GEN 1:1 ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದರು.
GEN 1:2 ಭೂಮಿಯು ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲೆ ಕವಿದಿತ್ತು. ದೇವರಾತ್ಮರು ಜಲ ಸಮೂಹಗಳ ಮೇಲೆ ಚಲಿಸುತ್ತಿದ್ದರು.
GEN 1:3 ಆಗ ದೇವರು, “ಬೆಳಕಾಗಲಿ” ಎನ್ನಲು, ಬೆಳಕಾಯಿತು.
GEN 1:4 ದೇವರು ಬೆಳಕನ್ನು ಒಳ್ಳೆಯದೆಂದು ಕಂಡರು. ದೇವರು ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸಿದರು.
GEN 1:5 ದೇವರು ಬೆಳಕಿಗೆ ಹಗಲು ಎಂದೂ ಕತ್ತಲೆಗೆ ರಾತ್ರಿ ಎಂದೂ ಕರೆದರು. ಆಗ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.
GEN 1:6 ನಂತರ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಗುಮ್ಮಟವಾಗಲಿ, ಅದು ನೀರಿನಿಂದ ಭೂಮಿಯನ್ನು ಪ್ರತ್ಯೇಕ ಮಾಡಲಿ,” ಎಂದರು.
GEN 1:7 ಹೀಗೆ ದೇವರು ವಿಸ್ತಾರವಾದ ಗುಮ್ಮಟವನ್ನು ಅದರ ಕೆಳಗಿದ್ದ ನೀರನ್ನೂ ಅದರ ಮೇಲಿದ್ದ ನೀರನ್ನೂ ಪ್ರತ್ಯೇಕಿಸಿದರು. ಅದು ಹಾಗೆಯೇ ಆಯಿತು.
GEN 1:8 ದೇವರು ಆ ಗುಮ್ಮಟಕ್ಕೆ ಆಕಾಶ ಎಂದು ಕರೆದರು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.
GEN 1:9 ಆಗ ದೇವರು, “ಆಕಾಶದ ಕೆಳಗಿರುವ ನೀರು ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣ ನೆಲವು ಕಾಣಿಸಲಿ,” ಎಂದರು. ಅದು ಹಾಗೆಯೇ ಆಯಿತು.
GEN 1:10 ದೇವರು ಒಣ ನೆಲಕ್ಕೆ “ಭೂಮಿ” ಎಂದೂ ಕೂಡಿಕೊಂಡಿದ್ದ ನೀರಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
GEN 1:11 ಅನಂತರ ದೇವರು, “ಭೂಮಿಯು ಹುಲ್ಲನ್ನೂ ಬೀಜಬಿಡುವ ಗಿಡಗಳನ್ನೂ ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನೂ ಉತ್ಪತ್ತಿ ಮಾಡಲಿ,” ಎಂದು ಹೇಳಿದರು. ಅದು ಹಾಗೆಯೇ ಆಯಿತು.
GEN 1:12 ಭೂಮಿಯ ಮೇಲೆ ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು ಮತ್ತು ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನು ಮೊಳೆಯಿಸಿದವು. ದೇವರು ಅದನ್ನು ಒಳ್ಳೆಯದೆಂದು ಕಂಡರು.
GEN 1:13 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.
GEN 1:14 ಅನಂತರ ದೇವರು, “ಹಗಲನ್ನು ರಾತ್ರಿಯಿಂದ ಪ್ರತ್ಯೇಕಿಸುವುದಕ್ಕೆ ಆಕಾಶಮಂಡಲದಲ್ಲಿ ಬೆಳಕುಗಳಿರಲಿ; ಅವು ಕಾಲಗಳನ್ನೂ ದಿನ ಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ.
GEN 1:15 ಅವು ಭೂಮಿಗೆ ಬೆಳಕನ್ನು ಕೊಡುವುದಕ್ಕೆ ಆಕಾಶಮಂಡಲದಲ್ಲಿ ದೀಪಗಳಂತಿರಲಿ,” ಎಂದರು. ಅದು ಹಾಗೆಯೇ ಆಯಿತು.
GEN 1:16 ಹಗಲನ್ನಾಳುವುದಕ್ಕೆ ದೊಡ್ಡ ಬೆಳಕನ್ನು, ರಾತ್ರಿಯನ್ನಾಳುವುದಕ್ಕೆ ಚಿಕ್ಕ ಬೆಳಕನ್ನು ಎಂಬಂತೆ ದೇವರು ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದರು. ದೇವರು ನಕ್ಷತ್ರಗಳನ್ನು ಸಹ ಉಂಟುಮಾಡಿದರು.
GEN 1:17 ದೇವರು ಆ ಬೆಳಕುಗಳನ್ನು ಆಕಾಶದಲ್ಲಿಟ್ಟು ಭೂಮಿಗೆ ಬೆಳಕನ್ನು ಕೊಡುವುದಕ್ಕೂ
GEN 1:18 ಹಗಲನ್ನು ಮತ್ತು ರಾತ್ರಿಯನ್ನು ಆಳುವುದಕ್ಕೂ ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸುವುದಕ್ಕೂ ದೇವರು ಅವುಗಳನ್ನು ನೇಮಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
GEN 1:19 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು.
GEN 1:20 ಆಮೇಲೆ ದೇವರು, “ನೀರಿನಲ್ಲಿ ಜೀವಜಂತುಗಳು ತುಂಬಿಕೊಳ್ಳಲಿ, ಭೂಮಿಯ ಮೇಲೆ ಆಕಾಶಮಂಡಲದಲ್ಲಿ ಪಕ್ಷಿಗಳು ಹಾರಾಡಲಿ,” ಎಂದರು.
GEN 1:21 ಹೀಗೆ ದೇವರು ದೊಡ್ಡ ಜಲಚರಗಳನ್ನು, ನೀರಿನಲ್ಲಿ ತುಂಬಿರುವ ಎಲ್ಲಾ ಚಲಿಸುವ ಜೀವ ಜಂತುಗಳನ್ನು, ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಯನ್ನು ಅವುಗಳ ಜಾತಿಗನುಸಾರವಾಗಿ ಸೃಷ್ಟಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
GEN 1:22 ದೇವರು ಅವುಗಳನ್ನು ಆಶೀರ್ವದಿಸಿ ಅವುಗಳಿಗೆ, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಸಮುದ್ರಗಳಲ್ಲಿ ನೀರನ್ನು ತುಂಬಿರಿ, ಭೂಮಿಯ ಮೇಲೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಲಿ,” ಎಂದರು.
GEN 1:23 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.
GEN 1:24 ಆಮೇಲೆ ದೇವರು, “ಭೂಮಿಯಿಂದ ಎಲ್ಲಾ ತರಹದ ಜೀವಿಗಳು ಉಂಟಾಗಲಿ: ಪಶುಗಳು, ನೆಲದ ಮೇಲೆ ಹರಿದಾಡುವ ಜೀವಿಗಳು, ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಉಂಟಾಗಲಿ,” ಎಂದರು. ಅದು ಹಾಗೆಯೇ ಆಯಿತು.
GEN 1:25 ಹೀಗೆ ದೇವರು ಎಲ್ಲ ತರದ ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
GEN 1:26 ತರುವಾಯ ದೇವರು, “ನಾವು ನಮ್ಮ ಸ್ವರೂಪದಲ್ಲಿ, ನಮ್ಮ ಹೋಲಿಕೆಯಲ್ಲಿ ಮನುಷ್ಯನನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ಮಾಡಲಿ,” ಎಂದರು.
GEN 1:27 ಹೀಗೆ ದೇವರು ಮನುಷ್ಯನನ್ನು ತಮ್ಮ ಸ್ವರೂಪದಲ್ಲಿ ಸೃಷ್ಟಿ ಮಾಡಿದರು. ದೇವರ ಸ್ವರೂಪದಲ್ಲಿಯೇ ಅವರನ್ನು ಸೃಷ್ಟಿ ಮಾಡಿದರು. ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು.
GEN 1:28 ದೇವರು ಅವರನ್ನು ಆಶೀರ್ವದಿಸಿ, “ನೀವು ಸಂತಾನವುಳ್ಳವರಾಗಿ, ಸಂಖ್ಯೆಯಲ್ಲಿ ಹೆಚ್ಚಿರಿ, ಭೂಮಿಯನ್ನು ತುಂಬಿಸಿ ಅದನ್ನು ಆಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ನೆಲದ ಮೇಲೆ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ನಡೆಸಿರಿ,” ಎಂದು ಅವರಿಗೆ ಹೇಳಿದರು.
GEN 1:29 ದೇವರು, “ಇಗೋ, ಭೂಮಿಯ ಮೇಲಿರುವ ಬೀಜಬಿಡುವ ಸಕಲ ಸಸ್ಯಗಳನ್ನೂ ಬೀಜಬಿಡುವ ಸಕಲ ಹಣ್ಣಿನ ಮರಗಳನ್ನೂ ನಿಮಗೆ ಕೊಟ್ಟಿದ್ದೇನೆ. ಅವು ನಿಮಗೆ ಆಹಾರಕ್ಕಾಗಿರುವುವು.
GEN 1:30 ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೂ ಆಕಾಶದ ಪಕ್ಷಿಗಳಿಗೂ ನೆಲದ ಮೇಲೆ ಹರಿದಾಡುವ ಜೀವಿಗಳಿಗೂ ಉಸಿರನ್ನು ಹೊಂದಿರುವ ಪ್ರತಿಯೊಂದು ಜೀವಿಗಳಿಗೆ ಹಸಿರಾದ ಸಸ್ಯಗಳನ್ನೆಲ್ಲಾ ನಾನು ಆಹಾರವಾಗಿ ಕೊಟ್ಟಿದ್ದೇನೆ,” ಎಂದರು. ಅದು ಹಾಗೆಯೇ ಆಯಿತು.
GEN 1:31 ದೇವರು ತಾವು ಉಂಟು ಮಾಡಿದ್ದನ್ನೆಲ್ಲಾ ನೋಡಲು, ಅವೆಲ್ಲವೂ ಬಹಳ ಒಳ್ಳೆಯದಾಗಿದ್ದವು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು.
GEN 2:1 ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ಸಂಪೂರ್ಣವಾಗಿ ನಿರ್ಮಿತವಾದವು.
GEN 2:2 ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.
GEN 2:3 ಅನಂತರ ದೇವರು ಏಳನೆಯ ದಿನವನ್ನು ಆಶೀರ್ವದಿಸಿ, ಅದನ್ನು ಪವಿತ್ರ ದಿನವನ್ನಾಗಿ ಮಾಡಿದರು. ಏಕೆಂದರೆ ಆ ದಿನದಲ್ಲಿ ದೇವರು ಸೃಷ್ಟಿಸಿದ ತಮ್ಮ ಎಲ್ಲಾ ಕೆಲಸಗಳಿಂದ ವಿಶ್ರಮಿಸಿಕೊಂಡರು.
GEN 2:4 ಯೆಹೋವ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದರು. ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.
GEN 2:5 ಭೂಮಿಯಲ್ಲಿ ಯಾವ ಗಿಡವೂ ಇನ್ನೂ ಬೆಳೆದಿರಲಿಲ್ಲ, ಯಾವ ಪಲ್ಯವೂ ಇನ್ನೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಆಗ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ.
GEN 2:6 ಆದರೆ ಭೂಮಿಯಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸಿತು.
GEN 2:7 ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು ಆಗ ಅವನು ಜೀವಿಸುವ ವ್ಯಕ್ತಿಯಾದನು.
GEN 2:8 ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.
GEN 2:9 ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು.
GEN 2:10 ಏದೆನ್ ಸೀಮೆಯಿಂದ ಒಂದು ನದಿ ಹರಿದು, ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ಹರಿದು ವಿಭಾಗವಾಗಿ, ನಾಲ್ಕು ಉಪನದಿಗಳಾದವು.
GEN 2:11 ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರವಿರುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು.
GEN 2:12 ಆ ದೇಶದ ಬಂಗಾರವು ಉತ್ತಮವಾಗಿತ್ತು. ಅಲ್ಲಿ ಬದೋಲಖ ಧೂಪ ಮತ್ತು ಗೋಮೇಧಿಕ ರತ್ನ ಇದ್ದವು.
GEN 2:13 ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು.
GEN 2:14 ಮೂರನೆಯ ನದಿಯ ಹೆಸರು ಟೈಗ್ರಿಸ್; ಅದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತಿತ್ತು. ನಾಲ್ಕನೆಯ ನದಿಯು ಯೂಫ್ರೇಟೀಸ್.
GEN 2:15 ಯೆಹೋವ ದೇವರು ಮನುಷ್ಯನನ್ನು ಕರೆದುಕೊಂಡು ಹೋಗಿ, ಏದೆನ್ ತೋಟದಲ್ಲಿ ಕೆಲಸ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇಟ್ಟರು.
GEN 2:16 ಇದಲ್ಲದೆ ಯೆಹೋವ ದೇವರು ಮನುಷ್ಯನಿಗೆ, “ನೀನು ತೋಟದ ಎಲ್ಲಾ ಮರಗಳ ಹಣ್ಣುಗಳನ್ನು ನಿನ್ನ ಇಷ್ಟಾನುಸಾರವಾಗಿ ತಿನ್ನಬಹುದು.
GEN 2:17 ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು.
GEN 2:18 ಅನಂತರ ಯೆಹೋವ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಬೀಳುವ ಸಹಕಾರಿಣಿಯನ್ನು ಉಂಟುಮಾಡುವೆನು,” ಎಂದರು.
GEN 2:19 ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲಾ ಕಾಡುಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿದ ಮೇಲೆ, ಅವುಗಳಿಗೆ ಮನುಷ್ಯನು ಏನು ಹೆಸರಿಡುವನೋ ಎಂದು ನೋಡುವುದಕ್ಕೆ, ಅವುಗಳನ್ನು ಅವನ ಬಳಿಗೆ ತಂದರು. ಒಂದೊಂದು ಜೀವಿಗೂ ಮನುಷ್ಯನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.
GEN 2:20 ಹೀಗೆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆದಾಮನಿಗೆ ಸರಿಬೀಳುವ ಸಹಕಾರಿಣಿಯು ಕಾಣಿಸಲಿಲ್ಲ.
GEN 2:21 ಆದಕಾರಣ ಯೆಹೋವ ದೇವರು ಮನುಷ್ಯನಿಗೆ ಗಾಢನಿದ್ರೆ ಬರಮಾಡಿದರು. ಅವನು ನಿದ್ರಿಸುತ್ತಿರುವಾಗ, ಅವರು ಅವನ ಪಕ್ಕೆಯನ್ನು ತೆಗೆದುಕೊಂಡು, ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು.
GEN 2:22 ಬಳಿಕ ಯೆಹೋವ ದೇವರು ಮನುಷ್ಯನಿಂದ ತೆಗೆದಿದ್ದ ಪಕ್ಕೆಯಿಂದ ಒಬ್ಬ ಸ್ತ್ರೀಯನ್ನು ಉಂಟುಮಾಡಿ, ಆಕೆಯನ್ನು ಆ ಮನುಷ್ಯನ ಬಳಿಗೆ ತಂದರು.
GEN 2:23 ಆಗ ಮನುಷ್ಯನು ಹೀಗೆ ಹೇಳಿದನು: “ಇದು ನನ್ನ ಎಲುಬಿನಿಂದಾದ ಎಲುಬು ಮತ್ತು ನನ್ನ ಮಾಂಸದಿಂದಾದ ಮಾಂಸವಾಗಿದೆ. ಈಕೆ ನರನಿಂದ ತೆಗೆದಿರುವುದರಿಂದ, ಈಕೆ, ‘ನಾರಿ’ ಎಂದು ಎನಿಸಿಕೊಳ್ಳುವಳು.”
GEN 2:24 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗಿರುವರು.
GEN 2:25 ಆದಾಮನೂ ಅವನ ಹೆಂಡತಿಯೂ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.
GEN 3:1 ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.
GEN 3:2 ಆಗ ಸ್ತ್ರೀಯು ಸರ್ಪಕ್ಕೆ, “ತೋಟದ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು.
GEN 3:3 ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸತ್ತು ಹೋಗುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದಳು.
GEN 3:4 ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ.
GEN 3:5 ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.
GEN 3:6 ಆಗ ಸ್ತ್ರೀಯು, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು.
GEN 3:7 ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು.
GEN 3:8 ತರುವಾಯ ಯೆಹೋವ ದೇವರು, ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ, ಆ ಸ್ತ್ರೀ ಪುರುಷರು ಅವರ ಸಪ್ಪಳವನ್ನು ಕೇಳಿ, ಅವರಿಗೆ ಕಾಣಿಸಿಕೊಳ್ಳಬಾರದೆಂದು ತೋಟದ ಮರಗಳ ಮಧ್ಯದಲ್ಲಿ ಅಡಗಿಕೊಂಡರು.
GEN 3:9 ಆಗ ಯೆಹೋವ ದೇವರು ಮನುಷ್ಯನನ್ನು ಕರೆದು ಅವನಿಗೆ, “ನೀನು ಎಲ್ಲಿದ್ದೀ?” ಎಂದರು.
GEN 3:10 ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು.
GEN 3:11 ಅದಕ್ಕೆ ದೇವರು, “ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದೀಯೋ?” ಎಂದು ಕೇಳಿದರು.
GEN 3:12 ಅದಕ್ಕೆ ಮನುಷ್ಯನು, “ನೀನು ನನ್ನ ಸಂಗಡ ಇರಿಸಿದ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು. ನಾನು ತಿಂದೆನು,” ಎಂದು ಹೇಳಿದನು.
GEN 3:13 ಯೆಹೋವ ದೇವರು ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಅದಕ್ಕೆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು. ನಾನು ತಿಂದೆನು,” ಎಂದು ಉತ್ತರಕೊಟ್ಟಳು.
GEN 3:14 ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ, “ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ. ಇಂದಿನಿಂದ ನಿನ್ನ ಜೀವನ ಪೂರ್ತಿ ಹೊಟ್ಟೆಯಿಂದ ಹರಿದಾಡಿ, ಮಣ್ಣನ್ನು ತಿನ್ನುವೆ.
GEN 3:15 ನಾನು ನಿನಗೂ ಸ್ತ್ರೀಗೂ ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ ವೈರತ್ವವನ್ನು ಇಡುವೆನು. ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.”
GEN 3:16 ಬಳಿಕ ದೇವರು ಸ್ತ್ರೀಗೆ ಹೀಗೆ ಹೇಳಿದರು, “ನಾನು ನಿನ್ನ ಗರ್ಭ ವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. ನೀನು ನೋವಿನಿಂದ ಮಕ್ಕಳನ್ನು ಹೆರುವಿ. ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು. ಅವನು ನಿನ್ನನ್ನು ಆಳುವನು.”
GEN 3:17 ಅನಂತರ ದೇವರು ಆದಾಮನಿಗೆ ಹೀಗೆ ಹೇಳಿದರು, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು, ಅದರ ಹುಟ್ಟುವಳಿಯನ್ನು ಉಣ್ಣುವೆ.
GEN 3:18 ಭೂಮಿಯಲ್ಲಿ ಮುಳ್ಳುಗಿಡಗಳೂ ಕಳ್ಳಿಗಳೂ ಬೆಳೆಯುವುವು. ನೀನು ಹೊಲದ ಬೆಳೆಯನ್ನು ಉಣ್ಣುವೆ.
GEN 3:19 ನೀನು ಪುನಃ ಮಣ್ಣಿಗೆ ಸೇರುವ ತನಕ, ಬೆವರಿಡುತ್ತಾ ಆಹಾರವನ್ನು ಉಣ್ಣುವೆ. ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. ನೀನು ಪುನಃ ಮಣ್ಣಿಗೆ ಸೇರತಕ್ಕವನು.”
GEN 3:20 ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಏಕೆಂದರೆ ಆಕೆಯೇ ಬದುಕಿದವರಿಗೆಲ್ಲಾ ತಾಯಿಯಾಗಿದ್ದಾಳೆ.
GEN 3:21 ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು.
GEN 3:22 ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.
GEN 3:23 ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು.
GEN 3:24 ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.
GEN 4:1 ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, “ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ,” ಎಂದು ಹೇಳಿದಳು.
GEN 4:2 ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.
GEN 4:3 ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು.
GEN 4:4 ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು.
GEN 4:5 ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.
GEN 4:6 ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ?
GEN 4:7 ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು.
GEN 4:8 ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.
GEN 4:9 ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು, ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು.
GEN 4:10 ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ.
GEN 4:11 ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ.
GEN 4:12 ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.
GEN 4:13 ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ.
GEN 4:14 ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.
GEN 4:15 ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು.
GEN 4:16 ಆಗ ಕಾಯಿನನು ಯೆಹೋವ ದೇವರ ಸನ್ನಿಧಿಯಿಂದ ಹೊರಟುಹೋಗಿ, ಏದೆನ್ ಸೀಮೆಗೆ ಪೂರ್ವದಲ್ಲಿದ್ದ ನೋದು ಎಂಬ ದೇಶದಲ್ಲಿ ವಾಸಿಸಿದನು.
GEN 4:17 ಕಾಯಿನನು ತನ್ನ ಹೆಂಡತಿಯನ್ನು ಕೂಡಲು, ಅವಳು ಗರ್ಭಿಣಿಯಾಗಿ ಹನೋಕನನ್ನು ಪಡೆದಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ, ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರನ್ನಿಟ್ಟನು.
GEN 4:18 ಹನೋಕನಿಂದ ಈರಾದನು ಹುಟ್ಟಿದನು. ಈರಾದನಿಂದ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಂದ ಮೆತೂಷಾಯೇಲನು ಹುಟ್ಟಿದನು. ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು.
GEN 4:19 ಲೆಮೆಕನು ಇಬ್ಬರು ಸ್ತ್ರೀಯರನ್ನು ಮದುವೆಯಾದನು. ಒಬ್ಬಳ ಹೆಸರು ಆದಾ ಮತ್ತೊಬ್ಬಳ ಹೆಸರು ಚಿಲ್ಲಾ.
GEN 4:20 ಆದಾಳು ಯಾಬಾಲನನ್ನು ಹೆತ್ತಳು. ಪಶುಗಳನ್ನು ಸಾಕುತ್ತಾ, ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ.
GEN 4:21 ಇವನ ತಮ್ಮನ ಹೆಸರು ಯೂಬಾಲನು. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರ ಮೂಲಪುರುಷನು.
GEN 4:22 ಚಿಲ್ಲಾ ತೂಬಲ್ ಕಾಯಿನನನ್ನು ಪಡೆದಳು. ಅವನು ಕಂಚು ಮತ್ತು ಕಬ್ಬಿಣದ ಆಯುಧಗಳನ್ನು ಮಾಡುವವನಾಗಿದ್ದನು. ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ.
GEN 4:23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: “ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ. ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ. ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು. ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು.
GEN 4:24 ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ, ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು.”
GEN 4:25 ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್ ಎಂದು ಹೆಸರಿಟ್ಟಳು.
GEN 4:26 ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.
GEN 5:1 ಆದಾಮನ ವಂಶದವರ ದಾಖಲೆಯಿದು: ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು.
GEN 5:2 ದೇವರು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. ಅದೇ ದಿನದಲ್ಲಿ ಅವರನ್ನು ಆಶೀರ್ವದಿಸಿ, ಅವರಿಗೆ “ಮನುಷ್ಯ” ಎಂದು ಕರೆದರು.
GEN 5:3 ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ, “ಸೇತ್” ಎಂದು ಹೆಸರಿಟ್ಟನು.
GEN 5:4 ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರು ವರುಷ ಬದುಕಿದನು.
GEN 5:5 ಆದಾಮನು ಒಟ್ಟು ಒಂಬೈನೂರ ಮೂವತ್ತು ವರುಷ ಬದುಕಿ ಸತ್ತನು.
GEN 5:6 ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು.
GEN 5:7 ಎನೋಷನು ಹುಟ್ಟಿದ ಮೇಲೆ ಸೇತನು ಎಂಟುನೂರ ಏಳು ವರುಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.
GEN 5:8 ಸೇತನು ಒಟ್ಟು ಒಂಬೈನೂರ ಹನ್ನೆರಡು ವರ್ಷ ಬದುಕಿ ಸತ್ತನು.
GEN 5:9 ಎನೋಷನು ತೊಂಬತ್ತು ವರ್ಷದವನಾದಾಗ ಕೇನಾನನನ್ನು ಪಡೆದನು.
GEN 5:10 ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು.
GEN 5:11 ಅವನು ಒಟ್ಟು ಒಂಬೈನೂರ ಐದು ವರುಷ ಬದುಕಿ ಸತ್ತನು.
GEN 5:12 ಕೇನಾನನು ಎಪ್ಪತ್ತು ವರುಷದವನಾದಾಗ, ಅವನಿಂದ ಮಹಲಲೇಲನು ಹುಟ್ಟಿದನು.
GEN 5:13 ಕೇನಾನನು ಮಹಲಲೇಲನು ಹುಟ್ಟಿದ ಮೇಲೆ ಎಂಟುನೂರ ನಲವತ್ತು ವರ್ಷ ಬದುಕಿ, ಗಂಡು ಹೆಣ್ಣು ಮಕ್ಕಳನ್ನು ಪಡೆದನು.
GEN 5:14 ಕೇನಾನನು ಒಟ್ಟು ಒಂಬೈನೂರ ಹತ್ತು ವರ್ಷ ಬದುಕಿ ಸತ್ತನು.
GEN 5:15 ಮಹಲಲೇಲನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಯೆರೆದನು ಹುಟ್ಟಿದನು.
GEN 5:16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಎಂಟುನೂರ ಮೂವತ್ತು ವರ್ಷ ಬದುಕಿ ಗಂಡು, ಹೆಣ್ಣು ಮಕ್ಕಳನ್ನು ಪಡೆದನು.
GEN 5:17 ಮಹಲಲೇಲನು ಎಂಟುನೂರ ತೊಂಬತ್ತೈದು ವರ್ಷ ಬದುಕಿ ತರುವಾಯ ಸತ್ತನು.
GEN 5:18 ಯೆರೆದನು ನೂರ ಅರವತ್ತೆರಡು ವರುಷದವನಾಗಿದ್ದಾಗ, ಅವನಿಂದ ಹನೋಕನು ಹುಟ್ಟಿದನು.
GEN 5:19 ಹನೋಕನು ಹುಟ್ಟಿದ ಮೇಲೆ, ಯೆರೆದನು ಎಂಟುನೂರು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
GEN 5:20 ಯೆರೆದನು ಒಟ್ಟು ಒಂಬೈನೂರ ಅರವತ್ತೆರಡು ವರ್ಷ ಬದುಕಿ, ತರುವಾಯ ಸತ್ತನು.
GEN 5:21 ಹನೋಕನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಮೆತೂಷೆಲಹನು ಹುಟ್ಟಿದನು.
GEN 5:22 ಮೆತೂಷೆಲಹನು ಹುಟ್ಟಿದ ತರುವಾಯ, ಹನೋಕನು ಮುನ್ನೂರು ವರ್ಷ ದೇವರೊಂದಿಗೆ ನಡೆದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
GEN 5:23 ಹನೋಕನು ಒಟ್ಟು ಮುನ್ನೂರ ಅರವತ್ತೈದು ವರ್ಷ ಬದುಕಿದನು.
GEN 5:24 ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.
GEN 5:25 ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು.
GEN 5:26 ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
GEN 5:27 ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು.
GEN 5:28 ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು.
GEN 5:29 ಅವನಿಗೆ, ನೋಹ ಎಂದು ಹೆಸರಿಟ್ಟು, “ಯೆಹೋವ ದೇವರು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಉಪಶಮನಗೊಳಿಸುವನು,” ಎಂದು ಹೇಳಿದನು.
GEN 5:30 ನೋಹನು ಹುಟ್ಟಿದ ಮೇಲೆ, ಲೆಮೆಕನು ಗಂಡು, ಹೆಣ್ಣು ಮಕ್ಕಳನ್ನು ಪಡೆದು, ಐನೂರ ತೊಂಬತ್ತೈದು ವರ್ಷ ಬದುಕಿದನು.
GEN 5:31 ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿದನು. ತರುವಾಯ ಅವನು ಸತ್ತನು.
GEN 5:32 ನೋಹನು ಐನೂರು ವರ್ಷದವನಾಗಿದ್ದನು. ಆಗ ನೋಹನಿಂದ ಶೇಮ್, ಹಾಮ್, ಯೆಫೆತರು ಹುಟ್ಟಿದರು.
GEN 6:1 ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ ಅವರಿಗೆ ಪುತ್ರಿಯರು ಹುಟ್ಟಿದರು.
GEN 6:2 ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು.
GEN 6:3 ಆಗ ಯೆಹೋವ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ನಿತ್ಯವಾಗಿ ಇರುವುದಿಲ್ಲ. ಏಕೆಂದರೆ ಅವರು ಮರ್ತ್ಯರೇ. ಆದರೂ ಅವರ ಆಯುಷ್ಯವು ನೂರ ಇಪ್ಪತ್ತು ವರ್ಷಗಳಾಗಿರುವುದು,” ಎಂದರು.
GEN 6:4 ಆ ದಿನಗಳಲ್ಲಿ ಭೂಮಿಯ ಮೇಲೆ ನೆಫೀಲಿಯೆಂಬ ರಾಕ್ಷಸ ವಂಶದವರು ಇದ್ದರು. ನಂತರದಲ್ಲಿಯೂ ಇದ್ದರು. ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಕೂಡಿದಾಗ, ಮಕ್ಕಳು ಹುಟ್ಟಿದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಿಗಳು.
GEN 6:5 ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು.
GEN 6:6 ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು.
GEN 6:7 ಇದಲ್ಲದೆ ಯೆಹೋವ ದೇವರು, “ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ,” ಎಂದರು.
GEN 6:8 ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು.
GEN 6:9 ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ: ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು.
GEN 6:10 ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳಿದ್ದರು.
GEN 6:11 ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು.
GEN 6:12 ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
GEN 6:13 ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು.
GEN 6:14 ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು.
GEN 6:15 ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು.
GEN 6:16 ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು.
GEN 6:17 ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು.
GEN 6:18 ಆದರೆ ನಾನು ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀನು, ನಿನ್ನ ಸಂಗಡ ನಿನ್ನ ಮಕ್ಕಳು, ನಿನ್ನ ಹೆಂಡತಿ ಹಾಗೂ ಸೊಸೆಯರು ನಾವೆಯೊಳಗೆ ಸೇರಬೇಕು.
GEN 6:19 ಜೀವಿಗಳ ಪ್ರತಿಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು; ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಜೀವಂತವಾಗಿ ಉಳಿಸಿಕೊಳ್ಳಬೇಕು.
GEN 6:20 ಪಕ್ಷಿಗಳಲ್ಲಿ ಅವುಗಳ ಜಾತಿಗನುಸಾರವಾಗಿ, ಪ್ರಾಣಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಮತ್ತು ನೆಲದ ಮೇಲೆ ಹರಿದಾಡುವ ಸಕಲ ಜೀವಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಎರಡೆರಡು ಬದುಕಿಬಾಳಲು ಅವುಗಳನ್ನು ನೀನು ಕಾಪಾಡುವಂತೆ ನಿನ್ನ ಬಳಿಗೆ ಬರುವುವು.
GEN 6:21 ನೀನು, ಎಲ್ಲ ವಿಧವಾದ ಆಹಾರ ಪದಾರ್ಥಗಳನ್ನು ಕೂಡಿಸಿಡಬೇಕು. ಅದು ನಿಮಗೂ ಮತ್ತು ಪ್ರಾಣಿಗಳಿಗೂ ಆಹಾರವಾಗಿರಬೇಕು,” ಎಂದು ಹೇಳಿದರು.
GEN 6:22 ದೇವರು ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನು ಮಾಡಿದನು.
GEN 7:1 ಯೆಹೋವ ದೇವರು ನೋಹನಿಗೆ, “ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ.
GEN 7:2 ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡು, ಹೆಣ್ಣುಗಳನ್ನೂ, ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು, ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು.
GEN 7:3 ಆಕಾಶದ ಪಕ್ಷಿಗಳಲ್ಲಿ ಗಂಡು, ಹೆಣ್ಣು ಏಳೇಳರಂತೆ ತೆಗೆದುಕೊಂಡು, ಭೂಮಿಯ ಮೇಲೆಲ್ಲಾ ಅವುಗಳ ಸಂತತಿಯನ್ನು ಜೀವಂತವಾಗಿ ಉಳಿಸಬೇಕು.
GEN 7:4 ಏಳು ದಿವಸಗಳಾದ ಮೇಲೆ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳು ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಪ್ರತಿಯೊಂದು ಜೀವರಾಶಿಯನ್ನೂ ಭೂಮಿಯ ಮೇಲಿಂದ ಅಳಿಸಿಬಿಡುತ್ತೇನೆ,” ಎಂದರು.
GEN 7:5 ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನೂ ಮಾಡಿದನು.
GEN 7:6 ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು.
GEN 7:7 ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು.
GEN 7:8 ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ
GEN 7:9 ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು.
GEN 7:10 ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.
GEN 7:11 ನೋಹನ ಜೀವನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾಸಾಗರದ ಸೆಲೆಗಳು ಒಡೆದವು. ಆಕಾಶದ ಪ್ರವಾಹದ ದ್ವಾರಗಳು ತೆರೆದವು.
GEN 7:12 ನಲವತ್ತು ದಿವಸ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು.
GEN 7:13 ಅದೇ ದಿನದಲ್ಲಿ ನೋಹನು ಮತ್ತು ಅವನ ಪುತ್ರರಾದ ಶೇಮ್, ಹಾಮ್, ಯೆಫೆತ್ ಇವರೂ ನೋಹನ ಹೆಂಡತಿಯೂ ಅವನ ಪುತ್ರರ ಹೆಂಡತಿಯರೂ ನಾವೆಯನ್ನು ಪ್ರವೇಶಿಸಿದರು.
GEN 7:14 ಇದಲ್ಲದೆ ತಮ್ಮ ತಮ್ಮ ಜಾತಿಗನುಸಾರವಾಗಿ ಎಲ್ಲಾ ಕಾಡು ಮೃಗಗಳೂ ಎಲ್ಲಾ ಪಶುಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳೂ ಎಲ್ಲಾ ಪಕ್ಷಿಗಳೂ ಎಲ್ಲಾ ವಿಧವಾದ ರೆಕ್ಕೆಯಿರುವ ಜೀವಿಗಳೂ ಪ್ರವೇಶಿಸಿದವು.
GEN 7:15 ಹೀಗೆ ಜೀವಶ್ವಾಸವಿರುವ ಎಲ್ಲಾ ಸೃಷ್ಟಿಗಳಲ್ಲಿ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು.
GEN 7:16 ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
GEN 7:17 ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು.
GEN 7:18 ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು.
GEN 7:19 ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು.
GEN 7:20 ನೀರು ಬೆಟ್ಟವನ್ನು ಮುಚ್ಚಿ ಅವುಗಳ ಮೇಲೆ ಸುಮಾರು ಏಳು ಮೀಟರಷ್ಟು ಏರಿತು.
GEN 7:21 ಪಕ್ಷಿಗಳು, ಪಶುಗಳು, ಕಾಡುಮೃಗಗಳು, ನೆಲದ ಮೇಲೆ ಚಲಿಸುವ ಸಕಲ ಪ್ರಾಣಿಗಳು ಮತ್ತು ಮನುಷ್ಯರು ನಾಶವಾದರು.
GEN 7:22 ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು.
GEN 7:23 ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು.
GEN 7:24 ಜಲವು ಭೂಮಿಯ ಮೇಲೆ ನೂರೈವತ್ತು ದಿನ ಮುಂದುವರೆಯಿತು.
GEN 8:1 ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಕಾಡುಮೃಗಗಳನ್ನೂ ಪಶುಗಳನ್ನೂ ನೆನಪಿಗೆ ತಂದುಕೊಂಡು, ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ, ನೀರು ತಗ್ಗಿತು.
GEN 8:2 ಮಾತ್ರವಲ್ಲದೆ ಸಾಗರದ ಸೆಲೆಗಳೂ, ಆಕಾಶದ ದ್ವಾರಗಳೂ ಮುಚ್ಚಿಹೋದವು. ಆಕಾಶದಿಂದ ಬೀಳುವ ಮಳೆ ನಿಂತುಹೋಯಿತು.
GEN 8:3 ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು.
GEN 8:4 ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು.
GEN 8:5 ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂತು, ಹತ್ತನೆಯ ತಿಂಗಳಿನ ಮೊದಲಿನ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.
GEN 8:6 ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು.
GEN 8:7 ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು.
GEN 8:8 ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು.
GEN 8:9 ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.
GEN 8:10 ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು.
GEN 8:11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು.
GEN 8:12 ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ.
GEN 8:13 ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು.
GEN 8:14 ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.
GEN 8:15 ಆಗ ದೇವರು ನೋಹನಿಗೆ,
GEN 8:16 “ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ.
GEN 8:17 ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ,” ಎಂದು ಹೇಳಿದರು.
GEN 8:18 ಹೀಗೆ ನೋಹನು, ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ಹೊರಗೆ ಬಂದನು.
GEN 8:19 ಎಲ್ಲಾ ಮೃಗಗಳೂ ಎಲ್ಲಾ ಕ್ರಿಮಿಗಳೂ ಎಲ್ಲಾ ಪಕ್ಷಿಗಳೂ ಭೂಮಿಯಲ್ಲಿ ಹರಿದಾಡುವ ಎಲ್ಲವೂ ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯೊಳಗಿಂದ ಹೊರಗೆ ಬಂದವು.
GEN 8:20 ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.
GEN 8:21 ಅದರ ಸುವಾಸನೆಯು ಯೆಹೋವ ದೇವರಿಗೆ ಗಮಗಮಿಸಲು, ಅವರು ಹೃದಯದೊಳಗೆ, “ಮನುಷ್ಯನ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಮನುಷ್ಯರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವುದಿಲ್ಲ.
GEN 8:22 “ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ; ತಂಪೂ ಸೆಕೆಯೂ; ಬೇಸಿಗೆಯೂ ಹಿಮಕಾಲವೂ; ಹಗಲೂ ರಾತ್ರಿಯೂ ನಿಂತುಹೋಗುವುದಿಲ್ಲ.”
GEN 9:1 ದೇವರು ನೋಹನನ್ನೂ, ಅವನ ಪುತ್ರರನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿ, ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
GEN 9:2 ಭೂಮಿಯ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಸಮುದ್ರದ ಎಲ್ಲಾ ಮೀನುಗಳ ಮೇಲೆಯೂ ನಿಮ್ಮ ಭಯ ಬೆದರಿಕೆಯು ಇರುವುದು. ನಿಮ್ಮ ಕೈಗೆ ಅವು ಕೊಡಲಾಗಿವೆ.
GEN 9:3 ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ. ಹಸಿರು ಪಲ್ಯಗಳ ಹಾಗೆಯೇ, ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
GEN 9:4 “ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು.
GEN 9:5 ನಿಮ್ಮ ರಕ್ತ ಸುರಿಸಿ, ಪ್ರಾಣ ತೆಗೆಯುವವರಿಗೆ, ಮುಯ್ಯಿತೀರಿಸುವೆನು, ಮೃಗವಾಗಿದ್ದರೆ ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಇನ್ನೊಬ್ಬ ಮನುಷ್ಯನಾದುದರಿಂದ ಹತಿಸಿದವನಿಗೂ ಮುಯ್ಯಿತೀರಿಸುವೆನು.
GEN 9:6 “ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, ಅವರ ರಕ್ತವನ್ನು ಮನುಷ್ಯರೇ ಸುರಿಸುವರು. ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದರು.
GEN 9:7 ಆದ್ದರಿಂದ ನೀವು ಬಹುಸಂತಾನವಾಗಿ ಹೆಚ್ಚಿರಿ. ಸಂಖ್ಯೆಯಲ್ಲಿಯೂ ಅಧಿಕವಾಗಿ ಭೂಮಿಯಲ್ಲಿ ಹೆಚ್ಚಿರಿ,” ಎಂದು ಹೇಳಿದರು.
GEN 9:8 ಇದಲ್ಲದೆ ದೇವರು ನೋಹನಿಗೂ ಅವನ ಸಂಗಡ ಇದ್ದ ಅವನ ಪುತ್ರರಿಗೂ ಹೇಳಿದ್ದೇನೆಂದರೆ,
GEN 9:9 “ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ
GEN 9:10 ನಿಮ್ಮ ಜೊತೆ ನಾವೆಯೊಳಗಿಂದ ಹೊರಗೆ ಬಂದ ಎಲ್ಲಾ ಜೀವಿಗಳ ಸಹಿತ ಅಂದರೆ ಪಕ್ಷಿಗಳು, ಪಶುಗಳು, ಕಾಡುಮೃಗಗಳು ಮತ್ತು ಭೂಮಿಯ ಎಲ್ಲಾ ಜೀವಿಗಳೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ
GEN 9:11 ಜಲಪ್ರಳಯದಿಂದ ಇನ್ನು ಮೇಲೆ ಎಲ್ಲಾ ಜೀವಿಗಳು ನಾಶವಾಗುವುದಿಲ್ಲ. ಭೂಮಿಯನ್ನು ಹಾಳು ಮಾಡುವುದಕ್ಕೆ ಇನ್ನು ಮುಂದೆ ಇಂಥ ಪ್ರಳಯವು ಇರುವುದಿಲ್ಲ ಎಂದು ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.”
GEN 9:12 ದೇವರು ಮತ್ತೆ ಹೇಳಿದ್ದೇನೆಂದರೆ, “ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳವರೆಗೆ ನಾನು ಮಾಡುವ ಒಡಂಬಡಿಕೆಗೆ ಗುರುತು ಇದೆ:
GEN 9:13 ನನ್ನ ಮಳೆಬಿಲ್ಲನ್ನು ಮೇಘಗಳಲ್ಲಿ ಇಟ್ಟಿದ್ದೇನೆ, ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವುದು.
GEN 9:14 ನಾನು ಭೂಮಿಯ ಮೇಲೆ ಮೇಘಗಳನ್ನು ಬರಮಾಡುವಾಗ, ಆ ಮಳೆಬಿಲ್ಲು ಮೇಘಗಳಲ್ಲಿ ಕಂಡುಬರುವುದು.
GEN 9:15 ಆಗ ನಾನು ನನಗೂ ನಿಮಗೂ ಪ್ರತಿಯೊಂದು ಜೀವಿಗಳಿಗೂ ಮಧ್ಯೆಯಿರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಎಲ್ಲಾ ಜೀವಿಗಳನ್ನು ನಾಶಮಾಡುವ ಪ್ರಳಯವಾಗುವುದೇ ಇಲ್ಲ.
GEN 9:16 ಆ ಮಳೆಬಿಲ್ಲು ಮೇಘಗಳಲ್ಲಿರುವಾಗ, ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ಇರುವ ನಿತ್ಯವಾದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವ ಹಾಗೆ, ನಾನು ಅದನ್ನು ನೋಡುವೆನು.”
GEN 9:17 ನಂತರ ದೇವರು ನೋಹನಿಗೆ, “ಈ ಮಳೆಬಿಲ್ಲು ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಮಧ್ಯದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತಾಗಿದೆ,” ಎಂದು ಹೇಳಿದರು.
GEN 9:18 ನಾವೆಯೊಳಗಿಂದ ಹೊರಬಂದ ನೋಹನ ಪುತ್ರರು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು.
GEN 9:19 ಈ ಮೂವರು ನೋಹನ ಮಕ್ಕಳು; ಭೂಮಿಯ ಮೇಲೆ ಚೆದರಿದ ಎಲ್ಲ ಜನರು ಇವರಿಂದಲೇ ಉತ್ಪತ್ತಿಯಾದರು.
GEN 9:20 ನೋಹನು ವ್ಯವಸಾಯಗಾರನಾಗಿದ್ದನು. ಅವನು ಒಂದು ದ್ರಾಕ್ಷಿತೋಟವನ್ನು ಪ್ರಾರಂಭಿಸಿದನು.
GEN 9:21 ಅವನು ಅದರಿಂದ ಸ್ವಲ್ಪ ದ್ರಾಕ್ಷಾರಸವನ್ನು ಕುಡಿದು ಅಮಲೇರಿ, ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿದ್ದನು.
GEN 9:22 ಕಾನಾನನ ತಂದೆ ಹಾಮನು, ತನ್ನ ತಂದೆಯ ಬೆತ್ತಲೆತನವನ್ನು ನೋಡಿ, ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿದನು.
GEN 9:23 ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತೆಗೆದುಕೊಂಡು, ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು, ಹಿಂಭಾಗವಾಗಿ ಹೋಗಿ, ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಮ್ಮುಖವಾಗಿದ್ದುದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.
GEN 9:24 ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು, ತನ್ನ ಕಿರಿಯ ಮಗನು ತನಗೆ ಮಾಡಿದ್ದನ್ನು ತಿಳಿದನು.
GEN 9:25 ನಂತರ ಅವನು ಹೀಗೆಂದನು, “ಕಾನಾನನು ಶಾಪಗ್ರಸ್ತನಾಗಲಿ, ಅವನು ತನ್ನ ಸಹೋದರರಿಗೆ ದಾಸಾನುದಾಸನಾಗಿರಲಿ.”
GEN 9:26 ನೋಹನು ಮತ್ತೆ ಹೇಳಿದ್ದು, “ಶೇಮನ ದೇವರಾದ ಯೆಹೋವ ಸ್ತುತಿಹೊಂದಲಿ. ಕಾನಾನನು ಶೇಮನಿಗೆ ದಾಸನಾಗಿರಲಿ.
GEN 9:27 ಯೆಫೆತನ ಮೇರೆಗಳನ್ನು ದೇವರು ವಿಸ್ತರಿಸಲಿ. ಯೆಫೆತನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ, ಕಾನಾನನು ಯೆಫೆತನಿಗೆ ದಾಸನಾಗಿರಲಿ.”
GEN 9:28 ಪ್ರಳಯವಾದ ಮೇಲೆ ನೋಹನು ಮುನ್ನೂರ ಐವತ್ತು ವರ್ಷ ಬದುಕಿದನು.
GEN 9:29 ನೋಹ ಒಟ್ಟು ಒಂಬೈನೂರ ಐವತ್ತು ವರ್ಷ ಜೀವಿಸಿ, ಸತ್ತನು.
GEN 10:1 ನೋಹನ ಪುತ್ರರಾದ ಶೇಮ್, ಹಾಮ್, ಯೆಫೆತರಿಗೆ ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. ಅವರ ವಂಶಾವಳಿ ಇದು:
GEN 10:2 ಯೆಫೆತನ ಪುತ್ರರು: ಗೋಮೆರ್, ಮಾಗೋಗ್, ಮಾದಯ್, ಯಾವಾನ್ ತೂಬಲ್, ಮೆಷೆಕ್ ಮತ್ತು ತೀರಾಸ್.
GEN 10:3 ಗೋಮೆರನ ಪುತ್ರರು: ಅಷ್ಕೆನಜ್, ರೀಫತ್, ತೋಗರ್ಮ.
GEN 10:4 ಯಾವಾನನ ಮಕ್ಕಳು: ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.
GEN 10:5 ಇವರಿಂದ ಕಡಲತೀರದ ಹಾಗೂ ದ್ವೀಪಗಳ ನಿವಾಸಿಯರು ತಮ್ಮ ಸ್ವಂತ ದೇಶ, ಭಾಷೆ, ಕುಲ ಜನಾಂಗಗಳ ಪ್ರಕಾರ ಹರಡುತ್ತಿದ್ದರು.
GEN 10:6 ಹಾಮನ ಪುತ್ರರು: ಕೂಷ್, ಈಜಿಪ್ಟ್, ಪೂಟ್, ಕಾನಾನ್.
GEN 10:7 ಕೂಷನ ಪುತ್ರರು: ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ. ರಾಮನ ಪುತ್ರರು: ಶೆಬಾ ಮತ್ತು ದೆದಾನ್.
GEN 10:8 ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು.
GEN 10:9 ಅವನು ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರನಾದನು. ಆದ್ದರಿಂದ, “ನಿಮ್ರೋದನಂತೆ ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರ” ಎಂಬ ಹೇಳಿಕೆ ಇಂದಿಗೂ ಇದೆ.
GEN 10:10 ಶಿನಾರ್ ದೇಶದಲ್ಲಿರುವ ಬಾಬಿಲೋನ್, ಯೆರೆಕ್, ಅಕ್ಕದ್, ಕಲ್ನೇ ಎಂಬವು ಅವನ ರಾಜ್ಯದ ಪ್ರಾರಂಭದ ಕೇಂದ್ರಗಳು.
GEN 10:11 ಆ ದೇಶದಿಂದ ಅವನು ಅಸ್ಸೀರಿಯಕ್ಕೆ ಹೋಗಿ ನಿನೆವೆ, ರೆಹೋಬೋತೀರ್, ಕೆಲಹ ಪಟ್ಟಣಗಳನ್ನೂ
GEN 10:12 ಮತ್ತು ನಿನೆವೆ ಹಾಗೂ ಕೆಲಹ ಮಧ್ಯದಲ್ಲಿರುವ ರೆಸೆನ್ ಮಹಾಪಟ್ಟಣವನ್ನು ಕಟ್ಟಿಸಿದನು.
GEN 10:13 ಈಜಿಪ್ಟನವರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು
GEN 10:14 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು,
GEN 10:15 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತನು ಹುಟ್ಟಿದನು.
GEN 10:16 ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು
GEN 10:17 ಹಿವ್ವಿಯರು, ಅರ್ಕಿಯರು, ಸೀನಿಯರು,
GEN 10:18 ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು.
GEN 10:19 ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ.
GEN 10:20 ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ, ತಮ್ಮ ಸೀಮೆ ಹಾಗು ದೇಶಗಳಲ್ಲಿಯೂ ಇರುವ ಹಾಮನ ಪುತ್ರರು.
GEN 10:21 ಯೆಫೆತನ ಹಿರಿಯ ಸಹೋದರನೂ ಏಬೆರನ ಮಕ್ಕಳ ಮೂಲಪುರುಷನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
GEN 10:22 ಶೇಮನ ಪುತ್ರರು: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್.
GEN 10:23 ಅರಾಮನ ಪುತ್ರರು: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.
GEN 10:24 ಅರ್ಪಕ್ಷದ್ ಶೆಲಹನ ತಂದೆ; ಶೆಲಹ ಏಬೆರನ ತಂದೆ,
GEN 10:25 ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು. ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್.
GEN 10:26 ಯೊಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಪ್, ಹಜರ್ಮಾವೆತ್, ಯೆರಹ,
GEN 10:27 ಹದೋರಾಮ್, ಊಜಾಲ್, ದಿಕ್ಲಾ,
GEN 10:28 ಓಬಾಲ್, ಅಬೀಮಯೇಲ್, ಶೆಬಾ,
GEN 10:29 ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.
GEN 10:30 ಅವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವದಿಕ್ಕಿನ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು.
GEN 10:31 ಇವರೇ ತಮ್ಮ ಕುಟುಂಬಗಳ, ತಮ್ಮ ಭಾಷೆಗಳ ಪ್ರಕಾರ, ತಮ್ಮ ದೇಶಗಳಲ್ಲಿ, ತಮ್ಮ ಜನಾಂಗಗಳ ಪ್ರಕಾರ ಶೇಮನ ಪುತ್ರರು.
GEN 10:32 ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರವಾಗಿ ನೋಹನ ಪುತ್ರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ಹರಡಿಕೊಂಡವು.
GEN 11:1 ಆ ಕಾಲದಲ್ಲಿ ಭೂಲೋಕದಲ್ಲೆಲ್ಲಾ ಒಂದೇ ಭಾಷೆಯಿತ್ತು. ಭಾಷಾಭೇದವೇನೂ ಇರಲಿಲ್ಲ.
GEN 11:2 ಜನರು ಪೂರ್ವದಿಕ್ಕಿಗೆ ಪ್ರಯಾಣ ಮಾಡುವಾಗ, ಶಿನಾರ್ ದೇಶದ ಬಯಲನ್ನು ಕಂಡು ಅಲ್ಲಿ ವಾಸಮಾಡಿದರು.
GEN 11:3 ಅಲ್ಲಿ ಅವರು, “ಬನ್ನಿರಿ ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು.
GEN 11:4 ಅನಂತರ ಅವರು, “ಬನ್ನಿರಿ, ನಾವು ಭೂಮಿಯ ಮೇಲೆ ಪಟ್ಟಣವನ್ನು ಕಟ್ಟೋಣ. ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನು ನಮಗೋಸ್ಕರವಾಗಿ ಕಟ್ಟಿಕೊಂಡು, ನಮಗೆ ಹೆಸರು ಸಂಪಾದಿಸಿಕೊಳ್ಳೋಣ. ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವುದಕ್ಕೆ ಆಸ್ಪದವಾಗುವದಿಲ್ಲ,” ಎಂದುಕೊಂಡರು.
GEN 11:5 ಜನರು ಕಟ್ಟುತ್ತಿದ್ದ ಪಟ್ಟಣವನ್ನೂ ಗೋಪುರವನ್ನೂ ನೋಡುವುದಕ್ಕೆ ಯೆಹೋವ ದೇವರು ಇಳಿದು ಬಂದರು.
GEN 11:6 ಯೆಹೋವ ದೇವರು, “ಇವರಿಗೆ ಒಂದೇ ಜನಾಂಗವೂ ಒಂದೇ ಭಾಷೆಯೂ ಇದೆ. ಇವರು ಇದನ್ನು ಮಾಡಲಾರಂಭಿಸಿದ್ದಾರೆ. ಈಗ ಇನ್ನು ಮುಂದೆ ಇವರು ಮಾಡುವುದಕ್ಕೆ ಉದ್ದೇಶಿಸುವುದು ಇವರಿಗೆ ಅಸಾಧ್ಯವಾಗುವುದಿಲ್ಲ.
GEN 11:7 ನಾವು ಇಳಿದು ಹೋಗಿ, ಇವರು ಒಬ್ಬರ ಮಾತನ್ನು ಒಬ್ಬರು ತಿಳಿಯದಂತೆ, ಇವರ ಭಾಷೆಯನ್ನು ಗಲಿಬಿಲಿ ಮಾಡೋಣ,” ಎಂದರು.
GEN 11:8 ಆದ್ದರಿಂದ ಯೆಹೋವ ದೇವರು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿದರು. ಆಗ ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು.
GEN 11:9 ಆದಕಾರಣ ಅದಕ್ಕೆ, ಬಾಬೆಲ್ ಎಂದು ಹೆಸರಾಯಿತು. ಏಕೆಂದರೆ ಅಲ್ಲಿ ಯೆಹೋವ ದೇವರು ಇಡೀ ಜಗತ್ತಿನ ಭಾಷೆಗಳನ್ನು ಗಲಿಬಿಲಿ ಮಾಡಿದರು. ಅಲ್ಲಿಂದ ಯೆಹೋವ ದೇವರು ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿಬಿಟ್ಟರು.
GEN 11:10 ಶೇಮನ ವಂಶಾವಳಿ: ಶೇಮನು ನೂರು ವರ್ಷದವನಾಗಿದ್ದಾಗ, ಎಂದರೆ, ಪ್ರಳಯವಾಗಿ ಎರಡು ವರ್ಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
GEN 11:11 ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ, ಶೇಮನು ಐನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:12 ಅರ್ಪಕ್ಷದನು ಮೂವತ್ತೈದು ವರ್ಷದವನಾಗಿರುವಾಗ, ಅವನಿಂದ ಶೆಲಹನು ಹುಟ್ಟಿದನು.
GEN 11:13 ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:14 ಶೆಲಹನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ಏಬೆರನು ಹುಟ್ಟಿದನು.
GEN 11:15 ಶೆಲಹನಿಂದ ಏಬೆರನು ಹುಟ್ಟಿದ ಮೇಲೆ, ಶೆಲಹನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:16 ಏಬೆರನು ಮೂವತ್ತ ನಾಲ್ಕು ವರ್ಷದವನಾಗಿದ್ದಾಗ, ಅವನಿಂದ ಪೆಲೆಗನು ಹುಟ್ಟಿದನು.
GEN 11:17 ಏಬೆರನಿಂದ ಪೆಲೆಗನು ಹುಟ್ಟಿದ ಮೇಲೆ, ಏಬೆರನು ನಾನೂರ ಮೂವತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:18 ಪೆಲೆಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ರೆಗೂವನು ಹುಟ್ಟಿದನು.
GEN 11:19 ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ, ಪೆಲೆಗನು ಇನ್ನೂರ ಒಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:20 ರೆಗೂವನು ಮೂವತ್ತೆರಡು ವರ್ಷದವನಾಗಿದ್ದಾಗ, ಅವನಿಂದ ಸೆರೂಗನು ಹುಟ್ಟಿದನು.
GEN 11:21 ರೆಗೂವನಿಂದ ಸೆರೂಗನು ಹುಟ್ಟಿದ ಮೇಲೆ, ರೆಗೂವನು ಇನ್ನೂರ ಏಳು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:22 ಸೆರೂಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ನಾಹೋರನು ಹುಟ್ಟಿದನು.
GEN 11:23 ಸೆರೂಗನಿಂದ ನಾಹೋರನು ಹುಟ್ಟಿದ ಮೇಲೆ, ಸೆರೂಗನು ಇನ್ನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:24 ನಾಹೋರನು ಇಪ್ಪತ್ತೊಂಬತ್ತು ವರ್ಷದವನಾಗಿದ್ದಾಗ, ಅವನಿಂದ ತೆರಹನು ಹುಟ್ಟಿದನು.
GEN 11:25 ನಾಹೋರನಿಂದ ತೆರಹನು ಹುಟ್ಟಿದ ಮೇಲೆ, ನಾಹೋರನು ನೂರ ಹತ್ತೊಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
GEN 11:26 ತೆರಹನು ಎಪ್ಪತ್ತು ವರ್ಷದವನಾಗಿದ್ದಾಗ, ಅವನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು.
GEN 11:27 ತೆರಹನ ವಂಶಾವಳಿ: ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
GEN 11:28 ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಸ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆ ತೆರಹನಿಗಿಂತ ಮೊದಲು ಸತ್ತನು.
GEN 11:29 ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾಳಿಗೂ ಇಸ್ಕಳಿಗೂ ತಂದೆ.
GEN 11:30 ಸಾರಯಳು ಬಂಜೆಯಾದದ್ದರಿಂದ ಆಕೆಗೆ ಮಕ್ಕಳಿರಲಿಲ್ಲ.
GEN 11:31 ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಕಾನಾನ್ ದೇಶಕ್ಕೆ ಹೋಗುವುದಕ್ಕಾಗಿ ಕಸ್ದೀಯರ ಊರ್ ಪಟ್ಟಣವನ್ನು ಬಿಟ್ಟು, ಹಾರಾನ್ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು.
GEN 11:32 ತೆರಹನು ಇನ್ನೂರ ಐದು ವರ್ಷ ಜೀವಿಸಿ, ಹಾರಾನಿನಲ್ಲಿ ಮರಣಹೊಂದಿದನು.
GEN 12:1 ಯೆಹೋವ ದೇವರು ಅಬ್ರಾಮನಿಗೆ ಹೀಗೆ ಹೇಳಿದರು, “ನೀನು ನಿನ್ನ ಸ್ವದೇಶದಿಂದಲೂ ಬಂಧುಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರಬಂದು, ನಾನು ನಿನಗೆ ತೋರಿಸುವ ನಾಡಿಗೆ ಹೋಗು.
GEN 12:2 “ನಾನು ನಿನ್ನನ್ನು ದೊಡ್ಡ ಜನಾಂಗದವನನ್ನಾಗಿ ಮಾಡಿ, ನಿನ್ನನ್ನು ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಸಿದ್ಧ ಮಾಡುವೆನು. ನೀನು ಆಶೀರ್ವಾದವಾಗಿ ಇರುವಿ.
GEN 12:3 ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು. ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು.”
GEN 12:4 ಆದ್ದರಿಂದ ಯೆಹೋವ ದೇವರು ತನಗೆ ಹೇಳಿದ ಪ್ರಕಾರ, ಅಬ್ರಾಮನು ಹೊರಟುಹೋದನು. ಲೋಟನು ಅವನೊಂದಿಗೆ ಹೋದನು. ಅಬ್ರಾಮನು ಹಾರಾನಿನಿಂದ ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.
GEN 12:5 ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ಸಹೋದರನ ಮಗ ಲೋಟನನ್ನೂ, ತಾವು ಕೂಡಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ, ಹಾರಾನಿನಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಜನರನ್ನೂ ತಮ್ಮ ಸಂಗಡ ಕರೆದುಕೊಂಡು ಕಾನಾನ್ ದೇಶಕ್ಕೆ ಸೇರಿದನು.
GEN 12:6 ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆ ಎಂಬ ಮಹಾವೃಕ್ಷದವರೆಗೆ ಪ್ರಯಾಣಮಾಡಿದನು. ಆಗ ಕಾನಾನ್ಯರು ಆ ದೇಶದಲ್ಲಿ ಇದ್ದರು.
GEN 12:7 ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನು ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು,” ಎಂದರು. ಆದ್ದರಿಂದ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿದನು.
GEN 12:8 ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು.
GEN 12:9 ಅಬ್ರಾಮನು ಪ್ರಯಾಣಮಾಡಿ, ನೆಗೆವ ಕಡೆಗೆ ಹೊರಟನು.
GEN 12:10 ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ, ಅಬ್ರಾಮನು ಈಜಿಪ್ಟಿನಲ್ಲಿ ಕೆಲವು ಸಮಯ ಇರಲು ಇಳಿದು ಹೋದನು. ಏಕೆಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು.
GEN 12:11 ಅವನು ಈಜಿಪ್ಟನ್ನು ಸಮೀಪಿಸುತ್ತಿದ್ದಾಗ, ತನ್ನ ಹೆಂಡತಿ ಸಾರಯಳಿಗೆ, “ನೀನು ನೋಡುವುದಕ್ಕೆ ರೂಪವತಿಯೆಂದು ನನಗೆ ತಿಳಿದಿದೆ.
GEN 12:12 ಹೀಗಿರುವುದರಿಂದ ಈಜಿಪ್ಟಿನವರು ನಿನ್ನನ್ನು ಕಂಡು, ‘ಈಕೆಯು ಅವನ ಹೆಂಡತಿ’ ಎಂದು ಹೇಳಿ, ನನ್ನನ್ನು ಕೊಂದುಹಾಕಿ, ನಿನ್ನನ್ನು ಉಳಿಸುವರು.
GEN 12:13 ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ, ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ದಯಮಾಡಿ ಹೇಳಬೇಕು,” ಎಂದು ಹೇಳಿದನು.
GEN 12:14 ಅಬ್ರಾಮನು ಈಜಿಪ್ಟಿಗೆ ಬಂದಾಗ, ಈಜಿಪ್ಟಿನವರು, ಆ ಸಾರಯಳು ಬಹಳ ಸುಂದರಿ ಎಂದುಕೊಂಡರು.
GEN 12:15 ಫರೋಹನ ಅಧಿಕಾರಿಗಳು ಆಕೆಯನ್ನು ನೋಡಿ, ಫರೋಹನ ಮುಂದೆ ಆಕೆಯನ್ನು ಹೊಗಳಿ, ಆ ಸ್ತ್ರೀಯನ್ನು ಅವನ ಅರಮನೆಗೆ ಕರೆದುಕೊಂಡು ಹೋದರು.
GEN 12:16 ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೆಯದನ್ನು ಮಾಡಿದನು. ಅವನಿಗೆ ಕುರಿ, ಎತ್ತು, ಕತ್ತೆಗಳೂ ದಾಸದಾಸಿಯರೂ ಹೆಣ್ಣು ಕತ್ತೆಗಳೂ ಒಂಟೆಗಳೂ ದೊರೆತವು.
GEN 12:17 ಆದರೆ ಯೆಹೋವ ದೇವರು ಫರೋಹನನ್ನೂ, ಅವನ ಮನೆಯನ್ನೂ ಅಬ್ರಾಮನ ಹೆಂಡತಿ ಸಾರಯಳಿಗಾಗಿ ಭಯಂಕರವಾದ ರೋಗಗಳಿಂದ ಬಾಧಿಸಿದರು.
GEN 12:18 ಅನಂತರ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿ ಎಂದು ಯಾಕೆ ನನಗೆ ತಿಳಿಸಲಿಲ್ಲ?
GEN 12:19 ‘ಆಕೆಯು ನನ್ನ ಸಹೋದರಿ,’ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವುದರಲ್ಲಿದ್ದೆನು. ಆದರೆ ಈಗ, ನಿನ್ನ ಹೆಂಡತಿ, ಈಕೆಯನ್ನು ನೀನು ಕರೆದುಕೊಂಡು ಹೋಗು,” ಎಂದನು.
GEN 12:20 ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಆಜ್ಞಾಪಿಸಲು, ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳುಹಿಸಿಬಿಟ್ಟನು.
GEN 13:1 ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ನೆಗೆವಕ್ಕೆ ಪ್ರಯಾಣಮಾಡಿದನು.
GEN 13:2 ಅಬ್ರಾಮನು ಪಶುಗಳು, ಬೆಳ್ಳಿ ಮತ್ತು ಬಂಗಾರವನ್ನು ಹೊಂದಿ ಬಹು ಧನವಂತನಾಗಿದ್ದನು.
GEN 13:3 ಅವನು ತನ್ನ ಪ್ರಯಾಣಗಳಲ್ಲಿ ನೆಗೆವದಿಂದ ಬೇತೇಲಿಗೆ, ಎಂದರೆ ಮೊದಲು ಬೇತೇಲಿಗೂ ಆಯಿ ಎಂಬ ಊರಿಗೂ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೆ ಬಂದನು.
GEN 13:4 ಅಲ್ಲಿ ಅಬ್ರಾಮನು ಯೆಹೋವ ದೇವರ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
GEN 13:5 ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು.
GEN 13:6 ಆಗ ಅವರು ಒಂದಾಗಿ ವಾಸಿಸಲಿಕ್ಕೆ ಆ ಸ್ಥಳ ಸಾಲದೆ ಹೋಯಿತು. ಅವರಿಬ್ಬರ ಸಂಪತ್ತು ಬಹಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ಅವರು ವಾಸವಾಗಿರಲು ಆಗಲಿಲ್ಲ.
GEN 13:7 ಆಗ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.
GEN 13:8 ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು.
GEN 13:9 ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು,” ಎಂದನು.
GEN 13:10 ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು.
GEN 13:11 ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು.
GEN 13:12 ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನಾದರೋ ಸಮತಟ್ಟಾದ ಊರುಗಳಲ್ಲಿ ವಾಸಿಸುತ್ತಾ ಸೊದೋಮಿನ ಬಳಿ ತನ್ನ ಗುಡಾರವನ್ನು ಹಾಕಿದನು.
GEN 13:13 ಸೊದೋಮಿನ ಜನರು ದುಷ್ಟರಾಗಿದ್ದರು ಮತ್ತು ಯೆಹೋವ ದೇವರ ವಿರುದ್ಧ ಬಹಳ ಪಾಪಮಾಡುತ್ತಿದ್ದರು.
GEN 13:14 ಲೋಟನು ಅಬ್ರಾಮನಿಂದ ಹೋದ ಮೇಲೆ ಯೆಹೋವ ದೇವರು ಅವನಿಗೆ, “ಈಗ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ಕಣ್ಣೆತ್ತಿ ನೋಡು.
GEN 13:15 ಏಕೆಂದರೆ ನೀನು ಕಾಣುವ ದೇಶವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
GEN 13:16 ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ, ನಿನ್ನ ಸಂತಾನದವರನ್ನು ಸಹ ಲೆಕ್ಕಿಸಲು ಸಾಧ್ಯವಾಗುವುದು.
GEN 13:17 ಎದ್ದು ದೇಶದ ಉದ್ದಗಲಕ್ಕೂ ನಡೆದಾಡು. ನಾನು ನಿನಗೆ ಅದನ್ನು ಕೊಡುವೆನು,” ಎಂದರು.
GEN 13:18 ಅನಂತರ ಅಬ್ರಾಮನು ತನ್ನ ಗುಡಾರವನ್ನು ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆಯ ತೋಪಿಗೆ ಬಂದು, ಅಲ್ಲಿ ವಾಸವಾಗಿದ್ದನು. ಅಲ್ಲಿ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.
GEN 14:1 ಶಿನಾರಿನ ಅರಸ ಅಮ್ರಾಫೆಲನು ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲಗೋಮರನು, ಗೋಯಿಮದ ಅರಸ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನೆಂದರೆ:
GEN 14:2 ಇವರು ಸೊದೋಮಿನ ಅರಸ ಬೆರಗನೂ ಗೊಮೋರದ ಅರಸ ಬಿರ್ಶಗನೂ ಅದ್ಮಾಹದ ಅರಸ ಶಿನಾಬನಿಗೂ ಚೆಬೋಯಿಮಿನ ಅರಸ ಶೆಮೇಬರನಿಗೂ ಬೆಲಗಿನ ಅಂದರೆ, ಚೋಗರದ ಅರಸನಿಗೂ ವಿರೋಧವಾಗಿ ಯುದ್ಧಮಾಡಿದರು.
GEN 14:3 ಇವರೆಲ್ಲರು ಉಪ್ಪಿನ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿಬಂದರು.
GEN 14:4 ಅವರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಸೇವೆಮಾಡಿ, ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು.
GEN 14:5 ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ, ಹಾಮಿನಲ್ಲಿ ಜೂಜ್ಯರನ್ನೂ, ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ,
GEN 14:6 ಅವರ ಬೆಟ್ಟವಾದ ಸೇಯೀರನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸಮೀಪವಾದ ಏಲ್ಪಾರಾನಿನವರೆಗೂ ಅವರನ್ನು ಸೋಲಿಸಿದರು.
GEN 14:7 ಅವರು ಹಿಂದಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು, ಅಮಾಲೇಕ್ಯರ ಎಲ್ಲಾ ಬಯಲನ್ನು ಹಜಜೋನ್ ತಾಮಾರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು.
GEN 14:8 ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಿಮಿನ ಅರಸನೂ ಚೋಗರೆಂಬ ಬೆಲಗದ ಅರಸನೂ ಹೊರಟು,
GEN 14:9 ಏಲಾಮಿನ ಅರಸ ಕೆದೊರ್ಲಗೋಮರನಿಗೂ ಗೋಯಿಮದ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸ ಅಮ್ರಾಫೆಲನಿಗೂ ಎಲ್ಲಸಾರಿನ ಅರಸ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಹೀಗೆ ನಾಲ್ವರು ಅರಸರಿಗೆ ವಿರೋಧವಾಗಿ ಐದು ಮಂದಿ ಅರಸರು ಎದುರಿಸಿದರು.
GEN 14:10 ಸಿದ್ದೀಮ್ ತಗ್ಗು ಕಲ್ಲರಗಿನ ಕೆಸರುಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗಿ ಅದರಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.
GEN 14:11 ಆಗ ಅವರು ಸೊದೋಮ್, ಗೊಮೋರಗಳ ಎಲ್ಲಾ ಸಂಪತ್ತನ್ನೂ, ಅವರ ಎಲ್ಲಾ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೊರಟು ಹೋದರು.
GEN 14:12 ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗ ಲೋಟನನ್ನು ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
GEN 14:13 ತಪ್ಪಿಸಿಕೊಂಡವನೊಬ್ಬನು ಹೋಗಿ ಹಿಬ್ರಿಯನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಆಗ ಅಬ್ರಾಮನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದ ಅಮೋರಿಯನಾದ ಮಮ್ರೆಯನ ತೋಪಿನಲ್ಲಿ ವಾಸವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
GEN 14:14 ತನ್ನ ಸಹೋದರನ ಮಗನು ಸೆರೆಯಾಗಿ ಹೋಗಿರುವುದನ್ನು ಕೇಳಿದಾಗ, ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ, ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ, ದಾನಿನವರೆಗೆ ಹಿಂದಟ್ಟಿದನು.
GEN 14:15 ಅಬ್ರಾಮನು ರಾತ್ರಿಯಲ್ಲಿ ಅವರಿಗೆ ವಿರೋಧವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ, ಅವರನ್ನು ಹೊಡೆದು, ದಮಸ್ಕದ ಉತ್ತರದಲ್ಲಿ ಹೋಬಾದವರೆಗೆ ಅವರನ್ನು ಸೋಲಿಸಿದನು.
GEN 14:16 ಆಸ್ತಿಯನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಬಂಧುವಾದ ಲೋಟನನ್ನೂ, ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತೆಗೆದುಕೊಂಡು ಬಂದನು.
GEN 14:17 ಅವನು ಕೆದೊರ್ಲಗೋಮರನನ್ನೂ, ಅವನ ಸಂಗಡ ಇದ್ದ ರಾಜರನ್ನೂ ಸೋಲಿಸಿ, ಹಿಂದಿರುಗಿ ಬಂದಾಗ, ಸೊದೋಮಿನ ಅರಸನು ಹೊರಟು ಶಾವೆ ತಗ್ಗು ಎಂಬ ಅರಸನ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಳ್ಳುವುದಕ್ಕಾಗಿ ಬಂದನು.
GEN 14:18 ಸಾಲೇಮಿನ ಅರಸ ಮೆಲ್ಕಿಜೆದೇಕನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಂದನು. ಇವನು ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು.
GEN 14:19 ಇವನು ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು: “ಅಬ್ರಾಮನು ಭೂಮಿ, ಆಕಾಶವನ್ನು ಸೃಷ್ಟಿಸಿದ ಮಹೋನ್ನತ ದೇವರಿಂದ ಆಶೀರ್ವಾದ ಹೊಂದಲಿ.
GEN 14:20 ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ದೇವರು ಸ್ತುತಿಹೊಂದಲಿ.” ಅಬ್ರಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನು.
GEN 14:21 ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿಕೊಂಡು ಬಂದ ಜನರನ್ನು ನನಗೆ ಕೊಡು. ಸಂಪತ್ತನ್ನು ನೀನು ತೆಗೆದುಕೋ,” ಎಂದನು.
GEN 14:22 ಅದಕ್ಕೆ ಅಬ್ರಾಮನು ಸೊದೋಮಿನ ಅರಸನಿಗೆ, “ಭೂಮಿ ಆಕಾಶವನ್ನು ಸ್ವಾಧೀನ ಪಡಿಸಿಕೊಂಡಿರುವ ಮಹೋನ್ನತ ದೇವರಾಗಿರುವ ಯೆಹೋವ ದೇವರ ಕಡೆಗೆ ನನ್ನ ಕೈ ಎತ್ತಿ ಪ್ರಮಾಣ ಮಾಡುತ್ತೇನೆ.
GEN 14:23 ನಿನಗೆ ಸೇರಿದ ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ’ ಎಂದು ನೀನು ಹೇಳಬಾರದು.
GEN 14:24 ನನ್ನ ಆಳುಗಳು ಊಟಮಾಡಿದ್ದು ಸಾಕು. ನನ್ನ ಸಂಗಡ ಬಂದ ಆನೇರ, ಎಷ್ಕೋಲ್ ಮತ್ತು ಮಮ್ರೆ ಎಂಬ ಈ ಜನರ ಪಾಲನ್ನು ಬಿಟ್ಟು ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮ ಪಾಲನ್ನು ತೆಗೆದುಕೊಳ್ಳಲಿ,” ಎಂದನು.
GEN 15:1 ಇವುಗಳಾದ ಮೇಲೆ ಯೆಹೋವ ದೇವರ ವಾಕ್ಯವು ಅಬ್ರಾಮನಿಗೆ ದರ್ಶನದಲ್ಲಿ ಉಂಟಾಗಿ ಹೇಳಿದ್ದೇನೆಂದರೆ: “ಅಬ್ರಾಮನೇ, ಭಯಪಡಬೇಡ. ನಾನು ನಿನಗೆ ಗುರಾಣಿಯಾಗಿದ್ದೇನೆ. ನಾನೇ ನಿನಗೆ ಅತ್ಯಧಿಕ ಬಹುಮಾನವಾಗಿದ್ದೇನೆ.”
GEN 15:2 ಅದಕ್ಕೆ ಅಬ್ರಾಮನು, “ಸಾರ್ವಭೌಮ ಯೆಹೋವ ದೇವರೇ, ಮಕ್ಕಳಿಲ್ಲದವನಾಗಿರುವ ನನಗೆ ಏನು ಕೊಡುವಿರಿ? ಈ ದಮಸ್ಕದ ಎಲೀಯೆಜೆರನಿಗೆ ನನ್ನ ಆಸ್ತಿ ಪಾಲಾಗಿಬಿಡುವುದು,” ಎಂದನು.
GEN 15:3 ಅನಂತರ ಅಬ್ರಾಮನು, “ನೀವು ನನಗೆ ಸಂತಾನವನ್ನು ಕೊಡಲಿಲ್ಲ. ನನ್ನ ಮನೆಯಲ್ಲಿರುವ ದಾಸನೇ ಉತ್ತರಾಧಿಕಾರಿಯಾಗಿರುವನು,” ಎಂದನು.
GEN 15:4 ಆಗ ಯೆಹೋವ ದೇವರ ವಾಕ್ಯವು, “ಈ ಮನುಷ್ಯನು ನಿನ್ನ ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದಲೇ ಹುಟ್ಟಿಬರುವ ನಿನ್ನ ಮಗನು ನಿನ್ನ ವಾರಸುದಾರನಾಗುವನು,” ಎಂದು ಹೇಳಿ,
GEN 15:5 ಯೆಹೋವ ದೇವರು ಅವನನ್ನು ಹೊರಗೆ ಕರೆದುಕೊಂಡು ಬಂದು, “ಈಗ ನೀನು ಆಕಾಶವನ್ನು ದೃಷ್ಟಿಸಿ, ನಕ್ಷತ್ರಗಳನ್ನು ಲೆಕ್ಕಿಸಲು ನಿನ್ನಿಂದಾದರೆ, ಲೆಕ್ಕಿಸು. ಅದರಂತೆಯೇ ನಿನ್ನ ಸಂತತಿಯು ಆಗುವುದು,” ಎಂದು ಹೇಳಿದರು.
GEN 15:6 ಅಬ್ರಾಮನು ಯೆಹೋವ ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು.
GEN 15:7 ದೇವರು ಅವನಿಗೆ, “ಈ ದೇಶವನ್ನು ಸೊತ್ತಾಗಿ ನಿನಗೆ ಕೊಡಲು, ಕಸ್ದೀಯರ ಊರ್ ಎಂಬ ಪ್ರದೇಶದಿಂದ ನಿನ್ನನ್ನು ಹೊರಗೆ ತಂದ ಯೆಹೋವ ದೇವರು ನಾನೇ,” ಎಂದು ಹೇಳಿದರು.
GEN 15:8 ಅದಕ್ಕೆ ಅವನು, “ಸಾರ್ವಭೌಮ ಯೆಹೋವ ದೇವರೇ ನಾನು ಅದನ್ನು ನನ್ನ ಸೊತ್ತಾಗಿ ಹೊಂದುವೆನೆಂದು ಯಾವುದರಿಂದ ತಿಳಿದುಕೊಳ್ಳಲಿ?” ಎಂದನು.
GEN 15:9 ಅದಕ್ಕೆ ಯೆಹೋವ ದೇವರು ಅಬ್ರಾಮನಿಗೆ, “ಮೂರು ವರ್ಷದ ಕಡಸನ್ನು, ಮೂರು ವರ್ಷದ ಮೇಕೆಯನ್ನು, ಮೂರು ವರ್ಷದ ಟಗರನ್ನು, ಒಂದು ಬೆಳವಕ್ಕಿಯನ್ನು, ಒಂದು ಪಾರಿವಾಳವನ್ನು ನನಗಾಗಿ ತೆಗೆದುಕೊಂಡು ಬಾ,” ಎಂದರು.
GEN 15:10 ಅನಂತರ ಅವನು ಇವುಗಳನ್ನೆಲ್ಲಾ ಯೆಹೋವ ದೇವರಿಗಾಗಿ ತೆಗೆದುಕೊಂಡು ಬಂದು ಎರಡೆರಡು ಹೋಳುಮಾಡಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು. ಆದರೆ ಅವನು ಪಕ್ಷಿಗಳನ್ನು ತುಂಡು ಮಾಡಲಿಲ್ಲ.
GEN 15:11 ರಣಹದ್ದುಗಳು ಆ ಶವಗಳ ಮೇಲೆ ಇಳಿದು ಬಂದಾಗ, ಅಬ್ರಾಮನು ಅವುಗಳನ್ನು ಓಡಿಸಿದನು.
GEN 15:12 ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತ್ತು. ಭೀಕರವಾದ ಕಾರ್ಗತ್ತಲು ಅವನ ಮೇಲೆ ಕವಿಯಿತು.
GEN 15:13 ಯೆಹೋವ ದೇವರು ಅಬ್ರಾಮನಿಗೆ, “ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು, ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು ಎಂಬುದನ್ನು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.
GEN 15:14 ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.
GEN 15:15 ನೀನಾದರೋ ಸಮಾಧಾನದಿಂದ ನಿನ್ನ ಪಿತೃಗಳ ಬಳಿಗೆ ಸೇರುವೆ. ಬಹಳ ಮುದಿ ಪ್ರಾಯದವನಾಗಿ ಮರಣಹೊಂದುವೆ.
GEN 15:16 ಆಗ ನಾಲ್ಕನೆಯ ಸಂತಾನದವರು ಇಲ್ಲಿಗೆ ತಿರುಗಿ ಬರುವರು. ಏಕೆಂದರೆ ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ,” ಎಂದು ಹೇಳಿದರು.
GEN 15:17 ಇದಾದ ಮೇಲೆ ಹೊತ್ತು ಮುಳುಗಿ ಕತ್ತಲಾಗುತ್ತಿರಲು, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.
GEN 15:18 ಅದೇ ದಿನದಲ್ಲಿ ಯೆಹೋವ ದೇವರು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಈಜಿಪ್ಟ್ ದೇಶದ ನದಿಯಿಂದ ಮಹಾನದಿ ಯೂಫ್ರೇಟೀಸ್ ನದಿಯವರೆಗೆ ವಾಸಿಸುವ
GEN 15:19 ಕೇನ್ಯರೂ ಕೆನಿಜ್ಜೀಯರೂ ಕದ್ಮೋನಿಯರೂ
GEN 15:20 ಹಿತ್ತಿಯರೂ ಪೆರಿಜೀಯರೂ ರೆಫಾಯರೂ
GEN 15:21 ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ಹೇಳಿದರು.
GEN 16:1 ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಹಾಗರಳೆಂಬ ಈಜಿಪ್ಟಿನ ದಾಸಿ ಇದ್ದಳು.
GEN 16:2 ಆಗ ಸಾರಯಳು ಅಬ್ರಾಮನಿಗೆ, “ನಾನು ಮಕ್ಕಳನ್ನು ಹೆರದಂತೆ ಯೆಹೋವ ದೇವರು ನನಗೆ ಅಡ್ಡಿ ಮಾಡಿದ್ದಾರೆ. ದಯಮಾಡಿ ನೀನು ನನ್ನ ದಾಸಿಯ ಬಳಿಗೆ ಹೋಗು. ಒಂದು ವೇಳೆ ನಾನು ಅವಳ ಮೂಲಕ ಕುಟುಂಬವನ್ನು ಕಟ್ಟಬಲ್ಲೆ,” ಎಂದಳು. ಅಬ್ರಾಮನು ಸಾರಯಳ ಮಾತನ್ನು ಕೇಳಿದನು.
GEN 16:3 ಅಬ್ರಾಮನು ಕಾನಾನ್ ದೇಶದಲ್ಲಿ ಹತ್ತು ವರ್ಷ ವಾಸಿಸಿದ ತರುವಾಯ, ಅಬ್ರಾಮನ ಹೆಂಡತಿಯಾದ ಸಾರಯಳು ಈಜಿಪ್ಟಿನವಳಾದ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.
GEN 16:4 ಅವನು ಹಾಗರಳನ್ನು ಕೂಡಿದನು. ಆಗ ಅವಳು ಗರ್ಭಿಣಿಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದಾಗ, ಅವಳು ತನ್ನ ಯಜಮಾನಿಯನ್ನು ತಿರಸ್ಕರಿಸಿದಳು.
GEN 16:5 ಸಾರಯಳು ಅಬ್ರಾಮನಿಗೆ, “ನನಗೆ ಆದ ಅನ್ಯಾಯಕ್ಕೆ ನೀನೇ ಹೊಣೆ. ನಾನು ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರಕ್ಕೆ ಯೋಗ್ಯಳಾದೆನು. ಯೆಹೋವ ದೇವರು ನಿನಗೂ ನನಗೂ ನ್ಯಾಯತೀರಿಸಲಿ,” ಎಂದಳು.
GEN 16:6 ಆದರೆ ಅಬ್ರಾಮನು ಸಾರಯಳಿಗೆ, “ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ. ನಿನ್ನ ಮನಸ್ಸಿಗೆ ಬಂದಂತೆ ಮಾಡು,” ಎಂದನು. ಆಗ ಸಾರಯಳು ಹಾಗರಳನ್ನು ಬಾಧಿಸಿದ್ದರಿಂದ, ಅವಳು ಸಾರಯಳಿಂದ ಓಡಿ ಹೋದಳು.
GEN 16:7 ಯೆಹೋವ ದೇವರ ದೂತನು ಮರುಭೂಮಿಯಲ್ಲಿ ಶೂರಿನ ಮಾರ್ಗವಾಗಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಹಾಗರಳನ್ನು ಕಂಡು,
GEN 16:8 “ಸಾರಯಳ ದಾಸಿ ಹಾಗರಳೇ, ನೀನು ಎಲ್ಲಿಂದ ಬಂದೆ? ನೀನು ಎಲ್ಲಿಗೆ ಹೋಗುತ್ತೀ?” ಎಂದು ವಿಚಾರಿಸಿದನು. ಅವಳು, “ನನ್ನ ಯಜಮಾನಿ ಸಾರಯಳನ್ನು ಬಿಟ್ಟು ಓಡಿ ಹೋಗುತ್ತಿದ್ದೇನೆ,” ಎಂದಳು.
GEN 16:9 ಯೆಹೋವ ದೇವರ ದೂತನು ಆಕೆಗೆ, “ನಿನ್ನ ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಆಕೆಗೆ ಅಧೀನಳಾಗಿರು,” ಎಂದನು.
GEN 16:10 ಇದಲ್ಲದೆ ಯೆಹೋವ ದೇವರ ದೂತನು ಅವಳಿಗೆ, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ಹೆಚ್ಚಿಸುತ್ತೇನೆ,” ಎಂದನು.
GEN 16:11 ಅನಂತರ ಯೆಹೋವ ದೇವರ ದೂತನು ಆಕೆಗೆ ಹೀಗೆ ಹೇಳಿದನು: “ನೀನು ಈಗ ಗರ್ಭಿಣಿಯಾಗಿರುವೆ, ಒಬ್ಬ ಮಗನನ್ನು ಹೆರುವೆ. ಅವನಿಗೆ, ಇಷ್ಮಾಯೇಲ್ ಎಂದು ಹೆಸರಿಡಬೇಕು. ಏಕೆಂದರೆ ಯೆಹೋವ ದೇವರು ನಿನ್ನ ವ್ಯಥೆಗೆ ಕಿವಿಗೊಟ್ಟಿದ್ದಾರೆ.
GEN 16:12 ಅವನು ಕಾಡುಕತ್ತೆಯಂತೆ ಇರುವನು. ಪ್ರತಿಯೊಬ್ಬರಿಗೂ ವಿರೋಧವಾಗಿ ಅವನು ಕೈ ಎತ್ತುವನು, ಪ್ರತಿಯೊಬ್ಬರ ಕೈಯೂ ಅವನ ವಿರೋಧವಾಗಿ ಇರುವುದು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು.”
GEN 16:13 ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವ ದೇವರಿಗೆ, “ನೀವು ನನ್ನನ್ನು ನೋಡುವ ದೇವರು,” ಎಂದು ಹೆಸರಿಟ್ಟಳು. ಏಕೆಂದರೆ, “ನನ್ನನ್ನು ನೋಡುವ ದೇವರನ್ನು ನಾನು ಇಲ್ಲಿ ನೋಡಿದೆ,” ಎಂದುಕೊಂಡಳು.
GEN 16:14 ಆದ್ದರಿಂದ ಆ ಬಾವಿಗೆ, ಬೇರ್ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
GEN 16:15 ತರುವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳ ಮಗನಿಗೆ ಅಬ್ರಾಮನು ಇಷ್ಮಾಯೇಲ್ ಎಂದು ಹೆಸರಿಟ್ಟನು.
GEN 16:16 ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ, ಅಬ್ರಾಮನು ಎಂಬತ್ತಾರು ವರ್ಷದವನಾಗಿದ್ದನು.
GEN 17:1 ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು.
GEN 17:2 ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು. ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ವೃದ್ಧಿಪಡಿಸುವೆನು,” ಎಂದು ಅವನಿಗೆ ಹೇಳಿದರು.
GEN 17:3 ಆಗ ಅಬ್ರಾಮನು ಸಾಷ್ಟಾಂಗ ನಮಸ್ಕಾರಮಾಡಿದನು. ದೇವರು ಅವನ ಸಂಗಡ ಮಾತನಾಡಿದ್ದೇನೆಂದರೆ:
GEN 17:4 “ನಾನಾದರೋ ಈ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ: ನೀನು ಅನೇಕ ರಾಷ್ಟ್ರಗಳಿಗೆ ತಂದೆಯಾಗಿರುವೆ.
GEN 17:5 ಇನ್ನು ಮುಂದೆ, ‘ಅಬ್ರಾಮ್’ ಎಂದು ನಿನಗೆ ಹೆಸರಿರುವುದಿಲ್ಲ. ನಿನ್ನ ಹೆಸರು, ‘ಅಬ್ರಹಾಮ’ ಎಂದು ಇರುವುದು. ಏಕೆಂದರೆ ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ.
GEN 17:6 ನಿನ್ನಿಂದ ಅನೇಕ ಜನಾಂಗಗಳೂ ಅರಸರೂ ಹುಟ್ಟುವರು.
GEN 17:7 ಇದಲ್ಲದೆ ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನು. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುವೆನು.
GEN 17:8 ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ತರುವಾಯ ನಿನ್ನ ಸಂತತಿಗೂ ಶಾಶ್ವತವಾದ ಸ್ವತ್ತನ್ನಾಗಿ ಕೊಟ್ಟು, ನಾನು ಅವರಿಗೆ ದೇವರಾಗಿರುವೆನು,” ಎಂದರು.
GEN 17:9 ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನೂ, ನಿನ್ನ ತರುವಾಯ ಬರುವ ನಿನ್ನ ಸಂತತಿಯವರೂ ತಲತಲಾಂತರಕ್ಕೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು.
GEN 17:10 ನೀನೂ, ನಿನ್ನ ತರುವಾಯ ನಿನ್ನ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ: ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು.
GEN 17:11 ನೀವು ಸುನ್ನತಿ ಮಾಡಿಸಿಕೊಳ್ಳುವುದು, ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತಾಗಿ ಇರುವುದು.
GEN 17:12 ನಿಮ್ಮ ಸಂತತಿಯವರಲ್ಲಿ ಪ್ರತಿಯೊಂದು ಗಂಡು ಮಗುವಿಗೂ ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು. ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಕ್ರಯಕ್ಕೆ ತೆಗೆದುಕೊಂಡವನಾಗಲಿ,
GEN 17:13 ಹೀಗೆ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ಕ್ರಯಕ್ಕೆ ತೆಗೆದುಕೊಂಡವನಿಗೂ ಸುನ್ನತಿಯಾಗಬೇಕು. ಈ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವುದನ್ನು ಸೂಚಿಸುವುದು.
GEN 17:14 ಸುನ್ನತಿ ಮಾಡಿಸಿಕೊಳ್ಳದವನು ನನ್ನ ಒಡಂಬಡಿಕೆಯನ್ನು ಮೀರಿದ ಕಾರಣ, ಅವನನ್ನು ಜನರೊಳಗಿಂದ ಬಹಿಷ್ಕರಿಸಬೇಕು,” ಎಂದರು.
GEN 17:15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಯಳ ವಿಷಯದಲ್ಲಾದರೋ, ಆಕೆಯನ್ನು ಸಾರಯಳೆಂದು ಕರೆಯಬೇಡ, ಅವಳ ಹೆಸರು, ‘ಸಾರಾ.’
GEN 17:16 ಆಕೆಯನ್ನು ನಾನು ಆಶೀರ್ವದಿಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಆಕೆಯು ಜನಾಂಗಗಳ ತಾಯಿಯಾಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ರಾಷ್ಟ್ರಗಳೂ ಅರಸರೂ ಹುಟ್ಟುವರು,” ಎಂದರು.
GEN 17:17 ಅಬ್ರಹಾಮನು ಅಡ್ಡಬಿದ್ದು ನಕ್ಕು, “ನೂರು ವರ್ಷದವನಿಗೆ ಮಗುವು ಹುಟ್ಟುವುದುಂಟೇ? ತೊಂಬತ್ತು ವರ್ಷದವಳಾದ ಸಾರಳು ಹೆರುವುದುಂಟೋ?” ಎಂದು ತನ್ನ ಹೃದಯದಲ್ಲಿ ಅಂದುಕೊಂಡನು.
GEN 17:18 ಅಬ್ರಹಾಮನು ದೇವರಿಗೆ, “ಇಷ್ಮಾಯೇಲನು ನಿನ್ನ ಆಶೀರ್ವಾದದಲ್ಲಿ ಬದುಕಲಿ,” ಎಂದನು.
GEN 17:19 ಅದಕ್ಕೆ ದೇವರು, “ನಿಶ್ಚಯವಾಗಿ ನಿನ್ನ ಹೆಂಡತಿ ಸಾರಳು ಮಗನನ್ನು ಹೆರುವಳು. ಅವನಿಗೆ, ‘ಇಸಾಕ್’ ಎಂದು ಹೆಸರಿಡಬೇಕು. ಅವನ ಸಂಗಡವೂ ಅವನ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡವೂ ನಾನು ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು.
GEN 17:20 ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ನಾನು ಅವನನ್ನು ಸಹ ಆಶೀರ್ವದಿಸುವೆನು. ಅವನನ್ನು ಅಭಿವೃದ್ಧಿ ಮಾಡಿ, ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು.
GEN 17:21 ಆದರೆ ಬರುವ ವರ್ಷ ಈ ಕಾಲದಲ್ಲಿ ಸಾರಳು ನಿನ್ನಿಂದ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸವೆನು,” ಎಂದು ಹೇಳಿದರು.
GEN 17:22 ಆಗ ದೇವರು ಅವನ ಸಂಗಡ ಮಾತನಾಡುವುದನ್ನು ಮುಗಿಸಿ, ಅಬ್ರಹಾಮನ ಬಳಿಯಿಂದ ಹೊರಟು ಹೋದರು.
GEN 17:23 ಅಬ್ರಹಾಮನು ತನ್ನ ಮಗ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರಿಗೂ ತಾನು ಕ್ರಯಕ್ಕೆ ತೆಗೆದುಕೊಂಡವರೆಲ್ಲರಿಗೂ ಹೀಗೆ ತನ್ನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ದೇವರು ತನಗೆ ಹೇಳಿದ ಹಾಗೆ, ಆ ದಿನವೇ ಸುನ್ನತಿ ಮಾಡಿಸಿದನು.
GEN 17:24 ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಬತ್ತೊಂಬತ್ತು ವರ್ಷದವನಾಗಿದ್ದನು.
GEN 17:25 ಅವನ ಮಗ ಇಷ್ಮಾಯೇಲನಿಗೆ ಸುನ್ನತಿಯಾದಾಗ, ಅವನು ಹದಿಮೂರು ವರ್ಷದವನಾಗಿದ್ದನು.
GEN 17:26 ಅಬ್ರಹಾಮನೂ ಅವನ ಮಗ ಇಷ್ಮಾಯೇಲನೂ ಅದೇ ದಿನದಲ್ಲಿ ಸುನ್ನತಿ ಮಾಡಿಸಿಕೊಂಡರು.
GEN 17:27 ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದವರಿಗೂ ಪರರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನ ಸಂಗಡವೇ ಸುನ್ನತಿ ಆಯಿತು.
GEN 18:1 ಯೆಹೋವ ದೇವರು ಮಮ್ರೆಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡರು. ಹಗಲಿನ ಬಿಸಿಲಿನಲ್ಲಿ ಅವನು ಡೇರೆಯ ಬಾಗಿಲಿನಲ್ಲಿ ಕುಳಿತುಕೊಂಡಿದ್ದನು.
GEN 18:2 ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು, ಮೂವರು ಪುರುಷರು ಹತ್ತಿರದಲ್ಲಿ ನಿಂತಿದ್ದರು. ಅವನು ಅವರನ್ನು ಕಂಡು ಅವರಿಗೆ ಎದುರಾಗಿ ಡೇರೆಯ ಬಾಗಿಲಿನಿಂದ ಓಡಿಬಂದು ನೆಲದವರೆಗೂ ಬಗ್ಗಿ ನಮಸ್ಕರಿಸಿದನು.
GEN 18:3 ಅಬ್ರಹಾಮನು ಅವರಿಗೆ, “ನನ್ನ ಸ್ವಾಮಿ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತಿದ್ದರೆ, ನಿಮ್ಮ ದಾಸನ ಬಳಿಯಿಂದ ಹೊರಟು ಹೋಗಬೇಡಿ.
GEN 18:4 ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ, ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ, ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
GEN 18:5 ನಾನು ಸ್ವಲ್ಪ ಆಹಾರವನ್ನು ತರುತ್ತೇನೆ. ತರುವಾಯ ನೀವು ಮುಂದೆ ಹೊರಟು ಹೋಗಬಹುದು. ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ,” ಎಂದು ಬೇಡಿಕೊಂಡನು. ಅದಕ್ಕೆ ಅವರು, “ನೀನು ಹೇಳಿದಂತೆಯೇ ಮಾಡು,” ಎಂದರು.
GEN 18:6 ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ, “ಬೇಗನೇ ಮೂರು ಸೇರು ನಯವಾದ ಹಿಟ್ಟು ನಾದಿ, ಒಲೆಯ ಮೇಲೆ ರೊಟ್ಟಿಗಳನ್ನು ಮಾಡು,” ಎಂದನು.
GEN 18:7 ಅಬ್ರಹಾಮನು ದನದ ಮಂದೆಯ ಬಳಿಗೆ ಓಡಿಹೋಗಿ, ಒಳ್ಳೆಯ ಕರುವನ್ನು ತೆಗೆದುಕೊಂಡು ಒಬ್ಬ ಸೇವಕನಿಗೆ ಕೊಟ್ಟನು. ಆ ಸೇವಕನು ಬೇಗನೆ ಅಡಿಗೆಯನ್ನು ಸಿದ್ಧಪಡಿಸಿದನು.
GEN 18:8 ತರುವಾಯ ಮೊಸರನ್ನೂ, ಹಾಲನ್ನೂ, ಪಕ್ವಮಾಡಿದ ಮಾಂಸವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು. ಅವನಾದರೋ ಮರದ ಕೆಳಗೆ ಅವರ ಹತ್ತರ ನಿಂತುಕೊಂಡನು. ಅವರು ಊಟಮಾಡಿದರು.
GEN 18:9 ಅವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಕೇಳಲು, ಅವನು, “ಇಗೋ, ಡೇರೆಯಲ್ಲಿದ್ದಾಳೆ,” ಎಂದನು.
GEN 18:10 ಆಗ ಆ ಮೂವರಲ್ಲಿ ಒಬ್ಬರು, “ಬರುವ ವರ್ಷ ಇದೇ ಸಮಯದಲ್ಲಿ ನಾನು ನಿಶ್ಚಯವಾಗಿ ತಿರುಗಿ ನಿನ್ನ ಬಳಿಗೆ ಬರುವೆನು. ಆಗ ನಿನ್ನ ಹೆಂಡತಿ ಸಾರಳಿಗೆ ಒಬ್ಬ ಮಗನಿರುವನು,” ಎಂದನು. ಸಾರಳು ಅವರ ಹಿಂದೆ ಇದ್ದ ಡೇರೆಯ ಬಾಗಿಲಲ್ಲಿದ್ದು ಅದನ್ನು ಕೇಳಿಸಿಕೊಂಡಳು.
GEN 18:11 ಅಬ್ರಹಾಮನೂ ಸಾರಳೂ ವಯಸ್ಸಾಗಿ, ಮುದುಕರಾಗಿದ್ದರು. ಸಾರಳಿಗೆ ಮಗುವನ್ನು ಹೆರುವ ಕಾಲ ಮುಗಿದು ಹೋಗಿತ್ತು.
GEN 18:12 ಆದ್ದರಿಂದ ಸಾರಳು ತನ್ನೊಳಗೆ ನಕ್ಕು, “ನಾನು ವೃದ್ಧಳಾಗಿದ್ದೇನೆ, ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರುವಲ್ಲಿ ನನ್ನಿಂದ ಮಗುವನ್ನು ಹೆರುವದಾದೀತೇ?” ಎಂದುಕೊಂಡಳು.
GEN 18:13 ಆಗ ಯೆಹೋವ ದೇವರು ಅಬ್ರಹಾಮನಿಗೆ, “ನಾನು ಮುದಿಪ್ರಾಯದವಳಾಗಿ ಮಗುವನ್ನು ಹೆರುವುದು ನಿಜವೋ? ಎಂದುಕೊಂಡು ಸಾರಳು ಏಕೆ ನಕ್ಕಳು?
GEN 18:14 ಯೆಹೋವ ದೇವರಿಗೆ ಅಸಾಧ್ಯವಾದದ್ದು ಯಾವುದಾದರೂ ಇದೆಯೋ? ಬರುವ ವರ್ಷ ಇದೇ ಸಮಯದಲ್ಲಿ ನಾನು ತಿರುಗಿ ನಿನ್ನ ಬಳಿಗೆ ಬರುವೆನು. ಆಗ ಸಾರಳಿಗೆ ಒಬ್ಬ ಮಗನಿರುವನು,” ಎಂದರು.
GEN 18:15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ,” ಎಂದು ಹೇಳಿ ಸುಳ್ಳಾಡಿದಾಗ, ದೇವರು, “ನೀನು ನಕ್ಕದ್ದು ನಿಜ,” ಎಂದರು.
GEN 18:16 ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಕಳುಹಿಸಿಕೊಡುವುದಕ್ಕೆ ಅವರ ಸಂಗಡ ಹೋದನು.
GEN 18:17 ಆಗ ಯೆಹೋವ ದೇವರು, “ನಾನು ಮಾಡುವುದನ್ನು ಅಬ್ರಹಾಮನಿಗೆ ಮರೆಮಾಡಲೋ?
GEN 18:18 ಅಬ್ರಹಾಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗವಾಗುವನು, ಅವನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು.
GEN 18:19 ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು.
GEN 18:20 ಇದಲ್ಲದೆ ಯೆಹೋವ ದೇವರು, “ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿದೆ. ಅವರ ಪಾಪವೂ ಘೋರವಾಗಿದೆ.
GEN 18:21 ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಆ ಊರಿನವರ ಕೂಗಿನ ಪ್ರಕಾರವೇ, ಅವರು ಮಾಡಿದ್ದಾರೋ, ಇಲ್ಲವೋ, ಎಂದು ನೋಡಿ ತಿಳಿದುಕೊಳ್ಳುವೆನು,” ಎಂದುಕೊಂಡರು.
GEN 18:22 ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು, ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಯೆಹೋವ ದೇವರ ಮುಂದೆ ನಿಂತುಕೊಂಡಿದ್ದನು.
GEN 18:23 ಆಗ ಅಬ್ರಹಾಮನು ಹತ್ತಿರ ಬಂದು, “ದುಷ್ಟರ ಜೊತೆ ನೀತಿವಂತರನ್ನೂ ನಾಶಮಾಡುವಿರೋ?
GEN 18:24 ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ, ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ?
GEN 18:25 ಈ ರೀತಿಯಾಗಿ ನೀತಿವಂತರಿಗೂ ದುಷ್ಟರಿಗೂ ಭೇದ ಮಾಡದೆ, ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವುದು ನಿಮ್ಮಿಂದ ಎಂದಿಗೂ ಆಗಬಾರದು. ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿರುವ ತಾವು ನ್ಯಾಯವಾದದ್ದನ್ನೇ ಮಾಡಬೇಕಲ್ಲವೇ?” ಎಂದನು.
GEN 18:26 ಅದಕ್ಕೆ ಯೆಹೋವ ದೇವರು, “ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ, ಅವರಿಗೋಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು,” ಎಂದರು.
GEN 18:27 ಆಗ ಅಬ್ರಹಾಮನು, “ಇಗೋ, ಮಣ್ಣೂ, ಬೂದಿಯೂ ಆಗಿರುವ ನಾನು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ.
GEN 18:28 ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ, ಆ ಐದು ಮಂದಿ ಇಲ್ಲದ್ದರಿಂದ ಪಟ್ಟಣವನ್ನು ನಾಶಮಾಡುವಿರೋ?” ಎಂದು ಕೇಳಿದನು. ಅದಕ್ಕೆ ದೇವರು, “ನಲವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವುದಿಲ್ಲ,” ಎಂದರು.
GEN 18:29 ಅಬ್ರಹಾಮನು ದೇವರ ಸಂಗಡ ಇನ್ನೂ ಮಾತನಾಡಿ, “ಅಲ್ಲಿ ನಲವತ್ತು ಮಂದಿ ದೊರೆತರೆ, ಏನು ಮಾಡುವಿರಿ?” ಎನ್ನಲು, ಅದಕ್ಕೆ ದೇವರು, “ನಲವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವುದಿಲ್ಲ,” ಎಂದರು.
GEN 18:30 ಅವನು, “ಯೆಹೋವ ದೇವರಿಗೆ ಕೋಪಬಾರದೆ ಇರಲಿ, ನಾನು ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಇದ್ದರೆ,” ಎಂದಾಗ, ದೇವರು, “ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ, ನಾಶಮಾಡುವುದಿಲ್ಲ,” ಎಂದರು.
GEN 18:31 ಅವನು, “ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಬಂದಿದ್ದೇನೆ. ಒಂದು ವೇಳೆ ಇಪ್ಪತ್ತು ಮಂದಿ ಸಿಕ್ಕಿದರೆ ಏನು ಮಾಡುವಿರಿ?” ಎಂದನು. ಅದಕ್ಕೆ ದೇವರು, “ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು.
GEN 18:32 ಆಗ ಅವನು, “ಯೆಹೋವ ದೇವರೇ, ನಿಮಗೆ ಕೋಪಬಾರದೆ ಇರಲಿ. ಇನ್ನು ಒಂದೇ ಸಾರಿ ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಿದರೆ,” ಎಂದಾಗ, ದೇವರು, “ಹತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು.
GEN 18:33 ಯೆಹೋವ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿದ ಕೂಡಲೆ ಹೊರಟು ಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.
GEN 19:1 ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ, ಲೋಟನು ಸೊದೋಮಿನ ಬಾಗಿಲಲ್ಲಿ ಕುಳಿತಿದ್ದನು. ಲೋಟನು ಅವರನ್ನು ಎದುರುಗೊಳ್ಳುವುದಕ್ಕೆ ಎದ್ದು ನೆಲದವರೆಗೆ ಬಾಗಿ,
GEN 19:2 “ಸ್ವಾಮಿಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ತಂಗಿ, ರಾತ್ರಿ ಕಳೆಯಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ. ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು,” ಎಂದು ಬೇಡಿಕೊಂಡನು. ಅದಕ್ಕೆ ಅವರು, “ಹಾಗಲ್ಲ, ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ,” ಎಂದರು.
GEN 19:3 ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ, ಅವರು ತಿರುಗಿಬಂದು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿದನು. ಅವರು ಊಟಮಾಡಿದರು.
GEN 19:4 ಆದರೆ ಅವರು ಮಲಗುವುದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರವರೆಗೆ ಎಲ್ಲಾ ಜನರೂ ಪ್ರತಿಯೊಂದು ಮೂಲೆಯಿಂದ ಕೂಡಿ, ಮನೆಯನ್ನು ಸುತ್ತಿಕೊಂಡರು.
GEN 19:5 ಅವರು ಲೋಟನನ್ನು ಕರೆದು, “ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಕರೆದುಕೊಂಡು ಬಾ, ಅವರೊಡನೆ ಸಂಭೋಗಿಸಬೇಕು,” ಎಂದು ಹೇಳಿದರು.
GEN 19:6 ಆಗ ಲೋಟನು ಅವರ ಬಳಿಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು,
GEN 19:7 “ನನ್ನ ಸಹೋದರರೇ, ಈ ದುಷ್ಟತನವನ್ನು ಮಾಡಬೇಡಿರಿ.
GEN 19:8 ಗಂಡಸರನ್ನು ಅರಿಯದ ಇಬ್ಬರು ಪುತ್ರಿಯರು ನನಗೆ ಇದ್ದಾರೆ. ಅವರನ್ನು ನಿಮ್ಮ ಬಳಿಗೆ ಕರೆ ತರುವೆನು. ನಿಮ್ಮ ದೃಷ್ಟಿಗೆ ಒಳ್ಳೆಯದೆಂದು ಕಾಣುವ ಹಾಗೆ ನೀವು ಅವರಿಗೆ ಮಾಡಿರಿ. ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ. ಏಕೆಂದರೆ ಅವರು ನನ್ನ ಮನೆಯ ಆಶ್ರಯಕ್ಕೆ ಬಂದಿದ್ದಾರೆ,” ಎಂದು ಬೇಡಿಕೊಂಡನು.
GEN 19:9 ಆದರೆ ಅವರು, “ಹಿಂದಕ್ಕೆ ಸರಿ,” ಎಂದು ಹೇಳಿ, “ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿಯಾಗಲು ಯತ್ನಿಸುತ್ತಿದ್ದಾನೆ. ಈಗ ನಿನಗೆ ಅವರಿಗಿಂತ ಹೆಚ್ಚು ಕೇಡು ಮಾಡುತ್ತೇವೆ,” ಎಂದರು. ಅವರು ಲೋಟನನ್ನು ಬಲವಾಗಿ ತುಳಿದು, ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
GEN 19:10 ಆಗ ಲೋಟನ ಮನೆಗೆ ಬಂದಿದ್ದ ಆ ದೂತರಿಬ್ಬರು ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಒಳಕ್ಕೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು.
GEN 19:11 ಬಾಗಿಲಲ್ಲಿದ್ದವರನ್ನು ಕಿರಿಯರಿಂದ ಹಿರಿಯರವರೆಗೆ ಕುರುಡಾಗುವಂತೆ ಮಾಡಿದರು. ಆಗ ಆ ಊರಿನವರು ಬಾಗಿಲನ್ನು ಕಂಡುಕೊಳ್ಳದೆ ಬೇಸರಗೊಂಡರು.
GEN 19:12 ಆ ದೂತರಿಬ್ಬರು ಲೋಟನಿಗೆ, “ಇಲ್ಲಿ ನಿನಗೆ ಇನ್ನೂ ಯಾರಾದರೂ ಇದ್ದಾರೋ? ನಿನ್ನ ಅಳಿಯಂದಿರನ್ನೂ, ನಿನ್ನ ಪುತ್ರರನ್ನೂ, ಪುತ್ರಿಯರನ್ನೂ, ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಈ ಸ್ಥಳದಿಂದ ಹೊರಗೆ ಕರೆದುಕೊಂಡು ಬಾ.
GEN 19:13 ಏಕೆಂದರೆ ಈ ಸ್ಥಳದವರ ಕೂಗು ಯೆಹೋವ ದೇವರ ಸನ್ನಿಧಿಯಲ್ಲಿ ದೊಡ್ಡದಾಗಿರುವುದರಿಂದ ನಾವು ಇದನ್ನು ನಾಶ ಮಾಡುತ್ತೇವೆ. ಯೆಹೋವ ದೇವರು ನಮ್ಮನ್ನು ಕಳುಹಿಸಿದ್ದಾರೆ.”
GEN 19:14 ಆಗ ಲೋಟನು ಹೊರಟುಹೋಗಿ, ತನ್ನ ಪುತ್ರಿಯರನ್ನು ಗೊತ್ತುಮಾಡಿದ್ದ ಅಳಿಯಂದಿರ ಸಂಗಡ ಮಾತನಾಡಿ, “ಎದ್ದು ಈ ಸ್ಥಳದಿಂದ ಹೊರಡಿರಿ. ಏಕೆಂದರೆ ಯೆಹೋವ ದೇವರು ಈ ಪಟ್ಟಣವನ್ನು ನಾಶಮಾಡುವುದಕ್ಕಿದ್ದಾರೆ,” ಎಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಪರಿಹಾಸ್ಯಮಾಡುವಂತೆ ಕಾಣಿಸಿದನು.
GEN 19:15 ಸೂರ್ಯೋದಯವಾಗುವ ಮೊದಲು ದೂತರು ಲೋಟನನ್ನು ತ್ವರೆಪಡಿಸಿ, “ಈ ಪಟ್ಟಣಕ್ಕೆ ಉಂಟಾಗುವ ದಂಡನೆಯಿಂದ ನೀನು ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಪುತ್ರಿಯರನ್ನೂ ಕರೆದುಕೊಂಡು ನಡೆ,” ಎಂದರು.
GEN 19:16 ಅವರು ತಡಮಾಡಿದಾಗ ಯೆಹೋವ ದೇವರು ಅವನನ್ನು ಕನಿಕರಿಸಿದ್ದರಿಂದ, ಆ ದೂತರು ಅವನ ಕೈಯನ್ನೂ, ಅವನ ಹೆಂಡತಿಯ ಕೈಯನ್ನೂ, ಅವನ ಇಬ್ಬರು ಪುತ್ರಿಯರ ಕೈಗಳನ್ನೂ ಹಿಡಿದು, ಅವರನ್ನು ಪಟ್ಟಣದ ಹೊರಗೆ ತಂದುಬಿಟ್ಟರು.
GEN 19:17 ಅವರನ್ನು ಹೊರಗೆ ತಂದಮೇಲೆ ಅವರಲ್ಲಿ ಒಬ್ಬನು, “ಹಿಂದಕ್ಕೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ. ನೀನು ನಾಶವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗು,” ಎಂದನು.
GEN 19:18 ಅದಕ್ಕೆ ಲೋಟನು, “ಸ್ವಾಮಿ, ಅದು ನನ್ನಿಂದಾಗದು.
GEN 19:19 ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ದಯೆ ದೊಡ್ಡದು. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗಲಾರೆನು, ನನಗೆ ವಿಪತ್ತು ಉಂಟಾಗಿ ಸತ್ತೇನು.
GEN 19:20 ಆ ಪಟ್ಟಣವನ್ನು ನೋಡಿರಿ. ನಾನು ಅಲ್ಲಿಗೆ ಓಡಿಹೋಗಲು ಸಮೀಪವಾಗಿದೆ ಮತ್ತು ಅದು ಸಣ್ಣದು. ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುತ್ತೇನೆ. ಇದರಿಂದ ನನ್ನ ಪ್ರಾಣವು ಉಳಿಯುವುದು,” ಎಂದನು.
GEN 19:21 ದೂತನು ಅವನಿಗೆ, “ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ. ನೋಡು, ನೀನು ಹೇಳಿದ ಆ ಊರನ್ನು ನಾನು ಕೆಡವಿ ಹಾಕುವುದಿಲ್ಲ.
GEN 19:22 ಬೇಗನೆ ತಪ್ಪಿಸಿಕೊಂಡು ಅಲ್ಲಿಗೆ ಹೋಗು, ಏಕೆಂದರೆ ನೀನು ಅಲ್ಲಿ ಸೇರುವ ತನಕ ನಾನೇನೂ ಮಾಡಲಾರೆನು,” ಎಂದನು. ಆದ್ದರಿಂದ ಆ ಊರಿಗೆ ಚೋಗರ್ ಎಂದು ಹೆಸರಾಯಿತು.
GEN 19:23 ಲೋಟನು ಚೋಗರಿಗೆ ಬಂದಾಗ ಸೂರ್ಯೋದಯವಾಗಿತ್ತು.
GEN 19:24 ಆಗ ಯೆಹೋವ ದೇವರು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ, ಬೆಂಕಿಯನ್ನೂ ಆಕಾಶದಿಂದ ಸುರಿಸಿದರು.
GEN 19:25 ಹೀಗೆ ದೇವರು ಆ ಪಟ್ಟಣಗಳನ್ನೂ, ಅಲ್ಲಿಯ ಪ್ರದೇಶವನ್ನೂ, ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ, ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಅಳಿಸಿಬಿಟ್ಟರು.
GEN 19:26 ಆದರೆ ಲೋಟನ ಹಿಂದೆ ಬರುತ್ತಿದ್ದ ಅವನ ಹೆಂಡತಿಯು ಹಿಂದಿರುಗಿ ನೋಡಿ ಉಪ್ಪಿನ ಸ್ತಂಭವಾದಳು.
GEN 19:27 ಅಬ್ರಹಾಮನು ಬೆಳಿಗ್ಗೆ ಎದ್ದು, ತಾನು ಯೆಹೋವ ದೇವರ ಸನ್ನಿಧಿಯಲ್ಲಿ ನಿಂತಿದ್ದ ಆ ಸ್ಥಳಕ್ಕೆ ಹೋದನು.
GEN 19:28 ಅವನು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶಗಳ ಕಡೆಗೂ ನೋಡಿದನು. ಆ ಪ್ರದೇಶದಿಂದ ಹೊಗೆಯು ಕುಲುಮೆಯ ಹೊಗೆಯಂತೆ ಏರುತ್ತಿತ್ತು.
GEN 19:29 ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ, ಲೋಟನು ವಾಸವಾಗಿದ್ದ ಪಟ್ಟಣಗಳನ್ನು ನಾಶಮಾಡಿದರು. ಆದರೆ ಅಬ್ರಹಾಮನನ್ನು ಜ್ಞಾಪಕಮಾಡಿಕೊಂಡು, ಲೋಟನನ್ನು ಹೊರಗೆ ಕಳುಹಿಸಿ ಪಾರು ಮಾಡಿದರು.
GEN 19:30 ಲೋಟನು ಚೋಗರಿನಲ್ಲಿ ವಾಸಿಸಲು ಭಯಪಟ್ಟು, ತನ್ನ ಇಬ್ಬರು ಪುತ್ರಿಯರ ಸಂಗಡ ಬೆಟ್ಟದ ಮೇಲೆ ಹೋಗಿ ವಾಸಮಾಡಿದನು. ಅಲ್ಲಿ ಅವನೂ ಅವನ ಇಬ್ಬರು ಪುತ್ರಿಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.
GEN 19:31 ಆಗ ಹಿರಿಯ ಮಗಳು ಚಿಕ್ಕವಳಿಗೆ, “ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮೊಂದಿಗಿರಲು ನಮ್ಮ ಸುತ್ತಲಿನ ಪ್ರದೇಶದಲ್ಲಿ ಪುರುಷರಿಲ್ಲ.
GEN 19:32 ಆದ್ದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ನಾವು ಅವನ ಸಂಗಡ ಮಲಗಿಕೊಳ್ಳೋಣ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
GEN 19:33 ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಹಿರಿಯ ಮಗಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
GEN 19:34 ಮರುದಿನ ಹಿರಿಯವಳು ಚಿಕ್ಕವಳಿಗೆ, “ಕಳೆದ ರಾತ್ರಿ ತಂದೆಯ ಸಂಗಡ ನಾನು ಮಲಗಿಕೊಂಡೆನು. ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ, ನೀನು ಹೋಗಿ ಅವನ ಸಂಗಡ ಮಲಗಿಕೋ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
GEN 19:35 ಹಾಗೆ ಆ ರಾತ್ರಿಯಲ್ಲಿಯೂ ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಚಿಕ್ಕವಳು ಎದ್ದು, ಅವನ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
GEN 19:36 ಈ ಪ್ರಕಾರ ಲೋಟನ ಇಬ್ಬರು ಪುತ್ರಿಯರು ತಮ್ಮ ತಂದೆಯಿಂದ ಗರ್ಭಿಣಿಯರಾದರು.
GEN 19:37 ಹಿರಿಯ ಮಗಳು ಮಗನನ್ನು ಹೆತ್ತು, ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗಿನ ಮೋವಾಬ್ಯರಿಗೂ ಇವನೇ ತಂದೆ.
GEN 19:38 ಚಿಕ್ಕವಳು ಸಹ ಮಗನನ್ನು ಹೆತ್ತು, ಅವನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗಿನ ಅಮ್ಮೋನಿಯರಿಗೂ ಇವನೇ ತಂದೆ.
GEN 20:1 ಅಬ್ರಹಾಮನು ಅಲ್ಲಿಂದ ನೆಗೆವ ಕಡೆಗೆ ಕಾದೇಶಿಗೆ ಪ್ರಯಾಣಮಾಡಿ, ಕಾದೇಶ್ ಹಾಗೂ ಶೂರಿನ ಮಧ್ಯದ ಗೆರಾರಿನಲ್ಲಿ ಸ್ವಲ್ಪಕಾಲ ಪ್ರವಾಸಿಯಾಗಿದ್ದನು.
GEN 20:2 ಗೆರಾರಿನಲ್ಲಿ ಅಬ್ರಹಾಮನು ತನ್ನ ಹೆಂಡತಿ ಸಾರಳ ವಿಷಯವಾಗಿ, “ಅವಳು ನನ್ನ ತಂಗಿ,” ಎಂದು ಹೇಳಿದ್ದನು. ಆದ್ದರಿಂದ ಗೆರಾರಿನ ಅರಸ ಅಬೀಮೆಲೆಕನು ಸಾರಳನ್ನು ಕರೆಯಿಸಿ ತನ್ನ ಅರಮನೆಗೆ ತೆಗೆದುಕೊಂಡನು.
GEN 20:3 ಆದರೆ ದೇವರು ಅಬೀಮೆಲೆಕನಿಗೆ ರಾತ್ರಿಯ ಕನಸಿನಲ್ಲಿ ಬಂದು, “ನೀನು ಆ ಸ್ರೀಯನ್ನು ತೆಗೆದುಕೊಂಡ ಕಾರಣ ಸಾಯತಕ್ಕವನಾಗಿದ್ದಿ, ಏಕೆಂದರೆ ಆಕೆಯು ಆ ಮನುಷ್ಯನ ಹೆಂಡತಿ,” ಎಂದು ಅವನಿಗೆ ಹೇಳಿದರು.
GEN 20:4 ಆದರೆ ಅಬೀಮೆಲೆಕನು ಆಕೆಯ ಸಮೀಪಕ್ಕೆ ಬಂದಿರಲಿಲ್ಲ. ಆದ್ದರಿಂದ ಅವನು, “ಪ್ರಭುವೇ, ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ?
GEN 20:5 ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು.
GEN 20:6 ಅದಕ್ಕೆ ದೇವರು ಕನಸಿನಲ್ಲಿ ಅವನಿಗೆ, “ಹೌದು, ನೀನು ಇದನ್ನು ಯಥಾರ್ಥವಾದ ಹೃದಯದಿಂದಲೇ ಮಾಡಿದ್ದೀಯೆ ಎಂದು ನನಗೂ ತಿಳಿದಿದೆ. ಆದ್ದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು, ಆಕೆಯನ್ನು ಮುಟ್ಟಗೊಡಿಸಲಿಲ್ಲ.
GEN 20:7 ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸಿಬಿಡು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವಂತೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ, ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ,” ಎಂದರು.
GEN 20:8 ಅಬೀಮೆಲೆಕನು ಬೆಳಿಗ್ಗೆ ಎದ್ದು, ತನ್ನ ಸೇವಕರೆಲ್ಲರನ್ನೂ ಕರೆದು, ಇವುಗಳನ್ನೆಲ್ಲಾ ಅವರಿಗೆ ಹೇಳಿದನು. ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು.
GEN 20:9 ಅಬೀಮೆಲೆಕನು ಅಬ್ರಹಾಮನನ್ನು ಕರೆದು ಅವನಿಗೆ, “ನೀನು ನಮಗೆ ಮಾಡಿದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಿನಗೆ ನಾನು ಏನು ಅಪರಾಧ ಮಾಡಿದ್ದೇನೆ? ನೀನು ನನಗೆ ಮಾಡಬಾರದ ಕೆಲಸಗಳನ್ನು ಮಾಡಿದ್ದೀಯೆ,” ಎಂದನು.
GEN 20:10 ಇದಲ್ಲದೆ ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಹೀಗೆ ಮಾಡಿದ ಕಾರಣವೇನು?” ಎಂದು ವಿಚಾರಿಸಿದನು.
GEN 20:11 ಅದಕ್ಕೆ ಅಬ್ರಹಾಮನು, “ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ನೆನಸಿದೆನು.
GEN 20:12 ಇದಲ್ಲದೆ ನಿಜವಾಗಿಯೂ ಅವಳು ನನ್ನ ತಂಗಿ, ಆದರೆ ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ, ನನಗೆ ಹೆಂಡತಿಯಾದಳು.
GEN 20:13 ದೇವರು ನನ್ನ ತಂದೆಯ ಮನೆಯೊಳಗಿಂದ ನನ್ನನ್ನು ದೇಶಾಂತರಕ್ಕೆ ಕರೆದಾಗ, ನಾನು ಅವಳಿಗೆ, ನೀನು ನನಗೆ ತೋರಿಸತಕ್ಕ ದಯೆಯು ಯಾವುದೆಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ, ‘ಇವನು ನನ್ನ ಅಣ್ಣ,’ ಎಂದು ಹೇಳು ಎಂದು ತಿಳಿಸಿದೆನು,” ಎಂದನು.
GEN 20:14 ಆಗ ಅಬೀಮೆಲೆಕನು ಕುರಿಗಳನ್ನೂ ಎತ್ತುಗಳನ್ನೂ ದಾಸರನ್ನೂ ದಾಸಿಯರನ್ನೂ ತೆಗೆದುಕೊಂಡು ಅಬ್ರಹಾಮನಿಗೆ ಕೊಟ್ಟು, ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿಕೊಟ್ಟನು.
GEN 20:15 ಅಬೀಮೆಲೆಕನು, “ನನ್ನ ದೇಶವು ನಿನ್ನ ಮುಂದೆ ಇದೆ, ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು,” ಎಂದನು.
GEN 20:16 ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣವನ್ನು ಕೊಟ್ಟಿದ್ದೇನೆ. ನೋಡು, ನಡೆದ ಘಟನೆಗೆ ಇದು ಪ್ರಾಯಶ್ಚಿತ್ತವಾಗಿದೆ. ನಿನ್ನ ಸಂಗಡ ಇರುವವರೆಲ್ಲರಿಗೂ ಉಳಿದವರೆಲ್ಲರಿಗೂ ನೀನು ನಿರ್ದೋಷಿಯೆಂದು ಇದು ಸಾಕ್ಷಿಯಾಗಿರಲಿ,” ಎಂದನು.
GEN 20:17 ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆಮಾಡಿದನು. ದೇವರು ಅಬೀಮೆಲೆಕನನ್ನೂ, ಅವನ ಹೆಂಡತಿಯನ್ನೂ ದಾಸಿಯರನ್ನೂ ವಾಸಿಮಾಡಿದರು. ಆದ್ದರಿಂದ ಅವರಿಗೆ ಮಕ್ಕಳಾದರು.
GEN 20:18 ಏಕೆಂದರೆ ಯೆಹೋವ ದೇವರು ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರನ್ನು ಬಂಜೆಯರನ್ನಾಗಿ ಮಾಡಿದ್ದರು.
GEN 21:1 ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು.
GEN 21:2 ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು.
GEN 21:3 ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ, ಇಸಾಕ, ಎಂದು ಹೆಸರಿಟ್ಟನು.
GEN 21:4 ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು.
GEN 21:5 ಅಬ್ರಹಾಮನ ಮಗ ಇಸಾಕನು ಜನಿಸಿದಾಗ ಅವನು ನೂರು ವರ್ಷದವನಾಗಿದ್ದನು.
GEN 21:6 ಆಗ ಸಾರಳು, “ದೇವರು ನನ್ನನ್ನು ನಗುವಂತೆ ಮಾಡಿದ್ದಾರೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು.
GEN 21:7 ಸಾರಳು ಮಕ್ಕಳಿಗೆ ಹಾಲು ಕುಡಿಸುವಳೆಂದು ಅಬ್ರಹಾಮನಿಗೆ ಯಾರು ಹೇಳುತ್ತಿದ್ದರು? ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು,” ಎಂದಳು.
GEN 21:8 ಇಸಾಕನು ಬೆಳೆದು ಬಾಲಕನಾಗಿ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ಆ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣ ಮಾಡಿಸಿದನು.
GEN 21:9 ಈಜಿಪ್ಟಿನವಳಾದ ಹಾಗರಳಿಗೆ ಅಬ್ರಹಾಮನಿಂದ ಜನಿಸಿದ ಮಗನು ಹಾಸ್ಯ ಮಾಡುವುದನ್ನು ಸಾರಳು ನೋಡಿ,
GEN 21:10 ಅಬ್ರಹಾಮನಿಗೆ, “ಈ ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಈ ದಾಸಿಯ ಮಗನು ನನ್ನ ಮಗ ಇಸಾಕನ ಸಂಗಡ ಬಾಧ್ಯನಾಗಬಾರದು,” ಎಂದಳು.
GEN 21:11 ಅಬ್ರಹಾಮನಿಗೆ ತನ್ನ ಮಗನ ದೆಸೆಯಿಂದ ಬಹು ದುಃಖವಾಯಿತು.
GEN 21:12 ಆಗ ದೇವರು ಅಬ್ರಹಾಮನಿಗೆ, “ಹುಡುಗನಿಗಾಗಿಯೂ, ನಿನ್ನ ದಾಸಿಗಾಗಿಯೂ ನೀನು ಚಿಂತಿಸಬೇಡ. ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು. ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು.
GEN 21:13 ದಾಸಿಯ ಮಗನೂ ನಿನ್ನ ಸಂತಾನವಾಗಿರುವುದರಿಂದ, ಅವನನ್ನೂ ನಾನು ಜನಾಂಗವಾಗಿ ಮಾಡುವೆನು,” ಎಂದರು.
GEN 21:14 ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ, ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು, ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ, ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಮರುಭೂಮಿಯಲ್ಲಿ ಅಲೆದಾಡುತ್ತಿದ್ದಳು.
GEN 21:15 ತಿತ್ತಿಯೊಳಗಿನ ನೀರು ಮುಗಿದಾಗ, ಆಕೆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ,
GEN 21:16 ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು, “ಮಗುವಿನ ಸಾವನ್ನು ನಾನು ನೋಡಲಾರೆನು,” ಎಂದು ಹೇಳಿ ಸ್ವರವೆತ್ತಿ ಅತ್ತಳು.
GEN 21:17 ದೇವರು ಆ ಹುಡುಗನ ಅಳುವ ಸ್ವರವನ್ನು ಕೇಳಿದರು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು, ಆಕೆಗೆ, “ಹಾಗರಳೇ, ವ್ಯಥೆಪಡುವುದೇಕೆ? ಅಂಜಬೇಡ ದೇವರು ಹುಡುಗನ ಸ್ವರವನ್ನು ಕೇಳಿದ್ದಾರೆ.
GEN 21:18 ಎದ್ದು ಹುಡುಗನನ್ನು ಎತ್ತಿಕೊಂಡು ನಿನ್ನ ಕೈಯಲ್ಲಿ ತೆಗೆದುಕೋ. ನಾನು ಅವನನ್ನು ದೊಡ್ಡ ಜನಾಂಗದವನನ್ನಾಗಿ ಮಾಡುವೆನು,” ಎಂದನು.
GEN 21:19 ದೇವರು ಆಕೆಯ ಕಣ್ಣುಗಳನ್ನು ತೆರೆಯಲು, ಆಕೆಯು ನೀರಿನ ಬಾವಿಯನ್ನು ನೋಡಿದಳು. ಅಲ್ಲಿಗೆ ಹೋಗಿ ತಿತ್ತಿಯಲ್ಲಿ ನೀರನ್ನು ತುಂಬಿಸಿ, ಹುಡುಗನಿಗೆ ಕುಡಿಯಲು ಕೊಟ್ಟಳು.
GEN 21:20 ದೇವರು ಆ ಹುಡುಗನ ಸಂಗಡ ಇದ್ದರು. ಹುಡುಗನು ಬೆಳೆದು ಮರುಭೂಮಿಯಲ್ಲಿ ವಾಸಮಾಡಿ ಬಿಲ್ಲುಗಾರನಾದನು.
GEN 21:21 ಇಷ್ಮಾಯೇಲನು ಪಾರಾನಿನ ಮರುಭೂಮಿಯಲ್ಲಿ ವಾಸಮಾಡುತ್ತಿದ್ದಾಗ, ಅವನ ತಾಯಿಯು ಅವನಿಗೋಸ್ಕರ ಈಜಿಪ್ಟ್ ದೇಶದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.
GEN 21:22 ಆ ಕಾಲದಲ್ಲಿ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಕಾರ್ಯಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾರೆ.
GEN 21:23 ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.
GEN 21:24 ಅದಕ್ಕೆ ಅಬ್ರಹಾಮನು, “ನಾನು ಹಾಗೆಯೇ ಪ್ರಮಾಣ ಮಾಡುತ್ತೇನೆ,” ಎಂದನು.
GEN 21:25 ಅಬೀಮೆಲೆಕನ ಸೇವಕರು ಬಲಾತ್ಕಾರದಿಂದ ತೆಗೆದುಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಿದನು.
GEN 21:26 ಅದಕ್ಕೆ ಅಬೀಮೆಲೆಕನು, “ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆ. ನೀನೂ ನನಗೆ ತಿಳಿಸಲಿಲ್ಲ. ನಾನು ಇಂದಿನವರೆಗೂ ಅದನ್ನು ಕೇಳಲೂ ಇಲ್ಲ,” ಎಂದನು.
GEN 21:27 ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
GEN 21:28 ಅಬ್ರಹಾಮನು ಹಿಂಡಿನಿಂದ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ಮಾಡಿ ನಿಲ್ಲಿಸಿದನು.
GEN 21:29 ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಆ ಏಳು ಹೆಣ್ಣು ಕುರಿಮರಿಗಳನ್ನು ಬೇರೆಯಾಗಿ ನಿಲ್ಲಿಸಿದ ಅರ್ಥ ಏನು?” ಎಂದನು.
GEN 21:30 ಅದಕ್ಕೆ ಅಬ್ರಹಾಮನು, “ನಾನೇ ಆ ಬಾವಿಯನ್ನು ಅಗೆದಿದ್ದೇನೆಂಬುದಕ್ಕೆ ಸಾಕ್ಷಿಯಾಗಿ ಆ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು,” ಎಂದನು.
GEN 21:31 ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣ ಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅಬ್ರಹಾಮನು ಹೆಸರಿಟ್ಟನು.
GEN 21:32 ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿದರು.
GEN 21:33 ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು, ಅಲ್ಲಿ ನಿತ್ಯ ದೇವರಾಗಿರುವ ಯೆಹೋವ ದೇವರ ಹೆಸರನ್ನು ಹೇಳಿ ಆರಾಧಿಸಿದನು.
GEN 21:34 ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುಕಾಲ ತಂಗಿದ್ದನು.
GEN 22:1 ಕೆಲವು ಕಾಲದ ನಂತರ, ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕಾಗಿ ಅವನಿಗೆ, “ಅಬ್ರಹಾಮನೇ,” ಎಂದು ಕರೆದರು. ಅದಕ್ಕವನು, “ಇಗೋ, ಇಲ್ಲಿದ್ದೇನೆ,” ಎಂದು ಉತ್ತರಕೊಟ್ಟನು.
GEN 22:2 ಆಗ ದೇವರು, “ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು,” ಎಂದರು.
GEN 22:3 ಅಬ್ರಹಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಗೆ ತಡಿ ಕಟ್ಟಿ, ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗ ಇಸಾಕನನ್ನೂ, ದಹನಬಲಿಗಳಿಗಾಗಿ ಕಟ್ಟಿಗೆಗಳನ್ನೂ ತೆಗೆದುಕೊಂಡು, ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು.
GEN 22:4 ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಆ ಸ್ಥಳವು ದೂರದಲ್ಲಿ ಕಾಣಿಸಿತು.
GEN 22:5 ಅಬ್ರಹಾಮನು ತನ್ನ ಸೇವಕರಿಗೆ, “ಕತ್ತೆಯ ಸಂಗಡ ಇಲ್ಲಿಯೇ ಇರಿ. ನಾನೂ, ಹುಡುಗನೂ ಅಲ್ಲಿಗೆ ಹೋಗಿ, ಆರಾಧನೆ ಮಾಡಿ, ನಿಮ್ಮ ಬಳಿಗೆ ಹಿಂದಿರುಗಿ ಬರುತ್ತೇವೆ,” ಎಂದನು.
GEN 22:6 ಅಬ್ರಹಾಮನು ದಹನಬಲಿಗಳ ಕಟ್ಟಿಗೆಗಳನ್ನು ತೆಗೆದುಕೊಂಡು, ತನ್ನ ಮಗ ಇಸಾಕನ ಮೇಲೆ ಹೊರಿಸಿ; ಬೆಂಕಿಯನ್ನೂ, ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡನು. ಅವರಿಬ್ಬರೂ ಹೊರಟು ಹೋದರು.
GEN 22:7 ಇಸಾಕನು ತನ್ನ ತಂದೆ ಅಬ್ರಹಾಮನಿಗೆ, “ಅಪ್ಪಾ,” ಎಂದನು. ಆಗ ಅಬ್ರಹಾಮನು, “ಏನು ಮಗನೇ?” ಎಂದನು. ಅದಕ್ಕೆ ಅವನು, “ಇಗೋ, ಬೆಂಕಿಯೂ, ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ?” ಎಂದನು.
GEN 22:8 ಅಬ್ರಹಾಮನು, “ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು,” ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.
GEN 22:9 ದೇವರು ಅವನಿಗೆ ಹೇಳಿದ ಸ್ಥಳಕ್ಕೆ ಬಂದಾಗ, ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ, ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ, ತನ್ನ ಮಗ ಇಸಾಕನನ್ನು ಕಟ್ಟಿ, ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.
GEN 22:10 ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವುದಕ್ಕೆ ಕತ್ತಿ ತೆಗೆದುಕೊಂಡನು.
GEN 22:11 ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, “ಅಬ್ರಹಾಮನೇ, ಅಬ್ರಹಾಮನೇ,” ಎಂದು ಅವನನ್ನು ಕರೆದನು. ಅವನು, “ಇಲ್ಲಿ ಇದ್ದೇನೆ,” ಎಂದನು.
GEN 22:12 ಯೆಹೋವ ದೇವರ ದೂತನು ಅಬ್ರಹಾಮನಿಗೆ, “ಹುಡುಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ; ಏಕೆಂದರೆ ನೀನು ದೇವರಿಗೆ ಭಯಪಡುತ್ತೀ ಎಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ,” ಎಂದು ಹೇಳಿದನು.
GEN 22:13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು, ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.
GEN 22:14 ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. “ಯೆಹೋವ ದೇವರು ಪರ್ವತದ ಮೇಲೆ ಒದಗಿಸುವರು,” ಎಂದು ಇಂದಿನವರೆಗೂ ಜನರು ಹೇಳುತ್ತಾರೆ.
GEN 22:15 ಯೆಹೋವ ದೇವರ ದೂತನು ಆಕಾಶದೊಳಗಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ,
GEN 22:16 “ನೀನು ಈ ಕಾರ್ಯವನ್ನು ಮಾಡಿ, ನಿನ್ನ ಒಬ್ಬನೇ ಮಗನನ್ನು ಸಹ ನನಗೆ ಕೊಡುವುದಕ್ಕೆ ಹಿಂಜರಿಯದೆ ಇದ್ದುದರಿಂದ, ಯೆಹೋವ ದೇವರಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ,
GEN 22:17 ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸುವೆನು. ನಿನ್ನ ಸಂತಾನದವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
GEN 22:18 ನೀನು ನನಗೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂದರು.
GEN 22:19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂದಿರುಗಿ ಬಂದನು. ಅವರೆಲ್ಲರೂ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.
GEN 22:20 ಕೆಲ ಸಮಯದ ನಂತರ ಕೆಲವರು ಅಬ್ರಹಾಮನಿಗೆ, “ಮಿಲ್ಕಾಳು ತಾಯಾಗಿದ್ದಾಳೆ. ನಿನ್ನ ಸಹೋದರ ನಾಹೋರನಿಗೆ ಅವಳು ಮಕ್ಕಳನ್ನು ಹೆತ್ತಿದ್ದಾಳೆ,” ಎಂದು ತಿಳಿಸಿದರು.
GEN 22:21 ಅವರು ಯಾರೆಂದರೆ, ಅವನ ಚೊಚ್ಚಲು ಮಗ ಊಚ್, ಅವನ ಸಹೋದರ ಬೂಜ್, ಅರಾಮನ ತಂದೆ ಕೆಮೂಯೇಲ್,
GEN 22:22 ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂಯೇಲ್.
GEN 22:23 ಬೆತೂಯೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಾಳು ಅಬ್ರಹಾಮನ ಸಹೋದರ ನಾಹೋರನಿಗೆ ಹೆತ್ತಳು.
GEN 22:24 ಅವನ ಉಪಪತ್ನಿ ರೂಮಳೆಂಬವಳು ಸಹ ಟೆಬಹ, ಗಹಮ, ತಹಷ, ಮಾಕಾ ಎಂಬುವರನ್ನು ಹೆತ್ತಳು.
GEN 23:1 ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು.
GEN 23:2 ಅವಳು ಕಾನಾನ್ ದೇಶದಲ್ಲಿರುವ ಹೆಬ್ರೋನಿನಲ್ಲಿ ಅಂದರೆ ಕಿರ್ಯತ್ ಅರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡಿದನು.
GEN 23:3 ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ,
GEN 23:4 “ನಾನು ನಿಮ್ಮೊಂದಿಗೆ ಪರದೇಶಸ್ಥನೂ, ಪರವಾಸಿಯೂ ಆಗಿದ್ದೇನೆ. ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ. ಆಗ ನನ್ನ ಹೆಂಡತಿಯ ಶವವನ್ನು ಹೂಳಿಡುವೆನು,” ಎಂದನು.
GEN 23:5 ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು,
GEN 23:6 “ಒಡೆಯಾ, ನಮ್ಮ ಮಾತನ್ನು ಕೇಳು, ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ. ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಳಿಡು. ನಮ್ಮಲ್ಲಿ ಯಾರೂ ನಿನಗೆ ಸಮಾಧಿಯನ್ನು ಕೊಡುವುದಿಲ್ಲ ಎಂದು ಹೇಳಲಾರರು,” ಎಂದರು.
GEN 23:7 ಆಗ ಅಬ್ರಹಾಮನು ಎದ್ದು, ಆ ದೇಶದ ಜನರಾದ ಹಿತ್ತಿಯರ ಮುಂದೆ ತಲೆಬಾಗಿ,
GEN 23:8 ಅವರ ಸಂಗಡ ಮಾತನಾಡಿ, “ನಾನು ನನ್ನ ಹೆಂಡತಿಯ ಶವವನ್ನು ಹೂಳಿಡುವುದು ನಿಮ್ಮ ಮನಸ್ಸಿಗೆ ಸರಿಬಿದ್ದರೆ, ನನ್ನ ಮಾತು ಕೇಳಿ ಚೋಹರನ ಮಗ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.
GEN 23:9 ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲಾ ಗವಿಯನ್ನು ನನಗೆ ಕೊಡಲಿ. ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ,” ಎಂದನು.
GEN 23:10 ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ,
GEN 23:11 “ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
GEN 23:12 ಆಗ ಅಬ್ರಹಾಮನು ದೇಶದ ಜನರ ಮುಂದೆ ತಲೆಬಾಗಿ,
GEN 23:13 ದೇಶದ ಜನರು ಕೇಳುವಂತೆ ಎಫ್ರೋನನಿಗೆ, “ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು. ನಾನು ಹೊಲದ ಕ್ರಯವನ್ನು ಕೊಡುತ್ತೇನೆ. ಅದನ್ನು ನನ್ನಿಂದ ತೆಗೆದುಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಳಿಡುವೆನು,” ಎಂದನು.
GEN 23:14 ಎಫ್ರೋನನು ಅಬ್ರಹಾಮನಿಗೆ ಉತ್ತರವಾಗಿ,
GEN 23:15 “ನನ್ನ ಒಡೆಯನೇ, ನನ್ನ ಮಾತನ್ನು ಕೇಳು. ಆ ಭೂಮಿಯು ನಾನೂರು ಬೆಳ್ಳಿಯ ನಾಣ್ಯಗಳ ಬೆಲೆಯುಳ್ಳದ್ದು, ಈ ಕುರಿತು ನಮ್ಮೊಳಗೇ ವಾದವೇಕೆ? ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
GEN 23:16 ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿಕೊಂಡು, ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ಬೆಲೆ ಅಂದರೆ, ವರ್ತಕರಲ್ಲಿ ನಡೆಯುವ ನಾನೂರು ಬೆಳ್ಳಿ ನಾಣ್ಯಗಳನ್ನು ತೂಕಮಾಡಿ ಅವನಿಗೆ ಕೊಟ್ಟನು.
GEN 23:17 ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋನನ ಹೊಲವೂ, ಆ ಹೊಲದಲ್ಲಿರುವ ಗವಿಯೂ, ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ,
GEN 23:18 ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು.
GEN 23:19 ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿಟ್ಟನು.
GEN 23:20 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಅಬ್ರಹಾಮನಿಗೆ ಸ್ವಂತ ಸಮಾಧಿ ಎಂದು ಸ್ಥಿರವಾಯಿತು.
GEN 24:1 ಅಬ್ರಹಾಮನು ವೃದ್ಧನಾಗಿದ್ದನು. ಯೆಹೋವ ದೇವರು ಅಬ್ರಹಾಮನನ್ನು ಎಲ್ಲಾದರಲ್ಲಿಯೂ ಆಶೀರ್ವದಿಸಿದ್ದರು.
GEN 24:2 ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರಿಯ ಸೇವಕನಿಗೆ, “ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು,
GEN 24:3 ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬಾರದು.
GEN 24:4 ನನ್ನ ದೇಶಕ್ಕೂ, ಬಂಧುಗಳ ಬಳಿಗೂ ಹೋಗಿ ನನ್ನ ಮಗ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಂಡು ಬರುತ್ತೇನೆಂದು ಪರಲೋಕದ ಮತ್ತು ಭೂಲೋಕದ ದೇವರಾಗಿರುವ ಯೆಹೋವ ದೇವರ ಮೇಲೆ ನೀನು ನನಗೆ ಪ್ರಮಾಣಮಾಡಬೇಕು,” ಎಂದನು.
GEN 24:5 ಆ ಸೇವಕನು ಅವನಿಗೆ, “ಒಂದು ವೇಳೆ ನನ್ನನ್ನು ಹಿಂಬಾಲಿಸಿ, ಈ ದೇಶಕ್ಕೆ ಬರಲು ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ, ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರುಗಿ ಕರೆದುಕೊಂಡು ಹೋಗಬೇಕೋ?” ಎಂದನು.
GEN 24:6 ಅಬ್ರಹಾಮನು ಅವನಿಗೆ, “ನನ್ನ ಮಗನನ್ನು ತಿರುಗಿ ಅಲ್ಲಿಗೆ ಕರೆದುಕೊಂಡು ಹೋಗಬಾರದು,
GEN 24:7 ನನ್ನ ತಂದೆಯ ಮನೆಯಿಂದಲೂ ಬಂಧುಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು, ನನ್ನ ಸಂಗಡ ಮಾತನಾಡಿ, ‘ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು,’ ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಯೆಹೋವ ದೇವರು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ, ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸುವರು.
GEN 24:8 ಆದರೆ ನಿನ್ನನ್ನು ಹಿಂಬಾಲಿಸಿ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದಿದ್ದರೆ, ನನಗೆ ಮಾಡಿದ ಆ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಆದರೆ ನನ್ನ ಮಗನನ್ನು ಅಲ್ಲಿಗೆ ಮಾತ್ರ ತಿರುಗಿ ಕರೆದುಕೊಂಡು ಹೋಗಬಾರದು,” ಎಂದನು.
GEN 24:9 ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು, ಆ ವಿಷಯ ಬಗ್ಗೆ ಅವನಿಗೆ ಪ್ರಮಾಣ ಮಾಡಿದನು.
GEN 24:10 ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನೂ, ತನ್ನ ಯಜಮಾನನಿಂದ ಎಲ್ಲಾ ತರಹದ ವಸ್ತ್ರಗಳನ್ನೂ ತೆಗೆದುಕೊಂಡು ಅರಾಮ್ ನಹರೈಮಿಗೆ ಹೊರಟು, ನಾಹೋರನು ವಾಸವಾಗಿದ್ದ ಊರನ್ನು ಸೇರಿದನು.
GEN 24:11 ಆಗ ಸ್ತ್ರೀಯರು ನೀರು ತರಲು ಬರುವ ಸಂಜೆಯ ಸಮಯವಾಗಿತ್ತು. ಅವನು ಪಟ್ಟಣದ ಹೊರಗೆ ನೀರಿನ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು.
GEN 24:12 ಆಗ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರೇ, ಈ ಹೊತ್ತು ನನಗೆ ಅನುಕೂಲವನ್ನು ಉಂಟುಮಾಡಿ, ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸಿರಿ.
GEN 24:13 ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ. ಊರಿನ ಜನರ ಪುತ್ರಿಯರು ನೀರು ಸೇದುವುದಕ್ಕೆ ಹೊರಗೆ ಬರುತ್ತಾರೆ.
GEN 24:14 ನಾನು ಯಾವ ಹುಡುಗಿಗೆ, ‘ನೀರು ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು,’ ಎಂದು ಕೇಳಿಕೊಂಡಾಗ, ‘ನೀನೂ ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವುದಕ್ಕೆ ಕೊಡುತ್ತೇನೆ,’ ಎಂದು ಹೇಳುವಳೋ, ಆಕೆಯನ್ನೇ ನೀವು ನಿಮ್ಮ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದೀರಿ ಮತ್ತು ಯಜಮಾನನಿಗೆ ದಯೆ ತೋರಿಸಿದ್ದೀರಿ, ಎಂದು ಇದರಿಂದ ನಾನು ತಿಳಿದುಕೊಳ್ಳುವೆನು,” ಎಂದು ಬೇಡಿಕೊಂಡನು.
GEN 24:15 ಅವನು ಹಾಗೆ ಹೇಳುವುದನ್ನು ಮುಗಿಸುವುದಕ್ಕಿಂತ ಮುಂಚೆ ಅಬ್ರಹಾಮನ ಸಹೋದರನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಾಳ ಮಗ ಬೆತೂಯೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲೆ ಇಟ್ಟುಕೊಂಡು ಹೊರಗೆ ಬಂದಳು.
GEN 24:16 ಆ ಹುಡುಗಿಯು ನೋಡುವುದಕ್ಕೆ ಬಹು ಸುಂದರಿಯಾಗಿದ್ದಳು, ಮದುವೆಯಾಗದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಯ ಬಳಿಗೆ ಹೋಗಿ, ತನ್ನ ಕೊಡವನ್ನು ತುಂಬಿಕೊಂಡು ಬಂದಳು.
GEN 24:17 ಆಗ ಸೇವಕನು ಅವಳೆದುರಿಗೆ ಓಡಿಹೋಗಿ, “ನಿನ್ನ ಕೊಡದೊಳಗಿಂದ ಸ್ವಲ್ಪ ನೀರು ನನಗೆ ಕುಡಿಯುವುದಕ್ಕೆ ಕೊಡು,” ಎಂದು ಕೇಳಿಕೊಂಡನು.
GEN 24:18 ಅದಕ್ಕವಳು, “ನನ್ನ ಒಡೆಯನೇ, ಕುಡಿ,” ಎಂದು ಹೇಳಿ, ತ್ವರೆಯಾಗಿ ತನ್ನ ಕೊಡವನ್ನು ಕೈಯಿಂದ ಇಳಿಸಿ, ಅವನಿಗೆ ಕುಡಿಯಲು ಕೊಟ್ಟಳು.
GEN 24:19 ಅವನಿಗೆ ಕುಡಿಯುವುದಕ್ಕೆ ಕೊಟ್ಟನಂತರ ಆಕೆಯು, “ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ಸೇದುತ್ತೇನೆ,” ಎಂದು ಹೇಳಿದಳು.
GEN 24:20 ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ತೊಟ್ಟಿಯಲ್ಲಿ ಹೊಯ್ದು, ತಿರುಗಿ ಸೇದುವುದಕ್ಕೆ ಬಾವಿಯ ಬಳಿಗೆ ಓಡಿ, ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ಸೇದಿದಳು.
GEN 24:21 ಆಗ ಯೆಹೋವ ದೇವರು ತನ್ನ ಪ್ರಯಾಣನ್ನು ಸಫಲ ಮಾಡಿದರೋ ಏನೋ, ಎಂದು ತಿಳಿದುಕೊಳ್ಳುವುದಕ್ಕೆ ಆ ಮನುಷ್ಯನು ಆಕೆಯನ್ನು ಗಮನಿಸುತ್ತಾ, ಆಶ್ಚರ್ಯಪಟ್ಟು ಮೌನವಾಗಿದ್ದನು.
GEN 24:22 ಒಂಟೆಗಳು ನೀರು ಕುಡಿದಾದ ಮೇಲೆ, ಆ ಮನುಷ್ಯನು ಅರ್ಧ ತೊಲೆಯ ತೂಕದ ಚಿನ್ನದ ಮೂಗುತಿಯನ್ನು, ಹತ್ತು ತೊಲೆ ತೂಕದ ಎರಡು ಬಳೆಗಳನ್ನು ಆಕೆಗೆ ಕೊಟ್ಟನು.
GEN 24:23 ಅನಂತರ, “ನೀನು ಯಾರ ಮಗಳು? ನನಗೆ ಹೇಳು. ನಿನ್ನ ತಂದೆಯ ಮನೆಯಲ್ಲಿ ಒಂದು ರಾತ್ರಿ ಕಳೆಯುವುದಕ್ಕೆ ನಮಗೆ ಸ್ಥಳವಿದೆಯೋ?” ಕೇಳಿದನು.
GEN 24:24 ಅದಕ್ಕೆ ಆಕೆಯು, “ನಾಹೋರನಿಗೆ ಮಿಲ್ಕಾಳು ಹೆತ್ತ ಬೆತೂಯೇಲನ ಮಗಳು,” ಎಂದಳು.
GEN 24:25 ಇದಲ್ಲದೆ ಆಕೆಯು ಅವನಿಗೆ, “ಹುಲ್ಲೂ, ಮೇವೂ ನಮ್ಮಲ್ಲಿ ಸಾಕಷ್ಟು ಇವೆ, ನೀವು ಒಂದು ರಾತ್ರಿ ಕಳೆಯುವುದಕ್ಕೆ ಸ್ಥಳವಿದೆ,” ಎಂದು ಅವನಿಗೆ ಹೇಳಿದಳು.
GEN 24:26 ಆಗ ಆ ಮನುಷ್ಯನು ತಲೆಬಾಗಿ ಯೆಹೋವ ದೇವರಿಗೆ ಅಡ್ಡಬಿದ್ದು ಆರಾಧಿಸಿದನು.
GEN 24:27 ಇದಲ್ಲದೆ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರು ಸ್ತುತಿಹೊಂದಲಿ. ಅವರು ನನ್ನ ಯಜಮಾನನನ್ನು ಕೈಬಿಡದೆ, ತಮ್ಮ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಿದ್ದಾರೆ. ನಾನು ಮಾರ್ಗದಲ್ಲಿರುವಾಗ ಯೆಹೋವ ದೇವರು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೇ ನಡೆಸಿದ್ದಾರೆ,” ಎಂದನು.
GEN 24:28 ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿದ್ದವರಿಗೆ ತಿಳಿಸಿದಳು.
GEN 24:29 ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿದನು.
GEN 24:30 ಅವನು ಮೂಗುತಿಯನ್ನೂ, ತನ್ನ ಸಹೋದರಿಯ ಕೈಗಳಲ್ಲಿದ್ದ ಬಳೆಗಳನ್ನೂ ಕಂಡು, ಆ ಮನುಷ್ಯನು ತನ್ನ ಬಳಿ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿ ರೆಬೆಕ್ಕಳ ಮಾತುಗಳನ್ನು ಕೇಳಿ, ಆ ಮನುಷ್ಯನ ಬಳಿಗೆ ಬಂದನು. ಅವನು ಇನ್ನೂ ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
GEN 24:31 ಲಾಬಾನನು ಅವನಿಗೆ, “ಯೆಹೋವ ದೇವರಿಂದ ಆಶೀರ್ವಾದ ಪಡೆದವನೇ, ಒಳಗೆ ಬಾ, ಏಕೆ ಹೊರಗೆ ನಿಂತಿರುವೆ? ನಾನು ಮನೆಯನ್ನೂ, ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ,” ಎಂದನು.
GEN 24:32 ಆಗ ಆ ಮನುಷ್ಯನು ಮನೆಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ, ಅವುಗಳಿಗೆ ಹುಲ್ಲನ್ನೂ, ಮೇವನ್ನೂ ಕೊಟ್ಟನು. ಅವನ ಕಾಲುಗಳನ್ನೂ, ಅವನ ಸಂಗಡ ಇದ್ದ ಮನುಷ್ಯರ ಕಾಲುಗಳನ್ನೂ ತೊಳೆಯುವುದಕ್ಕೆ ನೀರನ್ನು ಕೊಟ್ಟನು.
GEN 24:33 ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವುದಿಲ್ಲ,” ಎಂದನು. ಅದಕ್ಕೆ ಲಾಬಾನನು, “ಹೇಳು,” ಎಂದನು.
GEN 24:34 ಅವನು, “ನಾನು ಅಬ್ರಹಾಮನ ಸೇವಕನು.
GEN 24:35 ಯೆಹೋವ ದೇವರು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ಧನವಂತನಾದನು. ದೇವರು ಅವನಿಗೆ ಕುರಿದನ, ಬೆಳ್ಳಿಬಂಗಾರ, ದಾಸದಾಸಿ, ಒಂಟೆಗಳು ಮತ್ತು ಕತ್ತೆಗಳನ್ನು ಕೊಟ್ಟಿದ್ದಾರೆ.
GEN 24:36 ಇದಲ್ಲದೆ ನನ್ನ ಯಜಮಾನನ ಹೆಂಡತಿ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
GEN 24:37 ನನ್ನ ಯಜಮಾನನು, ‘ನಾನು ಯಾರ ದೇಶದಲ್ಲಿ ವಾಸಮಾಡುತ್ತೇನೋ, ಆ ಕಾನಾನ್ಯರ ಪುತ್ರಿಯರಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಡ.
GEN 24:38 ಆದರೆ ನೀನು ನನ್ನ ತಂದೆಯ ಮನೆಗೂ, ನನ್ನ ಬಂಧುಗಳ ಬಳಿಗೂ ಹೋಗಿ, ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಕೆಂದು,’ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದಾನೆ.
GEN 24:39 “ನಾನು ನನ್ನ ಯಜಮಾನನಿಗೆ, ‘ಒಂದು ವೇಳೆ ಆ ಸ್ತ್ರೀ ನನ್ನನ್ನು ಹಿಂಬಾಲಿಸದೆ ಹೋದಾಳು,’ ಹೇಳಿದೆ.
GEN 24:40 “ಅವನು ನನಗೆ, ‘ನಾನು ಯಾರ ಮುಂದೆ ನಂಬಿಗಸ್ತಿಕೆಯಿಂದ ನಡೆದುಕೊಳ್ಳುತ್ತೇನೋ, ಆ ಯೆಹೋವ ದೇವರು ತಮ್ಮ ದೂತನನ್ನು ನಿನ್ನ ಸಂಗಡ ಕಳುಹಿಸಿ, ನೀನು ನನ್ನ ಬಂಧುಗಳಿಂದಲೂ ನನ್ನ ತಂದೆಯ ಮನೆಯೊಳಗಿಂದಲೂ ನನ್ನ ಮಗನಿಗೋಸ್ಕರ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ನಿನ್ನ ಪ್ರಯತ್ನವನ್ನು ಸಫಲಮಾಡುವರು.
GEN 24:41 ನೀನು ನನ್ನ ಬಂಧುಗಳ ಬಳಿಗೆ ಬಂದಾಗ, ಅವರು ನಿನಗೆ ಆ ಹುಡುಗಿಯನ್ನು ಕೊಡದೆ ಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆ,’ ” ಎಂದನು.
GEN 24:42 “ಈ ದಿನ ನಾನು ಆ ಬಾವಿಯ ಬಳಿಗೆ ಬಂದಾಗ, ‘ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರೇ, ನೀವು ಬಯಸಿದರೆ, ದಯವಿಟ್ಟು ನಾನು ಬಂದ ಪ್ರಯಾಣಕ್ಕೆ ನೀವು ಸಫಲ ಮಾಡಿದ್ದಾದರೆ,
GEN 24:43 ಇಗೋ, ನಾನು ಈಗ ಬಾವಿಯ ಬಳಿಯಲ್ಲಿ ನಿಂತಿದ್ದೇನೆ. ಯಾವ ಹುಡುಗಿ ನೀರು ಸೇದುವುದಕ್ಕೆ ಹೊರಗೆ ಬರುತ್ತಾಳೋ, ನಾನು ಆಕೆಗೆ, “ನಿನ್ನ ಕೊಡದೊಳಗಿಂದ ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು,” ಎಂದು ಕೇಳಿದಾಗ,
GEN 24:44 ಆಕೆಯು ನನಗೆ, “ನೀನೂ ಕುಡಿ, ನಿನ್ನ ಒಂಟೆಗಳಿಗೂ ಸೇದಿ ಹಾಕುತ್ತೇನೆ,” ಎಂದು ನನಗೆ ಹೇಳಿದರೆ, ಆಕೆಯೇ ಯೆಹೋವ ದೇವರಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾಗಿರಲಿ,’ ಎಂದುಕೊಂಡೆನು.
GEN 24:45 “ನಾನು ನನ್ನ ಹೃದಯದಲ್ಲಿ ಹಾಗೆ ಅಂದುಕೊಂಡು ಮುಗಿಸುವುದರೊಳಗಾಗಿ, ರೆಬೆಕ್ಕಳು ತನ್ನ ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಹೊರಗೆ ಬಂದಳು. ಆಕೆಯು ಬಾವಿಯಿಂದ ನೀರನ್ನು ಸೇದಿದಳು. ಆಗ ನಾನು, ‘ನನಗೆ ಕುಡಿಯುವುದಕ್ಕೆ ಕೊಡು,’ ಎಂದು ಆಕೆಯನ್ನು ಕೇಳಿದೆನು.
GEN 24:46 “ಅದಕ್ಕೆ ಆಕೆಯು ತ್ವರೆಪಟ್ಟು, ತನ್ನ ಹೆಗಲಿನ ಮೇಲಿನಿಂದ ಕೊಡವನ್ನು ಇಳಿಸಿ, ‘ನೀನು ಕುಡಿ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ,’ ಎಂದಳು. ಆಗ ನಾನು ಕುಡಿದೆನು, ಆಕೆಯು ಒಂಟೆಗಳಿಗೂ ನೀರನ್ನು ತಂದುಕೊಟ್ಟಳು.
GEN 24:47 “ನಾನು ಆಕೆಗೆ, ‘ನೀನು ಯಾರ ಮಗಳು?’ ಎಂದು ಕೇಳಿದೆನು. “ಅದಕ್ಕವಳು, ‘ನಾಹೋರನಿಗೆ ಮಿಲ್ಕಾಳು ಹೆತ್ತ ಮಗನಾದ ಬೆತೂಯೇಲನ ಮಗಳು,’ ಎಂದಳು. “ಆಗ ನಾನು ಆಕೆಗೆ ಮೂಗುತಿಯನ್ನೂ, ಆಕೆಯ ಕೈಗಳಿಗೆ ಬಳೆಗಳನ್ನೂ ಕೊಟ್ಟು,
GEN 24:48 ತಲೆಬಾಗಿ ಯೆಹೋವ ದೇವರನ್ನು ಆರಾಧಿಸಿ, ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕೆ ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರನ್ನು ಕೊಂಡಾಡಿದೆ.
GEN 24:49 ಆದ್ದರಿಂದ ನೀವು ನನ್ನ ಯಜಮಾನನಿಗೆ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ವರ್ತಿಸುವುದಾದರೆ ನನಗೆ ತಿಳಿಸಿರಿ. ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ, ಎಡಗಡೆಯಾದರೂ ತಿರುಗಿಕೊಂಡುಹೋಗುವೆನು,” ಎಂದನು.
GEN 24:50 ಅದಕ್ಕೆ ಲಾಬಾನನು ಮತ್ತು ಬೆತೂಯೇಲನು, “ಈ ಕಾರ್ಯವು ಯೆಹೋವ ದೇವರಿಂದಲೇ ಉಂಟಾಯಿತು. ನಾವಂತೂ ಹೌದೆಂದೂ ಅಲ್ಲವೆಂದೂ ಹೇಳಲಾರೆವು
GEN 24:51 ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವ ದೇವರು ಹೇಳಿದಂತೆಯೇ ಆಕೆ ನಿನ್ನೊಡೆಯನ ಮಗನಿಗೆ ಹೆಂಡತಿಯಾಗಲಿ,” ಎಂದರು.
GEN 24:52 ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವ ದೇವರ ಮುಂದೆ ಅಡ್ಡಬಿದ್ದು, ಆರಾಧಿಸಿದನು.
GEN 24:53 ಅವನು ಬೆಳ್ಳಿಯ ಒಡವೆ, ಬಂಗಾರದ ಒಡವೆ, ವಸ್ತ್ರಗಳನ್ನೂ ತಂದು, ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ, ಆಕೆಯ ತಾಯಿಗೂ ಅಮೂಲ್ಯವಾದ ಉಡುಗೊರೆಗಳನ್ನು ಕೊಟ್ಟನು.
GEN 24:54 ತರುವಾಯ ಅವನೂ, ಅವನ ಸಂಗಡ ಇದ್ದ ಜನರೂ ಊಟಮಾಡಿ, ಕುಡಿದು, ರಾತ್ರಿಯನ್ನು ಅಲ್ಲೇ ಕಳೆದರು. ಬೆಳಿಗ್ಗೆ ಎದ್ದ ಮೇಲೆ ಅವನು, “ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ,” ಎಂದನು.
GEN 24:55 ಅದಕ್ಕೆ ಆಕೆಯ ಸಹೋದರನೂ, ತಾಯಿಯೂ, “ಹುಡುಗಿಯು ಕೆಲವು ದಿನ ಇರಲಿ. ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇದ್ದು ತರುವಾಯ ಹೋಗಲಿ,” ಎಂದರು.
GEN 24:56 ಆಗ ಅವನು ಅವರಿಗೆ, “ನನ್ನನ್ನು ತಡೆಯಬೇಡಿರಿ, ಯೆಹೋವ ದೇವರು ನನ್ನ ಮಾರ್ಗವನ್ನು ಸಫಲ ಮಾಡಿದ್ದಾರಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿರಿ,” ಎಂದನು.
GEN 24:57 ಆಗ ಅವರು, “ನಾವು ಹುಡುಗಿಯನ್ನು ಕರೆದು, ಆಕೆಯ ಅಭಿಪ್ರಾಯವನ್ನು ವಿಚಾರಿಸೋಣ,” ಎಂದರು.
GEN 24:58 ಅವರು ರೆಬೆಕ್ಕಳನ್ನು ಕರೆದು ಆಕೆಗೆ, “ಈ ಮನುಷ್ಯನ ಸಂಗಡ ಹೋಗುತ್ತೀಯಾ?” ಎಂದು ಕೇಳಿದರು. ಅದಕ್ಕೆ ಆಕೆಯು, “ನಾನು ಹೋಗುತ್ತೇನೆ,” ಎಂದಳು.
GEN 24:59 ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಸಾಗಕಳುಹಿಸಿದರು.
GEN 24:60 ಇದಲ್ಲದೆ ಅವರು ರೆಬೆಕ್ಕಳನ್ನು ಹೀಗೆಂದು ಆಶೀರ್ವದಿಸಿದರು: “ನಮ್ಮ ಸಹೋದರಿಯೇ, ನೀನು ಸಹಸ್ರ ಸಹಸ್ರ ಮಕ್ಕಳಿಗೆ ತಾಯಿಯಾಗು. ನಿನ್ನ ಸಂತಾನದವರು ತಮ್ಮ ವೈರಿಗಳ ಪ್ರದೇಶಗಳನ್ನು ಸ್ವಾಧೀನಮಾಡಿಕೊಳ್ಳಲಿ.”
GEN 24:61 ಆಗ ರೆಬೆಕ್ಕಳೂ, ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ, ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು.
GEN 24:62 ಇಸಾಕನು ಬೇರ್ ಲಹೈರೋಯಿ ಬಾವಿಗೆ ಹೋಗಿ ಬಂದನು. ಅವನು ದೇಶದ ನೆಗೆವನಲ್ಲಿ ವಾಸವಾಗಿದ್ದನು.
GEN 24:63 ಇಸಾಕನು ಸಾಯಂಕಾಲ ಹೊಲದಲ್ಲಿ ಧ್ಯಾನಮಾಡುವುದಕ್ಕೆ ಹೋದಾಗ, ಕಣ್ಣೆತ್ತಿ ನೋಡಲು, ಒಂಟೆಗಳು ಬರುವುದನ್ನು ಕಂಡನು.
GEN 24:64 ರೆಬೆಕ್ಕಳು ಸಹ ಕಣ್ಣೆತ್ತಿ ಇಸಾಕನನ್ನು ನೋಡಿ, ಒಂಟೆಗಳಿಂದ ಇಳಿದಳು.
GEN 24:65 ಆಕೆಯು ಆ ಸೇವಕನಿಗೆ, “ಹೊಲದಲ್ಲಿ ನಮಗೆ ಎದುರಾಗಿ ಬರುವ ಆ ಮನುಷ್ಯನು ಯಾರು?” ಎಂದಳು. ಅದಕ್ಕೆ ಸೇವಕನು, “ಅವನೇ ನನ್ನ ಯಜಮಾನನು,” ಎಂದಾಗ, ಆಕೆಯು ಮುಸುಕು ಹಾಕಿಕೊಂಡಳು.
GEN 24:66 ಆಗ ಸೇವಕನು ಇಸಾಕನಿಗೆ ತಾನು ಮಾಡಿದ ಕಾರ್ಯಗಳನ್ನೆಲ್ಲಾ ತಿಳಿಸಿದನು.
GEN 24:67 ಇಸಾಕನು ಆಕೆಯನ್ನು ತನ್ನ ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಸ್ವೀಕರಿಸಿದನು. ಆಕೆಯು ಅವನ ಹೆಂಡತಿಯಾದಳು, ಅವನು ಆಕೆಯನ್ನು ಪ್ರೀತಿಸಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ದುಃಖ ಶಮನ ಮಾಡಿಕೊಂಡನು.
GEN 25:1 ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬಳನ್ನು ಮದುವೆಮಾಡಿಕೊಂಡನು.
GEN 25:2 ಆಕೆಯು ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.
GEN 25:3 ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು. ದೆದಾನನ ಪುತ್ರರು ಅಶ್ಯೂರರು, ಲೆಟೂಶ್ಯರೂ, ಲೆಯುಮ್ಯರೂ.
GEN 25:4 ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು.
GEN 25:5 ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕನಿಗೆ ಕೊಟ್ಟನು.
GEN 25:6 ಅಬ್ರಹಾಮನಿಗೆ ಇದ್ದ ಉಪಪತ್ನಿಯರ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು, ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಕಳುಹಿಸಿದನು.
GEN 25:7 ಅಬ್ರಹಾಮನು ನೂರೆಪ್ಪತ್ತೈದು ವರ್ಷಗಳವರೆಗೆ ಜೀವಿಸಿದನು.
GEN 25:8 ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿ ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.
GEN 25:9 ಅವನ ಪುತ್ರರಾದ ಇಸಾಕನೂ, ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಳಿಟ್ಟರು.
GEN 25:10 ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅಬ್ರಹಾಮನಿಗೂ, ಅವನ ಹೆಂಡತಿ ಸಾರಳಿಗೂ ಒಂದೇ ಸ್ಥಳದಲ್ಲಿ ಸಮಾಧಿ ಆಯಿತು.
GEN 25:11 ಅಬ್ರಹಾಮನು ಸತ್ತ ನಂತರ ದೇವರು ಅವನ ಮಗ ಇಸಾಕನನ್ನು ಆಶೀರ್ವದಿಸಿದರು. ಇಸಾಕನು ಬೇರ್ ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು.
GEN 25:12 ಸಾರಳ ದಾಸಿ ಈಜಿಪ್ಟಿನ ಹಾಗರಳು ಅಬ್ರಹಾಮನಿಗೆ ಹೆತ್ತ ಮಗ ಇಷ್ಮಾಯೇಲನ ವಂಶಾವಳಿ:
GEN 25:13 ಜನನದ ಪ್ರಕಾರ ಇಷ್ಮಾಯೇಲನ ಪುತ್ರರ ಹೆಸರುಗಳು ಇವೇ: ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತ್, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
GEN 25:14 ಮಿಷ್ಮಾ, ದೂಮಾ, ಮಸ್ಸಾ,
GEN 25:15 ಹದದ್, ತೇಮಾ, ಯೆಟೂರ್, ನಾಫೀಷ್, ಕೇದೆಮ.
GEN 25:16 ಇವರೇ ಇಷ್ಮಾಯೇಲನ ಪುತ್ರರು. ಇವುಗಳೇ ಅವರ ಗ್ರಾಮಗಳ ಪ್ರಕಾರವಾಗಿಯೂ, ಪಾಳೆಯಗಳ ಪ್ರಕಾರವಾಗಿಯೂ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.
GEN 25:17 ಇಷ್ಮಾಯೇಲನು ಬದುಕಿದ ವರ್ಷಗಳು ನೂರಮೂವತ್ತೇಳು. ಅವನು ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.
GEN 25:18 ಅವನ ವಂಶಸ್ಥರು ಅಸ್ಸೀರಿಯಗೆ ಹೋಗುವ, ಈಜಿಪ್ಟಿನ ಮೇರೆಯಲ್ಲಿ ಹವೀಲದಿಂದ ಶೂರ್‌ವರೆಗಿನ ಪ್ರದೇಶದಲ್ಲಿ ವಾಸಿಸಿದರು. ಅವರು ತಮ್ಮ ಎಲ್ಲಾ ಸಹೋದರರೊಂದಿಗೆ ಎದುರುಬದಿರಿನಲ್ಲೇ ವಾಸಮಾಡಿದರು.
GEN 25:19 ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನಿಂದ ಇಸಾಕನು ಹುಟ್ಟಿದನು.
GEN 25:20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂಯೇಲನ ಮಗಳೂ, ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತೆಗೆದುಕೊಂಡನು.
GEN 25:21 ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು.
GEN 25:22 ಅವಳ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು, “ನನಗೆ ಏಕೆ ಹೀಗಾಗುತ್ತಿದೆ?” ಎಂದು ಕೇಳಿ, ಯೆಹೋವ ದೇವರ ಬಳಿಗೆ ವಿಚಾರಿಸುವುದಕ್ಕೆ ಹೋದಳು.
GEN 25:23 ಯೆಹೋವ ದೇವರು ಆಕೆಗೆ ಹೀಗೆ ಹೇಳಿದರು: “ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ಜನಾಂಗಗಳು ಹೊರಟುಬಂದು ಬೇರೆಯಾಗುವುವು. ಒಂದು ಇನ್ನೊಂದಕ್ಕಿಂತ ಬಲವಾಗಿರುವುದು. ಇದಲ್ಲದೆ ಹಿರಿಯನು ಕಿರಿಯವನಿಗೆ ಸೇವೆಮಾಡುವನು.”
GEN 25:24 ಆಕೆಯು ಹೆರುವುದಕ್ಕೆ ದಿನತುಂಬಿದಾಗ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು.
GEN 25:25 ಮೊದಲನೆಯವನು ಕೆಂಪಾಗಿಯೂ ಕೂದಲಿನ ವಸ್ತ್ರದಂತೆ ಇಡೀ ದೇಹವು ಇದ್ದುದರಿಂದ ಅವನಿಗೆ, ಏಸಾವ, ಎಂದು ಹೆಸರಿಟ್ಟರು.
GEN 25:26 ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹೊರಗೆ ಬಂದನು. ಅವನಿಗೆ, ಯಾಕೋಬ, ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರವತ್ತು ವರ್ಷದವನಾಗಿದ್ದನು.
GEN 25:27 ಆ ಹುಡುಗರು ಬೆಳೆದಾಗ ಏಸಾವನು ಬೇಟೆಯಾಡುವುದರಲ್ಲಿ ಜಾಣನಾಗಿದ್ದು, ಅಡವಿಯ ಮನುಷ್ಯನಾದನು. ಯಾಕೋಬನು ಗುಡಾರಗಳಲ್ಲಿ ವಾಸಮಾಡುವ ಸಾಧು ಮನುಷ್ಯನಾಗಿದ್ದನು.
GEN 25:28 ಬೇಟೆಯಲ್ಲಿ ಆಸಕ್ತನಾಗಿದ್ದ ಇಸಾಕನು ಏಸಾವನನ್ನು ಪ್ರೀತಿಸಿದನು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
GEN 25:29 ಒಂದು ಸಾರಿ ಯಾಕೋಬನು ಅಡಿಗೆ ಮಾಡುತ್ತಿದ್ದಾಗ, ಏಸಾವನು ದಣಿದು ಅಡವಿಯಿಂದ ಬಂದನು.
GEN 25:30 ಏಸಾವನು ಯಾಕೋಬನಿಗೆ, “ಆ ಕೆಂಪಾದ ಪದಾರ್ಥವನ್ನು ತಿನ್ನುವುದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ,” ಎಂದನು. ಆದ್ದರಿಂದ ಅವನಿಗೆ, ಎದೋಮ್, ಎಂದು ಹೆಸರಾಯಿತು.
GEN 25:31 ಆಗ ಯಾಕೋಬನು, “ಈ ಹೊತ್ತು ನಿನ್ನ ಜೇಷ್ಠ ಪುತ್ರನ ಹಕ್ಕನ್ನು ನನಗೆ ಮಾರು,” ಎಂದನು.
GEN 25:32 ಏಸಾವನು, “ಇಗೋ, ನಾನು ಸಾಯುತ್ತಿದ್ದೇನೆ, ಜೇಷ್ಠ ಪುತ್ರನ ಹಕ್ಕಿನಿಂದ ನನಗೇನು ಲಾಭ?” ಎಂದನು.
GEN 25:33 ಯಾಕೋಬನು, “ಈ ಹೊತ್ತು ನನಗೆ ಪ್ರಮಾಣಮಾಡು,” ಎಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ, ತನ್ನ ಜೇಷ್ಠ ಪುತ್ರನ ಹಕ್ಕನ್ನು ಅವನಿಗೆ ಮಾರಿದನು.
GEN 25:34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ, ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಅವನು ತಿಂದು, ಕುಡಿದು ಎದ್ದು ಹೋದನು. ಹೀಗೆ ಏಸಾವನು ತನ್ನ ಜೇಷ್ಠ ಪುತ್ರನ ಹಕ್ಕನ್ನು ತಾತ್ಸಾರದಿಂದ ಕಂಡನು.
GEN 26:1 ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
GEN 26:2 ಆಗ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ಈಜಿಪ್ಟಿಗೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
GEN 26:3 ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
GEN 26:4 ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವಾಗುವುದು.
GEN 26:5 ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ನನ್ನ ವಿಧಿಯನ್ನೂ, ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ನನ್ನ ನೇಮಗಳನ್ನೂ, ಕೈಗೊಂಡು ನಡೆದನು,” ಎಂದರು.
GEN 26:6 ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.
GEN 26:7 ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು, ರೆಬೆಕ್ಕಳು ನೋಟಕ್ಕೆ ಚೆಲುವೆಯಾಗಿದ್ದುದರಿಂದ ಆಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು, ಆಕೆ ತನ್ನ ಹೆಂಡತಿಯೆಂದು ಹೇಳುವುದಕ್ಕೆ ಅಂಜಿ ಅವನು, “ಆಕೆಯು ನನ್ನ ತಂಗಿ” ಎಂದನು.
GEN 26:8 ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ, ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡುತ್ತಿದ್ದಾಗ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸಮಾಡುವುದನ್ನು ಕಂಡನು.
GEN 26:9 ಆಗ ಅಬೀಮೆಲೆಕನು ಇಸಾಕನನ್ನು ಕರೆದು, “ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು, ‘ಆಕೆಯು ನನ್ನ ತಂಗಿ,’ ಎಂದು ಏಕೆ ಹೇಳಿದೆ?” ಎಂದನು. ಇಸಾಕನು ಅವನಿಗೆ, “ನಾನು ಆಕೆಯ ನಿಮಿತ್ತ ಸಾಯಬಾರದೆಂದು ಹಾಗೆ ಹೇಳಿದೆನು,” ಎಂದನು.
GEN 26:10 ಆಗ ಅಬೀಮೆಲೆಕನು, “ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯನ್ನು ತೆಗೆದುಕೊಂಡಿದ್ದರೆ, ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ,” ಎಂದನು.
GEN 26:11 ಅಬೀಮೆಲೆಕನು ತನ್ನ ಜನರಿಗೆಲ್ಲಾ, “ಈ ಮನುಷ್ಯನನ್ನಾಗಲಿ, ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು,” ಎಂದು ಅಪ್ಪಣೆಕೊಟ್ಟನು.
GEN 26:12 ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
GEN 26:13 ಅವನು ಬಹಳ ಶ್ರೀಮಂತನಾಗಿ, ಕ್ರಮೇಣವಾಗಿ ಹೆಚ್ಚಿದ್ದರಿಂದ ಅಭಿವೃದ್ಧಿಯಾದನು.
GEN 26:14 ಏಕೆಂದರೆ ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡುಗಳೂ ಬಹಳ ಮಂದಿ ಸೇವಕರೂ ಇದ್ದರು. ಆದ್ದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು.
GEN 26:15 ಅವನ ತಂದೆ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗೆದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದರು.
GEN 26:16 ಅಬೀಮೆಲೆಕನು ಇಸಾಕನಿಗೆ, “ನಮ್ಮನ್ನು ಬಿಟ್ಟು ಹೋಗು, ಏಕೆಂದರೆ ನೀನು ನಮಗಿಂತ ಬಲಿಷ್ಠನಾಗಿಬಿಟ್ಟೆ,” ಎಂದನು.
GEN 26:17 ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ, ಅಲ್ಲಿ ವಾಸಮಾಡಿದನು.
GEN 26:18 ಇದಲ್ಲದೆ ಇಸಾಕನು ತನ್ನ ತಂದೆ ಅಬ್ರಹಾಮನ ದಿನಗಳಲ್ಲಿ ಅಗೆದಂಥ ಬಾವಿಗಳನ್ನು ತಿರುಗಿ ಅಗೆದನು. ಏಕೆಂದರೆ ಅಬ್ರಹಾಮನು ಮರಣದ ನಂತರ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರುಕೊಟ್ಟನು.
GEN 26:19 ಇಸಾಕನ ಸೇವಕರು ತಗ್ಗಿನಲ್ಲಿ ಅಗೆದಾಗ, ಅಲ್ಲಿ ಅವರಿಗೆ ಉಕ್ಕುವ ಒರತೆಯ ಬಾವಿಯು ಸಿಕ್ಕಿತು.
GEN 26:20 ಗೆರಾರಿನ ಮಂದೆಯನ್ನು ಮೇಯಿಸುವವರು, “ಈ ನೀರು ನಮ್ಮದು,” ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ, ಏಸೆಕ್, ಎಂದು ಹೆಸರಿಟ್ಟನು.
GEN 26:21 ತರುವಾಯ ಅವರು ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿಯೂ ಅವರು ಜಗಳವಾಡಿದಾಗ, ಅವನು ಅದಕ್ಕೆ, ಸಿಟ್ನಾ, ಎಂದು ಹೆಸರಿಟ್ಟನು.
GEN 26:22 ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು, “ಈಗ ಯೆಹೋವ ದೇವರು ನಮಗೆ ಸ್ಥಳವನ್ನು ಮಾಡಿದ್ದಾರೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಹೊಂದುವೆವು,” ಎಂದು ಹೇಳಿ ಅದಕ್ಕೆ, ರೆಹೋಬೋತ್, ಎಂದು ಹೆಸರಿಟ್ಟನು.
GEN 26:23 ಅಲ್ಲಿಂದ ಅವನು ಬೇರ್ಷೆಬಕ್ಕೆ ಹೋದನು.
GEN 26:24 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ, ಭಯಪಡಬೇಡ. ಏಕೆಂದರೆ ನಾನು ನಿನ್ನ ಸಂಗಡ ಇದ್ದೇನೆ, ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು,” ಎಂದರು.
GEN 26:25 ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು.
GEN 26:26 ತರುವಾಯ ಅಬೀಮೆಲೆಕನೂ, ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.
GEN 26:27 ಇಸಾಕನು ಅವರಿಗೆ, “ನನ್ನ ಬಳಿಗೆ ನೀವು ಏಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ, ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿಬಿಟ್ಟಿರಲ್ಲಾ?” ಎಂದನು.
GEN 26:28 ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ.
GEN 26:29 ಅದೇನೆಂದರೆ, ನಾವು ನಿನ್ನನ್ನು ಮುಟ್ಟದೆ, ನಿನಗೆ ಒಳ್ಳೆಯದನ್ನೇ ಮಾಡಿ, ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು. ಏಕೆಂದರೆ ನೀನು ಈಗ ಯೆಹೋವ ದೇವರಿಂದ ಆಶೀರ್ವಾದ ಹೊಂದಿರುವೆ,” ಎಂದರು.
GEN 26:30 ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ತಿಂದು ಕುಡಿದರು.
GEN 26:31 ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಅನಂತರ ಇಸಾಕನು ಅವರನ್ನು ಸಾಗಕಳುಹಿಸಿದನು. ಅವರು ಸಮಾಧಾನದಿಂದ ಹೊರಟು ಹೋದರು.
GEN 26:32 ಅದೇ ದಿನದಲ್ಲಿ ಇಸಾಕನ ಸೇವಕರು ಬಂದು ತಾವು ಅಗೆದ ಬಾವಿಯಲ್ಲಿ, “ನೀರು ಸಿಕ್ಕಿತ್ತು,” ಎಂದು ಅವನಿಗೆ ಹೇಳಿದರು.
GEN 26:33 ಅದಕ್ಕೆ ಅವನು, ಷಿಬಾ, ಎಂದು ಹೆಸರಿಟ್ಟನು. ಆದ್ದರಿಂದ ಇಂದಿನವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
GEN 26:34 ಏಸಾವನು ನಲವತ್ತು ವರ್ಷದವನಾಗಿದ್ದಾಗ, ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತಳನ್ನೂ, ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಯಾದನು.
GEN 26:35 ಇವರ ದೆಸೆಯಿಂದ ಇಸಾಕನಿಗೂ, ರೆಬೆಕ್ಕಳಿಗೂ ಮನೋವ್ಯಥೆಯಾಯಿತು.
GEN 27:1 ಇಸಾಕನು ಮುದುಕನಾಗಿ ನೋಡುವುದಕ್ಕಾಗದಷ್ಟು ಅವನ ಕಣ್ಣುಗಳು ಮಬ್ಬಾದಾಗ, ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು ಅವನಿಗೆ, “ನನ್ನ ಮಗನೇ,” ಎಂದನು. ಅವನು ಇಸಾಕನಿಗೆ, “ಇದ್ದೇನೆ,” ಎಂದನು.
GEN 27:2 ಆಗ ಇಸಾಕನು, “ಇಗೋ, ಈಗ ನಾನು ಮುದುಕನಾಗಿದ್ದೇನೆ. ನನ್ನ ಸಾವಿನ ದಿನವನ್ನು ಅರಿಯೆನು.
GEN 27:3 ಆದ್ದರಿಂದ ಈಗ ನೀನು ನಿನ್ನ ಆಯುಧಗಳನ್ನೂ, ಬಿಲ್ಲುಬತ್ತಳಿಕೆಯನ್ನೂ, ತೆಗೆದುಕೊಂಡು ಅಡವಿಗೆ ಹೋಗಿ ನನಗೋಸ್ಕರ ಬೇಟೆಯ ಮಾಂಸವನ್ನೂ,
GEN 27:4 ನಾನು ಇಷ್ಟಪಡುವ ರುಚಿಯಾದ ಊಟವನ್ನೂ ಸಿದ್ಧಮಾಡಿ ತೆಗೆದುಕೊಂಡು ಬಾ. ಆಗ ಸಾಯುವುದಕ್ಕಿಂತ ಮುಂಚೆ ನಾನು ನಿನ್ನನ್ನು ಆಶೀರ್ವದಿಸುವಂತೆ ಅದನ್ನು ಊಟಮಾಡುವೆನು,” ಎಂದನು.
GEN 27:5 ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ್ದನ್ನು ರೆಬೆಕ್ಕಳು ಕೇಳಿಸಿಕೊಂಡಳು. ಏಸಾವನು ಬೇಟೆಯಾಡಿ ಅದನ್ನು ತರುವುದಕ್ಕಾಗಿ ಅಡವಿಗೆ ಹೋದನು.
GEN 27:6 ಆಗ ರೆಬೆಕ್ಕಳು ತನ್ನ ಮಗ ಯಾಕೋಬನಿಗೆ, “ನಿನ್ನ ತಂದೆ ನಿನ್ನ ಸಹೋದರ ಏಸಾವನಿಗೆ,
GEN 27:7 ‘ನನಗೋಸ್ಕರ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಂದು, ನಾನು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಬಾ, ಆಗ ನಾನು ಸಾಯುವುದಕ್ಕಿಂತ ಮುಂಚೆ ಊಟಮಾಡಿ, ಯೆಹೋವ ದೇವರ ಸನ್ನಿಧಿಯಲ್ಲಿ ನಿನ್ನನ್ನು ಆಶೀರ್ವದಿಸುವೆನು,’ ಎಂದು ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ.
GEN 27:8 ಆದ್ದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು.
GEN 27:9 ನೀನು ಮಂದೆಯ ಬಳಿಗೆ ಹೋಗಿ, ಅಲ್ಲಿಂದ ಎರಡು ಒಳ್ಳೆಯ ಮೇಕೆಯ ಮರಿಗಳನ್ನು ತೆಗೆದುಕೊಂಡು ಬಾ. ನಿನ್ನ ತಂದೆಗೋಸ್ಕರ ನಾನು ಅವುಗಳನ್ನೂ, ಅವನು ಇಷ್ಟಪಡುವ ರುಚಿಯಾದ ಅಡಿಗೆಯನ್ನೂ ಸಿದ್ಧಮಾಡುತ್ತೇನೆ.
GEN 27:10 ನೀನು ಅದನ್ನು ನಿನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನು ಆಶೀರ್ವದಿಸುವಂತೆ ಊಟಮಾಡಲಿ,” ಎಂದಳು.
GEN 27:11 ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಸಹೋದರ ಏಸಾವನು ರೋಮವುಳ್ಳವನಾಗಿದ್ದಾನೆ, ನಾನು ನುಣುಪಾದ ಚರ್ಮವುಳ್ಳವನಾಗಿದ್ದೇನೆ.
GEN 27:12 ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ, ನನ್ನ ಗತಿಯೇನು? ನಾನು ಅವನಿಗೆ ಮೋಸಮಾಡುವವನಾಗಿ ಕಂಡು ಬಂದು, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು,” ಎಂದನು.
GEN 27:13 ಅವನ ತಾಯಿಯು ಅವನಿಗೆ, “ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ, ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ, ಅವುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು.
GEN 27:14 ಆಗ ಯಾಕೋಬನು ಹೋಗಿ ಅವುಗಳನ್ನು ಹಿಡಿದು ತೆಗೆದುಕೊಂಡು ತನ್ನ ತಾಯಿಗೆ ತಂದುಕೊಟ್ಟನು. ಅವನ ತಾಯಿಯು, ಅವನ ತಂದೆಯು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಸಿದ್ಧಮಾಡಿದಳು.
GEN 27:15 ತರುವಾಯ ರೆಬೆಕ್ಕಳು ಮನೆಯಲ್ಲಿದ್ದ ತನ್ನ ಹಿರಿಯ ಮಗನಾದ ಏಸಾವನ ಒಳ್ಳೆಯ ವಸ್ತ್ರವನ್ನು ತೆಗೆದುಕೊಂಡು, ತನ್ನ ಕಿರಿಯ ಮಗ ಯಾಕೋಬನಿಗೆ ಉಡಿಸಿದಳು.
GEN 27:16 ಇದಲ್ಲದೆ ಮೇಕೆಯ ಮರಿಗಳ ಚರ್ಮಗಳನ್ನು ಅವನ ಕೈಗಳ ಮೇಲೆಯೂ, ನುಣುಪಾದ ಅವನ ಕೊರಳಿನ ಮೇಲೆಯೂ ಕಟ್ಟಿದಳು.
GEN 27:17 ತರುವಾಯ ತಾನು ಸಿದ್ಧಮಾಡಿದ ರುಚಿಯಾದ ಊಟವನ್ನೂ, ರೊಟ್ಟಿಯನ್ನೂ ತನ್ನ ಮಗ ಯಾಕೋಬನ ಕೈಯಲ್ಲಿ ಕೊಟ್ಟಳು.
GEN 27:18 ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ, “ನನ್ನ ತಂದೆಯೇ,” ಎಂದನು. ಅದಕ್ಕೆ ಅವನು, “ನೀನು ಯಾರು?” ಎಂದನು.
GEN 27:19 ಯಾಕೋಬನು ತನ್ನ ತಂದೆಗೆ, “ನಾನು ನಿನ್ನ ಹಿರಿಯ ಮಗ ಏಸಾವನು. ನೀನು ನನಗೆ ಹೇಳಿದಂತೆ ಮಾಡಿದ್ದೇನೆ, ಎದ್ದು ಕುಳಿತುಕೋ. ನೀನು ನನ್ನನ್ನು ಆಶೀರ್ವದಿಸುವಂತೆ ನನ್ನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು.
GEN 27:20 ಇಸಾಕನು ತನ್ನ ಮಗನಿಗೆ, “ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು?” ಎಂದನು. ಅವನು, “ನಿನ್ನ ದೇವರಾದ ಯೆಹೋವ ದೇವರು ನನ್ನೆದುರಿಗೆ ಅದು ಬರುವಂತೆ ಮಾಡಿದರು,” ಎಂದನು.
GEN 27:21 ಆಗ ಇಸಾಕನು ಯಾಕೋಬನಿಗೆ, “ನನ್ನ ಮಗನೇ, ನೀನೇ ನನ್ನ ಮಗ ಏಸಾವನು ಹೌದೋ, ಅಲ್ಲವೋ ಎಂದು ನಾನು ನಿನ್ನನ್ನು ಮುಟ್ಟಿನೋಡುವಂತೆ ಹತ್ತಿರ ಬಾ,” ಎಂದನು.
GEN 27:22 ಆಗ ಯಾಕೋಬನು ತನ್ನ ತಂದೆ ಇಸಾಕನ ಹತ್ತಿರ ಬಂದನು. ಇಸಾಕನು ಅವನನ್ನು ಮುಟ್ಟಿ, “ಸ್ವರವು ಯಾಕೋಬನ ಸ್ವರವಾಗಿದೆ, ಆದರೆ ಕೈಗಳು ಏಸಾವನ ಕೈಗಳು,” ಎಂದು ಹೇಳಿದನು.
GEN 27:23 ಅವನ ಕೈಗಳು ಅವನ ಅಣ್ಣ ಏಸಾವನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ, ಅವನು ಯಾರೆಂದು ತಿಳಿಯದೆ, ಅವನನ್ನು ಆಶೀರ್ವದಿಸಿದನು.
GEN 27:24 ಮತ್ತೆ ಅವನು, “ನೀನು ನನ್ನ ಮಗ ಏಸಾವನೋ?” ಎಂದಾಗ. ಯಾಕೋಬನು, “ನಾನೇ,” ಎಂದನು.
GEN 27:25 ಆಗ ಇಸಾಕನು, “ನನ್ನ ಮಗನೇ, ನೀನು ತಂದದ್ದನ್ನು ಕೊಡು, ಊಟಮಾಡಿ, ನಿನ್ನನ್ನು ಆಶೀರ್ವದಿಸುವೆನು,” ಎಂದನು. ಆಗ ಯಾಕೋಬನು ಅದನ್ನು ಹತ್ತಿರ ತೆಗೆದುಕೊಂಡು ಬಂದಾಗ ಅವನು ಊಟಮಾಡಿದನು. ಅವನು ದ್ರಾಕ್ಷಾರಸವನ್ನು ತಂದಾಗ, ಅದನ್ನು ಕುಡಿದನು.
GEN 27:26 ಅವನ ತಂದೆ ಇಸಾಕನು ಅವನಿಗೆ, “ನನ್ನ ಮಗನೇ, ಹತ್ತಿರ ಬಂದು ನನಗೆ ಮುದ್ದಿಡು,” ಎಂದನು.
GEN 27:27 ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ, ಅವನನ್ನು ಹೀಗೆ ಆಶೀರ್ವದಿಸಿದನು, “ನನ್ನ ಮಗನ ವಾಸನೆಯು ಯೆಹೋವ ದೇವರು ಆಶೀರ್ವದಿಸಿದ ಹೊಲದ ವಾಸನೆಯಂತೆ ಇದೆ.
GEN 27:28 ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ.
GEN 27:29 ಜನರು ನಿನಗೆ ಸೇವೆಮಾಡಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಆಗಲಿ.”
GEN 27:30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ, ಯಾಕೋಬನು ತನ್ನ ತಂದೆ ಇಸಾಕನ ಸಮ್ಮುಖದಿಂದ ಹೊರಟುಹೋದನು. ಆಮೇಲೆ ಅವನ ಸಹೋದರ ಏಸಾವನು ಬೇಟೆಯಿಂದ ಬಂದನು.
GEN 27:31 ಅವನೂ ಸಹ ರುಚಿಯಾದ ಊಟವನ್ನು ಸಿದ್ಧಮಾಡಿ, ತನ್ನ ತಂದೆಯ ಬಳಿಗೆ ತಂದು, “ನನ್ನ ತಂದೆಯೇ, ಎದ್ದು ನನ್ನನ್ನು ಆಶೀರ್ವದಿಸುವಂತೆ ನಿನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು.
GEN 27:32 ಅವನ ತಂದೆ ಇಸಾಕನು ಅವನಿಗೆ, “ನೀನು ಯಾರು?” ಎಂದಾಗ. ಅವನು, “ನಾನು ನಿನ್ನ ಚೊಚ್ಚಲ ಮಗ ಏಸಾವನು,” ಎಂದನು.
GEN 27:33 ಆಗ ಇಸಾಕನು ಬಹಳವಾಗಿ ನಡುಗುತ್ತಾ, “ನೀನು ಬರುವುದಕ್ಕಿಂತ ಮೊದಲು ಬೇಟೆಯಾಡಿ ನನಗೆ ಊಟ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವುದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವದಿಸಿದೆನು. ಅವನು ಆಶೀರ್ವಾದ ಹೊಂದಿರುವನು,” ಎಂದನು.
GEN 27:34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ, ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ, “ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು,” ಎಂದನು.
GEN 27:35 ಇಸಾಕನು, “ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡಿದ್ದಾನೆ,” ಎಂದನು.
GEN 27:36 ಅದಕ್ಕೆ ಏಸಾವನು, “ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ? ಅವನು ನನ್ನನ್ನು ಎರಡು ಸಾರಿ ವಂಚಿಸಿದ್ದಾನೆ. ಅವನು ನನ್ನ ಚೊಚ್ಚಲತನವನ್ನು ತೆಗೆದುಕೊಂಡಿದ್ದಾನೆ. ಇಗೋ, ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸಲಿಲ್ಲವೋ?” ಎಂದನು.
GEN 27:37 ಇಸಾಕನು ಉತ್ತರವಾಗಿ ಏಸಾವನಿಗೆ, “ಅವನನ್ನು ನಿನಗೆ ದೊರೆಯನನ್ನಾಗಿ ನೇಮಿಸಿದ್ದೇನೆ, ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕರನ್ನಾಗಿ ಕೊಟ್ಟು, ಧಾನ್ಯದಿಂದಲೂ ಹೊಸ ದ್ರಾಕ್ಷಾರಸದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ?” ಎಂದನು.
GEN 27:38 ಏಸಾವನು ತನ್ನ ತಂದೆಗೆ, “ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಆಶೀರ್ವದಿಸು,” ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು.
GEN 27:39 ಆಗ ಅವನ ತಂದೆ ಇಸಾಕನು ಉತ್ತರವಾಗಿ ಅವನಿಗೆ ಹೀಗೆ ಹೇಳಿದನು, “ನಿನ್ನ ನಿವಾಸವು ಭೂಮಿಯ ಐಶ್ವರ್ಯದಿಂದಲೂ ಮೇಲಿನ ಆಕಾಶದಿಂದ ಬೀಳುವ ಮಂಜಿನಿಂದಲೂ ಇರುವುದು.
GEN 27:40 ನೀನು ಖಡ್ಗದಿಂದಲೇ ಬದುಕುವೆ, ನಿನ್ನ ಸಹೋದರರನ್ನು ನೀನು ಸೇವೆಮಾಡುವೆ, ಆದರೆ ನಿನ್ನ ತಾಳ್ಮೆ ತಪ್ಪಿದಾಗ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದುಹಾಕುವೆ.”
GEN 27:41 ಏಸಾವನು ತನ್ನ ತಂದೆಯು ಅವನಿಗೆ ಕೊಟ್ಟ ಆಶೀರ್ವಾದಕ್ಕೋಸ್ಕರ ಯಾಕೋಬನನ್ನು ದ್ವೇಷಿಸಿದನು. ಏಸಾವನು, “ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸಮೀಪವಾಗಿವೆ. ತರುವಾಯ ನಾನು ನನ್ನ ಸಹೋದರ ಯಾಕೋಬನನ್ನು ಕೊಲ್ಲುವೆನು,” ಎಂದು ತನ್ನಲ್ಲಿಯೇ ಅಂದುಕೊಂಡನು.
GEN 27:42 ರೆಬೆಕ್ಕಳಿಗೆ ತನ್ನ ಹಿರಿಯ ಮಗ ಏಸಾವನ ಬಗ್ಗೆ ಗ್ರಹಿಸಿದಾಗ, ಆಕೆಯು ತನ್ನ ಕಿರಿಯ ಮಗ ಯಾಕೋಬನನ್ನು ಕರೆದು ಅವನಿಗೆ, “ನಿನ್ನ ಸಹೋದರ ಏಸಾವನು ನಿನ್ನನ್ನು ಕೊಂದು, ತನ್ನನ್ನು ಸಂತೈಸಿಕೊಳ್ಳುವುದಕ್ಕಿದ್ದಾನೆ.
GEN 27:43 ಆದ್ದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು. ಎದ್ದು ಹಾರಾನಿನಲ್ಲಿರುವ ನನ್ನ ಸಹೋದರ ಲಾಬಾನನ ಬಳಿಗೆ ಓಡಿಹೋಗು.
GEN 27:44 ನಿನ್ನ ಸಹೋದರನ ಕೋಪವು ತೀರುವವರೆಗೆ ಕೆಲವು ದಿವಸಗಳು ಅಲ್ಲೇ ಇರು.
GEN 27:45 ನಿನ್ನ ಕಡೆಗಿರುವ ನಿನ್ನ ಸಹೋದರನ ಕೋಪವು ತೀರಿಹೋಗಿ, ನೀನು ಅವನಿಗೆ ಮಾಡಿದ್ದನ್ನು ಅವನು ಮರೆಯುವವರೆಗೆ ನೀನು ಅಲ್ಲೇ ಇರು. ತರುವಾಯ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುವೆನು. ಒಂದೇ ದಿನದಲ್ಲಿ ನಾನು ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದಳು.
GEN 27:46 ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು.
GEN 28:1 ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಆಜ್ಞಾಪಿಸಿದ್ದೇನೆಂದರೆ, “ಕಾನಾನ್ಯರ ಸ್ತ್ರೀಯರನ್ನು ನೀನು ಮದುವೆಯಾಗಬಾರದು.
GEN 28:2 ಕೂಡಲೇ ನಿನ್ನ ತಾಯಿಯ ತಂದೆ ಬೆತೂಯೇಲನು ಇರುವ ಪದ್ದನ್ ಅರಾಮಿಗೆ ಹೋಗು. ನಿನ್ನ ತಾಯಿಯ ಸಹೋದರ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೋ.
GEN 28:3 ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಿ, ನೀನು ದೊಡ್ಡ ಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ.
GEN 28:4 ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ನೀನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೂ, ನಿನ್ನ ಸಂತತಿಗೂ ಕೊಡಲಿ,” ಎಂದನು.
GEN 28:5 ಇಸಾಕನು ಯಾಕೋಬನನ್ನು ಕಳುಹಿಸಿದಾಗ, ಅವನು ಪದ್ದನ್ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿ ರೆಬೆಕ್ಕಳ ಸಹೋದರ ಅರಾಮಿನವನಾದ ಬೆತೂಯೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
GEN 28:6 ಇಸಾಕನು ಯಾಕೋಬನನ್ನು ಆಶೀರ್ವದಿಸಿ, ಅವನಿಗೆ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ಪದ್ದನ್ ಅರಾಮಿಗೆ ಕಳುಹಿಸಿದ್ದನ್ನೂ, ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ, ಅವನಿಗೆ, “ಕಾನಾನ್ಯರ ಪುತ್ರಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳಬಾರದು,” ಎಂದು ಆಜ್ಞಾಪಿಸಿದ್ದನ್ನೂ, ಏಸಾವನು ತಿಳಿದುಕೊಂಡನು.
GEN 28:7 ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ, ಪದ್ದನ್ ಅರಾಮಿಗೆ ಹೋದದ್ದನ್ನೂ
GEN 28:8 ಕಾನಾನ್ಯರ ಪುತ್ರಿಯರು ತನ್ನ ತಂದೆ ಇಸಾಕನಿಗೆ ಮೆಚ್ಚಿಗೆಯಾಗಲಿಲ್ಲವೆಂದು ಏಸಾವನು ತಿಳಿದು,
GEN 28:9 ಅವನು ಇಷ್ಮಾಯೇಲನ ಬಳಿಗೆ ಹೋಗಿ, ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗ ಇಷ್ಮಾಯೇಲನ ಮಗಳೂ, ನೆಬಾಯೋತನ ತಂಗಿಯೂ ಆಗಿರುವ ಮಹಲತ್ ಎಂಬವಳನ್ನೂ ಮದುವೆಮಾಡಿಕೊಂಡನು.
GEN 28:10 ಆಗ ಯಾಕೋಬನು ಬೇರ್ಷೆಬದಿಂದ ಹಾರಾನಿನ ಕಡೆಗೆ ಹೊರಟನು.
GEN 28:11 ಅವನು ಒಂದು ಸ್ಥಳಕ್ಕೆ ಸೇರಿದಾಗ, ಸೂರ್ಯಾಸ್ತಮವಾದದ್ದರಿಂದ ಅಲ್ಲಿ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ತಲೆ ದಿಂಬನ್ನಾಗಿ ಇಟ್ಟುಕೊಂಡು, ಆ ಸ್ಥಳದಲ್ಲಿ ಮಲಗಿಕೊಂಡನು.
GEN 28:12 ಆಗ ಅವನು ಒಂದು ಕನಸುಕಂಡನು. ಏಣಿಯು ಭೂಮಿಯ ಮೇಲೆ ನಿಂತಿತ್ತು. ಅದರ ತುದಿಯು ಪರಲೋಕಕ್ಕೆ ಮುಟ್ಟಿತ್ತು. ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
GEN 28:13 ಇದಲ್ಲದೆ ಯೆಹೋವ ದೇವರು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರೂ, ಇಸಾಕನ ದೇವರೂ ಆದ ಯೆಹೋವ ದೇವರು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು.
GEN 28:14 ನಿನ್ನ ಸಂತತಿಯು ಭೂಮಿಯ ಧೂಳಿನಂತೆ ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣೋತ್ತರಗಳಿಗೆ ಹರಡಿಕೊಳ್ಳುವೆ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಜನರು ಆಶೀರ್ವಾದ ಹೊಂದುವರು.
GEN 28:15 ಇಗೋ, ನಾನು ನಿನ್ನ ಸಂಗಡ ಇದ್ದು, ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಈ ದೇಶಕ್ಕೆ ನಿನ್ನನ್ನು ತಿರುಗಿ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವವರೆಗೆ ನಿನ್ನನ್ನು ಬಿಡುವುದಿಲ್ಲ,” ಎಂದರು.
GEN 28:16 ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ನಿಶ್ಚಯವಾಗಿ ಈ ಸ್ಥಳದಲ್ಲಿ ಯೆಹೋವ ದೇವರು ಇದ್ದಾರೆ. ಇದನ್ನು ನಾನು ಅರಿಯಲಿಲ್ಲ,” ಎಂದನು.
GEN 28:17 ಅವನು ಭಯಪಟ್ಟು, “ಈ ಸ್ಥಳವು ಎಷ್ಟೋ ಗಂಭೀರವಾದದ್ದು, ಇದು ದೇವರ ಮನೆಯೇ ಹೊರತು ಬೇರೆಯಲ್ಲ. ಇದೇ ಪರಲೋಕದ ಬಾಗಿಲು,” ಎಂದನು.
GEN 28:18 ಯಾಕೋಬನು ಬೆಳಿಗ್ಗೆ ಎದ್ದು, ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು, ಅದನ್ನು ಸ್ತಂಭವಾಗಿ ನೆಟ್ಟು, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
GEN 28:19 ಇದಲ್ಲದೆ ಅವನು ಆ ಸ್ಥಳಕ್ಕೆ, ಬೇತೇಲ್, ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಸ್ಥಳಕ್ಕೆ, ಲೂಜ್ ಎಂದು ಹೆಸರಿತ್ತು.
GEN 28:20 ಆಗ ಯಾಕೋಬನು ಪ್ರಮಾಣಮಾಡಿ, “ದೇವರು ನನ್ನ ಸಂಗಡ ಇದ್ದು, ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ ನನಗೆ ಕೊಟ್ಟು,
GEN 28:21 ನನ್ನನ್ನು ಸಮಾಧಾನವಾಗಿ ನನ್ನ ತಂದೆಯ ಮನೆಗೆ ತಿರುಗಿ ಬರಮಾಡಿದರೆ, ಯೆಹೋವ ನನಗೆ ದೇವರಾಗಿರುವರು.
GEN 28:22 ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವುದು. ಆಗ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ದೇವರಿಗೆ ನಾನು ಖಂಡಿತವಾಗಿ ಕೊಡುವೆನು,” ಎಂದನು.
GEN 29:1 ಆಗ ಯಾಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು.
GEN 29:2 ಅವನು ಕಣ್ಣೆತ್ತಿ ನೋಡಲಾಗಿ, ಹೊಲದಲ್ಲಿ ಒಂದು ಬಾವಿ ಇತ್ತು. ಅದರ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿದ್ದವು. ಏಕೆಂದರೆ ಆ ಬಾವಿಯ ನೀರನ್ನು ಮಂದೆಗಳಿಗೆ ಕುಡಿಸುತ್ತಿದ್ದರು. ಆ ಬಾವಿಯ ಮೇಲೆ ಒಂದು ದೊಡ್ಡ ಕಲ್ಲು ಇತ್ತು.
GEN 29:3 ಅಲ್ಲಿ ಮಂದೆಗಳೆಲ್ಲಾ ಕೂಡಿದಾಗ, ಬಾವಿಯ ಮೇಲಿದ್ದ ಕಲ್ಲನ್ನು ಉರುಳಿಸಿ, ಕುರಿಗಳಿಗೆ ನೀರನ್ನು ಕುಡಿಸಿ, ಕಲ್ಲನ್ನು ಮತ್ತೆ ಅದರ ಸ್ಥಳದಲ್ಲಿ ಇಡುತ್ತಿದ್ದರು.
GEN 29:4 ಯಾಕೋಬನು ಅವರಿಗೆ, “ನನ್ನ ಸಹೋದರರೇ, ನೀವು ಎಲ್ಲಿಯವರು?” ಎಂದಾಗ. ಅವರು, “ನಾವು ಹಾರಾನಿನವರು,” ಎಂದರು.
GEN 29:5 ಅದಕ್ಕವನು ಅವರಿಗೆ, “ನಾಹೋರನ ಮೊಮ್ಮಗ ಲಾಬಾನನನ್ನು ನೀವು ಬಲ್ಲಿರೋ?” ಎಂದಾಗ. ಅವರು, “ನಾವು ಅವನನ್ನು ಬಲ್ಲೆವು,” ಎಂದರು.
GEN 29:6 ಯಾಕೋಬನು ಅವರಿಗೆ, “ಅವನು ಕ್ಷೇಮವಾಗಿದ್ದಾನೋ?” ಎಂದು ಕೇಳಿದಾಗ, ಆಗ ಅವರು, “ಕ್ಷೇಮವಾಗಿದ್ದಾನೆ, ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು.
GEN 29:7 ಯಾಕೋಬನು ಅವರಿಗೆ, “ಇನ್ನೂ ಬಹಳ ಹೊತ್ತು ಇದೆ. ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ. ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ,” ಎಂದನು.
GEN 29:8 ಅದಕ್ಕೆ ಅವರು, “ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಉರುಳಿಸುತ್ತಾರೆ. ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ,” ಎಂದರು.
GEN 29:9 ಯಾಕೋಬನು ಇನ್ನೂ ಅವರ ಸಂಗಡ ಮಾತನಾಡುತ್ತಿದ್ದಾಗ, ಕುರಿಗಳನ್ನು ಮೇಯಿಸುವ ರಾಹೇಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು.
GEN 29:10 ಯಾಕೋಬನು ತನ್ನ ತಾಯಿಯ ಸಹೋದರ ಲಾಬಾನನ ಮಗಳಾದ ರಾಹೇಲಳನ್ನೂ, ಅವಳ ಕುರಿಗಳನ್ನೂ ನೋಡಿದಾಗ, ಯಾಕೋಬನು ಹತ್ತಿರ ಬಂದು, ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ, ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು.
GEN 29:11 ಆಗ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು, ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು.
GEN 29:12 ಯಾಕೋಬನು ರಾಹೇಲಳಿಗೆ, ತಾನು ಆಕೆಯ ತಂದೆಗೆ ಸೋದರಳಿಯನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ಆಕೆಯು ಓಡಿಹೋಗಿ ತನ್ನ ತಂದೆಗೆ ತಿಳಿಸಿದಳು.
GEN 29:13 ಲಾಬಾನನು ತನ್ನ ಸಹೋದರಿಯ ಮಗ ಯಾಕೋಬನ ಸುದ್ದಿಯನ್ನು ಕೇಳಿದಾಗ, ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು.
GEN 29:14 ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು. ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.
GEN 29:15 ಲಾಬಾನನು ಯಾಕೋಬನಿಗೆ, “ನೀನು ನನ್ನ ಸಂಬಂಧಿಕನಾಗಿರುವುದರಿಂದ ಸುಮ್ಮನೆ ನನಗೆ ಸೇವೆ ಮಾಡಬೇಕೆ? ನಿನ್ನ ಸಂಬಳ ಎಷ್ಟೆಂಬುದನ್ನು ನನಗೆ ಹೇಳು?” ಎಂದನು.
GEN 29:16 ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು.
GEN 29:17 ಲೇಯಳ ಕಣ್ಣುಗಳು ಕಾಂತಿಹೀನವಾಗಿದ್ದವು. ಆದರೆ ರಾಹೇಲಳು ಸುಂದರಿಯೂ ರೂಪವತಿಯೂ ಆಗಿದ್ದಳು.
GEN 29:18 ಹೀಗಿರುವುದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಾನು ನಿನ್ನ ಕಿರಿ ಮಗಳಾಗಿರುವ ರಾಹೇಲಳಿಗೋಸ್ಕರ ನಿಮ್ಮಲ್ಲಿ ಏಳು ವರ್ಷ ಸೇವೆ ಮಾಡುತ್ತೇನೆ,” ಎಂದನು.
GEN 29:19 ಅದಕ್ಕೆ ಲಾಬಾನನು, “ಅವಳನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ, ನಿನಗೆ ಕೊಡುವುದು ಒಳ್ಳೆಯದು. ಆದ್ದರಿಂದ ನನ್ನ ಸಂಗಡವಿರು,” ಎಂದನು.
GEN 29:20 ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರ್ಷಗಳು ಅವನಿಗೆ ಸ್ವಲ್ಪದಿನಗಳಾಗಿ ತೋರಿದವು.
GEN 29:21 ತರುವಾಯ ಯಾಕೋಬನು ಲಾಬಾನನಿಗೆ, “ನನ್ನ ಸೇವಾ ದಿನಗಳು ಪೂರ್ತಿಯಾದವು. ನಾನು ನನ್ನ ಹೆಂಡತಿಯೊಂದಿಗೆ ಬಾಳುವಂತೆ ಆಕೆಯನ್ನು ನನಗೆ ಕೊಡು,” ಎಂದನು.
GEN 29:22 ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣ ಮಾಡಿಸಿದನು.
GEN 29:23 ರಾತ್ರಿಯಾದಾಗ ಅವನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕರೆತಂದನು. ಆಗ ಅವನು ಲೇಯಳ ಬಳಿಗೆ ಬಂದನು.
GEN 29:24 ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಳನ್ನು, ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು.
GEN 29:25 ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಯಾಕೋಬನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದೆ? ರಾಹೇಲಳಿಗೋಸ್ಕರ ನಾನು ನಿನಗೆ ಸೇವೆಮಾಡಿದೆನಲ್ಲಾ? ಏಕೆ ನನಗೆ ಮೋಸಮಾಡಿದೆ?” ಎಂದನು.
GEN 29:26 ಅದಕ್ಕೆ ಲಾಬಾನನು, “ಹಿರಿಯಳಿಗಿಂತ ಮೊದಲು ಕಿರಿಯಳನ್ನು ಮದುವೆ ಮಾಡಿಕೊಡುವುದು ನಮ್ಮ ಪದ್ಧತಿಯಲ್ಲ.
GEN 29:27 ಹಿರಿಯಳೊಡನೆ ಈ ವಾರವನ್ನು ಪೂರೈಸು. ತರುವಾಯ ನೀನು ಇನ್ನು ಬೇರೆ ಏಳು ವರ್ಷಗಳವರೆಗೆ ಸೇವೆ ಮಾಡಲು ಒಪ್ಪಿಕೊಂಡರೆ, ನಾನು ಕಿರಿಯ ಮಗಳನ್ನು ನಿನಗೆ ಕೊಡುತ್ತೇನೆ,” ಎಂದನು.
GEN 29:28 ಯಾಕೋಬನು ಅದರಂತೆ ಮಾಡಿ, ವಾರವನ್ನು ಪೂರೈಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
GEN 29:29 ಲಾಬಾನನು ತನ್ನ ಮಗಳಾದ ರಾಹೇಲಳಿಗೆ, ತನ್ನ ದಾಸಿಯಾದ ಬಿಲ್ಹಳನ್ನು ದಾಸಿಯಾಗಿ ಕೊಟ್ಟನು.
GEN 29:30 ಯಾಕೋಬನು ರಾಹೇಲಳೊಂದಿಗೆ ಕೂಡಿ, ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಸಿದನು. ಇನ್ನೂ ಏಳು ವರ್ಷ ಲಾಬಾನನ ಬಳಿಯಲ್ಲಿ ಸೇವೆ ಮಾಡಿದನು.
GEN 29:31 ಲೇಯಳು ತಾತ್ಸಾರಕ್ಕೆ ತುತ್ತಾಗುವಳೆಂದು ಯೆಹೋವ ದೇವರು ಕಂಡು, ಅವಳು ಗರ್ಭಿಣಿಯಾಗುವಂತೆ ಅನುಗ್ರಹಮಾಡಿದರು. ಆದರೆ ರಾಹೇಲಳು ಬಂಜೆಯಾಗಿದ್ದಳು.
GEN 29:32 ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
GEN 29:33 ಲೇಯಳು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಾನು ತಾತ್ಸಾರವಾಗಿದ್ದೆ ಎಂದು ಯೆಹೋವ ದೇವರು ಕೇಳಿ, ಇವನನ್ನು ನನಗೆ ಕೊಟ್ಟಿದ್ದಾರೆ,” ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು.
GEN 29:34 ಮತ್ತೊಮ್ಮೆ ಲೇಯಳು ಮಗನನ್ನು ಹೆತ್ತು, “ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಏಕೆಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ,” ಎಂದು ಹೇಳಿ, ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
GEN 29:35 ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ಈಗ ನಾನು ಯೆಹೋವ ದೇವರನ್ನು ಸ್ತುತಿಸುವೆನು,” ಎಂದು ಹೇಳಿ, ಅವನಿಗೆ ಯೆಹೂದ ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಮಕ್ಕಳಾಗಲಿಲ್ಲ.
GEN 30:1 ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರಲಿಲ್ಲ ಎಂದು ತಿಳಿದಾಗ, ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೆಕಿಚ್ಚು ಪಟ್ಟು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ,” ಎಂದಳು.
GEN 30:2 ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿಕೊಂಡು, “ನಿನಗೆ ಗರ್ಭ ಫಲವನ್ನು ಕೊಡುವ ದೇವರ ಸ್ಥಾನದಲ್ಲಿ ನಾನಿದ್ದೇನೋ?” ಎಂದನು.
GEN 30:3 ಅದಕ್ಕೆ ಆಕೆಯು, “ನನ್ನ ದಾಸಿ ಬಿಲ್ಹಳು ಇದ್ದಾಳೆ, ಅವಳ ಬಳಿಗೆ ಹೋಗು, ಅವಳು ಹೆತ್ತು ನನ್ನ ಮಡಿಲಲ್ಲಿ ಇಡಲಿ. ಅವಳಿಂದ ನನಗೆ ಮಕ್ಕಳಾಗುವರು,” ಎಂದಳು.
GEN 30:4 ಹೀಗೆ ಅವನಿಗೆ ತನ್ನ ದಾಸಿ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳನ್ನು ಸ್ವೀಕರಿಸಿದನು.
GEN 30:5 ಬಿಲ್ಹಳು ಗರ್ಭಿಣಿಯಾಗಿ, ಯಾಕೋಬನಿಗೆ ಮಗನನ್ನು ಹೆತ್ತಳು.
GEN 30:6 ರಾಹೇಲಳು, “ದೇವರು ನನಗೆ ನ್ಯಾಯತೀರಿಸಿ, ನನ್ನ ಸ್ವರವನ್ನು ಕೇಳಿ, ನನಗೆ ಮಗನನ್ನು ಕೊಟ್ಟಿದ್ದಾರೆ,” ಎಂದು ಹೇಳಿದಳು. ಆದ್ದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು.
GEN 30:7 ರಾಹೇಲಳ ದಾಸಿ ಬಿಲ್ಹಳು ಮತ್ತೆ ಗರ್ಭಿಣಿಯಾಗಿ, ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.
GEN 30:8 ಆಗ ರಾಹೇಲಳು, “ಅಧಿಕವಾದ ಹೋರಾಟಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ,” ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು.
GEN 30:9 ಲೇಯಳು ತಾನು ಹೆರುವುದು ನಿಂತಿತೆಂದು ತಿಳಿದು, ತನ್ನ ದಾಸಿ ಜಿಲ್ಪಳನ್ನು ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು.
GEN 30:10 ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು.
GEN 30:11 ಆಗ ಲೇಯಳು, “ಎಂಥಾ ಸೌಭಾಗ್ಯ,” ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು.
GEN 30:12 ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.
GEN 30:13 ಆಗ ಲೇಯಳು, “ನಾನು ಧನ್ಯಳಾದೆನು, ಏಕೆಂದರೆ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು,” ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು.
GEN 30:14 ರೂಬೇನನು ಗೋಧಿ ಕೊಯ್ಯುವ ಕಾಲದಲ್ಲಿ ಹೋಗಿ, ಹೊಲದಲ್ಲಿ ದುದಾಯಿ ಫಲಗಳನ್ನು ಕಂಡು, ತಾಯಿ ಲೇಯಳ ಬಳಿಗೆ ಕೆಲವು ಫಲಗಳನ್ನು ತಂದಾಗ, ರಾಹೇಲಳು ಲೇಯಳಿಗೆ, “ನಿನ್ನ ಮಗನು ತಂದ ಫಲಗಳಲ್ಲಿ ಕೆಲವನ್ನು ನನಗೆ ಕೊಡು,” ಎಂದಳು.
GEN 30:15 ಅದಕ್ಕೆ ಆಕೆಯು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯ ಫಲಗಳನ್ನು ಸಹ ತೆಗೆದುಕೊಳ್ಳುವಿಯೋ?” ಎಂದಳು. ಅದಕ್ಕೆ ರಾಹೇಲಳು, “ನಿನ್ನ ಮಗನು ತಂದ ದುದಾಯ ಫಲಗಳಿಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ,” ಎಂದಳು.
GEN 30:16 ಯಾಕೋಬನು ಸಾಯಂಕಾಲದಲ್ಲಿ ಹೊಲದಿಂದ ಬಂದಾಗ, ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನ ಬಳಿಗೆ ಬರಬೇಕು. ನನ್ನ ಮಗನು ತಂದ ದುದಾಯಿ ಫಲಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ,” ಎಂದಳು. ಆದ್ದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು.
GEN 30:17 ಆಗ ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದ್ದರಿಂದ, ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು.
GEN 30:18 ಲೇಯಳು, “ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾರೆ,” ಎಂದು ಹೇಳಿ, ಅವನಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.
GEN 30:19 ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು,
GEN 30:20 ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾರೆ. ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ, ನನ್ನ ಗಂಡನು ಈಗಲಾದರೂ ನನ್ನನ್ನು ಗೌರವಿಸುವನು,” ಎಂದು ಹೇಳಿ, ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು.
GEN 30:21 ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು, ಆಕೆಗೆ ದೀನಾ ಎಂದು ಹೆಸರಿಟ್ಟಳು.
GEN 30:22 ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿಕೊಂಡರು. ದೇವರು ಆಕೆಯ ಮೊರೆಯನ್ನು ಕೇಳಿ, ಆಕೆಗೆ ಮಕ್ಕಳಾಗುವಂತೆ ಅನುಗ್ರಹಮಾಡಿದರು.
GEN 30:23 ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು, “ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾರೆ,” ಎಂದಳು.
GEN 30:24 ಆಕೆಯು, “ಯೆಹೋವ ದೇವರು ನನಗೆ ಮತ್ತೊಬ್ಬ ಮಗನನ್ನು ದಯಪಾಲಿಸುವರು,” ಎಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.
GEN 30:25 ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ, “ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವಂತೆ ನನ್ನನ್ನು ಕಳುಹಿಸಿಕೊಡು.
GEN 30:26 ನಾನು ಯಾರಿಗೋಸ್ಕರ ನಿನಗೆ ಸೇವೆ ಮಾಡಿದೆನೋ, ಆ ನನ್ನ ಹೆಂಡತಿಯರನ್ನೂ, ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀಯೆ,” ಎಂದನು.
GEN 30:27 ಲಾಬಾನನು ಅವನಿಗೆ, “ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವನಾಗಿದ್ದರೆ, ನನ್ನ ಬಳಿಯಲ್ಲಿಯೇ ಇರು. ಏಕೆಂದರೆ ಯೆಹೋವ ದೇವರು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾರೆಂದು ನಾನು ಭವಿಷ್ಯಜ್ಞಾನ ಅನುಭವದಿಂದ ಕಲಿತುಕೊಂಡಿದ್ದೇನೆ.
GEN 30:28 ನೀನು ನಿನ್ನ ಸಂಬಳವನ್ನು ನಿರ್ಣಯಿಸು. ಅದನ್ನು ನಾನು ನಿನಗೆ ಕೊಡುವೆನು,” ಎಂದನು.
GEN 30:29 ಅದಕ್ಕೆ ಯಾಕೋಬನು ಅವನಿಗೆ, “ನಾನು ನಿನಗೆ ಮಾಡಿದ ಸೇವೆಯನ್ನೂ, ನಿನ್ನ ಪಶುಗಳು ನನ್ನ ಬಳಿಯಲ್ಲಿ ಹೇಗೆ ಅಭಿವೃದ್ಧಿ ಆಗಿವೆ ಎಂಬುದನ್ನೂ ನೀನು ಬಲ್ಲೆ.
GEN 30:30 ನಾನು ಬರುವುದಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಯೆಹೋವ ದೇವರು ನಿನ್ನನ್ನು ಆಶೀರ್ವದಿಸಿದ್ದಾರೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ?” ಎಂದನು.
GEN 30:31 ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು. ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು.
GEN 30:32 ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದು ಹೋಗುವೆನು. ಕುರಿಗಳಲ್ಲಿ ಕಂದುಬಣ್ಣದವುಗಳನ್ನೆಲ್ಲಾ, ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ.
GEN 30:33 ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ, ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿಕೊಡುವುದು. ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳು ನನ್ನ ಬಳಿಯಲ್ಲಿದ್ದರೆ, ಅವು ಕದ್ದವುಗಳು ಎಂದು ಎಣಿಕೆಯಾಗಿರಲಿ,” ಎಂದನು.
GEN 30:34 ಲಾಬಾನನು, “ನೀನು ಹೇಳಿದಂತೆಯೇ ಆಗಲಿ,” ಎಂದನು.
GEN 30:35 ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ, ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಂದು ಬಣ್ಣವಿದ್ದವುಗಳನ್ನೂ ವಿಂಗಡಿಸಿ, ತನ್ನ ಪುತ್ರರ ಕೈಗೆ ಕೊಟ್ಟನು.
GEN 30:36 ತನಗೂ, ಯಾಕೋಬನಿಗೂ ಮಧ್ಯದಲ್ಲಿ ಮೂರು ದಿನಗಳ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಯನ್ನು ಮೇಯಿಸಿದನು.
GEN 30:37 ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು, ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು, ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು.
GEN 30:38 ಮಂದೆಗಳು ನೀರು ಕುಡಿಯುವುದಕ್ಕೆ ಬಂದಾಗ, ಅವು ಗರ್ಭಧರಿಸಬೇಕೆಂದು ನೀರು ಕುಡಿಯುವ ದೋಣಿಗಳಲ್ಲಿ ತಾನು ತೊಗಟೆ ಸುಲಿದ ಕೋಲುಗಳನ್ನು ಅವುಗಳ ಮುಂದೆ ಇಟ್ಟನು.
GEN 30:39 ಮಂದೆಗಳು ಆ ಕೋಲುಗಳನ್ನು ನೋಡಿ, ಸಂಗಮ ಮಾಡಿದ್ದರಿಂದ, ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು.
GEN 30:40 ಯಾಕೋಬನು ಕುರಿಗಳನ್ನು ಬೇರೆ ಮಾಡಿ, ಲಾಬಾನನ ಮಂದೆಯಲ್ಲಿರುವ ರೇಖೆಗಳುಳ್ಳ ಆಡುಕುರಿಗಳೆದುರಾಗಿಯೂ ಕಂದು ಬಣ್ಣ ಉಳ್ಳವುಗಳೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ, ಅವುಗಳನ್ನು ಬೇರೆ ಇಟ್ಟುಕೊಂಡನು.
GEN 30:41 ಬಲವಾದ ಕುರಿಗಳು ಸಂಗಮ ಮಾಡುವಾಗ ಯಾಕೋಬನು ಆ ಕುರಿಗಳು ಕೋಲುಗಳನ್ನು ನೋಡುತ್ತಾ ಗರ್ಭಧರಿಸುವ ಹಾಗೆ ಕೋಲುಗಳನ್ನು ಕುರಿಗಳ ಕಣ್ಣೆದುರಾಗಿ ದೋಣಿಗಳಲ್ಲಿ ಇಡುತ್ತಿದ್ದನು.
GEN 30:42 ಆದರೆ ಕುರಿಗಳು ಬಲಹೀನವಾಗಿದ್ದಾಗ, ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನವಾದವುಗಳು ಲಾಬಾನನಿಗೂ, ಬಲವಾದವುಗಳು ಯಾಕೋಬನಿಗೂ ಆದವು.
GEN 30:43 ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದ್ದರಿಂದ, ಬಹು ಕುರಿಗಳೂ ದಾಸದಾಸಿಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.
GEN 31:1 ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು.
GEN 31:2 ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ, ಅದು ತನ್ನ ಕಡೆಗೆ ಮೊದಲು ಇದ್ದ ಹಾಗೆ ಇರಲಿಲ್ಲ.
GEN 31:3 ಆಗ ಯೆಹೋವ ದೇವರು ಯಾಕೋಬನಿಗೆ, “ನಿನ್ನ ತಂದೆಗಳ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ನಾನು ನಿನ್ನ ಸಂಗಡ ಇರುವೆನು,” ಎಂದರು.
GEN 31:4 ಯಾಕೋಬನು ರಾಹೇಲಳನ್ನೂ, ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೆಸಿದನು.
GEN 31:5 ಅವರಿಗೆ, “ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದ ಹಾಗೆ ಈಗ ಇಲ್ಲದಿರುವುದನ್ನು ನಾನು ನೋಡಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಕಡೆಗೆ ಇದ್ದಾರೆ.
GEN 31:6 ನಾನು ಪೂರ್ಣಬಲದಿಂದ ನಿಮ್ಮ ತಂದೆಯ ಸೇವೆ ಮಾಡಿದ್ದು ನಿಮಗೆ ತಿಳಿದಿದೆ.
GEN 31:7 ಆದರೆ ನಿಮ್ಮ ತಂದೆಯು ನನಗೆ ವಂಚನೆಮಾಡಿ, ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡು ಮಾಡಗೊಡಿಸಲಿಲ್ಲ.
GEN 31:8 ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಅಂದಾಗ, ಮಂದೆಯೆಲ್ಲಾ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು, ‘ರೇಖೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಎಂದಾಗ, ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು.
GEN 31:9 ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು, ನನಗೆ ಕೊಟ್ಟಿದ್ದಾರೆ.
GEN 31:10 “ಇದಲ್ಲದೆ ಕುರಿಗಳು ಸಂಗಮ ಮಾಡುವಾಗ, ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ, ಕುರಿಗಳ ಮೇಲೆ ಏರುವ ಟಗರುಗಳು ಚುಕ್ಕೆ, ಮಚ್ಚೆ, ರೇಖೆಗಳುಳ್ಳವುಗಳಾಗಿದ್ದವು.
GEN 31:11 ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು.
GEN 31:12 ಅವನು ನನಗೆ, ‘ನಿನ್ನ ಕಣ್ಣುಗಳನ್ನೆತ್ತಿ ಕುರಿಗಳನ್ನೇರುವ ಎಲ್ಲಾ ಟಗರುಗಳನ್ನು ನೋಡು. ಅವು ಚುಕ್ಕೆ, ಮಚ್ಚೆ, ರೇಖೆಯೂ ಉಳ್ಳವುಗಳಾಗಿವೆ. ಏಕೆಂದರೆ ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ಕಂಡಿದ್ದೇನೆ.
GEN 31:13 ನೀನು ಸ್ತಂಭವನ್ನು ಅಭಿಷೇಕಿಸಿ, ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದಿಂದ ಹೊರಟು, ನಿನ್ನ ಬಂಧುಗಳ ದೇಶಕ್ಕೆ ಹಿಂದಿರುಗಿ ಹೋಗು,’ ಎಂದು ಹೇಳಿದ್ದಾರೆ,” ಎಂದನು.
GEN 31:14 ಆಗ ರಾಹೇಲಳು, ಲೇಯಳು ಅವನಿಗೆ, “ನಮ್ಮ ತಂದೆಯ ಮನೆಯಲ್ಲಿ ಇನ್ನೇನಾದರೂ ಭಾಗವೂ, ಬಾಧ್ಯತೆಯೂ ಇದೆಯೋ?
GEN 31:15 ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ.
GEN 31:16 ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು,” ಎಂದರು.
GEN 31:17 ಆಗ ಯಾಕೋಬನು ಎದ್ದು ತನ್ನ ಮಕ್ಕಳನ್ನೂ, ತನ್ನ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ,
GEN 31:18 ತನ್ನ ಎಲ್ಲಾ ಪಶುಗಳನ್ನೂ, ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ, ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ತೆಗೆದುಕೊಂಡು ಹೊರಟನು.
GEN 31:19 ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
GEN 31:20 ಆದರೆ ಯಾಕೋಬನು ತಾನು ಹೋಗುವುದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ವಂಚಿಸಿ ಓಡಿಹೋದನು.
GEN 31:21 ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು.
GEN 31:22 ಯಾಕೋಬನು ಓಡಿಹೋದನೆಂದು ಮೂರನೆಯ ದಿವಸದಲ್ಲಿ ಲಾಬಾನನಿಗೆ ತಿಳಿಯಿತು.
GEN 31:23 ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
GEN 31:24 ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮಿನವನಾದ ಲಾಬಾನನ ಬಳಿಗೆ ಬಂದು ಅವನಿಗೆ, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು,” ಎಂದರು.
GEN 31:25 ತರುವಾಯ ಲಾಬಾನನು ಯಾಕೋಬನನ್ನು ಸಂಧಿಸಿದಾಗ, ಯಾಕೋಬನು ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ಅಲ್ಲಿಯೇ ಗುಡಾರವನ್ನು ಹಾಕಿಸಿದ್ದನು.
GEN 31:26 ಲಾಬಾನನು ಯಾಕೋಬನಿಗೆ, “ನೀನು ಏನು ಮಾಡಿದೆ? ನನಗೆ ತಿಳಿಸದೆ ಮೋಸಮಾಡಿದ್ದೀಯೆ ಮತ್ತು ನನ್ನ ಪುತ್ರಿಯರನ್ನು ಯುದ್ಧದಲ್ಲಿ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಹೋದೆಯಲ್ಲಾ.
GEN 31:27 ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು.
GEN 31:28 ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ.
GEN 31:29 ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು.
GEN 31:30 ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಹಾರೈಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದನು.
GEN 31:31 ಅದಕ್ಕೆ ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನಿನ್ನ ಪುತ್ರಿಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವೆ ಎಂದು ಭಯಪಟ್ಟೆನು.
GEN 31:32 ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
GEN 31:33 ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಹುಡುಕಿದರೂ, ಅವುಗಳನ್ನು ಕಾಣಲಿಲ್ಲ. ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.
GEN 31:34 ಆದರೆ ರಾಹೇಲಳು ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು, ಅದರ ಮೇಲೆ ಕುಳಿತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದರೂ, ಅವನು ಅವುಗಳನ್ನು ಕಾಣಲಿಲ್ಲ.
GEN 31:35 ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೇ ಇರುವುದರಿಂದ, ನನ್ನ ಮೇಲೆ ಕೋಪಬಾರದೆ ಇರಲಿ. ಏಕೆಂದರೆ ನಾನು ಮುಟ್ಟಾಗಿದ್ದೇನೆ,” ಎಂದಳು. ಅವನು ಹುಡುಕಿ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೋದನು.
GEN 31:36 ಆಗ ಯಾಕೋಬನು ಕೋಪಗೊಂಡು ಲಾಬಾನನೊಂದಿಗೆ ವಾದಿಸಿದನು. ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನನ್ನನ್ನು ಬೆನ್ನಟ್ಟಿ ಬರುವುದಕ್ಕೆ ನನ್ನ ಅಪರಾಧವೇನು?” ನನ್ನ ಪಾಪವೇನು?
GEN 31:37 ನೀನು ನನ್ನ ಸಲಕರಣೆಗಳನ್ನೆಲ್ಲಾ ಹುಡುಕಿದ ಮೇಲೆ ನಿನ್ನ ಮನೆಯ ಯಾವ ವಸ್ತುಗಳನ್ನು ಕಂಡುಕೊಂಡೆ? ನನಗೂ, ನಿನಗೂ ಬಂಧುಗಳಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
GEN 31:38 “ಈ ಇಪ್ಪತ್ತು ವರ್ಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ, ಮೇಕೆಗಳೂ ಮರಿ ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.
GEN 31:39 ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ.
GEN 31:40 ನನ್ನ ಸ್ಥಿತಿ ಹೀಗೆ ಇತ್ತು: ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನನ್ನ ಕಣ್ಣುಗಳಿಗೆ ನಿದ್ರೆ ತಪ್ಪಿಹೋಯಿತು.
GEN 31:41 ನಿನ್ನ ಇಬ್ಬರು ಪುತ್ರಿಯರಿಗಾಗಿ ಹದಿನಾಲ್ಕು ವರ್ಷ, ನಿನ್ನ ಮಂದೆಗಳಿಗೋಸ್ಕರ ಆರು ವರ್ಷ, ಈ ಪ್ರಕಾರ ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದು, ನಿನ್ನ ಸೇವೆ ಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ.
GEN 31:42 ನನ್ನ ತಂದೆ ದೇವರೂ, ಅಬ್ರಹಾಮನ ದೇವರೂ, ಇಸಾಕನ ಭಯವೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದೆ. ನನ್ನ ಬಾಧೆಯನ್ನೂ, ನನ್ನ ಕಷ್ಟವನ್ನೂ ದೇವರು ಕಂಡು, ನಿನ್ನೆ ರಾತ್ರಿ ನಿನ್ನನ್ನು ಗದರಿಸಿದ್ದಾರೆ,” ಎಂದನು.
GEN 31:43 ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ?
GEN 31:44 ಆದ್ದರಿಂದ ನೀನು ಇಲ್ಲಿ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದನು.
GEN 31:45 ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು.
GEN 31:46 ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ,” ಎಂದನು. ಅವರು ಕಲ್ಲುಗಳನ್ನು ತೆಗೆದುಕೊಂಡು ಒಂದು ಕುಪ್ಪೆ ಮಾಡಿದರು. ಅವರು ಆ ಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡು ಊಟಮಾಡಿದರು.
GEN 31:47 ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್ ಎಂದು ಹೆಸರಿಟ್ಟನು.
GEN 31:48 ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ,
GEN 31:49 ಮಿಚ್ಪಾ ಎಂದೂ ಹೆಸರಾಯಿತು. ಏಕೆಂದರೆ, “ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವ ದೇವರು ನಮ್ಮನ್ನು ನೋಡಿಕೊಳ್ಳುತ್ತಾ ಇರಲಿ.
GEN 31:50 ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು.
GEN 31:51 ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು,
GEN 31:52 ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ.
GEN 31:53 ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು.
GEN 31:54 ಯಾಕೋಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ, ಭೋಜನ ಮಾಡುವುದಕ್ಕೆ ತನ್ನ ಬಂಧುಗಳನ್ನು ಕರೆಕಳುಹಿಸಿದನು. ಅವರು ಭೋಜನ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.
GEN 31:55 ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
GEN 32:1 ಅನಂತರ ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ, ದೇವದೂತರು ಅವನ ಎದುರಿಗೆ ಬಂದರು.
GEN 32:2 ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.
GEN 32:3 ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
GEN 32:4 ಕಳುಹಿಸುವಾಗ ಅವರಿಗೆ, “ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳಬೇಕು: ‘ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ: ಲಾಬಾನನ ಸಂಗಡ ನಾನು ಇಲ್ಲಿಯವರೆಗೆ ಪ್ರವಾಸಿಯಾಗಿದ್ದೆನು.
GEN 32:5 ಈಗ ನನಗೆ ಎತ್ತು, ಕತ್ತೆ, ಕುರಿಗಳು, ದಾಸದಾಸಿಯರು ಇದ್ದಾರೆ. ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದುವಂತೆ ನಾನು ಈ ಸಂದೇಶವನ್ನು ನನ್ನ ಯಜಮಾನನಾದ ನಿಮಗೆ ತಿಳಿಸುವುದಕ್ಕಾಗಿ ಕಳುಹಿಸಿದ್ದೇನೆ,’ ಎಂದು ಹೇಳಿರಿ,” ಎಂದನು.
GEN 32:6 ಆಗ ದೂತರು ಯಾಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿನ್ನ ಸಹೋದರ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರೆದುಕೊಂಡು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆ,” ಎಂದರು.
GEN 32:7 ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು.
GEN 32:8 ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ದಾಳಿಮಾಡಿದರೆ, ಉಳಿದ ಗುಂಪು ತಪ್ಪಿಸಿಕೊಂಡು ಹೋಗಬಹುದು,” ಎಂದುಕೊಂಡನು.
GEN 32:9 ಇದಲ್ಲದೆ ಯಾಕೋಬನು, “ನನ್ನ ತಂದೆ ಅಬ್ರಹಾಮನ ದೇವರೇ, ನನ್ನ ತಂದೆ ಇಸಾಕನ ದೇವರೇ, ನಿಮ್ಮ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ಆಗ ನಾನು ನಿನಗೆ ಒಳ್ಳೆಯದನ್ನು ಮಾಡುವೆನು ಎಂದು ನನಗೆ ಹೇಳಿದ ಯೆಹೋವ ದೇವರೇ,
GEN 32:10 ನೀವು ನಿಮ್ಮ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ, ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಏಕೆಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ, ನನ್ನ ಕೈಯಲ್ಲಿ ಕೋಲು ಮಾತ್ರವೇ ಇತ್ತು, ಈಗ ನನಗೆ ಎರಡು ಗುಂಪುಗಳಿವೆ.
GEN 32:11 ನನ್ನ ಅಣ್ಣ ಏಸಾವನ ಕೈಯಿಂದ ನನ್ನನ್ನು ತಪ್ಪಿಸಿರಿ. ಏಕೆಂದರೆ ಅವನು ಬಂದು ನನ್ನನ್ನೂ, ಮಕ್ಕಳೊಂದಿಗೆ ತಾಯಂದಿರನ್ನೂ, ದಾಳಿಮಾಡುವನು ಎಂದು ನಾನು ಅವನಿಗೆ ಭಯಪಡುತ್ತೇನೆ.
GEN 32:12 ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು.
GEN 32:13 ಯಾಕೋಬನು ಆ ರಾತ್ರಿ ಅಲ್ಲೇ ಕಳೆದನು. ತಾನು ತಂದದ್ದರಲ್ಲಿ ಕೆಲವನ್ನು ಅವನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು.
GEN 32:14 ಅವು ಯಾವುವೆಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು,
GEN 32:15 ಹಾಲು ಕೊಡುವ ಮೂವತ್ತು ಒಂಟೆಗಳು, ಅವುಗಳ ಮರಿಗಳು, ನಲವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಗಂಡುಕತ್ತೆಗಳು,
GEN 32:16 ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನೂ, ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ, ಅವರಿಗೆ, “ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳ ಬಿಡಿರಿ,” ಎಂದನು.
GEN 32:17 ಅವನು ಮೊದಲನೆಯವನಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಕಡೆಯವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವ ಇವೆಲ್ಲ ಯಾರವು?’ ಎಂದು ಕೇಳಿದರೆ,
GEN 32:18 ನೀನು ಅವನಿಗೆ, ‘ಇವು ನಿನ್ನ ದಾಸನಾದ ಯಾಕೋಬನವುಗಳೇ, ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲಾದ ಕಾಣಿಕೆ, ಅವನೂ ನಮ್ಮ ಹಿಂದೆ ಇದ್ದಾನೆ,’ ಎಂದು ಅವನಿಗೆ ಹೇಳಬೇಕು,” ಎಂದು ಆಜ್ಞಾಪಿಸಿದನು.
GEN 32:19 ಎರಡನೆಯವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ, “ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು.
GEN 32:20 ಇದಲ್ಲದೆ, ‘ನಿನ್ನ ದಾಸ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು,’ ” ಎಂದು ಆಜ್ಞಾಪಿಸಿದನು. ಏಕೆಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ಕಾಣುವೆನು. ಅವನು ನನ್ನನ್ನು ಅಂಗೀಕರಿಸುವನೇನೋ ಎಂದುಕೊಂಡನು.
GEN 32:21 ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಅಲ್ಲಿಯೇ ತಂಗಿದನು.
GEN 32:22 ಆ ರಾತ್ರಿಯಲ್ಲಿ ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ, ತನ್ನ ಇಬ್ಬರು ದಾಸಿಯರನ್ನೂ, ತನ್ನ ಹನ್ನೊಂದು ಮಂದಿ ಪುತ್ರರನ್ನೂ ಕರೆದುಕೊಂಡು ಯಬ್ಬೋಕ್ ಎಂಬ ಹೊಳೆಯ ದಂಡೆಯನ್ನು ದಾಟಿದನು.
GEN 32:23 ಅವನು ಅವರನ್ನು ಕರೆದುಕೊಂಡು ಹೊಳೆ ದಂಡೆಯನ್ನು ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು.
GEN 32:24 ಆಗ ಯಾಕೋಬನು ಒಬ್ಬನೇ ಉಳಿದಾಗ, ಒಬ್ಬ ಮನುಷ್ಯನು ಉದಯವಾಗುವವರೆಗೆ ಅವನ ಸಂಗಡ ಹೋರಾಡಿದನು.
GEN 32:25 ಆ ಮನುಷ್ಯನು ಅವನನ್ನು ಜಯಿಸದೆ ಇರುವುದನ್ನು ಕಂಡು, ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಸಂಗಡ ಹೋರಾಡುತ್ತಿರುವಾಗಲೇ ಯಾಕೋಬನ ತೊಡೆಯ ಕೀಲು ತಪ್ಪಿತು.
GEN 32:26 ಅವನು ಯಾಕೋಬನಿಗೆ, “ಉದಯವಾಯಿತು, ನನ್ನನ್ನು ಹೋಗಗೊಡು,” ಎಂದಾಗ. ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು, ನಾನು ನಿನ್ನನ್ನು ಹೋಗಗೊಡಿಸೆನು,” ಎಂದನು.
GEN 32:27 ಆ ಮನುಷ್ಯನು ಅವನಿಗೆ, “ನಿನ್ನ ಹೆಸರು ಏನು?” ಎಂದಾಗ. ಅವನು, “ಯಾಕೋಬ,” ಎಂದನು.
GEN 32:28 ಅದಕ್ಕೆ ಅವನು, “ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಎನಿಸಿಕೊಳ್ಳದೆ, ಇಸ್ರಾಯೇಲ್ ಎಂದು ನಿನಗೆ ಹೆಸರಾಗುವುದು. ಏಕೆಂದರೆ ನೀನು ದೇವರ ಸಂಗಡವೂ, ಮನುಷ್ಯರ ಸಂಗಡವೂ ಹೋರಾಡಿ ಜಯಿಸಿದ್ದೀ,” ಎಂದನು.
GEN 32:29 ಯಾಕೋಬನು, “ನಿನ್ನ ಹೆಸರನ್ನು ನನಗೆ ತಿಳಿಸು,” ಎಂದು ಅವನನ್ನು ಕೇಳಿಕೊಂಡನು. ಆತನು, “ನನ್ನ ಹೆಸರನ್ನು ಏಕೆ ಕೇಳುತ್ತೀ?” ಎಂದು ಹೇಳಿ ಅವನನ್ನು ಅಲ್ಲೇ ಆಶೀರ್ವದಿಸಿದನು.
GEN 32:30 ಆಗ ಯಾಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ, ನನ್ನ ಪ್ರಾಣ ಉಳಿಯಿತು,” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.
GEN 32:31 ಯಾಕೋಬನು ಪೆನೀಯೇಲನ್ನು ದಾಟಿಹೋದಾಗ, ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು.
GEN 32:32 ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲರು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದವರೆಗೂ ತಿನ್ನುವುದಿಲ್ಲ.
GEN 33:1 ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ, ರಾಹೇಲಳಿಗೂ, ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ, ಅವರನ್ನು ಬೇರೆ ಬೇರೆ ಮಾಡಿದನು.
GEN 33:2 ದಾಸಿಯರನ್ನೂ, ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ; ಅವರ ಹಿಂದೆ ಲೇಯಳನ್ನೂ, ಆಕೆಯ ಮಕ್ಕಳನ್ನೂ; ಕಟ್ಟಕಡೆಯಲ್ಲಿ ರಾಹೇಲಳನ್ನೂ, ಯೋಸೇಫನನ್ನೂ ಇರಿಸಿದನು.
GEN 33:3 ತಾನೇ ಅವರ ಮುಂದಾಗಿ ಹೋಗಿ ತನ್ನ ಸಹೋದರನ ಬಳಿಗೆ ಬರುವವರೆಗೆ ಏಳು ಸಾರಿ ನೆಲದವರೆಗೆ ಬಗ್ಗಿದನು.
GEN 33:4 ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು, ಅವನನ್ನು ಅಪ್ಪಿಕೊಂಡು, ಅವನ ಕೊರಳಿನ ಮೇಲೆ ಬಿದ್ದು, ಅವನಿಗೆ ಮುದ್ದಿಟ್ಟನು. ಅವರಿಬ್ಬರೂ ಅತ್ತರು.
GEN 33:5 ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು.
GEN 33:6 ಆಗ ದಾಸಿಯರೂ, ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.
GEN 33:7 ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ, ರಾಹೇಲಳೂ ಬಂದು ಅಡ್ಡಬಿದ್ದರು.
GEN 33:8 ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು.
GEN 33:9 ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು.
GEN 33:10 ಆಗ ಯಾಕೋಬನು, “ಹಾಗಲ್ಲ, ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದಿದ್ದೆನಾದರೆ, ನನ್ನ ಕಾಣಿಕೆಯನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ನಾನು ದೇವರ ಮುಖವನ್ನು ಕಂಡಂತೆ, ನಿನ್ನ ಮುಖವನ್ನು ಕಂಡದ್ದಕ್ಕಾಗಿಯೂ, ನೀನು ನನ್ನನ್ನು ಮೆಚ್ಚಿದ್ದಕ್ಕಾಗಿಯೂ,
GEN 33:11 ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು.
GEN 33:12 ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ನಿನ್ನ ಮುಂದೆ ಹೋಗುವೆನು,” ಎಂದನು.
GEN 33:13 ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು.
GEN 33:14 ಆದ್ದರಿಂದ ನನ್ನ ಒಡೆಯನೇ, ನೀನು ನಿನ್ನ ಸೇವಕನಿಗಿಂತಲೂ ಮುಂಚೆ ಹೋಗಬಹುದು. ನಾನು ನನ್ನ ಒಡೆಯನ ಬಳಿಗೆ ಸೇಯೀರಿಗೆ ಬರುವವರೆಗೆ, ನನ್ನ ಮುಂದಿರುವ ಮಂದೆಗಳ ನಡಿಗೆಗೂ, ಮಕ್ಕಳ ನಡಿಗೆಗೂ ತಕ್ಕ ಹಾಗೆ ಮೆಲ್ಲಗೆ ನಡೆದು ಬರುವೆನು,” ಎಂದನು.
GEN 33:15 ಅದಕ್ಕೆ ಏಸಾವನು, “ನನ್ನ ಬಳಿಯಲ್ಲಿರುವ ಜನರಲ್ಲಿ ಕೆಲವರನ್ನು ನಿನ್ನ ಬಳಿಯಲ್ಲಿ ಬಿಟ್ಟು ಹೋಗುತ್ತೇನೆ,” ಅನ್ನಲು. ಯಾಕೋಬನು, “ಅದರ ಅಗತ್ಯವೇನು? ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ,” ಎಂದನು.
GEN 33:16 ಹೀಗೆ ಏಸಾವನು ಆ ದಿನವೇ ತನ್ನ ಮಾರ್ಗವಾಗಿ ಸೇಯೀರಿಗೆ ಹಿಂದಿರುಗಿ ಹೋದನು.
GEN 33:17 ಯಾಕೋಬನು ಪ್ರಯಾಣಮಾಡಿ, ಸುಕ್ಕೋತಿಗೆ ಹೋಗಿ, ಮನೆಯನ್ನು ಕಟ್ಟಿಸಿಕೊಂಡನು. ಇದಲ್ಲದೆ ತನ್ನ ಪಶುಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದ್ದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.
GEN 33:18 ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸೇರಿ, ಅದರ ಮುಂದೆ ತನ್ನ ಗುಡಾರಗಳನ್ನು ಹಾಕಿದನು.
GEN 33:19 ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡುಕೊಂಡನು.
GEN 33:20 ಅಲ್ಲಿ ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
GEN 34:1 ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವುದಕ್ಕಾಗಿ ಹೊರಗೆ ಹೋದಳು.
GEN 34:2 ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ತೆಗೆದುಕೊಂಡುಹೋಗಿ ಮಾನಭಂಗ ಮಾಡಿದನು.
GEN 34:3 ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು.
GEN 34:4 ಶೆಕೆಮನು ತನ್ನ ತಂದೆ ಹಮೋರನಿಗೆ, “ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ಹೇಳು,” ಎಂದನು.
GEN 34:5 ಯಾಕೋಬನು ತನ್ನ ಮಗಳಾದ ದೀನಳನ್ನು ಶೆಕೆಮನು ಕೆಡಿಸಿದ್ದಾನೆಂದು ಕೇಳಿದಾಗ, ಅವನ ಮಕ್ಕಳು ಅವನ ಪಶುಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವವರೆಗೆ ಯಾಕೋಬನು ಸುಮ್ಮನಿದ್ದನು.
GEN 34:6 ಆಗ ಶೆಕೆಮನ ತಂದೆ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು.
GEN 34:7 ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು.
GEN 34:8 ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
GEN 34:9 ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ.
GEN 34:10 ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ, ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು.
GEN 34:11 ಬಳಿಕ ಶೆಕೆಮನು ಆಕೆಯ ತಂದೆಗೂ, ಆಕೆಯ ಸಹೋದರರಿಗೂ, “ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ, ನೀವು ಕೇಳಿದ್ದನ್ನು ನಾನು ನಿಮಗೆ ಕೊಡುವೆನು.
GEN 34:12 ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ,” ಎಂದನು.
GEN 34:13 ಆಗ ಯಾಕೋಬನ ಮಕ್ಕಳು ಶೆಕೆಮನಿಗೂ, ಅವನ ತಂದೆ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಏಕೆಂದರೆ ಅವನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದನು.
GEN 34:14 ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿ ಇಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು. ಅದು ನಮಗೆ ಅವಮಾನ.
GEN 34:15 ಆದರೆ ನೀವು ನಮ್ಮ ಹಾಗಿದ್ದು, ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಂಡರೆ ಮಾತ್ರ ನಾವು ನಿಮಗೆ ಒಪ್ಪುವೆವು.
GEN 34:16 ನಮ್ಮ ಪುತ್ರಿಯರನ್ನು ನಿಮಗೆ ಕೊಟ್ಟು, ನಿಮ್ಮ ಪುತ್ರಿಯರನ್ನು ತೆಗೆದುಕೊಳ್ಳುವೆವು. ಇದಲ್ಲದೆ ನಾವು ನಿಮ್ಮೊಂದಿಗೆ ವಾಸಮಾಡಿ, ಒಂದೇ ಜನಾಂಗವಾಗುವೆವು.
GEN 34:17 ಆದರೆ ನೀವು ನಮ್ಮ ಮಾತನ್ನು ಕೇಳದೆ, ಸುನ್ನತಿ ಮಾಡಿಸಿಕೊಳ್ಳದೆ ಹೋದರೆ, ನಮ್ಮ ಹುಡುಗಿಯನ್ನು ನಾವು ಕರೆದುಕೊಂಡು ಹೋಗಿಬಿಡುತ್ತೇವೆ,” ಎಂದು ಹೇಳಿದರು.
GEN 34:18 ಅವರ ಮಾತುಗಳು ಹಮೋರನಿಗೂ, ಅವನ ಮಗ ಶೆಕೆಮನಿಗೂ ಯೋಗ್ಯವಾಗಿ ಕಂಡವು.
GEN 34:19 ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
GEN 34:20 ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ,
GEN 34:21 “ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ದೇಶದಲ್ಲಿ ವಾಸಮಾಡಿ, ಅದರಲ್ಲಿ ವ್ಯಾಪಾರಮಾಡಲಿ. ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಪುತ್ರಿಯರನ್ನು ನಮಗೆ ಹೆಂಡತಿಯರನ್ನಾಗಿ ಮಾಡಿಕೊಳ್ಳೋಣ ಮತ್ತು ನಮ್ಮ ಪುತ್ರಿಯರನ್ನು ಅವರಿಗೆ ಕೊಡೋಣ.
GEN 34:22 ಸುನ್ನತಿ ಮಾಡಿಸಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಮಾಡುವುದಕ್ಕೂ, ಒಂದೇ ಜನಾಂಗವಾಗುವುದಕ್ಕೂ ಒಪ್ಪುವರು.
GEN 34:23 ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು.
GEN 34:24 ಆಗ ಪಟ್ಟಣದ ದ್ವಾರದಲ್ಲಿ ಹೋಗುವ ಗಂಡಸರೆಲ್ಲರೂ ಹಮೋರನೂ, ಅವನ ಮಗ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ, ಒಪ್ಪಿಕೊಂಡರು. ಹೀಗೆ ಪಟ್ಟಣದಲ್ಲಿದ್ದ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
GEN 34:25 ಮೂರನೆಯ ದಿನದಲ್ಲಿ ಅವರಿಗೆ ನೋವುಂಟಾದಾಗ, ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ, ದೀನಳ ಸಹೋದರರಾದ ಸಿಮೆಯೋನನೂ, ಲೇವಿಯೂ ತಮ್ಮ ತಮ್ಮ ಖಡ್ಗಗಳನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು, ಗಂಡಸರನ್ನೆಲ್ಲಾ ಕೊಂದುಹಾಕಿದರು.
GEN 34:26 ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು.
GEN 34:27 ಅವರು ತಮ್ಮ ಸಹೋದರಿಯನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಬಂದು ಆ ಊರನ್ನೇ ಕೊಳ್ಳೆಹೊಡೆದರು.
GEN 34:28 ಪಟ್ಟಣದಲ್ಲಿಯೂ, ಹೊಲದಲ್ಲಿಯೂ ಇದ್ದ ಅವರ ಕುರಿ, ದನ, ಕತ್ತೆಗಳನ್ನು ತೆಗೆದುಕೊಂಡರು.
GEN 34:29 ಅವರ ಎಲ್ಲಾ ಆಸ್ತಿಯನ್ನೂ, ಅವರ ಎಲ್ಲಾ ಚಿಕ್ಕ ಮಕ್ಕಳನ್ನೂ, ಅವರ ಹೆಂಡತಿಯರನ್ನೂ ಸೆರೆಹಿಡಿದು, ಮನೆಯಲ್ಲಿ ಇದ್ದದ್ದೆಲ್ಲವನ್ನೂ ಅವರು ಕೊಳ್ಳೆಹೊಡೆದರು.
GEN 34:30 ಆಗ ಯಾಕೋಬನು ಸಿಮೆಯೋನನಿಗೂ, ಲೇವಿಗೂ, “ನೀವು ನನ್ನನ್ನು ಈ ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯವಾಗುವಂತೆ ಮಾಡಿ, ನನ್ನನ್ನು ಕಳವಳಪಡಿಸಿದಿರಿ. ನಾವು ಸ್ವಲ್ಪ ಜನರು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ದಾಳಿಮಾಡುವರು. ಆಗ ನಾನೂ, ನನ್ನ ಮನೆಯವರೂ ನಾಶವಾಗುವೆವು,” ಎಂದನು.
GEN 34:31 ಆದರೆ ಅವರು, “ಅವನು ನಮ್ಮ ತಂಗಿಯನ್ನು ವೇಶ್ಯೆಯಂತೆ ನಡೆಸಬಹುದೋ?” ಎಂದರು.
GEN 35:1 ದೇವರು ಯಾಕೋಬನಿಗೆ, “ನೀನು ಇಲ್ಲಿಂದ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು, ನಿನ್ನ ಸಹೋದರ ಏಸಾವನ ಎದುರಿನಿಂದ ಓಡಿ ಹೋಗುತ್ತಿದ್ದಾಗ, ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟು,” ಎಂದರು.
GEN 35:2 ಆಗ ಯಾಕೋಬನು ತನ್ನ ಮನೆಯವರಿಗೂ, ತನ್ನ ಸಂಗಡ ಇದ್ದವರೆಲ್ಲರಿಗೂ, “ನಿಮ್ಮ ಮಧ್ಯದಲ್ಲಿರುವ ಅನ್ಯದೇವರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ, ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ.
GEN 35:3 ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಬಲಿಪೀಠವನ್ನು ಕಟ್ಟುವೆನು,” ಎಂದನು.
GEN 35:4 ಆಗ ಅವರು ತಮ್ಮ ಬಳಿಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ, ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ತೆಗೆದು, ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಊರಿಗೆ ಸಮೀಪವಾಗಿದ್ದ ಏಲಾ ಮರದ ಕೆಳಗೆ ಹೂಳಿಟ್ಟರು.
GEN 35:5 ತರುವಾಯ ಅವರು ಮುಂದೆ ಪ್ರಯಾಣಮಾಡಿದರು. ಆಗ ಸುತ್ತಲಿರುವ ಪಟ್ಟಣಗಳವರ ಮೇಲೆ ದೇವರ ಭಯವು ಇದ್ದುದರಿಂದ, ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.
GEN 35:6 ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನರಸಹಿತವಾಗಿ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದನು.
GEN 35:7 ಅಲ್ಲಿ ಅವನು ಬಲಿಪೀಠವನ್ನು ಕಟ್ಟಿ, ತಾನು ತನ್ನ ಸಹೋದರನ ಬಳಿಯಿಂದ ಓಡಿಹೋದಾಗ, ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
GEN 35:8 ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಮರಣಹೊಂದಿದಳು. ಬೇತೇಲಿನ ಕೆಳಗಿದ್ದ ಏಲಾ ಮರದ ಬುಡದಲ್ಲಿ ಆಕೆಯನ್ನು ಹೂಳಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು.
GEN 35:9 ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ, ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ, ಅವನನ್ನು ಆಶೀರ್ವದಿಸಿದರು.
GEN 35:10 ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಆದರೆ ಇನ್ನು ಮೇಲೆ ನೀನು ಯಾಕೋಬನೆಂದು ಕರೆಸಿಕೊಳ್ಳದೆ, ‘ಇಸ್ರಾಯೇಲ್,’ ಎಂದು ಕರೆಸಿಕೊಳ್ಳುವೆ,” ಎಂದು ಹೇಳಿ, ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟರು.
GEN 35:11 ದೇವರು ಅವನಿಗೆ, “ಸರ್ವಶಕ್ತ ದೇವರು ನಾನೇ. ನೀನು ಅಭಿವೃದ್ಧಿಯಾಗಿ, ನಿನ್ನ ಸಂತಾನವು ಹೆಚ್ಚಲಿ. ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವುವು. ಅರಸರು ನಿನ್ನಿಂದ ಹುಟ್ಟುವರು.
GEN 35:12 ಇದಲ್ಲದೆ ಅಬ್ರಹಾಮನಿಗೂ, ಇಸಾಕನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಕೊಡುವೆನು,” ಎಂದರು.
GEN 35:13 ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದರು.
GEN 35:14 ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ, ಆ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ, ಪಾನಾರ್ಪಣೆ ಮಾಡಿ, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
GEN 35:15 ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು.
GEN 35:16 ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು.
GEN 35:17 ಹೆರುವುದರಲ್ಲಿ ಆಕೆಯು ಕಷ್ಟಪಡುತ್ತಿದ್ದಾಗ, ಸೂಲಗಿತ್ತಿಯು ಅವಳಿಗೆ, “ನೀನು ಭಯಪಡಬೇಡ, ಈ ಮಗನನ್ನು ಸಹ ನೀನು ಪಡೆಯುವೆ,” ಎಂದಳು.
GEN 35:18 ಆದರೆ ರಾಹೇಲಳು ಸತ್ತುಹೋದಳು. ಅವಳು ಪ್ರಾಣಬಿಡುವಾಗ, ಮಗನಿಗೆ ಬೆನೋನಿ ಎಂದು ಹೆಸರಿಟ್ಟಳು, ಆದರೆ ಅವನ ತಂದೆ ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು.
GEN 35:19 ಸತ್ತು ಹೋದ ರಾಹೇಲಳನ್ನು ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಹೂಳಿಟ್ಟರು.
GEN 35:20 ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
GEN 35:21 ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರಿನ ಆಚೆ ತನ್ನ ಗುಡಾರವನ್ನು ಹಾಕಿದನು.
GEN 35:22 ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ, ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿ ಬಿಲ್ಹಳ ಸಂಗಡ ಮಲಗಿದನು. ಈ ವಿಷಯ ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಪುತ್ರರು ಇದ್ದರು.
GEN 35:23 ಅವರಲ್ಲಿ ಲೇಯಳ ಪುತ್ರರು: ಯಾಕೋಬನ ಚೊಚ್ಚಲ ಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.
GEN 35:24 ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.
GEN 35:25 ರಾಹೇಲಳ ದಾಸಿ ಬಿಲ್ಹಳ ಪುತ್ರರು: ದಾನ್, ನಫ್ತಾಲಿ.
GEN 35:26 ಲೇಯಳ ದಾಸಿ ಜಿಲ್ಪಳ ಪುತ್ರರು: ಗಾದ್ ಮತ್ತು ಆಶೇರ್. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು.
GEN 35:27 ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ಅಬ್ರಹಾಮನೂ, ಇಸಾಕನೂ ಪ್ರವಾಸಿಗರಾಗಿ ವಾಸವಾಗಿದ್ದ ಹೆಬ್ರೋನ್ ಎಂಬ ಕಿರ್ಯತ್ ಅರ್ಬ ಪಟ್ಟಣಕ್ಕೆ ಬಂದನು.
GEN 35:28 ಆಗ ಇಸಾಕನು ನೂರ ಎಂಬತ್ತು ವರ್ಷದವನಾಗಿದ್ದನು.
GEN 35:29 ಇಸಾಕನು ಮುದುಕನಾಗಿಯೂ, ತುಂಬಾ ಆಯುಷ್ಯವುಳ್ಳವನಾಗಿಯೂ ಮರಣಹೊಂದಿ ತನ್ನ ಪಿತೃಗಳೊಂದಿಗೆ ಸೇರಿದನು. ಅವನ ಮಕ್ಕಳಾದ ಏಸಾವನೂ, ಯಾಕೋಬನೂ ಅವನನ್ನು ಸಮಾಧಿಮಾಡಿದರು.
GEN 36:1 ಎದೋಮ್ ಎಂಬ ಏಸಾವನ ವಂಶಾವಳಿ ಇದು:
GEN 36:2 ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,
GEN 36:3 ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
GEN 36:4 ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು.
GEN 36:5 ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು.
GEN 36:6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು.
GEN 36:7 ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
GEN 36:8 ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು.
GEN 36:9 ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:
GEN 36:10 ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ: ಏಸಾವನ ಹೆಂಡತಿಯಾಗಿರುವ ಆದಾ ಎಂಬಾಕೆಯ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿ ಬಾಸೆಮತಳ ಮಗ ರೆಯೂವೇಲನು.
GEN 36:11 ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್.
GEN 36:12 ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ.
GEN 36:13 ರೆಯೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ, ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
GEN 36:14 ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ ಯೆಯೂಷ್, ಯಳಾಮ್ ಹಾಗೂ ಕೋರಹ ಇವರನ್ನು ಹೆತ್ತಳು.
GEN 36:15 ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್, ಓಮಾರ್, ಚೆಫೋ, ಕೆನಜ್,
GEN 36:16 ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು.
GEN 36:17 ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ: ನಹತ್, ಜೆರಹ, ಶಮ್ಮಾ ಹಾಗೂ ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆವುಯೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
GEN 36:18 ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ: ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. ಇವರು ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಿಂದ ಬಂದ ಮುಖಂಡರು.
GEN 36:19 ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು.
GEN 36:20 ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
GEN 36:21 ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು.
GEN 36:22 ಲೋಟಾನನ ಪುತ್ರರು ಯಾರೆಂದರೆ: ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
GEN 36:23 ಶೋಬಾಲನ ಮಕ್ಕಳು ಯಾರೆಂದರೆ: ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್.
GEN 36:24 ಸಿಬೆಯೋನನ ಮಕ್ಕಳು: ಅಯ್ಯಾಹ ಮತ್ತು ಅನಾಹ ಎಂಬುವರು. ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೂ ಅರಣ್ಯದಲ್ಲಿ ಹೇಸರಗತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.
GEN 36:25 ಅನಾಹನ ಮಕ್ಕಳು ಯಾರೆಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
GEN 36:26 ದೀಶೋನನ ಮಕ್ಕಳು ಯಾರೆಂದರೆ: ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
GEN 36:27 ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಆಕಾನ್.
GEN 36:28 ದೀಶಾನನ ಮಕ್ಕಳು ಯಾರೆಂದರೆ: ಊಚ್ ಮತ್ತು ಅರಾನ್.
GEN 36:29 ಹೋರಿಯರಿಂದ ಬಂದ ಮುಖಂಡರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
GEN 36:30 ದೀಶೋನ್, ಏಚೆರ್, ದೀಶಾನ್. ಹೋರಿಯರಿಂದ ಹುಟ್ಟಿದ ಸೇಯೀರ್ ದೇಶದಲ್ಲಿ ಮುಖಂಡರು ಇವರೇ.
GEN 36:31 ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
GEN 36:32 ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
GEN 36:33 ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
GEN 36:34 ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
GEN 36:35 ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
GEN 36:36 ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
GEN 36:37 ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
GEN 36:38 ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
GEN 36:39 ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
GEN 36:40 ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ: ತಿಮ್ನಾ, ಅಲ್ವಾ, ಯೆತೇತ,
GEN 36:41 ಒಹೊಲೀಬಾಮ, ಏಲಾ, ಪೀನೋನ್,
GEN 36:42 ಕೆನಜ್, ತೇಮಾನ್, ಮಿಬ್ಜಾರ,
GEN 36:43 ಮಗ್ದೀಯೇಲ್ ಮತ್ತು ಗೀರಾಮ್ ಇವರೇ ತಮ್ಮ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಎದೋಮ್ಯರ ತಂದೆ ಏಸಾವನು ವಂಶಾವಳಿ ಇದೇ.
GEN 37:1 ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸವಾಗಿದ್ದನು.
GEN 37:2 ಇದು ಯಾಕೋಬನ ವಂಶದವರ ಚರಿತ್ರೆ: ಯೋಸೇಫನು ಹದಿನೇಳು ವರ್ಷದವನಾಗಿದ್ದಾಗ, ತನ್ನ ಸಹೋದರರ ಸಂಗಡ ಅಂದರೆ, ತನ್ನ ತಂದೆಯ ಹೆಂಡತಿಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಮಕ್ಕಳ ಸಂಗಡ ಕುರಿಮಂದೆಗಳನ್ನು ಕಾಯುತ್ತಿದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.
GEN 37:3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನ ವಯಸ್ಸಿನಲ್ಲಿ ಹುಟ್ಟಿದ ಮಗನಾಗಿದ್ದುದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ, ಅವನಿಗೆ ಅನೇಕ ಬಣ್ಣಗಳ ಅಂಗಿಯನ್ನು ಹೊಲಿಸಿಕೊಟ್ಟನು.
GEN 37:4 ತಮ್ಮ ತಂದೆಯು ಅವನನ್ನು ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿಮಾಡುತ್ತಿರುವುದನ್ನು ಅವನ ಸಹೋದರರು ಕಂಡು, ಅವನನ್ನು ದ್ವೇಷಿಸಿ, ಅವನ ಸಂಗಡ ಸಮಾಧಾನದಿಂದ ಮಾತಾಡದೆಹೋದರು.
GEN 37:5 ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ, ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.
GEN 37:6 ಅವನು ಅವರಿಗೆ, “ನಾನು ಕಂಡ ಈ ಕನಸನ್ನು ಹೇಳುತ್ತೇನೆ ಕೇಳಿರಿ.
GEN 37:7 ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು. ನನ್ನ ಸಿವುಡು ಎದ್ದುನಿಂತಿತು. ಆಗ ನಿಮ್ಮ ಸಿವುಡುಗಳು ತಿರುಗಿ ನನ್ನ ಸಿವುಡಿಗೆ ಅಡ್ಡಬಿದ್ದವು,” ಎಂದನು.
GEN 37:8 ಆಗ ಅವನ ಸಹೋದರರು ಅವನಿಗೆ, “ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವೆಯೋ? ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ?” ಎಂದು ಹೇಳಿ, ಅವನ ಕನಸು ಮತ್ತು ಅವನ ಮಾತುಗಳಿಗೆ ಅವನನ್ನು ಮತ್ತಷ್ಟೂ ದ್ವೇಷಿಸಿದರು.
GEN 37:9 ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ, “ಇನ್ನೊಂದು ಕನಸನ್ನು ಕಂಡಿದ್ದೇನೆ. ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದನು.
GEN 37:10 ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ತಿಳಿಸಿದಾಗ, ಅವನ ತಂದೆಯು ಅವನನ್ನು ಗದರಿಸಿ, “ನೀನು ಕಂಡ ಈ ಕನಸು ಏನು? ನಾನು, ನಿನ್ನ ತಾಯಿ, ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬರಬೇಕೋ?” ಎಂದನು.
GEN 37:11 ಹೀಗೆ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
GEN 37:12 ಅವನ ಸಹೋದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವುದಕ್ಕೆ ಹೋದರು.
GEN 37:13 ಆದ್ದರಿಂದ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಸಹೋದರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ. ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು,” ಎಂದನು. ಅದಕ್ಕೆ ಅವನು, “ಆಗಲಿ ಹೋಗುತ್ತೇನೆ,” ಎಂದನು.
GEN 37:14 ಯಾಕೋಬನು ಅವನಿಗೆ, “ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ, ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು,” ಎಂದು ಹೇಳಿ ಹೆಬ್ರೋನ್ ಕಣಿವೆಯಿಂದ ಕಳುಹಿಸಿದನು. ಯೋಸೇಫನು ಶೆಕೆಮಿಗೆ ಬಂದಾಗ,
GEN 37:15 ಒಬ್ಬಾನೊಬ್ಬ ಮನುಷ್ಯನು ಯೋಸೇಫನು ಹೊಲದಲ್ಲಿ ಅಲೆದಾಡುವುದನ್ನು ಕಂಡು ಅವನಿಗೆ, “ನೀನು ಏನು ಹುಡುಕುತ್ತಿದ್ದೀ?” ಎಂದು ಕೇಳಿದನು.
GEN 37:16 ಅದಕ್ಕೆ ಅವನು, “ನನ್ನ ಸಹೋದರರನ್ನು ಹುಡುಕುತ್ತಿದ್ದೇನೆ, ಅವರು ತಮ್ಮ ಮಂದೆಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆಂದು ದಯವಿಟ್ಟು ನನಗೆ ಹೇಳು,” ಎಂದನು.
GEN 37:17 ಆ ಮನುಷ್ಯನು, “ಅವರು ಇಲ್ಲಿಂದ ಹೊರಟು ಹೋದರು. ಅವರು, ‘ನಾವು ದೋತಾನಿಗೆ ಹೋಗೋಣ,’ ಎಂದು ಮಾತಾಡುವದನ್ನು ನಾನು ಕೇಳಿಸಿಕೊಂಡೆ,” ಎಂದನು. ಆಗ ಯೋಸೇಫನು ತನ್ನ ಸಹೋದರರನ್ನು ಹುಡುಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು.
GEN 37:18 ಅವರು ದೂರದಿಂದ ಅವನನ್ನು ನೋಡಿದಾಗ, ಅವನು ಸಮೀಪಕ್ಕೆ ಬರುವ ಮುಂಚೆಯೇ ಅವನನ್ನು ಕೊಂದುಹಾಕಬೇಕೆಂದು ಅವನಿಗೆ ವಿರೋಧವಾಗಿ ಒಳಸಂಚು ಮಾಡಿಕೊಂಡರು.
GEN 37:19 ಅವರು, “ಇಗೋ, ಈ ಕನಸುಗಾರ ಬರುತ್ತಿದ್ದಾನೆ,
GEN 37:20 ಬನ್ನಿರಿ, ಈಗ ಅವನನ್ನು ಕೊಂದು, ಯಾವುದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ. ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
GEN 37:21 ಆದರೆ ರೂಬೇನನು ಅದನ್ನು ಕೇಳಿ, ಅವನನ್ನು ಅವರ ಕೈಗಳಿಂದ ತಪ್ಪಿಸಿ, “ಅವನನ್ನು ಕೊಲ್ಲುವುದು ಬೇಡ,” ಎಂದನು.
GEN 37:22 ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ, ತನ್ನ ತಂದೆಯ ಬಳಿಗೆ ತಿರುಗಿ ಕರೆದುಕೊಂಡುಹೋಗುವ ಉದ್ದೇಶದಿಂದ ಅವರಿಗೆ, “ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ಗುಂಡಿಯಲ್ಲಿ ಹಾಕಿರಿ, ಆದರೆ ಅವನ ಮೇಲೆ ಕೈಹಾಕಬೇಡಿರಿ,” ಎಂದನು.
GEN 37:23 ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ, ಅವರು ಯೋಸೇಫನ ಮೇಲಿದ್ದ ಬಣ್ಣಗಳ ಅಂಗಿಯನ್ನು ತೆಗೆದರು.
GEN 37:24 ಅವನನ್ನು ತೆಗೆದುಕೊಂಡು ಗುಂಡಿಯಲ್ಲಿ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು.
GEN 37:25 ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು.
GEN 37:26 ಆಗ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ಸಹೋದರನನ್ನು ಕೊಂದುಹಾಕಿ, ಅವನ ರಕ್ತವನ್ನು ಮರೆಮಾಡುವುದರಲ್ಲಿ ಲಾಭವೇನು?
GEN 37:27 ಬನ್ನಿರಿ, ಇಷ್ಮಾಯೇಲರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಏಕೆಂದರೆ ಅವನು ನಮ್ಮ ಸಹೋದರನೂ ನಮ್ಮ ದೇಹವೂ ರಕ್ತವೂ ಆಗಿದ್ದಾನೆ,” ಎಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು.
GEN 37:28 ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು.
GEN 37:29 ರೂಬೇನನು ಗುಂಡಿಯ ಬಳಿಗೆ ತಿರುಗಿ ಬಂದಾಗ, ಯೋಸೇಫನು ಗುಂಡಿಯಲ್ಲಿ ಇಲ್ಲದ್ದರಿಂದ, ತನ್ನ ವಸ್ತ್ರಗಳನ್ನು ಹರಿದುಕೊಂಡನು.
GEN 37:30 ಅವನು ತನ್ನ ಸಹೋದರರ ಬಳಿಗೆ ತಿರುಗಿ ಹೋಗಿ, “ಬಾಲಕನು ಅಲ್ಲಿ ಇಲ್ಲವಲ್ಲಾ, ನಾನು ಎಲ್ಲಿಗೆ ಹೋಗಲಿ?” ಎಂದನು.
GEN 37:31 ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು, ಒಂದು ಹೋತವನ್ನು ಕೊಯ್ದು, ಆ ಅಂಗಿಯನ್ನು ರಕ್ತದಲ್ಲಿ ಅದ್ದಿ,
GEN 37:32 ಆ ಬಣ್ಣದ ಅಂಗಿಯನ್ನು ಅವರು ತಮ್ಮ ತಂದೆಯ ಬಳಿಗೆ ತಂದು, “ಇದು ನಮಗೆ ಸಿಕ್ಕಿತು, ಇದು ನಿನ್ನ ಮಗನ ಅಂಗಿಯೋ ಏನೋ ನೋಡು,” ಎಂದು ಹೇಳಿದರು.
GEN 37:33 ಯಾಕೋಬನು ಅದನ್ನು ಗುರುತು ಹಿಡಿದು, “ಇದು ನನ್ನ ಮಗನ ಅಂಗಿ ಹೌದು, ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು, ಯೋಸೇಫನನ್ನು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದನು.
GEN 37:34 ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
GEN 37:35 ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.
GEN 37:36 ಇದರೊಂದಿಗೆ, ಆ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಪೋಟೀಫರನಿಗೆ ಮಾರಿದರು. ಇವನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.
GEN 38:1 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರ ಬಳಿಯಿಂದ ಹೊರಟು, ಅದುಲ್ಲಾಮೂರಿನವನಾದ ಹೀರಾನ ಬಳಿಗೆ ಹೋದನು.
GEN 38:2 ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು, ಅವಳನ್ನು ಮದುವೆಯಾಗಿ ಅವಳನ್ನು ಕೂಡಿದನು.
GEN 38:3 ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ್ ಎಂದು ಹೆಸರಿಟ್ಟನು.
GEN 38:4 ಆಕೆಯು ತಿರುಗಿ ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ ಓನಾನ್ ಎಂದು ಹೆಸರಿಟ್ಟಳು.
GEN 38:5 ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು.
GEN 38:6 ಇದಾದ ಮೇಲೆ ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ತಾಮಾರ್ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು.
GEN 38:7 ಆದರೆ ಯೆಹೂದನ ಜೇಷ್ಠಪುತ್ರ ಏರನು ಯೆಹೋವ ದೇವರ ದೃಷ್ಟಿಯಲ್ಲಿ ದುಷ್ಟನಾಗಿದ್ದುದರಿಂದ, ಯೆಹೋವ ದೇವರು ಅವನನ್ನು ಸಾವಿಗೀಡುಮಾಡಿದರು.
GEN 38:8 ಆಗ ಯೆಹೂದನು ಓನಾನನಿಗೆ, “ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ, ಅವಳನ್ನು ಮದುವೆಯಾಗಿ, ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡು,” ಎಂದನು.
GEN 38:9 ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು.
GEN 38:10 ಅವನು ಮಾಡಿದ್ದು ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರಲಿಲ್ಲ. ಆದ್ದರಿಂದ ಅವರು ಇವನನ್ನೂ ಸಾವಿಗೀಡುಮಾಡಿದರು.
GEN 38:11 ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
GEN 38:12 ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂದನು ಆದರಣೆ ಹೊಂದಿದ ಮೇಲೆ, ತಾನೂ, ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರಾನನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾ ಊರಿಗೆ ಹೋದರು.
GEN 38:13 ಆಗ ತಾಮಾರಳಿಗೆ, “ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೆ ತಿಮ್ನಾ ಊರಿಗೆ ಹೋಗುತ್ತಿದ್ದಾನೆ,” ಎಂದು ತಿಳಿಸಿದಾಗ,
GEN 38:14 ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು.
GEN 38:15 ಯೆಹೂದನು ಅವಳನ್ನು ಕಂಡಾಗ, ಅವಳು ಮುಖ ಮುಚ್ಚಿಕೊಂಡಿದ್ದರಿಂದ ಅವಳು ವೇಶ್ಯೆಯೆಂದು ತಿಳಿದುಕೊಂಡನು.
GEN 38:16 ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ. ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು.
GEN 38:17 ಅವನು, “ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿಸುತ್ತೇನೆ,” ಎಂದನು. ಅವಳು, “ನೀನು ಅದನ್ನು ಕಳುಹಿಸುವವರೆಗೆ ಈಡು ಕೊಡುವೆಯೋ?” ಎಂದಳು.
GEN 38:18 ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ. ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
GEN 38:19 ತರುವಾಯ ಅವಳು ಎದ್ದು ಹೋಗಿ, ಮುಸುಕನ್ನು ತೆಗೆದಿಟ್ಟು, ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು.
GEN 38:20 ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತೆಗೆದುಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ.
GEN 38:21 ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ. ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು.
GEN 38:22 ಆಗ ಅವನು ಯೆಹೂದನ ಬಳಿಗೆ ತಿರುಗಿಬಂದು, “ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು, ‘ಈ ಸ್ಥಳದಲ್ಲಿ ದೇವದಾಸಿ ಇರಲಿಲ್ಲ,’ ಎಂದು ಹೇಳಿದರು,” ಎಂದು ಹೇಳಿದನು.
GEN 38:23 ಆಗ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಅವಳು ಅದನ್ನು ತೆಗೆದುಕೊಂಡು ಹೋಗಲಿ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ,” ಎಂದನು.
GEN 38:24 ಹೆಚ್ಚು ಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆ ತಾಮಾರಳು ವೇಶ್ಯಾವೃತ್ತಿಮಾಡಿ ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ,” ಎಂದು ತಿಳಿಸಿದರು. ಆಗ ಯೆಹೂದನು, “ಅವಳನ್ನು ಹೊರಗೆ ತನ್ನಿರಿ, ಅವಳನ್ನು ಸುಡಬೇಕು,” ಎಂದನು.
GEN 38:25 ಆಕೆಯನ್ನು ಹೊರಗೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಒತ್ತೆಯ ಸಾಮಾನುಗಳನ್ನು ಕೊಟ್ಟ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದ್ದರಿಂದ ಈ ಮುದ್ರೆಯೂ ದಾರವೂ ಕೋಲೂ ಯಾರವೆಂದು ತಿಳಿದುಕೋ,” ಎಂದು ಹೇಳಿದಳು.
GEN 38:26 ಆಗ ಯೆಹೂದನು ಅವುಗಳನ್ನು ಗುರುತಿಸಿ, “ಆಕೆಯು ನನಗಿಂತ ನೀತಿವಂತಳು, ಏಕೆಂದರೆ ನಾನು ನನ್ನ ಮಗ ಶೇಲಹನಿಗೆ ಅವಳನ್ನು ಕೊಡಲಿಲ್ಲ,” ಎಂದನು. ಅವನು ಮತ್ತೆ ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.
GEN 38:27 ಅವಳು ಹೆರುವ ಸಮಯದಲ್ಲಿ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದವು.
GEN 38:28 ಆಕೆಯು ಹೆರುವಾಗ ಒಂದು ಮಗುವು ತನ್ನ ಕೈಚಾಚಿತು. ಆಗ ಸೂಲಗಿತ್ತಿಯು, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು.
GEN 38:29 ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು.
GEN 38:30 ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.
GEN 39:1 ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.
GEN 39:2 ಯೆಹೋವ ದೇವರು ಯೋಸೇಫನ ಸಂಗಡ ಇದ್ದುದರಿಂದ, ಅವನು ಏಳಿಗೆಯಾಗಿ ಈಜಿಪ್ಟಿನವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು.
GEN 39:3 ಯೆಹೋವ ದೇವರು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಯೆಹೋವ ದೇವರು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನಿಗೆ ತಿಳಿಯಿತು.
GEN 39:4 ಆದ್ದರಿಂದ ಯೋಸೇಫನು ಪೋಟೀಫರನ ದೃಷ್ಟಿಯಲ್ಲಿ ದಯೆಹೊಂದಿ ಅವನ ಸೇವೆ ಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ, ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.
GEN 39:5 ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು.
GEN 39:6 ಹೀಗಿರುವುದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ, ತನ್ನ ಊಟದ ವಿಷಯದಲ್ಲಿ ಹೊರತು ಬೇರೆ ಯಾವುದರ ವಿಷಯದಲ್ಲಿಯೂ ಚಿಂತಿಸದೆ ಇದ್ದನು. ಯೋಸೇಫನು ಸುರೂಪಿಯೂ ಸುಂದರನೂ ಆಗಿದ್ದನು.
GEN 39:7 ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು.
GEN 39:8 ಆದರೆ ಅವನು ಅದಕ್ಕೆ ಒಪ್ಪದೆ, ತನ್ನ ಯಜಮಾನನ ಹೆಂಡತಿಗೆ, “ನನ್ನ ಯಜಮಾನನು ತನ್ನ ಮನೆಯಲ್ಲಿರುವ ಯಾವುದರ ಬಗ್ಗೆಯೂ ಚಿಂತಿಸದೆ, ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ.
GEN 39:9 ಈ ಮನೆಯಲ್ಲಿ ನನಗಿಂತ ದೊಡ್ಡವನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವುದರಿಂದ, ನಿನ್ನನ್ನು ಹೊರತುಪಡಿಸಿ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ಮಹಾ ದುಷ್ಕೃತ್ಯ ಮಾಡಿ, ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ?” ಎಂದನು.
GEN 39:10 ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದರೂ, ಅವನು ಅವಳ ಕೂಡ ಮಲಗುವುದಕ್ಕಾಗಲಿ, ಅವಳ ಹತ್ತಿರ ಇರುವುದಕ್ಕಾಗಲಿ ಒಪ್ಪಲಿಲ್ಲ.
GEN 39:11 ಹೀಗಿರುವಲ್ಲಿ ಒಂದು ದಿನ ಅವನು ತನ್ನ ಕೆಲಸ ಮಾಡುವುದಕ್ಕೆ ಮನೆಯನ್ನು ಪ್ರವೇಶಿಸಿದಾಗ, ಮನೆಯ ಸೇವಕರಲ್ಲಿ ಒಬ್ಬರೂ ಇರಲಿಲ್ಲ.
GEN 39:12 ಆಗ ಆಕೆಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಡ ಮಲಗು,” ಎಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು.
GEN 39:13 ಅವನು ತನ್ನ ವಸ್ತ್ರವನ್ನು ತನ್ನ ಕೈಯಲ್ಲಿ ಬಿಟ್ಟು ಬಿಟ್ಟಿದ್ದನ್ನೂ, ಹೊರಗೆ ಓಡಿ ಹೋದದ್ದನ್ನೂ ಅವಳು ಕಂಡು,
GEN 39:14 ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು.
GEN 39:15 ನಾನು ಜೋರಾಗಿ ಕೂಗಿದ್ದನ್ನು ಅವನು ಕೇಳಿ, ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
GEN 39:16 ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು.
GEN 39:17 ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುತ್ತಾ, “ನೀನು ನಮ್ಮ ಬಳಿಗೆ ತಂದ ಹಿಬ್ರಿಯ ಸೇವಕನು ನನ್ನನ್ನು ಅವಮಾನ ಮಾಡುವುದಕ್ಕೆ ನನ್ನ ಬಳಿಗೆ ಬಂದನು.
GEN 39:18 ಆದರೆ ನಾನು ಜೋರಾಗಿ ಕೂಗಿಕೊಂಡಾಗ, ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು,” ಎಂದಳು.
GEN 39:19 “ನಿನ್ನ ಸೇವಕನು ನನಗೆ ಹೀಗೆ ಮಾಡಿದ,” ಎಂದು ತನ್ನ ಹೆಂಡತಿ ಹೇಳಿದ್ದನ್ನು ಯಜಮಾನನು ಕೇಳಿ, ಅವನ ಕೋಪವೇರಿತು.
GEN 39:20 ಆಗ ಯೋಸೇಫನ ಯಜಮಾನನು ಅವನನ್ನು ಹಿಡಿದುಕೊಂಡು, ರಾಜನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು.
GEN 39:21 ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು.
GEN 39:22 ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.
GEN 39:23 ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು.
GEN 40:1 ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು.
GEN 40:2 ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು,
GEN 40:3 ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು.
GEN 40:4 ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.
GEN 40:5 ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು.
GEN 40:6 ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು.
GEN 40:7 ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು.
GEN 40:8 ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.
GEN 40:9 ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು.
GEN 40:10 ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು.
GEN 40:11 ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು.
GEN 40:12 ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.
GEN 40:13 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ.
GEN 40:14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು.
GEN 40:15 ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು.
GEN 40:16 ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.
GEN 40:17 ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು.
GEN 40:18 ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು.
GEN 40:19 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
GEN 40:20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು.
GEN 40:21 ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು.
GEN 40:22 ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು.
GEN 40:23 ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.
GEN 41:1 ಎರಡು ಪೂರ್ಣ ವರ್ಷಗಳು ಕಳೆದ ಮೇಲೆ ಫರೋಹನು ಒಂದು ಕನಸನ್ನು ಕಂಡನು. ಆ ಕನಸಿನಲ್ಲಿ ಅವನು ನೈಲ್ ನದಿಯ ಬಳಿಯಲ್ಲಿ ನಿಂತಿದ್ದನು.
GEN 41:2 ಲಕ್ಷಣವಾದ ಮತ್ತು ಕೊಬ್ಬಿದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
GEN 41:3 ಅವಲಕ್ಷಣವಾದ ಬೇರೆ ಏಳು ಬಡಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು, ಆ ಹಸುಗಳ ಹತ್ತಿರ ನೈಲ್ ನದಿ ತೀರದಲ್ಲಿ ನಿಂತಿದ್ದವು.
GEN 41:4 ಆ ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನು ಎಚ್ಚೆತ್ತನು.
GEN 41:5 ಅವನು ತಿರುಗಿ ನಿದ್ರೆ ಮಾಡಿದಾಗ, ಎರಡನೆಯ ಸಾರಿ ಕನಸನ್ನು ಕಂಡನು. ಒಂದೇ ದಂಟಿನಲ್ಲಿ ಏಳು ಒಳ್ಳೆಯ ಪುಷ್ಟಿಯಾದ ತೆನೆಗಳು ಎದ್ದವು.
GEN 41:6 ಅವುಗಳ ಹಿಂದೆಯೇ ಪೂರ್ವದಿಕ್ಕಿನ ಗಾಳಿಯಿಂದ ಬತ್ತಿ, ಒಣಗಿ ಹೋದ ಏಳು ತೆನೆಗಳು ಮೊಳೆತವು.
GEN 41:7 ಆ ಬತ್ತಿ ಹೋಗಿದ್ದ ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿ ಬಿಟ್ಟವು. ಫರೋಹನು ಎಚ್ಚೆತ್ತಾಗ ಅದು ಕನಸಾಗಿತ್ತು.
GEN 41:8 ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡಿತು. ಆದ್ದರಿಂದ ಅವನು ಈಜಿಪ್ಟಿನ ಎಲ್ಲಾ ಮಂತ್ರವಾದಿಗಳನ್ನೂ ಎಲ್ಲಾ ಜ್ಞಾನಿಗಳನ್ನೂ ಕರೆಕಳುಹಿಸಿದನು. ಫರೋಹನು ಅವರಿಗೆ ತನ್ನ ಕನಸನ್ನು ತಿಳಿಸಿದಾಗ, ಅವುಗಳ ಅರ್ಥವನ್ನು ಹೇಳುವವರು ಯಾರೂ ಇರಲಿಲ್ಲ.
GEN 41:9 ಆಗ ಪಾನದಾಯಕರ ಮುಖ್ಯಸ್ಥನು ಫರೋಹನಿಗೆ, “ಈ ಹೊತ್ತು ನನ್ನ ತಪ್ಪನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
GEN 41:10 ಫರೋಹನು ತನ್ನ ಸೇವಕರ ಮೇಲೆ ಕೋಪಿಸಿಕೊಂಡಾಗ, ನನ್ನನ್ನೂ, ರೊಟ್ಟಿಗಾರರ ಮುಖ್ಯಸ್ಥನನ್ನೂ ಮೈಗಾವಲಿನ ದಳಪತಿಯ ಮನೆಯಲ್ಲಿ ಕಾವಲಲ್ಲಿ ಇಟ್ಟಿದ್ದೀರಿ.
GEN 41:11 ನಾವು ಒಂದು ರಾತ್ರಿಯಲ್ಲಿ ಕನಸನ್ನು ಕಂಡೆವು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು.
GEN 41:12 ಮೈಗಾವಲಿನ ದಳಪತಿಗೆ ಸೇವಕನಾಗಿದ್ದ ಹಿಬ್ರಿಯ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ, ಅವನು ನಮ್ಮ ನಮ್ಮ ಕನಸಿನ ಅರ್ಥವನ್ನು ಹೇಳಿದನು.
GEN 41:13 ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನಾನು ನನ್ನ ಸ್ಥಾನವನ್ನು ಪುನಃ ಪಡೆದುಕೊಂಡೆನು, ಇನ್ನೊಬ್ಬನನ್ನು ಗಲ್ಲಿಗೇರಿಸಲಾಯಿತು,” ಎಂದು ಹೇಳಿದನು.
GEN 41:14 ಆಗ ಫರೋಹನು ಯೋಸೇಫನನ್ನು ಕರೆತರುವಂತೆ ಸೇವಕರನ್ನು ಕಳುಹಿಸಿದನು. ಅವರು ಅವನನ್ನು ತ್ವರೆಯಾಗಿ ಕಾರಾಗೃಹದಿಂದ ಹೊರಗೆ ತಂದರು. ಅವನು ಕ್ಷೌರಮಾಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿ ಫರೋಹನ ಬಳಿಗೆ ಬಂದನು.
GEN 41:15 ಆಗ ಫರೋಹನು ಯೋಸೇಫನಿಗೆ, “ನಾನು ಕನಸನ್ನು ಕಂಡಿದ್ದೇನೆ, ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ. ನೀನು ಕನಸನ್ನು ಗ್ರಹಿಸಿ, ಅರ್ಥವನ್ನು ಹೇಳುತ್ತೀ ಎಂದು ನಿನ್ನ ವಿಷಯವಾಗಿ ನಾನು ಕೇಳಿದ್ದೇನೆ,” ಎಂದನು.
GEN 41:16 ಯೋಸೇಫನು ಫರೋಹನಿಗೆ ಉತ್ತರವಾಗಿ, “ಅದನ್ನು ನಾನು ಹೇಳಲಾರೆ, ಆದರೆ ದೇವರು ಫರೋಹನಿಗೆ ಮೆಚ್ಚಿಕೆಯಾದ ಉತ್ತರವನ್ನು ಕೊಡುವರು,” ಎಂದನು.
GEN 41:17 ಅದಕ್ಕೆ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು.
GEN 41:18 ಆಗ ಕೊಬ್ಬಿದ ಮಾಂಸವಿದ್ದ ಲಕ್ಷಣವಾದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
GEN 41:19 ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬೇರೆ ಏಳು ಬಡಹಸುಗಳು ಏರಿ ಬಂದವು. ಅಂಥ ಬಡ ಹಸುಗಳನ್ನು, ನಾನು ಈಜಿಪ್ಟ್ ದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ.
GEN 41:20 ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು.
GEN 41:21 ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಲಿಲ್ಲ. ಅವು ಮೊದಲಿನಂತೆ ಬಡಕಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು.
GEN 41:22 “ನನಗೆ ಇನ್ನೊಂದು ಕನಸು ಬಂತು. ನಾನು ಆ ಕನಸಿನಲ್ಲಿ, ಒಂದೇ ದಂಟಿನಲ್ಲಿ ಪುಷ್ಟಿಯುಳ್ಳ ಏಳು ತೆನೆಗಳು ಇದ್ದವು.
GEN 41:23 ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು ಅವುಗಳ ತರುವಾಯ ಮೊಳೆತವು.
GEN 41:24 ಆ ಒಣಗಿದ್ದ ಏಳು ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಸಿದಾಗ, ಅದರ ಅರ್ಥವನ್ನು ನನಗೆ ಯಾರೂ ಹೇಳಲಿಲ್ಲ,” ಎಂದನು.
GEN 41:25 ಆಗ ಯೋಸೇಫನು ಫರೋಹನಿಗೆ, “ಫರೋಹನ ಎರಡು ಕನಸುಗಳ ವಿಷಯ ಒಂದೇ, ದೇವರು ಮಾಡಲಿರುವುದನ್ನು ಫರೋಹನಿಗೆ ತಿಳಿಸಿದ್ದಾರೆ.
GEN 41:26 ಆ ಏಳು ಒಳ್ಳೆಯ ಹಸುಗಳು ಏಳು ವರ್ಷಗಳು; ಏಳು ಒಳ್ಳೆಯ ತೆನೆಗಳೂ, ಏಳು ವರ್ಷಗಳೇ. ಇವೆರಡು ಕನಸುಗಳ ಅರ್ಥ ಒಂದೇ.
GEN 41:27 ಅವುಗಳ ತರುವಾಯ ಏರಿ ಬಂದ ಬಡಕಲಾದ ಕೆಟ್ಟ ಏಳು ಹಸುಗಳು ಮತ್ತು ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು, ಬರಲಿರುವ ಏಳು ವರ್ಷಗಳು.
GEN 41:28 “ನಾನು ಫರೋಹನಿಗೆ ಹೇಳಿದ ಮಾತಿನಂತೆ ದೇವರು ಮಾಡಲಿರುವುದನ್ನು ಫರೋಹನಿಗೆ ತೋರಿಸಿದ್ದಾರೆ.
GEN 41:29 ಈಜಿಪ್ಟ್ ದೇಶದಲ್ಲೆಲ್ಲಾ ಬಹುಸಮೃದ್ಧಿಯ ಸುಭಿಕ್ಷ ವರ್ಷಗಳು ಬರುತ್ತವೆ.
GEN 41:30 ಆದರೆ ಅವುಗಳ ಹಿಂದೆ ಏಳು ವರ್ಷಗಳ ಬರಗಾಲ ಬರುತ್ತವೆ. ಆಗ ಈಜಿಪ್ಟಿನಲ್ಲಿದ್ದ ಸುಭಿಕ್ಷವು ಮರೆಯುವಂತಾಗುವುದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವುದು.
GEN 41:31 ತರುವಾಯ ಬರಗಾಲವು ಬಹಳ ಕಠಿಣವಾಗಿರುವುದರಿಂದ, ಸುಭಿಕ್ಷ ಕಾಲದ ನೆನಪು ದೇಶದಲ್ಲಿ ಇರದೆ ಹೋಗುವುದು.
GEN 41:32 ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದುದರಿಂದ, ಆ ಕಾರ್ಯವು ದೇವರಿಂದ ಸ್ಥಿರಪಡಿಸಲಾಗಿದೆ. ಆದ್ದರಿಂದ ದೇವರು ಅದನ್ನು ಬೇಗನೆ ನೆರವೇರಿಸುವರು.
GEN 41:33 “ಹೀಗಿರುವುದರಿಂದ ಈಗ ಫರೋಹನು ವಿವೇಕಿಯಾದ ಬುದ್ಧಿಯುಳ್ಳ ಒಬ್ಬನನ್ನು ನೋಡಿ, ಅವನನ್ನು ಈಜಿಪ್ಟ್ ದೇಶದ ಮೇಲೆ ನೇಮಿಸಲಿ.
GEN 41:34 ಫರೋಹನು ಅಧಿಕಾರಿಗಳನ್ನು ನೇಮಿಸಿ, ದೇಶದ ಮೇಲಿಟ್ಟು, ಸುಭಿಕ್ಷದ ಏಳು ವರ್ಷಗಳಲ್ಲಿ ಈಜಿಪ್ಟ್ ದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ಕಂದಾಯವಾಗಿ ತೆಗೆದುಕೊಳ್ಳಲಿ.
GEN 41:35 ಅಧಿಕಾರಿಗಳು ಮುಂಬರುವ ಈ ಒಳ್ಳೆಯ ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಫರೋಹನ ಕೈಕೆಳಗೆ ಧಾನ್ಯವನ್ನು ಪಟ್ಟಣಗಳಲ್ಲಿ ಇಟ್ಟುಕೊಂಡು ಕಾಯಲಿ.
GEN 41:36 ಈಜಿಪ್ಟಿನಲ್ಲಿ ಬರುವದಕ್ಕಿರುವ ಬರಗಾಲದ ಏಳು ವರ್ಷಗಳಲ್ಲಿ ದೇಶವು ಹಾಳಾಗದಂತೆ, ಆಹಾರವು ದೇಶಕ್ಕೆ ಸಂಗ್ರಹವಾಗಿರುವುದು,” ಎಂದನು.
GEN 41:37 ಈ ಮಾತುಗಳು ಫರೋಹನಿಗೂ, ಅವನ ಸೇವಕರಿಗೂ ಒಳ್ಳೆಯದೆಂದು ತೋರಿತು.
GEN 41:38 ಫರೋಹನು ತನ್ನ ಸೇವಕರಿಗೆ, “ಯೋಸೇಫನಂಥ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ?” ಎಂದನು.
GEN 41:39 ಫರೋಹನು ಯೋಸೇಫನಿಗೆ, “ದೇವರು ನಿನಗೆ ಇವುಗಳನ್ನೆಲ್ಲಾ ತೋರಿಸಿದ ಮೇಲೆ, ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ.
GEN 41:40 ನೀನೇ ನನ್ನ ಅರಮನೆಯ ಅಧಿಕಾರಿಯಾಗಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಅಧೀನವಾಗಿರಲಿ. ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದನು.
GEN 41:41 ಇದಲ್ಲದೆ ಫರೋಹನು ಯೋಸೇಫನಿಗೆ, “ನೋಡು, ನಾನು ನಿನ್ನನ್ನು ಈಜಿಪ್ಟ್ ದೇಶದ ಮೇಲೆಲ್ಲಾ ನೇಮಿಸಿದ್ದೇನೆ,” ಎಂದನು.
GEN 41:42 ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು.
GEN 41:43 ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂಡಿಸಿದಾಗ, “ಈತನನ್ನು ನಮಸ್ಕರಿಸಿ ದಾರಿಮಾಡಿರಿ,” ಎಂದು ಪ್ರಕಟಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶವನ್ನೆಲ್ಲಾ ಆಳುವವನನ್ನಾಗಿ ನೇಮಿಸಿದನು.
GEN 41:44 ಇದಲ್ಲದೆ ಫರೋಹನು ಯೋಸೇಫನಿಗೆ, “ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟ್ ದೇಶದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ, ಕಾಲನ್ನಾಗಲಿ ಎತ್ತಬಾರದು,” ಎಂದನು.
GEN 41:45 ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ತರುವಾಯ ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು.
GEN 41:46 ಯೋಸೇಫನು ಈಜಿಪ್ಟಿನ ಅರಸನಾದ ಫರೋಹನ ಮುಂದೆ ನಿಂತಾಗ, ಮೂವತ್ತು ವರ್ಷದವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು, ಈಜಿಪ್ಟ್ ದೇಶದಲ್ಲೆಲ್ಲಾ ಸಂಚಾರಮಾಡಿದನು.
GEN 41:47 ಆ ದೇಶವು ಸುಭಿಕ್ಷದ ಏಳು ವರ್ಷಗಳಲ್ಲಿ ರಾಶಿರಾಶಿಯಾಗಿ ಫಲಕೊಟ್ಟಿತು.
GEN 41:48 ಹೀಗಿರಲಾಗಿ ಅವನು ಈಜಿಪ್ಟ್ ದೇಶದಲ್ಲಿದ್ದ ಆ ಏಳು ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಪಟ್ಟಣಗಳಲ್ಲಿ ಇಟ್ಟನು. ಒಂದೊಂದು ಪಟ್ಟಣದ ಸುತ್ತಲಿರುವ ಬೆಳೆಯನ್ನು ಆಯಾ ಪಟ್ಟಣದಲ್ಲಿ ಕೂಡಿಸಿಟ್ಟನು.
GEN 41:49 ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕಮಾಡುವುದಕ್ಕೆ ಆಗದೆ ಹೋಯಿತು.
GEN 41:50 ಇದಲ್ಲದೆ ಬರಗಾಲದ ವರ್ಷಗಳು ಬರುವುದಕ್ಕೆ ಮುಂಚೆ, ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್, ಅವಳನ್ನು ಯೋಸೇಫನಿಗೆ ಹೆತ್ತಳು.
GEN 41:51 ಜೇಷ್ಠಪುತ್ರನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಏಕೆಂದರೆ ಅವನು, “ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನು ಮರೆತುಬಿಡುವಂತೆ ಮಾಡಿದರು,” ಎಂದನು.
GEN 41:52 ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯೀಮ್ ಎಂದು ಹೆಸರಿಟ್ಟನು. “ನಾನು ಬಾಧೆಯನ್ನನುಭವಿಸಿದ ದೇಶ ಫಲಭರಿತವಾಗುವಂತೆ ದೇವರು ಮಾಡಿದ್ದಾರೆ,” ಎಂದನು.
GEN 41:53 ಈಜಿಪ್ಟ್ ದೇಶದಲ್ಲಿದ್ದ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ,
GEN 41:54 ಯೋಸೇಫನು ಹೇಳಿದಂತೆ ಬರುವುದಕ್ಕಿದ್ದ ಬರಗಾಲದ ಏಳು ವರ್ಷಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರಗಾಲವಿತ್ತು. ಆದರೆ ಈಜಿಪ್ಟ್ ದೇಶದಲ್ಲೆಲ್ಲಾ ಆಹಾರವಿತ್ತು.
GEN 41:55 ಈಜಿಪ್ಟ್‌ದವರೆಲ್ಲಾ ಹಸಿದು, ಜನರು ಆಹಾರಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ, ಫರೋಹನು ಎಲ್ಲಾ ಈಜಿಪ್ಟಿನವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ನಿಮಗೆ ಹೇಳುವುದನ್ನು ಮಾಡಿರಿ,” ಎಂದನು.
GEN 41:56 ಈಜಿಪ್ಟಿನಲ್ಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಈಜಿಪ್ಟಿನವರಿಗೆ ಮಾರಿದನು. ಆಗ ಬರವು ಈಜಿಪ್ಟ್ ದೇಶದಲ್ಲಿ ಕಠಿಣವಾಗಿತ್ತು.
GEN 41:57 ಇದಲ್ಲದೆ ಭೂಮಿಯ ಮೇಲೆಲ್ಲಾ ಬರಗಾಲವು ಕಠಿಣವಾಗಿದ್ದದರಿಂದ, ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಈಜಿಪ್ಟಿಗೆ ಬರುತ್ತಿದ್ದರು.
GEN 42:1 ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ಯಾಕೋಬನು ತಿಳಿದಾಗ, ಅವನು ತನ್ನ ಪುತ್ರರಿಗೆ, “ನೀವು ಒಬ್ಬರನ್ನೊಬ್ಬರು ನೋಡಿಕೊಂಡು ಸುಮ್ಮನಿರುವುದೇನು?” ಎಂದನು.
GEN 42:2 ಅವನು ಮುಂದುವರಿಸಿ, “ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ, ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡುಕೊಳ್ಳಿರಿ,” ಎಂದನು.
GEN 42:3 ಆಗ ಯೋಸೇಫನ ಹತ್ತು ಮಂದಿ ಸಹೋದರರು ಈಜಿಪ್ಟಿನಲ್ಲಿ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಹೋದರು.
GEN 42:4 ಆದರೆ ಯೋಸೇಫನ ಸಹೋದರನಾದ ಬೆನ್ಯಾಮೀನನನ್ನು ಕಳುಹಿಸಲಿಲ್ಲ. ಏಕೆಂದರೆ ಅವನಿಗೆ ಕೇಡು ಬಂದೀತೆಂದು ಹೇಳಿ, ಯಾಕೋಬನು ಅವನನ್ನು ಅವನ ಸಹೋದರರ ಸಂಗಡ ಕಳುಹಿಸಲಿಲ್ಲ.
GEN 42:5 ಕಾನಾನ್ ದೇಶದಲ್ಲಿ ಬರವಿದ್ದುದರಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಬರುವವರೊಂದಿಗೆ ಇಸ್ರಾಯೇಲನ ಪುತ್ರರೂ ಬಂದರು.
GEN 42:6 ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರುವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು, ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
GEN 42:7 ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ, ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ, ಅವರಿಗೆ, “ಎಲ್ಲಿಂದ ಬಂದಿರಿ?” ಎಂದನು. ಅದಕ್ಕೆ ಅವರು, “ಆಹಾರ ಕೊಂಡುಕೊಳ್ಳುವುದಕ್ಕೆ ಕಾನಾನ್ ದೇಶದಿಂದ ಬಂದೆವು,” ಎಂದರು.
GEN 42:8 ಯೋಸೇಫನು ತನ್ನ ಸಹೋದರರನ್ನು ಗುರುತಿಸಿದರೂ, ಅವರು ಅವನನ್ನು ಗುರುತಿಸಲಿಲ್ಲ.
GEN 42:9 ಆಗ ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವರಿಗೆ, “ನೀವು ಗೂಢಚಾರರು, ದೇಶದ ಒಳಗುಟ್ಟನ್ನು ನೋಡುವುದಕ್ಕೆ ಬಂದಿದ್ದೀರಿ,” ಎಂದನು.
GEN 42:10 ಅದಕ್ಕವರು, “ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೇವೆ.
GEN 42:11 ನಾವೆಲ್ಲರೂ ಒಬ್ಬ ಮನುಷ್ಯನ ಪುತ್ರರಾಗಿದ್ದು ಸತ್ಯವಂತರಾಗಿದ್ದೇವೆ. ಆದ್ದರಿಂದ ನಿನ್ನ ದಾಸರು ಗೂಢಚಾರರಲ್ಲ,” ಎಂದರು.
GEN 42:12 ಆದರೆ ಅವನು ಅವರಿಗೆ, “ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ ಬಂದಿದ್ದೀರಿ,” ಎಂದನು.
GEN 42:13 ಅದಕ್ಕವರು, “ನಿನ್ನ ದಾಸರಾದ ನಾವು ಹನ್ನೆರಡು ಸಹೋದರರು. ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಈಗ ಚಿಕ್ಕವನು ನನ್ನ ತಂದೆಯೊಂದಿಗೆ ಇದ್ದಾನೆ, ಮತ್ತೊಬ್ಬನು ಇಲ್ಲ,” ಎಂದು ಹೇಳಿದರು.
GEN 42:14 ಆಗ ಯೋಸೇಫನು ಅವರಿಗೆ, “ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ!
GEN 42:15 ಈಗ ನಿಮ್ಮನ್ನು ನಾನು ಪರೀಕ್ಷಿಸುತ್ತೇನೆ. ಹೇಗೆಂದರೆ, ನಿಮ್ಮ ಚಿಕ್ಕ ಸಹೋದರನು ಇಲ್ಲಿಗೆ ಬಂದ ಹೊರತು, ಫರೋಹನ ಜೀವದಾಣೆ ನೀವು ಇಲ್ಲಿಂದ ಹೋಗಬಾರದು.
GEN 42:16 ನಿಮ್ಮಲ್ಲಿಂದ ಒಬ್ಬನನ್ನು ಕಳುಹಿಸಿರಿ, ಅವನು ನಿಮ್ಮ ಸಹೋದರನನ್ನು ಕರೆದುಕೊಂಡು ಬರಲಿ. ಆದರೆ ನೀವು ಸೆರೆಮನೆಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ, ಇಲ್ಲವೋ ಎಂದು ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಇಲ್ಲದಿದ್ದರೆ, ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು,” ಎಂದು ಹೇಳಿದನು.
GEN 42:17 ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು.
GEN 42:18 ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ, “ನಾನು ದೇವರಿಗೆ ಭಯಪಡುವವನಾಗಿದ್ದೇನೆ.
GEN 42:19 ನೀವು ಸತ್ಯವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿತನಾಗಿರಲಿ. ಆದರೆ ನೀವು ಎಲ್ಲರೂ ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ.
GEN 42:20 ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ಕರೆತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು. ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಿದರು.
GEN 42:21 ಆಗ ಅವರು, “ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ, ಅವನ ಪ್ರಾಣಸಂಕಟವನ್ನು ಕಂಡರೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು,” ಎಂದು ಮಾತಾಡಿಕೊಂಡರು.
GEN 42:22 ಆಗ ರೂಬೇನನು ಅವರಿಗೆ ಉತ್ತರವಾಗಿ, “ಹುಡುಗನಿಗೆ ಏನೂ ಕೇಡು ಮಾಡಬೇಡಿರಿ, ಎಂದು ನಾನು ನಿಮಗೆ ಹೇಳಿದರೂ ನೀವು ಕೇಳಲಿಲ್ಲ. ಆದ್ದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ಈಗ ನಾವು ಲೆಕ್ಕ ಒಪ್ಪಿಸುತ್ತಿದ್ದೇವೆ,” ಎಂದನು.
GEN 42:23 ಆದರೆ ಯೋಸೇಫನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಿದ್ದನು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಏಕೆಂದರೆ ಯೋಸೇಫನು ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದನು.
GEN 42:24 ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು.
GEN 42:25 ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸಬೇಕೆಂದೂ, ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರುಗಿ ಇಡಬೇಕೆಂದೂ, ಪ್ರಯಾಣಕ್ಕಾಗಿ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು.
GEN 42:26 ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು, ಅಲ್ಲಿಂದ ಹೊರಟು ಹೋದರು.
GEN 42:27 ಆಗ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವುದಕ್ಕೆ ವಸತಿಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ, ಚೀಲದ ಬಾಯಲ್ಲಿಟ್ಟಿದ್ದ ತನ್ನ ಹಣವನ್ನು ಕಂಡನು.
GEN 42:28 ಅವನು ತನ್ನ ಸಹೋದರರಿಗೆ, “ನನ್ನ ಹಣವನ್ನು ಹಿಂದಕ್ಕೆ ಕೊಟ್ಟಿದ್ದಾರೆ, ಅದು ನನ್ನ ಚೀಲದಲ್ಲಿದೆ,” ಎಂದು ಹೇಳಿದ. ಅವರಿಗೆ ಹೃದಯ ಕಂಪನವಾದಂತಾಗಿ ಹೆದರಿ ಒಬ್ಬರಿಗೊಬ್ಬರು, “ದೇವರು ನಮಗೆ ಮಾಡಿದ್ದೇನು?” ಎಂದರು.
GEN 42:29 ಅವರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದಾಗ, ತಮಗೆ ಸಂಭವಿಸಿದ್ದೆಲ್ಲವನ್ನೂ ಅವನಿಗೆ ತಿಳಿಸಿದರು.
GEN 42:30 ದೇಶದ ಅಧಿಪತಿಯಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ, ದೇಶದ ಗೂಢಚಾರರನ್ನಾಗಿ ನಮ್ಮನ್ನು ಎಣಿಸಿದನು.
GEN 42:31 ನಾವು ಅವನಿಗೆ, “ನಾವು ಗೂಢಚಾರರಲ್ಲ, ಸತ್ಯವಂತರೇ.
GEN 42:32 ನಾವು ಹನ್ನೆರಡು ಮಂದಿ ಸಹೋದರರಾಗಿದ್ದು, ಒಂದೇ ತಂದೆಯ ಪುತ್ರರಾಗಿದ್ದೇವೆ, ಒಬ್ಬನು ಇಲ್ಲ, ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ,” ಎಂದೆವು.
GEN 42:33 “ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು, ‘ನೀವು ಯಥಾರ್ಥರೆಂದು ನಾನು ಇದರಲ್ಲಿ ತಿಳಿದುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು, ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತೆಗೆದುಕೊಂಡು ಹೋಗಿರಿ.
GEN 42:34 ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ. ಆಗ ನೀವು ಗೂಢಚಾರರಲ್ಲವೆಂದೂ, ಯಥಾರ್ಥರೆಂದೂ ತಿಳಿದುಕೊಂಡು, ನಿಮ್ಮ ಸಹೋದರರನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು,’ ಎಂದು ಹೇಳಿದನು,” ಎಂದರು.
GEN 42:35 ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ, ಅವನವನ ಹಣದ ಗಂಟು, ಅವನವನ ಚೀಲದಲ್ಲಿ ಇತ್ತು. ಅವರೂ, ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.
GEN 42:36 ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು.
GEN 42:37 ರೂಬೇನನು ತನ್ನ ತಂದೆಗೆ, “ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ನನ್ನ ಇಬ್ಬರು ಪುತ್ರರನ್ನು ಕೊಂದುಬಿಡು. ನೀನು ಬೆನ್ಯಾಮೀನನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರುಗಿ ತರುವೆನು,” ಎಂದನು.
GEN 42:38 ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು.
GEN 43:1 ದೇಶದಲ್ಲಿ ಬರವು ಘೋರವಾಗಿತ್ತು.
GEN 43:2 ಅವರು ಈಜಿಪ್ಟಿನಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ, “ತಿರುಗಿ ಹೋಗಿ ನಮಗಾಗಿ ಸ್ವಲ್ಪ ಆಹಾರ ಕೊಂಡುಕೊಳ್ಳಿರಿ,” ಎಂದನು.
GEN 43:3 ಆಗ ಯೆಹೂದನು ಅವನಿಗೆ, “ಆ ಮನುಷ್ಯನು ನಮಗೆ ನಿಮ್ಮ ಸಹೋದರನು ನಿಮ್ಮ ಸಂಗಡ ಇದ್ದ ಹೊರತು, ನೀವು ನನ್ನ ಮುಖವನ್ನು ನೋಡಬಾರದೆಂದು, ನಮಗೆ ದೃಢವಾಗಿ ನಿರ್ಣಯಿಸಿ ಹೇಳಿದ್ದಾನೆ.
GEN 43:4 ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ, ನಾವು ಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಂಡು ಬರುತ್ತೇವೆ.
GEN 43:5 ಅವನನ್ನು ಕಳುಹಿಸದೆ ಹೋದರೆ, ನಾವು ಹೋಗುವುದಿಲ್ಲ. ಏಕೆಂದರೆ ಆ ಮನುಷ್ಯನು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ, ನನ್ನ ಮುಖವನ್ನು ನೋಡಬಾರದು,’ ಎಂದು ನಮಗೆ ಹೇಳಿದ್ದಾನೆ,” ಎಂದನು.
GEN 43:6 ಇಸ್ರಾಯೇಲನು, “ನಿಮಗೆ ಇನ್ನೊಬ್ಬ ತಮ್ಮನು ಇದ್ದಾನೆಂದು ನೀವು ಏಕೆ ಆ ಮನುಷ್ಯನಿಗೆ ಹೇಳಿ ನನಗೆ ಕೇಡು ಮಾಡಿದ್ದೀರಿ?” ಎಂದನು.
GEN 43:7 ಅವರು ಅವನಿಗೆ, “ಆ ಮನುಷ್ಯನು ನಮ್ಮ ವಿಷಯದಲ್ಲಿ ಮತ್ತು ನಮ್ಮ ಮನೆಯವರ ವಿಷಯದಲ್ಲಿ ನೇರವಾಗಿ ಕೇಳಿ ಅವನು, ‘ನಿಮ್ಮ ತಂದೆ ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ಸಹೋದರನು ಇದ್ದಾನೋ?’ ಎಂದು ಕೇಳಿದನು. ಆಗ ಈ ಮಾತುಗಳಿಗೆ ತಕ್ಕ ಹಾಗೆ ನಾವು ಅವನಿಗೆ ತಿಳಿಸಿದೆವು. ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ,’ ಎಂದು ಅವನು ನಮಗೆ ಹೇಳುತ್ತಾನೆಂದು ನಮಗೆ ಹೇಗೆ ತಿಳಿಯಲು ಸಾಧ್ಯ?” ಎಂದರು.
GEN 43:8 ಯೆಹೂದನು ತನ್ನ ತಂದೆ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಸಂಗಡ ಕಳುಹಿಸು, ಆಗ ನಾವು ಹೋಗುವೆವು. ನಾವು, ನೀನೂ ಮತ್ತು ನಮ್ಮ ಮಕ್ಕಳು ಸಾಯದೆ ಬದುಕುವೆವು.
GEN 43:9 ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ, ಎಂದೆಂದಿಗೂ ನಾನು ಅಪರಾಧವನ್ನು ಹೊರುವೆನು.
GEN 43:10 ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು.
GEN 43:11 ಆಗ ಅವರ ತಂದೆ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು, ಆ ಮನುಷ್ಯನಿಗೆ ಕಾಣಿಕೆ ತೆಗೆದುಕೊಂಡು ಹೋಗಿರಿ. ಅಂದರೆ, ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಆಕ್ರೋಡು ಮತ್ತು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ.
GEN 43:12 ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಬಂದಿರಬಹುದು.
GEN 43:13 ನಿಮ್ಮ ಸಹೋದರನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ತಿರುಗಿ ಹೋಗಿರಿ.
GEN 43:14 ಸರ್ವಶಕ್ತ ದೇವರು ನಿಮ್ಮ ಮತ್ತೊಬ್ಬ ಸಹೋದರನನ್ನೂ ಬೆನ್ಯಾಮೀನನನ್ನೂ ಕಳುಹಿಸಿಕೊಡುವ ಹಾಗೆ, ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ,” ಎಂದನು.
GEN 43:15 ಆಗ ಅವರು ಆ ಕಾಣಿಕೆಯನ್ನು ತೆಗೆದುಕೊಂಡು, ತಮ್ಮ ಕೈಯಲ್ಲಿ ಎರಡರಷ್ಟು ಹಣವನ್ನೂ, ಬೆನ್ಯಾಮೀನನನ್ನೂ ಕರೆದುಕೊಂಡು ಈಜಿಪ್ಟಿಗೆ ಹೋಗಿ, ಯೋಸೇಫನ ಮುಂದೆ ನಿಂತರು.
GEN 43:16 ಯೋಸೇಫನು ಬೆನ್ಯಾಮೀನನನ್ನು ಅವರ ಸಂಗಡ ಕಂಡಾಗ ತನ್ನ ಮನೆ ಉಗ್ರಾಣಿಕನಿಗೆ, “ಈ ಮನುಷ್ಯರನ್ನು ಮನೆಗೆ ಕರೆದುಕೊಂಡು ಹೋಗಿ, ಮಾಂಸದ ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಮಧ್ಯಾಹ್ನದಲ್ಲಿ ನನ್ನ ಸಂಗಡ ಊಟಮಾಡಬೇಕು,” ಎಂದನು.
GEN 43:17 ಯೋಸೇಫನು ಹೇಳಿದಂತೆ ಅವನು ಮಾಡಿದನು. ಅವನು ಆ ಮನುಷ್ಯರನ್ನು ಯೋಸೇಫನ ಮನೆಗೆ ಕರೆದುಕೊಂಡು ಹೋದನು.
GEN 43:18 ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಹಿಂದೆ ನಮ್ಮ ಚೀಲಗಳಲ್ಲಿ ತಿರುಗಿ ಸೇರಿದ ಹಣಕ್ಕಾಗಿ ನಮ್ಮನ್ನು ಹಿಡಿದು, ನಮ್ಮ ಮೇಲೆ ಬಿದ್ದು, ನಮ್ಮನ್ನು ದಾಸರಾಗಿ ಮಾಡಿ, ನಮ್ಮ ಕತ್ತೆಗಳನ್ನು ತೆಗೆದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ತಂದಿದ್ದಾನೆ,” ಎಂದರು.
GEN 43:19 ಆಗ ಅವರು ಯೋಸೇಫನ ಮನೆಯ ಬಳಿಗೆ ಹೋಗಿ, ಬಾಗಿಲಿನ ಮುಂದೆ ಗೃಹನಿರ್ವಾಹಕನ ಸಂಗಡ ಮಾತನಾಡಿ,
GEN 43:20 “ಒಡೆಯಾ, ನಾವು ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಮೊದಲನೆಯ ಸಾರಿ ಬಂದದ್ದು ನಿಜವೇ.
GEN 43:21 ಇದಾದ ಮೇಲೆ ನಾವು ವಸತಿಗೃಹಕ್ಕೆ ಬಂದು ನಮ್ಮ ಚೀಲಗಳನ್ನು ತೆರೆದಾಗ, ಪ್ರತಿಯೊಬ್ಬನ ಹಣವು ಅವನವನ ಚೀಲದ ಬಾಯಲ್ಲಿ ಇತ್ತು. ನಮ್ಮ ಕೈಗಳಲ್ಲಿ ಅದನ್ನು ತಿರುಗಿ ತೆಗೆದುಕೊಂಡು ಬಂದಿದ್ದೇವೆ.
GEN 43:22 ಇದಲ್ಲದೆ ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಈ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೆಂದು ನಮಗೆ ತಿಳಿಯದು,” ಎಂದರು.
GEN 43:23 ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು.
GEN 43:24 ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ, ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು.
GEN 43:25 ಅವರು ಅಲ್ಲಿ ಊಟ ಮಾಡಬೇಕೆಂದು ಕೇಳಿದ್ದರಿಂದ, ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು.
GEN 43:26 ಯೋಸೇಫನು ಮನೆಗೆ ಬಂದ ಮೇಲೆ, ತಮ್ಮ ಕೈಗಳಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತೆಗೆದುಕೊಂಡು ಬಂದು, ಅವನಿಗೆ ನೆಲದವರೆಗೂ ಅಡ್ಡಬಿದ್ದರು.
GEN 43:27 ಆಗ ಯೋಸೇಫನು ಅವರ ಕ್ಷೇಮಸಮಾಚಾರವನ್ನು ಕೇಳಿ, “ನೀವು ಹೇಳಿದ ವೃದ್ಧನಾದ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದನು.
GEN 43:28 ಅದಕ್ಕವರು, “ನಿನ್ನ ದಾಸನಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ, ಅವನು ಇನ್ನೂ ಬದುಕಿದ್ದಾನೆ,” ಎಂದು ಹೇಳಿ ತಮ್ಮ ತಲೆಗಳನ್ನು ಮತ್ತೆ ಬಾಗಿಸಿ ವಂದಿಸಿದರು.
GEN 43:29 ಆಗ ಅವನು ತನ್ನ ದೃಷ್ಟಿಯಿಟ್ಟು, ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾಮೀನನನ್ನು ನೋಡಿ, “ನೀವು ನನಗೆ ಹೇಳಿದ ನಿಮ್ಮ ಚಿಕ್ಕ ತಮ್ಮನು ಇವನೋ?” ಎಂದು ಹೇಳಿ, “ನನ್ನ ಮಗನೇ, ದೇವರು ನಿನಗೆ ಕೃಪಾಳುವಾಗಿರಲಿ,” ಎಂದನು.
GEN 43:30 ಆಗ ಯೋಸೇಫನ ಕರುಳು ತನ್ನ ತಮ್ಮನ ಬಗ್ಗೆ ಮರುಗಿದ್ದರಿಂದ ಅವನು ಅವಸರದಲ್ಲಿ ಎದ್ದು ಅಳುವುದಕ್ಕೆ ಸ್ಥಳವನ್ನು ಹುಡುಕಿ, ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.
GEN 43:31 ತರುವಾಯ ಅವನು ಮುಖವನ್ನು ತೊಳೆದುಕೊಂಡು ಹೊರಗೆ ಬಂದನು. ಅವನು ಮನಸ್ಸನ್ನು ಬಿಗಿಹಿಡಿದುಕೊಂಡು, “ಊಟಕ್ಕೆ ಬಡಿಸಿರಿ,” ಎಂದನು.
GEN 43:32 ಆಗ ಅವರು ಯೋಸೇಫನಿಗೆ, ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡ ಇದ್ದ ಈಜಿಪ್ಟಿನವರಿಗೂ ಬೇರೆಬೇರೆಯಾಗಿ ಊಟಕ್ಕೆ ಇಟ್ಟರು. ಏಕೆಂದರೆ ಈಜಿಪ್ಟಿನವರು ಹಿಬ್ರಿಯರ ಕೂಡ ಊಟಮಾಡುತ್ತಿರಲಿಲ್ಲ. ಅದು ಈಜಿಪ್ಟಿನವರಿಗೆ ಅಸಹ್ಯವಾಗಿತ್ತು.
GEN 43:33 ಯೋಸೇಫನು ಅವರನ್ನು ಹಿರಿಯವರಿಂದ ಕಿರಿಯವನವರೆಗೆ ಅವರವರ ವಯಸ್ಸಿನ ಪ್ರಕಾರ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮತಮ್ಮೊಳಗೆ ಆಶ್ಚರ್ಯಪಟ್ಟರು.
GEN 43:34 ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು ಮತ್ತು ಅವರು ಅವನ ಸಂಗಡ ಕುಡಿದು ಸಂತೋಷದಿಂದಿದ್ದರು.
GEN 44:1 ಯೋಸೇಫನು ತನ್ನ ಮನೆಯ ಉಗ್ರಾಣಿಕನಿಗೆ, “ಈ ಮನುಷ್ಯರ ಚೀಲಗಳಲ್ಲಿ ಹೊರುವುದಕ್ಕಾಗುವಷ್ಟು ಧಾನ್ಯವನ್ನು ತುಂಬಿಸಿ, ಪ್ರತಿಯೊಬ್ಬನ ಹಣವನ್ನು ಅವನವನ ಚೀಲದ ಬಾಯಲ್ಲಿ ಇಡು.
GEN 44:2 ನನ್ನ ಬೆಳ್ಳಿಯ ಪಾತ್ರೆಯನ್ನು ಚಿಕ್ಕವನ ಚೀಲದ ಬಾಯಲ್ಲಿ ಅವನ ಧಾನ್ಯ ಹಾಗೂ ಹಣದ ಸಂಗಡ ಇಡು,” ಎಂದು ಆಜ್ಞಾಪಿಸಿದನು. ಯೋಸೇಫನು ಹೇಳಿದಂತೆಯೇ ಅವನು ಮಾಡಿದನು.
GEN 44:3 ಸೂರ್ಯೋದಯವಾದಾಗ ಆ ಮನುಷ್ಯರನ್ನು ತಮ್ಮ ಕತ್ತೆಗಳ ಸಹಿತವಾಗಿ ಕಳುಹಿಸಲಾಯಿತು.
GEN 44:4 ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವುದಕ್ಕಿಂತ ಮುಂಚೆ ಯೋಸೇಫನು ಮನೆಯ ಗೃಹನಿರ್ವಾಹಕನಿಗೆ, “ಆ ಮನುಷ್ಯರ ಹಿಂದೆ ಹೋಗು. ಅವರು ಸಿಕ್ಕಿದಾಗ, ‘ಏಕೆ ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಿದಿರಿ?
GEN 44:5 ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ,’ ಎಂದು ಅವರಿಗೆ ಹೇಳು,” ಎಂದನು.
GEN 44:6 ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು.
GEN 44:7 ಆಗ ಅವರು ಅವನಿಗೆ, “ನಮ್ಮ ಒಡೆಯನು ಏಕೆ ಇಂಥ ಮಾತುಗಳನ್ನಾಡುತ್ತಾನೆ? ನಿನ್ನ ದಾಸರು ಹೀಗೆ ಮಾಡುವವರಲ್ಲ.
GEN 44:8 ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವುದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು?
GEN 44:9 ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವುದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು,” ಎಂದರು.
GEN 44:10 ಆಗ ಅವನು, “ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ, ಅವನು ನನಗೆ ದಾಸನಾಗಿರಲಿ, ಆದರೆ ನೀವು ನಿರಪರಾಧಿಗಳಾಗಿರುವಿರಿ,” ಎಂದನು.
GEN 44:11 ಅದಕ್ಕೆ ಅವರು ತ್ವರೆಪಟ್ಟು, ತಮ್ಮ ತಮ್ಮ ಚೀಲಗಳನ್ನು ನೆಲಕ್ಕೆ ಇಳಿಸಿ ಅವುಗಳನ್ನು ಬಿಚ್ಚಿದರು.
GEN 44:12 ಅವರು ಹಿರಿಯನನ್ನು ಮೊದಲುಗೊಂಡು ಕಿರಿಯವನವರೆಗೆ ಶೋಧಿಸಲಾಗಿ, ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
GEN 44:13 ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು, ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಕೊಂಡು ಪಟ್ಟಣಕ್ಕೆ ಮರಳಿ ಬಂದರು.
GEN 44:14 ಯೆಹೂದನೂ ಅವನ ಸಹೋದರರೂ ಯೋಸೇಫನು ಇನ್ನೂ ಮನೆಯಲ್ಲಿದ್ದಾಗಲೇ, ಅವನ ಮನೆಗೆ ಬಂದು ಮುಂದೆ ಅಡ್ಡಬಿದ್ದರು.
GEN 44:15 ಆಗ ಯೋಸೇಫನು ಅವರಿಗೆ, “ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದನು.
GEN 44:16 ಯೆಹೂದನು, “ನಾವು ನಮ್ಮ ಒಡೆಯನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನೀತಿವಂತರಾಗಿ ಮಾಡಿಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಹೊರಪಡಿಸಿದ್ದಾರೆ. ನಾವೂ ಪಾತ್ರೆಯು ಯಾರ ಕೈಯಲ್ಲಿ ಸಿಕ್ಕಿತೋ ಅವನೂ ನನ್ನ ಒಡೆಯನಿಗೆ ದಾಸರಾಗಿದ್ದೇವೆ,” ಎಂದನು.
GEN 44:17 ಆಗ ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ, ಅವನು ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ,” ಎಂದನು.
GEN 44:18 ಯೆಹೂದನು ಅವನ ಸಮೀಪಕ್ಕೆ ಬಂದು, “ನನ್ನ ಒಡೆಯನೇ, ನನ್ನ ಒಡೆಯನ ಕಿವಿಗಳಲ್ಲಿ ಒಂದು ಮಾತು ಹೇಳುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ನಿನ್ನ ಕೋಪವು ಉರಿಯದೆ ಇರಲಿ. ಏಕೆಂದರೆ ನೀನು ಫರೋಹನಿಗೆ ಸಮಾನನು.
GEN 44:19 ನನ್ನ ಒಡೆಯನೇ, ‘ನಿಮಗೆ ತಂದೆಯೂ ಸಹೋದರರೂ ಇದ್ದಾರೋ,’ ಎಂದು ತನ್ನ ದಾಸರನ್ನು ಕೇಳಲು,
GEN 44:20 ನಾವು ನಮ್ಮ ಒಡೆಯನಿಗೆ, ‘ನಮಗೆ ಮುದುಕನಾದ ತಂದೆಯೂ ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಚಿಕ್ಕ ಮಗನೂ ಇದ್ದಾನೆ, ಅವನ ಸಹೋದರನು ಸತ್ತುಹೋಗಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿಸುತ್ತಾನೆ,’ ಎಂದು ಹೇಳಿದೆವು.
GEN 44:21 “ಅದಕ್ಕೆ ನೀನು ನಿನ್ನ ದಾಸರಿಗೆ, ‘ನಾನು ಅವನನ್ನು ನೋಡುವ ಹಾಗೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,’ ಎಂದು ಹೇಳಿದೆಯಲ್ಲಾ.
GEN 44:22 ನಾವು ನಮ್ಮ ಒಡೆಯನಿಗೆ, ‘ಆ ಹುಡುಗನು ನಮ್ಮ ತಂದೆಯನ್ನು ಬಿಡಕೂಡದು. ಅವನು ತಂದೆಯನ್ನು ಬಿಟ್ಟರೆ, ಅವನು ಸಾಯುವನು,’ ಎಂದು ಹೇಳಿದೆವು.
GEN 44:23 ಆಗ ನೀವು ನಿನ್ನ ದಾಸರಿಗೆ, ‘ನಿಮ್ಮ ಚಿಕ್ಕ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ, ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು,’ ಎಂದು ಹೇಳಿದೆ.
GEN 44:24 ಹೀಗಿರಲಾಗಿ ನಾವು ನಿನ್ನ ದಾಸನಾದ ನಮ್ಮ ತಂದೆಯ ಬಳಿಗೆ ಹೋದಾಗ, ನನ್ನ ಒಡೆಯನ ಮಾತುಗಳನ್ನು ಅವನಿಗೆ ತಿಳಿಸಿದೆವು.
GEN 44:25 “ನಮ್ಮ ತಂದೆಯು, ‘ನೀವು ತಿರುಗಿ ಹೋಗಿ, ನಮಗೆ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ,’ ಎಂದನು.
GEN 44:26 ಆಗ ನಾವು, ‘ಹೋಗುವುದಕ್ಕಾಗದು, ನಮ್ಮ ಚಿಕ್ಕ ತಮ್ಮನು ನಮ್ಮೊಂದಿಗೆ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಏಕೆಂದರೆ ನಮ್ಮ ಚಿಕ್ಕ ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ, ಆ ಮನುಷ್ಯನ ಮುಖವನ್ನು ನಾವು ನೋಡುವುದಕ್ಕಾಗುವುದು,’ ಎಂದು ಹೇಳಿದೆವು.
GEN 44:27 “ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು, ‘ನನ್ನ ಹೆಂಡತಿಯು ನನಗೆ ಇಬ್ಬರು ಪುತ್ರರನ್ನು ಹೆತ್ತಳೆಂಬುದು ನಿಮಗೆ ತಿಳಿದಿದೆ.
GEN 44:28 ಒಬ್ಬನು ನನ್ನ ಬಳಿಯಿಂದ ಹೋಗಿ ಬಿಟ್ಟನು. “ಅವನು ನಿಶ್ಚಯವಾಗಿ ಕಾಡುಮೃಗದಿಂದ ಸೀಳಿ ಸತ್ತಿರಬೇಕು,” ಎಂದು ಹೇಳಿದಿರಿ. ಅವನನ್ನು ನಾನು ಈ ದಿನದವರೆಗೂ ನೋಡಲಿಲ್ಲ.
GEN 44:29 ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು.
GEN 44:30 “ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದಲ್ಲಿ ನೆಟ್ಟಿದ್ದರಿಂದ,
GEN 44:31 ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು.
GEN 44:32 ಏಕೆಂದರೆ ನಿನ್ನ ದಾಸನಾದ ನಾನು, ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆಯಾಗಿ, ‘ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆನು,’ ಎಂದು ಹೇಳಿಕೊಂಡಿದ್ದೇನೆ.
GEN 44:33 “ಹಾಗಿದ್ದಲ್ಲಿ ಆ ಹುಡುಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು. ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ.
GEN 44:34 ಹುಡುಗನು ನನ್ನ ಬಳಿಯಲ್ಲಿರದೆ, ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡಬೇಕಾದೀತು,” ಎಂದನು.
GEN 45:1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.
GEN 45:2 ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ, ಹೊರಗಿದ್ದ ಈಜಿಪ್ಟಿನವರೂ, ಫರೋಹನ ಮನೆಯವರೂ ಕೇಳಿಸಿಕೊಂಡರು.
GEN 45:3 ಯೋಸೇಫನು ತನ್ನ ಸಹೋದರರಿಗೆ, “ನಾನು ಯೋಸೇಫನು! ನನ್ನ ತಂದೆಯು ಬದುಕಿದ್ದಾನೋ?” ಎಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ, ಅವನಿಗೆ ಉತ್ತರ ಕೊಡಲಾರದೆ ಹೋದರು.
GEN 45:4 ಆಗ ಯೋಸೇಫನು ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿರಿ,” ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, “ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ!
GEN 45:5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.
GEN 45:6 ಏಕೆಂದರೆ ಈ ಎರಡು ವರ್ಷಗಳವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರ್ಷಗಳವರೆಗೆ ಬಿತ್ತುವುದೂ, ಕೊಯ್ಯುವುದೂ ಇರುವುದಿಲ್ಲ.
GEN 45:7 ಆದ್ದರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವುದಕ್ಕೂ, ದೊಡ್ಡ ಬರಗಾಲದಿಂದ ನಿಮ್ಮ ಪ್ರಾಣಗಳನ್ನು ಉಳಿಸುವುದಕ್ಕೂ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ.
GEN 45:8 “ಆದ್ದರಿಂದ ಈಗ ನೀವಲ್ಲ, ದೇವರು ತಾವೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ದೇವರು ನನ್ನನ್ನು ಫರೋಹನಿಗೆ ತಂದೆಯಾಗಿಯೂ, ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಈಜಿಪ್ಟ್ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾರೆ.
GEN 45:9 ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ, ‘ನಿನ್ನ ಮಗ ಯೋಸೇಫನನ್ನು ದೇವರು ಈಜಿಪ್ಟಿಗೆಲ್ಲಾ ಪ್ರಭುವನ್ನಾಗಿ ಮಾಡಿದ್ದಾರೆ, ತಡಮಾಡದೆ ನನ್ನ ಬಳಿಗೆ ಬೇಗ ಬಾ.
GEN 45:10 ಗೋಷೆನ್ ಪ್ರದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ದನಕುರಿಗಳೂ, ನಿನಗಿದ್ದದ್ದೆಲ್ಲವೂ ನನ್ನ ಸಮೀಪದಲ್ಲಿರಬೇಕು.
GEN 45:11 ಅಲ್ಲಿ ನಿನ್ನನ್ನು ಪೋಷಿಸುವೆನು. ಏಕೆಂದರೆ ಇನ್ನೂ ಕ್ಷಾಮದ ಐದು ವರ್ಷಗಳಿವೆ. ನಿನಗೂ, ನಿನ್ನ ಮನೆಗೂ, ನಿನಗಿರುವುದೆಲ್ಲದಕ್ಕೂ ಬಡತನವಾಗಬಾರದು’ ಎಂದು ಹೇಳಿರಿ.
GEN 45:12 “ನಿಮ್ಮ ಸಂಗಡ ಮಾತನಾಡುವುದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ, ನನ್ನ ಸಹೋದರ ಬೆನ್ಯಾಮೀನನ ಕಣ್ಣುಗಳೂ ನೋಡಿವೆ.
GEN 45:13 ಹೀಗಿರಲಾಗಿ ನೀವು ಈಜಿಪ್ಟ್ ದೇಶದಲ್ಲಿ ನನಗಿರುವ ಎಲ್ಲಾ ಘನತೆಯನ್ನೂ, ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ,” ಎಂದನು.
GEN 45:14 ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು.
GEN 45:15 ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.
GEN 45:16 ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ, ಅವನ ಸೇವಕರಿಗೂ ಅದು ಮೆಚ್ಚಿಗೆಯಾಗಿತ್ತು.
GEN 45:17 ಆಗ ಫರೋಹನು ಯೋಸೇಫನಿಗೆ, “ನಿನ್ನ ಸಹೋದರರಿಗೆ ಹೀಗೆ ಮಾಡಲು ಹೇಳು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ವಸ್ತುಗಳನ್ನು ಹೇರಿ, ಕಾನಾನ್ ದೇಶಕ್ಕೆ ಹೋಗಿ,
GEN 45:18 ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’
GEN 45:19 “ಇದನ್ನು ಸಹ ನಿನ್ನ ಸಹೋದರರು ಹೇಳುವಂತೆ ನಿನಗೆ ಅಪ್ಪಣೆಯಾಗಿದೆ: ‘ಈಜಿಪ್ಟ್ ದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ, ಹೆಂಡತಿಯರಿಗಾಗಿಯೂ ಬಂಡಿಗಳನ್ನು ತೆಗೆದುಕೊಂಡುಹೋಗಿ, ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ.
GEN 45:20 ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಈಜಿಪ್ಟ್ ದೇಶದಲ್ಲಿರುವ ಉತ್ತಮವಾದದ್ದೆಲ್ಲಾ ನಿಮ್ಮದೇ,’ ” ಎಂದನು.
GEN 45:21 ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ, ಮಾರ್ಗಕ್ಕೋಸ್ಕರ ಆಹಾರವನ್ನೂ ಕೊಟ್ಟನು.
GEN 45:22 ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು.
GEN 45:23 ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.
GEN 45:24 ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು.
GEN 45:25 ಅವರು ಈಜಿಪ್ಟಿನಿಂದ ಹೊರಟುಹೋಗಿ ಕಾನಾನಿನಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದು,
GEN 45:26 “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ! ಅವನೇ ಈಜಿಪ್ಟ್ ದೇಶವನ್ನೆಲ್ಲಾ ಆಳುತ್ತಿದ್ದಾನೆ,” ಎಂದು ಅವನಿಗೆ ತಿಳಿಸಿದಾಗ, ಅವನು ಆಶ್ಚರ್ಯಪಟ್ಟನು, ಅವರನ್ನು ನಂಬಲಿಲ್ಲ.
GEN 45:27 ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದರು. ಅವನನ್ನು ಕರೆದುಕೊಂಡು ಹೋಗುವುದಕ್ಕೆ ಯೋಸೇಫನು ಕಳುಹಿಸಿದ ರಥಗಳನ್ನು ಅವನು ನೋಡಿದಾಗ ಯಾಕೋಬನ ಆತ್ಮವು ಉಜ್ಜೀವಿಸಿತು.
GEN 45:28 ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.
GEN 46:1 ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಬೇರ್ಷೆಬಕ್ಕೆ ಬಂದು, ತನ್ನ ತಂದೆ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿದನು.
GEN 46:2 ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.
GEN 46:3 ದೇವರು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗುವುದಕ್ಕೆ ಭಯಪಡಬೇಡ. ಏಕೆಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡ ಜನಾಂಗವಾಗಮಾಡುವೆನು.
GEN 46:4 ನಾನೇ ನಿನ್ನ ಸಂಗಡ ಈಜಿಪ್ಟಿಗೆ ಹೋಗುವೆನು. ನಾನು ನಿಶ್ಚಯವಾಗಿ ನಿನ್ನನ್ನು ಕಾನಾನಿಗೆ ತಿರುಗಿ ಬರಮಾಡುವೆನು. ಯೋಸೇಫನು ನಿನ್ನ ಅಂತಿಮ ಕಾಲದಲ್ಲಿ ನೀನು ಕಣ್ಣುಮುಚ್ಚುವಾಗ ಇರುವನು,” ಎಂದನು.
GEN 46:5 ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಆಗ ಇಸ್ರಾಯೇಲರು ತಮ್ಮ ತಂದೆ ಯಾಕೋಬನನ್ನೂ, ತಮ್ಮ ಮಕ್ಕಳನ್ನೂ, ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ರಥಗಳಲ್ಲಿ ಕೂರಿಸಿಕೊಂಡು ಹೋದರು.
GEN 46:6 ಅವರು ತಮ್ಮ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತೆಗೆದುಕೊಂಡು ಈಜಿಪ್ಟಿಗೆ ಬಂದರು. ಯಾಕೋಬನು ತನ್ನ ಕುಟುಂಬ ಸಮೇತವಾಗಿ ಬಂದನು.
GEN 46:7 ಅವನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮೊಕ್ಕಳನ್ನೂ, ಅಂತೂ ತನ್ನ ಇಡೀ ಕುಟುಂಬದವರೆಲ್ಲರನ್ನೂ ತನ್ನೊಂದಿಗೆ ಈಜಿಪ್ಟಿಗೆ ಕರೆದುಕೊಂಡು ಹೋದನು.
GEN 46:8 ಈಜಿಪ್ಟಿಗೆ ಬಂದ ಇಸ್ರಾಯೇಲರ ಮಕ್ಕಳು ಎಂದರೆ, ಯಾಕೋಬನ ಹಾಗೂ ಅವನ ಸಂತತಿಯರ ಹೆಸರುಗಳು: ಯಾಕೋಬನ ಚೊಚ್ಚಲ ಮಗ ರೂಬೇನನು.
GEN 46:9 ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್ ಮತ್ತು ಕರ್ಮೀ ಎಂಬುವರು.
GEN 46:10 ಸಿಮೆಯೋನನ ಮಕ್ಕಳು: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ ಎಂಬುವರು.
GEN 46:11 ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ ಎಂಬುವರು.
GEN 46:12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.
GEN 46:13 ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್ ಎಂಬುವರು.
GEN 46:14 ಜೆಬುಲೂನನ ಮಕ್ಕಳು: ಸೆರೆದ್, ಏಲೋನ್, ಯಹಲೇಲ್ ಎಂಬುವರು.
GEN 46:15 ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ, ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಪುತ್ರಪುತ್ರಿಯರೆಲ್ಲಾ ಸೇರಿ ಒಟ್ಟು ಮೂವತ್ತು ಮೂರು ಮಂದಿ.
GEN 46:16 ಗಾದನ ಮಕ್ಕಳು: ಚಿಫ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ ಎಂಬುವರು.
GEN 46:17 ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಯ ಮತ್ತು ಅವರ ಸಹೋದರಿಯಾದ ಸೆರಹ. ಬೆರೀಗನ ಪುತ್ರರು: ಹೆಬೆರ, ಮಲ್ಕೀಯೇಲ್ ಎಂಬುವರು.
GEN 46:18 ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಈಕೆಯಿಂದ ಯಾಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ.
GEN 46:19 ಯಾಕೋಬನ ಹೆಂಡತಿಯಾದ ರಾಹೇಲಳ ಪುತ್ರರು: ಯೋಸೇಫ್, ಬೆನ್ಯಾಮೀನ್ ಎಂಬುವರು.
GEN 46:20 ಯೋಸೇಫನಿಗೆ ಈಜಿಪ್ಟ್ ದೇಶದಲ್ಲಿ ಮಕ್ಕಳು ಹುಟ್ಟಿದರು. ಓನ್ ಪಟ್ಟಣದ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತ್ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಅವನಿಗೆ ಹೆತ್ತಳು.
GEN 46:21 ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು.
GEN 46:22 ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಪುತ್ರರು. ಎಲ್ಲರೂ ಕೂಡಿ ಹದಿನಾಲ್ಕು ಮಂದಿ.
GEN 46:23 ದಾನನ ಮಗನು: ಹುಶೀಮನು.
GEN 46:24 ನಫ್ತಾಲಿಯ ಪುತ್ರರು: ಯಹಚೇಲ, ಗೂನೀ, ಯೇಚೆರ್, ಶಿಲ್ಲೇಮ್ ಎಂಬುವರು.
GEN 46:25 ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಪುತ್ರರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲರೂ ಕೂಡಿ ಏಳುಮಂದಿ.
GEN 46:26 ಯಾಕೋಬನ ಪುತ್ರರ ಹೆಂಡತಿಯರಲ್ಲದೆ, ಯಾಕೋಬನ ಸಂಗಡ ಈಜಿಪ್ಟಿಗೆ ಹೋದವರು ಒಟ್ಟು ಅರವತ್ತಾರು ಮಂದಿ.
GEN 46:27 ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
GEN 46:28 ಇದಲ್ಲದೆ ಗೋಷೆನ್ ಪ್ರಾಂತಕ್ಕೆ ಮಾರ್ಗವನ್ನು ತೋರಿಸುವಂತೆ ಯಾಕೋಬನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಪ್ರಾಂತಕ್ಕೆ ಬಂದು ಸೇರಿದರು.
GEN 46:29 ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು.
GEN 46:30 ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು.
GEN 46:31 ಯೋಸೇಫನು ತನ್ನ ಸಹೋದರರಿಗೂ, ತನ್ನ ತಂದೆಯ ಮನೆಯವರಿಗೂ, “ನಾನು ಹೋಗಿ ಫರೋಹನಿಗೆ, ಕಾನಾನ್ ದೇಶದಲ್ಲಿದ್ದ ನನ್ನ ಸಹೋದರರೂ, ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ.
GEN 46:32 ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು.
GEN 46:33 ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಕೆಲಸವೇನು?’ ಎಂದು ಕೇಳುವನು.
GEN 46:34 ನೀವು ಅವನಿಗೆ, ‘ಚಿಕ್ಕಂದಿನಿಂದ ಇಂದಿನವರೆಗೂ ನಿನ್ನ ದಾಸರಾದ ನಾವೂ ನಮ್ಮ ಪೂರ್ವಿಕರೂ ಪಶುಗಳನ್ನು ಕಾಯುವವರಾಗಿದ್ದೇವೆ,’ ಎಂದು ಹೇಳಬೇಕು. ಏಕೆಂದರೆ ಕುರಿ ಕಾಯುವವರೆಲ್ಲಾ ಈಜಿಪ್ಟಿನವರಿಗೆ ಅಸಹ್ಯವಾಗಿದ್ದರಿಂದ, ನೀವು ಗೋಷೆನ್ ಪ್ರಾಂತದಲ್ಲಿ ವಾಸವಾಗಿರುವಂತೆ ನೇಮಿಸುವನು,” ಎಂದನು.
GEN 47:1 ಯೋಸೇಫನು ಹೋಗಿ ಫರೋಹನಿಗೆ, “ನನ್ನ ತಂದೆಯೂ, ನನ್ನ ಸಹೋದರರೂ ತಮ್ಮ ಕುರಿದನಗಳನ್ನೂ, ತಮಗಿದ್ದ ಎಲ್ಲವುಗಳನ್ನೂ ತೆಗೆದುಕೊಂಡು ಕಾನಾನ್ ದೇಶದಿಂದ ಬಂದಿದ್ದಾರೆ. ಅವರು ಗೋಷೆನ್ ಪ್ರಾಂತದಲ್ಲಿ ಇದ್ದಾರೆ,” ಎಂದನು.
GEN 47:2 ಅವನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.
GEN 47:3 ಫರೋಹನು ಯೋಸೇಫನ ಸಹೋದರರಿಗೆ, “ನಿಮ್ಮ ಕೆಲಸವೇನು?” ಎಂದು ಕೇಳಿದನು. ಅವರು ಫರೋಹನಿಗೆ, “ನಿನ್ನ ದಾಸರಾದ ನಾವೂ, ನಮ್ಮ ತಂದೆಯವರೂ ಕುರಿಕಾಯುವವರಾಗಿದ್ದೇವೆ.
GEN 47:4 ದೇಶದಲ್ಲಿ ಪ್ರವಾಸಮಾಡುವುದಕ್ಕಾಗಿ ಬಂದಿದ್ದೇವೆ. ಏಕೆಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವುದರಿಂದ, ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವುದರಿಂದ ನಿನ್ನ ದಾಸರು ಗೋಷೆನ್ ಪ್ರಾಂತದ ನಿವಾಸಿಗಳಾಗುವಂತೆ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇವೆ,” ಎಂದರು.
GEN 47:5 ಅದಕ್ಕೆ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ.
GEN 47:6 ಈಜಿಪ್ಟ್ ದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದ ಕಡೆ ನಿನ್ನ ತಂದೆಯೂ, ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಪ್ರಾಂತದಲ್ಲಿ ಅವರು ವಾಸವಾಗಿರಲಿ. ಅವರಲ್ಲಿ ಯಾರಾದರೂ ಸಮರ್ಥರೆಂದು ನೀನು ತಿಳಿದರೆ, ಅವರನ್ನು ನಮಗಿರುವ ಪಶುಗಳ ಮೇಲೆ ವಿಚಾರಕರನ್ನಾಗಿ ಇರಿಸು,” ಎಂದನು.
GEN 47:7 ಯೋಸೇಫನು ತನ್ನ ತಂದೆ ಯಾಕೋಬನನ್ನು ಕರೆದುಕೊಂಡು ಬಂದು, ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು.
GEN 47:8 ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವರ್ಷಗಳು?” ಎಂದು ಕೇಳಿದನು.
GEN 47:9 ಯಾಕೋಬನು ಫರೋಹನಿಗೆ, “ನಾನು ಲೋಕದಲ್ಲಿ ಸಂಚಾರಮಾಡಿದ್ದು ನೂರಮೂವತ್ತು ವರುಷಗಳೇ. ನನ್ನ ವರ್ಷಗಳು ಕಡಿಮೆಯಾದರೂ ಕಠಿಣವಾದವುಗಳು ಆಗಿವೆ. ಅವು ನನ್ನ ಪಿತೃಗಳ ಪ್ರಯಾಣದ ವರ್ಷಗಳಿಗೆ ಸಮವಾಗಿಲ್ಲ,” ಎಂದನು.
GEN 47:10 ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ, ಅವನಿಂದ ಬೀಳ್ಕೊಂಡನು.
GEN 47:11 ಯೋಸೇಫನು ತನ್ನ ತಂದೆಗೂ, ತನ್ನ ಸಹೋದರರಿಗೂ ನಿವಾಸವನ್ನು ಕೊಟ್ಟು, ಫರೋಹನ ಅಪ್ಪಣೆಯ ಪ್ರಕಾರ, ಅವರಿಗೆ ಈಜಿಪ್ಟ್ ದೇಶದ ಉತ್ತಮವಾದ ರಮ್ಸೇಸ್ ಸೀಮೆಯ ಸ್ವತ್ತನ್ನು ಕೊಟ್ಟನು.
GEN 47:12 ಯೋಸೇಫನು ತನ್ನ ತಂದೆಯನ್ನೂ, ತನ್ನ ಸಹೋದರರನ್ನೂ, ತನ್ನ ತಂದೆಯ ಮನೆಯವರೆಲ್ಲರನ್ನೂ ಅವರ ಮಕ್ಕಳ ಲೆಕ್ಕದ ಪ್ರಕಾರ ಆಹಾರಕೊಟ್ಟು, ಅವರನ್ನು ಸಂರಕ್ಷಿಸಿದನು.
GEN 47:13 ಆದರೆ ಬರವು ಅತಿ ಘೋರವಾಗಿದ್ದದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಈಜಿಪ್ಟ್ ದೇಶವೂ, ಕಾನಾನ್ ದೇಶವೂ ಕ್ಷಾಮದಿಂದ ಕ್ಷೀಣವಾದವು.
GEN 47:14 ಆಗ ಯೋಸೇಫನು ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ, ಅದನ್ನು ಫರೋಹನ ಮನೆಗೆ ತಂದನು.
GEN 47:15 ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಹಣವು ಮುಗಿದಾಗ, ಈಜಿಪ್ಟಿನವರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮಗೆ ಆಹಾರವನ್ನು ಕೊಡು, ನಾವು ನಿನ್ನ ಮುಂದೆ ಏಕೆ ಸಾಯಬೇಕು? ಏಕೆಂದರೆ ಹಣವೆಲ್ಲಾ ತೀರಿತು,” ಎಂದರು.
GEN 47:16 ಆಗ ಯೋಸೇಫನು, “ನಿಮ್ಮ ಪಶುಗಳನ್ನು ತೆಗೆದುಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ, ನಿಮ್ಮ ಪಶುಗಳಿಗೆ ಬದಲಾಗಿ ಧಾನ್ಯವನ್ನು ಕೊಡುತ್ತೇನೆ,” ಎಂದನು.
GEN 47:17 ಅವರು ತಮ್ಮ ಪಶುಗಳನ್ನೆಲ್ಲಾ ಯೋಸೇಫನ ಬಳಿಗೆ ತಂದರು. ಅವುಗಳ ಬದಲಾಗಿ ಅವನು ಆಹಾರ ಧಾನ್ಯ ಕೊಟ್ಟನು. ಅವರ ಕುದುರೆಗಳನ್ನೂ ಕುರಿಗಳನ್ನೂ ಆಡುಗಳನ್ನೂ ದನಗಳನ್ನೂ ಕತ್ತೆಗಳನ್ನೂ ಬದಲಾಗಿ ತೆಗೆದುಕೊಂಡನು. ಆ ವರ್ಷ ಅವರು ಆಹಾರಕ್ಕಾಗಿ ತಮ್ಮ ಎಲ್ಲಾ ಪಶುಪ್ರಾಣಿಗಳನ್ನು ಮಾರಿಕೊಂಡರು.
GEN 47:18 ಆ ವರ್ಷವಾದ ಮೇಲೆ ಮಾರನೆಯ ವರ್ಷದಲ್ಲಿ, ಅವರು ಅವನ ಬಳಿಗೆ ಬಂದು ಅವನಿಗೆ, “ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವುದರಿಂದ, ನಮ್ಮ ಶರೀರಗಳೂ, ನಮ್ಮ ಭೂಮಿಯೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬುದನ್ನು ನಮ್ಮ ಒಡೆಯನಿಗೆ ಮರೆಮಾಡದೆ ತಿಳಿಸುತ್ತಿದ್ದೇವೆ.
GEN 47:19 ನಾವೂ, ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವುದು ಏಕೆ? ನಮ್ಮನ್ನೂ, ನಮ್ಮ ಭೂಮಿಯನ್ನೂ ಆಹಾರಕ್ಕಾಗಿ ಕೊಂಡುಕೋ. ಆಗ ನಾವೂ, ನಮ್ಮ ಭೂಮಿಯೂ ಫರೋಹನಿಗೆ ದಾಸರಾಗಿರುವೆವು. ನಮಗೆ ಬೀಜವನ್ನು ಕೊಡು, ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವುದು,” ಎಂದರು.
GEN 47:20 ಆಗ ಯೋಸೇಫನು ಈಜಿಪ್ಟ್ ದೇಶವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಬರವು ಅವರಿಗೆ ಘೋರವಾಗಿದ್ದುದರಿಂದ ಈಜಿಪ್ಟನವರು ತಮ್ಮ ತಮ್ಮ ಹೊಲಗಳನ್ನು ಮಾರಿಬಿಟ್ಟರು. ಹೀಗೆ ದೇಶವು ಫರೋಹನದಾಯಿತು.
GEN 47:21 ಯೋಸೇಫನು ಈಜಿಪ್ಟ್ ದೇಶದ ಒಂದು ಮೇರೆಯಿಂದ ಇನ್ನೊಂದು ಮೇರೆಯವರೆಗೂ ಜನರನ್ನು ದಾಸರನ್ನಾಗಿ ಮಾಡಿದನು.
GEN 47:22 ಯಾಜಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಫರೋಹನು ಯಾಜಕರಿಗೆ ಭತ್ಯೆಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು, ಅವರು ಊಟಮಾಡುತ್ತಿದ್ದರು. ಆದ್ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.
GEN 47:23 ಯೋಸೇಫನು ಜನರಿಗೆ, “ಇಂದು ನಿಮ್ಮನ್ನೂ, ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜ ಬಿತ್ತಿರಿ.
GEN 47:24 ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ಉಳಿದ ನಾಲ್ಕು ಪಾಲು ಹೊಲದ ಬೀಜಕ್ಕಾಗಿಯೂ, ನಿಮ್ಮ ಆಹಾರಕ್ಕಾಗಿಯೂ, ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ,” ಎಂದನು.
GEN 47:25 ಆಗ ಅವರು, “ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ದಯೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು,” ಎಂದರು.
GEN 47:26 ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬುದನ್ನು ಈಜಿಪ್ಟಿನ ಭೂಮಿಗೆ ಇಂದಿನವರೆಗೂ ನಿಯಮವಾಗಿ ಸ್ಥಾಪಿಸಿದನು. ಯಾಜಕರ ಭೂಮಿಯು ಮಾತ್ರ ಫರೋಹನದಾಗಲಿಲ್ಲ.
GEN 47:27 ಇಸ್ರಾಯೇಲರು ಈಜಿಪ್ಟ್ ದೇಶದ ಗೋಷೆನ್ ಪ್ರಾಂತದಲ್ಲಿ ವಾಸವಾಗಿದ್ದು, ಆಸ್ತಿಯನ್ನು ಸಂಪಾದಿಸಿ, ಬೆಳೆದು ಬಹಳವಾಗಿ ವೃದ್ಧಿಹೊಂದಿದರು.
GEN 47:28 ಇದಲ್ಲದೆ ಯಾಕೋಬನು ಈಜಿಪ್ಟ್ ದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಲ್ವತ್ತೇಳು ವರ್ಷಗಳು.
GEN 47:29 ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ.
GEN 47:30 ನನ್ನ ತಂದೆಯ ಸಂಗಡ ನಾನು ಮಲಗಬೇಕು. ಈಜಿಪ್ಟಿನಿಂದ ನನ್ನನ್ನು ತೆಗೆದುಕೊಂಡುಹೋಗಿ, ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಳಿಡು,” ಎಂದನು. ಅದಕ್ಕವನು, “ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ,” ಎಂದನು.
GEN 47:31 ಯಾಕೋಬನು ತನಗೆ ಪ್ರಮಾಣಮಾಡು ಎಂದಾಗ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
GEN 48:1 ಕೆಲವು ಕಾಲದ ನಂತರ ಯೋಸೇಫನಿಗೆ, “ನಿನ್ನ ತಂದೆ ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಬಂದಿತು. ಆಗ ಅವನು ತನ್ನ ಇಬ್ಬರು ಪುತ್ರರಾದ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಕರೆದುಕೊಂಡು ತಂದೆಯ ಬಳಿಗೆ ಬಂದನು.
GEN 48:2 ಯಾಕೋಬನಿಗೆ, “ನಿನ್ನ ಮಗ ಯೋಸೇಫನು ಬಂದಿದ್ದಾನೆ,” ಎಂದು ತಿಳಿಸಿದಾಗ, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.
GEN 48:3 ಆಗ ಯಾಕೋಬನು ಯೋಸೇಫನಿಗೆ, “ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು, ನನ್ನನ್ನು ಆಶೀರ್ವದಿಸಿದರು.
GEN 48:4 ದೇವರು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು, ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಶಾಶ್ವತವಾದ ಸ್ವತ್ತನ್ನಾಗಿ ಕೊಡುತ್ತೇನೆ,’ ಎಂದು ಹೇಳಿದರು.
GEN 48:5 “ಈಗ ನಾನು ನಿನ್ನ ಬಳಿಗೆ ಈಜಿಪ್ಟಿಗೆ ಬರುವ ಮೊದಲು ಈಜಿಪ್ಟಿನಲ್ಲಿ ನಿನಗೆ ಹುಟ್ಟಿದ ಇಬ್ಬರು ಪುತ್ರರಾದ ಎಫ್ರಾಯೀಮ್ ಮನಸ್ಸೆಯರು ನನ್ನವರಾಗಿರಬೇಕು. ಅವರು ರೂಬೇನ್ ಮತ್ತು ಸಿಮೆಯೋನರಂತೆ ನನ್ನವರಾಗಿರಬೇಕು.
GEN 48:6 ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ಸಹೋದರರ ಸೊತ್ತಿಗೆ ಬಾಧ್ಯತೆಯನ್ನು ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
GEN 48:7 ನಾನು ಪದ್ದನ್ ಅರಾಮಿನಿಂದ ಬಂದಾಗ, ಕಾನಾನ್ ದೇಶದಲ್ಲಿ ಎಫ್ರಾತಿನಿಂದ ಸ್ವಲ್ಪ ದೂರವಾಗಿರುವಾಗ, ರಾಹೇಲಳು ಸತ್ತುಹೋದಳು. ಅಲ್ಲಿ ಅಂದರೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಯನ್ನು ಸಮಾಧಿಮಾಡಿದೆನು,” ಎಂದನು.
GEN 48:8 ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ಕಂಡು, “ಇವರು ಯಾರು?” ಎಂದನು.
GEN 48:9 ಅದಕ್ಕೆ ಯೋಸೇಫನು ತನ್ನ ತಂದೆಗೆ, “ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಪುತ್ರರು,” ಎಂದನು. ಆಗ ಇಸ್ರಾಯೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ,” ಎಂದನು.
GEN 48:10 ಇಸ್ರಾಯೇಲನು ಮುದುಕನಾಗಿದ್ದದ್ದರಿಂದ, ಅವನ ಕಣ್ಣುಗಳು ಕಾಣದಷ್ಟು ಮಬ್ಬಾಗಿದ್ದವು. ಯೋಸೇಫನು ಅವರನ್ನು ಅವನ ಸಮೀಪಕ್ಕೆ ತಂದಾಗ, ಅವನು ಅವರನ್ನು ಮುದ್ದಿಟ್ಟು, ಅಪ್ಪಿಕೊಂಡನು.
GEN 48:11 ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಾಣುವೆನೆಂದು ನಾನು ನೆನಸಿರಲಿಲ್ಲ. ಆದರೆ ನಿನ್ನ ಸಂತಾನವನ್ನು ಸಹ ದೇವರು ನನಗೆ ಕಾಣುವಂತೆ ಅನುಗ್ರಹಿಸಿದ್ದಾನೆ,” ಎಂದನು.
GEN 48:12 ಆಗ ಯೋಸೇಫನು ಅವರನ್ನು ಮೊಣಕಾಲುಗಳ ಬಳಿಯಿಂದ ಬರಮಾಡಿ ತಂದೆಗೆ ಅಡ್ಡಬಿದ್ದನು.
GEN 48:13 ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿಗೆ ತಂದನು.
GEN 48:14 ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯೀಮನ ತಲೆಯ ಮೇಲೆಯೂ, ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ, ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.
GEN 48:15 ಆಗ ಅವನು ಯೋಸೇಫನನ್ನು ಹೀಗೆ ಆಶೀರ್ವದಿಸಿದನು, “ನನ್ನ ತಂದೆ ಅಬ್ರಹಾಮನೂ ಇಸಾಕನೂ ಯಾವ ದೇವರ ಮುಂದೆ ನಡೆದುಕೊಂಡರೋ, ಆ ದೇವರೇ ನಾನು ಹುಟ್ಟಿದಂದಿನಿಂದ ಇಂದಿನವರೆಗೆ ನನಗೆ ಕುರುಬ ಆಗಿದ್ದ ದೇವರು.
GEN 48:16 ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ, ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದಲೂ, ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ ಅವರು ಮುಂದುವರೆಯಲಿ. ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.”
GEN 48:17 ತನ್ನ ತಂದೆಯು ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನು ಇಟ್ಟದ್ದನ್ನು ಯೋಸೇಫನು ಕಂಡಾಗ, ಅದು ಅವನಿಗೆ ಇಷ್ಟವಾಗಿರಲಿಲ್ಲ. ಆದ್ದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು, ಎಫ್ರಾಯೀಮನ ತಲೆಯ ಮೇಲಿಂದ ತೆಗೆದು, ಮನಸ್ಸೆಯ ತಲೆಯ ಮೇಲೆ ಇಡುವುದರಲ್ಲಿದ್ದನು.
GEN 48:18 ಯೋಸೇಫನು ತನ್ನ ತಂದೆಗೆ, “ಅಪ್ಪಾ, ಹಾಗಲ್ಲ, ಇವನೇ ಜೇಷ್ಠಪುತ್ರನು. ಇವನ ತಲೆಯ ಮೇಲೆ ಬಲಗೈ ಇಡು,” ಎಂದನು.
GEN 48:19 ಅದಕ್ಕೆ ಅವನ ತಂದೆಯು ಒಪ್ಪದೆ, “ನನಗೆ ಗೊತ್ತು. ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವುದಲ್ಲದೆ ಅವನು ದೊಡ್ಡವನಾಗುವನು. ಆದರೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತತಿಯು ಜನಾಂಗಗಳ ಸಮೂಹವಾಗುವುದು,” ಎಂದನು.
GEN 48:20 ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವದಿಸಿ, ಹೀಗೆಂದನು: “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಈ ಆಶೀರ್ವಾದವನ್ನು ಹೇಳುವರು: ‘ಎಫ್ರಾಯೀಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲಿ.’ ” ಹೀಗೆ ಹೇಳುತ್ತಾ ಯಾಕೋಬನು ಎಫ್ರಾಯೀಮನಿಗೆ ಮನಸ್ಸೆಗಿಂತಲೂ ಉನ್ನತಸ್ಥಾನವನ್ನು ಕೊಟ್ಟನು.
GEN 48:21 ಆಗ ಇಸ್ರಾಯೇಲನು ಯೋಸೇಫನಿಗೆ, “ನಾನು ಸಾಯುತ್ತೇನೆ, ಆದರೆ ದೇವರು ನಿಮ್ಮ ಸಂಗಡವಿದ್ದು, ನಿಮ್ಮನ್ನು ನಿಮ್ಮ ಪಿತೃಗಳ ದೇಶಕ್ಕೆ ಮತ್ತೆ ಸೇರಿಸುವರು.
GEN 48:22 ಇದಲ್ಲದೆ ನಾನು ನನ್ನ ಖಡ್ಗದಿಂದಲೂ ಬಿಲ್ಲಿನಿಂದಲೂ ಅಮೋರಿಯರ ಕೈಯಿಂದ ತೆಗೆದುಕೊಂಡ ಒಂದು ಹೊಲವನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ,” ಎಂದನು.
GEN 49:1 ಆಗ ಯಾಕೋಬನು ತನ್ನ ಪುತ್ರರನ್ನು ಕರೆಯಿಸಿ ಅವರಿಗೆ, “ನೀವೆಲ್ಲರೂ ಕೂಡಿಬನ್ನಿರಿ. ಅಂತ್ಯ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ.
GEN 49:2 “ಯಾಕೋಬನ ಪುತ್ರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ, ನಿಮ್ಮ ತಂದೆ ಇಸ್ರಾಯೇಲನ ಮಾತಿಗೆ ಕಿವಿಗೊಡಿರಿ.
GEN 49:3 “ರೂಬೇನನೇ, ನೀನು ನನ್ನ ಜೇಷ್ಠಪುತ್ರನು. ನನ್ನ ಶಕ್ತಿ, ನನ್ನ ಬಲದ ಸಂಕೇತವೂ, ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ.
GEN 49:4 ನೀರಿನಂತೆ ಚಂಚಲನಾಗಿದ್ದು, ನೀನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆಮಾಡಿದೆ, ನನ್ನ ಹಾಸಿಗೆಯನ್ನು ಏರಿದೆ.
GEN 49:5 “ಸಿಮೆಯೋನನೂ ಲೇವಿಯೂ ಸಹೋದರರು ಹಿಂಸಾಚಾರದ ಆಯುಧಗಳು.
GEN 49:6 ನನ್ನ ಮನವೇ, ಅವರ ಆಲೋಚನೆಗೆ ಒಳಪಡಬೇಡ. ನನ್ನ ಪ್ರಾಣವೇ, ಅವರ ಕೂಟಗಳಲ್ಲಿ ಸೇರಬೇಡ. ಅವರು ತಮ್ಮ ಕೋಪದಲ್ಲಿ ಮನುಷ್ಯರನ್ನು ಕೊಂದರು, ಮದದಿಂದ ಎತ್ತುಗಳನ್ನು ಊನಪಡಿಸಿದರು.
GEN 49:7 ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದ್ದು, ಅದಕ್ಕೆ ಶಾಪಗ್ರಸ್ತವಾಗಲಿ. ಯಾಕೋಬನ ಕುಟುಂಬದಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು.
GEN 49:8 “ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡಬೀಳುವರು.
GEN 49:9 ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಬೇಟೆಹಿಡಿದು ಮೇಲಕ್ಕೆ ಬಂದೆ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕುವವರು ಯಾರು?
GEN 49:10 ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, ಯೆಹೂದನ ಕೈಯಿಂದ ರಾಜದಂಡವಾಗಲೀ, ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು.
GEN 49:11 ಅವನು ತನ್ನ ವಾಹನ ಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು. ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು. ದ್ರಾಕ್ಷಾರಸದಲ್ಲಿ ತನ್ನ ಬಟ್ಟೆ ಒಗೆಯುವನು, ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು.
GEN 49:12 ದ್ರಾಕ್ಷಾರಸದಿಂದ ಅವನ ಕಣ್ಣುಗಳು ಕೆಂಪಾಗಿರುವವು, ಹಾಲಿನಿಂದ ಅವನ ಹಲ್ಲುಗಳು ಬಿಳುಪಾಗಿರುವವು.
GEN 49:13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. ಅವನ ಮೇರೆಯು ಸೀದೋನಿಗೆ ಮುಟ್ಟುವುದು.
GEN 49:14 “ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ ಮಲಗಿಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ.
GEN 49:15 ವಿಶ್ರಾಂತಿಯು ಒಳ್ಳೆಯದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆ ಹೊರುವುದಕ್ಕೆ ತನ್ನ ಹೆಗಲನ್ನು ಬಗ್ಗಿಸಿ ಬಿಟ್ಟಿಯ ಕೆಲಸ ಮಾಡುವನು.
GEN 49:16 “ದಾನನು ಇಸ್ರಾಯೇಲನ ಗೋತ್ರಗಳಲ್ಲಿ ಒಂದು ಗೋತ್ರವಾಗಿ ತನ್ನ ಜನರಿಗೆ ನ್ಯಾಯತೀರಿಸುವನು.
GEN 49:17 ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ, ಹತ್ತಿದವನು ಬೋರಲು ಬೀಳುವನು.
GEN 49:18 “ಯೆಹೋವ ದೇವರೇ, ನಿಮ್ಮ ವಿಮೋಚನೆಗಾಗಿ ಕಾಯುತ್ತಿದ್ದೇನೆ.
GEN 49:19 “ಗಾದನ ಮೇಲೆ ಸೈನ್ಯವು ದಾಳಿಮಾಡುವುದು, ಕೊನೆಗೆ ಅವನೇ ಅವರನ್ನು ಓಡಿಸಿಬಿಡುವನು.
GEN 49:20 “ಆಶೇರನ ಆಹಾರವು ಕೊಬ್ಬಿದ ಆಹಾರವು. ಅವನು ಅರಸನಿಗೆ ಸವಿಯೂಟವನ್ನು ಕೊಡುವನು.
GEN 49:21 “ನಫ್ತಾಲಿ ಬಿಡುಗಡೆ ಹೊಂದಿದ ಜಿಂಕೆ, ಅವನು ಮಾತುಗಳು ಸುಂದರ ಮಕ್ಕಳ ಮಾತುಗಳಂತೆ.
GEN 49:22 “ಯೋಸೇಫನು ಫಲಭರಿತವಾದ ದ್ರಾಕ್ಷಿಬಳ್ಳಿ ಕಾಲುವೆಗಳ ಬಳಿಯಲ್ಲಿರುವ ಫಲಭರಿತ ದ್ರಾಕ್ಷಿಬಳ್ಳಿ, ಅದರ ಕೊಂಬೆಗಳು ಗೋಡೆಗಳನ್ನೇರುತ್ತವೆ.
GEN 49:23 ಸಿಟ್ಟಿನಿಂದ ಬಿಲ್ಲುಗಾರರು ಅವನ ಮೇಲೆ ಬೀಳುವರು. ವಿರೋಧದಿಂದ ಅವನ ಮೇಲೆ ಬಾಣಗಳನ್ನು ಎಸೆಯುವರು.
GEN 49:24 ಆದರೆ ಅವನ ಬಿಲ್ಲು ಸ್ಥಿರವಾಗಿ ನಿಲ್ಲುವುದು. ಅವನ ಬಲವಾದ ತೋಳುಗಳು ಚುರುಕಾಗಿ ನಿಂತವು. ಇದಕ್ಕೆ ಕಾರಣ ಯಾಕೋಬನಿಗೆ ಸರ್ವಶಕ್ತರಾಗಿರುವ ದೇವರ ಹಸ್ತವೇ; ಇದಕ್ಕೆ ಕಾರಣ ಇಸ್ರಾಯೇಲನ ಬಂಡೆಯಾಗಿರುವ ಕುರುಬ.
GEN 49:25 ಇದಕ್ಕೆ ಕಾರಣ ನಿನಗೆ ಸಹಾಯ ಮಾಡುವ ನಿನ್ನ ಪಿತೃಗಳ ದೇವರು; ನಿನ್ನನ್ನು ಸರ್ವಶಕ್ತರಾದ ದೇವರು ಆಶೀರ್ವದಿಸಲಿ. ಆ ಆಶೀರ್ವಾದಗಳು ಪರಲೋಕದವುಗಳು. ಆ ಆಶೀರ್ವಾದಗಳು ಕೆಳಗಿನಾಳದಲ್ಲಿರುವವುಗಳು. ಅವು ಎದೆಯ ಹಾಗೂ ಗರ್ಭದ ಆಶೀರ್ವಾದಗಳು.
GEN 49:26 ಪುರಾತನ ಪರ್ವತಗಳ ಆಶೀರ್ವಾದಗಳಿಗಿಂತ ನಿನ್ನ ತಂದೆಯ ಆಶೀರ್ವಾದಗಳು ಶ್ರೇಷ್ಠವಾದವುಗಳು. ಅವು ಪುರಾತನ ಶಿಖರಗಳ ಐಶ್ವರ್ಯಕ್ಕಿಂತ ಹೆಚ್ಚಿನವುಗಳು. ಇವೆಲ್ಲವೂ ಯೋಸೇಫನ ತಲೆಯ ಮೇಲೆ ಅಂದರೆ, ತನ್ನ ಸಹೋದರರಲ್ಲಿ ರಾಜಕುಮಾರನಾದವನ ಹಣೆಯ ಮೇಲಿರಲಿ.
GEN 49:27 “ಬೆನ್ಯಾಮೀನನು ಕ್ರೂರವಾದ ತೋಳದಂತಿದ್ದಾನೆ. ಬೆಳಿಗ್ಗೆ ತಿನ್ನುತ್ತಾನೆ, ಸಂಜೆ ಕೊಳ್ಳೆಯನ್ನು ಹಂಚಿಕೊಳ್ಳುತ್ತಾನೆ.”
GEN 49:28 ಇವರೆಲ್ಲಾ ಇಸ್ರಾಯೇಲಿನ ಹನ್ನೆರಡು ಗೋತ್ರಗಳು. ಅವರ ತಂದೆ ಅವರಿಗೆ ಹೇಳಿದ್ದೂ ಇದೇ. ಅವನು ಒಬ್ಬೊಬ್ಬನನ್ನೂ ಅವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
GEN 49:29 ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ, “ನಾನು ನನ್ನ ಜನರೊಂದಿಗೆ ಸೇರಿಕೊಳ್ಳುತ್ತೇನೆ. ನನ್ನ ಪಿತೃಗಳ ಸಂಗಡ ಹಿತ್ತಿಯನಾದ ಎಫ್ರೋನನ ಹೊಲದಲ್ಲಿರುವ ಗವಿಯಲ್ಲಿ
GEN 49:30 ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲದಲ್ಲಿರುವಂಥ ಅಬ್ರಹಾಮನು, ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಳಿರಿ.
GEN 49:31 ಅಲ್ಲಿ ಅಬ್ರಹಾಮನನ್ನೂ, ಅವನ ಹೆಂಡತಿ ಸಾರಳನ್ನೂ ಹೂಳಿದರು. ಅಲ್ಲಿ ಇಸಾಕನನ್ನೂ, ಅವನ ಹೆಂಡತಿ ರೆಬೆಕ್ಕಳನ್ನೂ ಹೂಳಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಳಿದೆನು.
GEN 49:32 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಕೊಂಡುಕೊಂಡದ್ದು,” ಎಂದನು.
GEN 49:33 ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ತರುವಾಯ, ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಪಿತೃಗಳೊಂದಿಗೆ ಸೇರಿದನು.
GEN 50:1 ಆಗ ಯೋಸೇಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಅವನಿಗಾಗಿ ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು.
GEN 50:2 ಯೋಸೇಫನು ತನ್ನ ತಂದೆ ಇಸ್ರಾಯೇಲನಿಗೆ ಸುಗಂಧದ್ರವ್ಯವನ್ನು ಹಾಕಬೇಕೆಂದು ತನ್ನ ದಾಸರಾದ ವೈದ್ಯರಿಗೆ ಅಪ್ಪಣೆಕೊಟ್ಟನು.
GEN 50:3 ವೈದ್ಯರು ಇಸ್ರಾಯೇಲನಿಗೆ ನಲವತ್ತು ದಿನಗಳವರೆಗೆ ಸುಗಂಧದ್ರವ್ಯಗಳ ಲೇಪನ ಮಾಡಿದರು. ಅದಕ್ಕಾಗಿ ಅಷ್ಟು ಸಮಯ ಬೇಕಾಗಿತ್ತು. ಇದಲ್ಲದೆ ಈಜಿಪ್ಟಿನವರು ಅವನಿಗಾಗಿ ಎಪ್ಪತ್ತು ದಿವಸ ದುಃಖಪಟ್ಟರು.
GEN 50:4 ಅವನಿಗಾಗಿ ದುಃಖಿಸುವ ದಿನಗಳು ಮುಗಿದ ಮೇಲೆ ಯೋಸೇಫನು ಫರೋಹನ ಆಸ್ಥಾನದವರಿಗೆ, “ನಾನು ನಿಮ್ಮ ಕಣ್ಣುಗಳ ಮುಂದೆ ದಯೆ ಹೊಂದಿದ್ದೇಯಾದರೆ, ಫರೋಹನ ಕಿವಿಗಳಲ್ಲಿ ಈ ಮಾತು ಹೇಳಬೇಕು.
GEN 50:5 ‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು.
GEN 50:6 ಆಗ ಫರೋಹನು, “ನಿನ್ನ ತಂದೆಯು ನಿನ್ನಿಂದ ಪ್ರಮಾಣ ಮಾಡಿಸಿದಂತೆ, ನೀನು ಹೋಗಿ ನಿನ್ನ ತಂದೆಯನ್ನು ಹೂಳಿಡು,” ಎಂದನು.
GEN 50:7 ಹೀಗೆ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡುವದಕ್ಕೆ ಹೊರಟುಹೋದನು. ಅವನ ಸಂಗಡ ಫರೋಹನ ದಾಸರೆಲ್ಲರೂ ಅರಮನೆಯ ಹಿರಿಯರೆಲ್ಲರೂ ಈಜಿಪ್ಟ್ ದೇಶದ ಮುಖ್ಯಸ್ಥರೆಲ್ಲರೂ,
GEN 50:8 ಯೋಸೇಫನ ಮನೆಯವರೆಲ್ಲರೂ ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋದರು. ಅವರ ಮಕ್ಕಳನ್ನೂ, ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತದಲ್ಲಿ ಬಿಟ್ಟರು.
GEN 50:9 ರಥಗಳೂ, ರಾಹುತರೂ ಅವನ ಸಂಗಡ ಹೊರಟು ಹೋದರು. ಸಮೂಹವು ಬಹಳ ದೊಡ್ಡದಾಗಿತ್ತು.
GEN 50:10 ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದಾಗ, ಅಲ್ಲಿ ಅಧಿಕವಾದ ಮತ್ತು ಮಹಾ ಘೋರವಾದ ಗೋಳಾಟದಿಂದ ದುಃಖಪಟ್ಟರು.
GEN 50:11 ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ಕಂಡಾಗ, “ಇದು ಈಜಿಪ್ಟಿನವರಿಗೆ ಘೋರವಾದ ದುಃಖ,” ಎಂದು ಹೇಳಿದರು. ಆದ್ದರಿಂದ ಅದಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆ ಇದೆ.
GEN 50:12 ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು.
GEN 50:13 ಅವನ ಪುತ್ರರು ಅವನನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡುಹೋಗಿ, ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವಂಥ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿದರು.
GEN 50:14 ಯೋಸೇಫನು ತನ್ನ ತಂದೆಯನ್ನು ಹೂಳಿದ ಮೇಲೆ, ತನ್ನ ಸಹೋದರರ ಸಂಗಡವೂ, ತನ್ನ ತಂದೆಯನ್ನು ಹೂಳುವುದಕ್ಕಾಗಿ ಅವನ ಸಂಗಡ ಹೋದವರೆಲ್ಲರೂ ಈಜಿಪ್ಟಿಗೆ ತಿರುಗಿ ಬಂದರು.
GEN 50:15 ತಮ್ಮ ತಂದೆ ಸತ್ತು ಹೋದ ಮೇಲೆ ಯೋಸೇಫನ ಸಹೋದರರು, “ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ, ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗಾಗಿ ನಿಶ್ಚಯವಾಗಿ ಪ್ರತೀಕಾರಮಾಡಬಹುದು,” ಎಂದುಕೊಂಡು,
GEN 50:16 ಅವರು ಒಬ್ಬ ಸೇವಕನನ್ನು ಕಳುಹಿಸಿ ಯೋಸೇಫನಿಗೆ, “ನಿನ್ನ ತಂದೆಯು ಮರಣ ಹೊಂದುವುದಕ್ಕಿಂತ ಮುಂಚೆ,
GEN 50:17 ‘ನಿನ್ನ ಸಹೋದರರ ಅಪರಾಧವನ್ನೂ ಅವರ ಪಾಪವನ್ನೂ ಮನ್ನಿಸು,’ ಎಂಬುದಾಗಿ ಯೋಸೇಫನಿಗೆ ಹೇಳಿರಿ, ಎಂದು ತಿಳಿಸಿದ್ದಾನೆ. ಹೀಗಿರುವುದರಿಂದ ನಿನ್ನ ತಂದೆಯ ದೇವರ ದಾಸರಾದ ನಾವು ಮಾಡಿದ ಅಪರಾಧವನ್ನು ದಯಮಾಡಿ ಕ್ಷಮಿಸು,” ಎಂದು ತಿಳಿಸಿದರು. ಈ ಸಂದೇಶ ಅವನಿಗೆ ಬಂದಾಗ, ಅವನು ಅತ್ತನು.
GEN 50:18 ಆಮೇಲೆ ಅವನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದು, “ನಿನ್ನ ದಾಸರಾಗಿದ್ದೇವೆ,” ಎಂದರು.
GEN 50:19 ಯೋಸೇಫನು ಅವರಿಗೆ, “ಭಯಪಡಬೇಡಿರಿ, ನಾನು ದೇವರ ಸ್ಥಾನದಲ್ಲಿ ಇದ್ದೇನೋ?
GEN 50:20 ನೀವು ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿಯೇ ಸಂಕಲ್ಪಿಸಿದರು. ಈಗ ಬಹುಜನರ ಪ್ರಾಣ ಉಳಿಯುವಂತೆ ನಡೆಯುತ್ತಿದೆ.
GEN 50:21 ಹೀಗಿರುವುದರಿಂದ ನೀವು ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಸಂರಕ್ಷಿಸುತ್ತೇನೆ,” ಎಂದು ಹೇಳಿ, ಅವರನ್ನು ಸಂತೈಸಿ, ದಯೆಯಿಂದ ಮಾತನಾಡಿದನು.
GEN 50:22 ಹೀಗೆ ಯೋಸೇಫನೂ, ಅವನ ತಂದೆಯ ಮನೆಯವರೂ ಸಹಿತವಾಗಿ ಈಜಿಪ್ಟಿನಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು.
GEN 50:23 ಯೋಸೇಫನು ಎಫ್ರಾಯೀಮನ ಮರಿಮೊಮ್ಮಕ್ಕಳನ್ನೂ ಕಂಡನು. ಮನಸ್ಸೆಯ ಮಗ ಮಾಕೀರನ ಮಕ್ಕಳೂ ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.
GEN 50:24 ಇದಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ನಾನು ಸತ್ತಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಿ, ಈ ದೇಶದೊಳಗಿಂದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಸೇರುವಂತೆ ಮಾಡುವರು,” ಎಂದನು.
GEN 50:25 ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಶ್ಚಯವಾಗಿ ನಿಮಗೆ ಸಹಾಯ ಮಾಡುವರು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು,” ಎಂದು ಪ್ರಮಾಣ ಮಾಡಿಸಿದನು.
GEN 50:26 ಯೋಸೇಫನು ನೂರಹತ್ತು ವರ್ಷದವನಾಗಿ ಈಜಿಪ್ಟ್ ದೇಶದಲ್ಲಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ, ಈಜಿಪ್ಟಿನಲ್ಲಿ ಪೆಟ್ಟಿಗೆಯೊಳಗೆ ಇಟ್ಟರು.
EXO 1:1 ಯಾಕೋಬನೊಂದಿಗೆ ಈಜಿಪ್ಟಿಗೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲನ ಮಕ್ಕಳ ಹೆಸರುಗಳು:
EXO 1:2 ರೂಬೇನ್, ಸಿಮೆಯೋನ್, ಲೇವಿ ಮತ್ತು ಯೆಹೂದ,
EXO 1:3 ಇಸ್ಸಾಕಾರ್ ಜೆಬುಲೂನ್ ಮತ್ತು ಬೆನ್ಯಾಮೀನ್,
EXO 1:4 ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್.
EXO 1:5 ಯಾಕೋಬನ ವಂಶಜರು ಒಟ್ಟು ಎಪ್ಪತ್ತು ಮಂದಿ ಆದರೆ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.
EXO 1:6 ಹಲವು ವರ್ಷಗಳ ಬಳಿಕ ಯೋಸೇಫನೂ ಅವನ ಸಹೋದರರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.
EXO 1:7 ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡು ಬಲಗೊಂಡರು, ಅದರಿಂದ ಆ ದೇಶವು ಅವರಿಂದ ತುಂಬಿತು.
EXO 1:8 ತರುವಾಯ ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.
EXO 1:9 ಅವನು ತನ್ನ ಜನರಿಗೆ, “ಇಸ್ರಾಯೇಲರು ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಹೆಚ್ಚು ಬಲವುಳ್ಳವರಾಗಿದ್ದಾರೆ.
EXO 1:10 ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು, ನಮಗೆ ವಿರೋಧವಾಗಿ ಯುದ್ಧಮಾಡಿ, ದೇಶವನ್ನು ಬಿಟ್ಟು ಹೋಗಬಹುದು ಆದ್ದರಿಂದ ಅವರು ವೃದ್ಧಿಯಾಗದಂತೆ ಅವರೊಂದಿಗೆ ಬುದ್ಧಿವಂತಿಕೆಯಿಂದ ನಾವು ವರ್ತಿಸೋಣ,” ಎಂದನು.
EXO 1:11 ಆಗ ಅವರನ್ನು ಬಿಟ್ಟೀ ಕೆಲಸಗಳಿಂದ ಶ್ರಮಪಡಿಸುವುದಕ್ಕಾಗಿ, ಬಿಟ್ಟೀ ಕೆಲಸಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ಮತ್ತು ರಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
EXO 1:12 ಆದರೆ ಈಜಿಪ್ಟನವರು ಅವರನ್ನು ಎಷ್ಟು ಶ್ರಮಪಡಿಸಿದರೋ, ಅಷ್ಟು ಅಧಿಕವಾಗಿ ಅವರು ಹೆಚ್ಚಿ ಹರಡಿಕೊಂಡದ್ದರಿಂದ ಈಜಿಪ್ಟಿನವರು ಇಸ್ರಾಯೇಲರ ಬಗ್ಗೆ ಹೆದರಿದವರಾದರು.
EXO 1:13 ಆದ್ದರಿಂದ ಈಜಿಪ್ಟಿನವರು ಇಸ್ರಾಯೇಲರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾ ಸೇವೆ ಮಾಡಿಸಿಕೊಂಡರು.
EXO 1:14 ಮಣ್ಣು ಅಗೆಯುವ, ಇಟ್ಟಿಗೆಯನ್ನು ಮಾಡುವ ಮತ್ತು ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಈಜಿಪ್ಟಿನವರು ಅವರಿಂದ ಮಾಡಿಸಿದ ಎಲ್ಲಾ ಕೆಲಸವು ಕಠೋರವಾಗಿತ್ತು.
EXO 1:15 ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಹಿಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿ,
EXO 1:16 ಅವರಿಗೆ, “ನೀವು ಹಿಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವುದಕ್ಕೆ ಹೆರಿಗೆಯ ಸಮಯದಲ್ಲಿ ಅವರನ್ನು ಪರಾಂಬರಿಸುವಾಗ, ಗಂಡು ಮಗುವಾದರೆ ಅದನ್ನು ಕೊಂದುಹಾಕಿರಿ, ಹೆಣ್ಣಾದರೆ ಬದುಕಲಿ,” ಎಂದು ಹೇಳಿದ್ದನು.
EXO 1:17 ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಈಜಿಪ್ಟಿನ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.
EXO 1:18 ಆಗ ಈಜಿಪ್ಟಿನ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ಏಕೆ ಗಂಡು ಮಕ್ಕಳನ್ನು ಬದುಕಿಸಿದ್ದೀರಿ? ಇಂಥ ಕೆಲಸವನ್ನು ಏಕೆ ಮಾಡಿದಿರಿ?” ಎಂದನು.
EXO 1:19 ಸೂಲಗಿತ್ತಿಯರು ಫರೋಹನಿಗೆ, “ಹಿಬ್ರಿಯರ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯರು ಅವರ ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದರು.
EXO 1:20 ಆದ್ದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದರು. ಇದಲ್ಲದೆ ಇಸ್ರಾಯೇಲರು ಸಂಖ್ಯೆಯಲ್ಲೂ ಹೆಚ್ಚಾಗಿ ಬಹು ಬಲಗೊಂಡರು.
EXO 1:21 ಸೂಲಗಿತ್ತಿಯರು ದೇವರಿಗೆ ಭಯಪಟ್ಟದ್ದರಿಂದ, ದೇವರು ಅವರ ಕುಟುಂಬಕ್ಕೆ ಅಭಿವೃದ್ಧಿಯನ್ನು ಉಂಟುಮಾಡಿದರು.
EXO 1:22 ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.
EXO 2:1 ಈ ಸಮಯದಲ್ಲಿ ಲೇವಿಯ ವಂಶದವನಾದ ಒಬ್ಬನು ಲೇವಿಯ ಸ್ತ್ರೀಯನ್ನು ಮದುವೆಯಾದನು.
EXO 2:2 ಆ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತಳು. ಅದು ಸುಂದರವಾಗಿದ್ದುದರಿಂದ ಮೂರು ತಿಂಗಳು ಬಚ್ಚಿಟ್ಟರು.
EXO 2:3 ಆದರೆ ಅದನ್ನು ಹೆಚ್ಚುಕಾಲ ಬಚ್ಚಿಡುವುದಕ್ಕಾಗದೆ ಇದ್ದಾಗ, ಅವನಿಗಾಗಿ ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನು ಮತ್ತು ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿಟ್ಟು, ನೈಲ್ ನದಿಯ ಅಂಚಿನಲ್ಲಿ ಇದ್ದ ಜಂಬು ಹುಲ್ಲಿನಲ್ಲಿ ಇಟ್ಟರು.
EXO 2:4 ಕೂಸಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕೆ ದೂರದಲ್ಲಿ ಅದರ ಅಕ್ಕ ನಿಂತುಕೊಂಡಳು.
EXO 2:5 ಆಗ ಫರೋಹನ ಮಗಳು ನೈಲ್ ನದಿಯಲ್ಲಿ ಸ್ನಾನ ಮಾಡುವದಕ್ಕೆ ಬಂದಳು. ಆಕೆಯ ದಾಸಿಯರು ನದಿಯ ಅಂಚಿನಲ್ಲಿ ತಿರುಗಾಡುತ್ತಿದ್ದರು. ಫರೋಹನ ಮಗಳು ಜಂಬು ಹುಲ್ಲಿನಲ್ಲಿದ್ದ ಪೆಟ್ಟಿಗೆಯನ್ನು ನೋಡಿ ತನ್ನ ದಾಸಿಯನ್ನು ಕಳುಹಿಸಿ, ಅದನ್ನು ತರಿಸಿದಳು.
EXO 2:6 ಆ ಪೆಟ್ಟಿಗೆಯನ್ನು ತೆರೆದಾಗ, ಕೂಸನ್ನು ನೋಡಿದಳು. ಕೂಸು ಅಳುತ್ತಿತ್ತು. ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. ಅವಳು, “ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು,” ಎಂದು ಹೇಳಿದಳು.
EXO 2:7 ಆಗ ಮಗುವಿನ ಅಕ್ಕ ಫರೋಹನ ಮಗಳಿಗೆ, “ನಾನು ಹೋಗಿ ಈ ಕೂಸಿಗೆ ಹಾಲು ಕೊಟ್ಟು ಸಾಕುವುದಕ್ಕೆ ಹಿಬ್ರಿಯ ಸ್ತ್ರೀಯರಿಂದ ಒಬ್ಬ ದಾದಿಯನ್ನು ನಿನಗೋಸ್ಕರ ಕರೆದುಕೊಂಡು ಬರಲೋ?” ಎಂದಳು.
EXO 2:8 ಫರೋಹನ ಮಗಳು ಆಕೆಗೆ, “ಹೌದು, ಹೋಗು,” ಎಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನೇ ಕರೆದುಕೊಂಡು ಬಂದಳು.
EXO 2:9 ಫರೋಹನ ಮಗಳು ಆಕೆಗೆ, “ಈ ಮಗುವನ್ನು ತೆಗೆದುಕೊಂಡುಹೋಗಿ, ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು,” ಎಂದಳು. ಆಗ ಆ ಸ್ತ್ರೀಯು ಕೂಸನ್ನು ತೆಗೆದುಕೊಂಡುಹೋಗಿ ಸಾಕಿದಳು.
EXO 2:10 ಆ ಮಗುವು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಹೋದಳು. ಅವನು ಆಕೆಗೆ ಮಗನಾದನು. ಆಕೆಯು, “ನೀರಿನೊಳಗಿಂದ ಇವನನ್ನು ಎಳೆದೆ,” ಎಂದು ಹೇಳಿ ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.
EXO 2:11 ಹಲವು ವರ್ಷಗಳ ನಂತರ ಮೋಶೆಯು ದೊಡ್ಡವನಾದ ಮೇಲೆ ತನ್ನ ಸಹೋದರರ ಬಳಿಗೆ ಹೋಗಿ ಅವರ ಬಿಟ್ಟೀ ಕೆಲಸಗಳನ್ನು ನೋಡಿದಾಗ, ಒಬ್ಬ ಈಜಿಪ್ಟಿನವನು ತನ್ನ ಸಹೋದರರಲ್ಲಿ ಒಬ್ಬ ಹಿಬ್ರಿಯನನ್ನು ಹೊಡೆಯುವುದನ್ನು ನೋಡಿದನು.
EXO 2:12 ಅವನು ಸುತ್ತಮುತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು ಆ ಈಜಿಪ್ಟಿನವನನ್ನು ಕೊಂದುಹಾಕಿ, ಮರಳಿನಲ್ಲಿ ಮುಚ್ಚಿಹಾಕಿದನು.
EXO 2:13 ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಹಿಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡುತ್ತಿದ್ದರು. ತಪ್ಪು ಮಾಡಿದವನಿಗೆ ಮೋಶೆ, “ಏಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ?” ಎಂದನು.
EXO 2:14 ಅದಕ್ಕವನು, “ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿದ್ದಾರೆ? ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದು ಹಾಕಬೇಕೆಂದಿದ್ದೀಯೋ?” ಎಂದನು. ಆಗ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ತಿಳಿದಿರಬೇಕು,” ಎಂದುಕೊಂಡನು.
EXO 2:15 ಫರೋಹನು ಈ ವಿಷಯವನ್ನು ಕೇಳಿದಾಗ, ಮೋಶೆಯನ್ನು ಕೊಂದುಹಾಕುವುದಕ್ಕೆ ಪ್ರಯತ್ನಿಸಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್ ದೇಶಕ್ಕೆ ವಾಸಿಸಲು ಹೋದನು. ಅಲ್ಲಿ ಒಂದು ಬಾವಿಯ ಬಳಿಯಲ್ಲಿ ಕೂತುಕೊಂಡನು.
EXO 2:16 ಮಿದ್ಯಾನಿನ ಯಾಜಕನಿಗೆ ಏಳುಮಂದಿ ಪುತ್ರಿಯರಿದ್ದರು. ಇವರು ಬಂದು ತಮ್ಮ ತಂದೆಯ ಕುರಿಮಂದೆಗಳಿಗೆ ನೀರು ಕುಡಿಸುವದಕ್ಕಾಗಿ ನೀರು ಸೇದಿ, ದೋಣಿಗಳನ್ನು ತುಂಬಿಸುತ್ತಿದ್ದರು.
EXO 2:17 ಕುರುಬರು ಬಂದು ಅವರನ್ನು ಅಲ್ಲಿಂದ ಓಡಿಸಲು, ಮೋಶೆಯು ಎದ್ದು ಬಂದು ಅವರಿಗೆ ಸಹಾಯಮಾಡಿ, ಅವರ ಕುರಿಗಳಿಗೆ ನೀರು ಕುಡಿಸಿದನು.
EXO 2:18 ಹುಡುಗಿಯರು ತಮ್ಮ ತಂದೆ ರೆಯೂವೇಲನ ಬಳಿಗೆ ಬಂದಾಗ, ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿರಿ?” ಎಂದನು.
EXO 2:19 ಅದಕ್ಕೆ ಅವರು, “ಈಜಿಪ್ಟಿನವನಾದ ಒಬ್ಬ ಮನುಷ್ಯನು ಕುರುಬರ ಕೈಯಿಂದ ನಮ್ಮನ್ನು ತಪ್ಪಿಸಿ, ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ, ಮಂದೆಗೆ ಕುಡಿಸಿದನು,” ಎಂದರು.
EXO 2:20 ಆಗ ರೆಯೂವೇಲನು ತನ್ನ ಪುತ್ರಿಯರಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟಮಾಡಲಿ,” ಎಂದನು.
EXO 2:21 ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವುದಕ್ಕೆ ಸಮ್ಮತಿಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರಳನ್ನು ಮದುವೆ ಮಾಡಿಕೊಟ್ಟನು.
EXO 2:22 ಆಕೆಯು ಅವನಿಗೆ ಮಗನನ್ನು ಹೆತ್ತಾಗ, ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿಟ್ಟನು ಏಕೆಂದರೆ ಅವನು, “ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ,” ಎಂದನು.
EXO 2:23 ಹೀಗೆ ಬಹಳ ದಿನಗಳಾದ ಮೇಲೆ ಈಜಿಪ್ಟಿನ ಅರಸನು ಸತ್ತನು. ಇಸ್ರಾಯೇಲರು ದಾಸತ್ವದ ಕಾರಣದಿಂದ ನರಳಾಡುತ್ತಾ ಮೊರೆಯಿಡುತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಮುಟ್ಟಿತು.
EXO 2:24 ದೇವರು ಅವರ ನರಳಾಟವನ್ನು ಕೇಳಿದಾಗ, ಅವರು ಅಬ್ರಹಾಮ, ಇಸಾಕ ಮತ್ತು ಯಾಕೋಬನ ಸಂಗಡ ತಾವು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡರು.
EXO 2:25 ದೇವರು ಇಸ್ರಾಯೇಲರನ್ನು ನೋಡಿ ಅವರಲ್ಲಿ ಕನಿಕರಗೊಂಡರು.
EXO 3:1 ಮೋಶೆಯು ತನ್ನ ಮಾವನೂ ಮಿದ್ಯಾನಿನ ಯಾಜಕನೂ ಆದ ಇತ್ರೋವನ ಮಂದೆಯನ್ನು ಮೇಯಿಸುತ್ತಿದ್ದನು. ಮರುಭೂಮಿಯ ಹಿಂಭಾಗಕ್ಕೆ ನಡೆಸಿಕೊಂಡು ಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.
EXO 3:2 ಆಗ ಯೆಹೋವ ದೇವರ ದೂತನು ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ನೋಡಿದಾಗ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು ಆದಾಗ್ಯೂ ಪೊದೆಯು ಸುಟ್ಟು ಹೋಗಲಿಲ್ಲ.
EXO 3:3 ಆಗ ಮೋಶೆಯು, “ನಾನು ಹೋಗಿ ಆ ವಿಚಿತ್ರ ನೋಟವನ್ನೂ ಪೊದೆಯು ಏಕೆ ಸುಟ್ಟುಹೋಗಲಿಲ್ಲವೆಂಬುದನ್ನೂ ನೋಡುವೆನು,” ಎಂದುಕೊಂಡನು.
EXO 3:4 ಅವನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವ ದೇವರು ನೋಡಿದಾಗ, ದೇವರು ಪೊದೆಯೊಳಗಿಂದ ಅವನಿಗೆ, “ಮೋಶೇ, ಮೋಶೇ,” ಎಂದು ಕರೆದರು. ಆಗ ಅವನು, “ನಾನು ಇಲ್ಲಿ ಇದ್ದೇನೆ,” ಎಂದನು.
EXO 3:5 ಆಗ ದೇವರು ಅವನಿಗೆ, “ಇಲ್ಲಿ ಸಮೀಪಕ್ಕೆ ಬರಬೇಡ, ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ,” ಎಂದರು.
EXO 3:6 ಇದಲ್ಲದೆ ಮೋಶೆಗೆ, “ನಾನು ನಿನ್ನ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿದ್ದೇನೆ,” ಎಂದು ಹೇಳಿದರು. ಮೋಶೆಯು ದೇವರ ಕಡೆ ದೃಷ್ಟಿ ಇಡುವುದಕ್ಕೆ ಭಯಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
EXO 3:7 ಆಗ ಯೆಹೋವ ದೇವರು, “ಈಜಿಪ್ಟಿನಲ್ಲಿರುವ ನನ್ನ ಜನರ ವ್ಯಥೆಯನ್ನು ವಾಸ್ತವವಾಗಿಯೂ ಕಂಡಿದ್ದೇನೆ. ಬಿಟ್ಟೀ ಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.
EXO 3:8 ಆದಕಾರಣ ಅವರನ್ನು ಈಜಿಪ್ಟನವರ ಕೈಯೊಳಗಿಂದ ಬಿಡುಗಡೆ ಮಾಡುವುದಕ್ಕೆ ಬಂದಿದ್ದೇನೆ. ನಾನು ಅವರನ್ನು ಆ ದೇಶದಿಂದ ಬಿಡಿಸಿ, ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ.
EXO 3:9 ಈಗ ಇಸ್ರಾಯೇಲರ ಕೂಗು ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ.
EXO 3:10 ಆದ್ದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲರಾದ ನನ್ನ ಜನರನ್ನು ನೀನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಬೇಕು,” ಎಂದರು.
EXO 3:11 ಆಗ ಮೋಶೆಯು ದೇವರಿಗೆ, “ಫರೋಹನ ಬಳಿಗೆ ಹೋಗಿ, ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತರುವುದಕ್ಕೆ ನಾನು ಎಷ್ಟರವನು?” ಎಂದನು.
EXO 3:12 ಆಗ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ಜನರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದ ಮೇಲೆ ದೇವರಾದ ನನ್ನನ್ನು ಆರಾಧಿಸುವಿರಿ. ನಾನು ನಿನ್ನನ್ನು ಕಳುಹಿಸಿದವನು ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.
EXO 3:13 ಅದಕ್ಕೆ ಮೋಶೆಯು ದೇವರಿಗೆ, “ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಹೇಳುವಾಗ ಅವರು ನನಗೆ, ‘ಅವರ ಹೆಸರು ಏನು?’ ಎಂದು ಕೇಳಿದರೆ, ನಾನು ಅವರಿಗೆ ಏನು ಹೇಳಬೇಕು?” ಎಂದನು.
EXO 3:14 ಆಗ ದೇವರು ಮೋಶೆಗೆ, “ಇರುವಾತನೇ ಆಗಿದ್ದೇನೆ. ‘ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಇಸ್ರಾಯೇಲರಿಗೆ ಹೇಳಬೇಕು,” ಎಂದರು.
EXO 3:15 ಮತ್ತೆ ದೇವರು ಮೋಶೆಗೆ, “ ‘ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಇಸ್ರಾಯೇಲರಿಗೆ ಹೇಳಬೇಕು, “ಇದೇ ಯುಗಯುಗಕ್ಕೆ ನನ್ನ ಹೆಸರೂ, ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ಹೆಸರು.
EXO 3:16 “ನೀನು ಹೋಗಿ ಇಸ್ರಾಯೇಲ್ ಹಿರಿಯರನ್ನು ಕೂಡಿಸಿ ಅವರಿಗೆ, ‘ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವ ದೇವರು ನನಗೆ ಕಾಣಿಸಿಕೊಂಡು ಹೀಗೆಂದಿದ್ದಾರೆ: ನಾನು ನಿಮ್ಮನ್ನೂ ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲವನ್ನೂ ನಿಶ್ಚಯವಾಗಿ ನೋಡಿದ್ದೇನೆ.
EXO 3:17 ಈಜಿಪ್ಟಿನ ವ್ಯಥೆಯಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ಇರುವ ಹಾಲು ಜೇನು ಹರಿಯುವ ದೇಶಕ್ಕೆ ಬರಮಾಡುವೆನೆಂದು ವಾಗ್ದಾನ ಮಾಡಿದ್ದೇನೆ,’ ಎಂದು ಅವರಿಗೆ ತಿಳಿಸು.
EXO 3:18 “ಇಸ್ರಾಯೇಲರ ಹಿರಿಯರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್ ಜನರ ಹಿರಿಯರ ಸಹಿತವಾಗಿ ಈಜಿಪ್ಟಿನ ಅರಸನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾಗಿರುವ ಯೆಹೋವ ದೇವರು ನಮಗೆ ಪ್ರತ್ಯಕ್ಷನಾಗಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞಮಾಡಬೇಕಾಗಿದೆ. ಅದಕ್ಕಾಗಿ ನಮ್ಮನ್ನು ಬಿಡು ಎಂದು ಬೇಡಿಕೊಳ್ಳುತ್ತೇವೆ,’ ಎಂದು ಹೇಳಬೇಕು.
EXO 3:19 ಆದರೂ ಈಜಿಪ್ಟಿನ ಅರಸನು ನೀವು ಎಷ್ಟು ಬಲವಂತ ಮಾಡಿದರೂ ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂದು ನನಗೆ ನಿಶ್ಚಯವಾಗಿ ತಿಳಿದಿದೆ.
EXO 3:20 ಹೀಗಿರುವುದರಿಂದ ನನ್ನ ಕೈಯನ್ನು ಚಾಚಿ ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿ, ನಾನು ಅದನ್ನು ನಾನಾ ವಿಧವಾಗಿ ಬಾಧಿಸುವೆನು. ತರುವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.
EXO 3:21 “ಇದಲ್ಲದೆ ಈ ಜನರಿಗೆ ಈಜಿಪ್ಟಿನವರ ಕಣ್ಣೆದುರಿನಲ್ಲಿ ದಯೆ ದೊರಕುವಂತೆ ಮಾಡುವೆನು. ನೀವು ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ.
EXO 3:22 ಆದರೆ ಪ್ರತಿ ಸ್ತ್ರೀಯು ತನ್ನ ಮನೆಯಲ್ಲಿ ಇಳಿದುಕೊಂಡಿರುವ ಸ್ತ್ರೀಯಿಂದಲೂ ನೆರೆಯವಳಿಂದಲೂ ಬೆಳ್ಳಿಬಂಗಾರದ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಕೇಳಿಕೊಳ್ಳಲಿ. ಅವುಗಳನ್ನು ನಿಮ್ಮ ಪುತ್ರಪುತ್ರಿಯರ ಮೇಲೆ ಹಾಕಿರಿ. ಹೀಗೆ ನೀವು ಈಜಿಪ್ಟಿನವರನ್ನು ಸೂರೆಮಾಡುವಿರಿ,” ಎಂದರು.
EXO 4:1 ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ‘ಯೆಹೋವ ದೇವರು ನಿನಗೆ ಕಾಣಿಸಿಕೊಂಡೇ ಇಲ್ಲ,’ ಎಂದು ಹೇಳಬಹುದು,” ಎಂದನು.
EXO 4:2 ಯೆಹೋವ ದೇವರು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು. ಅವನು, “ಕೋಲು,” ಎಂದನು.
EXO 4:3 ಯೆಹೋವ ದೇವರು ಅವನಿಗೆ, “ಅದನ್ನು ನೆಲದ ಮೇಲೆ ಬಿಸಾಡು,” ಎಂದರು. ಅವನು ಅದನ್ನು ನೆಲದ ಮೇಲೆ ಬಿಸಾಡಿದನು. ಆಗ ಅದು ಸರ್ಪವಾಯಿತು. ಮೋಶೆ ಅಲ್ಲಿಂದ ಓಡಿಹೋದನು.
EXO 4:4 ಯೆಹೋವ ದೇವರು ಮೋಶೆಗೆ, “ನಿನ್ನ ಕೈಚಾಚಿ, ಅದರ ಬಾಲವನ್ನು ಹಿಡಿ,” ಎಂದಾಗ, ಅವನು ಕೈಚಾಚಿ ಅದನ್ನು ಹಿಡಿದ ಕೂಡಲೇ, ಅದು ಅವನ ಕೈಯಲ್ಲಿ ಕೋಲಾಯಿತು.
EXO 4:5 ಆಗ ಯೆಹೋವ ದೇವರು ಅವನಿಗೆ, “ಇದರಿಂದ ಆ ಜನರು ತಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗೂ ಯಾಕೋಬರ ದೇವರಾಗಿರುವ ಯೆಹೋವ ದೇವರು ನಿನಗೆ ಪ್ರಕಟವಾಗಿದ್ದು ನಿಜ ಎಂಬುದನ್ನು ನಂಬುವರು,” ಎಂದರು.
EXO 4:6 ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇನ್ನೂ ಮಾತನಾಡಿ, “ನಿನ್ನ ಕೈಯನ್ನು ನಿನ್ನ ಉಡಿಯಲ್ಲಿ ಇಟ್ಟುಕೋ,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆದನು. ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.
EXO 4:7 ದೇವರು ಅವನಿಗೆ, “ನಿನ್ನ ಕೈಯನ್ನು ಉಡಿಯಲ್ಲಿ ಹಾಕು,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ, ಉಡಿಯಿಂದ ಹೊರಗೆ ತೆಗೆದಾಗ, ಅದು ಅವನ ಉಳಿದ ಮೈಯಂತೆ ಆಗಿತ್ತು.
EXO 4:8 ಆಗ ಯೆಹೋವ ದೇವರು, “ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ಹೋದರೂ, ಎರಡನೆಯ ಸೂಚಕಕಾರ್ಯವನ್ನು ನೋಡಿ ನಂಬುವರು.
EXO 4:9 ಆ ಎರಡೂ ಸೂಚಕಕಾರ್ಯಗಳನ್ನು ಅವರು ನಂಬದೆ, ನಿನ್ನ ಮಾತನ್ನು ಕೇಳದೆ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದು, ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ನೀನು ತೆಗೆದ ನದಿಯ ನೀರು ಒಣಗಿದ ನೆಲದ ಮೇಲೆ ರಕ್ತವಾಗುವುದು,” ಎಂದರು.
EXO 4:10 ಮೋಶೆಯು ಯೆಹೋವ ದೇವರಿಗೆ, “ಸ್ವಾಮಿ, ನನ್ನನ್ನು ಕ್ಷಮಿಸಿರಿ, ನಾನು ಮೊದಲಿನಿಂದಲೂ ನೀವು ನಿಮ್ಮ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ,” ಎಂದನು.
EXO 4:11 ಅದಕ್ಕೆ ಯೆಹೋವ ದೇವರು ಅವನಿಗೆ, “ಮನುಷ್ಯರಿಗೆ ಬಾಯಿ ಕೊಟ್ಟಾತನೂ ಯಾರು? ಮೂಕರನ್ನೂ ಕಿವುಡರನ್ನೂ ಮಾಡಿದಾತನೂ ಯಾರು? ದೃಷ್ಟಿಯುಳ್ಳವರನ್ನೂ ದೃಷ್ಟಿಯಿಲ್ಲದವರನ್ನೂ ಮಾಡಿದಾತನೂ ಯಾರು? ಯೆಹೋವ ದೇವರಾದ ನಾನೇ ಅಲ್ಲವೋ?
EXO 4:12 ಹಾಗಾದರೆ ಈಗ ಹೋಗು, ನಾನೇ ನಿನ್ನ ಸಂಗಡವಿದ್ದು, ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು,” ಎಂದರು.
EXO 4:13 ಅದಕ್ಕೆ ಮೋಶೆಯು, “ಸ್ವಾಮಿ, ನೀವು ಬೇರೊಬ್ಬನನ್ನು ಕಳುಹಿಸಿರಿ, ಎಂದು ಬೇಡುತ್ತೇನೆ,” ಎಂದನು.
EXO 4:14 ಯೆಹೋವ ದೇವರು ಮೋಶೆಯ ಮೇಲೆ ಬೇಸರಗೊಂಡು, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲನೆಂದು ನನಗೆ ಗೊತ್ತಿದೆ. ಅವನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ಕಂಡು, ತನ್ನ ಹೃದಯದಲ್ಲಿ ಆನಂದಿಸುವನು.
EXO 4:15 ಅವನ ಸಂಗಡ ನೀನು ಮಾತನಾಡಿ, ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಂದಲೂ ಅವನ ಬಾಯಿಂದಲೂ ನಾನೇ ಮಾತನಾಡಿ ನೀವು ಮಾಡಬೇಕಾದುದನ್ನು ಕಲಿಸುವೆನು.
EXO 4:16 ಅವನು ನಿನ್ನ ಪರವಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿರುವನು, ನೀನು ಅವನಿಗೆ ದೇವರಂತಿರುವಿ.
EXO 4:17 ಆದರೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಳ್ಳಬೇಕು. ಇದರಿಂದಲೇ ನೀನು ಸೂಚಕಕಾರ್ಯಗಳನ್ನು ಮಾಡುವೆ,” ಎಂದರು.
EXO 4:18 ಇದಾದ ಮೇಲೆ ಮೋಶೆಯು ತನ್ನ ಮಾವನಾದ ಇತ್ರೋವನ ಬಳಿಗೆ ಬಂದು ಅವನಿಗೆ, “ಈಜಿಪ್ಟಿನಲ್ಲಿರುವ ನನ್ನ ಸಹೋದರರ ಬಳಿಗೆ ಹಿಂದಿರುಗಿ ಹೋಗಿ, ಅವರು ಇನ್ನೂ ಜೀವದಿಂದ ಇದ್ದಾರೋ ಎಂಬುದನ್ನು ನೋಡುವೆನು,” ಎಂದನು. ಇತ್ರೋವನು ಮೋಶೆಗೆ, “ಸಮಾಧಾನದಿಂದ ಹೋಗು,” ಎಂದನು.
EXO 4:19 ಯೆಹೋವ ದೇವರು ಮಿದ್ಯಾನಿನಲ್ಲಿ ಮೋಶೆಗೆ, “ಈಜಿಪ್ಟಿಗೆ ಹಿಂದಿರುಗಿ ಹೋಗು. ಏಕೆಂದರೆ ನಿನ್ನನ್ನು ಕೊಲ್ಲಬೇಕೆಂದಿದ್ದ ಜನರೆಲ್ಲಾ ಸತ್ತಿದ್ದಾರೆ,” ಎಂದರು.
EXO 4:20 ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರೆದುಕೊಂಡು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ, ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಬಂದನು. ಇದಲ್ಲದೆ ದೇವರ ಕೋಲನ್ನು ಕೈಯಲ್ಲಿ ತೆಗೆದುಕೊಂಡನು.
EXO 4:21 ಆಗ ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗುವಾಗ, ನಾನು ನಿನ್ನ ಕೈಯಲ್ಲಿ ಮಾಡಿಸಿದ ಎಲ್ಲಾ ಸೂಚಕಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವುದಿಲ್ಲ.
EXO 4:22 ಆಗ ನೀನು ಫರೋಹನಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲ ನನ್ನ ಮಗನು, ನನ್ನ ಜೇಷ್ಠಪುತ್ರನು.
EXO 4:23 ಫರೋಹನೇ, ನಾನು ನಿನಗೆ ಹೇಳುವುದೇನೆಂದರೆ: “ನನ್ನ ಸೇವೆಮಾಡುವಂತೆ ನನ್ನ ಮಗನನ್ನು ಕಳುಹಿಸು.” ನೀನು ಅವನನ್ನು ಕಳುಹಿಸುವುದನ್ನು ನಿರಾಕರಿಸಿದರೆ, ನಾನು ನಿನ್ನ ಮಗನನ್ನು ಅಂದರೆ, ನಿನ್ನ ಜೇಷ್ಠಪುತ್ರನನ್ನು ಕೊಲ್ಲುವೆನು,’ ಎಂದು ತಿಳಿಸಬೇಕು,” ಎಂದರು.
EXO 4:24 ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ ವಸತಿಗೃಹದಲ್ಲಿದ್ದಾಗ, ಯೆಹೋವ ದೇವರು ಮೋಶೆಯ ಎದುರಿಗೆ ಬಂದು ಅವನನ್ನು ಕೊಲ್ಲುವುದಕ್ಕಿದ್ದಾಗ,
EXO 4:25 ಚಿಪ್ಪೋರಳು ಕಲ್ಲಿನ ಚೂರಿ ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ, ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿ ಅವನಿಗೆ, “ಖಂಡಿತವಾಗಿ ನೀನು ನನಗೆ ರಕ್ತಧಾರೆಯಿಂದಾದ ಗಂಡನು,” ಎಂದಳು.
EXO 4:26 ಆಗ ಯೆಹೋವ ದೇವರು ಅವನನ್ನು ಉಳಿಸಿದರು. ಆಗ ಅವಳು, “ಸುನ್ನತಿಯ ನಿಮಿತ್ತ ನೀನು ನನಗೆ ರಕ್ತಧಾರೆಯಿಂದ ಗಂಡನಾಗಿದ್ದೀ,” ಎಂದಳು.
EXO 4:27 ಇದಲ್ಲದೆ ಯೆಹೋವ ದೇವರು ಆರೋನನಿಗೆ, “ಮೋಶೆಯನ್ನು ಎದುರುಗೊಳ್ಳುವದಕ್ಕೆ ಮರುಭೂಮಿಗೆ ಹೋಗು,” ಎಂದರು. ಆಗ ಅವನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು.
EXO 4:28 ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಯೆಹೋವ ದೇವರ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
EXO 4:29 ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲಿನ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.
EXO 4:30 ಯೆಹೋವ ದೇವರು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ಹೇಳಿ, ಜನರ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
EXO 4:31 ಜನರು ನಂಬಿದರು. ಯೆಹೋವ ದೇವರು ಇಸ್ರಾಯೇಲರನ್ನು ದರ್ಶಿಸಿ, ಅವರ ವ್ಯಥೆಯನ್ನು ನೋಡಿದ್ದಾರೆ ಎಂದು ಅವರು ಕೇಳಿದಾಗ, ತಲೆಬಾಗಿಸಿ ಆರಾಧಿಸಿದರು.
EXO 5:1 ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ, “ಇಸ್ರಾಯೇಲಿನ ಯೆಹೋವ ದೇವರು, ‘ಮರುಭೂಮಿಯಲ್ಲಿ ನನಗೆ ನನ್ನ ಜನರು ಹಬ್ಬವನ್ನಾಚರಿಸುವುದಕ್ಕೆ ಅವರನ್ನು ಹೋಗಗೊಡಿಸು,’ ಎಂದು ಹೇಳುತ್ತಾರೆ,” ಎಂದರು.
EXO 5:2 ಆಗ ಫರೋಹನು, “ನಾನು ಆತನ ಮಾತಿಗೆ ವಿಧೇಯನಾಗಿ ಇಸ್ರಾಯೇಲರನ್ನು ಕಳುಹಿಸಿಬಿಡುವಂತೆ ಆ ಯೆಹೋವ ಯಾರು? ಆ ಯೆಹೋವ ದೇವರನ್ನು ನಾನರಿಯೆನು. ಇಸ್ರಾಯೇಲರನ್ನೂ ಕಳುಹಿಸುವುದಿಲ್ಲ,” ಎಂದನು.
EXO 5:3 ಆಗ ಅವರು ಫರೋಹನಿಗೆ, “ಹಿಬ್ರಿಯರ ದೇವರು ನಮ್ಮನ್ನು ಸಂದರ್ಶಿಸಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿವಸ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞ ಅರ್ಪಿಸುವುದಕ್ಕೆ ನಾವು ಹೋಗಬೇಕು. ಇಲ್ಲವಾದರೆ ಅವರು ಉಪದ್ರವದಿಂದಲೋ ಖಡ್ಗದಿಂದಲೋ ನಮ್ಮನ್ನು ದಂಡಿಸುವರು,” ಎಂದರು.
EXO 5:4 ಈಜಿಪ್ಟಿನ ಅರಸನು ಅವರಿಗೆ, “ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸಗಳನ್ನು ಮಾಡದಂತೆ ಏಕೆ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಗಳಿಗೆ ಹೋಗಿ,” ಎಂದನು.
EXO 5:5 ಇದಲ್ಲದೆ ಫರೋಹನು, “ಈಗ ಹಿಬ್ರಿಯರು ಈ ದೇಶದಲ್ಲಿ ಹೆಚ್ಚಿದ್ದಾರೆ. ನೀವು ಅವರನ್ನು ಅವರ ಬಿಟ್ಟಿಕೆಲಸಗಳಿಂದ ನಿಲ್ಲಿಸಿಬಿಡುತ್ತೀರಲ್ಲಾ?” ಎಂದನು.
EXO 5:6 ಅದೇ ದಿನದಲ್ಲಿ ಫರೋಹನು ಬಿಟ್ಟಿಕೆಲಸ ಮಾಡಿಸುವವರಿಗೂ ಅವರ ಮೇಲ್ವಿಚಾರಕರಿಗೂ,
EXO 5:7 “ನೀವು ಇನ್ನು ಇಟ್ಟಿಗೆಗಳನ್ನು ಮಾಡುವುದಕ್ಕೆ ಮೊದಲಿನ ಹಾಗೆ ಜನರಿಗೆ ಒಣಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.
EXO 5:8 ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದ್ದರಿಂದ ಅವರು, ‘ನಾವು ಹೋಗಿ ನಮ್ಮ ದೇವರಿಗೆ ಯಜ್ಞವನ್ನು ಅರ್ಪಿಸೋಣ,’ ಎಂದು ಕೂಗುತ್ತಾರೆ.
EXO 5:9 ಈ ಜನರು ಸುಳ್ಳು ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ. ಅವರು ದುಡಿಯಲಿ,” ಎಂದು ಆಜ್ಞಾಪಿಸಿದನು.
EXO 5:10 ಆಗ ಬಿಟ್ಟಿಕೆಲಸವನ್ನು ಮಾಡಿಸುವವರೂ ಮೇಲ್ವಿಚಾರಕರೂ ಹೊರಗೆ ಹೋಗಿ ಜನರಿಗೆ, “ಫರೋಹನು ಹೀಗೆ ಹೇಳುತ್ತಾನೆ: ‘ನಾನು ನಿಮಗೆ ಒಣಹುಲ್ಲು ಕೊಡುವುದಿಲ್ಲ.
EXO 5:11 ನಿಮಗೆ ಹುಲ್ಲು ಎಲ್ಲಿ ದೊರಕುವುದೋ, ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೆ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು,’ ಎಂದು ಹೇಳಿದ್ದಾನೆ,” ಎಂದರು.
EXO 5:12 ಆಗ ಜನರು ಒಣಹುಲ್ಲಿಗಾಗಿ ಕಳೆಕೀಳಿಸುವುದಕ್ಕೆ ಈಜಿಪ್ಟ್ ದೇಶದಲ್ಲೆಲ್ಲಾ ಚದರಿಹೋದರು.
EXO 5:13 ಇದಲ್ಲದೆ ಬಿಟ್ಟಿಕೆಲಸ ಮಾಡಿಸುವವರು, “ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿದಂತೆಯೇ, ಪ್ರತಿಯೊಂದು ದಿನದಲ್ಲಿ, ಆ ದಿನದ ಕೆಲಸವನ್ನು ತೀರಿಸಿಬಿಡಬೇಕು,” ಎಂದು ಹೇಳಿ ಅವರನ್ನು ತ್ವರೆಪಡಿಸಿದರು.
EXO 5:14 ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, “ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಅವರನ್ನು ಹೊಡೆಸಿದರು.
EXO 5:15 ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, “ಏಕೆ ನಿಮ್ಮ ದಾಸರಿಗೆ ಹೀಗೆ ಮಾಡುತ್ತೀರಿ?
EXO 5:16 ನಿಮ್ಮ ದಾಸರಿಗೆ ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ, ‘ಇಟ್ಟಿಗೆಗಳನ್ನು ಮಾಡಿರಿ’ ಎಂದು ನಮಗೆ ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಆದರೆ ತಪ್ಪು ನಿಮ್ಮ ಸ್ವಂತ ಜನರಲ್ಲಿಯೇ ಇದೆ,” ಎಂದರು.
EXO 5:17 ಅದಕ್ಕೆ ಅವನು, “ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, ನೀವು, ‘ನಾವು ಹೋಗಿ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುತ್ತೇವೆ,’ ಎಂದು ಹೇಳುತ್ತೀರಿ.
EXO 5:18 ಆದ್ದರಿಂದ ಈಗ ಹೋಗಿ ಕೆಲಸಮಾಡಿರಿ. ಹುಲ್ಲನ್ನು ನಿಮಗೆ ಕೊಡುವುದಕ್ಕಾಗುವುದಿಲ್ಲ. ಆದರೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ತಯಾರಿಸಬೇಕು,” ಎಂದನು.
EXO 5:19 ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದ್ದರಿಂದ, ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಇದ್ದೇವೆಂದು ತಿಳಿದುಕೊಂಡರು.
EXO 5:20 ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ, ದಾರಿಯಲ್ಲಿ ಕಾದಿದ್ದ ಮೋಶೆಯನ್ನೂ, ಆರೋನನನ್ನೂ ಸಂಧಿಸಿದರು.
EXO 5:21 ಅವರು ಮೋಶೆ ಆರೋನರಿಗೆ, “ಯೆಹೋವ ದೇವರು ನಿಮ್ಮನ್ನು ನೋಡಿ ನ್ಯಾಯತೀರಿಸಲಿ! ಏಕೆಂದರೆ ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ. ನಮ್ಮನ್ನು ಸಂಹರಿಸುವುದಕ್ಕೆ ನೀವು ಅವರ ಕೈಗೆ ಖಡ್ಗವನ್ನು ಕೊಟ್ಟಿದ್ದೀರಿ,” ಎಂದರು.
EXO 5:22 ಆಗ ಮೋಶೆಯು ಯೆಹೋವ ದೇವರ ಬಳಿಗೆ ಬಂದು, “ಸ್ವಾಮಿ, ಈ ಜನರಿಗೆ ಏಕೆ ಕಷ್ಟವನ್ನು ಕೊಟ್ಟಿದ್ದೀರಿ? ಏಕೆ ನನ್ನನ್ನು ಕಳುಹಿಸಿದಿರಿ?
EXO 5:23 ನಾನು ಫರೋಹನ ಬಳಿಗೆ ಬಂದು ನಿಮ್ಮ ಹೆಸರಿನಲ್ಲಿ ಮಾತನಾಡಿದಂದಿನಿಂದ, ಈ ಜನರಿಗೆ ಅವನು ಕೇಡನ್ನೇ ಮಾಡುತ್ತಿದ್ದಾನೆ. ನೀವು ನಿಮ್ಮ ಜನರನ್ನು ರಕ್ಷಿಸಲಿಲ್ಲವಲ್ಲಾ,” ಎಂದನು.
EXO 6:1 ಆಗ ಯೆಹೋವ ದೇವರು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನನ್ನ ಬಲವಾದ ಹಸ್ತವನ್ನು ಕಂಡು ಅವನು ಅವರನ್ನು ಹೋಗಗೊಡಿಸುವನು. ನನ್ನ ಬಲವಾದ ಹಸ್ತದ ಕಾರಣದಿಂದ ಅವನು ಅವರನ್ನು ತನ್ನ ದೇಶದೊಳಗಿಂದ ಹೊರಡಿಸುವನು,” ಎಂದರು.
EXO 6:2 ಇದಲ್ಲದೆ ದೇವರು ಮೋಶೆಯ ಸಂಗಡ ಮಾತನಾಡಿ, “ನಾನೇ ಯೆಹೋವ ದೇವರು.
EXO 6:3 ನಾನೇ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಸರ್ವಶಕ್ತ ದೇವರೆಂದು ಪ್ರಕಟಿಸಿಗೊಂಡೆನು. ಆದರೆ ಯೆಹೋವ ದೇವರೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಪೂರ್ಣವಾಗಿ ತಿಳಿಸಲಿಲ್ಲ.
EXO 6:4 ಕಾನಾನ್ ದೇಶವನ್ನು ಅಂದರೆ, ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬಡಿಕೆಯನ್ನು ದೃಢಪಡಿಸಿದೆನು.
EXO 6:5 ಈಜಿಪ್ಟಿನವರು ದಾಸರನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲರ ನರಳುವಿಕೆಯನ್ನು ಕೇಳಿ, ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.
EXO 6:6 “ಆದ್ದರಿಂದ ಇಸ್ರಾಯೇಲರಿಗೆ, ‘ನಾನೇ ಯೆಹೋವ ದೇವರು. ನಾನು ನಿಮ್ಮನ್ನು ಈಜಿಪ್ಟಿನ ಬಿಟ್ಟಿಕೆಲಸದಿಂದ ಅವರಿಗೆ ದಾಸತ್ವದಲ್ಲಿರುವುದರಿಂದ, ನಾನು ಚಾಚಿದ ಬಾಹುವಿನಿಂದಲೂ ಬಲವಾದ ನ್ಯಾಯತೀರ್ಪುಗಳಿಂದಲೂ ನಿಮ್ಮನ್ನು ಬಿಡಿಸುವೆನು.
EXO 6:7 ನಿಮ್ಮನ್ನು ನನ್ನ ಜನರನ್ನಾಗಿ ತೆಗೆದುಕೊಂಡು ನಿಮಗೆ ದೇವರಾಗಿರುವೆನು. ಈಜಿಪ್ಟಿನ ಬಿಟ್ಟಿಕೆಲಸಗಳೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ, ಯೆಹೋವ ದೇವರಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವುದು.
EXO 6:8 ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕೊಡುವೆನೆಂದು ಕೈಯನ್ನೆತ್ತಿ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಬರಮಾಡಿ, ಅದನ್ನು ನಿಮಗೆ ಸೊತ್ತಾಗಿ ಕೊಡುವೆನೆಂದು ಹೇಳಿದ ಯೆಹೋವ ದೇವರು ನಾನೇ,’ ಎಂದು ಹೇಳು,” ಎಂದರು.
EXO 6:9 ಮೋಶೆಯು ಇಸ್ರಾಯೇಲರಿಗೆ ಹಾಗೆ ಹೇಳಿದಾಗ, ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.
EXO 6:10 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
EXO 6:11 “ನೀನು ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಹೋಗಿ, ಅವನು ಇಸ್ರಾಯೇಲರನ್ನು ತನ್ನ ದೇಶದಿಂದ ಹೊರಗೆ ಕಳುಹಿಸುವಂತೆ ಅವನ ಸಂಗಡ ಮಾತನಾಡು,” ಎಂದರು.
EXO 6:12 ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ, “ಇಗೋ, ಇಸ್ರಾಯೇಲರೇ ನನ್ನ ಮಾತನ್ನು ಕೇಳದಿರುವಲ್ಲಿ, ತೊದಲು ಮಾತನಾಡುವ ನನ್ನ ಮಾತನ್ನು ಫರೋಹನು ಕೇಳುವುದು ಹೇಗೆ?” ಎಂದನು.
EXO 6:13 ಯೆಹೋವ ದೇವರು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, ಇಸ್ರಾಯೇಲರನ್ನು ಈಜಿಪ್ಟಿನ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾಯೇಲರ ಬಳಿಗೂ ಅರಸನಾದ ಫರೋಹನ ಬಳಿಗೂ ಹೋಗಬೇಕೆಂದು ಅವರಿಗೆ ಆಜ್ಞಾಪಿಸಿದರು.
EXO 6:14 ಇಸ್ರಾಯೇಲ್ ಗೋತ್ರಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಜೇಷ್ಠ ಪುತ್ರನಾದ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ. ಇವರು ರೂಬೇನನ ಗೋತ್ರಗಳ ಮೂಲ ಪುರುಷರು.
EXO 6:15 ಸಿಮೆಯೋನನ ಪುತ್ರರು: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ. ಇವು ಸಿಮೆಯೋನನ ಗೋತ್ರಗಳು.
EXO 6:16 ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್, ಮೆರಾರೀ. ಲೇವಿಯು ನೂರಮೂವತ್ತೇಳು ವರ್ಷಗಳವರೆಗೆ ಬದುಕಿದ್ದನು.
EXO 6:17 ಗೇರ್ಷೋನನ ಪುತ್ರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಮತ್ತು ಶಿಮ್ಮೀಯರು.
EXO 6:18 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೊಹಾತನು ಜೀವಿಸಿದ ವರ್ಷಗಳು ನೂರಮೂವತ್ತಮೂರು.
EXO 6:19 ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ವಂಶಾವಳಿಗಳ ಪ್ರಕಾರ ಇವೇ ಲೇವಿಯ ಗೋತ್ರಗಳು.
EXO 6:20 ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆದಳನ್ನು ಮದುವೆಯಾದನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರಮೂವತ್ತೇಳು ವರ್ಷಗಳು.
EXO 6:21 ಇಚ್ಹಾರನ ಪುತ್ರರು: ಕೋರಹ, ನೆಫೆಗ್ ಮತ್ತು ಜಿಕ್ರಿ.
EXO 6:22 ಉಜ್ಜೀಯೇಲನ ಪುತ್ರರು: ಮೀಶಾಯೇಲ್, ಎಲ್ಜಾಫಾನ್ ಮತ್ತು ಸಿತ್ರಿ.
EXO 6:23 ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬಳನ್ನು ಮದುವೆಯಾದನು. ಆಕೆಯು ಅವನಿಗೆ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಇವರನ್ನು ಹೆತ್ತಳು.
EXO 6:24 ಕೋರಹನ ಪುತ್ರರು: ಅಸ್ಸೀರ್ ಎಲ್ಕಾನಾ, ಅಬೀಯಾಸಾಫ್ ಎಂಬುವರು. ಇವು ಕೋರಹೀಯರ ಗೋತ್ರಗಳು.
EXO 6:25 ಆರೋನನ ಮಗ ಎಲಿಯಾಜರನು ಪೂಟಿಯೇಲನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಯಾದನು. ಆಕೆಯು ಅವನಿಗೆ ಫೀನೆಹಾಸನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿಯರ ಗೋತ್ರಗಳ ಮುಖ್ಯಸ್ಥರು.
EXO 6:26 ಆರೋನ್, ಮೋಶೆ ಇವರಿಗೆ, “ಇಸ್ರಾಯೇಲರನ್ನು ಅವರವರ ಗೋತ್ರಗಳಿಗನುಸಾರವಾಗಿ ಈಜಿಪ್ಟಿನ ಒಳಗಿಂದ ಹೊರಗೆ ಬರಮಾಡಬೇಕು,” ಎಂದು ಯೆಹೋವ ದೇವರು ಹೇಳಿದ್ದರು.
EXO 6:27 ಆದುದರಿಂದ ಮೋಶೆ, ಆರೋನರೂ ಇಸ್ರಾಯೇಲರನ್ನು ಹೊರಗೆ ತರುವುದಕ್ಕಾಗಿ ಈಜಿಪ್ಟಿನ ಅರಸನಾದ ಫರೋಹನ ಸಂಗಡ ಮಾತನಾಡಿದರು.
EXO 6:28 ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತನಾಡಿದರು.
EXO 6:29 ಅವರು ಮೋಶೆಗೆ, “ನಾನೇ ಯೆಹೋವ ದೇವರು. ನಾನು ನಿನಗೆ ಹೇಳುವುದನ್ನೆಲ್ಲಾ ಈಜಿಪ್ಟಿನ ಅರಸನಾದ ಫರೋಹನಿಗೆ ತಿಳಿಸು,” ಎಂದರು.
EXO 6:30 ಅದಕ್ಕೆ ಮೋಶೆಯು ಯೆಹೋವ ದೇವರ ಮುಂದೆ, “ಇಗೋ, ನಾನು ತೊದಲು ಮಾತನಾಡುವವನು. ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.
EXO 7:1 ಆಗ ಯೆಹೋವ ದೇವರು ಮೋಶೆಗೆ, “ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ. ನಿನ್ನ ಸಹೋದರನಾದ ಆರೋನನು ನಿನ್ನ ಪ್ರವಾದಿಯಾಗಿರುವನು.
EXO 7:2 ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಮಾತನಾಡಬೇಕು. ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು.
EXO 7:3 ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ, ನನ್ನ ಸೂಚಕಕಾರ್ಯಗಳನ್ನೂ, ನನ್ನ ಅದ್ಭುತಕಾರ್ಯಗಳನ್ನೂ ಈಜಿಪ್ಟ್ ದೇಶದಲ್ಲಿ ಹೆಚ್ಚಿಸುವೆನು.
EXO 7:4 ಆದರೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆದರೆ ನನ್ನ ಕೈಯನ್ನು ಈಜಿಪ್ಟಿನ ಮೇಲೆ ಇಟ್ಟು, ದೊಡ್ಡ ನ್ಯಾಯ ತೀರ್ಪುಗಳಿಂದ ನನ್ನ ಜನರಾದ ಇಸ್ರಾಯೇಲರನ್ನೂ, ಅವರ ಸೈನ್ಯಗಳನ್ನೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡುವೆನು.
EXO 7:5 ನಾನು ಈಜಿಪ್ಟಿನ ಮೇಲೆ ನನ್ನ ಕೈಯನ್ನಿಟ್ಟು, ಅವರೊಳಗಿಂದ ಇಸ್ರಾಯೇಲರನ್ನು ಹೊರಗೆ ಬರಮಾಡಿದಾಗ, ನಾನು ಯೆಹೋವ ದೇವರೆಂದು ಈಜಿಪ್ಟಿನವರಿಗೆ ತಿಳಿದುಬರುವುದು,” ಎಂದು ಹೇಳಿದರು.
EXO 7:6 ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.
EXO 7:7 ಅವರು ಫರೋಹನ ಮುಂದೆ ಮಾತನಾಡುವಾಗ ಮೋಶೆಯು ಎಂಬತ್ತು ವರ್ಷದವನೂ ಆರೋನನು ಎಂಬತ್ತಮೂರು ವರ್ಷದವನೂ ಆಗಿದ್ದನು.
EXO 7:8 ಆಗ ಯೆಹೋವ ದೇವರು ಮಾತನಾಡಿ ಮೋಶೆಗೂ ಆರೋನನಿಗೂ,
EXO 7:9 “ಫರೋಹನು ನಿಮಗೆ, ‘ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರಿ,’ ಎಂದಾಗ ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಫರೋಹನ ಮುಂದೆ ಬಿಸಾಡು,’ ಎಂದು ಹೇಳು, ಆಗ ಅದು ಸರ್ಪವಾಗುವುದು,” ಎಂದು ಹೇಳಿದರು.
EXO 7:10 ಆಗ ಮೋಶೆಯೂ ಆರೋನನೂ ಫರೋಹನ ಬಳಿಗೆ ಹೋಗಿ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹ ಮತ್ತು ಅವನ ಸೇವಕರ ಮುಂದೆಯೂ ಬಿಸಾಡಿದಾಗ, ಅದು ಸರ್ಪವಾಯಿತು.
EXO 7:11 ಫರೋಹನು ಜ್ಞಾನಿಗಳನ್ನೂ, ಮಂತ್ರವಾದಿಗಳನ್ನೂ ಕರೆಸಿದನು. ಆಗ ಈಜಿಪ್ಟಿನ ಮಂತ್ರಗಾರರೂ ಸಹ ತಮ್ಮ ಮಾಟಗಳಿಂದ ಹಾಗೆಯೇ ಮಾಡಿದರು.
EXO 7:12 ಅವರು ತಮ್ಮ ತಮ್ಮ ಕೋಲುಗಳನ್ನು ಬಿಸಾಡಿದಾಗ, ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
EXO 7:13 ಯೆಹೋವ ದೇವರು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತನ್ನು ಕೇಳಲಿಲ್ಲ.
EXO 7:14 ಆಗ ಯೆಹೋವ ದೇವರು ಮೋಶೆಗೆ, “ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ.
EXO 7:15 ಬೆಳಿಗ್ಗೆ ಫರೋಹನ ಬಳಿಗೆ ಹೋಗು. ಅವನು ಹೊರಗೆ ನದಿಯ ಬಳಿಗೆ ಹೋಗುವನು. ಆಗ ನೈಲ್ ನದಿ ತೀರದಲ್ಲಿ ಅವನೆದುರಿಗೆ ನಿಂತುಕೊಂಡು, ಸರ್ಪವಾಗಿ ಮಾಡಿದ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡಿರು.
EXO 7:16 ಅವನಿಗೆ ನೀನು, ‘ಹಿಬ್ರಿಯರ ದೇವರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ಮರುಭೂಮಿಯಲ್ಲಿ ನನಗೆ ಆರಾಧನೆ ಮಾಡುವ ಹಾಗೆ ನನ್ನ ಜನರನ್ನು ಕಳುಹಿಸು, ಎಂದು ಅವರು ಹೇಳಿದ್ದಾರೆ. ಆದರೆ ಇಗೋ, ಇಂದಿನವರೆಗೂ ನೀನು ಕೇಳಲಿಲ್ಲ.
EXO 7:17 ಆದುದರಿಂದ ಯೆಹೋವ ದೇವರು ಮತ್ತೆ ನಿನಗೆ ಹೇಳುವುದೇನೆಂದರೆ: ನಾನೇ ಯೆಹೋವ ದೇವರೆಂದು ನೀನು ಇದರಿಂದ ತಿಳಿದುಕೊಳ್ಳುವೆ. ನನ್ನ ಕೈಯಲ್ಲಿರುವ ಕೋಲಿನಿಂದ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯುವೆನು, ಆಗ ಅದು ರಕ್ತವಾಗುವುದು.
EXO 7:18 ನದಿಯಲ್ಲಿರುವ ಮೀನುಗಳು ಸಾಯುವುವು. ನೈಲ್ ನದಿಯು ಹೊಲಸಾಗಿ ನಾರುವುದು. ಈಜಿಪ್ಟಿನವರು ನದಿಯ ನೀರನ್ನು ಕುಡಿಯುವುದಕ್ಕೆ ಅಸಹ್ಯಪಡುವರು,’ ಎಂದು ಹೇಳು,” ಎಂದರು.
EXO 7:19 ಅನಂತರ ಯೆಹೋವ ದೇವರು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟಿನ ನೀರಿನ ಮೇಲೆಯೂ ಅದರ ನದಿಗಳ ಮೇಲೆಯೂ ಕೊಳಗಳ ಮೇಲೆಯೂ ಅದರ ಕಾಲುವೆ ಮೇಲೆಯೂ ಅದರ ಕೆರೆಗಳ ಮೇಲೆಯೂ ಕೈಚಾಚು,’ ಎಂದು ಹೇಳು. ಆಗ ಅವು ರಕ್ತವಾಗುವುವು. ಈಜಿಪ್ಟ್ ದೇಶದಲ್ಲಿ ನೀರಿರುವ ಮರದ ತೊಟ್ಟಿಗಳಲ್ಲಾಗಲೀ, ಕಲ್ಲಿನ ಪಾತ್ರೆಗಳಲ್ಲಾಗಲೀ ರಕ್ತವಿರುವುದು,” ಎಂದು ಹೇಳಿದರು.
EXO 7:20 ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಫರೋಹನ ಮುಂದೆಯೂ, ಅವನ ಸೇವಕರ ಮುಂದೆಯೂ ಹೊಡೆದನು. ಆಗ ನದಿಯಲ್ಲಿದ್ದ ನೀರೆಲ್ಲಾ ರಕ್ತವಾಯಿತು.
EXO 7:21 ನದಿಯಲ್ಲಿದ್ದ ಮೀನುಗಳು ಸತ್ತವು, ನದಿಯು ದುರ್ವಾಸನೆಗೊಂಡಿತು. ಈಜಿಪ್ಟಿನವರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ರಕ್ತವಿತ್ತು.
EXO 7:22 ಆದರೆ ಈಜಿಪ್ಟಿನ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
EXO 7:23 ಫರೋಹನು ತಿರುಗಿಕೊಂಡು ತನ್ನ ಅರಮನೆಗೆ ಹಿಂದಿರುಗಿದನು. ಅವನು ಈ ಅದ್ಭುತಕ್ಕೂ ಗಮನಕೊಡಲಿಲ್ಲ.
EXO 7:24 ಆದರೆ ಈಜಿಪ್ಟಿನವರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ, ಕುಡಿಯುವ ನೀರಿಗಾಗಿ ನೈಲ್ ನದಿಯ ಸುತ್ತಲೂ ಅಗೆದರು.
EXO 7:25 ಯೆಹೋವ ದೇವರು ನೈಲ್ ನದಿಯನ್ನು ರಕ್ತವನ್ನಾಗಿ ಮಾಡಿ ಏಳು ದಿನಗಳು ಕಳೆದವು.
EXO 8:1 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.
EXO 8:2 ಕಳುಹಿಸುವುದಕ್ಕೆ ನಿರಾಕರಿಸಿದರೆ, ನಾನು ನಿನ್ನ ದೇಶವನ್ನೆಲ್ಲಾ ಕಪ್ಪೆಗಳಿಂದ ಉಪದ್ರವ ತರುವೆನು.
EXO 8:3 ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ನಿನ್ನ ಅರಮನೆಯಲ್ಲಿಯೂ ನೀನು ಮಲಗುವ ಕೊಠಡಿಯಲ್ಲಿಯೂ ನಿನ್ನ ಹಾಸಿಗೆಯ ಮೇಲೂ ನಿನ್ನ ಸೇವಕರ ಮನೆಗಳಲ್ಲಿಯೂ ನಿನ್ನ ಜನರ ಮೇಲೆಯೂ ನಿನ್ನ ಒಲೆಗಳಲ್ಲಿಯೂ ನಿನ್ನ ಹಿಟ್ಟು ನಾದುವ ಹರಿವಾಣಗಳಲ್ಲಿಯೂ ಕಾಣಿಸಿಕೊಳ್ಳುವುವು.
EXO 8:4 ನಿನ್ನ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಎಲ್ಲಾ ಅಧಿಕಾರಿಗಳ ಮೇಲೆಯೂ ಕಪ್ಪೆಗಳು ಏರಿ ಬರುವುವು,’ ಎಂದು ಹೇಳು,” ಎಂದರು.
EXO 8:5 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನೀನು ಕೋಲನ್ನು ಹಿಡಿದುಕೊಂಡು ನದಿ, ಕಾಲುವೆ, ಕೆರೆಗಳ ಮೇಲೆಲ್ಲಾ ನಿನ್ನ ಕೈಚಾಚಿ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಬರುವಂತೆ ಮಾಡು,’ ಎಂದು ಹೇಳಬೇಕು,” ಎಂದರು.
EXO 8:6 ಆರೋನನು ಈಜಿಪ್ಟಿನ ನೀರಿನ ಮೇಲೆ ಕೈಚಾಚಿದಾಗ, ಕಪ್ಪೆಗಳು ಏರಿಬಂದು ಈಜಿಪ್ಟ್ ದೇಶವನ್ನು ಮುತ್ತಿಕೊಂಡವು.
EXO 8:7 ಆದರೆ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿ, ಕಪ್ಪೆಗಳನ್ನು ಈಜಿಪ್ಟ್ ದೇಶದ ಮೇಲೆ ಬರಮಾಡಿದರು.
EXO 8:8 ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಯೆಹೋವ ದೇವರನ್ನು ಬೇಡಿಕೊಂಡು ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಯೆಹೋವ ದೇವರಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು,” ಎಂದನು.
EXO 8:9 ಅದಕ್ಕೆ ಮೋಶೆ, “ಈ ಕಪ್ಪೆಗಳು ತಮ್ಮ ಬಳಿಯಿಂದಲೂ ನಿನ್ನ ಮನೆಗಳಿಂದಲೂ ತೊಲಗಿ ಹೋಗಿ, ನೈಲ್ ನದಿಯಲ್ಲಿ ಮಾತ್ರ ಉಳಿಯುವಂತೆ ನಾನು ಯಾವಾಗ ನಿನ್ನ ಪರವಾಗಿ, ನಿನ್ನ ಪ್ರಜಾ ಪರಿವಾರದ ಪರವಾಗಿ ಪ್ರಾರ್ಥನೆ ಸಲ್ಲಿಸಬೇಕು? ನಿನಗೆ ಸರಿದೋರಿದಂತೆ ನೀನೇ ಅದಕ್ಕೊಂದು ಕಾಲವನ್ನು ನಿಗದಿಮಾಡಬೇಕು,” ಎಂದು ಫರೋಹನನ್ನು ವಿನಂತಿಸಿದನು.
EXO 8:10 ಫರೋಹನು ಮೋಶೆಗೆ, “ನಾಳೆ,” ಎಂದನು. ಆಗ ಮೋಶೆಯು, “ನಮ್ಮ ದೇವರಾಗಿರುವ ಯೆಹೋವ ದೇವರ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ನಿನ್ನ ಮಾತಿನ ಪ್ರಕಾರ ಆಗಲಿ.
EXO 8:11 ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ, ನೈಲ್ ನದಿಯಲ್ಲಿ ಮಾತ್ರ ಇರುವುವು,” ಎಂದನು.
EXO 8:12 ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ, ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ಕಾಟದ ಬಗ್ಗೆ ಯೆಹೋವ ದೇವರಿಗೆ ಮೊರೆಯಿಟ್ಟನು.
EXO 8:13 ಮೋಶೆ ಹೇಳಿದ ಪ್ರಕಾರ ಯೆಹೋವ ದೇವರು ಮಾಡಿದರು. ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು.
EXO 8:14 ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.
EXO 8:15 ಆದರೆ ಫರೋಹನು ತನಗೆ ಉಪಶಮನವಾಯಿತೆಂದು ನೋಡಿದಾಗ, ಯೆಹೋವ ದೇವರು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣ ಮಾಡಿಕೊಂಡು, ಮೋಶೆ ಮತ್ತು ಆರೋನರ ಮಾತನ್ನು ಕೇಳಲಿಲ್ಲ.
EXO 8:16 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನೀನು ಕೋಲನ್ನು ಚಾಚಿ ಭೂಮಿಯ ಧೂಳನ್ನು ಹೊಡೆ, ಆಗ ಈಜಿಪ್ಟ್ ದೇಶದಲ್ಲೆಲ್ಲಾ ಧೂಳು ಹೇನುಗಳಾಗುವುವು,’ ಎಂದು ಹೇಳು,” ಎಂದರು.
EXO 8:17 ಅವರು ಹಾಗೆಯೇ ಮಾಡಲಾರಂಭಿಸಿದರು. ಆರೋನನು ಕೋಲನ್ನು ಕೈಯಲ್ಲಿ ಹಿಡಿದು, ಅದನ್ನು ಚಾಚಿ, ಭೂಮಿಯ ಧೂಳನ್ನು ಹೊಡೆದನು. ಆಗ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹೇನುಗಳಾದವು. ಈಜಿಪ್ಟ್ ದೇಶದಲ್ಲೆಲ್ಲಾ ನೆಲದ ಧೂಳು ಹೇನುಗಳಾದವು
EXO 8:18 ಮಂತ್ರಗಾರರು ಹೇನುಗಳನ್ನು ಬರಮಾಡುವುದಕ್ಕೆ ತಮ್ಮ ಮಾಟಗಳಿಂದ ಪ್ರಯತ್ನಿಸಿದರು, ಆದರೆ ಸಾಧ್ಯವಾಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹಾಗೆಯೇ ಇದ್ದವು.
EXO 8:19 ಆಗ ಮಂತ್ರಗಾರರು ಫರೋಹನಿಗೆ, “ಇದು ದೇವರ ಕೈಕೆಲಸವೇ ಸರಿ,” ಎಂದರು. ಆದರೆ ಯೆಹೋವ ದೇವರು ಹೇಳಿದಂತೆ ಫರೋಹನ ಹೃದಯ ಕಠಿಣವಾಯಿತು. ಆದ್ದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.
EXO 8:20 ಆಗ ಯೆಹೋವ ದೇವರು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ. ಅವನು ಹೊರಗೆ ನದಿಯ ಬಳಿಗೆ ಬರುತ್ತಾನೆ. ನೀನು ಅವನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜನರು ನನ್ನನ್ನು ಆರಾಧಿಸುವಂತೆ ಅವರನ್ನು ಕಳುಹಿಸು.
EXO 8:21 ನೀನು ನನ್ನ ಜನರನ್ನು ಕಳುಹಿಸದೆ ಹೋದರೆ, ನಾನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಮನೆಗಳಿಗೂ ನೊಣಗಳನ್ನು ಕಳುಹಿಸುವೆನು. ಈಜಿಪ್ಟಿನವರ ಮನೆಗಳೂ, ಅವರು ವಾಸವಾಗಿರುವ ಭೂಮಿಯೂ ನೊಣಗಳಿಂದ ತುಂಬಿರುವುವು.
EXO 8:22 “ ‘ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವಂತೆ, ನನ್ನ ಜನರು ವಾಸಿಸುವ ಗೋಷೆನ್ ಪ್ರಾಂತದಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.
EXO 8:23 ನನ್ನ ಜನರನ್ನೂ, ನಿನ್ನ ಜನರನ್ನೂ ವಿಂಗಡಿಸುವೆನು. ನಾಳೆ ಈ ಸೂಚಕಕಾರ್ಯ ಕಾಣುವುದು,’ ಎಂದು ಹೇಳು,” ಎಂದರು.
EXO 8:24 ಯೆಹೋವ ದೇವರು ಹಾಗೆಯೇ ಮಾಡಲಾರಂಭಿಸಿದರು. ಬಾಧಿಸುವ ನೊಣಗಳು ಫರೋಹನ ಮನೆಯಲ್ಲಿಯೂ ಅವನ ಸೇವಕರ ಮನೆಗಳಲ್ಲಿಯೂ ಸಮಸ್ತ ಈಜಿಪ್ಟ್ ದೇಶದಲ್ಲಿಯೂ ಬಂದವು. ನೊಣಗಳಿಂದ ದೇಶವು ಹಾಳಾಗಿ ಹೋಯಿತು.
EXO 8:25 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಹೋಗಿ ಈ ದೇಶದಲ್ಲಿಯೇ ನಿಮ್ಮ ದೇವರಿಗೆ ಯಜ್ಞವನ್ನರ್ಪಿಸಿರಿ,” ಎಂದನು.
EXO 8:26 ಆದರೆ ಮೋಶೆಯು ಫರೋಹನಿಗೆ, “ಹಾಗೆ ಮಾಡುವುದು ಯುಕ್ತವಲ್ಲ. ಏಕೆಂದರೆ ನಮ್ಮ ಯೆಹೋವ ದೇವರಾದ ದೇವರಿಗೆ ಯಜ್ಞವನ್ನರ್ಪಿಸುವುದು ಈಜಿಪ್ಟಿನವರಿಗೆ ಅಸಹ್ಯವಾಗಿರುವುದು. ಈಜಿಪ್ಟಿನವರಿಗೆ ಅಸಹ್ಯವಾಗಿರುವುದನ್ನು ಅವರ ಕಣ್ಣೆದುರಿಗೆ ಅರ್ಪಿಸಿದರೆ, ಅವರು ನಮ್ಮ ಮೇಲೆ ಕಲ್ಲೆಸೆದಾರು.
EXO 8:27 ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವ ದೇವರಿಗೆ ಅವರ ಅಪ್ಪಣೆಯಂತೆ ಯಜ್ಞಮಾಡುವೆವು,” ಎಂದು ಹೇಳಿದನು.
EXO 8:28 ಅದಕ್ಕೆ ಫರೋಹನು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರಿಗೆ ಮರುಭೂಮಿಯಲ್ಲಿ ಯಜ್ಞವನ್ನರ್ಪಿಸುವಂತೆ ನಿಮ್ಮನ್ನು ಕಳುಹಿಸುತ್ತೇನೆ. ಆದರೆ ದೂರ ಹೋಗಬೇಡಿರಿ, ನನಗೋಸ್ಕರ ಪ್ರಾರ್ಥನೆಮಾಡಿರಿ,” ಎಂದನು.
EXO 8:29 ಆಗ ಮೋಶೆಯು ಅವನಿಗೆ, “ನಾನು ನಿನ್ನನ್ನು ಬಿಟ್ಟು ಹೋಗಿ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ, ಅವನ ಸೇವಕರನ್ನೂ, ಅವರ ಜನರನ್ನೂ ಬಿಟ್ಟು ಹೋಗುವುವು. ಆದರೆ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುವುದಕ್ಕೆ ಫರೋಹನಾದ ನೀನು ಜನರನ್ನು ಕಳುಹಿಸದೆ ಇನ್ನು ಮೇಲೆ ವಂಚಿಸಬಾರದು,” ಎಂದನು.
EXO 8:30 ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಹೋಗಿ, ಯೆಹೋವ ದೇವರನ್ನು ಬೇಡಿಕೊಂಡನು.
EXO 8:31 ಮೋಶೆಯು ಕೇಳಿದಂತೆಯೇ ಯೆಹೋವ ದೇವರು ಮಾಡಿದರು. ಅವರು ಫರೋಹನಿಂದಲೂ ಅವನ ಸೇವಕರಿಂದಲೂ, ಅವರ ಜನರಿಂದಲೂ ನೊಣಗಳನ್ನು ತೆಗೆದುಹಾಕಿದರು. ಅಲ್ಲಿ ಒಂದಾದರೂ ಉಳಿಯಲಿಲ್ಲ.
EXO 8:32 ಆದರೆ ಫರೋಹನು ಆ ಸಮಯದಲ್ಲಿಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡಿದ್ದಲ್ಲದೆ, ಜನರನ್ನೂ ಹೋಗಗೊಡಿಸಲಿಲ್ಲ.
EXO 9:1 ಅನಂತರ ಯೆಹೋವ ದೇವರು ಮೋಶೆಗೆ ಹೇಳಿದ್ದೇನಂದರೆ, “ಫರೋಹನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.”
EXO 9:2 ಅವರನ್ನು ಕಳುಹಿಸುವುದಕ್ಕೆ ನಿರಾಕರಿಸಿ ಇನ್ನೂ ತಡೆದರೆ,
EXO 9:3 ಯೆಹೋವ ದೇವರ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವುದು. ಕುದುರೆ, ಕತ್ತೆ, ಒಂಟೆ, ಎತ್ತು, ಕುರಿ, ಆಡು ಇವುಗಳ ಮೇಲೆ ಕಠಿಣವಾದ ಉಪದ್ರವ ಬರುವುದು.
EXO 9:4 ಯೆಹೋವ ದೇವರು ಇಸ್ರಾಯೇಲರ ಪಶುಗಳನ್ನೂ ಈಜಿಪ್ಟಿನವರ ಪಶುಗಳನ್ನೂ ವಿಂಗಡಿಸುವರು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯುವುದಿಲ್ಲ,’ ” ಎಂದರು.
EXO 9:5 ಇದಲ್ಲದೆ ಯೆಹೋವ ದೇವರು, “ನಿರ್ದಿಷ್ಟವಾದ ಒಂದು ಸಮಯವನ್ನು ನೇಮಿಸಿ, ನಾಳೆ ಯೆಹೋವ ದೇವರು ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವರು, ಎಂದು ಹೇಳು,” ಎಂದರು.
EXO 9:6 ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.
EXO 9:7 ಫರೋಹನು ಆಳುಗಳನ್ನು ಕಳುಹಿಸಿ ನೋಡಿದಾಗ, ಇಸ್ರಾಯೇಲರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದುದರಿಂದ ಅವನು ಜನರನ್ನು ಹೋಗಗೊಡಿಸಲಿಲ್ಲ.
EXO 9:8 ಆಗ ಯೆಹೋವ ದೇವರು ಮೋಶೆ ಆರೋನರಿಗೆ, “ಕೈತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ. ಅದನ್ನು ಮೋಶೆಯು ಫರೋಹನ ಮುಂದೆ ಆಕಾಶದ ಕಡೆಗೆ ತೂರಲಿ.
EXO 9:9 ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು.
EXO 9:10 ಆಗ ಅವರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗುವಂಥ ಬೊಕ್ಕೆಗಳಾದವು.
EXO 9:11 ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು.
EXO 9:12 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದರು. ಯೆಹೋವ ದೇವರು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
EXO 9:13 ಯೆಹೋವ ದೇವರು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಅವರು ಆರಾಧಿಸುವ ಹಾಗೆ ನನ್ನ ಜನರನ್ನು ಕಳುಹಿಸು.
EXO 9:14 ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು.
EXO 9:15 ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.
EXO 9:16 ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.
EXO 9:17 ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?
EXO 9:18 ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ಮಹಾ ಕಠಿಣವಾದ ಆಲಿಕಲ್ಲಿನ ಮಳೆಯನ್ನು ಬೀಳುವಂತೆ ಮಾಡುವೆನು. ಅಂಥದ್ದು ಈಜಿಪ್ಟಿನಲ್ಲಿ, ಅದರ ರಾಜ್ಯವು ಸ್ಥಾಪಿತವಾದಂದಿನಿಂದ ಇಲ್ಲಿಯವರೆಗೂ ಆಗಿಲ್ಲ.
EXO 9:19 ಹೀಗಿರುವುದರಿಂದ ಯಾರನ್ನಾದರೂ ಕಳುಹಿಸಿ ನಿನ್ನ ಪಶುಗಳನ್ನೂ, ಹೊಲದಲ್ಲಿ ನಿನಗಿರುವವುಗಳನ್ನೂ ಭದ್ರಪಡಿಸು. ಏಕೆಂದರೆ ಮನೆಗಳಿಗೆ ಬಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಆಲಿಕಲ್ಲಿನ ಮಳೆಯು ಸುರಿದು ಕೊಲ್ಲುವುದು,’ ಎಂದು ಹೇಳು,” ಎಂದರು.
EXO 9:20 ಆಗ ಫರೋಹನ ಸೇವಕರಲ್ಲಿ ಯೆಹೋವ ದೇವರ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿ ಬರುವಂತೆ ಮಾಡಿದರು.
EXO 9:21 ಆದರೆ ಯೆಹೋವ ದೇವರ ವಾಕ್ಯಕ್ಕೆ ಮನಸ್ಸು ಕೊಡದವರು, ತಮ್ಮ ದಾಸರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
EXO 9:22 ಆಗ ಯೆಹೋವ ದೇವರು ಮೋಶೆಗೆ, “ಆಕಾಶದ ಕಡೆಗೆ ನಿನ್ನ ಕೈಚಾಚು. ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಈಜಿಪ್ಟ್ ದೇಶದಲ್ಲಿ ಇರುವ ಎಲ್ಲಾ ಹೊಲದ ಬೆಳೆಯ ಮೇಲೆಯೂ ಆಲಿಕಲ್ಲಿನ ಮಳೆ ಸುರಿಯುವುದು,” ಎಂದು ಪ್ರಕಟಪಡಿಸಿದರು.
EXO 9:23 ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು.
EXO 9:24 ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ.
EXO 9:25 ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು.
EXO 9:26 ಇಸ್ರಾಯೇಲರು ಇದ್ದ ಗೋಷೆನ್ ಪ್ರಾಂತದಲ್ಲಿ ಆಲಿಕಲ್ಲಿನ ಮಳೆಯು ಇರಲಿಲ್ಲ.
EXO 9:27 ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು.
EXO 9:28 ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.
EXO 9:29 ಮೋಶೆಯು ಅವನಿಗೆ, “ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೇ, ಯೆಹೋವ ದೇವರ ಕಡೆಗೆ ನನ್ನ ಕೈಗಳನ್ನು ಚಾಚಿ ಪ್ರಾರ್ಥಿಸುವೆನು. ಭೂಮಿಯು ಯೆಹೋವ ದೇವರದೇ ಎಂದು ನೀನು ತಿಳಿದುಕೊಳ್ಳುವಂತೆ ಗುಡುಗುಗಳು ನಿಂತುಹೋಗುವುವು. ಆಲಿಕಲ್ಲಿನ ಮಳೆಯು ಇನ್ನು ಇರದು.
EXO 9:30 ಆದರೂ ನೀನು ಮತ್ತು ನಿನ್ನ ಅಧಿಕಾರಿಗಳು ದೇವರಾದ ಯೆಹೋವ ದೇವರಿಗೆ ಭಯಪಡುವುದಿಲ್ಲವೆಂದು ನಾನು ಬಲ್ಲೆನು,” ಎಂದನು.
EXO 9:31 ಜವೆಗೋಧಿಗೆ ತೆನೆಯೂ ಅಗಸೆಯ ಮೊಗ್ಗುಗಳೂ ಇದ್ದುದರಿಂದ ಅಗಸೆಯೂ ಜವೆಗೋಧಿಯೂ ಹಾಳಾದವು.
EXO 9:32 ಆದರೆ ಗೋಧಿ ಮತ್ತು ಕಡಲೆ ಬೆಳೆದಿಲ್ಲವಾದ್ದರಿಂದ ಹಾಳಾಗಲಿಲ್ಲ.
EXO 9:33 ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.
EXO 9:34 ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
EXO 9:35 ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ.
EXO 10:1 ತರುವಾಯ ಯೆಹೋವ ದೇವರು ಮೋಶೆಗೆ, “ಫರೋಹನ ಬಳಿಗೆ ಹೋಗು, ಏಕೆಂದರೆ ನಾನು ನನ್ನ ಅದ್ಭುತ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸುವುದಕ್ಕಾಗಿ ಅವನ ಹೃದಯವನ್ನೂ ಅವನ ಅಧಿಕಾರಿಗಳ ಹೃದಯಗಳನ್ನೂ ಕಠಿಣ ಮಾಡಿದ್ದೇನೆ.
EXO 10:2 ಇದಲ್ಲದೆ ನೀನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ನಾನು ಈಜಿಪ್ಟಿನಲ್ಲಿ ಏನು ಮಾಡಿದೆನೆಂದೂ, ನಾನೇ ಯೆಹೋವ ದೇವರೆಂದೂ ನೀವು ತಿಳಿದುಕೊಳ್ಳುವಂತೆ ನಾನು ಅವರ ಮಧ್ಯದಲ್ಲಿ ಮಾಡಿದ ಅದ್ಭುತ ಸೂಚಕಕಾರ್ಯಗಳನ್ನು ತಿಳಿಸಬೇಕು,” ಎಂದು ಹೇಳಿದರು.
EXO 10:3 ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ, “ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನನ್ನ ಸನ್ನಿಧಿಯಲ್ಲಿ ನೀನು ಎಷ್ಟು ಕಾಲ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಹೋಗಗೊಡಿಸು.
EXO 10:4 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ನಾಳೆಯೇ ನಾನು ನಿನ್ನ ರಾಜ್ಯದಲ್ಲಿ ಮಿಡತೆಗಳನ್ನು ಬರಮಾಡುವೆನು.
EXO 10:5 ಒಬ್ಬನು ಭೂಮಿಯನ್ನು ಕಾಣುವುದಕ್ಕಾಗದಷ್ಟು ಅವು ಭೂಮಿಯನ್ನೆಲ್ಲಾ ಮುಚ್ಚಿಕೊಳ್ಳುವುವು. ಇದಲ್ಲದೆ ಅವು ಆಲಿಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವುದೆಲ್ಲವನ್ನೂ, ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡುವುವು.
EXO 10:6 ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿಕೊಳ್ಳುವುವು. ನಿನ್ನ ತಂದೆ ಅಲ್ಲದೆ ನಿನ್ನ ತಂದೆಯ ತಂದೆಗಳಾಗಲಿ, ಭೂಮಿಯ ಮೇಲೆ ಇದ್ದಂದಿನಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಯಾರೂ ನೋಡಿಲ್ಲ,’ ” ಎಂದು ಮೋಶೆ ಹೇಳಿ ಫರೋಹನ ಬಳಿಯಿಂದ ಹೊರಟುಹೋದನು.
EXO 10:7 ಫರೋಹನ ಅಧಿಕಾರಿಗಳು ಅವನಿಗೆ, “ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವಂತೆ ಅವರನ್ನು ಕಳುಹಿಸಿಬಿಡು. ಈಜಿಪ್ಟ್ ನಾಶವಾಯಿತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ?” ಎಂದರು.
EXO 10:8 ಆದುದರಿಂದ ಫರೋಹನು ಮೋಶೆ ಮತ್ತು ಆರೋನರನ್ನು ಪುನಃ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಆದರೆ ಹೋಗುವವರು ಯಾರ‍್ಯಾರು?” ಎಂದು ಕೇಳಿದನು.
EXO 10:9 ಅದಕ್ಕೆ ಮೋಶೆಯು ಅವನಿಗೆ, “ನಮ್ಮ ಚಿಕ್ಕವರನ್ನೂ ವೃದ್ಧರನ್ನೂ ಕರೆದುಕೊಂಡು ಹೋಗುತ್ತೇವೆ. ಇದಲ್ಲದೆ ನಮ್ಮ ಪುತ್ರಪುತ್ರಿಯರನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಏಕೆಂದರೆ ನಾವು ಯೆಹೋವ ದೇವರಿಗಾಗಿ ಹಬ್ಬವನ್ನು ಮಾಡಬೇಕು,” ಎಂದನು.
EXO 10:10 ಫರೋಹನು ಅವರಿಗೆ, “ನಾನು ನಿಮ್ಮ ಮಡದಿ ಮಕ್ಕಳನ್ನೂ ಕಳುಹಿಸಿಕೊಟ್ಟು, ಯೆಹೋವ ದೇವರು ನಿಮ್ಮ ಸಂಗಡ ಇರಲಿ ಎಂದು ನಾನು ಹೇಳಬಯಸುವಿರೋ? ಇಲ್ಲಾ! ನೀವು ಕೇಡು ಮಾಡಲು ನಿರ್ಧರಿಸಿರುವಿರಿ?
EXO 10:11 ಹಾಗೆ ಮಾಡದೆ, ಗಂಡಸರಾದ ನೀವು ಮಾತ್ರ ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಏಕೆಂದರೆ ಇದನ್ನೇ ನೀವು ಬಯಸಿದಿರಿ,” ಎಂದನು. ತರುವಾಯ ಫರೋಹನು ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
EXO 10:12 ಆಗ ಯೆಹೋವ ದೇವರು ಮೋಶೆಗೆ, “ಮಿಡತೆಗಳಿಗಾಗಿ ನಿನ್ನ ಕೈಯನ್ನು ಈಜಿಪ್ಟಿನ ಮೇಲೆ ಚಾಚು. ಅವು ಈಜಿಪ್ಟಿನ ಮೇಲೆ ಬಂದು, ಆಲಿಕಲ್ಲಿನ ಮಳೆಯು ದೇಶದಲ್ಲಿ ಉಳಿಸಿದ ಹಸುರಾದದ್ದನ್ನೆಲ್ಲಾ ತಿಂದುಬಿಡಲಿ,” ಎಂದರು.
EXO 10:13 ಮೋಶೆಯು ತನ್ನ ಕೋಲನ್ನು ಈಜಿಪ್ಟ್ ದೇಶದ ಮೇಲೆ ಚಾಚಿದಾಗ, ಯೆಹೋವ ದೇವರು ಹಗಲಲ್ಲೂ ರಾತ್ರಿಯಲ್ಲೂ ಪೂರ್ವದಿಕ್ಕಿನಿಂದ ಗಾಳಿಯನ್ನು ಬರಮಾಡಿದರು. ಉದಯವಾದಾಗ ಆ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು.
EXO 10:14 ಹೀಗೆ ಮಿಡತೆಗಳ ಉಪದ್ರವ ಈಜಿಪ್ಟ್ ದೇಶದಲ್ಲೆಲ್ಲಾ ಬಂದು, ಈಜಿಪ್ಟಿನ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವುಗಳಂಥವು ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು.
EXO 10:15 ಏಕೆಂದರೆ ಅವು ಭೂಮಿಯನ್ನೆಲ್ಲಾ ಮುತ್ತಿಕೊಂಡದ್ದರಿಂದ, ಆ ದೇಶದಲ್ಲಿ ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ, ಆಲಿಕಲ್ಲಿನ ಮಳೆಯು ಉಳಿಸಿದ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಈಜಿಪ್ಟ್ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.
EXO 10:16 ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ, “ನಾನು ನಿಮ್ಮ ದೇವರಾದ ಯೆಹೋವ ದೇವರಿಗೂ, ನಿಮಗೂ ವಿರೋಧವಾಗಿ ಪಾಪಮಾಡಿದ್ದೇನೆ.
EXO 10:17 ಹೀಗಿರುವುದರಿಂದ ಈಗ ಒಂದೇ ಸಾರಿ ಮಾತ್ರ ನನ್ನ ಪಾಪವನ್ನು ಕ್ಷಮಿಸಬೇಕು. ಈ ಮರಣಕರವಾದ ಉಪದ್ರವವನ್ನು ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಿರಿ,” ಎಂದನು.
EXO 10:18 ಆಗ ಮೋಶೆ ಫರೋಹನನ್ನು ಬಿಟ್ಟು ಹೋಗಿ ಯೆಹೋವ ದೇವರನ್ನು ಬೇಡಿಕೊಂಡನು.
EXO 10:19 ಯೆಹೋವ ದೇವರು ಬಲವಾದ ಪಶ್ಚಿಮ ಗಾಳಿಯನ್ನು ಬೀಸುವಂತೆ ಮಾಡಿದರು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪು ಸಮುದ್ರದಲ್ಲಿ ಹಾಕಿತು. ಈಜಿಪ್ಟ್ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯಲಿಲ್ಲ.
EXO 10:20 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ಕಳುಹಿಸದೆ ಹೋದನು.
EXO 10:21 ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟ್ ದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು,” ಎಂದರು.
EXO 10:22 ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ, ಈಜಿಪ್ಟ್ ದೇಶದಲ್ಲೆಲ್ಲಾ ಮೂರು ದಿನಗಳವರೆಗೆ ಘೋರವಾದ ಕತ್ತಲೆ ಕವಿಯಿತು.
EXO 10:23 ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾರೂ ತಮ್ಮ ಸ್ಥಳವನ್ನು ಬಿಟ್ಟು ಏಳಲಿಲ್ಲ. ಆದರೆ ಇಸ್ರಾಯೇಲರಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.
EXO 10:24 ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ. ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಡದಿ ಮಕ್ಕಳೂ ನಿಮ್ಮ ಸಂಗಡ ಹೋಗಲಿ,” ಎಂದನು.
EXO 10:25 ಅದಕ್ಕೆ ಮೋಶೆಯು ಅವನಿಗೆ, “ನಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸುವುದಕ್ಕಾಗಿ ಯಜ್ಞಗಳನ್ನೂ ದಹನಬಲಿಗಳನ್ನೂ ತೆಗೆದುಕೊಂಡು ಹೋಗಲು ಅಪ್ಪಣೆಬೇಕು.
EXO 10:26 ನಮ್ಮ ಪಶುಪ್ರಾಣಿಗಳನ್ನೂ ನಾವು ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನೂ ಬಿಡಲಾರೆವು. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವುದಕ್ಕೆ ಅವುಗಳಿಂದಲೇ ಬಲಿ ಅರ್ಪಿಸಬೇಕು. ಯೆಹೋವ ದೇವರಿಗೆ ಯಾವ ಅರ್ಪಣೆ ಮಾಡಬೇಕೆಂಬುದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯದು,” ಎಂದನು.
EXO 10:27 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಅವರನ್ನು ಕಳುಹಿಸಲಾರದೆ ಹೋದನು.
EXO 10:28 ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟು ಹೋಗು. ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರ. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ಸಾಯುವೆ,” ಎಂದನು.
EXO 10:29 ಮೋಶೆಯು ಅವನಿಗೆ, “ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವುದಿಲ್ಲ,” ಎಂದನು.
EXO 11:1 ಯೆಹೋವ ದೇವರು ಮೋಶೆಗೆ, “ಇನ್ನು ಒಂದೇ ಉಪದ್ರವವನ್ನು ಫರೋಹನ ಮೇಲೆಯೂ, ಈಜಿಪ್ಟ್ ಮೇಲೆಯೂ ಬರಮಾಡುವೆನು. ಆಮೇಲೆ ಅವನು ಇಲ್ಲಿಂದ ಕಳುಹಿಸುವನು. ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲರನ್ನೂ ಕಳುಹಿಸಿಬಿಡುವನು.
EXO 11:2 ಆದ್ದರಿಂದ ಸ್ತ್ರೀಪುರುಷರೆಲ್ಲರು ತನ್ನ ನೆರೆಯವನಿಂದಲೂ ಬೆಳ್ಳಿಬಂಗಾರ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ಇಸ್ರಾಯೇಲರಿಗೆ ಹೇಳು,” ಎಂದು ಹೇಳಿದರು.
EXO 11:3 ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರ ದೃಷ್ಟಿಯಲ್ಲಿ ಜನರಿಗೆ ದಯೆ ದೊರಕುವಂತೆ ಮಾಡಿದರು. ಇದಲ್ಲದೆ ಮೋಶೆಯು ಈಜಿಪ್ಟ್ ದೇಶದಲ್ಲಿಯೂ ಫರೋಹನ ಅಧಿಕಾರಿಗಳ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹಳ ಗೌರವ ಹೊಂದಿದನು.
EXO 11:4 ಆಗ ಮೋಶೆಯು ಫರೋಹನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸುಮಾರು ಮಧ್ಯರಾತ್ರಿಯಲ್ಲಿ ನಾನು ಈಜಿಪ್ಟಿನ ಮಧ್ಯದಲ್ಲಿ ಹಾದು ಹೋಗುವೆನು.
EXO 11:5 ಆಗ ಈಜಿಪ್ಟ್ ದೇಶದ ಚೊಚ್ಚಲ ಮಕ್ಕಳು ಅಂದರೆ, ಸಿಂಹಾಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲನ್ನು ಹಿಡಿದಿರುವ ದಾಸಿಯ ಚೊಚ್ಚಲ ಮಗನವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವೂ ಸಾಯುವುವು.
EXO 11:6 ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವುದು. ಅಂಥಾ ಗೋಳಾಟವು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ.
EXO 11:7 ಆದರೆ ಯೆಹೋವ ದೇವರು ಈಜಿಪ್ಟಿನವರಿಗೂ, ಇಸ್ರಾಯೇಲರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳುಕೊಳ್ಳುವಂತೆ, ಇಸ್ರಾಯೇಲಿನವರ ವಿರುದ್ಧ ಇಲ್ಲವೆ ಪ್ರಾಣಿಗಳ ವಿರುದ್ಧ ಒಂದು ನಾಯಿ ಸಹ ಬೊಗಳುವುದಿಲ್ಲ.’
EXO 11:8 ಆಗ ನಿನ್ನ ದಾಸರಾದ ಇವರೆಲ್ಲರೂ ನನ್ನ ಬಳಿಗೆ ಬಂದು, ನನಗೆ ಅಡ್ಡಬಿದ್ದು, ನನಗೆ ನೀನೂ, ನಿನ್ನನ್ನು ಹಿಂಬಾಲಿಸುವ ಜನರೆಲ್ಲರೂ, ‘ಹೊರಗೆ ಹೋಗಿರಿ,’ ಎಂದು ಹೇಳುವರು. ತರುವಾಯ ನಾನು ಹೊರಗೆ ಹೋಗುವೆನು,” ಎಂದು ಹೇಳಿ ಮೋಶೆಯು ಕೋಪಾವೇಶವುಳ್ಳವನಾಗಿ ಫರೋಹನ ಬಳಿಯಿಂದ ಹೊರಟುಹೋದನು.
EXO 11:9 ಆದರೆ ಯೆಹೋವ ದೇವರು ಮೋಶೆಗೆ, “ನನ್ನ ಅದ್ಭುತಗಳು ಈಜಿಪ್ಟ್ ದೇಶದಲ್ಲಿ ಹೆಚ್ಚಾಗುವಂತೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ,” ಎಂದರು.
EXO 11:10 ಈ ಅದ್ಭುತಗಳನ್ನೆಲ್ಲಾ ಮೋಶೆ ಆರೋನರು ಫರೋಹನ ಮುಂದೆ ಮಾಡಿದರು. ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಲಿಲ್ಲ.
EXO 12:1 ಯೆಹೋವ ದೇವರು ಈಜಿಪ್ಟಿನಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
EXO 12:2 “ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರಬೇಕು.
EXO 12:3 ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇನೆಂದರೆ, ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಪ್ರತಿ ಗೋತ್ರಗಳ ಪ್ರತಿಯೊಂದು ಕುಟುಂಬಕ್ಕೆ ಒಂದರಂತೆ ಕುರಿಮರಿಯನ್ನು ತೆಗೆದುಕೊಳ್ಳಬೇಕು.
EXO 12:4 ಆ ಕುರಿಮರಿಯನ್ನು ಪೂರ್ತಿಯಾಗಿ ತಿನ್ನುವುದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ, ತನ್ನ ಮನೆಗೆ ಸಮೀಪವಾಗಿರುವ ತನ್ನ ನೆರೆಯವನ ಕುಟುಂಬದಲ್ಲಿ ಲೆಕ್ಕನೋಡಿ ಅವರೊಂದಿಗೆ ಪಾಲು ಹೊಂದಲಿ. ಒಬ್ಬೊಬ್ಬನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತೆಗೆದುಕೊಳ್ಳಲಿ.
EXO 12:5 ನೀವು ಆಯ್ದುಕೊಳ್ಳುವ ಕುರಿಮರಿಯು ದೋಷರಹಿತವಾಗಿರುವ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ, ಆಡುಗಳಿಂದಾಗಲಿ ತೆಗೆದುಕೊಳ್ಳಬಹುದು.
EXO 12:6 ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ತರುವಾಯ ಸಂಜೆಯಲ್ಲಿ ಇಸ್ರಾಯೇಲಿನ ಜನಾಂಗದವರೆಲ್ಲರೂ ಅವುಗಳನ್ನು ವಧಿಸಬೇಕು.
EXO 12:7 ಅವರು ರಕ್ತದಲ್ಲಿ ಸ್ವಲ್ಪ ತೆಗೆದು, ಕುರಿಮರಿಯ ಮಾಂಸವನ್ನು ಭೋಜನಮಾಡುವ ಮನೆಗಳ ಬಾಗಿಲಿನ ನಿಲುವು ಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.
EXO 12:8 ಆ ರಾತ್ರಿಯಲ್ಲಿಯೇ ಮಾಂಸವನ್ನು ಸುಟ್ಟು, ಅದನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.
EXO 12:9 ಅದರಲ್ಲಿ ಯಾವುದನ್ನೂ ಹಸಿಯಾದದ್ದನ್ನಾಗಲಿ, ನೀರಿನಲ್ಲಿ ಬೇಯಿಸಿಯಾಗಲಿ ತಿನ್ನದೆ, ಅದರ ತಲೆ, ತೊಡೆ, ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.
EXO 12:10 ಅದರಲ್ಲಿ ಬೆಳಗಿನವರೆಗೆ ಏನನ್ನೂ ಉಳಿಸಬಾರದು. ಬೆಳಗಿನವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
EXO 12:11 ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ತ್ವರೆಯಾಗಿ ಅದನ್ನು ತಿನ್ನಬೇಕು, ಅದು ಯೆಹೋವ ದೇವರ ಪಸ್ಕವಾಗಿದೆ.
EXO 12:12 “ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು.
EXO 12:13 ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ, ನಿಮ್ಮನ್ನು ದಾಟಿಹೋಗುವೆನು. ಈಜಿಪ್ಟ್ ದೇಶವನ್ನು ನಾನು ಸಂಹರಿಸುವ ಸಮಯದಲ್ಲಿ, ನಿಮ್ಮನ್ನು ನಾಶಮಾಡುವ ಯಾವ ಉಪದ್ರವವು ನಿಮ್ಮ ಮೇಲೆ ಬರುವುದಿಲ್ಲ.
EXO 12:14 “ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ನೀವು ಅದನ್ನು ಯೆಹೋವ ದೇವರಿಗೆ ಹಬ್ಬವಾಗಿ ತಲತಲಾಂತರಗಳಲ್ಲಿ ಆಚರಿಸಬೇಕು. ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.
EXO 12:15 ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿ ತಿನ್ನುವವರನ್ನು ಇಸ್ರಾಯೇಲಿನೊಳಗಿಂದ ಬಹಿಷ್ಕರಿಸಬೇಕು.
EXO 12:16 ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು, ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಊಟಕ್ಕೆ ಬೇಕಾದದ್ದನ್ನು ಮಾಡುವುದನ್ನು ಬಿಟ್ಟು, ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡಬಾರದು.
EXO 12:17 “ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದೇನೆ. ಆದಕಾರಣ ನಿಮ್ಮ ಸಂತತಿಗಳಲ್ಲಿ ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.
EXO 12:18 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನ ಸಂಜೆಯವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.
EXO 12:19 ಏಳು ದಿನಗಳವರೆಗೆ ಹುಳಿ ಹಿಟ್ಟು ನಿಮ್ಮ ಮನೆಗಳಲ್ಲಿ ಸಿಕ್ಕಬಾರದು, ಏಕೆಂದರೆ ಹುಳಿ ಬೆರೆಸಿದ್ದನ್ನು ಯಾರು ತಿನ್ನುವರೋ ಅವರು ಪರದೇಶದವರಾಗಲಿ, ಸ್ವದೇಶದವರಾಗಲಿ ಅವರನ್ನು ಇಸ್ರಾಯೇಲ್ ಸಭೆಯೊಳಗಿಂದ ಬಹಿಷ್ಕರಿಸಬೇಕು.
EXO 12:20 ಹುಳಿ ಕಲಸಿದ್ದು ಯಾವುದೇ ಆಗಿರಲಿ ನೀವು ತಿನ್ನಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು,” ಎಂದು ಹೇಳಿದರು.
EXO 12:21 ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯರನ್ನು ಕರೆದು ಅವರಿಗೆ, “ನಿಮ್ಮ ಕುಟುಂಬಗಳ ಪ್ರಕಾರ ಕುರಿಗಳನ್ನು ಆಯ್ದುಕೊಂಡು ಪಸ್ಕಹಬ್ಬಕ್ಕಾಗಿ ಕೊಯ್ಯಿರಿ.
EXO 12:22 ಹಿಸ್ಸೋಪ ಗಿಡದ ಕಟ್ಟನ್ನು ತೆಗೆದುಕೊಂಡು, ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ, ಬಾಗಿಲಿನ ಮೇಲೆ ಅಡ್ಡ ಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವು ಕಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟುಹೋಗಬಾರದು.
EXO 12:23 ಏಕೆಂದರೆ ಯೆಹೋವ ದೇವರು ಈಜಿಪ್ಟಿನವರನ್ನು ಸಂಹರಿಸುವುದಕ್ಕಾಗಿ ಹಾದುಹೋಗುವರು. ಅವರು ಅಡ್ಡ ಪಟ್ಟಿಯ ಮೇಲೂ, ಅದರ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ, ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡದಂತೆ, ಯೆಹೋವ ದೇವರು ನಿಮ್ಮ ಬಾಗಿಲುಗಳನ್ನು ದಾಟಿಹೋಗುವರು.
EXO 12:24 “ಇದನ್ನು ಒಂದು ಶಾಸನವಾಗಿ ನೀವೂ, ನಿಮ್ಮ ಪುತ್ರರೂ ಸದಾಕಾಲಕ್ಕೂ ಆಚರಿಸತಕ್ಕದ್ದು.
EXO 12:25 ಯೆಹೋವ ದೇವರು ಕೊಡುವೆನೆಂದು ಪ್ರಮಾಣ ಮಾಡಿದ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ನೀವು ಕೈಗೊಳ್ಳಬೇಕು.
EXO 12:26 ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ,
EXO 12:27 ನೀವು ಅವರಿಗೆ, ‘ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಈಜಿಪ್ಟಿನವರನ್ನು ಸಂಹರಿಸಿ, ನಮ್ಮ ಮನೆಗಳನ್ನು ಕಾಪಾಡುವುದಕ್ಕಾಗಿ ಇಸ್ರಾಯೇಲರ ಮನೆಗಳನ್ನು ದಾಟಿಹೋದ ಯೆಹೋವ ದೇವರ ಪಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ,’ ಎಂದು ನೀವು ಹೇಳಬೇಕು,” ಎಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.
EXO 12:28 ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಇಸ್ರಾಯೇಲರು ಮಾಡಿದರು.
EXO 12:29 ಮಧ್ಯರಾತ್ರಿಯಲ್ಲಿ ಸಿಂಹಾಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು, ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಎಂದರೆ ಈಜಿಪ್ಟ್ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ, ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಯೆಹೋವ ದೇವರು ಸಂಹರಿಸಿದರು.
EXO 12:30 ಆಗ ಫರೋಹನೂ, ಅವನ ಎಲ್ಲಾ ಅಧಿಕಾರಿಗಳೂ, ಎಲ್ಲಾ ಈಜಿಪ್ಟಿನವರೂ ರಾತ್ರಿಯಲ್ಲಿ ಎದ್ದರು. ಆ ಈಜಿಪ್ಟಿನಲ್ಲಿ ದೊಡ್ಡ ಗೋಳಾಟವಾಯಿತು. ಏಕೆಂದರೆ ಅಲ್ಲಿ ಸತ್ತವರು ಇಲ್ಲದ ಒಂದು ಮನೆಯಾದರೂ ಇರಲಿಲ್ಲ.
EXO 12:31 ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಮತ್ತು ಇಸ್ರಾಯೇಲರೆಲ್ಲರೂ ಎದ್ದು ನನ್ನ ಜನರೊಳಗಿಂದ ಹೊರಟು ಹೋಗಿರಿ. ನೀವು ಹೇಳಿದ ಹಾಗೆಯೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಹೊರಟುಹೋಗಿರಿ.
EXO 12:32 ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ,” ಎಂದನು.
EXO 12:33 ಇದಲ್ಲದೆ ಈಜಿಪ್ಟಿನವರು, “ನಾವೆಲ್ಲರೂ ಸಾಯುತ್ತೇವೆ,” ಎಂದು ಹೇಳಿ, ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ಜನರನ್ನು ಒತ್ತಾಯಮಾಡಿದರು.
EXO 12:34 ಆದ್ದರಿಂದ ಜನರು ಹಿಟ್ಟಿಗೆ ಹುಳಿ ಹಾಕುವುದಕ್ಕಿಂತ ಮುಂಚೆ, ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ, ಹೆಗಲಿನ ಮೇಲೆ ಹೊತ್ತುಕೊಂಡು ಹೋದರು.
EXO 12:35 ಇಸ್ರಾಯೇಲರು ಮೋಶೆಯು ಹೇಳಿದಂತೆ ಮಾಡಿ, ಬೆಳ್ಳಿಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಈಜಿಪ್ಟಿನವರಿಂದ ಕೇಳಿ ಪಡೆದರು.
EXO 12:36 ಯೆಹೋವ ದೇವರು ಈಜಿಪ್ಟಿನವರ ಎದುರಿನಲ್ಲಿ ಜನರ ಮೇಲೆ ದಯೆ ತೋರಿಸಿದ್ದರಿಂದ, ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಈಜಿಪ್ಟಿನವರ ಸೊತ್ತನ್ನು ಸುಲಿದುಕೊಂಡರು.
EXO 12:37 ಆಗ ಇಸ್ರಾಯೇಲರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಜನರು ಕಾಲುನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣಮಾಡಿದರು.
EXO 12:38 ಬೇರೆ ಜನಸಮೂಹವೂ ಕುರಿದನ ಮೊದಲಾದ ಪಶುಗಳ ಬಹುದೊಡ್ಡ ಹಿಂಡೂ ಇಸ್ರಾಯೇಲರ ಸಂಗಡ ಹೋದವು.
EXO 12:39 ಆಗ ಅವರು ಈಜಿಪ್ಟಿನಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿಯಾಗದ ಕಾರಣ, ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿದರು. ಏಕೆಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಈಜಿಪ್ಟಿನಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.
EXO 12:40 ಇಸ್ರಾಯೇಲರು ಈಜಿಪ್ಟಿನಲ್ಲಿ ಪ್ರವಾಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರ್ಷಗಳಾಗಿದ್ದವು.
EXO 12:41 ನಾನೂರ ಮೂವತ್ತು ವರ್ಷಗಳು ತೀರಿದ ತರುವಾಯ, ಅದೇ ದಿನದಲ್ಲಿ ಯೆಹೋವ ದೇವರ ಸೈನ್ಯಗಳೆಲ್ಲಾ ಈಜಿಪ್ಟ್ ದೇಶವನ್ನು ಬಿಟ್ಟು ಹೊರಗೆ ಹೋದವು.
EXO 12:42 ದೇವರು ಈಜಿಪ್ಟ್ ದೇಶದಿಂದ ಅವರನ್ನು ಹೊರಗೆ ತಂದ ಕಾರಣ, ಇದು ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲರು ತಮ್ಮ ಸಂತತಿಗಳಲ್ಲಿ ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯು ಇದೇ.
EXO 12:43 ಯೆಹೋವ ದೇವರು ಮೋಶೆ ಆರೋನರಿಗೆ, “ಪಸ್ಕದ ಶಾಸನವು ಇದೆ: “ವಿದೇಶಿಯರಲ್ಲಿ ಯಾರೂ ಪಸ್ಕಭೋಜನವನ್ನು ತಿನ್ನಬಾರದು.
EXO 12:44 ಆದರೆ ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ತರುವಾಯ, ಅಂಥವನು ಅದನ್ನು ತಿನ್ನಬಹುದು.
EXO 12:45 ಪರದೇಶದವರೂ, ಕೂಲಿಯವರೂ, ಅದನ್ನು ತಿನ್ನಬಾರದು.
EXO 12:46 “ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು.
EXO 12:47 ಇಸ್ರಾಯೇಲಿನ ಸಮೂಹದಲ್ಲಿರುವವರೆಲ್ಲರೂ ಇದನ್ನು ಆಚರಿಸಬೇಕು.
EXO 12:48 “ನಿಮ್ಮ ಜೊತೆಯಲ್ಲಿ ವಾಸಮಾಡಿದ ಪರದೇಶದವನು ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ, ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ. ತರುವಾಯ ಅವನು ಅದನ್ನು ಆಚರಿಸುವುದಕ್ಕೆ ಸಮೀಪಬರಲಿ, ಅಂಥವರು ಸ್ವದೇಶದಲ್ಲಿ ಹುಟ್ಟಿದವರಂತೆ ಇರುವರು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.
EXO 12:49 ಸ್ವದೇಶದಲ್ಲಿ ಹುಟ್ಟಿದವನಿಗೂ, ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯನಿಗೂ ಒಂದೇ ನಿಯಮವಿರಲಿ,” ಎಂದು ಹೇಳಿದರು.
EXO 12:50 ಇಸ್ರಾಯೇಲರೆಲ್ಲಾ ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಮಾಡಿದರು.
EXO 12:51 ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.
EXO 13:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
EXO 13:2 “ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಮೀಸಲಾಗಿಡು. ಮನುಷ್ಯರಾಗಿರಲಿ, ಪಶುಪ್ರಾಣಿಗಳಾಗಿರಲಿ ಪ್ರಥಮ ಗರ್ಭಫಲವು ನನ್ನದಾಗಿದೆ,” ಎಂದರು.
EXO 13:3 ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.
EXO 13:4 ಅಬೀಬ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
EXO 13:5 ಆದ್ದರಿಂದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಹಿವ್ವಿಯರ, ಯೆಬೂಸಿಯರ ದೇಶಕ್ಕೆ ನಿಮ್ಮನ್ನು ಕರೆತಂದು ಅದನ್ನು ನಿಮಗೆ ಕೊಟ್ಟಾಗ ಈ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸಬೇಕು.
EXO 13:6 ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಯೆಹೋವ ದೇವರಿಗೆ ಹಬ್ಬವನ್ನಾಚರಿಸಬೇಕು.
EXO 13:7 ಆ ಏಳು ದಿನಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಅಲ್ಲದೆ ನಿಮ್ಮ ಬಳಿಯಲ್ಲಿ ಹುಳಿಯಾಗಲಿ ಇಲ್ಲವೆ ಹುಳಿಹಿಟ್ಟಾಗಲಿ ನಿಮ್ಮ ಯಾವ ಮೇರೆಯಲ್ಲೂ ಕಾಣಬಾರದು.
EXO 13:8 ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.
EXO 13:9 ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.
EXO 13:10 ಹೀಗಿರುವುದರಿಂದ ನೀವು ಪ್ರತಿ ವರುಷವು ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಗೊಳ್ಳಬೇಕು.
EXO 13:11 “ಯೆಹೋವ ದೇವರು ನಿಮಗೂ ನಿಮ್ಮ ಪಿತೃಗಳಿಗೂ ಪ್ರಮಾಣ ಮಾಡಿದ ಪ್ರಕಾರ, ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ, ಅದನ್ನು ನಿಮಗೆ ಕೊಟ್ಟನಂತರ,
EXO 13:12 ನಿಮ್ಮಲ್ಲಿಯೂ ನಿಮ್ಮ ಪಶುಪ್ರಾಣಿಗಳಲ್ಲಿಯೂ ಹುಟ್ಟುವ ಪ್ರತಿಯೊಂದು ಗರ್ಭದ ಪ್ರಥಮ ಫಲವನ್ನು ನೀವು ಯೆಹೋವ ದೇವರಿಗೆ ಕೊಡಬೇಕು.
EXO 13:13 ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ವಿಮೋಚಿಸಿಕೊಳ್ಳಬೇಕು. ಹಾಗೆ ವಿಮೋಚಿಸಿಕೊಳ್ಳದೆ ಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರಲ್ಲಿ ಚೊಚ್ಚಲ ಗಂಡು ಮಕ್ಕಳನ್ನು ಬದಲುಕೊಟ್ಟು, ವಿಮೋಚಿಸಲೇಬೇಕು.
EXO 13:14 “ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.
EXO 13:15 ಫರೋಹನು ಹಟಮಾರಿತನದಿಂದ ನಮ್ಮನ್ನು ಕಳುಹಿಸದೆ ಇದ್ದಾಗ, ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಎಂದರೆ, ಮನುಷ್ಯರ ಹಾಗೂ ಪಶುಪ್ರಾಣಿಗಳ ಚೊಚ್ಚಲಾದವುಗಳನ್ನು ಕೊಂದುಹಾಕಿದರು. ಆದ್ದರಿಂದ ಚೊಚ್ಚಲ ಗಂಡುಗಳನ್ನೆಲ್ಲಾ ಯೆಹೋವ ದೇವರಿಗೆ ಅರ್ಪಿಸುತ್ತೇವೆ. ನಮ್ಮ ಪುತ್ರರಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇವೆ,’
EXO 13:16 ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು.
EXO 13:17 ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು.
EXO 13:18 ಹೀಗಿರುವುದರಿಂದ ಯೆಹೋವ ದೇವರು ಜನರನ್ನು ಕೆಂಪುಸಮುದ್ರದ ಮರುಭೂಮಿಯಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದರು. ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಈಜಿಪ್ಟ್ ದೇಶದೊಳಗಿಂದ ಹೋದರು.
EXO 13:19 ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. ಏಕೆಂದರೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಜವಾಗಿಯೂ ನಿಮ್ಮ ಸಹಾಯಕ್ಕೆ ಬರುವರು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು,” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು.
EXO 13:20 ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ, ಏತಾಮಿನ ಮರುಭೂಮಿಯ ಅಂಚಿನಲ್ಲಿ ಇಳಿದುಕೊಂಡರು.
EXO 13:21 ಇದಲ್ಲದೆ ಅವರು ಹಗಲೂ ರಾತ್ರಿಯೂ ಪ್ರಯಾಣ ಮಾಡುವ ಹಾಗೆ ಯೆಹೋವ ದೇವರು ಹಗಲಲ್ಲಿ ಅವರಿಗೆ ದಾರಿ ತೋರಿಸುವುದಕ್ಕೆ ಮೇಘದ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವುದಕ್ಕೆ ಅಗ್ನಿಯ ಸ್ತಂಭದಲ್ಲಿಯೂ ಅವರ ಮುಂದೆ ಹೋದರು.
EXO 13:22 ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.
EXO 14:1 ತರುವಾಯ ಯೆಹೋವ ದೇವರು ಮಾತನಾಡಿ ಮೋಶೆಗೆ,
EXO 14:2 “ಇಸ್ರಾಯೇಲರು ಹಿಂತಿರುಗಿ ಹೋಗಿ ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಲ್ಜೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳಿದುಕೊಳ್ಳಬೇಕು.
EXO 14:3 ಏಕೆಂದರೆ ಫರೋಹನು ಇಸ್ರಾಯೇಲರ ವಿಷಯದಲ್ಲಿ, ‘ಅವರು ಗಲಿಬಿಲಿಗೊಂಡು ಮರುಭೂಮಿಯನ್ನು ಸುತ್ತುವರಿದ ಪ್ರದೇಶದಲ್ಲಿ ಅತ್ತಿತ್ತ ಹೋಗುತ್ತಿರುವರು,’ ಎಂದುಕೊಳ್ಳುವನು.
EXO 14:4 ಇದಲ್ಲದೆ ಫರೋಹನು ನಿಮ್ಮನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು. ಫರೋಹನಲ್ಲಿಯೂ, ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು. ಆಗ ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿಯುವರು,” ಎಂದು ಹೇಳಿದರು. ಅದರಂತೆಯೇ ಇಸ್ರಾಯೇಲರು ಮಾಡಿದರು.
EXO 14:5 ಜನರು ಓಡಿಹೋದರೆಂಬ ವಿಷಯ ಈಜಿಪ್ಟಿನ ಅರಸನಿಗೆ ತಿಳಿಯಿತು. ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಅವರಿಗೆ ವಿರೋಧವಾಗಿ ತಿರುಗಿಕೊಂಡಿತು. ಅವರು, “ಇಸ್ರಾಯೇಲರು ನಮ್ಮ ಸೇವೆ ಮಾಡುವುದನ್ನು ಬಿಟ್ಟು ಹೋಗಿಬಿಡುವಂತೆ ನಾವು ಏಕೆ ಮಾಡಿದೆವು?” ಎಂದುಕೊಂಡರು.
EXO 14:6 ಆಗ ಫರೋಹನು ತನ್ನ ರಥವನ್ನು ಸಿದ್ಧಮಾಡಿ, ತನ್ನ ಸೈನ್ಯವನ್ನು ತನ್ನೊಂದಿಗೆ ತೆಗೆದುಕೊಂಡನು.
EXO 14:7 ಇದಲ್ಲದೆ ಅವನು ಆರಿಸಿಕೊಂಡ ಅತ್ಯುತ್ತಮ ಆರುನೂರು ರಥಗಳನ್ನೂ, ಈಜಿಪ್ಟಿನ ಎಲ್ಲಾ ರಥಗಳನ್ನೂ, ಅವುಗಳ ಮೇಲೆ ಅಧಿಪತಿಗಳನ್ನೂ ತೆಗೆದುಕೊಂಡನು.
EXO 14:8 ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವ ದೇವರು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲರು ಧೈರ್ಯದಿಂದ ಹೊರಗೆ ಹೋದರು.
EXO 14:9 ಈಜಿಪ್ಟಿನವರು ಅವರನ್ನು ಹಿಂದಟ್ಟಿದರು. ಅವರು ಸಮುದ್ರ ತೀರದಲ್ಲಿ ಇಳಿದುಕೊಂಡಿರುವಾಗ, ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸಮೀಪದಲ್ಲಿ ಬಾಲ್ಜೆಫೋನಿನ ಎದುರಾಗಿ ಇಸ್ರಾಯೇಲರನ್ನು ಸಮೀಪಿಸಿದರು.
EXO 14:10 ಫರೋಹನು ಸಮೀಪಕ್ಕೆ ಬರುವುದನ್ನು ಇಸ್ರಾಯೇಲರು ಕಣ್ಣೆತ್ತಿ ನೋಡಿದರು. ಈಜಿಪ್ಟಿನವರು ಅವರ ಹಿಂದೆ ಬರುತ್ತಿರುವುದನ್ನು ಕಂಡು ಇಸ್ರಾಯೇಲರು ಬಹಳ ಭಯಪಟ್ಟು ಯೆಹೋವ ದೇವರಿಗೆ ಮೊರೆಯಿಟ್ಟರು.
EXO 14:11 ಅವರು ಮೋಶೆಗೆ, “ಈಜಿಪ್ಟಿನಲ್ಲಿ ಸಮಾಧಿಗಳು ಇಲ್ಲದ ಕಾರಣ ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಕರೆದುಕೊಂಡು ಬಂದೆಯೋ? ಏಕೆ ನೀನು ಈ ಪ್ರಕಾರ ನಮಗೆ ಮಾಡಿ, ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆ?
EXO 14:12 ನಾವು ಈಜಿಪ್ಟ್ ದೇಶದಲ್ಲಿದ್ದಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ, ನಾವು ಈಜಿಪ್ಟಿನವರಿಗೆ ಸೇವೆಮಾಡುತ್ತೇವೆ,’ ಎಂದು ನಿನಗೆ ಹೇಳಲಿಲ್ಲವೇ? ನಾವು ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಸೇವೆ ಮಾಡುವುದೇ ಒಳ್ಳೆಯದಾಗಿತ್ತಲ್ಲಾ?” ಎಂದು ಹೇಳಿದರು.
EXO 14:13 ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.
EXO 14:14 ಯೆಹೋವ ದೇವರು ನಿಮಗೋಸ್ಕರ ಯುದ್ಧಮಾಡುವರು, ಆದರೆ ನೀವು ವಿಶ್ರಾಂತಿಯಿಂದಿರಿ,” ಎಂದನು.
EXO 14:15 ಆಗ ಯೆಹೋವ ದೇವರು ಮೋಶೆಗೆ, “ನೀನು ನನಗೆ ಮೊರೆಯಿಡುವುದೇನು? ಇಸ್ರಾಯೇಲರಿಗೆ ಮುಂದಕ್ಕೆ ಹೊರಡಬೇಕೆಂದು ಹೇಳು.
EXO 14:16 ನೀನು ನಿನ್ನ ಕೋಲನ್ನು ಎತ್ತಿ, ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚಿ, ಅದನ್ನು ವಿಭಾಗಿಸು. ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.
EXO 14:17 ನಾನು ಈಜಿಪ್ಟಿನವರ ಹೃದಯವನ್ನು ಕಠಿಣ ಮಾಡುತ್ತೇನೆ. ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
EXO 14:18 ನಾನು ಫರೋಹನ ಮೇಲೆಯೂ ಅವನ ರಥಗಳ ಮೇಲೆಯೂ ಅವನ ಕುದುರೆ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಂಡಾಗ, ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.
EXO 14:19 ಆಗ ಇಸ್ರಾಯೇಲ್ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
EXO 14:20 ಅದು ಈಜಿಪ್ಟಿನ ದಂಡಿಗೂ ಇಸ್ರಾಯೇಲರ ದಂಡಿಗೂ ನಡುವೆ ಬಂದಿತು. ಮೇಘಸ್ತಂಭವು ಈಜಿಪ್ಟಿನವರಿಗೆ ಕತ್ತಲನ್ನೂ ಇಸ್ರಾಯೇಲರಿಗೆ ಬೆಳಕನ್ನೂ ನೀಡಿತು. ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಾಗಲಿಲ್ಲ.
EXO 14:21 ಆಗ ಮೋಶೆಯು ಸಮುದ್ರದ ಮೇಲೆ ತನ್ನ ಬಲಗೈಯನ್ನು ಚಾಚಲಾಗಿ, ಯೆಹೋವ ದೇವರು ರಾತ್ರಿಯೆಲ್ಲಾ ಬಲವಾದ ಪೂರ್ವದಿಕ್ಕಿನ ಗಾಳಿಯಿಂದ ಸಮುದ್ರವನ್ನು ಹಿಂದಕ್ಕೆ ಹೋಗುವಂತೆ ಸಮುದ್ರವನ್ನು ಸರಿಸಿ, ಒಣ ನೆಲ ಕಾಣಿಸುವಂತೆ ಮಾಡಿದರು. ಆಗ ನೀರು ವಿಭಾಗವಾಯಿತು.
EXO 14:22 ಹೀಗೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಾಗಿ ನಿಂತಿತ್ತು.
EXO 14:23 ಈಜಿಪ್ಟಿನವರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆ ಸವಾರರೂ ಅವರನ್ನು ಹಿಂದಟ್ಟಿ, ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
EXO 14:24 ಬೆಳಗಿನ ಜಾವದಲ್ಲಿ ಯೆಹೋವ ದೇವರು ಅಗ್ನಿ ಮೇಘಗಳ ಸ್ತಂಭದೊಳಗಿಂದ ಈಜಿಪ್ಟಿನ ದಂಡಿನ ಮೇಲೆ ದೃಷ್ಟಿಯಿಟ್ಟು, ಈಜಿಪ್ಟಿನ ದಂಡನ್ನು ಗಾಬರಿಗೊಳಿಸಿದರು.
EXO 14:25 ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟು ಕಷ್ಟದಿಂದ ಅವರು ಹೋಗುವಂತೆ ಮಾಡಿದರು. ಆಗ ಈಜಿಪ್ಟಿನವರು, “ಇಸ್ರಾಯೇಲರ ಎದುರಿನಿಂದ ಓಡಿಹೋಗೋಣ. ಏಕೆಂದರೆ ಯೆಹೋವ ದೇವರು ಈಜಿಪ್ಟಿನವರಿಗೆ ವಿರೋಧವಾಗಿ ಯುದ್ಧಮಾಡುತ್ತಾರೆ,” ಎಂದು ಹೇಳಿಕೊಂಡರು.
EXO 14:26 ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟಿನವರನ್ನೂ ಅವರ ರಥಗಳ ಕುದುರೆಯ ಸವಾರರನ್ನೂ ಸಮುದ್ರವು ಮುಳುಗಿಸುವಂತೆ ಸಮುದ್ರದ ಮೇಲೆ ಕೈಚಾಚು,” ಎಂದರು.
EXO 14:27 ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ಮೊದಲಿನಂತೆ ತುಂಬಿಕೊಂಡಿತು. ಈಜಿಪ್ಟಿನವರು ಓಡಿಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಯೆಹೋವ ದೇವರು ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
EXO 14:28 ನೀರು ತಿರುಗಿಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಹೀಗೆ ಒಬ್ಬರೂ ಉಳಿಯದಂತೆ ಮುಳುಗಿಸಿತು.
EXO 14:29 ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿದ್ದ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತಿತ್ತು.
EXO 14:30 ಆ ದಿನದಲ್ಲಿ ಯೆಹೋವ ದೇವರು ಈ ಪ್ರಕಾರ ಇಸ್ರಾಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಇಸ್ರಾಯೇಲರು ಸಮುದ್ರ ತೀರದಲ್ಲಿ ಸತ್ತ ಈಜಿಪ್ಟಿನವರನ್ನು ನೋಡಿದರು.
EXO 14:31 ಈಜಿಪ್ಟಿನವರ ಮೇಲೆ ಯೆಹೋವ ದೇವರು ಮಾಡಿದ ದೊಡ್ಡ ಕಾರ್ಯವನ್ನು ನೋಡಿದಾಗ, ಇಸ್ರಾಯೇಲರು ಯೆಹೋವ ದೇವರಿಗೆ ಭಯಪಟ್ಟು, ಅವರಲ್ಲಿಯೂ ಅವರ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.
EXO 15:1 ಆಗ ಮೋಶೆ ಮತ್ತು ಇಸ್ರಾಯೇಲರು ಯೆಹೋವ ದೇವರಿಗೆ ಈ ಹಾಡನ್ನು ಹಾಡಿದರು: “ನಾನು ಯೆಹೋವ ದೇವರಿಗೆ ಹಾಡುತ್ತೇನೆ. ಏಕೆಂದರೆ ಅವರು ಪ್ರಭಾವದಿಂದ ಜಯಶಾಲಿಯಾದರು. ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ದಬ್ಬಿದ್ದಾರೆ.
EXO 15:2 “ಯೆಹೋವ ದೇವರು ನನ್ನ ಬಲವೂ ಕೀರ್ತನೆಯೂ ಆಗಿದ್ದಾರೆ; ಅವರು ನನ್ನ ರಕ್ಷಣೆಯಾದರು; ಅವರು ನನ್ನ ದೇವರು, ಅವರನ್ನು ಕೊಂಡಾಡುವೆನು; ಅವರು ನನ್ನ ತಂದೆಯ ದೇವರು, ನಾನು ಅವರನ್ನು ಘನಪಡಿಸುವೆನು.
EXO 15:3 ಯೆಹೋವ ದೇವರು ಯುದ್ಧವೀರರು; ಯೆಹೋವ ದೇವರು ಎಂಬುದೇ ಅವರ ಹೆಸರು.
EXO 15:4 ಅವರು ಫರೋಹನ ರಥಗಳನ್ನೂ, ಅವನ ಸ್ಯೆನ್ಯವನ್ನೂ ಸಮುದ್ರದಲ್ಲಿ ಅಲ್ಲಾಡಿಸಿ ಎಸೆದಿದ್ದಾರೆ. ಫರೋಹನ ಅತ್ಯುತ್ತಮ ಅಧಿಕಾರಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿ ಹೋದರು.
EXO 15:5 ಆಳವಾದ ಜಲರಾಶಿ ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ ಸಮುದ್ರದ ತಳಕ್ಕೆ ಮುಳುಗಿದರು.
EXO 15:6 ಯೆಹೋವ ದೇವರೇ, ನಿಮ್ಮ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳದ್ದಾಗಿದೆ; ಯೆಹೋವ ದೇವರೇ, ನಿಮ್ಮ ಬಲಗೈ ಶತ್ರುವನ್ನು ಜಜ್ಜಿ ಪುಡಿ ಮಾಡಿತು.
EXO 15:7 “ನಿಮ್ಮ ಮಹತ್ತಾದ ಘನತೆಯಲ್ಲಿ ನಿಮಗೆ ವಿರೋಧವಾಗಿ ಎದ್ದವರನ್ನು ಕೆಡವಿಬಿಟ್ಟಿರುವಿರಿ. ನಿಮ್ಮ ಕೋಪವು ಬೆಂಕಿಯಂತೆ ಕಾರಿದೆ; ಅದು ಅವರನ್ನು ಕೋಲಿನಂತೆ ದಹಿಸಿತು.
EXO 15:8 ನೀವು ಬೀಸಿದ ಬಿರುಸಾದ ಗಾಳಿಯಿಂದ ನೀರು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು. ಜಲರಾಶಿಗಳು ಸಮುದ್ರದ ಮಧ್ಯದಲ್ಲಿ ಗಟ್ಟಿಯಾದವು.
EXO 15:9 ಶತ್ರುವು ಹೆಮ್ಮೆಯಿಂದ ಹೀಗೆ ಮಾತನಾಡಿಕೊಳ್ಳುತ್ತಿದ್ದರು, ‘ನಾನು ಹಿಂದಟ್ಟುವೆನು, ಅವರನ್ನು ಹಿಡಿಯುವೆನು, ನಾನು ಅವರ ಕೊಳ್ಳೆಯನ್ನು ಹಂಚುವೆನು; ನನ್ನ ಆಶೆಗಳು ಅವರಿಂದ ತೃಪ್ತಿ ಹೊಂದುವುವು; ನಾನು ನನ್ನ ಖಡ್ಗವನ್ನು ಹಿರಿಯುವೆನು; ನನ್ನ ಕೈ ಅವರನ್ನು ಸಂಹಾರ ಮಾಡುವುದು.’
EXO 15:10 ನೀವು ನಿಮ್ಮ ಶ್ವಾಸ ಊದಿದಾಗ ಸಮುದ್ರವು ಅವರನ್ನು ನುಂಗಿಕೊಂಡಿತು. ಅವರು ಸೀಸದಂತೆ ಮಹಾಸಾಗರದಲ್ಲಿ ಮುಳುಗಿ ಹೋದರು.
EXO 15:11 ಯೆಹೋವ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ವೈಭವ ಹೊಂದಿದವರೂ, ಮಹಿಮೆಯಲ್ಲಿ ಅತಿಶಯರೂ, ಅದ್ಭುತಗಳನ್ನು ಮಾಡುವವರೂ ಆದ ನಿಮ್ಮ ಹಾಗೆ ಯಾರಿದ್ದಾರೆ?
EXO 15:12 “ನೀವು ನಿಮ್ಮ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು.
EXO 15:13 ನೀವು ವಿಮೋಚಿಸಿದ ಜನರನ್ನು ನೀವು ನಿಮ್ಮ ಪ್ರೀತಿಯಿಂದ ನಡೆಸಿದ್ದೀರಿ. ನೀವು ಅವರನ್ನು ನಿಮ್ಮ ಬಲದಿಂದ ನಿಮ್ಮ ಪರಿಶುದ್ಧ ನಿವಾಸಕ್ಕೆ ನಡೆಸಿದ್ದೀರಿ.
EXO 15:14 ಜನರು ಇದನ್ನು ಕೇಳಿದಾಗ ಭಯಪಡುವರು. ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವುದು.
EXO 15:15 ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳುವರು; ಕಂಪನವು ಮೋವಾಬಿನ ಬಲಿಷ್ಠರನ್ನು ಹಿಡಿಯುವುದು; ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
EXO 15:16 ಭಯವೂ ಹೆದರಿಕೆಯೂ ಅವರಿಗಾಗುವುದು; ನಿಮ್ಮ ಜನರು ದಾಟಿ ಹೋಗುವವರೆಗೆ ಯೆಹೋವ ದೇವರೇ, ನೀವು ಕೊಂಡುಕೊಂಡ ಜನರು ದಾಟಿಹೋಗುವವರೆಗೆ ನಿಮ್ಮ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗಿರುವರು.
EXO 15:17 ಅವರನ್ನು ಒಳಗೆ ಬರಮಾಡಿ, ಯೆಹೋವ ದೇವರೇ, ನಿಮ್ಮ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ ಯೆಹೋವ ದೇವರೇ, ನೀವು ವಾಸಿಸುವುದಕ್ಕೆ ಮಾಡಿಕೊಂಡಿರುವ ನಿಮ್ಮ ಸ್ವತ್ತಾಗಿರುವ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿರಿ.
EXO 15:18 “ಯೆಹೋವ ದೇವರು ಯುಗಯುಗಾಂತರಗಳವರೆಗೆ ಆಳುವರು.”
EXO 15:19 ಫರೋಹನ ಕುದುರೆಗಳು ಅವನ ರಥಗಳ ಮತ್ತು ಸವಾರರ ಸಂಗಡ ಸಮುದ್ರದೊಳಗೆ ಬಂದಾಗ, ಯೆಹೋವ ದೇವರು ಸಮುದ್ರದ ನೀರನ್ನು ಅವರ ಮೇಲೆ ತಿರುಗಿ ಬರಮಾಡಿದರು. ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿನ ಒಣನೆಲದ ಮೇಲೆ ದಾಟಿಹೋದರು.
EXO 15:20 ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯನ್ನು ಹಿಂಬಾಲಿಸಿ ಹೊರಹೊರಟರು.
EXO 15:21 ಮಿರ್ಯಾಮಳು ಅವರಿಗೆ ಹೀಗೆ ಹಾಡಿದಳು: “ಯೆಹೋವ ದೇವರಿಗೆ ನೀವು ಹಾಡಿರಿ, ಅವರು ಮಹೋನ್ನತದಲ್ಲಿದ್ದಾರೆ; ಕುದುರೆಯನ್ನೂ ಸವಾರರನ್ನೂ ಸಮುದ್ರದಲ್ಲಿ ಮುಣುಗಿಸಿಬಿಟ್ಟರು.”
EXO 15:22 ಆಮೇಲೆ ಮೋಶೆಯು ಇಸ್ರಾಯೇಲರನ್ನು ಕೆಂಪು ಸಮುದ್ರದಿಂದ ನಡೆಸಿದನು. ಅವರು ಶೂರಿನ ಮರುಭೂಮಿಯೊಳಗೆ ಹೋದರು. ಅವರು ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿದರೂ ನೀರನ್ನು ಕಂಡುಕೊಳ್ಳಲಿಲ್ಲ.
EXO 15:23 ಅವರು ಮಾರಾ ಎಂಬಲ್ಲಿಗೆ ಬಂದ ಮೇಲೆ ಅಲ್ಲಿಯ ನೀರನ್ನು ಕುಡಿಯಲಾರದೆ ಇದ್ದರು; ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು “ಮಾರಾ” ಎಂದು ಕರೆಯಲಾಯಿತು.
EXO 15:24 ಆದ್ದರಿಂದ ಜನರು, “ನಾವು ಏನು ಕುಡಿಯೋಣ?” ಎಂದು ಹೇಳಿ, ಮೋಶೆಗೆ ವಿರೋಧವಾಗಿ ಗೊಣಗುಟ್ಟಿದರು.
EXO 15:25 ಅವನು ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಒಂದು ಗಿಡವನ್ನು ತೋರಿಸಿದರು. ಅವನು ಅದನ್ನು ನೀರಿನಲ್ಲಿ ಹಾಕಿದಾಗ, ನೀರು ಸಿಹಿಯಾಗಿ ಬಿಟ್ಟಿತು. ಅಲ್ಲಿ ದೇವರು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿದರು. ಅಲ್ಲಿಯೇ ದೇವರು ಅವರನ್ನು ಪರೀಕ್ಷಿಸಿದರು.
EXO 15:26 ದೇವರು, “ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಶ್ರದ್ಧೆಯಿಂದ ಕಿವಿಗೊಟ್ಟು, ಅವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ, ಅವರ ಆಜ್ಞೆಗಳಿಗೆ ಕಿವಿಗೊಟ್ಟು, ಅವರ ನಿಯಮಗಳನ್ನು ಕೈಗೊಂಡರೆ, ಈಜಿಪ್ಟಿನ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿಮ್ಮ ಮೇಲೆ ಬರಮಾಡುವುದಿಲ್ಲ. ನಿಮ್ಮನ್ನು ಸ್ವಸ್ಥಪಡಿಸುವ ಯೆಹೋವ ದೇವರು ನಾನೇ ಆಗಿದ್ದೇನೆ,” ಎಂದು ಪ್ರಕಟಪಡಿಸಿದರು.
EXO 15:27 ತರುವಾಯ ಇಸ್ರಾಯೇಲರು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಅವರು ಆ ನೀರಿನ ಬಳಿಯಲ್ಲಿ ಇಳಿದುಕೊಂಡರು.
EXO 16:1 ಇಸ್ರಾಯೇಲರ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣಮಾಡಿ, ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ, ಸೀನಾಯಿ ಪರ್ವತಕ್ಕೂ ಮಧ್ಯೆ ಇರುವ ಸೀನ್ ಮರುಭೂಮಿಗೆ ಬಂದರು.
EXO 16:2 ಆಗ ಇಸ್ರಾಯೇಲರ ಸಭೆಯೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ವಿರೋಧವಾಗಿ ಗೊಣಗುಟ್ಟಿದರು.
EXO 16:3 ಇಸ್ರಾಯೇಲರು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಸಾಕಾಗುವಷ್ಟು ರೊಟ್ಟಿಯನ್ನು ತಿನ್ನುತ್ತಿದ್ದಾಗ, ಯೆಹೋವ ದೇವರ ಕೈಯಿಂದ ಸತ್ತು ಹೋಗಿದ್ದರೆ ಒಳ್ಳೆಯದಾಗಿತ್ತು. ಇಡೀ ಜನಾಂಗವೇ ಹಸಿವೆಯಿಂದ ಸತ್ತು ಹೋಗುವಂತೆ ನಮ್ಮನ್ನು ಈ ಮರುಭೂಮಿಗೆ ಬರಮಾಡಿದ್ದೀರಿ,” ಎಂದರು.
EXO 16:4 ಆಗ ಯೆಹೋವ ದೇವರು ಮೋಶೆಗೆ, “ನಾನು ರೊಟ್ಟಿಯನ್ನು ನಿಮಗಾಗಿ ಆಕಾಶದಿಂದ ಸುರಿಸುತ್ತೇನೆ. ಜನರು ಹೊರಗೆ ಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದದ್ದನ್ನು ಕೂಡಿಸಲಿ. ಇದರಿಂದ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳುವರೋ, ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇನೆ.
EXO 16:5 ಆರನೆಯ ದಿವಸದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಪಡಿಸಿಕೊಳ್ಳುವಾಗ, ಪ್ರತಿದಿನ ಕೂಡಿಸುವುದಕ್ಕಿಂತಲೂ ಎರಡರಷ್ಟಾಗಿರುವುದು,” ಎಂದು ಹೇಳಿದರು.
EXO 16:6 ಆಗ ಮೋಶೆ, ಆರೋನರು ಇಸ್ರಾಯೇಲರಿಗೆಲ್ಲಾ, “ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದವರು ಯೆಹೋವ ದೇವರೇ, ಎಂದು ಸಾಯಂಕಾಲವಾದಾಗ ನಿಮಗೆ ತಿಳಿಯುವುದು.
EXO 16:7 ಬೆಳಿಗ್ಗೆ ಯೆಹೋವ ದೇವರ ಮಹಿಮೆಯನ್ನು ನೋಡುವಿರಿ. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ನೀವು ಗೊಣಗುಟ್ಟಿದ್ದನ್ನು ಅವರು ಕೇಳಿದ್ದಾರೆ. ನಮಗೆ ವಿರೋಧವಾಗಿ ನೀವು ಗೊಣಗುಟ್ಟುವ ಹಾಗೆ ನಾವು ಯಾರು?” ಎಂದರು.
EXO 16:8 ಮೋಶೆ ಮುಂದುವರಿಸಿ, “ಸಂಜೆಯಲ್ಲಿ ಯೆಹೋವ ದೇವರು ನಿಮಗೆ ಮಾಂಸಾಹಾರವನ್ನೂ, ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ಕೊಡುವರು. ನಿಮ್ಮ ಗೊಣಗುಟ್ಟುವಿಕೆಯು ಯೆಹೋವ ದೇವರಿಗೆ ಹೊರತು ನಮಗಲ್ಲ. ನಾವು ಎಷ್ಟು ಮಾತ್ರದವರು,” ಎಂದನು.
EXO 16:9 ಅನಂತರ ಮೋಶೆ ಆರೋನನಿಗೆ, “ನೀನು ಇಸ್ರಾಯೇಲರ ಸಮೂಹಕ್ಕೆ, ‘ನಿಮ್ಮ ಗೊಣಗುಟ್ಟುವಿಕೆಯನ್ನು ಯೆಹೋವ ದೇವರು ಕೇಳಿದ್ದರಿಂದ ನೀವು ಅವರ ಮುಂದೆ ಬನ್ನಿರಿ,’ ಎಂದು ಹೇಳು,” ಎಂದನು.
EXO 16:10 ಆರೋನನು ಇಸ್ರಾಯೇಲರ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಮರುಭೂಮಿಯ ಕಡೆಗೆ ನೋಡಿದರು. ಆಗ, ಯೆಹೋವ ದೇವರ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.
EXO 16:11 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
EXO 16:12 “ಇಸ್ರಾಯೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತನಾಡಿ, ‘ನೀವು ಸಂಜೆಯಲ್ಲಿ ಮಾಂಸವನ್ನು ತಿನ್ನುವಿರಿ. ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ,’ ಎಂದು ಅವರಿಗೆ ಹೇಳು,” ಎಂದರು.
EXO 16:13 ಸಂಜೆಯಲ್ಲಿ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.
EXO 16:14 ಬಿದ್ದಿದ್ದ ಮಂಜು ಹೋದ ಮೇಲೆ, ಗಟ್ಟಿಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕದಾದದ್ದೂ, ಗುಂಡಾದದ್ದೂ ಮರುಭೂಮಿಯಲ್ಲಿ ಹರಡಿತ್ತು.
EXO 16:15 ಇಸ್ರಾಯೇಲರು ಅದನ್ನು ನೋಡಿದಾಗ ಅವರು, ಒಬ್ಬರಿಗೊಬ್ಬರು, “ಇದೇನು?” ಎಂದರು. ಏಕೆಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ, “ಯೆಹೋವ ದೇವರು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ.
EXO 16:16 ಯೆಹೋವ ದೇವರು, ‘ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ. ಪ್ರತಿಯೊಬ್ಬನಿಗೆ ಸುಮಾರು ಒಂದು ಕಿಲೋಗ್ರಾಂದಷ್ಟು ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತೆಗೆದುಕೊಳ್ಳಿರಿ,’ ಎಂದು ಹೇಳಿದ್ದಾರೆ,” ಎಂದನು.
EXO 16:17 ಇಸ್ರಾಯೇಲರು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.
EXO 16:18 ಓಮೆರದಿಂದ ಅಳತೆಮಾಡಿದಾಗ, ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ. ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು.
EXO 16:19 ಮೋಶೆ ಅವರಿಗೆ, “ಇದನ್ನು ಯಾರೂ ಮರುದಿನದವರೆಗೆ ಇಟ್ಟುಕೊಳ್ಳಬಾರದು,” ಎಂದು ಹೇಳಿದನು.
EXO 16:20 ಆದರೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನವರೆಗೆ ಇಟ್ಟುಕೊಂಡಾಗ, ಅದು ಹುಳ ಬಿದ್ದು ಹೊಲಸುವಾಸನೆ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿಕೊಂಡನು.
EXO 16:21 ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನುವಷ್ಟು ಪ್ರತಿದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.
EXO 16:22 ಆರನೆಯ ದಿನದಲ್ಲಿ ಅವರು ಎರಡರಷ್ಟು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು.
EXO 16:23 ಅದಕ್ಕೆ ಮೋಶೆ, “ಯೆಹೋವ ದೇವರು ಆಜ್ಞಾಪಿಸಿದ ಮಾತು ಇದೇ: ‘ನಾಳೆ ಯೆಹೋವ ದೇವರಿಗೆ ಪರಿಶುದ್ಧ ಸಬ್ಬತ್ ದಿನವಾಗಿದೆ. ಇಂದೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನವರೆಗೆ ಇಟ್ಟುಕೊಳ್ಳಿರಿ,’ ” ಎಂದನು.
EXO 16:24 ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರುದಿನದವರೆಗೆ ಇಟ್ಟುಕೊಂಡಾಗ, ಅದು ಹೊಲಸುವಾಸನೆ ಹೊಂದಲಿಲ್ಲ. ಅದರಲ್ಲಿ ಹುಳಗಳೂ ಇರಲಿಲ್ಲ.
EXO 16:25 ಆಗ ಮೋಶೆಯು, “ಈ ಹೊತ್ತು ಅದನ್ನು ಊಟಮಾಡಿರಿ. ಏಕೆಂದರೆ ಈ ದಿನವು ಯೆಹೋವ ದೇವರ ಸಬ್ಬತ್ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ ಆಹಾರ ಸಿಕ್ಕುವುದಿಲ್ಲ.
EXO 16:26 ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ,” ಎಂದನು.
EXO 16:27 ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವುದಕ್ಕೆ ಹೊರಗೆ ಹೋದಾಗ, ಅವರಿಗೆ ಏನೂ ಸಿಕ್ಕಲಿಲ್ಲ.
EXO 16:28 ಆಗ ಯೆಹೋವ ದೇವರು ಮೋಶೆಗೆ, “ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ, ನಿಯಮಗಳನ್ನೂ ಕೈಗೊಳ್ಳದೆ ನಿರಾಕರಿಸುವಿರಿ?
EXO 16:29 ನೋಡಿರಿ, ಯೆಹೋವ ದೇವರಾದ ನಾನು ನಿಮಗೆ ಸಬ್ಬತ್ ದಿನವನ್ನು ಕೊಟ್ಟಿದ್ದರಿಂದಲೇ, ಆರನೆಯ ದಿನದಲ್ಲಿ ನಿಮಗೆ ಎರಡು ದಿನಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟಿದ್ದೇನೆ. ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಇರಲಿ. ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದರು.
EXO 16:30 ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.
EXO 16:31 ಇಸ್ರಾಯೇಲರು ಆ ಆಹಾರಕ್ಕೆ ಮನ್ನಾ, ಎಂದು ಹೆಸರಿಟ್ಟರು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನುತುಪ್ಪ ಕಲಸಿದ ದೋಸೆಯಂತೆ ಇತ್ತು.
EXO 16:32 ಮೋಶೆಯು ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ: ‘ನಾನು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಡಿಸಿದಾಗ, ಮರುಭೂಮಿಯಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ್ ಮನ್ನವನ್ನು ತುಂಬಿಸಿ ಇಟ್ಟಿರಬೇಕು,’ ಎಂಬುದು,” ಎಂದನು.
EXO 16:33 ಮೋಶೆ ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕೋಸ್ಕರ ಅದನ್ನು ಯೆಹೋವ ದೇವರ ಮುಂದೆ ಇಡು,” ಎಂದನು.
EXO 16:34 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮನ್ನವನ್ನು ಸಂರಕ್ಷಿಸುವುದಕ್ಕೆ ಸಾಕ್ಷಿಯಾಗಿ ಇಟ್ಟನು.
EXO 16:35 ಇಸ್ರಾಯೇಲರು ತಾವು ವಾಸವಾಗಿರತಕ್ಕ ದೇಶಕ್ಕೆ ಬರುವವರೆಗೆ, ನಲವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಸೇರುವವರೆಗೂ ಅವರು ಮನ್ನವನ್ನು ತಿಂದರು.
EXO 16:36 ಓಮೆರ್ ಎಂದರೆ ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಅಳತೆ.
EXO 17:1 ಇಸ್ರಾಯೇಲ್ ಸಮೂಹವೆಲ್ಲಾ ಯೆಹೋವ ದೇವರ ಅಪ್ಪಣೆಯ ಪ್ರಕಾರ ಅವರವರು ಹೊರಡುವ ಕ್ರಮದಂತೆ ಸೀನ್ ಮರುಭೂಮಿಯಿಂದ ಹೊರಟು ರೆಫೀದೀಮಿನಲ್ಲಿ ತಂಗಿದರು. ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.
EXO 17:2 ಆದಕಾರಣ ಜನರು ಮೋಶೆಯ ಸಂಗಡ ವಿವಾದ ಮಾಡಿ, “ನಮಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು. ಮೋಶೆಯು ಅವರಿಗೆ, “ಏಕೆ ನನ್ನ ಸಂಗಡ ವಿವಾದ ಮಾಡುತ್ತೀರಿ? ಯೆಹೋವ ದೇವರನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು.
EXO 17:3 ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿ, “ನಮ್ನನ್ನೂ, ನಮ್ಮ ಮಕ್ಕಳನ್ನೂ, ನಮ್ಮ ಪಶುಗಳನ್ನೂ ದಾಹದಿಂದ ಕೊಲ್ಲುವುದಕ್ಕಾಗಿ ಏಕೆ ಈಜಿಪ್ಟಿನೊಳಗಿಂದ ಇಲ್ಲಿಗೆ ಬರಮಾಡಿದೆ,” ಎಂದರು.
EXO 17:4 ಆಗ ಮೋಶೆಯು ಯೆಹೋವ ದೇವರಿಗೆ ಮೊರೆಯಿಟ್ಟು, “ಈ ಜನರಿಗೆ ನಾನೇನು ಮಾಡಲಿ? ಅವರು ಬಹಳಮಟ್ಟಿಗೆ ನನಗೆ ಕಲ್ಲೆಸೆಯುವುದಕ್ಕಿದ್ದಾರೆ,” ಎಂದನು.
EXO 17:5 ಆಗ ಯೆಹೋವ ದೇವರು ಮೋಶೆಗೆ, “ಜನರ ಮುಂದೆ ಹಾದು ಹೋಗಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರನ್ನು ಕರಕೊಂಡು ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು.
EXO 17:6 ಅಲ್ಲಿ, ನಾನು ಹೋರೇಬಿನಲ್ಲಿ ಬಂಡೆಯ ಮೇಲೆ ನಿನ್ನ ಮುಂದೆ ನಿಂತುಕೊಳ್ಳುವೆನು, ನೀನು ಬಂಡೆಯನ್ನು ಹೊಡೆಯಬೇಕು. ಆಗ ಜನರು ಕುಡಿಯುವಂತೆ ನೀರು ಹೊರಗೆ ಬರುವುದು,” ಎಂದರು. ಮೋಶೆಯು ಇಸ್ರಾಯೇಲರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.
EXO 17:7 “ಯೆಹೋವ ದೇವರು ತಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ,” ಎಂದು ಜನರು ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ಮಸ್ಸಾ ಎಂದು ಹೆಸರಿಟ್ಟನು. ಅಲ್ಲಿ ಇಸ್ರಾಯೇಲರು ತನ್ನೊಡನೆ ವಿವಾದ ಮಾಡಿದ್ದರಿಂದ ಮೆರೀಬಾ ಎಂತಲೂ ಹೆಸರಿಟ್ಟನು.
EXO 17:8 ಅಮಾಲೇಕ್ಯರು ಬಂದು ರೆಫೀದೀಮಿನಲ್ಲಿ ಇಸ್ರಾಯೇಲರ ಸಂಗಡ ಯುದ್ಧಮಾಡಿದರು.
EXO 17:9 ಆಗ ಮೋಶೆಯು ಯೆಹೋಶುವನಿಗೆ, “ನೀನು ನಮ್ಮ ಜನರಲ್ಲಿ ಕೆಲವರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗು. ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು,” ಎಂದನು.
EXO 17:10 ಯೆಹೋಶುವನು ಮೋಶೆ ಅಪ್ಪಣೆ ಕೊಟ್ಟಂತೆ ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು.
EXO 17:11 ಮೋಶೆಯು ತನ್ನ ಕೈಯನ್ನು ಎತ್ತಿದಾಗ, ಇಸ್ರಾಯೇಲರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು.
EXO 17:12 ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಕಲ್ಲನ್ನು ತಂದು ಇಟ್ಟಾಗ, ಅವನು ಅದರ ಮೇಲೆ ಕೂತುಕೊಂಡನು. ಆರೋನನು ಒಂದು ಕಡೆಯಲ್ಲಿಯೂ, ಹೂರನು ಇನ್ನೊಂದು ಕಡೆಯಲ್ಲಿಯೂ ಮೋಶೆಯ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವವರೆಗೆ ಅವನ ಕೈಗಳು ಇಳಿಯದೆ ನಿಂತೇ ಇದ್ದವು.
EXO 17:13 ಯೆಹೋಶುವನು ಅಮಾಲೇಕ್ಯರನ್ನೂ, ಅವನ ಜನರನ್ನೂ ಖಡ್ಗದಿಂದ ಸೋಲಿಸಿದನು.
EXO 17:14 ಆಗ ಯೆಹೋವ ದೇವರು ಮೋಶೆಗೆ, “ಇದನ್ನು ಜ್ಞಾಪಕಾರ್ಥವಾಗಿ ಗ್ರಂಥದಲ್ಲಿ ಬರೆ. ಏಕೆಂದರೆ ನಾನು ಅಮಾಲೇಕ್ಯರ ನೆನಪು ಭೂಲೋಕದಲ್ಲಿ ಇರದಂತೆ ಸಂಪೂರ್ಣವಾಗಿ ಅಳಿಸಿಬಿಡುವೆನು. ಇದನ್ನು ಯೆಹೋಶುವನಿಗೆ ಮನದಟ್ಟಾಗುವಂತೆ ಹೇಳು,” ಎಂದರು.
EXO 17:15 ಇದಾದ ಮೇಲೆ ಮೋಶೆ ಬಲಿಪೀಠವನ್ನು ಕಟ್ಟಿ, ಅದಕ್ಕೆ “ಯೆಹೋವ ನಿಸ್ಸೀ,” ಎಂದು ಹೆಸರಿಟ್ಟನು.
EXO 17:16 ಅನಂತರ ಮೋಶೆ, “ಯೆಹೋವ ದೇವರ ಸಿಂಹಾಸನಕ್ಕೆ ವಿರೋಧವಾಗಿ ಅಮಾಲೇಕ್ಯರ ಕೈಗಳು ಎತ್ತಿದ್ದರಿಂದ, ಯೆಹೋವ ದೇವರು ತಲತಲಾಂತರಗಳಲ್ಲಿ ಅಮಾಲೇಕ್ಯರ ವಿರುದ್ಧ ಯುದ್ಧಮಾಡುವರು,” ಎಂದನು.
EXO 18:1 ದೇವರು ಮೋಶೆಗೂ, ತಮ್ಮ ಜನರಾದ ಇಸ್ರಾಯೇಲರಿಗೂ ಮಾಡಿದವುಗಳೆಲ್ಲವನ್ನೂ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದದ್ದನ್ನೂ, ಮಿದ್ಯಾನಿನ ಯಾಜಕನೂ, ಮೋಶೆಯ ಮಾವನೂ ಆಗಿದ್ದ ಇತ್ರೋವನಿಗೆ ಮುಟ್ಟಿತು.
EXO 18:2 ಅವನು ತನ್ನ ಬಳಿಗೆ ಕಳುಹಿಸಲಾಗಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನು ಮತ್ತು ಆಕೆಯ ಇಬ್ಬರು ಪುತ್ರರನ್ನು ಕರೆದುಕೊಂಡು ಬಂದನು.
EXO 18:3 ಮೋಶೆಯು, “ನಾನು ಪರದೇಶದಲ್ಲಿ ಅನ್ಯನಾಗಿದ್ದೆನು,” ಎಂದು ಹೇಳಿ ಆ ಪುತ್ರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿಟ್ಟಿದ್ದನು.
EXO 18:4 “ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು, ಫರೋಹನ ಖಡ್ಗದಿಂದ ಬಿಡುಗಡೆ ಮಾಡಿದನು,” ಎಂದು ಹೇಳಿ ಇನ್ನೊಬ್ಬ ಮಗನಿಗೆ ಎಲೀಯೆಜೆರ್ ಎಂದು ಹೆಸರಿಟ್ಟಿದ್ದನು.
EXO 18:5 ಮೋಶೆಯ ಮಾವನಾದ ಇತ್ರೋವನ ಸಂಗಡ ಮೋಶೆಯ ಹೆಂಡತಿಯನ್ನೂ, ಅವನ ಪುತ್ರರನ್ನೂ ಮೋಶೆಯ ಬಳಿಗೆ ಅವನು ತಂಗಿದ್ದ ಮರುಭೂಮಿಯಲ್ಲಿ ದೇವರ ಬೆಟ್ಟದ ಬಳಿಗೆ ಬಂದರು.
EXO 18:6 ಆಗ ಅವನು ಮೋಶೆಗೆ, “ನಿನ್ನ ಮಾವ ಇತ್ರೋವನೆಂಬ ನಾನು ನಿನ್ನ ಹೆಂಡತಿ, ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆ,” ಎಂದು ಹೇಳಿ ಕಳುಹಿಸಿದನು.
EXO 18:7 ಮೋಶೆಗೆ ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ, ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.
EXO 18:8 ಇಸ್ರಾಯೇಲರಿಗೋಸ್ಕರ ಯೆಹೋವ ದೇವರು ಫರೋಹನಿಗೂ ಈಜಿಪ್ಟಿನವರಿಗೂ ಮಾಡಿದ್ದೆಲ್ಲವನ್ನೂ, ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಯೆಹೋವ ದೇವರು ತಮ್ಮನ್ನು ಹೇಗೆ ತಪ್ಪಿಸಿದನೆಂಬುದನ್ನೂ ಮೋಶೆಯು ತನ್ನ ಮಾವನಿಗೆ ತಿಳಿಯಪಡಿಸಿದನು.
EXO 18:9 ಇದಲ್ಲದೆ ಯೆಹೋವ ದೇವರು ಇಸ್ರಾಯೇಲರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ, ಯೆಹೋವ ದೇವರು ಅವರನ್ನು ಈಜಿಪ್ಟಿನವರ ಕೈಗಳಿಂದ ತಪ್ಪಿಸಿದ್ದಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು.
EXO 18:10 ಇತ್ರೋವನು, “ಈಜಿಪ್ಟಿನವರ ಕೈಗೂ ಫರೋಹನ ಕೈಗೂ ಈಜಿಪ್ಟಿನವರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
EXO 18:11 ಎಲ್ಲಾ ದೇವರುಗಳಿಗಿಂತ ಯೆಹೋವ ದೇವರೇ ದೊಡ್ಡವರೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ ಈಜಿಪ್ಟಿನವರು ಗರ್ವಪಟ್ಟಿದ್ದರಿಂದ ಯೆಹೋವ ದೇವರು ಅವರನ್ನು ತಗ್ಗಿಸಿದರು,” ಎಂದನು.
EXO 18:12 ಮೋಶೆಯ ಮಾವ ಇತ್ರೋವನು ದಹನಬಲಿಯನ್ನೂ, ಯಜ್ಞಗಳನ್ನೂ ದೇವರಿಗಾಗಿ ತೆಗೆದುಕೊಂಡು ಬಂದನು. ಆರೋನನೂ, ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನವನ್ನು ಮಾಡುವುದಕ್ಕೆ ಬಂದರು.
EXO 18:13 ಮರುದಿನ ಮೋಶೆಯು ಜನರಿಗೆ ನ್ಯಾಯತೀರಿಸುವುದಕ್ಕೆ ಕೂತುಕೊಂಡಾಗ, ಜನರು ಬೆಳಗಿನಿಂದ ಸಂಜೆಯವರೆಗೆ ಮೋಶೆಯ ಬಳಿಯಲ್ಲಿ ನಿಂತಿದ್ದರು.
EXO 18:14 ಇತ್ರೋವನು ಮೋಶೆಯು ಜನರಿಗಾಗಿ ಮಾಡುವುದನ್ನೆಲ್ಲಾ ನೋಡಿದಾಗ, ಅವನು ಮೋಶೆಗೆ, “ಇದೇನು ಜನರಿಗೆ ನೀನು ಮಾಡುವುದು? ಏಕೆ ನೀನೊಬ್ಬನೇ ನ್ಯಾಯಾಧೀಶನಾಗಿ ಕೂತಿರಲಾಗಿ, ಜನರು ಬೆಳಗಿನಿಂದ ಸಂಜೆಯವರೆಗೆ ನಿನ್ನ ಬಳಿಯಲ್ಲಿ ನಿಂತಿರಬೇಕು?” ಎಂದನು.
EXO 18:15 ಅದಕ್ಕೆ ಮೋಶೆಯು ತನ್ನ ಮಾವನಿಗೆ, “ದೇವರ ವಿಷಯವಾಗಿ ಕೇಳುವುದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.
EXO 18:16 ಅವರಿಗೆ ಏನಾದರೂ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ,” ಎಂದನು.
EXO 18:17 ಮೋಶೆಯ ಮಾವನು ಅವನಿಗೆ, “ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ,
EXO 18:18 ನೀನೂ, ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ. ಏಕೆಂದರೆ ಇದು ನಿನಗೆ ಬಹು ಭಾರ. ನೀನೊಬ್ಬನೇ ಇದನ್ನು ಮಾಡಲಾರೆ.
EXO 18:19 ಆದ್ದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ. ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು, ಅವರ ವ್ಯಾಜ್ಯಗಳನ್ನು ದೇವರ ಮುಂದೆ ತರಬೇಕು.
EXO 18:20 ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕಲಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಅವರು ಮಾಡಬೇಕಾದ ಕೆಲಸವನ್ನೂ ಅವರಿಗೆ ತೋರಿಸಬೇಕು.
EXO 18:21 ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯಪಡುವವರೂ, ಸತ್ಯವಂತರೂ, ದುರಾಶೆಯನ್ನು ಹಗೆಮಾಡುವವರೂ ಆಗಿರುವವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸು.
EXO 18:22 ಇವರು ಎಲ್ಲಾ ಕಾಲಗಳಲ್ಲಿಯೂ ಜನರಿಗೆ ನ್ಯಾಯತೀರಿಸಲಿ. ಆದರೆ ದೊಡ್ಡ ವ್ಯಾಜ್ಯಗಳನ್ನೆಲ್ಲಾ ನಿನ್ನ ಮುಂದೆ ತಂದು, ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಆಗ ನಿನಗೆ ಸುಲಭವಾಗುವುದು. ಅವರೂ ನಿನ್ನ ಸಂಗಡ ಭಾರವನ್ನು ಹೊರುವರು.
EXO 18:23 ಈ ಕಾರ್ಯವನ್ನು ಮಾಡುವುದಕ್ಕೆ ದೇವರು ನಿನಗೆ ಅಪ್ಪಣೆ ಕೊಟ್ಟರೆ, ಆಗ ನೀನು ಇದನ್ನು ನಿರ್ವಹಿಸಲು ಶಕ್ತನಾಗುವೆ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು,” ಎಂದನು.
EXO 18:24 ಮೋಶೆಯು ತನ್ನ ಮಾವನ ಮಾತನ್ನು ಕೇಳಿ, ಅವನು ಹೇಳಿದ್ದನ್ನೆಲ್ಲಾ ಮಾಡಿದನು.
EXO 18:25 ಮೋಶೆಯು ಇಸ್ರಾಯೇಲರಲ್ಲಿ ಇರುವ ಸಮರ್ಥರನ್ನು ಆರಿಸಿಕೊಂಡು, ಅವರನ್ನು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ, ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದನು.
EXO 18:26 ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ, ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.
EXO 18:27 ತರುವಾಯ ಮೋಶೆಯು ತನ್ನ ಮಾವ ಇತ್ರೋವನಿಗೆ ಸಾಗಕಳುಹಿಸಿದಾಗ, ಅವನು ಸ್ವದೇಶಕ್ಕೆ ಹೊರಟುಹೋದನು.
EXO 19:1 ಇಸ್ರಾಯೇಲರು ಈಜಿಪ್ಟನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.
EXO 19:2 ಅವರು ರೆಫೀದೀಮಿನಿಂದ ಹೊರಟು, ಸೀನಾಯಿ ಮರುಭೂಮಿಗೆ ಬಂದು, ಮರುಭೂಮಿಯಲ್ಲಿ ಡೇರೆ ಹಾಕಿ, ಬೆಟ್ಟಕ್ಕೆದುರಾಗಿ ಇಳಿದುಕೊಂಡರು.
EXO 19:3 ಮೋಶೆಯು ದೇವರ ಸನ್ನಿಧಿಗೆ ಬೆಟ್ಟದ ಮೇಲೆ ಹೋದನು. ಆಗ ಯೆಹೋವ ದೇವರು ಸೀನಾಯಿ ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಇದನ್ನು ತಿಳಿಸು:
EXO 19:4 ‘ನಾನು ಈಜಿಪ್ಟಿನವರಿಗೆ ಮಾಡಿದ್ದನ್ನೂ, ಹದ್ದು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಮೇಲೆ ಹೊತ್ತು ಬರುವಂತೆ ನಿಮ್ಮನ್ನು ಈ ಸ್ಥಳಕ್ಕೆ ಬರಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
EXO 19:5 ಆದ್ದರಿಂದ ಈಗ ನೀವು ನನ್ನ ಮಾತನ್ನು ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿದರೆ, ಸಮಸ್ತ ಜನರಲ್ಲಿ ನೀವು ನನ್ನ ಸಂಗ್ರಹಿಸಿದ ಸೊತ್ತಾಗಿರುವಿರಿ. ಏಕೆಂದರೆ ಭೂಮಿಯೆಲ್ಲಾ ನನ್ನದೇ.
EXO 19:6 ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ.’ ಇಸ್ರಾಯೇಲರಿಗೆ ನೀನು ಹೇಳಬೇಕಾದ ಮಾತುಗಳು ಇವೇ,” ಎಂದರು.
EXO 19:7 ಆಗ ಮೋಶೆಯು ಇಳಿದುಬಂದು ಜನರ ಹಿರಿಯರನ್ನು ಕರೆದು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರ ಮುಂದೆ ಇಟ್ಟನು.
EXO 19:8 ಜನರೆಲ್ಲಾ ಒಂದಾಗಿ ಉತ್ತರಕೊಟ್ಟು, “ಯೆಹೋವ ದೇವರು ಹೇಳಿದ್ದನ್ನೆಲ್ಲಾ ಮಾಡುತ್ತೇವೆ,” ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ಹೇಳಿದನು.
EXO 19:9 ಯೆಹೋವ ದೇವರು ಮೋಶೆಗೆ, “ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ದಟ್ಟವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ,” ಎಂದರು. ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ತಿಳಿಸಿದನು.
EXO 19:10 ಆಗ ಯೆಹೋವ ದೇವರು ಮೋಶೆಗೆ, “ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಳ್ಳಲಿ.
EXO 19:11 ಮೂರನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ. ಏಕೆಂದರೆ ಮೂರನೆಯ ದಿನದಲ್ಲಿ ಯೆಹೋವ ದೇವರು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವರು.
EXO 19:12 ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ, ‘ಅವರು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತು ಹೋಗುವರು.
EXO 19:13 ಯಾರೂ ಅಂಥವರನ್ನು ಮುಟ್ಟಬಾರದು. ಮುಟ್ಟಿದ ಪಶುವಾಗಲಿ, ಮನುಷ್ಯನಾಗಲಿ ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು.’ ದೀರ್ಘವಾಗಿ ತುತೂರಿ ಊದುವ ಸಮಯದಲ್ಲಿ ಅವರು ಬೆಟ್ಟದ ಬಳಿಗೆ ಬರಬೇಕು,” ಎಂದರು.
EXO 19:14 ಆಗ ಮೋಶೆಯು ಬೆಟ್ಟದಿಂದಿಳಿದು ಜನರನ್ನು ಶುದ್ಧಿಮಾಡಿದನು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು.
EXO 19:15 ಅವನು ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ, ನೀವು ಲೈಂಗಿಕ ಸಂಬಂಧದಿಂದ ದೂರವಾಗಿರಿ,” ಎಂದನು.
EXO 19:16 ಮೂರನೆಯ ದಿನದಲ್ಲಿ ಉದಯವಾದಾಗ, ಬೆಟ್ಟದ ಮೇಲೆ ಗುಡುಗು, ಮಿಂಚು, ದಟ್ಟವಾದ ಮೇಘ ಮತ್ತು ತುತೂರಿಯ ಮಹಾ ಧ್ವನಿ ಉಂಟಾದವು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿದರು.
EXO 19:17 ಆಗ ಮೋಶೆಯು ದೇವರನ್ನು ಸಂಧಿಸುವುದಕ್ಕೆ ಜನರನ್ನು ಪಾಳೆಯದೊಳಗಿಂದ ಹೊರಗೆ ಬರಮಾಡಿದನು. ಆಗ ಅವರು ಬೆಟ್ಟದ ಕೆಳಗೆ ನಿಂತುಕೊಂಡರು.
EXO 19:18 ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
EXO 19:19 ತುತೂರಿಯ ಧ್ವನಿಯು ಬರಬರುತ್ತಾ ಹೆಚ್ಚಾಗುತ್ತಾ ಇತ್ತು. ಆಗ ಮೋಶೆಯು ದೇವರೊಡನೆ ಮಾತನಾಡಿದನು. ಅವನಿಗೆ ದೇವರು ಉತ್ತರಕೊಟ್ಟರು.
EXO 19:20 ಯೆಹೋವ ದೇವರು ಸೀನಾಯಿ ಬೆಟ್ಟದ ತುದಿಯಲ್ಲಿ ಇಳಿದುಬಂದು ಮೋಶೆಯನ್ನು ಬೆಟ್ಟದ ತುದಿಗೆ ಕರೆದರು. ಮೋಶೆಯು ಮೇಲೆ ಹೋದನು.
EXO 19:21 ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಯೆಹೋವ ದೇವರನ್ನು ನೋಡುವದಕ್ಕಾಗಿ ಮುಂದೆ ಬಂದರೆ, ಅವರಲ್ಲಿ ಬಹಳ ಜನರು ಸಾಯುವರು.
EXO 19:22 ಯೆಹೋವ ದೇವರ ಸಮೀಪಕ್ಕೆ ಬರುವ ಯಾಜಕರು ಸಹ ಯೆಹೋವ ದೇವರು ಅವರನ್ನು ಸಾಯಿಸದಂತೆ ತಮ್ಮನ್ನು ಶುದ್ಧಿಮಾಡಿಕೊಳ್ಳಲಿ, ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದರು.
EXO 19:23 ಮೋಶೆಯು ಯೆಹೋವ ದೇವರಿಗೆ, “ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀವೇ ನಮ್ಮನ್ನು ಎಚ್ಚರಿಸಿದ್ದೀರಿ,” ಎಂದನು.
EXO 19:24 ಆಗ ಯೆಹೋವ ದೇವರು ಅವನಿಗೆ, “ನೀನು ಇಳಿದು ಹೋಗಿ, ಆರೋನನನ್ನು ಕರೆದುಕೊಂಡು ಇಲ್ಲಿಗೆ ಬಾ. ಆದರೆ ಯೆಹೋವ ದೇವರಿಂದ ಸಂಹಾರವಾಗದಂತೆ ಯಾಜಕರೂ ಜನರೂ ಮುಂದೆ ಯೆಹೋವ ದೇವರ ಬಳಿಗೆ ಬಾರದೇ ಇರಲಿ,” ಎಂದರು.
EXO 19:25 ಮೋಶೆಯು ಜನರ ಬಳಿಗೆ ಇಳಿದು ಹೋಗಿ ಅವರಿಗೆ ಇದನ್ನೆಲ್ಲಾ ಹೇಳಿದನು.
EXO 20:1 ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದರು:
EXO 20:2 “ನಿನ್ನನ್ನು ಈಜಿಪ್ಟ್ ದೇಶದಿಂದಲೂ ದಾಸತ್ವದ ನಾಡಿನೊಳಗಿಂದಲೂ ಹೊರಗೆ ತಂದ ನಿನ್ನ ದೇವರಾದ ಯೆಹೋವ ದೇವರು ನಾನೇ.
EXO 20:3 “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.
EXO 20:4 ಮೇಲಿನ ಆಕಾಶದಲ್ಲಾಗಲಿ, ಕೆಳಗಿನ ಭೂಮಿಯಲ್ಲಾಗಲಿ, ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಇರುವ ಯಾವುದರ ವಿಗ್ರಹವನ್ನಾಗಲಿ, ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.
EXO 20:5 ನೀನು ಅವುಗಳಿಗೆ ಅಡ್ಡ ಬೀಳಬಾರದು ಮತ್ತು ಆರಾಧಿಸಲೂಬಾರದು. ಏಕೆಂದರೆ ನಿನ್ನ ದೇವರಾದ ನಾನು, ನನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತನಾದ ಯೆಹೋವ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆತಾಯಿಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳವರೆಗೂ ಬರಮಾಡುವೆನು.
EXO 20:6 ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಸಾವಿರ ತಲೆಗಳವರೆಗೆ ಪ್ರೀತಿ ತೋರಿಸುತ್ತೇನೆ.
EXO 20:7 ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.
EXO 20:8 ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಆಚರಿಸಿರಿ.
EXO 20:9 ಆರು ದಿನಗಳಲ್ಲಿ ನೀನು ದುಡಿದು, ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
EXO 20:10 ಆದರೆ ಏಳನೆಯ ದಿನ ನಿನ್ನ ದೇವರಾದ ಯೆಹೋವ ದೇವರ ಸಬ್ಬತ್ ದಿನವಾಗಿದೆ. ಅದರಲ್ಲಿ ನೀನಾಗಲೀ, ನಿನ್ನ ಮಗನಾಗಲೀ, ನಿನ್ನ ಮಗಳಾಗಲೀ, ನಿನ್ನ ದಾಸನಾಗಲೀ, ನಿನ್ನ ದಾಸಿಯಾಗಲೀ, ನಿನ್ನ ಪಶುಗಳಾಗಲೀ ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಸಹ ಯಾವ ಕೆಲಸವನ್ನೂ ಮಾಡಬಾರದು.
EXO 20:11 ಏಕೆಂದರೆ ಆರು ದಿನಗಳಲ್ಲಿ ಯೆಹೋವ ದೇವರು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದ್ದರಿಂದ ಯೆಹೋವ ದೇವರು ಸಬ್ಬತ್ ದಿನವನ್ನು ಆಶೀರ್ವದಿಸಿ, ಅದನ್ನು ಪರಿಶುದ್ಧ ಮಾಡಿದರು.
EXO 20:12 ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು.
EXO 20:13 ಕೊಲೆ ಮಾಡಬೇಡ.
EXO 20:14 ವ್ಯಭಿಚಾರ ಮಾಡಬೇಡ.
EXO 20:15 ಕದಿಯಬೇಡ.
EXO 20:16 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.
EXO 20:17 ನಿನ್ನ ನೆರೆಯವನ ಮನೆಯನ್ನು ಆಶಿಸಬೇಡ. ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.”
EXO 20:18 ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟದಲ್ಲಿ ಹೊಗೆ ಹಾಯುವುದನ್ನೂ ನೋಡಿದರು. ಜನರು ಅದನ್ನು ನೋಡಿ ನಡುಗುತ್ತಾ ದೂರಹೋಗಿ ನಿಂತುಕೊಂಡರು.
EXO 20:19 ಅವರು ಮೋಶೆಗೆ, “ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮೊಂದಿಗೆ ನೇರವಾಗಿ ಮಾತನಾಡಲು ಬಿಡಬೇಡಿ,” ಎಂದು ವಿನಂತಿಸಿಕೊಂಡರು.
EXO 20:20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ. ಏಕೆಂದರೆ ನಿಮ್ಮನ್ನು ಪರೀಕ್ಷಿಸುವುದಕ್ಕೋಸ್ಕರವೂ ನೀವು ಪಾಪಮಾಡದಂತೆ ಅವರ ಭಯವು ನಿಮಗಿರಲೆಂದೂ ದೇವರು ಬಂದಿದ್ದಾರೆ,” ಎಂದನು.
EXO 20:21 ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
EXO 20:22 ಯೆಹೋವ ದೇವರು ಮೋಶೆಗೆ, “ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
EXO 20:23 ನನ್ನ ಹೊರತಾಗಿ ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ.
EXO 20:24 “ ‘ಬಲಿಪೀಠವನ್ನು ಮಣ್ಣಿನಿಂದ ಮಾಡಬೇಕು. ಅದರ ಮೇಲೆ ನಿಮ್ಮ ಸಮರ್ಪಣೆಗಳಾದ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಮೇಕೆಗಳನ್ನೂ ದನಗಳನ್ನೂ ಅರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
EXO 20:25 ಬಲಿಪೀಠವನ್ನು ಕಲ್ಲಿನಿಂದ ಮಾಡಿದರೆ, ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಏಕೆಂದರೆ ಉಳಿಯನ್ನು ಅದರ ಮೇಲೆ ಉಪಯೋಗಿಸಿದರೆ, ಅದನ್ನು ಅಪವಿತ್ರಮಾಡಿದ ಹಾಗಾಗುತ್ತದೆ.
EXO 20:26 ನನಗಾಗಿ ಬಲಿಪೀಠದ ಮೇಲೆ ಹೋಗಲು ಹತ್ತುವಾಗ ನಿನ್ನ ಬೆತ್ತಲೆತನ ಕಾಣಬಾರದು. ಅದರ ಮೆಟ್ಟಲುಗಳನ್ನು ಹತ್ತಬಾರದು,’ ಎಂದು ಹೇಳಿದರು.
EXO 21:1 “ಈಗ ಅವರ ಮುಂದೆ ನೀನು ಇಡತಕ್ಕ ನ್ಯಾಯವಿಧಿಗಳು ಇವೇ.
EXO 21:2 “ನೀನು ಹಿಬ್ರಿಯ ದಾಸನನ್ನು ಕೊಂಡುಕೊಂಡರೆ, ಅವನು ಆರು ವರ್ಷ ನಿನಗೆ ಸೇವೆಮಾಡಬೇಕು. ಏಳನೆಯ ವರ್ಷದಲ್ಲಿ ಅವನು ಏನೂ ಕೊಡದೆ ಬಿಡುಗಡೆಯಾಗಿ ಹೋಗಲಿ.
EXO 21:3 ಅವನು ಒಬ್ಬನಾಗಿ ಬಂದಿದ್ದರೆ, ಒಬ್ಬನಾಗಿಯೇ ಹೋಗಬೇಕು. ಅವನು ಮದುವೆಯಾದವನಾಗಿದ್ದರೆ, ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.
EXO 21:4 ಅವನ ಯಜಮಾನನು ಅವನಿಗೆ ಮದುವೆಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ಅವನು ಒಬ್ಬನಾಗಿಯೇ ಹೋಗಬೇಕು.
EXO 21:5 “ಆದರೆ ದಾಸನು, ‘ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿಮಾಡುತ್ತೇನೆ. ಆದ್ದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,’ ಎಂದು ಸ್ವಷ್ಟವಾಗಿ ಹೇಳಿದರೆ,
EXO 21:6 ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು, ಬಾಗಿಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ, ಅವನ ಯಜಮಾನನು ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ದಾಸನಾಗಿರಬೇಕು.
EXO 21:7 “ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಹೋಗುವಂತೆ ಆಕೆಯು ಹೋಗಿಬಿಡಬಾರದು.
EXO 21:8 ಅವಳನ್ನು ನಿಶ್ಚಯಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ, ಆಗ ಅವಳು ಬಿಡುಗಡೆಯಾಗುವಂತೆ ಮಾಡಲಿ. ಅವನು ಅವಳನ್ನು ವಂಚಿಸಿದ್ದರಿಂದ ಯೆಹೂದ್ಯರಲ್ಲದವರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
EXO 21:9 ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿದರೆ, ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.
EXO 21:10 ಒಂದು ವೇಳೆ ಅವನು ಇನ್ನೊಬ್ಬಳನ್ನು ಮದುವೆಯಾದರೆ, ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕನ್ನು ಕಡಿಮೆ ಮಾಡಬಾರದು.
EXO 21:11 ಈ ಮೂರನ್ನು ಅವಳಿಗೆ ಮಾಡದೆ ಹೋದರೆ, ಅವಳು ಏನೂ ಕ್ರಯ ಕೊಡದೆ, ಸ್ವತಂತ್ರಳಾಗಿ ಹೋಗಿಬಿಡಬಹುದು.
EXO 21:12 “ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.
EXO 21:13 ಆದರೆ ಕೊಲ್ಲಬೇಕೆಂಬ ಯೋಚನೆ ಇಲ್ಲದೆ ದೇವರು ಅನುಮತಿಸಿದ್ದರಿಂದ ಕೊಲೆಯಾದರೆ, ಕೊಂದವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಾನು ನೇಮಿಸುವೆನು.
EXO 21:14 ಆದರೆ ಒಬ್ಬನು ಮತ್ತೊಬ್ಬನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಬಲಿಪೀಠದಿಂದ ದೂರ ತೆಗೆದುಕೊಂಡುಹೋಗಿ ಕೊಂದುಹಾಕಬೇಕು.
EXO 21:15 “ತಂದೆತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಮರಣದಂಡನೆ ಹೊಂದಬೇಕು.
EXO 21:16 “ಒಬ್ಬನು ಮತ್ತೊಬ್ಬನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ, ಇಲ್ಲವೆ ಅವನು ಬಂಧನಕ್ಕೊಳಗಾದಾಗ ಅಪಹರಿಸಲಾದವನು ಅವನೊಂದಿಗಿದ್ದರೆ, ಅವನನ್ನು ಮರಣದಂಡನೆಗೆ ಗುರಿಮಾಡಬೇಕು.
EXO 21:17 “ತಂದೆಗಾದರೂ ತಾಯಿಗಾದರೂ ಶಾಪಕೊಟ್ಟವನು ಖಂಡಿತವಾಗಿ ಸಾಯಬೇಕು.
EXO 21:18 “ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಟಿಯಿಂದಾಗಲಿ ಹೊಡೆದದ್ದರಿಂದ ಅವನು ಸಾಯದೆ ಗಾಯಗೊಂಡು, ಹಾಸಿಗೆ ಹಿಡಿದು, ಕ್ರಮೇಣ
EXO 21:19 ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ, ಅವನನ್ನು ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಪೆಟ್ಟು ತಿಂದವನು ಗುಣಹೊಂದುವವರೆಗೆ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನನ್ನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
EXO 21:20 “ಒಬ್ಬನು ದಾಸನನ್ನಾಗಲಿ, ದಾಸಿಯನ್ನಾಗಲಿ ಸಾಯುವಂತೆ ಕೋಲಿನಿಂದ ಹೊಡೆದಾಗ, ಹೊಡೆದವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.
EXO 21:21 ದಾಸದಾಸಿಯರು ಒಂದೆರಡು ದಿನಗಳ ನಂತರ ಉಳಿದರೆ ಶಿಕ್ಷೆಯಾಗಬಾರದು. ಏಕೆಂದರೆ ಅವರು ಅವನ ಸೊತ್ತು.
EXO 21:22 “ಜನರು ಜಗಳವಾಡುವಾಗ ಗರ್ಭಿಣಿಯಾದ ಸ್ತ್ರೀಗೆ ಏಟು ತಗಲಿ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು.
EXO 21:23 ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನು, ಕಣ್ಣಿಗೆ ಕಣ್ಣನ್ನು,
EXO 21:24 ಹಲ್ಲಿಗೆ ಹಲ್ಲು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು,
EXO 21:25 ಸುಟ್ಟ ಗಾಯಕ್ಕೆ ಸುಟ್ಟಗಾಯವನ್ನು, ಕಡಿದ ಗಾಯಕ್ಕೆ ಕಡಿದ ಗಾಯವನ್ನು, ಹೊಡೆದ ಗಾಯಕ್ಕೆ ಹೊಡೆದು ಗಾಯವನ್ನು ನೀನು ಮಾಡಬೇಕು.
EXO 21:26 “ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ, ಆ ಕಣ್ಣಿಗೋಸ್ಕರ ಅವರನ್ನು ಅವನು ಬಿಡುಗಡೆ ಮಾಡಿ ಕಳುಹಿಸಲಿ.
EXO 21:27 ಒಬ್ಬನು ದಾಸನ ಹಲ್ಲನ್ನು, ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ, ಹಲ್ಲಿಗೋಸ್ಕರ ಅವರನ್ನು ಬಿಡುಗಡೆ ಮಾಡಿ ಕಳುಹಿಸಲಿ.
EXO 21:28 “ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಹಾಯ್ದು ಕೊಂದರೆ, ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆ ಎತ್ತಿನ ಯಜಮಾನನು ನಿರಪರಾಧಿ.
EXO 21:29 ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೆ ಇದ್ದುದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದುಹಾಕಿದರೆ, ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಆದರೆ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
EXO 21:30 ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿಸಿದರೆ, ಅವನು ತನಗೆ ನೇಮಿಸಿದ್ದನ್ನೆಲ್ಲಾ ತನ್ನ ಪ್ರಾಣವಿಮೋಚನೆಗಾಗಿ ಕೊಡಲಿ.
EXO 21:31 ಅದು ಮಗನನ್ನು ಹಾಯ್ದಿದ್ದರೂ, ಮಗಳನ್ನು ಹಾಯ್ದಿದ್ದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
EXO 21:32 ದಾಸನನ್ನಾದರೂ, ದಾಸಿಯನ್ನಾದರೂ ಎತ್ತು ಹಾಯ್ದರೆ, ದಾಸನ, ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
EXO 21:33 “ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದುದರಿಂದ ಎತ್ತಾದರೂ ಕತ್ತೆಯಾದರೂ ಆ ಗುಂಡಿಯಲ್ಲಿ ಬಿದ್ದು ಸತ್ತರೆ,
EXO 21:34 ಗುಂಡಿಯನ್ನು ಅಗೆದವನು ಈಡು ಕೊಡಬೇಕು. ಅವುಗಳ ಯಜಮಾನನಿಗೆ ಕ್ರಯ ನೀಡಬೇಕು. ಆದರೆ ಸತ್ತ ಪಶು ಅವನದಾಗಬೇಕು.
EXO 21:35 “ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ, ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನೂ, ಸತ್ತ ಎತ್ತನ್ನೂ ಸರಿಯಾಗಿ ಇಬ್ಬರೂ ಪಾಲುಮಾಡಿಕೊಳ್ಳಬೇಕು.
EXO 21:36 ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿದ್ದರೂ, ಅದರ ಯಜಮಾನನು ಅದನ್ನು ಕಟ್ಟಿಹಾಕದೆ ಹೋಗಿದ್ದರೆ, ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲುಕೊಡಬೇಕು. ಆದರೆ ಸತ್ತ ಪಶುವನ್ನು ಅವನು ತೆಗೆದುಕೊಳ್ಳಬಹುದು.
EXO 22:1 “ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದು ಕೊಯ್ದರೆ, ಇಲ್ಲವೆ ಅದನ್ನು ಮಾರಿದರೆ, ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ, ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.
EXO 22:2 “ಒಬ್ಬ ಕಳ್ಳನು ಮನೆ ಮುರಿಯುವಾಗಲೇ ಕೈಗೆ ಸಿಕ್ಕಿದಾಗ ಅವನನ್ನು ಹೊಡೆದುಕೊಂದರೆ, ಹೊಡೆದವನ ರಕ್ತ ಸುರಿಸಬಾರದು.
EXO 22:3 ಅವನು ಕಳ್ಳತನ ಮಾಡುವಾಗ ಸೂರ್ಯೋದಯವಾದರೆ, ಹೊಡೆದವನ ರಕ್ತ ಸುರಿಸಬೇಕು. “ಕಳ್ಳನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಹಿಂದಿರುಗಿಸಬೇಕು. ಅವನಲ್ಲಿ ಕೊಡಲು ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನನ್ನು ಗುಲಾಮನನ್ನಾಗಿ ಮಾರಬೇಕು.
EXO 22:4 ಕಳ್ಳತನ ಮಾಡಿದ ಎತ್ತಾಗಲಿ, ಕತ್ತೆಯಾಗಲಿ, ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ಸಿಕ್ಕಿದರೆ ಅವನು ಎರಡರಷ್ಟು ಈಡು ಕೊಡಬೇಕು.
EXO 22:5 “ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ, ದ್ರಾಕ್ಷಿ ತೋಟವನ್ನೂ ಮೇಯಿಸಿದರೆ, ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ, ದ್ರಾಕ್ಷಿ ತೋಟದಲ್ಲಿನ ಉತ್ತಮವಾದದ್ದನ್ನೂ ಈಡು ಕೊಡಬೇಕು.
EXO 22:6 “ಬೆಂಕಿಹತ್ತಿ ಅದು ಮುಳ್ಳಿನ ಕೊಂಪೆಗೆ ತಗುಲಿ, ಸಿವುಡುಗಳ ಬಣವೆಗಳನ್ನಾಗಲಿ, ನಿಂತ ಬೆಳೆಯನ್ನಾಗಲಿ, ಹೊಲವನ್ನಾಗಲಿ ಸುಟ್ಟುಬಿಟ್ಟರೆ, ಆ ಬೆಂಕಿಯನ್ನು ಹಚ್ಚಿದವನು ಖಂಡಿತವಾಗಿ ಈಡು ಕೊಡಬೇಕು.
EXO 22:7 “ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ, ವಸ್ತುಗಳನ್ನಾಗಲಿ ಇಟ್ಟುಕೊಳ್ಳುವುದಕ್ಕೆ ಕೊಟ್ಟಾಗ, ಅದು ಅವನ ಮನೆಯಿಂದ ಕಳ್ಳತನವಾದರೆ, ಕಳ್ಳತನ ಮಾಡಿದವನು ಸಿಕ್ಕಿದರೆ, ಅವನು ಎರಡರಷ್ಟು ಕೊಡಬೇಕು.
EXO 22:8 ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ವಸ್ತುಗಳನ್ನು ಅವನು ಮುಟ್ಟಲಿಲ್ಲವೆಂದು ವಿಚಾರಿಸುವುದಕ್ಕೆ ದೇವರ ಸನ್ನಿಧಿಯಲ್ಲಿ ಅವನನ್ನು ಹಾಜರುಪಡಿಸಬೇಕು.
EXO 22:9 ಎತ್ತು, ಕತ್ತೆ, ಕುರಿ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದುಹೋದ ಯಾವ ತರದ ವಸ್ತುಗಳ ವಿಷಯದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು, ‘ಇದು ತನ್ನದೆಂದು,’ ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ನ್ಯಾಯಾಧಿಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸುವರೋ, ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
EXO 22:10 “ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶುವನ್ನಾದರೂ ಕಾಯುವುದಕ್ಕೆ ಕೊಟ್ಟಾಗ, ಅದು ಸತ್ತರೆ, ಇಲ್ಲವೆ ಊನವಾದರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ,
EXO 22:11 ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಯೆಹೋವ ದೇವರ ಮುಂದೆ ಪ್ರಮಾಣಮಾಡಬೇಕು. ಅದನ್ನು ಪಶುವಿನ ಯಜಮಾನನು ಒಪ್ಪಿದರೆ ಅವನು ಈಡುಕೊಡಬಾರದು.
EXO 22:12 ಆದರೆ ಅದು ಅವನ ಬಳಿಯಿಂದ ಕಳ್ಳತನವಾಗಿ ಹೋಗಿದ್ದರೆ, ಯಜಮಾನನಿಗೆ ಈಡು ಕೊಡಬೇಕು.
EXO 22:13 ಕಾಡುಮೃಗವು ಅದನ್ನು ಕೊಂದಿದ್ದರೆ, ಅದರ ಹೆಣವನ್ನು ಸಾಕ್ಷಿಗಾಗಿ ತರಲಿ. ಕಾಡುಮೃಗ ಕೊಂದಿದ್ದಕ್ಕೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ.
EXO 22:14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಲಾಗಿ ತೆಗೆದುಕೊಂಡಿರಲಾಗಿ ಅದರ ಒಡೆಯನು ಅದರ ಹತ್ತಿರ ಇಲ್ಲದಿರುವಾಗ, ಆ ಪಶುವಿಗೆ ಊನವಾದರೆ, ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಈಡು ಕೊಡಬೇಕು.
EXO 22:15 ಆದರೆ ಅದರ ಯಜಮಾನನು ಅದರ ಸಂಗಡ ಇದ್ದರೆ ಈಡು ಕೊಡದೆಯಿರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಎಣಿಕೆಯಾಗಲಿ.
EXO 22:16 “ಒಬ್ಬನು ಕನ್ನಿಕೆಯನ್ನು ಮೋಸಗೊಳಿಸಿ, ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಆಕೆಗೆ ಖಂಡಿತವಾಗಿ ತೆರವನ್ನು ಕೊಡಬೇಕು.
EXO 22:17 ಆಕೆಯ ತಂದೆಗೆ ಆಕೆಯನ್ನು ಕೊಡುವುದಕ್ಕೆ ಮನಸ್ಸಿಲ್ಲದಿದ್ದರೆ, ಅವನಿಗೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.
EXO 22:18 “ಮಾಟಗಾರ್ತಿಯನ್ನು ಬದುಕಲು ಬಿಡಬಾರದು.
EXO 22:19 “ಪಶುವಿನ ಸಂಗಡ ಸಂಗಮಿಸುವ ಯಾರಾದರೂ ಸರಿ, ಅಂಥವನಿಗೆ ಮರಣದಂಡನೆಯಾಗಬೇಕು.
EXO 22:20 “ಯೆಹೋವ ದೇವರು ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಅರ್ಪಿಸುವವನು ಸಂಪೂರ್ಣವಾಗಿ ನಾಶವಾಗಬೇಕು.
EXO 22:21 “ಪರದೇಶಸ್ಥನನ್ನು ಉಪದ್ರವ ಪಡಿಸಬೇಡಿರಿ ಮತ್ತು ಬಾಧಿಸಲೂ ಬೇಡಿರಿ. ಏಕೆಂದರೆ ನೀವು ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದೀರಿ.
EXO 22:22 “ಯಾವ ವಿಧವೆಯನ್ನು, ದಿಕ್ಕಿಲ್ಲದ ಮಗುವನ್ನು ಬಾಧಿಸಬೇಡಿರಿ.
EXO 22:23 ನೀವು ಯಾವ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ಕೂಗಿದರೆ ನಾನು ನಿಶ್ಚಯವಾಗಿ ಅವರ ಕೂಗನ್ನು ಕೇಳುವೆನು.
EXO 22:24 ಆಗ ನನ್ನ ಕೋಪವು ಉರಿಯುವುದು. ಖಡ್ಗದಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
EXO 22:25 “ನಿಮ್ಮ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ, ಅವನಿಂದ ಬಡ್ಡಿ ತೆಗೆದುಕೊಳ್ಳಬಾರದು.
EXO 22:26 ಇಲ್ಲವೆ ಅವನ ಮೇಲೆ ಬಡ್ಡಿ ಹೊರಿಸಬೇಡ. ನಿಮ್ಮ ನೆರೆಯವನ ಮೇಲಂಗಿಯನ್ನು ಅಡವು ಇಟ್ಟುಕೊಂಡಿದ್ದರೆ, ಸೂರ್ಯನು ಮುಳುಗುವುದರೊಳಗಾಗಿ ಅವನಿಗೆ ಹಿಂದಕ್ಕೆ ಕೊಡಬೇಕು.
EXO 22:27 ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವುದನ್ನು ಹೊದ್ದುಕೊಂಡು ಮಲಗಿಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ಏಕೆಂದರೆ ನಾನು ಅನುಕಂಪ ಉಳ್ಳವನು.
EXO 22:28 “ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.
EXO 22:29 “ನಿನ್ನ ಧಾನ್ಯಗಳನ್ನೂ ಪಾನಗಳನ್ನೂ ನನಗೆ ಅರ್ಪಿಸುವುದಕ್ಕೆ ತಡಮಾಡಬೇಡ. “ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಮೀಸಲಾಗಿಡಬೇಕು.
EXO 22:30 ಅದರಂತೆಯೇ ನಿಮ್ಮ ದನಕುರಿಗಳನ್ನೂ ನನಗೆ ಸಮರ್ಪಿಸಬೇಕು. ಅದು ಏಳು ದಿನಗಳು ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
EXO 22:31 “ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದ್ದರಿಂದ ಹೊಲದಲ್ಲಿ ಕಾಡುಮೃಗ ಕೊಂದದ್ದನ್ನು ನೀವು ತಿನ್ನಬಾರದು, ಅದನ್ನು ನಾಯಿಗಳಿಗೆ ಹಾಕಬೇಕು.
EXO 23:1 “ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುರುದ್ದೇಶಪೂರಿತ ಸಾಕ್ಷಿಯಾಗುವ ಮೂಲಕ ದುಷ್ಟರಿಗೆ ಸಹಾಯಮಾಡಬೇಡ.
EXO 23:2 “ಕೆಟ್ಟದ್ದನ್ನು ಮಾಡುವವರು ಬಹುಮಂದಿ ಆದರೂ ನೀವು ಅವರನ್ನು ಹಿಂಬಾಲಿಸಬೇಡ. ಬಹುಮಂದಿಯೊಂದಿಗೆ ನ್ಯಾಯಕ್ಕೆ ವಿರುದ್ಧವಾಗಿ ವ್ಯಾಜ್ಯದಲ್ಲಿ ಸಾಕ್ಷಿಕೊಡಬೇಡ.
EXO 23:3 ಬಡವನಿಗೂ ವ್ಯಾಜ್ಯದಲ್ಲಿ ಮುಖದಾಕ್ಷಿಣ್ಯ ಮಾಡಬೇಡ.
EXO 23:4 “ನೀವು ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ, ಅದು ನಿಮಗೆ ಸಿಕ್ಕಿದರೆ ನೀವು ಅದನ್ನು ಖಂಡಿತವಾಗಿ ತಿರುಗಿ ಅವನಿಗೆ ತಂದುಕೊಡಬೇಕು.
EXO 23:5 ನಿಮ್ಮನ್ನು ಹಗೆ ಮಾಡುವವನ ಕತ್ತೆಯು ತನ್ನ ಹೊರೆಯ ಕೆಳಗೆ ಬಿದ್ದಿರುವುದನ್ನು ನೀವು ಕಂಡಾಗ, ಅವನಿಗೆ ಸಹಾಯ ಮಾಡುವುದಕ್ಕೆ ಮನಸ್ಸಿಲ್ಲದಿದ್ದರೂ ನೀವು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
EXO 23:6 “ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ತಪ್ಪಿಸಿ ತೀರ್ಪುಕೊಡಬಾರದು.
EXO 23:7 ಸುಳ್ಳಿನ ವಿಷಯಗಳಿಂದ ನೀವು ದೂರವಿರಬೇಕು. ನಿರಪರಾಧಿ, ನೀತಿವಂತ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಬಾರದು. ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
EXO 23:8 “ಲಂಚವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
EXO 23:9 “ಪರದೇಶಿಯರನ್ನು ಪೀಡಿಸಬಾರದು. ಏಕೆಂದರೆ ಈಜಿಪ್ಟ್ ದೇಶದಲ್ಲಿ ನೀವೂ ಪರದೇಶಿಗಳಾದ್ದಿರಷ್ಟೇ, ಅಂಥವರ ಮನೋವ್ಯಥೆಯನ್ನು ನಿಮಗೆ ತಿಳಿದಿದೆ.
EXO 23:10 “ಆರು ವರ್ಷ ನಿಮ್ಮ ಭೂಮಿಗೆ ಬೀಜ ಹಾಕಿ, ಅದರ ಬೆಳೆಯನ್ನು ಕೂಡಿಸಬೇಕು.
EXO 23:11 ಆದರೆ ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು, ಅದನ್ನು ಬೀಳುಬಿಡಬೇಕು. ಆಗ ನಿಮ್ಮ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ. ಅವರು ಬಿಟ್ಟದ್ದನ್ನು ಕಾಡುಮೃಗಗಳು ತಿನ್ನಲಿ. ನಿಮ್ಮ ದ್ರಾಕ್ಷಿತೋಟದ, ಓಲಿವ್ ಮರಗಳ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು.
EXO 23:12 “ಆರು ದಿವಸ ನೀವು ನಿಮ್ಮ ಕೆಲಸಗಳನ್ನು ಮಾಡಬೇಕು. ಏಳನೆಯ ದಿನದಲ್ಲಿ ನೀವು, ನಿಮ್ಮ ಎತ್ತು ಮತ್ತು ನಿಮ್ಮ ಕತ್ತೆ ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿಮ್ಮ ಮನೆಯಲ್ಲಿ ಜನಿಸಿದ ದಾಸದಾಸಿಯರೂ ಪರದೇಶಸ್ಥರೂ ದಣಿವು ಆರಿಸಿಕೊಳ್ಳಲಿ.
EXO 23:13 “ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಗೊಳ್ಳಬೇಕು. ಬೇರೆ ದೇವರುಗಳ ಹೆಸರನ್ನು ಎತ್ತಬೇಡ. ಅದನ್ನು ಉಚ್ಚರಿಸಲೂ ಬೇಡ.
EXO 23:14 “ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡಬೇಕು.
EXO 23:15 “ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ಅಬೀಬ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳವರೆಗೆ ನಾನು ನಿಮಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಆ ತಿಂಗಳಲ್ಲೇ ಈಜಿಪ್ಟಿನಿಂದ ಹೊರಗೆ ಬಂದಿದ್ದೀರಿ. “ಒಬ್ಬರೂ ಕಾಣಿಕೆಯಿಲ್ಲದೆ ಬರಿಗೈಯಿಂದ ನನ್ನ ಸನ್ನಿಧಿಗೆ ಬರಬಾರದು.
EXO 23:16 “ನೀವು ಬಿತ್ತಿದ ಹೊಲದಲ್ಲಿ ಪ್ರಥಮ ಫಲವು ದೊರೆತಾಗ ಸುಗ್ಗಿ ಹಬ್ಬವನ್ನು ಆಚರಿಸಬೇಕು. “ಹೊಲತೋಟಗಳ ಬೆಳೆಯನ್ನು ಕೂಡಿಸುವಾಗ ಅಂದರೆ, ವರ್ಷದ ಕೊನೆಯಲ್ಲಿ ಫಲಸಂಗ್ರಹದ ಹಬ್ಬವನ್ನು ಆಚರಿಸಬೇಕು.
EXO 23:17 “ವರ್ಷಕ್ಕೆ ಮೂರು ಸಾರಿ ನಿಮ್ಮಲ್ಲಿರುವ ಪುರುಷರೆಲ್ಲಾ ಸಾರ್ವಭೌಮ ಯೆಹೋವ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
EXO 23:18 “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. “ಯಾವುದೇ ಹಬ್ಬದ ಅರ್ಪಣೆಯಲ್ಲಿ ಕೊಬ್ಬನ್ನು ಬೆಳಗಿನವರೆಗೆ ಇಟ್ಟುಕೊಳ್ಳಬಾರದು.
EXO 23:19 “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
EXO 23:20 “ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವುದಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ತರುವುದಕ್ಕೋಸ್ಕರವೂ ನಾನು ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.
EXO 23:21 ಅವನ ವಿಷಯದಲ್ಲಿ ಜಾಗ್ರತೆಯಾಗಿದ್ದು, ಅವನ ಮಾತಿಗೆ ವಿಧೇಯರಾಗಿರಿ. ಅವನಿಗೆ ಕೋಪವನ್ನೆಬ್ಬಿಸಬೇಡಿರಿ. ಏಕೆಂದರೆ ನನ್ನ ಹೆಸರು ಅವನಲ್ಲಿ ಇರುವುದರಿಂದ ಅವನು ನಿಮ್ಮ ದ್ರೋಹಗಳನ್ನು ಮನ್ನಿಸುವುದಿಲ್ಲ.
EXO 23:22 ಅವನ ಮಾತಿಗೆ ನೀವು ನಿಜವಾಗಿಯೂ ವಿಧೇಯರಾಗಿ ನಾನು ಹೇಳಿದ್ದನ್ನೆಲ್ಲಾ ನೀವು ಮಾಡಿದರೆ, ನಿಮ್ಮ ಶತ್ರುಗಳಿಗೆ ನಾನು ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ನಾನು ವಿರೋಧಿಯಾಗಿಯೂ ಇರುವೆನು.
EXO 23:23 ಏಕೆಂದರೆ ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು.
EXO 23:24 ಅವರ ದೇವರುಗಳಿಗೆ ನೀವು ಅಡ್ಡಬೀಳಲೂಬಾರದು, ಅವುಗಳನ್ನು ಆರಾಧಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ, ಅವರನ್ನು ನಿರ್ಮೂಲ ಮಾಡಿಬಿಟ್ಟು, ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದುಹಾಕಬೇಕು.
EXO 23:25 ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಬೇಕು. ಆಗ ಆತನು ನಿಮ್ಮ ಆಹಾರವನ್ನೂ ನೀರನ್ನೂ ಆಶೀರ್ವದಿಸುವನು. ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿಬಿಡುವೆನು.
EXO 23:26 ಗರ್ಭ ಸ್ರಾವವಾಗಲಿ, ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವುದಿಲ್ಲ. ನಾನು ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ಅನುಗ್ರಹಿಸುವೆನು.
EXO 23:27 “ನೀವು ಹೋಗುವ ಎಲ್ಲ ಜಾಗಗಳಲ್ಲಿಯೂ ನನ್ನ ಮೇಲಿನ ಭೀತಿಯನ್ನು ನಿಮ್ಮನ್ನು ಎದುರಿಸುವ ಜನರಲ್ಲಿ ಉಂಟುಮಾಡಿಸಿ, ಕಳವಳವನ್ನು ಉಂಟುಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿಸುವಂತೆ ಮಾಡುವೆನು.
EXO 23:28 ಹಿವ್ವಿಯರು, ಕಾನಾನ್ಯರು ಮತ್ತು ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳಹಿಸುವೆನು.
EXO 23:29 ಭೂಮಿಯು ಬರಿದಾಗದಂತೆಯೂ ಕಾಡುಮೃಗಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರ್ಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ
EXO 23:30 ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿಸಿಕೊಳ್ಳುವವರೆಗೆ ಸ್ವಲ್ಪ ಸ್ವಲ್ಪವಾಗಿ ಹೊರಡಿಸುತ್ತಿರುವೆನು.
EXO 23:31 “ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದವರೆಗೆ ಮರುಭೂಮಿಯಿಂದ ನದಿಯವರೆಗೂ ನಿಮ್ಮ ಮೇರೆಗಳನ್ನು ನೇಮಿಸುವೆನು. ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವಿರಿ.
EXO 23:32 ಅವರ ಸಂಗಡ, ಅವರ ದೇವರುಗಳ ಸಂಗಡ ಯಾವ ಒಡಂಬಡಿಕೆಯನ್ನು ಮಾಡಿಕೊಳ್ಳಬಾರದು.
EXO 23:33 ನನಗೆ ವಿರೋಧವಾಗಿ ನೀವು ಪಾಪಮಾಡದಂತಾಗಬೇಕಾದರೆ, ಅವರು ನಿಮ್ಮ ದೇಶದಲ್ಲಿ ವಾಸವಾಗಿರಬಾರದು. ಏಕೆಂದರೆ ನೀವು ಅವರ ದೇವರುಗಳನ್ನು ಆರಾಧಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವುದು.”
EXO 24:1 ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.
EXO 24:2 ಮೋಶೆ ಒಬ್ಬನೇ ಯೆಹೋವ ದೇವರ ಸಮೀಪಕ್ಕೆ ಬರಲಿ. ಬೇರೆ ಯಾರೂ ಸಮೀಪಕ್ಕೆ ಬರಬಾರದು. ಜನರೂ ಅವನ ಸಂಗಡ ಮೇಲೇರಿ ಬರಬಾರದು,” ಎಂದು ಹೇಳಿದರು.
EXO 24:3 ಮೋಶೆಯು ಬಂದು ಯೆಹೋವ ದೇವರ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲಾ ಒಂದೇ ಸ್ವರದಿಂದ, “ಯೆಹೋವ ದೇವರು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ,” ಎಂದು ಉತ್ತರಕೊಟ್ಟರು.
EXO 24:4 ಮೋಶೆಯು ಯೆಹೋವ ದೇವರು ಪ್ರಕಟಪಡಿಸಿದ ಮಾತುಗಳನ್ನೆಲ್ಲಾ ಬರೆದಿಟ್ಟನು. ಅವನು ಮರುದಿನ ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಬಲಿಪೀಠವನ್ನು ಕಟ್ಟಿಸಿ, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.
EXO 24:5 ಅವನು ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಹೋರಿಗಳನ್ನೂ ಅರ್ಪಿಸುವುದಕ್ಕಾಗಿ ಇಸ್ರಾಯೇಲರ ಯೌವನಸ್ಥರನ್ನು ಕಳುಹಿಸಲು ಅವರು ಅದನ್ನು ಅರ್ಪಿಸಿದರು.
EXO 24:6 ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿದನು ಮತ್ತು ರಕ್ತದಲ್ಲಿ ಮಿಕ್ಕ ಅರ್ಧವನ್ನು ಬಲಿಪೀಠದ ಮೇಲೆ ಚಿಮುಕಿಸಿದನು.
EXO 24:7 ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರ ಸಭೆಯಲ್ಲಿ ಓದಿದನು. ಆಗ ಅವರು, “ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ಅವುಗಳಿಗೆ ವಿಧೇಯರಾಗುವೆವು,” ಎಂದರು.
EXO 24:8 ತರುವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಈ ಎಲ್ಲಾ ಮಾತುಗಳ ವಿಷಯದಲ್ಲಿ ಯೆಹೋವ ದೇವರು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತ,” ಎಂದನು.
EXO 24:9 ಆಗ ಮೋಶೆ, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಮೇಲಕ್ಕೆ ಹೋದರು.
EXO 24:10 ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲ ವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ, ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.
EXO 24:11 ಆದರೆ ದೇವರು ಇಸ್ರಾಯೇಲರ ಶ್ರೇಷ್ಠರನ್ನು ತಳ್ಳಿಬಿಡಲಿಲ್ಲ. ಅವರು ಸಹ ದೇವರನ್ನು ನೋಡಿ, ಊಟಮಾಡಿ, ಪಾನಮಾಡಿದರು.
EXO 24:12 ಯೆಹೋವ ದೇವರು ಮೋಶೆಗೆ, “ಬೆಟ್ಟವನ್ನೇರಿ, ನನ್ನ ಬಳಿಗೆ ಬಂದು ಇಲ್ಲೇ ಇರು. ನಿಯಮವನ್ನು ಹಾಗು ಆಜ್ಞೆಗಳನ್ನು ನೀನು ಜನರಿಗೆ ಬೋಧನೆಮಾಡುವಂತೆ ಬರೆದಿರುವ ಕಲ್ಲಿನ ಹಲಗೆಗಳನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು.
EXO 24:13 ಆಗ ಮೋಶೆಯೂ ಅವನ ಸಹಾಯಕನಾದ ಯೆಹೋಶುವನೂ ದೇವರ ಬೆಟ್ಟದ ಮೇಲೆ ಹೊರಟರು.
EXO 24:14 ಆಗ ಮೋಶೆ ಹಿರಿಯರಿಗೆ, “ನಾವು ನಿಮ್ಮ ಬಳಿಗೆ ತಿರುಗಿ ಬರುವವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರಿ. ಆರೋನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿಗಾದರೂ ವ್ಯಾಜ್ಯವಿದ್ದರೆ ಅವರ ಬಳಿಗೆ ಹೋಗಲಿ,” ಎಂದನು.
EXO 24:15 ಮೋಶೆ ಬೆಟ್ಟವನ್ನೇರಿ ಹೋದಾಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.
EXO 24:16 ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.
EXO 24:17 ಯೆಹೋವ ದೇವರ ಮಹಿಮೆಯ ದೃಶ್ಯವು ಇಸ್ರಾಯೇಲರ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ದಹಿಸುವ ಅಗ್ನಿಯಂತಿತ್ತು.
EXO 24:18 ಆಗ ಮೋಶೆಯು ಮೇಘದ ಮಧ್ಯಕ್ಕೆ ಬಂದು ಬೆಟ್ಟವನ್ನೇರಿದನು. ಅವನು ಹಗಲಿರುಳು ನಲವತ್ತು ದಿವಸ ಪರ್ವತದ ಮೇಲಿದ್ದನು.
EXO 25:1 ಯೆಹೋವ ದೇವರು ಮೋಶೆಗೆ,
EXO 25:2 “ನನಗೆ ಕಾಣಿಕೆಗಳನ್ನು ತೆಗೆದುಕೊಂಡು ಬರುವಂತೆ ಇಸ್ರಾಯೇಲರ ಸಂಗಡ ಮಾತನಾಡು. ಯಾರ ಹೃದಯದಲ್ಲಿ ಕಾಣಿಕೆ ಕೊಡಬೇಕೆಂಬ ಪ್ರೇರಣೆ ಹುಟ್ಟುತ್ತದೋ, ಅಂಥವರ ಕಾಣಿಕೆಯನ್ನು ನೀನು ತೆಗೆದುಕೊಳ್ಳಬೇಕು.
EXO 25:3 “ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: “ಚಿನ್ನ, ಬೆಳ್ಳಿ, ಕಂಚು,
EXO 25:4 ನೀಲಿ, ಧೂಮ್ರ, ರಕ್ತವರ್ಣದಾರಗಳು, ನಾರುಬಟ್ಟೆಗಳು, ಮೇಕೆಯ ಕೂದಲು,
EXO 25:5 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ.
EXO 25:6 ದೀಪಕ್ಕಾಗಿ ಓಲಿವ್ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
EXO 25:7 ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೆ.
EXO 25:8 “ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
EXO 25:9 ಗುಡಾರದ ಮಾದರಿಯನ್ನೂ, ಅದರ ಎಲ್ಲಾ ಸಲಕರಣೆಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
EXO 25:10 “ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು.
EXO 25:11 ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿಸಬೇಕು.
EXO 25:12 ಅದಕ್ಕೆ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
EXO 25:13 ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.
EXO 25:14 ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
EXO 25:15 ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯಬಾರದು.
EXO 25:16 ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.
EXO 25:17 “ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.
EXO 25:18 ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು.
EXO 25:19 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು.
EXO 25:20 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು.
EXO 25:21 ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು.
EXO 25:22 ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.
EXO 25:23 “ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಬೇಕು.
EXO 25:24 ಶುದ್ಧ ಬಂಗಾರದಿಂದ ಮೇಜನ್ನು ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.
EXO 25:25 ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.
EXO 25:26 ಇದಲ್ಲದೆ ಆ ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಬೇಕು.
EXO 25:27 ಅಂಚಿಗೆ ಸಮೀಪವಾಗಿ ಮೇಜನ್ನು ಹೊತ್ತುಕೊಂಡು ಹೋಗಲು ಇರುವ ಕೋಲುಗಳಿಗೆ ಬಳೆಗಳು ಇರಬೇಕು.
EXO 25:28 ಮೇಜನ್ನು ಹೊರುವುದಕ್ಕಾಗಿ ಕೋಲುಗಳನ್ನು, ತೋರಣವನ್ನು ಜಾಲಿ ಮರದಿಂದ ಮಾಡಿ, ಬಂಗಾರದಿಂದ ಹೊದಿಸಬೇಕು.
EXO 25:29 ಇದಲ್ಲದೆ ನೀನು ಪಾತ್ರೆಗಳನ್ನು, ಧೂಪಾರತಿಗಳನ್ನು, ಮುಚ್ಚಳಗಳನ್ನು ಪಾನಾರ್ಪಣೆಗೆ ಹೂಜೆಗಳನ್ನೂ ಬೇಕಾದ ಬಟ್ಟಲುಗಳನ್ನೂ, ಶುದ್ಧ ಬಂಗಾರದಿಂದ ಮಾಡಬೇಕು.
EXO 25:30 ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
EXO 25:31 “ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಬೇಕು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇರಬೇಕು.
EXO 25:32 ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿರಬೇಕು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.
EXO 25:33 ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇರಬೇಕು.
EXO 25:34 ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇರಬೇಕು.
EXO 25:35 ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿರಬೇಕು. ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳು ಇರಬೇಕು.
EXO 25:36 ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿರಬೇಕು.
EXO 25:37 “ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶಕೊಡುವಂತೆ ಅವುಗಳನ್ನು ಹೊತ್ತಿಸಬೇಕು.
EXO 25:38 ಇದಲ್ಲದೆ ಅದರ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.
EXO 25:39 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಬೇಕು.
EXO 25:40 ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
EXO 26:1 “ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.
EXO 26:2 ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿರಬೇಕು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿರಬೇಕು.
EXO 26:3 ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಬೇಕು.
EXO 26:4 ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಬೇಕು.
EXO 26:5 ಒಂದು ಪರದೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ಪರದೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಎದುರುಬದುರಾಗಿ ಹಿಡಿದುಕೊಳ್ಳುವವುಗಳಾಗಿರಬೇಕು.
EXO 26:6 ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗಬೇಕು.
EXO 26:7 “ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಬೇಕು.
EXO 26:8 ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿರಬೇಕು.
EXO 26:9 ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿ, ಆರನೆಯ ಪರದೆಯನ್ನು ಗುಡಾರದ ಮುಂಭಾಗದಲ್ಲಿ ಮಡಿಸಿ ತೂಗಾಡಬಿಡಬೇಕು.
EXO 26:10 ಜೋಡಿಸುವಾಗ ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು.
EXO 26:11 ಇದಲ್ಲದೆ ಕಂಚಿನ ಐವತ್ತು ಕೊಂಡಿಗಳನ್ನು ಮಾಡಿ, ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ, ಒಂದೇ ಡೇರೆ ಆಗುವಂತೆ ಜೋಡಿಸಬೇಕು.
EXO 26:12 ಗುಡಾರದ ಪರದೆಗಳನ್ನು ಮಿಕ್ಕಿದ ತೂಗಾಡುವಂಥದ್ದು ಎಂದರೆ ಉಳಿದ ಅರ್ಧ ಪರದೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ.
EXO 26:13 ಗುಡಾರದ ಪರದೆಗಳ ಉದ್ದದಲ್ಲಿ ಈಚೆ ಆಚೆ ಮಿಕ್ಕಿದ ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವುದಕ್ಕಾಗಿ ತೂಗಾಡಲಿ.
EXO 26:14 ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಬೇಕು, ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಬೇಕು.
EXO 26:15 “ಗುಡಾರಕ್ಕೆ ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಬೇಕು.
EXO 26:16 ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇರಬೇಕು.
EXO 26:17 ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಬೇಕು. ಅದೇ ಪ್ರಕಾರ ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಬೇಕು.
EXO 26:18 ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಬೇಕು.
EXO 26:19 ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಬೇಕು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.
EXO 26:20 ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನೂ,
EXO 26:21 ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನೂ,
EXO 26:22 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಬೇಕು.
EXO 26:23 ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಬೇಕು.
EXO 26:24 ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರಬೇಕು. ಇದೇ ರೀತಿಯಲ್ಲಿ ಅವು ಎರಡು ಮೂಲೆಗಳಲ್ಲಿ ಎರಡಕ್ಕೂ ಇರಬೇಕು.
EXO 26:25 ಹೀಗೆ ಅವು ಎಂಟು ಚೌಕಟ್ಟುಗಳೂ ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳೂ ಇರುವುದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳೂ ಇರಬೇಕು.
EXO 26:26 “ಜಾಲಿ ಮರದಿಂದ ಅಗುಳಿಗಳನ್ನು ಮಾಡಬೇಕು. ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು,
EXO 26:27 ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಬೇಕು.
EXO 26:28 ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಮುಟ್ಟಿರಬೇಕು.
EXO 26:29 ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು. ಅಗುಳಿಗಳನ್ನು ಬಂಗಾರದಿಂದ ಹೊದಿಸಬೇಕು.
EXO 26:30 “ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರವನ್ನು ನಿಲ್ಲಿಸಬೇಕು.
EXO 26:31 “ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಬೇಕು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.
EXO 26:32 ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳ ಮೇಲೆ ಊರಿಕೊಂಡಿರುವ ಜಾಲಿ ಮರದ ಸ್ತಂಭಗಳಲ್ಲಿ ಅದನ್ನು ತೂಗು ಹಾಕಬೇಕು.
EXO 26:33 ಆ ಪರದೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ, ಪರದೆಯೊಳಗೆ ಒಡಂಬಡಿಕೆಯ ಮಂಜೂಷವನ್ನು ತರಬೇಕು. ಪರಿಶುದ್ಧ ಸ್ಥಳಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಮಧ್ಯದಲ್ಲಿ ಆ ಪರದೆಯನ್ನು ವಿಂಗಡಿಸಬೇಕು.
EXO 26:34 ಮಹಾಪರಿಶುದ್ಧ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮೇಲೆ ಕರುಣಾಸನವನ್ನು ಇಡಬೇಕು.
EXO 26:35 ಇದಲ್ಲದೆ ಗುಡಾರದ ಉತ್ತರ ಕಡೆಯಲ್ಲಿ ಪರದೆಯ ಹೊರಗೆ ಮೇಜನ್ನು ಇಡಬೇಕು ಮತ್ತು ದೀಪಸ್ತಂಭವನ್ನು ಅದರ ಎದುರಾಗಿ ದಕ್ಷಿಣದ ದಿಕ್ಕಿನಲ್ಲಿ ಇಡಬೇಕು.
EXO 26:36 “ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಬೇಕು.
EXO 26:37 ಆ ಪರದೆಗೆ ಜಾಲಿ ಮರದ ಐದು ಕಂಬಗಳನ್ನು ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಎರಕಹೊಯಿಸಬೇಕು.
EXO 27:1 “ಇದಲ್ಲದೆ ಜಾಲಿ ಮರದಿಂದ ಬಲಿಪೀಠವನ್ನು ಮಾಡಬೇಕು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.
EXO 27:2 ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಬೇಕು.
EXO 27:3 ಅದರ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಮತ್ತು ಬಲಿಪೀಠದ ಉಪಕರಣಗಳನ್ನೆಲ್ಲಾ ಕಂಚಿನಿಂದ ಮಾಡಬೇಕು.
EXO 27:4 ಅದಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿ, ಆ ಜಾಳಿಗೆಯ ನಾಲ್ಕು ಮೂಲೆಗಳಿಗೆ ಕಂಚಿನ ನಾಲ್ಕು ಬಳೆಗಳನ್ನು ಮಾಡಬೇಕು.
EXO 27:5 ಆ ಜಾಳಿಗೆಯು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಬೇಕು.
EXO 27:6 ಬಲಿಪೀಠಕ್ಕೆ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಬೇಕು.
EXO 27:7 ಆ ಕೋಲುಗಳನ್ನು ಬಳೆಗಳಲ್ಲಿ ಸೇರಿಸಬೇಕು. ಅವುಗಳು ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಇರಬೇಕು.
EXO 27:8 ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಬೇಕು.
EXO 27:9 “ಗುಡಾರದ ಅಂಗಳವನ್ನು ಮಾಡಬೇಕು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಬೇಕು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು.
EXO 27:10 ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಬೇಕು.
EXO 27:11 ಹಾಗೆಯೇ ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು, ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಬೇಕು.
EXO 27:12 “ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾದ ಪರದೆಗಳು, ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿರಬೇಕು.
EXO 27:13 ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾಗಿರಬೇಕು.
EXO 27:14 ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್ ಉದ್ದವಾಗಿರಬೇಕು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಕಾಲು ಗದ್ದಿಗೇ ಕಲ್ಲುಗಳು ಇರಬೇಕು.
EXO 27:15 ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿರಬೇಕು.
EXO 27:16 “ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ, ಅದಕ್ಕೆ ನಾಲ್ಕು ಸ್ತಂಭಗಳು ಮತ್ತು ನಾಲ್ಕು ಗದ್ದಿಗೇ ಕಲ್ಲುಗಳಿರಬೇಕು.
EXO 27:17 ಅಂಗಳದ ಸುತ್ತಲಿರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಮತ್ತು ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿರಬೇಕು.
EXO 27:18 ಅಂಗಳದ ಉದ್ದ ಸುಮಾರು ನಲವತ್ತೈದು ಮೀಟರ್, ಅಗಲ ಸುಮಾರು ಇಪ್ಪತ್ತಮೂರು ಮೀಟರ್, ಅದರ ಎತ್ತರ ಸುಮಾರು ಎರಡು ಮೀಟರ್ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು, ಅವುಗಳ ಕುಳಿಗಳನ್ನು ಕಂಚಿನಿಂದ ಮಾಡಿಸಬೇಕು.
EXO 27:19 ಗುಡಾರದ ಕೆಲಸಕ್ಕೆ ಬೇಕಾಗುವ ಎಲ್ಲಾ ಉಪಕರಣಗಳು, ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದವುಗಳಾಗಿರಬೇಕು.
EXO 27:20 “ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.
EXO 27:21 ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ಇಸ್ರಾಯೇಲರಿಗೆ ಮತ್ತು ಅವರ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರಬೇಕು.
EXO 28:1 “ನನಗೆ ಯಾಜಕ ಸೇವೆ ಮಾಡುವುದಕ್ಕೆ ನೀನು ಇಸ್ರಾಯೇಲರಿಂದ ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಎಂಬುವರನ್ನು ನಿನ್ನ ಹತ್ತಿರ ಬರಮಾಡಬೇಕು.
EXO 28:2 ನಿನ್ನ ಸಹೋದರನಾದ ಆರೋನನ ಗೌರವಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.
EXO 28:3 ಇದಲ್ಲದೆ ನಾನು ಜ್ಞಾನದ ಆತ್ಮದಿಂದ ತುಂಬಿದ ವಿವೇಕದ ಹೃದಯವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.
EXO 28:4 ಅವರು ಮಾಡಬೇಕಾದ ವಸ್ತ್ರಗಳು ಇವು: ಎದೆಪದಕವು, ಏಫೋದ್, ನಿಲುವಂಗಿ, ಕಸೂತಿಯ ಕೆಲಸದ ಮೇಲಂಗಿ, ಮುಂಡಾಸ, ನಡುಕಟ್ಟು. ನಿನ್ನ ಸಹೋದರನಾದ ಆರೋನನೂ ಅವನ ಪುತ್ರರೂ ನನ್ನ ಯಾಜಕರಾಗಿ ಸೇವೆ ಮಾಡುವುದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಿಸು.
EXO 28:5 ಅವರು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರವನ್ನು ಮತ್ತು ನಯವಾದ ನಾರುಬಟ್ಟೆಯನ್ನು ಹೊಸೆದು ಉಪಯೋಗಿಸಬೇಕು.
EXO 28:6 “ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡಬೇಕು.
EXO 28:7 ಈ ಕವಚಕ್ಕೆ ಅದರ ಎರಡೂ ಕೊನೆಗಳನ್ನು ಜೋಡಿಸುವುದಕ್ಕೆ ಎರಡು ಹೆಗಲು ಪಟ್ಟಿಗಳಿರಬೇಕು.
EXO 28:8 ಅದರ ಮೇಲಿರುವ ಕಸೂತಿ ಕೆಲಸದ ಏಫೋದಿನ ನಡುಕಟ್ಟನ್ನು ಒಂದೇ ರೀತಿಯ ವಸ್ತುಗಳಿಂದ ತಯಾರಿಸಬೇಕು ಅಂದರೆ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದ್ದಾಗಿರಬೇಕು.
EXO 28:9 “ನೀನು ಎರಡು ಗೋಮೇಧಿಕ ರತ್ನಗಳನ್ನು ತೆಗೆದುಕೊಂಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.
EXO 28:10 ಒಂದು ರತ್ನದ ಮೇಲೆ ಆರು ಹೆಸರುಗಳನ್ನು ಮತ್ತೊಂದು ರತ್ನದ ಮೇಲೆ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಪ್ರಕಾರ ಕೆತ್ತಬೇಕು.
EXO 28:11 ಶಿಲ್ಪಿಗನು ಕಲ್ಲಿನ ಮೇಲೆ ಮುದ್ರೆ ಕೆತ್ತುವ ಪ್ರಕಾರ, ಆ ಎರಡೂ ರತ್ನಗಳ ಮೇಲೆ ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಕೆತ್ತಿಸಿ, ಅವುಗಳನ್ನು ಬಂಗಾರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು.
EXO 28:12 ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.
EXO 28:13 ನೀನು ಬಂಗಾರದ ಜವೆಗಳನ್ನು ಮಾಡಬೇಕು.
EXO 28:14 ಹೊಸೆದ ಹಗ್ಗದಂತೆ ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೆ ಕೆಲಸದಿಂದ ಮಾಡಿ, ಆ ಹೆಣೆದ ಸರಪಣಿಗಳ ಕೊನೆಗಳನ್ನು ಜವೆಗಳಿಗೆ ಸೇರಿಸಿಬೇಕು.
EXO 28:15 “ದೇವನಿರ್ಣಯ ಮಾಡುವ ಆತನ ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಂದರೆ ಏಫೋದಿನ ಕೆಲಸದ ಹಾಗೆಯೇ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿಸಬೇಕು.
EXO 28:16 ಅದು ಗೇಣು ಉದ್ದ, ಒಂದು ಗೇಣು ಅಗಲ ಮತ್ತು ಇದು ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿಯೂ ಇರಬೇಕು.
EXO 28:17 ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳಿರಬೇಕು.
EXO 28:18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿರಬೇಕು.
EXO 28:19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿರಬೇಕು.
EXO 28:20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.
EXO 28:21 ಈ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿರಬೇಕು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು, ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
EXO 28:22 “ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ಹೆಣೆದ ಕೆಲಸವಾಗಿರುವ ಹುರಿಗಳಂತಿರುವ ಸರಪಣಿಯನ್ನು ಮಾಡಬೇಕು.
EXO 28:23 ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆಗಳನ್ನು ಮಾಡಿ, ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.
EXO 28:24 ಬಂಗಾರದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.
EXO 28:25 ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ, ಏಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಬೇಕು.
EXO 28:26 ಅದಲ್ಲದೆ ಬಂಗಾರದ ಎರಡು ಉಂಗುರಗಳನ್ನು ಮಾಡಿ, ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿ, ಏಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು.
EXO 28:27 ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ, ಏಫೋದಿನ ಮುಂಬದಿಯ ಕೆಳಗಿನ ಎರಡು ಹೆಗಲಿನ ಪಟ್ಟಿಗಳಲ್ಲಿ, ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಬೇಕು.
EXO 28:28 ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ, ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ, ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಬೇಕು.
EXO 28:29 “ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲರ ಹೆಸರುಗಳನ್ನು ಯಾವಾಗಲೂ ಯೆಹೋವ ದೇವರ ಮುಂದೆ ಜ್ಞಾಪಕ ಮಾಡುವುದಕ್ಕಾಗಿ ನ್ಯಾಯದ ಎದೆಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು.
EXO 28:30 ನಿರ್ಣಯವನ್ನು ತಿಳಿಸುವ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್‌ಗಳನ್ನು ಇಡಬೇಕು. ಆರೋನನು ಯೆಹೋವ ದೇವರ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಯೆಹೋವ ದೇವರ ಮುಂದೆ ಯಾವಾಗಲೂ ಇಸ್ರಾಯೇಲರ ನಿರ್ಣಯಗಳನ್ನು ತನ್ನ ಹೃದಯದ ಮೇಲೆ ಹೊರಬೇಕು.
EXO 28:31 “ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಬೇಕು.
EXO 28:32 ಅದರ ಮಧ್ಯದಲ್ಲಿ ಮೇಲ್ಗಡೆ ತಲೆದೂರಿಸುವುದಕ್ಕೆ ರಂದ್ರವಿರಬೇಕು. ಅದು ಹರಿಯದ ಆ ರಂದ್ರದ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿಸಬೇಕು.
EXO 28:33 ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ದಾಳಿಂಬೆ ಹಣ್ಣಿನಂತೆ ಅದರ ಅಂಚಿನ ಸುತ್ತಲೂ ಮಾಡಿ, ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನೂ ಸುತ್ತಲೂ ಇರಿಸಬೇಕು.
EXO 28:34 ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.
EXO 28:35 ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಅವನು ಯೆಹೋವ ದೇವರ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ, ಅವನು ಸಾಯದಂತೆ ಅವನ ಶಬ್ದವು ಕೇಳಿಸಬೇಕು.
EXO 28:36 “ಶುದ್ಧ ಬಂಗಾರದ ತಗಡನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ, ಅದರಲ್ಲಿ ಹೀಗೆ ಕೆತ್ತಬೇಕು: ‘ಯೆಹೋವ ದೇವರಿಗೆ ಪರಿಶುದ್ಧ.’
EXO 28:37 ಅದು ಮುಂಡಾಸದ ಮುಂಭಾಗದಲ್ಲಿರುವಂತೆ ಅದನ್ನು ನೀಲಿ ದಾರಿನಿಂದ ಕಟ್ಟಬೇಕು.
EXO 28:38 ಇಸ್ರಾಯೇಲರು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ದೋಷವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಯೆಹೋವ ದೇವರ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
EXO 28:39 “ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸದಿಂದ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿಸಬೇಕು.
EXO 28:40 ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗೂ ಶೋಭೆ ಸಿಗುವಂತೆ ನಿಲುವಂಗಿಗಳನ್ನೂ, ನಡುಕಟ್ಟುಗಳನ್ನೂ ಹಾಗೂ ಪೇಟಗಳನ್ನೂ ಮಾಡಿಸು.
EXO 28:41 ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.
EXO 28:42 “ಅವರ ಬೆತ್ತಲೆಯನ್ನು ಮುಚ್ಚುವ ಹಾಗೆ ನಾರಿನ ಚಡ್ಡಿಗಳನ್ನು ಮಾಡಿಸು. ಅವು ಸೊಂಟದಿಂದ ತೊಡೆಯವರೆಗೆ ಇರಬೇಕು.
EXO 28:43 ಆರೋನನೂ ಅವನ ಪುತ್ರರೂ ದೇವದರ್ಶನದ ಗುಡಾರಕ್ಕೆ ಬರುವ ಸಮಯದಲ್ಲಿಯೂ ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ದೋಷವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. “ಇದೇ ಆರೋನನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.
EXO 29:1 “ಅವರು ನನಗೆ ಯಾಜಕ ಸೇವೆಮಾಡುವಂತೆ ನೀನು ಅವರನ್ನು ಶುದ್ಧ ಮಾಡಲು ಮಾಡಬೇಕಾದದ್ದೇನೆಂದರೆ: ದೋಷವಿಲ್ಲದ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ,
EXO 29:2 ಅತ್ಯುತ್ತಮ ಗೋಧಿಯ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆ ಹೊಯ್ದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಚ್ಚಿದ ಹುಳಿಯಿಲ್ಲದ ಪೂರಿಗಳನ್ನೂ ತೆಗೆದುಕೊಳ್ಳಬೇಕು.
EXO 29:3 ಇವುಗಳನ್ನು ಒಂದೇ ಬುಟ್ಟಿಯಲ್ಲಿ ಇಟ್ಟುಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತೆಗೆದುಕೊಂಡು ಬರಬೇಕು.
EXO 29:4 ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ತಂದು, ನೀರಿನಲ್ಲಿ ಅವರನ್ನು ತೊಳೆಯಬೇಕು.
EXO 29:5 ತರುವಾಯ ಆ ವಸ್ತ್ರಗಳನ್ನು ತೆಗೆದುಕೊಂಡು ಆರೋನನಿಗೆ ಅಂಗಿಯನ್ನೂ ಏಫೋದಿನ ನಿಲುವಂಗಿಯನ್ನೂ ಏಫೋದನ್ನೂ ಎದೆಪದಕವನ್ನೂ ತೊಡಿಸಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ,
EXO 29:6 ಅವನ ತಲೆಗೆ ಮುಂಡಾಸವನ್ನು ಇಟ್ಟು, ಮುಂಡಾಸದ ಮೇಲೆ ಪರಿಶುದ್ಧ ಪಟ್ಟವನ್ನು ಇಟ್ಟು,
EXO 29:7 ಅಭಿಷೇಕಿಸುವ ಎಣ್ಣೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನನ್ನು ಅಭಿಷೇಕಿಸಬೇಕು.
EXO 29:8 ನೀನು ಅವನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ,
EXO 29:9 ಆರೋನನಿಗೂ ಅವನ ಪುತ್ರರಿಗೂ ಮುಂಡಾಸುಗಳನ್ನು ಇಟ್ಟು ನಡುಕಟ್ಟುಗಳನ್ನು ಕಟ್ಟಬೇಕು, ಅವರಿಗೆ ಹೀಗೆ ಅವರಿಗೆ ಯಾಜಕತ್ವ ಸೇವೆಯು ಶಾಶ್ವತ ಕಟ್ಟಳೆಯಾಗಿರುವುದು. “ಈ ರೀತಿಯಾಗಿ ಆರೋನನನ್ನೂ ಅವನ ಪುತ್ರರನ್ನೂ ನೀನು ಪ್ರತಿಷ್ಠೆ ಮಾಡಬೇಕು.
EXO 29:10 “ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಪುತ್ರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.
EXO 29:11 ತರುವಾಯ ನೀನು ಆ ಹೋರಿಯನ್ನು ಯೆಹೋವ ದೇವರ ಮುಂದೆ ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು.
EXO 29:12 ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಹಚ್ಚಿ, ರಕ್ತವನ್ನೆಲ್ಲಾ ಬಲಿಪೀಠದ ಅಡಿಯಲ್ಲಿ ಸುರಿಯಬೇಕು.
EXO 29:13 ನೀನು ಕರುಳುಗಳನ್ನೂ ಅವುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು.
EXO 29:14 ಇದಲ್ಲದೆ ಹೋರಿಯ ಮಾಂಸವನ್ನೂ ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿದೆ.
EXO 29:15 “ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.
EXO 29:16 ತರುವಾಯ ಆ ಟಗರನ್ನು ನೀನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.
EXO 29:17 ಇದಲ್ಲದೆ ಆ ಟಗರನ್ನು ತುಂಡುತುಂಡಾಗಿ ಕಡಿದು, ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು, ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು.
EXO 29:18 ಅದನ್ನೆಲ್ಲಾ ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ದಹನಬಲಿಯಾಗಿದೆ. ಅದು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ.
EXO 29:19 “ಆ ಇನ್ನೊಂದು ಟಗರನ್ನು ನೀನು ತಂದಾಗ, ಆರೋನನೂ ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.
EXO 29:20 ತರುವಾಯ ನೀನು ಅದನ್ನು ವಧಿಸಿ, ಅದರ ರಕ್ತವನ್ನು ಆರೋನನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
EXO 29:21 ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಪುತ್ರರೂ ಅವರ ವಸ್ತ್ರಗಳೂ ಪರಿಶುದ್ಧವಾಗುವ ಹಾಗೆ ಬಲಿಪೀಠದ ಮೇಲಿರುವ ರಕ್ತವನ್ನೂ, ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಪುತ್ರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು.
EXO 29:22 “ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಳ್ಳಬೇಕು. ಏಕೆಂದರೆ ಅದು ಪ್ರತಿಷ್ಠೆಯ ಟಗರು.
EXO 29:23 ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ
EXO 29:24 ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಅವರು ಯೆಹೋವ ದೇವರ ಮುಂದೆ ಅದನ್ನು ನೈವೇದ್ಯವಾಗಿ ನಿವಾಳಿಸಬೇಕು.
EXO 29:25 ನೀನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರ ಮುಂದೆ ಸುವಾಸನೆಗೋಸ್ಕರ ದಹಿಸಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಅರ್ಪಣೆ.
EXO 29:26 ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು, ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನ್ನ ಪಾಲಾಗಿರುವುದು.
EXO 29:27 “ನೀನು ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಣೆ ಮಾಡಿದ ಬಲದ ಮುಂದೊಡೆಯನ್ನೂ, ಆರೋನನ, ಅವನ ಪುತ್ರರಿಗೆ ಸಲ್ಲಬೇಕಾದ ಪ್ರತಿಷ್ಠಿತ ಟಗರಿನ ಭಾಗವನ್ನು ಪ್ರತಿಷ್ಠಿಸು.
EXO 29:28 ಅದು ಆರೋನನಿಗೂ ಅವನ ಪುತ್ರರಿಗೂ ಇಸ್ರಾಯೇಲರ ಕಡೆಯಿಂದ ನಿತ್ಯವಾಗಿ ಕೊಡುವ ಭಾಗವಾಗಿರಬೇಕು. ಏಕೆಂದರೆ ಅದು ನೈವೇದ್ಯವಾಗಿದೆ. ಇಸ್ರಾಯೇಲರ ಸಮಾಧಾನದ ಬಲಿಗಳ ಅರ್ಪಣೆಗಳಿಂದ ಅವರು ಯೆಹೋವ ದೇವರಿಗೆ ನೈವೇದ್ಯ ಮಾಡುವಂಥದ್ದು ಆಗಿರಬೇಕು.
EXO 29:29 “ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಪುತ್ರರಿಗೆ ಆಗಬೇಕು. ಅವರು ಅಭಿಷಿಕ್ತರಾಗಿ ಅವುಗಳನ್ನು ಧರಿಸಿಕೊಂಡು, ಪ್ರತಿಷ್ಠಿತರಾಗಬೇಕು.
EXO 29:30 ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡೆಸಿ, ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದ ದಿನದಿಂದ ಅವುಗಳನ್ನು ಏಳು ದಿನಗಳವರೆಗೆ ತೊಟ್ಟುಕೊಳ್ಳಬೇಕು.
EXO 29:31 “ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸಬೇಕು.
EXO 29:32 ಆರೋನನೂ ಅವನ ಪುತ್ರರೂ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಊಟಮಾಡಬೇಕು.
EXO 29:33 ಅವರನ್ನು ಪ್ರತಿಷ್ಠೆ ಮಾಡುವುದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವುದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿದವುಗಳನ್ನು ಅವರೇ ಊಟಮಾಡಬೇಕು. ಇತರರು ಅದನ್ನು ಉಣ್ಣಬಾರದು. ಏಕೆಂದರೆ ಅವು ಪರಿಶುದ್ಧವಾದವುಗಳು.
EXO 29:34 ಪ್ರತಿಷ್ಠೆ ಬಲಿ ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಡಬೇಕು. ಅದು ಪರಿಶುದ್ಧವಾಗಿರುವುದರಿಂದ ಅದನ್ನು ಮರುದಿನ ತಿನ್ನಬಾರದು.
EXO 29:35 “ಹೀಗೆ ಆರೋನನಿಗೂ ಅವನ ಪುತ್ರಿರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರಮಾಡಿ, ಏಳು ದಿವಸ ಅವರನ್ನು ಪ್ರತಿಷ್ಠೆ ಕ್ರಮವನ್ನು ಮಾಡಬೇಕು.
EXO 29:36 ಪ್ರತಿದಿನ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞ ಮಾಡಬೇಕು. ಬಲಿಪೀಠವನ್ನು ಶುದ್ಧಿಮಾಡುವುದಕ್ಕಾಗಿ ಅದರ ಮೇಲೆ ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಅದನ್ನು ದೇವರ ಸೇವೆಗಾಗಿ ಪ್ರತಿಷ್ಠಿಸುವುದಕ್ಕಾಗಿ ಅಭಿಷೇಕಿಸಬೇಕು.
EXO 29:37 ಏಳು ದಿವಸ ಬಲಿಪೀಠಕ್ಕೊಸ್ಕರ ಪ್ರಾಯಶ್ಚಿತ್ತ ಮಾಡಿ, ಅದನ್ನು ಪವಿತ್ರ ಮಾಡಬೇಕು. ಆಗ ಬಲಿಪೀಠವು ಅತಿ ಪರಿಶುದ್ಧವಾಗಿರುವುದು. ಬಲಿಪೀಠವನ್ನು ಮುಟ್ಟುವುದೆಲ್ಲಾ ಪವಿತ್ರವಾಗಿರಬೇಕು.
EXO 29:38 “ಬಲಿಪೀಠದ ಮೇಲೆ ನೀನು ಅರ್ಪಿಸಬೇಕಾದದ್ದು ಇದೇ: ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಟ್ಟುಬಿಡದೆ ದಹನಬಲಿಯಾಗಿ ಅರ್ಪಿಸಬೇಕು.
EXO 29:39 ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.
EXO 29:40 ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ, ಒಂದು ಲೀಟರ್ ದ್ರಾಕ್ಷಾರಸವನ್ನು ಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮ ಮಾಡಬೇಕು.
EXO 29:41 ಇನ್ನೊಂದು ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಬೆಳಿಗ್ಗೆ ಮಾಡಿದಂತೆಯೇ ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು.
EXO 29:42 “ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ದೇವದರ್ಶನದ ಗುಡಾರದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವುದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವುದು.
EXO 29:43 ಅಲ್ಲಿ ನಾನು ಇಸ್ರಾಯೇಲರನ್ನು ಸಂಧಿಸುವೆನು. ಅದು ನನ್ನ ಮಹಿಮೆಯಿಂದ ಪವಿತ್ರವಾಗುವುದು.
EXO 29:44 “ನಾನು ದೇವದರ್ಶನದ ಗುಡಾರವನ್ನೂ ಬಲಿಪೀಠವನ್ನೂ ಪರಿಶುದ್ಧ ಮಾಡುವೆನು. ಆರೋನನನ್ನೂ ಅವನ ಪುತ್ರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರ ಮಾಡುವೆನು.
EXO 29:45 ಇಸ್ರಾಯೇಲರ ಮಧ್ಯದಲ್ಲಿ ನಾನು ವಾಸಮಾಡಿ, ಅವರಿಗೆ ನಾನು ದೇವರಾಗಿರುವೆನು.
EXO 29:46 ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ಅವರ ದೇವರಾದ ಯೆಹೋವ ದೇವರು ನಾನೇ ಎಂದು ಅವರಿಗೆ ತಿಳಿಯುವುದು. ನಾನೇ ಅವರ ದೇವರಾದ ಯೆಹೋವ ದೇವರು.
EXO 30:1 “ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು.
EXO 30:2 ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿರಬೇಕು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಬೇಕು.
EXO 30:3 ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ, ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.
EXO 30:4 ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಬೇಕು. ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಬೇಕು.
EXO 30:5 ಆ ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು.
EXO 30:6 ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.
EXO 30:7 “ಅದರ ಮೇಲೆ ಆರೋನನು ಪರಿಮಳ ಧೂಪವನ್ನು ಸುಡಬೇಕು. ಪ್ರತಿದಿನ ಬೆಳಿಗ್ಗೆ ಸುಡಬೇಕು. ಪ್ರತಿದಿನ ಬೆಳಿಗ್ಗೆ ದೀಪಗಳನ್ನು ಸಿದ್ಧಮಾಡುವಾಗ ಅದನ್ನು ಸುಡಬೇಕು.
EXO 30:8 ಆರೋನನು ಸಂಜೆ ದೀಪಗಳನ್ನು ಹಚ್ಚುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಯೆಹೋವ ದೇವರ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪವು.
EXO 30:9 ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ, ದಹನಬಲಿಗಳನ್ನಾಗಲಿ, ಧಾನ್ಯಗಳ ಅರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು.
EXO 30:10 ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೆ ಒಂದು ಸಾರಿ ಪಾಪ ಪರಿಹಾರದ ಬಲಿಯ ರಕ್ತದಿಂದ ಅದರ ಕೊಂಬುಗಳಿಗೆ ಹಚ್ಚಿ ಪ್ರಾಯಶ್ಚಿತ್ತ ಮಾಡಬೇಕು. ಅದು ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.”
EXO 30:11 ಆಗ ಯೆಹೋವ ದೇವರು ಪ್ರಕಟಪಡಿಸಿ ಮೋಶೆಗೆ,
EXO 30:12 “ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ.
EXO 30:13 ಲೆಕ್ಕಿತರಾದವರಲ್ಲಿ ಸೇರುವ ಪ್ರತಿಯೊಬ್ಬ ಮನುಷ್ಯನು ಕೊಡಬೇಕಾದದ್ದು ಏನೆಂದರೆ ಶೆಕೆಲಿಗೆ ಇಪ್ಪತ್ತು ಗೇರಾಗಳ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರ್ಧ ಶೆಕೆಲ್ ಕೊಡಬೇಕು. ಅರ್ಧ ಶೆಕೆಲ್ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.
EXO 30:14 ಲೆಕ್ಕಿತರಾದವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೂ ಹೆಚ್ಚು ಪ್ರಾಯವುಳ್ಳವರೂ ಯೆಹೋವ ದೇವರಿಗೆ ಕಾಣಿಕೆಯನ್ನು ಕೊಡಬೇಕು.
EXO 30:15 ನಿಮ್ಮ ಜೀವನದ ಪ್ರಾಯಶ್ಚಿತ್ತಕ್ಕೆ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವುದರಲ್ಲಿ ಐಶ್ವರ್ಯವಂತರು ಅರ್ಧ ಶೇಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು.
EXO 30:16 ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಕೆಲಸಕ್ಕಾಗಿ ಪ್ರತ್ಯೇಕಿಸಬೇಕು. ಇದೇ ಯೆಹೋವ ದೇವರ ಮುಂದೆ ಇಸ್ರಾಯೇಲರಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಯಶ್ಚಿತ್ತಕ್ಕಾಗಿಯೂ ಇರುವುದು,” ಎಂದರು.
EXO 30:17 ಯೆಹೋವ ದೇವರು ಮೋಶೆಗೆ,
EXO 30:18 “ತೊಳೆದುಕೊಳ್ಳುವದಕ್ಕಾಗಿ ಕಂಚಿನ ಬೋಗುಣಿಯನ್ನು ಮಾಡಿಸಿ ಅದಕ್ಕೆ ಕಂಚಿನ ಪೀಠವನ್ನೂ ಮಾಡಿಸಿ, ಅದನ್ನು ದೇವದರ್ಶನದ ಗುಡಾರ ಮತ್ತು ಬಲಿಪೀಠದ ಮಧ್ಯದಲ್ಲಿಟ್ಟು, ಅದರಲ್ಲಿ ನೀರನ್ನು ತುಂಬಿಸಿಡಬೇಕು.
EXO 30:19 ಏಕೆಂದರೆ ಆರೋನನೂ ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು.
EXO 30:20 ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು.
EXO 30:21 ಅವರು ಸಾಯದ ಹಾಗೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು,” ಎಂದರು.
EXO 30:22 ಯೆಹೋವ ದೇವರು ಮೋಶೆಗೆ,
EXO 30:23 “ಉತ್ತಮವಾದ ತೈಲಗಳನ್ನು ಆರು ಕಿಲೋಗ್ರಾಂ ಸ್ವಚ್ಛವಾದ ರಕ್ತಬೋಳವು, ಇದರ ಅರ್ಧದಷ್ಟು ಮೂರು ಕಿಲೋಗ್ರಾಂ ಸುಗಂಧವಾದ ಲವಂಗಚಕ್ಕೆಯನ್ನು ಮತ್ತು ಮೂರು ಕಿಲೋಗ್ರಾಂ ಸುಗಂಧವಾದ ಬಜೆಯನ್ನು,
EXO 30:24 ಆರು ಕಿಲೋಗ್ರಾಂ ದಾಲ್ಚಿನ್ನಿಯನ್ನು ಪರಿಶುದ್ಧಸ್ಥಳದ ಅಳತೆಯ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಸುಮಾರು ನಾಲ್ಕು ಲೀಟರಷ್ಟು ಓಲಿವ್ ಎಣ್ಣೆಯನ್ನು ಸಹ ತೆಗೆದುಕೊಂಡು,
EXO 30:25 ಅದರಿಂದ ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು. ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿರುವುದು.
EXO 30:26 ಅದರಿಂದ ಸಭೆಯ ಗುಡಾರವನ್ನೂ ಒಡಂಬಡಿಕೆಯ ಮಂಜೂಷವನ್ನೂ
EXO 30:27 ಮೇಜನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಧೂಪದ ವೇದಿಯನ್ನೂ
EXO 30:28 ದಹನಬಲಿಯ ಪೀಠವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಗಂಗಾಳವನ್ನೂ, ಅದರ ಕಾಲುಗಳನ್ನೂ ಅಭಿಷೇಕಿಸು.
EXO 30:29 ಅವು ಮಹಾಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವುದೆಲ್ಲವೂ ಪರಿಶುದ್ಧವಾಗಿರಬೇಕು.
EXO 30:30 “ಆರೋನನನ್ನೂ, ಅವನ ಪುತ್ರರನ್ನೂ ಅಭಿಷೇಕಿಸಿ, ಅವರು ನನಗೆ ಯಾಜಕ ಸೇವೆಮಾಡುವಂತೆ ಅವರನ್ನು ಪ್ರತಿಷ್ಠೆ ಮಾಡು, ಎಂದರು.
EXO 30:31 ನೀನು ಇಸ್ರಾಯೇಲರಿಗೆ: ‘ತಲತಲಾಂತರಗಳಲ್ಲಿ ಇದು ನನಗೆ ಪರಿಶುದ್ಧವಾದ ಅಭಿಷೇಕ ಎಣ್ಣೆಯಾಗಿರಬೇಕು.
EXO 30:32 ಇದನ್ನು ಮನುಷ್ಯರ ಮೇಲೆ ಹೊಯ್ಯಬಾರದು. ಇದರ ಮಾದರಿಯಂತೆ ಅಥವಾ ಇದಕ್ಕೆ ಸಮಾನವಾದದ್ದನ್ನು ಮಾಡಬಾರದು. ಇದು ಪರಿಶುದ್ಧವಾದದ್ದು. ನೀವು ಸಹ ಇದನ್ನು ಪರಿಶುದ್ಧವೆಂದು ತಿಳಿದುಕೊಳ್ಳಬೇಕು.
EXO 30:33 ಇದರ ಹಾಗೆ ತೈಲ ಮಾಡುವವನೂ ಯಾಜಕನಲ್ಲದವನ ಮೇಲೆ ಇದನ್ನು ಹಚ್ಚುವವನನ್ನು ಸ್ವಜನರೊಳಗಿಂದ ತೆಗೆದುಹಾಕಬೇಕು,’ ಎಂದು ಹೇಳು,” ಎಂದರು.
EXO 30:34 ಯೆಹೋವ ದೇವರು ಮೋಶೆಗೆ, “ನೀನು ಹಾಲು ಮಡ್ಡಿ, ಗುಗ್ಗಲ ಹಾಗೂ ಗಂಧದ ಚಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಮ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.
EXO 30:35 ಅದನ್ನು ಸುಗಂಧ ತೈಲ ಮಾಡುವವರ ವಿದ್ಯೆಯ ಪ್ರಕಾರ ಬೆರಸಿ, ಶುದ್ಧವಾದ ಮತ್ತು ಪವಿತ್ರವಾದ ತೈಲವನ್ನು ಮಾಡಬೇಕು.
EXO 30:36 ಅದರಲ್ಲಿ ಸ್ವಲ್ಪ ಪುಡಿಮಾಡಿ, ದೇವದರ್ಶನದ ಗುಡಾರದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇಡು. ಅದು ನಿಮಗೆ ಮಹಾಪರಿಶುದ್ಧವಾಗಿರಲಿ.
EXO 30:37 ನೀನು ಮಾಡುವ ಧೂಪದ ಮಾದರಿಯಂತೆ ನಿಮಗೋಸ್ಕರ ಮಾಡಿಕೊಳ್ಳಬಾರದು. ಅದನ್ನು ಯೆಹೋವ ದೇವರಿಗೆ ಪವಿತ್ರವೆಂದು ಪರಿಗಣಿಸಬೇಕು.
EXO 30:38 ಸುವಾಸನೆಗಾಗಿ ಅದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
EXO 31:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ,
EXO 31:2 “ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ.
EXO 31:3 ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ ಎಲ್ಲಾ ವಿಧವಾದ ಕೌಶಲ್ಯದಿಂದಲೂ ತುಂಬಿಸಿದ್ದೇನೆ.
EXO 31:4 ಅವನು ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದಕ್ಕೂ,
EXO 31:5 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸವನ್ನು ಬಲ್ಲವನಾಗಿರುವನು.
EXO 31:6 ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ. “ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.
EXO 31:7 “ದೇವದರ್ಶನದ ಗುಡಾರ, ಒಡಂಬಡಿಕೆಯ ಮಂಜೂಷ, ಅದರ ಮೇಲಿರುವ ಕರುಣಾಸನ, ಗುಡಾರದ ಎಲ್ಲಾ ಉಪಕರಣಗಳು,
EXO 31:8 ಮೇಜು ಅದರ ಉಪಕರಣಗಳು, ಶುದ್ಧ ಬಂಗಾರದ ದೀಪಸ್ತಂಭ, ಅದರ ಎಲ್ಲಾ ಉಪಕರಣಗಳು, ಧೂಪವೇದಿ, ಬಲಿಪೀಠ,
EXO 31:9 ದಹನಬಲಿಪೀಠದ ಎಲ್ಲಾ ಉಪಕರಣಗಳು, ಗಂಗಾಳ, ಅದರ ಕಾಲು,
EXO 31:10 ಯಾಜಕನಾದ ಆರೋನನ ಕಲಾತ್ಮಕವಾಗಿ ನೇಯ್ದ ಸೇವಾವಸ್ತ್ರಗಳು, ಪರಿಶುದ್ಧ ವಸ್ತ್ರಗಳು, ಯಾಜಕನ ಕೆಲಸ ಮಾಡುವುದಕ್ಕೆ ಅವನ ಮಕ್ಕಳ ವಸ್ತ್ರಗಳು,
EXO 31:11 ಅಭಿಷೇಕಿಸುವ ತೈಲ, ಪರಿಶುದ್ಧ ಸ್ಥಳಕ್ಕೋಸ್ಕರವಿರುವ ಪರಿಮಳ ಧೂಪ. “ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು,” ಎಂದರು.
EXO 31:12 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
EXO 31:13 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ, ‘ನಿಶ್ಚಯವಾಗಿ ನೀವು ನನ್ನ ವಿಶ್ರಾಂತಿಯ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ನಿಮ್ಮನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ, ನಿಮಗೂ, ನಿಮ್ಮ ಸಂತತಿಯವರಿಗೂ ಗುರುತಾಗಿರುವುದು.
EXO 31:14 “ ‘ಹೀಗಿರುವುದರಿಂದ ನೀವು ಸಬ್ಬತ್ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರ ಮಾಡುವ ಪ್ರತಿಯೊಬ್ಬನು ಸಾಯಲೇಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ, ಅವರನ್ನು ನಿಮ್ಮ ಜನರೊಳಗಿಂದ ತೆಗೆದುಹಾಕಬೇಕು.
EXO 31:15 ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಯೆಹೋವ ದೇವರಿಗೆ ಪರಿಶುದ್ಧವಾದ ಸಬ್ಬತ್ ದಿನ. ಆ ಸಬ್ಬತ್ ದಿನದಲ್ಲಿ ಕೆಲಸ ಮಾಡುವವರೆಲ್ಲಾ ಸಾಯಲೇಬೇಕು.
EXO 31:16 ಹೀಗಿರಲಾಗಿ ಇಸ್ರಾಯೇಲರು ತಮ್ಮ ತಲತಲಾಂತರಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
EXO 31:17 ನನಗೂ, ಇಸ್ರಾಯೇಲರಿಗೂ ಇದೇ ಶಾಶ್ವತವಾದ ಗುರುತು. ಏಕೆಂದರೆ ಆರು ದಿವಸಗಳಲ್ಲಿ ಯೆಹೋವ ದೇವರು ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸ ನಿಲ್ಲಿಸಿ, ವಿಶ್ರಮಿಸಿಕೊಂಡರು ಎಂದು ಹೇಳು,’ ” ಎಂದರು.
EXO 31:18 ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.
EXO 32:1 ಮೋಶೆಯು ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲರು ನೋಡಿದಾಗ, ಅವರು ಆರೋನನ ಬಳಿಗೆ ಕೂಡಿಬಂದು ಅವನಿಗೆ, “ನೀನು ಎದ್ದು ನಮ್ಮನ್ನು ಮುನ್ನಡೆಸಿಕೊಂಡು ಹೋಗುವ ದೇವರುಗಳನ್ನು ನಮಗಾಗಿ ಮಾಡು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದ ಮನುಷ್ಯನಾದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು,” ಎಂದರು.
EXO 32:2 ಅದಕ್ಕೆ ಆರೋನನು ಅವರಿಗೆ, “ನಿಮ್ಮ ಹೆಂಡತಿಯರ ಮತ್ತು ನಿಮ್ಮ ಪುತ್ರಪುತ್ರಿಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ,” ಎಂದನು.
EXO 32:3 ಆಗ ಜನರೆಲ್ಲರೂ ತಮ್ಮ ಕಿವಿಗಳಲ್ಲಿದ್ದ ಚಿನ್ನದ ವಾಲೆಗಳನ್ನು ಕಿತ್ತು ಆರೋನನ ಬಳಿಗೆ ತಂದರು.
EXO 32:4 ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಉಳಿಯಿಂದ ರೂಪಿಸಿ, ಎರಕ ಹೊಯ್ದು, ಕರುವಾಗಿ ಮಾಡಿದನು. ಆಗ ಅವರು, “ಇಸ್ರಾಯೇಲರೇ, ನಿಮ್ಮನ್ನು ಈಜಿಪ್ಟ್ ದೇಶದೊಳಗಿನಿಂದ ಬರಮಾಡಿದ ನಿಮ್ಮ ದೇವರುಗಳು ಇವೇ,” ಎಂದರು.
EXO 32:5 ಆರೋನನು ಅದನ್ನು ನೋಡಿ ಅದರ ಮುಂದೆ ಬಲಿಪೀಠವನ್ನು ಕಟ್ಟಿದನು. “ನಾಳೆ ಯೆಹೋವ ದೇವರಿಗೆ ಹಬ್ಬ,” ಎಂದು ಪ್ರಕಟಿಸಿದನು.
EXO 32:6 ಮರುದಿನ ಬೆಳಿಗ್ಗೆ ಜನರು ಎದ್ದು, ದಹನಬಲಿಗಳನ್ನೂ, ಸಮಾಧಾನ ಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು, ಆಮೇಲೆ ಎದ್ದು ಕುಣಿದಾಡಿದರು.
EXO 32:7 ಆಗ ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗು ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.
EXO 32:8 ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು, ತಮಗೆ ಎರಕ ಹೊಯ್ದ ಕರುವನ್ನು ಮಾಡಿಕೊಂಡು, ಅದನ್ನು ಆರಾಧಿಸುತ್ತಾ, ಅದಕ್ಕೆ ಬಲಿ ಅರ್ಪಿಸಿ, ‘ಇಸ್ರಾಯೇಲರೇ, ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರುಗಳು ಇವುಗಳೇ,’ ಎಂದು ಹೇಳುತ್ತಿದ್ದಾರೆ.”
EXO 32:9 ಇದಲ್ಲದೆ ಯೆಹೋವ ದೇವರು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಇವರು ಹಟಮಾರಿ ಜನರೇ,
EXO 32:10 ಹೀಗಿರುವುದರಿಂದ ನನ್ನ ಕೋಪಾಗ್ನಿಯು ಅವರ ಮೇಲೆ ಉರಿದು ಅವರನ್ನು ದಹಿಸಿಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು,” ಎಂದರು.
EXO 32:11 ಅದಕ್ಕೆ ಮೋಶೆ, ತನ್ನ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನೆಂದರೆ, “ಯೆಹೋವ ದೇವರೇ, ನೀವು ಮಹಾಶಕ್ತಿಯಿಂದಲೂ, ಬಲವುಳ್ಳ ಕೈಯಿಂದಲೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರ ಮೇಲೆ ಏಕೆ ನಿಮ್ಮ ಕೋಪವು ಉರಿಯುವುದು?
EXO 32:12 ‘ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಸಾಯಿಸಿ, ಭೂಮಿಯ ಮೇಲಿನಿಂದ ಅವರನ್ನು ಅಳಿಸಿಬಿಡುವುದಕ್ಕೂ, ದೇವರು ಅವರನ್ನು ಹೊರಗೆ ಬರಮಾಡಿದ್ದಾರೆ,’ ಎಂದು ಈಜಿಪ್ಟಿನವರು ಏಕೆ ಹೇಳಬೇಕು? ತಾವು ಕೋಪಾಗ್ನಿಯನ್ನು ಬಿಟ್ಟು ತಿರುಗಿಕೊಳ್ಳಿ. ನಿಮ್ಮ ಜನರಿಗೆ ವಿರೋಧವಾದ ಈ ಕೇಡಿನ ವಿಷಯದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿರಿ.
EXO 32:13 ಆ ನಿಮ್ಮ ಸೇವಕರಾದ ಅಬ್ರಹಾಮನನ್ನೂ, ಇಸಾಕನನ್ನೂ, ಇಸ್ರಾಯೇಲನನ್ನೂ ಜ್ಞಾಪಕಮಾಡಿಕೊಳ್ಳಿರಿ, ಯಾರಿಗೆ ನೀವು ಆಣೆಯಿಟ್ಟು ಪ್ರಮಾಣಮಾಡಿ: ‘ಆಕಾಶದ ನಕ್ಷತ್ರಗಳ ಹಾಗೆ ನಿನ್ನ ಸಂತತಿಯನ್ನು ಹೆಚ್ಚಿಸಿ, ನಾನು ಹೇಳಿದ ಈ ದೇಶವನ್ನು ನಿಮ್ಮ ಸಂತತಿಯವರಿಗೆ ಕೊಡುವೆನು ಮತ್ತು ಅವರು ನಿತ್ಯವಾಗಿ ಸ್ವಾಧೀನವಾಗಿಟ್ಟುಕೊಳ್ಳುವರು’ ಎಂದು ಮಾತುಕೊಡಲಿಲ್ಲವೆ?” ಎಂದನು.
EXO 32:14 ಆಗ ಯೆಹೋವ ದೇವರು ತಮ್ಮ ಜನರಿಗೆ ಮಾಡುವೆನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಮಾರ್ಪಡಿಸಿಕೊಂಡರು.
EXO 32:15 ಮೋಶೆಯು ತಿರುಗಿಕೊಂಡು ಎರಡೂ ಬದಿಯಲ್ಲಿ ಬರೆದಿರುವ ಸಾಕ್ಷಿಯ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಗೆಗಳ ಎರಡೂ ಬದಿಗಳಲ್ಲಿ ಅಂದರೆ ಈ ಕಡೆಯಲ್ಲಿಯೂ ಮತ್ತು ಆ ಕಡೆಯಲ್ಲಿಯೂ ಬರಹವಿತ್ತು.
EXO 32:16 ಆ ಹಲಗೆಗಳು ದೇವರ ಕೆಲಸಗಳಾಗಿದ್ದವು. ಆ ಹಲಗೆಗಳ ಮೇಲೆ ಕೆತ್ತಿದ ಬರಹವು ದೇವರದ್ದೇ ಆಗಿತ್ತು.
EXO 32:17 ಯೆಹೋಶುವನು ಜನರು ಕೂಗುತ್ತಿದ್ದ ಶಬ್ದವನ್ನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಶಬ್ದವು ಕೇಳಿಸುತ್ತದೆ,” ಎಂದು ಹೇಳಿದನು.
EXO 32:18 ಅದಕ್ಕೆ ಮೋಶೆಯು ಹೀಗೆ ಉತ್ತರಿಸಿದನು: “ಅದು ಜಯಧ್ವನಿಯು ಅಲ್ಲ, ಅಪಜಯದ ಧ್ವನಿಯೂ ಅಲ್ಲ. ಆದರೆ ನನಗೆ ಹಾಡುವ ಧ್ವನಿಯು ಕೇಳಿಸುತ್ತಿದೆ.”
EXO 32:19 ಇದಾದ ಮೇಲೆ ಮೋಶೆ ಪಾಳೆಯದ ಸಮೀಪಕ್ಕೆ ಬಂದು ಆ ಕರುವನ್ನೂ, ಅವರ ಕುಣಿದಾಟವನ್ನೂ ನೋಡಿದಾಗ, ಮೋಶೆಯು ಕೋಪಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬೆಟ್ಟದ ಅಡಿಯಲ್ಲಿ ಬಿಸಾಡಿ ಅವುಗಳನ್ನು ಒಡೆದುಬಿಟ್ಟನು.
EXO 32:20 ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟು ಪುಡಿಯಾಗುವವರೆಗೆ ಅರೆದು ನೀರಿನ ಮೇಲೆ ಚೆಲ್ಲಿ, ಆ ನೀರನ್ನು ಇಸ್ರಾಯೇಲರು ಕುಡಿಯುವಂತೆ ಮಾಡಿದನು.
EXO 32:21 ಮೋಶೆಯು ಆರೋನನಿಗೆ, “ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು?” ಎಂದು ಕೇಳಿದನು.
EXO 32:22 ಅದಕ್ಕೆ ಆರೋನನು, “ನನ್ನ ಒಡೆಯನೇ ಕೋಪಗೊಳ್ಳಬೇಡಿ ಈ ಜನರು ಕೆಡುಕಿನ ಮನಸ್ಸಿನವರಾಗಿದ್ದಾರೆಂದು ನೀವು ಬಲ್ಲಿರಿ.
EXO 32:23 ಅವರು ನನಗೆ, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗುವ ದೇವರುಗಳನ್ನು ಮಾಡು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಮ್ಮನ್ನು ಬರಮಾಡಿದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು,’ ಎಂದು ಹೇಳಿದರು.
EXO 32:24 ಆದ್ದರಿಂದ ನಾನು ಅವರಿಗೆ, ‘ಚಿನ್ನ ಇದ್ದವರು ಅದನ್ನು ತರಲಿ,’ ಎಂದೆನು. ಅವರು ಅದನ್ನು ನನಗೆ ಕೊಟ್ಟರು. ಆಗ ನಾನು ಅದನ್ನು ಬೆಂಕಿಯಲ್ಲಿ ಹಾಕಿದಾಗ, ಈ ಕರುವು ಉಂಟಾಯಿತು,” ಎಂದನು.
EXO 32:25 ಮೋಶೆಯು ಜನರು ಕ್ರಮವಿಲ್ಲದಿರುವುದನ್ನು ಕಂಡನು. ಆರೋನನು ಅವರನ್ನು ಮಿತಿಮೀರಿ ಇಷ್ಟಬಂದಂತೆ ಮಾಡುವದಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ಅವರ ವೈರಿಗಳ ಮುಂದೆ ಅಪಹಾಸ್ಯಕ್ಕೆ ಆಸ್ಪದವಾಯಿತು.
EXO 32:26 ಮೋಶೆಯು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, “ಯೆಹೋವ ದೇವರ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಲಿ,” ಎಂದನು. ಆಗ ಲೇವಿಯರೆಲ್ಲರು ಅವನ ಬಳಿಗೆ ಕೂಡಿಬಂದರು.
EXO 32:27 ಆಗ ಅವನು ಅವರಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪ್ರತಿಯೊಬ್ಬನು ತನ್ನ ಖಡ್ಗವನ್ನು ಪಕ್ಕದಲ್ಲಿ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಂದು ದ್ವಾರದಿಂದ ಇನ್ನೊಂದು ದ್ವಾರಕ್ಕೆ ಹೋಗಿ ಹೋಗುತ್ತಾ ಬರುತ್ತಾ ತನ್ನ ಸಹೋದರನನ್ನೂ, ತನ್ನ ಜೊತೆಗಾರನನ್ನೂ ಮತ್ತು ನೆರೆಹೊರೆಯವನೆಂದು ಲಕ್ಷಿಸದೆ ಕೊಲ್ಲಲಿ,’ ” ಎಂದು ಹೇಳಿದನು.
EXO 32:28 ಲೇವಿಯರು ಮೋಶೆಯು ಆಜ್ಞಾಪಿಸಿದಂತೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಜನರು ಸತ್ತರು.
EXO 32:29 ಆಗ ಮೋಶೆ ಆ ಲೇವಿಯರಿಗೆ, “ಈ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ, ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ನಿಮ್ಮನ್ನೇ ಯೆಹೋವ ದೇವರ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.
EXO 32:30 ಮರುದಿನದಲ್ಲಿ, ಮೋಶೆಯು ಜನರಿಗೆ, “ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ. ಆದ್ದರಿಂದ ನಾನು ಈಗ ಬೆಟ್ಟವನ್ನು ಹತ್ತಿ ಯೆಹೋವ ದೇವರ ಬಳಿಗೆ ಹೋಗುವೆನು. ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು,” ಎಂದನು.
EXO 32:31 ಹೀಗೆ ಮೋಶೆಯು ಯೆಹೋವ ದೇವರ ಬಳಿಗೆ ತಿರುಗಿ ಹೋಗಿ, “ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.
EXO 32:32 ಆದರೂ ಈಗ ನೀವು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀವು ಬರೆದ ಗ್ರಂಥದಿಂದ ನನ್ನ ಹೆಸರನ್ನು ಅಳಿಸಿಬಿಡಿ,” ಎಂದು ಬೇಡಿಕೊಂಡನು.
EXO 32:33 ಅದಕ್ಕೆ ಯೆಹೋವ ದೇವರು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.
EXO 32:34 ಆದರೆ ಈಗ ನೀನು ಹೋಗಿ, ಜನರನ್ನು ನಿನಗೆ ನಾನು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋಗು. ಇಗೋ, ನನ್ನ ದೂತನು ನಿನ್ನನ್ನು ಮುನ್ನಡೆಸುವನು. ಆದರೂ ನಾನು ವಿಚಾರಿಸುವ ದಿನ ಬಂದಾಗ ಅವರ ಪಾಪಕ್ಕೆ ತಕ್ಕಂತೆ ಅವರನ್ನು ಶಿಕ್ಷಿಸುತ್ತೇನೆ,” ಎಂದರು.
EXO 32:35 ಹೀಗೆ ಆರೋನನು ಮಾಡಿದ ಕರುವನ್ನು ಅವರು ಆರಾಧಿಸಿದ್ದರಿಂದ ಯೆಹೋವ ದೇವರು ಜನರನ್ನು ಉಪದ್ರವದಿಂದ ಬಾಧಿಸಿದರು.
EXO 33:1 ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ, ‘ನಿಮ್ಮ ಸಂತತಿಯವರಿಗೆ ಅದನ್ನು ಕೊಡುವೆನು,’ ಎಂದು ಹೇಳಿ ಪ್ರಮಾಣ ಮಾಡಿದ ದೇಶಕ್ಕೆ ಹೋಗು.
EXO 33:2 ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ, ಅಮೋರಿಯರನ್ನೂ, ಹಿತ್ತಿಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಹೊರದೂಡುವೆನು.
EXO 33:3 ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು. ನಾನು ನಿಮ್ಮ ಸಂಗಡ ಹೋಗುವುದಿಲ್ಲ ಏಕೆಂದರೆ ನೀವು ಮಾತು ಕೇಳದ ಹಟಮಾರಿ ಜನರಾಗಿದ್ದೀರಿ ಮತ್ತು ಮಾರ್ಗದಲ್ಲಿ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು,” ಎಂದರು.
EXO 33:4 ಜನರು ಈ ಕಠಿಣವಾದ ಮಾತುಗಳನ್ನು ಕೇಳಿದಾಗ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.
EXO 33:5 ಏಕೆಂದರೆ ಯೆಹೋವ ದೇವರು ಮೋಶೆಗೆ, “ಇಸ್ರಾಯೇಲರಿಗೆ ಹೀಗೆ ಹೇಳು: ‘ನೀವು ಆಜ್ಞೆಗಳನ್ನು ಪಾಲಿಸದ ಹಟಮಾರಿ ಜನರು. ನಾನು ಕ್ಷಣಮಾತ್ರವೂ ನಿಮ್ಮೊಡನೆ ಬಂದರೆ ನೀವು ನಿರ್ಮೂಲವಾಗಿಬಿಡುವಿರಿ. ಹೀಗಿರುವುದರಿಂದ ಈಗ ನಿಮ್ಮ ಆಭರಣಗಳನ್ನು ನಿಮ್ಮಿಂದ ತೆಗೆದುಬಿಡಿರಿ, ನಾನು ನಿಮಗೆ ಏನು ಮಾಡಬೇಕೆಂಬುದನ್ನು ತೀರ್ಮಾನಿಸುವೆನು’ ಎಂದು ಹೇಳು,” ಎಂದು ತಿಳಿಸಿದರು.
EXO 33:6 ಅದರಂತೆಯೇ ಇಸ್ರಾಯೇಲರು ಹೋರೇಬ್ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು.
EXO 33:7 ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ, ಅದಕ್ಕೆ “ದೇವದರ್ಶನದ ಗುಡಾರ” ಎಂದು ಹೆಸರಿಟ್ಟನು. ತರುವಾಯ ಯೆಹೋವ ದೇವರನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನದ ಗುಡಾರಕ್ಕೆ ಹೋದರು.
EXO 33:8 ಇದಾದ ಮೇಲೆ ಮೋಶೆಯು ಗುಡಾರದ ಬಳಿಗೆ ಹೊರಗೆ ಹೋಗುತ್ತಿರುವಾಗ ಜನರೆಲ್ಲರೂ ಎದ್ದು, ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವವರೆಗೆ ಅವನ ಹಿಂದೆ ನೋಡುತ್ತಿದ್ದರು.
EXO 33:9 ಮೋಶೆ ಗುಡಾರದೊಳಗೆ ಹೋಗುವಾಗ, ಮೇಘಸ್ತಂಭವು ಪ್ರವೇಶದ್ವಾರದ ಬಳಿಯಲ್ಲಿ ನಿಲ್ಲುತ್ತಿತ್ತು. ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡುತ್ತಿದ್ದರು.
EXO 33:10 ಜನರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡುವಾಗ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಯೆಹೋವ ದೇವರನ್ನು ಆರಾಧಿಸುತ್ತಿದ್ದರು.
EXO 33:11 ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಯೆಹೋವ ದೇವರು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದರು. ತರುವಾಯ ಅವನು ಪಾಳೆಯಕ್ಕೆ ಹಿಂದಿರುಗಿ ಹೋಗುತ್ತಿದ್ದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವನೆಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.
EXO 33:12 ಮೋಶೆಯು ಯೆಹೋವ ದೇವರಿಗೆ, “ ‘ಈ ಜನರನ್ನು ನಡೆಸಿಕೊಂಡು ಹೋಗು,’ ಎಂದು ನನಗೆ ಹೇಳುತ್ತಿರುವಿರಿ. ಯಾರನ್ನು ನನ್ನ ಸಂಗಡ ಕಳುಹಿಸುವಿರಿ, ಎಂದು ನೀವು ನನಗೆ ತಿಳಿಸಲಿಲ್ಲ. ಆದರೂ ನೀವು ನನಗೆ, ‘ನಾನು ನಿನ್ನನ್ನು ನಿನ್ನ ಹೆಸರಿನ ಮೂಲಕ ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆಯಿತು,’ ಎಂದೂ ಹೇಳಿದ್ದೀರಲ್ಲಾ.
EXO 33:13 ಹಾಗಾದರೆ ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆಕಿದ್ದೇ ಆದರೆ ನಾನು ನಿಮ್ಮನ್ನು ತಿಳಿಯುವ ಹಾಗೆ, ನಿಮ್ಮ ಮಾರ್ಗವನ್ನು ನನಗೆ ತೋರಿಸಿ. ಆಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದು. ಈ ಜನಾಂಗವು ನಿಮ್ಮ ಜನರೇ, ಎಂದು ಜ್ಞಾಪಿಸಿಕೊಳ್ಳುವೆನು,” ಎಂದು ಹೇಳಿದನು.
EXO 33:14 ಆಗ ಯೆಹೋವ ದೇವರು, “ನನ್ನ ಪ್ರಸನ್ನತೆಯು ನಿನ್ನ ಸಂಗಡ ಹೋಗುವುದು. ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು,” ಎಂದರು.
EXO 33:15 ಮೋಶೆಯು ಅವರಿಗೆ, “ನಿಮ್ಮ ಪ್ರಸನ್ನತೆಯು ನಮ್ಮೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಡಿ.
EXO 33:16 ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು,” ಎಂದನು.
EXO 33:17 ಅದಕ್ಕೆ ಯೆಹೋವ ದೇವರು ಮೋಶೆಗೆ, “ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ,” ಎಂದರು.
EXO 33:18 ಆಗ ಮೋಶೆ, “ನಿಮ್ಮ ಮಹಿಮೆಯನ್ನು ನನಗೆ ತೋರಿಸಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದನು.
EXO 33:19 ಅದಕ್ಕೆ ಅವರು, “ನಾನು ನನ್ನ ಒಳ್ಳೆಯತನವನ್ನೆಲ್ಲಾ ನಿನ್ನ ಎದುರಿಗೆ ಹಾದು ಹೋಗ ಮಾಡಿ, ಯೆಹೋವ ದೇವರ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ, ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು,” ಎಂದರು.
EXO 33:20 ಮತ್ತೆ ದೇವರು ಮೋಶೆಗೆ, “ನೀನು ನನ್ನ ಮುಖವನ್ನು ನೋಡಲಾರಿ. ಏಕೆಂದರೆ ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕಿರಲಾರನು,” ಎಂದರು.
EXO 33:21 ಇದಲ್ಲದೆ ಯೆಹೋವ ದೇವರು, “ನನ್ನ ಬಳಿಯಲ್ಲಿ ಒಂದು ಸ್ಥಳವಿದೆ. ನೀನು ಬಂಡೆಯ ಮೇಲೆ ನಿಂತುಕೋ.
EXO 33:22 ಆಗ ನನ್ನ ಮಹಿಮೆಯು ಹಾದುಹೋಗುವಾಗ, ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ, ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.
EXO 33:23 ತರುವಾಯ ನನ್ನ ಕೈಯನ್ನು ತೆಗೆದುಬಿಡುವೆನು. ಆಗ ನೀನು ನನ್ನ ಬೆನ್ನನ್ನು ನೋಡುವೆ, ಆದರೆ ನನ್ನ ಮುಖವು ನಿನಗೆ ಕಾಣಿಸುವುದಿಲ್ಲ,” ಎಂದರು.
EXO 34:1 ಯೆಹೋವ ದೇವರು ಮೋಶೆಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೋ. ಆಗ ನೀನು ಒಡೆದ ಆ ಮೊದಲನೆಯ ಹಲಗೆಗಳ ಮೇಲೆ ಇದ್ದ ವಾಕ್ಯಗಳನ್ನು ಈ ಹಲಗೆಗಳ ಮೇಲೆ ನಾನು ಬರೆಯುವೆನು.
EXO 34:2 ಬೆಳಿಗ್ಗೆ ನೀನು ಸಿದ್ಧನಾಗಿ ಸೀನಾಯಿ ಬೆಟ್ಟವನ್ನೇರಿ, ಆ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು.
EXO 34:3 ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು. ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಆ ಬೆಟ್ಟದ ಎದುರಿನಲ್ಲಿ ದನಕುರಿಗಳು ಸಹ ಮೇಯಬಾರದು,” ಎಂದು ಹೇಳಿದರು.
EXO 34:4 ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೊಂಡನು. ಬೆಳಿಗ್ಗೆ ಎದ್ದು ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಕಲ್ಲಿನ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲೆ ಹೋದನು.
EXO 34:5 ಆಗ ಯೆಹೋವ ದೇವರು ಮೇಘದಲ್ಲಿ ಇಳಿದುಬಂದು ಅಲ್ಲಿ ಅವನ ಸಂಗಡ ನಿಂತುಕೊಂಡು, ಯೆಹೋವ ದೇವರು ತಮ್ಮ ಹೆಸರನ್ನು ಪ್ರಕಟಮಾಡಿದರು.
EXO 34:6 ಯೆಹೋವ ದೇವರು ಅವನೆದುರಿಗೆ ಹಾದು ಹೋಗಿ, “ಯೆಹೋವ ದೇವರು, ಯೆಹೋವ ದೇವರು, ಕರುಣಾಳುವು, ಕೃಪಾಳುವು, ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ
EXO 34:7 ಸಾವಿರ ತಲೆಗಳವರೆಗೂ ಕರುಣೆ ತೋರಿಸುವಾತನು. ದೋಷವನ್ನು, ಅಪರಾಧವನ್ನು, ಪಾಪವನ್ನು ಕ್ಷಮಿಸುವಾತನು ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನು,” ಎಂದು ಪ್ರಕಟಿಸಿಕೊಂಡರು.
EXO 34:8 ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬಾಗಿ ಅವರನ್ನು ಆರಾಧಿಸಿದನು.
EXO 34:9 ಅವನು, ಕರ್ತನೇ, “ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನನ್ನ ಕರ್ತನೇ ತಾವೇ ನಮ್ಮ ಸಂಗಡ ಬರಬೇಕು. ಇದು ಮಾತು ಕೇಳದ ಹಟಮಾರಿ ಜನಾಂಗವೇ ಹೌದು. ಆದರೂ ನಮ್ಮ ದೋಷವನ್ನೂ ಪಾಪವನ್ನೂ ಮನ್ನಿಸಿ ನಮ್ಮನ್ನು ನಿಮ್ಮ ಸೊತ್ತಾಗಿ ತೆಗೆದುಕೊಳ್ಳಿ,” ಎಂದನು.
EXO 34:10 ಅದಕ್ಕೆ ಯೆಹೋವ ದೇವರು, “ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿಯಲ್ಲಿಯೂ ಯಾವ ಜನಾಂಗದಲ್ಲಿಯೂ ಹಿಂದೆಂದಿಗೂ ಮಾಡದಿರುವಂಥ ಅದ್ಭುತಗಳನ್ನು ನಿನ್ನ ಎಲ್ಲಾ ಜನರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವೆಯೋ ಆ ಜನರೂ ಯೆಹೋವ ದೇವರ ಕಾರ್ಯವನ್ನು ನೋಡುವರು ಏಕೆಂದರೆ ನಾನು ನಿಮಗೆ ಮಾಡುವಂಥದ್ದು ಭಯಂಕರವಾಗಿರುವುದು.
EXO 34:11 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವುದನ್ನು ಅನುಸರಿಸಿ ನಡೆಯಬೇಕು. ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ, ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿಮ್ಮ ಮುಂದೆಯೇ ಹೊರಡಿಸಿಬಿಡುತ್ತೇನೆ.
EXO 34:12 ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಪ್ಪಂದವನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವುದು.
EXO 34:13 ಆದರೆ ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಬೇಕು.
EXO 34:14 ಏಕೆಂದರೆ, ‘ರೋಷವುಳ್ಳವನು,’ ಎಂದು ಹೆಸರುಳ್ಳ ಯೆಹೋವ ದೇವರು ರೋಷವುಳ್ಳ ದೇವರಾಗಿರುವುದರಿಂದ ನೀನು ಬೇರೆ ದೇವರುಗಳನ್ನು ಆರಾಧಿಸಬಾರದು.
EXO 34:15 “ನೀನು ಆ ದೇಶದ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಎಚ್ಚರದಿಂದಿರು. ಅವರು ಅನ್ಯದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞ ಅರ್ಪಿಸುವ ಸಮಯದಲ್ಲಿ ಒಬ್ಬನು ನಿನ್ನನ್ನು ಕರೆದಾನು, ನೀನು ಅವನ ಯಜ್ಞಭೋಜನವನ್ನು ಮಾಡಬೇಕಾದೀತು.
EXO 34:16 ಇದಲ್ಲದೆ ಅವರ ಪುತ್ರಿಯರನ್ನು ನಿನ್ನ ಪುತ್ರರಿಗೋಸ್ಕರ ತೆಗೆದುಕೊಳ್ಳಬೇಕಾಗಬಹುದು. ತೆಗೆದುಕೊಂಡರೆ ಅವರ ಪುತ್ರಿಯರು ತಮ್ಮ ದೇವರುಗಳನ್ನು ಆರಾಧಿಸಿ, ನಿಮ್ಮ ಪುತ್ರರನ್ನೂ ಅನ್ಯದೇವರುಗಳ ಆರಾಧನೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು.
EXO 34:17 “ನಿಮಗಾಗಿ ದೇವರುಗಳ ಎರಕ ಹೊಯ್ದ ವಿಗ್ರಹಗಳನ್ನು ಮಾಡಿಕೊಳ್ಳಬಾರದು.
EXO 34:18 “ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರ ಮಾಸದ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನೀವು ಈಜಿಪ್ಟ್ ದೇಶವನ್ನು ಬಿಟ್ಟು ಬಂದಿದ್ದೀರಿ.
EXO 34:19 “ಪ್ರಥಮ ಗರ್ಭಫಲವೆಲ್ಲಾ ಅಂದರೆ ನಿಮ್ಮ ಪಶುಗಳಾಗಲಿ, ಎತ್ತುಗಳಾಗಲಿ, ಟಗರುಗಳಾಗಲಿ ಮೊದಲು ಹುಟ್ಟುವವುಗಳೆಲ್ಲಾ ಗಂಡಾಗಿದ್ದರೆ ಅವು ನನ್ನವೇ.
EXO 34:20 ಕತ್ತೆಮರಿಗೆ ಬದಲಾಗಿ ಕುರಿಮರಿಯನ್ನು ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ, ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಪುತ್ರರಲ್ಲಿ ಚೊಚ್ಚಲಾದವರನ್ನೆಲ್ಲಾ ವಿಮೋಚಿಸಬೇಕು. “ನನ್ನ ಮುಂದೆ ಯಾರೂ ಬರಿಗೈಯಿಂದ ಕಾಣಿಸಿಕೊಳ್ಳಬಾರದು.
EXO 34:21 “ಆರು ದಿನಗಳು ಕೆಲಸಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು.
EXO 34:22 “ಪ್ರಥಮ ಗೋಧಿ ಸುಗ್ಗಿಯ ವಾರಗಳ ಹಬ್ಬವನ್ನು ಮತ್ತು ವರ್ಷದ ಕೊನೆಯಲ್ಲಿ ಬೆಳೆ ಸಂಗ್ರಹದ ಹಬ್ಬವನ್ನು ಆಚರಿಸಬೇಕು.
EXO 34:23 ವರುಷಕ್ಕೆ ಮೂರು ಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಸಾರ್ವಭೌಮ ಯೆಹೋವ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.
EXO 34:24 ಏಕೆಂದರೆ ನಾನು ಜನಾಂಗಗಳನ್ನು ನಿಮ್ಮ ಸನ್ನಿಧಿಯಿಂದ ಹೊರಡಿಸಿಬಿಟ್ಟು, ನಿಮ್ಮ ಮೇರೆಗಳನ್ನು ವಿಸ್ತಾರ ಮಾಡುವೆನು. ವರ್ಷಕ್ಕೆ ಮೂರು ಸಾರಿ ನೀವು ನಿಮ್ಮ ಯೆಹೋವ ದೇವರ ಮುಂದೆ ಬರುವ ಸಮಯದಲ್ಲಿ ಯಾರೂ ನಿಮ್ಮ ಭೂಮಿಯನ್ನು ಅಪಹರಿಸಲು ಆಶೆಪಡುವುದಿಲ್ಲ.
EXO 34:25 “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕಹಬ್ಬದ ಬಲಿಯಲ್ಲಿ ಯಾವುದೂ ಬೆಳಗಿನವರೆಗೆ ಉಳಿಸಬಾರದು.
EXO 34:26 “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು,” ಎಂದು ಹೇಳಿದರು.
EXO 34:27 ಯೆಹೋವ ದೇವರು ಮೋಶೆಗೆ ಹೀಗೆ ಹೇಳಿದರು, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಪ್ರಕಾರವೇ ನಾನು ನಿನ್ನ ಮತ್ತು ಇಸ್ರಾಯೇಲಿನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ.”
EXO 34:28 ಮೋಶೆಯು ಹಗಲಿರುಳು ನಲವತ್ತು ದಿವಸ ರೊಟ್ಟಿಯನ್ನು ತಿನ್ನದೇ, ನೀರನ್ನು ಕುಡಿಯದೇ ಅಲ್ಲಿ ಯೆಹೋವ ದೇವರ ಸಂಗಡ ಇದ್ದನು. ದೇವರು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದರು.
EXO 34:29 ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ, ಅವನು ಯೆಹೋವ ದೇವರ ಸಂಗಡ ಬೆಟ್ಟದಲ್ಲಿ ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿಸುತ್ತದೆಂದು ಬೆಟ್ಟದಿಂದ ಇಳಿದಾಗ ಮೋಶೆಗೆ ತಿಳಿಯಲಿಲ್ಲ.
EXO 34:30 ಆದರೆ ಆರೋನನು ಮತ್ತು ಇಸ್ರಾಯೇಲರೆಲ್ಲರೂ ಮೋಶೆಯನ್ನು ನೋಡಿದಾಗ, ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದ್ದರಿಂದ ಅವರು ಅವನ ಹತ್ತಿರ ಬರುವುದಕ್ಕೆ ಭಯಪಟ್ಟರು.
EXO 34:31 ಮೋಶೆಯು ಅವರನ್ನು ಕರೆದಾಗ, ಆರೋನನು ಮತ್ತು ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರುಗಿ ಬಂದರು. ಆಗ ಮೋಶೆಯು ಅವರ ಸಂಗಡ ಮಾತನಾಡಿದನು.
EXO 34:32 ತರುವಾಯ ಇಸ್ರಾಯೇಲರೆಲ್ಲರೂ ಹತ್ತಿರ ಬಂದರು. ಆಗ ಅವನು ಅವರಿಗೆ, ಯೆಹೋವ ದೇವರು ತನಗೆ ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳನ್ನೆಲ್ಲಾ ಆಜ್ಞಾಪಿಸಿ ಹೇಳಿದನು.
EXO 34:33 ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸುವವರೆಗೂ ಅವನು ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು.
EXO 34:34 ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ ಆತನ ಸಂಗಡ ಮಾತನಾಡುವುದಕ್ಕೆ ಒಳಗೆ ಪ್ರವೇಶಿಸಿ ಹೊರಗೆ ಬರುವವರೆಗೆ ಆ ಮುಸುಕನ್ನು ತೆಗೆದು ಬಿಡುತ್ತಿದ್ದನು. ಅವನು ಹೊರಗೆ ಬಂದು ತನಗೆ ಆಜ್ಞಾಪಿಸಿದ್ದನ್ನು ಇಸ್ರಾಯೇಲರಿಗೆ ಹೇಳಿದನು.
EXO 34:35 ಆಗ ಮೋಶೆಯ ಮುಖವು ಪ್ರಕಾಶಿಸುವುದನ್ನು ಇಸ್ರಾಯೇಲರು ನೋಡಿದ್ದರು. ಮೋಶೆ ದೇವರ ಸಂಗಡ ಮಾತನಾಡುವುದಕ್ಕೆ ಹೋಗುವವರೆಗೆ ಅವನು ತನ್ನ ಮುಖದ ಮೇಲೆ ತಿರುಗಿ ಮುಸುಕನ್ನು ಹಾಕಿಕೊಳ್ಳುತ್ತಿದ್ದನು.
EXO 35:1 ಮೋಶೆಯು ಇಸ್ರಾಯೇಲರ ಸಮೂಹವನ್ನು ಒಟ್ಟುಗೂಡಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವ ದೇವರು ನಿಮಗೆ ಹೀಗೆ ಆಜ್ಞಾಪಿಸಿದ್ದಾರೆ.
EXO 35:2 ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು.
EXO 35:3 ಸಬ್ಬತ್ ದಿನದಲ್ಲಿ ನೀವು ವಾಸಮಾಡುವ ಯಾವ ಮನೆಯಲ್ಲಿಯೂ ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
EXO 35:4 ಮೋಶೆಯು ಇಸ್ರಾಯೇಲರ ಇಡೀ ಸಮೂಹಕ್ಕೆ ಹೇಳಿದ್ದು: “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ.
EXO 35:5 ನಿಮ್ಮಲ್ಲಿರುವದರಿಂದ ಯೆಹೋವ ದೇವರಿಗೆ ಕಾಣಿಕೆಯನ್ನು ಅರ್ಪಿಸಿರಿ. ಯಾರ‍್ಯಾರಿಗೆ ಇಷ್ಟವಿದೆಯೋ ಅವರು, “ಚಿನ್ನ, ಬೆಳ್ಳಿ, ಕಂಚು,
EXO 35:6 ನೀಲಿ, ನಾರು, ರಕ್ತವರ್ಣ ನಾರು, ಲಾಕಿ ಬಣ್ಣ, ನಾರು, ನಾರುಬಟ್ಟೆಗಳು, ಮೇಕೆಯ ಕೂದಲು,
EXO 35:7 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ,
EXO 35:8 ದೀಪಕ್ಕಾಗಿ ಓಲಿವ್ ಎಣ್ಣೆ ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಮತ್ತು ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
EXO 35:9 ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳನ್ನು ತನ್ನಿರಿ.
EXO 35:10 “ನಿಮ್ಮಲ್ಲಿರುವ ಶಿಲ್ಪಿಗಳೆಲ್ಲರೂ ಬಂದು, ಯೆಹೋವ ದೇವರು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು. ಅವು ಯಾವುವೆಂದರೆ:
EXO 35:11 “ದೇವದರ್ಶನದ ಗುಡಾರವನ್ನು, ಅದರ ಮೇಲ್ಹೊದಿಕೆಯನ್ನು, ಅದರ ಕೊಂಡಿಗಳನ್ನು, ಅದರ ಚೌಕಟ್ಟುಗಳನ್ನು, ಅದರ ಅಗುಳಿಗಳನ್ನು, ಅದರ ಸ್ತಂಭಗಳನ್ನು, ಅದರ ಕುಣಿಕೆಗಳನ್ನು,
EXO 35:12 ಮಂಜೂಷವನ್ನು, ಅದರ ಕೋಲುಗಳನ್ನು, ಅವುಗಳೊಂದಿಗೆ ಕರುಣಾಸನವನ್ನು, ಮರೆಮಾಡುವ ಪರದೆಯನ್ನು,
EXO 35:13 ಮೇಜನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
EXO 35:14 ಬೆಳಕಿಗಾಗಿ ದೀಪಸ್ತಂಭವನ್ನು, ಅದರ ಉಪಕರಣಗಳನ್ನು, ಅದರ ದೀಪಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು,
EXO 35:15 ಧೂಪವೇದಿಯನ್ನು, ಅದರ ಕೋಲುಗಳನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
EXO 35:16 ದಹನಬಲಿಯ ಪೀಠವನ್ನು, ಅದರೊಂದಿಗೆ ಕಂಚಿನ ಜಾಳಿಗೆಯನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ಕಂಚಿನ ಗಂಗಾಳವನ್ನು, ಅದರ ಕಾಲನ್ನು,
EXO 35:17 ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು,
EXO 35:18 ಗುಡಾರದ ಗೂಟಗಳನ್ನು, ಅಂಗಳದ ಗೂಟಗಳನ್ನು, ಅದರ ಹಗ್ಗಗಳನ್ನು,
EXO 35:19 ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ಮಾಡಲಿ,” ಎಂದನು.
EXO 35:20 ಆಗ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಯ ಸನ್ನಿಧಿಯಿಂದ ಹೊರಟು ಹೋದರು.
EXO 35:21 ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.
EXO 35:22 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮೂಗುತಿಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಜನರೆಲ್ಲಾ ಚಿನ್ನವನ್ನು ವಿಶೇಷ ಕಾಣಿಕೆಗಳನ್ನಾಗಿ ಯೆಹೋವ ದೇವರಿಗೆ ಅರ್ಪಿಸಿದರು.
EXO 35:23 ನೀಲಿ, ಧೂಮ್ರ, ರಕ್ತವರ್ಣ ದಾರಗಳೂ ನಯವಾದ ನಾರುಮಡಿ, ಮೇಕೆಯ ಕೂದಲು, ಟಗರುಗಳ ಕೆಂಪು ಬಣ್ಣದ ಚರ್ಮಗಳೂ ಕಡಲುಹಂದಿಯ ಚರ್ಮಗಳೂ ಯಾರ ಬಳಿಯಲ್ಲಿದ್ದವೋ ಅವರೆಲ್ಲರೂ ತಂದರು.
EXO 35:24 ಬೆಳ್ಳಿ, ಕಂಚುಗಳ ಕಾಣಿಕೆಗಳನ್ನು ಅರ್ಪಿಸುವುದಕ್ಕೆ ಮನಸ್ಸಿದ್ದವರೆಲ್ಲರೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸಕ್ಕೋಸ್ಕರ ಜಾಲಿ ಮರವಿದ್ದವರು ಅದನ್ನು ತಂದರು.
EXO 35:25 ಕುಶಲತೆ ಬಲ್ಲ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ದಾರಗಳನ್ನು ಮತ್ತು ನಯವಾದ ನಾರುಮಡಿಯನ್ನು ತಂದರು.
EXO 35:26 ಕುಶಲತೆ ಬಲ್ಲ ಎಲ್ಲಾ ಸ್ತ್ರೀಯರು ಮೇಕೆ ಕೂದಲುಗಳನ್ನು ನೇಯ್ದರು.
EXO 35:27 ಅಧಿಪತಿಗಳು ಏಫೋದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವುದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
EXO 35:28 ಸುಗಂಧದ್ರವ್ಯಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆಯನ್ನೂ ತಂದರು.
EXO 35:29 ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.
EXO 35:30 ಆಗ ಮೋಶೆಯು ಇಸ್ರಾಯೇಲರಿಗೆ, “ನೋಡಿರಿ, ಯೆಹೋವ ದೇವರು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ಆರಿಸಿಕೊಂಡಿದ್ದಾರೆ,
EXO 35:31 ಅವರು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ
EXO 35:32 ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದರಲ್ಲಿಯೂ
EXO 35:33 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸದ ಜ್ಞಾನದಿಂದಲೂ ಅವನನ್ನು ತುಂಬಿಸಿದ್ದಾರೆ.
EXO 35:34 ಇದಲ್ಲದೆ ಕಲಿಸುವುದಕ್ಕೆ ಅವನಿಗೆ ಮತ್ತು ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದಾರೆ.
EXO 35:35 ಕೆತ್ತನೆಯ ಕೆಲಸಗಳನ್ನು, ವಿನ್ಯಾಸದ ಕೆಲಸಗಳನ್ನು, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ, ನಯವಾದ ನಾರುಬಟ್ಟೆ ಇವುಗಳಲ್ಲಿ ಕಸೂತಿ ಕೆಲಸಗಳನ್ನು ಮಾಡುವುದಕ್ಕೆ ಮತ್ತು ನೇಯ್ಗೆಯ ಕೆಲಸ ಮಾಡುವುದಕ್ಕೆ ಎಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಯೆಹೋವ ದೇವರು ಅವರಿಗೆ ಜ್ಞಾನವನ್ನು ಅನುಗ್ರಹಿಸಿದ್ದಾರೆ.
EXO 36:1 ತರುವಾಯ ಬೆಚಲಯೇಲ್ ಮತ್ತು ಒಹೋಲಿಯಾಬನೂ ಯೆಹೋವ ದೇವರು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡುವರು. ಅವರು ಪರಿಶುದ್ಧಸ್ಥಳದ ಸೇವೆಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಯೆಹೋವ ದೇವರಿಂದ ಜ್ಞಾನ ವಿವೇಕಗಳನ್ನು ಹೊಂದಿದ ಇತರರೊಂದಿಗೆ ಕೆಲಸಮಾಡುವರು,” ಎಂದು ಹೇಳಿದನು.
EXO 36:2 ಬೆಚಲಯೇಲನನ್ನು, ಒಹೋಲಿಯಾಬನನ್ನು ಮತ್ತು ಯೆಹೋವ ದೇವರು ಜ್ಞಾನಕೊಟ್ಟಿದ್ದ ಪ್ರತಿಯೊಬ್ಬ ಶಿಲ್ಪಿಯನ್ನೂ ಆ ಕೆಲಸ ಮಾಡುವುದಕ್ಕೆ ಸಿದ್ಧ ಮನಸ್ಸಿದ್ದ ಪ್ರತಿಯೊಬ್ಬನನ್ನೂ ಮೋಶೆಯು ಕರೆದನು.
EXO 36:3 ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.
EXO 36:4 ಆಗ ಪರಿಶುದ್ಧಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಮ್ಮ ತಮ್ಮ ಕೆಲಸವನ್ನು ಬಿಟ್ಟು ಬಂದು,
EXO 36:5 ಮೋಶೆಯ ಸಂಗಡ ಮಾತನಾಡಿ, “ಯೆಹೋವ ದೇವರು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಾಣಿಕೆಗಳನ್ನು ಈ ಜನರು ತರುತ್ತಿದ್ದಾರೆ,” ಎಂದು ಹೇಳಿದರು.
EXO 36:6 ಆಗ ಮೋಶೆಯು, “ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.
EXO 36:7 ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು.
EXO 36:8 ಕೆಲಸದವರಲ್ಲಿದ್ದ ಶಿಲ್ಪಿಗಳೆಲ್ಲರೂ ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿದರು.
EXO 36:9 ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿದ್ದವು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದ್ದವು.
EXO 36:10 ಅವರು ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಿದರು.
EXO 36:11 ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿದ್ದಲ್ಲದೆ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಿದರು.
EXO 36:12 ಒಂದು ಪರದೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ, ಇನ್ನೊಂದು ಪರದೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು. ಆ ಕುಣಿಕೆಗಳು ಒಂದು ಪರದೆಯನ್ನು ಮತ್ತೊಂದು ಪರದೆಯು ಹಿಡಿದುಕೊಳ್ಳುವಂತೆ ಮಾಡಿದರು.
EXO 36:13 ಅವರು ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಎರಡು ಜೋಡಣೆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು. ಹೀಗೆ ಅದು ಒಂದೇ ಗುಡಾರವಾಯಿತು.
EXO 36:14 ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಅವರು ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಿದರು.
EXO 36:15 ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿದ್ದವು.
EXO 36:16 ಅವರು ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿದರು.
EXO 36:17 ಅವರು ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು.
EXO 36:18 ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡಣೆಗೆ ಅವರು ಕಂಚಿನ ಐವತ್ತು ಕೊಂಡಿಗಳನ್ನು ಮಾಡಿದರು.
EXO 36:19 ಅದಲ್ಲದೆ ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಿದರು. ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದರು.
EXO 36:20 ಗುಡಾರವು ನಿಂತುಕೊಂಡಿರುವುದಕ್ಕೆ ಅವರು ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಿದರು.
EXO 36:21 ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇತ್ತು.
EXO 36:22 ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದರು. ಅದೇ ಪ್ರಕಾರ ಅವರು ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಿದರು.
EXO 36:23 ಅವರು ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
EXO 36:24 ಅವರು ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಿದರು.
EXO 36:25 ಇನ್ನೊಂದು ಭಾಗಕ್ಕೆ ಅಂದರೆ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
EXO 36:26 ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು.
EXO 36:27 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಿದರು.
EXO 36:28 ಅವರು ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.
EXO 36:29 ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿದರು. ಇದೇ ರೀತಿಯಲ್ಲಿ ಅವರು ಎರಡು ಮೂಲೆಗಳಲ್ಲಿ ಎರಡಕ್ಕೂ ಮಾಡಿದರು.
EXO 36:30 ಇಂಥ ಎಂಟು ಚೌಕಟ್ಟುಗಳಿದ್ದವು. ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳಿದ್ದವು.
EXO 36:31 ಅವರು ಜಾಲಿ ಮರದಿಂದ ಅಗುಳಿಗಳನ್ನು ಮಾಡಿದರು, ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳು,
EXO 36:32 ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಿದರು.
EXO 36:33 ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹಾದು ಹೋಗುವಹಾಗೆ ಮಾಡಿದರು.
EXO 36:34 ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಿ, ಆ ಅಗುಳಿಗಳಿಗಾಗಿ ಬಂಗಾರದಿಂದ ಬಳೆಗಳನ್ನು ಮಾಡಿ, ಮಾಡಿದ ಅಗುಳಿಗಳನ್ನು ಬಂಗಾರದಿಂದ ಹೊದಿಸಿದರು.
EXO 36:35 ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಿದರು.
EXO 36:36 ಅದಕ್ಕೆ ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಅವುಗಳಿಗೆ ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳನ್ನು ಎರಕ ಹೊಯ್ದರು.
EXO 36:37 ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಿದರು.
EXO 36:38 ಕೊಂಡಿಯಿರುವ ಐದು ಕಂಬಗಳನ್ನು ಮಾಡಿ, ಅವುಗಳ ತಲೆಗಳನ್ನೂ ಕಂಬಗಳನ್ನೂ ಬಂಗಾರದಿಂದ ಹೊದಿಸಿದರು. ಆದರೆ ಅವುಗಳ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಮಾಡಿದರು.
EXO 37:1 ಬೆಚಲಯೇಲನು ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
EXO 37:2 ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿದನು.
EXO 37:3 ಅದರ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇರಿಸಿದನು.
EXO 37:4 ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.
EXO 37:5 ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು.
EXO 37:6 ಇದಲ್ಲದೆ ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಿದನು.
EXO 37:7 ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿದನು.
EXO 37:8 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿದನು.
EXO 37:9 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿದ್ದವು.
EXO 37:10 ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಿದನು.
EXO 37:11 ಆಮೇಲೆ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಸುತ್ತಲೂ ಬಂಗಾರದ ತೋರಣ ಕಟ್ಟಿದನು.
EXO 37:12 ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಕಟ್ಟಿದರು.
EXO 37:13 ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಎರಕ ಹೊಯ್ದು, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಿದರು.
EXO 37:14 ಮೇಜನ್ನು ಹೊತ್ತುಕೊಂಡು ಹೋಗಲು ಕೋಲುಗಳನ್ನು ಮಾಡಿ, ಈ ಬಳೆಗಳನ್ನು ಅಡ್ಡಪಟ್ಟಿಗೆ ಸಮೀಪದಲ್ಲಿ ಕೂಡಿಸಿದರು.
EXO 37:15 ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳಿಗೆ ಬಂಗಾರದಿಂದ ಹೊದಿಸಲಾಯಿತು.
EXO 37:16 ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣ, ಧೂಪಾರತಿಗಳು, ಹೂಜೆಗಳು, ಪಾನದ್ರವ್ಯಗಳ ಅರ್ಪಣೆಗಾಗಿ ಬೇಕಾಗುವ ಬಟ್ಟಲುಗಳನ್ನು ಶುದ್ಧ ಬಂಗಾರದಿಂದ ಮಾಡಿದರು.
EXO 37:17 ಚೊಕ್ಕ ಬಂಗಾರದಿಂದ ದೀಪಸ್ತಂಭವನ್ನು ಮಾಡಿದರು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದರು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇದ್ದವು.
EXO 37:18 ಆ ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬಂದಿದ್ದವು.
EXO 37:19 ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿದ್ದವು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು ಮೊಗ್ಗು ಪುಷ್ಟಗಳಿದ್ದವು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇದ್ದವು.
EXO 37:20 ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇದ್ದವು.
EXO 37:21 ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿತ್ತು, ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳಿದ್ದವು.
EXO 37:22 ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿದ್ದವು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿತ್ತು.
EXO 37:23 ಅವರು ಏಳು ದೀಪಗಳನ್ನೂ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಿದರು.
EXO 37:24 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಿದರು.
EXO 37:25 ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಿದರು. ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿತ್ತು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಲಾಗಿತ್ತು.
EXO 37:26 ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿದರು. ಅದರ ಸುತ್ತಲೂ ಬಂಗಾರದ ಗೋಟನ್ನು ಕಟ್ಟಿಸಿದರು.
EXO 37:27 ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಿದರು, ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಿದರು.
EXO 37:28 ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಿದರು.
EXO 37:29 ಅನಂತರ ಅವರು ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮತ್ತು ಪರಿಮಳ ದ್ರವ್ಯದಿಂದ ಶುದ್ಧವಾದ ಧೂಪವನ್ನು ತಯಾರಿಸಿದರು.
EXO 38:1 ಬೆಚಲೇಲನು ಜಾಲಿ ಮರದಿಂದ ದಹನಬಲಿಯ ಪೀಠವನ್ನು ಮಾಡಿದರು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.
EXO 38:2 ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದರು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಿದರು.
EXO 38:3 ಅನಂತರ ಅವರು ಬಲಿಪೀಠದ ಉಪಕರಣಗಳನ್ನೆಲ್ಲಾ ಅಂದರೆ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಇವುಗಳೆನ್ನೆಲ್ಲಾ ಕಂಚಿನಿಂದ ಮಾಡಿದರು.
EXO 38:4 ಬಲಿಪೀಠಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿದರು. ಅದು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಿದರು.
EXO 38:5 ವೇದಿಯನ್ನು ಹೊರುವಾಗ ಕೋಲು ಸಿಕ್ಕಿಸುವುದಕ್ಕೋಸ್ಕರ ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಕಂಚಿನಿಂದ ಎರಕ ಹೊಯ್ದರು.
EXO 38:6 ಅವರು ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಿದರು.
EXO 38:7 ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಮಾಡಿದ ಕೋಲುಗಳನ್ನು ಬಳೆಗಳಲ್ಲಿ ಸೇರಿಸಿದರು. ಅವರು ಆ ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಿದರು.
EXO 38:8 ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಸೇವೆಮಾಡುತ್ತಿದ್ದ ಸ್ತ್ರೀಯರಿಂದ ಕೂಡಿಸಿದ ಕಂಚಿನ ದರ್ಪಣಗಳಿಂದ ಕಂಚಿನಿಂದ ಬೋಗುಣಿಯನ್ನು ಅದರ ಪೀಠವನ್ನೂ ಮಾಡಿದರು.
EXO 38:9 ಅವರು ಗುಡಾರದ ಅಂಗಳವನ್ನು ಮಾಡಿದರು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಲಾಗಿತ್ತು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿದ್ದವು.
EXO 38:10 ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳಿದ್ದವು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು.
EXO 38:11 ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿದ್ದವು. ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಿದ್ದಾಗಿದ್ದವು.
EXO 38:12 ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾದ ಪರದೆಗಳಿದ್ದವು. ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿದ್ದವು. ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಮೇಲಿನ ಕಟ್ಟುಗಳು ಬೆಳ್ಳಿಯದ್ದಾಗಿದ್ದವು.
EXO 38:13 ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರವಾಗಿತ್ತು.
EXO 38:14 ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್ ಉದ್ದವಾಗಿದ್ದವು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಗದ್ದಿಗೇ ಕಲ್ಲುಗಳು ಇದ್ದವು.
EXO 38:15 ಅಂಗಳದ ದ್ವಾರದ ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳಿದ್ದವು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿದ್ದವು.
EXO 38:16 ಅಂಗಳದ ಸುತ್ತಲಿದ್ದ ಎಲ್ಲ ಪರದೆಗಳು ನಯವಾಗಿ ಹೊಸೆದ ನಾರಿನ ಬಟ್ಟೆಯಿಂದ ಮಾಡಲಾಗಿದ್ದವು.
EXO 38:17 ಸ್ತಂಭಗಳ ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿದ್ದವು. ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯದ್ದಾಗಿದ್ದವು. ಸ್ತಂಭದ ಬೋದಿಗೆಗಳು ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದ ಎಲ್ಲಾ ಸ್ತಂಭಗಳಿಗೆ ಬೆಳ್ಳಿಯ ಕಟ್ಟುಗಳಿದ್ದವು.
EXO 38:18 ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ ಮಾಡಲಾಗಿತ್ತು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು. ಅಗಲ, ಎತ್ತರಗಳಲ್ಲಿ ಅಂಗಳದ ಉಳಿದ ಪರದೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.
EXO 38:19 ಅವುಗಳಿಗೆ ನಾಲ್ಕು ಸ್ತಂಭಗಳು, ಆ ಕಂಬಗಳಿಗೆ ನಾಲ್ಕು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಅವುಗಳ ಕೊಂಡಿಗಳು ಬೆಳ್ಳಿಯದ್ದಾಗಿದ್ದವು. ಅವುಗಳ ಬೋದಿಗಳ ಹೊದಿಕೆ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದ್ದಾಗಿದ್ದವು.
EXO 38:20 ಗುಡಾರದ ಮತ್ತು ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದಾಗಿದ್ದವು.
EXO 38:21 ದೇವದರ್ಶನದ ಗುಡಾರಕ್ಕೆ ಅಂದರೆ ಒಡಂಬಡಿಕೆಯ ನಿಯಮದ ಗುಡಾರ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಲೆಕ್ಕ ಇವು: ಮೋಶೆಯ ಆಜ್ಞೆಯ ಮೇರೆಗೆ ಯಾಜಕನಾದ ಆರೋನನ ಮಗನಾದ ಈತಾಮಾರನ ನಿರ್ದೇಶನದಲ್ಲಿ ಲೇವಿಯರ ಕೈಯಿಂದ ಲೆಕ್ಕ ಮಾಡಿಸಿದ್ದು.
EXO 38:22 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೆಹೂದ ಕುಲದವನಾದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲಯೇಲನು ಮಾಡಿದನು.
EXO 38:23 ಅವನ ಜೊತೆಯಲ್ಲಿ ದಾನ್ ಕುಲದವನಾದ ಅಹೀಸಾಮಾಕನ ಮಗ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ, ಧೂಮ್ರ ಮತ್ತು ರಕ್ತವರ್ಣದ ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡುವವನೂ ಆಗಿದ್ದನು.
EXO 38:24 ಪರಿಶುದ್ಧಾಲಯದ ಸೇವೆಗೆ ನೇಮಕವಾದ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ವಿಶೇಷವಾಗಿ ಅರ್ಪಿಸಿದ ಕಾಣಿಕೆಯಾಗಿತ್ತು, ಅದು ಇಪ್ಪತ್ತೊಂಬತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲ್ ಇತ್ತು.
EXO 38:25 ಪರಿಶುದ್ಧಾಲಯದ ನಿಯಮದ ಮೇರೆಗೆ ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ಸಂಗ್ರಹಿದ ಬೆಳ್ಳಿಯ ತೂಕವು ಸುಮಾರು 3,400 ಕಿಲೋಗ್ರಾಂ ಇತ್ತು.
EXO 38:26 ಪರಿಶುದ್ಧಾಲಯದ ನಿಯಮದ ಮೇರೆಗೆ ಪ್ರತಿಯೊಬ್ಬ ಮನುಷ್ಯನಿಂದ ಒಂದೊಂದು “ಬೆಕಾ” ಅಂದರೆ ಅರ್ಧ ಶೆಕೆಲ್ ಆಗಿತ್ತು. ಕೊಟ್ಟವರ ಲೆಕ್ಕವನ್ನು ಇಪ್ಪತ್ತು ವರ್ಷದವರು ಮತ್ತು ಅದಕ್ಕೆ ಮೇಲಿನ ಪ್ರಾಯದವರನ್ನು ಲೆಕ್ಕ ಮಾಡಲಾಗಿ ಅದು 6,03,550 ಗಂಡಸರ ಸಂಖ್ಯೆ ಇತ್ತು.
EXO 38:27 ಪರಿಶುದ್ಧಾಲಯದ ಗದ್ದಿಗೇ ಕಲ್ಲುಗಳಿಗೆ ಮತ್ತು ಪರದೆಗಳ ಗದ್ದಿಗೇ ಕಲ್ಲುಗಳಿಗೆ ಎರಕ ಹೊಯ್ಯಲು 3,400 ಕಿಲೋಗ್ರಾಂ ಬೆಳ್ಳಿ ಹಿಡಿಯಿತು. ಒಂದು ಗದ್ದಿಗೇ ಕಲ್ಲಿಗೆ ಮೂವತ್ನಾಲ್ಕು ಕಿಲೋಗ್ರಾಂನಂತೆ ನೂರು ಗದ್ದಿಗೇ ಕಲ್ಲುಗಳಿಗೆ 3,400 ಕಿಲೋಗ್ರಾಂ ಬೆಳ್ಳಿ ಆಯಿತು.
EXO 38:28 ಒಂದರ ತೂಕ ಸುಮಾರು 34 ಕಿಲೋಗ್ರಾಂ ಇತ್ತು. ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದರು.
EXO 38:29 ವಿಶೇಷ ಕಾಣಿಕೆಯಾಗಿ ಬಂದ ಕಂಚು 2,425 ಕಿಲೋಗ್ರಾಂ ತೂಕವಿತ್ತು.
EXO 38:30 ಆ ಕಂಚಿನಿಂದ ಅವರು ದೇವದರ್ಶನದ ಗುಡಾರದ ದ್ವಾರಗಳಿಗೆ ಗದ್ದಿಗೇ ಕಲ್ಲುಗಳನ್ನೂ ಬಲಿಪೀಠವನ್ನೂ ಅದಕ್ಕೆ ಕಂಚಿನ ಜಾಳಿಗೆಯನ್ನೂ ಬಲಿಪೀಠದ ಸಮಸ್ತ ಪಾತ್ರೆಗಳನ್ನೂ ಮಾಡಿದರು.
EXO 38:31 ಅಂಗಳದ ಸುತ್ತಲಿನ ಗದ್ದಿಗೇ ಕಲ್ಲುಗಳನ್ನೂ, ಗುಡಾರದ ಮತ್ತು ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದರು.
EXO 39:1 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಮೇರೆಗೆ ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಪವಿತ್ರ ಆಲಯದ ಸೇವೆ ಮಾಡುವುದಕ್ಕೆ ಕಲಾತ್ಮಕವಾಗಿ ನೇಯ್ದ ಸೇವಾ ವಸ್ತ್ರಗಳನ್ನು ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.
EXO 39:2 ಬೆಚಲೇಲನು ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಬಟ್ಟೆಯನ್ನು ಹೊಸೆದು ಉಪಯೋಗಿಸಿದ್ದರು.
EXO 39:3 ಅವರು ಬಂಗಾರವನ್ನು ಹೊಡೆದು, ತೆಳುವಾದ ತಗಡುಗಳನ್ನಾಗಿ ಮಾಡಿ, ಅದನ್ನು ಕತ್ತರಿಸಿ ಎಳೆಗಳನ್ನಾಗಿ ಮಾಡಿ, ಆ ಎಳೆಗಳನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡುವುದಕ್ಕೆ ಉಪಯೋಗಿಸಿದ್ದರು.
EXO 39:4 ಆ ಕವಚಕ್ಕೆ ಅದರ ಎರಡೂ ಕೊನೆಗಳನ್ನು ಜೋಡಿಸುವುದಕ್ಕೆ ಎರಡು ಹೆಗಲು ಪಟ್ಟಿಗಳನ್ನು ತಯಾರಿಸಿದ್ದರು.
EXO 39:5 ಅದರ ಮೇಲಿರುವ ಅದರ ಮೇಲಿರುವ ಕಸೂತಿ ಕೆಲಸದ ಏಫೋದಿನ ನಡುಕಟ್ಟನ್ನು ಒಂದೇ ರೀತಿಯ ವಸ್ತುಗಳಿಂದ ತಯಾರಿಸಬೇಕು ಅಂದರೆ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಲಾಗಿತ್ತು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.
EXO 39:6 ಮುದ್ರೆ ಕೆತ್ತುವ ಪ್ರಕಾರ, ಗೋಮೇಧಿಕ ರತ್ನಗಳಲ್ಲಿ ಹನ್ನೆರಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಕೆತ್ತಿ ಬಂಗಾರದ ಕುಂದಣದಲ್ಲಿ ಇಟ್ಟರು.
EXO 39:7 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗುವಂತೆ ಇಟ್ಟರು.
EXO 39:8 ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಂದರೆ ಏಫೋದಿನ ಕೆಲಸದ ಹಾಗೆಯೇ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು.
EXO 39:9 ಅದು ಚಚ್ಚೌಕವಾಗಿತ್ತು, ಅದು ಗೇಣು ಉದ್ದ, ಒಂದು ಗೇಣು ಅಗಲ ಮತ್ತು ಇದು ಎರಡು ಪದರುಳ್ಳದ್ದಾಗಿತ್ತು.
EXO 39:10 ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಪಟಿಕಗಳಿದ್ದವು.
EXO 39:11 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿದ್ದವು.
EXO 39:12 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿದ್ದವು.
EXO 39:13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು.
EXO 39:14 ಆ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿದ್ದವು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿದವುಗಳಾಗಿದ್ದವು.
EXO 39:15 ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ಹೆಣೆದ ಕೆಲಸವಾಗಿರುವ ಹುರಿಗಳಂತಿರುವ ಸರಪಣಿಯನ್ನು ಮಾಡಿದರು.
EXO 39:16 ಬಂಗಾರದ ಆ ಎರಡು ಜವೆಗಳನ್ನು ಮಾಡಿ, ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದರು.
EXO 39:17 ಬಂಗಾರದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಿದರು.
EXO 39:18 ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸೇರಿಸಿ, ಏಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿದರು.
EXO 39:19 ಬಂಗಾರದ ಎರಡು ಉಂಗುರಗಳನ್ನು ಮಾಡಿ, ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿ ಏಫೋದಿನ ಬದಿಗೆ ಒಳಗಡೆಯಲ್ಲಿ ಹಾಕಿದರು.
EXO 39:20 ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ, ಏಫೋದಿನ ಮುಂಬದಿಯ ಕೆಳಗಿನ ಎರಡು ಹೆಗಲಿನ ಪಟ್ಟಿಗಳಲ್ಲಿ, ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.
EXO 39:21 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು.
EXO 39:22 ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಿದರು. ಅದು ನೇಕಾರನ ಕೆಲಸವಾಗಿತ್ತು.
EXO 39:23 ನಿಲುವಂಗಿಯ ರಂದ್ರ, ಕವಚದ ರಂದ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಯುದ್ಧದ ಕವಚದೋಪಾದಿಯಲ್ಲಿ ಆ ರಂದ್ರದ ಸುತ್ತಲೂ ನೇಯ್ಗೆ ಪಟ್ಟಿ ಇತ್ತು.
EXO 39:24 ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ದಾಳಿಂಬೆ ಹಣ್ಣಿನಂತೆ ಮಾಡಿದರು.
EXO 39:25 ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ, ಆ ಗಂಟೆಗಳನ್ನು ದಾಳಿಂಬೆಗಳ ನಡುವೆಯೇ ಇರಿಸಿದರು.
EXO 39:26 ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಸೇವೆಗೋಸ್ಕರ ಮಾಡಿದ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.
EXO 39:27 ಆರೋನನಿಗೆ ಹಾಗೂ ಅವನ ಮಕ್ಕಳಿಗೆ ನಯವಾದ ನಾರಿನಿಂದ ಹೊಸೆದ ಕೆಲಸದಿಂದ ಮಾಡಿದ ಮೇಲಂಗಿಗಳನ್ನೂ
EXO 39:28 ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ಹೊಸೆದ ನಯವಾದ ನಾರುಗಳಿಂದ ಮಾಡಿದ ಒಳಉಡುಪುಗಳನ್ನೂ
EXO 39:29 ನಯವಾದ ನಾರಿನಿಂದ ಹೊಸೆದ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿದರು. ಇವುಗಳನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
EXO 39:30 ಶುದ್ಧ ಬಂಗಾರದಿಂದ ಪರಿಶುದ್ಧ ಕಿರೀಟದ ತಗಡನ್ನು ಮಾಡಿ, ಮುದ್ರೆ ಕೆತ್ತುವ ಪ್ರಕಾರ ಅದರಲ್ಲಿ, “ಯೆಹೋವ ದೇವರಿಗೆ ಪರಿಶುದ್ಧ,” ಎಂದು ಕೆತ್ತಿಸಿದರು,
EXO 39:31 ಅದು ಮುಂಡಾಸದ ಮುಂಭಾಗದಲ್ಲಿರುವಂತೆ ಅದನ್ನು ನೀಲಿ ದಾರಿನಿಂದ ಕಟ್ಟಿಸಿದರು. ಇದನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.
EXO 39:32 ಈ ಪ್ರಕಾರ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲರು ಅದರಂತೆಯೇ ಮಾಡಿದರು.
EXO 39:33 ಆಗ ಅವರು ದೇವದರ್ಶನದ ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಮೇಲ್ಹೊದಿಕೆಯನ್ನು, ಅದರ ಎಲ್ಲಾ ಸಲಕರಣೆಗಳನ್ನು ಅದರ ಕೊಂಡಿಗಳನ್ನು, ಅದರ ಚೌಕಟ್ಟುಗಳನ್ನು, ಅದರ ಅಗುಳಿಗಳನ್ನು, ಅದರ ಸ್ತಂಭಗಳನ್ನು, ಅದರ ಕುಣಿಕೆಗಳನ್ನು,
EXO 39:34 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲುಹಂದಿಗಳ ಚರ್ಮಗಳ ಹೊದಿಕೆಗಳನ್ನು, ಮರೆಮಾಡುವ ಪರದೆಯನ್ನು,
EXO 39:35 ಒಡಂಬಡಿಕೆಯ ಮಂಜೂಷನ್ನು, ಅದರ ಕೋಲುಗಳನ್ನು, ಕರುಣಾಸನವನ್ನು,
EXO 39:36 ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
EXO 39:37 ಶುದ್ಧವಾದ ದೀಪಸ್ತಂಭವನ್ನು, ಅದರ ದೀಪಗಳನ್ನು, ಕ್ರಮವಾಗಿಡುವ ದೀಪಗಳನ್ನು, ಅದರ ಉಪಕರಣಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು,
EXO 39:38 ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
EXO 39:39 ಬಲಿಪೀಠವನ್ನು, ಅದರೊಂದಿಗೆ ಕಂಚಿನ ಜಾಳಿಗೆಯನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ಕಂಚಿನ ಗಂಗಾಳವನ್ನು, ಅದರ ಕಾಲನ್ನು,
EXO 39:40 ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು, ಅದರ ಹಗ್ಗಗಳನ್ನು, ಗುಡಾರದ ಗೂಟಗಳನ್ನು, ಸಭೆಯ ದೇವದರ್ಶನದ ಗುಡಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು,
EXO 39:41 ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ತಂದರು.
EXO 39:42 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಇಸ್ರಾಯೇಲರು ಈ ಕೆಲಸಗಳನ್ನೆಲ್ಲಾ ಮಾಡಿದರು.
EXO 39:43 ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ, ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು.
EXO 40:1 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
EXO 40:2 “ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.
EXO 40:3 ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು.
EXO 40:4 ಮೇಜನ್ನು ಒಳಗೆ ತಂದು, ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪಸ್ತಂಭವನ್ನು ಒಳಗೆ ತಂದು, ನೀನು ಅದರ ದೀಪಗಳನ್ನು ಅಂಟಿಸಬೇಕು.
EXO 40:5 ನೀನು ಮಾಡಿದ ಚಿನ್ನದ ಧೂಪಪೀಠವನ್ನು ಒಡಂಬಡಿಕೆಯ ಮಂಜೂಷದ ಎದುರಾಗಿ ಇಟ್ಟು, ದೇವದರ್ಶನದ ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಬೇಕು.
EXO 40:6 “ನೀನು ದಹನಬಲಿಯ ಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡಬೇಕು.
EXO 40:7 ನೀನು ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಗಂಗಾಳವನ್ನಿಟ್ಟು, ಅದರಲ್ಲಿ ನೀರನ್ನು ತುಂಬಿಸಬೇಕು.
EXO 40:8 ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ಪರದೆಯನ್ನು ತೂಗು ಹಾಕಬೇಕು.
EXO 40:9 “ನೀನು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಪರಿಶುದ್ಧ ಮಾಡು. ಆಗ ಅದು ಪರಿಶುದ್ಧವಾಗುವುದು.
EXO 40:10 ದಹನಬಲಿಯ ಪೀಠವನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ನೀನು ಅಭಿಷೇಕಿಸಿ, ಬಲಿಪೀಠವನ್ನು ಪವಿತ್ರಮಾಡು. ಆಗ ಅದು ಅತಿಪರಿಶುದ್ಧವಾದ ಬಲಿಪೀಠವಾಗುವುದು.
EXO 40:11 ಗಂಗಾಳವನ್ನೂ, ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ, ಅದನ್ನು ಪ್ರತಿಷ್ಠಾಪನೆ ಮಾಡಬೇಕು.
EXO 40:12 “ಆರೋನನನ್ನೂ, ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ, ಅವರನ್ನು ನೀರಿನಿಂದ ಸ್ನಾನ ಮಾಡಿಸಬೇಕು.
EXO 40:13 ಆರೋನನು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ, ಅವನನ್ನು ಶುದ್ಧಮಾಡಬೇಕು.
EXO 40:14 ಅವನ ಪುತ್ರರನ್ನು ನೀನು ಬರಮಾಡಿಕೊಂಡು, ಅವರಿಗೆ ಅಂಗಿಗಳನ್ನು ತೊಡಿಸಿ,
EXO 40:15 ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ, ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವರನ್ನೂ ನೀನು ಅಭಿಷೇಕಿಸು. ಅವರ ಈ ಅಭಿಷೇಕದಿಂದ ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವುದು,” ಎಂದು ಹೇಳಿದರು.
EXO 40:16 ಮೋಶೆಯು ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
EXO 40:17 ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಗುಡಾರವು ಎದ್ದುನಿಂತಿತು.
EXO 40:18 ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ, ಅದರ ಕಾಲುಗಳನ್ನು ಬಿಗಿದು, ಅದರ ಚೌಕಟ್ಟುಗಳನ್ನು ಇರಿಸಿ, ಅಗುಳಿಗಳನ್ನು ಹಾಕಿ, ಅದರ ಸ್ತಂಭಗಳನ್ನು ನಿಲ್ಲಿಸಿದನು.
EXO 40:19 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ, ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.
EXO 40:20 ಅವನು ಆಜ್ಞಾಶಾಸನಗಳನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿಟ್ಟು, ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ, ಮಂಜೂಷದ ಮೇಲೆ ಕರುಣಾಸನವನ್ನು ಇಟ್ಟನು.
EXO 40:21 ಅವನು ಮಂಜೂಷವನ್ನು ಗುಡಾರಕ್ಕೆ ತಂದು, ಮರೆಮಾಡುವ ಪರದೆಯನ್ನಿರಿಸಿ, ಒಡಂಬಡಿಕೆಯ ಮಂಜೂಷವನ್ನು ಮರೆಮಾಡಿದನು. ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಮೋಶೆಯು ಮಾಡಿದನು.
EXO 40:22 ಅನಂತರ ಮೋಶೆ ದೇವದರ್ಶನದ ಗುಡಾರದ ಉತ್ತರ ಭಾಗದಲ್ಲಿ, ಪರದೆಯ ಹೊರಗೆ ಮೇಜನ್ನು ಇಟ್ಟನು.
EXO 40:23 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.
EXO 40:24 ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು.
EXO 40:25 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಯೆಹೋವ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಇರಿಸಿದನು.
EXO 40:26 ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ಪರದೆಯ ಮುಂದೆ ಇಟ್ಟನು.
EXO 40:27 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.
EXO 40:28 ಗುಡಾರದ ಬಾಗಿಲಿನ ಪರದೆಯನ್ನು ತೂಗುಹಾಕಿದನು.
EXO 40:29 ದೇವದರ್ಶನದ ಗುಡಾರದ ಬಳಿಯಲ್ಲಿ ದಹನಬಲಿಯ ಪೀಠವನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠ ಇಟ್ಟು ಅದರ ಮೇಲೆ ದಹನಬಲಿ ಮತ್ತು ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು.
EXO 40:30 ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯ ಗಂಗಾಳವನ್ನು ಇಟ್ಟು, ಅದರಲ್ಲಿ ತೊಳೆಯುವುದಕ್ಕೆ ನೀರನ್ನು ತುಂಬಿಸಿದನು.
EXO 40:31 ಮೋಶೆಯೂ, ಆರೋನನೂ, ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆದುಕೊಂಡರು.
EXO 40:32 ಅವರು ದೇವದರ್ಶನದ ಗುಡಾರದ ಒಳಗೆ ಸೇರುವ ಸಮಯದಲ್ಲಿಯೂ, ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಸ್ನಾನ ಮಾಡಿದರು.
EXO 40:33 ಮೋಶೆಯು ಗುಡಾರಕ್ಕೂ, ಬಲಿಪೀಠಕ್ಕೂ ಸುತ್ತಲೂ ಅಂಗಳವನ್ನು ನಿಲ್ಲಿಸಿ, ಅಂಗಳದ ಬಾಗಿಲಿನ ಪರದೆಯನ್ನು ತೂಗುಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು.
EXO 40:34 ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿಕೊಂಡಿತು.
EXO 40:35 ದೇವದರ್ಶನದ ಗುಡಾರದ ಮೇಲೆ ಮೇಘವು ನೆಲೆಯಾಗಿದ್ದದರಿಂದಲೂ, ಯೆಹೋವ ದೇವರು ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿದ್ದರಿಂದಲೂ, ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.
EXO 40:36 ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ, ಇಸ್ರಾಯೇಲರು ತಮ್ಮ ಪ್ರಯಾಣಕ್ಕಾಗಿ ಮುಂದೆ ಹೊರಡುತ್ತಿದ್ದರು.
EXO 40:37 ಆದರೆ ಮೇಘವು ಮೇಲಕ್ಕೆ ಎತ್ತದೇ ಇರುವಾಗ ಅದು ಎತ್ತುವ ದಿವಸದವರೆಗೆ ಅವರು ಪ್ರಯಾಣ ಮಾಡಲಿಲ್ಲ.
EXO 40:38 ಏಕೆಂದರೆ ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿ ಅವರ ಕಣ್ಣುಗಳ ಮುಂದೆ ಹಗಲಿನಲ್ಲಿ ಯೆಹೋವ ದೇವರ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.
LEV 1:1 ಯೆಹೋವ ದೇವರು ಮೋಶೆಯನ್ನು ಕರೆದು, ದೇವದರ್ಶನದ ಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ,
LEV 1:2 ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನಂದರೆ: “ ‘ನಿಮ್ಮಲ್ಲಿ ಯಾರಾದರೂ ಯೆಹೋವ ದೇವರಿಗೆ ಒಂದು ಪ್ರಾಣಿಯನ್ನು ಕಾಣಿಕೆಯಾಗಿ ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ, ಆಡು ಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.
LEV 1:3 “ ‘ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ, ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಯೆಹೋವ ದೇವರಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.
LEV 1:4 ದಹನಬಲಿ ಅರ್ಪಿಸುವವನು ತನ್ನ ಕೈಯನ್ನು ಆ ಪ್ರಾಣಿಯ ತಲೆಯ ಮೇಲೆ ಇಡಬೇಕು. ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವುದು.
LEV 1:5 ಅವನು ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು. ಆಗ ಯಾಜಕರಾದ ಆರೋನನ ಪುತ್ರರು ರಕ್ತವನ್ನು ತಂದು, ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
LEV 1:6 ಅವನು ಆ ದಹನಬಲಿಯ ಚರ್ಮವನ್ನು ಸುಲಿದು, ಅದರ ದೇಹವನ್ನು ಕಡಿದು, ತುಂಡುತುಂಡಾಗಿ ಮಾಡಬೇಕು.
LEV 1:7 ಯಾಜಕನಾದ ಆರೋನನ ಪುತ್ರರು ಬಲಿಪೀಠದ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
LEV 1:8 ಆಗ ಯಾಜಕರಾದ ಆರೋನನ ಪುತ್ರರು ಅದರ ಭಾಗಗಳನ್ನು ಅಂದರೆ, ತಲೆಯನ್ನೂ ಮತ್ತು ಕೊಬ್ಬನ್ನೂ ಬಲಿಪೀಠದ ಮೇಲೆ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
LEV 1:9 ಅದರ ಕರುಳುಗಳನ್ನೂ, ಕಾಲುಗಳನ್ನೂ ಅವರು ನೀರಿನಲ್ಲಿ ತೊಳೆಯಬೇಕು. ಯಾಜಕನು ಎಲ್ಲವನ್ನೂ ಬಲಿಪೀಠದ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ, ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
LEV 1:10 “ ‘ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆಯಿಂದ ತರುವುದಾದರೆ ಅವನು ಕುರಿಗಳಲ್ಲಾಗಲಿ, ಮೇಕೆಗಳಲ್ಲಾಗಲಿ, ಕಳಂಕರಹಿತ ಒಂದು ಗಂಡನ್ನು ತರಬೇಕು.
LEV 1:11 ಅವನು ಅದನ್ನು ಬಲಿಪೀಠದ ಉತ್ತರದ ಕಡೆಯಲ್ಲಿ ಯೆಹೋವ ದೇವರ ಮುಂದೆ ವಧಿಸಬೇಕು. ಇದಲ್ಲದೆ ಯಾಜಕರಾದ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
LEV 1:12 ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ, ಯಾಜಕನು ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
LEV 1:13 ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು. ಆಗ ಯಾಜಕನು ಅವೆಲ್ಲವುಗಳನ್ನೂ ತಂದು ಬಲಿಪೀಠದ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
LEV 1:14 “ ‘ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿಗಳಾಗಿದ್ದರೆ, ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯನ್ನಾಗಲಿ ಇಲ್ಲವೆ ಪಾರಿವಾಳದ ಮರಿಯನ್ನಾಗಲಿ ತರಬೇಕು.
LEV 1:15 ಆಗ ಯಾಜಕನು ಅದನ್ನೂ ಬಲಿಪೀಠದ ಬಳಿಗೆ ತಂದು ಅದರ ತಲೆಯನ್ನು ಮುರಿದು, ಬಲಿಪೀಠದ ಮೇಲೆ ಸುಡಬೇಕು. ಅದರ ರಕ್ತವನ್ನು ಬಲಿಪೀಠದ ಹೊರಬದಿಯಲ್ಲಿ ಹಿಂಡಬೇಕು.
LEV 1:16 ಇದಲ್ಲದೆ ಅವನು ಅದರ ರೆಕ್ಕೆ ಪುಕ್ಕಗಳೊಂದಿಗೆ ಕರುಳುಗಳನ್ನೂ ಕಿತ್ತು, ಬಲಿಪೀಠದ ಬಳಿ ಪೂರ್ವ ಭಾಗದಲ್ಲಿ ಬೂದಿಯಿರುವ ಸ್ಥಳದಲ್ಲಿ ಬಿಸಾಡಬೇಕು.
LEV 1:17 ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು. ಆದರೆ ಬೇರೆಬೇರೆಯಾಗಿ ವಿಭಾಗಿಸಬಾರದು. ಆಗ ಯಾಜಕನು ಅದನ್ನು ಬಲಿಪೀಠದ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆ ಸುಡಬೇಕು.
LEV 2:1 “ ‘ಯಾರಾದರೂ ಯೆಹೋವ ದೇವರಿಗೆ ಧಾನ್ಯ ಸಮರ್ಪಣೆಯನ್ನು ಸಮರ್ಪಿಸುವುದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಸಬೇಕು, ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.
LEV 2:2 ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಅವನು ಹಿಟ್ಟಿನಲ್ಲಿಯೂ, ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜಕನು ಅದನ್ನು ಜ್ಞಾಪಕಾರ್ಥವಾಗಿ ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.
LEV 2:3 ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.
LEV 2:4 “ ‘ನೀನು ಒಲೆಯಲ್ಲಿ ಸುಟ್ಟ ಧಾನ್ಯ ಸಮರ್ಪಣೆಯನ್ನು ಕಾಣಿಕೆಯಾಗಿ ತರುವುದಾದರೆ, ಅದು ಹುಳಿಯಿಲ್ಲದ ಮತ್ತು ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು.
LEV 2:5 ನಿನ್ನ ಕಾಣಿಕೆಯು ಬೋಗುಣಿಯಲ್ಲಿ ಬೇಯಿಸಿದ ಧಾನ್ಯ ಸಮರ್ಪಣೆಯಾಗಿದ್ದರೆ, ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು.
LEV 2:6 ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ, ಅದರ ಮೇಲೆ ಎಣ್ಣೆ ಸುರಿಯಬೇಕು, ಅದು ಆಹಾರ ಸಮರ್ಪಣೆಯಾಗಿದೆ.
LEV 2:7 ನಿನ್ನ ಕಾಣಿಕೆಯು ತವೆಯಲ್ಲಿ ಬೇಯಿಸಿದ ಧಾನ್ಯವಾಗಿದ್ದರೆ, ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು.
LEV 2:8 ನೀನು ಇವುಗಳಿಂದ ಮಾಡಿದ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ತರಬೇಕು. ಅದು ಯಾಜಕನಿಗೆ ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಬಳಿಗೆ ತರುವನು.
LEV 2:9 ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾಗಿ ಧಾನ್ಯ ಸಮರ್ಪಣೆಯನ್ನಾಗಿ ತೆಗೆದುಕೊಂಡು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು, ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿರುವುದು.
LEV 2:10 ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.
LEV 2:11 “ ‘ಯೆಹೋವ ದೇವರಿಗೆ ನೀನು ತರುವ ಧಾನ್ಯ ಸಮರ್ಪಣೆಯು ಯಾವುದೂ ಹುಳಿಯಿಂದ ಮಾಡಿದ್ದಾಗಿರಬಾರದು. ಏಕೆಂದರೆ ಯೆಹೋವ ದೇವರಿಗೆ ನೀವು ಬೆಂಕಿಯಿಂದ ಮಾಡುವ ಯಾವ ಸಮರ್ಪಣೆಯಲ್ಲಿ ಹುಳಿಯನ್ನಾಗಲಿ, ಜೇನನ್ನಾಗಲಿ ಬೆರೆಸಬಾರದು.
LEV 2:12 ಪ್ರಥಮ ಫಲದ ಕಾಣಿಕೆಯ ವಿಷಯದಲ್ಲಿಯಾದರೋ ನೀವು ಅವುಗಳನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು. ಆದರೆ ಅವುಗಳನ್ನು ಬಲಿಪೀಠದ ಮೇಲೆ ಸುವಾಸನೆಗಾಗಿ ಸುಡಬಾರದು.
LEV 2:13 ನಿನ್ನ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಉಪ್ಪಿನಲ್ಲಿ ಬೆರಕೆಯಾಗಿರಬೇಕು. ನಿನ್ನ ದೇವರ ಒಡಂಬಡಿಕೆಯ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು. ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.
LEV 2:14 “ ‘ನೀನು ನಿನ್ನ ಪ್ರಥಮ ಫಲಗಳ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ಮಾಡಿದರೆ, ನಿನ್ನ ಪ್ರಥಮ ಫಲ ಧಾನ್ಯ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸಬೇಕು.
LEV 2:15 ನೀನು ಅದರ ಮೇಲೆ ಎಣ್ಣೆಯನ್ನು ಸಾಂಬ್ರಾಣಿಯನ್ನು ಹಾಕು. ಇದೇ ಧಾನ್ಯ ಸಮರ್ಪಣೆ.
LEV 2:16 ಯಾಜಕನು ಬಡಿದ ಕಾಳುಗಳಲ್ಲಿ ಕೆಲವು ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿಯನ್ನು ಜ್ಞಾಪಕಾರ್ಥವಾಗಿ ಸುಡಬೇಕು. ಇದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.
LEV 3:1 “ ‘ಯಾರಾದರು ಸಮಾಧಾನ ಸಮರ್ಪಣೆಗಾಗಿ ಬಲಿದಾನ ಮಾಡಬೇಕಾದರೆ, ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಯೆಹೋವ ದೇವರ ದೃಷ್ಟಿಯಲ್ಲಿ ಕಳಂಕರಹಿತವಾಗಿರಬೇಕು.
LEV 3:2 ಅವನು ಅರ್ಪಿಸಬೇಕಾದ ಆ ಪ್ರಾಣಿಯನ್ನು ಯೆಹೋವ ದೇವರ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈ ಇಡಬೇಕು. ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
LEV 3:3 ಅವನು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,
LEV 3:4 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಯಲ್ಲಿಯ ಅವುಗಳ ಮೇಲಿರುವ ಕೊಬ್ಬನ್ನೂ, ಮೂತ್ರ ಜನಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಯೆಹೋವ ದೇವರಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.
LEV 3:5 ಆರೋನನ ಪುತ್ರರು ಅದನ್ನು ಬಲಿಪೀಠದಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನಬಲಿಯಾಗಿ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು, ಯೆಹೋವ ದೇವರಿಗೆ ಸುವಾಸನೆಯಾಗಿರುವುದು.
LEV 3:6 “ ‘ಅವನ ಕಾಣಿಕೆಯು ಸಮಾಧಾನದ ಬಲಿಯಾಗಿ, ಅದು ಯೆಹೋವ ದೇವರಿಗೆ ತನ್ನ ಆಡುಕುರಿಗಳಿಂದಾದ ಕಾಣಿಕೆಯಾಗಿದ್ದರೆ, ಗಂಡಾಗಲಿ, ಹೆಣ್ಣಾಗಲಿ ಕಳಂಕರಹಿತವಾದದ್ದನ್ನು ಅವನು ಸಮರ್ಪಿಸಬೇಕು.
LEV 3:7 ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವುದಾದರೆ, ಅದನ್ನು ಅವನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
LEV 3:8 ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು, ಅದನ್ನು ದೇವದರ್ಶನದ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಪುತ್ರರು ಬಲಿಪೀಠದ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.
LEV 3:9 ಸಮಾಧಾನದ ಬಲಿಗಾಗಿ ಅದರ ಇಡೀ ಹಿಂಭಾಗವನ್ನೂ, ಅದರ ಕೊಬ್ಬನ್ನೂ, ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
LEV 3:10 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ, ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
LEV 3:11 ಯಾಜಕನು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುವುದು.
LEV 3:12 “ ‘ಸಮರ್ಪಣೆಯು ಮೇಕೆಯಾಗಿದ್ದರೆ, ಅದನ್ನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
LEV 3:13 ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ದೇವದರ್ಶನದ ಗುಡಾರದ ಮುಂದೆ ಅದನ್ನು ವಧಿಸಬೇಕು. ಆಗ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
LEV 3:14 ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
LEV 3:15 ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
LEV 3:16 ಯಾಜಕನು ಅವುಗಳನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಸುವಾಸನೆಯ ಯಜ್ಞಾರ್ಪಣೆಯ ಆಹಾರವಾಗಿರುವುದು. ಎಲ್ಲಾ ಕೊಬ್ಬು ಯೆಹೋವ ದೇವರದೇ.
LEV 3:17 “ ‘ನೀವು ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನದೆ ಇರುವುದು ನಿಮ್ಮ ಸಂತತಿಯವರಿಗೆಲ್ಲಾ ನಿಮ್ಮ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವುದು,’ ” ಎಂದು ಹೇಳಿದರು.
LEV 4:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 4:2 “ಇಸ್ರಾಯೇಲರಿಗೆ ಹೀಗೆ ಹೇಳು: ‘ಯಾರಾದರೂ ಉದ್ದೇಶವಿಲ್ಲದೆ ಪಾಪಮಾಡಿದರೆ ಹಾಗೂ ಯೆಹೋವ ದೇವರ ಆಜ್ಞೆಗಳಲ್ಲಿ ನಿಷೇಧಿಸಿದ ಯಾವುದನ್ನಾದರೂ ಮಾಡಿದರೆ, ಅವರು ದೋಷಪರಿಹಾರಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕು:
LEV 4:3 “ ‘ಅಭಿಷಿಕ್ತನಾದ ಯಾಜಕನು ಪಾಪಮಾಡಿ ಜನರ ಮೇಲೆ ಅಪರಾಧವನ್ನು ತಂದರೆ, ತಾನು ಮಾಡಿದ ಪಾಪಕ್ಕಾಗಿ ಕಳಂಕರಹಿತವಾದ ಒಂದು ಎಳೆಯ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
LEV 4:4 ಅವನು ಆ ಹೋರಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿಗೆ ತರಬೇಕು. ತನ್ನ ಕೈಯನ್ನು ಆ ಹೋರಿಯ ತಲೆಯ ಮೇಲಿಟ್ಟು, ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.
LEV 4:5 ಆಗ ಅಭಿಷಿಕ್ತನಾದ ಯಾಜಕನು ಆ ಹೋರಿಯ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಳಿಗೆ ತರಬೇಕು.
LEV 4:6 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ, ಯೆಹೋವ ದೇವರ ಮುಂದಿನ ಪವಿತ್ರ ಸ್ಥಳದ ತೆರೆಯ ಮುಂದೆ ರಕ್ತವನ್ನು ಏಳು ಸಾರಿ ಚಿಮುಕಿಸಬೇಕು.
LEV 4:7 ಯಾಜಕನು ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ಸುವಾಸನೆಯುಳ್ಳ ಧೂಪವನ್ನು ಬಲಿಪೀಠದ ಕೊಂಬುಗಳಿಗೆ ಯೆಹೋವ ದೇವರ ಮುಂದೆ ಹಚ್ಚಬೇಕು. ಅಲ್ಲದೆ ಆ ಹೋರಿಯ ಎಲ್ಲಾ ರಕವನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿಯ ಪೀಠದ ಅಡಿಯಲ್ಲಿ ಸುರಿಯಬೇಕು.
LEV 4:8 ಅವನು ಪಾಪ ಪರಿಹಾರದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು. ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,
LEV 4:9 ಎರಡು ಮೂತ್ರಪಿಂಡಗಳನ್ನು ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ, ಮೂತ್ರಪಿಂಡದೊಂದಿಗೂ ಕಾಳಿಜದ ಉತ್ತಮ ಭಾಗವನ್ನೂ ಅವನು ತೆಗೆಯಬೇಕು.
LEV 4:10 ಸಮಾಧಾನದ ಬಲಿಯನ್ನು ಹೋರಿಯಿಂದ ತೆಗೆದಂತೆಯೇ ತೆಗೆಯಬೇಕು. ಯಾಜಕನು ದಹನಬಲಿಯ ಪೀಠದ ಮೇಲೆ ಅವುಗಳನ್ನು ಸುಡಬೇಕು.
LEV 4:11 ಆ ಹೋರಿಯ ಚರ್ಮವನ್ನು, ಅದರ ಎಲ್ಲಾ ಮಾಂಸವನ್ನು, ಅದರ ತಲೆ, ಅದರ ಕಾಲುಗಳು, ಅದರ ಕರುಳುಗಳು, ಅದರ ಸಗಣಿಯೊಂದಿಗೆ
LEV 4:12 ಎಂದರೆ ಇಡೀ ಹೋರಿಯನ್ನು ಪಾಳೆಯದ ಹೊರಗೆ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು, ಕಟ್ಟಿಗೆಯ ಮೇಲೆ ಬೆಂಕಿಯಿಂದ ಅದನ್ನು ಸುಡಬೇಕು.
LEV 4:13 “ ‘ಮಾಡಬಾರದ ಕೆಲಸಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ಯಾವುದನ್ನಾದರೂ ಇಸ್ರಾಯೇಲರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಮತ್ತು ಅದು ಸಮೂಹಕ್ಕೆ ಕಣ್ಮರೆಯಾಗಿದ್ದರೆ
LEV 4:14 ಅವರು ಮಾಡಿದ ಪಾಪವು ಗೊತ್ತಾದಾಗ, ಆ ಪಾಪಕ್ಕಾಗಿ ಸಮಾಜವು ಒಂದು ಎಳೆಯ ಹೋರಿಯನ್ನು ದೇವದರ್ಶನದ ಗುಡಾರದ ಮುಂದೆ ಪಾಪ ಪರಿಹಾರದ ಬಲಿಯಾಗಿ ತರಬೇಕು.
LEV 4:15 ಸಮಾಜದ ಹಿರಿಯರು ಯೆಹೋವ ದೇವರ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು.
LEV 4:16 ಅಭಿಷಿಕ್ತನಾದ ಯಾಜಕನು ಆ ಹೋರಿಯ ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗೆ ತಂದು,
LEV 4:17 ಅದರಲ್ಲಿ ಬೆರಳನ್ನು ಅದ್ದಿ ಅದನ್ನು ಯೆಹೋವ ದೇವರ ಮುಂದೆ ಅಂದರೆ ತೆರೆಯ ಮುಂದೆ ಏಳು ಸಾರಿ ಚಿಮುಕಿಸಬೇಕು.
LEV 4:18 ಇದಲ್ಲದೆ ಅವನು ಸ್ವಲ್ಪ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ಬಲಿಪೀಠದ ಕೊಂಬುಗಳಿಗೆ ಯೆಹೋವ ದೇವರ ಎದುರಿನಲ್ಲಿ ಹಚ್ಚಿ, ಉಳಿದ ಎಲ್ಲಾ ರಕ್ತವನ್ನು ದೇವದರ್ಶನದ ಗುಡಾರದೊಳಗಿರುವ ದಹನಬಲಿಯ ಪೀಠದ ಅಡಿಯಲ್ಲಿ ಸುರಿಯಬೇಕು.
LEV 4:19 ಅವನು ಅದರ ಎಲ್ಲಾ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು.
LEV 4:20 ಪಾಪ ಪರಿಹಾರದ ಬಲಿಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ, ಈ ಹೋರಿಗೂ ಮಾಡಬೇಕು. ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವರಿಗೆ ಕ್ಷಮಾಪಣೆಯಾಗುವುದು.
LEV 4:21 ಅವನು ಮೊದಲನೆಯ ಹೋರಿಯನ್ನು ಸುಟ್ಟಂತೆಯೇ, ಈ ಹೋರಿಯನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಸುಡಬೇಕು. ಅದು ಸಮಾಜಕ್ಕೆ ಪಾಪ ಪರಿಹಾರದ ಬಲಿಯಾಗಿ ಇರುವುದು.
LEV 4:22 “ ‘ಒಬ್ಬ ಅಧಿಪತಿಯು ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,
LEV 4:23 ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದುಬಂದರೆ, ಅವನು ಬಲಿಗಾಗಿ ಹೋತಗಳಲ್ಲಿ ಕಳಂಕರಹಿತವಾದ ಒಂದು ಹೋತವನ್ನು ತಂದು ಸಮರ್ಪಿಸಬೇಕು.
LEV 4:24 ಅವನು ತನ್ನ ಕೈಯನ್ನು ಆ ಹೋತದ ತಲೆಯ ಮೇಲೆ ಇಟ್ಟು, ಯೆಹೋವ ದೇವರ ಮುಂದೆ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು. ಅದು ಪಾಪ ಪರಿಹಾರದ ಬಲಿಯಾಗಿರುವುದು.
LEV 4:25 ಯಾಜಕನು ಪಾಪ ಪರಿಹಾರದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು, ದಹನಬಲಿಯ ಪೀಠದ ಮೇಲೆ ಅಡಿಯಲ್ಲಿ ಹೊಯ್ಯಬೇಕು.
LEV 4:26 ಅವರು ಸಮಾಧಾನದ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಯಾಜಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.
LEV 4:27 “ ‘ಸಾಮಾನ್ಯ ಜನರಲ್ಲಿ ಯಾವನಾದರೂ ಮಾಡಬಾರದವುಗಳನ್ನು ಯೆಹೋವ ದೇವರ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ,
LEV 4:28 ಇಲ್ಲವೆ ಅವರು ಮಾಡಿದ ಪಾಪವು ಅವರಿಗೆ ತಿಳಿದುಬಂದರೆ, ಅವರು ಪಾಪ ಪರಿಹಾರಕ್ಕಾಗಿ ಕಳಂಕರಹಿತವಾದ ಒಂದು ಹೆಣ್ಣು ಮೇಕೆಯನ್ನು ತಂದು ಸಮರ್ಪಿಸಬೇಕು.
LEV 4:29 ಅವರು ತಮ್ಮ ಕೈಯನ್ನು ಪಾಪದ ಬಲಿಯ ಮೇಲಿಟ್ಟು, ಆ ಪಾಪ ಪರಿಹಾರದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.
LEV 4:30 ಆಗ ಯಾಜಕನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ದಹನಬಲಿಯ ಪೀಠದ ಕೊಂಬುಗಳಿಗೆ ಹಚ್ಚಿ, ಉಳಿದ ಎಲ್ಲಾ ರಕ್ತವನ್ನು ಆ ಬಲಿಪೀಠದ ಅಡಿಯಲ್ಲಿ ಸುರಿಯಬೇಕು.
LEV 4:31 ಅವನು ಸಮಾಧಾನ ಬಲಿಯ ಕೊಬ್ಬನ್ನು ತೆಗೆದಂತೆ, ಅದರ ಎಲ್ಲಾ ಕೊಬ್ಬನ್ನು ತೆಗೆಯಬೇಕು. ಯಾಜಕನು ಅದನ್ನು ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯಾಗಿ ಸುಡಬೇಕು. ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.
LEV 4:32 “ ‘ಯಾರಾದರೂ ಪಾಪ ಪರಿಹಾರದ ಬಲಿಗಾಗಿ ಒಂದು ಕುರಿಮರಿಯನ್ನು ತರುವುದಾದರೆ, ಕಳಂಕರಹಿತವಾದ ಒಂದು ಹೆಣ್ಣನ್ನು ತರಬೇಕು.
LEV 4:33 ಅವರು ಪಾಪ ಪರಿಹಾರದ ಬಲಿಯ ತಲೆಯ ಮೇಲೆ ತಮ್ಮ ಕೈಯನ್ನು ಇಟ್ಟು, ದೋಷಪರಿಹಾರ ಬಲಿಯಾಗಿ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು.
LEV 4:34 ಯಾಜಕನು ಪಾಪ ಪರಿಹಾರದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು, ದಹನಬಲಿಯ ಪೀಠದ ಕೊಂಬುಗಳಿಗೆ ಹಚ್ಚಬೇಕು. ಉಳಿದ ಎಲ್ಲಾ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ಯಬೇಕು.
LEV 4:35 ಇದಲ್ಲದೆ ಸಮಾಧಾನ ಬಲಿಗಳ ಕುರಿಮರಿಯ ಕೊಬ್ಬಿನಂತೆಯೇ, ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು. ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಯೆಹೋವ ದೇವರಿಗೆ ಮಾಡಿದಂತೆಯೇ, ಬಲಿಪೀಠದ ಮೇಲೆ ಅವುಗಳನ್ನು ಸುಡಬೇಕು. ಯಾಜಕನು ಅವನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವನಿಗೆ ಕ್ಷಮಾಪಣೆಯಾಗುವುದು.
LEV 5:1 “ ‘ಯಾವನಾದರೂ ಆಣೆ ಇಡುವುದನ್ನು ಕೇಳಿ, ಸಾಕ್ಷಿಯಾಗಿದ್ದು, ಪಾಪಮಾಡಿದರೆ, ಅವನು ಅದನ್ನು ಕಂಡೂ ಇಲ್ಲವೆ ತಿಳಿದೂ ಅವನು ಅದನ್ನು ಹೇಳದಿದ್ದರೆ, ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.
LEV 5:2 “ ‘ಇಲ್ಲವೆ, ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು ಇವುಗಳ ಹೆಣವಾಗಲಿ, ಅಶುದ್ಧವಾದ ಹರಿದಾಡುವ ಕ್ರಿಮಿಗಳ ಹೆಣಗಳಾಗಲಿ ಅಥವಾ ಬೇರೆ ಯಾವ ಅಶುದ್ಧವಸ್ತುವಾಗಲಿ ತಗಲಿದರೆ ಅವನಿಗೆ ತಿಳಿಯದೆ ಇದ್ದರೂ ಅವನು ಅಶುದ್ಧವಾಗಿದ್ದು ಅಪರಾಧಿಯಾಗಿರುವನು.
LEV 5:3 ಇಲ್ಲವೆ, ಅವನು ಮನುಷ್ಯನ ಅಶುದ್ಧತ್ವವನ್ನು ತಗಲಿದರೆ, ಮನುಷ್ಯನನ್ನು ಅಶುದ್ಧಪಡಿಸುವ ಯಾವುದೇ ಅಶುದ್ಧತ್ವವಾಗಿದ್ದರೂ ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಅವನು ಅಪರಾಧಿಯಾಗಿರುವನು.
LEV 5:4 ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ, ಒಳ್ಳೆಯದನ್ನಾಗಲಿ ಮಾಡುವುದನ್ನು ತನ್ನ ತುಟಿಗಳಿಂದ ಉಚ್ಛರಿಸಿದರೆ, ಒಬ್ಬ ಮನುಷ್ಯನು ಪ್ರಮಾಣದೊಡನೆ ಉಚ್ಚರಿಸಿದ್ದು ಯಾವುದೇ ಆಗಿರಲಿ, ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಇವುಗಳೊಂದರಲ್ಲಿ ಅವನು ಅಪರಾಧಿಯಾಗಿರುವನು.
LEV 5:5 ಅವನು ಇವುಗಳೊಂದರಲ್ಲಿ ಅಪರಾಧಿಯಾಗಿದ್ದು, ತಾನು ಅದರಲ್ಲಿ ಪಾಪಮಾಡಿದ್ದೇನೆಂದು ಅರಿಕೆ ಮಾಡುವುದಾದರೆ,
LEV 5:6 ಅವನು ತಾನು ಮಾಡಿದ ಪಾಪಕ್ಕಾಗಿ ಯೆಹೋವ ದೇವರಿಗೆ ಅಪರಾಧ ಬಲಿಯನ್ನು ಪಾಪ ಪರಿಹಾರದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣು ಕುರಿಯನ್ನಾಗಲಿ, ಒಂದು ಮೇಕೆಯನ್ನಾಗಲಿ ತರಬೇಕು. ಯಾಜಕನು ಅವನ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು.
LEV 5:7 “ ‘ಯಾರಾದರೂ ಒಂದು ಕುರಿಮರಿಯನ್ನು ತರುವುದಕ್ಕೆ ಅಶಕ್ತರಾಗಿದ್ದರೆ, ತಾವು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ, ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ಯೆಹೋವ ದೇವರಿಗೆ ತರಬೇಕು. ಒಂದನ್ನು ಪಾಪ ಪರಿಹಾರದ ಬಲಿಗಾಗಿ, ಮತ್ತೊಂದನ್ನು ದಹನಬಲಿಗಾಗಿ ತರಬೇಕು.
LEV 5:8 ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಅವನು ಪಾಪ ಪರಿಹಾರದ ಬಲಿಗೆ ತಂದಿರುವುದನ್ನು ಮೊದಲು ಸಮರ್ಪಿಸಿ, ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು. ಆದರೆ ಅದನ್ನು ವಿಭಾಗಿಸಬಾರದು.
LEV 5:9 ಇದಲ್ಲದೆ, ಅವನು ಪಾಪ ಪರಿಹಾರದ ಬಲಿಯ ರಕ್ತವನ್ನು ಬಲಿಪೀಠದ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಬಲಿಪೀಠದ ಬದಿಯಲ್ಲಿ ಹಿಂಡಬೇಕು. ಅದು ದೋಷಪರಿಹಾರ ಬಲಿಯಾಗಿರುವುದು.
LEV 5:10 ಅವನು ಕ್ರಮದ ಪ್ರಕಾರ, ಎರಡನೆಯದನ್ನು ದಹನಬಲಿಯಾಗಿ ಸಮರ್ಪಿಸಬೇಕು. ಯಾಜಕನು ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.
LEV 5:11 “ ‘ಆದರೆ ಅವರು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅಶಕ್ತರಾಗಿದ್ದರೆ, ಪಾಪಮಾಡಿದವರು ತಮ್ಮ ಬಲಿಗಾಗಿ, ಮೂರು ಸೇರು ಗೋಧಿ ಹಿಟ್ಟನ್ನು ಪಾಪ ಪರಿಹಾರದ ಬಲಿಯಾಗಿ ತರಬೇಕು. ಅವರು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಏಕೆಂದರೆ ಅದು ದೋಷಪರಿಹಾರ ಬಲಿಯಾಗಿದೆ.
LEV 5:12 ತರುವಾಯ ಅವರು ಅದನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಜ್ಞಾಪಕಾರ್ಥವಾಗಿ ಅದರಿಂದ ತನ್ನ ಹಿಡಿಯಷ್ಟು ತೆಗೆದುಕೊಂಡು, ಬಲಿಪೀಠದ ಮೇಲೆ ಬೆಂಕಿಯ ಅರ್ಪಣೆಗಳಿಗನುಸಾರವಾಗಿ ಯೆಹೋವ ದೇವರಿಗಾಗಿ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿರುವುದು.
LEV 5:13 ಇವುಗಳಲ್ಲಿ ಒಂದನ್ನು ಪಾಪದ ವಿಷಯವಾಗಿ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲಾಗುವುದು. ಉಳಿದದ್ದು ಯಾಜಕನಿಗಾಗಿ ಧಾನ್ಯ ಸಮರ್ಪಣೆಯಾಗಿರುವುದು.’ ”
LEV 5:14 ಯೆಹೋವ ದೇವರು ಮೋಶೆಗೆ,
LEV 5:15 “ಯಾರಾದರೂ ಅತಿಕ್ರಮಿಸಿದ್ದರೆ ಮತ್ತು ಯೆಹೋವ ದೇವರ ಪರಿಶುದ್ಧ ಸಂಗತಿಗಳನ್ನು ಅರಿಯದೆ ಪಾಪಮಾಡಿದ್ದರೆ, ಅವರು ತಮ್ಮ ಅತಿಕ್ರಮಕ್ಕಾಗಿ ತಮ್ಮ ಹಿಂಡುಗಳಿಂದ ಕಳಂಕರಹಿತವಾದ ಟಗರನ್ನು ಸಮರ್ಪಿಸಬೇಕು. ಪವಿತ್ರ ಸ್ಥಳಕ್ಕೆ ನೇಮಕವಾದ ಎರಡು ಬೆಳ್ಳಿನಾಣ್ಯ ಅಥವಾ ಹೆಚ್ಚು ಬೆಲೆಬಾಳುವ ಟಗರನ್ನು ಹಿಂಡಿನಿಂದ ತಂದು ಪ್ರಾಯಶ್ಚಿತ್ತ ಬಲಿಗಾಗಿ ಯೆಹೋವ ದೇವರಿಗೆ ಅರ್ಪಿಸಬೇಕು.
LEV 5:16 ಪರಿಶುದ್ಧವಾದದ್ದಲ್ಲದೆ, ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ವಸ್ತುಗಳನ್ನು ಅದಕ್ಕೆ ಐದನೆಯ ಪಾಲನ್ನು ಕೂಡಿಸಿ, ಅದನ್ನು ಯಾಜಕನಿಗೆ ಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು,” ಎಂದನು.
LEV 5:17 “ಯಾರಾದರೂ ಯೆಹೋವ ದೇವರು ನಿಷೇಧಿಸಿದ ಆಜ್ಞೆಗಳಲ್ಲಿ ಯಾವುದನ್ನಾದರೂ ಮಾಡಿ, ಪಾಪಮಾಡಿದರೆ, ಅದು ಅವರಿಗೆ ತಿಳಿಯದಿದ್ದರೂ ಅವರು ಅಪರಾಧಿಯಾಗಿರುವರು ಮತ್ತು ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳುವರು.
LEV 5:18 ಅಲ್ಲದೆ ಅವನು ಹಿಂಡಿನೊಳಗಿಂದ ಕಳಂಕರಹಿತವಾದ ಒಂದು ಟಗರನ್ನು ನಿನ್ನ ಅಂದಾಜಿಗನುಸಾರ ಪ್ರಾಯಶ್ಚಿತ್ತ ಬಲಿಗಾಗಿ, ಯಾಜಕನ ಬಳಿಗೆ ತರಬೇಕು. ಯಾಜಕನು, ಅಜ್ಞಾನದಿಂದ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ, ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನಿಗೆ ಕ್ಷಮೆ ದೊರಕುವುದು.
LEV 5:19 ಅವನು ನಿಶ್ಚಯವಾಗಿ ಯೆಹೋವ ದೇವರ ವಿರುದ್ಧವಾಗಿ ಅಪರಾಧ ಮಾಡಿದ್ದಾನೆ, ಅದಕ್ಕಾಗಿ ಇದು ಪ್ರಾಯಶ್ಚಿತ್ತ ಬಲಿಯಾಗಿದೆ,” ಎಂದರು.
LEV 6:1 ಯೆಹೋವ ದೇವರು ಮೋಶೆಯೊಡನೆ ಮಾತನಾಡಿ,
LEV 6:2 “ಯಾರಾದರೂ ಪಾಪಮಾಡಿದರೆ ಮತ್ತು ನೆರೆಯವರಿಗೆ ಮೋಸ ಮಾಡುವ ಮೂಲಕ ಯೆಹೋವ ದೇವರಿಗೆ ವಿಶ್ವಾಸದ್ರೋಹಿ ಆಗಿದ್ದರೆ ಅಥವಾ ಅವರ ಆರೈಕೆಯಲ್ಲಿ ಏನಾದರೂ ಉಳಿಸಿಕೊಂಡಿದ್ದರೆ ಅಥವಾ ಯಾವುದನ್ನಾದರೂ ಕದ್ದುಕೊಂಡಿದ್ದರೆ ಅಥವಾ ಅವರು ತಮ್ಮ ನೆರೆಹೊರೆಯವರಿಗೆ ಮೋಸ ಮಾಡಿದ್ದರೆ,
LEV 6:3 ಇಲ್ಲವೆ ಕಳೆದುಹೋಗಿದ ವಸ್ತು ಸಿಕ್ಕಿ, ಅದರ ವಿಷಯದಲ್ಲಿ ಸುಳ್ಳಾಡಿದ್ದರೆ ಮತ್ತು ಸುಳ್ಳಾಗಿ ಪ್ರಮಾಣ ಮಾಡಿದ್ದರೆ, ಇವೆಲ್ಲವುಗಳಲ್ಲಿ ಯಾವುದನ್ನಾದರೂ ಒಬ್ಬನು ಮಾಡಿದ್ದರೆ, ಅವನು ಪಾಪಮಾಡುವವನಾಗಿದ್ದಾನೆ.
LEV 6:4 ಅವನು ಪಾಪಮಾಡಿ, ಅಪರಾಧಿಯಾಗಿರುವುದರಿಂದ ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಇಲ್ಲವೆ ಅವನು ಮೋಸದಿಂದ ಪಡೆದ ವಸ್ತುವನ್ನೂ ಇಲ್ಲವೆ ಅವನ ವಶಕ್ಕೆ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ತಂದುಕೊಡಬೇಕು.
LEV 6:5 ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ, ಪಡೆದವುಗಳೆಲ್ಲವುಗಳನ್ನೂ ಕೂಡಿಸಿ, ಹಿಂದಕ್ಕೆ ಕೊಡಬೇಕು. ಪ್ರಾಯಶ್ಚಿತ್ತದ ಬಲಿ ಅರ್ಪಿಸುವ ದಿನದಲ್ಲಿ, ಅದರ ಯಜಮಾನನು ಯಾವನಾಗಿರುವನೋ, ಅವನಿಗೆ ಕೊಡಬೇಕು.
LEV 6:6 ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಕಳಂಕರಹಿತವಾದ ಒಂದು ಟಗರನ್ನು ಹಿಂಡಿನಿಂದ ತಂದು ಅದನ್ನು ಯೆಹೋವ ದೇವರಿಗೆಂದು ಯಾಜಕನ ಬಳಿಗೆ ತರಬೇಕು.
LEV 6:7 ಯಾಜಕನು ಅವನಿಗಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಬೇಕು. ಅತಿಕ್ರಮದಲ್ಲಿ ಅವನು ಏನನ್ನಾದರೂ ಮಾಡಿದ್ದರೆ, ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವುದು,” ಎಂದರು.
LEV 6:8 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 6:9 “ಆರೋನನಿಗೂ ಅವನ ಪುತ್ರರಿಗೂ ಆಜ್ಞಾಪಿಸಿ ಹೀಗೆ ಹೇಳು, ‘ಇದು ದಹನಬಲಿಯ ನಿಯಮವಾಗಿದೆ. ದಹನಬಲಿ ಇಡೀ ರಾತ್ರಿ, ಅಂದರೆ ಬೆಳಗಿನವರೆಗೆ ಬಲಿಪೀಠದ ಅಗ್ನಿಕುಂಡದ ಮೇಲೆ ಇರಬೇಕು. ಬಲಿಪೀಠದ ಬೆಂಕಿಯು ಅದರೊಳಗೆ ಸುಡುತ್ತಾ ಇರುವುದು.
LEV 6:10 ಯಾಜಕನು ತನ್ನ ನಾರುಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರುಮಡಿಯ ಒಳಉಡುಪುಗಳನ್ನೂ ಧರಿಸಿಕೊಂಡು, ಬಲಿಪೀಠದ ಮೇಲೆ ದಹನಬಲಿಯೊಂದಿಗೆ ಸುಟ್ಟ ಬೂದಿಯನ್ನು ತೆಗೆದುಕೊಂಡು, ಅದನ್ನು ಬಲಿಪೀಠದ ಬಳಿಯಲ್ಲಿ ಹಾಕಬೇಕು.
LEV 6:11 ಆಮೇಲೆ ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ, ಬೇರೆ ಉಡುಪುಗಳನ್ನು ಧರಿಸಿಕೊಂಡು, ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
LEV 6:12 ಬಲಿಪೀಠದ ಮೇಲೆ ಬೆಂಕಿಯು ಅದರೊಳಗೆ ಸುಡುತ್ತಲೇ ಇರಬೇಕು. ಅದು ಆರಿಹೋಗಿರಬಾರದು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆಯನ್ನು ಹಾಕಬೇಕು. ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು. ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಬಲಿ ಅರ್ಪಣೆಗಳ ಕೊಬ್ಬನ್ನು ಸುಡಬೇಕು.
LEV 6:13 ಬಲಿಪೀಠದ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು, ಅದು ಎಂದಿಗೂ ಆರಬಾರದು.
LEV 6:14 “ ‘ಧಾನ್ಯ ಸಮರ್ಪಣೆಯ ನಿಯಮವು ಇದೇ. ಆರೋನನ ಪುತ್ರರು ಬಲಿಪೀಠದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು.
LEV 6:15 ಯಾಜಕನು ಧಾನ್ಯ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ, ಧಾನ್ಯ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ, ಅದರ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದುಕೊಂಡು ಜ್ಞಾಪಕಾರ್ಥವಾಗಿ ಯೆಹೋವ ದೇವರಿಗೆ ಬಲಿಪೀಠದ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು.
LEV 6:16 ಅದರಲ್ಲಿ ಉಳಿದದ್ದನ್ನು ಆರೋನನೂ, ಅವನ ಪುತ್ರರೂ ತಿನ್ನಬೇಕು. ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು. ಅದನ್ನು ಅವರು ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.
LEV 6:17 ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ಅವರು ನನಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆಗಳಲ್ಲಿ ಅವರ ಪಾಲನ್ನು ಅವರಿಗೆ ನಾನು ಕೊಟ್ಟಿದ್ದೇನೆ. ಅದು ದೋಷಪರಿಹಾರದ ಬಲಿಯ ಹಾಗೆಯೂ ಮಹಾಪರಿಶುದ್ಧವಾದದ್ದು.
LEV 6:18 ಆರೋನನ ಮಕ್ಕಳಲ್ಲಿ ಎಲ್ಲಾ ಗಂಡುಮಕ್ಕಳೂ ಅದನ್ನು ತಿನ್ನಬಹುದು. ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವುದು. ಅವುಗಳನ್ನು ಮುಟ್ಟುವ ಪ್ರತಿಯೊಬ್ಬನೂ ಪರಿಶುದ್ಧನಾಗಿರಬೇಕು,’ ” ಎಂದರು.
LEV 6:19 ಯೆಹೋವ ದೇವರು ಮೋಶೆಯೊಡನೆ ಮಾತನಾಡಿ,
LEV 6:20 “ಆರೋನನೂ, ಅವನ ಪುತ್ರರೂ ಅಭಿಷಿಕ್ತರಾದ ದಿನದಲ್ಲಿ, ಅವರು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಬಲಿಯು ಇದೇ. ಮೂರು ಸೇರು ಗೋಧಿ ಹಿಟ್ಟಿನಲ್ಲಿ ನಿರಂತರವಾಗಿರುವ ಧಾನ್ಯ ಸಮರ್ಪಣೆಗಾಗಿ ಮುಂಜಾನೆ ಅದರಲ್ಲಿ ಅರ್ಧಭಾಗವನ್ನು ಮತ್ತು ರಾತ್ರಿ ಅದರಲ್ಲಿ ಅರ್ಧಭಾಗವನ್ನು ಸಮರ್ಪಿಸಬೇಕು.
LEV 6:21 ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಬೇಯಿಸಿದ ಧಾನ್ಯ ಸಮರ್ಪಣೆಯ ತುಂಡುಗಳನ್ನು ನೀನು ಯೆಹೋವ ದೇವರಿಗೆ ಸುವಾಸನೆಯಾಗಿ ಸಮರ್ಪಿಸಬೇಕು.
LEV 6:22 ಅವನ ಪುತ್ರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ. ಅದು ಸಂಪೂರ್ಣವಾಗಿ ಸುಟ್ಟಿರಬೇಕು.
LEV 6:23 ಏಕೆಂದರೆ ಯಾಜಕನಿಗಾಗಿರುವ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಸಂಪೂರ್ಣವಾಗಿ ಸುಟ್ಟಿರಬೇಕು. ಅದನ್ನು ತಿನ್ನಬಾರದು,” ಎಂದರು.
LEV 6:24 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 6:25 “ಆರೋನನಿಗೂ, ಅವನ ಪುತ್ರರಿಗೂ ಹೇಳು: ‘ಪಾಪ ಪರಿಹಾರದ ಬಲಿಯ ನಿಯಮವು ಇದೇ. ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯೂ ಯೆಹೋವ ದೇವರ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು.
LEV 6:26 ಪಾಪ ಪರಿಹಾರದ ಬಲಿಯನ್ನು ಮಾಡುವ ಯಾಜಕನು ಅದನ್ನು ತಿನ್ನಬೇಕು. ಅದನ್ನು ಸಭೆಯ ದೇವದರ್ಶನದ ಗುಡಾರದ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು.
LEV 6:27 ಅದರ ಮಾಂಸವನ್ನು ಮುಟ್ಟಿದ್ದೆಲ್ಲವೂ ಪರಿಶುದ್ಧವಾಗಿರುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಉಡುಪಿನ ಮೇಲೆ ಬಿದ್ದರೆ, ಅದನ್ನು ಚಿಮುಕಿಸಿದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು.
LEV 6:28 ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಅದನ್ನು ಒಂದು ಕಂಚಿನ ಪಾತ್ರೆಯಲ್ಲಿ ಬೇಯಿಸಿದ್ದಾದರೆ, ಅದನ್ನು ಬೆಳಗಿ, ನೀರಿನಿಂದ ತೊಳೆಯಬೇಕು.
LEV 6:29 ಯಾಜಕರ ಕುಟುಂಬದಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.
LEV 6:30 ಯಾವ ಪಾಪ ಪರಿಹಾರದ ಬಲಿಯ ರಕ್ತವನ್ನು ದೇವದರ್ಶನದ ಗುಡಾರದೊಳಗೆ ಸಮಾಧಾನಕ್ಕಾಗಿ ತರಲಾಗಿದೆಯೋ, ಆ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು, ಅದನ್ನು ಬೆಂಕಿಯಿಂದ ಸುಡಬೇಕು.
LEV 7:1 “ ‘ಇವು ಪ್ರಾಯಶ್ಚಿತ್ತ ಬಲಿಯ ನಿಯಮಗಳು: ಇದು ಮಹಾಪರಿಶುದ್ಧವಾದದ್ದು.
LEV 7:2 ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಪ್ರಾಯಶ್ಚಿತ್ತದ ಬಲಿಯನ್ನು ವಧಿಸಬೇಕು. ಅದರ ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.
LEV 7:3 ಅದರ ಎಲ್ಲಾ ಕೊಬ್ಬನ್ನೂ, ಅಂದರೆ ಬಾಲದ ಕೊಬ್ಬನ್ನೂ ಕರುಳಿನ ಸುತ್ತಲಿರುವ ಕೊಬ್ಬನ್ನು,
LEV 7:4 ಬದಿಯಲ್ಲಿರುವ ಎರಡು ಮೂತ್ರ ಜನಕಾಂಗಗಳನ್ನೂ, ಅವುಗಳ ಮೇಲಿರುವ ಕೊಬ್ಬನ್ನೂ, ಪಕ್ಕೆಯ ಬದಿಯಲ್ಲಿಯ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ತೆಗೆದುಕೊಂಡು ಅರ್ಪಿಸಬೇಕು.
LEV 7:5 ಆಗ ಯಾಜಕನು ಅವುಗಳನ್ನು ಬೆಂಕಿಯಿಂದ ಯೆಹೋವ ದೇವರಿಗೆ ಸಮರ್ಪಿಸುವ ಬಲಿಪೀಠದ ಮೇಲೆ ಸುಡಬೇಕು. ಇದು ಪ್ರಾಯಶ್ಚಿತ್ತದ ಬಲಿಯಾಗಿದೆ.
LEV 7:6 ಯಾಜಕರಲ್ಲಿ ಪ್ರತಿಯೊಬ್ಬ ಪುರುಷನು ಅದನ್ನು ತಿನ್ನಬೇಕು. ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.
LEV 7:7 “ ‘ಪಾಪ ಪರಿಹಾರದ ಬಲಿಯ ಹಾಗೆಯೇ ಪ್ರಾಯಶ್ಚಿತ್ತದ ಬಲಿಯೂ ಆಗಿದೆ. ಅವುಗಳಿಗೆ ಇರುವುದು ಒಂದೇ ನಿಯಮ, ಅವುಗಳಿಂದ ಪ್ರಾಯಶ್ಚಿತ್ತ ಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.
LEV 7:8 ದಹನಬಲಿಯನ್ನು ಸಮರ್ಪಿಸುವ ಯಾಜಕನು ತಾನು ಸಮರ್ಪಿಸಿದ ದಹನಬಲಿಯ ತೊಗಲನ್ನು ತಾನೇ ತೆಗೆದುಕೊಳ್ಳಬೇಕು.
LEV 7:9 ಒಲೆಯಲ್ಲಿ ಬೇಯಿಸಿದ ಬಾಂಡ್ಲಿಯಲ್ಲಿಯೂ ಬೋಗುಣಿಯಲ್ಲಿಯೂ ತಯಾರಿಸಿದ ಎಲ್ಲಾ ಧಾನ್ಯ ಸಮರ್ಪಣೆಯು ಸಮರ್ಪಿಸಿದ ಯಾಜಕನದಾಗಿರಬೇಕು.
LEV 7:10 ಎಣ್ಣೆಯಿಂದ ಮಿಶ್ರಿತವಾದ ಮತ್ತು ಒಣಗಿದ್ದ ಪ್ರತಿಯೊಂದು ಧಾನ್ಯ ಸಮರ್ಪಣೆಯನ್ನೂ ಆರೋನನ ಪುತ್ರರು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು.
LEV 7:11 “ ‘ಅವನು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಸಮಾಧಾನದ ಬಲಿಗಳ ನಿಯಮವು ಇದೇ.
LEV 7:12 “ ‘ಅವನು ಉಪಕಾರ ಸ್ತುತಿಗಾಗಿ ಅರ್ಪಿಸುವುದಾದರೆ, ಕೃತಜ್ಞತಾಸ್ತುತಿ ಬಲಿಯನ್ನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಗಳೊಂದಿಗೆ, ಎಣ್ಣೆ ಹೊಯ್ದ ಹುಳಿಯಿಲ್ಲದ ದೋಸೆಗಳೊಂದಿಗೆ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದ ರೊಟ್ಟಿಗಳೊಂದಿಗೆ ಸಮರ್ಪಿಸಬೇಕು.
LEV 7:13 ರೊಟ್ಟಿಗಳಲ್ಲದೆ, ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಬಲಿಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸಬೇಕು.
LEV 7:14 ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಕಾಣಿಕೆಯನ್ನಾಗಿ ಯೆಹೋವ ದೇವರಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದ್ದಾಗಬೇಕು.
LEV 7:15 ಉಪಕಾರ ಸ್ತುತಿಗಾಗಿ ಅವನು ಸಮಾಧಾನ ಬಲಿಯ ಮಾಂಸವನ್ನು ಅರ್ಪಿಸಲಾದ ದಿನವೇ ತಿನ್ನಬೇಕು. ಅವನು ಅದರಲ್ಲಿ ಬೆಳಗಿನವರೆಗೆ ಯಾವುದನ್ನೂ ಉಳಿಸಬಾರದು.
LEV 7:16 “ ‘ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಯಿಚ್ಛೆಯಾದ ಸಮರ್ಪಣೆಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ಅದನ್ನು ತಿನ್ನಬೇಕು. ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬಹುದು.
LEV 7:17 ಆದರೆ ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿಯಿಂದ ಸುಡಬೇಕು.
LEV 7:18 ತನ್ನ ಸಮಾಧಾನ ಬಲಿಯ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಬಲಿಯಾಗುವುದಿಲ್ಲ, ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರುವುದಿಲ್ಲ. ಅದು ಅಶುಚಿಯಾಗಿರುವುದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.
LEV 7:19 “ ‘ಅಶುದ್ಧವಾದ ಯಾವುದನ್ನಾದರೂ ಮುಟ್ಟಿದ ಮಾಂಸವನ್ನು ತಿನ್ನಬಾರದು, ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದರಲ್ಲಿ ತಿನ್ನಬಹುದು.
LEV 7:20 ಆದರೆ ಯೆಹೋವ ದೇವರಿಗೆ ಸಂಬಂಧಪಟ್ಟ ಸಮಾಧಾನದ ಬಲಿಯ ಯಜ್ಞದ ಮಾಂಸವನ್ನು ಯಾವನಾದರೂ ಅಶುದ್ಧನಾಗಿದ್ದು ತಿನ್ನುವನೋ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.
LEV 7:21 ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧ ವಸ್ತುವನ್ನೇ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧವಸ್ತುವನ್ನಾಗಲಿ ಮುಟ್ಟಿದರೆ ಮತ್ತು ಯೆಹೋವ ದೇವರಿಗೆ ಸಂಬಂಧಿಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು,’ ” ಎಂದರು.
LEV 7:22 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 7:23 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ನೀವು ಎತ್ತು ಇಲ್ಲವೆ ಕುರಿ ಇಲ್ಲವೆ ಮೇಕೆಗಳ ಕೊಬ್ಬನ್ನು ತಿನ್ನಬಾರದು.
LEV 7:24 ತಾನಾಗಿಯೇ ಸತ್ತ ಪ್ರಾಣಿಯ ಕೊಬ್ಬನ್ನೂ, ಕಾಡುಮೃಗಗಳು ಸೀಳಿದ್ದರ ಕೊಬ್ಬನ್ನೂ ಬೇರೆ ಯಾವುದಕ್ಕಾದರೂ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಷ್ಟು ಮಾತ್ರವೂ ತಿನ್ನಬಾರದು.
LEV 7:25 ಏಕೆಂದರೆ ಮನುಷ್ಯರು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಬಲಿ, ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.
LEV 7:26 ಇದಲ್ಲದೆ ನೀವು ಯಾವ ತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾಗಿರಲಿ, ಪ್ರಾಣಿಯದಾಗಿರಲಿ ನಿಮ್ಮ ಯಾವ ನಿವಾಸಗಳಲ್ಲಿಯೂ ತಿನ್ನಬಾರದು.
LEV 7:27 ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ, ಅಂಥವನನ್ನು ತನ್ನ ಜನರಿಂದ ತೆಗೆದುಹಾಕಬೇಕು.’ ”
LEV 7:28 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 7:29 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಯೆಹೋವ ದೇವರಿಗೆ ಸಮಾಧಾನ ಬಲಿಯನ್ನು ಅರ್ಪಿಸುವವನು, ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಯೆಹೋವ ದೇವರಿಗೆ ತರಬೇಕು.
LEV 7:30 ಅವನು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಯೆಹೋವ ದೇವರ ಮುಂದೆ ನೈವೇದ್ಯರೂಪವಾಗಿ ನಿವಾಳಿಸುವದಕ್ಕೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು.
LEV 7:31 ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳಿಗೆ ಸೇರುವುದು.
LEV 7:32 ಬಲಭುಜವನ್ನು ನೀವು ಯಾಜಕನಿಗೆ ಸಮಾಧಾನದ ಬಲಿಯಾಗಿ ಕೊಡಬೇಕು.
LEV 7:33 ಸಮಾಧಾನದ ಬಲಿಗಳ ರಕ್ತವನ್ನೂ, ಕೊಬ್ಬನ್ನೂ ಸಮರ್ಪಿಸುವ ಆರೋನನ ಪುತ್ರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ.
LEV 7:34 ಏಕೆಂದರೆ ನೈವೇದ್ಯ ಮಾಡಿದ ಎದೆಯನ್ನು ಮತ್ತು ನಿವಾಳಿಸುವ ಭುಜವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಬಲಿಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಯಾಜಕನಾದ ಆರೋನನಿಗೂ, ಅವನ ಪುತ್ರರಿಗೂ ಇಸ್ರಾಯೇಲರಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಅವರಿಗೆ ಕೊಟ್ಟಿದ್ದೇನೆ.’ ”
LEV 7:35 ಆರೋನನ ಅಭಿಷೇಕದ ಮತ್ತು ಅವನ ಮಕ್ಕಳ ಅಭಿಷೇಕದ ದಿನದಲ್ಲಿ ಅವರು ತಮ್ಮನ್ನು ಯಾಜಕನ ಉದ್ಯೋಗದ ಸೇವೆಗಾಗಿ ಯೆಹೋವ ದೇವರಿಗೆ ಒಪ್ಪಿಸಿಕೊಳ್ಳುವಾಗ, ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸುವ ಬಲಿಗಳಲ್ಲಿ ಇರುವ ಪಾಲು ಇದೆ.
LEV 7:36 ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾರೆ.
LEV 7:37 ದಹನಬಲಿ, ಧಾನ್ಯ ಬಲಿ, ಪಾಪ ಪರಿಹಾರದ ಬಲಿ, ಪ್ರಾಯಶ್ಚಿತ್ತದ ಬಲಿ, ಪ್ರತಿಷ್ಠೆಗಳ ಮತ್ತು ಸಮಾಧಾನದ ಬಲಿಗಳ ಉಪದೇಶಗಳು ಇವೇ.
LEV 7:38 ಇವುಗಳನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರು ತಮ್ಮ ಕಾಣಿಕೆಗಳನ್ನು ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಸೀನಾಯಿ ಮರುಭೂಮಿಯ ಸೀನಾಯಿ ಬೆಟ್ಟದಲ್ಲಿ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದರು.
LEV 8:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 8:2 “ಆರೋನನನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಉಡುಪುಗಳನ್ನೂ, ಅಭಿಷೇಕ ತೈಲವನ್ನೂ, ಪಾಪ ಪರಿಹಾರದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೋ.
LEV 8:3 ಎಲ್ಲಾ ಸಭೆಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸು,” ಎಂದರು.
LEV 8:4 ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆಯೇ ಮಾಡಿದನು. ಸಭೆಯು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು.
LEV 8:5 ಮೋಶೆಯು ಸಭೆಗೆ, “ಯೆಹೋವ ದೇವರು ಮಾಡುವುದಕ್ಕೆ ಆಜ್ಞಾಪಿಸಿರುವುದು ಇದೇ.”
LEV 8:6 ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಬಂದು, ಸ್ನಾನಮಾಡಿಸಿ,
LEV 8:7 ಆರೋನನಿಗೆ ನಿಲುವಂಗಿಯನ್ನು ಹೊದಿಸಿ, ನಡುಕಟ್ಟಿನಿಂದ ಅವನ ನಡುವನ್ನು ಕಟ್ಟಿ, ಅವನಿಗೆ ಮೇಲಂಗಿಯನ್ನು ತೊಡಿಸಿ, ಅವನ ಮೇಲೆ ಏಫೋದನ್ನು ಹಾಕಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ, ಅದರಿಂದ ಅವನನ್ನು ಬಿಗಿದನು.
LEV 8:8 ಅವನ ಮೇಲೆ ಎದೆಪದಕವನ್ನು ಹಾಕಿ, ಆ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್ ಇವುಗಳನ್ನೂ ಸಹ ಹಾಕಿದನು.
LEV 8:9 ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು, ಆ ಮುಂಡಾಸದ ಮೇಲೆ ಅಂದರೆ ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ, ಪವಿತ್ರವಾದ ಕಿರೀಟವನ್ನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಟ್ಟನು.
LEV 8:10 ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರೊಳಗಿರುವುದೆಲ್ಲವನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು.
LEV 8:11 ಅವನು ಅದರಿಂದ ಬಲಿಪೀಠದ ಮೇಲೆ ಏಳು ಸಾರಿ ಚಿಮುಕಿಸಿ, ಬಲಿಪೀಠವನ್ನೂ, ಅದರ ಎಲ್ಲಾ ಪಾತ್ರೆಗಳನ್ನೂ, ಗಂಗಾಳವನ್ನೂ, ಅದರ ಕಾಲನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು.
LEV 8:12 ಅವನು ಅಭಿಷೇಕ ತೈಲದಿಂದ ಆರೋನನ ತಲೆಯ ಮೇಲೆ ಸುರಿದು, ಅವನನ್ನು ಪವಿತ್ರ ಮಾಡುವುದಕ್ಕಾಗಿ ಅವನನ್ನು ಅಭಿಷೇಕಿಸಿದನು.
LEV 8:13 ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ, ಅವರ ನಡುಗಳನ್ನು ನಡುಕಟ್ಟುಗಳಿಂದ ಕಟ್ಟಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಹಾಕಿದನು.
LEV 8:14 ಪಾಪ ಪರಿಹಾರದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಪುತ್ರರೂ ಪಾಪ ಪರಿಹಾರದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
LEV 8:15 ಆಗ ಅವನು ಅದನ್ನು ವಧಿಸಿದನು. ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಸುತ್ತಲೂ ಇರುವ ಕೊಂಬುಗಳ ಮೇಲೆ ತನ್ನ ಬೆರಳಿನಿಂದ ಹಚ್ಚಿ, ಬಲಿಪೀಠವನ್ನು ಶುದ್ಧೀಕರಿಸಿ, ಉಳಿದ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಅದನ್ನು ಪವಿತ್ರ ಮಾಡಿದನು.
LEV 8:16 ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಮೋಶೆಯು ತೆಗೆದುಕೊಂಡು ಬಲಿಪೀಠದ ಮೇಲೆ ಸುಟ್ಟನು.
LEV 8:17 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಹೋರಿಯ ಮಾಂಸವನ್ನೂ, ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
LEV 8:18 ದಹನಬಲಿಗಾಗಿ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
LEV 8:19 ಅವನು ಅದನ್ನು ವಧಿಸಿದನು. ತರುವಾಯ ಮೋಶೆಯು ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
LEV 8:20 ಅವನು ಆ ಟಗರನ್ನು ತುಂಡುತುಂಡಾಗಿ ಮಾಡಿದನು. ಮೋಶೆಯು ತಲೆಯನ್ನು, ಆ ತುಂಡುಗಳನ್ನು, ಆ ಕೊಬ್ಬನ್ನು ಸುಟ್ಟನು.
LEV 8:21 ಅವನು ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣವಾಗಿ ಬಲಿಪೀಠದ ಮೇಲೆ ಸುಟ್ಟನು. ಇದು ದಹನಬಲಿಯಾಗಿ ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯ ಸಮರ್ಪಣೆಯಾಗಿತ್ತು.
LEV 8:22 ಅವನು ಪ್ರತಿಷ್ಠೆಯ ಟಗರಾದ ಇನ್ನೊಂದು ಟಗರನ್ನು ತಂದನು. ಆಗ ಆರೋನನೂ, ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
LEV 8:23 ಮೋಶೆಯು ಅದನ್ನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಅದನ್ನು ಆರೋನನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
LEV 8:24 ಮೋಶೆಯು ಆರೋನನ ಪುತ್ರರನ್ನು ಕರೆತಂದು ಅವರ ಬಲಗಿವಿಯ ತುದಿಯ ಮೇಲೆಯೂ, ಅವರವರ ಬಲಗೈಯ ಹೆಬ್ಬೆರಳಿಗೂ, ಅವರವರ ಬಲಗಾಲಿನ ಹೆಬ್ಬೆಟ್ಟಿಗೂ ಆ ರಕ್ತವನ್ನು ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.
LEV 8:25 ಅವನು ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಂಡನು.
LEV 8:26 ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ ತೆಗೆದುಕೊಂಡು, ಅವುಗಳನ್ನು ಕೊಬ್ಬಿನ ಮೇಲೆಯೂ, ಬಲಭುಜದ ಮೇಲೆಯೂ ಇಟ್ಟನು.
LEV 8:27 ಅದೆಲ್ಲವನ್ನೂ ಆರೋನನ ಕೈಗಳಿಗೆ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಯೆಹೋವ ದೇವರ ಮುಂದೆ ಸಮರ್ಪಣೆಗಾಗಿ ಅವುಗಳನ್ನು ನೈವೇದ್ಯ ಮಾಡಿಸಿದನು.
LEV 8:28 ಆಮೇಲೆ ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಅವುಗಳನ್ನು ಸುಟ್ಟನು. ಅವು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಸುಗಂಧಕರ ಪ್ರತಿಷ್ಠೆಯ ಬಲಿಯಾಗಿದ್ದವು.
LEV 8:29 ಮೋಶೆಯು ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಿದನು. ಏಕೆಂದರೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಷ್ಠಿತ ಟಗರು ಮೋಶೆಯ ಪಾಲಾಗಿತ್ತು.
LEV 8:30 ಮೋಶೆಯು ಅಭಿಷೇಕ ತೈಲವನ್ನೂ, ಬಲಿಪೀಠದ ಮೇಲಿರುವ ರಕ್ತವನ್ನೂ ತೆಗೆದುಕೊಂಡು, ಆರೋನನ ಮೇಲೆಯೂ, ಅವನ ಉಡುಪುಗಳ ಮೇಲೆಯೂ ಅವನೊಂದಿಗೆ ಅವನ ಪುತ್ರರ ಮೇಲೆಯೂ, ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು. ಆರೋನನನ್ನೂ, ಅವನ ಉಡುಪುಗಳನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಅವನ ಪುತ್ರರ ಉಡುಪುಗಳನ್ನೂ ಪವಿತ್ರ ಮಾಡಿದನು.
LEV 8:31 ಮೋಶೆಯು ಆರೋನನಿಗೂ, ಅವನ ಪುತ್ರರಿಗೂ, “ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ. ಅದನ್ನು ಪ್ರತಿಷ್ಠಿತ ಬುಟ್ಟಿಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು. ನಾನು ಆಜ್ಞಾಪಿಸಿ ಹೇಳಿದಂತೆ, ‘ಆರೋನನು ಮತ್ತು ಅವನ ಪುತ್ರರು ಅದನ್ನು ತಿನ್ನಬೇಕು.’
LEV 8:32 ಮಾಂಸದಲ್ಲಿಯೂ, ರೊಟ್ಟಿಯಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದ ಸುಡಬೇಕು.
LEV 8:33 ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಗೊಳ್ಳುವುದಕ್ಕೆ ಏಳು ದಿವಸ ಹಿಡಿಯುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು.
LEV 8:34 ನಿಮ್ಮ ದೋಷಪರಿಹಾರಕ್ಕಾಗಿ ಈ ಹೊತ್ತು ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ.
LEV 8:35 ಆದ್ದರಿಂದ ಏಳು ದಿನಗಳವರೆಗೆ ನೀವು ಸಾಯದಂತೆ ಹಗಲೂ ರಾತ್ರಿ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಆಜ್ಞೆಯನ್ನು ಕೈಗೊಳ್ಳಬೇಕು. ಏಕೆಂದರೆ ಹಾಗೆಯೇ ನನಗೆ ಅಪ್ಪಣೆಯಾಗಿದೆ,” ಎಂದನು.
LEV 8:36 ಹೀಗೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ, ಆರೋನನೂ, ಅವನ ಪುತ್ರರೂ ಮಾಡಿದರು.
LEV 9:1 ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಮತ್ತು ಇಸ್ರಾಯೇಲಿನ ಹಿರಿಯರನ್ನೂ ಕರೆದನು.
LEV 9:2 ಅವನು ಆರೋನನಿಗೆ, “ನೀನು ಪಾಪ ಪರಿಹಾರದ ಬಲಿಗಾಗಿ ಒಂದು ಎಳೆಯ ಕರುವನ್ನೂ ಮತ್ತು ದಹನಬಲಿಗಾಗಿ ಕಳಂಕರಹಿತ ಟಗರನ್ನೂ ತೆಗೆದುಕೊಂಡು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸು.
LEV 9:3 ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ: ‘ಪಾಪ ಪರಿಹಾರದ ಬಲಿಗಾಗಿ ಹೋತವನ್ನೂ ದಹನಬಲಿಗಾಗಿ ಕಳಂಕರಹಿತ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿಯನ್ನೂ ತೆಗೆದುಕೊಳ್ಳಬೇಕು.
LEV 9:4 ಯೆಹೋವ ದೇವರ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಾಗಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆಹಾರದ ಬಲಿ ಎಣ್ಣೆಯೊಂದಿಗೆ ಬೆರೆತಿರಬೇಕು. ಏಕೆಂದರೆ ಈ ದಿನವೇ ಯೆಹೋವ ದೇವರು ನಿಮಗೆ ಕಾಣಿಸಿಕೊಳ್ಳುವರು,’ ” ಎಂದನು.
LEV 9:5 ಅವರು ಮೋಶೆಯು ಆಜ್ಞಾಪಿಸಿದವುಗಳನ್ನು ದೇವದರ್ಶನದ ಗುಡಾರದ ಮುಂದೆ ತಂದರು. ಸಮೂಹವೆಲ್ಲವೂ ಹತ್ತಿರ ಬಂದು ಯೆಹೋವ ದೇವರ ಮುಂದೆ ನಿಂತಿತು.
LEV 9:6 ಮೋಶೆ ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ ಸಂಗತಿಯು ಇದೇ. ಇದನ್ನು ನೀವು ಮಾಡಿರಿ. ಯೆಹೋವ ದೇವರ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವುದು,” ಎಂದನು.
LEV 9:7 ಮೋಶೆಯು ಆರೋನನಿಗೆ, “ಬಲಿಪೀಠದ ಕಡೆಗೆ ಹೋಗಿ, ಯೆಹೋವ ದೇವರು ಆಜ್ಞಾಪಿಸಿದಂತೆಯೇ ನಿನ್ನ ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸು. ನಿನಗಾಗಿ ಪ್ರಾಯಶ್ಚಿತ್ತವನ್ನು ಮಾಡು, ಜನರ ಸಮರ್ಪಣೆಗಳನ್ನು ಸಮರ್ಪಿಸಿ, ಅವರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು,” ಎಂದನು.
LEV 9:8 ಆದ್ದರಿಂದ ಆರೋನನು ಬಲಿಪೀಠದ ಕಡೆಗೆ ಹೋಗಿ, ತನಗಾಗಿ ಪಾಪ ಪರಿಹಾರದ ಬಲಿಯಾದ ಕರುವನ್ನು ವಧಿಸಿದನು.
LEV 9:9 ಆಗ ಆರೋನನ ಪುತ್ರರು ಅವನ ಬಳಿಗೆ ರಕ್ತವನ್ನು ತಂದರು. ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಬಲಿಪೀಠದ ಅಡಿಯಲ್ಲಿ ಉಳಿದ ರಕ್ತವನ್ನು ಹೊಯ್ದನು.
LEV 9:10 ಅದರ ಪಾಪ ಪರಿಹಾರದ ಬಲಿಯ ಕೊಬ್ಬು, ಮೂತ್ರಪಿಂಡಗಳು ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬು, ಇವುಗಳನ್ನು ಅವನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ, ಬಲಿಪೀಠದ ಮೇಲೆ ಸುಟ್ಟನು.
LEV 9:11 ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
LEV 9:12 ಅವನು ದಹನಬಲಿಯನ್ನು ವಧಿಸಿದಾಗ, ಆರೋನನ ಪುತ್ರರು ಅವನಿಗೆ ರಕ್ತವನ್ನು ತಂದು ಕೊಟ್ಟರು. ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
LEV 9:13 ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದು ಕೊಡಲು, ಅವನು ಅವುಗಳನ್ನು ಬಲಿಪೀಠದ ಮೇಲೆ ಸುಟ್ಟನು.
LEV 9:14 ಅವನು ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು, ಅವುಗಳನ್ನು ದಹನಬಲಿಯ ಜೊತೆ ಮೇಲಿನ ಬಲಿಪೀಠದ ಮೇಲೆ ಸುಟ್ಟನು.
LEV 9:15 ಅದಾದ ಮೇಲೆ ಆರೋನನು ಜನರಿಗಾಗಿ ಅರ್ಪಿಸಿದ ಬಲಿಯನ್ನು ತಂದು, ಹೋತವನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಪರಿಹಾರದ ಬಲಿಯಾಗಿರುವುದನ್ನು ವಧಿಸಿ, ಮೊದಲನೆಯದರ ಹಾಗೆ ಅದನ್ನು ಸಮರ್ಪಿಸಿದನು.
LEV 9:16 ಅವನು ದಹನಬಲಿಯನ್ನು ತಂದು, ಅದನ್ನು ವಿಧಿಬದ್ಧವಾಗಿ ಸಮರ್ಪಿಸಿದನು.
LEV 9:17 ಅವನು ಧಾನ್ಯ ಸಮರ್ಪಣೆಯ ಬಲಿಯನ್ನು ತಂದು, ಅದರಲ್ಲಿ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಬೆಳಗಿನ ದಹನಬಲಿ ಯಜ್ಞದ ಬಳಿಯಲ್ಲಿ ಅದನ್ನು ಹೋಮ ಮಾಡಿದನು.
LEV 9:18 ಅವನು ಜನರಿಗಾಗಿದ್ದ ಹೋರಿ ಮತ್ತು ಟಗರನ್ನು ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಅವನ ಬಳಿಗೆ ತರಲು, ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
LEV 9:19 ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಹಿಂಭಾಗದ ಕೊಬ್ಬನ್ನೂ ಮತ್ತು ಕರುಳುಗಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳ ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬನ್ನೂ
LEV 9:20 ಕೊಬ್ಬನ್ನು ಎದೆಯ ಭಾಗಗಳ ಮೇಲೆ ಇಡಲು, ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಟ್ಟನು.
LEV 9:21 ಎದೆಯ ಭಾಗಗಳನ್ನು, ಬಲತೊಡೆಗಳನ್ನು ಆರೋನನು, ಮೋಶೆ ಆಜ್ಞಾಪಿಸಿದಂತೆ ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
LEV 9:22 ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಮತ್ತು ಸಮಾಧಾನದ ಬಲಿಯನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
LEV 9:23 ಮೋಶೆಯೂ ಆರೋನನೂ ದೇವದರ್ಶನದ ಗುಡಾರದ ಒಳಗೆ ಹೋಗಿ, ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವ ದೇವರ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.
LEV 9:24 ಆಗ ಅಲ್ಲಿ ಬೆಂಕಿಯು ಯೆಹೋವ ದೇವರ ಸನ್ನಿಧಿಯಿಂದ ಬಂದು, ಬಲಿಪೀಠದ ಮೇಲಿದ್ದ ದಹನಬಲಿಯನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಇದನ್ನು ಜನರೆಲ್ಲರೂ ಕಂಡಾಗ, ಅವರು ಆನಂದದಿಂದ ಜಯಘೋಷ ಮಾಡಿ ಅಡ್ಡಬಿದ್ದರು.
LEV 10:1 ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹೂ ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು, ಅದರಲ್ಲಿ ಬೆಂಕಿಯನ್ನು ಹಾಕಿ, ಅದರಲ್ಲಿ ಸುವಾಸನೆಯ ಧೂಪವನ್ನು ಹಾಕಿ, ಯೆಹೋವ ದೇವರು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದರು.
LEV 10:2 ಆಗ ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟುಬಂದು ಅವರನ್ನು ದಹಿಸಿಬಿಟ್ಟಿತು. ಅವರು ಯೆಹೋವ ದೇವರ ಮುಂದೆ ಮರಣಹೊಂದಿದರು.
LEV 10:3 ತರುವಾಯ ಮೋಶೆಯು ಆರೋನನಿಗೆ, “ಯೆಹೋವ ದೇವರು ಹೇಳಿದ್ದು ಇದೇ. ಅದೇನೆಂದರೆ: “ ‘ನನ್ನನ್ನು ಸಮೀಪಿಸುವವರ ಮುಖಾಂತರ ನನ್ನ ಪರಿಶುದ್ಧತೆಯನ್ನು ತೋರಿಸುವೆನು ಮತ್ತು ಜನರೆಲ್ಲರ ಮುಂದೆ ನನ್ನ ಮಹಿಮೆಯನ್ನು ತೋರ್ಪಡಿಸುವೆನು,’ ” ಎಂದನು. ಆಗ ಆರೋನನು ಮಾತನಾಡದೆ ಸುಮ್ಮನಿದ್ದನು.
LEV 10:4 ಮೋಶೆಯು ಆರೋನನ ಚಿಕ್ಕಪ್ಪನಾದ ಉಜ್ಜೀಯೇಲನ ಮಕ್ಕಳಾದ ಮೀಶಾಯೇಲನನ್ನೂ ಎಲ್ಜಾಫಾನನನ್ನೂ ಕರೆದು, “ನಿಮ್ಮ ಸಹೋದರರನ್ನು ಪರಿಶುದ್ಧ ಸ್ಥಳದಿಂದ ಪಾಳೆಯದ ಹೊರಗೆ ಹೊತ್ತುಕೊಂಡು ಹೋಗಿರಿ,” ಎಂದನು.
LEV 10:5 ಮೋಶೆಯು ಹೇಳಿದ ಹಾಗೆಯೇ, ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು.
LEV 10:6 ಆಗ ಮೋಶೆಯು ಆರೋನನಿಗೂ ಅವನ ಪುತ್ರರಾದ ಎಲಿಯಾಜರನಿಗೂ ಈತಾಮಾರನಿಗೂ, “ನೀವು ಮರಣ ಹೊಂದದಂತೆಯೂ ಕೋಪವು ಜನರೆಲ್ಲರ ಮೇಲೆ ಬಾರದಂತೆಯೂ ನೀವು ನಿಮ್ಮ ಮುಚ್ಚಿದ ತಲೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಆದರೆ ನಿಮ್ಮ ಸಹೋದರರಾಗಿರುವ ಇಸ್ರಾಯೇಲಿನ ಮನೆತನದವರೆಲ್ಲರು ಯೆಹೋವ ದೇವರು ಉರಿಸಿದ ಬೆಂಕಿಯ ನಾಶದ ನಿಮಿತ್ತ ಗೋಳಾಡಲಿ.
LEV 10:7 ನೀವು ಮರಣ ಹೊಂದದಂತೆ ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು. ಏಕೆಂದರೆ ಯೆಹೋವ ದೇವರ ಅಭಿಷೇಕ ತೈಲವು ನಿಮ್ಮ ಮೇಲಿದೆ,” ಎಂದನು. ಆಗ ಅವರು ಮೋಶೆಯ ಮಾತಿನ ಪ್ರಕಾರವೇ ಮಾಡಿದರು.
LEV 10:8 ಯೆಹೋವ ದೇವರು ಮಾತನಾಡಿ ಆರೋನನಿಗೆ,
LEV 10:9 “ನೀನು ಸಾಯದಂತೆ ದೇವದರ್ಶನದ ಗುಡಾರಕ್ಕೆ ಬರುವಾಗ ನೀನೂ ಇಲ್ಲವೆ ನಿನ್ನ ಪುತ್ರರೂ ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿಯಬಾರದು. ಇದು ನಿಮ್ಮ ವಂಶಾವಳಿಯು ಇರುವವರೆಗೂ ಶಾಶ್ವತವಾಗಿರುವ ಕಟ್ಟಳೆಯಾಗಿದೆ.
LEV 10:10 ನೀವು ಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸುವುದಕ್ಕಾಗಿಯೂ
LEV 10:11 ನೀವು ಇಸ್ರಾಯೇಲರಿಗೆ ಯೆಹೋವ ದೇವರು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ, ಎಲ್ಲಾ ಕಟ್ಟಳೆಗಳನ್ನು ಬೋಧಿಸುವುದಕ್ಕಾಗಿಯೂ ಇರುವುದು,” ಎಂದರು.
LEV 10:12 ಮೋಶೆಯು ಆರೋನನೊಂದಿಗೂ ಉಳಿದ ಅವನ ಪುತ್ರರಾದ ಎಲಿಯಾಜರನೊಂದಿಗೂ ಈತಾಮಾರನೊಂದಿಗೂ ಮಾತನಾಡಿ, “ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಗಳಲ್ಲಿ ಉಳಿದಿರುವ ಧಾನ್ಯ ಸಮರ್ಪಣೆಯನ್ನು ತೆಗೆದುಕೊಳ್ಳಿರಿ ಮತ್ತು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿಯಿಲ್ಲದ ರೊಟ್ಟಿ ತಿನ್ನಿರಿ. ಏಕೆಂದರೆ ಅದು ಮಹಾಪರಿಶುದ್ಧವಾದದ್ದು.
LEV 10:13 ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ದಹನ ಮಾಡಿದ ಯೆಹೋವ ದೇವರ ಯಜ್ಞಗಳಲ್ಲಿ ಇವು ನಿನಗೂ ನಿನ್ನ ಪುತ್ರರಿಗೂ ಸಲ್ಲತಕ್ಕವುಗಳು. ಏಕೆಂದರೆ ಹಾಗೆ ನನಗೆ ಆಜ್ಞೆಯಾಗಿದೆ.
LEV 10:14 ನೀನೂ, ನಿನ್ನೊಂದಿಗೆ ನಿನ್ನ ಪುತ್ರರೂ ನಿನ್ನ ಪುತ್ರಿಯರೂ ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಿಸುವ ತೊಡೆಯ ಭಾಗವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ಇಸ್ರಾಯೇಲರ ಸಮಾಧಾನದ ಬಲಿಗಳಲ್ಲಿ ನಿನಗೂ ನಿನ್ನ ಪುತ್ರರಿಗೂ ಸಲ್ಲುವಂಥವುಗಳಾಗಿವೆ.
LEV 10:15 ನೈವೇದ್ಯವಾಗಿ ಅರ್ಪಿಸುವ ಎದೆಯನ್ನೂ ತೊಡೆಯನ್ನೂ ಅವರು ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನು ನೈವೇದ್ಯವಾಗಿ ನಿವಾಳಿಸುವುದಕ್ಕೆ ಯೆಹೋವ ದೇವರ ಸನ್ನಿಧಿಯಲ್ಲಿ ತರಬೇಕು. ಯೆಹೋವ ದೇವರು ಆಜ್ಞಾಪಿಸಿದ ಹಾಗೆ ಅದು ನಿನಗೂ, ನಿನ್ನೊಂದಿಗೆ ನಿನ್ನ ಪುತ್ರರಿಗೂ ನಿತ್ಯ ಕಟ್ಟಳೆಯಾಗಿ ಸಿಕ್ಕಬೇಕು,” ಎಂದು ಹೇಳಿದನು.
LEV 10:16 ಅನಂತರ ಮೋಶೆಯು ಶ್ರದ್ಧೆಯಿಂದ ಪಾಪ ಪರಿಹಾರದ ಬಲಿಯ ಹೋತವನ್ನು ಹುಡುಕಿದಾಗ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಪುತ್ರರಾದ ಎಲಿಯಾಜರ್ ಮತ್ತು ಈತಾಮಾರನ ಮೇಲೆ ಕೋಪಗೊಂಡು, ಹೇಳಿದ್ದೇನೆಂದರೆ,
LEV 10:17 “ಅದು ಮಹಾಪರಿಶುದ್ಧವಾದ್ದರಿಂದಲೂ ಯೆಹೋವ ಸನ್ನಿಧಿಯಲ್ಲಿ ಅವರಿಗಾಗಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿಯೂ ನೀವು ಸಭೆಯ ಅಪರಾಧವನ್ನು ಹೊರುವುದಕ್ಕಾಗಿ ದೇವರು ಅದನ್ನು ಕೊಟ್ಟಿದ್ದೆಂದೂ ನೀವು ತಿಳಿದು ಪಾಪ ಪರಿಹಾರದ ಬಲಿಯನ್ನು ಪರಿಶುದ್ಧವಾದ ಸ್ಥಳದಲ್ಲಿ ಏಕೆ ತಿನ್ನಲಿಲ್ಲ?
LEV 10:18 ಇಗೋ, ಅದರ ರಕ್ತವು ಪರಿಶುದ್ಧಸ್ಥಳದ ಒಳಗೆ ತರಲಿಲ್ಲವಾದ ಕಾರಣ ನಾನು ಆಜ್ಞಾಪಿಸಿದಂತೆ ನಿಶ್ಚಯವಾಗಿ ನೀವು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕಾಗಿತ್ತು,” ಎಂದನು.
LEV 10:19 ಆಗ ಆರೋನನು ಮೋಶೆಗೆ, “ಈ ದಿನ ಅವರು ಪಾಪಪರಿಹಾರ ಬಲಿಯನ್ನು ಮತ್ತು ಅದರ ದಹನಬಲಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದ್ದರು. ಆದರೆ ಈ ದುಃಖ ಘಟನೆಗಳು ನನಗೆ ಸಂಭವಿಸಿದೆ. ಹೀಗಿರುವಲ್ಲಿ ಇಂದು ನಾನು ಆ ಪಾಪ ಪರಿಹಾರದ ಬಲಿದ್ರವ್ಯವನ್ನು ಊಟಮಾಡಿದ್ದರೆ, ಯೆಹೋವ ದೇವರು ಸಂತೋಷಪಡುತ್ತಿದ್ದರೋ?” ಎಂದನು.
LEV 10:20 ಆಗ ಮೋಶೆಯು ಈ ಮಾತನ್ನು ಕೇಳಿದಾಗ ತೃಪ್ತಿಪಟ್ಟನು.
LEV 11:1 ಯೆಹೋವ ದೇವರು ಮೋಶೆ ಆರೋನರಿಗೆ ಹೀಗೆ ಹೇಳಿದರು,
LEV 11:2 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು: ‘ಭೂಮಿಯ ಮೇಲೆ ಇರುವ ಎಲ್ಲಾ ನೀವು ತಿನ್ನತಕ್ಕ ಪ್ರಾಣಿಗಳು ಯಾವವಂದರೆ:
LEV 11:3 ಪ್ರಾಣಿಗಳಲ್ಲಿ ಕಾಲ್ಗೊರಸು ಸೀಳಿದ ಮತ್ತು ಮೇವನ್ನು ಮೆಲುಕಾಡಿಸುವುದನ್ನೂ ನೀವು ತಿನ್ನಬಹುದು.
LEV 11:4 “ ‘ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವುದಾದರೂ ಅದಕ್ಕೆ ಸೀಳುಗೊರಸು ಇಲ್ಲ. ಅದು ನಿಮಗೆ ಅಶುದ್ಧ.
LEV 11:5 ಬೆಟ್ಟದ ಕುಣಿ ಮೊಲವು ಮೇವನ್ನು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು.
LEV 11:6 ಮೊಲವು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು.
LEV 11:7 ಹಂದಿಯ ಗೊರಸು ಸೀಳಿದ್ದರೂ ಅದು ಮೇವನ್ನು ಮೆಲುಕು ಹಾಕುವುದಿಲ್ಲ, ಅದು ನಿಮಗೆ ಅಶುದ್ಧವಾಗಿರುವುದು.
LEV 11:8 ಅವುಗಳ ಮಾಂಸವನ್ನು ನೀವು ತಿನ್ನಬಾರದು. ಅವುಗಳ ಹೆಣವನ್ನು ಮುಟ್ಟಬಾರದು. ಅವು ನಿಮಗೆ ಅಶುದ್ಧವಾಗಿವೆ.
LEV 11:9 “ ‘ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ಸಮುದ್ರದಲ್ಲಿ ಮತ್ತು ನದಿಯಲ್ಲಿ ಇರುವ ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.
LEV 11:10 ಸಮುದ್ರಗಳಲ್ಲಿಯೂ, ನದಿಗಳಲ್ಲಿಯೂ ನೀರೊಳಗೆ ಚಲಿಸುವ ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜುರೆಕ್ಕೆ ಮತ್ತು ಪೊರೆಯಿಲ್ಲದವುಗಳು ನಿಮಗೆ ನಿಷಿದ್ಧವಾಗಿವೆ.
LEV 11:11 ಅವು ನಿಮಗೆ ಅಶುದ್ಧವಾಗಿಯೇ ಇರುವವು. ನೀವು ಅವುಗಳ ಮಾಂಸವನ್ನು ತಿನ್ನಬಾರದು ಮತ್ತು ಅವುಗಳ ಶವಗಳು ನಿಮಗೆ ಹೇಯವಾಗಿರಬೇಕು.
LEV 11:12 ನೀರಲ್ಲಿ ಯಾವುದಕ್ಕೆ ಈಜುರೆಕ್ಕೆ ಮತ್ತು ಪೊರೆಗಳಿಲ್ಲವೋ ಅವು ನಿಮಗೆ ಹೇಯವಾಗಿರಬೇಕು.
LEV 11:13 “ ‘ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವಾಗಿವೆ. ಇವುಗಳು ನಿಮಗೆ ಅಸಹ್ಯಕರವಾದ ಮತ್ತು ತಿನ್ನಲು ನಿಷೇಧಿಸಲಾದ ಪಕ್ಷಿಗಳು ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ರಣಹದ್ದು, ಕಪ್ಪು ರಣಹದ್ದು.
LEV 11:14 ಕ್ರೌಂಚ, ಅದರ ಜಾತಿಯ ಹದ್ದು,
LEV 11:15 ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ,
LEV 11:16 ಉಷ್ಟ್ರಪಕ್ಷಿ, ಚೀರು ಗೂಬೆ, ಕಡಲ ಹಕ್ಕಿ ಮತ್ತು ಅದರ ಪ್ರತಿಯೊಂದು ಜಾತಿಯ ಗಿಡುಗ.
LEV 11:17 ಸಣ್ಣ ಗೂಬೆ, ನೀರುಕಾಗೆ, ದೊಡ್ಡ ಗೂಬೆ,
LEV 11:18 ಬಿಳಿಗೂಬೆ, ಮರಳುಗಾಡು ಗೂಬೆ, ರಣಹದ್ದು,
LEV 11:19 ನೀರು ಕೋಳಿ, ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
LEV 11:20 “ ‘ನಾಲ್ಕು ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳು ನಿಮಗೆ ಹೇಯವಾಗಿರಬೇಕು.
LEV 11:21 ಆದರೂ ಹಾರಾಡುವ, ಹರಿದಾಡುವ ನಾಲ್ಕು ಕಾಲುಗಳ ಮೇಲೆ ಹೋಗುವ, ತಮ್ಮ ಪಾದಗಳ ಮೇಲೆ ಕಾಲುಗಳಿದ್ದು, ಭೂಮಿಯ ಮೇಲೆ ದುಮುಕುವವುಗಳನ್ನೂ ನೀವು ತಿನ್ನಬಹುದು.
LEV 11:22 ಮಿಡತೆಗಳನ್ನು ಜುಟ್ಟೆ ಮಿಡತೆಗಳನ್ನು ಅವುಗಳ ಜಾತಿಗನುಸಾರವಾಗಿ ತಿನ್ನಬಹುದು.
LEV 11:23 ಆದರೆ ನಾಲ್ಕು ಪಾದವಿರುವ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳು ನಿಮಗೆ ಹೇಯವಾಗಿರಬೇಕು.
LEV 11:24 “ ‘ಇವುಗಳಿಂದ ನೀವು ಅಶುದ್ಧರಾಗುವಿರಿ. ಅಂದರೆ ಅವುಗಳ ಶವಗಳನ್ನು ಮುಟ್ಟುವವರು ಸಂಜೆಯವರೆಗೂ ಅಶುದ್ಧರಾಗಿರುವರು.
LEV 11:25 ಯಾರಾದರೂ ಅವುಗಳ ಶವವನ್ನು ಹೊತ್ತರೂ, ಅವರು ಬಟ್ಟೆಗಳನ್ನು ಒಗೆದುಕೊಂಡು ಸಂಜೆಯವರೆಗೂ ಅಶುದ್ಧರಾಗಿರುವರು.
LEV 11:26 “ ‘ಯಾವ ಪ್ರಾಣಿಯ ಗೊರಸು ಸ್ವಲ್ಪ ಸೀಳಿದ್ದರೂ, ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳ ಶವವನ್ನು ಮುಟ್ಟುವವರು ಅಶುದ್ಧರಾಗಿರುವರು.
LEV 11:27 ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವುದೆಲ್ಲವೂ ನಿಮಗೆ ಅಶುದ್ಧವಾಗಿರುವುವು. ಯಾರಾದರೂ ಅವುಗಳ ಶವವನ್ನು ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು.
LEV 11:28 ಅವುಗಳ ಶವವನ್ನು ಹೊರುವವರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೂ ಅಶುದ್ಧರಾಗಿರುವರು. ಈ ಪ್ರಾಣಿಗಳು ನಿಮಗೆ ಅಶುದ್ಧವಾದವುಗಳು.
LEV 11:29 “ ‘ಭೂಮಿಯ ಮೇಲೆ ಹರಿದಾಡುವವುಗಳಲ್ಲಿ ಇವು ಸಹ ನಿಮಗೆ ಅಶುದ್ಧವಾಗಿರಬೇಕು: ಮುಂಗುಲಿ, ಇಲಿ, ಸಕಲವಿಧವಾದ ಉಡ,
LEV 11:30 ಅರೆ ಪಳಗಿಸಿದ ಪ್ರಾಣಿ, ಹಾವುರಾಣಿ, ಊಸುರುವಳ್ಳಿ, ಹಲ್ಲಿ, ಬಸವನ ಹುಳು ಮತ್ತು ಚಿಟ್ಟಿಲಿ.
LEV 11:31 ನೆಲದ ಮೇಲೆ ಹರಿದಾಡುವ ಇವು ನಿಮಗೆ ಅಶುದ್ಧ. ಸತ್ತಿರುವಾಗ ಅವುಗಳನ್ನು ಯಾರಾದರೂ ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು.
LEV 11:32 ಅವು ಸತ್ತು ಹೋಗಿ, ಯಾವುದರ ಮೇಲೆ ಬೀಳುವವೋ ಅವೆಲ್ಲಾ ಅಶುದ್ಧವಾಗಿರುವುದು. ಅದು ಮರದ ಪಾತ್ರೆಯೇ ಆಗಿರಲಿ, ಉಡುಪೇ ಆಗಿರಲಿ, ಚೀಲವೇ ಆಗಿರಲಿ, ಕೆಲಸ ಮಾಡುವ ಯಾವ ವಸ್ತುವಾಗಲಿ, ಅದು ಏನೇ ಆಗಿರಲಿ ಸಂಜೆಯವರೆಗೆ ನೀರಲ್ಲಿ ಇಡುವವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು.
LEV 11:33 ಪ್ರತಿಯೊಂದು ಮಣ್ಣಿನ ಪಾತ್ರೆಯಲ್ಲಿ ಅವುಗಳಲ್ಲಿ ಯಾವುದಾದರೂ ಬಿದ್ದರೆ, ಅದರಲ್ಲಿ ಏನಿದ್ದರೂ ಅಶುದ್ಧವಾಗುವುದು ಮತ್ತು ನೀವು ಅದನ್ನು ಒಡೆದುಹಾಕಬೇಕು.
LEV 11:34 ಅದರಲ್ಲಿರುವ ಆಹಾರ ಪದಾರ್ಥವೆಲ್ಲಾ ನೀರಿನಿಂದ ನೆನೆದಿದ್ದರೆ ಅದು ಅಶುದ್ಧವಾಗಿರುವುದು. ಅಂಥ ಪ್ರತಿ ಪಾತ್ರೆಯಲ್ಲಿ ಕುಡಿಯುವ ಎಲ್ಲಾ ಪಾನವೂ ಅಶುದ್ಧವಾಗಿರುವುದು.
LEV 11:35 ಅವುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಅದು ಅಶುದ್ಧವಾಗಿರುವುದು. ಅದು ಹರಿವಾಣವಾಗಿದ್ದರೂ, ಮಣ್ಣುಗಳ ಒಲೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಏಕೆಂದರೆ ಅವು ಅಶುದ್ಧವಾಗಿವೆ. ಅವು ನಿಮಗೆ ಅಶುದ್ಧವೇ.
LEV 11:36 ನೀರು ಹೆಚ್ಚಾಗಿರುವ ಬುಗ್ಗೆಯಾಗಲಿ, ಹಳ್ಳವಾಗಲಿ ಶುದ್ಧವಾಗಿರುವುದು. ಅವುಗಳೊಳಗಿಂದ ಹೆಣಗಳನ್ನು ಎತ್ತಿದವರು ಅಶುದ್ಧರಾಗುವರು.
LEV 11:37 ಯಾವ ಭಾಗವಾದರೂ ಬಿತ್ತುವ ಬೀಜದಲ್ಲಿ ಬಿದ್ದರೂ ಶುದ್ಧವಾಗಿರುವುದು.
LEV 11:38 ಆದರೆ ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣವು ಬಿದ್ದರೆ, ಅದು ನಿಮಗೆ ಅಶುದ್ಧವಾಗಿರುವುದು.
LEV 11:39 “ ‘ನೀವು ತಿನ್ನುವ ಯಾವುದಾದರೂ ಪ್ರಾಣಿ ಸತ್ತಿದ್ದರೆ, ಅದರ ಶವವನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 11:40 ಯಾರಾದರೂ ಅದರ ಮಾಂಸವನ್ನು ತಿಂದಲ್ಲಿ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು. ಅದರ ಶವವನ್ನು ಹೊರುವವರೂ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 11:41 “ ‘ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಹೇಯವಾಗಿದೆ. ಅದನ್ನು ತಿನ್ನಬಾರದು.
LEV 11:42 ಹೊಟ್ಟೆಯಿಂದ ಹರಿದಾಡುವ ಯಾವುದನ್ನೂ, ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವುದನ್ನೂ, ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವುದನ್ನು ನೀವು ತಿನ್ನಬಾರದು. ಏಕೆಂದರೆ ಅವು ಹೇಯವಾಗಿವೆ.
LEV 11:43 ಯಾವುದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು, ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಅವುಗಳಿಂದ ಮಲಿನರಾಗಬಾರದು.
LEV 11:44 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಾನೇ. ನೀವು ನಿಮ್ಮನ್ನು ಪ್ರತಿಷ್ಠಿಸಿಕೊಳ್ಳಿರಿ. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ಇದಲ್ಲದೆ ಭೂಮಿಯ ಮೇಲೆ ಹರಿದಾಡುವ ಯಾವ ಬಗೆಯ ಜಂತುಗಳಿಂದಲೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.
LEV 11:45 ಏಕೆಂದರೆ ನಿಮ್ಮ ದೇವರಾಗಿರುವುದಕ್ಕೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಯೆಹೋವ ದೇವರು ನಾನೇ. ನಾನು ಪರಿಶುದ್ಧನಾಗಿರುವುದರಿಂದ ನೀವು ಪರಿಶುದ್ಧರಾಗಿರಬೇಕು.
LEV 11:46 “ ‘ಪ್ರಾಣಿಗಳು, ಪಕ್ಷಿಗಳು, ನೀರಿನಲ್ಲಿರುವ ಮತ್ತು ನೆಲದ ಮೇಲೆ ತೆವಳುವ ಪ್ರತಿಯೊಂದು ಜೀವಿಗಳಿಗೆ ಕುರಿತಾದ ನಿಯಮವು ಇದೇ.
LEV 11:47 ಅಶುದ್ಧ ಮತ್ತು ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನಲರ್ಹವಾದ ಮೃಗ ಮತ್ತು ತಿನ್ನಬಾರದ ಮೃಗಗಳ ನಡುವಿನ ವ್ಯತ್ಯಾಸವನ್ನು ಹೀಗೆ ತಿಳಿದುಕೊಳ್ಳುವಿರಿ.’ ”
LEV 12:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, ಹೇಳಿದ್ದೇನೆಂದರೆ,
LEV 12:2 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಒಬ್ಬ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು. ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.
LEV 12:3 ಎಂಟನೆಯ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು.
LEV 12:4 ಅವಳು ಮೂವತ್ತಮೂರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. ಅವಳ ಶುದ್ಧೀಕರಣದ ದಿನಗಳು ಪೂರೈಸುವ ತನಕ ಅವಳು ಪರಿಶುದ್ಧವಾದದ್ದನ್ನು ಮುಟ್ಟಬಾರದು, ಇಲ್ಲವೆ ಪರಿಶುದ್ಧ ಸ್ಥಳಕ್ಕೆ ಬರಬಾರದು.
LEV 12:5 ಅವಳು ಹೆಣ್ಣು ಮಗುವನ್ನು ಹೆತ್ತರೆ, ಅವಳು ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು.
LEV 12:6 “ ‘ಮಗನಿಗಾಗಿ ಇಲ್ಲವೆ ಮಗಳಿಗಾಗಿ ಅವಳ ಶುದ್ಧ ದಿನಗಳು ಪೂರ್ತಿಯಾದರೆ, ಅವಳು ದಹನಬಲಿಗಾಗಿ ಒಂದು ವರ್ಷದ ಕುರಿಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಪಾರಿವಾಳದ ಮರಿಯನ್ನೂ, ಇಲ್ಲವೆ ಬೆಳವಕ್ಕಿಯನ್ನೂ ದೇವದರ್ಶನದ ಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು.
LEV 12:7 ಅವನು ಯೆಹೋವ ದೇವರ ಮುಂದೆ ಅದನ್ನು ಅರ್ಪಿಸಿ, ಅವಳಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದಾದ ಅಶುದ್ಧತೆಯಿಂದ ಶುದ್ಧಳಾಗುವಳು. “ ‘ಗಂಡು ಮಗುವನ್ನಾಗಲಿ, ಹೆಣ್ಣು ಮಗುವನ್ನಾಗಲಿ ಹೆತ್ತವಳಿಗೆ ನಿಯಮವು ಇದೆ.
LEV 12:8 ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ, ಅವಳು ದಹನಬಲಿಗಾಗಿ ಒಂದು ಪಾಪ ಪರಿಹಾರದ ಬಲಿಗಾಗಿ, ಇನ್ನೊಂದು ಎಂಬಂತೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧಳಾಗುವಳು.’ ”
LEV 13:1 ಯೆಹೋವ ದೇವರು ಮೋಶೆ ಮತ್ತು ಆರೋನರೊಡನೆ ಮಾತನಾಡಿ ಹೇಳಿದ್ದೇನೆಂದರೆ,
LEV 13:2 “ಒಬ್ಬ ಮನುಷ್ಯನು ತನ್ನ ಚರ್ಮದ ಮೇಲೆ ಬಾವಾಗಲಿ, ಕಜ್ಜಿಯಾಗಲಿ, ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಚರ್ಮದಲ್ಲಿ ಕುಷ್ಠದ ವ್ಯಾಧಿಯಂತಿದ್ದರೆ, ಅವನು ಯಾಜಕನಾದ ಆರೋನನ ಬಳಿಗಾದರೂ ಇಲ್ಲವೆ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗಾದರೂ ಕರೆದುಕೊಂಡು ಬರಬೇಕು.
LEV 13:3 ಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
LEV 13:4 ಅವನ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು, ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದು, ಅಲ್ಲಿನ ಕೂದಲು ಬೆಳ್ಳಗಾಗದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಪ್ರತ್ಯೇಕವಾಗಿ ಇರಿಸಬೇಕು.
LEV 13:5 ಯಾಜಕನು ಏಳನೆಯ ದಿನದಲ್ಲಿ ಅವನನ್ನು ಪರೀಕ್ಷಿಸಿದಾಗ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ, ಆ ವ್ಯಾಧಿ ಚರ್ಮದಲ್ಲಿ ಹರಡಿರದಿದ್ದರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
LEV 13:6 ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ವ್ಯಾಧಿಯು ಸ್ವಲ್ಪ ಕಪ್ಪಾಗಿದ್ದು, ಚರ್ಮದಲ್ಲೆಲ್ಲಾ ಹರಡಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರುವನು.
LEV 13:7 ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ, ಅವನು ತಿರುಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
LEV 13:8 ಯಾಜಕನು ಅದನ್ನು ಪರೀಕ್ಷಿಸಿದಾಗ, ಕಜ್ಜಿಯ ಚರ್ಮವೇ ಹರಡಿರುವುದಾದರೆ ಆಗ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಏಕೆಂದರೆ ಅದು ಚರ್ಮರೋಗವಾಗಿರುವುದು.
LEV 13:9 “ಚರ್ಮರೋಗವು ಮನುಷ್ಯನಲ್ಲಿ ಇರುವುದಾದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
LEV 13:10 ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,
LEV 13:11 ಅದು ಅವನ ಚರ್ಮದಲ್ಲಿ ದೀರ್ಘಕಾಲದ ಚರ್ಮರೋಗವಾಗಿರುವುದು. ಆಗ ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು ಮತ್ತು ಅವನನ್ನು ಪ್ರತ್ಯೇಕವಾಗಿ ಇರಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
LEV 13:12 “ಒಬ್ಬನಲ್ಲಿ ಸಾಂಕ್ರಾಮಿಕ ಚರ್ಮರೋಗ ಹತ್ತಿದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಪಾದದವರೆಗೂ ಹರಡಿವುದುನ್ನು ಯಾಜಕನು ಪರೀಕ್ಷಿಸಿದರೆ,
LEV 13:13 ಆಗ ಯಾಜಕನು ಅದನ್ನು ಗಮನಿಸಬೇಕು. ತೊನ್ನು ಹತ್ತಿದರೆ, ಅವನ ಮೈಯೆಲ್ಲವನ್ನು ಹರಡಿಕೊಂಡಿದ್ದರೆ, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವುದರಿಂದ ಅವನು ಶುದ್ಧನಾಗಿರುವನು.
LEV 13:14 ಆದರೆ ಹಸಿ ಮಾಂಸವು ಅವನಲ್ಲಿ ಕಾಣಿಸಿಕೊಂಡರೆ ಅವನು ಅಶುದ್ಧನಾಗಿರುವನು.
LEV 13:15 ಯಾಜಕನು ಹಸಿ ಮಾಂಸವನ್ನು ಪರೀಕ್ಷಿಸಿ ಅವನು ಅಶುದ್ಧನೆಂದು ನುಡಿಯಬೇಕು. ಏಕೆಂದರೆ ಹಸಿ ಮಾಂಸವು ಅಶುದ್ಧವಾದದ್ದು, ಅದು ಅಶುದ್ಧಗೊಳಿಸುವ ಚರ್ಮರೋಗವೇ.
LEV 13:16 ಹಸಿ ಮಾಂಸವು ಮತ್ತೆ ಬದಲಾಗಿ ಬೆಳ್ಳಗಾದರೆ, ಅವನು ಯಾಜಕನ ಬಳಿಗೆ ಬರಬೇಕು.
LEV 13:17 ಆಗ ಯಾಜಕನು ಅವನನ್ನು ಪರೀಕ್ಷಿಸಿ, ಆ ವ್ಯಾಧಿಯು ಬೆಳ್ಳಗಾಗಿದ್ದರೆ, ಯಾಜಕನು, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅವನು ಶುದ್ಧನಾಗಿರುವನು.
LEV 13:18 “ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
LEV 13:19 ಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.
LEV 13:20 ಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು.
LEV 13:21 ಆದರೆ ಯಾಜಕನು ಅದನ್ನು ಪರೀಕ್ಷಿಸಲು, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದಿದ್ದರೆ ಮತ್ತು ಸ್ವಲ್ಪ ಮಬ್ಬಾಗಿದ್ದರೆ, ಆಗ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
LEV 13:22 ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು. ಅದು ಚರ್ಮರೋಗವಾಗಿದೆ.
LEV 13:23 ಆದರೆ ಆ ಹೊಳಪಾದ ಕಲೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು, ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
LEV 13:24 “ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಸಹ ಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಕಲೆಯಾಗಿದ್ದರೆ,
LEV 13:25 ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಹೊಳಪಾದ ಕಲೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆಯಿಂದ ಒಡೆದ ಚರ್ಮರೋಗವಾಗಿರುವುದು. ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಚರ್ಮವ್ಯಾಧಿಯಾಗಿದೆ.
LEV 13:26 ಆದರೆ ಯಾಜಕನು ಅದನ್ನು ಪರೀಕ್ಷಿಸಿದಾಗ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೋಟಾಗಿದ್ದರೆ, ಯಾಜಕನು ಆಗ ಅವನನ್ನು ಏಳು ದಿನಗಳ ಕಾಲ ಮುಚ್ಚಿಡಬೇಕು.
LEV 13:27 ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ಚರ್ಮರೋಗ.
LEV 13:28 ಆ ಹೊಳಪಾದ ಕಲೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮಬ್ಬಾಗಿದ್ದರೆ, ಬೆಂಕಿ ಸುಟ್ಟ ಬೊಬ್ಬೆಯ ಊತವೆಂದು ಮತ್ತು ಅವನು ಶುದ್ಧನೆಂದು ಯಾಜಕನು ನುಡಿಯಬೇಕು. ಏಕೆಂದರೆ ಅದು ಬೆಂಕಿಯ ಬೊಬ್ಬೆಯಾಗಿರುವುದು.
LEV 13:29 “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ವ್ಯಾಧಿಯು ತಲೆಯ ಮೇಲಾಗಲಿ, ಗಡ್ಡದ ಮೇಲಾಗಲಿ ಕಲೆ ಇದ್ದರೆ,
LEV 13:30 ಆಗ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಬೇಕು. ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ತಲೆಯ ಮೇಲಾಗಲಿ ಇಲ್ಲವೆ ಗಡ್ಡದ ಮೇಲಾಗಲಿ ಇರುವ ಚರ್ಮರೋಗವಾಗಿದೆ.
LEV 13:31 ಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು.
LEV 13:32 ಏಳನೆಯ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಿದಾಗ, ಆ ಇಸಬು ಹರಡದೆ ಮತ್ತು ಅದರಲ್ಲಿ ಹಳದಿ ಕೂದಲು ಇರದೆ, ಆ ಇಸಬು ಮಿಕ್ಕ ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ,
LEV 13:33 ಅವನು ಕ್ಷೌರ ಮಾಡಿಸಿಕೊಳ್ಳಲಿ. ಆದರೆ ಅವನು ಇಸಬನ್ನು ಕ್ಷೌರ ಮಾಡಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
LEV 13:34 ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಆ ಇಸಬು ಚರ್ಮದಲ್ಲಿ ಹರಡಿರದಿದ್ದರೆ ಇಲ್ಲವೆ ನೋಡಲು ಅದು ಮಿಕ್ಕ ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ, ಯಾಜಕನು ಆಗ ಅವನನ್ನು ಶುದ್ಧನೆಂದು ನುಡಿಯಬೇಕು, ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರಬೇಕು.
LEV 13:35 ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿರದಿದ್ದರೆ,
LEV 13:36 ಯಾಜಕನು ಆಗ ಅವನನ್ನು ಪರೀಕ್ಷಿಸಬೇಕು, ಆ ಇಸಬು ಚರ್ಮದಲ್ಲಿ ಹರಡಿದ್ದರೆ, ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ. ಅವನು ಅಶುದ್ಧನು.
LEV 13:37 ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಮತ್ತು ಅದರಲ್ಲಿ ಕಪ್ಪುಕೂದಲು ಬೆಳೆದರೆ, ಇಸಬು ವಾಸಿಯಾಗಿ ಅವನು ಶುದ್ಧನಾಗುವನು, ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
LEV 13:38 “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ದೇಹದ ಚರ್ಮದಲ್ಲಿ ಬಿಳಿಯ ಹೊಳಪಾದ ಮಚ್ಚೆಗಳು ಅಲ್ಲಲ್ಲಿ ಇದ್ದರೆ,
LEV 13:39 ಅವುಗಳನ್ನು ಯಾಜಕನು ಪರೀಕ್ಷಿಸಬೇಕು, ಅವರ ದೇಹದ ಚರ್ಮದಲ್ಲಿ ಹೊಳಪಾದ ಕಲೆಗಳು ಮಬ್ಬಾಗಿ ಬಿಳುಪಾಗಿದ್ದರೆ, ಅದು ಚರ್ಮದ ಮೇಲೆ ಬಿಸಿಲಿನಿಂದಾದ ಕೆಂಪು ಮಚ್ಚೆಯಾಗಿರುವುದು. ಅವನು ಶುದ್ಧನಾಗಿರುವನು.
LEV 13:40 “ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.
LEV 13:41 ಮುಂದಲೆಯ ಭಾಗದಲ್ಲಿ ಕೂದಲು ಉದುರಿ ಹೋಗಿದ್ದರೆ, ಅವನು ಪಟ್ಟೆ ತಲೆಯವನು, ಆದರೂ ಅವನು ಶುದ್ಧನಾಗಿರುವನು.
LEV 13:42 ಆದರೆ ಆ ಬೋಳು ತಲೆಯಲ್ಲಿ ಇಲ್ಲವೆ ಪಟ್ಟೆ ತಲೆಯಲ್ಲಿ ಕೆಂಪಗಿರುವ ಬಿಳುಪಾದ ಮಚ್ಚೆಯಿದ್ದರೆ, ಅದು ಅವನ ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆ ತಲೆಯಲ್ಲಾಗಲಿ ಹುಟ್ಟುತ್ತಿರುವ ಚರ್ಮರೋಗವೇ.
LEV 13:43 ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು. ಅವನ ಬೋಳು ತಲೆಯಲ್ಲಾಗಲಿ, ಇಲ್ಲವೆ ಅವನ ಪಟ್ಟೆ ತಲೆಯಲ್ಲಾಗಲಿ ಏಳುತ್ತಿರುವ ಆ ಕಲೆಯು ಬಿಳುಪಾಗಿ ಕೆಂಪಾಗಿದ್ದರೆ ಮತ್ತು ಮಾಂಸದ ತೊಗಲಿನಲ್ಲಿ ಇರುವ ಚರ್ಮರೋಗದ ಹಾಗಿದ್ದರೆ, ಅವನು ರೋಗಿ ಎಂದೂ ಅಶುದ್ಧನೆಂದೂ
LEV 13:44 ಅವನ ವ್ಯಾಧಿಯು ಅವನ ತಲೆಯಲ್ಲಿ ಕಾಣಿಸಿದ್ದರಿಂದ ಅವನು ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
LEV 13:45 “ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.
LEV 13:46 ಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
LEV 13:47 “ಬೂಜು ಚರ್ಮರೋಗದ ಗುರುತು ಅವನ ಉಡುಪಿನಲ್ಲೂ ಇದ್ದು, ಅದು ಉಣ್ಣೆಯ ಉಡುಪಾಗಲಿ ಇಲ್ಲವೆ ನಾರಿನ ಉಡುಪಾಗಲಿ,
LEV 13:48 ನಾರಿನ ಇಲ್ಲವೆ ಉಣ್ಣೆಯ ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ಚರ್ಮದಲ್ಲಾಗಲಿ, ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಇದಲ್ಲದೆ ಹಸುರಾಗಿ ಇಲ್ಲವೆ,
LEV 13:49 ಆ ಬಟ್ಟೆ ತೊಗಲು ಹಾಸು ಇಲ್ಲವೆ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ, ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಬೂಜಾಗಿದೆ. ಅದನ್ನು ಯಾಜಕನಿಗೆ ತೋರಿಸಬೇಕು.
LEV 13:50 ಯಾಜಕನು ಅದನ್ನು ಪರೀಕ್ಷಿಸಿ, ಆ ವಸ್ತುವನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
LEV 13:51 ಅವನು ಏಳನೆಯ ದಿನದಲ್ಲಿ ಅದನ್ನು ಪರೀಕ್ಷಿಸಬೇಕು. ಆ ಬೂಜು ಅವನ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಹರಡಿದ್ದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದು ಅಶುದ್ಧವು.
LEV 13:52 ಆದ್ದರಿಂದ ಅವನು ಆ ಉಡುಪುಗಳನ್ನು ಅಂದರೆ ಅದು ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಎಲ್ಲಿ ಬೂಜಿದೆಯೋ ಅದನ್ನು ಸುಡಬೇಕು. ಏಕೆಂದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದನ್ನು ಬೆಂಕಿಯಿಂದ ಸುಡಬೇಕು.
LEV 13:53 “ಯಾಜಕನು ಪರೀಕ್ಷಿಸಿದಾಗ ಬೂಜು ಉಡುಪಿನಲ್ಲಾಗಲಿ, ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ತೊಗಲಿನ ವಸ್ತುಗಳಲ್ಲಾಗಲಿ ಹರಡದಿದ್ದರೆ,
LEV 13:54 ಆಗ ಯಾಜಕನು ಆ ಬೂಜುಳ್ಳ ವಸ್ತುವನ್ನು ತೊಳೆಯುವಂತೆ ಆಜ್ಞಾಪಿಸಿ, ಅದನ್ನು ಅವನು ಏಳು ದಿನಗಳ ಕಾಲ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
LEV 13:55 ಅದನ್ನು ತೊಳೆದಾದ ಮೇಲೆ ಯಾಜಕನು ಆ ಬೂಜನ್ನು ಪರೀಕ್ಷಿಸಬೇಕು. ಆ ಬೂಜು ಬಣ್ಣವನ್ನು ಬದಲಾಯಿಸದಿದ್ದರೆ ಮತ್ತು ಹರಡದಿದ್ದರೆ ಅದು ಅಶುದ್ಧವಾಗಿರುವುದು. ಅದನ್ನು ನೀನು ಬೆಂಕಿಯಿಂದ ಸುಡಬೇಕು. ಅದು ಒಳಗಿನಿಂದಾಗಲಿ ಇಲ್ಲವೆ ಹೊರಗಿನಿಂದಾಗಲಿ ವ್ಯಾಪಿಸಿದೆ.
LEV 13:56 ಯಾಜಕನು ಅದನ್ನು ಪರೀಕ್ಷಿಸಿದರೆ, ಆ ಬೂಜು ಹಿಡಿದ ವಸ್ತುವನ್ನು ತೊಳೆದ ನಂತರ ಮಬ್ಬಾಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ, ಚರ್ಮದಿಂದಾಗಲಿ, ಹಾಸಿನಿಂದಾಗಲಿ, ಹೊಕ್ಕಿನಿಂದಾಗಲಿ ಹರಿದುಹಾಕಬೇಕು.
LEV 13:57 ಆದರೆ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನಲ್ಲಾಗಲಿ ಕಂಡು ಬಂದರೆ ಅದು ಹರಡುವ ಬೂಜು ಮತ್ತು ಬೂಜಿರುವ ವಸ್ತುವನ್ನು ನೀನು ಬೆಂಕಿಯಿಂದ ಸುಡಬೇಕು.
LEV 13:58 ನೀನು ತೊಳೆದ ಮೇಲೆ ಆ ಬೂಜು ಯಾವ ವಸ್ತುವಿನಿಂದ ಹೊರಟು ಹೋಯಿತೋ, ಆ ಬಟ್ಟೆಯನ್ನೂ, ಹಾಸನ್ನೂ, ಹೊಕ್ಕನ್ನೂ ಇಲ್ಲವೆ ಚರ್ಮದ ಯಾವುದೇ ಸಾಮಗ್ರಿಗಳನ್ನೂ ಎರಡನೆಯ ಸಾರಿ ತೊಳೆಯಬೇಕು. ಆಗ ಅದು ಶುದ್ಧವಾಗಿರುವುದು.”
LEV 13:59 ಉಣ್ಣೆ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಬೂಜು ಹಿಡಿದಿದ್ದರೆ ಪಾಲಿಸತಕ್ಕ ನಿಯಮಗಳಿವು. ಅದನ್ನು ಶುದ್ಧವೆಂದು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇದೇ.
LEV 14:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
LEV 14:2 “ಚರ್ಮರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ. ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
LEV 14:3 ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು. ಚರ್ಮರೋಗದಿಂದ ರೋಗಿಯು ಗುಣವಾದನೆಂದು ಯಾಜಕನು ಪರೀಕ್ಷಿಸಿದರೆ,
LEV 14:4 ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು.
LEV 14:5 ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
LEV 14:6 ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಂಡು, ಹರಿಯುವ ನೀರಿನ ಬಳಿಯಲ್ಲಿ ವಧಿಸಿದ ಆ ಪಕ್ಷಿಯ ರಕ್ತದಲ್ಲಿ ಅದ್ದಿ,
LEV 14:7 ಚರ್ಮರೋಗದಿಂದ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ, ಅವನನ್ನು ಶುದ್ಧನೆಂದು ನುಡಿದು, ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟುಬಿಡಬೇಕು.
LEV 14:8 “ಶುದ್ಧವಾಗುವುದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ, ತನ್ನ ಎಲ್ಲಾ ಕೂದಲನ್ನು ಬೋಳಿಸಿಕೊಂಡು, ತಾನು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು. ತರುವಾಯ ಅವನು ಪಾಳೆಯದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳವರೆಗೆ ಕಾಯಬೇಕು.
LEV 14:9 ಆದರೆ ಏಳನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ, ಗಡ್ಡವನ್ನೂ, ತನ್ನ ಕಣ್ಣುಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಬೋಳಿಸಿಕೊಳ್ಳಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
LEV 14:10 “ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.
LEV 14:11 ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯೆಹೋವ ದೇವರ ಮುಂದೆ ನಿಲ್ಲಿಸಬೇಕು.
LEV 14:12 “ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಂಡು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸಿ, ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
LEV 14:13 ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.
LEV 14:14 ಯಾಜಕನು ಪ್ರಾಯಶ್ಚಿತ್ತ ಬಲಿಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಮತ್ತು ಯಾಜಕನು ಅದನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿನ ಮೇಲೆಯೂ, ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಹಚ್ಚಬೇಕು.
LEV 14:15 ಯಾಜಕನು ಒಂದನೆಯ ಮೂರು ಭಾಗದಷ್ಟು ಎಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
LEV 14:16 ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ, ತನ್ನ ಬೆರಳಿನಿಂದ ಆ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
LEV 14:17 ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆ ಮತ್ತು ಅವನ ಬಲಗೈಯ ಹೆಬ್ಬೆರಳಿನ ಮೇಲೆ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಹಚ್ಚಬೇಕು. ಅದೇ ರೀತಿ ಪ್ರಾಯಶ್ಚಿತ್ತ ಬಲಿಯ ರಕ್ತದ ಮೇಲೆ ಹಚ್ಚಬೇಕು.
LEV 14:18 ಯಾಜಕನ ಕೈಯಲ್ಲಿರುವ ಉಳಿದ ಆ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
LEV 14:19 “ಯಾಜಕನು ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಶುದ್ಧಮಾಡಿಸಿಕೊಳ್ಳುವವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ತರುವಾಯ ಅವನು ದಹನಬಲಿಯ ಪ್ರಾಣಿಯನ್ನು ವಧಿಸಬೇಕು.
LEV 14:20 ಯಾಜಕನು ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
LEV 14:21 “ಅವನು ಬಡವನಾಗಿದ್ದರೆ ಅಷ್ಟೊಂದು ತರುವುದಕ್ಕೆ ಆಗದಿದ್ದರೆ, ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಬಲಿ ಕೊಡಲು ನೈವೇದ್ಯ ಮಾಡುವುದಕ್ಕೆ ಒಂದು ಕುರಿಮರಿಯನ್ನೂ, ಎಣ್ಣೆ ಬೆರೆಸಿದ ಒಂದುವರೆ ಕಿಲೋಗ್ರಾಂ ನಯವಾದ ಹಿಟ್ಟನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ
LEV 14:22 ಮತ್ತು ಅವನಿಂದಾಗುವಷ್ಟು ಎರಡು ಬೆಳವಕ್ಕಿಗಳನ್ನೂ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನೂ ತೆಗೆದುಕೊಳ್ಳಬೇಕು. ಅವುಗಳಲ್ಲಿ ಒಂದು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದು ದಹನಬಲಿಗಾಗಿಯೂ ಇರುವುದು.
LEV 14:23 “ಅವನು ತನ್ನ ಶುದ್ಧತೆಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಯೆಹೋವ ದೇವರ ಎದುರಿನಲ್ಲಿ ತರಬೇಕು.
LEV 14:24 ಯಾಜಕನು ಪ್ರಾಯಶ್ಚಿತ್ತದ ಸಮರ್ಪಣೆಯ ಆ ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
LEV 14:25 ಅವನು ಪ್ರಾಯಶ್ಚಿತ್ತ ಬಲಿಗಾಗಿ ಆ ಕುರಿಮರಿಯನ್ನು ವಧಿಸಬೇಕು. ಆ ಪ್ರಾಯಶ್ಚಿತ್ತ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು, ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ ಹಚ್ಚಬೇಕು.
LEV 14:26 ಇದಲ್ಲದೆ ಯಾಜಕನು ತನ್ನ ಸ್ವಂತ ಎಡ ಅಂಗೈಯಲ್ಲಿ ಎಣ್ಣೆಯನ್ನು ಸುರಿಯಬೇಕು.
LEV 14:27 ಯಾಜಕನು ತನ್ನ ಬಲಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
LEV 14:28 ಇದಲ್ಲದೆ ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಪ್ರಾಯಶ್ಚಿತ್ತ ಬಲಿಯ ರಕ್ತದ ಸ್ಥಳದ ಮೇಲೆಯೂ ಹಚ್ಚಬೇಕು.
LEV 14:29 ಯಾಜಕನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು, ಯೆಹೋವ ದೇವರ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
LEV 14:30 ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಬೆಳವಕ್ಕಿಗಳಲ್ಲಿಯಾಗಲಿ ಪಾರಿವಾಳದ ಮರಿಗಳಲ್ಲಿಯಾಗಲಿ ಸಮರ್ಪಿಸಬೇಕು.
LEV 14:31 ಅದರಂತೆಯೇ ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಧಾನ್ಯಸಮರ್ಪಣೆಯೊಂದಿಗೆ ಸಮರ್ಪಿಸಬೇಕು, ಶುದ್ಧಪಡಿಸಿಕೊಳ್ಳುವವನಿಗೋಸ್ಕರ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.”
LEV 14:32 ಚರ್ಮರೋಗವುಳ್ಳವನು ಶುದ್ಧತೆ ಮಾಡಿಸಿಕೊಳ್ಳಲು ಗತಿಯಿಲ್ಲದವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
LEV 14:33 ಯೆಹೋವ ದೇವರು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
LEV 14:34 “ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,
LEV 14:35 ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.
LEV 14:36 ಆಗ ಯಾಜಕನು ಆ ಮನೆಯಲ್ಲಿ ಬೂಜನ್ನು ಪರೀಕ್ಷಿಸುವುದಕ್ಕೆ ಹೋಗುವ ಮೊದಲು, ಆ ಮನೆಯೊಳಗೆ ಇರುವವುಗಳು ಅಶುದ್ಧವಾಗದಂತೆ ಆ ಮನೆಯನ್ನು ಬರಿದುಮಾಡಬೇಕೆಂದು ಆಜ್ಞಾಪಿಸಬೇಕು. ತರುವಾಯ ಯಾಜಕನು ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
LEV 14:37 ಅವನು ಆ ಬೂಜನ್ನು ಪರೀಕ್ಷಿಸಿದಾಗ, ಅದು ಮನೆಯ ಗೋಡೆಗಳಲ್ಲಿ ತಗ್ಗಾದ ಸಾಲುಗಳಲ್ಲಿ ಹಸಿರಾಗಿಯಾದರೂ, ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ,
LEV 14:38 ಯಾಜಕನು ಆ ಮನೆಯ ಹೊರಗೆ ಮನೆಯ ಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳವರೆಗೆ ಮುಚ್ಚಬೇಕು.
LEV 14:39 ಏಳನೆಯ ದಿನದಲ್ಲಿ ಯಾಜಕನು ತಿರುಗಿಬಂದು ಪರೀಕ್ಷಿಸಿದಾಗ, ಆ ಬೂಜು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ,
LEV 14:40 ಬೂಜುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ,
LEV 14:41 ಆ ಮನೆಯ ಒಳಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯಬೇಕೆಂದೂ,
LEV 14:42 ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.
LEV 14:43 “ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆತ್ತಿ ಗಿಲಾವು ಮಾಡಿಸಿದ ಮೇಲೆ ಆ ಬೂಜು ತಿರುಗಿ ಕಾಣಬಂದರೆ,
LEV 14:44 ಯಾಜಕನು ಬಂದು ಪರೀಕ್ಷಿಸಬೇಕು. ಆಗ ಬೂಜು ಮನೆಯಲ್ಲಿ ಹರಡಿಕೊಂಡಿದ್ದರೆ, ಆ ಮನೆಯಲ್ಲಿ ಅದೊಂದು ನಾಶಕರವಾದ ಬೂಜು ಆಗಿರುವುದು, ಆ ಮನೆ ಅಶುದ್ಧವಾದದ್ದು.
LEV 14:45 ಅವನು ಆ ಮನೆಯನ್ನು ಕೆಡವಿಹಾಕಿ, ಅದರ ಕಲ್ಲುಗಳನ್ನೂ, ಮರಗಳನ್ನೂ, ಆ ಮನೆಯ ಎಲ್ಲಾ ಧೂಳನ್ನೂ ತೆಗೆದು, ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
LEV 14:46 “ಆ ಮನೆಯು ಮುಚ್ಚಿರುವ ಕಾಲದಲ್ಲೆಲ್ಲಾ ಅದರೊಳಗೆ ಯಾವನಾದರೂ ಹೋದರೆ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು.
LEV 14:47 ಆ ಮನೆಯೊಳಗೆ ಮಲಗಿಕೊಳ್ಳುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ಆ ಮನೆಯೊಳಗೆ ತಿನ್ನುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
LEV 14:48 “ಆದರೆ ಯಾಜಕನು ಒಳಗೆ ಬಂದು ಅದನ್ನು ಪರೀಕ್ಷಿಸಿದಾಗ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ಬೂಜು ಹರಡಿಕೊಂಡಿರದಿದ್ದರೆ, ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸಬೇಕು. ಏಕೆಂದರೆ ಆ ಬೂಜು ಹೊರಟುಹೋಯಿತು.
LEV 14:49 ಆ ಮನೆಯನ್ನು ಶುದ್ಧಪಡಿಸುವುದಕ್ಕೋಸ್ಕರ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣ ದಾರವನ್ನೂ, ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
LEV 14:50 ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
LEV 14:51 ತರುವಾಯ ದೇವದಾರು ಕಟ್ಟಿಗೆಯನ್ನೂ, ಹಿಸ್ಸೋಪನ್ನೂ, ರಕ್ತವರ್ಣ ದಾರವನ್ನೂ, ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು, ಅವುಗಳನ್ನು ವಧಿಸಿದ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ, ಏಳು ಸಾರಿ ಆ ಮನೆಗೆ ಚಿಮುಕಿಸಬೇಕು.
LEV 14:52 ಅವನು ಪಕ್ಷಿಯ ರಕ್ತದಿಂದಲೂ, ಹರಿಯುವ ನೀರಿನಿಂದಲೂ, ಸಜೀವವುಳ್ಳ ಪಕ್ಷಿಯಿಂದಲೂ, ದೇವದಾರು ಕಟ್ಟಿಗೆಯಿಂದಲೂ, ಹಿಸ್ಸೋಪಿನಿಂದಲೂ, ರಕ್ತವರ್ಣ ದಾರದಿಂದಲೂ ಆ ಮನೆಯನ್ನು ಶುದ್ಧೀಕರಿಸಬೇಕು.
LEV 14:53 ಆದರೆ ಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲಗಳಲ್ಲಿ ಬಿಟ್ಟುಬಿಡಬೇಕು. ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅದು ಶುದ್ಧವಾಗುವುದು.”
LEV 14:54 ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,
LEV 14:55 ಬಟ್ಟೆಯ ಮತ್ತು ಮನೆಯ ಬೂಜಿಗೂ,
LEV 14:56 ಬಾವು, ಚರ್ಮವ್ಯಾಧಿಗೂ, ಹೊಳೆಯುವ ಕಲೆಗೂ
LEV 14:57 ಅವುಗಳ ಶುದ್ಧಾಶುದ್ಧ ಬೇಧವನ್ನು ಬೋಧಿಸುವ ನಿಯಮಗಳು ಇವೇ. ಚರ್ಮರೋಗಗಳ ಹಾಗೂ ಬೂಜಿನ ವಿಷಯದಲ್ಲಿರುವ ನಿಯಮಗಳು ಇವೇ.
LEV 15:1 ಯೆಹೋವ ದೇವರು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 15:2 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಒಬ್ಬ ಪುರುಷನ ಶರೀರದಿಂದ ಮೇಹಸ್ರಾವ ಹರಿಯುವುದಾಗಿದ್ದರೆ, ಆ ಸ್ರಾವದ ನಿಮಿತ್ತವಾಗಿ ಅವನು ಅಶುದ್ಧನಾಗಿರುವನು.
LEV 15:3 ಅವನ ಸ್ರಾವದಲ್ಲಿ ಅದು ಅವನ ಅಶುದ್ಧತೆಯಾಗಿರುವುದು. ಅವನ ಶರೀರವು ತನ್ನ ಸ್ರಾವದಿಂದ ಹರಿಯುವುದಾಗಿದ್ದರೂ, ಸ್ರಾವವು ಅವನ ಶರೀರದಲ್ಲಿ ನಿಂತು ಹೋಗಿದ್ದರೂ, ಅದು ಅವನ ಅಶುದ್ಧತೆಯಾಗಿರುವುದು. ಅವನ ವಿಸರ್ಜನೆಯು ಹೇಗೆ ಅಶುದ್ಧತೆಯನ್ನು ತರುತ್ತದೆ ಅಂದರೆ:
LEV 15:4 “ ‘ಸ್ರಾವವಿರುವವನು ಮಲಗುವ ಪ್ರತಿಯೊಂದು ಹಾಸಿಗೆಯೂ ಅಶುದ್ಧವಾದದ್ದು, ಅವನು ಕೂತುಕೊಳ್ಳುವ ಪ್ರತಿಯೊಂದು ವಸ್ತುವೂ ಅಶುದ್ಧವಾಗಿರುವುದು.
LEV 15:5 ಅವನ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು, ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
LEV 15:6 ಇದಲ್ಲದೆ ಸ್ರಾವವಿರುವವನು ಕುಳಿತುಕೊಂಡ ಯಾವುದೇ ವಸ್ತುವಿನ ಮೇಲೆ ಕುಳಿತುಕೊಳ್ಳುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರುವರು.
LEV 15:7 “ ‘ಸ್ರಾವವಿರುವವನ ಶರೀರವನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಮತ್ತು ಸಂಜೆಯವರೆಗೆ ಅವರು ಅಶುದ್ಧನಾಗಿರಬೇಕು.
LEV 15:8 “ ‘ಶುದ್ಧರಾಗಿರುವವರ ಮೇಲೆ ಸ್ರಾವವಿರುವವನು ಉಗುಳಿದರೆ, ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
LEV 15:9 “ ‘ಸ್ರಾವವುಳ್ಳವನು ಏರಿ ಕುಳಿತುಕೊಂಡಿದ್ದ ತಡಿಯು ಅಶುದ್ಧವಾಗಿರುವುದು.
LEV 15:10 ಅವನ ಕೆಳಗಿರುವ ಯಾವುದಾದರೂ ವಸ್ತುವನ್ನು ಮುಟ್ಟಿದವನು ಸಂಜೆಯವರೆಗೆ ಅಶುದ್ಧನಾಗಿರಬೇಕು, ಅವುಗಳಲ್ಲಿ ಯಾವುದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರುವನು.
LEV 15:11 “ ‘ಸ್ರಾವವುಳ್ಳವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ, ಯಾರನ್ನಾದರೂ ಮುಟ್ಟಿದರೆ ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
LEV 15:12 “ ‘ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
LEV 15:13 “ ‘ಸ್ರಾವವುಳ್ಳವನು ತನ್ನ ಸ್ರಾವದಿಂದ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕ ಮಾಡಿ, ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗಿರುವನು.
LEV 15:14 ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳ ಮರಿಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿ ಯೆಹೋವ ದೇವರ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
LEV 15:15 ಆಗ ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು, ಯಾಜಕನು ಅವನ ಸ್ರಾವಕ್ಕೋಸ್ಕರ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
LEV 15:16 “ ‘ಒಬ್ಬನಿಗೆ ವೀರ್ಯವು ಹೊರಟು ಹೋದರೆ, ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು, ಸಂಜೆಯವರೆಗೆ ಅಶುದ್ಧನಾಗಿರಬೇಕು.
LEV 15:17 ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮವನ್ನು ನೀರಿನಿಂದ ತೊಳೆದು, ಸಂಜೆಯವರೆಗೆ ಅಶುದ್ಧವಾಗಿರಬೇಕು.
LEV 15:18 ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ, ವೀರ್ಯ ಸ್ರಾವವಾಗಿದ್ದರೆ, ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರಬೇಕು.
LEV 15:19 “ ‘ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತ ಸ್ರಾವವಿದ್ದರೆ, ಅವಳು ಏಳು ದಿವಸಗಳವರೆಗೆ ಪ್ರತ್ಯೇಕವಾಗಿರಬೇಕು, ಅವಳನ್ನು ಯಾರಾದರೂ ಮುಟ್ಟಿದರೆ, ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 15:20 “ ‘ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ಹಾಸಿಗೆ ಅಶುದ್ಧವಾಗಿರುವುದು. ಅವಳು ಕೂತುಕೊಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರುವುದು.
LEV 15:21 ಅವಳ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರುವರು.
LEV 15:22 ಅವಳು ಯಾವುದರ ಮೇಲೆ ಕುಳಿತಿದ್ದಳೋ, ಅದನ್ನು ಮುಟ್ಟಿದವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 15:23 ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕುಳಿತುಕೊಂಡ ಯಾವದರ ಮೇಲಾಗಲಿ ಇರುವುದನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 15:24 “ ‘ಯಾವನಾದರೂ ಅವಳೊಂದಿಗೆ ಸಂಗಮಿಸಿದರೆ ಮತ್ತು ಅವಳ ಸ್ರಾವವು ಅವನಿಗೆ ತಗಲಿದರೆ, ಅವನು ಏಳು ದಿವಸ ಅಶುದ್ಧನಾಗಿರಬೇಕು. ಅವನು ಮಲಗಿಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವುದು.
LEV 15:25 “ ‘ಇದಲ್ಲದೆ ಸ್ತ್ರೀಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ, ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದರೆ, ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು. ಅವಳು ಅಶುದ್ಧಳಾಗಿರುವಳು.
LEV 15:26 ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಹಾಸಿಗೆಯು, ಅವಳ ಮುಟ್ಟಿನ ಹಾಸಿಗೆಯಂತೆ ಅಶುದ್ಧವಾಗಿರುವುದು. ಅವಳು ಕುಳಿತುಕೊಳ್ಳುವುದೆಲ್ಲವೂ ಅವಳ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವುದು.
LEV 15:27 ಯಾರಾದರೂ ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧರಾಗಿರುವರು. ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
LEV 15:28 “ ‘ಅವಳು ತನ್ನ ಸ್ರಾವದಿಂದ ಶುದ್ಧಳಾದರೆ, ಅವಳು ಶುದ್ಧಳಾದಂದಿನಿಂದ ತನಗಾಗಿ ಏಳು ದಿನಗಳನ್ನು ಲೆಕ್ಕಿಸಬೇಕು.
LEV 15:29 ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು, ದೇವದರ್ಶನದ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರಬೇಕು.
LEV 15:30 ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು, ಯಾಜಕನು ಅವಳಿಗಾಗಿ ಅವಳ ಅಶುದ್ಧತೆಯ ಸ್ರಾವದ ವಿಷಯದಲ್ಲಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
LEV 15:31 “ ‘ಹೀಗೆ ನೀವು ಇಸ್ರಾಯೇಲರನ್ನು ಅಶುದ್ಧತೆಯಿಂದ ದೂರವಾಗಿರುವಂತೆ ನೋಡಿಕೊಳ್ಳಬೇಕು. ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಅಶುದ್ಧ ಮಾಡದೆ, ತಮ್ಮ ಅಶುದ್ಧತ್ವದಿಂದ ಸಾಯುವುದಿಲ್ಲ.’ ”
LEV 15:32 ಮೇಹಸ್ರಾವವುಳ್ಳವನಿಗೂ ವೀರ್ಯ ಸ್ರಾವವುಳ್ಳವನಿಗೂ ಅವುಗಳಿಂದ ಅಶುದ್ಧವಾಗುವವರೆಗೂ ಇರುವ ನಿಯಮವು ಇದೆ.
LEV 15:33 ಮುಟ್ಟು ಇರುವವಳಿಗೂ, ಸ್ರಾವವಿರುವ ಪುರುಷನಿಗೂ ಸ್ತ್ರೀಗೂ, ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮ ಇದೆ.
LEV 16:1 ಆರೋನನ ಇಬ್ಬರು ಗಂಡು ಮಕ್ಕಳು ಯೆಹೋವ ದೇವರ ಸನ್ನಿಧಿಗೆ ಬಂದು ಸತ್ತಾಗ ಮೋಶೆಯಂದಿಗೆ ಯೆಹೋವ ದೇವರು ಮಾತನಾಡಿದರು.
LEV 16:2 ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನಿನ್ನ ಅಣ್ಣನಾದ ಆರೋನನು ಮಂಜೂಷದ ಮೇಲಿರುವ ಕರುಣಾಸನದ ಮುಂದಿರುವ ತೆರೆಯ ಒಳಗೆ ಮಹಾಪರಿಶುದ್ಧ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ, ಇಲ್ಲವಾದರೆ ಅವನು ಸಾಯುತ್ತಾನೆ, ಏಕೆಂದರೆ ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
LEV 16:3 “ಈ ಸೂಚನೆಗಳನ್ನು ಸಂಪೂರ್ಣವಾಗಿ ಅನುಸರಿಸಿದ ನಂತರವೇ ಆರೋನನು ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಬೇಕು: ಪಾಪ ಪರಿಹಾರದ ಬಲಿಗಾಗಿ ಒಂದು ಹೋರಿಯನ್ನು ಮತ್ತು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
LEV 16:4 ಅವನು ಪರಿಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟುಕೊಂಡು, ತನ್ನ ಶರೀರದ ಮೇಲೆ ನಾರುಬಟ್ಟೆಯ ಒಳಉಡುಪನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು, ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು. ಆದಕಾರಣ ಅವನು ನೀರಿನಿಂದ ಸ್ನಾನಮಾಡಿ ಅವುಗಳನ್ನು ಧರಿಸಿಕೊಳ್ಳಬೇಕು.
LEV 16:5 ಅವನು ಇಸ್ರಾಯೇಲರ ಸಭೆಯ ಕಡೆಯಿಂದ ಪಾಪ ಪರಿಹಾರದ ಬಲಿಗಾಗಿ ಎರಡು ಹೋತಗಳನ್ನು, ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಳ್ಳಬೇಕು.
LEV 16:6 “ಇದಲ್ಲದೆ ಆರೋನನು ತನಗೋಸ್ಕರ ಪಾಪ ಪರಿಹಾರದ ಬಲಿಗಾಗಿ ತನ್ನ ಹೋರಿಯನ್ನು ಸಮರ್ಪಿಸಿ, ತನ್ನ ಮನೆಯವರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
LEV 16:7 ಅವನು ಎರಡು ಹೋತಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಂದು, ಅವುಗಳನ್ನು ಯೆಹೋವ ದೇವರ ಎದುರಿನಲ್ಲಿ ನಿಲ್ಲಿಸಬೇಕು.
LEV 16:8 ಆರೋನನು ಆ ಎರಡು ಹೋತಗಳಿಗಾಗಿ ಚೀಟುಹಾಕಬೇಕು. ಒಂದು ಚೀಟು ಯೆಹೋವ ದೇವರಿಗೋಸ್ಕರ, ಮತ್ತೊಂದು ಚೀಟು ಬಲಿಪಶುವಿಗೋಸ್ಕರ.
LEV 16:9 ಆರೋನನು ಯೆಹೋವ ದೇವರ ಚೀಟು ಬಿದ್ದ ಹೋತವನ್ನು ತಂದು, ಅದನ್ನು ಪಾಪ ಪರಿಹಾರದ ಬಲಿಗಾಗಿ ಸಮರ್ಪಿಸಬೇಕು.
LEV 16:10 ಆದರೆ ಬಲಿಪಶುವಿಗಾಗಿ ಚೀಟು ಬಿದ್ದ ಆ ಹೋತವನ್ನು ತನ್ನೊಂದಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ, ಅದನ್ನು ಬಲಿಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು.
LEV 16:11 “ಇದಲ್ಲದೆ ಆರೋನನು ಪಾಪ ಪರಿಹಾರದ ಬಲಿಯಾಗಿರುವ ಹೋರಿಯನ್ನು ತಂದು, ತನಗೋಸ್ಕರ ಮತ್ತು ತನ್ನ ಮನೆತನದವರಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ತನಗೋಸ್ಕರ ದೋಷಪರಿಹಾರಕ ಬಲಿಯಾಗಿ ಆ ಹೋರಿಯನ್ನು ವಧಿಸಬೇಕು.
LEV 16:12 ಅವನು ಯೆಹೋವ ದೇವರ ಸನ್ನಿಧಿಯಲ್ಲಿರುವ ಬಲಿಪೀಠದಿಂದ ಬೆಂಕಿಯ ಕೆಂಡಗಳನ್ನು ಧೂಪ ಸುಡುವ ಪಾತ್ರೆಯಲ್ಲಿ ತುಂಬಿಸಿ, ತನ್ನ ಎರಡು ಕೈತುಂಬ ಪರಿಮಳ ಧೂಪದ್ರವ್ಯದ ಚೂರ್ಣವನ್ನು ತೆಗೆದುಕೊಂಡು, ತೆರೆಯನ್ನು ದಾಟಿ ತರಬೇಕು.
LEV 16:13 ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕರುಣಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಯೆಹೋವ ದೇವರ ಎದುರಿನಲ್ಲಿ ಬೆಂಕಿಯ ಮೇಲೆ ಹಾಕಬೇಕು.
LEV 16:14 ಆ ಹೋರಿಯ ರಕ್ತದಿಂದ ಸ್ವಲ್ಪ ತೆಗೆದುಕೊಂಡು, ಕರುಣಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು, ಕರುಣಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೇಕು.
LEV 16:15 “ತರುವಾಯ ಅವನು ಜನರಿಗೋಸ್ಕರ ಪಾಪ ಪರಿಹಾರದ ಬಲಿಯಾಗಿರುವ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯ ಒಳಗಡೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಕರುಣಾಸನದ ಮೇಲೆಯೂ, ಕರುಣಾಸನದ ಮುಂದೆಯೂ ಚಿಮುಕಿಸಬೇಕು.
LEV 16:16 ಇಸ್ರಾಯೇಲರ ಅಶುದ್ಧತ್ವದ ನಿಮಿತ್ತವಾಗಿಯೂ, ಎಲ್ಲಾ ಅಪರಾಧಗಳಿಗಾಗಿಯೂ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅಶುದ್ಧತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ದೇವದರ್ಶನದ ಗುಡಾರಕ್ಕೂ ಅದರಂತೆಯೇ ಮಾಡಬೇಕು.
LEV 16:17 ಅವನು ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಮಹಾಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ, ತನ್ನ ಮನೆಯವರಿಗೆಲ್ಲರಿಗೋಸ್ಕರವೂ, ಇಸ್ರಾಯೇಲರ ಸಭೆಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಿ ಹೊರಗೆ ಬರುವ ತನಕ ದೇವದರ್ಶನದ ಗುಡಾರದಲ್ಲಿ ಒಬ್ಬ ಮನುಷ್ಯನೂ ಇರಬಾರದು.
LEV 16:18 “ಅವನು ಯೆಹೋವ ದೇವರ ಎದುರಿನಲ್ಲಿರುವ ಬಲಿಪೀಠದ ಬಳಿಗೆ ಬಂದು, ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಹೋರಿಯ ರಕ್ತವನ್ನೂ, ಹೋತದ ರಕ್ತವನ್ನೂ ತೆಗೆದುಕೊಂಡು ಬಲಿಪೀಠದ ಸುತ್ತಲೂ ಇರುವ ಕೊಂಬುಗಳಿಗೆ ಹಚ್ಚಬೇಕು.
LEV 16:19 ಅವನು ಏಳು ಸಾರಿ ಅದರ ಮೇಲೆ ರಕ್ತವನ್ನು ಚಿಮುಕಿಸಿ, ಅದನ್ನು ಶುದ್ಧಮಾಡಬೇಕು ಮತ್ತು ಇಸ್ರಾಯೇಲರ ಅಶುದ್ಧತೆಯನ್ನು ಹೋಗಲಾಡಿಸಿ, ಅದನ್ನು ಪರಿಶುದ್ಧ ಮಾಡಬೇಕು.
LEV 16:20 “ಹೀಗೆ ಮಹಾಪರಿಶುದ್ಧ ಸ್ಥಳಕ್ಕೂ, ಸಭೆಯ ಗುಡಾರಕ್ಕೂ, ಬಲಿಪೀಠಕ್ಕೂ ಸಂಧಾನದ ಕೊನೆಯಲ್ಲಿ ಅವನು ಒಂದು ಜೀವವುಳ್ಳ ಹೋತವನ್ನು ತರಬೇಕು.
LEV 16:21 ಆರೋನನು ಆ ಜೀವವುಳ್ಳ ಹೋತದ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು, ಅದರ ಮೇಲೆ ಇಸ್ರಾಯೇಲರ ಎಲ್ಲಾ ಅಕ್ರಮಗಳನ್ನೂ, ಅವರ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆಮಾಡಿ ಅವುಗಳನ್ನು ಹೋತದ ತಲೆಯ ಮೇಲೆ ಇರಿಸಿ, ನೇಮಕವಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
LEV 16:22 ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಮನುಷ್ಯನು ಹೋತವನ್ನು ಅಡವಿಗೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
LEV 16:23 “ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟುಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗಳನ್ನು ಅಲ್ಲಿಯೇ ಬಿಡಬೇಕು.
LEV 16:24 ಅವನು ಪರಿಶುದ್ಧ ಸ್ಥಳದಲ್ಲಿ ನೀರಿನಲ್ಲಿ ಸ್ನಾನಮಾಡಿ, ತನ್ನ ಬಳಕೆಯ ಬಟ್ಟೆಗಳನ್ನು ಧರಿಸಿಕೊಂಡು, ಹೊರಗೆ ಬಂದು ತನ್ನ ದಹನಬಲಿಯನ್ನೂ, ಜನರ ದಹನಬಲಿಯನ್ನೂ ಸಮರ್ಪಿಸಿ ತನಗೋಸ್ಕರವೂ, ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
LEV 16:25 ಪಾಪ ಪರಿಹಾರದ ಬಲಿಯ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು.
LEV 16:26 “ಬಲಿಪಶುವಿಗಾಗಿ ಹೋತವನ್ನು ಹೋಗಲು ಬಿಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.
LEV 16:27 ಇದಲ್ಲದೆ ಮಹಾಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯಾವುದರ ರಕ್ತವು ತರಲಾಗಿತ್ತೋ, ಆ ಪಾಪ ಪರಿಹಾರದ ಬಲಿಯ ಹೋರಿಯನ್ನು ಮತ್ತು ದೋಷಪರಿಹಾರ ಬಲಿಯ ಹೋತವನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಅವುಗಳ ಚರ್ಮವನ್ನೂ, ಮಾಂಸವನ್ನೂ, ಸಗಣಿಯನ್ನೂ ಸುಡಬೇಕು.
LEV 16:28 ಅವುಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ನಂತರ ಪಾಳೆಯದೊಳಕ್ಕೆ ಬರಬೇಕು.
LEV 16:29 “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ, ನಿಮ್ಮೊಡನೆ ವಾಸಿಸುತ್ತಿರುವ ಪರಕೀಯರೂ, ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು, ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು.
LEV 16:30 ನೀವು ಯೆಹೋವ ದೇವರ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ, ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡುವನು.
LEV 16:31 ಇದೇ ನಿಮಗೆ ಸಬ್ಬತ್ ದಿನವಾಗಿರುವುದು. ನಿಮಗೆ ನಿತ್ಯವಾದ ನಿಯಮವಿರುವಂತೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ.
LEV 16:32 ಯಾವನು ತನ್ನ ತಂದೆಯ ಬದಲಾಗಿ ಮಹಾಯಾಜಕ ಉದ್ಯೋಗಕ್ಕೋಸ್ಕರ ಅಭಿಷಿಕ್ತನಾಗಿ ಪ್ರತಿಷ್ಟಿಸಲಾಗಿದ್ದಾನೋ, ಆ ಮಹಾಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು.
LEV 16:33 ಹೀಗೆ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದಲ್ಲದೆ ಸಭೆಯ ಗುಡಾರಕ್ಕಾಗಿಯೂ, ಬಲಿಪೀಠಕ್ಕಾಗಿಯೂ ಪ್ರಾಯಶ್ಚಿತ್ತ ಮಾಡಬೇಕು. ಯಾಜಕರಿಗಾಗಿಯೂ, ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
LEV 16:34 “ಹೀಗೆ ಇಸ್ರಾಯೇಲರ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತ ಮಾಡುವುದು, ನಿಮಗೆ ನಿರಂತರವಾದ ನಿಯಮವಾಗಿರುವುದು,” ಎಂದು ಹೇಳಿದರು. ಯೆಹೋವ ದೇವರು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
LEV 17:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 17:2 “ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರೆಲ್ಲರಿಗೂ ಮಾತನಾಡಿ ಅವರಿಗೆ ಹೀಗೆ ಹೇಳು: ‘ಯೆಹೋವ ದೇವರು ನಿಮಗೆ ಇಂತೆಂದು ಆಜ್ಞಾಪಿಸುತ್ತಾರೆ.
LEV 17:3 ಇಸ್ರಾಯೇಲಿನ ಮನೆತನದಲ್ಲಿ ಯಾವನು ಒಂದು ಎತ್ತನ್ನಾಗಲಿ ಇಲ್ಲವೆ ಒಂದು ಕುರಿಯನ್ನಾಗಲಿ ಇಲ್ಲವೆ ಒಂದು ಆಡನ್ನಾಗಲಿ ಪಾಳೆಯದೊಳಗೆ ಆಗಲಿ ಇಲ್ಲವೆ ಪಾಳೆಯದ ಹೊರಗೆ ಆಗಲಿ ವಧಿಸಿ,
LEV 17:4 ಯೆಹೋವ ದೇವರಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲ ಮುಂದೆ ತಾರದಿದ್ದರೆ, ಆ ಮನುಷ್ಯನ ಮೇಲೆ ರಕ್ತಾಪರಾಧವು ಹೊರಿಸಬೇಕು. ಅವನು ರಕ್ತ ಸುರಿಸಿರುವವನು, ಆ ಮನುಷ್ಯನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
LEV 17:5 ಇಸ್ರಾಯೇಲರು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಯೆಹೋವ ದೇವರಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
LEV 17:6 ಯಾಜಕನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಬಲಿಪೀಠದ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಯೆಹೋವ ದೇವರಿಗೆ ಆಹ್ಲಾದಕರ ಸುಗಂಧ ವಾಸನೆಯಾಗಿ ಸುಡಬೇಕು.
LEV 17:7 ಜಾರತ್ವ ಮಾಡುವಂತೆ ಅವರು ಇದುವರೆಗೆ ಪೂಜಿಸುತ್ತಿದ್ದ ಆ ಮೇಕೆ ದೇವತೆಗಳಿಗೆ ಇನ್ನೆಂದಿಗೂ ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಯಮ.’
LEV 17:8 “ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರು ಇಲ್ಲವೆ ನಿಮ್ಮೊಳಗೆ ಪ್ರವಾಸಿಗರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸಿದರೆ,
LEV 17:9 ಅದನ್ನು ಯೆಹೋವ ದೇವರಿಗೆ ಸಮರ್ಪಿಸುವಂತೆ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ, ಆ ಮನುಷ್ಯನನ್ನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
LEV 17:10 “ ‘ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ, ಯಾವುದೇ ತರದ ರಕ್ತವನ್ನು ತಿಂದರೆ, ರಕ್ತವನ್ನು ತಿನ್ನುವ ಆ ಪ್ರಾಣಕ್ಕೆ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
LEV 17:11 ಏಕೆಂದರೆ ದೇಹದ ಜೀವವು ರಕ್ತದೊಳಗೆ ಇರುತ್ತದೆ ಮತ್ತು ನಾನು ಅದನ್ನು ನಿಮ್ಮ ಆತ್ಮಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಬಲಿಪೀಠದ ಮೇಲೆ ನಿಮಗೆ ಕೊಟ್ಟಿದ್ದೇನೆ. ಪ್ರಾಣಕ್ಕೆ ಪ್ರಾಯಶ್ಚಿತ್ತ ಮಾಡುವುದು ರಕ್ತವೇ.
LEV 17:12 ಆದಕಾರಣ ನಾನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಿದೆನು, “ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ತಂಗಿರುವ ಪರಕೀಯರಲ್ಲಿಯಾಗಲಿ ಯಾರೂ ರಕ್ತವನ್ನು ಭುಜಿಸಬಾರದು.”
LEV 17:13 “ ‘ಇದಲ್ಲದೆ ಇಸ್ರಾಯೇಲರು ಯಾವ ಮನುಷ್ಯನಾದರೂ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವುದಕ್ಕಾಗಿ ಬೇಟೆಯಾಡಿ, ಯಾವುದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ, ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿನಿಂದ ಮುಚ್ಚಬೇಕು.
LEV 17:14 ಏಕೆಂದರೆ ಅದು ಎಲ್ಲಾ ಶರೀರಗಳ ಜೀವವಾಗಿದೆ. ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ. ಆದ್ದರಿಂದ ನಾನು ಇಸ್ರಾಯೇಲರಿಗೆ, “ನೀವು ಯಾವ ತರಹದ ರಕ್ತವನ್ನೂ ತಿನ್ನಬಾರದು,” ಎಂದು ಹೇಳಿದ್ದೇನೆ. ಏಕೆಂದರೆ ಎಲ್ಲಾ ಶರೀರಗಳ ಜೀವವೂ ಅದರ ರಕ್ತದಲ್ಲಿಯೇ ಇದೆ. ಅದನ್ನು ತಿನ್ನುವ ಯಾವನನ್ನಾದರೂ ಬಹಿಷ್ಕರಿಸಬೇಕು.
LEV 17:15 “ ‘ಸ್ವದೇಶದವನಾಗಲಿ ಇಲ್ಲವೆ ಪರಕೀಯನಾಗಲಿ ತನ್ನಷ್ಟಕ್ಕೆ ತಾನೇ ಸತ್ತು ಹೋದದ್ದನ್ನು ಇಲ್ಲವೆ ಕಾಡುಮೃಗ ಕೊಂದದ್ದನ್ನು ತಿಂದ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರಬೇಕು. ತರುವಾಯ ಅವನು ಶುದ್ಧನಾಗಿರುವನು.
LEV 17:16 ಆದರೆ ಅವನು ಬಟ್ಟೆಗಳನ್ನು ಒಗೆದುಕೊಳ್ಳದೆ ಇದ್ದರೆ, ಇಲ್ಲವೆ ತಾನು ಸ್ನಾನ ಮಾಡದಿದ್ದರೆ, ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.’ ”
LEV 18:1 ಯೆಹೋವ ದೇವರು ಮೋಶೆಗೆ,
LEV 18:2 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು, ‘ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 18:3 ನೀವು ವಾಸವಾಗಿದ್ದ ಈಜಿಪ್ಟ್ ದೇಶದ ಆಚಾರಗಳನ್ನು ಅನುಸರಿಸಬಾರದು. ನಿಮ್ಮನ್ನು ಸೇರಿಸಲಿರುವ ಕಾನಾನ್ ದೇಶದವರ ಆಚಾರಗಳನ್ನು ನೀವು ಮಾಡಬಾರದು. ಇಲ್ಲವೆ ನೀವು ಅವರ ಪದ್ಧತಿಗಳನುಸಾರ ನಡೆಯಬಾರದು.
LEV 18:4 ನೀವು ನನ್ನ ನಿರ್ಣಯಗಳನ್ನು ಕೈಗೊಂಡು ಕಟ್ಟಳೆಗಳ ಪ್ರಕಾರ ನಡೆಯಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 18:5 ಆದ್ದರಿಂದ ನೀವು ನನ್ನ ನಿಯಮಗಳನ್ನೂ, ನನ್ನ ನಿರ್ಣಯಗಳನ್ನೂ ಕೈಗೊಳ್ಳಿರಿ. ಇವುಗಳನ್ನು ಅನುಸರಿಸುವವರು ನಿಯಮಗಳ ಮೂಲಕವೇ ಬದುಕುವರು, ನಾನೇ ಯೆಹೋವ ದೇವರು.
LEV 18:6 “ ‘ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯೊಡನೆ ಲೈಂಗಿಕ ಸಂಬಂಧ ಬೆಳೆಸಬಾರದು, ನಾನೇ ಯೆಹೋವ ದೇವರು.
LEV 18:7 “ ‘ನಿನ್ನ ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ, ನಿನ್ನ ತಂದೆಯನ್ನು ಅಗೌರವಿಸಬೇಡ. ಆಕೆ ನಿನ್ನ ತಾಯಿ: ಆಕೆಯೊಂದಿಗೆ ಇಂಥ ಸಂಬಂಧ ಬೇಡ.
LEV 18:8 “ ‘ನಿನ್ನ ಮಲತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ತಂದೆಗೆ ಅಗೌರವವನ್ನುಂಟು ಮಾಡುವುದು.
LEV 18:9 “ ‘ನಿನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಮಗಳಾಗಿರಬಹುದು ಇಲ್ಲವೆ ತಾಯಿಯ ಮಗಳಾಗಿರಬಹುದು. ಆಕೆ ಒಂದೇ ಮನೆಯಲ್ಲಿ ಹುಟ್ಟಿರಬಹುದು ಇಲ್ಲವೆ ಬೇರೆ ಕಡೆಯಲ್ಲಿ ಹುಟ್ಟಿರಬಹುದು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
LEV 18:10 “ ‘ನಿನ್ನ ಮಗನ ಮಗಳ ಕೂಡ, ಇಲ್ಲವೆ ಮಗಳ ಮಗಳ ಕೂಡ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನಗೆ ಅಗೌರವವಾಗಿದೆ.
LEV 18:11 “ ‘ನಿನ್ನ ತಂದೆಯಿಂದ ಜನಿಸಿದ ನಿನ್ನ ತಂದೆಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ಸಹೋದರಿ.
LEV 18:12 “ ‘ನಿನ್ನ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಸಮೀಪ ಬಂಧು.
LEV 18:13 “ ‘ನಿನ್ನ ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ.
LEV 18:14 “ ‘ನಿನ್ನ ತಂದೆಯ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಬೇಡ. ನಿನ್ನ ತಂದೆಯ ಸಹೋದರನನ್ನು ಅಗೌರವಿಸಬೇಡ. ಆಕೆ ನಿನ್ನ ದೊಡ್ಡಮ್ಮ.
LEV 18:15 “ ‘ನಿನ್ನ ಸೊಸೆಯೊಂದಿಗೆ ಲೈಂಗಿಕ ಸಂಪರ್ಕ ಬೇಡ. ಆಕೆ ನಿನ್ನ ಮಗನ ಹೆಂಡತಿ. ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
LEV 18:16 “ ‘ನೀನು ನಿನ್ನ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ಸಹೋದರನನ್ನು ಅಗೌರವಿಸುವುದು.
LEV 18:17 “ ‘ಸ್ತ್ರೀಯೊಂದಿಗೂ, ಆಕೆಯ ಮಗಳೊಂದಿಗೂ ಒಟ್ಟಿಗೆ ಲೈಂಗಿಕ ಸಂಪರ್ಕ ಬೇಡ. ಆಕೆಯ ಮಗನ ಮಗಳೊಂದಿಗಾದರೂ, ಮಗಳ ಮಗಳೊಂದಿಗಾದರೂ ಲೈಂಗಿಕ ಸಂಪರ್ಕ ಬೇಡ. ಅವರು ಆಕೆಯ ಹತ್ತಿರ ಸಂಬಂಧಿಗಳು. ಅದು ದುಷ್ಟತನ.
LEV 18:18 “ ‘ನಿನ್ನ ಹೆಂಡತಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದುಕೊಳ್ಳಬೇಡ. ಒಬ್ಬಳು ಜೀವಂತವಾಗಿರುವಾಗ ಮತ್ತೊಬ್ಬಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
LEV 18:19 “ ‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯ ಸಂಪರ್ಕ ಮಾಡಬೇಡ.
LEV 18:20 “ ‘ಪರರ ಹೆಂಡತಿಯೊಂದಿಗೆ ನೀನು ಸಂಗಮಿಸಿ ಅಶುದ್ಧನಾಗಬೇಡ.
LEV 18:21 “ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.
LEV 18:22 “ ‘ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರುಷನೊಂದಿಗೆ ಮಲಗಬಾರದು. ಅದು ಅಸಹ್ಯವಾದದ್ದು.
LEV 18:23 “ ‘ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು. ಅದು ಸ್ವಭಾವಕ್ಕೆ ವ್ಯತಿರಿಕ್ತವಾದದ್ದು.
LEV 18:24 “ ‘ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. ಏಕೆಂದರೆ ನಿಮ್ಮ ಮುಂದೆಯೇ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಿಂದ ಹೊಲೆಯಾಗಿವೆ.
LEV 18:25 ದೇಶವೂ ಅಶುದ್ಧವಾಗಿದೆ. ಆದ್ದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು. ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವುದು.
LEV 18:26 ಆದ್ದರಿಂದ ನೀವು ನನ್ನ ನಿಯಮಗಳನ್ನು, ನನ್ನ ನಿರ್ಣಯಗಳನ್ನು ಕೈಗೊಳ್ಳಬೇಕು. ಸ್ವದೇಶದವರಲ್ಲಿ ಯಾವನಾಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನೂ ಮಾಡಬಾರದು.
LEV 18:27 ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲಾ ಅಸಹ್ಯವಾದವುಗಳನ್ನು ಮಾಡಿದ್ದರಿಂದ ದೇಶವೂ ಅಶುದ್ಧವಾಯಿತು.
LEV 18:28 ನೀವೂ ಅದನ್ನು ಅಶುದ್ಧಮಾಡಿದರೆ, ಅದು ನಿಮಗಿಂತ ಮೊದಲಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವುದು.
LEV 18:29 “ ‘ಏಕೆಂದರೆ ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವುದನ್ನಾದರೂ ಮಾಡಿದರೆ, ಅವನನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
LEV 18:30 ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
LEV 19:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
LEV 19:2 “ಇಸ್ರಾಯೇಲರ ಸಭೆಯವರೆಲ್ಲರ ಸಂಗಡ ಮಾತನಾಡಿ, ಅವರಿಗೆ ಹೀಗೆ ಹೇಳಬೇಕು: ‘ನೀವು ಪರಿಶುದ್ಧರಾಗಿರಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರಾದ ನಾನು ಪರಿಶುದ್ಧನಾಗಿದ್ದೇನೆ.
LEV 19:3 “ ‘ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತಾಯಿಗೂ ತನ್ನ ತಂದೆಗೂ ಭಯಪಟ್ಟು, ನನ್ನ ವಿಶ್ರಾಂತಿಯ ದಿನಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:4 “ ‘ನೀವು ವಿಗ್ರಹಗಳ ಕಡೆಗೆ ತಿರುಗಿಕೊಳ್ಳಬೇಡಿರಿ. ಇಲ್ಲವೆ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:5 “ ‘ನೀವು ನಿಮ್ಮ ಯೆಹೋವ ದೇವರಿಗೆ ಸಮಾಧಾನದ ಬಲಿಯನ್ನು ಸಮರ್ಪಿಸುವುದಾದರೆ, ನೀವು ಆತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿಯೇ ಅರ್ಪಿಸಬೇಕು.
LEV 19:6 ಅದನ್ನು ನೀವು ಸಮರ್ಪಿಸಿದ ದಿನದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು. ಆದರೆ ಅದು ಮೂರನೆಯ ದಿನದವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು.
LEV 19:7 ಅದನ್ನು ಮೂರನೆಯ ದಿನದಲ್ಲಿ ತಿಂದದ್ದೇ ಆದರೆ, ಅದು ಅಸಹ್ಯವಾದದ್ದು, ಅದು ಅಂಗೀಕೃತವಾಗುವುದಿಲ್ಲ.
LEV 19:8 ಆದ್ದರಿಂದ ಅದನ್ನು ತಿನ್ನುವ ಪ್ರತಿಯೊಬ್ಬರೂ ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಏಕೆಂದರೆ ಯೆಹೋವ ದೇವರಿಗೆ ಪವಿತ್ರವಾದದ್ದನ್ನು ಅವರು ಅಶುದ್ಧಮಾಡಿದ್ದಾನೆ. ಅಂಥವರನ್ನು ತಮ್ಮ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
LEV 19:9 “ ‘ನೀವು ನಿಮ್ಮ ಭೂಮಿಯ ಪೈರನ್ನು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಗಳಲ್ಲಿ ಸಂಪೂರ್ಣವಾಗಿ ಕೊಯ್ಯಬಾರದು. ಇಲ್ಲವೆ ನಿಮ್ಮ ಸುಗ್ಗಿಯ ಹಕ್ಕಲುಗಳನ್ನು ಕೂಡಿಸಬಾರದು.
LEV 19:10 ನಿಮ್ಮ ದ್ರಾಕ್ಷಿತೋಟದಲ್ಲಿ ಹಕ್ಕಲಾಯಬಾರದು. ಇಲ್ಲವೆ ಪ್ರತಿಯೊಂದು ದ್ರಾಕ್ಷಿಯನ್ನೂ ಕೂಡಿಸಬಾರದು. ನೀವು ಅವುಗಳನ್ನು ಬಡವರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:11 “ ‘ಕದಿಯಬಾರದು. “ ‘ಸುಳ್ಳಾಡಬಾರದು. “ ‘ಒಬ್ಬರಿಗೊಬ್ಬರು ಮೋಸಮಾಡಬಾರದು.
LEV 19:12 “ ‘ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣ ಮಾಡಬಾರದು. ನಿಮ್ಮ ದೇವರ ಹೆಸರನ್ನು ಅಗೌರವಿಸಬಾರದು. ನಾನೇ ಯೆಹೋವ ದೇವರು.
LEV 19:13 “ ‘ನಿಮ್ಮ ನೆರೆಯವನನ್ನು ವಂಚಿಸಬಾರದು. “ ‘ಇಲ್ಲವೆ ಅವನನ್ನು ಸುಲಿದುಕೊಳ್ಳಬಾರದು. ಕೂಲಿಯಾಳಿನ ಕೂಲಿಯು ನಿಮ್ಮ ಬಳಿಯಲ್ಲಿ ರಾತ್ರಿಯೆಲ್ಲಾ ಮತ್ತು ಮುಂಜಾನೆಯವರೆಗೆ ಇರಬಾರದು.
LEV 19:14 “ ‘ಕಿವುಡನನ್ನು ಶಪಿಸಬಾರದು. ಇಲ್ಲವೆ ಕಣ್ಣು ಕಾಣದವನನ್ನು ಮುಗ್ಗರಿಸುವಂತೆ ಮಾಡಬಾರದು. ನಿಮ್ಮ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು.
LEV 19:15 “ ‘ವ್ಯಾಜ್ಯ ತೀರಿಸುವಾಗ ನೀನು ಅನ್ಯಾಯ ಮಾಡದಿರು. ಬಡವನ ಮುಖ ದಾಕ್ಷಿಣ್ಯವನ್ನಾಗಲಿ, ಬಲಿಷ್ಠನ ಘನತೆಯನ್ನಾಗಲಿ ಲಕ್ಷಿಸದೆ ನಿಷ್ಪಕ್ಷಪಾತವಾಗಿ ತೀರ್ಪುಕೊಡು. ನಿನ್ನ ನೆರೆಯವನಿಗೆ ನೀತಿಯಲ್ಲಿ ನ್ಯಾಯವಾಗಿ ತೀರ್ಪುಮಾಡು.
LEV 19:16 “ ‘ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ. “ ‘ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ. ನಾನೇ ಯೆಹೋವ ದೇವರು.
LEV 19:17 “ ‘ನಿನ್ನ ಹೃದಯದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ, ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
LEV 19:18 “ ‘ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸದವನಾಗಿಯೂ, ಸೇಡು ತೀರಿಸದೆಯೂ ಇರು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು. ನಾನೇ ಯೆಹೋವ ದೇವರು.
LEV 19:19 “ ‘ನೀನು ನನ್ನ ಆಜ್ಞೆಗಳನ್ನು ಕೈಗೊಳ್ಳಬೇಕು. “ ‘ನಿನ್ನ ಪಶುಗಳನ್ನು ಬೇರೆ ಜಾತಿಯೊಂದಿಗೆ ಕೂಡಗೊಡಿಸಬೇಡ. “ ‘ನಿನ್ನ ಹೊಲದಲ್ಲಿ ಮಿಶ್ರವಾದ ಬೀಜಗಳನ್ನು ಬಿತ್ತಬೇಡ. “ ‘ಇದಲ್ಲದೆ ನಾರು ಮತ್ತು ಉಣ್ಣೆ ಕೂಡಿಸಿದ ಬಟ್ಟೆ ನಿನ್ನ ಮೇಲೆ ಇರಬಾರದು.
LEV 19:20 “ ‘ಒಬ್ಬ ಪುರುಷನಿಗೆ ನಿಶ್ಚಿತವಾಗಿರುವ ದಾಸಿಯಾದ ಒಬ್ಬ ಸ್ತ್ರೀಯೊಂದಿಗೆ ಒಬ್ಬ ಮನುಷ್ಯನು ಸಂಗಮಿಸುವುದಕ್ಕಾಗಿ ಮಲಗಿದರೆ ಅವಳು ಬಿಡುಗಡೆಯನ್ನು ಹೊಂದಿರದಿದ್ದರೆ, ಇಲ್ಲವೆ ಅವಳಿಗೆ ಸ್ವಾತಂತ್ರ್ಯವನ್ನು ಕೊಡದಿರದಿದ್ದರೆ, ತಕ್ಕ ಶಿಕ್ಷೆಯಾಗಬೇಕು. ಅವಳು ಸ್ವತಂತ್ರಳಲ್ಲದ ಕಾರಣ ಅವಳಿಗೆ ಮರಣದಂಡನೆಯನ್ನು ವಿಧಿಸಬಾರದು.
LEV 19:21 ಅವನು ಪ್ರಾಯಶ್ಚಿತ್ತ ಬಲಿಯ ಟಗರಾದ ತನ್ನ ಪ್ರಾಯಶ್ಚಿತ್ತ ಬಲಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿನಲ್ಲಿ ತರಬೇಕು.
LEV 19:22 ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಬಲಿಯಾಗಿರುವ ಟಗರಿನಿಂದ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನು ಮಾಡಿದ ಪಾಪವನ್ನು ಅವನಿಗೆ ಕ್ಷಮಿಸಲಾಗುವುದು.
LEV 19:23 “ ‘ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ, ಅದರ ಫಲವನ್ನು ಮೂರು ವರುಷಗಳವರೆಗೆ ಅಶುದ್ಧವೆಂದೆಣಿಸಿ ಅದನ್ನು ತಿನ್ನಬಾರದು.
LEV 19:24 ಆದರೆ ನಾಲ್ಕನೆಯ ವರುಷದಲ್ಲಿ ಅದರ ಎಲ್ಲಾ ಫಲವು ಯೆಹೋವ ದೇವರ ಸ್ತೋತ್ರಕ್ಕಾಗಿ ಪರಿಶುದ್ಧವಾಗಿರುವುದು.
LEV 19:25 ಐದನೆಯ ವರುಷದಲ್ಲಿ ಅದರ ಫಲವನ್ನು ನೀವು ತಿನ್ನಬೇಕು. ಆಗ ಅದು ನಿಮಗೆ ಇನ್ನೂ ಸಮೃದ್ಧಿಯಾಗಿ ಫಲಿಸುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:26 “ ‘ರಕ್ತದೊಂದಿಗೆ ಯಾವುದನ್ನೂ ನೀವು ತಿನ್ನಬಾರದು. “ ‘ಇದಲ್ಲದೆ ಮಂತ್ರವನ್ನು ಮಾಡಬಾರದು. ಇಲ್ಲವೆ ಶಕುನಗಳನ್ನು ನೋಡಬಾರದು.
LEV 19:27 “ ‘ನಿಮ್ಮ ತಲೆಯ ಮೂಲೆಗಳನ್ನು ದುಂಡಗೆ ಕತ್ತರಿಸಬಾರದು. ಇದಲ್ಲದೆ ನಿಮ್ಮ ಗಡ್ಡದ ಮೂಲೆಯನ್ನು ಕೆಡಿಸಬಾರದು.
LEV 19:28 “ ‘ಸತ್ತವರಿಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು. ನಿಮ್ಮ ಮೇಲೆ ಯಾವ ಹಚ್ಚೆಗಳನ್ನೂ ಹಚ್ಚಿಸಿಕೊಳ್ಳಬಾರದು. ನಾನೇ ಯೆಹೋವ ದೇವರು.
LEV 19:29 “ ‘ನಿನ್ನ ಮಗಳು ವೇಶ್ಯೆಯಾಗುವಂತೆ ವ್ಯಭಿಚಾರಕ್ಕೆ ಬಿಡಬಾರದು. ಹಾಗೆ ಮಾಡಿದರೆ, ದೇಶವು ವೇಶ್ಯೆತನಕ್ಕೆ ಒಳಪಡುವುದು ಮತ್ತು ಕೆಟ್ಟತನದಿಂದ ತುಂಬಿಹೋಗುವುದು.
LEV 19:30 “ ‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು.
LEV 19:31 “ ‘ಮಾಟಗಾರರನ್ನು ಲಕ್ಷಿಸಬೇಡ, ಅಲ್ಲದೆ ಅವರಿಂದ ಅಶುದ್ಧವಾಗದಂತೆ ಭೂತಪ್ರೇತಗಳನ್ನು ವಿಚಾರಿಸುವವರನ್ನು ಅನುಸರಿಸಬೇಡ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:32 “ ‘ತಲೆ ನೆರೆತ ವೃದ್ಧರ ಮುಂದೆ ಎದ್ದು ನಿಂತುಕೊಳ್ಳಬೇಕು, ಅವರ ಸಮ್ಮುಖವನ್ನು ಗೌರವಿಸು. ನಿನ್ನ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು.
LEV 19:33 “ ‘ಒಬ್ಬ ಪರಕೀಯನು ನಿಮ್ಮ ದೇಶದಲ್ಲಿ ನಿನ್ನೊಂದಿಗೆ ಪ್ರವಾಸಿಯಾಗಿದ್ದರೆ, ಅವನನ್ನು ಉಪದ್ರವ ಪಡಿಸಬೇಡಿರಿ.
LEV 19:34 ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೇ ಸ್ವದೇಶದವನಂತಿರಲಿ. ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಏಕೆಂದರೆ ನೀವು ಸಹ ಈಜಿಪ್ಟ್ ದೇಶದಲ್ಲಿ ಪರಕೀಯರಾಗಿದ್ದಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 19:35 “ ‘ನಿಮ್ಮ ನಿರ್ಣಯದಲ್ಲಿಯೂ, ಅಳೆಯುವುದರಲ್ಲಿಯೂ, ತೂಕದಲ್ಲಿಯೂ, ಅಳತೆಯಲ್ಲಿಯೂ ನೀವು ಅನ್ಯಾಯ ಮಾಡಬೇಡಿರಿ.
LEV 19:36 ತಕ್ಕಡಿ, ತೂಕದ ಕಲ್ಲುಗಳು, ಕಿಲೋಗ್ರಾಂ ಮತ್ತು ಲೀಟರ್ ನ್ಯಾಯಯುತವಾಗಿರಲಿ. ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ.
LEV 19:37 “ ‘ಆದ್ದರಿಂದ ನನ್ನ ಎಲ್ಲಾ ಆಜ್ಞೆಗಳನ್ನೂ, ನನ್ನ ಎಲ್ಲಾ ನ್ಯಾಯಗಳನ್ನೂ ನೀವು ಅನುಸರಿಸಿ ನಡೆಯಬೇಕು. ನಾನೇ ಯೆಹೋವ ದೇವರು,’ ” ಎಂದು ಹೇಳಿದರು.
LEV 20:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 20:2 “ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು: ‘ಇಸ್ರಾಯೇಲರಲ್ಲಿಯಾಗಲಿ, ಇಸ್ರಾಯೇಲಿನಲ್ಲಿ ಪ್ರವಾಸಿಯಾದ ಪರಕೀಯರಲ್ಲಿಯಾಗಲಿ ಯಾವನಾದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ, ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು. ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.
LEV 20:3 ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಏಕೆಂದರೆ ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಅಶುದ್ಧಮಾಡುವಂತೆ ತನ್ನ ಮಕ್ಕಳನ್ನು ಮೋಲೆಕನಿಗೆ ಕೊಟ್ಟಿದ್ದಾನೆ.
LEV 20:4 ಆ ಮನುಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ, ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ, ಅವನನ್ನು ಕೊಲ್ಲದೆ ಹೋದರೆ,
LEV 20:5 ಆಗ ನಾನು ಆ ಮನುಷ್ಯನಿಗೂ, ಅವನ ಕುಟುಂಬಕ್ಕೂ ವಿರೋಧವಾಗಿಯೂ, ವಿಮುಖವಾಗಿಯೂ ಇರುವೆನು. ಮೋಲೆಕನನ್ನು ಪೂಜೆ ಮಾಡಿದ್ದಕ್ಕಾಗಿ ಅವನನ್ನೂ, ದೇವದ್ರೋಹಿಗಳಾಗಿ ಅವನನ್ನು ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
LEV 20:6 “ ‘ಇದಲ್ಲದೆ ಮಾಟಗಾರರನ್ನು ಮತ್ತು ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ ನಾನು ಅಂಥ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
LEV 20:7 “ ‘ಆದ್ದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ ಮತ್ತು ಪರಿಶುದ್ಧರಾಗಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 20:8 ಇದಲ್ಲದೆ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಪಾಲಿಸಬೇಕು. ನಿಮ್ಮನ್ನು ಶುದ್ಧಪಡಿಸುವ ಯೆಹೋವ ದೇವರು ನಾನೇ.
LEV 20:9 “ ‘ತನ್ನ ತಂದೆಯಾನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವರಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಯಾರು ತನ್ನ ತಂದೆಯಾನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವರೋ, ಅವರ ಪಾಪವು ಸ್ವಯಂಕೃತವಾದುದು.
LEV 20:10 “ ‘ಇದಲ್ಲದೆ ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿಚಾರ ಮಾಡಿದರೆ, ವ್ಯಭಿಚಾರ ಮಾಡುವವನಿಗೂ ಮತ್ತು ವ್ಯಭಿಚಾರ ಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.
LEV 20:11 “ ‘ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಗೆ ಮಾನಭಂಗ ಮಾಡಿದಂತೆ. ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಅವರ ರಕ್ತವು ಅವರ ಮೇಲೆ ಇರುವುದು.
LEV 20:12 “ ‘ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ, ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಅವರು ವಿಕೃತವನ್ನು ಮಾಡಿದ್ದಾರೆ, ಅವರ ಪಾಪವು ಅವರ ಮೇಲೆ ಇರುವುದು.
LEV 20:13 “ ‘ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ, ಅವರಿಬ್ಬರೂ ಅಸಹ್ಯವಾದದ್ದನ್ನು ಮಾಡಿದವರಾಗಿದ್ದಾರೆ. ಅವರಿಗೆ ನಿಶ್ಚಯವಾಗಿಯೂ ಮರಣದಂಡನೆ ವಿಧಿಸಬೇಕು. ಅವರ ರಕ್ತವು ಅವರ ಮೇಲೆ ಇರುವುದು.
LEV 20:14 “ ‘ಒಬ್ಬ ಮನುಷ್ಯನು ಒಬ್ಬ ಸ್ತ್ರೀಯನ್ನೂ, ಅವಳ ತಾಯಿಯನ್ನೂ ಮದುವೆ ಮಾಡಿಕೊಂಡರೆ ಅದು ದುಷ್ಟತನವಾಗಿದೆ. ಆದ್ದರಿಂದ ನಿಮ್ಮಲ್ಲಿ ದುಷ್ಟತನವು ಇರದಂತೆ ಆ ಮೂರು ಜನರನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
LEV 20:15 “ ‘ಒಬ್ಬನು ಪಶುವಿನೊಂದಿಗೆ ಸಂಗಮಿಸಿದರೆ ಅವನಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು ಮತ್ತು ನೀವು ಆ ಪಶುವನ್ನು ವಧಿಸಬೇಕು.
LEV 20:16 “ ‘ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವುದಕ್ಕಾಗಿ ಮಲಗಿಕೊಂಡರೆ, ನೀವು ಆ ಸ್ತ್ರೀಯನ್ನೂ, ಆ ಪಶುವನ್ನೂ ಕೊಲ್ಲಬೇಕು. ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು. ಅವರ ಪಾಪವು ಅವರ ಮೇಲೆ ಇರುವುದು.
LEV 20:17 “ ‘ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯ ಬೆತ್ತಲೆತನವನ್ನು ನೋಡಿದರೆ, ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ. ಅವರನ್ನು ತಮ್ಮ ಜನರ ಮಧ್ಯದಿಂದ ತೆಗೆದುಹಾಕಬೇಕು. ಅವರ ರಕ್ತವು ಅವರ ಮೇಲೆ ಇರುವುದು. ಅವನು ತನ್ನ ಸಹೋದರಿಯನ್ನು ಸಂಗಮಿಸಿದ್ದರಿಂದ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳುವನು.
LEV 20:18 “ ‘ಒಬ್ಬ ಮನುಷ್ಯನು ಮುಟ್ಟಾದ ಸ್ತ್ರೀಯೊಂದಿಗೆ ಮಲಗಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ, ಅವನು ಆಕೆಯ ಮುಟ್ಟಿನ ಮೂಲವನ್ನು ಬಹಿರಂಗಪಡಿಸಿದ್ದಾನೆ. ಆಕೆ ಅದನ್ನು ಬಹಿರಂಗಪಡಿಸಿದ್ದಾಳೆ. ಅವರಿಬ್ಬರನ್ನೂ ಸ್ವಜನರಿಂದ ಬಹಿಷ್ಕರಿಸಬೇಕು.
LEV 20:19 “ ‘ನೀನು ನಿನ್ನ ತಾಯಿಯ ಸಹೋದರಿ ಇಲ್ಲವೆ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಡ. ಅದು ಸಮೀಪ ಬಂಧುವನ್ನು ಅಗೌರವಿಸಿದ ಹಾಗೆ ಅದಕ್ಕೆ ನೀವಿಬ್ಬರೂ ಜವಾಬ್ದಾರರು.
LEV 20:20 “ ‘ಒಬ್ಬನು ತನ್ನ ಚಿಕ್ಕಪ್ಪನ ಹೆಂಡತಿಯೊಂದಿಗೆ ಸಂಗಮಿಸಿದರೆ, ಅವನು ತನ್ನ ಚಿಕ್ಕಪ್ಪನನ್ನು ಅಗೌರವಿಸಿದಂತೆ. ಅವರು ತಮ್ಮ ಪಾಪವನ್ನು ಹೊತ್ತುಕೊಳ್ಳಬೇಕು. ಅವರು ಮಕ್ಕಳಿಲ್ಲದೆ ಸಾಯುವರು.
LEV 20:21 “ ‘ಒಬ್ಬನು ತನ್ನ ಸಹೋದರನ ಹೆಂಡತಿಯನ್ನು ತೆಗೆದುಕೊಂಡರೆ, ಅದು ಅಶುದ್ಧವಾದದ್ದು. ಏಕೆಂದರೆ ಅವನು ತನ್ನ ಸಹೋದರನನ್ನು ಅಗೌರವಿಸಿದ್ದಾನೆ. ಅವರು ಮಕ್ಕಳಿಲ್ಲದವರಾಗುವರು.
LEV 20:22 “ ‘ನೀವು ನನ್ನ ಎಲ್ಲಾ ನಿಯಮಗಳನ್ನೂ, ನನ್ನ ಎಲ್ಲಾ ನ್ಯಾಯಗಳನ್ನೂ ಕೈಗೊಂಡು ಪಾಲಿಸಬೇಕು. ಹೀಗಿದ್ದರೆ ನೀವು ವಾಸಿಸುವುದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವುದಿಲ್ಲ.
LEV 20:23 ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು. ಏಕೆಂದರೆ ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ. ಆದಕಾರಣ ನಾನು ಅವರನ್ನು ಕಂಡು ಅಸಹ್ಯಗೊಂಡಿದ್ದೇನೆ.
LEV 20:24 ಆದರೆ, “ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ.” ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 20:25 “ ‘ಆದ್ದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ, ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಇಲ್ಲವೆ ಪಕ್ಷಿಗಳಿಂದಲೂ ಇಲ್ಲವೆ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮ ಪ್ರಾಣಗಳನ್ನು ಅಶುದ್ಧಮಾಡಿಕೊಳ್ಳಬಾರದು.
LEV 20:26 ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ ಯೆಹೋವ ದೇವರಾದ ನಾನು ಪರಿಶುದ್ಧನಾಗಿರುವುದರಿಂದ, ನೀವು ನನಗೆ ಪರಿಶುದ್ಧರಾಗಿರಬೇಕು.
LEV 20:27 “ ‘ಪುರುಷನಾಗಲಿ, ಸ್ತ್ರೀಯಾಗಲಿ ಮಾಟಗಾರರಾಗಿದ್ದರೆ ಇಲ್ಲವೆ ಭೂತಪ್ರೇತಗಳನ್ನು ವಿಚಾರಿಸುವವರಾಗಿದ್ದರೆ, ಅವರನ್ನು ನಿಶ್ಚಯವಾಗಿ ಕೊಲ್ಲಬೇಕು. ಅವರ ಪಾಪವು ಅವರ ಮೇಲೆ ಇರುವುದು.’ ”
LEV 21:1 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ, ಅವರಿಗೆ ಹೀಗೆ ಹೇಳು: ಸತ್ತವರ ದೇಹವನ್ನು ಮುಟ್ಟುವುದರಿಂದ ಯಾವ ಯಾಜಕನೂ ಅಪವಿತ್ರನಾಗಬಾರದು.
LEV 21:2 ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿಯಾಗಿ, ತಂದೆಯಾಗಿ, ಅವನ ಮಗನಿಗಾಗಿ, ಅವನ ಮಗಳಿಗಾಗಿ, ಅವನ ಸಹೋದರನಿಗಾಗಿ,
LEV 21:3 ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಹೊರತು,
LEV 21:4 ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿರುವುದರಿಂದ ತನ್ನನ್ನು ತಾನು ಅಪವಿತ್ರವಾಗಬಾರದು.
LEV 21:5 “ ‘ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿಕೊಳ್ಳಬಾರದು. ದೇಹವನ್ನು ಗಾಯಮಾಡಿಕೊಳ್ಳಬಾರದು.
LEV 21:6 ಅವರು ತಮ್ಮ ಯೆಹೋವ ದೇವರಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವುದರಿಂದ, ಅವರು ತಮ್ಮ ದೇವರ ಹೆಸರನ್ನು ಅಗೌರವಪಡಿಸದೆ, ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು. ಆದಕಾರಣ ಅವರು ಪರಿಶುದ್ಧರಾಗಿರುವರು.
LEV 21:7 “ ‘ಯಾಜಕರು ತಮ್ಮ ದೇವರಿಗೆ ಪರಿಶುದ್ಧರಾಗಿರುವುದರಿಂದ ವೇಶ್ಯೆಯನ್ನಾಗಲಿ, ಶೀಲಭ್ರಷ್ಠ ಸ್ತ್ರೀಯನ್ನಾಗಲಿ, ಗಂಡನಿಂದ ವಿಚ್ಛೇದನ ಪಡೆದವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.
LEV 21:8 ಅವರನ್ನು ಪರಿಶುದ್ಧರೆಣಿಸಿ, ಏಕೆಂದರೆ ನಿಮ್ಮ ದೇವರಾದ ನನಗೆ ಆಹಾರವನ್ನು ಸಮರ್ಪಿಸುವವರಾದ ಕಾರಣ ನೀನು ಅವರನ್ನು ದೇವರ ದಾಸರೆಂದು ಭಾವಿಸಬೇಕು. ನಿಮ್ನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವ ದೇವರೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನೂ ಪರಿಶುದ್ಧರೆಂದು ನೀನು ಭಾವಿಸಬೇಕು.
LEV 21:9 “ ‘ಯಾವುದೇ ಯಾಜಕನ ಮಗಳು ವ್ಯಭಿಚಾರ ಕೃತ್ಯದಿಂದ ತನ್ನನ್ನು ಅಪವಿತ್ರ ಮಾಡಿಕೊಂಡರೆ, ಅವಳು ತನ್ನ ತಂದೆಯನ್ನು ಅಗೌರವಿಸಿದ್ದಾಳೆ. ಅವಳನ್ನು ಬೆಂಕಿಯಿಂದ ಸುಡಬೇಕು.
LEV 21:10 “ ‘ತನ್ನ ಸಹೋದರರೊಳಗೆ ಮಹಾಯಾಜಕನಾಗಿದ್ದು, ಯಾವನು ತೈಲಾಭಿಷೇಕ ಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ, ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು, ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು.
LEV 21:11 ಯಾವ ಮೃತ ಶರೀರದ ಬಳಿಗೂ ಹೋಗಬಾರದು, ಅವನು ತನ್ನ ತಂದೆತಾಯಿಗಳ ಮರಣದ ನಿಮಿತ್ತ, ತನ್ನನ್ನು ಅಶುದ್ಧಮಾಡಿಕೊಳ್ಳಬಾರದು.
LEV 21:12 ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ಮತ್ತು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನೇ ಯೆಹೋವ ದೇವರು.
LEV 21:13 “ ‘ಅವನು ಪುರುಷ ಸಂಪರ್ಕವೇ ಇಲ್ಲದ ಯುವತಿಯನ್ನು ಮದುವೆ ಮಾಡಿಕೊಳ್ಳಬೇಕೇ ಹೊರತು
LEV 21:14 ವಿಧವೆಯನ್ನಾಗಲಿ, ಗಂಡ ಬಿಟ್ಟ ಸ್ತ್ರೀಯನ್ನಾಗಲಿ, ಇಲ್ಲವೆ ಅಪವಿತ್ರಳನ್ನಾಗಲಿ, ವೇಶ್ಯೆಯನ್ನಾಗಲಿ, ಇಂಥವರನ್ನು ಅವನು ಮದುವೆಯಾಗಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು.
LEV 21:15 ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಏಕೆಂದರೆ ಯೆಹೋವ ದೇವರಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ.’ ”
LEV 21:16 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 21:17 “ಆರೋನನೊಂದಿಗೆ ಮಾತನಾಡಿ ಹೀಗೆ ಹೇಳು: ‘ನಿನ್ನ ಸಂತತಿಯ ವಂಶಾವಳಿಗಳಲ್ಲಿ ಯಾವನಿಗೆ ನ್ಯೂನತೆವಿರುತ್ತದೋ, ಅವನು ದೇವರ ರೊಟ್ಟಿಯನ್ನು ಸಮರ್ಪಿಸುವುದಕ್ಕಾಗಿ ಬರಬಾರದು.
LEV 21:18 ಊನಗೊಂಡ ಮನುಷ್ಯನು ಸಮೀಪಕ್ಕೆ ಬರಬಾರದು. ಎಂದರೆ, ಕಣ್ಣಿಲ್ಲದವನು, ಕುಂಟನು, ಕುರೂಪವುಳ್ಳವನು, ಅಂಗವಿಕಲನು,
LEV 21:19 ಮುರಿದ ಪಾದವುಳ್ಳವನು, ಮುರಿದ ಕೈಯುಳ್ಳವನು,
LEV 21:20 ಗೂನು ಬೆನ್ನುಳ್ಳವನು, ಗಿಡ್ಡನು, ಕಣ್ಣುಗಳಲ್ಲಿ ನ್ಯೂನತೆವುಳ್ಳವನು, ಕಜ್ಜಿತುರಿಗಳುಳ್ಳವನು, ತನ್ನನ್ನು ನಪುಂಸಕನನ್ನಾಗಿ ಮಾಡಿಕೊಂಡವನು,
LEV 21:21 ಯಾಜಕನಾದ ಆರೋನನ ಸಂತತಿಯಲ್ಲಿ ನ್ಯೂನತೆವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಬರಬಾರದು. ನ್ಯೂನತೆವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವುದಕ್ಕಾಗಿ ಸಮೀಪ ಬರಬಾರದು.
LEV 21:22 ಅವನು ದೇವರ ರೊಟ್ಟಿಯಲ್ಲಿ ಪರಿಶುದ್ಧವಾದದ್ದನ್ನೂ, ಮಹಾಪರಿಶುದ್ಧವಾದದ್ದನ್ನೂ ತಿನ್ನಬಹುದು.
LEV 21:23 ಆದರೆ ಅವನು ನ್ಯೂನತೆವುಳ್ಳವನಾದ್ದರಿಂದ ತೆರೆಯ ಒಳಗೆ ಹೋಗಬಾರದು ಹಾಗು ಯಜ್ಞವೇದಿಯ ಬಳಿಗೆ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ”
LEV 21:24 ಮೋಶೆಯು ಅದನ್ನು ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರಿಗೂ ಹೇಳಿದನು.
LEV 22:1 ತರುವಾಯ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 22:2 “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡು, ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡದಂತೆ ಇಸ್ರಾಯೇಲರು ನನಗೆ ಸಲ್ಲಿಸುವ ಪರಿಶುದ್ಧವಾದವುಗಳನ್ನು ಗೌರವದಿಂದ ಅವರು ಪ್ರತ್ಯೇಕವಾಗಿರಿಸಬೇಕು. ನಾನೇ ಯೆಹೋವ ದೇವರು.
LEV 22:3 “ಅವರಿಗೆ ನೀನು ಹೀಗೆ ಹೇಳು: ‘ನಿಮ್ಮ ಎಲ್ಲಾ ಸಂತತಿಯ ವಂಶಾವಳಿಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲರು ಯೆಹೋವ ದೇವರಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ, ಅವನನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು. ನಾನೇ ಯೆಹೋವ ದೇವರು.
LEV 22:4 “ ‘ಆರೋನನ ಸಂತತಿಯವರಲ್ಲಿ ಯಾವನಾದರೂ ಚರ್ಮರೋಗ ಇಲ್ಲವೆ ಸ್ರಾವವುಳ್ಳವನಿದ್ದರೆ, ಅವನು ಶುದ್ಧನಾಗುವವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
LEV 22:5 ಇಲ್ಲವೆ ತನ್ನನ್ನು ಅಶುದ್ಧನಾಗುವಂತೆ ಹರಿದಾಡುವ ಯಾವುದನ್ನಾಗಲಿ ಇಲ್ಲವೆ ಅಶುದ್ಧ ಮನುಷ್ಯನನ್ನಾಗಲಿ ಮುಟ್ಟಿದವನು,
LEV 22:6 ಸಂಜೆಯವರೆಗೆ ಅಶುದ್ಧನಾಗಿರಬೇಕು. ಅವನು ನೀರಿನಲ್ಲಿ ಸ್ನಾನಮಾಡಿದ ಮೇಲೆ ಪರಿಶುದ್ಧವಾದವುಗಳನ್ನು ತಿನ್ನಬಹುದು.
LEV 22:7 ಸೂರ್ಯನು ಮುಳುಗಿದಾಗ ಅವನು ಶುದ್ಧನಾಗಿರುವನು. ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ. ಏಕೆಂದರೆ ಅದು ಅವನಿಗೆ ಆಹಾರ.
LEV 22:8 ತನ್ನನ್ನು ಅಶುದ್ಧಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವುದನ್ನಾಗಲಿ ಇಲ್ಲವೆ ಕಾಡುಮೃಗಗಳಿಂದ ಕೊಂದದ್ದನ್ನಾಗಲಿ ತಿನ್ನಬಾರದು. ನಾನೇ ಯೆಹೋವ ದೇವರು.
LEV 22:9 “ ‘ಯಾಜಕರು ಅದನ್ನು ಅಪವಿತ್ರ ಪಡಿಸಿದರೆ, ಅದರ ನಿಮಿತ್ತ ಅಪರಾಧಿಯಾಗಿ ಸಾಯದಂತೆ ನನ್ನ ವಿಧಿಗಳನ್ನು ಕೈಗೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.
LEV 22:10 “ ‘ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಅತಿಥಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
LEV 22:11 ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ, ಅವನು ಅದರಲ್ಲಿ ತಿನ್ನಬಹುದು. ಅವನ ಮನೆಯಲ್ಲಿ ಹುಟ್ಟಿದವನು ಅದನ್ನು ತಿನ್ನಬಹುದು.
LEV 22:12 ಯಾಜಕನ ಮಗಳು ಒಬ್ಬ ಯಾಜಕನಲ್ಲದವನನ್ನು ಮದುವೆಯಾದರೆ, ಅವಳು ಸಮರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
LEV 22:13 ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಗಂಡಬಿಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ, ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ. ಆದರೆ ಯಾಜಕರಲ್ಲದ ಕುಟುಂಬದವರು ಅದರಲ್ಲಿ ತಿನ್ನಬಾರದು.
LEV 22:14 “ ‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.
LEV 22:15 ಇಸ್ರಾಯೇಲರು ಯೆಹೋವ ದೇವರಿಗೆ ಅರ್ಪಿಸುವ ಪರಿಶುದ್ಧವಾದವುಗಳನ್ನು ಅವರು ಅಪವಿತ್ರ ಮಾಡಬಾರದು.
LEV 22:16 ಇಲ್ಲವೆ ಅವರು ಪರಿಶುದ್ಧವಾದವುಗಳನ್ನು ತಿನ್ನುವುದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ”
LEV 22:17 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 22:18 “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದದ್ದು ಇದೇ, ‘ಇಸ್ರಾಯೇಲ್ ಮನೆತನದವರಲ್ಲಿಯಾಗಲಿ, ಇಸ್ರಾಯೇಲರಾದ ಪರಕೀಯರಲ್ಲಿಯಾಗಲಿ ಯಾರಾದರೂ ತಮ್ಮ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಯೆಹೋವ ದೇವರಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ
LEV 22:19 ನೀವು ನಿಮ್ಮ ಸ್ವಯಿಚ್ಛೆಯಿಂದ ಕಳಂಕರಹಿತವಾದ ಗಂಡು ಪಶು, ಕುರಿ ಅಥವಾ ಮೇಕೆಯನ್ನೇ ಅರ್ಪಿಸಬೇಕು.
LEV 22:20 ಆದರೆ ದೋಷವಿರುವ ಯಾವುದನ್ನೂ ಸಮರ್ಪಿಸಬಾರದು. ಏಕೆಂದರೆ ಅದು ನಿಮಗೋಸ್ಕರ ಅಂಗೀಕಾರವಾಗುವುದಿಲ್ಲ.
LEV 22:21 ತಮ್ಮ ಪ್ರಮಾಣವನ್ನು ಪೂರೈಸುವ ಹಾಗೆ ಯಾರಾದರೂ ಸಮಾಧಾನದ ಬಲಿಯನ್ನಾಗಲಿ, ಪಶುಗಳನ್ನಾಗಲಿ, ಕುರಿಗಳನ್ನಾಗಲಿ ಉಚಿತವಾದ ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಾದರೆ, ಅದು ಅಂಗೀಕಾರಕ್ಕೆ ಪರಿಪೂರ್ಣವುಳ್ಳದ್ದಾಗಿರಬೇಕು. ಅದರೊಳಗೆ ಯಾವ ದೋಷವೂ ಕಳಂಕವೂ ಇರಬಾರದು.
LEV 22:22 ಕುರುಡಾದದ್ದು, ಮುರಿದದ್ದು, ಅಂಗಹೀನವಾದದ್ದು, ಬೊಕ್ಕೆಯುಳ್ಳದ್ದು, ಕಜ್ಜಿ ತುರಿಯುಳ್ಳದ್ದು, ಇವುಗಳನ್ನು ನೀವು ಯೆಹೋವ ದೇವರಿಗೆ ಸಮರ್ಪಿಸಲೂಬಾರದು ಮತ್ತು ಅವುಗಳನ್ನು ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಲೂಬಾರದು.
LEV 22:23 ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆಯಿರುವುದಾದರೆ, ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು. ಆದರೆ ಹರಕೆಯಾಗಿ ಅದು ಅಂಗೀಕಾರವಾಗುವುದಿಲ್ಲ.
LEV 22:24 ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವುದನ್ನೂ ಯೆಹೋವ ದೇವರಿಗೆ ಸಮರ್ಪಿಸಬಾರದು. ನಿಮ್ಮ ದೇಶದೊಳಗಿರುವ ಅಂಥ ಯಾವ ಬಲಿಯನ್ನಾದರೂ ನೀವು ಸಮರ್ಪಿಸಬಾರದು.
LEV 22:25 ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’ ”
LEV 22:26 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 22:27 “ಹೋರಿಯನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ, ಏಳು ದಿವಸಗಳವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸಿದರೆ ಅಂಗೀಕಾರವಾಗುವುದು.
LEV 22:28 ಹಸುವನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು.
LEV 22:29 “ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು, ಯೆಹೋವ ದೇವರಿಗೆ ಮಾಡುವ ಬಲಿದಾನವನ್ನು ಮೆಚ್ಚಿಗೆಯಾದ ರೀತಿಯಲ್ಲಿ ಸಮರ್ಪಿಸಬೇಕು.
LEV 22:30 ಅದೇ ದಿನದಲ್ಲಿ ಅದನ್ನು ತಿಂದುಬಿಡಬೇಕು. ಅದರಲ್ಲಿ ಯಾವುದನ್ನೂ ಮಾರನೆಯ ದಿನದವರೆಗೆ ಉಳಿಸಬಾರದು. ನಾನೇ ಯೆಹೋವ ದೇವರು.
LEV 22:31 “ಆದ್ದರಿಂದ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಮಾಡಬೇಕು. ನಾನೇ ಯೆಹೋವ ದೇವರು.
LEV 22:32 ನನ್ನ ಪರಿಶುದ್ಧವಾದ ಹೆಸರನ್ನು ಅಪರಿಶುದ್ಧಗೊಳಿಸಬಾರದು, ಏಕೆಂದರೆ ಇಸ್ರಾಯೇಲರ ಮಧ್ಯದಲ್ಲಿ ನಾನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವ ದೇವರು ನಾನೇ.
LEV 22:33 ನಿಮಗೆ ದೇವರಾಗಿರಲು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದೆನು. ನಾನೇ ಯೆಹೋವ ದೇವರು.”
LEV 23:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 23:2 “ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನೀವು ಪರಿಶುದ್ಧ ಸಭೆಗಳಾಗಿ ಸೇರಿ ಯೆಹೋವ ದೇವರಾಗಿರುವ ನನಗೋಸ್ಕರ ನೇಮಕವಾದ ಈ ಹಬ್ಬಗಳನ್ನು ಪ್ರಕಟಿಸಬೇಕು.
LEV 23:3 “ ‘ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಸಬ್ಬತ್ ದಿನ. ಆ ದಿನವು ಪರಿಶುದ್ಧ ದಿನವಾಗಿರುವುದು. ನೀವು ಆ ದಿನದಲ್ಲಿ ಕೆಲಸಮಾಡಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿಯೂ ಅದು ಯೆಹೋವ ದೇವರ ಸಬ್ಬತ್ ದಿನವಾಗಿರುವುದು.
LEV 23:4 “ ‘ಇವು ಯೆಹೋವ ದೇವರ ಹಬ್ಬಗಳು: ನೀವು ನೇಮಕವಾದ ಕಾಲಗಳಲ್ಲಿ ನಿಮ್ಮ ಪವಿತ್ರ ಸಭಾ ಕೂಟಗಳಲ್ಲಿ ಈ ಹಬ್ಬಗಳನ್ನು ಪ್ರಕಟಿಸಬೇಕು.
LEV 23:5 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಲ್ಲಿ ಯೆಹೋವ ದೇವರ ಪಸ್ಕಹಬ್ಬವಾಗಬೇಕು.
LEV 23:6 ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಯೆಹೋವ ದೇವರಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.
LEV 23:7 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
LEV 23:8 ಆದರೆ ಏಳು ದಿವಸ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ಪರಿಶುದ್ಧ ಸಭಾಕೂಟವಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.’ ”
LEV 23:9 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 23:10 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿಯನ್ನು ಕೊಯ್ದರೆ, ನಿಮ್ಮ ಸುಗ್ಗಿಯ ಪ್ರಥಮ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.
LEV 23:11 ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಅರ್ಪಿಸಬೇಕು. ಸಬ್ಬತ್ ದಿನವಾದ ಮಾರನೆಯ ದಿನ ಯಾಜಕನು ಅದನ್ನು ಅರ್ಪಿಸಬೇಕು.
LEV 23:12 ನೀವು ಸಿವುಡನ್ನು ಅರ್ಪಿಸುವ ದಿನದಲ್ಲಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂತೆ ಒಂದು ವರ್ಷದ ಮತ್ತು ಕಳಂಕರಹಿತವಾದ ಕುರಿಮರಿಯನ್ನು ಅರ್ಪಿಸಬೇಕು.
LEV 23:13 ಇದರೊಂದಿಗೆ, ಧಾನ್ಯ ಸಮರ್ಪಣೆಯಲ್ಲಿ ಬೆರೆಸಿದ ಎಣ್ಣೆ ಮತ್ತು ಮೂರು ಕಿಲೋಗ್ರಾಂ ನಯವಾದ ಹಿಟ್ಟನ್ನು ಆಹ್ಲಾದಕರವಾದ ಪರಿಮಳದ ರೂಪದಲ್ಲಿ ಯೆಹೋವ ದೇವರಿಗೆ ಅರ್ಪಿಸಬೇಕು. ಇದಲ್ಲದೆ ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಸುಮಾರು ಒಂದು ಲೀಟರ್ ದ್ರಾಕ್ಷಾರಸ ಆಗಿರಬೇಕು.
LEV 23:14 ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಬಲಿಯನ್ನು ತರುವವರೆಗೆ ರೊಟ್ಟಿಯನ್ನಾಗಲಿ, ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿಯೂ ಶಾಶ್ವತವಾದ ನಿಯಮವಾಗಿರಬೇಕು.
LEV 23:15 “ ‘ಸಬ್ಬತ್ ದಿನದ ಮಾರನೆಯ ದಿನ ನೀವು ನೈವೇದ್ಯವಾಗಿ ನಿವಾಳಿಸಿದ ಸಿವುಡನ್ನು ತಂದ ದಿನದಿಂದ ಏಳು ವಾರಗಳು ಪೂರ್ಣವಾಗುವವರೆಗೆ ಲೆಕ್ಕಿಸಬೇಕು.
LEV 23:16 ಏಳನೆಯ ಸಬ್ಬತ್ ದಿನದ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಯೆಹೋವ ದೇವರಿಗೆ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸಬೇಕು.
LEV 23:17 ಇದಲ್ಲದೆ ನೀವು ನಿಮ್ಮ ಮನೆಗಳಿಂದ ತಂದ ಹಿಟ್ಟಿನಲ್ಲಿ ಎರಡೆರಡು ಓಮರ್ ಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋಧಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವ ದೇವರಿಗೆ ನೈವೇದ್ಯವಾಗಿ ನಿವಾಳಿಸಬೇಕು.
LEV 23:18 ಇದಲ್ಲದೆ ನೀವು ರೊಟ್ಟಿಯೊಂದಿಗೆ ಕಳಂಕರಹಿತವಾದ ಒಂದು ವರ್ಷದ ಏಳು ಕುರಿಮರಿಗಳನ್ನೂ ಒಂದು ಎಳೆಯ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಅವು ಯೆಹೋವ ದೇವರಿಗೆ ದಹನಬಲಿಗಳಾಗುವುವು. ಅವುಗಳೊಂದಿಗೆ ಆಹಾರ ಬಲಿಯು ಮತ್ತು ಪಾನಾರ್ಪಣೆಗಳು, ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು.
LEV 23:19 ತರುವಾಯ ಹೋತವನ್ನು ಪಾಪ ಪರಿಹಾರದ ಬಲಿಯಾಗಿಯೂ ಮತ್ತು ಸಮಾಧಾನ ಬಲಿಯಾಗಿ ಒಂದು ವರ್ಷದ ಎರಡು ಕುರಿಮರಿಗಳನ್ನು ಬಲಿಯಾಗಿ ಅರ್ಪಿಸಬೇಕು.
LEV 23:20 ಯಾಜಕನು ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಥಮ ಫಲದ ರೊಟ್ಟಿಯೊಂದಿಗೂ, ಎರಡು ಕುರಿಮರಿಗಳೊಂದಿಗೂ ಅವುಗಳನ್ನು ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವ ದೇವರಿಗೆ ಪರಿಶುದ್ಧವಾಗಿದ್ದು ಯಾಜಕನಿಗೋಸ್ಕರ ಇರಬೇಕು.
LEV 23:21 ಅದೇ ದಿನದಲ್ಲಿ ಪವಿತ್ರ ಸಭೆ ಕೂಡುವುದೆಂದು ಪ್ರಕಟಿಸಬೇಕು ಮತ್ತು ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ, ನೀವು ಎಲ್ಲೇ ಇದ್ದರೂ ಪಾಲಿಸಬೇಕಾದ ಶಾಶ್ವತ ನಿಯಮ.
LEV 23:22 “ ‘ನಿಮ್ಮ ಭೂಮಿಯ ಸುಗ್ಗಿಯನ್ನು ನೀವು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಯನ್ನು ಸಂಪೂರ್ಣವಾಗಿ ಕೊಯ್ಯಬಾರದು, ಇಲ್ಲವೆ ನಿಮ್ಮ ಸುಗ್ಗಿಯಲ್ಲಿ ಯಾವ ಹಕ್ಕಲನ್ನೂ ಕೂಡಿಸಿಕೊಳ್ಳಬಾರದು. ನೀವು ಅವುಗಳನ್ನು ಬಡವರಿಗಾಗಿ ಮತ್ತು ಪರಕೀಯರಿಗಾಗಿ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
LEV 23:23 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 23:24 “ಇಸ್ರಾಯೇಲರೊಂದಿಗೆ ಮಾತನಾಡಿ: ‘ಏಳನೆಯ ತಿಂಗಳಿನಲ್ಲಿ ಮೊದಲನೆಯ ದಿನದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥವಾದ ಸಬ್ಬತ್ ದಿನವಾಗಿರಬೇಕು. ಆ ದಿನ ಪರಿಶುದ್ಧ ಸಭೆಯ ಕೂಟವೂ ಇರಬೇಕು.
LEV 23:25 ನೀವು ಅದರಲ್ಲಿ ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ದಹನಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು,’ ” ಎಂದು ಹೇಳಿದರು.
LEV 23:26 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 23:27 “ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿರುವುದು. ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವುದು. ನೀವು ಉಪವಾಸ ಮಾಡಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು.
LEV 23:28 ಆ ದಿವಸದಲ್ಲಿ ನೀವು ಕೆಲಸವನ್ನು ಮಾಡಬಾರದು. ಏಕೆಂದರೆ ಅದು ನಿಮಗೋಸ್ಕರ ನಿಮ್ಮ ದೇವರಾಗಿರುವ ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಪ್ರಾಯಶ್ಚಿತ್ತದ ದಿವಸವಾಗಿರುವುದು.
LEV 23:29 ಅದೇ ದಿವಸದಲ್ಲಿ ಯಾರಾದರೂ ಉಪವಾಸ ಮಾಡದೆ ಇದ್ದಲ್ಲಿ, ಅವರು ತಮ್ಮ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.
LEV 23:30 ಅದೇ ದಿವಸದಲ್ಲಿ ಯಾರಾದರೂ ಕೆಲಸವನ್ನು ಮಾಡಿದರೆ, ಅವರನ್ನು ನಾನು ಅವರ ಜನರ ಮಧ್ಯದಿಂದ ನಾಶಮಾಡುವೆನು.
LEV 23:31 ನೀವು ಯಾವ ತರಹದ ಕೆಲಸವನ್ನೂ ಮಾಡಬಾರದು. ಇದು ನಿಮ್ಮ ಸಂತತಿಗೆ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು.
LEV 23:32 ಇದು ನಿಮಗೆ ಸಬ್ಬತ್ ದಿನವಾಗಿರುವುದು. ನೀವು ನಿಮ್ಮನ್ನು ಉಪವಾಸ ಇಡಬೇಕು. ಆ ತಿಂಗಳಿನ ಒಂಬತ್ತನೆಯ ದಿವಸದ ಸಾಯಂಕಾಲದಿಂದ ಹಿಡಿದು ಮರುದಿನದ ಸಂಜೆಯವರೆಗೆ ಸಬ್ಬತ್ ದಿನವನ್ನು ಆಚರಿಸಬೇಕು,” ಎಂಬದೇ.
LEV 23:33 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 23:34 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳವರೆಗೆ ಯೆಹೋವ ದೇವರಿಗೆ ಗುಡಾರಗಳ ಹಬ್ಬವಾಗಿರುವುದು.
LEV 23:35 ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವುದು. ನೀವು ಅದರಲ್ಲಿ ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.
LEV 23:36 ಏಳು ದಿವಸ ನೀವು ಬೆಂಕಿಯ ಮೂಲಕ ಬಲಿಗಳನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿಶುದ್ಧ ಕೂಟವಾಗಿರುವುದು. ನೀವು ಬೆಂಕಿಯ ಮೂಲಕ ಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಅದೊಂದು ಗಂಭೀರ ಸಭೆಯಾಗಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.
LEV 23:37 “ ‘ನೀವು ಪರಿಶುದ್ಧ ಸಭೆಯಾಗಿ ಯೆಹೋವ ದೇವರ ನೇಮಕವಾದ ಹಬ್ಬಗಳು ಇವೇ. ಇವುಗಳ ಒಂದೊಂದು ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ, ಯಜ್ಞವನ್ನೂ, ಪಾನದ್ರವ್ಯ ಬಲಿಗಳನ್ನೂ ಅರ್ಪಿಸಬೇಕು.
LEV 23:38 ಯೆಹೋವ ದೇವರ ವಿಶ್ರಾಂತಿಯ ದಿನಗಳ ಹೊರತಾಗಿಯೂ, ನೀವು ಯೆಹೋವ ದೇವರಿಗೆ ಸಮರ್ಪಿಸುವ ನಿಮ್ಮ ದಾನಗಳ ಹೊರತಾಗಿಯೂ, ನಿಮ್ಮ ಎಲ್ಲಾ ಹರಕೆಗಳ ಹೊರತಾಗಿಯೂ, ನಿಮ್ಮ ಎಲ್ಲಾ ಸ್ವಯಿಚ್ಛೆಯ ಕಾಣಿಕೆಗಳ ಹೊರತಾಗಿಯೂ ಸಲ್ಲಿಸಬೇಕಾದ ಅರ್ಪಣೆಗಳಿರುತ್ತವೆ.
LEV 23:39 “ ‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಭೂಮಿಯ ಫಲವನ್ನು ಕೂಡಿಸಿದಾಗ, ಯೆಹೋವ ದೇವರಿಗೆ ಏಳು ದಿವಸಗಳ ಹಬ್ಬವನ್ನು ಕೈಗೊಳ್ಳಬೇಕು. ಮೊದಲನೆಯ ದಿನವು ಸಬ್ಬತ್ ದಿನವಾಗಿರಬೇಕು ಮತ್ತು ಎಂಟನೆಯ ದಿನವು ಸಬ್ಬತ್ ದಿನವಾಗಿರಬೇಕು.
LEV 23:40 ಮೊದಲನೆಯ ದಿವಸದಲ್ಲಿ ನೀವು ಸುಂದರವಾದ ಮರಗಳ ರೆಂಬೆಗಳನ್ನೂ, ಖರ್ಜೂರ ಮರಗಳ ರೆಂಬೆಗಳನ್ನೂ, ದಟ್ಟವಾದ ಮರಗಳ ರೆಂಬೆಗಳನ್ನೂ, ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳವರೆಗೆ ನಿಮ್ಮ ದೇವರಾಗಿರುವ ಯೆಹೋವ ದೇವರ ಎದುರಿನಲ್ಲಿ ಸಂತೋಷ ಪಡಬೇಕು.
LEV 23:41 ವರ್ಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಯೆಹೋವ ದೇವರಿಗಾಗಿ ಕೈಗೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು.
LEV 23:42 ಏಳು ದಿವಸಗಳವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು. ಸ್ವದೇಶೀಯರಾದ ಇಸ್ರಾಯೇಲರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸಬೇಕು.
LEV 23:43 ಏಕೆಂದರೆ ನಾನು ಇಸ್ರಾಯೇಲರನ್ನು ಈಜಿಪ್ಟ್ ದೇಶದೊಳಗಿನಿಂದ ಹೊರಗೆ ಬರಮಾಡಿದಾಗ, ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
LEV 23:44 ಹೀಗೆ ಮೋಶೆಯು ಇಸ್ರಾಯೇಲರಿಗೆ ಯೆಹೋವ ದೇವರ ಹಬ್ಬಗಳನ್ನು ನೇಮಕಮಾಡಿದನು.
LEV 24:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 24:2 “ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.
LEV 24:3 ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ನಿಮಗೆ ಮತ್ತು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರುವುದು.
LEV 24:4 ದೀಪಗಳು ಚೊಕ್ಕ ಬಂಗಾರದ ದೀಪಸ್ತಂಭದ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.
LEV 24:5 “ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಓಮರನಷ್ಟು ಇರಬೇಕು.
LEV 24:6 ಅವುಗಳನ್ನು ಚೊಕ್ಕ ಬಂಗಾರದ ಮೇಜಿನ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ, ಎರಡು ಸಾಲುಗಳನ್ನಾಗಿ ಇಡಬೇಕು.
LEV 24:7 ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾಗಿ ಇರುವಂತೆಯೂ, ಬೆಂಕಿಯ ಮೂಲಕ ಯೆಹೋವ ದೇವರಿಗೆ ಸಮರ್ಪಣೆಯಾಗುವಂತೆಯೂ, ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.
LEV 24:8 ಪ್ರತಿಯೊಂದು ಸಬ್ಬತ್ ದಿನದಲ್ಲಿಯೂ ಯೆಹೋವ ದೇವರ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮಪಡಿಸಬೇಕು. ಇದು ಇಸ್ರಾಯೇಲರ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.
LEV 24:9 ಅದು ಆರೋನನ ಮತ್ತು ಅವನ ಪುತ್ರರದಾಗಿರಬೇಕು. ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ನಿತ್ಯವಾದ ನಿಯಮವಾಗಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವವುಗಳಲ್ಲಿ ಅವನಿಗೆ ಮಹಾಪರಿಶುದ್ಧವಾಗಿರುವುದು.”
LEV 24:10 ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ, ಈಜಿಪ್ಟಿನವನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲರ ಪಾಳ್ಯಕ್ಕೆ ಬಂದನು. ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಜಗಳವಾಡಿದರು.
LEV 24:11 ಇಸ್ರಾಯೇಲ್ ಸ್ತ್ರೀಯ ಮಗನು ಯೆಹೋವ ದೇವರ ನಾಮವನ್ನು ದೂಷಿಸಿ, ಶಪಿಸಿದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು. ಅವನ ತಾಯಿಯ ಹೆಸರು ಶೆಲೋಮಿತ್. ಇವಳು ದಾನ್ ಕುಲದ ದಿಬ್ರೀಯನ ಮಗಳು.
LEV 24:12 ಯೆಹೋವ ದೇವರ ಮನಸ್ಸನ್ನು ತಿಳಿಯುವಂತೆ ಅವನನ್ನು ಕಾವಲಲ್ಲಿ ಬಿಟ್ಟರು.
LEV 24:13 ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 24:14 “ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ, ಅವನಿಂದ ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.
LEV 24:15 ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ಶಪಿಸುವವನು, ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
LEV 24:16 ಯೆಹೋವ ದೇವರ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು. ಸಭೆಯವರೆಲ್ಲರೂ ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ಸ್ವದೇಶೀಯನಾಗಿರಲಿ, ಪರಕೀಯನಾಗಿರಲಿ ಯೆಹೋವ ದೇವರ ಹೆಸರನ್ನು ದೂಷಣೆ ಮಾಡಿದಾಗ, ಅವನನ್ನು ಮರಣ ಶಿಕ್ಷೆಗೆ ಒಳಪಡಿಸಬೇಕು.
LEV 24:17 “ ‘ಯಾರಾದರೂ ಮನುಷ್ಯನನ್ನು ಕೊಂದರೆ, ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
LEV 24:18 ಪಶುವನ್ನು ಕೊಲ್ಲುವವರು, ಅದಕ್ಕೆ ಪ್ರತಿಯಾಗಿ ಒಂದು ಪಶುವನ್ನು ಕೊಡಬೇಕು.
LEV 24:19 ಯಾರಾದರೂ ತಮ್ಮ ನೆರೆಯವನಿಗೆ ಊನವಾಗುವಂತೆ ಮಾಡಿದರೆ, ಅವರು ಮಾಡಿದಂತೆಯೇ ಅವರಿಗೆ ಮಾಡಬೇಕು.
LEV 24:20 ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವರು ಒಬ್ಬರಿಗೆ ಊನ ಮಾಡಿದ ಹಾಗೆಯೇ ಅವರಿಗೂ ಮಾಡಬೇಕು.
LEV 24:21 ಪಶುವನ್ನು ಕೊಲ್ಲುವವರು ಅದಕ್ಕೆ ಬದಲುಕೊಡಬೇಕು. ಮನುಷ್ಯರನ್ನು ಕೊಲ್ಲುವವರನ್ನು ಮರಣಕ್ಕೆ ಒಳಪಡಿಸಬೇಕು.
LEV 24:22 ನಿಮಗೆ ಒಂದೇ ವಿಧವಾದ ನಿಯಮವಿರಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
LEV 24:23 ಶಪಿಸಿದವನನ್ನು ಪಾಳೆಯದ ಹೊರಗೆ ತಂದು, ಅವನನ್ನು ಕಲ್ಲುಗಳಿಂದ ಹೊಡೆಯುವಂತೆ ಮೋಶೆಯು ಇಸ್ರಾಯೇಲರೊಂದಿಗೆ ಮಾತನಾಡಿದನು. ಆಗ ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
LEV 25:1 ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
LEV 25:2 “ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ, ದೇಶವು ಯೆಹೋವ ದೇವರಿಗಾಗಿ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
LEV 25:3 ಆರು ವರ್ಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು. ಆರು ವರ್ಷ ನೀವು ನಿಮ್ಮ ದ್ರಾಕ್ಷಿತೋಟವನ್ನು ಕತ್ತರಿಸಬೇಕು, ಅವುಗಳಿಂದ ಫಲವನ್ನು ಕೂಡಿಸಬೇಕು.
LEV 25:4 ಆದರೆ ಏಳನೆಯ ವರ್ಷವು ನೆಲಕ್ಕೆ ವಿಶ್ರಾಂತಿಕಾಲವಾಗಿರುವುದು. ಅದು ಯೆಹೋವ ದೇವರಿಗೆ ಸಬ್ಬತ್ ಕಾಲವಾಗಿರುವುದು. ನೀವು ಆ ವರ್ಷದಲ್ಲಿ ನಿಮ್ಮ ಹೊಲವನ್ನು ಬಿತ್ತಬಾರದು. ಇಲ್ಲವೆ ದ್ರಾಕ್ಷಿತೋಟವನ್ನು ಕತ್ತರಿಸಬಾರದು.
LEV 25:5 ತನ್ನಷ್ಟಕ್ಕೆ ತಾನೇ ಬೆಳೆದಿರುವ ಪೈರನ್ನು ನೀವು ಕೊಯ್ಯಬಾರದು. ಇಲ್ಲವೆ ಕತ್ತರಿಸದಿರುವ ದ್ರಾಕ್ಷಿಯ ಬಳ್ಳಿಯ ದ್ರಾಕ್ಷಿಹಣ್ಣುಗಳನ್ನು ಕೂಡಿಸಬಾರದು. ಏಕೆಂದರೆ ಅದು ದೇಶಕ್ಕೆ ವಿಶ್ರಾಂತಿಯ ವರ್ಷವಾಗಿರುವುದು.
LEV 25:6 ದೇಶದ ಆ ಸಬ್ಬತ್ ವರ್ಷದಲ್ಲಿ ತಾನಾಗಿಯೇ ಬೆಳೆದದ್ದು ನಿಮ್ಮ ಆಹಾರಕ್ಕಾಗಿ ಇರುವುದು. ಅದು ನಿಮಗೂ, ನಿಮ್ಮ ದಾಸದಾಸಿಯರಿಗೂ, ನಿಮ್ಮ ಕೂಲಿಯವರಿಗೂ, ನಿಮ್ಮೊಂದಿಗೆ ಪ್ರವಾಸಿಯಾಗಿರುವ ಪರಕೀಯರಿಗೂ,
LEV 25:7 ನಿಮ್ಮ ದೇಶದಲ್ಲಿರುವ ಹುಟ್ಟುವಳಿಯೆಲ್ಲಾ ನಿಮ್ಮ ಪಶು ಮತ್ತು ಕಾಡುಮೃಗಗಳಿಗೆ ಆಹಾರವಾಗಬಹುದು.
LEV 25:8 “ ‘ಇದಲ್ಲದೆ ಏಳು ವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ವರ್ಷಗಳ ಕಾಲವು ಒಟ್ಟು ನಾಲ್ವತ್ತೊಂಬತ್ತು ವರ್ಷಗಳಾಗಿರುವುವು.
LEV 25:9 ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೆಯ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸಬೇಕು. ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.
LEV 25:10 ಐವತ್ತನೆಯ ವರ್ಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೆಯ ವರ್ಷದ ವಾರ್ಷಿಕೋತ್ಸವವಾಗಿರಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಆಸ್ತಿಗೂ, ಅವನವನ ಕುಟುಂಬಕ್ಕೂ, ಹಿಂದಿರುಗಿ ಹೋಗಬೇಕು.
LEV 25:11 ಐವತ್ತನೆಯ ಆ ವರುಷವು ನಿಮಗೆ ಜೂಬಿಲಿಯಾಗಿರುವುದು. ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವುದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳನ್ನು ಕೂಡಿಸಲೂಬಾರದು.
LEV 25:12 ಏಕೆಂದರೆ ಅದು ಜೂಬಿಲಿ. ಅದು ನಿಮಗೆ ಪರಿಶುದ್ಧವಾಗಿರುವುದು. ಹೊಲದೊಳಗಿಂದ ಬೆಳೆದ ಹುಟ್ಟುವಳಿಯನ್ನು ನೀವು ತಿನ್ನಬೇಕು.
LEV 25:13 “ ‘ಜೂಬಿಲಿಯ ಈ ವರ್ಷದಲ್ಲಿ ಪ್ರತಿಯೊಬ್ಬನು ತನ್ನ ಆಸ್ತಿಗೆ ಹಿಂದಿರುಗಬೇಕು.
LEV 25:14 “ ‘ನೆರೆಯವನಿಗೆ ಏನಾದರೂ ಮಾರಾಟ ಮಾಡಿದ್ದರೆ, ಇಲ್ಲವೆ ನೆರೆಯವನಿಂದ ಕೊಂಡುಕೊಂಡಿದ್ದರೆ, ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು.
LEV 25:15 ಜೂಬಿಲಿಯ ತರುವಾಯ ವರ್ಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರ್ಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.
LEV 25:16 ವರ್ಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನೂ ಹೆಚ್ಚಿಸಬೇಕು. ವರ್ಷಗಳು ಕಡಿಮೆಯಿರುವಂತೆಯೇ ಫಲದ ಬೆಲೆಯನ್ನು ಕಡಿಮೆ ಮಾಡಬೇಕು. ಫಲದ ವರ್ಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟಮಾಡಬೇಕು.
LEV 25:17 ಆದ್ದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು. ಆದರೆ ದೇವರಿಗೆ ನೀನು ಭಯಪಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 25:18 “ ‘ಹೀಗೆ ನೀವು ನನ್ನ ನಿಯಮಗಳನ್ನು ಪಾಲಿಸಬೇಕು, ನನ್ನ ನಿರ್ಣಯಗಳನ್ನು ಕೈಗೊಂಡು ನಡೆಯಬೇಕು. ಆಗ ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
LEV 25:19 ಭೂಮಿಯು ತನ್ನ ಫಲವನ್ನು ಕೊಡುವುದು. ನೀವು ತಿಂದು ತೃಪ್ತರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
LEV 25:20 ನೀವು, “ನಾವು ಬಿತ್ತುವುದಿಲ್ಲ, ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವುದಿಲ್ಲ. ಏಳನೆಯ ವರ್ಷದಲ್ಲಿ ನಾವು ಏನು ತಿನ್ನೋಣ,” ಎನ್ನುವಿರಿ.
LEV 25:21 ಆಗ ನಾನು, “ಆರನೆಯ ವರ್ಷದಲ್ಲಿ ಮೂರು ವರ್ಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಕೊಡುವೆನು.
LEV 25:22 ನೀವು ಎಂಟನೆಯ ವರ್ಷದಲ್ಲಿ ಬಿತ್ತಿ, ಅದರ ಫಲವನ್ನು ಒಂಬತ್ತನೆಯ ವರ್ಷದವರೆಗೆ ತಿನ್ನುವಿರಿ. ಅದರ ಫಲ ಬರುವವರೆಗೆ ತಿನ್ನುವಿರಿ, ಅದರ ಫಲ ಬರುವವರೆಗೆ ನೀವು ಸಂಗ್ರಹಿಸಿದ ಹಳೆಯದನ್ನೇ ತಿನ್ನುವಿರಿ,” ಎಂದು ಹೇಳುತ್ತೇನೆ.
LEV 25:23 “ ‘ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು. ಏಕೆಂದರೆ ಭೂಮಿಯು ನನ್ನದು. ನನ್ನೊಂದಿಗೆ ನೀವು ಪರಕೀಯರೂ, ಪ್ರವಾಸಿಗಳೂ ಆಗಿದ್ದೀರಿ.
LEV 25:24 ನಿಮ್ಮ ಸ್ವಾಧೀನದಲ್ಲಿರುವ ನಿಮ್ಮ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.
LEV 25:25 “ ‘ನಿಮ್ಮ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸೊತ್ತಿನಲ್ಲಿ ಸ್ವಲ್ಪವನ್ನು ಮಾರಿದರೆ, ಅವನ ಬಂಧುವು ಅದನ್ನು ಬಿಡಿಸಿಕೊಳ್ಳಬೇಕು.
LEV 25:26 ಬಿಡಿಸುವ ಬಂಧುವು ಇಲ್ಲದೆ ಹೋದರೆ, ಮಾರಿದವನೇ ಸ್ಥಿತಿವಂತನಾಗಿ ಅದನ್ನು ಬಿಡಿಸಿಕೊಳ್ಳುವಂತಾದರೆ,
LEV 25:27 ಅವನು ಅದನ್ನು ಮಾರಿದ ವರ್ಷಗಳನ್ನು ಲೆಕ್ಕಿಸಿ, ಅದನ್ನು ಮಾರಿದವನಿಗೆ ಮಿಕ್ಕ ಕ್ರಯವನ್ನು ಪೂರ್ತಿಮಾಡಿ, ತನ್ನ ಸ್ವಂತ ಹೊಲವನ್ನು ಸ್ವಾಧೀನಪಡಿಸಿಕೊಳ್ಳಬಹುದು.
LEV 25:28 ತಿರುಗಿ ಸಲ್ಲಿಸುವುದಕ್ಕೆ ಅವನಿಗೆ ಆಗದಿದ್ದರೆ, ಅವನು ಮಾರಿದ್ದು ಜೂಬಿಲಿಯ ವರ್ಷದವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು ಮತ್ತು ಸಂಭ್ರಮದ ವರ್ಷದಲ್ಲಿ ಅದು ಬಿಡುಗಡೆಯಾಗಬೇಕು, ಅವನು ತನ್ನ ಸೊತ್ತನ್ನು ಪಡೆಯಬೇಕು.
LEV 25:29 “ ‘ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದಲ್ಲಿರುವ ನಿವಾಸದ ಮನೆಯನ್ನು ಮಾರಿದರೆ, ಅದನ್ನು ಮಾರಿದ ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು. ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡಿಸಬಹುದು.
LEV 25:30 ಆದರೆ ವರ್ಷವು ಪೂರ್ಣವಾಗುವುದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ, ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು. ಜೂಬಿಲಿಯ ವರ್ಷದಲ್ಲಿ ಅದು ಬಿಡುಗಡೆಯಾಗಬಾರದು.
LEV 25:31 ಆದರೆ ಸುತ್ತಲೂ ಗೋಡೆಗಳಿಲ್ಲದೆ ಹಳ್ಳಿಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದು. ಜೂಬಿಲಿಯ ವರ್ಷದಲ್ಲಿ ಅವು ಬಿಡುಗಡೆ ಆಗಬೇಕು.
LEV 25:32 “ ‘ಲೇವಿಯರ ಪಟ್ಟಣಗಳ ವಿಷಯವಾಗಿಯೂ, ಅವರ ಸ್ವಾಧೀನವಾಗಿರುವ ಪಟ್ಟಣಗಳ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
LEV 25:33 ಲೇವಿಯರಿಂದ ಏನಾದರೂ ಕೊಂಡುಕೊಂಡರೆ, ಕೊಂಡುಕೊಂಡ ಮನೆಯೂ, ಅವನ ಸ್ವಾಸ್ತ್ಯದ ಪಟ್ಟಣವೂ ಜೂಬಿಲಿಯ ವರ್ಷದಲ್ಲಿ ಬಿಡುಗಡೆಯಾಗಬೇಕು. ಏಕೆಂದರೆ ಲೇವಿಯರ ಪಟ್ಟಣಗಳ ಮನೆಗಳು ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸ್ವಾಧೀನವಾಗಿವೆ.
LEV 25:34 ಆದರೆ ಅವರ ಪಟ್ಟಣಗಳ ಉಪನಗರಗಳ ಹೊಲವನ್ನು ಮಾರಬಾರದು. ಏಕೆಂದರೆ ಅದು ಅವರಿಗೆ ಶಾಶ್ವತವಾದ ಸೊತ್ತು.
LEV 25:35 “ ‘ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣವಾಗಿ ಬಿದ್ದುಕೊಂಡರೆ, ಅವನು ಪರಕೀಯನಾಗಿದ್ದರೂ, ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡಬೇಕು.
LEV 25:36 ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವರಿಗೆ ಭಯಪಡು.
LEV 25:37 ನೀನು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ನಿನ್ನ ಆಹಾರವನ್ನು ಲಾಭಕ್ಕಾಗಿ ಸಾಲವಾಗಿ ಕೊಡಬೇಡ.
LEV 25:38 ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ, ನಿನಗೆ ದೇವರಾಗಿರುವಂತೆಯೂ ನಿನ್ನನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ.
LEV 25:39 “ ‘ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ತನ್ನನ್ನೇ ಮಾರಿಕೊಂಡಿದ್ದರೆ, ದಾಸನ ಹಾಗೆ ಸೇವೆಯನ್ನು ಮಾಡುವಂತೆ ಅವನನ್ನು ನೀನು ಬಲಾತ್ಕರಿಸಬಾರದು.
LEV 25:40 ಆದರೆ ಕೂಲಿಯಾಳಂತೆಯೂ, ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದವರೆಗೆ ನಿನಗೆ ಸೇವೆಮಾಡಲಿ.
LEV 25:41 ತರುವಾಯ ಅವನು ನಿನ್ನ ಬಳಿಯಿಂದ ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೆ ಹಿಂದಿರುಗಬೇಕು. ತನ್ನ ಪಿತೃಗಳ ಸೊತ್ತಿಗೂ ಅವನು ಹಿಂದಿರುಗಬೇಕು.
LEV 25:42 ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಕರತಂದ ಇಸ್ರಾಯೇಲರು ನನ್ನ ಸೇವಕರಾಗಿದ್ದಾರೆ, ದಾಸರನ್ನು ಮಾರುವಂತೆ ಅವರನ್ನು ಮಾರಬಾರದು.
LEV 25:43 ನೀನು ಕಠಿಣವಾಗಿ ಅವನ ಮೇಲೆ ಅಧಿಕಾರ ಚಲಾಯಿಸಬಾರದು. ನಿನ್ನ ದೇವರಿಗೆ ಭಯಪಡಬೇಕು.
LEV 25:44 “ ‘ನಿನ್ನ ಸುತ್ತಲೂ ಇರುವ ಇತರ ಜನರು ನಿನಗೆ ದಾಸ ದಾಸಿಯರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.
LEV 25:45 ಇದಲ್ಲದೆ ನಿನ್ನ ಮಧ್ಯದೊಳಗಿರುವ ಪರಕೀಯ ಪ್ರವಾಸಿಗಳ ಮಕ್ಕಳಿಂದ ಮತ್ತು ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ದೇಶದೊಳಗೆ ಅವರು ಪಡೆದವರಿಂದ ನೀನು ಕೊಂಡುಕೊಳ್ಳಬಹುದು ಮತ್ತು ಅವರು ನಿನ್ನ ಸ್ವತ್ತಾಗಿರುವರು.
LEV 25:46 ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವತ್ತಾಗುವ ಬಾಧ್ಯತೆಯಾಗಿ ತೆಗೆದುಕೊಳ್ಳಬೇಕು. ಅವರು ಶಾಶ್ವತವಾಗಿ ನಿಮ್ಮ ದಾಸರಾಗಿರುವರು. ಆದರೆ ಇಸ್ರಾಯೇಲರಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದಬ್ಬಾಳಿಕೆಯನ್ನು ನಡೆಸಬೇಡಿರಿ.
LEV 25:47 “ ‘ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿ ಇಲ್ಲವೆ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
LEV 25:48 ಅವನ ಸಹೋದರರಲ್ಲಿ ಒಬ್ಬನು ಈಡುಕೊಟ್ಟು ಅವನನ್ನು ವಿಮೋಚಿಸಬಹುದು.
LEV 25:49 ಅವನ ಚಿಕ್ಕಪ್ಪನಾಗಲಿ ಇಲ್ಲವೆ ಅವನ ಚಿಕ್ಕಪ್ಪನ ಮಗನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸಮೀಪವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.
LEV 25:50 ಅವನು ತನ್ನನ್ನು ಮಾರಿಕೊಂಡ ವರುಷ ಮೊದಲುಗೊಂಡು ಮುಂದಿನ ಜೂಬಿಲಿ ಸಂವತ್ಸರದವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವುದು.
LEV 25:51 ಜೂಬಿಲಿ ಸಂವತ್ಸರದವರೆಗೆ ಇನ್ನು ಬಹಳ ವರುಷಗಳಿದ್ದರೆ ಅವುಗಳ ಪ್ರಕಾರ ತನ್ನ ವಿಮೋಚನೆಯ ಕ್ರಯವನ್ನು ಕೊಡಬೇಕು.
LEV 25:52 ಜೂಬಿಲಿ ಸಂವತ್ಸರದವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರ್ಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನಿಗೆ ಸಲ್ಲಿಸಬೇಕು.
LEV 25:53 ವರ್ಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಯಜಮಾನನು ಅವನನ್ನು ಕಠಿಣವಾಗಿ ನಡೆಸಿಕೊಳ್ಳುತ್ತಿರುವುದನ್ನು ನೀವು ನೋಡುತ್ತಾ ಸುಮ್ಮನಿರಬಾರದು.
LEV 25:54 “ ‘ಈ ವರುಷಗಳಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ, ಜೂಬಿಲಿ ಸಂವತ್ಸರದಲ್ಲಿ ಅವನು ಮಕ್ಕಳೊಂದಿಗೆ ಬಿಡುಗಡೆಯಾಗಬೇಕು.
LEV 25:55 ಏಕೆಂದರೆ ಇಸ್ರಾಯೇಲರು ನನ್ನ ದಾಸರು ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿನ್ನ ದೇವರಾದ ಯೆಹೋವ ದೇವರು ನಾನೇ.
LEV 26:1 “ ‘ನೀವು ನಿಮಗಾಗಿ ವಿಗ್ರಹಗಳನ್ನಾಗಲಿ, ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ, ಇಲ್ಲವೆ ನಿಲ್ಲಿಸುವ ಪ್ರತಿಮೆಯನ್ನು ಮಾಡಿಕೊಳ್ಳಬೇಡಿರಿ, ಕಲ್ಲಿನ ವಿಗ್ರಹಗಳನ್ನು ನಿಮ್ಮ ದೇಶದಲ್ಲಿಟ್ಟುಕೊಂಡು ಅದಕ್ಕೆ ಅಡ್ಡಬೀಳಬೇಡಿರಿ. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
LEV 26:2 “ ‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು.
LEV 26:3 “ ‘ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು, ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳಂತೆ ನಡೆದರೆ,
LEV 26:4 ನಿಮಗೆ ಮಳೆಯನ್ನು ತಕ್ಕ ಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವುದು. ಭೂಮಿಯ ಮರಗಳು ಅವುಗಳ ಫಲವನ್ನು ಕೊಡುವವು.
LEV 26:5 ಕಣ ತುಳಿಸುವ ಕೆಲಸವು ದ್ರಾಕ್ಷಿ ಬೆಳೆಯುವವರೆಗೂ ದ್ರಾಕ್ಷಿ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿಯನ್ನು ತಿಂದು, ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.
LEV 26:6 “ ‘ನಾನು ದೇಶದಲ್ಲಿ ಶಾಂತಿಯನ್ನು ಕೊಡುವೆನು, ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ. ದೇಶದಲ್ಲಿ ದುಷ್ಟಮೃಗಗಳು ಇಲ್ಲದ ಹಾಗೆ ನಾನು ಮಾಡುವೆನು. ಖಡ್ಗ ನಿಮ್ಮ ದೇಶದಲ್ಲಿ ಹಾದು ಹೋಗುವುದಿಲ್ಲ.
LEV 26:7 ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ, ಅವರು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.
LEV 26:8 ನಿಮ್ಮಲ್ಲಿಯ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿಯ ನೂರು ಮಂದಿ, ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.
LEV 26:9 “ ‘ನಾನು ನಿಮ್ಮನ್ನು ಲಕ್ಷಿಸಿ, ನಿಮ್ಮನ್ನು ಅಭಿವೃದ್ಧಿ ಮಾಡಿ, ನಿಮ್ಮನ್ನು ಹೆಚ್ಚಿಸಿ, ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು.
LEV 26:10 ನೀವು ಹಳೆಯ ಧಾನ್ಯವನ್ನು ತಿಂದು, ಹೊಸದು ಬಂದಾಗ ಹಳೆಯದನ್ನು ಹೊರಗೆ ತರುವಿರಿ.
LEV 26:11 ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳುವೆನು. ನನ್ನ ಪ್ರಾಣವು ನಿಮ್ಮನ್ನು ತಿರಸ್ಕರಿಸುವುದಿಲ್ಲ.
LEV 26:12 ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವರಾಗಿರುವೆನು. ನೀವು ನನ್ನ ಜನರಾಗಿರುವಿರಿ.
LEV 26:13 ಈಜಿಪ್ಟ್ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ನಿಮ್ಮ ನೊಗದ ಕಟ್ಟುಗಳನ್ನು ಮುರಿದು, ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಾನೇ.
LEV 26:14 “ ‘ನೀವು ನನ್ನ ಮಾತನ್ನು ಕೇಳದೆ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ,
LEV 26:15 ನನ್ನ ನಿಯಮಗಳನ್ನು ನೀವು ತಿರಸ್ಕರಿಸಿದರೆ, ನನ್ನ ನಿರ್ಣಯಗಳಿಗೆ ಅಸಹ್ಯಪಟ್ಟರೆ, ನೀವು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ,
LEV 26:16 ನಾನು ಸಹ ಇದನ್ನು ನಿಮಗೆ ಮಾಡುವೆನು: ನಿಮ್ಮ ಮೇಲೆ ಭೀತಿಯನ್ನು ಉಂಟುಮಾಡುವ, ಕಣ್ಣುಗಳನ್ನು ಕ್ಷೀಣಿಸುವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗುವಂತೆಯೂ ಮಾಡುವ ಕ್ಷಯರೋಗವನ್ನೂ ಚಳಿಜ್ವರವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ಬೀಜವನ್ನು ಬಿತ್ತುವಿರಿ. ಏಕೆಂದರೆ ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
LEV 26:17 ನಾನು ನಿಮಗೆ ವಿಮುಖನಾಗಿರುವೆನು. ಆದ್ದರಿಂದ ನೀವು ನಿಮ್ಮ ವೈರಿಗಳಿಂದ ಸೋತುಹೋಗುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗಲೂ ಓಡಿಹೋಗುವಿರಿ.
LEV 26:18 “ ‘ಹೀಗೂ ನನ್ನ ಮಾತನ್ನು ಕೇಳದೆ ಹೋದರೆ, ನಾನು ನಿಮ್ಮನ್ನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ಶಿಕ್ಷಿಸುವೆನು.
LEV 26:19 ನಿಮ್ಮ ಬಲದ ಗರ್ವವನ್ನು ಮುರಿದುಹಾಕಿ, ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಕಂಚಿನಂತೆಯೂ ಮಾಡುವೆನು.
LEV 26:20 ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದುಹೋಗುವುದು. ಏಕೆಂದರೆ ನಿಮ್ಮ ಭೂಮಿಯು ತನ್ನ ಬೆಳೆಯನ್ನು ಕೊಡದೆ ಇರುವುದು ಭೂಮಿಯ ಮರಗಳು ತಮ್ಮ ಫಲಗಳನ್ನು ಕೊಡುವುದಿಲ್ಲ.
LEV 26:21 “ ‘ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧವಾಗಿ ನಡೆದರೆ, ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ಬಾಧಿಸುವೆನು.
LEV 26:22 ಕಾಡುಮೃಗಗಳು ನಿಮ್ಮ ಮೇಲೆ ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದವರನ್ನಾಗಿ ಮಾಡಿ, ನಿಮ್ಮ ದನಗಳನ್ನು ತಿಂದುಬಿಡುವವು. ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವುವು. ನಿಮ್ಮ ಮಾರ್ಗಗಳು ಹಾಳಾಗಿ ಹೋಗುವುವು.
LEV 26:23 “ ‘ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ,
LEV 26:24 ನಾನು ಸಹ ನಿಮಗೆ ವಿರೋಧವಾಗಿ ನಡೆದು, ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ, ಏಳರಷ್ಟು ಶಿಕ್ಷಿಸುವೆನು.
LEV 26:25 ಒಡಂಬಡಿಕೆಯನ್ನು ಮುರಿದದ್ದಕ್ಕಾಗಿ, ಮುಯ್ಯಿಗೆ ಮುಯ್ಯಿ ತೀರಿಸುವ ಖಡ್ಗವನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಸೇರಿದಾಗ, ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನಿಮ್ಮನ್ನು ಶತ್ರುವಿನ ಕೈಗೆ ಒಪ್ಪಿಸಲಾಗುವುದು.
LEV 26:26 ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿದಾಗ, ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು, ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ, ನಿಮಗೆ ತೃಪ್ತಿಯಾಗುವುದಿಲ್ಲ.
LEV 26:27 “ ‘ಇದೆಲ್ಲಾ ಆದರೂ, ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,
LEV 26:28 ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು, ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
LEV 26:29 ನೀವು ನಿಮ್ಮ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.
LEV 26:30 ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.
LEV 26:31 ನಿಮ್ಮ ಪಟ್ಟಣಗಳನ್ನು ನಾನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಸುವಾಸನೆಗಳನ್ನು ಮೂಸಿ ನೋಡದೆ ಇರುವೆನು.
LEV 26:32 ನಾನು ದೇಶವನ್ನು ಹಾಳುಮಾಡುವೆನು. ಅದರಲ್ಲಿ ವಾಸವಾಗುವ ನಿಮ್ಮ ಶತ್ರುಗಳೂ ಅದಕ್ಕೆ ಆಶ್ಚರ್ಯಪಡುವರು.
LEV 26:33 ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ನಿಮ್ಮ ಹಿಂದೆ ಖಡ್ಗವನ್ನು ಬೀಸುವೆನು. ನಿಮ್ಮ ಭೂಮಿ ಹಾಳಾಗಿರುವುದು, ನಿಮ್ಮ ಪಟ್ಟಣಗಳು ನಾಶವಾಗಿರುವುವು.
LEV 26:34 ಆಗ ನಾಡು ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವವರೆಗೂ, ನಾಡು ತನ್ನ ಸಬ್ಬತ್ ಕಾಲವನ್ನು ಅನುಭವಿಸುವುದು. ಆಗ ನೆಲವು ವಿಶ್ರಮಿಸಿಕೊಂಡು ತನ್ನ ವಿಶ್ರಾಂತಿಯ ಕಾಲವನ್ನು ಅನುಭವಿಸುವುದು.
LEV 26:35 ನೀವು ನಿಮ್ಮ ಶತ್ರುಗಳ ದೇಶದಲ್ಲಿ ವಾಸವಾಗಿದ್ದಾಗ, ಹಾಳುಬಿದ್ದ ನಿಮ್ಮ ನಾಡು ತಾನು ಹೊಂದದ ವಿಶ್ರಾಂತಿಯನ್ನು ಈಗ ಸುದೀರ್ಘವಾಗಿ ಹೊಂದಿಕೊಳ್ಳುವುದು.
LEV 26:36 “ ‘ನಿಮ್ಮಲ್ಲಿ ಯಾರು ಉಳಿದು ಶತ್ರುಗಳ ದೇಶದಲ್ಲಿ ಇರುವರೋ, ಅವರ ಹೃದಯದಲ್ಲಿ ಭೀತಿಯನ್ನು ಹುಟ್ಟಿಸುವೆನು. ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವುದು. ಖಡ್ಗಕ್ಕೆ ಓಡಿ ಹೋದ ಹಾಗೆ ಓಡಿಹೋಗುವರು.
LEV 26:37 ಓಡಿಸುವವನಿಲ್ಲದೆ ಒಬ್ಬರ ಮೇಲೊಬ್ಬರು ಖಡ್ಗದ ಭಯದಿಂದಾದ ಹಾಗೆ ಬೀಳುವರು. ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವುದು ನಿಮ್ಮಿಂದಾಗದು.
LEV 26:38 ಜನಾಂಗಗಳೊಳಗೆ ನಾಶವಾಗುವಿರಿ. ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವುದು.
LEV 26:39 ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು, ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.
LEV 26:40 “ ‘ಆದರೆ ಅವರು ನನಗೆ ಮಾಡಿದ ತಮ್ಮ ದುಷ್ಕೃತ್ಯದಲ್ಲಿರುವ ತಮ್ಮ ಅಕ್ರಮವನ್ನೂ, ತಮ್ಮ ಪಿತೃಗಳ ಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದುಕೊಂಡದ್ದನ್ನೂ,
LEV 26:41 ನಾನು ಸಹ ಅವರಿಗೆ ವಿರೋಧವಾಗಿ ನಡೆದುಕೊಂಡು ಅವರನ್ನು ತಮ್ಮ ಶತ್ರುಗಳ ದೇಶದಲ್ಲಿ ಬರಮಾಡಿದ್ದನ್ನೂ ಅರಿಕೆಮಾಡಿದರೆ, ಆಗಲೇ ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆಬಾಗಿ, ಅವರು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಒಪ್ಪಿಕೊಳ್ಳುವುದಾದರೆ,
LEV 26:42 ನಾನು ಯಾಕೋಬನಿಗೆ, ಇಸಾಕನಿಗೆ ಮತ್ತು ಅಬ್ರಹಾಮನಿಗೆ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ದೇಶವನ್ನು ದಯೆಯಿಂದ ನೆನಪಿಸಿಕೊಳ್ಳುವೆನು.
LEV 26:43 ಅವರು ಬಿಟ್ಟುಹೋದ ಸ್ವದೇಶವು ಯಾರೂ ಇಲ್ಲದೆ ಹಾಳಾದ ವೇಳೆಯಲ್ಲಿ ತನ್ನ ವಿಶ್ರಾಂತಿಯನ್ನು ಅನುಭವಿಸುವುದು. ಆದರೆ ಅವರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸುವರು. ಅದು ಏಕೆಂದರೆ, ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ತಾತ್ಸಾರ ಮಾಡಿದ್ದರಿಂದಲೇ.
LEV 26:44 ಆದರೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ಧಿಕ್ಕರಿಸದೆ, ಅವರನ್ನು ಅಸಹ್ಯಪಡದೆ, ಅವರನ್ನು ಸಂಪೂರ್ಣವಾಗಿ ನಾಶಮಾಡದೆಯೂ, ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು. ಏಕೆಂದರೆ ಅವರ ದೇವರಾಗಿರುವ ಯೆಹೋವ ದೇವರು ನಾನೇ.
LEV 26:45 ನಾನು ಅವರ ಪಿತೃಗಳ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು, ಅವರಿಗೆ ಹಿತವನ್ನೇ ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದೇ, ಅವರ ಪಿತೃಗಳನ್ನು ಎಲ್ಲಾ ಜನಾಂಗಗಳ ಮುಂದೆ ಈಜಿಪ್ಟಿನಿಂದ ಬರಮಾಡಿದೆನು. ನಾನೇ ಯೆಹೋವ ದೇವರು.’ ”
LEV 26:46 ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ, ಇಸ್ರಾಯೇಲರಿಗೂ ಮಧ್ಯದಲ್ಲಿ ಇಟ್ಟ ನಿಯಮಗಳೂ, ನ್ಯಾಯಗಳೂ, ಆಜ್ಞಾವಿಧಿಗಳೂ ಇವೇ.
LEV 27:1 ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
LEV 27:2 “ಇಸ್ರಾಯೇಲರ ಸಂಗಡ ನೀನು ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಒಬ್ಬನು ಪ್ರತ್ಯೇಕವಾಗಿ ಯೆಹೋವ ದೇವರಿಗೆ ಹರಕೆಮಾಡಿ ಪ್ರತಿಷ್ಠಿಸಿಕೊಂಡರೆ, ನೀನು ನೇಮಿಸಿದ ಕ್ರಯದ ಪ್ರಕಾರ ಜನರು ಕೊಡಬೇಕು.
LEV 27:3 ನೀನು ನೇಮಿಸಬೇಕಾದ ಕ್ರಯವು ಯಾವುದೆಂದರೆ, ಇಪ್ಪತ್ತರಿಂದ ಅರವತ್ತು ವಯಸ್ಸುಳ್ಳ ಪುರುಷನಿಗೆ ನೀನು ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಐವತ್ತು ಶೆಕೆಲ್ ಆಗಿರಬೇಕು.
LEV 27:4 ಹೆಣ್ಣಾಗಿದ್ದರೆ, ನೀನು ನೇಮಿಸುವ ಕ್ರಯವು ಮೂವತ್ತು ಶೆಕೆಲ್ ಆಗಿರಬೇಕು.
LEV 27:5 ಐದರಿಂದ ಇಪ್ಪತ್ತು ವಯಸ್ಸುಳ್ಳ ಪುರುಷನ ಕ್ರಯವು ಇಪ್ಪತ್ತು ಶೆಕೆಲ್, ಸ್ತ್ರೀ ಕ್ರಯವು ಹತ್ತು ಶೆಕೆಲ್ ಆಗಿರಬೇಕು.
LEV 27:6 ಒಂದು ತಿಂಗಳಿಂದ ಐದು ವಯಸ್ಸುಳ್ಳ ಹುಡುಗನ ಕ್ರಯವು ಐದು ಶೆಕೆಲ್, ಹುಡುಗಿಯ ಕ್ರಯವು ಮೂರು ಶೆಕೆಲ್ ಆಗಿರಬೇಕು.
LEV 27:7 ಅರವತ್ತು ವರುಷವೂ, ಅದಕ್ಕೂ ಹೆಚ್ಚಾದ ಪ್ರಾಯವುಳ್ಳ ಪುರುಷನಾಗಿದ್ದರೆ, ನೀನು ನೇಮಿಸುವ ಕ್ರಯವು ಹದಿನೈದು ಶೆಕೆಲ್, ಸ್ತ್ರೀಗೆ ಹತ್ತು ಶೆಕೆಲ್ ಆಗಿರಬೇಕು.
LEV 27:8 ಆದರೆ ನೀನು ನೇಮಿಸಿದ ಕ್ರಯವನ್ನು ಕೊಡದಷ್ಟು ಅವನು ಬಡವನಾಗಿದ್ದರೆ, ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು. ಪ್ರಮಾಣ ಮಾಡಿದವನ ಸಂಪತ್ತಿಗೆ ತಕ್ಕಂತೆ ಯಾಜಕನು ಅವನಿಗೆ ಕ್ರಯವನ್ನು ನಿರ್ಣಯಿಸಬೇಕು.
LEV 27:9 “ ‘ಆದರೆ ಯೆಹೋವ ದೇವರಿಗೆ ಸಮರ್ಪಿಸಬೇಕಾದ ಪಶುಗಳ ಜಾತಿಯಲ್ಲಿ ಯಾವುದಾಗಿದ್ದರೂ, ಅವುಗಳಲ್ಲಿ ಯೆಹೋವ ದೇವರಿಗೆ ಕೊಡುವಂಥದ್ದು ಪರಿಶುದ್ಧವಾಗಿರಬೇಕು.
LEV 27:10 ಅದನ್ನು ಒಳ್ಳೆಯದಕ್ಕೆ ಕೆಟ್ಟದ್ದನ್ನಾಗಲಿ, ಕೆಟ್ಟದ್ದಕ್ಕೆ ಒಳ್ಳೆಯದನ್ನಾಗಲಿ ಬದಲು ಮಾಡಬಾರದು, ಮಾರ್ಪಡಿಸಲೂಬಾರದು. ಅವನು ಗೊತ್ತುಮಾಡಿದ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ, ಅದು ಮತ್ತು ಅದರ ಬದಲಾಗಿಟ್ಟ ಪಶು ಇವೆರಡೂ ಯೆಹೋವ ದೇವರಿಗೆ ಪರಿಶುದ್ಧವಾಗಿರಬೇಕು.
LEV 27:11 ಅದು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಪಶುವು ಅಶುದ್ಧವಾಗಿದ್ದರೆ, ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು.
LEV 27:12 ಆಗ ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಅದಕ್ಕೆ ಕ್ರಯ ಕಟ್ಟಬೇಕು. ಯಾಜಕನು ನಿರ್ಧರಿಸಿದ ಕ್ರಯವೇ ಅಂತಿಮ ಕ್ರಯವಾಗಿರಬೇಕು.
LEV 27:13 ಹರಕೆ ಮಾಡುವವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿದ್ದರೆ, ನೀನು ನಿರ್ಧರಿಸಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು.
LEV 27:14 “ ‘ಒಬ್ಬನು ತನ್ನ ಮನೆಯನ್ನು ಯೆಹೋವ ದೇವರಿಗೆ ಪರಿಶುದ್ಧವಾಗಿರಲೆಂದು ಪ್ರತಿಷ್ಠೆಪಡಿಸಿದರೆ, ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಪರೀಕ್ಷಿಸಿ ಕ್ರಯವನ್ನು ಕಟ್ಟಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಸ್ಥಿರವಾಗಿರಬೇಕು.
LEV 27:15 ಆದರೆ ಪ್ರತಿಷ್ಠೆ ಪಡಿಸಿದವನು ತನ್ನ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಒಂದು ಭಾಗ ಹಣವನ್ನು ಕೊಡಲಿ, ಆಗ ಅದು ಅವನದಾಗಿರುವುದು.
LEV 27:16 “ ‘ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಯೆಹೋವ ದೇವರಿಗೆ ಪ್ರತಿಷ್ಠಿಸಿದರೆ, ಅದರ ಬೀಜದ ಪ್ರಕಾರ ಕ್ರಯ ಕಟ್ಟಬೇಕು. ಒಂದು ಓಮೆರ್ ಜವೆಗೋಧಿಯನ್ನು, ಬೀಜಕ್ಕೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಡಬೇಕಾಗುವುದು.
LEV 27:17 ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪ್ರತಿಷ್ಠಿಸಿದರೆ, ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು.
LEV 27:18 ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪ್ರತಿಷ್ಠೆ ಮಾಡಿದರೆ, ಜೂಬಿಲಿ ಸಂವತ್ಸರದವರೆಗೆ ಮಿಕ್ಕ ವರ್ಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ನಿರ್ಧರಿಸಿ, ಕಟ್ಟಿದ ಕ್ರಯದಿಂದ ಕಳೆಯಬೇಕು.
LEV 27:19 ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿದವನು ಅದನ್ನು ಅವನು ವಿಮೋಚಿಸಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಒಂದು ಪಾಲನ್ನು ಕೊಡಬೇಕು. ಆಗ ಅದು ಸ್ಥಿರವಾಗಿರುವುದು.
LEV 27:20 ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ, ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ, ಅದನ್ನು ಅನಂತರ ವಿಮೋಚಿಸಕೂಡದು.
LEV 27:21 ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಬಿಡುಗಡೆಯಾಗುವಾಗ ಆ ಹೊಲವು ಯೆಹೋವ ದೇವರಿಗೆ ಪವಿತ್ರವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು, ಅದು ಯಾಜಕನಿಗೆ ಸಲ್ಲಬೇಕು.
LEV 27:22 “ ‘ಆದರೆ ತನ್ನ ಹೊಲಗಳಲ್ಲಿ ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಂಥ ಹೊಲವನ್ನು ಯೆಹೋವ ದೇವರಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ,
LEV 27:23 ಯಾಜಕನು ಅವನಿಗೆ ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದವರೆಗೂ ಎಣಿಸಬೇಕು. ಅವನು ಆ ದಿವಸದಲ್ಲಿ ಕಟ್ಟಿದ ಕ್ರಯವನ್ನು ಯೆಹೋವ ದೇವರಿಗೆ ಮೀಸಲಾದದ್ದು ಎಂದು ಭಾವಿಸಿ ಕೊಡಬೇಕು.
LEV 27:24 ಆ ಹೊಲವು ಯಾರಿಗೆ ಸ್ವಂತವಾಗಿದ್ದು, ಯಾರಿಂದ ಕೊಂಡುಕೊಳ್ಳಲಾಗಿದೆಯೋ ಅದು ಜೂಬಿಲಿ ವರ್ಷದಲ್ಲಿ ಅವರಿಗೇ ಹಿಂದಕ್ಕೆ ಕೊಡಬೇಕು.
LEV 27:25 ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಇಪ್ಪತ್ತು ಗೇರಾ ತೂಕದ ಶೆಕೆಲ್ ಮೇರೆಗೆ ನೀವು ಕ್ರಯವನ್ನು ನಿಗದಿಮಾಡಬೇಕು.
LEV 27:26 “ ‘ಪಶುಗಳ ಚೊಚ್ಚಲ ಮರಿ ಯೆಹೋವ ದೇವರದಾದ್ದರಿಂದ ಅದನ್ನೂ ಹರಕೆಯಾಗಿ ಕೊಡಬಾರದು. ಅದು ಎತ್ತಾಗಲಿ ಇಲ್ಲವೆ ಕುರಿಯಾಗಲಿ, ಅದು ಯೆಹೋವ ದೇವರದೇ.
LEV 27:27 ಆದರೆ ಅದು ಅಶುದ್ಧ ಪಶುಗಳಲ್ಲಿ ಹುಟ್ಟಿದ್ದಾಗಿದ್ದರೆ, ಹರಕೆ ಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆಹೋದರೆ ಅದನ್ನು ಕಟ್ಟಿದ ಕ್ರಯದ ಪ್ರಕಾರ ಮಾರಬೇಕು.
LEV 27:28 “ ‘ಯಾರಾದರೂ ಮನುಷ್ಯನನ್ನಾಗಲಿ, ಪಶುವನ್ನಾಗಲಿ, ಪಿತ್ರಾರ್ಜಿತ ಹೊಲವನ್ನಾಗಲಿ ತನಗಿದ್ದ ಬೇರೆ ಯಾವುದನ್ನಾಗಲಿ ಒಬ್ಬ ಮನುಷ್ಯನು ಯೆಹೋವ ದೇವರಿಗಾಗಿ ಮೀಸಲಾಗಿಟ್ಟಿದ್ದರೆ, ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು. ಮೀಸಲಾಗಿರುವ ಪ್ರತಿಯೊಂದೂ ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.
LEV 27:29 “ ‘ಯೆಹೋವ ದೇವರಿಗೆಂದು ಮೀಸಲಾದದನ್ನು ಯಾರೂ ಕ್ರಯಕೊಟ್ಟು ವಿಮೋಚಿಸಬಾರದು. ಅಂಥವನಿಗೆ ಮರಣವೇ ಆಗಬೇಕು.
LEV 27:30 “ ‘ಭೂಮಿಯ ಬೀಜದಲ್ಲಾಗಲಿ, ಮರದ ಫಲದಲ್ಲಾಗಲಿ ಹತ್ತನೆಯ ಒಂದು ಪಾಲೆಲ್ಲಾ ಯೆಹೋವ ದೇವರದೇ. ಅದು ಯೆಹೋವ ದೇವರಿಗೆ ಪರಿಶುದ್ಧವಾದದ್ದು.
LEV 27:31 ಯಾವನಾದರೂ ತನ್ನ ಹತ್ತನೆಯ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ, ಅದಕ್ಕಿಂತ ಹೆಚ್ಚಾಗಿ ಅದರ ಐದನೆಯ ಒಂದು ಪಾಲನ್ನು ಕೊಡಬೇಕು.
LEV 27:32 ಇದಲ್ಲದೆ ದನಕುರಿಗಳಲ್ಲಿಯೂ, ಕುರುಬನು ಎಣಿಸುವ ಪಶುಗಳಲ್ಲಿಯೂ ಹತ್ತನೆಯ ಪಾಲು, ಹತ್ತರಲ್ಲಿ ಒಂದು ಯೆಹೋವ ದೇವರಿಗೆ ಪರಿಶುದ್ಧವಾಗಿರುವುದು.
LEV 27:33 ಆ ಪಶು ಒಳ್ಳೆಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸಬಾರದು. ಅವನು ಅದನ್ನು ಬದಲಾಯಿಸಬಾರದು. ಯಾರಾದರೂ ಅದನ್ನು ಬದಲಾಯಿಸಿದ್ದಾದರೆ, ಆಗ ಎರಡೂ ಪಶುಗಳು ಯೆಹೋವ ದೇವರಿಗೆ ಸೇರುತ್ತದೆ, ಅದು ಪರಿಶುದ್ಧವಾಗಿರುತ್ತದೆ ಅದನ್ನು ವಿಮೋಚಿಸಬಾರದು.’ ”
LEV 27:34 ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲರಿಗಾಗಿ ಕೊಟ್ಟ ಆಜ್ಞೆಗಳು ಇವೇ.
NUM 1:1 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು:
NUM 1:2 “ಇಸ್ರಾಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು.
NUM 1:3 ಇಸ್ರಾಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು ಅಂದರೆ, ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚಾದ ವಯಸ್ಸುಳ್ಳ ಎಲ್ಲರನ್ನು ಸೈನ್ಯಸೈನ್ಯವಾಗಿ ನೀನು ಮತ್ತು ಆರೋನನು ಪಟ್ಟಿಮಾಡಬೇಕು.
NUM 1:4 ಪ್ರತಿಯೊಂದು ಗೋತ್ರದ ಒಬ್ಬೊಬ್ಬ ಮುಖ್ಯಸ್ಥನು ನಿಮಗೆ ಸಹಾಯಕನಾಗಿರಲಿ.
NUM 1:5 “ನಿಮಗೆ ಸಹಾಯ ಮಾಡಬೇಕಾದ ಪುರುಷರ ಹೆಸರುಗಳು: “ರೂಬೇನ್ ಗೋತ್ರದಿಂದ ಶೆದೇಯೂರನ ಮಗ ಎಲೀಚೂರ್,
NUM 1:6 ಸಿಮೆಯೋನ್ ಗೋತ್ರದಿಂದ ಚುರೀಷದ್ದೈಯನ ಮಗ ಶೆಲುಮೀಯೇಲ್,
NUM 1:7 ಯೆಹೂದ ಗೋತ್ರದಿಂದ ಅಮ್ಮೀನಾದಾಬನ ಮಗ ನಹಶೋನ್,
NUM 1:8 ಇಸ್ಸಾಕರ್ ಗೋತ್ರದಿಂದ ಚೂವಾರನ ಮಗ ನೆತನೆಯೇಲ್,
NUM 1:9 ಜೆಬುಲೂನ್ ಗೋತ್ರದಿಂದ ಹೇಲೋನನ ಮಗ ಎಲೀಯಾಬ್,
NUM 1:10 ಯೋಸೇಫನ ಗೋತ್ರದಲ್ಲಿ, ಎಫ್ರಾಯೀಮ್‌ನಿಂದ ಅಮ್ಮೀಹೂದನ ಮಗ ಎಲೀಷಾಮಾ, ಮನಸ್ಸೆ ಗೋತ್ರದಿಂದ ಪೆದಾಚೂರನ ಮಗನಾದ ಗಮಲಿಯೇಲ್,
NUM 1:11 ಬೆನ್ಯಾಮೀನ್ ಗೋತ್ರದಿಂದ ಗಿದ್ಯೋನಿನ ಮಗನಾದ ಅಬೀದಾನ,
NUM 1:12 ದಾನ್ ಗೋತ್ರದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್,
NUM 1:13 ಆಶೇರ್ ಗೋತ್ರದಿಂದ ಒಕ್ರಾನನ ಮಗ ಪಗೀಯೇಲ್,
NUM 1:14 ಗಾದ್ ಗೋತ್ರದಿಂದ ದೆವುಯೇಲನ ಮಗ ಎಲ್ಯಾಸಾಫ್,
NUM 1:15 ನಫ್ತಾಲಿ ಗೋತ್ರದಿಂದ ಏನಾನನ ಮಗ ಅಹೀರನು.”
NUM 1:16 ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.
NUM 1:17 ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆ ಮತ್ತು ಆರೋನನು ತಮ್ಮ ಜೊತೆ ತೆಗೆದುಕೊಂಡರು.
NUM 1:18 ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಜನರು ತಮ್ಮ ಗೋತ್ರ ಮತ್ತು ಕುಟುಂಬಗಳ ಅನುಸಾರವಾಗಿ ತಮ್ಮ ವಂಶಾವಳಿಯನ್ನು ನೊಂದಾಯಿಸಿದರು. ಹಾಗೂ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಾದ ವಯಸ್ಸಿನವರ ಹೆಸರುಗಳನ್ನು ಒಬ್ಬೊಬ್ಬರಾಗಿ ಪಟ್ಟಿಮಾಡಲಾಯಿತು.
NUM 1:19 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.
NUM 1:20 ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:21 ರೂಬೇನನ ಗೋತ್ರದಲ್ಲಿ ಎಣಿಕೆಯಾದವರು 46,500 ಜನರು.
NUM 1:22 ಸಿಮೆಯೋನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:23 ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದವರು 59,300 ಜನರು.
NUM 1:24 ಗಾದನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:25 ಗಾದನ ಗೋತ್ರದಲ್ಲಿ ಎಣಿಕೆಯಾದವರು 45,650 ಜನರು.
NUM 1:26 ಯೆಹೂದ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:27 ಯೆಹೂದ ಗೋತ್ರದಲ್ಲಿ ಎಣಿಕೆಯಾದವರು 74,600 ಜನರು.
NUM 1:28 ಇಸ್ಸಾಕಾರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:29 ಇಸ್ಸಾಕಾರನ ಗೋತ್ರದಲ್ಲಿ ಎಣಿಕೆಯಾದವರು 54,400 ಜನರು.
NUM 1:30 ಜೆಬುಲೂನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:31 ಜೆಬುಲೂನ್ ಗೋತ್ರದಲ್ಲಿ ಎಣಿಕೆಯಾದವರು 57,400 ಜನರು.
NUM 1:32 ಯೋಸೇಫನ ಮಕ್ಕಳಾದ ಎಫ್ರಾಯೀಮನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:33 ಎಫ್ರಾಯೀಮನ ಗೋತ್ರದಲ್ಲಿ ಎಣಿಕೆಯಾದವರು 40,500 ಜನರು.
NUM 1:34 ಮನಸ್ಸೆಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:35 ಮನಸ್ಸೆಯ ಗೋತ್ರದಲ್ಲಿ ಎಣಿಕೆಯಾದವರು 32,200 ಜನರು.
NUM 1:36 ಬೆನ್ಯಾಮೀನ್ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:37 ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.
NUM 1:38 ದಾನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:39 ದಾನನ ಗೋತ್ರದಲ್ಲಿ ಎಣಿಕೆಯಾದವರು 62,700 ಜನರು.
NUM 1:40 ಆಶೇರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:41 ಆಶೇರನ ಗೋತ್ರದಲ್ಲಿ ಎಣಿಕೆಯಾದವರು 41,500 ಜನರು.
NUM 1:42 ನಫ್ತಾಲಿಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
NUM 1:43 ನಫ್ತಾಲಿಯ ಗೋತ್ರದಲ್ಲಿ ಎಣಿಕೆಯಾದವರು 53,400 ಜನರು.
NUM 1:44 ಮೋಶೆ, ಆರೋನ್ ಮತ್ತು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರು.
NUM 1:45 ಹೀಗೆ ಇಸ್ರಾಯೇಲರಲ್ಲಿ ಎಣಿಕೆಯಾದವರೆಲ್ಲರೂ ಅವರ ಕುಟುಂಬಗಳ ಪ್ರಕಾರ ಇಪ್ಪತ್ತು ವರ್ಷದವರೂ, ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳವರೂ, ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಶಕ್ತರಾದವರೂ ಆಗಿದ್ದರು.
NUM 1:46 ಎಣಿಕೆಯಾದವರು ಒಟ್ಟು 6,03,550 ಮಂದಿಯಾಗಿದ್ದರು.
NUM 1:47 ಲೇವಿಯರ ತಂದೆಗಳ ಗೋತ್ರವನ್ನು ಇತರರೊಂದಿಗೆ ಎಣಿಸಲಿಲ್ಲ.
NUM 1:48 ಇದಲ್ಲದೆ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ:
NUM 1:49 “ನೀವು ಲೇವಿಯ ಕುಲವನ್ನು ಎಣಿಸಬಾರದು ಅಥವಾ ಇತರ ಇಸ್ರಾಯೇಲರ ಜನಗಣತಿಯಲ್ಲಿ ಅವರನ್ನು ಸೇರಿಸಬಾರದು.
NUM 1:50 ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.
NUM 1:51 ದೇವದರ್ಶನ ಗುಡಾರವು ಹೊರಡುವಾಗ ಲೇವಿಯರು ಅದನ್ನು ತೆಗೆಯಲಿ. ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ. ಬೇರೆ ಯಾವನಾದರೂ ಸಮೀಪಿಸಿದರೆ ಅವನು ಸಾಯಬೇಕು.
NUM 1:52 ಇಸ್ರಾಯೇಲರು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಧ್ವಜದ ಬಳಿ ಇಳಿದುಕೊಳ್ಳಬೇಕು.
NUM 1:53 ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”
NUM 1:54 ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.
NUM 2:1 ಯೆಹೋವ ದೇವರು ಮಾತನಾಡಿ ಮೋಶೆ ಮತ್ತು ಆರೋನನಿಗೆ ಹೇಳಿದ್ದೇನೆಂದರೆ:
NUM 2:2 “ಇಸ್ರಾಯೇಲರು ಒಬ್ಬೊಬ್ಬರಾಗಿ ಕುಟುಂಬಗಳ ಗುರುತುಗಳ ಪ್ರಕಾರ ತಮ್ಮ ತಮ್ಮ ದಂಡಿನ ಧ್ವಜಗಳ ಬಳಿಯಲ್ಲಿ ಇಳಿದುಕೊಳ್ಳಬೇಕು. ಅವರು ದೇವದರ್ಶನ ಗುಡಾರದ ಎದುರಿನಲ್ಲಿ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.”
NUM 2:3 ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ, ಸೂರ್ಯೋದಯದ ಕಡೆಗೆ ಯೆಹೂದ ದಂಡಿನ ಧ್ವಜದ ಬಳಿಯಲ್ಲಿ ತಮ್ಮ ಸೈನ್ಯಗಳ ಪ್ರಕಾರ ಇಳಿದುಕೊಳ್ಳಬೇಕು. ಯೆಹೂದ ಮಕ್ಕಳಿಗೆ ಅಮ್ಮೀನಾದಾಬನ ಮಗ ನಹಶೋನನು ಸೈನ್ಯಾಧಿಪತಿ.
NUM 2:4 ಅವನ ಸೈನಿಕರ ಸಂಖ್ಯೆ 74,600 ಮಂದಿ.
NUM 2:5 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಗೋತ್ರದವರು. ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗ ನೆತನೆಯೇಲ್ ಎಂಬ ಸೈನ್ಯಾಧಿಪತಿ.
NUM 2:6 ಅವನ ಸೈನಿಕರ ಸಂಖ್ಯೆ 54,400 ಮಂದಿ.
NUM 2:7 ಅವನ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ಯನ ಗೋತ್ರದವರು. ಜೆಬುಲೂನ್ಯನ ಮಕ್ಕಳಿಗೆ ಹೇಲೋನನ ಮಗ ಎಲೀಯಾಬನು ಸೈನ್ಯಾಧಿಪತಿ.
NUM 2:8 ಅವನ ಸೈನಿಕರ ಸಂಖ್ಯೆ 57,400 ಮಂದಿ.
NUM 2:9 ಯೆಹೂದನ ಪಾಳೆಯದಲ್ಲಿ ಎಣಿಸಲಾದ ಅವರ ಸೈನಿಕರ ಸಂಖ್ಯೆ 1,86,400 ಮಂದಿ. ಅವರು ಮೊದಲು ಹೊರಡತಕ್ಕವರು.
NUM 2:10 ದಕ್ಷಿಣ ದಿಕ್ಕಿನಲ್ಲಿ: ರೂಬೇನ್ ಕುಲದ ದಂಡಿಗೆ ಸೇರಿದವರು ಅವರವರ ಸೈನ್ಯಗಳ ಪ್ರಕಾರ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ರೂಬೇನನ ಮಕ್ಕಳಿಗೆ ಶೆದೇಯೂರನ ಮಗ ಎಲೀಚೂರನು ಸೈನ್ಯಾಧಿಪತಿ.
NUM 2:11 ಅವನ ಸೈನಿಕರ ಸಂಖ್ಯೆ 46,500 ಮಂದಿ.
NUM 2:12 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನನ ಗೋತ್ರದವರು. ಸಿಮೆಯೋನನ ಮಕ್ಕಳಿಗೆ ಚುರೀಷದ್ದೈಯನ ಮಗನಾದ ಶೆಲುಮೀಯೇಲನು ಸೈನ್ಯಾಧಿಪತಿ.
NUM 2:13 ಅವನ ಸೈನಿಕರ ಸಂಖ್ಯೆ 59,300 ಮಂದಿ.
NUM 2:14 ತರುವಾಯ ಗಾದ್ ಗೋತ್ರದವರು. ಗಾದನ ಮಕ್ಕಳಿಗೆ ದೆವುಯೇಲನ ಮಗ ಎಲ್ಯಾಸಾಫನು ಸೈನ್ಯಾಧಿಪತಿ.
NUM 2:15 ಅವನ ಸೈನಿಕರ ಸಂಖ್ಯೆ 45,650 ಮಂದಿ.
NUM 2:16 ರೂಬೇನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
NUM 2:17 ತರುವಾಯ ದೇವದರ್ಶನ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ, ತಮ್ಮ ತಮ್ಮ ಕಡೆಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
NUM 2:18 ಎಫ್ರಾಯೀಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವುದು: ಎಫ್ರಾಯೀಮನ ಮಕ್ಕಳಿಗೆ ಅಮ್ಮೀಹೂದನ ಮಗ ಎಲೀಷಾಮಾನು ಸೈನ್ಯಾಧಿಪತಿ.
NUM 2:19 ಅವನ ಸೈನಿಕರ ಸಂಖ್ಯೆ 40,500 ಮಂದಿ.
NUM 2:20 ಅವರ ಬಳಿಯಲ್ಲಿ ಮನಸ್ಸೆ ಗೋತ್ರದವರು. ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗ ಗಮಲಿಯೇಲನು ಸೈನ್ಯಾಧಿಪತಿ.
NUM 2:21 ಅವನ ಸೈನಿಕರ ಸಂಖ್ಯೆ 32,200 ಮಂದಿ.
NUM 2:22 ತರುವಾಯ ಬೆನ್ಯಾಮೀನ್ ಗೋತ್ರದವರು. ಬೆನ್ಯಾಮೀನನ ಮಕ್ಕಳಿಗೆ ಗಿದ್ಯೋನಿಯ ಮಗ ಅಬೀದಾನನು ಸೈನ್ಯಾಧಿಪತಿ.
NUM 2:23 ಅವನ ಸೈನಿಕರ ಸಂಖ್ಯೆ 35,400 ಮಂದಿ.
NUM 2:24 ಎಫ್ರಾಯೀಮನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,08,100 ಮಂದಿ. ಇವರು ಮೂರನೆಯವರಾಗಿ ಹೊರಡತಕ್ಕವರು.
NUM 2:25 ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವರು: ದಾನನ ಮಕ್ಕಳಿಗೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸೈನ್ಯಾಧಿಪತಿ.
NUM 2:26 ಅವನ ಸೈನಿಕರ ಸಂಖ್ಯೆ 62,700 ಮಂದಿ.
NUM 2:27 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಆಶೇರ್ ಗೋತ್ರದವರು. ಆಶೇರನ ಮಕ್ಕಳಿಗೆ ಒಕ್ರಾನನ ಮಗ ಪಗೀಯೇಲನು ಸೈನ್ಯಾಧಿಪತಿ.
NUM 2:28 ಅವನ ಸೈನಿಕರ ಸಂಖ್ಯೆ 41,500 ಮಂದಿ.
NUM 2:29 ತರುವಾಯ ನಫ್ತಾಲಿ ಗೋತ್ರದವರು. ನಫ್ತಾಲಿ ಮಕ್ಕಳಿಗೆ ಏನಾನನ ಮಗ ಅಹೀರನು ಸೈನ್ಯಾಧಿಪತಿ.
NUM 2:30 ಅವನ ಸೈನಿಕರ ಸಂಖ್ಯೆ 53,400 ಮಂದಿ.
NUM 2:31 ದಾನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,57,600 ಮಂದಿ. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯ ದಂಡಾಗಿ ಹೊರಡತಕ್ಕದ್ದು.
NUM 2:32 ಇಸ್ರಾಯೇಲರಲ್ಲಿ ತಮ್ಮ ಕುಟುಂಬಗಳ ಪ್ರಕಾರವಾಗಿ ಎಣಿಕೆಯಾದವರು ಇವರೇ. ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 6,03,550 ಮಂದಿ.
NUM 2:33 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲರೊಳಗೆ ಎಣಿಕೆಯಾಗಲಿಲ್ಲ.
NUM 2:34 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಎಲ್ಲವನ್ನೂ ಮಾಡಿದರು. ಹಾಗೆಯೇ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ಕುಟುಂಬಗಳ ಪ್ರಕಾರವೂ ಪಾಳೆಯವನ್ನು ಹಾಕಿಕೊಳ್ಳುತ್ತಾ ಮುಂದುವರಿಯುತ್ತಿದ್ದರು.
NUM 3:1 ಯೆಹೋವ ದೇವರು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿವಸದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ.
NUM 3:2 ಆರೋನನ ಮಕ್ಕಳುಗಳ ಹೆಸರುಗಳು: ಚೊಚ್ಚಲ ಮಗನು ನಾದಾಬ್, ತರುವಾಯ ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್.
NUM 3:3 ಯಾಜಕರಾಗಿ ಅಭಿಷೇಕ ಹೊಂದಿದ ಆರೋನನ ಮಕ್ಕಳುಗಳ ಹೆಸರುಗಳು ಇವೇ, ಇವರೇ ಯಾಜಕೋದ್ಯೋಗ ಮಾಡುವುದಕ್ಕೆ ಪ್ರತಿಷ್ಠಿತರಾದವರು.
NUM 3:4 ಆದರೆ ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಅರ್ಪಿಸಿದಾಗ, ಯೆಹೋವ ದೇವರ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ. ಹೀಗೆ ಎಲಿಯಾಜರನು, ಈತಾಮಾರನು ತಮ್ಮ ತಂದೆ ಆರೋನನ ಎದುರಿನಲ್ಲಿ ಯಾಜಕ ಉದ್ಯೋಗವನ್ನು ಮಾಡಿದರು.
NUM 3:5 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 3:6 “ಲೇವಿಯ ಗೋತ್ರವನ್ನು ಹತ್ತಿರ ಕರೆದು, ಯಾಜಕನಾದ ಆರೋನನ ಮುಂದೆ ನಿಲ್ಲಿಸು. ಅವರು ಅವನಿಗೆ ಸಹಾಯ ಮಾಡಲಿ.
NUM 3:7 ಇದಲ್ಲದೆ ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ದೇವದರ್ಶನದ ಗುಡಾರದ ಸೇವೆಮಾಡುತ್ತಾ ಆರೋನನಿಗಾಗಿಯೂ ಸಮಸ್ತ ಸಮೂಹದವರಿಗಾಗಿಯೂ ಕರ್ತವ್ಯಗಳನ್ನು ನಿರ್ವಹಿಸಬೇಕು.
NUM 3:8 ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು.
NUM 3:9 ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸು. ಇಸ್ರಾಯೇಲರೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲಾದವರು ಇವರೇ.
NUM 3:10 ಇದಲ್ಲದೆ ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನೂ ಅವನ ಪುತ್ರರನ್ನೂ ನೇಮಿಸಬೇಕು. ಪರಕೀಯನು ಸಮೀಪಿಸಿದರೆ ಸಾಯಬೇಕು.”
NUM 3:11 ಯೆಹೋವ ದೇವರು ಮೋಶೆಗೆ ಹೀಗೆಂದರು:
NUM 3:12 “ಪ್ರತಿಯೊಬ್ಬ ಇಸ್ರಾಯೇಲಿನ ಮಹಿಳೆಯ ಜೇಷ್ಠ ಮಗನಿಗೆ ಬದಲಾಗಿ ಇಸ್ರಾಯೇಲರೊಳಗಿಂದ ಲೇವಿಯರನ್ನು ತೆಗೆದುಕೊಂಡಿದ್ದೇನೆ. ಲೇವಿಯರು ನನಗೆ ಸೇರಿದವರು.
NUM 3:13 ಏಕೆಂದರೆ ಜೇಷ್ಠರಾದವರೆಲ್ಲರೂ ನನ್ನವರೇ. ನಾನು ಈಜಿಪ್ಟ್ ದೇಶದಲ್ಲಿ ಜೇಷ್ಠರಾದವುಗಳನ್ನೆಲ್ಲಾ ಹೊಡೆದ ದಿವಸದಲ್ಲಿ ನಾನು ಇಸ್ರಾಯೇಲರಲ್ಲಿ ಪುರುಷರಾಗಲಿ, ಪಶುಗಳಾಗಲಿ ಚೊಚ್ಚಲಾದ ಪ್ರತಿಯೊಂದನ್ನು ನನಗಾಗಿ ಪ್ರತ್ಯೇಕಿಸಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಯೆಹೋವ ದೇವರು.”
NUM 3:14 ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ ಹೇಳಿದ್ದೇನೆಂದರೆ:
NUM 3:15 “ಲೇವಿಯರನ್ನು ಕುಟುಂಬಗಳಾಗಿಯೂ, ಗೋತ್ರಗಳಾಗಿಯೂ ಎಣಿಕೆ ಮಾಡು. ಒಂದು ತಿಂಗಳು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು,” ಎಂದರು.
NUM 3:16 ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
NUM 3:17 ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್ ಮತ್ತು ಮೆರಾರೀ.
NUM 3:18 ಗೇರ್ಷೋನ್ ಗೋತ್ರದವರು: ಲಿಬ್ನೀ ಹಾಗೂ ಶಿಮ್ಮೀ.
NUM 3:19 ಕೊಹಾತನ ಗೋತ್ರದವರು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
NUM 3:20 ಮೆರಾರೀಯ ಗೋತ್ರದವರು: ಮಹ್ಲೀ ಮತ್ತು ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರವಾಗಿ ಇವರೇ ಲೇವಿ ವಂಶದವರು.
NUM 3:21 ಗೇರ್ಷೋನ್ ವಂಶಕ್ಕೆ ಸೇರಿದ ಲಿಬ್ನೀಯ ಕುಟುಂಬವೂ ಶಿಮ್ಮೀಯ ಕುಟುಂಬದವರೂ ಇದ್ದರು.
NUM 3:22 ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಅವರ ಎಲ್ಲಾ ಗಂಡಸರ ಸಂಖ್ಯೆಯ ಪ್ರಕಾರ ಎಣಿಕೆಯಾದವರು 7,500 ಮಂದಿ.
NUM 3:23 ಗೇರ್ಷೋನ್ಯರ ಕುಟುಂಬಗಳು ದೇವದರ್ಶನದ ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳಿದುಕೊಳ್ಳಬೇಕು.
NUM 3:24 ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥನು ಲಾಯೇಲನ ಮಗ ಎಲ್ಯಾಸಾಫ್.
NUM 3:25 ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವವೆಂದರೆ: ಗುಡಾರ, ಅದರ ಮೇಲಿನ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ,
NUM 3:26 ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂತಹ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
NUM 3:27 ಅಮ್ರಾಮಿಯರು, ಇಚ್ಹಾರರು, ಹೆಬ್ರೋನಿಯರು, ಉಜ್ಜೀಯೇಲರು; ಇವು ಕೊಹಾತನ ಕುಟುಂಬಗಳು.
NUM 3:28 ಕೊಹಾತ್ಯರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 8,600 ಮಂದಿ. ಇವರು ಪರಿಶುದ್ಧ ಸ್ಥಳವನ್ನು ನೋಡಿಕೊಳ್ಳುತ್ತಿದ್ದರು.
NUM 3:29 ಕೊಹಾತ್ಯರ ಗೋತ್ರಗಳವರು ಪರಿಶುದ್ಧ ಸ್ಥಳವನ್ನು ಕಾಯುವ ಜವಾಬ್ದಾರಿಕೆ ಹೊಂದಿದ್ದರು. ಅವರು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳಿದುಕೊಳ್ಳಬೇಕು.
NUM 3:30 ಉಜ್ಜೀಯೇಲನ ಪುತ್ರನಾದ ಎಲೀಚಾಫಾನನು ಕೊಹಾತ್ಯರ ಕುಟುಂಬಗಳ ನಾಯಕನು.
NUM 3:31 ಅವರು ನೋಡಿಕೊಳ್ಳಬೇಕಾಗಿದ್ದವುಗಳು ಯಾವವೆಂದರೆ: ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ಪರದೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
NUM 3:32 ಇದಲ್ಲದೆ ಯಾಜಕನಾಗಿರುವ ಆರೋನನ ಮಗ ಎಲಿಯಾಜರನು ಲೇವಿಯರ ಮತ್ತೊಬ್ಬ ನಾಯಕನಾಗಿದ್ದನು. ಪರಿಶುದ್ಧಸ್ಥಳದ ಜವಾಬ್ದಾರಿಕೆಯುಳ್ಳವನ ಮೇಲೆ ವಿಚಾರಕನು ಅವನೇ.
NUM 3:33 ಮೆರಾರೀಯ ಮಹ್ಲೀಯರ ಹಾಗೂ ಮೂಷೀಯರ ಗೋತ್ರಗಳಿಗೆ ಸಂಬಂಧಪಟ್ಟವನು. ಇವು ಮೆರಾರೀ ಗೋತ್ರಗಳು.
NUM 3:34 ಅವರಲ್ಲಿ ಎಣಿಕೆಯಾದವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 6,200 ಮಂದಿ.
NUM 3:35 ಅಬೀಹೈಲನ ಮಗ ಜುರೀಯೇಲನು ಮೆರಾರೀ ಗೋತ್ರದ ಮುಖ್ಯಸ್ಥನು. ಅವರು ದೇವದರ್ಶನ ಗುಡಾರದ ಬಳಿಯಲ್ಲಿ ಉತ್ತರ ದಿಕ್ಕಿನ ಕಡೆಗೆ ಇಳಿದುಕೊಳ್ಳಬೇಕು.
NUM 3:36 ಮೆರಾರೀ ಗೋತ್ರದವರು ದೇವದರ್ಶನ ಗುಡಾರದ ಹಲಗೆ, ಅಗುಳಿ, ಕಂಬ, ಕುಣಿಕೆ, ಅದರ ಎಲ್ಲಾ ಸಲಕರಣೆಗಳು, ಅದರ ಎಲ್ಲಾ ಸೇವೆಯೂ
NUM 3:37 ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಅವುಗಳ ಗೂಟಗಳೂ ಅವುಗಳ ಹಗ್ಗಗಳೂ ಇವೆಲ್ಲವುಗಳ ಮೇಲ್ವಿಚಾರಣೆ ಮಾಡಬೇಕು.
NUM 3:38 ದೇವದರ್ಶನ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ದೇವದರ್ಶನದ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳಿದುಕೊಳ್ಳುವವರು ಮೋಶೆ, ಆರೋನ್ ಮತ್ತು ಅವನ ಪುತ್ರರು. ಇವರು ಇಸ್ರಾಯೇಲರಿಗಾಗಿ ಪರಿಶುದ್ಧಸ್ಥಳದ ಮೇಲ್ವಿಚಾರಣೆ ಮಾಡುವವರು. ಬೇರೆ ಯಾರಾದರೂ ಸಮೀಪಿಸಿದರೆ, ಅವರಿಗೆ ಮರಣಶಿಕ್ಷೆ ಆಗಬೇಕು.
NUM 3:39 ಮೋಶೆಯೂ ಆರೋನನೂ ಯೆಹೋವ ದೇವರ ಆಜ್ಞೆಯ ಪ್ರಕಾರ, ಕುಟುಂಬಗಳ ಪ್ರಕಾರ ಲೆಕ್ಕಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 22,000 ಮಂದಿ.
NUM 3:40 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಇಸ್ರಾಯೇಲರಲ್ಲಿರುವ ಜೇಷ್ಠಪುತ್ರರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ.
NUM 3:41 ಇಸ್ರಾಯೇಲರಲ್ಲಿರುವ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಪಶುಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ‘ನಾನೇ ಯೆಹೋವ ದೇವರು,’ ” ಎಂದರು.
NUM 3:42 ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಮೋಶೆ ಇಸ್ರಾಯೇಲರಲ್ಲಿ ಜೇಷ್ಠರಾಗಿರುವುದೆಲ್ಲವನ್ನು ಎಣಿಸಿದನು.
NUM 3:43 ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಜೇಷ್ಠರಾದವರೆಲ್ಲರ ಒಟ್ಟು ಸಂಖ್ಯೆ 22,273 ಮಂದಿ.
NUM 3:44 ಯೆಹೋವ ದೇವರು ಮೋಶೆಗೆ ಪುನಃ ಹೇಳಿದ್ದೇನೆಂದರೆ,
NUM 3:45 “ಇಸ್ರಾಯೇಲರಲ್ಲಿ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರು ನನ್ನವರಾಗಿರುವರು. ನಾನೇ ಯೆಹೋವ ದೇವರು.
NUM 3:46 ಇಸ್ರಾಯೇಲರ ಜೇಷ್ಠರಾದವರಲ್ಲಿ ಲೇವಿಯರಿಗಿಂತ ಹೆಚ್ಚಾಗಿರುವ 273 ಮಂದಿಯ ವಿಮೋಚನೆಯ ಕ್ರಯವಾಗಿ
NUM 3:47 ಒಬ್ಬೊಬ್ಬನಿಗೆ ಐದು ಶೆಕೆಲ್ ತೆಗೆದುಕೋ. ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, ಅಂದರೆ ಇಪ್ಪತ್ತು ಗೇರಾ ತೂಕದ ಶೆಕೆಲ್ ಈ ಪ್ರಕಾರವಾಗಿ ಇದನ್ನು ತೆಗೆದುಕೊಳ್ಳಬೇಕು.
NUM 3:48 ಅವರೊಳಗೆ ಹೆಚ್ಚಾಗಿರುವವರ ವಿಮೋಚನೆಯ ಕ್ರಯವನ್ನು ಆರೋನನಿಗೂ ಅವನ ಮಕ್ಕಳಿಗೂ ನೀನು ಕೊಡಬೇಕು.”
NUM 3:49 ಹೀಗೆ ಮೋಶೆಯು ಲೇವಿಯರಿಂದ ವಿಮೋಚಿಸಲಾದವರಿಗೆ ಹೆಚ್ಚು ಜನರ ವಿಮೋಚನೆಯ ಕ್ರಯವಾದ ಹಣವನ್ನು ತೆಗೆದುಕೊಂಡನು.
NUM 3:50 ಇಸ್ರಾಯೇಲರಲ್ಲಿ ಜೇಷ್ಠರಾದವರಿಂದ ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ ನಿಗದಿಯಾದ 1,365 ಶೆಕೆಲ್‌ಗಳನ್ನು ತೆಗೆದುಕೊಂಡನು.
NUM 3:51 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ವಿಮೋಚನೆಯ ಹಣವನ್ನು ಆರೋನನಿಗೂ, ಅವನ ಪುತ್ರರಿಗೂ ಕೊಟ್ಟನು.
NUM 4:1 ಯೆಹೋವ ದೇವರು ಮೋಶೆಯ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 4:2 “ಲೇವಿಯರೊಳಗೆ ಕೊಹಾತ್ಯರಲ್ಲಿಯ ಕುಟುಂಬಗಳನ್ನು ಗೋತ್ರಗಳನ್ನಾಗಿ ಲೆಕ್ಕಮಾಡು.
NUM 4:3 ಮೂವತ್ತು ವರ್ಷವಾದವರನ್ನೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷದವರವರೆಗೆ ದೇವದರ್ಶನ ಗುಡಾರದಲ್ಲಿ ಕೆಲಸ ಮಾಡುವುದಕ್ಕೆ ಬರುವವರನ್ನು ಲೆಕ್ಕಮಾಡು.
NUM 4:4 “ದೇವದರ್ಶನದ ಗುಡಾರದಲ್ಲಿ ಕೊಹಾತ್ಯರು ಮಾಡುವ ಸೇವೆ ಯಾವುದೆಂದರೆ, ದೇವದರ್ಶನ ಗುಡಾರದ ಅತಿಪರಿಶುದ್ಧವಾದ ವಸ್ತುಗಳನ್ನು ಕಾಪಾಡುವುದು.
NUM 4:5 ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ,
NUM 4:6 ಅದರ ಮೇಲೆ ಕಡಲುಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗದಲ್ಲಿ ಪೂರ್ಣವಾದ ನೀಲಿವಸ್ತ್ರವನ್ನು ಹಾಸಿ, ಕೋಲುಗಳನ್ನು ಅದರ ಸ್ಥಳದಲ್ಲಿ ಇಡಬೇಕು.
NUM 4:7 “ಸಮ್ಮುಖದ ರೊಟ್ಟಿಯ ಮೇಜಿನ ಮೇಲೆ ಅವರು ನೀಲಿವಸ್ತ್ರವನ್ನು ಹಾಸಿ, ಅದರ ಮೇಲೆ ಪಾತ್ರೆಗಳನ್ನು, ಸೌಟುಗಳನ್ನು, ಬೋಗುಣಿಗಳನ್ನು ಮತ್ತು ಪಾನಾರ್ಪಣೆಯ ಹೂಜಿಗಳನ್ನು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಯನ್ನು ಅದರ ಮೇಲೆ ಇಡಬೇಕು.
NUM 4:8 ಅವೆಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ, ಅದನ್ನು ಕಡಲುಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ, ಅದರ ಕೋಲುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
NUM 4:9 “ಇದಲ್ಲದೆ ಅವರು ನೀಲಿವಸ್ತ್ರವನ್ನು ತೆಗೆದುಕೊಂಡು, ಅದರಿಂದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ, ಅದರ ಬತ್ತಿ ಕತ್ತರಿಸುವ ಸಲಕರಣೆಗಳನ್ನೂ, ಅದರ ಬಟ್ಟಲುಗಳನ್ನೂ, ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು.
NUM 4:10 ಅವರು ಅದನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ಕಡಲುಹಂದಿಯ ಚರ್ಮಗಳ ಮುಚ್ಚಳದೊಳಗೆ ಇಟ್ಟು, ಅಡ್ಡ ದಂಡಕ್ಕೆ ಕಟ್ಟಬೇಕು.
NUM 4:11 “ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿವಸ್ತ್ರವನ್ನು ಹಾಸಿ, ಅದನ್ನು ಕಡಲುಹಂದಿಯ ಚರ್ಮಗಳ ಮುಚ್ಚಳದೊಳಗೆ ಮುಚ್ಚಿ, ಅದರ ಕೋಲುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
NUM 4:12 “ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವ ಸೇವೆಯ ಎಲ್ಲಾ ಸಲಕರಣೆಗಳನ್ನು ಅವರು ತೆಗೆದುಕೊಂಡು ನೀಲಿ ವಸ್ತ್ರದಿಂದ ಕಟ್ಟಿ, ಕಡಲುಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ, ಅಡ್ಡ ದಂಡಕ್ಕೆ ಕಟ್ಟಬೇಕು.
NUM 4:13 “ಬಲಿಪೀಠದ ಬೂದಿಯನ್ನು ತೆಗೆದು, ಅದರ ಮೇಲೆ ಧೂಮ್ರವರ್ಣದ ವಸ್ತ್ರವನ್ನು ಹಾಸಿ,
NUM 4:14 ಅದರ ಮೇಲೆ ಸೇವೆ ಮಾಡುವ ಎಲ್ಲಾ ಸಲಕರಣೆಗಳನ್ನು, ಅಗ್ನಿ ಪಾತ್ರೆಗಳನ್ನು, ಮುಳ್ಳುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಬಲಿಪೀಠದ ಎಲ್ಲಾ ಸಲಕರಣೆಗಳನ್ನು ಅದರ ಮೇಲಿಟ್ಟು, ಕಡಲುಹಂದಿಯ ಚರ್ಮಗಳ ಹೊದಿಕೆಯನ್ನು ಹಾಕಿ, ಹೊರುವ ಕೋಲುಗಳನ್ನು ಇಡಬೇಕು.
NUM 4:15 “ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ.
NUM 4:16 “ಯಾಜಕನಾದ ಆರೋನನ ಮಗ ಎಲಿಯಾಜರನ ಕೆಲಸ ಯಾವುದೆಂದರೆ, ದೀಪದ ಎಣ್ಣೆಯೂ, ಸುಗಂಧ ಧೂಪವೂ, ನಿತ್ಯದ ಧಾನ್ಯ ಸಮರ್ಪಣೆಯೂ, ಅಭಿಷೇಕದ ತೈಲವೂ, ಸಮಸ್ತ ಗುಡಾರವೂ, ಅದರಲ್ಲಿರುವ ಸಕಲವೂ, ಪರಿಶುದ್ಧ ಸ್ಥಳದಲ್ಲಿರುವ ಅದರ ಸಾಮಗ್ರಿಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.”
NUM 4:17 ಇದಲ್ಲದೆ ಯೆಹೋವ ದೇವರು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 4:18 “ನೀವು ಲೇವಿಯರೊಳಗಿಂದ ಕೊಹಾತ್ಯರ ಗೋತ್ರದ ಕಟುಂಬಗಳು ನಾಶವಾಗಿ ಹೋಗದಂತೆ ನೋಡಿಕೊಳ್ಳಿರಿ.
NUM 4:19 ಅವರು ಮಹಾಪರಿಶುದ್ಧ ವಸ್ತುಗಳ ಸಮೀಪಕ್ಕೆ ಬರುವಾಗ, ಅವರು ಸಾಯದೆ ಬದುಕುವ ಹಾಗೆ ಹೀಗೆ ಎಚ್ಚರಿಕೆ ವಹಿಸಬೇಕು: ಆರೋನನೂ ಅವನ ಪುತ್ರರೂ ಒಳಗೆ ಪ್ರವೇಶಿಸಿ, ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಯನ್ನೂ ನೇಮಿಸಬೇಕು.
NUM 4:20 ಆದರೆ ಕೊಹಾತ್ಯರು ದೇವದರ್ಶನದ ಗುಡಾರದ ಒಳಗೆ ಬಂದು, ಒಂದು ಕ್ಷಣವೂ ಆ ಪವಿತ್ರ ವಸ್ತುಗಳನ್ನು ನೋಡಬಾರದು, ನೋಡಿ ಸಾವನ್ನಪ್ಪದಿರಲಿ.”
NUM 4:21 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 4:22 “ಗೇರ್ಷೋನನ ಪುತ್ರರ ಲೆಕ್ಕವನ್ನು ಸಹ ಅವರ ತಂದೆಗಳ ಮನೆಗಳ ಪ್ರಕಾರವಾಗಿಯೂ, ಅವರ ಕುಲಗಳ ಪ್ರಕಾರವಾಗಿಯೂ ತೆಗೆದುಕೊಳ್ಳಬೇಕು.
NUM 4:23 ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳ ಪುರುಷರನ್ನೂ ದೇವದರ್ಶನ ಗುಡಾರದಲ್ಲಿ ಸೇವೆ ಮಾಡುವುದಕ್ಕೂ, ಅದನ್ನು ಪೂರೈಸುವುದಕ್ಕೂ ಸೇರುವವರೆಲ್ಲರನ್ನೂ ಎಣಿಸು.
NUM 4:24 “ಗೇರ್ಷೋನ್ಯರ ಕುಟುಂಬಗಳ ಸೇವೆಯೂ ಜವಾಬ್ದಾರಿಕೆ ಯಾವುದೆಂದರೆ,
NUM 4:25 ಅವರು ಗುಡಾರದ ಪರದೆಗಳನ್ನೂ ದೇವದರ್ಶನ ಗುಡಾರವನ್ನೂ ಅದರ ಹೊದಿಕೆಯನ್ನೂ ಅದರ ಮೇಲಿರುವ ಕಡಲುಹಂದಿಯ ಚರ್ಮಗಳ ಹೊದಿಕೆಯನ್ನೂ ದೇವದರ್ಶನ ಗುಡಾರದ ಬಾಗಿಲಿನ ಪರದೆಯನ್ನೂ
NUM 4:26 ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಿಲಿನ ಪರದೆಯನ್ನೂ ಅವುಗಳ ಹಗ್ಗಗಳನ್ನೂ, ಅವುಗಳ ಸೇವೆಯ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು.
NUM 4:27 ಗೇರ್ಷೋನ್ಯರು ಆರೋನ್, ಅವನ ಪುತ್ರರ ನಿರ್ದೇಶನದ ಮೇರೆಗೆ ಅವರ ಹೊರೆಹೊರುವದನ್ನು ಮತ್ತು ಇತರ ಕೆಲಸಗಳನ್ನು ಮಾಡಲಿ. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.
NUM 4:28 ಗೇರ್ಷೋನ್ಯರ ಕುಟುಂಬದವರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯೂ ಇದೆ. ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವುದು ಅವರಿಗೆ ಅಪ್ಪಣೆಯಾಗಿದೆ.
NUM 4:29 “ಮೆರಾರೀಯ ಪುತ್ರರನ್ನು ಅವರ ಕುಲಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ಎಣಿಸಬೇಕು.
NUM 4:30 ಮೂವತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷಗಳವರೆಗೆ ದೇವದರ್ಶನದ ಗುಡಾರದ ಸೇವೆ ಮಾಡುವುದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು.
NUM 4:31 ದೇವದರ್ಶನದ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವುದಕ್ಕೆ ನೀಡಿದ ಅಪ್ಪಣೆಯು ಏನೆಂದರೆ: ಗುಡಾರದ ಹಲಿಗೆಗಳೂ ಅದರ ಅಡ್ಡ ದಂಡ ಅದರ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ
NUM 4:32 ಸುತ್ತಲಿರುವ ಅಂಗಳದ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ ಅದರ ಗೂಟಗಳೂ ಅವುಗಳ ಹಗ್ಗಗಳೂ ಅವುಗಳ ಎಲ್ಲಾ ಸಲಕರಣೆಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವುದಕ್ಕೆ ಕೊಟ್ಟ ಅಪ್ಪಣೆಯ ಸಲಕರಣೆಗಳನ್ನು ನೀವು ಹೆಸರೆಸರಾಗಿ ಎಣಿಸಬೇಕು.
NUM 4:33 ಮೆರಾರೀಯ ಪುತ್ರರ ಕುಟುಂಬಗಳ ಸೇವೆಯೂ, ದೇವದರ್ಶನದ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೆ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.”
NUM 4:34 ಮೋಶೆಯೂ, ಆರೋನನೂ, ಸಭೆಯ ಮುಖ್ಯಸ್ಥನೂ, ಕೊಹಾತ್ಯರ ಪುತ್ರರನ್ನು ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ
NUM 4:35 ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರೂ ಎಂದರೆ ಐವತ್ತು ವರ್ಷಗಳವರೆಗೆ ದೇವದರ್ಶನದ ಗುಡಾರದಲ್ಲಿ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು ಎಣಿಸಿದರು.
NUM 4:36 ಕುಲಗಳ ಪ್ರಕಾರ ಅವರಲ್ಲಿ ಎಣಿಕೆಯಾದವರು 2,750 ಮಂದಿಯಾಗಿದ್ದರು.
NUM 4:37 ಮೋಶೆಗೆ ಯೆಹೋವ ದೇವರು ಅಪ್ಪಣೆ ಮಾಡಿದ ಹಾಗೆ ಮೋಶೆಯೂ, ಆರೋನನೂ ಎಣಿಸಿದ ಕೊಹಾತ್ಯರ ಕುಟುಂಬಗಳಲ್ಲಿ ಎಣಿಕೆಯಾದವರೂ, ದೇವದರ್ಶನ ಗುಡಾರದಲ್ಲಿ ಸೇವೆ ಮಾಡುವವರೆಲ್ಲರೂ ಇವರೇ.
NUM 4:38 ಗೇರ್ಷೋನನ ಪುತ್ರರಲ್ಲಿ ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಕೆಯಾದರು.
NUM 4:39 ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ, ಎಂದರೆ ಐವತ್ತು ವರ್ಷಗಳವರೆಗೆ ದೇವದರ್ಶನ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನೂ,
NUM 4:40 ಎಂದರೆ ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ, ಅವರಲ್ಲಿ ಎಣಿಕೆಯಾದವರು 2,630 ಮಂದಿಯಾಗಿದ್ದರು.
NUM 4:41 ಯೆಹೋವ ದೇವರ ಅಪ್ಪಣೆಯ ಹಾಗೆ ಮೋಶೆಯೂ, ಆರೋನನೂ ಎಣಿಸಿದ ಗೇರ್ಷೋನನ ಪುತ್ರರ ಕುಟುಂಬಗಳಲ್ಲಿ ಎಣಿಕೆಯಾದವರೂ, ದೇವದರ್ಶನದ ಗುಡಾರದಲ್ಲಿ ಸೇವೆ ಮಾಡುವವರೆಲ್ಲರೂ ಇವರೇ.
NUM 4:42 ಮೆರಾರೀಯ ಪುತ್ರರಲ್ಲಿ ಅವರ ಕುಲಗಳ ಪ್ರಕಾರವಾಗಿಯೂ, ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಕೆಯಾದವರು.
NUM 4:43 ಮೂವತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷಗಳವರೆಗೆ ದೇವದರ್ಶನ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು
NUM 4:44 ಎಂದರೆ, ಅವರ ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಕೆಯಾದವರು 3,200 ಮಂದಿಯಾಗಿದ್ದರು.
NUM 4:45 ಮೋಶೆಗೆ ಯೆಹೋವ ದೇವರು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸಿದ ಮೆರಾರೀಯ ಪುತ್ರರ ಕುಲಗಳಲ್ಲಿ ಎಣಿಕೆಯಾದವರು ಇವರೇ.
NUM 4:46 ಮೋಶೆಯೂ, ಆರೋನನೂ, ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದ ಸಮಸ್ತ ಲೇವಿಯರು ಅವರ ಕುಲಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸಿದರು.
NUM 4:47 ದೇವದರ್ಶನ ಗುಡಾರದಲ್ಲಿ ಕೆಲಸ ಮಾಡುವುದಕ್ಕಾಗಿಯೂ, ಹೊರುವುದಕ್ಕಾಗಿಯೂ ಬರುವವರೆಲ್ಲರೂ ಎಂದರೆ, ಅವರಲ್ಲಿ ಮೂವತ್ತು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಎಂದರೆ, ಐವತ್ತು ವರ್ಷಗಳವರೆಗೆ
NUM 4:48 ಎಣಿಕೆಯಾದವರು 8,580 ಮಂದಿ.
NUM 4:49 ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ, ಹೊರುವುದಕ್ಕಾಗಿಯೂ ಜವಾಬ್ದಾರಿಕೆ ಕೊಡಲಾಯಿತು. ಹೀಗೆ ಯೆಹೋವ ದೇವರು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಎಣಿಸಲಾಯಿತು.
NUM 5:1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
NUM 5:2 “ಚರ್ಮರೋಗವಿರುವವರೆಲ್ಲರನ್ನು, ಮೇಹಸ್ರಾವವುಳ್ಳವರೆಲ್ಲರನ್ನು ಮತ್ತು ಹೆಣದ ಸೋಂಕಿನಿಂದ ಅಶುದ್ಧರಾದವರೆಲ್ಲರನ್ನು ಪಾಳೆಯದೊಳಗಿಂದ ಹೊರಗೆ ಕಳುಹಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.
NUM 5:3 ಸ್ತ್ರೀ ಪುರುಷವೆಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನು ಹೊರಹಾಕಬೇಕು. ನಾನು ಅವರ ಮಧ್ಯದಲ್ಲಿ ವಾಸಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಪಾಳೆಯದ ಹೊರಗೆ ಕಳುಹಿಸಬೇಕು,” ಎಂಬುದೆ.
NUM 5:4 ಆಗ ಇಸ್ರಾಯೇಲರು ಹಾಗೆ ಮಾಡಿ, ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರ ಇಸ್ರಾಯೇಲರು ಮಾಡಿದರು.
NUM 5:5 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 5:6 “ಇಸ್ರಾಯೇಲರಿಗೆ ಹೀಗೆ ಹೇಳು: ‘ಪುರುಷನಾದರೂ ಸ್ತ್ರೀಯಾದರೂ ಮತ್ತೊಬ್ಬರಿಗೆ ಮೋಸಮಾಡಿ ಯೆಹೋವ ದೇವರಿಗೆ ಅಪನಂಬಿಗಸ್ತರಾದರೆ, ಆ ವ್ಯಕ್ತಿ ಅಪರಾಧಿ.
NUM 5:7 ಅವನು ಮಾಡಿದ ಪಾಪವನ್ನು ಅರಿಕೆ ಮಾಡಬೇಕು. ಅವನ ಅಪರಾಧದ ಬದಲುಕೊಟ್ಟು, ಅದರ ಸಂಗಡ ಅದರ ಐದನೆಯ ಪಾಲನ್ನು ಕೂಡಿಸಿ, ಯಾರಿಗೆ ಅಪರಾಧ ಮಾಡಿದರೋ, ಅವರಿಗೆ ಕೊಡಬೇಕು.
NUM 5:8 ಆದರೆ ಅಪರಾಧಕ್ಕೆ ಬದಲು ಕೊಡುವುದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಅದು ಯೆಹೋವ ದೇವರಿಗೆ ಸೇರಬೇಕು. ಅದು ದೋಷಪರಿಹಾರಕ್ಕಾಗಿ ಅರ್ಪಿಸಲಾಗುವ ಪ್ರಾಯಶ್ಚಿತ್ತದ ಟಗರು, ಇವೆರಡೂ ಯಾಜಕನಿಗೆ ಸೇರಬೇಕು.
NUM 5:9 ಇಸ್ರಾಯೇಲರು ತರುವ ಸಕಲ ಪರಿಶುದ್ಧವಾದ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
NUM 5:10 ಪ್ರತಿ ಮನುಷ್ಯನ ಪರಿಶುದ್ಧವಾದ ಕಾಣಿಕೆಗಳು ಅವನದಾಗಿಯೇ ಆಗಿರುತ್ತವೆ. ಆದರೆ ಯಾಜಕನಿಗೆ ಕೊಟ್ಟದ್ದು ಯಾಜಕರದಾಗುತ್ತದೆ,’ ” ಎಂದು ಹೇಳಿದರು.
NUM 5:11 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 5:12 “ಇಸ್ರಾಯೇಲರಿಗೆ ಹೀಗೆ ಹೇಳು, ‘ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ಅಪನಂಬಿಗಸ್ತಳಾಗಿದ್ದರೆ,
NUM 5:13 ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು, ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬುದು ಗುಪ್ತವಾಗಿದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ, ಅವಳನ್ನು ಹಿಡಿಯದೇ ಇದ್ದರೆ,
NUM 5:14 ಆಕೆ ಅಶುದ್ಧಳಾಗಿದ್ದಾಳೆಂದು ಆಕೆಯ ಮೇಲೆ ಅಸೂಯೆಗೊಂಡು ಸಂಶಯಪಟ್ಟರೆ, ಆಕೆ ಅಶುದ್ಧಳಾಗದಿದ್ದರೂ, ಆಕೆಯೊಡನೆ ಅಸೂಯೆ ಸಂಶಯ ಹೊಂದಿದರೆ, ಆಗ
NUM 5:15 ಆ ಮನುಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತರಬೇಕು. ಅವಳಿಗೋಸ್ಕರ ಕಾಣಿಕೆಯಾಗಿ ಒಂದು ಓಮರ್ ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕಬಾರದು. ಏಕೆಂದರೆ ಅದು ಸಂಶಯವನ್ನು ಸೂಚಿಸುವುದಕ್ಕೂ ಅಪರಾಧವನ್ನು ಹೊರಪಡಿಸುವುದಕ್ಕೂ ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.
NUM 5:16 “ ‘ಯಾಜಕನು ಅವಳನ್ನು ಸಮೀಪಕ್ಕೆ ಕರೆದು, ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಬೇಕು.
NUM 5:17 ಆಗ ಯಾಜಕನು ಪವಿತ್ರ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದುಕೊಳ್ಳಬೇಕು. ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತೆಗೆದುಕೊಂಡು, ಆ ನೀರಿನೊಳಗೆ ಹಾಕಬೇಕು.
NUM 5:18 ಯಾಜಕನು ಆ ಸ್ತ್ರೀಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಿ, ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು, ಅವಳ ಕೈಗಳಲ್ಲಿ ಸಂಶಯ ಸೂಚಿಸುವ ಕಾಣಿಕೆಯಾದ ನೈವೇದ್ಯದ ಹಿಟ್ಟನ್ನು ಇಡಬೇಕು. ಯಾಜಕನ ಕೈಯಲ್ಲಿ ಶಾಪತರುವ ಕಹಿಯಾದ ನೀರು ಇರಬೇಕು.
NUM 5:19 ಯಾಜಕನು ಅವಳನ್ನು ಪ್ರಮಾಣ ಮಾಡಿಸಿ, ಸ್ತ್ರೀಗೆ ಹೇಳಬೇಕಾದದ್ದು, “ಮದುವೆಯಾಗಿ ಗಂಡನೊಂದಿಗೆ ಸಂಸಾರ ನಡೆಸುವಾಗ, ಒಬ್ಬ ಪರಪುರುಷನು ನಿನ್ನ ಸಂಗಡ ಮಲಗಿರದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೆ ಇದ್ದರೆ, ಶಾಪವನ್ನು ಉಂಟುಮಾಡುವ ಈ ನೀರು ನಿನಗೆ ಯಾವ ಹಾನಿಮಾಡುವುದಿಲ್ಲ.
NUM 5:20 ಆದರೆ ನೀನು ನಿನ್ನ ಗಂಡನನ್ನು ಬಿಟ್ಟು, ಜಾರತ್ವ ಮಾಡಿ ಅಶುದ್ಧಳಾಗಿದ್ದರೆ, ನಿನ್ನ ಗಂಡನನ್ನು ಬಿಟ್ಟು, ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ,
NUM 5:21 ಯೆಹೋವ ದೇವರು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವನು. ನಿನ್ನ ಜನರು ನಿನ್ನನ್ನು ಶಪಿಸುವರು, ತಿರಸ್ಕರಿಸುವರು.
NUM 5:22 ಶಪಿಸುವಂಥ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ತೊಡೆಯನ್ನು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ ಎಂದು ಹೇಳಬೇಕು, ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣ ಮಾಡಿಸಬೇಕು.” “ ‘ಅದಕ್ಕೆ ಆ ಸ್ತ್ರೀಯು, “ಆಮೆನ್, ಆಮೆನ್,” ಎಂದು ಹೇಳಬೇಕು.
NUM 5:23 “ ‘ಇದಲ್ಲದೆ ಯಾಜಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ತೊಳೆದು,
NUM 5:24 ಆ ಸ್ತ್ರೀಗೆ ಶಪಿಸುವಂಥಹ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವುದು.
NUM 5:25 ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ಸಂಶಯ ಸೂಚಕ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನೈವೇದ್ಯ ಮಾಡಿ, ಬಲಿಪೀಠದ ಸಮೀಪಕ್ಕೆ ತರಬೇಕು.
NUM 5:26 ಆಗ ಯಾಜಕನು ಜ್ಞಾಪಕಾರ್ಥವಾಗಿ ಕಾಣಿಕೆಯಿಂದ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಸುಟ್ಟು, ಸ್ತ್ರೀಗೆ ಆ ನೀರನ್ನು ಕುಡಿಸಬೇಕು.
NUM 5:27 ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ, ಶಪಿಸುವ ನೀರು ಆಕೆಯೊಳಗೆ ಸೇರಿ ಕಹಿಯಾಗುವುದು. ಅವಳ ಹೊಟ್ಟೆ ಉಬ್ಬಿ, ಅವಳ ತೊಡೆ ಕ್ಷೀಣವಾಗುವುದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು.
NUM 5:28 ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ, ಅವಳು ನಿರಪರಾಧಿಯಾಗಿದ್ದು ಸಂತಾನವನ್ನು ಪಡೆಯುವಳು.
NUM 5:29 “ ‘ಸಂಶಯ ಪರಿಹಾರದ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವ ಮಾಡಿ, ಅಶುದ್ಧಳಾಗಿದ್ದರೆ,
NUM 5:30 ಅಥವಾ ಪುರುಷನು ಸಂಶಯಗೊಂಡು ಅವನು ತನ್ನ ಹೆಂಡತಿ ಮೇಲೆ ರೋಷಗೊಂಡಿದ್ದರೆ, ಅವನು ತನ್ನ ಹೆಂಡತಿಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಲಿ. ಆಗ ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆಗಳ ಪ್ರಕಾರ ಮಾಡುವನು.
NUM 5:31 ಆಗ ಗಂಡನು ನಿರಪರಾಧಿಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’ ”
NUM 6:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 6:2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ: ‘ಪುರುಷನಾದರೂ, ಸ್ತ್ರೀಯಾದರೂ ಯೆಹೋವ ದೇವರಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರ ವ್ರತ ಕೈಗೊಂಡರೆ,
NUM 6:3 ದ್ರಾಕ್ಷಾರಸಕ್ಕೂ ಮದ್ಯಪಾನಕ್ಕೂ ದೂರವಾಗಿದ್ದು, ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ, ದ್ರಾಕ್ಷಿಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ ಹಸಿಯದಾಗಲಿ, ಒಣಗಿದ್ದಾಗಲಿ ದ್ರಾಕ್ಷಿಹಣ್ಣನ್ನು ತಿನ್ನದೆ ಇರಬೇಕು.
NUM 6:4 ತಮ್ಮ ನಾಜೀರತನದ ದಿವಸಗಳಲ್ಲೆಲ್ಲಾ ದ್ರಾಕ್ಷಿ ಬೀಜ ಮೊದಲುಗೊಂಡು ಸಿಪ್ಪೆಯವರೆಗೂ, ದ್ರಾಕ್ಷಿಬಳ್ಳಿಯಲ್ಲಿ ಬೆಳೆದದ್ದು ಯಾವುದನ್ನಾದರೂ ತಿನ್ನಬಾರದು.
NUM 6:5 “ ‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು.
NUM 6:6 “ ‘ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳಲ್ಲೆಲ್ಲಾ ಸತ್ತವರ ಬಳಿಗೆ ಬರಬಾರದು.
NUM 6:7 ಅವರು ತಂದೆತಾಯಿ, ಸಹೋದರ ಸಹೋದರಿ ಸತ್ತರೂ ಅವರು ಅವರಿಗೋಸ್ಕರ ಅಪವಿತ್ರರಾಗಬಾರದು. ಏಕೆಂದರೆ ದೇವರಿಗೆ ಅವರ ಸಮರ್ಪಣೆಯ ಸಂಕೇತವು ಅವರ ತಲೆಯ ಮೇಲೆ ಇದೆ.
NUM 6:8 ಅವರ ಸಮರ್ಪಣೆಯ ದಿವಸಗಳಲ್ಲೆಲ್ಲಾ ಅವರು ಯೆಹೋವ ದೇವರಿಗೆ ಮೀಸಲಾಗಿರಬೇಕು.
NUM 6:9 “ ‘ಅವರ ಬಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಸತ್ತದ್ದರಿಂದ ಅವರ ತಲೆಯ ಕೂದಲು ಅಶುದ್ಧವಾದರೆ, ಅವರು ಶುದ್ಧರಾಗುವ ದಿವಸದಲ್ಲಿ ಅಂದರೆ ಏಳನೆಯ ದಿವಸದಲ್ಲಿ ತಮ್ಮ ತಲೆಯನ್ನು ಬೋಳಿಸಬೇಕು.
NUM 6:10 ಎಂಟನೆಯ ದಿವಸದಲ್ಲಿ ಅವರು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಿಲಿಗೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
NUM 6:11 ಯಾಜಕನು ಒಂದನ್ನು ದೋಷಪರಿಹಾರಕ ಬಲಿಯಾಗಿಯೂ, ಇನ್ನೊಂದನ್ನು ದಹನಬಲಿಯಾಗಿ ಅರ್ಪಿಸಿ, ಅವರು ಶವದ ಹತ್ತಿರವಿದ್ದು ಪಾಪಮಾಡಿದ್ದರಿಂದ, ಅವರಿಗೋಸ್ಕರ ಆ ದಿವಸದಲ್ಲಿ ಅವರ ತಲೆಯನ್ನು ಪ್ರತಿಷ್ಠಿಸಬೇಕು.
NUM 6:12 ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.
NUM 6:13 “ ‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು.
NUM 6:14 ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು.
NUM 6:15 ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳ ಒಂದು ಬುಟ್ಟಿಯನ್ನೂ, ಎಣ್ಣೆ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ, ಧಾನ್ಯದ್ರವ್ಯ ಪಾನದ್ರವ್ಯ ಇವುಗಳನ್ನೆಲ್ಲಾ ಅರ್ಪಣೆಯಾಗಿ ತರಬೇಕು.
NUM 6:16 “ ‘ಇವುಗಳನ್ನು ಯಾಜಕನು ಯೆಹೋವ ದೇವರ ಎದುರಿನಲ್ಲಿ ತಂದು, ಅವರ ದೋಷಪರಿಹಾರಕ ಬಲಿಯನ್ನೂ ಅವರ ದಹನಬಲಿಯನ್ನೂ ಅರ್ಪಿಸಬೇಕು.
NUM 6:17 ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯ ಸಂಗಡ ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಅರ್ಪಿಸಬೇಕು. ಇದಲ್ಲದೆ ಯಾಜಕನು ಅವರ ಧಾನ್ಯವನ್ನೂ, ಪಾನದ್ರವ್ಯವನ್ನೂ ಅರ್ಪಿಸಬೇಕು.
NUM 6:18 “ ‘ಇದಲ್ಲದೆ ನಾಜೀರರು ತಮ್ಮ ಸಮರ್ಪಣೆಯನ್ನು ಸಂಕೇತಿಸುವ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಪ್ರತ್ಯೇಕಿಸಿದ ತಮ್ಮ ತಲೆಗೂದಲನ್ನು ತೆಗೆದುಕೊಂಡು, ಸಮಾಧಾನದ ಬಲಿಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
NUM 6:19 “ ‘ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಆ ಪುಟ್ಟಿಯೊಳಗಿಂದ ಹುಳಿಯಿಲ್ಲದ ಒಂದು ರೊಟ್ಟಿಯನ್ನೂ, ಹುಳಿಯಿಲ್ಲದ ಒಂದು ದೋಸೆಯನ್ನೂ, ಆ ನಾಜೀರರ ಪ್ರತ್ಯೇಕಿಸಿದ ಕೂದಲನ್ನು ಕ್ಷೌರಮಾಡಿಸಿದ ತರುವಾಯ ಅವರ ಕೈಗಳಲ್ಲಿ ಕೊಡಬೇಕು.
NUM 6:20 ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸುವ ಅರ್ಪಣೆಗಾಗಿ ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಸಂಗಡ ಅದು ಯಾಜಕನಿಗೆ ಪರಿಶುದ್ಧವಾಗಿದೆ. ಆಮೇಲೆ ನಾಜೀರರು ದ್ರಾಕ್ಷಾರಸವನ್ನು ಕುಡಿಯಬಹುದು.
NUM 6:21 “ ‘ಪ್ರಮಾಣ ಮಾಡಿಕೊಂಡ ನಾಜೀರರ ನಿಯಮವು ಇದೇ. ಸಂಬಂಧಪಟ್ಟದ್ದರೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಅವರು ತಮ್ಮ ಪ್ರತ್ಯೇಕಿಸುವಿಕೆಗಾಗಿ ಯೆಹೋವ ದೇವರಿಗೆ ಕಾಣಿಕೆ ಅರ್ಪಿಸತಕ್ಕದ್ದು. ನಾಜೀರ ವ್ರತದ ಕ್ರಮದ ಪ್ರಕಾರ, ನೀವು ಮಾಡಿದ ಪ್ರಮಾಣಕ್ಕನುಸಾರವಾಗಿ ತಮ್ಮ ವ್ರತದ ಕ್ರಮಗಳನ್ನು ನೆರವೇರಿಸಬೇಕು.’ ”
NUM 6:22 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 6:23 “ನೀನು ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು:
NUM 6:24 “ ‘ “ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಕಾಪಾಡಲಿ.
NUM 6:25 ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ, ನಿಮಗೆ ಕೃಪೆ ತೋರಿಸಲಿ.
NUM 6:26 ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಎತ್ತಿ, ನಿಮಗೆ ಸಮಾಧಾನ ಅನುಗ್ರಹಿಸಲಿ.” ’
NUM 6:27 “ಹೀಗೆ ಅವರು ನನ್ನ ಹೆಸರನ್ನು ಇಸ್ರಾಯೇಲರ ಮೇಲೆ ಉಚ್ಛರಿಸುವರು. ನಾನೇ ಅವರನ್ನು ಆಶೀರ್ವದಿಸುವೆನು.”
NUM 7:1 ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ,
NUM 7:2 ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
NUM 7:3 ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
NUM 7:4 ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
NUM 7:5 “ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
NUM 7:6 ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು.
NUM 7:7 ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು.
NUM 7:8 ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.
NUM 7:9 ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
NUM 7:10 ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.
NUM 7:11 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
NUM 7:12 ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
NUM 7:13 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:14 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:15 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
NUM 7:16 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
NUM 7:17 ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು. ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
NUM 7:18 ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
NUM 7:19 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:20 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:21 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:22 ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
NUM 7:23 ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
NUM 7:24 ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
NUM 7:25 ಅವನ ಅರ್ಪಣೆ ಏನೆಂದರೆ: ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:26 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:27 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:28 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:29 ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
NUM 7:30 ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
NUM 7:31 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:32 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:33 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:34 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
NUM 7:35 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
NUM 7:36 ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
NUM 7:37 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:38 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:39 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:40 ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
NUM 7:41 ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
NUM 7:42 ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
NUM 7:43 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:44 ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:45 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:46 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:47 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
NUM 7:48 ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
NUM 7:49 ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:50 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:51 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
NUM 7:52 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:53 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
NUM 7:54 ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
NUM 7:55 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:56 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:57 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
NUM 7:58 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:59 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
NUM 7:60 ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
NUM 7:61 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:62 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:63 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
NUM 7:64 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:65 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
NUM 7:66 ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
NUM 7:67 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:68 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:69 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:70 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:71 ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
NUM 7:72 ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
NUM 7:73 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
NUM 7:74 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:75 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:76 ದೋಷಪರಿಹಾರಕ ಬಲಿಗಾಗಿ ಒಂದು ಹೋತ,
NUM 7:77 ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
NUM 7:78 ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
NUM 7:79 ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
NUM 7:80 ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
NUM 7:81 ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
NUM 7:82 ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
NUM 7:83 ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಏನಾನನ ಮಗ ಅಹೀರನ ಅರ್ಪಣೆಯು.
NUM 7:84 ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,
NUM 7:85 ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್.
NUM 7:86 ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್,
NUM 7:87 ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
NUM 7:88 ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60. ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
NUM 7:89 ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.
NUM 8:1 ಯೆಹೋವ ದೇವರು ಮೋಶೆಗೆ:
NUM 8:2 “ಆರೋನನ ಸಂಗಡ ಮಾತನಾಡಿ ಅವನಿಗೆ ಹೀಗೆ ಹೇಳಬೇಕು, ‘ನೀನು ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳೂ ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಪ್ರಕಾಶಕೊಡುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.”
NUM 8:3 ಆರೋನನು ಹಾಗೆಯೇ ಮಾಡಿ, ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಕೊಡುವಂತೆ ಅದರ ದೀಪಗಳನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಹಚ್ಚಿದನು.
NUM 8:4 ದೀಪಸ್ತಂಭವೂ ಅದರ ಬುಡಭಾಗವೂ, ಪುಷ್ಪಾಲಂಕಾರಗಳೂ ಬಂಗಾರದ ನಕಾಸಿ ಕೆಲಸದಿಂದ ಹೊಡೆದು ಮಾಡಲಾಗಿತ್ತು. ಯೆಹೋವ ದೇವರು ಮೋಶೆಗೆ ತೋರಿಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿದನು.
NUM 8:5 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 8:6 “ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡು ಅವರನ್ನು ಪ್ರತ್ಯೇಕಿಸಿ ಶುದ್ಧಮಾಡು.
NUM 8:7 ಅವರನ್ನು ಶುದ್ಧಮಾಡುವುದಕ್ಕೆ ಅವರಿಗೆ ಮಾಡಬೇಕಾದದ್ದೇನೆಂದರೆ ಶುದ್ಧೀಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಅವರು ಸರ್ವಾಂಗ ಕ್ಷೌರ ಮಾಡಿಸಿಕೊಳ್ಳಲಿ. ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧ ಮಾಡಿಕೊಳ್ಳಬೇಕು.
NUM 8:8 ಅವರು ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು, ಅದರೊಂದಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ದೋಷಪರಿಹಾರಕ ಬಲಿಗಾಗಿ ಮತ್ತೊಂದು ಹೋರಿಯನ್ನೂ ನೀನು ತೆಗೆದುಕೋ.
NUM 8:9 ಆಗ ನೀನು ಲೇವಿಯರನ್ನು ದೇವದರ್ಶನದ ಗುಡಾರದ ಮುಂದೆ ಕರೆತಂದು, ಇಸ್ರಾಯೇಲರ ಸಮೂಹವನ್ನೆಲ್ಲಾ ಒಟ್ಟುಗೂಡಿಸಬೇಕು.
NUM 8:10 ನೀನು ಲೇವಿಯರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕರೆತಂದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
NUM 8:11 ಲೇವಿಯರು ಇಸ್ರಾಯೇಲರ ಪರವಾಗಿ ಯೆಹೋವ ದೇವರ ಸೇವೆಯನ್ನು ಮಾಡುವುದಕ್ಕೆ ಸಿದ್ಧರಾಗುವಂತೆ ಆರೋನನು ಅವರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು.
NUM 8:12 “ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರಿಗೆ ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿಯೂ ಮತ್ತೊಂದು ಹೋರಿಯನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು.
NUM 8:13 ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಪುತ್ರರ ಮುಂದೆಯೂ ನಿಲ್ಲಿಸಿ, ಅವರನ್ನು ಯೆಹೋವ ದೇವರಿಗೆ ನೈವೇದ್ಯದಂತೆ ಸಮರ್ಪಿಸಬೇಕು.
NUM 8:14 ಹೀಗೆ ನೀನು ಲೇವಿಯರನ್ನು ಇಸ್ರಾಯೇಲರೊಳಗಿಂದ ಪ್ರತ್ಯೇಕಿಸಬೇಕು, ಆಗ ಲೇವಿಯರು ನನ್ನವರಾಗುವರು.
NUM 8:15 “ಅದರ ತರುವಾಯ ಲೇವಿಯರು ಸೇವೆ ಮಾಡವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸುವರು. ಆಗ ನೀನು ಅವರನ್ನು ಶುದ್ಧೀಮಾಡಿ, ನೈವೇದ್ಯದಂತೆ ಸಮರ್ಪಿಸಬೇಕು.
NUM 8:16 ಏಕೆಂದರೆ ಅವರು ಇಸ್ರಾಯೇಲರಲ್ಲಿ ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಚೊಚ್ಚಲು ಮಕ್ಕಳಿಗೆ ಬದಲಾಗಿ, ಅಂದರೆ ಇಸ್ರಾಯೇಲರ ಜೇಷ್ಠಪುತ್ರರಿಗೆ ಬದಲಾಗಿ ನಾನು ಅವರನ್ನೇ ನನಗೋಸ್ಕರ ತೆಗೆದುಕೊಂಡಿದ್ದೇನೆ.
NUM 8:17 ಏಕೆಂದರೆ ಇಸ್ರಾಯೇಲರಲ್ಲಿ ಮನುಷ್ಯರಾದರೂ ಪಶುಗಳಾದರೂ ಜೇಷ್ಠರಾದದ್ದೆಲ್ಲಾ ನನ್ನದೇ. ನಾನು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹರಿಸಿದಾಗ ಇಸ್ರಾಯೇಲರಲ್ಲಿ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತ್ಯೇಕಿಸಿಕೊಂಡೆನು.
NUM 8:18 ಇಸ್ರಾಯೇಲರಲ್ಲಿರುವ ಎಲ್ಲಾ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನು ನಾನು ತೆಗೆದುಕೊಂಡೆನು.
NUM 8:19 ಅವರು ದೇವದರ್ಶನದ ಗುಡಾರದಲ್ಲಿ ಇಸ್ರಾಯೇಲರ ಸೇವೆಯನ್ನು ಮಾಡುವುದಕ್ಕೂ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲರು ಸಮೀಪಿಸುವಾಗ ಇಸ್ರಾಯೇಲರೊಳಗೆ ವ್ಯಾಧಿಯು ಇರದಂತೆ ನಾನು ಲೇವಿಯರನ್ನು ಇಸ್ರಾಯೇಲರೊಳಗಿಂದ ಆರೋನನಿಗೂ, ಅವನ ಪುತ್ರರಿಗೂ ದಾನವಾಗಿ ಕೊಟ್ಟಿದ್ದೇನೆ.”
NUM 8:20 ಆಗ ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆಯೂ ಆರೋನನೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು.
NUM 8:21 ಲೇವಿಯರು ತಮ್ಮನ್ನು ಶುದ್ಧಿಮಾಡಿಕೊಂಡು, ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಯೆಹೋವ ದೇವರ ಮುಂದೆ ನೈವೇದ್ಯದಂತೆ ಅರ್ಪಿಸಿದನು. ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
NUM 8:22 ತರುವಾಯ ಲೇವಿಯರು ದೇವದರ್ಶನದ ಗುಡಾರದಲ್ಲಿ ಆರೋನನ ಮುಂದೆಯೂ, ಅವನ ಪುತ್ರರ ಮುಂದೆಯೂ ಅವರ ಸೇವೆ ಮಾಡುವುದಕ್ಕೆ ಒಳಗೆ ಪ್ರವೇಶಿಸಿದರು. ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮಾಡಿದನು.
NUM 8:23 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
NUM 8:24 “ಲೇವಿಯರಿಗೆ ಸಂಬಂಧಪಟ್ಟದ್ದು ಇದಾಗಿದೆ: ಇಪ್ಪತ್ತೈದು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ದೇವದರ್ಶನದ ಗುಡಾರದ ಸೇವೆಗಾಗಿ ಒಳಗೆ ಸೇರಬೇಕು.
NUM 8:25 ಆದರೆ ಐವತ್ತು ವರ್ಷದವರಾದ ನಂತರ ಸೇವೆಯನ್ನು ಬಿಟ್ಟು ನಿವೃತ್ತರಾಗಬೇಕು ಮತ್ತು ತದನಂತರ ಕೆಲಸಮಾಡಬಾರದು.
NUM 8:26 ಆದರೆ ಅವರು ದೇವದರ್ಶನದ ಗುಡಾರದಲ್ಲಿ ಅಪ್ಪಣೆಯನ್ನು ಕೈಗೊಂಡು ತಮ್ಮ ಸಹೋದರರೊಂದಿಗೆ ಕೆಲಸಮಾಡಲಿ, ಆದರೆ ಅವರು ಸೇವೆಯನ್ನು ತಾವಾಗಿ ಮಾಡಬಾರದು. ಈ ಪ್ರಕಾರ ನೀನು ಲೇವಿಯರಿಗೆ ಕರ್ತವ್ಯಗಳನ್ನು ಆಜ್ಞಾಪಿಸಬೇಕು,” ಎಂಬುದು.
NUM 9:1 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ವರ್ಷದ ಮೊದಲನೆಯ ತಿಂಗಳಿನಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಯ ಸಂಗಡ ಮಾತನಾಡಿ ಹೀಗೆ ಹೇಳಿದರು:
NUM 9:2 “ಇಸ್ರಾಯೇಲರು ಪಸ್ಕವನ್ನು ನೇಮಿಸಿದ ಸಮಯದಲ್ಲಿ ಆಚರಿಸಬೇಕು.
NUM 9:3 ಈ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಅದನ್ನು ಆಚರಿಸಬೇಕು. ಅದರ ಆಜ್ಞಾವಿಧಿಗಳ ಪ್ರಕಾರವಾಗಿಯೂ, ಅದರ ಎಲ್ಲಾ ನಿಯಮಗಳ ಪ್ರಕಾರವಾಗಿಯೂ ಅದನ್ನು ಆಚರಿಸಿರಿ.”
NUM 9:4 ಆಗ ಮೋಶೆಯು ಪಸ್ಕವನ್ನು ಆಚರಿಸುವುದಕ್ಕೆ ಇಸ್ರಾಯೇಲರ ಸಂಗಡ ಮಾತನಾಡಿದನು.
NUM 9:5 ಅವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆ ಸೀನಾಯಿ ಮರುಭೂಮಿಯಲ್ಲಿ ಪಸ್ಕವನ್ನು ಆಚರಿಸಿದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ, ಇಸ್ರಾಯೇಲರು ಮಾಡಿದರು.
NUM 9:6 ಆದರೆ ಕೆಲವು ಜನರು ಮನುಷ್ಯನ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿವಸದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ ಅದಕ್ಕೆ ಅದೇ ದಿನ ಅವರು ಮೋಶೆ ಮತ್ತು ಆರೋನರ ಬಳಿಗೆ ಬಂದು
NUM 9:7 ಮೋಶೆಯ ಸಂಗಡ ಮಾತನಾಡಿ, “ನಾವು ಮನುಷ್ಯನ ಶವದ ಸೋಂಕಿನಿಂದ ಅಶುದ್ಧರಾಗಿದ್ದೇವೆ. ಆದ್ದರಿಂದ ನಾವು ಇಸ್ರಾಯೇಲರೊಡನೆ ನೇಮಕವಾದ ಸಮಯದಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಲು ನಮಗೆ ಏಕೆ ಅಡ್ಡಿಯಾಗಬೇಕು,” ಎಂದರು.
NUM 9:8 ಮೋಶೆ ಅವರಿಗೆ, “ಸ್ವಲ್ಪ ಕಾಯಿರಿ, ಯೆಹೋವ ದೇವರು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುತ್ತಾರೋ ನಾನು ಕೇಳುತ್ತೇನೆ,” ಎಂದನು.
NUM 9:9 ಯೆಹೋವ ದೇವರು ಮೋಶೆ ಸಂಗಡ ಮಾತನಾಡಿ ಅವನಿಗೆ,
NUM 9:10 ನೀನು ಇಸ್ರಾಯೇಲರಿಗೆ, “ನಿಮ್ಮಲ್ಲಿಯೂ, ನಿಮ್ಮ ಸಂತತಿಯಲ್ಲಿಯೂ ಯಾವನಾದರೂ ಶವದ ಸೋಂಕಿನಿಂದ ಅಶುದ್ಧನಾಗಿದ್ದರೂ, ಇಲ್ಲವೆ ದೂರ ಪ್ರಯಾಣದಲ್ಲಿದ್ದರೂ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕು.
NUM 9:11 ಆದರೆ ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಆಚರಿಸಲಿ. ಆ ಕುರಿಯನ್ನು ಹುಳಿಯಿಲ್ಲದ ರೊಟ್ಟಿಗಳ ಸಂಗಡ ಕಹಿಯಾದ ಸೊಪ್ಪುಗಳೊಂದಿಗೆ ಊಟಮಾಡಬೇಕು.
NUM 9:12 ಅವರು ಅದರಿಂದ ಮರುದಿವಸಕ್ಕೆ ಏನನ್ನೂ ಉಳಿಸಬಾರದು. ಅದರಲ್ಲಿ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು, ಪಸ್ಕದ ಸಮಸ್ತ ಕಟ್ಟಳೆಗಳ ಪ್ರಕಾರವಾಗಿ ಅದನ್ನು ಆಚರಿಸಬೇಕು.
NUM 9:13 ಆದರೆ ಒಬ್ಬ ಮನುಷ್ಯನೂ ಆಚಾರವಾಗಿ ಶುದ್ಧನಾದವನು, ಪ್ರಯಾಣ ಮಾಡದವನಾಗಿದ್ದು ಪಸ್ಕವನ್ನು ಆಚರಿಸಲು ತಪ್ಪಿದರೆ, ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು. ಅವನು ಯೆಹೋವ ದೇವರ ಅರ್ಪಣೆಯನ್ನು ಅದರ ಸಮಯದಲ್ಲಿ ತರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
NUM 9:14 “ಪರದೇಶಿಯಾದವನು ನಿಮ್ಮ ಸಂಗಡ ಇದ್ದು, ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಬಯಸಿದರೆ, ಅದರ ಆಜ್ಞಾವಿಧಿಗಳ ಪ್ರಕಾರವೇ ಆಚರಿಸಲಿ. ಸ್ಥಳೀಯ ಮೂಲದ ಇಸ್ರಾಯೇಲರಿಗೂ ಮತ್ತು ನಿಮ್ಮ ನಡುವೆ ವಾಸಿಸುವ ಪರದೇಶಸ್ತನಿಗೂ ಒಂದೇ ನಿಯಮ ಇರಬೇಕು,” ಎಂದು ಹೇಳಿದರು.
NUM 9:15 ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರವನ್ನು ಮುಚ್ಚಿತು. ಸಂಜೆಯಿಂದ ಮುಂಜಾನೆಯವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು.
NUM 9:16 ಈ ಪ್ರಕಾರ ಯಾವಾಗಲೂ, ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು.
NUM 9:17 ಆ ಮೇಘವು ಗುಡಾರದ ಮೇಲಿನಿಂದ ಹೋದಾಗ, ಇಸ್ರಾಯೇಲರು ಪ್ರಯಾಣ ಮಾಡುತ್ತಿದ್ದರು, ಮೇಘವು ನೆಲಸಿದ ಸ್ಥಳದಲ್ಲಿ ಇಸ್ರಾಯೇಲರು ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಿದ್ದರು.
NUM 9:18 ಯೆಹೋವ ದೇವರ ಆಜ್ಞೆಯ ಪ್ರಕಾರ ಇಸ್ರಾಯೇಲರು ಪ್ರಯಾಣಮಾಡಿದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು.
NUM 9:19 ಮೇಘವು ದೇವದರ್ಶನದ ಗುಡಾರದ ಮೇಲೆ ಅನೇಕ ದಿವಸಗಳು ತಡಮಾಡಿದಾಗ, ಇಸ್ರಾಯೇಲರು ಯೆಹೋವ ದೇವರ ಅಪ್ಪಣೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುತ್ತಿದ್ದರು.
NUM 9:20 ಇದಲ್ಲದೆ ಮೇಘವು ಗುಡಾರದ ಮೇಲೆ ಸ್ವಲ್ಪ ದಿವಸಗಳು ಇರುವಾಗ, ಅವರು ಯೆಹೋವ ದೇವರ ಆಜ್ಞೆಯ ಪ್ರಕಾರ ಇಳಿದುಕೊಳ್ಳುತ್ತಿದ್ದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಿದ್ದರು.
NUM 9:21 ಮೇಘವು ಸಂಜೆಯಿಂದ ಮುಂಜಾನೆಯವರೆಗೆ ಇದ್ದು, ಬೆಳಿಗ್ಗೆ ಮೇಲಕ್ಕೆ ಎದ್ದಾಗ, ಅವರು ಪ್ರಯಾಣ ಮಾಡುತ್ತಿದ್ದರು, ಹಗಲುರಾತ್ರಿ ಇದ್ದು ಮೇಘವು ಮೇಲಕ್ಕೇರಿದಾಗ ಅವರು ಪ್ರಯಾಣ ಮಾಡುತ್ತಿದ್ದರು.
NUM 9:22 ಆ ಮೇಘವು ಎರಡು ದಿವಸಗಳಾದರೂ, ಒಂದು ತಿಂಗಳಾದರೂ, ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾಯೇಲರು ಪ್ರಯಾಣ ಮಾಡದೆ ಅಲ್ಲೇ ಇಳಿದುಕೊಳ್ಳುತ್ತಿದ್ದರು. ಅದು ಮೇಲೆ ಎದ್ದಾಗ ಮಾತ್ರ ಅವರು ಪ್ರಯಾಣ ಮಾಡುತ್ತಿದ್ದರು.
NUM 9:23 ಯೆಹೋವ ದೇವರ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಾ, ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಯೆಹೋವ ದೇವರು ಆಜ್ಞಾಪಿಸಿದಂತೆ ಯೆಹೋವ ದೇವರ ಅಪ್ಪಣೆಯನ್ನು ಕೈಗೊಳ್ಳುತ್ತಿದ್ದರು.
NUM 10:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದು:
NUM 10:2 “ನಕ್ಷೆಯ ಕೆಲಸದಿಂದ ಹೊಡೆದು ಮಾಡಿದ ಬೆಳ್ಳಿಯ ತಗಡಿನ ಎರಡು ತುತೂರಿಗಳನ್ನು ನೀನು ಮಾಡಿಸಬೇಕು. ಸಭೆಯನ್ನು ಕರೆಯುವುದಕ್ಕಾಗಿಯೂ, ಪಾಳೆಯಗಳ ಪ್ರಯಾಣಕ್ಕಾಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು.
NUM 10:3 ಅವುಗಳನ್ನು ಊದುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
NUM 10:4 ಒಂದನ್ನು ಮಾತ್ರ ಊದುವಾಗ, ಇಸ್ರಾಯೇಲರಲ್ಲಿ ಮುಖ್ಯಸ್ಥರಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.
NUM 10:5 ನೀವು ಜಯಧ್ವನಿಯಂತೆ ಊದುವಾಗ ಪೂರ್ವದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಮುಂದೆ ಹೊರಡಬೇಕು.
NUM 10:6 ನೀವು ಎರಡನೆಯ ಸಾರಿ ಆರ್ಭಟವಾಗಿ ಊದುವಾಗ, ದಕ್ಷಿಣದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಪ್ರಯಾಣ ಮಾಡಬೇಕು. ಅವರ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿ ಊದಬೇಕು.
NUM 10:7 ಆದರೆ ಸಭೆಯನ್ನು ಕೂಡಿಸುವಾಗ ನೀವು ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬೇಡಿರಿ.
NUM 10:8 “ಯಾಜಕರಾಗಿರುವ ಆರೋನನ ಪುತ್ರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು.
NUM 10:9 ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರವಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ಜನರನ್ನು ಎಚ್ಚರಿಸುವಂತೆ ತುತೂರಿಗಳನ್ನು ಆರ್ಭಟವಾಗಿ ಊದಬೇಕು. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನೆನಪು ಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ಬಿಡಿಸುವನು.
NUM 10:10 ನಿಮ್ಮ ಸಂತೋಷದ ದಿವಸದಲ್ಲಿಯೂ, ನಿಮ್ಮ ಹಬ್ಬಗಳಲ್ಲಿಯೂ ನಿಮ್ಮ ತಿಂಗಳಿನ ಆರಂಭದಲ್ಲಿಯೂ ತುತೂರಿಗಳನ್ನು ಊದಬೇಕು. ನಿಮ್ಮ ದಹನಬಲಿಗಳನ್ನೂ ಸಮಾಧಾನದ ಬಲಿಯನ್ನೂ ಅರ್ಪಿಸುವಾಗ ಅವುಗಳನ್ನು ಊದಬೇಕು. ಅವುಗಳ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.”
NUM 10:11 ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎದ್ದಿತು.
NUM 10:12 ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.
NUM 10:13 ಆಗ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಪ್ರಯಾಣಮಾಡಿದ್ದು ಇದು ಮೊದಲನೇ ಸಾರಿ.
NUM 10:14 ಯೆಹೂದನ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀನಾದಾಬನ ಮಗ ನಹಶೋನನು ಇದ್ದನು.
NUM 10:15 ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗ ನೆತನೆಯೇಲ್ ಇದ್ದನು.
NUM 10:16 ಜೆಬುಲೂನನ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗ ಎಲೀಯಾಬನು ಇದ್ದನು.
NUM 10:17 ಆಗ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ, ಮೆರಾರೀಯರೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
NUM 10:18 ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಶೆದೇಯೂರನ ಮಗ ಎಲೀಚೂರನು ಇದ್ದನು.
NUM 10:19 ಸಿಮೆಯೋನನ ಗೋತ್ರದ ಸೈನ್ಯದ ಮೇಲೆ ಚುರೀಷದ್ದೈಯನ ಮಗ ಶೆಲುಮೀಯೇಲನು ಇದ್ದನು.
NUM 10:20 ಗಾದನ ಗೋತ್ರದ ಸೈನ್ಯದ ಮೇಲೆ ದೆವುಯೇಲನ ಮಗ ಎಲ್ಯಾಸಾಫನು ಇದ್ದನು.
NUM 10:21 ಅವರ ಹಿಂದೆ ಪರಿಶುದ್ಧ ವಸ್ತುಗಳನ್ನು ಹೊರುವ ಕೊಹಾತ್ಯರು ಹೊರಟರು. ಇವರು ಬರುವಷ್ಟರೊಳಗೆ ಉಳಿದ ಲೇವಿಯರು ಗುಡಾರವನ್ನು ನಿಲ್ಲಿಸಿದರು.
NUM 10:22 ಎಫ್ರಾಯೀಮನ ಪಾಳೆಯದ ಧ್ವಜವು ಅವನ ಸೈನ್ಯಗಳ ಪ್ರಕಾರ ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀಹೂದನ ಮಗ ಎಲೀಷಾಮನು ಇದ್ದನು.
NUM 10:23 ಮನಸ್ಸೆಯ ಗೋತ್ರದ ಮೇಲೆ ಪೆದಾಚೂರನ ಮಗ ಗಮಲಿಯೇಲನು ಇದ್ದನು.
NUM 10:24 ಬೆನ್ಯಾಮೀನನ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗ ಅಬೀದಾನನು ಇದ್ದನು.
NUM 10:25 ದಾನನ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಇದ್ದನು.
NUM 10:26 ಆಶೇರನ ಗೋತ್ರದ ಸೈನ್ಯಗಳ ಮೇಲೆ ಒಕ್ರಾನನ ಮಗ ಪಗೀಯೇಲನು ಇದ್ದನು.
NUM 10:27 ನಫ್ತಾಲಿಯ ಗೋತ್ರದ ಸೈನ್ಯದ ಮೇಲೆ ಏನಾನ ಮಗ ಅಹೀರನು ಇದ್ದನು.
NUM 10:28 ಈ ಪ್ರಕಾರ ಇಸ್ರಾಯೇಲರು ತಮ್ಮ ಗೋತ್ರಗಳ ಪ್ರಕಾರ ಪ್ರಯಾಣವಾಗಿ ಹೊರಟರು.
NUM 10:29 ಮೋಶೆ ತನ್ನ ಮಾವನಾಗಿದ್ದ ಮಿದ್ಯಾನನಾದ ರೆಯೂವೇಲನ ಮಗ ಹೊಬಾಬನಿಗೆ, “ಯೆಹೋವ ದೇವರು ನಮಗೆ ಕೊಡುತ್ತೇನೆಂದು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸಂಗಡ ನೀನೂ ಬಾ, ನಾವು ನಿನಗೆ ಒಳ್ಳೆಯದನ್ನು ಮಾಡುವೆವು. ಏಕೆಂದರೆ ಯೆಹೋವ ದೇವರು ಇಸ್ರಾಯೇಲರನ್ನು ಕುರಿತು ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾರೆ,” ಎಂದು ಹೇಳಿದನು.
NUM 10:30 ಆಗ ಅವನು ಅವನಿಗೆ, “ನಾನು ಬರುವುದಿಲ್ಲ. ನನ್ನ ದೇಶಕ್ಕೂ ನನ್ನ ಬಂಧುಗಳ ಬಳಿಗೂ ನಾನು ಹೋಗುತ್ತೇನೆ,” ಎಂದನು.
NUM 10:31 ಅದಕ್ಕೆ ಮೋಶೆ, “ನಮ್ಮನ್ನು ಬಿಡಬೇಡ. ಏಕೆಂದರೆ ನಾವು ಎಲ್ಲಿ ಇಳಿದುಕೊಳ್ಳಬೇಕೆಂಬುದು ನಿನಗೆ ಮಾತ್ರ ತಿಳಿದಿದೆ. ನೀನು ನಮಗೆ ಕಣ್ಣುಗಳಾಗಿರುವೆ.
NUM 10:32 ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.
NUM 10:33 ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು.
NUM 10:34 ಅವರು ಪಾಳೆಯದಿಂದ ಹೊರಟಾಗ, ಯೆಹೋವ ದೇವರ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು.
NUM 10:35 ಇದಲ್ಲದೆ ಮಂಜೂಷವು ಹೊರಡುವಾಗ ಮೋಶೆಯು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಎದ್ದೇಳಿರಿ, ನಿಮ್ಮ ಶತ್ರುಗಳು ಚದರಿಹೋಗಲಿ. ನಿಮ್ಮನ್ನು ಹಗೆ ಮಾಡುವವರು ನಿಮ್ಮ ಎದುರಿನಿಂದ ಓಡಿಹೋಗಲಿ.”
NUM 10:36 ಮಂಜೂಷವು ನಿಂತಾಗ ಅವನು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಸಾವಿರಾರು ಇಸ್ರಾಯೇಲರ ಕುಟುಂಬಗಳ ಬಳಿಗೆ ಹಿಂದಿರುಗು.”
NUM 11:1 ಇಸ್ರಾಯೇಲ್ ಜನರು ತಮಗೆ ಕಷ್ಟವಾಯಿತೆಂದು ಗೊಣಗುಟ್ಟಿದಾಗ, ಯೆಹೋವ ದೇವರು ಅದನ್ನು ಕೇಳಿ ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿ ಬೀಳುವಂತೆ ಮಾಡಿದ್ದರಿಂದ ಅವರ ಪಾಳೆಯದ ಕಟ್ಟಕಡೆಯ ಭಾಗದಲ್ಲಿದ್ದವರು ಸುಟ್ಟುಹೋದರು.
NUM 11:2 ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ, ಮೋಶೆಯು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು ಆಗ ಬೆಂಕಿಯು ಆರಿಹೋಯಿತು.
NUM 11:3 ಯೆಹೋವ ದೇವರು ಹತ್ತಿಸಿದ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು.
NUM 11:4 ಅವರೊಳಗಿದ್ದ ಮಿಶ್ರ ಗುಂಪಿನ ಜನರು ಮಾಂಸಕ್ಕಾಗಿ ದುರಾಶೆಪಟ್ಟರು. ಇಸ್ರಾಯೇಲರು ಸಹ ತಿರುಗಿ ಅಳುತ್ತಾ, “ನಮಗೆ ಮಾಂಸವನ್ನು ತಿನ್ನುವುದಕ್ಕೆ ಕೊಡುವವರು ಯಾರು?
NUM 11:5 ನಾವು ಈಜಿಪ್ಟ್ ದೇಶದಲ್ಲಿ ಉಚಿತವಾಗಿ ತಿಂದ ಮೀನನ್ನೂ ಸವತೆ ಕಾಯಿಯನ್ನೂ ಕರ್ಬೂಜಗಳನ್ನೂ ನೀರುಳ್ಳಿ ಈರುಳ್ಳಿ ಬೆಳ್ಳುಳ್ಳಿಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ.
NUM 11:6 ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು, ಈ ಮನ್ನವಲ್ಲದೆ ಬೇರೆ ಯಾವುದೂ ನಮ್ಮ ಕಣ್ಣುಗಳ ಮುಂದೆ ಇರುವುದಿಲ್ಲ,” ಎಂದರು.
NUM 11:7 ಆ ಮನ್ನವು ಕೊತ್ತಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸಿತು.
NUM 11:8 ಜನರು ಹೊರಗೆ ಹೋಗಿ ಅದನ್ನು ಕೂಡಿಸಿ, ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ, ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡುತ್ತಿದ್ದರು. ಅದರ ರುಚಿಯು ಓಲಿವ್ ಎಣ್ಣೆಯಿಂದ ಮಾಡಿದ ರೊಟ್ಟಿಯಹಾಗೆ ಇತ್ತು.
NUM 11:9 ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುವಾಗ ಅದರೊಂದಿಗೆ ಮನ್ನವು ಬೀಳುತ್ತಿತ್ತು.
NUM 11:10 ಆಗ ಪ್ರತಿಯೊಂದು ಕುಟುಂಬದ ಜನರು ತಮ್ಮ ಗುಡಾರದ ಬಾಗಿಲಿನಲ್ಲಿ ನಿಂತು ಅಳುವುದನ್ನು ಮೋಶೆ ಕೇಳಿದನು. ಯೆಹೋವ ದೇವರು ಬಹಳ ಕೋಪಗೊಂಡರು. ಮೋಶೆ ಗಲಿಬಿಲಿಗೊಂಡನು.
NUM 11:11 ಮೋಶೆಯು ಯೆಹೋವ ದೇವರಿಗೆ, “ಈ ಎಲ್ಲಾ ಜನರ ಭಾರವನ್ನು ನನ್ನ ಮೇಲೆ ಹೊರಿಸಿ ನೀವು ಏಕೆ ತೊಂದರೆಯನ್ನು ನಿಮ್ಮ ಸೇವಕನ ಮೇಲೆ ತಂದಿದ್ದೀರಿ? ನಿಮ್ಮನ್ನು ಅತೃಪ್ತಿಗೊಳಿಸಲು ನಾನೇನು ಮಾಡಿದ್ದೇನೆ?
NUM 11:12 ನಾನು ಈ ಎಲ್ಲಾ ಜನರನ್ನು ಗರ್ಭಧರಿಸಿ ಜನ್ಮವಿತ್ತೆನೋ? ದಾದಿಯು ಹಸುಗೂಸನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವರ ಪಿತೃಗಳಿಗೆ ನೀವು ವಾಗ್ದಾನ ಮಾಡಿದ ದೇಶಕ್ಕೆ ನಡೆಸಬೇಕೆಂದು ನೀವು ನನಗೇಕೆ ಹೇಳಿದ್ದೀರಿ?
NUM 11:13 ಈ ಸಮಸ್ತ ಜನರಿಗೆ ಕೊಡುವುದಕ್ಕೆ ಮಾಂಸವು ನನಗೆ ಎಲ್ಲಿಂದ ದೊರಕುವುದು? ‘ನಮಗೆ ತಿನ್ನಲು ಮಾಂಸವನ್ನು ಕೊಡು,’ ಎಂದು ನನ್ನ ಬಳಿಗೆ ಬಂದು ಅಳುತ್ತಿದ್ದಾರೆ.
NUM 11:14 ನಾನು ಒಬ್ಬೊಂಟಿಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವುದಕ್ಕೆ ಶಕ್ತನಲ್ಲ. ಅದು ನನಗೆ ಅತಿದೊಡ್ಡ ಭಾರವಾಗಿದೆ.
NUM 11:15 ಈ ರೀತಿಯಲ್ಲಿ ನೀವು ನನ್ನನ್ನು ನಡೆಸುವುದಾದರೆ, ಈಗಲೇ ನನ್ನನ್ನು ಕೊಂದುಬಿಡಿ. ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತರೆ, ನಾನು ನನ್ನ ಸ್ವಂತ ನಾಶವನ್ನು ಎದುರಿಸದಂತೆ ಕಾಪಾಡಿ,” ಎಂದನು.
NUM 11:16 ಯೆಹೋವ ದೇವರು ಮೋಶೆಗೆ, “ಜನರ ನಾಯಕರೆಂದೂ, ಹಿರಿಯರೆಂದೂ, ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂತಹ ಇಸ್ರಾಯೇಲರ ಹಿರಿಯರೊಳಗಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ, ಅವರನ್ನು ದೇವದರ್ಶನದ ಗುಡಾರದ ಕಡೆಗೆ ಕರೆದುಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
NUM 11:17 ಆಗ ನಾನು ಇಳಿದುಬಂದು, ಅಲ್ಲಿ ನಿನ್ನ ಸಂಗಡ ಮಾತನಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಸ್ವಲ್ಪವನ್ನು ಅವರಿಗೂ ಕೊಡುವೆನು. ಆಗ ನೀನು ಅದನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಜನರ ಭಾರವನ್ನು ಹೊರುವರು,” ಎಂದು ಹೇಳಿದರು.
NUM 11:18 ಜನರಿಗೆ ನೀನು, “ ‘ನಾಳೆಗಾಗಿ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ. ಆಗ ಮಾಂಸವನ್ನು ತಿನ್ನುವಿರಿ. ನಮಗೆ ಯಾವನು ಮಾಂಸವನ್ನು ತಿನ್ನುವುದಕ್ಕೆ ಕೊಡುವನು? ಈಜಿಪ್ಟ್ ದೇಶದಲ್ಲಿ ನಮಗೆ ಒಳ್ಳೆಯದು ಇತ್ತು,’ ಎಂದು ಹೇಳಿ, ಯೆಹೋವ ದೇವರು ಕೇಳುವಂತೆ ಅತ್ತಿರಿ. ಆದಕಾರಣ ಯೆಹೋವ ದೇವರು ನಿಮಗೆ ತಿನ್ನುವುದಕ್ಕೆ ಮಾಂಸವನ್ನು ಕೊಡುವನು ಮತ್ತು ನೀವು ಅದನ್ನು ತಿನ್ನುವಿರಿ.
NUM 11:19 ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವೂ ಅಲ್ಲ, ಐದು ದಿನವೂ ಅಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ.
NUM 11:20 ಅದು ನಿಮ್ಮ ಮೂಗಿನಿಂದ ಬಂದು, ನಿಮಗೆ ಅಸಹ್ಯವಾಗುವ ತನಕ ಪೂರ್ತಿ ತಿಂಗಳವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವ ದೇವರನ್ನು ಅಲಕ್ಷ್ಯಮಾಡಿ, ಅವರ ಎದುರಿನಲ್ಲಿ ಅತ್ತು, ‘ನಾವು ಏಕೆ ಈಜಿಪ್ಟಿನಿಂದ ಬಂದೆವು,’ ಎಂದು ಹೇಳುತ್ತೀರಲ್ಲಾ, ಎಂದು ಹೇಳು,” ಎಂದರು.
NUM 11:21 ಆದರೆ ಮೋಶೆಯು, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಅವರು ಒಂದು ತಿಂಗಳು ಪೂರ್ತಿ ತಿನ್ನುವ ಹಾಗೆ, ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀವು ಹೇಳಿದ್ದೀರಿ.
NUM 11:22 ಅವರಿಗೆ ಸಾಕಾಗುವ ಹಾಗೆ ಕುರಿದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ಮೀನುಗಳನ್ನೆಲ್ಲಾ ಕೂಡಿಸಿ ತರಬೇಕೋ?” ಎಂದು ಕೇಳಿದನು.
NUM 11:23 ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಎಂದು ನೀನು ನೋಡುವೆ,” ಎಂದರು.
NUM 11:24 ಆಗ ಮೋಶೆ ಹೋಗಿ ಯೆಹೋವ ದೇವರ ಮಾತುಗಳನ್ನು ಜನರಿಗೆ ಹೇಳಿ, ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ, ಗುಡಾರದ ಸುತ್ತಲೂ ನಿಲ್ಲಿಸಿದನು.
NUM 11:25 ಯೆಹೋವ ದೇವರು ಮೇಘದೊಳಗಿಂದ ಇಳಿದು, ಅವನ ಸಂಗಡ ಮಾತನಾಡಿ, ಅವನ ಮೇಲಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ತೆಗೆದು, ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟರು. ಆದ್ದರಿಂದ ಆತ್ಮವು ಅವರ ಮೇಲೆ ನೆಲೆಯಾಗಿದ್ದಾಗ ಅವರು ಪ್ರವಾದಿಸಿದರು. ಆಮೇಲೆ ಅವರು ಪ್ರವಾದಿಸಲಿಲ್ಲ.
NUM 11:26 ಆದರೆ ಇಬ್ಬರು ಮನುಷ್ಯರು ಪಾಳೆಯದಲ್ಲಿ ಉಳಿದರು. ಅವರಲ್ಲಿ ಒಬ್ಬನ ಹೆಸರು ಎಲ್ದಾದ್. ಮತ್ತೊಬ್ಬನ ಹೆಸರು ಮೇದಾದ್. ಇವರು ನಾಯಕರ ಪಟ್ಟಿಯಲ್ಲಿದ್ದವರಾಗಿದ್ದರು. ಇವರ ಮೇಲೆ ಆತ್ಮವು ನೆಲೆಯಾಯಿತು. ಇವರು ಗುಡಾರಕ್ಕೆ ಹೊರಟು ಹೋಗದೆ, ಪಾಳೆಯದಲ್ಲಿ ಪ್ರವಾದಿಸುತ್ತಿದ್ದರು.
NUM 11:27 ಆಗ ಒಬ್ಬ ಯೌವನಸ್ಥನು ಓಡಿಬಂದು ಮೋಶೆಗೆ, “ಎಲ್ದಾದನೂ, ಮೇದಾದನೂ ಪಾಳೆಯದಲ್ಲಿ ಪ್ರವಾದಿಸುತ್ತಾರೆ,” ಎಂದನು.
NUM 11:28 ಅದಕ್ಕೆ ಯೌವನಸ್ಥರಲ್ಲಿ ಒಬ್ಬನೂ, ಮೋಶೆಯ ಸೇವಕನೂ ಆಗಿದ್ದ ನೂನನ ಮಗ ಯೆಹೋಶುವನು, “ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ,” ಎಂದನು.
NUM 11:29 ಮೋಶೆಯು ಅವನಿಗೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚು ಪಡುತ್ತೀಯೋ? ಯೆಹೋವ ದೇವರ ಜನರೆಲ್ಲಾ ಪ್ರವಾದಿಗಳಾಗಿದ್ದು, ಯೆಹೋವ ದೇವರು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೆಯದು,” ಎಂದನು.
NUM 11:30 ಆಗ ಮೋಶೆಯೂ, ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
NUM 11:31 ಯೆಹೋವ ದೇವರ ಕಡೆಯಿಂದ ಒಂದು ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು, ಪಾಳೆಯದ ಸುತ್ತಲೂ ಈ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು, ಆ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು.
NUM 11:32 ಜನರು ಆ ದಿನವೆಲ್ಲಾ, ಆ ರಾತ್ರಿಯೆಲ್ಲಾ, ಮರು ದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಸಾವಿರ ಕಿಲೋಗ್ರಾಮಿನಷ್ಟು ಕೂಡಿಸಿದನು. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.
NUM 11:33 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ, ಅದನ್ನು ಅಗಿಯುವುದಕ್ಕಿಂತ ಮುಂಚೆ ಯೆಹೋವ ದೇವರು ಜನರನ್ನು ಘೋರ ವ್ಯಾಧಿಯಿಂದ ಸಾಯಿಸಿದನು.
NUM 11:34 ಆಶೆ ಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್ ಹತಾವ ಎಂದು ಹೆಸರಾಯಿತು.
NUM 11:35 ತರುವಾಯ ಜನರು ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿಗೆ ಪ್ರಯಾಣಮಾಡಿ ಬಂದು, ಅಲ್ಲಿ ಇಳಿದುಕೊಂಡರು.
NUM 12:1 ಮೋಶೆಯು ಕೂಷ್ ದೇಶದ ಸ್ತ್ರೀಯನ್ನು ವಿವಾಹವಾಗಿದ್ದನು. ಆಕೆಯ ನಿಮಿತ್ತವಾಗಿ ಮಿರ್ಯಾಮಳೂ ಆರೋನನೂ ಮೋಶೆಗೆ ವಿರುದ್ಧವಾಗಿ ಮಾತನಾಡಲಿಕ್ಕೆ ಪ್ರಾರಂಭಿಸಿದರು.
NUM 12:2 ಅವರು, “ಯೆಹೋವ ದೇವರು ಮೋಶೆಯ ಮುಖಾಂತರ ಮಾತ್ರವೇ ಮಾತನಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?” ಎಂದರು. ಅವರು ಆಡಿದ ಮಾತು ಯೆಹೋವ ದೇವರಿಗೆ ಕೇಳಿಸಿತು.
NUM 12:3 ಆದರೆ ಮೋಶೆ ಎಂಬವನು ಭೂಲೋಕದಲ್ಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ದೀನನಾಗಿದ್ದನು.
NUM 12:4 ಯೆಹೋವ ದೇವರು ಫಕ್ಕನೆ ಮೋಶೆಗೂ ಆರೋನನಿಗೂ ಮಿರ್ಯಾಮಳಿಗೂ, “ನೀವು ಮೂವರು ಹೊರಗೆ ದೇವದರ್ಶನ ಗುಡಾರದ ಸಮೀಪಕ್ಕೆ ಬನ್ನಿರಿ,” ಎಂದರು. ಆಗ ಆ ಮೂವರೂ ಹೊರಗೆ ಬಂದರು.
NUM 12:5 ಯೆಹೋವ ದೇವರು ಮೇಘ ಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು, ಆರೋನನನ್ನೂ ಮಿರ್ಯಾಮಳನ್ನೂ ಕರೆದಾಗ, ಅವರಿಬ್ಬರು ಮುಂದೆ ಬಂದರು.
NUM 12:6 ಯೆಹೋವ ದೇವರು ಅವರಿಗೆ ಹೀಗೆ ಹೇಳಿದನು, “ನನ್ನ ಮಾತುಗಳನ್ನು ಈಗ ಕೇಳಿರಿ: “ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಯೆಹೋವ ದೇವರಾದ ನಾನು ದರ್ಶನದಲ್ಲಿ ಪ್ರಕಟಿಸುವೆನು, ಇಲ್ಲವೆ ಕನಸಿನಲ್ಲಿಯೂ ನಾನು ಅವನೊಡನೆ ಮಾತನಾಡುವೆನು.
NUM 12:7 ಆದರೆ ನನ್ನ ಸೇವಕನಾದ ಮೋಶೆಯು ಹಾಗಲ್ಲ. ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ.
NUM 12:8 ನಾನು ಗೂಢವಾಗಿ ಅಲ್ಲ ಸ್ಪಷ್ಟವಾಗಿ, ಮುಖಾಮುಖಿಯಾಗಿ ಅಂದರೆ, ಪ್ರತ್ಯಕ್ಷವಾಗಿ ಅವನ ಸಂಗಡ ಮಾತನಾಡುತ್ತೇನೆ. ಅವನು ಯೆಹೋವ ದೇವರ ರೂಪವನ್ನು ದೃಷ್ಟಿಸುವನು. ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡುವುದಕ್ಕೆ ಏಕೆ ಭಯಪಡಲಿಲ್ಲ?”
NUM 12:9 ಆಗ ಯೆಹೋವ ದೇವರು ಅವರ ಮೇಲೆ ಕೋಪಗೊಂಡು ಹೊರಟು ಹೋದರು.
NUM 12:10 ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು. ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ, ಇಗೋ, ಅವಳು ಕುಷ್ಠರೋಗಿಯಾಗಿದ್ದಳು.
NUM 12:11 ಆರೋನನು ಮೋಶೆಗೆ, “ಅಯ್ಯೋ ನನ್ನ ಒಡೆಯನೇ, ನಾವು ಪಾಪಮಾಡಿದೆವು. ಬುದ್ಧಿ ಇಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.
NUM 12:12 ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತು ಹೋದ ಶಿಶುವಿನ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ,” ಎಂದನು.
NUM 12:13 ಮೋಶೆಯು ಯೆಹೋವ ದೇವರಿಗೆ, “ದೇವರೇ, ಅವಳನ್ನು ಈಗ ಗುಣಪಡಿಸು, ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ,” ಎಂದನು.
NUM 12:14 ಆಗ ಯೆಹೋವ ದೇವರು ಮೋಶೆಗೆ, “ಆಕೆಯ ತಂದೆ ಅವಳ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗಿರುವುದಿಲ್ಲವೇ? ಹಾಗಾದರೆ ಆಕೆಯು ಏಳು ದಿವಸ ಪಾಳೆಯದ ಹೊರಗೆ ಇರಲಿ, ತರುವಾಯ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದರು.
NUM 12:15 ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿ ಇಟ್ಟರು. ಮಿರ್ಯಾಮಳು ತಿರುಗಿ ಒಳಗೆ ಬರುವವರೆಗೆ ಜನರು ಪ್ರಯಾಣ ಮಾಡಲಿಲ್ಲ.
NUM 12:16 ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.
NUM 13:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 13:2 “ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಜನರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು,” ಎಂದರು.
NUM 13:3 ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಪಾರಾನ್ ಮರುಭೂಮಿಯಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾಯೇಲರ ಮುಖ್ಯಸ್ಥರಾಗಿದ್ದರು.
NUM 13:4 ಅವರ ಹೆಸರುಗಳು ಯಾವುವೆಂದರೆ: ರೂಬೇನನ ಗೋತ್ರದ ಜಕ್ಕೂರನ ಮಗ ಶಮ್ಮೂವ,
NUM 13:5 ಸಿಮೆಯೋನ್ ಗೋತ್ರದ ಹೋರಿಯನ ಮಗ ಶಾಫಾಟನು,
NUM 13:6 ಯೆಹೂದ ಗೋತ್ರದ ಯೆಫುನ್ನೆಯ ಮಗ ಕಾಲೇಬನು,
NUM 13:7 ಇಸ್ಸಾಕಾರ್ ಗೋತ್ರದ ಯೋಸೇಫನ ಮಗ ಇಗಾಲ್,
NUM 13:8 ಎಫ್ರಾಯೀಮ್ ಗೋತ್ರದ ನೂನನ ಮಗ ಹೋಶೇಯ,
NUM 13:9 ಬೆನ್ಯಾಮೀನ್ ಗೋತ್ರದ ರಾಫೂವನ ಮಗ ಪಲ್ಟೀ,
NUM 13:10 ಜೆಬುಲೂನ್ ಗೋತ್ರದ ಸೋದೀಯ ಮಗ ಗದ್ದೀಯೇಲ್,
NUM 13:11 ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗ ಗದ್ದೀ,
NUM 13:12 ದಾನನ ಗೋತ್ರದ ಗೆಮಲ್ಲೀಯನ ಮಗ ಅಮ್ಮಿಯೇಲ್,
NUM 13:13 ಆಶೇರ್ ಗೋತ್ರದ ಮೀಕಾಯೇಲನ ಮಗ ಸೆತೂರ್,
NUM 13:14 ನಫ್ತಾಲಿ ಗೋತ್ರದ ವಾಪೆಸೀಯನ ಮಗ ನಹಬೀ.
NUM 13:15 ಗಾದನ ಗೋತ್ರದ ಮಾಕೀಯನ ಮಗ ಗೆಯೂಯೇಲ್.
NUM 13:16 ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ಯೆಹೋಶುವ ಎಂದು ಹೆಸರಿಟ್ಟನು.
NUM 13:17 ಮೋಶೆ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ನೆಗೆವ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ,
NUM 13:18 ಆ ದೇಶವು ಎಂಥಾದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳವರೋ, ಬಲಹೀನರೋ? ಸ್ವಲ್ಪ ಜನರೋ, ಬಹಳ ಜನರೋ? ಎಂದೂ,
NUM 13:19 ಅವರು ವಾಸಿಸುವ ದೇಶವು ಎಂಥಾದ್ದೋ? ಅದು ಒಳ್ಳೆಯದಾಗಿದೆಯೋ, ಕೆಟ್ಟದ್ದಾಗಿದೆಯೋ? ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ? ಅವರು ವಾಸಿಸುವುದು ಡೇರೆಗಳಲ್ಲಿಯೋ, ಬಲವಾದ ಕೋಟೆಗಳಲ್ಲಿಯೋ? ಎಂದೂ,
NUM 13:20 ಆ ಭೂಮಿಯು ಎಂಥಾದ್ದೋ? ಸಾರವಾದದ್ದೋ? ನಿಸ್ಸಾರವಾದದ್ದೋ? ಮರಗಳುಳ್ಳದ್ದೋ? ಇಲ್ಲದಿರುವುದೋ? ಎಂದು ನೋಡಿರಿ. ನೀವು ಧೈರ್ಯವುಳ್ಳವರಾಗಿದ್ದು, ಆ ಭೂಮಿಯ ಫಲವನ್ನು ತರಬೇಕು,” ಎಂದನು. ಆ ಕಾಲವು ಪ್ರಥಮ ದ್ರಾಕ್ಷಿ ಹಣ್ಣುಗಳ ಕಾಲವಾಗಿತ್ತು.
NUM 13:21 ಆಗ ಅವರು ಏರಿಹೋಗಿ ಚಿನ್ ಎಂಬ ಮರುಭೂಮಿಯಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನವರೆಗೂ ದೇಶವನ್ನು ಸಂಚರಿಸಿ ನೋಡಿದರು.
NUM 13:22 ಅವರು ನೆಗೆವನ್ನು ದಾಟಿ ಹೆಬ್ರೋನಿನವರೆಗೆ ಬಂದರು. ಅಲ್ಲಿ ಅನಾಕನ ಮಕ್ಕಳಾದ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳು ಮೊದಲು ನಿರ್ಮಿಸಲಾಗಿತ್ತು.
NUM 13:23 ಅವರು ಎಷ್ಕೋಲ್ ಹಳ್ಳದವರೆಗೂ ಬಂದು, ಅಲ್ಲಿ ದ್ರಾಕ್ಷಿ ಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು, ಅದನ್ನು ಅಡ್ಡ ಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು. ಇದಲ್ಲದೆ ದಾಳಿಂಬೆ, ಅಂಜೂರ ಹಣ್ಣುಗಳನ್ನು ತೆಗೆದುಕೊಂಡು ಹೋದರು.
NUM 13:24 ಇಸ್ರಾಯೇಲರು ಅಲ್ಲಿ ದ್ರಾಕ್ಷಿ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು.
NUM 13:25 ಅವರು ದೇಶವನ್ನು ಸಂಚರಿಸಿ ನೋಡಿ, ನಲವತ್ತು ದಿವಸಗಳಾದ ಮೇಲೆ ತಿರುಗಿ ಬಂದರು.
NUM 13:26 ಅವರು ಹೋಗಿ ಮೋಶೆ ಆರೋನರ ಬಳಿಗೂ, ಇಸ್ರಾಯೇಲರ ಸಮಸ್ತ ಸಭೆಯ ಬಳಿಗೂ ಪಾರಾನ್ ಮರುಭೂಮಿಯಲ್ಲಿರುವ ಕಾದೇಶಿಗೂ ಬಂದು, ಅವರಿಗೂ, ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ, ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
NUM 13:27 ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ. ಅದರ ಫಲವು ಇವೇ.
NUM 13:28 ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು. ಪಟ್ಟಣಗಳು ಭದ್ರವಾಗಿಯೂ, ಬಹಳ ದೊಡ್ಡದಾಗಿಯೂ ಇವೆ. ಅನಾಕನ ಮಕ್ಕಳನ್ನು ನಾವು ಅಲ್ಲಿ ಕಂಡೆವು.
NUM 13:29 ಅಮಾಲೇಕ್ಯರು ದೇಶದ ನೆಗೆವನಲ್ಲಿ ವಾಸವಾಗಿದ್ದಾರೆ. ಹಿತ್ತಿಯರೂ ಯೆಬೂಸಿಯರೂ ಅಮೋರಿಯರೂ ಪರ್ವತಗಳಲ್ಲಿಯೂ; ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸವಾಗಿದ್ದಾರೆ,” ಎಂದರು.
NUM 13:30 ನಂತರ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ, “ನಾವು ತಕ್ಷಣವೇ ಏರಿಹೋಗಿ ಅದನ್ನು ಸ್ವಾಧೀನ ಮಾಡಿಕೊಳ್ಳೋಣ. ಏಕೆಂದರೆ ಅದನ್ನು ಜಯಿಸಲು ನಾವು ನಿಜವಾಗಿಯೂ ಶಕ್ತರಾಗಿದ್ದೇವೆ,” ಎಂದನು.
NUM 13:31 ಆದರೆ ಅವನ ಸಂಗಡ ಹೋದ ಜನರು, “ಆ ಜನರ ಬಳಿಗೆ ಹೋಗುವುದಕ್ಕೆ ನಮ್ಮಿಂದಾಗುವುದಿಲ್ಲ, ಅವರು ನಮಗಿಂತ ಬಲಿಷ್ಠರಾಗಿದ್ದಾರೆ,” ಎಂದರು.
NUM 13:32 ಅವರು ಸಂಚರಿಸಿ ನೋಡಿದಂಥ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿ ಬಂದ ದೇಶವು ತನ್ನಲ್ಲಿ ವಾಸವಾಗಿರುವವರನ್ನೇ ತಿಂದುಬಿಡುವ ದೇಶವಾಗಿದೆ. ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾ ಶರೀರದ ಮನುಷ್ಯರು.
NUM 13:33 ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಮಹಾಶರೀರವುಳ್ಳ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳ ಹಾಗೆ ಇದ್ದೆವು. ಅವರ ದೃಷ್ಟಿಗೂ ನಾವು ಹಾಗೆಯೇ ಕಾಣಿಸಿದೆವು,” ಎಂದರು.
NUM 14:1 ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು.
NUM 14:2 ಇಸ್ರಾಯೇಲರೆಲ್ಲರು ಮೋಶೆಗೂ ಆರೋನನಿಗೂ ವಿರೋಧವಾಗಿ ಗೊಣಗುಟ್ಟಿದರು. ಅವರು, “ನಾವು ಈಜಿಪ್ಟ್ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಮರುಭೂಮಿಯಲ್ಲಾದರೂ ಸತ್ತಿದ್ದರೆ ಚೆನ್ನಾಗಿತ್ತು.
NUM 14:3 ನಾವು ಖಡ್ಗದಿಂದ ಕೊಲೆಯಾಗುವ ಹಾಗೆಯೂ ನಮ್ಮ ಹೆಂಡತಿಯರು ಮಕ್ಕಳು ಸುಲಿಗೆಯಾಗುವ ಹಾಗೆಯೂ ಯೆಹೋವ ದೇವರು ನಮ್ಮನ್ನು ಈ ದೇಶಕ್ಕೆ ಏಕೆ ಬರಮಾಡಿದ್ದಾರೆ? ಈಜಿಪ್ಟ್ ದೇಶಕ್ಕೆ ನಾವು ತಿರುಗಿ ಹೋಗುವುದು ನಮಗೆ ಒಳ್ಳೆಯದಲ್ಲವೋ?
NUM 14:4 ನಾವು ನಾಯಕನನ್ನು ನೇಮಿಸಿಕೊಂಡು ಈಜಿಪ್ಟ್ ದೇಶಕ್ಕೆ ಹಿಂದಿರುಗೋಣ ಬನ್ನಿರಿ,” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
NUM 14:5 ಆಗ ಮೋಶೆಯೂ ಆರೋನನೂ ಇಸ್ರಾಯೇಲರ ಸಮಸ್ತ ಜನರ ಕೂಟದ ಮುಂದೆ ಅಡ್ಡಬಿದ್ದರು.
NUM 14:6 ಇದಲ್ಲದೆ ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,
NUM 14:7 ಇಸ್ರಾಯೇಲರ ಸಮಸ್ತ ಜನಸಮೂಹಕ್ಕೆ, “ಸಂಚರಿಸಿ ನೋಡುವುದಕ್ಕೆ ನಾವು ದಾಟಿಹೋದ ದೇಶವು ಅತ್ಯುತ್ತಮವಾದ ದೇಶವೇ.
NUM 14:8 ಯೆಹೋವ ದೇವರು ನಮ್ಮನ್ನು ಇಷ್ಟಪಟ್ಟರೆ ಹಾಲೂ ಜೇನೂ ಹರಿಯುವ ದೇಶವಾಗಿರುವ ಆ ದೇಶಕ್ಕೆ ನಮ್ಮನ್ನು ಬರಮಾಡಿ, ಅದನ್ನು ನಮಗೆ ಕೊಡುವರು.
NUM 14:9 ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು.
NUM 14:10 ಆಗ ಸಭೆಯವರೆಲ್ಲರೂ ಅವರಿಗೆ ಕಲ್ಲೆಸೆಯಬೇಕೆಂದಿದ್ದರು. ಯೆಹೋವ ದೇವರ ಮಹಿಮೆಯು ದೇವದರ್ಶನ ಗುಡಾರದಲ್ಲಿ ಇಸ್ರಾಯೇಲರಿಗೆಲ್ಲಾ ಪ್ರತ್ಯಕ್ಷವಾಯಿತು.
NUM 14:11 ಆಗ ಯೆಹೋವ ದೇವರು ಮೋಶೆಗೆ, “ಈ ಜನರು ಎಷ್ಟರವರೆಗೆ ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ಮಾಡಿದ ಸಕಲ ಸೂಚಕಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಎಷ್ಟು ಮಾತ್ರಕ್ಕು ನಂಬದೆ ಇರುವರು?
NUM 14:12 ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲ ಮಾಡುವೆನು. ನಿನ್ನನ್ನು ಅವರಿಗಿಂತ ದೊಡ್ಡದಾದ ಮತ್ತು ಬಲವುಳ್ಳ ಜನಾಂಗವನ್ನಾಗಿ ಮಾಡುವೆನು,” ಎಂದರು.
NUM 14:13 ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ!
NUM 14:14 ಅವರು ಈ ದೇಶದ ನಿವಾಸಿಗಳಿಗೆ ಅದನ್ನು ಹೇಳುವರು. ನೀವು ಈ ಜನರ ಸಂಗಡ ಇದ್ದೀಯೆಂದೂ, ಯೆಹೋವ ದೇವರಾದ ನೀವೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀರಿ ಎಂದೂ ನೀವು ಹಗಲು ಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀರಿ ಎಂದೂ ನೀವಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಎಂದೂ ಅವರು ಈಗಾಗಲೇ ಕೇಳಿದ್ದಾರೆ.
NUM 14:15 ಈಗ ನೀವು ಈ ಜನರನ್ನೆಲ್ಲಾ ಕೊಂದುಹಾಕಿದರೆ, ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳು ನಿಮ್ಮ ವಿಷಯದಲ್ಲಿ,
NUM 14:16 ಯೆಹೋವ ದೇವರು ಈ ಜನರನ್ನು ಅವರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶಕ್ಕೆ ತರಲಾರದ ಕಾರಣ ಅವರನ್ನು ಮರುಭೂಮಿಯಲ್ಲಿ ಕೊಂದುಹಾಕಿದರು,” ಎಂದು ಹೇಳುವರು.
NUM 14:17 “ಈಗ ನೀವು ಹೇಳಿದ ಪ್ರಕಾರ ಯೆಹೋವ ದೇವರ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.
NUM 14:18 ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ?
NUM 14:19 ನಿಮ್ಮ ಪ್ರೀತಿಯು ದೊಡ್ಡದಾಗಿರುವ ಪ್ರಕಾರವೂ ನೀವು ಈಜಿಪ್ಟಿನಿಂದ ಇಲ್ಲಿಯವರೆಗೆ ಈ ಜನರ ಪಾಪಗಳನ್ನು ಮನ್ನಿಸಿದ ಪ್ರಕಾರ ಈಗಲೂ ಈ ಜನರ ಪಾಪವನ್ನು ಮನ್ನಿಸಿರಿ,” ಎಂದು ಬೇಡಿಕೊಂಡನು.
NUM 14:20 ಆಗ ಯೆಹೋವ ದೇವರು, “ನಿನ್ನ ಮಾತಿನ ಪ್ರಕಾರ ಮನ್ನಿಸಿದ್ದೇನೆ.
NUM 14:21 ಆದರೆ ನನ್ನ ಜೀವದಾಣೆ, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು.
NUM 14:22 ಏಕೆಂದರೆ ನನ್ನ ಮಹಿಮೆಯನ್ನೂ, ಈಜಿಪ್ಟ್ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ ನಾನು ಮಾಡಿದ ಸೂಚಕಕಾರ್ಯಗಳನ್ನೂ ನೋಡಿದ ಈ ಸಕಲ ಜನರು, ನನ್ನನ್ನು ಈಗ ಹತ್ತು ಸಾರಿ ಪರೀಕ್ಷಿಸಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,
NUM 14:23 ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ.
NUM 14:24 ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ಬೇರೆ ಆತ್ಮವಿದ್ದುದರಿಂದಲೂ, ಅವನು ಹೃದಯಪೂರ್ವಕವಾಗಿ ನನ್ನನ್ನು ಹಿಂಬಾಲಿಸಿದ್ದುದರಿಂದಲೂ ಅವನು ಸಂಚರಿಸಿ ಬಂದ ಆ ದೇಶಕ್ಕೆ ಅವನನ್ನು ಸೇರಿಸುವೆನು. ಅವನ ಸಂತಾನವು ಅದನ್ನು ಸ್ವಾಧೀನಪಡಿಸಿಕೊಳ್ಳುವುದು.
NUM 14:25 ಅಮಾಲೇಕ್ಯರೂ, ಕಾನಾನ್ಯರೂ ತಗ್ಗಿನಲ್ಲಿ ವಾಸ ಮಾಡುತ್ತಿರುವುದರಿಂದ ನಾಳೆ ನೀವು ತಿರುಗಿಕೊಂಡು, ಕೆಂಪುಸಮುದ್ರದ ಮಾರ್ಗವಾಗಿ ಮರುಭೂಮಿಗೆ ಹೊರಡಿರಿ,” ಎಂದರು.
NUM 14:26 ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,
NUM 14:27 “ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ.
NUM 14:28 ಆದ್ದರಿಂದ ನೀನು ಅವರಿಗೆ, ‘ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.
NUM 14:29 ಈ ಮರುಭೂಮಿಯಲ್ಲಿ ನನಗೆ ವಿರೋಧವಾಗಿ ಗೊಣಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸತ್ತು ಹೋಗುವಿರಿ.
NUM 14:30 ಯೆಫುನ್ನೆಯ ಮಗ ಕಾಲೇಬನೂ, ನೂನನ ಮಗ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡುವುದಕ್ಕೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವೆಲ್ಲರೂ ಬಾರದೆ ಇರುವಿರಿ.
NUM 14:31 ಆದರೆ ಸೆರೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು, ನೀವು ಅಲಕ್ಷ್ಯಮಾಡಿದ ದೇಶವನ್ನು ಅವರು ಅನುಭವಿಸುವರು.
NUM 14:32 ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಮರುಭೂಮಿಯಲ್ಲಿ ಬೀಳುವುವು.
NUM 14:33 ಇದಲ್ಲದೆ ನಿಮ್ಮ ಮಕ್ಕಳು ನಲವತ್ತು ವರುಷ ಮರುಭೂಮಿಯಲ್ಲಿ ಅಲೆದಾಡಿ, ನಿಮ್ಮ ಹೆಣಗಳು ಮರುಭೂಮಿಯಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಅಪನಂಬಿಗಸ್ತಿಕೆಯನ್ನು ಅನುಭವಿಸುವಿರಿ.
NUM 14:34 ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.
NUM 14:35 ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು.
NUM 14:36 ದೇಶವನ್ನು ಪರೀಕ್ಷಿಸುವುದಕ್ಕೆ ಮೋಶೆಯ ಅಪ್ಪಣೆಯ ಮೇರೆಗೆ ಹಿಂದಿರುಗಿ, ಆ ದೇಶದ ವಿಷಯವಾಗಿ ಕೆಟ್ಟ ಸುದ್ದಿಯನ್ನು ಎಬ್ಬಿಸಿ, ಸಮಸ್ತ ಸಭೆಯನ್ನು ಮೋಶೆಗೆ ವಿರೋಧವಾಗಿ ಗೊಣಗುಟ್ಟುವಂತೆ ಮಾಡಿದರು.
NUM 14:37 ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವ ದೇವರ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
NUM 14:38 ಆದರೆ ದೇಶವನ್ನು ಪರೀಕ್ಷಿಸುವುದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ಉಳಿದರು.
NUM 14:39 ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು.
NUM 14:40 ಮರುದಿವಸ ಬೆಳಿಗ್ಗೆ ಅವರು ಎದ್ದು, ಬೆಟ್ಟದ ತುದಿಯ ಮೇಲಕ್ಕೆ ಏರಿ, “ಇಗೋ, ಯೆಹೋವ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವುದಕ್ಕೆ ಇದ್ದೇವೆ. ನಾವು ಪಾಪಮಾಡಿದ್ದೇವೆ,” ಎಂದರು.
NUM 14:41 ಆಗ ಮೋಶೆಯು, “ನೀವು ಏಕೆ ಹೀಗೆ ಯೆಹೋವ ದೇವರ ಆಜ್ಞೆಯನ್ನು ಮೀರುತ್ತೀರಿ? ಅದು ಸಫಲವಾಗುವುದಿಲ್ಲ.
NUM 14:42 ಯೆಹೋವ ದೇವರು ನಿಮ್ಮ ಸಂಗಡ ಇಲ್ಲ ಅದಕ್ಕಾಗಿ ನಿಮ್ಮ ಶತ್ರುಗಳು ನಿಮ್ಮನ್ನು ಪರಾಜಯಗೊಳಿಸದಂತೆ ಏರಿ ಹೋಗಬೇಡಿರಿ.
NUM 14:43 ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿರುವುದರಿಂದ ನೀವು ಅವರ ಖಡ್ಗಕ್ಕೆ ತುತ್ತಾಗುವಿರಿ. ನೀವು ಯೆಹೋವ ದೇವರ ಕಡೆಯಿಂದ ತಿರುಗಿದ ಕಾರಣ, ಆತನು ನಿಮ್ಮ ಸಂಗಡ ಇರುವುದಿಲ್ಲ,” ಎಂದನು.
NUM 14:44 ಆದರೆ ಅವರು ಹಟಮಾಡಿ, ಬೆಟ್ಟದ ತುದಿಯ ಮೇಲೆ ಏರಿಹೋದರು. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.
NUM 14:45 ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ ಅಟ್ಟಿಬಿಟ್ಟರು.
NUM 15:1 ಯೆಹೋವ ದೇವರು ಮೋಶೆಗೆ,
NUM 15:2 “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ನಾನು ನಿಮಗೆ ಕೊಡುವ ನಿಮ್ಮ ನಿವಾಸಗಳ ದೇಶಕ್ಕೆ ಬಂದಾಗ,
NUM 15:3 ಯೆಹೋವ ದೇವರಿಗೆ ಪಶುಗಳಿಂದಾದರೂ ಕುರಿಗಳಿಂದಾದರೂ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ, ಹರಕೆಯನ್ನು ಈಡೇರಿಸುವ ಬಲಿಯನ್ನಾಗಲಿ, ಉಚಿತವಾದ ಸಮರ್ಪಣೆಯಾಗಲಿ, ನಿಮ್ಮ ಪವಿತ್ರ ಹಬ್ಬಗಳಲ್ಲಿಯಾಗಲಿ ಯೆಹೋವ ದೇವರಿಗೆ ಬೆಂಕಿಯಿಂದ ಅರ್ಪಿಸಲಾಗಲಿ.
NUM 15:4 ಅದರೊಂದಿಗೆ ಯೆಹೋವ ದೇವರಿಗೆ ತನ್ನ ಬಲಿಯನ್ನು ಅರ್ಪಿಸುವಾಗ ಧಾನ್ಯ ಅರ್ಪಣೆಗಾಗಿ ಸುಮಾರು ಒಂದುವರೆ ಕಿಲೋಗ್ರಾಂ ಗೋಧಿ ಹಿಟ್ಟನ್ನು ಒಂದು ಲೀಟರ್ ಓಲಿವ್ ಎಣ್ಣೆಗೆ ಬೆರೆಸಲಾಗುತ್ತದೆ.
NUM 15:5 ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡ ಒಂದು ಕುರಿಗೋಸ್ಕರ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
NUM 15:6 “ ‘ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯ ಅರ್ಪಣೆಗಾಗಿ ಸುಮಾರು ಒಂದೂವರೆ ಲೀಟರ್ ಓಲಿವ್ ಎಣ್ಣೆ ಬೆರೆಸಿದ ಮೂರು ಕಿಲೋಗ್ರಾಂ ನಯವಾದ ಹಿಟ್ಟನ್ನು ನೀನು ಸಿದ್ಧಮಾಡಬೇಕು.
NUM 15:7 ಪಾನದ ಸಮರ್ಪಣೆಯಾಗಿ ಯೆಹೋವ ದೇವರಿಗೆ ಸುವಾಸನೆಗಾಗಿ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
NUM 15:8 “ ‘ನೀನು ಯೆಹೋವ ದೇವರಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾಧಾನದ ಬಲಿಗಳಿಗಾಗಿ ಹೋರಿಯನ್ನು ನೀನು ಸಿದ್ಧಮಾಡುವಾಗ,
NUM 15:9 ನೀವು ಆ ಹೋರಿಯೊಂದಿಗೆ ಧಾನ್ಯ ಸಮರ್ಪಣೆಯಾಗಿ ಸುಮಾರು ಎರಡು ಲೀಟರ್ ಓಲಿವ್ ಎಣ್ಣೆ ಬೆರೆಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು ಅರ್ಪಿಸಬೇಕು.
NUM 15:10 ಇದಲ್ಲದೆ, ಪಾನದ್ರವ್ಯಕ್ಕಾಗಿ ಒಂದುವರೆ ಲೀಟರ್ ದ್ರಾಕ್ಷಾರಸವನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಯಾಗುವುದು.
NUM 15:11 ಹೀಗೆ ಒಂದು ಹೋರಿ, ಟಗರು, ಕುರಿಮರಿ, ಮೇಕೆ, ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ಈ ಪ್ರಕಾರ ಮಾಡತಕ್ಕದ್ದು.
NUM 15:12 ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡತಕ್ಕದ್ದು.
NUM 15:13 “ ‘ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಅರ್ಪಿಸುವಾಗ ಸ್ಥಳೀಯ ಮೂಲದ ಇಸ್ರಾಯೇಲರೆಲ್ಲರೂ ಇವುಗಳನ್ನು ಈ ರೀತಿಯಾಗಿಯೇ ಮಾಡಬೇಕು.
NUM 15:14 ನಿಮ್ಮ ಸಂಗಡ ಪ್ರಯಾಣ ಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ, ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಸಮರ್ಪಿಸಿದಾಗ, ನೀವು ಹೇಗೆ ಮಾಡುತ್ತೀರೋ ಹಾಗೆಯೇ ಅವನು ಮಾಡಲಿ.
NUM 15:15 ನಿಮಗೂ ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಕಟ್ಟಳೆ ಇರಬೇಕು. ಯೆಹೋವ ದೇವರ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು.
NUM 15:16 ನಿಮಗೂ, ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು,’ ” ಎಂದರು.
NUM 15:17 ಯೆಹೋವ ದೇವರು ಮೋಶೆಗೆ,
NUM 15:18 “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ: ‘ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದನಂತರ,
NUM 15:19 ಆ ದೇಶದ ಆಹಾರವನ್ನು ತಿನ್ನುವಾಗ, ನೀವು ಅದರಲ್ಲಿ ಸ್ವಲ್ಪವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು.
NUM 15:20 ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮ ಫಲವನ್ನು ಕಾಣಿಕೆಯಾಗಿ ಅರ್ಪಿಸುವಂತೆ ಕಣಕದಿಂದ ಮಾಡುವ ನಿಮ್ಮ ಪ್ರಥಮ ಬೀಸಿದ ಹಿಟ್ಟಿನ ರೊಟ್ಟಿಯನ್ನು ಸಮರ್ಪಿಸಬೇಕು.
NUM 15:21 ನೀವು ಮತ್ತು ನಿಮ್ಮ ಸಂತತಿಯವರು ನಿಮ್ಮ ಕಣದಿಂದ ಮಾಡಿದ ಪ್ರಥಮ ರೊಟ್ಟಿಯನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು.
NUM 15:22 “ ‘ನೀವು ತಪ್ಪಿ ಯೆಹೋವ ದೇವರು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ,
NUM 15:23 ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು, ನಿಮ್ಮ ಸಂತತಿಗಳವರೆಗೂ ಯೆಹೋವ ದೇವರು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ,
NUM 15:24 ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ, ಸಭೆಯು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು ಕ್ರಮದ ಪ್ರಕಾರ ಅದರ ಧಾನ್ಯ ಸಮರ್ಪಣೆಯನ್ನೂ, ಪಾನದ ಸಮರ್ಪಣೆಯನ್ನೂ, ಪಾಪ ಪರಿಹಾರಕ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.
NUM 15:25 ಯಾಜಕನು ಇಸ್ರಾಯೇಲರ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತ ಮಾಡಬೇಕು. ಏಕೆಂದರೆ ಅದು ತಿಳಿಯದೆ ಮಾಡಲಾಗಿತ್ತು. ಆದರೂ ಅವರು ಯೆಹೋವ ದೇವರಿಗೆ ದಹನಬಲಿಯಾಗಿ ತಮ್ಮ ಸಮರ್ಪಣೆಯನ್ನೂ, ತಮ್ಮ ತಪ್ಪಿಗೋಸ್ಕರ ಪಾಪ ಪರಿಹಾರಕ ಬಲಿಯನ್ನೂ ಯೆಹೋವ ದೇವರ ಮುಂದೆ ತರಬೇಕು.
NUM 15:26 ಆಗ ಇಸ್ರಾಯೇಲರ ಸಮಸ್ತ ಸಮೂಹದವರಿಗೂ, ಅವರೊಳಗೆ ಪರಕೀಯನಾಗಿ ಪ್ರವಾಸಿಯಾಗಿರುವವನಿಗೂ ಅದು ಕ್ಷಮಾಪಣೆಯಾಗುವುದು. ಏಕೆಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು.
NUM 15:27 “ ‘ಯಾವನಾದರೂ ಒಬ್ಬನು ತಿಳಿಯದೆ ಪಾಪ ಮಾಡುವುದಾದರೆ, ಪಾಪ ಪರಿಹಾರಕ ಬಲಿಗಾಗಿ ಒಂದು ವರ್ಷದ ಮೇಕೆಯನ್ನು ತರಬೇಕು.
NUM 15:28 ತಿಳಿಯದೆ ಪಾಪ ಮಾಡಿದವನಿಗೋಸ್ಕರ ಯಾಜಕನು ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅದು ಪಾಪಕ್ಷಮಾಪಣೆಯಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
NUM 15:29 ಸ್ಥಳೀಯ ಮೂಲದ ಇಸ್ರಾಯೇಲರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ನಿಯಮ ಇರಬೇಕು.
NUM 15:30 “ ‘ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ, ಪರಕೀಯನಾಗಲಿ ಬೇಕೆಂದು ಪಾಪಮಾಡಿದರೆ, ಅವನು ಯೆಹೋವ ದೇವರನ್ನು ನಿಂದಿಸಿದ್ದಾನೆ. ಆ ಮನುಷ್ಯನನ್ನು ಸ್ವಜನರಿಂದ ತೆಗೆದುಹಾಕಬೇಕು.
NUM 15:31 ಅವನು ಯೆಹೋವ ದೇವರ ವಾಕ್ಯವನ್ನು ಅವಮಾನ ಮಾಡಿ, ಅವರ ಆಜ್ಞೆಗಳನ್ನು ಮೀರಿದ್ದರಿಂದ, ಆ ಮನುಷ್ಯನನ್ನು ನಿಶ್ಚಯವಾಗಿ ತೆಗೆದುಹಾಕಬೇಕು. ಅವನ ಅಕ್ರಮವು ಅವನ ಮೇಲೆ ಇರುವುದು,’ ” ಎಂದರು.
NUM 15:32 ಇಸ್ರಾಯೇಲರು ಮರುಭೂಮಿಯಲ್ಲಿದ್ದಾಗ, ಅವರು ಸಬ್ಬತ್ ದಿನದಲ್ಲಿ ಸೌದೆಯನ್ನು ಕೂಡಿಸುವ ಒಬ್ಬನನ್ನು ಕಂಡರು.
NUM 15:33 ಆಗ ಸೌದೆ ಕೂಡಿಸುವುದನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೆ ಮತ್ತು ಸಮಸ್ತ ಸಮುದಾಯದ ಬಳಿಗೆ ತಂದು,
NUM 15:34 ಅವನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ, ಅವನನ್ನು ಕಾವಲಲ್ಲಿ ಇಟ್ಟರು.
NUM 15:35 ಆಗ ಯೆಹೋವ ದೇವರು ಮೋಶೆಗೆ, “ಆ ಮನುಷ್ಯನು ಖಂಡಿತವಾಗಿಯೂ ಸಾಯಲೇಬೇಕು, ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು,” ಎಂದರು.
NUM 15:36 ಆಗ ಸಮೂಹದವರೆಲ್ಲಾ ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವನನ್ನು ಕಲ್ಲೆಸೆದು ಕೊಂದರು.
NUM 15:37 ಯೆಹೋವ ದೇವರು ಮೋಶೆಗೆ,
NUM 15:38 “ನೀನು ಇಸ್ರಾಯೇಲರಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಅವರು ತಮ್ಮ ತಲತಲಾಂತರಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಅಂಚಿನಲ್ಲಿ ಗೊಂಡೆಗಳನ್ನು ಮಾಡಿಕೊಳ್ಳಬೇಕು. ಸೆರಗಿನ ಗೊಂಡೆಗಳ ಮೇಲೆ ನೀಲಿ ದಾರವನ್ನು ಹಾಕಬೇಕು.
NUM 15:39 ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು, ಅದನ್ನು ನೋಡುವಾಗ, ಯೆಹೋವ ದೇವರ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರಮಾಡಿ, ನಿಮ್ಮ ಹೃದಯ ಹಾಗೂ ಇಚ್ಛೆಗನುಸಾರ ನಿಮ್ಮ ಕಣ್ಣುಗಳು ಜಾರತ್ವ ಮಾಡುವಂತೆ ಹಿಂಬಾಲಿಸದೆ ಇರುವಿರಿ.
NUM 15:40 ನೀವು ನನ್ನ ಆಜ್ಞೆಗಳನ್ನೆಲ್ಲಾ ನೆನಸಿ, ಅವುಗಳ ಪ್ರಕಾರಮಾಡಿ, ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು.
NUM 15:41 ನಾನು ನಿಮ್ಮ ದೇವರಾಗುವದಕ್ಕೆ ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
NUM 16:1 ಆಗ ಲೇವಿಯ ಮಗನಾದ ಕೊಹಾತನ ಮೊಮ್ಮಗ ಇಚ್ಹಾರನ ಮಗ ಕೋರಹನೂ ರೂಬೇನ್ ಗೋತ್ರದವರಾದ ಎಲೀಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಜನರನ್ನು ತೆಗೆದುಕೊಂಡು
NUM 16:2 ಇಸ್ರಾಯೇಲರೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯ ಪ್ರಸಿದ್ಧರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಗೆ ಎದುರಾಗಿ ತಿರುಗಿಬಿದ್ದರು.
NUM 16:3 ಅವರು ಮೋಶೆಗೂ, ಆರೋನನಿಗೂ ವಿರೋಧವಾಗಿ ಕೂಡಿಕೊಂಡು, “ನೀವು ಹೆಚ್ಚು ಅಧಿಕಾರ ತೆಗೆದುಕೊಳ್ಳುತ್ತೀರಿ, ಏಕೆಂದರೆ ಈ ಸಮೂಹದಲ್ಲಿರುವ ಎಲ್ಲರೂ ಪರಿಶುದ್ಧರು. ಯೆಹೋವ ದೇವರು ಅವರ ಮಧ್ಯದಲ್ಲಿದ್ದಾರೆ. ಹೀಗಿರಲಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಅವರಿಗೆ ಕೇಳಿದರು.
NUM 16:4 ಮೋಶೆಯು ಇದನ್ನು ಕೇಳಿದಾಗ, ಬೋರಲು ಬಿದ್ದು,
NUM 16:5 ಕೋರಹನಿಗೂ, ಅವನ ಸಮಸ್ತ ಸಮೂಹಕ್ಕೂ, “ಯೆಹೋವ ದೇವರು ತಮ್ಮ ಹತ್ತಿರ ಬರಮಾಡಿಕೊಳ್ಳುವ ಹಾಗೆ ತನ್ನವರು ಯಾರಾರೆಂಬುದನ್ನು ಮತ್ತು ಪರಿಶುದ್ಧ ಯಾರು ಎಂಬುದನ್ನು ನಾಳೆ ತೋರಿಸುವರು. ಅವರು ಯಾರನ್ನು ಆಯ್ದುಕೊಳ್ಳುವರೋ, ಅವರನ್ನು ಹತ್ತಿರ ಬರಮಾಡಿಕೊಳ್ಳುವರು. ನೀವು ಇದನ್ನು ಮಾಡಿರಿ:
NUM 16:6 ಕೋರಹನೂ, ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು,
NUM 16:7 ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ, ಅವುಗಳ ಮೇಲೆ ಧೂಪವನ್ನು ಯೆಹೋವ ದೇವರ ಮುಂದೆ ಹಾಕಿರಿ. ಆಗ ಯೆಹೋವ ದೇವರು ಯಾವನನ್ನು ಆಯ್ದುಕೊಳ್ಳುವರೋ ಅವನೇ ಪರಿಶುದ್ಧನಾಗಿರುವನು. ಲೇವಿಯರೇ, ನೀವು ಬಹಳ ಮಿತಿಮೀರಿ ಹೋಗುತ್ತಿರುವಿರಿ,” ಎಂದನು.
NUM 16:8 ಮೋಶೆಯು ಕೋರಹನಿಗೆ, “ಲೇವಿಯ ಪುತ್ರರೇ, ಈಗ ಕೇಳಿರಿ.
NUM 16:9 ಯೆಹೋವ ದೇವರ ಗುಡಾರದ ಸೇವೆಯನ್ನು ಮಾಡುವುದಕ್ಕೂ, ಸಮೂಹದ ಮುಂದೆ ಇರುವ ಅವರ ಸೇವೆಯಲ್ಲಿ ನಿಲ್ಲುವುದಕ್ಕೂ ಇಸ್ರಾಯೇಲರ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲರೊಳಗಿಂದಲೇ ನಿಮ್ಮನ್ನು ಪ್ರತ್ಯೇಕಿಸಿದ್ದು, ನಿಮಗೆ ಅಲ್ಪವಾಗಿ ತೋರಿತೋ?
NUM 16:10 ದೇವರು ನಿನ್ನನ್ನೂ, ನಿನ್ನ ಸಂಗಡ ಲೇವಿಯ ಪುತ್ರರಾದ ನಿನ್ನ ಸಹೋದರರೆಲ್ಲರನ್ನೂ ತಮ್ಮ ಹತ್ತಿರ ಬರಮಾಡಿಕೊಂಡಿದ್ದಾರೆ. ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ?
NUM 16:11 ಈ ಕಾರಣದಿಂದ ನೀನೂ, ನಿನ್ನ ಸಮಸ್ತ ಗುಂಪು ಯೆಹೋವ ದೇವರಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ. ನೀವು ಆರೋನನಿಗೆ ವಿರೋಧವಾಗಿ ಗೊಣಗುಟ್ಟುವುದು ಯಾಕೆ?” ಎಂದು ಹೇಳಿದನು.
NUM 16:12 ಆಗ ಮೋಶೆ ಎಲೀಯಾಬನ ಪುತ್ರರಾದ ದಾತಾನನನ್ನೂ, ಅಬೀರಾಮನನ್ನೂ ಕರೆಯಕಳುಹಿಸಿದನು. ಆದರೆ ಅವರು, “ನಾವು ಬರುವುದಿಲ್ಲ.
NUM 16:13 ನೀನು ಮರುಭೂಮಿಯಲ್ಲಿ ನಮ್ಮನ್ನು ಸಾಯಿಸುವುದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಹೊರಕ್ಕೆ ಕರೆದುಕೊಂಡು ಬಂದದ್ದು ನಿನಗೆ ಸಾಕಾಗಲಿಲ್ಲವೋ? ನೀನು ಅರಸನಾಗಿ ನಮ್ಮನ್ನು ಆಳಬೇಕೋ?
NUM 16:14 ಅಷ್ಟುಮಾತ್ರವಲ್ಲದೆ, ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತೆಗೆದುಕೊಂಡು ಬರಲಿಲ್ಲ. ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ನಮಗೆ ಸ್ವಾಧೀನಕ್ಕೆ ಕೊಡಲಿಲ್ಲ. ಈ ಮನುಷ್ಯರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ!” ಎಂದರು.
NUM 16:15 ಆಗ ಮೋಶೆಯು ಬಹಳವಾಗಿ ಕೋಪಿಸಿಕೊಂಡು ಯೆಹೋವ ದೇವರಿಗೆ, “ಅವರ ಬಲಿಯನ್ನು ನೀವು ಗೌರವಿಸಬೇಡಿ, ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ,” ಎಂದು ಹೇಳಿದನು.
NUM 16:16 ಮೋಶೆಯು ಕೋರಹನಿಗೆ, “ನೀನೂ, ನಿನ್ನ ಸಮೂಹವೆಲ್ಲವೂ ಯೆಹೋವ ದೇವರ ಎದುರಿನಲ್ಲಿ ಇರಬೇಕು. ನೀನೂ, ಅವರೂ, ಆರೋನನೂ ನಾಳೆ ಬಂದು,
NUM 16:17 ಒಬ್ಬೊಬ್ಬನು ತನ್ನ ತನ್ನ ಧೂಪ ಪಾತ್ರೆಯನ್ನು ತೆಗೆದುಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ, ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ಧೂಪ ಪಾತ್ರೆಗಳಾದ ನಿಮ್ಮ ಧೂಪ ಪಾತ್ರೆಗಳನ್ನು ಯೆಹೋವ ದೇವರ ಎದುರಿಗೆ ತನ್ನಿರಿ. ನೀನೂ, ಆರೋನನೂ, ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತೆಗೆದುಕೊಂಡು ಬನ್ನಿರಿ,” ಎಂದನು.
NUM 16:18 ಆಗ ಅವರು ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ, ಧೂಪವನ್ನು ಅದರ ಮೇಲೆ ಹಾಕಿ, ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು.
NUM 16:19 ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಕೂಡಿಸಿದನು. ಆಗ ಯೆಹೋವ ದೇವರ ಮಹಿಮೆಯು ಸಮಸ್ತ ಸಮೂಹಕ್ಕೆ ತೋರಿಬಂತು.
NUM 16:20 ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,
NUM 16:21 “ಈ ಜನರ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು.
NUM 16:22 ಆಗ ಅವರು ಬೋರಲು ಬಿದ್ದು, “ದೇವರೇ, ಎಲ್ಲಾ ಮಾನವರ ಆತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀವು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳುತ್ತೀರೋ?” ಎಂದರು.
NUM 16:23 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 16:24 “ನೀನು ಜನರ ಸಮೂಹಕ್ಕೆ, ‘ಕೋರಹ, ದಾತಾನ್, ಅಬೀರಾಮರ ನಿವಾಸದ ಸುತ್ತಲಿಂದ ದೂರವಿರಬೇಕು,’ ಎಂದು ಅವರಿಗೆ ಆಜ್ಞಾಪಿಸು,” ಎಂದರು.
NUM 16:25 ಮೋಶೆಯು ಎದ್ದು ದಾತಾನ್, ಅಬೀರಾಮರ ಬಳಿಗೆ ಹೋದನು. ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು.
NUM 16:26 ಅವನು ಸಮೂಹದವರಿಗೆ, “ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿಹೋಗಿರಿ. ನೀವು ಅವರ ಎಲ್ಲಾ ಪಾಪಗಳ ದೆಸೆಯಿಂದ ನಾಶವಾಗದಂತೆ ಅವರಿಗಿರುವ ಯಾವುದನ್ನು ಮುಟ್ಟಬೇಡಿರಿ,” ಎಂದನು.
NUM 16:27 ಆಗ ಅವರು ಕೋರಹನ ದಾತಾನ್, ಅಬೀರಾಮರ ಡೇರೆಗಳ ಸುತ್ತಲಿಂದ ದೂರ ಹೋದರು. ದಾತಾನನೂ, ಅಬೀರಾಮನೂ ತಮ್ಮ ಹೆಂಡತಿಯರೂ, ಪುತ್ರರೂ, ಚಿಕ್ಕ ಮಕ್ಕಳೂ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡರು.
NUM 16:28 ಆಗ ಮೋಶೆಯು, “ಈ ಕಾರ್ಯಗಳನ್ನೆಲ್ಲಾ ಮಾಡುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ, ಅವುಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲ ಎಂದು ನೀವು ಇದರಿಂದ ತಿಳಿದುಕೊಳ್ಳುವಿರಿ.
NUM 16:29 ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ, ಇಲ್ಲವೆ ಎಲ್ಲಾ ಮನುಷ್ಯರ ಶಿಕ್ಷೆ ಇವರಿಗೂ ಪ್ರಾಪ್ತವಾದರೆ ಯೆಹೋವ ದೇವರು ನನ್ನನ್ನು ಕಳುಹಿಸಲಿಲ್ಲ.
NUM 16:30 ಆದರೆ ಯೆಹೋವ ದೇವರು ಹೊಸದನ್ನು ಮಾಡಿ, ಭೂಮಿಯು ತನ್ನ ಬಾಯಿತೆರೆದು, ಇವರನ್ನೂ, ಇವರಿಗಿರುವ ಎಲ್ಲದನ್ನೂ ನುಂಗಿ, ಇವರು ತೀವ್ರವಾಗಿ ಪಾತಾಳಕ್ಕೆ ಇಳಿಯುವಂತೆ ಮಾಡಿ, ಈ ಮನುಷ್ಯರು ಯೆಹೋವ ದೇವರನ್ನು ರೇಗಿಸಿದ್ದಾರೆಂದು ನೀವು ತಿಳಿದುಕೊಳ್ಳುವಿರಿ,” ಎಂದನು.
NUM 16:31 ಅವನು ಹೇಳ ಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ, ಅವರ ಕೆಳಗಿರುವ ನೆಲವು ಸೀಳಿ
NUM 16:32 ಭೂಮಿಯು ತನ್ನ ಬಾಯಿತೆರೆದು, ಅವರನ್ನೂ, ಅವರ ಮನೆಗಳನ್ನೂ, ಕೋರಹನಿಗೆ ಸಂಬಂಧಪಟ್ಟ ಸಕಲ ಜನರನ್ನೂ, ಅವರಿಗಿದ್ದದ್ದನ್ನೆಲ್ಲಾ ನುಂಗಿಬಿಟ್ಟಿತು.
NUM 16:33 ಅವರು ತಮಗೆ ಸಂಬಂಧಪಟ್ಟವುಗಳೆಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು. ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು.
NUM 16:34 ಆಗ ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಓಡಿಹೋದರು, ಏಕೆಂದರೆ ಅವರು, “ಭೂಮಿಯು ನಮ್ಮನ್ನು ಸಹ ನುಂಗಿಬಿಟ್ಟೀತು,” ಎಂದು ಹೆದರಿದರು.
NUM 16:35 ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟು, ಧೂಪವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
NUM 16:36 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 16:37 “ಯಾಜಕನಾದ ಆರೋನನ ಮಗ ಎಲಿಯಾಜರನಿಗೆ, ಧೂಪದ ಪಾತ್ರೆಗಳು ಪರಿಶುದ್ಧವಾಗಿರುವುದರಿಂದ ಸುಟ್ಟುಹೋದವರ ಮಧ್ಯದಿಂದ ಅವನು ಅವುಗಳನ್ನು ಎತ್ತಬೇಕು. ಆ ಬೆಂಕಿಯನ್ನು ದೂರ ಚೆಲ್ಲು.
NUM 16:38 ತಮ್ಮ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ ಮನುಷ್ಯರ ಧೂಪದ ಪಾತ್ರೆಗಳನ್ನು ಬಲಿಪೀಠವನ್ನು ಮುಚ್ಚತಕ್ಕ ಅಗಲವಾದ ತಗಡುಗಳನ್ನಾಗಿ ಮಾಡಬೇಕು. ಏಕೆಂದರೆ ಅವುಗಳನ್ನು ಯೆಹೋವ ದೇವರ ಸಮ್ಮುಖದಲ್ಲಿ ಅರ್ಪಿಸಿದ ಕಾರಣ ಅವು ಪರಿಶುದ್ಧವಾದವುಗಳು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು,” ಎಂದರು.
NUM 16:39 ಆಗ ಯಾಜಕನಾದ ಎಲಿಯಾಜರನು ಯೆಹೋವ ದೇವರು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ಸುಟ್ಟು ಹೋದವರು ಅರ್ಪಿಸಿದ ಕಂಚಿನ ಧೂಪದ ಪಾತ್ರೆಗಳನ್ನು ತೆಗೆದುಕೊಂಡು, ಬಲಿಪೀಠವನ್ನು ಮುಚ್ಚುವುದಕ್ಕಾಗಿ ಅವುಗಳನ್ನು ಅಗಲವಾದ ತಗಡುಗಳನ್ನಾಗಿ ಮಾಡಿದನು.
NUM 16:40 ಆರೋನನ ಸಂತಾನವಲ್ಲದ ಪರಕೀಯನು ಯೆಹೋವ ದೇವರ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸಬಾರದು, ಅರ್ಪಿಸಿದರೆ ಕೋರಹ ಮತ್ತು ಅವನ ಸಮೂಹಕ್ಕೆ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವದಕ್ಕಾಗಿ ಅದು ಗುರುತಾಯಿತು.
NUM 16:41 ಆದರೆ ಮರುದಿನದಲ್ಲಿ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಗೆ ವಿರೋಧವಾಗಿಯೂ ಆರೋನನಿಗೆ ವಿರೋಧವಾಗಿಯೂ ಗೊಣಗುಟ್ಟುತ್ತಾ, “ನೀವು ಯೆಹೋವ ದೇವರ ಜನರನ್ನು ಕೊಂದುಹಾಕಿದ್ದೀರಿ,” ಎಂದರು.
NUM 16:42 ಜನರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡಾಗ, ಅವರು ದೇವದರ್ಶನ ಗುಡಾರದ ಕಡೆಗೆ ನೋಡಲಾಗಿ, ಮೇಘವು ಅದನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ಕಾಣಬಂತು.
NUM 16:43 ಮೋಶೆಯೂ ಆರೋನನೂ ದೇವದರ್ಶನ ಗುಡಾರದ ಮುಂದೆ ಬಂದರು.
NUM 16:44 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 16:45 “ನೀನು ಈ ಜನರ ಮಧ್ಯದಿಂದ ಎದ್ದು ಬಾ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು. ಆಗ ಅವರಿಬ್ಬರು ಬೋರಲು ಬಿದ್ದರು.
NUM 16:46 ಮೋಶೆಯು ಆರೋನನಿಗೆ, “ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು, ಧೂಪ ಹಾಕಿ, ಶೀಘ್ರವಾಗಿ ಜನರೊಳಗೆ ಹೋಗಿ, ಅವರಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡು. ಏಕೆಂದರೆ ಯೆಹೋವ ದೇವರ ಸಮ್ಮುಖದಿಂದ ಕೋಪವು ಹೊರಟು, ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು,” ಎಂದನು.
NUM 16:47 ಆರೋನನು, ಮೋಶೆಯು ಹೇಳಿದ ಹಾಗೆ ಅದನ್ನು ತೆಗೆದುಕೊಂಡು, ಜನಸಮೂಹದ ಮಧ್ಯಕ್ಕೆ ಓಡಿಬಂದನು. ಆಗ ವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಅವನು ಧೂಪವನ್ನು ಇಟ್ಟು, ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
NUM 16:48 ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡದ್ದರಿಂದ ವ್ಯಾಧಿಯು ಶಮನವಾಯಿತು.
NUM 16:49 ಕೋರಹನ ನಿಮಿತ್ತ ಸತ್ತು ಹೋದವರ ಹೊರತಾಗಿ ವ್ಯಾಧಿಯಲ್ಲಿ ಸತ್ತವರು ಹದಿನಾಲ್ಕು ಸಾವಿರ ಏಳು ನೂರು ಮಂದಿಯಾಗಿದ್ದರು.
NUM 16:50 ಆ ವ್ಯಾಧಿಯು ನಿಂತು ಹೋದಾಗ ಆರೋನನು ದೇವದರ್ಶನ ಗುಡಾರದ ಬಾಗಿಲಿನ ಬಳಿಯಲ್ಲಿದ್ದ ಮೋಶೆಯ ಬಳಿಗೆ ಹಿಂದಿರುಗಿ ಬಂದನು.
NUM 17:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 17:2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಗೋತ್ರಗಳ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ ಕೋಲುಗಳನ್ನು ತೆಗೆದುಕೊಂಡು, ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ನೀನು ಬರೆ.
NUM 17:3 ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಏಕೆಂದರೆ ಅವರ ಪಿತೃಗಳ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.
NUM 17:4 ಅವುಗಳನ್ನು ದೇವದರ್ಶನ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಒಡಂಬಡಿಕೆಯ ಮಂಜೂಷದ ಮುಂದೆ ಇಡಬೇಕು.
NUM 17:5 ನಾನು ಯಾವನನ್ನು ಆಯ್ದುಕೊಳ್ಳುತ್ತೇನೋ, ಆ ಮನುಷ್ಯನ ಕೋಲು ಚಿಗುರುವುದು. ಹೀಗೆ ಇಸ್ರಾಯೇಲರು ನಿಮಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ನಿಲ್ಲಿಸಿಬಿಡುವೆನು,” ಎಂದರು.
NUM 17:6 ಹಾಗೆಯೇ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಗೋತ್ರಗಳ ಪ್ರಕಾರ ಒಬ್ಬೊಬ್ಬ ಪ್ರಧಾನನಿಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು.
NUM 17:7 ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರದ ಒಳಗೆ ಯೆಹೋವ ದೇವರ ಸಮ್ಮುಖದಲ್ಲಿ ಇಟ್ಟನು.
NUM 17:8 ಮರುದಿವಸದಲ್ಲಿ, ಮೋಶೆಯು ಸಾಕ್ಷಿ ಗುಡಾರದೊಳಗೆ ಪ್ರವೇಶಿಸುವಾಗ, ಲೇವಿಯ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ, ಮೊಗ್ಗು ಬಿಟ್ಟು, ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು.
NUM 17:9 ಆಗ ಮೋಶೆಯು ಕೋಲುಗಳನ್ನು ಯೆಹೋವ ದೇವರ ಸನ್ನಿಧಿಯಿಂದ ಎಲ್ಲಾ ಇಸ್ರಾಯೇಲರಿಗೆ ತೋರಿಸುವುದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲುಗಳನ್ನು ತೆಗೆದುಕೊಂಡರು.
NUM 17:10 ಯೆಹೋವ ದೇವರು ಮೋಶೆಗೆ, “ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಇಟ್ಟುಕೊಳ್ಳುವುದಕ್ಕೆ ಒಡಂಬಡಿಕೆಯ ಮಂಜೂಷದ ಮುಂದೆ ತಿರುಗಿ ಇಡು. ಗೊಣಗುಟ್ಟುವುದನ್ನು ನೀನು ಸಂಪೂರ್ಣವಾಗಿ ತೆಗೆದುಬಿಡಬೇಕು,” ಎಂದರು.
NUM 17:11 ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಮೋಶೆ ಮಾಡಿದನು.
NUM 17:12 ಆಗ ಇಸ್ರಾಯೇಲರು ಮೋಶೆಯ ಸಂಗಡ ಮಾತನಾಡಿ, “ನಾವೆಲ್ಲರೂ ಸಾಯುತ್ತೇವೆ, ನಾಶವಾಗುತ್ತೇವೆ. ನಾವೆಲ್ಲರೂ ನಾಶವಾಗುತ್ತೇವೆ.
NUM 17:13 ಯೆಹೋವ ದೇವರ ಗುಡಾರದ ಸಮೀಪಕ್ಕೆ ಬರುವವರೆಲ್ಲರೂ ಸಾಯುವರು. ಹಾಗೆಯೇ ನಾವೆಲ್ಲರೂ ಸಾಯಬೇಕೋ?” ಎಂದರು.
NUM 18:1 ಯೆಹೋವ ದೇವರು ಆರೋನನಿಗೆ, “ನೀನೂ, ನಿನ್ನ ಪುತ್ರರೂ, ನಿನ್ನ ಪಿತೃಗಳ ಮನೆಯವರೂ ಪರಿಶುದ್ಧ ಸ್ಥಳಕ್ಕೆ ವಿರೋಧವಾಗಿ ನಡೆಯುವ ಕಾರ್ಯಗಳ ಜವಾಬ್ದಾರಿ ವಹಿಸಬೇಕು. ಯಾಜಕತ್ವಕ್ಕೆ ವಿರೋಧವಾಗಿ ನಡೆಯುವ ಅಕ್ರಮಗಳಿಗೆ ನೀನು ಮತ್ತು ನಿನ್ನ ಪುತ್ರರು ಮಾತ್ರ ಹೊಣೆಯಾಗಿರುತ್ತೀರಿ.
NUM 18:2 ನಿನ್ನ ಗೋತ್ರದ ಮೂಲಪುರುಷನಾದ ಲೇವಿ ವಂಶದವರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಏಕೆಂದರೆ ಅವರು ನಿನ್ನ ಕೂಡ ಇದ್ದು, ನಿನಗೆ ಸೇವೆಮಾಡಬೇಕು. ಆದರೆ ನೀನು ಮತ್ತು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷಿ ಗುಡಾರದ ಮುಂದೆ ಸೇವೆಮಾಡಬೇಕು.
NUM 18:3 ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.
NUM 18:4 ಆದರೆ ಅವರು ನಿನ್ನ ಸಹಾಯಕರಾಗಿದ್ದು, ದೇವದರ್ಶನದ ಗುಡಾರದ ಎಲ್ಲಾ ಕಾರ್ಯಗಳಿಗೂ ಅದನ್ನು ಕಾಪಾಡುವುದಕ್ಕೂ ಜವಾಬ್ದಾರರಾಗಿರುವರು. ಬೇರೆ ಕುಲದವರು ನಿಮ್ಮ ಸಮೀಪಕ್ಕೆ ಬರಬಾರದು.
NUM 18:5 “ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.
NUM 18:6 ನಾನು ನಿಮ್ಮ ಸಹೋದರರಾದ ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡಿದ್ದೇನೆ. ದೇವದರ್ಶನ ಗುಡಾರದ ಸೇವೆಯನ್ನು ಮಾಡುವುದಕ್ಕೆ ಅವರು ಯೆಹೋವ ದೇವರಿಗಾಗಿ ನಿಮಗೆ ಕಾಣಿಕೆಯಾಗಿ ಸಮರ್ಪಿತರಾಗಿದ್ದಾರೆ.
NUM 18:7 ಆದ್ದರಿಂದ ನೀನು ನಿನ್ನ ಪುತ್ರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ತೆರೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವ ಸೇವೆಯನ್ನು ನಿಮಗೆ ದಾನವಾಗಿ ಕೊಟ್ಟಿದ್ದೇನೆ. ಪರಕೀಯನು ಸಮೀಪಕ್ಕೆ ಬಂದರೆ ಮರಣಶಿಕ್ಷೆಯಾಗಬೇಕು,” ಎಂದರು.
NUM 18:8 ಯೆಹೋವ ದೇವರು ಮಾತನಾಡಿ ಆರೋನನಿಗೆ, “ನನಗೆ ಕೊಡುವ ಎಲ್ಲಾ ಕಾಣಿಕೆಗಳ ಮೇಲೆ ನಿನ್ನನ್ನು ನೇಮಿಸಿದ್ದೇನೆ. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಪರಿಶುದ್ಧವಾದ ಕಾಣಿಕೆಗಳನ್ನೆಲ್ಲಾ ನಿನಗೂ ನಿನ್ನ ಮಕ್ಕಳಿಗೂ ಶಾಶ್ವತ ಪಾಲನ್ನು ನೀಡುತ್ತೇನೆ,” ಎಂದರು.
NUM 18:9 ದಹನಬಲಿಗೆ ಒಳಗಾಗದ ಮಹಾಪರಿಶುದ್ಧವಾದ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು ಯಾವುವೆಂದರೆ ಇಸ್ರಾಯೇಲರು ನನಗೆ ಸಮರ್ಪಿಸುವ ಧಾನ್ಯ, ದೋಷಪರಿಹಾರಕ ಬಲಿಗಳು ಮತ್ತು ಪ್ರಾಯಶ್ಚಿತ್ತ ಬಲಿಗಳು, ಇವುಗಳಲ್ಲಿ ದಹನವಾಗದೆ ಉಳಿದವುಗಳು ಮಹಾಪರಿಶುದ್ಧವಾದದರಿಂದ ನಿನಗೂ ನಿನ್ನ ಪುತ್ರರಿಗೂ ಸೇರಬೇಕು.
NUM 18:10 ಮಹಾಪರಿಶುದ್ಧ ಸ್ಥಳದಲ್ಲಿ ನೀನು ಅದನ್ನು ತಿನ್ನಬೇಕು. ಪುರುಷರು ಅದನ್ನು ತಿನ್ನಬಹುದು. ಅದು ನಿನಗೆ ಪರಿಶುದ್ಧವಾಗಿರುವುದೆಂದು ಪರಿಗಣಿಸಬೇಕು.
NUM 18:11 “ಅವರು ಕೊಟ್ಟ ಅರ್ಪಣೆಯೂ ಇಸ್ರಾಯೇಲರು ನೈವೇದ್ಯವಾಗಿ ನಿವಾಳಿಸುವ ಎಲ್ಲಾ ಸಮರ್ಪಣೆಗಳೂ ನಿನ್ನದಾಗಿರುವುವು. ಅವುಗಳನ್ನು ನಾನು ನಿನಗೂ, ನಿನ್ನ ಪುತ್ರಪುತ್ರಿಯರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
NUM 18:12 “ಜನರು ಯೆಹೋವ ದೇವರಿಗೆ ಸಮರ್ಪಿಸುವ ಪ್ರಥಮ ಫಲಗಳನ್ನು ಅಂದರೆ ಎಲ್ಲಾ ಉತ್ತಮವಾದ ಎಣ್ಣೆಯೂ ಉತ್ತಮವಾದ ಹೊಸ ದ್ರಾಕ್ಷಾರಸ, ಧಾನ್ಯವೂ ನಿನಗೆ ಕೊಟ್ಟಿದ್ದೇನೆ.
NUM 18:13 ಅವರು ಯೆಹೋವ ದೇವರಿಗೆ ತರುವ ಅವರ ದೇಶದಲ್ಲಿರುವ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವುವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
NUM 18:14 “ಇಸ್ರಾಯೇಲರು ಯೆಹೋವ ದೇವರಿಗೆ ಹರಕೆಮಾಡಿ ಸಮರ್ಪಿಸಿದ ಪ್ರತಿಯೊಂದೂ ನಿನ್ನದಾಗಿದೆ.
NUM 18:15 ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಯೆಹೋವ ದೇವರಿಗೆ ಸಮರ್ಪಿಸುವ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು. ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಅಪವಿತ್ರವಾದ ಗಂಡು ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.
NUM 18:16 ಅವು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ಗೇರಾ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ವಿಮೋಚಿಸಿಕೊಳ್ಳಬೇಕು.
NUM 18:17 “ಆದರೆ ಆಕಳಿನ ಚೊಚ್ಚಲನ್ನಾದರೂ ಕುರಿಯ ಚೊಚ್ಚಲನ್ನಾದರೂ ಮೇಕೆಯ ಚೊಚ್ಚಲನ್ನಾದರೂ ನೀನು ಬಿಟ್ಟುಬಿಡಬಾರದು. ಅವು ಪರಿಶುದ್ಧವಾಗಿವೆ, ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸಬೇಕು, ಅವುಗಳ ಕೊಬ್ಬನ್ನು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ ಮಾಡಬೇಕು.
NUM 18:18 ನೈವೇದ್ಯವಾಗಿ ನಿವಾಳಿಸುವ ಎದೆಯೂ ಬಲಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನದಾಗಿರಬೇಕು.
NUM 18:19 ಇಸ್ರಾಯೇಲರು ಯೆಹೋವ ದೇವರಿಗೆ ನೈವೇದ್ಯ ಮಾಡುವ ಪರಿಶುದ್ಧವಾದ ಬಲಿಗಳನ್ನೆಲ್ಲಾ ನಿನಗೂ ನಿನ್ನ ಪುತ್ರಪುತ್ರಿಯರಿಗೂ ಕ್ರಮ ಪ್ರಕಾರವಾದ ಭಾಗವಾಗಿ ಕೊಟ್ಟಿದ್ದೇನೆ. ಇದು ಯೆಹೋವ ದೇವರ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು,” ಎಂದರು.
NUM 18:20 ಯೆಹೋವ ದೇವರು ಆರೋನನಿಗೆ, “ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು, ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು. ನಾನೇ ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಪಾಲೂ ನಿನ್ನ ಸ್ವಾಸ್ತ್ಯವೂ ಆಗಿದ್ದೇನೆ.
NUM 18:21 “ಅವರು ದೇವದರ್ಶನ ಗುಡಾರದ ಸೇವೆಯನ್ನೂ ಮಾಡುವುದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾಯೇಲರಲ್ಲಿ ಹತ್ತನೆಯ ಭಾಗವನ್ನು ಸೊತ್ತಾಗಿ ಕೊಟ್ಟಿದ್ದೇನೆ.
NUM 18:22 ಇನ್ನು ಮೇಲೆ ಇಸ್ರಾಯೇಲರು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ದೇವದರ್ಶನದ ಗುಡಾರದ ಸಮೀಪಕ್ಕೆ ಬರಬಾರದು.
NUM 18:23 ಆದರೆ ಲೇವಿಯರೇ ದೇವದರ್ಶನ ಗುಡಾರದ ಸೇವೆಯನ್ನು ಮಾಡಬೇಕು. ಅವರು ಅಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು. ಇದು ನಿಮ್ಮ ಸಂತತಿಗಳಿಗೆ ಶಾಶ್ವತ ಕಟ್ಟಳೆಯಾಗಿದೆ, ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಾಸ್ತ್ಯ ಇರಬಾರದು.
NUM 18:24 ಇಸ್ರಾಯೇಲರು ಯೆಹೋವ ದೇವರಿಗೆ ಬಲಿಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ. ಆದಕಾರಣ, ‘ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸೊತ್ತು ಇರಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ,’ ” ಎಂದರು.
NUM 18:25 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 18:26 “ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ಇಸ್ರಾಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯದರಿಂದ ಒಂದು ಪಾಲನ್ನು ಪ್ರತ್ಯೇಕಿಸಿ ಯೆಹೋವ ದೇವರಿಗೆ ಸಮರ್ಪಿಸಬೇಕು.
NUM 18:27 ಈ ನಿಮ್ಮ ಸಮರ್ಪಣೆಯನ್ನು ಕಣದ ಧಾನ್ಯದ ಹಾಗೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುವುದು.
NUM 18:28 ಈ ಪ್ರಕಾರ ನೀವು ಸಹ ಇಸ್ರಾಯೇಲರ ಕಡೆಯಿಂದ ತೆಗೆದುಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯ ಒಂದು ಭಾಗವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು, ನೀವು ಅದರಿಂದ ಯೆಹೋವ ದೇವರ ಯಾಜಕನಾದ ಆರೋನನಿಗೆ ಕೊಡಬೇಕು.
NUM 18:29 ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಅದರ ಒಂದೊಂದರ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಯೆಹೋವ ದೇವರಿಗೆ ಸಮರ್ಪಣೆಯಾಗಿ ಅರ್ಪಿಸಬೇಕು.’
NUM 18:30 “ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಅದರಲ್ಲಿ ಉತ್ತಮವಾದದ್ದನ್ನು ಸಮರ್ಪಿಸಿದ ನಂತರ ಉಳಿದವುಗಳನ್ನು ಕಣದಲ್ಲಿನ ದವಸದಂತೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುತ್ತದೆ.
NUM 18:31 ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಏಕೆಂದರೆ ದೇವದರ್ಶನದ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ಅದು ನಿಮಗೆ ಪ್ರತಿಫಲವಾಗಿದೆ.
NUM 18:32 ಆದಕಾರಣ ನೀವು ಅದರಲ್ಲಿ ಉತ್ತಮವಾದದ್ದನ್ನು ಅರ್ಪಿಸಿದಾಗ, ಅದರ ದೆಸೆಯಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ನೀವು ಸಾಯುವುದಿಲ್ಲ,’ ” ಎಂದರು.
NUM 19:1 ಯೆಹೋವ ದೇವರು ಮೋಶೆ ಹಾಗೂ ಆರೋನನ ಸಂಗಡ ಮಾತನಾಡಿ,
NUM 19:2 “ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು.
NUM 19:3 ನೀವು ಅದನ್ನು ಯಾಜಕನಾದ ಎಲಿಯಾಜರನಿಗೆ ಕೊಡಬೇಕು. ಅವನು ಅದನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ತನ್ನ ಮುಂದೆ ವಧೆಮಾಡಿಸಬೇಕು.
NUM 19:4 ಯಾಜಕನಾದ ಎಲಿಯಾಜರನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ಅದನ್ನು ಏಳು ಸಾರಿ ದೇವದರ್ಶನ ಗುಡಾರದ ಮುಂಭಾಗಕ್ಕೆ ನೇರವಾಗಿ ಚಿಮುಕಿಸಬೇಕು.
NUM 19:5 ಹಸುವನ್ನು ಅವನ ಎದುರಿನಲ್ಲಿಯೇ ಸುಡಿಸಬೇಕು. ಅದರ ತೊಗಲನ್ನೂ ಮಾಂಸವನ್ನೂ ರಕ್ತವನ್ನೂ ಮತ್ತು ಅದರ ಸಗಣಿಯ ಕೂಡ ಸುಡಬೇಕು.
NUM 19:6 ಯಾಜಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಹಸುವಿನ ದಹನದಲ್ಲಿ ಹಾಕಬೇಕು.
NUM 19:7 ಆಗ ಯಾಜಕನು ತನ್ನ ವಸ್ತ್ರಗಳನ್ನು ತೊಳೆದುಕೊಂಡು, ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಗೆ ಬರಬಹುದು. ಆದರೂ ಯಾಜಕನು ಸಂಜೆಯವರೆಗೂ ಅಶುದ್ಧನಾಗಿರುವನು.
NUM 19:8 ಅದನ್ನು ಸುಡುವವನು ತನ್ನ ವಸ್ತ್ರಗಳನ್ನು ನೀರಿನಲ್ಲಿ ತೊಳೆದುಕೊಂಡು, ಸ್ನಾನಮಾಡಬೇಕು. ಅವನೂ ಸಹ ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
NUM 19:9 “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ, ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷಪರಿಹಾರಕವಾದುದು. ಆದ್ದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು.
NUM 19:10 ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು, ಸಂಜೆಯವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಶಾಶ್ವತ ಕಟ್ಟಳೆಯಾಗಿದೆ.
NUM 19:11 “ಮನುಷ್ಯನ ಶವವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರುವನು.
NUM 19:12 ಅವನು ಇದರಿಂದ ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿಕೊಂಡು ಏಳನೆಯ ದಿವಸದಲ್ಲಿ ಶುದ್ಧನಾಗಬೇಕು. ಆದರೆ ಅವನು ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧಮಾಡಿಕೊಳ್ಳದಿದ್ದರೆ, ಏಳನೆಯ ದಿವಸದಲ್ಲಿ ಶುದ್ಧನಾಗಲಾರನು.
NUM 19:13 ಸತ್ತ ಮನುಷ್ಯನ ಶವವನ್ನು ಮುಟ್ಟಿ, ಶುದ್ಧಮಾಡಿಕೊಳ್ಳದವನು ಯೆಹೋವ ದೇವರ ಗುಡಾರವನ್ನು ಅಪವಿತ್ರಪಡಿಸುತ್ತಾನೆ, ಅಂಥವನನ್ನು ಇಸ್ರಾಯೇಲಿನವರೊಳಗಿಂದ ತೆಗೆದುಹಾಕಬೇಕು, ಶುದ್ಧೀಕರಣದ ನೀರು ಅವನ ಮೇಲೆ ಚಿಮುಕಿಸದ ಕಾರಣ ಅವನು ಅಶುದ್ಧನಾಗಿದ್ದಾನೆ. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು.
NUM 19:14 “ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು.
NUM 19:15 ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರುವುವು.
NUM 19:16 “ಇದಲ್ಲದೆ ಬಯಲಿನಲ್ಲಿ ಖಡ್ಗದಿಂದ ಹತನಾದ ವ್ಯಕ್ತಿಯನ್ನು ಮುಟ್ಟಿದವರೂ ಅಥವಾ ಬೇರೆ ಯಾವ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬನ್ನಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರೆಲ್ಲರೂ ಏಳು ದಿವಸ ಅಪವಿತ್ರರಾಗಿರುವರು.
NUM 19:17 “ಅಪವಿತ್ರನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯನ್ನು ತೆಗೆದುಕೊಂಡು, ಒಂದು ಪಾತ್ರೆಯೊಳಗಿಟ್ಟು, ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು.
NUM 19:18 ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಆ ಡೇರೆಯ ಮೇಲೆಯೂ, ಸಮಸ್ತ ಸಲಕರಣೆಗಳ ಮೇಲೆಯೂ, ಅದರಲ್ಲಿರುವ ಜನರ ಮೇಲೆಯೂ ಚಿಮುಕಿಸಬೇಕು. ಹಾಗೆಯೇ ಎಲುಬನ್ನಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರ ಮೇಲೆಯೂ ಚಿಮುಕಿಸಬೇಕು.
NUM 19:19 ಪವಿತ್ರನಾದವನು ಅಪವಿತ್ರನಾದವನ ಮೇಲೆ ಮೂರನೆಯ ದಿವಸದಲ್ಲಿಯೂ, ಏಳನೆಯ ದಿವಸದಲ್ಲಿಯೂ ಅದನ್ನು ಚಿಮುಕಿಸಲಿ. ಏಳನೆಯ ದಿವಸದಲ್ಲಿ ಅವನು ತನ್ನನ್ನು ಪವಿತ್ರ ಮಾಡಿಕೊಂಡು, ತನ್ನ ವಸ್ತ್ರಗಳನ್ನು ತೊಳೆದುಕೊಂಡು, ನೀರಿನಲ್ಲಿ ಸ್ನಾನ ಮಾಡಲಿ. ಹೀಗೆ ಸಂಜೆಯಲ್ಲಿ ಪವಿತ್ರನಾಗುವನು.
NUM 19:20 ಆದರೆ ಅಪವಿತ್ರನಾಗಿದ್ದು, ತನ್ನನ್ನು ಶುದ್ಧಪಡಿಸಿಕೊಳ್ಳದವನು ಸಭೆಯ ಮಧ್ಯದಿಂದ ತೆಗೆದುಹಾಕಬೇಕು ಏಕೆಂದರೆ ಅವನು ಯೆಹೋವ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ. ನೀರು ಅವನ ಮೇಲೆ ಚಿಮಿಕಿಸಿಕೊಳ್ಳದ ಕಾರಣ ಅವನು ಅಪವಿತ್ರನೇ.
NUM 19:21 ಇದು ಅವರಿಗೆ ಶಾಶ್ವತ ಕಟ್ಟಳೆಯಾಗಿರಬೇಕು. “ಶುದ್ಧೀಕರಣದ ನೀರನ್ನು ಚಿಮುಕಿಸುವವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಂಜೆಯವರೆಗೆ ಅಪವಿತ್ರನಾಗಿರುವನು.
NUM 19:22 ಇದಲ್ಲದೆ ಅಪವಿತ್ರನಾದವನು ಮುಟ್ಟುವಂಥಾದ್ದೆಲ್ಲ ಅಪವಿತ್ರವಾಗುವುದು, ಅವನನ್ನು ಮುಟ್ಟಿದವನು ಸಂಜೆಯವರೆಗೆ ಅಪವಿತ್ರನಾಗಿರುವನು,” ಎಂದು ಹೇಳಿದರು.
NUM 20:1 ಇಸ್ರಾಯೇಲರ ಸರ್ವ ಸಮೂಹದವರು ಚಿನ್ ಎಂಬ ಮರುಭೂಮಿಗೆ ಮೊದಲನೆಯ ತಿಂಗಳಿನಲ್ಲಿ ಬಂದರು. ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಮರಣಹೊಂದಿದಳು, ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು.
NUM 20:2 ಆಗ ಜನರಿಗೆ ನೀರು ಇಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡರು.
NUM 20:3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಸಹೋದರರು ಯೆಹೋವ ದೇವರ ಮುಂದೆ ಸತ್ತು ಹೋದಾಗಲೇ, ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.
NUM 20:4 ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಏಕೆ ಯೆಹೋವ ದೇವರ ಸಭೆಯವರಾದ ನಮ್ಮನ್ನೂ ಈ ಮರುಭೂಮಿಗೆ ತಂದಿರಿ.
NUM 20:5 ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವುದಕ್ಕೆ ಏಕೆ ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಕರಕೊಂಡು ಬಂದಿರಿ. ಈ ಸ್ಥಳದಲ್ಲಿ ಧಾನ್ಯವಾದರೂ ಅಂಜೂರವಾದರೂ ದ್ರಾಕ್ಷಿ ತೋಟವಾದರೂ ದಾಳಿಂಬೆ ಹಣ್ಣಾದರೂ ಇಲ್ಲ. ಕುಡಿಯುವುದಕ್ಕೆ ನೀರು ಸಹ ಇಲ್ಲ,” ಎಂದರು.
NUM 20:6 ಆಗ ಮೋಶೆ, ಆರೋನನೂ ಜನಸಮೂಹದ ಎದುರಿನಿಂದ ದೇವದರ್ಶನ ಗುಡಾರದ ಬಾಗಿಲಿನೊಳಗೆ ಹೋಗಿ, ಸಾಷ್ಟಾಂಗವೆರಗಿದರು. ಯೆಹೋವ ದೇವರ ಮಹಿಮೆಯು ಅವರಿಗೆ ಕಾಣಬಂತು.
NUM 20:7 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 20:8 “ಕೋಲನ್ನು ತೆಗೆದುಕೊಂಡು ನೀನು ನಿನ್ನ ಸಹೋದರ ಆರೋನನು ಜನರನ್ನು ಕೂಡಿಸಿಕೊಂಡು, ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ. ಅದು ತನ್ನ ನೀರನ್ನು ಕೊಡುವುದು. ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವೆ, ಜನರಿಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡಬಹುದು,” ಎಂದು ಹೇಳಿದರು.
NUM 20:9 ಆಗ ಮೋಶೆಯು ಯೆಹೋವ ದೇವರ ಸನ್ನಿಧಿಯಿಂದ ಹೊರಟು, ತನಗೆ ಆಜ್ಞಾಪಿಸಿದ ಹಾಗೆ ಕೋಲನ್ನು ತೆಗೆದುಕೊಂಡನು.
NUM 20:10 ಮೋಶೆಯೂ, ಆರೋನನೂ ಜನರನ್ನು ಬಂಡೆಯ ಮುಂದೆ ಕೂಡಿಸಿ, ಅವರಿಗೆ, “ತಿರುಗಿ ಬಿದ್ದವರೇ ಕೇಳಿರಿ, ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ?” ಎಂದರು.
NUM 20:11 ಮೋಶೆಯು ತನ್ನ ಕೈಯನ್ನು ಎತ್ತಿ, ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ಬಹಳ ನೀರು ಹೊರಗೆ ಬಂತು, ಜನರೂ ಅವರ ಪಶುಗಳೂ ಕುಡಿದರು.
NUM 20:12 ಆಗ ಯೆಹೋವ ದೇವರು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ, “ನನ್ನಲ್ಲಿ ವಿಶ್ವಾಸವಿಡದೆ ಹೋದಕಾರಣ ನೀವು ಇಸ್ರಾಯೇಲರ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧನಾಗಿ ಗೌರವಿಸುವುದಕ್ಕೆ, ನಾನು ಅವರಿಗೆ ಕೊಡುವ ದೇಶದಲ್ಲಿ ನೀವು ಅವರನ್ನು ಸೇರಿಸುವುದಿಲ್ಲ,” ಎಂದರು.
NUM 20:13 ಇಸ್ರಾಯೇಲರು ಯೆಹೋವ ದೇವರ ಸಂಗಡ ವ್ಯಾಜ್ಯವಾಡಿದ್ದಕ್ಕಾಗಿ ದೇವರು ಅವರಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾ ಸ್ಥಳದ ನೀರು ಇದೇ.
NUM 20:14 ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಿಮ್ಮ ಸಹೋದರರಾದ ಇಸ್ರಾಯೇಲರು ಹೇಳುವುದೇನೆಂದರೆ, ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
NUM 20:15 ನಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಜಿಪ್ಟಿನಲ್ಲಿ ಬಹಳ ದಿವಸ ವಾಸವಾಗಿದ್ದೆವು ಮತ್ತು ಈಜಿಪ್ಟಿನವರು ನಮಗೂ, ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದರು.
NUM 20:16 ಆದಕಾರಣ ನಾವು ಯೆಹೋವ ದೇವರಿಗೆ ಕೂಗಿದೆವು. ಅವರು ನಮ್ಮ ಧ್ವನಿಯನ್ನು ಕೇಳಿ, ದೂತನನ್ನು ಕಳುಹಿಸಿ, ನಮ್ಮನ್ನು ಈಜಿಪ್ಟಿನೊಳಗಿಂದ ನಮ್ಮನ್ನು ಹೊರಗೆ ತಂದರು. “ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿಯದಲ್ಲಿ ಇದ್ದೇವೆ.
NUM 20:17 ನಮ್ಮನ್ನು ನಿನ್ನ ದೇಶದೊಳಗಿಂದ ದಾಟಿ ಹೋಗಗೊಡಿಸು; ನಾವು ಹೊಲವನ್ನಾದರೂ, ದ್ರಾಕ್ಷಿ ತೋಟವನ್ನಾದರೂ ದಾಟಿ ಹೋಗುವುದಿಲ್ಲ; ರಾಜಮಾರ್ಗದಲ್ಲಿ ಮಾತ್ರ ಹೋಗುತ್ತೇವೆ; ನಿನ್ನ ಮೇರೆಯನ್ನು ನಾವು ದಾಟುವವರೆಗೆ ಬಲಗಡೆಗಾದರೂ, ಎಡಗಡೆಗಾದರೂ ನಾವು ತಿರುಗುವುದಿಲ್ಲ,” ಎಂದು ವಿನಂತಿಸಿದನು.
NUM 20:18 ಎದೋಮ್ಯರು ದೂತರಿಗೆ, “ನೀನು ಈ ಕಡೆಯಲ್ಲಿ ದಾಟಿ ಹೋಗಬೇಡ. ಹೋದರೆ ನಾನು ಖಡ್ಗದಿಂದ ನಿನ್ನ ಮೇಲೆ ದಾಳಿಗೆ ಬರುವೆನು,” ಎಂದನು.
NUM 20:19 ಅದಕ್ಕೆ ಇಸ್ರಾಯೇಲರು ಅವನಿಗೆ, “ನಾವು ರಾಜಮಾರ್ಗದಲ್ಲಿ ಹೋಗುತ್ತೇವೆ. ನಮ್ಮ ಪಶುಗಳು ನಿನ್ನ ನೀರು ಕುಡಿದರೆ, ಅದರ ಕ್ರಯವನ್ನು ಕೊಡುತ್ತೇವೆ. ನಮ್ಮ ಕಾಲುಗಳಿಂದ ದಾಟಿ ಹೋಗುವುದೇ ಹೊರತು ಮತ್ತೇನೂ ಮಾಡುವುದಿಲ್ಲ,” ಎಂದು ಹೇಳಿ ಕಳುಹಿಸಿದನು.
NUM 20:20 ಆದರೆ ಅವನು, “ನೀವು ದಾಟಬಾರದು,” ಎಂದನು. ಎದೋಮ್ಯರು ಬಹುಜನರಿಂದಲೂ, ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಯುದ್ಧಕ್ಕೆ ಬಂದರು.
NUM 20:21 ಈ ಪ್ರಕಾರ ಎದೋಮ್ಯನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸಲಿಲ್ಲ. ಆದಕಾರಣ ಇಸ್ರಾಯೇಲರು ಅವನ ಕಡೆಯಿಂದ ತಿರುಗಿಕೊಂಡು ಹೊರಟು ಹೋದರು.
NUM 20:22 ಇಸ್ರಾಯೇಲರ ಸಮಸ್ತ ಸಮೂಹದವರು ಕಾದೇಶಿನಿಂದ ಪ್ರಯಾಣಮಾಡಿ, ಹೋರ್ ಎಂಬ ಬೆಟ್ಟದ ಬಳಿಗೆ ಬಂದರು.
NUM 20:23 ಆಗ ಯೆಹೋವ ದೇವರು ಎದೋಮ್ಯ ದೇಶದ ಮೇರೆಯ ಮೇಲಿರುವ ಹೋರ್ ಎಂಬ ಬೆಟ್ಟದಲ್ಲಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
NUM 20:24 “ಆರೋನನು ತನ್ನ ಪಿತೃಗಳ ಸಂಗಡ ಸೇರುವನು, ಏಕೆಂದರೆ ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿಬಿದ್ದದರಿಂದ, ನಾನು ಇಸ್ರಾಯೇಲರಿಗೆ ಕೊಡುವ ದೇಶಕ್ಕೆ ಅವನು ಪ್ರವೇಶಿಸುವುದಿಲ್ಲ.
NUM 20:25 ಆರೋನನನ್ನೂ, ಅವನ ಮಗ ಎಲಿಯಾಜರನನ್ನೂ ತೆಗೆದುಕೊಂಡು, ಅವರನ್ನು ಹೋರ್ ಬೆಟ್ಟಕ್ಕೆ ಕರೆದುಕೊಂಡು ಬಾ.
NUM 20:26 ಆರೋನನ ವಸ್ತ್ರಗಳನ್ನು ತೆಗೆದು, ಅವುಗಳನ್ನು ಅವನ ಮಗ ಎಲಿಯಾಜರನಿಗೆ ತೊಡಿಸು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಬೇಕು,” ಎಂದರು.
NUM 20:27 ಮೋಶೆಯು ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಮಾಡಿದನು. ಅವರು ಸಮಸ್ತ ಸಭೆಯವರು ನೋಡುತ್ತಿರುವಾಗ ಹೋರ್ ಬೆಟ್ಟವನ್ನೇರಿದರು.
NUM 20:28 ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು, ಅವನ ಮಗ ಎಲಿಯಾಜರನಿಗೆ ತೊಡಿಸಿದನು. ಆಗ ಆರೋನನು ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ, ಎಲಿಯಾಜರನೂ ಬೆಟ್ಟದಿಂದ ಇಳಿದರು.
NUM 20:29 ಆರೋನನು ತೀರಿಹೋದನೆಂದು ಸಭೆಯೆಲ್ಲಾ ನೋಡಿದಾಗ, ಇಸ್ರಾಯೇಲರೆಲ್ಲರೂ ಆರೋನನಿಗೋಸ್ಕರ ಮೂವತ್ತು ದಿವಸಗಳವರೆಗೂ ದುಃಖಿಸಿದರು.
NUM 21:1 ನೆಗೆವನಲ್ಲಿ ವಾಸಿಸುವ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಇಸ್ರಾಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ಕೇಳಿ, ಅವರ ಸಂಗಡ ಯುದ್ಧಮಾಡಿ, ಅವರಲ್ಲಿ ಕೆಲವರನ್ನು ಸೆರೆಹಿಡಿದನು.
NUM 21:2 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಪ್ರಮಾಣಮಾಡಿ, “ನೀನು ಈ ಜನರನ್ನು ನಮ್ಮ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ, ನಾವು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆವು,” ಎಂದರು.
NUM 21:3 ಆಗ ಯೆಹೋವ ದೇವರು ಇಸ್ರಾಯೇಲರ ಧ್ವನಿಯನ್ನು ಕೇಳಿ ಕಾನಾನ್ಯರನ್ನು ಒಪ್ಪಿಸಿಕೊಟ್ಟನು. ಇಸ್ರಾಯೇಲರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
NUM 21:4 ಅವರು ಹೋರ್ ಎಂಬ ಬೆಟ್ಟದಿಂದ ಹೊರಟು, ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಆದರೆ ಜನರು ಈ ಪ್ರಯಾಣದಿಂದ ಆಯಾಸವಾಗಿ ಬಹಳ ಕುಂದಿಹೋದರು.
NUM 21:5 ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.
NUM 21:6 ಆಗ ಯೆಹೋವ ದೇವರು ಜನರೊಳಗೆ ವಿಷಸರ್ಪಗಳನ್ನು ಕಳುಹಿಸಿದರು. ಅವು ಜನರನ್ನು ಕಚ್ಚಿದ್ದರಿಂದ, ಇಸ್ರಾಯೇಲರಲ್ಲಿ ಬಹುಜನರು ಸತ್ತುಹೋದರು.
NUM 21:7 ಆದ್ದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ಯೆಹೋವ ದೇವರಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ. ಯೆಹೋವ ದೇವರು ನಮ್ಮ ಮೇಲಿಂದ ಸರ್ಪಗಳನ್ನು ದೂರಮಾಡುವ ಹಾಗೆ ಪ್ರಾರ್ಥನೆ ಮಾಡು,” ಎಂದರು. ಆಗ ಮೋಶೆಯು ಜನರಿಗೋಸ್ಕರ ಪ್ರಾರ್ಥನೆಮಾಡಿದನು.
NUM 21:8 ಯೆಹೋವ ದೇವರು ಮೋಶೆಗೆ, “ನೀನು ಕಂಚಿನಿಂದ ಒಂದು ಸರ್ಪವನ್ನು ಮಾಡಿಸಿಕೊಂಡು, ಒಂದು ಕಂಬದ ಮೇಲೆ ಇಡು. ಆಗ ಕಚ್ಚಿಸಿಕೊಂಡವರೆಲ್ಲರೂ ಅದರ ಮೇಲೆ ದೃಷ್ಟಿ ಇಟ್ಟರೆ ಅವರು ಬದುಕುವರು,” ಎಂದರು.
NUM 21:9 ಆಗ ಮೋಶೆಯು ಕಂಚಿನ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟನು. ಸರ್ಪದಿಂದ ಕಚ್ಚಿಸಿಕೊಂಡವರಲ್ಲಿ ಯಾರು ಆ ಕಂಚಿನ ಸರ್ಪದ ಕಡೆಗೆ ದೃಷ್ಟಿ ಇಟ್ಟು ನೋಡಿದರೋ, ಅವರು ಬದುಕಿಕೊಂಡರು.
NUM 21:10 ಇಸ್ರಾಯೇಲರು ಹೊರಟು ಓಬೋತಿನಲ್ಲಿ ಇಳಿದುಕೊಂಡರು.
NUM 21:11 ಓಬೋತಿನಿಂದ ಹೊರಟು ಮೋವಾಬ್ ದೇಶಕ್ಕೆದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಮರುಭೂಮಿಯಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
NUM 21:12 ಅಲ್ಲಿಂದ ಅವರು ಹೊರಟು ಜೆರೆದ್ ಎಂಬ ಹಳ್ಳದ ಬಳಿಯಲ್ಲಿ ಇಳಿದುಕೊಂಡರು.
NUM 21:13 ಅಲ್ಲಿಂದ ಹೊರಟು ಅಮೋರಿಯರ ಪ್ರದೇಶದಿಂದ ಹೊರಗೆ ಬರುವ ಮರುಭೂಮಿಯಲ್ಲಿರುವ ಅರ್ನೋನ್ ಹೊಳೆಯ ಈಚೆಯಲ್ಲಿ ಇಳಿದುಕೊಂಡರು. ಏಕೆಂದರೆ ಅರ್ನೋನ್ ಮೋವಾಬರಿಗೂ ಅಮೋರಿಯರಿಗೂ ಮಧ್ಯದ ಮೋವಾಬಿನ ಗಡಿಯಾಗಿದೆ.
NUM 21:14 ಆದಕಾರಣ ಯೆಹೋವ ದೇವರ ಯುದ್ಧಗಳ ಪುಸ್ತಕದಲ್ಲಿ ಹೀಗೆಂದು ಬರೆದಿದೆ: “ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್
NUM 21:15 ಹೊಳೆಗೆ ಸೇರುವ ಹಳ್ಳಗಳನ್ನು, ಆರ್ ಪಟ್ಟಣದ ತನಕ ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು.”
NUM 21:16 ಅವರು ಅಲ್ಲಿಂದ ಬೇರ್ ಎಂಬಲ್ಲಿಗೆ ಬಂದರು. ಯೆಹೋವ ದೇವರು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು,” ಎಂದು ಯೆಹೋವ ದೇವರು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯನ್ನು ಕುರಿತೇ.
NUM 21:17 ಆಗ ಇಸ್ರಾಯೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕು, ಜನರೇ, ಅದರ ಬಗ್ಗೆ ನೀವು ಹಾಡಿರಿ.
NUM 21:18 ಪ್ರಭುಗಳು ಈ ಬಾವಿಯನ್ನು ಅಗೆದರು. ಜನರ ಅಧಿಪತಿಗಳು ನ್ಯಾಯಾಧಿಪತಿಯ ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು.” ಆಮೇಲೆ ಅವರು ಮರುಭೂಮಿಯಿಂದ ಮತ್ತಾನಕ್ಕೆ ಬಂದರು.
NUM 21:19 ಇದಲ್ಲದೆ ಅವರು ಮತ್ತಾನದಿಂದ ನಹಲಿಯೇಲಕ್ಕೆ ಬಂದರು. ನಹಲಿಯೇಲದಿಂದ ಬಾಮೋತಿಗೆ ಬಂದರು.
NUM 21:20 ಬಾಮೋತಿನಿಂದ ಮೋವಾಬ್ ದೇಶದಲ್ಲಿರುವ ಕಣಿವೆಯಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಮರಳುಗಾಡು ಕಾಣಿಸುತ್ತದೆ.
NUM 21:21 ಆಗ ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,
NUM 21:22 “ನಾವು ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಯಾವುದೇ ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ, ಬಾವಿಯ ನೀರನ್ನು ಕುಡಿಯದೆ, ನಿನ್ನ ದೇಶವನ್ನು ದಾಟುವವರೆಗೆ ರಾಜಮಾರ್ಗದಲ್ಲಿಯೇ ಹೋಗುತ್ತೇವೆ,” ಎಂದು ಬೇಡಿಕೊಂಡರು.
NUM 21:23 ಆದರೆ ಸೀಹೋನನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ, ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು, ಇಸ್ರಾಯೇಲರನ್ನು ಎದುರಿಸಲು ಮರುಭೂಮಿಗೆ ಹೊರಟನು. ಅವನು ಯಹಚಕ್ಕೆ ಬಂದು ಇಸ್ರಾಯೇಲರ ಸಂಗಡ ಯುದ್ಧಮಾಡಿದನು.
NUM 21:24 ಆದರೆ ಇಸ್ರಾಯೇಲರು ಅವನನ್ನು ಖಡ್ಗದಿಂದ ಹೊಡೆದು, ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೆ ಅಮ್ಮೋನನ ಮಕ್ಕಳ ಮೇರೆಯವರೆಗೂ ಸ್ವಾಧೀನಪಡಿಸಿಕೊಂಡರು. ಏಕೆಂದರೆ ಅಮ್ಮೋನನ ಮಕ್ಕಳ ಮೇರೆಯು ಬಲಿಷ್ಠವಾಗಿತ್ತು.
NUM 21:25 ಇಸ್ರಾಯೇಲರು ಆ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಇಸ್ರಾಯೇಲರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.
NUM 21:26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು. ಅವನು ಮೋವಾಬ್ ದೇಶದ ಹಿಂದಿನ ಅರಸನ ಸಂಗಡ ಯುದ್ಧಮಾಡಿ, ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯವರೆಗೂ ಅವನಿಂದ ವಶಪಡಿಸಿಕೊಂಡಿದ್ದನು.
NUM 21:27 ಇದರ ಬಗ್ಗೆ ಕವಿಗಳು ಹೀಗೆಂದು ಹಾಡಿದ್ದಾರೆ: “ಹೆಷ್ಬೋನಿಗೆ ಬನ್ನಿರಿ ಅದನ್ನು ತಿರುಗಿ ಕಟ್ಟಬೇಕು. ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆ ಮಾಡಬೇಕು.
NUM 21:28 “ಏಕೆಂದರೆ ಬೆಂಕಿ ಹೆಷ್ಬೋನಿನಿಂದಲೂ, ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು, ಮೋವಾಬಿನ ಆರ್ ಎಂಬ ಪಟ್ಟಣವನ್ನೂ, ಅರ್ನೋನ್ ಹೊಳೆಯ ಬಳಿಯಲ್ಲಿರುವ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
NUM 21:29 ಮೋವಾಬೇ, ನಿನಗೆ ದಿಕ್ಕಾರ! ಕೆಮೋಷಿನ ಜನವೇ ನಿಮಗೆ ದುರ್ಗತಿ ಉಂಟಾಯಿತಲ್ಲಾ! ಅವನು ತನ್ನ ಪುತ್ರರನ್ನು ದೇಶಭ್ರಷ್ಟರನ್ನಾಗಿಯೂ ತನ್ನ ಪುತ್ರಿಯರನ್ನು ಸೆರೆಯವರನ್ನಾಗಿಯೂ ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಒಪ್ಪಿಸಿಕೊಟ್ಟನು.
NUM 21:30 “ನಾವು ಅವರನ್ನು ಪದಚ್ಚುತಿಗೊಳಿಸಿದೆವು. ಹೆಷ್ಬೋನು ದೀಬೋನಿನವರೆಗೂ ನಾಶವಾಯಿತು. ನಾವು ಅವರನ್ನು ಮೇದೆಬಾಕ್ಕೆ ಮುಟ್ಟುವ ನೋಫಹದ ತನಕ ಹಾಳುಮಾಡಿದೆವು.”
NUM 21:31 ಹೀಗೆ ಇಸ್ರಾಯೇಲರು ಅಮೋರಿಯರ ದೇಶದಲ್ಲಿ ವಾಸಮಾಡಿದರು.
NUM 21:32 ಇದಲ್ಲದೆ ಮೋಶೆಯು ಯಜ್ಜೇರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದನು. ಅವರು ಅವರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿರುವ ಅಮೋರಿಯರನ್ನು ಹೊರಡಿಸಿಬಿಟ್ಟರು.
NUM 21:33 ಅವರು ತಿರುಗಿ ಬಾಷಾನಿನ ಹಾದಿ ಏರಿದರು. ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವುದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
NUM 21:34 ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಅವನಿಗೆ ಭಯಪಡಬೇಡ, ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು.
NUM 21:35 ಈ ಪ್ರಕಾರ ಅವರು ಅವನನ್ನೂ ಅವನ ಮಕ್ಕಳನ್ನೂ ಅವನ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು, ಅವನ ದೇಶವನ್ನು ವಶಮಾಡಿಕೊಂಡರು.
NUM 22:1 ನಂತರ ಇಸ್ರಾಯೇಲರು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾಬಿನ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಇಳಿದುಕೊಂಡರು.
NUM 22:2 ಆದರೆ ಚಿಪ್ಪೋರನ ಮಗ ಬಾಲಾಕನು ಇಸ್ರಾಯೇಲರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ನೋಡಿದನು.
NUM 22:3 ಇದಲ್ಲದೆ ಮೋವಾಬಿನವರು, ಇಸ್ರಾಯೇಲರು ಬಹಳ ಜನರಾಗಿರುವುದರಿಂದ ಅವರಿಗೆ ಬಹಳವಾಗಿ ಅಂಜಿದರು. ಮೋವಾಬಿನವರು ಇಸ್ರಾಯೇಲರಿಗೆ ದಿಗಿಲುಪಟ್ಟರು.
NUM 22:4 ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ, ಈಗ ಈ ಸಮೂಹವು ನಮ್ಮ ಸುತ್ತಲಿರುವುದನ್ನೆಲ್ಲಾ ಮೇಯುವುದು,” ಎಂದನು. ಆ ಕಾಲದಲ್ಲಿ ಚಿಪ್ಪೋರನ ಮಗ ಬಾಲಾಕನು ಮೋವಾಬ್ಯರ ಅರಸನಾಗಿದ್ದನು.
NUM 22:5 ಇವನು ಸ್ವಜನರ ನಾಡಾದ ಯೂಫ್ರೇಟೀಸ್ ನದಿಯ ತೀರದಲ್ಲಿರುವ ಪೆತೋರೂರಿಗೆ ದೂತರನ್ನು ಕಳುಹಿಸಿ, ಬೆಯೋರನ ಮಗ ಬಿಳಾಮನನ್ನೂ ಕರೆಯಿಸಿ, “ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ. ಅದು ದೇಶವನ್ನೆಲ್ಲಾ ಆವರಿಸಿಕೊಂಡು, ನನಗೆದುರಾಗಿ ವಾಸಿಸುತ್ತಿದೆ.
NUM 22:6 ಅವರು ನನಗಿಂತ ಬಲವುಳ್ಳವರಾಗಿದ್ದರಿಂದ ಈಗ ನೀನು ದಯಮಾಡಿ ಬಂದು, ಈ ಜನರನ್ನು ನನಗಾಗಿ ಶಪಿಸು. ಆಗ ನಾನು ಅವರನ್ನು ಗೆದ್ದು, ದೇಶದೊಳಗಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ಏಕೆಂದರೆ ನೀನು ಯಾವನನ್ನು ಆಶೀರ್ವದಿಸುತ್ತೀಯೋ, ಅವನು ಆಶೀರ್ವಾದ ಹೊಂದಿರುವನು; ನೀನು ಯಾವನನ್ನು ಶಪಿಸುತ್ತೀಯೋ, ಅವನು ಶಾಪಗ್ರಸ್ತನಾಗಿರುವನು; ಎಂದು ನಾನು ಬಲ್ಲೆನು,” ಎಂದು ಹೇಳಿ ಕಳುಹಿಸಿದನು.
NUM 22:7 ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಗಳನ್ನು ತೆಗೆದುಕೊಂಡು ಹೋದರು. ಅವರು ಬಿಳಾಮನ ಬಳಿಗೆ ಬಂದು, ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು.
NUM 22:8 ಅವನು ಅವರಿಗೆ, “ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ. ಯೆಹೋವ ದೇವರು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು,” ಎಂದು ಹೇಳಿದನು. ಆದಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳಿದುಕೊಂಡರು.
NUM 22:9 ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು?” ಎಂದರು.
NUM 22:10 ಬಿಳಾಮನು ದೇವರಿಗೆ, “ಚಿಪ್ಪೋರನ ಮಗನಾಗಿಯೂ ಮೋವಾಬಿನ ಅರಸನಾಗಿಯೂ ಇರುವ ಬಾಲಾಕನು ನನ್ನ ಬಳಿಗೆ ಹೇಳಿ ಕಳುಹಿಸಿದ್ದೇನೆಂದರೆ:
NUM 22:11 ‘ಇಗೋ, ಈಜಿಪ್ಟ್ ದೇಶದಿಂದ ಹೊರಟಿರುವ ಒಂದು ಜನಾಂಗವು ದೇಶವನ್ನೆಲ್ಲಾ ಆವರಿಸಿಕೊಂಡಿದೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ಒಂದು ವೇಳೆ ಅವರ ಸಂಗಡ ಯುದ್ಧಮಾಡಿ ಹೊರಗೆ ಹಾಕುವುದಕ್ಕೆ ನನ್ನಿಂದ ಸಾಧ್ಯವಾಗಬಹುದು,’ ಎಂದು ಹೇಳಿ ಕಳುಹಿಸಿದ್ದಾನೆ,” ಎಂದನು.
NUM 22:12 ಆಗ ದೇವರು ಬಿಳಾಮನಿಗೆ, “ನೀನು ಅವರ ಸಂಗಡ ಹೋಗಬೇಡ, ನೀನು ಆ ಜನರನ್ನು ಶಪಿಸಬೇಡ, ಏಕೆಂದರೆ ಅವರು ನನ್ನಿಂದ ಆಶೀರ್ವಾದ ಹೊಂದಿದವರು,” ಎಂದರು.
NUM 22:13 ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ, “ನಿಮ್ಮ ದೇಶಕ್ಕೆ ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಲಿಲ್ಲ,” ಎಂದನು.
NUM 22:14 ಆದಕಾರಣ ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು, “ಬಿಳಾಮನು ನಮ್ಮ ಸಂಗಡ ಬರಲಿಲ್ಲ,” ಎಂದರು.
NUM 22:15 ಆದರೆ ಬಾಲಾಕನು ತಿರುಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಧಾನರನ್ನು ಕಳುಹಿಸಿದನು.
NUM 22:16 ಅವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗ ಬಾಲಾಕನು ಹೀಗೆ ಹೇಳುತ್ತಾನೆ: ನೀನು ದಯಮಾಡಿ ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬಾರದು.
NUM 22:17 ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಹೇಳುವುದನ್ನೆಲ್ಲಾ ನಾನು ಮಾಡುವೆನು. ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು,” ಎಂದನು.
NUM 22:18 ಬಿಳಾಮನು ಪ್ರತ್ಯುತ್ತರವಾಗಿ ಬಾಲಾಕನ ಸೇವಕರಿಗೆ, “ಬಾಲಾಕನು ನನಗೆ ತನ್ನ ಮನೆ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾಗಿರುವ ಯೆಹೋವ ದೇವರ ಮಾತನ್ನು ಮೀರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು.
NUM 22:19 ಆದರೆ ಈಗ ಯೆಹೋವ ದೇವರು ನನಗೆ ಮತ್ತೇನು ಹೇಳುವರೆಂದು ನಾನು ತಿಳಿದುಕೊಳ್ಳುವ ಹಾಗೆ, ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ,” ಎಂದನು.
NUM 22:20 ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ, “ಈ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿದ್ದರೆ, ನೀನು ಎದ್ದು ಅವರ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವ ಮಾತಿನಂತೆಯೇ ನೀನು ಮಾಡಬೇಕು,” ಎಂದರು.
NUM 22:21 ಬಿಳಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಯನ್ನು ಹತ್ತಿ, ಮೋವಾಬಿನ ಪ್ರಧಾನರ ಸಂಗಡ ಹೋದನು.
NUM 22:22 ಆದರೆ ಅವನು ಹೋದದ್ದರಿಂದ ದೇವರಿಗೆ ಕೋಪ ಬಂದಿತು. ಯೆಹೋವ ದೇವರ ದೂತನು ಅವನಿಗೆ ಎದುರಾಳಿಯಾಗಿ ಮಾರ್ಗದಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು. ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
NUM 22:23 ಕತ್ತೆಯು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಅವನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ, ಮಾರ್ಗದಿಂದ ವಾರೆಯಾಗಿ ಹೊಲದೊಳಗೆ ಹೋಯಿತು. ಆಗ ಬಿಳಾಮನು ಕತ್ತೆಯನ್ನು ಮಾರ್ಗದೊಳಗೆ ತಿರುಗಿಸುವುದಕ್ಕೆ ಅದನ್ನು ಹೊಡೆದನು.
NUM 22:24 ಆದರೆ ಯೆಹೋವ ದೇವರ ದೂತನು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ಹಾದಿಯಲ್ಲಿ ಎರಡೂ ಕಡೆಯಲ್ಲಿ ಗೋಡೆ ಇದ್ದಲ್ಲಿ ನಿಂತನು.
NUM 22:25 ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡು, ಬಿಳಾಮನ ಕಾಲನ್ನು ಗೋಡೆಗೆ ಒತ್ತಿ ಹಾಕಿತು. ಅವನು ಅದನ್ನು ಮತ್ತೆ ಹೆಚ್ಚಾಗಿ ಹೊಡೆದನು.
NUM 22:26 ಆಗ ಯೆಹೋವ ದೇವರ ದೂತನು ಮುಂದೆ ಹೋಗಿ ಬಲಕ್ಕೂ ಎಡಕ್ಕೂ ತಿರುಗುವುದಕ್ಕೆ ಮಾರ್ಗವಿಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ನಿಂತನು.
NUM 22:27 ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು. ಆದಕಾರಣ ಬಿಳಾಮನು ಕೋಪಿಸಿಕೊಂಡು ಕತ್ತೆಯನ್ನು ಬೆತ್ತದಿಂದ ಹೊಡೆದನು.
NUM 22:28 ಆಗ ಯೆಹೋವ ದೇವರು ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ಈಗ ನನ್ನನ್ನು ಮೂರು ಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು?” ಎಂದು ಕೇಳಿತು.
NUM 22:29 ಬಿಳಾಮನು ಕತ್ತೆಗೆ, “ನೀನು ನನಗೆ ಹಾಸ್ಯಮಾಡಿದೆಯಲ್ಲಾ? ನನ್ನ ಕೈಯಲ್ಲಿ ಖಡ್ಗ ಇದ್ದಿದ್ದರೆ, ನಾನು ಈಗಲೇ ನಿನ್ನನ್ನು ಕೊಂದು ಹಾಕುತ್ತಿದ್ದೆ,” ಎಂದನು.
NUM 22:30 ಕತ್ತೆಯು ಬಿಳಾಮನಿಗೆ, “ಈ ದಿವಸದವರೆಗೂ ನೀನು ಯಾವಾಗಲೂ ಸವಾರಿಮಾಡುತ್ತಿದ್ದ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ರೀತಿ ಮಾಡಿದೆನೋ?” ಎಂದು ಪ್ರಶ್ನಿಸಿತು. ಅದಕ್ಕವನು, “ಇಲ್ಲ,” ಎಂದನು.
NUM 22:31 ಆಗ ಯೆಹೋವ ದೇವರು ಬಿಳಾಮನ ಕಣ್ಣುಗಳನ್ನು ತೆರೆದರು. ಅವನು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಆತನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ ಬೋರಲು ಬಿದ್ದನು.
NUM 22:32 ಯೆಹೋವ ದೇವರ ದೂತನು ಅವನಿಗೆ, “ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಏಕೆ? ಇಗೋ, ನಿನ್ನ ಮಾರ್ಗವು ನನ್ನ ಮುಂದೆ ವಕ್ರವಾಗಿರುವುದರಿಂದ ನಾನು ನಿನ್ನನ್ನು ತಡೆಯುವುದಕ್ಕೆ ಬಂದಿದ್ದೇನೆ.
NUM 22:33 ಆ ಕತ್ತೆ ನನ್ನನ್ನು ನೋಡಿ, ನನ್ನ ಮುಂದೆ ಈಗ ಮೂರು ಸಾರಿ ಓರೆಯಾಗಿ ಹೋಯಿತು. ಅದು ನನ್ನ ಮುಂದೆ ಓರೆಯಾಗಿ ಹೋಗದಿದ್ದರೆ, ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದುಹಾಕಿ ಕತ್ತೆಯನ್ನು ಉಳಿಸುತ್ತಿದ್ದೆನು,” ಎಂದನು.
NUM 22:34 ಆಗ ಬಿಳಾಮನು ಯೆಹೋವ ದೇವರ ದೂತನಿಗೆ, “ನಾನು ಪಾಪಮಾಡಿದ್ದೇನೆ. ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ. ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ, ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ,” ಎಂದನು.
NUM 22:35 ಆದರೆ ಯೆಹೋವ ದೇವರ ದೂತನು ಬಿಳಾಮನಿಗೆ, “ಈ ಮನುಷ್ಯರ ಸಂಗಡ ಹೋಗು ಆದರೆ ನಾನು ನಿನಗೆ ಹೇಳುವುದನ್ನೇ ಹೇಳಬೇಕೇ ಹೊರತು ಬೇರೆ ಯಾವದನ್ನೂ ಹೇಳಬಾರದು,” ಎಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.
NUM 22:36 ಬಿಳಾಮನು ಬಂದನೆಂದು ಬಾಲಾಕನು ಕೇಳಿದಾಗ, ಅವನು ಕಡೆಯ ಮೇರೆಯಲ್ಲಿರುವ ಅರ್ನೋನ್ ಹೊಳೆಯ ತೀರದಲ್ಲಿದ್ದ ಮೋವಾಬಿನ ಪಟ್ಟಣಕ್ಕೆ ಬರಮಾಡಿಕೊಳ್ಳಲು ಹೊರಟನು.
NUM 22:37 ಬಾಲಾಕನು ಬಿಳಾಮನಿಗೆ, “ನಾನು ನಿನಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಲಿಲ್ಲವೋ? ನೀನು ನನ್ನ ಬಳಿಗೆ ಏಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯವುಳ್ಳವನಲ್ಲವೋ?” ಎಂದನು.
NUM 22:38 ಬಿಳಾಮನು ಬಾಲಾಕನಿಗೆ, “ಇಗೋ, ನಾನು ನಿನ್ನ ಬಳಿಗೆ ಬಂದಿದ್ದೇನೆ. ಆದರೆ ಈಗ ನಿನಗೆ ಇಷ್ಟವಾಗುವಂಥದ್ದನ್ನು ಹೇಳುವುದು ನನಗೆ ಸಾಧ್ಯವಿಲ್ಲ? ದೇವರು ನನ್ನಿಂದ ಆಡಿಸಿದ ಮಾತನ್ನೇ ಹೇಳುವೆನು,” ಎಂದನು.
NUM 22:39 ಆಗ ಬಿಳಾಮನು ಬಾಲಾಕನ ಸಂಗಡ ಹೋದನು. ಇಬ್ಬರು ಕಿರ್ಯತ್ ಹುಚೋತಿಗೆ ಬಂದರು.
NUM 22:40 ಬಾಲಾಕನು ಎತ್ತುಗಳನ್ನೂ ಕುರಿಗಳನ್ನೂ ಅರ್ಪಿಸಿದನು. ಅದರಲ್ಲಿ ಸ್ವಲ್ಪವನ್ನು ಬಿಳಾಮನಿಗೂ ಅವನ ಸಂಗಡ ಇದ್ದ ಪ್ರಭುಗಳಿಗೂ ಕಳುಹಿಸಿದನು.
NUM 22:41 ಮರುದಿವಸದಲ್ಲಿ ಬಾಲಾಕನು ಬಿಳಾಮನನ್ನು ಕರೆದುಕೊಂಡು ಬಾಮೋತ್ ಬಾಳ್ ದೇವತೆಯ ಎತ್ತರವಾದ ಸ್ಥಳಕ್ಕೆ ಹತ್ತಿ, ಅಲ್ಲಿಂದ ಅವನು ಇಸ್ರಾಯೇಲ್ ಜನರ ಒಂದು ಭಾಗವನ್ನು ತೋರಿಸಿದನು.
NUM 23:1 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ನನಗೆ ಏಳು ಬಲಿಪೀಠಗಳನ್ನು ಕಟ್ಟಿ, ನನಗೆ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು.
NUM 23:2 ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿದನು. ಬಾಲಾಕನು ಮತ್ತು ಬಿಳಾಮನು ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಬಲಿಪೀಠದ ಮೇಲೆ ಅರ್ಪಿಸಿದರು.
NUM 23:3 ಆಗ ಬಿಳಾಮನು ಬಾಲಾಕನಿಗೆ, “ನೀನು ನಿನ್ನ ದಹನಬಲಿಯ ಹತ್ತಿರ ನಿಂತುಕೋ, ನಾನು ಸ್ವಲ್ಪ ದೂರಹೋಗಿ ಬರುತ್ತೇನೆ. ಯೆಹೋವ ದೇವರು ನನಗೆ ದರ್ಶನ ಕೊಡಬಹುದು, ಅವರು ನನಗೆ ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುವೆನು,” ಎಂದು ಹೇಳಿ, ಒಂದು ಎತ್ತರವಾದ ಸ್ಥಳಕ್ಕೆ ಹೋದನು.
NUM 23:4 ಆಗ ದೇವರು ಬಿಳಾಮನನ್ನು ಸಂಧಿಸಿದರು. ಬಿಳಾಮನು ಅವರಿಗೆ, “ನಾನು ಏಳು ಬಲಿಪೀಠಗಳನ್ನು ಸಿದ್ಧಮಾಡಿ, ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದ್ದೇನೆ,” ಎಂದನು.
NUM 23:5 ಯೆಹೋವ ದೇವರು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ, ನಾನು ಹೇಳಿದ್ದನ್ನು ತಿಳಿಸು,” ಎಂದರು.
NUM 23:6 ಆಗ ಅವನು ಬಾಲಾಕನ ಬಳಿಗೆ ತಿರುಗಿಬಂದನು. ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು.
NUM 23:7 ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬಾಲಾಕನು ನನ್ನನ್ನು ಅರಾಮಿನಿಂದಲೂ, ಮೋವಾಬಿನ ಅರಸನು ಪೂರ್ವ ಪರ್ವತಗಳಿಂದಲೂ ಕರೆಯಿಸಿ, ‘ನನಗೋಸ್ಕರ ಯಾಕೋಬನನ್ನು ಶಪಿಸಿ ಬಾ, ಇಸ್ರಾಯೇಲನ್ನು ಎದುರಿಸುವುದಕ್ಕೆ ಬಾ,’ ಎಂದು ನನಗೆ ಹೇಳಿದ್ದಾನೆ.
NUM 23:8 ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವ ದೇವರು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?
NUM 23:9 ಬೆಟ್ಟಗಳ ತುದಿಯಿಂದ ಅವರನ್ನು ನೋಡುತ್ತೇನೆ. ಎತ್ತರದ ಗುಡ್ಡಗಳಿಂದ ಅವರನ್ನು ದೃಷ್ಟಿಸಿದ್ದೇನೆ. ನಾನು ಆ ಪ್ರತ್ಯೇಕವಾಗಿ ವಾಸಿಸುವ ಜನರನ್ನು ನೋಡುತ್ತೇನೆ. ಆ ಜನಾಂಗವು ತಾನು ಇತರ ಜನಾಂಗಗಳಂತೆ ಸಾಧಾರಣವೆಂದು ಎಣಿಸುವುದಿಲ್ಲ.
NUM 23:10 ಧೂಳಿನಷ್ಟು ಅಸಂಖ್ಯವಾದ ಯಾಕೋಬರನ್ನು ಎಣಿಸುವುದಕ್ಕೂ, ಇಸ್ರಾಯೇಲಿನ ನಾಲ್ಕನೆಯ ಒಂದು ಪಾಲನ್ನು ಲೆಕ್ಕ ಮಾಡುವುದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು. ನನ್ನ ಅಂತ್ಯವು ಅವರಂತೆಯೇ ಆಗಲಿ.”
NUM 23:11 ಆಗ ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಯಿಸಿದೆನು, ನೀನು ಅವರನ್ನು ಶಪಿಸದೆ ಸಂಪೂರ್ಣವಾಗಿ ಆಶೀರ್ವದಿಸಿದೆ,” ಎಂದನು.
NUM 23:12 ಅದಕ್ಕೆ ಅವನು ಉತ್ತರವಾಗಿ, “ಯೆಹೋವ ದೇವರು ನನ್ನ ಬಾಯಿಯೊಳಗೆ ಇಡುವ ಮಾತನ್ನೇ ನಾನು ನುಡಿಯಬೇಕಲ್ಲವೇ?” ಎಂದನು.
NUM 23:13 ಬಾಲಾಕನು ಅವನಿಗೆ, “ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ, ಅವರನ್ನೆಲ್ಲಾ ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವೆ. ಅಲ್ಲಿಂದ ಅವರನ್ನು ನನಗೋಸ್ಕರ ಶಪಿಸು,” ಎಂದನು.
NUM 23:14 ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾದ ತುದಿಗೆ ಚೋಫೀಮ್ ಬಯಲಿಗೆ ಕರೆದುಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.
NUM 23:15 ಆಗ ಅವನು ಬಾಲಾಕನಿಗೆ, “ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ. ನಾನು ಅಲ್ಲಿ ಯೆಹೋವ ದೇವರನ್ನು ಎದುರುಗೊಳ್ಳುವೆನು,” ಎಂದನು.
NUM 23:16 ಆಗ ಯೆಹೋವ ದೇವರು ಬಿಳಾಮನ ಎದುರಿಗೆ ಬಂದು ಅವನ ಬಾಯಿಯೊಳಗೆ ವಾಕ್ಯವನ್ನಿಟ್ಟು, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.
NUM 23:17 ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು. ಬಾಲಾಕನು ಅವನಿಗೆ, “ಯೆಹೋವ ದೇವರು ಏನು ಹೇಳಿದ್ದಾರೆ,” ಎಂದನು.
NUM 23:18 ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.
NUM 23:19 ದೇವರು ಮನುಷ್ಯನಂತೆ ಸುಳ್ಳಾಡುವವರಲ್ಲ. ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಅವರು ನುಡಿದದ್ದನ್ನು ಮಾಡದಿರುವರೇ? ವಾಗ್ದಾನ ಮಾಡಿದ್ದನ್ನು ಅವರು ನೆರವೇರಿಸದಿರುವರೇ?
NUM 23:20 ಆಶೀರ್ವದಿಸುವುದಕ್ಕೆ ನಾನು ಅಪ್ಪಣೆ ಹೊಂದಿದ್ದೇನೆ. ಅವರು ಆಶೀರ್ವದಿಸಿದ ನಂತರ ನಾನು ಅದನ್ನು ಬದಲಾಯಿಸಲಾರೆನು.
NUM 23:21 “ಯೆಹೋವ ದೇವರು ಯಾಕೋಬನಲ್ಲಿ ಆಪತ್ತನ್ನು ಕಾಣಲಿಲ್ಲ. ಇಸ್ರಾಯೇಲಿನಲ್ಲಿ ವಿಪತ್ತನ್ನು ನೋಡಲಿಲ್ಲ. ಅವರ ದೇವರಾದ ಯೆಹೋವ ದೇವರು ಅವರ ಸಂಗಡ ಇದ್ದಾರೆ. ಅರಸನ ಜಯಧ್ವನಿಯು ಅವರಲ್ಲಿ ಉಂಟು.
NUM 23:22 ದೇವರು ಅವರನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ. ಅವರಿಗೆ ಕಾಡುಕೋಣದಂಥ ಬಲವುಂಟು.
NUM 23:23 ನಿಶ್ಚಯವಾಗಿ ಯಾಕೋಬನಲ್ಲಿ ಕಣಿಕೇಳುವದು ಇಲ್ಲ. ಇಸ್ರಾಯೇಲರಲ್ಲಿ ಶಕುನನೋಡುವದು ಇಲ್ಲ. ‘ನೋಡಿರಿ, ದೇವರು ಎಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ,’ ಎಂದು ಯಾಕೋಬನ ವಿಷಯವಾಗಿಯೂ, ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.
NUM 23:24 ಇಗೋ, ಜನಾಂಗವು ದೊಡ್ಡ ಸಿಂಹದ ಹಾಗೆ ಏಳುವುದು. ಸಿಂಹದ ಮರಿಯ ಹಾಗೆ ಎದ್ದೇಳುವುದು. ಅದು ಬೇಟೆಯನ್ನು ತಿಂದು, ಹತರಾದವರ ರಕ್ತವನ್ನು ಕುಡಿಯುವವರೆಗೆ ಮಲಗದು.”
NUM 23:25 ಆಗ ಬಾಲಾಕನು ಬಿಳಾಮನಿಗೆ, “ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ,” ಎಂದನು.
NUM 23:26 ಆದರೆ ಬಿಳಾಮನು ಉತ್ತರವಾಗಿ, “ಬಾಲಾಕನಿಗೆ ಯೆಹೋವ ದೇವರು ಹೇಳುವುದನ್ನೆಲ್ಲಾ ನಾನು ಮಾಡುವೆನೆಂದು ನಿನಗೆ ಹೇಳಲಿಲ್ಲವೋ?” ಎಂದನು.
NUM 23:27 ಆಗ ಬಾಲಾಕನು ಬಿಳಾಮನಿಗೆ, “ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸುವುದು ಒಂದು ವೇಳೆ ದೇವರಿಗೆ ಯುಕ್ತವಾಗಿದ್ದೀತು,” ಎಂದನು.
NUM 23:28 ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿಯ ತುದಿಗೆ ಕರೆದುಕೊಂಡು ಹೋದನು.
NUM 23:29 ಬಿಳಾಮನು ಬಾಲಾಕನಿಗೆ, “ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಇಲ್ಲಿ ನನಗೆ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು.
NUM 23:30 ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ, ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.
NUM 24:1 ಆದರೆ ಇಸ್ರಾಯೇಲನ್ನು ಆಶೀರ್ವದಿಸುವುದಕ್ಕೆ ಯೆಹೋವ ದೇವರ ದೃಷ್ಟಿಗೆ ಒಳ್ಳೆಯದೆಂದು ಬಿಳಾಮನು ನೋಡಿದಾಗ, ಅವನು ಮುಂಚಿನ ಹಾಗೆ ಶಕುನವನ್ನು ಕಂಡುಕೊಳ್ಳುವುದಕ್ಕೆ ಹೋಗದೆ, ತನ್ನ ಮುಖವನ್ನು ಮರುಭೂಮಿಯ ಕಡೆಗೆ ತಿರುಗಿಸಿಕೊಂಡನು.
NUM 24:2 ಬಿಳಾಮನು ತನ್ನ ಕಣ್ಣೆತ್ತಿ ಇಸ್ರಾಯೇಲರು ಅವರವರ ಗೋತ್ರಗಳ ಪ್ರಕಾರ ತಮ್ಮ ಡೇರೆಗಳಲ್ಲಿ ವಾಸವಾಗಿರುವುದನ್ನು ನೋಡಿದಾಗ, ದೇವರಾತ್ಮ ಪ್ರೇರಿತನಾಗಿ
NUM 24:3 ಹೀಗೆ ಪ್ರವಾದಿಸಿದನು: “ಇದು ಬೆಯೋರನ ಮಗ ಬಿಳಾಮನ ಪ್ರವಾದನೆ: ಸ್ಪಷ್ಟ ಕಣ್ಣುಳ್ಳವನು ನುಡಿದದ್ದು.
NUM 24:4 ದೇವರ ಮಾತುಗಳನ್ನು ಕೇಳಿದವನೂ, ಸರ್ವಶಕ್ತರ ದರ್ಶನವನ್ನು ನೋಡಿದವನೂ, ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು:
NUM 24:5 “ಯಾಕೋಬೇ, ನಿನ್ನ ಡೇರೆಗಳೂ; ಇಸ್ರಾಯೇಲರೇ, ನಿಮ್ಮ ಗುಡಾರಗಳೂ ಉತ್ತಮವಾಗಿವೆ!
NUM 24:6 “ಅವು ಕಣಿವೆಗಳ ಹಾಗೆ ವಿಸ್ತರಿಸಿವೆ. ನದಿತೀರದಲ್ಲಿರುವ ತೋಟಗಳ ಹಾಗೆಯೂ, ಯೆಹೋವ ದೇವರು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.
NUM 24:7 ಅವರ ತೊಟ್ಟಿಗಳಿಂದ ನೀರು ಹರಿಯುವಂತೆ ಮಾಡುವರು. ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. “ಅವರ ಅರಸನು ಅಗಾಗ್ ರಾಜನಿಗಿಂತಲೂ ಉನ್ನತವಾಗಿರುವನು. ಅವರ ರಾಜ್ಯವು ಅಭಿವೃದ್ಧಿ ಹೊಂದುವುದು.
NUM 24:8 “ದೇವರು ಅವರನ್ನು ಈಜಿಪ್ಟಿನಿಂದ ಹೊರಗೆ ತಂದನು. ಈ ಕಾಡುಕೋಣದಂತೆ ಬಲ ಅವರಿಗೆ ಉಂಟು. ಅವರು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು, ಅವರ ಎಲುಬುಗಳನ್ನು ಚೂರುಮಾಡಿ, ತಮ್ಮ ಬಾಣಗಳಿಂದ ಗಾಯಮಾಡುವನು.
NUM 24:9 ಅವರು ಸಿಂಹದ ಹಾಗೆಯೂ, ಸಿಂಹಣಿ ಹಾಗೆಯೂ ಬಾಗಿ ಮಲಗುತ್ತಾನೆ. ಅವನನ್ನು ಎಬ್ಬಿಸುವವನು ಯಾರು? “ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದ ಉಂಟಾಗಲಿ. ಶಪಿಸುವವನಿಗೆ ಶಾಪ ಉಂಟಾಗಲಿ.”
NUM 24:10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ.
NUM 24:11 ಈಗ ನಿನ್ನ ಸ್ಥಳಕ್ಕೆ ಓಡಿಹೋಗು. ನಾನು ನಿನ್ನನ್ನು ಬಹು ಗೌರವಿಸಬೇಕೆಂದಿದ್ದೆ. ಆದರೆ ಇಗೋ, ಯೆಹೋವ ದೇವರು ನಿನಗೆ ಘನತೆ ಬಾರದಂತೆ ತಡೆದಿದ್ದಾನೆ,” ಎಂದನು.
NUM 24:12 ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ,
NUM 24:13 ‘ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಬಂಗಾರಗಳನ್ನು ಕೊಟ್ಟರೂ, ನನ್ನ ಹೃದಯದಿಂದ ಒಳ್ಳೆಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡುವುದಕ್ಕೆ ಯೆಹೋವ ದೇವರ ಆಜ್ಞೆಯನ್ನು ಮೀರಲಾರೆನು. ಯೆಹೋವ ದೇವರು ಏನು ಹೇಳುತ್ತಾರೋ, ಅದನ್ನೇ ಹೇಳುವೆನೆಂದು ನಾನು ಹೇಳಲಿಲ್ಲವೋ’? ಈಗ, ನನ್ನ ಜನರ ಬಳಿಗೆ ಹೋಗುತ್ತೇನೆ.
NUM 24:14 ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ, ಅದನ್ನು ನಿನಗೆ ತಿಳಿಸುವೆನು,” ಎಂದನು.
NUM 24:15 ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬೆಯೋರನ ಮಗ ಬಿಳಾಮನು ಹೇಳಿದ್ದು: ಸ್ಪಷ್ಟ ಕಣ್ಣುಳ್ಳ ಮನುಷ್ಯನು ನುಡಿದದ್ದು.
NUM 24:16 ದೇವರ ಮಾತುಗಳನ್ನು ಕೇಳಿದವನೂ, ಮಹೋನ್ನತನ ಜ್ಞಾನವನ್ನು ತಿಳಿದವನೂ, ಸರ್ವಶಕ್ತರ ದರ್ಶನವನ್ನು ನೋಡಿದವನೂ, ಪರವಶನಾಗಿದ್ದು ತೆರೆದ ಕಣ್ಣುಳ್ಳವನೂ ಹೇಳಿದ್ದು:
NUM 24:17 “ನಾನು ಅವನನ್ನು ನೋಡುವೆನು, ಈಗಲ್ಲ. ಅವನನ್ನು ದೃಷ್ಟಿಸುವೆನು, ಸಮೀಪದಲ್ಲಿ ಅಲ್ಲ. ಯಾಕೋಬನಿಂದ ನಕ್ಷತ್ರ ಉದಯಿಸುವುದು. ಇಸ್ರಾಯೇಲನಿಂದ ರಾಜದಂಡ ಏಳುವುದು. ಅದು ಮೋವಾಬಿನ ಮೂಲೆಗಳನ್ನು ಹೊಡೆದು, ಸೇಥನ ಎಲ್ಲಾ ಮಕ್ಕಳನ್ನು ಸಂಹರಿಸುವುದು.
NUM 24:18 ಎದೋಮು ಸ್ವಾಧೀನವಾಗುವುದು; ಸೇಯೀರನವರು ತನ್ನ ಶತ್ರುಗಳಿಗೆ ಸ್ವಾಧೀನವಾಗುವುದು; ಇಸ್ರಾಯೇಲು ಪರಾಕ್ರಮ ಕಾರ್ಯಮಾಡುವುದು,
NUM 24:19 ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು, ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು.”
NUM 24:20 ಅನಂತರ ಬಿಳಾಮನು ಅಮಾಲೇಕ್ಯರನ್ನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಜನಾಂಗಗಳಲ್ಲಿ ಮೊದಲನೆಯವನೇ ಅಮಾಲೇಕ್ಯನು, ಆದರೆ ಅವನು ಕೊನೆಗೆ ನಾಶವಾಗುವನು.”
NUM 24:21 ಬಳಿಕ ಕೇನ್ಯರನ್ನು ಅವನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.
NUM 24:22 ಆದರೂ ಅಸ್ಸೀರಿಯರು ನಿನ್ನನ್ನು ಸೆರೆಹಿಡಿಯುವಷ್ಟರಲ್ಲೇ ನೀವು ಕೇನ್ಯರೂ ಹಾಳಾಗುವರು.”
NUM 24:23 ಇದಲ್ಲದೆ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಅಯ್ಯೋ! ದೇವರು ಇದನ್ನು ಮಾಡುವಾಗ ಯಾರು ಬದುಕುವರು?
NUM 24:24 ಕಿತ್ತೀಮೆಂಬ ತೀರದಿಂದ ಹಡಗುಗಳು ಬಂದು, ಅಸ್ಸೀರಿಯರನ್ನೂ, ಏಬೆರ್ ಜನರನ್ನೂ ಸೋಲಿಸುವುವು. ಅವನು ಸಹ ಸದಾಕಾಲಕ್ಕೂ ನಾಶವಾಗುವನು.”
NUM 24:25 ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರುಗಿಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.
NUM 25:1 ಆಗ ಇಸ್ರಾಯೇಲರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ, ಅವರು ಮೋವಾಬಿನ ಪುತ್ರಿಯರ ಸಂಗಡ ಜಾರತ್ವ ಮಾಡಲಾರಂಭಿಸಿದರು.
NUM 25:2 ಆ ಮಹಿಳೆಯರು ಇಸ್ರಾಯೇಲರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು. ಇವರು ತಿಂದು ಅವರ ದೇವರುಗಳಿಗೆ ಅಡ್ಡಬಿದ್ದರು.
NUM 25:3 ಹೀಗೆ ಇಸ್ರಾಯೇಲರು ಬಾಳ್ ಪೆಯೋರಿನೊಂದಿಗೆ ತಾವೇ ಕೂಡಿ ಪೂಜಿಸಿದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡರು.
NUM 25:4 ಆಗ ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೋಪಾಗ್ನಿಯು ಇಸ್ರಾಯೇಲಿನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥರೆಲ್ಲರನ್ನು ತೆಗೆದುಕೊಂಡು, ಅವರನ್ನು ಹಗಲು ಹೊತ್ತಿನಲ್ಲಿ ಯೆಹೋವ ದೇವರ ಮುಂದೆ ಕೊಂದುಹಾಕು.”
NUM 25:5 ಆದ್ದರಿಂದ ಮೋಶೆ ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ಬಾಳ್ ಪೆಯೋರಿನೊಂದಿಗೆ ಕೂಡಿ ಪೂಜಿಸಿರುವ ನಿನ್ನ ಜನರನ್ನು ಕೊಲ್ಲಬೇಕು,” ಎಂದನು.
NUM 25:6 ಆಗ ಇಸ್ರಾಯೇಲರಲ್ಲಿ ಒಬ್ಬನು ಮೋಶೆಗೆ ಹಾಗೂ ದೇವದರ್ಶನ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲರ ಸಮಸ್ತ ಸಮೂಹಕ್ಕೂ ಕಾಣುವ ಹಾಗೆ ಒಬ್ಬ ಮಿದ್ಯಾನ್ ಮಹಿಳೆಯನ್ನು ಕರೆತಂದನು.
NUM 25:7 ಕೂಡಲೆ ಮಾಹಾಯಾಜಕ ಆರೋನನ ಮಗನಾಗಿದ್ದ ಎಲಿಯಾಜರನ ಮಗ ಫೀನೆಹಾಸನು ಅದನ್ನು ನೋಡಿ, ಜನರ ಮಧ್ಯದಿಂದ ಎದ್ದು, ತನ್ನ ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು,
NUM 25:8 ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ, ಇಸ್ರಾಯೇಲಿನವನನ್ನೂ ಆ ಮಹಿಳೆಯನ್ನೂ ಒಂದೇ ಬಾರಿಗೆ ಇಬ್ಬರ ಹೊಟ್ಟೆಯನ್ನು ತಿವಿದನು. ಹೀಗೆ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
NUM 25:9 ಆದರೂ, ವ್ಯಾಧಿಯಿಂದ ಸತ್ತವರು 24,000 ಮಂದಿಯಾಗಿದ್ದರು.
NUM 25:10 ಯೆಹೋವ ದೇವರು ಮೋಶೆಗೆ,
NUM 25:11 “ಯಾಜಕನಾದ ಆರೋನನ ಮೊಮ್ಮಗನೂ, ಎಲಿಯಾಜರನ ಮಗ ಫೀನೆಹಾಸನು ಇಸ್ರಾಯೇಲರಲ್ಲಿ ನನಗೋಸ್ಕರ ಆಸಕ್ತನಾಗಿದ್ದು, ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ, ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿಬಿಟ್ಟಿದ್ದಾನೆ.
NUM 25:12 ಆದಕಾರಣ, ನಾನು ಅವನೊಂದಿಗೆ ನನ್ನ ಸಮಾಧಾನದ ಒಡಂಬಡಿಕೆಯನ್ನು ಮಾಡುತ್ತೇನೆ ಎಂದು ಹೇಳು.
NUM 25:13 ಅವನು ತನ್ನ ದೇವರ ಗೌರವವನ್ನು ಕಾಪಾಡಲು ಆಸಕ್ತನಾಗಿದ್ದು, ಇಸ್ರಾಯೇಲರಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ, ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆ ಮಾಡಿದ್ದೇನೆ,” ಎಂದರು.
NUM 25:14 ಮಿದ್ಯಾನ್ ಸ್ತ್ರೀಯ ಸಂಗಡ ಹತನಾದ ಆ ಇಸ್ರಾಯೇಲಿನವನ ಹೆಸರು ಜಿಮ್ರಿ, ಅವನು ಸಿಮೆಯೋನ್ ಕುಲದವರಲ್ಲಿ ಗೋತ್ರದ ಮುಖ್ಯಸ್ಥನಾಗಿದ್ದ ಸಾಲೂ ಎಂಬುವನ ಮಗನು.
NUM 25:15 ಹತಳಾದ ಆ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ, ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಗೆ ಯಜಮಾನನೂ ಆಗಿರುವ ಚೂರ್ ಎಂಬವನ ಮಗಳಾಗಿದ್ದಳು.
NUM 25:16 ಯೆಹೋವ ದೇವರು ಮೋಶೆಗೆ,
NUM 25:17 “ಮಿದ್ಯಾನ್ಯರನ್ನು ವೈರಿ ಎಂದು ತಿಳಿದು ಹೊಡೆಯಬೇಕು.
NUM 25:18 ಅವರು ಪೆಯೋರಿನ ವಿಷಯದಲ್ಲಿಯೂ, ಪೆಯೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಹತಳಾದ ತಮ್ಮ ಸಹೋದರಿಯಾಗಿಯೂ, ಮಿದ್ಯಾನ್ಯರ ಪ್ರಧಾನನ ಮಗಳಾಗಿಯೂ, ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರವ ಕೊಡುತ್ತಾರೆ,” ಎಂದರು.
NUM 26:1 ವ್ಯಾಧಿಯ ತರುವಾಯ ಯೆಹೋವ ದೇವರು ಮೋಶೆಗೂ, ಆರೋನನ ಮಗನೂ, ಯಾಜಕನೂ ಆಗಿರುವ ಎಲಿಯಾಜರನ ಸಂಗಡ ಮಾತನಾಡಿ,
NUM 26:2 “ಇಸ್ರಾಯೇಲರ ಸಮಸ್ತ ಸಮೂಹದವರಲ್ಲಿ ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಯುದ್ಧಕ್ಕೆ ಹೋಗುವುದಕ್ಕೆ ಶಕ್ತರಾದವರೆಲ್ಲರನ್ನು ಜನಗಣತಿ ಮಾಡಿ ಅವರ ಗೋತ್ರಗಳ ಪ್ರಕಾರ ತೆಗೆದುಕೊಳ್ಳಿರಿ,” ಎಂದರು.
NUM 26:3 ಆಗ ಮೋಶೆಯೂ ಯಾಜಕನಾದ ಎಲಿಯಾಜರನೂ ಮೋವಾಬಿನ ಬಯಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ,
NUM 26:4 “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇಪ್ಪತ್ತು ವರ್ಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.” ಈಜಿಪ್ಟ್ ದೇಶದಿಂದ ಹೊರಟು ಬಂದಿದ್ದ ಇಸ್ರಾಯೇಲರು ಇವರು:
NUM 26:5 ಇಸ್ರಾಯೇಲನ ಚೊಚ್ಚಲ ಮಗ ರೂಬೇನನೂ, ರೂಬೇನನ ಮಕ್ಕಳೂ; ಹನೋಕನೂ, ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;
NUM 26:6 ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ಮೀಯಿಂದ ಕರ್ಮೀಯರ ಕುಟುಂಬ.
NUM 26:7 ಇವೇ ರೂಬೇನ್ಯರ ಕುಟುಂಬಗಳು. ಇವರಲ್ಲಿ ಎಣಿಕೆಯಾದವರ ಸಂಖ್ಯೆ 43,730 ಪುರುಷರು.
NUM 26:8 ಪಲ್ಲೂವಿನ ಪುತ್ರ ಎಲೀಯಾಬನು.
NUM 26:9 ಎಲೀಯಾಬನ ಪುತ್ರರು ನೆಮೂಯೇಲ್, ದಾತಾನ್, ಅಬೀರಾಮ್. ಈ ದಾತಾನನೂ, ಅಬೀರಾಮನೂ ಜನರಲ್ಲಿ ಪ್ರಸಿದ್ಧರಾಗಿದ್ದು; ಕೋರಹನ ಗುಂಪಿನಲ್ಲಿದ್ದು; ಯೆಹೋವ ದೇವರಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು.
NUM 26:10 ಭೂಮಿಯು ತನ್ನ ಬಾಯಿಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು. ಹಾಗೆಯೇ ಆ ಗುಂಪಿನವರಲ್ಲಿ ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು. ಹೀಗೆ ಇಸ್ರಾಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು. ಅವರು ದೃಷ್ಟಾಂತವಾದರು.
NUM 26:11 ಆದರೂ ಕೋರಹನ ಮಕ್ಕಳು ಸಾಯಲಿಲ್ಲ.
NUM 26:12 ಕುಟುಂಬಗಳ ಪ್ರಕಾರ ಸಿಮೆಯೋನನ ಪುತ್ರರು. ನೆಮೂಯೇಲನಿಂದ ನೆಮೂಯೇಲ್ಯರ ಕುಟುಂಬ; ಯಾಮೀನನಿಂದ ಯಾಮೀನ್ಯರ ಕುಟುಂಬ; ಯಾಕೀನನಿಂದ ಯಾಕೀನ್ಯರ ಕುಟುಂಬ;
NUM 26:13 ಜೆರಹನ ವಂಶಸ್ಥರಾದ ಜೆರಹಿಯರು, ಸೌಲನಿಂದ ಸೌಲ್ಯರ ಕುಟುಂಬ;
NUM 26:14 ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 22,200 ಪುರುಷರು.
NUM 26:15 ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯಿಂದ ಹಗ್ಗೀಯರ ಕುಟುಂಬ ಶೂನೀಯಿಂದ ಶೂನೀಯರ ಕುಟುಂಬ;
NUM 26:16 ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,
NUM 26:17 ಅರೋದನಿಂದ ಅರೋದ್ಯರ ಕುಟುಂಬ; ಅರೇಲೀಯಿಂದ ಅರೇಲೀಯರ ಕುಟುಂಬ.
NUM 26:18 ಗಾದನ ಮಕ್ಕಳ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 40,500 ಪುರುಷರು.
NUM 26:19 ಯೆಹೂದನ ಪುತ್ರರು: ಏರ್, ಓನಾನನೂ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು.
NUM 26:20 ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು. ಶೇಲಹನಿಂದ ಶೇಲಾನ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹಿಯರ ಕುಟುಂಬ;
NUM 26:21 ಪೆರೆಚನ ಪುತ್ರರು, ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ. ಹಾಮೂಲನಿಂದ ಹಾಮೂಲ್ಯರು ಕುಟುಂಬ
NUM 26:22 ಯೆಹೂದನ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 76,500 ಪುರುಷರು.
NUM 26:23 ಕುಟುಂಬಗಳ ಪ್ರಕಾರ ಇಸ್ಸಾಕಾರನ ಪುತ್ರರು. ತೋಲನ ವಂಶಸ್ಥರಾದ ತೋಲಾಯರು, ಪುವ್ವನಿಂದ ಪೂನ್ಯರ ಕುಟುಂಬ;
NUM 26:24 ಯಾಶೂಬನಿಂದ ಯಾಶೂಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ.
NUM 26:25 ಇಸ್ಸಾಕಾರನ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 64,300 ಪುರುಷರು.
NUM 26:26 ಜೆಬುಲೂನನ ಪುತ್ರರು: ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನಿಂದ ಯಹಲೇಲ್ಯರ ಕುಟುಂಬ.
NUM 26:27 ಜೆಬುಲೂನ್ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 60,500 ಪುರುಷರು.
NUM 26:28 ಕುಟುಂಬಗಳ ಪ್ರಕಾರ ಯೋಸೇಫನ ಪುತ್ರರು: ಮನಸ್ಸೆ, ಎಫ್ರಾಯೀಮ್.
NUM 26:29 ಮನಸ್ಸೆಯ ಪುತ್ರರು: ಮಾಕೀರನಿಂದ ಮಾಕೀರ್ಯರ ಕುಟುಂಬ; ಮಾಕೀರನು ಗಿಲ್ಯಾದನನ್ನು ಪಡೆದನು. ಗಿಲ್ಯಾದನಿಂದ ಗಿಲ್ಯಾದ್ಯರ ಕುಟುಂಬ.
NUM 26:30 ಗಿಲ್ಯಾದನ ಪುತ್ರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ;
NUM 26:31 ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ, ಶೆಕೆಮನಿಂದ ಶೆಕೆಮ್ಯರ ಕುಟುಂಬ;
NUM 26:32 ಶೆಮೀದಾಯನಿಂದ ಶೆಮೀದಾಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ.
NUM 26:33 ಹೇಫೆರನ ಮಗ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಪುತ್ರಿಯರು ಇದ್ದರು. ಚಲ್ಪಹಾದನ ಪುತ್ರಿಯರ ಹೆಸರುಗಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
NUM 26:34 ಮನಸ್ಸೆಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 52,700 ಪುರುಷರು.
NUM 26:35 ಕುಟುಂಬಗಳ ಪ್ರಕಾರ ಎಫ್ರಾಯೀಮನ ಪುತ್ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನಿಯರ ಕುಟುಂಬ.
NUM 26:36 ಶೂತೆಲಹನ ಪುತ್ರರು: ಏರಾನನಿಂದ ಏರಾನ್ಯರ ಕುಟುಂಬ.
NUM 26:37 ಎಫ್ರಾಯೀಮನ ಪುತ್ರರ ಎಫ್ರಾಯೀಮನ ಪುತ್ರರುಗಳು ಇವೇ. ಅವರಲ್ಲಿ ಲೆಕ್ಕಿತರಾದವರ ಸಂಖ್ಯೆ 32,500. ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
NUM 26:38 ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು: ಬೆಳಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;
NUM 26:39 ಶೂಫಾಮನಿಂದ ಶೂಫಾಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ.
NUM 26:40 ಬೆಳಗನ ಪುತ್ರರು ಆರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ.
NUM 26:41 ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು ಇವರೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 45,600.
NUM 26:42 ಕುಟುಂಬಗಳ ಪ್ರಕಾರ ದಾನನ ಪುತ್ರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ; ಕುಟುಂಬಗಳ ಪ್ರಕಾರ ದಾನನ ಕುಟುಂಬಗಳು ಇವೇ.
NUM 26:43 ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 64,400.
NUM 26:44 ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನನಿಂದ ಇಮ್ನಾಹರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ.
NUM 26:45 ಬೆರೀಯನ ಕುಮಾರರು: ಹೆಬೆರನಿಂದ ಹೆಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.
NUM 26:46 ಆಶೇರನ ಮಗಳ ಹೆಸರು ಸೆರಹ.
NUM 26:47 ಲೆಕ್ಕಾನುಸಾರವಾದ ಆಶೇರನ ಪುತ್ರರ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 53,400.
NUM 26:48 ಕುಟುಂಬಗಳ ಪ್ರಕಾರ ನಫ್ತಾಲಿಯ ಪುತ್ರರು: ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀಯ ವಂಶಸ್ಥರಾದ ಗೂನೀಯರು,
NUM 26:49 ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.
NUM 26:50 ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರು 45,400.
NUM 26:51 ಇಸ್ರಾಯೇಲರಲ್ಲಿ ಲೆಕ್ಕಿತರಾದವರ ಸಂಖ್ಯೆ 6,01,730.
NUM 26:52 ಯೆಹೋವ ದೇವರು ಮೋಶೆಗೆ,
NUM 26:53 “ಇವರಿಗೆ ನಾಡನ್ನು ಹೆಸರುಗಳ ಲೆಕ್ಕದ ಪ್ರಕಾರ ಸೊತ್ತಾಗಿ ಹಂಚಿಕೊಡು.
NUM 26:54 ಹೆಚ್ಚು ಮಂದಿಯುಳ್ಳ ಗೋತ್ರಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಗೋತ್ರಕ್ಕೆ ಕಡಿಮೆಯಾಗಿಯೂ ಕೊಡು. ಹೀಗೆ ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸೊತ್ತನ್ನು ಹಂಚಿಕೊಡು.
NUM 26:55 ಇದಲ್ಲದೆ ಚೀಟು ಹಾಕುವುದರಿಂದ ದೇಶವನ್ನು ಪಾಲುಮಾಡಬೇಕು. ತಮ್ಮ ಗೋತ್ರಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ತಮ್ಮ ಪಾಲನ್ನು ಪಡೆಯಬೇಕು.
NUM 26:56 ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿಯ ಪ್ರಕಾರ ಪಾಲಾಗಬೇಕು.”
NUM 26:57 ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ. ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೊಹಾತನಿಂದ ಕೊಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.
NUM 26:58 ಲೇವಿಯರ ಕುಟುಂಬಗಳು ಇವೇ. ಲಿಬ್ನೀಯರ ಕುಟುಂಬ; ಹೆಬ್ರೋನಿಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹೀಯರ ಕುಟುಂಬ. ಕೊಹಾತನು ಅಮ್ರಾಮನನ್ನು ಪಡೆದನು.
NUM 26:59 ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಈಜಿಪ್ಟಿನಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.
NUM 26:60 ಆರೋನನಿಗೆ ನಾದಾಬನೂ ಅಬೀಹೂ ಎಲಿಯಾಜರನೂ ಈತಾಮಾರನೂ ಹುಟ್ಟಿದರು.
NUM 26:61 ಆದರೆ ನಾದಾಬನೂ ಅಬೀಹೂ ಯೆಹೋವ ದೇವರ ಮುಂದೆ ಆಜ್ಞಾಪಿಸದೇ ಇದ್ದ ಬೇರೆ ಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು.
NUM 26:62 ಇವರಲ್ಲಿ ಲೆಕ್ಕಿತರಾದವರು ಒಂದು ತಿಂಗಳೂ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 23,000 ಆಗಿತ್ತು. ಇವರಿಗೆ ಇಸ್ರಾಯೇಲರಲ್ಲಿ ಸೊತ್ತು ದೊರೆಯದ ಕಾರಣ ಅವರು ಇಸ್ರಾಯೇಲರೊಳಗೆ ಲೆಕ್ಕಿತರಾಗಲಿಲ್ಲ.
NUM 26:63 ಇವರನ್ನು ಮೋಶೆಯೂ ಯಾಜಕನಾದ ಎಲಿಯಾಜರನೂ ಇಸ್ರಾಯೇಲರಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು.
NUM 26:64 ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಎಣಿಸಿದಾಗ, ಎಣಿಕೆಯಾದವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.
NUM 26:65 ಏಕೆಂದರೆ ಅವರು ಮರುಭೂಮಿಯಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರು. ಈ ಪ್ರಕಾರ ಯೆಫುನ್ನೆಯ ಮಗ ಕಾಲೇಬನೂ ನೂನನ ಮಗ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನೂ ಉಳಿಯಲಿಲ್ಲ.
NUM 27:1 ಯೋಸೇಫನ ಮಗನಾದ ಮನಸ್ಸೆಯ ಕುಟುಂಬಗಳಿಗೆ ಸೇರಿದ ಚಲ್ಪಹಾದ ಎಂಬುವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫೆರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಪುತ್ರಿಯರಿದ್ದರು.
NUM 27:2 ಇವರು ಸಭೆಯ ಗುಡಾರದ ಬಾಗಿಲಿನ ಹತ್ತಿರದಲ್ಲಿದ್ದ ಮೋಶೆ, ಯಾಜಕನಾದ ಎಲಿಯಾಜರ್, ಪ್ರಧಾನರು ಮತ್ತು ಸಮಸ್ತ ಸಭೆಯವರ ಮುಂದೆ ಬಂದು ನಿಂತು ಅವರಿಗೆ,
NUM 27:3 “ನಮ್ಮ ತಂದೆಯು ಮರುಭೂಮಿಯಲ್ಲಿ ಸತ್ತನು. ಅವನು ಕೋರಹನ ಗುಂಪಿನಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ಕೂಡಿಕೊಂಡವರ ಗುಂಪಿನೊಳಗಿರದೆ, ತನ್ನ ಪಾಪದಲ್ಲಿಯೇ ಸತ್ತನು. ಅವನಿಗೆ ಪುತ್ರರು ಇರಲಿಲ್ಲ.
NUM 27:4 ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವುದರಿಂದ, ಅವನ ಹೆಸರನ್ನು ತನ್ನ ಕುಟುಂಬದಿಂದ ಏಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಮಗೆ ಕೊಡು,” ಎಂದರು.
NUM 27:5 ಮೋಶೆಯು ಅವರ ವ್ಯಾಜ್ಯವನ್ನು ಯೆಹೋವ ದೇವರ ಮುಂದೆ ತಂದನು.
NUM 27:6 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 27:7 ಚಲ್ಪಹಾದನ ಪುತ್ರಿಯರು ಹೇಳಿದ್ದು ಸರಿ, ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಿಶ್ಚಯವಾಗಿ ಕೊಡಬೇಕು, ಅವರ ತಂದೆಯ ಸೊತ್ತನ್ನು ಅವರಿಗೆ ಸೇರಿಸಬೇಕು.
NUM 27:8 “ಇಸ್ರಾಯೇಲರ ಸಂಗಡ ಮಾಡನಾಡಿ ನೀನು ಹೇಳಬೇಕಾದದ್ದೇನೆಂದರೆ: ‘ಒಬ್ಬನು ಮಗನಿಲ್ಲದೆ ಸತ್ತರೆ, ನೀವು ಅವನ ಸೊತ್ತನ್ನು ಅವನ ಮಗಳಿಗೆ ಸೇರಿಸಬೇಕು.
NUM 27:9 ಅವನಿಗೆ ಸಹೋದರರು ಇಲ್ಲದಿದ್ದರೆ, ನೀವು ಅವನ ಸೊತ್ತನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.
NUM 27:10 ಆದರೆ ಅವನ ತಂದೆಗೆ ಸಹೋದರರು ಇಲ್ಲದಿದ್ದರೆ,
NUM 27:11 ಅವನ ಕುಟುಂಬದೊಳಗೆ ಅವನಿಗೆ ಹೆಚ್ಚಾಗಿ ಸಮೀಪವಾದ ಬಂಧುವಿಗೆ ಅವನ ಸೊತ್ತನ್ನು ಕೊಡಬೇಕು. ಅವನೇ ಅದನ್ನು ಪಡೆದುಕೊಳ್ಳಲಿ. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇದು ಇಸ್ರಾಯೇಲರಿಗೆ ನ್ಯಾಯದ ಕಟ್ಟಳೆಯಾಗಿರಬೇಕು,’ ” ಎಂದು ಹೇಳಿದರು.
NUM 27:12 ಆಗ ಯೆಹೋವ ದೇವರು ಮೋಶೆಗೆ, “ನೀನು ಈ ಅಬಾರೀಮ್ ಪರ್ವತದ ಮೇಲೆ ಏರಿ, ನಾನು ಇಸ್ರಾಯೇಲರಿಗೆ ಕೊಟ್ಟ ದೇಶವನ್ನು ನೋಡು.
NUM 27:13 ಅದನ್ನು ನೋಡಿದ ಮೇಲೆ, ನಿನ್ನ ಸಹೋದರನಾದ ಆರೋನನ ಪ್ರಕಾರ ನೀನೂ ಸಹ ನಿನ್ನ ಜನರ ಬಳಿಗೆ ಸೇರುತ್ತೀ.
NUM 27:14 ಏಕೆಂದರೆ ನೀವು ಚಿನ್ ಎಂಬ ಮರುಭೂಮಿಯಲ್ಲಿ, ಇಸ್ರಾಯೇಲ್ ಜನಸಮೂಹದವರು ನನ್ನೊಡನೆ ವಾಗ್ವಾದ ಮಾಡಿದಾಗ ಅವರ ಮುಂದೆ ನೀರಿನ ಬಳಿಯಲ್ಲಿ ನನ್ನನ್ನು ಗೌರವಿಸದೆ, ನನ್ನ ಆಜ್ಞೆಯನ್ನು ಮೀರಿದಿರಿ. ಆ ನೀರು ಎಂದರೆ ಚಿನ್ ಎಂಬ ಮರುಭೂಮಿಯ ಕಾದೇಶಿನಲ್ಲಿರುವ ಮೆರೀಬಾದ ನೀರು,” ಎಂದರು.
NUM 27:15 ಮೋಶೆಯು ಯೆಹೋವ ದೇವರ ಸಂಗಡ ಮಾತನಾಡಿ,
NUM 27:16 “ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವ ದೇವರು ಈ ಜನಸಮೂಹದ ಮೇಲೆ ಒಬ್ಬ ಮನುಷ್ಯನನ್ನು ನೇಮಿಸಿ ಇಡಲಿ.
NUM 27:17 ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.
NUM 27:18 ಆಗ ಯೆಹೋವ ದೇವರು ಮೋಶೆಗೆ, “ಪವಿತ್ರಾತ್ಮವುಳ್ಳವನಾಗಿರುವ ನೂನನ ಮಗ ಯೆಹೋಶುವನನ್ನು ತೆಗೆದುಕೊಂಡು, ನಿನ್ನ ಕೈಯನ್ನು ಅವನ ಮೇಲೆ ಇಟ್ಟು,
NUM 27:19 ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ, ಅವರಿಗೆದುರಾಗಿ ಅವನನ್ನು ನೇಮಿಸು.
NUM 27:20 ಇಸ್ರಾಯೇಲರ ಸಮಸ್ತ ಸಭೆಯು ಅವನಿಗೆ ವಿಧೇಯರಾಗುವಂತೆ, ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.
NUM 27:21 ಅವನು ಯಾಜಕನಾದ ಎಲಿಯಾಜರನ ಮುಂದೆ ನಿಲ್ಲಬೇಕು. ಎಲಿಯಾಜರನು ಯೆಹೋವ ದೇವರ ಮುಂದೆ ಊರೀಮ್ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನ ಆಜ್ಞೆಯ ಪ್ರಕಾರವೇ ಅವನು ಮತ್ತು ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲರ ಸಮೂಹವೂ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದರು.
NUM 27:22 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಮಾಡಿ, ಯೆಹೋಶುವನನ್ನು ತೆಗೆದುಕೊಂಡು, ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ, ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ,
NUM 27:23 ಅವನ ಮೇಲೆ ತನ್ನ ಕೈಗಳನ್ನು ಇಟ್ಟು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನನ್ನು ನೇಮಿಸಿದನು.
NUM 28:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 28:2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’
NUM 28:3 ನೀನು ಅವರಿಗೆ ಹೇಳಬೇಕಾದದ್ದು: ‘ನೀವು ಯೆಹೋವ ದೇವರಿಗೆ ಅರ್ಪಿಸಬೇಕಾದ ಅರ್ಪಣೆ ಏನೆಂದರೆ, ನಿಯಮಿತವಾಗಿ ಪ್ರತಿದಿನ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನು ದಹನಬಲಿಯಾಗಿ ಅರ್ಪಿಸಬೇಕು.
NUM 28:4 ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.
NUM 28:5 ಧಾನ್ಯ ಅರ್ಪಣೆಗಾಗಿ ಸುಮಾರು ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ ಸಮರ್ಪಿಸಬೇಕು.
NUM 28:6 ಇದು ಸೀನಾಯಿ ಪರ್ವತದಲ್ಲಿ ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
NUM 28:7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.
NUM 28:8 ಎರಡನೆಯ ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಬೆಳಿಗ್ಗೆ ಮಾಡಿದಂತೆಯೇ, ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
NUM 28:9 “ ‘ಆದರೆ ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನೂ, ಓಲಿವ್ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಗೋಧಿಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.
NUM 28:10 ನಿತ್ಯ ದಹನಬಲಿಯ ಹೊರತು, ಪ್ರತಿ ಸಬ್ಬತ್ ದಿನಕ್ಕೆ ತಕ್ಕ ದಹನಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
NUM 28:11 “ ‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
NUM 28:12 ಒಂದೊಂದು ಹೋರಿಗೆ ಧಾನ್ಯ ಅರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಹಿಟ್ಟನ್ನೂ,
NUM 28:13 ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.
NUM 28:14 ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.
NUM 28:15 ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
NUM 28:16 “ ‘ಆದರೆ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನವು ಯೆಹೋವ ದೇವರ ಪಸ್ಕಹಬ್ಬವಾಗಿರಬೇಕು.
NUM 28:17 ಆ ತಿಂಗಳ ಹದಿನೈದನೆಯ ದಿನವು ಹಬ್ಬವಾಗಿದೆ. ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
NUM 28:18 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
NUM 28:19 ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.
NUM 28:20 ಅವುಗಳ ಧಾನ್ಯ ಸಮರ್ಪಣೆಯನ್ನೂ, ಎಣ್ಣೆ ಕಲಸಿದ ಐದು ಕಿಲೋಗ್ರಾಂ ಹಿಟ್ಟನ್ನು ಒಂದೊಂದು ಹೋರಿಗೆ, ಹತ್ತನೇ ಎರಡು ಭಾಗ ಟಗರಿಗೂ ಅರ್ಪಿಸಬೇಕು.
NUM 28:21 ಮತ್ತು ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಸುಮಾರು ಒಂದುವರೆ ಕಿಲೋಗ್ರಾಂ ಅರ್ಪಿಸಬೇಕು.
NUM 28:22 ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
NUM 28:23 ನಿತ್ಯ ದಹನಬಲಿಯಾಗಿರುವ ಮುಂಜಾನೆಯ ದಹನಬಲಿಯ ಹೊರತಾಗಿ ಇವುಗಳನ್ನು ನೀವು ಅರ್ಪಿಸಬೇಕು.
NUM 28:24 ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೆ ಪ್ರತಿದಿನವೂ ಯೆಹೋವ ದೇವರಿಗೆ ಸುವಾಸನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು. ಅದನ್ನೂ ಅದಕ್ಕೆ ತಕ್ಕ ಪಾನಾರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
NUM 28:25 ಏಳನೆಯ ದಿವಸದಲ್ಲಿ ಪರಿಶುದ್ಧವಾದ ಸಭೆ ಕೂಡಬೇಕು. ಆ ದಿನದಲ್ಲಿ ನೀವು ದೈನಂದಿನ ಉದ್ಯೋಗವನ್ನೂ ಮಾಡಬೇಡಿರಿ.
NUM 28:26 “ ‘ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಯೆಹೋವ ದೇವರಿಗೆ ನಿಮ್ಮ ವಾರಗಳಲ್ಲಿ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸುವಾಗ, ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡದೆ ಪವಿತ್ರ ಸಭೆ ಕೂಡಬೇಕು.
NUM 28:27 ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
NUM 28:28 ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಸುಮಾರು ಐದು ಕಿಲೋಗ್ರಾಂ ಹಿಟ್ಟನ್ನು ಪ್ರತಿಯೊಂದು ಹೋರಿಗೆ, ಸುಮಾರು ಮೂರುವರೆ ಕಿಲೋಗ್ರಾಂ ಟಗರಿಗೂ
NUM 28:29 ಏಳು ಕುರಿಮರಿಗಳಲ್ಲಿ ಸುಮಾರು ಒಂದುವರೆ ಕಿಲೋಗ್ರಾಂ,
NUM 28:30 ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಒಂದು ಹೋತವನ್ನು ಸಮರ್ಪಿಸಬೇಕು.
NUM 28:31 ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:1 “ ‘ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ನೀವು ಮಾಡಬಾರದು. ಅದು ನಿಮಗೆ ತುತೂರಿಗಳನ್ನು ಊದುವ ದಿವಸವಾಗಿರುವುದು.
NUM 29:2 ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.
NUM 29:3 ಅವುಗಳಿಗೆ ಧಾನ್ಯ ಸಮರ್ಪಣೆಯಾಗಿ ಎಣ್ಣೆಯಿಂದ ಕಲಸಿದ ಹಿಟ್ಟನ್ನು ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಹತ್ತನೇ ಎರಡು ಭಾಗ,
NUM 29:4 ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
NUM 29:5 ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
NUM 29:6 ಇದಲ್ಲದೆ ಪ್ರತಿ ತಿಂಗಳಿನ ಮತ್ತು ನಿತ್ಯವಾದ ದಹನಬಲಿಗಳಿಗೆ ಹೆಚ್ಚುವರಿಯಾಗಿ ಅವುಗಳ ಧಾನ್ಯ ಅರ್ಪಣೆಯನ್ನು ಮತ್ತು ಪಾನ ಅರ್ಪಣೆಗಳನ್ನು ನಿರ್ದಿಷ್ಟಪಡಿಸಿದಂತೆ ಸಮರ್ಪಣೆಯಾಗಬೇಕು, ಅವು ಯೆಹೋವ ದೇವರಿಗೆ ಸುವಾಸನೆಗಾಗಿ ಅರ್ಪಿಸುವ ದಹನಬಲಿಯಾಗಿರುವುವು.
NUM 29:7 “ ‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.
NUM 29:8 ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
NUM 29:9 ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು, ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಎಫಾದ ಹತ್ತನೇ ಎರಡು ಭಾಗ,
NUM 29:10 ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
NUM 29:11 ಪಾಪ ಪರಿಹಾರಕ ಬಲಿಗಾಗಿ ಒಂದು ಹೋತನ್ನು ಅರ್ಪಿಸುವದರ ಜೊತೆಗೆ ಪ್ರಾಯಶ್ಚಿತ್ತದ ಪಾಪ ಪರಿಹಾರಕ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:12 “ ‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.
NUM 29:13 ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:14 ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಮೂರು ಭಾಗ, ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಎರಡು ಭಾಗ,
NUM 29:15 ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಒಂದು ಭಾಗ,
NUM 29:16 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆ ಮತ್ತು ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
NUM 29:17 “ ‘ಎರಡನೆಯ ದಿವಸದಲ್ಲಿ ಕಳಂಕವಿಲ್ಲದ ಹನ್ನೆರಡು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:18 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
NUM 29:19 ದೋಷಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:20 “ ‘ಮೂರನೆಯ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:21 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
NUM 29:22 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:23 “ ‘ನಾಲ್ಕನೆಯ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:24 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ
NUM 29:25 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:26 “ ‘ಐದನೆಯ ದಿವಸದಲ್ಲಿ ದೋಷವಿಲ್ಲದ ಒಂಬತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:27 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯಪಾನ ಬಲಿಗಳನ್ನೂ,
NUM 29:28 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:29 “ ‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
NUM 29:30 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
NUM 29:31 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:32 “ ‘ಏಳನೆಯ ದಿವಸದಲ್ಲಿ ದೋಷವಿಲ್ಲದ ಏಳು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ
NUM 29:33 ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
NUM 29:34 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:35 “ ‘ಎಂಟನೆಯ ದಿನದಲ್ಲಿ ನೀವು ಹಬ್ಬದ ಸಭೆಯಾಗಿ ಕೂಡಿಬರಬೇಕು. ದೈನಂದಿನ ಕೆಲಸವನ್ನು ನೀವು ಮಾಡಬಾರದು.
NUM 29:36 ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ
NUM 29:37 ಹೋರಿಗೆ, ಟಗರಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
NUM 29:38 ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
NUM 29:39 “ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ”
NUM 29:40 ಯೆಹೋವ ದೇವರು ತನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮೋಶೆಯು ಇಸ್ರಾಯೇಲರಿಗೆ ಹೇಳಿದನು.
NUM 30:1 ಮೋಶೆಯು ಇಸ್ರಾಯೇಲರ ಗೋತ್ರಗಳ ನಾಯಕರ ಸಂಗಡ ಮಾತನಾಡಿ, “ಯೆಹೋವ ದೇವರು ಆಜ್ಞಾಪಿಸಿದ್ದೇನೆಂದರೆ:
NUM 30:2 ಯಾವನಾದರೂ ಯೆಹೋವ ದೇವರಿಗೆ ಹರಕೆಯನ್ನು ಮಾಡಿದರೆ, ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ, ಅವನು ತನ್ನ ಮಾತನ್ನು ತಪ್ಪಿಸಬಾರದು. ಬಾಯಿಂದ ಹೊರಟ ಮಾತುಗಳ ಪ್ರಕಾರ ಎಲ್ಲವನ್ನೂ ಮಾಡಬೇಕು.
NUM 30:3 “ಸ್ತ್ರೀಯು ಯೆಹೋವ ದೇವರಿಗೆ ಹರಕೆಮಾಡಿ, ತನ್ನ ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿ ದೇವರಿಗೆ ಹರಕೆಯನ್ನು ಮಾಡಿದಾಗ, ಇಲ್ಲವೆ ಯಾವುದಾದರೊಂದನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದಾಗ,
NUM 30:4 ಅವಳ ತಂದೆಯು ಆ ವಿಷಯವನ್ನು ತಿಳಿದು ಮೌನವಾಗಿದ್ದರೆ, ಅವಳು ಆ ಹರಕೆ ಮತ್ತು ಪ್ರಮಾಣಗಳನ್ನು ನೆರವೇರಿಸಲೇಬೇಕು.
NUM 30:5 ಆದರೆ ಅವಳ ತಂದೆ ಅದನ್ನು ಕೇಳಿ ಅವಳನ್ನು ತಡೆದರೆ, ಅವಳ ಎಲ್ಲಾ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುತ್ತವೆ. ಅವಳ ತಂದೆ ಅವಳನ್ನು ತಡೆದ ಕಾರಣ ಯೆಹೋವ ದೇವರು ಅವಳನ್ನು ಕ್ಷಮಿಸುವರು.
NUM 30:6 “ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಹರಕೆಗಳು ಇಲ್ಲವೆ ಪ್ರಾಣವನ್ನು ಬಂಧಿಸುವ ಬಾಯಿಂದ ಬಂದ ಮಾತು ಇದ್ದರೆ,
NUM 30:7 ಅವಳ ಗಂಡನು ಆ ವಿಷಯವನ್ನು ತಿಳಿದು ಸುಮ್ಮನಿದ್ದ ಪಕ್ಷದಲ್ಲಿ ಅವಳ ಹರಕೆಗಳೂ ಪ್ರತಿಜ್ಞೆಗಳೂ ನೆರವೇರಬೇಕು.
NUM 30:8 ಆದರೆ ಅವಳ ಗಂಡನು ಅದನ್ನು ಕೇಳಿದಾಗ ಬೇಡವೆಂದು ತಡೆದು, ಅವಳ ಮೇಲೆ ಇರುವ ಅವಳ ಹರಕೆಯನ್ನೂ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆಯನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಯೆಹೋವ ದೇವರು ಅವಳಿಗೆ ಕ್ಷಮಿಸುವರು.
NUM 30:9 “ಇದಲ್ಲದೆ ವಿಧವೆಯಾದರೂ ವಿವಾಹ ವಿಚ್ಛೇದಿತ ಮಹಿಳೆಯಾದರೂ ಇಂತಹ ಹರಕೆ ಇಲ್ಲವೆ ಪ್ರಮಾಣ ಮಾಡಿಕೊಂಡರೆ ಅವಳು ಅದನ್ನು ನೆರವೇರಿಸಬೇಕು.
NUM 30:10 “ಅವಳು ತನ್ನ ಗಂಡನ ಮನೆಯಲ್ಲಿ ಅಂತಹ ಹರಕೆ ಇಲ್ಲವೆ ಪ್ರತಿಜ್ಞೆಯನ್ನು ಮಾಡಿದಾಗ,
NUM 30:11 ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು, ಅವಳನ್ನು ತಡೆಯದ ಪಕ್ಷದಲ್ಲಿ, ಅವಳ ಸಮಸ್ತ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುವುವು.
NUM 30:12 ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕ ಮಾಡಿದ ಪಕ್ಷದಲ್ಲಿ ಅವಳ ಹರಕೆಗಳಿಗೋಸ್ಕರವೂ ಅವಳು ಕೈಗೊಂಡ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವುದಾಗಲಿ ನಿಲ್ಲದು. ಅವಳ ಗಂಡನು ಅವುಗಳನ್ನು ನಿರರ್ಥಕ ಮಾಡಿದ್ದಾನೆ. ಯೆಹೋವ ದೇವರು ಅವಳಿಗೆ ಕ್ಷಮಿಸುವರು.
NUM 30:13 ಸಮಸ್ತ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಸಮಸ್ತ ಹರಕೆಗಳನ್ನೂ, ಅವಳ ಗಂಡನು ಅದನ್ನು ಸ್ಥಾಪಿಸಬಹುದು ಅಥವಾ ಅದನ್ನು ರದ್ದುಗೊಳಿಸಬಹುದು.
NUM 30:14 ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ, ಅವನು ಅವಳ ಸಮಸ್ತ ಹರಕೆಗಳನ್ನೂ ಅವಳ ಮೇಲಿರುವ ಸಮಸ್ತ ಪ್ರತಿಜ್ಞೆಗಳನ್ನೂ ಅನುಮೋದಿಸಿದಂತಾಗುವುದು. ಅವನು ಕೇಳಿದ ದಿನದಲ್ಲಿ ಅದಕ್ಕೆ ಸುಮ್ಮನಿರುವುದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
NUM 30:15 ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ, ಅವನೇ ಅವಳ ಅಕ್ರಮವನ್ನು ಹೊರಬೇಕು.”
NUM 30:16 ಗಂಡ ಹೆಂಡತಿಯರ ವಿಷಯದಲ್ಲಿಯೂ ತಂದೆಯ ಮನೆಯಲ್ಲಿ ಕನ್ಯಾವಸ್ಥೆಯಲ್ಲಿರುವ ಮಗಳ ವಿಷಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.
NUM 31:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 31:2 “ನೀನು ಇಸ್ರಾಯೇಲರಿಂದ ಮಿದ್ಯಾನ್ಯರಿಗೆ ಮುಯ್ಯನ್ನು ತೀರಿಸಬೇಕು. ತರುವಾಯ ನೀನು ನಿನ್ನ ಪೂರ್ವಜರ ಬಳಿಗೆ ಸೇರಬೇಕು,” ಎಂದರು.
NUM 31:3 ಆಗ ಮೋಶೆಯು ಜನರ ಸಂಗಡ ಮಾತನಾಡಿ, “ನಿಮ್ಮೊಳಗಿಂದ ಜನರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಲಿ. ಅವರು ಮಿದ್ಯಾನ್ಯರಿಗೆ ವಿರೋಧವಾಗಿ ಹೋಗಿ, ಯೆಹೋವ ದೇವರ ಪ್ರತೀಕಾರವನ್ನು ಅವರಿಗೆ ತೀರಿಸಬೇಕು.
NUM 31:4 ಇಸ್ರಾಯೇಲರ ಸಮಸ್ತ ಗೋತ್ರಗಳೊಳಗೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯನ್ನು ಯುದ್ಧಕ್ಕೆ ಕಳುಹಿಸಬೇಕು,” ಎಂದನು.
NUM 31:5 ಆಗ ಇಸ್ರಾಯೇಲರ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿ ಯುದ್ಧಕ್ಕೆ ಸಿದ್ಧವಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
NUM 31:6 ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿರುವ ಅವರನ್ನೂ ಯಾಜಕನಾದ ಎಲಿಯಾಜರನ ಮಗ ಫೀನೆಹಾಸನನ್ನೂ ಪರಿಶುದ್ಧ ಸಲಕರಣೆಗಳ ಸಂಗಡವೂ ಸೂಚಿಸುವದಕ್ಕೋಸ್ಕರ ತುತೂರಿಗಳ ಸಂಗಡವೂ ಯುದ್ಧಕ್ಕೆ ಕಳುಹಿಸಿದನು.
NUM 31:7 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಮಿದ್ಯಾನ್ಯರ ಮೇಲೆ ಯುದ್ಧಮಾಡಿ,
NUM 31:8 ಗಂಡಸರೆಲ್ಲರನ್ನು ಕೊಂದುಹಾಕಿದರು. ಈ ಹತರಾದವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದುಹಾಕಿದರು. ಅವರು ಮಿದ್ಯಾನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗ ಬಿಳಾಮನನ್ನೂ ಖಡ್ಗದಿಂದ ಕೊಂದುಹಾಕಿದರು.
NUM 31:9 ಇಸ್ರಾಯೇಲರು ಮಿದ್ಯಾನ್ಯರ ಸ್ತ್ರೀಯರನ್ನೂ, ಅವರ ಮಕ್ಕಳನ್ನೂ ಸೆರೆಹಿಡಿದು, ಅವರ ಸಮಸ್ತ ಪಶುಗಳನ್ನೂ, ಅವರ ಸಮಸ್ತ ಹಿಂಡುಗಳನ್ನೂ, ಅವರ ಸಮಸ್ತ ಸಲಕರಣೆಗಳನ್ನೂ ಸುಲಿಗೆ ಮಾಡಿದರು.
NUM 31:10 ಅವರು ವಾಸಮಾಡಿದ ಸಮಸ್ತ ಪಟ್ಟಣಗಳನ್ನೂ, ಅವರ ಸಮಸ್ತ ಕೋಟೆಗಳನ್ನೂ ಬೆಂಕಿಯಿಂದ ಸುಟ್ಟರು.
NUM 31:11 ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಸಮಸ್ತ ಸುಲಿಗೆಯನ್ನೂ, ಸಮಸ್ತ ಲೂಟಿಯನ್ನೂ ತೆಗೆದುಕೊಂಡರು.
NUM 31:12 ಅವರು ಸೆರೆಯವರನ್ನೂ, ಲೂಟಿಯನ್ನೂ, ಸುಲಿಗೆಯನ್ನೂ ಮೋಶೆ, ಯಾಜಕನಾದ ಎಲಿಯಾಜರನು, ಇಸ್ರಾಯೇಲರ ಸಭೆ ಇವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬಯಲುಗಳಲ್ಲಿ ಇದ್ದ ಪಾಳೆಯದೊಳಗೆ ತಂದರು.
NUM 31:13 ಮೋಶೆಯೂ, ಯಾಜಕನಾದ ಎಲಿಯಾಜರನೂ, ಸಮೂಹದ ಪ್ರಧಾನರೆಲ್ಲರೂ ಅವರಿಗೆ ಎದುರಾಗಿ ಪಾಳೆಯದ ಹೊರಗೆ ಹೋದರು.
NUM 31:14 ಆದರೆ ಮೋಶೆಯು ಯುದ್ಧದಿಂದ ಬಂದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಆಗಿರುವ ಪಾಳೆಯದ ಮೇಲೆ ಕೋಪಮಾಡಿಕೊಂಡರು.
NUM 31:15 ಮೋಶೆಯು ಅವರಿಗೆ, “ಹೆಂಗಸರನ್ನೆಲ್ಲಾ ಉಳಿಸಿದರೋ?
NUM 31:16 ಇವರೇ ಬಿಳಾಮನ ಮಾತಿನಿಂದ ಪೆಯೋರನ ಕಾರ್ಯದಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡುವುದಕ್ಕೆ ಇಸ್ರಾಯೇಲರಿಗೆ ಕಾರಣವಾಗಿದ್ದರು. ಯೆಹೋವ ದೇವರ ಸಭೆಯೊಳಗೆ ಇವರಿಂದಲೇ ವ್ಯಾಧಿಯಾಯಿತು.
NUM 31:17 ಆದಕಾರಣ ಈಗ ಬಾಲಕರನ್ನೂ, ಎಲ್ಲಾ ಪುರುಷನನ್ನು ಅರಿತಿರುವ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ.
NUM 31:18 ಆದರೆ ಪುರುಷನನ್ನು ಅರಿಯದ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗಾಗಿ ಉಳಿಸಿಕೊಳ್ಳಿರಿ.
NUM 31:19 “ಇದಲ್ಲದೆ ನಿಮ್ಮಲ್ಲಿ ಪ್ರಾಣ ತೆಗೆದವರು ಮತ್ತು ಶವವನ್ನು ಮುಟ್ಟಿದವರು ಏಳು ದಿವಸ ಪಾಳೆಯದ ಹೊರಗೆ ಇರಬೇಕು. ನೀವೂ, ನಿಮ್ಮ ಸೆರೆಯವರೂ ಮೂರನೆಯ ಹಾಗೂ ಏಳನೆಯ ದಿವಸಗಳಲ್ಲಿ ನಿಮ್ಮನ್ನು ಶುದ್ಧ ಮಾಡಿಕೊಳ್ಳಬೇಕು.
NUM 31:20 ಎಲ್ಲಾ ಬಟ್ಟೆಗಳನ್ನೂ, ಎಲ್ಲಾ ಚರ್ಮದ ಸಲಕರಣೆಗಳನ್ನೂ, ಮೇಕೆ ಕೂದಲಿಂದ ಮಾಡಿದ್ದೆಲ್ಲವನ್ನೂ, ಕಟ್ಟಿಗೆ ಸಲಕರಣೆಗಳೆಲ್ಲವನ್ನೂ ಶುದ್ಧಮಾಡಬೇಕು,” ಎಂದು ಹೇಳಿದನು.
NUM 31:21 ಯಾಜಕನಾದ ಎಲಿಯಾಜರನು ಯುದ್ಧಕ್ಕೆ ಹೋದ ಪಾಳೆಯದ ಜನರಿಗೆ, “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ನ್ಯಾಯದ ಕಟ್ಟಳೆಯು ಇದೇ:
NUM 31:22 ಬೆಂಕಿ ತಾಳುವ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು
NUM 31:23 ನೀವು ಬೆಂಕಿಯಿಂದ ದಾಟಿಸಬೇಕು. ಆಗ ಅವು ಶುದ್ಧವಾಗುವುವು. ಶುದ್ಧೀಕರಣದ ನೀರಿನಲ್ಲಿ ಅದ್ದಿ ಶುದ್ಧಮಾಡಬೇಕು. ಆಗ ಅವು ಶುದ್ಧವಾಗುವುವು. ಆದರೆ ಬೆಂಕಿ ತಾಳದ ಸಮಸ್ತವನ್ನು ನೀವು ನೀರಿನಿಂದ ತೊಳೆಯಬೇಕು.
NUM 31:24 ಏಳನೆಯ ದಿವಸದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಒಗೆದುಕೊಂಡು ಶುದ್ಧರಾಗಬೇಕು. ತರುವಾಯ ಪಾಳೆಯದೊಳಗೆ ಬರಬೇಕು,” ಎಂದು ಹೇಳಿದನು.
NUM 31:25 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 31:26 “ನೀನೂ, ಯಾಜಕನಾದ ಎಲಿಯಾಜರನೂ, ಕುಲಾಧಿಪತಿಗಳೂ ಸೈನಿಕರ ಕೈಗೆ ಸಿಕ್ಕಿರುವ ಮನುಷ್ಯರನ್ನೂ ಪಶುಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿರಿ.
NUM 31:27 ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಭಟರಿಗೂ, ಸಮಸ್ತ ಸಭೆಗೂ ಎರಡು ಪಾಲನ್ನು ಮಾಡಬೇಕು.
NUM 31:28 ಜನರಿಂದಲೂ, ಪಶುಗಳಿಂದಲೂ, ಕತ್ತೆಗಳಿಂದಲೂ, ಕುರಿಗಳಿಂದಲೂ ಐನೂರರಲ್ಲಿ ಒಂದು ಪ್ರಾಣವನ್ನು ಯುದ್ಧಕ್ಕೆ ಹೊರಟ ಯುದ್ಧಭಟರ ಕಡೆಯಿಂದ ಯೆಹೋವ ದೇವರಿಗೆ ಕಪ್ಪವಾಗಿ ಎತ್ತಬೇಕು.
NUM 31:29 ಅವರ ಅರ್ಧ ಪಾಲಿನಿಂದ ಅದನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಅರ್ಪಣೆಯಾಗಿ, ಯಾಜಕನಾದ ಎಲಿಯಾಜರನಿಗೆ ಕೊಡಬೇಕು.
NUM 31:30 ಇಸ್ರಾಯೇಲರ ಅರ್ಧ ಪಾಲಿನಿಂದ ಜನರಿಂದಲೂ, ಕತ್ತೆಗಳಿಂದಲೂ, ಮಂದೆಗಳಿಂದಲೂ, ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತೆಗೆದುಕೊಂಡು, ಅವುಗಳನ್ನು ಯೆಹೋವ ದೇವರ ಗುಡಾರವನ್ನು ನಿರ್ವಹಿಸುವ ಲೇವಿಯರಿಗೆ ಕೊಡಬೇಕು,” ಎಂದರು.
NUM 31:31 ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿದರು.
NUM 31:32 ಯುದ್ಧಭಟರು ತೆಗೆದುಕೊಂಡು ಬಂದ ಲೂಟಿಯಲ್ಲಿ ಉಳಿದ ಸುಲಿಗೆ ಎಷ್ಟೆಂದರೆ 6,75,000 ಕುರಿಗಳು.
NUM 31:33 72,000 ಪಶುಗಳು;
NUM 31:34 ಕತ್ತೆಗಳು 61,000;
NUM 31:35 ಪುರುಷರನ್ನು ಅರಿಯದ ಸ್ತ್ರೀಯರು 32,000 ಮಂದಿ.
NUM 31:36 ಯುದ್ಧಕ್ಕೆ ಹೊರಟವರ ಅರ್ಧ ಭಾಗದ ಲೆಕ್ಕವಿದು: 3,37,500 ಕುರಿಗಳಿಂದ
NUM 31:37 ಯೆಹೋವ ದೇವರಿಗೆ ಕೊಡಲಾದ ಕಪ್ಪವು 675;
NUM 31:38 ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ ಯೆಹೋವ ದೇವರಿಗೆ ಉಂಟಾದ ಕಪ್ಪವು 72 ದನಕರುಗಳು;
NUM 31:39 30,500 ಕತ್ತೆಗಳು; ಅವುಗಳಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 61;
NUM 31:40 16,000 ಜನರು, ಅವರಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 32 ಜನ.
NUM 31:41 ಮೋಶೆಯು ಯೆಹೋವ ದೇವರಿಗೆ ಪಡೆಯುವ ಕಪ್ಪವನ್ನು ಯಾಜಕನಾದ ಎಲಿಯಾಜರನಿಗೆ ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಕೊಟ್ಟನು.
NUM 31:42 ಮೋಶೆಯು ಯುದ್ಧಕ್ಕೆ ಹೋದ ಜನರಿಂದ ತೆಗೆದುಕೊಂಡು ಇಸ್ರಾಯೇಲರಿಗೆ ಹಂಚಿದ ಅರ್ಧ ಭಾಗದ ವಿವರ:
NUM 31:43 ಕುರಿಗಳಿಂದ ಸಭೆಯ ಅರ್ಧ 3, 37,500 ಕುರಿಗಳು;
NUM 31:44 36,000 ಪಶುಗಳು;
NUM 31:45 30,500 ಕತ್ತೆಗಳು;
NUM 31:46 16,000 ಜನರು;
NUM 31:47 ಮೋಶೆಯು ಇಸ್ರಾಯೇಲರ ಅರ್ಧದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಐವತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋವ ದೇವರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
NUM 31:48 ಆಗ ಸೈನ್ಯದ ಅಧಿಕಾರಿಗಳಾದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು,
NUM 31:49 ಮೋಶೆಗೆ ಅವರು, “ನಿನ್ನ ಸೇವಕರಾದ ನಾವು ನಮ್ಮ ಕೈಯಲ್ಲಿದ್ದ ಯುದ್ಧಭಟರ ಲೆಕ್ಕವನ್ನು ತೆಗೆದುಕೊಂಡೆವು. ಅವರೊಳಗೆ ಒಬ್ಬನಾದರೂ ಕಡಿಮೆಯಾಗಲಿಲ್ಲ.
NUM 31:50 ಆದ್ದರಿಂದ ಯೆಹೋವ ದೇವರ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ವಸ್ತುಗಳಾದ ಸರಪಣಿಗಳನ್ನೂ, ಕಡಗಗಳನ್ನೂ, ಉಂಗುರಗಳನ್ನೂ, ವಾಲೆಗಳನ್ನೂ, ಪದಕಗಳನ್ನೂ ಯೆಹೋವ ದೇವರಿಗೆ ಕಾಣಿಕೆಯಾಗಿ ತಂದಿದ್ದೇವೆ,” ಎಂದು ಹೇಳಿದರು.
NUM 31:51 ಮೋಶೆಯೂ, ಯಾಜಕನಾದ ಎಲಿಯಾಜರನೂ ವಿಚಿತ್ರ ಕೆಲಸವಾಗಿರುವ ಬಂಗಾರವನ್ನೆಲ್ಲಾ ಅದರಿಂದ ತೆಗೆದುಕೊಂಡರು.
NUM 31:52 ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವ ದೇವರಿಗೆ ಅರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್‌ಗಳು.
NUM 31:53 ಯುದ್ಧದ ಜನರು ಒಬ್ಬೊಬ್ಬನು ಸ್ವಂತವಾಗಿ ಸುಲಿದುಕೊಂಡಿದ್ದನು.
NUM 31:54 ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತೆಗೆದುಕೊಂಡು, ಯೆಹೋವ ದೇವರ ಸಮ್ಮುಖದಲ್ಲಿ ಇಸ್ರಾಯೇಲರಿಗೆ ಜ್ಞಾಪಕಕ್ಕಾಗಿ ದೇವದರ್ಶನ ಗುಡಾರದೊಳಗೆ ತಂದರು.
NUM 32:1 ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.
NUM 32:2 ಆದ್ದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆ ಮತ್ತು ಯಾಜಕನಾದ ಎಲಿಯಾಜರನ ಬಳಿಗೂ ಸಭೆಯ ಪ್ರಧಾನರಿಗೂ ಬಳಿಗೂ ಬಂದು ಮಾತನಾಡಿ:
NUM 32:3 “ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು,
NUM 32:4 ಯೆಹೋವ ದೇವರು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪ್ರದೇಶವು ಪಶುಗಳ ಮೇವಿಗೆ ಸೂಕ್ತವಾಗಿದೆ. ನಿಮ್ಮ ಸೇವಕರಿಗೂ ಪಶುಗಳು ಉಂಟು.
NUM 32:5 ಆದ್ದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯೆಯು ಸಿಕ್ಕಿದ್ದಾದರೆ, ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು. ನಮ್ಮನ್ನು ಯೊರ್ದನ್ ನದಿಯ ಆಚೆಗೆ ತೆಗೆದುಕೊಂಡು ಹೋಗಬೇಡಿರಿ,” ಎಂದರು.
NUM 32:6 ಆಗ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲಿ ಕುಳಿತಿರಬೇಕೋ?
NUM 32:7 ಯೆಹೋವ ದೇವರು ಅವರಿಗೆ ಕೊಟ್ಟ ದೇಶಕ್ಕೆ ಹೋಗುವುದಕ್ಕೆ ನೀವು ಇಸ್ರಾಯೇಲರ ಹೃದಯಗಳನ್ನು ಅಧೈರ್ಯಪಡಿಸುವುದು ಏಕೆ?
NUM 32:8 ನಾನು ದೇಶವನ್ನು ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ಅವರನ್ನು ಕಳುಹಿಸಿದಾಗ, ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
NUM 32:9 ಹೇಗೆಂದರೆ ಅವರು ಎಷ್ಕೋಲೆಂಬ ಹಳ್ಳದವರೆಗೆ ಬಂದು, ದೇಶವನ್ನು ನೋಡಿದಾಗ, ಇಸ್ರಾಯೇಲರ ಹೃದಯವನ್ನು ಯೆಹೋವ ದೇವರು ಅವರಿಗೆ ಕೊಟ್ಟ ದೇಶದ ಒಳಗೆ ಹೋಗದ ಹಾಗೆ ಅಧೈರ್ಯಪಡಿಸಿದನು.
NUM 32:10 ಯೆಹೋವ ದೇವರು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವರಾಗಿ ಪ್ರಮಾಣಮಾಡಿ,
NUM 32:11 ಅವರು ನನ್ನನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸದೆ ಇರುವುದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶವನ್ನು ಈಜಿಪ್ಟಿನೊಳಗಿಂದ ಹೊರಬಂದ ಇಪ್ಪತ್ತು ವರ್ಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ
NUM 32:12 ಯೆಹೋವ ದೇವರನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸಿದ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಬೇರಾರೂ ನೋಡುವುದಿಲ್ಲ.
NUM 32:13 ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು.
NUM 32:14 “ನಿಮ್ಮ ಪಿತೃಗಳ ಬದಲಾಗಿ ಬಂದಿರುವ ನೀವು, ಪಾಪಿಗಳಾಗಿ ಇಸ್ರಾಯೇಲ್ ಕುರಿತು ಯೆಹೋವ ದೇವರ ಕೋಪವನ್ನೂ ಮತ್ತಷ್ಟು ಹೆಚ್ಚಿಸುತ್ತಿದ್ದೀರಲ್ಲಾ.
NUM 32:15 ಏಕೆಂದರೆ ನೀವು ದೇವರ ಕಡೆಯಿಂದ ತೊಲಗಿದರೆ, ದೇವರು ಅವರನ್ನು ಮರುಭೂಮಿಯಲ್ಲಿಯೇ ಇರಿಸಿಬಿಡುವನು. ನೀವು ಈ ಸಮಸ್ತ ಜನರ ನಾಶಕ್ಕೆ ನೀವೇ ಕಾರಣರಾಗುವಿರಿ,” ಎಂದು ಹೇಳಿದನು.
NUM 32:16 ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ, ನಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು.
NUM 32:17 ಆದರೆ ನಾವು ಇಸ್ರಾಯೇಲರ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವವರೆಗೆ ಯುದ್ಧಕ್ಕೆ ಸಿದ್ಧರಾಗಿ ಓಡುವೆವು. ನಮ್ಮ ಸ್ತ್ರೀಯರು ಮತ್ತು ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು.
NUM 32:18 ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಸೊತ್ತನ್ನು ಹೊಂದಿಕೊಳ್ಳುವವರೆಗೆ, ನಾವು ನಮ್ಮ ಮನೆಗಳಿಗೆ ತಿರುಗುವುದಿಲ್ಲ.
NUM 32:19 ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸೊತ್ತನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಸೊತ್ತು ನಮಗೆ ಯೊರ್ದನ್ ನದಿಯ ಈಚೆ ಪೂರ್ವದಿಕ್ಕಿನಲ್ಲಿ ಬಂತು,” ಎಂದನು.
NUM 32:20 ಮೋಶೆಯು ಅವರಿಗೆ, “ನೀವು ಈ ಕಾರ್ಯವನ್ನು ಮಾಡಿದರೆ, ನೀವು ಯೆಹೋವ ದೇವರ ಮುಂದೆ ಯುದ್ಧಕ್ಕೆ ಸಿದ್ಧವಾಗಿದ್ದರೆ,
NUM 32:21 ನಿಮ್ಮಲ್ಲಿ ಸಿದ್ಧವಾದವರೆಲ್ಲರೂ ಯೆಹೋವ ದೇವರು ತಮ್ಮ ಶತ್ರುಗಳನ್ನು ತಮ್ಮ ಸನ್ನಿಧಿಯಿಂದ ಹೊರಡಿಸುವವರೆಗೆ, ಯೆಹೋವ ದೇವರ ಮುಂದೆ ಯೊರ್ದನ್ ನದಿಯನ್ನು ದಾಟಿದರೆ,
NUM 32:22 ದೇಶವು ಯೆಹೋವ ದೇವರ ಮುಂದೆ ವಶವಾದ ತರುವಾಯ, ನೀವು ಯೆಹೋವ ದೇವರ ಮತ್ತು ಇಸ್ರಾಯೇಲರ ದೃಷಿಯಲ್ಲಿ ನಿರಪರಾಧಿಗಳಾಗಿದ್ದು, ಈ ದೇಶವು ಯೆಹೋವ ದೇವರ ಮುಂದೆ ನಿಮ್ಮ ಸೊತ್ತಾಗುವುದು.
NUM 32:23 “ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಯೆಹೋವ ದೇವರ ವಿರೋಧವಾಗಿ ಪಾಪಮಾಡಿದವರಾಗುವಿರಿ, ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವುದೆಂದು ತಿಳಿದುಕೊಳ್ಳಿರಿ.
NUM 32:24 ನಿಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿ, ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ,” ಎಂದು ಹೇಳಿದನು.
NUM 32:25 ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ, “ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು.
NUM 32:26 ನಮ್ಮ ಮಕ್ಕಳೂ, ನಮ್ಮ ಹೆಂಡತಿಯರೂ, ನಮ್ಮ ಸಂಪತ್ತೂ ನಮ್ಮ ಪಶುಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ.
NUM 32:27 ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರೂ ನಮ್ಮ ಒಡೆಯನು ಹೇಳಿದ ಪ್ರಕಾರ ಯೆಹೋವ ದೇವರ ಮುಂದೆ ಯುದ್ಧಕ್ಕೆ ದಾಟಿಹೋಗುವರು,” ಎಂದರು.
NUM 32:28 ಆಗ ಮೋಶೆಯು ಅವರ ವಿಷಯವಾಗಿ ಯಾಜಕನಾದ ಎಲಿಯಾಜರನಿಗೂ, ನೂನನ ಮಗ ಯೆಹೋಶುವನಿಗೂ, ಇಸ್ರಾಯೇಲರ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದರು.
NUM 32:29 ಮೋಶೆಯು ಅವರಿಗೆ, “ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಎಲ್ಲರೂ ಯುದ್ಧಕ್ಕೆ ಸಿದ್ಧವಾಗಿದ್ದು, ನಿಮ್ಮ ಸಂಗಡ ಯೊರ್ದನ್ ನದಿಯನ್ನು ಯೆಹೋವ ದೇವರ ಮುಂದೆ ದಾಟಿದರೆ, ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸೊತ್ತಾಗಿ ಕೊಡಬೇಕು.
NUM 32:30 ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟಿ ಬಾರದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿಯೇ ಸೊತ್ತನ್ನು ಹೊಂದಿಕೊಳ್ಳಬೇಕು,” ಎಂದನು.
NUM 32:31 ಆಗ ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಉತ್ತರವಾಗಿ, “ಯೆಹೋವ ದೇವರು ನಿನ್ನ ಸೇವಕರಿಗೆ ಹೇಳಿದ್ದಂತೆಯೇ ನಾವು ಮಾಡುವೆವು.
NUM 32:32 ನಾವು ಯುದ್ಧಕ್ಕೆ ಸಿದ್ಧವಾಗಿ ಯೆಹೋವ ದೇವರ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು. ಆದರೆ ಯೊರ್ದನ್ ನದಿಯ ಈಚೆಯಲ್ಲಿರುವ ನಮ್ಮ ಸೊತ್ತಿನ ಭಾಗವೇ ನಮಗಿರಲಿ,” ಎಂದು ಹೇಳಿದರು.
NUM 32:33 ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಅರಸನಾದ ಓಗನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅದರ ಭೂಮಿಯನ್ನೂ, ಅದರ ಮೇರೆಗಳಲ್ಲಿ ಸುತ್ತಮುತ್ತಲ ಪಟ್ಟಣಗಳನ್ನೂ ಕೊಟ್ಟನು.
NUM 32:34 ಗಾದನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್,
NUM 32:35 ಅಟ್ರೋತ್ಷೋಫಾನ್, ಯಜ್ಜೇರ್, ಯೊಗ್ಬೆಹಾ,
NUM 32:36 ಬೇತ್ ನಿಮ್ರಾ ಮತ್ತು ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ, ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದರು.
NUM 32:37 ರೂಬೇನನ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್,
NUM 32:38 ನೆಬೋ, ಬಾಳ್ ಮೆಯೋನ್ ಎಂದು ಬೇರೆ ಈ ಹೆಸರು ಹೊಂದಿದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ, ತಾವು ಕಟ್ಟಿದ ಪಟ್ಟಣಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
NUM 32:39 ಮನಸ್ಸೆಯ ಮಗ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ, ಅದನ್ನು ತೆಗೆದುಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು.
NUM 32:40 ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗ ಮಾಕೀರನಿಗೆ ಕೊಟ್ಟಿದ್ದರಿಂದ, ಅವನು ಅದರಲ್ಲಿ ವಾಸಿಸಿದನು.
NUM 32:41 ಆದರೆ ಮನಸ್ಸೆಯ ಮಗ ಯಾಯೀರನು ಹೋಗಿ, ಅವರ ನಗರಗಳನ್ನು ತೆಗೆದುಕೊಂಡು, ಅವುಗಳಿಗೆ ಯಾಯೀರನ ಹಳ್ಳಿಗಳೆಂದು ಹೆಸರಿಟ್ಟನು.
NUM 32:42 ನೋಬಹನು ಹೋಗಿ ಕೆನಾತ್ ಎಂಬ ಪಟ್ಟಣವನ್ನೂ, ಅದರ ಗ್ರಾಮಗಳನ್ನೂ ತೆಗೆದುಕೊಂಡು, ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂಬ ಹೆಸರಿಟ್ಟನು.
NUM 33:1 ಮೋಶೆ ಆರೋನರ ನಾಯಕತ್ವದಲ್ಲಿ ಈಜಿಪ್ಟ್ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲರ ಪ್ರಯಾಣದ ಹಂತಗಳ ವಿವರ ಇಲ್ಲಿವೆ.
NUM 33:2 ಮೋಶೆಯು ಯೆಹೋವ ದೇವರ ಆಜ್ಞೆಯ ಪ್ರಕಾರ ಅವರ ಪ್ರಯಾಣದಲ್ಲಿ ತಂಗಿದ್ದ ಸ್ಥಳಗಳ ವಿವರಗಳನ್ನು ಬರೆದನು.
NUM 33:3 ಅವರ ಪ್ರಯಾಣಗಳ ವಿವರಗಳು ಯಾವುವೆಂದರೆ: ಅವರು ಮೊದಲನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪಸ್ಕಹಬ್ಬದ ಮರುದಿನ ಇಸ್ರಾಯೇಲರು ಸಮಸ್ತ ಈಜಿಪ್ಟನವರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟು ಹೋದರು.
NUM 33:4 ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು.
NUM 33:5 ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.
NUM 33:6 ಸುಕ್ಕೋತಿನಿಂದ ಹೊರಟು ಮರುಭೂಮಿಯ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.
NUM 33:7 ಏತಾಮಿನಿಂದ ಹೊರಟು ಬಾಲ್ಜೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು, ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.
NUM 33:8 ಪೀಹಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಮರುಭೂಮಿಗೆ ದಾಟಿದರು. ಆಗ ಅವರು ಮೂರು ದಿವಸದ ಪ್ರಯಾಣಮಾಡಿ ಏತಾಮೆಂಬ ಮರುಭೂಮಿಯಲ್ಲಿ ನಡೆದು ಮಾರಾದಲ್ಲಿ ಇಳಿದರು.
NUM 33:9 ಮಾರಾದಿಂದ ಹೊರಟು ಏಲೀಮಿಗೆ ಬಂದರು. ಎಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು.
NUM 33:10 ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದುಕೊಂಡರು.
NUM 33:11 ಕೆಂಪು ಸಮುದ್ರದಿಂದ ಹೊರಟು ಸೀನೆಂಬ ಮರುಭೂಮಿಯಲ್ಲಿ ಇಳಿದುಕೊಂಡು,
NUM 33:12 ಸೀನೆಂಬ ಮರುಭೂಮಿಯಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು.
NUM 33:13 ದೊಫ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.
NUM 33:14 ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.
NUM 33:15 ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.
NUM 33:16 ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.
NUM 33:17 ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.
NUM 33:18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
NUM 33:19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.
NUM 33:20 ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
NUM 33:21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
NUM 33:22 ರಿಸ್ಸದಿಂದ ಹೊರಟು ಕೆಹೇಲಾತಾನಲ್ಲಿ ಇಳಿದುಕೊಂಡರು.
NUM 33:23 ಕೆಹೇಲಾತಾನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು.
NUM 33:24 ಶೆಫೆರ್ ಪರ್ವತದಿಂದ ಹೊರಟು ಹರಾದಾದಲ್ಲಿ ಇಳಿದುಕೊಂಡರು.
NUM 33:25 ಹರಾದಾದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.
NUM 33:26 ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
NUM 33:27 ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.
NUM 33:28 ತೆರಹದಿಂದ ಹೊರಟು ಮಿತ್ಕಾದಲ್ಲಿ ಇಳಿದುಕೊಂಡರು.
NUM 33:29 ಮಿತ್ಕಾದಿಂದ ಹೊರಟು ಹಷ್ಮೋನಾದಲ್ಲಿ ಇಳಿದುಕೊಂಡರು.
NUM 33:30 ಹಷ್ಮೋನಾದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.
NUM 33:31 ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.
NUM 33:32 ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು.
NUM 33:33 ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
NUM 33:34 ಯೊಟ್ಬಾತದಿಂದ ಹೊರಟು ಅಬ್ರೋನಾದಲ್ಲಿ ಇಳಿದುಕೊಂಡರು.
NUM 33:35 ಅಬ್ರೋನಾದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.
NUM 33:36 ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.
NUM 33:37 ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂತ್ಯದಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.
NUM 33:38 ಆಗ ಯಾಜಕನಾದ ಆರೋನನು ಯೆಹೋವ ದೇವರ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ, ಅಲ್ಲಿ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನಿಧನ ಹೊಂದಿದನು.
NUM 33:39 ಆರೋನನು ಹೋರ್ ಗುಡ್ಡದಲ್ಲಿ ಮರಣಹೊಂದಿದಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.
NUM 33:40 ಆಗ ಕಾನಾನ್ ದೇಶದ ನೆಗೆವನಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಇಸ್ರಾಯೇಲರು ಬರುವುದನ್ನು ಕೇಳಿದನು.
NUM 33:41 ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
NUM 33:42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
NUM 33:43 ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
NUM 33:44 ಓಬೋತಿನಿಂದ ಹೊರಟು ಮೋವಾಬಿನ ಮೇರೆಯಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
NUM 33:45 ಇಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು.
NUM 33:46 ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.
NUM 33:47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೆಬೋವಿನ ಪೂರ್ವದಲ್ಲಿರುವ ಅಬಾರೀಮ್ ಬೆಟ್ಟಗಳಲ್ಲಿ ಇಳಿದುಕೊಂಡರು.
NUM 33:48 ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋವಿಗೆ ಎದುರಾಗಿ ಯೊರ್ದನ್ ನದಿಯ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಇಳಿದುಕೊಂಡರು.
NUM 33:49 ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ ಯೆಷೀಮೋತಿನಿಂದ ಮೋವಾಬಿನ ಬಯಲುಗಳಲ್ಲಿರುವ ಆಬೇಲ್ ಶಿಟ್ಟೀಮಿನ ಪರ್ಯಂತರದವರೆಗೂ ಇಳಿದುಕೊಂಡರು.
NUM 33:50 ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,
NUM 33:51 “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,
NUM 33:52 ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ, ಅವರ ಚಿತ್ರಗಳನ್ನೂ ಅವರು ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ, ಅವರ ಸಮಸ್ತ ಪವಿತ್ರ ಸ್ಥಳಗಳನ್ನೂ ಹಾಳುಮಾಡಬೇಕು.
NUM 33:53 ನೀವು ಆ ದೇಶವನ್ನು ತೆಗೆದುಕೊಂಡು ಅದರಲ್ಲಿ ವಾಸಮಾಡಿರಿ. ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
NUM 33:54 ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟುಹಾಕಿ, ಸ್ವಾಧೀನಮಾಡಿ ಹಂಚಿಕೊಳ್ಳಬೇಕು. ಹೆಚ್ಚಾದವರಿಗೆ ಸೊತ್ತನ್ನು ಹೆಚ್ಚಿಸಿ, ಕಡಿಮೆಯಾದವರಿಗೆ ಸೊತ್ತನ್ನು ಕಡಿಮೆ ಮಾಡಬೇಕು. ಒಬ್ಬೊಬ್ಬನಿಗೆ ಚೀಟು ಎಲ್ಲಿ ಬೀಳುವುದೋ, ಅದೇ ಅವನಿಗಾಗಬೇಕು. ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
NUM 33:55 “ ‘ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿಗಳನ್ನು ಹೊರಡಿಸದಿದ್ದರೆ, ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ, ನಿಮ್ಮ ಪಕ್ಕೆಗಳಲ್ಲಿ ಕಂಟಕಗಳಾಗಿಯೂ ಇರುವರು. ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.
NUM 33:56 ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.’ ”
NUM 34:1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 34:2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ, ಅವರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಕಾನಾನ್ ದೇಶದೊಳಗೆ ಬರುವಾಗ, ನಿಮಗೆ ಸೊತ್ತಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು.
NUM 34:3 “ ‘ನಿಮ್ಮ ದಕ್ಷಿಣ ಕಡೆಯು ಚಿನ್ ಮರುಭೂಮಿಯಿಂದ ಎದೋಮಿಗೆ ಅನುಸಾರವಾಗಿರಬೇಕು. ನಿಮ್ಮ ದಕ್ಷಿಣ ಮೇರೆಯು, ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
NUM 34:4 ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ, ಚಿನ್‌ಗೆ ಹಾದು, ಕಾದೇಶ್ ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು, ಅಲ್ಲಿಂದ ಹಚರದ್ದಾರಿಗೆ ಹೊರಟು, ಅಚ್ಮೋನಿಗೆ ಹಾದು ಹೋಗಬೇಕು.
NUM 34:5 ಅಚ್ಮೋನಿನಿಂದ ಈಜಿಪ್ಟಿನ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.
NUM 34:6 ಪಶ್ಚಿಮದಲ್ಲಿ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು. ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವುದು.
NUM 34:7 ನಿಮ್ಮ ಉತ್ತರ ಮೇರೆ ಯಾವುದೆಂದರೆ ನೀವು ದೊಡ್ಡ ಸಮುದ್ರದಿಂದ ಹೋರ್ ಪರ್ವತದವರೆಗೂ,
NUM 34:8 ಸಾಲು ಮಾಡಿಕೊಂಡು ಹೋರ್ ಪರ್ವತದಿಂದ ನೀವು ಲೆಬೊ ಹಮಾತಿನ ಪ್ರದೇಶದವರೆಗೆ ಸಾಲು ಮಾಡಿರಿ. ಮೇರೆಯು ಚೆದಾದಿಗೆ ಹೊರಟು
NUM 34:9 ಜಿಫ್ರೋನಿಗೆ ಹೋಗಿ, ಹಚರ್ ಏನಾನಿನಲ್ಲಿ ಮುಗಿಯಲಿ. ಇದು ನಿಮ್ಮ ಉತ್ತರ ಮೇರೆ.
NUM 34:10 ಪೂರ್ವದ ಮೇರೆಗೋಸ್ಕರ ಹಚರ್ ಏನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ.
NUM 34:11 ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಾಕ್ಕೆ ಇಳಿದು, ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ.
NUM 34:12 ಅಲ್ಲಿಂದ ಮೇರೆಯು ಯೊರ್ದನ್ ನದಿಗೆ ಅನುಸಾರವಾಗಿ ಇಳಿದು, ಉಪ್ಪಿನ ಸಮುದ್ರದಲ್ಲಿ ಮುಗಿಯುವುದು. “ ‘ಇದು ಅದರ ಸುತ್ತಮುತ್ತಲ ಮೇರೆಗಳ ಪ್ರಕಾರ ನಿಮ್ಮ ದೇಶವಾಗಿರಬೇಕು.’ ”
NUM 34:13 ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿ, “ನೀವು ಚೀಟುಹಾಕಿ ಸ್ವಾಧೀನಪಡಿಸಿಕೊಳ್ಳಬೇಕಾದ ದೇಶವು ಒಂಬತ್ತುವರೆ ಗೋತ್ರಗಳಿಗೆ ಕೊಡಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ ದೇಶವು ಇದೇ.
NUM 34:14 ಏಕೆಂದರೆ ರೂಬೇನ್ಯರ ಮಕ್ಕಳ ಗೋತ್ರವೂ, ಗಾದನ ಮಕ್ಕಳ ಗೋತ್ರವೂ, ಮನಸ್ಸೆಯ ಅರ್ಧ ಗೋತ್ರವೂ ತಮ್ಮ ಪಿತೃಗಳ ಮನೆಯ ಪ್ರಕಾರವಾಗಿ ತಮ್ಮ ಸೊತ್ತನ್ನು ಪಡೆದುಕೊಂಡಿದ್ದಾರೆ.
NUM 34:15 ಎರಡೂವರೆ ಗೋತ್ರಗಳು ತಮ್ಮ ಸೊತ್ತನ್ನು ಯೊರ್ದನಿನ ಈಚೆಯಲ್ಲಿ ಯೆರಿಕೋವಿಗೆ ಸೂರ್ಯನು ಉದಯಿಸುವ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ,” ಎಂದನು.
NUM 34:16 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 34:17 “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಇವೇ. ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ
NUM 34:18 ದೇಶದ ಸೊತ್ತನ್ನು ಹಂಚುವುದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತೆಗೆದುಕೊಳ್ಳಿರಿ.
NUM 34:19 “ಈ ಜನರ ಹೆಸರುಗಳು ಇವೇ. “ಯೆಹೂದನ ಕುಟುಂಬದಿಂದ ಯೆಫುನ್ನೆಯ ಮಗ ಕಾಲೇಬನೂ,
NUM 34:20 ಸಿಮೆಯೋನನ ಮಕ್ಕಳ ಗೋತ್ರದಿಂದ ಅಮ್ಮೀಹೂದನ ಮಗ ಶಮುವೇಲನೂ,
NUM 34:21 ಬೆನ್ಯಾಮೀನನ ಗೋತ್ರದಿಂದ ಕಿಸ್ಲೋನನ ಮಗ ಎಲೀದಾದ್,
NUM 34:22 ದಾನನ ಮಕ್ಕಳ ಗೋತ್ರದ ಪ್ರಧಾನನು, ಯೊಗ್ಲೀಯ ಮಗ ಬುಕ್ಕೀ,
NUM 34:23 ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಏಫೋದನ ಮಗ ಹನ್ನೀಯೇಲನೂ,
NUM 34:24 ಎಫ್ರಾಯೀಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗ ಕೆಮೂಯೇಲನೂ,
NUM 34:25 ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗ ಎಲೀಚಾಫಾನ್,
NUM 34:26 ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗ ಪಲ್ಟೀಯೇಲನೂ,
NUM 34:27 ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗ ಅಹೀಹೂದನೂ,
NUM 34:28 ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅಮ್ಮೀಹೂದನ ಮಗ ಪೆದಹೇಲನೂ.”
NUM 34:29 ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಸೊತ್ತನ್ನು ಹಂಚುವುದಕ್ಕೆ ಯೆಹೋವ ದೇವರು ನೇಮಿಸಿದ ಮನುಷ್ಯರು ಇವರೇ.
NUM 35:1 ಯೆಹೋವ ದೇವರು ಯೆರಿಕೋವಿಗೆ ಎದುರಾಗಿ ಯೊರ್ದನಿನ ಬಳಿಯಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,
NUM 35:2 “ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿಯರಿಗೆ ವಾಸಮಾಡುವುದಕ್ಕೆ ಕೆಲವು ಪಟ್ಟಣಗಳನ್ನು ಕೊಡಬೇಕು. ಪಟ್ಟಣಗಳ ಸುತ್ತಮುತ್ತಲಿರುವ ಹುಲ್ಲುಗಾವಲು ಪ್ರದೇಶಗಳನ್ನು ನೀವು ಲೇವಿಯರಿಗೆ ಕೊಡಬೇಕು.
NUM 35:3 ನಂತರ ಅವರು ವಾಸಮಾಡುವದಕ್ಕೆ ಪಟ್ಟಣಗಳು, ಅವರು ಹೊಂದಿರುವ ಪಶುಗಳಿಗೋಸ್ಕರವೂ ಮತ್ತು ಅವರ ಎಲ್ಲಾ ಇತರ ಪ್ರಾಣಿಗಳಿಗೂ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿರುತ್ತಾರೆ.
NUM 35:4 “ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣಗಳ ಉಪನಗರಗಳು, ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು.
NUM 35:5 ನೀವು ಪಟ್ಟಣದ ಹೊರಗೆ ಪೂರ್ವದಲ್ಲಿ ಎರಡು ಸಾವಿರ ಮೊಳ, ದಕ್ಷಿಣದಲ್ಲಿ ಎರಡು ಸಾವಿರ ಮೊಳ, ಪಶ್ಚಿಮದಲ್ಲಿ ಎರಡು ಸಾವಿರ ಮೊಳ, ಉತ್ತರದಲ್ಲಿ ಎರಡು ಸಾವಿರ ಮೊಳ ಅಳೆಯಬೇಕು. ಮಧ್ಯದಲ್ಲಿ ಪಟ್ಟಣವಿರಬೇಕು. ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
NUM 35:6 “ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯ ಹತ್ಯೆ ಮಾಡಿದವನು ಅಲ್ಲಿಗೆ ಓಡುವ ಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು. ಅವುಗಳ ಹೊರತು ನೀವು ನಲವತ್ತೆರಡು ಪಟ್ಟಣಗಳನ್ನು ಕೊಡಬೇಕು.
NUM 35:7 ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು, ಅವುಗಳ ಉಪನಗರಗಳ ಸಂಗಡ ನಲವತ್ತೆಂಟು ಪಟ್ಟಣಗಳಾಗಿರಬೇಕು.
NUM 35:8 ನೀವು ಇಸ್ರಾಯೇಲರ ಸ್ವಾಧೀನದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ, ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತೆಗೆದುಕೊಳ್ಳಬೇಕು. ಒಬ್ಬೊಬ್ಬನು ತಾನು ಹೊಂದುವ ಸೊತ್ತಿಗನುಸಾರವಾಗಿ ತನ್ನ ಪಟ್ಟಣಗಳೊಳಗಿಂದ ಲೇವಿಯರಿಗೆ ಕೊಡಬೇಕು,” ಎಂದು ಹೇಳಿದರು.
NUM 35:9 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
NUM 35:10 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,
NUM 35:11 ಕೈತಪ್ಪಿ ಒಬ್ಬನನ್ನು ಕೊಂದರೆ, ನೀವು ಓಡಿಹೋಗುವ ಹಾಗೆ ನಿಮಗೆ ಆಶ್ರಯಕ್ಕಾಗಿ ಪಟ್ಟಣಗಳನ್ನು ನೇಮಿಸಬೇಕು.
NUM 35:12 ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವವರೆಗೂ ಸೇಡು ತೀರಿಸುವವನ ದೆಸೆಯಿಂದ ಸಾಯದಂತೆ ಅವು ನಿಮಗೆ ಆಶ್ರಯದ ಪಟ್ಟಣಗಳಾಗಿರಬೇಕು.
NUM 35:13 ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು.
NUM 35:14 ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನು ಮತ್ತು ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನು ಆಶ್ರಯದ ಪಟ್ಟಣಗಳಾಗಿ ಕೊಡಬೇಕು.
NUM 35:15 ಕೈತಪ್ಪಿ ಪ್ರಾಣಹತ್ಯೆ ಮಾಡುವವರೆಲ್ಲರೂ, ಅಲ್ಲಿಗೆ ಓಡಿಹೋಗುವುದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲರಿಗೂ, ಪರಕೀಯರಿಗಾಗಿ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
NUM 35:16 “ ‘ಒಬ್ಬನು ಕಬ್ಬಿಣದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ, ಅವನು ಕೊಲೆಪಾತಕನು. ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
NUM 35:17 ಒಬ್ಬನು ಸಾಯುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ, ಅವನು ಕೊಲೆಪಾತಕನು. ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
NUM 35:18 ಇಲ್ಲವೆ ಯಾರಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದುಕೊಂದರೆ, ಆ ವ್ಯಕ್ತಿಯು ಕೊಲೆಗಾರ; ಆ ಕೊಲೆಪಾತಕನಿಗೆ ನಿಜವಾಗಿಯೂ ಮರಣಶಿಕ್ಷೆಯಾಗಬೇಕು.
NUM 35:19 ರಕ್ತಪಾತಕ್ಕೆ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ಕೊಲ್ಲಬೇಕು. ಅವನು ಕೊಲೆಪಾತಕನನ್ನು ನೋಡಿದಾಗ, ಅವನನ್ನೂ ಕೊಲ್ಲಬೇಕು.
NUM 35:20 ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ, ಇಲ್ಲವೆ ನೂಕುವುದರಿಂದಲಾದರೂ, ಸಮಯ ನೋಡಿಕೊಂಡು ಅವನ ಮೇಲೆ ಯಾವುದನ್ನಾದರೂ ಬಲವಾಗಿ ಎಸೆದರೆ,
NUM 35:21 ಇಲ್ಲವೆ ಹಗೆತನ ಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ, ಹೊಡೆದವನನ್ನು ನಿಜವಾಗಿ ಸಾಯಿಸಬೇಕು. ರಕ್ತಪಾತಕ್ಕೆ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆಪಾತಕನನ್ನು ಕೊಲ್ಲಬೇಕು.
NUM 35:22 “ ‘ಆದರೆ ಶತ್ರುತ್ವವಿಲ್ಲದೆ ಆಕಸ್ಮಿಕವಾಗಿ ಅವನನ್ನು ನೂಕುವುದರಿಂದಲಾದರೂ, ಸಮಯ ಸಾಧಿಸದೆ ಯಾವುದಾದರೊಂದು ವಸ್ತುವನ್ನು ಅವನ ಮೇಲೆ ಎಸೆದರೆ,
NUM 35:23 ಇಲ್ಲವೆ ಶತ್ರುತ್ವವಿಲ್ಲದೆ ಅವನ ಕೇಡನ್ನು ಹುಡುಕದೆ ಅವನನ್ನು ನೋಡದೆ ಮರಣವಾಗುವಂತೆ ಯಾವುದಾದರೊಂದು ಕಲ್ಲನ್ನು ಅವನು ಸಾಯುವ ಹಾಗೆ ಅವನ ಮೇಲೆ ಬೀಳ ಮಾಡಿದರೆ,
NUM 35:24 ಆಗ ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ, ರಕ್ತಪಾತಕ್ಕೆ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು.
NUM 35:25 ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸುವವನ ಕೈಯಿಂದ ತಪ್ಪಿಸಿ, ಅವನು ಓಡಿ ಹೋದ ಆಶ್ರಯದ ಪಟ್ಟಣಕ್ಕೆ ತಿರುಗಿ ಸೇರಿಸಬೇಕು. ಅಲ್ಲೇ ಅವನು ಪರಿಶುದ್ಧ ಎಣ್ಣೆಯಿಂದ ಅಭಿಷೇಕ ಹೊಂದಿದ ಮಹಾಯಾಜಕನು ಸಾಯುವವರೆಗೂ ವಾಸಮಾಡಲಿ.
NUM 35:26 “ ‘ಆದರೆ ಕೊಲೆಪಾತಕನು ತಾನು ಓಡಿ ಹೋದ ಆಶ್ರಯದ ಪಟ್ಟಣದ ಮೇರೆಯನ್ನು ಯಾವ ಸಮಯದಲ್ಲಾದರೂ ಮೀರಿ ಹೊರಟರೆ,
NUM 35:27 ರಕ್ತಕ್ಕೆ ಸೇಡು ತೀರಿಸುವವನು ಅವನನ್ನು ತನ್ನ ಆಶ್ರಯದ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಲೆಪಾತಕನನ್ನು ಕೊಂದರೆ, ಅವನಿಗೆ ರಕ್ತಾಪರಾಧವಿಲ್ಲ.
NUM 35:28 ಏಕೆಂದರೆ ಅವನು ತನ್ನ ಆಶ್ರಯದ ಪಟ್ಟಣದ ಮಹಾಯಾಜಕನು ಸಾಯುವವರೆಗೂ ವಾಸಮಾಡಬೇಕಾಗಿತ್ತು. ಮಹಾಯಾಜಕನ ಮರಣದ ತರುವಾಯ ಕೊಲೆಪಾತಕನು ತನ್ನ ಸೊತ್ತಿರುವ ದೇಶಕ್ಕೆ ಹೋಗಬಹುದು.
NUM 35:29 “ ‘ಹೀಗೆ ಇವು ನಿಮ್ಮ ಸಮಸ್ತ ನಿವಾಸಿಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಯಾಗಿರಬೇಕು.
NUM 35:30 “ ‘ಪ್ರಾಣಹತ್ಯೆ ಮಾಡಿದ ಕೊಲೆಪಾತಕನನ್ನು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆಯನ್ನು ವಿಧಿಸಬೇಕು. ಒಬ್ಬನೇ ಸಾಕ್ಷಿಯು ಒಂದು ಪ್ರಾಣಕ್ಕೆ ವಿರೋಧವಾಗಿ ಸಾಯುವ ಹಾಗೆ ಸಾಕ್ಷಿ ಕೊಡಬಾರದು.
NUM 35:31 “ ‘ಸಾಯತಕ್ಕ ಕೊಲೆಪಾತಕನ ಪ್ರಾಣಕ್ಕೋಸ್ಕರ ಈಡನ್ನು ತೆಗೆದುಕೊಳ್ಳಬೇಡಿರಿ. ಏಕೆಂದರೆ ಅವನು ನಿಜವಾಗಿಯೂ ಸಾಯಬೇಕು.
NUM 35:32 “ ‘ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿಗೋಸ್ಕರ ಅವನು ತಿರುಗಿಬಂದು ಮಹಾಯಾಜಕನು ಸಾಯುವವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತೆಗೆದುಕೊಳ್ಳಬೇಡಿರಿ.
NUM 35:33 “ ‘ಹೀಗೆ ನೀವು ವಾಸಿಸುವ ದೇಶವನ್ನು ನೀವು ಅಪವಿತ್ರ ಮಾಡಬೇಡಿರಿ. ಏಕೆಂದರೆ ದೇಶವನ್ನು ಅಪವಿತ್ರ ಮಾಡುವಂಥಾದ್ದು ರಕ್ತವೇ. ಹತರಾದವರ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
NUM 35:34 ಆದ್ದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧ ಮಾಡಬೇಡಿರಿ. ಏಕೆಂದರೆ ನಾನು ಅದರೊಳಗೆ ವಾಸಿಸುತ್ತೇನೆ. ಯೆಹೋವ ದೇವರಾಗಿರುವ ನಾನೇ ಇಸ್ರಾಯೇಲರ ಮಧ್ಯದಲ್ಲಿ ವಾಸಿಸುತ್ತೇನೆ,’ ” ಎಂದರು.
NUM 36:1 ಆಗ ಯೋಸೇಫನ ಪುತ್ರರ ಕುಟುಂಬದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬಗಳ ಮುಖ್ಯಸ್ಥರು ಮೋಶೆ ಹಾಗೂ ಇಸ್ರಾಯೇಲರ ಕುಲನಾಯಕರ ಸಮೀಪಕ್ಕೆ ಬಂದು ಮಾತನಾಡಿ,
NUM 36:2 “ಚೀಟುಹಾಕಿ ನಾಡನ್ನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವುದಕ್ಕೆ ಯೆಹೋವ ದೇವರು ನಮ್ಮ ಒಡೆಯನಾದ ನಿನಗೆ ಆಜ್ಞಾಪಿಸಿದರು. ನಮ್ಮ ಸಹೋದರನಾದ ಚಲ್ಪಹಾದನ ಸೊತ್ತನ್ನು ಅವನ ಪುತ್ರಿಯರಿಗೆ ಕೊಡಬೇಕೆಂದು ದೇವರಿಂದ ಅಪ್ಪಣೆಯಾಗಿತ್ತು.
NUM 36:3 ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು.
NUM 36:4 ಇಸ್ರಾಯೇಲರಿಗೆ ಜೂಬಿಲಿ ವರ್ಷ ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಗೋತ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಗೋತ್ರದ ಸೊತ್ತಿನಿಂದ ತೆಗೆಯಲಾಗುವುದು.”
NUM 36:5 ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಇಸ್ರಾಯೇಲರಿಗೆ ಆಜ್ಞಾಪಿಸಿ, “ಯೋಸೇಫನ ಪುತ್ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ.
NUM 36:6 ಯೆಹೋವ ದೇವರು ಚಲ್ಪಹಾದನ ಪುತ್ರಿಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನೆಂದರೆ: ಅವರು ತಮ್ಮ ಮನಸ್ಸು ಬಂದವರೊಂದಿಗೆ ಮದುವೆಮಾಡಿಕೊಳ್ಳಲಿ, ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದವರಿಗೆ ಮಾತ್ರ ಮದುವೆ ಮಾಡಿಕೊಳ್ಳಬಹುದು.
NUM 36:7 ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು.
NUM 36:8 ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು.
NUM 36:9 ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು.
NUM 36:10 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾದನ ಪುತ್ರಿಯರು ಮಾಡಿದರು.
NUM 36:11 ಚಲ್ಪಹಾದನ ಪುತ್ರಿಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ, ತಮ್ಮ ಚಿಕ್ಕಪ್ಪಂದಿರ ಪುತ್ರರನ್ನು ಮದುವೆಯಾದರು.
NUM 36:12 ಯೋಸೇಫನ ಮಗನಾದ ಮನಸ್ಸೆಯ ಪುತ್ರರ ಕುಟುಂಬದವರೊಡನೆ ಮದುವೆಯಾದರು. ಈ ಪ್ರಕಾರ ಅವರ ಸೊತ್ತು ತಮ್ಮ ಪಿತೃವಿನ ಗೋತ್ರದಲ್ಲಿಯೇ ಉಳಿಯಿತು.
NUM 36:13 ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರಿಗೆ ಆಜ್ಞಾಪಿಸಿದ ಆಜ್ಞೆಗಳೂ, ನ್ಯಾಯಗಳೂ ಇವೇ.
DEU 1:1 ಯೊರ್ದನ್ ನದಿಯ ಆಚೆ ಪಾರಾನ್, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ, ಮೋಶೆ ಇಸ್ರಾಯೇಲರಿಗೆ ಹೇಳಿದ ಮಾತುಗಳು ಇವು.
DEU 1:2 ಹೋರೇಬಿನಿಂದ ಕಾದೇಶ್ ಬರ್ನೇಯಕ್ಕೆ ಸೇಯೀರ್ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ.
DEU 1:3 ನಲ್ವತ್ತನೆಯ ವರ್ಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿನದಲ್ಲಿ, ಮೋಶೆಯು ಇಸ್ರಾಯೇಲರಿಗೆ, ಯೆಹೋವ ದೇವರು ಅವನಿಗೆ ಅವರ ವಿಷಯವಾಗಿ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾತನಾಡಿದನು.
DEU 1:4 ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದ ಮೇಲೆಯೂ, ಅಷ್ಟಾರೋತ್‌ನಲ್ಲಿ, ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಎದ್ರೈಯಲ್ಲಿ ಸೋಲಿಸಿದ ಮೇಲೆಯೂ ಮೋಶೆ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿದನು.
DEU 1:5 ಯೊರ್ದನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ನಿಯಮವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
DEU 1:6 ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮಗೆ, “ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು,
DEU 1:7 ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ, ಅದರ ಅರಾಬಾ ಸಮೀಪದ ಎಲ್ಲಾ ಪ್ರದೇಶದ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ನೆಗೆವನಲ್ಲಿಯೂ ಸಮುದ್ರ ತೀರದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ, ಲೆಬನೋನಿಗೂ ಯೂಫ್ರೇಟೀಸ್ ಎಂಬ ಮಹಾನದಿಯ ಬಳಿಗೂ ಹೋಗಿರಿ.
DEU 1:8 ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. ನೀವು ಹೋಗಿ ಯೆಹೋವ ದೇವರಾದ ನಾನು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ,” ಎಂದು ಹೇಳಿದರು.
DEU 1:9 ಆ ಕಾಲದಲ್ಲಿ ನಾನು ನಿಮಗೆ, “ನಾನೊಬ್ಬನೇ ನಿಮ್ಮ ಭಾರವನ್ನು ಹೊರಲಾರೆನು.
DEU 1:10 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಿದ್ದಾರೆ. ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ.
DEU 1:11 ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಲಿ, ಅವರು ವಾಗ್ದಾನ ಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ.
DEU 1:12 ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ?
DEU 1:13 ಆದ್ದರಿಂದ ನೀವು ಪ್ರತಿಯೊಂದು ಗೋತ್ರದಿಂದ ಜ್ಞಾನಿಗಳೂ ವಿವೇಕಿಗಳೂ ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿರಿ. ನಾನು ಅವರನ್ನು ನಿಮಗೆ ಅಧಿಪತಿಗಳಾಗಿ ನೇಮಿಸುತ್ತೇನೆ,” ಎಂದು ಹೇಳಿದೆನು.
DEU 1:14 ಅದಕ್ಕೆ ನೀವು ನನಗೆ ಉತ್ತರವಾಗಿ, “ನೀನು ಹೇಳಿದ ಮಾತು ಮಾಡುವುದಕ್ಕೆ ಒಳ್ಳೆಯದು,” ಎಂದಿರಿ.
DEU 1:15 ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಜ್ಞಾನಿಗಳನ್ನು ಕರೆಯಿಸಿ, ಒಂದೊಂದು ಗೋತ್ರದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದೆನು.
DEU 1:16 ಆ ನ್ಯಾಯಾಧಿಪತಿಗಳಿಗೆ ಆ ಕಾಲದಲ್ಲಿ ನಾನು, “ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಾಯೇಲರ ವ್ಯಾಜ್ಯವಾಗಿರಬಹುದು. ಇಸ್ರಾಯೇಲರಲ್ಲದವರ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.
DEU 1:17 ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ಮಾಡಬೇಡಿರಿ. ಹಿರಿಯನನ್ನು ಹೇಗೋ ಹಾಗೆಯೇ ಕಿರಿಯನನ್ನು ಕೇಳಬೇಕು. ಯಾವ ಮನುಷ್ಯನಿಗೂ ಹೆದರಬೇಡಿರಿ. ಆದರೆ ನ್ಯಾಯ ತೀರ್ವಿಕೆಯು ದೇವರದೇ. ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ, ನಾನು ಅದನ್ನು ತೀರಿಸುವೆನು,” ಎಂದು ಹೇಳಿದೆ.
DEU 1:18 ಹೀಗೆ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ಆ ಕಾಲದಲ್ಲಿ ನಿಮಗೆ ಆಜ್ಞಾಪಿಸಿದೆನು.
DEU 1:19 ಆಗ ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ ಪ್ರಕಾರ, ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಮರುಭೂಮಿಯನ್ನೆಲ್ಲಾ ದಾಟಿ, ಕಾದೇಶ್ ಬರ್ನೇಯಕ್ಕೆ ಬಂದೆವು.
DEU 1:20 ಆಗ ನಾನು ನಿಮಗೆ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ಅಮೋರಿಯರ ಮಲೆನಾಡಿಗೆ ಹತ್ತಿರ ಬಂದಿದ್ದೀರಿ.
DEU 1:21 ನಿಮ್ಮ ದೇವರಾದ ಯೆಹೋವ ದೇವರು ದೇಶವನ್ನು ನಿಮಗೆ ಕೊಟ್ಟಿದ್ದಾರೆ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಪ್ರಕಾರ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿರಿ. ಭಯಪಡಬೇಡಿರಿ, ಧೈರ್ಯವಾಗಿರಿ,” ಎಂದೆನು.
DEU 1:22 ಆಗ ನೀವೆಲ್ಲರು ನನ್ನ ಬಳಿಗೆ ಬಂದು, “ನಮಗಿಂತ ಮುಂದಾಗಿ ಜನರನ್ನು ಕಳುಹಿಸೋಣ. ಅವರು ನಮಗೆ ದೇಶವನ್ನು ಸಂಚರಿಸಿ ನೋಡಿ, ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತರಲಿ,” ಎಂದು ಹೇಳಿದಿರಿ.
DEU 1:23 ಆ ಮಾತು ನನಗೆ ಒಳ್ಳೆಯದೆಂದು ತೋಚಿತು. ನಾನು ನಿಮ್ಮಲ್ಲಿ ಗೋತ್ರಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು.
DEU 1:24 ಅವರು ಹೋಗಿ ಬೆಟ್ಟವನ್ನೇರಿ, ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು, ಅದನ್ನು ಸಂಚರಿಸಿ ನೋಡಿ,
DEU 1:25 ಆ ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತೆಗೆದುಕೊಂಡು, ನಮ್ಮ ಬಳಿಗೆ ತಂದು ತೋರಿಸಿ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶವು ಒಳ್ಳೆಯದು,” ಎಂದು ವರದಿಮಾಡಿದರು.
DEU 1:26 ಆದರೆ ನೀವು ಮೇಲೆ ಹತ್ತಿ ಹೋಗುವುದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದಿರಿ.
DEU 1:27 ನೀವು ನಿಮ್ಮ ಗುಡಾರಗಳಲ್ಲಿ ಗೊಣಗುಟ್ಟಿ, “ಯೆಹೋವ ದೇವರು ನಮ್ಮನ್ನು ಹಗೆ ಮಾಡಿದ್ದರಿಂದ, ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ, ನಮ್ಮನ್ನು ನಾಶಮಾಡುವುದಕ್ಕೆ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದಾರೆ.
DEU 1:28 ನಾವು ಎಲ್ಲಿಗೆ ಏರಿಹೋಗೋಣ? ನಮ್ಮ ಸಹೋದರರು, ‘ಆ ಜನರು ನಮಗಿಂತ ಬಲಿಷ್ಠರೂ ಎತ್ತರವಾದವರೂ ಪಟ್ಟಣಗಳು ದೊಡ್ಡವೂ, ಆಕಾಶವನ್ನು ಮುಟ್ಟುವ ಗೋಡೆಯುಳ್ಳವುಗಳೂ ಆಗಿವೆ. ಇದಲ್ಲದೆ ರಾಕ್ಷಸಾಕಾರದ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು’ ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ,” ಎಂದು ಹೇಳಿದಿರಿ.
DEU 1:29 ಆಗ ನಾನು ನಿಮಗೆ, “ಅಂಜಬೇಡಿರಿ, ಅವರಿಗೆ ಭಯಪಡಬೇಡಿರಿ.
DEU 1:30 ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಿಮ್ಮ ಕಣ್ಣು ಮುಂದೆ, ಯುದ್ಧಮಾಡಿದಂತೆಯೇ ಈಗಲೂ ನಿಮಗೋಸ್ಕರ ಯುದ್ಧಮಾಡುವರು.
DEU 1:31 ನೀವು ಈ ಸ್ಥಳಕ್ಕೆ ಸೇರುವ ತನಕ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೆ ಹೊರುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊತ್ತು ತಂದರಲ್ಲವೇ?” ಎಂದು ನಿಮಗೆ ಹೇಳಿದೆನು.
DEU 1:32 ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಲಿಲ್ಲ.
DEU 1:33 ಅವರೇ ನಿಮಗೆ ಇಳಿದುಕೊಳ್ಳುವುದಕ್ಕೆ ಸ್ಥಳವನ್ನು ಗೊತ್ತುಮಾಡಿ ನೀವು ಹೋಗತಕ್ಕ ಮಾರ್ಗವನ್ನು ನಿಮಗೆ ತೋರಿಸಲು ರಾತ್ರಿ ಹೊತ್ತು ಬೆಂಕಿಯಲ್ಲಿಯೂ ಹಗಲು ಹೊತ್ತು ಮೇಘದಲ್ಲಿಯೂ ನಿಮ್ಮ ಮುಂದೆ ಹೋದರು.
DEU 1:34 ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ, ಬೇಸರಗೊಂಡು, ಪ್ರಮಾಣಮಾಡಿ,
DEU 1:35 “ಕೆಟ್ಟ ಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಒಳ್ಳೆಯ ದೇಶವನ್ನು ನೋಡುವುದಿಲ್ಲ.
DEU 1:36 ಯೆಫುನ್ನೆಯ ಮಗ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸಿದ್ದರಿಂದ, ಅವನು ಸಂದರ್ಶಿಸಿದ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು,” ಎಂದರು.
DEU 1:37 ನನ್ನ ಮೇಲೆಯೂ ಯೆಹೋವ ದೇವರು ನಿಮ್ಮ ವಿಷಯವಾಗಿ ಬೇಸರಮಾಡಿಕೊಂಡು, “ನೀನು ಸಹ ಅದರಲ್ಲಿ ಪ್ರವೇಶಿಸುವುದಿಲ್ಲ.
DEU 1:38 ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನನ್ನು ಧೈರ್ಯಗೊಳಿಸು. ಅವನೇ ಆ ನಾಡನ್ನು ಇಸ್ರಾಯೇಲಿಗೆ ಸ್ವಾಧೀನಪಡಿಸುವನು.
DEU 1:39 ಇದಲ್ಲದೆ ಸೆರೆಯಾಗಿ ಹೋಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈ ಹೊತ್ತು ಒಳ್ಳೆಯದು, ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳು ಅದರಲ್ಲಿ ಪ್ರವೇಶಿಸುವರು. ನಾನು ಅವರಿಗೆ ಅದನ್ನು ಕೊಡುವೆನು, ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
DEU 1:40 ನೀವಾದರೋ ತಿರುಗಿಕೊಂಡು ಕೆಂಪು ಸಮುದ್ರ ಮಾರ್ಗವಾಗಿ ಮರುಭೂಮಿಗೆ ಹೊರಟು ಹೋಗಿರಿ,” ಎಂದು ಹೇಳಿದರು.
DEU 1:41 ಆಗ ನೀವು ಉತ್ತರಕೊಟ್ಟು ನನಗೆ, “ಯೆಹೋವ ದೇವರಿಗೆ ಪಾಪಮಾಡಿದ್ದೇವೆ. ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ನಾವು ಬೆಟ್ಟವನ್ನು ಹತ್ತಿ ಯುದ್ಧ ಮಾಡುತ್ತೇವೆ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಮೇಲೆ ಬೆಟ್ಟಕ್ಕೆ ಹೊರಟುಹೋಗುವುದು ಸಣ್ಣ ಕೆಲಸ,” ಎಂದು ಹೇಳಿದಿರಿ.
DEU 1:42 ಆದರೆ ಯೆಹೋವ ದೇವರು ನನಗೆ, “ ‘ಏರಿ ಹೋಗಬೇಡಿರಿ, ಯುದ್ಧಮಾಡಬೇಡಿರಿ. ಏಕೆಂದರೆ ನಾನು ನಿಮ್ಮ ಮಧ್ಯದಲ್ಲಿ ಇಲ್ಲ. ನೀವು ನಿಮ್ಮ ಶತ್ರುಗಳಿಂದ ಸೋಲನ್ನು ಅನುಭವಿಸುವಿರಿ,’ ಎಂದು ಅವರಿಗೆ ಹೇಳು,” ಎಂದರು.
DEU 1:43 ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ, ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದು, ಗರ್ವದಿಂದ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.
DEU 1:44 ಆಗ ಆ ಬೆಟ್ಟದಲ್ಲಿ ವಾಸಮಾಡುತ್ತಿದ್ದ ಅಮೋರಿಯರು ನಿಮಗೆ ವಿರುದ್ಧವಾಗಿ ಹೊರಟು, ಜೇನುಹುಳಗಳು ಮುತ್ತಿದಂತೆ ನಿಮ್ಮ ಬೆನ್ನು ಹತ್ತಿ, ಸೇಯೀರಿನಲ್ಲಿ ಹೊರ್ಮಾದವರೆಗೂ ನಿಮ್ಮನ್ನು ಸಂಹಾರ ಮಾಡಿದರು.
DEU 1:45 ನೀವು ತಿರುಗಿಕೊಂಡು ಯೆಹೋವ ದೇವರ ಮುಂದೆ ಅತ್ತಿರಿ. ಆದರೆ ಯೆಹೋವ ದೇವರು ನಿಮ್ಮ ಧ್ವನಿಗೆ ಕಿವಿಗೊಡಲಿಲ್ಲ.
DEU 1:46 ಆಮೇಲೆ ನೀವು ಕಾದೇಶಿನಲ್ಲಿ ಬಹಳ ದಿವಸ ವಾಸವಾಗಿದ್ದಿರಿ.
DEU 2:1 ಆಗ ಯೆಹೋವ ದೇವರು ನನಗೆ ಆಜ್ಞಾಪಿಸಿದ ಪ್ರಕಾರ ಮರುಭೂಮಿಗೆ ಹೊರಟು ಕೆಂಪುಸಮುದ್ರದ ಮಾರ್ಗದಲ್ಲಿ ಅನೇಕ ದಿನಗಳು ಸೇಯೀರ್ ಬೆಟ್ಟದ ಮಲೆನಾಡನ್ನು ಸುತ್ತುತ್ತಿದ್ದೆವು.
DEU 2:2 ಆಮೇಲೆ ಯೆಹೋವ ದೇವರು ನನಗೆ,
DEU 2:3 “ನೀವು ಈ ಬೆಟ್ಟವನ್ನು ಸುತ್ತಿದ್ದು ಸಾಕು. ಉತ್ತರಕ್ಕೆ ತಿರುಗಿಕೊಳ್ಳಿರಿ.
DEU 2:4 ನೀವು ಜನರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ನೀವು ಸೇಯೀರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಪುತ್ರರ ಗಡಿಯನ್ನು ದಾಟಬೇಕು. ಅವರು ನಿಮಗೆ ಭಯಪಡುವರು. ಆದ್ದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.
DEU 2:5 ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದವಿಡುವಷ್ಟು ಸ್ಥಳವನ್ನಾದರೂ ಕೊಡುವುದಿಲ್ಲ. ಏಕೆಂದರೆ ಸೇಯೀರ್ ಬೆಟ್ಟವನ್ನು ನಾನು ಏಸಾವನಿಗೆ ಸ್ವದೇಶವಾಗಿ ಕೊಟ್ಟಿದ್ದೇನೆ.
DEU 2:6 ನೀವು ಅಲ್ಲಿ ಉಣ್ಣುವ ಆಹಾರವನ್ನು ಮತ್ತು ಕುಡಿಯುವ ನೀರನ್ನು ಸಹ ಹಣಕೊಟ್ಟು ಕೊಂಡುಕೊಳ್ಳಬೇಕು.’ ”
DEU 2:7 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೈಕೆಲಸದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದಾರೆ. ನೀವು ಈ ದೊಡ್ಡ ಮರುಭೂಮಿಯಲ್ಲಿ ಸಂಚಾರ ಮಾಡಿದ್ದನ್ನು ದೇವರು ಗಮನಿಸಿದ್ದಾರೆ. ಈ ನಲವತ್ತು ವರ್ಷ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದರು. ನಿಮಗೆ ಏನೂ ಕಡಿಮೆ ಆಗಲಿಲ್ಲ.
DEU 2:8 ಈ ಪ್ರಕಾರ ನಾವು ಸೇಯೀರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬಾದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ, ಮೋವಾಬಿನ ಮರುಭೂಮಿಯ ಮಾರ್ಗವಾಗಿ ಹಾದು ಹೋದೆವು.
DEU 2:9 ಆಗ ಯೆಹೋವ ದೇವರು ನನಗೆ, “ಮೋವಾಬ್ಯರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ಏಕೆಂದರೆ ನಾನು ಅವರ ದೇಶದಲ್ಲಿ ನಿನಗೆ ಸೊತ್ತನ್ನು ಕೊಡುವುದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಆರ್ ಎಂಬ ಪ್ರದೇಶವನ್ನು ಕೊಟ್ಟೆನಲ್ಲವೇ?” ಎಂದರು.
DEU 2:10 ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು.
DEU 2:11 ಅವರು ಅನಾಕ್ಯರ ಹಾಗೆ ರೆಫಾಯರಿಗೆ ಸೇರಿದವರೆಂದು ಹೇಳುವದುಂಟು. ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.
DEU 2:12 ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವ ದೇವರು ಕೊಟ್ಟ ನಾಡನ್ನು ಹೇಗೆ ಸ್ವಾಧೀನ ಮಾಡಿಕೊಂಡರೋ, ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ, ಅವರ ನಾಡಿನಲ್ಲಿ ವಾಸಮಾಡಿದರು.
DEU 2:13 “ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ,” ಎಂದು ಯೆಹೋವ ದೇವರು ಹೇಳಿದ ಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.
DEU 2:14 ನಾವು ಕಾದೇಶ್ ಬರ್ನೇಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳವನ್ನು ದಾಟಿದವರೆಗೆ ಗತಿಸಿದ ಕಾಲವು ಮೂವತ್ತೆಂಟು ವರ್ಷ. ಯೆಹೋವ ದೇವರು ಅವರಿಗೆ ಪ್ರಮಾಣ ಮಾಡಿದ ಪ್ರಕಾರ ಅಷ್ಟರಲ್ಲಿ ಆ ಸಂತತಿಯ ಸೈನಿಕರೆಲ್ಲರು ಸತ್ತುಹೋಗಿದ್ದರು.
DEU 2:15 ಪಾಳೆಯದಿಂದ ಅವರನ್ನು ಸಂಪೂರ್ಣವಾಗಿ ಹೊರಹಾಕುವವರೆಗೂ ಯೆಹೋವ ದೇವರ ಹಸ್ತವು ಅವರ ಮೇಲಿತ್ತು.
DEU 2:16 ಉಳಿದ ಯುದ್ಧ ಮಾಡುವವರು ಜನರೊಳಗಿಂದ ಸತ್ತು ಹೋದ ಮೇಲೆ,
DEU 2:17 ಯೆಹೋವ ದೇವರು ನನ್ನೊಂದಿಗೆ ಮಾತನಾಡಿ ನನಗೆ,
DEU 2:18 “ಇಂದು ನೀನು ಮೋವಾಬಿನ ಮೇರೆಯಾದ ಆರ್ ಎಂಬ ಸ್ಥಳವನ್ನು ದಾಟಬೇಕು.
DEU 2:19 ಅಮ್ಮೋನ್ಯರ ಹತ್ತಿರಕ್ಕೆ ನೀವು ಬಂದಾಗ, ಅವರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿರುವದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನೂ ಕೊಡುವುದಿಲ್ಲ” ಎಂದರು.
DEU 2:20 ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ಸಹ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.
DEU 2:21 ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು. ಆದರೆ ಯೆಹೋವ ದೇವರು ಅವರನ್ನು ಅಮ್ಮೋನಿಯರ ಮುಂದೆ ತೆಗೆದುಹಾಕಿದ್ದರು. ಹೀಗೆ ಅಮ್ಮೋನಿಯರು ಅವರನ್ನು ಹೊರಡಿಸಿ, ಅವರ ಬದಲಾಗಿ ವಾಸಿಸಿದರು.
DEU 2:22 ಯೆಹೋವ ದೇವರು ಸೇಯೀರಿನಲ್ಲಿ ವಾಸವಾಗಿರುವ ಏಸಾವನ ಮಕ್ಕಳಿಗೆ ಮಾಡಿದ ಹಾಗೆ ಆಯಿತು. ದೇವರು ಅವರ ಮುಂದೆ ಹೋರಿಯರನ್ನು ತೆಗೆದುಹಾಕಿದರು. ಹೀಗೆ ಅವರು ಹೋರಿಯರನ್ನು ಹೊರಡಿಸಿ, ಇವರ ಬದಲಾಗಿ ಇಂದಿನವರೆಗೂ ವಾಸಿಸುತ್ತಿದ್ದಾರೆ.
DEU 2:23 ಹಾಗೆ ಗಾಜಾ ಪಟ್ಟಣದವರೆಗೂ ವಾಸವಾಗಿದ್ದ ಅವ್ವೀಯರನ್ನು ಕಫ್ತೋರಿಂದ ಬಂದ ಕಫ್ತೋರ್ಯರು ನಾಶಮಾಡಿ, ಅವರ ಬದಲಾಗಿ ವಾಸಿಸಿದರು.
DEU 2:24 “ಈಗ ಏಳಿರಿ, ಹೊರಡಿರಿ, ಅರ್ನೋನ್ ಹಳ್ಳವನ್ನು ದಾಟಿರಿ, ಇಗೋ, ಹೆಷ್ಬೋನಿನ ಅರಸ ಅಮೋರಿಯನಾದ ಸೀಹೋನನನ್ನೂ, ಅವನ ದೇಶವನ್ನೂ ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ. ಅವನ ಸಂಗಡ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆರಂಭಮಾಡಿರಿ.
DEU 2:25 ಇದೇ ದಿವಸ ಆಕಾಶದ ಕೆಳಗಿರುವ ಜನಾಂಗಗಳ ಮೇಲೆ ನಿಮ್ಮ ಹೆದರಿಕೆಯೂ ಮತ್ತು ಭಯವೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿ ನಡುಗಿ ಅಂಜುವರು,” ಎಂದರು.
DEU 2:26 ಆಗ ನಾನು ಕೆದೇಮೋತೆಂಬ ಮರುಭೂಮಿಯಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನದ ಸುದ್ದಿಯನ್ನು ತಿಳಿಸುವಂತೆ ದೂತರನ್ನು ಕಳುಹಿಸಿ,
DEU 2:27 “ನಾವು ನಿನ್ನ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಕ್ಕೂ ಬಲಕ್ಕೂ ತಿರುಗದೆ ರಾಜ ಮಾರ್ಗದಿಂದಲೇ ಹೋಗುವೆವು.
DEU 2:28 ನಾವು ಊಣ್ಣುವುದಕ್ಕೆ ಆಹಾರವನ್ನೂ ಕುಡಿಯಲು ನೀರನ್ನು ಹಣಕೊಟ್ಟು ನಿಮ್ಮಿಂದ ಕೊಂಡುಕೊಳ್ಳುತ್ತೇವೆ. ಕಾಲ್ನಡಿಗೆಯಿಂದ ನಿಮ್ಮ ನಾಡನ್ನು ಹಾದು ಹೋಗುತ್ತೇವಷ್ಟೆ.
DEU 2:29 ನಾವು ಯೊರ್ದನಿನ ಆಚೆಗೆ ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶಕ್ಕೆ ಹೋಗುವವರಿದ್ದೇವೆ. ಸೇಯೀರಿನಲ್ಲಿ ವಾಸಮಾಡುವ ಏಸಾವನ ಮಕ್ಕಳೂ ಆರ್ ಪ್ರದೇಶದಲ್ಲಿ ವಾಸಮಾಡುವ ಮೋವಾಬ್ಯರೂ ನಮಗೆ ದಾರಿಕೊಟ್ಟಂತೆ ನೀವೂ ನಮಗೆ ಕೊಡಬೇಕು,” ಎಂದೆನು.
DEU 2:30 ಆದರೆ ಹೆಷ್ಬೋನಿನ ಅರಸನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಸಮ್ಮತಿಸಲಿಲ್ಲ. ಏಕೆಂದರೆ ಅವನನ್ನು ನಿಮ್ಮ ಕೈಯಲ್ಲಿ ಒಪ್ಪಿಸುವ ಹಾಗೆ ನಿಮ್ಮ ದೇವರಾದ ಯೆಹೋವ ದೇವರು ಅವನ ಬುದ್ಧಿಯನ್ನು ಮಂಕುಮಾಡಿ, ಹೃದಯವನ್ನು ಕಠಿಣಪಡಿಸಿದರು. ಈಗಾಗಲೇ ಅದು ನೆರವೇರಿದೆ.
DEU 2:31 ಇದಲ್ಲದೆ ಯೆಹೋವ ದೇವರು ನನಗೆ, “ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸುವುದಕ್ಕೆ ಆರಂಭಮಾಡಿದ್ದೇನೆ, ಅವನ ದೇಶವನ್ನು ಸೊತ್ತಾಗಿ ಹೊಂದುವಂತೆ ವಶಪಡಿಸಿಕೊಳ್ಳುವುದಕ್ಕೆ ಆರಂಭಮಾಡು,” ಎಂದು ಹೇಳಿದರು.
DEU 2:32 ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ನಮ್ಮೊಡನೆ ಯುದ್ಧಮಾಡುವುದಕ್ಕೆ ಯಹಚಗೆ ಹೊರಟುಬಂದನು.
DEU 2:33 ನಮ್ಮ ದೇವರಾದ ಯೆಹೋವ ದೇವರು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿದ್ದರಿಂದ, ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಸೋಲಿಸಿದೆವು.
DEU 2:34 ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತೆಗೆದುಕೊಂಡು, ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು. ಒಬ್ಬರನ್ನೂ ಉಳಿಸಲಿಲ್ಲ.
DEU 2:35 ಪಶುಗಳನ್ನು ಮಾತ್ರ ನಮಗೆ ತೆಗೆದುಕೊಂಡು, ಪಟ್ಟಣಗಳನ್ನು ಸೂರೆಮಾಡಿದೆವು.
DEU 2:36 ಅರ್ನೋನಿನ ತೀರದಲ್ಲಿರುವ ಅರೋಯೇರ್ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ. ನಮ್ಮ ದೇವರಾದ ಯೆಹೋವ ದೇವರು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದರು.
DEU 2:37 ಅಮ್ಮೋನಿಯರ ದೇಶದ ಯಬ್ಬೋಕ್ ನದಿಯ ಬಳಿಯಲ್ಲಿರುವ ಸ್ಥಳವನ್ನೂ ಪರ್ವತ ಪಟ್ಟಣವನ್ನೂ ನಮ್ಮ ದೇವರಾದ ಯೆಹೋವ ದೇವರು ನಮಗೆ ಬೇಡವೆಂದ ಕಾರಣ, ಆ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ.
DEU 3:1 ಆಗ ನಾವು ಹಿಂದಿರುಗಿ ಬಾಷಾನಿನ ಕಡೆಗೆ ಮೇಲಕ್ಕೆ ಹೊರಟೆವು. ಆಗ ಬಾಷಾನಿನ ಅರಸನಾದ ಓಗನು ತನ್ನ ಸಮಸ್ತ ಜನರ ಸಂಗಡ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈಗೆ ಹೊರಟುಬಂದನು.
DEU 3:2 ಆಗ ಯೆಹೋವ ದೇವರು ನನಗೆ, “ನೀನು ಅವನಿಗೆ ಭಯಪಡಬೇಡ. ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ, ಅವನ ಸಮಸ್ತ ಜನರನ್ನೂ, ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು.
DEU 3:3 ಈ ಪ್ರಕಾರ ನಮ್ಮ ದೇವರಾದ ಯೆಹೋವ ದೇವರು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲರನ್ನೂ ನಮ್ಮ ಕೈಗಳಲ್ಲಿ ಒಪ್ಪಿಸಿದರು. ಒಬ್ಬನಾದರೂ ತಪ್ಪಿಸಿಕೊಂಡು ಬದುಕುಳಿಯದಂತೆ ಅವರನ್ನು ಹೊಡೆದೆವು.
DEU 3:4 ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ಜಯಿಸಿದೆವು. ನಾವು ಅವರಿಂದ ವಶಪಡಿಸಿಕೊಳ್ಳದ ಪಟ್ಟಣವು ಒಂದೂ ಇರಲಿಲ್ಲ. ಬಾಷಾನಿನಲ್ಲಿರುವ ಓಗನ ರಾಜ್ಯದಲ್ಲಿ ಅಂದರೆ, ಅರ್ಗೋಬಿನ ಸಮಸ್ತ ಸುತ್ತಲಿನ ಪ್ರದೇಶದ ಅರವತ್ತು ಪಟ್ಟಣಗಳನ್ನು ತೆಗೆದುಕೊಂಡೆವು.
DEU 3:5 ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆ, ಬಾಗಿಲು, ಅಗುಳಿಗಳಿಂದ ಭದ್ರವಾಗಿದ್ದವು. ಅವುಗಳಲ್ಲದೆ ಬಯಲುಸೀಮೆಯ ಪಟ್ಟಣಗಳು ಬಹಳ ಇದ್ದವು.
DEU 3:6 ನಾವು ಹೆಷ್ಬೋನಿನ ಅರಸನಾದ ಸೀಹೋನನ ಪಟ್ಟಣಗಳಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು. ಪುರುಷರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು.
DEU 3:7 ಎಲ್ಲಾ ಪಶುಗಳನ್ನೂ ಪಟ್ಟಣಗಳನ್ನೂ ಸೂರೆಮಾಡಿಬಿಟ್ಟೆವು.
DEU 3:8 ಆ ಕಾಲದಲ್ಲಿ ನಾವು ಯೊರ್ದನ್ ನದಿಯ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರಸರ ಕೈಯಿಂದ ಸ್ವಾಧೀನಮಾಡಿಕೊಂಡೆವು.
DEU 3:9 ಹೆರ್ಮೋನಿಗೆ ಸೀದೋನ್ಯರು ಸಿರ್ಯೋನೆಂದೂ ಅಮೋರಿಯರು ಸೆನೀರ್ ಎಂದೂ ಕರೆಯುತ್ತಾರೆ.
DEU 3:10 ಬಯಲುಸೀಮೆಯ ಎಲ್ಲಾ ಪಟ್ಟಣಗಳನ್ನೂ, ಎಲ್ಲಾ ಗಿಲ್ಯಾದನ್ನೂ ಬಾಷಾನಿನಲ್ಲಿ ಓಗನ ರಾಜ್ಯದಲ್ಲಿ ಪಟ್ಟಣಗಳಾದ ಸಲ್ಕಾ ಎದ್ರೈವರೆಗೆ ಎಲ್ಲಾ ಬಾಷಾನನ್ನೂ ಸ್ವಾಧೀನಮಾಡಿಕೊಂಡೆವು.
DEU 3:11 ರೆಫಾಯರಲ್ಲಿ ಬಾಷಾನಿನ ಅರಸನಾದ ಓಗನು ಮಾತ್ರ ಉಳಿದಿದ್ದನು. ಅವನ ಮಂಚವು ಕಬ್ಬಿಣದ ಮಂಚ. ಅದು ಅಮ್ಮೋನಿಯರ ರಬ್ಬಾದಲ್ಲಿ ಈಗಲೂ ಉಂಟಲ್ಲವೋ? ಅದರ ಉದ್ದ ಪುರುಷನ ಕೈ ಅಳತೆಯ ಪ್ರಕಾರ ಒಂಬತ್ತು ಮೊಳ, ಅಗಲ ನಾಲ್ಕು ಮೊಳ ಇತ್ತು.
DEU 3:12 ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ಹಳ್ಳದ ಸಮೀಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು, ಅರ್ಧ ಗಿಲ್ಯಾದ್ ಬೆಟ್ಟವನ್ನೂ, ಅದರ ಪಟ್ಟಣಗಳನ್ನೂ ರೂಬೇನ್ಯರ ಪ್ರದೇಶದವರೆಗೂ, ಗಾದನ ಪ್ರದೇಶದವರೆಗೂ ಕೊಟ್ಟೆನು.
DEU 3:13 ಮಿಕ್ಕ ಗಿಲ್ಯಾದನ್ನು ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಗೋತ್ರಕ್ಕೆ ಕೊಟ್ಟೆನು. ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಸೀಮೆಯನ್ನೂ, ರೆಫಾಯರ ದೇಶವೆಂದು ಎನಿಸಿಕೊಳ್ಳುವ ಸಮಸ್ತ ಬಾಷಾನನ್ನೂ ಅವರಿಗೆ ಕೊಟ್ಟೆನು.
DEU 3:14 ಮನಸ್ಸೆಯ ಮಗ ಯಾಯೀರನು ಅರ್ಗೋಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯವರೆಗೆ ಸ್ವಾಧೀನಮಾಡಿಕೊಂಡು, ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನವರೆಗೆ ಹವ್ವೋತ್ ಯಾಯೀರೆಂದು ಹೆಸರಿಟ್ಟನು.
DEU 3:15 ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
DEU 3:16 ಗಿಲ್ಯಾದ್ ಮೊದಲುಗೊಂಡು ಅರ್ನೋನ್ ತಗ್ಗಿನವರೆಗೂ ಯಬ್ಬೋಕ್ ಹೊಳೆಯವರೆಗೂ ಇರುವ ಪ್ರದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಕೊಟ್ಟೆನು. ಅರ್ನೋನ್ ತಗ್ಗಿನ ಮಧ್ಯಭಾಗವೇ ಅವರ ಮೇರೆ. ಅವರಿಗೂ ಅಮ್ಮೋನಿಯರಿಗೂ ನಡುವೆ ಇರುವ ಯಬ್ಬೋಕ್ ಹೊಳೆಯು ಅವರ ಮೇರೆ.
DEU 3:17 ಅದಲ್ಲದೆ ಪಶ್ಚಿಮದಲ್ಲಿ ಅವರ ಪ್ರದೇಶ ಅರಾಬಾದ ಯೊರ್ದನ್ ನದಿಯವರೆಗೆ ಹರಡಿತ್ತು, ಅದರಲ್ಲಿ ಕಿನ್ನೆರೆತ್ ಮೊದಲ್ಗೊಂಡು ಪೂರ್ವದಲ್ಲಿರುವ ಪಿಸ್ಗಾದ ಕೆಳಗಿರುವ ಉಪ್ಪಿನ ಸಮುದ್ರವಾದ ಬಯಲು ಸಮುದ್ರದವರೆಗೆ ವ್ಯಾಪಿಸಿತ್ತು.
DEU 3:18 ಆ ಕಾಲದಲ್ಲಿ ನಾನು ರೂಬೇನ್ಯರಿಗೂ ಗಾದ್ಯರಿಗೂ ಮತ್ತು ಮನಸ್ಸೆಯ ಅರ್ಧ ಗೋತ್ರಕ್ಕೂ ಆಜ್ಞಾಪಿಸಿದ್ದೇನೆಂದರೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ದೇಶವನ್ನು ಸೊತ್ತಾಗಿ ಕೊಟ್ಟಿದ್ದಾರೆ. ನಿಪುಣರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲರ ಮುಂದೆ ಆಯುಧ ಧರಿಸಿಕೊಂಡು ನದಿದಾಟಿ ಹೋಗಬೇಕು.
DEU 3:19 ನಿಮಗೆ ಬಹಳ ಪಶುಗಳಿವೆ ಎಂದು ನನಗೆ ಗೊತ್ತಿದೆ. ಆದರೆ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಲಿ.
DEU 3:20 ಯೆಹೋವ ದೇವರು ನಿಮಗೆ ವಿಶ್ರಾಂತಿ ಕೊಟ್ಟ ಹಾಗೆಯೇ ನಿಮ್ಮ ಸಹೋದರರಿಗೂ ವಿಶ್ರಾಂತಿಯನ್ನು ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವರು. ಅದುವರೆಗೆ ನೀವು ಅವರೊಂದಿಗೆ ಸೇರಿ ಯುದ್ಧಕ್ಕೆ ಹೋಗಿರಿ. ಅನಂತರ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ನಿಮಗೆ ಕೊಟ್ಟ ಸ್ಥಳಗಳಗೆ ಹಿಂತಿರುಗಿ ಬರಬಹುದು.”
DEU 3:21 ಆ ಕಾಲದಲ್ಲಿ ನಾನು ಯೆಹೋಶುವನಿಗೆ ಆಜ್ಞಾಪಿಸಿ, “ನಿಮ್ಮ ದೇವರಾದ ಯೆಹೋವ ದೇವರು ಆ ಇಬ್ಬರು ಅರಸರಿಗೆ ಮಾಡಿದ್ದನ್ನೆಲ್ಲಾ ನಿನ್ನ ಕಣ್ಣುಗಳು ನೋಡಿದವು. ನೀನು ಹಾದುಹೋಗುವ ಎಲ್ಲಾ ರಾಜ್ಯಗಳನ್ನೂ ಯೆಹೋವ ದೇವರು ಹಾಗೆಯೇ ಮಾಡುವರು.
DEU 3:22 ನೀವು ಅವುಗಳಿಗೆ ಭಯಪಡಬೇಡಿರಿ, ನಿಮ್ಮ ದೇವರಾದ ಯೆಹೋವ ದೇವರೇ ನಿಮಗೋಸ್ಕರ ಯುದ್ಧಮಾಡುವರು,” ಎಂದೆನು.
DEU 3:23 ಆ ಕಾಲದಲ್ಲಿ ನಾನು ಯೆಹೋವ ದೇವರಿಗೆ:
DEU 3:24 “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಸೇವಕನಿಗೆ ನಿಮ್ಮ ಮಹತ್ವವನ್ನೂ ನಿಮ್ಮ ಹಸ್ತಬಲವನ್ನೂ ತೋರಿಸಲಾರಂಭಿಸಿದಿರಿ. ನಿಮ್ಮ ಮಹತ್ಕಾರ್ಯಗಳ ಹಾಗೆಯೂ, ನಿಮ್ಮ ಪರಾಕ್ರಮದ ಹಾಗೆಯೂ ಮಾಡಲು ಶಕ್ತರಾದ ದೇವರು ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ ಯಾರಿದ್ದಾರೆ?
DEU 3:25 ನಾನು ದಾಟಿ ಹೋಗಿ, ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೆಯ ದೇಶವನ್ನೂ ಆ ಒಳ್ಳೆಯ ಬೆಟ್ಟವನ್ನೂ ಲೆಬನೋನನ್ನೂ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಬಿನ್ನೈಸಿದೆನು.
DEU 3:26 ಆದರೆ ಯೆಹೋವ ದೇವರು ನಿಮ್ಮ ನಿಮಿತ್ತ ನನ್ನ ಮೇಲೆ ಕೋಪಮಾಡಿ, ನನ್ನ ಮನವಿಯನ್ನು ಕೇಳಲಿಲ್ಲ. ಯೆಹೋವ ದೇವರು ನನಗೆ, “ಇನ್ನು ಸಾಕು, ಈ ವಿಷಯದಲ್ಲಿ ನನ್ನ ಸಂಗಡ ಇನ್ನು ಮಾತನಾಡಬೇಡ.
DEU 3:27 ಪಿಸ್ಗಾದ ತುದಿಗೆ ಏರಿ, ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ, ಪೂರ್ವಕ್ಕೂ ಕಣ್ಣೆತ್ತಿ ಅದನ್ನು ಕಣ್ಣಾರೆ ನೋಡು. ಈ ಯೊರ್ದನನ್ನು ನೀನು ದಾಟಿ ಹೋಗುವುದಿಲ್ಲ.
DEU 3:28 ಆದರೆ ಯೆಹೋಶುವನಿಗೆ ಆಜ್ಞಾಪಿಸಿ, ಅವನಿಗೆ ದೃಢಮಾಡಿ ಬಲಪಡಿಸು. ಅವನು ಈ ಜನರ ಮುಂದೆ ದಾಟಿ ಹೋಗಿ, ನೀನು ನೋಡುವ ದೇಶವನ್ನು ಅವರಿಗೆ ಸ್ವಾಧೀನಪಡಿಸುವನು,” ಎಂದು ಹೇಳಿದರು.
DEU 3:29 ಆಗ ನಾವು ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು.
DEU 4:1 ಈಗ ಇಸ್ರಾಯೇಲರೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ, ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ, ನ್ಯಾಯಗಳನ್ನೂ ಕೇಳಿ, ಅವುಗಳನ್ನು ಕೈಗೊಳ್ಳಿರಿ.
DEU 4:2 ನಾನು ನಿಮಗೆ ಆಜ್ಞಾಪಿಸುವ ವಾಕ್ಯಕ್ಕೆ ಏನನ್ನೂ ಕೂಡಿಸಬೇಡಿರಿ, ಅದರಿಂದ ಏನನ್ನೂ ತೆಗೆಯಬೇಡಿರಿ. ಆದರೆ ನಾನು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಳ್ಳಬೇಕು.
DEU 4:3 ಬಾಳ್ ಪೆಯೋರನ ವಿಷಯದಲ್ಲಿ ಯೆಹೋವ ದೇವರು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು. ಬಾಳ್ ಪೆಯೋರನನ್ನು ಹಿಂಬಾಲಿಸಿದ ಜನರನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿದರಲ್ಲವೇ?
DEU 4:4 ಆದರೆ ನಿಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾದ ನೀವೆಲ್ಲರು ಇಂದಿನವರೆಗೆ ಬದುಕಿದ್ದೀರಿ.
DEU 4:5 ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಯೆಹೋವ ದೇವರು ನನಗೆ ಆಜ್ಞಾಪಿಸಿದ ಆಜ್ಞಾವಿಧಿಗಳನ್ನೂ ನಿಮಗೆ ಬೋಧಿಸಿದ್ದೇನೆ.
DEU 4:6 ಹೀಗಿರುವುದರಿಂದ ನೀವು ಅವುಗಳನ್ನು ಎಚ್ಚರದಿಂದ ಕೈಗೊಂಡು ಅನುಸರಿಸಿರಿ. ಏಕೆಂದರೆ ಇತರ ಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, “ನಿಶ್ಚಯವಾಗಿ ಇದು ದೊಡ್ಡ ಜನಾಂಗವು ಎಂತಹ ಜ್ಞಾನವೂ ವಿವೇಕವೂ ಉಳ್ಳ ಜನಾಂಗವಾಗಿದೆ” ಎನ್ನುವರು.
DEU 4:7 ನಾವು ನಮ್ಮ ದೇವರಾದ ಯೆಹೋವ ದೇವರಿಗೆ ಮೊರೆಯಿಡುವಾಗೆಲ್ಲಾ ಅವರು ಸಮೀಪವಾಗಿಯೇ ಇದ್ದಾರಲ್ಲಾ. ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವರು?
DEU 4:8 ಇದಲ್ಲದೆ ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನಿಯಮದ ಪ್ರಕಾರ ನೀತಿ ಮತ್ತು ನ್ಯಾಯನಿಯಮಗಳುಳ್ಳ ದೊಡ್ಡ ಜನಾಂಗ ಯಾವುದು?
DEU 4:9 ನಿಮ್ಮ ಕಣ್ಣುಗಳಿಂದ ನೋಡಿದ ಕಾರ್ಯಗಳನ್ನು ನೀವು ಮರೆಯದ ಹಾಗೆಯೂ, ನೀವು ಬದುಕುವ ದಿನಗಳೆಲ್ಲಾ ಅವು ನಿಮ್ಮ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು, ಕಾಪಾಡಿಕೊಳ್ಳಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ, ನಿಮ್ಮ ಮಕ್ಕಳ ಮಕ್ಕಳಿಗೂ ಬೋಧಿಸಿರಿ.
DEU 4:10 ನೀವು ಹೋರೇಬಿನಲ್ಲಿ ಯೆಹೋವ ದೇವರ ಮುಂದೆ ನಿಂತ ದಿವಸದಂದು ದೇವರು ನನಗೆ, “ಜನರನ್ನು ನನಗಾಗಿ ಕೂಡಿಸು, ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿರುವುದನ್ನು ಕಲಿತು, ತಮ್ಮ ಮಕ್ಕಳಿಗೂ ಬೋಧಿಸುವಂತೆ ನಾನು ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡುವೆನು,” ಎಂದರು.
DEU 4:11 ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ. ಆ ಬೆಟ್ಟವು ಕತ್ತಲೆಯಾಗಿದ್ದು, ಮೇಘಗಳೂ, ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದವರೆಗೆ ಬೆಂಕಿಯಿಂದ ಉರಿಯುತ್ತಿತ್ತು.
DEU 4:12 ಬೆಂಕಿಯ ಮಧ್ಯದೊಳಗಿಂದ ಯೆಹೋವ ದೇವರು ನಿಮ್ಮ ಸಂಗಡ ಮಾತಾಡಿದರು. ವಾಕ್ಯಗಳ ಧ್ವನಿಯನ್ನು ನೀವು ಕೇಳಿದಿರಿ, ಆದರೆ ಆಕಾರವನ್ನು ನೋಡಲಿಲ್ಲ, ಧ್ವನಿಯನ್ನು ಮಾತ್ರ ಕೇಳಿದಿರಿ.
DEU 4:13 ಅವರು ಹತ್ತು ಆಜ್ಞೆಗಳೆಂಬ ತಮ್ಮ ಒಡಂಬಡಿಕೆಯನ್ನು ನಿಮಗೆ ತಿಳಿಸಿ, ಅದನ್ನು ಮಾಡಬೇಕೆಂದು ನಿಮಗೆ ಆಜ್ಞಾಪಿಸಿ, ಅವುಗಳನ್ನು ಕಲ್ಲಿನ ಎರಡು ಹಲಗೆಗಳ ಮೇಲೆ ಬರೆದರು.
DEU 4:14 ನೀವು ದಾಟಿ ಹೋಗಿ, ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಮಾಡತಕ್ಕ ನ್ಯಾಯನಿಯಮಗಳನ್ನು ನಿಮಗೆ ಬೋಧಿಸಬೇಕೆಂದು ಆಗಲೇ ಯೆಹೋವ ದೇವರು ನನಗೆ ಆಜ್ಞಾಪಿಸಿದರು.
DEU 4:15 ಆದ್ದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರಿ. ಯೆಹೋವ ದೇವರು ಹೋರೇಬಿನಲ್ಲಿ ಬೆಂಕಿಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿಲ್ಲವಲ್ಲ.
DEU 4:16 ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಮಾಡಿಕೊಳ್ಳಬೇಡಿರಿ. ಎಂದರೆ, ಸ್ತ್ರೀಪುರುಷರ ರೂಪದಲ್ಲಾಗಲಿ,
DEU 4:17 ಭೂಮಿಯ ಮೇಲಿರುವ ಯಾವುದೊಂದು ಮೃಗದ ಹೋಲಿಕೆಯನ್ನೂ, ಆಕಾಶದಲ್ಲಿ ಹಾರುವಂಥ ರೆಕ್ಕೆಯುಳ್ಳ ಯಾವುದೊಂದು ಪಕ್ಷಿಯ ಹೋಲಿಕೆಯನ್ನೂ, ಭೂಮಿಯ ಮೇಲೆ ಹರಿದಾಡುವಂಥ ಕ್ರಿಮಿಕೀಟ ಯಾವುದೊಂದರ ಹೋಲಿಕೆಯನ್ನೂ,
DEU 4:18 ಭೂಮಿಯ ಕೆಳಗಿನ ನೀರುಗಳಲ್ಲಿರುವ ಯಾವುದೊಂದು ಮೀನಿನ ಹೋಲಿಕೆಯ ವಿಗ್ರಹವನ್ನೂ ಮಾಡಬಾರದು.
DEU 4:19 ನೀವು ನಿಮ್ಮ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ, ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ, ನಿಮ್ಮ ದೇವರಾದ ಯೆಹೋವ ದೇವರು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಕೊಟ್ಟಿದ್ದಾರೆ. ನೀವು ಅವುಗಳಿಗೆ ಅಡ್ಡಬಿದ್ದು, ಮರುಳುಗೊಂಡು ಅವುಗಳನ್ನು ಪೂಜಿಸದಂತೆಯೂ ನೋಡಿಕೊಳ್ಳಿರಿ.
DEU 4:20 ನಿಮ್ಮನ್ನಾದರೋ ಯೆಹೋವ ದೇವರು ತಮಗೆ ಸ್ವಕೀಯ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಈಜಿಪ್ಟ್ ದೇಶದಿಂದ ಹೊರತಂದರು.
DEU 4:21 ನಾನು ಯೊರ್ದನಿನ ಆಚೆಗೆ ಹೋಗದ ಹಾಗೆಯೂ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಆ ಒಳ್ಳೆಯ ದೇಶದಲ್ಲಿ ಪ್ರವೇಶಿಸದಂತೆ, ನಿಮ್ಮ ನಿಮಿತ್ತ ಯೆಹೋವ ದೇವರು ನನ್ನ ಮೇಲೆ ಕೋಪಮಾಡಿಕೊಂಡು ಪ್ರಮಾಣ ಮಾಡಿದರು.
DEU 4:22 ಆದರೆ ನಾನು ಈ ದೇಶದಲ್ಲಿ ಸಾಯಲೇಬೇಕು. ನಾನು ಯೊರ್ದನಿನ ಆಚೆಗೆ ಹೋಗತಕ್ಕದ್ದಲ್ಲ. ಆದರೆ ನೀವು ಆಚೆಗೆ ಹೋಗಿ, ಆ ಒಳ್ಳೆಯ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ.
DEU 4:23 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಡಬೇಡಿರಿ. ನಿಮ್ಮ ದೇವರಾದ ಯೆಹೋವ ದೇವರು ಪೂಜಿಸಬೇಡವೆಂದು ಹೇಳಿದ ಯಾವ ಕೆತ್ತಿದ ವಿಗ್ರಹವನ್ನು ಮಾಡಿಕೊಳ್ಳದಂತೆ ಜಾಗ್ರತೆಯಾಗಿರಿ.
DEU 4:24 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ದಹಿಸುವ ಅಗ್ನಿಯೂ, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರೂ ಆಗಿದ್ದಾರೆ.
DEU 4:25 ನಿಮ್ಮಿಂದ ಮಕ್ಕಳೂ, ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು, ತರುವಾಯ ಯಾವುದಾದರೂ ಕೆತ್ತಿದ ವಿಗ್ರಹವನ್ನು ಮಾಡಿ ನಿಮ್ಮನ್ನು ಕೆಡಿಸಿಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಅವರಿಗೆ ಕೋಪಗೊಳಿಸಿದರೆ,
DEU 4:26 ನಾನು ಈ ದಿನ ಆಕಾಶವನ್ನೂ, ಭೂಮಿಯನ್ನೂ ಸಾಕ್ಷಿಗೆ ಕರೆದು, ನಿಮಗೆ ಹೇಳುವುದೇನೆಂದರೆ, ನೀವು ಯೊರ್ದನನ್ನು ದಾಟಿ ಸ್ವಾಧೀನಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ, ಸಂಪೂರ್ಣವಾಗಿ ನಶಿಸುವಿರಿ.
DEU 4:27 ಆಗ ಯೆಹೋವ ದೇವರು ನಿಮ್ಮನ್ನು ದೇಶಗಳಲ್ಲಿ ಚದರಿಸಿಬಿಡುವರು. ಯೆಹೋವ ದೇವರು ನಿಮ್ಮನ್ನು ಅಟ್ಟಿದ ದೇಶಗಳ ಮಧ್ಯದಲ್ಲಿ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ.
DEU 4:28 ಅಲ್ಲಿ ನೀವು ಮನುಷ್ಯರ ಕೈಯಿಂದ ಮಾಡಿದ ಎಂದರೆ, ನೋಡದೆಯೂ, ಕೇಳದೆಯೂ, ಉಣ್ಣದೆಯೂ, ಮೂಸಿ ನೋಡದೆಯೂ ಇರುವಂಥ ಮರ ಮತ್ತು ಕಲ್ಲುಗಳಿಂದ ಮಾಡಿದ ದೇವರುಗಳನ್ನು ಸೇವಿಸುವಿರಿ.
DEU 4:29 ಆದರೆ ಅಲ್ಲಿಂದಲೂ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಅವರನ್ನು ಕಂಡುಕೊಳ್ಳುವಿರಿ.
DEU 4:30 ನೀವು ಇಕ್ಕಟ್ಟಿಗೆ ಗುರಿಯಾಗಿ ಇವೆಲ್ಲವುಗಳು ನಿಮಗೆ ಸಂಭವಿಸಿದಾಗ, ಕಡೇ ದಿವಸಗಳಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು ವಿಧೇಯರಾಗಿರಿ.
DEU 4:31 ನಿಮ್ಮ ದೇವರಾದ ಯೆಹೋವ ದೇವರು ಕರುಣೆಯುಳ್ಳ ದೇವರು, ಅವರು ನಿಮ್ಮನ್ನು ಕೈಬಿಡುವುದಿಲ್ಲ, ನಾಶಮಾಡುವುದಿಲ್ಲ, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನು ಮರೆಯುವುದಿಲ್ಲ.
DEU 4:32 ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿದ ಪೂರ್ವಕಾಲವನ್ನು ವಿಚಾರಿಸಿ ನೋಡಿರಿ. ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ವಿಚಾರಿಸಿರಿ. ಇಂಥ ಅದ್ಭುತಕಾರ್ಯ ಉಂಟಾಯಿತೇ? ಇಲ್ಲವೆ ಇಂಥ ಸುದ್ದಿ ಕೇಳಿದ್ದುಂಟ್ಟೋ?
DEU 4:33 ನೀವು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೋ?
DEU 4:34 ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿ ನಿಮ್ಮ ಕಣ್ಣ ಮುಂದೆಯೇ ನಿಮಗೆ ಮಾಡಿದ್ದೆಲ್ಲದರ ಹಾಗೆ ಯಾವ ದೇವರು ಒಂದು ಜನಾಂಗವನ್ನು ಮತ್ತೊಂದು ಜನಾಂಗದಿಂದ ತಮಗಾಗಿ ಆಯ್ದು ತೆಗೆದುಕೊಳ್ಳುವುದಕ್ಕೆ ಪರೀಕ್ಷೆಗಳು, ಗುರುತುಗಳು, ಅದ್ಭುತಗಳು ಇವುಗಳ ಮೂಲಕವಾಗಿಯೂ, ಯುದ್ಧದಿಂದಲೂ, ಭುಜಬಲದಿಂದಲೂ, ಚಾಚಿದ ತೋಳಿನಿಂದಲೂ, ದೊಡ್ಡ ಭಯಗಳಿಂದಲೂ ಪ್ರಯತ್ನ ಮಾಡಿದರೋ?
DEU 4:35 ಯೆಹೋವ ದೇವರಲ್ಲದೆ ಮತ್ತೊಬ್ಬರಿಲ್ಲ. ಅವರೇ ದೇವರೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ.
DEU 4:36 ದೇವರು ನಿಮ್ಮ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತಮ್ಮ ಸ್ವರವನ್ನು ನಿಮಗೆ ಕೇಳಮಾಡಿದರು, ಭೂಮಿಯ ಮೇಲೆ ತಮ್ಮ ದೊಡ್ಡ ಬೆಂಕಿಯನ್ನು ನಿಮಗೆ ತೋರಿಸಿದರು. ನೀವು ಬೆಂಕಿಯೊಳಗಿಂದ ಅವರ ಮಾತುಗಳನ್ನು ಕೇಳಿದಿರಿ.
DEU 4:37 ದೇವರು ನಿಮ್ಮ ಪಿತೃಗಳನ್ನು ಪ್ರೀತಿಮಾಡಿದ್ದರಿಂದ, ಅವರ ತರುವಾಯ ಅವರ ಸಂತತಿಯನ್ನು ಆಯ್ದುಕೊಂಡು, ನಿಮ್ಮನ್ನು ತಮ್ಮ ದೃಷ್ಟಿಯಲ್ಲಿ ತಮ್ಮ ದೊಡ್ಡ ಬಲದಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
DEU 4:38 ದೇವರು ನಿಮಗಿಂತ ದೊಡ್ಡದಾದ, ನಿಮಗಿಂತ ಬಲಿಷ್ಠವಾದ ಜನಾಂಗಗಳನ್ನು ನಿಮ್ಮ ಮುಂದೆ ಓಡಿಸಿ, ನಿಮ್ಮನ್ನು ಅವರ ದೇಶದೊಳಗೆ ಬರಮಾಡಿ, ಈ ದಿನ ನೀವು ಇರುವಂತೆ ನಿಮಗೆ ಅವರ ದೇಶವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ.
DEU 4:39 ಹೀಗಿರುವುದರಿಂದ ಮೇಲಿನ ಆಕಾಶದಲ್ಲಿಯೂ, ಕೆಳಗಿನ ಭೂಮಿಯಲ್ಲಿಯೂ ಯೆಹೋವ ದೇವರೇ ದೇವರೆಂದೂ ಮತ್ತೊಬ್ಬರಿಲ್ಲವೆಂಬುದನ್ನೂ ನೀವು ಈಗ ಗ್ರಹಿಸಿಕೊಂಡು ಮನಸ್ಸಿಗೆ ತಂದುಕೊಳ್ಳಿರಿ.
DEU 4:40 ನಿಮಗೂ, ನಿಮ್ಮ ತರುವಾಯ ನಿಮ್ಮ ಮಕ್ಕಳಿಗೂ ಒಳ್ಳೆಯದು ಆಗುವ ಹಾಗೆಯೂ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸದಾಕಾಲಕ್ಕೆ ಕೊಡುವ ಭೂಮಿಯ ಮೇಲೆ ನೀವು ಬಹಳ ದಿವಸವಿರುವ ಹಾಗೆಯೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅನುಸರಿಸಿರಿ.
DEU 4:41 ಮೋಶೆಯು ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯ ನಗರಗಳನ್ನು ಪ್ರತ್ಯೇಕ ಮಾಡಿದನು.
DEU 4:42 ಯಾವ ಹಗೆಯಿಲ್ಲದೆ ತನ್ನ ನೆರೆಯವನನ್ನು ಕೈತಪ್ಪಿ ಕೊಂದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳುವಂತೆ ಆ ನಗರಗಳನ್ನು ನೇಮಿಸಿದನು.
DEU 4:43 ಅವು ಯಾವುವೆಂದರೆ, ರೂಬೇನ್ಯರಿಗೆ ಮರುಭೂಮಿಯ ಬಯಲಿನಲ್ಲಿ ಇರುವ ಬೆಚೆರ್, ಗಾದನವರಿಗೆ ಗಿಲ್ಯಾದಿನ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.
DEU 4:44 ಮೋಶೆಯು ಇಸ್ರಾಯೇಲರ ಮುಂದೆ ಇಟ್ಟ ದೇವರ ನಿಯಮವು ಇದೇ.
DEU 4:45 ಇಸ್ರಾಯೇಲರು ಈಜಿಪ್ಟಿನೊಳಗಿಂದ ಹೊರಟ ಮೇಲೆ ಮೋಶೆಯು ಇಸ್ರಾಯೇಲರಿಗೆ ನುಡಿದ ಸಾಕ್ಷಿಗಳೂ, ನಿಯಮಗಳೂ, ನ್ಯಾಯಗಳೂ ಇವೇ.
DEU 4:46 ಯೊರ್ದನ್ ನದಿಯ ಆಚೆಯಲ್ಲಿ ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಅವನನ್ನು ಮೋಶೆಯೂ, ಇಸ್ರಾಯೇಲರೂ ಈಜಿಪ್ಟಿನೊಳಗಿಂದ ಹೊರಟ ಮೇಲೆ ಸೋಲಿಸಿದರು.
DEU 4:47 ಸೀಹೋನನ ದೇಶವನ್ನೂ, ಬಾಷಾನಿನ ಅರಸನಾದ ಓಗನ ದೇಶವನ್ನೂ ಯೊರ್ದನಿನ ಆಚೆಯಲ್ಲಿ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ದೇಶಗಳನ್ನೂ ಗೆದ್ದುಕೊಂಡರು.
DEU 4:48 ಅರ್ನೋನ್ ನದಿಯ ತೀರದಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸಿರ್ಯೋನ ಪರ್ವತದವರೆಗೂ ಹರಡಿತ್ತು.
DEU 4:49 ಯೊರ್ದನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿ ಇರುವ ಎಲ್ಲಾ ಅರಾಬಾದನ್ನು ಸಹ, ಪಿಸ್ಗಾದ ಬೆಟ್ಟದ ತಗ್ಗಿನಲ್ಲಿರುವ ಬಯಲಿನ ಸಮುದ್ರದವರೆಗೆ ಸ್ವಾಧೀನಮಾಡಿಕೊಂಡರು.
DEU 5:1 ಮೋಶೆಯು ಇಸ್ರಾಯೇಲರನ್ನೆಲ್ಲಾ ಕರೆದು ಅವರಿಗೆ ಹೀಗೆ ಹೇಳಿದನು: ಇಸ್ರಾಯೇಲರೇ, ನಾನು ಈ ಹೊತ್ತು ನೀವು ಕೇಳುವಂತೆ ಹೇಳುವ ನಿಯಮಗಳನ್ನೂ, ನ್ಯಾಯಗಳನ್ನೂ ಕೇಳಿರಿ. ಇವುಗಳನ್ನು ಕಲಿತು ಕೈಗೊಂಡು ನಡೆಯಬೇಕು.
DEU 5:2 ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಂಡರು.
DEU 5:3 ಯೆಹೋವ ದೇವರು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದರು. ನಾವೆಲ್ಲರೂ ಈ ಹೊತ್ತು ಇಲ್ಲಿ ಜೀವದಿಂದಿದ್ದೇವೆ.
DEU 5:4 ಮುಖಾಮುಖಿಯಾಗಿ ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದರು.
DEU 5:5 ಆ ಕಾಲದಲ್ಲಿ ನಾನು ಯೆಹೋವ ದೇವರ ವಾಕ್ಯವನ್ನು ನಿಮಗೆ ತಿಳಿಸಿದ ಹಾಗೆ ಯೆಹೋವ ದೇವರಿಗೂ, ನಿಮಗೂ ನಡುವೆ ನಿಂತಿದ್ದೆನು. ಏಕೆಂದರೆ ನೀವು ಆ ಬೆಂಕಿಗೆ ಭಯಪಟ್ಟು, ಬೆಟ್ಟದ ಮೇಲೆ ಏರಲಿಲ್ಲ. ದೇವರು ಹೇಳಿದ್ದೇನೆಂದರೆ:
DEU 5:6 “ನಿನ್ನನ್ನು ಈಜಿಪ್ಟ್ ದೇಶದಿಂದಲೂ, ದಾಸತ್ವದ ನಾಡಿನೊಳಗಿಂದಲೂ ಹೊರಗೆ ತಂದ ನಿನ್ನ ದೇವರಾದ ಯೆಹೋವ ದೇವರು ನಾನೇ.
DEU 5:7 “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.
DEU 5:8 ಮೇಲಿನ ಆಕಾಶದಲ್ಲಾಗಲಿ, ಕೆಳಗಿನ ಭೂಮಿಯಲ್ಲಾಗಲಿ, ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಇರುವ ಯಾವುದರ ವಿಗ್ರಹವನ್ನಾಗಲಿ, ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.
DEU 5:9 ನೀನು ಅವುಗಳಿಗೆ ಅಡ್ಡ ಬೀಳಬಾರದು ಮತ್ತು ಆರಾಧಿಸಲೂಬಾರದು. ಏಕೆಂದರೆ ನಿನ್ನ ದೇವರಾದ ನಾನು, ನನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತನಾದ ಯೆಹೋವ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆತಾಯಿಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳವರೆಗೂ ಬರಮಾಡುವೆನು.
DEU 5:10 ಆದರೆ ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಸಾವಿರ ತಲೆಗಳವರೆಗೆ ಪ್ರೀತಿ ತೋರಿಸುತ್ತೇನೆ.
DEU 5:11 ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು, ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.
DEU 5:12 ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.
DEU 5:13 ಆರು ದಿನಗಳಲ್ಲಿ ನೀನು ದುಡಿದು, ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
DEU 5:14 ಆದರೆ ಏಳನೆಯ ದಿನ ನಿನ್ನ ದೇವರಾದ ಯೆಹೋವ ದೇವರ ಸಬ್ಬತ್ ದಿನವಾಗಿದೆ. ಅದರಲ್ಲಿ ನೀನಾಗಲೀ, ನಿನ್ನ ಮಗನಾಗಲೀ, ನಿನ್ನ ಮಗಳಾಗಲೀ, ನಿನ್ನ ದಾಸನಾಗಲೀ, ನಿನ್ನ ದಾಸಿಯಾಗಲೀ, ನಿನ್ನ ಎತ್ತೂ, ನಿನ್ನ ಕತ್ತೆಯೂ, ನಿನ್ನ ಎಲ್ಲಾ ಪಶುಗಳೂ, ನಿನ್ನ ಊರಲ್ಲಿರುವ ಅನ್ಯದೇಶದವರು ಸಹ ಯಾವ ಕೆಲಸವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು.
DEU 5:15 ನೀನು ಈಜಿಪ್ಟ್ ದೇಶದಲ್ಲಿ ದಾಸನಾಗಿದ್ದಿಯೆಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ಬಲವಾದ ಹಸ್ತದಿಂದಲೂ ಚಾಚಿದ ಭುಜದಿಂದಲೂ ಹೊರಗೆ ಬರಮಾಡಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಯೆಹೋವ ದೇವರು ನಿನಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾರೆ.
DEU 5:16 ನಿನ್ನ ದಿವಸಗಳು ಹೆಚ್ಚಾಗುವ ಹಾಗೆಯೂ, ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನಿನಗೆ ಒಳ್ಳೆಯದಾಗುವ ಹಾಗೆಯೂ, ನಿನ್ನ ದೇವರಾದ ಯೆಹೋವ ದೇವರು ಆಜ್ಞಾಪಿಸಿದಂತೆ ನಿನ್ನ ತಂದೆಯನ್ನೂ, ನಿನ್ನ ತಾಯಿಯನ್ನೂ ಗೌರವಿಸು.
DEU 5:17 ಕೊಲೆ ಮಾಡಬೇಡ.
DEU 5:18 ವ್ಯಭಿಚಾರ ಮಾಡಬೇಡ.
DEU 5:19 ಕದಿಯಬೇಡ.
DEU 5:20 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.
DEU 5:21 ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ನಿನ್ನ ನೆರೆಯವನ ಮನೆಯನ್ನೂ, ಅವನ ಹೊಲವನ್ನೂ, ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.”
DEU 5:22 ಈ ಮಾತುಗಳನ್ನು ಯೆಹೋವ ದೇವರು ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು, ಇವುಗಳ ಮಧ್ಯದೊಳಗಿಂದ, ನಿಮ್ಮ ಸಭೆಗೆಲ್ಲಾ ಕೇಳಿಸುವಂತೆ ಮಹಾ ಸ್ವರದಿಂದ ನುಡಿದರು. ಅವರು ಹೆಚ್ಚೇನೂ ಕೂಡಿಸಲಿಲ್ಲ. ದೇವರು ಈ ಮಾತುಗಳನ್ನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟರು.
DEU 5:23 ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ, ನೀವು ಕತ್ತಲೆಯಿಂದ ಆ ಸ್ವರವನ್ನು ಕೇಳಿದಾಗ, ನಿಮ್ಮ ಗೋತ್ರಗಳ ಮುಖ್ಯಸ್ಥರೂ, ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ,
DEU 5:24 “ಇಗೋ, ನಮ್ಮ ದೇವರಾದ ಯೆಹೋವ ದೇವರು ತಮ್ಮ ಮಹಿಮೆಯನ್ನೂ, ತಮ್ಮ ಘನವನ್ನೂ ನಮಗೆ ತೋರಿಸಿದ್ದಾರೆ. ಅವರ ಸ್ವರವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ. ದೇವರು ಮನುಷ್ಯರ ಸಂಗಡ ಮಾತನಾಡಿದ ಮೇಲೂ, ಅವರು ಬದುಕುತ್ತಾರೆಂದು ಈ ಹೊತ್ತು ನೋಡಿದ್ದೇವೆ.
DEU 5:25 ಹಾಗಾದರೆ ಈಗ ನಾವು ಏಕೆ ಸಾಯಬೇಕು? ಈ ದೊಡ್ಡ ಬೆಂಕಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವುದು. ನಾವು ಇನ್ನೂ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿದರೆ ಸಾಯುತ್ತೇವೆ.
DEU 5:26 ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳಗಿಂದ ಮಾತನಾಡುವ ಜೀವವುಳ್ಳ ದೇವರ ಸ್ವರವನ್ನು ಕೇಳಿ ಬದುಕಿದರು?
DEU 5:27 ನೀನೇ ಸಮೀಪಕ್ಕೆ ಹೋಗಿ ನಮ್ಮ ದೇವರಾದ ಯೆಹೋವ ದೇವರು ಹೇಳುವುದನ್ನೆಲ್ಲಾ ಕೇಳಿ, ನಮ್ಮ ದೇವರಾದ ಯೆಹೋವ ದೇವರು ನಿನಗೆ ಹೇಳಿದ್ದನ್ನೆಲ್ಲಾ ನಮಗೆ ಹೇಳು. ಆಗ ನಾವು ಕೇಳಿ ಅದರಂತೆ ಮಾಡುತ್ತೇವೆ,” ಎಂದು ಹೇಳಿದಿರಿ.
DEU 5:28 ನೀವು ನನ್ನ ಹತ್ತಿರ ಮಾತನಾಡಿದಾಗ, ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ ನನಗೆ, “ಈ ಜನರು ನಿನಗೆ ಹೇಳಿದ ಮಾತುಗಳನ್ನು ಕೇಳಿದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೆಯದು.
DEU 5:29 ಅವರು ನನಗೆ ಭಯಪಟ್ಟು, ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಗೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೆಯದು. ಆಗ ಅವರಿಗೂ, ಅವರ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವುದು.”
DEU 5:30 “ನೀನು ಹೋಗಿ ಅವರಿಗೆ, ‘ನಿಮ್ಮ ಡೇರೆಗಳಿಗೆ ಹಿಂದಿರುಗಿರಿ,’ ಎಂದು ಹೇಳು.
DEU 5:31 ನೀನಾದರೋ ಇಲ್ಲಿ ನನ್ನ ಸಂಗಡ ನಿಂತುಕೋ. ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸೊತ್ತಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞಾನಿಯಮ ಮತ್ತು ನ್ಯಾಯಗಳನ್ನು ನಿಮಗೆ ಹೇಳುವೆನು.”
DEU 5:32 ಹೀಗಿರುವುದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಅವುಗಳನ್ನು ಕೈಗೊಂಡು ನಡೆಯಬೇಕು. ಎಡಕ್ಕಾದರೂ, ಬಲಕ್ಕಾದರೂ ತಿರುಗಬೇಡಿರಿ.
DEU 5:33 ನೀವು ಬದುಕುವ ಹಾಗೆಯೂ, ನಿಮಗೆ ಒಳ್ಳೆಯದಾಗುವ ಹಾಗೆಯೂ, ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗಗಳಲ್ಲೇ ನಡೆದುಕೊಳ್ಳಬೇಕು.
DEU 6:1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.
DEU 6:2 ನೀವೂ, ನಿಮ್ಮ ಮಕ್ಕಳೂ, ನಿಮ್ಮ ಮೊಮ್ಮಕ್ಕಳೂ ತಮ್ಮ ಜೀವನದ ದಿವಸಗಳಲ್ಲೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಕೈಗೊಳ್ಳುವ ಹಾಗೆಯೂ, ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಾನು ನಿಮಗೆ ಕೊಡುವ ದೇವರ ಎಲ್ಲಾ ತೀರ್ಪುಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಬೇಕು.
DEU 6:3 ಹೀಗಿರುವುದರಿಂದ ಓ ಇಸ್ರಾಯೇಲರೇ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ದೇಶದಲ್ಲಿ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಬಹಳವಾಗಿ ಹೆಚ್ಚುವ ಹಾಗೆಯೂ ಲಕ್ಷ್ಯವಿಟ್ಟು ಕೇಳಿ ವಿಧೇಯರಾಗಿರಿ.
DEU 6:4 ಇಸ್ರಾಯೇಲರೇ, ಕೇಳಿರಿ: ದೇವರಾದ ಯೆಹೋವ ನಮ್ಮ ದೇವರು; ಯೆಹೋವ ದೇವರು ಒಬ್ಬರೇ.
DEU 6:5 ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
DEU 6:6 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು.
DEU 6:7 ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು.
DEU 6:8 ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು. ಅವುಗಳನ್ನು ನಿಮ್ಮ ಹಣೆಗೂ ಕಟ್ಟಿಕೊಳ್ಳಬೇಕು.
DEU 6:9 ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
DEU 6:10 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಸೇರಿಸಿ, ನೀವು ಕಟ್ಟಿದ ದೊಡ್ಡದಾದ ಒಳ್ಳೆಯ ಪಟ್ಟಣಗಳನ್ನೂ,
DEU 6:11 ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.
DEU 6:12 ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ಯೆಹೋವ ದೇವರನ್ನು ಮರೆಯದ ಹಾಗೆ ನೋಡಿಕೊಳ್ಳಿರಿ.
DEU 6:13 ನಿಮ್ಮ ದೇವರಾದ ಯೆಹೋವ ದೇವರಿಗೆ ನೀವು ಭಯಪಡಬೇಕು. ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು ಮತ್ತು ಅವರ ಹೆಸರಿನಲ್ಲಿ ಆಣೆಯಿಟ್ಟುಕೊಳ್ಳಬೇಕು.
DEU 6:14 ನಿಮ್ಮ ಸುತ್ತಲಿರುವ ಜನರ ದೇವರುಗಳಾಗಿರುವ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.
DEU 6:15 ಏಕೆಂದರೆ ನಿಮ್ಮ ಮಧ್ಯದಲ್ಲಿರುವ ನಿಮ್ಮ ಯೆಹೋವ ದೇವರು ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರು. ನಿಮ್ಮ ದೇವರ ಕೋಪವು ನಿಮ್ಮ ಮೇಲೆ ಉರಿಯಲು, ಅವರು ನಿಮ್ಮನ್ನು ಭೂಮಿಯ ಮೇಲಿನಿಂದ ತೆಗೆದುಹಾಕುವರು.
DEU 6:16 ನೀವು ಮಸ್ಸದಲ್ಲಿ ಪರೀಕ್ಷಿಸಿದ ಹಾಗೆ ನಿಮ್ಮ ದೇವರಾದ ಯೆಹೋವ ದೇವರನ್ನು ಪರೀಕ್ಷಿಸಬಾರದು.
DEU 6:17 ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೂ, ಅವರು ನಿಮಗೆ ನೀಡಿದ ಷರತ್ತುಗಳನ್ನೂ, ಅವರ ತೀರ್ಪುಗಳನ್ನೂ ಎಚ್ಚರಿಕೆಯಿಂದ ಕೈಗೊಳ್ಳಬೇಕು.
DEU 6:18 ನಿಮಗೆ ಒಳ್ಳೆಯದಾಗುವಂತೆಯೂ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ಒಳ್ಳೆಯ ದೇಶವನ್ನು ನೀವು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವಂತೆಯೂ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೂ, ಒಳ್ಳೆಯದನ್ನೂ ಮಾಡಿರಿ.
DEU 6:19 ಆಗ ಯೆಹೋವ ದೇವರು ತಾವು ಹೇಳಿದಂತೆ ನಿಮ್ಮ ಎಲ್ಲಾ ಶತ್ರುಗಳನ್ನು ನಿಮ್ಮ ಮುಂದೆಯೇ ಓಡಿಸಿಬಿಡುವರು.
DEU 6:20 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, “ನಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಈ ಷರತ್ತುಗಳ, ತೀರ್ಪುಗಳ ಹಾಗು ನಿಯಮಗಳ ಅರ್ಥ ಏನು?” ಎಂದು ನಿಮ್ಮನ್ನು ಕೇಳುವರು.
DEU 6:21 ಆಗ ನೀವು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಫರೋಹನನಿಗೆ ದಾಸರಾಗಿದ್ದೆವು. ಯೆಹೋವ ದೇವರು ಬಲವಾದ ಕೈಯಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
DEU 6:22 ಯೆಹೋವ ದೇವರು ನಮ್ಮ ಕಣ್ಣ ಮುಂದೆಯೇ ಈಜಿಪ್ಟಿನ ಮೇಲೆಯೂ, ಫರೋಹನ ಮೇಲೆಯೂ, ಅವನ ಎಲ್ಲಾ ಮನೆಯ ಮೇಲೆಯೂ ಭಯಂಕರವಾದ ದೊಡ್ಡ ಗುರುತುಗಳನ್ನೂ, ಅದ್ಭುತಗಳನ್ನೂ ಕಳುಹಿಸಿದರು.
DEU 6:23 ಆದರೆ ದೇವರು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶವನ್ನು ನಮಗೆ ಕೊಡುವಂತೆಯೂ ನಾವು ಅದರಲ್ಲಿ ಪ್ರವೇಶ ಮಾಡುವಂತೆಯೂ ನಮ್ಮನ್ನು ಈಜಿಪ್ಟಿನಿಂದ ಬರಮಾಡಿದರು.
DEU 6:24 ನಮಗೆ ಎಂದೆಂದಿಗೂ ಒಳ್ಳೆಯದಾಗುವಂತೆಯೂ, ಇಂದಿನಂತೆ ನಾವು ಬದುಕುವಂತೆಯೂ, ನಾವು ಈ ನಿಯಮಗಳನ್ನೆಲ್ಲಾ ಕೈಗೊಂಡು ನಮ್ಮ ಯೆಹೋವ ದೇವರಿಗೆ ಭಯಪಡಬೇಕೆಂದು ಅವರು ನಮಗೆ ಆಜ್ಞಾಪಿಸಿದ್ದಾರೆ.
DEU 6:25 ಅವರು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಗೊಂಡು ನಡೆದರೆ, ಅದು ನಮಗೆ ನೀತಿಯಾಗಿರುವುದು,” ಎಂದು ಹೇಳಬೇಕು.
DEU 7:1 ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಬರಮಾಡಿದಾಗ, ಅವರು ನಿಮಗಿಂತ ದೊಡ್ಡವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಎಂದರೆ, ಗಿರ್ಗಾಷಿಯರನ್ನೂ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವರು.
DEU 7:2 ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ದಂಡಿಸಿ ಸಂಪೂರ್ಣವಾಗಿ ತೆಗೆದುಹಾಕಿಬಿಡುವರು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು. ಅವರಿಗೆ ದಯೆ ತೋರಿಸಬಾರದು.
DEU 7:3 ಅವರ ಸಂಗಡ ಮದುವೆ ಮಾಡಿಕೊಳ್ಳಬಾರದು. ನಿಮ್ಮ ಪುತ್ರಿಯರನ್ನು ಅವರ ಮಕ್ಕಳಿಗೆ ಕೊಡಬಾರದು. ನಿಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳಬಾರದು.
DEU 7:4 ಏಕೆಂದರೆ ಅವರು ನಿಮ್ಮ ಪುತ್ರರನ್ನು ಬೇರೆ ದೇವರುಗಳನ್ನು ಸೇವಿಸುವ ಹಾಗೆ ನನ್ನಿಂದ ತೊಲಗಿಸಿಬಿಡುವರು. ಆಗ ಯೆಹೋವ ದೇವರು ನಿಮ್ಮ ಮೇಲೆ ಕೋಪಗೊಂಡು, ನಿಮ್ಮನ್ನು ಬೇಗ ದಂಡಿಸಿಬಿಡುವರು.
DEU 7:5 ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಬೇಕು. ಅವರ ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ನೀವು ಅವರಿಗೆ ಹೀಗೆ ಮಾಡತಕ್ಕದ್ದು.
DEU 7:6 ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ತಮಗೆ ಸ್ವಂತ ಜನರಾಗಿರಲು ತಮ್ಮ ಆಸ್ತಿಯಾಗಿ ಆರಿಸಿಕೊಂಡಿದ್ದಾರೆ.
DEU 7:7 ನೀವು ಎಲ್ಲಾ ಜನರಿಗಿಂತ ಹೆಚ್ಚಾಗಿರುವ ಕಾರಣ ಯೆಹೋವ ದೇವರು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ. ನೀವು ಎಲ್ಲಾ ಜನರಿಗಿಂತ ಸಂಖ್ಯಾತರು.
DEU 7:8 ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದಲೂ, ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸುವುದರಿಂದಲೂ, ಯೆಹೋವ ದೇವರು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿಮ್ಮನ್ನು ಗುಲಾಮತನದಿಂದಲೂ, ಈಜಿಪ್ಟಿನ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದರು.
DEU 7:9 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರು ಒಬ್ಬರೇ ದೇವರು; ಅವರೇ ನಂಬಿಗಸ್ತರಾದ ದೇವರು; ತಮ್ಮನ್ನು ಪ್ರೀತಿಸಿ, ತಮ್ಮ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಅವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಸಾವಿರ ತಲೆಗಳವರೆಗೂ ತೋರಿಸುವರು.
DEU 7:10 ಆದರೆ, ತಮ್ಮನ್ನು ಹಗೆಮಾಡುವವರಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ಅವರನ್ನು ತೆಗೆದುಹಾಕುತ್ತಾರೆ. ದೇವರು ತಮ್ಮನ್ನು ಹಗೆಮಾಡುವವರಿಗೆ ತಡಮಾಡದೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ ಎಂದು ತಿಳಿದುಕೊಳ್ಳಿರಿ.
DEU 7:11 ಹೀಗಿರುವುದರಿಂದ ನಾನು ಈ ಹೊತ್ತು ನಿಮಗೆ ಕೊಡುವ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನು ಕೈಗೊಳ್ಳಬೇಕು.
DEU 7:12 ನೀವು ಈ ನ್ಯಾಯಗಳನ್ನು ಕೇಳಿ ಕಾಪಾಡಿ ನಡೆದುಕೊಂಡರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನೂ, ಕರುಣೆಯನ್ನೂ ನಿಮಗೋಸ್ಕರ ನೆರವೇರಿಸುವರು.
DEU 7:13 ಅವರು ನಿಮ್ಮನ್ನು ಪ್ರೀತಿಸಿ, ನಿಮ್ಮನ್ನು ಆಶೀರ್ವದಿಸಿ, ನಿಮ್ಮನ್ನು ಅಭಿವೃದ್ಧಿಗೊಳಿಸಿ ಮತ್ತು ನಿಮಗೆ ಕೊಡುತ್ತೇನೆಂದು ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ದೇಶದಲ್ಲಿ ನಿಮ್ಮ ಗರ್ಭದ ಫಲವನ್ನೂ ಅಂದರೆ, ಭೂಮಿಯ ಹುಟ್ಟುವಳಿಯನ್ನೂ, ನಿಮ್ಮ ಧಾನ್ಯವನ್ನೂ, ನಿಮ್ಮ ಹೊಸ ದ್ರಾಕ್ಷಾರಸವನ್ನೂ, ನಿಮ್ಮ ಎಣ್ಣೆಯನ್ನೂ, ನಿಮ್ಮ ಪಶುಗಳನ್ನೂ, ನಿಮ್ಮ ಕುರಿಗಳ ಮಂದೆಗಳನ್ನೂ ಆಶೀರ್ವದಿಸುವರು.
DEU 7:14 ಎಲ್ಲಾ ಜನರಿಗಿಂತಲೂ ನೀವು ಆಶೀರ್ವಾದಕ್ಕೆ ಪಾತ್ರರಾಗಿರುವಿರಿ. ನಿಮ್ಮೊಳಗೆ ಸ್ತ್ರೀ ಪುರುಷರಲ್ಲಾಗಲಿ, ಹೆಣ್ಣು ಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ.
DEU 7:15 ಯೆಹೋವ ದೇವರು ಎಲ್ಲಾ ರೋಗಗಳನ್ನು ನಿಮ್ಮಿಂದ ತೆಗೆದುಬಿಡುವರು. ನಿಮಗೆ ತಿಳಿದಿರುವ ಈಜಿಪ್ಟಿನ ಕ್ರೂರರೋಗಗಳನ್ನು ನಿಮ್ಮ ಮೇಲೆ ಬರಮಾಡದ, ನಿಮ್ಮನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರಮಾಡುವರು.
DEU 7:16 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಒಪ್ಪಿಸುವ ಜನರನ್ನೆಲ್ಲಾ ನೀವು ಸಂಹರಿಸಬೇಕು. ಅವರ ಮೇಲೆ ನೀವು ಕಟಾಕ್ಷವಿಡಬಾರದು. ಅವರ ದೇವರುಗಳನ್ನು ಆರಾಧಿಸಬಾರದು. ಏಕೆಂದರೆ ಅವು ನಿಮಗೆ ಉರುಲಾಗುವವು.
DEU 7:17 “ಈ ಜನಾಂಗದವರು ನಮಗಿಂತ ಹೆಚ್ಚು ಮಂದಿ ಇದ್ದಾರೆ. ನಾವು ಹೇಗೆ ಅವರನ್ನು ವಶಮಾಡಿಕೊಳ್ಳಬೇಕು?” ಎಂದು ನಿಮ್ಮ ಹೃದಯದಲ್ಲಿ ಅಂದುಕೊಳ್ಳುವಿರೋ?
DEU 7:18 ನೀವು ಅವರಿಗೆ ಭಯಪಡಬೇಡಿರಿ. ನಿಮ್ಮ ದೇವರಾದ ಯೆಹೋವ ದೇವರು ಫರೋಹನಿಗೂ, ಎಲ್ಲಾ ಈಜಿಪ್ಟಿನವರಿಗೂ ಮಾಡಿದ್ದನ್ನು
DEU 7:19 ಕಣ್ಣಾರೆ ನೋಡಿದ ದೊಡ್ಡ ಉಪದ್ರವಗಳನ್ನೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ, ಅದ್ಭುತಗಳನ್ನೂ, ದೇವರ ಬಲವಾದ ಹಸ್ತವನ್ನೂ, ಚಾಚಿದ ತೋಳನ್ನೂ ನೀವು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀವು ಯಾವ ಜನರಿಗೆ ಭಯಪಡುತ್ತೀರೋ, ಆ ಜನರಿಗೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ಹಾಗೆಯೇ ಮಾಡುವರು.
DEU 7:20 ಇದಲ್ಲದೆ ಉಳಿದವರೂ, ನಿಮಗೆ ಮರೆಯಾಗಿ ಉಳುಕೊಂಡವರೂ ನಾಶವಾಗುವ ತನಕ ನಿಮ್ಮ ದೇವರಾದ ಯೆಹೋವ ದೇವರು ಕಣಜದ ಹುಳವನ್ನು ಅವರಲ್ಲಿ ಕಳುಹಿಸುವರು.
DEU 7:21 ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಭಯಭಕ್ತಿಗೆ ಯೋಗ್ಯರಾದ ಮಹಾ ದೇವರಾಗಿ ನಿಮ್ಮ ಮಧ್ಯದಲ್ಲಿದ್ದಾರೆ.
DEU 7:22 ನಿಮ್ಮ ದೇವರಾದ ಯೆಹೋವ ದೇವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವರು. ನೀವು ಅವರನ್ನು ತ್ವರೆಯಾಗಿ ಸಂಹರಿಸಬಾರದು. ಹಾಗೆ ಮಾಡಿದರೆ, ಕಾಡುಮೃಗಗಳು ಹೆಚ್ಚಾಗಿ ನಿಮಗೆ ತೊಂದರೆಕೊಡುವುವು.
DEU 7:23 ಆದರೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮಗೆ ಒಪ್ಪಿಸಿಬಿಡುವರು. ಅವರು ಸೋತುಹೋಗಿ ಇಲ್ಲದಂತಾಗುವರು.
DEU 7:24 ದೇವರು ಅವರ ಅರಸರನ್ನು ನಿಮಗೆ ಒಪ್ಪಿಸುವರು. ನೀವು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ದಂಡಿಸುವಿರಿ. ನೀವು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿಮ್ಮ ಮುಂದೆ ನಿಲ್ಲಲಾರನು.
DEU 7:25 ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ಅವುಗಳ ಮೇಲಿರುವ ಬೆಳ್ಳಿಬಂಗಾರವನ್ನು ಆಶಿಸಿ ನೀವು ತೆಗೆದುಕೊಳ್ಳಬಾರದು. ಅದು ನಿಮಗೆ ಉರುಲಾದೀತು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.
DEU 7:26 ನೀವು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿಮ್ಮ ಮನೆಗೆ ತೆಗೆದುಕೊಂಡು ಬರಬಾರದು. ಅದನ್ನು ಕೆಟ್ಟದಾಗಿ ಪರಿಗಣಿಸಿ ಮತ್ತು ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು, ಏಕೆಂದರೆ ಅದು ಶಾಪಗ್ರಸ್ತವಾದದ್ದು.
DEU 8:1 ನೀವು ಬದುಕಿ ಅಭಿವೃದ್ಧಿಯಾಗಿ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಹೋಗಿ, ಅದನ್ನು ಸ್ವಾಧೀನ ಮಾಡಿಕೊಳ್ಳುವ ಹಾಗೆ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಲಕ್ಷ್ಯವಿಟ್ಟು ಕೈಗೊಳ್ಳಿರಿ.
DEU 8:2 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ತಗ್ಗಿಸಿ, ನೀವು ದೇವರ ಆಜ್ಞೆಗಳನ್ನು ಕಾಪಾಡುವಿರೋ ಇಲ್ಲವೋ ಎಂದು ನಿಮ್ಮ ಹೃದಯವನ್ನು ಪರೀಕ್ಷಿಸುವುದಕ್ಕೆ ನಿಮ್ಮನ್ನು ನಡೆಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಿರಿ.
DEU 8:3 ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ ಯೆಹೋವ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾನೆಂದು ನಿಮಗೆ ಬೋಧಿಸುವಂತೆ ದೇವರು ನಿಮ್ಮನ್ನು ಹಸಿವೆಯಿಂದ ಬಳಲುವಂತೆ ಮಾಡಿದರು. ನೀವು ತಿಳಿಯದಂಥ ಮತ್ತು ನಿಮ್ಮ ಪಿತೃಗಳು ತಿಳಿಯದಂಥ ಮನ್ನವನ್ನು ನಿಮಗೆ ಉಣ್ಣಲು ಕೊಟ್ಟರು.
DEU 8:4 ಈ ನಲವತ್ತು ವರ್ಷ ನಿಮ್ಮ ಮೇಲಿರುವ ವಸ್ತ್ರಗಳು ಹಳೆಯದಾಗಲಿಲ್ಲ, ನಿಮ್ಮ ಕಾಲುಗಳು ಬಾತುಹೋಗಲಿಲ್ಲ.
DEU 8:5 ಇದಲ್ಲದೆ ಒಬ್ಬನು ತನ್ನ ಮಗನನ್ನು ಶಿಸ್ತುಪಡಿಸುವ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಶಿಸ್ತಿನಿಂದ ನಡೆಸುತ್ತಾ ಬಂದರೆಂದು ನಿಮ್ಮ ಹೃದಯದಲ್ಲಿ ತಿಳಿದುಕೊಳ್ಳಿರಿ.
DEU 8:6 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಂಡು, ಅವರ ಮಾರ್ಗಗಳಲ್ಲಿ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.
DEU 8:7 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಒಳ್ಳೆಯ ದೇಶಕ್ಕೆ ಬರಮಾಡುತ್ತಾರೆ. ಅದು ನೀರಿನ ಹಳ್ಳಗಳೂ, ತಗ್ಗುಗಳಲ್ಲಿಯೂ, ಬೆಟ್ಟದಲ್ಲಿಯೂ, ಉಕ್ಕುವ ಬುಗ್ಗೆಗಳೂ ಇರುವ ದೇಶವಾಗಿರುತ್ತದೆ.
DEU 8:8 ಆ ದೇಶದಲ್ಲಿ ಗೋಧಿಯೂ, ಜವೆಗೋಧಿಯೂ, ದ್ರಾಕ್ಷೆಯೂ, ಅಂಜೂರ ಮರಗಳೂ, ದಾಳಿಂಬೆಗಳೂ ಇರುತ್ತವೆ. ಅದು ಓಲಿವ್ ಎಣ್ಣೆಯೂ, ಜೇನೂ ಉಳ್ಳ ದೇಶವೇ.
DEU 8:9 ಆ ದೇಶದಲ್ಲಿ ನಿಮಗೆ ಆಹಾರಕ್ಕೆ ಕೊರತೆ ಇರುವುದಿಲ್ಲ. ಅಲ್ಲಿ ಯಾವುದರ ಕೊರತೆ ನಿಮಗೆ ಆಗದು. ಅದರ ಕಲ್ಲುಗಳಲ್ಲಿ ಕಬ್ಬಿಣವನ್ನೂ, ಅದರ ಬೆಟ್ಟಗಳಲ್ಲಿ ತಾಮ್ರದ ಗಣಿಗಳನ್ನೂ ಅಗೆಯಬಹುದು.
DEU 8:10 ನೀವು ತಿಂದು ತೃಪ್ತಿ ಹೊಂದಿದಾಗ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಒಳ್ಳೆಯ ದೇಶದಲ್ಲಿ ಅವರನ್ನು ಸ್ತುತಿಸಬೇಕು.
DEU 8:11 ನಾನು ಈ ಹೊತ್ತು ನಿಮಗೆ ಕೊಡುವ ದೇವರ ಆಜ್ಞೆಗಳನ್ನೂ ನಿಯಮಗಳನ್ನೂ ತೀರ್ಪುಗಳನ್ನೂ ಕೈಕೊಳ್ಳದವರೂ, ಯೆಹೋವ ದೇವರನ್ನು ಮರೆಯದವರೂ ಆಗದಂತೆ ನೋಡಿಕೊಳ್ಳಿರಿ.
DEU 8:12 ನೀವು ತಿಂದು ತೃಪ್ತಿಹೊಂದಿ, ಒಳ್ಳೆಯ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ,
DEU 8:13 ನಿಮ್ಮ ಪಶು ಕುರಿಗಳು ಹೆಚ್ಚಿದಾಗಲೂ, ಬೆಳ್ಳಿಬಂಗಾರ ನಿಮಗೆ ಹೆಚ್ಚಿದಾಗಲೂ, ನಿಮಗಿರುವ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ,
DEU 8:14 ನಿಮ್ಮ ಹೃದಯವು ಗರ್ವಗೊಂಡು, ನಿಮ್ಮನ್ನು ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ ನಿಮ್ಮ ದೇವರಾದ ಯೆಹೋವ ದೇವರನ್ನೇ ಮರೆತುಬಿಡಬೇಡಿರಿ.
DEU 8:15 ದೇವರು ಅಗ್ನಿಸರ್ಪಗಳೂ, ಚೇಳುಗಳೂ ತುಂಬಿದ ಮತ್ತು ನೀರಿಲ್ಲದ ಆ ಭಯಂಕರವಾದ ವಿಶಾಲ ಮರುಭೂಮಿಯಲ್ಲಿ ನಿಮ್ಮನ್ನು ನಡೆಸಿ, ಗಟ್ಟಿಯಾದ ಬಂಡೆಯೊಳಗಿಂದ ನಿಮಗೆ ನೀರು ಬರಮಾಡಿದರು.
DEU 8:16 ನಿಮ್ಮನ್ನು ದೀನತ್ವಕೆ ಒಳಪಡಿಸಿ, ಪರೀಕ್ಷಿಸಿದ ನಂತರ, ಕಡೆಯಲ್ಲಿ ನಿಮಗೆ ಒಳ್ಳೆಯದನ್ನು ಮಾಡುವಂತೆ ನಿಮ್ಮ ಪಿತೃಗಳು ಅರಿಯದ ಮನ್ನವನ್ನು ಮರುಭೂಮಿಯಲ್ಲಿ ನಿಮಗೆ ಪೋಷಿಸಿದರು.
DEU 8:17 ನಿಮ್ಮ ದೇವರಾದ ಯೆಹೋವ ದೇವರನ್ನು ಮರೆತು, “ನಮ್ಮ ಹಸ್ತ ಬಲ ಸಾಮರ್ಥ್ಯವೇ ನಮಗೆ ಈ ಆಸ್ತಿಯನ್ನು ಸಂಪಾದಿಸಿತು,” ಎಂದು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೊಳ್ಳಿರಿ.
DEU 8:18 ನಿಮ್ಮ ದೇವರಾದ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರೇ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸುವಂತೆ ಇಂದು ನೀವು ಇಷ್ಟು ಆಸ್ತಿಯನ್ನು ಸಂಪಾದಿಸುವ ಸಾಮರ್ಥ್ಯವನ್ನು ನಿಮಗೆ ಕೊಟ್ಟಿದ್ದಾರೆ.
DEU 8:19 ಒಂದು ವೇಳೆ ನೀವು ನಿಮ್ಮ ಯೆಹೋವ ದೇವರನ್ನು ಮರೆತು, ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ, ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧವಾಗಿ ಈ ಹೊತ್ತು ಸಾಕ್ಷಿ ಹೇಳುತ್ತೇನೆ.
DEU 8:20 ನೀವು ನಿಮ್ಮ ಯೆಹೋವ ದೇವರ ಮಾತಿಗೆ ವಿಧೇಯರಾಗದ ಕಾರಣ ಅವರು ನಿಮ್ಮ ಮುಂದೆ ನಾಶಮಾಡುವ ಇತರ ಜನಾಂಗಗಳ ಹಾಗೆಯೇ ನೀವೂ ನಾಶವಾಗಿಹೋಗುವಿರಿ.
DEU 9:1 ಇಸ್ರಾಯೇಲರೇ, ಕೇಳಿರಿ, ನೀವು ಹೋಗಿ ನಿಮಗಿಂತ ದೊಡ್ಡ, ಬಲಿಷ್ಠ ಜನಾಂಗಗಳನ್ನೂ, ಆಕಾಶದವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಳ್ಳುವುದಕ್ಕೆ ಈ ಹೊತ್ತು ಯೊರ್ದನ್ ನದಿಯನ್ನು ದಾಟಲಿದ್ದೀರಿ.
DEU 9:2 ಆ ನಾಡಿನ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ. “ಅನಾಕ್ಯರ ಮುಂದೆ ಯಾರು ನಿಲ್ಲುವರು?” ಎಂಬ ಮಾತನ್ನು ಅವರ ಬಗ್ಗೆ ಕೇಳಿದ್ದೀರಿ.
DEU 9:3 ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.
DEU 9:4 ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ತೆಗೆದುಹಾಕಿದಾಗ, “ಯೆಹೋವ ದೇವರು ನಮ್ಮನ್ನು ಈ ದೇಶವನ್ನು ಸ್ವಾಧೀನಪಡಿಸಲು ಕರೆದುಕೊಂಡು ಬಂದಿದ್ದು ನಮ್ಮ ನೀತಿಯ ನಿಮಿತ್ತವೇ,” ಎಂದು ನೀವು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳಬಾರದು. ಆ ಜನಾಂಗಗಳ ಕೆಟ್ಟತನದ ನಿಮಿತ್ತವೇ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
DEU 9:5 ನಿಮ್ಮ ನೀತಿಗೋಸ್ಕರವೂ, ನಿಮ್ಮ ಹೃದಯದ ಯಥಾರ್ಥತೆಗೋಸ್ಕರವೂ ನೀವು ಅವರ ದೇಶವನ್ನು ಸ್ವತಂತ್ರಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆ ಜನಾಂಗಗಳ ಕೆಟ್ಟತನಕ್ಕೋಸ್ಕರವೂ, ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
DEU 9:6 ಹೀಗಿರುವುದರಿಂದ ನಿಮ್ಮ ನೀತಿಗೋಸ್ಕರ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ಒಳ್ಳೆಯ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೊಡುವುದಿಲ್ಲವೆಂದು ನೀವು ತಿಳಿದುಕೊಳ್ಳಬೇಕು. ಏಕೆಂದರೆ ನೀವು ಹಟಮಾರಿ ಜನಾಂಗವಾಗಿದ್ದೀರಿ.
DEU 9:7 ನೀವು ಮರುಭೂಮಿಯಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ. ಮರೆಯಬೇಡಿರಿ. ನೀವು ಈಜಿಪ್ಟ್ ದೇಶದಿಂದ ಹೊರಟ ದಿವಸ ಮೊದಲ್ಗೊಂಡು ಈ ಸ್ಥಳಕ್ಕೆ ಬರುವವರೆಗೆ ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುತ್ತಿದ್ದೀರಿ.
DEU 9:8 ನೀವು ಹೋರೇಬಿನಲ್ಲಿಯೂ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದಾಗ, ಅವರು ನಿಮ್ಮನ್ನು ನಿಮ್ಮ ಮೇಲೆ ಸಿಟ್ಟುಮಾಡಿಕೊಂಡು ನಾಶಮಾಡಬೇಕೆಂದಿದ್ದರು.
DEU 9:9 ಆ ಕಲ್ಲಿನ ಹಲಗೆಗಳು ಅಂದರೆ, ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ, ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ.
DEU 9:10 ಆಗ ಯೆಹೋವ ದೇವರು ನನಗೆ ತಮ್ಮ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು. ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿನದಲ್ಲಿ ಹೇಳಿದ ಆಜ್ಞೆಗಳೆಲ್ಲಾ ಆ ಹಲಗೆಗಳಲ್ಲಿದ್ದವು.
DEU 9:11 ನಲವತ್ತು ದಿವಸ ಹಗಲು ರಾತ್ರಿಗಳಾದ ಮೇಲೆ ಯೆಹೋವ ದೇವರು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು.
DEU 9:12 ಆಗ ಯೆಹೋವ ದೇವರು, “ಎದ್ದು ಇಲ್ಲಿಂದ ಬೇಗ ಇಳಿದು ಹೋಗು. ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು.
DEU 9:13 ಇದಲ್ಲದೆ ಯೆಹೋವ ದೇವರು ನನಗೆ, “ನಾನು ಈ ಜನರನ್ನು ನೋಡಿದ್ದೇನೆ. ಇಗೋ, ಇದು ಆಜ್ಞೆಗೆ ವಿಧೇಯವಾಗದ ಜನಾಂಗವೇ.
DEU 9:14 ನನ್ನನ್ನು ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು, ನಿಮ್ಮನ್ನು ಅವರಿಗಿಂತ ಬಲಿಷ್ಠವಾದ ಜನಾಂಗವಾಗಿ ಮಾಡುವೆನು,” ಎಂದು ಹೇಳಿದರು.
DEU 9:15 ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು. ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು. ಒಡಂಬಡಿಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು.
DEU 9:16 ನಾನು ನೋಡಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಎರಕ ಹೊಯ್ದ ಕರುವನ್ನು ನಿಮಗೆ ಮಾಡಿಕೊಂಡು, ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗ ಬಿಟ್ಟುಬಿಟ್ಟು ಹೋಗಿದ್ದಿರಿ.
DEU 9:17 ಆಗ ನಾನು ಆ ಎರಡು ಹಲಗೆಗಳನ್ನು ತೆಗೆದುಕೊಂಡು ನನ್ನ ಕೈಯಿಂದ ಬಿಸಾಡಿ, ನಿಮ್ಮ ಮುಂದೆ ಒಡೆದು ಹಾಕಿದೆನು.
DEU 9:18 ಆಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಲವತ್ತು ದಿವಸ ಹಗಲುರಾತ್ರಿ ಊಟಮಾಡದೆ, ನೀರು ಕುಡಿಯದೆ, ಯೆಹೋವ ದೇವರ ಮುಂದೆ ಬಿದ್ದಿದ್ದೆನು.
DEU 9:19 ಏಕೆಂದರೆ ಯೆಹೋವ ದೇವರು ನಿಮ್ಮನ್ನು ನಾಶಮಾಡುವಂತೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು. ಆದರೆ ಆ ಸಾರಿ ಕೂಡ ಯೆಹೋವ ದೇವರು ನನ್ನ ಬೇಡಿಕೆಯನ್ನು ಕೇಳಿದರು.
DEU 9:20 ಆರೋನನನ್ನು ನಾಶಮಾಡುವಂತೆ ಯೆಹೋವ ದೇವರು ಅವನ ಮೇಲೆಯೂ ಬಹಳ ಕೋಪಗೊಂಡರು. ಆದ್ದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆ ಮಾಡಿದೆನು.
DEU 9:21 ಇದಲ್ಲದೆ ನೀವು ಯಾವದರ ಮೂಲಕ ಪಾಪವನ್ನು ಮಾಡಿದ್ದೀರೋ ಆ ಚಿನ್ನದ ಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿದೆನು.
DEU 9:22 ನೀವು ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಲ್ಲಿಯೂ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದಿರಿ.
DEU 9:23 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿ, “ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ,” ಎಂದು ಹೇಳಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ನಂಬಲಿಲ್ಲ. ಅವರ ಮಾತನ್ನೂ ಕೇಳಲಿಲ್ಲ.
DEU 9:24 ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದೀರಿ.
DEU 9:25 ಹೀಗಿರಲಾಗಿ ಯೆಹೋವ ದೇವರು ನಿಮ್ಮನ್ನು ನಾಶಮಾಡುತ್ತೇನೆಂದು ಹೇಳಿದ್ದರಿಂದ, ನಾನು ಮುಂಚೆ ಬಿದ್ದುಕೊಂಡ ಹಾಗೆಯೇ ನಲವತ್ತು ದಿವಸ ಹಗಲುರಾತ್ರಿ ಯೆಹೋವ ದೇವರ ಮುಂದೆ ಬಿದ್ದಿದ್ದೆನು.
DEU 9:26 ನಾನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಮಹಿಮೆಯಿಂದ ವಿಮೋಚಿಸಿ, ಬಲವಾದ ಕೈಯಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರನ್ನು ನಾಶಮಾಡಬೇಡಿ.
DEU 9:27 ನಿಮ್ಮ ದಾಸರಾದ ಅಬ್ರಹಾಮ್, ಇಸಾಕ್, ಯಾಕೋಬರನ್ನು ಜ್ಞಾಪಕಮಾಡಿಕೊಳ್ಳಿರಿ. ಈ ಜನರ ಕಾಠಿಣ್ಯದ ಮೇಲೆಯೂ, ಅವರ ದುಷ್ಟತ್ವದ ಮೇಲೆಯೂ, ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡಿ.
DEU 9:28 ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ, ಆ ದೇಶದವರು, ‘ಯೆಹೋವ ದೇವರು ಇಸ್ರಾಯೇಲರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
DEU 9:29 ಆದರೂ ನೀವು ನಿಮ್ಮ ದೊಡ್ಡ ಶಕ್ತಿಯಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಹೊರಗೆ ಬರಮಾಡಿದ ನಿಮ್ಮ ಜನವೂ ನಿಮ್ಮ ಸೊತ್ತೂ ಇವರೇ,” ಎಂದು ಹೇಳಿದೆನು.
DEU 10:1 ಆ ಕಾಲದಲ್ಲಿ ಯೆಹೋವ ದೇವರು ನನಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ನೀನು ಕೆತ್ತಿಕೊಂಡು, ಬೆಟ್ಟವನ್ನೇರಿ ನನ್ನ ಬಳಿಗೆ ಬಾ. ಒಂದು ಮರದ ಮಂಜೂಷವನ್ನು ಮಾಡಿಕೊಳ್ಳಬೇಕು.
DEU 10:2 ಆಗ ನೀನು ಒಡೆದ ಆ ಮೊದಲಿನ ಹಲಗೆಗಳ ಮೇಲಿದ್ದ ಮಾತುಗಳನ್ನು ಈ ಹಲಗೆಗಳ ಮೇಲೆ ಬರೆಯುವೆನು. ಆಮೇಲೆ ನೀನು ಅವುಗಳನ್ನು ಮಂಜೂಷದಲ್ಲಿ ಇಡಬೇಕು,” ಎಂದು ಹೇಳಿದರು.
DEU 10:3 ಈ ಪ್ರಕಾರ ನಾನು ಜಾಲಿ ಮರದ ಮಂಜೂಷವನ್ನು ಮಾಡಿ, ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳಂತೆ ಕೆತ್ತಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟವನ್ನೇರಿದೆನು.
DEU 10:4 ಆ ಹಲಗೆಗಳ ಮೇಲೆ ಯೆಹೋವ ದೇವರು ಮುಂಚೆ ಬರೆದಿದ್ದ ಪ್ರಕಾರ ಬರೆದರು. ಅವರು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿವಸದಲ್ಲಿ ಹೇಳಿದ ಆ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟರು.
DEU 10:5 ತರುವಾಯ ನಾನು ಬೆಟ್ಟದಿಂದ ಇಳಿದುಬಂದು, ಆ ಹಲಗೆಗಳನ್ನು ಯೆಹೋವ ದೇವರು ನನಗೆ ಆಜ್ಞಾಪಿಸಿದ ಹಾಗೆ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಅವು ಅಲ್ಲಿಯೇ ಇರುತ್ತವೆ.
DEU 10:6 ಇಸ್ರಾಯೇಲರು ಯಾಕಾನನ ಮಕ್ಕಳ ಬಾವಿಗಳ ಬಳಿಯಿಂದ ಬೇರೋತದಿಂದ ಮೋಸೇರಕ್ಕೆ ಹೊರಟಾಗ, ಆರೋನನು ಅಲ್ಲಿ ಮರಣಹೊಂದಿದನು. ಅಲ್ಲೇ ಅವನನ್ನು ಹೂಳಿಟ್ಟೆವು. ಅವನ ಮಗ ಎಲಿಯಾಜರನು ಅವನ ಬದಲಿಗೆ ಯಾಜಕನಾದನು.
DEU 10:7 ಅಲ್ಲಿಂದ ಅವರು ಗುದ್ಗೋದಕ್ಕೂ, ಗುದ್ಗೋದದಿಂದ ನೀರಿನ ಪ್ರವಾಹಗಳುಳ್ಳ ದೇಶವಾದ ಯೊಟ್ಬಾತಕ್ಕೂ ಪ್ರಯಾಣಮಾಡಿದರು.
DEU 10:8 ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ.
DEU 10:9 ಆದ್ದರಿಂದ ಲೇವಿಯರಿಗೆ ಅವರ ಸಹೋದರರ ಸಂಗಡ ಸ್ವಂತವಾದ ಭೂಸ್ವಾಸ್ತ್ಯವು ದೊರೆಯಲಿಲ್ಲ. ನಿಮ್ಮ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದಂತೆ ಯೆಹೋವ ದೇವರೇ ಅವರ ಸೊತ್ತು.
DEU 10:10 ಇದಲ್ಲದೆ ನಾನು ಮೊದಲಿನಂತೆ ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿ ನಿಂತೆನು. ಯೆಹೋವ ದೇವರು ಆ ಕಾಲದಲ್ಲಿ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
DEU 10:11 ಯೆಹೋವ ದೇವರು ನನಗೆ, “ಜನರ ಮುಂದೆ ಹೋಗು, ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ದೇಶವನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,” ಎಂದು ಆಜ್ಞಾಪಿಸಿದರು.
DEU 10:12 ಈಗ ಇಸ್ರಾಯೇಲರೇ, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದುಕೊಂಡು, ಅವರನ್ನು ಪ್ರೀತಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ.
DEU 10:13 ನಾನು ಈ ಹೊತ್ತು ನಿಮ್ಮ ಮೇಲಿಗಾಗಿ ನಿಮಗೆ ಆಜ್ಞಾಪಿಸುವ ಯೆಹೋವ ದೇವರ ಆಜ್ಞೆಗಳನ್ನೂ ಅವರ ನಿಮಯಗಳನ್ನೂ ಕಾಪಾಡುವುದೇ ಹೊರತು, ಮತ್ತೇನೂ ನಮ್ಮ ದೇವರಾಗಿರುವ ಯೆಹೋವ ದೇವರು ನಿಮ್ಮಿಂದ ಕೇಳುತ್ತಾರೆ?
DEU 10:14 ಆಕಾಶವೂ ಉನ್ನತಾಕಾಶವೂ ಭೂಮಿಯೂ ಅದರಲ್ಲಿರುವಂಥಾದ್ದೆಲ್ಲವೂ ನಿಮ್ಮ ದೇವರಾಗಿರುವ ಯೆಹೋವ ದೇವರವುಗಳೇ.
DEU 10:15 ನಿಮ್ಮ ಪಿತೃಗಳ ಮೇಲೆ ಯೆಹೋವ ದೇವರು ತಾವೇ ಮನಸ್ಸಿಟ್ಟು, ಅವರನ್ನು ಪ್ರೀತಿಸಿ, ಅವರ ಸಂತಾನವಾಗಿರುವ ನಿಮ್ಮನ್ನು ಈ ಹೊತ್ತು ಇರುವ ಪ್ರಕಾರ ಎಲ್ಲಾ ಜನರೊಳಗಿಂದ ಆರಿಸಿಕೊಂಡರು.
DEU 10:16 ಹೀಗಿರುವುದರಿಂದ ನಿಮ್ಮ ಹೃದಯದ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಹಟಮಾರಿಗಳಾಗಿರಬೇಡಿರಿ.
DEU 10:17 ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ದೇವರುಗಳ ದೇವರು, ಕರ್ತರ ಕರ್ತರು, ದೇವಾಧಿದೇವರು, ಪರಾಕ್ರಮಿಯೂ, ಭಯಭಕ್ತಿಗೆ ಪಾತ್ರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ.
DEU 10:18 ಅವರು ತಂದೆ ಇಲ್ಲದವರಿಗೂ, ವಿಧವೆಯರಿಗೂ ನ್ಯಾಯ ದೊರಕಿಸುತ್ತಾರೆ. ಪರದೇಶಿಯರನ್ನು ಪ್ರೀತಿಸಿ ಅನ್ನ, ವಸ್ತ್ರ ಕೊಡುತ್ತಾರೆ.
DEU 10:19 ಹೀಗಿರುವುದರಿಂದ ನೀವು ಪರದೇಶಿಯರನ್ನು ಪ್ರೀತಿಸಿರಿ. ಏಕೆಂದರೆ ನೀವು ಈಜಿಪ್ಟಿನಲ್ಲಿ ಪರದೇಶಿಗಳಾಗಿದ್ದೀರಿ.
DEU 10:20 ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡಬೇಕು. ಅವರ ಸೇವೆಮಾಡಿ ಅವರಿಗೆ ಅಂಟಿಕೊಂಡು, ಅವರ ಹೆಸರಿನಲ್ಲಿ ಪ್ರಮಾಣಮಾಡಬೇಕು.
DEU 10:21 ನೀವು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿಮಗೆ ಮಾಡಿದ ಅವರೇ ನಿಮ್ಮ ಸ್ತೋತ್ರವು. ಅವರೇ ನಿಮ್ಮ ದೇವರು.
DEU 10:22 ಎಪ್ಪತ್ತು ಮಂದಿಯಾಗಿ ನಿಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡಿದ್ದಾರೆ.
DEU 11:1 ಹೀಗಿರುವುದರಿಂದ ನಿಮ್ಮ ಯೆಹೋವ ದೇವರನ್ನು ಪ್ರೀತಿಸಿ, ಅವರ ಅಪೇಕ್ಷೆ, ಅವರ ತೀರ್ಪು, ಅವರ ನಿಯಮ ಹಾಗು ಅವರ ಆಜ್ಞೆಗಳನ್ನು ಯಾವಾಗಲೂ ಕೈಗೊಳ್ಳಬೇಕು.
DEU 11:2 ನಿಮಗೆ ಈ ಹೊತ್ತು ತಿಳಿಯಬೇಕಾದದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರ ಶಿಕ್ಷಣವನ್ನು ಅನುಭವಿಸಿದ್ದು ನಿಮ್ಮ ಮಕ್ಕಳಲ್ಲ: ದೇವರ ಮಹತ್ವವನ್ನೂ, ಅವರ ಬಲವಾದ ಕೈಯನ್ನೂ, ಅವರು ಚಾಚಿದ ಭುಜವನ್ನೂ;
DEU 11:3 ಅಂದರೆ, ದೇವರು ಈಜಿಪ್ಟ್ ಮಧ್ಯದಲ್ಲಿ ಈಜಿಪ್ಟಿನ ಅರಸನಾದ ಫರೋಹನಿಗೆ ಮತ್ತು ಅವನ ಎಲ್ಲಾ ದೇಶಕ್ಕೆ ಮಾಡಿದ ಅವರ ಸೂಚಕಕಾರ್ಯಗಳನ್ನೂ ನೀವೇ ಅನುಭವಿಸಿ ನೋಡಿದ್ದೀರಿ;
DEU 11:4 ದೇವರು ಈಜಿಪ್ಟಿನ ಸೈನ್ಯಕ್ಕೆ, ಅವರ ಕುದುರೆಗಳಿಗೆ ಮತ್ತು ರಥಗಳಿಗೆ ಮಾಡಿದ್ದನ್ನು ಅಂದರೆ, ಅವರು ನಿಮ್ಮನ್ನು ಹಿಂದಟ್ಟುವಾಗ ಕೆಂಪುಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ, ಸಂಪೂರ್ಣವಾಗಿ ಅವರನ್ನು ನಾಶಮಾಡಿದ್ದನ್ನು ಸಹ ನೀವು ನೋಡಿದ್ದೀರಿ;
DEU 11:5 ನೀವು ಈ ಸ್ಥಳಕ್ಕೆ ಸೇರುವ ತನಕ ಯೆಹೋವ ದೇವರು ಮರುಭೂಮಿಯಲ್ಲಿ ನಿಮಗೆ ಮಾಡಿದ ಉಪಕಾರಗಳನ್ನೂ;
DEU 11:6 ರೂಬೇನನ ಮಗ ಎಲೀಯಾಬನ ಪುತ್ರರಾಗಿರುವ ದಾತಾನ್, ಅಬೀರಾಮರು ದಂಗೆಯೆದ್ದಾಗ, ಭೂಮಿಯು ಬಾಯಿತೆರೆದು ಅವರ ಮನೆಗಳನ್ನೂ, ಅವರಿಗಿದ್ದ ಎಲ್ಲಾ ಆಸ್ತಿಯನ್ನೂ, ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲಾ ಪಶುಪ್ರಾಣಿಗಳನ್ನೂ, ಸಮಸ್ತ ಇಸ್ರಾಯೇಲರ ಮಧ್ಯದಲ್ಲಿ ಹೇಗೆ ನುಂಗುವಂತೆ ದೇವರು ಮಾಡಿದರೆಂಬುದನ್ನೂ ಜ್ಞಾಪಕಮಾಡಿಕೊಳ್ಳಿರಿ.
DEU 11:7 ಯೆಹೋವ ದೇವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ನಿಮ್ಮ ಕಣ್ಣುಗಳು ನೋಡಿದವು.
DEU 11:8 ಹೀಗಿರುವುದರಿಂದ ಈಗ ನಾನು ನಿಮಗೆ ಬೋಧಿಸುವ ಈ ಆಜ್ಞೆಯನ್ನೆಲ್ಲಾ ಕೈಗೊಳ್ಳಬೇಕು. ಆಗ ನೀವು ಬಲವುಳ್ಳವರಾಗಿ, ಈ ನದಿದಾಟಿ ಆಚೆಯಿರುವ ದೇಶವನ್ನು ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳುವಿರಿ.
DEU 11:9 ಯೆಹೋವ ದೇವರು ನಿಮ್ಮ ಪಿತೃಗಳಿಗೂ, ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಾಗಿರುವ ಆ ಹಾಲೂ ಜೇನೂ ಹರಿಯುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ.
DEU 11:10 ಏಕೆಂದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು, ನೀವು ಹೊರಟ ಈಜಿಪ್ಟ್ ದೇಶದ ಹಾಗಲ್ಲ. ಅಲ್ಲಿ ನೀವು ಬೀಜವನ್ನು ಬಿತ್ತಿ, ಪಲ್ಯಗಳ ತೋಟವನ್ನು ಸಾಗುವಳಿ ಮಾಡುವ ರೀತಿಯಲ್ಲಿ ಏತವನ್ನು ತುಳಿದು, ನೀರು ಕಟ್ಟುತ್ತಿದ್ದಿರಿ.
DEU 11:11 ಆದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು ಬೆಟ್ಟಗಳೂ, ತಗ್ಗುಗಳೂ ಉಳ್ಳ ದೇಶವೇ; ಆಕಾಶದ ಮಳೆಯಿಂದ ಅದಕ್ಕೆ ನೀರು ದೊರೆಯುವುದು.
DEU 11:12 ಅದು ನಿಮ್ಮ ದೇವರಾದ ಯೆಹೋವ ದೇವರು ಪರಾಮರಿಸುವ ದೇಶವೇ; ವರ್ಷದ ಆರಂಭದಿಂದ ವರ್ಷದ ಅಂತ್ಯದವರೆಗೂ ಯಾವಾಗಲೂ ನಿಮ್ಮ ದೇವರಾದ ಯೆಹೋವ ದೇವರ ಕಣ್ಣು ಅದರ ಮೇಲಿರುವುದು.
DEU 11:13 ಹಾಗಾದರೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನನ್ನ ಆಜ್ಞೆಗಳನ್ನು ನೀವು ಲಕ್ಯಕೊಟ್ಟು ಕೇಳಿ, ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ ಅವರಿಗೆ ಸೇವೆ ಮಾಡಿದರೆ,
DEU 11:14 ನೀವು ನಿಮ್ಮ ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೂಡಿಸುವಂತೆ ದೇವರು ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ, ಮುಂಗಾರು ಹಿಂಗಾರುಗಳನ್ನೂ ಕೊಡುವರು.
DEU 11:15 ನಿಮ್ಮ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ನಿಮ್ಮ ಹೊಲದಲ್ಲಿ ಕೊಡುವರು. ನೀವು ಆಹಾರದಿಂದ ತೃಪ್ತರಾಗುವಿರಿ.
DEU 11:16 ನಿಮ್ಮ ಹೃದಯವು ಮರಳುಗೊಂಡು ನೀವು ದಾರಿತಪ್ಪಿ ಬೇರೆ ದೇವರುಗಳನ್ನು ಆರಾಧಿಸಿ ಅಡ್ಡಬೀಳದಂತೆ ಎಚ್ಚರವಾಗಿರಿ.
DEU 11:17 ಇಲ್ಲದಿದ್ದರೆ, ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯಲು ಅವರು ಮಳೆಯಾಗದಂತೆ ಮಾಡುವರು. ಭೂಮಿಯು ತನ್ನ ಬೆಳೆಯನ್ನು ಕೊಡದಂತೆ ಆಕಾಶವನ್ನು ಮುಚ್ಚಿಬಿಡುವರು. ಯೆಹೋವ ದೇವರು ನಿಮಗೆ ಕೊಡುವ ಆ ಒಳ್ಳೆಯ ದೇಶದಲ್ಲಿ ನೀವು ಬೇಗ ನಾಶವಾಗಿಹೋಗುವಿರಿ, ಎಚ್ಚರಿಕೆ.
DEU 11:18 ಈ ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ, ಪ್ರಾಣಗಳಲ್ಲಿಯೂ ಇಟ್ಟುಕೊಳ್ಳಿರಿ. ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಿರಿ, ಅವು ನಿಮ್ಮ ಹಣೆಗೆ ಕಟ್ಟಿರಲಿ.
DEU 11:19 ನೀವು ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ, ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು.
DEU 11:20 ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
DEU 11:21 ಹೀಗೆ ಮಾಡಿದರೆ ನಿಮ್ಮ ದಿನಗಳೂ, ನಿಮ್ಮ ಮಕ್ಕಳ ದಿನಗಳೂ ಭೂಮಿಯಲ್ಲಿ ಆಕಾಶದ ದಿನಗಳು ನೆಲೆಯಾಗಿರುವ ಪ್ರಕಾರ, ಯೆಹೋವ ದೇವರು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನೆಲೆಯಾಗಿರುವಿರಿ.
DEU 11:22 ನಾನು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಎಚ್ಚರಿಕೆಯಿಂದ ಕಾಪಾಡಿ, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರನ್ನು ಅಂಟಿಕೊಂಡರೆ,
DEU 11:23 ಯೆಹೋವ ದೇವರು ಆ ಜನಾಂಗಗಳನ್ನೆಲ್ಲಾ ನಿಮ್ಮ ಮುಂದೆ ಹೊರಡಿಸುವರು. ನೀವು ನಿಮಗಿಂತ ಬಲವುಳ್ಳ ದೊಡ್ಡ ಜನಾಂಗಗಳನ್ನು ಸ್ವಾಧೀನಮಾಡಿಕೊಳ್ಳುವಿರಿ.
DEU 11:24 ನೀವು ಹೆಜ್ಜೆ ಇಡುವ ಸ್ಥಳವೆಲ್ಲಾ ನಿಮ್ಮದಾಗುವುದು. ಮರುಭೂಮಿಯಿಂದ ಲೆಬನೋನಿನವರೆಗೂ, ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದವರೆಗೂ ನಿಮ್ಮ ಮೇರೆಯಾಗಿರುವುದು.
DEU 11:25 ಯಾರೂ ನಿಮ್ಮ ಮುಂದೆ ನಿಲ್ಲಲಾರರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನಿಮ್ಮ ಹೆದರಿಕೆಯನ್ನೂ, ದಿಗಿಲನ್ನೂ, ನೀವು ಸಂಚಾರ ಮಾಡುವ ಸಮಸ್ತ ದೇಶದ ಮೇಲೆ ಇಡುವರು.
DEU 11:26 ನಾನು ಈ ಹೊತ್ತು ಆಶೀರ್ವಾದವನ್ನೂ, ಶಾಪವನ್ನೂ ನಿಮ್ಮ ಮುಂದೆ ಇಡುತ್ತೇನೆ.
DEU 11:27 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ನೀವು ವಿಧೇಯರಾದರೆ, ಆಶೀರ್ವಾದವನ್ನು ಪಡೆದುಕೊಳ್ಳುವಿರಿ.
DEU 11:28 ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿಧೇಯರಾಗದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾರ್ಗಕ್ಕೆ ಓರೆಯಾದರೆ, ನೀವು ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿದರೆ, ನಿಮಗೆ ಶಾಪವು ತಗಲುವುದು.
DEU 11:29 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರವೇಶಿಸುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೇರಿಸಿದಾಗ, ನೀವು ಗೆರಿಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು.
DEU 11:30 ಇವು ಯೊರ್ದನ್ ನದಿಯ ಆಚೆ ಸೂರ್ಯನು ಅಸ್ತಮಿಸುವ ದಿಕ್ಕಿನಲ್ಲಿ ಅರಾಬಾ ಪ್ರದೇಶದಲ್ಲಿ ಗಿಲ್ಗಾಲಿಗೆ ಎದುರಾಗಿರುವ ಬಯಲಿನೊಳಗೆ ಮೋರೆ ಎಂಬ ಮಹಾವೃಕ್ಷದ ಸಮೀಪ ವಾಸಮಾಡುವ ಕಾನಾನ್ಯರ ದೇಶದಲ್ಲಿ ಇರುತ್ತವೆ.
DEU 11:31 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟಿ ಹೋಗಬೇಕು. ಆಗ ಅದನ್ನು ನೀವು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ,
DEU 11:32 ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ಆಜ್ಞಾವಿಧಿಗಳನ್ನು ಕಾಪಾಡಿ ನಡೆದುಕೊಳ್ಳಬೇಕು.
DEU 12:1 ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದಲ್ಲಿ ನೀವು ಬದುಕುವ ದಿವಸಗಳಲ್ಲೆಲ್ಲಾ ಕೈಗೊಂಡು ನಡೆಯತಕ್ಕ ತೀರ್ಪು ಹಾಗು ನಿಯಮಗಳು ಇವೇ.
DEU 12:2 ನೀವು ಸ್ವಾಧೀನ ಮಾಡಿಕೊಳ್ಳುವ ದೇಶದ ಜನಾಂಗಗಳು ತಮ್ಮ ದೇವರುಗಳಿಗೆ ಪೂಜಿಸಿದ ಸ್ಥಳಗಳನ್ನೂ, ಬೆಟ್ಟಗಳ ಮೇಲಿನ ಎತ್ತರ ಸ್ಥಳಗಳನ್ನೂ, ಗುಡ್ಡಗಳ ಹಾಗು ಮರಗಳ ಕೆಳಗಿರುವ ಸ್ಥಳಗಳನ್ನು ನೀವು ಪೂರ್ಣವಾಗಿ ನಾಶಮಾಡಬೇಕು.
DEU 12:3 ನೀವು ಅವರ ಬಲಿಪೀಠಗಳನ್ನು ಕೆಡವಿಹಾಕಿ, ಅವರ ಕಲ್ಲುಸ್ತಂಭಗಳನ್ನು ಒಡೆದು, ಅವರ ಆಶೇರ್ ಸ್ತಂಭಗಳನ್ನು ಬೆಂಕಿಯಿಂದ ಸುಟ್ಟು, ಅವರ ದೇವರುಗಳ ವಿಗ್ರಹಗಳನ್ನು ಕಡಿದುಹಾಕಿ, ಅವರ ಹೆಸರುಗಳನ್ನು ಆ ಸ್ಥಳಗಳೊಳಗಿಂದ ತೆಗೆದುಹಾಕಬೇಕು.
DEU 12:4 ಅವರು ಅನುಸರಿಸುವ ರೀತಿಯಲ್ಲಿ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಆರಾಧಿಸಬಾರದು.
DEU 12:5 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳಲು ಹಾಗು ತಾವು ವಾಸಮಾಡಲು ನಿಮ್ಮ ಎಲ್ಲಾ ಗೋತ್ರಗಳಿಂದ ಆರಿಸಿಕೊಳ್ಳುವ ಸ್ಥಳದಲ್ಲೇ, ನೀವು ದೇವರ ದರ್ಶನಕ್ಕಾಗಿ ಸಭೆ ಸೇರಬೇಕು.
DEU 12:6 ಅಲ್ಲಿಗೆ ನಿಮ್ಮ ದಹನಬಲಿಗಳನ್ನೂ, ನಿಮ್ಮ ಅರ್ಪಣೆಗಳನ್ನೂ, ನಿಮ್ಮ ಬೆಳೆಯನ್ನೂ, ದಶಮಾಂಶಗಳನ್ನೂ, ನಿಮ್ಮ ಹರಕೆಗಳನ್ನೂ, ಉಚಿತವಾದ ಕಾಣಿಕೆಗಳನ್ನೂ, ನಿಮ್ಮ ಚೊಚ್ಚಲಾದ ದನಕುರಿಗಳನ್ನೂ ತರಬೇಕು.
DEU 12:7 ಅಲ್ಲಿ ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ಉಂಡು, ನಿಮ್ಮ ಕುಟುಂಬಗಳ ಸಂಗಡ ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಿದ್ದರಿಂದ, ನೀವು ಸಾಧಿಸಿದ ಎಲ್ಲಾ ಕಾರ್ಯಗಳ ಬಗ್ಗೆ ಸಂತೋಷ ಪಡಬೇಕು.
DEU 12:8 ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡಬೇಡಿರಿ.
DEU 12:9 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ವಿಶ್ರಾಂತಿಗೂ, ಸೊತ್ತಿಗೂ ನೀವು ಇನ್ನೂ ಸೇರಲಿಲ್ಲ.
DEU 12:10 ಆದರೆ ನೀವು ಯೊರ್ದನ್ ನದಿಯನ್ನು ದಾಟಿದ ಮೇಲೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ, ದೇವರು ಸುತ್ತಲಿರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ, ನೀವು ಸುರಕ್ಷಿತವಾಗಿ ವಾಸಿಸುವಂತೆ ಮಾಡುವರು.
DEU 12:11 ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿಗಳನ್ನು, ಅರ್ಪಣೆಗಳನ್ನು, ಬೆಳೆಯ ದಶಮಾಂಶಗಳನ್ನು, ಯೆಹೋವ ದೇವರಿಗಾಗಿ ವಿಶೇಷ ಉಡುಗೊರೆಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.
DEU 12:12 ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸದಾಸಿಯರೂ ನಿಮ್ಮೊಡನೆ ಸ್ವಾಸ್ತ್ಯವನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರೂ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.
DEU 12:13 ನೀವು ಕಂಡ ಎಲ್ಲಾ ಸ್ಥಳಗಳಲ್ಲಿ ನಿಮ್ಮ ದಹನಬಲಿಗಳನ್ನು ಅರ್ಪಿಸದಂತೆ ನೋಡಿಕೊಳ್ಳಿರಿ.
DEU 12:14 ಯೆಹೋವ ದೇವರು ನಿಮ್ಮ ಗೋತ್ರಗಳ ಒಂದರಲ್ಲಿ ಆಯ್ದುಕೊಳ್ಳುವ ಸ್ಥಳದಲ್ಲೇ ನೀವು ನಿಮ್ಮ ದಹನಬಲಿಗಳನ್ನು ಅರ್ಪಿಸಬೇಕು. ಅಲ್ಲೇ ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾಡಬೇಕು.
DEU 12:15 ಆದರೂ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಆಶೀರ್ವಾದದ ಪ್ರಕಾರ ನಿಮ್ಮ ಇಷ್ಟಾನುಸಾರ ಮಾಂಸಾಹಾರವನ್ನು ನಿಮ್ಮ ಎಲ್ಲಾ ಊರುಗಳಲ್ಲಿ ತಿನ್ನಬಹುದು. ಆಚಾರದ ಪ್ರಕಾರ ಶುದ್ಧರೂ, ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನು ತಿನ್ನಬಹುದು.
DEU 12:16 ರಕ್ತವನ್ನು ಮಾತ್ರ ಭುಜಿಸಬೇಡಿರಿ. ಅದನ್ನು ನೀರಿನಂತೆ ನೆಲಕ್ಕೆ ಚೆಲ್ಲಬೇಕು.
DEU 12:17 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆಗಳ ದಶಮಾಂಶವನ್ನೂ, ನಿಮ್ಮ ದನಕುರಿಗಳ ಚೊಚ್ಚಲಾದವುಗಳನ್ನೂ, ನೀವು ಮಾಡುವ ಎಲ್ಲಾ ಹರಕೆಯ ಪದಾರ್ಥಗಳನ್ನೂ, ನಿಮ್ಮ ಉಚಿತವಾದ ಕಾಣಿಕೆಗಳನ್ನೂ, ಯಾಜಕರಿಗೆ ಪ್ರತ್ಯೇಕಿಸಿದ ಅರ್ಪಣೆಗಳನ್ನೂ ನಿಮ್ಮ ಊರುಗಳಲ್ಲಿ ತಿನ್ನಬೇಡಿರಿ.
DEU 12:18 ಅವುಗಳನ್ನು ನಿಮ್ಮ ದೇವರಾದ ಯೆಹೋವ ದೇವರ ಮುಂದೆ, ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ನೀವೂ, ನಿಮ್ಮ ಮಕ್ಕಳೂ, ನಿಮ್ಮ ದಾಸರೂ, ನಿಮ್ಮ ದಾಸಿಯರೂ, ನಿಮ್ಮ ಊರುಗಳಲ್ಲಿರುವ ಲೇವಿಯರೂ ತಿನ್ನಬೇಕು. ಹೀಗೆ ನಿಮ್ಮ ಎಲ್ಲಾ ಕೈಕೆಲಸದಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನೀವು ಸಂತೋಷ ಪಡಬೇಕು.
DEU 12:19 ನೀವು ಭೂಮಿಯ ಮೇಲೆ ಜೀವಿಸುವವರೆಗೆ ಲೇವಿಯರನ್ನು ಬಿಟ್ಟು ಬಿಡದ ಹಾಗೆ ನೋಡಿಕೊಳ್ಳಿರಿ.
DEU 12:20 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆ ನಿಮ್ಮ ಮೇರೆಯನ್ನು ವಿಸ್ತಾರಮಾಡುವರು. ಆಗ ನೀವು, “ಮಾಂಸಾಹಾರವನ್ನು ತಿನ್ನಲು ಇಷ್ಟಪಡುತ್ತೇನೆ,” ಎಂದು ಹೇಳಿದರೆ, ತಿನ್ನಬಹುದು.
DEU 12:21 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಂಡ ಸ್ಥಳವು ನಿಮಗೆ ದೂರವಾದರೆ, ಯೆಹೋವ ದೇವರು ನಿಮಗೆ ಕೊಟ್ಟ ದನಕುರಿಗಳಿಂದ ನಾನು ನಿಮಗೆ ಆಜ್ಞಾಪಿಸಿದಂತೆ ನಿಮ್ಮ ಊರಲ್ಲೇ ನಿಮಗೆ ಮನಸ್ಸಿದ್ದಷ್ಟು ಮಾಂಸಾಹಾರವನ್ನು ಮಾಡಿ ಉಣ್ಣಬಹುದು.
DEU 12:22 ಆಚಾರದ ಪ್ರಕಾರ ಶುದ್ಧರೂ, ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನು ತಿನ್ನಬಹುದು.
DEU 12:23 ರಕ್ತವನ್ನು ಮಾತ್ರ ಭುಜಿಸದ ಹಾಗೆ ಜಾಗ್ರತೆಯಾಗಿರಿ. ಏಕೆಂದರೆ ರಕ್ತವು ಪ್ರಾಣವೇ. ಮಾಂಸದೊಡನೆ ಅದರ ಜೀವವನ್ನು ತಿನ್ನಬಾರದು.
DEU 12:24 ಅದನ್ನು ಭುಜಿಸದೆ ನೀರಿನಂತೆ ಭೂಮಿಯ ಮೇಲೆ ಹೊಯ್ಯಬೇಕು.
DEU 12:25 ನೀವು ರಕ್ತವನ್ನು ಭುಜಿಸದಿದ್ದರೆ, ಯೆಹೋವ ದೇವರಿಗೆ ಮೆಚ್ಚುಗೆಯಾಗುವುದು. ಅಲ್ಲದೆ ನಿಮಗೂ, ನಿಮ್ಮ ಮಕ್ಕಳಿಗೂ ಒಳ್ಳೆಯದಾಗುವುದು.
DEU 12:26 ನಿಮಗಿರುವ ಪರಿಶುದ್ಧವಾದವುಗಳನ್ನೂ ಹರಕೆಮಾಡಿದ್ದನ್ನೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಬರಬೇಕು.
DEU 12:27 ಆಗ ನಿಮ್ಮ ದಹನಬಲಿಗಳನ್ನೂ, ರಕ್ತಮಾಂಸವನ್ನೂ, ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸಬೇಕು. ನಿಮ್ಮ ಬಲಿಗಳ ರಕ್ತವನ್ನು ನಿನ್ನ ದೇವರಾದ ಯೆಹೋವ ದೇವರ ಬಲಿಪೀಠದ ಮೇಲೆ ಸುರಿಯಬೇಕು. ಅನಂತರ ಮಾಂಸ ಊಟಮಾಡಬಹುದು.
DEU 12:28 ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ಒಳ್ಳೆಯದನ್ನೂ, ಸರಿಯಾದದ್ದನ್ನೂ ಮಾಡುವುದರಿಂದ ನಿಮಗೂ ನಿಮ್ಮ ಮುಂದೆ ಇರುವ ನಿಮ್ಮ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವ ಹಾಗೆ ನಾನು ನಿಮಗೆ ಆಜ್ಞಾಪಿಸುವ ಈ ಮಾತುಗಳನ್ನೆಲ್ಲಾ ಕೇಳಿ ಕಾಪಾಡಿರಿ.
DEU 12:29 ನೀವು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಲಿಕ್ಕಿರುವ ದೇಶದ ಜನಾಂಗಗಳನ್ನು ನಿಮ್ಮ ದೇವರಾದ ಯೆಹೋವ ದೇವರು ತೆಗೆದುಹಾಕುವರು. ನೀವು ಅವರನ್ನು ಹೊರಗೆ ಓಡಿಸಿ, ಅಲ್ಲಿ ನೀವು ನೆಲೆಸಿದಾಗ,
DEU 12:30 ನೀವು ಭ್ರಮೆಗೊಂಡು ನಿಮ್ಮ ಮುಂದೆ ನಾಶವಾದವರ ಬಗ್ಗೆ ವಿಚಾರಣೆ ಮಾಡಬೇಡಿರಿ. “ಈ ಜನಾಂಗಗಳು ತಮ್ಮ ದೇವರುಗಳನ್ನು ಹೇಗೆ ಪೂಜಿಸಿದವು? ನಾವೂ ಹಾಗೆ ಮಾಡೋಣ,” ಎಂದು ಹೇಳಬೇಡಿರಿ.
DEU 12:31 ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಯೆಹೋವ ದೇವರಿಗೆ ಅಸಹ್ಯವಾದ ಅನೇಕ ಸಂಗತಿಗಳನ್ನು ಮಾಡುತ್ತಾರೆ. ಅಂದರೆ, ಅವರು ತಮ್ಮ ಗಂಡು ಮಕ್ಕಳನ್ನು, ಹೆಣ್ಣು ಮಕ್ಕಳನ್ನು ತಮ್ಮ ದೇವರುಗಳಿಗೆ ಬಲಿಯಾಗಿ ಬೆಂಕಿಯಲ್ಲಿ ಸುಡುತ್ತಾರೆ. ಆದ್ದರಿಂದ ನೀವು ನಿಮ್ಮ ಯೆಹೋವ ದೇವರನ್ನು ಆ ರೀತಿಯಲ್ಲಿ ಆರಾಧಿಸಬಾರದು.
DEU 12:32 ನಾನು ನಿಮಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಕಾಪಾಡಿ ಕೈಗೊಳ್ಳಬೇಕು. ಅದಕ್ಕೆ ಏನೂ ಕೂಡಿಸಬಾರದು. ಅದರಿಂದ ಏನನ್ನೂ ತೆಗೆದುಹಾಕಬಾರದು.
DEU 13:1 ನಿಮ್ಮ ಮಧ್ಯೆ ಯಾವ ಪ್ರವಾದಿಯೇ ಆಗಲಿ, ಕನಸುಗಾರನೇ ಆಗಲಿ, ಎದ್ದು ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆ ಮಾಡಿ,
DEU 13:2 “ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ,” ಎಂದು ಬೋಧಿಸಬಹುದು. ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಸಹ ಹೇಳಬಹುದು.
DEU 13:3 ಅವನು ಹೇಳಿದಂತೆಯೇ ಅದು ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸುತ್ತೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.
DEU 13:4 ನಿಮ್ಮ ದೇವರಾದ ಯೆಹೋವ ದೇವರನ್ನೇ ಅನುಸರಿಸಿ, ಅವರಿಗೆ ಭಯಪಟ್ಟು, ಅವರ ಆಜ್ಞೆಗಳನ್ನು ಕಾಪಾಡಿ, ಅವರ ಮಾತನ್ನು ಕೇಳಿ, ಅವರ ಸೇವೆಮಾಡುತ್ತಾ ಅವರನ್ನೇ ಅಂಟಿಕೊಳ್ಳಬೇಕು.
DEU 13:5 ಆ ಪ್ರವಾದಿಯನ್ನು, ಕನಸು ಕಾಣುವವನಿಗೆ ಮರಣದಂಡನೆ ವಿಧಿಸಬೇಕು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ದಾಸತ್ವದಿಂದ ನಿಮ್ಮನ್ನು ವಿಮೋಚಿಸಿದ ನಿಮ್ಮ ದೇವರಾದ ಯೆಹೋವ ದೇವರಿಂದ ತಿರುಗುವಂತೆ ಮತ್ತು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಡೆಯಲು ಆಜ್ಞಾಪಿಸಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸುವಂತೆ ಅವನು ಮಾತನಾಡಿದ್ದಾನೆ. ಹೀಗೆ ನೀವು ಕೆಟ್ಟದ್ದನ್ನು ನಿಮ್ಮಿಂದ ತೆಗೆದುಹಾಕಬೇಕು.
DEU 13:6 ನಿನ್ನ ಸಹೋದರನಾಗಲಿ, ಮಗನಾಗಲಿ, ಮಗಳಾಗಲಿ, ಪ್ರೀತಿಯ ಹೆಂಡತಿಯಾಗಲಿ, ಪ್ರಾಣ ಸ್ನೇಹಿತನಾಗಲಿ, “ನೀವೂ, ನಿಮ್ಮ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು
DEU 13:7 ನಿಮಗೆ ಸಮೀಪವಾಗಲಿ, ನಿಮಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯವರೆಗೆ ನಿಮ್ಮ ಸುತ್ತಲಿರುವ ಜನರ ದೇವರುಗಳನ್ನು ಸೇವಿಸೋಣ,” ಎಂದು ನಿಮ್ಮನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ,
DEU 13:8 ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.
DEU 13:9 ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲು ಎಸೆಯಬೇಕು, ತರುವಾಯ ಜನರೆಲ್ಲರೂ ಎಸೆಯಲಿ.
DEU 13:10 ಗುಲಾಮಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆ ಮಾಡಿ, ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಯೆಹೋವ ದೇವರ ಆಶ್ರಯದಿಂದ ಅಂಥವರು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ, ಅಂಥವರನ್ನು ಕಲ್ಲು ಎಸೆದು ಕೊಲ್ಲಬೇಕು.
DEU 13:11 ಇಸ್ರಾಯೇಲರೆಲ್ಲಾ ಇದನ್ನು ಕೇಳಿ ಭಯಪಟ್ಟು, ಇನ್ನು ಮೇಲೆ ಕೆಟ್ಟದ್ದನ್ನು ಮಾಡದೆ ಇರುವರು.
DEU 13:12 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಸಮಾಡುವುದಕ್ಕೆ ಕೊಡುವ ಯಾವುದಾದರೂ ಪಟ್ಟಣದಲ್ಲಿ
DEU 13:13 ದುಷ್ಟಜನರು ಎದ್ದು ತಮ್ಮ ಪಟ್ಟಣದಲ್ಲಿರುವ ಜನರನ್ನು, “ನೀವು ತಿಳಿಯದಿರುವ ಇತರ ದೇವರುಗಳನ್ನು ಪೂಜಿಸೋಣ ಬನ್ನಿರಿ,” ಎಂದು ಹೇಳಿ ದುರ್ಮಾಗಕ್ಕೆ ಎಳೆದಿದ್ದಾರೆ ಎಂಬ ಸುದ್ದಿ ನಿಮಗೆ ತಿಳಿಸಿದರೆ,
DEU 13:14 ನೀವು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು. ಆ ಕಾರ್ಯವು ನಿಶ್ಚಯವಾಗಿ ಸತ್ಯವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ,
DEU 13:15 ಆ ಊರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅದನ್ನೂ, ಅದರಲ್ಲಿರುವ ಎಲ್ಲದನ್ನೂ, ಅದರ ಪಶುಗಳನ್ನೂ ಸಹ ಶಪಿಸಿ ಖಡ್ಗದಿಂದ ನಿರ್ಮೂಲ ಮಾಡಬೇಕು.
DEU 13:16 ಇದಲ್ಲದೆ ಆ ಊರಿನ ಎಲ್ಲಾ ಸಾಮಗ್ರಿಗಳನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ, ಆ ಪಟ್ಟಣವನ್ನೂ, ಅದರ ಎಲ್ಲಾ ವಸ್ತುವನ್ನೂ ಸಂಪೂರ್ಣವಾಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಯಾಗಿ ಸುಟ್ಟುಬಿಡಬೇಕು. ಅದು ಎಂದಿಗೂ ಹಾಳುದಿಬ್ಬವಾಗಿರಬೇಕು; ಇನ್ನು ಮೇಲೆ ಅದನ್ನು ಕಟ್ಟಬಾರದು; ಆ ಶಾಪಗ್ರಸ್ತ ವಸ್ತುಗಳಲ್ಲಿ ಏನನ್ನೂ ತೆಗೆದುಕೊಳ್ಳಬಾರದು.
DEU 13:17 ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕಾಪಾಡಿ,
DEU 13:18 ನಿಮ್ಮ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಾಗ ಯೆಹೋವ ದೇವರು ತಮ್ಮ ಕೋಪವನ್ನು ಬಿಟ್ಟು, ತಿರುಗಿ ನಿಮಗೆ ದಯೆಯನ್ನು ತೋರಿಸಿ, ನಿಮ್ಮ ಮೇಲೆ ಕನಿಕರಪಟ್ಟು, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು.
DEU 14:1 ನೀವು ನಿಮ್ಮ ದೇವರಾದ ಯೆಹೋವ ದೇವರ ಮಕ್ಕಳು. ನೀವು ಸತ್ತವರಿಗೋಸ್ಕರ ಗಾಯಮಾಡಿಕೊಳ್ಳಬಾರದು. ಮುಂದಲೆಯನ್ನು ಬೋಳಿಸಿಕೊಳ್ಳಬಾರದು.
DEU 14:2 ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ, ಯೆಹೋವ ದೇವರು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ನಿಮ್ಮನ್ನೇ ತಮ್ಮ ಅಮೂಲ್ಯವಾದ ಆಸ್ತಿಯಾಗಿ ಆಯ್ದುಕೊಂಡಿದ್ದಾರೆ.
DEU 14:3 ಅಸಹ್ಯವಾದ ಯಾವುದನ್ನಾದರೂ ತಿನ್ನಬಾರದು.
DEU 14:4 ನೀವು ತಿನ್ನಬಹುದಾದ ಪ್ರಾಣಿಗಳು ಯಾವವಂದರೆ: ಎತ್ತು, ಕುರಿ, ಮೇಕೆ,
DEU 14:5 ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ ಇವುಗಳೇ.
DEU 14:6 ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ, ಅದು ಮೆಲುಕು ಹಾಕುವಂಥಾದ್ದಾದರೆ ಅದರ ಮಾಂಸವನ್ನು ತಿನ್ನಬಹುದು.
DEU 14:7 ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವು ಮೆಲುಕು ಹಾಕುವಂಥವುಗಳಾದರೂ, ಸೀಳುಗೊರಸು ಇಲ್ಲವಾದದ್ದರಿಂದ ಅವು ನಿಮಗೆ ಅಶುದ್ಧ.
DEU 14:8 ಹಂದಿಯನ್ನು ತಿನ್ನಬಾರದು. ಏಕೆಂದರೆ ಅದು ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲ. ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ನೀವು ತಿನ್ನಬಾರದು, ಅವುಗಳ ಹೆಣವನ್ನು ಮುಟ್ಟಬಾರದು.
DEU 14:9 ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ನೀವು ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.
DEU 14:10 ಆದರೆ ರೆಕ್ಕಗಳೂ ಪೊರೆಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು. ಅವು ನಿಮಗೆ ಅಶುದ್ಧ.
DEU 14:11 ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
DEU 14:12 ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ಬೆಟ್ಟದಹದ್ದು, ಕಪ್ಪು ರಣಹದ್ದು,
DEU 14:13 ಗಿಡುಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು,
DEU 14:14 ಸಕಲವಿಧವಾದ ಕಾಗೆ,
DEU 14:15 ಉಷ್ಟ್ರಪಕ್ಷಿ, ಉಲೂಕ, ಚೀರು ಗೂಬೆ, ಕಡಲ ಹಕ್ಕಿ, ಸಕಲವಿಧವಾದ ಡೇಗೆ,
DEU 14:16 ಸಣ್ಣ ಗೂಬೆ, ದೊಡ್ಡ ಗೂಬೆ, ಬಿಳಿಗೂಬೆ,
DEU 14:17 ಮರಳುಗಾಡು ಗೂಬೆ, ರಣಹದ್ದು, ನೀರು ಕೋಳಿ,
DEU 14:18 ಕೊಕ್ಕರೆ, ನೀರುಕಾಗೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
DEU 14:19 ಇದಲ್ಲದೆ ಹಾರುವ ಎಲ್ಲಾ ಕ್ರಿಮಿಕೀಟಗಳು ನಿಮಗೆ ಅಶುದ್ಧವೇ. ಅವುಗಳನ್ನು ತಿನ್ನಬಾರದು.
DEU 14:20 ಶುದ್ಧವಾದ ಎಲ್ಲಾ ರೆಕ್ಕೆ ಉಳ್ಳ ಪಕ್ಷಿಗಳನ್ನು ತಿನ್ನಬಹುದು.
DEU 14:21 ತಾನೇ ಸತ್ತ ಯಾವುದನ್ನೂ ತಿನ್ನಬಾರದು. ನಿಮ್ಮ ಊರಲ್ಲಿರುವ ಅನ್ಯನಿಗೆ ತಿನ್ನಲು ಕೊಡಬಹುದು ಇಲ್ಲವೆ ಪರದೇಶದವನಿಗೆ ಮಾರಬಹುದು. ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಕುದಿಸಬಾರದು.
DEU 14:22 ನೀವು ಬಿತ್ತುವ ಹೊಲದಲ್ಲಿ ವರ್ಷ ವರ್ಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
DEU 14:23 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ದಶಮಾಂಶವನ್ನೂ ನಿಮ್ಮ ದನಕುರಿಗಳಲ್ಲಿ ಚೊಚ್ಚಲುಗಳನ್ನೂ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ದೇವರೇ ಆಯ್ದುಕೊಂಡ ಸ್ಥಳದಲ್ಲಿ ತಿನ್ನಬೇಕು. ಇದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಎಂದೆಂದಿಗೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಕಲಿಯುವಿರಿ.
DEU 14:24 ನೀವು ಕಾಣಿಕೆಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಮಗೆ ದಾರಿ ದೂರವಾಗಿದ್ದರೆ, ಅಥವಾ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಂಡ ಸ್ಥಳವು ನಿಮಗೆ ದೂರವಾಗಿದ್ದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಿದ ಕಾಲದಲ್ಲಿ,
DEU 14:25 ಅವುಗಳನ್ನು ಮಾರಿ ಹಣವನ್ನಾಗಿ ಮಾರ್ಪಡಿಸಿ, ಆ ಹಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
DEU 14:26 ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ, ಮೊದಲಾದವುಗಳನ್ನು ಹಣದಿಂದ ಕೊಂಡುಕೊಂಡು ನೀವೂ, ನಿಮ್ಮ ಮನೆಯವರೂ, ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಊಟಮಾಡಿ, ಸಂತೋಷವಾಗಿರಬೇಕು.
DEU 14:27 ನಿಮ್ಮ ಊರುಗಳಲ್ಲಿರುವ ಲೇವಿಯರನ್ನು ಕೈಬಿಡಬಾರದು. ಏಕೆಂದರೆ ಅವರಿಗೆ ನಿಮ್ಮ ಸಂಗಡ ಪಾಲೂ, ಸೊತ್ತೂ ಇಲ್ಲ.
DEU 14:28 ಪ್ರತಿ ಮೂರು ವರ್ಷಗಳ ಅಂತ್ಯದಲ್ಲಿ ಆಯಾ ವರ್ಷದಲ್ಲಿ ನಿಮಗೆ ಸಿಕ್ಕಿದ ಹುಟ್ಟುವಳಿಯ ದಶಮಭಾಗವನ್ನೆಲ್ಲಾ ಹೊರಗೆ ತಂದು ನಿಮ್ಮ ಊರಲ್ಲಿಯೇ ಕೂಡಿಸಬೇಕು.
DEU 14:29 ಆಗ ನಿಮ್ಮ ಸಂಗಡ ಪಾಲನ್ನೂ, ಸೊತ್ತನ್ನೂ ಹೊಂದದ ಲೇವಿಯರೂ, ನಿಮ್ಮ ಊರಲ್ಲಿರುವ ಅನ್ಯದೇಶದವರೂ, ದಿಕ್ಕಿಲ್ಲದವರೂ, ವಿಧವೆಯರೂ ಬಂದು ತಿಂದು ತೃಪ್ತರಾಗಲಿ. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನೂ, ನೀವು ಮಾಡುವ ಎಲ್ಲಾ ಪ್ರಯತ್ನಗಳನ್ನೂ ಆಶೀರ್ವದಿಸುವರು.
DEU 15:1 ಪ್ರತಿ ಏಳು ವರ್ಷಗಳ ಅಂತ್ಯದಲ್ಲಿ ಎಲ್ಲರ ಸಾಲಗಳನ್ನೂ ಮನ್ನಾಮಾಡಬೇಕು.
DEU 15:2 ನೀವು ಮಾಡಬೇಕಾದ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಾದ ಇಸ್ರಾಯೇಲರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡಬೇಕು. ಅದು ಯೆಹೋವ ದೇವರ ಬಿಡುಗಡೆಯ ವರ್ಷ ಎಂದು ಪ್ರಕಟವಾಗಿರುವುದರಿಂದ ತನ್ನ ನೆರೆಯವನಿಂದಲೂ, ತನ್ನ ಸಹೋದರನಿಂದಲೂ ಸಾಲವನ್ನು ಕೇಳಬಾರದು.
DEU 15:3 ಅನ್ಯದೇಶದವರಿಂದ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದು. ಆದರೆ ಸ್ವದೇಶದವನಾದ ನಿಮ್ಮ ಸಹೋದರರು ಕೊಡಬೇಕಾದ ಸಾಲವನ್ನು ನೀವು ಮನ್ನಾಮಾಡಬೇಕು.
DEU 15:4 ಏಕೆಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದಲ್ಲಿ ಯೆಹೋವ ದೇವರು ನಿಮ್ಮನ್ನು ಬಹಳವಾಗಿ ಆಶೀರ್ವದಿಸುವರು. ಹೀಗಾಗಿ ನಿಮ್ಮಲ್ಲಿ ಬಡವರೇ ಇರುವುದಿಲ್ಲ.
DEU 15:5 ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಎಚ್ಚರಿಕೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಎಲ್ಲಾ ಆಜ್ಞೆಯನ್ನು ಕಾಪಾಡಿ ನಡೆಯಿರಿ.
DEU 15:6 ನಿಶ್ಚಯವಾಗಿ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದಂತೆ ನಿನ್ನನ್ನು ಆಶೀರ್ವದಿಸುವರು. ನೀವು ಸಾಲ ತೆಗೆದುಕೊಳ್ಳದೆ ಅನೇಕ ಜನಾಂಗಗಳಿಗೆ ಸಾಲ ಕೊಡುವಿರಿ. ಅನೇಕ ಜನಾಂಗಗಳನ್ನು ಆಳುವಿರಿ, ಅವರು ನಿಮ್ಮನ್ನು ಆಳುವುದಿಲ್ಲ.
DEU 15:7 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ನಿಮ್ಮ ದೇಶದಲ್ಲಿ, ನಿಮ್ಮ ಸಹೋದರರಲ್ಲಿ ಬಡವರು ಇದ್ದರೆ, ನಿಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳಬೇಡಿರಿ. ನಿಮ್ಮ ಕೈಯನ್ನು ನಿಮ್ಮ ಬಡ ಸಹೋದರರಿಗೆ ಮುಚ್ಚಿಕೊಳ್ಳಬೇಡಿರಿ.
DEU 15:8 ನಿಮ್ಮ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು. ಅವನಿಗೆ ಅಗತ್ಯವಾದಷ್ಟು ಕೊಡಬೇಕು.
DEU 15:9 “ಸಾಲ ಬಿಡುಗಡೆಯ ವರ್ಷವಾದ ಏಳನೆಯ ವರ್ಷವು ಸಮೀಪವಾಯಿತು,” ಎಂಬ ದುಷ್ಟ ಆಲೋಚನೆ ನಿಮ್ಮ ಹೃದಯದಲ್ಲಿ ಹುಟ್ಟಿ, ನಿಮ್ಮ ಬಡ ಸಹೋದರನ ಮೇಲೆ ಕಠಿಣವಾಗಿ, ನೀವು ಅವನಿಗೆ ಏನೂ ಕೊಡದೆ ಇರಬೇಡಿರಿ. ಅವನು ನಿಮಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆ ಇಟ್ಟಾಗ, ನಿಮ್ಮಲ್ಲಿ ಅಪರಾಧ ಉಂಟಾಗದಂತೆ ನೋಡಿಕೊಳ್ಳಿರಿ.
DEU 15:10 ಕೊಡುವಾಗ ಬೇಸರಗೊಳ್ಳದೇ ಉದಾರಮನಸ್ಸಿನಿಂದ ಕೊಡಿರಿ. ಏಕೆಂದರೆ ಇದಕ್ಕೋಸ್ಕರವೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ, ನೀವು ಕೈಹಾಕುವುದೆಲ್ಲದರಲ್ಲಿಯೂ ಆಶೀರ್ವದಿಸುವರು.
DEU 15:11 ಏಕೆಂದರೆ ಬಡವರು ದೇಶದಲ್ಲಿ ಇಲ್ಲದೆ ಹೋಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರರಿಗೂ, ನಿಮ್ಮ ನಾಡಿನ ದರಿದ್ರರಿಗೂ, ಬಡವರಿಗೂ ನಿಮ್ಮ ಕೈಯನ್ನು ವಿಶಾಲವಾಗಿ ತೆರೆಯಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.
DEU 15:12 ನಿಮ್ಮ ಸಹೋದರನಾದ ಹಿಬ್ರಿಯನಾಗಲಿ, ಒಬ್ಬ ಹಿಬ್ರಿಯ ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ, ಆರು ವರ್ಷ ನಿಮಗೆ ಮಾರಾಟವಾಗಿದ್ದರೆ ಮತ್ತು ಸೇವೆ ಮಾಡಿದ್ದರೆ, ಏಳನೆಯ ವರ್ಷದಲ್ಲಿ ಅವರನ್ನು ಬಿಡುಗಡೆ ಮಾಡಿ ಕಳುಹಿಸಿಬಿಡಿರಿ.
DEU 15:13 ಹಾಗೆ ಬಿಟ್ಟುಬಿಡುವಾಗ ಬರೀ ಕೈಯಲ್ಲಿ ಕಳುಹಿಸಬಾರದು.
DEU 15:14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅಂದರೆ ನಿಮ್ಮ ಕುರಿಮಂದೆಯಿಂದಲೂ ಕಣದಿಂದಲೂ ದ್ರಾಕ್ಷಿ ಆಲೆಯದಿಂದಲೂ ಅವರಿಗೆ ಧಾರಾಳವಾಗಿ ಕೊಟ್ಟುಕಳುಹಿಸಬೇಕು.
DEU 15:15 ನೀವು ಈಜಿಪ್ಟ್ ದೇಶದಲ್ಲಿ ದಾಸರಾಗಿದ್ದಿರಿ ಎಂದೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ನಾನು ಈ ಹೊತ್ತು ಇದನ್ನು ನಿಮಗೆ ಆಜ್ಞಾಪಿಸುತ್ತೇನೆ.
DEU 15:16 ಒಂದು ವೇಳೆ ಆ ಗುಲಾಮನು, ನಿಮ್ಮನ್ನೂ, ನಿಮ್ಮ ಮನೆಯನ್ನೂ ಪ್ರೀತಿಸುವುದರಿಂದಲೂ, ನಿಮ್ಮ ಬಳಿ ಸುಖವಾಗಿರುವುದರಿಂದಲೂ, “ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,” ಎಂದು ಹೇಳಿದರೆ,
DEU 15:17 ನೀವು ದಬ್ಬಳವನ್ನು ತೆಗೆದುಕೊಂಡು ಅವನ ಕಿವಿಯನ್ನು ಬಾಗಿಲಿಗೆ ತಗಲಿಸಿ ಚುಚ್ಚಬೇಕು. ಆಗ ಅವನು ನಿತ್ಯವಾಗಿ ನಿಮ್ಮ ದಾಸನಾಗಿರುವನು. ನಿಮ್ಮ ದಾಸಿಗೂ ಹಾಗೆಯೇ ಮಾಡಬೇಕು.
DEU 15:18 ಒಬ್ಬ ಗುಲಾಮನನ್ನು ನಿಮ್ಮಿಂದ ಬಿಡುಗಡೆಯಾಗಿ ಕಳುಹಿಸುವುದು ನಿಮಗೆ ಕಷ್ಟವೆಂದು ಹೇಳಿಕೊಳ್ಳಬಾರದು. ಏಕೆಂದರೆ ಅವನು ಆರು ವರ್ಷ ನಿಮ್ಮ ದಾಸನಾಗಿದ್ದದರಿಂದ ಸಂಬಳದ ಸೇವಕನಿಗಿಂತ ಎರಡಷ್ಟಾಗಿದ್ದನು. ಹೀಗೆ ನಿಮ್ಮ ದೇವರಾದ ಯೆಹೋವ ದೇವರು ನೀವು ಮಾಡುವುದೆಲ್ಲದರಲ್ಲಿಯೂ ನಿಮ್ಮನ್ನು ಆಶೀರ್ವದಿಸುವರು.
DEU 15:19 ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠಿಸಬೇಕು. ನಿಮ್ಮ ಹೋರಿಯ ಚೊಚ್ಚಲಿನಿಂದ ನೀವು ಕೆಲಸ ಮಾಡಿಸಬಾರದು. ನಿಮ್ಮ ಕುರಿಯ ಚೊಚ್ಚಲಲ್ಲಿ ಉಣ್ಣೆ ಕತ್ತರಿಸಬಾರದು.
DEU 15:20 ನಿಮ್ಮ ದೇವರಾದ ಯೆಹೋವ ದೇವರ ಮುಂದೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ನೀವು ನಿಮ್ಮ ಮನೆಯವರ ಸಹಿತವಾಗಿ ಅವುಗಳಿಂದ ಪ್ರತಿವರ್ಷ ಮಾಂಸಾಹಾರವಾಗಿರಬೇಕು.
DEU 15:21 ಅದರಲ್ಲಿ ಏನಾದರೂ ಊನವಿದ್ದರೆ ಅಂದರೆ, ಅದು ಕುಂಟಾಗಲಿ, ಕುರುಡಾಗಲಿ ಏನಾದರೂ ಕೆಟ್ಟ ಊನವುಳ್ಳದ್ದಾಗಿದ್ದರೆ, ಅದನ್ನು ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು.
DEU 15:22 ಅದನ್ನು ನಿಮ್ಮ ಊರಲ್ಲಿ ಮಾಂಸಾಹಾರವಾಗಿರಲಿ. ಆಚಾರವಾಗಿ ಶುದ್ಧರೂ, ಅಶುದ್ಧರೂ ಕೂಡ ಅದನ್ನು ಕಡವೆ ಜಿಂಕೆಗಳನ್ನು ಮಾಂಸಾಹಾರವಾಗಿ ಮಾಡಿಕೊಂಡ ಹಾಗೆ ತಿನ್ನಬಹುದು.
DEU 15:23 ಅದರ ರಕ್ತವನ್ನು ಮಾತ್ರ ಭುಜಿಸಬಾರದು, ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
DEU 16:1 ನೀವು ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಾತ್ರಿಯಲ್ಲಿ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
DEU 16:2 ಹೀಗಿರುವುದರಿಂದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆಡುಕುರಿಗಳಲ್ಲಾಗಲಿ, ದನಗಳಲ್ಲಿ ಆಗಲಿ ಪಸ್ಕದ ಪಶುವನ್ನಾಗಿ ಅರ್ಪಿಸಬೇಕು.
DEU 16:3 ಅದರೊಂದಿಗೆ ಹುಳಿರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿಯಿಲ್ಲದ ಶ್ರಮೆಯ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ತ್ವರೆಯಾಗಿ ಈಜಿಪ್ಟ್ ದೇಶದೊಳಗಿಂದ ನೀವು ಹೊರಗೆ ಬಂದದ್ದರಿಂದ ನೀವು ಜೀವಿಸುವ ದಿವಸಗಳಲ್ಲೆಲ್ಲಾ ಇದನ್ನು ಜ್ಞಾಪಕಮಾಡಿಕೊಳ್ಳಬೇಕು.
DEU 16:4 ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿಮ್ಮ ಮೇರೆಗಳಲ್ಲಿ ಎಲ್ಲಿಯೂ ಕಾಣಬಾರದು. ಮೊದಲನೆಯ ದಿವಸದ ಸಾಯಂಕಾಲದಲ್ಲಿ ನೀವು ಯಜ್ಞವಾಗಿ ಸಮರ್ಪಿಸಿದ ಮಾಂಸದಲ್ಲಿ ಏನೂ ಮರುದಿವಸದವರೆಗೆ ಉಳಿಯಬಾರದು.
DEU 16:5 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವ ಊರಲ್ಲಾದರೂ ಪಸ್ಕವನ್ನು ಅರ್ಪಿಸಬಾರದು.
DEU 16:6 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲೇ ಸೂರ್ಯನು ಅಸ್ತಮಿಸುವಾಗ ನೀವು ಈಜಿಪ್ಟನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು.
DEU 16:7 ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು. ಮರುದಿವಸದಲ್ಲಿ ಹಿಂದಿರುಗಿ ನಿಮ್ಮ ಗುಡಾರಗಳಿಗೆ ಹೋಗಬಹುದು.
DEU 16:8 ಆರು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿವಸದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಭೆಯಾಗಿ ಕೂಡಿಬರಬೇಕು. ಆ ದಿನದಲ್ಲಿ ಕೆಲಸಮಾಡಬಾರದು.
DEU 16:9 ಏಳು ವಾರಗಳನ್ನು ನನಗಾಗಿ ಎಣಿಸಿಕೊಳ್ಳಬೇಕು. ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಬೇಕು.
DEU 16:10 ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ಅರ್ಪಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ವಾರಗಳ ಹಬ್ಬವನ್ನು ಆಚರಿಸಬೇಕು
DEU 16:11 ಮತ್ತು ಅವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು, ನಿಮ್ಮ ಗಂಡು ಹೆಣ್ಣುಮಕ್ಕಳು, ದಾಸದಾಸಿಯರು, ನಿಮ್ಮ ಊರಲ್ಲಿರುವ ಲೇವಿಯರು, ಪರದೇಶದವರು, ತಂದೆತಾಯಿ ಇಲ್ಲದವರು ಹಾಗೂ ವಿಧವೆಯರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
DEU 16:12 ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದೆವೆಂಬುದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಆಚರಿಸಬೇಕು.
DEU 16:13 ನೀವು ಕಣದ ಕೆಲಸವನ್ನೂ ದ್ರಾಕ್ಷಿ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ, ಏಳು ದಿನಗಳವರೆಗೂ ಗುಡಾರಗಳ ಹಬ್ಬವನ್ನು ಆಚರಿಸಬೇಕು.
DEU 16:14 ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಂದೆತಾಯಿ ಇಲ್ಲದವರೂ ಹಾಗೂ ವಿಧವೆಯರೂ ಸಂಭ್ರಮದಿಂದಿರಬೇಕು.
DEU 16:15 ನಿಮ್ಮ ದೇವರಾದ ಯೆಹೋವ ದೇವರಿಗೆ ಏಳು ದಿವಸ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಎಲ್ಲಾ ಆದಾಯದಲ್ಲಿಯೂ, ನಿಮ್ಮ ಎಲ್ಲಾ ಕೆಲಸದಲ್ಲಿಯೂ ಆಶೀರ್ವದಿಸುವುದರಿಂದ ನೀವು ಪರಿಪೂರ್ಣ ಸಂತೋಷದಿಂದ ಇರಬೇಕು.
DEU 16:16 ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಮತ್ತು ಗುಡಾರಗಳ ಹಬ್ಬದಲ್ಲಿಯೂ ವರ್ಷಕ್ಕೆ ಮೂರು ಸಾರಿ ನಿಮ್ಮ ಎಲ್ಲಾ ಪುರುಷರು, ನಿಮ್ಮ ಯೆಹೋವ ದೇವರ ಮುಂದೆ ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಯೆಹೋವ ದೇವರ ಸಮ್ಮುಖಕ್ಕೆ ಬರೀ ಕೈಯಿಂದ ಬರಬಾರದು.
DEU 16:17 ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ಆಶೀರ್ವಾದದ ಪ್ರಕಾರ ಒಬ್ಬೊಬ್ಬನೂ ಕೊಡಬೇಕು.
DEU 16:18 ಯೆಹೋವ ದೇವರು ನಿಮ್ಮ ಗೋತ್ರಗಳ ಪ್ರಕಾರ ಕೊಡುವ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ನ್ಯಾಯಾಧಿಪತಿಗಳನ್ನೂ, ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು. ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
DEU 16:19 ನೀವು ನ್ಯಾಯವನ್ನು ಕೆಡಿಸಬಾರದು. ನೀವು ಮುಖದಾಕ್ಷಿಣ್ಯ ನೋಡಬಾರದು, ಇಲ್ಲವೆ ಲಂಚವನ್ನು ತೆಗೆದುಕೊಳ್ಳಬಾರದು, ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
DEU 16:20 ನೀವು ಬದುಕಿ ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಹಾಗೆ ನ್ಯಾಯವನ್ನು ಅಂದರೆ ಕೇವಲ ನ್ಯಾಯವನ್ನೇ ಅನುಸರಿಸಬೇಕು.
DEU 16:21 ನಿಮ್ಮ ಯೆಹೋವ ದೇವರಿಗಾಗಿ ಕಟ್ಟುವ ಬಲಿಪೀಠದ ಸಮೀಪದಲ್ಲಿ ಮರದಿಂದ ಮಾಡಿದ ಯಾವುದೇ ಅಶೇರ ಸ್ತಂಭವನ್ನು ನಿಲ್ಲಿಸಬಾರದು.
DEU 16:22 ಯಾವ ವಿಗ್ರಹವನ್ನೂ ನಿಲ್ಲಿಸಬಾರದು. ಇದನ್ನು ನಿನ್ನ ಯೆಹೋವ ದೇವರು ದ್ವೇಷಿಸುತ್ತಾರೆ.
DEU 17:1 ಯಾವುದೇ ಊನತೆ ಅಥವಾ ಅವಲಕ್ಷಣವುಳ್ಳ ಹೋರಿಯನ್ನಾಗಲಿ, ಕುರಿಯನ್ನಾಗಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.
DEU 17:2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವುದೇ ಊರಿನಲ್ಲಿ, ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಯೆಹೋವ ದೇವರ ಒಡಂಬಡಿಕೆಯನ್ನು ಮೀರಿ ಅವರ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ನಡೆಸಲು ಸಾಧ್ಯ.
DEU 17:3 ಅಂದರೆ, ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ನಕ್ಷತ್ರಗಳನ್ನಾಗಲಿ, ಬೇರೆ ದೇವರುಗಳನ್ನಾಗಲಿ, ನನ್ನ ಆಜ್ಞೆಗೆ ವಿರೋಧವಾಗಿ ಅವುಗಳನ್ನು ಆರಾಧಿಸಿದರೆ,
DEU 17:4 ಆ ಸಂಗತಿಯನ್ನು ನೀವು ಕೇಳಿದಾಗ ಅದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಆಗ ಇಸ್ರಾಯೇಲರಲ್ಲಿ ಯಾರಿಂದಾದರೂ ಆ ಅಸಹ್ಯಕರವಾದ ಕಾರ್ಯವು ನಡೆದದ್ದು ಸತ್ಯವೆಂದು ತಿಳಿದುಬಂದರೆ,
DEU 17:5 ಆಗ ನೀವು ಆ ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಊರ ಹೊರಗೆ ತಂದು, ಅವರು ಸಾಯುವಂತೆ ಅವರ ಮೇಲೆ ಕಲ್ಲೆಸೆಯಬೇಕು.
DEU 17:6 ಒಬ್ಬನ ಸಾಕ್ಷಿಯ ಮಾತಿನಿಂದ ಮಾತ್ರ ಯಾರಿಗೂ ಮರಣಶಿಕ್ಷೆಯಾಗಬಾರದು. ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಸಾಕ್ಷಿಗಳು ಇಲ್ಲವೆ ಮೂವರು ಸಾಕ್ಷಿಗಳು ಬೇಕು.
DEU 17:7 ಅವನನ್ನು ಕೊಲ್ಲುವ ಮೊದಲು ಸಾಕ್ಷಿಗಳಾದ ಎಲ್ಲಾ ಜನರು ತಮ್ಮ ಕೈಗಳನ್ನು ಅವನ ಮೇಲೆ ಇಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
DEU 17:8 ನಿಮ್ಮ ಊರುಗಳಲ್ಲಿ ಉಂಟಾದ ವಿವಾದಗಳ ವಿಷಯವಾಗಿ ಅಂದರೆ, ಕೊಲೆಯ ವ್ಯಾಜ್ಯವಾಗಲಿ, ವಾದಿ ಪ್ರತಿವಾದ ವ್ಯಾಜ್ಯವಾಗಲಿ, ಹೊಡೆದಾಟದ ವ್ಯಾಜ್ಯವಾಗಲಿ, ನಿಮಗೆ ನ್ಯಾಯತೀರಿಸುವುದು ಕಷ್ಟವಾದರೆ, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
DEU 17:9 ನೀವು ಯಾಜಕರಾದ ಲೇವಿಯರ ಬಳಿಗೂ, ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು. ಅವರು ನಿಮಗೆ ಆ ತೀರ್ಪನ್ನು ತಿಳಿಸುವರು.
DEU 17:10 ಅವರು ನಿಮಗೆ ಯೆಹೋವ ದೇವರು ಆಯ್ದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀವು ಮಾಡಿ, ಅವರು ನಿಮಗೆ ಬೋಧಿಸುವುದನ್ನೇ ನೀವು ಕೈಗೊಂಡು ನಡೆಯಬೇಕು.
DEU 17:11 ಅವರು ನಿಮಗೆ ಬೋಧಿಸುವ ತೀರ್ಪಿನ ಪ್ರಕಾರವೂ, ಅವರು ನಿಮಗೆ ಹೇಳುವ ನ್ಯಾಯದ ಪ್ರಕಾರವೂ ನೀವು ಮಾಡಬೇಕು. ಅವರು ನಿಮಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು.
DEU 17:12 ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸೇವೆ ಮಾಡುವುದಕ್ಕೆ ನಿಂತ ಯಾಜಕನ ಮಾತನ್ನಾದರೂ, ನ್ಯಾಯಾಧಿಪತಿಯ ಮಾತನ್ನಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವುದಾದರೆ, ಆ ಮನುಷ್ಯನು ಸಾಯಲೇಬೇಕು. ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
DEU 17:13 ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಹಾಗೆ ಮಾಡಲಾರರು.
DEU 17:14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದು, ಅದನ್ನು ಸ್ವಾಧೀನಪಡಿಸಿಕೊಂಡು, ಅದರಲ್ಲಿ ವಾಸವಾಗಿರುವಾಗ, “ನಮ್ಮ ಸುತ್ತಲಿರುವ ಎಲ್ಲಾ ಜನಾಂಗಗಳ ಹಾಗೆ ನಮಗೆ ಅರಸನನ್ನು ಇಟ್ಟುಕೊಳ್ಳುತ್ತೇವೆ,” ಎಂದು ಹೇಳಿಕೊಳ್ಳಬಹುದು.
DEU 17:15 ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವವನನ್ನು ನಿಮಗೆ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಇಸ್ರಾಯೇಲ್ ಸಹೋದರರಲ್ಲಿಂದ ಒಬ್ಬನನ್ನು ನಿಮ್ಮ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಸಹೋದರನಲ್ಲದ ಅನ್ಯದೇಶದವನನ್ನು ನಿಮ್ಮ ಮೇಲೆ ನೇಮಿಸಿಕೊಳ್ಳಬಾರದು.
DEU 17:16 ಅರಸನು ತನಗಾಗಿ ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದು. ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನರನ್ನು ಈಜಿಪ್ಟ್ ದೇಶಕ್ಕೆ ಕಳುಹಿಸಬಾರದು. “ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗಬಾರದು,” ಎಂದು ಯೆಹೋವ ದೇವರು ನಿಮಗೆ ಹೇಳಿದ್ದಾರೆ.
DEU 17:17 ಅರಸನು ದಾರಿತಪ್ಪಿ ಹೋಗದಂತೆ ತನಗೆ ಹೆಚ್ಚು ಜನ ಹೆಂಡತಿಯರನ್ನು ಮದುವೆ ಮಾಡಿಕೊಳ್ಳಬಾರದು. ಅವನು ತನಗಾಗಿ ಹೆಚ್ಚು ಬೆಳ್ಳಿಬಂಗಾರವನ್ನು ಕೂಡಿಸಿಟ್ಟುಕೊಳ್ಳಬಾರದು.
DEU 17:18 ಅರಸನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆ ಮಾಡುವ ಲೇವಿಯರ ವಶದಲ್ಲಿ ಇರುವ ಈ ದೇವರ ನಿಯಮ ಗ್ರಂಥದ ಒಂದು ಪ್ರತಿಯನ್ನು ತನಗಾಗಿ ಪುಸ್ತಕ ರೂಪವಾಗಿ ಬರೆಯಿಸಿಕೊಳ್ಳಬೇಕು.
DEU 17:19 ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು. ಯೆಹೋವ ದೇವರ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳಬಾರದು. ದೇವರಾದ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವನಾಗಿರಬೇಕು. ಈ ದೇವರ ನಿಯಮದ ಎಲ್ಲಾ ವಾಕ್ಯಗಳನ್ನು, ತೀರ್ಪುಗಳನ್ನು ಅನುಸರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು.
DEU 17:20 ಹೀಗೆ ಮಾಡಿದರೆ, ಅವನೂ, ಅವನ ಸಂತತಿಯವರೂ ದೀರ್ಘಕಾಲ ಇಸ್ರಾಯೇಲರ ಮೇಲೆ ರಾಜ್ಯಾಧಿಕಾರ ನಡೆಸುವರು.
DEU 18:1 ಯಾಜಕರಾದ ಲೇವಿಯರಿಗೂ, ಆ ಎಲ್ಲಾ ಲೇವಿಯ ಗೋತ್ರಕ್ಕೂ, ಇಸ್ರಾಯೇಲಿನ ಸಂಗಡ ಪಾಲೂ ಸೊತ್ತೂ ಇರಬಾರದು. ಅವರು ಯೆಹೋವ ದೇವರಿಗೆ ಸಮರ್ಪಿಸಿದ ದಹನಬಲಿಯ ಕಾಣಿಕೆಗಳ ಮೇಲೆ ಆಧಾರಮಾಡಿಕೊಂಡು ಜೀವಿಸಬೇಕು. ಅದು ಅವರ ಬಾಧ್ಯತೆಯಾಗಿದೆ.
DEU 18:2 ಲೇವಿಯರಿಗೆ ಅವರ ಸಹೋದರರ ಮಧ್ಯದಲ್ಲಿ ಸೊತ್ತಿರಬಾರದು. ಯೆಹೋವ ದೇವರು ಅವರಿಗೆ ಹೇಳಿದ ಹಾಗೆ ದೇವರೇ ಅವರ ಸೊತ್ತು.
DEU 18:3 ಎತ್ತನ್ನಾಗಲಿ, ಕುರಿಯನ್ನಾಗಲಿ ಬಲಿ ಅರ್ಪಿಸುವವರಿಂದ ಯಾಜಕರಿಗೆ ಸಿಕ್ಕುವ ಪಾಲು, ಅವುಗಳ ಮುಂದೊಡೆ, ದವಡೆ ಹಾಗೂ ಒಳಗಿನ ಭಾಗಗಳು.
DEU 18:4 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ಪ್ರಥಮ ಫಲವನ್ನೂ, ನಿಮ್ಮ ಕುರಿಗಳ ಉಣ್ಣೆಯಲ್ಲಿ ಪ್ರಥಮವಾದದ್ದನ್ನೂ ಅವರಿಗೆ ಕೊಡಬೇಕು.
DEU 18:5 ಏಕೆಂದರೆ ಅವರೂ, ಅವರ ಪುತ್ರರೂ ನಿತ್ಯವಾಗಿ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡುತ್ತಾ ನಿಂತಿರುವ ಹಾಗೆ ಅವರನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಗೋತ್ರಗಳೊಳಗಿಂದ ಆಯ್ದುಕೊಂಡಿದ್ದಾರೆ.
DEU 18:6 ಒಬ್ಬ ಲೇವಿಯು ಸಮಸ್ತ ಇಸ್ರಾಯೇಲಿನಲ್ಲಿರುವ ಯಾವುದೇ ಊರಿನಲ್ಲಿ ಇಳಿದುಕೊಂಡಿರುವ ಸ್ಥಳದಿಂದ ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಬರಬಹುದು.
DEU 18:7 ಅಲ್ಲಿ ಯೆಹೋವ ದೇವರ ಮುಂದೆ ನಿಂತುಕೊಳ್ಳುವ ಇತರ ಲೇವಿಯರಂತೆ ಅವನೂ ತನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡಬಹುದು.
DEU 18:8 ಅವನು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದರಲ್ಲಿ ಹಣದ ಪಾಲನ್ನು ಸ್ವೀಕರಿಸಿದ್ದರೂ, ಮಿಕ್ಕ ಲೇವಿಯರೊಡನೆ ಸಮಾನ ಪಾಲು ಹೊಂದಬೇಕು.
DEU 18:9 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಆ ಜನಾಂಗಗಳು ಮಾಡುವ ಅಸಹ್ಯ ಕಾರ್ಯಗಳನ್ನು ನೀವು ಕಲಿಯಬಾರದು.
DEU 18:10 ತನ್ನ ಮಗನನ್ನು ಇಲ್ಲವೆ ಮಗಳನ್ನು ಆಹುತಿ ಕೊಡುವವನೂ, ಕಣಿ ಹೇಳುವವನೂ, ಶಕುನ ನೋಡುವವನೂ, ಸರ್ಪ ಮಂತ್ರದವನೂ, ಮಾಟಗಾರನೂ,
DEU 18:11 ಗಾರುಡಿಗಾರನೂ, ಯಕ್ಷಿಣಿಗಾರನೂ, ಮಂತ್ರಗಾರನೂ, ಸತ್ತವರ ಹತ್ತಿರ ವಿಚಾರಿಸುವವನೂ ನಿಮ್ಮಲ್ಲಿ ಇರಬಾರದು.
DEU 18:12 ಏಕೆಂದರೆ ಇಂಥವುಗಳನ್ನು ಮಾಡುವವರೆಲ್ಲಾ ಯೆಹೋವ ದೇವರಿಗೆ ಅಸಹ್ಯರಾಗಿದ್ದಾರೆ. ಈ ಅಸಹ್ಯಗಳ ನಿಮಿತ್ತವೇ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರದೂಡಿಸಿಬಿಡುತ್ತಾರೆ.
DEU 18:13 ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿರ್ದೋಷಿಯಾಗಿರಬೇಕು.
DEU 18:14 ನೀವು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಶಕುನ ನೋಡುವವರ ಹಾಗೂ ಕಣಿಹೇಳುವವರ ಮಾತನ್ನು ಕೇಳುತ್ತಿದ್ದರು. ನಿಮ್ಮನ್ನಾದರೋ ನಿಮ್ಮ ದೇವರಾದ ಯೆಹೋವ ದೇವರು ಹಾಗೆ ಮಾಡಲು ಅನುಮತಿಸಲಿಲ್ಲ.
DEU 18:15 ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಿಮ್ಮ ಸಹೋದರರ ನಡುವೆಯಿಂದ ಎಬ್ಬಿಸುವರು. ಆ ಪ್ರವಾದಿಯ ಮಾತನ್ನು ನೀವು ಕೇಳಬೇಕು.
DEU 18:16 ನೀವು ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಂದ ಬೇಡಿಕೊಂಡ ಪ್ರಕಾರ ಆಗುವುದು. ಆಗ ನೀವು, “ನಾವು ಸಾಯದಂತೆ ಇನ್ನು ಮೇಲೆ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ನಾವು ಕೇಳುವುದಿಲ್ಲ, ಈ ದೊಡ್ಡ ಬೆಂಕಿಯನ್ನೂ ನೋಡುವುದಿಲ್ಲ,” ಎಂದು ಹೇಳಿದಿರಿ.
DEU 18:17 ಆಗ ಯೆಹೋವ ದೇವರು ನನಗೆ, “ಅವರು ಹೇಳಿದ್ದು ಸರಿಯಾಗಿದೆ.
DEU 18:18 ನಿನ್ನ ಹಾಗಿರುವ ಪ್ರವಾದಿಯನ್ನು ನಾನು ಅವರ ಸಹೋದರರ ಮಧ್ಯದಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಆತನ ಬಾಯಿಯಲ್ಲಿ ಇಡುವೆನು. ನಾನು ಆತನಿಗೆ ಆಜ್ಞಾಪಿಸುವುದನ್ನೆಲ್ಲಾ ಆತನು ಅವರಿಗೆ ಹೇಳುವನು.
DEU 18:19 ಆ ಪ್ರವಾದಿ ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
DEU 18:20 ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವುದನ್ನು ನನ್ನ ಹೆಸರಿನಿಂದ ಮಾತನಾಡುವ ಪ್ರವಾದಿಯೂ, ಬೇರೆ ದೇವರುಗಳ ಹೆಸರಿನಿಂದ ಮಾತನಾಡುವ ಪ್ರವಾದಿಯೂ ಸಾಯಬೇಕು.”
DEU 18:21 ಇದಲ್ಲದೆ ನೀವು, “ಇದು ಯೆಹೋವ ದೇವರು ಹೇಳಿದ ವಾಕ್ಯವು ಅಲ್ಲ ಎಂದು ನಾವು ತಿಳಿದುಕೊಳ್ಳುವುದು ಹೇಗೆ?” ಎಂದು ನೀವು ನಿಮ್ಮ ಹೃದಯದಲ್ಲಿ ಆಲೋಚಿಸಬಹುದು.
DEU 18:22 ಒಬ್ಬ ಪ್ರವಾದಿಯು ಯೆಹೋವ ದೇವರ ಹೆಸರಿನಲ್ಲಿ ಮುಂತಿಳಿಸಿದ ಮಾತು ಸಂಭವಿಸದೆ ಹೋದರೆ ಅಥವಾ ನಿಜವಾಗದಿದ್ದರೆ, ಅದು ಯೆಹೋವ ದೇವರ ಮಾತು ಅಲ್ಲವೆಂದು ನೀವು ತಿಳಿದುಕೊಳ್ಳಬೇಕು. ಆ ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ, ಆದ್ದರಿಂದ ನೀವು ಅವನಿಗೆ ಭಯಪಡಬಾರದು.
DEU 19:1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದ ಜನಾಂಗಗಳನ್ನು ದೇವರು ತೆಗೆದುಹಾಕಿದ ತರುವಾಯ, ನೀವು ದೇಶವನ್ನು ಸ್ವಾಧೀನಮಾಡಿಕೊಂಡು ಅದರ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಿರಿ.
DEU 19:2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ನಿಮ್ಮ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿಮಗಾಗಿ ಪ್ರತ್ಯೇಕಿಸಬೇಕು.
DEU 19:3 ಕೈತಪ್ಪಿ ಕೊಲೆ ಮಾಡುವವರೆಲ್ಲರೂ ಅಲ್ಲಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದ ಮೇರೆಯನ್ನು ಮೂರು ಭಾಗಮಾಡಿ, ಅವುಗಳ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು.
DEU 19:4 ಬದುಕಿ ಉಳಿಯಲು ಅಲ್ಲಿ ಓಡಿಹೋಗತಕ್ಕ ಕೊಲೆಪಾತಕನ ವಿವರವೇನೆಂದರೆ, ತಿಳಿಯದೆ ಇಲ್ಲವೆ ಪೂರ್ವ ಕಲ್ಪಿತ ಹಗೆ ಮಾಡದೆ, ತನ್ನ ನೆರೆಯವನನ್ನು ಹೊಡೆದವನೇ.
DEU 19:5 ಉದಾಹರಣೆಗೆ: ಒಬ್ಬ ವ್ಯಕ್ತಿ ಕಟ್ಟಿಗೆಯನ್ನು ಕಡಿಯಲು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋದನೆಂದು ಇಟ್ಟುಕೊಳ್ಳೋಣ. ಅಲ್ಲಿ ಒಂದು ಮರವನ್ನು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿ ಕಾವಿನಿಂದ ಜಾರಿ, ಆ ಮತ್ತೊಬ್ಬನಿಗೆ ತಗಲಿ ಅವನು ಸತ್ತರೆ, ಹೊಡೆದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.
DEU 19:6 ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ. ಆದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯೆ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸಮೀಪ ಬಂಧು ಕೋಪದಿಂದ ಉರಿಯುತ್ತಾ, ಅವನನ್ನು ಹಿಂದಟ್ಟಬಹುದು. ಮಾರ್ಗದ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದು ಹಾಕಬಹುದು.
DEU 19:7 ಈ ಕಾರಣದಿಂದಲೇ ನೀವು ಆ ಮೂರು ಆಶ್ರಯಪಟ್ಟಣಗಳನ್ನು ಗೊತ್ತು ಮಾಡಬೇಕೆಂದು ಆಜ್ಞಾಪಿಸಿದ್ದೇನೆ.
DEU 19:8 ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮ ಮೇರೆಯನ್ನು ವಿಸ್ತಾರಮಾಡಿ, ನಿಮ್ಮ ಪಿತೃಗಳಿಗೆ ಕೊಡುವುದಾಗಿ ಹೇಳಿದ ದೇಶವನ್ನೆಲ್ಲಾ ನಿಮಗೆ ಕೊಡುವರು.
DEU 19:9 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಕಾಪಾಡಿ ಕೈಗೊಳ್ಳಬೇಕು. ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ಯಾವಾಗಲೂ ನಡೆದರೆ ನೀವು ಈ ಮೂರು ಪಟ್ಟಣಗಳ ಜೊತೆಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.
DEU 19:10 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗಬಾರದು, ಅಂಥವನಿಗೆ ಮರಣಶಿಕ್ಷೆಯಾದರೆ ಆ ರಕ್ತಾಪರಾಧ ನಿಮ್ಮದಾಗಿಯೇ ಇರುವುದು.
DEU 19:11 ಆದರೆ ಒಬ್ಬನು ತನ್ನ ನೆರೆಯವನನ್ನು ದ್ವೇಷಿಸಿ ಹೊಂಚು ಹಾಕಿ, ಅವನಿಗೆ ವಿರೋಧವಾಗಿ ಎದ್ದು, ಅವನನ್ನು ಸಾಯುವವರೆಗೂ ಹೊಡೆದು ಕೊಂದುಹಾಕಿ ಈ ಪಟ್ಟಣಗಳಿಗೆ ಓಡಿಹೋದರೆ,
DEU 19:12 ಆ ಪಟ್ಟಣದ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ, ಅವನಿಗೆ ಮರಣದಂಡನೆಯಾಗುವಂತೆ ಸೇಡು ತೀರಿಸಿಕೊಳ್ಳುವವನ ಕೈಗೆ ಅವನನ್ನು ಒಪ್ಪಿಸಬೇಕು.
DEU 19:13 ನೀವು ಅವನ ಮೇಲೆ ದಯೆ ತೋರಬಾರದು. ನಿಮಗೆ ಒಳ್ಳೆಯದಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲರಲ್ಲಿ ಉಳಿಯದಂತೆ ತೆಗೆದುಹಾಕಬೇಕು.
DEU 19:14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದೊಳಗೆ ನೀವು ಹೊಂದುವ ಸೊತ್ತಿನಲ್ಲಿ ಹಿರಿಯರು ಇಟ್ಟಂಥ ನಿಮ್ಮ ನೆರೆಯವನ ಮೇರೆಯನ್ನು ಸರಿಸಬಾರದು.
DEU 19:15 ಯಾವ ಅಕ್ರಮದ ನಿಮಿತ್ತವೂ, ಅಥವಾ ಪಾಪದ ನಿಮಿತ್ತವೂ ಒಬ್ಬ ಮನುಷ್ಯನಿಗೆ ವಿರೋಧವಾಗಿ ಒಬ್ಬ ಸಾಕ್ಷಿ ನಿಂತುಕೊಳ್ಳಬಾರದು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ವಿಷಯವು ಸ್ಥಿರವಾಗುವುದು.
DEU 19:16 ಸುಳ್ಳುಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವುದಕ್ಕೆ ಎದ್ದರೆ,
DEU 19:17 ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಯೆಹೋವ ದೇವರ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ಹಾಗು ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.
DEU 19:18 ನ್ಯಾಯಾಧಿಪತಿಗಳು ಕೂಲಂಕಷವಾಗಿ ವಿಚಾರಣೆ ಮಾಡಬೇಕು. ಆಗ ಇಗೋ, ಆ ಸಾಕ್ಷಿಯು ಸುಳ್ಳುಸಾಕ್ಷಿಯಾಗಿದ್ದರೆ, ಅಂದರೆ ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ,
DEU 19:19 ಅವನು ತನ್ನ ಸಹೋದರನಿಗೆ ಮಾಡುವುದಕ್ಕೆ ಯೋಚಿಸಿದ ಪ್ರಕಾರವೇ ಅವನಿಗೆ ಶಿಕ್ಷೆ ಕೊಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
DEU 19:20 ಆಗ ಉಳಿದವರು ಕೇಳಿ ಭಯಪಟ್ಟು, ಆ ದುಷ್ಟಕೃತ್ಯವನ್ನು ಇನ್ನು ಮುಂದೆ ನಿಮ್ಮ ಮಧ್ಯದಲ್ಲಿ ಮಾಡದಿರುವರು.
DEU 19:21 ನೀವು ಅಂಥವರಿಗೆ ಕರುಣೆ ತೋರಿಸಬಾರದು, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.
DEU 20:1 ನೀವು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟಾಗ ಅವರ ಕುದುರೆಗಳನ್ನೂ ರಥಗಳನ್ನೂ ನಿಮಗಿಂತ ಹೆಚ್ಚಾಗಿರುವ ಜನರನ್ನೂ ನೋಡಿದರೆ ಭಯಪಡಬೇಡಿರಿ. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ.
DEU 20:2 ನೀವು ಯುದ್ಧಕ್ಕೆ ಸಮೀಪ ಬಂದಾಗ, ಯಾಜಕನು ಹತ್ತಿರ ಬಂದು, ಯೋಧರ ಸಂಗಡ ಮಾತನಾಡಿ ಅವರಿಗೆ,
DEU 20:3 “ಇಸ್ರಾಯೇಲರೇ ಕೇಳಿರಿ, ನೀವು ಈ ಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸಮೀಪ ಬಂದಿದ್ದೀರಿ. ನಿಮ್ಮ ಹೃದಯಗಳು ಕುಗ್ಗಬಾರದು. ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂ ಬೇಡಿರಿ.
DEU 20:4 ಏಕೆಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ, ನಿಮ್ಮನ್ನು ರಕ್ಷಿಸುವುದಕ್ಕೆ ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಸಂಗಡ ಬರುತ್ತಾರೆ,” ಎಂದು ಹೇಳಬೇಕು.
DEU 20:5 ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು.
DEU 20:6 ದ್ರಾಕ್ಷಿತೋಟವನ್ನು ನೆಟ್ಟು ಅದರ ಫಲವನ್ನು ತಿನ್ನದೇ ಇರುವ ಮನುಷ್ಯನು, ತನ್ನ ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಫಲ ತಿಂದಾನು.
DEU 20:7 ಯಾವನಾದರೂ ಮದುವೆ ಮಾಡಿಕೊಂಡಿದ್ದು, ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿರದಿದ್ದರೆ, ಅಂಥವನು ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ, ಬೇರೊಬ್ಬನು ಆಕೆಯನ್ನು ಸೇರಿಸಿಕೊಂಡಾನು.”
DEU 20:8 ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.
DEU 20:9 ಅಧಿಕಾರಿಗಳು ಯೋಧರ ಸಂಗಡ ಮಾತನಾಡಿ ಮುಗಿಸಿದಾಗ, ಅವರು ಅದರ ಮೇಲೆ ಸೇನಾಧಿಪತಿಗಳನ್ನು ನೇಮಿಸಬೇಕು.
DEU 20:10 ನೀವು ಯುದ್ಧಮಾಡುವುದಕ್ಕಾಗಿ ಒಂದು ಪಟ್ಟಣದ ಹತ್ತಿರ ಬಂದಾಗ, ಮೊದಲು ಅದನ್ನು ಸಮಾಧಾನಕ್ಕಾಗಿ ಕರೆಯಬೇಕು.
DEU 20:11 ಆ ಪಟ್ಟಣವು ನಿಮಗೆ ಸಮಾಧಾನದ ಉತ್ತರಕೊಟ್ಟು ಬಾಗಿಲನ್ನು ತೆರೆದರೆ, ಅದರಲ್ಲಿರುವ ಜನರೆಲ್ಲರೂ ನಿಮಗೆ ಕಪ್ಪಕೊಟ್ಟು, ನಿಮಗಾಗಿ ಕೆಲಸ ಮಾಡಬೇಕು.
DEU 20:12 ಅವರು ನಿಮ್ಮ ಮಾತಿಗೆ ಸಮ್ಮತಿಸದೆ ನಿಮ್ಮ ಸಂಗಡ ಯುದ್ಧಮಾಡಿದರೆ, ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
DEU 20:13 ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಕೊಟ್ಟಾಗ, ಅದರ ಗಂಡಸರೆಲ್ಲರನ್ನು ಸಂಹಾರಮಾಡಬೇಕು.
DEU 20:14 ಆದರೆ ಸ್ತ್ರೀಯರನ್ನೂ ಚಿಕ್ಕವರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲಾ ಆಸ್ತಿಯನ್ನೂ ನಿಮಗಾಗಿ ತಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವಂಥ ನಿಮ್ಮ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.
DEU 20:15 ಹೀಗೆ ಈ ದೇಶದ ಜನಾಂಗಗಳಿಗೆ ಸೇರದೆ ನಿಮಗೆ ದೂರವಾಗಿರುವ ಜನಾಂಗಗಳ ಪಟ್ಟಣಗಳಿಗೆಲ್ಲಾ ಹಾಗೆಯೇ ಮಾಡಬೇಕು.
DEU 20:16 ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಈ ಜನರ ಪಟ್ಟಣಗಳಲ್ಲಿ ಉಸಿರಾಡುವ ಯಾವುದನ್ನಾದರೂ ಉಳಿಸಬಾರದು.
DEU 20:17 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಹಿತ್ತಿಯರನ್ನೂ, ಅಮೋರಿಯರನ್ನೂ, ಕಾನಾನ್ಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಪೂರ್ಣವಾಗಿ ದಂಡಿಸಬೇಕು.
DEU 20:18 ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಆರಾಧಿಸುವಾಗ ಮಾಡಿದ ಎಲ್ಲಾ ಅಸಹ್ಯಕರವಾದ ಆಚಾರಗಳನ್ನು ನಿಮಗೆ ಕಲಿಸಿಕೊಡಬಹುದು ಮತ್ತು ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ದ್ರೋಹಿಗಳಾಗಬಹುದು.
DEU 20:19 ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು ಅದಕ್ಕೆ ಬಹು ದಿವಸ ಮುತ್ತಿಗೆ ಹಾಕಬೇಕಾಗಬಹುದು. ಆಗ ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು. ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧ ಮಾಡಬಹುದೇ?
DEU 20:20 ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಕಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.
DEU 21:1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ಹತನಾದ ಒಬ್ಬ ವ್ಯಕ್ತಿಯ ಶವವು ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡಾಗ ಮತ್ತು ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ,
DEU 21:2 ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ, ಆ ಹತನಾದವನ ಸುತ್ತಲಿರುವ ಪಟ್ಟಣಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳಲು ಅಳತೆಮಾಡಬೇಕು.
DEU 21:3 ಹತನಾದವನಿಗೆ ಸಮೀಪವಾದ ಊರು ಯಾವುದೋ, ಆ ಊರಿನ ಹಿರಿಯರು ಇನ್ನೂ ಕೆಲಸ ಮಾಡದಂಥ, ನೊಗ ಎಳೆಯದಂಥ, ಒಂದು ಕಡಸನ್ನು ತೆಗೆದುಕೊಳ್ಳಬೇಕು.
DEU 21:4 ಆಮೇಲೆ ಆ ಊರಿನ ಹಿರಿಯರು ಆ ಕಡಸನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜ ಹಾಕದಂಥ ಸ್ಥಳಕ್ಕೆ ತೆಗೆದುಕೊಂಡುಹೋಗಿ, ಅಲ್ಲಿ ಹಳ್ಳದಲ್ಲಿ ಕಡಸನ್ನು ವಧಿಸಬೇಕು.
DEU 21:5 ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ.
DEU 21:6 ಆಮೇಲೆ ಹತನಾದವನ ಶವಕ್ಕೆ ಸಮೀಪವಾಗಿರುವ ಆ ಊರಿನ ಹಿರಿಯರೆಲ್ಲರೂ ತಗ್ಗಿನಲ್ಲಿ ವಧಿಸಿದ ಕಡಸಿನ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು.
DEU 21:7 ಅನಂತರ, “ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ. ನಮ್ಮ ಕಣ್ಣುಗಳು ನಡೆದದ್ದನ್ನು ನೋಡಲಿಲ್ಲ.
DEU 21:8 ಯೆಹೋವ ದೇವರೇ, ನೀವು ವಿಮೋಚಿಸಿದ ನಿಮ್ಮ ಜನರಾದ ಇಸ್ರಾಯೇಲರಿಗೆ ಕರುಣೆ ಹೊದಿಸಿರಿ. ನಿಮ್ಮ ಜನರಾದ ಇಸ್ರಾಯೇಲರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡಿರಿ,” ಎಂದು ಹೇಳಬೇಕು. ಆ ರಕ್ತಾಪರಾಧವು ಅವರಿಗೆ ಮುಚ್ಚಲಾಗುವುದು.
DEU 21:9 ಈ ಪ್ರಕಾರ ನೀವು ಯೆಹೋವ ದೇವರ ಮುಂದೆ ಸರಿಯಾದದ್ದನ್ನು ಮಾಡಿದರೆ, ರಕ್ತಾಪರಾಧವನ್ನು ನಿಮ್ಮಲ್ಲಿಂದ ತೆಗೆದುಹಾಕುವಿರಿ.
DEU 21:10 ನೀವು ಶತ್ರುಗಳ ವಿರುದ್ಧ ಯುದ್ಧಮಾಡಿ, ನಿಮ್ಮ ದೇವರಾದ ಯೆಹೋವ ದೇವರಿಂದ, ನೀವು ಅವರನ್ನು ಸೋಲಿಸಿದರೆ,
DEU 21:11 ಸೆರೆ ಹಿಡಿದವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರೂ ಕಂಡು ಇಷ್ಟಪಟ್ಟರೆ, ಅವಳನ್ನು ಮದುವೆ ಮಾಡಿಕೊಳ್ಳಬಹುದು.
DEU 21:12 ಅವಳು ತಲೆ ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು,
DEU 21:13 ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳವರೆಗೆ ತನ್ನ ತಾಯಿ ತಂದೆಯರನ್ನು ಸ್ಮರಿಸಿ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.
DEU 21:14 ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ, ಅವನು ಅವಳನ್ನು ಅವಳು ಬಯಸಿದ ಸ್ಥಳಕ್ಕೆ ಕಳುಹಿಸಿಬಿಡಬೇಕು. ಅವಳನ್ನು ಅವಮಾನಪಡಿಸಿದ್ದರಿಂದ ದಾಸತ್ವಕ್ಕೆ ಮಾರಲೂಬಾರದು, ದಾಸಿಯಂತೆ ನಡೆಸಲೂಬಾರದು.
DEU 21:15 ಒಬ್ಬ ಮನುಷ್ಯನಿಗೆ ಇಬ್ಬರು ಹೆಂಡತಿಯರಿದ್ದು, ಒಬ್ಬಳನ್ನು ಪ್ರೀತಿಸುತ್ತಲೂ, ಮತ್ತೊಬ್ಬಳನ್ನು ದ್ವೇಷಿಸುತ್ತಲೂ ಇದ್ದರೆ, ಅವರಿಬ್ಬರೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ, ಚೊಚ್ಚಲು ಮಗನು ತಿರಸ್ಕಾರ ಹೊಂದುತ್ತಿರುವ ಹೆಂಡತಿಯಲ್ಲಿಯೇ ಹುಟ್ಟಿದ್ದರೆ,
DEU 21:16 ಅವನು ತನ್ನ ಪುತ್ರರಿಗೆ ತನ್ನ ಆಸ್ತಿಯನ್ನು ಹಂಚಿ ಕೊಡುವಾಗ, ತಾನು ಪ್ರೀತಿಮಾಡದ ಹೆಂಡತಿಯ ಚೊಚ್ಚಲ ಮಗನಿಗೆ ಬದಲಾಗಿ ಅವನು ಪ್ರೀತಿಸುವವಳ ಮಗನನ್ನು ಹಿರಿಯನೆಂದು ಮಾಡಕೂಡದು.
DEU 21:17 ಅವನು ಪ್ರೀತಿಮಾಡದವಳ ಮಗನಿಗೆ ತನ್ನ ಬಳಿಯಲ್ಲಿರುವ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು, ಅವನೇ ಜೇಷ್ಠ ಪುತ್ರನೆಂದು ಒಪ್ಪಿಕೊಳ್ಳಬೇಕು. ಏಕೆಂದರೆ ಅವನೇ ಅವನ ಪ್ರಥಮ ಫಲ. ಅವನಿಗೆ ಜೇಷ್ಠ ಪುತ್ರನ ಹಕ್ಕು ಉಂಟು.
DEU 21:18 ಒಬ್ಬ ಮನುಷ್ಯನಿಗೆ ಮೊಂಡನೂ, ತಿರುಗಿ ಬೀಳುವವನೂ ಆದ ಮಗನಿದ್ದರೆ, ಅವನು ತಂದೆತಾಯಿಯ ಮಾತನ್ನೂ ಕೇಳದೆ, ಅವರು ಅವನನ್ನು ಶಿಸ್ತುಪಡಿಸಲು ಹೇಳುವ ಮಾತನ್ನೂ ಕೇಳದೆ ಹೋದರೆ,
DEU 21:19 ಅವನ ತಂದೆತಾಯಿಗಳು ಅವನನ್ನು ಹಿಡಿದು, ಪಟ್ಟಣದ ಹಿರಿಯರ ಬಳಿಗೂ ಅವನ ಊರಿನ ಬಾಗಿಲಿನ ಬಳಿಗೂ ತಂದು,
DEU 21:20 ಪಟ್ಟಣದ ಹಿರಿಯರಿಗೆ, “ಈ ನಮ್ಮ ಮಗನು ಮೊಂಡನೂ, ತಿರುಗಿ ಬೀಳುವವನೂ, ನಮ್ಮ ಮಾತು ಕೇಳದವನೂ, ಹೊಟ್ಟೆ ಬಾಕನೂ, ಕುಡುಕನೂ ಆಗಿದ್ದಾನೆ,” ಎಂದು ಹೇಳಬೇಕು.
DEU 21:21 ಆಗ ಅವನ ಪಟ್ಟಣದ ಜನರೆಲ್ಲರೂ ಅವನು ಸಾಯುವಂತೆ ಅವನ ಮೇಲೆ ಕಲ್ಲೆಸೆಯಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಇಸ್ರಾಯೇಲರಲ್ಲಿ ಇದನ್ನು ಕೇಳಿ ಭಯಪಡುವರು.
DEU 21:22 ಒಬ್ಬನು ಮರಣದಂಡನೆಗೆ ಯೋಗ್ಯವಾದ ಅಪರಾಧ ಮಾಡಿದ್ದರಿಂದ, ನೀವು ಅವನಿಗೆ ಮರಣದಂಡನೆಯನ್ನು ವಿಧಿಸಿ, ಅವನ ಶವವನ್ನು ಮರಕ್ಕೆ ತೂಗುಹಾಕಿದ್ದಾದರೆ,
DEU 21:23 ಅವನ ಶವ ರಾತ್ರಿಯಲ್ಲಿ ಮರದ ಮೇಲಿರಬಾರದು. ಅವನನ್ನು ಅದೇ ದಿವಸದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
DEU 22:1 ಸ್ವದೇಶದವನ ಎತ್ತಾಗಲಿ, ಕುರಿಯಾಗಲಿ ದಾರಿತಪ್ಪಿ ಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟುಹೋಗಬಾರದು. ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
DEU 22:2 ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆ ಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿ ಕೊಡಬೇಕು.
DEU 22:3 ಅವನ ಕತ್ತೆಯಾಗಲಿ, ಅವನ ವಸ್ತ್ರವಾಗಲಿ, ನಿನ್ನ ಸಹೋದರನು ಕಳೆದುಕೊಂಡ ಯಾವ ವಸ್ತುಗಳೇ ಆಗಲಿ ನೀನು ಕಂಡುಕೊಂಡರೆ, ಹಾಗೆಯೇ ಮಾಡಬೇಕು. ನೀನು ಕಾಣದವರಂತೆ ಇರಬಾರದು.
DEU 22:4 ನಿನ್ನ ಸಹೋದರನ ಕತ್ತೆಯಾಗಲಿ, ಎತ್ತಾಗಲಿ, ಮಾರ್ಗದಲ್ಲಿ ಬಿದ್ದಿರುವುದನ್ನು ನೋಡಿದರೆ ಅಲಕ್ಷ್ಯ ಮಾಡಬೇಡ. ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
DEU 22:5 ಸ್ತ್ರೀಯು ಪುರುಷನ ವಸ್ತ್ರ ಉಟ್ಟುಕೊಳ್ಳಬಾರದು, ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು. ಏಕೆಂದರೆ ಹೀಗೆ ಮಾಡುವವರೆಲ್ಲ ಯೆಹೋವ ದೇವರಿಗೆ ಅಸಹ್ಯ.
DEU 22:6 ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು.
DEU 22:7 ನಿನಗೆ ಒಳ್ಳೆಯದಾಗುವ ಹಾಗೆಯೂ ಬಹುಕಾಲ ಬಾಳುವ ಹಾಗೆಯೂ ಹೇಗಾದರೂ ತಾಯಿಯನ್ನು ಕಳುಹಿಸಿಬಿಟ್ಟು, ಮರಿಗಳನ್ನು ತೆಗೆದುಕೊಳ್ಳಬಹುದು.
DEU 22:8 ನೀನು ಹೊಸ ಮನೆಯನ್ನು ಕಟ್ಟಿದಾಗ, ಯಾರೂ ಅದರ ಮೇಲಿನಿಂದ ಬಿದ್ದು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಬೇಕು.
DEU 22:9 ನಿನ್ನ ದ್ರಾಕ್ಷಿತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜವೂ, ಬಿತ್ತಿದ ಬೀಜದ ಪೈರೂ, ದ್ರಾಕ್ಷಿತೋಟದ ಹುಟ್ಟುವಳಿಯೂ ಅಶುದ್ಧವಾಗುವುದು.
DEU 22:10 ಎತ್ತನ್ನೂ, ಕತ್ತೆಯನ್ನೂ ಜೊತೆ ಮಾಡಿ, ನೇಗಿಲಿಗೆ ಕಟ್ಟಬಾರದು.
DEU 22:11 ನಾರು ಮತ್ತು ಉಣ್ಣೆ ಎರಡೂ ಕೂಡಿರುವ ಬಟ್ಟೆಯನ್ನೂ ಧರಿಸಬಾರದು.
DEU 22:12 ನೀನು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
DEU 22:13 ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ,
DEU 22:14 ಅವಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ, “ನಾನು ಇವಳನ್ನು ಮದುವೆ ಮಾಡಿಕೊಂಡೆ, ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು,” ಎಂದು ಹೇಳಿ ಅವಳ ಮೇಲೆ ಆಪಾದನೆ ತರಬಹುದು.
DEU 22:15 ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು, ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
DEU 22:16 ಆಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇನೆಂದರೆ, “ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿಯಾಗಿ ಕೊಟ್ಟಿದ್ದೇನೆ, ಅವನು ಅವಳನ್ನು ದ್ವೇಷಿಸಿ,
DEU 22:17 ಅವನು, ‘ನಿನ್ನ ಮಗಳು ಕನ್ನಿಕೆಯಲ್ಲವೆಂದು ಕಂಡೆನೆಂಬುದಾಗಿ, ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟಿದ್ದಾನೆ.’ ಆದರೂ ನನ್ನ ಮಗಳ ಕನ್ಯಾಲಕ್ಷಣಕ್ಕೆ ಇದೇ ಪ್ರಮಾಣ,” ಎಂದು ಹೇಳಿ, ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
DEU 22:18 ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಬಂದು ಅವನನ್ನು ಶಿಕ್ಷಿಸಬೇಕು.
DEU 22:19 ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ನಿಕೆಯ ಹೆಸರನ್ನು ಕೆಡಿಸಿದ್ದರಿಂದ, ಅವನಿಗೆ ನೂರು ಬೆಳ್ಳಿ ಶೆಕೆಲ್‌ಗಳ ದಂಡವನ್ನು ವಿಧಿಸಿ, ಅದನ್ನು ಆ ಹುಡುಗಿಯ ತಂದೆಗೆ ಕೊಡಬೇಕು. ಇದಲ್ಲದೆ ಅವಳು ಅವನಿಗೆ ಹೆಂಡತಿಯಾಗಬೇಕು, ಅವನು ಬದುಕಿರುವವರೆಗೆ ಅವಳನ್ನು ಪರಿತ್ಯಾಗಮಾಡಬಾರದು.
DEU 22:20 ಆದರೆ ಆ ಮಾತು ಸತ್ಯವಾಗಿದ್ದರೆ, ಆ ಹುಡುಗಿಯಲ್ಲಿ ಕನ್ಯಾಲಕ್ಷಣ ಕಾಣದೆ ಇದ್ದರೆ,
DEU 22:21 ಆ ಹುಡುಗಿಯನ್ನು ಅವಳ ತಂದೆಯ ಮನೆ ಬಾಗಿಲಿಗೆ ತರಬೇಕು. ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು. ಏಕೆಂದರೆ ಅವಳು ತಂದೆಯ ಮನೆಯಲ್ಲಿರುವಾಗಲೇ ಅಕ್ರಮವಾಗಿ ನಡೆದು, ಇಸ್ರಾಯೇಲಿನಲ್ಲಿ ಸೂಳೆತನ ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
DEU 22:22 ಒಬ್ಬ ಮನುಷ್ಯನು ಪರನ ಹೆಂಡತಿಯೊಡನೆ ಮಲಗಿಕೊಂಡವನಾಗಿ ಸಿಕ್ಕಿಬಿದ್ದರೆ, ಆ ಸ್ತ್ರೀಯ ಸಂಗಡ ಮಲಗಿಕೊಂಡ ಮನುಷ್ಯನೂ ಆ ಸ್ತ್ರೀಯೂ ಇಬ್ಬರೂ ಸಾಯಬೇಕು. ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
DEU 22:23 ಕನ್ನಿಕೆಯಾದ ಒಬ್ಬ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯ ಮಾಡಿರಲಾಗಿ, ಮತ್ತೊಬ್ಬ ಮನುಷ್ಯನು ಆ ಪಟ್ಟಣದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ,
DEU 22:24 ಅವರಿಬ್ಬರನ್ನೂ ಆ ಪಟ್ಟಣದ ಬಾಗಿಲಿನ ಹೊರಗೆ ತಂದು, ಅವರು ಸಾಯುವ ಹಾಗೆ ಕಲ್ಲೆಸೆಯಬೇಕು. ಆ ಹುಡುಗಿಯು ಪಟ್ಟಣದಲ್ಲಿ ಇದ್ದರೂ, ಕೂಗದೆ ಇದ್ದದ್ದರಿಂದಲೂ, ಆ ಮನುಷ್ಯನು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
DEU 22:25 ಆದರೆ ಆ ಮನುಷ್ಯನು ನಿಶ್ಚಯಮಾಡಿದ ಹುಡುಗಿಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ, ಅವಳ ಸಂಗಡ ಮಲಗಿದರೆ, ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬಾರದು.
DEU 22:26 ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
DEU 22:27 ಏಕೆಂದರೆ ಅವನು ಹೊಲದಲ್ಲಿ ಅವಳನ್ನು ಕಂಡನು, ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು. ಆದರೆ ರಕ್ಷಿಸುವವನು ಅವಳಿಗೆ ಯಾರೂ ಇರಲಿಲ್ಲ.
DEU 22:28 ಒಬ್ಬ ಮನುಷ್ಯನು ನಿಶ್ಚಯ ಮಾಡದಿರುವ ಕನ್ಯೆಯನ್ನು ಕಂಡು, ಅವಳನ್ನು ಹಿಡಿದು, ಅವಳ ಸಂಗಡ ಮಲಗಿ ಸಿಕ್ಕಿಬಿದ್ದರೆ,
DEU 22:29 ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು, ಏಕೆಂದರೆ ಅವನು ಅವಳನ್ನು ಕೆಡಿಸಿದ್ದರಿಂದ, ಬದುಕುವ ದಿವಸಗಳೆಲ್ಲಾ ಅವಳನ್ನು ಪರಿತ್ಯಾಗಮಾಡಬಾರದು.
DEU 22:30 ಯಾರೂ ತನ್ನ ತಂದೆಯ ಹೆಂಡತಿಯನ್ನು ಮದುವೆ ಮಾಡಿಕೊಳ್ಳಬಾರದು. ತನ್ನ ತಂದೆಯ ಹಾಸಿಗೆಯನ್ನು ಅಗೌರವಿಸಬಾರದು.
DEU 23:1 ಬೀಜ ಹೊಡಿಸಿಕೊಂಡವರು ಅಥವಾ ಜನನ ಇಂದ್ರಿಯ ಕತ್ತರಿಸಿಕೊಂಡವರು ಯೆಹೋವ ದೇವರ ಸಭೆಗೆ ಸೇರಬಾರದು.
DEU 23:2 ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲಾಂತರದವರೆಗೂ ಯೆಹೋವ ದೇವರ ಸಭೆಗೆ ಸೇರಬಾರದು.
DEU 23:3 ಅಮ್ಮೋನಿಯರು ಇಲ್ಲವೆ ಮೋವಾಬ್ಯರು ಯೆಹೋವ ದೇವರ ಸಭೆಗೆ ಸೇರಬಾರದು; ಹತ್ತನೆಯ ತಲಾಂತರವರೆಗೆ ಅವರು ಯೆಹೋವ ದೇವರ ಸಭೆಯಲ್ಲಿ ಸೇರಬಾರದು.
DEU 23:4 ಏಕೆಂದರೆ ನೀವು ಈಜಿಪ್ಟನ್ನು ಬಿಟ್ಟು ಬರುವಾಗ, ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವುದಕ್ಕೆ ಎದುರುಗೊಳ್ಳಲಿಲ್ಲ. ನಿಮ್ಮನ್ನು ಶಪಿಸುವುದಕ್ಕೆ ಮೆಸೊಪೊತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ಬಿಳಾಮನಿಗೆ ಕೂಲಿ ಕೊಟ್ಟು ನಿಮಗೆ ವಿರೋಧವಾಗಿ ಕರೆಸಿದರು.
DEU 23:5 ಆದರೂ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸಲಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು.
DEU 23:6 ನೀವು ಇರುವವರೆಗೆ ಎಂದಿಗೂ ಅವರ ಏಳಿಗೆಯನ್ನು, ಕ್ಷೇಮವನ್ನು ಬಯಸಬಾರದು.
DEU 23:7 ಎದೋಮ್ಯನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನು ನಿಮ್ಮ ಸಹೋದರನು; ಈಜಿಪ್ಟಿನವನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನ ದೇಶದಲ್ಲಿ ನೀವು ಪರವಾಸಿಯಾಗಿದ್ದಿರಿ.
DEU 23:8 ಅವರಿಗೆ ಹುಟ್ಟುವ ಮಕ್ಕಳಲ್ಲಿ ಮೂರನೆಯ ತಲಾಂತರದವರು ಯೆಹೋವ ದೇವರ ಸಭೆಯಲ್ಲಿ ಸೇರಬಹುದು.
DEU 23:9 ನೀವು ಶತ್ರುಗಳಿಗೆ ವಿರೋಧವಾಗಿ ಸೈನ್ಯವಾಗಿ ಹೊರಟರೆ, ಪಾಳೆಯದಲ್ಲಿ ಯಾವ ಅಶುದ್ಧ ಕಾರ್ಯಗಳು ಇಲ್ಲದಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.
DEU 23:10 ರಾತ್ರಿಯಲ್ಲಿ ವೀರ್ಯ ವಿಸರ್ಜನೆಯ ದೆಸೆಯಿಂದ ಯಾವನಾದರು ಅಶುದ್ಧನಾದವನು ನಿಮ್ಮಲ್ಲಿದ್ದರೆ, ಅವನು ಪಾಳೆಯದ ಒಳಗೆ ಇರದೆ ಹೊರಗೆ ಇರಬೇಕು.
DEU 23:11 ಸಂಜೆ ಆಗುತ್ತಿರುವಾಗ ಅವನು ಸ್ನಾನಮಾಡಿ, ಸೂರ್ಯನು ಮುಳುಗಿದಾಗ ಪಾಳೆಯದ ಒಳಗೆ ತಿರುಗಿಬರಬಹುದು.
DEU 23:12 ಇದಲ್ಲದೆ ನೀವು ಮಲವಿಸರ್ಜನೆಗೆ ಹೋಗಲು ಪಾಳೆಯದ ಹೊರಗೆ ಸ್ಥಳವಿರಬೇಕು.
DEU 23:13 ನಿಮ್ಮ ಆಯುಧಗಳ ಜೊತೆಯಲ್ಲಿ ಕಬ್ಬಿಣದ ಸಲಕೆ ಇರಬೇಕು. ನೀವು ಮಲವಿಸರ್ಜನೆ ಮಾಡಿದಾಗ, ಆ ಸಲಕೆಯಿಂದ ಅಗೆದು ಮುಚ್ಚಿಬಿಡಬೇಕು.
DEU 23:14 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಕ್ಷಿಸುವುದಕ್ಕೂ, ನಿಮ್ಮ ಶತ್ರುಗಳನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವುದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾರೆ. ಅವರು ನಿಮ್ಮಲ್ಲಿ ಅಶುದ್ಧವಾದ ಕಾರ್ಯವನ್ನು ನೋಡಿ, ನಿಮ್ಮನ್ನು ಬಿಟ್ಟು ತಿರುಗಿಹೋಗದಂತೆ ನಿಮ್ಮ ಪಾಳೆಯವು ನಿರ್ಮಲವಾಗಿರಬೇಕು.
DEU 23:15 ತನ್ನ ಯಜಮಾನನನ್ನು ಬಿಟ್ಟು, ನಿನ್ನ ಬಳಿಗೆ ತಪ್ಪಿಸಿಕೊಂಡು ಬಂದ ದಾಸನನ್ನು ಹಿಡಿದು ಯಜಮಾನನಿಗೆ ಒಪ್ಪಿಸಬಾರದು.
DEU 23:16 ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಒಳ್ಳೆಯದೆಂದು ತೋಚುತ್ತದೆಯೋ, ಅಲ್ಲಿಯೇ ವಾಸವಾಗಲಿ. ಅವನನ್ನು ನೀವು ಕುಗ್ಗಿಸಬಾರದು.
DEU 23:17 ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ಗುಡಿ ವೇಶ್ಯೆಯಾಗಬಾರದು. ಇಸ್ರಾಯೇಲರಲ್ಲಿ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು.
DEU 23:18 ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯು ಸೂಳೆಗಾರಿಕೆಯಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ದೇವ ಮಂದಿರದೊಳಗೆ ತರಬಾರದು. ಏಕೆಂದರೆ ಅವೆರಡನ್ನು ನಿನ್ನ ದೇವರಾದ ಯೆಹೋವ ದೇವರು ದ್ವೇಷಿಸುತ್ತಾರೆ.
DEU 23:19 ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವನ್ನಾಗಲಿ, ಬೇರೆ ಯಾವುದನ್ನಾಗಲಿ ಬಡ್ಡಿಗೆ ಕೊಡಬಾರದು.
DEU 23:20 ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸಹೋದರನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೆಲಸಗಳನ್ನು ಆಶೀರ್ವದಿಸುತ್ತಾರೆ.
DEU 23:21 ನೀನು ನಿನ್ನ ದೇವರಾದ ಯೆಹೋವ ದೇವರಿಗೆ ಹರಕೆಮಾಡಿದ ಮೇಲೆ ಅದನ್ನು ಸಲ್ಲಿಸುವುದಕ್ಕೆ ತಡಮಾಡಬೇಡ. ಏಕೆಂದರೆ ನಿನ್ನ ದೇವರಾದ ಯೆಹೋವ ದೇವರು ಅದನ್ನು ನಿಶ್ಚಯವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವರು. ತೀರಿಸದೆ ಹೋಗುವದು ಪಾಪ.
DEU 23:22 ಆದರೆ ನೀನು ಹರಕೆ ಮಾಡದಿದ್ದರೆ, ನೀನು ದೋಷಿಯಾಗುವುದಿಲ್ಲ.
DEU 23:23 ನಿನ್ನ ತುಟಿಗಳಿಂದ ಹೊರಟಿದ್ದನ್ನು ಮಾಡುವುದಕ್ಕೆ ತಪ್ಪಬೇಡ. ನಿನ್ನ ದೇವರಾದ ಯೆಹೋವ ದೇವರಿಗೆ ನಿನ್ನ ಬಾಯಿಯಿಂದಲೇ ನೀನು ಹರಕೆ ಮಾಡಿದಿಯಲ್ಲವೇ.
DEU 23:24 ನಿನ್ನ ನೆರೆಯವನ ದ್ರಾಕ್ಷಿ ತೋಟಕ್ಕೆ ಬಂದರೆ, ನಿನ್ನ ಮನಸ್ಸು ತೃಪ್ತಿಯಾಗುವವರೆಗೆ ಹಣ್ಣುಗಳನ್ನು ತಿನ್ನಬಹುದು. ಆದರೆ ನಿನ್ನ ಚೀಲದಲ್ಲಿ ಹಾಕಿಕೊಳ್ಳಬಾರದು.
DEU 23:25 ನಿನ್ನ ನೆರೆಯವನ ಪೈರಿನ ಬಳಿಗೆ ಹಾದುಹೋಗುವಾಗ, ಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲು ಹಾಕಿ ಕೊಯ್ಯಬಾರದು.
DEU 24:1 ಒಬ್ಬನು ತಾನು ಮದುವೆಮಾಡಿಕೊಂಡ ಮಹಿಳೆಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಅಸಂತೃಪ್ತನಾದರೆ, ವಿವಾಹ ವಿಚ್ಛೇದನ ಪತ್ರವನ್ನು ಬರೆದು, ಅವಳ ಕೈಯಲ್ಲಿ ಕೊಟ್ಟು, ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಟ್ಟಾಗ,
DEU 24:2 ಅವಳು ಅವನ ಮನೆಯನ್ನು ಬಿಟ್ಟುಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗಬಹುದು.
DEU 24:3 ಆ ಮತ್ತೊಬ್ಬ ಗಂಡನು ಅವಳನ್ನು ಹಗೆಮಾಡಿ, ವಿವಾಹ ವಿಚ್ಛೇದನ ಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು, ತನ್ನ ಮನೆಯಿಂದ ಕಳುಹಿಸಿಬಿಟ್ಟರೆ, ಇಲ್ಲವೆ ಆ ಎರಡನೆಯ ಗಂಡನು ಸತ್ತರೆ,
DEU 24:4 ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಹೆಂಡತಿಯಾಗಿ ಸ್ವೀಕರಿಸಬಾರದು. ಅದು ಯೆಹೋವ ದೇವರ ಮುಂದೆ ಅಸಹ್ಯವೇ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ದೋಷವುಂಟಾಗಲು ಅವಕಾಶ ಕೊಡಬಾರದು.
DEU 24:5 ಒಬ್ಬನು ಹೊಸದಾಗಿ ಮದುವೆಯಾಗಿದ್ದರೆ, ಅವನನ್ನು ಯುದ್ಧಕ್ಕೆ ಕಳುಹಿಸಬಾರದು ಅಥವಾ ಜವಾಬ್ದಾರಿಯ ಯಾವುದೊಂದೂ ಕೆಲಸವನ್ನು ಅವನಿಂದ ಮಾಡಿಸಬಾರದು. ಅವನು ಒಂದು ವರ್ಷ ಸ್ವತಂತ್ರನಾಗಿ ತನ್ನ ಮನೆಯಲ್ಲಿದ್ದು, ತಾನು ಮದುವೆಯಾದ ಹೆಂಡತಿಯೊಡನೆ ಸುಖವಾಗಿರಲಿ.
DEU 24:6 ಬೀಸುವ ಕಲ್ಲಿನಲ್ಲಿ ಅಡಿಗಲ್ಲನ್ನಾದರೂ, ಮೇಲಿನ ಕಲ್ಲನ್ನಾದರೂ ಒತ್ತೆಯಾಗಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ, ಅದು ವ್ಯಕ್ತಿಯ ಜೀವನೋಪಾಯವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಿರುವುದು.
DEU 24:7 ಒಬ್ಬನು ತನ್ನ ಸಹೋದರರಾದ ಇಸ್ರಾಯೇಲರಲ್ಲಿ ಒಬ್ಬನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ನಡುವೆಯಿಂದ ತೆಗೆದುಹಾಕಬೇಕು.
DEU 24:8 ಕುಷ್ಠರೋಗಿಗಳ ವಿಷಯದಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವುದನ್ನೆಲ್ಲಾ ನೀವು ಜಾಗ್ರತೆಯಿಂದ ಕಾಪಾಡಿ ಕೈಗೊಳ್ಳುವ ಹಾಗೆ ನೋಡಿಕೊಳ್ಳಿ. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನು ನೀವು ಕಾಪಾಡಿ ಕೈಗೊಳ್ಳಬೇಕು.
DEU 24:9 ನೀವು ಈಜಿಪ್ಟಿನಿಂದ ಹೊರಗೆ ಬಂದಾಗ, ಮಾರ್ಗದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ಮಿರ್ಯಾಮಗಳಿಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.
DEU 24:10 ನಿನ್ನ ನೆರೆಯವನಿಗೆ ನೀವು ಯಾವುದೇ ರೀತಿಯ ಸಾಲಕೊಟ್ಟರೆ, ಅವನ ಒತ್ತೆಯನ್ನು ಕೇಳಲು ಅವನ ಮನೆಯಲ್ಲಿ ಪ್ರವೇಶಿಸಬಾರದು.
DEU 24:11 ನೀನು ಹೊರಗೆ ನಿಂತಿರಬೇಕು. ಸಾಲ ಕೊಟ್ಟವನೇ ಒತ್ತೆಯನ್ನು ನಿನಗೆ ಹೊರಗೆ ತರಬೇಕು.
DEU 24:12 ಅವನು ಬಡವನಾದರೆ, ಅವನ ಒತ್ತೆಯನ್ನು ಇಟ್ಟುಕೊಂಡು ರಾತ್ರಿ ಮಲಗಬೇಡ.
DEU 24:13 ನಿನ್ನ ನೆರೆಯವನು ಅದರಲ್ಲಿ ಮಲಗಲು ಸಾಯಂಕಾಲದ ಹೊತ್ತಿಗೆ ಅವನು ಹೊದ್ದುಕೊಳ್ಳುವ ವಸ್ತ್ರವನ್ನು ಹಿಂತಿರುಗಿಸು. ಆಗ ಅವನು ನಿನ್ನನ್ನು ಆಶೀರ್ವದಿಸುವನು. ನೀನು ಮಾಡಿದ್ದು ನಿನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ನೀತಿಯ ಕಾರ್ಯವೆಂದು ಪರಿಗಣಿಸಲಾಗುವುದು.
DEU 24:14 ನಿನ್ನ ನಾಡಿನ ಸಹೋದರನಾಗಲಿ, ಪರದೇಶಿಯವನಾಗಲಿ, ಬಡ ಮತ್ತು ನಿರ್ಗತಿಕನಾಗಿರುವ ಕೂಲಿಯವನನ್ನು ಬಾಧಿಸಬಾರದು.
DEU 24:15 ಅವನ ದಿನದ ಕೂಲಿಯನ್ನು ಆ ದಿನದಲ್ಲೇ ಸೂರ್ಯನು ಮುಳುಗುವುದರೊಳಗೆ ಅವನಿಗೆ ಕೊಡಬೇಕು. ಏಕೆಂದರೆ ಅವನು ಬಡವನಾಗಿದ್ದರಿಂದ ಅದನ್ನೇ ಎದುರು ನೋಡುತ್ತಿರುತ್ತಾನೆ. ನೀವು ಕೊಡದಿದ್ದರೆ, ಅವನು ನಿನಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆಯಿಡುವನು. ಆಗ ನಿನ್ನ ಮೇಲೆ ಪಾಪದ ಹೊರೆ ಬಿದ್ದೀತು.
DEU 24:16 ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು.
DEU 24:17 ಪರನಿಗೂ, ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸಬೇಡ. ವಿಧವೆಯಿಂದ ಉಡುವ ವಸ್ತ್ರವನ್ನು ಒತ್ತೆಯಾಗಿ ತೆಗೆದುಕೊಳ್ಳಬೇಡ.
DEU 24:18 ನೀನು ಈಜಿಪ್ಟಿನಲ್ಲಿ ದಾಸನಾಗಿದ್ದೆ ಎಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದ್ದರಿಂದ ಈ ಕಾರ್ಯಗಳನ್ನೆಲ್ಲಾ ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
DEU 24:19 ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ, ಹೊಲದಲ್ಲಿ ಸಿವುಡನ್ನು ಮರೆತುಬಿಟ್ಟರೆ, ಅದನ್ನು ತೆಗೆದುಕೊಳ್ಳುವುದಕ್ಕೆ ತಿರುಗಿಕೊಳ್ಳಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. ನೀವು ಹೀಗೆ ನಡೆದುಕೊಂಡರೆ, ನಿನ್ನ ದೇವರಾದ ಯೆಹೋವ ದೇವರು ನಿನ್ನ ಎಲ್ಲಾ ದುಡಿಮೆಯಲ್ಲಿ ನಿನ್ನನ್ನು ಆಶೀರ್ವದಿಸುವರು.
DEU 24:20 ಓಲಿವ್ ಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವದಕ್ಕೆ ಹೋಗಬಾರದು, ಮಿಕ್ಕಿದ್ದನ್ನು ಪರದೇಶದವನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.
DEU 24:21 ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು. ಪರದೇಶಿ, ತಂದೆತಾಯಿ ಇಲ್ಲದ ವ್ಯಕ್ತಿ, ವಿಧವೆ ಇಂಥವರಿಗಾಗಿ ಅದನ್ನು ಬಿಟ್ಟುಬಿಡು.
DEU 24:22 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿ ವಾಸವಾಗಿದ್ದಿರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.
DEU 25:1 ಜನರಲ್ಲಿ ಏನಾದರೂ ವ್ಯಾಜ್ಯವಿದ್ದರೆ, ಅವರು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬೇಕು. ನ್ಯಾಯಾಧೀಶರು ನೀತಿವಂತನನ್ನು ನೀತಿವಂತನೆಂದೂ ತಪ್ಪುಳ್ಳವನನ್ನು ಅಪರಾಧಿಯೆಂದೂ ನ್ಯಾಯತೀರಿಸುವರು.
DEU 25:2 ಅಪರಾಧಿಗೆ ಪೆಟ್ಟಿನ ಶಿಕ್ಷೆ ತಿರ್ಮಾನವಾದರೆ, ನ್ಯಾಯಾಧಿಪತಿ ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.
DEU 25:3 ಪೆಟ್ಟಿನ ಶಿಕ್ಷೆ ನಲವತ್ತಕ್ಕಿಂತ ಹೆಚ್ಚಿರಬಾರದು. ಅಷ್ಟಕ್ಕಿಂತ ಮೀರಿ ನೀವು ಹೆಚ್ಚುಪೆಟ್ಟುಗಳನ್ನು ಹೊಡಿಸಿದರೆ, ನಿಮ್ಮ ಸ್ವದೇಶದವನನ್ನು ಕೇವಲ ನೀಚನನ್ನಾಗಿ ನೀವು ಕಂಡಂತಾಗುವುದು.
DEU 25:4 ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು.
DEU 25:5 ಸಹೋದರರು ಕೂಡಿ ವಾಸಮಾಡುವಾಗ, ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಆ ಸತ್ತವನ ಹೆಂಡತಿ ಮನೆಬಿಟ್ಟು ಅನ್ಯನನ್ನು ಮದುವೆಯಾಗಬಾರದು. ಗಂಡನ ಸಹೋದರನು ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನನ ಕರ್ತವ್ಯವನ್ನು ಪೂರೈಸಬೇಕು.
DEU 25:6 ಅವಳು ಹೆರುವ ಚೊಚ್ಚಲ ಮಗನನ್ನು ಸತ್ತವನ ಮಗನೆಂದೇ ಎಣಿಸಬೇಕು, ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಾಯೇಲರಲ್ಲಿ ಅಳಿದುಹೋಗುವುದಿಲ್ಲ.
DEU 25:7 ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತೆಗೆದುಕೊಳ್ಳವ ಮನಸ್ಸಿಲ್ಲದಿದ್ದರೆ, ಅತ್ತಿಗೆಯು ಚಾವಡಿಗೆ ಹೋಗಿ ಹಿರಿಯರ ಹತ್ತಿರ ಬಂದು, “ನನ್ನ ಗಂಡನ ಸಹೋದರನು ತನ್ನ ಸಹೋದರನ ಹೆಸರನ್ನು ಇಸ್ರಾಯೇಲಿನಲ್ಲಿ ಮುಂದುವರಿಸಲು ಸಿದ್ಧನಿಲ್ಲ. ಅವನು ತನ್ನ ಮೈದುನನ ಕರ್ತವ್ಯವನ್ನು ನಡೆಸಲು ಮನಸ್ಸಿಲ್ಲದವನಾಗಿದ್ದಾನೆ,” ಎಂದು ಹೇಳಬೇಕು.
DEU 25:8 ಆಗ ಅವನ ಪಟ್ಟಣದ ಹಿರಿಯರು ಅವನನ್ನು ಕರೆದು, ಅವನ ಸಂಗಡ ಮಾತನಾಡಬೇಕು. ಅವನು ನಿಂತುಕೊಂಡು, “ಅವಳನ್ನು ಮದುವೆಯಾಗುವುದಕ್ಕೆ ನನಗೆ ಮನಸ್ಸಿಲ್ಲ,” ಎಂದು ಹೇಳಿದರೆ,
DEU 25:9 ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು, ಕೆರವನ್ನು ಅವನ ಪಾದದಿಂದ ಬಿಡಿಸಿ, ಅವನ ಮುಖದಲ್ಲಿ ಉಗುಳಿ ಉತ್ತರಕೊಟ್ಟು, “ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು,” ಎಂದು ಹೇಳಲಿ.
DEU 25:10 ಆಮೇಲೆ ಆ ಮನುಷ್ಯನ ಮನೆಯವರಿಗೆ ಇಸ್ರಾಯೇಲಿನಲ್ಲಿ ಕೆರಬಿಚ್ಚಿಸಿಕೊಂಡವನ ಮನೆಯವರು ಎಂದು ಹೆಸರಾಗುವುದು.
DEU 25:11 ಇಬ್ಬರು ಮನುಷ್ಯರು, ಒಬ್ಬನ ಸಂಗಡ ಒಬ್ಬನು ಜಗಳವಾಡುತ್ತಿರುವಾಗ, ಒಬ್ಬನ ಹೆಂಡತಿ ತನ್ನ ಗಂಡನನ್ನು ಹೊಡೆಯುವವನ ಕೈಯಿಂದ ಬಿಡಿಸುವುದಕ್ಕೆ ಸಮೀಪ ಬಂದು ಕೈಚಾಚಿ, ಅವನ ಜನನೇಂದ್ರಿಯವನ್ನು ಹಿಡಿದರೆ,
DEU 25:12 ಅವಳ ಕೈಯನ್ನು ಕಡಿದುಹಾಕಬೇಕು. ಅವಳಿಗೆ ಕರುಣೆ ತೋರಿಸಬಾರದು.
DEU 25:13 ಹೆಚ್ಚು ಕಡಿಮೆಯಾಗಿರುವ ಎರಡು ವಿಧವಾದ ಕಳ್ಳ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬಾರದು.
DEU 25:14 ಹೆಚ್ಚು ಕಡಿಮೆಯಾದ ಎರಡು ವಿಧವಾದ ಕಳ್ಳ ಸೇರುಗಳು ನಿಮ್ಮ ಮನೆಯಲ್ಲಿರಬಾರದು.
DEU 25:15 ತೂಕದ ಕಲ್ಲೂ, ಅಳತೆಯ ಸೇರೂ, ಸರಿಯಾಗಿಯೂ ನ್ಯಾಯವಾಗಿಯೂ ಇರಬೇಕು. ಆಗ ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ಭೂಮಿಯ ಮೇಲೆ ನಿನ್ನ ದಿನಗಳು ಹೆಚ್ಚಾಗುತ್ತವೆ.
DEU 25:16 ಅಂಥ ಅನ್ಯಾಯ ಮಾಡುವವರೆಲ್ಲರೂ ನಿನ್ನ ದೇವರಾದ ಯೆಹೋವ ದೇವರಿಗೆ ಅಸಹ್ಯ.
DEU 25:17 ನೀವು ಈಜಿಪ್ಟನ್ನು ಬಿಟ್ಟು ಬರುವ ಮಾರ್ಗದಲ್ಲಿ ಅಮಾಲೇಕ್ಯರು ನಿನಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.
DEU 25:18 ಅವರು ಮಾರ್ಗದಲ್ಲಿ ನಿಮಗೆ ಎದುರುಗೊಂಡು, ನೀವು ಆಯಾಸವುಳ್ಳವರಾಗಿಯೂ, ದಣಿದವರಾಗಿಯೂ ಇದ್ದ ಸಮಯದಲ್ಲಿ ನಿಮ್ಮ ಹಿಂದೆ ಇದ್ದ ಬಲಹೀನರೆಲ್ಲರನ್ನು ಹಿಂಭಾಗದಲ್ಲಿ ಸಂಹಾರ ಮಾಡಿದರು. ಅವರಿಗೆ ದೇವರ ಬಗ್ಗೆ ಯಾವ ಭಯವೂ ಇರಲಿಲ್ಲ.
DEU 25:19 ಆದ್ದರಿಂದ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಶಮಾಡಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದ ಸುತ್ತಲು ಇರುವ ಶತ್ರುಗಳಿಂದ ನಿಮ್ಮನ್ನು ಬಿಡಿಸಿ, ವಿಶ್ರಾಂತಿ ಕೊಡುವರು. ಆಗ ನೀವು ಅಮಾಲೇಕ್ಯರ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು, ಇದನ್ನು ಮರೆಯಬಾರದು.
DEU 26:1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವತ್ತಾಗಿ ಕೊಡುವ ದೇಶಕ್ಕೆ ನೀವು ಬಂದು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸಮಾಡುವಿರಿ.
DEU 26:2 ಆಗ ನಿಮ್ಮ ದೇಶದಿಂದ ನೀವು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಬುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವದಕ್ಕೆ ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
DEU 26:3 ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ, “ಯೆಹೋವ ದೇವರು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನಾನು ಸೇರಿದ್ದಾಯಿತೆಂದು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಈಗ ನಾನು ಒಪ್ಪಿಕೊಳ್ಳುತ್ತೇನೆ,” ಎಂದು ಹೇಳಬೇಕು.
DEU 26:4 ಆಗ ಯಾಜಕನು ಆ ಬುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದು, ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠದ ಮುಂದೆ ಇಡಬೇಕು.
DEU 26:5 ಆಮೇಲೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ, “ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಅಲೆದಾಡುತ್ತಾ ಸ್ವಲ್ಪ ಜನರೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಬಲಿಷ್ಠವಾದ ಮಹಾಜನಾಂಗವಾದರು.
DEU 26:6 ಆದರೆ ಈಜಿಪ್ಟಿನವರು ನಮ್ಮನ್ನು ಕ್ರೂರವಾಗಿ ನಡೆಸಿ, ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.
DEU 26:7 ಆಗ ನಾವು ನಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ಮೊರೆಯಿಟ್ಟೆವು. ಯೆಹೋವ ದೇವರು ನಮ್ಮ ಸ್ವರವನ್ನು ಕೇಳಿ, ನಮ್ಮ ಸಂಕಟವನ್ನೂ ಕಷ್ಟವನ್ನೂ ದಬ್ಬಾಳಿಕೆಯನ್ನೂ ನೋಡಿದರು.
DEU 26:8 ಯೆಹೋವ ದೇವರು ನಮ್ಮನ್ನು ತಮ್ಮ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಮಹಾಭಯದಿಂದಲೂ, ಸೂಚಕಕಾರ್ಯಗಳಿಂದಲೂ, ಅದ್ಭುತಗಳಿಂದಲೂ, ಈಜಿಪ್ಟಿನಿಂದ ಹೊರಗೆ ಬರಮಾಡಿ,
DEU 26:9 ನಮ್ಮನ್ನು ಈ ಸ್ಥಳಕ್ಕೆ ಕರೆತಂದು, ಹಾಲೂ ಜೇನೂ ಹರಿಯುವ ದೇಶವಾಗಿರುವ ಈ ದೇಶವನ್ನು ನಮಗೆ ಕೊಟ್ಟಿದ್ದಾರೆ.
DEU 26:10 ಹೀಗಿರುವುದರಿಂದ ಯೆಹೋವ ದೇವರೇ, ನೀವು ನಮಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿದ್ದೇವೆ,” ಎಂದು ಹೇಳಬೇಕು. ಆಗ ಅದನ್ನು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿಟ್ಟು, ಅವರನ್ನು ಆರಾಧಿಸಬೇಕು.
DEU 26:11 ನಿಮ್ಮ ದೇವರಾದ ಯೆಹೋವ ದೇವರು ನಿಮಗೂ ನಿಮ್ಮ ಮನೆಗೂ ಲೇವಿಯರಿಗೂ ನಿಮ್ಮ ಸಂಗಡ ಇರುವ ಪರವಾಸಿಗಳಿಗೂ ನೀಡಿರುವ ಸೌಲಭ್ಯಕ್ಕಾಗಿ ಸಂತೋಷ ಪಡಬೇಕು.
DEU 26:12 ಹತ್ತನೆಯ ಪಾಲನ್ನು ಕೊಡುವ ವರ್ಷವಾಗಿರುವ ಮೂರನೆಯ ವರ್ಷದಲ್ಲಿ ನೀವು ನಿಮ್ಮ ಎಲ್ಲಾ ಹುಟ್ಟುವಳಿಯ ಹತ್ತನೆಯ ಪಾಲನ್ನು ಪ್ರತ್ಯೇಕಿಸಿದಾಗ, ನಿಮ್ಮ ಊರುಗಳಲ್ಲಿರುವ ಲೇವಿಯರೂ ಪರದೇಶಿಗಳೂ ದಿಕ್ಕಿಲ್ಲದವರೂ ವಿಧವೆಯರೂ ಉಂಡು ತೃಪ್ತರಾಗುವಂತೆ ಅದನ್ನು ಅವರಿಗೆ ಕೊಡಬೇಕು.
DEU 26:13 ಆಗ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, “ನಾವು ಮೀಸಲಿಟ್ಟ ಪರಿಶುದ್ಧ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದು, ನೀವು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರಿಗೆ, ಪರದೇಶಿಗೆ, ತಂದೆತಾಯಿ ಇಲ್ಲದವರಿಗೆ, ವಿಧವೆಯರಿಗೆ ಕೊಟ್ಟಿದ್ದೇವೆ. ನಿಮ್ಮ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ, ಮರೆಯಲೂ ಇಲ್ಲ.
DEU 26:14 ದುಃಖದ ಸಮಯದಲ್ಲಿ ಪರಿಶುದ್ಧವಾದದ್ದರಲ್ಲಿ ಏನೂ ತಿನ್ನಲಿಲ್ಲ. ಅಶುದ್ಧರಾಗಿ ಅದರಿಂದ ತೆಗೆದುಕೊಂಡು ಉಪಯೋಗಿಸಲಿಲ್ಲ. ಸತ್ತವರಿಗಾಗಿ ಅದರಲ್ಲಿ ಏನೂ ಕೊಡಲಿಲ್ಲ. ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿದ್ದೇವೆ. ನಮಗೆ ಆಜ್ಞಾಪಿಸಿದ್ದೆಲ್ಲಾ ಮಾಡಿದ್ದೇವೆ.
DEU 26:15 ಪರಲೋಕದ ನಿಮ್ಮ ಪರಿಶುದ್ಧ ನಿವಾಸದೊಳಗಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿಮ್ಮ ಜನರಾದ ಇಸ್ರಾಯೇಲರನ್ನೂ, ನೀವು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಪ್ರಕಾರ, ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ಈ ದೇಶವನ್ನೂ ಆಶೀರ್ವದಿಸಿರಿ,” ಎಂದು ಹೇಳಬೇಕು.
DEU 26:16 ಈ ತೀರ್ಪುಗಳನ್ನೂ ನಿಯಮಗಳನ್ನೂ ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದ್ದರಿಂದ ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು.
DEU 26:17 ನೀವು ಈ ಹೊತ್ತು, ಯೆಹೋವ ದೇವರೇ ನಮಗೆ ದೇವರು ಎಂದೂ, ಅವರ ಮಾರ್ಗಗಳಲ್ಲಿ ನಡೆದು, ಅವರು ಹೇಳಿದ ಆಜ್ಞಾವಿಧಿನಿಯಮಗಳನ್ನು ಪಾಲಿಸಿ, ಅವರ ಮಾತಿಗೆ ವಿಧೇಯರಾಗಿರುತ್ತೇವೆ ಎಂದೂ ದೃಢವಾಗಿ ಹೇಳಿದ್ದೀರಿ.
DEU 26:18 ಈ ಹೊತ್ತು ನಿಮಗೆ ಯೆಹೋವ ದೇವರು ಘೋಷಿಸಿದಂತೆ, ನೀವು ಅವರ ಜನರೂ ಅವರ ಸಂಗ್ರಹಿಸಿದ ಆಸ್ತಿಯೂ ಆಗಿದ್ದೀರೆಂದು ವಾಗ್ದಾನಮಾಡಿದ್ದಾರೆ. ನೀವು ಅವರ ಎಲ್ಲಾ ಆಜ್ಞೆಗಳನ್ನು ಪಾಲಿಸಿರಿ.
DEU 26:19 ದೇವರು ನಿರ್ಮಿಸಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ನಿಮ್ಮನ್ನು ಕೀರ್ತಿಯಲ್ಲಿಯೂ, ಪ್ರಸಿದ್ಧತೆಯಲ್ಲಿಯೂ, ಘನತೆಯಲ್ಲಿಯೂ, ಸ್ಥಾಪಿಸುವುದಾಗಿ ನಿಮ್ಮ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದಂತೆ ನೀವು ಅವರಿಗೆ ಪರಿಶುದ್ಧ ಜನರಾಗಬೇಕೆಂದೂ ಘೋಷಿಸಿದ್ದಾರೆ.
DEU 27:1 ಮೋಶೆ ಮತ್ತು ಇಸ್ರಾಯೇಲಿನ ಹಿರಿಯರು ಜನರಿಗೆ, “ನಾವು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು.
DEU 27:2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಯೊರ್ದನನ್ನು ದಾಟಿ ಪ್ರವೇಶಿಸುವಾಗ, ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಿ,
DEU 27:3 ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಪ್ರಕಾರ ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಹಾಲೂ ಜೇನೂ ಹರಿಯುವಂಥ ದೇಶವನ್ನು ನೀವು ಪ್ರವೇಶಿಸುವಂತೆ ಯೊರ್ದನ್ ನದಿಯನ್ನು ದಾಟುವಾಗ, ಅವುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಆ ಕಲ್ಲಿನ ಮೇಲೆ ಬರೆಯಬೇಕು.
DEU 27:4 ನೀವು ಯೊರ್ದನನ್ನು ದಾಟಿದ ಮೇಲೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು.
DEU 27:5 ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಬೇಕು. ಕಬ್ಬಿಣದ ಉಪಕರಣವನ್ನು ನೀವು ಕಲ್ಲುಗಳ ಮೇಲೆ ಉಪಯೋಗಿಸಬಾರದು.
DEU 27:6 ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠವನ್ನು ಹುಟ್ಟುಕಲ್ಲುಗಳಿಂದಲೇ ಕಟ್ಟಬೇಕು. ನೀವು ಅದರ ಮೇಲೆ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಬೇಕು.
DEU 27:7 ಅಲ್ಲಿ ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಸಮರ್ಪಿಸಿ, ಸಹಭೋಜನ ಮಾಡಿ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
DEU 27:8 ನೀವು ಆ ಕಲ್ಲುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಬಹುಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದರು.
DEU 27:9 ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ.
DEU 27:10 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಆಜ್ಞೆಗಳನ್ನೂ ತೀರ್ಪುಗಳನ್ನೂ ಅನುಸರಿಸಬೇಕು,” ಎಂದು ಹೇಳಿದನು.
DEU 27:11 ಇದಲ್ಲದೆ ಮೋಶೆ ಅದೇ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ:
DEU 27:12 “ನೀವು ಯೊರ್ದನನ್ನು ದಾಟಿದ ಮೇಲೆ ಜನರನ್ನು ಆಶೀರ್ವದಿಸುವುದಕ್ಕೆ ಗೆರಿಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ, ಬೆನ್ಯಾಮೀನ್ ಮುಂತಾದವರು;
DEU 27:13 ಶಪಿಸುವುದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರು ಯಾರೆಂದರೆ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ,” ಎಂದು ಆಜ್ಞಾಪಿಸಿ ಹೇಳಿದನು.
DEU 27:14 ಲೇವಿಯರು ಇಸ್ರಾಯೇಲ್ ಜನರೆಲ್ಲರಿಗೆ ಗಟ್ಟಿಯಾದ ಧ್ವನಿಯಿಂದ,
DEU 27:15 “ಯೆಹೋವ ದೇವರಿಗೆ ಅಸಹ್ಯವಾಗಿರುವ ವಿಗ್ರಹವನ್ನಾಗಲಿ, ಎರಕ ಹೊಯ್ದದ್ದನ್ನಾಗಲಿ ಮಾಡಿಕೊಂಡು, ಶಿಲ್ಪಿಯ ಕೈಯಿಂದ ಮಾಡಿಸಿ, ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:16 ಅವರು, “ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:17 ಅವರು, “ತನ್ನ ನೆರೆಯವನ ಗಡಿ ಮೇರೆಯನ್ನು ಸರಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:18 ಅವರು, “ಕಣ್ಣು ಕಾಣದವನನ್ನು ದಾರಿತಪ್ಪಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:19 ಅವರು, “ಪರವಾಸಿಗೂ, ದಿಕ್ಕಿಲ್ಲದವನಿಗೂ, ವಿಧವೆಗೂ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:20 ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:21 ಅವರು, “ಪಶುಸಂಗಮ ಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:22 ಅವರು, “ತನ್ನ ತಂದೆಯ ಮಗಳ ಸಂಗಡವಾಗಲಿ, ತಾಯಿಯ ಮಗಳ ಸಂಗಡವಾಗಲಿ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:23 ಅವರು, “ತನ್ನ ಅತ್ತೆಯ ಸಂಗಡ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:24 ಅವರು, “ತನ್ನ ನೆರೆಯವನನ್ನು ರಹಸ್ಯವಾಗಿ ಕೊಲೆಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:25 ಅವರು, “ನಿರಪರಾಧಿಯನ್ನು ಕೊಲ್ಲಲು ಲಂಚ ತೆಗೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 27:26 ಅವರು, “ದೇವರ ನಿಯಮದ ಈ ಮಾತುಗಳನ್ನು ಸನ್ಮಾನಿಸಿ ಕೈಗೊಳ್ಳದೆ ಇರುವವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
DEU 28:1 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಲೋಕದ ಎಲ್ಲಾ ಜನಾಂಗಗಳಿಗಿಂತ ಉನ್ನತ ಸ್ಥಿತಿಯಲ್ಲಿರಿಸುವರು.
DEU 28:2 ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳಿ ಪಾಲಿಸಿದರೆ, ಈ ಎಲ್ಲಾ ಆಶೀರ್ವಾದಗಳು ನಿಮ್ಮ ಮೇಲೆ ಬಂದು, ನಿಮ್ಮೊಂದಿಗಿರುವವು:
DEU 28:3 ಪಟ್ಟಣದಲ್ಲಿ ನಿಮಗೆ ಆಶೀರ್ವಾದ, ಹೊಲದಲ್ಲಿ ನಿಮಗೆ ಆಶೀರ್ವಾದ,
DEU 28:4 ನಿಮ್ಮ ಸಂತಾನಕ್ಕೂ ನಿಮ್ಮ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
DEU 28:5 ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಆಶೀರ್ವಾದ.
DEU 28:6 ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಆಶೀರ್ವಾದ, ಬರುವಾಗಲೂ ನಿಮಗೆ ಆಶೀರ್ವಾದ.
DEU 28:7 ನಿಮಗೆ ವಿರೋಧವಾಗಿ ಏಳುವ ನಿಮ್ಮ ಶತ್ರುಗಳನ್ನು ಯೆಹೋವ ದೇವರು ನಿಮ್ಮ ಮುಂದೆಯೇ ಸೋಲಿಸಿಬಿಡುವರು. ಅವರು ಒಂದೇ ಮಾರ್ಗದಲ್ಲಿ ನಿಮಗೆ ವಿರೋಧವಾಗಿ ಹೊರಟು ಬಂದರೂ, ಏಳು ಮಾರ್ಗಗಳಿಂದ ಓಡಿಹೋಗುವರು.
DEU 28:8 ನಿಮ್ಮ ಕಣಜಗಳಲ್ಲಿಯೂ, ನೀವು ಕೈಹಾಕುವ ಎಲ್ಲಾದರಲ್ಲಿಯೂ ನಿಮಗೆ ಆಶೀರ್ವಾದ ಬರುವಂತೆ ಯೆಹೋವ ದೇವರು ಅಪ್ಪಣೆ ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು.
DEU 28:9 ನೀವು ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಪಾಲಿಸಿ, ಅವರ ಮಾರ್ಗಗಳಲ್ಲಿ ನಡೆದರೆ, ಯೆಹೋವ ದೇವರು ನಿಮಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ತಮಗೆ ಮೀಸಲಾದ ಪರಿಶುದ್ಧ ಜನರನ್ನಾಗಿ ಸ್ಥಾಪಿಸುವರು.
DEU 28:10 ಆಗ ಭೂಲೋಕದ ಜನರೆಲ್ಲರೂ, ನೀವು ಯೆಹೋವ ದೇವರ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.
DEU 28:11 ನಿಮಗೆ ಕೊಡುತ್ತೇನೆಂದು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಯೆಹೋವ ದೇವರು ಭೂಮಿಯ ಮೇಲೆ ನಿಮ್ಮನ್ನು ಸಂತಾನ, ಪಶು ಮತ್ತು ಕೃಷಿ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವರು.
DEU 28:12 ಯೆಹೋವ ದೇವರು ಆಕಾಶವೆಂಬ ತಮ್ಮ ಒಳ್ಳೆಯ ಉಗ್ರಾಣವನ್ನು ನಿಮಗೆ ತೆರೆದು, ನಿಮ್ಮ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು, ನಿಮ್ಮ ಕೈಕೆಲಸವನ್ನೆಲ್ಲಾ ಆಶೀರ್ವದಿಸುವರು. ನೀವು ಅನೇಕ ಜನಾಂಗಗಳಿಗೆ ಸಾಲಕೊಡುವಿರೇ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ.
DEU 28:13 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ನೀವು ಕೇಳಿ ಕಾಪಾಡಿ ಕೈಗೊಂಡರೆ, ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು. ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.
DEU 28:14 ಹೀಗಿರುವುದರಿಂದ ನೀವು ಬೇರೆ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಅನುಸರಿಸಿ ನಡೆಯದಂತೆ, ನಾನು ಇಂದು ನಿಮಗೆ ಆಜ್ಞಾಪಿಸುವ ಈ ಮಾತುಗಳನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು.
DEU 28:15 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕೈಗೊಳ್ಳದೇ ಹೋದರೆ, ಈ ಎಲ್ಲಾ ಶಾಪಗಳು ನಿಮ್ಮ ಮೇಲೆ ಬಂದು ನಿಮ್ಮನ್ನು ಹಿಡಿದುಕೊಳ್ಳುವವು:
DEU 28:16 ನಿಮಗೆ ಪಟ್ಟಣದಲ್ಲಿಯೂ ಶಾಪ, ಹೊಲದಲ್ಲಿಯೂ ನಿಮಗೆ ಶಾಪ.
DEU 28:17 ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಶಾಪ.
DEU 28:18 ನಿಮ್ಮ ಗರ್ಭದ ಫಲಕ್ಕೂ ಪಶುಗಳ ಹಿಂಡಿಗೂ, ಕುರಿಗಳ ಮಂದೆಗಳಿಗೂ ಶಾಪ.
DEU 28:19 ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಶಾಪ, ಬರುವಾಗಲೂ ಶಾಪ.
DEU 28:20 ನೀವು ನಿಮ್ಮ ಯೆಹೋವ ದೇವರನ್ನು ಬಿಟ್ಟ ದುಷ್ಟಕ್ರಿಯೆಯ ನಿಮಿತ್ತ, ಯೆಹೋವ ದೇವರು ನೀವು ಬೇಗ ನಾಶವಾಗುವವರೆಗೂ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮಗೆ ಶಾಪ, ಗಲಿಬಿಲಿ ಹಾಗು ಗದರಿಕೆ ಮುಂತಾದವುಗಳನ್ನು ಉಂಟುಮಾಡುವರು.
DEU 28:21 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವವರೆಗೆ ಯೆಹೋವ ದೇವರು ನಿಮಗೆ ವ್ಯಾಧಿಯು ಅಂಟಿಕೊಳ್ಳುವಂತೆ ಮಾಡುವರು.
DEU 28:22 ಯೆಹೋವ ದೇವರು ಕ್ಷಯರೋಗದಿಂದಲೂ, ಚಳಿಜ್ವರದಿಂದಲೂ, ಉರಿವಾತದಿಂದಲೂ, ಉಷ್ಣಜ್ವರದಿಂದಲೂ ಕುಗ್ಗಿಸಿ, ದೇಶವನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಯಿಂದಲೂ ಬಾಧಿಸುವರು. ನೀವು ನಾಶವಾಗುವ ತನಕ ಅವು ನಿಮ್ಮನ್ನು ಹಿಂದಟ್ಟಿಬರುವವು.
DEU 28:23 ನಿಮ್ಮ ತಲೆಯ ಮೇಲಿರುವ ಆಕಾಶವು ಕಂಚಿನಂತೆಯೂ ಕೆಳಗಿರುವ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.
DEU 28:24 ಯೆಹೋವ ದೇವರು ನಿಮ್ಮ ದೇಶದಲ್ಲಿ ಮಳೆಗೆ ಬದಲಾಗಿ ಹುಡಿಯೂ ಧೂಳೂ ಆಗುವಂತೆ ಮಾಡುವರು. ನೀವು ನಾಶವಾಗುವವರೆಗೆ ಅದು ಆಕಾಶದಿಂದ ನಿಮ್ಮ ಮೇಲೆ ಸುರಿಯುವುದು.
DEU 28:25 ಯೆಹೋವ ದೇವರು ನಿಮ್ಮನ್ನು ನಿಮ್ಮ ಶತ್ರುಗಳ ಮುಂದೆ ಸೋಲಿಸಿಬಿಡುವರು. ನೀವು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ದಾಳಿಮಾಡಲು ಹೊರಟು, ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗುವಿರಿ. ಭೂಮಿಯ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವವು.
DEU 28:26 ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುದು. ಯಾರೂ ಅವುಗಳನ್ನು ಬೆದರಿಸಿ ಓಡಿಸುವುದಿಲ್ಲ.
DEU 28:27 ಯೆಹೋವ ದೇವರು ನಿಮ್ಮನ್ನು ಈಜಿಪ್ಟನ್ನು ಬಾಧಿಸುವಂತೆ ಹುಣ್ಣುಗಳಿಂದಲೂ, ಮೂಲವ್ಯಾಧಿಯಿಂದಲೂ, ಕಜ್ಜಿಯಿಂದಲೂ, ಇಸುಬಿನಿಂದಲೂ ನೀವು ವಾಸಿಯಾಗದ ರೋಗಗಳಿಂದ ನಿಮ್ಮನ್ನು ಬಾಧಿಸುವರು.
DEU 28:28 ಯೆಹೋವ ದೇವರು ನಿಮ್ಮನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಕಾಡುವರು.
DEU 28:29 ಕಣ್ಣು ಕಾಣದವನು ಕತ್ತಲಲ್ಲಿ ತಡವಾಡುವಂತೆ ಮಧ್ಯಾಹ್ನದಲ್ಲಿ ತಡವಾಡುತ್ತಾ ಇರುವಿರಿ, ನಿಮ್ಮ ಮಾರ್ಗಗಳಲ್ಲಿ ಸಫಲವಾಗುವುದಿಲ್ಲ. ನೀವು ಯಾವಾಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ, ಸುಲಿಗೆಯನ್ನೂ ಅನುಭವಿಸುವವರಾಗುವಿರಿ.
DEU 28:30 ನೀವು ಮದುವೆಮಾಡಿಕೊಳ್ಳಲು ನಿಶ್ಚಯಿಸಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಗೊಳಿಸುವನು. ಮನೆಯನ್ನು ಕಟ್ಟಿದರೆ, ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟರೆ, ಅದರ ಫಲ ನಿಮಗೆ ದೊರೆಯುವುದಿಲ್ಲ.
DEU 28:31 ನಿಮ್ಮ ದನಗಳನ್ನು ನಿಮ್ಮ ಕಣ್ಣು ಮುಂದೆಯೇ ಕೊಯ್ಯುವರು, ಆದರೆ ನೀವು ಅದರ ಮಾಂಸ ತಿನ್ನುವುದಿಲ್ಲ. ನಿಮ್ಮ ಕತ್ತೆಯನ್ನು ನಿಮ್ಮ ಕಣ್ಣ ಮುಂದೆಯೇ ಬಲಾತ್ಕಾರದಿಂದ ತೆಗೆದುಕೊಂಡು ಹೋಗುವರು. ಅದು ನಿಮಗೆ ಮತ್ತೆ ಸಿಕ್ಕುವುದಿಲ್ಲ. ನಿಮ್ಮ ಕುರಿಗಳು ನಿಮ್ಮ ಶತ್ರುವಿಗೆ ಕೊಡಲಾಗುವುದು. ಅವುಗಳನ್ನು ಬಿಡಿಸುವುದಕ್ಕೆ ಯಾರೂ ಇರುವುದಿಲ್ಲ.
DEU 28:32 ನಿಮ್ಮ ಪುತ್ರಪುತ್ರಿಯರು ಬೇರೆ ಜನರಿಗೆ ವಶಪಡಿಸಿರಲು, ನೀವು ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಇರುವಿರಿ. ಆದರೆ ಅವರನ್ನು ಕಾಪಾಡಲು ನಿಮ್ಮ ಕೈಯಿಂದ ಸಾಧ್ಯವಾಗದೆ ಇರುವುದು.
DEU 28:33 ನಿಮ್ಮ ಭೂಮಿಯ ಫಲವನ್ನೂ, ನಿಮ್ಮ ಎಲ್ಲಾ ಆದಾಯವನ್ನೂ ನಿಮ್ಮನ್ನರಿಯದ ಜನರು ತಿಂದುಬಿಡುವರು. ನೀವು ಯಾವಾಗಲೂ ಬಲಾತ್ಕಾರವನ್ನೂ, ಸಂಕಟವನ್ನೂ ಅನುಭವಿಸುವಿರಿ.
DEU 28:34 ನಿಮ್ಮ ಕಣ್ಣಮುಂದೆ ನಡೆಯುವ ಘಟನೆಗಳನ್ನು ನೋಡಿ ಹುಚ್ಚರಾಗುವಿರಿ.
DEU 28:35 ಯೆಹೋವ ದೇವರು ನಿಮ್ಮನ್ನು ಮೊಣಕಾಲುಗಳಲ್ಲಿಯೂ, ತೊಡೆಗಳಲ್ಲಿಯೂ ವಾಸಿಯಾಗದ ಕೆಟ್ಟ ಉರಿ ಹುಣ್ಣಿನಿಂದ ಅಂಗಾಲು ಮೊದಲ್ಗೊಂಡು ನೆತ್ತಿಯವರೆಗೆ ಹೊಡೆಯುವರು.
DEU 28:36 ಯೆಹೋವ ದೇವರು ನಿಮ್ಮನ್ನೂ, ನೀವು ನಿಮ್ಮ ಮೇಲೆ ನೇಮಿಸಿಕೊಳ್ಳುವ ಅರಸನನ್ನೂ, ನೀವೂ, ನಿಮ್ಮ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗುವಂತೆ ಮಾಡುವರು. ಅಲ್ಲಿ ಮರವೂ, ಕಲ್ಲೂ ಆಗಿರುವ ಬೇರೆ ದೇವರುಗಳನ್ನೂ ನೀವು ಪೂಜಿಸುವಿರಿ.
DEU 28:37 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಚೆದರಿಸುವ ಎಲ್ಲಾ ಜನಾಂಗಗಳಲ್ಲಿ ನೀವು ವಿಸ್ಮಯಕ್ಕೂ, ಗಾದೆಗೂ, ಹಾಸ್ಯಕ್ಕೂ ಗುರಿಯಾಗುವಿರಿ.
DEU 28:38 ಬಹಳ ಬೀಜವನ್ನು ಹೊಲದಲ್ಲಿ ಬಿತ್ತಿದರೂ ಸ್ವಲ್ಪವೇ ಬೆಳೆ. ಏಕೆಂದರೆ ಮಿಡತೆ ಅದನ್ನು ತಿಂದುಬಿಡುವುದು;
DEU 28:39 ದ್ರಾಕ್ಷಿತೋಟವನ್ನು ನೆಟ್ಟು ಕಾಪಾಡುವಿರಿ, ಆದರೆ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಮತ್ತು ಹಣ್ಣು ಕೂಡಿಸುವುದಿಲ್ಲ, ಏಕೆಂದರೆ ಹುಳುಗಳು ಅದನ್ನು ತಿಂದುಬಿಡುವುವು;
DEU 28:40 ಓಲಿವ್ ಮರಗಳು ನಿಮ್ಮ ಎಲ್ಲಾ ಮೇರೆಗಳಲ್ಲಿ ಇರುವುವು. ಆದರೆ ಅವುಗಳ ಕಾಯಿಗಳು ಉದುರುವುದರಿಂದ ನಿಮ್ಮ ಉಪಯೋಗಕ್ಕೆ ಎಣ್ಣೆ ಸಿಗದು.
DEU 28:41 ನೀವು ಪುತ್ರಪುತ್ರಿಯರನ್ನು ಪಡೆಯುವಿರಿ, ಆದರೆ ಅವರ ಕೂಡ ಸಂತೋಷಿಸುವುದಿಲ್ಲ. ಏಕೆಂದರೆ ಅವರು ಸೆರೆಯಾಗಿ ಹೋಗುವರು.
DEU 28:42 ನಿಮ್ಮ ಎಲ್ಲಾ ಮರಗಳನ್ನೂ, ನಿಮ್ಮ ಹೊಲದ ಪೈರನ್ನೂ ಮಿಡತೆ ತಿಂದುಬಿಡುವುದು.
DEU 28:43 ನಿಮ್ಮ ಮಧ್ಯದಲ್ಲಿರುವ ಪರದೇಶದವರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುವರು. ನೀವಾದರೋ ಕಡಿಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ.
DEU 28:44 ಅವರು ನಿಮಗೆ ಸಾಲ ಕೊಡುವರು ಆದರೆ ನೀವು ಅವರಿಗೆ ಸಾಲಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅವರು ನಿಮಗೆ ಶಿರಸ್ಸಾಗುವರು ಆದರೆ ನೀವು ಅವರಿಗೆ ಅಧೀನರಾಗುವಿರಿ.
DEU 28:45 ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳದೆ ಅವರು ನಿಮಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ನಿಯಮಗಳನ್ನೂ ಕೈಗೊಳ್ಳದೆ ಇದ್ದುದರಿಂದ, ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬಂದು, ನಿಮ್ಮನ್ನು ನಾಶಮಾಡುವವರೆಗೂ ನಿಮ್ಮನ್ನು ಹಿಂದಟ್ಟುವುವು.
DEU 28:46 ಅವು ನಿಮ್ಮ ಮೇಲೂ ನಿಮ್ಮ ಸಂತತಿಯ ಮೇಲೂ ಯಾವಾಗಲೂ ಗುರುತೂ ಅದ್ಭುತವೂ ಆಗಿರುವುವು.
DEU 28:47 ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಂತೋಷದಿಂದಲೂ ಹರ್ಷದಿಂದಲೂ ಸೇವೆಮಾಡದೆ ಹೋದಿರಿ.
DEU 28:48 ಆದುದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬಡತನದಲ್ಲಿ ಬಟ್ಟೆಬರೆ ಏನೂ ಇಲ್ಲದೆ, ಯೆಹೋವ ದೇವರು ನಿಮ್ಮ ಮೇಲೆ ಕಳುಹಿಸುವ ಆ ಶತ್ರುಗಳಿಗೇ ನೀವು ಸೇವಕರಾಗಬೇಕಾಗುವುದು. ಯೆಹೋವ ದೇವರು ನಿಮ್ಮನ್ನು ನಾಶಮಾಡುವವರೆಗೆ ಕಬ್ಬಿಣದ ನೊಗವನ್ನು ನಿಮ್ಮ ಮೇಲೆ ಹೊರಿಸುವರು.
DEU 28:49 ಯೆಹೋವ ದೇವರು ದೂರದಿಂದ ಅಂದರೆ, ಭೂಮಿಯ ಕೊನೆಯಿಂದ ರಣಹದ್ದು ಹೇಗೆ ಹಾರಿಬರುವುದೋ ಹಾಗೆಯೇ, ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವನ್ನು ನಿಮ್ಮ ಮೇಲೆ ಬರುವಂತೆ ಮಾಡುವರು.
DEU 28:50 ಆ ಜನಾಂಗದವರು ಕ್ರೂರಮುಖವುಳ್ಳವರು. ನಿಮ್ಮನ್ನು ವೃದ್ಧರೆಂದು ಮರ್ಯಾದೆ ತೋರಿಸುವದಿಲ್ಲ, ಚಿಕ್ಕವರೆಂದು ದಯೆಯೂ ತೋರಿಸುವುದಿಲ್ಲ.
DEU 28:51 ಅವರು ನಿಮ್ಮ ಪಶುಗಳ ಫಲವನ್ನೂ ನಿಮ್ಮ ಭೂಮಿಯ ಫಲವನ್ನೂ ನೀವು ನಾಶವಾಗುವವರೆಗೆ ತಿಂದುಬಿಡುವರು. ಅವರು ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಓಲಿವ್ ಎಣ್ಣೆಯನ್ನೂ, ಪಶುಗಳ ಅಭಿವೃದ್ಧಿಯನ್ನೂ, ಕುರಿಗಳ ಮಂದೆಗಳನ್ನೂ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
DEU 28:52 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ನಿಮ್ಮ ದೇಶದಲ್ಲೆಲ್ಲಾ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ಮುತ್ತಿಗೆ ಹಾಕುವರು. ನೀವು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿಮ್ಮ ಗೋಡೆಗಳನ್ನು ಕೆಡವಿಬಿಡುವರು.
DEU 28:53 ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಗರ್ಭದ ಫಲವನ್ನು ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.
DEU 28:54 ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಸಹ ತನ್ನ ಸ್ವಂತ ಸಹೋದರ ಅಥವಾ ಅವನು ಪ್ರೀತಿಸುವ ಹೆಂಡತಿ ಅಥವಾ ಉಳಿದಿರುವ ಮಕ್ಕಳ ಮೇಲೆ ಅನುಕಂಪ ತೋರಿಸುವುದಿಲ್ಲ.
DEU 28:55 ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ಅವನು ತನಗೆ ತಿನ್ನಲಿಕ್ಕೆ ಏನೂ ಸಿಗುವುದಿಲ್ಲ ಅಂದುಕೊಂಡು, ತನ್ನ ಮಕ್ಕಳ ಮಾಂಸವನ್ನು ಇತರರಿಗೆ ಕೊಡದೆ ತಿನ್ನುವನು.
DEU 28:56 ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವಳೂ, ಬಹಳ ಸೂಕ್ಷ್ಮ ಗುಣವುಳ್ಳವಳೂ, ನೆಲಕ್ಕೆ ಅಂಗಾಲನ್ನು ಸಹ ಇಡದ ಮಹಿಳೆಯು, ತನ್ನ ಮಗ್ಗುಲಲ್ಲಿರುವ ಗಂಡನ ಕಡೆಗೂ ಹೆತ್ತ ಪುತ್ರಪುತ್ರಿಯರ ಕಡೆಗೂ ಕಠಿಣವಾಗಿರುವಳು.
DEU 28:57 ಅವಳು ಕೊರತೆಯಲ್ಲಿಯೂ, ಮುತ್ತಿಗೆಯಲ್ಲಿಯೂ, ಶತ್ರು ನಿಮಗೆ ನಿಮ್ಮ ಪಟ್ಟಣಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ, ತನ್ನ ಮಕ್ಕಳನ್ನು ಗುಪ್ತವಾಗಿ ತಿಂದುಬಿಡುವಳು.
DEU 28:58 ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ,
DEU 28:59 ಯೆಹೋವ ದೇವರು ನಿಮಗೂ ನಿಮ್ಮ ಸಂತತಿಗೂ ಭಯಂಕರವಾದ ಉಪದ್ರವಗಳನ್ನು ಬರಮಾಡುವರು; ಅವು ಕಠಿಣವಾದ ಮತ್ತು ದೀರ್ಘಕಾಲದ ಬಾಧೆಗಳೂ ಘೋರವಾದ ಮತ್ತು ಗಂಭೀರವಾದ ರೋಗಗಳಾಗಿರುವವು.
DEU 28:60 ಇದಲ್ಲದೆ ನೀವು ಹೆದರಿಕೊಳ್ಳುತ್ತಿದ್ದ ಈಜಿಪ್ಟಿನ ರೋಗಗಳನ್ನೆಲ್ಲಾ ದೇವರು ತಿರುಗಿ ನಿಮ್ಮ ಮೇಲೆ ಬರಮಾಡುವರು; ಅವು ನಿಮ್ಮನ್ನು ಅಂಟಿಕೊಳ್ಳುವವು.
DEU 28:61 ಈ ನಿಯಮದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ನೀವು ಪೂರ್ಣ ನಾಶವಾಗುವವರೆಗೆ ಯೆಹೋವ ದೇವರು ನಿಮ್ಮ ಮೇಲೆ ತರುವರು.
DEU 28:62 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೇ ಹೋದದ್ದರಿಂದ, ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯಾತರಾಗಿರುವ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ.
DEU 28:63 ಯೆಹೋವ ದೇವರು ಹೇಗೆ ನಿಮಗೆ ಸಮೃದ್ಧಿಯನ್ನು ಕೊಡುವುದಕ್ಕೂ ನಿಮ್ಮನ್ನು ಹೆಚ್ಚಿಸುವುದಕ್ಕೂ ನಿಮಗೋಸ್ಕರ ಸಂತೋಷಿಸಿದರೋ, ಹಾಗೆಯೇ ಯೆಹೋವ ದೇವರು ನಿಮ್ಮನ್ನು ಕೆಡಿಸಿ, ನಾಶಮಾಡುವುದಕ್ಕೂ ನಿಮಗೆ ವಿರೋಧವಾಗಿ ಸಂತೋಷಿಸುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಿಂದಲೂ ನಿಮ್ಮನ್ನು ಕಿತ್ತುಹಾಕುವರು.
DEU 28:64 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯವರೆಗೂ ಎಲ್ಲಾ ಜನಾಂಗಗಳಲ್ಲಿ ಚದರಿಸುವರು. ಅಲ್ಲಿ ನೀವೂ ನಿಮ್ಮ ಪಿತೃಗಳು ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಆರಾಧಿಸುವಿರಿ.
DEU 28:65 ಆ ಜನಾಂಗಗಳಲ್ಲಿ ನಿಮಗೆ ವಿಶ್ರಾಂತಿ ದೊರೆಯುವುದಿಲ್ಲ. ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ಅಲ್ಲಿ ಯೆಹೋವ ದೇವರು ನಿಮಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಂದುವ ಪ್ರಾಣವನ್ನೂ ಕೊಡುವರು.
DEU 28:66 ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ರಾತ್ರಿ ಹಗಲು ಜೀವದ ಮೇಲೆ ನಂಬಿಕೆ ಇಲ್ಲದೆ ಹೆದರಿಕೊಳ್ಳುವಿರಿ.
DEU 28:67 ನಿಮ್ಮ ಹೃದಯದಲ್ಲಿನ ಪ್ರಾಣಭೀತಿ, ಹೆದರಿಕೆಯ ನಿಮಿತ್ತವೂ ನಿಮ್ಮ ಕಣ್ಣುಗಳು ನೋಡುವ ಭಯಂಕರ ನೋಟದಿಂದ ನೀವು ಮುಂಜಾನೆಯಲ್ಲಿ, “ಸಂಜೆ ಆಗಬೇಕು,” ಎನ್ನುವಿರಿ. ಸಂಜೆಯಲ್ಲಿ, “ಮುಂಜಾನೆ ಆಗಬೇಕು,” ಎನ್ನುವಿರಿ.
DEU 28:68 ಇದಲ್ಲದೆ, ಯೆಹೋವ ದೇವರು, ನೀವು ಇನ್ನು ಮೇಲೆ ನೋಡುವುದಿಲ್ಲ ಎಂದು ಹೇಳಿದ ದಾರಿಯಲ್ಲಿಯೇ ಹಡಗುಗಳಲ್ಲಿ ಜನರು ನಿಮ್ಮನ್ನು ಈಜಿಪ್ಟಿಗೆ ತಿರುಗಿ ಬರಮಾಡುವರು. ನಿಮ್ಮನ್ನು ಅಲ್ಲಿ ದಾಸರಾಗಿಯೂ ದಾಸಿಯರಾಗಿಯೂ ನಿಮ್ಮ ಶತ್ರುಗಳಿಗೆ ಮಾರಿಕೊಳ್ಳಬೇಕೆಂದಿದ್ದರೂ, ಕೊಂಡುಕೊಳ್ಳುವವರು ಇರುವುದಿಲ್ಲ.
DEU 29:1 ಯೆಹೋವ ದೇವರು ಹೋರೇಬಿನಲ್ಲಿ ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆ ಅಲ್ಲದೆ ಅವರು ಮೋವಾಬ್ ದೇಶದಲ್ಲಿ ಇಸ್ರಾಯೇಲರೊಡನೆ ಮಾಡಬೇಕೆಂದು ಮೋಶೆಗೆ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ:
DEU 29:2 ಮೋಶೆಯು ಎಲ್ಲಾ ಇಸ್ರಾಯೇಲರನ್ನು ಕರೆದು ಅವರಿಗೆ ಹೀಗೆ ಹೇಳಿದನು: ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಣು ಮುಂದೆಯೇ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
DEU 29:3 ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ನಿಮ್ಮ ಕಣ್ಣಾರೆ ನೋಡಿದ್ದೀರಿ.
DEU 29:4 ಆದರೂ ಯೆಹೋವ ದೇವರು ಇಂದಿನವರೆಗೂ ತಿಳಿದುಕೊಳ್ಳುವ ಹೃದಯವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ನಿಮಗೆ ಕೊಡಲಿಲ್ಲವಲ್ಲ!
DEU 29:5 “ನಾನು ನಲವತ್ತು ವರ್ಷ ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿದೆನು. ನಿಮ್ಮ ಮೇಲಿರುವ ವಸ್ತ್ರಗಳು ಹರಿಯಲಿಲ್ಲ. ನಿಮ್ಮ ಪಾದಗಳಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ.
DEU 29:6 ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಲೇ ಇಲ್ಲ. ಯೆಹೋವ ದೇವರೇ ನಿಮ್ಮ ದೇವರು ಎಂಬುದು ನಿಮಗೆ ತಿಳಿಯಬೇಕೆಂಬ ಉದ್ದೇಶದಿಂದ ಹೀಗಾಯಿತು.”
DEU 29:7 ನೀವು ಈ ಸ್ಥಳಕ್ಕೆ ಬಂದಾಗ, ಹೆಷ್ಬೋನಿನ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಹೊರಟರು. ನಾವು ಅವರನ್ನು ಸೋಲಿಸಿ,
DEU 29:8 ಅವರ ದೇಶವನ್ನು ತೆಗೆದುಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸೊತ್ತಾಗಿ ಕೊಟ್ಟೆವು.
DEU 29:9 ಹೀಗಿರುವುದರಿಂದ ನೀವು ಮಾಡುವ ಎಲ್ಲದರಲ್ಲಿಯೂ ಸಫಲವಾಗುವಂತೆ ಈ ಒಡಂಬಡಿಕೆಯ ಮಾತುಗಳನ್ನು ಕೇಳಿ ನಡೆಯಬೇಕು.
DEU 29:10 ನೀವೆಲ್ಲರು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ಗೋತ್ರಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಜನರೆಲ್ಲರೂ
DEU 29:11 ನಿಮ್ಮ ಮಕ್ಕಳೂ ಹೆಂಡತಿಯರೂ ನಿಮ್ಮ ಪಾಳೆಯದಲ್ಲಿರುವ ಪರದೇಶಿಯರೂ ನಿಮಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವವರೂ ಸಹ
DEU 29:12 ನಿಮ್ಮ ದೇವರಾದ ಯೆಹೋವ ದೇವರು ಈ ಹೊತ್ತು ನಿಮ್ಮ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯನ್ನು ಸೇರುವುದಕ್ಕೆ ಅವರು ಆಣೆಯಿಟ್ಟು ಮುದ್ರಿಸಿದ್ದಾರೆ.
DEU 29:13 ಆ ಒಡಂಬಡಿಕೆ ಯಾವುದೆಂದರೆ, ದೇವರು ನಿಮಗೆ ಹೇಳಿದಂತೆಯೂ, ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದಂತೆಯೂ, ಈ ಹೊತ್ತು ನಿಮ್ಮನ್ನು ತಮ್ಮ ಜನರನ್ನಾಗಿ ಸ್ಥಾಪಿಸಿ, ನಿಮಗೆ ದೇವರಾಗಬೇಕೆಂಬುದೇ.
DEU 29:14 ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆಯನ್ನೂ, ಈ ಆಣೆಯನ್ನೂ ಮಾಡುವುದಲ್ಲದೆ
DEU 29:15 ಈ ಹೊತ್ತು ಇಲ್ಲಿ ನಮ್ಮೊಡನೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತವರ ಸಂಗಡ, ಈ ಹೊತ್ತು ಇಲ್ಲಿ ನಮ್ಮೊಡನೆ ಇಲ್ಲದವರ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
DEU 29:16 ಏಕೆಂದರೆ ನಾವು ಈಜಿಪ್ಟ್ ದೇಶದಲ್ಲಿ ಹೇಗೆ ವಾಸವಾಗಿದ್ದೆವೆಂದೂ, ನೀವು ದಾಟಿಬಂದ ಜನಾಂಗಗಳನ್ನು ನಾವು ಹೇಗೆ ದಾಟಿ ಬಂದೆವೆಂದೂ ನಿಮಗೆ ತಿಳಿದಿದೆ.
DEU 29:17 ಅವರ ಬಳಿಯಲ್ಲಿರುವ ಮರ, ಕಲ್ಲು, ಬೆಳ್ಳಿ, ಬಂಗಾರಗಳ ಅಸಹ್ಯವಾದ ಬೊಂಬೆಗಳನ್ನೂ ನೀವು ನೋಡಿದ್ದೀರಲ್ಲವೇ?
DEU 29:18 ಈ ಹೊತ್ತು ನಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆ ಮಾಡುವುದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ಈ ಘೋರ ವಿಷವನ್ನೂ, ಬೆಳೆಸುವ ಬೇರೂ ನಿಮ್ಮಲ್ಲಿ ಇರಬಾರದು.
DEU 29:19 ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರೂ ತನ್ನೊಳಗೆ, “ನಾನು ಹಟ ಹಿಡಿದು, ಅವಿಧೇಯನಾದರೂ ನನಗೆ ಕ್ಷೇಮವೇ,” ಎಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವನು ಇರಬಾರದು. ಅಂಥವನು ನೀರಾವರಿ ನಾಡಿಗೂ ಒಣ ನಾಡಿಗೂ ನಾಶನವನ್ನು ತರುವನು.
DEU 29:20 ಅಂಥವನನ್ನು ಯೆಹೋವ ದೇವರು ಉಳಿಸುವುದಿಲ್ಲ, ಆಗಲೇ ಯೆಹೋವ ದೇವರ ಕೋಪವೂ, ರೋಷವೂ ಆ ಮನುಷ್ಯನನ್ನು ಸುಡುವುದು. ಈ ಗ್ರಂಥದಲ್ಲಿ ಬರೆದಿರುವ ಶಾಪವೆಲ್ಲಾ ಅವನ ಮೇಲೆ ಬರುವುದು. ಯೆಹೋವ ದೇವರು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವರು.
DEU 29:21 ಈ ನಿಯಮದ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಯೆಹೋವ ದೇವರು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವರು.
DEU 29:22 ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ, ದೂರದೇಶದಿಂದ ಬರುವ ಅನ್ಯನೂ, ಆ ದೇಶದ ವಿಪತ್ತುಗಳನ್ನೂ, ಯೆಹೋವ ದೇವರು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡುವರು.
DEU 29:23 ಯೆಹೋವ ದೇವರು ತಮ್ಮ ದೈವಿಕ ಕೋಪದಲ್ಲಿ ಕೆಡವಿ ಹಾಕಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಂತೆ ಆ ದೇಶವೆಲ್ಲಾ ಗಂಧಕವೂ, ಉಪ್ಪೂ ಉರಿಯುತ್ತಾ, ವ್ಯವಸಾಯವಾದರೂ ಹುಲ್ಲಾದರೂ ಬೆಳೆಯದೆ ಇರುವುದು.
DEU 29:24 ಆಗ ಎಲ್ಲಾ ದೇಶದವರೂ, “ಯೆಹೋವ ದೇವರು ಈ ದೇಶಕ್ಕೆ ಏಕೆ ಹೀಗೆ ಮಾಡಿದ್ದಾರೆ? ಈ ದೊಡ್ಡ ಕೋಪಾಗ್ನಿಗೆ ಕಾರಣವೇನು?” ಎಂದು ಕೇಳುವರು.
DEU 29:25 ಆಗ ಜನರು, “ಇಸ್ರಾಯೇಲರು ತಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ.
DEU 29:26 ಅವರು ತಮಗೆ ನೇಮಕವಾಗದಿದ್ದ ಹಾಗು ಗೊತ್ತಿಲ್ಲದಿದ್ದ ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದ್ದಾರೆ.
DEU 29:27 ಆದ್ದರಿಂದ ಯೆಹೋವ ದೇವರು ಇಸ್ರಾಯೇಲ್ ದೇಶದ ಮೇಲೆ ಕೋಪಗೊಂಡು ಈ ಗ್ರಂಥದಲ್ಲಿ ಬರೆದಿರುವ ಶಾಪಗಳನ್ನು ಅವರ ಮೇಲೆ ಬರಮಾಡಿದ್ದಾರೆ.
DEU 29:28 ಯೆಹೋವ ದೇವರು ಅವರನ್ನು ತೀವ್ರಕೋಪದಲ್ಲಿಯೂ, ಮಹಾ ಆಸಕ್ತಿಯಲ್ಲಿಯೂ ದೇಶದಿಂದ ಕಿತ್ತುಹಾಕಿ, ಇಂದು ಇರುವ ಪ್ರಕಾರ ಅವರನ್ನು ಬೇರೆ ದೇಶಕ್ಕೆ ಕಳುಹಿಸಿದ್ದಾರೆ.”
DEU 29:29 ರಹಸ್ಯಗಳು ನಮ್ಮ ದೇವರಾದ ಯೆಹೋವ ದೇವರಿಗೆ ಸೇರಿದ್ದು, ಆದರೆ ಪ್ರಕಟವಾದ ಈ ನಿಯಮದ ಮಾತುಗಳನ್ನೆಲ್ಲಾ ನಾವು ಕೈಕೊಳ್ಳುವ ಹಾಗೆ ನಮಗೂ, ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.
DEU 30:1 ನಾನು ನಿಮ್ಮ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ, ಶಾಪವೂ, ನಿಮಗೆ ಸಂಭವಿಸಿದಾಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಚದರಿಸಿರುವ ಎಲ್ಲಾ ಜನಾಂಗಗಳ ಮಧ್ಯದಲ್ಲಿಯೇ ನೀವು ಇವುಗಳನ್ನು ನೆನಪಿಗೆ ತಂದುಕೊಳ್ಳಬೇಕು.
DEU 30:2 ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು.
DEU 30:3 ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೆರೆಯಿಂದ ಬಿಡಿಸಿ, ನಿಮ್ಮ ಮೇಲೆ ಕನಿಕರಿಸಿ, ಅವರು ನಿಮ್ಮನ್ನು ಚದರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿಮ್ಮನ್ನು ಕೂಡಿಸುವರು.
DEU 30:4 ನಿಮ್ಮಲ್ಲಿ ಯಾರಾದರೂ ಭೂಮಿಯ ಕಟ್ಟಕಡೆಯವರೆಗೂ ಚದರಿ ಹೋಗಿದ್ದರೂ, ಅಲ್ಲಿಂದ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ಸಹ ಕರೆದುತರುವರು.
DEU 30:5 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳು ಸ್ವಾಧೀನ ಮಾಡಿಕೊಂಡ ದೇಶಕ್ಕೆ ನಿಮ್ಮನ್ನು ತರುವರು. ನೀವು ಅದನ್ನು ಸ್ವಾಧೀನಮಾಡಿಕೊಳ್ಳುವಿರಿ. ದೇವರು ನಿಮ್ಮ ಪಿತೃಗಳಿಗಿಂತಲೂ ನಿಮ್ಮನ್ನು ಸಮೃದ್ಧಿಗೊಳಿಸಿ ಹೆಚ್ಚಿಸುವರು.
DEU 30:6 ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು.
DEU 30:7 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಆ ಶಾಪಗಳನ್ನೆಲ್ಲಾ ನಿಮ್ಮ ಶತ್ರುಗಳ ಮೇಲೆಯೂ, ನಿಮ್ಮನ್ನು ಹಿಂಸಿಸಿದ ನಿಮ್ಮ ಹಗೆಯವರ ಮೇಲೆಯೂ ಬರಮಾಡುವರು.
DEU 30:8 ಆದರೆ ನೀವು ಪುನಃ ಯೆಹೋವ ದೇವರ ಮಾತನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳಂತೆ ನಡೆಯುವಿರಿ.
DEU 30:9 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೈಕೆಲಸದಲ್ಲಿಯೂ, ನಿಮ್ಮ ಗರ್ಭದ ಫಲದಲ್ಲಿಯೂ, ನಿಮ್ಮ ಪಶುಗಳ ಫಲದಲ್ಲಿಯೂ, ನಿಮ್ಮ ಭೂಮಿಯ ಫಲದಲ್ಲಿಯೂ ಅತ್ಯಂತ ಅಭಿವೃದ್ಧಿಯನ್ನು ಮಾಡುವರು. ಯೆಹೋವ ದೇವರು ನಿಮ್ಮ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿಮ್ಮಲ್ಲಿಯೂ ಸಂತೋಷಿಸುವರು.
DEU 30:10 ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿ, ಈ ನಿಯಮದ ಗ್ರಂಥದಲ್ಲಿ ಬರೆದಿರುವ ಅವರ ಆಜ್ಞಾತೀರ್ಪುಗಳನ್ನು ಕಾಪಾಡಿ, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡರೆ, ನಿಮ್ಮಲ್ಲಿ ಸಂತೋಷಿಸುವರು.
DEU 30:11 ನಿಶ್ಚಯವಾಗಿ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯು ನಿಮಗೆ ಕಠಿಣವಾದದ್ದಲ್ಲ; ದೂರವಾದದ್ದೂ ಅಲ್ಲ.
DEU 30:12 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಆಕಾಶಕ್ಕೆ ಏರಿಹೋಗಿ, ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಆಕಾಶದಲ್ಲಿ ಇರುವಂಥದ್ದೂ ಅಲ್ಲ.
DEU 30:13 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಸಮುದ್ರವನ್ನು ದಾಟಿ, ನಮಗೆ ತೆಗೆದುಕೊಂಡು ಬಂದು ಅದನ್ನು ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಸಮುದ್ರದ ಆಚೆಯಲ್ಲಿ ಇರುವಂಥದ್ದೂ ಅಲ್ಲ.
DEU 30:14 ಆ ವಾಕ್ಯವು ನಿಮಗೆ ಬಹಳ ಸಮೀಪವಾಗಿದೆ. ಅದನ್ನು ಕೈಗೊಳ್ಳುವ ಹಾಗೆ ವಾಕ್ಯವು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.
DEU 30:15 ನೋಡಿರಿ, ನಾನು ಈ ಹೊತ್ತು ಜೀವ ಸಮೃದ್ಧಿಯನ್ನೂ, ಮರಣ ನಾಶನವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ.
DEU 30:16 ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ನಡೆದುಕೊಂಡು, ಅವರ ಆಜ್ಞಾತೀರ್ಪುಗಳನ್ನೂ, ಅನುಸರಿಸಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ. ಹಾಗೆ ಮಾಡಿದರೆ, ನೀವು ಬದುಕಿ ಹೆಚ್ಚುವಿರಿ. ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು.
DEU 30:17 ಆದರೆ ನಿಮ್ಮ ಹೃದಯವು ತಿರುಗಿಬಿದ್ದು ನೀವು ಮಾತು ಕೇಳದೆ ಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆದವರಾಗಿ ಅಡ್ಡಬಿದ್ದು, ಅವುಗಳಿಗೆ ಸೇವೆ ಮಾಡಿದರೆ,
DEU 30:18 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಬಾಳದೆ, ನಾಶವಾಗಿಹೋಗುವಿರಿ ಎಂದು ಈ ಹೊತ್ತು ನಿಮಗೆ ಖಂಡಿತವಾಗಿ ತಿಳಿಸುತ್ತೇನೆ.
DEU 30:19 ನಾನು ಜೀವ ಮರಣವನ್ನೂ, ಆಶೀರ್ವಾದ ಶಾಪವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆಂಬುದಕ್ಕೆ ಆಕಾಶವನ್ನೂ, ಭೂಮಿಯನ್ನೂ ಈ ಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ. ಆದುದರಿಂದ ನೀವೂ, ನಿಮ್ಮ ಸಂತತಿಯೂ, ಬದುಕಿ ಬಾಳುವಂತೆ ಜೀವವನ್ನೇ ಆಯ್ದುಕೊಳ್ಳಿರಿ.
DEU 30:20 ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾತನ್ನು ಕೇಳಿ, ಅವರನ್ನೇ ಹೊಂದಿಕೊಂಡಿರಿ. ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಲ್ಲಿ ನೀವು ಬಹುಕಾಲ ವಾಸಮಾಡುವಿರಿ.
DEU 31:1 ಆಗ ಮೋಶೆ ಹೋಗಿ ಇಸ್ರಾಯೇಲರಿಗೆಲ್ಲಾ ಈ ಮಾತುಗಳನ್ನು ಹೇಳಿದನು:
DEU 31:2 “ನಾನು ಈ ಹೊತ್ತು ನೂರ ಇಪ್ಪತ್ತು ವರ್ಷದವನಾಗಿದ್ದೇನೆ. ಇನ್ನು ಮುಂದೆ ನಿಮ್ಮನ್ನು ಮುನ್ನಡೆಸಲು ನನಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಯೆಹೋವ ದೇವರು ನನಗೆ, ‘ನೀನು ಈ ಯೊರ್ದನನ್ನು ದಾಟುವುದಿಲ್ಲ,’ ಎಂದು ಹೇಳಿದ್ದಾರೆ.
DEU 31:3 ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುವರು. ಅವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸೋಲಿಸುವರು. ನೀವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋಶುವನು ನಿಮ್ಮ ಮುಂದೆ ಹೋಗುವನು.
DEU 31:4 ಯೆಹೋವ ದೇವರು ಅಮೋರಿಯರ ಅರಸನಾದ ಸೀಹೋನನಿಗೂ, ಓಗನಿಗೂ, ಅವರ ದೇಶಕ್ಕೂ ಮಾಡಿದ ಪ್ರಕಾರ ಆ ಜನಾಂಗಗಳನ್ನು ದಂಡಿಸುವರು.
DEU 31:5 ಯೆಹೋವ ದೇವರು ಅವರನ್ನು ನಿಮಗೆ ಒಪ್ಪಿಸಿಕೊಡುವಾಗ, ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಅವರಿಗೆ ಮಾಡಬೇಕು.
DEU 31:6 ಶಕ್ತಿಶಾಲಿಗಳಾಗಿರಿ, ಧೈರ್ಯವಾಗಿರಿ, ಭಯಪಡಬೇಡಿರಿ, ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ನಿಮ್ಮನ್ನು ಕೈಬಿಡುವುದಿಲ್ಲ, ತೊರೆಯುವುದೂ ಇಲ್ಲ.”
DEU 31:7 ಆಗ ಮೋಶೆಯು ಯೆಹೋಶುವನನ್ನು ಕರೆದು, ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ, “ಶಕ್ತಿಶಾಲಿಯಾಗಿರು, ಧೈರ್ಯವಾಗಿರು. ಏಕೆಂದರೆ ನೀನು ಈ ಜನರ ಸಂಗಡ ಹೋಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ಸೇರಿಸಬೇಕು. ನೀನು ಅವರಿಗೆ ಅದನ್ನು ಸೊತ್ತಾಗಿ ಹಂಚಿಕೊಡಬೇಕು.
DEU 31:8 ಯೆಹೋವ ದೇವರು ತಾವೇ ನಿನ್ನ ಮುಂದೆ ಹೋಗುತ್ತಾರೆ. ಅವರು ನಿನ್ನ ಸಂಗಡ ಇರುವರು, ಅವರು ನಿನ್ನನ್ನು ತೊರೆಯುವುದಿಲ್ಲ, ಮರೆತುಬಿಡುವುದಿಲ್ಲ. ನೀನು ಭಯಪಡಬೇಡ, ಅಂಜಿಕೊಳ್ಳಬೇಡ,” ಎಂದು ಹೇಳಿದನು.
DEU 31:9 ಇದಲ್ಲದೆ ಮೋಶೆಯು ಈ ನಿಯಮವನ್ನು ಬರೆದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಪುತ್ರರಾದ ಯಾಜಕರಿಗೂ, ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.
DEU 31:10 ಅನಂತರ ಮೋಶೆಯು ಅವರಿಗೆ, “ಪ್ರತಿ ಏಳು ವರ್ಷ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರ್ಷದಲ್ಲಿ ಅಂದರೆ, ಗುಡಾರಗಳ ಹಬ್ಬದಲ್ಲಿ
DEU 31:11 ಇಸ್ರಾಯೇಲಿನವರೆಲ್ಲರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ನೀವು ಈ ನಿಯಮವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಜನರು ಕೇಳುವ ಹಾಗೆ ಓದಬೇಕು.
DEU 31:12 ಜನರನ್ನು ಅಂದರೆ, ಪುರುಷರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಪರದೇಶಿಯರನ್ನೂ ಕೂಡಿಸಬೇಕು. ಅವರು ಕೇಳಿ ಕಲಿತು, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಈ ನಿಯಮದ ವಾಕ್ಯಗಳನ್ನೆಲ್ಲಾ ಕೈಗೊಂಡು ನಡೆಯುವ ಹಾಗೆ, ಅವರೆಲ್ಲರನ್ನು ಒಂದು ಕಡೆ ಕೂಡಿಸಬೇಕು.
DEU 31:13 ದೇವರ ಈ ನಿಯಮವನ್ನು ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ, ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವುದಕ್ಕೆ ಕಲಿತುಕೊಳ್ಳಿರಿ, ಎಂದು ಅವರಿಗೆ ಆಜ್ಞಾಪಿಸಿ ಹೇಳಬೇಕು,” ಎಂದನು.
DEU 31:14 ಇದಲ್ಲದೆ ಯೆಹೋವ ದೇವರು ಮೋಶೆಗೆ, “ಇಗೋ, ನೀನು ಸಾಯುವ ದಿನಗಳು ಸಮೀಪವಾದವು. ಯೆಹೋಶುವನನ್ನು ಕರೆದು ನೀವು ದೇವದರ್ಶನ ಗುಡಾರದಲ್ಲಿ ನಿಂತುಕೊಳ್ಳಿರಿ. ಆಗ ಅವನಿಗೆ ಅಧಿಕಾರ ಕೊಡುವೆನು,” ಎಂದರು. ಆ ಪ್ರಕಾರವೆ ಮೋಶೆಯೂ, ಯೆಹೋಶುವನೂ ಹೋಗಿ ದೇವದರ್ಶನ ಗುಡಾರದಲ್ಲಿ ನಿಂತುಕೊಂಡರು.
DEU 31:15 ಆಗ ಯೆಹೋವ ದೇವರು ಗುಡಾರದೊಳಗೆ ಮೇಘ ಸ್ತಂಭದಲ್ಲಿ ಕಾಣಿಸಿಕೊಂಡರು. ಆ ಮೇಘಸ್ತಂಭವು ಗುಡಾರದ ಬಾಗಿಲಿನ ಮೇಲೆ ನಿಂತಿತು.
DEU 31:16 ಆಗ ಯೆಹೋವ ದೇವರು ಮೋಶೆಗೆ, “ನೀನು ಮೃತನಾಗಿ, ನಿನ್ನ ಪಿತೃಗಳ ಸಂಗಡ ಸೇರುವಿ. ಈ ಜನರು ದೇವದ್ರೋಹಿಗಳಾಗಿ, ಅವರು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಪೂಜೆ ಮಾಡಿ, ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿದ ಒಡಂಬಡಿಕೆಯನ್ನು ಮೀರುವರು.
DEU 31:17 ಆ ದಿವಸದಲ್ಲಿ ನಾನು ಅವರ ಮೇಲೆ ಕೋಪಗೊಂಡು ಅವರನ್ನು ಬಿಟ್ಟುಬಿಟ್ಟು, ನನ್ನ ಮುಖವನ್ನು ಅವರಿಗೆ ಮರೆಮಾಡುವೆನು. ವಿರೋಧಿಗಳು ಅವರನ್ನು ನುಂಗಿಬಿಡುವರು. ಬಹಳ ಕೇಡುಗಳೂ, ಇಕ್ಕಟ್ಟುಗಳೂ ಅವರಿಗೆ ಸಂಭವಿಸುವುದು. ಆ ದಿವಸದಲ್ಲಿ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ನಮಗೆ ಕೇಡುಗಳು,’ ಎಂದು ಹೇಳುವರು.
DEU 31:18 ಅವರು ಮಾಡಿದ ಎಲ್ಲಾ ದುಷ್ಕೃತ್ಯದ ನಿಮಿತ್ತವೂ, ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತ ಮರೆಮಾಡುವೆನು.
DEU 31:19 “ಹೀಗಿರುವುದರಿಂದ ಈಗ ಈ ಹಾಡನ್ನು ಬರೆದುಕೊಳ್ಳಿರಿ. ಇಸ್ರಾಯೇಲರಲ್ಲಿ ಈ ಹಾಡು ನನಗೆ ಸಾಕ್ಷಿಯಾಗಿರುವ ಹಾಗೆ ಅದನ್ನು ಅವರಿಗೆ ಬಾಯಿಪಾಠ ಮಾಡಿಸು.
DEU 31:20 ನಾನು ಅವರ ಪಿತೃಗಳಿಗೆ ಪ್ರಮಾಣ ಮಾಡಿದಂಥ, ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ, ಅವರು ತಿಂದು ತೃಪ್ತರಾಗಿ ಕೊಬ್ಬಿದವರಾದಾಗ, ಅವರು ಅನ್ಯದೇವರುಗಳ ಕಡೆಗೆ ತಿರುಗಿಕೊಂಡು, ಅವುಗಳನ್ನು ಪೂಜಿಸಿ, ನನಗೆ ಕೋಪವನ್ನೆಬ್ಬಿಸಿ, ನನ್ನ ಒಡಂಬಡಿಕೆಯನ್ನು ಮೀರುವರು.
DEU 31:21 ಬಹಳ ಕೇಡುಗಳೂ ವಿಪತ್ತುಗಳೂ ಅವರಿಗೆ ಸಂಭವಿಸುವಾಗ, ಈ ಹಾಡು ಅವರಿಗೆ ವಿರೋಧ ಸಾಕ್ಷಿಯಾಗಿ ಉತ್ತರಕೊಡುವುದು. ಏಕೆಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತು ಹೋಗುವುದಿಲ್ಲ. ನಾನು ಪ್ರಮಾಣ ಮಾಡಿದ ದೇಶದಲ್ಲಿ ಅವರನ್ನು ತರುವುದಕ್ಕಿಂತ ಮುಂಚೆ ಅವರು ಈ ಹೊತ್ತು ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆನು.”
DEU 31:22 ಆದ್ದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲರಿಗೆ ಕಲಿಸಿದನು.
DEU 31:23 ಅವನು ನೂನನ ಮಗನಾದ ಯೆಹೋಶುವನಿಗೆ ಆಜ್ಞಾಪಿಸಿ, “ಶೂರನಾಗಿರು, ಧೈರ್ಯವಾಗಿರು, ಏಕೆಂದರೆ ನೀನು ಇಸ್ರಾಯೇಲರನ್ನು ನಾನು ಅವರಿಗೆ ಪ್ರಮಾಣ ಮಾಡಿದ ದೇಶಕ್ಕೆ ತರುವೆ, ನಾನು ನಿನ್ನ ಸಂಗಡ ಇರುವೆನು,” ಎಂದು ಹೇಳಿದನು.
DEU 31:24 ಇದಲ್ಲದೆ ಮೋಶೆ ಈ ನಿಯಮದ ವಾಕ್ಯಗಳನ್ನು ಗ್ರಂಥದಲ್ಲಿ ಬರೆದು ತೀರಿಸಿದಾಗ,
DEU 31:25 ಮೋಶೆ ಯೆಹೋವ ದೇವರು ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ,
DEU 31:26 “ದೇವರ ನಿಯಮದ ಈ ಗ್ರಂಥವನ್ನು ತೆಗೆದುಕೊಂಡು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿ ಇಡಿರಿ. ಅದು ನಿಮಗೆ ವಿರೋಧವಾದ ಸಾಕ್ಷಿಯಾಗಿ ಅಲ್ಲಿ ಇರಲಿ.
DEU 31:27 ಏಕೆಂದರೆ ನಿಮ್ಮ ದ್ರೋಹವನ್ನೂ, ನಿಮ್ಮ ಹಟಮಾರಿತನವನ್ನೂ ನಾನು ಬಲ್ಲೆನು. ಈ ಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರುವಾಗಲೇ ಯೆಹೋವ ದೇವರಿಗೆ ದ್ರೋಹ ಮಾಡಿದವರಾದಿರಿ. ನಾನು ಸತ್ತಮೇಲೆ ಇನ್ನೇನಾಗುವುದು?
DEU 31:28 ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ, ನಿಮ್ಮ ಅಧಿಕಾರಿಗಳನ್ನೂ ನನ್ನ ಬಳಿಗೆ ಸೇರಿಸಿರಿ. ಆಗ ಈ ಮಾತುಗಳನ್ನು ಅವರು ಕೇಳುವ ಹಾಗೆ ಆಕಾಶವನ್ನೂ, ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು.
DEU 31:29 ಏಕೆಂದರೆ ನಾನು ಸತ್ತಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವೇ ಕೆಡಿಸಿಕೊಂಡು, ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು. ನೀವು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ನಿಮ್ಮ ಕ್ರಿಯೆಗಳಿಂದ ಅವರಿಗೆ ಕೋಪವನ್ನೆಬ್ಬಿಸುವದರಿಂದ ನಿಮಗೆ ಕೇಡು ಸಂಭವಿಸುವುದು,” ಎಂದು ಹೇಳಿದನು.
DEU 31:30 ಆಗ ಮೋಶೆ ಇಸ್ರಾಯೇಲ್ ಸಮೂಹಕ್ಕೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಪ್ರಾರಂಭದಿಂದ ಕೊನೆಯವರೆಗೆ ಹೇಳಿದನು.
DEU 32:1 ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
DEU 32:2 ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.
DEU 32:3 ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
DEU 32:4 ದೇವರು ಸಂರಕ್ಷಿಸುವ ಬಂಡೆ. ದೇವರ ಕಾರ್ಯವು ಸಂಪೂರ್ಣವಾದದ್ದು. ಅವರ ಮಾರ್ಗಗಳೆಲ್ಲಾ ನ್ಯಾಯವಾಗಿವೆ. ಅವರು ಯಾವ ತಪ್ಪನ್ನೂ ಮಾಡದ ನಂಬಿಗಸ್ತ ದೇವರು, ನೀತಿವಂತರೂ ಯಥಾರ್ಥರೂ ಆದ ದೇವರು.
DEU 32:5 ಇಸ್ರಾಯೇಲರು ತಮ್ಮನ್ನು ಕೆಡಿಸಿಕೊಂಡರು. ದೇವರ ಮಕ್ಕಳಿಗೆ ತಕ್ಕಂತೆ ನಡೆಯದವರು. ಅವರು ಮೂರ್ಖರಾದ ವಕ್ರ ಸಂತತಿ.
DEU 32:6 ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?
DEU 32:7 ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳಿರಿ. ತಲತಲಾಂತರಗಳ ವರುಷಗಳನ್ನು ಗ್ರಹಿಸಿಕೊಳ್ಳಿರಿ. ನಿಮ್ಮ ತಂದೆಯನ್ನು ಕೇಳಿದರೆ, ಅವರು ನಿಮಗೆ ತಿಳಿಸುವರು. ನಿಮ್ಮ ಹಿರಿಯರನ್ನು ಕೇಳಿದರೆ, ಅವರು ನಿಮಗೆ ಹೇಳುವರು.
DEU 32:8 ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.
DEU 32:9 ಏಕೆಂದರೆ ಯೆಹೋವ ದೇವರ ಪಾಲು ಅವರ ಜನರೇ ಆಗಿರುತ್ತಾರೆ. ಯಾಕೋಬ್ಯರೇ ದೇವರ ಸೊತ್ತಿನ ಪಾಲು.
DEU 32:10 ದೇವರು ಬರಿದಾದ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಕಂಡು ನಡೆಸಿದರು. ದೇವರು ಇಸ್ರಾಯೇಲರನ್ನು ರಕ್ಷಿಸಿ, ಉಪದೇಶಿಸಿ, ತಮ್ಮ ಕಣ್ಣುಗುಡ್ಡೆಯಂತೆ ಕಾಪಾಡಿದರು.
DEU 32:11 ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ, ಅವುಗಳ ಮೇಲೆ ರೆಕ್ಕೆಯನ್ನಾಡಿಸಿ, ತನ್ನ ರೆಕ್ಕೆಗಳನ್ನು ಚಾಚಿ, ಅವುಗಳನ್ನು ತೆಗೆದುಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ,
DEU 32:12 ಯೆಹೋವ ದೇವರು ಮಾತ್ರವೇ ಇಸ್ರಾಯೇಲರನ್ನು ನಡೆಸಿಕೊಂಡು ಬಂದರು. ಅನ್ಯದೇವರು ಯಾರೂ ಇಸ್ರಾಯೇಲರ ಸಂಗಡ ಇರಲಿಲ್ಲ.
DEU 32:13 ದೇವರು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ, ಅವರಿಗೆ ವ್ಯವಸಾಯ ವೃದ್ಧಿಯನ್ನುಂಟುಮಾಡಿ, ಬಂಡೆಯಿಂದ ಜೇನೂ, ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದರು.
DEU 32:14 ಹಸುಗಳ ಕೆನೆಯನ್ನೂ, ಕುರಿಗಳ ಹಾಲನ್ನೂ, ಕುರಿಮರಿಗಳ ಕೊಬ್ಬಿನ ಸಂಗಡ ಬಾಷಾನಿನ ಟಗರುಗಳನ್ನೂ ಹೋತಗಳನ್ನೂ ಉತ್ತಮವಾದ ಗೋಧಿಯನ್ನು ಕೊಟ್ಟರು. ನೀನು ರಕ್ತಗೆಂಪಾದ ದ್ರಾಕ್ಷಾರಸವನ್ನು ಕುಡಿದೆ.
DEU 32:15 ಯೆಶುರೂನು ಎಂಬ ಇಸ್ರಾಯೇಲರು ಕೊಬ್ಬಿ ಹೋದರು. ಅವರು ಹೊಟ್ಟೆ ತುಂಬ ಚೆನ್ನಾಗಿ ತಿಂದು ದಪ್ಪವಾದರು. ಅವರು ತಮ್ಮನ್ನು ಸೃಷ್ಟಿಮಾಡಿದ ದೇವರನ್ನು ಬಿಟ್ಟು, ತಮ್ಮ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದರು.
DEU 32:16 ಅನ್ಯದೇವತೆಗಳಿಂದ ದೇವರಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ದೇವರಿಗೆ ಕೋಪವನ್ನು ಎಬ್ಬಿಸಿದರು.
DEU 32:17 ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಮುಂಚಿತವಾಗಿ ಅರಿಯದ ದೇವರುಗಳಿಗೆ, ಸಮೀಪದಲ್ಲಿ ಹೊಸದಾಗಿ ತೋರಿ ಬಂದ ದೇವರುಗಳಿಗೆ, ಅಂದರೆ, ಅವರ ಪಿತೃಗಳು ಭಜಿಸದವುಗಳಿಗೆ ಬಲಿ ಅರ್ಪಿಸಿದರು.
DEU 32:18 ನಿಮ್ಮನ್ನು ಹುಟ್ಟಿಸಿದ ರಕ್ಷಣಾಬಂಡೆಯನ್ನು ನೆನಸದೆ, ನಿಮ್ಮನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿರಿ.
DEU 32:19 ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.
DEU 32:20 ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.
DEU 32:21 ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
DEU 32:22 ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.
DEU 32:23 “ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿಡುವೆನು. ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
DEU 32:24 ಅವರು ಹಸಿವೆಯಿಂದ ಬಳಲಿ ಹೋಗುವರು, ಜ್ವಾಲೆಯಿಂದಲೂ ಕಠಿಣ ವ್ಯಾಧಿಯಿಂದಲೂ ಬೀಳುವರು. ಕಾಡುಮೃಗಗಳನ್ನೂ ಧೂಳಿನಲ್ಲಿರುವ ವಿಷಸರ್ಪಗಳನ್ನೂ ಅವರಿಗೆ ವಿರೋಧವಾಗಿ ಕಳುಹಿಸುವೆನು.
DEU 32:25 ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.
DEU 32:26 ನಾನು ಅವರನ್ನು ಚದರಿಸಿಬಿಡುವೆನು. ಅವರ ನೆನಪೇ ಮನುಷ್ಯರಲ್ಲಿ ಇರದ ಹಾಗೆ ಮಾಡುತ್ತಿದ್ದೆನು.
DEU 32:27 ಆದರೆ ಅವರ ವಿರೋಧಿಗಳು ತಪ್ಪಾದ ಭಾವನೆ ಮಾಡಿಕೊಂಡು, ‘ಯೆಹೋವ ದೇವರು ಇವುಗಳನ್ನೆಲ್ಲಾ ಮಾಡಲಿಲ್ಲ, ನಾವೇ ನಮ್ಮ ಕೈಯಿಂದ ಜಯಿಸಿದೆವೆಂದುಕೊಳ್ಳುವರು,’ ಆದ್ದರಿಂದ ನಾನು ಹಿಂತಗೆದುಕೊಂಡೆನು.”
DEU 32:28 ಏಕೆಂದರೆ ಇಸ್ರಾಯೇಲರು ಆಲೋಚನೆ ಇಲ್ಲದ ಜನಾಂಗವೇ. ಅವರಲ್ಲಿ ವಿವೇಕವಿಲ್ಲ.
DEU 32:29 ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.
DEU 32:30 ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
DEU 32:31 ಏಕೆಂದರೆ ನಮ್ಮ ರಕ್ಷಣಾಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
DEU 32:32 ಏಕೆಂದರೆ ಸೊದೋಮಿನ ದ್ರಾಕ್ಷಿಗಿಡದಿಂದಲೂ, ಗೊಮೋರದ ತೋಟದೊಳಗಿಂದಲೂ ಅವರ ದ್ರಾಕ್ಷಿಗಿಡ ಉಂಟಾಯಿತು. ಅವರ ಹಣ್ಣುಗಳು, ವಿಷದ ಹಣ್ಣುಗಳು, ಆ ಹಣ್ಣುಗಳ ಗೊಂಚಲು ಕಹಿಯಾಗಿವೆ.
DEU 32:33 ಅವರ ದ್ರಾಕ್ಷಾರಸವು ಸರ್ಪಗಳ ವಿಷವೂ, ಹಾವುಗಳ ಕ್ರೂರ ವಿಷವೂ ಆಗಿದೆ.
DEU 32:34 “ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?
DEU 32:35 ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”
DEU 32:36 ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.
DEU 32:37 ಆಗ ಯೆಹೋವ ದೇವರು ಹೀಗನ್ನುವರು: “ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
DEU 32:38 ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ? ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ, ನಿಮಗೋಸ್ಕರ ಕಾವಲಾಗಲಿ.
DEU 32:39 “ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
DEU 32:40 ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
DEU 32:41 ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
DEU 32:42 ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ, ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ ನನ್ನ ಬಾಣಗಳು ಅಮಲೇರುವುದು. ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
DEU 32:43 ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
DEU 32:44 ಆಗ ಮೋಶೆಯು ನೂನನ ಮಗನಾದ ಹೋಶೇಯನ ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು.
DEU 32:45 ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ,
DEU 32:46 “ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ.
DEU 32:47 ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
DEU 32:48 ಆ ದಿವಸವೇ ಯೆಹೋವ ದೇವರು ಮೋಶೆಗೆ,
DEU 32:49 “ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು.
DEU 32:50 ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು.
DEU 32:51 ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ.
DEU 32:52 ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.
DEU 33:1 ದೇವರ ಮನುಷ್ಯನಾದ ಮೋಶೆಯು ಮರಣ ಹೊಂದುವದಕ್ಕಿಂತ ಮುಂಚೆ ಇಸ್ರಾಯೇಲರಿಗೆ ಕೊಟ್ಟ ಆಶೀರ್ವಾದ:
DEU 33:2 “ಯೆಹೋವ ದೇವರು ಸೀನಾಯಿ ಬೆಟ್ಟದಿಂದ ಬಂದು, ಸೇಯೀರಿನಿಂದ ಅವರ ಮೇಲೆ ಉದಯಿಸಿದರು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದರು. ದೇವರು ದಕ್ಷಿಣದ ತಮ್ಮ ಪರ್ವತ ಶ್ರೇಣಿಯಿಂದ ಲಕ್ಷಾಂತರ ಪರಿಶುದ್ಧರ ಸಂಗಡ ಬಂದರು.
DEU 33:3 ನಿಶ್ಚಯವಾಗಿ ನೀವು ಜನರನ್ನು ಪ್ರೀತಿಸುತ್ತೀರಿ. ಪರಿಶುದ್ಧ ಜನರು ನಿಮ್ಮ ಆಶ್ರಯದಲ್ಲಿಯೇ ಇದ್ದಾರೆ. ನಿಮ್ಮ ಪಾದಗಳಿಗೆ ಎಲ್ಲರೂ ಎರಗುವರು. ನಿಮ್ಮಿಂದಲೇ ಬೋಧನೆ ಪಡೆಯುವರು.
DEU 33:4 ಯಾಕೋಬನ ಸಂತತಿಯವರಾದ ನಮಗೆ, ಮೋಶೆಯು ನಿಯಮವನ್ನು ಸೊತ್ತಾಗಿ ಕೊಟ್ಟಿದ್ದಾನೆ.
DEU 33:5 ಇಸ್ರಾಯೇಲರ ಮುಖ್ಯಸ್ಥರೂ ಅವರ ಗೋತ್ರಗಳು ಒಟ್ಟಾಗಿ ಸೇರಿಬಂದಾಗ, ದೇವರೇ ಯೆಶುರೂನಿನ ಮೇಲೆ ಅರಸನಾಗಿದ್ದರು.
DEU 33:6 “ರೂಬೇನನು ಸಾಯದೆ ಬದುಕಲಿ. ಅವನ ಜನರು ಕಡಿಮೆಯಾಗದಿರಲಿ.”
DEU 33:7 ಯೆಹೂದನ ಬಗ್ಗೆ ಮೋಶೆ ಹೇಳಿದ ಮಾತಿದು: “ಯೆಹೋವ ದೇವರೇ, ಯೆಹೂದನ ಮೊರೆಯನ್ನಾಲಿಸಿ, ಅವರನ್ನು ಅವರ ಬಂಧುಗಳೊಡನೆ ಸೇರಿಸಿರಿ. ಅವನ ಸ್ವಂತ ಕೈಗಳೇ ತನ್ನ ಹಕ್ಕು ಬಾಧ್ಯತೆಗಳನ್ನು ಕಾದಿರಿಸುತ್ತವೆ. ಅವನ ಶತ್ರುಗಳಿಂದ ಅವನನ್ನು ತಪ್ಪಿಸಿರಿ.”
DEU 33:8 ಲೇವಿ ಕುಲದ ವಿಷಯದಲ್ಲಿ ಹೇಳಿದ್ದೇನೆಂದರೆ: “ನಿಮ್ಮ ನಿರ್ಣಯವನ್ನು ತಿಳಿಸುವ ಊರೀಮ್, ತುಮ್ಮೀಮ್ ಎಂಬ ವಸ್ತುಗಳು ನಿಮ್ಮ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀವು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿರಿ. ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದ ಮಾಡಿದಿರಿ.
DEU 33:9 ಅವನು ತನ್ನ ತಂದೆತಾಯಿಗಳ ಬಗ್ಗೆ, ‘ಅವರಿಗಾಗಿ ನನಗೆ ಗೌರವವಿಲ್ಲ.’ ಅವನು ತನ್ನ ಸಹೋದರರನ್ನೂ ಗುರುತಿಸಲಿಲ್ಲ ತನ್ನ ಸ್ವಂತ ಮಕ್ಕಳನ್ನೂ ಅರಿಯಲಿಲ್ಲ, ಏಕೆಂದರೆ ಅವನು ನಿಮ್ಮ ವಾಕ್ಯವನ್ನು ಕೈಗೊಂಡು ನಿಮ್ಮ ಒಡಂಬಡಿಕೆಯನ್ನು ಕಾಪಾಡಿದ್ದಾನೆ.
DEU 33:10 ಅವನು ಯಾಕೋಬನಿಗೆ ನಿಮ್ಮ ಸೂತ್ರಗಳನ್ನೂ, ಇಸ್ರಾಯೇಲರಿಗೆ ನಿಮ್ಮ ನಿಯಮವನ್ನೂ ಬೋಧಿಸುವನು. ನಿಮ್ಮ ಮುಂದೆ ಧೂಪವನ್ನೂ ನಿಮ್ಮ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಸಮರ್ಪಿಸುವನು.
DEU 33:11 ಯೆಹೋವ ದೇವರೇ, ಅವನ ಎಲ್ಲ ಕೌಶಲ್ಯಗಳನ್ನು ಆಶೀರ್ವದಿಸಿರಿ. ಅವನ ಕೈಕೆಲಸವನ್ನು ಅಂಗೀಕರಿಸಿರಿ. ಅವನಿಗೆ ವಿರೋಧವಾಗಿ ಏಳುವವರ ನಡು ಮುರಿದು ಹೋಗಲಿ. ಅವನನ್ನು ದ್ವೇಷಿಸುವವರು ತಿರುಗಿ ಏಳದ ಹೋಗಲಿ.”
DEU 33:12 ಮೋಶೆಯು ಬೆನ್ಯಾಮೀನನ ವಿಷಯವಾಗಿ ಹೇಳಿದ್ದೇನೆಂದರೆ: “ಯೆಹೋವ ದೇವರಿಗೆ ಪ್ರಿಯನಾದ ಇವನು ದೇವರ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುವನು. ದೇವರು ಅವನಿಗೆ ದಿನವೆಲ್ಲಾ ಆಸರೆಯಾಗಿರುವರು. ಅವನು ದೇವರ ಭುಜಗಳ ನಡುವೆ ವಿಶ್ರಾಂತಿ ಪಡೆಯುವನು.”
DEU 33:13 ಯೋಸೇಫನ ವಿಷಯವಾಗಿ ಹೇಳಿದ್ದೇನೆಂದರೆ: “ಅವನ ದೇಶವು ಆಕಾಶದ ಅಮೂಲ್ಯವಾದ ಮಂಜಿನಿಂದಲೂ, ಕೆಳಗೆ ಸಾಗರ ಸೆಲೆಯಿಂದಲೂ ಯೆಹೋವ ದೇವರ ಆಶೀರ್ವಾದ ಹೊಂದಲಿ.
DEU 33:14 ಸೂರ್ಯನು ತರುವ ಉತ್ಕೃಷ್ಟವಾದವುಗಳಿಂದಲೂ ಚಂದ್ರನು ದಯಪಾಲಿಸುವ ಅಮೂಲ್ಯವಾದವುಗಳಿಂದಲೂ
DEU 33:15 ಪುರಾತನ ಪರ್ವತಗಳಿಂದ ದೊರೆಯುವ ಅತ್ಯುತ್ತಮ ಕಾಣಿಕೆಗಳಿಂದಲೂ ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದಲೂ,
DEU 33:16 ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಫಲಗಳಲ್ಲಿ ಉತ್ಕೃಷ್ಟವಾದುದೆಲ್ಲವೂ ಸುಡುವ ಪೊದೆಯಲ್ಲಿ ವಾಸವಾಗಿದ್ದ ದೇವರ ದಯೆಯೂ ಯೋಸೇಫನ ತಲೆಯ ಮೇಲೆ ನೆಲೆಗೊಳ್ಳಲಿ. ಅವನು ತನ್ನ ಸಹೋದರರಲ್ಲಿ ರಾಜಕುಮಾರನಾಗಿರುವನು. ಕುಲದವರ ಶಿರಸ್ಸಾಗಿರುವ ಅವನ ಮೇಲೆ ಆಶೀರ್ವಾದ ಉಂಟಾಗಲಿ.
DEU 33:17 ಅವನ ವೈಭವವು ಚೊಚ್ಚಲ ಹೋರಿಯಂತೆ ಇರುವುದು, ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇರುವುದು. ಇವುಗಳಿಂದ ಜನಾಂಗಗಳನ್ನೆಲ್ಲಾ ಇರಿದು ಒಟ್ಟಿಗೆ ಭೂಮಿಯ ಅಂಚಿನವರೆಗೆ ಓಡಿಸುವನು. ಎಫ್ರಾಯೀಮ್ ಕುಲದ ಹತ್ತು ಸಾವಿರ ಜನರೂ ಇಂಥವರೇ. ಮನಸ್ಸೆ ಕುಲದ ಸಹಸ್ರ ಜನರೂ ಇಂಥವರೇ ಆಗಿದ್ದಾರೆ.”
DEU 33:18 ಮೋಶೆಯು ಜೆಬುಲೂನರ ವಿಷಯವಾಗಿ ಹೇಳಿದ್ದೇನೆಂದರೆ: “ಜೆಬೂಲೂನನೇ, ನಿನ್ನ ಪ್ರಯಾಣದಲ್ಲಿ ಸಂತೋಷಪಡು. ಇಸ್ಸಾಕಾರನೇ, ನಿನ್ನ ಗುಡಾರಗಳಲ್ಲಿ ಸಂತೋಷಪಡು.
DEU 33:19 ಅವರು ಜನರನ್ನು ಬೆಟ್ಟಕ್ಕೆ ಕರೆಯಿಸಿ, ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಏಕೆಂದರೆ ಅವರು ಸಮುದ್ರದಿಂದ ಐಶ್ವರ್ಯವನ್ನು ಹೊಂದಿ ಮರಳಿನಲ್ಲಿ ಅಡಗಿರುವ ಸಂಪತ್ತನ್ನು ಪಡೆಯುವರು.”
DEU 33:20 ಮೋಶೆಯು ಗಾದನ ವಿಷಯವಾಗಿ ಹೇಳಿದ್ದೇನೆಂದರೆ: “ಗಾದನ ರಾಜ್ಯವನ್ನು ವಿಸ್ತಾರ ಮಾಡಿದ ದೇವರು ಸ್ತುತಿಹೊಂದಲಿ. ಅವನು ಸಿಂಹದಂತೆ ಜೀವಿಸಿ ತೋಳನ್ನೂ ಶಿರಸ್ಸನ್ನೂ ಮುರಿಯುವನು.
DEU 33:21 ಅವನು ಉತ್ತಮವಾದ ನಾಡನ್ನು ತನಗಾಗಿ ಆಯ್ದುಕೊಂಡನು. ನಾಯಕರ ಪಾಲು ಅವನಿಗಾಗಿ ದೊರಕಿತು. ಅವನು ಜನರ ಮುಖ್ಯಸ್ಥರ ಸಂಗಡ ಬಂದು, ಇಸ್ರಾಯೇಲರೊಡನೆ ಯೆಹೋವ ದೇವರ ನೀತಿಯನ್ನೂ ದೇವರ ನ್ಯಾಯಗಳನ್ನೂ ಸ್ಥಾಪಿಸಿದನು.”
DEU 33:22 ಮೋಶೆಯು ದಾನನ ವಿಷಯವಾಗಿ ಹೇಳಿದ್ದೇನೆಂದರೆ: “ದಾನನು ಬಾಷಾನಿನಿಂದ ಹಾರಿಬರುವ, ಪ್ರಾಯದ ಸಿಂಹದಂತಿದ್ದಾನೆ.”
DEU 33:23 ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ್ದೇನೆಂದರೆ: “ನಫ್ತಾಲಿಯೇ, ಯೆಹೋವ ದೇವರ ಅನುಗ್ರಹದಿಂದ ತೃಪ್ತನಾದವನೇ, ದೇವರ ಆಶೀರ್ವಾದದಿಂದ ತುಂಬಿದವನೇ; ಸಮುದ್ರವೂ ದಕ್ಷಿಣ ಪ್ರದೇಶವೂ ನಿನಗೆ ಸೊತ್ತಾಗಲಿ.”
DEU 33:24 ಮೋಶೆ ಆಶೇರನ ವಿಷಯವಾಗಿ ಹೇಳಿದ್ದೇನೆಂದರೆ: “ಪುತ್ರರಲ್ಲಿಯೇ ಶ್ರೇಷ್ಠನಾದ ಆಶೇರನು ಭಾಗ್ಯ ಹೊಂದಲಿ. ಅವನ ಸಹೋದರರು ಅವನನ್ನು ಮೆಚ್ಚಿಕೊಳ್ಳಲಿ, ಎಣ್ಣೆಯಲ್ಲಿ ಪಾದಸ್ನಾನ ಮಾಡುವಂತಾಗಲಿ.
DEU 33:25 ನಿನ್ನ ದ್ವಾರಗಳ ಅಗುಳಿಗಳು ಕಬ್ಬಿಣದ ಮತ್ತು ಕಂಚಿನವುಗಳು ಆಗಿರಲಿ. ನಿನ್ನ ಜೀವಮಾನಕಾಲವೆಲ್ಲಾ ನಿನಗೆ ಬಲವಿರುವುದು.
DEU 33:26 “ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ದೇವರು ನಿನ್ನ ಸಹಾಯಕ್ಕೆ ಆಕಾಶವನ್ನೇರಿ ಮೇಘಾರೂಢನಾಗಿ ತಮ್ಮ ಘನತೆಯಲ್ಲಿ ಬರುತ್ತಾರೆ.
DEU 33:27 ನಿತ್ಯ ದೇವರು ನಿನ್ನ ಆಶ್ರಯವು. ದೇವರ ಶಾಶ್ವತ ತೋಳುಗಳು ನಿನಗೆ ಆಶ್ರಯ. ನಿನ್ನ ವೈರಿಗಳನ್ನು ನಿನ್ನ ಮುಂದೆ ಓಡಿಸಿ, ‘ಅವರನ್ನು ಸಂಹರಿಸಿರಿ,’ ಎಂದು ಆಜ್ಞಾಪಿಸುವರು.
DEU 33:28 ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ, ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ, ಯಾಕೋಬನ ವಂಶದವರು ಸುರಕ್ಷಿತರಾದರು. ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.
DEU 33:29 ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು. ಯೆಹೋವ ದೇವರಿಂದ ರಕ್ಷಣೆಹೊಂದಿದ ಜನಾಂಗವೇ ನಿಮ್ಮಂತೆ ಯಾರಿದ್ದಾರೆ? ದೇವರೇ ನಿಮಗೆ ಗುರಾಣಿ ಹಾಗೂ ಸಹಾಯಕ. ದೇವರು ನಿಮ್ಮ ಮಹಿಮಾ ಖಡ್ಗ. ನಿಮ್ಮ ವೈರಿಗಳು ನಿಮ್ಮ ಮುಂದೆ ಮುದುರಿಕೊಳ್ಳುವರು ಮತ್ತು ಅವರ ಉನ್ನತ ಸ್ಥಳಗಳನ್ನು ನೀವು ತುಳಿದುಬಿಡುವಿರಿ.”
DEU 34:1 ಆಗ ಮೋಶೆ ಮೋವಾಬಿನ ಬಯಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿಹೋದನು. ಅಲ್ಲಿ ಯೆಹೋವ ದೇವರು ಅವನಿಗೆ ದೇಶವನ್ನೆಲ್ಲಾ ದಾನಿನವರೆಗಿರುವ ಗಿಲ್ಯಾದನ್ನೂ
DEU 34:2 ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯೀಮ್, ಮನಸ್ಸೆಯ ದೇಶವನ್ನೂ, ಸಮುದ್ರದ ಕಟ್ಟಕಡೆಯವರೆಗಿರುವ ಸಮಸ್ತ ಯೆಹೂದ ದೇಶವನ್ನೂ,
DEU 34:3 ನೆಗೆವನ್ನೂ ಖರ್ಜೂರಗಳ ಪಟ್ಟಣವಾದ ಯೆರಿಕೋ ಕಣಿವೆಯ ಬಯಲನ್ನೂ, ಚೋಗರ್ ಊರಿನ ತನಕ ತೋರಿಸಿದರು.
DEU 34:4 ಅನಂತರ ಯೆಹೋವ ದೇವರು ಅವನಿಗೆ, “ಅಬ್ರಹಾಮನಿಗೂ ಅವನ ಸಂತತಿಗೂ ಕೊಡುತ್ತೇನೆಂದು ನಾನು ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದ ದೇಶವು ಇದೇ. ಇದನ್ನು ನಿನಗೆ ತೋರಿಸಿದೆನು. ಆದರೆ ನೀನು ಅಲ್ಲಿಗೆ ಸೇರುವುದಿಲ್ಲ,” ಎಂದು ಹೇಳಿದರು.
DEU 34:5 ಯೆಹೋವ ದೇವರ ಮಾತಿನ ಹಾಗೆ ಅವರ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಮರಣಹೊಂದಿದನು.
DEU 34:6 ದೇವರು ಅವನನ್ನು ಮೋವಾಬಿನ ದೇಶದ ಬೇತ್ ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೂಣಿಟ್ಟರು. ಆದರೆ ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ಗೊತ್ತಿಲ್ಲ.
DEU 34:7 ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ. ಅವನ ಬಲ ಕುಂದಿಹೋಗಿರಲಿಲ್ಲ.
DEU 34:8 ಇಸ್ರಾಯೇಲರು ಮೋವಾಬಿನ ಬಯಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ದುಃಖಿಸಿದರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಸಂತಾಪದ ದಿವಸಗಳು ಮುಗಿದವು.
DEU 34:9 ಇದಲ್ಲದೆ ನೂನನ ಮಗ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದವನಾಗಿದ್ದನು. ಏಕೆಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರು ಯೆಹೋಶುವನ ಮಾತು ಕೇಳಿದರು.
DEU 34:10 ಯೆಹೋವ ದೇವರ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದ ಮೋಶೆಯಂಥ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ.
DEU 34:11 ಈಜಿಪ್ಟಿನಲ್ಲಿ ಫರೋಹನ ಮುಂದೆಯೂ, ಅವನ ಎಲ್ಲಾ ಅಧಿಕಾರಿಗಳ ಮುಂದೆಯೂ, ಜನರ ಮುಂದೆಯೂ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ಮಾಡುವುದಕ್ಕೆ ಯೆಹೋವ ದೇವರು ಮೋಶೆಯನ್ನು ಕಳುಹಿಸಿದ್ದರು.
DEU 34:12 ಇಸ್ರಾಯೇಲರ ಮುಂದೆ ಮೋಶೆಯು ನಡೆಸಿದ ವಿಶೇಷವಾದ ಕಾರ್ಯಗಳನ್ನು ಮತ್ತು ಭುಜಪರಾಕ್ರಮವನ್ನು ಯಾರೂ ಎಂದೂ ತೋರಿಸಿರಲಿಲ್ಲ ಅಥವಾ ಮಾಡಿರಲ್ಲ.
JOS 1:1 ಯೆಹೋವ ದೇವರ ಸೇವಕನಾದ ಮೋಶೆಯ ಮರಣದ ತರುವಾಯ, ನೂನನ ಮಗ ಮತ್ತು ಮೋಶೆಯ ಸೇವಕ ಆಗಿರುವ ಯೆಹೋಶುವನಿಗೆ ಯೆಹೋವ ದೇವರು:
JOS 1:2 “ನನ್ನ ಸೇವಕನಾದ ಮೋಶೆಯು ಮರಣಹೊಂದಿದನು. ಈಗ ನೀನು ಇಸ್ರಾಯೇಲರಾದ ಈ ಜನರೆಲ್ಲರ ಸಹಿತವಾಗಿ ಎದ್ದು, ಯೊರ್ದನ್ ನದಿಯನ್ನು ದಾಟಿ, ಇಸ್ರಾಯೇಲರಿಗೆ ನಾನು ಕೊಡುವ ದೇಶಕ್ಕೆ ಹೋಗು.
JOS 1:3 ನಾನು ಮೋಶೆಗೆ ವಾಗ್ದಾನ ಮಾಡಿದ ಪ್ರಕಾರ ನೀವು ಪಾದವಿಡುವ ಎಲ್ಲಾ ಸ್ಥಳವನ್ನು ನಾನು ನಿಮಗೆ ಕೊಟ್ಟಿದ್ದೇನೆ.
JOS 1:4 ಮರುಭೂಮಿಯೂ ಈ ಲೆಬನೋನ್ ಮೊದಲುಗೊಂಡು ಯೂಫ್ರೇಟೀಸ್ ಮಹಾ ನದಿಯವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು. ನಿಮ್ಮ ಸೀಮೆ ಸೂರ್ಯನು ಅಸ್ತಮಿಸುವ ಮಹಾಸಾಗರದವರೆಗೂ ವಿಸ್ತರಿಸಿಕೊಳ್ಳುವುದು.
JOS 1:5 ನೀನು ಜೀವಿಸುವ ದಿವಸಗಳಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಮರೆಯುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ.
JOS 1:6 ಬಲಿಷ್ಠನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರಿಗೆ ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ಇವರಿಗೆ ಸ್ವಾಧೀನಪಡಿಸಬೇಕಾದವನು ನೀನೇ.
JOS 1:7 “ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ದೇವರ ನಿಯಮದ ಪ್ರಕಾರ ನೀನು ಕೈಗೊಂಡು ನಡೆಯುವ ಹಾಗೆ ಬಲಿಷ್ಠನಾಗಿರು, ಧೈರ್ಯದಿಂದಿರು. ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ, ಅದನ್ನು ಬಿಟ್ಟು ಬಲಕ್ಕಾದರೂ, ಎಡಕ್ಕಾದರೂ ತಿರುಗಬೇಡ.
JOS 1:8 ಈ ದೇವರ ನಿಯಮವು ನಿನ್ನ ಬಾಯಿಂದ ತೊಲಗಬಾರದು, ಅದರಲ್ಲಿ ಬರೆದಿರುವ ಪ್ರಕಾರವೇ ಕೈಗೊಂಡು ನಡೆಯುವ ಹಾಗೆ ಹಗಲುರಾತ್ರಿ ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವು ಸಮೃದ್ಧಿಯಾಗಿ ನೀನು ಜಯಶಾಲಿಯಾಗುವೆ.
JOS 1:9 ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.
JOS 1:10 ಆಗ ಯೆಹೋಶುವನು ಅಧಿಕಾರಿಗಳಿಗೆ ಆಜ್ಞಾಪಿಸಿ:
JOS 1:11 “ನೀವು ಪಾಳೆಯದ ಮಧ್ಯದಲ್ಲಿ ನಡೆದುಹೋಗಿ ಜನರಿಗೆ, ‘ನಿಮಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನ್ ನದಿಯನ್ನು ದಾಟಿ ಹೋಗಬೇಕು,’ ಎಂದು ತಿಳಿಸಿರಿ,” ಎಂದನು.
JOS 1:12 ಇದಲ್ಲದೆ ಯೆಹೋಶುವನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ,
JOS 1:13 “ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕಮಾಡಿಕೊಳ್ಳಿರಿ. ‘ನಿಮ್ಮ ದೇವರಾದ ಯೆಹೋವ ದೇವರು ಈ ದೇಶವನ್ನು ನಿಮಗೆ ಕೊಟ್ಟು ನಿಮ್ಮನ್ನು ವಿಶ್ರಾಂತಿಪಡಿಸಿದ್ದಾರೆ.’
JOS 1:14 ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳು ಮೋಶೆ ನಿಮಗೆ ಕೊಟ್ಟ ಯೊರ್ದನ್ ನದಿಯ ಈಚೆ ಇರುವ ದೇಶದಲ್ಲೇ ಇರಲಿ. ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರ ಮುಂದೆ ಹೊರಟು, ನದಿದಾಟಿ,
JOS 1:15 ಯೆಹೋವ ದೇವರು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿಪಡಿಸಿ, ಅವರು ನಿಮ್ಮ ದೇವರಾದ ಯೆಹೋವ ದೇವರು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವವರೆಗೆ ಅವರಿಗೆ ಸಹಾಯಮಾಡಬೇಕು. ತರುವಾಯ ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿಯ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸೊತ್ತಾಗಿರುವ ದೇಶಕ್ಕೆ ತಿರುಗಿಬಂದು, ಅದನ್ನು ಸ್ವಾಧೀನಮಾಡಿಕೊಂಡು, ಅದನ್ನು ಅನುಭವಿಸಿರಿ,” ಎಂದನು.
JOS 1:16 ಆಗ ಅವರು ಯೆಹೋಶುವನಿಗೆ ಉತ್ತರವಾಗಿ, “ನೀನು ನಮಗೆ ಆಜ್ಞಾಪಿಸುವುದನ್ನೆಲ್ಲಾ ಮಾಡುವೆವು. ಎಲ್ಲಿಗೆ ಕಳುಹಿಸುತ್ತೀಯೋ, ಅಲ್ಲಿಗೆ ಹೋಗುವೆವು.
JOS 1:17 ನಾವು ಮೋಶೆಯ ಎಲ್ಲಾ ಮಾತು ಕೇಳಿದ ಹಾಗೆಯೇ ನಿನ್ನ ಮಾತು ಕೇಳುವೆವು. ನಿನ್ನ ದೇವರಾದ ಯೆಹೋವ ದೇವರು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.
JOS 1:18 ನೀನು ಆಜ್ಞಾಪಿಸುವ ಎಲ್ಲದರಲ್ಲಿ ಯಾರು ನಿನ್ನ ಮಾತುಗಳನ್ನು ಕೇಳದೆ, ನಿನ್ನ ಬಾಯಿ ಮಾತಿಗೆ ಎದುರು ಬೀಳುವರೋ ಅವರು ಮರಣಕ್ಕೆ ಗುರಿಯಾಗಬೇಕು. ಬಲಿಷ್ಠನಾಗಿರು, ಧೈರ್ಯದಿಂದಿರು,” ಎಂದರು.
JOS 2:1 ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಶಿಟ್ಟೀಮಿನಿಂದ ಗುಪ್ತವಾಗಿ ಕಳುಹಿಸಿ, ಅವರಿಗೆ, “ನೀವು ಹೋಗಿ ದೇಶವನ್ನೂ, ವಿಶೇಷವಾಗಿ ಯೆರಿಕೋ ಪಟ್ಟಣವನ್ನೂ ಸುತ್ತಿ ನೋಡಿರಿ,” ಎಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದು ಅಲ್ಲಿಯೇ ಉಳಿದುಕೊಂಡರು.
JOS 2:2 ಯೆರಿಕೋವಿನ ಅರಸನಿಗೆ, “ಇಗೋ, ಇಸ್ರಾಯೇಲರಲ್ಲಿ ಕೆಲವರು ದೇಶವನ್ನು ಗೂಢಚಾರ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾರೆ,” ಎಂದು ತಿಳಿಸಲಾಯಿತು.
JOS 2:3 ಆಗ ಯೆರಿಕೋವಿನ ಅರಸನು ರಾಹಾಬಳಿಗೆ, “ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರೆದುಕೊಂಡು ಬಾ. ಏಕೆಂದರೆ ಅವರು ದೇಶವನ್ನೆಲ್ಲಾ ಗೂಢಚಾರ ಮಾಡಲು ಬಂದಿದ್ದಾರೆ,” ಎಂದನು.
JOS 2:4 ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು, “ನನ್ನ ಬಳಿಗೆ ಇಬ್ಬರು ಮನುಷ್ಯರು ಬಂದಿದ್ದರು. ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು.
JOS 2:5 ಪಟ್ಟಣದ ಬಾಗಿಲು ಮುಚ್ಚುವ ಮುಸ್ಸಂಜೆ ವೇಳೆಯಲ್ಲಿ ಆ ಮನುಷ್ಯರು ಹೊರಟು ಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ. ಅವರನ್ನು ಬೇಗ ಹಿಂದಟ್ಟಿರಿ. ನಿಮಗೆ ಸಿಕ್ಕುವರು,” ಎಂದಳು.
JOS 2:6 ಆದರೆ ಆಕೆಯು ಅವರನ್ನು ಮಾಳಿಗೆಯ ಮೇಲೆ ಏರಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನೊಳಗೆ ಬಚ್ಚಿಟ್ಟಿದ್ದಳು.
JOS 2:7 ಆ ಮನುಷ್ಯರು ಯೊರ್ದನ್ ನದಿ ದಾರಿ ಹಿಡಿದು ಹೋಗಿ ನದಿ ದಾಟುವ ಸ್ಥಳದವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ, ಪಟ್ಟಣದ ಹೆಬ್ಬಾಗಿಲು ಮುಚ್ಚಿದರು.
JOS 2:8 ಗೂಢಚಾರರು ಮಲಗುವುದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ, ಅವರ ಬಳಿಗೆ ಬಂದು,
JOS 2:9 “ಯೆಹೋವ ದೇವರು ನಿಮಗೆ ದೇಶವನ್ನು ಕೊಟ್ಟಿದ್ದಾರೆಂದೂ, ನಿಮ್ಮ ನಿಮಿತ್ತ ನಮಗೆ ಮಹಾ ಭೀತಿಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.
JOS 2:10 ನೀವು ಈಜಿಪ್ಟಿನಿಂದ ಹೊರಡುವಾಗ ಯೆಹೋವ ದೇವರು ಹೇಗೆ ನಿಮಗೋಸ್ಕರ ಕೆಂಪುಸಮುದ್ರದ ನೀರನ್ನು ಬತ್ತಿಹೋಗಮಾಡಿದ್ದನ್ನೂ, ನೀವು ಸಂಪೂರ್ಣ ನಿರ್ಮೂಲ ಮಾಡಿದ ಯೊರ್ದನ್ ನದಿ ಆಚೆಯಲ್ಲಿದ್ದ ಅಮೋರಿಯರ ಇಬ್ಬರು ಅರಸುಗಳಾದ ಸೀಹೋನನಿಗೂ, ಓಗನಿಗೂ ಮಾಡಿದ್ದನ್ನೂ ನಾವು ಕೇಳಿದ್ದೇವೆ.
JOS 2:11 ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕುಂದಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ನಿಮ್ಮ ದೇವರಾದ ಯೆಹೋವ ದೇವರೇ ಮೇಲಿರುವ ಪರಲೋಕದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾರೆ.
JOS 2:12 “ಈಗ ನೀವು ನನಗೊಂದು ಪ್ರಮಾಣಮಾಡಬೇಕು. ನಾನು ನಿಮಗೆ ದಯೆ ತೋರಿಸಿದ್ದರಿಂದ ನೀವು ನನಗೂ ನನ್ನ ತಂದೆಯ ಮನೆಗೂ ದಯೆ ತೋರಿಸಬೇಕು. ನನಗೆ ನಿಶ್ಚಯವಾದ ಗುರುತನ್ನು ಕೊಡಬೇಕು.
JOS 2:13 ನನ್ನ ತಂದೆಯನ್ನೂ ನನ್ನ ತಾಯಿಯನ್ನೂ, ನನ್ನ ಸಹೋದರರನ್ನೂ ನನ್ನ ಸಹೋದರಿಯರನ್ನೂ, ಅವರಲ್ಲಿರುವ ಎಲ್ಲರನ್ನೂ ಜೀವದಿಂದಿರಿಸಿ, ನಮ್ಮ ಪ್ರಾಣವನ್ನು ಸಾವಿನಿಂದ ತಪ್ಪಿಸಬೇಕು ಎಂದು ಯೆಹೋವ ದೇವರ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದಳು.
JOS 2:14 ಆಗ ಅವರು ಆಕೆಗೆ, “ನೀನು ಈ ನಮ್ಮ ಕಾರ್ಯವನ್ನು ಬಹಿರಂಗ ಮಾಡದೆ ಇದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿ ಇರುವೆವು. ಯೆಹೋವ ದೇವರು ನಮಗೆ ದೇಶವನ್ನು ಕೊಟ್ಟಾಗ, ಸತ್ಯದಿಂದಲೂ, ದಯೆಯಿಂದಲೂ ನಡೆದುಕೊಳ್ಳುವೆವು,” ಎಂದರು.
JOS 2:15 ಆಗ ಆಕೆಯು ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿಬಿಟ್ಟಳು. ಏಕೆಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು.
JOS 2:16 ಆಕೆಯು ಅವರಿಗೆ, “ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ, ಅವರು ತಿರುಗಿ ಬರುವವರೆಗೂ ಅಲ್ಲಿ ಮೂರು ದಿವಸ ಅಡಗಿಕೊಂಡಿದ್ದು, ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ,” ಎಂದಳು.
JOS 2:17 ಆಗ ಆ ಮನುಷ್ಯರು ಆಕೆಗೆ, “ನೀನು ನಮ್ಮಿಂದ ಮಾಡಿಸಿದ ಈ ನಿನ್ನ ಪ್ರಮಾಣದಿಂದ ಬಿಡುಗಡೆಯಾಗಿರುವೆವು.
JOS 2:18 ಇಗೋ, ನಾವು ಈ ದೇಶದಲ್ಲಿ ಪ್ರವೇಶಿಸುವಾಗ, ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕಡುಗೆಂಪು ಹಗ್ಗವನ್ನು ಕಟ್ಟಿ, ನಿನ್ನ ತಂದೆಯನ್ನೂ, ನಿನ್ನ ತಾಯಿಯನ್ನೂ, ನಿನ್ನ ಸಹೋದರರನ್ನೂ, ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು.
JOS 2:19 ಯಾವನಾದರೂ ನಿನ್ನ ಮನೆಯ ಬಾಗಿಲಿನಿಂದ ಹೊರಗೆ ಹೊರಟು ಬೀದಿಗೆ ಬಂದರೆ, ಅವನ ರಕ್ತವು ಅವನ ತಲೆಯ ಮೇಲೆ ಇರುವುದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಮಾಡಿದರೆ, ಅವನ ರಕ್ತ ಅಪರಾಧವು ನಮ್ಮ ತಲೆಯ ಮೇಲೆ ಇರುವುದು.
JOS 2:20 ಆದರೆ ನೀನು ಈ ನಮ್ಮ ಕಾರ್ಯವನ್ನು ಬಹಿರಂಗಪಡಿಸಿದರೆ, ನೀನು ನಮಗೆ ಇಟ್ಟ ಆಣೆಯಿಂದ ನಾವು ಬಿಡುಗಡೆಯಾಗಿರುವೆವು,” ಎಂದರು.
JOS 2:21 ಅದಕ್ಕೆ ಆಕೆಯು, “ನಿಮ್ಮ ಮಾತುಗಳ ಪ್ರಕಾರವೇ ಆಗಲಿ,” ಎಂದು ಹೇಳಿದಳು. ಅನಂತರ ಅವರನ್ನು ಕಳುಹಿಸಿಬಿಟ್ಟಳು. ಅವರು ಹೋದಾಗ, ಆ ಕಡುಗೆಂಪು ಹಗ್ಗವನ್ನು ಕಿಟಿಕಿಯಲ್ಲಿ ಕಟ್ಟಿದಳು.
JOS 2:22 ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರುಗಿ ಬರುವವರೆಗೂ ಮೂರು ದಿನ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವರನ್ನು ಹುಡುಕಿ ಕಾಣದೆ ಹೋದರು.
JOS 2:23 ಆಗ ಅವರಿಬ್ಬರು ಹಿಂದಿರುಗಿ ಬೆಟ್ಟದಿಂದ ಇಳಿದು, ನದಿಯನ್ನು ದಾಟಿ, ನೂನನ ಮಗ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವರಿಗೆ ವಿವರಿಸಿದರು.
JOS 2:24 ಅವರು ಯೆಹೋಶುವನಿಗೆ, “ನಿಶ್ಚಯವಾಗಿ ಯೆಹೋವ ದೇವರು ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ದೇಶದ ನಿವಾಸಿಗಳೆಲ್ಲರೂ ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ,” ಎಂದರು.
JOS 3:1 ಯೆಹೋಶುವನು ಬೆಳಿಗ್ಗೆ ಎದ್ದು, ಅವನೂ, ಇಸ್ರಾಯೇಲರೆಲ್ಲರೂ ಶಿಟ್ಟೀಮಿನಿಂದ ಪ್ರಯಾಣಮಾಡಿ, ಯೊರ್ದನ್ ನದಿ ಬಳಿಗೆ ಬಂದು, ದಾಟುವುದಕ್ಕಿಂತ ಮುಂಚೆ ಅಲ್ಲಿ ಇಳಿದುಕೊಂಡರು.
JOS 3:2 ಮೂರು ದಿನಗಳಾದ ಮೇಲೆ ಅಧಿಕಾರಿಗಳು ಪಾಳೆಯದೊಳಗೆ ಹಾದು ಹೋಗಿ,
JOS 3:3 ಜನರಿಗೆ ಆಜ್ಞಾಪಿಸಿ, “ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷ ಹೊರುವುದನ್ನು ಕಾಣುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು.
JOS 3:4 ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರ ಇರಬೇಕು. ಅದರ ಹತ್ತಿರ ಬರಬೇಡಿರಿ. ನೀವು ಹೋಗಬೇಕಾದ ಮಾರ್ಗ ನಿಮಗೆ ತಿಳಿಯುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇದುವರೆಗೆ ಪ್ರಯಾಣ ಮಾಡಿರುವುದಿಲ್ಲ,” ಎಂದರು.
JOS 3:5 ಯೆಹೋಶುವನು ಜನರಿಗೆ, “ಇಂದು ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ, ನಾಳೆ ಯೆಹೋವ ದೇವರು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವರು,” ಎಂದನು.
JOS 3:6 ಆಗ ಯೆಹೋಶುವನು ಯಾಜಕರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋಗಿರಿ,” ಎಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದೆ ಹೊರಟರು.
JOS 3:7 ಯೆಹೋವ ದೇವರು ಯೆಹೋಶುವನಿಗೆ, “ನಾನು ಮೋಶೆಯ ಸಂಗಡ ಇದ್ದ ಪ್ರಕಾರ, ನಿನ್ನ ಸಂಗಡ ಇರುವುದನ್ನು ಇಸ್ರಾಯೇಲರೆಲ್ಲರೂ ತಿಳಿಯುವಂತೆ, ನಾನು ಈ ದಿನ ನಿನ್ನನ್ನು ಅವರ ಮುಂದೆ ಉನ್ನತಗೊಳಿಸುವೆನು.
JOS 3:8 ನೀನು ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನ್ ನದಿಯ ಅಂಚಿಗೆ ಬಂದಾಗ, ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು,” ಎಂದರು.
JOS 3:9 ಆಗ ಯೆಹೋಶುವನು ಇಸ್ರಾಯೇಲರಿಗೆ, “ನೀವು ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿರಿ.
JOS 3:10 ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರುವುದನ್ನೂ, ಅವರು ಕಾನಾನ್ಯರನ್ನೂ, ಹಿತ್ತಿಯರನ್ನೂ, ಹಿವ್ವಿಯರನ್ನೂ, ಪೆರಿಜೀಯರನ್ನೂ, ಗಿರ್ಗಾಷಿಯರನ್ನೂ, ಅಮೋರಿಯರನ್ನೂ, ಯೆಬೂಸಿಯರನ್ನೂ ನಿಮ್ಮ ಮುಂದೆ ನಿಶ್ಚಯವಾಗಿ ಓಡಿಸಿಬಿಡುವುದನ್ನೂ ನೀವು ತಿಳಿಯುವಿರಿ.
JOS 3:11 ಇಗೋ, ಸಮಸ್ತ ಭೂಮಿಗೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನ್ ನದಿಯನ್ನು ದಾಟಿ ಹೋಗುವುದು.
JOS 3:12 ಆದ್ದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬರಾಗಿ ತೆಗೆದುಕೊಳ್ಳಿರಿ.
JOS 3:13 ಸಮಸ್ತ ಭೂಮಿಗೂ ಒಡೆಯರಾಗಿರುವ ಯೆಹೋವ ದೇವರ ಮಂಜೂಷವನ್ನು ಹೊರುವ ಯಾಜಕರ ಪಾದಗಳು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ, ಮೇಲಿನಿಂದ ಹರಿದು ಬರುವ ನೀರು ಮುಂದೆ ಹರಿಯದೆ ಅಲ್ಲಿಯೇ ರಾಶಿಯಾಗಿ ನಿಲ್ಲುವುದು,” ಎಂದು ಹೇಳಿದನು.
JOS 3:14 ಆದ್ದರಿಂದ ಜನರು ಯೊರ್ದನ್ ನದಿಯನ್ನು ದಾಟಲು ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಜನರಿಗೆ ಮುಂದಾಗಿ ಹೊತ್ತುಕೊಂಡು ಹೋದರು.
JOS 3:15 ಎಂದಿನಂತೆ ಯೊರ್ದನ್ ನದಿಯು ಸುಗ್ಗಿಕಾಲದಲ್ಲಿ ದಡ ತುಂಬಿ ಹರಿಯುತ್ತಾ ಇತ್ತು. ಮಂಜೂಷವನ್ನು ಹೊರುವ ಯಾಜಕರ ಕಾಲುಗಳು ನೀರಿನ ಅಂಚಿನಲ್ಲಿ ಇಡುತ್ತಲೇ,
JOS 3:16 ಮೇಲಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಸಮೀಪವಾಗಿದ್ದ ಆದಾಮ್ ಪಟ್ಟಣಕ್ಕೆ ಬಂದು ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ಎಂಬ ಲವಣ ಸಮುದ್ರಕ್ಕೆ ಹರಿದುಹೋಯಿತು. ಆಗ ಜನರು ಯೆರಿಕೋವಿನ ಎದುರಾಗಿ ನದಿ ದಾಟಿದರು.
JOS 3:17 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿಯ ಮಧ್ಯದಲ್ಲಿ ಒಣನೆಲದಲ್ಲಿ ದೃಢವಾಗಿ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲರೆಲ್ಲರೂ ಒಣನೆಲದ ಮೇಲೆ ನಡೆದರು. ಹೀಗೆ ಇಡೀ ರಾಷ್ಟ್ರವು ಯೊರ್ದನ್ ನದಿ ಆಚೆ ಸೇರಿತು.
JOS 4:1 ಜನರೆಲ್ಲರು ಯೊರ್ದನ್ ನದಿಯ ಆಚೆಗೆ ದಾಟಿದ ಮೇಲೆ, ಯೆಹೋವ ದೇವರು ಯೆಹೋಶುವನೊಂದಿಗೆ ಮಾತನಾಡಿ,
JOS 4:2 “ನೀನು ಜನರಲ್ಲಿ ಪ್ರತಿ ಗೋತ್ರಕ್ಕೆ ಒಬ್ಬೊಬ್ಬನಂತೆ ಹನ್ನೆರಡು ಮಂದಿ ಗಂಡಸರನ್ನು ಆರಿಸಿಕೊಂಡು,
JOS 4:3 ಯೊರ್ದನ್ ನದಿ ಮಧ್ಯದಲ್ಲಿ ಯಾಜಕರ ಕಾಲುಗಳು ಸ್ಥಿರವಾಗಿ ನಿಂತ ಸ್ಥಳದಲ್ಲಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಅವುಗಳನ್ನು ನಿಮ್ಮ ಸಂಗಡ ಆಚೆದಡಕ್ಕೆ ತಂದು, ನೀವು ಈ ರಾತ್ರಿಯಲ್ಲಿ ಇಳಿದುಕೊಳ್ಳುವ ಸ್ಥಳದಲ್ಲಿ ಅವುಗಳನ್ನು ಹಾಕಿರಿ ಎಂದು ಅವರಿಗೆ ಆಜ್ಞಾಪಿಸು,” ಎಂದರು.
JOS 4:4 ಆಗ ಯೆಹೋಶುವನು ಇಸ್ರಾಯೇಲರಲ್ಲಿ ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನ ಪ್ರಕಾರ ತಾನು ಆರಿಸಿಕೊಂಡ ಹನ್ನೆರಡು ಮಂದಿ ಗಂಡಸರನ್ನು ಕರೆದನು.
JOS 4:5 ಯೆಹೋಶುವನು ಅವರಿಗೆ, “ನೀವು ಯೊರ್ದನ್ ನದಿ ಮಧ್ಯದಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಮಂಜೂಷದ ಮುಂದೆ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನೂ ಒಂದೊಂದು ಕಲ್ಲನ್ನು ಭುಜದ ಮೇಲೆ ಹೊತ್ತುಕೊಂಡು ಬನ್ನಿರಿ.
JOS 4:6 ಏಕೆಂದರೆ ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳೇನು?’ ಎಂದು ಕೇಳುವಾಗ,
JOS 4:7 ನೀವು ಅವರಿಗೆ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯೊರ್ದನ್ ನದಿಯ ನೀರು ವಿಭಾಗವಾಯಿತು. ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿಯನ್ನು ದಾಟುವಾಗ, ಯೊರ್ದನ್ ನದಿಯ ನೀರು ನಿಂತುಹೋಯಿತು. ಈ ಕಲ್ಲುಗಳು ಇಸ್ರಾಯೇಲರಿಗೆ ಎಂದೆಂದಿಗೂ ಜ್ಞಾಪಕಾರ್ಥವಾದ ಗುರುತು,’ ಎಂದು ಉತ್ತರಕೊಡಬೇಕು,” ಎಂದನು.
JOS 4:8 ಆಗ ಇಸ್ರಾಯೇಲರು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು. ಯೆಹೋವ ದೇವರು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನ್ ನದಿಯ ಮಧ್ಯದಿಂದ ತೆಗೆದುಕೊಂಡು, ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ಇಟ್ಟರು.
JOS 4:9 ಯೆಹೋಶುವನು ಯೊರ್ದನ್ ನದಿ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ಇಟ್ಟ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದವರೆಗೂ ಅಲ್ಲಿಯೇ ಇವೆ.
JOS 4:10 ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದ ಪ್ರಕಾರ, ಯೆಹೋವ ದೇವರು ಆಜ್ಞಾಪಿಸಿದ್ದೆಲ್ಲಾ ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿ ನಡುವೆಯೇ ನಿಂತರು. ಜನರು ತ್ವರೆಯಾಗಿ ಆಚೆಗೆ ದಾಟಿಹೋದರು.
JOS 4:11 ಜನರೆಲ್ಲರೂ ಆಚೆಗೆ ದಾಟಿದ ಮೇಲೆ ಯೆಹೋವ ದೇವರ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು.
JOS 4:12 ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಗೋತ್ರದವರು ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ಧರಾಗಿ ಮಿಕ್ಕ ಇಸ್ರಾಯೇಲರಿಗಿಂತ ಮುಂದಾಗಿ ಹಾದುಹೋದರು.
JOS 4:13 ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಯೆಹೋವ ದೇವರ ಮುಂದೆ ಯುದ್ಧಮಾಡುವುದಕ್ಕೆ ಯೆರಿಕೋವಿನ ಬಯಲುಗಳಿಗೆ ಹಾದುಬಂದರು.
JOS 4:14 ಆ ದಿನದಲ್ಲಿ ಯೆಹೋವ ದೇವರು ಯೆಹೋಶುವನನ್ನು ಇಸ್ರಾಯೇಲರೆಲ್ಲರ ಮುಂದೆ ಘನಪಡಿಸಿದರು. ಅವರು ಮೋಶೆಯನ್ನು ಗೌರವಿಸಿದ ಹಾಗೆಯೇ, ಅವನಿಗೂ ಅವನು ಬದುಕಿದ ದಿನಗಳಲ್ಲೆಲ್ಲಾ ಗೌರವ ಕೊಟ್ಟರು.
JOS 4:15 ಯೆಹೋವ ದೇವರು ಯೆಹೋಶುವನ ಸಂಗಡ ಮಾತನಾಡಿ,
JOS 4:16 “ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲೆ ಬರಬೇಕೆಂದು ಆಜ್ಞಾಪಿಸು,” ಎಂದು ಹೇಳಿದರು.
JOS 4:17 ಆಗ ಯೆಹೋಶುವನು ಯಾಜಕರಿಗೆ, “ಯೊರ್ದನಿನಿಂದ ಮೇಲಕ್ಕೆ ಬನ್ನಿರಿ,” ಎಂದು ಆಜ್ಞಾಪಿಸಿದನು.
JOS 4:18 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿ ಮಧ್ಯದಲ್ಲಿಂದ ಏರಿ, ತಮ್ಮ ಅಂಗಾಲುಗಳನ್ನು ಒಣನೆಲದ ಮೇಲೆ ಇಟ್ಟಕೂಡಲೇ ನೀರು ಮುಂಚಿನಂತೆ ಬಂದು ಯೊರ್ದನ್ ನದಿಯ ದಡ ತುಂಬಿ ಹರಿಯಿತು.
JOS 4:19 ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಯೊರ್ದನಿನಿಂದ ಹೊರಟು, ಯೆರಿಕೋವಿನ ಪೂರ್ವದಿಕ್ಕಿನ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದುಕೊಂಡರು.
JOS 4:20 ಅವರು ಯೊರ್ದನಿನಿಂದ ತೆಗೆದುಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು.
JOS 4:21 ಅವನು ಇಸ್ರಾಯೇಲರಿಗೆ, “ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನು?’ ಎಂದು ಮುಂದಿನ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳುವಾಗ,
JOS 4:22 ನೀವು ಅವರಿಗೆ, ‘ಇಸ್ರಾಯೇಲರು ಒಣನೆಲದಲ್ಲಿ ಈ ಯೊರ್ದನ್ ನದಿಯನ್ನು ದಾಟಿ ಬಂದರು.
JOS 4:23 ನೀವು ಯೊರ್ದನ್ ನದಿ ನೀರನ್ನು ದಾಟಿ ಬರುವವರೆಗೂ, ನಿಮ್ಮ ದೇವರಾದ ಯೆಹೋವ ದೇವರು ಆ ನದಿಯ ನೀರನ್ನು ಒಣಗಿ ಹೋಗುವಂತೆ ಮಾಡಿದರು. ಕೆಂಪು ಸಮುದ್ರವನ್ನು ನಾವು ದಾಟುವವರೆಗೂ ನಮ್ಮ ಮುಂದೆ ಬತ್ತಿಸಿದಂತೆ, ಯೊರ್ದನ್ ನದಿ ನೀರನ್ನೂ ಬತ್ತಿಸಿದರು.
JOS 4:24 ಭೂಮಿಯ ಜನರೆಲ್ಲಾ ಯೆಹೋವ ದೇವರ ಹಸ್ತವು ಬಲವುಳ್ಳದ್ದೆಂದು ತಿಳಿಯುವಂತೆಯೂ ನೀವು ನಿರಂತರವೂ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವಂತೆಯೂ ದೇವರಾದ ಯೆಹೋವ ದೇವರು ಹೀಗೆ ಮಾಡಿದರು,’ ಎಂದು ನೀವು ಹೇಳಬೇಕು,” ಎಂದನು.
JOS 5:1 ಇದಾದ ಮೇಲೆ ಯೆಹೋವ ದೇವರು ಇಸ್ರಾಯೇಲರು ದಾಟಿಹೋಗುವವರೆಗೆ ಅವರ ಮುಂದೆ ಯೊರ್ದನ್ ನದಿಯನ್ನು ಒಣಗಿ ಹೋಗುವಂತೆ ಮಾಡಿದ್ದನ್ನು ಯೊರ್ದನ್ ನದಿ ಪಶ್ಚಿಮದ ಆಚೆದಡದಲ್ಲಿ ವಾಸಿಸಿದ್ದ ಅಮೋರಿಯರ ಸಕಲ ಅರಸರು ಮತ್ತು ಸಮುದ್ರದ ಆಚೆಯಲ್ಲಿ ವಾಸಿಸಿದ್ದ ಕಾನಾನ್ಯರ ಸಕಲ ಅರಸರು ಕೇಳಿದಾಗ ಅವರ ಹೃದಯವು ಕುಂದಿಹೋಯಿತು. ಇಸ್ರಾಯೇಲರ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.
JOS 5:2 ಆ ಕಾಲದಲ್ಲಿ ಯೆಹೋವ ದೇವರು ಯೆಹೋಶುವನಿಗೆ, “ನೀನು ಗಟ್ಟಿಯಾದ ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲರಿಗೆ ಸುನ್ನತಿ ಮಾಡು,” ಎಂದರು.
JOS 5:3 ಆಗ ಯೆಹೋಶುವನು ತಾನು ಗಟ್ಟಿಯಾದ ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಇಸ್ರಾಯೇಲರಿಗೆ ಗಿಬೆಯಾತ್ ಹಾರಲೋತ್ ಎಂಬ ಸ್ಥಳದಲ್ಲಿ ಸುನ್ನತಿ ಮಾಡಿದನು.
JOS 5:4 ಯೆಹೋಶುವನು ಸುನ್ನತಿ ಮಾಡಿದ ಕಾರಣವೇನೆಂದರೆ: ಈಜಿಪ್ಟಿನಿಂದ ಹೊರಟ ಗಂಡಸರಲ್ಲಿ ಯುದ್ಧಮಾಡುವ ಸೈನ್ಯದವರೆಲ್ಲರೂ ಮರುಭೂಮಿಯ ಮಾರ್ಗದಲ್ಲಿ ಸತ್ತುಹೋದರು.
JOS 5:5 ಈಜಿಪ್ಟಿನಿಂದ ಹೊರಟ ಗಂಡಸರೆಲ್ಲರಿಗೂ ಸುನ್ನತಿ ಆಗಿತ್ತು. ಆದರೆ ಈಜಿಪ್ಟಿನಿಂದ ಹೊರಟಾಗ ಮರುಭೂಮಿಯೊಳಗೆ ಮಾರ್ಗದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿ ಆಗಿರಲಿಲ್ಲ.
JOS 5:6 ಈಜಿಪ್ಟಿನಿಂದ ಹೊರಟ ಇಸ್ರಾಯೇಲರು ಯೆಹೋವ ದೇವರ ಸ್ವರಕ್ಕೆ ವಿಧೇಯರಾಗದಿದ್ದರಿಂದ ಅವರು, ತಮ್ಮ ಯುದ್ಧವೀರರೆಲ್ಲಾ ನಾಶವಾಗುವ ತನಕ ನಾಲ್ವತ್ತು ವರ್ಷಗಳವರೆಗೆ ಮರುಭೂಮಿಯಲ್ಲಿ ಅಲೆದಾಡುತ್ತಿದ್ದರು. ಏಕೆಂದರೆ ಯೆಹೋವ ದೇವರು ಅವರ ತಂದೆಗಳಿಗೆ ವಾಗ್ದಾನಮಾಡಿದ್ದ, ಹಾಲು ಜೇನು ಹರಿಯುವ ದೇಶವನ್ನು ಅವರು ಕಾಣುವುದಿಲ್ಲ ಎಂದು ಯೆಹೋವ ದೇವರು ಅವರಿಗೆ ಆಣೆಯಿಟ್ಟಿದ್ದರು.
JOS 5:7 ಅವರಿಗೆ ಹುಟ್ಟಿದ ಅವರ ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿಸಿದನು. ಅವರಿಗೆ ಮಾರ್ಗದಲ್ಲಿ ಸುನ್ನತಿ ಮಾಡದೆ ಇದ್ದುದರಿಂದ ಅವರು ಸುನ್ನತಿ ಇಲ್ಲದವರಾಗಿದ್ದರು.
JOS 5:8 ಜನರೆಲ್ಲರೂ ಸುನ್ನತಿ ಮಾಡಿಸಿಕೊಂಡ ತರುವಾಯ ಅವರು ವಾಸಿಯಾಗುವವರೆಗೂ ಪಾಳೆಯದೊಳಗೆ ತಮ್ಮ ತಮ್ಮ ಸ್ಥಳಗಳಲ್ಲಿ ಇದ್ದರು.
JOS 5:9 ಆಗ ಯೆಹೋವ ದೇವರು ಯೆಹೋಶುವನಿಗೆ, “ಈ ದಿನ ಈಜಿಪ್ಟಿನ ನಿಂದೆಯನ್ನು ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ,” ಎಂದರು. ಆದ್ದರಿಂದ ಆ ಸ್ಥಳವು ಇಂದಿನವರೆಗೂ ಗಿಲ್ಗಾಲ್ ಎಂದು ಕರೆಯಲಾಗಿದೆ.
JOS 5:10 ಇಸ್ರಾಯೇಲರು ಗಿಲ್ಗಾಲಿನಲ್ಲಿ ಇಳಿದುಕೊಂಡು ತಿಂಗಳಿನ ಹದಿನಾಲ್ಕನೆಯ ದಿವಸ ಸಂಜೆಯಲ್ಲಿ ಯೆರಿಕೋವಿನ ಬಯಲುಗಳಲ್ಲಿ ಪಸ್ಕವನ್ನು ಆಚರಿಸಿದರು.
JOS 5:11 ಪಸ್ಕದ ಮರುದಿವಸ ಅವರು ಆ ದೇಶದ ಬೆಳೆಯನ್ನು ಅಂದರೆ ಹುಳಿಯಿಲ್ಲದ ರೊಟ್ಟಿಗಳನ್ನೂ ಹುರಿದ ಧಾನ್ಯಗಳನ್ನೂ ತಿಂದರು.
JOS 5:12 ಅವರು ಆ ದೇಶದ ಧಾನ್ಯವನ್ನು ತಿಂದ ಮರುದಿವಸದಲ್ಲೇ ಮನ್ನವು ನಿಂತುಹೋಯಿತು. ಇಸ್ರಾಯೇಲರಿಗೆ ಮನ್ನ ಮತ್ತೆ ಸಿಕ್ಕಲಿಲ್ಲ. ಅವರು ಆ ವರುಷದಲ್ಲಿ ಕಾನಾನ್ ದೇಶದ ಫಲವನ್ನು ತಿಂದರು.
JOS 5:13 ಇದಾದ ಮೇಲೆ ಯೆಹೋಶುವನು ಯೆರಿಕೋವಿನ ಬಳಿಯಲ್ಲಿ ಇದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಆಗ ಒಬ್ಬ ಮನುಷ್ಯನು ಅವನಿಗೆದುರಾಗಿ ನಿಂತಿದ್ದನು. ಆತನ ಕೈಯಲ್ಲಿ ಹಿರಿದ ಖಡ್ಗ ಇರುವುದನ್ನು ಕಂಡನು. ಯೆಹೋಶುವನು ಆತನ ಬಳಿಗೆ ಹೋಗಿ ಆತನಿಗೆ, “ನೀವು ನಮ್ಮವರೋ ಅಥವಾ ಶತ್ರು ಕಡೆಯವರೋ?” ಎಂದು ಕೇಳಿದನು.
JOS 5:14 ಅದಕ್ಕೆ ಆತನು, “ನಾನು ಅಂಥವನಲ್ಲ, ಯೆಹೋವ ದೇವರ ಸೈನ್ಯದ ಅಧಿಪತಿಯಾಗಿ ಈಗ ನಾನು ಬಂದಿದ್ದೇನೆ,” ಎಂದನು. ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ, ಆತನಿಗೆ, “ನನ್ನ ಒಡೆಯಾ, ತಮ್ಮ ಸೇವಕನಿಗೆ ಹೇಳಬೇಕಾಗಿರುವ ಸಂದೇಶವೇನು?” ಎಂದನು.
JOS 5:15 ಅದಕ್ಕೆ ಯೆಹೋವ ದೇವರ ಸೈನ್ಯದ ಅಧಿಪತಿಯು ಯೆಹೋಶುವನಿಗೆ, “ನಿನ್ನ ಕೆರಗಳನ್ನು ನಿನ್ನ ಕಾಲುಗಳಿಂದ ತೆಗೆದಿಡು. ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು,” ಎಂದನು. ಹಾಗೆಯೇ ಯೆಹೋಶುವನು ಮಾಡಿದನು.
JOS 6:1 ಆಗ ಯೆರಿಕೋವಿನ ಜನರು ಇಸ್ರಾಯೇಲರ ನಿಮಿತ್ತವಾಗಿ, ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದರು.
JOS 6:2 ಆಗ ಯೆಹೋವ ದೇವರು ಯೆಹೋಶುವನಿಗೆ, “ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
JOS 6:3 ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು.
JOS 6:4 ಏಳುಮಂದಿ ಯಾಜಕರು ಹೊತ್ತುಕೊಂಡಿದ್ದ ಮಂಜೂಷದ ಮುಂದೆ ಟಗರುಗಳ ಏಳು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡು ಹೋಗಬೇಕು. ಆದರೆ ಅವರು ಏಳನೆಯ ದಿವಸ ಪಟ್ಟಣವನ್ನು ಏಳು ಸಾರಿ ಸುತ್ತಿ ಬರಬೇಕು. ಯಾಜಕರು ತುತೂರಿಗಳನ್ನು ಊದಬೇಕು.
JOS 6:5 ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.
JOS 6:6 ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ. ಏಳುಮಂದಿ ಯಾಜಕರು ಏಳು ಟಗರು ಕೊಂಬುಗಳ ತುತೂರಿಗಳೊಂದಿಗೆ ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.
JOS 6:7 ಜನರಿಗೆ, “ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.
JOS 6:8 ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ, ಏಳು ಟಗರು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಮುಂದೆ ನಡೆದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರನ್ನು ಹಿಂಬಾಲಿಸಿತು.
JOS 6:9 ಹೀಗೆ ಯುದ್ಧ ಸನ್ನದ್ಧರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು.
JOS 6:10 ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಶಬ್ದವು ಕೇಳಿಸಲೂಬಾರದು. ನಿಮ್ಮ ಬಾಯಿಂದ ಯಾವ ಮಾತು ಹೊರಡಲೂಬಾರದು, ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು.
JOS 6:11 ಹೀಗೆಯೇ ಯೆಹೋವ ದೇವರ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದರು.
JOS 6:12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡರು.
JOS 6:13 ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧವಾದ ಜನರು ಅವರ ಮುಂದೆ ಹೋದರು. ಆದರೆ ಹಿಂದಿನ ಸೈನ್ಯದವರು ಯೆಹೋವ ದೇವರ ಮಂಜೂಷದ ಹಿಂದೆ ನಡೆದರು. ಯಾಜಕರು ತುತೂರಿಗಳನ್ನು ಊದುತ್ತಾ ಹೊರಟರು.
JOS 6:14 ಹೀಗೆ ಎರಡನೆಯ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿಬಂದು ಪಾಳೆಯಕ್ಕೆ ಹಿಂದಿರುಗಿದರು. ಹೀಗೆಯೇ ಆರು ದಿನ ಮಾಡಿದರು.
JOS 6:15 ಆದರೆ ಏಳನೆಯ ದಿನ ಸೂರ್ಯೋದಯವಾಗುವಾಗ, ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು. ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿಬಂದರು.
JOS 6:16 ಏಳನೆಯ ಸಾರಿ ಯಾಜಕರು ತುತೂರಿಗಳನ್ನು ಊದುವಾಗ, ಯೆಹೋಶುವನು ಜನರಿಗೆ, “ಆರ್ಭಟಿಸಿರಿ! ಯೆಹೋವ ದೇವರು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾರೆ.
JOS 6:17 ಆದರೂ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರಿಗೆ ಅರ್ಪಿತವಾದವುಗಳು. ರಾಹಾಬಳೆಂಬ ವೇಶ್ಯೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಆಕೆಯು ಬಚ್ಚಿಟ್ಟಿದ್ದಳು.
JOS 6:18 ಆದರೆ ಅರ್ಪಿತವಾದವುಗಳನ್ನು ನೀವು ಮುಟ್ಟಬೇಡಿರಿ. ಹಾಗೆ ಅವುಗಳನ್ನು ತೆಗೆದುಕೊಂಡು ನಿಮಗೆ ನಾಶನವನ್ನು ತಂದುಕೊಳ್ಳಬೇಡಿರಿ. ಇಸ್ರಾಯೇಲಿನ ಪಾಳೆಯವೇ ಶಾಪಕ್ಕೆ ಈಡು ಮಾಡಿ, ತೊಂದರೆ ಪಡಿಸದಂತೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರಿ.
JOS 6:19 ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.
JOS 6:20 ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು.
JOS 6:21 ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀಪುರುಷರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆಗಳನ್ನೂ ಖಡ್ಗದಿಂದ ಸಂಪೂರ್ಣವಾಗಿ ನಾಶಮಾಡಿದರು.
JOS 6:22 ಆ ನಾಡನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ ಯೆಹೋಶುವನು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳನ್ನೂ ಅವಳಿಗೆ ಇರುವ ಸಮಸ್ತವನ್ನೂ ನೀವು ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತೆಗೆದುಕೊಂಡು ಬನ್ನಿರಿ,” ಎಂದನು.
JOS 6:23 ಅದರಂತೆ ಆ ಯೌವನಸ್ಥರು ಒಳಗೆ ಹೋಗಿ, ರಾಹಾಬಳನ್ನೂ ಅವಳ ತಂದೆಯನ್ನೂ ಅವಳ ತಾಯಿಯನ್ನೂ ಅವಳ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಗೋತ್ರದ ಎಲ್ಲಾ ಸಂಬಂಧಿಕರನ್ನೂ ಹೊರಗೆ ಕರೆತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು.
JOS 6:24 ಆದರೆ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿಬಂಗಾರವನ್ನೂ ಕಂಚು ಕಬ್ಬಿಣ ಪಾತ್ರೆಗಳನ್ನು ಮಾತ್ರ ಯೆಹೋವ ದೇವರ ಮನೆಯ ಭಂಡಾರದಲ್ಲಿ ಇಟ್ಟರು.
JOS 6:25 ಆದರೆ ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ, ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದ ಸಮಸ್ತವನ್ನೂ ತಪ್ಪಿಸಿ ಉಳಿಸಿದನು. ಅವಳು ಈ ದಿವಸದವರೆಗೂ ಇಸ್ರಾಯೇಲರಲ್ಲಿ ವಾಸವಾಗಿದ್ದಾಳೆ. ಏಕೆಂದರೆ ಯೆರಿಕೋವನ್ನು ಸಂಚರಿಸಿ ನೋಡಲು, ಯೆಹೋಶುವನು ಕಳುಹಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.
JOS 6:26 ಆ ಕಾಲದಲ್ಲಿ ಯೆಹೋಶುವನು ಅವರಿಗೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಯೆರಿಕೋವೆಂಬ ಈ ನಗರವನ್ನು ಮತ್ತೆ ಕಟ್ಟುವವನು, ಯೆಹೋವ ದೇವರ ದೃಷ್ಟಿಯಲ್ಲಿ ಶಾಪಗ್ರಸ್ತನಾಗುವನು. “ಅದರ ಅಸ್ತಿವಾರವನ್ನು ಹಾಕುವವನು, ಅವನು ತನ್ನ ಚೊಚ್ಚಲು ಮಗನನ್ನು ಕಳೆದುಕೊಳ್ಳುವನು. ಪಟ್ಟಣದ ಬಾಗಿಲುಗಳನ್ನಿಡುವಾಗ ತನ್ನ ಕಿರಿ ಮಗನನ್ನು ಕಳೆದುಕೊಳ್ಳುವನು.”
JOS 6:27 ಯೆಹೋವ ದೇವರು ಯೆಹೋಶುವನ ಸಂಗಡ ಇದ್ದರು. ಅವನ ಕೀರ್ತಿ ದೇಶದಲ್ಲೆಲ್ಲಾ ಹರಡಿತು.
JOS 7:1 ಆದರೆ ಇಸ್ರಾಯೇಲರು ಅರ್ಪಿತವಾದ ವಸ್ತುಗಳ ವಿಷಯದಲ್ಲಿ ಅಪನಂಬಿಕೆಯಿಂದ ನಡೆದುಕೊಂಡರು. ಯೆಹೂದ ಗೋತ್ರದ ಜೆರಹನ ಮೊಮ್ಮಗನೂ, ಜಿಮ್ರಿಯ ಮಗನೂ ಆದ ಕರ್ಮೀಯ ಮಗನಾದ ಆಕಾನನು ಅರ್ಪಿತವಾದ ವಸ್ತುಗಳಲ್ಲಿ ಕೆಲವನ್ನು ಕದ್ದುಕೊಂಡನು. ಇದರಿಂದ ಇಸ್ರಾಯೇಲರ ಮೇಲೆ ಯೆಹೋವ ದೇವರ ಕೋಪವು ಉರಿಯಿತು.
JOS 7:2 ಆಗ ಯೆಹೋಶುವನು ಕೆಲವರನ್ನು ಕರೆದು, “ನೀವು ದೇಶವನ್ನು ಸಂಚರಿಸಿ ಸುತ್ತಿ ನೋಡಿ ಬನ್ನಿರಿ,” ಎಂದು ಹೇಳಿ, ಯೆರಿಕೋವಿನಿಂದ ಜನರನ್ನು ಬೇತೇಲಿನ ಪೂರ್ವದಕಡೆ ಬೇತಾವೆನಿನ ಬಳಿಯಲ್ಲಿರುವ ಆಯಿ ಎಂಬ ಪಟ್ಟಣಕ್ಕೆ ಕಳುಹಿಸಿದನು. ಆಗ ಅವರು ಹೋಗಿ ಆಯಿ ಎಂಬ ಪಟ್ಟಣವನ್ನು ರಹಸ್ಯವಾಗಿ ನೋಡಿ ಬಂದರು.
JOS 7:3 ಯೆಹೋಶುವನ ಬಳಿಗೆ ತಿರುಗಿಬಂದು ಅವನಿಗೆ, “ಜನರೆಲ್ಲರೂ ಹೋಗುವ ಅವಶ್ಯಕತೆ ಇಲ್ಲ, ಆಯಿ ಎಂಬ ಪಟ್ಟಣವನ್ನು ಹೊಡೆಯುವುದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಹೋದರೆ ಸಾಕು. ಸೈನ್ಯವನ್ನು ಕಳುಹಿಸಿ ದಣಿಸಬೇಡ. ಏಕೆಂದರೆ ಸ್ವಲ್ಪ ಜನರು ಮಾತ್ರ ಅಲ್ಲಿ ಇದ್ದಾರೆ,” ಎಂದರು.
JOS 7:4 ಆದ್ದರಿಂದ ಜನರಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಅಲ್ಲಿಗೆ ಹೋದರು. ಆದರೆ ಅವರು ಆಯಿ ಎಂಬ ಪಟ್ಟಣದ ಮನುಷ್ಯರನ್ನು ಎದುರಿಸಲಾಗದೆ ಓಡಿಹೋದರು.
JOS 7:5 ಆಯಿ ಎಂಬ ಪಟ್ಟಣದವರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಪಟ್ಟಣದ ಬಾಗಿಲಿನಿಂದ ಪ್ರಾರಂಭಿಸಿ ಶೆಬಾರಿಮಿನವರೆಗೂ ಅವರನ್ನು ಹಿಂದಟ್ಟಿ, ಅವರನ್ನು ಹೊಡೆದರು. ಆದ್ದರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
JOS 7:6 ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡನು. ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಂಜೆಯವರೆಗೆ ಯೆಹೋವ ದೇವರ ಮಂಜೂಷದ ಮುಂದೆ ನೆಲದ ಮೇಲೆ ಬೋರಲು ಬಿದ್ದರು.
JOS 7:7 ಇದಲ್ಲದೆ ಯೆಹೋಶುವನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ನಮ್ಮನ್ನು ಅಮೋರಿಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕಾಗಿ ನೀವು ಈ ಜನರನ್ನು ಯೊರ್ದನ್ ನದಿ ದಾಟಿಸಿದ್ದು ಏಕೆ? ನಾವು ಯೊರ್ದನ್ ನದಿ ಆಚೆಯಲ್ಲಿ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
JOS 7:8 ಯೆಹೋವ ದೇವರೇ, ಈಗ ಇಸ್ರಾಯೇಲರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದರಲ್ಲಾ. ನಾನು ಏನು ಹೇಳಲಿ.
JOS 7:9 ಕಾನಾನ್ಯರೂ ದೇಶವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದುಬಿಡುವರು, ಆಗ ನಿಮ್ಮ ಮಹತ್ತಾದ ಹೆಸರಿಗೆ ಏನು ಮಾಡುವಿರಿ?” ಎಂದನು.
JOS 7:10 ಯೆಹೋವ ದೇವರು ಯೆಹೋಶುವನಿಗೆ, “ನೀನು ಎದ್ದೇಳು, ನೀನು ಈ ಪ್ರಕಾರ ಬೋರಲು ಬಿದ್ದಿರುವುದೇನು?
JOS 7:11 ಇಸ್ರಾಯೇಲರು ಪಾಪಮಾಡಿದ್ದಾರೆ. ನಾನು ತಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿದರು. ಅವರು ಅರ್ಪಿತವಾದದ್ದರಲ್ಲಿ ಕೆಲವೊಂದನ್ನು ಕಳವು ಮಾಡಿ ತೆಗೆದುಕೊಂಡು, ವಂಚನೆಮಾಡಿ ಅದನ್ನು ತಮ್ಮ ಸಲಕರಣೆಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
JOS 7:12 ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನು ತೋರಿಸಿದ್ದಾರೆ. ಅದರಿಂದ ಅವರು ನಾಶನಕ್ಕೆ ಪಾತ್ರರಾದರು. ನೀವು ಶಾಪಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ, ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವುದಿಲ್ಲ.
JOS 7:13 “ನೀನು ಎದ್ದು ಜನರನ್ನು ಶುದ್ಧೀಕರಿಸಿ, ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ, ಏಕೆಂದರೆ, ‘ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು, ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವವರೆಗೂ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರೆ,’ ಎಂದು ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುತ್ತಾರೆ.
JOS 7:14 “ ‘ಆದ್ದರಿಂದ ಬೆಳಿಗ್ಗೆ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಯೆಹೋವ ದೇವರು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರವಾಗಿಯೂ ಯೆಹೋವ ದೇವರು ಹಿಡಿಯುವ ಕುಟುಂಬವು ಮನೆಮನೆಯಾಗಿಯೂ ಯೆಹೋವ ದೇವರು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ.
JOS 7:15 ಆಗ ಶಾಪಕ್ಕೀಡಾದದ್ದನ್ನು ತೆಗೆದುಕೊಂಡವನೆಂದು ಹಿಡಿಯಲಾಗುವನು. ಯೆಹೋವ ದೇವರ ಒಡಂಬಡಿಕೆಯನ್ನು ಮೀರಿ, ಇಸ್ರಾಯೇಲಿನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲಾಗಬೇಕು, ಎಂದು ಅವರಿಗೆ ಹೇಳು,’ ಎಂದರು.”
JOS 7:16 ಮರುದಿನ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲನ್ನು ಗೋತ್ರ ಗೋತ್ರವಾಗಿ ಕರೆದಾಗ, ಯೆಹೂದ ಗೋತ್ರವು ಸಿಕ್ಕಿಕೊಂಡಿತು.
JOS 7:17 ಅವನು ಯೆಹೂದ ಕುಟುಂಬವನ್ನು ಕರೆದಾಗ, ಜೆರಹನ ಗೋತ್ರ ಸಿಕ್ಕಿಕೊಂಡಿತು. ಜೆರಹನ ಗೋತ್ರವನ್ನು ಕರೆದಾಗ ಜಿಮ್ರಿಯು ಸಿಕ್ಕಿಕೊಂಡಿತು.
JOS 7:18 ಅವನ ಕುಟುಂಬಗಳು ಕುಟುಂಬಗಳಾಗಿ, ವ್ಯಕ್ತಿಗಳು ವ್ಯಕ್ತಿಗಳಾಗಿ ಬಂದಾಗ, ಜಿಮ್ರಿಯ ಮಗನಾದ ಕರ್ಮೀಯ ಮಗನಾದ ಆಕಾನನೂ ಯೆಹೂದ ಕುಲದವನೂ ಜೆರಹನ ಗೋತ್ರದವನೂ ಸಿಕ್ಕಿದನು.
JOS 7:19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ನೀನು ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಘನಪಡಿಸಿ, ಅವರಿಗೆ ಸ್ತೋತ್ರ ಸಲ್ಲಿಸು. ಏನು ಮಾಡಿದೆಯೋ ಅದನ್ನು ನನಗೆ ತಿಳಿಸು, ನನಗೆ ಮರೆಮಾಡಬೇಡ,” ಎಂದನು.
JOS 7:20 ಆಕಾನನು ಯೆಹೋಶುವನಿಗೆ, “ನಿಜವಾಗಿ ನಾನು ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಇಂಥಿಂಥವುಗಳನ್ನು ಮಾಡಿದ್ದೇನೆ.
JOS 7:21 ನಾನು ಕೊಳ್ಳೆಯಲ್ಲಿ ಒಂದು ಶಿನಾರ್ ದೇಶದ ಒಳ್ಳೆಯ ವಸ್ತ್ರವನ್ನೂ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಅರ್ಧ ಕಿಲೋಗ್ರಾಂ ತೂಕದ ಒಂದು ಬಂಗಾರದ ಗಟ್ಟಿಯನ್ನು ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ, ಬೆಳ್ಳಿಯೂ ಅದರ ಕೆಳಗೆ ಇದೆ,” ಎಂದನು.
JOS 7:22 ಆಗ ಯೆಹೋಶುವನು ದೂತರನ್ನು ಕಳುಹಿಸಿದನು. ಅವರು ಡೇರೆಗಳಿಗೆ ಓಡಿದರು. ಆ ಡೇರೆಯಲ್ಲಿ ಹೂತಿಟ್ಟವುಗಳನ್ನು ತೆಗೆದರು. ಬೆಳ್ಳಿಯು ಅದರ ಕೆಳಗೆ ಮರೆಮಾಡಲಾಗಿತ್ತು.
JOS 7:23 ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲರ ಬಳಿಗೂ ತಂದು, ಯೆಹೋವ ದೇವರ ಮುಂದೆ ಇಟ್ಟರು.
JOS 7:24 ಆಗ ಯೆಹೋಶುವನೂ ಅವನೊಂದಿಗೆ ಇಸ್ರಾಯೇಲರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಪುತ್ರಪುತ್ರಿಯರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ಕಣಿವೆಗೆ ತಂದರು.
JOS 7:25 ಆಗ ಯೆಹೋಶುವನು ಅವನಿಗೆ, “ನೀನು ನಮ್ಮನ್ನು ಸಂಕಷ್ಟಪಡಿಸಿದ್ದೇನು? ಇಂದು ಯೆಹೋವ ದೇವರು ನಿನ್ನನ್ನು ಸಂಕಷ್ಟಪಡಿಸುವರು,” ಎಂದನು. ಆಗ ಇಸ್ರಾಯೇಲರೆಲ್ಲರೂ ಅವನ ಮೇಲೆ ಕಲ್ಲೆಸೆದರು. ಕಲ್ಲೆಸೆದ ತರುವಾಯ ಉಳಿದವರನ್ನು ಬೆಂಕಿಯಿಂದ ಸುಟ್ಟುಬಿಟ್ಟು,
JOS 7:26 ಅವರ ಮೇಲೆ ಕಲ್ಲುಕುಪ್ಪೆ ಕೂಡಿಸಿದರು. ಅದು ಈ ದಿನದವರೆಗೂ ಇದೆ. ಆಗ ಯೆಹೋವ ದೇವರು ತಮ್ಮ ಕೋಪದ ಉರಿಯನ್ನು ಬಿಟ್ಟು ತಿರುಗಿದರು. ಆದ್ದರಿಂದ ಆ ಸ್ಥಳವು ಈವರೆಗೂ ಆಕೋರಿನ ಕಣಿವೆ ಎಂದು ಕರೆಯಲಾಗುತ್ತದೆ.
JOS 8:1 ಆಗ ಯೆಹೋವ ದೇವರು ಯೆಹೋಶುವನಿಗೆ, “ಭಯಪಡಬೇಡ, ನಿರುತ್ಸಾಹಗೊಳ್ಳಬೇಡ, ನೀನು ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಎದ್ದು ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗು. ನೋಡು, ನಾನು ಆಯಿ ಎಂಬ ಪಟ್ಟಣದ ಅರಸನನ್ನೂ ಅವನ ಜನರನ್ನೂ ಅವನ ಪಟ್ಟಣವನ್ನೂ ಅವನ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
JOS 8:2 ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದೆಯೋ ಹಾಗೆಯೇ ಆಯಿ ಎಂಬ ಪಟ್ಟಣಕ್ಕೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನು ಮಾತ್ರವೇ ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಲು ಸ್ಥಳಮಾಡಿಕೊಳ್ಳಿರಿ,” ಎಂದರು.
JOS 8:3 ಆಗ ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗಲು ಯೆಹೋಶುವನೂ, ಸಮಸ್ತ ಸೈನಿಕರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆಯ್ದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು.
JOS 8:4 ಅವರಿಗೆ ಆಜ್ಞಾಪಿಸಿ, “ಪಟ್ಟಣದ ಹಿಂದೆ ನೀವು ಹೊಂಚಿಕೊಂಡಿರಿ, ಪಟ್ಟಣಕ್ಕೆ ಬಹುದೂರ ಹೋಗಬೇಡಿರಿ. ನೀವೆಲ್ಲರೂ ಸಿದ್ಧವಾಗಿರಿ.
JOS 8:5 ಆದರೆ ನಾನೂ, ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸಮೀಪಕ್ಕೆ ಸೇರುವೆವು. ಆಗ, ಅವರು ಮುಂಚಿನ ಹಾಗೆಯೇ ನಮಗೆ ವಿರೋಧವಾಗಿ ಪಟ್ಟಣದಿಂದ ಹೊರಟು ಬರುವಾಗ ಅವರ ಮುಂದೆ ನಾವು ಓಡಿ ಹೋಗುವೆವು.
JOS 8:6 ಆಗ ಅವರು, ‘ಮುಂಚಿನ ಹಾಗೆಯೇ ನಮ್ಮ ಮುಂದೆ ಓಡಿಹೋಗುತ್ತಾರೆ,’ ಎಂದು ಹೇಳಿಕೊಳ್ಳುವರು. ಪಟ್ಟಣದ ಬಳಿಯಿಂದ ದೂರದವರೆಗೂ ಅವರು ಬರುವವರೆಗೆ ನಾವು ಓಡಿ ಹೋಗುತ್ತಲೇ ಇರುವೆವು.
JOS 8:7 ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಡುವರು.
JOS 8:8 ನೀವು ಪಟ್ಟಣವನ್ನು ಹಿಡಿದ ತರುವಾಯ, ಬೆಂಕಿ ಹಚ್ಚಿ, ಅದನ್ನು ಸುಟ್ಟುಬಿಟ್ಟು, ಯೆಹೋವ ದೇವರ ಆಜ್ಞೆಯ ಪ್ರಕಾರವೇ ಮಾಡಿರಿ. ನಾನು ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ,” ಎಂದನು.
JOS 8:9 ಯೆಹೋಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿ ಎಂಬ ಪಟ್ಟಣಕ್ಕೂ ನಡುವೆ ಆಯಿ ಎಂಬ ಪಟ್ಟಣಕ್ಕೆ ಪಶ್ಚಿಮದ ಕಡೆ ಅಡಗಿಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಉಳಿದನು.
JOS 8:10 ಉದಯಕಾಲದಲ್ಲಿ ಯೆಹೋಶುವನು ಎದ್ದು ಸೈನ್ಯವನ್ನು ಲೆಕ್ಕ ಮಾಡಿ, ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿ ಎಂಬ ಪಟ್ಟಣಕ್ಕೆ ಏರಿಹೋದರು.
JOS 8:11 ಅವನ ಸಂಗಡ ಇದ್ದ ಸೈನಿಕರೆಲ್ಲಾ ನಡೆದು ಪಟ್ಟಣದ ಸಮೀಪವಾಗಿ ಬಂದು ಸೇರಿ, ಆಯಿ ಎಂಬ ಪಟ್ಟಣದ ಉತ್ತರ ದಿಕ್ಕಿನಲ್ಲಿ ಪಾಳೆಯಲ್ಲಿ ಇಳಿದುಕೊಂಡರು. ಆದರೆ ಆಯಿ ಎಂಬ ಪಟ್ಟಣಕ್ಕೂ ಅವರಿಗೂ ಮಧ್ಯದಲ್ಲಿ ಒಂದು ಕಣಿವೆ ಇತ್ತು.
JOS 8:12 ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆಯ್ದುಕೊಂಡು, ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ, ಆಯಿ ಎಂಬ ಪಟ್ಟಣದ ನಡುವೆ ಹೊಂಚಿಹಾಕಿಕೊಂಡಿರಲು ಅವರನ್ನು ಇಟ್ಟನು.
JOS 8:13 ಪಟ್ಟಣಕ್ಕೆ ಉತ್ತರದಲ್ಲಿರುವ ಸಕಲ ಸೈನ್ಯದ ಜನರನ್ನೂ, ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಗಾರರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ಕಣಿವೆಯ ಮಧ್ಯಕ್ಕೆ ಹೋದನು.
JOS 8:14 ಆಯಿ ಎಂಬ ಪಟ್ಟಣದ ಅರಸನು ಇದನ್ನು ಕಂಡಾಗ, ಆ ಪಟ್ಟಣದ ಜನರು ತ್ವರೆಪಟ್ಟು, ಉದಯಕಾಲದಲ್ಲಿ ಎದ್ದು, ನಿಶ್ಚಯಿಸಿದ ವೇಳೆಯಲ್ಲಿ ಆಯಿ ಎಂಬ ಪಟ್ಟಣದ ಅರಸನೂ ಅವನ ಜನರೆಲ್ಲರೂ ಇಸ್ರಾಯೇಲಿಗೆ ಎದುರಾಗಿ ಯುದ್ಧಮಾಡಲು ಬಯಲಿಗೆ ಹೊರಟರು. ಅವನೂ ಅವನ ಜನರೂ ಅರಾಬಾ ಎಂಬ ತಗ್ಗಾದ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವವರನ್ನು ಅರಿಯದೆ ಇದ್ದನು.
JOS 8:15 ಅವರ ಮುಂದೆ ಯೆಹೋಶುವನೂ ಇಸ್ರಾಯೇಲರೆಲ್ಲರೂ ಸೋತವರ ಹಾಗೆ ಮರುಭೂಮಿಯ ಮಾರ್ಗವಾಗಿ ಓಡಿಹೋದರು.
JOS 8:16 ಆಗ ಆಯಿ ಎಂಬ ಪಟ್ಟಣದಲ್ಲಿರುವ ಜನರೆಲ್ಲರನ್ನು ಕರೆದುಕೊಂಡು ಹಿಂದಟ್ಟುವುದಕ್ಕೆ ಕರೆಯಲಾದವರು ಯೆಹೋಶುವನನ್ನು ಹಿಂದಟ್ಟಿದರು. ಹೀಗೆ ಅವರು ಆ ಪಟ್ಟಣದಿಂದ ಹೊರಬಂದರು.
JOS 8:17 ಆಯಿ ಎಂಬ ಪಟ್ಟಣದಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇರಲಿಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲರನ್ನು ಹಿಂದಟ್ಟಿದರು.
JOS 8:18 ಆಗ ಯೆಹೋವ ದೇವರು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಪಟ್ಟಣಕ್ಕೆ ಎದುರಾಗಿ ಚಾಚು. ಏಕೆಂದರೆ ಅದನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು,” ಎಂದರು. ಹಾಗೆಯೇ ಅವನು ತನ್ನ ಕೈಯಲ್ಲಿರುವ ಈಟಿಯನ್ನು ಪಟ್ಟಣಕ್ಕೆ ಎದುರಾಗಿ ಚಾಚಿದನು.
JOS 8:19 ಆಗ ಹೊಂಚುಗಾರರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಪಟ್ಟಣದಲ್ಲಿ ಪ್ರವೇಶಿಸಿ, ಸೆರೆಹಿಡಿದು ಕೂಡಲೆ ಅದಕ್ಕೆ ಬೆಂಕಿಯನ್ನು ಹಚ್ಚಿದರು.
JOS 8:20 ಆಯಿ ಎಂಬ ಪಟ್ಟಣದ ಮನುಷ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳುವುದನ್ನು ಕಂಡರು. ಹೇಗಾದರೂ ಓಡಿಹೋಗಲು ಅವರಿಗೆ ತ್ರಾಣ ಇಲ್ಲದೆ ಹೋಯಿತು. ಆಗ ಮರುಭೂಮಿಗೆ ಓಡಿ ಹೋದ ಇಸ್ರಾಯೇಲರು ಹಿಂದಟ್ಟಿದವರ ಕಡೆಗೆ ತಿರುಗಿದರು.
JOS 8:21 ಪಟ್ಟಣವು ಹೊಂಚುಗಾರರಿಗೆ ಸ್ವಾಧೀನವಾದುದನ್ನೂ ಹೊಗೆ ಆಕಾಶಕ್ಕೆ ಏರುತ್ತಿದ್ದುದನ್ನೂ ಕಂಡಾಗ ಯೆಹೋಶುವನೂ ಇಸ್ರಾಯೇಲರೂ ಹಿಂದಿರುಗಿ ಆಯಿ ಎಂಬ ಪಟ್ಟಣದ ಜನರ ಮೇಲೆ ಬಿದ್ದರು.
JOS 8:22 ಅವರು ಪಟ್ಟಣದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ, ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲರ ಮಧ್ಯದಲ್ಲಿ ಸಿಕ್ಕಿದರು. ಅವರಲ್ಲಿ ಇಬ್ಬರೂ ತಪ್ಪಿಸಿಕೊಂಡ ಹಾಗೆಯೂ ಅವರನ್ನು ಹೊಡೆದರು.
JOS 8:23 ಆಯಿ ಎಂಬ ಪಟ್ಟಣದ ಅರಸನನ್ನು ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ತಂದರು.
JOS 8:24 ಇಸ್ರಾಯೇಲರು ಮರುಭೂಮಿಯಲ್ಲಿಯೂ ಬಯಲಿನಲ್ಲಿಯೂ ಓಡಿಸಿದ ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಖಡ್ಗದಿಂದ ಸಂಹರಿಸಿದ ನಂತರ ಅವರೆಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಕೊಂದರು.
JOS 8:25 ಆ ದಿನದಲ್ಲಿ ಆಯಿ ಎಂಬ ಪಟ್ಟಣದಲ್ಲಿಯ ಹನ್ನೆರಡು ಸಾವಿರ ಜನರು ಹತರಾದರು.
JOS 8:26 ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಸಂಪೂರ್ಣ ನಾಶವಾಗುವವರೆಗೂ ಯೆಹೋಶುವನು ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ.
JOS 8:27 ಯೆಹೋವ ದೇವರು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇಲರು ಆ ಪಟ್ಟಣದ ಪಶುಪ್ರಾಣಿಗಳನ್ನೂ, ಕೊಳ್ಳೆಯನ್ನೂ ತಮಗೋಸ್ಕರ ಇಟ್ಟುಕೊಂಡರು.
JOS 8:28 ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟುಬಿಟ್ಟು, ಅದನ್ನು ಮರಳಿ ಕಟ್ಟಲಾಗದಂತೆ ಹಾಳು ದಿಬ್ಬವಾಗಿ ಮಾಡಿದನು. ಅದು ಇಂದಿನವರೆಗೂ ಹಾಗೆಯೇ ಉಳಿದಿದೆ.
JOS 8:29 ಆಯಿ ಎಂಬ ಪಟ್ಟಣದ ಅರಸನನ್ನು ಸಾಯಂಕಾಲದವರೆಗೂ ಒಂದು ಮರದಲ್ಲಿ ತೂಗಿಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶುವನು ಅವನ ಹೆಣವನ್ನು ಮರದಿಂದ ಇಳಿಸಿ, ಅದನ್ನು ಆ ಪಟ್ಟಣದ ಬಾಗಿಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿದರು. ಆ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಇಟ್ಟರು. ಅದು ಇಂದಿನವರೆಗೂ ಇದೆ.
JOS 8:30 ಆಗ ಯೆಹೋಶುವನು ಏಬಾಲ್ ಪರ್ವತದಲ್ಲಿ ಇಸ್ರಾಯೇಲಿನ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.
JOS 8:31 ಸೇವಕನಾದ ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿದಂತೆ, ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಯೆಹೋವ ದೇವರಿಗೆ ಉಳಿಮುಟ್ಟದ ಪೂರ್ಣವಾದ ಕಲ್ಲುಗಳಿಂದ ಬಲಿಪೀಠವನ್ನು ಕಟ್ಟಿದನು. ಆಗ ಅವರು ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನ ಸಮರ್ಪಣೆಗಳನ್ನೂ ಅರ್ಪಿಸಿದರು.
JOS 8:32 ಅಲ್ಲಿ ಅವನು ಇಸ್ರಾಯೇಲರ ಸಮಕ್ಷಮದಲ್ಲಿ ಮೋಶೆ ಬರೆದಿದ್ದ ಮೋಶೆಯ ನಿಯಮದ ಪ್ರತಿಯನ್ನು ಬರೆದನು.
JOS 8:33 ಇಸ್ರಾಯೇಲರೆಲ್ಲರೂ ಅವರ ಹಿರಿಯರೂ ಅವರ ಅಧಿಕಾರಿಗಳೂ ಅವರ ನ್ಯಾಯಾಧಿಪತಿಗಳೂ ಪರದೇಶಸ್ಥರೂ ಸ್ವದೇಶಸ್ಥರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜೀಮ್ ಪರ್ವತದ ಕಡೆಗೂ ಅರ್ಧ ಏಬಾಲ್ ಪರ್ವತದ ಮುಂದೆಯೂ ನಿಂತರು. ಯೆಹೋವ ದೇವರ ಸೇವಕ ಮೋಶೆ ಇಸ್ರಾಯೇಲರನ್ನು ಆಶೀರ್ವದಿಸುವಂತೆ ಮುಂಚೆ ವಾಕ್ಯಗಳನ್ನು ಕೊಟ್ಟಾಗ ಆಜ್ಞಾಪಿಸಿದ ಹಾಗೆಯೇ ನಿಂತರು.
JOS 8:34 ತರುವಾಯ ಯೆಹೋಶುವನು ದೇವರ ನಿಯಮ ಗ್ರಂಥದಲ್ಲಿ ಬರೆದಿರುವ ಎಲ್ಲಾ ಮಾತುಗಳನ್ನೂ ಆಶೀರ್ವಾದಗಳನ್ನೂ, ಶಾಪಗಳನ್ನೂ ಓದಿದನು.
JOS 8:35 ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ, ಮಕ್ಕಳಿಗೂ, ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.
JOS 9:1 ಯೊರ್ದನ್ ನದಿಯ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದುರಾದ ಮೆಡಿಟೆರಿಯನ್ ಸಮುದ್ರದ ಸಮಸ್ತ ಪ್ರಾಂತಗಳಲ್ಲಿಯೂ ಇರುವ ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಅರಸರು ಇದನ್ನು ಕೇಳಿದರು.
JOS 9:2 ಆಗ ಅವರು ಯೆಹೋಶುವನಿಗೂ ಇಸ್ರಾಯೇಲರಿಗೂ ವಿರುದ್ಧ ಯುದ್ಧಮಾಡುವುದಕ್ಕೆ ಒಟ್ಟಾಗಿ ಕೂಡಿಕೊಂಡರು.
JOS 9:3 ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ,
JOS 9:4 ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ, ಅವರು ರಾಯಭಾರಿಗಳ ಹಾಗೆ ತೋರಿಸುವಂತೆ ಹಳೆಯ ಗೋಣಿ ಚೀಲಗಳನ್ನೂ ತೇಪೆ ಹಾಕಿದ ಹಳೆಯದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು, ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ಹೋದರು.
JOS 9:5 ತೇಪೆ ಹಾಕಿದ ಹಳೆಯದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಯನ್ನೂ ತೆಗೆದುಕೊಂಡರು.
JOS 9:6 ಅನಂತರ ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಸೇರಿ ಯೆಹೋಶುವನ ಬಳಿಗೆ ಬಂದರು. ಅವರು ಅವನಿಗೂ ಇಸ್ರಾಯೇಲರಿಗೂ, “ನಾವು ದೂರದೇಶದಿಂದ ಬಂದೆವು. ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ,” ಎಂದರು.
JOS 9:7 ಆಗ ಇಸ್ರಾಯೇಲರು ಹಿವ್ವಿಯರಾದ ಅವರಿಗೆ, “ನೀವು ಒಂದು ವೇಳೆ ನಮ್ಮ ಹತ್ತಿರದಲ್ಲಿ ವಾಸಿಸುವವರು ಆಗಿರಬಹುದು. ನಾವು ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವುದು ಹೇಗೆ?” ಎಂದರು.
JOS 9:8 ಅದಕ್ಕವರು ಯೆಹೋಶುವನಿಗೆ, “ನಾವು ನಿನ್ನ ಸೇವಕರು,” ಎಂದರು. ಆಗ ಯೆಹೋಶುವನು ಅವರಿಗೆ, “ನೀವು ಯಾರು? ಎಲ್ಲಿಂದ ಬಂದಿರಿ?” ಎಂದನು.
JOS 9:9 ಅವರು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರ ಹೆಸರಿನ ಮಹತ್ವ ಕೇಳಿ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದಿದ್ದೇವೆ. ಏಕೆಂದರೆ ದೇವರ ಕೀರ್ತಿಯನ್ನೂ, ಅವರು ಈಜಿಪ್ಟಿನಲ್ಲಿ ಮಾಡಿದ ಎಲ್ಲವನ್ನೂ ಕೇಳಿದ್ದೇವೆ.
JOS 9:10 ಯೊರ್ದನ್ ನದಿಗೆ ಆಚೆ ಇರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ, ಅಷ್ಟಾರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದ್ದೇವೆ.
JOS 9:11 ನಮ್ಮ ಹಿರಿಯರೂ, ನಮ್ಮ ದೇಶವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇನೆಂದರೆ, ‘ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದುಕೊಂಡು ಅವರೆದುರಿಗೆ ಹೋಗಿ, ಅವರಿಗೆ ನಾವು ನಿಮ್ಮ ಸೇವಕರು ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ ಎಂದು ಹೇಳಿರಿ,’ ಎಂದರು.
JOS 9:12 ಆದರೆ ನಿಮ್ಮ ಬಳಿಗೆ ಬರುವುದಕ್ಕೆ ನಾವು ಹೊರಟ ದಿನದಲ್ಲಿ ನಮ್ಮ ಮಾರ್ಗ ಪ್ರಯಾಣಕ್ಕೆ ನಮ್ಮ ಮನೆಯೊಳಗೆ ನಮ್ಮ ಒಲೆಯ ಮೇಲೆ ಬಿಸಿ ರೊಟ್ಟಿಗಳನ್ನು ತೆಗೆದುಕೊಂಡೆವು.
JOS 9:13 ಈಗ ಅವು ಒಣಗಿ ಬೂಷ್ಟು ಹಿಡಿದವುಗಳಗಿವೆ. ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸದಾಗಿದ್ದವು. ಇಗೋ, ಈಗ ಅವು ಹರಿದು ಹೋಗಿವೆ. ಇದಲ್ಲದೆ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಪ್ರಯಾಣ ಬಹಳ ದೂರವಾದ್ದರಿಂದ ಹಳೆಯದಾಗಿವೆ,” ಎಂದರು.
JOS 9:14 ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ.
JOS 9:15 ಯೆಹೋಶುವನು ಅವರ ಸಂಗಡ ಸಮಾಧಾನದ ಒಡಂಬಡಿಕೆ ಮಾಡಿಕೊಂಡನು. ಅವರನ್ನು ಜೀವದಿಂದ ಉಳಿಸುವುದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಅವರಿಗೆ ಪ್ರಮಾಣ ಮಾಡಿದರು.
JOS 9:16 ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ, ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ, ತಮ್ಮಲ್ಲಿ ಇರುವವರೆಂದೂ ತಿಳಿದುಬಂತು.
JOS 9:17 ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.
JOS 9:18 ಆದರೆ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದ್ದರಿಂದ ಇಸ್ರಾಯೇಲರು ಅವರ ಮೇಲೆ ದಾಳಿಮಾಡಲಿಲ್ಲ. ಆದರೆ ಇಸ್ರಾಯೇಲರೆಲ್ಲರೂ ಪ್ರಧಾನರಿಗೆ ವಿರೋಧವಾಗಿ ಗೊಣಗುಟ್ಟಿದರು.
JOS 9:19 ಆಗ ಸಕಲ ಪ್ರಧಾನರು ಎಲ್ಲಾ ಜನರಿಗೆ, “ನಾವು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಅವರಿಗೆ ಪ್ರಮಾಣ ಮಾಡಿದ್ದೇವು. ಆದ್ದರಿಂದ ಅವರನ್ನು ನಾವು ಮುಟ್ಟಕೂಡದು.
JOS 9:20 ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಉಳಿಸಬೇಕು. ಆದರೆ ನಾವು ಅವರಿಗೆ ಹೀಗೆ ಮಾಡೋಣ.
JOS 9:21 ಅದು ಏನೆಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರು ಜೀವದಿಂದ ಇರಲಿ. ಆದರೆ ಅವರು ಇಸ್ರಾಯೇಲಿನ ಎಲ್ಲಾ ಸಮೂಹಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಪ್ರಧಾನರ ಮಾತಿನಂತೆಯೇ ಆಯಿತು.
JOS 9:22 ತರುವಾಯ ಯೆಹೋಶುವನು ಗಿಬ್ಯೋನ್ಯರನ್ನು ಕರೆಯಿಸಿ ಅವರಿಗೆ, “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ, ‘ನಾವು ನಿಮಗೆ ಬಹಳ ದೂರವಾಗಿರುವವರು,’ ಎಂದು ಹೇಳಿ ನಮ್ಮನ್ನು ಮೋಸಗೊಳಿಸಿದ್ದೇಕೆ?
JOS 9:23 ಈಗ ನೀವು ಶಾಪಗ್ರಸ್ತರು, ನೀವು ಯಾವಾಗಲೂ ದಾಸತ್ವದಿಂದ ಬಿಡುಗಡೆಯಾಗುವುದಿಲ್ಲ. ನೀವು ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರುವಿರಿ,” ಎಂದು ಹೇಳಿದನು.
JOS 9:24 ಅದಕ್ಕವರು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವುದಕ್ಕೂ, ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡುವುದಕ್ಕೂ ತಮ್ಮ ಸೇವಕ ಮೋಶೆಗೆ ಆಜ್ಞಾಪಿಸಿದ್ದಾರೆಂದು, ನಿಮ್ಮ ಸೇವಕರಾದ ನಾವು ಕೇಳಿದೆವು. ಆದ್ದರಿಂದ ನಾವು ನಮ್ಮ ಪ್ರಾಣಕ್ಕಾಗಿ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
JOS 9:25 ಇಗೋ, ಈಗಲೂ ನಾವು ನಿನ್ನ ಕೈಯಲ್ಲಿಯೇ ಇದ್ದೇವೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿಯೂ, ಸರಿಯಾಗಿಯೂ ತೋಚುವ ಹಾಗೆ ನಮಗೆ ಮಾಡು,” ಎಂದು ಉತ್ತರಕೊಟ್ಟರು.
JOS 9:26 ಆ ಪ್ರಕಾರವೇ ಯೆಹೋಶುವನು ಅವರಿಗೆ ಹೇಳಿದಂತೆ ಮಾಡಿದನು. ಅವರನ್ನು ಕೊಂದು ಹಾಕದ ಹಾಗೆ ಇಸ್ರಾಯೇಲರ ಕೈಯಿಂದ ತಪ್ಪಿಸಿದನು.
JOS 9:27 ಯೆಹೋಶುವನು ಆ ದಿನ ಇರುವ ಹಾಗೆ ಗಿಬ್ಯೋನಿನವರ ಸಮೂಹಕ್ಕೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿರುವ ಅವರ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.
JOS 10:1 ಈ ಸಮಯದಲ್ಲಿ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಯೆಹೋಶುವನು ಯೆರಿಕೋವನ್ನೂ ಅದರ ಅರಸನನ್ನೂ ಹೇಗೋ ಹಾಗೆಯೇ ಆಯಿ ಎಂಬ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡು, ಅದರ ಅರಸನನ್ನು ಸಂಹರಿಸಿಬಿಟ್ಟು ಸಂಪೂರ್ಣ ನಾಶಮಾಡಿದನೆಂಬ ಸಂಗತಿಯನ್ನು ಅವನು ಕೇಳಿದ್ದನು. ಹಾಗೆಯೇ ಗಿಬ್ಯೋನಿನ ನಿವಾಸಿಗಳು ಇಸ್ರಾಯೇಲಿನ ಸಂಗಡ ಸಮಾಧಾನ ಮಾಡಿಕೊಂಡು ಅವರಲ್ಲಿ ಇದ್ದರೆಂದೂ ಕೇಳಿದ್ದನು.
JOS 10:2 ಅದೋನೀಚೆದೆಕನು ಅವನ ಜನರೂ ಬಹು ಭಯಪಟ್ಟರು. ಏಕೆಂದರೆ ಗಿಬ್ಯೋನ್ ಒಂದು ರಾಜಧಾನಿಯಷ್ಟು ಶ್ರೇಷ್ಠ ಪಟ್ಟಣವೂ ಅದು ಆಯಿ ಪಟ್ಟಣಕ್ಕಿಂತಲೂ ದೊಡ್ಡದಾಗಿತ್ತು. ಇದಲ್ಲದೆ ಅದರಲ್ಲಿರುವ ಜನರು ಪರಾಕ್ರಮಶಾಲಿಗಳಾಗಿದ್ದರು.
JOS 10:3 ಆದ್ದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ದೂತರನ್ನು ಕಳುಹಿಸಿದನು:
JOS 10:4 “ಗಿಬ್ಯೋನರು ಯೆಹೋಶುವನ ಮತ್ತು ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡದ್ದರಿಂದ ನಾವು ಅದನ್ನು ದಾಳಿಮಾಡುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ,” ಎಂದು ಹೇಳಿ ಕಳುಹಿಸಿದನು.
JOS 10:5 ಹಾಗೆಯೇ ಅಮೋರಿಯರ ಐದು ಮಂದಿ ಅರಸರಾದ, ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಒಟ್ಟುಸೇರಿದರು. ಇವರೂ ಇವರ ಸೈನ್ಯವೂ ಹೊರಟುಹೋಗಿ ಗಿಬ್ಯೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿದರು.
JOS 10:6 ಆಗ ಗಿಬ್ಯೋನಿನ ಜನರು, “ಪರ್ವತಗಳಲ್ಲಿ ವಾಸವಾಗಿರುವ ಅಮೋರಿಯರ ಅರಸುಗಳೆಲ್ಲರೂ ನಮಗೆ ವಿರೋಧವಾಗಿ ಕೂಡಿಬಂದಿದ್ದಾರೆ. ನಿನ್ನ ಸೇವಕರರಾದ ನಮ್ಮನ್ನು ಕೈಬಿಡದೆ ಶೀಘ್ರವಾಗಿ ನಮ್ಮ ಬಳಿಗೆ ಬಂದು, ನಮ್ಮನ್ನು ಕಾಪಾಡು! ನಮಗೆ ಸಹಾಯಮಾಡು,” ಎಂದು ಗಿಲ್ಗಾಲಿನಲ್ಲಿ ಪಾಳೆಯ ಮಾಡಿದ್ದ ಯೆಹೋಶುವನ ಬಳಿಗೆ ಹೇಳಿ ಕಳುಹಿಸಿದರು.
JOS 10:7 ಆಗ ಯೆಹೋಶುವನು ಗಿಲ್ಗಾಲಿನಿಂದ, ಸಮಸ್ತ ಯುದ್ಧವೀರರೂ ಉಳಿದ ಪರಾಕ್ರಮಶಾಲಿಗಳ ಸಮೇತ ಹೊರಟನು.
JOS 10:8 ಯೆಹೋವ ದೇವರು ಯೆಹೋಶುವನಿಗೆ, “ನೀನು ಅವರಿಗೆ ಭಯಪಡಬೇಡ, ನಾನು ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ. ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವುದಿಲ್ಲ,” ಎಂದರು.
JOS 10:9 ಆದ್ದರಿಂದ ಯೆಹೋಶುವನು ಗಿಲ್ಗಾಲಿನಿಂದ ರಾತ್ರಿಯೆಲ್ಲಾ ಪ್ರಯಾಣಮಾಡಿ, ತಕ್ಷಣವೇ ಅವರ ಮೇಲೆ ದಾಳಿಮಾಡಿದನು.
JOS 10:10 ಆಗ ಯೆಹೋವ ದೇವರು ಅವರನ್ನು ಇಸ್ರಾಯೇಲಿನ ಮುಂದೆ ಕಳವಳಗೊಳಿಸಿದರು. ಯೆಹೋಶುವನು ಮತ್ತು ಇಸ್ರಾಯೇಲರು ಗಿಬ್ಯೋನಿನಲ್ಲಿ ಸಂಪೂರ್ಣವಾಗಿ ಸಂಹರಿಸಿ, ಬೇತ್ ಹೋರೋನಿಗೆ ಹೋಗುವ ಮಾರ್ಗದಲ್ಲಿ ಅವರನ್ನು ಹಿಂದಟ್ಟಿ, ಅಜೇಕ, ಮಕ್ಕೇದದ ಎಂಬ ಊರುಗಳವರೆಗೆ ಹೊಡೆದರು.
JOS 10:11 ಅವರು ಬೇತ್ ಹೋರೋನಿನಿಂದ ಇಳಿದು ಅಜೇಕದವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ, ಅವರ ಮೇಲೆ ಯೆಹೋವ ದೇವರು ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಇಸ್ರಾಯೇಲರ ಖಡ್ಗದ ದಾಳಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.
JOS 10:12 ಯೆಹೋವ ದೇವರು ಅಮೋರಿಯರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿದ ಆ ದಿನದಲ್ಲಿ ಯೆಹೋಶುವನು ಯೆಹೋವ ದೇವರ ಸಂಗಡ ಮಾತನಾಡಿ ಇಸ್ರಾಯೇಲಿನ ಮುಂದೆ ಹೀಗೆ ಹೇಳಿದನು, “ಸೂರ್ಯನೇ ನೀನು ಗಿಬ್ಯೋನಿನ ಮೇಲೆ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲಿ ಸ್ಥಿರವಾಗಿ ನಿಲ್ಲು.”
JOS 10:13 ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರೆಗೆ ಸೂರ್ಯ ಚಂದ್ರರು ನೆಲೆಯಾಗಿ ನಿಂತಿದ್ದರು. ಇದು ಯಾಷಾರ್ ಪುಸ್ತಕದಲ್ಲಿ ಬರೆದಿದೆ. ಹೀಗೆ ಸೂರ್ಯ ಅಸ್ತಮಿಸಲು ತ್ವರೆಮಾಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿ ನಿಂತಿತು.
JOS 10:14 ಯೆಹೋವ ದೇವರು ಒಬ್ಬ ಮನುಷ್ಯನ ಮಾತನ್ನು ಕೇಳಿದಂಥ ಆ ದಿನಕ್ಕೆ ಸಮಾನವಾದ ದಿನವು ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ. ಏಕೆಂದರೆ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.
JOS 10:15 ತರುವಾಯ ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂದಿರುಗಿದನು.
JOS 10:16 ಆದರೆ ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡರು.
JOS 10:17 ಆ ಐದು ಮಂದಿ ಅರಸರು ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡವರಾಗಿ ಸಿಕ್ಕಿದರೆಂದು ಯೆಹೋಶುವನಿಗೆ ತಿಳಿಯಿತು.
JOS 10:18 ಆಗ ಯೆಹೋಶುವನು, “ದೊಡ್ಡ ಕಲ್ಲುಗಳನ್ನು ಗವಿಯ ಬಾಯಿಗೆ ಹೊರಳಿಸಿರಿ. ಆ ಸ್ಥಳದಲ್ಲಿ ಅವರನ್ನು ಕಾಯುವಂತೆ ಕೆಲವರನ್ನು ನೇಮಿಸಿರಿ.
JOS 10:19 ನೀವು ನಿಲ್ಲಬೇಡಿರಿ, ನಿಮ್ಮ ಶತ್ರುಗಳನ್ನು ಹಿಂದಟ್ಟಿರಿ, ದಾಳಿಮಾಡಿರಿ. ತಮ್ಮ ಪಟ್ಟಣಗಳಲ್ಲಿ ಪ್ರವೇಶಿಸದಂತೆ ಮಾಡಿರಿ. ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದನು.
JOS 10:20 ಯೆಹೋಶುವನೂ ಇಸ್ರಾಯೇಲರೂ ಅವರನ್ನು ಸಂಪೂರ್ಣವಾಗಿ ಸಂಹರಿಸಿದರು. ಆದರೂ ಅವರಲ್ಲಿ ಉಳಿದವರು ಕೋಟೆಗಳುಳ್ಳ ಪಟ್ಟಣಗಳಲ್ಲಿ ಸೇರಿಕೊಂಡರು.
JOS 10:21 ಇಸ್ರಾಯೇಲರು ಮಕ್ಕೇದದಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಸುರಕ್ಷಿತವಾಗಿ ಹಿಂದಿರುಗಿ ಬಂದರು. ಇಸ್ರಾಯೇಲರಿಗೆ ವಿರೋಧವಾಗಿ ಒಬ್ಬನೂ ಮಾತಾಡಲಿಲ್ಲ.
JOS 10:22 ಆಗ ಯೆಹೋಶುವನು, “ನೀವು ಗವಿಯ ಬಾಯಿಯನ್ನು ತೆರೆದು ಆ ಐದು ಮಂದಿ ಅರಸರನ್ನು ಗವಿಯೊಳಗಿಂದ ನನ್ನ ಬಳಿಗೆ ತನ್ನಿರಿ,” ಎಂದನು.
JOS 10:23 ಅವರು ಹಾಗೆಯೇ ಮಾಡಿದರು. ಆ ಐದು ಮಂದಿ ಅರಸರನ್ನು ಅಂದರೆ ಯೆರೂಸಲೇಮಿನ ಅರಸನನ್ನೂ, ಹೆಬ್ರೋನಿನ ಅರಸನನ್ನೂ ಯರ್ಮೂತಿನ ಅರಸನನ್ನೂ ಲಾಕೀಷಿನ ಅರಸನನ್ನೂ ಎಗ್ಲೋನಿನ ಅರಸನನ್ನೂ ಆ ಗವಿಯೊಳಗಿಂದ ಅವನ ಬಳಿಗೆ ಹೊರಗೆ ತಂದರು.
JOS 10:24 ಅವರನ್ನು ಯೆಹೋಶುವನ ಬಳಿ ತೆಗೆದುಕೊಂಡು ಬಂದಾಗ, ಯೆಹೋಶುವನು ಇಸ್ರಾಯೇಲರೆಲ್ಲರನ್ನು ಕರೆಸಿ ತನ್ನ ಸಂಗಡ ಬಂದ ಯುದ್ಧಭಟರಾದ ಅಧಿಕಾರಿಗಳಿಗೆ, “ನೀವು ಸಮೀಪಕ್ಕೆ ಬಂದು ನಿಮ್ಮ ಪಾದಗಳನ್ನು ಈ ಅರಸರ ಕೊರಳಿನ ಮೇಲೆ ಇಡಿರಿ,” ಎಂದನು. ಆಗ ಅವರು ಸಮೀಪಕ್ಕೆ ಬಂದು ತಮ್ಮ ಪಾದಗಳನ್ನು ಅವರ ಕೊರಳಿನ ಮೇಲೆ ಇಟ್ಟರು.
JOS 10:25 ಆಗ ಯೆಹೋಶುವನು ಅವರಿಗೆ, “ಭಯಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರಿ. ಏಕೆಂದರೆ ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಯೆಹೋವ ದೇವರು ಹೀಗೆಯೇ ಮಾಡುವರು,” ಎಂದನು.
JOS 10:26 ಆ ತರುವಾಯ ಯೆಹೋಶುವನು ಅವರನ್ನು ದಂಡಿಸಿ, ಐದು ಮರಗಳಲ್ಲಿ ತೂಗುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಮರಗಳಲ್ಲಿ ತೂಗಾಡುತ್ತಿದ್ದವು.
JOS 10:27 ಆದರೆ ಸೂರ್ಯನು ಅಸ್ತಮಿಸುವಾಗ ಯೆಹೋಶುವನು ಆಜ್ಞಾಪಿಸಲು, ಶವವನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿಯಲ್ಲಿಯೇ ಅವರನ್ನು ಹಾಕಿ, ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.
JOS 10:28 ಆ ದಿನದಲ್ಲಿ ಯೆಹೋಶುವನು ಮಕ್ಕೇದ ಊರನ್ನು ಸ್ವಾಧೀನಪಡಿಸಿಕೊಂಡನು. ಅದರ ಅರಸನನ್ನೂ ಜನರನ್ನೂ ಖಡ್ಗಕ್ಕೆ ತುತ್ತಾಗುವಂತೆ ಮಾಡಿದನು. ಅದರಲ್ಲಿರುವ ಎಲ್ಲವನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಸಂಪೂರ್ಣ ನಾಶಮಾಡಿ, ತಾನು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆಯೇ ಮಕ್ಕೇದದ ಅರಸನಿಗೂ ಮಾಡಿದನು.
JOS 10:29 ಆಗ ಯೆಹೋಶುವನೂ ಅವನ ಸಂಗಡ ಇದ್ದ ಸಮಸ್ತ ಇಸ್ರಾಯೇಲರೆಲ್ಲರೂ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿದರು.
JOS 10:30 ಯೆಹೋವ ದೇವರು ಲಿಬ್ನವನ್ನೂ, ಅದರ ಅರಸನನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟರು. ಯೆಹೋಶುವನು ಅದನ್ನೂ, ಅದರಲ್ಲಿರುವ ಎಲ್ಲರನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಖಡ್ಗದಿಂದ ಹೊಡೆದು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆ ಅದರ ಅರಸನಿಗೂ ಮಾಡಿದನು.
JOS 10:31 ಅಲ್ಲಿಂದ ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಲಿಬ್ನದಿಂದ ಲಾಕೀಷಿಗೆ ಹೋಗಿ, ಅದರ ಎದುರಿಗೆ ಪಾಳೆಯ ಮಾಡಿಕೊಂಡು, ಅದರ ಮೇಲೆ ಯುದ್ಧಮಾಡಿದನು.
JOS 10:32 ಯೆಹೋವ ದೇವರು ಲಾಕೀಷನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಅವರು ಅದನ್ನು ಎರಡನೆಯ ದಿವಸದಲ್ಲಿ ಹಿಡಿದು ಲಿಬ್ನಕ್ಕೆ ಮಾಡಿದಂತೆ ಸರಿಯಾಗಿ ಅದನ್ನೂ ಅದರಲ್ಲಿರುವ ಎಲ್ಲರನ್ನು ಖಡ್ಗದಿಂದ ಹೊಡೆದರು.
JOS 10:33 ಆಗ ಗೆಜೆರಿನ ಅರಸನಾದ ಹೋರಾಮನು ಲಾಕೀಷಿಗೆ ಸಹಾಯಮಾಡಲು ಬಂದನು. ಆದರೆ ಯೆಹೋಶುವನು ಒಬ್ಬರೂ ಉಳಿಯದಂತೆ ಅವನನ್ನೂ, ಅವನ ಜನರನ್ನೂ ಸದೆಬಡಿದನು.
JOS 10:34 ಯೆಹೋಶುವನೂ, ಅವನ ಸಂಗಡ ಸಮಸ್ತ ಇಸ್ರಾಯೇಲರೂ ಲಾಕೀಷಿನಿಂದ ಎಗ್ಲೋನಿಗೆ ಹೋಗಿ, ಅದಕ್ಕೆದುರಾಗಿ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿದರು.
JOS 10:35 ಅದೇ ದಿನದಲ್ಲಿ ಎಗ್ಲೋನನ್ನು ಹಿಡಿದು, ಅದರ ಜನರನ್ನು ಖಡ್ಗದಿಂದ ಹೊಡೆದರು. ಅವರು ಲಾಕೀಷಿಗೆ ಮಾಡಿದ ಹಾಗೆ ಅದಕ್ಕೆ ಮಾಡಿ, ಅದೇ ದಿನದಲ್ಲಿ ಅದರಲ್ಲಿರುವ ಸಕಲ ಜನರನ್ನು ಸಂಪೂರ್ಣವಾಗಿ ನಾಶಮಾಡಿದರು.
JOS 10:36 ಅನಂತರ ಯೆಹೋಶುವನು ಸಮಸ್ತ ಇಸ್ರಾಯೇಲರ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟುಹೋಗಿ, ಅದರ ಮೇಲೆ ಯುದ್ಧಮಾಡಿದನು.
JOS 10:37 ಹೆಬ್ರೋನನ್ನು ಹಿಡಿದು ಅದನ್ನೂ, ಅದರ ಅರಸನನ್ನೂ ಅದರ ಸಮಸ್ತ ಊರುಗಳನ್ನೂ ಅವುಗಳಲ್ಲಿರುವ ಸಮಸ್ತ ಜನರನ್ನೂ ಖಡ್ಗದಿಂದ ಸದೆಬಡಿದು ಎಗ್ಲೋನಿಗೆ ಮಾಡಿದ ಹಾಗೆ ಒಬ್ಬರನ್ನೂ ಉಳಿಸದೆ, ಅದನ್ನೂ, ಅದರಲ್ಲಿರುವ ಎಲ್ಲರನ್ನೂ ಸಂಪೂರ್ಣ ನಾಶಮಾಡಿದನು.
JOS 10:38 ಯೆಹೋಶುವನು ಸಮಸ್ತ ಇಸ್ರಾಯೇಲರ ಕೂಡ ದೆಬೀರಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿದನು.
JOS 10:39 ದೆಬೀರನ್ನೂ ಅದರ ಅರಸನನ್ನೂ, ಅದರ ಸಮಸ್ತ ಊರುಗಳನ್ನೂ ಹಿಡಿದು ಅವುಗಳನ್ನು ಖಡ್ಗದಿಂದ ದಾಳಿಮಾಡಿ, ಒಬ್ಬರನ್ನೂ ಉಳಿಸದೆ ಅದರಲ್ಲಿದ್ದ ಎಲ್ಲರನ್ನೂ, ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.
JOS 10:40 ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ, ದಕ್ಷಿಣದ ಪ್ರದೇಶವನ್ನೂ, ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸರನ್ನೂ ಒಬ್ಬರನ್ನೂ ಉಳಿಸದೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದನು.
JOS 10:41 ಯೆಹೋಶುವನು ಕಾದೇಶ್ ಬರ್ನೇಯದಿಂದ ಗಾಜದವರೆಗೂ ಇರುವವರನ್ನೂ, ಗೋಷೆನಿನ ಸಮಸ್ತ ಪ್ರಾಂತವನ್ನೂ ಗಿಬ್ಯೋನಿನವರೆಗೆ ಸೋಲಿಸಿದನು.
JOS 10:42 ಯೆಹೋಶುವನು ಈ ಸಮಸ್ತ ಅರಸರನ್ನೂ, ಅವರ ರಾಜ್ಯವನ್ನೂ ಏಕಕಾಲದಲ್ಲಿ ವಶಪಡಿಸಿಕೊಂಡನು. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.
JOS 10:43 ಅನಂತರ ಯೆಹೋಶುವನು ಇಸ್ರಾಯೇಲರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂದಿರುಗಿ ಬಂದನು.
JOS 11:1 ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ
JOS 11:2 ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೆತಿಗೆ ದಕ್ಷಿಣಕ್ಕಿರುವ ಬಯಲಿನಲ್ಲಿಯೂ ಕಣಿವೆಗಳಲ್ಲಿ ಮತ್ತು ಪಶ್ಚಿಮದಲ್ಲಿ ದೋರಿನ ಪ್ರಾಂತಗಳಲ್ಲಿ ಇರುವ ಅರಸರಿಗೂ
JOS 11:3 ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ ಬಳಿಗೂ, ಮಿಚ್ಪಾ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿ ಕಳುಹಿಸಿದನು.
JOS 11:4 ಅವರೆಲ್ಲರು ಸಮುದ್ರ ದಡದ ಮರಳಿನ ಹಾಗೆ ಅಸಂಖ್ಯರಾಗಿದ್ದರು. ಅವರು ಬಹು ರಥಗಳೂ ಕುದುರೆಗಳೂ ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
JOS 11:5 ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.
JOS 11:6 ಆಗ ಯೆಹೋವ ದೇವರು ಯೆಹೋಶುವನಿಗೆ, “ಅವರಿಗೆ ಭಯಪಡಬೇಡ, ಏಕೆಂದರೆ ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರೂ ಸಂಹಾರವಾಗುವಂತೆ ಇಸ್ರಾಯೇಲರಿಗೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು,” ಎಂದರು.
JOS 11:7 ಆಗ ಯೆಹೋಶುವನೂ ಅವನ ಸಂಗಡ ಇದ್ದ ಸೈನಿಕರೆಲ್ಲರೂ ಬಂದು ಫಕ್ಕನೆ ಮೇರೋಮ ಜಲಾಶಯದ ಬಳಿಯಲ್ಲಿ ಅವರ ಮೇಲೆ ದಾಳಿಮಾಡಿದರು.
JOS 11:8 ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.
JOS 11:9 ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರವೇ ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದುಬಿಟ್ಟು, ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
JOS 11:10 ಆ ಕಾಲದಲ್ಲಿ ಯೆಹೋಶುವನು ಹಿಂದಿರುಗಿ ಹಾಚೋರನ್ನು ಹಿಡಿದು, ಅದರ ಅರಸನನ್ನು ಖಡ್ಗದಿಂದ ಸಂಹರಿಸಿದನು. ಏಕೆಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ಶಿರಸ್ಸಾಗಿತ್ತು.
JOS 11:11 ಅವರು ಒಬ್ಬರನ್ನಾದರೂ ಉಳಿಸದೆ, ಅದರಲ್ಲಿದ್ದ ಪ್ರತಿಯೊಬ್ಬರನ್ನೂ ಖಡ್ಗದಿಂದ ಸಂಹರಿಸಿದನು. ಹಾಚೋರನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
JOS 11:12 ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ, ಅವುಗಳ ಸಮಸ್ತ ಅರಸರನ್ನೂ ಹಿಡಿದು ಖಡ್ಗದಿಂದ ದಾಳಿಮಾಡಿ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು.
JOS 11:13 ಆದರೆ ದಿನ್ನೆಯ ಮೇಲೆ ನಿಂತಿರುವ ಪಟ್ಟಣಗಳನ್ನೆಲ್ಲಾ ಇಸ್ರಾಯೇಲರು ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟುಬಿಟ್ಟನು.
JOS 11:14 ಆ ಪಟ್ಟಣಗಳ ಎಲ್ಲಾ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನೆಲ್ಲಾ ಇಸ್ರಾಯೇಲರು ತಮಗೋಸ್ಕರ ಸುಲಿಗೆ ಮಾಡಿಕೊಂಡರು. ಖಡ್ಗದಿಂದ ಜನರನ್ನು ನಾಶಮಾಡಿದರು. ಒಬ್ಬರನ್ನೂ ಅವರು ಉಳಿಸಲಿಲ್ಲ.
JOS 11:15 ಯೆಹೋವ ದೇವರು ತಮ್ಮ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದನು. ಯೆಹೋಶುವನೂ ಹಾಗೆಯೇ ಮಾಡಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಯೆಹೋಶುವನು ಒಂದನ್ನೂ ಮೀರದೆ ಎಲ್ಲವನ್ನೂ ಮಾಡಿದನು.
JOS 11:16 ಈ ಪ್ರಕಾರ ಗೋಷೆನ್ ಸೀಮೆ, ಅದರ ಕಣಿವೆ, ಬಯಲು ಪ್ರದೇಶ, ದಕ್ಷಿಣದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲಾ ಯೆಹೋಶುವನಿಗೆ ಸ್ವಾಧೀನವಾದವು.
JOS 11:17 ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು.
JOS 11:18 ಯೆಹೋಶುವನು ಬಹಳ ಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧ ಮಾಡುತ್ತಿದ್ದನು.
JOS 11:19 ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ. ಅವರು ಬೇರೆ ಎಲ್ಲವುಗಳನ್ನು ಯುದ್ಧಮಾಡಿ ತೆಗೆದುಕೊಂಡರು.
JOS 11:20 ಏಕೆಂದರೆ ಅವರು ಇಸ್ರಾಯೇಲರಿಗೆ ಎದುರಾಗಿ ಯುದ್ಧಮಾಡಲು ಬರುವ ಹಾಗೆ ಅವರ ಹೃದಯವನ್ನು ಯೆಹೋವ ದೇವರು ಕಠಿಣಮಾಡಿದ್ದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರಿಗೆ ದಯೆ ತೋರಿಸದೆ, ಅವರನ್ನು ಸಂಹರಿಸಿದರು.
JOS 11:21 ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ, ದೆಬೀರಿನಲ್ಲಿಯೂ, ಅನಾಬಿನಲ್ಲಿಯೂ, ಯೆಹೂದದ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲ್ ಪ್ರಾಂತದ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯರನ್ನು ಕಡಿದುಬಿಟ್ಟು, ಅವರನ್ನೂ, ಅವರ ಪಟ್ಟಣಗಳನ್ನೂ ಪೂರ್ಣವಾಗಿ ನಾಶಮಾಡಿದನು.
JOS 11:22 ಅನಾಕ್ಯರು ಇಸ್ರಾಯೇಲರ ದೇಶದಲ್ಲಿ ಒಬ್ಬರೂ ಉಳಿಯಲಿಲ್ಲ. ಗಾಜದಲ್ಲಿಯೂ, ಗತ್‌ನಲ್ಲಿಯೂ, ಅಷ್ಡೋದಿನಲ್ಲಿಯೂ ಮಾತ್ರ ಕೆಲವರು ಉಳಿದರು.
JOS 11:23 ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.
JOS 12:1 ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:
JOS 12:2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು.
JOS 12:3 ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು.
JOS 12:4 ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು.
JOS 12:5 ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.
JOS 12:6 ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.
JOS 12:7 ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ,
JOS 12:8 ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
JOS 12:9 ಯೆರಿಕೋವಿನ ಅರಸನು ಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು.
JOS 12:10 ಯೆರೂಸಲೇಮಿನ ಅರಸನು. ಹೆಬ್ರೋನಿನ ಅರಸನು.
JOS 12:11 ಯರ್ಮೂತಿನ ಅರಸನು. ಲಾಕೀಷಿನ ಅರಸನು.
JOS 12:12 ಎಗ್ಲೋನಿನ ಅರಸನು. ಗೆಜೆರಿನ ಅರಸನು.
JOS 12:13 ದೆಬೀರಿನ ಅರಸನು. ಗೆದೆರಿನ ಅರಸನು.
JOS 12:14 ಹೊರ್ಮಾದ ಅರಸನು. ಅರಾದಿನ ಅರಸನು.
JOS 12:15 ಲಿಬ್ನದ ಅರಸನು. ಅದುಲ್ಲಾಮಿನ ಅರಸನು.
JOS 12:16 ಮಕ್ಕೇದದ ಅರಸನು. ಬೇತೇಲಿನ ಅರಸನು.
JOS 12:17 ತಪ್ಪೂಹದ ಅರಸನು. ಹೇಫೆರಿನ ಅರಸನು.
JOS 12:18 ಅಫೇಕದ ಅರಸನು. ಲಷ್ಷಾರೋನಿನ ಅರಸನು.
JOS 12:19 ಮಾದೋನಿನ ಅರಸನು. ಹಾಚೋರಿನ ಅರಸನು.
JOS 12:20 ಶಿಮ್ರೋನ್ ಮೆರೋನಿನ ಅರಸನು. ಅಕ್ಷಾಫಿನ ಅರಸನು.
JOS 12:21 ತಾನಕದ ಅರಸನು. ಮೆಗಿದ್ದೋವಿನ ಅರಸನು.
JOS 12:22 ಕೆದೆಷಿನ ಅರಸನು. ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು.
JOS 12:23 ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.
JOS 12:24 ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.
JOS 13:1 ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವ ದೇವರು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನ ಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.
JOS 13:2 “ಅವು ಯಾವುವೆಂದರೆ: “ಫಿಲಿಷ್ಟಿಯರ ಮತ್ತು ಗೆಷೂರ್ಯರ ದೇಶವೆಲ್ಲಾ ಅಂದರೆ,
JOS 13:3 ಈಜಿಪ್ಟಿಗೆ ಎದುರಾದ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗೂ ಅಂದರೆ, ಗಾಜಾ, ಅಷ್ಡೋದ್, ಅಷ್ಕೆಲೋನ್, ಗಾತ್, ಎಕ್ರೋನ್ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ದಕ್ಷಿಣ ಪ್ರಾಂತ್ಯದಲ್ಲಿದ್ದ ಅವ್ವೀಯರ ಸೀಮೆ;
JOS 13:4 ಸೀದೋನ್ಯರ ಆರಾ ಪ್ರದೇಶದಿಂದ ಅಫೇಕ್ ಮತ್ತು ಅಮೋರಿಯರ ಮೇರೆಯವರೆಗೆ ಕಾನಾನ್ಯರ ಎಲ್ಲಾ ದೇಶವು,
JOS 13:5 ಅದರೊಂದಿಗೆ ಗೆಬಾಲ್ಯರ ಪ್ರಾಂತ್ಯ, ಹೆರ್ಮೋನ್ ಬೆಟ್ಟದ ಕೆಳಗೆ ಇರುವ ಬಾಲ್ಗಾದಿನಿಂದ ಹಮಾತಿನ ದಾರಿಯವರೆಗೂ ಇರುವ ಲೆಬನೋನಿನ ಪೂರ್ವ ಪ್ರದೇಶ.
JOS 13:6 “ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಸೀದೋನ್ಯರನ್ನೂ ನಾನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ, ಇಸ್ರಾಯೇಲರಿಗೆ ಸೊತ್ತಾಗಿ ಪಾಲು ಕೊಡಬೇಕು.
JOS 13:7 ಈಗ ಈ ದೇಶವನ್ನು ಒಂಬತ್ತು ಗೋತ್ರಗಳಿಗೂ ಮನಸ್ಸೆ ಕುಲದ ಅರ್ಧ ಗೋತ್ರಕ್ಕೆ ಸೊತ್ತಾಗಿ ಪಾಲು ಮಾಡಿಕೊಡು,” ಎಂದು ಹೇಳಿದರು.
JOS 13:8 ಮನಸ್ಸೆ ಕುಲದ ಉಳಿದ ಅರ್ಧ ಗೋತ್ರದವರೂ ರೂಬೇನ್ಯರೂ ಗಾದ್ಯರೂ ತಮ್ಮ ಸೊತ್ತನ್ನು ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಬೇಕೆಂದು ನಿರ್ಣಯಿಸಿದ ಸ್ಥಳಗಳು ಅವರಿಗೆ ಕೊಡಲಾದವು. ಅವುಗಳು ಯಾವುವೆಂದರೆ:
JOS 13:9 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬಾದ ಸಮನಾದ ಭೂಮಿಯೂ
JOS 13:10 ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಮೇರೆಯವರೆಗೂ ಇದ್ದ ಸಕಲ ಪಟ್ಟಣಗಳು.
JOS 13:11 ಅದರೊಂದಿಗೆ ಗಿಲ್ಯಾದ್, ಗೆಷೂರ್ಯರ, ಮಾಕಾತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಸಲೆಕಾವರೆಗೆ ಇರುವ ಇಡೀ ಬಾಷಾನ್ ಪೂರ್ತಿಯಾಗಿ.
JOS 13:12 ಅಂದರೆ, ಬಾಷಾನಿನಲ್ಲಿ ಅಷ್ಟಾರೋತ್, ಎದ್ರೈ ಎಂಬ ಊರುಗಳಲ್ಲಿ ಆಳಿದ ರೆಫಾಯರ ವಂಶಸ್ಥನಾದ ಓಗನ ಸಮಸ್ತ ರಾಜ್ಯವೆಲ್ಲಾ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ, ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.
JOS 13:13 ಆದಾಗ್ಯೂ ಇಸ್ರಾಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿಬಿಡಲಿಲ್ಲ. ಏಕೆಂದರೆ ಗೆಷೂರ್ಯರೂ ಮಾಕಾತೀಯರೂ ಈ ದಿನದವರೆಗೆ ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದಾರೆ.
JOS 13:14 ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಅವನು ಅವರಿಗೆ ಹೇಳಿದ ಪ್ರಕಾರ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದ್ದರಿಂದ, ಇಸ್ರಾಯೇಲಿನ ದೇವರೇ ಅವರ ಸೊತ್ತು.
JOS 13:15 ಮೋಶೆಯು ರೂಬೇನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:
JOS 13:16 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ,
JOS 13:17 ಸಮನಾದ ಭೂಮಿಯಲ್ಲಿರುವ ಹೆಷ್ಬೋನ್ ಪಟ್ಟಣವೂ ಅದರ ಎಲ್ಲಾ ಪಟ್ಟಣಗಳಾದ ದೀಬೋನ್, ಬಾಮೋತ್ ಬಾಳ್, ಬೇತ್ ಬಾಳ್ ಮೆಯೋನ್,
JOS 13:18 ಯಹಚ, ಕೆದೇಮೋತ್, ಮೇಫಾತ್,
JOS 13:19 ಕಿರ್ಯಾತಯಿಮ್, ಸಿಬ್ಮಾ, ತಗ್ಗಿನ ಬೆಟ್ಟದಲ್ಲಿರುವ ಚೆರೆತ್ ಶಹರ್,
JOS 13:20 ಬೇತ್ ಪೆಗೋರ್ ಎಂಬ ಪಟ್ಟಣಗಳೂ ಪಿಸ್ಗಾದ ಕೆಳಗಡೆ ಇರುವ ಸೀಮೆ, ಬೇತ್ ಯೆಷೀಮೋತ್,
JOS 13:21 ಸಮನಾದ ಭೂಮಿಯ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳಿದ ಸೀಹೋನೆಂಬ ಅಮೋರಿಯರ ಅರಸನ ರಾಜ್ಯವೆಲ್ಲವೂ ಅವರ ಮೇರೆಗೊಳಗಾದವು. ಮೋಶೆಯು ಅವನನ್ನೂ ದೇಶದಲ್ಲಿ ಅವನ ಅಧಿಪತಿಗಳಾದಂಥ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬವರನ್ನೂ ಸೆದೆಬಡಿದನು.
JOS 13:22 ಇದಲ್ಲದೆ ಇಸ್ರಾಯೇಲರು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮನೆಂಬ ಕಣಿ ಹೇಳುವವನನ್ನು ಖಡ್ಗದಿಂದ ಕೊಂದುಹಾಕಿದರು.
JOS 13:23 ಯೊರ್ದನ್ ನದಿಯು ರೂಬೇನ್ ಗೋತ್ರಗಳ ಮೇರೆಯಾಗಿತ್ತು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ರೂಬೇನನ ಮಕ್ಕಳಿಗೆ ಅವರ ಗೋತ್ರಗಳ ಪ್ರಕಾರ ದೊರಕಿದ ಸೊತ್ತು.
JOS 13:24 ಮೋಶೆಯು ಗಾದನ ಗೋತ್ರಗಳಿಗೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:
JOS 13:25 ಯಜ್ಜೇರ್ ಪ್ರದೇಶ, ಗಿಲ್ಯಾದಿನ ಸಮಸ್ತ ಪಟ್ಟಣಗಳೂ ರಬ್ಬಾ ಊರಿನ ಎದುರಾಗಿರುವ ಅರೋಯೇರ್ ಪಟ್ಟಣವರೆಗೂ ಇರುವ ಅಮ್ಮೋನಿಯರ ಅರ್ಧ ದೇಶವು.
JOS 13:26 ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೊನೀಮ್ ಎಂಬ ಊರುಗಳವರೆಗೂ ಮಹನಯಿಮಿನಿಂದ ದೆಬೀರ್ ಮೇರೆಯವರೆಗೂ ಇರುವ ದೇಶವು.
JOS 13:27 ತಗ್ಗಿನಲ್ಲಿರುವ ಬೇತ್‌ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಪೋನ್ ಎಂಬ ಪಟ್ಟಣಗಳು ಹೆಷ್ಬೋನಿನ ಅರಸನಾದ ಸೀಹೋನನ ಉಳಿದ ರಾಜ್ಯವೂ ಯೊರ್ದನ್ ನದಿ ತೀರವಾಗಿ ಕಿನ್ನೆರೆತ್ ಸಮುದ್ರದ ಪರ್ಯಂತರಕ್ಕೂ ಇರುವ ದೇಶವು ಅವರ ಮೇರೆಗೆ ಒಳಗಾದವು.
JOS 13:28 ಈ ಪಟ್ಟಣಗಳೂ, ಇವುಗಳ ಗ್ರಾಮಗಳೂ ಗಾದ್ಯರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿವೆ.
JOS 13:29 ಇದಲ್ಲದೆ ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಅವರ ಕುಟುಂಬದ ಪ್ರಕಾರ ಕೊಟ್ಟ ಸೊತ್ತು ಇವು:
JOS 13:30 ಮಹನಯಿಮಿನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ, ಬಾಷಾನಿನಲ್ಲಿರುವ ಯಾಯೀರನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು.
JOS 13:31 ಗಿಲ್ಯಾದಿನ ಅರ್ಧ ಭಾಗ, ಬಾಷಾನಿನಲ್ಲಿರುವ ಓಗ್ ರಾಜನ ಪಟ್ಟಣಗಳಾದ ಅಷ್ಟಾರೋತ್, ಎದ್ರೈ, ಇವೆಲ್ಲವೂ ಮನಸ್ಸೆಯ ಮಗ ಮಾಕೀರನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನರಿಗೆ ಕೊಟ್ಟನು.
JOS 13:32 ಹೀಗೆಯೇ ಮೋಶೆಯು ಯೊರ್ದನ್ ನದಿಗೆ ಆಚೆ ಯೆರಿಕೋವಿನ ಪೂರ್ವದಿಕ್ಕಿನಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಬಾಧ್ಯತೆಯಾಗಿ ಹಂಚಿದ ದೇಶಗಳು ಇವೆ.
JOS 13:33 ಆದರೆ ಲೇವಿಯರ ಗೋತ್ರಕ್ಕೆ ಮೋಶೆಯು ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ದೇವರು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲರ ದೇವರಾದ ಯೆಹೋವ ದೇವರೇ ಅವರ ಸೊತ್ತು.
JOS 14:1 ಯಾಜಕನಾದ ಎಲಿಯಾಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಮುಖ್ಯಸ್ಥರೂ ಜನರಿಗೆ ಸೊತ್ತಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲರು ಬಾಧ್ಯವಾಗಿ ಪ್ರದೇಶಗಳನ್ನು ಹೊಂದಿದರು.
JOS 14:2 ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಹಾಗೆಯೇ ಒಂಬತ್ತುವರೆ ಗೋತ್ರಗಳಿಗೆ ಚೀಟುಗಳನ್ನು ಹಾಕಿ ಸೊತ್ತಾಗಿ ಪಾಲು ಹಂಚಿದರು.
JOS 14:3 ಏಕೆಂದರೆ ಮೋಶೆಯು ಯೊರ್ದನ್ ನದಿ ಆಚೆ ಎರಡೂವರೆ ಗೋತ್ರಗಳಿಗೆ ಸೊತ್ತನ್ನು ಕೊಟ್ಟಿದ್ದನು. ಆದರೆ ಲೇವಿಯರಿಗೆ ಯಾವ ಸೊತ್ತನ್ನೂ ಕೊಡಲಿಲ್ಲ,
JOS 14:4 ಯೋಸೇಫನ ಮಕ್ಕಳಾದ ಮನಸ್ಸೆಯೂ, ಎಫ್ರಾಯೀಮನೂ ಎರಡು ಗೋತ್ರಗಳಾಗಿದ್ದರು. ಲೇವಿಯರಿಗೆ ದೇಶದಲ್ಲಿ ಪಾಲುಕೊಡಲಿಲ್ಲ. ಆದರೆ ವಾಸಮಾಡುವ ಪಟ್ಟಣಗಳನ್ನೂ, ದನಕುರಿಗಳಿಗೋಸ್ಕರವಾಗಿ ಹುಲ್ಲುಗಾವಲುಗಳನ್ನೂ, ಪ್ರಾಂತಗಳನ್ನೂ ಮಾಡಿಕೊಟ್ಟರು.
JOS 14:5 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರಮಾಡಿ, ದೇಶವನ್ನು ಹಂಚಿಕೊಡಲಾಯಿತು.
JOS 14:6 ಯೆಹೂದದ ಗೋತ್ರದವರು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಬಂದರು. ಆಗ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಅವನಿಗೆ, “ಕಾದೇಶ್ ಬರ್ನೇಯದಲ್ಲಿ ಯೆಹೋವ ದೇವರು ನನ್ನನ್ನೂ, ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ.
JOS 14:7 ದೇಶವನ್ನು ಸಂಚರಿಸಿ ನೋಡಲು ಯೆಹೋವ ದೇವರ ಸೇವಕನಾದ ಮೋಶೆಯು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ ನಾನು ನಾಲ್ವತ್ತು ವರ್ಷ ಪ್ರಾಯದವನಾಗಿದ್ದೆನು. ನನ್ನ ಮನಸ್ಸಿಗೆ ಬಂದಿದ್ದ ವರದಿಯನ್ನು ತಂದು ತಿಳಿಸಿದೆನು.
JOS 14:8 ಆದರೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದೆನು.
JOS 14:9 ಆ ದಿವಸದಲ್ಲಿ ಮೋಶೆಯು ನನಗೆ, ‘ನೀನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ನಿನ್ನ ಪಾದ ಮೆಟ್ಟಿದ ದೇಶವು ನಿನಗೂ, ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವುದು,’ ಎಂದು ಆಣೆ ಇಟ್ಟು ಹೇಳಿದನು.
JOS 14:10 “ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ.
JOS 14:11 ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ.
JOS 14:12 ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.
JOS 14:13 ಆಗ ಯೆಹೋಶುವನು ಯೆಫುನ್ನೆಯ ಮಗ ಕಾಲೇಬನನ್ನು ಆಶೀರ್ವದಿಸಿ, ಅವನಿಗೆ ಹೆಬ್ರೋನನ್ನು ಸೊತ್ತಾಗಿ ಕೊಟ್ಟನು.
JOS 14:14 ಹೀಗೆಯೇ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ಹೆಬ್ರೋನು ಇಂದಿನವರೆಗೂ ಅವನ ಸೊತ್ತಾಗಿದೆ.
JOS 14:15 ಹೆಬ್ರೋನಿನ ಮೊದಲಿನ ಹೆಸರು ಕಿರ್ಯತ್ ಅರ್ಬ. “ಅರ್ಬ” ಎಂಬುವವನು ಅನಾಕ್ಯರಲ್ಲಿ ಪ್ರಮುಖನಾಗಿದ್ದನು. ದೇಶವು ಯುದ್ಧವಿಲ್ಲದೆ ಶಾಂತವಾಗಿತ್ತು.
JOS 15:1 ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವುದೆಂದರೆ: ಕಟ್ಟಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಚಿನ್ ಮರುಭೂಮಿಯ ದಕ್ಷಿಣ ಭಾಗ.
JOS 15:2 ಲವಣ ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ,
JOS 15:3 ಅಕ್ರಬ್ಬೀಮ್ ಎಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಚ್ರೋನನಿಂದ ಅದ್ದಾರವರೆಗೂ ಮುಂದುವರೆದು ಅಲ್ಲಿ ತಿರಿಗಿಕೊಂಡು ಕರ್ಕದವರೆಗೂ ವಿಸ್ತರಿಸಿಕೊಂಡಿತ್ತು,
JOS 15:4 ಅಲ್ಲಿಂದ ಈಜಿಪ್ಟನ ಅಚ್ಮೋನ ನದಿಗೆ ಬಂದು ಮೆಡಿಟೆರಿಯನ್ ಸಮುದ್ರದವರೆಗೆ ಹೋಗಿ ಸೇರುವುದು. ಇದೇ ಯೆಹೂದದ ದಕ್ಷಿಣ ಮೇರೆ.
JOS 15:5 ಅದರ ಪೂರ್ವದ ಮೇರೆ, ಯೊರ್ದನ್ ನದಿ ಕೊನೆಯ ಮಟ್ಟಿಗಿರುವ ಲವಣ ಸಮುದ್ರವು. ಉತ್ತರ ಕಡೆಗೆ ಯೊರ್ದನ್ ನದಿ ಮೇರೆ ಕೊನೆ ಹತ್ತಿರ ಸಮುದ್ರದ ಮುಖದ್ವಾರದಿಂದ ಇತ್ತು;
JOS 15:6 ಅಲ್ಲಿಂದ ಬೇತ್ ಹೊಗ್ಲಾಕ್ಕೂ, ಅಲ್ಲಿಂದ ಉತ್ತರಕ್ಕಿರುವ ಬೇತ್ ಅರಾಬನ್ನು ದಾಟಿ, ರೂಬೇನನ ಮಗ ಬೋಹನನ ಬಂಡೆಯ ವರೆಗೆ ಇತ್ತು.
JOS 15:7 ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಗೆ ತಿರುಗಿಕೊಂಡು ದಕ್ಷಿಣದಲ್ಲಿರುವ ಅದುಮೀಮಿನ ದಿಬ್ಬೆಗೆ ಎದುರಾಗಿರುವ ಗಿಲ್ಗಾಲಿಗೂ, ಅಲ್ಲಿಂದ ಏನ್ ಷೆಮೆಷ್ ಎಂಬ ಬುಗ್ಗೆಗೂ, ಅಲ್ಲಿಂದ ಏನ್ ರೋಗೆಲ್‌ವರೆಗೂ ಇತ್ತು.
JOS 15:8 ಅಲ್ಲಿಂದ ಯೆಬೂಸಿಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗನ್ನು ದಾಟಿ, ಉತ್ತರಕ್ಕಿರುವ ರೆಫಾಯಿಮ್ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕೆ ಬೆನ್ ಹಿನ್ನೋಮನ ತಗ್ಗಿನ ಮುಂದಿರುವ ಬೆಟ್ಟದ ಶಿಖರದವರೆಗೂ ಹೋಗುತ್ತದೆ.
JOS 15:9 ಆ ಬೆಟ್ಟದ ಶಿಖರದಿಂದ ನೆಫ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣಗಳಿಗೂ ಅಲ್ಲಿಂದ ಕಿರ್ಯತ್ ಯಾರೀಮ್ ಆದ ಬಾಲಾ ಎಂಬ ಊರಿನವರೆಗೆ ಹೋಗುತ್ತದೆ.
JOS 15:10 ಬಾಲಾದಿಂದ ಪಶ್ಚಿಮಕ್ಕಿರುವ ಸೇಯೀರ್ ಬೆಟ್ಟವನ್ನು ಸುತ್ತಿ, ಅಲ್ಲಿಂದ ಕೆಸಾಲೋನಿನ ಯಾರೀಮ್ ಬೆಟ್ಟದ ಉತ್ತರಕ್ಕೂ ಅಲ್ಲಿಂದ ಬೇತ್ ಷೆಮೆಷ್ ಕಡೆಗೆ ಇಳಿದು ತಿಮ್ನಾಗೆ ಹೋಯಿತು.
JOS 15:11 ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೂ, ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯಬ್ನೆಯೇಲಿಗೆ ಹೊರಟು ಸಮುದ್ರ ತೀರದಲ್ಲಿ ಮುಗಿಯುತ್ತದೆ.
JOS 15:12 ಅದು ಪಶ್ಚಿಮದ ಮೇರೆಯ ಮೆಡಿಟರೇನಿಯನ್ ಮಹಾಸಾಗರವಾಗಿದೆ. ಇದೇ ಯೆಹೂದ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
JOS 15:13 ಇದಲ್ಲದೆ ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರ ಯೆಫುನ್ನೆಯ ಮಗ ಕಾಲೇಬನಿಗೆ ಅನಾಕನ ತಂದೆಯ ಕಿರ್ಯತ್ ಅರ್ಬ ಎಂಬ ಹೆಬ್ರೋನನ್ನು ಯೆಹೂದನ ಮಕ್ಕಳ ನಡುವೆ ಸೊತ್ತಾಗಿ ಕೊಟ್ಟನು.
JOS 15:14 ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ, ಅಹೀಮನ್, ತಲ್ಮೈರನ್ನು ಹೊರಡಿಸಿಬಿಟ್ಟನು.
JOS 15:15 ಕಾಲೇಬನು ಅಲ್ಲಿಂದ ಹೊರಟು, ಕಿರ್ಯತ್ ಸೇಫೆರ್ ಎಂದು ಅನ್ನಿಸಿಕೊಳ್ಳುತ್ತಿದ್ದ ದೆಬೀರಿನ ವಾಸಿಗಳ ವಿರೋಧವಾಗಿ ಹೋದನು.
JOS 15:16 ಅಲ್ಲಿ ಕಾಲೇಬನು, “ಕಿರ್ಯತ್ ಸೇಫೆರನ್ನು ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು.
JOS 15:17 ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
JOS 15:18 ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.
JOS 15:19 ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನೀನು ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.
JOS 15:20 ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸೊತ್ತಿನ ವಿವರ:
JOS 15:21 ದಕ್ಷಿಣದ ಕಟ್ಟಕಡೆಗಿರುವ ಎದೋಮಿನ ಮೇರೆಗೆ ಸರಿಯಾಗಿ ಯೆಹೂದ ಗೋತ್ರಕ್ಕೆ ಇರುವ ಪಟ್ಟಣಗಳು. ಅವು: ಕಬ್ಜಯೇಲ್, ಏದೆರ್, ಯಾಗೂರ್,
JOS 15:22 ಕೀನಾ, ದೀಮೋನಾ, ಅದಾದಾ,
JOS 15:23 ಕೆದೆಷ್, ಹಾಚೋರ್, ಇತ್ನಾನ್,
JOS 15:24 ಜೀಫ್, ಟೆಲೆಮ್, ಬೆಯಾಲೋತ್,
JOS 15:25 ಹಾಚೋರ್ ಹದತ್ತಾ, ಕಿರ್ಯೋತ್ ಹೆಚ್ರೋನ್, ಎಂಬುವ ಹಾಚೋರ್,
JOS 15:26 ಅಮಾಮ್, ಶೆಮ, ಮೋಲಾದ,
JOS 15:27 ಹಜರ್ ಗದ್ದಾ, ಹೆಷ್ಮೋನ್, ಬೇತ್ ಪೆಲೆಟ್,
JOS 15:28 ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,
JOS 15:29 ಬಾಲಾ, ಇಯೀಮ್, ಎಚೆಮ್,
JOS 15:30 ಎಲ್ತೋಲದ್, ಕೆಸೀಲ್, ಹೊರ್ಮಾ,
JOS 15:31 ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,
JOS 15:32 ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬವುಗಳೇ ಪಟ್ಟಣಗಳೆಲ್ಲಾ ಇಪ್ಪತ್ತೊಂಬತ್ತು ಮತ್ತು ಅವುಗಳ ಗ್ರಾಮಗಳು.
JOS 15:33 ಪಶ್ಚಿಮದ ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ಣಾ,
JOS 15:34 ಜಾನೋಹ, ಏಂಗನ್ನೀಮ್, ತಪ್ಪೂಹ, ಏನಾಮ್,
JOS 15:35 ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ,
JOS 15:36 ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
JOS 15:37 ಚೆನಾನ್, ಹದಾಷಾ, ಮಿಗ್ದಲ್ಗಾದ್,
JOS 15:38 ದಿಲಾನ್, ಮಿಚ್ಪೆ, ಯೊಕ್ತೇಲ್,
JOS 15:39 ಲಾಕೀಷ್, ಬೊಚ್ಕತ್, ಎಗ್ಲೋನ್,
JOS 15:40 ಕಬ್ಬೋನ್, ಲಹ್ಮಾಸ್, ಕಿತ್ಲೀಷ್,
JOS 15:41 ಗೆದೇರೋತ್, ಬೇತ್‌ದಾಗೋನ್, ನಾಮಾ, ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು.
JOS 15:42 ಇದಲ್ಲದೆ ಲಿಬ್ನಾ, ಎತೆರ್, ಆಷಾನ್,
JOS 15:43 ಇಪ್ತಾಹ, ಅಶ್ಣಾ, ನೆಜೀಬ್,
JOS 15:44 ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳು.
JOS 15:45 ಎಕ್ರೋನ್ ಅದರ ಪಟ್ಟಣಗಳು ಗ್ರಾಮಗಳು ಸಹ.
JOS 15:46 ಎಕ್ರೋನಿನ ಪಶ್ಚಿಮ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು.
JOS 15:47 ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು.
JOS 15:48 ಬೆಟ್ಟಗಳಲ್ಲಿರುವ ಪ್ರದೇಶಗಳು: ಶಾಮೀರ್, ಯತ್ತೀರ್, ಸೋಕೋ,
JOS 15:49 ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ,
JOS 15:50 ಅನಾಬ್, ಎಷ್ಟೆಮೋ, ಅನೀಮ್,
JOS 15:51 ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಪಟ್ಟಣಗಳು ಅವುಗಳ ಗ್ರಾಮಗಳು.
JOS 15:52 ಅರಬ್, ರೂಮಾ, ಎಷಾನ್,
JOS 15:53 ಯಾನೂಮ್, ಬೇತ್ ತಪ್ಪೂಹ, ಅಫೇಕಾ,
JOS 15:54 ಹುಮ್ಟಾ, ಹೆಬ್ರೋನೆಂಬ ಕಿರ್ಯತ್ ಅರ್ಬ, ಚೀಯೋರ್ ಎಂಬ ಒಂಬತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.
JOS 15:55 ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,
JOS 15:56 ಇಜ್ರೆಯೇಲ್, ಯೊಗ್ದೆಯಾಮ್, ಜಾನೋಹ,
JOS 15:57 ಕಯಿನ್, ಗಿಬೆಯ, ತಿಮ್ನಾ ಎಂಬ ಹತ್ತು ಪಟ್ಟಣಗಳು, ಅವುಗಳ ಗ್ರಾಮಗಳು.
JOS 15:58 ಹಲ್ಹೂಲ್, ಬೇತ್ ಚೂರ್, ಗೆದೋರ್,
JOS 15:59 ಮಾರಾತ್, ಬೇತ್ ಅನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.
JOS 15:60 ಕಿರ್ಯತ್ ಯಾರೀಮ್ ಎಂಬ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
JOS 15:61 ಮರುಭೂಮಿಯಲ್ಲಿರುವ ಬೇತ್ ಅರಾಬಾ, ಮಿದ್ದೀನ್, ಸೆಕಾಕಾ,
JOS 15:62 ನಿಬ್ಷಾನ್, ಉಪ್ಪಿನ ಪಟ್ಟಣವು ಮತ್ತು ಏನ್ಗೆದಿ ಎಂಬ ಪಟ್ಟಣಗಳನ್ನು ಒಳಗೊಂಡ ಆರು ಪಟ್ಟಣಗಳು ಅವುಗಳ ಗ್ರಾಮಗಳು.
JOS 15:63 ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೆಹೂದ ಗೋತ್ರದವರಿಂದ ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ದಿವಸದವರೆಗೂ ಯೆಬೂಸಿಯರು ಯೆಹೂದ ಗೋತ್ರದವರ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.
JOS 16:1 ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಉಂಟಾದ ಸೊತ್ತಿನ ವಿವರ: ಯೆರಿಕೋವಿನ ಬಳಿಯಲ್ಲಿರುವ ಯೊರ್ದನ್ ನದಿಯಿಂದ ಪೂರ್ವದಲ್ಲಿರುವ ಯೆರಿಕೋವಿನ ಜಲದವರೆಗೂ ಮತ್ತು ಬೇತೇಲಿನ ಬೆಟ್ಟಗಳವರೆಗೂ ಇರುವ ಮರುಭೂಮಿಯ ಮಾರ್ಗವಾಗಿ ಹೋಗಿತ್ತು.
JOS 16:2 ಬೇತೇಲಿನಿಂದ ಅಂದರೆ ಲೂಜ್ ಅಲ್ಲಿಂದ ಅರ್ಕಿಯ ಮೇರೆಗಳಾದ ಅಟಾರೋತನ್ನು ದಾಟಿ,
JOS 16:3 ಪಶ್ಚಿಮಕ್ಕೆ ಯಫ್ಲೇಟ್ಯರ ಮೇರೆಗೂ ಕೆಳಗಡೆಯಾದ ಬೇತ್ ಹೋರೋನ್ ಮೇರೆಯವರೆಗೂ ಅಲ್ಲಿಂದ ಗೆಜೆರಿನವರೆಗೂ ಹೋಗಿ ಮೆಡಿಟೆರಿಯನ್ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
JOS 16:4 ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯೀಮರು ತಮಗೆ ಸೊತ್ತಾಗಿ ತೆಗೆದುಕೊಂಡರು.
JOS 16:5 ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.
JOS 16:6 ಅಲ್ಲಿಂದ ಮೆಡಿಟೆರಿಯನ್ ಸಮುದ್ರದ ಪಶ್ಚಿಮ ಮೇರೆಗೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಪೂರ್ವಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಪೂರ್ವದ ಕಡೆಗೆ ಹಾದು ಹೋಗಿತ್ತು.
JOS 16:7 ಯಾನೋಹದಿಂದ ಅಟಾರೋತ್‌ಗೂ ನಾರಾ ಎಂಬ ಊರುಗಳ ಮೇಲೆ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನ್ ನದಿಗೆ ಮುಗಿಯುವುದು.
JOS 16:8 ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಮೆಡಿಟೆರೆನಿಯನ್ ಸಮುದ್ರದವರೆಗೆ ಮುಗಿಯುವುದು. ಇದು ಎಫ್ರಾಯೀಮನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರವೇ ದೊರೆತ ಸೊತ್ತು.
JOS 16:9 ಇದಲ್ಲದೆ ಎಫ್ರಾಯೀಮ್ ಹಾಗೂ ಮನಸ್ಸೆ ಗೋತ್ರದವರ ಮಧ್ಯೆ ಕೊಡಲಾದ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಪ್ರತ್ಯೇಕವಾಗಿ ಕೊಡಲಾಗಿತ್ತು.
JOS 16:10 ಅವರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ, ಎಫ್ರಾಯೀಮ್ಯರ ಮಧ್ಯದಲ್ಲಿ ಕಾನಾನ್ಯರು ಈವರೆಗೂ ಅವರಲ್ಲಿ ದಾಸತ್ವದಲ್ಲಿದ್ದುಕೊಂಡು ಕೆಲಸಮಾಡುವವರಾಗಿದ್ದಾರೆ.
JOS 17:1 ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗ ದೊರೆಯಿತು. ಏಕೆಂದರೆ ಅವನು ಯೋಸೇಫನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದುದರಿಂದ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಅವನ ಪಾಲಿಗೆ ಬಂದವು.
JOS 17:2 ಮನಸ್ಸೆಯ ಉಳಿದವರಿಗೆ ಅಬೀಯೆಜೆರನ ಮಕ್ಕಳಿಗೂ ಹೇಲೆಕ್‌ನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮ್ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆಮೀದಾನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಸೊತ್ತು ದೊರೆಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
JOS 17:3 ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ, ಹೇಫೆರನ ಮಗನೂ ಆದ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಆದರೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಪುತ್ರಿಯರು ಇದ್ದರು.
JOS 17:4 ಇವರು ಯಾಜಕನಾದ ಎಲಿಯಾಜರನ ಬಳಿಗೂ ನೂನನ ಮಗ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆ, “ನಮ್ಮ ಸಹೋದರರಲ್ಲಿ ನಮಗೂ ಸೊತ್ತನ್ನು ಕೊಡುವಂತೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರು,” ಎಂದರು. ಆದ್ದರಿಂದ ಅವರ ತಂದೆಗಳ ಸಹೋದರರ ಜೊತೆಗೆ ಅವರಿಗೂ ಯೆಹೋವ ದೇವರ ವಾಕ್ಯದ ಪ್ರಕಾರ ಸೊತ್ತನ್ನು ಕೊಟ್ಟನು.
JOS 17:5 ಯೊರ್ದನ್ ನದಿ ಆಚೆಯಲ್ಲಿರುವ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳ ಜೊತೆಗೆ ಮನಸ್ಸೆಗೆ ಬಿದ್ದ ಚೀಟಿನಲ್ಲಿ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು.
JOS 17:6 ಏಕೆಂದರೆ ಮನಸ್ಸೆಯ ಪುತ್ರಿಯರು ಸಹ ಅವನ ಪುತ್ರರಲ್ಲಿ ಸೊತ್ತನ್ನು ಹೊಂದಿದ್ದರು. ಆದರೆ ಉಳಿದ ಮನಸ್ಸೆಯ ಪುತ್ರರಿಗೆ ಗಿಲ್ಯಾದ್ ನಾಡು ದೊರೆಯಿತು.
JOS 17:7 ಮನಸ್ಸೆಯ ಮೇರೆ, ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿನವರೆಗೂ ಇತ್ತು. ಅಲ್ಲಿಂದ ದಕ್ಷಿಣ ಕಡೆಯಿರುವ ಎನ್ ತಪ್ಪೂಹದ ನಿವಾಸಗಳಿಗೆ ಹೋಗುತ್ತದೆ.
JOS 17:8 ತಪ್ಪೂಹದ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯೀಮನ ಮಕ್ಕಳದ್ದಾಗಿತ್ತು.
JOS 17:9 ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದುಹೋಗುವುದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯೀಮನದಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ಹೋಗಿರುವುದು.
JOS 17:10 ನದಿಯ ದಕ್ಷಿಣ ಸೀಮೆ ಎಫ್ರಾಯೀಮನದು; ಉತ್ತರ ಸೀಮೆ ಮನಸ್ಸೆಯದು, ಮೆಡಿಟೆರೆನಿಯನ್ ಸಮುದ್ರವು ಅದರ ಮೇರೆಯಾಗಿರುವುದು. ಉತ್ತರಕ್ಕೆ ಇರುವ ಆಶೇರ್ ಗೋತ್ರದವರ ಪ್ರಾಂತವೂ ಪೂರ್ವಕ್ಕೆ ಇರುವ ಇಸ್ಸಾಕಾರ್ ಗೋತ್ರವೂ ಇರುವುದು.
JOS 17:11 ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.
JOS 17:12 ಆದರೆ ಮನಸ್ಸೆಯ ಸಂತತಿಯರಿಗೆ ಆ ಪಟ್ಟಣಗಳ ನಿವಾಸಿಗಳಾದ ಕಾನಾನ್ಯರನ್ನು ಹೊರಡಿಸುವುದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ನಿರ್ಧರಿಸಿದ್ದರು.
JOS 17:13 ಆದರೆ ಇಸ್ರಾಯೇಲರು ಬಲಗೊಂಡಾಗ, ಕಾನಾನ್ಯರನ್ನು ಹೊರಡಿಸದೆ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡರು.
JOS 17:14 ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.
JOS 17:15 ಅದಕ್ಕೆ ಯೆಹೋಶುವನು ಉತ್ತರವಾಗಿ ಅವರಿಗೆ, “ನೀವು ಹೆಚ್ಚು ಜನರಾಗಿದ್ದರೆ ಮತ್ತು ನಿಮಗೆ ಎಫ್ರಾಯೀಮ್ ಪರ್ವತವು ಸಾಲದಿದ್ದರೆ, ನೀವು ಪೆರಿಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡನ್ನು ಕಡಿದು ನಿಮಗೆ ಸ್ಥಳಮಾಡಿಕೊಳ್ಳಿರಿ,” ಎಂದನು.
JOS 17:16 ಅದಕ್ಕೆ ಯೋಸೇಫನ ಸಂತತಿಯರು, “ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿರುವ ಬೇತ್ ಷೆಯಾನ್‌ನಲ್ಲಿಯೂ ಇಜ್ರೆಯೇಲ್ ಕಣಿವೆಯಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಇವೆ,” ಎಂದರು.
JOS 17:17 ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯೀಮನಿಗೂ ಮನಸ್ಸೆಗೂ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವುದು.
JOS 17:18 ಏಕೆಂದರೆ ಅದು ಅಡವಿಯಾಗಿದೆ. ಅದನ್ನು ನೀವು ಕಡಿಯಬೇಕು. ಅದರ ಅಂತ್ಯಗಳವರೆಗೂ ನಿಮ್ಮದಾಗಿರುವುದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿಬಿಡಲು ನಿಮಗೆ ಸಾಧ್ಯ,” ಎಂದನು.
JOS 18:1 ಇಸ್ರಾಯೇಲರ ಸಮೂಹವೆಲ್ಲಾ ಶೀಲೋವಿನಲ್ಲಿ ಒಟ್ಟು ಕೂಡಿ ಅಲ್ಲಿ ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.
JOS 18:2 ಆದರೆ ಇಸ್ರಾಯೇಲರಲ್ಲಿ ತಮ್ಮ ಬಾಧ್ಯತೆಯನ್ನು ಇನ್ನೂ ಹೊಂದಿಕೊಳ್ಳದ ಏಳು ಗೋತ್ರಗಳು ಉಳಿದಿದ್ದವು.
JOS 18:3 ಯೆಹೋಶುವನು ಇಸ್ರಾಯೇಲರಿಗೆ, “ನಿಮ್ಮ ತಂದೆಗಳ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಎಷ್ಟರವರೆಗೆ ಆಲಸ್ಯ ಮಾಡುವಿರಿ?
JOS 18:4 ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ. ನಾನು ಅವರನ್ನು ಕಳುಹಿಸುವೆನು. ಅವರು ಎದ್ದು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯತೆಗಳ ಪ್ರಕಾರ ಅದನ್ನು ಅಳತೆಮಾಡಿ ವಿವರವಾಗಿ ಬರೆಯಲಿ. ತರುವಾಯ ನನ್ನ ಬಳಿಗೆ ಅವರು ಬರಲಿ.
JOS 18:5 ನೀವು ಅದನ್ನು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೆಹೂದವು, ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲೆಸಬೇಕು.
JOS 18:6 ನೀವು ದೇಶವನ್ನು ಏಳು ಪಾಲಾಗಿ ವಿತರಿಸಬೇಕು ಮತ್ತು ಅದರ ವಿವರಗಳನ್ನು ಇಲ್ಲಿ ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಮಗಾಗಿ ಚೀಟುಗಳನ್ನು ಹಾಕುವೆನು.
JOS 18:7 ಆದರೆ ಲೇವಿಯರಿಗೆ ನಿಮ್ಮೊಳಗೆ ಪಾಲಿಲ್ಲ. ಏಕೆಂದರೆ ಅವರಿಗೆ ಯೆಹೋವ ದೇವರ ಯಾಜಕತ್ವವೇ ಅವರ ಸೊತ್ತು. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಯೆಹೋವ ದೇವರ ಸೇವಕನಾದ ಮೋಶೆಯಿಂದಲೇ ತಮಗೆ ಸೊತ್ತನ್ನು ತೆಗೆದುಕೊಂಡಿದ್ದಾರೆ,” ಎಂದನು.
JOS 18:8 ಆ ಮನುಷ್ಯರು ನಾಡನ್ನು ಅಳತೆ ಮಾಡುವುದಕ್ಕಾಗಿ ಹೊರಟು ಹೋಗುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ನೀವು ಹೋಗಿ ದೇಶವೆಲ್ಲಾ ಸಂಚರಿಸಿ, ಅದನ್ನು ಅಳತೆಮಾಡಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ನಾನು ಇಲ್ಲಿ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ನಿಮಗೆ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ಬನ್ನಿರಿ,” ಎಂದು ಅಪ್ಪಣೆಕೊಟ್ಟನು.
JOS 18:9 ಆ ಮನುಷ್ಯರು ಆ ನಾಡಿಗೆ ಹೋಗಿ, ಅದರ ಪಟ್ಟಣಗಳ ಪ್ರಕಾರ ಏಳು ಪಾಲಾಗಿ ಒಂದು ಗ್ರಂಥದಲ್ಲಿ ಬರೆದುಕೊಂಡು ಶೀಲೋವಿನಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ತಿರುಗಿ ಬಂದರು.
JOS 18:10 ಆಗ ಯೆಹೋಶುವನು ಅವರಿಗೆ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ಚೀಟುಗಳನ್ನು ಹಾಕಿದನು. ಅಲ್ಲಿ ಯೆಹೋಶುವನು ಇಸ್ರಾಯೇಲರಿಗೆ ನಾಡನ್ನು ಅವರ ಗೋತ್ರಗಳ ಪ್ರಕಾರ ಪಾಲುಗಳನ್ನು ಹಂಚಿಕೊಟ್ಟನು.
JOS 18:11 ಬೆನ್ಯಾಮೀನನ ಸಂತತಿಯವರಿಗೆ ಅವರ ಕುಟುಂಬಗಳ ಪ್ರಕಾರ ಅವರ ಗೋತ್ರಕ್ಕೆ ಚೀಟು ಬಿದ್ದಿತು. ಅವರ ಸೊತ್ತು ಯೆಹೂದ ಮತ್ತು ಯೋಸೇಫನ ಗೋತ್ರದವರ ಪ್ರಾಂತಗಳಿಗೆ ನಡುವೆಯಿತ್ತು.
JOS 18:12 ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನಿನಿಂದ ಹೊರಟು ಯೆರಿಕೋವಿನ ಉತ್ತರದ ಕಡೆಯಿಂದ ಬೆಟ್ಟಗಳಲ್ಲಿ ಪಶ್ಚಿಮದ ಕಡೆಗೆ ಏರಿ ಬೇತಾವೆನ ಮರುಭೂಮಿಗೆ ಮುಗಿಯುವುದು.
JOS 18:13 ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು, ಲೂಜಿನ ದಕ್ಷಿಣದ ಕಡೆಗೆ ಹೋಗಿ, ಅಟಾರೋತ್ ಅದ್ದಾರಿನ ಕೆಳಗಿನ ಬೇತ್ ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವುದು.
JOS 18:14 ಇದಲ್ಲದೆ ಆ ಮೇರೆಯು ದಕ್ಷಿಣ ಎಲ್ಲೆಗೆ ಎದುರಾಗಿರುವ ಬೇತ್ ಹೋರೋನಿಗೆ ಎದುರಾಗಿ ಬೆಟ್ಟವನ್ನು ಹಿಡಿದು, ದಕ್ಷಿಣವಾಗಿ ಸುತ್ತಿಕೊಂಡು ಕಿರ್ಯತ್ ಯಾರೀಮ್ ಎಂಬ ಯೆಹೂದ ಗೋತ್ರದ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವುದು. ಇದು ಪಶ್ಚಿಮ ಎಲ್ಲೆಯಾಗಿತ್ತು.
JOS 18:15 ಆ ದಕ್ಷಿಣ ಎಲ್ಲೆಯೂ ಕಿರ್ಯತ್ ಯಾರೀಮ್ ತುದಿಯಿಂದ ಹೊರಟು, ಪಶ್ಚಿಮಕ್ಕೆ ಹೋಗಿ, ನೆಫ್ತೋಹದ ಜಲಬುಗ್ಗೆಯ ಬಳಿ ಮುಗಿಯುತ್ತದೆ.
JOS 18:16 ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ತಗ್ಗಿನ ಈಚೆಗೂ ರೆಫಾಯಿಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ, ಅಲ್ಲಿಂದ ದಕ್ಷಿಣದಲ್ಲಿ ಯೆಬೂಸಿಯರ ಮೇರೆಯಾದ ಬೆನ್ ಹಿನ್ನೋಮಿನ ಹಳ್ಳದ ಕಣಿವೆ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.
JOS 18:17 ಅಲ್ಲಿಂದ ಏನ್ ಷೆಮೆಷ್, ಅಲ್ಲಿಂದ ಅದುಮೀಮ್ ಎಂಬ ದಿಬ್ಬೆಗೆ ಎದುರಾಗಿ ಗೆಲೀಲೋತಿಗೂ, ಅಲ್ಲಿಂದ ರೂಬೇನನ ಪುತ್ರನಾದ ಬೋಹನನ ಕಲ್ಲಿಗೆ ಏರಿಹೋಗಿ,
JOS 18:18 ಅಲ್ಲಿಂದ ಬೇತ್ ಅರಾಬಾದ ಎದುರಾಗಿ ಉತ್ತರ ಭಾಗಕ್ಕೆ ಹೊರಟು, ಅರಾಬಾ ತಗ್ಗಿಗೆ ಇಳಿದು ಬರುತ್ತದೆ.
JOS 18:19 ಅಲ್ಲಿಂದ ಆ ಮೇರೆ ಬೇತ್ ಹೊಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು, ಯೊರ್ದನ್ ನದಿ ಮುಖ ದ್ವಾರಕ್ಕೆ ಉತ್ತರವಾದ ಲವಣ ಸಮುದ್ರ ಎಂಬ ಲವಣ ಸಮುದ್ರದ ಉತ್ತರ ಮೂಲೆಯಲ್ಲಿ ಮುಗಿಯುತ್ತದೆ. ಇದೇ ದಕ್ಷಿಣ ಭಾಗದ ಮೇರೆ.
JOS 18:20 ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯೇ ಅದರ ಮೇರೆಯಾಗಿತ್ತು. ಇದು ಬೆನ್ಯಾಮೀನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಸೊತ್ತಾಗಿತ್ತು.
JOS 18:21 ಬೆನ್ಯಾಮೀನನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರಕಿರುವ ಪಟ್ಟಣಗಳ ವಿವರ: ಯೆರಿಕೋ, ಬೇತ್ ಹೊಗ್ಲಾ, ಏಮೆಕ್ ಕೆಚ್ಚೀಚ್ ತಗ್ಗು,
JOS 18:22 ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,
JOS 18:23 ಅವ್ವೀಮ್, ಪಾರಾ, ಒಫ್ರಾ,
JOS 18:24 ಕೆಫೆರ್ ಅಮ್ಮೋನಿ, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಆಗಿರುತ್ತವೆ.
JOS 18:25 ಇದಲ್ಲದೆ ಗಿಬ್ಯೋನ್, ರಾಮಾ, ಬೇರೋತ್,
JOS 18:26 ಮಿಚ್ಪೆ, ಕೆಫೀರಾ, ಮೋಚಾ,
JOS 18:27 ರೆಕೆಮ್, ಇರ್ಪೇಲ್, ತರಲಾ,
JOS 18:28 ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯ, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ. ಇವೇ ಬೆನ್ಯಾಮೀನ್ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
JOS 19:1 ಎರಡನೆಯ ಚೀಟು ಬಿದ್ದ ಭಾಗವು ಸಿಮೆಯೋನನ ಗೋತ್ರದವರದಾಗಿತ್ತು. ಸಿಮೆಯೋನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು. ಅವರ ಸೊತ್ತು ಯೆಹೂದ ಗೋತ್ರದ ಸೊತ್ತಿನ ಮಧ್ಯದಲ್ಲಿತ್ತು.
JOS 19:2 ಅವರಿಗೆ ಸೇರಿದ ಪಟ್ಟಣಗಳು ಯಾವುವೆಂದರೆ: ಬೇರ್ಷೆಬಾ ಅಥವಾ ಶೆಬಾ, ಮೋಲಾದಾ,
JOS 19:3 ಹಚರ್ ಷೂವಾಲ್, ಬಾಲಾ, ಎಚೆಮ್,
JOS 19:4 ಎಲ್ತೋಲದ್, ಬೆತೂಲ್, ಹೊರ್ಮಾ,
JOS 19:5 ಚಿಕ್ಲಗ್, ಬೇತ್ ಮರ್ಕಾಬೋತ್, ಹಚರ್‌ಸೂಸಾ,
JOS 19:6 ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿದ್ದವು.
JOS 19:7 ಇದಲ್ಲದೆ ಆಯಿನ್, ರಿಮ್ಮೋನ್, ಎತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳೂ ಆಗಿದ್ದವು.
JOS 19:8 ಇದರೊಂದಿಗೆ ಬಾಲಾತ್ ಬೇರಿನವರೆಗೂ ಇರುವ ಎಲ್ಲಾ ಪಟ್ಟಣ ಮತ್ತು ಅದರ ಗ್ರಾಮಗಳೂ ಬಾಲತ್ ಬೇರ್ ಎಂಬುದು ದಕ್ಷಿಣದಲ್ಲಿರುವ ನೆಗೇವಿನ ರಾಮದಲ್ಲಿ ಇರುತ್ತದೆ. ಇದೇ ಸಿಮೆಯೋನನ ಗೋತ್ರದವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
JOS 19:9 ಸಿಮೆಯೋನನ ಗೋತ್ರದವರಿಗೆ ಬಾಧ್ಯತೆ ಯೆಹೂದ ಗೋತ್ರದವರ ಭಾಗದಿಂದ ಸಿಕ್ಕಿತು. ಏಕೆಂದರೆ ಯೆಹೂದ ಗೋತ್ರದ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ, ಸಿಮೆಯೋನನ ಗೋತ್ರದವರು ಯೆಹೂದ ಗೋತ್ರದವರ ಎಲ್ಲೆಯ ಒಳಗಿಂದಲೇ ತಮ್ಮ ಪಾಲನ್ನು ಹೊಂದಿದರು.
JOS 19:10 ಮೂರನೆಯ ಚೀಟು ಬಿದ್ದ ಭಾಗ ಜೆಬುಲೂನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಬಿದ್ದಿತು. ಅವರ ಬಾಧ್ಯತೆಯ ಮೇರೆ ಸಾರೀದ್ ವರೆಗೂ ಇತ್ತು.
JOS 19:11 ಅಲ್ಲಿಂದ ಪಶ್ಚಿಮ ಕಡೆಗೆ ಹೋಗಿ, ಮರಾಳಕ್ಕೆ ಏರಿ, ದಬ್ಬೆಷೆತಿಗೆ ಹೋಗಿ, ಯೊಕ್ನೆಯಾಮಿಗೆ ಎದುರಾದ ಹಳ್ಳಕ್ಕೆ ಹೋಗುತ್ತದೆ.
JOS 19:12 ಅದು ಸಾರೀದಿನಿಂದ ಸೂರ್ಯನು ಉದಯಿಸುವ ಪೂರ್ವದಿಕ್ಕಿನ ಕಿಸ್ಲೋತ್ ತಾಬೋರಿನ ಮೇರೆಗೆ ತಿರುಗಿ, ಅಲ್ಲಿಂದ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
JOS 19:13 ಅಲ್ಲಿಂದ ಪೂರ್ವದಿಕ್ಕಿನಲ್ಲಿ ಮುಂದುವರೆದು ಗತ್‌ಹೇಫೆರನ್ನು ಮತ್ತು ಎತ್‌ಕಾಚೀನನ್ನು ದಾಟಿ, ರಿಮ್ಮೋನವರೆಗೂ ಹೋಗಿ ನೇಯಗೆ ತಿರುಗುತ್ತದೆ.
JOS 19:14 ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಯೇಲನ ಹಳ್ಳದ ತಗ್ಗಿಗೆ ಮುಗಿಯುತ್ತದೆ.
JOS 19:15 ಈ ಮೇರೆಯಲ್ಲಿರುವ ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳ ಗ್ರಾಮಗಳು ಸಹ ಒಳಪಟ್ಟಿರುತ್ತದೆ
JOS 19:16 ಜೆಬುಲೂನಿನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
JOS 19:17 ನಾಲ್ಕನೆಯ ಚೀಟು ಇಸ್ಸಾಕಾರನ ಸಂತತಿಯವರಿಗೆ ಬಿದ್ದಿತು.
JOS 19:18 ಅವರ ಮೇರೆಯು: ಇಜ್ರೆಯೇಲ್ ಕೆಸುಲೋತ್, ಶೂನೇಮ್,
JOS 19:19 ಹಫಾರಯಿಮ್, ಶಿಯೋನ್, ಅನಾಹರತ್,
JOS 19:20 ರಬ್ಬೀತ್, ಕಿಷ್ಯೋನ್, ಎಬೆಜ್,
JOS 19:21 ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್ ಎಂಬ ತೀರಗಳನ್ನು ಒಳಗೊಂಡಿತ್ತು.
JOS 19:22 ಆ ಎಲ್ಲೆಯು ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳಿಗೆ ಸೇರಿ ಯೊರ್ದನ್ ನದಿ ತೀರದಲ್ಲಿ ಮುಗಿಯುತ್ತದೆ. ಅಲ್ಲಿ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
JOS 19:23 ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರಿಗೆ ದೊರೆತ ಪಾಲು.
JOS 19:24 ಚೀಟು ಬಿದ್ದ ಐದನೆಯ ಭಾಗವು ಆಶೇರನ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರ ದೊರೆಯಿತು.
JOS 19:25 ಅವರ ಮೇರೆ: ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
JOS 19:26 ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲ್, ಶೀಹೋರ್ ಲಿಬ್ನತ್ ಕಡೆ ಹೋಗಿ,
JOS 19:27 ಅಲ್ಲಿಂದ ಪೂರ್ವದ ಕಡೆಯಾಗಿ ಬೇತ್‌ದಾಗೋನಿಗೆ ತಿರುಗುತ್ತದೆ. ಅನಂತರ ಜೆಬುಲೂನಿಗೂ ಬೇತ್ ಏಮೆಕಿಗೆ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಯೇಲ್ ತಗ್ಗಿಗೂ ನೆಗೀಯೇಲ್ ಕಡೆ ಹಾದು, ಎಡಭಾಗದಲ್ಲಿರುವ ಕಾಬೂಲ್ ಕಡೆ ಮುಂದುವರೆಯುತ್ತದೆ.
JOS 19:28 ಅಲ್ಲಿಂದ ಅಬ್ದೋನ್, ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
JOS 19:29 ಅಲ್ಲಿಂದ ರಾಮಾ, ಟೈರ್ ಎಂಬ ಕೋಟೆಪಟ್ಟಣದವರೆಗೂ ಹೋಗುತ್ತದೆ. ಅಲ್ಲಿಂದ ಹೋಸಾ ಕಡೆ ಹೊರಟು ಮೆಡಿಟೆರಿಯನ್ ಸಮುದ್ರದ ಬಳಿ ಅಕ್ಜೀಬ್ ಮೇರೆಯ ಅಂಚಿಗೆ ಮುಗಿಯುತ್ತದೆ.
JOS 19:30 ಅದಕ್ಕೆ ಉಮ್ಮಾ, ಅಫೇಕ್ ಮತ್ತು ರೆಹೋಬ್ ಒಟ್ಟು ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
JOS 19:31 ಇದೇ ಆಶೇರನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ.
JOS 19:32 ಆರನೆಯ ಚೀಟು ಬಿದ್ದ ಭಾಗವು ನಫ್ತಾಲಿಯ ಗೋತ್ರದ್ದಾಗಿತ್ತು. ನಫ್ತಾಲಿಯ ಗೋತ್ರದ ಅವರ ಕುಟುಂಬಗಳ ಪ್ರಕಾರ ಪಾಲು ದೊರೆಯಿತು.
JOS 19:33 ಅವರ ಮೇರೆಯು ಹೆಲೇಫ್ ಮತ್ತು ಚಾನನ್ನೀಮ್ ಎಂಬ ಕಡೆಯಲ್ಲಿ ಇರುವ ಅಲ್ಲೋನ್ ಮರದಿಂದ, ಆದಾಮಿ ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮ್ ತನಕ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಗಿಯುತ್ತದೆ.
JOS 19:34 ಆ ಮೇರೆಯು ಪಶ್ಚಿಮಕ್ಕೆ ಅಜ್ನೋತ್ ತಾಬೋರ್ ಕಡೆಗೆ ತಿರುಗಿ, ಅಲ್ಲಿಂದ ಹುಕ್ಕೋಕ್ ಹೊರಟು, ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನ್ನೂ ಮತ್ತು ಯೆಹೂದಿಯರ ಮೇರೆಗೂ ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯನ್ನು ಮುಟ್ಟಿ ಬರುವುದು.
JOS 19:35 ಇದರಲ್ಲಿರುವ ಕೋಟೆಗಳುಳ್ಳ ಪಟ್ಟಣಗಳು ಯಾವುವೆಂದರೆ: ಜಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
JOS 19:36 ಅದಾಮಾ, ರಾಮಾ, ಹಾಚೋರ್,
JOS 19:37 ಕೆದೆಷ್, ಎದ್ರೈ, ಎನ್ ಹಾಚೋರ್,
JOS 19:38 ಇರೋನ್, ಮಿಗ್ದಲ್ ಎಲ್, ಹೊರೇಮ್, ಬೇತ್ ಅನಾತ್ ಹಾಗೂ ಬೇತ್ ಷೆಮೆಷ್. ಮೊದಲಾದ ಹತ್ತೊಂಬತ್ತು ಕೋಟೆಪಟ್ಟಣಗಳೂ, ಅವುಗಳ ಗ್ರಾಮಗಳು.
JOS 19:39 ಇದೇ ನಫ್ತಾಲಿಯ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿ ಸಿಕ್ಕಿದ ಪಟ್ಟಣಗಳೂ ಅವುಗಳ ಗ್ರಾಮಗಳು.
JOS 19:40 ಇದಲ್ಲದೆ ಏಳನೆಯ ಚೀಟು ಬಿದ್ದ ಭಾಗವು ದಾನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು.
JOS 19:41 ಅವರಿಗೆ ದೊರೆತ ಸೊತ್ತಿನ ವಿವರ: ಚೊರ್ಗಾ, ಎಷ್ಟಾವೋಲ್, ಈರ್ ಷೆಮೆಷ್,
JOS 19:42 ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
JOS 19:43 ಏಲೋನ್, ತಿಮ್ನಾ, ಎಕ್ರೋನ್,
JOS 19:44 ಎಲ್ತೆಕೇ, ಗಿಬ್ಬೆತೋನ್, ಬಾಲಾತ್,
JOS 19:45 ಯೆಹುದ್, ಬೆನೇ ಬೆರಕ್, ಗತ್ ರಿಮ್ಮೋನ್,
JOS 19:46 ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪ ಊರಿಗೆ ಎದುರಾದ ಮೇರೆಯು ಸಹ ದೊರಕಿತು.
JOS 19:47 ಇದಲ್ಲದೆ ದಾನನ ಗೋತ್ರದ ಮೇರೆಯು ಅವರಿಗೆ ಸಾಲದ್ದರಿಂದ ಅವರು ಹೊರಟುಹೋಗಿ ಲೆಷೆಮಿನ ಮೇಲೆ ಖಡ್ಗದಿಂದ ಯುದ್ಧಮಾಡಿ, ಅದನ್ನು ಸೋಲಿಸಿ, ಸ್ವಾಧೀನಮಾಡಿಕೊಂಡರು. ಅವರು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
JOS 19:48 ಈ ಪಟ್ಟಣಗಳೂ, ಅವುಗಳ ಗ್ರಾಮಗಳೂ, ದಾನ್ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
JOS 19:49 ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡ ಮೇಲೆ ಇಸ್ರಾಯೇಲರು ನೂನನ ಮಗನಾದ ಯೆಹೋಶುವನಿಗೆ ತಮ್ಮ ಮಧ್ಯದಲ್ಲಿ ಪಾಲನ್ನು ಕೊಟ್ಟರು.
JOS 19:50 ಅವನು ಕೇಳಿದ ಎಫ್ರಾಯೀಮ್ ಬೆಟ್ಟದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಯೆಹೋವ ದೇವರ ಆಜ್ಞೆಯ ಪ್ರಕಾರ ಕೊಟ್ಟರು. ಅವನು ಪಟ್ಟಣವನ್ನು ಕಟ್ಟಿಕೊಂಡು ಅಲ್ಲಿಯೇ ನೆಲೆಸಿದನು.
JOS 19:51 ಯಾಜಕನಾದ ಎಲಿಯಾಜರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಚೀಟುಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಹಂಚಿಕೊಳ್ಳುವ ಕೆಲಸವನ್ನು ಪೂರೈಸಿದರು.
JOS 20:1 ಯೆಹೋವ ದೇವರು ಯೆಹೋಶುವನಿಗೆ,
JOS 20:2 “ನಾನು ಮೋಶೆಯ ಮುಖಾಂತರ ನಿನಗೆ ಹೇಳಿದ ಆಶ್ರಯದ ಪಟ್ಟಣಗಳನ್ನು ಗೊತ್ತುಮಾಡಿಕೊಳ್ಳುವಂತೆ ನೀನು ಇಸ್ರಾಯೇಲರಿಗೆ ಹೇಳು.
JOS 20:3 ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ.
JOS 20:4 ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು, ಪಟ್ಟಣದ ಬಾಗಿಲ ದ್ವಾರದಲ್ಲಿ ನಿಂತುಕೊಂಡು, ಆ ಪಟ್ಟಣದ ಹಿರಿಯರ ಮುಂದೆ ತನ್ನ ವ್ಯಾಜ್ಯವನ್ನು ತಿಳಿಸಬೇಕು. ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಳ್ಳಲಿ. ಅವರು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಲಿ.
JOS 20:5 ರಕ್ತದ ಸೇಡು ತೀರಿಸಿಕೊಳ್ಳುವವನು ಅವನನ್ನು ಹಿಂದಟ್ಟಿ ಬಂದರೆ, ಕೊಲೆ ಮಾಡಿದವನನ್ನು ಅವನ ಕೈಗೆ ಒಪ್ಪಿಸಿಕೊಡಬಾರದು. ಏಕೆಂದರೆ ಅವನು ತನ್ನ ನೆರೆಯವನನ್ನು ಅಕಸ್ಮಾತ್ತಾಗಿ ಕೊಂದನು ಮತ್ತು ಪೂರ್ವದಲ್ಲಿ ಅವನ ಬಗ್ಗೆ ದ್ವೇಷ ಇರಲಿಲ್ಲ.
JOS 20:6 ಇದಲ್ಲದೆ ಅವನು ನ್ಯಾಯ ವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆ ದಿವಸಗಳಲ್ಲಿ ಇರುವ ಮಹಾಯಾಜಕನು ಮರಣ ಹೊಂದುವವರೆಗೂ ಆ ಪಟ್ಟಣದಲ್ಲೇ ವಾಸವಾಗಿರಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿ ಹೋದ ತನ್ನ ಪಟ್ಟಣಕ್ಕೂ, ತನ್ನ ಮನೆಗೂ ತಿರುಗಿಬರಬಹುದು,” ಎಂದು ಹೇಳಿದರು.
JOS 20:7 ಅದರಂತೆ ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ, ಎಫ್ರಾಯೀಮನ ಬೆಟ್ಟಗಳಲ್ಲಿರುವ ಶೆಕೆಮನ್ನೂ, ಯೆಹೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯತ್ ಅರ್ಬವನ್ನೂ ನೇಮಿಸಿದರು.
JOS 20:8 ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನ್ ನದಿ ಆಚೆ ರೂಬೇನನ ಗೋತ್ರಕ್ಕಿರುವ ಸಮ ಭೂಮಿಯ ಅರಣ್ಯದಲ್ಲಿರುವ ಬೆಚೆರನ್ನು ಗಾದನ ಗೋತ್ರಕ್ಕೆ ಗಿಲ್ಯಾದಿನ ರಾಮೋತನ್ನೂ, ಮನಸ್ಸೆಯ ಗೋತ್ರಕ್ಕೆ ಬಾಷಾನಿನಲ್ಲಿರುವ ಗೋಲಾನನ್ನೂ ಕೊಟ್ಟರು.
JOS 20:9 ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.
JOS 21:1 ಲೇವಿ ಗೋತ್ರದ ಹಿರಿಯರು, ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲರ ಗೋತ್ರಗಳ ಹಿರಿಯರ ಬಳಿಗೂ ಯಾಜಕನಾದ ಎಲಿಯಾಜರನ ಬಳಿಗೂ ಬಂದರು.
JOS 21:2 ಅವರು ಕಾನಾನ್ ದೇಶದ ಶೀಲೋವಿನಲ್ಲಿ ಅವರನ್ನು ಸಂಧಿಸಿ, “ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ್ದಾರೆ,” ಎಂದರು.
JOS 21:3 ಹಾಗೆಯೇ ಇಸ್ರಾಯೇಲರು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಯೆಹೋವ ದೇವರ ಆಜ್ಞೆಯ ಪ್ರಕಾರ ಪಟ್ಟಣಗಳನ್ನೂ ಗೋಮಾಳಗಳನ್ನೂ ಕೊಟ್ಟರು. ಅವುಗಳ ವಿವರ:
JOS 21:4 ಕೊಹಾತ್ಯರ ಗೋತ್ರಗಳಿಗೆ ಚೀಟು ಬಂದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೆಹೂದದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ, ಬೆನ್ಯಾಮೀನನ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.
JOS 21:5 ಕೊಹಾತ್ಯರಿಗೆ ಎಫ್ರಾಯೀಮನ ಗೋತ್ರದಲ್ಲಿಯೂ, ದಾನನ ಗೋತ್ರದಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹತ್ತು ಪಟ್ಟಣಗಳು ಚೀಟಿಯಿಂದ ದೊರಕಿದವು.
JOS 21:6 ಗೇರ್ಷೋನ್ಯರಿಗೆ ಇಸ್ಸಾಕಾರನ ಗೋತ್ರದಲ್ಲಿಯೂ, ಆಶೇರನ ಗೋತ್ರದಲ್ಲಿಯೂ, ನಫ್ತಾಲಿಯ ಗೋತ್ರದಲ್ಲಿಯೂ, ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.
JOS 21:7 ಇದಲ್ಲದೆ ಮೆರಾರೀಯರಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ, ಗಾದನ ಗೋತ್ರದಲ್ಲಿಯೂ, ಜೆಬುಲೂನನ ಗೋತ್ರದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.
JOS 21:8 ಈ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗೋಮಾಳಗಳನ್ನೂ ಇಸ್ರಾಯೇಲರು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ, ಲೇವಿಯರಿಗೆ ಚೀಟು ಹಾಕಿಕೊಟ್ಟರು.
JOS 21:9 ಅವರು ಯೆಹೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರದಲ್ಲಿಯೂ ಕೆಲವು ಪಟ್ಟಣಗಳನ್ನು ಕೊಟ್ಟರು.
JOS 21:10 ಲೇವಿಯರಿಗೆ ಮೊದಲನೆಯ ಚೀಟು ಬಿದ್ದ ಕಾರಣ, ಲೇವಿ ಗೋತ್ರಕ್ಕೆ ಸೇರಿದ ಕೊಹಾತ್ಯರಾದ ಆರೋನನ ಸಂತತಿಯರಿಗೆ ಯೆಹೂದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ ಕೂಡಲಾದ ಪಟ್ಟಣಗಳ ವಿವರ:
JOS 21:11 ಯೆಹೂದದ ಬೆಟ್ಟಗಳಲ್ಲಿರುವ ಅನಾಕನ ಪಿತೃವಾದ ಕಿರ್ಯತ್ ಅರ್ಬನ ಹೆಸರಿದ್ದ ಪಟ್ಟಣವಾದ ಹೆಬ್ರೋನನ್ನೂ, ಅದರ ಸುತ್ತಲಿರುವ ಗೋಮಾಳಗಳನ್ನೂ ಅವರಿಗೆ ಕೊಟ್ಟರು.
JOS 21:12 ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೂ ಬಾಧ್ಯತೆಯಾಗಿ ಕೊಟ್ಟರು.
JOS 21:13 ಹೀಗೆಯೇ ಯಾಜಕನಾದ ಆರೋನನ ವಂಶದವರಿಗೆ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಕೊಟ್ಟರು. ಲಿಬ್ನಾವನ್ನೂ
JOS 21:14 ಯತ್ತೀರನ್ನೂ ಎಷ್ಟೆಮೋವನ್ನೂ
JOS 21:15 ಹೋಲೋನನ್ನೂ ದೆಬೀರನ್ನೂ
JOS 21:16 ಆಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಆ ಎರಡು ಗೋತ್ರಗಳಿಂದ ಈ ಒಂಬತ್ತು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.
JOS 21:17 ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿ ಗಿಬ್ಯೋನನ್ನೂ ಗೆಬಾನನ್ನೂ
JOS 21:18 ಅನಾತೋತನ್ನೂ ಅಲ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.
JOS 21:19 ಯಾಜಕನಾದ ಆರೋನನ ವಂಶದವರಿಗೆ ಒಟ್ಟು ಹದಿಮೂರು ಪಟ್ಟಣಗಳೂ, ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:20 ಇದಲ್ಲದೆ ಲೇವಿಯರಾದ ಕೊಹಾತ್ಯನ ಗೋತ್ರದ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯೀಮನ ಗೋತ್ರದಲ್ಲಿ ಚೀಟಿಯಿಂದ ದೊರಕಿದ ಪಟ್ಟಣಗಳ ವಿವರ:
JOS 21:21 ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯೀಮನ ಬೆಟ್ಟಗಳಲ್ಲಿರುವ, ಶೆಕೆಮನ್ನೂ ಗೆಜೆರನ್ನೂ
JOS 21:22 ಕಿಬ್‌ಚೈಮ್ ಮತ್ತು ಬೇತ್ ಹೋರೋನ್ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:23 ಇದಲ್ಲದೆ ದಾನ್ಯನ ಗೋತ್ರದಲ್ಲಿ, ಎಲ್ತೆಕೇಯನ್ನೂ ಗಿಬ್ಬೆತೋನನ್ನೂ
JOS 21:24 ಅಯ್ಯಾಲೋನನ್ನೂ ಗತ್ ರಿಮ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:25 ಮನಸ್ಸೆಯ ಅರ್ಧಗೋತ್ರದಲ್ಲಿ, ತಾನಕನ್ನೂ ಗತ್ ರಿಮ್ಮೋನನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:26 ಹೀಗೆ ಉಳಿದಂಥ ಕೊಹಾತ್ಯನ ಗೋತ್ರಗಳಲ್ಲಿ ಹತ್ತು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:27 ಲೇವಿ ಗೋತ್ರದ ಗೇರ್ಷೋನ್ಯರಿಗೆ ಮನಸ್ಸೆಯ ಅರ್ಧಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:28 ಇದಲ್ಲದೆ ಇಸ್ಸಾಕಾರನ ಗೋತ್ರದ ಸೊತ್ತಿನಿಂದ ಕಿಷ್ಯೋನನ್ನೂ ದಾಬೆರತನ್ನೂ
JOS 21:29 ಯರ್ಮೂತ್ ಮತ್ತು ಏಂಗನ್ನೀಮನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:30 ಆಶೇರನ ಗೋತ್ರದ ಸೊತ್ತಿನಿಂದ ಮಿಷಾಲನ್ನೂ, ಅಬ್ದೋನನ್ನೂ
JOS 21:31 ಹೆಲ್ಕತನ್ನೂ ರೆಹೋಬನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:32 ನಫ್ತಾಲಿಯ ಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಹಮ್ಮೋತ್ ದೋರನ್ನೂ ಕರ್ತಾನನ್ನೂ ಹೀಗೆ ಮೂರು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:33 ಗೇರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಹದಿಮೂರು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:34 ಉಳಿದ ಲೇವಿಯರಾದ ಮೆರಾರೀಯ ಕುಟುಂಬಗಳಿಗೆ ಜೆಬುಲೂನನ ಗೋತ್ರದ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,
JOS 21:35 ದಿಮ್ನಾ, ನಹಲಾಲ್, ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:36 ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಯಹಚವನ್ನೂ
JOS 21:37 ಕೆದೇಮೋತನ್ನೂ ಮೇಫಾತನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:38 ಗಾದ್ಯರ ಗೋತ್ರದಲ್ಲಿ, ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನ ರಾಮೋತನ್ನೂ, ಮಹನಯಿಮನ್ನೂ,
JOS 21:39 ಹೆಷ್ಬೋನನ್ನೂ ಯಜ್ಜೇರನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
JOS 21:40 ಹೀಗೆಯೇ ಲೇವಿ ಗೋತ್ರದ ಉಳಿದಂಥ ಮೆರಾರೀಯರ ಕುಟುಂಬಗಳ ಪ್ರಕಾರ ಚೀಟಿಯಿಂದ ದೊರೆತ ಪಟ್ಟಣಗಳು ಹನ್ನೆರಡು.
JOS 21:41 ಇಸ್ರಾಯೇಲರ ನಡುವೆ ಲೇವಿಯರಿಗೆ ಒಟ್ಟು ನಾಲ್ವತ್ತೆಂಟು ಪಟ್ಟಣಗಳು ಅವುಗಳ ಗೋಮಾಳ ಸಹಿತವಾಗಿ ದೊರಕಿದವು.
JOS 21:42 ಈ ಪಟ್ಟಣಗಳ ಸುತ್ತಲೂ ಪ್ರತಿ ಒಂದಕ್ಕೂ ಗೋಮಾಳಗಳಿದ್ದವು. ಎಲ್ಲ ಪಟ್ಟಣಗಳಿಗೂ ಹೀಗೆಯೇ ಇದ್ದವು.
JOS 21:43 ಈ ರೀತಿಯಾಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುವೆನೆಂದು ಆಣೆಯಿಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟರು. ಇಸ್ರಾಯೇಲರು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸವಾಗಿದ್ದರು.
JOS 21:44 ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು.
JOS 21:45 ಯೆಹೋವ ದೇವರು ಇಸ್ರಾಯೇಲರಿಗೆ ಹೇಳಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ. ಎಲ್ಲಾ ನೆರವೇರಿದವು.
JOS 22:1 ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧ ಗೋತ್ರದವರನ್ನೂ ಕರಿಸಿ ಅವರಿಗೆ,
JOS 22:2 “ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಗೊಂಡು, ನಾನು ನಿಮಗೆ ಆಜ್ಞಾಪಿಸಿದ ಎಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾಗಿದ್ದೀರಿ.
JOS 22:3 ನೀವು ಬಹಳ ದಿವಸಗಳಿಂದ ಇಂದಿನವರೆಗೂ ನಿಮ್ಮ ಸಹೋದರರನ್ನು ಕೈಬಿಡದೆ, ನಿಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಅಪ್ಪಣೆಯನ್ನು ಪಾಲಿಸುತ್ತಾ ಬಂದಿದ್ದೀರಿ.
JOS 22:4 ಈಗ ನಿಮ್ಮ ದೇವರಾದ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದ ಪ್ರಕಾರ, ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟಿದ್ದಾರೆ. ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಕಡೆ ನಿಮಗೆ ಕೊಟ್ಟ ಸೊತ್ತಿನ ದೇಶದಲ್ಲಿರುವ ನಿಮ್ಮ ನಿವಾಸಗಳಿಗೆ ನೀವು ಹೊರಡಿರಿ.
JOS 22:5 ಆದರೆ ಯೆಹೋವ ದೇವರ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಆಜ್ಞೆಯನ್ನೂ ನಿಯಮವನ್ನೂ ಜಾಗ್ರತೆಯಾಗಿ ಕೈಗೊಂಡು ನಡೆದು, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರ ಆಜ್ಞೆಗಳನ್ನು ಕೈಗೊಂಡು ಅವರನ್ನು ಅಂಟಿಕೊಂಡು, ಅವರನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ,” ಎಂದು ಹೇಳಿದನು.
JOS 22:6 ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿಬಿಟ್ಟಾಗ ಅವರು ತಮ್ಮ ಗುಡಾರಗಳಿಗೆ ಹೋದರು.
JOS 22:7 ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಅವರ ಅರ್ಧ ಗೋತ್ರಕ್ಕೆ ಯೆಹೋಶುವನು ಸಹ ಯೊರ್ದನ್ ನದಿ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸೊತ್ತನ್ನು ಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಅವರ ಗುಡಾರಗಳಿಗೆ ಕಳುಹಿಸುವಾಗ ಅವರನ್ನು ಆಶೀರ್ವದಿಸಿ ಅವರಿಗೆ,
JOS 22:8 “ನೀವು ಬಹು ಆಸ್ತಿಯುಳ್ಳವರಾಗಿ ಪಶುಗಳು, ಬೆಳ್ಳಿ, ಬಂಗಾರ, ಕಂಚು, ಕಬ್ಬಿಣ, ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂದಿರುಗಿ, ನಿಮ್ಮ ಗುಡಾರಗಳಿಗೆ ಹೋಗಿರಿ. ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ,” ಎಂದನು.
JOS 22:9 ರೂಬೇನನ ಗೋತ್ರದವರು, ಗಾದ್ಯ ಗೋತ್ರದವರು, ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು, ಯೆಹೋವ ದೇವರು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ತಾವು ವಶಮಾಡಿಕೊಂಡ ತಮ್ಮ ಗಿಲ್ಯಾದ್ ನಾಡಿಗೆ ಹೋದರು.
JOS 22:10 ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರು ಕಾನಾನ್ ದೇಶದಲ್ಲಿರುವ ಯೊರ್ದನ್ ನದಿ ಪ್ರಾಂತಕ್ಕೆ ಬಂದಾಗ, ಅಲ್ಲಿ ದೊಡ್ಡ ಬಲಿಪೀಠವನ್ನು ಕಟ್ಟಿದರು.
JOS 22:11 ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಕಾನಾನ್ ದೇಶಕ್ಕೆ ಎದುರಾಗಿ ಇಸ್ರಾಯೇಲರು ದಾಟಿಬಂದ ಯೊರ್ದನ್ ನದಿ ಪ್ರಾಂತದಲ್ಲಿ ಬಲಿಪೀಠವನ್ನು ಕಟ್ಟಿದರೆಂಬ ಸುದ್ದಿ ಇಸ್ರಾಯೇಲರಿಗೆ ಮುಟ್ಟಿತು.
JOS 22:12 ಇಸ್ರಾಯೇಲರು ಅದನ್ನು ಕೇಳಿದಾಗ, ಅವರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಶೀಲೋವಿನಲ್ಲಿ ಕೂಡಿದರು.
JOS 22:13 ಅವರು ಗಿಲ್ಯಾದ್ ನಾಡಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಯ ಅರ್ಧ ಗೋತ್ರದವರ ಬಳಿಗೆ ಯಾಜಕ ಎಲಿಯಾಜರನ ಮಗ ಫೀನೆಹಾಸನನ್ನೂ
JOS 22:14 ಅವನ ಸಂಗಡ ಇಸ್ರಾಯೇಲಿನ ಗೋತ್ರದ ಪ್ರತಿಯೊಂದು ಗೋತ್ರದಿಂದ ಒಬ್ಬೊಬ್ಬನನ್ನು ಅಂದರೆ ಮುಖ್ಯಸ್ಥನ ಪ್ರಕಾರ ಹತ್ತು ಮಂದಿ ಪ್ರಧಾನರನ್ನೂ ಕಳುಹಿಸಿದರು.
JOS 22:15 ಇವರು ಗಿಲ್ಯಾದ್ ನಾಡಿನಲ್ಲಿ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಯ ಅರ್ಧ ಗೋತ್ರದವರ ಬಳಿಗೆ ಬಂದು,
JOS 22:16 “ಯೆಹೋವ ದೇವರ ಸರ್ವ ಸಮೂಹವು ಹೇಳುವುದೇನೆಂದರೆ: ‘ನೀವು ಈ ಹೊತ್ತು ಯೆಹೋವ ದೇವರ ಕಡೆಗೆ ತಿರುಗದೆ, ಅವರಿಗೆ ವಿರೋಧವಾಗಿ ತಿರುಗಿಬೀಳುವ ಹಾಗೆ ನಿಮಗೆ ಒಂದು ಬಲಿಪೀಠವನ್ನು ಕಟ್ಟಿಕೊಂಡು, ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು?
JOS 22:17 ಪೆಯೋರದವರ ದುಷ್ಟತನವು ನಮಗೆ ಅಲ್ಪವೋ? ಯೆಹೋವ ದೇವರ ಜನರ ಮೇಲೆ ವ್ಯಾಧಿ ಬಂದಿದ್ದರೂ ಈ ದಿನದವರೆಗೂ ಆ ಪಾಪದಿಂದ ನಾವು ಶುದ್ಧವಾಗಲಿಲ್ಲ.
JOS 22:18 ನೀವು ಈಗ ಯೆಹೋವ ದೇವರ ಕಡೆಯಿಂದ ತಿರುಗಿ ಹೋಗುತ್ತೀರಲ್ಲಾ? “ ‘ಈ ಹೊತ್ತು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬಿದ್ದರೆ, ನಾಳೆ ಅವರು ಇಸ್ರಾಯೇಲ್ ಜನಾಂಗದ ಮೇಲೆ ರೌದ್ರವುಳ್ಳವರಾಗುವರು.
JOS 22:19 ನೀವು ಸ್ವಾಧೀನಪಡಿಸುವ ನಾಡು ಅಶುದ್ಧವಾಗಿದ್ದರೆ, ಯೆಹೋವ ದೇವರ ಗುಡಾರವಿರುವ ಯೆಹೋವ ದೇವರ ನಾಡಿಗೆ ನೀವು ಬಂದು, ನಮ್ಮ ಮಧ್ಯದಲ್ಲಿ ಸೊತ್ತನ್ನು ತೆಗೆದುಕೊಳ್ಳಿರಿ. ಯೆಹೋವ ದೇವರ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವುದರಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿ ಬೀಳಬೇಡಿರಿ. ನಮಗೆ ವಿರೋಧವಾಗಿಯೂ ತಿರುಗಿ ಬೀಳಬೇಡಿರಿ.
JOS 22:20 ಜೆರಹನ ಮಗ ಆಕಾನನು ಅರ್ಪಿತವಾದ ವಸ್ತುಗಳನ್ನು ಕದ್ದು ಅಪರಾಧವೆಸಗಿದಾಗ ಯೆಹೋವ ದೇವರ ಕೋಪವು ಸಮಸ್ತ ಇಸ್ರಾಯೇಲ್ ಜನರ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಇತರರೂ ಸಾಯಬೇಕಾಯಿತು,’ ” ಎಂದು ಹೇಳಿದರು.
JOS 22:21 ರೂಬೇನ್ಯರೂ ಗಾದ್ಯರೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಗೋತ್ರಗಳ ಮುಖ್ಯಸ್ಥರಿಗೆ ಉತ್ತರವಾಗಿ,
JOS 22:22 “ದೇವಾದಿದೇವರಾದ ಯೆಹೋವ ದೇವರು ಇದಕ್ಕೆ ಸಾಕ್ಷಿ, ನಾವು ದೇವಾದಿದೇವರಾದ ಯೆಹೋವ ದೇವರಿಗೆ ವಿರುದ್ಧ ಪಾಪಮಾಡಿದವರಾಗಿದ್ದರೆ ಅಥವಾ ಅವಿಧೇಯರಾಗಿದ್ದರೆ, ಆ ದೇವರು ನಮ್ಮನ್ನು ಇಂದೇ ಜೀವದಿಂದುಳಿಸದಿರಲಿ.
JOS 22:23 ನಾವು ಯೆಹೋವ ದೇವರ ಕಡೆಗೆ ತಿರುಗಿಕೊಂಡು ದಹನಬಲಿಗಳನ್ನಾದರೂ, ಧಾನ್ಯ ಸಮರ್ಪಣೆಯನ್ನಾದರೂ, ಸಮಾಧಾನದ ಸಮರ್ಪಣೆಗಳನ್ನಾದರೂ, ಅದರ ಮೇಲೆ ಅರ್ಪಿಸುವುದಕ್ಕೋಸ್ಕರ ಬಲಿಪೀಠವನ್ನು ನಮಗಾಗಿ ಕಟ್ಟಿದ್ದರೆ, ಯೆಹೋವ ದೇವರು ಅದನ್ನು ವಿಚಾರಿಸಲಿ.
JOS 22:24 “ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದೆವು. ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಾಯೇಲ್ ದೇವರಾದ ಯೆಹೋವ ದೇವರಲ್ಲಿ ನಿಮಗೇನು ಪಾಲಿದೆ?
JOS 22:25 ರೂಬೇನ್ಯರೇ, ಗಾದ್ಯರೇ ಯೆಹೋವ ದೇವರು ನಿಮಗೂ ನಮಗೂ ನಡುವೆ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದರಿಂದ ಯೆಹೋವ ದೇವರ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲ,’ ಎಂದು ಹೇಳಿ, ನಮ್ಮ ಮಕ್ಕಳನ್ನು ಯೆಹೋವ ದೇವರಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು.
JOS 22:26 “ಆದ್ದರಿಂದ, ‘ನಾವು ಸಿದ್ಧರಾಗಿ ಬಲಿಪೀಠವನ್ನು ಕಟ್ಟೋಣ ಎಂದು ಹೇಳಿದ ಕಾರಣ, ದಹನಬಲಿ ಅಥವಾ ಬೇರೆ ಬಲಿಗಳನ್ನು ಸಮರ್ಪಿಸುವುದಕ್ಕೆ ಅಲ್ಲ.’
JOS 22:27 ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿಯವರಿಗೂ ಮಧ್ಯದಲ್ಲಿ ಒಂದು ಸಾಕ್ಷಿ ಉಂಟಾಗಿರುವಂತೆಯೂ ನಾವು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿ, ಸಮಾಧಾನದ ಬಲಿ ಮುಂತಾದವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಗುರುತಾಗಿರುವಂತೆಯೂ, ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಯೆಹೋವ ದೇವರಲ್ಲಿ ನಿಮಗೆ ಭಾಗವಿಲ್ಲ,’ ಎಂದು ಹೇಳದೆ ಇರುವಂತೆಯೂ ಸಾಕ್ಷಿಗಾಗಿ ಕಟ್ಟಿದ್ದೇವೆ ಅಷ್ಟೇ.
JOS 22:28 “ಇದಲ್ಲದೆ ನಾವು, ‘ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತತಿಯವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ: ಯೆಹೋವ ದೇವರ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿರಿ, ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ. ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು.
JOS 22:29 “ಆದರೆ ನಮ್ಮ ದೇವರಾದ ಯೆಹೋವ ದೇವರ ಗುಡಾರದ ಮುಂದೆ ಇರುವ ಅವರ ಯಜ್ಞವೇದಿಯನ್ನು ಅಲ್ಲದೆ ನಾವು ದಹನಬಲಿ, ಧಾನ್ಯ ನೈವೇದ್ಯ ಮತ್ತು ಇತರ ಬಲಿಗೋಸ್ಕರವಾಗಿಯೂ ಮತ್ತೊಂದು ಬಲಿಪೀಠವನ್ನು ಕಟ್ಟಿ, ಯೆಹೋವ ದೇವರಿಗೆ ವಿರೋಧವಾಗಿ ವಿಮುಖರಾಗಿ ತಿರುಗಿಬೀಳುವುದು ನಮಗೆ ದೂರವಾಗಿರಲಿ,” ಎಂದರು.
JOS 22:30 ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್ ಗೋತ್ರಗಳ ಮುಖ್ಯಸ್ಥರೂ ರೂಬೇನ್, ಗಾದ್ ಹಾಗೂ ಮನಸ್ಸೆಯ ಗೋತ್ರದವರು ಹೇಳಿದ ಮಾತುಗಳನ್ನು ಕೇಳಿದಾಗ ಅವರಿಗೆ ಮೆಚ್ಚಿಕೆಯಾಯಿತು.
JOS 22:31 ಯಾಜಕನಾಗಿರುವ ಎಲಿಯಾಜರನ ಪುತ್ರ ಫೀನೆಹಾಸನು ರೂಬೇನ್, ಗಾದ್ ಹಾಗೂ ಮನಸ್ಸೆಯ ಗೋತ್ರದವರಿಗೆ, “ನೀವು ಯೆಹೋವ ದೇವರಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಅವರು ನಮ್ಮ ಮಧ್ಯದಲ್ಲಿರುತ್ತಾರೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವ ದೇವರ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ,” ಎಂದನು.
JOS 22:32 ಯಾಜಕನಾದ ಎಲಿಯಾಜರನ ಮಗ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್ ದೇಶದಲ್ಲಿರುವ ರೂಬೇನ್ಯರನ್ನೂ ಗಾದ್ಯರನ್ನೂ ಬಿಟ್ಟು ಕಾನಾನ್ ದೇಶದಲ್ಲಿರುವ ಇಸ್ರಾಯೇಲರ ಬಳಿಗೆ ತಿರುಗಿಬಂದು, ಅವರಿಗೆ ವರ್ತಮಾನವನ್ನು ತಿಳಿಸಿದರು.
JOS 22:33 ಆ ಮಾತನ್ನು ಇಸ್ರಾಯೇಲರು ಕೇಳಿ ಸಂತೋಷಪಟ್ಟು ದೇವರನ್ನು ಕೊಂಡಾಡಿದರು. ಆದ್ದರಿಂದ ಅವರು ರೂಬೇನ್ಯರೂ ಗಾದ್ಯರೂ ನಿವಾಸವಾಗಿದ್ದ ನಾಡಿನ ಮೇಲೆ ಯುದ್ಧಮಾಡಿ ಅವರನ್ನು ನಾಶಮಾಡಬೇಕೆಂಬ ಆಲೋಚನೆಯನ್ನು ಬಿಟ್ಟುಬಿಟ್ಟರು.
JOS 22:34 ರೂಬೇನ್ಯರೂ ಗಾದ್ಯರೂ ಆ ಬಲಿಪೀಠಕ್ಕೆ, “ನಮ್ಮ ನಡುವೆ ಯೆಹೋವ ದೇವರೇ ದೇವರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ,” ಎಂದು ಹೆಸರಿಟ್ಟರು.
JOS 23:1 ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.
JOS 23:2 ಒಂದು ದಿನ ಅವನು ಸಮಸ್ತ ಇಸ್ರಾಯೇಲರನ್ನೂ ಅವರ ಹಿರಿಯರನ್ನೂ ಅವರ ಮುಖ್ಯಸ್ಥರನ್ನೂ ಅವರ ನ್ಯಾಯಾಧಿಪತಿಗಳನ್ನೂ ಅವರ ಅಧಿಕಾರಿಗಳನ್ನೂ ಕರೆಯಿಸಿ ಅವರಿಗೆ, “ನಾನು ದಿನತುಂಬಿದ ವೃದ್ಧನಾಗಿದ್ದೇನೆ.
JOS 23:3 ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.
JOS 23:4 ನಾನು ಯೊರ್ದನ್ ನದಿ ಮೊದಲುಗೊಂಡು ಪಶ್ಚಿಮಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ರಾಷ್ಟ್ರಗಳನ್ನು ಸೋಲಿಸಿ, ಉಳಿದ ಸಕಲ ನಾಡನ್ನು ನಿಮ್ಮ ಗೋತ್ರಗಳಿಗೆ ಸೊತ್ತಾಗಿ ಕೊಟ್ಟಿದ್ದೇನೆ.
JOS 23:5 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಉಳಿದವರನ್ನು ನಿಮ್ಮ ಮುಂದೆ ತಳ್ಳಿಬಿಟ್ಟು, ನಿಮ್ಮ ಕಣ್ಣೆದುರಿನಿಂದ ಅವರನ್ನು ಹೊರಡಿಸಿ ಬಿಡುವರು. ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆಯೇ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.
JOS 23:6 “ನೀವು ಬಲಗೊಳ್ಳಿರಿ, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ, ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವ ಎಲ್ಲವನ್ನು ಕೈಗೊಂಡು ನಡೆಯಿರಿ.
JOS 23:7 ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವರುಗಳ ಹೆಸರುಗಳನ್ನು ಸ್ಮರಿಸಲೂ ಬೇಡಿರಿ. ಅವುಗಳ ಮೇಲೆ ಆಣೆಯೂ ಇಡಬೇಡಿರಿ. ಅವುಗಳಿಗೆ ಆರಾಧನೆ ಮಾಡಬಾರದು. ಅಡ್ಡಬೀಳಲೂಬಾರದು.
JOS 23:8 ಆದರೆ, ಈವರೆಗೂ ಹೇಗೋ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿರಿ.
JOS 23:9 “ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
JOS 23:10 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
JOS 23:11 ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.
JOS 23:12 “ಆದರೆ, ನೀವು ದೇವರಿಂದ ತಿರುಗಿಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಂಡು ಅವರೊಂದಿಗೆ ಮದುವೆ ಮಾಡಿಕೊಟ್ಟರೆ, ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ,
JOS 23:13 ನಿಮ್ಮ ದೇವರಾದ ಯೆಹೋವ ದೇವರು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿಬಿಡುವುದಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನೊಳಗಿಂದ ನೀವು ನಾಶವಾಗುವವರೆಗೂ ಅವರು ನಿಮಗೆ ಉರುಲೂ ಬೋನೂ ಆಗಿರುವರು. ಇದಲ್ಲದೆ ದೇವರು ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯವಾಗಿ ತಿಳಿದುಕೊಳ್ಳುವಿರಿ.
JOS 23:14 “ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
JOS 23:15 ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಒಳ್ಳೆಯ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ
JOS 23:16 ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯನ್ನು ನೀವು ಉಲ್ಲಂಘಿಸಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಅವರು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವರು. ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯುವುದು. ಅವರು ನಿಮಗೆ ಕೊಟ್ಟ ಒಳ್ಳೆಯ ದೇಶದಿಂದ ನೀವು ಬೇಗನೆ ನಾಶವಾಗಿಹೋಗುವಿರಿ,” ಎಂದನು.
JOS 24:1 ಅನಂತರ ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲಿನ ಸಮಸ್ತ ಗೋತ್ರದವರನ್ನು ಕೂಡಿಸಿ, ಇಸ್ರಾಯೇಲಿನ ಹಿರಿಯರನ್ನೂ ಅವರ ಮುಖ್ಯಸ್ಥರನ್ನೂ ಅವರ ನ್ಯಾಯಾಧಿಪತಿಗಳನ್ನೂ ಅವರ ಅಧಿಕಾರಿಗಳನ್ನೂ ಕರೆಯಿಸಿದನು. ಅವರು ದೇವರ ಮುಂದೆ ಬಂದು ನಿಂತರು.
JOS 24:2 ಯೆಹೋಶುವನು ಅವರೆಲ್ಲರಿಗೂ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ‘ಪೂರ್ವದಲ್ಲಿ ನಿಮ್ಮ ಮೂಲ ಪುರುಷರಾದ ಅಬ್ರಹಾಮನಿಗೂ ನಾಹೋರನಿಗೂ ತಂದೆಯಾದ ತೆರಹನು ಯೂಫ್ರೇಟೀಸ್ ನದಿಯ ಆಚೆ ವಾಸವಾಗಿದ್ದಾಗ ಅವರೆಲ್ಲರೂ ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
JOS 24:3 ಆದರೆ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿ ಇದ್ದ ನಿಮ್ಮ ತಂದೆಯಾದ ಅಬ್ರಹಾಮನನ್ನು ಕರೆದುಕೊಂಡು ಬಂದು, ಅವನನ್ನು ಕಾನಾನ್ ದೇಶವನ್ನೆಲ್ಲಾ ಸಂಚಾರ ಮಾಡಿಸಿ, ಅವನ ಸಂತಾನವನ್ನು ಅಭಿವೃದ್ಧಿ ಮಾಡಿದೆನು. ಅವನಿಗೆ ಇಸಾಕನನ್ನು ಕೊಟ್ಟೆನು.
JOS 24:4 ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯೀರ್ ಪರ್ವತದ ನಾಡನ್ನು ಸೊತ್ತಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಈಜಿಪ್ಟಿಗೆ ಹೋದರು.
JOS 24:5 “ ‘ನಾನು ಮೋಶೆಯನ್ನೂ ಆರೋನನನ್ನೂ ಕಳುಹಿಸಿ, ಅವರ ಮಧ್ಯದಲ್ಲಿ ನಾನು ಮಾಡಿದವುಗಳ ಪ್ರಕಾರ ಈಜಿಪ್ಟನ್ನು ಬಾಧಿಸಿದೆನು. ತರುವಾಯ ನಿಮ್ಮನ್ನು ಹೊರಗೆ ತಂದೆನು.
JOS 24:6 ನಾನು ನಿಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಹೊರಡಿಸಿದಾಗ ನೀವು ಸಮುದ್ರದ ತೀರಕ್ಕೆ ಬಂದಿರಿ. ಆದರೆ ಈಜಿಪ್ಟಿನವರು ರಥಗಳ ಮತ್ತು ರಾಹುತರ ಸಂಗಡ ನಿಮ್ಮ ಪೂರ್ವಜರನ್ನು ಕೆಂಪು ಸಮುದ್ರದವರೆಗೂ ಹಿಂದಟ್ಟಿದರು.
JOS 24:7 ಆಗ, ಅವರು ಯೆಹೋವ ದೇವರಾಗಿರುವ ನನಗೆ ಕೂಗಿದಾಗ ನಾನು ನಿಮಗೂ ಈಜಿಪ್ಟಿನವರಿಗೂ ಮಧ್ಯದಲ್ಲಿ ಅಂಧಕಾರವನ್ನು ಇಟ್ಟು, ಸಮುದ್ರವನ್ನು ಅವರ ಮೇಲೆ ಬರಮಾಡಿ, ಅವರನ್ನು ಮುಚ್ಚಿಬಿಟ್ಟೆನು.
JOS 24:8 “ ‘ನಾನು ಈಜಿಪ್ಟಿನಲ್ಲಿ ಮಾಡಿದ್ದನ್ನು ನಿಮ್ಮ ಕಣ್ಣುಗಳು ಕಂಡವು. ಮರುಭೂಮಿಯಲ್ಲಿ ಬಹುಕಾಲದವರೆಗೆ ವಾಸವಾಗಿದ್ದೀರಿ. ಅನಂತರ ಯೊರ್ದನ್ ನದಿ ಆಚೆ ವಾಸವಾಗಿದ್ದ ಅಮೋರಿಯರ ದೇಶಕ್ಕೆ ನಿಮ್ಮನ್ನು ಕರೆದುಕೊಂಡು ಬಂದೆನು. ಅವರು ನಿಮ್ಮ ಸಂಗಡ ಯುದ್ಧಮಾಡುವಾಗ ಅವರ ದೇಶವನ್ನು ನೀವು ಸ್ವಾಧೀನ ಮಾಡಿಕೊಳ್ಳುವ ಹಾಗೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ, ಅವರನ್ನು ನಿಮ್ಮ ಎದುರಿನಿಂದ ನಾಶಮಾಡಿದೆನು.
JOS 24:9 ಆಗ ಮೋವಾಬ್ಯರ ಅರಸನಾದ ಚಿಪ್ಪೋರನ ಮಗನಾದ ಬಾಲಾಕನು ಎದ್ದು, ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಿ ನಿಮ್ಮನ್ನು ಶಪಿಸುವ ಹಾಗೆ ಬೆಯೋರನ ಮಗನಾದ ಬಿಳಾಮನನ್ನು ಕರೆಕಳುಹಿಸಿದನು.
JOS 24:10 ಆದರೆ ನಾನು ಬಿಳಾಮನ ಮಾತನ್ನು ಕೇಳಲು ಮನಸ್ಸಿಲ್ಲದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಾನು ಅವನ ಕೈಯಿಂದ ನಿಮ್ಮನ್ನು ತಪ್ಪಿಸಿದೆನು.
JOS 24:11 “ ‘ನೀವು ಯೊರ್ದನ್ ನದಿಯನ್ನು ದಾಟಿ ಯೆರಿಕೋವಿಗೆ ಬಂದಿರಿ. ಯೆರಿಕೋವಿನ ನಿವಾಸಿಗಳೂ ನಿಮ್ಮ ಸಂಗಡ ಯುದ್ಧಮಾಡಿದರು. ಹಾಗೆಯೇ ಅಮೋರಿಯರೂ ಪೆರಿಜೀಯರೂ ಕಾನಾನ್ಯರೂ ಹಿತ್ತಿಯರೂ ಗಿರ್ಗಾಷಿಯರೂ ಹಿವ್ವಿಯರೂ ಯೆಬೂಸಿಯರೂ ನಿಮ್ಮ ಸಂಗಡ ಯುದ್ಧಮಾಡಿದರು. ಆದರೆ ನಾನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದೆನು.
JOS 24:12 ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳುಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸರನ್ನೂ ನಿಮ್ಮ ಮುಂದೆ ಓಡಿಸಿಬಿಟ್ಟವು. ಇದು ಆದದ್ದು ನಿಮ್ಮ ಖಡ್ಗದಿಂದಲ್ಲಾ, ನಿಮ್ಮ ಬಿಲ್ಲಿನಿಂದಲ್ಲಾ.
JOS 24:13 ನೀವು ವ್ಯವಸಾಯಮಾಡದ ಭೂಮಿಯನ್ನೂ ನೀವು ಕಟ್ಟದ ಪಟ್ಟಣಗಳನ್ನೂ ನಾನು ನಿಮಗೆ ಕೊಟ್ಟೆನು. ನೀವು ಅವುಗಳಲ್ಲಿ ವಾಸವಾಗಿದ್ದೀರಿ. ನೀವು ನೆಟ್ಟು ಬೆಳೆಸದ ದ್ರಾಕ್ಷಿತೋಟಗಳ ಫಲವನ್ನೂ ಹಿಪ್ಪೆತೋಪುಗಳ ಫಲವನ್ನೂ ಅನುಭವಿಸುತ್ತಿದ್ದೀರಿ,’ ಎಂಬುದೇ.
JOS 24:14 “ಆದ್ದರಿಂದ ನೀವು ಈಗ ಯೆಹೋವ ದೇವರಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಅವರನ್ನು ಸೇವಿಸಿರಿ. ನಿಮ್ಮ ಪೂರ್ವಜರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಸೇವಿಸಿದ ದೇವರುಗಳನ್ನು ತೊರೆದುಬಿಟ್ಟು ಯೆಹೋವ ದೇವರನ್ನೇ ನೀವು ಸೇವಿಸಿರಿ.
JOS 24:15 ಯೆಹೋವ ದೇವರನ್ನು ಸೇವಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಈ ಹೊತ್ತು ನೀವು ಯಾರನ್ನು ಸೇವಿಸಬೇಕೆಂದಿದ್ದೀರಿ? ನಿಮ್ಮ ಪಿತೃಗಳು ಯೂಫ್ರೇಟೀಸ್ ನದಿಯ ಆಚೆ ಸೇವಿಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆಯ್ದುಕೊಳ್ಳಿರಿ. ಆದರೆ ನಾನೂ ನನ್ನ ಮನೆಯವರೂ ಯೆಹೋವ ದೇವರನ್ನೇ ಸೇವಿಸುವೆವು,” ಎಂದನು.
JOS 24:16 ಜನರು ಯೆಹೋಶುವನಿಗೆ ಉತ್ತರವಾಗಿ, “ನಾವು ಯೆಹೋವ ದೇವರನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವ ಕಾರ್ಯವು ನಮಗೆ ದೂರವಾಗಿರಲಿ.
JOS 24:17 ಏಕೆಂದರೆ ನಮ್ಮ ದೇವರಾದ ಯೆಹೋವ ದೇವರು ತಾವೇ ನಮ್ಮನ್ನೂ ನಮ್ಮ ಪಿತೃಗಳನ್ನೂ ದಾಸತ್ವದ ಮನೆಯಾದ ಈಜಿಪ್ಟ್ ದೇಶದಿಂದ ಬರಮಾಡಿ, ನಮ್ಮ ಕಣ್ಣುಗಳ ಮುಂದೆ ಆ ಅದ್ಭುತ ಸೂಚಕಕಾರ್ಯಗಳನ್ನು ಮಾಡಿ, ನಾವು ನಡೆದ ಎಲ್ಲಾ ಮಾರ್ಗಗಳಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದವರು.
JOS 24:18 ಇದಲ್ಲದೆ ದೇಶದಲ್ಲಿ ವಾಸವಾಗಿದ್ದ ಅಮೋರಿಯರ ಸಕಲ ಜನರನ್ನು ಯೆಹೋವ ದೇವರು ನಮ್ಮ ಮುಂದೆ ಹೊರಡಿಸಿಬಿಟ್ಟರು. ಆದ್ದರಿಂದ ನಾವು ಯೆಹೋವ ದೇವರನ್ನೇ ಸೇವಿಸುವೆವು. ಏಕೆಂದರೆ ಅವರು ನಮ್ಮ ದೇವರು,” ಎಂದರು.
JOS 24:19 ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸಲಾರಿರಿ. ಏಕೆಂದರೆ ಅವರು ಪರಿಶುದ್ಧ ದೇವರು, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ತೀಕ್ಷ್ಣ ದೇವರು. ಅವರು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸರು.
JOS 24:20 ನೀವು ಯೆಹೋವ ದೇವರನ್ನು ಬಿಟ್ಟು, ಅನ್ಯದೇವರುಗಳನ್ನು ಸೇವಿಸಿದರೆ, ಅವರು ನಿಮಗೆ ಒಳ್ಳೆಯದನ್ನು ಮಾಡದೆ ಕೇಡನ್ನು ಬರಮಾಡಿ ನಿಮ್ಮನ್ನು ದಹಿಸಿಬಿಡುವರು,” ಎಂದು ಹೇಳಿದನು.
JOS 24:21 ಅದಕ್ಕೆ ಜನರು ಯೆಹೋಶುವನಿಗೆ, “ಇಲ್ಲ! ನಾವು ಯೆಹೋವ ದೇವರನ್ನೇ ಸೇವಿಸುವೆವು,” ಎಂದರು.
JOS 24:22 ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸುವುದಕ್ಕೆ ಅವರನ್ನು ಆಯ್ದುಕೊಂಡಿರುವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ,” ಎಂದನು. ಅದಕ್ಕವರು, “ಹೌದು, ನಾವೇ ಸಾಕ್ಷಿಗಳಾಗಿದ್ದೇವೆ,” ಎಂದರು.
JOS 24:23 ಆಗ ಯೆಹೋಶುವನು ಅವರಿಗೆ, “ಹಾಗಾದರೆ, ಈಗ ನಿಮ್ಮ ಮಧ್ಯದಲ್ಲಿರುವ ಅನ್ಯದೇವರುಗಳನ್ನು ತೊರೆದು, ನಿಮ್ಮ ಹೃದಯವನ್ನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಸಿರಿ,” ಎಂದನು.
JOS 24:24 ಜನರು ಯೆಹೋಶುವನಿಗೆ, “ನಾವು ನಮ್ಮ ದೇವರಾದ ಯೆಹೋವ ದೇವರಿಗೆ ಸೇವೆಸಲ್ಲಿಸಿ, ಅವರ ಮಾತಿಗೆ ವಿಧೇಯರಾಗುವೆವು,” ಎಂದರು.
JOS 24:25 ಯೆಹೋಶುವನು ಆ ಹೊತ್ತು ಶೆಕೆಮಿನಲ್ಲಿ ಜನರ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಅವರಿಗೆ ನಿಯಮವಾಗಿಯೂ ಕಟ್ಟಳೆಯಾಗಿಯೂ ಇಟ್ಟನು.
JOS 24:26 ಈ ಮಾತುಗಳನ್ನು ಯೆಹೋಶುವನು ದೇವರ ನಿಯಮದ ಗ್ರಂಥದಲ್ಲಿ ಬರೆದು, ಒಂದು ದೊಡ್ಡ ಕಲ್ಲನ್ನು ಎತ್ತಿ, ಅದನ್ನು ಯೆಹೋವ ದೇವರ ಪರಿಶುದ್ಧಸ್ಥಳದ ಬಳಿಯಲ್ಲಿ ಇದ್ದ ಏಲಾ ಮರದ ಕೆಳಗೆ ನೆಟ್ಟನು.
JOS 24:27 ಯೆಹೋಶುವನು ಜನರಿಗೆ, “ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಏಕೆಂದರೆ ಇದು ಯೆಹೋವ ದೇವರು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿದೆ. ಆದ್ದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ,” ಎಂದು ಹೇಳಿದನು.
JOS 24:28 ಹೀಗೆ ಯೆಹೋಶುವನು ಜನರನ್ನು ಅವರವರ ಸೊತ್ತಿನ ಕಡೆಗೆ ಕಳುಹಿಸಿಬಿಟ್ಟನು.
JOS 24:29 ಇವುಗಳಾದ ತರುವಾಯ ನೂನನ ಮಗ ಯೆಹೋಶುವನೆಂಬ ಯೆಹೋವ ದೇವರ ಸೇವಕನು ನೂರಹತ್ತು ವರುಷ ವಯಸ್ಸಿನವನಾಗಿ ಮರಣಹೊಂದಿದನು.
JOS 24:30 ಅವನನ್ನು ಎಫ್ರಾಯೀಮ್ ಪರ್ವತದ ಗಾಷ್ ಬೆಟ್ಟದ ಉತ್ತರಕ್ಕಿರುವ ತಿಮ್ನತ್ ಸೆರಹ ಎಂಬ ಅವನ ಸೊತ್ತಿನ ಮೇರೆಯಲ್ಲಿ ಹೂಳಿಟ್ಟರು.
JOS 24:31 ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು.
JOS 24:32 ಇಸ್ರಾಯೇಲರು ಈಜಿಪ್ಟಿನಿಂದ ತಂದ ಯೋಸೇಫನ ಎಲುಬುಗಳನ್ನು ಶೆಕೆಮ್ ಊರಿನ ಹೊಲದಲ್ಲಿ ಹೂಳಿಟ್ಟರು. ಈ ಹೊಲವನ್ನು ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿ ನಾಣ್ಯಗಳನ್ನು ಕೊಟ್ಟು ಕೊಂಡುಕೊಂಡಿದ್ದನು. ಅದು ಯೋಸೇಫ್ಯರ ಸೊತ್ತಾಗಿತ್ತು.
JOS 24:33 ಆರೋನನ ಮಗ ಎಲಿಯಾಜರನೂ ಮರಣಹೊಂದಿದನು. ಅವನನ್ನು ಅವನ ಮಗ ಫೀನೆಹಾಸನಿಗೆ ಎಫ್ರಾಯೀಮ್ ಬೆಟ್ಟದ ದೇಶದಲ್ಲಿ ಕೊಡಲಾದ ಗಿಬೆಯದಲ್ಲಿ ಸಮಾಧಿಮಾಡಿದರು.
JDG 1:1 ಯೆಹೋಶುವನು ಮರಣ ಹೊಂದಿದ ಬಳಿಕ ಇಸ್ರಾಯೇಲರು, “ಕಾನಾನ್ಯರೊಡನೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವ ದೇವರನ್ನು ಕೇಳಿದರು.
JDG 1:2 ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಹೋಗಲಿ; ನಾನು ಆ ದೇಶವನ್ನು ಇವರ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ,” ಎಂದರು.
JDG 1:3 ಯೆಹೂದ ಗೋತ್ರದವರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ನೀವು ನಮ್ಮ ಸಂಗಡ ನಮ್ಮ ಪ್ರಾಂತಕ್ಕೆ ಬನ್ನಿರಿ, ಕಾನಾನ್ಯರ ಮೇಲೆ ಯುದ್ಧ ಮಾಡೋಣ. ಹಾಗೆಯೇ ನಾವು ನಿಮ್ಮ ಸಂಗಡ ನಿಮ್ಮ ಪ್ರಾಂತಕ್ಕೆ ಬರುತ್ತೇವೆ,” ಎಂದರು. ಹೀಗೆ ಸಿಮೆಯೋನ್ಯರು ಅವರ ಸಂಗಡ ಹೋದರು.
JDG 1:4 ಯೆಹೂದ ಗೋತ್ರದವರು ಹೋದಾಗ, ಯೆಹೋವ ದೇವರು ಕಾನಾನ್ಯರನ್ನೂ ಪೆರಿಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಬೆಜೆಕಿನಲ್ಲಿ ಹತ್ತು ಸಾವಿರ ಜನರನ್ನು ಕೊಂದರು.
JDG 1:5 ಅವರು ಬೆಜೆಕಿನಲ್ಲಿ ಅರಸನಾದ ಅದೋನೀಬೆಜೆಕನನ್ನು ಸಂಧಿಸಿ, ಅವನ ವಿರೋಧವಾಗಿ ಯುದ್ಧಮಾಡಿ, ಕಾನಾನ್ಯರನ್ನೂ ಪೆರಿಜೀಯರನ್ನೂ ಕೊಂದುಹಾಕಿದರು.
JDG 1:6 ಆದರೆ ಅದೋನೀಬೆಜೆಕನು ಓಡಿ ಹೋದದ್ದರಿಂದ, ಅವನನ್ನು ಹಿಂದಟ್ಟಿ ಹಿಡಿದು, ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.
JDG 1:7 ಆಗ ಅದೋನೀಬೆಜೆಕನು, “ನಾನು ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು, ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ, ದೇವರು ನನಗೆ ಮಾಡಿದ್ದಾರೆ,” ಎಂದನು. ಅವರು ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಲ್ಲಿ ಅವನು ಮರಣಹೊಂದಿದನು.
JDG 1:8 ಯೆಹೂದ ಗೋತ್ರದವರು ಯೆರೂಸಲೇಮಿನವರ ಮೇಲೆ ಯುದ್ಧಮಾಡಿ, ಅಲ್ಲಿದ್ದವರನ್ನು ಖಡ್ಗದಿಂದ ಸಂಹರಿಸಿ, ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
JDG 1:9 ತರುವಾಯ ಯೆಹೂದ ಗೋತ್ರದವರು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋದರು.
JDG 1:10 ಯೆಹೂದ ಗೋತ್ರದವರು ಪೂರ್ವದಲ್ಲಿ ಕಿರ್ಯತ್ ಅರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಸೋಲಿಸಿದರು.
JDG 1:11 ಅಲ್ಲಿಂದ ದೆಬೀರಿನ ನಿವಾಸಿಗಳ ವಿರೋಧವಾಗಿ ಹೋದರು. ದೆಬೀರಿಗೆ ಮೊದಲು ಕಿರ್ಯತ್ ಸೇಫೆರ್ ಎಂಬ ಹೆಸರಿತ್ತು.
JDG 1:12 ಕಾಲೇಬನು, “ಕಿರ್ಯತ್ ಸೇಫೆರ ಮೇಲೆ ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು.
JDG 1:13 ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
JDG 1:14 ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.
JDG 1:15 ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ನೀನು ನನಗೆ ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.
JDG 1:16 ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು.
JDG 1:17 ಯೆಹೂದ ಗೋತ್ರದವರು ತನ್ನ ಸಹೋದರರಾದ ಸಿಮೆಯೋನ್ಯರ ಸಂಗಡ ಹೊರಟು, ಚೆಫೆತ್‌ನಲ್ಲಿ ವಾಸವಾಗಿರುವ ಕಾನಾನ್ಯರ ಮೇಲೆ ದಾಳಿಮಾಡಿ, ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೊರ್ಮಾ ಎಂದು ಕರೆಯಲಾಗಿತ್ತು.
JDG 1:18 ಇದಲ್ಲದೆ ಯೆಹೂದ ಗೋತ್ರದವರು ಗಾಜಾವನ್ನೂ ಅದರ ಮೇರೆಯನ್ನೂ; ಅಷ್ಕೆಲೋನನ್ನೂ, ಅದರ ಮೇರೆಯನ್ನೂ; ಎಕ್ರೋನನ್ನೂ, ಅದರ ಮೇರೆಯನ್ನೂ ತೆಗೆದುಕೊಂಡರು.
JDG 1:19 ಯೆಹೋವ ದೇವರು ಯೆಹೂದ ಗೋತ್ರದವರ ಸಂಗಡ ಇದ್ದುದರಿಂದ, ಅವರು ಬೆಟ್ಟದ ಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿಣದ ರಥಗಳಿದ್ದುದರಿಂದ, ಅವರು ಅವರನ್ನು ಹೊರಡಿಸಲಾರದೆ ಹೋದರು.
JDG 1:20 ಮೋಶೆಯು ಹೇಳಿದ ಪ್ರಕಾರ, ಅವರು ಹೆಬ್ರೋನನ್ನು ಕಾಲೇಬನಿಗೆ ಕೊಟ್ಟರು. ಅವರು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟರು.
JDG 1:21 ಬೆನ್ಯಾಮೀನ್ಯರಿಗೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಈ ದಿನದವರೆಗೂ ಬೆನ್ಯಾಮೀನರ ಸಂಗಡ ವಾಸವಾಗಿದ್ದಾರೆ.
JDG 1:22 ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಏರಿಹೋದರು. ಯೆಹೋವ ದೇವರು ಅವರ ಸಂಗಡ ಇದ್ದರು.
JDG 1:23 ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಸಂಚರಿಸಿ ನೋಡಲು, ಯೋಸೇಫನ ಮನೆಯವರನ್ನು ಕಳುಹಿಸಲಾಯಿತು.
JDG 1:24 ಗೂಢಚಾರರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು. ನಾವು ನಿನಗೆ ಕರುಣೆ ತೋರಿಸುವೆವು,” ಎಂದರು.
JDG 1:25 ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ, ಅವರು ಬಂದು ಪಟ್ಟಣವನ್ನು ಖಡ್ಗದಿಂದ ಹೊಡೆದು, ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
JDG 1:26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ, ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ, ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈವರೆಗೂ ಅದಕ್ಕೆ ಅದೇ ಹೆಸರಿದೆ.
JDG 1:27 ಮನಸ್ಸೆಯ ಗೋತ್ರದವರು ಬೇತ್ ಷೆಯಾನರನ್ನೂ, ಅವರ ಊರುಗಳವರನ್ನೂ; ತಾನಕದವರನ್ನೂ, ಅವರ ಊರುಗಳವರನ್ನೂ; ದೋರಿನವರನ್ನೂ, ಅವರ ಊರುಗಳವರನ್ನೂ; ಇಬ್ಲೆಯಾಮಿನವರನ್ನೂ, ಅವರ ಊರುಗಳವರನ್ನೂ, ಮೆಗಿದ್ದೋನಿನವರನ್ನೂ, ಅವರ ಊರುಗಳವರನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಆ ದೇಶದಲ್ಲಿ ವಾಸಿಸಬೇಕೆಂದಿದ್ದರು.
JDG 1:28 ಇಸ್ರಾಯೇಲರು ಬಲಗೊಂಡಾಗ, ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ, ಅವರನ್ನು ದಾಸತ್ವಕ್ಕೆ ಕಾನಾನ್ಯರಿಗೆ ನೇಮಕ ಮಾಡಿದರು.
JDG 1:29 ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
JDG 1:30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ದಾಸರಾಗಿ ವಾಸಮಾಡುವವರಾದರು.
JDG 1:31 ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ; ಸೀದೋನಿನ ವಾಸಿಗಳನ್ನೂ; ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
JDG 1:32 ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ, ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.
JDG 1:33 ನಫ್ತಾಲಿ ಗೋತ್ರದವರು ಬೇತ್ ಷೆಮೆಷ್ ವಾಸಿಗಳನ್ನೂ ಹೊರಡಿಸಿಬಿಡದೆ, ಆ ದೇಶವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ ಷೆಮೆಷ್, ಬೇತ್ ಅನಾತ್ ಪಟ್ಟಣ ವಾಸಿಗಳು ಅವರಿಗೆ ದಾಸರಾದರು.
JDG 1:34 ಅಮೋರಿಯರು ದಾನ್ಯರನ್ನು ತಗ್ಗಿನಲ್ಲಿ ಇಳಿಯಗೊಡದೆ, ಬೆಟ್ಟಗಳಿಗೆ ಓಡಿಸಿಬಿಟ್ಟರು
JDG 1:35 ಹೀಗೆ ಅಮೋರಿಯರು ಹರ್‌ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಗೋತ್ರದವರ ಕೈ ಬಲ ಹೆಚ್ಚಾದದ್ದರಿಂದ ಅವರಿಗೆ ದಾಸರಾದರು.
JDG 1:36 ಹೀಗೆ ಅಮೋರಿಯರ ಮೇರೆಯು ಅಕ್ರಬ್ಬೀಮನ್ನು ಹಿಡಿದು ಸೆಲ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.
JDG 2:1 ಯೆಹೋವ ದೇವರ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮ ತಂದೆಗಳಿಗೆ ಆಣೆ ಇಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.
JDG 2:2 ‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ?
JDG 2:3 ಆದ್ದರಿಂದ, ‘ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು. ಅವರ ದೇವರುಗಳು ನಿಮಗೆ ಉರುಲಾಗುವುವು,’ ಎಂದು ನಾನು ಹೇಳಿದ್ದೆನು.”
JDG 2:4 ಯೆಹೋವ ದೇವರ ದೂತನು ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ಹೇಳುವಾಗ, ಜನರು ಗಟ್ಟಿಯಾಗಿ ಅತ್ತರು.
JDG 2:5 ಆ ಸ್ಥಳಕ್ಕೆ ಬೋಕೀಮ್ ಎಂಬ ಹೆಸರಿಟ್ಟು, ಅಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಿದರು.
JDG 2:6 ಯೆಹೋಶುವನು ಜನರನ್ನು ಕಳುಹಿಸಿಬಿಟ್ಟಾಗ, ಇಸ್ರಾಯೇಲರು ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಬಾಧ್ಯತೆಗಳಿಗೆ ಹೋದರು.
JDG 2:7 ಆದರೆ ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು.
JDG 2:8 ಆದರೆ ನೂನನ ಮಗನೆಂಬ ಯೆಹೋವ ದೇವರ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಪ್ರಾಯದವನಾಗಿ ಮರಣಹೊಂದಿದನು.
JDG 2:9 ಅವನನ್ನು ಎಫ್ರಾಯೀಮನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ ಹೆರೆಸ್‌ನಲ್ಲಿ ಹೂಳಿಟ್ಟರು.
JDG 2:10 ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ, ಯೆಹೋವ ದೇವರನ್ನೂ ಅವರು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.
JDG 2:11 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟತನ ಮಾಡಿ, ಬಾಳನನ್ನು ಸೇವಿಸಿ,
JDG 2:12 ತಮ್ಮ ತಂದೆಗಳನ್ನು ಈಜಿಪ್ಟಿನಿಂದ ಹೊರಡಿಸಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ತಮ್ಮ ಸುತ್ತಲಿರುವ ಜನಾಂಗಗಳ ದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದರು.
JDG 2:13 ಅವರು ಯೆಹೋವ ದೇವರನ್ನು ಬಿಟ್ಟು, ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು.
JDG 2:14 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿಗೆ ವಿರೋಧವಾಗಿ ಉರಿಗೊಂಡು, ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಇನ್ನು ಮೇಲೆ ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ, ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟರು.
JDG 2:15 ಯೆಹೋವ ದೇವರು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಯಿಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವುದಕ್ಕೆ ಯೆಹೋವ ದೇವರ ಕೈ ಅವರಿಗೆ ವಿರೋಧವಾಗಿತ್ತು.
JDG 2:16 ಆದರೂ ಯೆಹೋವ ದೇವರು ಅವರನ್ನು ಕೊಳ್ಳೆಹೊಡೆಯುವವರ ಕೈಯಿಂದ ಬಿಡಿಸುವದಕ್ಕೋಸ್ಕರ ನ್ಯಾಯಾಧಿಪತಿಗಳನ್ನು ಎಬ್ಬಿಸಿದರು.
JDG 2:17 ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ, ಅನ್ಯದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಪಿತೃಗಳು ಯೆಹೋವ ದೇವರ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದುಬಿಟ್ಟರು. ಅವರು ಮಾಡಿದ ಪ್ರಕಾರ ಮಾಡಲಿಲ್ಲ.
JDG 2:18 ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು.
JDG 2:19 ಆ ನ್ಯಾಯಾಧಿಪತಿಯ ಮರಣದ ನಂತರ, ಅವರು ತಿರುಗಿ ಮಾರ್ಗತಪ್ಪಿ, ಅನ್ಯದೇವರುಗಳನ್ನು ಹಿಂಬಾಲಿಸಿ ಹೋಗಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಹಿರಿಯರಿಗಿಂತ ಅಧಿಕ ಭ್ರಷ್ಟರಾದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಟಮಾರಿತನವನ್ನೂ ಬಿಡಲೇ ಇಲ್ಲ.
JDG 2:20 ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,
JDG 2:21 ನಾನು ಸಹ ಇನ್ನು ಮೇಲೆ ಯೆಹೋಶುವನು ಮರಣಹೊಂದುವಾಗ ಉಳಿಸಿದ ಜನಾಂಗಗಳಲ್ಲಿ ಒಬ್ಬರನ್ನಾದರೂ ಇವರ ಮುಂದೆ ಹೊರಡಿಸಿಬಿಡುವುದಿಲ್ಲ,” ಎಂದರು.
JDG 2:22 ಇಸ್ರಾಯೇಲರು ತಮ್ಮ ತಂದೆಗಳು ಕೈಗೊಂಡು ನಡೆದ ಯೆಹೋವ ದೇವರ ಮಾರ್ಗದಲ್ಲಿ ತಾವು ಕೈಗೊಂಡು ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ,
JDG 2:23 ಯೆಹೋವ ದೇವರು ಆ ಜನಾಂಗಗಳನ್ನು ಯೆಹೋಶುವನ ಕೈಯಲ್ಲಿ ಒಪ್ಪಿಸಿಕೊಡದೆ, ಅವುಗಳನ್ನು ಶೀಘ್ರವಾಗಿ ಓಡಿಸಿಬಿಡದೆ ಉಳಿಸಿದರು.
JDG 3:1 ಕಾನಾನ್ ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲರನ್ನು ಪರೀಕ್ಷಿಸುವುದಕ್ಕೂ,
JDG 3:2 ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ:
JDG 3:3 ಐದು ಮಂದಿ ಫಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಸೀದೋನ್ಯರೂ ಬಾಳ್ ಹೆರ್ಮೋನ್ ಬೆಟ್ಟದಿಂದ ಪ್ರಾರಂಭಿಸಿ ಹಮಾತಿನ ಪ್ರದೇಶದವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾಗಿರುವ ಹಿವ್ವಿಯರು ಇವರೇ.
JDG 3:4 ತಾವು ಮೋಶೆಯ ಮುಖಾಂತರವಾಗಿ ಇಸ್ರಾಯೇಲರ ಪಿತೃಗಳಿಗೆ ಆಜ್ಞಾಪಿಸಿದ ಆಜ್ಞೆಗಳನ್ನು ಇಸ್ರಾಯೇಲರು ಕೇಳುವರೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕೆ ಯೆಹೋವ ದೇವರು ಅವರನ್ನು ಉಳಿಸಿಬಿಟ್ಟರು.
JDG 3:5 ಇಸ್ರಾಯೇಲರು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು,
JDG 3:6 ಅವರ ಪುತ್ರಿಯರನ್ನು ತಾವು ಹೆಂಡತಿಯರನ್ನಾಗಿ ತೆಗೆದುಕೊಂಡು, ತಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆ ಮಾಡಿಕೊಟ್ಟು, ಅವರ ದೇವರುಗಳನ್ನು ಸೇವಿಸಿದರು.
JDG 3:7 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತು, ಬಾಳನನ್ನೂ ಅಶೇರನನ್ನೂ ಸೇವಿಸಿದರು.
JDG 3:8 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡು, ಅವರನ್ನು ಅರಾಮ್ ನಹರೈಮ್‌ದ ಅರಸನಾದ ಕೂಷನ್ ರಿಷಾತಯಿಮನ ಕೈಗೆ ಮಾರಿಬಿಟ್ಟರು. ಇಸ್ರಾಯೇಲರು ಕೂಷನ್‌ರಿಷಾತಯಿಮ್ ಎಂಬವನಿಗೆ ಎಂಟು ವರ್ಷ ಗುಲಾಮರಾಗಿದ್ದರು.
JDG 3:9 ತರುವಾಯ ಇಸ್ರಾಯೇಲರು ಯೆಹೋವ ದೇವರನ್ನು ಕೂಗುವಾಗ, ಯೆಹೋವ ದೇವರು ಇಸ್ರಾಯೇಲರಿಗೆ ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ, ಕಾಲೇಬನ ತಮ್ಮನಾದ ಕೆನಾಜನ ಮಗ ಒತ್ನಿಯೇಲನನ್ನು ಎಬ್ಬಿಸಿದರು.
JDG 3:10 ಅವನ ಮೇಲೆ ಯೆಹೋವ ದೇವರ ಆತ್ಮವು ಬಂದದ್ದರಿಂದ, ಅವನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಯುದ್ಧಮಾಡುವುದಕ್ಕೆ ಹೊರಟಾಗ, ಯೆಹೋವ ದೇವರು ಅವನ ಕೈಗೆ ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಒಪ್ಪಿಸಿಕೊಟ್ಟರು. ಅವನು ಕೂಷನ್ ರಿಷಾತಯಿಮನ ಮೇಲೆ ಜಯಹೊಂದಿದನು.
JDG 3:11 ದೇಶವು ನಾಲ್ವತ್ತು ವರ್ಷದವರೆಗೆ ವಿಶ್ರಾಂತಿಯಿಂದಿತ್ತು. ತರುವಾಯ ಕೆನಾಜನ ಮಗ ಒತ್ನಿಯೇಲನು ಮರಣಹೊಂದಿದನು.
JDG 3:12 ಇಸ್ರಾಯೇಲರು ಯೆಹೋವ ದೇವರ ಮುಂದೆ ತಿರುಗಿ ಕೆಟ್ಟದ್ದನ್ನೇ ಮಾಡಿದರು. ಅವರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನೇ ಮಾಡಿದ್ದರಿಂದ, ಯೆಹೋವ ದೇವರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲಪಡಿಸಿದರು.
JDG 3:13 ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.
JDG 3:14 ಇಸ್ರಾಯೇಲರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರ್ಷ ಸೇವಿಸಿದರು.
JDG 3:15 ಆದರೆ ಇಸ್ರಾಯೇಲರು ಯೆಹೋವ ದೇವರನ್ನು ಕೂಗಿದಾಗ, ಯೆಹೋವ ದೇವರು ಅವರಿಗೆ ಬೆನ್ಯಾಮೀನನಾದ ಗೇರನ ಮಗ ಏಹೂದನನ್ನು ರಕ್ಷಿಸುವುದಕ್ಕೆ ಎಬ್ಬಿಸಿದರು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲರು ಮೋವಾಬಿನ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು.
JDG 3:16 ಏಹೂದನು ಇಬ್ಬಾಯಿಯುಳ್ಳ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿಕೊಂಡು, ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು,
JDG 3:17 ಕಾಣಿಕೆಯನ್ನು ಮೋವಾಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ದಪ್ಪ ಮನುಷ್ಯನಾಗಿದ್ದನು.
JDG 3:18 ಏಹೂದನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ, ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿಬಿಟ್ಟು,
JDG 3:19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, “ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ,” ಎಂದನು. ಅವನು, “ನಿಶ್ಶಬ್ದ,” ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು.
JDG 3:20 ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು.
JDG 3:21 ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು.
JDG 3:22 ಅದು ಅಲಗಿನ ಸಂಗಡ ಹಿಡಿ ಸಮೇತ ಅವನ ಹೊಟ್ಟೆಯಲ್ಲಿ ಹೊಕ್ಕು, ಕಿತ್ತು ತೆಗೆಯಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಅದರಿಂದ ಮಲವು ಹೊರಟಿತು.
JDG 3:23 ಆಗ ಏಹೂದನು ಕೊಠಡಿಯ ಬಾಗಿಲನ್ನು ತನ್ನ ಹಿಂಭಾಗದಲ್ಲಿ ಮುಚ್ಚಿ, ಬೀಗವನ್ನು ಹಾಕಿ, ದ್ವಾರಾಂಗಳದಿಂದ ಹೊರಟುಹೋದನು.
JDG 3:24 ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, “ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು,” ಎಂದುಕೊಂಡರು.
JDG 3:25 ಅವರು ತಮಗೆ ಬೇಸರವಾಗುವ ಮಟ್ಟಿಗೂ ಕಾದಿದ್ದರು. ಆದರೆ, ಅವನು ಕೊಠಡಿ ಬಾಗಿಲನ್ನು ತೆರೆಯದೆ ಇದ್ದುದರಿಂದ, ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆದರು. ಅವರ ಪ್ರಭುವು ನೆಲದ ಮೇಲೆ ಮರಣಹೊಂದಿದ್ದನು.
JDG 3:26 ಅವರು ಆಲಸ್ಯ ಮಾಡುತ್ತಿರುವಾಗ, ಏಹೂದನು ತಪ್ಪಿಸಿಕೊಂಡು ವಿಗ್ರಹಗಳನ್ನು ದಾಟಿ, ಸೇಯೀರಾತನ್ನು ಸೇರಿ ತಪ್ಪಿಸಿಕೊಂಡನು.
JDG 3:27 ಅವನು ಅಲ್ಲಿ ಬಂದಾಗ, ಎಫ್ರಾಯೀಮನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲರು ಅವನ ಸಂಗಡ ಬೆಟ್ಟದಿಂದ ಇಳಿದರು. ಅವನು ಇವರ ಮುಂದೆ ನಡೆದರು.
JDG 3:28 ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ,
JDG 3:29 ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಪುಷ್ಟರೂ, ಪರಾಕ್ರಮಿಗಳೂ ಆಗಿದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ.
JDG 3:30 ಹೀಗೆ ಆ ದಿವಸದಲ್ಲಿ ಮೋವಾಬ್ ಇಸ್ರಾಯೇಲರ ಆಳಿಕೆಗೆ ಅಧೀನವಾಗಿತ್ತು. ದೇಶವು ಎಂಬತ್ತು ವರ್ಷ ವಿಶ್ರಾಂತಿಗೊಂಡಿತು.
JDG 3:31 ಏಹೂದನ ತರುವಾಯ ಅನಾತನ ಮಗ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರುನೂರು ಜನರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲರನ್ನು ರಕ್ಷಿಸಿದನು.
JDG 4:1 ಏಹೂದನು ಮರಣಹೊಂದಿದನಂತರ ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು.
JDG 4:2 ಆದ್ದರಿಂದ ಯೆಹೋವ ದೇವರು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟರು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತ್ ಹಗ್ಗೊಯಿಮ್‌ನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು.
JDG 4:3 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಮೊರೆಯಿಟ್ಟರು. ಅವನಿಗೆ ಒಂಬೈನೂರು ಕಬ್ಬಿಣದ ರಥಗಳಿದ್ದವು. ಅವನು ಇಸ್ರಾಯೇಲರನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು.
JDG 4:4 ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿ ಇಸ್ರಾಯೇಲರಿಗೆ ನ್ಯಾಯ ತೀರಿಸುತ್ತಿದ್ದಳು.
JDG 4:5 ದೆಬೋರಳು ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಎಫ್ರಾಯೀಮ್ ಬೆಟ್ಟದಲ್ಲಿ ಖರ್ಜೂರದ ಮರದ ಕೆಳಗೆ ವಾಸಿಸುತ್ತಿದ್ದಳು. ಇಸ್ರಾಯೇಲರು ಅವಳ ಬಳಿಗೆ ನ್ಯಾಯಕ್ಕಾಗಿ ಬರುತ್ತಿದ್ದರು.
JDG 4:6 ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವಮನ ಮಗ ಬಾರಾಕನನ್ನು ಕರೆಯಿಸಿ ಅವನಿಗೆ, “ಇಸ್ರಾಯೇಲ್ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದೇನೆಂದರೆ, ‘ನೀನು ನಫ್ತಾಲಿಯರಲ್ಲಿಯು, ಜೆಬುಲೂನರಲ್ಲಿಯು ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು.
JDG 4:7 ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ, ಅವನ ರಥಗಳನ್ನೂ, ಅವನ ಸೈನ್ಯವನ್ನೂ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು, ನಿನ್ನ ಕೈಗೆ ಒಪ್ಪಿಸುವೆನು,’ ಎಂದು ಆಜ್ಞಾಪಿಸಿದನು,” ಎಂದಳು.
JDG 4:8 ಬಾರಾಕನು ಅವಳಿಗೆ, “ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು. ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವುದಿಲ್ಲ,” ಎಂದನು.
JDG 4:9 ಅದಕ್ಕವಳು, “ನಾನು ನಿನ್ನ ಸಂಗಡ ಖಂಡಿತವಾಗಿ ಬರುವೆನು. ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನತೆ ನಿನ್ನದಾಗಿರುವುದಿಲ್ಲ. ಏಕೆಂದರೆ ಯೆಹೋವ ದೇವರು ಸೀಸೆರನನ್ನು ಒಬ್ಬ ಸ್ತ್ರೀಯ ಕೈಗೆ ಒಪ್ಪಿಸಿಬಿಡುವೆನು,” ಎಂದು ಹೇಳಿದಳು. ದೆಬೋರಳು ಎದ್ದು ಬಾರಾಕನ ಸಂಗಡ ಕೆದೆಷಿಗೆ ಹೋದಳು.
JDG 4:10 ಬಾರಾಕನು ಜೆಬುಲೂನನ್ನೂ, ನಫ್ತಾಲಿಯನ್ನೂ ಕೆದೆಷಿಗೆ ಕರೆದನು. ಅವನು ಹತ್ತು ಸಾವಿರ ಜನರಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು.
JDG 4:11 ಮೋಶೆಯ ಅಳಿಯನಾದ ಹೊಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರನು ಕೇನ್ಯರನ್ನು ಬಿಟ್ಟು, ತನ್ನನ್ನು ಪ್ರತ್ಯೇಕಿಸಿ, ಕೆದೆಷಿನ ಬಳಿಯಲ್ಲಿರುವ ಚಾನನ್ನೀಮ್ ಎಂಬ ಊರಲ್ಲಿ ಅಲ್ಲೋನ್ ಮರದ ಬಳಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.
JDG 4:12 ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟದಲ್ಲಿ ಏರಿದನೆಂದು ಸೀಸೆರನಿಗೆ ತಿಳಿಸಲಾಯಿತು.
JDG 4:13 ಆದ್ದರಿಂದ ಸೀಸೆರನು ಒಂಬೈನೂರು ಕಬ್ಬಿಣದ ರಥಗಳನ್ನೂ, ತನ್ನ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಹರೋಷೆತ್ ಹಗ್ಗೋಯಿಮಿನಿಂದ ಕೀಷೋನ್ ಹಳ್ಳಕ್ಕೆ ಬಂದನು.
JDG 4:14 ಆಗ ದೆಬೋರಳು ಬಾರಾಕನಿಗೆ, “ನೀನು ಏಳು. ಏಕೆಂದರೆ ಯೆಹೋವ ದೇವರು ಸೀಸೆರನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವ ದಿನವು ಇದೇ. ಯೆಹೋವ ದೇವರು ನಿನ್ನ ಮುಂದೆ ಹೊರಡಲಿಲ್ಲವೋ?” ಎಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು, ತಾಬೋರ್ ಬೆಟ್ಟದಿಂದ ಇಳಿದನು.
JDG 4:15 ಯೆಹೋವ ದೇವರು ಸೀಸೆರನನ್ನೂ, ಅವನ ಎಲ್ಲಾ ರಥಗಳನ್ನೂ, ಅವನ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಖಡ್ಗದಿಂದ ಚದರಿಸಿದರು. ಸೀಸೆರನು ರಥದಿಂದ ಇಳಿದು ಓಡಿಹೋದನು.
JDG 4:16 ಬಾರಾಕನು ಅವನ ಸೈನ್ಯ, ರಥಗಳನ್ನು ಹರೋಷೆತ್ ಹಗ್ಗೋಯಿಮಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಖಡ್ಗದಿಂದ ಹತರಾದರು, ಒಬ್ಬನೂ ಉಳಿಯಲಿಲ್ಲ.
JDG 4:17 ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಏಕೆಂದರೆ ಯಾಬೀನನೆಂಬ ಹಾಚೋರಿನ ಅರಸನಿಗೂ, ಕೇನ್ಯನಾದ ಹೆಬೆರನ ಮನೆಗೂ ನಡುವೆ ಶಾಂತಿ ಇತ್ತು.
JDG 4:18 ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಒಳಗೆ ಬಾ, ನನ್ನ ಪ್ರಭುವೇ, ನಮ್ಮ ಬಳಿಗೆ ಬಾ, ಭಯಪಡಬೇಡ,” ಎಂದು ಹೇಳಿದಳು. ಅವನನ್ನು ಒಂದು ಕಂಬಳಿಯಿಂದ ಮುಚ್ಚಿದಳು.
JDG 4:19 ಸೀಸೆರನು ಅವಳಿಗೆ, “ದಯಮಾಡಿ, ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ,” ಎಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು, ಅವನಿಗೆ ಕುಡಿಯುವುದಕ್ಕೆ ಕೊಟ್ಟು, ಅವನನ್ನು ಮುಚ್ಚಿದಳು.
JDG 4:20 ತಿರುಗಿ ಅವನು ಅವಳಿಗೆ, “ನೀನು ಬಾಗಿಲಲ್ಲಿ ನಿಂತಿರು. ಯಾವನಾದರೂ ಬಂದು, ‘ಇಲ್ಲಿ ಯಾರಾದರೂ ಇದ್ದಾರೋ?’ ಎಂದು ನಿನ್ನನ್ನು ಕೇಳಿದರೆ, ‘ಇಲ್ಲ’ ಎಂದು ಹೇಳು,” ಎಂದನು.
JDG 4:21 ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆಯನ್ನು ತೆಗೆದು, ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದುಕೊಂಡು, ಅವನು ಆಯಾಸದಿಂದ ನಿದ್ರೆ ಮಾಡುತ್ತಿರುವಾಗ, ಮೆಲ್ಲನೆ ಅವನ ಬಳಿಗೆ ಬಂದು, ಅವನ ತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿಸಿದಳು. ಅವನು ಮರಣಹೊಂದಿದನು.
JDG 4:22 ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವುದಕ್ಕೆ ಹೊರಟುಹೋಗಿ ಅವನಿಗೆ, “ಬಾ, ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು,” ಎಂದು ಹೇಳಿದಳು. ಬಾರಾಕನು ಅವಳ ಬಳಿಗೆ ಬಂದಾಗ, ಸೀಸೆರನು ಮರಣಹೊಂದಿದ್ದನು. ಮೊಳೆಯು ಅವನ ತಲೆಯಲ್ಲಿ ಹೊಡೆದಿತ್ತು.
JDG 4:23 ಹೀಗೆಯೇ ದೇವರು ಆ ದಿವಸದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲರ ಮುಂದೆ ತಗ್ಗಿಸಿದರು.
JDG 4:24 ಇಸ್ರಾಯೇಲರ ಕೈ ಕಾನಾನ್ಯರ ಅರಸನಾದ ಯಾಬೀನನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯಹೊಂದಿತು.
JDG 5:1 ಆ ದಿವಸದಲ್ಲಿ ದೆಬೋರಳೂ, ಅಬೀನೋವಮನ ಮಗ ಬಾರಾಕನೂ ಹಾಡಿದ್ದೇನೆಂದರೆ:
JDG 5:2 “ಇಸ್ರಾಯೇಲಿನ ನಾಯಕರು ಮುನ್ನಡೆದಾಗ, ಜನರು ಸ್ವಇಚ್ಛೆಯಿಂದ ಅವರನ್ನು ಹಿಂಬಾಲಿಸಿದಾಗ ಯೆಹೋವ ದೇವರನ್ನು ಸ್ತುತಿಸಿರಿ!
JDG 5:3 “ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು.
JDG 5:4 “ಯೆಹೋವ ದೇವರೇ, ನೀವು ಸೇಯೀರಿನಿಂದ ಹೊರಟು, ಎದೋಮಿನ ಹೊಲದಿಂದ ಮುನ್ನಡೆಯುವಾಗ, ಭೂಮಿ ನಡುಗಿತು. ಆಕಾಶವು ಸಹ ಸುರಿಸಿತು. ಮೇಘಗಳು ಸಹ ನೀರು ಸುರಿಸಿದವು.
JDG 5:5 ಯೆಹೋವ ದೇವರ ಮುಂದೆ ಬೆಟ್ಟಗಳು ಕಂಪಿಸಿದವು. ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮುಂದೆ ಸೀನಾಯಿ ಪರ್ವತವು ಸಹ ಕಂಪಿಸಿತು.
JDG 5:6 “ಅನಾತನ ಮಗ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿವಸಗಳಲ್ಲಿಯೂ ಹೆದ್ದಾರಿಯ ಸಂಚಾರ ನಿಂತುಹೋಯಿತು. ಪ್ರಯಾಣಿಕರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
JDG 5:7 ದೆಬೋರಳಾದ ನಾನು ಏಳುವವರೆಗೂ, ಇಸ್ರಾಯೇಲಿನಲ್ಲಿ ತಾಯಿಯಾಗಿ ನಾನು ಏಳುವವರೆಗೂ ಇಸ್ರಾಯೇಲಿನ ಹಳ್ಳಿಗಳ ನಿವಾಸಿಗಳು ಯುದ್ಧಮಾಡಲಿಲ್ಲ.
JDG 5:8 ಅವರು ಹೊಸ ದೇವರುಗಳನ್ನು ಆಯ್ದುಕೊಂಡರು. ಆಗ ಯುದ್ಧವು ಬಾಗಿಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಲವತ್ತು ಸಾವಿರ ಸೈನಿಕರಲ್ಲಿ ಗುರಾಣಿಯೂ, ಕಠಾರಿಯೂ ಇರಲಿಲ್ಲ.
JDG 5:9 ನಾನು ಇಸ್ರಾಯೇಲ್ ನಾಯಕರೊಂದಿಗೂ ಸ್ವೇಚ್ಛೆಯಿಂದ ಬಂದ ಜನರೊಂದಿಗೆ ನನ್ನ ಹೃದಯವಿದೆ. ಯೆಹೋವ ದೇವರನ್ನು ಸ್ತುತಿಸಿರಿ.
JDG 5:10 “ಬಿಳಿ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾರ್ಗದಲ್ಲಿ ನಡೆಯುವವರೇ, ಗಾನಮಾಡಿರಿ.
JDG 5:11 ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. “ಆಗ ಯೆಹೋವ ದೇವರ ಜನರು ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು.
JDG 5:12 ‘ಎಚ್ಚರವಾಗು, ಎಚ್ಚರವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗಿ ಹಾಡನ್ನು ಹಾಡು; ಬಾರಾಕನೇ, ಏಳು; ಅಬೀನೋವಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡೆಸು.’
JDG 5:13 “ಆಗ ಉಳಿದವನನ್ನು ಅವರು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದರು. ಯೆಹೋವ ದೇವರ ಜನರು ನನ್ನ ಸಹಾಯಕ್ಕಾಗಿ ಬಂದು, ಪರಾಕ್ರಮಶಾಲಿಗಳ ವಿರುದ್ಧ ಯುದ್ಧಮಾಡಿದರು.
JDG 5:14 ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯೀಮಿನಿಂದ ಉಂಟಾಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾಮೀನನು ಮಾಕೀರನಲ್ಲಿಂದ ಅಧಿಪತಿಗಳೂ, ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವವರೂ ಬಂದರು.
JDG 5:15 ಇಸ್ಸಾಕಾರನ ಪ್ರಧಾನರು ದೆಬೋರಳ ಸಂಗಡ ಇದ್ದರು. ಹೌದು, ಇಸ್ಸಾಕಾರನ ಗೋತ್ರದವರು ಬಾರಾಕನ ಹಿಂದೆ ಅವನ ಕಟ್ಟಳೆಯ ಪ್ರಕಾರ, ಕಾಲುನಡಿಗೆಯಾಗಿ ಕಣಿವೆಯಲ್ಲಿ ನಡೆದರು. ರೂಬೇನನ ಕಡೆಯವರು ತಮ್ಮ ಹೃದಯಗಳನ್ನು ಮಹಾ ಪರಿಶೋಧನೆ ಮಾಡಿಕೊಂಡರು.
JDG 5:16 ಮಂದೆಗಳ ಕೂಗನ್ನು ಕೇಳಿ, ನೀನು ಕುರಿ ಹಟ್ಟಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನ್ಯರ ನಡುವೆ ಹೃದಯದ ಮಹಾ ಪರಿಶೋಧನೆಗಳು ಇದ್ದವು.
JDG 5:17 ಗಿಲ್ಯಾದನು ಯೊರ್ದನ್ ನದಿಯ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು, ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.
JDG 5:18 ಜೆಬುಲೂನ್ಯರು ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು. ನಫ್ತಾಲಿಯೂ ಸಹ ಹೊಲದ ಎತ್ತರವಾದ ಸ್ಥಳಗಳಲ್ಲಿ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು.
JDG 5:19 “ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸಮೀಪವಾದ ತಾನಕದಲ್ಲಿ ಯುದ್ಧಮಾಡಿದರು. ಅವರು ಬೆಳ್ಳಿ ದ್ರವ್ಯಗಳನ್ನು ತೆಗೆದುಕೊಳ್ಳಲಿಲ್ಲ.
JDG 5:20 ಆಕಾಶದಲ್ಲಿ ಇರುವವುಗಳು ಯುದ್ಧ ಮಾಡಿದವು. ನಕ್ಷತ್ರಗಳು ತಮ್ಮ ಓಟಗಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧ ಮಾಡಿದವು.
JDG 5:21 ಕೀಷೋನ್ ನದಿಯು, ಆ ಹಳೆಯದಾದ ಕೀಷೋನ್ ನದಿಯು ಅವರನ್ನು ಬಡಿದುಕೊಂಡು ಹೋಯಿತು. ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದೆ.
JDG 5:22 ಆಗ ನೆಲವನ್ನು ಘಟ್ಟಿಸಿ ಓಡುವ ಅವನ ಬಲವಾದ ಕುದುರೆಗಳ ಮೆಟ್ಟಿನಿಂದ ಗೊರಸುಗಳು ಸೀಳಿಹೋದವು.
JDG 5:23 ಯೆಹೋವ ದೇವರ ದೂತನು ಹೀಗೆ ಹೇಳುತ್ತಾನೆ, ‘ನೀವು ಮೆರೋಜನ್ನು ಶಪಿಸಿರಿ. ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ, ಏಕೆಂದರೆ ಅವರು ಯೆಹೋವ ದೇವರ ಸಹಾಯಕ್ಕೂ, ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಯೆಹೋವ ದೇವರ ಸಹಾಯಕ್ಕೂ ಬಾರದೆ ಹೋದರು.’
JDG 5:24 “ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳು ಆಶೀರ್ವಾದ ಹೊಂದಿದವಳು. ಗುಡಾರದಲ್ಲಿ ವಾಸಿಸುವ ಹೌದು, ಅವಳೇ ಸ್ತ್ರೀಯರೊಳಗೆ ಅಧಿಕ ಆಶೀರ್ವಾದ ಹೊಂದಿದವಳು.
JDG 5:25 ಅವನು ನೀರನ್ನು ಕೇಳಿದನು. ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.
JDG 5:26 ತನ್ನ ಕೈಯಲ್ಲಿ ಮೊಳೆಯನ್ನೂ, ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆಯನ್ನೂ ತೆಗೆದುಕೊಂಡಳು. ಸುತ್ತಿಗೆಯಿಂದ ಸೀಸೆರನನ್ನು ಅವಳು ಹೊಡೆದಳು. ಅವಳು ಅವನ ತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು.
JDG 5:27 ಅವಳ ಕಾಲುಗಳ ಹತ್ತಿರ ಮುದುರಿ ಬಿದ್ದು ಮಲಗಿದನು. ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು. ಎಲ್ಲಿ ಬಾಗಿ ಬಿದ್ದನೋ, ಅಲ್ಲಿಯೇ ಬಿದ್ದು ಮರಣಹೊಂದಿದನು.
JDG 5:28 “ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿಯಿಂದ ಕೂಗಿದಳು, ‘ಅವನ ರಥವು ಬರುವುದಕ್ಕೆ ಇಷ್ಟು ತಡವಾದದ್ದೇನು? ಅವನ ರಥಗಳ ಗಾಲಿಗಳು ಹಿಂದುಳಿದಿರುವುದೇನು?’
JDG 5:29 ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಉತ್ತರಕೊಟ್ಟರು. ಅವಳೇ ತನಗೆ ಬದಲು ಮಾತು ಕೇಳಿಕೊಂಡಳು:
JDG 5:30 ‘ಅವರು ಓಡಲಿಲ್ಲವೋ? ಕೊಳ್ಳೆ ಹಂಚಿಕೊಳ್ಳಲಿಲ್ಲವೋ? ಒಬ್ಬೊಬ್ಬ ಸೈನಿಕನಿಗೆ ಒಂದೆರಡು ದಾಸಿಯರು ಸೀಸೆರನಿಗಾದರೋ ನಾನಾ ವರ್ಣವುಳ್ಳ ಬಟ್ಟೆಗಳು. ನಾನಾ ವರ್ಣವುಳ್ಳ ವಿಚಿತ್ರವಾಗಿ ಕಸೂತಿಹಾಕಿದ ಬಟ್ಟೆಗಳು, ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ಬಟ್ಟೆಗಳೂ ಕೊಳ್ಳೆ ಹಿಡಿಯುವವರಿಗೆ ತಕ್ಕಂಥ ಕಂಠಮಾಲೆಗಳೂ ಸಿಕ್ಕಲಿಲ್ಲವೋ?’
JDG 5:31 “ಯೆಹೋವ ದೇವರೇ, ಹೀಗೆಯೇ ನಿಮ್ಮ ಶತ್ರುಗಳೆಲ್ಲರೂ ನಾಶವಾಗಲಿ. ಆದರೆ ಅವರನ್ನು ಪ್ರೀತಿ ಮಾಡುವವರು ಪರಾಕ್ರಮದಿಂದ ಹೊರಡುವ ಸೂರ್ಯನ ಹಾಗೆಯೇ ಇರಲಿ.” ಅನಂತರ ದೇಶವು ನಲವತ್ತು ವರ್ಷ ವಿಶ್ರಾಂತಿಯಲ್ಲಿತ್ತು.
JDG 6:1 ಇಸ್ರಾಯೇಲರು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ಆದ್ದರಿಂದ ಯೆಹೋವ ದೇವರು ಅವರನ್ನು ಏಳು ವರ್ಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟರು.
JDG 6:2 ಮಿದ್ಯಾನ್ಯರ ಕೈ ಇಸ್ರಾಯೇಲಿಗೆ ವಿರೋಧವಾಗಿ ಬಲವಾದ್ದರಿಂದ ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ತಮಗೆ ಪರ್ವತಗಳಲ್ಲಿ ಇರುವ ಬಂಡೆಯ ಬಿರುಕುಗಳನ್ನೂ, ಗವಿಗಳನ್ನೂ, ಬಲವಾದ ಸ್ಥಾನಗಳನ್ನೂ ಮಾಡಿಕೊಂಡರು.
JDG 6:3 ಇಸ್ರಾಯೇಲರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು,
JDG 6:4 ಗಾಜದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು, ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿ, ದನ, ಕತ್ತೆಗಳಾದರೂ ಉಳಿಯಗೊಡಿಸಲಿಲ್ಲ.
JDG 6:5 ಅವರು ತಮ್ಮ ಪಶುಗಳ ಡೇರೆಗಳ ಸಹಿತವಾಗಿ ಮಿಡತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ, ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಅವರು ನಾಡನ್ನು ನಾಶಮಾಡುವುದಕ್ಕೆ ಬಂದರು.
JDG 6:6 ಆದಕಾರಣ ಇಸ್ರಾಯೇಲರು ಮಿದ್ಯಾನ್ಯರಿಂದ ಬಹಳ ಬಡವರಾದರು. ಆಗ ಇಸ್ರಾಯೇಲರು ಯೆಹೋವ ದೇವರಿಗೆ ಬೇಡಿಕೊಂಡರು.
JDG 6:7 ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ಯೆಹೋವ ದೇವರನ್ನು ಬೇಡಿಕೊಂಡಾಗ,
JDG 6:8 ಅವರು ಒಬ್ಬ ಪ್ರವಾದಿಯನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದರು. ಅವನು ಅವರಿಗೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, “ನೀವು ದಾಸತ್ವದಲ್ಲಿದ್ದ ನಿಮ್ಮನ್ನು ನಾನು ಈಜಿಪ್ಟಿನಿಂದ ಬರಮಾಡಿದೆನು.
JDG 6:9 ನಿಮ್ಮನ್ನು ಈಜಿಪ್ಟಿನವರ ಕೈಯಿಂದ ತಪ್ಪಿಸಿ, ಅವರನ್ನು ನಿಮ್ಮ ಮುಂದೆ ಹೊರಗೆ ಹಾಕಿ, ಅವರ ದೇಶವನ್ನು ನಿಮಗೆ ಕೊಟ್ಟೆನು.
JDG 6:10 ‘ನಾನೇ ನಿಮ್ಮ ದೇವರಾದ ಯೆಹೋವ ದೇವರು. ನೀವು ವಾಸಿಸಿರುವ ಅಮೋರಿಯರ ದೇಶದ ದೇವರುಗಳಿಗೆ ಭಯಪಡಬೇಡಿರಿ,’ ಎಂದು ನಾನು ಹೇಳಿದೆನು. ಆದರೆ ನೀವು ನನ್ನ ಸ್ವರವನ್ನು ಕೇಳದೆ ಹೋದಿರಿ,” ಎಂದು ಹೇಳಿದನು.
JDG 6:11 ಯೆಹೋವ ದೇವರ ದೂತನು ಬಂದು ಅಬೀಯೆಜೆರನಾದ ಯೋವಾಷನಿಗೆ ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷಿಯ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.
JDG 6:12 ಆಗ ಯೆಹೋವ ದೇವರ ದೂತನು ಗಿದ್ಯೋನನಿಗೆ ಪ್ರತ್ಯಕ್ಷವಾಗಿ ಅವನಿಗೆ, “ಬಲಿಷ್ಠನಾದ ಪರಾಕ್ರಮಶಾಲಿಯೇ, ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
JDG 6:13 ಆಗ ಗಿದ್ಯೋನನು ಅವನಿಗೆ, “ಒಡೆಯನೇ, ಕ್ಷಮಿಸಿರಿ, ಯೆಹೋವ ದೇವರು ನಮ್ಮ ಸಂಗಡ ಇದ್ದರೆ, ಇದೆಲ್ಲಾ ನಮಗೆ ಏಕೆ ಸಂಭವಿಸಿತು? ಯೆಹೋವ ದೇವರು ನಮ್ಮನ್ನು ಈಜಿಪ್ಟಿನಿಂದ ಬರಮಾಡಲಿಲ್ಲವೋ? ಎಂದು ನಮ್ಮ ಪಿತೃಗಳು ನಮಗೆ ವಿವರಿಸಿ ಹೇಳಿದಂಥ ಅದ್ಭುತಗಳು ಎಲ್ಲಿ? ಈಗ ಯೆಹೋವ ದೇವರು ನಮ್ಮನ್ನು ಕೈಬಿಟ್ಟು, ಮಿದ್ಯಾನ್ಯರ ಕೈಗೆ ನಮ್ಮನ್ನು ಒಪ್ಪಿಸಿದ್ದಾರೆ,” ಎಂದನು.
JDG 6:14 ಯೆಹೋವ ದೇವರು ಅವನನ್ನು ದೃಷ್ಟಿಸಿ ನೋಡಿ, “ನಿನಗಿರುವ ಈ ಶಕ್ತಿಯಲ್ಲಿ ಹೋಗು, ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸುವೆ; ನಾನು ನಿನ್ನನ್ನು ಕಳುಹಿಸಲಿಲ್ಲವೋ?” ಎಂದರು.
JDG 6:15 ಅದಕ್ಕವನು ಅವರಿಗೆ, “ನನ್ನ ಒಡೆಯನೇ, ಕ್ಷಮಿಸಿರಿ ನಾನು ಇಸ್ರಾಯೇಲನ್ನು ಹೇಗೆ ರಕ್ಷಿಸಲಿ? ಮನಸ್ಸೆಯಲ್ಲಿ ನನ್ನ ಕುಟುಂಬವು ಬಡತನದ್ದು. ನನ್ನ ತಂದೆಯ ಮನೆಯಲ್ಲಿ ನಾನು ಅಲ್ಪನು,” ಎಂದನು.
JDG 6:16 ಆದರೆ ಯೆಹೋವ ದೇವರು ಅವನಿಗೆ, “ನಾನು ನಿನ್ನ ಸಂಗಡ ಖಂಡಿತವಾಗಿ ಇರುವುದರಿಂದ ನೀನು ಮಿದ್ಯಾನ್ಯರನ್ನು ಒಬ್ಬ ಮನುಷ್ಯನೋ ಎಂಬಂತೆ ಹೊಡೆಯುವಿ,” ಎಂದರು.
JDG 6:17 ಅದಕ್ಕವನು, “ಈಗ ನಿಮ್ಮ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ, ನನ್ನ ಸಂಗಡ ಮಾತನಾಡುವವರು ನೀವು ಎಂಬುದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು.
JDG 6:18 ನಾನು ನಿಮ್ಮ ಬಳಿಗೆ ನನ್ನ ಕಾಣಿಕೆಯನ್ನು ತಂದು, ನಿಮ್ಮ ಮುಂದೆ ಇಡುವವರೆಗೆ ನೀವು ಈ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದು ಬೇಡಿಕೊಂಡನು. ಅದಕ್ಕೆ ಯೆಹೋವ ದೇವರು, “ನೀನು ತಿರುಗಿ ಬರುವ ತನಕ ನಾನು ಕಾದಿರುವೆನು,” ಎಂದರು.
JDG 6:19 ಆಗ ಗಿದ್ಯೋನನು ಒಳಗೆ ಹೋಗಿ, ಒಂದು ಮೇಕೆಯ ಮರಿಯನ್ನೂ, ಹದಿನಾರು ಕಿಲೋಗ್ರಾಂ ಹಿಟ್ಟಿನಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿ, ಮಾಂಸವನ್ನು ಪುಟ್ಟಿಯಲ್ಲಿ ಇಟ್ಟು, ರಸವನ್ನು ಪಾತ್ರೆಯಲ್ಲಿ ಹೊಯ್ದು, ಅದನ್ನು ಹೊರಗೆ ಏಲಾ ಮರದ ಕೆಳಗೆ ಇದ್ದ ಅವರ ಬಳಿಯಲ್ಲಿ ತಂದಿಟ್ಟನು.
JDG 6:20 ದೇವದೂತನು ಅವನಿಗೆ, “ನೀನು ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ತೆಗೆದುಕೊಂಡು ಈ ಬಂಡೆಯ ಮೇಲೆ ಇಟ್ಟು, ರಸವನ್ನು ಸುರಿ,” ಎಂದನು. ಅವನು ಹಾಗೆಯೇ ಮಾಡಿದನು.
JDG 6:21 ಆಗ ಯೆಹೋವ ದೇವರ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆಯಿಂದ ಎದ್ದು, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ದಹಿಸಿಬಿಟ್ಟಿತು. ಆಗ ಯೆಹೋವ ದೇವರ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.
JDG 6:22 ಅವನು ಯೆಹೋವ ದೇವರ ದೂತನೆಂದು ಗಿದ್ಯೋನನು ತಿಳಿದಾಗ ಗಿದ್ಯೋನನು, “ಸಾರ್ವಭೌಮ ಯೆಹೋವ ದೇವರೇ, ನಾನು ಯೆಹೋವ ದೇವರ ದೂತನನ್ನು ಮುಖಾಮುಖಿಯಾಗಿ ಕಂಡೆನು,” ಎಂದನು.
JDG 6:23 ಆದರೆ ಯೆಹೋವ ದೇವರು ಅವನಿಗೆ, “ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವುದಿಲ್ಲ,” ಎಂದರು.
JDG 6:24 ಗಿದ್ಯೋನನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿ, “ಯೆಹೋವ ಶಾಲೋಮ್” ಎಂದು ಅದಕ್ಕೆ ಹೆಸರಿಟ್ಟನು. ಅದು ಈವರೆಗೂ ಅಬೀಯೆಜೆರ್ ಒಫ್ರದಲ್ಲಿ ಇನ್ನೂ ಇದೆ.
JDG 6:25 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ, “ನೀನು ನಿನ್ನ ತಂದೆಗಿರುವ ಎತ್ತುಗಳಲ್ಲಿ ಎಳೆಯದಾದ ಏಳು ವರ್ಷದ ಎರಡನೆಯ ಹೋರಿಯನ್ನು ತೆಗೆದುಕೊಂಡುಹೋಗಿ, ನಿನ್ನ ತಂದೆಗೆ ಇರುವ ಬಾಳನ ಬಲಿಪೀಠವನ್ನು ಕೆಡವಿ, ಅದರ ಸಮೀಪದಲ್ಲಿರುವ ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಿ,
JDG 6:26 ಈ ಪರ್ವತದ ತುದಿಯಲ್ಲಿ ನೇಮಕವಾದ ಸ್ಥಳದಲ್ಲಿ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಆ ಎರಡನೆಯ ಹೋರಿಯನ್ನು ತಂದು, ನೀನು ಕಡಿದುಹಾಕಿದ ಅಶೇರ ಸ್ತಂಭವನ್ನು ಕಟ್ಟಿಗೆಗಳ ಮೇಲೆ ದಹನಬಲಿಯಾಗಿ ಅರ್ಪಿಸು,” ಎಂದರು.
JDG 6:27 ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಹೇಳಿದ ಹಾಗೆಯೇ ಮಾಡಿದನು. ಆದರೆ ಅವನು ತನ್ನ ತಂದೆಯ ಮನೆಯವರೆಗೂ, ಆ ಊರಿನ ಮನುಷ್ಯರಿಗೂ ಭಯಪಟ್ಟದ್ದರಿಂದ ಹಗಲಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.
JDG 6:28 ಆ ಊರಿನ ಮನುಷ್ಯರು ಬೆಳಿಗ್ಗೆ ಎದ್ದಾಗ, ಬಾಳನ ಬಲಿಪೀಠವು ಕೆಡವಲಾಗಿದ್ದನ್ನು ಮತ್ತು ಅದರ ಪಕ್ಕದಲ್ಲಿದ್ದ ಅಶೇರ ಸ್ತಂಭವನ್ನು ಕಡಿಯಲಾಗಿರುವುದನ್ನು ಕಂಡರು. ಹೊಸದಾಗಿ ಕಟ್ಟಿದ ಬಲಿಪೀಠದ ಮೇಲೆ ಆ ಎರಡನೆಯ ಹೋರಿಯ ಬಲಿ ಅರ್ಪಿಸಲಾಗಿತ್ತು.
JDG 6:29 ಆಗ ಅವರು ಒಬ್ಬರಿಗೊಬ್ಬರು, “ಈ ಕಾರ್ಯವನ್ನು ಮಾಡಿದವನ್ಯಾರು?” ಎಂದರು. ವಿಚಾರಿಸಿ ಕೇಳಿದಾಗ, ಅವರು, “ಯೋವಾಷನ ಮಗ ಗಿದ್ಯೋನನು ಈ ಕಾರ್ಯ ಮಾಡಿದನು,” ಎಂದರು.
JDG 6:30 ಆ ಊರಿನವರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ, ಅವನು ಸಾಯಬೇಕು. ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ, ಅದರ ಬಳಿಯಲ್ಲಿದ್ದ ಅಶೇರ ಸ್ತಂಭವನ್ನು ಕಡಿದುಹಾಕಿದನು,” ಎಂದರು.
JDG 6:31 ಆದರೆ ಯೋವಾಷನು ತನಗೆ ವಿರೋಧವಾಗಿ ನಿಂತಿದ್ದ ಸಮಸ್ತರಿಗೂ, “ನೀವು ಬಾಳನಿಗಾಗಿ ವ್ಯಾಜ್ಯವಾಡುವಿರೋ? ನೀವು ಅವನನ್ನು ರಕ್ಷಿಸುವಿರೋ? ಅವನಿಗಾಗಿ ವ್ಯಾಜ್ಯ ಮಾಡುವವನು ಈ ಉದಯಕಾಲದಲ್ಲೇ ಹತನಾಗಲಿ. ಅವನು ದೇವರಾದರೆ ತನ್ನ ಬಲಿಪೀಠವನ್ನು ಕೆಡವಿದ್ದರಿಂದ, ಅವನು ತನ್ನನ್ನು ರಕ್ಷಿಸಿಕೊಳ್ಳಲಿ” ಎಂದನು.
JDG 6:32 ಗಿದ್ಯೋನನು ಬಾಳನ ಬಲಿಪೀಠವನ್ನು ಕೆಡವಿದ ಕಾರಣ ಅವರು ಆ ದಿವಸದಲ್ಲಿ, “ಬಾಳನೇ ವ್ಯಾಜ್ಯವಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ಯೆರುಬ್ಬಾಳ ಎಂಬ ಹೆಸರಾಯಿತು.
JDG 6:33 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಒಟ್ಟಾಗಿ ಕೂಡಿ, ಯೊರ್ದನ್ ಹೊಳೆ ದಾಟಿ ಬಂದು, ಇಜ್ರೆಯೇಲ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು.
JDG 6:34 ಆದರೆ ಯೆಹೋವ ದೇವರ ಆತ್ಮರು ಗಿದ್ಯೋನನ ಮೇಲೆ ಬಂದರು. ಅವನು ತುತೂರಿಯನ್ನು ಊದಿದಾಗ, ಅಬೀಯೆಜೆರಿನವರು ಅವನ ಹಿಂದೆ ಕೂಡಿಬಂದರು.
JDG 6:35 ಮನಸ್ಸೆಯವರ ಬಳಿ ದೂತರನ್ನು ಕಳುಹಿಸಿದಾಗ, ಅವರು ಅವನ ಹಿಂದೆ ಕೂಡಿಬಂದರು. ಆಶೇರ್, ಜೆಬುಲೂನಿನಲ್ಲಿಯೂ, ನಫ್ತಾಲಿನಲ್ಲಿಯೂ ದೂತರನ್ನು ಕಳುಹಿಸಲು, ಅವರು ಇವರಿಗೆ ಭೇಟಿಯಾಗಲು ಬಂದರು.
JDG 6:36 ಗಿದ್ಯೋನನು ದೇವರಿಗೆ, “ನೀವು ಹೇಳಿದ ಹಾಗೆಯೇ ನನ್ನ ಕೈಯಿಂದ ಇಸ್ರಾಯೇಲನನ್ನು ರಕ್ಷಿಸುವಿರಿಯಾದರೆ,
JDG 6:37 ಇಗೋ, ಉಣ್ಣೆಯ ತುಪ್ಪಟವನ್ನು ಕಣದಲ್ಲಿ ಹಾಕುವೆನು. ಮಂಜು ಉಣ್ಣೆಯ ಮೇಲೆ ಮಾತ್ರವೇ ಇದ್ದು ಭೂಮಿಯೆಲ್ಲಾ ಒಣಗಿದ್ದರೆ, ಆಗ ನೀವು ಹೇಳಿದ ಹಾಗೆ ಇಸ್ರಾಯೇಲನ್ನು ನನ್ನ ಕೈಯಿಂದ ನೀವು ರಕ್ಷಿಸುವಿರಿ ಎಂಬುದನ್ನು ನಾನು ತಿಳಿಯುವೆನು,” ಎಂದನು.
JDG 6:38 ಅದು ಹಾಗೆಯೇ ಆಯಿತು. ಅವನು ಮರುದಿವಸ ಉದಯದಲ್ಲಿ ಎದ್ದು, ಉಣ್ಣೆಯ ತುಪ್ಪಟವನ್ನು ತೆಗೆದುಕೊಂಡು, ಅದರೊಳಗಿದ್ದ ಮಂಜಿನ ನೀರನ್ನು ಒಂದು ಬೋಗುಣಿಯ ತುಂಬಾ ಹಿಂಡಿದನು.
JDG 6:39 ಗಿದ್ಯೋನನು ದೇವರಿಗೆ, “ನಾನು ಇನ್ನೊಂದು ಸಾರಿ ಮಾತನಾಡುವುದರಿಂದ ನಿಮ್ಮ ಕೋಪವು ನನ್ನ ಮೇಲೆ ಉರಿಯಬಾರದು. ಉಣ್ಣೆಯ ತುಪ್ಪಟದಿಂದ ಇನ್ನೊಂದು ಸಾರಿ ನಾನು ನಿಮ್ಮನ್ನು ಶೋಧಿಸುವೆನು. ತುಪ್ಪಟ ಮಾತ್ರವೇ ಒಣಗುವ ಹಾಗೆಯೂ ಭೂಮಿಯಲ್ಲೆಲ್ಲಾ ಮಂಜು ಇರುವ ಹಾಗೆಯೂ ಅಪ್ಪಣೆ ಆಗಲಿ,” ಎಂದನು.
JDG 6:40 ಆ ರಾತ್ರಿ ದೇವರು ಹಾಗೆಯೇ ಮಾಡಿದರು. ತುಪ್ಪಟ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿಬಿದ್ದಿತ್ತು.
JDG 7:1 ಗಿದ್ಯೋನನೆಂಬ ಯೆರುಬ್ಬಾಳನೂ, ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು, ಹೆರೋದಿನ ಬಾವಿಯ ಬಳಿಯಲ್ಲಿ ದಂಡಿಳಿಸಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು.
JDG 7:2 ಆಗ ಯೆಹೋವ ದೇವರು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ, ನಾನು ಮಿದ್ಯಾನ್ಯರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವುದಕ್ಕೆ ಸಾಧ್ಯವಿಲ್ಲ ಇಸ್ರಾಯೇಲರು, ‘ನನ್ನ ಕೈ ನನ್ನನ್ನು ರಕ್ಷಿಸಿತು,’ ಎಂದು ನನಗೆ ವಿರೋಧವಾಗಿ ಹೆಚ್ಚಳಪಟ್ಟಾರು.
JDG 7:3 ಆದ್ದರಿಂದ ನೀನು ಹೋಗಿ ಜನರು ಕೇಳುವ ಹಾಗೆ, ‘ಯಾವನಿಗೆ ಭಯವೂ, ಹೆದರಿಕೆಯೂ ಉಂಟೋ ಅವನು ತಿರುಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ,’ ಎಂದು ಪ್ರಕಟಮಾಡು,” ಎಂದರು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ಜನರು ತಿರುಗಿ ಹೋದರು; ನಂತರ ಹತ್ತು ಸಾವಿರ ಜನರು ಉಳಿದರು.
JDG 7:4 ಯೆಹೋವ ದೇವರು ಗಿದ್ಯೋನನಿಗೆ, “ಜನರು ಇನ್ನೂ ತುಂಬ ಇದ್ದರೆ; ಅವರನ್ನು ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡಿ ಆರಿಸುವೆನು. ನಿನ್ನ ಸಂಗಡ ಹೋಗುವವರಲ್ಲಿ ಯಾವನನ್ನು ಕುರಿತು ಹೇಳುವೆನೋ, ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು ನಿನ್ನ ಸಂಗಡ ಬರಬಾರದೆಂದು ಯಾವನನ್ನು ಕುರಿತು ಹೇಳುವೆನೋ, ಅವನು ಹೋಗಬಾರದು,” ಎಂದರು.
JDG 7:5 ಗಿದ್ಯೋನನು ಜನರನ್ನು ಹಳ್ಳದ ಬಳಿಗೆ ಕರಕೊಂಡು ಬಂದನು. ಆಗ ಯೆಹೋವ ದೇವರು ಗಿದ್ಯೋನನಿಗೆ, “ನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ, ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗುವ ಪ್ರತಿಯೊಬ್ಬನನ್ನೂ ಬೇರೆಬೇರೆಯಾಗಿ ನಿಲ್ಲಿಸು,” ಎಂದರು.
JDG 7:6 ಆಗ ನೀರನ್ನು ತಮ್ಮ ಕೈಯಿಂದ ತೆಗೆದುಕೊಂಡು, ತಮ್ಮ ಬಾಯಿಗೆ ಎತ್ತಿ ನೆಕ್ಕಿದವರು ಮುನ್ನೂರು ಜನ, ಉಳಿದ ಜನರೆಲ್ಲಾ ನೀರು ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗಿದರು.
JDG 7:7 ಆಗ ಯೆಹೋವ ದೇವರು ಗಿದ್ಯೋನನಿಗೆ, “ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ, ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸುವೆನು. ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದರು.
JDG 7:8 ಆಗ ಜನರು ಆಹಾರವನ್ನೂ, ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ ಗಿದ್ಯೋನನು ಇಸ್ರಾಯೇಲರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ, ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳಭಾಗದ ಕಣಿವೆಯಲ್ಲಿ ಇತ್ತು.
JDG 7:9 ಆಗ ರಾತ್ರಿಯಲ್ಲಿ, ಯೆಹೋವ ದೇವರು ಅವನಿಗೆ, “ನೀನು ಎದ್ದು ಪಾಳೆಗೆ ವಿರೋಧವಾಗಿ ಇಳಿದು ಹೋಗು. ಏಕೆಂದರೆ ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
JDG 7:10 ಇಳಿದು ಹೋಗುವುದಕ್ಕೆ ನೀನು ಭಯಪಟ್ಟರೆ, ಮೊದಲು ನೀನು ನಿನ್ನ ಸೇವಕನಾದ ಪುರನ ಸಂಗಡ ಪಾಳೆಯ ಬಳಿಗೆ ಇಳಿದು ಹೋಗಿ,
JDG 7:11 ಅವರು ಮಾತನಾಡುವುದನ್ನು ಕೇಳು. ತರುವಾಯ ಪಾಳೆಯಲ್ಲಿ ಇಳಿದು ಹೋಗುವುದಕ್ಕೆ ನಿನ್ನ ಕೈಗಳು ಬಲಗೊಳ್ಳುವುವು,” ಎಂದರು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ಪಾಳೆಯ ಹೊರಗಿರುವ ಸೈನಿಕರ ಬಳಿಗೆ ಹೋದನು.
JDG 7:12 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಮಲಗಿದ್ದರು. ಅವರ ಒಂಟೆಗಳು ಸಮುದ್ರದ ಮರಳಿನ ಹಾಗೆ ಅಸಂಖ್ಯವಾಗಿದ್ದವು.
JDG 7:13 ಗಿದ್ಯೋನನು ಬಂದಾಗ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇನೆಂದರೆ, “ಇಗೋ, ನಾನು ಒಂದು ಕನಸನ್ನು ಕಂಡೆನು. ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾನ್ಯರ ಪಾಳೆಯ ಮೇಲೆ ಹೊರಳಿ, ಒಂದು ಡೇರೆಯ ಮೇಲೆ ಬಂದು, ಅದು ಬೀಳುವ ಹಾಗೆ ಅದನ್ನು ಹೊಡೆದು, ಅದನ್ನು ಕೆಡವಿ ಹಾಕಿತು. ಆಗ ಡೇರೆಯು ಬಿದ್ದುಹೋಯಿತು,” ಎಂದನು.
JDG 7:14 ಅವನ ಜೊತೆಗಾರನು ಉತ್ತರಕೊಟ್ಟು, “ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲಿನ ಮನುಷ್ಯನ ಖಡ್ಗವೇ ಹೊರತು ಬೇರೆ ಅಲ್ಲ. ದೇವರು ಮಿದ್ಯಾನ್ಯರನ್ನೂ, ಈ ಸಮಸ್ತ ಪಾಳೆಯನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು.
JDG 7:15 ಗಿದ್ಯೋನನು ಆ ಕನಸಿನ ವಿವರವನ್ನೂ, ಅದರ ಅರ್ಥವನ್ನೂ ಕೇಳಿದಾಗ, ಅವನು ಯೆಹೋವ ದೇವರನ್ನು ಆರಾಧಿಸಿ, ಇಸ್ರಾಯೇಲ್ ಪಾಳೆಗೆ ತಿರುಗಿಬಂದು, “ಏಳಿರಿ, ಯೆಹೋವ ದೇವರು ಮಿದ್ಯಾನ್ಯರ ಪಾಳೆಯನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದು ಹೇಳಿದನು.
JDG 7:16 ಆ ಮುನ್ನೂರು ಜನರನ್ನು ಮೂರು ಭಾಗವಾಗಿ ಹಂಚಿ, ಎಲ್ಲರ ಕೈಯಲ್ಲಿ ತುತೂರಿಗಳನ್ನೂ, ಬರಿದಾದ ಕೊಡಗಳನ್ನೂ, ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟನು.
JDG 7:17 ಅನಂತರ ಗಿದ್ಯೋನನು, “ನಾನು ಮಾಡುವುದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ನಾನು ಪಾಳೆಯ ಹೊರಗೆ ಬಂದಾಗ ಹೇಗೆ ಮಾಡುವೆನೋ, ಹಾಗೆಯೇ ನೀವೂ ಮಾಡಿರಿ.
JDG 7:18 ನಾನೂ, ನನ್ನ ಸಂಗಡ ಇರುವವರೆಲ್ಲರೂ ತುತೂರಿಯನ್ನು ಊದುವಾಗ, ನೀವೆಲ್ಲರೂ ಪಾಳೆಯ ಸುತ್ತಲೂ, ಎಲ್ಲಾ ಕಡೆಯಲ್ಲಿಯೂ ತುತೂರಿಗಳನ್ನು ಊದಿ, ‘ಯೆಹೋವ ದೇವರಿಗಾಗಿ, ಗಿದ್ಯೋನನಿಗಾಗಿ,’ ಎಂದು ಕೂಗಿರಿ,” ಎಂದನು.
JDG 7:19 ಮಧ್ಯರಾತ್ರಿ ಆರಂಭದ ಜಾವದಲ್ಲಿ ಕಾವಲುಗಾರರನ್ನು ಬದಲಾಯಿಸಿದಾಗ, ಗಿದ್ಯೋನನೂ, ಅವನ ಸಂಗಡ ಇದ್ದ ನೂರು ಮಂದಿಯೂ ಪಾಳೆಯ ಹೊರಗೆ ಬಂದು, ತುತೂರಿಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು.
JDG 7:20 ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ, ಆ ಕೊಡಗಳನ್ನು ಒಡೆದುಬಿಟ್ಟು, ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ, ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು, “ಯೆಹೋವ ದೇವರಿಗಾಗಿ ಖಡ್ಗ, ಗಿದ್ಯೋನನಿಗಾಗಿ ಖಡ್ಗ,” ಎಂದು ಕೂಗಿ ಪಾಳೆಯ ಸುತ್ತಲೂ ಅವರವರ ಸ್ಥಳದಲ್ಲಿ ನಿಂತರು.
JDG 7:21 ಆಗ ಪಾಳೆಯದವರಾದರೋ ಕೂಗುತ್ತಾ ಓಡಿಹೋದರು.
JDG 7:22 ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು.
JDG 7:23 ಇಸ್ರಾಯೇಲರು ನಫ್ತಾಲಿಯಿಂದಲೂ, ಆಶೇರನಿಂದಲೂ, ಸಮಸ್ತ ಮನಸ್ಸೆಯವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.
JDG 7:24 ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಬೆಟ್ಟದಲ್ಲೆಲ್ಲಾ ದೂತರನ್ನು ಕಳುಹಿಸಿ, “ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ, ಬೇತ್‌ಬಾರದವರೆಗಿರುವ ನೀರನ್ನೂ, ಯೊರ್ದನನ್ನೂ ಅವರಿಗೆ ಮುಂದಾಗಿ ಹಿಡಿಯಿರಿ,” ಎಂದು ಹೇಳಿದನು. ಹಾಗೆಯೇ ಎಫ್ರಾಯೀಮನ ಜನರೆಲ್ಲರೂ ಕೂಡಿಕೊಂಡು, ಬೇತ್‌ಬಾರದವರೆಗೆ ನೀರನ್ನೂ, ಯೊರ್ದನನ್ನೂ ಹಿಡಿದರು.
JDG 7:25 ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನನ್ನೂ, ಜೇಬನನ್ನೂ ಹಿಡಿದು, ಓರೇಬನನ್ನು ಓರೇಬೆಂಬ ಬಂಡೆಯಲ್ಲಿಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ, ಮಿದ್ಯಾನ್ಯರನ್ನು ಹಿಂದಟ್ಟಿ, ಓರೇಬ್, ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.
JDG 8:1 ಆಗ ಎಫ್ರಾಯೀಮ್ಯರು, “ನೀನು ಮಿದ್ಯಾನ್ಯರ ಮೇಲೆ ಯುದ್ಧಮಾಡುವುದಕ್ಕೆ ಹೋಗುವಾಗ, ನಮ್ಮನ್ನು ಕರೆಯದೆ ಹೋದದ್ದೇನು?” ಎಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
JDG 8:2 ಅವನು ಅವರಿಗೆ, “ನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿದೆನು? ಅಬೀಯೆಜೆರನ ದ್ರಾಕ್ಷಿ ಫಲ ಕೂಡಿಸುವುದಕ್ಕಿಂತ ಎಫ್ರಾಯೀಮನ ಉಳಿದ ದ್ರಾಕ್ಷಿಗಳನ್ನು ಸಂಗ್ರಹಿಸುವುದು ಉತ್ತಮವಲ್ಲವೇ?
JDG 8:3 ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನನ್ನೂ, ಜೇಬನನ್ನೂ ಒಪ್ಪಿಸಿಕೊಡಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು?” ಎಂದನು. ಅವನು ಈ ಮಾತು ಹೇಳಿದಾಗ, ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
JDG 8:4 ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ; ಅವನೂ, ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ, ಹಿಂದಟ್ಟುವವರಾಗಿಯೂ ಇದ್ದರು.
JDG 8:5 ಅವನು ಸುಕ್ಕೋತನವರಿಗೆ, “ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಏಕೆಂದರೆ ಅವರು ದಣಿದಿದ್ದಾರೆ. ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ, ಚಲ್ಮುನ್ನನನ್ನೂ ಹಿಂದಟ್ಟುತ್ತೇನೆ,” ಎಂದನು.
JDG 8:6 ಆದರೆ ಸುಕ್ಕೋತಿನ ಪ್ರಧಾನರು ಅವನಿಗೆ, “ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈವಶವಾಗಿದೆಯೋ?” ಎಂದರು.
JDG 8:7 ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು.
JDG 8:8 ಅಲ್ಲಿಂದ ಪೆನೀಯೇಲಿಗೆ ಹೋಗಿ, ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಕ್ಕೋತಿನ ಮನುಷ್ಯರು ಉತ್ತರ ಕೊಟ್ಟ ಹಾಗೆಯೇ ಉತ್ತರಕೊಟ್ಟರು.
JDG 8:9 ಆಗ ಅವನು ಪೆನೀಯೇಲಿನ ಮನುಷ್ಯರಿಗೆ ಸಹ, “ನಾನು ಸಮಾಧಾನವಾಗಿ ತಿರುಗಿ ಬರುವಾಗ, ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
JDG 8:10 ಜೆಬಹನೂ, ಚಲ್ಮುನ್ನನೂ ತಮ್ಮ ಸೈನ್ಯದ ಹೆಚ್ಚು ಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರಷ್ಟೂ, ಖಡ್ಗ ಹಿಡಿಯತಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ, ಪೂರ್ವದೇಶದ ಸಮಸ್ತ ಜನರು ಅಲ್ಲಿ ಉಳಿದರು.
JDG 8:11 ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು.
JDG 8:12 ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು.
JDG 8:13 ಯೋವಾಷನ ಮಗನಾದ ಗಿದ್ಯೋನನು ಯುದ್ಧ ತೀರಿಸಿಕೊಂಡು ಹೆರೆಸ್ ಎಂಬ ಬೆಟ್ಟದ ಮಾರ್ಗವಾಗಿ ತಿರುಗಿಬಂದು,
JDG 8:14 ಸುಕ್ಕೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು, ಸುಕ್ಕೋತಿನ ಪ್ರಧಾನರೂ, ಹಿರಿಯರೂ ಆದ ಎಪ್ಪತ್ತೇಳು ಜನರ ಹೆಸರನ್ನು ಅವನು ಬರೆದನು.
JDG 8:15 ಗಿದ್ಯೋನನು ಸುಕ್ಕೋತಿನ ಮನುಷ್ಯರ ಬಳಿಗೆ ಬಂದು, “ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ, ಜೆಬಹ, ಚೆಲ್ಮುನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ, ಚಲ್ಮುನ್ನನನ್ನೂ ನೋಡಿರಿ,” ಎಂದು ಹೇಳಿ
JDG 8:16 ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು.
JDG 8:17 ಪೆನೀಯೇಲಿನ ಗೋಪುರವನ್ನು ಕೆಡವಿ, ಆ ಪಟ್ಟಣದ ಮನುಷ್ಯರನ್ನು ಕೊಂದುಹಾಕಿದನು.
JDG 8:18 ಅವನು ಜೆಬಹನಿಗೂ, ಚಲ್ಮುನ್ನನಿಗೂ, “ನೀವು ತಾಬೋರಿನಲ್ಲಿ ಕೊಂದುಹಾಕಿದ ಆ ಮನುಷ್ಯರು ಯಾವ ತರಹದವರಾಗಿದ್ದರು?” ಎಂದನು. ಅದಕ್ಕವರು, “ನಿನ್ನ ಹಾಗೆಯೇ ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಂತಿದ್ದರು,” ಎಂದರು.
JDG 8:19 ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು.
JDG 8:20 ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು.
JDG 8:21 ಆಗ ಜೆಬಹನೂ, ಚಲ್ಮುನ್ನನೂ, “ನೀನು ಎದ್ದು ನಮ್ಮ ಮೇಲೆ ಬೀಳು. ಏಕೆಂದರೆ ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವುದು,” ಎಂದರು. ಗಿದ್ಯೋನನು ಎದ್ದು ಜೆಬಹನನ್ನೂ, ಚೆಲ್ಮುನ್ನನನ್ನೂ ಕೊಂದುಹಾಕಿ, ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದುಕೊಂಡನು.
JDG 8:22 ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ, ನೀನೂ, ನಿನ್ನ ಪುತ್ರನೂ, ನಿನ್ನ ಪುತ್ರನ ಪುತ್ರನೂ ನಮ್ಮನ್ನು ಆಳಬೇಕು,” ಎಂದರು.
JDG 8:23 ಗಿದ್ಯೋನನು ಅವರಿಗೆ, “ನಾನು ನಿಮ್ಮನ್ನು ಆಳುವುದಿಲ್ಲ. ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ. ಯೆಹೋವ ದೇವರೇ ನಿಮ್ಮನ್ನು ಆಳುವರು.”
JDG 8:24 ಮತ್ತು ಗಿದ್ಯೋನನು ಅವರಿಗೆ, “ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿಯೊಬ್ಬನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಿರಿ,” ಎಂದನು. ಏಕೆಂದರೆ ಮಿದ್ಯಾನರು ಇಷ್ಮಾಯೇಲರಾಗಿದ್ದದರಿಂದ ಅವರು ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
JDG 8:25 ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು.
JDG 8:26 ಆಭರಣಗಳೂ, ಕಂಠಮಾಲೆಗಳೂ, ಮಿದ್ಯಾನರ ಅರಸರು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ, ಅವರ ಒಂಟೆಗಳ ಕೊರಳೊಳಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದುಕೊಂಡ ಬಂಗಾರದ ಓಲೆಗಳ ತೂಕವು ಇಪ್ಪತ್ತು ಕಿಲೋಗ್ರಾಂ ತೂಕವಾಗಿತ್ತು.
JDG 8:27 ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
JDG 8:28 ಮಿದ್ಯಾನ್ಯರು ತಮ್ಮ ತಲೆಯನ್ನು ತಿರುಗಿ ಎತ್ತಕೂಡದ ಹಾಗೆ ಇಸ್ರಾಯೇಲರ ಮುಂದೆ ತಗ್ಗಿಹೋದರು. ದೇಶವು ಗಿದ್ಯೋನನ ದಿವಸಗಳಲ್ಲಿ ನಲವತ್ತು ವರುಷ ವಿಶ್ರಾಂತಿಯಲ್ಲಿತ್ತು.
JDG 8:29 ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು.
JDG 8:30 ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಂದ ಜನಿಸಿದ ಎಪ್ಪತ್ತು ಮಂದಿ ಮಕ್ಕಳು ಇದ್ದರು.
JDG 8:31 ಶೆಖೆಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
JDG 8:32 ಯೋವಾಷನ ಮಗನಾದ ಗಿದ್ಯೋನನು ಒಳ್ಳೆಯ ವೃದ್ಧಾಪ್ಯದಲ್ಲಿ ಮರಣಹೊಂದಿದಾಗ, ಅವನನ್ನು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಳಿಡಲಾಯಿತು.
JDG 8:33 ಗಿದ್ಯೋನನ ಮರಣದ ತರುವಾಯ, ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜೆ ಮಾಡುತ್ತಾ ಬಾಳ್ ಬೆರೀತನ್ನು ತಮಗೆ ದೇವರಾಗಿ ಮಾಡಿಕೊಂಡರು.
JDG 8:34 ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟರು.
JDG 8:35 ಗಿದ್ಯೋನನೆಂಬ ಯೆರುಬ್ಬಾಳನು ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ದಯೆಯನ್ನು ಅವನ ಮನೆಗೆ ಮಾಡದೆ ಹೋದರು.
JDG 9:1 ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ, ಅವರ ಸಂಗಡ ಮತ್ತು ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆಲ್ಲರ ಸಂಗಡ ಮಾತನಾಡಿ,
JDG 9:2 “ನೀವು ದಯಮಾಡಿ ಶೆಕೆಮಿನ ಹಿರಿಯರಿಗೆ, ‘ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವುದು ಒಳ್ಳೆಯದೋ? ಒಬ್ಬನು ಆಳುವುದು ಒಳ್ಳೆಯದೋ?’ ಎಂದು ವಿಚಾರಿಸಿರಿ. ನಾನು ನಿಮ್ಮ ಎಲುಬೂ, ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕಮಾಡಿಕೊಳ್ಳಿರಿ,” ಎಂದನು.
JDG 9:3 ಹಾಗೆಯೇ ಅವನ ತಾಯಿಯ ಸಹೋದರರು ಅವನನ್ನು ಕುರಿತು ಶೆಕೆಮಿನ ಹಿರಿಯರೆಲ್ಲರೂ ಕೇಳುವಂತೆ ಈ ಮಾತುಗಳನ್ನೆಲ್ಲಾ ಹೇಳಿದರು. ಅವರು, “ಇವನು ನಮ್ಮ ಸಹೋದರನು,” ಎಂದು ಹೇಳಿದ್ದರಿಂದ, ಆ ಜನರ ಹೃದಯವು ಅಬೀಮೆಲೆಕನ ಕಡೆಗೆ ತಿರುಗಿತು.
JDG 9:4 ಅವರು ಬಾಳ್ ಬೆರೀತಿನ ಮನೆಯೊಳಗಿಂದ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಅವುಗಳಿಂದ ಅಬೀಮೆಲೆಕನು ಪುಂಡಪೋಕರಿಗಳನ್ನು ಸಂಬಳಕ್ಕೆ ಇಟ್ಟುಕೊಂಡನು. ಅವರು ಅವನ ಹಿಂದೆ ಹೋದರು.
JDG 9:5 ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಪುತ್ರರನ್ನು ಒಂದು ಬಂಡೆಯ ಮೇಲೆ ಕೊಂದುಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗ ಯೋತಾಮನು ಒಬ್ಬನೇ ಉಳಿದನು. ಏಕೆಂದರೆ ಅವನು ಅಡಗಿಕೊಂಡನು.
JDG 9:6 ಶೆಕೆಮಿನ ಜನರೆಲ್ಲರೂ, ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ, ಶೆಕೆಮಿನ ಬಯಲಲ್ಲಿ ಇರುವ ಸ್ತಂಭದ ಬಳಿ ಇರುವ ಅಲ್ಲೋನ್ ಮರದ ಹತ್ತಿರ ಸೇರಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
JDG 9:7 ಯೋತಾಮನಿಗೆ ಇದನ್ನು ತಿಳಿಸಿದಾಗ, ಅವನು ಹೋಗಿ ಗೆರಿಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು, ತನ್ನ ಸ್ವರವನ್ನೆತ್ತಿ ಕೂಗಿ ಅವರಿಗೆ, “ಶೆಕೆಮಿನ ಹಿರಿಯರೇ, ದೇವರು ನಿಮ್ಮನ್ನು ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.
JDG 9:8 ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇಕಿಸಿಕೊಳ್ಳುವುದಕ್ಕಾಗಿ ಹೊರಟುಹೋಗಿ, ಹಿಪ್ಪೆಯ ಮರಕ್ಕೆ, ‘ನೀನು ನಮ್ಮನ್ನು ಆಳು,’ ಎಂದವು.
JDG 9:9 “ಹಿಪ್ಪೆಯ ಮರ ಅವುಗಳಿಗೆ, ‘ಯಾವುದರಿಂದ ದೇವರನ್ನೂ, ಮನುಷ್ಯನನ್ನೂ ಘನಪಡಿಸುತ್ತಾರೋ, ಈ ನನ್ನ ಎಣ್ಣೆಯನ್ನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
JDG 9:10 “ಮರಗಳು ಅಂಜೂರದ ಗಿಡಕ್ಕೆ, ‘ನೀನು ಬಂದು ನಮ್ಮ ಮೇಲೆ ಆಳಬೇಕು,’ ಎಂದವು.
JDG 9:11 “ಆದರೆ ಅಂಜೂರದ ಗಿಡಗಳು ಅವುಗಳಿಗೆ, ‘ನಾನು ನನ್ನ ಮಧುರವನ್ನೂ, ನನ್ನ ಒಳ್ಳೆಯ ಫಲವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
JDG 9:12 “ಮರಗಳು ದ್ರಾಕ್ಷಿ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು.
JDG 9:13 “ಆದರೆ ದ್ರಾಕ್ಷಿ ಗಿಡವು ಅವುಗಳಿಗೆ, ‘ದೇವರನ್ನೂ, ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.
JDG 9:14 “ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ, ‘ನೀನು ಬಂದು ನಮ್ಮನ್ನು ಆಳು,’ ಎಂದವು.
JDG 9:15 “ಮುಳ್ಳಿನ ಗಿಡವು ಮರಗಳಿಗೆ, ‘ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವುದು ಸತ್ಯವಾದರೆ, ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು, ಲೆಬನೋನಿನ ದೇವದಾರುಗಳು ದಹಿಸಿಬಿಡಲಿ,’ ಎಂದಿತು.
JDG 9:16 “ನೀವು ಈಗ ಅಬೀಮೆಲೆಕನನ್ನು ಅರಸನಾಗಿ ಮಾಡಿದ್ದು ಸತ್ಯದಲ್ಲಿಯೂ, ಯಥಾರ್ಥದಿಂದಲೂ ಮಾಡಿರುವುದಾದರೆ ಮತ್ತು ಯೆರುಬ್ಬಾಳನಿಗೂ, ಅವನ ಮನೆಗೂ ಒಳ್ಳೆಯದನ್ನು ಮಾಡಿದ್ದರೆ,
JDG 9:17 ನನ್ನ ತಂದೆಯಾದ ಅವನು ನಿಮಗೋಸ್ಕರ ಯುದ್ಧಮಾಡಿದವನಾಗಿಯೂ, ತನ್ನ ಪ್ರಾಣವನ್ನು ಲೆಕ್ಕಿಸದೆ, ಮಿದ್ಯಾನಿನ ಕೈಯಿಂದ ನಿಮ್ಮನ್ನು ತಪ್ಪಿಸಿದವನಾಗಿಯೂ ಇರಲಾಗಿ,
JDG 9:18 ನೀವು ಈ ಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು, ಅವನ ಎಪ್ಪತ್ತು ಮಕ್ಕಳನ್ನು ಒಂದೇ ಬಂಡೆ ಮೇಲೆ ಕೊಂದು, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು, ಅವನು ನಿಮ್ಮ ಸಹೋದರನಾಗಿರುವುದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು,
JDG 9:19 ಯೆರುಬ್ಬಾಳನ ಯೋಗ್ಯತೆಗೆ ತಕ್ಕದ್ದಾಗಿದ್ದರೆ ಮತ್ತು ಈ ಹೊತ್ತು ಅವನಿಗೂ, ಅವನ ಮಗನಿಗೂ ನೀವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಕಾರ್ಯ ಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ. ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ.
JDG 9:20 ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿ ಹೊರಟು ಶೆಕೆಮಿನ ಹಿರಿಯರನ್ನೂ, ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನರಿಂದಲೂ, ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ,” ಎಂದನು.
JDG 9:21 ಆಗ ಯೋತಾಮನು ತಪ್ಪಿಸಿಕೊಂಡು ಓಡಿ ಬೇರಕ್ಕೆ ಹೋಗಿ, ತನ್ನ ಸಹೋದರನಾದ ಅಬೀಮೆಲೆಕನ ಭಯದ ನಿಮಿತ್ತವಾಗಿ ಅಲ್ಲಿ ವಾಸವಾಗಿದ್ದನು.
JDG 9:22 ಅಬೀಮೆಲೆಕನು ಇಸ್ರಾಯೇಲನ್ನು ಮೂರು ವರ್ಷ ಆಳಿದ ತರುವಾಯ,
JDG 9:23 ದೇವರು ಅಬೀಮೆಲೆಕ ಮತ್ತು ಶೆಕೆಮಿನ ಹಿರಿಯರ ನಡುವೆ ಒಂದು ದುರಾತ್ಮನನ್ನು ಕಳುಹಿಸಿದರು. ಆಗ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹಮಾಡಿದರು.
JDG 9:24 ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ, ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಅವನ ಸಹೋದರರನ್ನು ಕೊಲ್ಲುವುದಕ್ಕೆ ಅವನ ಕೈಗಳನ್ನು ಬಲಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ, ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹಮಾಡಿದರು.
JDG 9:25 ಶೆಕೆಮಿನ ಹಿರಿಯರು ಪರ್ವತ ಶಿಖರಗಳ ಮೇಲೆ ಅವನಿಗೋಸ್ಕರ ಹೊಂಚುಗಾರರನ್ನು ಇಟ್ಟು, ತಮ್ಮ ಸಮೀಪವಾಗಿ ಮಾರ್ಗದಲ್ಲಿ ಹಾದುಹೋಗುವ ಎಲ್ಲರನ್ನು ಸುಲಿದುಕೊಂಡರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು.
JDG 9:26 ಆಗ ಏಬೆದನ ಮಗನಾದ ಗಾಳನೂ, ಅವನ ಸಹೋದರರೂ ಶೆಕೆಮಿಗೆ ದಾಟಿ ಬಂದರು. ಆದರೆ ಶೆಕೆಮಿನ ಹಿರಿಯರು ಅವನಲ್ಲಿ ಭರವಸೆಯಿಟ್ಟು,
JDG 9:27 ಹೊರಗೆ ಹೋಗಿ ತಮ್ಮ ದ್ರಾಕ್ಷಿ ಫಲಗಳನ್ನು ಕೊಯ್ದು, ಅವುಗಳನ್ನು ತುಳಿದು ಸಂತೋಷಪಟ್ಟು, ತಮ್ಮ ದೇವರ ಮನೆಯೊಳಗೆ ಹೋಗಿ, ತಿಂದು ಕುಡಿದು ಅಬೀಮೆಲೆಕನನ್ನು ಶಪಿಸಿದರು.
JDG 9:28 ಆಗ ಏಬೆದನ ಮಗನಾದ ಗಾಳನು, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬೂಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ. ಇವನನ್ನು ನಾವು ಏಕೆ ಸೇವಿಸಬೇಕು?
JDG 9:29 ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುತ್ತಿದ್ದೆನು. ತರುವಾಯ ಅಬೀಮೆಲೆಕನಿಗೆ, ‘ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ,’ ಎಂದು ಹೇಳುತ್ತಿದ್ದೆನು,” ಎಂದನು.
JDG 9:30 ಆ ಪಟ್ಟಣದ ಅಧಿಪತಿಯಾದ ಜೆಬೂಲನು, ಏಬೆದನ ಮಗ ಗಾಳನು ಹೇಳಿದ ಮಾತುಗಳನ್ನು ಕೇಳಿದಾಗ ಕೋಪಗೊಂಡು,
JDG 9:31 ಅವನು ಅಬೀಮೆಲೆಕನ ಬಳಿಗೆ ರಹಸ್ಯವಾಗಿ ದೂತರನ್ನು ಕಳುಹಿಸಿ, “ಏಬೆದನ ಮಗ ಗಾಳನೂ, ಅವನ ಸಹೋದರರೂ ಶೆಕೆಮಿಗೆ ಬಂದಿದ್ದಾರೆ. ಅವರು ಪಟ್ಟಣವನ್ನು ನಿನಗೆ ವಿರೋಧವಾಗಿ ಬಲಪಡಿಸುತ್ತಿದ್ದಾರೆ.
JDG 9:32 ಆದ್ದರಿಂದ ಈಗ ನೀನೂ, ನಿನ್ನ ಸಂಗಡ ಇರುವ ಜನರೂ ಕೂಡಿ, ರಾತ್ರಿಯಲ್ಲಿ ಎದ್ದು, ಹೊಲದಲ್ಲಿ ಹೊಂಚುಹಾಕಿಕೊಂಡಿರಬೇಕು.
JDG 9:33 ಹೊತ್ತಾರೆ ಸೂರ್ಯನು ಉದಯಿಸುವಾಗ, ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು. ಗಾಳನೂ, ಅವನ ಸಂಗಡ ಇರುವ ಜನರೂ ನಿಮಗೆದುರಾಗಿ ಹೊರಟು ಬರುವಾಗ, ನೀನು ನಿನ್ನ ಕೈಗೆ ಸರಿಬಂದ ಹಾಗೆ ಅವನಿಗೆ ಮಾಡಬೇಕು,” ಎಂದು ಹೇಳಿದನು.
JDG 9:34 ಹಾಗೆಯೇ ಅಬೀಮೆಲೆಕನೂ, ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು, ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿಕಾಯುತ್ತಿದ್ದರು.
JDG 9:35 ಏಬೆದನ ಮಗ ಗಾಳನು ಹೊರಟುಬಂದು ಪಟ್ಟಣದ ಬಾಗಿಲಿನ ದ್ವಾರದಲ್ಲಿ ನಿಂತನು. ಆಗ ಹೊಂಚುಹಾಕೊಕೊಂಡಿದ್ದ ಅಬೀಮೆಲೆಕನೂ, ಅವನ ಸಂಗಡ ಇದ್ದ ಜನರೂ ಎದ್ದು ಬಂದರು.
JDG 9:36 ಗಾಳನು ಆ ಜನರನ್ನು ಕಂಡಾಗ, “ಬೆಟ್ಟದ ಶಿಖರಗಳಿಂದ ಜನರು ಬರುತ್ತಾರೆ,” ಎಂದು ಜೆಬೂಲನಿಗೆ ಹೇಳಿದರು. ಜೆಬೂಲನು ಅವನಿಗೆ, “ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ಕಾಣುತ್ತೀ,” ಎಂದನು.
JDG 9:37 ಗಾಳನು ತಿರುಗಿ ಅವನ ಸಂಗಡ ಮಾತನಾಡಿ, “ಇಗೋ, ಜನರು ಭೂಮಧ್ಯ ಸ್ಥಳದಿಂದ ಇಳಿದು ಬರುತ್ತಾರೆ. ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.
JDG 9:38 ಆಗ ಜೆಬೂಲನು ಅವನಿಗೆ, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು, ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನರಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧ ಮಾಡು,” ಎಂದನು.
JDG 9:39 ಗಾಳನು ಶೆಕೆಮಿನವರ ನಾಯಕನಾಗಿ ಹೊರಟು, ಅಬೀಮೆಲೆಕನ ಸಂಗಡ ಯುದ್ಧಮಾಡಿದನು.
JDG 9:40 ಆದರೆ ಅಬೀಮೆಲೆಕನು ಅವನನ್ನು ಹಿಂದಟ್ಟಿದಾಗ, ಗಾಳನು ಅವನ ಮುಂದೆ ಓಡಿಹೋದನು. ಬಾಗಿಲ ಹತ್ತಿರದವರೆಗೆ ಅನೇಕರು ಸಂಹಾರವಾಗಿ, ಅನೇಕರು ಗಾಯಗೊಂಡರು.
JDG 9:41 ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು. ಆದರೆ ಜೆಬೂಲನು ಗಾಳನನ್ನೂ, ಅವನ ಸಹೋದರರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು.
JDG 9:42 ಮಾರನೆಯ ದಿನ ಶೆಕೆಮಿನ ಜನರು ಹೊಲಕ್ಕೆ ಹೊರಟರು. ಸೈನಿಕರು ಅದನ್ನು ಅಬೀಮೆಲೆಕನಿಗೆ ತಿಳಿಸಿದರು.
JDG 9:43 ಅವನು ಸೈನಿಕರನ್ನು ತೆಗೆದುಕೊಂಡು, ಅವರನ್ನು ಮೂರು ಗುಂಪುಗಳಾಗಿ ಮಾಡಿ, ಹೊಲದಲ್ಲಿ ಹೊಂಚಿಹಾಕಿಕೊಂಡನು. ಆಗ ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು, ಅವರನ್ನು ಹೊಡೆದನು.
JDG 9:44 ಅಬೀಮೆಲೆಕನೂ, ಅವನ ಸಂಗಡ ಇದ್ದ ಸೈನಿಕರ ಗುಂಪೂ ಮುಂದಕ್ಕೆ ಓಡಿ, ಪಟ್ಟಣದ ಬಾಗಿಲಿನ ಬಳಿ ನಿಂತರು. ಮಿಕ್ಕಾದ ಎರಡು ಗುಂಪಿನ ಜನರು, ಹೊಲದಲ್ಲಿರುವವರೆಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿದರು.
JDG 9:45 ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ, ಪಟ್ಟಣವನ್ನು ಹಿಡಿದು, ಅದರಲ್ಲಿದ್ದ ಜನರನ್ನು ಕೊಂದು, ಪಟ್ಟಣವನ್ನು ಕೆಡವಿಬಿಟ್ಟು, ಅದರಲ್ಲಿ ಉಪ್ಪು ಎರಚಿಬಿಟ್ಟನು.
JDG 9:46 ಅದನ್ನು ಶೆಕೆಮಿನ ಗೋಪುರದಲ್ಲಿ ಜನರೆಲ್ಲರೂ ಕೇಳಿದಾಗ, ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಅಡಗಿಕೊಂಡರು.
JDG 9:47 ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ಗೊತ್ತಾದಾಗ,
JDG 9:48 ಅಬೀಮೆಲೆಕನು ತನ್ನ ಸಂಗಡ ಇದ್ದ ಸೈನಿಕರೆಲ್ಲರ ಸಹಿತವಾಗಿ ಚಲ್ಮೋನ್ ಬೆಟ್ಟವನ್ನೇರಿ, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು, ಒಂದು ಮರದ ಕೊಂಬೆಯನ್ನು ಕಡಿದು, ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, ತನ್ನ ಕೂಡ ಇದ್ದ ಜನರಿಗೆ, “ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ,” ಎಂದನು.
JDG 9:49 ಸೈನಿಕರೆಲ್ಲರಲ್ಲಿ ಒಬ್ಬೊಬ್ಬನು ಒಂದೊಂದು ಕೊಂಬೆಯನ್ನು ಕಡಿದು, ಅಬೀಮೆಲೆಕನ ಹಿಂದೆ ಹೋಗಿ, ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ, ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಜನರು ಸತ್ತುಹೋದರು. ಅವರು ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.
JDG 9:50 ಆಗ ಅಬೀಮೆಲೆಕನು ತೆಬೇಚಿಗೆ ಹೋಗಿ, ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಿ, ಅದನ್ನು ಹಿಡಿದನು.
JDG 9:51 ಆದರೆ ಪಟ್ಟಣದ ಒಳಗೆ ಬಲವಾದ ಗೋಪುರ ಇತ್ತು. ಆ ಪಟ್ಟಣದಲ್ಲಿರುವ ಸಮಸ್ತ ಸ್ತ್ರೀ ಪುರುಷರು ಅಲ್ಲಿಗೆ ಓಡಿಹೋಗಿ, ಅದರಲ್ಲಿ ಹೊಕ್ಕು, ತಮ್ಮ ಹಿಂದಿನಿಂದ ಬಾಗಿಲನ್ನು ಮುಚ್ಚಿ ಗೋಪುರದ ಮೇಲೆ ಏರಿದರು.
JDG 9:52 ಆಗ ಅಬೀಮೆಲೆಕನು ಆ ಗೋಪುರಕ್ಕೆ ಬಂದು, ಅದರ ವಿರುದ್ಧ ಯುದ್ಧಮಾಡಿ, ಗೋಪುರದ ಬಾಗಿಲನ್ನು ಸುಟ್ಟು ಬಿಡುವುದಕ್ಕೆ ಅದರ ಬಳಿಗೆ ಬಂದನು.
JDG 9:53 ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿದಳು. ಅದರಿಂದ ಅವನ ತಲೆಯನ್ನು ಒಡೆದು ಹಾಕಿದಳು.
JDG 9:54 ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕನನ್ನು ಕರೆದು ಅವನಿಗೆ, “ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಖಡ್ಗದಿಂದ ಇರಿದು, ನನ್ನನ್ನು ಕೊಲ್ಲು,” ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು. ಅವನು ಮರಣಹೊಂದಿದನು.
JDG 9:55 ಅಬೀಮೆಲೆಕನು ಮರಣಹೊಂದಿದ್ದನ್ನು ಇಸ್ರಾಯೇಲರು ಕಂಡಾಗ, ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.
JDG 9:56 ಈ ಪ್ರಕಾರ ಅಬೀಮೆಲೆಕನು ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿದ್ದರಿಂದ, ತನ್ನ ತಂದೆಗೆ ಮಾಡಿದ ಕೇಡನ್ನು ದೇವರು ಅವನ ಮೇಲೆ ತಿರುಗಿ ಬರಮಾಡಿದರು.
JDG 9:57 ಇದಲ್ಲದೆ ಶೆಕೆಮಿನವರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದರು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂದಿತು.
JDG 10:1 ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲರನ್ನು ರಕ್ಷಿಸುವುದಕ್ಕೆ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸಮಾಡಿದನು.
JDG 10:2 ಇಸ್ರಾಯೇಲಿಗೆ ಇಪ್ಪತ್ಮೂರು ವರುಷ ನ್ಯಾಯ ತೀರಿಸಿದ ತರುವಾಯ, ಅವನು ಮರಣಹೊಂದಿ ಶಾಮೀರಲ್ಲಿ ಸಮಾಧಿಯಾದನು.
JDG 10:3 ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು.
JDG 10:4 ಅವನಿಗೆ ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುವ ಮೂವತ್ತು ಮಂದಿ ಪುತ್ರರು ಇದ್ದರು. ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳು ಅವರ ಅಧಿಕಾರದಲ್ಲಿದ್ದವು. ಅವುಗಳಿಗೆ ಈ ದಿನದವರೆಗೂ ಹವೋತ್ ಯಾಯೀರ್ ಎಂಬ ಹೆಸರಿದೆ.
JDG 10:5 ಯಾಯೀರನು ಮರಣಹೊಂದಿ, ಕಾಮೋನಿನಲ್ಲಿ ಸಮಾಧಿಯಾದನು.
JDG 10:6 ಇಸ್ರಾಯೇಲರು ಪುನಃ ಯೆಹೋವ ದೇವರ ಮುಂದೆ ಕೆಟ್ಟತನವನ್ನು ಮಾಡಿ, ಬಾಳನನ್ನೂ, ಅಷ್ಟೋರೆತನ್ನೂ, ಅರಾಮ್ ದೇಶದ ದೇವರುಗಳನ್ನೂ, ಸೀದೋನಿನ ದೇವರುಗಳನ್ನೂ, ಮೋವಾಬಿನ ದೇವರುಗಳನ್ನೂ, ಅಮ್ಮೋನಿಯರ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸಿದರು.
JDG 10:7 ಅವರು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ಯೆಹೋವ ದೇವರು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವರಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಮಾರಿಬಿಟ್ಟರು.
JDG 10:8 ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು.
JDG 10:9 ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದ ಹಾಗೂ ಬೆನ್ಯಾಮೀನರಿಗೆ ವಿರೋಧವಾಗಿಯೂ, ಎಫ್ರಾಯೀಮರ ಮನೆಗೆ ವಿರೋಧವಾಗಿಯೂ ಯುದ್ಧಮಾಡುವುದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹು ಸಂಕಟವಾಯಿತು.
JDG 10:10 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಕೂಗಿ, “ನಮ್ಮ ದೇವರನ್ನು ಬಿಟ್ಟು, ಬಾಳನನ್ನು ಸೇವಿಸಿದ್ದರಿಂದ, ನಾವು ನಿಮಗೆ ವಿರೋಧವಾಗಿ ಪಾಪಮಾಡಿದೆವು,” ಎಂದರು.
JDG 10:11 ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ,
JDG 10:12 ಸೀದೋನ್ಯ, ಅಮಾಲೇಕ್ಯ, ಮಾವೋನ್ಯ ಈ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ತಪ್ಪಿಸಿಬಿಡಲಿಲ್ಲವೋ?
JDG 10:13 ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸುತ್ತಾ ಬಂದಿರಿ; ಆದ್ದರಿಂದ ಇನ್ನು ನಾನು ನಿಮ್ಮನ್ನು ರಕ್ಷಿಸುವುದಿಲ್ಲ.
JDG 10:14 ನೀವು ಹೋಗಿ ನಿಮಗೆ ನೀವೇ ಆಯ್ದುಕೊಂಡ ದೇವರುಗಳಿಗೆ ಕೂಗಿರಿ, ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ,” ಎಂದರು.
JDG 10:15 ಇಸ್ರಾಯೇಲರು ಯೆಹೋವ ದೇವರಿಗೆ, “ನಾವು ಪಾಪಮಾಡಿದೆವು. ನೀವು ನಿಮಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡಿರಿ. ಆದರೆ ಈ ಹೊತ್ತು ನಮ್ಮನ್ನು ರಕ್ಷಿಸಿರಿ,” ಎಂದು ಬೇಡಿಕೊಂಡರು.
JDG 10:16 ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು, ಯೆಹೋವ ದೇವರನ್ನು ಸೇವಿಸಿದರು. ಆಗ ಯೆಹೋವ ದೇವರು ಇಸ್ರಾಯೇಲಿನ ಕಷ್ಟಕ್ಕೋಸ್ಕರ ಮನಸ್ಸಿನಲ್ಲಿ ಬಹಳ ನೊಂದುಕೊಂಡರು.
JDG 10:17 ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.
JDG 10:18 ಆಗ ಗಿಲ್ಯಾದಿನ ಜನರೂ, ಪ್ರಧಾನರೂ ಒಬ್ಬರಿಗೊಬ್ಬರು, “ಯಾವನು ಅಮ್ಮೋನಿಯರ ಮೇಲೆ ಯುದ್ಧಮಾಡಲಾರಂಭಿಸುವನೋ, ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ತಲೆಯಾಗಿರುವನು,” ಎಂದು ಮಾತನಾಡಿಕೊಂಡರು.
JDG 11:1 ಗಿಲ್ಯಾದ್ಯನಾದ ಯೆಫ್ತಾಹನು ಬಲಿಷ್ಠನಾದ ಪರಾಕ್ರಮಶಾಲಿಯಾಗಿದ್ದನು. ಅವನು ಒಬ್ಬ ವೇಶ್ಯೆಯಲ್ಲಿ ಹುಟ್ಟಿದ ಗಿಲ್ಯಾದನ ಮಗನು.
JDG 11:2 ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಪುತ್ರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ, “ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ. ಏಕೆಂದರೆ ನೀನು ಪರಸ್ತ್ರೀಯ ಮಗನು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
JDG 11:3 ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ, ಟೋಬ್ ದೇಶದಲ್ಲಿ ವಾಸವಾಗಿದ್ದನು. ಆ ಸ್ಥಳದ ಪುಂಡಪೋಕರಿಗಳು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನನ್ನು ಹಿಂಬಾಲಿಸುತ್ತಿದ್ದರು.
JDG 11:4 ಕೆಲವು ದಿವಸಗಳಾದ ಮೇಲೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಿದರು.
JDG 11:5 ಆದರೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡುವಾಗ, ಗಿಲ್ಯಾದಿನ ಹಿರಿಯರು ಯೆಫ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರಲು ಹೋಗಿ,
JDG 11:6 ಯೆಫ್ತಾಹನಿಗೆ, “ನಾವು ಅಮ್ಮೋನಿಯರ ಸಂಗಡ ಯುದ್ಧಮಾಡುವಂತೆ, ನೀನು ಬಂದು ನಮ್ಮ ಸೈನ್ಯಾಧಿಪತಿಯಾಗಿರು,” ಎಂದರು.
JDG 11:7 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ನೀವಲ್ಲವೇ ನನ್ನನ್ನು ಹಗೆಮಾಡಿ, ನನ್ನ ತಂದೆಯ ಮನೆಯಿಂದ ಹೊರಡಿಸಿದವರು? ಈಗ ನಿಮಗೆ ಇಕ್ಕಟ್ಟು ಬಂದಿರುವಾಗ ನನ್ನ ಬಳಿಗೆ ಏಕೆ ಬಂದಿರಿ?” ಎಂದನು.
JDG 11:8 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನೀನು ನಮ್ಮೊಂದಿಗೆ ಬಂದು ಅಮ್ಮೋನ್ಯರಿಗೆ ವಿರೋಧವಾಗಿ ಯುದ್ಧಮಾಡಿ, ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ, ಈಗ ನಿನ್ನ ಬಳಿಗೆ ತಿರುಗಿ ಬಂದೆವು,” ಎಂದರು.
JDG 11:9 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ನೀವು ತಿರುಗಿ ನನ್ನನ್ನು ಮನೆಗೆ ಕರೆತಂದರೆ ಮತ್ತು ಯೆಹೋವ ದೇವರು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ, ನಾನು ನಿಮಗೆ ತಲೆಯಾಗಿರುವೆನೋ?” ಎಂದನು.
JDG 11:10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಈ ನಿನ್ನ ಮಾತಿನ ಹಾಗೆ ಮಾಡದೆ ಹೋದರೆ, ಯೆಹೋವ ದೇವರು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದರು.
JDG 11:11 ಹಾಗೆಯೇ ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನನ್ನಾಗಿಯೂ, ಸೈನ್ಯಾಧಿಪತಿಯಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಹೇಳಿದನು.
JDG 11:12 ಯೆಫ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವುದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು?” ಎಂದು ಹೇಳಿ ಕಳುಹಿಸಿದನು.
JDG 11:13 ಅಮ್ಮೋನಿಯ ಅರಸನು ಯೆಫ್ತಾಹನ ದೂತರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ, ಅರ್ನೋನಿನಿಂದ ಯಬ್ಬೋಕಿನವರೆಗೂ ಮತ್ತು ಯೊರ್ದನಿನವರೆಗೂ ಇರುವ ನನ್ನ ದೇಶವನ್ನು ತೆಗೆದುಕೊಂಡರು. ಆದ್ದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರುಗಿಕೊಡು,” ಎಂದನು.
JDG 11:14 ಆದರೆ ಯೆಫ್ತಾಹನು ತಿರುಗಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ,
JDG 11:15 ಅವರಿಗೆ ಯೆಫ್ತಾಹನು ಹೇಳುವ ಮಾತೇನೆಂದರೆ: “ಇದೇ ಇಸ್ರಾಯೇಲರು ಮೋವಾಬಿನ ದೇಶವನ್ನಾದರೂ, ಅಮ್ಮೋನಿಯರ ದೇಶವನ್ನಾದರೂ ತೆಗೆದುಕೊಂಡಿಲ್ಲ.
JDG 11:16 ಆದರೆ ಇಸ್ರಾಯೇಲು ಈಜಿಪ್ಟಿನಿಂದ ಬರುವಾಗ, ಮರುಭೂಮಿಯಲ್ಲಿ ಕೆಂಪು ಸಮುದ್ರದವರೆಗೆ ನಡೆದು ಕಾದೇಶಿಗೆ ಬಂದು,
JDG 11:17 ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆ ಆಗಬೇಕು,’ ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದ್ದರಿಂದ ಇಸ್ರಾಯೇಲರು ಕಾದೇಶಿನಲ್ಲಿ ವಾಸಮಾಡಿದರು.
JDG 11:18 “ಮರುಭೂಮಿಯಲ್ಲಿ ನಡೆದು, ಎದೋಮ್ ದೇಶವನ್ನೂ, ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ, ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು, ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ, ಮೋವಾಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳಿದುಕೊಂಡರು.
JDG 11:19 “ಇಸ್ರಾಯೇಲರು ಹೆಷ್ಬೋನನ್ನು ಆಳಿದ ಅಮೋರಿಯರ ಅರಸನಾದಂಥ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ, ‘ನಮ್ಮ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವುದಕ್ಕೆ ಅಪ್ಪಣೆ ಆಗಬೇಕು,’ ಎಂದರು.
JDG 11:20 ಆದರೆ ಸೀಹೋನನು ತನ್ನ ಮೇರೆಯನ್ನು ದಾಟುವುದಕ್ಕೆ ಇಸ್ರಾಯೇಲರನ್ನು ನಂಬದೆ, ತನ್ನ ಜನರನ್ನೆಲ್ಲಾ ಕೂಡಿಸಿ, ಯಹಚಿನಲ್ಲಿ ದಂಡಿಳಿದು, ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಮಾಡಿದನು.
JDG 11:21 “ಆಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೀಹೋನನನ್ನೂ, ಅವನ ಸಕಲ ಜನರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಇಸ್ರಾಯೇಲರು ಸೀಹೋನನನ್ನೂ, ಅವನ ಸಕಲ ಜನರನ್ನೂ ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇಲರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು.
JDG 11:22 ಅರ್ನೋನಿನಿಂದ ಯಬ್ಬೋಕಿನವರೆಗೂ, ಮರುಭೂಮಿಯಿಂದ ಯೊರ್ದನಿನವರೆಗೂ ಇರುವ ಅಮೋರಿಯರ ಮೇರೆಯಾದ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು.
JDG 11:23 “ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಅಮೋರಿಯರನ್ನು ತಮ್ಮ ಜನರಾದ ಇಸ್ರಾಯೇಲಿನ ಮುಂದೆ ಹೊರಡಿಸಿರುವಾಗ, ನೀನು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿಯೋ?
JDG 11:24 ಆದರೆ ನಿನ್ನ ದೇವರಾದ ಕೆಮೋಷನು ನಿನ್ನ ಮುಂದೆ ಹೊರಡಿಸುವವರ ದೇಶವನ್ನು ನೀನು ಸ್ವಾಧೀನ ಮಾಡಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವ ದೇವರು ನಮ್ಮ ಮುಂದೆ ಹೊರಡಿಸುವವರ ದೇಶವನ್ನೆಲ್ಲಾ ನಾವು ಸ್ವಾಧೀನ ಮಾಡಿಕೊಳ್ಳುವೆವು.
JDG 11:25 ಈಗ ಚಿಪ್ಪೋರನ ಮಗ ಮೋವಾಬಿನ ಅರಸ ಬಾಲಾಕನಿಗಿಂತ ಯಾವುದರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿಗೆ ವಿರೋಧವಾಗಿ ಎಂದಾದರೂ ವಿವಾದ ಮಾಡಿದನೋ ಅಥವಾ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನೋ?
JDG 11:26 ಇಸ್ರಾಯೇಲು ಹೆಷ್ಬೋನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರೋಯೇರಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರ್ನೋನಿನ ತೀರವಾದ ಎಲ್ಲಾ ಪಟ್ಟಣಗಳಲ್ಲಿಯೂ, ಮುನ್ನೂರು ವರ್ಷಗಳಿಂದ ವಾಸಿಸಿರುವಾಗ, ಇಷ್ಟರವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?
JDG 11:27 ಆದ್ದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧ ಮಾಡುವುದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀಯೆ. ನ್ಯಾಯಾಧಿಪತಿಯಾದ ಯೆಹೋವ ದೇವರು ಈ ಹೊತ್ತು ಇಸ್ರಾಯೇಲರಿಗೂ, ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು.
JDG 11:28 ಹೇಗಿದ್ದರೂ ಅಮ್ಮೋನಿಯರ ಅರಸನು ಯೆಫ್ತಾಹನು ತನಗೆ ಹೇಳಿ ಕಳುಹಿಸಿದ ಮಾತನ್ನು ಕೇಳದೆ ಹೋದನು.
JDG 11:29 ಆಗ ಯೆಹೋವ ದೇವರ ಆತ್ಮ ಯೆಫ್ತಾಹನ ಮೇಲೆ ಬಂತು. ಅವನು ಗಿಲ್ಯಾದ್, ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ, ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರೆದುರಿಗೆ ಹಾದುಹೋದನು.
JDG 11:30 ಯೆಫ್ತಾಹನು ಯೆಹೋವ ದೇವರಿಗೆ ಒಂದು ಪ್ರಮಾಣವನ್ನು ಮಾಡಿ, “ನೀನು ಅಮ್ಮೋನಿಯರನ್ನು ನನ್ನ ಕೈಯಲ್ಲಿ ತಪ್ಪದೆ ಒಪ್ಪಿಸಿಕೊಟ್ಟರೆ,
JDG 11:31 ನಾನು ಅಮ್ಮೋನಿಯರನ್ನು ಜಯಿಸಿ ಹಿಂತಿರುಗಿ ಬರುವಾಗ, ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥದ್ದು ಯೆಹೋವ ದೇವರದಾಗಿರುವುದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು,” ಎಂದನು.
JDG 11:32 ಹೀಗೆ ಯೆಫ್ತಾಹನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಅವರೆದುರಿಗೆ ಹೊರಟುಹೋದನು. ಯೆಹೋವ ದೇವರು ಅವರನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು.
JDG 11:33 ಯೆಫ್ತಾಹನು ಅವರನ್ನು ಅರೋಯೇರಿನಿಂದ ಮಿನ್ನೀಥಿನ ದಾರಿಯವರೆಗೆ ಮತ್ತು ಆಬೇಲ್ ಕೆರಾಮೀಮಗೆ ಹೋಗುವವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿದನು. ಹೀಗೆ ದೊಡ್ಡ ಜಯಹೊಂದಿ, ಅಮ್ಮೋನಿಯರು ಇಸ್ರಾಯೇಲರಿಗೆ ಶರಣಾದರು.
JDG 11:34 ಯೆಫ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಹಿಂದಿರುಗಿ ಬರುವಾಗ, ಅವನ ಮಗಳು ದಮ್ಮಡಿಗಳಿಂದಲೂ, ನಾಟ್ಯದಿಂದಲೂ ಅವನನ್ನು ಎದುರುಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು. ಅವಳ ಹೊರತಾಗಿ ಅವನಿಗೆ ಮಗನಾಗಲಿ, ಮಗಳಾಗಲಿ ಇರಲಿಲ್ಲ.
JDG 11:35 ಅವನು ಅವಳನ್ನು ನೋಡಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದೆ. ನನ್ನನ್ನು ತೊಂದರೆ ಪಡಿಸುವವರಲ್ಲಿ ನೀನೂ ಒಬ್ಬಳಾದೆ. ಏಕೆಂದರೆ ನಾನು ಯೆಹೋವ ದೇವರಿಗೆ ನನ್ನ ಬಾಯಿತೆರೆದು, ಪ್ರಮಾಣಮಾಡಿದೆನು, ಹಿಂದೆಗೆಯಲಾರೆನು,” ಎಂದನು.
JDG 11:36 ಅವಳು ಅವನಿಗೆ, “ಅಪ್ಪಾ, ನೀನು ಯೆಹೋವ ದೇವರಿಗೆ ನಿನ್ನ ಬಾಯಿ ತೆರೆದೆಯಲ್ಲ. ಯೆಹೋವ ದೇವರು ಅಮ್ಮೋನಿಯರಾದ ನಿನ್ನ ಶತ್ರುಗಳಿಗೆ ನಿನ್ನಿಂದ ಮುಯ್ಯಿ ತೀರಿಸಿದ್ದರಿಂದ, ಅವರಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು,” ಎಂದಳು.
JDG 11:37 ಇದಲ್ಲದೆ ಅವಳು ತನ್ನ ತಂದೆಗೆ, “ಈ ಕಾರ್ಯವು ನನಗೆ ಆಗಲಿ. ಆದರೆ ನಾನೂ, ನನ್ನ ಗೆಳತಿಯರೂ ಕೂಡ ನನ್ನ ಕನ್ಯಾವಸ್ಥೆಗಾಗಿ ಬೆಟ್ಟಗಳ ಮೇಲೆ ಹೋಗಿ, ನನ್ನ ಗೆಳತಿಯರ ಸಂಗಡ ಅಳುವುದಕ್ಕೆ ನನಗೆ ಎರಡು ತಿಂಗಳು ಸಮಯವನ್ನು ಕೊಡು,” ಎಂದಳು.
JDG 11:38 ಆಗ ಅವನು, “ಎರಡು ತಿಂಗಳು ಹೋಗಿ ಬಾ,” ಎಂದು ಹೇಳಿ ಮಗಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿಯರ ಸಂಗಡ ಹೋಗಿ, ತನ್ನ ಕನ್ಯಾವಸ್ಥೆಗಾಗಿ ಬೆಟ್ಟದಲ್ಲಿ ಅತ್ತು,
JDG 11:39 ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ತೀರ್ಪನ್ನು ಈಡೇರಿಸಿದನು. ಅವಳು ಕನ್ಯೆಯಾಗಿಯೇ ಮರಣಹೊಂದಿದಳು.
JDG 11:40 ಹೀಗೆ ವರ್ಷಕ್ಕೆ ನಾಲ್ಕು ದಿವಸ ಇಸ್ರಾಯೇಲಿನ ಪುತ್ರಿಯರು ಹೋಗಿ, ಗಿಲ್ಯಾದ್ಯನಾದ ಯೆಫ್ತಾಹನ ಮಗಳಿಗಾಗಿ ಗೋಳಾಡುವುದು ಇಸ್ರಾಯೇಲಿನಲ್ಲಿ ಪದ್ಧತಿ ಆಯಿತು.
JDG 12:1 ಎಫ್ರಾಯೀಮನ ಜನರು ಕೂಡಿಕೊಂಡು ಉತ್ತರದ ಜಪೋನಿಗೆ ಹೋಗಿ, ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಹೋದಾಗ, ನಮ್ಮನ್ನು ಏಕೆ ನಿನ್ನ ಸಂಗಡ ಹೋಗಲು ಕರೆಕಳುಹಿಸಲಿಲ್ಲ? ನಾವು ನಿನ್ನ ಮನೆಯನ್ನು ನಿನ್ನನ್ನು ಸಹಿತವಾಗಿ ಬೆಂಕಿಯಿಂದ ಸುಟ್ಟುಬಿಡುತ್ತೇವೆ,” ಎಂದರು.
JDG 12:2 ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ.
JDG 12:3 ನೀವು ನನ್ನನ್ನು ರಕ್ಷಿಸುವುದಿಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಅಮ್ಮೋನಿಯರಿಗೆ ವಿರೋಧವಾಗಿ ಹೋದೆನು. ಯೆಹೋವ ದೇವರು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ನೀವು ನನ್ನ ಸಂಗಡ ಯುದ್ಧಮಾಡುವುದಕ್ಕೆ ಈ ಹೊತ್ತು ನನಗೆ ವಿರೋಧವಾಗಿ ಏಕೆ ಬಂದಿರಿ?” ಎಂದನು.
JDG 12:4 ಆಗ ಯೆಫ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ, ಎಫ್ರಾಯೀಮ್ಯರ ಸಂಗಡ ಯುದ್ಧಮಾಡಿದನು. ಏಕೆಂದರೆ, “ಎಫ್ರಾಯೀಮ್ಯರನ್ನು ಮನಸ್ಸೆಯವರ ಮಧ್ಯದಲ್ಲಿದ್ದ ಗಿಲ್ಯಾದ್ಯರಾದ ನೀವು ಸ್ವಕುಲವನ್ನು ಬಿಟ್ಟು ತಪ್ಪಿಸಿಕೊಂಡವರಾಗಿದ್ದೀರಿ,” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯೀಮ್ಯರನ್ನು ಹೊಡೆದರು.
JDG 12:5 ಗಿಲ್ಯಾದ್ಯರು ಎಫ್ರಾಯೀಮ್ಯರಿಗೆ ಮುಂದುಗಡೆ ಯೊರ್ದನ್ ನದಿ ರೇವುಗಳನ್ನು ಹಿಡಿದರು. ಆಗ ಏನಾಯಿತೆಂದರೆ, ಎಫ್ರಾಯೀಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು, “ದಾಟುತ್ತೇನೆ,” ಎಂದು ಹೇಳಿದರೆ, ಗಿಲ್ಯಾದ್ಯರು, “ನೀನು ಎಫ್ರಾಯೀಮ್ಯನೋ?” ಎಂದು ಅವನನ್ನು ಕೇಳುತ್ತಿದ್ದರು. ಅವನು, “ಇಲ್ಲ,” ಎಂದರೆ, ಅವನಿಗೆ, “ನೀನು ಷಿಬ್ಬೋಲೆತ್ ಅನ್ನು,” ಎಂದು ಹೇಳುತ್ತಿದ್ದರು.
JDG 12:6 ಆಗ ಅವನು ಹಾಗೆ ಹೇಳಲಾರದೆ, “ಸಿಬ್ಬೋಲೆತ್,” ಎಂದು ಉಚ್ಛರಿಸುವವನನ್ನು ಹಿಡಿದು ಯೊರ್ದನ್ ನದಿ ರೇವುಗಳ ಬಳಿಯಲ್ಲಿ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ನಾಶವಾದರು.
JDG 12:7 ಯೆಫ್ತಾಹನು ಇಸ್ರಾಯೇಲರಿಗೆ ಆರು ವರ್ಷ ನ್ಯಾಯತೀರಿಸಿದನು. ಅನಂತರ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವನ ಶವವನ್ನು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು.
JDG 12:8 ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
JDG 12:9 ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು.
JDG 12:10 ನಂತರ ಇಬ್ಚಾನನು ಮರಣಹೊಂದಿ ಬೇತ್ಲೆಹೇಮಿನಲ್ಲಿ ಸಮಾಧಿಯಾದನು.
JDG 12:11 ಅವನ ತರುವಾಯ ಜೆಬುಲೂನಿನವನಾದ ಏಲೋನನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಅವನು ಹತ್ತು ವರ್ಷಗಳು ಇಸ್ರಾಯೇಲಿಗೆ ನ್ಯಾಯತೀರಿಸಿದನು.
JDG 12:12 ಜೆಬುಲೂನಿನವನಾದ ಏಲೋನನು ಮರಣಹೊಂದಿ, ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು.
JDG 12:13 ಅವನ ತರುವಾಯ ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
JDG 12:14 ಅವನಿಗೆ ಎಪ್ಪತ್ತು ಕತ್ತೆಗಳ ಮೇಲೆ ಏರುವ ನಾಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲಿಗೆ ಎಂಟು ವರ್ಷ ನ್ಯಾಯತೀರಿಸಿದನು.
JDG 12:15 ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿ, ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು.
JDG 13:1 ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ, ಯೆಹೋವ ದೇವರು ಅವರನ್ನು ನಾಲ್ವತ್ತು ವರ್ಷದವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟರು.
JDG 13:2 ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು.
JDG 13:3 ಯೆಹೋವ ದೇವರ ದೂತನು ಆ ಸ್ತ್ರೀಗೆ ಪ್ರತ್ಯಕ್ಷವಾಗಿ ಅವಳಿಗೆ, “ಇಗೋ, ನೀನು ಮಕ್ಕಳನ್ನು ಹೆರದೆ ಬಂಜೆಯಾಗಿದ್ದೀಯೆ. ಆದರೆ ನೀನು ಗರ್ಭಧರಿಸಿ ಒಬ್ಬ ಮಗನನ್ನು ಹೆರುವೆ.
JDG 13:4 ಆದ್ದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ, ಅಶುಚಿಯಾದ ಒಂದನ್ನಾದರೂ ತಿನ್ನದೆ, ಎಚ್ಚರಿಕೆಯಾಗಿರಬೇಕು.
JDG 13:5 ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು.
JDG 13:6 ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆ, “ಒಬ್ಬ ದೇವರ ಮನುಷ್ಯ ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾ ಭಯಂಕರವಾಗಿತ್ತು. ನಾನು ಅವನನ್ನು ಎಲ್ಲಿಂದ ಬಂದೆ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ.
JDG 13:7 ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.”
JDG 13:8 ಆಗ ಮಾನೋಹನು ಯೆಹೋವ ದೇವರಿಗೆ ಬೇಡಿಕೊಂಡು, “ನನ್ನ ಕರ್ತದೇವರೇ, ನೀವು ಕಳುಹಿಸಿದ ದೇವರ ಮನುಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು, ಹುಟ್ಟುವ ಕೂಸಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ,” ಎಂದು ಪ್ರಾರ್ಥಿಸಿದನು.
JDG 13:9 ದೇವರು ಮಾನೋಹನ ಬೇಡಿಕೆಯನ್ನು ಕೇಳಿದರು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ, ದೇವದೂತನು ತಿರುಗಿ ಅವಳ ಬಳಿಗೆ ಬಂದನು. ಆಗ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ.
JDG 13:10 ಆದ್ದರಿಂದ ಅವಳು ಬೇಗ ಓಡಿಹೋಗಿ, ತನ್ನ ಗಂಡನಿಗೆ, “ಇಗೋ, ಆ ದಿನ ನನಗೆ ಪ್ರತ್ಯಕ್ಷನಾದ ಮನುಷ್ಯನು ತಿರುಗಿ ನನಗೆ ಪ್ರತ್ಯಕ್ಷನಾಗಿದ್ದಾನೆ,” ಎಂದು ತಿಳಿಸಿದಳು.
JDG 13:11 ಆಗ ಮಾನೋಹನು ಎದ್ದು ತನ್ನ ಹೆಂಡತಿಯೊಡನೆ ಹೋಗಿ, ಅವನ ಬಳಿಗೆ ಬಂದು, ಅವನಿಗೆ, “ಈ ಸ್ತ್ರೀಯ ಸಂಗಡ ಮಾತನಾಡಿದವನು ನೀನೋ?” ಎಂದನು. ಅವನು, “ನಾನೇ,” ಎಂದನು.
JDG 13:12 ಮಾನೋಹನು, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ಆ ಕೂಸಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದನು.
JDG 13:13 ಯೆಹೋವ ದೇವರ ದೂತನು ಮಾನೋಹನಿಗೆ, “ನಾನು ಈ ಸ್ತ್ರೀಗೆ ಹೇಳಿದ್ದೆಲ್ಲದರಲ್ಲಿ ಅವಳು ಎಚ್ಚರಿಕೆಯಾಗಿದ್ದು,
JDG 13:14 ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು.
JDG 13:15 ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು.
JDG 13:16 ಯೆಹೋವ ದೇವರ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ, ನಾನು ನಿನ್ನ ರೊಟ್ಟಿಯನ್ನು ತಿನ್ನುವುದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ, ಅದನ್ನು ಯೆಹೋವ ದೇವರಿಗೆ ಅರ್ಪಿಸಬೇಕು,” ಎಂದನು.
JDG 13:17 ಏಕೆಂದರೆ ಅವನು ಯೆಹೋವ ದೇವರ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಯೆಹೋವ ದೇವರ ದೂತನಿಗೆ, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ನಿನ್ನನ್ನು ಘನಪಡಿಸುವ ಹಾಗೆ ನಿನ್ನ ಹೆಸರೇನು?” ಎಂದನು.
JDG 13:18 ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು.
JDG 13:19 ಹೀಗೆ ಮಾನೋಹನು ಮೇಕೆಯ ಮರಿಯನ್ನೂ, ಧಾನ್ಯ ಸಮರ್ಪಣೆಯನ್ನೂ ತಂದು, ಅವುಗಳನ್ನು ಬಂಡೆಯ ಮೇಲೆ ಯೆಹೋವ ದೇವರಿಗೆ ಅರ್ಪಿಸಿದನು. ಮಾನೋಹನೂ, ಅವನ ಹೆಂಡತಿಯೂ ನೋಡುವಾಗ, ಯೆಹೋವ ದೇವರ ದೂತನು ಆಶ್ಚರ್ಯಕರವಾದ ಸಂಗತಿಯನ್ನು ಮಾಡಿದನು.
JDG 13:20 ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು.
JDG 13:21 ಯೆಹೋವ ದೇವರ ದೂತನು ಮಾನೋಹನಿಗೂ, ಅವನ ಹೆಂಡತಿಗೂ ತಿರುಗಿ ಕಾಣಿಸಲಿಲ್ಲ. ಆಗ ಮಾನೋಹನು, ಅವನು ದೇವರ ದೂತನು ಎಂದು ತಿಳಿದುಕೊಂಡನು.
JDG 13:22 ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಂಡದ್ದರಿಂದ ನಿಶ್ಚಯವಾಗಿ ಸಾಯುವೆವು,” ಎಂದನು.
JDG 13:23 ಅವನ ಹೆಂಡತಿ ಅವನಿಗೆ, “ಯೆಹೋವ ದೇವರು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಅವರು ನಮ್ಮ ಕೈಯಿಂದ ದಹನಬಲಿಯನ್ನೂ, ಅರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯಮಾಡುತ್ತಿರಲಿಲ್ಲ,” ಎಂದಳು.
JDG 13:24 ಆ ಸ್ತ್ರೀಯು ಮಗನನ್ನು ಹೆತ್ತು, ಅವನಿಗೆ ಸಂಸೋನ ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
JDG 13:25 ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು.
JDG 14:1 ಸಂಸೋನನು ತಿಮ್ನಾತಿಗೆ ಇಳಿದು, ಅಲ್ಲಿ ತಿರುಗಿ ಫಿಲಿಷ್ಟಿಯರ ಪುತ್ರಿಯರ ಒಬ್ಬ ಸ್ತ್ರೀಯನ್ನು ಕಂಡು,
JDG 14:2 ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾತಿನಲ್ಲಿ ಫಿಲಿಷ್ಟಿಯರ ಪುತ್ರಿಯರೊಳಗೆ ಒಬ್ಬ ಸ್ತ್ರೀಯನ್ನು ಕಂಡೆನು. ಈಗ ಅವಳನ್ನು ನನಗೆ ಮದುವೆ ಮಾಡಿರಿ,” ಎಂದನು.
JDG 14:3 ಆಗ ಅವನ ತಂದೆಯೂ, ತಾಯಿಯೂ ಅವನಿಗೆ, “ನಿನಗೆ ಸುನ್ನತಿಯಾಗದ ಫಿಲಿಷ್ಟಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ನಿನ್ನ ಸಹೋದರರ ಪುತ್ರಿಯರಲ್ಲಿಯೂ, ನಮ್ಮ ಎಲ್ಲಾ ಜನರಲ್ಲಿಯೂ ಸ್ತ್ರೀ ಇಲ್ಲವೋ?” ಎಂದರು. ಆದರೆ ಸಂಸೋನನು ತನ್ನ ತಂದೆಗೆ, “ಅವಳನ್ನು ನನಗೆ ತೆಗೆದುಕೋ. ಏಕೆಂದರೆ ಅವಳು ನನ್ನ ಮನಸ್ಸಿಗೆ ಒಪ್ಪಿದ್ದಾಳೆ,” ಎಂದನು.
JDG 14:4 ಇದು ಯೆಹೋವ ದೇವರಿಂದ ಉಂಟಾಯಿತೆಂದು ಅವನ ತಂದೆತಾಯಂದಿರು ಅರಿಯದೆ ಇದ್ದರು. ಏಕೆಂದರೆ ಫಿಲಿಷ್ಟಿಯರಿಗೆ ವಿರೋಧವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರನ್ನು ಆಳುತ್ತಿದ್ದರು.
JDG 14:5 ಆಗ ಸಂಸೋನನೂ, ಅವನ ತಂದೆತಾಯಿಗಳೂ ತಿಮ್ನಾತಿಗೆ ಹೋಗುತ್ತಿದ್ದರು. ಅವರು ತಿಮ್ನತಿನ ದ್ರಾಕ್ಷಿತೋಟಗಳ ಬಳಿಗೆ ಬಂದಾಗ, ಪ್ರಾಯದ ಸಿಂಹವು ಗರ್ಜಿಸುತ್ತಾ ಅವನ ಎದುರಿಗೆ ಬಂದಿತು.
JDG 14:6 ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ, ಯೆಹೋವ ದೇವರ ಆತ್ಮ ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆಯ ಮರಿಯ ಹಾಗೆ ಸೀಳಿ ಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ.
JDG 14:7 ಅವನು ಹೋಗಿ ಆ ಸ್ತ್ರೀಯ ಸಂಗಡ ಮಾತನಾಡಿದನು. ಅವಳು ಸಂಸೋನನ ಕಣ್ಣಿಗೆ ಒಪ್ಪುವವಳಾಗಿದ್ದಳು.
JDG 14:8 ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ತಿರುಗಿ ಬರುವಾಗ, ಸಿಂಹದ ಹೆಣವನ್ನು ನೋಡುವುದಕ್ಕೆ ಪಕ್ಕಕ್ಕೆ ಹೋದಾಗ, ಸಿಂಹದ ಹೆಣದಲ್ಲಿ ಜೇನುಹುಳಗಳನ್ನು ಮತ್ತು ಜೇನನ್ನು ಕಂಡನು.
JDG 14:9 ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ, ತನ್ನ ತಂದೆತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಿಂದ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ.
JDG 14:10 ಅವನ ತಂದೆಯು ಆ ಸ್ತ್ರೀ ಇರುವ ಸ್ಥಳಕ್ಕೆ ಬಂದಾಗ, ಸಂಸೋನನು ಪ್ರಾಯಸ್ಥರು ಮಾಡುವ ಪದ್ಧತಿಯ ಪ್ರಕಾರ ಅಲ್ಲಿ ಔತಣ ಮಾಡಿಸಿದನು.
JDG 14:11 ಅವರು ಅವನನ್ನು ಕಂಡಾಗ, ಅವನ ಸಂಗಡ ಇರುವುದಕ್ಕೆ ಮೂವತ್ತು ಮಂದಿ ಸಂಗಡಿಗರನ್ನು ಕೊಟ್ಟರು.
JDG 14:12 ಅವರಿಗೆ ಸಂಸೋನನು, “ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ಹೇಳಿದರೆ, ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನು, ಮೂವತ್ತು ಜೊತೆ ಬಟ್ಟೆಗಳನ್ನು ಕೊಡುವೆನು.
JDG 14:13 ನಿಮ್ಮಿಂದ ಗ್ರಹಿಸಲು ಆಗದೆ ಹೋದರೆ, ನೀವು ನನಗೆ ಮೂವತ್ತು ದುಪ್ಪಟಿಗಳನ್ನು, ಮೂವತ್ತು ಜೊತೆ ಬಟ್ಟೆಗಳನ್ನು ಕೊಡಬೇಕು,” ಎಂದನು. ಅವರು ಅವನಿಗೆ, “ನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ,” ಎಂದರು.
JDG 14:14 ಆಗ ಅವನು ಅವರಿಗೆ ಹೇಳಿದ್ದೇನೆಂದರೆ, “ತಿಂದು ಬಿಡುವಂಥದ್ದರಿಂದ ತಿನ್ನತಕ್ಕದ್ದು ಹೊರಟಿತು. ಬಲಿಷ್ಠವಾದದ್ದರಿಂದ ಸಿಹಿಯು ಹೊರಟಿತು.” ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು.
JDG 14:15 ನಾಲ್ಕನೆಯ ದಿವಸದಲ್ಲಿ ಅವರು ಸಂಸೋನನ ಹೆಂಡತಿಗೆ, “ನಾವು ನಿನ್ನನ್ನೂ, ನಿನ್ನ ತಂದೆಯ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡದ ಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರಳುಗೊಳಿಸು. ನೀನು ನಮಗಿರುವುದೆಲ್ಲವನ್ನು ಕಸಿದುಕೊಳ್ಳುವುದಕ್ಕೆ ಅಲ್ಲವೇ ನಮ್ಮನ್ನು ಇಲ್ಲಿಗೆ ಕರೆಸಿದೆ?” ಎಂದರು.
JDG 14:16 ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು, “ನನ್ನನ್ನು ಹಗೆ ಮಾಡುತ್ತಿರುವೆ. ನೀನು ನನ್ನನ್ನು ನಿಜವಾಗಿ ಪ್ರೀತಿ ಮಾಡುವುದಿಲ್ಲ, ಏಕೆಂದರೆ ನೀನು ನನ್ನ ಜನರಿಗೆ ಒಂದು ಒಗಟನ್ನು ಹೇಳಿ ನನಗೆ ತಿಳಿಸದೆ ಹೋದೆ,” ಎಂದಳು. ಅವನು ಅವಳಿಗೆ, “ಇಗೋ, ನಾನು ನನ್ನ ತಂದೆತಾಯಿಗೆ ಅದನ್ನು ತಿಳಿಸಲಿಲ್ಲ. ನಿನಗೆ ತಿಳಿಸುವೆನೋ?” ಎಂದನು.
JDG 14:17 ಅವಳು ಔತಣದ ಏಳು ದಿವಸಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಆದರೆ ಏಳನೆಯ ದಿವಸದಲ್ಲಿ ಅವಳು, ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಒಗಟಿನ ಅರ್ಥವನ್ನು ತಿಳಿಸಿದನು. ಆಗ ಆಕೆ ತನ್ನ ಜನರಿಗೆ ಆ ಒಗಟನ್ನು ತಿಳಿಸಿದಳು.
JDG 14:18 ಏಳನೆಯ ದಿವಸದಲ್ಲಿ ಸೂರ್ಯ ಮುಳುಗುವುದಕ್ಕಿಂತ ಮುಂಚೆ ಆ ಊರಿನವರು ಅವನಿಗೆ, “ಜೇನಿಗಿಂತ ಸಿಹಿಯಾದದ್ದೇನು? ಸಿಂಹಕ್ಕಿಂತ ಬಲಿಷ್ಠವಾದದ್ದೇನು?” ಎಂದು ಹೇಳಿದರು. ಅವನು ಉತ್ತರವಾಗಿ ಅವರಿಗೆ, “ನೀವು ನನ್ನ ಕಡಸಿನಿಂದ ಉಳದೆ ಇದ್ದರೆ, ನನ್ನ ಒಗಟನ್ನು ಗ್ರಹಿಸಲಾರಿರಿ.”
JDG 14:19 ಯೆಹೋವ ದೇವರ ಆತ್ಮ ಅವನ ಮೇಲೆ ಬಂದದ್ದರಿಂದ, ಅವನು ಅಷ್ಕೆಲೋನಿಗೆ ಹೋಗಿ, ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ, ಸುಲಿದುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತು ವಸ್ತ್ರಗಳನ್ನು ಕೊಟ್ಟನು.
JDG 14:20 ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟುಹೋದನು. ಆದರೆ ಸಂಸೋನನ ಹೆಂಡತಿಯನ್ನು ಅವನ ಸಂಗಡ ಸ್ನೇಹಿತನಾಗಿದ್ದವನಿಗೆ ಮದುವೆ ಮಾಡಿಕೊಟ್ಟರು.
JDG 15:1 ಸ್ವಲ್ಪ ಸಮಯವಾದ ತರುವಾಯ, ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವುದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡುಹೋಗಿ, ಅವಳ ತಂದೆಗೆ, “ನನ್ನ ಹೆಂಡತಿಯ ಕೋಣೆಗೆ ಹೋಗುತ್ತೇನೆ,” ಎಂದನು.
JDG 15:2 ಆದರೆ ಅವಳ ತಂದೆಯು ಅವನನ್ನು ಅನುಮತಿಸದೆ ಅವನಿಗೆ, “ನೀನು ಅವಳನ್ನು ಪೂರ್ಣವಾಗಿ ಹಗೆ ಮಾಡಿದೆ ಎಂದು ನಾನು ನಿಜವಾಗಿ ತಿಳಿದು, ಅವಳನ್ನು ನಿನ್ನ ಜೊತೆಯವನಿಗೆ ಮದುವೆ ಮಾಡಿಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರಿಯಾಗಿದ್ದಾಳೆ. ಅವಳಿಗೆ ಬದಲಾಗಿ ಇವಳನ್ನು ಮದುವೆಯಾಗು,” ಎಂದನು.
JDG 15:3 ಆಗ ಸಂಸೋನನು, “ಅವರನ್ನು ಕುರಿತು, ನಾನು ಈ ಸಾರಿ ನಿರಪರಾಧಿ ಫಿಲಿಷ್ಟಿಯರಿಗೆ ಕೇಡನ್ನು ಮಾಡುವ ಸರಿಯಾದ ಸಮಯವಿದು,” ಎಂದು ಹೇಳಿ, ಹೊರಟುಹೋಗಿ,
JDG 15:4 ಮುನ್ನೂರು ನರಿಗಳನ್ನು ಹಿಡಿದು, ಪಂಜುಗಳನ್ನು ತೆಗೆದುಕೊಂಡು ಬಂದು, ಬಾಲಕ್ಕೆ ಬಾಲ ಸೇರಿಸಿ, ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿದನು.
JDG 15:5 ಬಾಲಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು, ತೆನೆ ಗೂಡುಗಳನ್ನೂ, ಪೈರುಗಳನ್ನೂ, ದ್ರಾಕ್ಷಿತೋಟಗಳನ್ನೂ, ಹಿಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.
JDG 15:6 ಫಿಲಿಷ್ಟಿಯರು, “ಇದನ್ನು ಮಾಡಿದವರು ಯಾರು?” ಎಂದರು. ಅದಕ್ಕೆ ಅವರು, “ತಿಮ್ನಾದವನ ಅಳಿಯನಾದ ಸಂಸೋನನು ಮಾಡಿದನು. ಏಕೆಂದರೆ ಇವನು ಅವನ ಹೆಂಡತಿಯನ್ನು ತೆಗೆದುಕೊಂಡು, ಅವನ ಜೊತೆಗಾರನಿಗೆ ಕೊಟ್ಟನು,” ಎಂದರು. ಆಗ ಫಿಲಿಷ್ಟಿಯರು ಬಂದು, ಅವಳನ್ನೂ, ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು.
JDG 15:7 ಸಂಸೋನನು ಅವರಿಗೆ, “ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದನು.
JDG 15:8 ಅವರ ಮೇಲೆ ಬಲವಾಗಿ ಬಿದ್ದು, ಅವರಲ್ಲಿ ಅನೇಕರನ್ನು ಕೊಂದುಹಾಕಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
JDG 15:9 ಫಿಲಿಷ್ಟಿಯರು ಹೊರಟುಹೋಗಿ ಯೆಹೂದದಲ್ಲಿ ಇಳಿದು, ಲೇಹಿಯಲ್ಲಿ ವ್ಯಾಪಿಸಿದರು.
JDG 15:10 ಯೆಹೂದದಲ್ಲಿ ವಾಸಿಸುವ ಜನರು ಅವರಿಗೆ, “ನೀವು ನಮಗೆ ವಿರೋಧವಾಗಿ ಬಂದದ್ದೇನು?” ಎಂದರು. ಫಿಲಿಷ್ಟಿಯರು, “ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವುದಕ್ಕೆ, ಅವನನ್ನು ಹಿಡಿದು ಕಟ್ಟುವುದಕ್ಕೆ ಬಂದೆವು,” ಎಂದರು.
JDG 15:11 ಆಗ ಯೆಹೂದದಲ್ಲಿ ಮೂರು ಸಾವಿರ ಜನರು ಏಟಾಮ್ ಬಂಡೆಯ ಮೇಲಕ್ಕೆ ಏರಿಹೋಗಿ, ಸಂಸೋನನಿಗೆ, “ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಏಕೆ ಮಾಡಿದೆ?” ಎಂದರು. ಅದಕ್ಕವನು, “ಅವರು ನನಗೆ ಮಾಡಿದ ಪ್ರಕಾರವೇ, ನಾನು ಅವರಿಗೆ ಮಾಡಿದೆನು,” ಎಂದು ಅವರಿಗೆ ಹೇಳಿದನು.
JDG 15:12 ಆಗ ಅವರು ಅವನಿಗೆ, “ನಾವು ನಿನ್ನನ್ನು ಕಟ್ಟಿ, ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು,” ಎಂದರು. ಸಂಸೋನನು ಅವರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ನನಗೆ ಆಣೆ ಇಡಿರಿ,” ಎಂದನು.
JDG 15:13 ಅದಕ್ಕವರು, “ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ, ಅವರ ಕೈಯಲ್ಲಿ ಒಪ್ಪಿಸಿಕೊಡುವೆವು. ನಾವು ನಿನ್ನನ್ನು ನಿಜವಾಗಿ ಕೊಲ್ಲುವುದೇ ಇಲ್ಲ,” ಎಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ, ಬಂಡೆಯ ಮೇಲಿನಿಂದ ತಂದರು.
JDG 15:14 ಅವನು ಲೇಹಿಗೆ ಬಂದಾಗ, ಫಿಲಿಷ್ಟಿಯರು ಅವನ ಎದುರಾಗಿ ಆರ್ಭಟಿಸುತ್ತಾ ಬಂದರು. ಯೆಹೋವ ದೇವರ ಆತ್ಮ ಅವನ ಮೇಲೆ ಬಲವಾಗಿ ಬಂದದ್ದರಿಂದ, ಅವನ ತೋಳುಗಳಲ್ಲಿ ಕಟ್ಟಿದ್ದ ಸೆಣಬಿನ ಹಗ್ಗಗಳು ಬೆಂಕಿಯಲ್ಲಿ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಯಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.
JDG 15:15 ಅವನು ಒಂದು ಕತ್ತೆಯ ದವಡೆಯ ಹೊಸ ಎಲುಬನ್ನು ಕಂಡುಕೊಂಡು, ತನ್ನ ಕೈಯನ್ನು ಚಾಚಿ ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.
JDG 15:16 ಆಗ ಸಂಸೋನನು ಹೇಳಿದ್ದೇನೆಂದರೆ, “ಕತ್ತೆಯ ದವಡೆಯಿಂದ ನಾನು ಅವರನ್ನು ಹೆಣಗಳನ್ನಾಗಿ ಮಾಡಿದ್ದೇನೆ. ಕತ್ತೆ ದವಡೆಯ ಎಲುಬಿನಿಂದ ಒಂದು ಸಾವಿರ ಜನರನ್ನು ಕೊಂದಿದ್ದೇನೆ.”
JDG 15:17 ಅವನು ಮಾತನಾಡಿ ತೀರಿಸಿದಾಗ, ತನ್ನ ಕೈಯಲ್ಲಿದ್ದ ದವಡೆಯ ಎಲುಬನ್ನು ಎಸೆದುಬಿಟ್ಟನು. ಆ ಸ್ಥಳಕ್ಕೆ ರಾಮತ್ ಲೇಹಿ ಎಂಬ ಹೆಸರಾಯಿತು.
JDG 15:18 ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು.
JDG 15:19 ಆಗ ದೇವರು ಲೇಹಿಯಲ್ಲಿ ಟೊಳ್ಳಾದ ಸ್ಥಳವನ್ನು ಸೀಳಿಬಿಟ್ಟರು. ಅದರೊಳಗಿಂದ ನೀರು ಹೊರಟು ಬಂತು. ಸಂಸೋನನು ಆ ನೀರನ್ನು ಕುಡಿದದ್ದರಿಂದ ಅವನ ಬಲ ತಿರುಗಿಬಂದು, ಅವನು ಚೇತರಿಸಿಕೊಂಡನು. ಆದ್ದರಿಂದ ಏನ್ ಹಕ್ಕೋರೇ ಎಂದು ಅದಕ್ಕೆ ಹೆಸರಾಯಿತು. ಈ ದಿವಸದವರೆಗೂ ಅದು ಲೇಹಿಯಲ್ಲಿ ಇದೆ.
JDG 15:20 ಸಂಸೋನನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರ್ಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.
JDG 16:1 ಸಂಸೋನನು ಗಾಜಕ್ಕೆ ಹೋಗಿ, ಅಲ್ಲಿ ಒಬ್ಬ ಜಾರಸ್ತ್ರೀಯನ್ನು ಕಂಡು, ಅವಳ ಬಳಿಗೆ ಹೋದನು.
JDG 16:2 ಆಗ ಸಂಸೋನನು ಅಲ್ಲಿಗೆ ಬಂದಿದ್ದಾನೆಂದು ಗಾಜದವರಿಗೆ ತಿಳಿದಿದ್ದರಿಂದ, ಅವರು ಅವನನ್ನು ಸುತ್ತಿಕೊಂಡು, ಪಟ್ಟಣದ ಬಾಗಿಲಲ್ಲಿ ಅವನಿಗಾಗಿ ಹೊಂಚಿಕೊಂಡಿದ್ದು, ರಾತ್ರಿಯೆಲ್ಲಾ ಕಾದುಕೊಂಡಿದ್ದರು. ಅವರು, “ಹೊತ್ತಾರೆ ಬೆಳಕಾದಾಗ ಅವನನ್ನು ಕೊಂದು ಹಾಕುವೆವು,” ಎಂದರು.
JDG 16:3 ಸಂಸೋನನು ಅರ್ಧ ರಾತ್ರಿಯವರೆಗೆ ಮಲಗಿದ್ದು, ಮಧ್ಯರಾತ್ರಿಯಲ್ಲಿ ಎದ್ದು, ಪಟ್ಟಣದ ಬಾಗಿಲ ಕದಗಳನ್ನೂ, ಅದರ ಎರಡು ತೋಳುಗಳನ್ನೂ ಹಿಡಿದು, ಅಗುಳಿ ಸಹ ಕಿತ್ತು, ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಹೆಬ್ರೋನಿಗೆ ಎದುರಾಗಿರುವ ಪರ್ವತದ ಶಿಖರದ ಮೇಲಕ್ಕೆ ಹೋದನು.
JDG 16:4 ಇದರ ತರುವಾಯ, ಸೊರೇಕ್ ತಗ್ಗಿನಲ್ಲಿದ್ದ ದೆಲೀಲ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು.
JDG 16:5 ಅವಳ ಬಳಿಗೆ ಫಿಲಿಷ್ಟಿಯರ ಅಧಿಪತಿಗಳು ಬಂದು ಅವಳಿಗೆ, “ನೀನು ಅವನನ್ನು ಮರಳುಗೊಳಿಸಿ, ನಾವು ಅವನನ್ನು ಯಾವ ಪ್ರಕಾರ ಗೆದ್ದು, ಕಟ್ಟಿ, ಬಾಧಿಸಬಹುದೆಂದೂ ಅವನ ದೊಡ್ಡ ಶಕ್ತಿ ಯಾವುದರಲ್ಲಿ ಇದೆ ಎಂದೂ ನೋಡು. ನಾವು ಒಬ್ಬೊಬ್ಬರು ನಿನಗೆ ಸಾವಿರದ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡುವೆವು,” ಎಂದರು.
JDG 16:6 ಆಗ ದೆಲೀಲಳು ಸಂಸೋನನಿಗೆ, “ನಿನ್ನ ದೊಡ್ಡ ಶಕ್ತಿ ಯಾವುದರಲ್ಲಿ ಉಂಟೆಂದೂ ನಿನ್ನನ್ನು ಬಾಧಿಸುವುದಕ್ಕೆ ಹೇಗೆ ಕಟ್ಟಬಹುದೆಂದೂ ನನಗೆ ದಯಮಾಡಿ ತಿಳಿಸು,” ಎಂದಳು.
JDG 16:7 ಸಂಸೋನನು ಅವಳಿಗೆ, “ಅವರು ನನ್ನನ್ನು ಒಣಗದೆ ಇರುವ ಹಸುರಾದ ಏಳು ನಾರಿನ ಬರಲುಗಳಿಂದ ಕಟ್ಟಿದರೆ, ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು,” ಎಂದನು.
JDG 16:8 ಆಗ ಫಿಲಿಷ್ಟಿಯರ ಅಧಿಪತಿಗಳು ಒಣಗದೆ ಇರುವ ಹಸಿಯಾದ ಏಳು ನಾರಿನ ಬರಲುಗಳನ್ನು ಅವಳಿಗೆ ಕೊಟ್ಟರು. ಅವಳು ಅವನನ್ನು ಅವುಗಳಿಂದ ಬಂಧಿಸಿದಳು.
JDG 16:9 ಹೊಂಚುಗಾರರು ಅವಳಿಗೋಸ್ಕರ ಕೊಠಡಿಯಲ್ಲಿದ್ದರು. ಅವಳು ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ,” ಎಂದಳು. ಆಗ ಅವನು ಬೆಂಕಿ ತಗುಲಿದ ಸೆಣಬಿನ ದಾರ ಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿಯ ರಹಸ್ಯ ತಿಳಿಯದೆ ಹೋಯಿತು.
JDG 16:10 ಆಗ ದೆಲೀಲಳು ಸಂಸೋನನಿಗೆ, “ನೀನು ನನ್ನನ್ನು ವಂಚನೆಮಾಡಿ, ನನಗೆ ಸುಳ್ಳು ಹೇಳಿದೆ. ಈಗ ನಿನ್ನನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ನನಗೆ ದಯಮಾಡಿ ತಿಳಿಸು,” ಎಂದಳು.
JDG 16:11 ಸಂಸೋನನು ಅವಳಿಗೆ, “ಯಾವ ಕೆಲಸಕ್ಕೆ ಬಳಸದೆ ಇರುವ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ, ನಾನು ಬಲಹೀನನಾಗಿ, ಬೇರೆ ಮನುಷ್ಯನಂತಾಗುವೆನು,” ಎಂದನು.
JDG 16:12 ಆಗ ದೆಲೀಲಳು ಹೊಸ ಹಗ್ಗಗಳನ್ನು ತೆಗೆದುಕೊಂಡು, ಅವುಗಳಿಂದ ಅವನನ್ನು ಕಟ್ಟಿ, ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಹೊಂಚುಗಾರರು ಕೊಠಡಿಯಲ್ಲಿದ್ದರು. ಆದರೆ ಅವನು ತನ್ನ ತೋಳುಗಳಲ್ಲಿ ಇರುವವುಗಳನ್ನು ದಾರದ ಹಾಗೆಯೇ ಹರಿದುಬಿಟ್ಟನು.
JDG 16:13 ದೆಲೀಲಳು ಸಂಸೋನನಿಗೆ, “ಈವರೆಗೂ ನನ್ನನ್ನು ವಂಚನೆಮಾಡಿ, ನನಗೆ ಸುಳ್ಳುಗಳನ್ನು ಹೇಳಿದೆ. ನಿನ್ನನ್ನು ಯಾವುದರಿಂದ ಕಟ್ಟಬಹುದೋ ತಿಳಿಸು,” ಎಂದಳು. ಅವನು ಅವಳಿಗೆ, “ನೀನು ನನ್ನ ತಲೆಯ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದರೆ ಆಗುವುದು,” ಎಂದನು.
JDG 16:14 ಸಂಸೋನನು ಮಲಗಿರುವಾಗ ದೆಲೀಲಳು ಅವನ ತಲೆಗೂದಲಿನ ಏಳು ಜಡೆಗಳನ್ನು ಆಗ ಅವುಗಳನ್ನು ಗೂಟದಿಂದ ಭದ್ರಮಾಡಿ, ಅವನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಎದ್ದು, ಮಗ್ಗದ ಗೂಟವನ್ನೂ ಮಗ್ಗವನ್ನೂ ತೆಗೆದುಕೊಂಡು ಹೋದನು.
JDG 16:15 ಅವಳು ಅವನಿಗೆ, “ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ, ನಿನ್ನನ್ನು ಪ್ರೀತಿಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆ ಮಾಡಿದೆ; ನಿನ್ನ ದೊಡ್ಡ ಶಕ್ತಿಯ ರಹಸ್ಯ ಯಾವುದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ,” ಎಂದಳು.
JDG 16:16 ಅವಳು ಅವನನ್ನು ದಿನದಿನವೂ ತನ್ನ ಮಾತುಗಳಿಂದ ಪೀಡಿಸಿ, ತೊಂದರೆ ಪಡಿಸಿದ್ದರಿಂದ, ಅವನ ಪ್ರಾಣವು ಸಾಯುವಷ್ಟು ವ್ಯಸನಪಟ್ಟಿತು.
JDG 16:17 ಅವನು ತನ್ನ ಹೃದಯವನ್ನೆಲ್ಲಾ ಅವಳಿಗೆ ತಿಳಿಸಿ, ಅವಳಿಗೆ, “ಕ್ಷೌರದ ಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ಏಕೆಂದರೆ ನಾನು ನನ್ನ ತಾಯಿಯ ಗರ್ಭದಲ್ಲಿಂದ ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿದ್ದೇನೆ. ನನ್ನ ತಲೆಯನ್ನು ಬೋಳಿಸಿದರೆ, ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗುವುದು; ನಾನು ಬಲಹೀನನಾಗಿ ಎಲ್ಲಾ ಮನುಷ್ಯರ ಹಾಗೆ ಇರುವೆನು,” ಎಂದನು.
JDG 16:18 ಆಗ ದೆಲೀಲಳು, ಅವನು ತನಗೆ ತನ್ನ ಹೃದಯಲ್ಲಿರುವುದನ್ನೆಲ್ಲಾ ತಿಳಿಸಿದ್ದಾನೆಂದು ಕಂಡು, ಅವಳು ಫಿಲಿಷ್ಟಿಯರ ಅಧಿಪತಿಗಳಿಗೆ, “ನೀವು ಈ ಸಾರಿ ಬನ್ನಿರಿ. ಏಕೆಂದರೆ ಅವನು ತನ್ನ ಹೃದಯದಲ್ಲಿರುವುದನ್ನೆಲ್ಲಾ ನನಗೆ ತಿಳಿಸಿದನು,” ಎಂದು ಕರೆಕಳುಹಿಸಿದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಅವಳ ಬಳಿಗೆ ಹಣವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಬಂದರು.
JDG 16:19 ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆ ಹೋಗುವಂತೆ ಮಾಡಿ, ಒಬ್ಬನನ್ನು ಕರೆದು, ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ, ಅವನನ್ನು ದುರ್ಬಲಪಡಿಸಿದಳು. ಆಗ ಅವನ ಶಕ್ತಿ ಅವನನ್ನು ಬಿಟ್ಟುಹೋಯಿತು.
JDG 16:20 ಅವಳು, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು, “ಮೊದಲಿನಂತೆಯೇ ನಾನು ಹೊರಗೆ ಹೋಗಿ ಬಿಡುಗಡೆಯಾಗುವೆನು,” ಎಂದುಕೊಂಡನು. ಆದರೆ ಯೆಹೋವ ದೇವರು ತನ್ನನ್ನು ಬಿಟ್ಟು ಹೋಗಿದ್ದಾರೆಂದು ಅವನು ಅರಿಯಲಿಲ್ಲ.
JDG 16:21 ಆದರೆ ಫಿಲಿಷ್ಟಿಯರು ಅವನನ್ನು ಹಿಡಿದು, ಅವನ ಕಣ್ಣುಗಳನ್ನು ಕಿತ್ತು, ಅವನನ್ನು ಗಾಜಕ್ಕೆ ಒಯ್ದು ಎರಡು ಕಂಚಿನ ಸಂಕೋಲೆಗಳನ್ನು ಹಾಕಿದರು. ಸೆರೆಮನೆಯಲ್ಲಿ ಅವನನ್ನು ಬೀಸುವುದಕ್ಕೆ ಹಚ್ಚಿದರು.
JDG 16:22 ಆದರೆ ಕ್ಷೌರ ಮಾಡಿದ ತರುವಾಯ ಅವನ ತಲೆಯ ಕೂದಲು ತಿರುಗಿ ಬೆಳೆಯಲಾರಂಭಿಸಿತು.
JDG 16:23 ಫಿಲಿಷ್ಟಿಯರ ಅಧಿಪತಿಗಳು ತಮ್ಮ ದೇವರಾದ ದಾಗೋನನಿಗೆ ದೊಡ್ಡ ಬಲಿಯನ್ನು ಅರ್ಪಿಸುವುದಕ್ಕೂ ಸಂತೋಷಪಡುವುದಕ್ಕೂ ಕೂಡಿಬಂದರು. “ನಮ್ಮ ದೇವರು ನಮ್ಮ ಶತ್ರುವಾದ ಸಂಸೋನನನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟನು,” ಎಂದು ಅವರು ಹೇಳಿಕೊಂಡರು.
JDG 16:24 ಜನರು ಸಂಸೋನನನ್ನು ನೋಡಿದಾಗ ತಮ್ಮ ದೇವರನ್ನು ಹೊಗಳಿದರು. ಏಕೆಂದರೆ, “ನಮ್ಮ ದೇಶವನ್ನು ಹಾಳು ಮಾಡಿ, ನಮ್ಮಲ್ಲಿ ಅನೇಕರನ್ನು ಕೊಂದ ನಮ್ಮ ವೈರಿಯನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು,” ಎಂದು ಅವರು ಹೇಳಿಕೊಂಡರು.
JDG 16:25 ಅಲ್ಲಿ ಅವರು ಸಂಭ್ರಮವಾಗಿರುವಾಗ, “ನಮ್ಮ ಮುಂದೆ ಮನೋರಂಜನೆಗಾಗಿ ಸಂಸೋನನನ್ನು ಕರೆದುಕೊಂಡು ಬನ್ನಿರಿ,” ಎಂದರು. ಅವರು ಸಂಸೋನನನ್ನು ಸೆರೆಮನೆಯಿಂದ ಕರೆತಂದಾಗ, ಅವನು ಅವರ ಮುಂದೆ ವಿನೋದ ಮಾಡಬೇಕಾಯಿತು. ಅವರು ಅವನನ್ನು ಸ್ತಂಭಗಳ ನಡುವೆ ನಿಲ್ಲಿಸಿದ್ದರು.
JDG 16:26 ಆದರೆ ಸಂಸೋನನು ತನ್ನ ಕೈಹಿಡಿದ ಹುಡುಗನಿಗೆ, “ಈ ಕಟ್ಟಡದ ಆಧಾರ ಸ್ತಂಭಗಳನ್ನು ನಾನು ಸ್ಪರ್ಶಿಸಿ, ಅವುಗಳ ಮೇಲೆ ಆತುಕೊಳ್ಳುವ ಹಾಗೆ ನನ್ನನ್ನು ಬಿಡು,” ಎಂದನು.
JDG 16:27 ಆ ಮನೆಯು ಸ್ತ್ರೀಪುರುಷರಿಂದ ತುಂಬಿತ್ತು. ಅಲ್ಲಿ ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಇದ್ದರು. ಇದಲ್ಲದೆ ಸಂಸೋನನು ವಿನೋದ ಮಾಡುವುದನ್ನು ಕಾಣುವುದಕ್ಕೆ ಮಾಳಿಗೆಯ ಮೇಲೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಸ್ತ್ರೀ ಪುರುಷರಿದ್ದರು.
JDG 16:28 ಆಗ ಸಂಸೋನನು ಯೆಹೋವ ದೇವರನ್ನು ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನಾನು ನನ್ನ ಎರಡು ಕಣ್ಣುಗಳಿಗಾಗಿ ಒಂದೇ ಸಾರಿ ಫಿಲಿಷ್ಟಿಯರಿಗೆ ಮುಯ್ಯಿಗೆ ಮುಯ್ಯಿ ಮಾಡುವ ಹಾಗೆ ಈ ಸಾರಿ ಮಾತ್ರ ನನ್ನನ್ನು ನೆನಸಿ ಬಲಪಡಿಸಿ ದೇವರೇ,”
JDG 16:29 ಎಂದು ಹೇಳಿ ಸಂಸೋನನು ಆ ಕಟ್ಟಡ ನಿಲ್ಲುವುದಕ್ಕೆ ಆಧಾರವಾದ ಎರಡು ನಡುವಿನ ಸ್ತಂಭಗಳನ್ನು ಒಂದನ್ನು ತನ್ನ ಬಲಗೈಯಿಂದ ಮತ್ತೊಂದನ್ನು ತನ್ನ ಎಡಗೈಯಿಂದ ಹಿಡಿದುಕೊಂಡು,
JDG 16:30 “ನನ್ನ ಪ್ರಾಣವು ಫಿಲಿಷ್ಟಿಯರ ಸಂಗಡ ಸಾಯಲಿ,” ಎಂದು ಹೇಳಿ ತನ್ನ ಶಕ್ತಿಯಿದ್ದ ಮಟ್ಟಿಗೂ ಬಾಗಿದನು. ಆಗ ಮನೆಯು ಅಧಿಪತಿಗಳ ಮೇಲೆಯೂ, ಅದರಲ್ಲಿದ್ದ ಎಲ್ಲಾ ಜನರ ಮೇಲೆಯೂ ಬಿತ್ತು. ಹೀಗೆ ಸಂಸೋನನು ಬದುಕಿದ್ದಾಗ ಕೊಂದ ಜನರಿಗಿಂತಲೂ ಮರಣಹೊಂದುವಾಗ ಕೊಂದ ಜನರ ಸಂಖ್ಯೆಯೇ ಹೆಚ್ಚಾಗಿತ್ತು.
JDG 16:31 ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತೆಗೆದುಕೊಂಡು ಬಂದು, ಚೊರ್ಗಕ್ಕೂ, ಎಷ್ಟಾವೋಲಿಗೂ ನಡುವೆ ಅವನ ತಂದೆ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರ್ಷ ನ್ಯಾಯತೀರಿಸಿದನು.
JDG 17:1 ಎಫ್ರಾಯೀಮ್ ಬೆಟ್ಟದ ಪ್ರಾಂತದಲ್ಲಿ ಮೀಕ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಇದ್ದನು.
JDG 17:2 ಅವನು ತನ್ನ ತಾಯಿಗೆ, “ನಿನ್ನ ಬಳಿಯಿಂದ ಸಾವಿರದ ನೂರು ಬೆಳ್ಳಿ ನಾಣ್ಯಗಳು ಕಳುವಾದಾಗ, ನೀನು ಆ ಹಣವನ್ನು ಕುರಿತು ಶಪಿಸಿದೆಯಲ್ಲಾ? ಇಗೋ, ಆ ನಾಣ್ಯಗಳು ನನ್ನ ಬಳಿಯಲ್ಲಿ ಇವೆ. ನಾನೇ ಅದನ್ನು ತೆಗೆದುಕೊಂಡೆನು,” ಎಂದನು. ಅದಕ್ಕೆ ಅವನ ತಾಯಿ, “ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದಳು.
JDG 17:3 ಅವನು ಆ ಸಾವಿರದ ನೂರು ಬೆಳ್ಳಿಯ ನಾಣ್ಯಗಳನ್ನು ತನ್ನ ತಾಯಿಗೆ ತಿರುಗಿ ಕೊಟ್ಟಾಗ, ಅವನ ತಾಯಿ, “ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡುವುದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಯೆಹೋವ ದೇವರಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದ್ದೆನು; ಆದ್ದರಿಂದ ನಾನು ಅದನ್ನು ನಿನಗೆ ತಿರುಗಿ ಕೊಡುವೆನು,” ಎಂದಳು.
JDG 17:4 ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರುಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡಿದನು. ಅವು ಮೀಕನ ಮನೆಯಲ್ಲಿದ್ದವು.
JDG 17:5 ಈ ಮೀಕ ಎಂಬವನಿಗೆ ದೇವರ ಮನೆ ಇದ್ದುದರಿಂದ ಅವನು ಒಂದು ಏಫೋದನ್ನೂ, ಪ್ರತಿಮೆಗಳನ್ನೂ ಮಾಡಿ, ತನ್ನ ಪುತ್ರರಲ್ಲಿ ಒಬ್ಬನನ್ನು ಯಾಜಕ ಸೇವೆಗೆ ಪ್ರತಿಷ್ಠೆ ಮಾಡಿದನು.
JDG 17:6 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.
JDG 17:7 ಯೆಹೂದದ ಬೇತ್ಲೆಹೇಮಿನವನಾದ ಯೆಹೂದದ ಗೋತ್ರದ ಲೇವಿಯನಾದಂಥ ಒಬ್ಬ ಪ್ರಾಯದವನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.
JDG 17:8 ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವುದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು. ಪ್ರಯಾಣ ಮಾಡುವಾಗ ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದನು.
JDG 17:9 ಆಗ ಮೀಕನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. ಅವನು ಮೀಕನಿಗೆ, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು. ನನಗೆ ಸ್ಥಳ ಸಿಕ್ಕಲ್ಲಿ ಪ್ರವಾಸಿಯಾಗಬೇಕೆಂದು ಹೊರಟಿದ್ದೇನೆ,” ಎಂದನು.
JDG 17:10 ಮೀಕನು ಅವನಿಗೆ, “ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ, ಒಂದು ದುಸ್ತು ವಸ್ತ್ರಗಳನ್ನೂ, ಆಹಾರವನ್ನೂ ಕೊಡುವೆನು,” ಎಂದನು. ಹಾಗೆಯೇ ಲೇವಿಯನು ಹೋದನು.
JDG 17:11 ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವುದಕ್ಕೆ ಸಮ್ಮತಿಸಿದನು. ಆ ಯೌವನಸ್ಥನು ಅವನಿಗೆ ಅವನ ಪುತ್ರರಲ್ಲಿ ಒಬ್ಬನ ಹಾಗೆ ಇದ್ದನು.
JDG 17:12 ಮೀಕನು ಲೇವಿಯನನ್ನು ಪ್ರತಿಷ್ಠೆ ಮಾಡಿದನು. ಆ ಯೌವನಸ್ಥನು ಅವನಿಗೆ ಯಾಜಕನಾದನು. ಅವನು ಮೀಕನ ಮನೆಯಲ್ಲಿ ಇದ್ದನು.
JDG 17:13 ಆಗ ಮೀಕನು, “ನನಗೆ ಒಬ್ಬ ಲೇವಿಯನು ಯಾಜಕನಾಗಿರುವುದರಿಂದ, ಯೆಹೋವ ದೇವರು ನನಗೆ ಒಳ್ಳೆಯದನ್ನು ಮಾಡುವರೆಂದು ಈಗ ತಿಳಿಯುತ್ತೇನೆ,” ಎಂದುಕೊಂಡನು.
JDG 18:1 ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವುದಕ್ಕೆ ತಮಗೆ ಬಾಧ್ಯತೆಯನ್ನು ಹುಡುಕುತ್ತಿದ್ದರು. ಏಕೆಂದರೆ ಅಂದಿನವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರೆತಿರಲಿಲ್ಲ.
JDG 18:2 ದಾನರು ದೇಶವನ್ನು ಸಂಚರಿಸಿ ನೋಡಿ, ಪರಿಶೋಧಿಸುವುದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ, ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿಯನ್ನು ಕರೆದು, ಅವರ ಸಂಗಡ, “ನೀವು ಹೋಗಿ ದೇಶವನ್ನು ಸಂಚರಿಸಿ ನೋಡಿರಿ,” ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದು ಅಲ್ಲಿ ಇಳಿದುಕೊಂಡರು.
JDG 18:3 ಅವರು ಮೀಕನ ಮನೆಯ ಬಳಿಯಲ್ಲಿರುವಾಗ, ಲೇವಿಯ ಯುವಕನ ಸ್ವರ ಗುರುತಿಸಿ, ಅವನ ಬಳಿಗೆ ಹೋಗಿ, “ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವನು ಯಾರು? ಇಲ್ಲಿ ನೀನು ಏನು ಮಾಡುತ್ತೀ? ಏಕೆ ನೀನು ಇಲ್ಲಿರುವೆ?” ಎಂದರು.
JDG 18:4 ಅವನು ಅವರಿಗೆ, “ಮೀಕನು ನನಗೆ ಹೀಗೆ ನಡೆಸುತ್ತಾ, ನನ್ನನ್ನು ಸಂಬಳಕ್ಕೆ ಇಟ್ಟುಕೊಂಡಿದ್ದಾನೆ. ನಾನು ಅವನಿಗೆ ಯಾಜಕನಾಗಿದ್ದೇನೆ,” ಎಂದನು.
JDG 18:5 ಆಗ ಅವರು ಅವನಿಗೆ, “ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವುದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು,” ಎಂದರು.
JDG 18:6 ಆ ಯಾಜಕನು, “ಸಮಾಧಾನವಾಗಿ ಹೋಗಿರಿ. ನೀವು ಹೋಗುವ ನಿಮ್ಮ ಮಾರ್ಗಕ್ಕೆ ಯೆಹೋವ ದೇವರ ಒಪ್ಪಿಗೆ ಇದೆ,” ಎಂದನು.
JDG 18:7 ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ, ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡುವಾಗ, ಅವರು ನಿರ್ಭೀತರಾಗಿಯೂ, ಸೀದೋನ್ಯರ ಹಾಗೆ ನೆಮ್ಮದಿಯಾಗಿಯೂ, ಸುರಕ್ಷಿತವಾಗಿಯೂ ಇದ್ದರು. ಅವರಿಗೆ ಯಾವ ಕೊರತೆಯು ಇರಲಿಲ್ಲ. ಅವರು ಸಮೃದ್ಧಿಯಲ್ಲಿದ್ದರು. ಸೀದೋನ್ಯರಿಂದ ದೂರವಾಗಿ ಜೀವಿಸುತ್ತಿದ್ದರು. ಬೇರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಿರಲಿಲ್ಲ.
JDG 18:8 ಅವರು ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರುಗಿ ಬಂದರು. ಅವರ ಸಹೋದರರಾದ ದಾನರು ಅವರಿಗೆ, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದರು.
JDG 18:9 ಅದಕ್ಕವರು, “ನಾವು ಅವರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಹಾಗೆ ಏಳಿರಿ; ಏಕೆಂದರೆ ನಾವು ಆ ದೇಶವನ್ನು ನೋಡಿದೆವು; ಅದು ಬಹಳ ಚೆನ್ನಾಗಿದೆ. ನೀವು ಏನನ್ನಾದರೂ ಮಾಡಲು ಹೋಗುತ್ತೀರಾ? ಆ ದೇಶದಲ್ಲಿ ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಲು ಹೋಗುವುದಕ್ಕೆ ತಡಮಾಡಬೇಡಿರಿ.
JDG 18:10 ನೀವು ಅಲ್ಲಿಗೆ ತಲುಪಿದಾಗ, ಸಂಶಯಪಡದ ಜನರನ್ನು ಅಲ್ಲಿ ಕಾಣುವಿರಿ. ಅದು ವಿಸ್ತಾರವಾದ ದೇಶವಾಗಿದೆ. ದೇವರು ಅದನ್ನು ನಿಮ್ಮ ಕೈಗಳಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ಆ ಪ್ರದೇಶದಲ್ಲಿ ಯಾವ ಕೊರತೆಯು ಇರುವುದಿಲ್ಲ,” ಎಂದರು.
JDG 18:11 ಆಗ ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ದಾನನ ಗೋತ್ರದವರಲ್ಲಿ ಆರುನೂರು ಜನರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು, ಅಲ್ಲಿಂದ ಹೊರಟುಹೋಗಿ,
JDG 18:12 ಯೆಹೂದದಲ್ಲಿರುವ ಕಿರ್ಯತ್ ಯಾರೀಮಿನಲ್ಲಿ ಇಳಿದುಕೊಂಡರು. ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್ ಎಂಬ ಹೆಸರಿದೆ.
JDG 18:13 ಅದು ಕಿರ್ಯತ್ ಯಾರೀಮಿನ ಹಿಂದೆ ಇರುವುದು. ಅಲ್ಲಿಂದ ಅವರು ಎಫ್ರಾಯೀಮ್ ಬೆಟ್ಟಕ್ಕೆ ಹೋಗಿ, ಮೀಕನ ಮನೆಯವರೆಗೆ ಬಂದರು.
JDG 18:14 ಆಗ ಲಯಿಷಿನ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಜನರು ತಮ್ಮ ಸಹೋದರರಿಗೆ ಉತ್ತರಕೊಟ್ಟು, “ಈ ಮನೆಗಳಲ್ಲಿ ಏಫೋದೂ, ಪ್ರತಿಮೆಗಳೂ, ಕೆತ್ತಿದ ವಿಗ್ರಹವೂ, ಎರಕದ ವಿಗ್ರಹವೂ ಉಂಟೆಂದು ನಿಮಗೆ ಗೊತ್ತುಂಟೋ? ನೀವು ಈಗ ಮಾಡಬೇಕಾದದ್ದೇನೆಂದು ತಿಳಿದುಕೊಳ್ಳಿರಿ,” ಎಂದರು.
JDG 18:15 ಅವರು ಅಲ್ಲಿಗೆ ಹೋಗಿ ಮೀಕನ ಮನೆಯಲ್ಲಿರುವ ಯುವಕನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸತೊಡಗಿದರು.
JDG 18:16 ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ದಾನನ ಗೋತ್ರದವರಾದ ಆರುನೂರು ಮಂದಿಯು ಬಾಗಿಲ ಬಳಿಯಲ್ಲಿ ನಿಂತರು.
JDG 18:17 ಆದರೆ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಒಳಗೆ ಹೋಗಿ, ಕೆತ್ತಿದ ವಿಗ್ರಹವನ್ನೂ, ಏಫೋದನ್ನೂ, ಪ್ರತಿಮೆಗಳನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡರು. ಆಗ ಯಾಜಕನೂ, ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಬಾಗಿಲ ಬಳಿಯಲ್ಲಿ ನಿಂತಿದ್ದರು.
JDG 18:18 ಅವರು ಮೀಕನ ಮನೆಗೆ ಬಂದು, ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡಾಗ, ಯಾಜಕನು ಅವರಿಗೆ, “ನೀವು ಏನು ಮಾಡುತ್ತೀರಿ?” ಎಂದನು.
JDG 18:19 ಅವರು ಅವನಿಗೆ, “ನೀನು ಸುಮ್ಮನೆ ಇರು; ನಿನ್ನ ಬಾಯಿ ಮುಚ್ಚಿಕೊಂಡು ನಮ್ಮ ಸಂಗಡ ಬಂದು, ನಮಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ, ಒಂದು ಕುಟುಂಬಕ್ಕೂ ಯಾಜಕನಾಗಿರುವುದು ಒಳ್ಳೆಯದೋ?” ಎಂದರು.
JDG 18:20 ಆಗ ಯಾಜಕನು ಸಂತೋಷಪಟ್ಟು ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ ತೆಗೆದುಕೊಂಡು ಜನರ ಮಧ್ಯದಲ್ಲಿ ಹೋದನು.
JDG 18:21 ಅವರು ತಿರುಗಿಕೊಂಡು ಹೊರಟು, ಚಿಕ್ಕವರನ್ನೂ, ಸಲಕರಣೆಗಳನ್ನೂ, ಪಶುಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು.
JDG 18:22 ಅವರು ಮೀಕನ ಮನೆಯಿಂದ ಸ್ವಲ್ಪ ದೂರ ಹೋದಾಗ, ಮೀಕನ ಮನೆಯ ಸುತ್ತಲೂ ನೆರೆಮನೆಗಳಲ್ಲಿ ಇರುವ ಮನುಷ್ಯರು ಕೂಡಿಕೊಂಡು ದಾನರನ್ನು ಹಿಂದಟ್ಟಿ, ಅವರನ್ನು ಕೂಗಿ ಕರೆದರು.
JDG 18:23 ದಾನರು ತಮ್ಮ ಮುಖ ತಿರುಗಿಸಿ ಮೀಕನಿಗೆ, “ನೀನು ಗುಂಪು ಕೂಡಿಕೊಂಡು ಬರಲು ನಿನಗೆ ಏನಾಯಿತು?” ಎಂದರು.
JDG 18:24 ಅವನು, “ನಾನು ಮಾಡಿಕೊಂಡ ನನ್ನ ದೇವರುಗಳನ್ನೂ, ಯಾಜಕನನ್ನೂ ತೆಗೆದುಕೊಂಡು ಹೋದಿರಿ. ಇನ್ನು ನನಗೆ ಏನಿದೆ? ನೀವು ನನ್ನನ್ನು, ‘ನಿನಗೆ ಏನಾಯಿತೆಂದು ಕೇಳುವುದೇನು?’ ಎಂದನು.”
JDG 18:25 ಆದರೆ ದಾನನ ಮಕ್ಕಳು ಅವನಿಗೆ, “ಕೋಪಿಷ್ಟರು ನಿನ್ನ ಮೇಲೆ ಬೀಳದ ಹಾಗೆ ನೀನು ನಿನ್ನ ಪ್ರಾಣವನ್ನೂ, ನಿನ್ನ ಮನೆಯವರ ಪ್ರಾಣವನ್ನೂ ಕಳೆದುಕೊಳ್ಳದ ಹಾಗೆ ನಿನ್ನ ಶಬ್ದ ನಮಗೆ ಕೇಳಿಸದೆ ಇರಲಿ,” ಎಂದರು.
JDG 18:26 ದಾನನ ಮಕ್ಕಳು ತಮ್ಮ ಮಾರ್ಗವಾಗಿ ಹೋದರು. ಆಗ ಮೀಕನು, ಅವರು ತನಗಿಂತ ಬಲಿಷ್ಠರೆಂದು ಕಂಡು, ತಿರುಗಿಕೊಂಡು ತನ್ನ ಮನೆಗೆ ಹೋದನು.
JDG 18:27 ಅವರು ಮೀಕನು ಮಾಡಿಕೊಂಡವುಗಳನ್ನೂ, ಅವನಿಗಿದ್ದ ಯಾಜಕನನ್ನೂ ತೆಗೆದುಕೊಂಡು ವಿಶ್ರಾಂತಿಯಿಂದಲೂ, ಭರವಸದಿಂದಲೂ ಇದ್ದ ಲಯಿಷಿನ ಜನರ ಮೇಲೆ ಬಂದು, ಅವರನ್ನು ಖಡ್ಗದಿಂದ ಹೊಡೆದು, ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
JDG 18:28 ಅದು ಸೀದೋನಿಗೆ ದೂರವಾಗಿದ್ದುದರಿಂದಲೂ, ಯಾವ ಮನುಷ್ಯನ ಸಂಗಡಲಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ಅವರನ್ನು ಕಾಪಾಡಲು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್‌ರೆಹೋಬಿಗೆ ಸಮೀಪವಾದ ತಗ್ಗಿನಲ್ಲಿ ಇತ್ತು. ಈ ಪಟ್ಟಣವನ್ನು ದಾನ್ಯರು ಪುನಃ ಕಟ್ಟಿಸಿ ಅದರಲ್ಲಿ ವಾಸಿಸಿದರು.
JDG 18:29 ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರಿತ್ತು. ಈಗ ದಾನ್ಯರು ಆ ಪಟ್ಟಣಕ್ಕೆ ಇಸ್ರಾಯೇಲನಿಗೆ ಹುಟ್ಟಿದ ತಮ್ಮ ಮೂಲಪುರುಷನಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
JDG 18:30 ಅಲ್ಲಿ ದಾನ್ಯರು ಕೆತ್ತಿದ ವಿಗ್ರಹವನ್ನು ತಮಗಾಗಿ ಸ್ಥಾಪಿಸಿಕೊಂಡರು. ಇಸ್ರಾಯೇಲರು ಸೆರೆಯಾಗಿ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ಅವನ ಮಕ್ಕಳೂ ದಾನನ ಗೋತ್ರದವರಿಗೆ ಯಾಜಕರಾಗಿದ್ದರು.
JDG 18:31 ದೇವರ ಮನೆ ಶೀಲೋವಿನಲ್ಲಿ ಇರುವ ಮಟ್ಟಿಗೂ, ಅವರು ಮೀಕನು ಮಾಡಿದ ವಿಗ್ರಹವನ್ನು ಇಟ್ಟುಕೊಂಡಿದ್ದರು.
JDG 19:1 ಇಸ್ರಾಯೇಲಿನಲ್ಲಿ ಆ ದಿವಸಗಳಲ್ಲಿ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟದ ಒಂದು ಮೂಲೆಯಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಅವನು ಯೆಹೂದದ ಬೇತ್ಲೆಹೇಮಿನವಳಾದಂಥ ಸ್ತ್ರೀಯನ್ನು ಉಪಪತ್ನಿಯಾಗಿ ತೆಗೆದುಕೊಂಡಿದ್ದನು.
JDG 19:2 ಅವನ ಉಪಪತ್ನಿ ಅವನಿಗೆ ವಿರೋಧವಾಗಿ ಜಾರತ್ವ ಮಾಡಿ, ಅವನನ್ನು ಬಿಟ್ಟು, ಯೆಹೂದದ ಬೇತ್ಲೆಹೇಮಿನಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ಅಲ್ಲಿ ನಾಲ್ಕು ತಿಂಗಳಿದ್ದಳು.
JDG 19:3 ಆಗ ಅವಳ ಗಂಡನು ಎದ್ದು, ಅವಳ ಸಂಗಡ ಪ್ರೀತಿಯಿಂದ ಮಾತನಾಡಿ, ಅವಳನ್ನು ತಿರುಗಿ ಕರೆತರುವುದಕ್ಕೆ ತನ್ನ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರೆದುಕೊಂಡು ಹೋದಳು. ಆಕೆಯ ತಂದೆ ಅವನನ್ನು ಕಂಡಾಗ, ಸಂತೋಷದಿಂದ ಅವನನ್ನು ಸ್ವಾಗತಿಸಿದನು.
JDG 19:4 ಅವನ ಮಾವನು ಅಂದರೆ ಆ ಸ್ತ್ರೀಯ ತಂದೆಯು ಅವನನ್ನು ಅಲ್ಲಿರುವಂತೆ ಒತ್ತಾಯ ಮಾಡಿದನು. ಆದ್ದರಿಂದ ಅವನು ಅಲ್ಲಿ ಊಟಮಾಡುತ್ತಾ, ಕುಡಿಯುತ್ತಾ, ಮಲಗುತ್ತಾ ಮೂರು ದಿನಗಳನ್ನು ಕಳೆದನು.
JDG 19:5 ನಾಲ್ಕನೆಯ ದಿನ ಅವರು ಬೇಗನೆ ಎದ್ದು, ಹೊರಡಲಿಕ್ಕೆ ಸಿದ್ಧರಾದರು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡಿ ಚೇತರಿಸಿಕೋ, ಆಮೇಲೆ ನೀವು ಹೋಗಬಹುದು,” ಎಂದನು.
JDG 19:6 ಆದ್ದರಿಂದ ಅವರಿಬ್ಬರು ಊಟ ಮಾಡಲು, ಕುಡಿಯಲು ಕುಳಿತುಕೊಂಡರು. ಅನಂತರದಲ್ಲಿ ಆ ಸ್ತ್ರೀಯ ತಂದೆಯು, “ಈ ರಾತ್ರಿ ಇಲ್ಲೇ ಇದ್ದುಕೊಂಡು ಸಂತೋಷಪಡು,” ಎಂದು ಹೇಳಿದನು.
JDG 19:7 ಆ ಮನುಷ್ಯನು ಎದ್ದು ಹೊರಡಲು ಸಿದ್ಧನಾದಾಗ, ಅವನ ಮಾವನು ಅವನನ್ನು ಆ ರಾತ್ರಿ ಅಲ್ಲಿಯೇ ಇರುವಂತೆ ಒಪ್ಪಿಸಿದನು.
JDG 19:8 ಐದನೆಯ ದಿನದ ಮುಂಜಾನೆ ಅವನು ಹೊರಡಲು ಎದ್ದೇಳುವಾಗ, ಆ ಸ್ತ್ರೀಯ ತಂದೆಯು, “ವಿಶ್ರಮಿಸಿಕೋ, ಮಧ್ಯಾಹ್ನದವರೆಗೆ ಇರು,” ಎಂದನು. ಅದರಂತೆ ಅವರಿಬ್ಬರು ಒಟ್ಟಾಗಿ ಊಟಮಾಡಿದರು.
JDG 19:9 ಅವನೂ, ಅವನ ಉಪಪತ್ನಿಯೂ ಅವನ ಸೇವಕನೂ ಹೋಗುವುದಕ್ಕೆ ಎದ್ದಾಗ, ಅವನ ಮಾವನು ಅವನಿಗೆ, “ಇಗೋ, ಹೊತ್ತು ಹೋಗಿ ಸಂಜೆ ಆಯಿತು. ಈ ರಾತ್ರಿ ನೀನು ದಯಮಾಡಿ ಇಲ್ಲೇ ಇರು; ಹೊತ್ತು ಮುಣುಗುತ್ತಾ ಬಂತು. ನೀನು ಈ ರಾತ್ರಿ ಇಲ್ಲಿದ್ದು, ನಿನ್ನ ಗುಡಾರಕ್ಕೆ ನಾಳೆ ಬೆಳಿಗ್ಗೆ ಎದ್ದು, ನಿಮ್ಮ ಮಾರ್ಗ ಹಿಡಿದು ಹೋಗಬಹುದು,” ಎಂದನು.
JDG 19:10 ಆದರೆ ಆ ಮನುಷ್ಯನು ಆ ರಾತ್ರಿ ಅಲ್ಲಿರುವುದಕ್ಕೆ ಮನಸ್ಸಿಲ್ಲದೆ, ಎದ್ದು ತಡಿಕಟ್ಟಿದ ಎರಡು ಕತ್ತೆಗಳ ಮತ್ತು ತನ್ನ ಉಪಪತ್ನಿಯ ಸಂಗಡ ಹೊರಟುಹೋಗಿ, ಯೆರೂಸಲೇಮು ಎಂಬ ಯೆಬೂಸಿಗೆ ಸರಿಯಾಗಿ ಬಂದನು.
JDG 19:11 ಅವರು ಯೆಬೂಸಿಗೆ ಸಮೀಪಿಸಿದಾಗ, ಹೊತ್ತು ಬಹಳ ಹೋಗಿತ್ತು. ಆಗ ಸೇವಕನು ತನ್ನ ಯಜಮಾನನಿಗೆ, “ನೀನು ದಯಮಾಡಿ ಬಾ; ಈ ಯೆಬೂಸಿಯರ ಪಟ್ಟಣಕ್ಕೆ ತಿರುಗಿಕೊಂಡು, ಅಲ್ಲಿ ರಾತ್ರಿಯಲ್ಲಿ ಇಳಿದುಕೊಳ್ಳೋಣ,” ಎಂದನು.
JDG 19:12 ಆದರೆ ಅವನ ಯಜಮಾನನು ಅವನಿಗೆ, “ನಾವು ಇಲ್ಲಿ ಇಸ್ರಾಯೇಲರಲ್ಲದವರ ಪಟ್ಟಣದಲ್ಲಿ ತಂಗಬಾರದು; ಗಿಬೆಯ ಪಟ್ಟಣಕ್ಕೆ ಹೋಗೋಣ,” ಎಂದನು.
JDG 19:13 ಅವನು ಸೇವಕನಿಗೆ, “ಗಿಬೆಯದಲ್ಲಾದರೂ, ರಾಮಾದಲ್ಲಾದರೂ ಇಳಿದುಕೊಳ್ಳುವುದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ,” ಎಂದನು.
JDG 19:14 ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾಮೀನನಿಗೆ ಸೇರಿದ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯ ಮುಳುಗಿತ್ತು.
JDG 19:15 ಆದ್ದರಿಂದ ಅವರು ಗಿಬೆಯದಲ್ಲಿ ರಾತ್ರಿ ಕಳೆಯಲು ಉಳಿದರು. ಅವರು ಹೋಗಿ ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು. ಮನೆಯಲ್ಲಿ ಇಳಿದುಕೊಳ್ಳುವುದಕ್ಕೆ ಅವರನ್ನು ಯಾರೂ ಸೇರಿಸಿಕೊಳ್ಳಲಿಲ್ಲ.
JDG 19:16 ಆಗ ಒಬ್ಬ ಮುದುಕನು ಹೊಲದಲ್ಲಿ ತನ್ನ ಕೆಲಸಮಾಡಿ ಬರುತ್ತಿದ್ದನು. ಆ ಮನುಷ್ಯನು ಎಫ್ರಾಯೀಮ್ ಬೆಟ್ಟದ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನರ ಊರಾದ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು.
JDG 19:17 ಆ ಮುದುಕನು ತನ್ನ ಕಣ್ಣೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದ ಯಾತ್ರಿಕನನ್ನು ಕಂಡು, “ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ?” ಎಂದನು.
JDG 19:18 ಅವನು ಇವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮ್ ಬೆಟ್ಟದ ಕಡೆಯಲ್ಲಿ ಹಾದು ಹೋಗುತ್ತೇವೆ. ನಾನು ಅಲ್ಲಿಯವನು. ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು. ಈಗ ಯೆಹೋವ ದೇವರ ಮನೆಗೆ ಹೋಗುತ್ತೇನೆ. ಆದರೆ ನಮ್ಮನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.
JDG 19:19 ಆದರೂ ನಮ್ಮ ಕತ್ತೆಗಳಿಗೆ ಮೇವೂ, ನಿನ್ನ ಸೇವಕನಾದ ನನಗೂ, ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಇರುವ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು. ಏನೂ ಕೊರತೆ ಇಲ್ಲ,” ಎಂದನು.
JDG 19:20 ಆಗ ಆ ಮುದುಕನು, “ನಿನಗೆ ಶುಭವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ, ಹೇಗಾದರೂ ಬೀದಿಯೊಳಗೆ ಇಳಿದುಕೊಳ್ಳಬೇಡ,” ಎಂದು ಹೇಳಿ
JDG 19:21 ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದು ತಿಂದು ಕುಡಿದರು.
JDG 19:22 ಅವರು ಸಂತೋಷಿಸುತ್ತಿರುವ ವೇಳೆಯಲ್ಲಿ ಆ ಪಟ್ಟಣದ ದುಷ್ಟ ಮನುಷ್ಯರಲ್ಲಿ ಕೆಲವರು ಆ ಮನೆಯನ್ನು ಸುತ್ತಿಕೊಂಡು, ಕದವನ್ನು ಬಡಿದು, ಆ ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನೊಡನೆ ನಮಗೆ ಸಂಗಮವಾಗಬೇಕು, ಹೊರಗೆ ಬಾ,” ಎಂದು ಹೇಳಿದರು.
JDG 19:23 ಆಗ ಮನೆಯ ಯಜಮಾನನಾದ ಆ ಮನುಷ್ಯನು ಅವರ ಬಳಿಗೆ ಹೊರಟುಹೋಗಿ, ಅವರಿಗೆ, “ಹಾಗೆ ಮಾಡಬೇಡಿರಿ. ನನ್ನ ಸಹೋದರರೇ, ದಯಮಾಡಿ ಕೆಟ್ಟತನ ಮಾಡಬೇಡಿರಿ. ಆ ಮನುಷ್ಯನು ನನ್ನ ಮನೆಯಲ್ಲಿ ಪ್ರವೇಶಿಸಿದ್ದರಿಂದ ನೀವು ಅಂಥ ಬುದ್ಧಿಹೀನತೆಯನ್ನು ಮಾಡಬೇಡಿರಿ.
JDG 19:24 ಕನ್ನಿಕೆಯಾದ ನನ್ನ ಮಗಳೂ, ಅವನ ಉಪಪತ್ನಿಯನ್ನೂ ಹೊರಗೆ ತರುವೆನು. ನೀವು ಅವರನ್ನು ಕುಂದಿಸಿ ನಿಮಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡಿರಿ, ಆ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ,” ಎಂದನು.
JDG 19:25 ಆದರೆ ಆ ಮನುಷ್ಯರು ಅವನ ಮಾತನ್ನು ಕೇಳಲೊಲ್ಲದೆ ಹೋದರು. ಆದ್ದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹಿಡಿದು ಹೊರಗೆ ಅವರ ಬಳಿಯಲ್ಲಿ ತಂದು ಬಿಟ್ಟನು. ಅವರು ಅವಳನ್ನು ತೆಗೆದುಕೊಂಡು ಉದಯಕಾಲದ ಪರ್ಯಂತರ ರಾತ್ರಿಯೆಲ್ಲಾ ಕೆಡಿಸಿ, ಉದಯವಾಗುವಾಗ ಅವಳನ್ನು ಬಿಟ್ಟುಬಿಟ್ಟರು.
JDG 19:26 ಆ ಸ್ತ್ರೀ ಉದಯಕಾಲಕ್ಕೆ ಮುಂಚೆ ಬಂದು ಬೆಳಗಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
JDG 19:27 ಅವಳ ಯಜಮಾನನು ಉದಯದಲ್ಲಿ ಎದ್ದು, ಮನೆಯ ಬಾಗಿಲನ್ನು ತೆರೆದು, ತನ್ನ ಮಾರ್ಗವಾಗಿ ಹೊರಡುವಾಗ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.
JDG 19:28 ಆಗ ಅವನು ಅವಳಿಗೆ, “ಏಳು, ಹೋಗೋಣ,” ಎಂದನು. ಆದರೆ ಅವಳಿಂದ ಪ್ರತ್ಯುತ್ತರ ಬರಲಿಲ್ಲ. ಆಗ ಆ ಮನುಷ್ಯನು ಅವಳ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು, ತನ್ನ ಸ್ಥಳಕ್ಕೆ ಹೋದನು.
JDG 19:29 ಅವನು ತನ್ನ ಮನೆಗೆ ಹೋದಾಗ, ಒಂದು ಖಡ್ಗವನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡುಗಳಾಗಿ ಕಡಿದು, ಅವುಗಳನ್ನು ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿದನು.
JDG 19:30 ಆಗ ಅದನ್ನು ಕಂಡವರೆಲ್ಲಾ, “ಇಸ್ರಾಯೇಲರು ಈಜಿಪ್ಟಿನಿಂದ ಬಂದ ದಿವಸ ಮೊದಲ್ಗೊಂಡು ಈ ಪರ್ಯಂತರ ಇಂಥ ಕಾರ್ಯವು ಆದದ್ದೂ ಇಲ್ಲ, ಕಂಡದ್ದೂ ಇಲ್ಲ. ನೀವು ಇದರ ವಿಷಯ ಆಲೋಚಿಸಿ ಯೋಚಿಸಿರಿ. ನಾವೇನು ಮಾಡಬೇಕು ಹೇಳಿರಿ?” ಎಂದರು.
JDG 20:1 ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು.
JDG 20:2 ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಖಡ್ಗ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಮೂಹದ ಜನರಲ್ಲಿಗೆ ಬಂದರು.
JDG 20:3 ಬೆನ್ಯಾಮೀನ್ಯರು, ಇಸ್ರಾಯೇಲರು ಮಿಚ್ಪೆಗೆ ಬಂದ ವರ್ತಮಾನವನ್ನು ಕೇಳಿದರು. ಆಗ ಇಸ್ರಾಯೇಲರು, “ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು?” ಎಂದರು.
JDG 20:4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು ಅವರಿಗೆ ಉತ್ತರಕೊಟ್ಟು, “ನಾನು ಬೆನ್ಯಾಮೀನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳಿದುಕೊಳ್ಳುವುದಕ್ಕೆ ಬಂದೆನು.
JDG 20:5 ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು, ನಾನು ಇಳಿದಿದ್ದ ಮನೆಯನ್ನು ರಾತ್ರಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು ಮತ್ತು ನನ್ನ ಉಪಪತ್ನಿಯನ್ನು ಅತ್ಯಾಚಾರಮಾಡಿದರು. ಅವಳು ಸತ್ತುಹೋದಳು.
JDG 20:6 ಅವರು ಇಸ್ರಾಯೇಲಿನಲ್ಲಿ ಇಂಥ ದುಷ್ಕಾರ್ಯವನ್ನೂ ಅತಿರೇಕದ ಕೆಲಸವನ್ನೂ ಮಾಡಿದ್ದರಿಂದ, ನಾನು ನನ್ನ ಉಪಪತ್ನಿಯನ್ನು ಹಿಡಿದು, ಅವಳನ್ನು ಕಡಿದು, ಇಸ್ರಾಯೇಲಿನ ಬಾಧ್ಯತೆಯಾದ ಎಲ್ಲಾ ಸೀಮೆಗಳಿಗೆ ಕಳುಹಿಸಿದೆನು. ನೀವೆಲ್ಲರೂ ಇಸ್ರಾಯೇಲರಾಗಿದ್ದೀರಿ.
JDG 20:7 ಇಲ್ಲಿ ಕೂಡಿದ ಎಲ್ಲಾ ಇಸ್ರಾಯೇಲರೇ, ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿಕೊಳ್ಳಿರಿ,” ಎಂದನು.
JDG 20:8 ಆಗ ಸಮಸ್ತ ಜನರೂ ಒಟ್ಟಾಗಿ ಎದ್ದು, “ನಮ್ಮಲ್ಲಿ ಯಾವನೂ ತನ್ನ ಡೇರೆಗೆ ಹೋಗದಿರಲಿ. ತನ್ನ ಮನೆಗೆ ಹಿಂದಿರುಗದಿರಲಿ.
JDG 20:9 ಈಗ ನಾವು ಗಿಬೆಯಕ್ಕೆ ಮಾಡುವುದು ಇದೇ. ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ.
JDG 20:10 ಆದರೆ ಬೆನ್ಯಾಮೀನನ ಗೋತ್ರದವರಾದ ಗಿಬೆಯದವರು ಇಸ್ರಾಯೇಲಿನಲ್ಲಿ ಮಾಡಿದ ಈ ಅತಿರೇಕದ ಕೆಲಸಕ್ಕೆ ತಕ್ಕ ಪ್ರಕಾರ ಮಾಡುವ ಹಾಗೆ ನಾವು ಆಹಾರವನ್ನು ತೆಗೆದುಕೊಂಡು ಬರುವುದಕ್ಕೆ ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನೂರಕ್ಕೆ ಹತ್ತು ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಜನರನ್ನು ತೆಗೆದುಕೊಂಡು ಕಳುಹಿಸುತ್ತೇವೆ,” ಎಂದರು.
JDG 20:11 ಹೀಗೆಯೇ ಇಸ್ರಾಯೇಲರೆಲ್ಲರೂ ಒಟ್ಟಾಗಿ ಆ ಪಟ್ಟಣದ ಮುಂದೆ ಕೂಡಿದರು.
JDG 20:12 ಅಲ್ಲಿಂದ ಇಸ್ರಾಯೇಲ್ ಗೋತ್ರಗಳು ಬೆನ್ಯಾಮೀನನ ಸಮಸ್ತ ಗೋತ್ರಗಳಿಗೆ ದೂತರನ್ನು ಕಳುಹಿಸಿ, “ನಿಮ್ಮಲ್ಲಿ ಮಾಡಿದ ಈ ಕೆಟ್ಟತನವೇನು?
JDG 20:13 ಗಿಬೆಯದಲ್ಲಿರುವ ದುಷ್ಟ ಮನುಷ್ಯರನ್ನು ನಾವು ಕೊಂದು, ಕೆಟ್ಟತನವನ್ನು ಇಸ್ರಾಯೇಲಿನಿಂದ ತೆಗೆದುಹಾಕುವ ಹಾಗೆ, ಅವರನ್ನು ಒಪ್ಪಿಸಿಕೊಡಿರಿ,” ಎಂದು ಹೇಳಿ ಕಳುಹಿಸಿದರು. ಆದರೆ ಬೆನ್ಯಾಮೀನ್ಯರು ಇಸ್ರಾಯೇಲರಾದ ತಮ್ಮ ಸಹೋದರರ ಮಾತನ್ನು ಕೇಳುವುದಕ್ಕೆ ಮನಸ್ಸಿಲ್ಲದೆ,
JDG 20:14 ಇಸ್ರಾಯೇಲರ ಸಂಗಡ ಯುದ್ಧಮಾಡುವುದಕ್ಕೆ ಹೊರಡುವ ಹಾಗೆ ಪಟ್ಟಣಗಳಲ್ಲಿಂದ ಗಿಬೆಯದಲ್ಲಿ ಬಂದು ಕೂಡಿದರು.
JDG 20:15 ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
JDG 20:16 ಈ ಸಮಸ್ತ ಜನರಲ್ಲಿ ಆರಿಸಿದ ಏಳು ನೂರು ಜನರು ಬಲಗೈ ಅಭ್ಯಾಸವಿಲ್ಲದವರಾಗಿದ್ದರು. ಅವರೆಲ್ಲರೂ ಒಂದು ಕೂದಲೆಳೆ ತಪ್ಪದ ಹಾಗೆ ಕವಣೆಯಿಂದ ಕಲ್ಲೆಸೆಯುವವರಾಗಿದ್ದರು.
JDG 20:17 ಬೆನ್ಯಾಮೀನನವರ ಹೊರತು ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು.
JDG 20:18 ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು.
JDG 20:19 ಆಗ ಇಸ್ರಾಯೇಲರು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ಪಾಳೆಯಮಾಡಿಕೊಂಡರು.
JDG 20:20 ಇಸ್ರಾಯೇಲಿನ ಮನುಷ್ಯರು ಗಿಬೆಯದ ಬಳಿಯಲ್ಲಿ ಬೆನ್ಯಾಮೀನ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ವ್ಯೂಹ ಕಟ್ಟಿದರು.
JDG 20:21 ಆಗ ಬೆನ್ಯಾಮೀನ್ಯರು ಗಿಬೆಯದಿಂದ ಹೊರಟು, ಇಸ್ರಾಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿವಸದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು.
JDG 20:22 ಇಸ್ರಾಯೇಲರಾದ ಜನರು ಬಲಗೊಂಡು, ಮೊದಲನೆಯ ದಿವಸ ಯುದ್ಧಕ್ಕೆ ವ್ಯೂಹ ಕಟ್ಟಿದ ಸ್ಥಳದಲ್ಲಿ ತಿರುಗಿ ವ್ಯೂಹ ಕಟ್ಟಿದರು.
JDG 20:23 ಇಸ್ರಾಯೇಲರು ಯೆಹೋವ ದೇವರ ಬಳಿಗೆ ಹೋಗಿ, ಅವರ ಮುಂದೆ ಸಂಜೆಯವರೆಗೆ ಅತ್ತು, “ನಮ್ಮ ಸಹೋದರರಾದ ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕೋ?” ಎಂದು ಯೆಹೋವ ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಅವರ ಮೇಲೆ ಹೋಗಿರಿ,” ಎಂದರು. ಎರಡನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರ ಬಳಿಗೆ ಬಂದರು.
JDG 20:24 ಆಗ ಬೆನ್ಯಾಮೀನನವರು ಆ ಎರಡನೆಯ ದಿವಸದಲ್ಲಿ ಗಿಬೆಯದಿಂದ ಅವರಿಗೆ ಎದುರಾಗಿ ಹೊರಟುಬಂದು,
JDG 20:25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯಾದಿಂದ ಹೊರಗೆ ಬಂದು ಇಸ್ರಾಯೇಲರಲ್ಲಿ ಖಡ್ಗ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು.
JDG 20:26 ಆಗ ಇಸ್ರಾಯೇಲರೆಲ್ಲರೂ ಸಮಸ್ತ ಸೇನೆಯೂ ಬೇತೇಲಿಗೆ ಹೊರಟು, ಅಲ್ಲಿ ಅಳುತ್ತಾ ಯೆಹೋವ ದೇವರ ಮುಂದೆ ಕುಳಿತುಕೊಂಡು, ಆ ಸಂಜೆಯವರೆಗೆ ಉಪವಾಸವಾಗಿದ್ದು, ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು.
JDG 20:27 ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ,
JDG 20:28 ಆರೋನನ ಮೊಮ್ಮಗನೂ, ಎಲಿಯಾಜರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದದರಿಂದಲೂ, ಇಸ್ರಾಯೇಲರು, “ನಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವುದಕ್ಕೆ ಹೋಗಬೇಕೋ ಬೇಡವೋ?” ಎಂದು ದೇವರನ್ನು ಕೇಳಿಕೊಂಡರು. ಯೆಹೋವ ದೇವರು, “ಹೋಗಿರಿ, ಏಕೆಂದರೆ ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.
JDG 20:29 ಇಸ್ರಾಯೇಲರು ಗಿಬೆಯದ ಸುತ್ತಲೂ ಹೊಂಚಿ ನೋಡುವವರನ್ನು ಇಟ್ಟರು.
JDG 20:30 ಮೂರನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ, ಗಿಬೆಯದ ಸಮೀಪದಲ್ಲಿ ವ್ಯೂಹವನ್ನು ಕಟ್ಟಿದರು.
JDG 20:31 ಆಗ ಬೆನ್ಯಾಮೀನ್ಯರು ಇಸ್ರಾಯೇಲ್ ಜನಕ್ಕೆ ಎದುರಾಗಿ ಹೊರಟು, ಪಟ್ಟಣದ ಬಳಿಯಿಂದ ಹೊರಬಂದು, ಅಡವಿಯಲ್ಲಿ ಹೆದ್ದಾರಿಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ,
JDG 20:32 ಬೆನ್ಯಾಮೀನ್ಯರು, “ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಸೋತುಹೋಗುತ್ತಾರೆ,” ಎಂದುಕೊಂಡರು. ಆದರೆ ಇಸ್ರಾಯೇಲರು, “ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳೆದುಕೊಳ್ಳುವ ಹಾಗೆ ನಾವು ಹಿಂದಕ್ಕೆ ಓಡಿಹೋಗೋಣ,” ಎಂದುಕೊಂಡರು.
JDG 20:33 ಇಸ್ರಾಯೇಲರೆಲ್ಲರೂ ತಮ್ಮ ಸ್ಥಳದಿಂದ ಎದ್ದು, ಬಾಳ್ ತಾಮಾರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲರು ಹೊರಟು ಬಂದರು.
JDG 20:34 ಅವರಲ್ಲಿ ಆರಿಸಿದ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು. ಆದರೆ ಬೆನ್ಯಾಮೀನ್ಯರು, ಕೇಡು ತಮಗೆ ಸಮೀಪವಾಗಿತ್ತೆಂದು ಅರಿಯದೆ ಇದ್ದರು.
JDG 20:35 ಆಗ ಯೆಹೋವ ದೇವರು ಇಸ್ರಾಯೇಲಿನ ಮುಂದೆ ಬೆನ್ಯಾಮೀನ್ಯರನ್ನು ಹೊಡೆದರು. ಆ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಲ್ಲಿ ಖಡ್ಗ ಹಿಡಿಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯರನ್ನು ನಾಶಮಾಡಿದರು.
JDG 20:36 ತಾವು ಸೋತುಹೋದೆವೆಂಬುದು ಹೀಗೆ ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಏಕೆಂದರೆ ಇಸ್ರಾಯೇಲರು ಗಿಬೆಯದ ಹತ್ತಿರ ಹೊಂಚು ಹಾಕುವದಕ್ಕೆ ಇಟ್ಟ ಜನರನ್ನು ನಂಬಿದ್ದರು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
JDG 20:37 ಆಗ ಹೊಂಚು ಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಸಾಲಾಗಿ ಹೊರಟು, ಪಟ್ಟಣದಲ್ಲಿರುವವರೆಲ್ಲರನ್ನು ಖಡ್ಗದಿಂದ ಸಂಹರಿಸಿದರು.
JDG 20:38 ಇಸ್ರಾಯೇಲರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇನೆಂದರೆ, ಪಟ್ಟಣದಲ್ಲಿಂದ ಮಹಾ ದೊಡ್ಡ ಹೊಗೆಯನ್ನು ಏಳ ಮಾಡುವುದೇ.
JDG 20:39 ತದನಂತರ ಇಸ್ರಾಯೇಲರು ಪ್ರತಿದಾಳಿ ನಡೆಸಿದರು. ಬೆನ್ಯಾಮೀನ್ಯರು ಇಸ್ರಾಯೇಲರನ್ನು ಹೊಡೆಯುವುದಕ್ಕೆ ಪ್ರಾರಂಭಿಸಿ, ಅವರಲ್ಲಿ ಹೆಚ್ಚು ಕಡಿಮೆ ಮೂವತ್ತು ಜನರನ್ನು ಕೊಂದಾಗ, “ಮೊದಲು ಯುದ್ಧದಲ್ಲಿ ಆದ ಹಾಗೆ ನಿಶ್ಚಯವಾಗಿ ಅವರು ನಮ್ಮ ಮುಂದೆ ಸೋತುಹೋದರು,” ಎಂದು ಅಂದುಕೊಂಡರು.
JDG 20:40 ಆದರೆ ಪಟ್ಟಣದೊಳಗಿಂದ ಹೊಗೆಯ ಸ್ತಂಭ ಸಹಿತವಾಗಿ ಏಳುವುದಕ್ಕೆ ಪ್ರಾರಂಭಿಸಿತು. ಬೆನ್ಯಾಮೀನ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು.
JDG 20:41 ಇಸ್ರಾಯೇಲರು ತಿರುಗಿಕೊಂಡು ಬಂದಾಗ, ಬೆನ್ಯಾಮೀನನ ಜನರು ತಲ್ಲಣಗೊಂಡರು, ಏಕೆಂದರೆ ಕೇಡು ತಮ್ಮ ಮೇಲೆ ಪ್ರಾಪ್ತವಾಯಿತೆಂದು ಕಂಡರು.
JDG 20:42 ಅವರು ಇಸ್ರಾಯೇಲರ ಮುಂದೆ ಮರುಭೂಮಿಯ ಮಾರ್ಗಕ್ಕೆ ತಿರುಗಿಕೊಂಡು ಹೋದರು. ಆದರೆ ಸೈನಿಕರು ಅವರನ್ನು ಹಿಡಿದು, ಪಟ್ಟಣದಿಂದ ಹೊರಟು ಬರುವ ಜನರನ್ನು ಮಧ್ಯದಲ್ಲೇ ಕೊಂದುಹಾಕಿದರು.
JDG 20:43 ಹೀಗೆ ಬೆನ್ಯಾಮೀನ್ಯರನ್ನು ಸುತ್ತಲೂ ಮುತ್ತಿಕೊಂಡು, ಅವರನ್ನು ಹಿಂದಟ್ಟಿ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಅವಕಾಶವಿಲ್ಲದೆ ತುಳಿದು ಹಾಕಿದರು.
JDG 20:44 ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಜನರು ಸತ್ತರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು.
JDG 20:45 ಆದರೆ ಕೆಲವರು ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬಂಡೆಗೆ ಓಡಿಹೋದರು. ಅದರಲ್ಲಿ ಐದು ಸಾವಿರ ಜನರನ್ನು ಹೆದ್ದಾರಿಗಳಲ್ಲಿ ಹಕ್ಕಲಾರಿಸಿ ಕೊಂದುಹಾಕಿದರು. ಉಳಿದವರನ್ನು ಗಿದೋಮಿನವರೆಗೆ ಹಿಂದಟ್ಟಿ ಅವರಲ್ಲಿ ಎರಡು ಸಾವಿರ ಮನುಷ್ಯರನ್ನು ವಧಿಸಿದರು.
JDG 20:46 ಹೀಗೆಯೇ ಬೆನ್ಯಾಮೀನ್ಯರೊಳಗೆ ಆ ದಿವಸದಲ್ಲಿ ಬಿದ್ದವರೆಲ್ಲರೂ ಖಡ್ಗ ಹಿಡಿಯುವ ಇಪ್ಪತ್ತೈದು ಸಾವಿರ ಜನರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು.
JDG 20:47 ಆದರೆ ಆರುನೂರು ಮಂದಿ ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ, ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು.
JDG 20:48 ಇಸ್ರಾಯೇಲರು ಬೆನ್ಯಾಮೀನ್ಯರ ಮೇಲೆ ತಿರುಗಿ ಹೋಗಿ, ಪಟ್ಟಣದಲ್ಲಿ ಜನರನ್ನೂ, ಪಶುಗಳನ್ನೂ, ಕೈಗೆ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ, ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
JDG 21:1 ಇಸ್ರಾಯೇಲರು ತಮ್ಮಲ್ಲಿ, “ಯಾವನೂ ತನ್ನ ಮಗಳನ್ನು ಬೆನ್ಯಾಮೀನ್ಯರಿಗೆ ಮದುವೆಮಾಡಿ ಕೊಡುವುದಿಲ್ಲ,” ಎಂದು ಮಿಚ್ಪೆಯಲ್ಲಿ ಆಣೆಯಿಟ್ಟಿದ್ದರು.
JDG 21:2 ಆದ್ದರಿಂದ ಜನರು ಬೇತೇಲಿಗೆ ಬಂದು, ಅಲ್ಲಿ ದೇವರ ಮುಂದೆ ಸಾಯಂಕಾಲದವರೆಗೆ ಇದ್ದು, ತಮ್ಮ ಧ್ವನಿ ಎತ್ತಿ ಬಹಳವಾಗಿ ಅತ್ತು,
JDG 21:3 “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದದ್ದೇನು?” ಎಂದರು.
JDG 21:4 ಜನರು ಮಾರನೆಯ ದಿವಸ ಉದಯದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ, ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು.
JDG 21:5 ಅನಂತರ ಅವರು, “ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಬಾರದವರು ಯಾರು?” ಎಂದರು. ಏಕೆಂದರೆ ಯೆಹೋವ ದೇವರ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆ ಇಟ್ಟುಕೊಂಡಿದ್ದರು.
JDG 21:6 ಆಗ ಇಸ್ರಾಯೇಲರು ತಮ್ಮ ಸಹೋದರರಾದ ಬೆನ್ಯಾಮೀನನ ವಿಷಯವಾಗಿ ಪಶ್ಚಾತ್ತಾಪಪಟ್ಟು, “ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಕಡಿದು ಹೋಯಿತು.
JDG 21:7 ನಾವು ನಮ್ಮ ಪುತ್ರಿಯರಲ್ಲಿ ಒಬ್ಬಳನ್ನಾದರೂ ಅವರಿಗೆ ಕೊಡುವುದಿಲ್ಲ, ಎಂದು ನಾವು ಯೆಹೋವ ದೇವರ ಮೇಲೆ ಆಣೆ ಇಟ್ಟುಕೊಂಡದ್ದರಿಂದ ಉಳಿದವರಿಗೆ ಹೆಂಡರು ದೊರಕುವಂತೆ ನಾವು ಅವರಿಗೋಸ್ಕರ ಏನು ಮಾಡೋಣ?
JDG 21:8 ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ.
JDG 21:9 ಜನರು ಲೆಕ್ಕಿಸಿದಾಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಇರಲಿಲ್ಲ.
JDG 21:10 ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ, ಅವರಿಗೆ, “ನೀವು ಹೋಗಿ, ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡ, ಖಡ್ಗದಿಂದ ಸಂಹರಿಸಿಬಿಡಿರಿ.
JDG 21:11 ಎಲ್ಲಾ ಗಂಡಸರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲ ಮಾಡಿರಿ,” ಎಂದು ಆಜ್ಞಾಪಿಸಿದರು.
JDG 21:12 ಹಾಗೆಯೇ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡರು. ಅವರು ಯಾವುದೇ ಪುರುಷರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನ್ನು ಕಾನಾನ್ ದೇಶದಲ್ಲಿರುವ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತಂದರು.
JDG 21:13 ಆಗ ಸಭೆಯವರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾಮೀನ್ಯರ ಸಂಗಡ ಮಾತನಾಡಿ, ಅವರಿಗೆ ಸಮಾಧಾನವನ್ನು ಸಾರಲು ಕೆಲವರನ್ನು ಕಳುಹಿಸಿದರು.
JDG 21:14 ಆ ಕಾಲದಲ್ಲಿ ಬೆನ್ಯಾಮೀನ್ಯರು ತಿರುಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯರಲ್ಲಿ ಜೀವದಿಂದ ಉಳಿಸಿದ ಕನ್ನಿಕೆಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಆದರೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ.
JDG 21:15 ಯೆಹೋವ ದೇವರು ಇಸ್ರಾಯೇಲ್ ಗೋತ್ರಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನರಿಗಾಗಿ ಪಶ್ಚಾತ್ತಾಪ ಪಟ್ಟರು.
JDG 21:16 ಸಮೂಹದ ಹಿರಿಯರು, “ಬೆನ್ಯಾಮೀನನ ಗೋತ್ರದ ಸ್ತ್ರೀಯರು ನಾಶವಾದದ್ದರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವುದಕ್ಕಾಗಿ ಏನು ಮಾಡೋಣ?
JDG 21:17 ಇಸ್ರಾಯೇಲಿನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾಮೀನ್ಯರಿಗೆ ಬಾಧ್ಯತೆ ಇರಬೇಕು.
JDG 21:18 ‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು.
JDG 21:19 ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು.
JDG 21:20 ಅವರು ಬೆನ್ಯಾಮೀನ್ಯರಿಗೆ, “ನೀವು ಹೋಗಿ ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ.
JDG 21:21 ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು.
JDG 21:22 ಅವರ ತಂದೆಗಳಾದರೂ, ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯವಾಡುವುದಕ್ಕೆ ಬಂದರೆ, ನಾವು ಅವರಿಗೆ, “ಯುದ್ಧದಲ್ಲಿ ನಾವು ಅವನವನಿಗೆ ಹೆಂಡತಿಯನ್ನು ದೊರಕಿಸಿದ ಕಾರಣ, ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಏಕೆಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ,” ಎಂದರು.
JDG 21:23 ಆಗ ಬೆನ್ಯಾಮೀನ್ಯರು ಅದೇ ಪ್ರಕಾರಮಾಡಿ, ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡಿದುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು, ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ, ಪಟ್ಟಣಗಳನ್ನು ಕಟ್ಟಿ, ಅವುಗಳಲ್ಲಿ ವಾಸಿಸಿದರು.
JDG 21:24 ಇಸ್ರಾಯೇಲರು ಆ ಕಾಲದಲ್ಲಿ ಆ ಸ್ಥಳವನ್ನು ಬಿಟ್ಟು, ತಮ್ಮ ತಮ್ಮ ಗೋತ್ರಕ್ಕೂ, ತಮ್ಮ ತಮ್ಮ ಕುಟುಂಬಕ್ಕೂ ಹೋದರು. ಅಲ್ಲಿಂದ ಒಬ್ಬೊಬ್ಬನು ತನ್ನ ಬಾಧ್ಯತೆಗೆ ಹೊರಟುಹೋದನು.
JDG 21:25 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.
RUT 1:1 ನ್ಯಾಯಸ್ಥಾಪಕರು ಆಳುತ್ತಿದ್ದ ಆ ದಿನಗಳಲ್ಲಿ ಇಸ್ರಾಯೇಲ್ ದೇಶದೊಳಗೆ ಬರ ಉಂಟಾಗಿದ್ದಾಗ, ಯೆಹೂದದ ಬೇತ್ಲೆಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಮಾಡಬೇಕೆಂದು ಹೋದನು.
RUT 1:2 ಆ ಮನುಷ್ಯನ ಹೆಸರು ಎಲೀಮೆಲೆಕನು. ಅವನ ಹೆಂಡತಿಯ ಹೆಸರು ನೊವೊಮಿ. ಅವನ ಪುತ್ರರಲ್ಲಿ ಒಬ್ಬನ ಹೆಸರು ಮಹ್ಲೋನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಬಂದು ಮೋವಾಬ್ ದೇಶದಲ್ಲಿ ವಾಸವಾಗಿದ್ದರು.
RUT 1:3 ಆದರೆ ನೊವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಆಕೆಯೂ ಆಕೆಯ ಇಬ್ಬರು ಪುತ್ರರೂ ಉಳಿದರು.
RUT 1:4 ಇವರು ಒರ್ಫಾ, ರೂತ್ ಎಂಬ ಹೆಸರುಗಳುಳ್ಳ ಇಬ್ಬರು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷ ಅಲ್ಲಿ ವಾಸವಾಗಿದ್ದರು.
RUT 1:5 ಅಲ್ಲಿಯೇ ಮಹ್ಲೋನ ಮತ್ತು ಕಿಲ್ಯೋನ ಇಬ್ಬರೂ ಸತ್ತುಹೋದರು. ಆ ಸ್ತ್ರೀಯು ತನ್ನ ಇಬ್ಬರು ಪುತ್ರರನ್ನೂ ತನ್ನ ಗಂಡನನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.
RUT 1:6 ಯೆಹೋವ ದೇವರು ತಮ್ಮ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದರೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು.
RUT 1:7 ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ಹೊರಟಳು.
RUT 1:8 ನೊವೊಮಿಯು ತನ್ನ ಇಬ್ಬರು ಸೊಸೆಯರಿಗೆ, “ನೀವು ನಿಮ್ಮ ನಿಮ್ಮ ತಾಯಿಯ ಮನೆಗೆ ತಿರುಗಿ ಹೋಗಿರಿ. ನೀವು ಮರಣ ಹೊಂದಿದ ಪತಿಯರಿಗೂ ನನಗೂ ದಯೆ ತೋರಿಸಿದ ಹಾಗೆಯೇ ಯೆಹೋವ ದೇವರು ನಿಮಗೆ ದಯೆ ತೋರಲಿ.
RUT 1:9 ನೀವು ಮದುವೆಯಾಗಿ ನಿಮ್ಮ ಗಂಡನ ಮನೆಯಲ್ಲಿ ವಿಶ್ರಾಂತಿ ಹೊಂದುವಂತೆ, ಯೆಹೋವ ದೇವರು ಆಶೀರ್ವದಿಸಲಿ,” ಎಂದು ಹೇಳಿದಳು. ನಂತರ ನೊವೊಮಿಯು ಅವರಿಗೆ ಮುದ್ದಿಟ್ಟಳು.
RUT 1:10 ಆಗ ಅವರು ಗಟ್ಟಿಯಾಗಿ ಅತ್ತು ಆಕೆಗೆ, “ನಿಶ್ಚಯವಾಗಿ ನಿಮ್ಮ ಜನರ ಬಳಿಗೆ ನಿಮ್ಮ ಸಂಗಡ ತಿರುಗಿ ಬರುತ್ತೇವೆ,” ಎಂದರು.
RUT 1:11 ಅದಕ್ಕೆ ನೊವೊಮಿಯು, “ಬೇಡ ನನ್ನ ಮಕ್ಕಳೇ, ನೀವು ಹಿಂತಿರುಗಿ ಹೋಗಿರಿ. ನನ್ನ ಸಂಗಡ ಏಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ಮುಂದೆ ನನ್ನ ಗರ್ಭದಲ್ಲಿ ನನಗೆ ಪುತ್ರರಾಗುವರೋ?
RUT 1:12 ನನ್ನ ಮಕ್ಕಳೇ, ನೀವು ನಿಮ್ಮ ಮನೆಗೆ ಹಿಂದಿರುಗಿ ಹೋಗಿರಿ. ಏಕೆಂದರೆ ನಾನು ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ, ನಾನು ಸಂತಾನವಾಗುವ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹೆತ್ತರೂ,
RUT 1:13 ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ,” ಎಂದಳು.
RUT 1:14 ಆಗ ಅವರು ತಿರುಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಾ ತನ್ನ ಅತ್ತೆಯನ್ನು ಮುದ್ದಿಟ್ಟು ಹೊರಟು ಹೋದಳು; ಆದರೆ ರೂತಳು ಅತ್ತೆಯನ್ನು ಅಂಟಿಕೊಂಡಳು.
RUT 1:15 ಆಗ ನೊವೊಮಿ, “ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರುಗಿ ಹೋದಳು. ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು,” ಎಂದಳು.
RUT 1:16 ಅದಕ್ಕೆ ರೂತಳು, “ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು.
RUT 1:17 ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ,” ಎಂದಳು.
RUT 1:18 ರೂತಳು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ನೊವೊಮಿ ತಿಳಿದು ಸುಮ್ಮನಾದಳು.
RUT 1:19 ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ನಡೆದುಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣದವರಲ್ಲಿ ಕುತೂಹಲ ಮೂಡಿಸಿತು. ಅವರು, “ಇವಳು ನೊವೊಮಿಯೋ?” ಎಂದರು.
RUT 1:20 ಆಗ ಆಕೆಯು ಅವರಿಗೆ, “ನನ್ನನ್ನು ‘ನೊವೊಮಿ’ ಎಂದು ಕರೆಯಬೇಡಿರಿ. ಮಾರಾ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು.
RUT 1:21 ನಾನು ಪರಿಪೂರ್ಣಳಾಗಿ ಹೊರಟುಹೋದೆನು. ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?” ಎಂದಳು.
RUT 1:22 ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತಳೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶದಿಂದ ತಿರುಗಿಬಂದಳು. ಅವರು ಜವೆಗೋಧಿಯ ಸುಗ್ಗಿಯ ಕಾಲ ಪ್ರಾರಂಭವಾದಾಗ ಬೇತ್ಲೆಹೇಮಿಗೆ ತಲುಪಿದರು.
RUT 2:1 ನೊವೊಮಿಯ ಗಂಡ ಎಲೀಮೆಲೆಕನ ಗೋತ್ರದಲ್ಲಿ ಬೋವಜ ಎಂಬ ಹೆಸರುಳ್ಳ ಪ್ರಬಲ ಮತ್ತು ಧನವಂತನಾಗಿರುವ ಬಂಧುವಿದ್ದನು.
RUT 2:2 ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಕ್ಕೆ ಹೋಗಿ ಯಾರ ದಯೆಯು ನನಗೆ ಆಗುವುದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿ ಕೊಳ್ಳುವೆನು,” ಎಂದಳು. ನೊವೊಮಿ, “ಹೋಗಿ ಬಾ, ಮಗಳೇ,” ಎಂದಳು.
RUT 2:3 ರೂತಳು ಹೊಲದಲ್ಲಿ ಕೊಯ್ಯುವವರ ಹಿಂದೆ ಹೋಗಿ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಹೊಲದ ಭಾಗ ಎಲೀಮೆಲೆಕನ ಕುಲದವನಾದ ಬೋವಜನದಾಗಿತ್ತು.
RUT 2:4 ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ, “ಯೆಹೋವ ದೇವರು ನಿಮ್ಮ ಸಂಗಡ ಇರಲಿ,” ಎಂದನು. ಅದಕ್ಕೆ ಅವರು, “ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದರು.
RUT 2:5 ಬೋವಜನು ಕೊಯ್ಯುವವರ ಮೇಲೆ ಮೇಲ್ವಿಚಾರಕನಾಗಿದ್ದ ತನ್ನ ಸೇವಕನಿಗೆ, “ಈ ಯುವತಿ ಯಾರು?” ಎಂದನು.
RUT 2:6 ಅದಕ್ಕೆ ಆ ಮೇಲ್ವಿಚಾರಕನು, “ಇವಳು ಮೋವಾಬ್ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಯುವತಿ.
RUT 2:7 ಇವಳು, ‘ಕೊಯ್ಯುವವರ ಹಿಂದೆ ಹೋಗಿ ಸಿವುಡುಗಳ ನಡುವೆ ನಾನು ಹಕ್ಕಲಾರಿಸಿಕೊಳ್ಳುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೇಳಿಕೊಂಡಳು. ಸ್ವಲ್ಪ ಸಮಯ ನೆರಳಿನಲ್ಲಿ ವಿಶ್ರಮಿಸಿಕೊಂಡು, ಬೆಳಗಿನಿಂದ ಈವರೆಗೂ ಇಲ್ಲಿಯೇ ಇದ್ದಾಳೆ,” ಎಂದನು.
RUT 2:8 ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ನನ್ನ ಮಾತನ್ನು ಕೇಳು. ನೀನು ಹಕ್ಕಲಾದುಕೊಳ್ಳಲು ಬೇರೆಯವರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಜೊತೆಯಲ್ಲಿಯೇ ಇರು.
RUT 2:9 ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ. ಅವರ ಹಿಂದೆಯೇ ಹೋಗು, ಯಾರೂ ನಿನ್ನನ್ನು ಮುಟ್ಟದಹಾಗೆ ಅವರಿಗೆ ಆಜ್ಞಾಪಿಸಿದ್ದೇನೆ. ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ನನ್ನ ಸೇವಕರು ಸೇದಿಟ್ಟ ನೀರನ್ನು ಕುಡಿ,” ಎಂದನು.
RUT 2:10 ಆಗ ಅವಳು ಅವನಿಗೆ ಸಾಷ್ಟಾಂಗಬಿದ್ದು ವಂದಿಸಿ ಅವನಿಗೆ, “ಪರದೇಶಿಯಾದ ನನ್ನನ್ನು ಕಂಡು ನನ್ನ ಮೇಲೆ ನಿಮ್ಮ ದಯೆಯನ್ನು ತೋರಿಸಿದ್ದು ಏಕೆ?” ಎಂದಳು.
RUT 2:11 ಆಗ ಬೋವಜನು ಅವಳಿಗೆ ಉತ್ತರವಾಗಿ, “ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿದ್ದೆಲ್ಲವೂ ನೀನು ನಿನ್ನ ತಂದೆತಾಯಿಗಳನ್ನೂ ನೀನು ಹುಟ್ಟಿದ ದೇಶವನ್ನೂ ಬಿಟ್ಟು ನೀನು ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿದಿದೆ.
RUT 2:12 ನೀನು ಮಾಡಿದ್ದಕ್ಕೆ ಯೆಹೋವ ದೇವರು ನಿನಗೆ ಬದಲು ಕೊಡಲಿ. ಇಸ್ರಾಯೇಲ್ ದೇವರಾದ ಯೆಹೋವ ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಅವರಿಂದ ದೊಡ್ಡ ಪ್ರತಿಫಲ ಅನುಗ್ರಹಿಸಲಿ,” ಎಂದನು.
RUT 2:13 ಅದಕ್ಕೆ ಅವಳು, “ನನ್ನ ಒಡೆಯನೇ, ನನಗೆ ನಿಮ್ಮ ದೃಷ್ಟಿಯಲ್ಲಿ ಉಪಕಾರವಾಗಲಿ. ಏಕೆಂದರೆ ನಾನು ನಿಮ್ಮ ದಾಸಿಯರಲ್ಲಿ ಒಬ್ಬಳಂತೆ ನಿಲ್ಲುವುದಕ್ಕೂ ಯೋಗ್ಯಳಲ್ಲ ಆದರೂ ದಯೆಯಿಂದ ಮಾತನಾಡಿಸಿದಿರಿ” ಎಂದಳು.
RUT 2:14 ಊಟದ ವೇಳೆಯಲ್ಲಿ ಬೋವಜನು ಅವಳಿಗೆ, “ಇಲ್ಲಿ ಹತ್ತಿರ ಬಂದು ರೊಟ್ಟಿ ತಿಂದು ತುತ್ತನ್ನು ಹುಳಿರಸದಲ್ಲಿ ಅದ್ದಿ ತಿನ್ನು,” ಎಂದನು. ಅವಳು ಕೊಯ್ಯುವವರ ಬಳಿಯಲ್ಲಿ ಕುಳಿತಳು. ಆಗ ಅವನು ಅವಳಿಗೆ ಹುರಿದ ತೆನೆಯನ್ನು ಕೊಟ್ಟನು. ಅವಳು ತಿಂದು ತೃಪ್ತಿಪಟ್ಟು, ಇನ್ನೂ ಉಳಿಸಿಕೊಂಡಳು.
RUT 2:15 ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವಜನು ತನ್ನ ಸೇವಕರಿಗೆ ಆಜ್ಞಾಪಿಸಿ, “ಇವಳು ಕೊಯ್ದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ಬೈಯಬೇಡಿರಿ.
RUT 2:16 ಅವಳು ಹಕ್ಕಲಾದುಕೊಳ್ಳುವ ಹಾಗೆ ನೀವು ಅವಳಿಗೋಸ್ಕರ ಸಿವುಡುಗಳಲ್ಲಿ ಕೆಲವನ್ನು ಕೆಳಗೆ ಹಾಕಿರಿ. ಅವಳನ್ನು ಗದರಿಸಬೇಡಿರಿ,” ಎಂದನು.
RUT 2:17 ಹಾಗೆಯೇ ಅವಳು ಸಾಯಂಕಾಲದವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಮೂವತ್ತು ಕಿಲೋಗ್ರಾಂ ಜವೆಗೋಧಿಯಾಗಿತ್ತು.
RUT 2:18 ಅವಳು ಅದನ್ನು ತೆಗೆದುಕೊಂಡು ಪಟ್ಟಣಕ್ಕೆ ಬಂದಳು. ಅವಳು ಹಕ್ಕಲಾದುಕೊಂಡಿದ್ದನ್ನು ಅವಳ ಅತ್ತೆಯು ಕಂಡಳು. ರೂತಳು ತೃಪ್ತಿಯಾದ ಮೇಲೆ ಉಳಿಸಿ ತಂದದ್ದನ್ನು ಅವಳಿಗೆ ಕೊಟ್ಟಳು.
RUT 2:19 ಆಗ ರೂತಳ ಅತ್ತೆಯು ಆಕೆಗೆ, “ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡೆ? ಎಲ್ಲಿ ಕೆಲಸಮಾಡಿದೆ? ನಿನ್ನನ್ನು ಪರಾಮರಿಸಿದವನಿಗೆ ಆಶೀರ್ವಾದವಾಗಲಿ,” ಎಂದಳು. ಅದಕ್ಕವಳು ತಾನು ಯಾರ ಹತ್ತಿರ ಕೆಲಸಮಾಡಿದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ, “ನಾನು ಈ ಹೊತ್ತು ಕೆಲಸ ಮಾಡಿದವನ ಹೆಸರು ಬೋವಜ,” ಎಂದು ಹೇಳಿದಳು.
RUT 2:20 ನೊವೊಮಿ ತನ್ನ ಸೊಸೆಗೆ, “ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ,” ಎಂದಳು. ಅನಂತರ ನೊವೊಮಿ ಅವಳಿಗೆ, “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ,” ಎಂದಳು.
RUT 2:21 ಅದಕ್ಕೆ ಮೋವಾಬ್ಯಳಾದ ರೂತಳು, “ಅವನು, ‘ನನ್ನ ಪೈರೆಲ್ಲಾ ಕೊಯ್ದು ತೀರುವವರೆಗೂ, ನೀನು ನನ್ನ ಕೆಲಸದವರ ಸಂಗಡ ಕೂಡಿಕೊಂಡಿರು’ ಎಂದು ನನಗೆ ಹೇಳಿದನು,” ಎಂದಳು.
RUT 2:22 ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನನ್ನ ಮಗಳೇ, ಮತ್ತೊಂದು ಹೊಲದಲ್ಲಿ ಮನುಷ್ಯರು ನಿನ್ನನ್ನು ಕಂಡುಕೊಳ್ಳದ ಹಾಗೆ ನೀನು ಅವನ ದಾಸಿಗಳ ಸಂಗಡ ಹೊರಟುಹೋಗುವುದು ಒಳ್ಳೆಯದು,” ಎಂದಳು.
RUT 2:23 ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವವರೆಗೆ ಹಕ್ಕಲಾದುಕೊಳ್ಳುವುದಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿಕೊಂಡು ಹೋಗುತ್ತಿದ್ದಳು.
RUT 3:1 ಒಂದು ದಿನ ರೂತಳ ಅತ್ತೆ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮತ್ತೆ ಗೃಹಿಣಿಯಾಗಿ ಸುಖದಿಂದ ಬಾಳುವಂತೆ, ನಾನು ನಿನಗೆ ವಿಶ್ರಾಂತಿ ಸ್ಥಳ ಏರ್ಪಾಟು ಮಾಡುವುದು ನನ್ನ ಕರ್ತವ್ಯವಲ್ಲವೇ?
RUT 3:2 ಈಗ ನೀನು ಯಾರ ದಾಸಿಯರ ಸಂಗಡ ಇದ್ದೀಯೋ, ಆ ಬೋವಜನು ನಮ್ಮ ಬಂಧುವಾಗಿದ್ದಾನೆ. ಇಗೋ, ಅವನು ರಾತ್ರಿಯಲ್ಲಿ ಕಣದಲ್ಲಿ ಜವೆಗೋಧಿಯನ್ನು ತೂರುವನು.
RUT 3:3 ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ತಿಂದು ಕುಡಿದು ತೀರಿಸುವವರೆಗೂ ಅವನಿಗೆ ನೀನು ಅಲ್ಲಿರುವದು ಅವನಿಗೆ ತಿಳಿಯದಿರಲಿ.
RUT 3:4 ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳಿದುಕೊಂಡು ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು,” ಎಂದಳು.
RUT 3:5 ಅದಕ್ಕೆ ರೂತಳು, “ನೀವು ನನಗೆ ಹೇಳಿದ್ದನ್ನೆಲ್ಲಾ ಮಾಡುವೆನು,” ಎಂದಳು.
RUT 3:6 ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದಳು.
RUT 3:7 ಬೋವಜನು ತಿಂದು ಕುಡಿದು ಸಂತುಷ್ಟನಾಗಿದ್ದನು. ಅವನು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿಕೊಂಡನು. ಆಗ ರೂತಳು ಮೆಲ್ಲಗೆ ಬಂದು ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ತೆಗೆದು ಮಲಗಿಕೊಂಡಳು.
RUT 3:8 ಆದರೆ ಮಧ್ಯರಾತ್ರಿಯಲ್ಲಿ ಬೋವಜನು ಹೆದರಿ ತಿರುಗಿ ನೋಡಿದಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡನು.
RUT 3:9 ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.
RUT 3:10 ಅದಕ್ಕೆ ಅವನು, “ನನ್ನ ಮಗಳೇ, ಯೆಹೋವ ದೇವರಿಂದ ನಿನಗೆ ಆಶೀರ್ವಾದವಾಗಲಿ, ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದುದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದ ದಯೆಯು ಹೆಚ್ಚಾಗಿದೆ.
RUT 3:11 ಈಗ ನನ್ನ ಮಗಳೇ, ನೀನು ಭಯಪಡಬೇಡ. ನಿನಗೆ ಬೇಕಾಗಿರುವುದನ್ನು ನಿನಗೆ ಮಾಡುವೆನು. ನೀನು ಗುಣವತಿಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರೂ ಬಲ್ಲರು.
RUT 3:12 ಈಗ ನಾನು ನಿನ್ನ ವಿಮೋಚಿಸತಕ್ಕ ಸಮೀಪ ಬಂಧುವಾಗಿದ್ದೇನೆ ಎಂಬುದು ನಿಜವೇ. ಆದರೆ ನನಗಿಂತಲೂ ಸಮೀಪಸ್ಥನಾದ ಬಂಧುವು ಒಬ್ಬನಿದ್ದಾನೆ.
RUT 3:13 ಈ ರಾತ್ರಿಯಲ್ಲಿ ಇಲ್ಲಿರು. ನಾಳೆ ಬೆಳಿಗ್ಗೆ ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಿದರೆ ಒಳ್ಳೆಯದು. ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಲು ಮನಸ್ಸಿಲ್ಲದಿದ್ದರೆ ಯೆಹೋವ ದೇವರ ಜೀವದಾಣೆ, ನಾನೇ ಅದನ್ನು ಮಾಡುವೆನು. ಉದಯಕಾಲದವರೆಗೂ ಇಲ್ಲಿಯೇ ಮಲಗಿರು,” ಎಂದನು.
RUT 3:14 ಅವಳು ಹಾಗೆಯೇ ಉದಯಕಾಲದವರೆಗೂ ಅವನ ಪಾದಗಳ ಬಳಿಯಲ್ಲಿ ಮಲಗಿದ್ದು ಯಾರಿಗೂ ಗೊತ್ತಾಗಬಾರದೆಂದು ಹೊತ್ತಿಗೆ ಮುಂಚೆ ಎದ್ದಳು. ಅವನು, “ಒಬ್ಬ ಸ್ತ್ರೀ ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯದಿರಲಿ,” ಎಂದನು.
RUT 3:15 ಅವನು, “ನಿನ್ನ ಮೇಲ್ಹೊದಿಕೆಯನ್ನು ಹಿಡಿ,” ಎಂದನು. ಅವಳು ಅದನ್ನು ಹಿಡಿದಾಗ ಅವನು ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಬಂದಳು.
RUT 3:16 ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು, “ನನ್ನ ಮಗಳೇ, ಏನು ನಡೆಯಿತು?” ಎಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು.
RUT 3:17 “ ‘ನೀನು ನಿನ್ನ ಅತ್ತೆಯ ಬಳಿಗೆ ಬರೀ ಕೈಯಾಗಿ ಹೋಗಬಾರದು’ ಎಂದು ಅವನು ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ನನಗೆ ಕೊಟ್ಟನು,” ಎಂದಳು.
RUT 3:18 ಅದಕ್ಕೆ ನೊವೊಮಿ, “ನನ್ನ ಮಗಳೇ, ಈ ಕಾರ್ಯ ಏನಾಗುವುದೋ, ಎಂದು ನೀನು ತಿಳಿಯುವವರೆಗೂ ಸುಮ್ಮನೆ ಇರು. ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವವರೆಗೂ ವಿಶ್ರಾಂತಿಯಲ್ಲಿ ಇರಲಾರನು,” ಎಂದಳು.
RUT 4:1 ಬೋವಜನು ಪಟ್ಟಣದ ಬಾಗಿಲ ಬಳಿ ಹೋಗಿ ಕುಳಿತುಕೊಂಡನು. ಆಗ ಬೋವಜನು ಹೇಳಿದ್ದ ಆ ವಿಮೋಚಕ ಬಂಧುವು ಹಾದುಹೋಗುತ್ತಿದ್ದನು. ಬೋವಜನು ಅವನಿಗೆ, “ನನ್ನ ಸ್ನೇಹಿತನೇ, ಈ ಕಡೆಗೆ ಬಂದು ಇಲ್ಲಿ ಕುಳಿತುಕೋ,” ಎಂದನು. ಅವನು ಬಂದು ಕುಳಿತುಕೊಂಡನು.
RUT 4:2 ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿರಿ,” ಎಂದನು. ಅವರು ಕುಳಿತರು.
RUT 4:3 ಆಗ ಬೋವಜನು ಆ ವಿಮೋಚಕ ಬಂಧುವಿಗೆ ಹೇಳಿದ್ದೇನೆಂದರೆ, “ಮೋವಾಬ್ ಸೀಮೆಯಿಂದ ತಿರುಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿಬಿಡಬೇಕೆಂದಿರುತ್ತಾಳೆ.
RUT 4:4 ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ. ಬಿಡಿಸಿಕೊಳ್ಳದಿದ್ದರೆ ನಾನು ತಿಳಿದುಕೊಳ್ಳುವ ಹಾಗೆ ನನಗೆ ಹೇಳು. ಏಕೆಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ,” ಎಂದು ಹೇಳಿದನು. ಅದಕ್ಕೆ ಅವನು, “ನಾನು ಬಿಡಿಸಿಕೊಳ್ಳುವೆನು,” ಎಂದನು.
RUT 4:5 ಆಗ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ತೆಗೆದುಕೊಳ್ಳಬೇಕು,” ಎಂದನು.
RUT 4:6 ಅದಕ್ಕೆ ಆ ಬಂಧುವು, “ನಾನು ನನ್ನ ಬಾಧ್ಯತೆಯನ್ನು ನಷ್ಟಪಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು. ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ; ಏಕೆಂದರೆ ನಾನು ಬಿಡಿಸಿಕೊಳ್ಳಲಾರೆನು,” ಎಂದನು.
RUT 4:7 ಬಿಡಿಸಿಕೊಳ್ಳುವುದರಲ್ಲಿಯೂ ಬದಲು ಮಾಡುವುದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಒಂದು ವಾಡಿಕೆಯಿತ್ತು. ಅದು ಕೊಡುವವನು ಕೊಳ್ಳುವವನಿಗೆ ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುತ್ತಿದ್ದನು. ಇದು ಇಸ್ರಾಯೇಲಿನಲ್ಲಿ ವ್ಯವಹಾರವನ್ನು ಕಾನೂನು ಬದ್ಧಗೊಳಿಸುವ ವಿಧಾನವಾಗಿತ್ತು.
RUT 4:8 ಹಾಗೆಯೇ ಆ ಬಂಧುವು ಬೋವಜನಿಗೆ, “ನೀನೇ ನಿನಗೋಸ್ಕರ ಅದನ್ನು ಕೊಂಡುಕೋ,” ಎಂದು ತನ್ನ ಕೆರವನ್ನು ತೆಗೆದುಹಾಕಿದನು.
RUT 4:9 ಆಗ ಬೋವಜನು ಹಿರಿಯರಿಗೂ ಸಮಸ್ತ ಜನರಿಗೂ, “ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬುದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ.
RUT 4:10 ಇದಲ್ಲದೆ ಸತ್ತವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಸ್ವೀಕರಿಸಿದ್ದೇನೆ. ಇದರಿಂದ ಹೊಲದ ಖಾತೆಯು ಗತಿಸಿದ ಮಹ್ಲೋನನ ಹೆಸರಿನಲ್ಲಿಯೇ ಉಳಿಯುವುದು. ಅವನ ಹೆಸರೂ ಅವನ ವಂಶವೂ ಊರಲ್ಲಿಯೇ ನೆಲೆಯಾಗಿರುವುದು. ಇದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ,” ಎಂದನು.
RUT 4:11 ಆಗ ಊರುಬಾಗಿಲಲ್ಲಿ ಕೂಡಿದ್ದ ಸಮಸ್ತ ಜನರೂ ಹಿರಿಯರೂ, “ನಾವು ಸಾಕ್ಷಿಗಳೇ, ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಯೆಹೋವ ದೇವರು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡಲಿ. ಎಫ್ರಾತದಲ್ಲಿ ಧನವಂತನಾಗಿರು, ಬೇತ್ಲೆಹೇಮಿನಲ್ಲಿ ಘನವಂತನಾಗಿರು.
RUT 4:12 ಈ ಹುಡುಗಿಯಿಂದ ಯೆಹೋವ ದೇವರು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯು ತಾಮಾರಳು ಯೆಹೂದನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ,” ಎಂದರು.
RUT 4:13 ಬೋವಜನು ರೂತಳನ್ನು ಮದುವೆಯಾದನು. ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳೊಂದಿಗೆ ಬಾಳಿದಾಗ, ರೂತಳು ಯೆಹೋವ ದೇವರ ಅನುಗ್ರಹದಿಂದ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
RUT 4:14 ಆಗ ಸ್ತ್ರೀಯರು ನೊವೊಮಿಗೆ, “ಇಸ್ರಾಯೇಲಿನಲ್ಲಿ ವಿಮೋಚಿಸತಕ್ಕ ಬಾಧ್ಯಸ್ಥನನ್ನು ನಿನಗೆ ಅನುಗ್ರಹಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಈ ಮಗನು ಪ್ರಖ್ಯಾತನಾಗಲಿ.
RUT 4:15 ಅವನು ನಿನಗೆ ಪ್ರಾಣವನ್ನು ಪುನರುಜ್ಜೀವಿಸುವವನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವನಾಗಿಯೂ ಇರುವನು. ಏಕೆಂದರೆ ನಿನ್ನನ್ನು ಪ್ರೀತಿ ಮಾಡುವ ಏಳುಮಂದಿ ಮಕ್ಕಳಿಗಿಂತ ನಿನಗೆ ಉತ್ತಮಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು,” ಎಂದರು.
RUT 4:16 ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು.
RUT 4:17 ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, “ಒಬ್ಬ ಮಗನು ಹುಟ್ಟಿದ್ದಾನೆ,” ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು.
RUT 4:18 ಪೆರೆಚನ ಸಂತತಿಯ ವಿವರ: ಪೆರೆಚನು ಹೆಚ್ರೋನನ ತಂದೆಯಾಗಿದ್ದನು;
RUT 4:19 ಹೆಚ್ರೋನನು ರಾಮನ ತಂದೆಯಾಗಿದ್ದನು; ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು;
RUT 4:20 ಅಮ್ಮೀನಾದಾಬನು ನಹಶೋನನ ತಂದೆಯಾಗಿದ್ದನು; ನಹಶೋನನು ಸಲ್ಮೋನನ ತಂದೆಯಾಗಿದ್ದನು;
RUT 4:21 ಸಲ್ಮೋನನು ಬೋವಜನ ತಂದೆಯಾಗಿದ್ದನು; ಬೋವಜನು ಓಬೇದನ ತಂದೆಯಾಗಿದ್ದನು;
RUT 4:22 ಓಬೇದನು ಇಷಯನ ತಂದೆಯಾಗಿದ್ದನು; ಇಷಯನು ದಾವೀದನ ತಂದೆಯಾಗಿದ್ದನು.
1SA 1:1 ಎಫ್ರಾಯೀಮ್ ಬೆಟ್ಟದ ಪ್ರದೇಶ ರಾಮತಾಯೀಮ್ ಚೋಫಿಮಿನಲ್ಲಿ ಎಲ್ಕಾನ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ಯನಾದ ಚೂಫನ ಮೊಮ್ಮಗನೂ ತೋಹುವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.
1SA 1:2 ಅವನಿಗೆ ಇಬ್ಬರು ಹೆಂಡತಿಯರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
1SA 1:3 ಅವನು ಶೀಲೋವಿನಲ್ಲಿ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸಲೂ, ಅವರಿಗೆ ಬಲಿಯನ್ನು ಅರ್ಪಿಸಲೂ ಪ್ರತಿವರ್ಷ ಪಟ್ಟಣದಿಂದ ಹೋಗುತ್ತಿದ್ದನು. ಯೆಹೋವ ದೇವರ ಯಾಜಕ ಏಲಿಯ ಮಕ್ಕಳಿಬ್ಬರಾದ ಹೊಫ್ನಿಯೂ, ಫೀನೆಹಾಸನೂ ಅಲ್ಲಿ ಇದ್ದರು.
1SA 1:4 ಎಲ್ಕಾನನು ಬಲಿ ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿ ಪೆನಿನ್ನಳಿಗೂ, ಅವಳ ಸಮಸ್ತ ಪುತ್ರಪುತ್ರಿಯರಿಗೂ ಪಾಲನ್ನು ಕೊಡುತ್ತಿದ್ದನು.
1SA 1:5 ಅವನು ಹನ್ನಳನ್ನು ಪ್ರೀತಿಸಿದ್ದರಿಂದ ಹನ್ನಳಿಗೆ ಎರಡಷ್ಟು ಪಾಲನ್ನು ಕೊಡುತ್ತಿದ್ದನು. ಆದರೆ ಯೆಹೋವ ದೇವರು ಹನ್ನಳ ಗರ್ಭವನ್ನು ಮುಚ್ಚಿಬಿಟ್ಟಿದ್ದರು.
1SA 1:6 ಯೆಹೋವ ದೇವರು ಅವಳ ಗರ್ಭವನ್ನು ಮುಚ್ಚಿದ್ದರಿಂದ, ಅವಳ ಪ್ರತಿಸ್ಪರ್ಧಿಯಾದ ಪೆನಿನ್ನಳು ಹನ್ನಳಿಗೆ ಮನಗುಂದುವ ಹಾಗೆ ಬಹಳ ಕೆಣಕಿ ಬಾಧಿಸಿದಳು.
1SA 1:7 ಹೀಗೆಯೇ ಅವನು ಪ್ರತಿ ಸಂವತ್ಸರದಲ್ಲಿಯೂ ಮಾಡುತ್ತಿದ್ದನು, ಇವಳು ಯೆಹೋವ ದೇವರ ಮನೆಗೆ ಹೋಗುತ್ತಿರುವಾಗ ಆ ರೀತಿಯಾಗಿ ಹನ್ನಳನ್ನು ಬಾಧಿಸುತ್ತಿದ್ದಳು. ಅದರಿಂದ ಹನ್ನಳು ಊಟಮಾಡದೆ ಅಳುತ್ತಾ ಇದ್ದಳು.
1SA 1:8 ಆಗ ಅವಳ ಗಂಡ ಎಲ್ಕಾನನು ಅವಳಿಗೆ, “ಹನ್ನಳೇ, ಏಕೆ ಅಳುತ್ತೀ? ಏಕೆ ಊಟಮಾಡದೆ ಇದ್ದೀ? ನಿನ್ನ ಮನ ಏಕೆ ಕುಂದಿದೆ? ಹತ್ತು ಮಂದಿ ಪುತ್ರರಿಗಿಂತ ನಾನು ನಿನಗೆ ಹೆಚ್ಚಲ್ಲವೆ?” ಎಂದನು.
1SA 1:9 ಅವರು ಶೀಲೋವಿನಲ್ಲಿ ಊಟಮಾಡಿದ ತರುವಾಯ ಹನ್ನಳು ಎದ್ದು ನಿಂತಳು. ಯಾಜಕನಾದ ಏಲಿ ಯೆಹೋವ ದೇವರ ಮಂದಿರದ ಸ್ತಂಭದ ಬಳಿ ಆಸನದ ಮೇಲೆ ಕುಳಿತಿರುವಾಗ,
1SA 1:10 ಅವಳು ಬಹಳ ಮನಗುಂದಿದವಳಾಗಿ ಯೆಹೋವ ದೇವರನ್ನು ಪ್ರಾರ್ಥಿಸಿ, ಅತ್ತು ಒಂದು
1SA 1:11 ಹರಕೆಮಾಡಿ, “ಸೇನಾಧೀಶ್ವರ ಯೆಹೋವ ದೇವರೇ, ನೀವು ನಿಶ್ಚಯವಾಗಿ ನಿಮ್ಮ ದಾಸಿಯ ದೀನತೆಯನ್ನು ಕಂಡು, ನಿಮ್ಮ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿಮ್ಮ ದಾಸಿಗೆ ಗಂಡು ಮಗುವನ್ನು ಕೊಟ್ಟರೆ, ಅವನು ಬದುಕುವ ಸಕಲ ದಿವಸಗಳಲ್ಲಿ ಅವನನ್ನು ಯೆಹೋವ ದೇವರಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರಿಕನ ಕತ್ತಿ ಬೀಳುವುದಿಲ್ಲ,” ಎಂದಳು.
1SA 1:12 ಅವಳು ಯೆಹೋವ ದೇವರ ಮುಂದೆ ಹೆಚ್ಚಾಗಿ ಪ್ರಾರ್ಥನೆ ಮಾಡುತ್ತಿರುವಾಗ, ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು.
1SA 1:13 ಹನ್ನಳು ತನ್ನ ಹೃದಯದಲ್ಲೇ ಮಾತನಾಡುತ್ತಾ, ತನ್ನ ತುಟಿಗಳನ್ನು ಮಾತ್ರ ಆಡಿಸುತ್ತಾ ಇದ್ದುದರಿಂದ ಅವಳ ಶಬ್ದವು ಕೇಳಿಸಲಿಲ್ಲ. ಆದ್ದರಿಂದ ಏಲಿಯು ಅವಳು ಅಮಲೇರಿದ್ದಾಳೆಂದು ನೆನಸಿದನು.
1SA 1:14 ಏಲಿಯು ಅವಳಿಗೆ, “ಎಷ್ಟರವರೆಗೂ ಅಮಲೇರಿದವಳಾಗಿರುವೆ? ನಿನ್ನ ಬಳಿಯಿಂದ ನಿನ್ನ ದ್ರಾಕ್ಷಾರಸವನ್ನು ತೊರೆದುಬಿಡು,” ಎಂದನು.
1SA 1:15 ಅದಕ್ಕೆ ಹನ್ನಳು ಅವನಿಗೆ ಉತ್ತರವಾಗಿ, “ನನ್ನ ಒಡೆಯನೇ, ಹಾಗಲ್ಲ. ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ. ನಾನು ದ್ರಾಕ್ಷಾರಸವನ್ನಾದರೂ ಮದ್ಯಪಾನವನ್ನಾದರೂ ಕುಡಿದವಳಲ್ಲ. ನಾನು ಯೆಹೋವ ದೇವರ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ತೋಡಿಕೊಳ್ಳುತ್ತಾ ಇದ್ದೇನೆ.
1SA 1:16 ನಿನ್ನ ದಾಸಿಯನ್ನು ದುಷ್ಟಳೆಂದು ನೆನಸಬೇಡ. ನನ್ನ ಹೆಚ್ಚಾದ ಚಿಂತೆಯಿಂದಲೂ, ದುಃಖದಿಂದಲೂ ಈವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು,” ಎಂದಳು.
1SA 1:17 ಆಗ ಏಲಿಯು ಅವಳಿಗೆ, “ಸಮಾಧಾನದಿಂದ ಹೋಗು. ಇಸ್ರಾಯೇಲಿನ ದೇವರು, ಅವರಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯಂತೆ ನಿನಗೆ ಕೊಡಲಿ,” ಎಂದನು.
1SA 1:18 ಅದಕ್ಕವಳು, “ನಿನ್ನ ಸೇವಕಿಗೆ ನಿನ್ನ ದೃಷ್ಟಿಯಲ್ಲಿ ದಯೆ ತೋರಲಿ,” ಎಂದಳು. ಆ ಸ್ತ್ರೀಯು ಹೊರಟುಹೋಗಿ ಊಟ ಮಾಡಿದಳು. ಆಮೇಲೆ ಅವಳ ಮುಖದಲ್ಲಿ ದುಃಖವು ಕಾಣಲಿಲ್ಲ.
1SA 1:19 ಅವರು ಉದಯದಲ್ಲಿ ಎದ್ದು, ಯೆಹೋವ ದೇವರನ್ನು ಆರಾಧಿಸಿ, ಹಿಂದಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಸಂಗಮಿಸಲು, ಆಗ ಯೆಹೋವ ದೇವರು ಅವಳನ್ನು ಜ್ಞಾಪಕಮಾಡಿಕೊಂಡರು.
1SA 1:20 ಹನ್ನಳು ಗರ್ಭವತಿಯಾಗಿ, ಕಾಲವು ಪೂರ್ತಿಯಾದ ತರುವಾಯ ಮಗನನ್ನು ಹೆತ್ತು, “ನಾನು ಇವನಿಗಾಗಿ ಯೆಹೋವ ದೇವರನ್ನು ಬೇಡಿ ಪಡೆದುಕೊಂಡೆನು,” ಎಂದು ಹೇಳಿ ಅವನಿಗೆ, ಸಮುಯೇಲ ಎಂದು ಹೆಸರಿಟ್ಟಳು.
1SA 1:21 ಎಲ್ಕಾನನು ಯೆಹೋವ ದೇವರಿಗೆ ಪ್ರತಿ ವರುಷದ ಬಲಿಯನ್ನೂ, ತನ್ನ ಹರಕೆಯನ್ನೂ ಸಲ್ಲಿಸುವುದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ,
1SA 1:22 ಹನ್ನಳು ಹೋಗದೆ ತನ್ನ ಗಂಡನಿಗೆ, “ಮಗುವು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ನಾನು ಬರುವುದಿಲ್ಲ. ಅವನು ಯೆಹೋವ ದೇವರ ಸನ್ನಿಧಿಯ ದರ್ಶನಕ್ಕೂ ಅಲ್ಲಿ ಎಂದೆಂದಿಗೂ ಇರುವುದಕ್ಕೂ ನಾನು ಅವನನ್ನು ಆಮೇಲೆ ತೆಗೆದುಕೊಂಡು ಬರುವೆನು,” ಎಂದಳು.
1SA 1:23 ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ, “ನೀನು ನಿನಗೆ ಒಳ್ಳೆಯದಾಗಿ ತೋರುವ ಹಾಗೆ ಮಾಡು. ಅವನು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ಕಾದುಕೊಂಡಿರು. ಯೆಹೋವ ದೇವರು ತಮ್ಮ ವಾಕ್ಯವನ್ನು ಪೂರೈಸಲಿ,” ಎಂದನು. ಹಾಗೆಯೇ ಅವಳು ನಿಂತು ತನ್ನ ಮಗುವು ಎದೆಹಾಲು ಬಿಡುವವರೆಗೂ ಅವನಿಗೆ ಎದೆಹಾಲು ಕೊಡುತ್ತಿದ್ದಳು.
1SA 1:24 ಅವನು ಎದೆಹಾಲು ಕುಡಿಯುವುದನ್ನು ಬಿಟ್ಟ ತರುವಾಯ, ಅವನನ್ನು ತನ್ನ ಸಂಗಡ ತೆಗೆದುಕೊಂಡು, ಮೂರು ವರ್ಷದ ಹೋರಿಯೊಂದನ್ನೂ, ಸುಮಾರು ಹದಿನಾರು ಕಿಲೋಗ್ರಾಂ ಹಿಟ್ಟನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಯೆಹೋವ ದೇವರ ಮನೆಗೆ ಹೋದಳು.
1SA 1:25 ಆಗ ಆ ಮಗುವು ಚಿಕ್ಕದಾಗಿತ್ತು. ಅವರು ಹೋರಿಯನ್ನು ಸಮರ್ಪಣೆ ಮಾಡಿದ ತರುವಾಯ, ಮಗುವನ್ನು ಏಲಿಯ ಬಳಿಗೆ ತಂದರು.
1SA 1:26 “ನನ್ನ ಒಡೆಯನೇ, ನಿನ್ನ ಪ್ರಾಣದ ಸಾಕ್ಷಿ, ಇಲ್ಲಿ ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, ಇಲ್ಲಿ ನಿನ್ನ ಬಳಿಯಲ್ಲಿ ನಿಂತಿದ್ದ ಸ್ತ್ರೀಯು ನಾನೇ. ಈ ಮಗುವಿಗೋಸ್ಕರ ಪ್ರಾರ್ಥನೆ ಮಾಡಿದೆನು.
1SA 1:27 ನಾನು ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದನ್ನು ಅವರು ನನಗೆ ಕೊಟ್ಟರು.
1SA 1:28 ಆದ್ದರಿಂದ ನಾನು ಅವನನ್ನು ಯೆಹೋವ ದೇವರಿಗೆ ಒಪ್ಪಿಸಿದ್ದೇನೆ. ಅವನು ಜೀವಿಸಿರುವವರೆಗೆ ಯೆಹೋವ ದೇವರಿಗೆ ಸಮರ್ಪಿತನಾಗಿರುವನು,” ಎಂದಳು. ಆಮೇಲೆ ಅವರೆಲ್ಲರೂ ಅಲ್ಲಿ ಯೆಹೋವ ದೇವರನ್ನು ಆರಾಧಿಸಿದರು.
1SA 2:1 ಹನ್ನಳು ಪ್ರಾರ್ಥಿಸಿ ಹೇಳಿದ್ದೇನೆಂದರೆ, “ನನ್ನ ಹೃದಯವು ಯೆಹೋವ ದೇವರಲ್ಲಿ ಸಂತೋಷಿಸಿತು. ನನ್ನ ಕೊಂಬು ಯೆಹೋವ ದೇವರಲ್ಲಿ ಉನ್ನತವಾಯಿತು. ನನ್ನ ಶತ್ರುಗಳ ಮುಂದೆ ನನ್ನ ಬಾಯಿ ಹೆಚ್ಚಳಪಟ್ಟಿತು. ಏಕೆಂದರೆ ನಾನು ನಿಮ್ಮ ರಕ್ಷಣೆಯಲ್ಲಿ ಹರ್ಷಿಸುತ್ತೇನೆ.
1SA 2:2 “ಯೆಹೋವ ದೇವರ ಹಾಗೆ ಪರಿಶುದ್ಧರಾದವರಿಲ್ಲ. ನಿಶ್ಚಯವಾಗಿ ನಿಮ್ಮ ಹೊರತು ಮತ್ತೊಬ್ಬರಿಲ್ಲ. ನಮ್ಮ ದೇವರ ಹಾಗೆಯೇ ಆಶ್ರಯದುರ್ಗ ಇಲ್ಲ.
1SA 2:3 “ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡದಿರಲಿ. ಏಕೆಂದರೆ ಯೆಹೋವ ದೇವರು ತಿಳುವಳಿಕೆಯುಳ್ಳ ದೇವರು. ಅವರು ಮನುಷ್ಯರ ಕಾರ್ಯಗಳನ್ನು ತೂಗಿನೋಡುವರು.
1SA 2:4 “ಪರಾಕ್ರಮಶಾಲಿಗಳ ಬಿಲ್ಲುಗಳು ಮುರಿದು ಬಿದ್ದಿವೆ, ಎಡವಿದವರು ಬಲದಿಂದ ನಡುಕಟ್ಟಿ ನಿಂತಿದ್ದಾರೆ.
1SA 2:5 ತೃಪ್ತಿಪಟ್ಟವರು ಆಹಾರಕ್ಕಾಗಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಸಿದವರು ಇನ್ನು ಮುಂದೆ ಹಸಿಯರು. ಬಂಜೆಯಾದವಳು ಏಳುಮಂದಿ ಮಕ್ಕಳನ್ನು ಹೆತ್ತಳು. ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನಳಾದಳು.
1SA 2:6 “ಯೆಹೋವ ದೇವರು ಮರಣ ತರುವವರೂ, ಬದುಕಿಸುವವರೂ ಆಗಿದ್ದಾರೆ. ಪಾತಾಳಕ್ಕೆ ಇಳಿಯುವಂತೆ ಮಾಡುತ್ತಾರೆ, ಮೇಲಕ್ಕೆ ತರುತ್ತಾರೆ.
1SA 2:7 ಯೆಹೋವ ದೇವರು ಬಡತನವನ್ನು, ಐಶ್ವರ್ಯವನ್ನು ಕೊಡುವವರೂ, ತಗ್ಗಿಸುವವರೂ, ಉನ್ನತ ಮಾಡುವವರೂ ಆಗಿದ್ದಾರೆ.
1SA 2:8 ದೇವರು ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುತ್ತಾರೆ. ಭಿಕ್ಷುಕನನ್ನು ತಿಪ್ಪೆ ಗುಂಡಿಯಿಂದ ತೆಗೆದು ಉನ್ನತಕ್ಕೇರಿಸುವವರೂ ಆಗಿದ್ದಾರೆ. ಅವರನ್ನು ಪ್ರಧಾನರ ಮಧ್ಯದಲ್ಲಿ ಕೂಡ್ರಿಸುತ್ತಾರೆ. ಘನತೆಯ ಸಿಂಹಾಸನವನ್ನು ಬಾಧ್ಯವಾಗಿ ಕೊಡುತ್ತಾರೆ. “ಭೂಮಿಯ ಆಧಾರ ಸ್ತಂಭಗಳು ಯೆಹೋವ ದೇವರದ್ದೇ. ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾರೆ.
1SA 2:9 ಅವರು ತಮ್ಮ ಪರಿಶುದ್ಧರ ಪಾದಗಳನ್ನು ಕಾಯುವರು. ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು. “ತನ್ನ ಶಕ್ತಿಯಿಂದ ಒಬ್ಬನೂ ಜಯಿಸನು.
1SA 2:10 ಯೆಹೋವ ದೇವರ ಸಂಗಡ ವಿವಾದಿಸುವವರು ಚದರಿಹೋಗುವರು. ಅವರು ಆಕಾಶದಲ್ಲಿಂದ ಅವರ ಮೇಲೆ ಗುಡುಗುವರು, ಯೆಹೋವ ದೇವರು ಲೋಕಾಂತ್ಯದವರೆಗೂ ನ್ಯಾಯತೀರಿಸುವರು. “ತಮ್ಮ ಅರಸನಿಗೆ ಬಲ ಕೊಡುವರು. ತಮ್ಮ ಅಭಿಷಿಕ್ತನ ಕೊಂಬನ್ನು ಉನ್ನತ ಮಾಡುವರು.”
1SA 2:11 ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು. ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಯೆಹೋವ ದೇವರ ಸೇವೆ ಮಾಡುತ್ತಿದ್ದನು.
1SA 2:12 ಆದರೆ ಏಲಿಯ ಪುತ್ರರು ಯೆಹೋವ ದೇವರನ್ನು ಗೌರವಿಸದೆ ದುಷ್ಟರಾಗಿದ್ದರು.
1SA 2:13 ಆ ಯಾಜಕರು ಜನರನ್ನು ನಡೆಸಿದ ವಿಧ ಏನೆಂದರೆ: ಯಾವನಾದರೂ ಬಲಿ ಅರ್ಪಿಸಿದರೆ, ಆ ಅರ್ಪಿಸಿದ ಬಲಿಯ ಮಾಂಸವನ್ನು ಬೇಯಿಸುವಾಗ, ಯಾಜಕನ ಸೇವಕನು ಮೂರು ಶೂಲವುಳ್ಳ ಆಯುಧವನ್ನು ತೆಗೆದುಕೊಂಡು ಬಂದು,
1SA 2:14 ಅದನ್ನು ತಪ್ಪಲೆಯಲ್ಲಾಗಲಿ, ಪಾತ್ರೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವುದನ್ನೆಲ್ಲಾ ಯಾಜಕನು ತನಗೆ ತೆಗೆದುಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲರಿಗೆ ಮಾಡಿದರು.
1SA 2:15 ಇದಲ್ಲದೆ ಕೊಬ್ಬನ್ನು ಬಲಿ ಅರ್ಪಿಸುವುದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು, ಬಲಿಯನ್ನು ಅರ್ಪಿಸುವವನ ಸಂಗಡ, “ಯಾಜಕನಿಗೆ ಸುಡುವುದಕ್ಕೆ ಮಾಂಸವನ್ನು ಕೊಡು. ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತೆಗೆದುಕೊಳ್ಳುವುದಿಲ್ಲ. ಅದು ಹಸಿಯಾಗಿರಬೇಕು,” ಎನ್ನುತ್ತಿದ್ದನು.
1SA 2:16 “ಮೊದಲು ಕೊಬ್ಬನ್ನು ಸುಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ,” ಎಂದು ಯಾರಾದರೂ ಹೇಳಿದರೆ; ಸೇವಕನು, “ಇಲ್ಲ ಈಗಲೇ ಕೊಡು. ನೀನು ಕೊಡದಿದ್ದರೆ, ನಾನು ಒತ್ತಾಯದಿಂದ ತೆಗೆದುಕೊಳ್ಳುವೆನು,” ಎನ್ನುತ್ತಿದ್ದನು.
1SA 2:17 ಈ ಯುವಕರ ಪಾಪವು ಯೆಹೋವ ದೇವರ ದೃಷ್ಟಿಯಲ್ಲಿ ಅಧಿಕವಾಗಿತ್ತು. ಏಕೆಂದರೆ ಅವರು ಯೆಹೋವ ದೇವರ ನೈವೇದ್ಯವನ್ನು ತುಚ್ಛವಾಗಿ ಕಂಡರು.
1SA 2:18 ಬಾಲಕನಾದ ಸಮುಯೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಯೆಹೋವ ದೇವರ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದನು.
1SA 2:19 ಅವನ ತಾಯಿ ಪ್ರತಿ ವರುಷದಲ್ಲೂ ವರುಷದ ಬಲಿಯನ್ನು ಅರ್ಪಿಸಲು ತನ್ನ ಗಂಡನ ಸಂಗಡ ಬರುವಾಗ, ಅವನಿಗೆ ಒಂದು ಚಿಕ್ಕ ನಿಲುವಂಗಿಯನ್ನು ಮಾಡಿಕೊಂಡು ಬರುವಳು.
1SA 2:20 ಆಗ ಏಲಿಯು ಎಲ್ಕಾನನನ್ನೂ, ಅವನ ಹೆಂಡತಿಯನ್ನೂ, “ಯೆಹೋವ ದೇವರಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ಯೆಹೋವ ದೇವರು ನಿನಗೆ ಬೇರೆ ಮಕ್ಕಳನ್ನು ದಯಪಾಲಿಸಲಿ,” ಎಂದು ಆಶೀರ್ವದಿಸುತ್ತಿದ್ದನು. ಅನಂತರ ಅವರು ತಿರುಗಿ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.
1SA 2:21 ಹಾಗೆಯೇ ಯೆಹೋವ ದೇವರು ಹನ್ನಳಿಗೆ ಕೃಪೆ ತೋರಿಸಿದ್ದರಿಂದ, ಅವಳು ಗರ್ಭಧರಿಸಿ ಮೂವರು ಪುತ್ರರನ್ನೂ, ಇಬ್ಬರು ಪುತ್ರಿಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುಯೇಲನು ಯೆಹೋವ ದೇವರ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು.
1SA 2:22 ಏಲಿಯು ಬಹಳ ವೃದ್ಧನಾಗಿದ್ದನು. ಅವನು ತನ್ನ ಪುತ್ರರು ಇಸ್ರಾಯೇಲ್ ಜನರಿಗೆ ಮಾಡುವುದೆಲ್ಲವನ್ನೂ, ಅವರು ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬುದನ್ನೂ ಕೇಳಿ ಅವರಿಗೆ,
1SA 2:23 “ನೀವು ಇಂಥಾ ಕಾರ್ಯಗಳನ್ನು ಮಾಡುವುದೇನು? ನಾನು ಎಲ್ಲ ಜನರಿಂದ ಈ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ.
1SA 2:24 ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ. ಏಕೆಂದರೆ ಯೆಹೋವ ದೇವರ ಜನರಲ್ಲಿ ನೀವು ಮಾಡಿರುವ ಕಾರ್ಯಗಳ ವರ್ತಮಾನವು ಹರಡಿದ್ದು ಒಳ್ಳೆಯದಲ್ಲ.
1SA 2:25 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ, ದೇವರು ಅಪರಾಧಿಗಾಗಿ ಮಧ್ಯಸ್ಥಿಕೆಯನ್ನು ವಹಿಸುವರು. ಆದರೆ ಒಬ್ಬನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದರೆ, ಅವನಿಗೋಸ್ಕರ ವಿಜ್ಞಾಪನೆ ಮಾಡತಕ್ಕವರು ಯಾರು?” ಎಂದನು. ಆದರೂ ಅವರು ತಮ್ಮ ತಂದೆಯ ಮಾತನ್ನು ಕೇಳದೆ ಹೋದರು. ಯೆಹೋವ ದೇವರು ಅವರನ್ನು ಮರಣದಂಡನೆಗೆ ಒಪ್ಪಿಸಬೇಕೆಂದಿದ್ದರು.
1SA 2:26 ಆದರೆ ಬಾಲಕನಾದ ಸಮುಯೇಲನು ನಿಲುವಿನಿಂದಲೂ ಯೆಹೋವ ದೇವರ ಕೃಪೆಯಲ್ಲಿಯೂ ಜನರೊಂದಿಗೂ ಬೆಳೆಯುತ್ತಾ ಬಂದನು.
1SA 2:27 ದೇವರ ಮನುಷ್ಯನು ಏಲಿಯ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ನಿನಗೆ ಹೇಳುವದೇನೆಂದರೆ: ‘ನಿನ್ನ ತಂದೆಯ ಮನೆಯವರು ಈಜಿಪ್ಟಿನಿಂದ ಫರೋಹನ ಮನೆಯೊಳಗೆ ಇರುವಾಗ, ನಾನು ಅವರಿಗೆ ಪ್ರತ್ಯಕ್ಷವಾದದ್ದು ಸ್ಪಷ್ಟವಾಗಲಿಲ್ಲವೋ?
1SA 2:28 ನನ್ನ ಬಲಿಪೀಠದ ಮೇಲೆ ಬಲಿಯನ್ನು ಅರ್ಪಿಸುವುದಕ್ಕೂ, ಧೂಪವನ್ನು ಸುಡುವುದಕ್ಕೂ, ನನ್ನ ಮುಂದೆ ಏಫೋದನ್ನು ಧರಿಸಿಕೊಂಡಿರುವುದಕ್ಕೂ, ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರಬೇಕೆಂದು ನಾನು ಅವನನ್ನು ಆಯ್ದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲರು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?
1SA 2:29 ನನ್ನ ಜನರಾದ ಇಸ್ರಾಯೇಲರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದಕ್ಕೆ ನನ್ನ ವಾಸಸ್ಥಳದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ, ಅರ್ಪಣೆಯನ್ನೂ ನೀವು ಒದ್ದು, ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವುದೇನು?’
1SA 2:30 “ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಅದು ದೂರವಾಗಿರಲಿ. ಏಕೆಂದರೆ ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು. ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.
1SA 2:31 ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟದಹಾಗೆ, ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿನಗಳು ಬರುವುವು.
1SA 2:32 ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವುಗಳಿಗೆ ಬದಲಾಗಿ, ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವೆ. ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ವೃದ್ಧನೂ ಇರುವುದಿಲ್ಲ.
1SA 2:33 ನನ್ನ ಬಲಿಪೀಠದ ಸೇವೆಯಿಂದ ನಾನು ತೆಗೆದು ಬಿಡದ ಮನುಷ್ಯನು, ನಿನ್ನ ಕಣ್ಣುಗಳನ್ನು ಕುಂದಿಸಿ, ನಿನ್ನ ಹೃದಯವನ್ನು ವೇದನೆ ಪಡಿಸುವುದಕ್ಕೆ ಇರುವನು. ನಿನ್ನ ಮನೆಯ ಸಂತತಿಯವರೆಲ್ಲಾ ಯೌವನ ಪ್ರಾಯದಲ್ಲಿಯೇ ಖಡ್ಗದಿಂದ ಸಾಯುವರು.
1SA 2:34 “ ‘ಇದಲ್ಲದೆ ನಿನಗೆ ಗುರುತಾಗಿ ಹೊಫ್ನಿಯು, ಫೀನೆಹಾಸನು ಎಂಬ ಇಬ್ಬರು ಮಕ್ಕಳು ಒಂದೇ ದಿವಸದಲ್ಲಿ ಸಾಯುವರು.
1SA 2:35 ಆದರೆ ನನ್ನ ಹೃದಯಕ್ಕೂ, ನನ್ನ ಮನಸ್ಸಿಗೂ ಸಮರ್ಪಕವಾದದ್ದನ್ನೇ ಮಾಡುವ ನಂಬಿಗಸ್ತನಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ, ಅವನಿಗೆ ಸ್ಥಿರವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ಸೇವೆಮಾಡುವನು.
1SA 2:36 ಆಗ ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡಬಿದ್ದು, ಒಂದು ಬೆಳ್ಳಿಯ ಹಣವನ್ನೂ, ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ, “ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆಯಲ್ಲಿ ಸೇರಿಸಿಕೋ, ಎಂದು ಹೇಳುವರು,” ಎಂದರು.’ ”
1SA 3:1 ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು.
1SA 3:2 ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ನೋಡುವುದಕ್ಕಾಗದಂತೆ ಅವನ ಕಣ್ಣುಗಳು ಮಬ್ಬಾಗುತ್ತಿದ್ದವು.
1SA 3:3 ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು.
1SA 3:4 ಆಗ ಯೆಹೋವ ದೇವರು ಸಮುಯೇಲನನ್ನು ಕರೆದರು. ಅದಕ್ಕವನು, “ಇಗೋ, ನಾನು ಇಲ್ಲಿದ್ದೇನೆ,” ಎಂದು ಹೇಳಿ,
1SA 3:5 ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನಾನು ನಿನ್ನನ್ನು ಕರೆಯಲಿಲ್ಲ, ತಿರುಗಿ ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು.
1SA 3:6 ಯೆಹೋವ ದೇವರು, “ಸಮುಯೇಲನೇ,” ಎಂದು ಅವನನ್ನು ತಿರುಗಿ ಕರೆದರು. ಆಗ ಸಮುಯೇಲನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ; ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನನ್ನ ಮಗನೇ, ನಾನು ಕರೆಯಲಿಲ್ಲ; ನೀನು ಹೋಗಿ ಮಲಗಿಕೋ,” ಎಂದನು.
1SA 3:7 ಸಮುಯೇಲನು ಆವರೆಗೂ ಯೆಹೋವ ದೇವರನ್ನು ತಿಳಿದುಕೊಂಡಿರಲಿಲ್ಲ. ಯೆಹೋವ ದೇವರ ವಾಕ್ಯವು ಅವನಿಗೆ ಪ್ರಕಟವಾಗಿರಲೂ ಇಲ್ಲ.
1SA 3:8 ಯೆಹೋವ ದೇವರು ಮತ್ತೆ ಮೂರನೆಯ ಸಾರಿ, “ಸಮುಯೇಲನೇ,” ಎಂದು ಕರೆದರು. ಅವನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಆಗ ಏಲಿಯು, ಯೆಹೋವ ದೇವರು ಹುಡುಗನನ್ನು ಕರೆದರೆಂದು ಗ್ರಹಿಸಿಕೊಂಡನು.
1SA 3:9 ಏಲಿಯು ಸಮುಯೇಲನಿಗೆ, “ನೀನು ಹೋಗಿ ಮಲಗು; ಅವರು ನಿನ್ನನ್ನು ಕರೆದರೆ, ಆಗ ನೀನು, ‘ಯೆಹೋವ ದೇವರೇ, ಮಾತನಾಡಿ, ನಿಮ್ಮ ದಾಸನು ಕೇಳುತ್ತಾನೆ,’ ಎಂದು ಹೇಳು,” ಎಂದನು. ಹಾಗೆಯೇ ಸಮುಯೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.
1SA 3:10 ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು.
1SA 3:11 ಆಗ ಯೆಹೋವ ದೇವರು ಸಮುಯೇಲನಿಗೆ, “ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯವನ್ನು ಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳೂ ಕಂಪಿಸುವುವು.
1SA 3:12 ಏಕೆಂದರೆ ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ. ನಾನು ಆರಂಭಿಸಿದ ಹಾಗೆ ಅಂತ್ಯವನ್ನು ಮಾಡುವೆನು.
1SA 3:13 ನಾನು ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯತೀರಿಸುವೆನು, ಎಂದು ಹೇಳಿದ್ದೆನು. ಏಕೆಂದರೆ ತನ್ನ ಪುತ್ರರು ದೇವರ ನಿಂದನೆ ಮಾಡಿದಾಗ, ಅವರನ್ನು ಹತೋಟಿಗೆ ತರಲಿಲ್ಲ.
1SA 3:14 ಆದ್ದರಿಂದ ‘ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿಯಿಂದಲಾದರೂ, ಅರ್ಪಣೆಯಿಂದಲಾದರೂ ಪ್ರಾಯಶ್ಚಿತ್ತವಾಗುವದಿಲ್ಲ, ಎಂದು ನಾನು ಏಲಿಯ ಮನೆಯನ್ನು ಕುರಿತು ಪ್ರಮಾಣಮಾಡಿದೆನು,’ ” ಎಂದರು.
1SA 3:15 ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು.
1SA 3:16 ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.
1SA 3:17 ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು.
1SA 3:18 ಹಾಗೆಯೇ ಸಮುಯೇಲನು ಅವನಿಗೆ ಒಂದನ್ನೂ ಮರೆಮಾಡದೆ, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು, “ಅವರು ಯೆಹೋವ ದೇವರು. ಅವರಿಗೆ ಸರಿತೋರುವುದನ್ನು ಮಾಡಲಿ,” ಎಂದನು.
1SA 3:19 ಸಮುಯೇಲನು ಬೆಳೆಯುತ್ತಾ ಬಂದನು. ಯೆಹೋವ ದೇವರು ಅವನ ಸಂಗಡ ಇದ್ದು, ಅವರ ವಾಕ್ಯಗಳಲ್ಲಿ ಒಂದಾದರೂ ಬಿದ್ದು ಹೋಗಗೊಡಿಸಲಿಲ್ಲ.
1SA 3:20 ಆಗ ಸಮುಯೇಲನು ಯೆಹೋವ ದೇವರ ಪ್ರವಾದಿಯಾಗಿ ದೃಢಪಟ್ಟನೆಂದು ದಾನ್ ಊರು ಮೊದಲ್ಗೊಂಡು ಬೇರ್ಷೆಬದವರೆಗೂ ಇದ್ದ ಇಸ್ರಾಯೇಲರೆಲ್ಲರು ತಿಳಿದಿದ್ದರು.
1SA 3:21 ಯೆಹೋವ ದೇವರು ತಿರುಗಿ ಶೀಲೋವಿನಲ್ಲಿ ಕಾಣಿಸಿಕೊಂಡರು. ಏಕೆಂದರೆ ಶೀಲೋವಿನಲ್ಲಿ ಯೆಹೋವ ದೇವರು ವಾಕ್ಯದ ಮೂಲಕ ಸಮುಯೇಲನಿಗೆ ಪ್ರಕಟಿಸಿಕೊಂಡರು.
1SA 4:1 ಸಮುಯೇಲನ ವಾಕ್ಯವು ಇಸ್ರಾಯೇಲದಲ್ಲಿ ಹರಡಿತು. ಇಸ್ರಾಯೇಲರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು, ಎಬೆನೆಜೆರಿನ ಸಮೀಪದಲ್ಲಿ ದಂಡಿಳಿದರು. ಫಿಲಿಷ್ಟಿಯರು ಅಫೇಕಿನಲ್ಲಿ ದಂಡಿಳಿದರು.
1SA 4:2 ಫಿಲಿಷ್ಟಿಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧಮಾಡಿದಾಗ, ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಸೋತರು. ಫಿಲಿಷ್ಟಿಯರು ಯುದ್ಧ ರಂಗದಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರ ಜನರನ್ನು ಹತಮಾಡಿದರು.
1SA 4:3 ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, “ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ,” ಎಂದರು.
1SA 4:4 ಕೆರೂಬಿಗಳ ಮಧ್ಯದಲ್ಲಿರುವ ಸೇನಾಧೀಶ್ವರ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬರಲು ಶೀಲೋವಿಗೆ ಜನರನ್ನು ಕಳುಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು.
1SA 4:5 ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ, ಇಸ್ರಾಯೇಲರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.
1SA 4:6 ಅವರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿದಾಗ, “ಹಿಬ್ರಿಯರ ಪಾಳೆಯದ ಈ ಮಹಾ ಆರ್ಭಟವೇನು?” ಎಂದು ವಿಚಾರಿಸಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳಿದುಕೊಂಡರು.
1SA 4:7 “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು, ಫಿಲಿಷ್ಟಿಯರು ಭಯಪಟ್ಟು, ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ.
1SA 4:8 ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವರ‍್ಯಾರು? ಈಜಿಪ್ಟಿನವರನ್ನು ಮರುಭೂಮಿಯಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
1SA 4:9 ಫಿಲಿಷ್ಟಿಯರೇ, ನೀವು ಬಲಗೊಂಡು ಶೂರರಾಗಿರಿ. ಹಿಬ್ರಿಯರು ನಿಮಗೆ ಗುಲಾಮರಾಗಿ ಮಾಡಿದ ಪ್ರಕಾರ ನೀವು ಅವರಿಗೆ ಗುಲಾಮರಾಗದ ಹಾಗೆ ಶೂರರಾಗಿ ಇದ್ದು, ಯುದ್ಧಮಾಡಿರೆಂದು ಹೇಳಿಕೊಂಡರು.
1SA 4:10 ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲರು ಸೋತು, ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾ ಸಂಹಾರವಾಯಿತು. ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು.
1SA 4:11 ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಮರಣಹೊಂದಿದರು.
1SA 4:12 ಅದೇ ದಿವಸದಲ್ಲಿ ಬೆನ್ಯಾಮೀನನಾದ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಯುದ್ಧರಂಗದಿಂದ ಶೀಲೋವಿಗೆ ಓಡಿಬಂದನು.
1SA 4:13 ಅವನು ಬರುವಾಗ, ಏಲಿಯು ದೇವರ ಮಂಜೂಷಕ್ಕೋಸ್ಕರ ತನ್ನ ಹೃದಯವು ನಡುಗುತ್ತಾ ಇರುವುದರಿಂದ, ಆಸನದ ಮೇಲೆ ಮಾರ್ಗದ ಬಳಿಯಲ್ಲಿ ನಿರೀಕ್ಷಿಸುತ್ತಾ ಕುಳಿತಿದ್ದನು. ಊರಲ್ಲಿ ವರ್ತಮಾನ ತಿಳಿಸಲು ಆ ಮನುಷ್ಯನು ಪಟ್ಟಣದಲ್ಲಿ ಪ್ರವೇಶಿಸಿದಾಗ ಪಟ್ಟಣವೆಲ್ಲಾ ಕೂಗಿತು.
1SA 4:14 ಕೂಗುವ ಶಬ್ದವನ್ನು ಏಲಿಯು ಕೇಳಿದಾಗ, “ಆ ಗುಂಪಿನ ಶಬ್ದ ಏನು?” ಎಂದನು. ಆಗ ಆ ಮನುಷ್ಯನು ತ್ವರೆಯಾಗಿ ಬಂದು ಏಲಿಗೆ ತಿಳಿಸಿದನು.
1SA 4:15 ಏಲಿಯು ತೊಂಬತ್ತೆಂಟು ವರುಷ ಪ್ರಾಯದವನಾಗಿದ್ದನು. ಅವನು ಕಾಣದ ಹಾಗೆ ಅವನ ಕಣ್ಣುಗಳು ಮಬ್ಬಾಗಿದ್ದವು.
1SA 4:16 ಆ ಮನುಷ್ಯನು ಏಲಿಗೆ, “ಯುದ್ಧರಂಗದಿಂದ ಬಂದವನು ನಾನೇ; ನಾನು ಈ ಹೊತ್ತು ಯುದ್ಧರಂಗದಿಂದ ಓಡಿ ಬಂದೆನು,” ಎಂದನು. ಆಗ ಅವನು, “ನನ್ನ ಮಗನೇ, ಅಲ್ಲಿ ನಡೆದ ವರ್ತಮಾನವೇನು?” ಎಂದನು.
1SA 4:17 ಅದಕ್ಕೆ ವರ್ತಮಾನ ತಂದವನು, “ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಓಡಿಹೋದರು. ಜನರಲ್ಲಿ ದೊಡ್ಡ ಸಂಹಾರವಾಯಿತು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ಮರಣಹೊಂದಿದರು. ದೇವರ ಮಂಜೂಷವು ಶತ್ರುವಶವಾಯಿತು,” ಎಂದನು.
1SA 4:18 ವೃದ್ಧನೂ ಸ್ಥೂಲಕಾಯನೂ ಆದ ಏಲಿಯು ದೇವರ ಮಂಜೂಷದ ಮಾತನ್ನು ಕೇಳಿದಾಗ, ಆಸನದ ಮೇಲಿಂದ ಬಾಗಿಲಿನ ಕಡೆಗೆ ಹಿಂದಕ್ಕೆ ಬಿದ್ದು, ಕುತ್ತಿಗೆ ಮುರಿದು ಮರಣಹೊಂದಿದನು. ಅವನು ನಾಲ್ವತ್ತು ವರುಷ ಇಸ್ರಾಯೇಲರಿಗೆ ನ್ಯಾಯತೀರಿಸಿದನು.
1SA 4:19 ಇದಲ್ಲದೆ ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ಗರ್ಭಿಣಿಯಾಗಿ ಹೆರುವ ಕಾಲದಲ್ಲಿದ್ದಳು. ಅವಳು, ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರೆಂಬುದನ್ನೂ ಕೇಳಿದಾಗ, ಅವಳಿಗೆ ಪ್ರಸವವೇದನೆ ಉಂಟಾಗಿ, ಅವಳು ಗಂಡು ಮಗುವನ್ನು ಹೆತ್ತಳು.
1SA 4:20 ಅವಳು ಸಾಯುವ ವೇಳೆಯಲ್ಲಿ, ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು, “ಭಯಪಡಬೇಡ. ಗಂಡು ಮಗುವನ್ನು ಹೆತ್ತಿದ್ದೀ,” ಎಂದು ಅವಳಿಗೆ ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯವನ್ನೂ ಕೊಡಲಿಲ್ಲ, ಪ್ರತ್ಯುತ್ತರವನ್ನೂ ಕೊಡಲಿಲ್ಲ.
1SA 4:21 ಆದರೆ ಅವಳು ಅದಕ್ಕೆ ಉತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರು ವಶವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರಿಂದಲೂ ದೇವರ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು ಎಂದು ಹೇಳಿ, ಆ ಕೂಸಿಗೆ, “ಈಕಾಬೋದ್,” ಎಂದು ಹೆಸರಿಟ್ಟಳು.
1SA 4:22 ಏಕೆಂದರೆ ಅವಳು, “ದೇವರ ಮಂಜೂಷವು ಶತ್ರು ವಶವಾಗಿ ಹೋದದ್ದರಿಂದ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು,” ಎಂದು ಹೇಳಿದಳು.
1SA 5:1 ಫಿಲಿಷ್ಟಿಯರು ದೇವರ ಮಂಜೂಷವನ್ನು ತೆಗೆದುಕೊಂಡು ಎಬೆನೆಜೆರಿನಿಂದ ಅಷ್ಡೋದಿಗೆ ತಂದರು.
1SA 5:2 ಫಿಲಿಷ್ಟಿಯರು ದೇವರ ಮಂಜೂಷವನ್ನು ದಾಗೋನನ ಗುಡಿಗೆ ತೆಗೆದುಕೊಂಡುಹೋಗಿ, ದಾಗೋನನ ಪಕ್ಕದಲ್ಲಿಟ್ಟರು.
1SA 5:3 ಅಷ್ಡೋದ್ಯರು ಮಾರನೆಯ ದಿವಸ ಎದ್ದಾಗ, ದಾಗೋನ್ ವಿಗ್ರಹ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು.
1SA 5:4 ಆಗ ಅವರು ದಾಗೋನನನ್ನು ತೆಗೆದು, ಅದನ್ನು ಅದರ ಸ್ಥಳದಲ್ಲಿ ತಿರುಗಿ ಇಟ್ಟರು. ಅವರು ಮಾರನೆಯ ದಿವಸ ಬೆಳಿಗ್ಗೆ ಎದ್ದಾಗ, ದಾಗೋನ್ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ದಾಗೋನನ ತಲೆಯೂ ಅದರ ಎರಡು ಕೈಗಳೂ ಕತ್ತರಿಸಲಾಗಿ ಹೊಸ್ತಿಲ ಮೇಲೆ ಬಿದ್ದಿದ್ದವು.
1SA 5:5 ಮುಂಡ ಮಾತ್ರ ಅದಕ್ಕೆ ಉಳಿದಿತ್ತು. ಆದ್ದರಿಂದ ಈ ದಿನದವರೆಗೂ ದಾಗೋನನ ಯಾಜಕರೂ, ದಾಗೋನನ ಗುಡಿಯನ್ನು ಪ್ರವೇಶಿಸುವವರೆಲ್ಲರೂ ಅಷ್ಡೋದಿನಲ್ಲಿರುವ ದಾಗೋನನ ಹೊಸ್ತಿಲನ್ನು ತುಳಿಯುವುದಿಲ್ಲ.
1SA 5:6 ಯೆಹೋವ ದೇವರ ಕೈ ಅಷ್ಡೋದಿನವರ ಮೇಲೆ ಮಹಾ ಭಾರವಾಗಿತ್ತು. ಅವರನ್ನು ನಾಶಮಾಡಿ, ಅಷ್ಡೋದನ್ನೂ, ಅದರ ಮೇರೆಗಳನ್ನೂ ಗಡ್ಡೆರೋಗದಿಂದಲೂ ಬಾಧಿಸಿದರು.
1SA 5:7 ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ಕಂಡಾಗ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು. ಏಕೆಂದರೆ ಅವರ ಕೈ ನಮ್ಮ ಮೇಲೆಯೂ, ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ,” ಎಂದರು.
1SA 5:8 ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೆಯಕಳುಹಿಸಿ ಅವರಿಗೆ, “ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದರು. ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವು ಗತ್ ಊರಿಗೆ ಕಳುಹಿಸಬೇಕು,” ಎಂದರು. ಅವರು ಇಸ್ರಾಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.
1SA 5:9 ಆದರೆ ಅವರು ಅದನ್ನು ತಂದ ತರುವಾಯ, ಯೆಹೋವ ದೇವರ ಕೈ ಆ ಪಟ್ಟಣದ ಮೇಲೆ ಬಂದು ಮಹಾ ನಾಶಮಾಡಿತು. ಇದಲ್ಲದೆ ಯೆಹೋವ ದೇವರು ಚಿಕ್ಕವರಿಂದ ಹಿರಿಯರವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದರು. ಅವರಿಗೆ ಗಡ್ಡೆರೋಗ ಬಂದಿತು.
1SA 5:10 ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ದೇವರ ಮಂಜೂಷವು ಎಕ್ರೋನಿಗೆ ಬಂದಾಗ, ಎಕ್ರೋನ್ಯರು, “ನಮ್ಮನ್ನೂ, ನಮ್ಮ ಜನರನ್ನೂ ಕೊಂದುಹಾಕಬೇಕೆಂದು ಇಸ್ರಾಯೇಲ್ ದೇವರ ಮಂಜೂಷವನ್ನು ನಮ್ಮ ಬಳಿಗೆ ತಂದರು,” ಎಂದು ಕೂಗಿ ಹೇಳಿದರು.
1SA 5:11 ಆಗ ಆ ಇಡೀ ಪಟ್ಟಣಕ್ಕೆ ಮರಣಾಂತಿಕ ವಿನಾಶ ಉಂಟಾಗಿ, ದೇವರ ಕೈ ಅಲ್ಲಿ ಮಹಾಬಾಧಕವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟುಗೂಡಿಸಿ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ, ನಮ್ಮ ಜನರನ್ನೂ ಕೊಂದು ಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರುಗಿ ಹೋಗುವಂತೆ ಕಳುಹಿಸಿಬಿಡಿರಿ,” ಎಂದರು.
1SA 5:12 ಉಳಿದವರು ಸತ್ತು ಹೋಗದೆ ಗಡ್ಡೆರೋಗದಿಂದ ಬಾಧಿತರಾದರು, ಆ ಪಟ್ಟಣದ ಗೋಳಾಟವು ಆಕಾಶಕ್ಕೆ ಮುಟ್ಟಿತು.
1SA 6:1 ಯೆಹೋವ ದೇವರ ಮಂಜೂಷವು ಫಿಲಿಷ್ಟಿಯರ ಸೀಮೆಯಲ್ಲಿ ಏಳು ತಿಂಗಳು ಇದ್ದ ತರುವಾಯ
1SA 6:2 ಫಿಲಿಷ್ಟಿಯರು ಯಾಜಕರನ್ನೂ ಕಣಿಹೇಳುವವರನ್ನೂ ಕರೆದು, “ಯೆಹೋವ ದೇವರ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವುದು ನಮಗೆ ತಿಳಿಸಿರಿ,” ಎಂದರು.
1SA 6:3 ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು,” ಎಂದರು.
1SA 6:4 ಆಗ ಅವರು, “ದೋಷಪರಿಹಾರ ಕಾಣಿಕೆಗಾಗಿ ನಾವು ಅದರ ಸಂಗಡ ಕಳುಹಿಸತಕ್ಕದ್ದೇನು?” ಎಂದರು. ಅದಕ್ಕವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವುದರಿಂದ ಫಿಲಿಷ್ಟಿಯರ ಅಧಿಪತಿಗಳ ಸಂಖ್ಯೆಗೆ ಸರಿಯಾಗಿ ಒಬ್ಬೊಬ್ಬರಿಗೆ ಬಂಗಾರದ ಐದು ಗಡ್ಡೆಗಳನ್ನು ಮತ್ತು ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ.
1SA 6:5 ಏಕೆಂದರೆ ನಿಮ್ಮೆಲ್ಲರ ನಾಶಕ್ಕೆ ಕಾರಣವಾದ ಈ ಗಡ್ಡೆಗಳ ಹಾಗು ಇಲಿಗಳ ಸ್ವರೂಪಗಳನ್ನು ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಅವರು ನಿಮ್ಮ ಮೇಲೆಯೂ, ನಿಮ್ಮ ದೇವರುಗಳ ಮೇಲೆಯೂ, ನಿಮ್ಮ ಭೂಮಿಯ ಮೇಲೆಯೂ ಇರುವ ತಮ್ಮ ಕೈಯನ್ನು ತೆಗೆದು ಹಗುರಮಾಡುವರು.
1SA 6:6 ಈಜಿಪ್ಟಿನವರೂ, ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ, ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವುದೇನು? ದೇವರು ಅವರ ಮಧ್ಯದಲ್ಲಿ ಆಶ್ಚರ್ಯಕರವಾದ ಕ್ರಿಯೆಗಳನ್ನು ನಡಿಸಿದಾಗ, ಅವರು ಇಸ್ರಾಯೇಲರನ್ನು ಅವರು ಹೋಗುವಹಾಗೆ ಕಳುಹಿಸಲಿಲ್ಲವೋ?
1SA 6:7 “ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ, ನೊಗವನ್ನು ಹಾಕದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು, ಅವುಗಳನ್ನು ಬಂಡಿಗೆ ಕಟ್ಟಿ, ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು,
1SA 6:8 ಯೆಹೋವ ದೇವರ ಮಂಜೂಷವನ್ನು ಬಂಡಿಯ ಮೇಲೆ ಇಟ್ಟು, ನೀವು ಕಳುಹಿಸಿಕೊಡುವ ನಿಮ್ಮ ದೋಷಪರಿಹಾರ ಕಾಣಿಕೆಯ ಬಂಗಾರದ ವಸ್ತುಗಳನ್ನು ಅದರ ಪಕ್ಕದಲ್ಲಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ, ಅದು ಹೋಗುವಹಾಗೆ ಕಳುಹಿಸಿರಿ.
1SA 6:9 ಆಗ ನೋಡಿರಿ, ಅದು ತನ್ನ ಮೇರೆಯಾದ ಬೇತ್ ಷೆಮೆಷ್ ಎಂಬ ಮಾರ್ಗವನ್ನು ಹಿಡಿದು ಹೋದರೆ, ಯೆಹೋವ ದೇವರು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾರೆ, ಇಲ್ಲದೆ ಹೋದರೆ ಅವರ ಹಸ್ತವು ನಮ್ಮನ್ನು ಮುಟ್ಟಲಿಲ್ಲ, ಅದು ತಾನಾಗಿಯೇ ನಮಗೆ ಆಯಿತೆಂದು ತಿಳಿದುಕೊಳ್ಳಿರಿ,” ಎಂದರು.
1SA 6:10 ಅವರು ಆ ಪ್ರಕಾರವೇ ಎರಡು ಹಾಲು ಕರೆಯುವ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು
1SA 6:11 ಯೆಹೋವ ದೇವರ ಮಂಜೂಷವನ್ನೂ, ಬಂಗಾರದ ಇಲಿಗಳನ್ನೂ, ತಮ್ಮ ಗಡ್ಡೆರೋಗದ ರೂಪಗಳನ್ನೂ ಇಟ್ಟಿರುವ ಚಿಕ್ಕ ಪೆಟ್ಟಿಗೆಯನ್ನೂ ಆ ಬಂಡಿಯ ಮೇಲಿಟ್ಟರು.
1SA 6:12 ಆಗ ಹಸುಗಳು ಕೂಗುತ್ತಾ ಬೇತ್ ಷೆಮೆಷ್ ಕಡೆಗೆ ಹೋಗುವ ಮಾರ್ಗವನ್ನು ಹಿಡಿದು, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ ಹೆದ್ದಾರಿಯಲ್ಲಿ ಹೋದವು. ಫಿಲಿಷ್ಟಿಯರ ಅಧಿಪತಿಗಳು ಬೇತ್ ಷೆಮೆಷ್ ಊರಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.
1SA 6:13 ಬೇತ್ ಷೆಮೆಷ್ ಊರಿನವರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು, ಅದನ್ನು ಕಂಡದ್ದಕ್ಕೆ ಸಂತೋಷಪಟ್ಟರು.
1SA 6:14 ಆ ಬಂಡಿಯು ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು. ಅಲ್ಲಿ ಒಂದು ದೊಡ್ಡ ಬಂಡೆ ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಹಸುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಿದರು.
1SA 6:15 ಲೇವಿಯರು ಯೆಹೋವ ದೇವರ ಮಂಜೂಷವನ್ನೂ, ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳಿದ್ದ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ, ಆ ದೊಡ್ಡ ಬಂಡೆಯ ಮೇಲಿಟ್ಟುಕೊಂಡರು. ಬೇತ್ ಷೆಮೆಷ್ ಊರಿನವರು ಆ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸಮರ್ಪಣೆಗಳನ್ನೂ ಅರ್ಪಿಸಿದರು.
1SA 6:16 ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ಕಂಡು, ಅದೇ ದಿನದಲ್ಲಿ ತಿರುಗಿ ಎಕ್ರೋನಿಗೆ ಹೋದರು.
1SA 6:17 ಫಿಲಿಷ್ಟಿಯರು ದೋಷಪರಿಹಾರ ಕಾಣಿಕೆಗಾಗಿ, ಗಡ್ಡೆರೋಗದ ಬಂಗಾರ ಸ್ವರೂಪಗಳನ್ನು ಅಷ್ಡೋದಿನಿಂದ ಒಂದೂ, ಗಾಜನಿಂದ ಒಂದೂ, ಅಷ್ಕೆಲೋನದಿಂದ ಒಂದೂ, ಗತ್‌ನಿಂದ ಒಂದೂ, ಎಕ್ರೋನಿನಿಂದ ಒಂದೂ ಯೆಹೋವ ದೇವರಿಗೆ ಅರ್ಪಿಸಿದರು.
1SA 6:18 ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ ಲೆಕ್ಕಕ್ಕೆ ಸರಿಯಾಗಿದ್ದವು. ಯೆಹೋವ ದೇವರ ಮಂಜೂಷವನ್ನಿಟ್ಟ ದೊಡ್ಡ ಬಂಡೆಯು ಇಂದಿನವರೆಗೂ ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಸಾಕ್ಷಿಯಾಗಿದೆ.
1SA 6:19 ಬೇತ್ ಷೆಮೆಷ್ ಊರಿನ ಜನರು ಯೆಹೋವ ದೇವರ ಮಂಜೂಷದೊಳಗೆ ಇಣಿಕಿ ನೋಡಿದ್ದರಿಂದ, ಯೆಹೋವ ದೇವರು ಅವರೊಳಗೆ ಎಪ್ಪತ್ತು ಮಂದಿಯನ್ನು ಕಠಿಣವಾಗಿ ದಂಡಿಸಿದರು.
1SA 6:20 ಯೆಹೋವ ದೇವರು ತಮ್ಮಲ್ಲಿ ದೊಡ್ಡ ನಾಶನಮಾಡಿದ್ದರಿಂದ, ಬೇತ್ ಷೆಮೆಷ್ ಊರಿನವರು ದುಃಖಪಟ್ಟು, “ಈ ಪರಿಶುದ್ಧ ದೇವರಾದ ಯೆಹೋವ ದೇವರ ಮುಂದೆ ನಿಲ್ಲತಕ್ಕವನ್ಯಾರು? ಇಲ್ಲಿಂದ ಮಂಜೂಷವು ಎಲ್ಲಿಗೆ ಹೋಗುವುದು?” ಎಂದು ಹೇಳಿದರು.
1SA 6:21 ಅವರು ಕಿರ್ಯತ್ ಯಾರೀಮಿನ ನಿವಾಸಿಗಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವ ದೇವರ ಮಂಜೂಷವನ್ನು ತಿರುಗಿ ಕಳುಹಿಸಿದ್ದಾರೆ, ನೀವು ಬಂದು ಅದನ್ನು ನಿಮ್ಮ ಬಳಿಗೆ ತೆಗೆದುಕೊಂಡು ಹೋಗಿರಿ,” ಎಂದು ಹೇಳಿದರು.
1SA 7:1 ಕಿರ್ಯತ್ ಯಾರೀಮಿನವರು ಬಂದು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡು, ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟರು. ಅವನ ಪುತ್ರನಾದ ಎಲಿಯಾಜರನನ್ನು ಯೆಹೋವ ದೇವರ ಮಂಜೂಷವನ್ನು ಕಾಯಲು ಪ್ರತಿಷ್ಠಿಸಿದರು.
1SA 7:2 ಮಂಜೂಷವು ಕಿರ್ಯತ್ ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರ್ಷಗಳಾದವು. ಆಗ, ಇಸ್ರಾಯೇಲ್ ಮನೆತನದವರೆಲ್ಲರು ಯೆಹೋವ ದೇವರಿಗೋಸ್ಕರ ಹಂಬಲಿಸಿ ಗೋಳಾಡುತ್ತಿದ್ದರು.
1SA 7:3 ಆಗ ಸಮುಯೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ, “ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರ ಕಡೆಗೆ ತಿರುಗಿ, ನಿಮ್ಮಲ್ಲಿರುವ ಅನ್ಯದೇವರುಗಳನ್ನೂ, ಅಷ್ಟೋರೆತನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ, ನಿಮ್ಮ ಹೃದಯವನ್ನು ಯೆಹೋವ ದೇವರಿಗೆ ಸಿದ್ಧಮಾಡಿ, ಅವರೊಬ್ಬರನ್ನೇ ಸೇವಿಸಿದರೆ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಗಳೊಳಗಿಂದ ತಪ್ಪಿಸುವರು,” ಎಂದನು.
1SA 7:4 ಆಗ ಇಸ್ರಾಯೇಲರು ಬಾಳನನ್ನೂ, ಅಷ್ಟೋರೆತನ್ನೂ ತೆಗೆದುಹಾಕಿ, ಯೆಹೋವ ದೇವರೊಬ್ಬರನ್ನೇ ಸೇವಿಸಿದರು.
1SA 7:5 ಸಮುಯೇಲನು, “ನಾನು ನಿಮಗೋಸ್ಕರವಾಗಿ ಯೆಹೋವ ದೇವರನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲರನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ,” ಎಂದನು.
1SA 7:6 ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟಾಗಿ ಕೂಡಿಬಂದು, ಯೆಹೋವ ದೇವರ ಮುಂದೆ ನೀರು ತಂದು ಹೊಯ್ದು, ಆ ದಿವಸದಲ್ಲಿ ಉಪವಾಸ ಮಾಡಿ, “ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ” ಎಂದು ಅಲ್ಲಿ ಹೇಳಿದರು. ಸಮುಯೇಲನು ಇಸ್ರಾಯೇಲರಿಗೆ ಮಿಚ್ಪೆಯಲ್ಲಿ ನ್ಯಾಯ ತೀರಿಸುತ್ತಿದ್ದನು.
1SA 7:7 ಇಸ್ರಾಯೇಲರು ಮಿಚ್ಪೆಯಲ್ಲಿ ಕೂಡಿ ಬಂದರೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರ ಅಧಿಪತಿಗಳು ಇಸ್ರಾಯೇಲರಿಗೆ ವಿರೋಧವಾಗಿ ಏರಿ ಬಂದರು. ಆಗ ಇಸ್ರಾಯೇಲರು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು,
1SA 7:8 ಅವರು ಸಮುಯೇಲನಿಗೆ, “ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವವರೆಗೆ, ನೀನು ನಮಗೋಸ್ಕರವಾಗಿ ಪ್ರಾರ್ಥನೆಮಾಡಿ ಮೊರೆಯಿಡುವುದನ್ನು ನಿಲ್ಲಿಸಬೇಡ,” ಎಂದರು.
1SA 7:9 ಆಗ ಸಮುಯೇಲನು ಹಾಲು ಕುಡಿಯುವ ಕುರಿಮರಿಯನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಪೂರ್ಣ ದಹನಬಲಿಯನ್ನು ಅರ್ಪಿಸಿದನು, ಇಸ್ರಾಯೇಲರಿಗೋಸ್ಕರ ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಉತ್ತರವನ್ನು ದಯಪಾಲಿಸಿದರು.
1SA 7:10 ಸಮುಯೇಲನು ದಹನಬಲಿಯನ್ನು ಅರ್ಪಿಸುವಾಗ, ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸಮೀಪಕ್ಕೆ ಬಂದರು. ಆಗ ಯೆಹೋವ ದೇವರು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಕಳವಳಗೊಳಿಸಿ, ಇಸ್ರಾಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು.
1SA 7:11 ಆಗ ಇಸ್ರಾಯೇಲರು ಮಿಚ್ಪೆಯಿಂದ ಹೊರಟು, ಫಿಲಿಷ್ಟಿಯರನ್ನು ಹಿಂದಟ್ಟಿ, ಬೇತ್ಕಾರಿನವರೆಗೂ ಅವರನ್ನು ಹೊಡೆದರು.
1SA 7:12 ಸಮುಯೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ, ಶೇನಿಗೂ ಮಧ್ಯದಲ್ಲಿ ನಿಲ್ಲಿಸಿ, “ಇಲ್ಲಿಯವರೆಗೂ ಯೆಹೋವ ದೇವರು ನಮಗೆ ಸಹಾಯ ಮಾಡಿದ್ದಾರೆ,” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.
1SA 7:13 ಫಿಲಿಷ್ಟಿಯರು ಸೋತುಹೋದುದರಿಂದ ಇಸ್ರಾಯೇಲಿನ ಮೇರೆಯಲ್ಲಿ ಬರಲೇ ಇಲ್ಲ. ಇದಲ್ಲದೆ ಸಮುಯೇಲನು ಇದ್ದ ದಿವಸಗಳೆಲ್ಲಾ ಯೆಹೋವ ದೇವರ ಕೈ ಫಿಲಿಷ್ಟಿಯರಿಗೆ ವಿರೋಧವಾಗಿತ್ತು.
1SA 7:14 ಫಿಲಿಷ್ಟಿಯರು ಇಸ್ರಾಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್ ಮೊದಲ್ಗೊಂಡು ಗತ್ ಊರಿನವರೆಗೂ ಇರುವ ಪಟ್ಟಣಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರಿಂದ ತಿರುಗಿ ತೆಗೆದುಕೊಂಡರು. ಅವುಗಳ ಮೇರೆಗಳನ್ನು ಇಸ್ರಾಯೇಲರು ಫಿಲಿಷ್ಟಿಯರ ಕೈಯಿಂದ ಬಿಡಿಸಿಕೊಂಡರು. ಇಸ್ರಾಯೇಲಿಗೂ, ಅಮೋರಿಯರಿಗೂ ಮಧ್ಯೆ ಸಮಾಧಾನ ಉಂಟಾಗಿತ್ತು.
1SA 7:15 ಇದಲ್ಲದೆ ಸಮುಯೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.
1SA 7:16 ಅವನು ಪ್ರತಿವರ್ಷ ಹೊರಟು ಬೇತೇಲನ್ನೂ, ಗಿಲ್ಗಾಲನ್ನೂ, ಮಿಚ್ಪೆಯನ್ನೂ ಸುತ್ತಿಕೊಂಡು ಹೋಗಿ ಆ ಸ್ಥಳಗಳಲ್ಲೆಲ್ಲಾ ಇಸ್ರಾಯೇಲರಿಗೆ ನ್ಯಾಯತೀರಿಸಿದನು.
1SA 7:17 ಆದರೆ ಅವನು ರಾಮಕ್ಕೆ ತಿರುಗಿ ಬರುತ್ತಾ ಇದ್ದನು. ಏಕೆಂದರೆ ಅಲ್ಲಿ ಅವನ ಮನೆ ಇತ್ತು, ಅಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು. ಯೆಹೋವ ದೇವರಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.
1SA 8:1 ಸಮುಯೇಲನು ವೃದ್ಧನಾದಾಗ ತನ್ನ ಪುತ್ರರನ್ನು ಇಸ್ರಾಯೇಲಿಗೆ ನ್ಯಾಯಾಧಿಪತಿಗಳನ್ನಾಗಿ ಮಾಡಿದನು.
1SA 8:2 ಅವನ ಚೊಚ್ಚಲ ಮಗನ ಹೆಸರು ಯೋಯೇಲ್, ಅವನ ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
1SA 8:3 ಆದರೆ ಅವರು ಸಮುಯೇಲನ ಮಾರ್ಗದಲ್ಲಿ ನಡೆಯದೆ, ಅಪ್ರಾಮಾಣಿಕತೆಯಿಂದ ಹಣ ಸಂಪಾದಿಸಿ, ಲಂಚವನ್ನು ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುತ್ತಿದ್ದರು.
1SA 8:4 ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು, ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು ಅವನಿಗೆ,
1SA 8:5 “ನೀನು ವೃದ್ಧನಾದೆ, ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವುದಿಲ್ಲ. ಈಗ ಎಲ್ಲ ರಾಷ್ಟ್ರಗಳ ಹಾಗೆ ನಮಗೆ ನ್ಯಾಯತೀರಿಸುವುದಕ್ಕೆ ಒಬ್ಬ ಅರಸನನ್ನು ನೇಮಿಸು,” ಎಂದರು.
1SA 8:6 “ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು,” ಎಂದು ಅವರು ಹೇಳಿದ್ದು ಸಮುಯೇಲನಿಗೆ ಕೆಟ್ಟದ್ದಾಗಿ ಕಾಣಿಸಿತು. ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.
1SA 8:7 ಆಗ ಯೆಹೋವ ದೇವರು ಸಮುಯೇಲನಿಗೆ, “ಜನರು ನಿನಗೆ ಹೇಳಿದ್ದೆಲ್ಲದರಲ್ಲಿ ಅವರ ಮಾತು ಕೇಳು. ಏಕೆಂದರೆ ಅವರು ನಿನ್ನನ್ನು ತಿರಸ್ಕಾರ ಮಾಡಿಲ್ಲ. ನಾನು ಅವರನ್ನು ಆಳದ ಹಾಗೆ ನನ್ನನ್ನೇ ತಿರಸ್ಕಾರಮಾಡಿದ್ದಾರೆ.
1SA 8:8 ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದ ದಿನವು ಮೊದಲುಗೊಂಡು ಈ ದಿನದವರೆಗೂ ಅವರು ನನ್ನನ್ನು ಬಿಟ್ಟು, ಅನ್ಯದೇವರುಗಳನ್ನು ಸೇವಿಸಿ, ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡುತ್ತಾರೆ.
1SA 8:9 ಈಗ ಅವರ ಮಾತನ್ನು ಕೇಳು. ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು, ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬುದನ್ನು ತಿಳಿಸು,” ಎಂದನು.
1SA 8:10 ಆಗ ಸಮುಯೇಲನು ಒಬ್ಬ ಅರಸನನ್ನು ಕೇಳಿದ ಜನರಿಗೆ ಯೆಹೋವ ದೇವರ ವಾಕ್ಯಗಳನ್ನೆಲ್ಲಾ ಹೇಳಿದನು.
1SA 8:11 ಅವನು, “ನಿಮ್ಮನ್ನು ಆಳುವ ಅರಸನ ಅಧಿಕಾರವು ಏನೆಂದರೆ, ಅವನು ನಿಮ್ಮ ಪುತ್ರರನ್ನು ತನ್ನ ರಥಗಳಿಗೋಸ್ಕರ ಸಾರಥಿಗಳನ್ನಾಗಿಯೂ ಕುದುರೆ ಸವಾರರನ್ನಾಗಿಯೂ ತೆಗೆದುಕೊಳ್ಳುವನು. ಕೆಲವರು ಅವನ ರಥಗಳ ಮುಂದೆ ಓಡುವರು.
1SA 8:12 ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು.
1SA 8:13 ಇದಲ್ಲದೆ ಅವನು ನಿಮ್ಮ ಪುತ್ರಿಯರನ್ನು ತೈಲಗಾರ್ತಿಗಳಾಗಿಯೂ, ಅಡುಗೆ ಮಾಡುವವರಾಗಿಯೂ ರೊಟ್ಟಿ ಸುಡುವವರಾಗಿಯೂ ಇಟ್ಟುಕೊಳ್ಳುವನು.
1SA 8:14 ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ, ನಿಮ್ಮ ದ್ರಾಕ್ಷಿತೋಟಗಳನ್ನೂ, ನಿಮ್ಮ ಓಲಿವ್ ಮರದ ತೋಪುಗಳನ್ನೂ ತೆಗೆದುಕೊಂಡು ತನ್ನ ಸೇವಕರಿಗೆ ಕೊಡುವನು.
1SA 8:15 ನಿಮ್ಮ ಧಾನ್ಯಗಳಲ್ಲಿಯೂ, ನಿಮ್ಮ ದ್ರಾಕ್ಷಿ ಫಲಗಳಲ್ಲಿಯೂ ಹತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ತನ್ನ ಅಧಿಕಾರಿಗಳಿಗೂ, ತನ್ನ ಸೇವಕರಿಗೂ ಕೊಡುವನು.
1SA 8:16 ನಿಮ್ಮ ದಾಸರನ್ನೂ, ನಿಮ್ಮ ದಾಸಿಯರನ್ನೂ, ನಿಮ್ಮ ಉತ್ತಮ ಪ್ರಾಯಸ್ಥರನ್ನೂ, ನಿಮ್ಮ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕೆ ಇಡುವನು.
1SA 8:17 ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆಯ್ದುಕೊಳ್ಳುವನು. ನೀವು ಅವನಿಗೆ ದಾಸರಾಗುವಿರಿ.
1SA 8:18 ನೀವು ನಿಮಗೆ ಆಯ್ದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ, ಆದರೆ ಆ ದಿವಸದಲ್ಲಿ ಯೆಹೋವ ದೇವರು ನಿಮಗೆ ಕಿವಿಗೊಡುವುದಿಲ್ಲ,” ಎಂದನು.
1SA 8:19 ಆದರೂ ಜನರು ಸಮುಯೇಲನ ಮಾತನ್ನು ಕೇಳಲೊಲ್ಲದೆ, ಅವರು, “ಹಾಗಲ್ಲ, ನಮ್ಮ ಮೇಲೆ ಅರಸನು ಇರಬೇಕು.
1SA 8:20 ನಾವು ಸಕಲ ರಾಷ್ಟ್ರಗಳ ಹಾಗೆ ಇರಬೇಕು. ನಮ್ಮ ಅರಸನು ನಮಗೆ ನ್ಯಾಯತೀರಿಸುವನು. ಅವನು ನಮ್ಮ ಮುಂದೆ ಹೊರಟು, ನಮ್ಮ ಪರವಾಗಿ ಯುದ್ಧಗಳನ್ನು ನಡೆಸುವನು,” ಎಂದರು.
1SA 8:21 ಸಮುಯೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಯೆಹೋವ ದೇವರಿಗೆ ಹೇಳಿದನು.
1SA 8:22 ಯೆಹೋವ ದೇವರು ಸಮುಯೇಲನಿಗೆ, “ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು,” ಎಂದರು. ಆಗ ಸಮುಯೇಲನು ಇಸ್ರಾಯೇಲ್ ಜನರಿಗೆ, “ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ,” ಎಂದನು.
1SA 9:1 ಬೆನ್ಯಾಮೀನನ ವಂಶದವನಾದ ಕೀಷನೆಂಬ ಒಬ್ಬ ಮನುಷ್ಯನಿದ್ದನು. ಇವನು ಅಬೀಯೇಲನ ಮಗನು, ಇವನು ಚೆರೋರನ ಮಗನು, ಇವನು ಬೆಕೋರತನ ಮಗನು, ಇವನು ಬೆನ್ಯಾಮೀನ್ಯನಾದ ಅಫೀಹನ ಮಗನು. ಇವನು ಐಶ್ವರ್ಯವಂತನಾಗಿದ್ದನು.
1SA 9:2 ಅವನಿಗೆ ಒಳ್ಳೆಯ ಪ್ರಾಯಸ್ಥನಾದ ಸೌಲನೆಂಬ ಹೆಸರುಳ್ಳ ಒಬ್ಬ ಒಳ್ಳೆಯ ಮಗನಿದ್ದನು. ಇಸ್ರಾಯೇಲರಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನಾದರೂ ಇರಲಿಲ್ಲ. ಅವನ ಭುಜವು ಜನರ ಮಧ್ಯೆ ಕಾಣುವಷ್ಟು ಎತ್ತರವಾಗಿದ್ದನು.
1SA 9:3 ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದ್ದರಿಂದ ಅವನು ತನ್ನ ಮಗ ಸೌಲನಿಗೆ, “ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರೆದುಕೊಂಡು, ಕತ್ತೆಗಳನ್ನು ಹುಡುಕಲು ಹೋಗಬೇಕು,” ಎಂದನು.
1SA 9:4 ಹಾಗೆಯೇ ಅವನು ಎಫ್ರಾಯೀಮ್ ಬೆಟ್ಟವನ್ನು ಶಾಲಿಷಾ ದೇಶವನ್ನೂ ದಾಟಿಹೋದನು, ಆದರೆ ಅವು ಸಿಕ್ಕಲಿಲ್ಲ. ಶಾಲೀಮ್ ದೇಶವನ್ನು ಹಾದುಹೋದನು, ಅಲ್ಲಿಯೂ ಅವುಗಳು ಕಾಣದೆ ಹೋದವು. ಅವನು ಬೆನ್ಯಾಮೀನನ ದೇಶವನ್ನು ದಾಟಿ, ಅವುಗಳನ್ನು ಕಾಣದೆ ಹೋದನು.
1SA 9:5 ಅವರು ಚೂಫ್ ಎಂಬ ದೇಶಕ್ಕೆ ಬಂದಾಗ, ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ, “ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು, ನಮಗೋಸ್ಕರ ಚಿಂತೆ ಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ,” ಎಂದನು.
1SA 9:6 ಅದಕ್ಕವನು, “ಇಗೋ, ಈ ಪಟ್ಟಣದಲ್ಲಿ ದೇವರ ಮನುಷ್ಯನು ಒಬ್ಬನಿದ್ದಾನೆ, ಅವನು ಘನವುಳ್ಳ ಮನುಷ್ಯನು. ಅವನು ಹೇಳುವುದೆಲ್ಲಾ ನಿಶ್ಚಯವಾಗಿ ಆಗುವುದು. ಈಗ ನಾವು ಅಲ್ಲಿಗೆ ಹೋಗೋಣ. ಒಂದು ವೇಳೆ ಅವನು ನಾವು ಹೋಗಬೇಕೆಂದಿರುವ ನಮ್ಮ ಮಾರ್ಗವನ್ನು ತಿಳಿಸುವನು,” ಎಂದನು.
1SA 9:7 ಆಗ ಸೌಲನು ತನ್ನ ಸೇವಕನಿಗೆ, “ನಾವು ಆ ಮನುಷ್ಯನ ಬಳಿಗೆ ಹೋದರೆ, ಏನು ತೆಗೆದುಕೊಂಡು ಹೋಗೋಣ? ನಮ್ಮ ಚೀಲಗಳಲ್ಲಿ ಇರುವ ರೊಟ್ಟಿ ಮುಗಿದು ಹೋಯಿತು. ದೇವರ ಮನುಷ್ಯನ ಬಳಿಗೆ ತೆಗೆದುಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ. ನಮ್ಮ ಬಳಿಯಲ್ಲಿ ಏನಿದೆ?” ಎಂದನು.
1SA 9:8 ಅದಕ್ಕೆ ಆ ಸೇವಕನು ಸೌಲನಿಗೆ ಉತ್ತರವಾಗಿ, “ಇಗೋ, ನನ್ನ ಕೈಯಲ್ಲಿ ಒಂದು ಪಾವಲಿ ಬೆಳ್ಳಿನಾಣ್ಯ ಇದೆ, ದೇವರ ಮನುಷ್ಯನು ನಮಗೆ ಮಾರ್ಗವನ್ನು ತಿಳಿಸುವ ಹಾಗೆ ನಾನು ಅದನ್ನು ಅವನಿಗೆ ಕೊಡುವೆನು,” ಎಂದನು.
1SA 9:9 ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ, “ಪ್ರವಾದಿಯ ಬಳಿಗೆ ಹೋಗೋಣ ಬನ್ನಿರಿ,” ಎನ್ನುವನು. ಏಕೆಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಿಸಿಕೊಳ್ಳುವವರನ್ನು ಪೂರ್ವಕಾಲದಲ್ಲಿ ದರ್ಶಿ ಎಂದು ಕರೆಯುತ್ತಿದ್ದರು.
1SA 9:10 ಆಗ ಸೌಲನು ಸೇವಕನಿಗೆ, “ನಿನ್ನ ಮಾತು ಒಳ್ಳೆಯದು. ನಾವು ಹೋಗೋಣ ಬಾ,” ಎಂದನು. ದೇವರ ಮನುಷ್ಯನಿದ್ದ ಆ ಪಟ್ಟಣಕ್ಕೆ ಹೋದರು.
1SA 9:11 ಅವರು ದಿಣ್ಣೆಯನ್ನು ಹತ್ತಿ ಪಟ್ಟಣದೊಳಗೆ ಹೋಗುವಾಗ, ನೀರು ಸೇದಲು ಬರುವ ಹುಡುಗಿಯರನ್ನು ಕಂಡು, “ದರ್ಶಿಯು ಇಲ್ಲಿ ಇದ್ದಾನೋ?” ಎಂದು ಅವರನ್ನು ಕೇಳಿದರು.
1SA 9:12 ಅವರು ಇವರಿಗೆ ಉತ್ತರವಾಗಿ, “ಅವನು ಇದ್ದಾನೆ, ನಿಮ್ಮ ಮುಂದೆ ಇದ್ದಾನೆ, ಈಗ ಬೇಗ ಹೋಗಿರಿ, ಏಕೆಂದರೆ ಈ ಹೊತ್ತು ಗುಡ್ಡದ ಮೇಲೆ ಜನರು ಬಲಿಯನ್ನು ಅರ್ಪಿಸುವುದರಿಂದ ಅವನು ಈ ಹೊತ್ತು ಪಟ್ಟಣಕ್ಕೆ ಬಂದಿದ್ದಾನೆ.
1SA 9:13 ನೀವು ಪಟ್ಟಣದೊಳಗೆ ಪ್ರವೇಶಿಸುತ್ತಲೇ ಗುಡ್ಡದ ಮೇಲೆ ತಿನ್ನಲು ಹೋಗುವರು. ಅವನು ಬರುವವರೆಗೂ ಜನರು ಏನೂ ತಿನ್ನುವುದಿಲ್ಲ. ಅವನು ಬಂದು ಅರ್ಪಣೆಯನ್ನು ಆಶೀರ್ವದಿಸುವನು. ಅನಂತರವೇ ಆಮಂತ್ರಿತರು ಊಟಮಾಡುವರು. ಈಗಲೇ ಹೋಗಿರಿ. ಈ ವೇಳೆಯಲ್ಲಿ ಅವನನ್ನು ಕಂಡುಕೊಳ್ಳುವಿರಿ,” ಎಂದರು.
1SA 9:14 ಅವರು ಪಟ್ಟಣಕ್ಕೆ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ, ಸಮುಯೇಲನು ಗುಡ್ಡದ ಮೇಲಕ್ಕೆ ಏರಿ ಹೋಗುವುದಕ್ಕೆ ಅವರಿಗೆದುರಾಗಿ ಹೊರಟುಬಂದನು.
1SA 9:15 ಆದರೆ ಸೌಲನು ಬರುವುದಕ್ಕೆ ಒಂದು ದಿವಸ ಮುಂಚೆ, ಯೆಹೋವ ದೇವರು ಸಮುಯೇಲನಿಗೆ ತಿಳಿಯಪಡಿಸಿದ್ದೇನೆಂದರೆ,
1SA 9:16 “ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನನ ದೇಶದವನಾದ ಒಬ್ಬ ಮನುಷ್ಯನನ್ನು ನಿನ್ನ ಬಳಿಗೆ ಕಳುಹಿಸುವೆನು. ನೀನು ಅವನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವನು. ಏಕೆಂದರೆ ನನ್ನ ಜನರ ಕೂಗು ನನ್ನ ಬಳಿಗೆ ಬಂದು ಮುಟ್ಟಿತು,” ಎಂಬುದೆ.
1SA 9:17 ಸಮುಯೇಲನು ಸೌಲನನ್ನು ಕಂಡಾಗ ಯೆಹೋವ ದೇವರು, “ಇಗೋ, ನಾನು ನಿನಗೆ ಹೇಳಿದ ಮನುಷ್ಯನು ಇವನೇ. ಇವನೇ ನನ್ನ ಜನರನ್ನು ಆಳುವನು,” ಎಂದರು.
1SA 9:18 ಸೌಲನು ಊರಿನ ಬಾಗಿಲಲ್ಲಿ ಇರುವ ಸಮುಯೇಲನ ಸಮೀಪಕ್ಕೆ ಬಂದು, ಅವನಿಗೆ, “ದರ್ಶಿಯ ಮನೆಯು ಎಲ್ಲಿ ಇದೆ? ದಯಮಾಡಿ ನೀನು ನನಗೆ ತಿಳಿಸು,” ಎಂದನು.
1SA 9:19 ಸಮುಯೇಲನು ಸೌಲನಿಗೆ ಉತ್ತರವಾಗಿ, “ದರ್ಶಿಯು ನಾನೇ, ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು. ಈ ಹೊತ್ತು ನೀನು ನನ್ನ ಸಂಗಡ ಊಟಮಾಡಬೇಕು, ನಾಳೆ ಹೊತ್ತಾರೆ ನಿನ್ನನ್ನು ಕಳುಹಿಸುವೆನು. ನಿನ್ನ ಹೃದಯದಲ್ಲಿರುವುದನ್ನೆಲ್ಲಾ ನಿನಗೆ ತಿಳಿಯಪಡಿಸುವೆನು.
1SA 9:20 ಇಂದಿಗೆ ಮೂರನೆಯ ದಿವಸದಲ್ಲಿ ಕಾಣದೆ ಹೋದ ನಿನ್ನ ಕತ್ತೆಗಳಿಗಾಗಿ ಚಿಂತೆ ಮಾಡಬೇಡ. ಏಕೆಂದರೆ ಅವು ದೊರಕಿದವು. ಇದಲ್ಲದೆ ಇಸ್ರಾಯೇಲಿನ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು? ಅದು ನಿನ್ನ ಮೇಲೆಯೇ ಅಲ್ಲವೋ,” ಎಂದನು.
1SA 9:21 ಸೌಲನು ಅದಕ್ಕೆ, “ಆದರೆ ನಾನು ಇಸ್ರಾಯೇಲನ ಸಣ್ಣ ಗೋತ್ರವಾದ ಬೆನ್ಯಾಮೀನನು ನಾನಲ್ಲವೋ, ಬೆನ್ಯಾಮೀನನ ಗೋತ್ರದಲ್ಲಿ ನನ್ನ ವಂಶವು ಸಣ್ಣದಾದದ್ದಲ್ಲವೋ? ಇಂಥ ಸಂಗತಿಯನ್ನು ನನಗೇಕೆ ಹೇಳುತ್ತೀ?” ಎಂದನು.
1SA 9:22 ಆಗ ಸಮುಯೇಲನು ಸೌಲನನ್ನೂ, ಅವನ ಸೇವಕನನ್ನೂ ಕರೆತಂದು ಅತಿಥಿಗಳ ಕೊಠಡಿಯಲ್ಲಿ ಮುಖ್ಯವಾದ ಸ್ಥಳಕ್ಕೆ ಕರಕೊಂಡು ಬಂದನು.
1SA 9:23 ಹೆಚ್ಚು ಕಡಿಮೆ ಮೂವತ್ತು ಜನರಿದ್ದರು. ಸಮುಯೇಲನು ಅಡಿಗೆಯವನಿಗೆ, “ನಾನು ನಿನ್ನ ಕೈಯಲ್ಲಿ ಕೊಟ್ಟು ಇಡಬೇಕೆಂದು ಹೇಳಿದ ಪಾಲನ್ನು ತಂದಿಡು,” ಎಂದನು.
1SA 9:24 ಆಗ ಅಡಿಗೆಯವನು ಒಂದು ಮುಂದೊಡೆಯನ್ನೂ, ಅದರ ಸಂಗಡ ಇದ್ದುದ್ದನ್ನೂ ತಂದು ಅದನ್ನು ಸೌಲನ ಮುಂದೆ ಇಟ್ಟನು. ಆಗ ಸಮುಯೇಲನು ಸೌಲನಿಗೆ, “ನಿನಗಾಗಿ ಪ್ರತ್ಯೇಕಿಸಿದ್ದು ಇದೇ. ನಾನು ಜನರನ್ನು ಭೋಜನಕ್ಕೆ ಕರೆದಿದ್ದೇನೆಂದು ಹೇಳಿದ ಕಾಲದಿಂದ ಈವರೆಗೂ ನಿನಗೋಸ್ಕರ ಪ್ರತ್ಯೇಕವಾಗಿ ಇಟ್ಟಿದ್ದು ಇದೇ, ಇದನ್ನು ತಿನ್ನು,” ಎಂದನು. ಹಾಗೆಯೇ ಸೌಲನು ಆ ದಿವಸದಲ್ಲಿ ಸಮುಯೇಲನ ಸಂಗಡ ಊಟಮಾಡಿದನು.
1SA 9:25 ಅವರು ಗುಡ್ಡದಿಂದ ಪಟ್ಟಣಕ್ಕೆ ಇಳಿದು ಬಂದಾಗ ಸಮುಯೇಲನು ಮಾಳಿಗೆಯ ಮೇಲೆ ಸೌಲನ ಸಂಗಡ ಮಾತನಾಡಿದನು.
1SA 9:26 ಅವರು ಉದಯಕಾಲದಲ್ಲಿ ಸೂರ್ಯೋದಯದಲ್ಲಿ ಎದ್ದಾಗ, ಸಮುಯೇಲನು ಸೌಲನನ್ನು ಮಾಳಿಗೆಗೆ ಕರೆದು, “ಏಳು, ನಾನು ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಸೌಲನು ಎದ್ದನು, ಆಗ ಸೌಲನೂ, ಸಮುಯೇಲನೂ ಇಬ್ಬರೂ ಹೊರಗೆ ಹೊರಟರು.
1SA 9:27 ಪಟ್ಟಣದ ಹೊರಗೆ ಬಂದಾಗ, ಸಮುಯೇಲನು ಸೌಲನಿಗೆ, “ನಾನು ದೇವರ ಸಂದೇಶವನ್ನು ನಿನಗೆ ತಿಳಿಸುವ ಹಾಗೆ ಸ್ವಲ್ಪ ಹೊತ್ತು ನಿಲ್ಲು. ನಿನ್ನ ಸೇವಕನನ್ನು ನಮ್ಮ ಮುಂದೆ ಹೋಗಲು ಹೇಳು,” ಎಂದನು.
1SA 10:1 ಆಗ ಸಮುಯೇಲನು ಎಣ್ಣೆಕುಪ್ಪಿಯಿಂದ ಅವನ ತಲೆಯ ಮೇಲೆ ಸುರಿದು, ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವ ದೇವರು ನಿನ್ನನ್ನು ತಮ್ಮ ಆಸ್ತಿಯಾಗಿರುವ ಜನರ ಮೇಲೆ ನಾಯಕನಾಗಿರಲು ಅಭಿಷೇಕ ಮಾಡಿದ್ದಾರೆ.
1SA 10:2 ನೀನು ಈ ಹೊತ್ತು ನನ್ನನ್ನು ಬಿಟ್ಟುಹೋದಾಗ, ಬೆನ್ಯಾಮೀನ್ಯರ ಮೇರೆಯಾದ ಚೆಲ್ಚಹಿನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವೆ. ಅವರು ನಿನಗೆ, ‘ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು, ನಿನಗೋಸ್ಕರ ಚಿಂತೆಪಟ್ಟು, ತನ್ನ ಮಗನಿಗೋಸ್ಕರ ಏನು ಮಾಡಲಿ? ಎನ್ನುತ್ತಾನೆ,’ ಎಂದು ಹೇಳುವರು.
1SA 10:3 “ನೀನು ಆ ಸ್ಥಳವನ್ನು ಬಿಟ್ಟು, ಆ ಕಡೆ ದಾಟಿ, ತಾಬೋರಿನ ಹತ್ತಿರವಿರುವ ಅಲ್ಲೋನ್ ವೃಕ್ಷದ ಬಳಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವೆ.
1SA 10:4 ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ, ನಿನಗೆ ಎರಡು ರೊಟ್ಟಿಗಳನ್ನು ಕೊಡುವರು. ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವೆ.
1SA 10:5 “ತರುವಾಯ ಫಿಲಿಷ್ಟಿಯರ ತಾಣವಿರುವ ದೇವರ ಗಿಬೆಯ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣಕ್ಕೆ ಪ್ರವೇಶಿಸುವಾಗ, ನಿನಗೆದುರಾಗಿ ವೀಣೆ, ದಮ್ಮಡಿ, ಕೊಳಲು, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವುದು. ಅವರು ಪ್ರವಾದಿಸುವರು.
1SA 10:6 ಆಗ ಯೆಹೋವ ದೇವರ ಆತ್ಮವು ನಿನ್ನ ಮೇಲೆ ಬರುವುದು. ನೀನು ಅವರ ಸಂಗಡ ಪ್ರವಾದಿಸುವೆ, ಬೇರೆ ಮನುಷ್ಯನಾಗಿ ಮಾರ್ಪಡುವೆ.
1SA 10:7 ಈ ಗುರುತುಗಳೆಲ್ಲಾ ನಿನಗೆ ಸಂಭವಿಸಿದಾಗ, ದೇವರು ನಿನ್ನ ಸಂಗಡ ಇರುವುದರಿಂದ ನೀನು ಆ ವೇಳೆಯಲ್ಲಿ ನಿನಗೆ ಕೈಗೂಡಿದ ಹಾಗೆ ಮಾಡು.
1SA 10:8 “ಆದರೆ ನೀನು ನನಗೆ ಮುಂದಾಗಿ ಗಿಲ್ಗಾಲಿಗೆ ಇಳಿದು ಹೋಗಬೇಕು. ನಾನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕಾಗಿ ನಿನ್ನ ಬಳಿಗೆ ಬರುವೆನು. ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವವರೆಗೂ ನೀನು ಅಲ್ಲಿ ಏಳು ದಿವಸ ಕಾದುಕೊಳ್ಳಬೇಕು,” ಎಂದನು.
1SA 10:9 ಅವನು ಸಮುಯೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ, ದೇವರು ಅವನಿಗೆ ಹೊಸ ಹೃದಯವನ್ನು ಕೊಟ್ಟರು. ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.
1SA 10:10 ಅವನು ಗಿಬೆಯದ ಗುಡ್ಡಕ್ಕೆ ಬಂದಾಗ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು. ಆಗ ದೇವರ ಆತ್ಮವು ಅವನ ಮೇಲೆ ಬಂದದ್ದರಿಂದ, ಅವರಲ್ಲಿದ್ದು ಪ್ರವಾದಿಸಿದನು.
1SA 10:11 ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು, ಅವನು ಪ್ರವಾದಿಗಳ ಸಂಗಡವಿದ್ದು ಪ್ರವಾದಿಸುವುದನ್ನು ಕಂಡಾಗ, ಅವರು ಒಬ್ಬರ ಸಂಗಡ ಒಬ್ಬರು, “ಕೀಷನ ಮಗನಿಗೆ ಆದದ್ದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂದರು.
1SA 10:12 ಅದಕ್ಕೆ ಅಲ್ಲಿಯವನೊಬ್ಬನು, “ಹಾಗಾದರೆ ಅವರ ನಾಯಕರು ಯಾರು?” ಎಂದನು. ಆದ್ದರಿಂದ, “ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂಬ ಗಾದೆ ಉಂಟಾಯಿತು.
1SA 10:13 ಅವನು ಪ್ರವಾದಿಸಿದ ತರುವಾಯ ಗುಡ್ಡದ ಮೇಲಕ್ಕೆ ಬಂದನು.
1SA 10:14 ಆಗ ಸೌಲನ ಚಿಕ್ಕಪ್ಪನು, “ನೀವು ಎಲ್ಲಿಗೆ ಹೋದಿರಿ?” ಎಂದು ಅವನನ್ನೂ, ಅವನ ಸೇವಕನನ್ನೂ ಕೇಳಿದನು. ಅದಕ್ಕವನು, “ಕತ್ತೆಗಳನ್ನು ಹುಡುಕುವುದಕ್ಕೆ, ಅವುಗಳನ್ನು ಕಾಣದೆ ಹೋದುದರಿಂದ ಸಮುಯೇಲನ ಬಳಿಗೆ ಹೋದೆವು,” ಎಂದನು.
1SA 10:15 ಅದಕ್ಕೆ ಸೌಲನ ಚಿಕ್ಕಪ್ಪನು, “ಸಮುಯೇಲನು ನಿನಗೆ ಏನು ಹೇಳಿದನು? ದಯಮಾಡಿ ನನಗೆ ತಿಳಿಸು,” ಎಂದನು.
1SA 10:16 ಸೌಲನು ತನ್ನ ಚಿಕ್ಕಪ್ಪನಿಗೆ, “ಕತ್ತೆಗಳು ದೊರಕಿದವೆಂದು ಅವನು ನಮಗೆ ಸ್ಪಷ್ಟವಾಗಿ ತಿಳಿಸಿದನು,” ಎಂದನು. ಆದರೆ ಅವನು ಸಮುಯೇಲನು ಹೇಳಿದ ರಾಜ್ಯಭಾರದ ಮಾತನ್ನು ಅವನಿಗೆ ತಿಳಿಸಲಿಲ್ಲ.
1SA 10:17 ಸಮುಯೇಲನು ಇಸ್ರಾಯೇಲರನ್ನು ಮಿಚ್ಪೆಯಲ್ಲಿ ಯೆಹೋವ ದೇವರ ಬಳಿಗೆ ಒಟ್ಟಾಗಿ ಕರೆದು ಅವರಿಗೆ,
1SA 10:18 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮನ್ನು ಈಜಿಪ್ಟಿನವರ ಕೈಯಿಂದಲೂ, ನಿಮ್ಮನ್ನು ಬಾಧೆಪಡಿಸಿದ ಸಮಸ್ತ ರಾಜ್ಯಗಳ ಕೈಯಿಂದಲೂ ಬಿಡಿಸಿದೆನು.’
1SA 10:19 ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಅವರಿಗೆ, ‘ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು,’ ಎಂದು ಹೇಳಿದಿರಿ. ಆದ್ದರಿಂದ ಈಗ ಯೆಹೋವ ದೇವರ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ, ನಿಮ್ಮ ಕುಲಗಳ ಪ್ರಕಾರವಾಗಿಯೂ ಬನ್ನಿರಿ,” ಎಂದನು.
1SA 10:20 ಸಮುಯೇಲನು ಇಸ್ರಾಯೇಲಿನ ಗೋತ್ರಗಳನ್ನೆಲ್ಲಾ ಸಮೀಪಕ್ಕೆ ಬರಮಾಡಿದಾಗ, ಬೆನ್ಯಾಮೀನನ ಗೋತ್ರಕ್ಕೆ ಚೀಟು ಬಿದ್ದಿತು.
1SA 10:21 ಅವನು ಬೆನ್ಯಾಮೀನನ ಗೋತ್ರವನ್ನು ಅದರ ಕುಲಗಳ ಹಾಗೆಯೇ ಹತ್ತಿರಕ್ಕೆ ಬರಮಾಡಿದಾಗ, ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಆದರೆ ಅವನನ್ನು ಹುಡುಕುವಾಗ, ಅವನು ಸಿಕ್ಕಲಿಲ್ಲ.
1SA 10:22 ಆದ್ದರಿಂದ ಅವರು, “ಅವನು ಇನ್ನು ಇಲ್ಲಿ ಬರುವನೋ?” ಎಂದು ಯೆಹೋವ ದೇವರನ್ನು ವಿಚಾರಿಸಿದರು. ಯೆಹೋವ ದೇವರು, “ಇಗೋ, ಅವನು ಸಲಕರಣೆಗಳಲ್ಲಿ ಅಡಗಿಕೊಂಡಿದ್ದಾನೆ,” ಎಂದು ಹೇಳಿದರು.
1SA 10:23 ಆಗ ಅವರು ಓಡಿಹೋಗಿ ಅಲ್ಲಿಂದ ಅವನನ್ನು ಕರೆತಂದರು. ಅವನು ಜನರ ಮಧ್ಯದಲ್ಲಿ ನಿಲ್ಲುವಾಗ ಅವನು ತನ್ನ ಭುಜದಿಂದ ಎಲ್ಲಾ ಜನರಿಗಿಂತ ಎತ್ತರವಾಗಿದ್ದನು.
1SA 10:24 ಆಗ ಸಮುಯೇಲನು, “ಯೆಹೋವ ದೇವರು ಆಯ್ದುಕೊಂಡವನನ್ನು ನೋಡಿರಿ, ಸಮಸ್ತ ಜನರಿಗೆ ಎಲ್ಲಾ ಜನರಲ್ಲಿ ಇವನಿಗೆ ಸಮಾನವಾದವನು ಯಾವನೂ ಇಲ್ಲವಲ್ಲ,” ಎಂದನು. ಜನರೆಲ್ಲರು ಆರ್ಭಟಿಸಿ, “ಅರಸ ಬಾಳಲಿ,” ಎಂದರು.
1SA 10:25 ಸಮುಯೇಲನು ರಾಜ್ಯದ ಪದ್ಧತಿಯನ್ನು ಜನರಿಗೆ ಹೇಳಿಕೊಟ್ಟು, ಒಂದು ಪುಸ್ತಕದಲ್ಲಿ ಬರೆದು, ಯೆಹೋವ ದೇವರ ಮುಂದೆ ಇಟ್ಟನು. ಆಗ ಸಮುಯೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.
1SA 10:26 ಸೌಲನು ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು. ದೇವರು ಯಾರ ಹೃದಯವನ್ನು ಮುಟ್ಟಿದರೋ, ಅವರ ಒಂದು ಗುಂಪು ಅವನ ಸಂಗಡ ಹೋಯಿತು.
1SA 10:27 ಆದರೆ ಕೆಲವು ಪುಂಡಪೋಕರಿಗಳು, “ಇವನು ನಮ್ಮನ್ನು ರಕ್ಷಿಸುವುದೇನು?” ಎಂದು ಅವನನ್ನು ತಿರಸ್ಕರಿಸಿದರು. ಅವರು ಅವನಿಗೆ ಕಾಣಿಕೆಯನ್ನು ತೆಗೆದುಕೊಂಡು ಬರಲಿಲ್ಲ. ಅವನು ಕೇಳದ ಹಾಗೆ ಇದ್ದನು.
1SA 11:1 ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ಮುತ್ತಿಗೆಹಾಕಿದನು. ಆಗ ಯಾಬೇಷಿನ ಜನರೆಲ್ಲರು ನಾಹಾಷನಿಗೆ, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿದರೆ, ನಾವು ನಿನಗೆ ಅಧೀನರಾಗಿರುವೆವು,” ಎಂದರು.
1SA 11:2 ಅಮ್ಮೋನ್ಯನಾದ ನಾಹಾಷನು ಅವರಿಗೆ, “ಇಸ್ರಾಯೇಲರಿಗೆ ಅವಮಾನಪಡಿಸುವುದಕ್ಕಾಗಿ ನಿಮ್ಮೆಲ್ಲರ ಬಲಗಣ್ಣುಗಳನ್ನು ಕಿತ್ತು ಹಾಕುವ ಒಂದೇ ನಿಬಂಧನೆಯಿಂದ, ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ,” ಎಂದನು.
1SA 11:3 ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ, “ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಅವಕಾಶವನ್ನು ಕೊಡು. ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲದೆ ಹೋದರೆ, ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು,” ಎಂದರು.
1SA 11:4 ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರಿಗೆ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಸ್ವರವನ್ನೆತ್ತಿ ಅತ್ತರು.
1SA 11:5 ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು, “ಜನರು ಅಳುವುದೇಕೆ?” ಎಂದು ಕೇಳಿದನು. ಅವರು ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು.
1SA 11:6 ಸೌಲನು ಈ ಮಾತುಗಳನ್ನು ಕೇಳಿದಾಗ, ದೇವರ ಆತ್ಮವು ಬಹಳ ಸಾಮರ್ಥ್ಯದಿಂದ ಅವನ ಮೇಲೆ ಬಂದು, ಅವನು ಬಹು ಕೋಪೋದ್ರೇಕಗೊಂಡನು. ಅನಂತರ ಅವನು ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು,
1SA 11:7 ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ, ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿ, “ಯಾರು ಸೌಲ ಮತ್ತು ಸಮುಯೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದನು. ಯೆಹೋವ ದೇವರಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ, ಅವರು ಒಬ್ಬ ಮನುಷ್ಯನಂತೆ ಹೊರಟು ಬಂದರು.
1SA 11:8 ಅವನು ಅವರನ್ನು ಬೆಜೆಕಿನಲ್ಲಿ ಎಣಿಸಿದಾಗ, ಇಸ್ರಾಯೇಲರು ಮೂರು ಲಕ್ಷ ಜನರೂ, ಯೆಹೂದ್ಯರಲ್ಲಿ ಮೂವತ್ತು ಸಾವಿರ ಜನರೂ ಆಗಿದ್ದರು.
1SA 11:9 ಆಗ ಅವರು ಬಂದ ದೂತರಿಗೆ, “ನೀವು ಗಿಲ್ಯಾದಿನಲ್ಲಿರುವ ಯಾಬೇಷಿನ ಜನರಿಗೆ, ‘ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವುದು,’ ಎಂದು ಹೇಳಿರಿ,” ಎಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ, ಅವರು ಸಂತೋಷಪಟ್ಟರು.
1SA 11:10 ತರುವಾಯ ಯಾಬೇಷಿನ ಜನರು ನಹಾಷನಿಗೆ, “ನಾಳೆ ನಿನ್ನ ಬಳಿಗೆ ಹೊರಟು ಬರುವೆವು; ಆಗ ನೀನು ನಿನಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡು,” ಎಂದರು.
1SA 11:11 ಮಾರನೆಯ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ, ಬೆಳಗಿನ ಜಾವದಲ್ಲಿ ಪಾಳೆಯದಲ್ಲಿ ಬಂದು, ಬಿಸಿಲೇರುವವರೆಗೆ ಅಮ್ಮೋನಿಯರನ್ನು ಸಂಹರಿಸಿದನು. ಉಳಿದವರು ಚದರಿಹೋದರು. ಅವರಲ್ಲಿ ಒಬ್ಬರು ಕೂಡ ಇರಲಿಲ್ಲ.
1SA 11:12 ಆಗ ಜನರು ಸಮುಯೇಲನಿಗೆ, “ಸೌಲನು ನಮ್ಮ ಮೇಲೆ ಆಳುವನೋ ಎಂದು ಹೇಳಿದವರ‍್ಯಾರು? ಆ ಮನುಷ್ಯರನ್ನು ನಮಗೆ ಒಪ್ಪಿಸಿರಿ, ಅವರನ್ನು ಕೊಂದು ಹಾಕುತ್ತೇವೆ,” ಎಂದರು.
1SA 11:13 ಆಗ ಸೌಲನು, “ಯೆಹೋವ ದೇವರು ಈ ದಿವಸ ಇಸ್ರಾಯೇಲಿನಲ್ಲಿ ರಕ್ಷಣೆಯನ್ನು ಉಂಟುಮಾಡಿದ್ದರಿಂದ, ಈ ಹೊತ್ತು ಯಾರನ್ನೂ ಕೊಲ್ಲಬಾರದು,” ಎಂದನು.
1SA 11:14 ಆಗ ಸಮುಯೇಲನು ಜನರಿಗೆ, “ನಾವು ಗಿಲ್ಗಾಲಿಗೆ ಹೋಗಿ, ಅಲ್ಲಿ ರಾಜ್ಯತ್ವವನ್ನು ದೃಢೀಕರಿಸೋಣ ಬನ್ನಿರಿ,” ಎಂದನು.
1SA 11:15 ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ, ಆ ಸ್ಥಳದಲ್ಲಿ ಯೆಹೋವ ದೇವರ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ, ಯೆಹೋವ ದೇವರಿಗೆ ಸಮಾಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲರೂ ಬಹಳವಾಗಿ ಸಂತೋಷಪಟ್ಟರು.
1SA 12:1 ಸಮುಯೇಲನು ಇಸ್ರಾಯೇಲರೆಲ್ಲರಿಗೆ, “ನೀವು ನನಗೆ ಹೇಳಿದ್ದೆಲ್ಲದರಲ್ಲಿ ನಿಮ್ಮ ಮಾತು ಕೇಳಿ, ನಿಮ್ಮ ಮೇಲೆ ಒಬ್ಬ ಅರಸನನ್ನು ಇಟ್ಟೆನು.
1SA 12:2 ಈಗ ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ನಾನು ವೃದ್ಧನಾಗಿ ನರೆ ಬಂದವನಾದೆನು. ನನ್ನ ಪುತ್ರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯ ಮೊದಲ್ಗೊಂಡು ಈ ದಿನದವರೆಗೂ ನಿಮ್ಮ ಮುಂದೆ ನಾಯಕನಾಗಿ ನಡೆದುಕೊಂಡಿದ್ದೇನೆ.
1SA 12:3 ನಾನು ಇಲ್ಲಿದ್ದೇನೆ. ಯೆಹೋವ ದೇವರ ಮುಂದೆಯೂ, ಅವರ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿ ಕೊಡಿರಿ. ನಾನು ಯಾರ ಎತ್ತನ್ನಾದರೂ, ಕತ್ತೆಯನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ, ತಿರುಗಿಕೊಡುತ್ತೇನೆ,” ಎಂದನು.
1SA 12:4 ಅವರು, “ನೀನು ನಮಗೆ ವಂಚನೆ ಮಾಡಲಿಲ್ಲ, ನಮ್ಮನ್ನು ಹಿಂಸಿಸಲಿಲ್ಲ, ನೀನು ಯಾರ ಕೈಯಿಂದಲೂ ಏನೂ ತೆಗೆದುಕೊಳ್ಳಲಿಲ್ಲ,” ಎಂದರು.
1SA 12:5 ಆಗ ಅವನು ಅವರಿಗೆ, “ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬುದಕ್ಕೆ ಯೆಹೋವ ದೇವರೇ ನಿಮಗೆ ಸಾಕ್ಷಿಯಾಗಿದ್ದಾರೆ. ಅವರ ಅಭಿಷಿಕ್ತನು ಈ ಹೊತ್ತು ಸಾಕ್ಷಿಯಾಗಿದ್ದಾನೆ,” ಎಂದನು. ಅದಕ್ಕವರು, “ಸಾಕ್ಷಿಯಾಗಿದ್ದಾರೆ,” ಎಂದರು.
1SA 12:6 ಆಗ ಸಮುಯೇಲನು ಜನರಿಗೆ, “ಮೋಶೆಯನ್ನೂ, ಆರೋನನನ್ನೂ ಮುಂದಕ್ಕೆ ತಂದವರೂ, ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಯೆಹೋವ ದೇವರೇ ಇದಕ್ಕೆ ಸಾಕ್ಷಿ.
1SA 12:7 ಆದ್ದರಿಂದ ಈಗ ನಿಲ್ಲಿರಿ. ಯೆಹೋವ ದೇವರು ನಿಮಗೂ, ನಿಮ್ಮ ಪಿತೃಗಳಿಗೂ ಮಾಡಿದ ಸಮಸ್ತ ನೀತಿಯುಳ್ಳ ಕ್ರಿಯೆಗಳ ವಿಷಯ ಯೆಹೋವ ದೇವರ ಮುಂದೆ ನಿಮಗೆ ನ್ಯಾಯ ಹೇಳುತ್ತೇನೆ.
1SA 12:8 “ಯಾಕೋಬನು ಈಜಿಪ್ಟಿಗೆ ಬಂದ ತರುವಾಯ, ನಿಮ್ಮ ತಂದೆಗಳು ಯೆಹೋವ ದೇವರಿಗೆ ಮೊರೆಯಿಟ್ಟರು. ಆಗ ಯೆಹೋವ ದೇವರು ಮೋಶೆಯನ್ನೂ, ಆರೋನನನ್ನೂ ಕಳುಹಿಸಿದರು. ಇವರು ನಿಮ್ಮ ಪಿತೃಗಳನ್ನು ಈಜಿಪ್ಟಿನಿಂದ ಕರೆತಂದು, ಅವರನ್ನು ಈ ದೇಶದಲ್ಲಿ ವಾಸಿಸುವಂತೆ ಮಾಡಿದರು.
1SA 12:9 “ಆದರೆ ಅವರು ತಮ್ಮ ದೇವರಾದ ಯೆಹೋವ ದೇವರನ್ನು ಮರೆತು ಹೋದಾಗ, ದೇವರು ಅವರನ್ನು ಹಾಚೋರಿನ ಸೈನ್ಯಾಧಿಪತಿಯಾದ ಸೀಸೆರನ ಕೈಗೂ, ಫಿಲಿಷ್ಟಿಯರಿಗೂ, ಮೋವಾಬ್ ರಾಜನಿಗೂ ಮಾರಿಬಿಟ್ಟರು.
1SA 12:10 ಇವರು ಅವರ ಸಂಗಡ ಯುದ್ಧಮಾಡಿದರು. ಆದ್ದರಿಂದ ಅವರು ಯೆಹೋವ ದೇವರಿಗೆ ಮೊರೆಯಿಟ್ಟು, ‘ನಾವು ಯೆಹೋವ ದೇವರಾದ ನಿಮ್ಮನ್ನು ಬಿಟ್ಟು ಬಾಳನನ್ನೂ, ಅಷ್ಟೋರೆತನನ್ನೂ ಸೇವಿಸಿದ್ದರಿಂದ ಪಾಪಮಾಡಿದೆವು. ಈಗ ನೀವು ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ಬಿಡಿಸಿರಿ; ನಾವು ನಿಮ್ಮ ಸೇವೆ ಮಾಡುವೆವು,’ ಎಂದರು.
1SA 12:11 ಆಗ ಯೆಹೋವ ದೇವರು ಯೆರುಬ್ಬಾಳನನ್ನೂ, ಬಾರಾಕನನ್ನೂ, ಯೆಫ್ತಾಹನನ್ನೂ, ಸಮುಯೇಲನನ್ನೂ ಕಳುಹಿಸಿ, ನಿಮ್ಮ ಸಮಸ್ತ ದಿಕ್ಕಿನಲ್ಲಿರುವ ನಿಮ್ಮ ಶತ್ರುಗಳ ಕೈಯಿಂದ ಬಿಡಿಸಿ, ನೀವು ಸುರಕ್ಷಿತವಾಗಿ ವಾಸಿಸುವಂತೆ ಮಾಡಿದರು.
1SA 12:12 “ಆದರೆ ಅಮ್ಮೋನ್ಯರ ಅರಸನಾದ ನಾಹಾಷನು ನಿಮಗೆ ವಿರೋಧವಾಗಿ ಯುದ್ಧಮಾಡಲು ಬರುವುದನ್ನು ಕಂಡಾಗ, ನಿಮ್ಮ ದೇವರಾದ ಯೆಹೋವ ದೇವರೇ ನಿಮಗೆ ಅರಸರಾಗಿದ್ದರು. ಆಗ ನೀವು, ‘ನಮಗೆ ಹಾಗೆ ಬೇಡ, ಒಬ್ಬ ಅರಸನು ನಮ್ಮನ್ನು ಆಳಬೇಕು,’ ಎಂದಿರಿ.
1SA 12:13 ಈಗ ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಯೆಹೋವ ದೇವರು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾರೆ.
1SA 12:14 ನೀವು ಯೆಹೋವ ದೇವರ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಯೆಹೋವ ದೇವರಿಗೆ ಭಯಪಟ್ಟು ಅವರನ್ನು ಸೇವಿಸಿ, ಅವರ ಮಾತಿಗೆ ವಿಧೇಯರಾದರೆ ನೀವೂ, ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಯೆಹೋವ ದೇವರನ್ನು ತಪ್ಪದೆ ಹಿಂಬಾಲಿಸುವಿರಿ.
1SA 12:15 ನೀವು ಯೆಹೋವ ದೇವರ ಮಾತಿಗೆ ವಿಧೇಯರಾಗದಿದ್ದರೆ, ಯೆಹೋವ ದೇವರ ಆಜ್ಞೆಗೆ ವಿರೋಧವಾಗಿ ತಿರುಗಿಬಿದ್ದರೆ, ಯೆಹೋವ ದೇವರ ಹಸ್ತವು ನಿಮ್ಮ ಪಿತೃಗಳಿಗೆ ವಿರೋಧವಾಗಿದ್ದಂತೆಯೇ ನಿಮಗೂ ವಿರೋಧವಾಗಿರುವುದು.
1SA 12:16 “ಈಗ ನಿಂತುಕೊಂಡು ಯೆಹೋವ ದೇವರು ನಿಮ್ಮ ಕಣ್ಣುಗಳ ಮುಂದೆ ಮಾಡುವ ಈ ಮಹತ್ಕಾರ್ಯವನ್ನು ನೋಡಿರಿ.
1SA 12:17 ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದರಿಂದ, ಯೆಹೋವ ದೇವರ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತನವು ಹೆಚ್ಚಾಗಿದೆ ಎಂದು ತಿಳಿದುಕೊಂಡು ನೋಡುವ ಹಾಗೆ, ನಾನು ಯೆಹೋವ ದೇವರಿಗೆ ಮೊರೆಯಿಡುವೆನು. ಆಗ ಅವರು ಗುಡುಗನ್ನೂ, ಮಳೆಯನ್ನೂ ಕಳುಹಿಸುವರು,” ಎಂದನು.
1SA 12:18 ಸಮುಯೇಲನು ಯೆಹೋವ ದೇವರಿಗೆ ಮೊರೆ ಇಟ್ಟಿದ್ದರಿಂದ, ಆ ದಿವಸದಲ್ಲೇ ಯೆಹೋವ ದೇವರು ಗುಡುಗನ್ನೂ, ಮಳೆಯನ್ನೂ ಕಳುಹಿಸಿದರು. ಆಗ ಜನರೆಲ್ಲರು ಯೆಹೋವ ದೇವರಿಗೂ, ಸಮುಯೇಲನಿಗೂ ಬಹಳವಾಗಿ ಭಯಪಟ್ಟರು.
1SA 12:19 ಜನರೆಲ್ಲರು ಸಮುಯೇಲನಿಗೆ, “ನಾವು ಸಾಯದ ಹಾಗೆ ನಿನ್ನ ದೇವರಾದ ಯೆಹೋವ ದೇವರಿಗೆ ನಿನ್ನ ಸೇವಕರಿಗೋಸ್ಕರ ಪ್ರಾರ್ಥನೆ ಮಾಡು. ಏಕೆಂದರೆ ನಮಗೆ ಒಬ್ಬ ಅರಸನು ಬೇಕೆಂದು ಕೇಳಿ, ನಮ್ಮ ಸಮಸ್ತ ಪಾಪಗಳಿಗೆ ಕೆಟ್ಟದ್ದನ್ನು ಕೂಡಿಸಿದ್ದೇವೆ,” ಎಂದು ಹೇಳಿದರು.
1SA 12:20 ಆಗ ಸಮುಯೇಲನು ಜನರಿಗೆ, “ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ. ಆದರೂ ಯೆಹೋವ ದೇವರನ್ನು ಬಿಟ್ಟು ತಿರುಗದೆ, ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರನ್ನು ಸೇವಿಸಿರಿ.
1SA 12:21 ವ್ಯರ್ಥವಾದ ವಸ್ತುಗಳ ಹಿಂದೆ ಹೋಗಬೇಡಿರಿ. ಅವು ನಿಮಗೆ ಒಳ್ಳೆಯದನ್ನು ಮಾಡಲಾರದವುಗಳೂ ನಿಮ್ಮನ್ನು ಬಿಡಿಸಲಾರದವುಗಳೂ ಆಗಿವೆ. ಏಕೆಂದರೆ ಅವು ವ್ಯರ್ಥವಾದವುಗಳಾಗಿವೆ.
1SA 12:22 ಏಕೆಂದರೆ ಯೆಹೋವ ದೇವರು ತಮ್ಮ ಮಹತ್ತಾದ ಹೆಸರಿಗೋಸ್ಕರ ತಮ್ಮ ಜನರನ್ನು ಕೈಬಿಡುವುದಿಲ್ಲ. ನಿಮ್ಮನ್ನು ತಮ್ಮ ಜನರಾಗಿ ಮಾಡಿಕೊಳ್ಳಲು ಇಚ್ಛೈಸಿದ್ದಾರಲ್ಲಾ?
1SA 12:23 ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ, ಯೆಹೋವ ದೇವರಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ. ಉತ್ತಮವಾದ, ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.
1SA 12:24 ಆದರೆ ನೀವು ಯೆಹೋವ ದೇವರಿಗೆ ಭಯಪಟ್ಟು, ನಿಮ್ಮ ಪೂರ್ಣಹೃದಯದಿಂದ ನಂಬಿಗಸ್ತರಾಗಿ ಅವರನ್ನು ಸೇವಿಸಿರಿ. ಏಕೆಂದರೆ ಅವರು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದರೆಂದು ಆಲೋಚಿಸಿರಿ.
1SA 12:25 ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ, ನೀವೂ ನಿಮ್ಮ ಅರಸನೂ ಸಹ ನಾಶವಾಗಿಹೋಗುವಿರಿ,” ಎಂದನು.
1SA 13:1 ಸೌಲನು ಅರಸನಾದಾಗ ಮೂವತ್ತು ವರ್ಷ ಪ್ರಾಯದವನಾಗಿದ್ದನು. ಅವನು ಇಸ್ರಾಯೇಲರ ಮೇಲೆ ನಲವತ್ತೆರಡು ವರ್ಷಕಾಲ ಆಳಿದನು.
1SA 13:2 ಸೌಲನು ಇಸ್ರಾಯೇಲರೊಳಗಿಂದ ಮೂರು ಸಾವಿರ ಜನ ಪುರುಷರನ್ನು ಆಯ್ದುಕೊಂಡನು. ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯು, ಬೇತೇಲಿನ ದಿನ್ನೆ ಪ್ರದೇಶಗಳಲ್ಲಿಯು ಇದ್ದರು. ಒಂದು ಸಾವಿರ ಜನರು ಬೆನ್ಯಾಮೀನ್ಯರ ಗಿಬೆಯದಲ್ಲಿ ಯೋನಾತಾನನ ಜೊತೆಗಿದ್ದರು. ಉಳಿದ ಜನರನ್ನು ಅವನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
1SA 13:3 ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ತಿಳಿದುಬಂತು. ಆದ್ದರಿಂದ ಸೌಲನು ದೇಶದಲ್ಲೆಲ್ಲಾ ಹಿಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.
1SA 13:4 “ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ಸೌಲನು ನಾಶಮಾಡಿದ್ದರಿಂದ, ಇಸ್ರಾಯೇಲರು ಈಗ ಫಿಲಿಷ್ಟಿಯರಿಗೆ ಅಸಹ್ಯಕರ ಶತ್ರುವಾದರು,” ಎಂಬ ವರ್ತಮಾನವನ್ನು ಸಮಸ್ತ ಇಸ್ರಾಯೇಲರು ಕೇಳಿದರು. ಮತ್ತು ಗಿಲ್ಗಾಲಿಗೆ ಬಂದು ಸೌಲನನ್ನು ಸೇರಿಕೊಳ್ಳಲು ಜನರನ್ನು ಕರೆದರು.
1SA 13:5 ಆಗ ಇಸ್ರಾಯೇಲರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ, ಆರು ಸಾವಿರ ಕುದುರೆ ಸವಾರರೂ, ಸಮುದ್ರತೀರದ ಮರಳಷ್ಟು ಜನರೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳಿದುಕೊಂಡರು.
1SA 13:6 ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದದ್ದರಿಂದ ತಾವು ಇಕ್ಕಟ್ಟಿನಲ್ಲಿ ಇರುವುದನ್ನು ಕಂಡು, ಗವಿಗಳಲ್ಲಿಯೂ, ಮುಳ್ಳಿನ ಪೊದೆಗಳಲ್ಲಿಯೂ, ಗುಡ್ಡಗಳಲ್ಲಿಯೂ, ಕುಣಿಗಳಲ್ಲಿಯೂ ಬಾವಿಗಳಲ್ಲಿಯೂ ಅಡಗಿಕೊಂಡರು.
1SA 13:7 ಇದಲ್ಲದೆ ಹಿಬ್ರಿಯರಲ್ಲಿ ಕೆಲವರು ಯೊರ್ದನನ್ನು ದಾಟಿ, ಗಾದ್ ದೇಶಕ್ಕೂ, ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು. ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು.
1SA 13:8 ಸೌಲನು ತನಗೆ ಸಮುಯೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುಯೇಲನು ಗಿಲ್ಗಾಲಿಗೆ ಬಾರದೆ ಇದ್ದುದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.
1SA 13:9 ಆಗ ಸೌಲನು, “ದಹನಬಲಿಯನ್ನೂ, ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು.
1SA 13:10 ಆದರೆ ಅವನು ದಹನಬಲಿಯನ್ನು ಅರ್ಪಿಸಿ, ತೀರಿಸುವಷ್ಟರೊಳಗೆ ಸಮುಯೇಲನು ಬಂದನು. ಆಗ ಅವನನ್ನು ವಂದಿಸುವುದಕ್ಕಾಗಿ ಸೌಲನು ಅವನನ್ನು ಎದುರುಗೊಳ್ಳಲು ಹೋದನು.
1SA 13:11 ಆದರೆ ಸಮುಯೇಲನು, “ನೀನೇನು ಮಾಡಿದಿ?” ಎಂದು ಸೌಲನನ್ನು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟು ಹೋಗುತ್ತಿರುವುದನ್ನು, ನೀನು ನೇಮಿಸಿದ ದಿವಸಗಳ ಪ್ರಕಾರ ಬಾರದಿರುವುದನ್ನು ಮತ್ತು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವುದನ್ನು ಕಂಡೆನು.
1SA 13:12 ಆಗ ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ದಾಳಿಮಾಡುವುದು ಖಚಿತ ಮತ್ತು ನಾನು ಎಂದಿಗೂ ಯೆಹೋವ ದೇವರ ಸಹಾಯವನ್ನು ಕೇಳಲಿಲ್ಲ.’ ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ದಹನಬಲಿಯನ್ನು ಅರ್ಪಿಸಿದೆನು,” ಎಂದನು.
1SA 13:13 ಸಮುಯೇಲನು ಸೌಲನಿಗೆ, “ನೀನು ಬುದ್ಧಿಹೀನವಾದ ಕೆಲಸಮಾಡಿದ್ದೀ; ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಯೆಹೋವ ದೇವರು ಇಸ್ರಾಯೇಲರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವುದಕ್ಕೆ ಇದ್ದರು.
1SA 13:14 ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದನ್ನು ನೀನು ಕೈಗೊಳ್ಳದೆ ಹೋದದ್ದರಿಂದ, ಅವರು ತಮ್ಮ ಹೃದಯಕ್ಕೆ ತಕ್ಕಂಥ ಒಬ್ಬ ಮನುಷ್ಯನನ್ನು ಹುಡುಕಿ, ಅವನನ್ನು ತಮ್ಮ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾರೆ,” ಎಂದನು.
1SA 13:15 ಸಮುಯೇಲನು ಎದ್ದು ಗಿಲ್ಗಾಲಿನಿಂದ ಬೆನ್ಯಾಮೀನ್ ದೇಶದ ಗಿಬೆಯಕ್ಕೆ ಹೋದನು. ಸೌಲನು ತನ್ನ ಸಂಗಡ ಇದ್ದ ಜನರನ್ನು ಲೆಕ್ಕಮಾಡಿದಾಗ, ಅವರು ಸುಮಾರು ಆರುನೂರು ಜನರಿದ್ದರು.
1SA 13:16 ಸೌಲನೂ, ಅವನ ಮಗ ಯೋನಾತಾನನೂ, ಅವನ ಸಂಗಡ ಇರುವ ಜನರೂ ಸಹಿತವಾಗಿ ಬೆನ್ಯಾಮೀನ್ಯರ ಗಿಬೆಯದಲ್ಲಿ ಇದ್ದರು. ಆದರೆ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಇಳಿದುಕೊಂಡಿದ್ದರು.
1SA 13:17 ಆಗ ಫಿಲಿಷ್ಟಿಯರ ಪಾಳೆಯದಿಂದ ಸುಲಿದುಕೊಳ್ಳುವವರು ಮೂರು ಗುಂಪಾಗಿ ಹೊರಟರು. ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ ದೇಶದ ಕಡೆಗೆ ಹೋಯಿತು.
1SA 13:18 ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.
1SA 13:19 “ಹಿಬ್ರಿಯರು ತಮಗೆ ಖಡ್ಗವನ್ನಾದರೂ ಈಟಿಯನ್ನಾದರೂ ಮಾಡಿಕೊಳ್ಳಬಾರದು,” ಎಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ, ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ.
1SA 13:20 ಆದ್ದರಿಂದ ಇಸ್ರಾಯೇಲರೆಲ್ಲಾ ತಮ್ಮ ತಮ್ಮ ನೇಗಿಲಿನ ಗುಳಗಳನ್ನೂ, ಸಲಿಕೆಗಳನ್ನೂ, ಕೊಡಲಿಗಳನ್ನೂ, ಗುದ್ದಲಿಗಳನ್ನೂ ಮೊನೆ ಮಾಡುವುದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.
1SA 13:21 ಆದರೆ ಸಲಿಕೆ, ಗುದ್ದಲಿ, ಕುಂಟೆ, ಮುಳ್ಳುಗೋಲು, ಕೊಡಲಿ, ಅಂಕುಶ ಇವುಗಳನ್ನು ಹದಮಾಡುವುದಕ್ಕೆ ಅವರಲ್ಲಿ ಅರವು ಮಾತ್ರ ಇತ್ತು.
1SA 13:22 ಯುದ್ಧದ ದಿವಸದಲ್ಲಿ ಸೌಲ ಯೋನಾತಾನರ ಜೊತೆಯಲ್ಲಿದ್ದ ಸಮಸ್ತ ಜನರಲ್ಲಿ ಒಬ್ಬನ ಕೈಯಲ್ಲಾದರೂ ಖಡ್ಗವಾಗಲಿ, ಈಟಿಯಾಗಲಿ ಇರಲಿಲ್ಲ. ಆದರೆ ಸೌಲನಿಗೂ, ಅವನ ಪುತ್ರನಾದ ಯೋನಾತಾನನಿಗೂ ಮಾತ್ರವೇ ಇತ್ತು.
1SA 13:23 ಆಗ ಫಿಲಿಷ್ಟಿಯರ ದಂಡು ಮಿಕ್ಮಾಷಿನ ಕಣಿವೆಯ ಮಾರ್ಗದತ್ತ ಹೊರಟಿತು.
1SA 14:1 ಆ ಕಾಲದಲ್ಲಿ, ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊರುವ ಯುವಕನಿಗೆ, “ನಾವು ನಮಗೆದುರಾಗಿರುವ ಆಚೆಯಲ್ಲಿರುವ ಫಿಲಿಷ್ಟಿಯರ ಠಾಣಕ್ಕೆ ಹೋಗೋಣ ಬಾ,” ಎಂದನು. ಆದರೆ ತಂದೆಗೆ ತಿಳಿಸಲಿಲ್ಲ.
1SA 14:2 ಸೌಲನು ಗಿಬೆಯದ ಕಟ್ಟಕಡೆಯ ಮೇರೆಯಾದ ಮಿಗ್ರೋನಿನಲ್ಲಿರುವ ದಾಳಿಂಬೆ ಮರದ ಕೆಳಗಿದ್ದನು. ಅವನ ಸಂಗಡ ಸುಮಾರು ಆರುನೂರು ಜನರಿದ್ದರು.
1SA 14:3 ಆಗ ಏಲಿಯ ಮಗ ಫೀನೆಹಾಸನ ಮಗ ಈಕಾಬೋದನ ಸಹೋದರ ಅಹೀಟೂಬನ ಮಗ ಅಹೀಯನು ಶೀಲೋವಿನಲ್ಲಿ ಏಫೋದನ್ನು ಧರಿಸಿಕೊಂಡು ಯೆಹೋವ ದೇವರ ಯಾಜಕನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.
1SA 14:4 ಯೋನಾತಾನನು ಫಿಲಿಷ್ಟಿಯರ ಠಾಣಕ್ಕೆ ದಾಟಿ ಹೋಗಬೇಕೆಂದು ಹುಡುಕಿದ ಮಾರ್ಗದ ಮಧ್ಯದಲ್ಲಿ ಈ ಕಡೆ ಆ ಕಡೆಯಲ್ಲಿ ಬೊಚೇಚ್, ಸೆನೆ ಎಂಬ ಚೂಪಾದ ಎರಡು ಬಂಡೆಗಳಿದ್ದವು.
1SA 14:5 ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ, ಮತ್ತೊಂದು ದಕ್ಷಿಣಕ್ಕೆ ಗಿಬೆಯಕ್ಕೆ ಎದುರಾಗಿಯೂ ಇತ್ತು.
1SA 14:6 ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯುವಕನಿಗೆ, “ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿ ಹೋಗೋಣ ಬಾ; ಒಂದು ವೇಳೆ ಯೆಹೋವ ದೇವರು ನಮಗೋಸ್ಕರ ಕಾರ್ಯವನ್ನು ನಡೆಸುವರು. ಏಕೆಂದರೆ ಅನೇಕ ಜನರಿಂದಲಾದರೂ, ಸ್ವಲ್ಪ ಜನರಿಂದಲಾದರೂ ರಕ್ಷಿಸುವುದಕ್ಕೆ ಯೆಹೋವ ದೇವರಿಗೆ ಅಸಾಧ್ಯವಲ್ಲ,” ಎಂದನು.
1SA 14:7 ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ, “ನಿನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಮಾಡು; ನಡಿ, ನಾನು ನನ್ನ ಸಂಪೂರ್ಣ ಹೃದಯದಿಂದ ನಿನ್ನ ಸಂಗಡ ಇದ್ದೇನೆ,” ಎಂದನು.
1SA 14:8 ಆಗ ಯೋನಾತಾನನು, “ನಾವು ಆ ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು.
1SA 14:9 ಅವರು, ‘ನಾವು ನಿಮ್ಮ ಬಳಿಗೆ ಬರುವವರೆಗೆ ಸುಮ್ಮನೆ ನಿಲ್ಲಿರಿ,’ ಎಂದು ನಮ್ಮ ಸಂಗಡ ಹೇಳಿದರೆ; ನಾವು ಅವರ ಬಳಿಗೆ ಹೋಗದೆ ನಮ್ಮ ಸ್ಥಳದಲ್ಲಿ ನಿಲ್ಲುವೆವು.
1SA 14:10 ಆದರೆ ಅವರು, ‘ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿರಿ,’ ಎಂದು ಹೇಳಿದರೆ ನಾವು ಮೇಲೆ ಹತ್ತಿ ಹೋಗೋಣ. ಏಕೆಂದರೆ ಯೆಹೋವ ದೇವರು ಅವರನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟರೆಂಬುದಕ್ಕೆ ಇದೇ ನಮಗೆ ಗುರುತಾಗಿರುವುದು,” ಎಂದನು.
1SA 14:11 ಹಾಗೆಯೇ ಅವರಿಬ್ಬರೂ ತಾವು ಫಿಲಿಷ್ಟಿಯರ ಠಾಣ್ಯದವರೆಗೂ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರು, “ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಹಿಬ್ರಿಯರು ಹೊರಟು ಬರುತ್ತಾರೆ,” ಎಂದರು.
1SA 14:12 ಠಾಣ್ಯಕ್ಕೆ ಮನುಷ್ಯರು ಯೋನಾತಾನನಿಗೂ, ಅವನ ಆಯುಧ ಹೊರುವವನಿಗೂ, “ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿರಿ, ನಿಮಗೆ ಪಾಠ ಕಲಿಸುತ್ತೇನೆ,” ಎಂದು ಕೂಗಿದರು. ಆಗ ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ನನ್ನ ಹಿಂದೆ ಏರಿ ಬಾ. ಏಕೆಂದರೆ ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು,” ಎಂದನು.
1SA 14:13 ಯೋನಾತಾನನು ತನ್ನ ಕೈಗಳಿಂದಲೂ, ಕಾಲುಗಳಿಂದಲೂ ಹತ್ತಿದನು. ಅವನ ಆಯುಧಗಳನ್ನು ಹೊರುವವನು ಅವನ ಹಿಂದೆ ಹತ್ತಿದನು. ಆಗ ಫಿಲಿಷ್ಟಿಯರು ಯೋನಾತಾನನ ಮುಂದೆ ಬಿದ್ದರು. ಅವನ ಆಯುಧಗಳನ್ನು ಹೊರುವವನು ಅವನ ಹಿಂದೆ ಕೊಲ್ಲುತ್ತಾ ಹೋದನು.
1SA 14:14 ಯೋನಾತಾನನೂ, ಅವನ ಆಯುಧಗಳನ್ನು ಹೊರುವವನೂ ಹೊಡೆದ ಆ ಮೊದಲ ಸಂಹಾರದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಸತ್ತವರು ಸುಮಾರು ಇಪ್ಪತ್ತು ಜನರಾಗಿದ್ದರು.
1SA 14:15 ಆಗ ಪಾಳೆಯಲ್ಲಿಯ ಹೊಲದಲ್ಲಿ ಇದ್ದ ಸಕಲ ಜನರಲ್ಲಿಯೂ ಭಯದಿಂದ ನಡುಕ ಉಂಟಾಯಿತು. ಠಾಣ್ಯದವರೂ, ಕೊಳ್ಳೆಗಾರರೂ ಹೆದರಿಕೊಂಡರು. ಇದಲ್ಲದೆ, ದೇವರು ಭೂಕಂಪವನ್ನುಂಟುಮಾಡಿದರು. ಹೀಗೆ ಅಲ್ಲಿ ದೊಡ್ಡ ಕಳವಳವಾಯಿತು.
1SA 14:16 ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ಕಂಡಾಗ, ಆ ಗುಂಪಿನವರು ಕರಗಿ ಹೋಗುತ್ತಾ, ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.
1SA 14:17 ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ, “ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ,” ಎಂದನು. ಅವರು ಲೆಕ್ಕ ನೋಡುವಾಗ, ಯೋನಾತಾನನೂ, ಅವನ ಆಯುಧಗಳನ್ನು ಹೊರುವವನೂ ಇರಲಿಲ್ಲ.
1SA 14:18 ಆಗ ಸೌಲನು ಅಹೀಯನಿಗೆ, “ನೀನು ದೇವರ ಮಂಜೂಷವನ್ನು ತೆಗೆದುಕೊಂಡು ಬಾ,” ಎಂದನು. ಏಕೆಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲರ ಬಳಿಯಲ್ಲಿತ್ತು.
1SA 14:19 ಸೌಲನು ಯಾಜಕನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಫಿಲಿಷ್ಟಿಯರ ದಂಡಿನಲ್ಲಿ ಕೋಲಾಹಲವು ಹೆಚ್ಚಾಯಿತು. ಆದ್ದರಿಂದ ಸೌಲನು ಯಾಜಕನಿಗೆ, “ನಿನ್ನ ಕೈ ಹಿಂದೆ ತೆಗೆದುಕೋ,” ಎಂದನು.
1SA 14:20 ಆಗ ಸೌಲನೂ, ಅವನ ಸಂಗಡ ಯುದ್ಧಕ್ಕಿದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ, ಫಿಲಿಷ್ಟಿಯರಲ್ಲಿ ಗಲಿಬಿಲಿಯುಂಟಾಗಿ ಒಬ್ಬನ ಖಡ್ಗವು ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನನ್ನು ಕೊಂದುಹಾಕುತ್ತಿದ್ದರು.
1SA 14:21 ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರೊಡನೆ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಹಿಬ್ರಿಯರು ಸೌಲ ಮತ್ತು, ಯೋನಾತಾನನ ಜೊತೆ ಇರುವ ಇಸ್ರಾಯೇಲರ ಸಂಗಡ ಕೂಡಿಕೊಂಡರು.
1SA 14:22 ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯೀಮ್ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲರು ಕೇಳಿದಾಗ, ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದ್ದರು.
1SA 14:23 ಹೀಗೆ ಯೆಹೋವ ದೇವರು ಆ ದಿನದಲ್ಲಿ ಇಸ್ರಾಯೇಲನ್ನು ರಕ್ಷಿಸಿದರು. ಆ ಯುದ್ಧವು ಬೇತಾವೆನಿನವರೆಗೂ ನಡೆಯಿತು.
1SA 14:24 ಇಸ್ರಾಯೇಲರು ಆ ದಿವಸ ಬಹಳ ಬಳಲಿ ಹೋದರು. ಏಕೆಂದರೆ ಸೌಲನು, “ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾಲದವರೆಗೆ ಯಾವನು ಆಹಾರ ತಿನ್ನುತ್ತಾನೋ, ಅವನು ಶಾಪಗ್ರಸ್ತನಾಗಲಿ,” ಎಂದು ಆಣೆ ಇಟ್ಟದ್ದರಿಂದ, ಜನರೆಲ್ಲರು ಆಹಾರದ ರುಚಿ ನೋಡದೆ ಇದ್ದರು.
1SA 14:25 ದೇಶದ ಜನರೆಲ್ಲರೂ ಅಡವಿಯಲ್ಲಿ ಹೋಗುತ್ತಿರುವಾಗ, ಅಲ್ಲಿ ನೆಲದ ಮೇಲೆ ಜೇನುಗೂಡು ಇತ್ತು.
1SA 14:26 ಜನರು ಆ ಅಡವಿಯಲ್ಲಿ ಹೋಗುವಾಗ, ಜೇನುತುಪ್ಪ ಸುರಿಯುತ್ತಿತ್ತು. ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ.
1SA 14:27 ಆದರೆ ಯೋನಾತಾನನು ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಕೇಳದೆ ಇದ್ದ ಕಾರಣ, ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ, ಅದನ್ನು ಜೇನು ತೊಟ್ಟಿಯಲ್ಲಿ ಅದ್ದಿ, ತನ್ನ ಬಾಯಿಗೆ ಹಾಕಿಕೊಂಡನು. ಅದರಿಂದ ಅವನ ಕಣ್ಣುಗಳು ಕಳೆಯನ್ನು ಹೊಂದಿದವು.
1SA 14:28 ಆಗ ಜನರಲ್ಲಿ ಒಬ್ಬನು ಅವನಿಗೆ, “ ‘ಈ ಹೊತ್ತು ಆಹಾರ ತಿನ್ನುವವರು ಶಾಪಗ್ರಸ್ತರಾಗಲಿ,’ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ,” ಎಂದನು.
1SA 14:29 ಅದಕ್ಕೆ ಯೋನಾತಾನನು, “ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿದ್ದಾನೆ. ನಾನು ಈ ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ, ನನ್ನ ಕಣ್ಣುಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು.
1SA 14:30 ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು. ಏಕೆಂದರೆ ಫಿಲಿಷ್ಟಿಯರಲ್ಲಿ ಹತರಾಗದವರು ಇನ್ನು ಹೆಚ್ಚು ಮಂದಿ ಇದ್ದಾರೆ,” ಎಂದನು.
1SA 14:31 ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋನಿನವರೆಗೂ ಫಿಲಿಷ್ಟಿಯರನ್ನುಳಿಸದೆ ಹೊಡೆದುದರಿಂದ ಅವರು ಬಹಳವಾಗಿ ದಣಿದು ಹೋದರು.
1SA 14:32 ಆದ್ದರಿಂದ ಅವರು ಕೊಳ್ಳೆ ಹೊಡೆದವುಗಳ ಮೇಲೆ ಬಿದ್ದು ಕುರಿಗಳನ್ನೂ, ದನಗಳನ್ನೂ, ಕರುಗಳನ್ನೂ ಹಿಡಿದು, ನೆಲದ ಮೇಲೆ ಕೊಯ್ದು, ಮಾಂಸವನ್ನು ರಕ್ತದ ಸಂಗಡ ತಿಂದರು.
1SA 14:33 ಆಗ ಅವರು ಸೌಲನಿಗೆ, “ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವುದರಿಂದ, ಯೆಹೋವ ದೇವರಿಗೆ ವಿರೋಧವಾಗಿ ಪಾಪ ಮಾಡುತ್ತಾರೆ,” ಎಂದು ತಿಳಿಸಿದರು. ಅದಕ್ಕವನು, “ನೀವು ನಂಬಿಕೆದ್ರೋಹ ಮಾಡಿದಿರಿ. ಈಗ ಒಂದು ದೊಡ್ಡ ಕಲ್ಲನ್ನು ನನ್ನ ಬಳಿಗೆ ಹೊರಳಿಸಿ ಬಿಡಿರಿ,” ಅಂದನು.
1SA 14:34 ಸೌಲನು ಅವರಿಗೆ, “ನೀವು ಜನರಲ್ಲಿ ಚದರಿಹೋಗಿ, ರಕ್ತ ಸಹಿತವಾಗಿ ತಿಂದು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದೆ, ಪ್ರತಿಯೊಬ್ಬನು ತನ್ನ ಎತ್ತನ್ನೂ, ತನ್ನ ಕುರಿಯನ್ನೂ ನನ್ನ ಬಳಿಗೆ ತಂದು, ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ,” ಎಂದನು. ಆದ್ದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತೆಗೆದುಕೊಂಡು ಬಂದು, ಅಲ್ಲಿ ಕೊಯ್ದನು.
1SA 14:35 ಸೌಲನು ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಯೆಹೋವ ದೇವರಿಗೆ ಅವನು ಕಟ್ಟಿಸಿದ ಮೊದಲನೆಯ ಬಲಿಪೀಠವು.
1SA 14:36 ಸೌಲನು ಜನರಿಗೆ, “ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿ ಹೋಗಿ, ಉದಯಕಾಲದವರೆಗೆ ಅವರನ್ನು ಸುಲಿದುಕೊಂಡು, ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು,” ಎಂದನು. ಅದಕ್ಕೆ ಜನರು, “ನಿನ್ನ ದೃಷ್ಟಿಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ಮಾಡು,” ಎಂದರು. ಆಗ ಯಾಜಕನು, “ದೇವರ ಸನ್ನಿಧಿಗೆ ಹೋಗೋಣ,” ಎಂದನು.
1SA 14:37 ಅದಕ್ಕೆ ಸೌಲನು, “ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀವು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಡುವಿರೋ?” ಎಂದು ದೇವರ ಆಲೋಚನೆಯನ್ನು ಕೇಳಿದನು. ಆದರೆ ಅವರು ಅವನಿಗೆ ಆ ದಿವಸದಲ್ಲಿ ಉತ್ತರ ಕೊಡದೆ ಹೋದರು.
1SA 14:38 ಆಗ ಸೌಲನು, “ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ. ಈ ಹೊತ್ತು ಈ ಪಾಪ ಯಾವುದರಿಂದ ಉಂಟಾಯಿತೆಂದು ತಿಳಿದುಕೊಂಡು ನೋಡಿರಿ.
1SA 14:39 ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.
1SA 14:40 ಆಗ ಸೌಲನು ಸಮಸ್ತ ಇಸ್ರಾಯೇಲರಿಗೆ, “ನೀವು ಒಂದು ಕಡೆಯಲ್ಲಿ ಇರಿ. ನಾನೂ, ನನ್ನ ಮಗ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ,” ಎಂದನು. ಜನರು ಸೌಲನಿಗೆ, “ನಿನ್ನ ದೃಷ್ಟಿಗೆ ಒಳ್ಳೆಯದಾಗಿ ತೋರುವುದನ್ನು ಮಾಡು,” ಎಂದರು.
1SA 14:41 ಸೌಲನು ಇಸ್ರಾಯೇಲರ ದೇವರಾದ ಯೆಹೋವ ದೇವರಿಗೆ, “ನೀವು ಪೂರ್ಣ ನಿರ್ಣಯವನ್ನು ದಯಪಾಲಿಸಿರಿ,” ಎಂದು ಹೇಳಿ ಚೀಟು ಹಾಕಿದನು. ಆಗ ಸೌಲನಿಗೂ ಯೋನಾತಾನನಿಗೂ ಚೀಟು ಬಂತು. ಆದರೆ ಜನರು ಪಾರಾದರು.
1SA 14:42 ಸೌಲನು ಅವರಿಗೆ, “ನನ್ನ ಮೇಲೆಯೂ ನನ್ನ ಮಗ ಯೋನಾತಾನನ ಮೇಲೆಯೂ ಚೀಟುಹಾಕಿರಿ,” ಎಂದಾಗ, ಯೋನಾತಾನನಿಗೆ ಚೀಟು ಬಿತ್ತು.
1SA 14:43 ಆಗ ಸೌಲನು ಯೋನಾತಾನನಿಗೆ, “ನೀನು ಮಾಡಿದ್ದನ್ನು ನನಗೆ ತಿಳಿಸು,” ಎಂದನು. ಅದಕ್ಕೆ ಯೋನಾತಾನನು, “ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ರುಚಿ ನೋಡಿದೆನು, ನಾನು ಸಾಯಬೇಕು,” ಎಂದನು.
1SA 14:44 ಅದಕ್ಕೆ ಸೌಲನು, “ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ,” ಎಂದನು.
1SA 14:45 ಆದರೆ ಜನರು ಸೌಲನಿಗೆ, “ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆಯನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಎಂದಿಗೂ ಇಲ್ಲ. ಯೆಹೋವ ದೇವರ ಜೀವದಾಣೆ, ಇದನ್ನು ಅವನು ದೇವರ ಸಹಾಯದಿಂದ ಮಾಡಿದ್ದರಿಂದ, ಅವನ ಒಂದು ಕೂದಲು ನೆಲಕ್ಕೆ ಬೀಳಬಾರದು,” ಎಂದು ಹೇಳಿ ಯೋನಾತಾನನು ಸಾಯದ ಹಾಗೆ ಪ್ರಾಯಶ್ಚಿತ್ತವನ್ನು ಮಾಡಿ ಬಿಡಿಸಿಕೊಂಡರು.
1SA 14:46 ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.
1SA 14:47 ಹೀಗೆ ಸೌಲನು ಇಸ್ರಾಯೇಲಿನ ದೊರೆತನವನ್ನು ತೆಗೆದುಕೊಂಡು, ಸುತ್ತಲಿರುವ ತನ್ನ ಸಮಸ್ತ ಶತ್ರುಗಳಾದ ಮೋವಾಬ್ಯರ ಮೇಲೆಯೂ, ಅಮ್ಮೋನ್ಯರ ಮೇಲೆಯೂ, ಎದೋಮ್ಯರ ಮೇಲೆಯೂ, ಚೋಬದ ಅರಸರ ಮೇಲೆಯೂ, ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ, ಅವರನ್ನು ಪೀಡಿಸಿದನು.
1SA 14:48 ಅವನು ಸೈನ್ಯವನ್ನು ಕೂಡಿಸಿಕೊಂಡು, ಅಮಾಲೇಕ್ಯರನ್ನು ಸಂಹರಿಸಿದನು. ಇಸ್ರಾಯೇಲನ್ನು ಸುಲಿದುಕೊಳ್ಳುವವರ ಸಮಸ್ತರ ಕೈಗೂ ತಪ್ಪಿಸಿದನು.
1SA 14:49 ಸೌಲನಿಗೆ ಯೋನಾತಾನನೂ, ಇಷ್ವಿಯೂ, ಮಲ್ಕೀಷೂವನೂ ಎಂಬ ಮೂವರು ಪುತ್ರರೂ; ಹಿರಿಯವಳಾದ ಮೇರಬಳು, ಚಿಕ್ಕವಳಾದ ಮೀಕಲಳು ಎಂಬ ಇಬ್ಬರು ಪುತ್ರಿಯರೂ ಇದ್ದರು.
1SA 14:50 ಅಹೀಮಾಚನ ಪುತ್ರಿಯಾದ ಅಹೀನೋವಮಳು ಸೌಲನ ಹೆಂಡತಿಯಾಗಿದ್ದಳು. ಸೌಲನ ಚಿಕ್ಕಪ್ಪ ನೇರನ ಮಗ ಅಬ್ನೇರನೆಂಬವನು ಅವನ ಸೈನ್ಯಾಧಿಪತಿಯಾಗಿದ್ದನು.
1SA 14:51 ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
1SA 14:52 ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಘೋರ ಯುದ್ಧ ನಡೆಯುತ್ತಿತ್ತು. ಸೌಲನು ಯಾವ ಪರಾಕ್ರಮಶಾಲಿಯನ್ನಾದರೂ, ಧೈರ್ಯಶಾಲಿಯನ್ನಾದರೂ ಕಂಡರೆ, ಅಂಥವನನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದನು.
1SA 15:1 ಸಮುಯೇಲನು ಸೌಲನಿಗೆ, “ಯೆಹೋವ ದೇವರು ತಮ್ಮ ಜನರಾದ ಇಸ್ರಾಯೇಲರ ಮೇಲೆ ನಿನ್ನನ್ನು ಅರಸನಾಗಿರಲು ಅಭಿಷೇಕಿಸಲು ನನ್ನನ್ನು ಕಳುಹಿಸಿದರು. ಈಗ ನೀನು ಯೆಹೋವ ದೇವರ ಮಾತುಗಳನ್ನು ಕೇಳು.
1SA 15:2 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿ ತೊಂದರೆಪಡಿಸಿದರು, ಆದ್ದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು.
1SA 15:3 ಈಗ ನೀನು ಹೋಗಿ ಅಮಾಲೇಕ್ಯರನ್ನು ಹೊಡೆದು, ಅವರಿಗೆ ಉಂಟಾದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿಬಿಟ್ಟು, ಅವರನ್ನು ಕನಿಕರಿಸದೆ ಪುರುಷರನ್ನೂ, ಸ್ತ್ರೀಯರನ್ನೂ, ಚಿಕ್ಕವರನ್ನೂ, ಹಸುಗೂಸುಗಳನ್ನೂ, ದನಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ, ಕತ್ತೆಗಳನ್ನೂ ಕೊಂದುಹಾಕು,’ ” ಎಂಬದು.
1SA 15:4 ಆಗ ಸೌಲನು ತೆಲಾಯಿಮಿನಲ್ಲಿ ಜನರನ್ನು ಕೂಡಿಸಿ, ಲೆಕ್ಕ ಮಾಡಿದನು. ಇಸ್ರಾಯೇಲರ ಕಾಲಾಳುಗಳು ಎರಡು ಲಕ್ಷ ಜನರೂ, ಯೆಹೂದನ ಮನುಷ್ಯರು ಹತ್ತು ಸಾವಿರ ಜನರೂ ಇದ್ದರು.
1SA 15:5 ಸೌಲನು ಅಮಾಲೇಕ್ಯರ ಪಟ್ಟಣದವರೆಗೂ ಬಂದು, ತಗ್ಗಿನಲ್ಲಿ ಹೊಂಚಿಹಾಕಿದ್ದನು.
1SA 15:6 ಕೇನ್ಯರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ, ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ, ನೀವು ಅವರ ಮಧ್ಯದಲ್ಲಿಂದ ಹೊರಟು ಹೋಗಿರಿ,” ಎಂದು ಹೇಳಿದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು.
1SA 15:7 ಆಗ ಸೌಲನು ಹವೀಲದಿಂದ ಈಜಿಪ್ಟಿನ ಪೂರ್ವದಿಕ್ಕಿನಲ್ಲಿರುವ ಶೂರಿಗೆ ಹೋಗುವ ಮೇರೆಯವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು,
1SA 15:8 ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು, ಆದರೆ ಸಮಸ್ತ ಜನರನ್ನು ಖಡ್ಗದಿಂದ ಸಂಪೂರ್ಣ ನಾಶಮಾಡಿದನು.
1SA 15:9 ಸೌಲನೂ, ಅವನ ಜನರೂ ಅಗಾಗನನ್ನೂ ಮೇಲ್ತರವಾದ ಕುರಿಗಳನ್ನೂ ದನಗಳನ್ನೂ ಕುರಿಮರಿಗಳನ್ನೂ, ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದರು. ಆದರೆ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
1SA 15:10 ಆಗ ಯೆಹೋವ ದೇವರ ವಾಕ್ಯವು ಸಮುಯೇಲನಿಗೆ ಉಂಟಾಗಿ,
1SA 15:11 “ನಾನು ಸೌಲನನ್ನು ಅರಸನಾಗಿ ಮಾಡಿದ್ದರಿಂದ ದುಃಖಪಡುತ್ತೇನೆ. ಏಕೆಂದರೆ ಅವನು ನನ್ನನ್ನು ಹಿಂಬಾಲಿಸುವುದನ್ನು ಬಿಟ್ಟು, ಹಿಂದಕ್ಕೆ ಹೋದನು; ನನ್ನ ಆಜ್ಞೆಗಳನ್ನು ಈಡೇರಿಸಲಿಲ್ಲ,” ಎಂದರು. ಅದಕ್ಕೆ ಸಮುಯೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವ ದೇವರಿಗೆ ಮೊರೆಯಿಟ್ಟನು.
1SA 15:12 ಸಮುಯೇಲನು ಉದಯಕಾಲದಲ್ಲೆದ್ದು ಸೌಲನನ್ನು ಎದುರುಗೊಳ್ಳಲು ಹೋದನು. ಆಗ ಅವನಿಗೆ ಹೀಗೆ ಹೇಳಲಾಗಿತ್ತು, “ಸೌಲನು ತನ್ನ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ಕರ್ಮೆಲಿಗೆ ಹೋಗಿದ್ದಾನೆ. ನಂತರ ಅಲ್ಲಿಂದ ಮುಂದೆ ಹೋಗಿ ಗಿಲ್ಗಾಲಿಗೆ ಹೋಗಿದ್ದಾನೆ.”
1SA 15:13 ಸಮುಯೇಲನು ಸೌಲನ ಬಳಿಗೆ ಬಂದಾಗ, ಸೌಲನು ಅವನಿಗೆ, “ನಿನಗೆ ಯೆಹೋವ ದೇವರ ಆಶೀರ್ವಾದವಾಗಲಿ; ನಾನು ಯೆಹೋವ ದೇವರ ಆಜ್ಞೆಯನ್ನು ಈಡೇರಿಸಿದೆನು,” ಎಂದನು.
1SA 15:14 ಆಗ ಸಮುಯೇಲನು ಅವನಿಗೆ, “ನನ್ನ ಕಿವಿಗಳಲ್ಲಿ ಬೀಳುವ ಆ ಕುರಿಗಳ ಶಬ್ದವೇನು? ನಾನು ಕೇಳುವ ಪಶುಗಳ ಶಬ್ದವೇನು?” ಎಂದನು.
1SA 15:15 ಅದಕ್ಕೆ ಸೌಲನು, “ಜನರು ಅಮಾಲೇಕ್ಯರ ಬಳಿಯಿಂದ ತೆಗೆದುಕೊಂಡು ಬಂದವುಗಳು; ಏಕೆಂದರೆ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸುವುದಕ್ಕೋಸ್ಕರ ಮೇಲ್ತರವಾದ ಪಶುಕುರಿಗಳನ್ನು ಉಳಿಸಿಟ್ಟು, ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿಬಿಟ್ಟೆವು,” ಎಂದನು.
1SA 15:16 ಆಗ ಸಮುಯೇಲನು ಸೌಲನಿಗೆ, “ಅದಿರಲಿ, ಯೆಹೋವ ದೇವರು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು,” ಎಂದನು. ಅದಕ್ಕವನು, “ಹೇಳು,” ಎಂದನು.
1SA 15:17 ಆಗ ಸಮುಯೇಲನು, “ನೀನು ನಿನ್ನ ದೃಷ್ಟಿಯಲ್ಲಿ ಚಿಕ್ಕವನಾಗಿರುವಾಗಲೇ ಇಸ್ರಾಯೇಲ್ ಗೋತ್ರಗಳ ಮೇಲೆ ಯಜಮಾನನಾಗಿ ನೇಮಕವಾದಿಯಲ್ಲವೆ? ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿ ಅಭಿಷೇಕಿಸಿದರಲ್ಲವೆ?
1SA 15:18 ಯೆಹೋವ ದೇವರು ನಿನಗೆ, ‘ಹೋಗು ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ, ಅವರು ತೀರಿ ಹೋಗುವವರೆಗೂ ಅವರ ಸಂಗಡ ಯುದ್ಧಮಾಡಬೇಕು,’ ಎಂದು ಆಜ್ಞಾಪಿಸಿದರು.
1SA 15:19 ಹೀಗಿರುವಾಗ ನೀನು ಏಕೆ ಯೆಹೋವ ದೇವರ ಮಾತಿಗೆ ವಿಧೇಯನಾಗದೆ, ಕೊಳ್ಳೆಯ ಮೇಲೆ ಬಿದ್ದು ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ?” ಎಂದನು.
1SA 15:20 ಆಗ ಸೌಲನು ಸಮುಯೇಲನಿಗೆ, “ಹೌದು, ನಾನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ಯೆಹೋವ ದೇವರು ನನ್ನನ್ನು ಕಳುಹಿಸಿದ ಮಾರ್ಗವಾಗಿ ಹೋಗಿ, ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು, ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು.
1SA 15:21 ಆದರೆ ಜನರು ನಿನ್ನ ದೇವರಾದ ಯೆಹೋವ ದೇವರಿಗೆ ಗಿಲ್ಗಾಲಿನಲ್ಲಿ ಬಲಿ ಕೊಡುವುದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣವಾಗಿ ನಾಶಮಾಡಬೇಕೆಂದಿರುವ ದನಕುರಿಗಳಲ್ಲಿ ಉತ್ತಮವಾದವುಗಳನ್ನು ಹಿಡಿದುಕೊಂಡು ಬಂದರು,” ಎಂದನು.
1SA 15:22 ಅದಕ್ಕೆ ಸಮುಯೇಲನು ಹೇಳಿದ್ದೇನೆಂದರೆ, “ಯೆಹೋವ ದೇವರ ವಾಕ್ಯಕ್ಕೆ ವಿಧೇಯನಾದರೆ, ಯೆಹೋವ ದೇವರಿಗೆ ಆಗುವ ಸಂತೋಷ ದಹನಬಲಿಗಳಲ್ಲಿಯೂ ಯಜ್ಞಗಳಲ್ಲಿಯೂ ಆಗುವುದೋ? ಇಗೋ, ಯಜ್ಞಕ್ಕಿಂತ ವಿಧೇಯತೆಯು, ಟಗರುಗಳ ಕೊಬ್ಬಿಗಿಂತ ಮಾತುಕೇಳುವುದೇ ಉತ್ತಮವಾಗಿರುವುದು.
1SA 15:23 ಏಕೆಂದರೆ ಪ್ರತಿಭಟಿಸುವುದು ಮಂತ್ರತಂತ್ರಗಳಷ್ಟು ಪಾಪವಾಗಿದೆ. ಹಟಮಾರಿತನವು ದುಷ್ಟತನಕ್ಕೂ ವಿಗ್ರಹಾರಾಧನೆಗೂ ಸಮಾನವಾಗಿದೆ. ನೀನು ಯೆಹೋವ ದೇವರ ವಾಕ್ಯವನ್ನು ಅಲಕ್ಷ್ಯಮಾಡಿದ್ದರಿಂದ ಅವರು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕರಿಸಿಬಿಟ್ಟಿದ್ದಾರೆ.”
1SA 15:24 ಆಗ ಸೌಲನು ಸಮುಯೇಲನಿಗೆ, “ನಾನು ಯೆಹೋವ ದೇವರ ಆಜ್ಞೆಯನ್ನೂ, ನಿನ್ನ ಮಾತುಗಳನ್ನೂ ಮೀರಿದ್ದರಿಂದ ನಾನು ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
1SA 15:25 ಆದ್ದರಿಂದ ಈಗ ದಯಮಾಡಿ ನನ್ನ ಪಾಪವನ್ನು ಕ್ಷಮಿಸಿ, ನಾನು ಯೆಹೋವ ದೇವರನ್ನು ಆರಾಧಿಸುವ ಹಾಗೆ ನನ್ನ ಸಂಗಡ ತಿರುಗಿ ಬಾ,” ಎಂದು ಬೇಡಿಕೊಂಡನು.
1SA 15:26 ಆದರೆ ಸಮುಯೇಲನು ಸೌಲನಿಗೆ, “ನಾನು ನಿನ್ನ ಸಂಗಡ ಹಿಂದಿರುಗಿ ಬರುವುದಿಲ್ಲ. ಏಕೆಂದರೆ ನೀನು ಯೆಹೋವ ದೇವರ ವಾಕ್ಯವನ್ನು ತಿರಸ್ಕರಿಸಿದ್ದೀ. ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿರದ ಹಾಗೆ ತಿರಸ್ಕಾರಮಾಡಿಬಿಟ್ಟರು,” ಎಂದು ಹೇಳಿದನು.
1SA 15:27 ಸಮುಯೇಲನು ಹೋಗುವುದಕ್ಕೋಸ್ಕರ ತಿರುಗಿಕೊಳ್ಳುವಾಗ ಸೌಲನು ಅವನ ವಸ್ತ್ರದ ಕೊನೆಯನ್ನು ಹಿಡಿದುಕೊಂಡನು. ಆಗ ಅದು ಹರಿದುಹೋಯಿತು.
1SA 15:28 ಸಮುಯೇಲನು ಅವನಿಗೆ, “ನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಯೆಹೋವ ದೇವರು ಈ ಹೊತ್ತು ಕಿತ್ತು, ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟರು.
1SA 15:29 ಇಸ್ರಾಯೇಲಿನ ಪ್ರತಾಪರು ಸುಳ್ಳು ಹೇಳುವವರಲ್ಲ, ಮಾತನ್ನು ಹಿಂತೆಗೆದುಕೊಳ್ಳುವವರಲ್ಲ. ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದನು.
1SA 15:30 ಅದಕ್ಕವನು, “ನಾನು ಪಾಪವನ್ನು ಮಾಡಿದೆನು. ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ, ಇಸ್ರಾಯೇಲರ ಮುಂದೆಯೂ ನನ್ನನ್ನು ಘನಪಡಿಸು. ನಾನು ನಿನ್ನ ದೇವರಾದ ಯೆಹೋವ ದೇವರಿಗೆ ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ,” ಎಂದನು.
1SA 15:31 ಹಾಗೆಯೇ ಸಮುಯೇಲನು ತಿರುಗಿ ಸೌಲನ ಹಿಂದೆ ಹೋದನು. ಸೌಲನು ಯೆಹೋವ ದೇವರನ್ನು ಆರಾಧಿಸಿದನು.
1SA 15:32 ಸಮುಯೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ,” ಎಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ, “ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತು,” ಎಂದುಕೊಂಡನು.
1SA 15:33 ಆದರೆ ಸಮುಯೇಲನು ಅವನಿಗೆ, “ನಿನ್ನ ಖಡ್ಗವು ಹೇಗೆ ಸ್ತ್ರೀಯರನ್ನು ಮಕ್ಕಳಿಲ್ಲದವರಾಗಿ ಮಾಡಿತೋ, ಹಾಗೆಯೇ ಸ್ತ್ರೀಯರಲ್ಲಿ ನಿನ್ನ ತಾಯಿಯು ಮಕ್ಕಳಿಲ್ಲದವಳಾಗುವಳು,” ಎಂದು ಹೇಳಿ, ಸಮುಯೇಲನು ಗಿಲ್ಗಾಲಿನಲ್ಲಿ ಯೆಹೋವ ದೇವರ ಮುಂದೆ ಅಗಾಗನಿಗೆ ಮರಣದಂಡನೆ ವಿಧಿಸಿದನು.
1SA 15:34 ಸಮುಯೇಲನು ರಾಮಕ್ಕೆ ಹೋದನು; ಆದರೆ ಸೌಲನು ತನ್ನ ಊರಾದ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು.
1SA 15:35 ಸಮುಯೇಲನು ತಾನು ಸಾಯುವ ದಿವಸದವರೆಗೂ ಸೌಲನನ್ನು ತಿರುಗಿ ಕಾಣಲು ಬರಲಿಲ್ಲ. ಸಮುಯೇಲನು ಅವನಿಗೋಸ್ಕರ ದುಃಖಪಟ್ಟನು. ಇದಲ್ಲದೆ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಮಾಡಿದ್ದಕ್ಕೋಸ್ಕರ ಯೆಹೋವ ದೇವರು ದುಃಖಪಟ್ಟರು.
1SA 16:1 ಯೆಹೋವ ದೇವರು ಸಮುಯೇಲನಿಗೆ, “ಇಸ್ರಾಯೇಲಿನ ಅರಸನಾಗಿರದ ಹಾಗೆ ನಾನು ಅಲಕ್ಷ್ಯಮಾಡಿದ ಸೌಲನಿಗೋಸ್ಕರ ನೀನು ಎಷ್ಟರವರೆಗೆ ದುಃಖವುಳ್ಳವನಾಗಿರುವೆ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ. ಬೇತ್ಲೆಹೇಮಿನವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು. ಏಕೆಂದರೆ ಅವನ ಮಕ್ಕಳಲ್ಲಿ ನಾನು ಒಬ್ಬನನ್ನು ಅರಸನಾಗಿ ಆಯ್ದುಕೊಂಡೆನು,” ಎಂದರು.
1SA 16:2 ಆಗ ಸಮುಯೇಲನು, “ನಾನು ಹೋಗುವುದು ಹೇಗೆ? ಸೌಲನು ಅದನ್ನು ಕೇಳಿದರೆ, ನನ್ನನ್ನು ಕೊಂದುಹಾಕುವನು,” ಎಂದನು. ಅದಕ್ಕೆ ಯೆಹೋವ ದೇವರು, “ನೀನು ಒಂದು ಕಡಸನ್ನು ನಿನ್ನ ಸಂಗಡ ತೆಗೆದುಕೊಂಡುಹೋಗಿ, ‘ನಾನು ಯೆಹೋವ ದೇವರಿಗಾಗಿ ಯಜ್ಞಮಾಡುವುದಕ್ಕೆ ಬಂದೆನು,’ ಎಂದು ಹೇಳಿ,
1SA 16:3 ಇಷಯನನ್ನು ಯಜ್ಞವನ್ನು ಅರ್ಪಿಸುವುದಕ್ಕೆ ಕರೆಯಬೇಕು; ಆಗ ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವೆನು. ನಾನು ನಿನಗೆ ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ನನಗೋಸ್ಕರ ಅಭಿಷೇಕಿಸಬೇಕು,” ಎಂದರು.
1SA 16:4 ಯೆಹೋವ ದೇವರು ಹೇಳಿದ ಪ್ರಕಾರ ಸಮುಯೇಲನು ಮಾಡಿ, ಬೇತ್ಲೆಹೇಮಿಗೆ ಬಂದನು. ಆಗ ಊರಿನ ಹಿರಿಯರು ಅವನ ಬರುವಿಕೆಯನ್ನು ಕಂಡು ನಡುಗಿ, ಅವನಿಗೆ, “ಸಮಾಧಾನವಾಗಿ ಬಂದೆಯೋ?” ಎಂದರು.
1SA 16:5 ಅದಕ್ಕವನು, “ಸಮಾಧಾನವೇ, ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸ ಬಂದೆನು. ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನನ್ನ ಸಂಗಡ ಯಜ್ಞಮಾಡುವುದಕ್ಕೆ ಬನ್ನಿರಿ,” ಎಂದನು. ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧಮಾಡಿ, ಅವರನ್ನು ಯಜ್ಞಮಾಡುವುದಕ್ಕೆ ಕರೆದನು.
1SA 16:6 ಅವರು ಬಂದಾಗ, ಅವನು ಎಲೀಯಾಬನನ್ನು ಕಂಡು, “ನಿಶ್ಚಯವಾಗಿ ಯೆಹೋವ ದೇವರ ಅಭಿಷಿಕ್ತನು ಅವರ ಮುಂದೆ ಇದ್ದಾನೆ,” ಎಂದುಕೊಂಡನು.
1SA 16:7 ಆದರೆ ಯೆಹೋವ ದೇವರು ಸಮುಯೇಲನಿಗೆ, “ನೀನು ಅವನ ರೂಪವನ್ನೂ, ಅವನ ದೇಹದ ಎತ್ತರವನ್ನೂ ದೃಷ್ಟಿಸಬೇಡ. ಏಕೆಂದರೆ ಅವನನ್ನು ನಾನು ತಿರಸ್ಕರಿಸಿದೆನು; ಏಕೆಂದರೆ ಯೆಹೋವ ದೇವರು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ, ಹೃದಯವನ್ನೇ ನೋಡುವರು,” ಎಂದನು.
1SA 16:8 ಆಗ ಇಷಯನು ಅಬೀನಾದಾಬನನ್ನು ಕರೆದು ಅವನನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಅವನು ಇವನನ್ನು, “ಯೆಹೋವ ದೇವರು ಆರಿಸಿಕೊಳ್ಳಲಿಲ್ಲ,” ಎಂದನು.
1SA 16:9 ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು, “ಇವನನ್ನು ಯೆಹೋವ ದೇವರು ಆಯ್ದುಕೊಳ್ಳಲಿಲ್ಲ,” ಎಂದನು.
1SA 16:10 ಅನಂತರ ಇಷಯನು ತನ್ನ ಏಳುಮಂದಿ ಪುತ್ರರನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಸಮುಯೇಲನು ಇಷಯನಿಗೆ, “ಯೆಹೋವ ದೇವರು ಇವರಲ್ಲಿ ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ,” ಎಂದನು.
1SA 16:11 ಸಮುಯೇಲನು, “ನಿನಗಿರುವ ಮಕ್ಕಳು ಇಷ್ಟೇನೋ?” ಎಂದು ಇಷಯನನ್ನು ಕೇಳಿದನು. ಅದಕ್ಕವನು, “ಇವರೆಲ್ಲರಿಗಿಂತಲೂ ಚಿಕ್ಕವನೊಬ್ಬನು ಉಳಿದಿದ್ದಾನೆ. ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ,” ಎಂದನು. ಆಗ ಸಮುಯೇಲನು ಇಷಯನಿಗೆ, “ಅವನನ್ನು ಕರೆಕಳುಹಿಸು. ಏಕೆಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕುಳಿತುಕೊಳ್ಳಬಾರದು,” ಎಂದನು.
1SA 16:12 ಆಗ ಇಷಯನು ಅವನನ್ನು ಕರೆಯಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ, ಸುಂದರ ಮುಖವುಳ್ಳವನಾಗಿಯೂ, ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಯೆಹೋವ ದೇವರು ಸಮುಯೇಲನಿಗೆ, “ನೀನೆದ್ದು ಇವನನ್ನು ಅಭಿಷೇಕಿಸು. ಇವನು ಅವನೇ,” ಎಂದರು.
1SA 16:13 ಸಮುಯೇಲನು ಎಣ್ಣೆ ಇರುವ ಕೊಂಬನ್ನು ತೆಗೆದುಕೊಂಡು, ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಯೆಹೋವ ದೇವರ ಆತ್ಮರು ಕೂಡಲೆ ದಾವೀದನ ಮೇಲೆ ಇಳಿದು ಬಂದರು. ಅನಂತರ ಸಮುಯೇಲನು ಎದ್ದು ರಾಮಕ್ಕೆ ಹೋದನು.
1SA 16:14 ಯೆಹೋವ ದೇವರ ಆತ್ಮರು ಸೌಲನನ್ನು ಬಿಟ್ಟುಹೋಗಲು, ದೇವರಿಂದ ಬಂದ ದುರಾತ್ಮವು ಅವನನ್ನು ಪೀಡಿಸಿತು.
1SA 16:15 ಆಗ ಸೌಲನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಹೆದರಿಸುತ್ತದೆ.
1SA 16:16 ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳಬೇಕು. ದೇವರಿಂದ ಬಂದ ದುರಾತ್ಮವು ನಿನ್ನ ಮೇಲೆ ಬಂದಿರುವಾಗ, ಅವನು ತನ್ನ ಕೈಯಿಂದ ವಾದ್ಯ ಬಾರಿಸಿದರೆ, ನಿನಗೆ ಒಳ್ಳೆಯದಾಗಿರುವುದು,” ಎಂದರು.
1SA 16:17 ಸೌಲನು ತನ್ನ ಸೇವಕರಿಗೆ, “ವಾದ್ಯ ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ನೋಡಿ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದನು.
1SA 16:18 ಆಗ ಸೇವಕರಲ್ಲಿ ಒಬ್ಬನು ಅವನಿಗೆ ಉತ್ತರವಾಗಿ, “ವಾದ್ಯ ಬಾರಿಸಲು ನಿಪುಣನಾದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ಕಂಡೆನು. ಅವನು ಧೈರ್ಯಶಾಲಿಯೂ, ಪರಾಕ್ರಮಶಾಲಿಯೂ, ರಣಶೂರನೂ, ವಾಕ್ಚತುರನೂ, ಸುಂದರನೂ ಆಗಿದ್ದಾನೆ. ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇದ್ದಾರೆ,” ಎಂದನು.
1SA 16:19 ಆದಕಾರಣ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ, “ಕುರಿಗಳ ಬಳಿಯಲ್ಲಿ ಇರುವ ನಿನ್ನ ಪುತ್ರನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು,” ಎಂದನು.
1SA 16:20 ಆಗ ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಮೇಕೆಯ ಮರಿಯನ್ನೂ ಕತ್ತೆಯ ಮೇಲೆ ಹೇರಿ, ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.
1SA 16:21 ಹಾಗೆಯೇ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಇವನನ್ನು ಬಹಳವಾಗಿ ಮೆಚ್ಚಿದನು. ಅವನನ್ನು ತನ್ನ ಆಯುಧ ಹೊರುವವರಲ್ಲಿ ಒಬ್ಬನನ್ನಾಗಿ ನೇಮಿಸಿಕೊಂಡನು.
1SA 16:22 ಸೌಲನು ಇಷಯನ ಬಳಿಗೆ ಮನುಷ್ಯನನ್ನು ಕಳುಹಿಸಿ, “ದಾವೀದನು ನನ್ನ ಸಮ್ಮುಖದಲ್ಲಿ ಸೇವೆಮಾಡಲಿ. ಏಕೆಂದರೆ ನಾನು ದಾವೀದನನ್ನು ಮೆಚ್ಚಿದ್ದೇನೆ,” ಎಂದನು.
1SA 16:23 ಹಾಗೆಯೇ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಬಂದಾಗ, ದಾವೀದನು ಕಿನ್ನರಿಯನ್ನು ತೆಗೆದುಕೊಂಡು, ತನ್ನ ಕೈಯಿಂದ ಬಾರಿಸುವನು. ಅದರಿಂದ ಸೌಲನು ಉಪಶಮನ ಹೊಂದಿ ಚೆನ್ನಾಗಿರುವನು; ದುರಾತ್ಮವು ಅವನನ್ನು ಬಿಟ್ಟು ಹೋಗುವುದು.
1SA 17:1 ಫಿಲಿಷ್ಟಿಯರು ಯುದ್ಧಮಾಡುವುದಕ್ಕೆ ತಮ್ಮ ಸೈನ್ಯವನ್ನು ಯೆಹೂದ ದೇಶದ ಸೋಕೋವಿನಲ್ಲಿ ಕೂಡಿಸಿದರು. ಅಜೇಕಕ್ಕೂ ಸೋಕೋವಿಗೂ ಮಧ್ಯದಲ್ಲಿರುವ ಎಫೆಸ ದಮ್ಮೀಮಿನಲ್ಲಿ ದಂಡಿಳಿದರು.
1SA 17:2 ಸೌಲನೂ, ಇಸ್ರಾಯೇಲರೂ ಕೂಡಿಕೊಂಡರು. ಏಲಾ ತಗ್ಗಿನ ಬಳಿಯಲ್ಲಿ ದಂಡಿಳಿದು, ಫಿಲಿಷ್ಟಿಯರಿಗೆ ಎದುರಾಗಿ ಯುದ್ಧಮಾಡಲು ವ್ಯೂಹ ಕಟ್ಟಿದರು.
1SA 17:3 ಫಿಲಿಷ್ಟಿಯರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ, ಇಸ್ರಾಯೇಲರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ ನಿಂತರು. ಅವರ ಮಧ್ಯದಲ್ಲಿ ತಗ್ಗು ಇತ್ತು.
1SA 17:4 ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಬಂದನು. ಅವನ ಎತ್ತರ ಸುಮಾರು ಮೂರು ಮೀಟರ್.
1SA 17:5 ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣ ಇತ್ತು. ಪರೆಪರೆಯಾಗಿ ಜೋಡಿಸಲಾಗಿದ್ದ ಕವಚವನ್ನು ಅವನು ತೊಟ್ಟುಕೊಂಡಿದ್ದನು. ಆ ಕವಚವು ಸುಮಾರು ಐವತ್ತೇಳು ಕಿಲೋಗ್ರಾಂ ತೂಕವಾಗಿತ್ತು.
1SA 17:6 ಅವನ ಕಾಲುಗಳಲ್ಲಿ ಕಂಚಿನ ಚಮ್ಮಳಿಗೆ. ಅವನ ತೋಳುಗಳ ಮಧ್ಯದಲ್ಲಿ ಭರ್ಜಿ ಇದ್ದವು.
1SA 17:7 ಅವನ ಈಟಿಯ ಕೋಲು ನೇಕಾರರ ಕುಂಟೆಯಷ್ಟು ಗಾತ್ರದಾಗಿತ್ತು. ಅವನ ಈಟಿಯ ಅಲಗು ಏಳು ಕಿಲೋಗ್ರಾಂ ತೂಕವಾಗಿತ್ತು.
1SA 17:8 ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾಯೇಲ್ ಸೈನ್ಯಗಳಿಗೆ ಕೂಗಿ ಹೇಳಿದ್ದೇನೆಂದರೆ, “ಏಕೆ ನೀವು ವ್ಯೂಹ ಕಟ್ಟಿಕೊಳ್ಳ ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆಯ್ದುಕೊಳ್ಳಿರಿ. ಅವನು ನನ್ನ ಮುಂದೆ ಬರಲಿ.
1SA 17:9 ಅವನು ನನ್ನ ಸಂಗಡ ಯುದ್ಧಮಾಡಿ ನನ್ನನ್ನು ಕೊಂದರೆ, ನಾವು ನಿಮಗೆ ಸೇವಕರಾಗುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು,” ಎಂದನು.
1SA 17:10 ಆ ಫಿಲಿಷ್ಟಿಯನು, “ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ. ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ,” ಎಂದನು.
1SA 17:11 ಸೌಲನೂ, ಸಮಸ್ತ ಇಸ್ರಾಯೇಲರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿದಾಗ ಹೆದರಿಕೊಂಡು ಬಹು ಭಯಪಟ್ಟರು.
1SA 17:12 ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾಗಿದ್ದನು. ಈ ಇಷಯನಿಗೆ ಎಂಟು ಮಂದಿ ಪುತ್ರರಿದ್ದರು. ಸೌಲನ ಕಾಲದಲ್ಲಿ ಇಷಯನು ವೃದ್ಧನಾಗಿದ್ದನು.
1SA 17:13 ಇಷಯನ ಮೂವರು ಹಿರಿಯ ಪುತ್ರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಪುತ್ರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು, ಎರಡನೆಯವನ ಹೆಸರು ಅಬೀನಾದಾಬನು; ಮೂರನೆಯವನ ಹೆಸರು ಶಮ್ಮನು;
1SA 17:14 ಆದರೆ ದಾವೀದನು ಚಿಕ್ಕವನಾಗಿದ್ದನು. ಹಿರಿಯರಾದ ಆ ಮೂವರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು.
1SA 17:15 ದಾವೀದನು ಸೌಲನನ್ನು ಬಿಟ್ಟು, ತನ್ನ ತಂದೆಯ ಕುರಿಗಳನ್ನು ಮೇಯಿಸಲು ಬೇತ್ಲೆಹೇಮಿಗೆ ಆಗಾಗ ಹೋಗುತ್ತಿದ್ದನು.
1SA 17:16 ಆದರೆ ಆ ಫಿಲಿಷ್ಟಿಯನು ಪ್ರತಿ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.
1SA 17:17 ಇಷಯನು ತನ್ನ ಮಗನಾದ ದಾವೀದನಿಗೆ, “ನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ, ಈ ಹತ್ತು ರೊಟ್ಟಿಗಳನ್ನೂ ತೆಗೆದುಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಹೋಗು.
1SA 17:18 ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಪ್ರಧಾನನಿಗೆ ಕೊಟ್ಟು, ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ, ಅವರ ಗುರುತನ್ನು ತೆಗೆದುಕೊಂಡು ಬಾ,” ಎಂದನು.
1SA 17:19 ಆಗ ಸೌಲನೂ, ಇಸ್ರಾಯೇಲರೆಲ್ಲರೂ ಫಿಲಿಷ್ಟಿಯರ ಸಂಗಡ ಏಲಾ ತಗ್ಗಿನಲ್ಲಿ ಯುದ್ಧ ಮಾಡುತ್ತಿದ್ದರು.
1SA 17:20 ದಾವೀದನು ಉದಯಕಾಲದಲ್ಲಿ ಎದ್ದು, ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು, ತನ್ನ ತಂದೆ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತೆಗೆದುಕೊಂಡುಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ, ಸಲಕರಣೆಗಳು ಇರುವ ಸ್ಥಳಕ್ಕೆ ಬಂದನು.
1SA 17:21 ಇಸ್ರಾಯೇಲರೂ, ಫಿಲಿಷ್ಟಿಯರೂ ಸೈನ್ಯಕ್ಕೆದುರಾಗಿ ಸೈನ್ಯ ವ್ಯೂಹ ಕಟ್ಟಿಕೊಂಡಿದ್ದರು.
1SA 17:22 ಆಗ ದಾವೀದನು ತಾನು ತೆಗೆದುಕೊಂಡು ಬಂದದ್ದನ್ನು, ವಸ್ತುಗಳನ್ನು ಕಾಯುವವನ ಕೈಯಲ್ಲಿ ಇಟ್ಟುಬಿಟ್ಟು, ರಣರಂಗಕ್ಕೆ ಓಡಿಹೋಗಿ, ತನ್ನ ಸಹೋದರರ ಬಳಿಗೆ ಬಂದು, ಯೋಗಕ್ಷೇಮ ವಿಚಾರಿಸಿದನು.
1SA 17:23 ಅವನು ಇವರ ಸಂಗಡ ಮಾತನಾಡಿಕೊಳ್ಳುತ್ತಾ ಇರುವಾಗ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು, ಮೊದಲಿನ ಹಾಗೆಯೇ ಮಾತನಾಡಿದನು. ಆ ಮಾತುಗಳನ್ನು ದಾವೀದನು ಕೇಳಿದನು.
1SA 17:24 ಇಸ್ರಾಯೇಲರೆಲ್ಲರೂ ಅವನನ್ನು ಕಂಡಾಗ, ಅವನ ಬಳಿಯಿಂದ ಓಡಿಹೋದರು; ಬಹು ಭಯಪಟ್ಟರು.
1SA 17:25 ಇಸ್ರಾಯೇಲರು, “ಏರಿ ಬಂದ ಈ ಮನುಷ್ಯನನ್ನು ಕಂಡಿರೋ? ಇಸ್ರಾಯೇಲನ್ನು ಪ್ರತಿಭಟಿಸಿ ಏರಿ ಬಂದಿದ್ದಾನಲ್ಲ. ಯಾವನು ಇವನನ್ನು ಕೊಂದು ಬಿಡುವನೋ, ಅವನನ್ನು ಅರಸನು ಬಹಳ ಐಶ್ವರ್ಯವಂತನನ್ನಾಗಿ ಮಾಡಿ, ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುವನು ಮತ್ತು ಅವನ ತಂದೆಯ ಮನೆಯನ್ನು ಇಸ್ರಾಯೇಲರಲ್ಲಿ ತೆರಿಗೆಯಿಂದ ವಿಮೋಚಿಸುವನು,” ಎಂದರು.
1SA 17:26 ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ, “ಈ ಫಿಲಿಷ್ಟಿಯನನ್ನು ಕೊಂದು, ಇಸ್ರಾಯೇಲಿನ ಮೇಲಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಸಿಕ್ಕುವುದು? ಏಕೆಂದರೆ ಸುನ್ನತಿ ಇಲ್ಲದ ಆ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸುವುದಕ್ಕೆ ಎಷ್ಟರವನು,” ಎಂದನು.
1SA 17:27 ಜನರು ಆ ಮಾತಿಗೆ ಸರಿಯಾಗಿ, “ಅವನನ್ನು ಕೊಂದವನಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದರು.
1SA 17:28 ದಾವೀದನು ಆ ಮನುಷ್ಯರ ಸಂಗಡ ಮಾತನಾಡುತ್ತಿರುವುದನ್ನು ಅವನ ಹಿರಿಯ ಸಹೋದರನಾದ ಎಲೀಯಾಬನು ಕೇಳಿ, ಅವನ ಮೇಲೆ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ, ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು. ಏಕೆಂದರೆ ಯುದ್ಧವನ್ನು ನೋಡಲು ಇಳಿದು ಬಂದಿದ್ದೀ,” ಎಂದನು.
1SA 17:29 ಅದಕ್ಕೆ ದಾವೀದನು, “ನಾನು ಈಗ ಮಾಡಿದ್ದೇನು? ಮಾತನಾಡಿದೆನಷ್ಟೇ?” ಎಂದನು.
1SA 17:30 ಅವನನ್ನು ಬಿಟ್ಟು ಬೇರೊಬ್ಬನ ಕಡೆಗೆ ತಿರುಗಿಕೊಂಡು ಹಾಗೆಯೇ ಕೇಳಿದನು. ಆಗ ಜನರು ಮೊದಲು ಹೇಳಿದ ಹಾಗೆಯೇ ಅವನಿಗೆ ಉತ್ತರವನ್ನು ಹೇಳಿದರು.
1SA 17:31 ದಾವೀದನು ಹೇಳಿದ ಮಾತುಗಳನ್ನು ಕೇಳಿದವರು ಸೌಲನ ಮುಂದೆ ತಿಳಿಸಿದರು. ಸೌಲನು ದಾವೀದನನ್ನು ಕರೆಯಿಸಿದನು.
1SA 17:32 ಆಗ ದಾವೀದನು ಸೌಲನಿಗೆ, “ಅವನ ನಿಮಿತ್ತವಾಗಿ ಯಾವ ಹೃದಯವೂ ಕುಗ್ಗಬಾರದು. ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧಮಾಡುವನು,” ಎಂದನು.
1SA 17:33 ಆಗ ಸೌಲನು ದಾವೀದನಿಗೆ, “ಈ ಫಿಲಿಷ್ಟಿಯನ ಮೇಲೆ ಯುದ್ಧಮಾಡಲು ನಿನ್ನಿಂದಾಗದು, ಏಕೆಂದರೆ ನೀನು ಹುಡುಗನಾಗಿದ್ದೀಯೆ. ಆದರೆ ಅವನು ಚಿಕ್ಕಂದಿನಿಂದ ಯುದ್ಧದ ಮನುಷ್ಯನಾಗಿದ್ದಾನೆ,” ಎಂದನು.
1SA 17:34 ದಾವೀದನು ಸೌಲನಿಗೆ, “ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿರುವ ಕುರಿಮರಿಯನ್ನು ಹಿಡಿದವು.
1SA 17:35 ಆಗ ನಾನು ಅದರ ಹಿಂದೆ ಹೋಗಿ, ಅದನ್ನು ಹೊಡೆದುಬಿಟ್ಟು, ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂದಿರುಗಿ ಬಿದ್ದಾಗ, ನಾನು ಅದರ ಗಡ್ಡವನ್ನು ಹಿಡಿದು, ಹೊಡೆದು ಕೊಂದುಹಾಕಿದೆನು.
1SA 17:36 ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ, ಆ ಕರಡಿಯನ್ನೂ ಕೊಂದುಬಿಟ್ಟೆನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸಿದ್ದರಿಂದ, ಅವುಗಳಲ್ಲಿ ಒಂದರ ಹಾಗೆ ಇರುವನು,” ಎಂದನು.
1SA 17:37 ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು. ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.
1SA 17:38 ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ಧರಿಸಲು ಹೇಳಿ, ಅವನ ತಲೆಯ ಮೇಲೆ ಒಂದು ಕಂಚಿನ ಶಿರಸ್ತ್ರಾಣವನ್ನು ಇಟ್ಟು, ಅವನಿಗೆ ಕವಚವನ್ನು ತೊಡಿಸಿದನು.
1SA 17:39 ದಾವೀದನು ಅವನ ಖಡ್ಗವನ್ನು ತನ್ನ ಕವಚಗಳ ಮೇಲೆ ಕಟ್ಟಿಕೊಂಡು ನಡೆದು ಪರೀಕ್ಷಿಸಿದನು. ಆದರೆ ಅವನಿಗೆ ಅದರ ಅಭ್ಯಾಸವಿರಲಿಲ್ಲ. ಆಗ ದಾವೀದನು ಸೌಲನಿಗೆ, “ನನಗೆ ಅವುಗಳ ಅಭ್ಯಾಸವಿಲ್ಲದ್ದರಿಂದ ಇವುಗಳ ಸಂಗಡ ಹೋಗಲಾರೆನು,” ಎಂದು ಹೇಳಿ, ಅವುಗಳನ್ನು ಬಿಚ್ಚಿಹಾಕಿ
1SA 17:40 ತನ್ನ ಕೋಲನ್ನು ಕೈಯಲ್ಲಿ ಹಿಡಿದು, ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆಯ್ದುಕೊಂಡು, ಅವುಗಳನ್ನು ಕುರಿಕಾಯಲು ಬಳಸುವ ತನ್ನ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಆ ಫಿಲಿಷ್ಟಿಯನ ಬಳಿಗೆ ಹೋದನು.
1SA 17:41 ಫಿಲಿಷ್ಟಿಯನು ನಡೆದು ದಾವೀದನ ಬಳಿಗೆ ಸಮೀಪಿಸಿ ಬಂದನು.
1SA 17:42 ಅವನ ಖೇಡ್ಯವನ್ನು ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದನನ್ನು ದೃಷ್ಟಿಸಿ ನೋಡಿದಾಗ, ಅವನು ಕೆಂಪಾದವನಾಗಿಯೂ, ಸುಂದರ ರೂಪವುಳ್ಳವನಾಗಿಯೂ ಇರುವ ಹುಡುಗನಾಗಿದ್ದುದರಿಂದ, ಅವನನ್ನು ತಿರಸ್ಕರಿಸಿ ದಾವೀದನಿಗೆ,
1SA 17:43 “ನೀನು ಕೋಲು ಹಿಡಿದುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ?” ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು.
1SA 17:44 ದಾವೀದನಿಗೆ, “ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು,” ಎಂದನು.
1SA 17:45 ದಾವೀದನು ಫಿಲಿಷ್ಟಿಯನಿಗೆ, “ನೀನು ಖಡ್ಗ, ಈಟಿ ಮತ್ತು ಗುರಾಣಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ. ಆದರೆ ನಾನು, ನೀನು ನಿಂದಿಸಿದ ಇಸ್ರಾಯೇಲಿನ ಸೈನ್ಯಗಳ ದೇವರಾದ ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ನಿನ್ನ ಬಳಿಗೆ ಬರುತ್ತೇನೆ.
1SA 17:46 ಯೆಹೋವ ದೇವರು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವರು; ನಾನು ನಿನ್ನನ್ನು ಹೊಡೆದುಬಿಟ್ಟು, ನಿನ್ನ ತಲೆಯನ್ನು ನಿನ್ನಿಂದ ತೆಗೆದುಹಾಕಿ, ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲರಲ್ಲಿ ದೇವರು ಇದ್ದಾರೆಂದು ಭೂಲೋಕದವರೆಲ್ಲರೂ ತಿಳಿಯುವರು.
1SA 17:47 ಯೆಹೋವ ದೇವರು ಖಡ್ಗದಿಂದಲೂ, ಈಟಿಯಿಂದಲೂ ರಕ್ಷಿಸುವುದಿಲ್ಲ ಎಂಬುದು ಈ ಸಮೂಹವೆಲ್ಲಾ ತಿಳಿದುಕೊಳ್ಳುವುದು. ಏಕೆಂದರೆ ಯುದ್ಧವು ಯೆಹೋವ ದೇವರದ್ದು, ಅವರು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
1SA 17:48 ಆಗ ಆ ಫಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸಮೀಪಿಸಿ ಬರುವಾಗ,
1SA 17:49 ದಾವೀದನು ತ್ವರೆಯಾಗಿ ಆ ಫಿಲಿಷ್ಟಿಯನಿಗೆದುರಾಗಿ ಓಡಿಹೋಗಿ, ತನ್ನ ಕೈಯನ್ನು ಚೀಲದಲ್ಲಿ ಹಾಕಿ, ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು, ಕವಣೆಯಲ್ಲಿಟ್ಟು ಬೀಸಿ, ಫಿಲಿಷ್ಟಿಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕದ್ದರಿಂದ, ಅವನು ನೆಲದ ಮೇಲೆ ಬೋರಲು ಬಿದ್ದನು.
1SA 17:50 ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು, ಅವನನ್ನು ಕೊಂದುಹಾಕಿದನು.
1SA 17:51 ದಾವೀದನ ಕೈಯಲ್ಲಿ ಖಡ್ಗ ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಖಡ್ಗವನ್ನು ತೆಗೆದುಕೊಂಡು, ಅದನ್ನು ಒರೆಯಿಂದ ಕಿತ್ತು, ಅವನನ್ನು ಕೊಂದು, ಅವನ ತಲೆಯನ್ನು ಕಡಿದುಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತು ಹೋದದ್ದನ್ನು ಕಂಡಾಗ ಓಡಿಹೋದರು.
1SA 17:52 ಇಸ್ರಾಯೇಲರೂ, ಯೆಹೂದದ ಜನರೂ ಎದ್ದು ಆರ್ಭಟಿಸಿ, ತಗ್ಗಿನ ಮೇರೆಯವರೆಗೂ, ಎಕ್ರೋನಿನ ಬಾಗಿಲಿನವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದ್ದರಿಂದ ಹತರಾದ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ಎಕ್ರೋನಿನವರೆಗೂ ಬಿದ್ದಿದ್ದರು.
1SA 17:53 ಇಸ್ರಾಯೇಲರು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರುಗಿಬಂದು ಅವರ ಡೇರೆಗಳನ್ನು ಸೂರೆಮಾಡಿದರು.
1SA 17:54 ದಾವೀದನು ಫಿಲಿಷ್ಟಿಯನ ತಲೆಯನ್ನು ತೆಗೆದುಕೊಂಡು, ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು.
1SA 17:55 ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟು ಹೋಗುವುದನ್ನು ಸೌಲನು ಕಂಡಾಗ, ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ, “ಅಬ್ನೇರನೇ, ಈ ಯುವಕನು ಯಾರ ಮಗನು?” ಎಂದನು. ಅದಕ್ಕೆ ಅಬ್ನೇರನು, “ಅರಸನೇ, ನಿನ್ನ ಪ್ರಾಣದಾಣೆ ನಾನರಿಯೆ,” ಎಂದನು.
1SA 17:56 ಅದಕ್ಕೆ ಅರಸನು, “ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು,” ಎಂದನು.
1SA 17:57 ಆಗ ದಾವೀದನು ಫಿಲಿಷ್ಟಿಯನನ್ನು ಕೊಂದು, ಅವನ ತಲೆಯನ್ನು ತೆಗೆದುಕೊಂಡು ಹಿಂದಿರುಗಿ ಬರುವಾಗ, ಅಬ್ನೇರನು ಅವನನ್ನು ಕರೆದು, ಸೌಲನ ಮುಂದೆ ತಂದು ಬಿಟ್ಟನು.
1SA 17:58 ಆಗ ಸೌಲನು, “ಯೌವನಸ್ಥನೇ, ನೀನು ಯಾರ ಮಗನು?” ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು, “ನಾನು ನಿನ್ನ ಸೇವಕನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು,” ಎಂದನು.
1SA 18:1 ದಾವೀದನು ಸೌಲನ ಸಂಗಡ ಮಾತನಾಡಿ ಮುಗಿಸಿದ ಮೇಲೆ, ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
1SA 18:2 ಇದಲ್ಲದೆ ಸೌಲನು ಆ ದಿವಸ ಅವನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು. ತಿರುಗಿ ಅವನ ತಂದೆಯ ಮನೆಗೆ ಹೋಗಗೊಡಿಸಲಿಲ್ಲ.
1SA 18:3 ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದನನ್ನು ಪ್ರೀತಿಮಾಡಿದ್ದರಿಂದ, ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು.
1SA 18:4 ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ, ತನ್ನ ವಸ್ತ್ರಗಳನ್ನೂ, ಖಡ್ಗವನ್ನೂ, ಬಿಲ್ಲನ್ನೂ, ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.
1SA 18:5 ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ, ಅಲ್ಲಿಗೆ ಹೋಗಿ ಅವನು ಎಲ್ಲವನ್ನು ವಿವೇಕದಿಂದ ಬಹು ಯಶಸ್ವಿಯಾಗಿ ಮಾಡುತ್ತಿದ್ದನು. ಆದ್ದರಿಂದ ಸೌಲನು ಅವನನ್ನು ಸೈನ್ಯದ ಮೇಲೆ ಅಧಿಕಾರಿಯಾಗಿ ನೇಮಿಸಿದನು. ಇದು ಸಮಸ್ತ ಜನರಿಗೂ, ಸೌಲನ ಸಮಸ್ತ ಸೇವಕರಿಗೂ ಮೆಚ್ಚಿಕೆಯಾಗಿತ್ತು.
1SA 18:6 ದಾವೀದನು ಫಿಲಿಷ್ಟಿಯರನ್ನು ಹೊಡೆದು ಜನರಸಹಿತವಾಗಿ ಬರುವಾಗ, ಇಸ್ರಾಯೇಲರ ಸಮಸ್ತ ಪಟ್ಟಣಗಳಿಂದ ಸ್ತ್ರೀಯರು ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಸಂತೋಷದಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.
1SA 18:7 ಆ ಸ್ತ್ರೀಯರು ಒಬ್ಬರಿಗೊಬ್ಬರು, “ಸೌಲನು ಸಾವಿರಗಳಷ್ಟು ಕೊಂದನು, ದಾವೀದನು ಹತ್ತು ಸಾವಿರಗಳಷ್ಟು ಕೊಂದನು,” ಎಂದು ಹಾಡಿದರು.
1SA 18:8 ಇದರಿಂದ ಸೌಲನಿಗೆ ಬಹು ಕೋಪವಾಯಿತು. ಆ ಹಾಡಿನಿಂದ ಅವನಿಗೆ ಬಹುಬೇಸರವಾಯಿತು. “ಇವರು ದಾವೀದನಿಗೆ ಹತ್ತು ಸಾವಿರಗಳಷ್ಟು ಎಂದು ಹಾಡಿದ್ದಾರೆ; ನನಗೆ ಸಾವಿರಗಳಷ್ಟೇ ಎಂದು ಹಾಡಿದ್ದಾರೆ; ಹಾಗಾದರೆ, ಅವನಿಗೆ ರಾಜ್ಯವಲ್ಲದೆ ಇನ್ನು ಆಗಬೇಕಾದದ್ದೇನು?” ಎಂದುಕೊಂಡನು.
1SA 18:9 ಆ ದಿವಸ ಮೊದಲುಗೊಂಡು ಸೌಲನು ದಾವೀದನ ಮೇಲೆ ಮತ್ಸರದ ಕಣ್ಣಿಟ್ಟನು.
1SA 18:10 ಮಾರನೆಯ ದಿವಸದಲ್ಲಿ ದೇವರಿಂದ ಅನುಮತಿಸಿದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಬುದ್ಧಿಗೆಟ್ಟು ಮನೆಯಲ್ಲಿ ಕೂಗಾಡತೊಡಗಿದನು. ಆಗ ದಾವೀದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಕಿನ್ನರಿಯನ್ನು ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
1SA 18:11 ಆಗ ಸೌಲನು, “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯುವೆನು,” ಎಂದು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ಅವನ ಸಮ್ಮುಖದಿಂದ ತಪ್ಪಿಸಿಕೊಂಡನು.
1SA 18:12 ಸೌಲನು ದಾವೀದನಿಗೆ ಭಯಪಟ್ಟನು. ಏಕೆಂದರೆ ಯೆಹೋವ ದೇವರು ಅವನ ಸಂಗಡ ಇದ್ದರು. ಸೌಲನ ಕಡೆಯಿಂದ ಹೊರಟು ಹೋಗಿದ್ದರು.
1SA 18:13 ಆದ್ದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು, ಸಾವಿರ ಜನರಿಗೆ ಪ್ರಧಾನನ್ನಾಗಿ ಮಾಡಿದನು. ಹಾಗೆಯೇ ಅವನು ದಳಪತಿಯಾಗಿ ಸೈನಿಕರನ್ನು ಕರೆದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
1SA 18:14 ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ತನ್ನ ಸಕಲ ಮಾರ್ಗಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.
1SA 18:15 ಅವನು ಜಯಶಾಲಿಯಾಗುತ್ತಿದ್ದದ್ದನ್ನು ಸೌಲನು ಕಂಡು ಅವನಿಗೆ ಭಯಪಟ್ಟಿದ್ದನು.
1SA 18:16 ಆದರೆ ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇರುವುದರಿಂದ ಅವನನ್ನು ಪ್ರೀತಿ ಮಾಡಿದರು.
1SA 18:17 ಆಗ ಸೌಲನು, “ನಾನು ಅವನ ಮೇಲೆ ವಿರೋಧವಾಗಿ ಕೈಯೆತ್ತಬಾರದು. ಫಿಲಿಷ್ಟಿಯರು ಅದನ್ನು ಮಾಡಲಿ,” ಎಂದು ತನ್ನಷ್ಟಕ್ಕೆ ಅಂದುಕೊಂಡು ದಾವೀದನಿಗೆ, “ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು, ನೀನು ನನಗೋಸ್ಕರ ಪರಾಕ್ರಮಶಾಲಿಯಾಗಿದ್ದು ಯೆಹೋವ ದೇವರ ಯುದ್ಧಗಳನ್ನು ನಡೆಸು,” ಎಂದನು.
1SA 18:18 ದಾವೀದನು ಸೌಲನಿಗೆ, “ಅರಸನಿಗೆ ಅಳಿಯನಾಗಿರುವುದಕ್ಕೆ ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರವು?” ಎಂದನು.
1SA 18:19 ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಮದುವೆಮಾಡಿಕೊಡುವ ಸಮಯ ಬಂದಾಗ, ಅವಳನ್ನು ಮೆಹೋಲದವನಾದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.
1SA 18:20 ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಅದು ಸೌಲನಿಗೆ ತಿಳಿದುಬಂದಾಗ, ಆ ಕಾರ್ಯವು ಅವನಿಗೆ ಮೆಚ್ಚಿಕೆಯಾಯಿತು.
1SA 18:21 “ಅವನಿಗೆ ಉರುಲಾಗಿರುವ ಹಾಗೆಯೂ, ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು,” ಎಂದುಕೊಂಡನು. ಆದ್ದರಿಂದ ಸೌಲನು ದಾವೀದನಿಗೆ, “ನೀನು ನನ್ನ ಅಳಿಯನಾಗಲು ಎರಡನೆಯ ಅವಕಾಶ,” ಎಂದನು.
1SA 18:22 ಸೌಲನು ತನ್ನ ಸೇವಕರಿಗೆ, “ನೀವು ದಾವೀದನ ಸಂಗಡ ಅಂತರಂಗವಾಗಿ ಮಾತನಾಡಿ, ಇಗೋ, ಅರಸನು ನಿನ್ನ ಮೇಲೆ ಪ್ರೀತಿಯುಳ್ಳವನಾಗಿದ್ದಾನೆ; ಈಗ ನೀನು ಅರಸನಿಗೆ ಅಳಿಯನಾಗೆಂದು, ಹೇಳಿರಿ,” ಎಂದು ಆಜ್ಞಾಪಿಸಿದನು.
1SA 18:23 ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು, “ನಾನು ದರಿದ್ರನೂ ಅಲ್ಪನೂ ಆಗಿರುವಾಗ, ನಾನು ಅರಸನಿಗೆ ಅಳಿಯನಾಗುವುದು ಅಷ್ಟು ಸಾಧಾರಣ ಸಂಗತಿಯೆಂದು ನೆನಸುತ್ತೀರೋ?” ಎಂದನು.
1SA 18:24 ಆಗ ಸೌಲನ ಸೇವಕರು ಸೌಲನಿಗೆ, ದಾವೀದನು ಈ ಪ್ರಕಾರವಾಗಿ ಮಾತನಾಡಿದನೆಂದು ಹೇಳಿದರು.
1SA 18:25 ಆದರೆ ಸೌಲನು ದಾವೀದನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ, “ನೀವು ದಾವೀದನಿಗೆ ಅರಸನು ಯಾವ ತೆರವನ್ನು ಅಪೇಕ್ಷಿಸದೆ, ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸುತ್ತಾನೆಂದು ಹೇಳಿರಿ,” ಎಂದನು.
1SA 18:26 ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ, ಅರಸನಿಗೆ ಅಳಿಯನಾಗುವುದು ಅವನಿಗೆ ಚೆನ್ನಾಗಿ ಕಾಣಿಸಿತು.
1SA 18:27 ಆದ್ದರಿಂದ ನೇಮಿಸಿದ ದಿವಸಗಳು ಈಡೇರುವುದಕ್ಕಿಂತ ಮುಂಚೆ ದಾವೀದನು ಎದ್ದು, ತನ್ನ ಜನರನ್ನು ಕರಕೊಂಡು ಹೋಗಿ, ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಹೊಡೆದು, ಅವರ ಮುಂದೊಗಲುಗಳನ್ನು ತಂದು, ತಾನು ಅರಸನಿಗೆ ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಪುತ್ರಿಯಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
1SA 18:28 ಸೌಲನು, ಯೆಹೋವ ದೇವರು ದಾವೀದನ ಸಂಗಡ ಇದ್ದಾರೆಂದೂ, ತನ್ನ ಮಗಳಾದ ಮೀಕಲಳು ಅವನನ್ನು ಪ್ರೀತಿ ಮಾಡಿದ್ದಳೆಂದು ತಿಳಿದುಕೊಂಡನು.
1SA 18:29 ಸೌಲನು ದಾವೀದನಿಗೋಸ್ಕರ ಇನ್ನೂ ಹೆಚ್ಚಾಗಿ ಭಯಪಟ್ಟನು. ಸೌಲನು ದಾವೀದನಿಗೆ ಜೀವಮಾನವೆಲ್ಲಾ ಶತ್ರುವಾಗಿದ್ದನು.
1SA 18:30 ಫಿಲಿಷ್ಟಿಯರ ಪ್ರಧಾನರು ಯುದ್ಧಕ್ಕೆ ಬರುತ್ತಿದ್ದರು. ಅವರು ಹೊರಟು ಬಂದಾಗಲೆಲ್ಲಾ ದಾವೀದನು ಸೌಲನ ಸಮಸ್ತ ಸೇನಾಪತಿಗಳಿಗಿಂತ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಆದ್ದರಿಂದ ಅವನ ಹೆಸರು ಬಹು ಪ್ರಸಿದ್ಧವಾಯಿತು.
1SA 19:1 ಸೌಲನು ತನ್ನ ಮಗ ಯೋನಾತಾನ ಮತ್ತು ತನ್ನ ಸಮಸ್ತ ಸೇವಕರಿಗೆ ದಾವೀದನನ್ನು ಕೊಲ್ಲಬೇಕೆಂದು ಹೇಳಿದನು. ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
1SA 19:2 ಯೋನಾತಾನನು ದಾವೀದನನ್ನು, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ. ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆಯಾಗಿದ್ದು, ಮರೆಯಾದ ಸ್ಥಳಗಳಲ್ಲಿ ಅಡಗಿಕೋ.
1SA 19:3 ಆಗ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು, ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿ, ನಾನು ನೋಡುವುದನ್ನು ಹೊರಟುಬಂದು ನೀನು ಇರುವ ಹೊಲದಲ್ಲಿ ನಿನಗೆ ತಿಳಿಸುವೆನು,” ಎಂದನು.
1SA 19:4 ಹಾಗೆಯೇ ಯೋನಾತಾನನು ತನ್ನ ತಂದೆ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೆಯದನ್ನು ಮಾತನಾಡಿ ಅವನಿಗೆ, “ಅರಸನು ತನ್ನ ಸೇವಕನಾದ ದಾವೀದನಿಗೆ ದ್ರೋಹಮಾಡದೆ ಇರಲಿ. ಏಕೆಂದರೆ ಅವನು ನಿನಗೆ ದ್ರೋಹಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.
1SA 19:5 ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಫಿಲಿಷ್ಟಿಯನನ್ನು ಹೊಡೆದನು. ಯೆಹೋವ ದೇವರು ಸಮಸ್ತ ಇಸ್ರಾಯೇಲರಿಗೋಸ್ಕರ ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ನೀನೂ ಕಂಡು ಸಂತೋಷಪಟ್ಟೆ. ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರ್ದೋಷಿಯ ರಕ್ತಕ್ಕೆ ವಿರೋಧವಾಗಿ ಅಪರಾಧವನ್ನು ಮಾಡುವುದೇಕೆ?” ಎಂದನು.
1SA 19:6 ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.
1SA 19:7 ಆಗ ಯೋನಾತಾನನು ದಾವೀದನನ್ನು ಕರೆದು, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ, ದಾವೀದನನ್ನು ಸೌಲನ ಬಳಿಗೆ ಕರೆತಂದನು. ಅವನು ಮುಂಚಿನ ಹಾಗೆಯೇ ಸೌಲನ ಬಳಿಯಲ್ಲಿ ಇದ್ದನು.
1SA 19:8 ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.
1SA 19:9 ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು.
1SA 19:10 ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.
1SA 19:11 ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ,” ಎಂದು ಹೇಳಿ
1SA 19:12 ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು.
1SA 19:13 ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.
1SA 19:14 ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, “ಅವನು ಖಾಯಿಲೆಯಲ್ಲಿದ್ದಾನೆ,” ಎಂದಳು.
1SA 19:15 ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, “ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದನು.
1SA 19:16 ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.
1SA 19:17 ಆಗ ಸೌಲನು ಮೀಕಲಳಿಗೆ, “ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ,” ಎಂದನು. ಆಗ ಮೀಕಲಳು ಸೌಲನಿಗೆ ಉತ್ತರವಾಗಿ, “ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು,” ಎಂದಳು.
1SA 19:18 ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.
1SA 19:19 ಆಗ, “ದಾವೀದನು ರಾಮದ ನಯೋತಿನಲ್ಲಿ ಇದ್ದಾನೆ,” ಎಂದು ಸೌಲನಿಗೆ ಗೊತ್ತಾಯಿತು.
1SA 19:20 ಆದ್ದರಿಂದ ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದನು. ಪ್ರವಾದಿಗಳ ಗುಂಪು ಪ್ರವಾದಿಸುವುದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುಯೇಲನು ನಿಂತಿರುವುದನ್ನೂ ಕಂಡಾಗ, ದೇವರ ಆತ್ಮ ಸೌಲನ ದೂತರ ಮೇಲೆ ಬಂದಿತು, ಅವರೂ ಸಹ ಪ್ರವಾದಿಸಿದರು.
1SA 19:21 ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ, ಅವನು ಬೇರೆ ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು.
1SA 19:22 ಆಗ ಸೌಲನು ತಾನೇ ರಾಮಕ್ಕೆ ಹೋದನು. ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, ಸಮುಯೇಲನೂ ದಾವೀದನೂ ಎಲ್ಲಿದ್ದಾರೆ ಎಂದು ಕೇಳಿದನು. ಆಗ ಒಬ್ಬನು, “ಅವರು ರಾಮದ ನಯೋತಿನಲ್ಲಿದ್ದಾರೆ,” ಎಂದನು.
1SA 19:23 ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು.
1SA 19:24 ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ, ತಾನೂ ಹಾಗೆಯೇ ಸಮುಯೇಲನ ಮುಂದೆ ಪ್ರವಾದಿಸಿದನು. ಆ ದಿನ ಹಗಲೆಲ್ಲವೂ, ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದ್ದರಿಂದ, “ಸೌಲನು ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ?” ಎಂಬ ಮಾತು ಪ್ರಚಲಿತವಾಯಿತು.
1SA 20:1 ದಾವೀದನು ರಾಮದ ನಯೋತಿನಿಂದ ಓಡಿಹೋಗಿ ಯೋನಾತಾನನ ಬಳಿಗೆ ಬಂದು, ಅವನ ಮುಂದೆ, “ನಾನು ಏನು ಮಾಡಿದೆನು? ನನ್ನ ಅಕ್ರಮವೇನು? ನಿನ್ನ ತಂದೆಯು ನನ್ನ ಪ್ರಾಣವನ್ನು ಹುಡುಕುವ ಹಾಗೆ ನಾನು ಅವನಿಗೆ ಮಾಡಿದ ದ್ರೋಹವೇನು?” ಎಂದನು.
1SA 20:2 ಯೋನಾತಾನನು ಅವನಿಗೆ, “ಅದು ಆಗಬಾರದು. ನೀನು ಸಾಯುವುದಿಲ್ಲ; ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ, ದೊಡ್ಡ ಕಾರ್ಯವನ್ನಾದರೂ ಮಾಡುವುದಿಲ್ಲ. ಈ ಕಾರ್ಯವನ್ನು ಯಾತಕ್ಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು,” ಎಂದನು.
1SA 20:3 ದಾವೀದನು ಪ್ರಮಾಣಮಾಡಿ, “ನಿನ್ನ ಕಣ್ಣು ಮುಂದೆ ನನಗೆ ದಯೆ ದೊರಕಿತೆಂದು ನಿನ್ನ ತಂದೆಯು ನಿಶ್ಚಲವಾಗಿ ಬಲ್ಲನು. ಆದಕಾರಣ ಅವನು ಯೋನಾತಾನನು ವ್ಯಥೆಪಡದ ಹಾಗೆ, ‘ಅವನು ಇದನ್ನು ತಿಳಿಯಬಾರದು,’ ಎಂದು ಹೇಳುತ್ತಾನೆ. ನಿಶ್ಚಯವಾಗಿ ಯೆಹೋವ ದೇವರಾಣೆ, ನನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ಮಾತ್ರ ದೂರ ಇದೆ,” ಎಂದನು.
1SA 20:4 ಆಗ ಯೋನಾತಾನನು ದಾವೀದನಿಗೆ, “ನಿನ್ನ ಪ್ರಾಣವು ಏನೇನು ಹೇಳುತ್ತದೋ, ನಿನಗೋಸ್ಕರ ನಾನು ಅದನ್ನು ಮಾಡುವೆನು,” ಎಂದನು.
1SA 20:5 ದಾವೀದನು ಯೋನಾತಾನನಿಗೆ, “ನಾಳೆ ಅಮಾವಾಸ್ಯೆ, ಆದ್ದರಿಂದ ನಾನು ಅರಸನ ಸಂಗಡ ಪಂಕ್ತಿಯಲ್ಲಿ ಊಟ ಮಾಡಲೇ ಬೇಕಾಗಿರುವುದು. ನಾನು ಮೂರನೆಯ ದಿವಸದ ಸಾಯಂಕಾಲದವರೆಗೆ ಹೊಲದಲ್ಲಿ ಬಚ್ಚಿಟ್ಟುಕೊಂಡಿರಲು, ನನ್ನನ್ನು ಹೋಗಗೊಡಿಸು.
1SA 20:6 ನಿನ್ನ ತಂದೆಯು ನಾನು ಅಲ್ಲಿ ಇಲ್ಲದಿರುವುದನ್ನು ಕಂಡು, ಶ್ರದ್ಧೆಯಿಂದ ವಿಚಾರಿಸಿ ಅವನು ಎಲ್ಲಿ? ಎಂದು ಕೇಳಿದರೆ, ‘ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಏಕೆಂದರೆ ತನ್ನ ಸಮಸ್ತ ಕುಟುಂಬಕ್ಕೋಸ್ಕರ ವರುಷದ ಯಜ್ಞ ಮಾಡುತ್ತಾರೆ,’ ಎಂದು ಹೇಳು.
1SA 20:7 ಅದಕ್ಕೆ ಅವನು, ‘ಒಳ್ಳೆಯದು,’ ಎಂದು ಹೇಳಿದರೆ, ನಿನ್ನ ಸೇವಕನಿಗೆ ಸಮಾಧಾನವಾಗಿರುವುದು. ಅವನು ಬಹಳ ಕೋಪ ಮಾಡಿದರೆ, ಅವನಿಂದ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ.
1SA 20:8 ಆದ್ದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು. ಏಕೆಂದರೆ ಯೆಹೋವ ದೇವರ ಒಡಂಬಡಿಕೆಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀಯಲ್ಲಾ. ಆದರೂ ನನ್ನಲ್ಲಿ ಅಕ್ರಮವಿದ್ದರೆ, ನೀನೇ ನನ್ನನ್ನು ಕೊಂದುಹಾಕು. ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವುದು ಏಕೆ?” ಎಂದನು.
1SA 20:9 ಆಗ ಯೋನಾತಾನನು, “ಅದು ನಿನಗೆ ದೂರವಾಗಿರಲಿ. ಏಕೆಂದರೆ ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ, ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ?” ಎಂದನು.
1SA 20:10 ದಾವೀದನು ಯೋನಾತಾನನಿಗೆ, “ನಿನ್ನ ತಂದೆಯು ನಿನಗೆ ಕಠಿಣವಾದ ಉತ್ತರ ಹೇಳಿದರೆ, ಅದನ್ನು ನನಗೆ ತಿಳಿಸುವವರು ಯಾರು?” ಎಂದನು.
1SA 20:11 ಆಗ ಯೋನಾತಾನನು ದಾವೀದನಿಗೆ, “ನಾವು ಹೊಲಕ್ಕೆ ಹೋಗೋಣ ಬಾ,” ಎಂದನು. ಹಾಗೆಯೇ ಅವರಿಬ್ಬರೂ ಹೊಲಕ್ಕೆ ಹೊರಟು ಹೋದರು.
1SA 20:12 ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವ ದೇವರೇ, ನಾನು ನಾಳೆ ನಾಡಿದ್ದರೊಳಗೆ ನನ್ನ ತಂದೆಯನ್ನು ವಿಚಾರಿಸಲು, ದಾವೀದನ ಮೇಲೆ ದಯೆ ಇದ್ದರೆ ನಿನಗೆ ತಿಳಿಸುವ ಹಾಗೆ ಹೇಳಿಕಳುಹಿಸದೆ ಇದ್ದರೆ, ಯೆಹೋವ ದೇವರು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.
1SA 20:13 ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.
1SA 20:14 ಆದರೆ ನಾನು ಇನ್ನೂ ಬದುಕುತ್ತಿರುವಾಗ ನಾನು ಸಾಯದ ಹಾಗೆ ನೀನು ಯೆಹೋವ ದೇವರ ದಯೆಯನ್ನು ನನ್ನ ಮೇಲೆ ತೋರಿಸಿಬೇಕಾದದ್ದಲ್ಲದೆ,
1SA 20:15 ಯೆಹೋವ ದೇವರು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ, ಎಂದಿಗೂ ನಿನ್ನ ದಯೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು,” ಎಂದನು.
1SA 20:16 ಹೀಗೆಯೇ ಯೋನಾತಾನನು ದಾವೀದನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು, “ಅಗಲಿದರೆ ಯೆಹೋವ ದೇವರೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ,” ಎಂದನು.
1SA 20:17 ಯೋನಾತಾನನು ದಾವೀದನನ್ನು ಪ್ರೀತಿಮಾಡಿದ್ದರಿಂದ, ಅವನಿಂದ ತಿರುಗಿ ಪ್ರಮಾಣ ತೆಗೆದುಕೊಂಡನು. ಅವನು ತನ್ನ ಪ್ರಾಣವನ್ನು ಪ್ರೀತಿಮಾಡಿದ ಹಾಗೆಯೇ, ಅವನನ್ನು ಪ್ರೀತಿಮಾಡಿದನು.
1SA 20:18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆ; ನೀನು ಅಲ್ಲಿ ಇಲ್ಲದಿರುವುದರಿಂದ ನಿನ್ನ ಸ್ಥಳವು ಬರಿದಾಗಿರುವುದು.
1SA 20:19 ನೀನು ಮೂರು ದಿವಸ ತಡೆದ ತರುವಾಯ, ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರುಗಿಬಂದು, ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
1SA 20:20 ಆಗ ನಾನು ಗುರಿಯಿಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
1SA 20:21 ಅನಂತರ ಹುಡುಗನನ್ನು ಕಳುಹಿಸಿ, ‘ಆ ಬಾಣಗಳನ್ನು ಹುಡುಕಿಕೊಂಡು ಬಾ,’ ಎಂದು ಹೇಳುವೆನು. ‘ಆ ಬಾಣಗಳು ನಿನಗೆ ಈಚೆ ಬಿದ್ದಿವೆ, ಅವುಗಳನ್ನು ತೆಗೆದುಕೊಂಡು ಬಾ,’ ಎಂದು ನಾನು ಹುಡುಗನಿಗೆ ಹೇಳಿದರೆ, ನೀನು ಬರಬಹುದು. ಏಕೆಂದರೆ ಯೆಹೋವ ದೇವರಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವುದು.
1SA 20:22 ಆದರೆ, ‘ಇಗೋ, ಬಾಣಗಳು ನಿನ್ನ ಆಚೆ ಬಿದ್ದಿವೆ,’ ಎಂದು ಹುಡುಗನಿಗೆ ಹೇಳಿದರೆ, ಹೊರಟು ಹೋಗು. ಏಕೆಂದರೆ ಯೆಹೋವ ದೇವರು ನಿನ್ನನ್ನು ದೂರ ಕಳುಹಿಸಿದರು.
1SA 20:23 ನಾನೂ, ನೀನೂ ಮಾತನಾಡಿಕೊಂಡ ಈ ಕಾರ್ಯಕ್ಕೆ ಯೆಹೋವ ದೇವರು ನನಗೂ, ನಿನಗೂ ಮಧ್ಯೆ ಎಂದೆಂದಿಗೂ ಸಾಕ್ಷಿಯಾಗಿರುವರು,” ಎಂದು ಹೇಳಿದನು.
1SA 20:24 ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟುಕೊಂಡಿದ್ದನು. ಅಮಾವಾಸ್ಯೆಯಾದಾಗ ಅರಸನು ಭೋಜನವನ್ನು ಮಾಡಲು ಕುಳಿತನು.
1SA 20:25 ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ, ಯೋನಾತಾನನು ಎದ್ದನು ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು. ದಾವೀದನು ಇರುವ ಸ್ಥಳವು ಬರಿದಾಗಿತ್ತು.
1SA 20:26 ಆದರೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ, “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿರಬಹುದು; ನಿಶ್ಚಯವಾಗಿ ಅಶುಚಿಯಾಗಿದ್ದಾನೆ,” ಎಂದು ಹೇಳಿಕೊಂಡನು.
1SA 20:27 ಅಮಾವಾಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡುವ ಸ್ಥಳವು ಹಾಗೆಯೇ ಬರಿದಾಗಿತ್ತು. ಆದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಪುತ್ರನಾದ ಯೋನಾತಾನನನ್ನು ಕೇಳಿದನು.
1SA 20:28 ಯೋನಾತಾನನು ಸೌಲನಿಗೆ ಉತ್ತರವಾಗಿ, “ಬೇತ್ಲೆಹೇಮಿನವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿಕೊಂಡನು.
1SA 20:29 ಅವನು ನನಗೆ, ‘ದಯಮಾಡಿ ನನಗೆ ಅಪ್ಪಣೆಕೊಡು. ಏಕೆಂದರೆ ಊರೊಳಗೆ ನಮ್ಮ ಕುಟುಂಬಕ್ಕೆ ಯಜ್ಞ ಮಾಡುವುದಿದೆ. ನನ್ನ ಸಹೋದರರು ನನ್ನನ್ನು ಬರಲು ಹೇಳಿ ಕಳುಹಿಸಿದರು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನಾನು ಅಪ್ಪಣೆ ತೆಗೆದುಕೊಂಡು ನನ್ನ ಸಹೋದರರನ್ನು ಕಾಣುವುದಕ್ಕೆ ಹೋಗುತ್ತೇನೆ,’ ಎಂದನು. ಆದ್ದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ,” ಎಂದನು.
1SA 20:30 ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ, “ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ, ಇಷಯನ ಮಗನನ್ನು ನೀನು ಆರಿಸಿಕೊಂಡಿದ್ದೀ ಎಂದು ನಾನರಿಯೆನೋ? ಇದರಿಂದ ನಿನಗೂ ನಿನ್ನನ್ನು ಹೆತ್ತವಳಿಗೂ ಅಸಹ್ಯವಾಗುವುದು.
1SA 20:31 ಏಕೆಂದರೆ ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳವರೆಗೂ ನೀನಾದರೂ, ನಿನ್ನ ರಾಜ್ಯವಾದರೂ ಸ್ಥಿರವಾಗುವುದಿಲ್ಲ. ಆದ್ದರಿಂದ ಈಗ ನೀನು ಅವನನ್ನು ಕರೆಕಳುಹಿಸಿ, ನನ್ನ ಬಳಿಗೆ ತೆಗೆದುಕೊಂಡು ಬಾ. ಏಕೆಂದರೆ ಅವನು ನಿಜವಾಗಿ ಸಾಯಲೇಬೇಕು,” ಎಂದನು.
1SA 20:32 ಅದಕ್ಕೆ ಯೋನಾತಾನನು ತನ್ನ ತಂದೆ ಸೌಲನಿಗೆ ಉತ್ತರವಾಗಿ, “ಅವನನ್ನು ಏಕೆ ಕೊಲೆಮಾಡಬೇಕು? ಅವನು ಏನು ಮಾಡಿದನು?” ಎಂದನು.
1SA 20:33 ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದ್ದರಿಂದ ಯೋನಾತಾನನು ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದನೆಂದು ತಿಳಿದುಕೊಂಡನು.
1SA 20:34 ಯೋನಾತಾನನು ಕೋಪದಿಂದ ಉರಿಗೊಂಡು ಮೇಜಿನಿಂದ ಎದ್ದು ಹೋದನು. ಹಬ್ಬದ ಎರಡನೆಯ ದಿನವಾಗಿದ್ದ ಅಂದು ಅವನು ಊಟ ಮಾಡಲಿಲ್ಲ. ಏಕೆಂದರೆ ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದರಿಂದ, ಅವನಿಗೋಸ್ಕರ ವ್ಯಥೆಪಟ್ಟನು.
1SA 20:35 ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗನನ್ನು ಕರೆದುಕೊಂಡು,
1SA 20:36 ಹೊಲಕ್ಕೆ ಹೊರಟುಹೋಗಿ ಹುಡುಗನಿಗೆ, “ನೀನು ಓಡಿಹೋಗಿ ನಾನು ಎಸೆಯುವ ಬಾಣಗಳನ್ನು ಹುಡುಕಿಕೊಂಡು ಬಾ,” ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ, ಆಚೆ ಹೋಗುವಹಾಗೆ ಬಾಣವನ್ನು ಎಸೆದನು.
1SA 20:37 ಯೋನಾತಾನನು ಎಸೆದ ಬಾಣವಿರುವ ಸ್ಥಳದವರೆಗೆ ಹುಡುಗನು ಹೋದಾಗ, “ಬಾಣವು ನಿನ್ನ ಆಚೆ ಇಲ್ಲವೋ?” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
1SA 20:38 “ನೀನು ಆಲಸ್ಯಮಾಡದೇ ತ್ವರೆಯಾಗಿ ಹೋಗು,” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು, ತನ್ನ ಯಜಮಾನನ ಬಳಿಗೆ ತಂದನು.
1SA 20:39 ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ, ದಾವೀದನೂ ಮಾತ್ರ ಆ ಸಂಗತಿಯನ್ನು ತಿಳಿದುಕೊಂಡಿದ್ದರು.
1SA 20:40 ಆಗ ಯೋನಾತಾನನು ತನ್ನ ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ, “ಅವುಗಳನ್ನು ಪಟ್ಟಣದೊಳಕ್ಕೆ ತೆಗೆದುಕೊಂಡು ಹೋಗು,” ಎಂದನು.
1SA 20:41 ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದು ಬಂದು ಯೋನಾತಾನನ ಮುಂದೆ ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು, ಒಬ್ಬರನ್ನೊಬ್ಬರು ನೋಡಿ ಅತ್ತರು. ದಾವೀದನು ಬಹಳವಾಗಿ ಅತ್ತನು.
1SA 20:42 ಆಗ ಯೋನಾತಾನನು ದಾವೀದನಿಗೆ, “ನೀನು ಸಮಾಧಾನವಾಗಿ ಹೋಗು, ಯೆಹೋವ ದೇವರು ಎಂದೆಂದಿಗೂ ನನಗೂ, ನಿನಗೂ, ನನ್ನ ಸಂತಾನಕ್ಕೂ, ನಿನ್ನ ಸಂತಾನಕ್ಕೂ ಸಾಕ್ಷಿಯಾಗಿರಲೆಂದು ಮಧ್ಯದಲ್ಲಿ ಯೆಹೋವ ದೇವರ ಹೆಸರಿನಿಂದ ಆಣೆಯಿಟ್ಟು ನಾವಿಬ್ಬರೂ ಪ್ರಮಾಣ ಮಾಡಿಕೊಂಡೆವಲ್ಲಾ,” ಎಂದನು. ಆಗ ದಾವೀದನು ಎದ್ದು ಹೋದನು. ಯೋನಾತಾನನು ಪಟ್ಟಣಕ್ಕೆ ಹೋದನು.
1SA 21:1 ದಾವೀದನು ನೋಬಿನಲ್ಲಿರುವ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ, “ಒಬ್ಬರೂ ನಿನ್ನ ಸಂಗಡ ಬಾರದೆ, ನೀನು ಒಂಟಿಯಾಗಿ ಬಂದದ್ದೇನು?” ಎಂದು ಅವನನ್ನು ಕೇಳಿದನು.
1SA 21:2 ದಾವೀದನು ಯಾಜಕನಾದ ಅಹೀಮೆಲೆಕನಿಗೆ, “ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿದ್ದು, ಇಂಥದ್ದೆಂದು ಒಬ್ಬರಿಗೂ ತಿಳಿಯಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.
1SA 21:3 ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ, ನಿನಗೆ ದೊರಕಿದ ಯಾವುದನ್ನಾದರೂ ನನಗೆ ಕೊಡು,” ಎಂದನು.
1SA 21:4 ಯಾಜಕನು ದಾವೀದನಿಗೆ ಉತ್ತರವಾಗಿ, “ಪರಿಶುದ್ಧವಾಗಿಸಿದ ರೊಟ್ಟಿಯ ಹೊರತಾಗಿ, ನನ್ನ ಕೈಯಲ್ಲಿ ಸಾಧಾರಣವಾದ ಒಂದು ರೊಟ್ಟಿಯಾದರೂ ಇಲ್ಲ. ಆ ರೊಟ್ಟಿಗಳನ್ನು ಸ್ತ್ರೀಯರೊಂದಿಗೆ ಸಂಪರ್ಕ ಮಾಡದವರಿಗೆ ಕೊಡಬಹುದು,” ಎಂದನು.
1SA 21:5 ದಾವೀದನು ಯಾಜಕನಿಗೆ ಉತ್ತರವಾಗಿ, “ನಾನು ಹೊರಡುವುದಕ್ಕಿಂತ ಮುಂಚೆ ನಿನ್ನೆಯೂ, ಮೊನ್ನೆಯೂ ಸ್ತ್ರೀಯರು ನಮಗೆ ದೂರವಾಗಿದ್ದರು. ಅಪವಿತ್ರವಾದ ಕಾರ್ಯಗಳಿಗೆ ಹೋಗುವಾಗಲೂ ಪುರುಷರು ಶುದ್ಧರಾಗಿರುತ್ತಾರೆ. ಇಂದು ಅದಕ್ಕಿಂತಲೂ ಹೆಚ್ಚಾಗಿರುವರಲ್ಲವೇ?” ಎಂದನು.
1SA 21:6 ಆಗ ಯೆಹೋವ ದೇವರ ಸನ್ನಿಧಿಯಿಂದ ತೆಗೆಯಲಾದ ಸಮ್ಮುಖದ ರೊಟ್ಟಿಗಳ ಹೊರತು, ಬೇರೆ ರೊಟ್ಟಿ ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧವಾಗಿಸಿದ ರೊಟ್ಟಿಯನ್ನು ಕೊಟ್ಟನು. ಏಕೆಂದರೆ ಅವುಗಳನ್ನು ತೆಗೆದುಕೊಳ್ಳುವ ದಿನದಲ್ಲಿ ಅವುಗಳಿಗೆ ಬದಲಾಗಿ ಬಿಸಿ ರೊಟ್ಟಿಗಳನ್ನು ಇಡಲೇಬೇಕು.
1SA 21:7 ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಯೆಹೋವ ದೇವರ ಆಲಯದ ಮುಂದೆ ಉಳಿದುಕೊಂಡಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
1SA 21:8 ಆಗ ದಾವೀದನು ಅಹೀಮೆಲೆಕನಿಗೆ, “ಇಲ್ಲಿ ನಿನ್ನ ಕೈ ವಶದಲ್ಲಿ ಈಟಿಯಾದರೂ, ಖಡ್ಗವಾದರೂ ಇಲ್ಲವೋ? ಏಕೆಂದರೆ ಅರಸನ ಕಾರ್ಯವು ಅವಸರವಾದುದರಿಂದ ನಾನು ನನ್ನ ಖಡ್ಗವನ್ನಾದರೂ, ಆಯುಧಗಳನ್ನಾದರೂ ತೆಗೆದುಕೊಂಡು ಬರಲಿಲ್ಲ,” ಎಂದನು.
1SA 21:9 ಅದಕ್ಕೆ ಯಾಜಕನು, “ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನು ಏಫೋದಿನ ಹಿಂದೆ ಒಂದು ಬಟ್ಟೆಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೋ. ಏಕೆಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ,” ಎಂದನು. ಅದಕ್ಕೆ ದಾವೀದನು, “ಅದರಂಥದ್ದು ಮತ್ತೊಂದಿಲ್ಲ, ಅದನ್ನೇ ಕೊಡು,” ಎಂದನು.
1SA 21:10 ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು.
1SA 21:11 ಆಕೀಷನ ಸೇವಕರು ಅವನಿಗೆ, “ಇವನು ನಾಡಿನ ಅರಸನಾದ ದಾವೀದನಲ್ಲವೋ? “ ‘ಸೌಲನು ಸಾವಿರಗಳನ್ನೂ, ದಾವೀದನು ಹತ್ತು ಸಾವಿರಗಳನ್ನೂ ಸಂಹರಿಸಿದನು,’ ಎಂದು ಸ್ತ್ರೀಯರು ನೃತ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದ್ದು ಇವನನ್ನು ಕುರಿತಲ್ಲವೋ?”
1SA 21:12 ಆಗ ದಾವೀದನು ಈ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಗತ್ ಊರಿನ ಅರಸನಾದ ಆಕೀಷನಿಗೆ ಹೆದರಿ,
1SA 21:13 ಅವರ ಕಣ್ಣು ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ, ಅವರಿಗೆ ತನ್ನನ್ನು ಹುಚ್ಚನ ಹಾಗೆಯೇ ತೋರಮಾಡಿ, ದ್ವಾರದ ಕದಗಳನ್ನು ಕೆರೆಯುತ್ತಾ, ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು.
1SA 21:14 ಆಗ ಆಕೀಷನು ತನ್ನ ಸೇವಕರಿಗೆ, “ಈ ಮನುಷ್ಯನು ನೋಡಿರಿ! ಅವನು ಹುಚ್ಚನಾಗಿದ್ದಾನೆ. ಇವನನ್ನು ನನ್ನ ಬಳಿಗೆ ಏಕೆ ತೆಗೆದುಕೊಂಡು ಬಂದಿರಿ?
1SA 21:15 ಹುಚ್ಚರು ನನಗೆ ಅವಶ್ಯವೆಂದು ನೆನಸಿ ನನ್ನನ್ನು ಮರುಳುಮಾಡಿ ಬೇಸರಗೊಳಿಸುವುದಕ್ಕಾಗಿ ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇವನು ನನ್ನ ಮನೆಯಲ್ಲಿ ಬರಬೇಕೋ?” ಎಂದನು.
1SA 22:1 ದಾವೀದನು ಆ ಸ್ಥಳದಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಬಂದನು. ಆ ವರ್ತಮಾನವನ್ನು ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಕೇಳಿ, ಅವನ ಬಳಿಗೆ ಅಲ್ಲಿಗೆ ಬಂದರು.
1SA 22:2 ಇದಲ್ಲದೆ ಶ್ರಮಪಟ್ಟವರೂ, ಸಾಲಗಾರರೂ, ಅಸಂತುಷ್ಟರೂ ಅವನ ಸಂಗಡ ಕೂಡಿಕೊಂಡರು. ಆಗ ದಾವೀದನು ಅವರಿಗೆ ಅಧಿಪತಿಯಾದನು. ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.
1SA 22:3 ದಾವೀದನು ಅಲ್ಲಿಂದ ಹೊರಟು ಮೋವಾಬ್ ದೇಶದ ಮಿಚ್ಪೆಗೆ ಬಂದು ಮೋವಾಬಿನ ಅರಸನಿಗೆ, “ದೇವರು ನನಗೆ ಏನು ಮಾಡುವರೋ ಎಂದು ನಾನು ತಿಳಿಯುವವರೆಗೂ, ನನ್ನ ತಂದೆತಾಯಿಗಳು ಹೊರಟುಬಂದು ನಿನ್ನ ಬಳಿಯಲ್ಲಿ ವಾಸಿಸಿರಲಿ,” ಎಂದು ಹೇಳಿ, ಅವರನ್ನು ಮೋವಾಬಿನ ಅರಸನ ಬಳಿಗೆ ಕರೆತಂದು ಬಿಟ್ಟನು.
1SA 22:4 ದಾವೀದನು ಗವಿಯಲ್ಲಿ ಇದ್ದ ದಿವಸಗಳೆಲ್ಲಾ, ಅವರು ಆ ಅರಸನ ಬಳಿಯಲ್ಲಿ ವಾಸವಾಗಿದ್ದರು.
1SA 22:5 ಆದರೆ ಗಾದನೆಂಬ ಪ್ರವಾದಿಯು ದಾವೀದನಿಗೆ, “ನೀನು ಗವಿಯಲ್ಲಿರದೆ ಯೆಹೂದ ದೇಶಕ್ಕೆ ಹೊರಟು ಬಾ,” ಎಂದನು. ಆಗ ದಾವೀದನು ಹೊರಟು ಹೆರೆತ್ ಎಂಬ ಅರಣ್ಯಕ್ಕೆ ಬಂದನು.
1SA 22:6 ಒಂದು ದಿನ ದಾವೀದನೂ ಅವನ ಸಂಗಡ ಇದ್ದವರೂ ಅಡಗಿಕೊಂಡಿದ್ದಾರೆ ಎಂಬ ವರ್ತಮಾನವನ್ನು ಸೌಲನು ಕೇಳಿದನು. ಆಗ ಅವನು ಗಿಬೆಯದ ಗುಡ್ಡದಲ್ಲಿ ಒಂದು ಪಿಚುಲ ವೃಕ್ಷದ ಕೆಳಗೆ ತನ್ನ ಈಟಿಯನ್ನು ಕೈಯಲ್ಲಿ ಹಿಡಿದು ಕುಳಿತುಕೊಂಡನು. ಅವನ ಸೇವಕರೆಲ್ಲರು ಸುತ್ತಲೂ ನಿಂತಿದ್ದರು.
1SA 22:7 ಆಗ ಸೌಲನು ಸುತ್ತಲು ನಿಂತಿದ್ದ ಸೇವಕರಿಗೆ, “ಬೆನ್ಯಾಮೀನನ ಮಕ್ಕಳೇ, ಕೇಳಿರಿ. ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ನಡೆಸುವಂತೆ ಇಷಯನ ಮಗನು ನಿಮ್ಮೆಲ್ಲರಿಗೆ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಕೊಡುವನೋ? ನಿಮ್ಮೆಲ್ಲರನ್ನು ಸಾವಿರಕ್ಕೆ ನಾಯಕರಾಗಿಯೂ, ನೂರಕ್ಕೆ ನಾಯಕರಾಗಿಯೂ ಮಾಡುವನೋ?
1SA 22:8 ಇದಲ್ಲದೆ ನಿಮ್ಮಲ್ಲಿ ನನ್ನ ಮಗನು ಇಷಯನ ಮಗನ ಸಂಗಡ ಒಡಂಬಡಿಕೆ ಮಾಡಿಕೊಂಡಿದ್ದನ್ನು ನನಗೆ ಯಾವನೂ ತಿಳಿಸಲಿಲ್ಲ. ನಿಮ್ಮಲ್ಲಿ ಯಾವನಾದರೂ ನನಗೋಸ್ಕರ ಚಿಂತಿಸಿ, ನನ್ನ ಮಗನು ಈ ಹೊತ್ತು ನನ್ನ ನಿಮಿತ್ತ ಅಡಗಿಕೊಂಡಿರುವಂತೆ ನನ್ನ ಸೇವಕನನ್ನು ನನಗೆ ವಿರೋಧವಾಗಿ ಒಳಸಂಚುಮಾಡಿ ಎಬ್ಬಿಸಿದ್ದನ್ನು ಯಾವನೂ ನನಗೆ ತಿಳಿಸಲಿಲ್ಲ,” ಎಂದನು.
1SA 22:9 ಆಗ ಸೌಲನು ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಉತ್ತರವಾಗಿ, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ಕಂಡೆನು.
1SA 22:10 ಇವನು ಅವನಿಗೋಸ್ಕರ ಯೆಹೋವ ದೇವರನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು, ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನು ಅವನಿಗೆ ಕೊಟ್ಟನು,” ಎಂದನು.
1SA 22:11 ಆದ್ದರಿಂದ ಅರಸನು ಅಹೀಟೂಬನ ಮಗನಾದ ಯಾಜಕನಾಗಿರುವ ಅಹೀಮೆಲೆಕನನ್ನೂ, ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರಾದ ಸಮಸ್ತರನ್ನೂ ಕರೆಯಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು.
1SA 22:12 ಆಗ ಸೌಲನು, “ಅಹೀಟೂಬನ ಮಗನೇ, ಕೇಳು,” ಎಂದನು. ಅದಕ್ಕವನು, “ನನ್ನ ಒಡೆಯನೇ, ನಾನು ಇಲ್ಲಿದ್ದೇನೆ,” ಎಂದನು.
1SA 22:13 ಸೌಲನು ಅವನಿಗೆ, “ನೀನೂ, ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋಧವಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಯನ್ನೂ, ಖಡ್ಗವನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು? ಅವನು ಇಂದಿನವರೆಗೂ ನನ್ನನ್ನು ಕೊಲ್ಲುವುದಕ್ಕೆ ಕಾಯುತ್ತಿದ್ದಾನೆ?” ಎಂದು ಕೇಳಿದನು.
1SA 22:14 ಅಹೀಮೆಲೆಕನು ಅರಸನಿಗೆ ಉತ್ತರವಾಗಿ, “ನಿನ್ನ ಸಮಸ್ತ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾರಿದ್ದಾರೆ? ಅವನು ಅರಸನಿಗೆ ಅಳಿಯನೂ ನಿಮ್ಮ ಅಂಗರಕ್ಷಕರ ನಾಯಕನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.
1SA 22:15 ನಾನು ಅವನಿಗೋಸ್ಕರ ದೇವರನ್ನು ಕೇಳಿಕೊಂಡದ್ದು ಅದೇ ಮೊದಲನೆಯದೋ? ಅಲ್ಲವೇ ಅಲ್ಲ. ಅರಸನು ತನ್ನ ಸೇವಕನ ಮೇಲಾದರೂ ಇಲ್ಲವೆ ಅವನ ಕುಟುಂಬದವರ ಮೇಲಾದರೂ ಇಂಥ ಅಪವಾದವನ್ನು ಹೊರಿಸಬಾರದು, ಏಕೆಂದರೆ ಆ ಕಾರ್ಯದ ಬಗ್ಗೆ ನಮಗೇನೂ ತಿಳಿದಿಲ್ಲ,” ಎಂದನು.
1SA 22:16 ಅದಕ್ಕೆ ಅರಸನು, “ಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯ ಸಮಸ್ತರೂ ನಿಶ್ಚಯವಾಗಿ ಸಾಯಲೇಬೇಕು,” ಎಂದನು.
1SA 22:17 ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆ, “ನೀವು ತಿರುಗಿಕೊಂಡು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿರಿ. ಏಕೆಂದರೆ ಅವರ ಕೈ ದಾವೀದನಿಗೆ ಸಹಾಯಕವಾಗಿದೆ. ಅವನು ಓಡಿ ಹೋಗುವುದನ್ನು ಅವರು ತಿಳಿದಿದ್ದು, ಅದನ್ನು ನನಗೆ ತಿಳಿಸದೆ ಹೋದರು,” ಎಂದನು. ಆದರೆ ಅರಸನ ಸೇವಕರು ಯೆಹೋವ ದೇವರ ಯಾಜಕರ ಮೇಲೆ ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
1SA 22:18 ಆಗ ಅರಸನು ದೋಯೇಗನಿಗೆ, “ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು,” ಎಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು, ನಾರುಬಟ್ಟೆಯ ಏಫೋದನ್ನು ಧರಿಸಿಕೊಳ್ಳುವವರಾದ ಎಂಬತ್ತೈದು ಯಾಜಕರನ್ನು ಆ ದಿನದಲ್ಲಿ ಕೊಂದನು.
1SA 22:19 ಇದಲ್ಲದೆ ಯಾಜಕರ ಪಟ್ಟಣವಾದ ನೋಬಿನಲ್ಲಿ ಇರುವ ಪುರುಷರನ್ನೂ, ಸ್ತ್ರೀಯರನ್ನೂ, ಮಕ್ಕಳನ್ನೂ, ಕೂಸುಗಳನ್ನೂ, ಎತ್ತುಗಳನ್ನೂ, ಕತ್ತೆಗಳನ್ನೂ, ಕುರಿಗಳನ್ನೂ ಖಡ್ಗದಿಂದ ಹೊಡೆದುಬಿಟ್ಟನು.
1SA 22:20 ಆದರೆ ಅಹೀಟೂಬನ ಮಗನಾಗಿರುವ ಅಹೀಮೆಲೆಕನ ಮಕ್ಕಳಲ್ಲಿ ಒಬ್ಬನಾದ ಅಬಿಯಾತರನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಹೋದನು.
1SA 22:21 ಸೌಲನು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿದ ವರ್ತಮಾನವನ್ನು ಅಬಿಯಾತರನು ದಾವೀದನಿಗೆ ತಿಳಿಸಿದನು.
1SA 22:22 ಆಗ ದಾವೀದನು ಅಬಿಯಾತರನಿಗೆ, “ಎದೋಮ್ಯನಾದ ದೋಯೇಗನು ಅಲ್ಲಿ ಇದ್ದುದರಿಂದ ಅವನು ಸೌಲನಿಗೆ ನಿಶ್ಚಯವಾಗಿ ತಿಳಿಸುವನೆಂದು ನಾನು ಆ ದಿನವೇ ನೆನೆಸಿಕೊಂಡೆ. ನಿನ್ನ ತಂದೆಯ ಮನೆಯ ಸಮಸ್ತರ ಪ್ರಾಣಹತ್ಯೆಗೆ ಕಾರಣನಾದವನು ನಾನೇ.
1SA 22:23 ನನ್ನ ಬಳಿಯಲ್ಲಿ ಇರು; ಭಯಪಡಬೇಡ; ಏಕೆಂದರೆ ನನ್ನ ಪ್ರಾಣವನ್ನು ಹುಡುಕುವವನು ನಿನ್ನ ಪ್ರಾಣವನ್ನು ಹುಡುಕುವನು; ನೀನು ನನ್ನ ಸಂಗಡ ಇದ್ದರೆ ಸುರಕ್ಷಿತನಾಗಿರುವಿ,” ಎಂದನು.
1SA 23:1 “ಫಿಲಿಷ್ಟಿಯರು ಕೆಯೀಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆ,” ಎಂದು ದಾವೀದನಿಗೆ ತಿಳಿಸಿದರು.
1SA 23:2 ಆದ್ದರಿಂದ ದಾವೀದನು, “ನಾನು ಈ ಫಿಲಿಷ್ಟಿಯರನ್ನು ಹೊಡೆಯಲು ಹೋಗಲೋ?” ಎಂದು ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು, “ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ನಗರವನ್ನು ರಕ್ಷಿಸು,” ಎಂದರು.
1SA 23:3 ಆಗ ದಾವೀದನ ಜನರು ಅವನಿಗೆ, “ಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ. ಆದರೆ ನಾವು ಫಿಲಿಷ್ಟಿಯರ ಸೈನ್ಯಗಳಿಗೆ ವಿರೋಧವಾಗಿ ಕೆಯೀಲಾ ನಗರಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವುದು,” ಎಂದರು.
1SA 23:4 ದಾವೀದನು ತಿರುಗಿ ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು ಉತ್ತರವಾಗಿ, “ನೀನೆದ್ದು ಕೆಯೀಲಾ ನಗರಕ್ಕೆ ಹೋಗು; ಏಕೆಂದರೆ ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.
1SA 23:5 ಹಾಗೆಯೇ ದಾವೀದನೂ, ಅವನ ಜನರೂ ಎದ್ದು ಕೆಯೀಲಾ ನಗರಕ್ಕೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ, ಅವರ ಪಶುಗಳನ್ನು ಹಿಡಿದುಕೊಂಡು ಬಂದು, ಅವರನ್ನು ಪೂರ್ಣವಾಗಿ ಸೋಲಿಸಿದರು. ಈ ಪ್ರಕಾರ ದಾವೀದನು ಕೆಯೀಲಾ ನಗರದ ನಿವಾಸಿಗಳನ್ನು ರಕ್ಷಿಸಿದನು.
1SA 23:6 ಅಹೀಮೆಲೆಕನ ಮಗ ಅಬಿಯಾತರನು ಕೆಯೀಲಾ ನಗರದಲ್ಲಿ ಇರುವ ದಾವೀದನ ಬಳಿಗೆ ಓಡಿ ಬಂದಾಗ, ಅವನ ಕೈಯಲ್ಲಿ ಏಫೋದು ಇತ್ತು.
1SA 23:7 ದಾವೀದನು ಕೆಯೀಲಾ ನಗರಕ್ಕೆ ಬಂದಿದ್ದಾನೆ ಎಂಬ ವಿಷಯ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ಅವನು ಬಾಗಿಲುಗಳೂ, ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಈಗ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು.
1SA 23:8 ಆಗ ಸೌಲನು ದಾವೀದನನ್ನೂ, ಅವನ ಜನರನ್ನೂ ಮುತ್ತಿಕೊಳ್ಳಲು ತನ್ನ ಸೈನಿಕರನ್ನು ಯುದ್ಧಕ್ಕೆ ಹೋಗಲು ಕೆಯೀಲಾ ನಗರಕ್ಕೆ ಕರೆದನು.
1SA 23:9 ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿದ್ದರಿಂದ ಯಾಜಕನಾದ ಅಬಿಯಾತರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದನು.
1SA 23:10 ಆಗ ದಾವೀದನು, “ಇಸ್ರಾಯೇಲ್ ದೇವರಾದ ಯೆಹೋವ ದೇವರೇ, ಸೌಲನು ಕೆಯೀಲಾ ನಗರಕ್ಕೆ ಬಂದು, ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿಮ್ಮ ಸೇವಕನು ಖಂಡಿತವಾಗಿ ಕೇಳಿದನು.
1SA 23:11 ಕೆಯೀಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿಮ್ಮ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ದಯಮಾಡಿ ಇದನ್ನು ನಿಮ್ಮ ಸೇವಕನಿಗೆ ತಿಳಿಸಿರಿ,” ಎಂದನು. ಅದಕ್ಕೆ ಯೆಹೋವ ದೇವರು, “ಅವನು ಬರುವನು,” ಎಂದರು.
1SA 23:12 ಅನಂತರ ದಾವೀದನು, “ಕೆಯೀಲಾ ಪಟ್ಟಣದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ?” ಎಂದು ಕೇಳಿದನು. ಯೆಹೋವ ದೇವರು, “ಅವರು ಒಪ್ಪಿಸಿಕೊಡುವರು,” ಎಂದರು.
1SA 23:13 ಆದ್ದರಿಂದ ದಾವೀದನೂ, ಹೆಚ್ಚು ಕಡಿಮೆ ಆರುನೂರು ಮಂದಿಯಿದ್ದ ತನ್ನ ಜನರೂ ಎದ್ದು ಕೆಯೀಲಾವನ್ನು ಬಿಟ್ಟು ವಿವಿಧ ಕಡೆಗಳಲ್ಲಿ ಅಲೆದಾಡಿದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.
1SA 23:14 ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ, ಜೀಫ್ ಎಂಬ ಮರುಭೂಮಿಯ ಬೆಟ್ಟದಲ್ಲಿಯೂ ವಾಸವಾಗಿದ್ದನು. ಸೌಲನು ದಿನವೂ ಅವನನ್ನು ಹುಡುಕುತ್ತಿದ್ದನು. ಆದರೆ ದೇವರು ದಾವೀದನನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.
1SA 23:15 ತನ್ನ ಪ್ರಾಣವನ್ನು ತೆಗೆಯುವುದಕ್ಕೆ ಸೌಲನು ಹೊರಟಿದ್ದಾನೆಂದು ದಾವೀದನು ತಿಳಿದಾಗ, ಅವನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು.
1SA 23:16 ಆಗ ಸೌಲನ ಮಗ ಯೋನಾತಾನನು ಎದ್ದು ಮರುಭೂಮಿಯಲ್ಲಿರುವ ದಾವೀದನ ಬಳಿಗೆ ಹೋಗಿ, ಅವನನ್ನು ದೇವರಲ್ಲಿ ಬಲಪಡಿಸಿ ಸಹಾಯಮಾಡಿದನು.
1SA 23:17 ಯೋನಾತಾನನು ಅವನಿಗೆ, “ಭಯಪಡಬೇಡ, ಏಕೆಂದರೆ ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವುದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ. ನಾನು ನಿನಗೆ ಎರಡನೆಯವನಾಗಿರುವೆನು ಮತ್ತು ಹೀಗೆ ಆಗುವುದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ,” ಎಂದನು.
1SA 23:18 ಅವರಿಬ್ಬರೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಹೋರೆಷದಲ್ಲಿಯೇ ಉಳಿದನು. ಆದರೆ ಯೋನಾತಾನನು ತನ್ನ ಮನೆಗೆ ಹೋದನು.
1SA 23:19 ಆಗ ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪಕ್ಷವಾಗಿಯೇ ಹೋರೆಷದ ಗಿರಿಗಳಲ್ಲಿ ಅಂದರೆ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದನಲ್ಲವೇ?
1SA 23:20 ಈಗ ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ. ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು,” ಎಂದರು.
1SA 23:21 ಆಗ ಸೌಲನು, “ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.
1SA 23:22 ನೀವು ದಯಮಾಡಿ ಹೋಗಿ ಅವನು ಹೆಜ್ಜೆ ಇಡುವ ಸ್ಥಳವನ್ನೂ, ಅಲ್ಲಿ ಅವನನ್ನು ನೋಡಿದವರು ಯಾರು ಎಂಬುದನ್ನೂ ಇನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ನೋಡಿರಿ. ಏಕೆಂದರೆ ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾನೆಂದು ನನಗೆ ಹೇಳುತ್ತಾರೆ.
1SA 23:23 ಅವನು ಅಡಗಿಕೊಂಡಿರುವ ಸಮಸ್ತ ರಹಸ್ಯ ಸ್ಥಳಗಳನ್ನೂ ನೋಡಿ ತಿಳಿದುಕೊಂಡು, ನಿಶ್ಚಯವಾದ ವರ್ತಮಾನವನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ, ಯೆಹೂದದ ಸಹಸ್ರ ಕುಲದಲ್ಲಿಯೂ ಅವನನ್ನು ಹುಡುಕಿ ಅವನನ್ನು ಹಿಡಿಯುವೆನು,” ಎಂದನು.
1SA 23:24 ಆದ್ದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ, ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಮಾವೋನಿನ ಮರುಭೂಮಿಯಲ್ಲಿದ್ದರು.
1SA 23:25 ಸೌಲನೂ, ಅವನ ಜನರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿದಾಗ, ಅವನು ಬಂಡೆಗಳಲ್ಲಿ ಇಳಿದು ಮಾವೋನಿನ ಮರುಭೂಮಿಯಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಮರುಭೂಮಿಯಲ್ಲಿ ದಾವೀದನನ್ನು ಹಿಂದಟ್ಟಿದನು.
1SA 23:26 ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು. ದಾವೀದನೂ, ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು. ಸೌಲನಿಗೆ ಭಯಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆಪಡುತ್ತಿದ್ದರು. ಆಗ ಸೌಲನೂ, ಅವನ ಜನರೂ ಅವರನ್ನು ಹಿಡಿಯುವಂತೆ ಸುತ್ತಿಕೊಂಡರು.
1SA 23:27 ಆದರೆ ಒಬ್ಬ ಸೇವಕನು ಸೌಲನ ಬಳಿಗೆ ಬಂದು, “ನೀನು ತ್ವರೆಯಾಗಿ ಬಾ. ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ,” ಎಂದನು.
1SA 23:28 ಆದ್ದರಿಂದ ಸೌಲನು ದಾವೀದನನ್ನು ಹಿಂದಟ್ಟುವುದನ್ನು ಬಿಟ್ಟು, ಫಿಲಿಷ್ಟಿಯರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಸೇಲಾ ಅಮ್ಮಾಲೆಕೋತ್ ಎಂದರೆ, ಅಡ್ಡ ಬೆಟ್ಟ ಎಂದು ಹೆಸರಿಟ್ಟರು.
1SA 23:29 ದಾವೀದನು ಆ ಸ್ಥಳವನ್ನು ಬಿಟ್ಟು ಹೋಗಿ ಏನ್ಗೆದಿಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.
1SA 24:1 ಆಗ ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರುಗಿ ಬಂದಾಗ, “ದಾವೀದನು ಏನ್ಗೆದಿ ಮರುಭೂಮಿಯಲ್ಲಿ ಇದ್ದಾನೆ,” ಎಂದು ಅವನಿಗೆ ತಿಳಿದುಬಂದಿತು.
1SA 24:2 ಆಗ ಸೌಲನು ಸಮಸ್ತ ಇಸ್ರಾಯೇಲಿನಲ್ಲಿ ಶ್ರೇಷ್ಠರಾದ ಮೂರು ಸಾವಿರ ಸೈನಿಕರನ್ನು ತೆಗೆದುಕೊಂಡು ದಾವೀದನನ್ನೂ, ಅವನ ಜನರನ್ನೂ ಹುಡುಕಲು ಕಾಡುಮೇಕೆಗಳಿರುವ ಬಂಡೆಗಳಿಗೆ ಹೋದನು.
1SA 24:3 ಸೌಲನು ಮಾರ್ಗದಲ್ಲಿ ಕುರಿಹಟ್ಟಿಗಳು ಇರುವ ಗವಿಯ ಬಳಿಗೆ ಬಂದು, ಅದರಲ್ಲಿ ಅವನು ಶೌಚಕ್ಕಾಗಿ ಹೋದನು. ಆದರೆ ದಾವೀದನೂ, ಅವನ ಜನರೂ ಅದೇ ಗವಿಯ ಹಿಂದೆ ಅಡಗಿಕೊಂಡಿದ್ದರು.
1SA 24:4 ಆಗ ದಾವೀದನ ಜನರು ಅವನಿಗೆ, “ ‘ನಾನು ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು. ಆಗ ನೀನು ನಿನ್ನ ಇಷ್ಟಾನುಸಾರ ಅವನಿಗೆ ಮಾಡಬಹುದು,’ ಎಂದು ಯೆಹೋವ ದೇವರು ನಿನಗೆ ಹೇಳಿದ ದಿನವು ಇದೇ,” ಎಂದರು. ಆಗ ದಾವೀದನು ಎದ್ದು ಹೋಗಿ ರಹಸ್ಯವಾಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
1SA 24:5 ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು.
1SA 24:6 ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು.
1SA 24:7 ಹೀಗೆಯೇ ದಾವೀದನು ತನ್ನ ಜನರನ್ನು ಸೌಲನ ಮೇಲೆ ಬೀಳಗೊಡದೆ, ಈ ಮಾತುಗಳಿಂದ ಅವರನ್ನು ನಿಲ್ಲಿಸಿದನು. ಸೌಲನು ಎದ್ದು ಗವಿಯನ್ನು ಬಿಟ್ಟು, ಹೊರಗೆ ನಡೆದು ಹೋದನು.
1SA 24:8 ತರುವಾಯ ದಾವೀದನು ಎದ್ದು ಗವಿಯಿಂದ ಹೊರಗೆ ಬಂದು ಸೌಲನಿಗೆ, “ಅರಸನೇ, ನನ್ನ ಒಡೆಯನೇ,” ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ, ದಾವೀದನು ನೆಲದವರೆಗೆ ಬಗ್ಗಿ ವಂದಿಸಿದನು.
1SA 24:9 ಸೌಲನಿಗೆ ದಾವೀದನು, “ಇಗೋ, ದಾವೀದನು ನಿನಗೆ ಕೇಡು ಮಾಡಲು ಹುಡುಕುತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಏಕೆ ಕೇಳುತ್ತಿದ್ದೀ?
1SA 24:10 ಯೆಹೋವ ದೇವರು ಈ ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರೆಂಬುದನ್ನು ಈ ದಿನ ನಿನ್ನ ಕಣ್ಣುಗಳು ಕಂಡವು. ಕೆಲವರು ನಿನ್ನನ್ನು ಕೊಂದುಹಾಕಲು ನನಗೆ ಒತ್ತಾಯಮಾಡಿದರು. ಆದರೆ ನಾನು ಅವರಿಗೆ, ‘ಅರಸನು ಯೆಹೋವ ದೇವರ ಅಭಿಷಿಕ್ತನು. ಆದುದರಿಂದ ನಾನು ನನ್ನ ಒಡೆಯನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆ.
1SA 24:11 ಇದಲ್ಲದೆ ನನ್ನ ತಂದೆಯೇ, ಇಲ್ಲಿ ನೋಡು! ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ತುಂಡನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ, ನಿನ್ನ ನಿಲುವಂಗಿಯ ಅಂಚನ್ನು ಮಾತ್ರ ಕತ್ತರಿಸಿಕೊಂಡದ್ದರಿಂದ, ನನ್ನಲ್ಲಿ ಕೆಟ್ಟತನವೂ, ದ್ರೋಹವೂ ಇಲ್ಲವೆಂದು ಇದು ಸೂಚಿಸುತ್ತಿದೆ; ನಾನು ನಿನಗೆ ವಿರೋಧವಾಗಿ ತಪ್ಪುಮಾಡಲಿಲ್ಲವೆಂದು ತಿಳಿದುಕೋ. ಹೀಗಿದ್ದರೂ, ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
1SA 24:12 ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ.
1SA 24:13 ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ, ‘ದುಷ್ಟರಿಂದ ದುಷ್ಟತ್ವವು ಹುಟ್ಟುವುದು’ ಆದರೂ ನಾನು ನಿನಗೆ ವಿರೋಧವಾಗಿ ನನ್ನ ಕೈ ಮುಟ್ಟುವುದಿಲ್ಲ.
1SA 24:14 “ಇಸ್ರಾಯೇಲಿನ ಅರಸನು ಯಾರನ್ನು ಹಿಂದಟ್ಟಿ ಹೊರಟನು? ಯಾರನ್ನು ಹಿಂದಟ್ಟುತ್ತೀ? ಸತ್ತ ನಾಯಿಯನ್ನೇ? ಒಂದು ನೊಣವನ್ನೇ?
1SA 24:15 ಯೆಹೋವ ದೇವರು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ, ನನ್ನ ಪರವಾಗಿ ವಾದಿಸಿ, ನನ್ನನ್ನು ನಿನ್ನ ಕೈಯಿಂದ ತಪ್ಪಿಸಿಬಿಡಲಿ,” ಎಂದನು.
1SA 24:16 ದಾವೀದನ ಮಾತುಗಳು ಮುಗಿದ ನಂತರ, ಸೌಲನು ದಾವೀದನಿಗೆ, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಎಂದು ಗಟ್ಟಿಯಾಗಿ ಅತ್ತನು.
1SA 24:17 ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನು. ನಾನು ನಿನಗೆ ಕೇಡನ್ನು ಮಾಡಿದರೂ, ನೀನು ನನಗೆ ಒಳ್ಳೆಯದನ್ನು ಮಾಡಿದೆ.
1SA 24:18 ಯೆಹೋವ ದೇವರು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಾಗ, ನೀನು ನನ್ನನ್ನು ಕೊಂದುಹಾಕದೆ ಇದ್ದುದರಿಂದ, ನೀನು ನನಗೆ ಉಪಕಾರ ಮಾಡಿದ್ದನ್ನು ಈ ಹೊತ್ತು ತೋರಿಸಿದೆ.
1SA 24:19 ಏಕೆಂದರೆ ಯಾವನಾದರೂ ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನನ್ನು ಸುರಕ್ಷಿತನಾಗಿ ಬಿಟ್ಟುಬಿಡುವನೋ? ಈ ಹೊತ್ತು ನೀನು ನನಗೆ ಒಳ್ಳೆಯದನ್ನು ಮಾಡಿದ್ದರಿಂದ ಯೆಹೋವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ.
1SA 24:20 ಈಗ ಇಗೋ, ನೀನು ನಿಶ್ಚಯವಾಗಿ ಅರಸನಾಗುವೆ ಎಂದೂ, ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರವಾಗುವುದೆಂದೂ ನಾನು ಚೆನ್ನಾಗಿ ಬಲ್ಲೆನು.
1SA 24:21 ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.
1SA 24:22 ಹಾಗೆಯೇ ದಾವೀದನು ಸೌಲನಿಗೆ ಪ್ರಮಾಣ ಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಮನುಷ್ಯರೂ ಆಶ್ರಯಗಿರಿಗೆ ಏರಿಹೋದರು.
1SA 25:1 ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಕೂಡಿಬಂದು ಅವನಿಗೋಸ್ಕರ ಗೋಳಾಡಿ, ರಾಮದಲ್ಲಿರುವ ಅವನ ಮನೆಯ ಅಂಗಳದಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ದಾವೀದನು ಹೊರಟು ಪಾರಾನ್ ಮರುಭೂಮಿಗೆ ಹೋದನು.
1SA 25:2 ಆದರೆ ಕರ್ಮೆಲಿನಲ್ಲಿ ಸೊತ್ತುಗಳಿರುವ ಮಾವೋನಿನ ಒಬ್ಬ ಮನುಷ್ಯನಿದ್ದನು. ಅವನು ಬಹು ಸಿರಿವಂತನಾಗಿದ್ದನು. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು.
1SA 25:3 ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆ ಕತ್ತರಿಸುತ್ತಿದ್ದನು. ಈ ಮನುಷ್ಯನ ಹೆಸರು ನಾಬಾಲನು. ಅವನ ಹೆಂಡತಿಯ ಹೆಸರು ಅಬೀಗೈಲಳು. ಆ ಸ್ತ್ರೀಯು ಬಹು ಬುದ್ಧಿವಂತೆ ಹಾಗು ಸುಂದರಿ. ಆದರೆ ಆ ಮನುಷ್ಯನು ಒರಟಾದವನೂ ದುಷ್ಕರ್ಮಿಯೂ ಆಗಿದ್ದನು. ಅವನು ಕಾಲೇಬನ ವಂಶಸ್ಥನು.
1SA 25:4 ನಾಬಾಲನು ತನ್ನ ಕುರಿಗಳ ಉಣ್ಣೆ ಕತ್ತರಿಸುವ ವರ್ತಮಾನವನ್ನು ದಾವೀದನು ಮರುಭೂಮಿಯಲ್ಲಿ ಕೇಳಿದನು.
1SA 25:5 ಆಗ ದಾವೀದನು ಹತ್ತು ಮಂದಿ ಯುವಕರನ್ನು ಕಳುಹಿಸಿದನು. ದಾವೀದನು ಅವರಿಗೆ, “ನೀವು ಕರ್ಮೆಲಿಗೆ ಹೋಗಿ ನಾಬಾಲನ ಬಳಿಗೆ ಸೇರಿದಾಗ, ನನ್ನ ಹೆಸರಿನಿಂದ ಅವನ ಕ್ಷೇಮಸಮಾಚಾರವನ್ನು ಕೇಳಿ, ಬಾಳುವವನಾದ ಅವನಿಗೆ ಹೇಳಬೇಕಾದದ್ದೇನೆಂದರೆ:
1SA 25:6 ‘ನಿನಗೆ ಸಮಾಧಾನವೂ, ನಿನ್ನ ಮನೆಗೆ ಸಮಾಧಾನವೂ ನಿನ್ನ ಸರ್ವಸಂಪತ್ತಿಗೂ ಸಮಾಧಾನವೂ ಆಗಲಿ.
1SA 25:7 “ ‘ಈಗ ನಿನಗೆ ಕುರಿಗಳ ಉಣ್ಣೆ ಕತ್ತರಿಸುವವರು ಉಂಟೆಂದು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿಕಾಯುವವರು ಕರ್ಮೆಲಿನಲ್ಲಿದ್ದ ದಿವಸಗಳೆಲ್ಲಾ ನಾವು ಅವರಿಗೆ ತೊಂದರೆಪಡಿಸಲಿಲ್ಲ. ಅವರು ಒಂದಾದರೂ ಕಳೆದುಕೊಳ್ಳಲಿಲ್ಲ.
1SA 25:8 ನಿನ್ನ ಸೇವಕರನ್ನು ಕೇಳು. ಅವರು ನಿನಗೆ ಹೇಳುವರು. ಆದ್ದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಏಕೆಂದರೆ ಒಳ್ಳೆಯ ದಿವಸದಲ್ಲಿ ಬಂದೆವು. ನಿನ್ನ ಕೈಯಲ್ಲಿ ದೊರಕುವುದನ್ನು ನಿನ್ನ ಸೇವಕರಿಗೂ, ನಿನ್ನ ಪುತ್ರನಾದ ದಾವೀದನಿಗೂ ದಯಪಾಲಿಸು ಎಂದು ಅವನಿಗೆ ಹೇಳಿರಿ,’ ” ಎಂದು ಅವರನ್ನು ಕಳುಹಿಸಿದನು.
1SA 25:9 ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.
1SA 25:10 ನಾಬಾಲನು ದಾವೀದನ ಸೇವಕರಿಗೆ ಉತ್ತರವಾಗಿ, “ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಉಂಟು.
1SA 25:11 ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆ ಕತ್ತರಿಸುವವರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನು ತೆಗೆದು, ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ?” ಎಂದನು.
1SA 25:12 ಹೀಗೆ ದಾವೀದನ ಯುವಕರು ತಮ್ಮ ಮಾರ್ಗವಾಗಿ ಹಿಂದಕ್ಕೆ ತಿರುಗಿ ದಾವೀದನ ಬಳಿಗೆ ಬಂದು, ಈ ಮಾತುಗಳನ್ನೆಲ್ಲಾ ತಿಳಿಸಿದರು.
1SA 25:13 ಆಗ ದಾವೀದನು ತನ್ನ ಜನರಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ನಿಮ್ಮ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ,” ಎಂದನು. ಪ್ರತಿಯೊಬ್ಬನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ಹಾಗೆಯೇ ದಾವೀದನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ದಾವೀದನ ಹಿಂದೆ ಹೆಚ್ಚು ಕಡಿಮೆ ನಾನೂರು ಮಂದಿ ಹೋದರು. ಇನ್ನೂರು ಮಂದಿ ಸಲಕರಣೆಗಳ ಬಳಿಯಲ್ಲಿ ನಿಂತರು.
1SA 25:14 ಆಗ ಕೆಲಸದವರಲ್ಲಿ ಯುವಕನಾದವನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಯಜಮಾನನನ್ನು ವಂದಿಸಲು ದಾವೀದನು ಮರುಭೂಮಿಯಿಂದ ದೂತರನ್ನು ಕಳುಹಿಸಿದನು.
1SA 25:15 ಆದರೆ ಇವನು ಅವರನ್ನು ನಿಂದಿಸಿದನು. ಆ ಜನರು ನಮಗೆ ಮಹಾ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನಗಳೆಲ್ಲಾ ನಾವು ತೊಂದರೆ ಪಡಲಿಲ್ಲ. ಒಂದನ್ನಾದರೂ ಕಳೆದುಕೊಳ್ಳಲಿಲ್ಲ.
1SA 25:16 ಇದಲ್ಲದೆ ಅವರ ಸಂಗಡ ನಾವು ಕುರಿಗಳನ್ನು ಮೇಯಿಸಿಕೊಂಡು ಇದ್ದ ದಿನಗಳೆಲ್ಲಾ ನಮಗೆ ಅವರು ರಾತ್ರಿ ಹಗಲು ಒಂದು ಕೋಟೆಯಂತೆ ಗೋಡೆಯಾಗಿದ್ದರು.
1SA 25:17 ಈಗ ನೀನು ಮಾಡಬೇಕಾದದ್ದೇನೆಂದು ಆಲೋಚಿಸಿ ನೋಡು. ಏಕೆಂದರೆ ಕೇಡು ನಮ್ಮ ಯಜಮಾನನ ಮೇಲೂ ಅವನ ಮನೆಯ ಮೇಲೆಯೂ ನಿಶ್ಚಯವಾಗಿದೆ. ದುಷ್ಟನಾಗಿರುವ ಅವನ ಸಂಗಡ ಮಾತನಾಡುವುದು ಅಸಾಧ್ಯ,” ಎಂದನು.
1SA 25:18 ಆಗ ಅಬೀಗೈಲಳು ತೀವ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸವನ್ನೂ ಬೇಯಿಸಿದ ಐದು ಕುರಿಗಳ ಮಾಂಸವನ್ನೂ ಐವತ್ತು ಸೇರು ಹುರಿದ ಧಾನ್ಯವನ್ನೂ ಒಣಗಿದ ನೂರು ದ್ರಾಕ್ಷಿ ಗೊನೆಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ಕತ್ತೆಗಳ ಮೇಲೆ ಹೇರಿಸಿಕೊಂಡು,
1SA 25:19 ತನ್ನ ಸೇವಕರಿಗೆ, “ನನಗೆ ಮುಂದಾಗಿ ಹೋಗಿರಿ. ನಾನು ನಿಮ್ಮ ಹಿಂದೆ ಬರುವೆನು,” ಎಂದು ಹೇಳಿದಳು. ಆದರೆ ತನ್ನ ಗಂಡನಾದ ನಾಬಾಲನಿಗೆ ಇದನ್ನು ತಿಳಿಸಲಿಲ್ಲ.
1SA 25:20 ಆಗ, ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಮಾರ್ಗದಲ್ಲಿ ಬೆಟ್ಟದ ಮರೆಗೆ ಬಂದಾಗ, ದಾವೀದನೂ ಅವನ ಜನರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು.
1SA 25:21 ಅಷ್ಟರಲ್ಲಿ ದಾವೀದನು ತನ್ನ ಜನರಿಗೆ, “ಅಡವಿಯಲ್ಲಿದ್ದ ಇವನ ಆಸ್ತಿಯಲ್ಲಿ ಏನೂ ನಷ್ಟವಾಗದಂತೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಅವನು ನಾನು ಮಾಡಿದ ಉಪಕಾರಕ್ಕೆ ಅಪಕಾರ ಮಾಡಿದ್ದಾನೆ.
1SA 25:22 ಬೆಳಗಾಗುವಷ್ಟರಲ್ಲಿ ಅವನ ಜನರಲ್ಲಿ ನಾನು ಒಬ್ಬ ಗಂಡಸನನ್ನಾದರೂ ಉಳಿಸಿದರೆ, ದೇವರು ದಾವೀದನಾದ ನನಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ,” ಎಂದು ಹೇಳಿದ್ದನು.
1SA 25:23 ಅಬೀಗೈಲಳು ದಾವೀದನನ್ನು ಕಂಡಾಗ, ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ, ಅವನ ಮುಂದೆ ಬೋರಲು ಬಿದ್ದು ನಮಸ್ಕರಿಸಿದಳು.
1SA 25:24 ಆಮೇಲೆ ಅವನ ಪಾದಗಳ ಮೇಲೆ ಬಿದ್ದು, “ನನ್ನ ಒಡೆಯನೇ, ಈ ಅಕ್ರಮವು ನನ್ನ ಮೇಲಿರಲಿ; ದಯಮಾಡಿ ನಿನ್ನ ದಾಸಿಯಾದ ನಾನು ಮಾತಾಡುವುದಕ್ಕೆ ಅಪ್ಪಣೆಯಾಗಲಿ. ನಿನ್ನ ದಾಸಿಯ ಮಾತುಗಳನ್ನು ಕೇಳು.
1SA 25:25 ನನ್ನ ಒಡೆಯನೇ, ದಯಮಾಡಿ ದುಷ್ಟನಾದ ನಾಬಾಲನ ಮೇಲೆ ಲಕ್ಷ್ಯವಿಡಬೇಡ. ಏಕೆಂದರೆ ಅವನ ಹೆಸರು ಹೇಗೋ, ಹಾಗೆಯೇ ಅವನು. ಅವನು ನಾಬಾಲನೆಂಬ ಹೆಸರುಳ್ಳವನು. ಬುದ್ಧಿಹೀನತೆ ಅವನಲ್ಲಿ ಇದೆ. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಸೇವಕರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ.
1SA 25:26 ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವುದಕ್ಕೂ, ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಹೋಗುವುದನ್ನು ದೇವರು ತಡೆದದ್ದರಿಂದ, ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ ನಿನ್ನ ಶತ್ರುಗಳೂ, ನನ್ನ ಒಡೆಯನಿಗೆ ಕೇಡನ್ನು ಹುಡುಕುವವರೂ ನಾಬಾಲನ ಹಾಗೆಯೇ ಆಗಲಿ.
1SA 25:27 ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತೆಗೆದುಕೊಂಡು ಬಂದ ಈ ಕಾಣಿಕೆಯು ನನ್ನ ಒಡೆಯನ ಹೆಜ್ಜೆಯಲ್ಲಿ ನಡೆಯುವವರಿಗೆ ಸಲ್ಲಲಿ.
1SA 25:28 “ನೀನು ದಯಮಾಡಿ ನಿನ್ನ ದಾಸಿಯ ತಪ್ಪನ್ನು ಮನ್ನಿಸಬೇಕು. ಏಕೆಂದರೆ ನನ್ನ ಒಡೆಯನು ಯೆಹೋವ ದೇವರ ಯುದ್ಧಗಳನ್ನು ನಡೆಸುತ್ತಾನೆ. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನ ಕಾಣದಿರಲಿ. ಯೆಹೋವ ದೇವರು ನಿಶ್ಚಯವಾಗಿ ನನ್ನ ಒಡೆಯನಾದ ನಿನಗೆ ಶಾಶ್ವತ ರಾಜ್ಯವನ್ನು ಸ್ಥಿರಪಡಿಸುವರು.
1SA 25:29 ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡುಕುವುದಕ್ಕೆ ಒಬ್ಬನು ಎದ್ದಿದ್ದಾನೆ. ಆದರೂ ನನ್ನ ಒಡೆಯನ ಪ್ರಾಣವು ದೇವರಾದ ಯೆಹೋವ ದೇವರ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಿರುವುದು. ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ದೇವರು ಎಸೆದುಬಿಡುವರು.
1SA 25:30 ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಯೆಹೋವ ದೇವರು ಹೇಳಿದ ಒಳ್ಳೆಯದೆಲ್ಲವನ್ನು ನಿನಗೆ ಮಾಡಿ, ನಿನ್ನನ್ನು ಇಸ್ರಾಯೇಲರ ಮೇಲೆ ನಾಯಕನಾಗಿ ನೇಮಿಸಿದಾಗ,
1SA 25:31 ನೀನು ಸುಮ್ಮನೆ ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡದ್ದರಿಂದ ಉಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ. ಆದರೆ ನನ್ನ ಒಡೆಯನನ್ನು ಯೆಹೋವ ದೇವರು ಚೆನ್ನಾಗಿ ನಡೆಸಿದಾಗ, ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು,” ಎಂದಳು.
1SA 25:32 ಆಗ ದಾವೀದನು ಅಬೀಗೈಲಳಿಗೆ, “ನನ್ನನ್ನು ಎದುರುಗೊಳ್ಳುವುದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
1SA 25:33 ನಿನ್ನ ಬುದ್ಧಿಮಾತಿಗಾಗಿಯೂ, ನಾನು ರಕ್ತ ಚೆಲ್ಲುವುದಕ್ಕೂ, ನನ್ನ ಕೈಯಿಂದ ನನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಈ ಹೊತ್ತು ನನ್ನನ್ನು ತಡೆದ ನಿನಗೆ ಆಶೀರ್ವಾದ ಆಗಲಿ.
1SA 25:34 ಏಕೆಂದರೆ ನಿನಗೆ ಕೇಡು ಆಗದ ಹಾಗೆ ನನ್ನನ್ನು ತಡೆದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಜೀವದಾಣೆ, ನೀನು ತ್ವರೆಯಾಗಿ ನನ್ನನ್ನು ಎದುರುಗೊಳ್ಳದಿದ್ದರೆ, ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ,” ಎಂದು ಹೇಳಿದನು.
1SA 25:35 ಅವಳು ತನಗೆ ತಂದದ್ದನ್ನು ದಾವೀದನು ತೆಗೆದುಕೊಂಡು ಅವಳಿಗೆ, “ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ನಾನು ನಿನ್ನ ಮಾತನ್ನು ಕೇಳಿ ನಿನ್ನ ಮುಖ ದಾಕ್ಷಿಣ್ಯವನ್ನು ನೋಡಿದೆನು,” ಎಂದನು.
1SA 25:36 ಅಬೀಗೈಲಳು ನಾಬಾಲನ ಬಳಿಗೆ ಬಂದಾಗ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸಗೊಂಡಿತ್ತು. ಆದಕಾರಣ ಅವಳು ಉದಯವಾಗುವವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ, ಹೆಚ್ಚಾದದ್ದನ್ನಾಗಲಿ ತಿಳಿಸಲಿಲ್ಲ.
1SA 25:37 ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು.
1SA 25:38 ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ, ಯೆಹೋವ ದೇವರ ದಂಡನೆಯ ನಿಮಿತ್ತ ನಾಬಾಲನು ಸತ್ತುಹೋದನು.
1SA 25:39 ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ, “ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ, ತನ್ನ ಸೇವಕನನ್ನು ಕೇಡು ಮಾಡಗೊಡದ ಹಾಗೆ ತಡೆದ ಯೆಹೋವ ದೇವರು ಸ್ತುತಿಹೊಂದಲಿ. ಏಕೆಂದರೆ ಯೆಹೋವ ದೇವರು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದರು,” ಎಂದನು. ದಾವೀದನು ಅಬೀಗೈಲಳನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ಅವಳ ಸಂಗಡ ಮಾತನಾಡಲು ಸೇವಕರನ್ನು ಕಳುಹಿಸಿದನು.
1SA 25:40 ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ, “ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನು,” ಎಂದು ಹೇಳಿದರು.
1SA 25:41 ಆಗ ಅವಳು ಎದ್ದು ಬೋರಲು ಬಿದ್ದು, “ನಿನ್ನ ದಾಸಿಯಾದ ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯುವುದಕ್ಕೂ ಸಿದ್ಧಳಾಗಿದ್ದೇನೆ,” ಎಂದಳು.
1SA 25:42 ಅಬೀಗೈಲಳು ತ್ವರೆಯಾಗಿ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು, ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರೆದುಕೊಂಡು ದಾವೀದನ ಸೇವಕರ ಹಿಂದೆ ಹೋಗಿ, ಅವನಿಗೆ ಹೆಂಡತಿಯಾದಳು.
1SA 25:43 ಇದಲ್ಲದೆ ದಾವೀದನು ಇಜ್ರೆಯೇಲ್ ಊರಿನವಳಾದ ಅಹೀನೋವಮಳನ್ನು ಮದುವೆ ಮಾಡಿಕೊಂಡಿದ್ದನು. ಅವರಿಬ್ಬರೂ ಅವನ ಹೆಂಡತಿಯರಾದರು.
1SA 25:44 ಆದರೆ ಸೌಲನು ದಾವೀದನ ಹೆಂಡತಿಯಾಗಿದ್ದ ಮೀಕಲಳೆಂಬ ತನ್ನ ಮಗಳನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದನು.
1SA 26:1 ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ಯೆಷಿಮೋನಿಗೆ ಎದುರಾದ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ,” ಎಂದರು.
1SA 26:2 ಆಗ ಸೌಲನು ಎದ್ದು ಜೀಫ್ ಮರುಭೂಮಿಯಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿನಲ್ಲಿ ಆಯ್ದ ಮೂರು ಸಾವಿರ ಜನರ ಸಂಗಡ ಜೀಫ್ ಮರುಭೂಮಿಗೆ ಹೊರಟುಹೋಗಿ,
1SA 26:3 ಯೆಷಿಮೋನಿಗೆ ಎದುರಾದ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿಸಿದನು. ದಾವೀದನು ಸೌಲನು ತನ್ನ ಹಿಂದೆ ಮರುಭೂಮಿಗೆ ಬಂದದ್ದನ್ನು ನೋಡಿ, ಮರುಭೂಮಿಯಲ್ಲಿ ನಿಂತನು.
1SA 26:4 ದಾವೀದನು ಗೂಢಚಾರರನ್ನು ಕಳುಹಿಸಿ, ಸೌಲನು ಬಂದದ್ದು ನಿಶ್ಚಯವೆಂದು ತಿಳಿದುಕೊಂಡನು.
1SA 26:5 ದಾವೀದನು ಎದ್ದು ಸೌಲನು ಇಳಿದುಕೊಂಡಿದ್ದ ಸ್ಥಳಕ್ಕೆ ಬಂದನು. ಸೌಲನೂ, ಅವನ ದಂಡಿನ ನಾಯಕನಾಗಿರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಸೌಲನು ಮಧ್ಯದಲ್ಲಿ ಮಲಗಿದ್ದನು. ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು.
1SA 26:6 ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನು ಮತ್ತು ಚೆರೂಯಳ ಮಗನಾಗಿರುವ ಯೋವಾಬನ ಸಹೋದರ ಅಬೀಷೈಯನ್ನು ನೋಡಿ, “ನನ್ನ ಸಂಗಡ ಸೌಲನ ದಂಡಿನಲ್ಲಿ ಪ್ರವೇಶಿಸಲು ಬರುವವರು ಯಾರು?” ಎಂದು ಕೇಳಿದನು. ಅದಕ್ಕೆ ಅಬೀಷೈಯನು, “ನಾನು ನಿನ್ನ ಸಂಗಡ ಬರುವೆನು,” ಎಂದನು.
1SA 26:7 ದಾವೀದನೂ, ಅಬೀಷೈಯನೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಸೌಲನು ಕಂದಕದೊಳಗೆ ಮಲಗಿ ನಿದ್ರೆ ಮಾಡುತ್ತಿದ್ದನು. ಅವನ ಈಟಿಯು ಅವನ ತಲೆದಿಂಬಿನ ಬಳಿಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲು ಅಬ್ನೇರನೂ, ಜನರೂ ಮಲಗಿದ್ದರು.
1SA 26:8 ಆಗ ಅಬೀಷೈಯನು ದಾವೀದನಿಗೆ, “ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಿಂದ ನೆಲಕ್ಕೆ ಹತ್ತುವಂತೆ ತಿವಿಯಲು ಅಪ್ಪಣೆಕೊಡಬೇಕು; ಎರಡು ಸಾರಿ ಹೊಡೆಯುವುದಿಲ್ಲ,” ಎಂದನು.
1SA 26:9 ಆದರೆ ದಾವೀದನು ಅಬೀಷೈಯನಿಗೆ, “ಅವನನ್ನು ಸಂಹರಿಸಬೇಡ. ಏಕೆಂದರೆ ಅಪರಾಧವಿಲ್ಲದೆ ಯೆಹೋವ ದೇವರ ಅಭಿಷಿಕ್ತನ ವಿರೋಧವಾಗಿ ಕೈ ಹಾಕುವವನು ಯಾರು?” ಎಂದನು.
1SA 26:10 ಇದಲ್ಲದೆ ಇನ್ನೂ ದಾವೀದನು, “ಯೆಹೋವ ದೇವರ ಜೀವದಾಣೆ, ಯೆಹೋವ ದೇವರೇ ಅವನನ್ನು ಹೊಡೆಯುವರು, ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು, ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
1SA 26:11 ನಾನು ನನ್ನ ಕೈಯನ್ನು ಯೆಹೋವ ದೇವರ ಅಭಿಷಿಕ್ತನ ಮೇಲೆ ಹಾಕದ ಹಾಗೆ ಯೆಹೋವ ದೇವರು ನನಗೆ ತಡೆಯಲಿ. ಈಗ ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೋ ನಾವು ಹೋಗೋಣ,” ಎಂದನು.
1SA 26:12 ದಾವೀದನು ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೊಂಡನು. ಅವರು ಹೊರಟು ಹೋದರು. ಒಬ್ಬರಾದರೂ ನೋಡಲಿಲ್ಲ ಇಲ್ಲವೆ ತಿಳಿದುಕೊಳ್ಳಲಿಲ್ಲ, ಅರಿತಿದ್ದಿಲ್ಲ, ಯಾರೂ ಎಚ್ಚೆತ್ತಿರಲಿಲ್ಲ. ಏಕೆಂದರೆ ಯೆಹೋವ ದೇವರಿಂದ ಗಾಢನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರು ಗಾಢ ನಿದ್ರೆಯಲ್ಲಿದ್ದರು.
1SA 26:13 ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ, ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಉಂಟಾಗುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು,
1SA 26:14 ಸೈನಿಕರಿಗೂ ನೇರನ ಮಗನಾದ ಅಬ್ನೇರನಿಗೂ ಕೇಳಿಸುವಂತೆ ಕೂಗಿ, “ಅಬ್ನೇರನೇ, ನೀನು ಉತ್ತರ ಕೊಡುವುದಿಲ್ಲವೋ?” ಎಂದನು. ಅದಕ್ಕೆ ಅಬ್ನೇರನು ಉತ್ತರವಾಗಿ, “ಅರಸನಿಗೆ ಎದುರಾಗಿ ಕೂಗುವ ನೀನು ಯಾರು?” ಎಂದನು.
1SA 26:15 ಆಗ ದಾವೀದನು ಅಬ್ನೇರನಿಗೆ, “ನೀನು ಪರಾಕ್ರಮಶಾಲಿಯಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವುದಕ್ಕೆ ಬಂದಿದ್ದನು.
1SA 26:16 ನೀನು ಮಾಡಿದ ಈ ಕಾರ್ಯ ಒಳ್ಳೆಯದಲ್ಲ. ಯೆಹೋವ ದೇವರ ಜೀವದಾಣೆ, ಯೆಹೋವ ದೇವರ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದ್ದರಿಂದ, ನೀವು ಮರಣಕ್ಕೆ ಯೋಗ್ಯರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ, ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು,” ಎಂದನು.
1SA 26:17 ಆಗ ಸೌಲನು ದಾವೀದನ ಸ್ವರವನ್ನು ತಿಳಿದುಕೊಂಡು, “ನನ್ನ ಪುತ್ರನಾದ ದಾವೀದನೇ, ಇದು ನಿನ್ನ ಸ್ವರವಲ್ಲವೋ?” ಎಂದನು. ದಾವೀದನು, “ಅರಸನಾದ ನನ್ನ ಒಡೆಯನೇ, ನನ್ನ ಧ್ವನಿಯೇ ಹೌದು,” ಎಂದನು.
1SA 26:18 “ನನ್ನ ಒಡೆಯನು ತನ್ನ ಸೇವಕನನ್ನು ಹೀಗೆ ಹಿಂದಟ್ಟುವುದೇನು? ನಾನೇನು ಮಾಡಿದೆನು?
1SA 26:19 ನನ್ನ ಕೈಯಲ್ಲಿ ಏನು ಕೆಟ್ಟತನವಿದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಯೆಹೋವ ದೇವರು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ, ಕಾಣಿಕೆಯನ್ನು ಅಂಗೀಕರಿಸಲಿ. ಆದರೆ ಮಾನವರು ಇದನ್ನು ಮಾಡಿದರೆ, ಅವರು ಯೆಹೋವ ದೇವರ ಮುಂದೆ ಶಾಪಗ್ರಸ್ತರಾಗಿರಲಿ. ಏಕೆಂದರೆ, ‘ನೀನು ಹೋಗಿ? ಅನ್ಯದೇವರುಗಳನ್ನು ಸೇವಿಸು,’ ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಯೆಹೋವ ದೇವರ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
1SA 26:20 ಆದ್ದರಿಂದ ಯೆಹೋವ ದೇವರ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ, ಇಸ್ರಾಯೇಲಿನ ಅರಸನು ಒಂದು ನೊಣವನ್ನು ಹುಡುಕಲು ಹೊರಟನು,” ಎಂದನು.
1SA 26:21 ಆಗ ಸೌಲನು, “ನಾನು ಪಾಪಮಾಡಿದೆನು. ನನ್ನ ಮಗನಾದ ದಾವೀದನೇ ತಿರುಗಿ ಬಾ. ಏಕೆಂದರೆ ನನ್ನ ಪ್ರಾಣ ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡು ಮಾಡೆನು. ಇದುವರೆಗೆ ನಾನು ಮಾಡಿದ್ದು ಹುಚ್ಚುತನವೂ, ದೊಡ್ಡ ತಪ್ಪೂ ಆಗಿದೆ,” ಎಂದನು.
1SA 26:22 ದಾವೀದನು ಉತ್ತರವಾಗಿ, “ಅರಸನ ಈಟಿಯು ಇಲ್ಲಿ ಇದೆ. ಸೇವಕರಲ್ಲಿ ಒಬ್ಬನು ಈ ಕಡೆಗೆ ಬಂದು, ಅದನ್ನು ತೆಗೆದುಕೊಂಡು ಹೋಗಲಿ.
1SA 26:23 ಆದರೆ ಯೆಹೋವ ದೇವರು ಪ್ರತಿಯೊಬ್ಬನಿಗೆ ಅವನ ನೀತಿಗೂ, ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಯೆಹೋವ ದೇವರು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆದರೆ ನಾನು ಯೆಹೋವ ದೇವರ ಅಭಿಷಿಕ್ತನ ಮೇಲೆ ನನ್ನ ಕೈ ಚಾಚಲು ಮನಸ್ಸಿಲ್ಲದೆ ಇದ್ದೆನು.
1SA 26:24 ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ, ಹಾಗೆಯೇ ನನ್ನ ಪ್ರಾಣವು ಯೆಹೋವ ದೇವರ ದೃಷ್ಟಿಗೆ ದೊಡ್ಡದಾಗಿರಲಿ. ಅವರು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ,” ಎಂದನು.
1SA 26:25 ಆಗ ಸೌಲನು ದಾವೀದನಿಗೆ, “ನನ್ನ ಮಗನಾದ ದಾವೀದನೇ, ದೇವರು ನಿನ್ನನ್ನು ಆಶೀರ್ವದಿಸಲಿ. ನೀನು ಮಹತ್ಕಾರ್ಯಗಳನ್ನು ಮಾಡುವೆ, ಗೆದ್ದೇ ಗೆಲ್ಲುವೆ,” ಎಂದನು. ಹಾಗೆಯೇ ದಾವೀದನು ತನ್ನ ಮಾರ್ಗವಾಗಿ ಹೋದನು. ಸೌಲನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
1SA 27:1 ಆದರೆ ದಾವೀದನು ತನ್ನ ಹೃದಯದಲ್ಲಿ, “ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಸಾಯುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು,” ಎಂದುಕೊಂಡನು.
1SA 27:2 ಆದ್ದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರುನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕನ ಮಗ ಆಕೀಷನ ಬಳಿಗೆ ಹೋದನು.
1SA 27:3 ದಾವೀದನು ಗತ್ ಊರಿನಲ್ಲಿ ಆಕೀಷನ ಬಳಿಯಲ್ಲಿ ತಾನೂ, ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ, ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾದ ಅಹೀನೋವಮಳು, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಸಹಿತವಾಗಿಯೂ ಇದ್ದರು.
1SA 27:4 ದಾವೀದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲಾಯಿತು. ಆದ್ದರಿಂದ ಅವನು ಆ ತರುವಾಯ ದಾವೀದನನ್ನು ಹುಡುಕಲಿಲ್ಲ.
1SA 27:5 ದಾವೀದನು ಆಕೀಷನಿಗೆ, “ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದರೆ, ಗ್ರಾಮಾಂತರಗಳಲ್ಲಿ ನಾನು ಇರುವುದಕ್ಕೆ ಒಂದು ಸ್ಥಳ ನನಗೆ ಕೊಡು. ನಿನ್ನ ದಾಸನು ಏಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು?” ಎಂದನು.
1SA 27:6 ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್ ಊರನ್ನು ಅವನಿಗೆ ಕೊಟ್ಟನು. ಆದ್ದರಿಂದ ಚಿಕ್ಲಗ್ ಇಂದಿನವರೆಗೂ ಯೆಹೂದದ ಅರಸರಿಗೆ ಸೇರಿದೆ.
1SA 27:7 ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳು ವಾಸಿಸಿದ್ದನು.
1SA 27:8 ದಾವೀದನೂ, ಅವನ ಜನರೂ ಶೂರಿಗೆ ಹೋಗುವ ಮೇರೆಯಿಂದ ಈಜಿಪ್ಟಿನವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.
1SA 27:9 ಆಗ ದಾವೀದನು ಪುರುಷರನ್ನಾದರೂ, ಸ್ತ್ರೀಯರನ್ನಾದರೂ ಉಳಿಸದೆ, ಆ ಸೀಮೆಯನ್ನು ಹೊಡೆದು, ಕುರಿಪಶುಗಳನ್ನೂ, ಕತ್ತೆಗಳನ್ನೂ, ಒಂಟೆಗಳನ್ನೂ, ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿಬಂದನು.
1SA 27:10 ಆಗ ಆಕೀಷನು, “ಈ ಹೊತ್ತು ಎಲ್ಲಿ ಸುಲಿದುಕೊಂಡಿರಿ?” ಎಂದಾಗ ದಾವೀದನು, “ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ, ಯೆರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ, ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು,” ಎಂದನು.
1SA 27:11 ದಾವೀದನು ಗತ್ ಪಟ್ಟಣಕ್ಕೆ ಒಬ್ಬ ಪುರುಷನನ್ನಾದರೂ ಸ್ತ್ರೀಯನನ್ನಾದರೂ ಜೀವಂತವಾಗಿ ತರಲಿಲ್ಲ. ಏಕೆಂದರೆ ಯಾರಾದರೂ ಹೋಗಿ ರಾಜನಾದ ಆಕೀಷನಿಗೆ ಸತ್ಯವನ್ನು ತಿಳಿಸಬಹುದೆಂದು ದಾವೀದನು ಯೋಚಿಸಿದನು. ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.
1SA 27:12 ಆಕೀಷನು ದಾವೀದನನ್ನು ನಂಬಿ, “ಇವನು ತನ್ನ ಜನರಾದ ಇಸ್ರಾಯೇಲರಿಗೆ ಅಸಹ್ಯವಾದನು, ಆದ್ದರಿಂದ ಇವನು ಎಂದೆಂದಿಗೂ ನನ್ನ ದಾಸನಾಗಿರುವನು,” ಎಂದನು.
1SA 28:1 ಆ ದಿವಸಗಳಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ಮೇಲೆ ಯುದ್ಧಮಾಡಲು ತಮ್ಮ ಸೈನ್ಯಗಳನ್ನು ಕೂಡಿಸಿಕೊಂಡರು. ಆಗ ಆಕೀಷನು ದಾವೀದನಿಗೆ, “ನೀನೂ, ನಿನ್ನ ಜನರೂ ಯುದ್ಧವನ್ನು ಮಾಡಲು ನಮ್ಮ ಸಂಗಡ ನಿಶ್ಚಯವಾಗಿ ಬರಬೇಕೆಂದು ತಿಳಿಯಲಿಲ್ಲವೋ?” ಎಂದನು.
1SA 28:2 ದಾವೀದನು ಆಕೀಷನಿಗೆ, “ನಿಶ್ಚಯವಾಗಿ ನಿನ್ನ ದಾಸನು ಮಾಡುವುದನ್ನು ನೀನೇ ತಿಳಿದುಕೊಳ್ಳುವಿ,” ಎಂದನು. ಆಕೀಷನು ದಾವೀದನಿಗೆ, “ಎಂದೆಂದಿಗೂ ನಾನು ನಿನ್ನನ್ನು ಕಾವಲುಗಾರನಾಗಿ ಮಾಡುವೆನು,” ಎಂದನು.
1SA 28:3 ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿ, ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಳಿಟ್ಟರು. ಇದಲ್ಲದೆ ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಲ್ಲಿಂದ ಹೊರಡಿಸಿದ್ದನು.
1SA 28:4 ಆಗ ಫಿಲಿಷ್ಟಿಯರ ಸೈನ್ಯ ಕೂಡಿಬಂದು ಶೂನೇಮಿನಲ್ಲಿ ದಂಡಿಳಿದರು. ಸೌಲನು ಸಮಸ್ತ ಇಸ್ರಾಯೇಲನ್ನು ಕೂಡಿಸಿಕೊಂಡು ಗಿಲ್ಬೋವದಲ್ಲಿ ದಂಡಿಳಿದನು.
1SA 28:5 ಸೌಲನು ಫಿಲಿಷ್ಟಿಯರ ಸೈನ್ಯವನ್ನು ಕಂಡು ಭಯಪಟ್ಟನು. ಆತನ ಹೃದಯದಲ್ಲಿ ಭಯತುಂಬಿತು.
1SA 28:6 ಸೌಲನು ಯೆಹೋವ ದೇವರನ್ನು ಕೇಳಿಕೊಂಡಾಗ, ಯೆಹೋವ ದೇವರು ಅವನಿಗೆ ಸ್ವಪ್ನಗಳಿಂದಲಾದರೂ, ಊರೀಮಿನಿಂದಲಾದರೂ, ಪ್ರವಾದಿಗಳಿಂದಲಾದರೂ ಉತ್ತರ ಕೊಡಲಿಲ್ಲ.
1SA 28:7 ಆಗ ಸೌಲನು ತನ್ನ ದಾಸರಿಗೆ, “ನಾನು ವಿಚಾರಿಸುವಂತೆ ಮಾಂತ್ರಿಕಳಾದ ಒಬ್ಬ ಸ್ತ್ರೀಯನ್ನು ವಿಚಾರಿಸಿರಿ,” ಎಂದನು. ಅವನ ದಾಸರು ಅವನಿಗೆ, “ಇಗೋ, ಎಂದೋರಿನಲ್ಲಿ ಮಾಂತ್ರಿಕಳಾದ ಒಬ್ಬ ಸ್ತ್ರೀ ಇದ್ದಾಳೆ,” ಎಂದರು.
1SA 28:8 ಆಗ ಸೌಲನು ತನ್ನನ್ನು ಮರೆಮಾಡಿಕೊಳ್ಳುವಂತೆ ಬದಲು ವಸ್ತ್ರಗಳನ್ನು ಧರಿಸಿ, ತನ್ನ ಸಂಗಡ ಇಬ್ಬರನ್ನು ಕರೆದುಕೊಂಡು, ರಾತ್ರಿಯಲ್ಲಿ ಆ ಸ್ತ್ರೀಯ ಬಳಿಗೆ ಬಂದು ಅವಳಿಗೆ, “ನೀನು ದಯಮಾಡಿ ಸತ್ತವರ ಆತ್ಮವನ್ನು ವಿಚಾರಿಸಿ ನನಗೆ ಕಣಿ ಹೇಳು. ನಾನು ನಿನಗೆ ಹೇಳುವವನನ್ನು ನನಗೆ ಕಾಣುವಂತೆ ಮಾಡು,” ಎಂದನು.
1SA 28:9 ಆ ಸ್ತ್ರೀಯು ಅವನಿಗೆ, “ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವುದಕ್ಕೆ ಕಾರಣವಾಗುವ ಹಾಗೆ ಏಕೆ ನನ್ನ ಪ್ರಾಣಕ್ಕೆ ಉರುಳಿಡುತ್ತಿ?” ಎಂದಳು.
1SA 28:10 ಆಗ ಸೌಲನು, “ಯೆಹೋವ ದೇವರ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬರುವುದಿಲ್ಲ,” ಎಂದು ಅವಳಿಗೆ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದನು.
1SA 28:11 ಅವಳು, “ನಿನಗೆ ನಾನು ಯಾರನ್ನು ಇಲ್ಲಿ ಬರಮಾಡಬೇಕು?” ಎಂದಳು. ಅದಕ್ಕವನು, “ಸಮುಯೇಲನನ್ನು ಬರಮಾಡು,” ಎಂದನು.
1SA 28:12 ಆ ಸ್ತ್ರೀಯು ಸಮುಯೇಲನನ್ನು ಕಂಡಾಗ ಮಹಾಶಬ್ದದಿಂದ ಕೂಗಿದಳು. ಆ ಸ್ತ್ರೀಯು, “ಏಕೆ ನನ್ನನ್ನು ಮೋಸಮಾಡಿದಿ? ನೀನೇ ಸೌಲನು,” ಎಂದಳು.
1SA 28:13 ಅರಸನು ಅವಳಿಗೆ, “ಭಯಪಡಬೇಡ, ನೀನು ಕಂಡದ್ದೇನು?” ಎಂದನು. ಆಗ ಸ್ತ್ರೀಯು ಸೌಲನಿಗೆ, “ಒಂದು ಆತ್ಮವು ಭೂಮಿಯಿಂದ ಎದ್ದು ಬರುವುದನ್ನು ಕಂಡೆನು,” ಎಂದಳು.
1SA 28:14 ಆಗ ಅವನು, “ಅವನ ರೂಪ ಹೇಗಿದೆ?” ಎಂದು ಅವಳನ್ನು ಕೇಳಿದನು. ಅವಳು, “ನಿಲುವಂಗಿಯನ್ನು ಹೊದ್ದಿರುವ ಮುದಿ ಪ್ರಾಯದವನಾದ ಒಬ್ಬ ಮನುಷ್ಯನು ಬರುತ್ತಿದ್ದಾನೆ,” ಎಂದಳು. ಅವನು ಸಮುಯೇಲನು ಎಂದು ಸೌಲನು ತಿಳಿದುಕೊಂಡು, ನೆಲದ ಮಟ್ಟಿಗೂ ಬಾಗಿ ಅಡ್ಡಬಿದ್ದನು.
1SA 28:15 ಆಗ ಸಮುಯೇಲನು ಸೌಲನಿಗೆ, “ನೀನು ನನ್ನನ್ನು ಇಲ್ಲಿ ಬರಮಾಡಿ ವಿಶ್ರಾಂತಿ ಕೆಡಿಸಿದೆ,” ಎಂದನು. ಅದಕ್ಕೆ ಸೌಲನು, “ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ. ಏಕೆಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಮಾಡುತ್ತಾರೆ. ಆದರೆ ದೇವರು ನನ್ನನ್ನು ಬಿಟ್ಟುಹೋದರು. ಅವರು ಪ್ರವಾದಿಗಳ ಮುಖಾಂತರವಾದರೂ, ಸ್ವಪ್ನದ ಮುಖಾಂತರವಾದರೂ ನನಗೆ ಉತ್ತರ ಕೊಡಲಿಲ್ಲ. ಆದ್ದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು,” ಎಂದನು.
1SA 28:16 ಸಮುಯೇಲನು ಅವನಿಗೆ, “ಯೆಹೋವ ದೇವರು ನಿನ್ನನ್ನು ಬಿಟ್ಟು ಹೋಗಿ ನಿನಗೆ ಶತ್ರುವಾಗಿರುವಾಗ, ನೀನು ನನ್ನನ್ನು ಕೇಳುವುದು ಏಕೆ?
1SA 28:17 ಯೆಹೋವ ದೇವರು ನನ್ನ ಮುಖಾಂತರ ಹೇಳಿದ ಹಾಗೆಯೇ ನಿನಗೆ ಮಾಡಿದ್ದಾರೆ. ಯೆಹೋವ ದೇವರು ರಾಜ್ಯವನ್ನು ನಿನ್ನ ಕೈಯಿಂದ ತೆಗೆದುಕೊಂಡು, ಅದನ್ನು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟರು.
1SA 28:18 ನೀನು ಯೆಹೋವ ದೇವರ ಮಾತನ್ನು ಕೇಳದೆ, ಅಮಾಲೇಕ್ಯರ ಮೇಲೆ ಇದ್ದ ಅವರ ಉಗ್ರಕೋಪವನ್ನು ತೀರಿಸದೆ ಹೋದದ್ದರಿಂದ, ಯೆಹೋವ ದೇವರು ಈ ದಿವಸದಲ್ಲಿ ನಿನಗೆ ಹೀಗೆ ಮಾಡಿದರು.
1SA 28:19 ಯೆಹೋವ ದೇವರು ನಿನ್ನ ಸಹಿತವಾಗಿ ಇಸ್ರಾಯೇಲನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವರು. ನಾಳೆ ನೀನೂ, ನಿನ್ನ ಪುತ್ರರೂ ನನ್ನ ಸಂಗಡ ಇರುವಿರಿ. ಯೆಹೋವ ದೇವರು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
1SA 28:20 ಆಗ ಸೌಲನು ನೆಲದ ಮೇಲೆ ಬೋರಲು ಬಿದ್ದು, ಸಮುಯೇಲನ ಮಾತುಗಳಿಗೋಸ್ಕರ ಬಹಳವಾಗಿ ಭಯಪಟ್ಟನು. ಆ ದಿನವೆಲ್ಲಾ ಏನೂ ಊಟಮಾಡದೆ ಇದ್ದುದರಿಂದ ಅವನೊಳಗೆ ಶಕ್ತಿ ಇಲ್ಲದೆ ಹೋಯಿತು.
1SA 28:21 ಆಗ ಆ ಸ್ತ್ರೀಯು ಸೌಲನ ಬಳಿಗೆ ಬಂದು, ಅವನು ಬಹಳ ತಲ್ಲಣಪಟ್ಟನೆಂದು ಕಂಡು ಅವನಿಗೆ, “ನಿನ್ನ ದಾಸಿಯಾದ ನಾನು ನಿನ್ನ ಮಾತನ್ನು ಕೇಳಿ, ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಇಟ್ಟುಕೊಂಡವಳಾಗಿ, ನೀನು ನನಗೆ ಹೇಳಿದ ಮಾತುಗಳನ್ನು ಕೇಳಿದೆನು.
1SA 28:22 ಆದ್ದರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ, ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನಗೆ ಕೊಡುವ ಆಹಾರವನ್ನು ಊಟಮಾಡು,” ಎಂದಳು.
1SA 28:23 ಅದಕ್ಕವನು, “ನಾನು ತಿನ್ನುವುದಿಲ್ಲ,” ಎಂದನು. ಆದರೆ ಅವನ ದಾಸರೂ, ಆ ಸ್ತ್ರೀಯೂ ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅವರ ಮಾತನ್ನು ಕೇಳಿ, ನೆಲವನ್ನು ಬಿಟ್ಟು ಎದ್ದು, ಮಂಚದ ಮೇಲೆ ಕುಳಿತುಕೊಂಡನು.
1SA 28:24 ಆ ಸ್ತ್ರೀಯ ಮನೆಯಲ್ಲಿ ಒಂದು ಕೊಬ್ಬಿದ ಕರುವು ಇತ್ತು. ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ನಾದಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು,
1SA 28:25 ಸೌಲನ ಮುಂದೆ ಮತ್ತು ಅವನ ದಾಸರ ಮುಂದೆ ತಂದಿಟ್ಟಳು. ಅವರು ಊಟಮಾಡಿ ಆ ರಾತ್ರಿಯಲ್ಲೇ ಹೊರಟು ಹೋದರು.
1SA 29:1 ಫಿಲಿಷ್ಟಿಯರು ತಮ್ಮ ಸಮಸ್ತ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿಕೊಂಡರು. ಹಾಗೆಯೇ ಇಸ್ರಾಯೇಲರು ಇಜ್ರೆಯೇಲ್ ಎಂಬ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
1SA 29:2 ಫಿಲಿಷ್ಟಿಯರ ಅಧಿಪತಿಗಳು ನೂರು ನೂರಾಗಿಯೂ, ಸಾವಿರ ಸಾವಿರವಾಗಿಯೂ ನಡೆದು ಬಂದರು. ದಾವೀದನೂ, ಅವನ ಜನರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು.
1SA 29:3 ಆಗ ಫಿಲಿಷ್ಟಿಯರ ಅಧಿಪತಿಗಳು, “ಈ ಹಿಬ್ರಿಯರು ಏಕೆ?” ಎಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ, “ಇಸ್ರಾಯೇಲಿನ ಅರಸನಾದ ಸೌಲನ ದಾಸನಾದ ಈ ದಾವೀದನು ಇಷ್ಟು ದಿವಸಗಳೂ, ಇಷ್ಟು ವರ್ಷಗಳೂ ನನ್ನ ಸಂಗಡ ಇದ್ದಾನೆ? ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೊಂಡು ಇಂದಿನವರೆಗೂ ನಾನು ಅವನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ,” ಎಂದನು.
1SA 29:4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಕೋಪಗೊಂಡು ಅವನಿಗೆ, “ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದಂತೆ, ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ, ನೀನು ಅವನಿಗೆ ನೇಮಿಸಿದ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವನನ್ನು ಕಳುಹಿಸಿಬಿಡು. ಏಕೆಂದರೆ ಇವನು ಯಾವುದರಿಂದ ತನ್ನ ಯಜಮಾನನ ಮೆಚ್ಚಿಗೆ ಪಡೆದುಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?
1SA 29:5 ಸ್ತ್ರೀಯರು ತಮ್ಮ ನೃತ್ಯಗಳಲ್ಲಿ ಹಾಡಿದ ದಾವೀದನು ಇವನಲ್ಲವೇ: “ ‘ಸೌಲನು ಸಾವಿರ ಜನರನ್ನೂ, ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನು.’ ”
1SA 29:6 ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ, “ನಿಜವಾಗಿಯೂ ಯೆಹೋವ ದೇವರಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವುದು ನನ್ನ ದೃಷ್ಟಿಗೆ ಒಳ್ಳೆಯದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡಿಲ್ಲ. ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ.
1SA 29:7 ಆದ್ದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಗೆ ಇಲ್ಲದ್ದರಿಂದ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು,” ಎಂದನು.
1SA 29:8 ದಾವೀದನು ಆಕೀಷನಿಗೆ, “ನನ್ನ ಯಜಮಾನನಾದ ಅರಸನ ಶತ್ರುಗಳ ಸಂಗಡ ಯುದ್ಧಮಾಡಲು ಹೋಗದ ಹಾಗೆ ನಾನೇನು ಮಾಡಿದೆನು? ನಿನ್ನ ದಾಸನು ನಿನ್ನ ಬಳಿಗೆ ಬಂದಂದಿನಿಂದ ಈ ದಿನದವರೆಗೂ ನನ್ನಲ್ಲಿ ಏನು ಕಂಡುಕೊಂಡಿ?” ಎಂದನು.
1SA 29:9 ಆಕೀಷನು ದಾವೀದನಿಗೆ ಉತ್ತರವಾಗಿ, “ನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ, ‘ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದು,’ ಎಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ.
1SA 29:10 ಆದ್ದರಿಂದ ನಾಳೆ ಉದಯಕ್ಕೆ ಎದ್ದು ನಿನ್ನ ಸಂಗಡ ಬಂದ ನಿನ್ನ ಯಜಮಾನನ ಸೇವಕರನ್ನು ಕರಕೊಂಡು, ಅವರ ಸಂಗಡ ಉದಯದಲ್ಲಿ ಬೆಳಕು ಆಗುವಾಗ ಹೊರಟು ಹೋಗು,” ಎಂದನು.
1SA 29:11 ಹಾಗೆಯೇ ದಾವೀದನೂ, ಅವನು ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರುಗಿ ಹೋಗಲು ಮುಂಜಾನೆ ಎದ್ದರು. ಫಿಲಿಷ್ಟಿಯರು ಇಜ್ರೆಯೇಲ್ ಎಂಬ ಪಟ್ಟಣಕ್ಕೆ ಹೊರಟು ಹೋದರು.
1SA 30:1 ದಾವೀದನೂ, ಅವನ ಜನರೂ ಮೂರನೆಯ ದಿವಸದಲ್ಲಿ ಚಿಕ್ಲಗ್ ಊರಿಗೆ ಬಂದು ಸೇರಿದರು. ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ, ಚಿಕ್ಲಗಿನ ಮೇಲೆಯೂ ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
1SA 30:2 ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರನ್ನಾದರೂ, ಕಿರಿಯರನ್ನಾದರೂ ಕೊಂದುಹಾಕದೆ, ಅವರನ್ನು ಸೆರೆಯಾಗಿ ತೆಗೆದುಕೊಂಡು, ತಮ್ಮ ಮಾರ್ಗವಾಗಿ ಹೊರಟು ಹೋದರು.
1SA 30:3 ದಾವೀದನೂ, ಅವನ ಜನರೂ ಆ ಪಟ್ಟಣಕ್ಕೆ ಬಂದಾಗ, ಅದು ಬೆಂಕಿಯಿಂದ ಸುಟ್ಟುಹೋಗಿರುವುದನ್ನೂ ಮತ್ತು ಆ ಜನರ ಹೆಂಡತಿಯರೂ ಅವರ ಪುತ್ರ ಪುತ್ರಿಯರೂ ಸೆರೆಯಾಗಿ ಹೋಗಿರುವುದನ್ನೂ ಕಂಡರು.
1SA 30:4 ಆಗ ದಾವೀದನೂ, ಅವನ ಸಂಗಡ ಇದ್ದ ಜನರೂ ಅಳುವುದಕ್ಕೆ ತಮ್ಮಲ್ಲಿ ಶಕ್ತಿಯಿಲ್ಲದೆ ಹೋಗುವವರೆಗೂ ತಮ್ಮ ಸ್ವರವನ್ನೆತ್ತಿ ಅತ್ತರು.
1SA 30:5 ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೆಯೇಲಿನವಳಾದ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ವಿಧವೆಯಾಗಿದ್ದ ಅಬೀಗೈಲಳು ಸೆರೆಯಾಗಿ ಹೋಗಿದ್ದರು.
1SA 30:6 ಜನರೆಲ್ಲರೂ ಪ್ರತಿಯೊಬ್ಬನು ತನ್ನ ಪುತ್ರಪುತ್ರಿಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು, ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ, ಅವನು ಬಹಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದನು. ಆದರೂ ದಾವೀದನು ಯೆಹೋವ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
1SA 30:7 ಆಗ ದಾವೀದನು ಅಹೀಮೆಲೆಕನ ಮಗ ಅಬಿಯಾತರನೆಂಬ ಯಾಜಕನಿಗೆ, “ನೀನು ದಯಮಾಡಿ ಏಫೋದನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ಅಬ್ಯತಾರನು ಏಫೋದನ್ನು ದಾವೀದನ ಬಳಿಗೆ ತಂದನು.
1SA 30:8 ದಾವೀದನು ಯೆಹೋವ ದೇವರಿಗೆ, “ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ಅವರು ನನಗೆ ವಶವಾಗುವರೋ?” ಎಂದು ಕೇಳಿದನು. ಅದಕ್ಕೆ ಯೆಹೋವ ದೇವರು, “ಬೆನ್ನಟ್ಟು, ಅವರು ನಿನ್ನ ವಶವಾಗುವರು; ನೀನು ನಿನ್ನವರನ್ನು ಬಿಡಿಸಿಕೊಂಡು ಬರುವೆ,” ಎಂದರು.
1SA 30:9 ಆಗ ದಾವೀದನೂ, ಅವನ ಸಂಗಡ ಇದ್ದ ಆರುನೂರು ಜನರೂ ಹೋದರು. ಅವರು ಬೆಸೋರ್ ಎಂಬ ಹಳ್ಳದ ಬಳಿಗೆ ಬಂದಾಗ, ಹಿಂದುಳಿದವರು ಅಲ್ಲಿಯೇ ನಿಂತರು.
1SA 30:10 ದಾವೀದನು ತಾನೂ, ನಾನೂರು ಜನರೂ ಹಿಂದಟ್ಟಿ ಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದರಿಂದ, ಇನ್ನೂರು ಜನರು ಅಲ್ಲಿ ನಿಂತರು.
1SA 30:11 ಅವನ ಜನರು ಒಬ್ಬ ಈಜಿಪ್ಟಿನವನು ಅಡವಿಯಲ್ಲಿ ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ಕೊಟ್ಟರು. ಅವನು ತಿಂದನು.
1SA 30:12 ಅವನಿಗೆ ನೀರನ್ನು ಕುಡಿಸಿ, ಅಂಜೂರ ಹಣ್ಣಿನ ಉಂಡೆಯನ್ನೂ, ಒಣಗಿದ ಎರಡು ದ್ರಾಕ್ಷಿ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದಾಗ ಚೇತರಿಸಿಕೊಂಡನು. ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
1SA 30:13 ದಾವೀದನು ಅವನನ್ನು, “ನೀನು ಯಾರ ಕಡೆಯವನು? ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಈಜಿಪ್ಟಿನವನು, ಒಬ್ಬ ಅಮಾಲೇಕ್ಯನ ಸೇವಕನು. ಮೂರು ದಿನಗಳಿಂದ ನಾನು ರೋಗದಲ್ಲಿ ಬಿದ್ದುದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
1SA 30:14 ನಾವು ಕೆರೇತ್ಯರ ದಕ್ಷಿಣ ಪ್ರಾಂತದ ಮೇಲೆಯೂ, ಯೆಹೂದದ ಮೇರೆಯ ಮೇಲೆಯೂ, ಕಾಲೇಬನ ದಕ್ಷಿಣ ಪ್ರಾಂತದ ಮೇಲೆಯೂ ದಾಳಿಮಾಡಿ, ಚಿಕ್ಲಗ್ ಊರನ್ನು ಬೆಂಕಿಯಿಂದ ಸುಟ್ಟುಬಿಟ್ಟೆವು,” ಎಂದನು.
1SA 30:15 ದಾವೀದನು ಅವನಿಗೆ, “ನೀನು ನನ್ನನ್ನು ಆ ಗುಂಪಿನ ಬಳಿಗೆ ಕರೆದುಕೊಂಡು ಹೋಗುತ್ತೀಯಾ?” ಎಂದು ಕೇಳಿದನು. ಅದಕ್ಕವನು, “ನೀನು ನನ್ನನ್ನು ಕೊಂದುಹಾಕುವುದಿಲ್ಲ ಇಲ್ಲವೆ ನನ್ನನ್ನು ನನ್ನ ಯಜಮಾನನ ಕೈಯಲ್ಲಿ ಒಪ್ಪಿಸಿಕೊಡುವುದಿಲ್ಲ ಎಂದು ನನಗೆ ದೇವರ ಹೆಸರಿನಿಂದ ಪ್ರಮಾಣಮಾಡಿದರೆ, ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ,” ಎಂದನು.
1SA 30:16 ಇವನು ದಾವೀದನನ್ನು ಕರೆದುಕೊಂಡು ಅಲ್ಲಿಗೆ ಹೋದಾಗ, ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶದಲ್ಲಿಯೂ, ಯೆಹೂದ ದೇಶದಲ್ಲಿಯೂ ವ್ಯಾಪಿಸಿಕೊಂಡು, ಸಮಸ್ತ ಕೊಳ್ಳೆ ತೆಗೆದುಕೊಂಡು ಬಂದುದರಿಂದ, ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.
1SA 30:17 ಆಗ ದಾವೀದನು ಅವರ ಮೇಲೆ ಬೆಳಗಿನಜಾವದಿಂದ ಮಾರನೆಯ ದಿವಸದ ಸಾಯಂಕಾಲದವರೆಗೂ ದಾಳಿಮಾಡುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿ ಹೋದ ನಾನೂರು ಮಂದಿ ಯುವಜನರ ಹೊರತು ಒಬ್ಬನಾದರೂ ತಪ್ಪಿಸಿಕೊಳ್ಳಲಿಲ್ಲ.
1SA 30:18 ಅಮಾಲೇಕ್ಯರು ತೆಗೆದುಕೊಂಡು ಹೋದದ್ದನ್ನೆಲ್ಲವನ್ನೂ ತನ್ನ ಇಬ್ಬರು ಹೆಂಡತಿಯರನ್ನೂ ದಾವೀದನು ಬಿಡಿಸಿಕೊಂಡನು.
1SA 30:19 ಅವರು ತೆಗೆದುಕೊಂಡು ಹೋದ ಕಿರಿಯರಲ್ಲಾದರೂ, ಹಿರಿಯರಲ್ಲಾದರೂ, ಪುತ್ರರಲ್ಲಾದರೂ, ಪುತ್ರಿಯರಲ್ಲಾದರೂ, ಕೊಳ್ಳೆಯಾದ ಯಾವ ವಸ್ತುಗಳಲ್ಲಾದರೂ ಒಂದೂ ಕಡಿಮೆ ಇಲ್ಲದ ಹಾಗೆ, ದಾವೀದನು ಎಲ್ಲವನ್ನು ತಿರುಗಿ ತೆಗೆದುಕೊಂಡು ಬಂದನು.
1SA 30:20 ಇದಲ್ಲದೆ ದಾವೀದನು ಶತ್ರುಗಳ ಸಮಸ್ತ ದನಕುರಿಗಳ ಮಂದೆಗಳನ್ನು ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ಪಶುಗಳ ಮುಂದಾಗಿ ಹೊಡೆದುಕೊಂಡು ಬಂದರು.
1SA 30:21 ಆದರೆ ದಣಿದಿದ್ದರಿಂದ ದಾವೀದನ ಹಿಂದೆ ಬರಲಾರದೆ ಬೆಸೋರಿನ ಹಳ್ಳದ ಬಳಿಯಲ್ಲಿ ಬಿಟ್ಟುಹೋಗಿದ್ದ ಇನ್ನೂರು ಜನರ ಬಳಿಗೆ ದಾವೀದನು ಬಂದಾಗ, ಅವರು ದಾವೀದನನ್ನೂ, ಅವನ ಸಂಗಡ ಇದ್ದ ಜನರನ್ನೂ ಎದುರುಗೊಳ್ಳಲು ಹೋದರು. ದಾವೀದನು ಆ ಜನರ ಬಳಿಗೆ ಸೇರಿ, ಅವರ ಕ್ಷೇಮಸಮಾಚಾರವನ್ನು ಕೇಳಿದನು.
1SA 30:22 ಆಗ ದಾವೀದನ ಸಂಗಡ ಬಂದ ಮನುಷ್ಯರಲ್ಲಿ ದುಷ್ಟರಾದ ಕೆಲವರು, “ನಮ್ಮ ಸಂಗಡ ಬಾರದೆ ಇದ್ದುದರಿಂದ, ನಾವು ತೆಗೆದುಕೊಂಡು ಬಂದ ಕೊಳ್ಳೆಯ ವಸ್ತುಗಳಲ್ಲಿ ಅವರಿಗೆ ಒಂದನ್ನೂ ಕೊಡುವುದಿಲ್ಲ. ಪ್ರತಿಯೊಬ್ಬನು ತನ್ನ ತನ್ನ ಹೆಂಡತಿ, ಮಕ್ಕಳನ್ನು ಮಾತ್ರವೇ ಕರೆದುಕೊಂಡು ಹೋಗಲಿ,” ಎಂದರು.
1SA 30:23 ಅದಕ್ಕೆ ದಾವೀದನು, “ನನ್ನ ಸಹೋದರರೇ, ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದ ಈ ಗುಂಪನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟ ಯೆಹೋವ ದೇವರು ನಮಗೆ ಕೊಟ್ಟದ್ದಕ್ಕೆ ನೀವು ಹಾಗೆ ಮಾಡಬೇಡಿರಿ. ಈ ಕಾರ್ಯಕ್ಕೋಸ್ಕರ ನಿಮ್ಮ ಮಾತನ್ನು ಯಾರು ಕೇಳುವರು?
1SA 30:24 ಆದರೆ ಯುದ್ಧಕ್ಕೆ ಹೋದವನ ಪಾಲಿನ ಹಾಗೆಯೇ ಸಲಕರಣೆಗಳ ಬಳಿಯಲ್ಲಿ ಕಾದಿರುವವನಿಗೂ ಪಾಲು ಇರಲಿ. ಅವರವರ ಪಾಲು ಇರಲಿ,” ಎಂದನು.
1SA 30:25 ಹಾಗೆಯೇ ದಾವೀದನು ಆ ದಿವಸ ಮೊದಲ್ಗೊಂಡು ಇಂದಿನವರೆಗೂ ಇರುವ ಹಾಗೆ ಇಸ್ರಾಯೇಲಿಗೆ ಅದನ್ನು ನಿಯಮವಾಗಿಯೂ, ಕಟ್ಟಳೆಯಾಗಿಯೂ ಮಾಡಿದನು.
1SA 30:26 ದಾವೀದನು ಚಿಕ್ಲಗನ್ನು ತಲುಪಿದಾಗ ಕೊಳ್ಳೆಯಿಂದ ತಂದದ್ದರಲ್ಲಿ ಒಂದು ಭಾಗವನ್ನು ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕಳುಹಿಸಿದನು. “ಯೆಹೋವ ದೇವರ ವೈರಿಗಳಿಂದ ಕೊಳ್ಳೆ ಹೊಡೆದದ್ದರಿಂದ ಈ ಬಹುಮಾನ ನಿಮಗಾಗಿದೆ,” ಎಂದು ಹೇಳಿದನು.
1SA 30:27 ಹೀಗೆ ದಾವೀದನು ಬೇತೇಲಿನವರು, ನೆಗೆಬನ ರಾಮೋತನವರು ಹಾಗೂ ಯತ್ತೀರಿನವರು,
1SA 30:28 ಅರೋಯೇರಿನವರು, ಸಿಪ್ಮೋತಿನವರು, ಎಷ್ಟೆಮೋವದವರು,
1SA 30:29 ರಾಕಾಲಿನವರು, ಯೆರಹ್ಮೇಲ್ಯರು, ಕೇನ್ಯರು,
1SA 30:30 ಹೊರ್ಮಾದವರು, ಬೋರಾಷಾನಿನವರು, ಅತಾಕಿನವರು,
1SA 30:31 ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳದವರಿಗೂ ಬಹುಮಾನಗಳನ್ನು ಕಳುಹಿಸಿಕೊಟ್ಟನು.
1SA 31:1 ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
1SA 31:2 ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ, ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
1SA 31:3 ಇದಲ್ಲದೆ ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು. ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
1SA 31:4 ಆದಕಾರಣ ಅವನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ ನೀನು ನಿನ್ನ ಖಡ್ಗವನ್ನು ಹಿರಿದು, ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
1SA 31:5 ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
1SA 31:6 ಹೀಗೆ ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಆಯುಧ ಹೊರುವವನೂ, ಅವನ ಸಮಸ್ತ ಜನರೂ ಅದೇ ದಿನ ಸತ್ತರು.
1SA 31:7 ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ, ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
1SA 31:8 ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಮೂವರು ಪುತ್ರರನ್ನೂ ಕಂಡರು.
1SA 31:9 ಅವರು ಅವನ ತಲೆಯನ್ನು ಕಡಿದು, ಅವನ ಆಯುಧಗಳನ್ನು ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
1SA 31:10 ಸೌಲನ ಆಯುಧಗಳನ್ನು ಅಷ್ಟೋರೆತ್ ಮಂದಿರದಲ್ಲಿ ಇಟ್ಟು, ಅವನ ಶವವನ್ನು ಬೇತ್ ಷೆಯಾನಿನ ಕೋಟೆಯ ಗೋಡೆಗೆ ನೇತುಹಾಕಿದರು.
1SA 31:11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
1SA 31:12 ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು, ರಾತ್ರಿಯೆಲ್ಲಾ ನಡೆದುಹೋಗಿ, ಬೇತ್ ಷೆಯಾನಿನ ಗೋಡೆಗೆ ಜಡಿದಿದ್ದ ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವುಗಳನ್ನು ಅಲ್ಲಿ ದಹಿಸಿದರು.
1SA 31:13 ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.
2SA 1:1 ಸೌಲನ ಮರಣದ ತರುವಾಯ ದಾವೀದನು ಅಮಾಲೇಕ್ಯರನ್ನು ಸಂಹರಿಸಿ, ಚಿಕ್ಲಗಿಗೆ ತಿರುಗಿಬಂದು, ಎರಡು ದಿವಸ ಅಲ್ಲಿ ಇದ್ದ ತರುವಾಯ,
2SA 1:2 ಮೂರನೆಯ ದಿನದಲ್ಲಿ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಸೌಲನ ಪಾಳೆಯದಿಂದ ಹೊರಟು ದಾವೀದನ ಬಳಿಗೆ ಬಂದು, ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು.
2SA 1:3 ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. ಅದಕ್ಕವನು, “ಇಸ್ರಾಯೇಲಿನ ಪಾಳೆಯದಿಂದ ತಪ್ಪಿಸಿಕೊಂಡು ಬಂದೆನು,” ಎಂದನು.
2SA 1:4 ದಾವೀದನು ಅವನಿಗೆ, “ನಡೆದ ವರ್ತಮಾನವೇನು? ನೀನು ನನಗೆ ತಿಳಿಸು,” ಎಂದನು. ಅವನು, “ಜನರು ಯುದ್ಧದಿಂದ ಓಡಿಹೋದರು. ಜನರಲ್ಲಿ ಅನೇಕರು ಸತ್ತರು. ಸೌಲನೂ, ಅವನ ಮಗ ಯೋನಾತಾನನೂ ಸತ್ತರು,” ಎಂದನು.
2SA 1:5 ದಾವೀದನು ತನಗೆ ವರ್ತಮಾನ ಹೇಳಿದ ಯುವಕನಿಗೆ, “ಸೌಲನೂ, ಅವನ ಮಗ ಯೋನಾತಾನನೂ ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿದನು.
2SA 1:6 ಆಗ ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಬೆಟ್ಟಕ್ಕೆ ಹೋಗಿದ್ದೆನು. ಅಲ್ಲಿ ಸೌಲನು ತನ್ನ ಈಟಿಯನ್ನು ಊರಿಕೊಂಡು ನಿಂತಿದ್ದನು. ಆಗ ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು.
2SA 1:7 ಅವನು ಹಿಂದಕ್ಕೆ ತಿರುಗಿ ನೋಡಿ, ನನ್ನನ್ನು ಕಂಡು ಕರೆದನು. ಆಗ ನಾನು, ‘ಇದ್ದೇನೆ,’ ಎಂದೆನು.
2SA 1:8 “ಆಗ ಅವನು, ‘ನೀನ್ಯಾರು?’ ಎಂದು ಕೇಳಿದನು. “ ‘ನಾನು ಒಬ್ಬ ಅಮಾಲೇಕ್ಯನು,’ ಎಂದು ಉತ್ತರಕೊಟ್ಟೆನು.
2SA 1:9 “ಅವನು ನನಗೆ, ‘ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು. ಏಕೆಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣವಾಗಿರುವುದರಿಂದ ಸಂಕಟವು ನನ್ನನ್ನು ಹಿಡಿದಿದೆ,’ ಎಂದನು.
2SA 1:10 “ಆದ್ದರಿಂದ ಅವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು, ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು, ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದಿದ್ದೇನೆ,” ಎಂದನು.
2SA 1:11 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,
2SA 1:12 ಸೌಲನೂ, ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಯೆಹೋವ ದೇವರ ಜನರೂ ಖಡ್ಗದಿಂದ ಬಿದ್ದ ಕಾರಣ, ಅವರಿಗೋಸ್ಕರ ಗೋಳಾಡಿ ಅತ್ತು, ಅಸ್ತಮಾನದವರೆಗೂ ಉಪವಾಸವಾಗಿದ್ದರು.
2SA 1:13 ದಾವೀದನು ತನಗೆ ವರ್ತಮಾನ ತಿಳಿಸಿದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ವಿದೇಶಿಯ ಮಗನಾದ ಅಮಾಲೇಕ್ಯನು,” ಎಂದನು.
2SA 1:14 ಆಗ ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈ ಎತ್ತುವುದಕ್ಕೆ ಯಾಕೆ ಭಯಪಡಲಿಲ್ಲ?” ಎಂದು ಕೇಳಿದನು.
2SA 1:15 ಯುವಕರಲ್ಲಿ ಒಬ್ಬನನ್ನು ಕರೆದು, “ನೀನು ಇವನನ್ನು ಕೊಲ್ಲು,” ಎಂದನು. ಹಾಗೆಯೇ ಅವನು ಅವನನ್ನು ಹೊಡೆದು ಕೊಂದನು.
2SA 1:16 ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿದ್ದರಿಂದ, ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ,” ಎಂದನು.
2SA 1:17 ಆಗ ದಾವೀದನು ಸೌಲನ ಮೇಲೆಯೂ, ಅವನ ಮಗ ಯೋನಾತಾನನ ಮೇಲೆಯೂ ಶೋಕದಿಂದ ಈ ಗೀತೆ ಹಾಡಿ ಗೋಳಾಡಿದನು.
2SA 1:18 ಇದಲ್ಲದೆ ದಾವೀದನು ಬಿಲ್ಲೆ ಎಂಬ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಹೇಳಿದನು. ಇದು ಯಾಷಾರನ ಗ್ರಂಥದಲ್ಲಿ ಬರೆಯಲಾಗಿದೆ:
2SA 1:19 “ಇಸ್ರಾಯೇಲೇ, ನಿನ್ನ ಮಹಿಮೆಯು ನಿನ್ನ ಬೆಟ್ಟಗಳ ಮೇಲೆ ಕೊಲೆಯಾಗಿ ಬಿದ್ದಿದೆ. ಪರಾಕ್ರಮಶಾಲಿಗಳು ಹೇಗೆ ಬಿದ್ದರು!
2SA 1:20 “ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು; ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು.
2SA 1:21 “ಗಿಲ್ಬೋವ ಬೆಟ್ಟಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ಬೀಳದೆ ಇರಲಿ, ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ. ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಯೂ ಅವಮಾನಗೊಂಡು ಬಿದ್ದವು. ಸೌಲನ ಗುರಾಣಿಯೂ ಎಣ್ಣೆಯಿಂದ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆಯಿತು.
2SA 1:22 “ಹತರಾದವರ ರಕ್ತದಿಂದಲೂ, ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ. ಸೌಲನ ಖಡ್ಗ ತೃಪ್ತಿಗೊಳ್ಳದೆ ತಿರುಗಿ ಬರಲಿಲ್ಲ.
2SA 1:23 ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ, ಸಂತೋಷಕರವಾಗಿಯೂ ಇದ್ದರು. ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು.
2SA 1:24 “ಇಸ್ರಾಯೇಲಿನ ಪುತ್ರಿಯರೇ, ಸೌಲನಿಗೋಸ್ಕರ ಅಳಿರಿ. ನಿಮಗೆ ರಕ್ತಾಂಬರವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ. ನಿಮ್ಮ ಉಡುಗೆಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
2SA 1:25 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ. ಯೋನಾತಾನನೇ, ನೀನು ಉನ್ನತ ಸ್ಥಳಗಳಲ್ಲಿ ಹತನಾಗಿ ಬಿದ್ದಿರುವಿ.
2SA 1:26 ನನ್ನ ಸಹೋದರನಾದ ಯೋನಾತಾನನೇ, ನಾನು ನಿನಗೋಸ್ಕರ ಶೋಕಿಸುತ್ತೇನೆ. ನೀನು ನನಗೆ ಬಹಳ ಮನೋಹರನಾಗಿದ್ದಿ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯಕರವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.
2SA 1:27 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ. ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.”
2SA 2:1 ಇದಾದ ಮೇಲೆ ದಾವೀದನು ಯೆಹೋವ ದೇವರನ್ನು, “ಯೆಹೂದದ ಪಟ್ಟಣಗಳಲ್ಲಿ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಿದನು. ಯೆಹೋವ ದೇವರು ಅವನಿಗೆ, “ಹೋಗು,” ಎಂದರು. ಅದಕ್ಕವನು, “ನಾನು ಎಲ್ಲಿಗೆ ಹೋಗಲಿ?” ಎಂದನು. ಅದಕ್ಕೆ ದೇವರು, “ಹೆಬ್ರೋನಿಗೆ,” ಎಂದರು.
2SA 2:2 ಹಾಗೆಯೇ ದಾವೀದನೂ, ಹಾಗೂ ಅವನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾಗಿರುವ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ವಿಧವೆಯಾಗಿದ್ದ ಅಬೀಗೈಲಳೂ ಅಲ್ಲಿಗೆ ಹೋದರು.
2SA 2:3 ಇದಲ್ಲದೆ ದಾವೀದನು ತನ್ನ ಸಂಗಡ ಇದ್ದ ಜನರನ್ನೂ, ಅವರವರ ಮನೆಯವರನ್ನೂ ಕರೆದುಕೊಂಡು ಹೋದನು. ಅವರು ಹೆಬ್ರೋನಿನ ಪಟ್ಟಣಗಳಲ್ಲಿ ವಾಸವಾಗಿದ್ದರು.
2SA 2:4 ಆಗ ಯೆಹೂದನ ಮನುಷ್ಯರು ಹೆಬ್ರೋನಿಗೆ ಬಂದು ಅಲ್ಲಿ ದಾವೀದನನ್ನು ಯೆಹೂದದವರ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿಸಿದರು. ಯಾಬೇಷ್ ಗಿಲ್ಯಾದಿನವರು ಸೌಲನನ್ನು ಸಮಾಧಿಮಾಡಿದರೆಂದು ದಾವೀದನಿಗೆ ತಿಳಿಸಿದಾಗ,
2SA 2:5 ದಾವೀದನು ಯಾಬೇಷ್ ಗಿಲ್ಯಾದಿನವರಿಗೆ ದೂತರನ್ನು ಕಳುಹಿಸಿ, “ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ, ಅವನನ್ನು ಸಮಾಧಿಮಾಡಿದ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.
2SA 2:6 ಈಗ ಯೆಹೋವ ದೇವರು ನಿಮಗೆ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ, ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು.
2SA 2:7 ನೀವು ಪರಾಕ್ರಮಶಾಲಿಗಳಾಗಿದ್ದು, ನಿಮ್ಮ ಕೈಗಳು ಬಲವಾಗಿರಲಿ. ಏಕೆಂದರೆ ನಿಮ್ಮ ಯಜಮಾನನಾದ ಸೌಲನು ಮರಣಹೊಂದಿದನು. ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿದರು,” ಎಂದನು.
2SA 2:8 ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು.
2SA 2:9 ಅಲ್ಲಿ ಅವನನ್ನು ಗಿಲ್ಯಾದ್, ಅಶೂರ್, ಇಜ್ರೆಯೇಲ್, ಎಫ್ರಾಯೀಮ್, ಬೆನ್ಯಾಮೀನ್ ಜನರ ಮೇಲೆಯೂ, ಇಸ್ರಾಯೇಲರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿದನು.
2SA 2:10 ಸೌಲನ ಮಗ ಈಷ್ಬೋಶೆತನು ಇಸ್ರಾಯೇಲಿನ ಮೇಲೆ ಆಳುವುದಕ್ಕೆ ಆರಂಭಿಸಿದಾಗ, ನಾಲ್ವತ್ತು ವರ್ಷ ಪ್ರಾಯದವನಾಗಿದ್ದು ಎರಡು ವರ್ಷ ಆಳಿದನು. ಆದರೆ ಯೆಹೂದ ಗೋತ್ರದವರು ದಾವೀದನನ್ನು ಹಿಂಬಾಲಿಸಿದರು.
2SA 2:11 ದಾವೀದನು ಹೆಬ್ರೋನಿನಲ್ಲಿ ಯೆಹೂದ ಗೋತ್ರದವರ ಮೇಲೆ ಅರಸನಾಗಿದ್ದ ಕಾಲವು ಏಳು ವರ್ಷ ಆರು ತಿಂಗಳು.
2SA 2:12 ನೇರನ ಮಗನಾಗಿರುವ ಅಬ್ನೇರನೂ, ಸೌಲನ ಮಗ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದನು.
2SA 2:13 ಚೆರೂಯಳ ಮಗ ಯೋವಾಬನೂ, ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಕೊಂಡರು. ಅವರು ಕೊಳದ ಆಚೆಯಲ್ಲಿಯೂ, ಇವರು ಕೊಳದ ಈಚೆಯಲ್ಲಿಯೂ ಕುಳಿತುಕೊಂಡರು.
2SA 2:14 ಆಗ ಅಬ್ನೇರನು ಯೋವಾಬನಿಗೆ, “ಕೆಲವು ಜನ ಯುವಕರು ಎದ್ದು ನಮ್ಮ ಮುಂದೆ ಮುಷ್ಠಿ ಯುದ್ಧ ಸ್ಪರ್ಧಿಸಲಿ,” ಎಂದನು. ಅದಕ್ಕೆ ಯೋವಾಬನು, “ಅವರು ಹಾಗೆಯೇ ಮಾಡಲಿ,” ಎಂದನು.
2SA 2:15 ಆದ್ದರಿಂದ ಸೌಲನ ಮಗ ಈಷ್ಬೋಶೆತನ ಕಡೆಯವನಾದ ಬೆನ್ಯಾಮೀನ್ಯರಲ್ಲಿ ಹನ್ನೆರಡು ಮಂದಿಯೂ, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟುಬಂದು,
2SA 2:16 ಅವರಲ್ಲಿ ಒಬ್ಬರ ಪಕ್ಕೆಯಲ್ಲಿ ಒಬ್ಬರು ಖಡ್ಗವನ್ನು ತಿವಿದುದರಿಂದ ಎಲ್ಲರೂ ಸತ್ತುಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಅಂದರೆ, “ಹದಗತ್ತಿ ಕ್ಷೇತ್ರ” ಎಂದು ಹೆಸರಾಯಿತು.
2SA 2:17 ಇದಲ್ಲದೆ, ಆ ದಿನದಲ್ಲಿ ಘೋರವಾದ ಯುದ್ಧವಾಯಿತು. ಅಬ್ನೇರನೂ, ಇಸ್ರಾಯೇಲರೂ ದಾವೀದನ ಸೇವಕರಿಂದ ಸೋತುಹೋದರು.
2SA 2:18 ಚೆರೂಯಳ ಮೂವರು ಮಕ್ಕಳಾದ ಯೋವಾಬನೂ, ಅಬೀಷೈಯನೂ, ಅಸಾಯೇಲನೂ ಅಲ್ಲಿ ಇದ್ದರು. ಅಸಾಯೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.
2SA 2:19 ಅಸಾಯೇಲನು ಅಬ್ನೇರನನ್ನು ಬಲಗಡೆಗಾದರೂ, ಎಡಗಡೆಗಾದರೂ ತಿರುಗದೆ ಬೆನ್ನಟ್ಟಿದನು.
2SA 2:20 ಆಗ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿ, “ನೀನು ಅಸಾಯೇಲನು ಅಲ್ಲವೇ?” ಎಂದನು. ಅದಕ್ಕವನು, “ನಾನೇ,” ಎಂದನು.
2SA 2:21 ಆಗ ಅಬ್ನೇರನು ಅವನಿಗೆ, “ನೀನು ಬಲಗಡೆಗಾದರೂ, ಎಡಗಡೆಗಾದರೂ ತಿರುಗು. ಯುವಕರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತೆಗೆದುಕೋ,” ಎಂದನು. ಆದರೆ ಅಸಾಯೇಲನು ಅವನನ್ನು ಹಿಂಬಾಲಿಸುವುದನ್ನು ಬಿಡಲೇ ಇಲ್ಲ.
2SA 2:22 ಅಬ್ನೇರನು ಅಸಾಯೇಲನಿಗೆ, “ನನ್ನನ್ನು ಬೆನ್ನಟ್ಟುವುದನ್ನು ಬಿಟ್ಟುಬಿಡು, ನಾನು ಏಕೆ ನಿನ್ನನ್ನು ನೆಲಕ್ಕೆ ಹೊಡೆದು ಕೆಡವಿಬಿಡಬೇಕು? ನಾನು ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ?” ಎಂದನು.
2SA 2:23 ಆದರೆ ಅಸಾಯೇಲನು ಒಪ್ಪದೆ ಹೋದದ್ದರಿಂದ, ಅಬ್ನೇರನು ತನ್ನ ಭರ್ಜಿಯ ಹಿಂಭಾಗದ ಮೊನೆಯಿಂದ ಅವನ ಹೊಟ್ಟೆಯೊಳಗೆ ತಿವಿಯಲು, ಅದು ಅವನ ಬೆನ್ನ ಹೊರಗೆ ತೂರಿ ಬಂತು. ಅವನು ಅಲ್ಲಿ ಬಿದ್ದು, ಅದೇ ಸ್ಥಳದಲ್ಲಿ ಸತ್ತನು. ಅಸಾಯೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.
2SA 2:24 ಆದರೆ ಯೋವಾಬನೂ, ಅಬೀಷೈಯನೂ ಅಬ್ನೇರನನ್ನು ಹಿಂದಟ್ಟಿ, ಸೂರ್ಯ ಆಸ್ತಮಿಸುವವರೆಗೆ ಗಿಬ್ಯೋನಿನ ಮರುಭೂಮಿಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದವರೆಗೆ ಬಂದರು.
2SA 2:25 ಆಗ ಅಬ್ನೇರನ ಹಿಂದೆ ಬೆನ್ಯಾಮೀನನ ಜನರು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು, ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು.
2SA 2:26 ಆಗ ಅಬ್ನೇರನು ಯೋವಾಬನಿಗೆ, “ಖಡ್ಗವು ಯಾವಾಗಲೂ ನುಂಗಿ ಬಿಡುವುದೋ? ಅಂತ್ಯದಲ್ಲಿ ಅದು ಕಹಿತನಕ್ಕೆ ನಡೆಸುವುದೆಂದು ನಿನಗೆ ಗೊತ್ತಾಗಲಿಲ್ಲವೋ? ತಮ್ಮ ಸಹೋದರರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಕ್ಕೆ ತಿರುಗುವಂತೆ ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದು ಕೂಗಿ ಹೇಳಿದನು.
2SA 2:27 ಅದಕ್ಕೆ ಯೋವಾಬನು, “ದೇವರ ಜೀವದಾಣೆ, ನೀನು ಮಾತನಾಡದೆ ಹೋದರೆ, ನಿಶ್ಚಯವಾಗಿ ಪ್ರತಿ ಮನುಷ್ಯನು ಉದಯದವರೆಗೆ ತನ್ನ ಸಹೋದರನನ್ನು ಹಿಂದಟ್ಟಿ ಹೋಗುತ್ತಿದ್ದನು,” ಎಂದನು.
2SA 2:28 ಹೀಗೆ ಯೋವಾಬನು ತುತೂರಿಯನ್ನು ಊದಿದನು. ಆಗ ಸೈನಿಕರೆಲ್ಲರೂ ನಿಂತರು. ಇಸ್ರಾಯೇಲರನ್ನು ಪುನಃ ಹಿಂದಟ್ಟಲಿಲ್ಲ, ಯುದ್ಧವು ನಿಂತಿತು.
2SA 2:29 ಅಬ್ನೇರನೂ, ಅವನ ಜನರೂ ಆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ನಡೆದು, ಯೊರ್ದನನ್ನು ದಾಟಿ, ಬಿಥ್ರೋನ್ ಕಣಿವೆಯನ್ನು ಹಾದು ಮಹನಯಿಮಿಗೆ ಬಂದರು.
2SA 2:30 ಯೋವಾಬನು ಅಬ್ನೇರನ ಹಿಂದಿನಿಂದ ತಿರುಗಿ ಜನರೆಲ್ಲರನ್ನು ಕೂಡಿಸಿಕೊಂಡಾಗ, ದಾವೀದನ ಸೇವಕರಲ್ಲಿ ಹತ್ತೊಂಬತ್ತು ಜನರೂ, ಅಸಾಯೇಲನೂ ಕಡಿಮೆಯಾಗಿದ್ದರು.
2SA 2:31 ದಾವೀದನ ಸೇವಕರು ಬೆನ್ಯಾಮೀನ್ಯರಲ್ಲಿಯೂ, ಅಬ್ನೇರನ ಜನರಲ್ಲಿಯೂ ಮುನ್ನೂರ ಅರವತ್ತು ಜನರನ್ನು ಹೊಡೆದದ್ದರಿಂದ ಅವರು ಸತ್ತರು.
2SA 2:32 ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.
2SA 3:1 ಸೌಲನ ಕುಟುಂಬದವರಿಗೂ ದಾವೀದನ ಕುಟುಂಬದವರಿಗೂ ಬಹು ದಿವಸ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಆದರೆ ಸೌಲನ ಕುಟುಂಬದವರು ಬಲಹೀನರಾಗುತ್ತಾ ಹೋದರು.
2SA 3:2 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
2SA 3:3 ಕರ್ಮೇಲ್ಯನಾದ ನಾಬಾಲನ ವಿಧವೆ ಅಬೀಗೈಲಳಿಂದ ಹುಟ್ಟಿದ ಅವನ ಎರಡನೆಯ ಮಗ ಕಿಲಾಬನೂ; ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು;
2SA 3:4 ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು; ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು;
2SA 3:5 ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು. ಇವರು ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು.
2SA 3:6 ಸೌಲನ ಕುಟುಂಬಕ್ಕೂ ದಾವೀದನ ಕುಟುಂಬಕ್ಕೂ ಯುದ್ಧ ನಡೆಯುತ್ತಿರುವಾಗ, ಅಬ್ನೇರನು ಸೌಲನ ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಬಲಪಡಿಸಿಕೊಂಡನು.
2SA 3:7 ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳೆಂಬ ಹೆಸರುಳ್ಳ ಒಬ್ಬ ಉಪಪತ್ನಿ ಇದ್ದಳು. ಈಷ್ಬೋಶೆತನು ಅಬ್ನೇರನಿಗೆ, “ನೀನು ನನ್ನ ತಂದೆಯ ಉಪಪತ್ನಿಯ ಬಳಿಗೆ ಪ್ರವೇಶಿಸಿದ್ದೇಕೆ?” ಎಂದನು.
2SA 3:8 ಆಗ ಅಬ್ನೇರನು ಈಷ್ಬೋಶೆತನ ಮಾತುಗಳಿಗೆ ಬಹುಕೋಪಗೊಂಡು, “ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿವಸದವರೆಗೂ ಯೆಹೂದವನ್ನು ವಿರೋಧಿಸಿ, ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಸಹೋದರರಿಗೂ, ಸ್ನೇಹಿತರಿಗೂ ದಯೆ ತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ತಪ್ಪು ಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
2SA 3:9 ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,
2SA 3:10 ದಾವೀದನ ಸಿಂಹಾಸನವನ್ನು ದಾನಿನಿಂದ ಬೇರ್ಷೆಬದ ಮಟ್ಟಿಗೂ ಇರುವ ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ ಸ್ಥಿರಪಡಿಸುವ ಹಾಗೆ ನಾನು ಮಾಡದೆ ಇದ್ದರೆ, ದೇವರು ಅಬ್ನೇರನಿಗೆ ಹೀಗೆಯೂ ಅಧಿಕವಾಗಿಯೂ ಮಾಡಲಿ,” ಎಂದನು.
2SA 3:11 ಈಷ್ಬೋಶೆತನು ಅಬ್ನೇರನಿಗೆ ಭಯಪಟ್ಟದ್ದರಿಂದ ಒಂದು ಮಾತಾದರೂ ಪ್ರತ್ಯುತ್ತರ ಹೇಳಲಾರದೆ ಇದ್ದನು.
2SA 3:12 ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ತನ್ನ ದೂತರನ್ನು ಕಳುಹಿಸಿ, “ದೇಶವು ಯಾರದು? ಇದಲ್ಲದೆ ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು. ಆಗ ಇಗೋ, ಇಸ್ರಾಯೇಲರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವುದೆಂದು ಹೇಳಿರಿ,” ಎಂದನು.
2SA 3:13 ಅದಕ್ಕೆ ದಾವೀದನು, “ಒಳ್ಳೆಯದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು. ಆದರೆ ನಾನು ನಿನ್ನಲ್ಲಿ ಒಂದನ್ನು ಕೇಳುತ್ತೇನೆ.” ಏನೆಂದರೆ, “ನೀನು ನನ್ನನ್ನು ನೋಡುವುದಕ್ಕೆ ಬರುವಾಗ, ಸೌಲನ ಮಗಳಾದ ಮೀಕಲಳನ್ನು ನೀನು ಕರೆದುಕೊಂಡು ಬಾರದೆ ಹೋದರೆ, ನೀನು ನನ್ನ ಮುಖವನ್ನು ಕಾಣಬಾರದು,” ಎಂದನು.
2SA 3:14 ದಾವೀದನು ಸೌಲನ ಮಗ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ಮೀಕಲಳನ್ನು ನನಗೆ ಒಪ್ಪಿಸು,” ಎಂದನು.
2SA 3:15 ಆಗ ಈಷ್ಬೋಶೆತನು ಸೇವಕರನ್ನು ಕಳುಹಿಸಿ, ಲಯಿಷನ ಮಗನಾಗಿರುವ ಅವಳ ಗಂಡ ಪಲ್ಟೀಯೇಲನಿಂದ ಅವಳನ್ನು ಕರೆಯಿಸಿಕೊಂಡನು.
2SA 3:16 ಅವಳ ಗಂಡನು ಅವಳ ಸಂಗಡ ಬಹುರೀಮಿನವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆ, “ತಿರುಗಿ ಹೋಗು ಹಿಂದಿರುಗು,” ಎಂದನು. ಅವನು ತಿರುಗಿಹೋದನು.
2SA 3:17 ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ, “ದಾವೀದನು ನಿಮ್ಮ ಮೇಲೆ ಅರಸನಾಗಿರುವುದಕ್ಕೆ ನೀವು ಹುಡುಕುತ್ತಿದ್ದೀರಿ.
2SA 3:18 ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.
2SA 3:19 ಇದಲ್ಲದೆ ಅಬ್ನೇರನು ಬೆನ್ಯಾಮೀನ್ಯರ ಸಂಗಡ ಮಾತನಾಡಿದನು. ಅಬ್ನೇರನು ಇಸ್ರಾಯೇಲರ ದೃಷ್ಟಿಗೂ ಬೆನ್ಯಾಮೀನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೆಯದಾಗಿ ತೋರಿದ್ದನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ಹೆಬ್ರೋನಿಗೆ ಹೋದನು.
2SA 3:20 ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರೆದುಕೊಂಡು, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರನಿಗೂ, ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.
2SA 3:21 ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.
2SA 3:22 ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.
2SA 3:23 ಯೋವಾಬನೂ ಅವನ ಸಂಗಡ ಇದ್ದ ಸೈನ್ಯವೂ ಬಂದಾಗ ಅಲ್ಲಿದ್ದವರು ಯೋವಾಬನಿಗೆ, “ನೇರನ ಮಗ ಅಬ್ನೇರನು ಅರಸನ ಬಳಿಗೆ ಬಂದನು. ದಾವೀದನು ಅವನನ್ನು ಕಳುಹಿಸಿಬಿಟ್ಟದ್ದರಿಂದ ಸಮಾಧಾನವಾಗಿ ಹೋಗಿದ್ದಾನೆ,” ಎಂದರು.
2SA 3:24 ಆಗ ಯೋವಾಬನು ಅರಸನ ಬಳಿಗೆ ಬಂದು, “ಏನು ಮಾಡಿದೆ? ಅಬ್ನೇರನು ನಿನ್ನ ಬಳಿಗೆ ಬಂದನು. ಅವನು ಹೋಗಿ ಬಿಡುವ ಹಾಗೆ ನೀನು ಅವನನ್ನು ಕಳುಹಿಸಿಬಿಟ್ಟದ್ದು ಏಕೆ?
2SA 3:25 ನೇರನ ಮಗ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಆಗಮನ, ನಿರ್ಗಮನಗಳನ್ನು ತಿಳಿದುಕೊಳ್ಳುವುದಕ್ಕೂ, ನೀನು ಮಾಡುವುದನ್ನೆಲ್ಲಾ ಕಂಡುಹಿಡಿಯುವುದಕ್ಕೂ ಬಂದಿದ್ದನು,” ಎಂದನು.
2SA 3:26 ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದಾಗ, ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು. ಅವರು ಅವನನ್ನು ಸಿರಾ ಎಂಬ ಬಾವಿಯಿಂದ ತಿರುಗಿ ಕರೆದುಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.
2SA 3:27 ಅಬ್ನೇರನು ಹೆಬ್ರೋನಿಗೆ ತಿರುಗಿ ಬಂದ ತರುವಾಯ ಯೋವಾಬನ ಬಾಗಿಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತನಾಡಿ, ಅವನನ್ನು ಒಂದು ಕಡೆ ಕರೆದುಕೊಂಡು ಹೋಗಿ, ತನ್ನ ತಮ್ಮ ಅಸಾಯೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಹೊಟ್ಟೆಯಲ್ಲಿ ಇರಿದು ಕೊಂದುಹಾಕಿದನು.
2SA 3:28 ದಾವೀದನು ಅದನ್ನು ಕೇಳಿದಾಗ, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ ನನ್ನ ರಾಜ್ಯವೂ ಎಂದೆಂದಿಗೂ ಯೆಹೋವ ದೇವರ ಮುಂದೆ ನಿರಪರಾಧಿಯಾಗಿದ್ದೇವೆ.
2SA 3:29 ಅದು ಯೋವಾಬನ ತಲೆಯ ಮೇಲೆಯೂ, ಅವನ ತಂದೆಯ ಮನೆತನದವರ ಮೇಲೆಯೂ ನಿಂತಿರಲಿ. ಯೋವಾಬನ ಮನೆಯಲ್ಲಿ ರಕ್ತಸ್ರಾವ ರೋಗದವರೂ, ಕುಷ್ಠರೋಗಿಯೂ, ಕೋಲು ಹಿಡಿದು ನಡೆಯುವವನೂ, ಖಡ್ಗದಿಂದ ಬೀಳುವವನೂ, ಆಹಾರದ ಕೊರತೆಯುಳ್ಳವನಾಗಿಯೂ ಇದ್ದೇ ಇರಲಿ,” ಎಂದನು.
2SA 3:30 ಹೀಗೆ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದುಹಾಕಿದರು. ಏಕೆಂದರೆ ಅಬ್ನೇರನು ಅವನ ಸಹೋದರ ಅಸಾಯೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.
2SA 3:31 ದಾವೀದನು ಯೋವಾಬನಿಗೂ, ಅವನ ಸಂಗಡವಿದ್ದ ಸಮಸ್ತ ಜನರಿಗೂ, “ನೀವು ನಿಮ್ಮ ವಸ್ತ್ರಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಉಟ್ಟುಕೊಂಡು, ಅಬ್ನೇರನ ಮುಂದೆ ಗೋಳಾಡಿರಿ,” ಎಂದನು. ಅರಸನಾದ ದಾವೀದನು ತಾನೇ ಅವನ ಶವದ ಪೆಟ್ಟಿಗೆಯ ಹಿಂದೆ ಹೋದನು.
2SA 3:32 ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಹೂಳಿಟ್ಟರು. ಆಗ ಅರಸನು ತನ್ನ ಧ್ವನಿಯನ್ನೆತ್ತಿ ಅಬ್ನೇರನ ಸಮಾಧಿಯ ಬಳಿಯಲ್ಲಿ ಅತ್ತನು; ಜನರೆಲ್ಲರು ಅತ್ತರು.
2SA 3:33 ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?
2SA 3:34 ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.
2SA 3:35 ಇನ್ನೂ ಹೊತ್ತಿರುವಾಗಲೇ ಜನರೆಲ್ಲರು ಬಂದು ಊಟಮಾಡು ಎಂದು ದಾವೀದನಿಗೆ ಹೇಳಿದರು. ಅದಕ್ಕೆ ದಾವೀದನು, “ಸೂರ್ಯನು ಅಸ್ತಮಿಸುವುದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾಗಲಿ, ಬೇರೆ ಯಾವ ಆಹಾರವನ್ನಾಗಲಿ ರುಚಿ ನೋಡಿದರೆ, ದೇವರು ನನಗೆ ಬೇಕಾದದ್ದನ್ನು ಮಾಡಲಿ, ಅಧಿಕವಾಗಿಯೂ ಮಾಡಲಿ,” ಎಂದು ಆಣೆ ಇಟ್ಟುಕೊಂಡನು.
2SA 3:36 ಜನರೆಲ್ಲರು ಅದನ್ನು ತಿಳಿದುಕೊಂಡಾಗ, ಅವರೆಲ್ಲರಿಗೆ ಮೆಚ್ಚಿಗೆಯಾಯಿತು. ಹಾಗೆಯೇ ಅರಸನು ಏನೇನು ಮಾಡಿದನೋ, ಅದು ಜನರಿಗೆ ಮೆಚ್ಚಿಗೆಯಾಗಿತ್ತು.
2SA 3:37 ಏಕೆಂದರೆ ನೇರನ ಮಗ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದದ್ದಲ್ಲವೆಂದು ಸಮಸ್ತ ಜನರೂ, ಸಮಸ್ತ ಇಸ್ರಾಯೇಲರೂ ಆ ದಿವಸದಲ್ಲಿ ತಿಳಿದುಕೊಂಡರು.
2SA 3:38 ಇದಲ್ಲದೆ ಅರಸನು ತನ್ನ ಸೇವಕರಿಗೆ, “ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿಲ್ಲವೋ?
2SA 3:39 ನಾನು ಅರಸನಾಗಿ ಅಭಿಷೇಕ ಹೊಂದಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಪುತ್ರರಾದ ಇವರು ನನ್ನ ಹತೋಟಿಗೆ ಬಾರದವರು. ಕೆಟ್ಟತನ ಮಾಡುವವನಿಗೆ ಯೆಹೋವ ದೇವರು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವರು,” ಎಂದನು.
2SA 4:1 ಅಬ್ನೇರನು ಹೆಬ್ರೋನಿನಲ್ಲಿ ಮರಣ ಹೊಂದಿದನೆಂದು ಸೌಲನ ಮಗ ಈಷ್ಬೋಶೆತನು ಕೇಳಿದಾಗ, ಅವನು ಧೈರ್ಯವನ್ನು ಕಳೆದುಕೊಂಡನು. ಇಸ್ರಾಯೇಲರೆಲ್ಲರು ಕಳವಳಗೊಂಡರು.
2SA 4:2 ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.
2SA 4:3 ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ ಇಂದಿನವರೆಗೂ ಅಲ್ಲಿ ಪ್ರವಾಸಿಗಳಾಗಿದ್ದಾರೆ.
2SA 4:4 ಸೌಲನ ಮಗ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಸೌಲನೂ, ಯೋನಾತಾನನೂ ಮರಣ ಹೊಂದಿದರೆಂಬ ವರ್ತಮಾನ ಇಜ್ರೆಯೇಲ್ ಎಂಬ ಪಟ್ಟಣದಿಂದ ಬಂದಾಗ, ಅವನು ಐದು ವರ್ಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.
2SA 4:5 ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನೂ, ಬಾಣನೂ ಹೊರಟು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಈಷ್ಬೋಶೆತನ ಮನೆಗೆ ಬಂದರು. ಅವನು ಮಂಚದ ಮೇಲೆ ಮಲಗಿಕೊಂಡಿದ್ದನು.
2SA 4:6 ಅವರು ಗೋಧಿಯನ್ನು ತೆಗೆದುಕೊಂಡು ಹೋಗುವವರಂತೆ ನಡುಮನೆಯೊಳಗೆ ಹೋಗಿ ಅವನ ಹೊಟ್ಟೆಯಲ್ಲಿ ತಿವಿದರು. ರೇಕಾಬನೂ ಅವನ ಸಹೋದರ ಬಾಣನೂ ಗುಟ್ಟಾಗಿ ಒಳಗೆ ಜಾರಿಕೊಂಡರು.
2SA 4:7 ಅವರು ಮನೆಯೊಳಗೆ ಪ್ರವೇಶಿಸಿದಾಗ, ಅರಸನು ಮಲಗುವ ಕೋಣೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಅವರಿಬ್ಬರು ಅವನನ್ನು ಹೊಡೆದು, ಕೊಂದುಹಾಕಿ, ತಲೆಯನ್ನು ಕಡಿದು, ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ನಡೆದರೆ.
2SA 4:8 ಅನಂತರ ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋಶೆತನ ತಲೆಯನ್ನು ತಂದು ಅರಸನಿಗೆ, “ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಯೆಹೋವ ದೇವರು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲನಿಗೂ, ಅವನ ಸಂತಾನಕ್ಕೂ ಮುಯ್ಯಿ ತೀರಿಸಿದ್ದಾರೆ,” ಎಂದರು.
2SA 4:9 ಆಗ ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನಿಗೂ, ಅವನ ಸಹೋದರ ಬಾಣನಿಗೂ ಉತ್ತರವಾಗಿ, “ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಜೀವದಾಣೆ,
2SA 4:10 ಶುಭವರ್ತಮಾನವನ್ನು ತಂದವನು ನಾನು, ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡುವೆನೆಂದು ನೆನಸಿ ಒಬ್ಬನು ನನಗೆ, ‘ಇಗೋ, ಸೌಲನು ಮರಣಹೊಂದಿದನು,’ ಎಂದು ಹೇಳಿದ್ದರಿಂದ, ನಾನು ಚಿಕ್ಲಗಿನಲ್ಲಿ ಅವನಿಗೆ ಮರಣದಂಡನೆಯನ್ನು ವಿಧಿಸಿದೆನು.
2SA 4:11 ಹಾಗಾದರೆ, ತನ್ನ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ನಿರ್ದೋಷಿಯನ್ನು ಕೊಲೆಮಾಡಿದ ದುಷ್ಟ ಮನುಷ್ಯರನ್ನು ಎಷ್ಟೋ ಹೆಚ್ಚಾಗಿ ಕೊಲ್ಲಿಸುವೆನು. ಈಗ ನಾನು ನಿಮ್ಮ ಕೈಯಿಂದ ಅವನ ರಕ್ತ ವಿಚಾರಣೆ ಮಾಡಿ, ನಿಮ್ಮನ್ನು ಭೂಮಿಯಿಂದ ತೆಗೆದುಬಿಡುವೆನು,” ಎಂದನು.
2SA 4:12 ದಾವೀದನು ತನ್ನ ಜನರಿಗೆ ಆಜ್ಞಾಪಿಸಿದ್ದರಿಂದ, ಅವರು ಅವರನ್ನು ಕೊಂದುಹಾಕಿ, ಅವರ ಕೈಕಾಲುಗಳನ್ನು ಕಡಿದು, ಹೆಬ್ರೋನಿನ ಕೊಳದ ಬಳಿಯಲ್ಲಿ ತೂಗುಹಾಕಿದರು. ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು, ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಳಿಟ್ಟರು.
2SA 5:1 ಇಸ್ರಾಯೇಲಿನ ಎಲ್ಲಾ ಗೋತ್ರದವರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.
2SA 5:2 ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವೆ ಎಂದು ಹೇಳಿದರು,’ ” ಎಂದರು.
2SA 5:3 ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದಾಗ, ಅರಸನಾದ ದಾವೀದನು ಹೆಬ್ರೋನಿನಲ್ಲಿ ಯೆಹೋವ ದೇವರ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
2SA 5:4 ದಾವೀದನು ಆಳಲು ಪ್ರಾರಂಭಿಸಿದಾಗ, ಮೂವತ್ತು ವರ್ಷದವನಾಗಿದ್ದನು. ಅವನು ನಲವತ್ತು ವರ್ಷ ಆಳಿದನು.
2SA 5:5 ಅವನು ಹೆಬ್ರೋನಿನಲ್ಲಿ ಯೆಹೂದದ ಮೇಲೆ ಏಳುವರೆ ವರ್ಷ ಆಳಿದನು. ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲರ ಮೇಲೆಯೂ, ಸಮಸ್ತ ಯೆಹೂದದ ಜನರ ಮೇಲೆಯೂ ಮೂವತ್ತು ಮೂರು ವರ್ಷ ಆಳಿದನು.
2SA 5:6 ಅರಸನೂ ಅವನ ಜನರೂ ಯೆಬೂಸಿಯರ ವಿರುದ್ಧವಾಗಿ ಯೆರೂಸಲೇಮಿಗೆ ಬಂದರು. ದಾವೀದನು ಇದರೊಳಗೆ ಬರಲು ಸಾಧ್ಯವಿಲ್ಲವೆಂದು ಅವರು ನೆನಸಿ ದಾವೀದನಿಗೆ, “ನೀನು ಕಣ್ಣು ಕಾಣದವರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು, ನೀನು ಇಲ್ಲಿಗೆ ಬರಲಾರೆ,” ಎಂದರು.
2SA 5:7 ಆದರೂ ದಾವೀದನು ಚೀಯೋನಿನ ಕೋಟೆಯನ್ನು ವಶಪಡಿಸಿಕೊಂಡನು. ಅದೇ ದಾವೀದನ ಪಟ್ಟಣವು.
2SA 5:8 ಆ ದಿವಸದಲ್ಲಿ ದಾವೀದನು, “ಜಲದ್ವಾರವನ್ನು ದಾಟಿ, ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ನಾಶಮಾಡಲಿ,” ಎಂದು ಹೇಳಿದ್ದನು. ಆದುದರಿಂದಲೇ, “ಕುರುಡರೂ ಕುಂಟರೂ ಅರಮನೆಯೊಳಗೆ ಪ್ರವೇಶಿಸಲಾರರು,” ಎಂಬ ಗಾದೆಯಾಯಿತು.
2SA 5:9 ದಾವೀದನು ಕೋಟೆಯಲ್ಲಿ ವಾಸಮಾಡಿದನು, ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ಅವನು ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.
2SA 5:10 ಹೀಗೆಯೇ ಸರ್ವಶಕ್ತರಾದ ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ದಿನದಿನಕ್ಕೆ ಬಲಗೊಳ್ಳುತ್ತಾ ಇದ್ದನು.
2SA 5:11 ಆಗ ಟೈರಿನ ಅರಸನಾದ ಹೀರಾಮನು ದಾವೀದನ ಬಳಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು, ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು.
2SA 5:12 ಆಗ ದಾವೀದನು, ತನ್ನನ್ನು ಯೆಹೋವ ದೇವರು ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದರೆಂದೂ ತಮ್ಮ ಜನರಾದ ಇಸ್ರಾಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದರೆಂದೂ ತಿಳಿದುಕೊಂಡನು.
2SA 5:13 ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ, ಯೆರೂಸಲೇಮಿನಲ್ಲಿ ಸಹ ಕೆಲವು ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಉಪಪತ್ನಿಯರನ್ನಾಗಿಯೂ ಮಾಡಿಕೊಂಡದ್ದರಿಂದ ಅವನಿಗೆ ಇನ್ನೂ ಹೆಚ್ಚು ಪುತ್ರ, ಪುತ್ರಿಯರು ಹುಟ್ಟಿದರು.
2SA 5:14 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್,
2SA 5:15 ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
2SA 5:16 ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಇವರೇ.
2SA 5:17 ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದಾನೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರೆಲ್ಲರೂ ದಾವೀದನನ್ನು ಸೆರೆಹಿಡಿಯಲು ಹೋದರು. ದಾವೀದನು ಅದನ್ನು ಕೇಳಿ ಕೋಟೆ ಸ್ಥಳಕ್ಕೆ ಹೋದನು.
2SA 5:18 ಆಗ ಫಿಲಿಷ್ಟಿಯರು ಬಂದು ರೆಫಾಯಿಮ್ ತಗ್ಗಿನಲ್ಲಿ ಇಳಿದುಕೊಂಡರು.
2SA 5:19 ಅದಕ್ಕೆ ದಾವೀದನು, “ನಾನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಬಹುದೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವಿರೋ?” ಎಂದು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು ಅವನಿಗೆ, “ಹೋಗು, ಖಂಡಿತವಾಗಿ ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದು ಹೇಳಿದರು.
2SA 5:20 ಆದಕಾರಣ ದಾವೀದನು ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ಯೆಹೋವ ದೇವರು ನನ್ನ ಶತ್ರುಗಳನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ, ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.
2SA 5:21 ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟು ಹೋದುದರಿಂದ ದಾವೀದನೂ, ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.
2SA 5:22 ಫಿಲಿಷ್ಟಿಯರು ಮತ್ತೆ ತಿರುಗಿಬಂದು, ರೆಫಾಯಿಮಿನ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು.
2SA 5:23 ಆದ್ದರಿಂದ ದಾವೀದನು ಇದರ ಬಗ್ಗೆ ಯೆಹೋವ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ, “ನೀನು ಅವರ ಮುಂದೆ ಹೋಗದೆ, ಅವರ ಹಿಂದಿನಿಂದ ಸುತ್ತಿಕೊಂಡು ಹೋಗಿ, ಬಾಕಾಮರಗಳಿಗೆ ಎದುರಾಗಿ ಅವರ ಮೇಲೆ ದಾಳಿಮಾಡು.
2SA 5:24 ಬಾಕಾಮರಗಳ ತುದಿಗಳಲ್ಲಿ ನಡೆದುಬರುವ ಶಬ್ದವನ್ನು ನೀನು ಕೇಳಿದಾಗಲೇ, ಯೆಹೋವ ದೇವರು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದರು.
2SA 5:25 ಆಗ ದಾವೀದನು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ, ಅವನು ಗೆಬದಿಂದ ಗೆಜೆರಿನವರೆಗೆ ಫಿಲಿಷ್ಟಿಯರನ್ನು ಹೊಡೆದನು.
2SA 6:1 ದಾವೀದನು ಇಸ್ರಾಯೇಲಿನಲ್ಲಿ ಆರಿಸಿದ ಮೂವತ್ತು ಸಾವಿರ ಸೈನಿಕರನ್ನು ಕೂಡಿಸಿಕೊಂಡು,
2SA 6:2 ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.
2SA 6:3 ಆಗ ಅವರು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು, ಅದನ್ನು ಹೊಸ ಬಂಡಿಯ ಮೇಲೆ ಏರಿಸಿದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗೂ ಅಹಿಯೋವನು ಆ ಹೊಸ ಬಂಡಿಯನ್ನು ನಡೆಸಿದರು.
2SA 6:4 ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದಾಗ ಅಹಿಯೋವನು ದೇವರ ಮಂಜೂಷದ ಮುಂದೆ ನಡೆದನು.
2SA 6:5 ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ಸ್ವರಮಂಡಲ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ಯೆಹೋವ ದೇವರ ಮುಂದೆ ಹೋದರು.
2SA 6:6 ಅವರು ನಾಕೋನನ ಕಣದ ಬಳಿಗೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ತನ್ನ ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
2SA 6:7 ಆಗ ಯೆಹೋವ ದೇವರು ಉಜ್ಜನ ಮೇಲೆ ಕೋಪಗೊಂಡು, ಅಂಥ ಅಗೌರವಕ್ಕಾಗಿ ದೇವರು ಅವನನ್ನು ಶಿಕ್ಷಿಸಿದರು; ಅವನು ಅಲ್ಲಿಯೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
2SA 6:8 ಯೆಹೋವ ದೇವರು ಉಜ್ಜನನ್ನು ಶಿಕ್ಷಿಸಿದ್ದರಿಂದ, ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು, ಇಂದಿನವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಕರೆಯಲಾಗುತ್ತದೆ.
2SA 6:9 ದಾವೀದನು ಆ ದಿನ ಯೆಹೋವ ದೇವರಿಗೆ ಭಯಪಟ್ಟು, “ಯೆಹೋವ ದೇವರ ಮಂಜೂಷವನ್ನು ನಾನಿರುವಲ್ಲಿಗೆ ಹೇಗೆ ತೆಗೆದುಕೊಂಡು ಹೋಗುವದು?” ಎಂದನು.
2SA 6:10 ದಾವೀದನು ಯೆಹೋವ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ, ಗಿತ್ತೀಯನಾದ ಓಬೇದ್ ಏದೋಮನ ಮನೆಗೆ ತೆಗೆದುಕೊಂಡು ಹೋದನು.
2SA 6:11 ಯೆಹೋವ ದೇವರ ಮಂಜೂಷವು ಗಿತ್ತೀಯನಾದ ಓಬೇದ್ ಏದೋಮನ ಮನೆಯಲ್ಲಿ ಮೂರು ತಿಂಗಳು ಇದ್ದುದರಿಂದ, ಯೆಹೋವ ದೇವರು ಓಬೇದ್ ಎದೋಮನನ್ನೂ, ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದರು.
2SA 6:12 “ದೇವರ ಮಂಜೂಷದ ನಿಮಿತ್ತ ಯೆಹೋವ ದೇವರು ಓಬೇದ್ ಏದೋಮನ ಮನೆಯನ್ನೂ, ಅವನಿಗೆ ಉಂಟಾದದ್ದೆಲ್ಲವನ್ನೂ ಆಶೀರ್ವದಿಸಿದ್ದಾರೆ,” ಎಂದು ಅರಸನಾದ ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು ಹೋಗಿ, ಓಬೇದ್ ಏದೋಮನ ಮನೆಯೊಳಗಿಂದ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.
2SA 6:13 ಯೆಹೋವ ದೇವರ ಮಂಜೂಷವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ, ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
2SA 6:14 ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡು, ತನ್ನ ಪೂರ್ಣಬಲದಿಂದ ಯೆಹೋವ ದೇವರ ಮುಂದೆ ಕುಣಿದಾಡಿದನು.
2SA 6:15 ಈ ಪ್ರಕಾರ ದಾವೀದನೂ, ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮಂಜೂಷವನ್ನು ಆರ್ಭಟದಿಂದಲೂ, ತುತೂರಿಯ ಶಬ್ದದಿಂದಲೂ ಬರಮಾಡಿದರು.
2SA 6:16 ಯೆಹೋವ ದೇವರ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಅರಸನಾದ ದಾವೀದನು ಯೆಹೋವ ದೇವರ ಮುಂದೆ ಕುಣಿದಾಡುವುದನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.
2SA 6:17 ಅವರು ಯೆಹೋವ ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ದಾವೀದನು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದನು.
2SA 6:18 ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
2SA 6:19 ನೆರೆದುಬಂದ ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
2SA 6:20 ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ತಿರುಗಿದಾಗ, ಸೌಲನ ಮಗಳಾದ ಮೀಕಲಳು ದಾವೀದನಿಗೆ ಎದುರಾಗಿ ಬಂದು, “ನಿಷ್ಪ್ರಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿ ಹಾಕಿದ ಹಾಗೆಯೇ, ಈ ಹೊತ್ತು ತನ್ನ ಸೇವಕರ ದಾಸಿಯರ ಕಣ್ಣು ಮುಂದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಹೊಂದಿದನು?” ಎಂದಳು.
2SA 6:21 ಆದರೆ ದಾವೀದನು ಮೀಕಲಳಿಗೆ, “ನಾನು ಕುಣಿದದ್ದು ಯೆಹೋವ ದೇವರ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಆ ಯೆಹೋವ ದೇವರ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
2SA 6:22 ನಾನು ಇನ್ನೂ ಇದಕ್ಕಿಂತ ಅಲ್ಪನಾಗಿರುವುದಕ್ಕೂ, ಹೀನೈಸಿಕೊಳ್ಳುವುದಕ್ಕೂ, ಸಿದ್ಧನಾಗಿದ್ದೇನೆ. ಆದರೆ ನೀನು ಹೇಳಿದ ದಾಸಿಯರಿಂದ ನಿಶ್ಚಯವಾಗಿ ಘನತೆಯನ್ನು ಹೊಂದುವೆನು,” ಎಂದನು.
2SA 6:23 ಆದ್ದರಿಂದ ಸೌಲನ ಮಗಳಾದ ಮೀಕಲಳು ತನ್ನ ಮರಣದ ದಿವಸದ ಮಟ್ಟಿಗೂ ಮಕ್ಕಳು ಆಗಲಿಲ್ಲ.
2SA 7:1 ಯೆಹೋವ ದೇವರು ಅರಸನ ಸುತ್ತಲಿದ್ದ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅರಸನು ವಿಶ್ರಾಂತಿಯಿಂದ ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ,
2SA 7:2 ಒಂದು ದಿನ ಅರಸನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಆದರೆ ದೇವರ ಮಂಜೂಷವು ಗುಡಾರದಲ್ಲಿರುತ್ತದೆ,” ಎಂದನು.
2SA 7:3 ಆಗ ನಾತಾನನು ಅರಸನಿಗೆ, “ಆಗಲಿ ನಿನ್ನ ಹೃದಯದಲ್ಲಿ ಏನು ಇದೆಯೋ ಅದನ್ನು ಮಾಡು. ಏಕೆಂದರೆ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
2SA 7:4 ಅದೇ ರಾತ್ರಿಯಲ್ಲಿ ಯೆಹೋವ ದೇವರ ವಾಕ್ಯವು ನಾತಾನನಿಗೆ ಉಂಟಾಗಿ,
2SA 7:5 “ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ಯೆಹೋವ ದೇವರು ಹೇಳುವುದೇನೆಂದರೆ: ನಾನು ವಾಸವಾಗಿರುವುದಕ್ಕೆ ನೀನು ನನಗೆ ಆಲಯವನ್ನು ಕಟ್ಟಬೇಕೆಂದಿರುವೆಯೋ?
2SA 7:6 ನಿಶ್ಚಯವಾಗಿ ನಾನು ಈಜಿಪ್ಟಿನಿಂದ ಇಸ್ರಾಯೇಲರನ್ನು ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಲಯದಲ್ಲಿ ವಾಸಮಾಡದೆ ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆನು.
2SA 7:7 ನಾನು ನನ್ನ ಜನರಾದ ಇಸ್ರಾಯೇಲರನ್ನು ಪರಿಪಾಲಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಜೊತೆಯಾದರೂ, “ನೀವು ನನಗೆ ದೇವದಾರು ಮನೆಯನ್ನು ಏಕೆ ಕಟ್ಟಲಿಲ್ಲ,” ಎಂದು, ನಾನು ಸಮಸ್ತ ಇಸ್ರಾಯೇಲಿನ ಸಂಗಡ ಸಂಚರಿಸಿದ ಯಾವ ಸ್ಥಳದಲ್ಲಾದರೂ, ಯಾವಾಗಲಾದರೂ ಕೇಳಿದೆನೋ?’
2SA 7:8 “ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, ‘ಸೇನಾಧೀಶ್ವರ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ: ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡು, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿರುವಂತೆ ನೇಮಿಸಿದೆನು.
2SA 7:9 ನೀನು ಎಲ್ಲಿ ಹೋದರೂ, ಅಲ್ಲಿ ನಿನ್ನ ಸಂಗಡ ಇದ್ದು, ನಿನ್ನ ಶತ್ರುಗಳನ್ನೆಲ್ಲಾ ನಿನ್ನ ಮುಂದೆಯೇ ಸಂಹರಿಸಿದೆನು. ಭೂಮಿಯಲ್ಲಿರುವ ಮಹಾಪುರುಷರ ಹೆಸರಿನ ಹಾಗೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
2SA 7:10 ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಏರ್ಪಡಿಸಿ, ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಲೆಗೊಳಿಸುವೆನು.
2SA 7:11 ಪೂರ್ವಕಾಲದಲ್ಲಿ ನಾನು ನನ್ನ ಜನರಾದ ಇಸ್ರಾಯೇಲರ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದ ಆ ದಿವಸದಿಂದ ಈಚೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಮೇಲೆ ಕುಗ್ಗಿಸದೆ ಇರುವರು. “ ‘ನಿನ್ನನ್ನು, ನಿನ್ನ ಸಮಸ್ತ ಶತ್ರುಗಳಿಂದ ತಪ್ಪಿಸಿ, ನಿನಗೆ ವಿಶ್ರಾಂತಿಯನ್ನು ಉಂಟುಮಾಡುವೆನು. ಇದಲ್ಲದೆ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ, ನಾನು ನಿನ್ನ ರಾಜವಂಶವನ್ನು ಸ್ಥಿರಪಡಿಸುವೆನು.
2SA 7:12 ನಿನ್ನ ಆಯುಷ್ಕಾಲವು ಮುಗಿದ ಮೇಲೆ ನೀನು ನಿನ್ನ ಪಿತೃಗಳ ಜೊತೆ ವಿಶ್ರಮಿಸುವಾಗ, ನಾನು ನಿನ್ನ ಸಂತತಿಯಲ್ಲಿ ಒಬ್ಬನನ್ನು ನಿನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಅವನ ರಾಜ್ಯವನ್ನು ಸ್ಥಿರಮಾಡುವೆನು.
2SA 7:13 ಅವನೇ ನನ್ನ ಹೆಸರಿಗಾಗಿ ದೇವಾಲಯನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು.
2SA 7:14 ನಾನು ಆತನ ತಂದೆಯಾಗಿರುವೆನು. ಆತನು ನನಗೆ ಮಗನಾಗಿರುವನು. ಅವನು ಕೆಟ್ಟದ್ದನ್ನು ಮಾಡಿದರೆ, ನಾನು ಅವನನ್ನು ಮನುಷ್ಯರಿಂದ ಬೆಸುಗೆ ಹಾಕಿದ ಕೋಲಿನಿಂದಲೂ ಮನುಷ್ಯರ ಕೈಗಳಿಂದ ಹೊಡೆದ ಹೊಡೆತದಿಂದ ದಂಡಿಸುವೆನು.
2SA 7:15 ಆದರೆ ಸೌಲನ ಮೇಲಿದ್ದ ನನ್ನ ಪ್ರೀತಿಯನ್ನು ಹಿಂತೆಗೆದುಕೊಂಡ ಹಾಗೆ, ಎಂದಿಗೂ ಅವನಿಂದ ಹಿಂತೆಗೆಯುವುದಿಲ್ಲ. ನಾನು ಸೌಲನನ್ನು ನಿನ್ನ ಮುಂದೆಯೇ ಹೊರಡಿಸಿಬಿಟ್ಟೆನಲ್ಲಾ.
2SA 7:16 ನಿನ್ನ ಮನೆಯೂ ನಿನ್ನ ರಾಜ್ಯವೂ ನನ್ನ ಮುಂದೆ ಸದಾಕಾಲಕ್ಕೂ ಸ್ಥಿರವಾಗಿರುವವು. ನಿನ್ನ ಸಿಂಹಾಸನವು ಯುಗಯುಗಾಂತರಕ್ಕೂ ಶಾಶ್ವತವಾಗಿರುವುದು,’ ” ಎಂದು ಹೇಳಿದರು.
2SA 7:17 ನಾತಾನನು ಈ ಸಮಸ್ತ ಪ್ರಕಟಣೆಯ ಮಾತುಗಳನ್ನು ದಾವೀದನಿಗೆ ತಿಳಿಸಿದನು.
2SA 7:18 ಅನಂತರ ಅರಸನಾದ ದಾವೀದನು ಒಳಗೆ ಪ್ರವೇಶಿಸಿ, ಯೆಹೋವ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು, “ಸಾರ್ವಭೌಮ ಯೆಹೋವ ದೇವರೇ, ನನ್ನಂಥವನಿಗೆ ನೀವು ಈ ಪದವಿಯನ್ನು ಅನುಗ್ರಹಿಸಿ, ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು?
2SA 7:19 ಸಾರ್ವಭೌಮ ಯೆಹೋವ ದೇವರೇ, ಇದು ನಿಮ್ಮ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನೀವು ನಿಮ್ಮ ಸೇವಕನ ಸಂತಾನದ ಭವಿಷ್ಯದ ಕುರಿತೂ ವಾಗ್ದಾನಮಾಡಿರುವಿರಿ. ಸಾರ್ವಭೌಮ ಯೆಹೋವ ದೇವರೇ, ಇದು ನೀವು ಮನುಷ್ಯನೊಂದಿಗೆ ವರ್ತಿಸುವ ಕ್ರಮ.
2SA 7:20 “ದಾವೀದನು ಇನ್ನೂ ಹೆಚ್ಚಾಗಿ ಹೇಳಿಕೊಳ್ಳುವುದೇನಿದೆ? ಏಕೆಂದರೆ ನೀವು ನಿಮ್ಮ ಸೇವಕನನ್ನು ಚೆನ್ನಾಗಿ ಬಲ್ಲಿರಿ; ಓ ಸಾರ್ವಭೌಮ ಯೆಹೋವ ದೇವರೇ,
2SA 7:21 ನಿಮ್ಮ ವಾಕ್ಯದ ನಿಮಿತ್ತವಾಗಿಯೂ ನಿಮ್ಮ ಚಿತ್ತಾನುಸಾರವಾಗಿಯೂ ನಿಮ್ಮ ಸೇವಕನಿಗೆ ತಿಳಿಯಪಡಿಸುವ ಹಾಗೆ ಈ ಮಹಾಕಾರ್ಯಗಳನ್ನೆಲ್ಲಾ ಮಾಡಿದಿರಿ.
2SA 7:22 “ಸಾರ್ವಭೌಮ ಯೆಹೋವ ದೇವರೇ, ನೀವು ಮಹೋನ್ನತರಾಗಿದ್ದೀರಿ. ನಮ್ಮ ಕಿವಿಗಳಿಂದ ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿಮ್ಮ ಹಾಗೆ ಯಾರೂ ಇಲ್ಲ; ನಿಮ್ಮ ಹೊರತು ದೇವರು ಯಾರೂ ಇಲ್ಲ.
2SA 7:23 ಭೂಲೋಕದಲ್ಲಿ ನಿಮ್ಮ ಜನರಾದ ಇಸ್ರಾಯೇಲರಿಗೆ ಸಮಾನವಾದ ಜನಾಂಗ ಯಾವುದು? ನೀವೇ ಹೋಗಿ ಅವರನ್ನು ಸ್ವಜನರಾಗಿ ವಿಮೋಚಿಸಿ ನಿಮ್ಮ ಹೆಸರನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟಿನಿಂದ ವಿಮೋಚಿಸಿ ತಂದ ನಿಮ್ಮ ಪ್ರಜೆಗಳ ಎದುರಿನಿಂದ ಜನಾಂಗಗಳನ್ನು ಮತ್ತು ಅವರ ದೇವರುಗಳನ್ನು ಓಡಿಸುವ ಮೂಲಕ ವಿಸ್ಮಯಕರವಾದ ಮಹಾ ಅದ್ಭುತಗಳನ್ನು ಮಾಡಿದ್ದೀರಲ್ಲವೇ?
2SA 7:24 ದೇವರಾದ ಯೆಹೋವ ದೇವರೇ, ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಇರುವ ಹಾಗೆ ಸ್ಥಿರಪಡಿಸಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.
2SA 7:25 “ಈಗ ದೇವರಾದ ಯೆಹೋವ ದೇವರೇ, ನೀವು ನಿಮ್ಮ ಸೇವಕನನ್ನು ಕುರಿತೂ, ಅವನ ಕುಟುಂಬವನ್ನು ಕುರಿತೂ ಮಾಡಿದ ವಾಗ್ದಾನವನ್ನು ನೆರವೇರಿಸಿ ಅದನ್ನು ಶಾಶ್ವತವಾಗಿ ಸ್ಥಿರಪಡಿಸಿರಿ.
2SA 7:26 ಹೀಗೆ ನಿಮ್ಮ ಹೆಸರು ಎಂದೆಂದಿಗೂ ಶ್ರೇಷ್ಠವಾಗಿರುತ್ತದೆ. ಆಗ ಜನರು, ‘ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲರ ದೇವರು,’ ಎಂದು ಹೇಳುವರು. ಇದಲ್ಲದೆ ನಿಮ್ಮ ಸೇವಕನಾದ ದಾವೀದನ ಮನೆಯು ನಿಮ್ಮ ಮುಂದೆ ಸ್ಥಿರವಾಗಿರುವುದು.
2SA 7:27 “ಸೇನಾಧೀಶ್ವರ ಯೆಹೋವ ದೇವರೇ, ಇಸ್ರಾಯೇಲಿನ ದೇವರೇ, ‘ನಾನು ನಿಮಗೆ ಮನೆಯನ್ನು ಕಟ್ಟುವೆನೆಂದು’ ನಿಮ್ಮ ಸೇವಕನಿಗೆ ಪ್ರಕಟ ಮಾಡಿದ್ದರಿಂದ, ನಿಮ್ಮನ್ನು ಕುರಿತು ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದಕ್ಕೆ ನಿಮ್ಮ ಸೇವಕನ ಹೃದಯದಲ್ಲಿ ಧೈರ್ಯ ಉಂಟಾಯಿತು.
2SA 7:28 ಸಾರ್ವಭೌಮ ಯೆಹೋವ ದೇವರೇ, ನಿಮ್ಮ ವಾಕ್ಯಗಳು ಸತ್ಯವಾದದ್ದು. ನಿಮ್ಮ ಸೇವಕನಿಗೆ ಈ ಒಳ್ಳೆಯ ಸಂಗತಿಗಳನ್ನು ವಾಗ್ದಾನಮಾಡಿದ ನೀವು ದೇವರಾಗಿದ್ದೀರಿ.
2SA 7:29 ಆದಕಾರಣ ಈಗ ನಿಮ್ಮ ಸೇವಕನ ಮನೆಯು ನಿಮ್ಮ ಮುಂದೆ ಶಾಶ್ವತವಾಗಿ ಇರುವ ಹಾಗೆ ಅದನ್ನು ಆಶೀರ್ವದಿಸಲು ಸಂತೋಷಪಡಿರಿ. ಸಾರ್ವಭೌಮ ಯೆಹೋವ ದೇವರೇ, ಅದನ್ನು ಹೇಳಿದವರು ನೀವೇ; ನಿಮ್ಮ ಆಶೀರ್ವಾದದಿಂದ ನಿಮ್ಮ ಸೇವಕನ ಮನೆಯಲ್ಲಿ ನಿತ್ಯವೂ ಸೌಭಾಗ್ಯವಿರಲಿ.”
2SA 8:1 ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಮೇತೆಗ್ ಅಮ್ಮಹವನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
2SA 8:2 ಹಾಗೆಯೇ ದಾವೀದನು ಮೋವಾಬ್ಯರನ್ನು ಸಹ ಸೋಲಿಸಿದನು. ಸೆರೆಯಾಳುಗಳನ್ನು ನೆಲದ ಮೇಲೆ ಹಗ್ಗದಿಂದ ಅಳತೆ ಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ, ಒಂದು ಪಾಲನ್ನು ಉಳಿಸಿದನು. ಹೀಗೆ ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.
2SA 8:3 ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಚೋಬದ ಅರಸನಾದ ರೆಹೋಬನ ಮಗ ಹದದೆಜೆರನನ್ನು ಸೋಲಿಸಿದನು.
2SA 8:4 ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.
2SA 8:5 ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.
2SA 8:6 ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
2SA 8:7 ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.
2SA 8:8 ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ, ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು.
2SA 8:9 ದಾವೀದನು ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,
2SA 8:10 ಅವನು ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಯೋರಾಮನನ್ನು ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.
2SA 8:11 ಅರಸನಾದ ದಾವೀದನು ಚಿನ್ನ, ಬೆಳ್ಳಿ ಮತ್ತು ಕಂಚಿನ ಎಲ್ಲಾ ವಸ್ತುಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದನು. ಜೊತೆಗೆ ಅವನು ಸೋತ ಎಲ್ಲಾ ದೇಶಗಳಿಂದ ವಶಪಡಿಸಿಕೊಂಡ ವಸ್ತುಗಳನ್ನೂ ಅರ್ಪಿಸಿದನು.
2SA 8:12 ಅಂದರೆ, ಅರಾಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಮತ್ತು ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಿಂದ ಪಡೆದ ಕೊಳ್ಳೆಯನ್ನೂ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.
2SA 8:13 ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂದಿರುಗಿದಾಗ ಪ್ರಖ್ಯಾತಿ ಹೊಂದಿದನು.
2SA 8:14 ಸಮಸ್ತ ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
2SA 8:15 ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.
2SA 8:16 ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
2SA 8:17 ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.
2SA 8:18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಸಮಾಲೋಚಕರಾಗಿದ್ದರು.
2SA 9:1 ದಾವೀದನು, “ಸೌಲನ ಕುಟುಂಬದಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆ ತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ?” ಎಂದು ಕೇಳಿದನು.
2SA 9:2 ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ, “ನೀನು ಚೀಬನೋ?” ಎಂದನು. ಅದಕ್ಕವನು, “ನಿನ್ನ ದಾಸನು ನಾನೇ,” ಎಂದನು.
2SA 9:3 ಅರಸನು, “ನಾನು ದೇವರ ದಯೆ ತೋರಿಸುವ ಹಾಗೆ ಸೌಲನ ಕುಟುಂಬದಲ್ಲಿ ಇನ್ನೂ ಯಾವನಾದರೂ ಇದ್ದಾನೋ?” ಎಂದನು. ಆಗ ಚೀಬನು ಅರಸನಿಗೆ, “ಯೋನಾತಾನನಿಗೆ ಎರಡೂ ಕಾಲು ಕುಂಟಾದ ಮಗನಿದ್ದಾನೆ,” ಎಂದನು.
2SA 9:4 “ಅವನು ಎಲ್ಲಿ ಇದ್ದಾನೆ?” ಎಂದು ಅರಸನು ಅವನನ್ನು ಕೇಳಿದನು. ಚೀಬನು ಅರಸನಿಗೆ, “ಅವನು ಲೋದೆಬಾರಲ್ಲಿ ಅಮ್ಮಿಯೇಲನ ಮಗ ಮಾಕೀರನ ಮನೆಯಲ್ಲಿ ಇದ್ದಾನೆ,” ಎಂದನು.
2SA 9:5 ಆಗ ಅರಸ ದಾವೀದನು ಲೋದೆಬಾರಿನಲ್ಲಿರುವ ಅಮ್ಮಿಯೇಲನ ಮಗ ಮಾಕೀರನ ಮನೆಯಿಂದ ಅವನನ್ನು ಕರೆಯಕಳುಹಿಸಿದನು.
2SA 9:6 ಸೌಲನ ಮಗನಾಗಿರುವ ಯೋನಾತಾನನ ಮಗ ಮೆಫೀಬೋಶೆತನು ದಾವೀದನ ಬಳಿಗೆ ಬಂದಾಗ, ಮೋರೆ ಕೆಳಗಾಗಿ ಬಿದ್ದು ವಂದಿಸಿದನು. ದಾವೀದನು, “ಮೆಫೀಬೋಶೆತನೇ,” ಎಂದನು. ಅವನು, “ಇಗೋ, ನಿನ್ನ ದಾಸನು,” ಎಂದನು.
2SA 9:7 ಆಗ ದಾವೀದನು ಅವನಿಗೆ, “ಭಯಪಡಬೇಡ, ಏಕೆಂದರೆ ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆ ತೋರಿಸುವೆನು. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರುಗಿ ಕೊಡುವೆನು ಮತ್ತು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವೆ,” ಎಂದನು.
2SA 9:8 ಆಗ ಅವನು ಅಡ್ಡಬಿದ್ದು, “ನೀನು ನನ್ನಂಥ ಸತ್ತ ನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು,” ಎಂದನು.
2SA 9:9 ಅನಂತರ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಯಜಮಾನ ಸೌಲನಿಗೂ, ಅವನ ಕುಟುಂಬದವರಿಗೂ ಇದ್ದ ಎಲ್ಲವನ್ನು ಅವನ ಮೊಮ್ಮಗನಿಗೆ ಕೊಟ್ಟಿರುತ್ತೇನೆ.
2SA 9:10 ಆದ್ದರಿಂದ ನೀನೂ, ನಿನ್ನ ಪುತ್ರರೂ, ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ, ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ, ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮೊಮ್ಮಗ ಮೆಫೀಬೋಶೆತನು ನಿತ್ಯವೂ ನನ್ನ ಮೇಜಿನಲ್ಲಿ ಊಟಮಾಡುವನು,” ಎಂದನು. ಈ ಚೀಬನಿಗೆ ಹದಿನೈದು ಮಂದಿ ಪುತ್ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.
2SA 9:11 ಆಗ ಚೀಬನು ಅರಸನಿಗೆ, “ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು,” ಎಂದನು. ಅರಸನ ಪುತ್ರರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು.
2SA 9:12 ಮೆಫೀಬೋಶೆತನಿಗೆ ಮೀಕನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾಗಿದ್ದ ಸಮಸ್ತರೂ ಮೆಫೀಬೋಶೆತನಿಗೆ ದಾಸರಾಗಿದ್ದರು.
2SA 9:13 ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದ್ದುದರಿಂದ ಯೆರೂಸಲೇಮಿನಲ್ಲೇ ವಾಸವಾಗಿದ್ದನು. ಅವನಿಗೆ ಎರಡೂ ಕಾಲು ಕುಂಟಾಗಿದ್ದವು.
2SA 10:1 ಇದರ ತರುವಾಯ, ಅಮ್ಮೋನಿಯರ ಅರಸನು ಮರಣಹೊಂದಿದನು. ಅವನಿಗೆ ಬದಲಾಗಿ ಅವನ ಮಗ ಹಾನೂನನು ಅರಸನಾದನು.
2SA 10:2 ಆಗ ದಾವೀದನು, “ಹಾನೂನನ ತಂದೆಯಾದ ನಾಹಾಷನು ನನಗೆ ದಯೆ ತೋರಿಸಿದ್ದರಿಂದ, ನಾನೂ ಅವನ ಮಗ ಹಾನೂನನಿಗೆ ದಯೆ ತೋರಿಸುವೆನು,” ಎಂದನು. ದಾವೀದನು ಅವನ ತಂದೆಯನ್ನು ಕುರಿತು ಹಾನೂನನಿಗೆ ಸಂತಾಪ ಸೂಚಿಸಲು ತನ್ನ ಸೇವಕರನ್ನು ಕಳುಹಿಸಿದನು. ಹೀಗೆಯೇ ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದರು.
2SA 10:3 ಆಗ ಅಮ್ಮೋನಿಯರ ಪ್ರಧಾನರು ತಮ್ಮ ಯಜಮಾನನಾದ ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತಾಪ ಸೂಚಿಸುವವರನ್ನು ಕಳುಹಿಸಿದ್ದರಿಂದ, ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ಯೋಚಿಸುತ್ತೀಯೋ? ದಾವೀದನು ತನ್ನ ಸೇವಕರನ್ನು ಈ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೂ ಶೋಧಿಸುವುದಕ್ಕೂ ಅದನ್ನು ಕೆಡವಿ ಹಾಕುವುದಕ್ಕೂ ನಿನ್ನ ಬಳಿಗೆ ಕಳುಹಿಸಿದ್ದಾನಲ್ಲವೇ,” ಎಂದರು.
2SA 10:4 ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು, ಅವರ ಅರ್ಧ ಗಡ್ಡವನ್ನು ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.
2SA 10:5 ಅವರು ಈ ವಿಷಯದ ಕುರಿತು ದಾವೀದನಿಗೆ ಹೇಳಿ ಕಳುಹಿಸಿದಾಗ, ಬಹಳ ಅಪಮಾನ ಹೊಂದಿದ ಅವರಿಗೆ ದಾವೀದನು ತನ್ನ ಆಳುಗಳನ್ನು ಅವರಿಗೆದುರಾಗಿ ಕಳುಹಿಸಿ, “ನಿಮ್ಮ ಗಡ್ಡಗಳು ಬೆಳೆಯುವವರೆಗೂ ಯೆರಿಕೋವಿನಲ್ಲಿ ಇರಿ. ಆಮೇಲೆ ತಿರುಗಿ ಬನ್ನಿರಿ” ಎಂದು ಹೇಳಿಸಿದನು.
2SA 10:6 ತಾವು ದಾವೀದನಿಗೆ ಅಸಹ್ಯರಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಆದ್ದರಿಂದ ಅವರು ದೂತರನ್ನು ಕಳುಹಿಸಿ ಬೇತ್‌ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಇರುವ ಇಪ್ಪತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ, ಟೋಬ್ ದೇಶದಿಂದ ಹನ್ನೆರಡು ಸಾವಿರ ಜನರನ್ನೂ, ಮಾಕದ ಅರಸನನ್ನೂ ಅವನ ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು.
2SA 10:7 ದಾವೀದನು ಇದನ್ನು ಕೇಳಿದಾಗ, ಅವನು ಯೋವಾಬನನ್ನೂ, ಪರಾಕ್ರಮಶಾಲಿಗಳಾದ ಸಮಸ್ತ ಸೈನಿಕರನ್ನೂ ಕಳುಹಿಸಿದನು.
2SA 10:8 ಆಗ ಅಮ್ಮೋನಿಯರು ಹೊರಟು ಪಟ್ಟಣದ ದ್ವಾರದ ಹತ್ತಿರ ವ್ಯೂಹ ಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬಿನಿಂದಲೂ ಟೋಬಿನಿಂದಲೂ ಮಾಕಾನಿಂದಲೂ ಬಂದ ಅರಾಮ್ಯರು ಪ್ರತ್ಯೇಕವಾಗಿ ಬೈಲಿನಲ್ಲಿ ಇಳಿದುಕೊಂಡಿದ್ದರು.
2SA 10:9 ಯೋವಾಬನು, ಯುದ್ಧವು ತನ್ನ ವಿರೋಧವಾಗಿ ಹಿಂದೆಯೂ, ಮುಂದೆಯೂ ಇರುವುದನ್ನು ಕಂಡಾಗ, ಅವನು ಇಸ್ರಾಯೇಲಿನ ಎಲ್ಲಾ ಶ್ರೇಷ್ಠ ಸೈನಿಕರನ್ನು ಆಯ್ದುಕೊಂಡು, ಅರಾಮ್ಯರಿಗೆ ಎದುರಾಗಿ ನಿಲ್ಲಿಸಿದನು.
2SA 10:10 ಉಳಿದ ಜನರನ್ನು ಅಮ್ಮೋನಿಯರಿಗೆದುರಾಗಿ ವ್ಯೂಹ ಕಟ್ಟುವ ಹಾಗೆ, ಅವರನ್ನು ತನ್ನ ತಮ್ಮನಾದ ಅಬೀಷೈಯನ ಕೈಯಲ್ಲಿ ಒಪ್ಪಿಸಿಕೊಟ್ಟು,
2SA 10:11 ಅವನಿಗೆ ಯೋವಾಬನು, “ಅರಾಮ್ಯರು ನನಗಿಂತ ಬಲವುಳ್ಳವರಾದರೆ, ನೀನು ನನಗೆ ಸಹಾಯಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳವರಾದರೆ, ನಾನು ಬಂದು ನಿನಗೆ ಸಹಾಯ ಮಾಡುವೆನು.
2SA 10:12 ದೃಢವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಧೈರ್ಯವಾಗಿ ಹೋರಾಡೋಣ, ಯೆಹೋವ ದೇವರು ತಮ್ಮ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ,” ಎಂದನು.
2SA 10:13 ಆಗ ಯೋವಾಬನೂ, ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ದಾಳಿಮಾಡಲು ಹತ್ತಿರವಾದಾಗ, ಅರಾಮ್ಯರು ಓಡಿಹೋದರು.
2SA 10:14 ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನಿಯರು ಕಂಡಾಗ, ಅವರು ಅಬೀಷೈಯನ ಎದುರಿನಿಂದ ಓಡಿಹೋಗಿ ಪಟ್ಟಣದೊಳಗೆ ಅಡಗಿಕೊಂಡರು. ಆಗ ಯೋವಾಬನು ಅಮ್ಮೋನಿಯರೊಡನೆ ಯುದ್ಧಮಾಡುವುದನ್ನು ಬಿಟ್ಟು, ಯೆರೂಸಲೇಮಿಗೆ ತಿರುಗಿಹೋದನು.
2SA 10:15 ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಸೋತುಹೋದೆವೆಂದು ತಿಳಿದಾಗ, ಅವರೆಲ್ಲರು ಒಟ್ಟಾಗಿ ಕೂಡಿಬಂದರು.
2SA 10:16 ಹದದೆಜೆರನು ನದಿಯ ಆಚೆಯಲ್ಲಿರುವ ಇತರ ಅರಾಮ್ಯರನ್ನು ಕರೆಯಿಸಿಕೊಂಡದ್ದರಿಂದ ಅವರು ಹೆಲಾಮಿಗೆ ಬಂದರು. ಹದದೆಜೆರನ ಸೇನಾಧಿಪತಿಯಾದ ಶೋಬಕನು ಅವರ ನಾಯಕನಾದನು.
2SA 10:17 ಅದನ್ನು ದಾವೀದನಿಗೆ ತಿಳಿಸಿದಾಗ, ಅವನು ಸಮಸ್ತ ಇಸ್ರಾಯೇಲರನ್ನು ಕೂಡಿಸಿಕೊಂಡು, ಯೊರ್ದನನ್ನು ದಾಟಿ ಹೆಲಾಮಿಗೆ ಬಂದನು. ಅರಾಮ್ಯರು ದಾವೀದನಿಗೆದುರಾಗಿ ವ್ಯೂಹ ಕಟ್ಟಿ ಯುದ್ಧಮಾಡಿದರು.
2SA 10:18 ಆಗ ಅರಾಮ್ಯರು ಇಸ್ರಾಯೇಲರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ರಥಗಳನ್ನೂ ಹಾಳು ಮಾಡಿ, ನಲವತ್ತು ಸಾವಿರ ಕಾಲಾಳುಗಳನ್ನೂ ಕೊಂದು, ಅವರ ಸೇನಾಧಿಪತಿಯಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಮರಣಹೊಂದಿದನು.
2SA 10:19 ಹದದೆಜೆರನ ಸೇವಕರಾದ ಸಮಸ್ತ ಅರಸರು ತಾವು ಇಸ್ರಾಯೇಲರ ಮುಂದೆ ಸೋತುಹೋದದ್ದನ್ನು ಕಂಡಾಗ, ಅವರು ಇಸ್ರಾಯೇಲರ ಸಂಗಡ ಸಂಧಾನ ಮಾಡಿಕೊಂಡು ಅವರಿಗೆ ಅಧೀನರಾದರು. ತರುವಾಯ ಅರಾಮ್ಯರು ಅಮ್ಮೋನಿಯರಿಗೆ ಮತ್ತೆ ಸಹಾಯ ಮಾಡುವುದಕ್ಕೆ ಭಯಪಟ್ಟರು.
2SA 11:1 ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ, ಅವನ ಸಂಗಡದಲ್ಲಿದ್ದ ಅವನ ಸೇವಕರನ್ನೂ, ಸಮಸ್ತ ಇಸ್ರಾಯೇಲರನ್ನೂ ಕಳುಹಿಸಿದನು. ಅವರು ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ ರಬ್ಬ ನಗರಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
2SA 11:2 ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು, ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇದ್ದು, ಸ್ನಾನ ಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಕಂಡನು.
2SA 11:3 ಆ ಸ್ತ್ರೀಯು ಬಹು ಸೌಂದರ್ಯವುಳ್ಳ ರೂಪವತಿಯಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವುದಕ್ಕೆ ಕಳುಹಿಸಿದಾಗ ಒಬ್ಬನು, “ಅವಳು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಬತ್ಷೆಬೆಳು,” ಎಂದನು.
2SA 11:4 ಆಗ ದಾವೀದನು ದೂತರನ್ನು ಕಳುಹಿಸಿ ಅವಳನ್ನು ಬರಮಾಡಿಕೊಂಡನು. ಅವಳು ಅವನ ಬಳಿಗೆ ಬಂದಾಗ, ಅವಳು ತನ್ನ ಮೈಲಿಗೆಯನ್ನು ಕಳೆದುಕೊಂಡು ಶುಚಿಯಾಗಿದ್ದದರಿಂದ, ದಾವೀದನು ಅವಳ ಸಂಗಡ ಮಲಗಿದನು.
2SA 11:5 ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ, “ತಾನು ಗರ್ಭವತಿ,” ಎಂಬ ವಿಷಯವನ್ನು ದಾವೀದನಿಗೆ ಹೇಳಿ ಕಳುಹಿಸಿದಳು.
2SA 11:6 ಆಗ ದಾವೀದನು, “ಹಿತ್ತಿಯನಾದ ಊರೀಯನನ್ನು ತನ್ನ ಬಳಿಗೆ ಕಳುಹಿಸು,” ಎಂದು ಯೋವಾಬನಿಗೆ ಹೇಳಿ ಕಳುಹಿಸಿದನು. ಹಾಗೆಯೇ ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು.
2SA 11:7 ಊರೀಯನು ದಾವೀದನ ಬಳಿಗೆ ಬಂದಾಗ, ದಾವೀದನು ಅವನನ್ನು, “ಯೋವಾಬನೂ ಸೈನ್ಯದವರೂ ಹೇಗಿದ್ದಾರೆ? ಮತ್ತು ಯುದ್ಧವು ಹೇಗಿದೆ?” ಎಂದು ವಿಚಾರಿಸಿದನು.
2SA 11:8 ದಾವೀದನು ಊರೀಯನಿಗೆ, “ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ,” ಎಂದನು. ಊರೀಯನು ಅರಸನ ಮನೆಯಿಂದ ಹೊರಟುಹೋದನು. ನಂತರ ಅರಸನು ಅವನಿಗೆ ಉಪಹಾರ ಕಳುಹಿಸಿದನು.
2SA 11:9 ಆದರೆ ಊರೀಯನು ತನ್ನ ಮನೆಗೆ ಹೋಗದೆ, ಅರಮನೆಯ ಬಾಗಿಲ ಬಳಿಯಲ್ಲಿ ತನ್ನ ಅರಸನ ಸಮಸ್ತ ಸೇವಕರ ಸಂಗಡ ಮಲಗಿದ್ದನು.
2SA 11:10 ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ದಾವೀದನು ಊರೀಯನಿಗೆ, “ನೀನು ಪ್ರಯಾಣದಿಂದ ಬರಲಿಲ್ಲವೋ? ಏಕೆ ನಿನ್ನ ಮನೆಗೆ ಹೋಗಲಿಲ್ಲ?” ಎಂದನು.
2SA 11:11 ಊರೀಯನು ದಾವೀದನಿಗೆ, “ಮಂಜೂಷವೂ, ಇಸ್ರಾಯೇಲಿನವರೂ, ಯೆಹೂದದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ; ನನ್ನ ಒಡೆಯನಾದ ಯೋವಾಬನೂ, ನನ್ನ ಒಡೆಯನ ಸೇವಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವುದಕ್ಕೂ, ಕುಡಿಯುವುದಕ್ಕೂ, ನನ್ನ ಹೆಂಡತಿಯ ಸಂಗಡ ಮಲಗುವುದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವುದಿಲ್ಲ,” ಎಂದನು.
2SA 11:12 ಆಗ ದಾವೀದನು ಊರೀಯನಿಗೆ, “ಈ ಹೊತ್ತು ಇಲ್ಲಿರು. ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಊರೀಯನೂ ಆ ದಿನವೂ, ಮಾರನೆಯ ದಿವಸವೂ ಯೆರೂಸಲೇಮಿನಲ್ಲಿ ಇದ್ದನು.
2SA 11:13 ದಾವೀದನು ಅವನನ್ನು ಕರೆದಾಗ, ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ, ತನ್ನ ಯಜಮಾನನ ಸೇವಕರ ಸಂಗಡ ಮಲಗುವುದಕ್ಕೆ ಹೊರಟುಹೋದನು.
2SA 11:14 ಉದಯದಲ್ಲಿ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು, ಊರೀಯನ ಕೈಯಲ್ಲಿ ಕಳುಹಿಸಿದನು.
2SA 11:15 ಆ ಪತ್ರದಲ್ಲಿ, “ಊರೀಯನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ ಮುಂದೆ ನಿಲ್ಲಿಸಿ, ಅವನು ಗಾಯಗೊಂಡು ಸಾಯುವಂತೆ, ಅವನನ್ನು ಬಿಟ್ಟು ನೀವು ಹಿಂದಕ್ಕೆ ಸರಿದುಕೊಳ್ಳಿರಿ,” ಎಂದು ಬರೆದಿದ್ದನು.
2SA 11:16 ಹಾಗೆಯೇ ಯೋವಾಬನು ಆ ಪಟ್ಟಣವನ್ನು ಮುತ್ತಿಗೆ ಹಾಕುವಾಗ, ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳಿದುಕೊಂಡು, ಅಲ್ಲಿ ಊರೀಯನನ್ನು ನಿಲ್ಲಿಸಿದನು.
2SA 11:17 ಪಟ್ಟಣದ ಮನುಷ್ಯರು ಹೊರಟು ಯೋವಾಬನ ಸಂಗಡ ಯುದ್ಧಮಾಡುವಾಗ, ದಾವೀದನ ಸೇವಕರಾದವರಲ್ಲಿ ಕೆಲವರು ಸತ್ತರು. ಇದಲ್ಲದೆ ಹಿತ್ತಿಯನಾದ ಊರೀಯನೂ ಸತ್ತನು.
2SA 11:18 ಆಗ ಯೋವಾಬನು ಯುದ್ಧದ ವರ್ತಮಾನಗಳನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ದೂತನನ್ನು ಕಳುಹಿಸುವಾಗ ಅವನಿಗೆ ಹೇಳಿದ್ದೇನೆಂದರೆ:
2SA 11:19 “ನೀನು ಈ ಯುದ್ಧದ ವರ್ತಮಾನಗಳನ್ನೆಲ್ಲಾ ಅರಸನಿಗೆ ಹೇಳಿ ತೀರಿಸಿದ ತರುವಾಯ,
2SA 11:20 ಅರಸನಿಗೆ ಕೋಪ ಉರಿದು, ‘ನೀವು ಯುದ್ಧಮಾಡುವುದಕ್ಕೆ ಪಟ್ಟಣಕ್ಕೆ ಇಷ್ಟು ಸಮೀಪವಾಗಿ ಸೇರಿದ್ದೇನು?
2SA 11:21 ಅವರು ಗೋಡೆಯಿಂದ ಬಾಣಗಳನ್ನು ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ? ಯೆರುಬ್ಬೆಷೆತನ ಮಗ ಅಬೀಮೆಲೆಕನನ್ನು ಕೊಂದವರ‍್ಯಾರು? ತೆಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲಿನ ತುಂಡನ್ನು ಅವನ ಮೇಲೆ ಹಾಕಿದಾಗ, ಅವನು ಸತ್ತನಲ್ಲವೋ? ನೀವು ಗೋಡೆಗೆ ಅಷ್ಟು ಸಮೀಪ ಏಕೆ ಹೋದಿರಿ?’ ಎಂದು ಕೇಳಿದರೆ; ಆಗ ನೀನು ಅವನಿಗೆ, ನಿಮ್ಮ ಸೇವಕನಾದ ಊರೀಯನೆಂಬ ಹಿತ್ತಿಯನು ಸತ್ತನೆಂದು ಹೇಳು,” ಎಂದನು.
2SA 11:22 ಹಾಗೆಯೇ ಆ ದೂತನು ಹೋಗಿ ದಾವೀದನಿಗೆ ಯೋವಾಬನು ತನ್ನೊಂದಿಗೆ ಕಳುಹಿಸಿದ ವರ್ತಮಾನಗಳನ್ನೆಲ್ಲಾ ತಿಳಿಸಿದನು.
2SA 11:23 ಆ ದೂತನು ದಾವೀದನಿಗೆ, “ಆ ಮನುಷ್ಯರು ನಿಶ್ಚಯವಾಗಿ ನಮ್ಮ ಮೇಲೆ ಬಲಗೊಂಡು ಬಯಲಿನಲ್ಲಿ ನಮ್ಮ ಮೇಲೆ ಹೊರಟುಬಂದಾಗ, ನಾವು ಪಟ್ಟಣದ ಬಾಗಿಲವರೆಗೆ ಅವರ ಮೇಲೆ ಬಂದೆವು.
2SA 11:24 ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದ ಕಾರಣ, ಅರಸನ ಸೇವಕರಲ್ಲಿ ಕೆಲವರು ಸತ್ತರು. ಇದಲ್ಲದೆ ನಿನ್ನ ಸೇವಕನಾದ ಊರೀಯನೆಂಬ ಹಿತ್ತಿಯನು ಸತ್ತನು,” ಎಂದನು.
2SA 11:25 ಆಗ ದಾವೀದನು ಆ ದೂತನಿಗೆ, “ನೀನು ಯೋವಾಬನಿಗೆ, ‘ಇದು ನಿನ್ನನ್ನು ಕದಲಿಸದಿರಲಿ. ಖಡ್ಗವು ಇವನನ್ನಾದರೂ ಸರಿ, ಅವನನ್ನಾದರೂ ಸರಿ ತಿಂದುಬಿಡುವುದು. ನೀನು ಪಟ್ಟಣವನ್ನು ನಿರ್ಮೂಲ ಮಾಡುವ ಹಾಗೆ, ಅದರ ಮೇಲೆ ನಿನ್ನ ಯುದ್ಧವು ಹೆಚ್ಚು ಬಲವಾಗಿರಲಿ,’ ಎಂದು ಹೇಳಿ, ಅವನನ್ನು ಬಲಪಡಿಸು,” ಎಂದನು.
2SA 11:26 ತನ್ನ ಗಂಡನಾದ ಊರೀಯನು ಸತ್ತನೆಂದು ಊರೀಯನ ಹೆಂಡತಿಯು ಕೇಳಿದಾಗ, ಅವಳು ತನ್ನ ಗಂಡನಿಗೋಸ್ಕರ ಗೋಳಾಡಿದಳು.
2SA 11:27 ದುಃಖದ ದಿವಸಗಳು ತೀರಿದ ತರುವಾಯ, ದಾವೀದನು ಅವಳನ್ನು ತನ್ನ ಮನೆಗೆ ಕರೆಯಕಳುಹಿಸಿದನು. ಅವಳು ಅವನಿಗೆ ಹೆಂಡತಿಯಾಗಿ ಒಬ್ಬ ಮಗನನ್ನು ಹೆತ್ತಳು. ದಾವೀದನು ಮಾಡಿದ ಈ ಕಾರ್ಯವು ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದಾಗಿತ್ತು.
2SA 12:1 ಯೆಹೋವ ದೇವರು ದಾವೀದನ ಬಳಿಗೆ ನಾತಾನನನ್ನು ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಅವನಿಗೆ, “ಒಂದು ಊರಿನಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.
2SA 12:2 ಐಶ್ವರ್ಯವಂತನಿಗೆ ಕುರಿದನಗಳು ಬಹಳವಾಗಿದ್ದವು.
2SA 12:3 ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡ, ಅವನ ಮಕ್ಕಳ ಸಂಗಡ ಬೆಳೆದು, ಅವನ ಸ್ವಂತ ಆಹಾರ ತಿಂದು, ಅವನ ಪಾತ್ರೆಯಲ್ಲಿ ಕುಡಿದು, ಅವನ ಮಗ್ಗುಲಲ್ಲಿ ಮಲಗಿಕೊಂಡು, ಅವನಿಗೆ ಮಗಳ ಹಾಗಿತ್ತು.
2SA 12:4 “ಐಶ್ವರ್ಯವಂತನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ, ಐಶ್ವರ್ಯವಂತನು ಅತಿಥಿಗಾಗಿ ಅಡಿಗೆಯನ್ನು ಮಾಡಿಸುವುದಕ್ಕೆ ತನ್ನ ಕುರಿದನಗಳಲ್ಲಿ ಒಂದನ್ನೂ ತೆಗೆದುಕೊಳ್ಳಲು ಮನಸ್ಸಿಲ್ಲದೆ, ಆ ಬಡವನ ಕುರಿಯನ್ನು ತೆಗೆದುಕೊಂಡು, ತನ್ನ ಬಳಿಗೆ ಬಂದ ಮನುಷ್ಯನಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು,” ಎಂದನು.
2SA 12:5 ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ, “ಯೆಹೋವ ದೇವರ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.
2SA 12:6 ಅವನು ಕನಿಕರಪಡದೆ ಈ ಕಾರ್ಯವನ್ನು ಮಾಡಿದ್ದರಿಂದ, ಆ ಕುರಿಗೋಸ್ಕರವಾಗಿ ನಾಲ್ಕರಷ್ಟು ತಿರುಗಿ ಕೊಡಬೇಕು,” ಎಂದನು.
2SA 12:7 ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯನು! ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ, ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು;
2SA 12:8 ನಿನ್ನ ಯಜಮಾನನ ಮನೆಯನ್ನೂ, ನಿನ್ನ ಯಜಮಾನನ ಹೆಂಡತಿಯರನ್ನೂ ನಿನಗೆ ಕೊಟ್ಟು; ಇಸ್ರಾಯೇಲಿನ ಮನೆಯನ್ನೂ, ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು. ಇದು ಸಾಲದೆ ಇದ್ದರೆ, ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು.
2SA 12:9 ನೀನು ಯೆಹೋವ ದೇವರ ದೃಷ್ಟಿಗೆ ಈ ಕೆಟ್ಟ ಕಾರ್ಯವನ್ನು ಮಾಡುವಂತೆ ಅವರ ವಾಕ್ಯವನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಖಡ್ಗದಿಂದ ಹೊಡೆದು ಹಾಕಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯಾಗಿ ತೆಗೆದುಕೊಂಡೆ. ಇದಲ್ಲದೆ ಅವನನ್ನು ಅಮ್ಮೋನಿಯರ ಖಡ್ಗದಿಂದ ಕೊಂದು ಹಾಕಿಸಿದೆ.
2SA 12:10 ಈಗ ನೀನು ನನ್ನನ್ನು ತಿರಸ್ಕರಿಸಿ, ಹಿತ್ತಿಯನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡದ್ದರಿಂದ, ಖಡ್ಗವು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ತೊಲಗದು.
2SA 12:11 “ಯೆಹೋವ ದೇವರು ಹೇಳುವುದೇನೆಂದರೆ: ‘ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ, ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು, ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲು ಹೊತ್ತಿನಲ್ಲಿಯೇ ಅವರ ಸಂಗಡ ಮಲಗುವನು.
2SA 12:12 ಏಕೆಂದರೆ ನೀನು ಮರೆಯಲ್ಲಿ ಅದನ್ನು ಮಾಡಿದೆ. ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲರೆಲ್ಲರ ಮುಂದೆಯೂ, ಹಗಲು ಹೊತ್ತಿನಲ್ಲಿಯೂ ಮಾಡುವೆನು,’ ” ಎಂದನು.
2SA 12:13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದನು. ನಾತಾನನು ದಾವೀದನಿಗೆ, “ನೀನು ಸಾಯದ ಹಾಗೆ ಯೆಹೋವ ದೇವರು ನಿನ್ನ ಪಾಪವನ್ನು ಪರಿಹರಿಸಿದರು.
2SA 12:14 ಹೇಗಿದ್ದರೂ ಈ ಕಾರ್ಯದಿಂದ ನೀನು ಯೆಹೋವ ದೇವರ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ, ನಿನಗೆ ಹುಟ್ಟಿದ ಮಗುವು ಖಂಡಿತವಾಗಿ ಸಾಯುವುದು,” ಎಂದನು.
2SA 12:15 ನಂತರ ನಾತಾನನು ತನ್ನ ಮನೆಗೆ ಹೋದನು. ಯೆಹೋವ ದೇವರು, ಊರೀಯನ ಹೆಂಡತಿಯು ದಾವೀದನಿಗೆ ಹೆತ್ತ ಕೂಸನ್ನು ಬಾಧಿಸಲು, ಅದು ಬಹಳ ಅಸ್ವಸ್ಥವಾಯಿತು.
2SA 12:16 ದಾವೀದನು ಕೂಸಿಗೋಸ್ಕರ ದೇವರನ್ನು ಬೇಡಿಕೊಂಡನು. ಇದಲ್ಲದೆ ದಾವೀದನು ಉಪವಾಸ ಮಾಡಿ, ಒಳಗಿನ ಕೋಣೆಯಲ್ಲಿ ನೆಲದ ಮೇಲೆಯೇ ರಾತ್ರಿ ಕಳೆಯುತ್ತಿದ್ದನು.
2SA 12:17 ಅವನನ್ನು ಎಬ್ಬಿಸುವುದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು. ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಇದ್ದನು.
2SA 12:18 ಮಗುವು ಏಳನೆಯ ದಿವಸ ಸತ್ತು ಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿಸುವುದಕ್ಕೆ ಭಯಪಟ್ಟರು. ಏಕೆಂದರೆ, “ಮಗುವು ಇನ್ನೂ ಬದುಕಿರುವಾಗ, ನಾವು ಅವನ ಸಂಗಡ ಮಾತನಾಡಿದಾಗ, ಅವನು ನಮ್ಮ ಮಾತನ್ನು ಕೇಳದೆ ಹೋದನು. ಈಗ ಮಗುವು ಸತ್ತು ಹೋಯಿತೆಂದು ನಾವು ಅವನಿಗೆ ಹೇಳಿದರೆ, ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುವನೋ?” ಎಂದುಕೊಂಡರು.
2SA 12:19 ಆದರೆ ದಾವೀದನು ತನ್ನ ಸೇವಕರು ಪಿಸುಗುಟ್ಟುವುದನ್ನು ಕಂಡು, ಮಗು ಸತ್ತು ಹೋಯಿತೆಂದು ಗ್ರಹಿಸಿಕೊಂಡನು. ದಾವೀದನು ತನ್ನ ಸೇವಕರಿಗೆ, “ಮಗುವು ಸತ್ತು ಹೋಯಿತೋ?” ಎಂದನು. ಅವರು, “ಸತ್ತು ಹೋಯಿತು,” ಎಂದರು.
2SA 12:20 ಆಗ ದಾವೀದನು ನೆಲದಿಂದ ಎದ್ದು ಸ್ನಾನಮಾಡಿ, ತೈಲವನ್ನು ಹಚ್ಚಿಕೊಂಡವನಾಗಿ, ಬದಲು ವಸ್ತ್ರಗಳನ್ನು ಧರಿಸಿಕೊಂಡು, ಯೆಹೋವ ದೇವರ ಮನೆಗೆ ಹೋಗಿ, ಅವರನ್ನು ಆರಾಧಿಸಿ ತನ್ನ ಮನೆಗೆ ಬಂದನು. ಅವನ ಕೋರಿಕೆಯ ಮೇರೆಗೆ ಅವರು ಅವನಿಗೆ ಆಹಾರವನ್ನು ಬಡಿಸಿದರು ಮತ್ತು ಅವನು ತಿನ್ನುತ್ತಿದ್ದನು.
2SA 12:21 ಅವನ ಸೇವಕರು ಅವನಿಗೆ, “ಇದು ಏನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ, ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದೆ. ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದೆ,” ಎಂದರು.
2SA 12:22 ಅದಕ್ಕವನು, “ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಯೆಹೋವ ದೇವರು ನನಗೆ ದಯಮಾಡುವರೋ ಎಂದು ಉಪವಾಸ ಮಾಡಿ ಅತ್ತೆನು.
2SA 12:23 ಆದರೆ ಈಗ ಸತ್ತಿದೆಯಲ್ಲಾ. ನಾನು ಉಪವಾಸ ಮಾಡುವುದು ಏಕೆ? ನಾನು ಅದನ್ನು ತಿರುಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು. ಆದರೆ ಅದು ನನ್ನ ಬಳಿಗೆ ತಿರುಗಿ ಬರುವುದಿಲ್ಲ,” ಎಂದನು.
2SA 12:24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಳನ್ನು ಆಧರಿಸಿ, ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು. ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಯೆಹೋವ ದೇವರು ಅವನನ್ನು ಪ್ರೀತಿ ಮಾಡಿದರು.
2SA 12:25 ಪ್ರವಾದಿಯಾದ ನಾತಾನನ ಮುಖಾಂತರ ಯೆಹೋವ ದೇವರ ನಿಮಿತ್ತ ಅವನಿಗೆ ಯೆದೀದ್ಯ ಎಂದು ಹೆಸರಿಟ್ಟನು.
2SA 12:26 ಯೋವಾಬನು ಅಮ್ಮೋನಿಯರ ರಬ್ಬತಿನ ಮೇಲೆ ಯುದ್ಧಮಾಡಿ, ಅರಮನೆ ಇದ್ದ ಪಟ್ಟಣವನ್ನು ವಶಪಡಿಸಿಕೊಂಡನು.
2SA 12:27 ಯೋವಾಬನು ದಾವೀದನಿಗೆ, “ನಾನು ರಬ್ಬಕ್ಕೆ ವಿರೋಧವಾಗಿ ಯುದ್ಧಮಾಡಿ, ನೀರು ಪೂರೈಕೆಯ ಭಾಗವನ್ನು ಸ್ವಾಧೀನ ಮಾಡಿಕೊಂಡಿದ್ದೇನೆ.
2SA 12:28 ಈಗ ನಾನು ಪಟ್ಟಣವನ್ನು ಹಿಡಿದು, ಅದು ನನ್ನ ಹೆಸರಿಗೆ ಕೀರ್ತಿ ಬಾರದ ಹಾಗೆ ನೀನು ಜನರನ್ನು ಕೂಡಿಸಿಕೊಂಡು ಬಂದು, ಪಟ್ಟಣವನ್ನು ಮುತ್ತಿಗೆ ಹಾಕಿ ಹಿಡಿ,” ಎಂದು ಹೇಳಿ ದೂತರನ್ನು ಕಳುಹಿಸಿದನು.
2SA 12:29 ಹಾಗೆಯೇ ದಾವೀದನು ಜನರೆಲ್ಲರನ್ನು ಕೂಡಿಸಿಕೊಂಡು ರಬ್ಬಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿ ಅದನ್ನು ವಶಮಾಡಿಕೊಂಡನು.
2SA 12:30 ಇದಲ್ಲದೆ ದಾವೀದನು ಅಮ್ಮೋನಿಯರ ಅರಸನ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು.
2SA 12:31 ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟಿಗೆಗಳನ್ನು ಸುಡುವುದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
2SA 13:1 ಕಾಲಾಂತರದಲ್ಲಿ ದಾವೀದನ ಮಗ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸುಂದರಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗ ಅಮ್ನೋನನು ಪ್ರೀತಿಮಾಡಿದನು.
2SA 13:2 ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ಸಂಕಟಪಟ್ಟು ಅಸ್ವಸ್ಥನಾದನು. ಅವಳು ಕನ್ಯೆಯಾಗಿದ್ದಳು. ಆದ್ದರಿಂದ ಅವಳನ್ನು ಏನಾದರೂ ಮಾಡುವುದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು.
2SA 13:3 ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮೆಯನ ಮಗ ಯೊನಾದಾಬನೆಂಬ ಹೆಸರುಳ್ಳ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಬಹು ಕುಯುಕ್ತಿಯುಳ್ಳವನಾಗಿದ್ದನು.
2SA 13:4 ಯೋನಾದಾಬನು ಅಮ್ನೋನನಿಗೆ, “ಅರಸನ ಮಗನಾದ ನೀನು ದಿನದಿನಕ್ಕೆ ಏಕೆ ಕ್ಷೀಣವಾಗಿ ಹೋಗುತ್ತೀ? ನನಗೆ ತಿಳಿಸುವುದಿಲ್ಲವೋ?” ಎಂದನು. ಅದಕ್ಕೆ ಅಮ್ನೋನನು ಅವನಿಗೆ, “ನಾನು ನನ್ನ ಸಹೋದರನಾಗಿರುವ ಅಬ್ಷಾಲೋಮನ ಸಹೋದರಿ ತಾಮಾರಳನ್ನು ಪ್ರೀತಿಮಾಡುತ್ತಿದ್ದೇನೆ,” ಎಂದನು.
2SA 13:5 ಆಗ ಯೋನಾದಾಬನು ಅವನಿಗೆ, “ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವುದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ, ‘ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು. ನಾನು ಅವಳ ಕೈಯಿಂದ ಉಣ್ಣುವ ಹಾಗೆ, ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ, ನನಗೆ ಆಹಾರ ಕೊಡಲಿ,’ ಎಂದು ಹೇಳು,” ಎಂದನು.
2SA 13:6 ಅಮ್ನೋನನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿಕೊಂಡನು. ಅರಸನು ತನ್ನನ್ನು ನೋಡುವುದಕ್ಕೆ ಬಂದಾಗ ಅಮ್ನೋನನು ಅರಸನಿಗೆ, “ನೀವು ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣು ಮುಂದೆ ಎರಡು ಭಕ್ಷ್ಯಗಳನ್ನು ಮಾಡುವುದಕ್ಕೆ ಬರಲಿ,” ಎಂದನು.
2SA 13:7 ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ, “ನೀನು ನಿನ್ನ ಸಹೋದರ ಅಮ್ನೋನನ ಮನೆಗೆ ಹೋಗಿ, ಅವನಿಗೆ ಅಡಿಗೆಯನ್ನು ಮಾಡಿ ಇಡು,” ಎಂದನು.
2SA 13:8 ಹಾಗೆಯೇ ತಾಮಾರಳು ತನ್ನ ಸಹೋದರ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದು ಕಲಸಿ, ಅವನ ಕಣ್ಣು ಮುಂದೆ ನಾದಿ, ಭಕ್ಷ್ಯಗಳನ್ನು ಮಾಡಿ,
2SA 13:9 ಪಾತ್ರೆ ತೆಗೆದುಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು, “ನಾನು ಉಣ್ಣುವುದಿಲ್ಲ,” ಎಂದು ಹೇಳಿ, “ನನ್ನ ಬಳಿಯಿಂದ ಎಲ್ಲಾ ಮನುಷ್ಯರನ್ನು ಕಳುಹಿಸಿಬಿಡಿರಿ,” ಎಂದನು. ಹಾಗೆಯೇ ಎಲ್ಲರು ಅವನನ್ನು ಬಿಟ್ಟುಹೋದರು.
2SA 13:10 ಆಗ ಅಮ್ನೋನನು, “ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿಯೊಳಗೆ ತನ್ನ ಸಹೋದರನಾದ ಅಮ್ಮೋನನ ಬಳಿಗೆ ತೆಗೆದುಕೊಂಡು ಬಂದಳು.
2SA 13:11 ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ, ಅವನು ಅವಳನ್ನು ಹಿಡಿದು ಅವಳಿಗೆ, “ನನ್ನ ಸಹೋದರಿಯೇ, ನನ್ನ ಸಂಗಡ ಮಲಗು ಬಾ,” ಎಂದನು.
2SA 13:12 ಅದಕ್ಕವಳು, “ನನ್ನ ಸಹೋದರನೇ, ಬೇಡ. ನನ್ನನ್ನು ಒತ್ತಾಯ ಮಾಡಬೇಡ. ಏಕೆಂದರೆ ಇಸ್ರಾಯೇಲಿನಲ್ಲಿ ಇಂಥ ಕಾರ್ಯ ಮಾಡಕೂಡದು. ಇಂಥ ದುಷ್ಟತನದ ಕೆಲಸ ಮಾಡಬೇಡ.
2SA 13:13 ಈ ಅವಮಾನವನ್ನು ಮರೆಮಾಡುವುದು ಹೇಗೆ? ನೀನು ಇಸ್ರಾಯೇಲಿನಲ್ಲಿ ದುಷ್ಟ ಮೂರ್ಖರೊಳಗೆ ಒಬ್ಬನಾಗಿ ಇರುವೆ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು. ಏಕೆಂದರೆ ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ,” ಎಂದಳು.
2SA 13:14 ಆದರೆ ಅವನು ಅವಳ ಮಾತನ್ನು ಕೇಳಲಿಲ್ಲ. ಅಮ್ನೋನನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಅವನು ಬಲಾತ್ಕಾರದಿಂದ ಅವಳ ಮೇಲೆ ಅತ್ಯಾಚಾರಮಾಡಿದನು.
2SA 13:15 ಅನಂತರ ಅಮ್ನೋನನು ಅವಳನ್ನು ಅತ್ಯಂತ ಹಗೆ ಮಾಡಿದನು. ಅವಳನ್ನು ಹಗೆ ಮಾಡುವ ಮೊದಲು ಮಾಡಿದ ಪ್ರೀತಿಗಿಂತ ಅದು ಅಧಿಕವಾಗಿತ್ತು. ಆದ್ದರಿಂದ, ಅಮ್ನೋನನು ಅವಳಿಗೆ, “ಎದ್ದು ಹೋಗು,” ಎಂದನು.
2SA 13:16 ಆಗ ಅವಳು ಅವನಿಗೆ, “ಬೇಡ! ನನಗೆ ಮಾಡಿದ ಆ ಕೆಟ್ಟತನಕ್ಕಿಂತ, ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಅಧಿಕ ಅನ್ಯಾಯವಾಗಿದೆ,” ಎಂದಳು. ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ
2SA 13:17 ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಸೇವಕನನ್ನು ಕರೆದು, “ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ, ಅವಳ ಹಿಂದೆ ಬಾಗಿಲು ಮುಚ್ಚಿ ಭದ್ರಪಡಿಸು,” ಎಂದನು.
2SA 13:18 ಅವಳು ವಿವಿಧ ಬಣ್ಣದ ವಸ್ತ್ರಗಳನ್ನು ಧರಿಸಿದ್ದಳು. ಏಕೆಂದರೆ ಅರಸನ ಪುತ್ರಿಯರಾದ ಕನ್ಯೆಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಅವನ ಸೇವಕನು ಅವಳನ್ನು ಹೊರಗೆ ತಂದು, ಅವಳ ಹಿಂದೆ ಬಾಗಿಲು ಮುಚ್ಚಿ ಬೀಗ ಹಾಕಿದನು.
2SA 13:19 ಆಗ ತಾಮಾರಳು ತನ್ನ ತಲೆಯ ಮೇಲೆ ಬೂದಿಯನ್ನು ಹಾಕಿಕೊಂಡು, ತಾನು ಧರಿಸಿಕೊಂಡಿದ್ದ ವಿವಿಧ ಬಣ್ಣದ ವಸ್ತ್ರವನ್ನು ಹರಿದು, ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಗಟ್ಟಿಯಾಗಿ ಅಳುತ್ತಾ ಹೋದಳು.
2SA 13:20 ಆಗ ಅವಳ ಸಹೋದರ ಅಬ್ಷಾಲೋಮನು ಅವಳಿಗೆ, “ನಿನ್ನ ಸಹೋದರ ಅಮ್ನೋನನು ನಿನ್ನ ಮಾನಭಂಗ ಮಾಡಿದನೋ? ನನ್ನ ಸಹೋದರಿ, ಈಗ ಸುಮ್ಮನಿರು. ಅವನು ನಿನ್ನ ಸಹೋದರನು. ಈ ಕಾರ್ಯವನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬೇಡ,” ಎಂದನು. ಹಾಗೆಯೇ ತಾಮಾರಳು ತನ್ನ ಸಹೋದರ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿ ವಾಸಿಸಿದಳು.
2SA 13:21 ಅರಸನಾದ ದಾವೀದನು ಇವುಗಳನ್ನೆಲ್ಲಾ ಕೇಳಿದಾಗ ಬಹು ಕೋಪಗೊಂಡನು.
2SA 13:22 ಆದರೆ ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೆಯದಾದರೂ, ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಏಕೆಂದರೆ ಅವನು ತನ್ನ ಸಹೋದರಿಯಾದ ತಾಮಾರಳನ್ನು ಅವಮಾನ ಮಾಡಿದ್ದರಿಂದ, ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.
2SA 13:23 ಎರಡು ವರ್ಷ ಪೂರ್ಣ ಮುಗಿದ ತರುವಾಯ, ಅಬ್ಷಾಲೋಮನಿಗೆ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವಾಗ, ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು.
2SA 13:24 ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ, “ಇಗೋ, ಈಗ ನಿನ್ನ ಸೇವಕನ ಬಳಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ, ತನ್ನ ಸೇವಕರೂ ನಿನ್ನ ಸೇವಕನ ಬಳಿಗೆ ಬರಬಹುದೋ?” ಎಂದನು.
2SA 13:25 ಅದಕ್ಕೆ ಅರಸನು ಅಬ್ಷಾಲೋಮನಿಗೆ, “ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವುದಿಲ್ಲ,” ಎಂದನು. ಅವನು ರಾಜನನ್ನು ಬಲವಂತ ಮಾಡಿದನು. ಆದರೆ ಅರಸನು ಹೋಗಲು ಒಪ್ಪದೆ, ಅಬ್ಷಾಲೋಮನನ್ನು ಆಶೀರ್ವದಿಸಿ ಕಳುಹಿಸಿದನು.
2SA 13:26 ಆಗ ಅಬ್ಷಾಲೋಮನು, “ಹಾಗಾದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ,” ಎಂದನು. ಅರಸನು ಅವನಿಗೆ, “ಏಕೆ ಅವನು ನಿಮ್ಮ ಸಂಗಡ ಬರಬೇಕು?” ಎಂದನು.
2SA 13:27 ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅಮ್ನೋನನನ್ನೂ, ಅರಸನ ಸಮಸ್ತ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು.
2SA 13:28 ಅಬ್ಷಾಲೋಮನು ತನ್ನ ಸೇವಕರಿಗೆ, “ನೀವು ನೋಡಿಕೊಳ್ಳಿರಿ. ಅಮ್ನೋನನ ಮನಸ್ಸು ದ್ರಾಕ್ಷಾರಸದಿಂದ ಅಮಲೇರಿದಾಗ ನಾನು ನಿಮಗೆ ಅವನನ್ನು ಹೊಡೆಯಿರಿ ಎಂದು ಹೇಳಿದಕೂಡಲೆ, ಅವನನ್ನು ಕೊಂದುಹಾಕಿರಿ, ಭಯಪಡಬೇಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ, ಧೈರ್ಯವಾಗಿರಿ, ಶೂರರಾಗಿರಿ,” ಎಂದು ಹೇಳಿದನು.
2SA 13:29 ಅಬ್ಷಾಲೋಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆಲ್ಲರೂ ಎದ್ದು, ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
2SA 13:30 ಅವರು ದಾರಿಯಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಕೊಂದುಹಾಕಿದ್ದಾನೆ, ಒಬ್ಬನಾದರೂ ಉಳಿಯಲಿಲ್ಲ,” ಎಂಬ ವರ್ತಮಾನ ಬಂತು.
2SA 13:31 ಆಗ ಅರಸನು ಎದ್ದು, ತನ್ನ ವಸ್ತ್ರಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಅವನ ಸುತ್ತಲು ನಿಂತರು.
2SA 13:32 ಆದರೆ ದಾವೀದನ ಸಹೋದರನಾದ ಶಿಮೆಯನ ಮಗನಾಗಿರುವ ಯೋನಾದಾಬನು ದಾವೀದನಿಗೆ, “ಒಡೆಯನೇ, ನನ್ನ ಅರಸನ ಪುತ್ರರೆಲ್ಲರನ್ನು ಕೊಂದು ಹಾಕಿದ್ದಾರೆಂದು ನೆನಸಬೇಡ. ಅಮ್ನೋನನು ಮಾತ್ರವೇ ಸತ್ತನು. ಏಕೆಂದರೆ ಅಬ್ಷಾಲೋಮನು ತನ್ನ ಸಹೋದರಿಯಾದ ತಾಮಾರಳನ್ನು ಅಮ್ಮೋನನು ಬಲಾತ್ಕಾರ ಮಾಡಿದ ದಿನ ಮೊದಲುಗೊಂಡು ಈ ಕಾರ್ಯವನ್ನು ಮಾಡುವುದಕ್ಕೆ ತನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡಿದ್ದನು.
2SA 13:33 ಆದ್ದರಿಂದ ಅರಸನಾದ ನನ್ನ ಒಡೆಯನೇ, ಅರಸನ ಮಕ್ಕಳೆಲ್ಲರು ಸತ್ತರೆಂಬುವ ಮಾತನ್ನು ನಿನ್ನ ಮನಸ್ಸಿನಲ್ಲಿಡಬೇಡ. ಏಕೆಂದರೆ ಅಮ್ನೋನನು ಒಬ್ಬನೇ ಸತ್ತನು,” ಎಂದನು.
2SA 13:34 ಅಬ್ಷಾಲೋಮನು ಓಡಿಹೋದನು. ಆಗ ಕಾವಲುಗಾರನು ಕಣ್ಣೆತ್ತಿ ನೋಡುವಾಗ, ಅವನ ಹಿಂಭಾಗದಲ್ಲಿ ಬೆಟ್ಟದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು. ಕಾವಲುಗಾರನು ಹೋಗಿ ಅರಸನಿಗೆ, “ನಾನು ಬೆಟ್ಟದ ಬದಿಯಲ್ಲಿರುವ ಹೋರೋನೈಮ್ ದಿಕ್ಕಿನಲ್ಲಿ ಮನುಷ್ಯರನ್ನು ಕಂಡೆನು,” ಎಂದು ಹೇಳಿದನು.
2SA 13:35 ಆಗ ಯೋನಾದಾಬನು ಅರಸನಿಗೆ, “ಅರಸನ ಪುತ್ರರು ಬರುತ್ತಿದ್ದಾರೆ. ನಿಮ್ಮ ಸೇವಕನು ಹೇಳಿದ ಹಾಗೆಯೇ ಆಯಿತು,” ಎಂದನು.
2SA 13:36 ಅವನು ಮಾತನಾಡಿ ತೀರಿಸಿದಾಗ, ಅರಸನ ಪುತ್ರರು ಬಂದು ಸ್ವರವೆತ್ತಿ ಅತ್ತರು. ಅರಸನೂ, ಅವನ ಸಮಸ್ತ ಸೇವಕರೂ ಮಹಾಧ್ವನಿಯಿಂದ ಅತ್ತರು.
2SA 13:37 ಆದರೆ ಅಬ್ಷಾಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅಮ್ಮೀಹೂದನ ಮಗ ತಲ್ಮಾಯನ ಬಳಿಗೆ ಹೋದನು. ದಾವೀದನು ಬಹಳ ದಿನಗಳವರೆಗೆ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.
2SA 13:38 ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿಹೋಗಿ ಅಲ್ಲಿ ಮೂರು ವರ್ಷ ಇದ್ದನು.
2SA 13:39 ಆದರೆ ಅರಸನಾದ ದಾವೀದನು ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ಅಬ್ಷಾಲೋಮನ ಬಳಿಗೆ ಹೋಗಲು ಬಯಸಿದನು.
2SA 14:1 ಅರಸನಾದ ದಾವೀದನ ಹೃದಯವು ಅಬ್ಷಾಲೋಮನ ಕಡೆಗೆ ಇರುವುದನ್ನು ಚೆರೂಯಳ ಮಗ ಯೋವಾಬನಿಗೆ ತಿಳಿಯಿತು.
2SA 14:2 ಆದುದರಿಂದ ಯೋವಾಬನು ತೆಕೋವಗೆ ಮನುಷ್ಯರನ್ನು ಕಳುಹಿಸಿ, ಅಲ್ಲಿಂದ ಒಬ್ಬ ಜ್ಞಾನವುಳ್ಳ ಸ್ತ್ರೀಯನ್ನು ಕರಿಸಿ ಅವಳಿಗೆ, “ನೀನು ಗೋಳಾಡುವವಳ ಹಾಗೆ ನಟಿಸಿ, ದುಃಖ ವಸ್ತ್ರಗಳನ್ನು ಧರಿಸಿಕೋ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳದೆ, ಸತ್ತವನಿಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು,
2SA 14:3 ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು,” ಎಂದು ಹೇಳಿ ಯೋವಾಬನು ಅವಳಿಗೆ ಕಲಿಸಿಕೊಟ್ಟನು.
2SA 14:4 ಹಾಗೆಯೇ ತೆಕೋವದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿದಳು. ಮೋರೆ ಕೆಳಗಾಗಿ ನೆಲಕ್ಕೆ ಬಿದ್ದು ವಂದಿಸಿ, “ಅರಸನೇ, ಸಹಾಯಮಾಡು,” ಎಂದಳು.
2SA 14:5 ಅರಸನು ಅವಳಿಗೆ, “ನಿನಗೆ ಏನಾಯಿತು?” ಎಂದನು. ಅದಕ್ಕವಳು, “ನಾನು ನಿಶ್ಚಯವಾಗಿ ವಿಧವೆಯಾದ ಸ್ತ್ರೀಯು. ನನ್ನ ಗಂಡನು ಸತ್ತುಹೋಗಿದ್ದಾನೆ.
2SA 14:6 ಆದರೆ ನಿನ್ನ ಸೇವಕಳಿಗೆ ಇಬ್ಬರು ಪುತ್ರರಿದ್ದರು. ಅವರಿಬ್ಬರೂ ಹೊಲದಲ್ಲಿ ಹೊಡೆದಾಡಿದರು. ಅವರನ್ನು ಬಿಡಿಸುವವರು ಯಾರೂ ಇಲ್ಲದ್ದರಿಂದ, ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದುಹಾಕಿದನು.
2SA 14:7 ಆದ್ದರಿಂದ ಕುಟುಂಬದವರೆಲ್ಲರು ನಿನ್ನ ಸೇವಕಿಯ ವಿರೋಧವಾಗಿ ಎದ್ದು, ‘ತನ್ನ ಸಹೋದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ಅವನನ್ನು ಒಪ್ಪಿಸಿಕೊಡು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಎನ್ನುತ್ತಾರೆ. ಹೀಗೆಯೇ ಅವರು ನನಗೆ ಉಳಿದಿರುವ ಒಂದು ಕೆಂಡವನ್ನು ಆರಿಸಿ, ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಅಳಿಸಬೇಕೆಂದಿದ್ದಾರೆ,” ಎಂದಳು.
2SA 14:8 ಆಗ ಅರಸನು ಆ ಸ್ತ್ರೀಗೆ, “ನೀನು ನಿನ್ನ ಮನೆಗೆ ಹೋಗು; ನಾನು ನಿನ್ನ ವಿಷಯವಾಗಿ ಆಜ್ಞಾಪಿಸುತ್ತೇನೆ,” ಎಂದನು.
2SA 14:9 ಆದರೆ ತೆಕೋವದ ಸ್ತ್ರೀಯು ಅರಸನಿಗೆ, “ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ, ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಅರಸನೂ, ಅವನ ಸಿಂಹಾಸನವೂ ನಿರಪರಾಧವಾಗಿರಲಿ,” ಎಂದಳು.
2SA 14:10 ಅದಕ್ಕೆ ಅರಸನು, “ಯಾವನಾದರೂ ನಿನಗೆ ಏನಾದರೂ ಹೇಳಿದರೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ಇನ್ನು ನಿನ್ನನ್ನು ಎಂದಿಗೂ ಮುಟ್ಟದೆ ಇರುವನು,” ಎಂದನು.
2SA 14:11 ಆಕೆ, “ಹಾಗಾದರೆ ನನ್ನ ಮಗನು ಸಾಯದಂತೆ ನಾಶನಕ್ಕೆ ನಾಶನವನ್ನು ಕೂಡಿಸುವ ಸೇಡುತೀರಿಸುವವರನ್ನು ತಡೆಯಲು ಅರಸನು ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಲಿ,” ಎಂದಳು. ಅದಕ್ಕೆ ದಾವೀದನು, “ಯೆಹೋವ ದೇವರ ಜೀವದಾಣೆ, ನಿನ್ನ ಮಗನ ತಲೆಯ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ,” ಎಂದನು.
2SA 14:12 ಆಗ ಆ ಸ್ತ್ರೀಯು, “ಅರಸನಾದ ನನ್ನ ಒಡೆಯನ ಸಂಗಡ ನಿನ್ನ ದಾಸಿಯು ಒಂದು ಮಾತನ್ನು ಹೇಳುವುದಕ್ಕೆ ಅಪ್ಪಣೆ ಆಗಬೇಕು,” ಎಂದಳು. ಆಗ ಅವನು, “ಹೇಳು,” ಎಂದನು.
2SA 14:13 ಆಗ ಆ ಸ್ತ್ರೀಯು, “ಹಾಗಾದರೆ, ಏಕೆ ದೇವಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನಡೆಸುವುದೇನು? ಅರಸನು ತಾನು ಬಹಿಷ್ಕರಿಸಿದ ಮಗನನ್ನು ತಿರುಗಿ ಸೇರಿಸಿಕೊಳ್ಳದೆ ಹೋದದ್ದರಿಂದ, ತನ್ನನ್ನು ತಾನೇ ಅಪರಾಧಿ ಎಂದು ತೀರ್ಪುಮಾಡಿದ ಹಾಗಾಯಿತು.
2SA 14:14 ನಾವೆಲ್ಲರೂ ಸಾಯುವುದು ಅವಶ್ಯವೇ. ನಾವು ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಹಾಗೆ ಯಾರ ಪ್ರಾಣವನ್ನೂ ತೆಗೆಯ ಬಯಸುವವರಲ್ಲ. ಅದಕ್ಕೆ ಬದಲಾಗಿ ಬಹಿಷ್ಕಾರವಾದವವರನ್ನು ತಿರುಗಿ ತಮ್ಮ ಬಳಿಗೆ ಬರುವಂತೆ ದೇವರು ಸದುಪಾಯಗಳನ್ನು ಕಲ್ಪಿಸುವವರಾಗಿದ್ದಾರೆ.
2SA 14:15 “ಆದ್ದರಿಂದ ಈಗ ಜನರು ನನ್ನನ್ನು ಭಯಪಡಿಸಿದ್ದರಿಂದ, ಈ ಕಾರ್ಯವನ್ನು ಕುರಿತು ನನ್ನ ಒಡೆಯನಾದ ಅರಸನ ಸಂಗಡ ನಿನ್ನ ದಾಸಿಯಾದ ನಾನು ಮಾತಾನಾಡುವುದಕ್ಕೆ ಬಂದೆನು. ‘ನಿನ್ನ ದಾಸಿಯಾದ ನಾನು ಅರಸನ ಬಳಿಗೆ ಹೋಗುತ್ತೇನೆ. ಒಂದು ವೇಳೆ ಅರಸನು ತನ್ನ ದಾಸಿಯ ಕಾರ್ಯವನ್ನು ನೆರವೇರಿಸಿಯಾನು.
2SA 14:16 ಏಕೆಂದರೆ ಅರಸನು ಕೇಳಿ ನನ್ನನ್ನೂ, ನನ್ನ ಮಗನನ್ನೂ ದೇವರ ಬಾಧ್ಯತೆಯಲ್ಲಿಂದ ನಾಶಮಾಡಬೇಕೆಂದಿರುವ ಮನುಷ್ಯರ ಕೈಯಿಂದ ದಾಸಿಯನ್ನು ತಪ್ಪಿಸುವನು,’ ಎಂದುಕೊಂಡೆನು.
2SA 14:17 “ನಿನ್ನ ದಾಸಿಯು, ‘ಅರಸನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ. ಏಕೆಂದರೆ ಒಳ್ಳೆಯದನ್ನೂ, ಕೆಟ್ಟದ್ದನ್ನೂ ಕೇಳುವುದಕ್ಕೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ ಮತ್ತು ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರಲಿ,’ ಎಂದಳು.”
2SA 14:18 ಆಗ ಅರಸನು ಉತ್ತರವಾಗಿ ಆ ಸ್ತ್ರೀಗೆ, “ನಾನು ನಿನ್ನಿಂದ ಕೇಳುವುದನ್ನು ನನಗೆ ಮರೆಮಾಡಬೇಡ,” ಎಂದನು. ಅದಕ್ಕವಳು, “ಅರಸನಾದ ನನ್ನ ಒಡೆಯನು ಮಾತನಾಡಲಿ,” ಎಂದಳು.
2SA 14:19 ಅದಕ್ಕೆ ಅರಸನು, “ಇದೆಲ್ಲಾದರಲ್ಲಿ ಯೋವಾಬನ ಕೈ ನಿನ್ನ ಸಂಗಡ ಉಂಟಲ್ಲವೋ?” ಎಂದು ಕೇಳಿದನು. ಆ ಸ್ತ್ರೀಯು ಉತ್ತರವಾಗಿ, “ನಿನ್ನ ಜೀವದಾಣೆ, ಅರಸನಾದ ನನ್ನ ಒಡೆಯನೇ, ನೀನು ಒಂದು ಮಾತು ಹೇಳಿದರೆ, ನಾವು ಅದನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ; ಏಕೆಂದರೆ ನಿನ್ನ ಸೇವಕನಾದ ಯೋವಾಬನು ನನಗೆ ಆಜ್ಞಾಪಿಸಿ, ಈ ಎಲ್ಲಾ ಮಾತುಗಳನ್ನು ನಿನ್ನ ಸೇವಕಳಿಗೆ ಹೇಳಿಕೊಟ್ಟನು.
2SA 14:20 ಈ ಮಾತನ್ನು ರೂಪಕವಾಗಿ ತಿರುಗಿಸುವುದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿಯಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ದೇವದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ,” ಎಂದಳು.
2SA 14:21 ಆದ್ದರಿಂದ ಅರಸನು ಯೋವಾಬನಿಗೆ, “ನಾನು ಈ ಕಾರ್ಯವನ್ನು ಮಾಡಿದೆನು. ನೀನು ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ತಿರುಗಿ ಕರೆದುಕೊಂಡು ಬಾ,” ಎಂದನು.
2SA 14:22 ಆಗ ಯೋವಾಬನು ಮೋರೆ ಕೆಳಗಾಗಿ ನೆಲದ ಮೇಲೆ ಬಿದ್ದು ವಂದಿಸಿದನು. ಯೋವಾಬನು, “ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ, ನನ್ನ ಒಡೆಯನಾದ ಅರಸನೇ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂಬುದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು,” ಎಂದನು.
2SA 14:23 ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು.
2SA 14:24 ಆದರೆ ಅರಸನು, “ಅವನು ತನ್ನ ಮನೆಗೆ ತಿರುಗಿ ಹೋಗಲಿ. ಅವನು ನನ್ನ ಮುಖವನ್ನು ನೋಡಬಾರದು,” ಎಂದನು. ಆದ್ದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿಹೋದನು.
2SA 14:25 ಸಮಸ್ತ ಇಸ್ರಾಯೇಲಿನಲ್ಲಿ ಬಹಳ ಹೊಗಳಿಕೆಗೆ ಪಾತ್ರನಾದ ಅಬ್ಷಾಲೋಮನಂಥ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.
2SA 14:26 ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರ್ಷದ ಕೊನೆಯಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ರಾಜರ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗಿರುತ್ತಿತ್ತು.
2SA 14:27 ಅಬ್ಷಾಲೋಮನಿಗೆ ಮೂರು ಮಂದಿ ಪುತ್ರರೂ, ತಾಮಾರ್ ಎಂಬ ಒಬ್ಬ ಪುತ್ರಿಯೂ ಹುಟ್ಟಿದರು. ತಾಮಾರಳು ಸೌಂದರ್ಯವುಳ್ಳ ಸ್ತ್ರೀ ಆಗಿದ್ದಳು.
2SA 14:28 ಅಬ್ಷಾಲೋಮನು ಅರಸನ ಮುಖವನ್ನು ಕಾಣದೆ, ಪೂರ್ಣವಾಗಿ ಎರಡು ವರ್ಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.
2SA 14:29 ಆದ್ದರಿಂದ ಅಬ್ಷಾಲೋಮನು ಅರಸನ ಬಳಿಗೆ ತನ್ನನ್ನು ಕಳುಹಿಸುವುದಕ್ಕೆ ಯೋವಾಬನನ್ನು ಕರೆಕಳುಹಿಸಿದನು. ಆದರೆ ಅವನು ಅವನ ಬಳಿಗೆ ಬರಲೊಲ್ಲದೆ ಹೋದನು. ಎರಡನೆಯ ಸಾರಿ ಅವನನ್ನು ಕರೆಕಳುಹಿಸಿದನು. ಅವನು ಬರಲೊಲ್ಲದೆ ಹೋದನು.
2SA 14:30 ಆದ್ದರಿಂದ ಅವನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲಕ್ಕೆ ಸಮೀಪವಾಗಿ ಯೋವಾಬನ ಹೊಲವಿದೆ. ಅದರಲ್ಲಿ ಜವೆಗೋಧಿ ಇದೆ. ನೀವು ಹೋಗಿ ಅದನ್ನು ಬೆಂಕಿಯಿಂದ ಸುಟ್ಟುಬಿಡಿರಿ,” ಎಂದನು. ಹಾಗೆಯೇ ಅಬ್ಷಾಲೋಮನ ಸೇವಕರು ಆ ಹೊಲಕ್ಕೆ ಬೆಂಕಿಯನ್ನು ಹಚ್ಚಿದರು.
2SA 14:31 ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ, “ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟಿದ್ದೇಕೆ?” ಎಂದು ಕೇಳಿದನು.
2SA 14:32 ಅಬ್ಷಾಲೋಮನು ಯೋವಾಬನಿಗೆ, “ನಾನು ಗೆಷೂರಿನಿಂದ ಏಕೆ ಬಂದೆನೆಂದು ಅರಸನಿಗೆ ಹೇಳುವುದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ‘ಇಲ್ಲಿಗೆ ಬಾ’ ಎಂದು ನಿನ್ನನ್ನು ಕರೆಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು. ನನ್ನಲ್ಲಿ ಅಕ್ರಮ ಇದ್ದರೆ, ಅವನು ನನ್ನನ್ನು ಕೊಂದು ಹಾಕಲಿ,” ಎಂದನು.
2SA 14:33 ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ, ಅರಸನು ಅಬ್ಷಾಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗ ನಮಸ್ಕಾರಮಾಡಿದನು. ಆಗ ಅರಸನು ಅಬ್ಷಾಲೋಮನಿಗೆ ಮುದ್ದಿಟ್ಟನು.
2SA 15:1 ಇದರ ತರುವಾಯ ಅಬ್ಷಾಲೋಮನು ತನಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು.
2SA 15:2 ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಿಲ ಬಳಿಯಲ್ಲಿ ನಿಂತುಕೊಂಡು, ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು, “ನೀನು ಯಾವ ಪಟ್ಟಣದವನು?” ಎಂದು ಕೇಳಿದನು. ಅದಕ್ಕವನು, “ನಿನ್ನ ಸೇವಕರಾದ ನಾವು ಇಸ್ರಾಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರ ಕೊಡುವನು.
2SA 15:3 ಆಗ ಅಬ್ಷಾಲೋಮನು ಅವನಿಗೆ, “ನೋಡು ನಿನ್ನ ಕಾರ್ಯವು ಒಳ್ಳೆಯದೂ, ನ್ಯಾಯವಾದದದ್ದೂ ಆಗಿದೆ. ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವುದಕ್ಕೆ ಯಾವನೂ ಇಲ್ಲ,” ಅನ್ನುವನು.
2SA 15:4 ಇದಲ್ಲದೆ ಅಬ್ಷಾಲೋಮನು, “ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ನೇಮಕವಾಗಿದ್ದರೆ ಎಷ್ಟೋ ಒಳ್ಳೆಯದು. ಆಗ ವ್ಯಾಜ್ಯವಾದರೂ, ನ್ಯಾಯವಿಚಾರಣೆಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ, ನಾನು ಅವನಿಗೆ ನೀತಿಯಿಂದ ನ್ಯಾಯತೀರಿಸುವೆನು,” ಅನ್ನುವನು.
2SA 15:5 ಯಾವನಾದರೂ ಅವನಿಗೆ ವಂದಿಸುವುದಕ್ಕೆ ಬಂದರೆ, ಕೂಡಲೆ ತನ್ನ ಕೈಯನ್ನು ಚಾಚಿ ಅಂಥವನನ್ನು ಎತ್ತಿ ಮುದ್ದಿಡುತ್ತಿದ್ದನು.
2SA 15:6 ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲರೆಲ್ಲರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲರ ಹೃದಯಗಳನ್ನು ಗೆದ್ದುಕೊಂಡನು.
2SA 15:7 ನಾಲ್ಕು ವರ್ಷಗಳಾದ ತರುವಾಯ ಅಬ್ಷಾಲೋಮನು ಅರಸನಿಗೆ, “ನಾನು ಯೆಹೋವ ದೇವರಿಗೆ ಮಾಡಿಕೊಂಡಿದ್ದ ನನ್ನ ಹರಕೆಯನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವುದಕ್ಕೆ ಅಪ್ಪಣೆಕೊಡಬೇಕು.
2SA 15:8 ಏಕೆಂದರೆ, ‘ಯೆಹೋವ ದೇವರು ನನ್ನನ್ನು ಯೆರೂಸಲೇಮಿಗೆ ತಿರುಗಿ ನಿಜವಾಗಿಯೂ ಬರಮಾಡಿದರೆ, ನಾನು ಯೆಹೋವ ದೇವರನ್ನು ಸೇವಿಸುವೆನು,’ ಎಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಹರಕೆ ಮಾಡಿಕೊಂಡಿದ್ದನು,” ಎಂದನು.
2SA 15:9 ಅರಸನು ಅವನಿಗೆ, “ಸಮಾಧಾನವಾಗಿ ಹೋಗು,” ಎಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.
2SA 15:10 ಅಬ್ಷಾಲೋಮನು ಇಸ್ರಾಯೇಲಿನ ಸಮಸ್ತ ಗೋತ್ರಗಳಿಗೆ ಗೂಢಚಾರರನ್ನು ಕಳುಹಿಸಿ ಅವರಿಗೆ, “ನೀವು ತುತೂರಿಯ ಶಬ್ದ ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಘೋಷಿಸಿರಿ’ ಎಂದು ಹೇಳಿರಿ,” ಎಂದನು.
2SA 15:11 ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲಾದ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ಒಳಸಂಚನ್ನು ಏನೂ ತಿಳಿಯದೆ ಯಥಾರ್ಥ ಮನಸ್ಸುಳ್ಳವರಾಗಿದ್ದರು.
2SA 15:12 ಅಬ್ಷಾಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ, ದಾವೀದನ ಆಲೋಚನಾಗಾರನಾಗಿರುವ ಗಿಲೋವಿನ ಅಹೀತೋಫೆಲನನ್ನು ಗಿಲೋವೆಂಬ ಅವನ ಪಟ್ಟಣದಿಂದ ಕರೆಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ, ಒಳಸಂಚಿನ ಗುಂಪು ಬಲವಾಯಿತು.
2SA 15:13 ದಾವೀದನ ಬಳಿಗೆ ಒಬ್ಬ ದೂತನು ಬಂದು, “ಇಸ್ರಾಯೇಲರ ಹೃದಯಗಳು ಅಬ್ಷಾಲೋಮನ ಕಡೆ ತಿರುಗಿಕೊಂಡಿವೆ,” ಎಂದನು.
2SA 15:14 ಆಗ ದಾವೀದನು ಯೆರೂಸಲೇಮಿನಲ್ಲಿ ತನ್ನ ಹತ್ತಿರ ಇರುವ ತನ್ನ ಸಮಸ್ತ ಸೇವಕರಿಗೆ, “ಏಳಿರಿ, ನಾವು ಓಡಿಹೋಗೋಣ. ಇಲ್ಲದಿದ್ದರೆ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಂಡು ಹೋಗಲಾರೆವು. ಅವನು ಫಕ್ಕನೆ ನಮ್ಮನ್ನು ಹಿಡಿದು, ನಮ್ಮ ಮೇಲೆ ಕೇಡನ್ನು ಬರಮಾಡಿ, ಪಟ್ಟಣವನ್ನು ಖಡ್ಗದಿಂದ ಹೊಡೆಯದ ಹಾಗೆ ಹೊರಟು ಹೋಗುವುದಕ್ಕೆ ತ್ವರೆಮಾಡಿರಿ,” ಎಂದನು.
2SA 15:15 ಆಗ ಅರಸನ ಸೇವಕರು ಅರಸನಿಗೆ, “ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ, ಅದನ್ನು ಮಾಡುವುದಕ್ಕೆ ನಿನ್ನ ಸೇವಕರು ಸಿದ್ಧವಾಗಿದ್ದೇವೆ,” ಎಂದರು.
2SA 15:16 ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು, ಅವನೂ, ಅವನ ಮನೆಯವರೆಲ್ಲರೂ ಅವನ ಹಿಂದೆ ಹೊರಟು ಹೋದರು.
2SA 15:17 ಅರಸನೂ, ಅವನ ಹಿಂದೆ ಸಮಸ್ತ ಜನರೂ ಹೊರಟುಹೋಗಿ ಪಟ್ಟಣದ ಕಡೆಯ ಮನೆಯ ಬಳಿ ಬಂದು ಅಲ್ಲಿ ನಿಂತರು.
2SA 15:18 ಅವನ ಸಮಸ್ತ ಸೇವಕರೂ, ಸಮಸ್ತ ಕೆರೇತ್ಯರೂ, ಸಮಸ್ತ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತೀಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.
2SA 15:19 ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ಕಂಡು, “ನೀನು ನಮ್ಮ ಸಂಗಡ ಬರುವುದು ಏಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ, ಅರಸನ ಸಂಗಡ ಇರು. ಏಕೆಂದರೆ ನೀನು ವಿದೇಶಿ. ನಿನ್ನ ದೇಶದಿಂದ ಸೆರೆಯಾಳಾಗಿ ಬಂದವನು.
2SA 15:20 ನೀನು ನಿನ್ನೆ ಬಂದವನು. ನಾನು ಎಲ್ಲಿಗೆ ಹೋಗುತ್ತೇನೋ ನನಗೇ ಗೊತ್ತಿಲ್ಲ. ಆದುದರಿಂದ ನಾನು ನಿನ್ನನ್ನು ನಮ್ಮ ಸಂಗಡ ಸುಮ್ಮನೇ ತಿರುಗಾಡಿಸುವುದು ಏಕೆ? ನೀನು ನಿನ್ನ ಸಹೋದರರನ್ನು ಕರೆದುಕೊಂಡು ಹಿಂದಕ್ಕೆ ಹೋಗು. ದಯೆಯೂ, ನಂಬಿಗಸ್ತಿಕೆಯೂ ನಿನ್ನ ಸಂಗಡ ಇರಲಿ,” ಎಂದನು.
2SA 15:21 ಆದರೆ ಇತ್ತೈಯೂ ಅರಸನಿಗೆ ಉತ್ತರವಾಗಿ, “ಯೆಹೋವ ದೇವರ ಜೀವದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ, ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ, ಸಾವಾದರೂ ಬದುಕಾದರೂ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು,” ಎಂದನು.
2SA 15:22 ಆಗ ದಾವೀದನು ಇತ್ತೈಗೆ, “ನೀನು ಹೋಗಿ ದಾಟು,” ಎಂದನು. ಆದ್ದರಿಂದ ಗಿತ್ತೀಯನಾದ ಇತ್ತೈಯೂ, ಅವನ ಸಮಸ್ತ ಮನುಷ್ಯರೂ, ಅವನ ಸಂಗಡ ಇರುವ ಸಮಸ್ತ ಚಿಕ್ಕವರೂ ಕೂಡ ದಾಟಿಹೋದರು.
2SA 15:23 ಜನರೆಲ್ಲಾ ದಾಟಿಹೋಗುವಾಗ, ದೇಶದವರೆಲ್ಲಾ ಮಹಾಧ್ವನಿಯಿಂದ ಅತ್ತರು. ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು. ಹಾಗೆಯೇ ಅವನ ಜನರೆಲ್ಲರೂ ದಾಟಿ ಮರುಭೂಮಿಯ ಮಾರ್ಗವಾಗಿ ನಡೆದುಹೋದರು.
2SA 15:24 ಚಾದೋಕನೂ, ಅವನ ಸಂಗಡ ಇರುವ ಸಮಸ್ತ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಅಬಿಯಾತರನು, ಜನರೆಲ್ಲರು ಪಟ್ಟಣದಿಂದ ದಾಟಿಹೋಗುವವರೆಗೆ ಯಜ್ಞ ಸಮರ್ಪಿಸುತ್ತಾ ಮುಂದೆ ನಡೆಯುತ್ತಿದ್ದನು.
2SA 15:25 ಆಗ ಅರಸನು ಚಾದೋಕನಿಗೆ, “ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರುಗಿ ತೆಗೆದುಕೊಂಡು ಹೋಗು. ಯೆಹೋವ ದೇವರ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ, ಅವರು ತಿರುಗಿ ನನ್ನನ್ನು ಬರಮಾಡಿ ಅದನ್ನೂ, ಅದರ ವಾಸಸ್ಥಳವನ್ನೂ ನನಗೆ ತೋರಿಸುವರು.
2SA 15:26 ಒಂದು ವೇಳೆ ಅವರು, ‘ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು’ ಹೇಳಿದರೆ ಇಗೋ, ಅವರು ತಮ್ಮ ದೃಷ್ಟಿಗೆ ತೋಚಿದ ಹಾಗೆ ನನಗೆ ಮಾಡಲಿ,” ಎಂದನು.
2SA 15:27 ಅರಸನು ಯಾಜಕನಾದ ಚಾದೋಕನಿಗೆ, “ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರುಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳು ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ ನಿನ್ನ ಸಂಗಡ ಹೋಗಲಿ.
2SA 15:28 ನೋಡು, ನನಗೆ ತಿಳಿಸುವುದಕ್ಕೆ ನಿಮ್ಮ ಬಳಿಯಿಂದ ವರ್ತಮಾನ ಬರುವವರೆಗೂ, ನಾನು ಮರುಭೂಮಿಯ ಬಳಿಯಲ್ಲಿ ಇರುವೆನು,” ಎಂದನು.
2SA 15:29 ಹಾಗೆಯೇ ಚಾದೋಕನೂ, ಅಬಿಯಾತರನೂ ದೇವರ ಮಂಜೂಷವನ್ನು ತಿರುಗಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ ಅಲ್ಲಿದ್ದರು.
2SA 15:30 ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿಕೊಂಡು, ಬರಿಗಾಲಿನಿಂದ ಎಣ್ಣೆಮರಗಳ ಗುಡ್ಡವನ್ನು ಏರಿದನು. ಅವನ ಸಂಗಡ ಇರುವ ಸಮಸ್ತ ಜನರೂ, ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆ ಏರಿದರು.
2SA 15:31 ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.
2SA 15:32 ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿದಾಗ, ಅರ್ಕಿಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅವನನ್ನು ಎದುರುಗೊಳ್ಳಲು ಬಂದನು.
2SA 15:33 ಆಗ ದಾವೀದನು ಅವನಿಗೆ, “ನೀನು ನನ್ನ ಸಂಗಡ ಬಂದರೆ, ನನಗೆ ಭಾರವಾಗಿರುವೆ.
2SA 15:34 ನೀನು ಪಟ್ಟಣಕ್ಕೆ ತಿರುಗಿ ಹೋಗಿ ಅಬ್ಷಾಲೋಮನಿಗೆ, ‘ಅರಸನೇ, ನಾನು ನಿನ್ನ ಸೇವಕನಾಗಿರುವೆನು. ನಾನು ಇಂದಿನವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ, ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು,’ ಎಂದು ಹೇಳಿದರೆ, ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಬಹುದು.
2SA 15:35 ಅಲ್ಲಿ ಯಾಜಕರಾದ ಚಾದೋಕನೂ, ಅಬಿಯಾತರನೂ ನಿನ್ನ ಬಳಿಯಲ್ಲಿ ಇಲ್ಲವೋ? ಆದ್ದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ, ಅದನ್ನು ಯಾಜಕರಾದ ಚಾದೋಕನಿಗೂ, ಎಬ್ಯಾತಾರನಿಗೂ ತಿಳಿಸು.
2SA 15:36 ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ. ಚಾದೋಕನ ಮಗ ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಕೈಯಿಂದ ನನಗೆ ಹೇಳಿ ಕಳುಹಿಸಬೇಕು,” ಎಂದನು.
2SA 15:37 ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣದೊಳಗೆ ಬಂದನು. ಆಗ ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.
2SA 16:1 ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರ ಹೋದಾಗ, ಮೆಫೀಬೋಶೆತನ ಸೇವಕ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡೆದುಕೊಂಡು ಬಂದು, ಅವನನ್ನು ಎದುರುಗೊಂಡನು. ಅವುಗಳ ಮೇಲೆ ಇನ್ನೂರು ರೊಟ್ಟಿಗಳೂ, ಒಣಗಿದ ನೂರು ದ್ರಾಕ್ಷಿ ಗೊಂಚಲುಗಳೂ, ಬೇಸಿಗೆ ಕಾಲದ ನೂರು ಹಣ್ಣುಗಳೂ, ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.
2SA 16:2 ಅರಸನು ಚೀಬನಿಗೆ, “ಇವು ಏಕೆ,” ಎಂದನು. ಅದಕ್ಕೆ ಚೀಬನು, “ಕತ್ತೆಗಳನ್ನು ಅರಸನ ಮನೆಯವರು ಸವಾರಿಮಾಡುವುದಕ್ಕೆ, ಆ ರೊಟ್ಟಿಗಳೂ, ಬೇಸಿಗೆ ಕಾಲದ ಫಲಗಳೂ ಜನರಿಗೆ ತಿನ್ನುವುದಕ್ಕೆ, ದ್ರಾಕ್ಷಾರಸವು ಮರುಭೂಮಿಯಲ್ಲಿ ದಣಿದವರು ಕುಡಿಯುವುದಕ್ಕೆ,” ಎಂದನು.
2SA 16:3 ಆಗ ಅರಸನು ಅವನನ್ನು, “ನಿನ್ನ ಯಜಮಾನನ ಪುತ್ರನು ಎಲ್ಲಿದ್ದಾನೆ?” ಎಂದು ಕೇಳಿದನು. ಚೀಬನು ಅರಸನಿಗೆ, “ಅವನು ಯೆರೂಸಲೇಮಿನಲ್ಲಿದ್ದಾನೆ. ಏಕೆಂದರೆ ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರುಗಿ ಕೊಡುವರೆಂದು ಹೇಳಿಕೊಂಡನು,” ಎಂದನು.
2SA 16:4 ಆಗ ಅರಸನು ಚೀಬನಿಗೆ, “ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲವೂ ನಿನಗುಂಟಾಯಿತು,” ಎಂದನು. ಅದಕ್ಕೆ ಚೀಬನು, “ಅರಸನಾದ ನನ್ನ ಒಡೆಯನೇ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದನು.
2SA 16:5 ಅರಸನಾದ ದಾವೀದನು ಬಹುರೀಮಿನವರೆಗೂ ಬಂದಾಗ, ಸೌಲನ ಗೋತ್ರದವನಾದ ಗೇರನ ಮಗ ಶಿಮ್ಮಿ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.
2SA 16:6 ದಾವೀದನ ಎಡಬಲದಲ್ಲಿ ಸೈನಿಕರೂ, ವಿಶೇಷ ಕಾವಲುಗಾರರೂ ಇದ್ದರು. ಆದರೂ ಶಿಮ್ಮಿಯು ದಾವೀದನ ಮೇಲೆಯೂ, ಅವನ ಅಧಿಕಾರಿಗಳ ಮೇಲೆಯೂ ಕಲ್ಲುಗಳನ್ನು ಎಸೆದನು.
2SA 16:7 ಶಿಮ್ಮಿಯು ಅರಸನನ್ನು ದೂಷಿಸುತ್ತಾ, “ಕೊಲೆಗಾರನೇ, ನೀಚನೇ, ಹೊರಟು ಹೋಗು; ಹೊರಟು ಹೋಗು.
2SA 16:8 ಯೆಹೋವ ದೇವರು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರುಗಿ ಬರಮಾಡಿ, ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ನೀನು ಕೊಲೆಗಾರನಾದುದರಿಂದ, ನಿನ್ನ ಕೇಡಿನಲ್ಲಿ ನೀನು ಸಿಕ್ಕಿಕೊಂಡೆ,” ಎಂದನು.
2SA 16:9 ಆಗ ಚೆರೂಯಳ ಮಗ ಅಬೀಷೈಯನು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವುದೇನು? ನಾನು ದಾಟಿ ಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆ ಆಗಲಿ,” ಎಂದನು.
2SA 16:10 ಆದರೆ ಅರಸನು, “ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ. ಏಕೆಂದರೆ, ‘ದಾವೀದನನ್ನು ದೂಷಿಸು,’ ಎಂದು ಯೆಹೋವ ದೇವರು ಅವನಿಗೆ ಹೇಳಿದ್ದಾರೆ. ಹಾಗಾದರೆ, ‘ಏಕೆ ಹೀಗೆ ಮಾಡುತ್ತೀ?’ ಎಂದು ಹೇಳುವವನ್ಯಾರು?” ಎಂದನು.
2SA 16:11 ದಾವೀದನು ಅಬೀಷೈಯನಿಗೂ, ತನ್ನ ಸಮಸ್ತ ಸೇವಕರಿಗೂ, “ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ, ಎಷ್ಟೋ ಅಧಿಕವಾಗಿ ಬೆನ್ಯಾಮೀನನಾದವನು ಈಗ ಏನು ಮಾಡಿಯಾನು? ಅವನನ್ನು ಬಿಟ್ಟುಬಿಡಿರಿ. ಅವನು ದೂಷಿಸಲಿ. ಏಕೆಂದರೆ ಯೆಹೋವ ದೇವರು ಅವನಿಗೆ ಹಾಗೆಯೇ ಹೇಳಿದ್ದಾರೆ.
2SA 16:12 ಒಂದು ವೇಳೆ ಯೆಹೋವ ದೇವರು ನನ್ನ ಕಷ್ಟವನ್ನು ಕಂಡು, ಈ ದಿನದಲ್ಲಿ ಅವನು ಮಾಡಿದ ಶಾಪಕ್ಕೆ ಪ್ರತಿಯಾಗಿ, ನನಗೆ ಒಳ್ಳೆಯದನ್ನು ಮಾಡಬಹುದು,” ಎಂದನು.
2SA 16:13 ದಾವೀದನೂ, ಅವನ ಸೇವಕರೂ ಹಾದಿ ಹಿಡಿದು ಹೋಗುವಾಗ, ಶಿಮ್ಮಿ ಬೆಟ್ಟದ ಓರೆಯಲ್ಲಿ ಬಂದು, ಅವನಿಗೆದುರಾಗಿ ನಡೆದನು. ಅವನು ದಾವೀದನನ್ನು ದೂಷಿಸಿ, ಮಣ್ಣನ್ನು ತೂರಿ, ಕಲ್ಲುಗಳನ್ನು ದಾವೀದನ ಮೇಲೆ ಎಸೆದನು.
2SA 16:14 ಅರಸನೂ, ಅವನ ಸಂಗಡದಲ್ಲಿರುವ ಸಮಸ್ತ ಜನರೂ ನಡೆದು ದಣಿದಿದ್ದರಿಂದ ಅಲ್ಲಿ ವಿಶ್ರಮಿಸಿಕೊಂಡರು.
2SA 16:15 ಅಬ್ಷಾಲೋಮನೂ, ಇಸ್ರಾಯೇಲರಾದ ಸಮಸ್ತ ಜನರೂ, ಅವನ ಸಂಗಡ ಅಹೀತೋಫೆಲನೂ ಯೆರೂಸಲೇಮಿಗೆ ಬಂದರು.
2SA 16:16 ಅರ್ಕಿಯನಾದ ಹೂಷೈಯು ಎಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದಾಗ, ಹೂಷೈ ಅಬ್ಷಾಲೋಮನಿಗೆ, “ಅರಸನು ಬಾಳಲಿ, ಅರಸನು ಬಾಳಲಿ,” ಎಂದನು.
2SA 16:17 ಆಗ ಅಬ್ಷಾಲೋಮನು ಹೂಷೈಯಿಗೆ, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನ ಸಂಗಡ ಏಕೆ ಹೋಗಲಿಲ್ಲ,” ಎಂದನು.
2SA 16:18 ಹೂಷೈ ಅಬ್ಷಾಲೋಮನಿಗೆ, “ಹಾಗಲ್ಲ, ಯೆಹೋವ ದೇವರು ಈ ಜನರೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ ಯಾರನ್ನು ಆಯ್ದುಕೊಳ್ಳುವರೋ, ನಾನೂ ಅವನ ಪಕ್ಷದವನಾಗಿರುವೆನು. ನಾನು ಅವನ ಬಳಿಯಲ್ಲಿ ಇರುವೆನು.
2SA 16:19 ಇದಲ್ಲದೆ ನಾನು ಯಾರನ್ನು ಸೇವಿಸತಕ್ಕದ್ದು? ಅವನ ಮಗನ ಸಮ್ಮುಖದಲ್ಲಿ ಅಲ್ಲವೇ? ನಾನು ನಿನ್ನ ತಂದೆಯ ಸಮ್ಮುಖದಲ್ಲಿ ಹೇಗೆ ಸೇವಿಸಿದೆನೋ ಹಾಗೆಯೇ ನಿನ್ನ ಸಮ್ಮುಖದಲ್ಲಿ ಇರುವೆನು,” ಎಂದನು.
2SA 16:20 ಆಗ ಅಬ್ಷಾಲೋಮನು ಅಹೀತೋಫೆಲನಿಗೆ, “ನಾವು ಮಾಡಬೇಕಾದದ್ದನ್ನು ನೀವು ಯೋಚನೆ ಮಾಡಿ ಹೇಳಿರಿ,” ಎಂದನು.
2SA 16:21 ಅಹೀತೋಫೆಲನು ಅಬ್ಷಾಲೋಮನಿಗೆ, “ಮನೆಗೆ ಕಾವಲಿಟ್ಟ ನಿನ್ನ ತಂದೆಯ ಉಪಪತ್ನಿಯರ ಸಂಗಡ ಮಲಗು; ಆಗ ನಿನ್ನ ತಂದೆ ನಿನ್ನನ್ನು ತನ್ನ ಶತ್ರುವನ್ನಾಗಿ ಮಾಡಿದನೆಂದು ಎಲ್ಲ ಇಸ್ರಾಯೇಲರಿಗೆ ತಿಳಿಯುವುದು. ಆಗ ನಿನ್ನ ಜನರ ಕೈಗಳೂ ಬಲವಾಗುವುವು,” ಎಂದನು.
2SA 16:22 ಹಾಗೆಯೇ ಅವರು ಅಬ್ಷಾಲೋಮನ ಮನೆಯ ಮೇಲೆ ಡೇರೆ ಹಾಕಿದರು. ಅಲ್ಲಿ ಅಬ್ಷಾಲೋಮನು ಸಮಸ್ತ ಇಸ್ರಾಯೇಲರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳ ಸಂಗಡ ಮಲಗಿದನು.
2SA 16:23 ಆ ದಿವಸಗಳಲ್ಲಿ ಅಹೀತೋಫೆಲನು ತಿಳಿಸಿದ ಆಲೋಚನೆಯು ದೇವರನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಗಳನ್ನು ದಾವೀದನೂ, ಅಬ್ಷಾಲೋಮನೂ ಹಾಗೆಯೇ ಗೌರವಿಸುತ್ತಿದ್ದರು.
2SA 17:1 ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.
2SA 17:2 ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು.
2SA 17:3 ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು.
2SA 17:4 ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು.
2SA 17:5 ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು.
2SA 17:6 ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು.
2SA 17:7 ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು.
2SA 17:8 ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ.
2SA 17:9 ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.
2SA 17:10 ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು.
2SA 17:11 “ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
2SA 17:12 ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ.
2SA 17:13 ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.
2SA 17:14 ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು.
2SA 17:15 ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.
2SA 17:16 ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು.
2SA 17:17 ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ.
2SA 17:18 ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು.
2SA 17:19 ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು.
2SA 17:20 ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು.
2SA 17:21 ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು.
2SA 17:22 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ.
2SA 17:23 ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.
2SA 17:24 ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.
2SA 17:25 ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.
2SA 17:26 ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು.
2SA 17:27 ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ
2SA 17:28 ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ,
2SA 17:29 ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು.
2SA 18:1 ದಾವೀದನು ತನ್ನ ಸಂಗಡದಲ್ಲಿದ್ದ ಜನರನ್ನು ಲೆಕ್ಕ ಮಾಡಿ, ಅವರ ಮೇಲೆ ಸಾವಿರ ಜನರಿಗೂ, ನೂರು ಜನರಿಗೂ ಅಧಿಪತಿಗಳನ್ನು ನೇಮಿಸಿದನು.
2SA 18:2 ದಾವೀದನು ಜನರಲ್ಲಿ ಮೂರನೆಯ ಪಾಲನ್ನು ಯೋವಾಬನಿಗೂ, ಎರಡನೆಯ ಪಾಲನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆಗಿರುವ ಅಬೀಷೈಗೂ, ಮೂರನೆಯ ಪಾಲನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿದನು. ತರುವಾಯ ಅರಸನು ಸೈನಿಕರಿಗೆ, “ನಾನೂ ನಿಮ್ಮ ಸಂಗಡ ಹೊರಟು ಬರುತ್ತೇನೆ,” ಎಂದನು.
2SA 18:3 ಆದರೆ ಸೈನಿಕರು ಅವನಿಗೆ, “ನೀನು ನಮ್ಮ ಸಂಗಡ ಬರಬೇಡ. ಏಕೆಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವುದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸಮನಾಗಿದ್ದೀ. ಈಗ ನೀನು ಊರಿನಲ್ಲಿದ್ದು, ನಮಗೆ ಸಹಾಯವಾಗಿರುವುದೇ ಉತ್ತಮ,” ಎಂದರು.
2SA 18:4 ಆಗ ಅರಸನು ಅವರಿಗೆ, “ನಿಮಗೆ ಸರಿಕಾಣಿಸುವುದನ್ನು ಮಾಡುತ್ತೇನೆ,” ಎಂದನು. ಅರಸನು ಬಾಗಿಲ ಬಳಿಯಲ್ಲಿ ನಿಂತನು. ಸೈನಿಕರೆಲ್ಲಾ ನೂರು ನೂರಾಗಿಯೂ, ಸಾವಿರ ಸಾವಿರಗಳಾಗಿಯೂ ಹೊರಟರು.
2SA 18:5 ಅರಸನು ಯೋವಾಬನಿಗೂ, ಅಬೀಷೈಯಿಗೂ, ಇತ್ತೈಗೂ ಆಜ್ಞಾಪಿಸಿ, “ನನಗೋಸ್ಕರ ಯುವಕನಾದ ಅಬ್ಷಾಲೋಮನೊಂದಿಗೆ ಮೃದುವಾಗಿ ವರ್ತಿಸಿರಿ,” ಎಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಟ ಆಜ್ಞೆಯನ್ನು ಸೈನಿಕರೆಲ್ಲರೂ ಕೇಳಿದರು.
2SA 18:6 ಅನಂತರ ಸೈನಿಕರು ಇಸ್ರಾಯೇಲಿಗೆ ವಿರೋಧವಾಗಿ ಹೊರಟರು. ಯುದ್ಧವು ಎಫ್ರಾಯೀಮ್ ಅಡವಿಯಲ್ಲಿತ್ತು.
2SA 18:7 ಅಲ್ಲಿ ಇಸ್ರಾಯೇಲರು ದಾವೀದನ ಸೇವಕರ ಮುಂದೆ ಸಂಹಾರವಾದರು.
2SA 18:8 ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು. ಇಪ್ಪತ್ತು ಸಾವಿರ ಸೈನಿಕರು ಸತ್ತರು. ಅಲ್ಲಿನ ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿನ ಸೈನಿಕರಲ್ಲಿ ಖಡ್ಗದಿಂದ ಹತರಾದವರಿಗಿಂತ ಕಾಡಿನಲ್ಲಿ ಹತರಾದವರೇ ಹೆಚ್ಚಾಗಿದ್ದರು.
2SA 18:9 ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಅಬ್ಷಾಲೋಮನು ಹೇಸರಗತ್ತೆಯ ಮೇಲೆ ಏರಿದ್ದನು. ಆ ಹೇಸರಗತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ, ಅವನ ತಲೆಯು ಆ ಮರದ ಕೊಂಬೆಯಲ್ಲಿ ಸಿಕ್ಕಿಕೊಂಡಿತು. ಆದ್ದರಿಂದ ಅವನು ಹತ್ತಿದ್ದ ಹೇಸರಗತ್ತೆಯು ಹೊರಟುಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನೇತಾಡುವವನಾದನು.
2SA 18:10 ಅದನ್ನು ಒಬ್ಬನು ಕಂಡು ಯೋವಾಬನಿಗೆ, “ಅಬ್ಷಾಲೋಮನು ಒಂದು ಏಲಾ ಮರದಲ್ಲಿ ತೂಗಾಡುವುದನ್ನು ಕಂಡೆನು,” ಎಂದನು.
2SA 18:11 ಅದಕ್ಕೆ ಯೋವಾಬನು ತನಗೆ ಅದನ್ನು ತಿಳಿಸಿದವನಿಗೆ, “ನೀನು ಕಂಡು ಅವನನ್ನು ಏಕೆ ಕಡಿದು ನೆಲಕ್ಕೆ ಉರುಳಿಸಲಿಲ್ಲ? ನಾನು ನಿನಗೆ ಹತ್ತು ಬೆಳ್ಳಿ ನಾಣ್ಯಗಳನ್ನು, ಒಂದು ಬೆಳ್ಳಿ ನಡುಕಟ್ಟನ್ನು ಕೊಡುತ್ತಿದ್ದೆನು,” ಎಂದನು.
2SA 18:12 ಆದರೆ ಆ ಮನುಷ್ಯನು ಯೋವಾಬನಿಗೆ, “ನೀನು ನನ್ನ ಕೈಯಲ್ಲಿ ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟರೂ, ನಾನು ಅರಸನ ಮಗನ ಮೇಲೆ ನನ್ನ ಕೈಚಾಚುವುದಿಲ್ಲ. ಏಕೆಂದರೆ, ‘ಅಬ್ಷಾಲೋಮನೆಂಬ ಯುವಕನೊಡನೆ ಸೌಮ್ಯದಿಂದ ನಡೆದು ಕಾಪಾಡಿರಿ,’ ಎಂದು ಅರಸನು ನಮ್ಮೆಲ್ಲರಿಗೆ ಕೇಳಿಸುವಂತೆ ನಿನಗೂ, ಅಬೀಷೈಯನಿಗೂ, ಇತ್ತೈಗೂ ಸ್ಪಷ್ಟವಾಗಿ ಆಜ್ಞಾಪಿಸಿದ್ದನು.
2SA 18:13 ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಏಕೆ ಮೋಸಮಾಡಿಕೊಳ್ಳಬೇಕು. ಏಕೆಂದರೆ ಅರಸನಿಗೆ ಯಾವ ಕಾರ್ಯವೂ ಮರೆಯಾಗಿರುವುದಿಲ್ಲ. ನೀನೇ ನನಗೆ ವಿರೋಧವಾಗಿ ನಿಲ್ಲುವಿ,” ಎಂದನು.
2SA 18:14 ಆಗ ಯೋವಾಬನು, “ನಾನು ಹೀಗೆ ನಿನ್ನ ಮುಂದೆ ಆಲಸ್ಯ ಮಾಡೆನು,” ಎಂದು ಹೇಳಿ, ಮೂರು ಈಟಿಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಅಬ್ಷಾಲೋಮನು ಇನ್ನೂ ಏಲಾ ಮರದ ಮಧ್ಯದಲ್ಲಿ ಜೀವದಿಂದಿರುವಾಗ, ಅವುಗಳನ್ನು ಅವನ ಹೃದಯದಲ್ಲಿ ತಿವಿದನು.
2SA 18:15 ಆಗ ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯುವಕರು ಸುತ್ತಿಕೊಂಡು, ಅಬ್ಷಾಲೋಮನನ್ನು ಕೊಂದುಹಾಕಿದರು.
2SA 18:16 ಆಗ ಯೋವಾಬನು ತುತೂರಿಯನ್ನು ಊದಿದ್ದರಿಂದ, ಸೈನಿಕರು ಇಸ್ರಾಯೇಲರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಿರುಗಿದರು. ಏಕೆಂದರೆ ಯೋವಾಬನು ಜನರನ್ನು ತಡೆದನು.
2SA 18:17 ಅವರು ಅಬ್ಷಾಲೋಮನನ್ನು ತೆಗೆದುಕೊಂಡು, ಅಡವಿಯಲ್ಲಿರುವ ಒಂದು ದೊಡ್ಡ ಗುಂಡಿಯಲ್ಲಿ ಹಾಕಿ, ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆದರೆ ಇಸ್ರಾಯೇಲರೆಲ್ಲರೂ ತಮ್ಮ ಗುಡಾರಗಳಿಗೆ ಓಡಿಹೋದರು.
2SA 18:18 ಅಬ್ಷಾಲೋಮನು ಜೀವದಿಂದಿರುವಾಗ, “ನನ್ನ ಹೆಸರನ್ನು ಜ್ಞಾಪಕಾರ್ಥವಾಗಿ ಉಳಿಸಲು ನನಗೆ ಮಗನಿಲ್ಲ,” ಎಂದು ಹೇಳಿ, ಅವನು ತಗ್ಗಿನಲ್ಲಿರುವ ಒಂದು ಕಲ್ಲಿನ ಸ್ತಂಭವನ್ನು ತರಿಸಿ, ಅದನ್ನು ಅರಸನ ಕಣಿವೆಯಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದು ಈ ದಿನದವರೆಗೂ ಅಬ್ಷಾಲೋಮನ ಸ್ಮಾರಕಸ್ತಂಭ ಎಂದು ಕರೆಯಲಾಗುತ್ತದೆ.
2SA 18:19 ಆಗ ಚಾದೋಕನ ಮಗ ಅಹೀಮಾಚನು, “ಯೆಹೋವ ದೇವರು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾರೆಂಬ ವರ್ತಮಾನವನ್ನು ಅರಸನಿಗೆ ತಿಳಿಸುವ ಹಾಗೆ, ನಾನು ಓಡಿ ಹೋಗುವೆನು,” ಎಂದನು.
2SA 18:20 ಆದರೆ ಯೋವಾಬನು ಅವನಿಗೆ, “ನೀನು ಈ ಹೊತ್ತು ವರ್ತಮಾನ ತೆಗೆದುಕೊಂಡು ಹೋಗಬೇಡ. ಮತ್ತೊಂದು ದಿವಸ ವರ್ತಮಾನ ತೆಗೆದುಕೊಂಡು ಹೋಗಬಹುದು. ಏಕೆಂದರೆ ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತೆಗೆದುಕೊಂಡು ಹೋಗಬೇಡ,” ಎಂದನು.
2SA 18:21 ಯೋವಾಬನು ಕೂಷ್ಯ ದೇಶವಾಸಿಯಾದ ಒಬ್ಬನಿಗೆ, “ನೀನು ಹೋಗಿ ಕಂಡದ್ದನ್ನು ಅರಸನಿಗೆ ತಿಳಿಸು,” ಎಂದನು. ಕೂಷ್ಯ ದೇಶವಾಸಿ ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು.
2SA 18:22 ಆಗ ಚಾದೋಕನ ಮಗ ಅಹೀಮಾಚನು ಯೋವಾಬನಿಗೆ, ಏನೇ ಆಗಲಿ, “ನಾನು ಕೂಷ್ಯ ದೇಶವಾಸಿ ಹಿಂದೆ ಓಡಿಹೋಗುವ ಹಾಗೆ ಅಪ್ಪಣೆಕೊಡಬೇಕು,” ಎಂದನು. ಅದಕ್ಕೆ ಯೋವಾಬನು, “ನನ್ನ ಮಗನೇ, ನೀನು ಏಕೆ ಹೋಗಲು ಬಯಸುತ್ತಿರುವೆ? ನಿನಗೆ ಪ್ರಶಸ್ತಿಯನ್ನು ತರುವ ಯಾವುದೇ ಸುದ್ದಿ ನಿನ್ನ ಬಳಿ ಇಲ್ಲ,” ಎಂದನು.
2SA 18:23 ಅವನು, “ಏನೇ ಆಗಲಿ, ನಾನು ಓಡಿ ಹೋಗುತ್ತೇನೆ,” ಎಂದನು. ಯೋವಾಬನು, “ಓಡು,” ಎಂದನು. ಆಗ ಅಹೀಮಾಚನು ಬಯಲು ಮಾರ್ಗವಾಗಿ ಓಡಿ ಕೂಷ್ಯನನ್ನು ದಾಟಿಹೋದನು.
2SA 18:24 ದಾವೀದನು ಒಳಗಣ ಮತ್ತು ಹೊರಗಣ ಬಾಗಿಲುಗಳ ಮಧ್ಯದಲ್ಲಿ ಕುಳಿತಿದ್ದನು. ಕಾವಲುಗಾರನು ಗೋಪುರದ ಮಾಳಿಗೆಯ ಮೇಲೆ ಏರಿ, ಕಣ್ಣುಗಳನ್ನೆತ್ತಿ ನೋಡಲಾಗಿ, ಒಬ್ಬ ಮನುಷ್ಯನು ಒಂಟಿಯಾಗಿ ಓಡಿಬರುವುದನ್ನು ಕಂಡನು.
2SA 18:25 ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು. ಅರಸನು, “ಅವನು ಒಬ್ಬನಾಗಿ ಬಂದರೆ, ಅವನ ಬಳಿ ಒಳ್ಳೆಯ ಸಮಾಚಾರ ಇರುವುದು,” ಎಂದನು. ಅವನು ಬಂದು ಸಮೀಪಿಸಿದನು.
2SA 18:26 ಕಾವಲುಗಾರನು ಬೇರೊಬ್ಬನು ಓಡಿಬರುವುದನ್ನು ಕಂಡು, ಬಾಗಿಲು ಕಾಯುವವನನ್ನು ಕರೆದು, “ಇಗೋ, ಮತ್ತೊಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ,” ಎಂದನು. ಅದಕ್ಕೆ ಅರಸನು, “ಅವನೂ ಸಹ ಒಳ್ಳೆಯ ಸಮಾಚಾರ ತೆಗೆದುಕೊಂಡು ಬರುತ್ತಾನೆ,” ಎಂದನು.
2SA 18:27 ಕಾವಲುಗಾರನು, “ಮೊದಲನೆಯವನ ಓಟವು ಚಾದೋಕನ ಮಗ ಅಹೀಮಾಚನ ಓಟದ ಹಾಗೆ ಇರುವುದೆಂದು ನನಗೆ ಕಾಣುತ್ತದೆ,” ಎಂದನು. ಅದಕ್ಕೆ ಅರಸನು, “ಅವನು ಒಳ್ಳೆಯವನು, ಒಳ್ಳೆಯ ಸಮಾಚಾರ ತರುತ್ತಾನೆ,” ಎಂದನು.
2SA 18:28 ಆಗ ಅಹೀಮಾಚನು ಕೂಗಿ ಅರಸನಿಗೆ, “ಎಲ್ಲವೂ ಕ್ಷೇಮ,” ಎಂದು ಹೇಳಿ ಅರಸನ ಮುಂದೆ ಮೋರೆ ಕೆಳಗಾಗಿ, ನೆಲಕ್ಕೆ ಅಡ್ಡಬಿದ್ದು, “ಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಮನುಷ್ಯರನ್ನು ಒಪ್ಪಿಸಿಕೊಟ್ಟ ನಿಮ್ಮ ದೇವರಾದ ಯೆಹೋವ ದೇವರು ಸ್ತುತಿಹೊಂದಲಿ,” ಎಂದನು.
2SA 18:29 ಅರಸನು, “ಯುವಕನಾದ ಅಬ್ಷಾಲೋಮನಿಗೆ ಕ್ಷೇಮವೋ?” ಎಂದು ಕೇಳಿದನು. ಅದಕ್ಕೆ ಅಹೀಮಾಚನು ಉತ್ತರವಾಗಿ, “ಯೋವಾಬನು ಅರಸನ ಸೇವಕನನ್ನೂ, ನಿನ್ನ ಸೇವಕನಾದ ನನ್ನನ್ನೂ ಕಳುಹಿಸಿದಾಗ ದೊಡ್ಡ ಗೊಂದಲವನ್ನು ಕಂಡೆನು. ಆದರೆ ಅದು ಏನೋ ನಾನರಿಯೆ,” ಎಂದನು.
2SA 18:30 ಅರಸನು, “ನೀನು ಇತ್ತಲಾಗಿ ಬಂದು ನಿಲ್ಲು,” ಎಂದನು. ಅವನು ಅತ್ತಲಾಗಿ ಹೋಗಿ ನಿಂತನು. ಆಗ ಕೂಷ್ಯನು ಬಂದನು.
2SA 18:31 ಕೂಷ್ಯನು, “ಅರಸನಾದ ನನ್ನ ಒಡೆಯನಿಗೆ ಶುಭವರ್ತಮಾನ ಉಂಟು, ಏನೆಂದರೆ ಯೆಹೋವ ದೇವರು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು, ಸಮಸ್ತರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾರೆ,” ಎಂದನು.
2SA 18:32 ಅರಸನು ಕೂಷ್ಯನಿಗೆ, “ಯುವಕನಾದ ಅಬ್ಷಾಲೋಮನಿಗೆ ಕ್ಷೇಮವೋ?” ಎಂದನು. ಕೂಷ್ಯನು ಉತ್ತರವಾಗಿ, “ಅರಸನಾದ ನನ್ನ ಒಡೆಯನ ಶತ್ರುಗಳು ಕೇಡು ಮಾಡುವಂತೆ ನಿನಗೆ ವಿರೋಧವಾಗಿ ಏಳುವ ಸಮಸ್ತರಿಗೂ, ಆ ಯುವಕನಿಗಾದ ಹಾಗೆಯೇ ಆಗಲಿ,” ಎಂದನು.
2SA 18:33 ಆಗ ಅರಸನು ನಡುಗುತ್ತಾ ಊರು ಬಾಗಿಲ ಮೇಲಿರುವ ಕೊಠಡಿಗೆ ಏರಿಹೋದನು. ಹೋಗುವಾಗ, “ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ,” ಎಂದು ಹೇಳಿ ಅತ್ತನು.
2SA 19:1 “ಅರಸನು ಅಬ್ಷಾಲೋಮನಿಗೋಸ್ಕರ ಅತ್ತು ದುಃಖ ಪಡುತ್ತಾ ಇದ್ದಾನೆ,” ಎಂದು ಯೋವಾಬನಿಗೆ ತಿಳಿಸಲಾಯಿತು.
2SA 19:2 “ಅರಸನು ತನ್ನ ಮಗನಿಗೋಸ್ಕರ ವ್ಯಥೆಪಡುತ್ತಿದ್ದಾನೆ,” ಎಂದು ಎಲ್ಲ ಜನರಿಗೂ ಗೊತ್ತಾಗಿದ್ದರಿಂದ ಆ ವಿಜಯದ ದಿನವು ಸಮಸ್ತ ಜನರಿಗೆ ಗೋಳಾಟವಾಗಿ ಮಾರ್ಪಟ್ಟಿತು.
2SA 19:3 ಆದ್ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಬರುವ ಕಳ್ಳರ ಹಾಗೆ ಪಟ್ಟಣದೊಳಗೆ ಬಂದರು.
2SA 19:4 ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು, ಮಹಾಶಬ್ದವಾಗಿ, “ನನ್ನ ಮಗ ಅಬ್ಷಾಲೋಮನೇ, ಅಬ್ಷಾಲೋಮನೇ ನನ್ನ ಮಗನೇ, ನನ್ನ ಮಗನೇ,” ಎಂದು ಕೂಗುತ್ತಿದ್ದನು.
2SA 19:5 ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು, ಅವನಿಗೆ, “ನಿನ್ನ ಪ್ರಾಣವನ್ನೂ, ನಿನ್ನ ಪುತ್ರಪುತ್ರಿಯರ ಪ್ರಾಣಗಳನ್ನೂ, ನಿನ್ನ ಹೆಂಡತಿಯರ ಮತ್ತು ಉಪಪತ್ನಿಯರ ಪ್ರಾಣಗಳನ್ನೂ ರಕ್ಷಿಸಿದ ನಿನ್ನ ಸೇವಕರನ್ನು ಈ ಹೊತ್ತು ನಾಚಿಕೆಪಡಿಸಿದ್ದೀ.
2SA 19:6 ನೀನು ನಿನ್ನ ಹಗೆಯವರನ್ನು ಪ್ರೀತಿಮಾಡಿ, ನಿನ್ನನ್ನು ಪ್ರೀತಿಸುವವರನ್ನು ಹಗೆ ಮಾಡಿದ್ದರಿಂದ ಸೇನಾಧಿಪತಿಗಳನ್ನೂ, ಸೈನಿಕರನ್ನೂ ನಿನಗೆ ಏನೂ ಅಲ್ಲವೆಂದು ಈಗ ತಿಳಿಯಮಾಡಿದಿ. ಈ ಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನು ಬದುಕಿದ್ದರೆ, ನಿನಗೆ ಸಂತೋಷವಾಗುತ್ತಿತ್ತು ಎಂದು ನನಗೆ ಅನಿಸುತ್ತದೆ.
2SA 19:7 ಈಗ ನೀನು ಎದ್ದು ಹೊರಟುಬಂದು, ನಿನ್ನ ಸೈನಿಕರ ಸಂಗಡ ಸಮಾಧಾನವಾಗಿ ಮಾತನಾಡು. ನೀನು ಹೊರಗೆ ಬಾರದೆ ಇದ್ದರೆ, ಈ ರಾತ್ರಿಯಲ್ಲಿ ಒಬ್ಬರಾದರೂ ನಿನ್ನ ಸಂಗಡ ಇರುವುದಿಲ್ಲವೆಂದು ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಆಗ ನಿನ್ನ ಯೌವನಕಾಲದಿಂದ ಈ ದಿನದವರೆಗೂ ನಿನಗೆ ಬಂದ ಸಮಸ್ತ ಕೇಡಿಗಿಂತ ಅದು ಅಧಿಕ ಕೇಡಾಗಿರುವುದು,” ಎಂದನು.
2SA 19:8 ಆಗ ಅರಸನು ಎದ್ದು ಹೋಗಿ ಬಾಗಿಲಲ್ಲಿ ಕುಳಿತನು. “ಅರಸನು ಬಾಗಿಲಲ್ಲಿ ಕುಳಿತಿದ್ದಾನೆ,” ಎಂದು ಸಮಸ್ತ ಸೈನಿಕರಿಗೆ ತಿಳಿದಿದ್ದರಿಂದ, ಸೈನಿಕರೆಲ್ಲರೂ ಅರಸನ ಎದುರಿಗೆ ಬಂದರು. ಆದರೆ ಇಸ್ರಾಯೇಲರು ಮಧ್ಯದಲ್ಲಿ ತಮ್ಮ ತಮ್ಮ ಮನೆಗಳಿಗೆ ಹೋದರು.
2SA 19:9 ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿ ಸಮಸ್ತ ಜನರು ತಮ್ಮೊಳಗೆ ಜಗಳ ಮಾಡುತ್ತಾ, “ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಫಿಲಿಷ್ಟಿಯರ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಆದರೆ ಈಗ ಅಬ್ಷಾಲೋಮನಿಗೋಸ್ಕರ ದೇಶವನ್ನು ಬಿಟ್ಟು ಓಡಿಹೋಗಿದ್ದಾನೆ.
2SA 19:10 ನಮ್ಮನ್ನು ಆಳಲು ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ನಾವು ಈಗ ಅರಸನನ್ನು ತಿರುಗಿ ಕರೆದುಕೊಂಡು ಬಾರದೆ, ಸುಮ್ಮನೆ ಇರುವುದು ಏಕೆ?” ಎಂದರು.
2SA 19:11 ಆಗ ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ, ಅಬಿಯಾತರನ ಬಳಿಗೂ ಸೇವಕರನ್ನು ಕಳುಹಿಸಿ, “ನೀವು ಯೆಹೂದದ ಹಿರಿಯರಿಗೆ, ‘ಸಮಸ್ತ ಇಸ್ರಾಯೇಲಿನ ಮಾತು ಅರಸನಿಗೆ ಅವನ ಅರಮನೆಯಲ್ಲಿಯೇ ತಿಳಿದಿರುವಾಗ, ಅರಸನನ್ನು ಅವನ ಮನೆಗೆ ತಿರುಗಿ ಕರೆದುಕೊಂಡು ಬರುವಂತೆ ನೀವು ಹಿಂಜರಿದದ್ದೇನು?
2SA 19:12 ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.
2SA 19:13 ಇದಲ್ಲದೆ ನೀವು ಅಮಾಸನಿಗೆ, ‘ನೀನು ನನ್ನ ರಕ್ತವೂ, ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ, ದೇವರು ನನಗೆ ಏನಾದರೂ ಮಾಡಲಿ,’ ಎಂದು ಹೇಳಿರಿ,” ಎಂದನು.
2SA 19:14 ಅರಸನು ಸಕಲ ಯೆಹೂದ ಜನರ ಹೃದಯವನ್ನು ಸಂಪೂರ್ಣವಾಗಿ ಗೆದ್ದುಕೊಂಡದ್ದರಿಂದ, ಅವರು ಅರಸನಿಗೆ, “ನೀನೂ, ನಿನ್ನ ಸಮಸ್ತ ಸೇವಕರೂ ತಿರುಗಿ ಬನ್ನಿರಿ,” ಎಂದು ಹೇಳಿ ಕಳುಹಿಸಿದರು.
2SA 19:15 ಅರಸನು ತಿರುಗಿ ಯೊರ್ದನಿನವರೆಗೂ ಬಂದನು. ಯೆಹೂದದವರು ಅರಸನನ್ನು ಎದುರುಗೊಳ್ಳುವದಕ್ಕೆ ಹೋಗಿ, ಅರಸನು ಯೊರ್ದನನ್ನು ದಾಟುವ ಹಾಗೆ ಮಾಡುವುದಕ್ಕೆ ಗಿಲ್ಗಾಲಿಗೆ ಬಂದರು.
2SA 19:16 ಬಹುರೀಮಿನವನೂ ಬೆನ್ಯಾಮೀನ್ಯನೂ ಗೇರನ ಮಗ ಶಿಮ್ಮಿಯು ತ್ವರೆಯಾಗಿ ಯೆಹೂದ ಜನರ ಸಂಗಡ ಅರಸ ದಾವೀದನನ್ನು ಎದುರುಗೊಳ್ಳುವುದಕ್ಕೆ ಬಂದನು.
2SA 19:17 ಅವನ ಸಂಗಡ ಬೆನ್ಯಾಮೀನ್ಯರಾದ ಸಾವಿರ ಜನರೂ, ಸೌಲನ ಮನೆಯ ಸೇವಕ ಚೀಬನೂ, ಅವನ ಸಂಗಡ ಹದಿನೈದು ಮಂದಿ ಪುತ್ರರೂ, ಅವನ ಇಪ್ಪತ್ತು ಮಂದಿ ಸೇವಕರೂ ಯೊರ್ದನನ್ನು ದಾಟಿ, ಅರಸನಿಗೆ ಎದುರಾಗಿ ಬಂದರು.
2SA 19:18 ಅರಸನ ಮನೆಯವರನ್ನು ಈಚೆ ದಡಕ್ಕೆ ತರುವುದಕ್ಕೂ, ಅವನ ದೃಷ್ಟಿಗೆ ಒಳ್ಳೆಯದಾಗಿ ತೋರಿಸಿದ್ದನ್ನು ಮಾಡುವುದಕ್ಕೂ ಯೊರ್ದನನ್ನು ದಾಟಿ ಬಂದರು. ಆಗ ಗೇರನ ಮಗ ಶಿಮ್ಮಿಯು ಯೊರ್ದನನ್ನು ದಾಟುತ್ತಲೇ, ಅರಸನ ಮುಂದೆ ಬಿದ್ದು ಅರಸನಿಗೆ,
2SA 19:19 “ನನ್ನ ಒಡೆಯನೇ, ನನ್ನ ಅಕ್ರಮವನ್ನು ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖತನದಿಂದ ಮಾಡಿದ ಕಾರ್ಯವನ್ನು ನೆನಸದೆ, ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ.
2SA 19:20 ಏಕೆಂದರೆ ಪಾಪ ಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದ್ದರಿಂದ ಇಗೋ, ನಾನು ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫ್ಯರಲ್ಲಿ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದಿದ್ದೇನೆ,” ಎಂದನು.
2SA 19:21 ಆಗ ಚೆರೂಯಳ ಮಗ ಅಬೀಷೈಯನು ಉತ್ತರವಾಗಿ, “ಯೆಹೋವ ದೇವರ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ, ಅದಕ್ಕಾಗಿ ಅವನಿಗೆ ಮರಣದಂಡನೆ ಆಗಬೇಕಲ್ಲವೆ?” ಎಂದನು.
2SA 19:22 ಆದರೆ ದಾವೀದನು, “ಚೆರೂಯಳ ಮಕ್ಕಳೇ, ಈ ಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈ ಹೊತ್ತು ಇಸ್ರಾಯೇಲಿನಲ್ಲಿ ಯಾರಿಗೂ ಮರಣದಂಡನೆ ಆಗಬಾರದು, ಏಕೆಂದರೆ ಈ ಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ಗೊತ್ತಾಯಿತಲ್ಲಾ?” ಎಂದನು.
2SA 19:23 ಆಗ ಅರಸನು ಶಿಮ್ಮಿಗೆ, “ನೀನು ಸಾಯುವುದಿಲ್ಲ,” ಎಂದು ಅವನಿಗೆ ಆಣೆ ಇಟ್ಟನು.
2SA 19:24 ಸೌಲನ ಮೊಮ್ಮಗ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವವರೆಗೂ ಅವನು ತನ್ನ ಪಾದಗಳನ್ನು ಕಟ್ಟಿಕೊಳ್ಳಲಿಲ್ಲ, ಗಡ್ಡವನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.
2SA 19:25 ಅವನು ಯೆರೂಸಲೇಮಿನಿಂದ ಅರಸನನ್ನು ಎದುರುಗೊಳ್ಳಲು ಬಂದಾಗ, ಅರಸನು ಅವನಿಗೆ, “ಮೆಫೀಬೋಶೆತನೇ, ನೀನು ಏಕೆ ನನ್ನ ಸಂಗಡ ಬಾರದೆ ಹೋದೆ?” ಎಂದನು.
2SA 19:26 ಅದಕ್ಕವನು, “ಅರಸನಾದ ನನ್ನ ಒಡೆಯನೇ, ನನ್ನ ಸೇವಕನು ನನ್ನನ್ನು ಮೋಸ ಮಾಡಿದನು. ಏಕೆಂದರೆ ನಿನ್ನ ಸೇವಕನು ಕುಂಟನಾಗಿರುವುದರಿಂದ ಒಂದು ಕತ್ತೆಯ ಮೇಲೆ ತಡಿಯನ್ನು ಹಾಕಿ, ಅದರ ಮೇಲೇರಿ ಅರಸನ ಸಂಗಡ ಹೋಗುವೆನೆಂದು ನಿನ್ನ ಸೇವಕನಾದ ನಾನು ಅವನಿಗೆ ಹೇಳಿದೆನು.
2SA 19:27 ಅವನು ಅರಸನಾದ ನನ್ನ ಒಡೆಯನಿಗೆ ನಿನ್ನ ಸೇವಕನ ಮೇಲೆ ಚಾಡಿಯನ್ನು ಹೇಳಿದನು. ಆದರೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆಯೇ ಇದ್ದಾನೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಮಾಡು.
2SA 19:28 ಏಕೆಂದರೆ ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರೂ ಸತ್ತವರಾಗಿ ಇದ್ದರೂ, ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವುದಕ್ಕೆ ಯೋಗ್ಯನೋ?” ಎಂದನು.
2SA 19:29 ಆಗ ಅರಸನು ಅವನಿಗೆ, “ಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡುವುದೇನು? ನೀನೂ, ಚೀಬನೂ ಭೂಮಿಯನ್ನು ಪಾಲು ಹಂಚಿಕೊಳ್ಳಿರಿ ಎಂದು ಹೇಳಿದ್ದೇನೆ,” ಎಂದನು.
2SA 19:30 ಮೆಫೀಬೋಶೆತನು ಅರಸನಿಗೆ, “ಹೌದು, ಅರಸನಾದ ನನ್ನ ಒಡೆಯನು ಸಮಾಧಾನದಿಂದ ತಿರುಗಿ ತನ್ನ ಮನೆಗೆ ಬಂದದ್ದೇ ಸಾಕು. ಅವನೇ ಸಮಸ್ತವನ್ನು ತೆಗೆದುಕೊಳ್ಳಲಿ,” ಎಂದನು.
2SA 19:31 ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ರೋಗೆಲೀಮಿನಿಂದ ಅರಸನನ್ನು ಯೊರ್ದನ್ ದಾಟಿಸಲು ಮತ್ತು ಅಲ್ಲಿಂದ ಅವನನ್ನು ಕಳುಹಿಸಲು ಬಂದನು.
2SA 19:32 ಈ ಬರ್ಜಿಲ್ಲೈಯು ಎಂಬತ್ತು ವರ್ಷದವನಾಗಿ ಮಹಾವೃದ್ಧನಾಗಿದ್ದನು. ಅರಸನು ಮಹನಯಿಮಿನಲ್ಲಿ ವಾಸಿಸಿಸುವವರೆಗೂ ಇವನು ಅರಸನನ್ನು ಸಂರಕ್ಷಿಸಿದನು. ಏಕೆಂದರೆ ಅವನು ಬಹು ಸಿರಿವಂತ ಮನುಷ್ಯನಾಗಿದ್ದನು.
2SA 19:33 ಆದ್ದರಿಂದ ಅರಸನು ಬರ್ಜಿಲ್ಲೈಗೆ, “ನೀನು ನನ್ನ ಸಂಗಡ ಬಾ, ಯೆರೂಸಲೇಮಿನಲ್ಲಿ ನಿನ್ನನ್ನು ನನ್ನ ಬಳಿಯಲ್ಲಿ ಸಂರಕ್ಷಿಸುವೆನು,” ಎಂದನು.
2SA 19:34 ಆದರೆ ಬರ್ಜಿಲ್ಲೈಯು ಅರಸನಿಗೆ, “ನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವಹಾಗೆ ನಾನು ಬದುಕುವ ವರುಷ ಎಷ್ಟು ಉಂಟು?
2SA 19:35 ನಾನು ಈ ಹೊತ್ತು ಎಂಬತ್ತು ವರ್ಷದವನು. ಇನ್ನು ಒಳ್ಳೆಯದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವುದು, ಕುಡಿಯುವುದು ನಿನ್ನ ಸೇವಕನಿಗೆ ರುಚಿಕರವಾಗಿರುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಏಕೆ ಇನ್ನು ಭಾರವಾಗಿರಬೇಕು?
2SA 19:36 ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವವರೆಗೂ ಅವರ ಅರಸನ ಸಂಗಡ ಬರುವನು. ಅದಕ್ಕೆ ಇಂಥಾ ಬಹುಮಾನ ಕೊಡುವುದೇನು?
2SA 19:37 ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರುಗಿ ಹೋಗಿ, ನನ್ನ ಪಟ್ಟಣದಲ್ಲಿ ನನ್ನ ತಂದೆತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ನಿನ್ನ ಸೇವಕನಾದ ನನ್ನ ಮಗ ಕಿಮ್ಹಾಮನು ಬರುವನು. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಅವನಿಗೆ ಮಾಡು,” ಎಂದನು.
2SA 19:38 ಆಗ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನಾನು ಅವನಿಗೆ ಮಾಡುವೆನು. ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು,” ಎಂದನು.
2SA 19:39 ಜನರೆಲ್ಲರೂ ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ, ಬರ್ಜಿಲ್ಲೈಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಸ್ಥಳಕ್ಕೆ ಹಿಂದಿರುಗಿದನು.
2SA 19:40 ಅರಸನು ಗಿಲ್ಗಾಲಿಗೆ ಬಂದನು. ಹಾಗೆಯೇ ಅವನ ಸಂಗಡ ಕಿಮ್ಹಾಮನು ಬಂದನು. ಯೆಹೂದದ ಸೈನಿಕರೆಲ್ಲರೂ, ಇಸ್ರಾಯೇಲಿನ ಅರ್ಧ ಪಾಲು ಸೈನಿಕರೂ ಅರಸನನ್ನು ಕರೆದುಕೊಂಡು ಬಂದರು.
2SA 19:41 ಇಸ್ರಾಯೇಲರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ, “ನಮ್ಮ ಸಹೋದರರಾದ ಯೆಹೂದದ ಮನುಷ್ಯರು ಕಳ್ಳತನವಾಗಿ ನಿನ್ನನ್ನು ಕರೆತಂದದ್ದೇನು? ಅರಸನನ್ನೂ, ಅವನ ಮನೆಯವರನ್ನೂ, ಅವನ ಸಂಗಡ ಇರುವ ದಾವೀದನ ಸಕಲ ಮನುಷ್ಯರನ್ನೂ ಯೊರ್ದನನ್ನು ದಾಟಿಸಿದ್ದೇನು?” ಎಂದರು.
2SA 19:42 ಆಗ ಯೆಹೂದದವರೆಲ್ಲರೂ ಇಸ್ರಾಯೇಲರಿಗೆ ಉತ್ತರವಾಗಿ, “ಅರಸನು ನಮಗೆ ಸಮೀಪ ಬಂಧುವಾದುದರಿಂದ, ಈ ಕಾರ್ಯಕ್ಕೋಸ್ಕರ ನೀವು ಕೋಪಗೊಂಡಿರುವುದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ನಾವು ನಮಗಾಗಿ ಏನನ್ನಾದರೂ ತೆಗೆದುಕೊಂಡಿದ್ದೇವೆಯೇ?” ಎಂದರು.
2SA 19:43 ಆದರೆ ಇಸ್ರಾಯೇಲರು ಯೆಹೂದ ಜನರಿಗೆ ಉತ್ತರವಾಗಿ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟು. ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರುಗಿ ಕರೆದುಕೊಂಡು ಬರುವುದರ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಏಕೆ ಅಲ್ಪರಾಗಿ ಎಣಿಸಿದಿರಿ?” ಎಂದರು. ಆದರೆ ಇಸ್ರಾಯೇಲರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.
2SA 20:1 ಬೆನ್ಯಾಮೀನ್ಯನಾದ ಬಿಕ್ರಿಯ ಮಗ ಶೆಬನೆಂಬ ಹೆಸರುಳ್ಳ ಒಬ್ಬ ನೀಚ ವ್ಯಕ್ತಿ ಅಲ್ಲಿದ್ದನು. ಅವನು ತುತೂರಿಯನ್ನು ಊದಿ ಹೀಗಂದನು, “ನಮಗೆ ದಾವೀದನಲ್ಲಿ ಪಾಲಿಲ್ಲ, ಇಷಯನ ಮಗನ ಬಳಿಯಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಇಸ್ರಾಯೇಲರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ.”
2SA 20:2 ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು ಸರಿದು, ಬಿಕ್ರಿಯ ಮಗ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.
2SA 20:3 ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು. ಅರಸನು ಮನೆಯಲ್ಲಿ ಕಾಯಲು ಇಟ್ಟ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ತೆಗೆದುಕೊಂಡು, ಅವರನ್ನು ಒಂದು ಕಾವಲಿನಲ್ಲಿರಿಸಿ ಸಾಕುತ್ತಿದ್ದನು. ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಅವರ ಸಂಪರ್ಕ ಮಾಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದವರೆಗೂ ವಿಧವೆಯರಂತೆ ಇದ್ದು ಕಾವಲಲ್ಲಿರಬೇಕಾಯಿತು.
2SA 20:4 ಅರಸನು ಅಮಾಸನಿಗೆ, “ನೀನು ಮೂರು ದಿವಸಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ನನ್ನ ಬಳಿಗೆ ಬಾ ಮತ್ತು ನೀನೇ ಇಲ್ಲಿ ಇರು,” ಎಂದನು.
2SA 20:5 ಹಾಗೆಯೇ ಅಮಾಸನು ಯೆಹೂದ ಜನರನ್ನು ಕೂಡಿಸಲು ಹೋದನು. ಆದರೆ ಅವನು ತನಗೆ ನೇಮಿಸಿದ ಕಾಲಕ್ಕಿಂತ ಬಾರದೆ ಹೆಚ್ಚು ತಡಮಾಡಿದನು.
2SA 20:6 ಆದ್ದರಿಂದ ದಾವೀದನು ಅಬೀಷೈಯನಿಗೆ, “ಈಗ ಅಬ್ಷಾಲೋಮನಿಗಿಂತ ಬಿಕ್ರಿಯ ಮಗ ಶೆಬನು ನಮಗೆ ಹೆಚ್ಚಿನ ಕೇಡನ್ನು ಮಾಡುವನು. ಅವನು ತನಗೆ ಗಡಿ ಪಟ್ಟಣಗಳನ್ನು ಸಂಪಾದಿಸಿಕೊಂಡು, ನಮ್ಮಿಂದ ತಪ್ಪಿಸಿಕೊಳ್ಳದೆ ಹಾಗೆ ನೀನು ನಿನ್ನ ಯಜಮಾನನ ಸೇವಕರನ್ನು ತೆಗೆದುಕೊಂಡು ಹೊರಟು ಅವನನ್ನು ಹಿಂದಟ್ಟು,” ಎಂದನು.
2SA 20:7 ಹಾಗೆಯೇ ಅವನ ಹಿಂದೆ ಯೋವಾಬನ ಜನರೂ, ಕೆರೇತ್ಯರೂ, ಪೆಲೇತ್ಯರೂ, ಸಮಸ್ತ ಪರಾಕ್ರಮಶಾಲಿಗಳೂ ಅಬೀಷೈಯನ ನೇತೃತ್ವದಲ್ಲಿ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.
2SA 20:8 ಅವರು ಗಿಬ್ಯೋನಿನ ಸಮೀಪದಲ್ಲಿರುವ ದೊಡ್ಡ ಕಲ್ಲಿನ ಬಳಿಗೆ ಬಂದಾಗ, ಅಮಾಸನು ಅವರೆದುರಿಗೆ ಬಂದನು. ಯೋವಾಬನು ತಾನು ಧರಿಸಿದ್ದ ಅಂಗಿಯ ಮೇಲೆ ಒಂದು ನಡುಕಟ್ಟನ್ನು ಕಟ್ಟಿಕೊಂಡಿದ್ದನು. ಅದರಲ್ಲಿ ಒರೆಯ ಸಂಗಡ ಒಂದು ಕಠಾರಿ ಅವನ ನಡುವಿನಲ್ಲಿ ತೂಗುತ್ತಿತ್ತು. ಅವನು ನಡೆಯುವಾಗ ಕಠಾರಿ ಒರೆಯಿಂದ ಕೆಳಗೆ ಬಿದ್ದಿತು.
2SA 20:9 ಆಗ ಯೋವಾಬನು ಅಮಾಸನಿಗೆ, “ನನ್ನ ಸಹೋದರನೇ, ಕ್ಷೇಮವೋ?” ಎಂದನು. ಯೋವಾಬನು ಅವನನ್ನು ಮುದ್ದಿಟ್ಟುಕೊಳ್ಳಲು ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು.
2SA 20:10 ಆದರೆ ಅಮಾಸನು ಯೋವಾಬನ ಕೈಯಲ್ಲಿ ಕಠಾರಿ ಇದ್ದುದರಿಂದ ಎಚ್ಚರಿಕೆ ತೆಗೆದುಕೊಳ್ಳದಿರುವಾಗ, ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಹೊಟ್ಟೆಯಲ್ಲಿ ತಿವಿದನು. ಎರಡನೆಯ ಸಾರಿ ಹೊಡೆಯಲಿಲ್ಲ. ಅವನು ಸತ್ತನು. ಯೋವಾಬನೂ, ಅವನ ಸಹೋದರನಾದ ಅಬೀಷೈಯನೂ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಿದರು.
2SA 20:11 ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು.
2SA 20:12 ಆದರೆ ಅಮಾಸನು ರಾಜಮಾರ್ಗದೊಳಗೆ ರಕ್ತದಲ್ಲಿ ಹೊರಳಾಡುತ್ತಾ ಇದ್ದನು. ಜನರೆಲ್ಲರು ನಿಂತಿರುವುದನ್ನು ಆ ಮನುಷ್ಯನು ಕಂಡಾಗ, ಅವನು ಅಮಾಸನನ್ನು ದಾರಿಯಿಂದ ಹೊಲಕ್ಕೆ ಎಳೆದು ಹಾಕಿ, ಅವನ ಮೇಲೆ ಒಂದು ವಸ್ತ್ರವನ್ನು ಹಾಕಿದನು.
2SA 20:13 ಶವವನ್ನು ರಾಜಮಾರ್ಗದಿಂದ ಎಳೆದು ಆಚೆ ಹಾಕಿದ ತರುವಾಯ ಜನರೆಲ್ಲರೂ ಮುಂದಕ್ಕೆ ಹೋಗಿ, ಬಿಕ್ರಿಯ ಮಗನಾದ ಶೆಬನನ್ನು ಹಿಂದಟ್ಟಿ ಯೋವಾಬನ ಹಿಂದೆ ಹೋದರು.
2SA 20:14 ಶೆಬನು ಇಸ್ರಾಯೇಲಿನ ಎಲ್ಲಾ ಗೋತ್ರಗಳಲ್ಲಿ ಹಾದು ಬೇತ್ ಮಾಕದ ಆಬೇಲಿಗೆ ಬಂದು, ಬೇರ‍್ಯರ ಪ್ರದೇಶದ ಮಾರ್ಗವಾಗಿ ಹೋದನು. ಆಗ ಬೇರ‍್ಯರು ಕೂಡಿಕೊಂಡು ಅವನ ಸಂಗಡ ಹೋದರು.
2SA 20:15 ಯೋವಾಬನ ಜೊತೆಗಿದ್ದ ಸೈನಿಕರು ಬಂದು ಆಬೇಲ್ ಬೇತ್ ಮಾಕಾ ಊರಿಗೆ ಮುತ್ತಿಗೆ ಹಾಕಿ, ಪಟ್ಟಣಕ್ಕೆದುರಾಗಿ ಊರು ಗೋಡೆಯವರೆಗೆ ಮಣ್ಣಿನ ದಿಬ್ಬವನ್ನು ಮಾಡಿದರು. ಯೋವಾಬನ ಸಂಗಡದಲ್ಲಿರುವ ಜನರೆಲ್ಲರೂ ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.
2SA 20:16 ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ, “ಕೇಳಿರಿ, ಕೇಳಿರಿ. ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸಮೀಪಿಸಲು ಬರಹೇಳಿರಿ,” ಎಂದು ಕೂಗಿ ಬೇಡಿಕೊಂಡಳು.
2SA 20:17 ಅವನು ಅವಳ ಬಳಿಗೆ ಸಮೀಪಿಸಿ ಬಂದಾಗ, ಆ ಸ್ತ್ರೀಯು, “ನೀನು ಯೋವಾಬನೋ?” ಎಂದಳು. ಅದಕ್ಕೆ ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿನ್ನ ದಾಸಿಯ ಮಾತನ್ನು ಕೇಳಿ,” ಎಂದಳು. ಅದಕ್ಕೆ ಅವನು, “ನಾನು ಕೇಳುತ್ತೇನೆ,” ಎಂದನು.
2SA 20:18 ಅವಳು ಮಾತನಾಡುತ್ತಾ, “ಪೂರ್ವಕಾಲದಲ್ಲಿ, ‘ಆಬೇಲಿನವರ ಉತ್ತರ ಪಡೆಯಿರಿ’ ಎಂದು ಹೇಗೆ ವ್ಯಾಜ್ಯ ತೀರಿಸಿಕೊಳ್ಳುತ್ತಿದ್ದರು.
2SA 20:19 ಹಾಗೆ ನಾವು ಇಸ್ರಾಯೇಲಿನಲ್ಲಿ ಸಮಾಧಾನವುಳ್ಳವರೂ, ನಂಬಿಗಸ್ತರೂ ಆಗಿದ್ದೇವೆ. ಇಸ್ರಾಯೇಲಿನ ತಾಯಿಯಂತಿರುವ ನಮ್ಮ ಪಟ್ಟಣವನ್ನು ಹಾಳುಮಾಡಲು ಯೆಹೋವ ದೇವರ ಸೊತ್ತನ್ನು ಕಬಳಿಸುವುದಕ್ಕೆ ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದಳು.
2SA 20:20 ಅದಕ್ಕೆ ಯೋವಾಬನು ಉತ್ತರವಾಗಿ, “ನಾನು ಅದನ್ನು ಎಂದಿಗೂ ಮಾಡುವುದಿಲ್ಲ. ನುಂಗುವುದನ್ನೂ ಹಾಳುಮಾಡುವುದನ್ನೂ ನಾನು ಎಂದಿಗೂ ಮಾಡುವುದಿಲ್ಲ.
2SA 20:21 ಕಾರ್ಯವು ಹಾಗಲ್ಲ. ಏಕೆಂದರೆ ಬಿಕ್ರಿಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯೀಮ್ ಬೆಟ್ಟದವನಾದ ಒಬ್ಬ ಮನುಷ್ಯನು, ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ. ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು,” ಎಂದನು. ಆ ಸ್ತ್ರೀಯು ಯೋವಾಬನಿಗೆ, “ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು,” ಎಂದಳು.
2SA 20:22 ಆ ಸ್ತ್ರೀಯು ತನ್ನ ಜ್ಞಾನದಿಂದ ಸಮಸ್ತ ಜನರ ಬಳಿಗೆ ಹೋದಳು. ಆಗ ಅವರು ಬಿಕ್ರಿಯ ಮಗ ಶೆಬನ ತಲೆಯನ್ನು ಕಡಿದು ಯೋವಾಬನ ಬಳಿ ಹಾಕಿದರು. ಅವನು ತುತೂರಿಯನ್ನು ಊದಿದ್ದರಿಂದ, ಅವರು ಪಟ್ಟಣದಿಂದ ಚದರಿ ಪ್ರತಿ ಮನುಷ್ಯನೂ ತಮ್ಮ ತಮ್ಮ ಮನೆಗಳಿಗೆ ಹೋದರು. ಯೋವಾಬನು ಯೆರೂಸಲೇಮಿನಲ್ಲಿರುವ ಅರಸನ ಬಳಿಗೆ ಹಿಂದಿರುಗಿ ಬಂದನು.
2SA 20:23 ಯೋವಾಬನು ಇಸ್ರಾಯೇಲಿನ ಸಮಸ್ತ ಸೈನ್ಯದ ಅಧಿಪತಿಯಾಗಿದ್ದನು. ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು.
2SA 20:24 ಅದೋನೀರಾಮನು ದಾಸರ ಮೇಲೆ ಉಸ್ತುವಾರಿ ವಹಿಸಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
2SA 20:25 ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕನೂ ಅಬಿಯಾತರನೂ ಯಾಜಕರಾಗಿದ್ದರು.
2SA 20:26 ಯಾಯೀರಿನವನಾದ ಈರನೂ ದಾವೀದನ ಯಾಜಕನಾಗಿದ್ದನು.
2SA 21:1 ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.
2SA 21:2 ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆಕಳುಹಿಸಿದನು. ಗಿಬ್ಯೋನ್ಯರು ಇಸ್ರಾಯೇಲರಿಗೆ ಸೇರಿದವರಲ್ಲ. ಅಮೋರಿಯರಲ್ಲಿ ಉಳಿದ ಜನರಾಗಿದ್ದರು. ಅವರನ್ನು ಕೊಲ್ಲುವುದಿಲ್ಲವೆಂದು ಇಸ್ರಾಯೇಲರು ಆಣೆ ಇಟ್ಟಿದ್ದರು. ಆದರೆ ಸೌಲನು ಇಸ್ರಾಯೇಲರಿಗಾಗಿಯೂ, ಯೆಹೂದದವರಿಗಾಗಿಯೂ ತನಗಿದ್ದ ಆಸಕ್ತಿಯಿಂದ ಅವರನ್ನು ಕೊಂದುಹಾಕಲು ಪ್ರಯತ್ನಮಾಡಿದ್ದನು.
2SA 21:3 ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಮಾಡಬೇಕಾದದ್ದೇನು? ನೀವು ಯೆಹೋವ ದೇವರ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ, ನಾನು ಯಾವುದರಿಂದ ಪ್ರಾಯಶ್ಚಿತ್ತ ಮಾಡಲಿ,” ಎಂದು ಕೇಳಿದನು.
2SA 21:4 ಆಗ ಗಿಬ್ಯೋನ್ಯರು ಅವನಿಗೆ, “ಸೌಲನ ಕೈಯಿಂದಲಾದರೂ, ಅವನ ಮನೆಯವರ ಕೈಯಿಂದಲಾದರೂ, ನಮಗೆ ಬೆಳ್ಳಿಯಾದರೂ, ಬಂಗಾರವಾದರೂ ಬೇಡ. ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕಬೇಕೆಂಬುದು ನಮಗೆ ಅಗತ್ಯವಿಲ್ಲ,” ಎಂದರು. ಆಗ ಅವನು, “ನೀವು ನನಗೆ ಏನು ಹೇಳುತ್ತೀರೋ, ನಾನು ನಿಮಗೆ ಮಾಡುವೆನು,” ಎಂದನು.
2SA 21:5 ಅವರು ಅರಸನಿಗೆ, “ಯಾವನು ನಮ್ಮನ್ನು ಸಂಹರಿಸಿಬಿಟ್ಟು, ನಾವು ಇಸ್ರಾಯೇಲಿನ ಸಮಸ್ತ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ ನಮಗೆ ಕೇಡು ಮಾಡಲು ನೆನಸಿದನೋ,
2SA 21:6 ಅವನ ಪುತ್ರರಲ್ಲಿ ಏಳುಮಂದಿಯನ್ನು ನಮಗೆ ಒಪ್ಪಿಸು. ಆಗ ನಾವು ಯೆಹೋವ ದೇವರು ಆಯ್ದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಯೆಹೋವ ದೇವರಿಗೋಸ್ಕರ ಗಲ್ಲಿಗೆ ಹಾಕುವೆವು,” ಎಂದರು. ಅದಕ್ಕೆ ಅರಸನು, “ನಾನು ಒಪ್ಪಿಸಿಕೊಡುವೆನು,” ಎಂದನು.
2SA 21:7 ಆದರೆ ತಮಗೂ, ದಾವೀದನಿಗೂ, ಸೌಲನ ಮಗ ಯೋನಾತಾನನಿಗೂ ಯೆಹೋವ ದೇವರನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ, ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ,
2SA 21:8 ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರು ಮಕ್ಕಳಾದ ಅರ್ಮೋನಿಯನ್ನೂ, ಮತ್ತೊಬ್ಬ ಮೆಫೀಬೋಶೆತನನ್ನೂ, ಸೌಲನ ಮಗಳಾಗಿರುವ ಮೇರಬಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರಿಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡಿದುಕೊಂಡು,
2SA 21:9 ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಇವರನ್ನು ಕೊಂದು, ಯೆಹೋವ ದೇವರ ಮುಂದೆ ಬೆಟ್ಟದ ಮೇಲೆ ನೇತುಹಾಕಿದರು. ಈ ಏಳುಮಂದಿಯೂ ಒಂದೇ ಸಾರಿ ಹತರಾದರು. ಇವರನ್ನು ಕೊಂದಾಗ ಜವೆಗೋಧಿ ಸುಗ್ಗಿಯ ಆರಂಭವಾಗಿತ್ತು.
2SA 21:10 ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತೆಗೆದುಕೊಂಡುಹೋಗಿ, ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಅದರ ಮೇಲೆ ಕುಳಿತುಕೊಂಡಳು. ಸುಗ್ಗಿಯ ದಿವಸ ಮೊದಲ್ಗೊಂಡು ಆಕಾಶದಿಂದ ಶವಗಳ ಮೇಲೆ ಮಳೆ ಬೀಳುವ ತನಕ, ಹಗಲಲ್ಲಿ ಆಕಾಶದ ಪಕ್ಷಿಗಳಾದರೂ, ರಾತ್ರಿಯಲ್ಲಿ ಕಾಡುಮೃಗಗಳಾದರೂ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.
2SA 21:11 ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲಾಯಿತು.
2SA 21:12 ಆಗ ದಾವೀದನು ಹೋಗಿ ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೆ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೌಲನನ್ನು ಸೋಲಿಸಿದ ನಂತರ, ಅವನ ಮತ್ತು ಅವನ ಮಗನಾದ ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಆ ಶವಗಳನ್ನು ಕದ್ದುಕೊಂಡು ಹೋಗಿದ್ದರು.
2SA 21:13 ದಾವೀದನು ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಆ ಮನುಷ್ಯರ ಎಲುಬುಗಳನ್ನೂ ಅವರಿಂದ ತೆಗೆದುಕೊಂಡನು.
2SA 21:14 ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.
2SA 21:15 ಫಿಲಿಷ್ಟಿಯರು ತಿರುಗಿ ಇಸ್ರಾಯೇಲರ ಮೇಲೆ ಯುದ್ಧಮಾಡಿದರು. ಆಗ ದಾವೀದನು ತನ್ನ ಜನರೊಂದಿಗೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿದನು. ದಾವೀದನು ದಣಿದು ಹೋದನು.
2SA 21:16 ಆಗ ಮುನ್ನೂರು ಬೆಳ್ಳಿ ನಾಣ್ಯದ ತೂಕದ ಕಂಚು ಈಟಿಯುಳ್ಳ, ಹೊಸ ಖಡ್ಗವನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ರೆಫಾಯನ ಮಕ್ಕಳಲ್ಲಿ ಇಷ್ಬೀಬೆನೋಬನು ದಾವೀದನನ್ನು ಕೊಲ್ಲಬೇಕೆಂದಿದ್ದನು.
2SA 21:17 ಆದರೆ ಚೆರೂಯಳ ಮಗ ಅಬೀಷೈಯನು ಅವನಿಗೆ ಸಹಾಯವಾಗಿ ಬಂದು, ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿದನು. ಆಗ ದಾವೀದನ ಜನರು ಅವನಿಗೆ, “ಇಸ್ರಾಯೇಲಿನ ಬೆಳಕಾಗಿರುವ ನೀನು ಆರಿಹೋಗದಂತೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಬರಬೇಡ,” ಎಂದು ಆಣೆ ಇಟ್ಟರು.
2SA 21:18 ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಮತ್ತೊಂದು ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
2SA 21:19 ಅನಂತರ ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಯುದ್ಧ ಉಂಟಾದಾಗ, ಬೇತ್ಲೆಹೇಮಿನವನಾದ ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರರನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
2SA 21:20 ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
2SA 21:21 ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮೆಯನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
2SA 21:22 ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.
2SA 22:1 ಯೆಹೋವ ದೇವರು ದಾವೀದನನ್ನು ಅವನ ಎಲ್ಲಾ ಶತ್ರುಗಳಿಂದಲೂ, ಸೌಲನ ಕೈಯಿಂದಲೂ ತಪ್ಪಿಸಿಕೊಂಡಾಗ ಯೆಹೋವ ದೇವರಿಗೆ ಈ ಪದ್ಯವನ್ನು ಹಾಡಿದ್ದು.
2SA 22:2 ಅವನು ಹೇಳಿದನು: “ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ,
2SA 22:3 ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು; ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ಅವರು ನನ್ನ ಉನ್ನತವಾದ ದುರ್ಗವೂ, ನನ್ನ ಆಶ್ರಯವೂ, ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವರೂ ಅವರೇ ಆಗಿದ್ದಾರೆ.
2SA 22:4 “ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.
2SA 22:5 ಮರಣದಲೆಗಳು ನನ್ನನ್ನು ಆವರಿಸಿಕೊಂಡವು. ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು;
2SA 22:6 ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು.
2SA 22:7 “ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಕರೆದೆನು; ನನ್ನ ದೇವರಿಗೆ ಮೊರೆಯಿಟ್ಟೆನು. ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಕಿವಿಗೆ ಮುಟ್ಟಿತು.
2SA 22:8 ಆಗ ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು, ಆಕಾಶಗಳ ಅಸ್ತಿವಾರಗಳು ಸಹ ಕದಲಿದವು.
2SA 22:9 ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.
2SA 22:10 ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು; ಅವರ ಪಾದಗಳ ಕೆಳಗೆ ಕಾರ್ಮೋಡಗಳಿದ್ದವು;
2SA 22:11 ಅವರು ಕೆರೂಬಿಯ ಮೇಲೆ ಕೂತು ಹಾರಿದರು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿಕೊಂಡರು.
2SA 22:12 ಕತ್ತಲನ್ನೂ, ಮಳೆ ತರುವ ಆಕಾಶದ ಕಾರ್ಮೋಡಗಳನ್ನೂ ತಮ್ಮ ಸುತ್ತಲೂ ಹೊದಿಕೆಯನ್ನಾಗಿ ಮಾಡಿಕೊಂಡರು.
2SA 22:13 ಅವರ ಸನ್ನಿಧಿಯ ಪ್ರಕಾಶದಿಂದ ಮಿಂಚಿನ ಜ್ವಾಲೆಗಳು ಹೊರಹೊಮ್ಮಿದವು.
2SA 22:14 ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು. ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.
2SA 22:15 ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು, ಸಿಡಿಲಿನಿಂದ ವೈರಿಗಳನ್ನೆಲ್ಲ ಅಟ್ಟಿಸಿಬಿಟ್ಟರು.
2SA 22:16 ಆಗ ಯೆಹೋವ ದೇವರ ಗದರಿಕೆಯಿಂದಲೂ, ಅವರ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿತು. ಭೂಲೋಕದ ಅಸ್ತಿವಾರಗಳು ಬಯಲಾದವು.
2SA 22:17 “ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ಅಗಾಧವಾದ ಜಲರಾಶಿಗಳಿಂದ ಹೊರಗೆಳೆದರು.
2SA 22:18 ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ, ದ್ವೇಷಿಸುತ್ತಿದ್ದ ವೈರಿಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದರು.
2SA 22:19 ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು; ಆದರೆ ಯೆಹೋವ ದೇವರು ನನಗೆ ಆಧಾರವಾಗಿದ್ದರು.
2SA 22:20 ಅವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು; ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ಕಾಪಾಡಿದರು.
2SA 22:21 “ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು; ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಪ್ರತಿಫಲಕೊಟ್ಟರು.
2SA 22:22 ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಅನುಸರಿಸಿದ್ದೇನೆ, ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
2SA 22:23 ಅವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು; ದೇವರ ತೀರ್ಪುಗಳಿಂದ ನಾನು ತೊಲಗಿಹೋಗಲಿಲ್ಲ.
2SA 22:24 ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು, ನಾನು ಪಾಪದಿಂದ ನನ್ನನ್ನು ಕಾಪಾಡಿಕೊಂಡೆನು.
2SA 22:25 ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ, ಅವರ ದೃಷ್ಟಿಯಲ್ಲಿ ನನ್ನ ಶುದ್ಧತ್ವದ ಪ್ರಕಾರವೂ ನನಗೆ ಪ್ರತಿಫಲಕೊಟ್ಟರು.
2SA 22:26 “ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ; ನಿರ್ದೋಷಿಗೆ ನೀವು ನಿರ್ದೋಷಿಯಾಗಿ ತೋರಿಸುತ್ತೀರಿ.
2SA 22:27 ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ, ವಕ್ರ ವ್ಯಕ್ತಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತೀರಿ.
2SA 22:28 ದೀನರನ್ನು ರಕ್ಷಿಸುತ್ತೀರಿ; ಆದರೆ ನೀವು ಗರ್ವಿಷ್ಠರನ್ನು ತಗ್ಗಿಸಲು ನಿಮ್ಮ ಕಣ್ಣುಗಳು ಅವರ ಮೇಲೆ ಇರುತ್ತವೆ.
2SA 22:29 ಯೆಹೋವ ದೇವರೇ, ನನ್ನ ದೀಪವು ನೀವೇ; ಯೆಹೋವ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.
2SA 22:30 ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು. ನನ್ನ ದೇವರೊಂದಿಗೆ ಕೋಟೆಗೋಡೆಯನ್ನೂ ಹಾರುವೆನು.
2SA 22:31 “ದೇವರ ಮಾರ್ಗವು ಪರಿಪೂರ್ಣವಾದದ್ದು; ಯೆಹೋವ ದೇವರ ವಾಕ್ಯವು ದೋಷವಿಲ್ಲದ್ದು; ತಮ್ಮಲ್ಲಿ ಆಶ್ರಯ ಹೊಂದಿದ ಎಲ್ಲರಿಗೂ ಅವರು ಗುರಾಣಿಯಾಗಿದ್ದಾರೆ.
2SA 22:32 ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ಬಂಡೆ ಯಾರು?
2SA 22:33 ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ; ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.
2SA 22:34 ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.
2SA 22:35 ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು. ನನ್ನ ಭುಜದಿಂದ ಕಂಚಿನ ಬಿಲ್ಲನ್ನು ಬಗ್ಗಿಸುವಂತೆ ಮಾಡುತ್ತಾರೆ.
2SA 22:36 ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ, ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.
2SA 22:37 ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ, ಆದುದರಿಂದ ನನ್ನ ಹಿಮ್ಮಡಿಗಳು ಜಾರುವುದಿಲ್ಲ.
2SA 22:38 “ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು. ಅವರನ್ನು ಸಂಹರಿಸಿಬಿಡುವವರೆಗೂ ನಾನು ಹಿಂದಿರುಗಲಿಲ್ಲ.
2SA 22:39 ಏಳಲಾರದಂತೆ ಅವರನ್ನು ಸಂಪೂರ್ಣವಾಗಿ ತುಳಿದುಬಿಟ್ಟೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದರು.
2SA 22:40 ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ; ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.
2SA 22:41 ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ; ನಾನು ನನ್ನ ವೈರಿಗಳನ್ನು ಸಂಹರಿಸಿದೆನು.
2SA 22:42 ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ; ಯೆಹೋವ ದೇವರಿಗೂ ಮೊರೆಯಿಟ್ಟರು, ಆದರೆ ಅವರೂ ಉತ್ತರ ಕೊಡಲಿಲ್ಲ.
2SA 22:43 ನಾನು ಅವರನ್ನು ನೆಲದ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.
2SA 22:44 “ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ, ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಉಳಿಸಿದ್ದೀ; ನಾನು ಅರಿಯದ ಜನರು ನನಗೆ ವಿಧೇಯರಾಗುವರು.
2SA 22:45 ವಿದೇಶಿಯರು ನನಗೆ ಅಧೀನರಾದರು; ನನ್ನ ಸುದ್ದಿ ಕೇಳಿದ ಕೂಡಲೇ ನನಗೆ ವಿಧೇಯರಾಗುವರು.
2SA 22:46 ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.
2SA 22:47 “ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರ. ನನ್ನ ಬಂಡೆಯು, ನನ್ನ ರಕ್ಷಕರಾದ ದೇವರು ಮಹಿಮೆ ಹೊಂದಲಿ.
2SA 22:48 ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ ಜನರನ್ನು ನನಗೆ ಅಧೀನಪಡಿಸುವವರೂ ಆಗಿದ್ದಾರೆ.
2SA 22:49 ಅವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ. ನೀವು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀರಿ. ಬಲಾತ್ಕಾರ ಮಾಡುವವನಿಂದ ನನ್ನನ್ನು ರಕ್ಷಿಸುತ್ತೀರಿ.
2SA 22:50 ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು. ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.
2SA 22:51 “ಅವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ, ದಾವೀದನಿಗೂ, ಅವನ ಸಂತತಿಯವರಿಗೂ ದಯೆಯನ್ನು ಯುಗಯುಗಕ್ಕೂ ಅನುಗ್ರಹಿಸುವರು.”
2SA 23:1 ದಾವೀದನ ಕಡೆಯ ಮಾತುಗಳು: “ಇಷಯನ ಮಗ ದಾವೀದನ ನುಡಿಗಳಿವು: ಉನ್ನತವಾಗಿ ಸಾಗಿದ ಪುರುಷನು ಯಾಕೋಬನ ದೇವರಿಂದ ಅಭಿಷಿಕ್ತನಾದವನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನೆಂದರೆ:
2SA 23:2 “ಯೆಹೋವ ದೇವರ ಆತ್ಮರು ನನ್ನ ಮೂಲಕ ಮಾತನಾಡಿದರು; ಅವರ ನುಡಿ ನನ್ನ ಬಾಯಲ್ಲಿ ಇತ್ತು.
2SA 23:3 ಇಸ್ರಾಯೇಲಿನ ದೇವರೂ, ಇಸ್ರಾಯೇಲಿನ ಬಂಡೆಯಾದವರೂ ನನಗೆ ಮಾತನಾಡಿದ್ದು: ‘ಮನುಷ್ಯರ ಮೇಲೆ ನೀತಿಯಿಂದ ಆಳುವವನು, ದೇವರ ಭಯದಿಂದ ಆಳುವವನು.
2SA 23:4 ಮೋಡವಿಲ್ಲದ ಮುಂಜಾನೆ ಸೂರ್ಯೋದಯದ ಸಮಯದಲ್ಲಿಯ ಉದಯದ ಬೆಳಕಿನಂತಿರುವನು. ಭೂಮಿಯಿಂದ ಹುಲ್ಲು ಮೊಳೆಯಿಸುವ ಮಳೆಯ ನಂತರದ ಪ್ರಕಾಶದಂತಿರುವನು.’
2SA 23:5 “ನನ್ನ ಮನೆ ದೇವರೊಂದಿಗೆ ಸರಿಯಾಗಿರದಿದ್ದರೆ, ನಿಶ್ಚಯವಾಗಿಯೂ ಅವರು ನನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ, ಪ್ರತಿಯೊಂದು ವಿಭಾಗದಲ್ಲಿಯೂ ವ್ಯವಸ್ಥೆಗೊಳಿಸಲಾಗಿದೆ ಮತ್ತು ಭದ್ರಪಡಿಸಲಾಗಿದೆ. ದೇವರು ನಿಶ್ಚಯವಾಗಿಯೂ ನನ್ನ ರಕ್ಷಣೆಯನ್ನು ಪೂರ್ತಿಗೊಳಿಸುವುದಿಲ್ಲ. ದೇವರು ನನ್ನ ಎಲ್ಲಾ ಅಪೇಕ್ಷೆಗಳನ್ನು ಪೂರೈಸುವುದಿಲ್ಲ.
2SA 23:6 ಆದರೆ ದುಷ್ಟಜನರೆಲ್ಲರು ಕೈಗಳಿಂದ ಕೂಡಿಸದೆ, ಎಸೆದುಬಿಡುವ ಮುಳ್ಳಿನಂತೆ ಇದ್ದಾರೆ.
2SA 23:7 ಮುಳ್ಳುಗಳನ್ನು ಮುಟ್ಟುವವರು ಕಬ್ಬಿಣದ ಆಯುಧ ಉಪಯೋಗಿಸುವರು, ಇಲ್ಲವೆ ಈಟಿಯ ಮೊನೆಯನ್ನು ಉಪಯೋಗಿಸುವರು. ಅವು ಬೀಳುವ ಸ್ಥಳದಲ್ಲಿ ಸುಟ್ಟುಹೋಗುವುವು.”
2SA 23:8 ದಾವೀದನ ಪರಾಕ್ರಮಶಾಲಿಗಳ ಹೆಸರುಗಳು ಇವೇ: ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನು ತಹ್ಕೆಮೋನ್ಯನಾದ ಯೋಷೆಬ್ ಬಷ್ಷೆಬೆತ ಎಂಬವನು; ಇವನು ತನ್ನ ಈಟಿಯಿಂದ ಎಂಟುನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.
2SA 23:9 ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು; ಇವನು ಇಸ್ರಾಯೇಲ್ ಜನರು ಓಡಿ ಹೋದ ತರುವಾಯ ಯುದ್ಧಕ್ಕೆ ಕೂಡಿಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
2SA 23:10 ಎಲಿಯಾಜರನು ಎದ್ದು ಖಡ್ಗ ಹಿಡಿದ ತನ್ನ ಕೈ ದಣಿದು ಮರಗಟ್ಟಿ ಹೋಗುವವರೆಗೂ ಫಿಲಿಷ್ಟಿಯರನ್ನು ಸಂಹರಿಸುತ್ತಿದ್ದನು. ಆ ದಿನ ಯೆಹೋವ ದೇವರು ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ಸೈನಿಕರು ಸುಲಿದುಕೊಳ್ಳುವುದಕ್ಕೆ ಮಾತ್ರ ಅವನ ಹಿಂದೆ ಹಿಂದಿರುಗಿದರು.
2SA 23:11 ಇವನ ತರುವಾಯ ಹರಾರ್ಯನಾದ ಆಗೇಯನ ಮಗನಾದ ಶಮ್ಮನು; ಅಲಸಂದಿಯಿಂದ ತುಂಬಿರುವ ಹೊಲದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿಬಂದಾಗ, ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು.
2SA 23:12 ಆದರೆ ಅವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು, ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
2SA 23:13 ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು.
2SA 23:14 ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
2SA 23:15 ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು.
2SA 23:16 ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು.
2SA 23:17 ಅವನು, “ಯೆಹೋವ ದೇವರೇ, ನಾನು ಇಂಥಾ ಕಾರ್ಯವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ಇದು ತಮ್ಮ ಪ್ರಾಣದಾಶೆ ತೊರೆದ ಮನುಷ್ಯರ ರಕ್ತವಲ್ಲವೇ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇಂಥಾ ಮಹಾಕಾರ್ಯಗಳನ್ನು ಈ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
2SA 23:18 ಯೋವಾಬನ ಸಹೋದರ ಚೆರೂಯಳ ಮಗ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು.
2SA 23:19 ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು. ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
2SA 23:20 ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು. ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
2SA 23:21 ಅವನು ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು. ಆ ಈಜಿಪ್ಟಿನವನ ಕೈಯಲ್ಲಿ ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು.
2SA 23:22 ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು.
2SA 23:23 ಇವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು. ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ. ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.
2SA 23:24 ಈ ಮೂವತ್ತು ಮಂದಿ ಯಾರೆಂದರೆ: ಯೋವಾಬನ ಸಹೋದರನಾದ ಅಸಾಯೇಲನು, ಬೇತ್ಲೆಹೇಮ್ ಊರಿನ ದೋದೋವಿನ ಮಗ ಎಲ್ಹನಾನನು;
2SA 23:25 ಹರೋದಿನವನಾದ ಶಮ್ಮನು; ಹರೋದಿನವನಾದ ಎಲೀಕನು;
2SA 23:26 ಪೆಲೆಟಿನವನಾದ ಹೆಲೆಚನು; ತೆಕೋವದ ಇಕ್ಕೇಷನ ಮಗನಾದ ಈರನು;
2SA 23:27 ಅನಾತೋತಿನವನಾದ ಅಬೀಯೆಜೆರನು; ಹುಷಾ ಊರಿನವನಾದ ಮೆಬುನೈ,
2SA 23:28 ಅಹೋಹ್ಯನಾದ ಚಲ್ಮೋನನು; ನೆಟೋಫದವನಾದ ಮಹರೈ;
2SA 23:29 ನೆಟೋಫದವನಾದ ಬಾಣನ ಮಗ ಹೆಲೇಬ್, ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ;
2SA 23:30 ಪಿರಾತೋನ್ಯನಾದ ಬೆನಾಯನು; ಹೊಳೆಗಳುಳ್ಳ ಗಾಷ್ ಊರಿನವನಾದ ಹಿದ್ದೈ;
2SA 23:31 ಅರಾಬಾ ತಗ್ಗಿನವನಾದ ಅಬೀ ಅಲ್ಬೋನನು; ಬಹರೂಮ್ಯನಾದ ಅಜ್ಮಾವೆತನು;
2SA 23:32 ಶಾಲ್ಬೋನ್ಯನಾದ ಎಲೆಯಖ್ಬಾನು; ಯಾಷೇನನ ಪುತ್ರರಲ್ಲಿ ಒಬ್ಬನು ಯೋನಾತಾನನು;
2SA 23:33 ಹರಾರ್ಯನಾದ ಶಮ್ಮನು; ಹರಾರ್ಯನಾದ ಶಾರಾರನ ಮಗ ಅಹೀಯಾಮ್;
2SA 23:34 ಮಾಕಾ ಊರಿನ ಅಹಸ್ಬೈ ಎಂಬುವನ ಮಗನಾದ ಎಲೀಫೆಲೆಟನು; ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್;
2SA 23:35 ಕರ್ಮೇಲ್ಯನಾದ ಹೆಚ್ರೋ; ಅರ್ಬಿಯನಾದ ಪಾರೈ;
2SA 23:36 ಹಗ್ರೀಯನ ಮಗನಾದ ಚೋಬ ಊರಿನವನಾದ ನಾತಾನನ ಮಗ ಇಗಾಲನು, ಗಾದ್ಯನಾದ ಬಾನೀ.
2SA 23:37 ಅಮ್ಮೋನಿಯನಾದ ಚೆಲೆಕನು; ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;
2SA 23:38 ಯೆತೆರಿಯನಾದ ಈರನು; ಯೆತೆರಿಯನಾದ ಗಾರೇಬನು;
2SA 23:39 ಹಿತ್ತಿಯನಾದ ಊರೀಯನು. ಹೀಗೆ ಇವರು ಸೇರಿ ಒಟ್ಟು ಮೂವತ್ತೇಳು ಮಂದಿ ರಣಧೀರರಿದ್ದರು.
2SA 24:1 ಯೆಹೋವ ದೇವರ ಕೋಪವು ತಿರುಗಿ ಇಸ್ರಾಯೇಲಿಗೆ ವಿರೋಧವಾಗಿ ಉರಿಯಿತು. ಆಗ ದೇವರು, “ಯೆಹೂದ ಮತ್ತು ಇಸ್ರಾಯೇಲರ ಜನಗಣತಿ ಮಾಡು,” ಎಂದು ದಾವೀದನನ್ನು ಪ್ರೇರೇಪಿಸಿದರು.
2SA 24:2 ಅರಸನು ಸೈನ್ಯಾಧಿಪತಿಯಾದ ಯೋವಾಬನಿಗೆ, “ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ, ನೀನು ದಾನಿನಿಂದ ಬೇರ್ಷೆಬದವರೆಗೂ ಇರುವ ಇಸ್ರಾಯೇಲ್ ಸಮಸ್ತ ಗೋತ್ರಗಳಲ್ಲಿ ಹೋಗಿ, ಯುದ್ಧಮಾಡಲು ಶಕ್ತರಾದ ಜನರನ್ನು ಲೆಕ್ಕಮಾಡಿಕೊಂಡು ಬಾ,” ಎಂದನು.
2SA 24:3 ಆಗ ಯೋವಾಬನು ಅರಸನಿಗೆ, “ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ಕಾಣುವ ಹಾಗೆ ನಿನ್ನ ದೇವರಾದ ಯೆಹೋವ ದೇವರು ತಮ್ಮ ಜನರನ್ನು ಈಗ ಇರುವುದಕ್ಕಿಂತ ನೂರರಷ್ಟಾಗಿ ಹೆಚ್ಚಿಸಲಿ; ಆದರೆ ನನ್ನ ಒಡೆಯನಾದ ಅರಸನು ಈ ಕಾರ್ಯವನ್ನು ಮಾಡಲು ಅಪೇಕ್ಷಿಸುವುದು ಏಕೆ?” ಎಂದನು.
2SA 24:4 ಆದಾಗ್ಯೂ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆದ್ದರಿಂದ ಯೋವಾಬನೂ, ಸೈನ್ಯಾಧಿಪತಿಗಳೂ ಇಸ್ರಾಯೇಲರಲ್ಲಿ ಯುದ್ಧಮಾಡಲು ಶಕ್ತರಾದ ಜನರನ್ನು ಲೆಕ್ಕಿಸಲು ಅರಸನ ಸಮ್ಮುಖದಿಂದ ಹೊರಟು ಹೋದರು.
2SA 24:5 ಅವರು ಯೊರ್ದನನ್ನು ದಾಟಿ, ಗಾದ್ ತಗ್ಗಿನಲ್ಲಿರುವ ಪಟ್ಟಣ ಹತ್ತಿರವಿರುವ ಅರೋಯೇರಿನಲ್ಲಿ ಇಳಿದು ಅಲ್ಲಿಂದ ಯಜ್ಜೇರಿಗೆ ಹೋದರು.
2SA 24:6 ಅಲ್ಲಿಂದ ಗಿಲ್ಯಾದಿಗೂ, ತಖ್ತೀಮ್ ಹೊಜೀ ಪ್ರದೇಶಕ್ಕೂ, ಅಲ್ಲಿಂದ ದಾನ್ ಯಾನಿಗೂ, ಅಲ್ಲಿಂದ ಸುತ್ತಿಕೊಂಡು ಸೀದೋನಿಗೂ ಬಂದರು.
2SA 24:7 ಅವರು ಟೈರಿನ ಭದ್ರಸ್ಥಳಕ್ಕೂ, ಹಿವ್ವಿಯರ, ಕಾನಾನ್ಯರ ಸಕಲ ಪಟ್ಟಣಗಳಿಗೂ, ಅಲ್ಲಿಂದ ಯೆಹೂದದ ದಕ್ಷಿಣಕ್ಕೂ, ಬೇರ್ಷೆಬಕ್ಕೂ ಬಂದರು.
2SA 24:8 ಹೀಗೆಯೇ ಅವರು ಸಮಸ್ತ ದೇಶಕ್ಕೆ ಹೋಗಿ, ಒಂಬತ್ತು ತಿಂಗಳು ಇಪ್ಪತ್ತು ದಿವಸವಾದ ತರುವಾಯ ಯೆರೂಸಲೇಮಿಗೆ ಬಂದರು.
2SA 24:9 ಯೋವಾಬನು ಅರಸನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನೆಂದರೆ: ಇಸ್ರಾಯೇಲರಲ್ಲಿ ಖಡ್ಗ ಹಿಡಿಯತಕ್ಕ ಪರಾಕ್ರಮವುಳ್ಳ ಎಂಟು ಲಕ್ಷಮಂದಿ ಇದ್ದರು. ಯೆಹೂದದ ಜನರು ಐದು ಲಕ್ಷಮಂದಿ ಇದ್ದರು.
2SA 24:10 ದಾವೀದನು ಜನರನ್ನು ಲೆಕ್ಕಿಸಿದ ತರುವಾಯ ಅವನ ಮನಸ್ಸಾಕ್ಷಿ ಹಂಗಿಸತೊಡಗಿತು. ಆದ್ದರಿಂದ ದಾವೀದನು ಯೆಹೋವ ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ ಮಹಾಪಾಪ ಮಾಡಿದೆನು. ಯೆಹೋವ ದೇವರೇ, ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ; ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.
2SA 24:11 ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದನೆಂಬ ಪ್ರವಾದಿಗೆ ಯೆಹೋವ ದೇವರ ವಾಕ್ಯ ಬಂದು ಅವನಿಗೆ,
2SA 24:12 “ನೀನು ದಾವೀದನ ಬಳಿಗೆ ಹೋಗಿ, ಅವನ ಸಂಗಡ ಮಾತಾಡಿ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನಗೆ ವಿರೋಧವಾಗಿ ಬರಮಾಡಬೇಕೋ ಅದನ್ನು ಆಯ್ದುಕೋ, ಎಂದು ಯೆಹೋವ ದೇವರು ಹೇಳುತ್ತಾರೆ,’ ಎಂದು ಹೇಳು,” ಎಂದರು.
2SA 24:13 ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ನಿನ್ನ ದೇಶದಲ್ಲಿ ಮೂರು ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ನಿನ್ನ ಶತ್ರುಗಳು ನಿನ್ನನ್ನು ಬೆನ್ನಟ್ಟಿ ಮೂರು ತಿಂಗಳವರೆಗೆ ಓಡಿಸಿಬಿಡಬೇಕೋ? ಇಲ್ಲವೆ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು.
2SA 24:14 ಆಗ ದಾವೀದನು ಗಾದನಿಗೆ, “ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಈಗ ಯೆಹೋವ ದೇವರ ಕೈಯಲ್ಲಿಯೇ ಬೀಳೋಣ, ಏಕೆಂದರೆ ಅವರ ಕರುಣೆಯು ದೊಡ್ಡದು, ಆದರೆ ಮನುಷ್ಯರ ಕೈಯಲ್ಲಿ ಬೀಳಲಾರೆನು,” ಎಂದನು.
2SA 24:15 ಆದಕಾರಣ ಯೆಹೋವ ದೇವರು ಉದಯಕಾಲದಿಂದ ನೇಮಿಸಿದ ಕಾಲದವರೆಗೂ ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಕಳುಹಿಸಿದರು. ಆಗ ದಾನಿನಿಂದ ಬೇರ್ಷೆಬದವರೆಗೂ ಇರುವ ಜನರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
2SA 24:16 ದೂತನು ಯೆರೂಸಲೇಮನ್ನು ನಾಶಮಾಡಲು, ಅದರ ಮೇಲೆ ತನ್ನ ಕೈಚಾಚಿದಾಗ, ಯೆಹೋವ ದೇವರು ಆ ದಂಡನೆಗಾಗಿ ನೊಂದುಕೊಂಡು, ಜನರನ್ನು ಸಂಹರಿಸುತ್ತಿದ್ದ ದೇವದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದರು. ಆಗ ಯೆಹೋವ ದೇವರ ದೂತನು ಯೆಬೂಸಿಯನಾದ ಅರೌನನ ಕಣದ ಬಳಿಯಲ್ಲಿ ಇದ್ದನು.
2SA 24:17 ದಾವೀದನು ಜನರನ್ನು ಹೊಡೆಯುವ ದೂತನನ್ನು ನೋಡಿದಾಗ, ಅವನು ಯೆಹೋವ ದೇವರಿಗೆ, “ಇಗೋ, ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಕೆಟ್ಟದ್ದನ್ನು ಮಾಡಿದೆನು. ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನಿಮ್ಮ ಹಸ್ತವು ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.
2SA 24:18 ಆ ದಿವಸವೇ ಪ್ರವಾದಿಯಾದ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿಸು,” ಎಂದನು.
2SA 24:19 ಆಗ ದಾವೀದನು ಗಾದನ ಮುಖಾಂತರವಾಗಿ ತನಗೆ ಯೆಹೋವ ದೇವರು ಆಜ್ಞಾಪಿಸಿದಂತೆ ಹೋದನು.
2SA 24:20 ಆದರೆ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವುದನ್ನು ಅರೌನನು ಕಣ್ಣೆತ್ತಿ ನೋಡಿದನು, ಆಗ ಅವನು ಕಣದಿಂದ ಹೊರಟು, ಅರಸನ ಮುಂದೆ ಮುಖ ಕೆಳಗೆಮಾಡಿ ಅಡ್ಡಬಿದ್ದನು.
2SA 24:21 ಅರೌನನು, “ಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು?” ಎಂದನು. ಅದಕ್ಕೆ ದಾವೀದನು, “ಈ ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ ಈ ಕಣವನ್ನು ನಿನ್ನಿಂದ ಕೊಂಡುಕೊಳ್ಳಲು ಬಂದಿದ್ದೇನೆ,” ಎಂದನು.
2SA 24:22 ಅರೌನನು ದಾವೀದನಿಗೆ, “ಅರಸನಾದ ನನ್ನ ಒಡೆಯನು ಅದನ್ನು ತೆಗೆದುಕೊಂಡು, ತನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಅರ್ಪಿಸಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ ಮುಂತಾದವುಗಳು ಇಲ್ಲಿ ಇವೆ,” ಎಂದನು.
2SA 24:23 ಅರೌನನು ಇವುಗಳನ್ನೆಲ್ಲಾ ಅರಸನಿಗೆ ಕೊಟ್ಟನು. ಇದಲ್ಲದೆ ಅರೌನನು ಅರಸನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಂಗೀಕರಿಸಲಿ,” ಎಂದನು.
2SA 24:24 ಆದರೆ ಅರಸನು ಅರೌನನಿಗೆ, “ಹಾಗಲ್ಲ, ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ದಹನಬಲಿಯಾಗಿ ನನ್ನ ದೇವರಾದ ಯೆಹೋವ ದೇವರಿಗೆ ಅರ್ಪಿಸೆನು,” ಎಂದನು. ಹೀಗೆ ದಾವೀದನು ಆ ಕಣವನ್ನೂ, ಎತ್ತುಗಳನ್ನೂ, ಐವತ್ತು ಬೆಳ್ಳಿ ನಾಣ್ಯಗಳಿಗೆ ಕೊಂಡುಕೊಂಡನು.
2SA 24:25 ಆಗ ದಾವೀದನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದನು. ಹೀಗೆ ಯೆಹೋವ ದೇವರು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ, ಇಸ್ರಾಯೇಲಿನ ಕಡೆಯಿಂದ ಆ ವ್ಯಾಧಿಯು ನಿಂತುಹೋಯಿತು.
1KI 1:1 ಅರಸನಾದ ದಾವೀದನು ವೃದ್ಧನಾಗಿಯೂ, ಬಹಳ ಪ್ರಾಯ ಹೋದವನಾಗಿಯೂ ಇರುವಾಗ, ಅವನ ಮೇಲೆ ಹೊದಿಕೆಗಳನ್ನು ಹಾಕಿದರೂ, ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.
1KI 1:2 ಆದ್ದರಿಂದ ಅವನ ಸೇವಕರು ಅವನಿಗೆ, “ಅರಸ, ನಮ್ಮ ಒಡೆಯನಿಗೋಸ್ಕರ ಕನ್ನಿಕೆಯನ್ನು ಹುಡುಕುವೆವು. ಅವಳು ಅರಸನ ಬಳಿಯಲ್ಲಿ ನಿಂತು, ಅವನನ್ನು ಜೋಪಾನ ಮಾಡಲಿ. ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ, ಅವನ ಮಗ್ಗುಲಲ್ಲಿ ಅವಳು ಮಲಗಲಿ,” ಎಂದರು.
1KI 1:3 ಹಾಗೆಯೇ ಅವರು ಸೌಂದರ್ಯವತಿಯಾದ ಹುಡುಗಿಗೋಸ್ಕರ ಇಸ್ರಾಯೇಲಿನ ಮೇರೆಗಳಲ್ಲೆಲ್ಲಾ ಹುಡುಕಿ, ಶೂನೇಮ್ಯಳಾದ ಅಬೀಷಗ್ ಎಂಬವಳನ್ನು ಕಂಡುಕೊಂಡು, ಅವಳನ್ನು ಅರಸನ ಬಳಿಗೆ ತಂದರು.
1KI 1:4 ಈ ಸೌಂದರ್ಯವತಿಯಾದ ಹುಡುಗಿಯು ಅರಸನ ಆರೈಕೆ ಮಾಡುತ್ತಾ, ಅವನ ಸೇವೆ ಮಾಡುತ್ತಿದ್ದಳು. ಅರಸನು ಅವಳೊಂದಿಗೆ ಸಂಪರ್ಕ ಮಾಡಲಿಲ್ಲ.
1KI 1:5 ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು, “ನಾನು ಅರಸನಾಗಿರಬೇಕು,” ಎಂದುಕೊಂಡು, ತನಗೋಸ್ಕರ ರಥಗಳನ್ನೂ, ಸಾರಥಿಯರನ್ನೂ, ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿ ಪುರುಷರನ್ನೂ ಸಿದ್ಧಮಾಡಿದನು.
1KI 1:6 ಅವನ ತಂದೆಯು ಎಂದಾದರೂ, “ನೀನು ಹೀಗೆ ಏಕೆ ಮಾಡಿದೆ?” ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಅವನು ಬಹು ಒಳ್ಳೆಯ ರೂಪವಂತನಾಗಿದ್ದನು. ಅಬ್ಷಾಲೋಮನ ತರುವಾಯ ಅವನ ತಾಯಿ ಅವನನ್ನು ಹೆತ್ತಳು.
1KI 1:7 ಅದೋನೀಯನು ಚೆರೂಯಳ ಮಗ ಯೋವಾಬ, ಯಾಜಕ ಅಬಿಯಾತರನ ಜೊತೆ ಸೇರಿ ಮಾತುಕತೆ ಮಾಡಿದನು. ಅವರು ಅದೋನೀಯನನ್ನು ಹಿಂಬಾಲಿಸಿ, ಅವನಿಗೆ ಸಹಾಯಕರಾಗಿದ್ದರು.
1KI 1:8 ಆದರೆ ಯಾಜಕನಾದ ಚಾದೋಕನೂ, ಯೆಹೋಯಾದಾವನ ಮಗ ಬೆನಾಯನೂ, ಪ್ರವಾದಿಯಾದ ನಾತಾನನೂ, ಶಿಮ್ಮಿಯೂ, ರೇಯಿಯೂ, ದಾವೀದನ ಪರಾಕ್ರಮಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.
1KI 1:9 ಅದೋನೀಯನು ಏನ್ ರೋಗೆಲಿನ ಬಳಿಯಲ್ಲಿರುವ ಚೋಹೆಲೆತ್ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ, ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಔತಣಕ್ಕೆ ಕರೆದನು.
1KI 1:10 ಆದರೆ ಪ್ರವಾದಿಯಾದ ನಾತಾನನನ್ನೂ, ಬೆನಾಯನನ್ನೂ, ಪರಾಕ್ರಮಶಾಲಿಗಳನ್ನೂ, ತನ್ನ ಸಹೋದರನಾದ ಸೊಲೊಮೋನನನ್ನೂ ಕರೆಯಲಿಲ್ಲ.
1KI 1:11 ಆಗ ನಾತಾನನು ಸೊಲೊಮೋನನ ತಾಯಿ ಬತ್ಷೆಬೆಳಿಗೆ, “ನಮ್ಮ ಒಡೆಯ ದಾವೀದನು ಅರಿಯದಿರುವಾಗ, ಹಗ್ಗೀತಳ ಮಗ ಅದೋನೀಯನು ಅರಸನಾಗಿದ್ದಾನೆ, ಎಂದು ನೀನು ಕೇಳಲಿಲ್ಲವೋ?
1KI 1:12 ಆದ್ದರಿಂದ ನೀನು ನಿನ್ನ ಪ್ರಾಣವನ್ನೂ, ನಿನ್ನ ಮಗ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ, ನಿನಗೆ ಆಲೋಚನೆ ಹೇಳುತ್ತೇನೆ.
1KI 1:13 ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ಅರಸನಾದ ನನ್ನ ಒಡೆಯನೇ, “ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ, ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ,” ನೀವು ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವುದು ಏಕೆ?’ ಎಂದು ಕೇಳು.
1KI 1:14 ನೀನು, ಇನ್ನೂ ಅರಸನ ಸಂಗಡ ಮಾತನಾಡುತ್ತಿರುವಾಗ, ನಾನು ನಿನ್ನ ಹಿಂದೆಯೇ ಒಳಗೆ ಬಂದು, ನಿನ್ನ ಮಾತುಗಳನ್ನು ಸ್ಥಿರಮಾಡುವೆನು,” ಎಂದನು.
1KI 1:15 ಆಗ ಬತ್ಷೆಬೆಳು ಬಹು ವೃದ್ಧನಾಗಿದ್ದ ದಾವೀದನನ್ನು ನೋಡಲು ಅರಸನ ಕೊಠಡಿಯೊಳಗೆ ಹೋದಳು. ಅಲ್ಲಿ ಶೂನೇಮ್ಯಳಾದ ಅಬೀಷಗ್ ಅರಸನಿಗೆ ಸೇವೆಮಾಡುತ್ತಾ ಇದ್ದಳು.
1KI 1:16 ಆಗ ಬತ್ಷೆಬೆಳು ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನಾದ ದಾವೀದನು, “ನಿನಗೇನು ಬೇಕು?” ಎಂದನು.
1KI 1:17 ಆಕೆಯು ಅರಸನಿಗೆ, “ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ಮಗ ಸೊಲೊಮೋನನು ಆಳುವನೆಂದೂ, ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ, ನೀವು ನಿನ್ನ ದಾಸಿಗೆ ನಿನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದಿರಿ.
1KI 1:18 ಆದರೆ, ಅರಸನಾಗಿರುವ ನನ್ನ ಒಡೆಯನಾದ ನೀವು ಅರಿಯದೆ ಇರುವಾಗ, ಅದೋನೀಯನು ರಾಜನಾಗಿಬಿಟ್ಟಿದ್ದಾನೆ.
1KI 1:19 ಇದಲ್ಲದೆ ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಬಲಿಯಾಗಿ ಅರ್ಪಿಸಿದ್ದಾನೆ, ಅರಸನ ಮಕ್ಕಳೆಲ್ಲರನ್ನೂ, ಯಾಜಕನಾದ ಅಬಿಯಾತರನನ್ನೂ, ಸೇನಾಧಿಪತಿ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ.
1KI 1:20 ಆದ್ದರಿಂದ ಅರಸನಾದ ನನ್ನ ಒಡೆಯನೇ, ನಿಮ್ಮ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನೀವು ಹೇಳುವ ಹಾಗೆ, ಸಮಸ್ತ ಇಸ್ರಾಯೇಲರ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ.
1KI 1:21 ಇಲ್ಲದಿದ್ದರೆ ನನ್ನ ಒಡೆಯನೂ ಅರಸನೂ ತನ್ನ ಪಿತೃಗಳ ಸಂಗಡ ಸಮಾಧಿ ಸೇರಿದಾಗ, ನಾನೂ, ನನ್ನ ಮಗ ಸೊಲೊಮೋನನೂ ಅಪರಾಧಿಗಳಾಗಿ ಎಣಿಕೆಯಾಗುವೆವು,” ಎಂದಳು.
1KI 1:22 ಅವಳು ಅರಸನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಪ್ರವಾದಿಯಾದ ನಾತಾನನು ಬಂದನು.
1KI 1:23 ಆಗ ಅರಸನಿಗೆ, “ಪ್ರವಾದಿಯಾದ ನಾತಾನನು,” ಎಂದರು. ಅವನು ಒಳಗೆ ಅರಸನ ಮುಂದೆ ಬಂದಾಗ, ಮೋರೆ ಕೆಳಗಾಗಿ ನೆಲಕ್ಕೆ ಅಡ್ಡಬಿದ್ದನು.
1KI 1:24 ಆಗ ನಾತಾನನು, “ಅರಸನಾದ ನನ್ನ ಒಡೆಯನೇ, ಅದೋನೀಯನು, ನನ್ನ ತರುವಾಯ ಆಳುವನೆಂದೂ, ನನ್ನ ಸಿಂಹಾಸನ ಮೇಲೆ ಕುಳಿತುಕೊಳ್ಳುವನೆಂದೂ, ನೀವು ಹೇಳಿದ್ದು ಹೌದೋ?
1KI 1:25 ಏಕೆಂದರೆ ಈ ಹೊತ್ತು ಅವನು ಇಳಿದು ಹೋಗಿ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳೆಲ್ಲರನ್ನೂ, ಸೈನ್ಯಾಧಿಪತಿಗಳನ್ನೂ, ಯಾಜಕನಾದ ಅಬಿಯಾತರನನ್ನೂ ಕರೆದಿದ್ದಾನೆ. ಅವರು ಅವನ ಮುಂದೆ ತಿಂದು, ಕುಡಿದು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ,’ ಎಂದು ಹೇಳುತ್ತಿದ್ದಾರೆ.
1KI 1:26 ಆದರೆ ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ನಿಮ್ಮ ಸೇವಕನಾದ ಸೊಲೊಮೋನನನ್ನೂ, ಅವನು ಕರೆಯಲೇ ಇಲ್ಲ.
1KI 1:27 ಅರಸನಾದ ನನ್ನ ಒಡೆಯನಿಂದ ಈ ಕಾರ್ಯವಾಯಿತೋ? ಅರಸನಾದ ನನ್ನ ಒಡೆಯನು, ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನಿಮ್ಮ ಸೇವಕನಾದ ನನಗೆ ನೀವು ತಿಳಿಸದೆ ಹೋದಿರೋ?” ಎಂದನು.
1KI 1:28 ಆಗ ಅರಸನಾದ ದಾವೀದನು ಉತ್ತರವಾಗಿ, “ಬತ್ಷೆಬೆಳನ್ನು ನನ್ನ ಬಳಿಗೆ ಕರೆಯಿರಿ,” ಎಂದನು. ಅವಳು ಅರಸನ ಸನ್ನಿಧಾನಕ್ಕೆ ಬಂದು ಅರಸನ ಮುಂದೆ ನಿಂತಳು.
1KI 1:29 ಅರಸನು ಆಕೆಗೆ, “ನಿಶ್ಚಯವಾಗಿ, ನಿನ್ನ ಮಗ ಸೊಲೊಮೋನನು ನನ್ನ ತರುವಾಯ ಆಳುವನೆಂದೂ,
1KI 1:30 ಅವನು ನನಗೆ ಬದಲಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಿನಗೆ ಹೇಗೆ ಆಣೆ ಇಟ್ಟು ಹೇಳಿದೆನೋ ಹಾಗೆಯೇ, ಈ ದಿನ ನಿಶ್ಚಯವಾಗಿ ಮಾಡುವೆನೆಂದೂ ಸಮಸ್ತ ಇಕ್ಕಟ್ಟಿನೊಳಗಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಮೇಲೆ ಆಣೆ ಇಡುತ್ತೇನೆ,” ಎಂದೂ ಪ್ರಮಾಣವಾಗಿ ಹೇಳಿದನು.
1KI 1:31 ಬತ್ಷೆಬೆಳು ಮುಖವನ್ನು ನೆಲಕ್ಕೆ ಬಗ್ಗಿಸಿ, ಅರಸನನ್ನು ವಂದಿಸಿ, “ನನ್ನ ಒಡೆಯನೂ, ಅರಸನೂ ಆದ ದಾವೀದನು ಎಂದೆಂದಿಗೂ ಬದುಕಲಿ,” ಎಂದಳು.
1KI 1:32 ಆಗ ಅರಸನಾದ ದಾವೀದನು, “ಯಾಜಕನಾದ ಚಾದೋಕನನ್ನೂ, ಪ್ರವಾದಿಯಾದ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ ನನ್ನ ಬಳಿಗೆ ಕರೆಯಿರಿ,” ಎಂದನು. ಅವರು ಅರಸನ ಸಮ್ಮುಖಕ್ಕೆ ಬಂದರು.
1KI 1:33 ಅರಸನು ಅವರಿಗೆ, “ನೀವು ನಿಮ್ಮ ಯಜಮಾನನ ಸೇವಕರನ್ನು ಕರೆದುಕೊಂಡು ಹೋಗಿ ನನ್ನ ಮಗ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಅವನನ್ನು ಕರೆದುಕೊಂಡು ಹೋಗಿರಿ.
1KI 1:34 ಅಲ್ಲಿ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಲಿ. ತುತೂರಿಯನ್ನು ಊದಿ, ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಿರಿ.
1KI 1:35 ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಹಾಗೆ, ನೀವು ಅವನ ಹಿಂದೆ ಬನ್ನಿರಿ. ಏಕೆಂದರೆ ಅವನು ನನಗೆ ಬದಲಾಗಿ ಅರಸನಾಗಿರುವನು. ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ, ನಾಯಕನಾಗಿರಲು ನಾನು ಅವನನ್ನು ನೇಮಿಸಿದ್ದೇನೆ,” ಎಂದನು.
1KI 1:36 ಯೆಹೋಯಾದಾವನ ಮಗ ಬೆನಾಯನು ಅರಸನಿಗೆ ಉತ್ತರವಾಗಿ, “ಆಮೆನ್, ಅರಸನಾದ ನನ್ನ ಒಡೆಯನ ದೇವರಾದ ಯೆಹೋವ ದೇವರು ಹಾಗೆಯೇ ಹೇಳಲಿ.
1KI 1:37 ಯೆಹೋವ ದೇವರು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದರೋ, ಹಾಗೆಯೇ ಸೊಲೊಮೋನನ ಸಂಗಡ ಇದ್ದು, ನನ್ನ ಒಡೆಯನೂ, ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನವನ್ನು ಅಧಿಕವಾಗಿ ಮಾಡಲಿ,” ಎಂದನು.
1KI 1:38 ಆಗ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ, ಯೆಹೋಯಾದಾವನ ಮಗ ಬೆನಾಯನೂ, ಕೆರೇತ್ಯರೂ, ಪೆಲೇತ್ಯರೂ ಹೋಗಿ, ಸೊಲೊಮೋನನನ್ನು ಅರಸನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನಿಗೆ ಕರೆತಂದರು.
1KI 1:39 ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು, “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ,” ಎಂದರು.
1KI 1:40 ಇದಲ್ಲದೆ ಜನರೆಲ್ಲರೂ ಅವನನ್ನು ಹಿಂಬಾಲಿಸಿದರು. ಜನರು ಕೊಳಲು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
1KI 1:41 ಆಗ ಅದೋನೀಯನೂ, ಅವನ ಸಂಗಡ ಕರೆಹೊಂದಿದವರೂ ತಿಂದು, ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ, “ಪಟ್ಟಣದಲ್ಲಿ ಗದ್ದಲದ ಶಬ್ದವೇಕೆ?” ಎಂದನು.
1KI 1:42 ಅವನು ಇನ್ನೂ ಮಾತನಾಡುತ್ತಿರುವಾಗ, ಯಾಜಕನಾಗಿರುವ ಅಬಿಯಾತರನ ಮಗ ಯೋನಾತಾನನು ಬಂದನು. ಅದೋನೀಯನು ಅವನಿಗೆ, “ಒಳಗೆ ಬಾ. ಏಕೆಂದರೆ ನೀನು ಯೋಗ್ಯ ಮನುಷ್ಯನೂ, ಒಳ್ಳೆಯ ಸಮಾಚಾರ ತರುವವನೂ ಆಗಿರುತ್ತೀ?” ಎಂದನು.
1KI 1:43 ಆಗ ಯೋನಾತಾನನು ಅದೋನೀಯನಿಗೆ, ನಿಶ್ಚಯವಾಗಿ ಒಳ್ಳೆಯ ಸಮಾಚಾರವಲ್ಲ! “ನಮ್ಮ ಒಡೆಯನೂ ಅರಸನೂ ಆಗಿರುವ ದಾವೀದನು ಸೊಲೊಮೋನನನ್ನು ಅರಸನಾಗಿ ಮಾಡಿದ್ದಾನೆ.
1KI 1:44 ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ, ಪ್ರವಾದಿ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ಕೆರೇತ್ಯರನ್ನೂ, ಪೆಲೇತ್ಯರನ್ನೂ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಕೂಡಿಸಿಕೊಂಡು ಹೋಗಿ,
1KI 1:45 ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಸೊಲೊಮೋನನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ. ಅವರು ಸಂತೋಷಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲವಾಯಿತು. ನೀವು ಕೇಳುವ ಆರ್ಭಟವು ಇದೇ.
1KI 1:46 ಇದಲ್ಲದೆ ಸೊಲೊಮೋನನು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
1KI 1:47 ಇದರ ಹೊರತು ಅರಸನ ಸೇವಕರೂ, ನಮ್ಮ ಯಜಮಾನನೂ, ಅರಸನೂ ಆದ ದಾವೀದನನ್ನು ಆಶೀರ್ವದಿಸಲು ಬಂದು, ‘ದೇವರು ಸೊಲೊಮೋನನ ಹೆಸರನ್ನು ನಿಮ್ಮ ಹೆಸರಿಗಿಂತಲೂ ಪ್ರಸಿದ್ಧ ಮಾಡಲಿ. ಅವನ ಸಿಂಹಾಸನವನ್ನು ನಿಮ್ಮ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಲಿ,’ ಎಂದೂ ಹೇಳುತ್ತಿರುವಾಗ, ಅರಸನು ಮಂಚದ ಮೇಲೆ ಬಾಗಿ,
1KI 1:48 ‘ಕಣ್ಣುಗಳು ನೋಡುತ್ತಿರುವಾಗ ಇಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಉತ್ತರಾಧಿಕಾರಿಯನ್ನು ನನಗೆ ಕೊಟ್ಟಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ,’ ಎಂದು ಹೇಳಿದ್ದಾರೆ,” ಎಂದನು.
1KI 1:49 ಆಗ ಅದೋನೀಯನ ಸಂಗಡ ಔತಣಕ್ಕೆ ಬಂದಿದ್ದ ಎಲ್ಲರೂ ಹೆದರಿಕೊಂಡು ಎದ್ದು, ತಮ್ಮ ತಮ್ಮ ಸ್ಥಳಗಳಿಗೆ ಹೊರಟು ಹೋದರು.
1KI 1:50 ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡನು.
1KI 1:51 ಆಗ ಒಬ್ಬನು ಅರಸನಾದ ಸೊಲೊಮೋನನಿಗೆ, “ಅದೋನೀಯನು, ನಿನಗೆ ಭಯಪಡುತ್ತಾನೆ. ಏಕೆಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ಖಡ್ಗದಿಂದ ತನ್ನ ಸೇವಕನನ್ನು ಕೊಲ್ಲುವುದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ,’ ಎಂದು ಹೇಳುತ್ತಾನೆ,” ಎಂದನು.
1KI 1:52 ಅದಕ್ಕೆ ಸೊಲೊಮೋನನು, “ಅವನು ಉತ್ತಮನಾಗಿ ನಡೆಯುವುದಾದರೆ, ಅವನ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳದು. ಆದರೆ ಅವನಲ್ಲಿ ಕೆಟ್ಟತನವು ಸಿಕ್ಕಿದರೆ ಅವನು ಸಾಯುವನು,” ಎಂದನು.
1KI 1:53 ಅರಸನಾದ ಸೊಲೊಮೋನನು ಅವನನ್ನು ಕರೆಸಿದಾಗ, ಬಲಿಪೀಠದ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡಬಿದ್ದನು. ಸೊಲೊಮೋನನು ಅವನಿಗೆ, “ನಿನ್ನ ಮನೆಗೆ ಹೋಗು,” ಎಂದನು.
1KI 2:1 ಆದರೆ ದಾವೀದನ ಸಾಯುವ ಕಾಲ ಸಮೀಪಿಸಿದ್ದರಿಂದ ಅವನು ತನ್ನ ಮಗ ಸೊಲೊಮೋನನಿಗೆ ಆಜ್ಞಾಪಿಸಿದ್ದೇನೆಂದರೆ,
1KI 2:2 “ಭೂಮಿಯಲ್ಲಿರುವವರೆಲ್ಲರು ಹೋಗುವ ಮಾರ್ಗವಾಗಿ ನಾನು ಹೋಗುತ್ತೇನೆ. ನೀನು ಬಲಗೊಂಡು ಶೂರನಾಗಿರು.
1KI 2:3 ನಿನ್ನ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಅನುಸರಿಸಿ ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ನಿಯಮದಲ್ಲಿ ಬರೆದಿರುವ ಅವರ ಆಜ್ಞಾನಿಯಮಗಳಿಗೂ, ವಿಧಿನಿರ್ಣಯಗಳಿಗೂ ವಿಧೇಯನಾಗಿರು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ, ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿಯೂ ಯಶಸ್ವಿಯಾಗುವೆ.
1KI 2:4 ಯೆಹೋವ ದೇವರು, ‘ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನನ್ನ ಮುಂದೆ ನಂಬಿಗಸ್ತರಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಅವರು ಇಸ್ರಾಯೇಲಿನ ಸಿಂಹಾಸನದ ಮೇಲೆ ತಪ್ಪದೇ ಕುಳಿತುಕೊಳ್ಳುವರು,’ ಎಂದು ನನಗೆ ಹೇಳಿದ ತಮ್ಮ ವಾಕ್ಯವನ್ನು ಸ್ಥಿರಪಡಿಸುವರು.
1KI 2:5 “ಇದಲ್ಲದೆ ಚೆರೂಯಳ ಮಗ ಯೋವಾಬನು ನನಗೂ, ಇಸ್ರಾಯೇಲಿನ ಸೈನ್ಯಗಳಿಗೆ ಇಬ್ಬರು ಅಧಿಪತಿಗಳಾದ ನೇರನ ಮಗ ಅಬ್ನೇರನಿಗೂ, ಯೆತೆರನ ಮಗ ಅಮಾಸನಿಗೂ ಏನು ಮಾಡಿದನೋ ನೀನು ಬಲ್ಲೆ. ಅವನು ಅವರನ್ನು ಕೊಂದು, ಸಮಾಧಾನ ಕಾಲದಲ್ಲಿ ಯುದ್ಧದ ರಕ್ತವನ್ನು ಚೆಲ್ಲಿ, ತನ್ನ ನಡುವಲ್ಲಿರುವ ನಡುಕಟ್ಟಿನ ಮೇಲೆಯೂ, ತನ್ನ ಪಾದಗಳಲ್ಲಿರುವ ಪಾದರಕ್ಷೆಗಳ ಮೇಲೆಯೂ ಯುದ್ಧದ ರಕ್ತವನ್ನು ಹಚ್ಚಿಕೊಂಡನು.
1KI 2:6 ಆದಕಾರಣ ನೀನು ನಿನ್ನ ಜ್ಞಾನದ ಪ್ರಕಾರಮಾಡಿ, ಅವನ ನರೆತಲೆಯನ್ನು ಸಮಾಧಾನದಿಂದ ಸಮಾಧಿ ಸೇರದಂತೆ ಮಾಡು.
1KI 2:7 “ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಮಕ್ಕಳಿಗೆ ದಯೆತೋರಿಸು. ಅವರು ನಿನ್ನ ಮೇಜಿನಲ್ಲಿ ಊಟಮಾಡುವವರಾಗಿ ನಿನ್ನ ಸಂಗಡ ಇರಲಿ. ಏಕೆಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಮುಂದೆ ಓಡಿಹೋದಾಗ ಅವರು ನನ್ನನ್ನು ಉಪಚರಿಸಿದರು.
1KI 2:8 “ಇದಲ್ಲದೆ ನಾನು ಮಹನಯಿಮಿಗೆ ಹೋಗುವ ದಿನದಲ್ಲಿ ಘೋರವಾದ ಶಾಪದಿಂದ ನನ್ನನ್ನು ಶಪಿಸಿದ ಬಹುರೀಮಿನ ಬೆನ್ಯಾಮೀನನಾದ ಗೇರನ ಮಗನಾಗಿರುವ ಶಿಮ್ಮಿಯು ನಿನ್ನ ಬಳಿಯಲ್ಲಿದ್ದಾನೆ. ಅವನು ಯೊರ್ದನ್ ನದಿ ಬಳಿಯಲ್ಲಿ ನನ್ನನ್ನು ಎದುರುಗೊಳ್ಳಲು ಬಂದದ್ದರಿಂದ, ‘ನಾನು ನಿನ್ನನ್ನು ಖಡ್ಗದಿಂದ ಕೊಲ್ಲುವುದಿಲ್ಲ,’ ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆಯಿಟ್ಟೆನು.
1KI 2:9 ಆದರೆ ನೀನು ಈಗ ಅವನನ್ನು ನಿರಪರಾಧಿ ಎಂದು ಎಣಿಸಬೇಡ. ನೀನು ಬುದ್ಧಿವಂತನಾಗಿರುವುದರಿಂದ ಅವನಿಗೆ ಏನು ಮಾಡತಕ್ಕದ್ದೋ ನೀನು ಬಲ್ಲೆ. ಆದರೆ ಅವನ ನರೆತಲೆಯನ್ನು ರಕ್ತದಿಂದ ಸಮಾಧಿ ಸೇರುವಂತೆ ಮಾಡು,” ಎಂದನು.
1KI 2:10 ಹೀಗೆಯೇ ದಾವೀದನು ಮರಣಹೊಂದಿ ತನ್ನ ಪಿತೃಗಳ ಜೊತೆ ಸೇರಿದನು. ದಾವೀದನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು.
1KI 2:11 ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು.
1KI 2:12 ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ಕುಳಿತನು. ಅವನ ರಾಜ್ಯವು ಬಹು ಸ್ಥಿರವಾಗಿತ್ತು.
1KI 2:13 ಆದರೆ ಹಗ್ಗೀತಳ ಮಗ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಬತ್ಷೆಬೆಳು ಅವನಿಗೆ, “ಸಮಾಧಾನವಾಗಿ ಬರುತ್ತೀಯೋ?” ಎಂದಳು. ಅದಕ್ಕೆ ಅವನು, “ಸಮಾಧಾನವೇ,” ಎಂದನು.
1KI 2:14 ಅವನು, “ನಿನಗೆ ಹೇಳತಕ್ಕ ಮಾತಿದೆ,” ಎಂದನು. ಬತ್ಷೆಬೆಳು, “ಹೇಳು,” ಎಂದಳು.
1KI 2:15 ಆಗ ಅವನು, “ರಾಜ್ಯವು ನನ್ನದಾಗಿತ್ತೆಂದೂ, ನಾನು ಆಳುವ ಸಮಸ್ತ ಇಸ್ರಾಯೇಲರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದೂ ನೀನು ಬಲ್ಲೆ. ಆದರೆ ಎಲ್ಲವೂ ಬದಲಾಗಿ, ರಾಜ್ಯವು ನನ್ನ ಸಹೋದರನಿಗೆ ದೊರಕಿತು. ಏಕೆಂದರೆ ಅದು ಅವನಿಗೆ ಯೆಹೋವ ದೇವರಿಂದ ಉಂಟಾಯಿತು.
1KI 2:16 ಆದರೆ ಈಗ ನನಗೆ ಒಂದು ಬಿನ್ನಹವಿದೆ. ಅದನ್ನು ತಿರಸ್ಕರಿಸಬೇಡ,” ಎಂದನು. ಬತ್ಷೆಬೆಳು ಅವನಿಗೆ, “ಅದೇನು ಹೇಳು,” ಎಂದಳು.
1KI 2:17 ಆಗ ಅವನು, “ನೀನು ದಯಮಾಡಿ ಅರಸನಾದ ಸೊಲೊಮೋನನು ಶೂನೇಮ್ಯಳಾದ ಅಬೀಷಗಳನ್ನು ನನಗೆ ಹೆಂಡತಿಯಾಗಿ ಕೊಡಲು ಅವನನ್ನು ಕೇಳು. ಏಕೆಂದರೆ ಅವನು ನಿನಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.
1KI 2:18 ಅದಕ್ಕೆ ಬತ್ಷೆಬೆಳು, “ಒಳ್ಳೆಯದು, ನಿನಗೋಸ್ಕರ ಅರಸನ ಸಂಗಡ ಮಾತನಾಡುವೆನು,” ಎಂದಳು.
1KI 2:19 ಆದ್ದರಿಂದ ಬತ್ಷೆಬೆಳು ಅದೋನೀಯನಿಗೋಸ್ಕರ ಮಾತನಾಡುವುದಕ್ಕೆ ಅರಸನಾದ ಸೊಲೊಮೋನನ ಬಳಿಗೆ ಹೋದಳು. ಅರಸನು ಅವಳನ್ನು ಎದುರುಗೊಳ್ಳಲು ಎದ್ದು, ಅವಳಿಗೆ ಅಡ್ಡಬಿದ್ದು, ತಾನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜಮಾತೆಗೋಸ್ಕರ ಆಸನವನ್ನು ಹಾಕಿಸಿದನು. ಅವಳು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
1KI 2:20 ಅವಳು ಅವನಿಗೆ, “ನಿನ್ನಿಂದ ಒಂದು ಚಿಕ್ಕ ಬಿನ್ನಹವಿದೆ, ಆಗುವುದಿಲ್ಲವೆಂದು ಹೇಳಬೇಡ,” ಎಂದಳು. ಅರಸನು ಅವಳಿಗೆ, “ನನ್ನ ತಾಯಿಯೇ ಕೇಳು. ಏಕೆಂದರೆ ನಾನು ನಿನ್ನ ಮಾತಿಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.
1KI 2:21 ಅದಕ್ಕವಳು, “ಶೂನೇಮ್ಯಳಾದ ಅಬೀಷಗಳನ್ನು ನಿನ್ನ ಅಣ್ಣ ಅದೋನೀಯನಿಗೆ ಹೆಂಡತಿಯಾಗಲು ಅಪ್ಪಣೆಯಾಗಲಿ,” ಎಂದಳು.
1KI 2:22 ಅರಸನಾದ ಸೊಲೊಮೋನನು ತನ್ನ ತಾಯಿಗೆ ಉತ್ತರವಾಗಿ, “ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ನೀನು ಕೇಳುವುದೇಕೆ? ರಾಜ್ಯವನ್ನೂ ಕೇಳು. ಏಕೆಂದರೆ ಅವನು ನನ್ನ ಅಣ್ಣನಾಗಿದ್ದಾನೆ. ಯಾಜಕ ಅಬಿಯಾತರನಿಗೋಸ್ಕರವೂ, ಚೆರೂಯಳ ಮಗ ಯೋವಾಬನಿಗೋಸ್ಕರವೂ ಕೇಳು,” ಎಂದನು.
1KI 2:23 ತರುವಾಯ ಅರಸನಾದ ಸೊಲೊಮೋನನು, “ಅದೋನೀಯನು ಈ ಮಾತನ್ನು ತನ್ನ ಪ್ರಾಣಕ್ಕೆ ವಿರೋಧವಾಗಿ ಹೇಳದೆ ಇದ್ದರೆ, ನನಗೆ ದೇವರು ಹಾಗೆಯೂ, ಅದಕ್ಕಿಂತಲೂ ಅಧಿಕವಾಗಿಯೂ ಮಾಡಲಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆ ಇಟ್ಟನು.
1KI 2:24 “ಹಾಗಾದರೆ ನನ್ನನ್ನು ಸ್ಥಿರಪಡಿಸಿ, ನನ್ನ ತಂದೆ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕೂಡಿಸಿ, ತಾವು ಮಾತುಕೊಟ್ಟ ಪ್ರಕಾರ ನನಗೆ ಮನೆತನ ಕಟ್ಟಿಸಿದ ಯೆಹೋವ ದೇವರ ಜೀವದಾಣೆ, ಈ ಹೊತ್ತು ಅದೋನೀಯನು ಸಾಯಬೇಕು,” ಎಂದನು.
1KI 2:25 ಆಗ ಅರಸನಾದ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನನ್ನು ಕಳುಹಿಸಿದನು. ಇವನು ಹೋಗಿ ಅದೋನೀಯನನ್ನು ಕೊಂದುಹಾಕಿದನು.
1KI 2:26 ಯಾಜಕನಾದ ಅಬಿಯಾತರನಿಗೆ ಅರಸನು, “ನೀನು ಅನಾತೋತಿನಲ್ಲಿರುವ ನಿನ್ನ ಹೊಲಗಳಿಗೆ ಹೋಗು. ಏಕೆಂದರೆ ನೀನು ಸಾವಿಗೆ ಪಾತ್ರನಾಗಿದ್ದೀಯೆ. ಆದರೆ ನೀನು ಸಾರ್ವಭೌಮ ಯೆಹೋವ ದೇವರ ಮಂಜೂಷವನ್ನು ನನ್ನ ತಂದೆ ದಾವೀದನ ಮುಂದೆ ಹೊತ್ತದ್ದರಿಂದಲೂ, ನನ್ನ ತಂದೆಯ ಎಲ್ಲಾ ಕಷ್ಟಗಳಲ್ಲಿ ನೀನು ಪಾಲುಗಾರನಾಗಿದ್ದರಿಂದಲೂ, ನಾನು ಈಗ ನಿನ್ನನ್ನು ಸಾಯಿಸುವುದಿಲ್ಲ,” ಎಂದನು.
1KI 2:27 ಹೀಗೆಯೇ ಯೆಹೋವ ದೇವರು ಶೀಲೋವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವುದಕ್ಕೆ ಸೊಲೊಮೋನನು ಅಬಿಯಾತರನನ್ನು ಯೆಹೋವ ದೇವರಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.
1KI 2:28 ಆಗ ಈ ಸುದ್ದಿ ಯೋವಾಬನಿಗೆ ಬಂತು. ಏಕೆಂದರೆ ಯೋವಾಬನು ಅಬ್ಷಾಲೋಮನ ಹಿಂದೆ ಹೋಗದೆ ಇದ್ದರೂ, ಅದೋನೀಯನ ಹಿಂದೆ ಹೋದನು. ಆದ್ದರಿಂದ ಯೋವಾಬನು ಯೆಹೋವ ದೇವರ ಮಂದಿರಕ್ಕೆ ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದನು.
1KI 2:29 ಯೋವಾಬನು ಯೆಹೋವ ದೇವರ ಗುಡಾರಕ್ಕೆ ಓಡಿಹೋಗಿ ಬಲಿಪೀಠದ ಬಳಿಯಲ್ಲಿ ಇದ್ದಾನೆ, ಎಂಬ ಸುದ್ದಿ ಅರಸನಾದ ಸೊಲೊಮೋನನಿಗೆ ತಿಳಿಯಿತು. ಆಗ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನಿಗೆ, “ನೀನು ಹೋಗಿ ಅವನನ್ನು ಕೊಂದುಹಾಕು,” ಎಂದನು.
1KI 2:30 ಬೆನಾಯನು ಯೆಹೋವ ದೇವರ ಗುಡಾರಕ್ಕೆ ಬಂದು ಯೋವಾಬನಿಗೆ, “ನೀನು ಹೊರಗೆ ಬರಬೇಕೆಂದು ಅರಸನು ಹೇಳುತ್ತಾನೆ,” ಎಂದನು. ಅದಕ್ಕವನು, “ಇಲ್ಲ, ಇಲ್ಲಿಯೇ ಸಾಯುತ್ತೇನೆ,” ಎಂದನು. ಬೆನಾಯನು ಅರಸನ ಬಳಿಗೆ ತಿರುಗಿ ಹೋಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು.
1KI 2:31 ಅರಸನು ಬೆನಾಯನಿಗೆ, “ಅವನು ಹೇಳಿದ ಪ್ರಕಾರ ಮಾಡು. ಯೋವಾಬನು ನಿನ್ನ ಹಾಗೂ ನನ್ನ ತಂದೆಯ ಮನೆಯವರ ನಿರಪರಾಧ ರಕ್ತವನ್ನು ಚೆಲ್ಲಿದ ದೋಷವನ್ನು ತೊಲಗಿಸುವ ಹಾಗೆ ಅವನನ್ನು ಕೊಂದು, ಅವನ ಶವವನ್ನು ಸಮಾಧಿಮಾಡು.
1KI 2:32 ಆಗ ಯೆಹೋವ ದೇವರು ಅವನ ತಲೆಯ ಮೇಲೆ ಅವನ ರಕ್ತಾಪರಾಧವನ್ನು ಬರಮಾಡುವರು. ಏಕೆಂದರೆ ಅವನು ನನ್ನ ತಂದೆ ದಾವೀದನಿಗೆ ತಿಳಿಯದೆ ತನಗಿಂತ ಉತ್ತಮರೂ ನೀತಿವಂತರೂ ಆದ ಇಬ್ಬರು ವ್ಯಕ್ತಿಗಳನ್ನು ಖಡ್ಗದಿಂದ ಕೊಂದನು. ಅವರು ಯಾರೆಂದರೆ, ಇಸ್ರಾಯೇಲಿನ ಸೈನ್ಯಕ್ಕೆ ಅಧಿಪತಿಯೂ ನೇರನ ಮಗನೂ ಆದ ಅಬ್ನೇರನು, ಯೆಹೂದ ಸೈನ್ಯಕ್ಕೆ ಅಧಿಪತಿಯೂ ಯೆತೆರನ ಮಗನೂ ಆದ ಅಮಾಸನು.
1KI 2:33 ಆದ್ದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆಯೂ, ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವುದು. ಆದರೆ ದಾವೀದನ ಮೇಲೆಯೂ, ಅವನ ಸಂತಾನದವರ ಮೇಲೆಯೂ, ಅವನ ಮನೆಯ ಮೇಲೆಯೂ, ಅವನ ಸಿಂಹಾಸನದ ಮೇಲೆಯೂ ಯೆಹೋವ ದೇವರಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವುದು,” ಎಂದನು.
1KI 2:34 ಹಾಗೆಯೇ ಯೆಹೋಯಾದಾವನ ಮಗ ಬೆನಾಯನು ಹೋಗಿ ಯೋವಾಬನನ್ನು ಕೊಂದುಹಾಕಿದನು. ಅವನ ಶವಕ್ಕೆ ಮರುಭೂಮಿಯಲ್ಲಿದ್ದ ಅವನ ಮನೆಯ ನಿವೇಶನದಲ್ಲಿ ಸಮಾಧಿಯಾಯಿತು.
1KI 2:35 ಆಗ ಅರಸನು ಯೆಹೋಯಾದಾವನ ಮಗ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಅಬಿಯಾತರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.
1KI 2:36 ಆಗ ಅರಸನು ಶಿಮ್ಮಿಯನ್ನು ಕರೆಯಿಸಿ ಅವನಿಗೆ, “ನೀನು ಯೆರೂಸಲೇಮಿನಲ್ಲಿ, ನಿನಗೆ ಮನೆಯನ್ನು ಕಟ್ಟಿಸಿಕೊಂಡು, ಅಲ್ಲಿಂದ ಎಲ್ಲಿಗೂ ಹೋಗದೆ ವಾಸವಾಗಿರು.
1KI 2:37 ಯಾವ ದಿವಸದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವೆಯೋ, ಆ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ ಎಂದು ಖಂಡಿತ ತಿಳಿದುಕೋ ಮತ್ತು ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವುದು,” ಎಂದನು.
1KI 2:38 ಶಿಮ್ಮಿ ಅರಸನಿಗೆ, “ನಿಮ್ಮ ಮಾತು ಒಳ್ಳೆಯದು. ಅರಸನಾದ ನನ್ನ ಒಡೆಯನು ಹೇಳಿದ ಪ್ರಕಾರವೇ, ನಿನ್ನ ಸೇವಕನು ಮಾಡುವನು,” ಎಂದನು. ಶಿಮ್ಮಿ ಯೆರೂಸಲೇಮಿನಲ್ಲಿ ಬಹಳ ದಿವಸ ವಾಸವಾಗಿದ್ದನು.
1KI 2:39 ಮೂರು ವರ್ಷಗಳ ಅಂತ್ಯದಲ್ಲಿ ಶಿಮ್ಮಿಯ ಸೇವಕರಲ್ಲಿ ಇಬ್ಬರು ಗತ್‌ನ ಅರಸನೂ ಮಾಕನ ಮಗನೂ ಆದ ಆಕೀಷನ ಬಳಿಗೆ ಓಡಿಹೋದರು. ಆಗ ಶಿಮ್ಮಿಗೆ, “ನಿನ್ನ ಸೇವಕರು ಗತ್‌ನಲ್ಲಿ ಇದ್ದಾರೆ” ಎಂದು ತಿಳಿಸಿದರು.
1KI 2:40 ಆದ್ದರಿಂದ ಶಿಮ್ಮಿ ಎದ್ದು ತನ್ನ ಕತ್ತೆಗೆ ತಡಿಯನ್ನು ಹಾಕಿಸಿ, ತನ್ನ ಸೇವಕರನ್ನು ಹುಡುಕಲು ಗತ್‌ನಲ್ಲಿರುವ ಆಕೀಷನ ಬಳಿಗೆ ಹೋದನು. ಶಿಮ್ಮಿ ಹೋಗಿ ಗತ್‌ನಿಂದ ತನ್ನ ಸೇವಕರನ್ನು ಕರೆದುಕೊಂಡು ಬಂದನು.
1KI 2:41 ಶಿಮ್ಮಿ ಯೆರೂಸಲೇಮನ್ನು ಬಿಟ್ಟು ಗತ್ ಊರಿಗೆ ಹೋಗಿ, ತಿರುಗಿ ಬಂದಿದ್ದಾನೆಂದು ಸೊಲೊಮೋನನಿಗೆ ತಿಳಿಯಿತು.
1KI 2:42 ಆಗ ಅರಸನು ಶಿಮ್ಮಿಯನ್ನು ಕರೆಕಳುಹಿಸಿ ಅವನಿಗೆ, “ನೀನು ಯಾವ ದಿವಸದಲ್ಲಿ ಹೊರಟು ಎಲ್ಲಿಗಾದರೂ ಹೋದರೆ, ಅದೇ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ, ಎಂದು ಖಂಡಿತವಾಗಿ ತಿಳಿದುಕೋ, ಎಂಬುದಾಗಿ ನಾನು ನಿನಗೆ ದೃಢವಾಗಿ ಹೇಳಿ, ಯೆಹೋವ ದೇವರ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ಮಾಡಿಸಲಿಲ್ಲವೋ? ನಾನು ಹೇಳಿದ ಮಾತುಒಳ್ಳೆಯದೆಂದು ನೀನು ಹೇಳಲಿಲ್ಲವೋ?
1KI 2:43 ನೀನು ಯೆಹೋವ ದೇವರ ಆಣೆಯನ್ನೂ, ನಾನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನೂ ನೀನು ಕೈಗೊಳ್ಳದೆ ಇದ್ದದ್ದೇನು?” ಎಂದನು.
1KI 2:44 ಅರಸನು ಶಿಮ್ಮಿಗೆ, “ನೀನು ನನ್ನ ತಂದೆ ದಾವೀದನಿಗೆ ಮಾಡಿದ ಕೇಡನ್ನು ನಿನ್ನ ಹೃದಯವು ತಿಳಿದಿದೆ. ಯೆಹೋವ ದೇವರು ನಿನ್ನ ಕೆಟ್ಟತನವನ್ನು ನಿನ್ನ ತಲೆಯ ಮೇಲೆ ಬರಮಾಡುವರು.
1KI 2:45 ಆದರೆ ಅರಸನಾದ ಸೊಲೊಮೋನನಿಗೆ ಆಶೀರ್ವಾದವಾಗಲಿ. ದಾವೀದನ ಸಿಂಹಾಸನವು ಯೆಹೋವ ದೇವರ ಮುಂದೆ ಯುಗಯುಗಾಂತರಕ್ಕೂ ಸ್ಥಿರವಾಗಿರುವುದು,” ಎಂದನು.
1KI 2:46 ಆಗ ಅರಸನಾದ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನಿಗೆ ಆಜ್ಞಾಪಿಸಿದ್ದರಿಂದ, ಅವನು ಹೊರಟು ಹೋಗಿ ಶಿಮ್ಮಿಯ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಹೀಗೆ ರಾಜ್ಯವು ಸೊಲೊಮೋನನ ಕೈಯಲ್ಲಿ ಸ್ಥಿರವಾಯಿತು.
1KI 3:1 ಸೊಲೊಮೋನನು ಈಜಿಪ್ಟಿನ ಅರಸನಾದ ಫರೋಹನ ಸಂಗಡ ಬಂಧುತ್ವ ಮಾಡಿ, ಫರೋಹನ ಮಗಳನ್ನು ಮದುವೆಮಾಡಿಕೊಂಡನು. ಅವನು ತನ್ನ ಮನೆಯನ್ನೂ, ಯೆಹೋವ ದೇವರ ಆಲಯವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಸುತ್ತಲೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
1KI 3:2 ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.
1KI 3:3 ಸೊಲೊಮೋನನು ಯೆಹೋವ ದೇವರನ್ನು ಪ್ರೀತಿಸಿ, ತನ್ನ ತಂದೆ ದಾವೀದನ ಕಟ್ಟಳೆಯಲ್ಲಿ ನಡೆಯುತ್ತಾ ಇದ್ದನು. ಆದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ, ಧೂಪವನ್ನೂ ಅರ್ಪಿಸುತ್ತಾ ಇದ್ದನು.
1KI 3:4 ಗಿಬ್ಯೋನಿನ ಅತಿಮುಖ್ಯವಾದ ಉನ್ನತ ಸ್ಥಳಕ್ಕೆ ಅರಸನಾದ ಸೊಲೊಮೋನನು ಬಲಿಗಳನ್ನರ್ಪಿಸಲು ಹೋಗಿ, ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.
1KI 3:5 ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿಯಲ್ಲಿ ಸ್ವಪ್ನದೊಳಗೆ ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡರು. ದೇವರು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.
1KI 3:6 ಅದಕ್ಕೆ ಸೊಲೊಮೋನನು, “ನನ್ನ ತಂದೆಯಾಗಿರುವ ನಿಮ್ಮ ಸೇವಕನಾದ ದಾವೀದನು ನಿಮ್ಮ ಮುಂದೆ ನೀತಿಯಿಂದಲೂ, ಯಥಾರ್ಥವಾದ ಹೃದಯವುಳ್ಳವನಾಗಿಯೂ ನಡೆದದ್ದರಿಂದ, ನೀವು ಅವನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ. ಈ ಮಹಾಕರುಣೆಯನ್ನು ಮುಂದುವರೆಸುತ್ತಾ ಈ ದಿನ ಅವನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಮಗನನ್ನು ಕೊಟ್ಟಿದ್ದೀರಿ.
1KI 3:7 “ಈಗ ನನ್ನ ದೇವರಾದ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಬದಲಾಗಿ ನಿಮ್ಮ ಸೇವಕನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ನಾನು ಚಿಕ್ಕ ಬಾಲಕನಾಗಿದ್ದು, ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ.
1KI 3:8 ಇದಲ್ಲದೆ ನಿಮ್ಮ ಸೇವಕನಾದ ನಾನು ನೀವು ಆಯ್ದುಕೊಂಡಂಥ ಅಸಂಖ್ಯಾತ ಜನರ ಮಧ್ಯದಲ್ಲಿ ಇದ್ದೇನೆ.
1KI 3:9 ಆದ್ದರಿಂದ ನಿಮ್ಮ ಜನರನ್ನು ಪರಿಪಾಲಿಸುವುದಕ್ಕೆ, ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ, ನಿಮ್ಮ ಸೇವಕನಿಗೆ ತಿಳುವಳಿಕೆಯುಳ್ಳ ಹೃದಯವನ್ನು ಕೊಡಬೇಕು. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.
1KI 3:10 ಸೊಲೊಮೋನನು ಕೇಳಿದ ಈ ಮಾತು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದಾಗಿತ್ತು.
1KI 3:11 ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ದೀರ್ಘಾಯುಷ್ಯ ಅಥವಾ ಸಂಪತ್ತನ್ನು ಕೇಳಲಿಲ್ಲ, ಅಥವಾ ನಿನ್ನ ಶತ್ರುಗಳ ಮರಣವನ್ನು ಕೇಳಿಲ್ಲ, ಆದರೆ ನ್ಯಾಯವನ್ನು ನಿರ್ವಹಿಸುವುದಕ್ಕಾಗಿ ನಿನಗೋಸ್ಕರ ವಿವೇಕವನ್ನು ಕೇಳಿದ್ದರಿಂದ,
1KI 3:12 ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ನಿನಗೆ ಜ್ಞಾನವನ್ನೂ, ವಿವೇಚನೆಯುಳ್ಳ ಹೃದಯವನ್ನೂ ಕೊಟ್ಟಿದ್ದೇನೆ. ನಿನಗೆ ಸಮನಾದ ಜ್ಞಾನಿಯು ಈ ಮುಂಚೆಯೂ ಇರಲಿಲ್ಲ, ನಿನ್ನ ತರುವಾಯವೂ ಇರುವುದಿಲ್ಲ.
1KI 3:13 ನೀನು ಕೇಳದ ಐಶ್ವರ್ಯವನ್ನೂ, ಘನವನ್ನೂ ಕೊಟ್ಟಿದ್ದೇನೆ. ಆದ್ದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸುಗಳಲ್ಲಿ ಒಬ್ಬನೂ ಇರುವುದಿಲ್ಲ.
1KI 3:14 ನೀನು, ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು, ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಕೈಗೊಂಡರೆ, ನಿನ್ನ ದಿವಸಗಳನ್ನು ಹೆಚ್ಚಿಸುವೆನು,” ಎಂದರು.
1KI 3:15 ತರುವಾಯ ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಸ್ವಪ್ನವೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು, ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ತನ್ನ ಸೇವಕರಿಗೆ ಔತಣವನ್ನು ಏರ್ಪಡಿಸಿದನು.
1KI 3:16 ಇಬ್ಬರು ವೇಶ್ಯೆಯರು ಅರಸನ ಬಳಿಗೆ ಬಂದು, ಅವನ ಮುಂದೆ ನಿಂತರು.
1KI 3:17 ಅವರಲ್ಲಿ ಒಬ್ಬಳು, “ನನ್ನ ಒಡೆಯನೇ, ನಾನೂ, ಈ ಹೆಣ್ಣು ಮಗಳು ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.
1KI 3:18 ನಾನು ಅವಳ ಸಂಗಡ ಮನೆಯಲ್ಲಿರುವಾಗ, ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ, ಈ ಹೆಣ್ಣು ಮಗಳು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತ್ಯಾರೂ ಇಲ್ಲ.
1KI 3:19 “ಆದರೆ ಅವಳು ಕೂಸಿನ ಮೇಲೆ ಮಲಗಿದ್ದರಿಂದ, ರಾತ್ರಿಯಲ್ಲಿ ಆಕೆಯ ಮಗು ಸತ್ತು ಹೋಯಿತು.
1KI 3:20 ಇವಳು ಮಧ್ಯರಾತ್ರಿಯಲ್ಲಿ ಎದ್ದು, ನಿನ್ನ ದಾಸಿಯು ನಿದ್ರೆಗೈಯುತ್ತಿರುವಾಗ, ನನ್ನ ಹತ್ತಿರ ಮಲಗಿದ್ದ ನನ್ನ ಮಗನನ್ನು ತೆಗೆದುಕೊಂಡು, ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು, ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.
1KI 3:21 ಉದಯದಲ್ಲಿ ನನ್ನ ಕೂಸಿಗೆ ಹಾಲು ಕುಡಿಸಲು ಎದ್ದಾಗ, ಅದು ಸತ್ತಿತ್ತು! ಉದಯದಲ್ಲಿ ಅದನ್ನು ಕಂಡಾಗ, ಅದು ನಾನು ಹೆತ್ತ ಮಗುವಾಗಿರಲಿಲ್ಲ,” ಎಂದಳು.
1KI 3:22 ಆಗ ಆ ಬೇರೆ ಹೆಣ್ಣು ಮಗಳು, “ಇಲ್ಲ ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,” ಎಂದಳು. ಮೊದಲನೆಯವಳು, “ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸಿದರು.
1KI 3:23 ಆಗ ಅರಸನು, “ ‘ಇವಳು ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,’ ಎನ್ನುತ್ತಾಳೆ. ಅವಳು, ಹಾಗಲ್ಲ, ‘ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,’ ಎನ್ನುತ್ತಾಳೆ,” ಎಂದು ಹೇಳಿ,
1KI 3:24 ಅರಸನು, “ಖಡ್ಗವನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಅವರು ಖಡ್ಗವನ್ನು ಅರಸನ ಬಳಿಗೆ ತಂದರು.
1KI 3:25 ಆಗ ಅರಸನು, “ಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು, ಇವಳಿಗೆ ಅರ್ಧ ಪಾಲನ್ನೂ, ಅವಳಿಗೆ ಅರ್ಧ ಪಾಲನ್ನೂ ಕೊಡಿರಿ,” ಎಂದನು.
1KI 3:26 ಆಗ ಬದುಕಿರುವ ಕೂಸಿನ ತಾಯಿಯಾಗಿರುವವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ, “ನನ್ನ ಒಡೆಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು, ಕೊಲ್ಲಬೇಡ,” ಎಂದಳು. ಆದರೆ, ಮತ್ತೊಬ್ಬಳು, ಅದು ನನಗಾಗಲಿ ನಿನಗಾಗಲಿ ಆಗಿರಬಾರದು, ಕಡಿಯಿರಿ. ಎಂದಳು.
1KI 3:27 ಆಗ ಅರಸನು ಉತ್ತರವಾಗಿ, “ಬದುಕಿರುವ ಕೂಸನ್ನು ಮೊದಲನೆಯವಳಿಗೆ ಕೊಡಿರಿ, ಕೊಲ್ಲಬೇಡಿರಿ, ಇವಳೇ ಅದರ ತಾಯಿ,” ಎಂದನು.
1KI 3:28 ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇಲರು ಕೇಳಿ, ಅರಸನಿಗೆ ಭಯಪಟ್ಟರು. ಏಕೆಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ಕಂಡರು.
1KI 4:1 ಹೀಗೆ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
1KI 4:2 ಅವನಿಗೆ ಇದ್ದ ಮುಖ್ಯ ಅಧಿಕಾರಿಗಳು ಯಾರೆಂದರೆ: ಚಾದೋಕನ ಮಗ ಅಜರ್ಯನು ಮುಖ್ಯಯಾಜಕನಾಗಿದ್ದನು.
1KI 4:3 ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬವರು ಕಾರ್ಯದರ್ಶಿಗಳು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಲೇಖಕ.
1KI 4:4 ಯೆಹೋಯಾದಾವನ ಮಗ ಬೆನಾಯನು ಸೈನ್ಯದ ಅಧಿಪತಿಯು, ಚಾದೋಕನೂ, ಅಬಿಯಾತರನೂ ಯಾಜಕರು.
1KI 4:5 ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು. ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.
1KI 4:6 ಅಹಿಷಾರನು ರಾಜ್ಯ ಗೃಹಾಧಿಪತಿ. ಅಬ್ದನ ಮಗ ಅದೋನೀರಾಮನು ದಾಸರ ಮೇಲೆ ಉಸ್ತುವಾರಿಮಾಡಿಸುವವನಾಗಿದ್ದನು.
1KI 4:7 ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.
1KI 4:8 ಅವರ ಹೆಸರುಗಳು, ಅವರ ಜಿಲ್ಲೆಗಳು: ಬೆನ್ ಹೂರ್ ಎಫ್ರಾಯೀಮ್ ಪರ್ವತ ಪ್ರದೇಶದ ಅಧಿಕಾರಿ.
1KI 4:9 ಬೆನ್ ಡೆಕೆರ್ ಮಾಕಾಚ್, ಶಾಲ್ಬೀಮ್, ಬೇತ್ ಷೆಮೆಷ್, ಏಲೋನ್ ಹಾಗು ಬೇತ್ ಹಾನಾನ್‌ಗಳಲ್ಲಿ ಅಧಿಕಾರಿ.
1KI 4:10 ಬೆನ್ ಹೆಸೆದ್ ಅರುಬ್ಬೋತದಲ್ಲಿ ಅಧಿಕಾರಿ. ಸೋಕೋ ಮತ್ತು ಹೇಫೆರಿನ ಎಲ್ಲಾ ಪ್ರದೇಶಗಳು ಅವನವಾಗಿದ್ದವು.
1KI 4:11 ಬೆನ್ ಅಬೀನಾದಾಬ್ ನಾಫೋತ್ ದೋರ್‌ದಲ್ಲಿ ಅಧಿಕಾರಿ. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
1KI 4:12 ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.
1KI 4:13 ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.
1KI 4:14 ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.
1KI 4:15 ಅಹೀಮಾಚ್ ನಫ್ತಾಲಿಯಲ್ಲಿ ಅಧಿಕಾರಿ. ಅವನಿಗೆ ಸೊಲೊಮೋನನ ಮಗಳಾದ ಬಾಸೆಮತ್ ಹೆಂಡತಿಯಾಗಿದ್ದಳು.
1KI 4:16 ಹೂಷೈಯ ಮಗ ಬಾಣಾ ಆಶೇರದಲ್ಲಿ ಮತ್ತು ಆಲೋತಿನಲ್ಲಿ ಅಧಿಕಾರಿ.
1KI 4:17 ಫಾರೂಹನ ಮಗ ಯೆಹೋಷಾಫಾಟನು ಇಸ್ಸಾಕಾರ್ ಪ್ರಾಂತದಲ್ಲಿ ಅಧಿಕಾರಿ.
1KI 4:18 ಏಲನ ಮಗ ಶಿಮ್ಮಿಯು ಬೆನ್ಯಾಮೀನ್ ಪ್ರಾಂತದಲ್ಲಿ ಅಧಿಕಾರಿ.
1KI 4:19 ಊರಿಯನ ಮಗ ಗೆಬೆರನು ಗಿಲ್ಯಾದಿನಲ್ಲಿ ಅಧಿಕಾರಿ. ಅಮೋರಿಯರ ಅರಸನಾದ ಸೀಹೋನನ ದೇಶಕ್ಕೂ ಬಾಷಾನಿನ ಅರಸನಾದ ಓಗನ ದೇಶಕ್ಕೂ ಅವನೊಬ್ಬನೇ ಅಧಿಪತಿಯಾಗಿದ್ದನು.
1KI 4:20 ಯೆಹೂದ ಮತ್ತು ಇಸ್ರಾಯೇಲಿನ ಜನರು ಸಮುದ್ರದ ಮರಳಿನ ಹಾಗೆ ಅಸಂಖ್ಯಾತರಾದರು. ಅವರು ಉಂಡು ಕುಡಿದು ಸುಖದಿಂದ ಇದ್ದರು.
1KI 4:21 ಇದಲ್ಲದೆ ಸೊಲೊಮೋನನು ಯೂಫ್ರೇಟೀಸ್ ಮೊದಲುಗೊಂಡು ಫಿಲಿಷ್ಟಿಯರ ದೇಶ ಮತ್ತು ಈಜಿಪ್ಟಿನ ಮೇರೆಯವರೆಗೂ ಇರುವ ಸಮಸ್ತ ರಾಜ್ಯಗಳನ್ನು ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳೆಲ್ಲಾ ಕಪ್ಪಗಳನ್ನು ಕೊಡುವವರಾಗಿ ಅವನಿಗೆ ಅಧೀನರಾಗಿದ್ದರು.
1KI 4:22 ಸೊಲೊಮೋನನು ಒಂದು ದಿನದ ಭೋಜನಕ್ಕೆ ಕೊಡುತ್ತಿದ್ದ ಆಹಾರ ಪದಾರ್ಥಗಳು 5,000 ಕಿಲೋಗ್ರಾಂ ನಯವಾದ ಗೋಧಿಯ ಹಿಟ್ಟು, 10,000 ಕಿಲೋಗ್ರಾಂ ಜವೆಗೋಧಿ,
1KI 4:23 ಕೊಬ್ಬಿದ ಎತ್ತುಗಳು ಹತ್ತು, ಮೇಯುವ ಎತ್ತುಗಳು ಇಪ್ಪತ್ತು, ಕುರಿಗಳು ನೂರು. ಇವುಗಳ ಹೊರತಾಗಿ ದುಪ್ಪಿಗಳೂ, ಜಿಂಕೆಗಳೂ, ಕೆಂದ ಜಿಂಕೆಗಳೂ, ಕೊಬ್ಬಿದ ಕೋಳಿಗಳೂ ಆಗಿದ್ದವು.
1KI 4:24 ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗೂ, ನದಿಯ ಈಚೆಯಲ್ಲಿರುವ ಸಮಸ್ತ ಅರಸರ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಅವನಿಗೆ ಸುತ್ತಲಿರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಿತ್ತು.
1KI 4:25 ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.
1KI 4:26 ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಲವತ್ತು ಸಾವಿರ ಕುದುರೆಗಳಿಗೆ ಸ್ಥಳವಿತ್ತು, ಹನ್ನೆರಡು ಸಾವಿರ ರಾಹುತರೂ ಇದ್ದರು.
1KI 4:27 ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ.
1KI 4:28 ಹೀಗೆಯೇ ಪ್ರತಿಯೊಬ್ಬನು ತನ್ನ ನೇಮಕದ ಪ್ರಕಾರ ಕುದುರೆಗಳಿಗೋಸ್ಕರವೂ, ಸವಾರಿ ಒಂಟೆಗಳಿಗೋಸ್ಕರವೂ, ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ, ಹುಲ್ಲನ್ನೂ ತಂದರು.
1KI 4:29 ದೇವರು ಸೊಲೊಮೋನನಿಗೆ ಅತ್ಯಧಿಕವಾಗಿ ಜ್ಞಾನವನ್ನೂ, ಗ್ರಹಿಕೆಯನ್ನೂ, ಸಮುದ್ರ ತೀರದಲ್ಲಿಯ ಮರಳಿನ ಹಾಗೆಯೇ ವಿವೇಕವನ್ನೂ ಕೊಟ್ಟರು.
1KI 4:30 ಸೊಲೊಮೋನನ ಜ್ಞಾನವು ಮೂಡಣ ದೇಶದ ಸಮಸ್ತರ ಜ್ಞಾನಕ್ಕಿಂತಲೂ, ಈಜಿಪ್ಟಿನ ಸಮಸ್ತರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
1KI 4:31 ಜೇರಹನ ಮಗನಾದ ಏತಾನನು, ಮಹೋಲನ ಮಕ್ಕಳಾದ ಹೇಮಾನನು, ಕಲ್ಕೋಲನು, ದರ್ದನು ಮೊದಲಾದ ಸಮಸ್ತ ಮನುಷ್ಯರಿಗಿಂತಲೂ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ದೇಶಗಳಲ್ಲಿ ಅವನ ಕೀರ್ತಿ ಇತ್ತು.
1KI 4:32 ಅವನು ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು. ಅವನ ಹಾಡುಗಳು ಸಾವಿರದ ಐದು.
1KI 4:33 ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು.
1KI 4:34 ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
1KI 5:1 ಸೊಲೊಮೋನನು ತನ್ನ ತಂದೆಗೆ ಬದಲಾಗಿ ಅರಸನಾಗಲು ಅಭಿಷೇಕ ಪಡೆದಿದ್ದಾನೆಂದು ಟೈರಿನ ಅರಸನಾದ ಹೀರಾಮನು ಕೇಳಿದಾಗ, ಅವನು ತನ್ನ ರಾಜದೂತರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. ಏಕೆಂದರೆ ಹೀರಾಮನು ಯಾವಾಗಲೂ ದಾವೀದನಿಗೆ ಆಪ್ತಮಿತ್ರನಾಗಿದ್ದನು.
1KI 5:2 ಸೊಲೊಮೋನನು ರಾಜದೂತರ ಮುಖಾಂತರ ಹೀರಾಮನಿಗೆ ಈ ಸಂದೇಶವನ್ನು ಕಳುಹಿಸಿದನು:
1KI 5:3 “ನನ್ನ ತಂದೆ ದಾವೀದನು ತನ್ನ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸಲಾರದೆ ಇದ್ದನೆಂದು ನೀನು ಬಲ್ಲೆ. ಏಕೆಂದರೆ ಯೆಹೋವ ದೇವರು ಅವನ ಶತ್ರುಗಳನ್ನು ಅವನ ಪಾದದ ಕೆಳಗೆ ಹಾಕುವವರೆಗೂ, ಅವನ ಸುತ್ತಲಿರುವ ಸಮಸ್ತ ದಿಕ್ಕುಗಳಲ್ಲಿ ಯುದ್ಧ ಉಂಟಾಯಿತು.
1KI 5:4 ಆದರೆ ಈಗ ನನ್ನ ದೇವರಾದ ಯೆಹೋವ ದೇವರು, ಶತ್ರುವಿನಿಂದ ತಗಲುವ ಕೇಡು ಒಂದಾದರೂ ಇಲ್ಲದ ಹಾಗೆ, ಸಮಸ್ತ ದಿಕ್ಕುಗಳಲ್ಲಿ ನನಗೆ ಸಮಾಧಾನವನ್ನು ಕೊಟ್ಟಿದ್ದಾರೆ.
1KI 5:5 ಆದ್ದರಿಂದ, ನನ್ನ ದೇವರಾದ ಯೆಹೋವ ದೇವರ ಹೆಸರಿಗೆ ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಯೆಹೋವ ದೇವರು ನನ್ನ ತಂದೆಯಾದ ದಾವೀದನಿಗೆ, ‘ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಕುಳ್ಳಿರಿಸುವ ನಿನ್ನ ಮಗನೇ ನನ್ನ ಹೆಸರಿಗೆ ದೇವಾಲಯವನ್ನು ಕಟ್ಟಿಸುವನು,’ ಎಂದು ಹೇಳಿದ್ದಾರಲ್ಲವೇ.
1KI 5:6 “ಆದ್ದರಿಂದ ನೀನು ನನಗೋಸ್ಕರ ಲೆಬನೋನಿನಲ್ಲಿ ದೇವದಾರು ಮರಗಳನ್ನು ಕಡಿಯಲು ಆಜ್ಞಾಪಿಸು. ನನ್ನ ಸೇವಕರೂ, ನಿನ್ನ ಸೇವಕರೂ ಕೂಡ ಇರಲಿ. ನೀನು ಹೇಳಿದ ಪ್ರಕಾರ, ನಿನ್ನ ಸೇವಕರ ಕೂಲಿಯನ್ನು ಕೊಡುತ್ತೇನೆ. ಏಕೆಂದರೆ ನಮ್ಮಲ್ಲಿ ಸೀದೋನ್ಯರ ಹಾಗೆ ಮರವನ್ನು ಕಡಿಯಲು ತಿಳಿದವರಿಲ್ಲ ಎಂದು ನೀನು ಬಲ್ಲೆ,” ಎಂದು ಹೇಳಿದನು.
1KI 5:7 ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹು ಸಂತೋಷಪಟ್ಟು, “ಈ ಮಹಾಜನರ ಮೇಲೆ ಜ್ಞಾನವುಳ್ಳ ಮಗನನ್ನು ದಾವೀದನಿಗೆ ಕೊಟ್ಟ ಯೆಹೋವ ದೇವರಿಗೆ ಇಂದು ಸ್ತೋತ್ರವಾಗಲಿ,” ಎಂದನು.
1KI 5:8 ಹೀರಾಮನು ಸೊಲೊಮೋನನಿಗೆ ಸಂದೇಶವನ್ನು ಕಳುಹಿಸಿ, “ನೀನು ಹೇಳಿ ಕಳುಹಿಸಿದ್ದನ್ನು ನಾನು ಕೇಳಿದ್ದೇನೆ. ದೇವದಾರು ಮರಗಳ ವಿಷಯವೂ, ತುರಾಯಿ ಮರಗಳ ವಿಷಯವೂ ನೀನು ಇಚ್ಛಿಸಿದ್ದನ್ನೆಲ್ಲಾ ನಾನು ಮಾಡುವೆನು.
1KI 5:9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತಂದಮೇಲೆ, ನನಗೆ ನೇಮಿಸಿದ ಸ್ಥಳಕ್ಕೆ ತೆಪ್ಪವನ್ನು ಕಟ್ಟಿ, ಸಮುದ್ರದಿಂದ ಕಳುಹಿಸಿ, ಅಲ್ಲಿ ಒಪ್ಪಿಸುವ ಹಾಗೆ ಮಾಡುವೆನು. ನೀನು ಅವುಗಳನ್ನು ತೆಗೆದುಕೊಂಡು ನನ್ನ ಮನೆಯವರಿಗೊಸ್ಕರ ಆಹಾರವನ್ನು ಕೊಟ್ಟು, ನನ್ನ ಇಚ್ಛೆಯನ್ನು ತೀರಿಸುವೆ,” ಎಂದನು.
1KI 5:10 ಹೀಗೆಯೇ ಹೀರಾಮನು ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಸೊಲೊಮೋನನ ಇಚ್ಛೆಯ ಪ್ರಕಾರವೆಲ್ಲಾ ಕೊಟ್ಟನು.
1KI 5:11 ಸೊಲೊಮೋನನು ಹೀರಾಮನಿಗೆ ಅವನ ಮನೆಯವರ ಆಹಾರಕ್ಕೋಸ್ಕರ ಸುಮಾರು ಮೂರು ಸಾವಿರ ಆರನೂರು ಟನ್ ಗೋಧಿಯನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ಅಪ್ಪಟವಾದ ಎಣ್ಣೆಯನ್ನೂ ಕೊಟ್ಟನು. ಹೀಗೆಯೇ ಸೊಲೊಮೋನನು ಹೀರಾಮನಿಗೆ ಪ್ರತಿ ವರುಷ ಕೊಡುತ್ತಾ ಇದ್ದನು.
1KI 5:12 ಇದಲ್ಲದೆ ಯೆಹೋವ ದೇವರು ಸೊಲೊಮೋನನಿಗೆ ವಾಗ್ದಾನ ಮಾಡಿದಂತೆ ಜ್ಞಾನವನ್ನು ಕೊಟ್ಟರು. ಹೀರಾಮನಿಗೂ, ಸೊಲೊಮೋನನಿಗೂ ಸಮಾಧಾನ ಉಂಟಾಗಿತ್ತು. ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
1KI 5:13 ಆಗ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲರೊಳಗಿಂದ ಆಳುಗಳನ್ನು ತೆಗೆದುಕೊಂಡನು. ಆ ಆಳುಗಳ ಲೆಕ್ಕವು ಮೂವತ್ತು ಸಾವಿರ ಜನವಾಗಿತ್ತು.
1KI 5:14 ಅವನು ಅವರನ್ನು ಲೆಬನೋನಿಗೆ ಕಳುಹಿಸಿದನು. ತಿಂಗಳು ತಿಂಗಳಿಗೂ ನೇಮಕದ ಪ್ರಕಾರ, ಹತ್ತು ಸಾವಿರ ಜನರನ್ನು ಕಳುಹಿಸಿದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದು, ಎರಡು ತಿಂಗಳು ತಮ್ಮ ಮನೆಗಳಲ್ಲಿದ್ದರು. ಅದೋನೀರಾಮನು ಆಳುಗಳ ಮೇಲೆ ಯಜಮಾನನಾಗಿದ್ದನು.
1KI 5:15 ಇದಲ್ಲದೆ ಸೊಲೊಮೋನನಿಗೆ ಹೊರೆ ಹೊರುವವರು ಎಪ್ಪತ್ತು ಸಾವಿರವೂ, ಬೆಟ್ಟಗಳಲ್ಲಿ ಕಲ್ಲುಕುಟಿಗರು ಎಂಬತ್ತು ಸಾವಿರವೂ ಇದ್ದರು.
1KI 5:16 ಇದರ ಹೊರತಾಗಿ ಸೊಲೊಮೋನನ ಮುಖ್ಯವಾದ ಅಧಿಪತಿಗಳು ಕೆಲಸದ ಮೇಲೆ ಇದ್ದರು. ಕೆಲಸ ಮಾಡುವ ಜನರ ಮೇಲೆ ಮೂರು ಸಾವಿರದ ಮುನ್ನೂರು ಮೇಸ್ತ್ರಿಗಳಿದ್ದರು.
1KI 5:17 ಅರಸನು ಆಜ್ಞಾಪಿಸಿದ್ದರಿಂದ ದೊಡ್ಡ ಕಲ್ಲುಗಳನ್ನೂ, ಬೆಲೆಯುಳ್ಳ ಕಲ್ಲುಗಳನ್ನೂ ದೇವಾಲಯ ಅಸ್ತಿವಾರವನ್ನು ಹಾಕಲು ಕೆತ್ತಿದ ಕಲ್ಲುಗಳನ್ನು ತಂದರು.
1KI 5:18 ಸೊಲೊಮೋನನ ಶಿಲ್ಪಕಾರರೂ, ಹೀರಾಮನ ಶಿಲ್ಪಕಾರರೂ, ಗೆಬಾಲ್ಯರೂ ಅವುಗಳನ್ನು ಕಡಿದು, ಆಲಯವನ್ನು ಕಟ್ಟುವುದಕ್ಕೆ ಕಲ್ಲುಗಳನ್ನೂ, ಮರಗಳನ್ನೂ ಸಿದ್ಧಮಾಡಿದರು.
1KI 6:1 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಬಂದ ನಾನೂರ ಎಂಬತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋನನ ಆಳಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಾದ ಜಿವ್ ತಿಂಗಳಲ್ಲಿ ಅವನು ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
1KI 6:2 ಅರಸನಾದ ಸೊಲೊಮೋನನು ಯೆಹೋವ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದನು, ಅದರ ಉದ್ದ ಸುಮಾರು 27 ಮೀಟರ್, ಅದರ ಅಗಲ 9 ಮೀಟರ್, ಅದರ ಎತ್ತರ 14 ಮೀಟರ್.
1KI 6:3 ಮಂದಿರದ ಮುಂದೆ ಮಂಟಪವಿತ್ತು. ಅದು ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು. ಆಲಯದ ಮುಂದೆ ಇರುವ ಅದರ ಅಗಲವು 4.5 ಮೀಟರ್.
1KI 6:4 ಅವನು ಸಣ್ಣ ಜಾಲರಿಗಳುಳ್ಳ ಕಿಟಿಕಿಗಳನ್ನು ಆಲಯಕ್ಕೆ ಮಾಡಿಸಿದನು.
1KI 6:5 ಕಟ್ಟಡದ ಹೊರಗಿನ ಗೋಡೆಗಳ ಸುತ್ತಲೂ, ಸೊಲೊಮೋನನು ಅನೇಕ ಕೋಣೆಗಳ ಸಂಕೀರ್ಣವನ್ನು ಎರಡೂ ಬದಿಗಳಲ್ಲಿ ನಿರ್ಮಿಸಿದನು.
1KI 6:6 ಕೆಳಗಿರುವ ಕೊಠಡಿಯು 2.2 ಮೀಟರ್ ಅಗಲ, ಎರಡನೆಯದು 2.7 ಮೀಟರ್ ಅಗಲ, ಮೂರನೆಯದು 3.1 ಮೀಟರ್ ಅಗಲ. ಏಕೆಂದರೆ ತೊಲೆಗಳು ಆಲಯದ ಗೋಡೆಗಳಲ್ಲಿ ತಗಲದ ಹಾಗೆ ಆಲಯದ ಸುತ್ತಲೂ ಹೊರಗಡೆಯಲ್ಲಿ ನಿಲ್ಲುವ ಅಂತಸ್ತುಗಳನ್ನು ಕಟ್ಟಿಸಿದನು.
1KI 6:7 ಆಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಆಲಯವನ್ನು ಕಟ್ಟುತ್ತಿರುವಾಗ, ಅದರಲ್ಲಿ ಸುತ್ತಿಗೆ, ಉಳಿ, ಕಬ್ಬಿಣದ ಉಪಕರಣಗಳ ಶಬ್ದವೇ ಕೇಳಲಿಲ್ಲ.
1KI 6:8 ಮಧ್ಯ ಕೊಠಡಿಯ ಬಾಗಿಲು ಆಲಯದ ದಕ್ಷಿಣ ಭಾಗದಲ್ಲಿ ಇತ್ತು. ಅಲ್ಲಿಂದ ಮಧ್ಯ ಕೊಠಡಿಗೂ, ಮಧ್ಯ ಕೊಠಡಿಯಿಂದ ಮೂರನೆಯ ಕೊಠಡಿಗೂ ಹತ್ತಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.
1KI 6:9 ಹೀಗೆಯೇ ಅವನು ಆಲಯವನ್ನು ಕಟ್ಟಿ, ತೀರಿಸಿದ ತರುವಾಯ, ಆಲಯವನ್ನು ದೇವದಾರುಗಳ ತೊಲೆಗಳಿಂದಲೂ, ಹಲಗೆಗಳಿಂದಲೂ ಮುಚ್ಚಿಸಿದನು.
1KI 6:10 ಅವನು 2.2 ಮೀಟರ್ ಎತ್ತರವಾದ ಕೊಠಡಿಗಳನ್ನು ಆಲಯದ ಬಳಿಯಲ್ಲಿ ಸುತ್ತಲು ಕಟ್ಟಿಸಿದನು. ಅವು ಆಲಯದ ಮೇಲೆ ಇರಿಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.
1KI 6:11 ಆಗ ಯೆಹೋವ ದೇವರ ವಾಕ್ಯವು ಸೊಲೊಮೋನನಿಗೆ ಬಂದಿತು,
1KI 6:12 “ನೀನು ಕಟ್ಟಿಸುವ ಈ ಆಲಯವನ್ನು ಕುರಿತು ನನ್ನ ಕಟ್ಟಳೆಗಳಲ್ಲಿ ನಡೆದು, ನನ್ನ ನ್ಯಾಯಗಳ ಪ್ರಕಾರಮಾಡಿ, ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಗೊಂಡರೆ, ನಾನು ನಿನ್ನ ತಂದೆ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರಮಾಡಿ,
1KI 6:13 ನನ್ನ ಜನವಾದ ಇಸ್ರಾಯೇಲರ ಕೈಬಿಡದೆ, ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿರುವೆನು,” ಎಂದರು.
1KI 6:14 ಸೊಲೊಮೋನನು ಆಲಯವನ್ನು ಕಟ್ಟಿಸಿ, ತೀರಿಸಿದನು.
1KI 6:15 ಆಲಯದ ಗೋಡೆಗಳ ಒಳಭಾಗಕ್ಕೆ ಮಂದಿರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯವರೆಗೂ ದೇವದಾರು ಹಲಗೆಗಳಿಂದ ಕಟ್ಟಿಸಿದನು. ಒಳಭಾಗದಲ್ಲಿ ಮರದಿಂದ ಮುಚ್ಚಿ, ಆಲಯದ ನೆಲವನ್ನು ತುರಾಯಿ ಮರಗಳ ಹಲಗೆಗಳಿಂದ ಮುಚ್ಚಿದನು.
1KI 6:16 ಅವನು ಆಲಯದ ಕಡೆಗಳಲ್ಲಿ 9 ಮೀಟರ್ ನೆಲವನ್ನೂ, ಗೋಡೆಗಳನ್ನೂ, ದೇವದಾರುಗಳ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಅತಿ ಪರಿಶುದ್ಧಸ್ಥಳದ ಅಂಗನ ಅಥವಾ ಮಹಾಪರಿಶುದ್ಧ ಸ್ಥಳವೆಂದು ಕಟ್ಟಿಸಿದನು.
1KI 6:17 ಅದರ ಮುಂದಿರುವ ಮಂದಿರವಾಗಿರುವ ಆಲಯ 18 ಮೀಟರ್ ಉದ್ದವಾಗಿತ್ತು.
1KI 6:18 ಆಲಯದ ಒಳಗಿರುವ ದೇವದಾರು ಮೊಗ್ಗುಗಳೂ, ಅರಳಿದ ಹೂವುಗಳೂ ಕೆತ್ತಿದ ಕೆಲಸಗಳಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಎಲ್ಲಾ ದೇವದಾರದ್ದಾಗಿತ್ತು.
1KI 6:19 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಅಲ್ಲಿ ಇರಿಸುವುದಕ್ಕೆ ಆಲಯದ ಒಳಗೆ ದೈವೋಕ್ತಿಯ ಸ್ಥಾನವನ್ನು ಸಿದ್ಧಮಾಡಿಸಿದನು.
1KI 6:20 ದೈವೋಕ್ತಿಯ ಸ್ಥಾನದ ಮುಂಭಾಗದ ಪ್ರಮಾಣವು, 9 ಮೀಟರ್ ಉದ್ದ, 9 ಮೀಟರ್ ಅಗಲ, 9 ಮೀಟರ್ ಎತ್ತರ ಇತ್ತು. ಅದನ್ನು ಶುದ್ಧ ಬಂಗಾರದಿಂದ ಹೊದಿಸಿದನು. ದೇವದಾರು ಮರದ ಪೀಠವನ್ನು ಹಾಗೆಯೇ ಹೊದಿಸಿದನು.
1KI 6:21 ಸೊಲೊಮೋನನು ಆಲಯದ ಒಳಭಾಗವನ್ನು ಶುದ್ಧ ಬಂಗಾರದಿಂದ ಹೊದಿಸಿ, ದೈವೋಕ್ತಿಯ ಸ್ಥಾನದ ಮುಂದೆ ಬಂಗಾರದ ಸರಪಣಿಗಳಿಂದ ವಿಭಾಗವನ್ನು ಮಾಡಿ, ಅದನ್ನು ಬಂಗಾರದಿಂದ ಹೊದಿಸಿದನು.
1KI 6:22 ಅವನು ಆಲಯವನ್ನೆಲ್ಲಾ ಬಂಗಾರದಿಂದ ಹೊದಿಸಿ, ಸ್ಥಾನದ ಮುಂಭಾಗದಲ್ಲಿರುವ ಪೀಠವನ್ನೂ ಬಂಗಾರದಿಂದ ಹೊದಿಸಿದನು.
1KI 6:23 ಅವನು ದೈವೋಕ್ತಿಯ ಸ್ಥಾನದಲ್ಲಿ ಹಿಪ್ಪೇಮರಗಳಿಂದ ಎರಡು ಕೆರೂಬಿಗಳನ್ನು ಮಾಡಿಸಿದನು. ಒಂದೊಂದು 4.4 ಮೀಟರ್ ಎತ್ತರವಾಗಿತ್ತು.
1KI 6:24 ಕೆರೂಬಿಗೆ ಇರುವ ಒಂದೊಂದು ರೆಕ್ಕೆ 2.2 ಮೀಟರ್ ಆಗಿತ್ತು. ಒಂದು ರೆಕ್ಕೆಯ ಕೊನೆ ಮೊದಲುಗೊಂಡು, ಮತ್ತೊಂದು ರೆಕ್ಕೆಯ ಕೊನೆಯವರೆಗೂ 4.4 ಮೀಟರ್ ಆಗಿತ್ತು.
1KI 6:25 ಎರಡನೆಯ ಕೆರೂಬಿಯು 4.4 ಮೀಟರ್. ಎರಡು ಕೆರೂಬಿಗಳಿಗೂ ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇತ್ತು.
1KI 6:26 ಒಂದು ಕೆರೂಬಿಯು 4.4 ಮೀಟರ್ ಎತ್ತರವಾಗಿತ್ತು. ಎರಡನೆಯ ಕೆರೂಬಿಯು ಅದರ ಹಾಗೆಯೇ ಇತ್ತು.
1KI 6:27 ಆ ಕೆರೂಬಿಗಳನ್ನು ದೇವಾಲಯದ ಒಳ ಮನೆಯೊಳಗೆ ಇಟ್ಟನು. ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವುದರಿಂದ ಒಂದು ರೆಕ್ಕೆಯ ಈ ಭಾಗದ ಗೋಡೆಯನ್ನೂ, ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು. ಆಲಯದ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.
1KI 6:28 ಆ ಕೆರೂಬಿಗಳನ್ನು ಬಂಗಾರದ ತಗಡುಗಳಿಂದ ಹೊದಿಸಿದನು.
1KI 6:29 ಅವನು ಆಲಯದ ಗೋಡೆಗಳ ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ, ಖರ್ಜೂರದ ಗಿಡಗಳನ್ನೂ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು.
1KI 6:30 ಆಲಯದ ಒಳಗಿನ ಮತ್ತು ಹೊರಗಿನ ನೆಲವನ್ನು ಬಂಗಾರ ತಗಡುಗಳಿಂದ ಹೊದಿಸಿದನು.
1KI 6:31 ಅವನು ದೈವೋಕ್ತಿಯ ಸ್ಥಾನದ ಬಾಗಿಲಿಗೆ ಹಿಪ್ಪೇಮರಗಳಿಂದ ಜೋಡು ಬಾಗಿಲುಗಳನ್ನು ಮಾಡಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು.
1KI 6:32 ಹಿಪ್ಪೇಮರದ ಆ ಜೋಡು ಬಾಗಿಲುಗಳ ಮೇಲೆ ಅವನು ಕೆರೂಬಿ, ಖರ್ಜೂರದ ವೃಕ್ಷ, ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಆ ಕೆರೂಬಿಗಳನ್ನೂ, ಖರ್ಜೂರ ಗಿಡಗಳನ್ನೂ, ಬಂಗಾರದ ತಗಡಿನಿಂದ ಹೊದಿಸಿದನು.
1KI 6:33 ಅದೇ ರೀತಿಯಲ್ಲಿ, ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿದನು.
1KI 6:34 ಅದಕ್ಕೆ ತುರಾಯಿ ಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಚಬಹುದಾಗಿತ್ತು.
1KI 6:35 ಅದರ ಮೇಲೆ ಕೆರೂಬಿಗಳ, ಖರ್ಜೂರ ಗಿಡಗಳ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು. ಈ ಕೆತ್ತನೆಗಳ ಮೇಲೆ ಸಮವಾಗಿ ಬಂಗಾರದ ತಗಡನ್ನು ಹೊದಿಸಿದನು.
1KI 6:36 ಅವನು ಒಳಗಿನ ಅಂಗಳವನ್ನು ಕೆತ್ತಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.
1KI 6:37 ನಾಲ್ಕನೆಯ ವರ್ಷದ ಜಿವ್ ತಿಂಗಳಲ್ಲಿ ಯೆಹೋವ ದೇವರ ಆಲಯದ ಅಸ್ತಿವಾರವು ಹಾಕಲಾಯಿತು.
1KI 6:38 ಹನ್ನೊಂದನೆಯ ವರ್ಷದ, ಎಂಟನೆಯ ತಿಂಗಳಾದ ಬೂಲ್ ಎಂಬ ಕಾರ್ತಿಕ ತಿಂಗಳಲ್ಲಿ ಆ ದೇವಾಲಯದ ಎಲ್ಲಾ ಭಾಗಗಳೂ ಯೋಜನೆಯ ಪ್ರಕಾರ ಕಟ್ಟಲಾಯಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.
1KI 7:1 ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
1KI 7:2 ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು.
1KI 7:3 ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು.
1KI 7:4 ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು.
1KI 7:5 ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.
1KI 7:6 22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.
1KI 7:7 ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು.
1KI 7:8 ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.
1KI 7:9 ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು.
1KI 7:10 ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು.
1KI 7:11 ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು.
1KI 7:12 ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು.
1KI 7:13 ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.
1KI 7:14 ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.
1KI 7:15 ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು.
1KI 7:16 ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು.
1KI 7:17 ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು.
1KI 7:18 ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು.
1KI 7:19 ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು.
1KI 7:20 ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.
1KI 7:21 ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
1KI 7:22 ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.
1KI 7:23 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು.
1KI 7:24 ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.
1KI 7:25 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
1KI 7:26 ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
1KI 7:27 ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು.
1KI 7:28 ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು.
1KI 7:29 ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.
1KI 7:30 ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.
1KI 7:31 ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.
1KI 7:32 ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.
1KI 7:33 ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.
1KI 7:34 ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು.
1KI 7:35 ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು.
1KI 7:36 ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.
1KI 7:37 ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.
1KI 7:38 ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.
1KI 7:39 ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು.
1KI 7:40 ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
1KI 7:41 ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
1KI 7:42 ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,
1KI 7:43 ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,
1KI 7:44 ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
1KI 7:45 ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು.
1KI 7:46 ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
1KI 7:47 ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
1KI 7:48 ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,
1KI 7:49 ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ, ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,
1KI 7:50 ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.
1KI 7:51 ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.
1KI 8:1 ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಅರಸನಾದ ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
1KI 8:2 ಯಥನಿಮ ತಿಂಗಳಲ್ಲಿ ಹಬ್ಬವಿದ್ದಾಗ, ಇಸ್ರಾಯೇಲಿನ ಸಮಸ್ತ ಜನರು ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು.
1KI 8:3 ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡು,
1KI 8:4 ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರೂ, ಲೇವಿಯರೂ ಹೊತ್ತುಕೊಂಡು ಬಂದರು.
1KI 8:5 ಆಗ ಅರಸನಾದ ಸೊಲೊಮೋನನೂ, ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
1KI 8:6 ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.
1KI 8:7 ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು.
1KI 8:8 ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ.
1KI 8:9 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ, ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
1KI 8:10 ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ, ಮೇಘವು ಯೆಹೋವ ದೇವರ ಮಂದಿರವನ್ನು ತುಂಬಿತ್ತು.
1KI 8:11 ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.
1KI 8:12 ಆಗ ಸೊಲೊಮೋನನು, “ಯೆಹೋವ ದೇವರೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀರಿ.
1KI 8:13 ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದು ಹೇಳಿದನು.
1KI 8:14 ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.
1KI 8:15 ನಂತರ ರಾಜನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ, ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು. ಅವರು ಹೇಳಿದ್ದೇನೆಂದರೆ,
1KI 8:16 ‘ನನ್ನ ಜನರಾದ ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು, ನನ್ನ ನಾಮವು ಅದರಲ್ಲಿರುವ ಹಾಗೆ, ಆಲಯವನ್ನು ಕಟ್ಟುವುದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆಯ್ದುಕೊಳ್ಳದೆ, ನನ್ನ ಜನರಾದ ಇಸ್ರಾಯೇಲರನ್ನು ಆಳುವುದಕ್ಕೆ ನಾನು ದಾವೀದನನ್ನು ಆಯ್ದುಕೊಂಡೆನು,’ ಎಂಬುದು.
1KI 8:17 “ನನ್ನ ತಂದೆ ದಾವೀದನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
1KI 8:18 ಯೆಹೋವ ದೇವರು ಆತನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೇ ಸರಿ.
1KI 8:19 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನಿಂದ ಹುಟ್ಟುವ ಮಗನೇ, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕು,’ ಎಂದು ಹೇಳಿದರು.
1KI 8:20 “ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಯೆಹೋವ ದೇವರು ಮಾತುಕೊಟ್ಟ ಪ್ರಕಾರ, ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.
1KI 8:21 ಇದಲ್ಲದೆ ಯೆಹೋವ ದೇವರು ನಮ್ಮ ಪಿತೃಗಳನ್ನು ಈಜಿಪ್ಟ್ ದೇಶದಿಂದ ಬರಮಾಡಿದಾಗ, ಅವರ ಸಂಗಡ ಮಾಡಿದ ಒಡಂಬಡಿಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇಟ್ಟೆನು,” ಎಂದನು.
1KI 8:22 ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,
1KI 8:23 ಹೀಗೆ ಪ್ರಾರ್ಥಿಸಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಮೇಲಿರುವ ಆಕಾಶದಲ್ಲಾದರೂ, ಕೆಳಗಿರುವ ಭೂಮಿಯಲ್ಲಾದರೂ ನಿಮ್ಮ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣ ಹೃದಯದಿಂದ ನಿಮಗೆ ನಡೆದುಕೊಳ್ಳುವಂಥ ಸೇವಕರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸುವವರೇ,
1KI 8:24 ನಿಮ್ಮ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿ, ನೀವು ನಿಮ್ಮ ಬಾಯಿಂದ ಹೇಳಿದ್ದನ್ನು ಇಂದು ಈಡೇರಿಸಿದ್ದೀರಿ.
1KI 8:25 “ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿನ್ನ ಸಂತಾನದವರು ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ಮಾರ್ಗದಲ್ಲೇ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.
1KI 8:26 ಈಗ ಇಸ್ರಾಯೇಲಿನ ದೇವರೇ, ನೀವು ನನ್ನ ತಂದೆಯೂ ನಿಮ್ಮ ಸೇವಕನೂ ಆದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.
1KI 8:27 “ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ವಾಸವಾಗಿರುವರೋ? ಇಗೋ, ಆಕಾಶವೂ ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?
1KI 8:28 ಆದರೂ ನನ್ನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನ ಪ್ರಾರ್ಥನೆಗೂ, ಅವನ ವಿಜ್ಞಾಪನೆಗೂ ತಿರುಗಿಕೊಂಡು, ಇಂದು ನಿಮ್ಮ ಸೇವಕನು ನಿಮ್ಮ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನು ಕೇಳಿರಿ.
1KI 8:29 ನಿಮ್ಮ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀವು ಕೇಳುವ ಹಾಗೆ, ‘ಇಲ್ಲಿ ನನ್ನ ನಾಮಪ್ರಭಾವ ಇರುವುದು,’ ಎಂದು ನೀವು ಹೇಳಿದ ಈ ಆಲಯದ ಮೇಲೆ ರಾತ್ರಿ ಹಗಲೂ ನಿಮ್ಮ ಕಟಾಕ್ಷವಿರಲಿ.
1KI 8:30 ನಿಮ್ಮ ಜನರಾದ ಇಸ್ರಾಯೇಲರ ಮತ್ತು ನಿಮ್ಮ ಸೇವಕನ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.
1KI 8:31 “ತನ್ನ ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ, ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅಂಥವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
1KI 8:32 ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿ, ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.
1KI 8:33 “ನಿಮ್ಮ ಜನರಾದ ಇಸ್ರಾಯೇಲರು ನಿಮಗೆ ವಿರೋಧವಾಗಿ ಪಾಪಮಾಡಿದ್ದರಿಂದ, ತಮ್ಮ ಶತ್ರುವಿನ ಮುಂದೆ ಪರಾಭವಗೊಂಡು, ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ, ಈ ಆಲಯದಲ್ಲಿ ನಿಮಗೆ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
1KI 8:34 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಜನರಾದ ಇಸ್ರಾಯೇಲರ ಪಾಪವನ್ನು ಮನ್ನಿಸಿ, ನೀವು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡಿರಿ.
1KI 8:35 “ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,
1KI 8:36 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.
1KI 8:37 “ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,
1KI 8:38 ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತನ್ನ ಹೃದಯದ ವೇದನೆಯಿಂದ, ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,
1KI 8:39 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಮನ್ನಿಸಿ, ನಡೆಸಿರಿ. ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.
1KI 8:40 ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿರುವರು.
1KI 8:41 “ನಿಮ್ಮ ಜನರಾದ ಇಸ್ರಾಯೇಲಿನವನಲ್ಲದೆ ನಿಮ್ಮ ನಾಮದ ನಿಮಿತ್ತ ದೂರದೇಶದಿಂದ ಬಂದ ಪರದೇಶಿಯ ವಿಷಯದಲ್ಲಿ ಬೇಡಿಕೊಳ್ಳುತ್ತೇನೆ.
1KI 8:42 ಜನರು ನಿಮ್ಮ ಮಹಾನಾಮವನ್ನೂ, ನಿಮ್ಮ ಬಲವಾದ ಕೈ, ನಿಮ್ಮ ಚಾಚಿದ ತೋಳು ಇವುಗಳ ಕುರಿತು ಕೇಳಿ, ಅವರು ಈ ಆಲಯದ ಕಡೆಗೆ ಬಂದು ಪ್ರಾರ್ಥನೆಮಾಡಿದರೆ,
1KI 8:43 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು.
1KI 8:44 “ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ಯೆಹೋವ ದೇವರಾದ ನಿಮಗೆ ಪ್ರಾರ್ಥನೆ ಮಾಡಿದಾಗ,
1KI 8:45 ನೀವು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ, ಅವರಿಗೆ ನ್ಯಾಯವನ್ನು ತೀರಿಸಿರಿ.
1KI 8:46 “ಪಾಪ ಮಾಡದವನು ಯಾವನೂ ಇಲ್ಲವಲ್ಲಾ. ಆದ್ದರಿಂದ ಅವರು ನಿಮಗೆ ವಿರೋಧವಾಗಿ ಪಾಪಮಾಡಲು, ನೀವು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ, ಸಮೀಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಹೋಗುವಂತೆ ನೀವು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ,
1KI 8:47 ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಮಾನಸಾಂತರಪಟ್ಟು, ‘ನಾವು ಪಾಪಮಾಡಿದ್ದೇವೆ, ತಪ್ಪುಮಾಡಿ ದುಷ್ಟರಾಗಿ ನಡೆದಿದ್ದೇವೆ,’ ಎಂದು ಅವರನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿಮಗೆ ಪ್ರಾರ್ಥನೆಮಾಡಿದರೆ,
1KI 8:48 ಅವರನ್ನು ಸೆರೆಹಿಡಿದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಅವರು ನಿಮಗೆ ಪ್ರಾರ್ಥನೆಮಾಡಿದರೆ,
1KI 8:49 ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ.
1KI 8:50 ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನೂ, ಅವರ ಸಮಸ್ತ ದ್ರೋಹಗಳನ್ನೂ ಕ್ಷಮಿಸಿರಿ; ಅವರನ್ನು ಸೆರೆಯಾಗಿ ಒಯ್ಯುವವರು ಅವರನ್ನು ಕರುಣಿಸುವಂತೆ ನೀವು ಸಹ ಅವರನ್ನು ಕರುಣಿಸಿರಿ.
1KI 8:51 ಏಕೆಂದರೆ ಅವರು ಈಜಿಪ್ಟಿನಿಂದಲೂ, ಕಬ್ಬಿಣದ ಒಲೆಯ ಮಧ್ಯದಿಂದಲೂ, ನೀವು ಬರಮಾಡಿದ ನಿಮ್ಮ ಜನರಾಗಿಯೂ, ನಿಮ್ಮ ಬಾಧ್ಯತೆಯೂ ಆಗಿದ್ದಾರೆ. ಹೀಗೆ ಅವರು ನಿಮಗೆ ಮೊರೆಯಿಡುವ ಎಲ್ಲಾದರಲ್ಲಿ ನೀವು ಅವರ ವ್ಯಾಜ್ಯವನ್ನು ಆಲಿಸಿರಿ.
1KI 8:52 “ನಿಮ್ಮ ಸೇವಕನ ವಿಜ್ಞಾಪನೆಗೂ, ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಗೂ ನಿಮ್ಮ ಕಣ್ಣುಗಳು ತೆರೆದಿರಲಿ. ಅವರು ನಿಮ್ಮನ್ನು ಬೇಡಿಕೊಳ್ಳುವಾಗಲೆಲ್ಲಾ ಅವರ ವಿಜ್ಞಾಪನೆಗಳಿಗೆ ಕಿವಿಗೊಡಿರಿ.
1KI 8:53 ನೀವು ಈಜಿಪ್ಟಿನಿಂದ ನಮ್ಮ ಪಿತೃಗಳನ್ನು ಹೊರಗೆ ತಂದಾಗ ನಿಮ್ಮ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆಯೇ ಸಾರ್ವಭೌಮ ಯೆಹೋವ ದೇವರೇ, ಅವರನ್ನು ನಿಮ್ಮ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿರಿ,” ಎಂದನು.
1KI 8:54 ಸೊಲೊಮೋನನು ಈ ಸಮಸ್ತ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಯೆಹೋವ ದೇವರಿಗೆ ಮಾಡಿ ತೀರಿಸಿದ ತರುವಾಯ, ಅವನು ಯೆಹೋವ ದೇವರ ಬಲಿಪೀಠದ ಮುಂದೆ ಮೊಣಕಾಲೂರಿ, ತನ್ನ ಕೈಗಳನ್ನು ಆಕಾಶಕ್ಕೆ ಚಾಚಿದವನಾಗಿ ಎದ್ದು ನಿಂತನು.
1KI 8:55 ಅವನು ನಿಂತುಕೊಂಡು ಮಹಾಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಮೂಹವನ್ನು ಆಶೀರ್ವದಿಸಿದನು.
1KI 8:56 “ತಮ್ಮ ಜನರಾದ ಇಸ್ರಾಯೇಲರಿಗೆ ತಾವು ಮಾತುಕೊಟ್ಟ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ವಾಗ್ದಾನಗಳಲ್ಲಿ ಒಂದು ವಾಗ್ದಾನವಾದರೂ ಬಿದ್ದು ಹೋಗಲಿಲ್ಲ.
1KI 8:57 ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಕೈಬಿಡದೆ, ನಮ್ಮನ್ನು ತ್ಯಜಿಸದೆ, ನಮ್ಮ ಪಿತೃಗಳ ಸಂಗಡ ಹೇಗೆ ಇದ್ದರೋ ಹಾಗೆಯೇ ನಮ್ಮ ಸಂಗಡ ಇರಲಿ.
1KI 8:58 ನಮ್ಮ ಪಿತೃಗಳಿಗೆ ಕೊಟ್ಟ ಆಜ್ಞೆಗಳನ್ನು, ಅಪ್ಪಣೆಗಳನ್ನು, ನಿಯಮಗಳನ್ನು ಕೈಗೊಂಡು ಅವರ ಎಲ್ಲಾ ಮಾರ್ಗಗಳಲ್ಲಿ ನಡೆಯಲು ಅವರು ನಮ್ಮ ಹೃದಯಗಳನ್ನು ಅವರ ಕಡೆಗೆ ತಿರುಗಿಸಲಿ.
1KI 8:59 ಇದಲ್ಲದೆ ಯೆಹೋವ ದೇವರು ತಾವೇ ದೇವರಾಗಿದ್ದಾರೆ. ಅವರ ಹೊರತು ಬೇರೊಬ್ಬರಿಲ್ಲವೆಂದು ಭೂಲೋಕದ ಜನರೆಲ್ಲರೂ ತಿಳಿಯುವ ಹಾಗೆ, ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತಮ್ಮ ಸೇವಕನ ನ್ಯಾಯವನ್ನೂ, ತಮ್ಮ ಜನರಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ, ನಾನು ಯೆಹೋವ ದೇವರ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು, ರಾತ್ರಿ ಹಗಲು ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಇರಲಿ.
1KI 8:61 ಇಂದಿನ ಹಾಗೆಯೇ ಅವರ ಕಟ್ಟಳೆಗಳಲ್ಲಿ ನಡೆಯಲೂ, ಅವರ ಆಜ್ಞೆಗಳನ್ನು ಕೈಗೊಳ್ಳಲೂ, ನಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಹೃದಯಗಳು ಪೂರ್ಣವಾಗಿ ಒಪ್ಪಿಸಿಕೊಟ್ಟದ್ದಾಗಿರಲಿ,” ಎಂದನು.
1KI 8:62 ಆಗ ಅರಸನೂ, ಅವನ ಸಂಗಡ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು.
1KI 8:63 ಸೊಲೊಮೋನನು ಯೆಹೋವ ದೇವರಿಗೆ ಸಮಾಧಾನದ ಬಲಿಗಳಾಗಿ 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ, ಇಸ್ರಾಯೇಲಿನ ಸಮಸ್ತ ಜನರೂ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು.
1KI 8:64 ಆ ದಿನ ಅರಸನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆ ಮಾಡಿದನು. ಯೆಹೋವ ದೇವರ ಮುಂದಿರುವ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
1KI 8:65 ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ತಮ್ಮ ದೇವರಾದ ಯೆಹೋವ ದೇವರ ಮುಂದೆ ಏಳೇಳು ದಿನಗಳು ಅಂದರೆ ಹದಿನಾಲ್ಕು ದಿವಸ ಹಬ್ಬವನ್ನು ಆಚರಿಸಿದರು.
1KI 8:66 ಎಂಟನೆಯ ದಿನದಲ್ಲಿ ಅವನು ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಅರಸನನ್ನು ಆಶೀರ್ವದಿಸಿ ಯೆಹೋವ ದೇವರು ತಮ್ಮ ಸೇವಕನಾದ ದಾವೀದನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಸಮಸ್ತ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಅವರವರ ಡೇರೆಗಳಿಗೆ ಹೋದರು.
1KI 9:1 ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ತಾನು ಬಯಸಿದ್ದೆಲ್ಲವನ್ನೂ ಸಾಧಿಸಿದನು.
1KI 9:2 ಅನಂತರ ಯೆಹೋವ ದೇವರು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.
1KI 9:3 ಯೆಹೋವ ದೇವರು ಅವನಿಗೆ, “ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆಯನ್ನೂ ನಿನ್ನ ವಿಜ್ಞಾಪನೆಯನ್ನೂ ಕೇಳಿ ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಆಲಯವನ್ನು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
1KI 9:4 “ನೀನು ನಿನ್ನ ತಂದೆಯಾದ ದಾವೀದನಂತೆ ಸಂಪೂರ್ಣ ಹೃದಯದಿಂದಲೂ, ಯಥಾರ್ಥತೆಯಿಂದಲೂ ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
1KI 9:5 ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲವೆಂದು ನಾನು ನಿನ್ನ ತಂದೆ ದಾವೀದನಿಗೆ ಮಾತುಕೊಟ್ಟ ಪ್ರಕಾರ, ‘ಇಸ್ರಾಯೇಲಿನಲ್ಲಿ ನಿನ್ನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.’
1KI 9:6 “ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ ಕೈಗೊಂಡು ನಡೆಯದೆ ನನ್ನಿಂದ ದೂರಹೋಗಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ,
1KI 9:7 ಆಗ ನಾನು ಇಸ್ರಾಯೇಲಿಗೆ ಕೊಟ್ಟ ದೇಶದೊಳಗಿಂದ ಅವರನ್ನು ತೆಗೆದುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಇಸ್ರಾಯೇಲರು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಗುರಿಯಾಗುವರು.
1KI 9:8 ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
1KI 9:9 ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಯೆಹೋವ ದೇವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು.
1KI 9:10 ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಆ ಎರಡು ಮನೆಗಳನ್ನು ಅಂದರೆ, ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ
1KI 9:11 ಸೊಲೊಮೋನನ ಇಷ್ಟದ ಪ್ರಕಾರ ಟೈರಿನ ಅರಸನಾದ ಹೀರಾಮನು ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಚಿನ್ನವನ್ನೂ ಕೊಟ್ಟಿದ್ದರಿಂದ ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ ಗಲಿಲಾಯ ದೇಶದಲ್ಲಿನ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
1KI 9:12 ಆಗ ಹೀರಾಮನು ಟೈರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು. ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ.
1KI 9:13 ಆದ್ದರಿಂದ ಅವನು, “ನನ್ನ ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೆ?” ಎಂದು ಹೇಳಿ, ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವಕ್ಕೆ ಅದೇ ಹೆಸರು.
1KI 9:14 ಹೀರಾಮನು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ಚಿನ್ನವನ್ನು ಕಳುಹಿಸಿದನು.
1KI 9:15 ಅರಸನಾದ ಸೊಲೊಮೋನನು ದಾಸರನ್ನು ಕೂಡಿಸಿದ ಕಾರಣವೇನೆಂದರೆ, ಯೆಹೋವ ದೇವರ ಮಂದಿರವನ್ನೂ, ತನ್ನ ಅರಮನೆಯನ್ನೂ, ಮಿಲ್ಲೋವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಹಾಚೋರನ್ನೂ, ಮೆಗಿದ್ದೋವನ್ನೂ, ಗೆಜೆರನ್ನೂ ಕಟ್ಟುವುದಕ್ಕೋಸ್ಕರವೇ.
1KI 9:16 ಈಜಿಪ್ಟಿನ ಅರಸನಾದ ಫರೋಹನು ಹೊರಟುಹೋಗಿ, ಗೆಜೆರನ್ನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು, ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಅದನ್ನು ಬಹುಮಾನವಾಗಿ ಕೊಟ್ಟನು.
1KI 9:17 ಹೀಗೆಯೇ ಸೊಲೊಮೋನನು ಗೆಜೆರನ್ನೂ, ಕೆಳಗಿನ ಬೇತ್ ಹೋರೋನನ್ನೂ,
1KI 9:18 ಬಾಲಾತನ್ನೂ, ಮರುಭೂಮಿಯಲ್ಲಿರುವ ತದ್ಮೋರ್ ಎಂಬ ಸ್ಥಳವನ್ನೂ ಕಟ್ಟಿಸಿದನು.
1KI 9:19 ಇದಲ್ಲದೆ ಸೊಲೊಮೋನನು ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
1KI 9:20 ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
1KI 9:21 ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
1KI 9:22 ಆದರೆ ಸೊಲೊಮೋನನು ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಅವರು ಯುದ್ಧಭಟರಾಗಿಯೂ, ಅವನ ಅಧಿಪತಿಯಾಗಿಯೂ, ತನ್ನ ಕೈಕೆಳಗಿರುವ ಅವನ ಪ್ರಧಾನರಾಗಿಯೂ, ಅಧಿಕಾರಿಗಳಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇದ್ದರು.
1KI 9:23 ಇದರೊಳಗೆ ಐದು ನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
1KI 9:24 ಆದರೆ ಫರೋಹನ ಮಗಳು ದಾವೀದನ ಪಟ್ಟಣದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
1KI 9:25 ವರುಷಕ್ಕೆ ಮೂರು ಸಾರಿ ಸೊಲೊಮೋನನು ಯೆಹೋವ ದೇವರಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ಯೆಹೋವ ದೇವರ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಡುತ್ತಿದ್ದನು. ಹೀಗೆ ಆಲಯದ ಅರ್ಪಣೆಗಳನ್ನು ಪೂರೈಸಿದನು.
1KI 9:26 ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪು ಸಮುದ್ರತೀರದ ಏಲೋತ್ ಎಂಬ ಊರ ಬಳಿಯಲ್ಲಿರುವ ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
1KI 9:27 ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರ ಸಂಗಡ ಆ ಹಡಗುಗಳಲ್ಲಿ ಕಳುಹಿಸಿದನು.
1KI 9:28 ಅವರು ಓಫೀರಿಗೆ ಹೋಗಿ, ಅಲ್ಲಿಂದ ಹದಿನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಅರಸನಾದ ಸೊಲೊಮೋನನಿಗೆ ತೆಗೆದುಕೊಂಡು ಬಂದರು.
1KI 10:1 ಶೆಬದ ರಾಣಿಯು ಯೆಹೋವ ದೇವರ ನಾಮದ ಮಹತ್ತಿನಿಂದ ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು.
1KI 10:2 ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು.
1KI 10:3 ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವುಗಳಲ್ಲಿ ಅರಸನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು.
1KI 10:4 ಶೆಬದ ರಾಣಿಯು ಸೊಲೊಮೋನನ ಸಮಸ್ತ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ,
1KI 10:5 ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.
1KI 10:6 ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ.
1KI 10:7 ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಿನ್ನ ಜ್ಞಾನವೂ, ನಿನ್ನ ಸಂಪತ್ತೂ ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ.
1KI 10:8 ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು.
1KI 10:9 ಇಸ್ರಾಯೇಲಿನ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಯೆಹೋವ ದೇವರು ಯುಗಯುಗಕ್ಕೂ ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು.
1KI 10:10 ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧದ್ರವ್ಯಗಳ ಹಾಗೆ ಬೇರೆ ಯಾರೂ ಕೊಟ್ಟಿರಲಿಲ್ಲ.
1KI 10:11 ಹೀರಾಮನ ಹಡಗುಗಳು ಓಫೀರನಿಂದ ಬಂಗಾರ ಮಾತ್ರವಲ್ಲದೆ ಅನೇಕ ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದವು.
1KI 10:12 ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ ಅರಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ, ವೀಣೆಗಳನ್ನೂ ಮಾಡಿಸಿದನು. ಅಂದಿನಿಂದ ಈ ದಿನದವರೆಗೂ ಅಂಥಾ ಸುಗಂಧದ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.
1KI 10:13 ಅರಸನಾದ ಸೊಲೊಮೋನನು ಶೆಬದ ರಾಣಿಗೆ ಔದಾರ್ಯವಾಗಿ ಕೊಟ್ಟ ಕಾಣಿಕೆಗಳ ಹೊರತಾಗಿ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು.
1KI 10:14 ಸೊಲೊಮೋನನಿಗೆ ಪ್ರತಿ ವರುಷ ಸುಮಾರು ಇಪ್ಪತ್ತಮೂರು ಸಾವಿರ ಕಿಲ್ರೊಗ್ರಾಂ ಬಂಗಾರವು ದೊರಕುತ್ತಿತ್ತು.
1KI 10:15 ಇದಲ್ಲದೆ ಸೊಲೊಮೋನನಿಗೆ ವರ್ತಕರಿಂದಲೂ, ವರ್ತಕರ ವ್ಯಾಪಾರದಿಂದಲೂ, ಅರೇಬಿಯದ ಅರಸರಿಂದಲೂ, ದೇಶದ ಅಧಿಪತಿಗಳಿಂದಲೂ ಸಹ ಬಂಗಾರವು ದೊರಕುತ್ತಿತ್ತು.
1KI 10:16 ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿ ಸುಮಾರು ಏಳು ಕಿಲೋಗ್ರಾಂ ತೂಕದ ಬಂಗಾರವಿತ್ತು.
1KI 10:17 ಹಾಗೆಯೇ ಬಂಗಾರದಿಂದ ಮುನ್ನೂರು ಸಣ್ಣ ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿಗೆ ಸುಮಾರು ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.
1KI 10:18 ಅರಸನು ದಂತದಿಂದ ದೊಡ್ಡ ಸಿಂಹಾಸನವನ್ನು ಮಾಡಿಸಿ, ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿದನು.
1KI 10:19 ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳಿದ್ದವು. ಈ ಸಿಂಹಾಸನದ ಹಿಂಭಾಗವು ದುಂಡಾಗಿತ್ತು. ಕುಳಿತುಕೊಳ್ಳುವ ಆಸನದ ಎರಡು ಕಡೆಗಳಲ್ಲಿ ಕೈಗಳಿದ್ದವು. ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
1KI 10:20 ಹನ್ನೆರಡು ಸಿಂಹಗಳು, ಆರು ಮೆಟ್ಟಲುಗಳ ಮೇಲೆ ಎರಡು ಕಡೆಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇರಲಿಲ್ಲ.
1KI 10:21 ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಎಲ್ಲಾ ಸಾಮಗ್ರಿಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ದಿವಸಗಳಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ, ಆದುದರಿಂದ ಅವನಲ್ಲಿ ಬೆಳ್ಳಿಯ ವಸ್ತು ಒಂದಾದರೂ ಕಾಣಿಸಲಿಲ್ಲ.
1KI 10:22 ಹೀರಾಮನ ಹಡಗುಗಳ ಜೊತೆಯಲ್ಲಿ ಅರಸನ ಹಡಗುಗಳು ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.
1KI 10:23 ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಸಮಸ್ತ ಅರಸರಿಗಿಂತ ಮಿಗಿಲಾಗಿದ್ದನು.
1KI 10:24 ದೇವರು ಸೊಲೊಮೋನನ ಹೃದಯದಲ್ಲಿ ಕೊಟ್ಟಿದ್ದ ಜ್ಞಾನವನ್ನು ಕೇಳುವುದಕ್ಕಾಗಿ ಭೂಲೋಕದಲ್ಲಿರುವ ಸಮಸ್ತರೂ ಅವನ ದರ್ಶನವನ್ನು ಬಯಸಿದರು.
1KI 10:25 ಅವರೆಲ್ಲರೂ ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ, ಬಂಗಾರದ ಪಾತ್ರೆಗಳನ್ನೂ, ವಸ್ತ್ರಗಳನ್ನೂ, ಆಯುಧಗಳನ್ನೂ, ಸುಗಂಧಗಳನ್ನೂ, ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ವರುಷ ವರುಷವೂ ನೇಮಕವಾದ ಪ್ರಕಾರ ತರುತ್ತಿದ್ದರು.
1KI 10:26 ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು.
1KI 10:27 ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.
1KI 10:28 ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
1KI 10:29 ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.
1KI 11:1 ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರ, ಅಮ್ಮೋನ್ಯರ, ಎದೋಮ್ಯರ, ಸೀದೋನ್ಯರ, ಹಿತ್ತಿಯರ ಸ್ತ್ರೀಯರನ್ನೂ ಪ್ರೀತಿಮಾಡಿದನು.
1KI 11:2 ಈ ಜನಾಂಗಗಳನ್ನು ಕುರಿತು ಯೆಹೋವ ದೇವರು ಇಸ್ರಾಯೇಲರಿಗೆ, “ನೀವು ಅವರ ಬಳಿಗೆ ಪ್ರವೇಶಿಸಬಾರದು. ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು,” ಎಂದು ಹೇಳಿದ್ದರು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು.
1KI 11:3 ಅವನಿಗೆ ರಾಜಪುತ್ರಿಯರಾದ ಏಳು ನೂರು ಮಂದಿ ಪತ್ನಿಯರೂ, ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದಾರಿ ತಪ್ಪಿಸಿದರು.
1KI 11:4 ಸೊಲೊಮೋನನು ಮುದುಕನಾದ ಕಾಲದಲ್ಲಿ ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗಿಸಿದರು. ಅವನ ಹೃದಯವು ತನ್ನ ತಂದೆ ದಾವೀದನ ಹೃದಯದ ಹಾಗೆ ತನ್ನ ದೇವರಾದ ಯೆಹೋವ ದೇವರ ಸಂಗಡ ಪರಿಪೂರ್ಣವಾಗಿ ಇರಲಿಲ್ಲ.
1KI 11:5 ಸೊಲೊಮೋನನು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಅಮ್ಮೋನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾಲಿಸಿದನು.
1KI 11:6 ಸೊಲೊಮೋನನು ತನ್ನ ತಂದೆ ದಾವೀದನ ಹಾಗೆ ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸದೆ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.
1KI 11:7 ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷಿಗೋಸ್ಕರವೂ, ಅಮ್ಮೋನ್ಯರ ಅಸಹ್ಯಕರವಾದ ಮೋಲೆಕನಿಗೋಸ್ಕರವೂ ಯೆರೂಸಲೇಮಿನ ಪೂರ್ವದಲ್ಲಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.
1KI 11:8 ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು, ಬಲಿಗಳನ್ನು ಅರ್ಪಿಸುವ ತನ್ನ ಅನ್ಯಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು.
1KI 11:9 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷರಾಗಿದ್ದರೂ, ಅವನ ಹೃದಯವು ದೇವರಿಂದ ತಿರುಗಿ ಹೋದುದರಿಂದ, ಅವನ ಮೇಲೆ ಕೋಪಿಸಿಕೊಂಡಿದ್ದರು.
1KI 11:10 ಅನ್ಯದೇವರುಗಳ ಹಿಂದೆ ಹೋಗಬಾರದೆಂದು ಅವರು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದರೂ, ಅವನು, ಯೆಹೋವ ದೇವರು ಆಜ್ಞಾಪಿಸಿದ್ದನ್ನು ಕೈಗೊಳ್ಳದೆ ಹೋದನು.
1KI 11:11 ಆದಕಾರಣ ಯೆಹೋವ ದೇವರು ಸೊಲೊಮೋನನಿಗೆ, “ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳದೆ ಹೋದುದರಿಂದ ನಿಶ್ಚಯವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಿದುಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು.
1KI 11:12 ಆದರೆ ನಿನ್ನ ತಂದೆ ದಾವೀದನಿಗೋಸ್ಕರ ನಿನ್ನ ಕಾಲದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಿದುಕೊಳ್ಳುವೆನು.
1KI 11:13 ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಿದುಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ, ನಾನು ಆಯ್ದುಕೊಂಡ ಯೆರೂಸಲೇಮಿಗೋಸ್ಕರವೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು,” ಎಂದರು.
1KI 11:14 ಆಗ ಯೆಹೋವ ದೇವರು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಎದುರಾಳಿಯಾಗಿ ಎಬ್ಬಿಸಿದರು.
1KI 11:15 ದಾವೀದನು ಎದೋಮಿನಲ್ಲಿರುವಾಗ ಸೇನಾಧಿಪತಿಯಾದ ಯೋವಾಬನು ಎದೋಮಿನ ಗಂಡಸರೆಲ್ಲರನ್ನು ಕೊಂದುಹಾಕಿದನು. ತರುವಾಯ ಇಸ್ರಾಯೇಲರಲ್ಲಿ ಹತರಾದವರನ್ನು ಸಮಾಧಿಮಾಡಲು ಹೋದನು.
1KI 11:16 ಯೋವಾಬನು ಎದೋಮಿನಲ್ಲಿರುವ ಗಂಡಸರೆಲ್ಲರನ್ನು ಸಂಹರಿಸುವವರೆಗೂ ಇಸ್ರಾಯೇಲಿನ ಸಮಸ್ತ ಸೈನ್ಯದ ಸಂಗಡ ಅಲ್ಲಿ ಆರು ತಿಂಗಳು ಇದ್ದನು.
1KI 11:17 ಆದರೆ ಆ ಸಮಯದಲ್ಲಿ ಇನ್ನೂ ಬಾಲಕನಾದ ಹದಾದನು ತನ್ನ ತಂದೆಯ ಕೆಲವು ಸೇವಕರಾದ ಎದೋಮ್ಯರ ಸಂಗಡ ಈಜಿಪ್ಟಿಗೆ ಓಡಿಹೋಗಬೇಕೆಂದು ಹೊರಟನು.
1KI 11:18 ಮಿದ್ಯಾನನ್ನು ಬಿಟ್ಟು ಪಾರಾನಿಗೆ ಬಂದು ಅಲ್ಲಿಂದ ಮನುಷ್ಯರನ್ನು ತೆಗೆದುಕೊಂಡು ಈಜಿಪ್ಟಿನಲ್ಲಿ ಪ್ರವೇಶಿಸಿ ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಮನೆಯನ್ನು, ಆಹಾರವನ್ನು ಮತ್ತು ಭೂಮಿಯನ್ನು ಕೊಟ್ಟನು.
1KI 11:19 ಇದಲ್ಲದೆ ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಪ್ನೆಸ್ ಎಂಬವಳ ಸಹೋದರಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
1KI 11:20 ತಪ್ನೆಸ್ ಸಹೋದರಿಯು ಅವನಿಗೆ ಗೆನುಬತ್ ಎಂಬ ಮಗನನ್ನು ಹೆತ್ತಳು. ತಪ್ನೆಸ್ ಇವನನ್ನು ಫರೋಹನ ಮನೆಯಲ್ಲಿ ಬೆಳೆಸಿದಳು. ಗೆನುಬತನು ಫರೋಹನ ಮನೆಯಲ್ಲಿ ಫರೋಹನ ಮಕ್ಕಳ ಸಂಗಡ ಇದ್ದನು.
1KI 11:21 ಆದರೆ ದಾವೀದನು ಮರಣ ಹೊಂದಿದನೆಂದೂ, ಸೇನಾಧಿಪತಿಯಾದ ಯೋವಾಬನು ಸತ್ತು ಹೋದನೆಂದೂ, ಹದದನು ಈಜಿಪ್ಟಿನಲ್ಲಿ ಕೇಳಿದಾಗ, ಹದದನು ಫರೋಹನಿಗೆ, “ನಾನು ನನ್ನ ದೇಶಕ್ಕೆ ಹೋಗುವಹಾಗೆ ನನ್ನನ್ನು ಕಳುಹಿಸು,” ಎಂದನು.
1KI 11:22 ಫರೋಹನು ಅವನಿಗೆ, “ನೀನು ನಿನ್ನ ದೇಶಕ್ಕೆ ಹೋಗಬೇಕೆನ್ನುವ ಹಾಗೆ ನಿನಗೆ ನನ್ನ ಸಂಗಡ ಇರುವಾಗ ಏನು ಕೊರತೆಯಾಯಿತು?” ಎಂದು ಕೇಳಿದನು. ಅವನು, “ಏನೂ ಇಲ್ಲ, ಆದರೆ ನಾನು ಅಲ್ಲಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು.
1KI 11:23 ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಸೊಲೊಮೋನನ ಮೇಲೆ ಎಬ್ಬಿಸಿದರು. ಅವನು ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೆಜೆರನನ್ನು ಬಿಟ್ಟು ಓಡಿ ಹೋದ ಎಲ್ಯಾದಾವನ ಮಗನಾದ ರೆಜೋನನು.
1KI 11:24 ದಾವೀದನು ಚೋಬದ ಜನರನ್ನು ಸಂಹರಿಸುವಾಗ ಇವನು ಜನರನ್ನು ತನ್ನ ಬಳಿಯಲ್ಲಿ ಕೂಡಿಸಿಕೊಂಡು ಒಂದು ಗುಂಪಿಗೆ ಅಧಿಪತಿಯಾಗಿ ಅವರ ಸಂಗಡ ದಮಸ್ಕಕ್ಕೆ ಹೋಗಿ ಅಲ್ಲಿ ವಾಸಿಸಿ, ಅರಸನಾದನು.
1KI 11:25 ಹದದನು ಮಾಡಿದ ಕೇಡಿಗೆ ಹೊರತಾಗಿ ಇವನು ಸೊಲೊಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲಿಗೆ ಶತ್ರುವಾಗಿದ್ದನು. ಅವನು ಇಸ್ರಾಯೇಲನ್ನು ಹಗೆಮಾಡಿ, ಅರಾಮ್ ದೇಶವನ್ನು ಆಳುತ್ತಾ ಇದ್ದನು.
1KI 11:26 ಇದಲ್ಲದೆ, ಅರಸನಾದ ಸೊಲೊಮೋನನಿಗೆ ವಿರೋಧವಾಗಿ ದಂಗೆ ಎದ್ದವರಲ್ಲಿ ಅವನ ಸೇವಕನೂ ಚರೇದ ಪಟ್ಟಣದ ಎಫ್ರಾಯೀಮ್ಯನಾದ ನೆಬಾಟನ ಮಗ ಯಾರೊಬ್ಬಾಮನು ಇದ್ದನು, ಚೆರೂಯಳೆಂಬ ವಿಧವೆಯು ಅವನ ತಾಯಿಯು.
1KI 11:27 ಅವನು ಅರಸನಿಗೆ ವಿರೋಧವಾಗಿ ದಂಗೆಯೆದ್ದ ಕಾರಣವೇನೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ, ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿಸುತ್ತಿರುವಾಗ,
1KI 11:28 ಯಾರೊಬ್ಬಾಮನು ಪರಾಕ್ರಮಶಾಲಿಯಾಗಿರುವುದರಿಂದ ಸೊಲೊಮೋನನು ಈ ಪ್ರಾಯಸ್ಥನು ಕೆಲಸಮಾಡತಕ್ಕವನೆಂದು ಕಂಡು, ಯೋಸೇಫನ ಗೋತ್ರದ ಸಮಸ್ತ ಆಳುಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.
1KI 11:29 ಆ ಕಾಲದಲ್ಲಿ, ಯಾರೊಬ್ಬಾಮನು ಯೆರೂಸಲೇಮಿನೊಳಗಿಂದ ಹೊರಟು ಹೋಗುವಾಗ, ಶೀಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿಯಲ್ಲಿ ಕಂಡನು. ಅವನು ಹೊಸ ಕಂಬಳಿಯನ್ನು ಹೊದ್ದುಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾಗಿದ್ದರು.
1KI 11:30 ಆಗ ಅಹೀಯನು ತನ್ನ ಮೇಲೆ ಇರುವ ಹೊಸ ಕಂಬಳಿಯನ್ನು ತೆಗೆದುಕೊಂಡು ಅದನ್ನು ಹನ್ನೆರಡು ತುಂಡುಗಳಾಗಿ ಹರಿದು,
1KI 11:31 ಯಾರೊಬ್ಬಾಮನಿಗೆ ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇಸ್ರಾಯೇಲಿನ ದೇವರಾದ ಯೆಹೋವ ದೇವರು, “ಇಗೋ, ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನು ಹರಿದು ತೆಗೆದುಕೊಂಡು, ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
1KI 11:32 ಆದರೆ, ನನ್ನ ಸೇವಕ ದಾವೀದನಿಗೋಸ್ಕರವೂ, ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವುದು.
1KI 11:33 ಏಕೆಂದರೆ ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ, ನನ್ನ ನ್ಯಾಯಗಳನ್ನೂ ಕೈಗೊಳ್ಳುವುದಕ್ಕೂ, ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡುವುದಕ್ಕೂ, ಸೊಲೊಮೋನನೂ ಅವನ ಮನೆಯವರೂ ನನ್ನ ಮಾರ್ಗಗಳಲ್ಲಿ ನಡೆಯದೆ, ನನ್ನನ್ನು ಬಿಟ್ಟು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಮೋವಾಬ್ಯರ ದೇವರಾದ ಕೆಮೋಷನ್ನೂ, ಅಮ್ಮೋನಿಯರ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
1KI 11:34 “ ‘ಆದರೂ ನನ್ನ ಆಜ್ಞೆಗಳನ್ನೂ, ನನ್ನ ತೀರ್ಪುಗಳನ್ನೂ ಕೈಗೊಂಡದ್ದರಿಂದ, ನಾನು ಆಯ್ದು ತೆಗೆದುಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದುಕೊಳ್ಳದೆ, ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು.
1KI 11:35 ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತೆಗೆದುಕೊಂಡು, ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
1KI 11:36 ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು.
1KI 11:37 ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ.
1KI 11:38 ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ, ನನ್ನ ಮಾರ್ಗಗಳಲ್ಲಿ ನಡೆದು, ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ, ನನ್ನ ತೀರ್ಪುಗಳನ್ನೂ, ನನ್ನ ಆಜ್ಞೆಗಳನ್ನೂ ಕೈಗೊಂಡು, ನನ್ನ ದೃಷ್ಟಿಗೆ ಯಥಾರ್ಥವಾದದ್ದನ್ನು ಮಾಡಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸಿ, ಇಸ್ರಾಯೇಲನ್ನು ನಿನಗೆ ಕೊಡುವೆನು.
1KI 11:39 ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು, ಆದರೆ ನಿರಂತರವಾಗಿ ಅಲ್ಲ,’ ” ಎಂದು ಅಹೀಯನು ಹೇಳಿದನು.
1KI 11:40 ಇದರ ನಿಮಿತ್ತ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಹುಡುಕಿದನು. ಆದ್ದರಿಂದ ಯಾರೊಬ್ಬಾಮನು ಎದ್ದು, ಈಜಿಪ್ಟಿನ ಅರಸನಾದ ಶೀಶಕನ ಬಳಿಗೆ ಈಜಿಪ್ಟಿಗೆ ಓಡಿಹೋಗಿ, ಸೊಲೊಮೋನನು ಸಾಯುವವರೆಗೂ ಅಲ್ಲಿ ಇದ್ದನು.
1KI 11:41 ಸೊಲೊಮೋನನ ಉಳಿದ ಕ್ರಿಯೆಗಳನ್ನು, ಅವನು ಮಾಡಿದ ಸಾಧನೆಗಳನ್ನು ಮತ್ತು ಅವನ ಜ್ಞಾನವನ್ನು ಕುರಿತು ಸೊಲೊಮೋನನ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತದೆ.
1KI 11:42 ಹೀಗೆ ಸೊಲೊಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲಿನ ಮೇಲೆ ನಾಲ್ವತ್ತು ವರ್ಷಗಳು ಆಳಿದನು.
1KI 11:43 ಸೊಲೊಮೋನನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ತಂದೆ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ರೆಹಬ್ಬಾಮನು ಅವನಿಗೆ ಬದಲಾಗಿ ಅರಸನಾದನು.
1KI 12:1 ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವುದಕ್ಕೆ ಸಮಸ್ತ ಇಸ್ರಾಯೇಲರು ಶೆಕೆಮಿಗೆ ಬಂದರು.
1KI 12:2 ಅರಸನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸವಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ಇದನ್ನು ಕೇಳಿದಾಗ, ಅವನು ಈಜಿಪ್ಟಿನಿಂದ ತಿರುಗಿಬಂದನು.
1KI 12:3 ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲರೂ ರೆಹಬ್ಬಾಮನ ಬಳಿಗೆ ಬಂದು, ಅವನ ಸಂಗಡ ಮಾತನಾಡಿ,
1KI 12:4 “ನಿನ್ನ ತಂದೆಯು ನಮ್ಮ ನೊಗವನ್ನು ಭಾರವಾಗಿ ಮಾಡಿದನು. ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ, ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ, ನಾವು ನಿನಗೆ ಸೇವೆಮಾಡುತ್ತೇವೆ,” ಎಂದರು.
1KI 12:5 ಅವನು ಅವರಿಗೆ, “ನೀವು ಹೋಗಿ ಮೂರು ದಿವಸಗಳಾದ ತರುವಾಯ ತಿರುಗಿ ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದ್ದರಿಂದ ಜನರು ಹೊರಟು ಹೋದರು.
1KI 12:6 ಆಗ ಅರಸನಾದ ರೆಹಬ್ಬಾಮನು ತನ್ನ ತಂದೆ ಸೊಲೊಮೋನನು ಬದುಕಿರುವಾಗ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ಅವರಿಗೆ, “ನಾನು ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
1KI 12:7 ಅವರು ಅವನಿಗೆ, “ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.
1KI 12:8 ಆದರೆ ರೆಹಬ್ಬಾಮನು, ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು, ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಕೇಳಿ,
1KI 12:9 ಅವನು ಅವರಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಉತ್ತರ ಕೊಡಲು ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
1KI 12:10 ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವನಿಗೆ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರಮಾಡಿದನು. ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರುವುದು.
1KI 12:11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು. ಆದರೆ ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಚೇಳು ಕೊರಡೆಗಳಿಂದ ಶಿಕ್ಷಿಸುವೆನು,’ ಎಂದು ನೀನು ಅವರಿಗೆ ಹೇಳು,” ಎಂದರು.
1KI 12:12 ಆಗ, “ಮೂರನೆಯ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ,” ಎಂದು ಅರಸನು ಹೇಳಿದ ಪ್ರಕಾರ, ಮೂರನೆಯ ದಿವಸದಲ್ಲಿ ಯಾರೊಬ್ಬಾಮನೂ, ಸಮಸ್ತ ಜನರೂ ಅರಸನಾದ ರೆಹಬ್ಬಾಮನ ಬಳಿಗೆ ಬಂದರು.
1KI 12:13 ಆದರೆ ಅರಸನು ಜನರಿಗೆ ಕಠಿಣವಾದ ಉತ್ತರವನ್ನು ಕೊಟ್ಟು, ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ನಿರಾಕರಿಸಿ,
1KI 12:14 ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ, “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿ ಮಾಡಿದನು. ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಶಿಕ್ಷಿಸಿದನು. ಆದರೆ ನಾನು ಮುಳ್ಳು ಕೊರಡೆಗಳಿಂದ ಶಿಕ್ಷಿಸುವೆನು,” ಎಂದನು.
1KI 12:15 ಅರಸನು ಜನರ ಮಾತನ್ನು ಕೇಳದೆಹೋದದ್ದು ಯೆಹೋವ ದೇವರಿಂದಲೇ. ಹೀಗೆ ಯೆಹೋವ ದೇವರು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ಈಡೇರುವುದಕ್ಕೆ ಕಾರಣವಾಯಿತು.
1KI 12:16 ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲರು ತಿಳಿದಾಗ, ಜನರು ಅರಸನಿಗೆ ಉತ್ತರವಾಗಿ, “ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾಯೇಲರೇ, ನಿಮ್ಮ ಡೇರೆಗಳಿಗೆ ಹೋಗಿರಿ. ದಾವೀದನೇ, ಈಗ ನಿನ್ನ ಕುಟುಂಬವನ್ನು ನೀನೇ ನೋಡಿಕೋ,” ಎಂದು ಹೇಳಿ, ಇಸ್ರಾಯೇಲರು ತಮ್ಮ ತಮ್ಮ ಡೇರೆಗಳಿಗೆ ಹೋದರು.
1KI 12:17 ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.
1KI 12:18 ಆಗ ರೆಹಬ್ಬಾಮನು ದಾಸರ ಮೇಲ್ವಿಚಾರಕನಾದ ಅದೋನೀರಾಮನನ್ನು ಕಳುಹಿಸಿದನು. ಆದರೆ ಇಸ್ರಾಯೇಲರೆಲ್ಲರು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು. ಆದ್ದರಿಂದ ಅರಸನಾದ ರೆಹಬ್ಬಾಮನು ಆತುರಪಟ್ಟು ತನ್ನ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು.
1KI 12:19 ಹೀಗೆ ಇಂದಿನವರೆಗೂ ಇಸ್ರಾಯೇಲರು ದಾವೀದನ ಕುಟುಂಬದವರೊಡನೆ ವಿರೋಧವಾಗಿ ತಿರುಗಿಬೀಳುತ್ತಲೇ ಇದ್ದಾರೆ.
1KI 12:20 ಇಸ್ರಾಯೇಲರು ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ, ಅವರು ಸಭೆಗೆ ಅವನನ್ನು ಕರೆಕಳುಹಿಸಿ, ಸಮಸ್ತ ಇಸ್ರಾಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.
1KI 12:21 ಸೊಲೊಮೋನನ ಮಗನಾದ ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಬೆನ್ಯಾಮೀನನ ಗೋತ್ರದ ಮತ್ತು ಯೆಹೂದನ ಸಮಸ್ತ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
1KI 12:22 ಆದರೆ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ,
1KI 12:23 “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನನ ಸಮಸ್ತ ಮನೆಯವರಿಗೂ ಮತ್ತು ಮಿಕ್ಕಿದ ಜನರಿಗೂ ಹೇಳಬೇಕಾದದ್ದೇನೆಂದರೆ,
1KI 12:24 ‘ನೀವು ಇಸ್ರಾಯೇಲರಾಗಿರುವ ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ.’ ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯೆಹೋವ ದೇವರ ವಾಕ್ಯದ ಪ್ರಕಾರವೇ ಹಿಂದಿರುಗಿ ಹೋದರು.
1KI 12:25 ಯಾರೊಬ್ಬಾಮನು ಎಫ್ರಾಯೀಮನ ಬೆಟ್ಟದಲ್ಲಿ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ, ಅದರಲ್ಲಿ ವಾಸಿಸಿದನು. ಅಲ್ಲಿಂದ ಹೊರಟುಹೋಗಿ ಪೆನೀಯೇಲ್ ಪಟ್ಟಣವನ್ನು ಭದ್ರಪಡಿಸಿದನು.
1KI 12:26 ಆದರೆ ಯಾರೊಬ್ಬಾಮನು ತನ್ನ ಮನಸ್ಸಿನಲ್ಲಿ, “ಈಗ ರಾಜ್ಯವು ದಾವೀದನ ಮನೆಯವರಿಗೆ ಹಿಂದಿರುಗುವುದು ಏನೋ,
1KI 12:27 ಈ ಜನರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ, ಆಗ ಇವರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಮತ್ತೆ ತಿರುಗುವುದು. ಅವರು ನನ್ನನ್ನು ಕೊಂದುಹಾಕಿ, ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ತಿರುಗಿ ಹೋದಾರು,” ಎಂದುಕೊಂಡನು.
1KI 12:28 ಅರಸನು ತನ್ನ ಸಲಹೆಗಾರರನ್ನು ಕೇಳಿ, ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ಯೆರೂಸಲೇಮಿನವರೆಗೂ ಜಾತ್ರೆಗೆ ಹೋಗುವುದು ನಿಮಗೆ ಕಷ್ಟವಾಗಿದೆ. ಇಸ್ರಾಯೇಲರೇ, ಇಗೋ ಈಜಿಪ್ಟಿನಿಂದ ನಿಮ್ಮನ್ನು ಬರಮಾಡಿದ ನಿಮ್ಮ ದೇವರುಗಳು,” ಎಂದನು.
1KI 12:29 ಒಂದನ್ನು ಬೇತೇಲಿನಲ್ಲಿಯೂ, ಒಂದನ್ನು ದಾನಿನಲ್ಲಿಯೂ ಸ್ಥಾಪಿಸಿದನು.
1KI 12:30 ಇದು ಪಾಪಕ್ಕೆ ಕಾರಣವಾಯಿತು. ದಾನಿನಲ್ಲಿರುವುದನ್ನು ಪೂಜಿಸಲು ಜನರು ಅಲ್ಲಿಯವರೆಗೆ ಹೋಗುತ್ತಿದ್ದರು.
1KI 12:31 ಅವನು ಉನ್ನತ ಸ್ಥಳಗಳಲ್ಲಿ ಪೂಜಾಸ್ಥಳಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.
1KI 12:32 ಯಾರೊಬ್ಬಾಮನು ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ, ಪೀಠದ ಮೇಲೆ ಬಲಿಗಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿನಲ್ಲಿ ಮಾಡಿ, ಅವನು ರೂಪಿಸಿದ ಕರುಗಳ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ನೇಮಿಸಿದ ಉನ್ನತ ಸ್ಥಳಗಳ ಯಾಜಕರನ್ನೇ ಇರಿಸಿದನು.
1KI 12:33 ಹೀಗೆ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಅವನು ಬೇತೇಲಿನಲ್ಲಿ ಕಟ್ಟಿಸಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ, ಇಸ್ರಾಯೇಲರಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು.
1KI 13:1 ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ, ಯೆಹೂದದಿಂದ ಬೇತೇಲಿಗೆ ಯೆಹೋವ ದೇವರ ಮಾತಿನಂತೆ ಒಬ್ಬ ದೇವರ ಮನುಷ್ಯ ಬಂದನು.
1KI 13:2 ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.
1KI 13:3 ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ, “ಯೆಹೋವ ದೇವರು ಇದಕ್ಕೆ ಹೇಳಿದ ಗುರುತೇನೆಂದರೆ, ಇಗೋ, ಬಲಿಪೀಠವು ಸೀಳಿಹೋಗಿ, ಅದರ ಮೇಲೆ ಇರುವ ಬೂದಿಯು ಬಿದ್ದುಹೋಗುವುದು,” ಎಂದನು.
1KI 13:4 ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಹೇಳಿದ ಮಾತನ್ನು ಕೇಳಿದಾಗ, ಅವನು ಪೀಠದ ಬಳಿಯಿಂದ ತನ್ನ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳೆದುಕೊಳ್ಳದ ಹಾಗೆ ಒಣಗಿ ಹೋಯಿತು.
1KI 13:5 ಇದಲ್ಲದೆ ಯೆಹೋವ ದೇವರ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿಪೀಠವು ಸೀಳಿಹೋಗಿ, ಬೂದಿಯು ಬಲಿಪೀಠದಿಂದ ಬಿದ್ದುಹೋಯಿತು.
1KI 13:6 ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು.
1KI 13:7 ಅರಸನು ದೇವರ ಮನುಷ್ಯನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡಿ ವಿಶ್ರಮಿಸಿಕೋ, ನಾನು ನಿನಗೆ ಬಹುಮಾನ ಕೊಡುವೆನು,” ಎಂದನು.
1KI 13:8 ಆದರೆ ದೇವರ ಮನುಷ್ಯನು ಅರಸನಿಗೆ ಉತ್ತರವಾಗಿ, “ನೀನು ನನಗೆ ನಿನ್ನ ಅರ್ಧ ಆಸ್ತಿಯನ್ನು ಕೊಟ್ಟರೂ, ನಾನು ನಿನ್ನ ಸಂಗಡ ಹೋಗುವುದಿಲ್ಲ. ಈ ಸ್ಥಳದಲ್ಲಿ ರೊಟ್ಟಿ ತಿನ್ನುವುದಿಲ್ಲ, ಕುಡಿಯುವುದಿಲ್ಲ.
1KI 13:9 ಏಕೆಂದರೆ, ‘ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ, ನೀನು ಬಂದ ಮಾರ್ಗದಿಂದ ಹಿಂದಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ವಾಕ್ಯದಿಂದ ನನಗೆ ಆಜ್ಞೆಯಾಗಿದೆ,” ಎಂದನು.
1KI 13:10 ಆದ್ದರಿಂದ ಅವನು ಬೇತೇಲಿಗೆ ಬಂದ ಮಾರ್ಗದಿಂದ ಹಿಂದಿರುಗಿ ಹೋಗದೆ, ಮತ್ತೊಂದು ಮಾರ್ಗವಾಗಿ ಹೋದನು.
1KI 13:11 ಬೇತೇಲಿನಲ್ಲಿ ಒಬ್ಬ ವೃದ್ಧ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ಆ ದಿನದಲ್ಲಿ ಬೇತೇಲಿನಲ್ಲಿ ದೇವರ ಮನುಷ್ಯನು ಮಾಡಿದ ಸಮಸ್ತ ಕ್ರಿಯೆಗಳನ್ನು ಮತ್ತು ಅರಸನಿಗೆ ಹೇಳಿದ ಮಾತುಗಳನ್ನು ತಮ್ಮ ತಂದೆಗೆ ತಿಳಿಸಿದರು.
1KI 13:12 ಆಗ ಅವರ ತಂದೆ ಅವರಿಗೆ, “ಅವನು ಯಾವ ಮಾರ್ಗವಾಗಿ ಹೋದನು,” ಎಂದನು. ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳಿಗೆ ತೋರಿಸಿದರು.
1KI 13:13 ಆದ್ದರಿಂದ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ಕತ್ತೆಗೆ ತಡಿ ಹಾಕಿದರು. ಅವನು ಅದರ ಮೇಲೆ ಏರಿ,
1KI 13:14 ದೇವರ ಮನುಷ್ಯನ ಹಿಂದೆ ಹೋಗಿ, ಅವನು ಏಲಾ ಮರದ ಕೆಳಗೆ ಕುಳಿತುಕೊಂಡಿರುವುದನ್ನು ಕಂಡನು. ಆಗ ಅವನು, “ನೀನು ಯೆಹೂದದಿಂದ ಬಂದ ದೇವರ ಮನುಷ್ಯನೋ?” ಎಂದನು. ಅದಕ್ಕವನು, “ನಾನೇ,” ಎಂದನು.
1KI 13:15 ಆಗ ವೃದ್ಧ ಪ್ರವಾದಿಯು ಅವನಿಗೆ, “ನೀನು ನನ್ನ ಮನೆಗೆ ಬಂದು ರೊಟ್ಟಿ ತಿನ್ನು,” ಎಂದನು.
1KI 13:16 ಅದಕ್ಕವನು, “ನಾನು ನಿನ್ನ ಸಂಗಡ ಹಿಂದಿರುಗಲೂ ಕೂಡದು, ಹೋಗಲೂ ಕೂಡದು. ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವುದಿಲ್ಲ, ನೀರು ಕುಡಿಯುವುದಿಲ್ಲ.
1KI 13:17 ಏಕೆಂದರೆ, ‘ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ, ಬಂದ ಮಾರ್ಗದಿಂದ ತಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ಮಾತಿನಿಂದ ನನಗೆ ಅಪ್ಪಣೆಯಾಗಿದೆ,” ಎಂದನು.
1KI 13:18 ಆಗ ವೃದ್ಧನು, “ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನ ಮುಖಾಂತರ ನನಗೆ ಯೆಹೋವ ದೇವರ ವಾಕ್ಯವು ಉಂಟಾಗಿ, ನಿನ್ನನ್ನು ಹಿಂದಕ್ಕೆ ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಆಜ್ಞೆಯಾಗಿದೆ ಎಂದು ಹೇಳಿದನು.” ಆದರೆ ವೃದ್ಧನು ಅವನಿಗೆ ಸುಳ್ಳು ಹೇಳಿದನು.
1KI 13:19 ಹಾಗೆಯೇ ದೇವರ ಮನುಷ್ಯನು ವೃದ್ಧನ ಸಂಗಡ ಹಿಂದಿರುಗಿ ಹೋಗಿ, ಅವನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನು.
1KI 13:20 ಅವರು ಊಟಕ್ಕೆ ಕುಳಿತಿರುವಾಗ, ಅವನನ್ನು ಹಿಂದಕ್ಕೆ ಕರೆತಂದ ವೃದ್ಧ ಪ್ರವಾದಿಗೆ ಯೆಹೋವ ದೇವರ ವಾಕ್ಯವು ಉಂಟಾಗಿ,
1KI 13:21 ಅವನು ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನೀನು ಯೆಹೋವ ದೇವರ ಮಾತಿಗೆ ತಿರುಗಿಬಿದ್ದು, ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳದೆ, ಹಿಂದಕ್ಕೆ ಬಂದು, ‘ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ,’ ಎಂದು ಯೆಹೋವ ದೇವರು ನಿನಗೆ ಹೇಳಿದ ಸ್ಥಳದಲ್ಲಿ
1KI 13:22 ನೀನು ಹಿಂದಿರುಗಿ ಬಂದು, ನೀನು ರೊಟ್ಟಿ ತಿಂದು, ನೀರು ಕುಡಿದಿದ್ದರಿಂದ, ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಸೇರುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
1KI 13:23 ದೇವರ ಮನುಷ್ಯನು ರೊಟ್ಟಿ ತಿಂದು, ನೀರು ಕುಡಿದ ತುರುವಾಯ, ಅವನು ತಾನು ಕರೆದುತಂದ ಪ್ರವಾದಿಗೋಸ್ಕರ ಕತ್ತೆಗೆ ತಡಿ ಹಾಕಿದನು.
1KI 13:24 ಅವನು ಹೋದ ತರುವಾಯ, ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಬಿದ್ದಿತ್ತು. ಕತ್ತೆಯೂ ಮತ್ತು ಸಿಂಹವೂ ಹೆಣದ ಬಳಿಯಲ್ಲಿ ನಿಂತಿದ್ದವು.
1KI 13:25 ಆಗ ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ, ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ಕಂಡು, ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು.
1KI 13:26 ಅವನನ್ನು ಮಾರ್ಗದಿಂದ ಹಿಂದಕ್ಕೆ ಕರೆತಂದ ಪ್ರವಾದಿಯು ಆ ವರ್ತಮಾನವನ್ನು ಕೇಳಿ, “ಇವನೇ ಯೆಹೋವ ದೇವರ ಮಾತಿಗೆ ಅವಿಧೇಯನಾದ ದೇವರ ಮನುಷ್ಯನು, ಯೆಹೋವ ದೇವರು ಅವನನ್ನು ಸಿಂಹಕ್ಕೆ ಒಪ್ಪಿಸಿದ್ದಾರೆ, ಅದು ಅವನನ್ನು ಸೀಳಿ ಕೊಂದುಹಾಕಿತು,” ಎಂದನು.
1KI 13:27 ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ತಡಿ ಹಾಕಿದರು.
1KI 13:28 ಅವನು ಹೋಗಿ ಇವನ ಹೆಣವು ದಾರಿಯಲ್ಲಿ ಬಿದ್ದಿರುವುದನ್ನೂ, ಕತ್ತೆಯೂ, ಸಿಂಹವೂ ಹೆಣದ ಬಳಿಯಲ್ಲಿ ನಿಂತಿರುವುದನ್ನೂ ಕಂಡನು.
1KI 13:29 ಸಿಂಹವು ಹೆಣವನ್ನು ತಿನ್ನದೆ, ಕತ್ತೆಯನ್ನು ಸೀಳಿ ಹಾಕದೆ ಇತ್ತು. ಆಗ ಪ್ರವಾದಿಯು ದೇವರ ಮನುಷ್ಯನ ಹೆಣವನ್ನು ಎತ್ತಿ, ಕತ್ತೆಯ ಮೇಲೆ ಹಾಕಿಕೊಂಡು ಗೋಳಾಡುವುದಕ್ಕೂ, ಅವನನ್ನು ಹೂಳುವುದಕ್ಕೂ ಪಟ್ಟಣಕ್ಕೆ ತಂದನು.
1KI 13:30 ಅವನ ಹೆಣವನ್ನು ತನ್ನ ಸಮಾಧಿಯಲ್ಲಿ ಹೂಳಿಟ್ಟನು. ಆಗ ಅವರು, “ಅಯ್ಯೋ, ನಮ್ಮ ಸಹೋದರನೇ!” ಎಂದು ಅವನಿಗೋಸ್ಕರ ಗೋಳಾಡಿದರು.
1KI 13:31 ವೃದ್ಧ ಪ್ರವಾದಿಯು ಅವನನ್ನು ಹೂಳಿಟ್ಟ ತರುವಾಯ, ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ದೇವರ ಮನುಷ್ಯನನ್ನು ಹೂಳಿಟ್ಟ ಸಮಾಧಿಯಲ್ಲಿ ನನ್ನನ್ನು ಹೂಳಿಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
1KI 13:32 ಏಕೆಂದರೆ ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ, ಸಮಾರ್ಯ ಪಟ್ಟಣಗಳಲ್ಲಿರುವ ಪೂಜಾಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ, ಯೆಹೋವ ದೇವರ ಮಾತಿನಿಂದ ಕೂಗಿದ ಮಾತು ನಿಶ್ಚಯವಾಗಿ ಆಗುವುದು,” ಎಂದನು.
1KI 13:33 ಈ ಕಾರ್ಯದ ತರುವಾಯ ಯಾರೊಬ್ಬಾಮನು ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗದೆ, ಪೂಜಾ ಸ್ಥಳಗಳಿಗೆ ಕನಿಷ್ಠ ಜನರಿಂದ ಪುನಃ ಯಾಜಕರನ್ನು ನೇಮಿಸಿದನು. ಯಾವನಿಗೆ ಮನಸ್ಸಿತ್ತೋ ಅವನನ್ನು ಇವನು ಪ್ರತಿಷ್ಠೆ ಮಾಡಿಸಿದ್ದರಿಂದ, ಪೂಜಾಸ್ಥಳಗಳ ಯಾಜಕರಲ್ಲಿ ಅವನು ಒಬ್ಬನಾಗುವನು.
1KI 13:34 ಯಾರೊಬ್ಬಾಮನ ಮನೆಯವರನ್ನು ಭೂಮಿಯಿಂದ ಸಂಹರಿಸುವುದಕ್ಕೂ, ನಾಶಮಾಡುವುದಕ್ಕೂ ಈ ಪಾಪವು ಅವರಿಗೆ ಕಾರಣವಾಯಿತು.
1KI 14:1 ಅದೇ ಕಾಲದಲ್ಲಿ ಯಾರೊಬ್ಬಾಮನ ಮಗ ಅಬೀಯನಿಗೆ ರೋಗ ತಗುಲಿತು. ಆದ್ದರಿಂದ ಯಾರೊಬ್ಬಾಮನು ತನ್ನ ಪತ್ನಿಗೆ,
1KI 14:2 “ನೀನು ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ನೀನೆದ್ದು, ವೇಷಹಾಕಿಕೊಂಡು ಶೀಲೋವಿಗೆ ಹೋಗು. ‘ಈ ಜನರ ಮೇಲೆ ಅರಸನಾಗಿರುವೆ,’ ಎಂದು ನನಗೆ ಹೇಳಿದ ಪ್ರವಾದಿ ಅಹೀಯನು ಅಲ್ಲಿದ್ದಾನೆ.
1KI 14:3 ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ, ಭಕ್ಷ್ಯಗಳನ್ನೂ, ಒಂದು ಮಡಕೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವುದನ್ನು ನಿನಗೆ ತಿಳಿಸುವನು,” ಎಂದನು.
1KI 14:4 ಯಾರೊಬ್ಬಾಮನ ಪತ್ನಿಯು ಹಾಗೆಯೇ ಮಾಡಿ, ಎದ್ದು ಶೀಲೋವಿಗೆ ಹೋಗಿ, ಅಹೀಯನ ಮನೆಗೆ ಬಂದಳು. ಆದರೆ ಅಹೀಯನಿಗೆ ಕಾಣಿಸಲಿಲ್ಲ, ವೃದ್ದಾಪ್ಯದಿಂದ ಅವನ ಕಣ್ಣುಗಳು ಮೊಬ್ಬಾಗಿ ಹೋಗಿದ್ದವು.
1KI 14:5 ಆದರೆ ಯೆಹೋವ ದೇವರು ಅಹೀಯನಿಗೆ, “ಯಾರೊಬ್ಬಾಮನ ಪತ್ನಿಯು ತನ್ನ ಮಗನಿಗೋಸ್ಕರ ನಿನ್ನಿಂದ ದೈವೋತ್ತರವನ್ನು ಕೇಳುವುದಕ್ಕೆ ಬರುತ್ತಾಳೆ. ಏಕೆಂದರೆ ಅವಳ ಮಗನು ರೋಗದಲ್ಲಿದ್ದಾನೆ. ನೀನು ಅವಳಿಗೆ ಹೀಗೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊಬ್ಬಳ ಹಾಗೆ ವೇಷಹಾಕಿಕೊಂಡು ಬರುವಳು,” ಎಂದು ಹೇಳಿಕೊಟ್ಟಿದ್ದನು.
1KI 14:6 ಅನಂತರ ಅವಳು ಬಾಗಿಲಲ್ಲಿ ಪ್ರವೇಶಿಸುವಾಗ, ಅಹೀಯನು ಅವಳ ಹೆಜ್ಜೆಗಳ ಶಬ್ದ ಕೇಳುತ್ತಲೇ ಅವನು, “ಯಾರೊಬ್ಬಾಮನ ಪತ್ನಿಯೇ ಒಳಗೆ ಬಾ, ನೀನು ಮತ್ತೊಬ್ಬಳಂತೆ ತೋರಿಸಿಕೊಳ್ಳುವುದು ಏಕೆ? ನಾನು ಕಠಿಣವಾದವುಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ.
1KI 14:7 ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಜನರೊಳಗಿಂದ ತೆಗೆದು ನಿನ್ನನ್ನು ಹೆಚ್ಚಿಸಿ, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿ ಮಾಡಿದೆನು.
1KI 14:8 ದಾವೀದನ ಮನೆಯಿಂದ ರಾಜ್ಯವನ್ನು ವಿಭಾಗಿಸಿ ನಿನಗೆ ಕೊಟ್ಟೆನು. ಆದರೆ ನನ್ನ ಆಜ್ಞೆಗಳನ್ನು ಕೈಗೊಂಡು, ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ, ತನ್ನ ಸಂಪೂರ್ಣ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರಲಿಲ್ಲ.
1KI 14:9 ನೀನು ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದೆ. ಏಕೆಂದರೆ, ನೀನು ಹೋಗಿ ನನಗೆ ಕೋಪವನ್ನೆಬ್ಬಿಸುವ ಅನ್ಯದೇವರುಗಳನ್ನೂ, ಎರಕದ ವಿಗ್ರಹಗಳನ್ನೂ ಮಾಡಿಕೊಂಡು, ನನ್ನನ್ನು ತಿರಸ್ಕರಿಸಿದೆ.
1KI 14:10 “ ‘ಆದ್ದರಿಂದ ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ, ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ, ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟುಕೊಂಡವರನ್ನೂ ಕಡಿದುಬಿಟ್ಟು, ಅದು ತೀರುವವರೆಗೆ ಮನುಷ್ಯನು ರಸವನ್ನು ಹೇಗೆ ತೆಗೆದು ಹಾಕುತ್ತಾನೋ, ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಉಳುವಿಕೆಯನ್ನು ತೆಗೆದುಹಾಕುತ್ತೇನೆ.
1KI 14:11 ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿಂದುಬಿಡುವವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿಂದುಬಿಡುವವು,’ ಎಂದು ಯೆಹೋವ ದೇವರು ಹೇಳಿದ್ದಾರೆ.
1KI 14:12 “ಆದ್ದರಿಂದ ನೀನೆದ್ದು ನಿನ್ನ ಮನೆಗೆ ಹೋಗು. ಪಟ್ಟಣದಲ್ಲಿ ಪ್ರವೇಶಿಸುವಾಗ ನಿನ್ನ ಮಗನು ಸಾಯುವನು.
1KI 14:13 ಇದಲ್ಲದೆ ಸಮಸ್ತ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಳಿಡುವರು. ಏಕೆಂದರೆ, ಯಾರೊಬ್ಬಾಮನವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು. ಯಾರೊಬ್ಬಾಮನ ಮನೆಯವರೊಳಗೆ ಅವನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗಾದ ಒಳ್ಳೆಯ ಕ್ರಿಯೆ ಸಿಕ್ಕಿತು.
1KI 14:14 “ಇದಲ್ಲದೆ ಯೆಹೋವ ದೇವರು ಇಸ್ರಾಯೇಲನ್ನು ಆಳುವುದಕ್ಕೆ ಅದೇ ದಿನದಲ್ಲಿ ಯಾರೊಬ್ಬಾಮನ ಮನೆಯನ್ನು ಕಡಿದುಬಿಡುವ ಒಬ್ಬ ಅರಸನನ್ನು ತನಗೋಸ್ಕರ ಎಬ್ಬಿಸುವರು.
1KI 14:15 ಈಗಲೇ ಏನು ಆಗುವುದು? ನೀರಿನಲ್ಲಿರುವ ಆಪು ಹುಲ್ಲು ಅಲ್ಲಾಡುವ ಹಾಗೆ ಯೆಹೋವ ದೇವರು ಇಸ್ರಾಯೇಲನ್ನು ಹೊಡೆಯುವರು. ಇಸ್ರಾಯೇಲರು ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಲು, ತಮ್ಮ ವಿಗ್ರಹಾರಾಧನೆಗೋಸ್ಕರ ಅಶೇರ ಸ್ತಂಭಗಳನ್ನು ನಿಲ್ಲಿಸಿಕೊಂಡದ್ದರಿಂದ, ಯೆಹೋವ ದೇವರು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವರು.
1KI 14:16 ಯೆಹೋವ ದೇವರು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲರನ್ನು ಶತ್ರುಗಳಿಗೆ ಒಪ್ಪಿಸಿಬಿಡುವರು. ಏಕೆಂದರೆ ಯಾರೊಬ್ಬಾಮನೇ ಪಾಪಮಾಡಿ, ಪಾಪವನ್ನು ಮಾಡಲು ಇಸ್ರಾಯೇಲರನ್ನು ಪ್ರೇರೇಪಿಸಿದನು,” ಎಂದನು.
1KI 14:17 ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಯೆಹೋವ ದೇವರು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಅವಳ ಮಗನು ಸತ್ತನು.
1KI 14:18 ಯೆಹೋವ ದೇವರು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಅವರು ಅವನನ್ನು ಹೂಳಿಟ್ಟರು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿದರು.
1KI 14:19 ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ, ಅವನು ಯುದ್ಧ ಮಾಡಿದ್ದೂ, ಆಳಿದ್ದೂ, ಇವು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 14:20 ಯಾರೊಬ್ಬಾಮನು ಆಳಿದ ದಿವಸಗಳು ಇಪ್ಪತ್ತೆರಡು ವರ್ಷಗಳಾಗಿದ್ದವು. ಅವನು ಮೃತನಾಗಿ, ತನ್ನ ಪಿತೃಗಳ ಜೊತೆ ಸೇರಿದನು. ಅವನಿಗೆ ಬದಲಾಗಿ ಅವನ ಮಗ ನಾದಾಬನು ಅರಸನಾದನು.
1KI 14:21 ಆದರೆ ಸೊಲೊಮೋನನ ಮಗ ರೆಹಬ್ಬಾಮನು ಯೆಹೂದದಲ್ಲಿ ಆಳುತ್ತಾ ಇದ್ದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
1KI 14:22 ಆದರೆ ಯೆಹೂದದವರು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನ ಮಾಡಿ, ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿಗಿಂತ, ತಾವು ಹೆಚ್ಚಾಗಿ ಪಾಪಮಾಡಿ ಯೆಹೋವ ದೇವರಿಗೆ ರೋಷವನ್ನೆಬ್ಬಿಸಿದರು.
1KI 14:23 ಅವರು ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ, ಉನ್ನತ ಸ್ಥಳಗಳನ್ನೂ ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ, ಹಸುರಾದ ಪ್ರತಿ ಗಿಡದ ಕೆಳಗೂ ತಮಗಾಗಿ ಮಾಡಿಕೊಂಡರು.
1KI 14:24 ಇದಲ್ಲದೆ ಪೂಜಾಸ್ಥಳಗಳಲ್ಲಿ ಪುರುಷಗಾಮಿಗಳಿದ್ದರು. ಅವರು ಇಸ್ರಾಯೇಲರ ಮುಂದೆ ಯೆಹೋವ ದೇವರು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕಾರ್ಯಗಳನ್ನು ಮಾಡುತ್ತಾ ಇದ್ದರು.
1KI 14:25 ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ, ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು.
1KI 14:26 ಅವನು ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು.
1KI 14:27 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು.
1KI 14:28 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
1KI 14:29 ರೆಹಬ್ಬಾಮನ ಉಳಿದ ಕಾರ್ಯಗಳೂ, ಅವನು ಮಾಡಿದ ಸಮಸ್ತವೂ ಯೆಹೂದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 14:30 ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.
1KI 14:31 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಸಮಾಧಿಮಾಡಿದರು. ಅವನ ತಾಯಿ ಅಮ್ಮೋನಿಯಳಾದ ನಯಮಾ. ಅವನ ಮಗ ಅಬಿಯಾಮನು ಅವನಿಗೆ ಬದಲಾಗಿ ಅರಸನಾದನು.
1KI 15:1 ನೆಬಾಟನ ಮಗ ಯಾರೊಬ್ಬಾಮನ ಹದಿನೆಂಟನೆಯ ವರ್ಷದಲ್ಲಿ ಅಬಿಯಾಮನು ಯೆಹೂದದ ಅರಸನಾಗಿ,
1KI 15:2 ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮಾಕಾ, ಇವಳು ಅಬ್ಷಾಲೋಮನ ಮಗಳಾಗಿದ್ದಳು.
1KI 15:3 ಅಬಿಯಾಮನು, ತನ್ನ ಪಿತೃವಾದ ದಾವೀದನ ಹೃದಯದ ಪ್ರಕಾರ, ಅವನ ಹೃದಯವು ತನ್ನ ದೇವರಾದ ಯೆಹೋವ ದೇವರ ಮುಂದೆ ಪೂರ್ಣವಾಗಿರದೆ, ತನಗೆ ಮುಂಚೆ ಇದ್ದ ತನ್ನ ತಂದೆ ಮಾಡಿದ ಸಮಸ್ತ ಪಾಪಗಳಲ್ಲಿ ನಡೆದನು.
1KI 15:4 ಅವನ ತರುವಾಯ ಅವನ ಮಗನನ್ನು ನೇಮಿಸುವುದಕ್ಕೂ, ಯೆರೂಸಲೇಮನ್ನು ಸ್ಥಿರಪಡಿಸುವುದಕ್ಕೂ, ತನ್ನ ದೇವರಾದ ಯೆಹೋವ ದೇವರು ದಾವೀದನ ನಿಮಿತ್ತ ಯೆರೂಸಲೇಮಿನಲ್ಲಿ ಅವನಿಗೆ ದೀಪವನ್ನು ಉಳಿಸಿದರು.
1KI 15:5 ಏಕೆಂದರೆ ದಾವೀದನು ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟು, ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಯೆಹೋವ ದೇವರು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ, ಅವರ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡಿದನು.
1KI 15:6 ಆದರೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಅವರ ಜೀವಾಂತ್ಯದವರೆಗೆ ಯುದ್ಧ ಉಂಟಾಗಿತ್ತು.
1KI 15:7 ಅಬಿಯಾಮನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಯೆಹೂದದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಇವನಿಗೂ ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
1KI 15:8 ಅಬಿಯಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು.
1KI 15:9 ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೆಯ ವರುಷದಲ್ಲಿ ಆಸನು ಯೆಹೂದದ ಮೇಲೆ ಅರಸನಾದನು.
1KI 15:10 ನಾಲ್ವತ್ತೊಂದು ವರುಷ ಅವನು ಯೆರೂಸಲೇಮಿನಲ್ಲಿ ಆಳಿದನು. ಅವನ ಅಜ್ಜಿ ಅಬ್ಷಾಲೋಮನ ಮಗಳಾಗಿದ್ದು ಮಾಕಾ ಎಂಬಾಕೆಯು ಇವನ ತಾಯಿ.
1KI 15:11 ಆಸನು ತನ್ನ ತಂದೆಯಾದ ದಾವೀದನ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿದನು.
1KI 15:12 ಅವನು ಪೂಜಾ ಸ್ಥಳದ ಪುರುಷಗಾಮಿಗಳನ್ನು ದೇಶದಲ್ಲಿಂದ ಹೊರಡಿಸಿ, ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು.
1KI 15:13 ಇದಲ್ಲದೆ, ಆಸನು ತನ್ನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ಕಡಿದುಹಾಕಿ ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.
1KI 15:14 ಅವನು ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು.
1KI 15:15 ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ಯೆಹೋವ ದೇವರ ಆಲಯಕ್ಕೆ ತಂದನು.
1KI 15:16 ಇದಲ್ಲದೆ ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷನಿಗೂ, ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು.
1KI 15:17 ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.
1KI 15:18 ಆಸನು ಯೆಹೋವ ದೇವರ ಆಲಯದ ಮತ್ತು ತನ್ನ ಅರಮನೆಯ ಬೊಕ್ಕಸಗಳಿಂದ ಮಿಕ್ಕ ಸಮಸ್ತ ಬೆಳ್ಳಿಬಂಗಾರವನ್ನು ತೆಗೆದು, ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ, ದಮಸ್ಕದಲ್ಲಿ ವಾಸವಾಗಿರುವ ಹೆಜ್ಯೋನನ ಮಗನೂ, ಟಬ್ರಿಮ್ಮೋನನ ಮಗನೂ ಆದ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿದನು.
1KI 15:19 ಅಲ್ಲದೆ ಅವನಿಗೆ, “ನನ್ನ ತಂದೆ ಮತ್ತು ನಿನ್ನ ತಂದೆಯ ನಡುವೆ ಇದ್ದಂತೆ ನನ್ನ ಮತ್ತು ನಿನ್ನ ನಡುವೆ ಒಡಂಬಡಿಕೆ ಉಂಟು. ಇಗೋ ನಾನು ಬೆಳ್ಳಿಬಂಗಾರವನ್ನು ದಾನವಾಗಿ ನಿನಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ, ನೀನು ಅವನ ಸಂಗಡ ಮಾಡಿದ ಒಡಂಬಡಿಕೆಯನ್ನು ಮುರಿಯಬೇಕು,” ಎಂದನು.
1KI 15:20 ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನ್ನ ಸೈನ್ಯಾಧಿಪತಿಗಳನ್ನು ಕಳುಹಿಸಿದನು. ಇಯ್ಯೋನ್, ದಾನ್, ಆಬೇಲ್ ಬೇತ್ ಮಾಕಾ ಹಾಗೂ ಸಮಸ್ತ ಕಿನ್ನೆರೆತ್, ಸಮಸ್ತ ನಫ್ತಾಲಿ ಪ್ರಾಂತ ಇವುಗಳನ್ನು ಹಾಳುಮಾಡಿದರು.
1KI 15:21 ಬಾಷನು ಇದನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವುದನ್ನು ಬಿಟ್ಟು, ತಿರ್ಚಕ್ಕೆ ಹೋಗಿ ವಾಸಿಸಿದನು.
1KI 15:22 ಆಗ ಅರಸನಾದ ಆಸನು ಯೆಹೂದರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ ಅವುಗಳಿಂದ ಬೆನ್ಯಾಮೀನನ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.
1KI 15:23 ಆಸನ ಉಳಿದ ಎಲ್ಲಾ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ, ಅವನು ಮಾಡಿದ್ದೆಲ್ಲವೂ, ಅವನು ಕಟ್ಟಿಸಿದ ಪಟ್ಟಣಗಳೂ, ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಆದರೆ ತನ್ನ ವೃದ್ಧಾಪ್ಯದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು.
1KI 15:24 ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ತಂದೆ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಅವನನ್ನು ಹೂಳಿಟ್ಟರು. ಅವನಿಗೆ ಬದಲಾಗಿ ಅವನ ಮಗ ಯೆಹೋಷಾಫಾಟನು ಅರಸನಾದನು.
1KI 15:25 ಯೆಹೂದದ ಅರಸನಾದ ಆಸನ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗ ನಾದಾಬನು ಅರಸನಾಗಿ ಎರಡು ವರುಷ ಇಸ್ರಾಯೇಲಿನ ಮೇಲೆ ಆಳಿದನು.
1KI 15:26 ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಪಾಪಮಾಡಲು ಇಸ್ರಾಯೇಲನ್ನು ಪ್ರೇರೇಪಿಸಿದ ಅವನ ತಂದೆಯ ಪಾಪದಲ್ಲಿಯೂ, ಅವನ ಮಾರ್ಗದಲ್ಲಿಯೂ ನಡೆದನು.
1KI 15:27 ನಾದಾಬನೂ, ಸಮಸ್ತ ಇಸ್ರಾಯೇಲರೂ ಫಿಲಿಷ್ಟಿಯರ ಪಟ್ಟಣವಾದ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು. ಆದುದರಿಂದ ಇಸ್ಸಾಕಾರನ ಗೋತ್ರದ ಅಹೀಯನ ಮಗ ಬಾಷನು ನಾದಾಬನಿಗೆ ವಿರೋಧವಾಗಿ ಒಳಸಂಚುಮಾಡಿ, ನಾದಾಬನನ್ನು ಕೊಂದುಬಿಟ್ಟನು.
1KI 15:28 ಯೆಹೂದದ ಅರಸನಾದ ಆಸನ ಮೂರನೆಯ ವರುಷದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
1KI 15:29 ಅವನು ಆಳುತ್ತಿರುವಾಗ, ಯಾರೊಬ್ಬಾಮನ ಮನೆಯವರನ್ನೆಲ್ಲಾ ಸಂಹರಿಸಿಬಿಟ್ಟನು. ಯಾರೊಬ್ಬಾಮನು ಪಾಪಮಾಡಿ, ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನಿಮಿತ್ತವಾಗಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದ ನಿಮಿತ್ತವಾಗಿಯೂ, ಯೆಹೋವ ದೇವರು ಶೀಲೋವಿನವನಾಗಿರುವ ತನ್ನ ಸೇವಕನಾದ ಅಹೀಯನ ಮುಖಾಂತರ ಹೇಳಿದ ಮಾತಿನ ಪ್ರಕಾರವೇ ನೆರವೇರಿತು.
1KI 15:30 ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನೂ ಪಾಪಕ್ಕೆ ಪ್ರೇರೇಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಪ್ರಚೋದಿಸಿದ ಕಾರಣ ಇದು ಸಂಭವಿಸಿತು.
1KI 15:31 ನಾದಾಬನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 15:32 ಇದಲ್ಲದೆ ಆಸನಿಗೂ, ಇಸ್ರಾಯೇಲಿನ ಅರಸನಾದ ಬಾಷನಿಗೂ ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು.
1KI 15:33 ಯೆಹೂದದ ಅರಸನಾದ ಆಸನ ಮೂರನೆಯ ವರ್ಷದಲ್ಲಿ ಅಹೀಯನ ಮಗ ಬಾಷನು ಸಮಸ್ತ ಇಸ್ರಾಯೇಲಿನ ಮೇಲೆ ತಿರ್ಚದಲ್ಲಿ ಇಪ್ಪತ್ತನಾಲ್ಕು ವರ್ಷ ಆಳಿದನು.
1KI 15:34 ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಯಾರೊಬ್ಬಾಮನ ಮಾರ್ಗದಲ್ಲಿಯೂ, ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದಲ್ಲಿಯೂ ಭಾಗಿಯಾದನು.
1KI 16:1 ಬಾಷನಿಗೆ ವಿರೋಧವಾಗಿ ಹನಾನೀಯ ಮಗ ಯೇಹುವಿಗೆ ಯೆಹೋವ ದೇವರ ವಾಕ್ಯ ಬಂತು,
1KI 16:2 “ನಾನು ನಿನ್ನನ್ನು ಧೂಳಿನಿಂದ ಎಬ್ಬಿಸಿ, ನಿನ್ನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ಇರಿಸಿದೆನು. ಆದರೆ ನೀನು ಯಾರೊಬ್ಬಾಮನ ಮಾರ್ಗದಲ್ಲಿ ನಡೆದು, ನನ್ನ ಜನರಾದ ಇಸ್ರಾಯೇಲರು ತಮ್ಮ ಪಾಪಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ಅವರನ್ನು ಪಾಪಮಾಡಲು ಪ್ರೇರೇಪಿಸಿದೆ.
1KI 16:3 ನಾನು ಬಾಷನ ಸಂತತಿಯನ್ನೂ, ಅವನ ಮನೆಯ ಸಂತತಿಯನ್ನೂ ತೆಗೆದುಹಾಕಿ, ನಿನ್ನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆ ಮಾಡುವೆನು.
1KI 16:4 ಬಾಷನ ಕಡೆಯವರಲ್ಲಿ ಪಟ್ಟಣದೊಳಗೆ ಸಾಯುವವನನ್ನು ನಾಯಿಗಳು ತಿನ್ನುವುವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು,” ಎಂಬುದೇ ಆ ವಾಕ್ಯ.
1KI 16:5 ಬಾಷನ ಇತರ ಕಾರ್ಯಗಳೂ, ಅವನು ಮಾಡಿದ್ದೂ, ಅವನ ಪರಾಕ್ರಮವೂ ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 16:6 ಬಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ತಿರ್ಚದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಏಲನು ಅವನಿಗೆ ಬದಲಾಗಿ ಅರಸನಾದನು.
1KI 16:7 ಬಾಷನು ಯಾರೊಬ್ಬಾಮನ ಮನೆಯವರ ಹಾಗಿದ್ದು, ಅವರನ್ನು ಸಂಹರಿಸಿದ್ದರಿಂದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿ, ಯೆಹೋವ ದೇವರ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ, ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿ ಯೇಹುವಿನ ಮುಖಾಂತರ ಯೆಹೋವ ದೇವರ ವಾಕ್ಯ ಬಂತು.
1KI 16:8 ಯೆಹೂದದ ಅರಸನಾದ ಆಸನ ಇಪ್ಪತ್ತಾರನೆಯ ವರುಷದಲ್ಲಿ ಬಾಷನ ಮಗ ಏಲನು ಇಸ್ರಾಯೇಲಿನ ಮೇಲೆ ತಿರ್ಚದಲ್ಲಿ ಎರಡು ವರ್ಷ ಆಳಿದನು.
1KI 16:9 ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿರುವಾಗ, ಅರ್ಧ ರಥಗಳಿಗೆ ಅಧಿಪತಿಯಾಗಿರುವ ಅವನ ಸೇವಕನಾದ ಜಿಮ್ರಿಯನು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದನು.
1KI 16:10 ಜಿಮ್ರಿಯು ಒಳಗೆ ಹೋಗಿ ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ, ಅವನನ್ನು ಕೆಡವಿ ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
1KI 16:11 ಜಿಮ್ರಿಯು ಆಳಲು ಆರಂಭಿಸಿದಾಗ, ಅವನು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಲೇ, ಬಾಷನ ಮನೆಯವರನ್ನೆಲ್ಲಾ ಸಂಹರಿಸಿ, ಅವನ ಬಂಧುಗಳಲ್ಲಿಯೂ, ಅವನ ಸ್ನೇಹಿತರಲ್ಲಿಯೂ ಒಬ್ಬ ಗಂಡಸನನ್ನೂ ಉಳಿಸಲಿಲ್ಲ.
1KI 16:12 ಹೀಗೆಯೇ ಬಾಷನೂ ಅವನ ಮಗ ಏಲನೂ ತಮ್ಮ ಎಲ್ಲಾ ಪಾಪಗಳಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕೋಪವನ್ನು ಎಬ್ಬಿಸಿ, ತಾವು ಮಾಡಿದ ಪಾಪಗಳಿಂದಲೂ,
1KI 16:13 ತಾವು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ್ದರಿಂದಲೂ, ಯೆಹೋವ ದೇವರು ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೆ ವಿರೋಧವಾಗಿ ಹೇಳಿದ ಆತನ ವಾಕ್ಯದ ಪ್ರಕಾರವೇ ಜಿಮ್ರಿಯು ಬಾಷನ ಮನೆಯವರನ್ನೆಲ್ಲಾ ನಾಶಮಾಡಿದನು.
1KI 16:14 ಏಲನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ ಇಸ್ರಾಯೇಲ್ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 16:15 ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ದಿನ ಆಳಿದನು. ಆಗ ಇಸ್ರಾಯೇಲರು ಫಿಲಿಷ್ಟಿಯರಿಗೆ ಸಂಬಂಧಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಿಳಿಸಿದ್ದರು.
1KI 16:16 ಜಿಮ್ರಿಯು ಒಳಸಂಚುಮಾಡಿ, ಅರಸನನ್ನು ಕೊಂದು ಹಾಕಿದ್ದಾನೆಂದು ಅಲ್ಲಿ ಇಳಿದಿರುವ ದಂಡಿನವರು ಕೇಳಿದ್ದರಿಂದ, ಇಸ್ರಾಯೇಲರೆಲ್ಲರು ಅದೇ ದಿವಸದಲ್ಲಿ ದಂಡಿನ ಅಧಿಪತಿಯಾದ ಒಮ್ರಿಯನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ನೇಮಿಸಿದರು.
1KI 16:17 ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು.
1KI 16:18 ಪಟ್ಟಣವು ವಶವಾದದ್ದನ್ನು ಕಂಡಾಗ, ಜಿಮ್ರಿಯು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ, ತನ್ನ ಅರಮನೆಯನ್ನು ಬೆಂಕಿಯಿಂದ ಸುಟ್ಟು ತಾನೂ ಸತ್ತನು.
1KI 16:19 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತಾನು ಮಾಡಿದ ಪಾಪಗಳ ನಿಮಿತ್ತವಾಗಿಯೂ, ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಆಯಿತು.
1KI 16:20 ಜಿಮ್ರಿಯ ಇತರ ಕಾರ್ಯಗಳೂ, ಅವನು, ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 16:21 ಆ ಕಾಲದಲ್ಲಿ ಇಸ್ರಾಯೇಲರೊಳಗೆ ಎರಡು ಪಕ್ಷಗಳುಂಟಾದವು, ಅರ್ಧ ಜನರು ಗೀನಾತನ ಮಗ ತಿಬ್ನಿಯನ್ನು ಅರಸನನ್ನಾಗಿ ಮಾಡಲು ಅವನ ಹಿಂದೆ ಹೋದರು, ಅರ್ಧ ಜನರು ಒಮ್ರಿಯ ಹಿಂದೆ ಹೋದರು.
1KI 16:22 ಆದರೆ ಒಮ್ರಿಯ ಸಮರ್ಥಕರು ಜಯಿಸಿದ್ದರಿಂದ ಗೀನಾತನ ಮಗನಾದ ತಿಬ್ನಿಯು ಸತ್ತುಹೋದನು, ಒಮ್ರಿಯು ಅರಸನಾದನು.
1KI 16:23 ಯೆಹೂದದ ಅರಸನಾದ ಆಸನ ಮೂವತ್ತೊಂದನೆಯ ವರ್ಷದಲ್ಲಿ, ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು, ಅದರಲ್ಲಿ ಆರು ವರ್ಷ ತಿರ್ಚದಲ್ಲಿ ಆಳಿದನು.
1KI 16:24 ಅವನು ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟು ಸಮಾರಿಯ ಎಂಬ ಬೆಟ್ಟವನ್ನು ಕೊಂಡುಕೊಂಡನು. ಆ ಬೆಟ್ಟದ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಜಮೀನಿನ ಯಜಮಾನನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ಎಂದು ಹೆಸರಿಟ್ಟನು.
1KI 16:25 ಆದರೆ ಒಮ್ರಿಯು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತನಗೆ ಮುಂಚೆ ಇದ್ದ ಎಲ್ಲರಿಗಿಂತ ಕೆಟ್ಟವನಾಗಿ ನಡೆದನು.
1KI 16:26 ಅವನು ನೆಬಾಟನ ಮಗ ಯಾರೊಬ್ಬಾಮನ ಸಕಲ ಮಾರ್ಗಗಳಲ್ಲಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ತಮ್ಮ ವ್ಯರ್ಥವಾದವುಗಳಿಂದ ಕೋಪವನ್ನು ಎಬ್ಬಿಸಿದ ಹಾಗೆ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪದಲ್ಲಿಯೂ ನಡೆದನು.
1KI 16:27 ಒಮ್ರಿಯು ಮಾಡಿದ ಇತರ ಕಾರ್ಯಗಳೂ, ಅವನು ತೋರಿಸಿದ ಪರಾಕ್ರಮವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 16:28 ಒಮ್ರಿಯು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಸಮಾರ್ಯ ಪಟ್ಟಣದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಹಾಬನು ಅರಸನಾದನು.
1KI 16:29 ಯೆಹೂದದ ಅರಸನಾದ ಆಸನ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಾಯೇಲಿನ ಮೇಲೆ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.
1KI 16:30 ಒಮ್ರಿಯ ಮಗ ಅಹಾಬನು ತನಗೆ ಮುಂಚೆ ಇದ್ದ ಎಲ್ಲರಿಗಿಂತ ಯೆಹೋವ ದೇವರ ಮುಂದೆ ಹೆಚ್ಚು ಕೆಟ್ಟತನ ಮಾಡಿದನು.
1KI 16:31 ನೆಬಾಟನ ಮಗ ಯಾರೊಬ್ಬಾಮನ ಪಾಪಗಳಲ್ಲಿ ನಡೆಯುವುದು ಅವನಿಗೆ ಅಲ್ಪವಾಗಿತ್ತು. ಅವನು ಸೀದೋನ್ಯರ ಅರಸನಾದ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡಬಿದ್ದನು.
1KI 16:32 ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿದನು.
1KI 16:33 ಅಹಾಬನು ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದನು. ಹೀಗೆಯೇ ಅಹಾಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪ ಉಕ್ಕುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕವಾಗಿ ಕೆಟ್ಟತನ ಮಾಡಿದನು.
1KI 16:34 ಅವನ ದಿವಸಗಳಲ್ಲಿ ಬೇತೇಲಿನ ಹೀಯೇಲನು ಯೆರಿಕೋವನ್ನು ಕಟ್ಟಿಸಿದನು. ಯೆಹೋವ ದೇವರು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ, ತನ್ನ ಚೊಚ್ಚಲಮಗನಾದ ಅಬೀರಾಮನನ್ನೂ, ಅದರ ಬಾಗಿಲುಗಳನ್ನು ಇಟ್ಟಾಗ ತನ್ನ ಕಿರಿ ಮಗನಾದ ಸೆಗೂಬನನ್ನೂ ಕಳೆದುಕೊಂಡನು.
1KI 17:1 ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು.
1KI 17:2 ಯೆಹೋವ ದೇವರ ಮಾತು ಅವನಿಗೆ ಉಂಟಾಗಿ,
1KI 17:3 “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ, ಯೊರ್ದನಿಗೆ ಎದುರಿಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ಅಡಗಿಕೊಂಡಿರು.
1KI 17:4 ಅಲ್ಲಿ ನೀನು ಆ ಹೊಳೆಯ ನೀರನ್ನು ಕುಡಿಯುವೆ. ಅಲ್ಲಿ ನಿನಗೆ ಆಹಾರವನ್ನು ತಂದು ಕೊಡಲು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದನು.
1KI 17:5 ಅವನು ಹೋಗಿ ಯೆಹೋವ ದೇವರ ಮಾತಿನ ಹಾಗೆಯೇ ಮಾಡಿದನು. ಅವನು ಹೋಗಿ ಯೊರ್ದನಿಗೆ ಎದುರಾಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ವಾಸವಾಗಿದ್ದನು.
1KI 17:6 ಕಾಗೆಗಳು ಅವನಿಗೆ ಉದಯಕಾಲದಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ, ಸಂಜೆಯಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ ತೆಗೆದುಕೊಂಡು ಬಂದವು, ಅವನು ಆ ಹೊಳೆಯ ನೀರನ್ನು ಕುಡಿದನು.
1KI 17:7 ಸ್ವಲ್ಪ ಕಾಲವಾದ ಮೇಲೆ ದೇಶದಲ್ಲಿ ಮಳೆ ಇಲ್ಲದ್ದರಿಂದ ಆ ಹಳ್ಳವು ಬತ್ತಿಹೋಯಿತು.
1KI 17:8 ಯೆಹೋವ ದೇವರ ವಾಕ್ಯವು ಅವನಿಗೆ ಉಂಟಾಗಿ,
1KI 17:9 “ನೀನೆದ್ದು ಸೀದೋನಿಗೆ ಹೊಂದಿದ ಚಾರೆಪತಕ್ಕೆ ಹೋಗಿ ಅಲ್ಲಿ ವಾಸವಾಗಿರು. ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು.
1KI 17:10 ಹಾಗೆಯೇ ಅವನೆದ್ದು ಚಾರೆಪತಕ್ಕೆ ಹೋಗಿ, ಪಟ್ಟಣದ ಬಾಗಿಲ ಬಳಿಗೆ ಬಂದಾಗ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು, “ನೀನು ದಯಮಾಡಿ ನನಗೆ ಕುಡಿಯುವುದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಬಾ,” ಎಂದನು.
1KI 17:11 ಅವಳು ತೆಗೆದುಕೊಂಡು ಬರಲು ಹೋಗುತ್ತಿರುವಾಗ ಅವನು ಅವಳನ್ನು ಕರೆದು, “ನೀನು ದಯಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತೆಗೆದುಕೊಂಡು ಬಾ,” ಎಂದನು.
1KI 17:12 ಅದಕ್ಕೆ ಅವಳು, “ನಿನ್ನ ದೇವರಾದ ಯೆಹೋವ ದೇವರಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ನಾನೂ, ನನ್ನ ಪುತ್ರನೂ ಅದನ್ನು ತಿಂದು ಸತ್ತು ಹೋಗುವಹಾಗೆ ಅದನ್ನು ನನಗೂ, ಅವನಿಗೂ ಸಿದ್ಧಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ,” ಎಂದಳು.
1KI 17:13 ಆಗ ಎಲೀಯನು ಅವಳಿಗೆ, “ಭಯಪಡಬೇಡ, ನೀನು ಹೇಳಿದ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿಮಾಡಿ, ನನ್ನ ಬಳಿಗೆ ತೆಗೆದುಕೊಂಡು ಬಾ. ತರುವಾಯ ನಿನಗೂ, ನಿನ್ನ ಮಗನಿಗೂ ಸಿದ್ಧಮಾಡಿಕೋ.
1KI 17:14 ಏಕೆಂದರೆ, ‘ಯೆಹೋವ ದೇವರು ಭೂಮಿಯ ಮೇಲೆ ಮಳೆಯನ್ನು ಕೊಡುವವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ. ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯುವುದಿಲ್ಲ,’ ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾರೆ,” ಎಂದನು.
1KI 17:15 ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿದಳು. ಎಲೀಯನಿಗೂ, ಮಹಿಳೆಗೂ, ಆಕೆಯ ಮಗನಿಗೂ ಪ್ರತಿದಿನ ಸಾಕಾಗುವಷ್ಟು ಆಹಾರವಿತ್ತು.
1KI 17:16 ಯೆಹೋವ ದೇವರು ಎಲೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಮಡಕೆಯಲ್ಲಿರುವ ಹಿಟ್ಟು ತೀರದೆ, ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯದೆ ಇತ್ತು.
1KI 17:17 ಸ್ವಲ್ಪ ಸಮಯದ ತರುವಾಯ, ಮನೆಯ ಯಜಮಾನಿಯಾದ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಕೊನೆಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು.
1KI 17:18 ಆಗ ಅವಳು ಎಲೀಯನಿಗೆ, “ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವುದಕ್ಕೂ, ನನ್ನ ಮಗನು ಸಾಯುವುದಕ್ಕೂ ನನ್ನ ಬಳಿಗೆ ಬಂದಿಯೋ?” ಎಂದಳು.
1KI 17:19 ಅವನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು,” ಎಂದು ಹೇಳಿ, ಅವನನ್ನು ಅವಳ ಮಡಿಲಿನಿಂದ ಎತ್ತಿಕೊಂಡು, ತಾನು ವಾಸವಾಗಿದ್ದ ಮಾಳಿಗೆಯ ಕೋಣೆಗೆ ಹೋಗಿ, ಅವನನ್ನು ಮಂಚದ ಮೇಲೆ ಮಲಗಿಸಿದನು.
1KI 17:20 “ನನ್ನ ದೇವರಾದ ಯೆಹೋವ ದೇವರೇ, ವಿಧವೆಯ ಮಗನನ್ನು ಕೊಂದುಹಾಕುವ ಈ ದುರಂತ ಅವಳ ಮೇಲೆ ಬರಮಾಡಿದಿಯಲ್ಲಾ?” ಎಂದು ಯೆಹೋವ ದೇವರನ್ನು ಕೂಗಿ ಬೇಡಿದನು.
1KI 17:21 ಅವನು ಬಾಲಕನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವ ದೇವರೇ, ಈ ಬಾಲಕನ ಪ್ರಾಣ ಅವನಲ್ಲಿ ತಿರುಗಿಬರಲಿ,” ಎಂದು ಯೆಹೋವ ದೇವರನ್ನು ಕೂಗಿದನು.
1KI 17:22 ಯೆಹೋವ ದೇವರು ಎಲೀಯನ ಪ್ರಾರ್ಥನೆಯನ್ನು ಕೇಳಿದ್ದರಿಂದ ಬಾಲಕನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರುಗಿ ಬಂತು.
1KI 17:23 ಆಗ ಎಲೀಯನು ಬಾಲಕನನ್ನು ಎತ್ತಿಕೊಂಡು ಉಪ್ಪರಿಗೆಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು, ಅವನನ್ನು ಅವನ ತಾಯಿಗೆ ಕೊಟ್ಟು, “ನೋಡು, ನಿನ್ನ ಮಗನು ಜೀವದಿಂದಿದ್ದಾನೆ,” ಎಂದು ಹೇಳಿದನು.
1KI 17:24 ಸ್ತ್ರೀಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಲ್ಲಿರುವ ಯೆಹೋವ ದೇವರ ವಾಕ್ಯವು ಸತ್ಯವೆಂದೂ ಇದರಿಂದ ಈಗ ತಿಳಿದಿದ್ದೇನೆ,” ಎಂದಳು.
1KI 18:1 ಅನೇಕ ದಿವಸಗಳಾದ ತರುವಾಯ, ಮೂರನೆಯ ವರ್ಷದಲ್ಲಿ, ಯೆಹೋವ ದೇವರ ವಾಕ್ಯವು ಎಲೀಯನಿಗೆ ಬಂದಿತು, “ನೀನು ಹೋಗಿ ಅಹಾಬನಿಗೆ ನಿನ್ನನ್ನು ಪ್ರಕಟಿಸಿಕೋ. ಆಗ ನಾನು ಭೂಮಿಯ ಮೇಲೆ ಮಳೆಯನ್ನು ಕಳುಹಿಸುವೆನು,” ಎಂದು ಹೇಳಿದರು.
1KI 18:2 ಎಲೀಯನು ಅಹಾಬನಿಗೆ ತನ್ನನ್ನು ಪ್ರಕಟಿಸಿಕೊಳ್ಳಲು ಹೋದನು. ಆದರೆ ಸಮಾರ್ಯದಲ್ಲಿ ಬರವು ಘೋರವಾಗಿತ್ತು.
1KI 18:3 ಅಹಾಬನು ತನ್ನ ಮನೆಯ ಉಗ್ರಾಣಿಕನಾದ ಓಬದ್ಯನನ್ನು ಕರೆದನು. ಓಬದ್ಯನು ಯೆಹೋವ ದೇವರಿಗೆ ಬಹಳ ಭಯಭಕ್ತಿವುಳ್ಳವನಾಗಿದ್ದನು.
1KI 18:4 ಈಜೆಬೆಲಳು ಯೆಹೋವ ದೇವರ ಪ್ರವಾದಿಗಳನ್ನು ಕೊಲ್ಲುತ್ತಿದ್ದಾಗ, ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು, ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು, ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.
1KI 18:5 ಅಹಾಬನು ಓಬದ್ಯನಿಗೆ, “ನೀನು ದೇಶದಲ್ಲಿರುವ ಎಲ್ಲಾ ನೀರಿನ ಬುಗ್ಗೆಗಳ ಬಳಿಗೂ, ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳೆದುಕೊಳ್ಳದ ಹಾಗೆ ಕುದುರೆಗಳನ್ನೂ, ಹೇಸರಗತ್ತೆಗಳನ್ನೂ ಜೀವದಿಂದ ಇರಿಸುವುದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು. ಆಗ ನಾವು ಅವುಗಳನ್ನು ಕೊಲ್ಲುವ ಅವಶ್ಯಕತೆ ಇರುವುದಿಲ್ಲ,” ಎಂದನು.
1KI 18:6 ಅವರು ದೇಶವನ್ನು ಹಾದು ಹೋಗಲು, ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ, ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕವಾಗಿ ಹೋದರು.
1KI 18:7 ಓಬದ್ಯನು ಮಾರ್ಗದಲ್ಲಿ ಹೋಗುತ್ತಿರುವಾಗ, ಎಲೀಯನು ಅವನನ್ನು ಸಂಧಿಸಿದನು. ಓಬದ್ಯನು ಅವನನ್ನು ಗುರುತಿಸಿ ಸಾಷ್ಟಾಂಗ ನಮಸ್ಕಾರಮಾಡಿ, “ನೀನು ನನ್ನ ಒಡೆಯನಾದ ಎಲೀಯನಲ್ಲವೋ?” ಎಂದನು.
1KI 18:8 ಎಲೀಯನು ಅವನಿಗೆ, “ನಾನೇ, ನೀನು ಹೋಗಿ, ‘ಎಲೀಯನು ಇಲ್ಲಿದ್ದಾನೆ’ ಎಂದು ನಿನ್ನ ಯಜಮಾನನಿಗೆ ಹೇಳು,” ಎಂದನು.
1KI 18:9 ಅದಕ್ಕವನು, “ಅಹಾಬನು ನನ್ನನ್ನು ಕೊಂದುಹಾಕುವ ಹಾಗೆ ನೀನು ನಿನ್ನ ಸೇವಕನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲು ನಾನೇನು ಪಾಪಮಾಡಿದೆನು?
1KI 18:10 ನಿನ್ನ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ, ರಾಜ್ಯವೂ ಒಂದೂ ಇಲ್ಲ. ಅವರು, ‘ಎಲೀಯನು ನಮ್ಮಲ್ಲಿ ಇಲ್ಲ,’ ಎಂದು ಹೇಳಿದಾಗ, ಅಹಾಬನು ಆ ರಾಜ್ಯಕ್ಕೂ, ಜನಾಂಗಕ್ಕೂ ಆಣೆ ಇಡಿಸಿಕೊಂಡನು.
1KI 18:11 ಈಗ ನೀನು, ‘ಇಗೋ, ಎಲೀಯನು ಇಲ್ಲಿದ್ದಾನೆಂದು ನಿನ್ನ ಯಜಮಾನನಿಗೆ ತಿಳಿಸು,’ ಎಂದು ಹೇಳುತ್ತೀ.
1KI 18:12 ನಾನು ನಿನ್ನನ್ನು ಬಿಟ್ಟು ಹೋಗುವಾಗ, ಯೆಹೋವ ದೇವರ ಆತ್ಮರು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯುವರು. ನಾನು ಬಂದು ಅಹಾಬನಿಗೆ ತಿಳಿಸಿದಾಗ, ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕುವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕಂದಿನಿಂದ ಯೆಹೋವ ದೇವರನ್ನು ಆರಾಧಿಸುತ್ತೇನೆ.
1KI 18:13 ಈಜೆಬೆಲಳು ಪ್ರವಾದಿಗಳನ್ನು ಕೊಲ್ಲುತ್ತಿದ್ದ ಸಮಯದಲ್ಲಿ ಯೆಹೋವ ದೇವರ ಪ್ರವಾದಿಗಳನ್ನು ನೂರು ಮಂದಿಯನ್ನು, ಐವತ್ತು ಐವತ್ತು ಮಂದಿಯಾಗಿ ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು ಸಂರಕ್ಷಿಸಿದ್ದು ನನ್ನ ಯಜಮಾನನಾದ ನೀನು ಕೇಳಿಸಿಕೊಳ್ಳಲಿಲ್ಲವೇ?
1KI 18:14 ಆದರೆ ಈಗ ನನ್ನ ಯಜಮಾನನು ನನ್ನನ್ನು ಕೊಂದುಹಾಕುವ ಹಾಗೆ, ‘ಎಲೀಯನು ಇದ್ದಾನೆ ಎಂದು ನೀನು ಹೋಗಿ ಅವನಿಗೆ ಹೇಳು,’ ಎಂಬುದಾಗಿ ನೀನು ಹೇಳುತ್ತೀ,” ಎಂದನು.
1KI 18:15 ಅದಕ್ಕೆ ಎಲೀಯನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರಾಣೆ, ಇಂದು ನನ್ನನ್ನು ಅವನಿಗೆ ತೋರಿಸಿಕೊಳ್ಳುವೆನು,” ಎಂದನು.
1KI 18:16 ಹೀಗೆ ಓಬದ್ಯನು ಅಹಾಬನೆದುರಿಗೆ ಹೋಗಿ ತಿಳಿಸಿದ್ದರಿಂದ ಅಹಾಬನು ಎಲೀಯನನ್ನು ಎದುರುಗೊಳ್ಳಲು ಹೋದನು.
1KI 18:17 ಅಹಾಬನು ಎಲೀಯನನ್ನು ಕಂಡಾಗ ಅವನಿಗೆ, “ಇಸ್ರಾಯೇಲನ್ನು ಕಷ್ಟಕ್ಕೆ ಒಳಪಡಿಸುವವನು ನೀನಲ್ಲವೋ?” ಎಂದನು.
1KI 18:18 ಅದಕ್ಕೆ ಅವನು, “ನಾನು ಇಸ್ರಾಯೇಲನ್ನು ಕಳವಳಪಡಿಸುವುದಿಲ್ಲ. ಆದರೆ ನೀನೂ, ನಿನ್ನ ತಂದೆಯ ಕುಟುಂಬದವರೂ ಯೆಹೋವ ದೇವರ ಆಜ್ಞೆಯನ್ನು ತೊರೆದುಬಿಟ್ಟು, ಬಾಳನನ್ನು ಹಿಂಬಾಲಿಸುವ ನೀವೇ ಕಳವಳಪಡಿಸುವವರು.
1KI 18:19 ಆದ್ದರಿಂದ ನೀನು ಕರ್ಮೆಲು ಬೆಟ್ಟದ ಬಳಿಯಲ್ಲಿ ಸಮಸ್ತ ಇಸ್ರಾಯೇಲನ್ನೂ, ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ, ಈಜೆಬೆಲಳ ಮೇಜಿನ ಹತ್ತಿರ ಭೋಜನಮಾಡುವ ಅಶೇರನ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕೂಡಿಸು,” ಎಂದನು.
1KI 18:20 ಹೀಗೆ ಅಹಾಬನು ಇಸ್ರಾಯೇಲರೆಲ್ಲರನ್ನೂ ಕರೆಯಿಸಿ, ಕರ್ಮೆಲು ಬೆಟ್ಟದ ಬಳಿಯಲ್ಲಿ ಪ್ರವಾದಿಗಳನ್ನು ಕೂಡಿಸಿದನು.
1KI 18:21 ಆಗ ಎಲೀಯನು ಸಕಲ ಜನರ ಬಳಿಗೆ ಬಂದು, “ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರವರೆಗೂ ನಿಂತುಕೊಂಡಿರುವಿರಿ? ಯೆಹೋವ ದೇವರು ದೇವರಾಗಿದ್ದರೆ, ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ,” ಎಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
1KI 18:22 ಆಗ ಎಲೀಯನು ಜನರಿಗೆ, “ಯೆಹೋವ ದೇವರ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ. ಆದರೆ ಬಾಳನ ಪ್ರವಾದಿಗಳು ನಾನೂರ ಐವತ್ತು ಮಂದಿಯಿದ್ದಾರೆ.
1KI 18:23 ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ. ಒಂದು ಹೋರಿಯನ್ನು ಅವರು ಆಯ್ದುಕೊಂಡು, ಅದನ್ನು ತುಂಡುತುಂಡಾಗಿ ಕಡಿದು, ಬೆಂಕಿ ಹಾಕದೆ, ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆ ಮಾಡಿ, ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು.
1KI 18:24 ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವ ದೇವರ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ, ಬೆಂಕಿಯನ್ನು ಕಳುಹಿಸುವರೋ, ಅವರೇ ದೇವರೆಂದು ನಿಶ್ಚಯಿಸೋಣ,” ಎಂದನು. ಅದಕ್ಕೆ ಜನರೆಲ್ಲರು ಉತ್ತರವಾಗಿ, “ಈ ಮಾತು ಸರಿ,” ಎಂದರು.
1KI 18:25 ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಅನೇಕರಾಗಿರುವುದರಿಂದ ಒಂದು ಹೋರಿಯನ್ನು ಆಯ್ದುಕೊಂಡು, ಅದನ್ನು ಮೊದಲು ಸಿದ್ಧಮಾಡಿ, ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ. ಆದರೆ ಬೆಂಕಿಯನ್ನು ಹೊತ್ತಿಸಬೇಡಿರಿ,” ಎಂದನು.
1KI 18:26 ಅವರು ತಮಗೆ ಕೊಟ್ಟ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. “ಬಾಳನೇ, ನಮಗೆ ಕಿವಿಗೊಡು,” ಎಂದು ಉದಯದಿಂದ ಮಧ್ಯಾಹ್ನದವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ, ಉತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು.
1KI 18:27 ಮಧ್ಯಾಹ್ನದಲ್ಲಿ ಎಲೀಯನು ಅವರನ್ನು ಗೇಲಿಮಾಡಿ ಅವರಿಗೆ, “ದೊಡ್ಡ ಶಬ್ದದಿಂದ ಕೂಗಿರಿ, ಏಕೆಂದರೆ ಅವನು ಒಬ್ಬ ದೇವರಲ್ಲವೇ? ಒಂದು ವೇಳೆ ಅವನು ಧ್ಯಾನದಲ್ಲಿರಬಹುದು; ಇಲ್ಲವೆ ಯಾವುದೋ ಕೆಲಸದಲ್ಲಿರಬಹುದು; ಇಲ್ಲವೆ ಪ್ರಯಾಣದಲ್ಲಿದ್ದಾನೆ; ಇಲ್ಲವೆ ಅವನು ನಿದ್ದೆಯಲ್ಲಿದ್ದಾನೆ; ಈಗ ಅವನು ಎಚ್ಚರವಾಗಬೇಕು,” ಎಂದನು.
1KI 18:28 ಅವರು ದೊಡ್ಡ ಶಬ್ದದಿಂದ ಕೂಗಿ, ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಖಡ್ಗಗಳಿಂದಲೂ, ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.
1KI 18:29 ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸುವ ವೇಳೆಯವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೆ ಶಬ್ದವಾದರೂ, ಉತ್ತರ ಕೊಡುವವನಾದರೂ, ಲಕ್ಷಿಸುವವನಾದರೂ ಇರಲಿಲ್ಲ.
1KI 18:30 ಆಗ ಎಲೀಯನು ಸಮಸ್ತ ಜನರಿಗೂ, “ನನ್ನ ಬಳಿಗೆ ಬನ್ನಿರಿ,” ಎಂದನು. ಜನರೆಲ್ಲರು ಅವನ ಬಳಿಗೆ ಬಂದರು. ಕಿತ್ತು ಹಾಕಿದ ಯೆಹೋವ ದೇವರ ಬಲಿಪೀಠವನ್ನು ಅವನು ದುರಸ್ತಿ ಮಾಡಿದನು.
1KI 18:31 “ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವುದು,” ಎಂದು ಯೆಹೋವ ದೇವರ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ, ಎಲೀಯನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,
1KI 18:32 ಆ ಕಲ್ಲುಗಳಿಂದ ಯೆಹೋವ ದೇವರ ಹೆಸರಿಗೆ ಬಲಿಪೀಠವನ್ನು ಕಟ್ಟಿ, ಆ ಬಲಿಪೀಠದ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗೆಸಿ, ಒಂದು ಕಾಲುವೆಯನ್ನು ಮಾಡಿದನು.
1KI 18:33 ತರುವಾಯ ಅವನು ಕಟ್ಟಿಗೆಗಳನ್ನು ಪೀಠದ ಮೇಲೆ ಇಟ್ಟು, ಹೋರಿಯನ್ನು ತುಂಡುತುಂಡಾಗಿ ಕಡಿದು, ಕಟ್ಟಿಗೆಗಳ ಮೇಲೆ ಇಟ್ಟು, “ನೀವು ನಾಲ್ಕು ಕೊಡ ನೀರು ತುಂಬಿಕೊಂಡು ದಹನಬಲಿಯ ಮೇಲೆಯೂ, ಕಟ್ಟಿಗೆಗಳ ಮೇಲೆಯೂ ಹೊಯ್ಯಿರಿ,” ಎಂದನು.
1KI 18:34 ಅವರು ಅವನು ಹೇಳಿದಂತೆ ಮಾಡಿದರು. ಆಗ ಎಲೀಯನು, “ಎರಡನೆಯ ಸಾರಿ ಹೊಯ್ಯಿರಿ,” ಎಂದನು. ಅವರು ಎರಡನೆಯ ಸಾರಿಯೂ ಹೊಯ್ದರು. ಮೂರನೆಯ ಸಾರಿ, “ಹೊಯ್ಯಿರಿ,” ಎಂದನು. ಮೂರನೆಯ ಸಾರಿಯೂ ಹೊಯ್ದರು.
1KI 18:35 ಆದ್ದರಿಂದ ನೀರು ಬಲಿಪೀಠದ ಸುತ್ತಲೂ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು.
1KI 18:36 ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆಯಲ್ಲಿ ಪ್ರವಾದಿಯಾದ ಎಲೀಯನು ಬಲಿಪೀಠದ ಸಮೀಪಕ್ಕೆ ಬಂದು, “ಅಬ್ರಹಾಮನಿಗೂ, ಇಸಾಕನಿಗೂ, ಇಸ್ರಾಯೇಲಿಗೂ ದೇವರಾದ ಯೆಹೋವ ದೇವರೇ, ಇಸ್ರಾಯೇಲಿನಲ್ಲಿ ನೀವೇ ದೇವರೆಂದೂ, ನಾನು ನಿಮ್ಮ ಸೇವಕನೆಂದೂ, ನಾನು ಈ ಕಾರ್ಯಗಳನ್ನೆಲ್ಲಾ ನಿಮ್ಮ ಮಾತಿನ ಹಾಗೆಯೇ ಮಾಡಿದ್ದೇನೆಂದೂ ಇಂದು ತೋರಿಸಿಕೊಡಿರಿ.
1KI 18:37 ನೀವು ದೇವರಾದ ಯೆಹೋವ ದೇವರೆಂದೂ, ನೀವು ಅವರ ಹೃದಯವನ್ನು ತಿರುಗಿಸಿದ್ದೀರೆಂದೂ ಈ ಜನರು ತಿಳಿಯುವ ಹಾಗೆ ನನಗೆ ಉತ್ತರಕೊಡಿರಿ. ಯೆಹೋವ ದೇವರೇ, ನನಗೆ ಉತ್ತರಕೊಡಿರಿ” ಎಂದು ಬೇಡಿದನು.
1KI 18:38 ಕೂಡಲೇ ಯೆಹೋವ ದೇವರ ಬೆಂಕಿಯು ಇಳಿದುಬಂದು, ದಹನಬಲಿಯನ್ನೂ, ಕಟ್ಟಿಗೆಗಳನ್ನೂ, ಕಲ್ಲುಗಳನ್ನೂ, ಮಣ್ಣನ್ನೂ ಸುಟ್ಟುಬಿಟ್ಟು, ಕಾಲುವೆಯಲ್ಲಿದ್ದ ನೀರನ್ನು ಹೀರಿಬಿಟ್ಟಿತು.
1KI 18:39 ಜನರೆಲ್ಲರು ಇದನ್ನು ಕಂಡಾಗ ಬೋರಲು ಬಿದ್ದು, “ಯೆಹೋವ ದೇವರೇ ದೇವರು! ಯೆಹೋವ ದೇವರೇ ದೇವರು!” ಎಂದರು.
1KI 18:40 ಆಗ ಎಲೀಯನು ಅವರಿಗೆ, “ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದೆ ಇರಲಿ,” ಎಂದನು. ಇವರು ಅವರನ್ನು ಹಿಡಿದರು. ಎಲೀಯನು ಅವರನ್ನು ಕೀಷೋನು ಹಳ್ಳದ ಬಳಿಗೆ ತೆಗೆದುಕೊಂಡುಹೋಗಿ ಅಲ್ಲಿ ಅವರನ್ನು ಕೊಂದುಹಾಕಿದನು.
1KI 18:41 ಅನಂತರ ಎಲೀಯನು ಅಹಾಬನಿಗೆ, “ನೀನು ಹೋಗಿ ತಿಂದು, ಕುಡಿ. ಏಕೆಂದರೆ ದೊಡ್ಡಮಳೆಯ ಶಬ್ದವು ಕೇಳಿಸುತ್ತದೆ,” ಎಂದನು.
1KI 18:42 ಅಹಾಬನು ತಿಂದು, ಕುಡಿಯುವುದಕ್ಕೆ ಹೋದನು. ಎಲೀಯನು ಕರ್ಮೆಲಿನ ಶಿಖರವನ್ನು ಏರಿ, ನೆಲದ ಮೇಲೆ ಬಿದ್ದು, ತನ್ನ ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು.
1KI 18:43 ತನ್ನ ಸೇವಕನಿಗೆ, “ನೀನು ಹೋಗಿ ಸಮುದ್ರದ ಕಡೆಗೆ ನೋಡು,” ಎಂದನು. ಅವನು ಹೋಗಿ ನೋಡಿ, “ಏನೂ ಇಲ್ಲ,” ಎಂದನು. ಅವನು, “ಏಳು ಸಾರಿ ತಿರುಗಿ ಹೋಗಿ ನೋಡು,” ಎಂದನು.
1KI 18:44 ಏಳನೆಯ ಸಾರಿ ಇವನು ಹೋಗಿ ನೋಡಿದಾಗ, “ಇಗೋ, ಸಮುದ್ರದಿಂದ ಒಂದು ಮನುಷ್ಯನ ಅಂಗೈಯಷ್ಟು ಚಿಕ್ಕ ಮೇಘವು ಏಳುತ್ತಿದೆ,” ಎಂದನು. ಆಗ, “ನೀನು ಹೋಗಿ ಅಹಾಬನಿಗೆ ಬೇಗನೇ ರಥವನ್ನು ತೆಗೆದುಕೊಂಡು ಮಳೆಯು ನಿನ್ನನ್ನು ತಡೆಯದಂತೆ ಇಳಿದುಹೋಗೆಂದು ಹೇಳು,” ಎಂದನು.
1KI 18:45 ಆಗ ಇದ್ದಕ್ಕಿದ್ದ ಹಾಗೆ ಆಕಾಶವು ಮೇಘಗಳಿಂದಲೂ, ಗಾಳಿಯಿಂದಲೂ ಕಪ್ಪಾಗಿ ದೊಡ್ಡಮಳೆಯು ಉಂಟಾಯಿತು. ಅಹಾಬನು ರಥದಲ್ಲಿ ಏರಿ ಇಜ್ರೆಯೇಲ್ ಪಟ್ಟಣಕ್ಕೆ ಹೋದನು.
1KI 18:46 ಯೆಹೋವ ದೇವರ ಕೈ ಎಲೀಯನ ಮೇಲೆ ಇದ್ದುದರಿಂದ ಅವನು ತನ್ನ ಸಡಿಲವಾದ ಬಟ್ಟೆಗಳನ್ನು ನಡುಕಟ್ಟಿಕೊಂಡು ಇಜ್ರೆಯೇಲ್ ಪಟ್ಟಣದವರೆಗೂ ಅಹಾಬನಿಗೆ ಮುಂದಾಗಿ ಓಡಿದನು.
1KI 19:1 ಎಲೀಯನು ಮಾಡಿದ್ದೆಲ್ಲವನ್ನೂ, ಅವನು ಖಡ್ಗದಿಂದ ಎಲ್ಲಾ ಪ್ರವಾದಿಗಳನ್ನು ಕೊಂದು ಹಾಕಿದ್ದೆಲ್ಲವನ್ನೂ, ಅಹಾಬನು ಈಜೆಬೆಲಳಿಗೆ ತಿಳಿಸಿದಾಗ,
1KI 19:2 ಈಜೆಬೆಲಳು ಎಲೀಯನ ಬಳಿಗೆ ದೂತನನ್ನು ಕಳುಹಿಸಿ, “ನಾನು ನಾಳೆ ಇಷ್ಟು ಹೊತ್ತಿಗೆ ಅವರಲ್ಲಿರುವ ಒಬ್ಬೊಬ್ಬನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ, ದೇವರುಗಳು ನನಗೆ ಬೇಕಾದದ್ದನ್ನು ಮಾಡಲಿ,” ಎಂದು ಹೇಳಿದಳು.
1KI 19:3 ಅವನು ಅದನ್ನು ಕೇಳಿ ಎದ್ದು, ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ, ಅಲ್ಲಿ ತನ್ನ ಸೇವಕನನ್ನು ಕಳುಹಿಸಿಬಿಟ್ಟನು.
1KI 19:4 ಆದರೆ ಅವನು ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತು, ತಾನು ಸಾಯಬೇಕೆಂದು ಅಪೇಕ್ಷಿಸಿ, “ಯೆಹೋವ ದೇವರೇ, ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಕೋ. ಏಕೆಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ,” ಎಂದನು.
1KI 19:5 ಅವನು ಜಾಲೀಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಆಗ ಒಬ್ಬ ದೂತನು ಅವನನ್ನು ತಟ್ಟಿ, ಅವನಿಗೆ, “ಎದ್ದು ತಿನ್ನು,” ಎಂದನು.
1KI 19:6 ಅವನು ಎದ್ದು ನೋಡಿದಾಗ, ಇಗೋ, ಕೆಂಡದಲ್ಲಿ ಬೇಯಿಸಿದ ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಕಡೆಗೆ ಇತ್ತು. ಆಗ ಅವನು ತಿಂದು, ಕುಡಿದು ತಿರುಗಿ ಮಲಗಿಕೊಂಡನು.
1KI 19:7 ತಿರುಗಿ ಎರಡನೆಯ ಸಾರಿ ಯೆಹೋವ ದೇವರ ದೂತನು ಬಂದು, ಅವನನ್ನು ತಟ್ಟಿ ಅವನಿಗೆ, “ನೀನೆದ್ದು ತಿನ್ನು, ಏಕೆಂದರೆ ನೀನು ಬಹುದೂರ ಪ್ರಯಾಣ ಮಾಡಬೇಕಾಗಿದೆ,” ಎಂದನು.
1KI 19:8 ಆಗ ಅವನೆದ್ದು ತಿಂದು, ಕುಡಿದು ಆ ಭೋಜನದ ಶಕ್ತಿಯಿಂದ ರಾತ್ರಿ ಹಗಲು ನಾಲ್ವತ್ತು ದಿವಸ ಹೋರೇಬ್ ಎಂಬ ದೇವರ ಬೆಟ್ಟದವರೆಗೂ ನಡೆದನು.
1KI 19:9 ಅವನು ಅಲ್ಲಿರುವ ಒಂದು ಗವಿಗೆ ಬಂದು ಅಲ್ಲಿ ವಾಸಿಸಿದನು. ಅಲ್ಲಿ ಅವನಿಗೆ ಯೆಹೋವ ದೇವರ ವಾಕ್ಯವು ಬಂದು, “ಎಲೀಯನೇ, ಇಲ್ಲಿ ಏನು ಮಾಡುತ್ತೀ?” ಎಂದರು.
1KI 19:10 ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.
1KI 19:11 ಆಗ ಯೆಹೋವ ದೇವರು, “ನೀನು ಹೊರಗೆ ಬಂದು ಬೆಟ್ಟದ ಮೇಲೆ ನನ್ನ ಮುಂದೆ ನಿಲ್ಲು. ಏಕೆಂದರೆ ನಾನು ನಿನ್ನ ಮುಂದೆ ಹಾದು ಹೋಗುತ್ತಿದ್ದೇನೆ,” ಎಂದನು. ಯೆಹೋವ ದೇವರ ಮುಂದೆ ಬೆಟ್ಟಗಳನ್ನು ಭೇದಿಸಿ, ಗುಡ್ಡಗಳನ್ನು ಒಡೆಯುವಂಥ ಮಹಾಬಲವಾದ ಗಾಳಿ, ಆ ಗಾಳಿಯಲ್ಲಿ ಯೆಹೋವ ದೇವರು ಇರಲಿಲ್ಲ. ಗಾಳಿಯ ತರುವಾಯ ಭೂಕಂಪವು, ಆ ಭೂಕಂಪದಲ್ಲಿ ಯೆಹೋವ ದೇವರು ಇರಲಿಲ್ಲ.
1KI 19:12 ಭೂಕಂಪದ ತರುವಾಯ ಬೆಂಕಿಯು, ಆ ಬೆಂಕಿಯಲ್ಲಿ ಯೆಹೋವ ದೇವರು ಇರಲಿಲ್ಲ. ಬೆಂಕಿಯ ತರುವಾಯ ಮೃದುವಾದ ಸ್ವರವು ಕೇಳಿಸಿತು.
1KI 19:13 ಎಲೀಯನು ಅದನ್ನು ಕೇಳಿದಾಗ, ತನ್ನ ಕಂಬಳಿಯಿಂದ ತನ್ನ ಮುಖವನ್ನು ಮುಚ್ಚಿಕೊಂಡು, ಹೊರಗೆ ಬಂದು ಗವಿಯ ದ್ವಾರದಲ್ಲಿ ನಿಂತನು. ಆಗ, “ಎಲೀಯನೇ, ಇಲ್ಲಿ ಏನು ಮಾಡುತ್ತೀ?” ಎಂದು ವಾಣಿ ಕೇಳಿಸಿತು.
1KI 19:14 ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.
1KI 19:15 ಆಗ ಯೆಹೋವ ದೇವರು ಅವನಿಗೆ, “ನೀನು ಬಂದ ಮಾರ್ಗದಲ್ಲಿ ದಮಸ್ಕದ ಮರುಭೂಮಿಗೆ ತಿರುಗಿಕೊಂಡು ಹೋಗಿ, ಅಲ್ಲಿ ತಲುಪಿದಾಗ, ಹಜಾಯೇಲನನ್ನು ಅರಾಮಿನ ಮೇಲೆ ಅರಸನಾಗಿರಲು ಅಭಿಷೇಕಿಸು.
1KI 19:16 ಇದಲ್ಲದೆ ನಿಂಷಿಯ ಮಗನಾದ ಯೇಹುವನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಿ, ಆಬೇಲ್ ಮೆಹೋಲ ಊರಿನವನಾದ ಶಾಫಾಟನ ಮಗನಾಗಿರುವ ಎಲೀಷನನ್ನು ನಿನಗೆ ಪ್ರತಿಯಾಗಿ ಪ್ರವಾದಿಯಾಗಿರಲು ಅಭಿಷೇಕಿಸು.
1KI 19:17 ಹಜಾಯೇಲನ ಖಡ್ಗಕ್ಕೆ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುವನು; ಯೇಹುವಿನ ಖಡ್ಗಕ್ಕೆ ತಪ್ಪಿಸಿಕೊಂಡವರನ್ನು ಎಲೀಷನು ಕೊಂದುಹಾಕುವನು.
1KI 19:18 ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಮಂದಿಯನ್ನು ಇಸ್ರಾಯೇಲಿನಲ್ಲಿ ನನಗೋಸ್ಕರ ಉಳಿಸುವೆನು,” ಎಂದರು.
1KI 19:19 ಹಾಗೆಯೇ ಎಲೀಯನು ಅಲ್ಲಿಂದ ಹೊರಟು ಶಾಫಾಟನ ಮಗ ಎಲೀಷನನ್ನು ಕಂಡುಕೊಂಡನು. ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡಿ ಎತ್ತುಗಳಿಂದ ಹೊಲವನ್ನು ಉಳುತ್ತಿದ್ದನು. ಅವನು ಹನ್ನೆರಡನೆಯ ಜೋಡಿನ ಸಂಗಡ ಇದ್ದಾಗ, ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ, ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.
1KI 19:20 ಆಗ ಅವನು ಎತ್ತುಗಳನ್ನು ಬಿಟ್ಟು, ಎಲೀಯನ ಹಿಂದೆ ಓಡಿಹೋಗಿ ಅವನಿಗೆ, “ಅಪ್ಪಣೆಯಾದರೆ, ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬಂದು ನಿನ್ನನ್ನು ಹಿಂಬಾಲಿಸುವೆನು,” ಎಂದನು. ಎಲೀಯನು, “ಹೋಗು, ನಾನು ನಿನಗೆ ಏನು ಮಾಡಿದೆ?” ಎಂದನು.
1KI 19:21 ಆಗ ಎಲೀಷನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ವಧಿಸಿ, ನೊಗದ ಕಟ್ಟಿಗೆಯಿಂದ ಅವುಗಳ ಮಾಂಸವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಸೇವಕನಾದನು.
1KI 20:1 ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸರಿದ್ದರು. ಅವನು ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ, ಅದರ ಮೇಲೆ ಯುದ್ಧಮಾಡಿದನು.
1KI 20:2 ಅವನು ಇಸ್ರಾಯೇಲಿನ ಅರಸನಾದ ಅಹಾಬನ ಬಳಿಗೆ ದೂತರನ್ನು ಪಟ್ಟಣದೊಳಗೆ ಕಳುಹಿಸಿ, “ಬೆನ್ಹದದನು ಹೀಗೆ ಹೇಳುತ್ತಾನೆ:
1KI 20:3 ‘ನಿನ್ನ ಬೆಳ್ಳಿಯೂ, ನಿನ್ನ ಬಂಗಾರವೂ ನನ್ನವು. ನಿನ್ನ ಪತ್ನಿಯರೂ, ನಿನ್ನ ಮಕ್ಕಳೆಲ್ಲರೂ ನನ್ನವರು,’ ” ಎಂಬುದಾಗಿ ಅವನಿಗೆ ಹೇಳಿದನು.
1KI 20:4 ಇಸ್ರಾಯೇಲಿನ ಅರಸನು ಉತ್ತರವಾಗಿ, “ಅರಸನಾದ ನನ್ನ ಒಡೆಯನೇ, ನಿನ್ನ ಮಾತಿನ ಹಾಗೆಯೇ ನಾನು ನಿನ್ನವನು, ನನಗುಂಟಾದ ಸಮಸ್ತವೂ ನಿನ್ನದು,” ಎಂದನು.
1KI 20:5 ಆ ದೂತರು ತಿರುಗಿಬಂದು ಅವನಿಗೆ, “ಬೆನ್ಹದದನು ಹೇಳುವುದೇನೆಂದರೆ, ‘ನಿನ್ನ ಬೆಳ್ಳಿಯನ್ನೂ, ನಿನ್ನ ಬಂಗಾರವನ್ನೂ, ನಿನ್ನ ಸ್ತ್ರೀಯರನ್ನೂ, ನಿನ್ನ ಮಕ್ಕಳನ್ನೂ, ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿ ಕಳುಹಿಸಿದೆನಲ್ಲವೇ?
1KI 20:6 ನಿಶ್ಚಯವಾಗಿ ನಾಳೆ ಇಷ್ಟು ಹೊತ್ತಿಗೆ ನಾನು ನನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸುವೆನು. ಅವರು ನಿನ್ನ ಅರಮನೆಯನ್ನೂ ನಿನ್ನ ಸೇವಕರ ಮನೆಗಳನ್ನೂ ಶೋಧಿಸಿ, ನಿಮಗೆ ಅಮೂಲ್ಯವಾದುವುಗಳನ್ನೆಲ್ಲಾ ಅವರು ತೆಗೆದುಕೊಂಡು ಹೋಗುವರು,’ ” ಎಂದನು.
1KI 20:7 ಆಗ ಇಸ್ರಾಯೇಲಿನ ಅರಸನು ದೇಶದ ಹಿರಿಯರನ್ನೆಲ್ಲಾ ಕರೆಯಿಸಿ ಅವರಿಗೆ, “ಇವನು ಎಂಥಾ ಕೇಡನ್ನು ಹುಡುಕುತ್ತಾನೆ, ಎಂದು ನೋಡಿರಿ. ಏಕೆಂದರೆ ಅವನು ನನ್ನ ಹೆಂಡತಿಯರಿಗೋಸ್ಕರವೂ, ನನ್ನ ಮಕ್ಕಳಿಗೋಸ್ಕರವೂ, ನನ್ನ ಬೆಳ್ಳಿಗೋಸ್ಕರವೂ, ನನ್ನ ಬಂಗಾರಕ್ಕೋಸ್ಕರವೂ ನನ್ನ ಬಳಿಗೆ ಕಳುಹಿಸಿದಾಗ, ನಾನು ಕೊಡುವುದಿಲ್ಲವೆಂದು ಅವನಿಗೆ ಹೇಳಲಿಲ್ಲ,” ಎಂದನು.
1KI 20:8 ಆಗ ಹಿರಿಯರೂ, ಜನರೂ ಅವನಿಗೆ, “ಅವನ ಮಾತು ಕೇಳದೆ ಒಪ್ಪದಿರು,” ಎಂದರು.
1KI 20:9 ಆದ್ದರಿಂದ ಅವನು ಬೆನ್ಹದದನ ದೂತರಿಗೆ, “ನೀವು ಅರಸನಾದ ನನ್ನ ಒಡೆಯನಿಗೆ ಹೇಳಬೇಕಾದದ್ದೇನೆಂದರೆ, ‘ನೀನು ಮೊದಲು ಹೇಳಿದ ಸಮಸ್ತವನ್ನೂ ಮಾಡುವೆನು. ಆದರೆ ಈ ಸಾರಿ ಹೇಳಿದ ಕಾರ್ಯವನ್ನು ನಾನು ಮಾಡಲಾರೆ,’ ಎಂದು ಹೇಳಿರಿ,” ಎಂದನು. ದೂತರು ಹೋಗಿ ಈ ಮಾತುಗಳನ್ನು ಬೆನ್ಹದದನಿಗೆ ಹೇಳಿದರು.
1KI 20:10 ಆಗ ಬೆನ್ಹದದನು ದೂತರನ್ನು ಕಳುಹಿಸಿ ಅಹಾಬನಿಗೆ, “ನನ್ನ ಸೈನಿಕರು ಸಮಾರ್ಯದ ಒಂದು ಹಿಡಿ ಧೂಳನ್ನು ಬಿಡುವುದಿಲ್ಲ. ಬಿಟ್ಟರೆ ದೇವರುಗಳು ನನಗೆ ಇದಕ್ಕಿಂತ ಹೆಚ್ಚಾಗಿ ನನಗೆ ಕೆಟ್ಟದ್ದನ್ನು ಮಾಡಲಿ,” ಎಂದು ಅವನಿಗೆ ಇನ್ನೊಂದು ಸುದ್ದಿಯನ್ನು ಹೇಳಿ ಕಳುಹಿಸಿದನು.
1KI 20:11 ಅದಕ್ಕೆ ಇಸ್ರಾಯೇಲಿನ ಅರಸನು ಉತ್ತರವಾಗಿ, “ಅವನಿಗೆ ಹೇಳು, ‘ತನ್ನ ಆಯುಧಗಳನ್ನು ಅದನ್ನು ಬಿಚ್ಚಿಡುವ ಜಯಶಾಲಿಯಂತೆ ಹೊಗಳಿಕೊಳ್ಳದೆ ಇರಲಿ’ ” ಎಂದನು.
1KI 20:12 ಬೆನ್ಹದದನೂ, ಅವನ ಸಂಗಡ ಡೇರೆಗಳಲ್ಲಿ ಕುಡಿಯುತ್ತಿದ್ದ ಅರಸರು, ಈ ವಾರ್ತೆಯನ್ನು ಕೇಳುತ್ತಲೇ, ಅವನು ತನ್ನ ಸೇವಕರಿಗೆ, “ಆಕ್ರಮಣ ಮಾಡುವುದಕ್ಕೆ ಸಿದ್ಧಮಾಡಿರಿ,” ಎಂದನು. ಹಾಗೆಯೇ ಪಟ್ಟಣಕ್ಕೆ ವಿರೋಧವಾಗಿ ಯುದ್ಧಕ್ಕೆ ಸಿದ್ಧಮಾಡಿದರು.
1KI 20:13 ಆಗ, ಒಬ್ಬ ಪ್ರವಾದಿಯು ಇಸ್ರಾಯೇಲಿನ ಅರಸನಾದ ಅಹಾಬನ ಬಳಿಗೆ ಬಂದು, “ಈ ದೊಡ್ಡ ಗುಂಪನ್ನು ನೋಡಿದೆಯೋ? ನಾನೇ ಯೆಹೋವ ದೇವರೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
1KI 20:14 ಅಹಾಬನು, “ಯಾರ ಕೈಯಿಂದ?” ಎಂದನು. ಅದಕ್ಕವನು, “ ‘ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳಿಂದಲೇ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. ಆಗ ಅಹಾಬನು, “ಯುದ್ಧ ಪ್ರಾರಂಭ ಮಾಡುವವನು ಯಾರು?” ಎಂದನು. ಅದಕ್ಕೆ ಆ ಪ್ರವಾದಿಯು, “ನೀನೇ,” ಎಂದನು.
1KI 20:15 ಅಹಾಬನು ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳನ್ನು ಲೆಕ್ಕಮಾಡಿದಾಗ ಅವರು ಇನ್ನೂರ ಮೂವತ್ತೆರಡು ಜನರಿದ್ದರು. ಅವರ ತರುವಾಯ ಇಸ್ರಾಯೇಲರಾದ ಸೈನಿಕರನ್ನು ಲೆಕ್ಕಮಾಡಿದಾಗ ಏಳು ಸಾವಿರ ಜನರಿದ್ದರು.
1KI 20:16 ಅವರು ಮಧ್ಯಾಹ್ನದಲ್ಲಿ ಹೊರಟರು. ಆದರೆ ಬೆನ್ಹದದನೂ, ಅವರ ಸಹಾಯಕರಾದ ಮೂವತ್ತೆರಡು ಮಂದಿ ಅರಸರೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.
1KI 20:17 ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳ ಮೊದಲು ಸೈನ್ಯವಾಗಿ ಬಂದರು. ಬೆನ್ಹದದನು ಪತ್ತೆದಾರರನ್ನು ಕಳುಹಿಸಿದನು. “ಅವರು ತಿರುಗಿಬಂದು ಸಮಾರ್ಯದಿಂದ ಸೈನಿಕರು ಬಂದಿದ್ದಾರೆ,” ಎಂದು ಅವನಿಗೆ ತಿಳಿಸಿದರು.
1KI 20:18 ಆಗ ಅವರು, “ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ, ಅವರನ್ನು ಜೀವಿತರಾಗಿ ಹಿಡಿಯಿರಿ. ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ, ಅವರನ್ನು ಜೀವಿತರಾಗಿ ಹಿಡಿಯಿರಿ,” ಎಂದನು.
1KI 20:19 ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳೂ, ಅವರ ಹಿಂದೆ ಬಂದ ಸೈನಿಕರೂ, ಪಟ್ಟಣದಿಂದ ಹೊರಗೆ ಬಂದಾಗ,
1KI 20:20 ಪ್ರತಿ ಸೈನಿಕನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದರು. ಆಗ ಅರಾಮ್ಯರು ಓಡಿಹೋದರು. ಇಸ್ರಾಯೇಲರು ಅವರನ್ನು ಹಿಂದಟ್ಟಿದರು. ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು.
1KI 20:21 ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ, ರಥಗಳನ್ನೂ ಹೊಡೆದು, ಅರಾಮ್ಯರನ್ನು ಮಹಾ ಸಂಹಾರದಿಂದ ನಾಶಮಾಡಿಬಿಟ್ಟನು.
1KI 20:22 ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ, “ನೀನು ಹೋಗಿ ಬಲಗೊಂಡು, ನೀನು ಏನು ಮಾಡಬೇಕೆಂಬುವುದನ್ನು ಆಲೋಚಿಸು. ಏಕೆಂದರೆ ವಸಂತ ಋತುವಿನಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು,” ಎಂದನು.
1KI 20:23 ಆದರೆ ಅರಾಮಿನ ಅರಸನ ಸೇವಕರು ಅವನಿಗೆ, “ಅವರ ದೇವರುಗಳು, ಪರ್ವತಗಳ ದೇವರುಗಳು, ಆದ್ದರಿಂದ ಅವರು ನಮ್ಮನ್ನು ಜಯಿಸಿದರು. ನಾವು ಅವರ ಸಂಗಡ ಸಮಭೂಮಿಯಲ್ಲಿ ಯುದ್ಧಮಾಡಿದರೆ, ನಿಶ್ಚಯವಾಗಿ ನಾವು ಅವರಿಗಿಂತ ಬಲಶಾಲಿಗಳಾಗಿರುವೆವು.
1KI 20:24 ಇದಲ್ಲದೆ ನೀನು ಮಾಡಬೇಕಾದದ್ದೇನೆಂದರೆ, ಅರಸರನ್ನು ತೆಗೆದುಹಾಕಿ ಅವರಿಗೆ ಪ್ರತಿಯಾಗಿ ಅಧಿಪತಿಗಳನ್ನು ನೇಮಿಸಬೇಕು.
1KI 20:25 ನಂತರ ನೀನು ಕಳೆದುಕೊಂಡ ಸೈನ್ಯದ ಹಾಗೆ ಕುದುರೆಗೆ ಕುದುರೆಯೂ, ರಥಕ್ಕೆ ರಥವೂ ಬೇರೆ ಸೈನ್ಯವನ್ನು ಲೆಕ್ಕಿಸು. ಆಗ ನಾವು ಸಮಭೂಮಿಯಲ್ಲಿ ಅವರ ಸಂಗಡ ಯುದ್ಧ ಮಾಡೋಣ. ನಿಶ್ಚಯವಾಗಿ ನಾವು ಅವರಿಗಿಂತ ಬಲಶಾಲಿಗಳಾಗುವೆವು,” ಎಂದರು. ಅವನು ಅವರ ಮಾತನ್ನು ಕೇಳಿ ಹಾಗೆಯೇ ಮಾಡಿದನು.
1KI 20:26 ವಸಂತ ಕಾಲದಲ್ಲಿ ಬೆನ್ಹದದನು ಅರಾಮ್ಯರನ್ನು ಲೆಕ್ಕಿಸಿ, ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಅಫೇಕಿಗೆ ಹೋದನು.
1KI 20:27 ಆದ್ದರಿಂದ ಇಸ್ರಾಯೇಲರು ಲೆಕ್ಕ ಮಾಡಿ ಆಹಾರವನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲರು ಅವರಿಗೆದುರಾಗಿ ದಂಡಿಳಿದಿರುವಾಗ, ಅವರು ಆಡುಮರಿಗಳ ಎರಡು ಮಂದೆಗಳ ಹಾಗಿದ್ದರು. ಆದರೆ ಅರಾಮ್ಯರು ಮೈದಾನದಲ್ಲಿ ಸಂಪೂರ್ಣವಾಗಿ ಆವರಿಸಿದ್ದರು.
1KI 20:28 ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾಯೇಲಿನ ಅರಸನಿಗೆ, “ಯೆಹೋವ ದೇವರು ತಗ್ಗುಗಳ ದೇವರಾಗಿರದೆ ಪರ್ವತಗಳ ದೇವರಾಗಿದ್ದನೆಂಬುದಾಗಿ ಅರಾಮ್ಯರು ಹೇಳಿದ್ದರಿಂದ, ‘ನಾನು ಯೆಹೋವ ದೇವರಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
1KI 20:29 ಏಳು ದಿವಸ ಎರಡು ಸೈನ್ಯಗಳೂ ಎದುರುಬದುರಾಗಿ ದಂಡಿಳಿದಿದ್ದರು. ಆದರೆ ಏಳನೆಯ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ, ಇಸ್ರಾಯೇಲರು ಅರಾಮ್ಯರಲ್ಲಿ ಲಕ್ಷಮಂದಿ ಕಾಲಾಳುಗಳನ್ನು ಒಂದೇ ದಿವಸದಲ್ಲಿ ಸಂಹರಿಸಿದರು.
1KI 20:30 ಮಿಕ್ಕಾದವರು ಅಫೇಕೆಂಬ ಪಟ್ಟಣದೊಳಗೆ ಓಡಿಹೋದರು. ಅಲ್ಲಿ ಒಂದು ಗೋಡೆ ಉಳಿದುಕೊಂಡವರಲ್ಲಿ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿದ್ದಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.
1KI 20:31 ಆಗ ಅವನ ಸೇವಕರು ಅವನಿಗೆ, “ಇಸ್ರಾಯೇಲಿನ ಮನೆಯ ಅರಸರು ಕರುಣೆಯುಳ್ಳವರೆಂದು ನಾವು ಕೇಳಿದ್ದೇವೆ. ನಾವು ಗೋಣಿಯನ್ನು ಸೊಂಟಕ್ಕೆ ಕಟ್ಟಿಕೊಂಡು, ಹಗ್ಗಗಳನ್ನು ನಮ್ಮ ತಲೆಗೆ ಸುತ್ತಿಕೊಂಡು ಇಸ್ರಾಯೇಲಿನ ಅರಸನ ಬಳಿಗೆ ಹೋಗೋಣ. ಒಂದು ವೇಳೆ ಅವನು ನಿನ್ನ ಪ್ರಾಣವನ್ನು ರಕ್ಷಿಸುವನು,” ಎಂದರು.
1KI 20:32 ಹಾಗೆಯೇ ಅವರು ಗೋಣಿಯನ್ನು ತಮ್ಮ ನಡುವುಗಳಿಗೆ ಕಟ್ಟಿಕೊಂಡು, ಹಗ್ಗಗಳನ್ನು ತಮ್ಮ ತಲೆಗಳಿಗೆ ಸುತ್ತಿಕೊಂಡು ಇಸ್ರಾಯೇಲಿನ ಅರಸನ ಬಳಿಗೆ ಬಂದು, “ನನ್ನ ಪ್ರಾಣ ಬದುಕಲೆಂದು ನಿನ್ನ ಸೇವಕನಾದ ಬೆನ್ಹದದನು ಹೇಳುತ್ತಾನೆ,” ಎಂದರು. ಅದಕ್ಕೆ ಅರಸನು, “ಅವನು ಇನ್ನೂ ಬದುಕಿದ್ದಾನೋ? ಅವನು ನನ್ನ ಸಹೋದರನು,” ಎಂದನು.
1KI 20:33 ಆದರೆ ಆ ಮನುಷ್ಯರು ಈ ಮಾತನ್ನು ಶುಭಸೂಚನೆಯಾಗಿ ನೆನಸಿ, ಅವನ ಮಾತಿಗೆ ಉತ್ತರವಾಗಿ, “ನಿನ್ನ ಸಹೋದರನಾದ ಬೆನ್ಹದದನು ಇದ್ದಾನೆ,” ಎಂದು ಹೇಳಿದರು. ಆಗ ಅಹಾಬನು, “ನೀವು ಹೋಗಿ ಅವನನ್ನು ಕರೆದುಕೊಂಡು ಬನ್ನಿರಿ,” ಎಂದನು. ಬೆನ್ಹದದನು ಅವನ ಬಳಿಗೆ ಹೊರಟುಬಂದಾಗ ಅಹಾಬನು ಅವನನ್ನು ರಥದಲ್ಲಿ ಕುಳ್ಳಿರಿಸಿಕೊಂಡನು.
1KI 20:34 ಆಗ ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ತೆಗೆದುಕೊಂಡ ಪಟ್ಟಣಗಳನ್ನು ತಿರುಗಿಕೊಡುತ್ತೇನೆ. ನನ್ನ ತಂದೆ ಸಮಾರ್ಯದಲ್ಲಿ ಮಾಡಿದ ಹಾಗೆಯೇ, ದಮಸ್ಕದಲ್ಲಿ ನೀನು ನಿನಗಾಗಿ ಬೀದಿಗಳನ್ನು ಮಾಡಿಸಬೇಕು,” ಎಂದನು. ಅದಕ್ಕೆ ಅಹಾಬನು, “ಈ ಒಡಂಬಡಿಕೆಯ ಪ್ರಕಾರವೇ ನಿನ್ನನ್ನು ಕಳುಹಿಸಿಬಿಡುತ್ತೇನೆ,” ಎಂದನು. ಹೀಗೆಯೇ ಅಹಾಬನು ಬೆನ್ಹದದನ ಸಂಗಡ ಒಡಂಬಡಿಕೆಯನ್ನು ಮಾಡಿ, ಅವನನ್ನು ಕಳುಹಿಸಿಬಿಟ್ಟನು.
1KI 20:35 ಆದರೆ ಪ್ರವಾದಿಗಳ ಮಂಡಲಿಯಲ್ಲಿ ಒಬ್ಬನು ಯೆಹೋವ ದೇವರ ಮಾತಿನಿಂದ ತನ್ನ ಜೊತೆಗಾರನಿಗೆ, “ನೀನು ನಿನ್ನ ಆಯುಧದಿಂದ ನನ್ನನ್ನು ಹೊಡೆ,” ಎಂದನು. ಆದರೆ ಆ ಜೊತೆಗಾರನನ್ನು ಹೊಡೆಯಲೊಲ್ಲದೆ ಇದ್ದನು.
1KI 20:36 ಆಗ ಪ್ರವಾದಿಯು ಇವನಿಗೆ, “ನೀನು ಯೆಹೋವ ದೇವರ ಮಾತನ್ನು ಕೇಳದೆ ಹೋದದ್ದರಿಂದ, ನೀನು ನನ್ನನ್ನು ಬಿಟ್ಟು ಹೋಗುವಾಗ ಸಿಂಹವು ನಿನ್ನನ್ನು ಕೊಲ್ಲುವುದು,” ಎಂದನು. ಅವನು ಪ್ರವಾದಿಯನ್ನು ಬಿಟ್ಟು ಹೋದಾಗಲೇ ಸಿಂಹವು ಅವನನ್ನು ಕಂಡು ಕೊಂದುಹಾಕಿತು.
1KI 20:37 ಪ್ರವಾದಿಯು ಮತ್ತೊಬ್ಬನನ್ನು ಕಂಡುಕೊಂಡು, “ದಯಮಾಡಿ, ನನ್ನನ್ನು ಹೊಡೆ,” ಎಂದನು. ಆ ಮನುಷ್ಯನು ಅವನನ್ನು ಗಾಯವಾಗುವಷ್ಟು ಹೊಡೆದನು.
1KI 20:38 ಆಗ ಪ್ರವಾದಿಯು ಹೋಗಿ ತನ್ನ ಕಣ್ಣುಗಳನ್ನು ಮುಂಡಾಸದಿಂದ ಮುಚ್ಚಿಕೊಂಡು ತನ್ನನ್ನು ಮರೆಮಾಡಿಕೊಂಡು, ಅರಸನಾದ ಅಹಾಬನಿಗೋಸ್ಕರ ಮಾರ್ಗದಲ್ಲಿ ಕಾದುಕೊಂಡಿದ್ದನು.
1KI 20:39 ಅರಸನು ಹಾದು ಹೋಗುತ್ತಿರುವಾಗ, ಪ್ರವಾದಿಯು ಅರಸನಿಗೆ ಕೂಗಿ ಹೇಳಿದ್ದೇನೆಂದರೆ, “ನಿನ್ನ ಸೇವಕನು ಯುದ್ಧಕ್ಕೆ ಹೋಗಿರುವಾಗ ಇಗೋ, ಒಬ್ಬ ಮನುಷ್ಯನು ಸೆರೆಯವನನ್ನು ನನ್ನ ಬಳಿಗೆ ಹಿಡಿದುಕೊಂಡು ಬಂದು, ‘ಈ ಮನುಷ್ಯನನ್ನು ಕಾಯಿ. ಇವನು ತಪ್ಪಿಸಿಕೊಂಡುಹೋದರೆ ನಿನ್ನ ಪ್ರಾಣವು ಇವನ ಪ್ರಾಣಕ್ಕೆ ಬದಲಾಗಿರುವುದು. ಇಲ್ಲವೆ ನೀನು ಮೂರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಡಬೇಕು,’ ಎಂದನು.
1KI 20:40 ಆದರೆ ನಿನ್ನ ಸೇವಕನು ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ತಪ್ಪಿಸಿಕೊಂಡುಹೋದನು,” ಎಂದನು. ಇಸ್ರಾಯೇಲಿನ ಅರಸನು ಅವನಿಗೆ, “ನಿನ್ನ ತೀರ್ಪಿನ ಹಾಗೆಯೇ ಆಗಲಿ, ನೀನು ಸರಿಯಾಗಿ ನಿರ್ಣಯಿಸಿದಿ,” ಎಂದನು.
1KI 20:41 ಆಗ ಅವನು ಶೀಘ್ರವಾಗಿ ತನ್ನ ಕಣ್ಣುಗಳ ಮೇಲೆ ಇರುವ ಮುಂಡಾಸವನ್ನು ತೆಗೆದು ಹಾಕಿದ್ದರಿಂದ ಇಸ್ರಾಯೇಲಿನ ಅರಸನು ಅವನು ಪ್ರವಾದಿಗಳಲ್ಲಿ ಒಬ್ಬನೆಂದು ತಿಳಿದುಕೊಂಡನು.
1KI 20:42 ಆಗ ಪ್ರವಾದಿಯು ಅಹಾಬನಿಗೆ, “ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಪೂರ್ಣ ನಾಶಕ್ಕೆ ಒಪ್ಪಿಸಿದ ಮನುಷ್ಯನನ್ನು ನೀನು ಬಿಟ್ಟುಬಿಟ್ಟ ಕಾರಣ, ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣ ಹೋಗುವುದು, ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು,’ ” ಎಂದನು.
1KI 20:43 ಆಗ ಇಸ್ರಾಯೇಲಿನ ಅರಸನು ಬೇಸರದಿಂದಲೂ, ಕೋಪದಿಂದಲೂ ತನ್ನ ಅರಮನೆಗೆ ಹೋಗಲು ಹೊರಟು ಸಮಾರ್ಯಕ್ಕೆ ಬಂದನು.
1KI 21:1 ಕೆಲವು ಕಾಲದ ನಂತರ, ಇಜ್ರೆಯೇಲ್ ಪಟ್ಟಣದಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಯೇಲಿನವನಾದ ನಾಬೋತನಿಗೆ ಒಂದು ದ್ರಾಕ್ಷಿ ತೋಟವಿತ್ತು.
1KI 21:2 ಅಹಾಬನು ನಾಬೋತನಿಗೆ, “ತೋಟವು ನನ್ನ ಮನೆಯ ಬಳಿಯಲ್ಲಿ ಇರುವುದರಿಂದ ಅದು ನನಗೆ ಕಾಯಿಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು. ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೆಯ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ಇಲ್ಲವೆ ನಿನ್ನ ದೃಷ್ಟಿಗೆ ಒಳ್ಳೆಯದಾಗಿದ್ದರೆ, ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು,” ಎಂದನು.
1KI 21:3 ಆದರೆ ನಾಬೋತನು ಅಹಾಬನಿಗೆ, “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡದಂತೆ ಯೆಹೋವ ದೇವರು ನನ್ನನ್ನು ತಡೆಯಲಿ,” ಎಂದನು.
1KI 21:4 “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವುದಿಲ್ಲ,” ಎಂದು ಇಜ್ರೆಯೇಲಿನವನಾದ ನಾಬೋತನು ಹೇಳಿದ ಮಾತಿಗೋಸ್ಕರ, ಅಹಾಬನು ವ್ಯಸನದಿಂದಲೂ ಕೋಪದಿಂದಲೂ ತನ್ನ ಮನೆಗೆ ಬಂದು, ತನ್ನ ಮಂಚದ ಮೇಲೆ ಮಲಗಿ, ತನ್ನ ಮುಖವನ್ನು ತಿರುಗಿಸಿಕೊಂಡು ಊಟಮಾಡದೆ ಇದ್ದನು.
1KI 21:5 ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು ಅವನಿಗೆ, “ನೀನು ವ್ಯಸನವಾಗಿರುವುದೇಕೆ? ಯಾಕೆ ಊಟಮಾಡುವುದಿಲ್ಲ?” ಎಂದಳು.
1KI 21:6 ಅವನು ಅವಳಿಗೆ, “ಏಕೆಂದರೆ ನಾನು ಇಜ್ರೆಯೇಲಿನವನಾದ ನಾಬೋತನ ಸಂಗಡ ಮಾತನಾಡಿ, ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಕ್ರಯಕ್ಕೆ ಕೊಡು. ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷಿತೋಟವನ್ನು ಕೊಡುವೆನು,’ ಎಂದು ಅವನಿಗೆ ಹೇಳಿದೆನು. ಅದಕ್ಕವನು, ‘ನನ್ನ ದ್ರಾಕ್ಷಿತೋಟವನ್ನು ಕೊಡುವುದಿಲ್ಲ,’ ” ಎಂದು ಹೇಳಿದನು.
1KI 21:7 ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ನಿನಗೆ ಕೊಡಿಸುತ್ತೇನೆ,” ಎಂದಳು.
1KI 21:8 ಹೀಗೆ ಅವಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು, ಅವುಗಳಿಗೆ ಅವನ ಮುದ್ರೆಹಾಕಿ, ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯರಿಗೂ, ಗೌರವಸ್ಥರಿಗೂ ಕಳುಹಿಸಿದಳು.
1KI 21:9 ಅವಳು ಪತ್ರಗಳಲ್ಲಿ, “ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ಕೂರಿಸಿ,
1KI 21:10 ‘ನೀನು ದೇವರನ್ನೂ, ಅರಸನನ್ನೂ ದೂಷಿಸಿದಿ,’ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ದುಷ್ಟರಾದ ಇಬ್ಬರು ಮನುಷ್ಯರನ್ನು ಕೂರಿಸಿರಿ. ತರುವಾಯ ಅವನನ್ನು ಹೊರಗೆ ತೆಗೆದುಕೊಂಡುಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ,” ಎಂದು ಬರೆದಿತ್ತು.
1KI 21:11 ಆಗ ಅವನ ಪಟ್ಟಣದ ಮನುಷ್ಯರೂ, ಅವನ ಪಟ್ಟಣದ ನಿವಾಸಿಗಳೂ ಆದ ಹಿರಿಯರೂ, ಗೌರವಸ್ಥರೂ, ಈಜೆಬೆಲಳು ಅವರಿಗೆ ಕಳುಹಿಸಿದ ಪ್ರಕಾರವೂ, ಅವಳು ಅವರ ಬಳಿಗೆ ಕಳುಹಿಸಿದ ಪತ್ರಗಳಲ್ಲಿ ಬರೆದ ಪ್ರಕಾರವೂ ಮಾಡಿದರು.
1KI 21:12 ಅವರು ಉಪವಾಸವನ್ನು ಪ್ರಕಟಮಾಡಿ, ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ಕೂರಿಸಿದರು.
1KI 21:13 ಆಗ ದುಷ್ಟರಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತುಕೊಂಡರು. ಈ ದುಷ್ಟಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ, “ಈ ನಾಬೋತನು ದೇವರನ್ನೂ, ಅರಸನನ್ನೂ ದೂಷಿಸಿದನು,” ಎಂದು ಸಾಕ್ಷಿ ಹೇಳಿದರು. ಆಗ ನಾಬೋತನನ್ನು ಪಟ್ಟಣದ ಹೊರಗೆ ಕರೆದುಕೊಂಡು ಹೋಗಿ, ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು.
1KI 21:14 ಅವನು ಸತ್ತನು. ಅವರು ಈಜೆಬೆಲಳಿಗೆ, “ನಾಬೋತನು ಕಲ್ಲೆಸೆತದಿಂದ ಸತ್ತನು,” ಎಂದು ಹೇಳಿ ಕಳುಹಿಸಿದರು.
1KI 21:15 ನಾಬೋತನು ಕಲ್ಲೆಸೆತದಿಂದ ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ, ಅವಳು ಅಹಾಬನಿಗೆ, “ನೀನೆದ್ದು ಇಜ್ರೆಯೇಲಿನವನಾದ ನಾಬೋತನು ಕ್ರಯಕ್ಕೆ ಕೊಡಲು ಸಮ್ಮತಿಸದಿದ್ದ ದ್ರಾಕ್ಷಿತೋಟವನ್ನು ಸ್ವಾಧೀನ ಮಾಡಿಕೋ. ಏಕೆಂದರೆ ನಾಬೋತನು ಜೀವದಿಂದಿಲ್ಲ, ಸತ್ತಿದ್ದಾನೆ,” ಎಂದಳು.
1KI 21:16 ನಾಬೋತನು ಸತ್ತನೆಂದು ಅಹಾಬನು ಕೇಳಿದಾಗ, ಅವನೆದ್ದು ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಸ್ವಾಧೀನಮಾಡಿಕೊಳ್ಳಲು ಹೋದನು.
1KI 21:17 ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ,
1KI 21:18 “ನೀನೆದ್ದು ಸಮಾರ್ಯದಲ್ಲಿರುವ ಇಸ್ರಾಯೇಲಿನ ಅರಸನಾದ ಅಹಾಬನಿಗೆ ಎದುರಾಗಿ ಹೋಗು. ಅವನು ನಾಬೋತನ ದ್ರಾಕ್ಷಿ ತೋಟದಲ್ಲಿದ್ದಾನೆ. ಅದನ್ನು ಸ್ವಾಧೀನಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದಾನೆ.
1KI 21:19 ನೀನು ಅವನಿಗೆ, ‘ನೀನು ಕೊಂದುಹಾಕಿ ಸ್ವಾಧೀನ ಮಾಡಿಕೊಂಡಿಯಲ್ಲಾ. ಆದ್ದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕುವುವು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
1KI 21:20 ಆಗ ಅಹಾಬನು ಎಲೀಯನಿಗೆ, “ನನ್ನ ಶತ್ರುವೇ, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು. ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ,
1KI 21:21 ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ, ನಿನ್ನ ಸಂತತಿಯನ್ನು ತೆಗೆದುಹಾಕಿ, ಅಹಾಬನಿಗೆ ಒಬ್ಬ ಗಂಡು ಮಗುವನ್ನಾದರೂ ಉಳಿಸದೆ ಇಸ್ರಾಯೇಲಿನಲ್ಲಿ ಎಲ್ಲರನ್ನು ತೆಗೆದುಹಾಕಿಬಿಡುವೆನು.
1KI 21:22 ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ, ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ, ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ, ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು, ಎಂದನು.’
1KI 21:23 “ಈಜೆಬೆಲಳನ್ನು ಕುರಿತು ಯೆಹೋವ ದೇವರು, ‘ನಾಯಿಗಳು ಈಜೆಬೆಲಳನ್ನು ಇಜ್ರೆಯೇಲ್ ಗೋಡೆಯ ಬಳಿಯಲ್ಲಿ ತಿನ್ನುವುವು.’
1KI 21:24 “ಅಹಾಬನ ಕುಟುಂಬದವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ, ಅವನನ್ನು ನಾಯಿಗಳು ತಿನ್ನುವುವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು, ಎಂದು ಹೇಳುತ್ತಾರೆ,” ಎಂದನು.
1KI 21:25 ತನ್ನ ಹೆಂಡತಿ ಈಜೆಬೆಲಳಿಂದ ಪ್ರೇರೇಪಿತನಾಗಿ, ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿ ಬಿಟ್ಟ ಅಹಾಬನ ಹಾಗೆ ದುಷ್ಟನು ಇನ್ನೊಬ್ಬನು ಇರಲಿಲ್ಲ.
1KI 21:26 ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಅಮೋರಿಯರು ಮಾಡಿದ ಎಲ್ಲಾ ವಿಗ್ರಹಗಳನ್ನು ಹಿಂಬಾಲಿಸಿ ಅಸಹ್ಯವಾಗಿ ನಡೆದನು.
1KI 21:27 ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ, ಅವನು ತನ್ನ ವಸ್ತ್ರಗಳನ್ನು ಹರಿದು, ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನತೆಯಿಂದ ನಡೆದನು.
1KI 21:28 ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ,
1KI 21:29 “ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ಜೀವಮಾನದಲ್ಲಿ ಆ ಕೇಡನ್ನು ಬರಮಾಡದೆ, ಅವನ ಮಗನ ಕಾಲದಲ್ಲಿ ಅವನ ಮನೆಯ ಮೇಲೆ ಬರಮಾಡುವೆನು,” ಎಂದನು.
1KI 22:1 ಅರಾಮ್ಯರಿಗೂ, ಇಸ್ರಾಯೇಲರಿಗೂ ಮೂರು ವರ್ಷ ಯುದ್ಧ ನಡೆಯಲಿಲ್ಲ.
1KI 22:2 ಮೂರನೆಯ ವರ್ಷದಲ್ಲಿ, ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಬಳಿಗೆ ಬಂದನು.
1KI 22:3 ಇಸ್ರಾಯೇಲಿನ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ನಮ್ಮದೆಂದು ನಿಮಗೆ ಗೊತ್ತುಂಟಲ್ಲಾ? ನಾವು ಅದನ್ನು ಅರಾಮಿನ ಅರಸನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಇದ್ದೇವೆ,” ಎಂದನು.
1KI 22:4 ಆಗ ಅವನು ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದನು.
1KI 22:5 ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ಈ ಹೊತ್ತು ಮೊದಲು ಯೆಹೋವ ದೇವರ ಆಲೋಚನೆಯನ್ನು ವಿಚಾರಿಸಿರಿ,” ಎಂದನು.
1KI 22:6 ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
1KI 22:7 ಆದರೆ ಯೆಹೋಷಾಫಾಟನು, “ಯೆಹೋವ ದೇವರ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಬೇರೆ ಪ್ರವಾದಿ ಇಲ್ಲಿ ಇಲ್ಲವೋ?” ಎಂದು ಕೇಳಿದನು.
1KI 22:8 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.
1KI 22:9 ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು, “ಇಮ್ಲನ ಮಗನಾದ ಮೀಕಾಯನನ್ನು ಶೀಘ್ರವಾಗಿ ಕರೆದುಕೊಂಡು ಬಾ,” ಎಂದನು.
1KI 22:10 ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ, ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯದ ಬಾಗಿಲಿನ ಮುಂದೆ ಬಯಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸುತ್ತಿದ್ದರು.
1KI 22:11 ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
1KI 22:12 ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ, “ಗಿಲ್ಯಾದಿನ ರಾಮೋತಿಗೆ ಹೋಗಿ ಜಯ ಹೊಂದು, ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
1KI 22:13 ಆದರೆ ಮೀಕಾಯನನ್ನು ಕರೆಯಲು ಹೋದ ದೂತನು ಅವನಿಗೆ, “ನೋಡು, ಎಲ್ಲ ಪ್ರವಾದಿಗಳು ಏಕಮನಸ್ಸಿನಿಂದ ಅರಸನಿಗೆ ಒಳ್ಳೆಯದನ್ನೇ ಪ್ರವಾದಿಸಿದ್ದಾರೆ. ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೆಯ ಮಾತು ಆಡು,” ಎಂದನು.
1KI 22:14 ಅದಕ್ಕೆ ಮೀಕಾಯನು, “ಯೆಹೋವ ದೇವರ ಜೀವದಾಣೆ, ಯೆಹೋವ ದೇವರು ನನಗೆ ಏನು ಹೇಳುವರೋ, ಅದನ್ನೇ ಮಾತನಾಡುವೆನು,” ಎಂದನು.
1KI 22:15 ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ, “ಮೀಕಾಯೆಹುವೇ, ನಾವು ಗಿಲ್ಯಾದಿನ ರಾಮೋತ್ ವಿರುದ್ಧವಾಗಿ ಯುದ್ಧಕ್ಕೆ ಹೋಗಬಹುದೋ ಅಥವಾ ಬೇಡವೋ?” ಎಂದನು. ಆಗ ಅವನು, “ಹೋಗಿ ಜಯ ಹೊಂದಿರಿ. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
1KI 22:16 ಆಗ ಅರಸನು ಅವನಿಗೆ, “ನೀನು ಯೆಹೋವ ದೇವರ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು?” ಎಂದನು.
1KI 22:17 ಅದಕ್ಕೆ ಮೀಕಾಯನು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳ ಮೇಲೆ ಚದರಿಹೋದದ್ದನ್ನು ಕಂಡೆನು. ಆಗ ಯೆಹೋವ ದೇವರು, ‘ಇವರಿಗೆ ಯಜಮಾನನು ಇಲ್ಲ, ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂದಿರುಗಿ ಹೋಗಲಿ,’ ಎಂಬುದಾಗಿ ಹೇಳಿದರು,” ಎಂದನು.
1KI 22:18 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ಇವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು.
1KI 22:19 ಆಗ ಮೀಕಾಯನು, “ಆದ್ದರಿಂದ ಯೆಹೋವ ದೇವರ ವಾಕ್ಯವನ್ನು ಕೇಳು: ಯೆಹೋವ ದೇವರು ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡಿರುವುದನ್ನೂ ಆಕಾಶದ ಸಮಸ್ತ ಸೈನ್ಯವು ಅವರ ಬಲಗಡೆ, ಎಡಗಡೆ ಮತ್ತು ಸುತ್ತಲೂ ನಿಂತಿರುವುದನ್ನೂ ನಾನು ಕಂಡೆನು.
1KI 22:20 ಆಗ ಯೆಹೋವ ದೇವರು, ‘ಅಹಾಬನು ಹೋಗಿ ಗಿಲ್ಯಾದಿನ ರಾಮೋತಿನಲ್ಲಿ ಬೀಳುವ ಹಾಗೆ, ಅವನನ್ನು ಮರುಳುಗೊಳಿಸುವವನು ಯಾರು?’ ಎಂದರು. “ಒಬ್ಬನು ಒಂದು ವಿಧವಾಗಿಯೂ ಮತ್ತೊಬ್ಬನು ಇನ್ನೊಂದು ವಿಧವಾಗಿಯೂ ಹೇಳುತ್ತಿದ್ದರು.
1KI 22:21 ಕೊನೆಯಲ್ಲಿ, ಒಂದು ಆತ್ಮವು ಹೊರಟುಬಂದು ಯೆಹೋವ ದೇವರ ಮುಂದೆ ನಿಂತು, ‘ನಾನು ಅವನನ್ನು ಮರುಳುಗೊಳಿಸುತ್ತೇನೆ,’ ಎಂದಿತು.
1KI 22:22 “ಆಗ ಯೆಹೋವ ದೇವರು, ‘ಅದು ಹೇಗೆ?’ ಎಂದರು. “ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಅವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ. ಹೊರಟುಹೋಗಿ ಹಾಗೆ ಮಾಡು,’ ಎಂದರು.
1KI 22:23 “ಆದ್ದರಿಂದ ಇಗೋ, ಯೆಹೋವ ದೇವರು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳನ್ನಾಡುವ ಆತ್ಮವನ್ನು ಇಟ್ಟಿದ್ದಾರೆ. ಇದಲ್ಲದೆ ಯೆಹೋವ ದೇವರು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾರೆ,” ಎಂದನು.
1KI 22:24 ಆಗ ಕೆನಾನನ ಮಗನಾದ ಚಿದ್ಕೀಯನು ಸಮೀಪಕ್ಕೆ ಬಂದು, ಮೀಕಾಯನ ಕೆನ್ನೆಯ ಮೇಲೆ ಹೊಡೆದು, “ಯೆಹೋವ ದೇವರ ಆತ್ಮವು ನನ್ನನ್ನು ಬಿಟ್ಟು, ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಬಂದಿತು?” ಎಂದನು.
1KI 22:25 ಅದಕ್ಕೆ ಮೀಕಾಯನು, “ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ನೀನು ಹೋಗುವ ದಿವಸದಲ್ಲಿ ನೋಡುವೆ,” ಎಂದನು.
1KI 22:26 ಆಗ ಇಸ್ರಾಯೇಲಿನ ಅರಸನು ಹೇಳಿದ್ದೇನೆಂದರೆ, “ನೀವು ಮೀಕಾಯನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ, ಅರಸನ ಮಗನಾದ ಯೋವಾಷನ ಬಳಿಗೂ ತೆಗೆದುಕೊಂಡುಹೋಗಿ,
1KI 22:27 ‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ,’ ಎಂದು ತಿಳಿಸು,” ಎಂದನು.
1KI 22:28 ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು.
1KI 22:29 ಹೀಗೆಯೇ ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.
1KI 22:30 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ಯುದ್ಧದಲ್ಲಿ ಪ್ರವೇಶಿಸುವೆನು. ಆದರೆ ನೀನು ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡಿರು,” ಎಂದನು. ಹಾಗೆಯೇ ಇಸ್ರಾಯೇಲಿನ ಅರಸನು ವೇಷಹಾಕಿಕೊಂಡು ಯುದ್ಧಕ್ಕೆ ಹೋದನು.
1KI 22:31 ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೆರಡು ಮಂದಿ ಪ್ರಧಾನರಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲಿನ ಅರಸನನ್ನು ಮಾತ್ರ ಗುರಿಯಾಗಿಸಿಕೊಂಡು ಯುದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
1KI 22:32 ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ನಿಶ್ಚಯವಾಗಿ ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ, ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆಗ ಯೆಹೋಷಾಫಾಟನು ಕೂಗಿಕೊಂಡನು.
1KI 22:33 ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳಿಗೆ ಗೊತ್ತಾದಾಗ, ಅವರು ಅವನನ್ನು ಬಿಟ್ಟುಹೋದರು.
1KI 22:34 ಆದರೆ ಅರಾಮ್ಯರ ಸೈನಿಕನೊಬ್ಬನು ಗುರಿ ಇಡದೆ ಬಿಲ್ಲಿಗೆ ಬಾಣವನ್ನೇರಿಸಿ ಹೊಡೆಯಲು, ಅದು ಇಸ್ರಾಯೇಲಿನ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆದ್ದರಿಂದ ಅವನು ತನ್ನ ರಥ ನಡೆಸುವವನಿಗೆ, “ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆಗೆ ತೆಗೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ,” ಎಂದನು.
1KI 22:35 ಆ ದಿವಸವೆಲ್ಲಾ ಯುದ್ಧವು ಬಹು ಘೋರವಾದದ್ದರಿಂದ ಇಸ್ರಾಯೇಲಿನ ಅರಸನು ಅರಾಮ್ಯರಿಗೆ ಎದುರಾಗಿ ರಥದಲ್ಲಿಯೇ ಆತುಕೊಂಡು ನಿಂತಿದ್ದನು. ಅವನ ಗಾಯದ ರಕ್ತವು ರಥದ ಅಡಿಭಾಗದಲ್ಲಿ ಸುರಿದು ನಿಂತಿತ್ತು, ಸಾಯಂಕಾಲದಲ್ಲಿ ಅವನು ಮರಣಹೊಂದಿದನು.
1KI 22:36 ಸಾಯಂಕಾಲವಾದಾಗ, “ಪ್ರತಿ ಮನುಷ್ಯನು ತನ್ನ ತನ್ನ ಪಟ್ಟಣಕ್ಕೂ, ಪ್ರತಿ ಮನುಷ್ಯನು ತನ್ನ ತನ್ನ ದೇಶಕ್ಕೂ ಹೋಗಲಿ,” ಎಂದು ಸೈನ್ಯದಲ್ಲಿ ಪ್ರಕಟಮಾಡಲಾಯಿತು.
1KI 22:37 ಇಸ್ರಾಯೇಲಿನ ಅರಸನ ಶವವನ್ನು ಸಮಾರ್ಯಕ್ಕೆ ತಂದು ಅಲ್ಲಿ ಸಮಾಧಿಮಾಡಿದರು.
1KI 22:38 ಆ ರಥವನ್ನು ವೇಶ್ಯೆಯರು ಸ್ನಾನ ಮಾಡುವ ಸಮಾರ್ಯದ ಕೆರೆಯಲ್ಲಿ ತೊಳೆಯುತ್ತಿದ್ದಾಗ, ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು.
1KI 22:39 ಅಹಾಬನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನು ಕಟ್ಟಿಸಿದ ದಂತದ ಮನೆಯೂ, ಅವನು ಕಟ್ಟಿಸಿದ ಎಲ್ಲಾ ಪಟ್ಟಣಗಳೂ ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
1KI 22:40 ಅಹಾಬನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.
1KI 22:41 ಇಸ್ರಾಯೇಲರ ಅರಸ ಅಹಾಬನ ನಾಲ್ಕನೆಯ ವರ್ಷದಲ್ಲಿ ಆಸನ ಮಗ ಯೆಹೋಷಾಫಾಟನು ಯೆಹೂದ್ಯರ ಅರಸನಾದನು.
1KI 22:42 ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.
1KI 22:43 ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು. ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
1KI 22:44 ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಸಂಗಡ ಸಮಾಧಾನ ಮಾಡಿಕೊಂಡನು.
1KI 22:45 ಯೆಹೋಷಾಫಾಟನ ಇತರ ಕ್ರಿಯೆಗಳೂ, ಅವನು ತೋರಿಸಿದ ಪರಾಕ್ರಮವೂ, ಅವನು ಯುದ್ಧ ಮಾಡಿದ ವಿಧವೂ, ಯೆಹೂದದ ಅರಸುಗಳ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ.
1KI 22:46 ಅವನ ತಂದೆ ಆಸನ ಕಾಲದಲ್ಲಿ ಉಳಿದಿದ್ದ ಪುರುಷಗಾಮಿಗಳನ್ನು ಅವನು ದೇಶದಿಂದ ತೆಗೆದುಹಾಕಿದನು.
1KI 22:47 ಆ ಕಾಲದಲ್ಲಿ ಎದೋಮಿನೊಳಗೆ ಅರಸನಿರಲಿಲ್ಲ, ಅಧಿಪತಿಯು ಆಳುತ್ತಿದ್ದನು.
1KI 22:48 ಯೆಹೋಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗುವುದಕ್ಕೆ ತಾರ್ಷೀಷ್ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ. ಆ ಹಡಗುಗಳು ಎಚ್ಯೋನ್ ಗೆಬೆರಿನ ಬಳಿಯಲ್ಲಿ ಒಡೆದುಹೋದವು.
1KI 22:49 ಆಗ ಅಹಾಬನ ಮಗ ಅಹಜ್ಯನು ಯೆಹೋಷಾಫಾಟನಿಗೆ, “ನನ್ನ ಸೇವಕರು, ನಿನ್ನ ಸೇವಕರ ಸಂಗಡ ಹಡಗುಗಳಲ್ಲಿ ಹೋಗಲಿ,” ಎಂದನು. ಆದರೆ ಯೆಹೋಷಾಫಾಟನು ಸಮ್ಮತಿಸಲಿಲ್ಲ.
1KI 22:50 ಯೆಹೋಷಾಫಾಟನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಪೂರ್ವಜರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಆಗ ಅವನಿಗೆ ಬದಲಾಗಿ ಅವನ ಮಗನಾದ ಯೆಹೋರಾಮನು ಅರಸನಾದನು.
1KI 22:51 ಅಹಾಬನ ಮಗ ಅಹಜ್ಯನು ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೇಳನೆಯ ವರ್ಷದಲ್ಲಿ ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲಾರಂಭಿಸಿ, ಎರಡು ವರ್ಷ ಇಸ್ರಾಯೇಲನ್ನು ಆಳಿದನು.
1KI 22:52 ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತನ್ನ ತಂದೆಯ ಮಾರ್ಗದಲ್ಲಿಯೂ, ತನ್ನ ತಾಯಿಯ ಮಾರ್ಗದಲ್ಲಿಯೂ ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗದಲ್ಲಿಯೂ ನಡೆದನು.
1KI 22:53 ಅವನು ಬಾಳನನ್ನು ಸೇವಿಸಿ, ಅದಕ್ಕೆ ಅಡ್ಡಬಿದ್ದು, ತನ್ನ ತಂದೆಯು ಮಾಡಿದ ಎಲ್ಲಾದರ ಪ್ರಕಾರವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪ ಬರುವಂತೆ ಮಾಡಿದನು.
2KI 1:1 ಅಹಾಬನ ಮರಣದ ನಂತರ ಮೋವಾಬ್ಯರು ಇಸ್ರಾಯೇಲರ ವಿರುದ್ಧ ದಂಗೆ ಎದ್ದರು.
2KI 1:2 ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.
2KI 1:3 ಆದರೆ ಯೆಹೋವ ದೇವರ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ, ‘ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀವು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಹೋಗುತ್ತಿರುವುದೇಕೆ?
2KI 1:4 ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು.
2KI 1:5 ಸೇವಕರು ಅರಸನ ಬಳಿಗೆ ಹಿಂದಿರುಗಿ ಬಂದಾಗ, ಅವನು ಅವರಿಗೆ, “ನೀವು ಹಿಂದಿರುಗಿ ಬಂದದ್ದೇಕೆ?” ಎಂದನು.
2KI 1:6 ಅವರು ಅರಸನಿಗೆ, “ಒಬ್ಬ ಮನುಷ್ಯನು ನಮಗೆ ಎದುರಾಗಿ ಬಂದು, ‘ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿ ಹೋಗಿ, ಯೆಹೋವ ದೇವರು ಹೇಳುವುದು ಏನೆಂದರೆ: ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಜನರನ್ನು ಕಳುಹಿಸಿರುತ್ತೀ? ಇದರ ನಿಮಿತ್ತ, ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂಬುದಾಗಿ ಅವನಿಗೆ ಹೇಳಿರಿ, ಎಂದು ತಿಳಿಸಿದನು,” ಎಂದರು.
2KI 1:7 ಅರಸನು ಅವರಿಗೆ, “ನಿಮಗೆದುರಾಗಿ ಬಂದು ಈ ಮಾತುಗಳನ್ನು ನಿಮಗೆ ಹೇಳಿದ ಆ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
2KI 1:8 ಅದಕ್ಕವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದನು; ಅವನ ಸೊಂಟಕ್ಕೆ ಸುತ್ತಲೂ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಅವನು ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದು ಹೇಳಿದನು.
2KI 1:9 ಆಗ ಅರಸನು ಒಬ್ಬ ಪ್ರಧಾನನನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಎಲೀಯನ ಬಳಿಗೆ ಕಳುಹಿಸಿದನು. ಪ್ರಧಾನನು ಅವನ ಬಳಿಗೆ ಹೋದಾಗ, ಇಗೋ, ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆಗ ಅವನು ಎಲೀಯನಿಗೆ, “ದೇವರ ಮನುಷ್ಯನೇ, ‘ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
2KI 1:10 ಅದಕ್ಕೆ ಎಲೀಯನು ಪ್ರಧಾನನಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು.
2KI 1:11 ತಿರುಗಿ ಅರಸನು ಎಲೀಯನ ಬಳಿಗೆ ಐವತ್ತು ಮಂದಿಯ ಪ್ರಧಾನನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ, “ದೇವರ ಮನುಷ್ಯನೇ, ‘ಬೇಗನೆ ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
2KI 1:12 ಎಲೀಯನು ಅವರಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು.
2KI 1:13 ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ.
2KI 1:14 ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ, ಅವರ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ,” ಎಂದು ಹೇಳಿ ಅವನನ್ನು ಬೇಡಿಕೊಂಡನು.
2KI 1:15 ಆಗ ಯೆಹೋವ ದೇವರ ದೂತನು ಎಲೀಯನಿಗೆ, “ಅವನ ಸಂಗಡ ಇಳಿದು ಹೋಗು, ಅವನಿಗೆ ಭಯಪಡಬೇಡ,” ಎಂದನು. ಆದ್ದರಿಂದ ಎಲೀಯನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋದನು.
2KI 1:16 ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
2KI 1:17 ಹಾಗೆಯೇ ಅವನು ಎಲೀಯನು ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರವೇ ಸತ್ತುಹೋದನು. ಅಹಜ್ಯನಿಗೆ ಮಗನಿಲ್ಲದ್ದರಿಂದ ಯೆಹೂದದ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಎರಡನೆಯ ವರ್ಷದಲ್ಲಿ ಯೋರಾಮನು ಅವನಿಗೆ ಬದಲಾಗಿ ಅರಸನಾದನು.
2KI 1:18 ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 2:1 ಯೆಹೋವ ದೇವರು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ, ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.
2KI 2:2 ಆಗ ಎಲೀಯನು ಎಲೀಷನಿಗೆ, “ನೀನು ದಯಮಾಡಿ ಇಲ್ಲಿ ಇರು. ಯೆಹೋವ ದೇವರು ನನ್ನನ್ನು ಬೇತೇಲಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕೆ ಎಲೀಷನು, “ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.
2KI 2:3 ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಇಂದು ಯೆಹೋವ ದೇವರು ನಿನ್ನ ಯಜಮಾನನನ್ನು ನಿನ್ನಿಂದ ತೆಗೆದುಕೊಳ್ಳುವರೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ಹೌದು, ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.
2KI 2:4 ಆಗ ಎಲೀಯನು ಅವನಿಗೆ, “ಎಲೀಷನೇ, ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೆರಿಕೋವಿಗೆ ಕಳುಹಿಸುತ್ತಿದ್ದಾರೆ” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು.
2KI 2:5 ಆಗ ಯೆರಿಕೋವಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.
2KI 2:6 ಎಲೀಯನು ಅವನಿಗೆ, “ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೊರ್ದನಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರಿಬ್ಬರೂ ಮುಂದಕ್ಕೆ ನಡೆದರು.
2KI 2:7 ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನ್ ನದಿ ಬಳಿಯಲ್ಲಿ ನಿಂತರು.
2KI 2:8 ಆದರೆ ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಿಸಿಕೊಂಡು, ನೀರನ್ನು ಹೊಡೆದನು. ಆಗ ಆ ನೀರು ಈ ಕಡೆ, ಆ ಕಡೆ ವಿಭಾಗವಾದುದರಿಂದ ಅವರಿಬ್ಬರೂ ಒಣಭೂಮಿಯ ಮೇಲೆ ದಾಟಿಹೋದರು.
2KI 2:9 ಅವರು ದಾಟಿಹೋದ ತರುವಾಯ, ಎಲೀಯನು ಎಲೀಷನಿಗೆ, “ನಾನು ನಿನ್ನನ್ನು ಬಿಟ್ಟುಹೋಗುವುದಕ್ಕೆ ಮುಂಚೆ, ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು,” ಎಂದನು. ಅದಕ್ಕೆ ಎಲೀಷನು, “ನಿನ್ನ ಆತ್ಮದ ಎರಡು ಪಾಲನ್ನು ನಾನು ಬಾಧ್ಯವಾಗಿ ಹೊಂದುವಂತೆ ಮಾಡು,” ಎಂದನು.
2KI 2:10 ಅದಕ್ಕವನು, “ನೀನು ಕಠಿಣವಾದದ್ದನ್ನು ಕೇಳಿದೆ. ಆದಾಗ್ಯೂ ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ಕಂಡರೆ, ನಿನಗೆ ಅದು ದೊರಕುವುದು, ಇಲ್ಲದಿದ್ದರೆ, ದೊರಕುವುದಿಲ್ಲ,” ಎಂದನು.
2KI 2:11 ಅವರು ನಡೆಯುತ್ತಾ ಬಂದು ಮಾತನಾಡಿಕೊಂಡಿರುವಾಗ, ಬೆಂಕಿಯ ರಥವೂ ಬೆಂಕಿಯ ಕುದುರೆಗಳೂ ಅವರಿಬ್ಬರನ್ನೂ ಬೇರೆಯಾಗಿ ಮಾಡಿದವು. ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.
2KI 2:12 ಎಲೀಷನು ಅದನ್ನು ಕಂಡು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥ ಮತ್ತು ಸಾರಥಿಯಾದ್ದಾತನೇ!” ಎಂದು ಕೂಗಿದನು. ಮತ್ತೆ ಅವನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡುತುಂಡಾಗಿ ಹರಿದನು.
2KI 2:13 ಎಲೀಷನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು, ಹಿಂದಕ್ಕೆ ಹೋಗಿ, ಯೊರ್ದನ್ ನದಿ ತೀರದಲ್ಲಿ ನಿಂತನು.
2KI 2:14 ಎಲೀಯನಿಂದ ಬಿದ್ದ ಹೊದಿಕೆಯನ್ನು ತೆಗೆದುಕೊಂಡು ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವ ದೇವರು ಎಲ್ಲಿ?” ಎಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ, ಅದು ಬಲಗಡೆಗೂ ಎಡಗಡೆಗೂ ವಿಭಾಗವಾದದ್ದರಿಂದ, ಎಲೀಷನು ದಾಟಿಹೋದನು.
2KI 2:15 ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು,” ಎಂದು ಹೇಳಿ, ಎದುರುಗೊಳ್ಳಲು ಬಂದು, ಅವನ ಮುಂದೆ ನೆಲದವರೆಗೂ ಅಡ್ಡಬಿದ್ದರು.
2KI 2:16 ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು.
2KI 2:17 ಆದರೆ ಅವರು ಅವನನ್ನು ಬೇಸರಪಡುವವರೆಗೂ ಬಲವಂತ ಮಾಡಿದ್ದರಿಂದ ಅವನು, “ಕಳುಹಿಸಿರಿ,” ಎಂದನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿ ಅವನನ್ನು ಕಾಣದೆ ಹೋದರು.
2KI 2:18 ಅವನು ಯೆರಿಕೋವಿನಲ್ಲಿ ನಿಂತಿರುವಾಗ, ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಅವರಿಗೆ, “ಹೋಗಬೇಡಿರೆಂದು ನಾನು ನಿಮಗೆ ಹೇಳಲಿಲ್ಲವೋ?” ಎಂದನು.
2KI 2:19 ಆಗ ಪಟ್ಟಣದ ಮನುಷ್ಯರು ಎಲೀಷನಿಗೆ, “ಈ ಪಟ್ಟಣದ ಸ್ಥಳವು ಒಳ್ಳೆಯದಾಗಿದೆ. ನಮ್ಮ ಯಜಮಾನನೇ, ನೋಡು ನಿನಗೆ ಕಾಣುವುದು. ಆದರೆ ನೋಡು ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು,” ಎಂದರು.
2KI 2:20 ಅದಕ್ಕವನು, “ನನ್ನ ಬಳಿಗೆ ಹೊಸ ಗಡಿಗೆಯನ್ನು ತೆಗೆದುಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ,” ಎಂದನು. ಅವರು ಅವನ ಬಳಿಗೆ ತೆಗೆದುಕೊಂಡು ಬಂದರು.
2KI 2:21 ಅವನು ನೀರಿನ ಬುಗ್ಗೆಯ ಬಳಿಗೆ ಹೊರಟುಹೋಗಿ, ನೀರಿನಲ್ಲಿ ಉಪ್ಪು ಹಾಕಿ, “ ‘ಆ ನೀರನ್ನು ಶುದ್ಧಮಾಡಿದೆನು. ಇನ್ನು ಮೇಲೆ ಅದರಿಂದ ಮರಣವೂ, ಬಂಜೆತನವೂ ಆಗದಿರಲಿ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
2KI 2:22 ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನವರೆಗೂ ಶುದ್ಧವಾಗಿಯೇ ಇದೆ.
2KI 2:23 ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿರುವಾಗ, ಚಿಕ್ಕ ಹುಡುಗರು ಪಟ್ಟಣದಿಂದ ಹೊರಟುಬಂದು ಅವನನ್ನು ಹಾಸ್ಯಮಾಡಿ ಅವನಿಗೆ, “ಬೋಳು ತಲೆಯವನೇ, ಏರಿ ಹೋಗು; ಬೋಳು ತಲೆಯವನೇ, ಏರಿ ಹೋಗು,” ಎಂದರು.
2KI 2:24 ಅವನು ಹಿಂದಿರುಗಿ ಅವರನ್ನು ನೋಡಿ, ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯಿಂದ ಎರಡು ಕರಡಿಗಳು ಹೊರಟು, ಅವರಲ್ಲಿ ನಾಲ್ವತ್ತೆರಡು ಹುಡುಗರನ್ನು ಸೀಳಿಬಿಟ್ಟವು.
2KI 2:25 ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಸಮಾರ್ಯಕ್ಕೆ ಇಳಿದು ಹೋದನು.
2KI 3:1 ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರ್ಷದಲ್ಲಿ, ಅಹಾಬನ ಮಗ ಯೋರಾಮನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು.
2KI 3:2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆಯಂತೆ, ತನ್ನ ತಾಯಿಯಂತೆ ಮಾಡಲಿಲ್ಲ. ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.
2KI 3:3 ಆದರೂ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಟ್ಟು ತೊಲಗದೆ ಇದ್ದನು.
2KI 3:4 ಮೋವಾಬಿನ ಅರಸನಾದ ಮೇಷನು ಕುರಿ ಮಂದೆಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ, ಒಂದು ಲಕ್ಷ ಟಗರುಗಳ ಉಣ್ಣೆಯನ್ನೂ ಕಪ್ಪವಾಗಿ ಕೊಡುತ್ತಿದ್ದನು.
2KI 3:5 ಅಹಾಬನು ಮರಣ ಹೊಂದಿದ ತರುವಾಯ, ಮೋವಾಬಿನ ಅರಸನು ಇಸ್ರಾಯೇಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
2KI 3:6 ಆ ದಿವಸದಲ್ಲಿ ಅರಸನಾದ ಯೋರಾಮನು ಸಮಾರ್ಯದಿಂದ ಹೊರಟುಹೋಗಿ ಇಸ್ರಾಯೇಲರನ್ನು ಕೂಡಿಸಿದನು.
2KI 3:7 ಇದಲ್ಲದೆ ಅವನು ಹೋಗಿ, “ಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದನು. ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವೆಯೋ?” ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿದನು. ಅದಕ್ಕವನು, “ನಾನು ಬರುವೆನು, ನಾನು ನಿನ್ನವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳೇ,” ಎಂದನು.
2KI 3:8 ಯೋರಾಮನು, “ಯಾವ ಮಾರ್ಗವಾಗಿ ಹೋಗೋಣ?” ಎಂದು ಇವನು ಕೇಳಿದನು. ಯೆಹೋಷಾಫಾಟನು, “ಎದೋಮಿನ ಮರುಭೂಮಿಯ ಮಾರ್ಗವಾಗಿ,” ಎಂದನು.
2KI 3:9 ಹೀಗೆ ಇಸ್ರಾಯೇಲಿನ ಅರಸನು ಮತ್ತು ಯೆಹೂದದ ಅರಸನು, ಎದೋಮಿನ ಅರಸನೊಂದಿಗೆ ಹೊರಟು, ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ, ಅವರು ತಂದಿದ್ದ ಪಶುಗಳಿಗೂ ನೀರು ಇಲ್ಲದೆ ಹೋಯಿತು.
2KI 3:10 ಆಗ ಇಸ್ರಾಯೇಲಿನ ಅರಸನು, “ಅಯ್ಯೋ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡಲು ಕರೆದಿದ್ದಾರಲ್ಲಾ?” ಎಂದನು.
2KI 3:11 ಆದರೆ ಯೆಹೋಷಾಫಾಟನು ಪ್ರವಾದಿಯ ಮೂಲಕವಾಗಿ ಯೆಹೋವ ದೇವರನ್ನು ಕೇಳುವ ಹಾಗೆ, “ಇಲ್ಲಿ ಯೆಹೋವ ದೇವರ ಪ್ರವಾದಿಯು ಯಾವನೂ ಇಲ್ಲವೋ?” ಎಂದನು. ಆಗ ಇಸ್ರಾಯೇಲಿನ ಅರಸನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಎಲೀಯನ ಕೈಗಳ ಮೇಲೆ ನೀರು ಹೊಯ್ಯುತ್ತಿದ್ದ ಶಾಫಾಟನ ಮಗ ಎಲೀಷನು ಇಲ್ಲಿದ್ದಾನೆ,” ಎಂದು ಹೇಳಿದನು.
2KI 3:12 ಆಗ ಯೆಹೋಷಾಫಾಟನು, “ಅವನ ಬಳಿಯಲ್ಲಿ ಯೆಹೋವ ದೇವರ ವಾಕ್ಯ ಇದೆ,” ಎಂದನು. ಇಸ್ರಾಯೇಲಿನ ಅರಸನೂ, ಯೆಹೋಷಾಫಾಟನೂ, ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.
2KI 3:13 ಎಲೀಷನು ಇಸ್ರಾಯೇಲಿನ ಅರಸನಿಗೆ, “ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆಯ ಪ್ರವಾದಿಗಳ ಬಳಿಗೂ, ನಿನ್ನ ತಾಯಿಯ ಪ್ರವಾದಿಗಳ ಬಳಿಗೂ ಹೋಗು,” ಎಂದನು. ಇಸ್ರಾಯೇಲಿನ ಅರಸನು ಅವನಿಗೆ, “ಇಲ್ಲ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕೆ ಒಟ್ಟಾಗಿ ಕರೆದಿದ್ದಾರಲ್ಲಾ,” ಎಂದನು.
2KI 3:14 ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರ ಆಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾಫಾಟನು ನಿನ್ನ ಜೊತೆಯಲ್ಲಿ ಬಂದಿರುವುದರಿಂದ ಗೌರವಿಸುತ್ತಿದ್ದೇನೆ; ಇಲ್ಲದಿದ್ದರೆ, ನಾನು ನಿನ್ನ ಕಡೆ ಸಹ ನೋಡುತ್ತಿರಲಿಲ್ಲ.
2KI 3:15 ಆದರೆ ಈಗ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬಾ,” ಎಂದನು. ಆ ವಾದ್ಯ ಬಾರಿಸುವವನು ಬಾರಿಸಿದಾಗ, ಯೆಹೋವ ದೇವರ ಕೈ ಎಲೀಷನ ಮೇಲೆ ಬಂತು.
2KI 3:16 ಆಗ ಅವನು, “ಈ ತಗ್ಗನ್ನು ಹಳ್ಳಕೊಳ್ಳಗಳಾಗಿ ಮಾಡಿರೆಂದು ಯೆಹೋವ ದೇವರು ಹೇಳುತ್ತಾರೆ.
2KI 3:17 ಏಕೆಂದರೆ ಯೆಹೋವ ದೇವರು, ‘ನೀವು ಗಾಳಿಯನ್ನೂ, ಮಳೆಯನ್ನೂ ಕಾಣುವುದಿಲ್ಲ. ಆದರೆ ನೀವು ನಿಮ್ಮ ದನಗಳೂ, ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬುವುದು.’
2KI 3:18 ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು.
2KI 3:19 ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ನಾಶಮಾಡಿಬಿಟ್ಟು, ಉತ್ತಮವಾದ ಎಲ್ಲಾ ಮರಗಳನ್ನೂ ಬೀಳಮಾಡಿ, ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಉತ್ತಮವಾದ ಭೂಮಿಯಲ್ಲಿರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ಕೆಡಿಸುವಿರಿ,” ಎಂದನು.
2KI 3:20 ಉದಯದಲ್ಲಿ ಕಾಣಿಕೆಗಳನ್ನು ಅರ್ಪಿಸುತ್ತಿರುವಾಗ, ನೀರು ಎದೋಮಿನ ಮಾರ್ಗವಾಗಿ ಬಂದದ್ದರಿಂದ ದೇಶವು ನೀರಿನಿಂದ ತುಂಬಿಕೊಂಡಿತು.
2KI 3:21 ಅರಸರು ತಮ್ಮ ಸಂಗಡ ಯುದ್ಧಮಾಡುವುದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ, ಅವರು ಆಯುಧ ಧರಿಸತಕ್ಕ ಪ್ರಾಯಸ್ಥರು ಮೊದಲುಗೊಂಡು, ಸಮಸ್ತರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು.
2KI 3:22 ಮೋವಾಬ್ಯರು ಉದಯಕಾಲದಲ್ಲಿ ಎದ್ದು, ಆ ನೀರಿನ ಮೇಲೆ ಸೂರ್ಯ ಪ್ರಕಾಶ ಮೂಡಿದ್ದರಿಂದ ಆಚೆಯಲ್ಲಿರುವ ಆ ನೀರು ರಕ್ತದ ಹಾಗೆ ಕೆಂಪಾಗಿರುವುದನ್ನು ಕಂಡರು.
2KI 3:23 ಆಗ ಅವರು, “ಇದು ರಕ್ತವೇ. ಆ ಅರಸರು ತಮ್ಮನ್ನು ತಾವೇ ನಿಜವಾಗಿ ನಾಶಮಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ. ಈಗ ಮೋವಾಬ್ಯರೇ ಕೊಳ್ಳೆಗೆ ಬನ್ನಿರಿ,” ಎಂದು ಹೇಳಿಕೊಂಡರು.
2KI 3:24 ಅವರು ಇಸ್ರಾಯೇಲಿನ ದಂಡಿಗೆ ಬಂದಾಗ, ಇಸ್ರಾಯೇಲರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಸೋಲಿಸಿ, ಮೋವಾಬ್ಯರನ್ನು ಅವರ ದೇಶದವರೆಗೂ ಹೊಡೆಯುತ್ತಾ ಬಂದರು.
2KI 3:25 ಇದಲ್ಲದೆ ಅವರು ಪಟ್ಟಣಗಳನ್ನು ಕೆಡವಿಹಾಕಿ, ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ, ಬಾವಿಗಳನ್ನೆಲ್ಲಾ ಮುಚ್ಚಿ, ಸಮಸ್ತ ಉತ್ತಮವಾದ ಮರಗಳನ್ನು ಕಡಿದುಹಾಕಿದರು. ಕೀರ್ ಹರೆಷೆತ್ ನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನು ಸುತ್ತಿಕೊಂಡು ಹೊಡೆದುಬಿಟ್ಟರು.
2KI 3:26 ಮೋವಾಬಿನ ಅರಸನು ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಕಂಡಾಗ, ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ, ಖಡ್ಗ ಹಿಡಿಯುವ ಏಳು ನೂರು ಮಂದಿಯನ್ನು ತನ್ನ ಸಂಗಡ ತೆಗೆದುಕೊಂಡನು. ಆದರೆ ಅದು ಅವರಿಂದ ಆಗದೆ ಹೋಯಿತು.
2KI 3:27 ಆಗ ಮೋವಾಬಿನ ಅರಸನು ತನಗೆ ಬದಲಾಗಿ ಆಳುವುದಕ್ಕಿರುವ ತನ್ನ ಹಿರಿಯ ಮಗನನ್ನು ತೆಗೆದುಕೊಂಡು, ಅವನನ್ನು ಗೋಡೆಯ ಮೇಲೆ ದಹನಬಲಿಯಾಗಿ ಅರ್ಪಿಸಿದನು. ಮೋವಾಬ್ಯರು ಇಸ್ರಾಯೇಲರಿಗೆ ವಿರೋಧವಾಗಿ ರೋಷವುಳ್ಳವರಾಗಿ ಅವರನ್ನು ಬಿಟ್ಟು, ತಮ್ಮ ದೇಶಕ್ಕೆ ಹಿಂದಿರುಗಿ ಹೋದರು.
2KI 4:1 ಪ್ರವಾದಿಗಳ ಗುಂಪಿನಲ್ಲಿದ್ದ ಒಬ್ಬ ಪ್ರವಾದಿಯ ಹೆಂಡತಿ ಎಲೀಷನಿಗೆ ಕೂಗಿ, “ನಿನ್ನ ದಾಸನಾದ ನನ್ನ ಗಂಡನು ಮರಣಹೊಂದಿದನು. ನಿನ್ನ ದಾಸನು ಯೆಹೋವ ದೇವರಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ. ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸರಾಗಿ ತೆಗೆದುಕೊಳ್ಳಲು ಬಂದಿದ್ದಾನೆ,” ಎಂದಳು.
2KI 4:2 ಎಲೀಷನು ಅವಳಿಗೆ, “ನಾನು ನಿನಗೆ ಏನು ಮಾಡಬೇಕು? ಮನೆಯಲ್ಲಿ ನಿನಗೆ ಏನು ಉಂಟು? ನನಗೆ ತಿಳಿಸು,” ಎಂದನು. ಅವಳು, “ನಿನ್ನ ಸೇವಕಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪವೇ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ,” ಎಂದಳು.
2KI 4:3 ಆಗ ಅವನು, “ನೀನು ಹೋಗಿ ಹೊರಗಿರುವ ನಿನ್ನ ಎಲ್ಲಾ ನೆರೆಮನೆಯವರಿಂದ ಬರಿದಾದ ಪಾತ್ರೆಗಳನ್ನು ಬೇಕಾದಷ್ಟು ಕೇಳಿ ತೆಗೆದುಕೊಂಡು ಬಾ.
2KI 4:4 ನೀನು ಒಳಗೆ ಪ್ರವೇಶಿಸಿ, ನೀನೂ, ನಿನ್ನ ಪುತ್ರರೂ ಬಾಗಿಲು ಮುಚ್ಚಿಕೊಂಡು, ಆ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದು ತುಂಬಿದ್ದನ್ನು ಒಂದು ಕಡೆ ಇಡು,” ಎಂದನು.
2KI 4:5 ಹೀಗೆ ಅವಳು ಅವನನ್ನು ಬಿಟ್ಟು ಹೋಗಿ, ತಾನೂ, ತನ್ನ ಪುತ್ರರೂ ಬಾಗಿಲು ಮುಚ್ಚಿದರು. ಇವರು ಅವಳ ಬಳಿಗೆ ಪಾತ್ರೆಗಳನ್ನು ತೆಗೆದುಕೊಂಡು ಬಂದರು. ಅವಳು ಎಣ್ಣೆಯನ್ನು ಅವುಗಳಲ್ಲಿ ಹೊಯ್ದಳು.
2KI 4:6 ಆ ಪಾತ್ರೆಗಳು ತುಂಬಿದ ತರುವಾಯ ಅವಳು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. ಮಗನು ಅವಳಿಗೆ, “ಇನ್ನೊಂದು ಪಾತ್ರೆ ಇಲ್ಲ,” ಎಂದನು. ಆಗ ಎಣ್ಣೆಯು ನಿಂತುಹೋಯಿತು.
2KI 4:7 ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು, “ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ, ಮಿಕ್ಕದ್ದರಿಂದ ನೀನೂ, ನಿನ್ನ ಮಕ್ಕಳು ಜೀವನ ಮಾಡಿರಿ,” ಎಂದನು.
2KI 4:8 ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬಳು ಶ್ರೀಮಂತ ಸ್ತ್ರೀಯು ಇದ್ದಳು. ಅವಳು ಅವನನ್ನು ಊಟ ಮಾಡಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ, ಅಲ್ಲಿ ಊಟ ಮಾಡಲು ಹೋಗುತ್ತಿದ್ದನು.
2KI 4:9 ಆದ್ದರಿಂದ ಅವಳು ತನ್ನ ಗಂಡನಿಗೆ, “ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದುಹೋಗುವ ಇವನು ದೇವರ ಪರಿಶುದ್ಧ ಮನುಷ್ಯನಾಗಿರುತ್ತಾನೆಂದು ನನಗೆ ಗೊತ್ತಾಯಿತು.
2KI 4:10 ನಾವು ಮಾಳಿಗೆಯ ಮೇಲೆ ಒಂದು ಚಿಕ್ಕ ಕೊಠಡಿಯನ್ನು ಕಟ್ಟಿಸಿ, ಅದರಲ್ಲಿ ಅವನಿಗೋಸ್ಕರ ಮಂಚವನ್ನೂ, ಮೇಜನ್ನೂ, ಕುರ್ಚಿಯನ್ನೂ, ದೀಪವನ್ನೂ ಇಡೋಣ. ಅವನು ನಮ್ಮ ಬಳಿಗೆ ಬರುವಾಗ ಅಲ್ಲಿ ಇರಲಿ,” ಎಂದಳು.
2KI 4:11 ಒಂದು ದಿವಸ ಎಲೀಷನು ಅಲ್ಲಿಗೆ ಬಂದು, ಆ ಕೊಠಡಿಯಲ್ಲಿ ಪ್ರವೇಶಿಸಿ ಮಲಗಿದನು.
2KI 4:12 ಆಗ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೀನು ಶೂನೇಮ್ಯಳನ್ನು ಕರೆ,” ಎಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಎಲೀಷನ ಮುಂದೆ ಬಂದು ನಿಂತಳು.
2KI 4:13 ಅವನು ಗೇಹಜಿಗೆ, “ಇಗೋ, ನೀನು ಕಷ್ಟಪಟ್ಟು ನಮಗೋಸ್ಕರ ಉಪಕಾರಮಾಡಿದೆ. ನಾನು ನಿನಗೆ ಮಾಡಬೇಕಾದದ್ದೇನು? ನಿನಗೋಸ್ಕರ ಅರಸನ ಸಂಗಡಲಾದರೂ, ಸೈನ್ಯಾಧಿಪತಿಯ ಸಂಗಡಲಾದರೂ ಮಾತನಾಡಬೇಕೋ ಎಂದು ಆಕೆಗೆ ಕೇಳು,” ಎಂದನು. ಅದಕ್ಕವಳು, “ನಾನು ನನ್ನ ಜನರ ಮಧ್ಯದಲ್ಲಿ ಸುಖವಾಗಿದ್ದೇನೆ,” ಎಂದಳು.
2KI 4:14 ಎಲೀಷನು ಗೇಹಜಿಗೆ, “ಅವಳಿಗೋಸ್ಕರ ಮಾಡಬೇಕಾದದ್ದೇನು?” ಎಂದನು. ಅದಕ್ಕೆ ಗೇಹಜಿಯು, “ಅವಳಿಗೆ ಮಕ್ಕಳಿಲ್ಲ. ಅವಳ ಗಂಡನು ವೃದ್ಧನಾಗಿದ್ದಾನೆ,” ಎಂದನು.
2KI 4:15 ಪ್ರವಾದಿಯು, “ಅವಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದಾಗ ಅವಳು ಬಾಗಿಲಲ್ಲೇ ನಿಂತಳು.
2KI 4:16 ಆಗ ಅವನು, “ಮುಂದಿನ ವರ್ಷ ಈ ಸಮಯದಲ್ಲಿ ನಿನ್ನ ಕೈಯಲ್ಲಿ ಒಬ್ಬ ಮಗನನ್ನು ಎತ್ತಿಕೊಂಡಿರುವೆ,” ಎಂದನು. ಅದಕ್ಕವಳು, “ಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಿಗೆ ನೀನು ಸುಳ್ಳು ಹೇಳಬೇಡ,” ಎಂದಳು.
2KI 4:17 ಆದರೆ, ಆ ಸ್ತ್ರೀಯು ಗರ್ಭಧರಿಸಿ, ಎಲೀಷನು ಹೇಳಿದ ಪ್ರಕಾರ ಮುಂದಿನ ವರ್ಷದ ಅದೇ ಸಮಯದಲ್ಲಿ ಮಗನನ್ನು ಹೆತ್ತಳು.
2KI 4:18 ಆ ಮಗುವು ಬೆಳೆದಾಗ ಒಂದು ದಿವಸ, ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು.
2KI 4:19 ಆಗ ಅವನು ತನ್ನ ತಂದೆಗೆ, “ನನ್ನ ತಲೆ, ನನ್ನ ತಲೆ,” ಎಂದನು. ತಂದೆಯು ತನ್ನ ಸೇವಕನಿಗೆ, “ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು,” ಎಂದನು.
2KI 4:20 ಸೇವಕನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದವರೆಗೂ ಅವಳ ತೊಡೆಯ ಮೇಲೆ ಇದ್ದು ಅನಂತರ ಮರಣಹೊಂದಿದನು.
2KI 4:21 ಆಗ ಅವಳು ಏರಿಹೋಗಿ, ಅವನನ್ನು ದೇವರ ಮನುಷ್ಯನ ಮಂಚದ ಮೇಲೆ ಮಲಗಿಸಿ ಬಾಗಿಲು ಮುಚ್ಚಿದಳು.
2KI 4:22 ತನ್ನ ಗಂಡನನ್ನು ಕರೆದು, “ನಾನು ದೇವರ ಮನುಷ್ಯನ ಬಳಿಗೆ ಬೇಗನೆ ಹೋಗಿ ತಿರುಗಿ ಬರುವ ಹಾಗೆ, ನೀನು ದಯಮಾಡಿ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು,” ಎಂದಳು.
2KI 4:23 ಅದಕ್ಕೆ ಅವನು, “ಇದು ಅಮಾವಾಸ್ಯೆ ಅಲ್ಲ, ಸಬ್ಬತ್ ದಿನವೂ ಅಲ್ಲ. ನೀನು ಏಕೆ ಈ ಹೊತ್ತು ಅವನ ಬಳಿಗೆ ಹೋಗುತ್ತೀ?” ಎಂದನು. ಅದಕ್ಕವಳು, “ಅಡ್ಡಿಯೇನಿಲ್ಲ,” ಎಂದಳು.
2KI 4:24 ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ, “ನಡೆಸಿಕೊಂಡು ಹೋಗು. ನಾನು ನಿನಗೆ ಹೇಳುವವರೆಗೂ, ನನಗೋಸ್ಕರ ಸವಾರಿಯನ್ನು ನಿಧಾನಗೊಳಿಸಬೇಡ,” ಎಂದು ಹೇಳಿ,
2KI 4:25 ಕರ್ಮೆಲ್ ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು. ಆಗ ದೇವರ ಮನುಷ್ಯನು ದೂರದಿಂದ ಅವಳು ಬರುವುದನ್ನು ಕಂಡನು. ಅವನು ತನ್ನ ಸೇವಕನಾದ ಗೇಹಜಿಗೆ, “ಇಗೋ, ಆ ಶೂನೇಮ್ಯಳು ಬರುತ್ತಿದ್ದಾಳೆ.
2KI 4:26 ನೀನು ಅವಳನ್ನು ಎದುರುಗೊಳ್ಳಲು ಓಡಿಹೋಗಿ, ಅವಳಿಗೆ, ‘ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ? ಎಂದು ಕೇಳು,’ ” ಎಂದನು. ಅವಳು, “ಕ್ಷೇಮ” ಎಂದಳು.
2KI 4:27 ಅವಳು ಬೆಟ್ಟಕ್ಕೆ ದೇವರ ಮನುಷ್ಯನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಿ ಹಾಕಲು ಗೇಹಜಿಯು ಹತ್ತಿರ ಬಂದದ್ದರಿಂದ ದೇವರ ಮನುಷ್ಯನು, “ಅವಳನ್ನು ಬಿಡು. ಏಕೆಂದರೆ ಅವಳ ಹೃದಯವು ಬಹಳ ನೋವಿನಿಂದ ತುಂಬಿದೆ. ಯೆಹೋವ ದೇವರು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾರೆ,” ಎಂದನು.
2KI 4:28 ಆಗ ಅವಳು, “ನಾನು ನನ್ನ ಒಡೆಯನಿಂದ ಪುತ್ರನನ್ನು ಕೇಳಿಕೊಂಡೆನೋ? ನನ್ನನ್ನು ಮೋಸಗೊಳಿಸಬೇಡವೆಂದು ನಾನು ಹೇಳಲಿಲ್ಲವೋ?” ಎಂದಳು.
2KI 4:29 ಎಲೀಷನು ಗೇಹಜಿಗೆ, “ನೀನು ನಿನ್ನ ಸಡಿಲವಾದ ಉಡುಪನ್ನು ನಡುವಿಗೆ ಕಟ್ಟಿಕೊಂಡು, ನನ್ನ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು ಹೋಗು. ನಿನಗೆ ಯಾವನಾದರೂ ಎದುರುಗೊಂಡರೆ, ಅವನನ್ನು ವಂದಿಸಬೇಡ; ಯಾವನಾದರೂ ನಿನ್ನನ್ನು ವಂದಿಸಿದರೆ, ಅವನಿಗೆ ಉತ್ತರ ಹೇಳಬೇಡ; ನನ್ನ ಕೋಲನ್ನು ಆ ಹುಡುಗನ ಮುಖದ ಮೇಲೆ ಹಾಕು,” ಎಂದನು.
2KI 4:30 ಆದರೆ ಹುಡುಗನ ತಾಯಿಯು, “ಯೆಹೋವ ದೇವರ ಜೀವದಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದಳು. ಆಗ ಅವನೆದ್ದು ಅವಳ ಹಿಂದೆ ಹೋದನು.
2KI 4:31 ಗೇಹಜಿಯು ಅವರಿಗೆ ಮುಂದಾಗಿ ಹೋಗಿ, ಆ ಕೋಲನ್ನು ಆ ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ, ಆಲೈಸುವುದಾದರೂ ಇರಲಿಲ್ಲ. ಆದ್ದರಿಂದ ಗೇಹಜಿಯು ಎಲೀಷನನ್ನು ಎದುರುಗೊಳ್ಳಲು ತಿರುಗಿ ಹೋಗಿ ಅವನಿಗೆ, “ಹುಡುಗನು ಎಚ್ಚರವಾಗಲಿಲ್ಲ,” ಎಂದನು.
2KI 4:32 ಎಲೀಷನು ಆ ಮನೆಯನ್ನು ಮುಟ್ಟಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಇಟ್ಟಿರುವುದನ್ನು ಕಂಡನು.
2KI 4:33 ಅವನು ಒಳಗೆ ಪ್ರವೇಶಿಸಿ, ಯಾರೂ ಒಳಗೆ ಬಾರದಂತೆ ಬಾಗಿಲು ಮುಚ್ಚಿಕೊಂಡು, ಯೆಹೋವ ದೇವರನ್ನು ಪ್ರಾರ್ಥಿಸಿದನು.
2KI 4:34 ಅವನು ಮಗುವಿನ ಮೇಲೆ ಮಲಗಿಕೊಂಡು, ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ, ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ, ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನ ಮೇಲೆ ಬೋರಲು ಬಿದ್ದುದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು.
2KI 4:35 ಅವನು ಆಮೇಲೆ ಎದ್ದು ಕೋಣೆಯಲ್ಲಿ ಸ್ವಲ್ಪ ಅತ್ತಿತ್ತ ತಿರುಗಾಡಿ, ಪುನಃ ಅವನ ಮೇಲೆ ಬೋರಲು ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ಕಣ್ಣುಗಳನ್ನು ತೆರೆದನು.
2KI 4:36 ಆಗ ಅವನು ಗೇಹಜಿಯನ್ನು ಕರೆದು ಅವನಿಗೆ, “ಶೂನೇಮ್ಯಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದನು. ಅವಳು ಎಲೀಷನ ಬಳಿಗೆ ಬಂದಾಗ ಅವನು, “ನಿನ್ನ ಪುತ್ರನನ್ನು ತೆಗೆದುಕೊಂಡು ಹೋಗು,” ಎಂದನು.
2KI 4:37 ಆಗ ಅವಳು ಬಂದು, ಅವನ ಪಾದಗಳ ಮೇಲೆ ಬಿದ್ದು, ನೆಲಕ್ಕೆ ಬಗ್ಗಿ ತನ್ನ ಮಗನನ್ನು ಎತ್ತಿಕೊಂಡು ಹೊರಟು ಹೋದಳು.
2KI 4:38 ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ, ದೇಶದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಂಡಳಿ ಅವನ ಮುಂದೆ ಕುಳಿತಿರುವಾಗ, ಅವನು ತನ್ನ ಸೇವಕನಿಗೆ, “ನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು, ಈ ಜನರಿಗೋಸ್ಕರ ಅಡಿಗೆ ಮಾಡು,” ಎಂದನು.
2KI 4:39 ಅವರಲ್ಲಿ ಒಬ್ಬನು ಪಲ್ಯವನ್ನು ತರಲು ಅಡವಿಗೆ ಹೋಗಿ, ಅಡವಿಯ ಬಳ್ಳಿಯನ್ನು ಕಂಡು, ಅಡವಿಯ ಕಾಯಿಗಳನ್ನು ತನ್ನ ಉಡಿಯ ತುಂಬ ಕೂಡಿಸಿಕೊಂಡು ಬಂದು, ಅವುಗಳನ್ನು ಕೊಯ್ದು ಗಡಿಗೆಯಲ್ಲಿ ಹಾಕಿದನು. ಅವು ಏನೆಂದು ಯಾರಿಗೂ ತಿಳಿದಿರಲಿಲ್ಲ.
2KI 4:40 ಜನರಿಗೆ ಅದನ್ನು ತಿನ್ನುವುದಕ್ಕೆ ಬಡಿಸಿದರು. ಅವರು ಆಹಾರವನ್ನು ತಿನ್ನುತ್ತಿರುವಾಗ, “ದೇವರ ಮನುಷ್ಯನೇ, ಗಡಿಗೆಯಲ್ಲಿ ಮರಣ,” ಎಂದು ಕೂಗಿದರು. ಅವರು ಅದರಲ್ಲಿದ್ದದ್ದನ್ನು ತಿನ್ನಲಾರದೆ ಹೋದರು.
2KI 4:41 ಆಗ ಎಲೀಷನು ಹಿಟ್ಟನ್ನು ತೆಗೆದುಕೊಂಡು ಬರಲು ಹೇಳಿ, ಅದನ್ನು ಗಡಿಗೆಯಲ್ಲಿ ಹಾಕಿ, “ಈಗ ಇದನ್ನು ಜನರಿಗೆ ಬಡಿಸಿರಿ,” ಎಂದನು. ಆಗ ಆ ಗಡಿಗೆಯಲ್ಲಿನ ವಿಷವೆಲ್ಲಾ ಹೋಗಿತ್ತು.
2KI 4:42 ಬಾಳ್ ಶಾಲಿಷಾ ಊರಿನಿಂದ ಒಬ್ಬನು ದೇವರ ಮನುಷ್ಯನಿಗೆ ಪ್ರಥಮ ಫಲವಾದ ಜವೆಗೋಧಿಯ ಇಪ್ಪತ್ತು ರೊಟ್ಟಿಗಳನ್ನೂ ಒಂದು ಚೀಲ ತುಂಬಿದ ತೆನೆಗಳನ್ನೂ ತೆಗೆದುಕೊಂಡು ಬಂದನು. ಆಗ ಎಲೀಷನು, “ಜನರಿಗೆ ಕೊಡು ಅವರು ತಿನ್ನಲಿ,” ಎಂದನು.
2KI 4:43 ಅವನ ಸೇವಕನು, “ಇದನ್ನು ನೂರು ಮಂದಿಗೆ ಬಡಿಸುವುದು ಹೇಗೆ?” ಎಂದನು. “ ‘ತಿನ್ನಲು ಜನರಿಗೆ ನೀಡು, ಅವರು ತಿಂದು ಅನಂತರ ಉಳಿಯುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಎಲೀಷನು ಉತ್ತರಕೊಟ್ಟನು.
2KI 4:44 ಹಾಗೆಯೇ ಸೇವಕನು ಬಡಿಸಿದನು. ಯೆಹೋವ ದೇವರು ನುಡಿದಂತೆಯೇ ಜನರು ಊಟಮಾಡಿ, ತೃಪ್ತರಾಗಿ ಇನ್ನೂ ಉಳಿಯಿತು.
2KI 5:1 ಅರಾಮಿನ ಅರಸನ ಸೈನ್ಯಾಧಿಪತಿ ನಾಮಾನನು ತನ್ನ ಯಜಮಾನನ ಮುಂದೆ ಮಹಾಪುರುಷನಾಗಿಯೂ, ಘನವುಳ್ಳವನಾಗಿಯೂ ಇದ್ದನು. ಏಕೆಂದರೆ ಅವನಿಂದ ಯೆಹೋವ ದೇವರು ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದರು. ಇದಲ್ಲದೆ ಅವನು ಪರಾಕ್ರಮಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾಗಿದ್ದನು.
2KI 5:2 ಅರಾಮಿನವರು ಗುಂಪುಗುಂಪಾಗಿ ಹೊರಟು, ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡಿದುಕೊಂಡು ಬಂದರು. ಅವಳು ನಾಮಾನನ ಹೆಂಡತಿಗೆ ಸೇವಕಿಯಾದಳು.
2KI 5:3 ಅವಳು ತನ್ನ ಯಜಮಾನನಿಗೆ, “ನನ್ನ ಧಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ, ಅವನು ಧಣಿಯ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು,” ಎಂದಳು.
2KI 5:4 ನಾಮಾನನು ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು.
2KI 5:5 ಅರಾಮ್ಯರ ಅರಸನು, “ನೀನು ಹೋಗಿ ಬಾ. ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು,” ಎಂದನು. ಅದರಂತೆ ನಾಮಾನನು 340 ಕಿಲೋಗ್ರಾಂ ಬೆಳ್ಳಿ, 64 ಕಿಲೋಗ್ರಾಂ ಬಂಗಾರ, ಹತ್ತು ಜೊತೆ ಬಟ್ಟೆಗಳನ್ನೂ ತೆಗೆದುಕೊಂಡು ಹೋದನು.
2KI 5:6 ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದುಕೊಂಡು ಬಂದನು. ಅದರಲ್ಲಿ, “ಈ ಪತ್ರ ನಿನಗೆ ಸೇರುವಾಗ, ನಿನ್ನ ಸೇವಕನಾದ ನಾಮಾನನ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ನಿನ್ನ ಬಳಿಗೆ ಕಳುಹಿಸಿದ್ದೇನೆ,” ಎಂದು ಬರೆದಿತ್ತು.
2KI 5:7 ಇಸ್ರಾಯೇಲಿನ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು, “ಕೊಲ್ಲುವುದಕ್ಕೂ, ಬದುಕಿಸುವುದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ವಾಸಿ ಮಾಡುವುದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧವಾಗಿ ಜಗಳಕ್ಕೆ ಕಾರಣ ಹುಡುಕುವುದನ್ನು ನೀವೇ ನೋಡಿರಿ,” ಎಂದನು.
2KI 5:8 ಇಸ್ರಾಯೇಲಿನ ಅರಸನು ತನ್ನ ವಸ್ತ್ರಗಳನ್ನು ಹರಿದುಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ, “ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ನಾಮಾನನು ತಿಳಿದುಕೊಳ್ಳುವಂತೆ ಅವನು ನನ್ನ ಬಳಿಗೆ ಬರಲಿ,” ಎಂದು ಅರಸನಿಗೆ ಹೇಳಿ ಕಳುಹಿಸಿದನು.
2KI 5:9 ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗಡ, ತನ್ನ ರಥದ ಸಂಗಡ ಬಂದು, ಎಲೀಷನ ಮನೆಯ ಬಾಗಿಲ ಬಳಿಯಲ್ಲಿ ನಿಂತನು.
2KI 5:10 ಆಗ ಎಲೀಷನು, “ನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನಮಾಡು, ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪಡುವುದು, ನೀನು ಶುದ್ಧನಾಗುವೆ,” ಎಂದು ಹೇಳಲು, ಅವನ ಬಳಿಗೆ ಸೇವಕನನ್ನು ಕಳುಹಿಸಿದನು.
2KI 5:11 ಆಗ ನಾಮಾನನು ಕೋಪಗೊಂಡು ಹೊರಟುಹೋಗಿ, “ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು, ತನ್ನ ದೇವರಾದ ಯೆಹೋವ ದೇವರ ಹೆಸರನ್ನು ಕರೆದು, ನನ್ನ ಚರ್ಮದ ಮೇಲೆ ತನ್ನ ಕೈಯನ್ನಾಡಿಸಿ, ಕುಷ್ಠರೋಗವನ್ನು ವಾಸಿಮಾಡುವನೆಂದು, ನಾನು ನೆನಸಿದೆ.
2KI 5:12 ನಾನು ಹೊಳೆಗಳಲ್ಲಿ ಸ್ನಾನಮಾಡಿ ಶುದ್ಧನಾಗುವಂತೆ ದಮಸ್ಕದ ನದಿಗಳಾದ ಅಬಾನಾವೂ, ಪಾರ್ಪರೂ ಇಸ್ರಾಯೇಲಿನ ಸಮಸ್ತ ನೀರುಗಳಿಗಿಂತ ಉತ್ತಮವಾಗಿಲ್ಲವೋ?” ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು.
2KI 5:13 ಆದರೆ ನಾಮಾನನ ಸೇವಕನು ಅವನ ಬಳಿಗೆ ಬಂದು, ಅವನ ಸಂಗಡ ಮಾತನಾಡಿ, “ನನ್ನ ತಂದೆಯೇ, ಪ್ರವಾದಿಯು ದೊಡ್ಡ ಕಾರ್ಯವನ್ನು ನಿನಗೆ ಹೇಳಿದ್ದರೆ, ನೀನು ಮಾಡುತ್ತಿದ್ದಿಲ್ಲವೋ? ಅವನು ನಿನಗೆ, ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರಲ್ಲಿ ಅಡ್ಡಿ ಏನು?” ಎಂದನು.
2KI 5:14 ಆಗ ಅವನು ಇಳಿದು ಹೋಗಿ ದೇವರ ಮನುಷ್ಯನ ಮಾತಿನ ಪ್ರಕಾರ ಯೊರ್ದನಿನಲ್ಲಿ ಏಳು ಸಾರಿ ಮುಳುಗಿದನು. ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು, ಅವನು ಶುದ್ಧನಾದನು.
2KI 5:15 ಆಗ ನಾಮಾನನೂ, ಅವನ ಸಮಸ್ತ ಸೈನ್ಯವೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ಬಂದು ನಿಂತು, “ಇಸ್ರಾಯೇಲಿನಲ್ಲಿರುವ ದೇವರ ಹೊರತು ಭೂಮಿಯಲ್ಲೆಲ್ಲೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು. ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತೆಗೆದುಕೋ,” ಎಂದನು.
2KI 5:16 ಆದರೆ ಪ್ರವಾದಿಯು, “ನಾನು ಯಾರ ಮುಂದೆ ನಿಲ್ಲುತ್ತೇನೋ ಆ ಯೆಹೋವ ದೇವರ ಜೀವದಾಣೆ, ನಾನು ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ಅವನು ತೆಗೆದುಕೊಳ್ಳಬೇಕೆಂದು ಬಲವಂತ ಮಾಡಿದರೂ, “ಬೇಡ,” ಎಂದನು.
2KI 5:17 ನಾಮಾನನು, “ಹಾಗಾದರೆ ಎರಡು ಹೇಸರಗತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ಕೊಡುವಂತೆ ಮಾಡು. ಏಕೆಂದರೆ ನಿನ್ನ ಸೇವಕನು ಇನ್ನು ಮೇಲೆ ಯೆಹೋವ ದೇವರಿಗೆ ಹೊರತಾಗಿ ಅನ್ಯ ದೇವರುಗಳಿಗೆ ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸನು.
2KI 5:18 ಈ ಕಾರ್ಯವನ್ನು ಯೆಹೋವ ದೇವರು ನಿನ್ನ ಸೇವಕನಿಗೆ ಮನ್ನಿಸಲಿ. ಏನೆಂದರೆ, ನನ್ನ ಯಜಮಾನನು ಅಡ್ಡ ಬೀಳುವುದಕ್ಕೆ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ, ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ, ರಿಮ್ಮೋನನ ದೇವಸ್ಥಾನದಲ್ಲಿ ನಾನು ಬಾಗಿದರೆ, ಯೆಹೋವ ದೇವರು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ,” ಎಂದನು.
2KI 5:19 ಅದಕ್ಕೆ ಎಲೀಷನು, “ಸಮಾಧಾನದಿಂದ ಹೋಗು,” ಎಂದನು. ನಾಮಾನನು ಸ್ವಲ್ಪ ದೂರ ಹೋದನು.
2KI 5:20 ದೇವರ ಮನುಷ್ಯನಾದ ಎಲೀಷನ ಸೇವಕನಾಗಿರುವ ಗೇಹಜಿಯು, “ನನ್ನ ಯಜಮಾನನು ಈ ಅರಾಮ್ಯನಾದ ನಾಮಾನನು ತೆಗೆದುಕೊಂಡು ಬಂದದ್ದನ್ನು ಅವನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಯೆಹೋವ ದೇವರ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ, ಅವನ ಕೈಯಿಂದ ಏನಾದರೂ ತೆಗೆದುಕೊಳ್ಳುವೆನು,” ಅಂದುಕೊಂಡನು.
2KI 5:21 ಅದರಂತೆ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ಕಂಡಾಗ, ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ, “ಎಲ್ಲಾ ಕ್ಷೇಮವೋ?” ಎಂದನು.
2KI 5:22 ಅದಕ್ಕೆ ಗೇಹಜಿಯು, “ಎಲ್ಲಾ ಕ್ಷೇಮ. ಪ್ರವಾದಿಗಳ ಮಂಡಳಿಯಲ್ಲಿಯ ಇಬ್ಬರು ಯುವಕರು ಎಫ್ರಾಯೀಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ. ನೀನು ದಯಮಾಡಿ ಅವರಿಗೆ ಮೂರು ಸಾವಿರ ಬೆಳ್ಳಿ ನಾಣ್ಯಗಳನ್ನೂ, ಎರಡು ಜೊತೆ ಬಟ್ಟೆಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ,” ಎಂದನು.
2KI 5:23 ಆಗ ನಾಮಾನನು, “ನೀನು ದಯಮಾಡಿ ಆರು ಸಾವಿರ ನಾಣ್ಯಗಳನ್ನಾದರೂ ತೆಗೆದುಕೋ,” ಎಂದು ಹೇಳಿ ಗೇಹಜಿಯನ್ನು ಬಲವಂತ ಮಾಡಿದನು. ಹಾಗೆಯೇ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಎರಡು ಚೀಲಗಳಲ್ಲಿ ಕಟ್ಟಿಸಿ, ಅದರ ಸಂಗಡ ಎರಡು ಜೊತೆ ಬಟ್ಟೆಗಳನ್ನು ಕೊಟ್ಟು, ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು. ಅವರು ಗೇಹಜಿಯ ಮುಂದೆ ಹೊತ್ತುಕೊಂಡು ಹೋದರು.
2KI 5:24 ಆದರೆ ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವರ ಕೈಯಿಂದ ಅವುಗಳನ್ನು ತೆಗೆದುಕೊಂಡು ಮನೆಯಲ್ಲಿಟ್ಟು, ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೊರಟು ಹೋದರು.
2KI 5:25 ಆಗ ಗೇಹಜಿಯು ಒಳಗೆ ಪ್ರವೇಶಿಸಿ, ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದೆ?” ಎಂದನು. ಅದಕ್ಕೆ ಗೇಹಜಿಯು, “ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ,” ಎಂದನು.
2KI 5:26 ಆದರೆ ಎಲೀಷನು ಅವನಿಗೆ, “ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ, ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ಹಣವನ್ನೂ, ವಸ್ತ್ರಗಳನ್ನೂ, ದ್ರವ್ಯವನ್ನೂ, ಹಿಪ್ಪೆಯ ತೋಪುಗಳನ್ನೂ, ದ್ರಾಕ್ಷಿಯ ತೋಟಗಳನ್ನೂ, ಕುರಿದನಗಳನ್ನೂ, ದಾಸದಾಸಿಯರನ್ನೂ ಪಡೆದುಕೊಳ್ಳುವುದಕ್ಕೆ ಇದು ಸಮಯವೋ?
2KI 5:27 ನಾಮಾನನ ಕುಷ್ಠರೋಗವು ನಿನಗೂ, ನಿನ್ನ ಸಂತಾನಕ್ಕೂ ನಿತ್ಯವಾಗಿ ಇರುವುದು,” ಎಂದನು. ಆಗ ಗೇಹಜಿಯು ಹಿಮದಂತೆ ಬಿಳುಪಾಗಿ, ಕುಷ್ಠರೋಗಿ ಆಗಿ ಎಲೀಷನಿಂದ ಹೊರಟುಹೋದನು.
2KI 6:1 ಪ್ರವಾದಿಗಳ ಮಂಡಳಿಯು ಎಲೀಷನಿಗೆ, “ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ. ಅಪ್ಪಣೆಕೊಡು,
2KI 6:2 ನಾವು ಯೊರ್ದನಿನವರೆಗೂ ಹೋಗಿ, ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತೆಗೆದುಕೊಂಡು ಬಂದು, ವಾಸವಾಗಿರುವುದಕ್ಕೆ ನಮಗೋಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು,” ಎಂದರು. ಅವನು, “ಹೋಗಿರಿ,” ಎಂದನು.
2KI 6:3 ಆಗ ಅವರಲ್ಲಿ ಒಬ್ಬನು ಎಲೀಷನಿಗೆ, “ನೀವು ದಯಮಾಡಿ ನಿಮ್ಮ ಸೇವಕರ ಸಂಗಡ ಬರುವಿರಾ?” ಎಂದನು. ಅದಕ್ಕವನು, “ನಾನು ಬರುತ್ತೇನೆ,” ಎಂದನು.
2KI 6:4 ಹಾಗೆಯೇ ಅವನು ಅವರ ಸಂಗಡ ಹೋದನು. ಅವರು ಯೊರ್ದನ್ ನದಿಯ ಕಡೆಗೆ ಬಂದು ಅಲ್ಲಿ ಮರಗಳನ್ನು ಕಡಿದರು.
2KI 6:5 ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು.
2KI 6:6 ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು.
2KI 6:7 ಪ್ರವಾದಿಯು, “ನೀನು ತೆಗೆದುಕೋ,” ಎಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.
2KI 6:8 ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧ ಮಾಡುತ್ತಿದ್ದನು. ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು.
2KI 6:9 ಆಗ ದೇವರ ಮನುಷ್ಯನು ಇಸ್ರಾಯೇಲಿನ ಅರಸನಿಗೆ, “ಅಂಥಾ ಸ್ಥಳವನ್ನು ಹಾದುಹೋಗದೆ ಜಾಗ್ರತೆಯಾಗಿ ಇರು. ಏಕೆಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆ,” ಎಂದು ಹೇಳಿ ಕಳುಹಿಸಿದನು.
2KI 6:10 ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ, ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿ ಕಳುಹಿಸಿ, ತನ್ನ ಸೈನ್ಯವನ್ನು ಕರೆಯಿಸಿಕೊಂಡನು. ಹೀಗೆ ಅವನು ಹಲವು ಸಾರಿ ತಪ್ಪಿಸಿಕೊಂಡನು.
2KI 6:11 ಆದ್ದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು, ಅವನು ತನ್ನ ಸೇವಕರನ್ನು ಕರೆದು ಅವರಿಗೆ, “ನಮ್ಮಲ್ಲಿ ಇಸ್ರಾಯೇಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವುದಿಲ್ಲವೋ?” ಎಂದನು.
2KI 6:12 ಅವನ ಸೇವಕರಲ್ಲಿ ಒಬ್ಬನು, “ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ನಿನ್ನ ಮಲಗುವ ಕೋಣೆಯಲ್ಲಿ ನೀನು ಹೇಳುವ ಮಾತುಗಳನ್ನು ಸಹ ಇಸ್ರಾಯೇಲಿನ ಅರಸನಿಗೆ ಹೇಳುತ್ತಾನೆ,” ಎಂದನು.
2KI 6:13 ಆಗ ಅರಾಮ್ಯರ ಅರಸನು, “ನಾನು ಅವನನ್ನು ಹಿಡಿಯುವ ಹಾಗೆ ನೀವು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ,” ಎಂದನು. ಅವನು ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.
2KI 6:14 ಆದ್ದರಿಂದ ಅರಾಮ್ಯರ ಅರಸನು ಅಲ್ಲಿಗೆ ಕುದುರೆಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
2KI 6:15 ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ, ಕುದುರೆಗಳೂ ರಥಗಳೂ ಉಳ್ಳ ಸೈನ್ಯ ಪಟ್ಟಣವನ್ನು ಸುತ್ತಿಕೊಂಡಿರುವುದನ್ನು ಕಂಡು ಎಲೀಷನಿಗೆ, “ಅಯ್ಯೋ! ನನ್ನ ಯಜಮಾನನೇ, ನಾವು ಏನು ಮಾಡುವುದು?” ಎಂದನು.
2KI 6:16 ಆದರೆ ಪ್ರವಾದಿಯು, “ಭಯಪಡಬೇಡ. ಅವರ ಸಂಗಡ ಇರುವವರಿಗಿಂತ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದನು.
2KI 6:17 ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು.
2KI 6:18 ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡಿರಿ,” ಎಂದು ಪ್ರಾರ್ಥಿಸಿದನು. ಎಲೀಷನ ಮಾತಿನ ಹಾಗೆಯೇ ದೇವರು ಅವರನ್ನು ಕುರುಡರನ್ನಾಗಿ ಮಾಡಿದರು.
2KI 6:19 ಆಗ ಎಲೀಷನು ಅವರಿಗೆ, “ಇದು ಆ ಮಾರ್ಗವಲ್ಲ, ಇದು ಆ ಪಟ್ಟಣವಲ್ಲ, ನನ್ನ ಹಿಂದೆ ಬನ್ನಿರಿ. ನೀವು ಹುಡುಕುವ ಮನುಷ್ಯರ ಬಳಿಗೆ ನಿಮ್ಮನ್ನು ಬರಮಾಡುವೆನು,” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ನಡೆಸಿದನು.
2KI 6:20 ಅವರು ಸಮಾರ್ಯಕ್ಕೆ ಬಂದಾಗ, ಎಲೀಷನು, “ಯೆಹೋವ ದೇವರೇ, ಇವರು ಕಾಣುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದನು. ಆಗ ಯೆಹೋವ ದೇವರು ಅವರ ಕಣ್ಣುಗಳನ್ನು ತೆರೆದರು. ಅವರು ನೋಡಿದಾಗ ಸಮಾರ್ಯದ ಮಧ್ಯದಲ್ಲಿದ್ದರು.
2KI 6:21 ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ, “ನನ್ನ ತಂದೆಯೇ, ನಾನು ಸಂಹರಿಸಲೋ, ಸಂಹರಿಸಲೋ?” ಎಂದನು.
2KI 6:22 ಅದಕ್ಕವನು, “ಸಂಹರಿಸಬೇಡ. ನೀನು ನಿನ್ನ ಖಡ್ಗದಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳದವರನ್ನು ಹೊಡೆಯುತ್ತೀಯೋ? ರೊಟ್ಟಿಯನ್ನೂ, ನೀರನ್ನೂ ಇವರ ಮುಂದೆ ಇಡು. ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ,” ಎಂದನು.
2KI 6:23 ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ.
2KI 6:24 ಸ್ವಲ್ಪ ಸಮಯದ ನಂತರ, ಅರಾಮಿನ ಅರಸ ಬೆನ್ಹದದನು ತನ್ನ ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಹೊರಟುಹೋಗಿ, ಸಮಾರ್ಯವನ್ನು ಮುತ್ತಿಗೆಹಾಕಿದನು.
2KI 6:25 ಆಗ ಸಮಾರ್ಯದಲ್ಲಿ ದೊಡ್ಡ ಬರವಿತ್ತು. ಒಂದು ಕತ್ತೆಯ ತಲೆಯು ಎಂಬತ್ತು ಶೆಕೆಲ್ ಬೆಳ್ಳಿಗೆ, ಸುಮಾರು ನೂರು ಗ್ರಾಂ ಪಾರಿವಾಳದ ಗೊಬ್ಬರವನ್ನು ಐದು ಶೆಕೆಲ್ ಬೆಳ್ಳಿಗೆ ಮಾರಲಾಗುವವರೆಗೂ ಅದನ್ನು ಮುತ್ತಿಗೆಹಾಕಿದನು.
2KI 6:26 ಇಸ್ರಾಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ, ಒಬ್ಬ ಸ್ತ್ರೀಯು ಅವನನ್ನು ಕೂಗಿ, “ನನ್ನ ಯಜಮಾನನೇ, ಅರಸನೇ, ಸಹಾಯ ಮಾಡಿ,” ಎಂದಳು.
2KI 6:27 ಅದಕ್ಕವನು, “ಯೆಹೋವ ದೇವರು ನಿನಗೆ ಸಹಾಯ ಮಾಡದೆ ಹೋದರೆ, ನಾನು ಎಲ್ಲಿಂದ ನಿನಗೆ ಸಹಾಯ ಮಾಡಲಿ? ಕಣದಿಂದಲೋ, ದ್ರಾಕ್ಷಿ ಆಲೆಯಿಂದಲೋ?” ಎಂದನು.
2KI 6:28 ಅರಸನು ಅವಳಿಗೆ, “ನಿನ್ನ ದುಃಖವೇನು?” ಎಂದನು. ಅದಕ್ಕವಳು, “ಈ ಸ್ತ್ರೀಯು ನನಗೆ ಹೇಳಿದ್ದೇನೆಂದರೆ, ‘ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು, ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದಳು.
2KI 6:29 ಹಾಗೆಯೇ ನಾವು ನನ್ನ ಮಗನನ್ನು ಬೇಯಿಸಿ ಅವನನ್ನು ತಿಂದೆವು. ಮಾರನೆಯ ದಿವಸದಲ್ಲಿ ನಾನು ಅವಳಿಗೆ, ‘ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು,’ ಎಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ,” ಎಂದಳು.
2KI 6:30 ಅರಸನು ಆ ಸ್ತ್ರೀಯು ಹೇಳಿದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಡೆಯ ಮೇಲೆ ಹಾದುಹೋದನು. ಜನರು ಕಂಡಾಗ ಅವನ ಮೈಮೇಲೆ ಗೋಣಿತಟ್ಟು ಇತ್ತು.
2KI 6:31 ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.
2KI 6:32 ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ದೂತನನ್ನು ಕಳುಹಿಸಿದನು. ಅವನು ಇನ್ನೂ ಸ್ವಲ್ಪ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ದೂತನನ್ನು ಕಳುಹಿಸಿದ್ದಾನೆ. ದೂತನು ಇಲ್ಲಿಗೆ ಬಂದ ಕೂಡಲೇ ನೀವು ಬಾಗಿಲನ್ನು ಮುಚ್ಚಿ, ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲಿನ ಸಪ್ಪಳ ಕೇಳಿಸುತ್ತಿದೆಯಲ್ಲವೇ?” ಎಂದು ಹೇಳಿದನು.
2KI 6:33 ಎಲೀಷನು ಅವರೊಡನೆ ಮಾತನಾಡುತ್ತಿರುವಾಗಲೇ ಆ ದೂತನೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವ ದೇವರಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಅವರನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು.
2KI 7:1 ಆಗ ಎಲೀಷನು, “ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಿಲಲ್ಲಿ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಆರು ಕಿಲೋಗ್ರಾಂ ಜವೆಗೋಧಿ ಒಂದು ಬೆಳ್ಳಿ ನಾಣ್ಯಕ್ಕೆ ಮಾರಲಾಗುವುದು,” ಎಂದನು.
2KI 7:2 ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೆ, ಈ ಕಾರ್ಯ ಸಂಭವಿಸುವುದೋ?” ಎಂದನು. ಅದಕ್ಕವನು, “ನೀನು ನಿನ್ನ ಕಣ್ಣುಗಳಿಂದ ಅದನ್ನು ನೋಡುವೆ, ಆದರೆ ಅದರಲ್ಲಿ ಯಾವುದನ್ನೂ ತಿನ್ನುವುದಿಲ್ಲ,” ಎಂದನು.
2KI 7:3 ಆಗ ಊರು ಬಾಗಿಲ ದ್ವಾರದಲ್ಲಿ ನಾಲ್ಕು ಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರು, “ನಾವು ಸಾಯುವವರೆಗೂ ಇಲ್ಲಿ ಕುಳಿತುಕೊಂಡಿರುವುದೇನು?
2KI 7:4 ನಾವು ಇಲ್ಲಿಯೇ ಇದ್ದರೆ, ಪಟ್ಟಣದಲ್ಲಿ ಬರವಿರುವುದರಿಂದ ಅಲ್ಲಿ ಸಾಯುತ್ತೇವೆ. ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯುತ್ತೇವೆ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಅವರಿಗೆ ಶರಣಾಗೋಣ. ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಅವರು ನಮ್ಮನ್ನು ಕೊಲ್ಲುವುದಾದರೆ ಕೊಲ್ಲಲಿ,” ಎಂದುಕೊಂಡರು.
2KI 7:5 ಹಾಗೆಯೇ ಸಂಜೆಯಲ್ಲಿ ಎದ್ದು, ಅರಾಮ್ಯರ ಪಾಳೆಯಕ್ಕೆ ಹೋಗಲು ಅವರು ಅರಾಮ್ಯರ ಪಾಳೆಯದ ಅಂಚಿಗೆ ಬಂದಾಗ, ಅಲ್ಲಿ ಯಾರೂ ಇರಲಿಲ್ಲ.
2KI 7:6 ಏಕೆಂದರೆ ಯೆಹೋವ ದೇವರು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ, ಕುದುರೆಗಳ ಮತ್ತು ಮಹಾ ಸೈನ್ಯದ ಶಬ್ದವೂ ಕೇಳಿಸುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊಬ್ಬರು, “ಇಸ್ರಾಯೇಲಿನ ಅರಸನು ಹಿತ್ತಿಯರ ಅರಸರನ್ನೂ, ಈಜಿಪ್ಟಿನ ಅರಸರನ್ನೂ ನಮ್ಮ ಮೇಲೆ ದಾಳಿಮಾಡಲು ಅವರನ್ನು ಕೂಲಿಗೆ ಕರೆದಿದ್ದಾನೆ,” ಎಂದುಕೊಂಡರು.
2KI 7:7 ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ, ತಮ್ಮ ಕುದುರೆಗಳನ್ನೂ, ತಮ್ಮ ಕತ್ತೆಗಳನ್ನೂ ಬಿಟ್ಟುಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋಗಿದ್ದರು.
2KI 7:8 ಆ ಕುಷ್ಠರೋಗಿಗಳು ದಂಡಿನ ಅಂಚಿನವರೆಗೂ ಬಂದು ಒಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿ ತಿಂದು ಕುಡಿದು ಅಲ್ಲಿದ್ದ ಬೆಳ್ಳಿಬಂಗಾರವನ್ನೂ, ವಸ್ತ್ರಗಳನ್ನೂ ತೆಗೆದುಕೊಂಡುಹೋಗಿ ಬಚ್ಚಿಟ್ಟರು. ತಿರುಗಿಬಂದು ಮತ್ತೊಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿಂದಲೂ ಹಾಗೆಯೇ ತೆಗೆದುಕೊಂಡುಹೋಗಿ ಬಚ್ಚಿಟ್ಟರು.
2KI 7:9 ಅನಂತರ ಅವರು, “ಇದು ಶುಭವಾರ್ತೆಯ ದಿವಸ, ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ, ಶಿಕ್ಷೆಗೆ ಪಾತ್ರರಾಗಬಹುದು. ಆದ್ದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತನಾಡಿಕೊಂಡರು.
2KI 7:10 ಹಾಗೆಯೇ ಅವರು ಬಂದು ಪಟ್ಟಣದ ಬಾಗಿಲು ಕಾಯುವವನನ್ನು ಕರೆದು ಅವನಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಬಂದೆವು, ಅಲ್ಲಿ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ,” ಎಂದರು.
2KI 7:11 ಅವನು ಬಾಗಿಲು ಕಾಯುವವರನ್ನು ಕರೆದನು. ಅವರು ಒಳಗಿರುವ ಅರಸನ ಮನೆಯವರಿಗೆ ತಿಳಿಸಿದರು.
2KI 7:12 ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಹಂಚಿಕೆಯನ್ನು ಹೇಳುತ್ತೇನೆ ಕೇಳಿ. ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುದನ್ನು ಅವರು ಬಲ್ಲರು. ಆದ್ದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೇ ನಮ್ಮನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ.”
2KI 7:13 ಆಗ ಅವನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತೆಗೆದುಕೊಂಡು ಹೋಗಲಿ. ಅವು ಇಸ್ರಾಯೇಲಿನ ಸಮಸ್ತ ಸಮೂಹದಲ್ಲಿ ಉಳಿದವುಗಳ ಹಾಗೆ ಇವೆ. ಅಂದರೆ ಇಸ್ರಾಯೇಲಿನ ಸಮಸ್ತ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ, ನಾವು ಕಳುಹಿಸಿ ನೋಡೋಣ,” ಎಂದನು.
2KI 7:14 ಆದ್ದರಿಂದ ಅವರು ಎರಡು ಜೋಡಿ ಕುದುರೆಗಳೊಂದಿಗೆ ಎರಡು ರಥಗಳನ್ನು ಆರಿಸಿಕೊಂಡರು ಮತ್ತು ಅರಸನು ಅರಾಮ್ಯರ ಸೈನ್ಯದ ಹಿಂದೆ ಅವರನ್ನು ಕಳುಹಿಸಿ, “ಹೋಗಿ ಏನಾಯಿತು ಎಂದು ತಿಳಿದುಕೊಳ್ಳಿ” ಎಂದು ಅವನು ರಾಹುತರಿಗೆ ಆಜ್ಞಾಪಿಸಿದನು.
2KI 7:15 ಅವರು ಅವರ ಹಿಂದೆ ಯೊರ್ದನಿನವರೆಗೆ ಹೋದರು. ಮಾರ್ಗದಲ್ಲೆಲ್ಲಾ ಅರಾಮ್ಯರು ಅವಸರದಿಂದ ಬಿಸಾಡಿದ ವಸ್ತ್ರಗಳೂ, ಪಾತ್ರೆಗಳೂ ತುಂಬಿದ್ದವು. ದೂತರು ತಿರುಗಿಬಂದು ಅರಸನಿಗೆ ತಿಳಿಸಿದರು.
2KI 7:16 ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲಿದುಕೊಂಡರು. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರವೇ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೂ, ಆರು ಕಿಲೋಗ್ರಾಂ ಜವೆಗೋಧಿಯು ಒಂದು ಬೆಳ್ಳಿ ನಾಣ್ಯಕ್ಕೂ ಮಾರಲಾಯಿತು.
2KI 7:17 ಆದರೆ ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಿಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ, ದೇವರ ಮನುಷ್ಯನು ಹೇಳಿದ್ದ ಪ್ರಕಾರವೇ ಜನರು ಆ ಅಧಿಕಾರಿಯನ್ನು ಪಟ್ಟಣದ ಬಾಗಿಲಲ್ಲಿ ತುಳಿದುಹಾಕಿದ್ದರಿಂದ ಅವನು ಮರಣಹೊಂದಿದನು.
2KI 7:18 ಹಾಗೆಯೇ, “ಆರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಜವೆಗೋಧಿ ಹನ್ನೆರಡು ಕಿಲೋಗ್ರಾಂ ಒಂದು ಬೆಳ್ಳಿ ನಾಣ್ಯಕ್ಕೆ ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಮಾರಲಾಗುವುದು,” ಎಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು.
2KI 7:19 ಆ ಅಧಿಕಾರಿ ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ, ಸಂಭವಿಸುವುದೋ?” ಎಂದು ನುಡಿದಿದ್ದನು. ಅದಕ್ಕವನು, “ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವೆ, ಆದರೆ ನೀನು ಅದನ್ನು ತಿನ್ನುವುದಿಲ್ಲ,” ಎಂದು ಪ್ರವಾದಿಯು ಹೇಳಿದ್ದನು.
2KI 7:20 ಆ ಪ್ರಕಾರವೇ ಅವನಿಗೆ ಸಂಭವಿಸಿತು. ಬಾಗಿಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಮರಣಹೊಂದಿದನು.
2KI 8:1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು.
2KI 8:2 ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ, ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷ ವಾಸವಾಗಿದ್ದಳು.
2KI 8:3 ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು.
2KI 8:4 ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡಿ, “ಎಲೀಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರಿಸು,” ಎಂದು ಅವನಿಗೆ ಹೇಳಿದನು.
2KI 8:5 ಗೇಹಜಿಯು ಸತ್ತ ಹುಡುಗನನ್ನು ಹೇಗೆ ಎಲೀಷನು ಬದುಕಿಸಿದನೆಂದು ಅರಸನಿಗೆ ವಿವರವಾಗಿ ಹೇಳುತ್ತಿರುವಾಗಲೇ, ಎಲೀಷನು ಬದುಕಿಸಿದ ಹುಡುಗನ ತಾಯಿಯು ತನ್ನ ಹೊಲಮನೆಗೋಸ್ಕರ, ಮೊರೆಯಿಡಲು ಅರಸನ ಬಳಿಗೆ ಬಂದಳು. ಕೂಡಲೆ ಗೇಹಜಿಯು, “ನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಆ ಹುಡುಗನು ಇವನೇ,” ಎಂದನು.
2KI 8:6 ಅರಸನು ಆ ಸ್ತ್ರೀಯನ್ನು ವಿಚಾರಿಸಿದಾಗ, ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ, ಅವನಿಗೆ, “ಅವಳಿಗೆ ಸೇರಿದ ಎಲ್ಲವನ್ನು, ಅವಳು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೆ ಅವಳಿಗೆ ಸಲ್ಲತಕ್ಕ ಆ ಹೊಲದ ಆದಾಯವನ್ನೆಲ್ಲಾ ಅವಳಿಗೆ ಕೊಡಿಸು,” ಎಂದನು.
2KI 8:7 ಅರಾಮಿನ ಅರಸನಾದ ಬೆನ್ಹದದನು ಅಸ್ವಸ್ಥನಾಗಿರುವಾಗ ಎಲೀಷನು ದಮಸ್ಕಕ್ಕೆ ಬಂದನು. “ದೇವರ ಮನುಷ್ಯನು ಇಲ್ಲಿಗೆ ಬಂದಿದ್ದಾನೆ,” ಎಂದು ಅವನಿಗೆ ತಿಳಿಸಲಾಯಿತು.
2KI 8:8 ಆಗ ಅರಸನು ಹಜಾಯೇಲನಿಗೆ, “ನೀನು ಕೈಯಲ್ಲಿ ಕಾಣಿಕೆಯನ್ನು ತೆಗೆದುಕೊಂಡುಹೋಗಿ ದೇವರ ಮನುಷ್ಯನನ್ನು ಎದುರುಗೊಂಡು, ಈ ವ್ಯಾಧಿಯಿಂದ ನಾನು ಗುಣವಾಗುವೆನೋ? ಎಂದು ಅವನಿಂದ ಯೆಹೋವ ದೇವರನ್ನು ವಿಚಾರಿಸು,” ಎಂದನು.
2KI 8:9 ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮವಾದವುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು, ಎಲೀಷನನ್ನು ಎದುರುಗೊಳ್ಳಲು ಹೋಗಿ, ಅವನ ಮುಂದೆ ಬಂದು ನಿಂತು, “ಅರಾಮಿನ ಅರಸನಾಗಿರುವ ನಿನ್ನ ಮಗ ಬೆನ್ಹದದನು, ‘ಈ ವ್ಯಾಧಿಯಿಂದ ಬದುಕುವೆನೋ?’ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ,” ಎಂದನು.
2KI 8:10 ಅದಕ್ಕೆ ಎಲೀಷನು, “ನೀನು ಹೋಗಿ ಅವನಿಗೆ, ನಿಜವಾಗಿಯೂ ಸ್ವಸ್ಥನಾಗುವೆ, ಎಂದು ಹೇಳು. ಆದರೆ ಅವನು ಸಾಯುವನೆಂದು ಯೆಹೋವ ದೇವರು ನನಗೆ ತೋರಿಸಿದ್ದಾರೆ,” ಎಂದನು.
2KI 8:11 ದೇವರ ಮನುಷ್ಯನಾದ ಎಲೀಷನು ಹಜಾಯೇಲನು ಮುಜುಗರಕ್ಕೆ ಒಳಗಾಗುವವರೆಗೂ ಅವನನ್ನು ದಿಟ್ಟಿಸಿ ನೋಡುತ್ತಿದ್ದನು. ನಂತರ ದೇವರ ಮನುಷ್ಯನು ಅಳತೊಡಗಿದನು.
2KI 8:12 ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು. ಅದಕ್ಕವನು, “ಏಕೆಂದರೆ ಇಸ್ರಾಯೇಲರಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ. ನೀನು ಅವರ ಕೋಟೆಗಳಿಗೆ ಬೆಂಕಿ ಹತ್ತಿಸಿ, ಅವರ ಯೌವನಸ್ಥರನ್ನು ಖಡ್ಗದಿಂದ ಕೊಂದು, ಅವರ ಕೂಸುಗಳನ್ನು ತುಂಡು ತುಂಡುಗಳಾಗಿ ಮಾಡಿ, ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವೆ,” ಎಂದ ಉತ್ತರಕೊಟ್ಟನು.
2KI 8:13 ಆದರೆ ಹಜಾಯೇಲನು, “ನಿಮ್ಮ ಸೇವಕನು ಕೇವಲ ನಾಯಿ, ಇಂಥಾ ಮಹಾ ಕೆಲಸವನ್ನು ಮಾಡುವುದಕ್ಕೆ ಹೇಗೆ ಸಾಧ್ಯ?” ಎಂದನು. ಎಲೀಷನು, “ನೀನು ಅರಾಮಿನ ಮೇಲೆ ಅರಸನಾಗುವೆ ಎಂದು ಯೆಹೋವ ದೇವರು ನನಗೆ ತಿಳಿಸಿದ್ದಾರೆ,” ಎಂದನು.
2KI 8:14 ಹಜಾಯೇಲನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಆಗ ಅವನು, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದ್ದಕ್ಕೆ ಹಜಾಯೇಲನು, “ನೀನು ನಿಜವಾಗಿ ಬದುಕುವೆ ಎಂದು ನನಗೆ ಹೇಳಿದನು,” ಎಂದನು.
2KI 8:15 ಆದರೆ ಮಾರನೆಯ ದಿವಸದಲ್ಲಿ, ಅವನು ದಪ್ಪ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಅರಸನ ಮುಖದ ಮೇಲೆ ಹಾಕಿದ್ದರಿಂದ ಅವನು ಮರಣಹೊಂದಿದನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು.
2KI 8:16 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಯೆಹೂದದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು.
2KI 8:17 ಅವನು ಆಳಲಾರಂಭಿಸಿದಾಗ, ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
2KI 8:18 ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2KI 8:19 ಆದರೂ ಯೆಹೋವ ದೇವರು ಯೆಹೂದದ ರಾಜ್ಯವನ್ನು ನಾಶಮಾಡಲಿಲ್ಲ. “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂಬುದಾಗಿ ತಮ್ಮ ದಾಸನಾದ ದಾವೀದನಿಗೆ ಪ್ರಮಾಣ ಮಾಡಿದ ಕಾರಣ ಉಳಿಸಿದರು.
2KI 8:20 ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.
2KI 8:21 ಆದ್ದರಿಂದ ಯೆಹೋರಾಮನು ತನ್ನ ಬಳಿಯಲ್ಲಿದ್ದ ಎಲ್ಲಾ ರಥಬಲವನ್ನು ತೆಗೆದುಕೊಂಡು ಚಾಯೀರಿಗೆ ಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ ತನ್ನ ರಥಗಳ ಅಧಿಪತಿಗಳನ್ನೂ ಎದೋಮ್ಯರನ್ನು ಸೋಲಿಸಿದನು. ಅವನ ಸೈನಿಕರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು.
2KI 8:22 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು.
2KI 8:23 ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 8:24 ಯೆಹೋರಾಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.
2KI 8:25 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.
2KI 8:26 ಇವನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಇವನ ತಾಯಿಯ ಹೆಸರು ಅತಲ್ಯಳು, ಅವಳು ಇಸ್ರಾಯೇಲಿನ ಅರಸನಾದ ಒಮ್ರಿಯ ಮೊಮ್ಮಗಳು.
2KI 8:27 ಇವನು ಅಹಾಬನ ಮನೆಯವರ ಮಾರ್ಗಗಳಲ್ಲಿ ನಡೆದು, ಅಹಾಬನ ಮನೆಯವರ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಏಕೆಂದರೆ ಇವನು ಅಹಾಬನ ಅಳಿಯನಾಗಿದ್ದನು.
2KI 8:28 ಅಹಜ್ಯನು ಅಹಾಬನ ಮಗ ಯೋರಾಮನ ಸಂಗಡ ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು.
2KI 8:29 ಆದ್ದರಿಂದ ಅರಸನಾದ ಯೋರಾಮನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡಲು ಹೋದನು.
2KI 9:1 ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಂಡಳಿಯಲ್ಲಿ ಒಬ್ಬನನ್ನು ಕರೆದು ಅವನಿಗೆ, “ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನ ರಾಮೋತಿಗೆ ಹೋಗು.
2KI 9:2 ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ಯೇಹುವನ್ನು ಅಲ್ಲಿ ಕಂಡು, ಒಳಗೆ ಪ್ರವೇಶಿಸಿ, ಅವನನ್ನು ಅವರ ಸಹೋದರರ ಮಧ್ಯದಿಂದ ಎಬ್ಬಿಸಿ, ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ,
2KI 9:3 ಎಣ್ಣೆಯ ಪಾತ್ರೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನಿಗೆ, ‘ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ, ಎಂದು ಯೆಹೋವ ದೇವರು ಹೇಳುತ್ತಾರೆ,’ ಎಂಬುದಾಗಿ ಹೇಳು. ಅನಂತರ ಕದವನ್ನು ತೆರೆದು ತಡಮಾಡದೆ ಓಡಿಹೋಗು,” ಎಂದನು.
2KI 9:4 ಹಾಗೆಯೇ ಯೌವನಸ್ಥನಾದ ಪ್ರವಾದಿಯು ಗಿಲ್ಯಾದಿನ ರಾಮೋತಿಗೆ ಹೋದನು.
2KI 9:5 ಅವನು ಅಲ್ಲಿ ಸೇರಿದಾಗ, ಅಲ್ಲಿ ಯೇಹುವು ಮತ್ತು ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು, “ಅಧಿಪತಿಯೇ, ನಿನಗೊಂದು ಮಾತು ಹೇಳುವುದಿದೆ,” ಎಂದನು. ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು. ಅವನು, “ಅಧಿಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು.
2KI 9:6 ಯೇಹುವು ಎದ್ದು ಮನೆಯೊಳಕ್ಕೆ ಹೋದನು. ಆಗ ಪ್ರವಾದಿಯು ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: ಯೆಹೋವ ದೇವರ ಜನರಾದ ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ.
2KI 9:7 ನಾನು ಪ್ರವಾದಿಗಳಾದ ನನ್ನ ಸೇವಕರ ರಕ್ತಕ್ಕೋಸ್ಕರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವಂತೆ ನೀನು ನಿನ್ನ ಯಜಮಾನನಾದ ಅಹಾಬನ ಮನೆಯನ್ನು ಸಂಹರಿಸಬೇಕು.
2KI 9:8 ಅಹಾಬನ ಮನೆಯೆಲ್ಲಾ ನಾಶವಾಗುವುದು. ಇಸ್ರಾಯೇಲಿನಲ್ಲಿ ಉಳಿದಿರುವ ಅಹಾಬನ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮರಾಗಲಿ ಎಲ್ಲರನ್ನೂ ತೆಗೆದುಹಾಕುವೆನು.
2KI 9:9 ಅಹಾಬನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು.
2KI 9:10 ಇದಲ್ಲದೆ ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳನ್ನು ತಿಂದುಬಿಡುವುವು; ಅವಳ ಶವವನ್ನು ಸಮಾಧಿಮಾಡಲು ಯಾವನೂ ಇರುವುದಿಲ್ಲ,” ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು.
2KI 9:11 ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಬಂದನು. ಅವರು ಅವನಿಗೆ, “ಶುಭವೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇನು?” ಎಂದರು. ಅವನು ಅವರಿಗೆ, “ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ,” ಎಂದನು.
2KI 9:12 ಅದಕ್ಕವರು, “ಅದು ಸುಳ್ಳು, ದಯಮಾಡಿ ನಮಗೆ ತಿಳಿಸು,” ಎಂದರು. ಆದ್ದರಿಂದ ಅವನು, “ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆಂಬುದಾಗಿ ಯೆಹೋವ ದೇವರು ಹೇಳುತ್ತಾರೆಂದು ಹೀಗೆ ನನಗೆ ಹೇಳಿದನು,” ಎಂದನು.
2KI 9:13 ಆಗ ಅವರು ತ್ವರೆಪಟ್ಟು ಪ್ರತಿಯೊಬ್ಬರು ತಮ್ಮ ಹೊರ ಉಡುಪುಗಳನ್ನು ತೆಗೆದು, ಮೆಟ್ಟಿಲುಗಳ ಮೇಲೆ ಹಾಸಿ, ಇವನನ್ನು ಕುಳ್ಳಿರಿಸಿ, ತುತೂರಿಗಳನ್ನು ಊದಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು.
2KI 9:14 ಹೀಗೆಯೇ ನಿಂಷಿಯ ಮಗ ಯೆಹೋಷಾಫಾಟನ ಮಗ ಯೇಹುವು ಯೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೋರಾಮನೂ, ಸಮಸ್ತ ಇಸ್ರಾಯೇಲರೂ ಗಿಲ್ಯಾದಿನ ರಾಮೋತಿನಲ್ಲಿ ಕಾಯುತ್ತಿದ್ದರು.
2KI 9:15 ಆದರೆ ಅರಸನಾದ ಯೋರಾಮನು ಅರಾಮಿನ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ, ಅರಾಮ್ಯರು ತನ್ನನ್ನು ಹೊಡೆದ ಗಾಯವನ್ನು ಸ್ವಸ್ಥಮಾಡಿಕೊಳ್ಳುವ ನಿಮಿತ್ತ ಇಜ್ರೆಯೇಲಿಗೆ ಹೋಗಿದ್ದನು. ಆಗ ಯೇಹುವು, “ನಿಮಗೆ ಮನಸ್ಸಿದ್ದರೆ ಇದನ್ನು ಇಜ್ರೆಯೇಲಿಗೆ ಹೋಗಿ ತಿಳಿಸಲು ಪಟ್ಟಣದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ,” ಎಂದನು.
2KI 9:16 ಯೇಹುವು ರಥದ ಮೇಲೆ ಏರಿ ಇಜ್ರೆಯೇಲಿಗೆ ಹೋದನು. ಏಕೆಂದರೆ ಯೋರಾಮನು ಅಲ್ಲಿ ವಿಶ್ರಾಂತಿಯಲ್ಲಿದ್ದನು. ಇದಲ್ಲದೆ ಯೋರಾಮನನ್ನು ನೋಡುವುದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು.
2KI 9:17 ಇಜ್ರೆಯೇಲ್ ಪಟ್ಟಣದ ಗೋಪುರದಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಕಾಣಿಸುತ್ತಿದೆ,” ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು, “ನೀನು ಒಬ್ಬ ರಾಹುತನನ್ನು ಕರೆದು, ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಇಲ್ಲವೋ ಎಂದು ಕೇಳುವುದಕ್ಕೆ ಕಳುಹಿಸು,” ಎಂಬುದಾಗಿ ಆಜ್ಞಾಪಿಸಿದನು.
2KI 9:18 ಒಬ್ಬ ರಾಹುತನು ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು, ಆದರೆ ತಿರುಗಿ ಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದನು.
2KI 9:19 ಆಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು. ಇವನು ಹೋಗಿ ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು.
2KI 9:20 ಆಗ ಕಾವಲುಗಾರನು, “ಇವನೂ ಅವರ ಬಳಿಗೆ ಹೋಗಿ ತಿರುಗಿ ಬರಲಿಲ್ಲ. ಇದಲ್ಲದೆ ರಥವನ್ನು ಓಡಿಸುವುದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ, ಏಕೆಂದರೆ ಅವನು ಹುಚ್ಚನಂತೆ ಓಡಿಸುತ್ತಿದ್ದಾನೆ,” ಎಂದನು.
2KI 9:21 ಯೋರಾಮನು, “ನನ್ನ ರಥವನ್ನು ಸಿದ್ಧಮಾಡು,” ಎಂದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ, ಯೆಹೂದದ ಅರಸನಾದ ಅಹಜ್ಯನೂ ಹೊರಟು, ಅವರವರು ತಮ್ಮ ತಮ್ಮ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು, ಇಜ್ರೆಯೇಲಿನವನಾದ ನಾಬೋತನಿಗೆ ಸಂಬಂಧಿಸಿದ ಸ್ಥಳದಲ್ಲಿ ಅವನನ್ನು ಸಂಧಿಸಿದರು.
2KI 9:22 ಯೋರಾಮನು ಯೇಹುವನ್ನು ಕಂಡಾಗ, “ಯೇಹುವೇ, ಸಮಾಧಾನದಿಂದ ಬಂದಿರುವೆಯೋ?” ಎಂದನು. ಅದಕ್ಕವನು, “ನಿನ್ನ ತಾಯಿಯಾದ ಈಜೆಬೆಲಳ ಜಾರತ್ವವೂ, ಅವಳ ಮಾಟಮಂತ್ರಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದನು.
2KI 9:23 ಆಗ ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ದ್ರೋಹ!” ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.
2KI 9:24 ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು. ಅವನು ರಥದಲ್ಲಿ ಕೆಳಗೆ ಮುದುರಿಕೊಂಡು ಬಿದ್ದನು.
2KI 9:25 ಆಗ ಯೇಹುವು ತನ್ನ ಅಧಿಪತಿಯಾದ ಬಿದ್ಕಾರನಿಗೆ, “ನೀನು ಅವನನ್ನು ತೆಗೆದುಕೊಂಡುಹೋಗಿ ಇಜ್ರೆಯೇಲಿನವನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು. ಏಕೆಂದರೆ ನಾನೂ, ನೀನೂ ಅವನ ತಂದೆಯಾದ ಅಹಾಬನ ಹಿಂದೆ ರಥವನ್ನು ಏರಿಕೊಂಡು ಹೋಗುತ್ತಿರುವಾಗ, ಯೆಹೋವ ದೇವರು ಈ ಪ್ರವಾದನೆಯನ್ನು ಅವನ ಬಗ್ಗೆ ತಿಳಿಸಿದರೆಂದು ಜ್ಞಾಪಕಮಾಡಿಕೋ.
2KI 9:26 ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು.
2KI 9:27 ಯೆಹೂದದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು, ಬೇತ್ ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ ರಥದಲ್ಲಿ, “ಅವನನ್ನು ಸಹ ಸಂಹರಿಸಿರಿ,” ಎಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿಹೋಗುವ ಅಹಜ್ಯನನ್ನು ಮಾರ್ಗದಲ್ಲಿ ರಥದಲ್ಲಿ ಹೊಡೆದರು. ಅವನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.
2KI 9:28 ಅವನ ಸೇವಕರು ಅವನನ್ನು ರಥದಲ್ಲಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ, ದಾವೀದನ ಪಟ್ಟಣದೊಳಗೆ ಅವನ ಪಿತೃಗಳ ಬಳಿಯಲ್ಲಿ ಅವನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು.
2KI 9:29 ಅಹಾಬನ ಮಗ ಯೋರಾಮನ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ಅರಸನಾಗಿದ್ದನು.
2KI 9:30 ಯೇಹುವು ಇಜ್ರೆಯೇಲಿಗೆ ಬಂದನು. ಅಲ್ಲಿಗೆ ಅವನು ಬಂದಿದ್ದಾನೆಂದು ಈಜೆಬೆಲಳು ಕೇಳಿ, ಅವಳು ತನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಂಡು, ತನ್ನ ತಲೆಯನ್ನು ಶೃಂಗರಿಸಿಕೊಂಡು, ಕಿಟಕಿಯಿಂದ ಇಣಿಕಿ ನೋಡಿದಳು.
2KI 9:31 ಯೇಹುವು ಬಾಗಿಲಲ್ಲಿ ಪ್ರವೇಶಿಸಿದಾಗ ಅವಳು, “ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾನನೇ, ಕ್ಷೇಮವೋ?” ಎಂದಳು.
2KI 9:32 ಯೇಹುವು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ, “ನನ್ನ ಕಡೆ ಇರುವವರು ಯಾರು?” ಎಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿಯಲ್ಲಿಂದ ಅವನನ್ನು ನೋಡಿದರು.
2KI 9:33 ಯೇಹುವು, “ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ,” ಎಂದನು. ಅವರು ಅವಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ, ಕುದುರೆಗಳ ಮೇಲೆಯೂ ಸಿಡಿಯಿತು. ಯೇಹುವು ರಥವನ್ನು ಅವಳ ಮೇಲೆ ಓಡಿಸಿದನು.
2KI 9:34 ಯೇಹುವು ಒಳಗೆ ಹೋಗಿ ತಿಂದು ಕುಡಿದನು. ಆಮೇಲೆ ಅವರಿಗೆ, “ನೀವು ಹೋಗಿ ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ಕಂಡು, ಅವಳನ್ನು ಹೂಳಿಡಿರಿ. ಏಕೆಂದರೆ ಅವಳು ಅರಸನ ಮಗಳು,” ಎಂದನು.
2KI 9:35 ಅವರು ಅವಳನ್ನು ಹೂಳಿಡಲು ಹೋದಾಗ, ಅವಳ ತಲೆ ಬುರುಡೆಯೂ, ಕಾಲುಗಳೂ, ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಆದ್ದರಿಂದ ಅವರು ತಿರುಗಿಬಂದು ಅವನಿಗೆ ತಿಳಿಸಿದರು.
2KI 9:36 ಅದಕ್ಕವನು, “ಯೆಹೋವ ದೇವರು ತಮ್ಮ ಸೇವಕನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರ ಹೇಳಿದ ವಾಕ್ಯವು ಇದೇ: ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವುವು.
2KI 9:37 ಇದಲ್ಲದೆ ಇದೇ ಈಜೆಬೆಲಳೆಂದು ಗುರುತು ಸಿಕ್ಕದ ಹಾಗೆ ಇಜ್ರೆಯೇಲಿನ ಹೊಲದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವುದು,” ಎಂದನು.
2KI 10:1 ಆಗ ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳು ಇದ್ದರು, ಯೇಹುವು ಸಮಾರ್ಯದಲ್ಲಿರುವ ಇಜ್ರೆಯೇಲ್ ಊರಿನ ಪ್ರಧಾನರಿಗೂ ಹಿರಿಯರಿಗೂ ಅಹಾಬನ ಮಕ್ಕಳನ್ನು ಪೋಷಿಸುವವರಿಗೂ ಪತ್ರಗಳನ್ನು ಬರೆದು, ಸಮಾರ್ಯಕ್ಕೆ ಕಳುಹಿಸಿದನು. ಅವನು,
2KI 10:2 “ನಿಮ್ಮ ಯಜಮಾನನ ಪುತ್ರರು ನಿಮ್ಮ ಬಳಿಯಲ್ಲಿ ಇದ್ದಾರೆ. ಇದಲ್ಲದೆ ರಥಗಳು, ಕುದುರೆಗಳು, ಕೋಟೆಗಳುಳ್ಳ ಪಟ್ಟಣ, ಆಯುಧಗಳು ನಿಮ್ಮ ಬಳಿಯಲ್ಲಿವೆ. ಆದ್ದರಿಂದ ಈ ಪತ್ರವು ನಿಮಗೆ ತಲುಪಿದ ತಕ್ಷಣ,
2KI 10:3 ನೀವು ನಿಮ್ಮ ಯಜಮಾನನ ಪುತ್ರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ಆರಿಸಿಕೊಂಡು, ಅವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂರಿಸಿ, ನಿಮ್ಮ ಯಜಮಾನನ ಕುಟುಂಬದವರಿಗಾಗಿ ಯುದ್ಧಮಾಡಿರಿ,” ಎಂದು ತಿಳಿಸಿದನು.
2KI 10:4 ಆದರೆ ಅವರು ತುಂಬಾ ಭಯಪಟ್ಟು, “ಇಬ್ಬರೂ ಅರಸರು ಅವನ ಮುಂದೆ ನಿಲ್ಲಲು ಸಾಧ್ಯವಾಗದಿದ್ದಾಗ, ನಾವು ನಿಲ್ಲುವುದು ಹೇಗೆ?” ಎಂದರು.
2KI 10:5 ಆಗ ಅರಮನೆಯ ಆಡಳಿತಾಧಿಕಾರಿ, ಪಟ್ಟಣದ ರಾಜ್ಯಪಾಲರು, ಹಿರಿಯರು ಮತ್ತು ಪಾಲಕರು ಈ ಸಂದೇಶವನ್ನು ಯೇಹುವಿನ ಬಳಿಗೆ ಕಳುಹಿಸಿ, “ನಾವು ನಿಮ್ಮ ಸೇವಕರು ನೀವು ನಮಗೆ ಹೇಳುವುದನ್ನೆಲ್ಲಾ ಮಾಡುತ್ತೇವೆ. ನಾವು ಯಾರನ್ನೂ ಅರಸನನ್ನಾಗಿ ನೇಮಿಸುವುದಿಲ್ಲ. ನಿಮ್ಮ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನೀವು ಮಾಡಿರಿ,” ಎಂದರು.
2KI 10:6 ಆಗ ಯೇಹುವು ಅವರಿಗೆ ಎರಡನೆಯ ಸಾರಿ ಪತ್ರವನ್ನು ಬರೆದು, “ನೀವು ನನ್ನವರಾಗಿದ್ದು ನನ್ನ ಮಾತು ಕೇಳುವವರಾಗಿದ್ದರೆ, ನಾಳೆ ಇಷ್ಟು ಹೊತ್ತಿಗೆ ಇಜ್ರೆಯೇಲ್ ಪಟ್ಟಣಕ್ಕೆ ನಿಮ್ಮ ಯಜಮಾನನ ಪುತ್ರರ ತಲೆಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದನು. ಆದರೆ ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮನುಷ್ಯರು ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು. ಅವರು ಅವರನ್ನು ಪೋಷಿಸುತ್ತಿದ್ದರು.
2KI 10:7 ಈ ಪತ್ರವು ಅವರ ಬಳಿಗೆ ಬಂದಾಗ, ಅವರು ರಾಜಪುತ್ರರನ್ನು ಹಿಡಿದು, ಎಪ್ಪತ್ತು ಮಂದಿಯನ್ನು ಕೊಂದು, ಅವರ ತಲೆಗಳನ್ನು ಪುಟ್ಟಿಗಳಲ್ಲಿ ಹಾಕಿ ಇಜ್ರೆಯೇಲ್ ಪಟ್ಟಣದಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.
2KI 10:8 ಆಗ ಆ ಸೇವಕನು ಬಂದು ಯೇಹುವಿಗೆ, “ರಾಜಪುತ್ರರ ತಲೆಗಳನ್ನು ತೆಗೆದುಕೊಂಡು ಬಂದಿದ್ದಾರೆ,” ಎಂದು ತಿಳಿಸಿದನು. ಅದಕ್ಕೆ ಯೇಹು, “ಉದಯಕಾಲದವರೆಗೂ ಅವುಗಳನ್ನು ಹೆಬ್ಬಾಗಿಲಿನಲ್ಲಿ ಎರಡು ರಾಶಿಗಳಾಗಿ ಹಾಕಿರಿ,” ಎಂದು ಆಜ್ಞಾಪಿಸಿದನು.
2KI 10:9 ಮರುದಿನ ಬೆಳಿಗ್ಗೆ ಯೇಹು ಹೊರಗೆ ಬಂದು, ಸಕಲ ಜನರ ಮುಂದೆ ನಿಂತು, “ನೀವು ನಿರಪರಾಧಿಗಳು. ನಾನು ನನ್ನ ಯಜಮಾನನ ಮೇಲೆ ಒಳಸಂಚುಮಾಡಿ, ಅವನನ್ನು ಕೊಂದುಹಾಕಿದೆನು. ಆದರೆ ಇವರೆಲ್ಲರನ್ನು ಸಂಹರಿಸಿದವರ‍್ಯಾರು?
2KI 10:10 ಯೆಹೋವ ದೇವರು ಅಹಾಬನ ಮನೆಯನ್ನು ಕುರಿತು ಹೇಳಿದ ಯೆಹೋವ ದೇವರ ಮಾತುಗಳಲ್ಲಿ ಒಂದೂ ವ್ಯರ್ಥವಾಗುವುದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಯೆಹೋವ ದೇವರು ತಮ್ಮ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾರೆ,” ಎಂದನು.
2KI 10:11 ಈ ಪ್ರಕಾರ ಯೇಹುವು ಇಜ್ರೆಯೇಲ್ ಪಟ್ಟಣದಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ ಅವನ ಸರದಾರರು, ಆಪ್ತಮಿತ್ರರು, ಪುರೋಹಿತರು ಇವರನ್ನೂ ಸಂಹರಿಸಿದನು; ಒಬ್ಬನನ್ನೂ ಉಳಿಸಲಿಲ್ಲ.
2KI 10:12 ಆಗ ಯೇಹುವು ಹೊರಟು ಸಮಾರ್ಯಕ್ಕೆ ಬಂದನು. ಅವನು ಕುರುಬರ ಬೇತ್ ಎಕೆದ್ ಬಳಿ ಬಂದಾಗ,
2KI 10:13 ಯೆಹೂದದ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ, “ನೀವು ಯಾರು?” ಎಂದನು. ಅದಕ್ಕವರು, “ನಾವು ಅಹಜ್ಯನ ಸಹೋದರರು. ಅರಸನ ಮಕ್ಕಳನ್ನೂ, ರಾಣಿಯ ಮಕ್ಕಳನ್ನೂ ವಂದಿಸಲು ಹೋಗುತ್ತಿದ್ದೇವೆ,” ಎಂದರು.
2KI 10:14 ಆಗ ಅವನು, “ಅವರನ್ನು ಜೀವದಿಂದ ಹಿಡಿಯಿರಿ,” ಎಂದು ಹೇಳಿದ್ದರಿಂದ ಕುರುಬರು ಇವರನ್ನು ಜೀವದಿಂದ ಹಿಡಿದು, ಉಣ್ಣೆ ಕತ್ತರಿಸುವ ಮನೆಯ ಬಾವಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನಾದರೂ ಉಳಿಸಲಿಲ್ಲ.
2KI 10:15 ಯೇಹುವು ಅಲ್ಲಿಂದ ಹೋಗಿ, ತನ್ನನ್ನು ಎದುರುಗೊಳ್ಳಲು ಬಂದ ರೇಕಾಬನ ಮಗ ಯೆಹೋನಾದಾಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ, “ನನ್ನ ಹೃದಯವು ನಿನ್ನ ಹೃದಯದ ಸಂಗಡ ಇರುವ ಹಾಗೆ ನಿನ್ನ ಹೃದಯವು ಯಥಾರ್ಥವಾಗಿ ಇದೆಯೋ?” ಎಂದನು. ಯೆಹೋನಾದಾಬನು, “ಇದೆ,” ಎಂದನು. “ಹಾಗಾದರೆ ನಿನ್ನ ಕೈ ಕೊಡು,” ಎಂದನು. ಇವನು ತನ್ನ ಕೈ ಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಹತ್ತಿಸಿಕೊಂಡು ಅವನಿಗೆ,
2KI 10:16 “ನೀನು ನನ್ನ ಸಂಗಡ ಬಂದು ಯೆಹೋವ ದೇವರಿಗೋಸ್ಕರ ನನಗುಂಟಾದ ಆಸಕ್ತಿಯನ್ನು ನೋಡು,” ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
2KI 10:17 ಯೇಹುವು ಸಮಾರ್ಯಕ್ಕೆ ಬಂದ ತರುವಾಯ ಸಮಾರ್ಯದಲ್ಲಿ ಅಹಾಬನಿಗೆ ಉಳಿದವರೆಲ್ಲರನ್ನು ಎಲೀಯನಿಗೆ ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರ ಅವರನ್ನು ಸಂಹರಿಸಿದನು.
2KI 10:18 ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ, “ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು. ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು.
2KI 10:19 ಆದ್ದರಿಂದ ಬಾಳನ ಸಮಸ್ತ ಪ್ರವಾದಿಗಳನ್ನೂ, ಅವನ ಸಮಸ್ತ ಸೇವಕರನ್ನೂ, ಅವನ ಸಮಸ್ತ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ. ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು,” ಎಂದನು. ಏಕೆಂದರೆ ಯೇಹುವು ಬಾಳನನ್ನು ಸೇವಿಸುವವರನ್ನು ನಾಶಮಾಡುವಂತೆ ಇದನ್ನು ತಂತ್ರದಿಂದ ಮಾಡಿದನು.
2KI 10:20 ಆಗ ಯೇಹುವು, “ಬಾಳನಿಗೋಸ್ಕರ ಪವಿತ್ರ ಸಮಾರಂಭವನ್ನು ಮಾಡಿರಿ,” ಎಂದನು. ಅವರು ಅದನ್ನು ಸಾರಿದರು.
2KI 10:21 ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ, ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಾಳನ ದೇವಸ್ಥಾನ ಪೂರ್ಣವಾಗಿ ತುಂಬಿತ್ತು.
2KI 10:22 ಆಗ ಅವನು ವಸ್ತ್ರಗಳ ಮನೆಯ ಮೇಲಧಿಕಾರಿಗೆ, “ಬಾಳನನ್ನು ಸೇವಿಸುವ ಸಮಸ್ತರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಾ,” ಎಂದು ಹೇಳಿದ್ದರಿಂದ, ಅವನು ಅವರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಂದನು.
2KI 10:23 ಆಗ ಯೇಹುವೂ, ರೇಕಾಬನ ಮಗ ಯೆಹೋನಾದಾಬನೂ ಬಾಳನ ದೇವಸ್ಥಾನದಲ್ಲಿ ಪ್ರವೇಶಿಸಿದರು. ಯೇಹುವು, “ಬಾಳನನ್ನು ಸೇವಿಸುವವರ ಹೊರತು ಅವರ ಸಂಗಡ ಯೆಹೋವ ದೇವರ ಸೇವಕರಲ್ಲಿ ಒಬ್ಬನೂ ಇರದ ಹಾಗೆ ಪರಿಶೋಧಿಸಿ ನೋಡಿರಿ,” ಎಂದು ಬಾಳನನ್ನು ಸೇವಿಸುವವರಿಗೆ ಹೇಳಿದನು.
2KI 10:24 ಅವರು ಬಲಿಗಳನ್ನೂ, ದಹನಬಲಿಗಳನ್ನೂ ಅರ್ಪಿಸಲು ಒಳಗೆ ಪ್ರವೇಶಿಸಿದ ತರುವಾಯ, ಯೇಹುವು ಹೊರಗೆ ಎಂಬತ್ತು ಮಂದಿಯನ್ನು ಇರಿಸಿಕೊಂಡು ಅವರಿಗೆ, “ನಾನು ನಿಮ್ಮ ಕೈಗೆ ಒಪ್ಪಿಸಿದ ಮನುಷ್ಯರಲ್ಲಿ ಯಾವನಾದರೂ ತಪ್ಪಿಸಿಕೊಂಡುಹೋದರೆ, ಅವನ ಪ್ರಾಣಕ್ಕೆ ನಿಮ್ಮ ಪ್ರಾಣ ಈಡಾಗಿರುವುದು,” ಎಂದನು.
2KI 10:25 ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ, ಯೇಹುವು ಕಾವಲುಗಾರರಿಗೂ, ಅಧಿಪತಿಗಳಿಗೂ, “ನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ,” ಎಂದನು. ಹಾಗೆಯೇ ಅವರು ಒಳಗೆ ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿ ಅವರ ಶವಗಳನ್ನು ಹೊರಗೆ ಹಾಕಿದ ತರುವಾಯ, ಬಾಳನ ಗರ್ಭಗುಡಿಯನ್ನು ಪ್ರವೇಶಿಸಿ,
2KI 10:26 ಬಾಳನ ದೇವಸ್ಥಾನದಿಂದ ವಿಗ್ರಹಗಳನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು.
2KI 10:27 ಇದಲ್ಲದೆ ಅವರು ಬಾಳನ ವಿಗ್ರಹವನ್ನು ಒಡೆದುಹಾಕಿ, ಬಾಳನ ದೇವಸ್ಥಾನವನ್ನು ಕೆಡವಿಬಿಟ್ಟು, ಆ ಸ್ಥಳವನ್ನು ಇಂದಿನವರೆಗೂ ಶೌಚಕ್ಕಾಗಿ ಉಪಯೋಗಿಸುತ್ತಾರೆ.
2KI 10:28 ಹೀಗೆಯೇ ಯೇಹುವು ಬಾಳನ ಪೂಜೆಯನ್ನು ಇಸ್ರಾಯೇಲಿನಲ್ಲಿಂದ ನಾಶಮಾಡಿಬಿಟ್ಟನು.
2KI 10:29 ಆದರೆ ಬೇತೇಲಿನಲ್ಲಿಯೂ, ದಾನಿನಲ್ಲಿಯೂ ಇರುವ ಬಂಗಾರದ ಕರುಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.
2KI 10:30 ಯೆಹೋವ ದೇವರು ಯೇಹುವಿಗೆ, “ನೀನು ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ನಡೆಸಿ ನನ್ನ ಮೆಚ್ಚಿಗೆಯನ್ನು ಪಡೆದೆ; ಅಹಾಬನ ಮನೆಯವರನ್ನು ಕುರಿತು ನನ್ನ ಹೃದಯದಲ್ಲಿದ್ದ ಎಲ್ಲದರ ಪ್ರಕಾರ ಮಾಡಿದ್ದರಿಂದ, ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದರು.
2KI 10:31 ಯೇಹುವು ತನ್ನ ಪೂರ್ಣಹೃದಯದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಿಯಮದಲ್ಲಿ ನಡೆಯಲು ಪ್ರಯತ್ನಿಸಲಿಲ್ಲ. ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2KI 10:32 ಆ ದಿವಸಗಳಲ್ಲಿ ಯೆಹೋವ ದೇವರು ಇಸ್ರಾಯೇಲನ್ನು ತಗ್ಗಿಸಲು ಆರಂಭಿಸಿದರು. ಹಜಾಯೇಲನು ಬಂದು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿ ಅವರನ್ನು ಸಂಹರಿಸಿದನು.
2KI 10:33 ಪೂರ್ವದಲ್ಲಿ ಯೊರ್ದನ್ ಮೊದಲುಗೊಂಡು ಗಾದ್ಯರೂ, ರೂಬೇನ್ಯರೂ ನಿವಾಸವಾಗಿದ್ದ ಗಿಲ್ಯಾದಿನ ಸಮಸ್ತ ದೇಶವನ್ನೂ, ಅರ್ನೋನ್ ನದಿಯ ಬಳಿಯಲ್ಲಿರುವ ಅರೋಯೇರ್ ಮೊದಲುಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್ ಬಾಷಾನಿನಲ್ಲಿರುವವರನ್ನೂ ಹಜಾಯೇಲನು ಸಂಹರಿಸಿದನು.
2KI 10:34 ಯೇಹುವಿನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನ ಪರಾಕ್ರಮವೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 10:35 ಯೇಹು ತನ್ನ ಪಿತೃಗಳ ಜೊತೆಯಲ್ಲಿ ವಿಶ್ರಾಂತಿ ಹೊಂದಿದ್ದರಿಂದ ಅವನನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೆಹೋವಾಹಾಜನು ಅವನಿಗೆ ಬದಲಾಗಿ ಅರಸನಾದನು.
2KI 10:36 ಯೇಹುವು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಿದ ಸಮಯ ಇಪ್ಪತ್ತೆಂಟು ವರ್ಷಗಳು.
2KI 11:1 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.
2KI 11:2 ಆದರೆ ಅರಸನಾದ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯೂ ಆದ ಯೆಹೋಷೆಬಳು ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನು ಹತನಾಗದ ಹಾಗೆ ಅವನನ್ನೂ ಅವನ ದಾದಿಯನ್ನೂ ಅತಲ್ಯಳಿಗೆ ಕಾಣದ ಹಾಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು.
2KI 11:3 ಹೀಗೆ ಅವನು ಯೆಹೋಷೆಬಳ ಸಂಗಡ ಆರು ವರ್ಷ ಯೆಹೋವ ದೇವರ ಆಲಯದಲ್ಲಿ ಗುಪ್ತವಾಗಿದ್ದನು, ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು.
2KI 11:4 ಏಳನೆಯ ವರ್ಷದಲ್ಲಿ ಯೆಹೋಯಾದಾವನು ಶತಾಧಿಪತಿಯಾದವರನ್ನೂ, ಕಾರಿ ಎಂಬ ಸಿಪಾಯಿಗಳ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯಿಸಿ, ತನ್ನ ಬಳಿಗೆ ಯೆಹೋವ ದೇವರ ಆಲಯಕ್ಕೆ ಕರೆದುಕೊಂಡು ಬಂದನು. ಅವರ ಸಂಗಡ ಒಡಂಬಡಿಕೆಯನ್ನು ಮಾಡಿ, ಯೆಹೋವ ದೇವರ ಆಲಯದಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು, ಅನಂತರ ಅವನಿಗೆ ಅರಸನ ಮಗನನ್ನು ತೋರಿಸಿದನು.
2KI 11:5 ಅವರಿಗೆ, “ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ಅರಮನೆಯ ಕಾವಲುಗಾರರಾಗಿರಬೇಕು.
2KI 11:6 ಇನ್ನೊಂದು ಭಾಗವು ಸೂರ್ ಎಂಬ ಬಾಗಿಲ ಬಳಿಯಲ್ಲಿಯೂ, ಮತ್ತೊಂದು ಭಾಗವು ಕಾವಲಿನ ಹಿಂದೆ ಇರುವ ಬಾಗಿಲ ಬಳಿಯಲ್ಲಿಯೂ ಇರಿ. ಹೀಗೆಯೇ ದೇವಾಲಯ ಕಾವಲು ಮುರಿಯದ ಹಾಗೆ ಅದನ್ನು ಕಾಯಿರಿ.
2KI 11:7 ಇದಲ್ಲದೆ ಸಬ್ಬತ್ ದಿನದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಯೆಹೋವ ದೇವರ ಆಲಯದಲ್ಲಿರುವ ಅರಸನನ್ನು ಕಾಯುವವರಾಗಿರಿ.
2KI 11:8 ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಯಾವನಾದರೂ ನಿಮ್ಮ ಸಾಲುಗಳಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಆದರೆ ಅರಸನು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಆಜ್ಞಾಪಿಸಿದನು.
2KI 11:9 ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಶತಾಧಿಪತಿಗಳು ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಯೆಹೋಯಾದಾವನ ಬಳಿಗೆ ಕರೆದುಕೊಂಡು ಬಂದರು.
2KI 11:10 ಆಗ ಯಾಜಕನು ಯೆಹೋವ ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ಗುರಾಣಿಗಳನ್ನೂ ಶತಾಧಿಪತಿಗಳಿಗೆ ಕೊಟ್ಟನು.
2KI 11:11 ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು, ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ನಿಂತುಕೊಂಡರು.
2KI 11:12 ಆಗ ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅರಸನನ್ನಾಗಿ ಮಾಡಿ ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು ಚಪ್ಪಾಳೆ ಹೊಡೆದು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.
2KI 11:13 ಅತಲ್ಯಳು ಕಾವಲುಗಾರರ ಮತ್ತು ಜನರ ಶಬ್ದವನ್ನೂ ಕೇಳಿದಾಗ, ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು.
2KI 11:14 ಅಲ್ಲಿ ಅರಸನು ಪದ್ಧತಿಯ ಪ್ರಕಾರ ಕಂಬದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
2KI 11:15 ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು.
2KI 11:16 ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಂದುಹಾಕಿದರು.
2KI 11:17 ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ಯೆಹೋವ ದೇವರಿಗೂ, ಅರಸನಿಗೂ, ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು. ಹಾಗೆಯೇ ಅರಸನಿಗೂ, ಜನರಿಗೂ ಮಧ್ಯದಲ್ಲಿ ಒಡಂಬಡಿಕೆ ಮಾಡಿಸಿದನು.
2KI 11:18 ದೇಶದ ಜನರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಆಗ ಯಾಜಕನಾದ ಯೆಹೋಯಾದಾವನು ಯೆಹೋವ ದೇವರ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು.
2KI 11:19 ಅವನು ಶತಾಧಿಪತಿಗಳನ್ನೂ, “ಕಾರಿ” ಎಂಬ ಸಿಪಾಯಿಗಳ ಅಧಿಕಾರಿಗಳನ್ನೂ, ಕಾವಲುಗಾರರನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕಾವಲುಗಾರರ ಬಾಗಿಲ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಬಂದು, ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.
2KI 11:20 ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
2KI 11:21 ಯೋವಾಷ್ ಅರಸನಾದಾಗ ಏಳು ವರ್ಷದವನಾಗಿದ್ದನು.
2KI 12:1 ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೋವಾಷನು ಅರಸನಾಗಿ, ಯೆರೂಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಚಿಬ್ಯಳು. ಅವಳು ಬೇರ್ಷೆಬ ಊರಿನವಳು.
2KI 12:2 ಯಾಜಕನಾದ ಯೆಹೋಯಾದಾವನು ಯೋವಾಷನಿಗೆ ಬೋಧಿಸಿದ ಎಲ್ಲಾ ವರ್ಷಗಳಲ್ಲಿ ಯೋವಾಷನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
2KI 12:3 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
2KI 12:4 ಯೋವಾಷನು ಯಾಜಕರಿಗೆ, “ಯೆಹೋವ ದೇವರ ಆಲಯಕ್ಕೆ ಪವಿತ್ರ ಅರ್ಪಣೆಗಳಾಗಿ ತರಲಾದ ಜನಗಣತಿಯಲ್ಲಿ ಸಂಗ್ರಹಿಸಿದ ಹಣ, ವೈಯಕ್ತಿಕ ಪ್ರತಿಜ್ಞೆಗಳಿಂದ ಪಡೆದ ಹಣ ಮತ್ತು ದೇವಾಲಯಕ್ಕೆ ಸ್ವಯಂಪ್ರೇರಣೆಯಿಂದ ತಂದ ಹಣವನ್ನು ಸಂಗ್ರಹಿಸಿರಿ ಎಂದನು.
2KI 12:5 ಯಾಜಕರಲ್ಲಿ ಪ್ರತಿಯೊಬ್ಬನು ಖಜಾಂಚಿಯವರಿಂದ ಹಣವನ್ನು ತೆಗೆದುಕೊಂಡು ಆಲಯದಲ್ಲಿ ಕಂಡುಕೊಳ್ಳುವ ಒಡಕುಗಳನ್ನೆಲ್ಲಾ ದುರಸ್ತಿ ಮಾಡಿಸಲು ಉಪಯೋಗಿಸಿರಿ,” ಎಂದನು.
2KI 12:6 ಆದರೆ ಯಾಜಕರು ಅರಸನಾದ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದವರೆಗೂ ದೇವಾಲಯವನ್ನು ದುರಸ್ತಿ ಮಾಡದೆ ಇದ್ದರು.
2KI 12:7 ಆದ್ದರಿಂದ ಅರಸನಾದ ಯೋವಾಷನು ಯಾಜಕನಾದ ಯೆಹೋಯಾದಾವನನ್ನು, ಇತರ ಯಾಜಕರನ್ನು ಕರೆದು ಅವರಿಗೆ, “ನೀವು ದೇವಾಲಯದ ಒಡಕುಗಳನ್ನು ಏಕೆ ದುರಸ್ತಿ ಮಾಡಿಸುತ್ತಿಲ್ಲ? ಇನ್ನು ಮೇಲೆ ನೀವು ನಿಮಗೆ ಪರಿಚಯವಿರುವ ಖಜಾಂಚಿಯವರಿಂದ ಹಣವನ್ನು ತೆಗೆದುಕೊಳ್ಳದೆ ದೇವಾಲಯದ ಒಡಕುಗಳನ್ನು ದುರಸ್ತಿ ಮಾಡಿಸಲು ಅದನ್ನು ಒಪ್ಪಿಸಿಕೊಡಿರಿ,” ಎಂದನು.
2KI 12:8 ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈ ಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು.
2KI 12:9 ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಅದರ ಮುಚ್ಚಳದಲ್ಲಿ ಒಂದು ರಂಧ್ರವನ್ನು ಮಾಡಿದನು. ಅವನು ಅದನ್ನು ಬಲಿಪೀಠದ ಬಳಿಯಲ್ಲಿ ಯೆಹೋವ ದೇವರ ಆಲಯ ಪ್ರವೇಶದ ಬಲಗಡೆಯಲ್ಲಿ ಇಟ್ಟನು. ಆಗ ಬಾಗಿಲು ಕಾಯುವ ಯಾಜಕರು ಯೆಹೋವ ದೇವರ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿ ಹಾಕಿಸುತ್ತಿದ್ದರು.
2KI 12:10 ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು.
2KI 12:11 ಅವರು ಎಣಿಸಿದ ಹಣವನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಅದರೊಂದಿಗೆ, ಅವರು ಯೆಹೋವ ದೇವರ ದೇವಸ್ಥಾನದಲ್ಲಿ ಕೆಲಸ ಮಾಡುವ ಬಡಗಿ, ಶಿಲ್ಪಿ,
2KI 12:12 ಉಪ್ಪಾರ, ಕಲ್ಲುಕುಟಿಗರಿಗೆ ಕೊಟ್ಟರು. ಇದಲ್ಲದೆ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಮರ, ಕೆತ್ತಿದ ಕಲ್ಲುಗಳನ್ನು ತೆಗೆದುಕೊಳ್ಳುವುದಕ್ಕೂ, ಆಲಯ ದುರಸ್ತಿ ಮಾಡಲು ಬೇಕಾದ ಸಮಸ್ತ ಖರ್ಚಿಗೂ ಕೊಟ್ಟರು.
2KI 12:13 ಯೆಹೋವ ದೇವರ ಆಲಯದೊಳಗೆ ತಂದ ಹಣದಿಂದ ಬೆಳ್ಳಿ ಬಟ್ಟಲು, ಕತ್ತರಿ, ಪಾತ್ರೆ, ತುತೂರಿ, ಬೆಳ್ಳಿಬಂಗಾರದ ಸಾಮಾನುಗಳು, ಇವೆಲ್ಲವುಗಳನ್ನು ಮಾಡಿಸದೆ,
2KI 12:14 ಅವರು ಅದನ್ನು ಕೆಲಸದವರಿಗೆ ಕೊಟ್ಟು, ಯೆಹೋವ ದೇವರ ಆಲಯದ ದುರಸ್ತಿ ಮಾಡಿಸಿದರು.
2KI 12:15 ಇದಲ್ಲದೆ ಅವರು ಕೆಲಸಮಾಡುವವರಿಗೆ ಹಣ ಕೊಡುವುದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ, ಅವರಿಂದ ಹಣದ ಲೆಕ್ಕವನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಂಬಿಗಸ್ತರಾಗಿದ್ದರು.
2KI 12:16 ಆದರೆ ಪ್ರಾಯಶ್ಚಿತ್ತ ಬಲಿಯ ಹಣವನ್ನು, ಪಾಪ ಪರಿಹಾರದ ಬಲಿಯ ಹಣವನ್ನು ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬರಲಿಲ್ಲ, ಅದು ಯಾಜಕರದಾಗಿತ್ತು.
2KI 12:17 ಈ ಸಮಯದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ, ಅದನ್ನು ವಶಪಡಿಸಿಕೊಂಡನು. ನಂತರ ಹಜಾಯೇಲನು ಯೆರೂಸಲೇಮಿನ ಮೇಲೆ ದಾಳಿಮಾಡಲು ಹೊರಟನು.
2KI 12:18 ಆಗ ಯೆಹೂದದ ಅರಸನಾದ ಯೋವಾಷನು ತನ್ನ ಪೂರ್ವಜರಾದ ಯೆಹೋಷಾಫಾಟ, ಯೆಹೋರಾಮ್, ಅಹಜ್ಯ ಎಂಬ ಯೆಹೂದದ ಅರಸರು ಅರ್ಪಿಸಿದ ಸಮಸ್ತ ಪ್ರತಿಷ್ಠಿತವಾದವುಗಳನ್ನೂ ತಾನೇ ಸ್ವತಃ ಅರ್ಪಿಸಿದ ಪ್ರತಿಷ್ಠಿತವಾದವುಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸದಲ್ಲಿಯೂ, ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತೆಗೆದುಕೊಂಡು ಅರಾಮಿನ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.
2KI 12:19 ಯೋವಾಷನ ಇತರ ಕಾರ್ಯಗಳು, ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 12:20 ಯೋವಾಷನ ಸೇವಕರು ಎದ್ದು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಸಿಲ್ಲಾ ಊರಿಗೆ ಇಳಿದು ಹೋಗುವ ಮಾರ್ಗವಾದ ಬೇತ್ ಮಿಲ್ಲೋ ಎಂಬ ಸ್ಥಳದಲ್ಲಿ ಯೋವಾಷನನ್ನು ಕೊಂದುಹಾಕಿದರು.
2KI 12:21 ಅವನ ಸೇವಕರಾದ ಶಿಮೆಯಾತನ ಮಗ ಯೋಜಾಬಾದ್ ಮತ್ತು ಶೋಮೇರನ ಮಗ ಯೆಹೋಜಾಬಾದ್ ಎಂಬವರು ಅರಸನನ್ನು ಕೊಂದರು. ಯೋವಾಷನ ಜನರು ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.
2KI 13:1 ಯೆಹೂದದ ಅರಸನಾದ ಅಹಜ್ಯನ ಮಗ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನೇಳು ವರ್ಷ ಆಳಿದನು.
2KI 13:2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ಬಿಟ್ಟುಬಿಡದೆ, ಅವುಗಳನ್ನು ಹಿಂಬಾಲಿಸಿದನು.
2KI 13:3 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಿಸಿಕೊಂಡು, ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಯಲ್ಲಿಯೂ, ಹಜಾಯೇಲನ ಮಗ ಬೆನ್ಹದದನ ಕೈಯಲ್ಲಿಯೂ ಬಹುಕಾಲ ಒಪ್ಪಿಸಿದರು.
2KI 13:4 ಆಗ ಯೆಹೋವಾಹಾಜನು ಯೆಹೋವ ದೇವರನ್ನು ಬೇಡಿಕೊಂಡದ್ದರಿಂದ ಯೆಹೋವ ದೇವರು ಅವನ ಮೊರೆಯನ್ನು ಕೇಳಿದರು. ಅರಾಮ್ಯರ ಅರಸನು ಇಸ್ರಾಯೇಲರನ್ನು ಬಾಧೆಪಡಿಸಿದ್ದನ್ನು ಅವರು ಕಂಡು,
2KI 13:5 ಯೆಹೋವ ದೇವರು ಇಸ್ರಾಯೇಲರಿಗೆ ಒಬ್ಬ ವಿಮೋಚಕನನ್ನು ಕೊಟ್ಟಿದ್ದರಿಂದ, ಅವರು ಅರಾಮ್ಯರ ಕೈಯಿಂದ ತಪ್ಪಿಸಿಕೊಂಡು ಹೋದರು. ಆಗ ಇಸ್ರಾಯೇಲರು ಮುಂಚಿನ ಹಾಗೆ ತಮ್ಮ ಮನೆಗಳಲ್ಲಿ ವಾಸವಾಗಿದ್ದರು.
2KI 13:6 ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು.
2KI 13:7 ಯೆಹೋವಾಹಾಜನ ಸೈನ್ಯದಲ್ಲಿ ಐವತ್ತು ಕುದುರೆ ರಾಹುತರು, ಹತ್ತು ರಥಗಳು, ಹತ್ತು ಸಾವಿರ ಜನ ಕಾಲಾಳುಗಳ ಹೊರತು ಏನೂ ಉಳಿಯಲಿಲ್ಲ. ಏಕೆಂದರೆ ಅರಾಮಿನ ಅರಸನು ಉಳಿದವರನ್ನು ಸಂಹರಿಸಿ, ತುಳಿದು, ಧೂಳಿನ ಹಾಗೆ ಮಾಡಿದನು.
2KI 13:8 ಯೆಹೋವಾಹಾಜನ ಇತರ ಕಾರ್ಯಗಳೂ ಅವನು ಮಾಡಿದ್ದೆಲ್ಲವೂ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 13:9 ಯೆಹೋವಾಹಾಜನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೋವಾಷನು ಅವನಿಗೆ ಬದಲಾಗಿ ಅರಸನಾದನು.
2KI 13:10 ಯೆಹೂದದ ಅರಸನಾದ ಯೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನಾರು ವರ್ಷ ಆಳಿದನು.
2KI 13:11 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಸಮಸ್ತ ಪಾಪಗಳನ್ನು ತೊರೆದುಬಿಡದೆ, ಅವುಗಳಲ್ಲಿ ಮುಂದುವರೆದನು.
2KI 13:12 ಯೋವಾಷನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 13:13 ಯೋವಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು, ಇವನ ಶವವನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸರ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನು ಅವನ ಸಿಂಹಾಸನ ಮೇಲೆ ಕುಳಿತುಕೊಂಡನು.
2KI 13:14 ಆಗ ಎಲೀಷನು ಮರಣಕರ ವ್ಯಾಧಿಯಿಂದ ಬಳಲುತ್ತಿದ್ದಾಗ, ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು, ಅವನ ಮೇಲೆ ಬಿದ್ದು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥಗಳೂ ಕುದುರೆ ಸವಾರರು ಆಗಿದ್ದವನೇ!” ಎಂದು ಹೇಳುತ್ತಾ ಅತ್ತನು.
2KI 13:15 ಎಲೀಷನು ಅವನಿಗೆ, “ಒಂದು ಬಿಲ್ಲನ್ನೂ ಬಾಣಗಳನ್ನೂ ತೆಗೆದುಕೋ,” ಎಂದನು. ಅವನು ತೆಗೆದುಕೊಂಡನು.
2KI 13:16 ಅವನು ಇಸ್ರಾಯೇಲಿನ ಅರಸನಿಗೆ, “ನಿನ್ನ ಕೈಯಲ್ಲಿ ಬಿಲ್ಲನ್ನು ತೆಗೆದುಕೋ,” ಅವನು ಅದನ್ನು ತೆಗೆದುಕೊಂಡಾಗ ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು.
2KI 13:17 “ಪೂರ್ವದಲ್ಲಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಎಲೀಷನು, “ಎಸೆ,” ಅನ್ನಲು, ಅವನು ಎಸೆದನು. “ಯೆಹೋವ ದೇವರ ವಿಜಯದ ಬಾಣವೇ, ಅರಾಮಿನಿಂದ ತಪ್ಪಿಸುವ ವಿಜಯದ ಬಾಣವೇ, ಅಫೇಕಿನಲ್ಲಿ ಅರಾಮ್ಯರನ್ನು ನಾಶಮಾಡುವವರೆಗೂ ನೀನು ಅವರನ್ನು ಹೊಡೆಯುವೆ,” ಎಂದು ಎಲೀಷನು ಹೇಳಿದನು.
2KI 13:18 ಅವನು, “ಬಾಣಗಳನ್ನು ತೆಗೆದುಕೋ,” ಎಂದನು. ಅರಸನು ತೆಗೆದುಕೊಂಡನು. ಎಲೀಷನು ಇಸ್ರಾಯೇಲಿನ ಅರಸನಿಗೆ, “ನೆಲದ ಮೇಲೆ ಹೊಡೆ,” ಎಂದನು. ಆಗ ಅವನು ಮೂರು ಸಾರಿ ಮಾತ್ರ ಹೊಡೆದು ನಿಂತನು.
2KI 13:19 ಆದರೆ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು, “ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಆಗ ಅರಾಮ್ಯರನ್ನು ನಾಶಮಾಡುವವರೆಗೂ ಹೊಡೆಯುತ್ತಿದ್ದೆ. ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಮಾತ್ರ ಹೊಡೆಯುವೆ,” ಎಂದನು.
2KI 13:20 ಅನಂತರ ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು. ವರ್ಷದ ಆರಂಭದಲ್ಲಿ ಮೋವಾಬ್ಯರ ದಂಡುಗಳು ದೇಶದಲ್ಲಿ ಪ್ರವೇಶಿಸಿದವು.
2KI 13:21 ಒಂದು ದಿನ ಕೆಲವು ಇಸ್ರಾಯೇಲರು ಒಬ್ಬ ಮನುಷ್ಯನನ್ನು ಸಮಾಧಿಮಾಡಲು ಹೋಗುತ್ತಿದ್ದರು. ಆಗ, ಮೋವಾಬ್ಯರ ದಂಡು ಬರುತ್ತಿರುವುದನ್ನು ಕಂಡು, ಆ ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಆ ಶವ ಸಮಾಧಿಯ ಮೇಲೆಬಿದ್ದಾಗ, ಅದು ಎಲೀಷನ ಎಲುಬುಗಳಿಗೆ ತಗಲಿ ಜೀವ ಬಂದು ಎದ್ದು ನಿಂತನು.
2KI 13:22 ಯೆಹೋವಾಹಾಜನ ದಿವಸಗಳೆಲ್ಲಾ ಅರಾಮಿನ ಅರಸನಾದ ಹಜಾಯೇಲನು ಇಸ್ರಾಯೇಲರನ್ನು ಬಾಧೆಪಡಿಸಿದನು.
2KI 13:23 ಆದರೆ ಯೆಹೋವ ದೇವರು ಅಬ್ರಹಾಮನ, ಇಸಾಕನ, ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಇಸ್ರಾಯೇಲರಿಗೆ ಕೃಪೆತೋರಿಸಿ ಅವರ ಮೇಲೆ ಅನುಕಂಪಗೊಂಡರು. ಅವರನ್ನು ನಾಶಮಾಡಲು, ಆತನು ಅವರನ್ನು ತನ್ನಿಂದ ತೊರೆದುಬಿಡಲು ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲು ಮನಸ್ಸು ಮಾಡಲಿಲ್ಲ.
2KI 13:24 ಅರಾಮಿನ ಅರಸನಾದ ಹಜಾಯೇಲನು ಮರಣಹೊಂದಿದನು. ಅವನ ಮಗ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು.
2KI 13:25 ಆಗ ಯೆಹೋವಾಹಾಜನ ಮಗ ಯೋವಾಷನು ಯುದ್ಧದಲ್ಲಿ ತನ್ನ ತಂದೆ ಯೆಹೋವಾಹಾಜನ ಕೈಯಿಂದ ಹಜಾಯೇಲನು ತೆಗೆದುಕೊಂಡಿದ್ದ ಪಟ್ಟಣಗಳನ್ನು ಅವನ ಮಗ ಬೆನ್ಹದದನ ಕೈಯಿಂದ ತಿರುಗಿ ತೆಗೆದುಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಾಯೇಲಿನ ಪಟ್ಟಣಗಳನ್ನು ತಿರುಗಿ ತೆಗೆದುಕೊಂಡನು.
2KI 14:1 ಇಸ್ರಾಯೇಲಿನ ಅರಸನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ, ಯೆಹೂದದ ಅರಸನಾದ ಯೋವಾಷನ ಮಗ ಅಮಚ್ಯನು ಅರಸನಾದನು.
2KI 14:2 ಅವನು ಆಳಲು ಆರಂಭಿಸಿದಾಗ, ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು.
2KI 14:3 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ತನ್ನ ಪಿತೃವಾದ ದಾವೀದನ ಹಾಗಲ್ಲ. ತನ್ನ ತಂದೆ ಯೋವಾಷನು ಮಾಡಿದ ಹಾಗೆ ಸಮಸ್ತವನ್ನು ಮಾಡಿದನು.
2KI 14:4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
2KI 14:5 ಇವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು.
2KI 14:6 ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ.
2KI 14:7 ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಸೋಲಿಸಿ, ಯುದ್ಧದಲ್ಲಿ ಸೆಲ ದುರ್ಗವನ್ನು ವಶಪಡಿಸಿಕೊಂಡು, ಅದಕ್ಕೆ ಯೊಕ್ತೆಯೇಲ್ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.
2KI 14:8 ಆಗ ಅಮಚ್ಯನು, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.
2KI 14:9 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು.
2KI 14:10 ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಗರ್ವಪಡುತ್ತಿರುವೆ, ನಿನ್ನ ಜಯದಲ್ಲಿ ಘನಪಡುತ್ತಾ, ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದು ಹೇಳಿ ಕಳುಹಿಸಿದನು.
2KI 14:11 ಆದರೆ ಅಮಚ್ಯನು ಕೇಳದೆ ಹೋದನು. ಆದ್ದರಿಂದ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು.
2KI 14:12 ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು.
2KI 14:13 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು ಮೂಲೆಯ ಬಾಗಿಲವರೆಗೂ, ಆರುನೂರು ಅಡಿ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು.
2KI 14:14 ಯೆಹೋವ ದೇವರ ಆಲಯದಲ್ಲಿ, ಅರಮನೆಯ ಬೊಕ್ಕಸಗಳಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ ಎಲ್ಲಾ ಸಲಕರಣೆಗಳನ್ನೂ ಯುದ್ಧದಲ್ಲಿ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.
2KI 14:15 ಯೋವಾಷನು ಮಾಡಿದ ಇತರ ಕ್ರಿಯೆಗಳೂ, ಅವನ ಪರಾಕ್ರಮವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ್ದೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 14:16 ಯೋವಾಷನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸುಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಯಾರೊಬ್ಬಾಮನು ಅವನ ಬದಲಿಗೆ ಅರಸನಾದನು.
2KI 14:17 ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು.
2KI 14:18 ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 14:19 ಯೆರೂಸಲೇಮಿನವರು ಅಮಚ್ಯನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.
2KI 14:20 ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ದಾವೀದನ ಪಟ್ಟಣವಾದ ಯೆರೂಸಲೇಮಿನಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು.
2KI 14:21 ಆಗ ಯೆಹೂದದ ಎಲ್ಲಾ ಜನರು ಹದಿನಾರು ವರ್ಷದವನಾದ ಅಜರ್ಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗಿ ಮಾಡಿದರು.
2KI 14:22 ಅಮಚ್ಯನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದ ತರುವಾಯ, ಅಜರ್ಯನು ಏಲತನ್ನು ಪುನಃ ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿಕೊಂಡನು.
2KI 14:23 ಯೆಹೂದದ ಅರಸನಾದ ಯೋವಾಷನ ಮಗನಾದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲು ಆರಂಭಿಸಿ, ನಾಲ್ವತ್ತೊಂದು ವರ್ಷ ಆಳಿದನು.
2KI 14:24 ಆದರೆ ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನೆಲ್ಲಾ ಅವನು ತೊರೆದುಬಿಡಲಿಲ್ಲ.
2KI 14:25 ಇದಲ್ಲದೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಗತ್‌ಹೇಫೆರಿನ ಪ್ರವಾದಿಯಾದ ಅಮಿತ್ತೈಯನ ಮಗ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದಂತೆ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಅರಾಬಾ ತಗ್ಗಿನ ಸಮುದ್ರದವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರುಗಿ ತೆಗೆದುಕೊಂಡನು.
2KI 14:26 ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರೂ ಸ್ವತಂತ್ರನಾಗಿರಲಿ, ಗುಲಾಮನಾಗಿರಲಿ, ಎಲ್ಲರು ಎಷ್ಟು ಕಷ್ಟದಲ್ಲಿದ್ದಾರೆಂಬುದನ್ನು ಯೆಹೋವ ದೇವರು ನೋಡಿದರು. ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ.
2KI 14:27 ಇಸ್ರಾಯೇಲಿನ ನಾಮವನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನೆಂದು ಯೆಹೋವ ದೇವರು ಹೇಳದೇ ಇದ್ದುದರಿಂದ, ಯೋವಾಷನ ಮಗ ಯಾರೊಬ್ಬಾಮನ ಕೈಯಿಂದ ಅವರನ್ನು ರಕ್ಷಿಸಿದರು.
2KI 14:28 ಯಾರೊಬ್ಬಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನ ಪರಾಕ್ರಮವೂ, ಅವನ ಯುದ್ಧಗಳೂ, ಯೆಹೂದಕ್ಕೆ ಸೇರಿದ ದಮಸ್ಕವನ್ನೂ, ಹಮಾತನ್ನೂ ಇಸ್ರಾಯೇಲಿಗೋಸ್ಕರ ಹಿಂದಿರುಗಿ ತೆಗೆದುಕೊಂಡದ್ದೂ, ಇಸ್ರಾಯೇಲಿನ ಅರಸುಗಳ ದಿನಚರ್ಯೆಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 14:29 ಯಾರೊಬ್ಬಾಮನು ಮೃತನಾಗಿ ಇಸ್ರಾಯೇಲಿನ ಅರಸುಗಳಾದ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಜೆಕರ್ಯನು ಅವನಿಗೆ ಬದಲಾಗಿ ಅರಸನಾದನು.
2KI 15:1 ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ, ಯೆಹೂದದ ಅರಸನಾಗಿರುವ ಅಮಚ್ಯನ ಮಗ ಅಜರ್ಯನು ಆಳಲು ಆರಂಭಿಸಿದನು.
2KI 15:2 ಅವನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು.
2KI 15:3 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
2KI 15:4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
2KI 15:5 ಯೆಹೋವ ದೇವರು ಅರಸನನ್ನು ಮರಣದ ದಿವಸದವರೆಗೂ ಕುಷ್ಠರೋಗದಿಂದ ಬಾಧಿಸಿದ್ದರಿಂದ, ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.
2KI 15:6 ಅಜರ್ಯನ ಇತರ ಕ್ರಿಯೆಗಳನ್ನು ಅವನು ಮಾಡಿದ ಸಮಸ್ತವನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:7 ಅಜರ್ಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
2KI 15:8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾದನು. ಅವನು ಆರು ತಿಂಗಳು ಆಳಿದನು.
2KI 15:9 ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2KI 15:10 ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
2KI 15:11 ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:12 “ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು.
2KI 15:13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಅರಸನಾಗಿ, ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
2KI 15:14 ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
2KI 15:15 ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:16 ಆ ಸಮಯದಲ್ಲಿ ಮೆನಹೇಮನು ತಿರ್ಚದಿಂದ ತಿಪ್ಸಹು ಪಟ್ಟಣಕ್ಕೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲುಗಳನ್ನು ತನಗೆ ತೆರೆಯದೆ ಇದ್ದುದರಿಂದ ಎಲ್ಲರನ್ನೂ, ಅದರ ಮೇರೆಗಳಲ್ಲಿದ್ದವರೆಲ್ಲರನ್ನೂ ಸಂಹರಿಸಿದನು. ತಿಪ್ಸಹವನ್ನು ಹಾಳು ಮಾಡಿ, ಎಲ್ಲಾ ಗರ್ಭಿಣಿಯರ ಹೊಟ್ಟೆಗಳನ್ನು ಸೀಳಿಸಿದನು.
2KI 15:17 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.
2KI 15:18 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2KI 15:19 ಅಸ್ಸೀರಿಯಾ ದೇಶದ ಅರಸನಾದ ಪೂಲನು ಇಸ್ರಾಯೇಲ್ ದೇಶದ ಮೇಲೆ ಯುದ್ಧಕ್ಕೆ ಬಂದನು. ಆಗ ಮೆನಹೇಮನು ಅವನ ಬೆಂಬಲವನ್ನು ಪಡೆಯಲು ಮತ್ತು ರಾಜ್ಯವನ್ನು ದೃಢಪಡಿಸಲು ಪೂಲನಿಗೆ ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು.
2KI 15:20 ಮೆನಹೇಮನು ಈ ಹಣವನ್ನು ಇಸ್ರಾಯೇಲಿನಿಂದ ವಸೂಲಿ ಮಾಡಿದನು. ಪ್ರತಿಯೊಬ್ಬ ಶ್ರೀಮಂತನು ಅಸ್ಸೀರಿಯದ ಅರಸನಿಗೆ ಕೊಡಬೇಕಾದ ಅರ್ಧ ಕಿಲೋಗ್ರಾಂ ಬೆಳ್ಳಿಯನ್ನು ನೀಡಬೇಕಾಗಿತ್ತು. ಆದ್ದರಿಂದ ಅಸ್ಸೀರಿಯದ ಅರಸನು ದೇಶದಲ್ಲಿ ನಿಲ್ಲದೆ ತನ್ನ ಸೈನ್ಯದೊಂದಿಗೆ ಹಿಂದಿರುಗಿ ಹೋದನು.
2KI 15:21 ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:22 ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು.
2KI 15:23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾಗಿ, ಎರಡು ವರ್ಷ ಆಳಿದನು.
2KI 15:24 ಪೆಕಹ್ಯನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ.
2KI 15:25 ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು.
2KI 15:26 ಪೆಕಹ್ಯನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರುಷದಲ್ಲಿ ರೆಮಲ್ಯನ ಮಗ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾಗಿ, ಇಪ್ಪತ್ತು ವರ್ಷ ಆಳಿದನು.
2KI 15:28 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2KI 15:29 ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು.
2KI 15:30 ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು.
2KI 15:31 ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:32 ಇಸ್ರಾಯೇಲಿನ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಉಜ್ಜೀಯನ ಮಗ ಯೋತಾಮನು ಆಳಲು ಆರಂಭಿಸಿದನು.
2KI 15:33 ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
2KI 15:34 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
2KI 15:35 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. ಯೋತಾಮನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿದನು.
2KI 15:36 ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 15:37 ಆ ದಿವಸಗಳಲ್ಲಿ ಯೆಹೋವ ದೇವರು ಅರಾಮಿನ ಅರಸನಾದ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದದ ವಿರೋಧವಾಗಿ ಕಳುಹಿಸಲು ಆರಂಭಿಸಿದರು.
2KI 15:38 ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.
2KI 16:1 ರೆಮಲ್ಯನ ಮಗ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಯೆಹೂದದ ಅರಸನಾಗಿರುವ ಯೋತಾಮನ ಮಗ ಆಹಾಜನು ಆಳಲು ಆರಂಭಿಸಿದನು.
2KI 16:2 ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಆದರೆ ಅವನು ತನ್ನ ತಂದೆಯಾದ ದಾವೀದನ ಹಾಗೆ ನಡೆಯದೆ, ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಲಿಲ್ಲ,
2KI 16:3 ಆಹಾಜನು ಇಸ್ರಾಯೇಲಿನ ಅರಸರ ಮಾರ್ಗದಲ್ಲಿ ನಡೆದನು. ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಇತರ ಜನಾಂಗಗಳ ಅಸಹ್ಯಕರವಾದ ಆಚಾರಗಳನ್ನು ಅನುಸರಿಸಿ ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಯಜ್ಞವಾಗಿ ಅರ್ಪಿಸಿದನು.
2KI 16:4 ಇದಲ್ಲದೆ ಅವನು ಪೂಜಾಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಎಲ್ಲಾ ಹಸಿರಾದ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.
2KI 16:5 ಆಗ ಅರಾಮಿನ ಅರಸನಾದ ರೆಚೀನ್, ಮತ್ತು ಇಸ್ರಾಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹನು ಯುದ್ಧಮಾಡಲು ಯೆರೂಸಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು. ಆದರೆ ಅವನನ್ನು ಜಯಿಸುವುದು ಅವರಿಂದ ಆಗಲಿಲ್ಲ.
2KI 16:6 ಅದೇ ವೇಳೆಯಲ್ಲಿ ಅರಾಮಿನ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ ರಾಜ್ಯಕ್ಕೆ ತಿರುಗಿ ಸೇರಿಸಿಕೊಂಡು ಏಲತ್ ಪಟ್ಟಣದಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು. ಎದೋಮ್ಯರು ಏಲತ್ ಪಟ್ಟಣದಲ್ಲಿ ಬಂದು ಇಂದಿನವರೆಗೂ ಅಲ್ಲಿ ವಾಸವಾಗಿದ್ದಾರೆ.
2KI 16:7 ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನಿಗೆ, “ನಾನು ನಿನ್ನ ಸೇವಕನೂ, ನಿನ್ನ ಮಗನೂ ಆಗಿದ್ದೇನೆ. ನನಗೆ ವಿರೋಧವಾಗಿ ಎದ್ದ ಅರಾಮಿನ ಅರಸನ ಕೈಗೂ, ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ, ರಕ್ಷಿಸುವುದಕ್ಕೆ ಬರಬೇಕು,” ಎಂದು ಹೇಳಿ ಸೇವಕರನ್ನು ಕಳುಹಿಸಿದನು.
2KI 16:8 ಆಹಾಜನು ಯೆಹೋವ ದೇವರ ಆಲಯದಲ್ಲಿಯೂ, ಅರಮನೆಯ ಖಜಾನೆಯಲ್ಲಿಯೂ ಇದ್ದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅಸ್ಸೀರಿಯದ ಅರಸನಿಗೆ ಕಾಣಿಕೆಯಾಗಿ ಕಳುಹಿಸಿದನು.
2KI 16:9 ಆಗ ಅಸ್ಸೀರಿಯದ ಅರಸನು ಅವನ ಮಾತು ಕೇಳಿ, ದಮಸ್ಕಕ್ಕೆ ಹೋಗಿ, ಅದನ್ನು ಮುತ್ತಿಗೆ ಹಾಕಿ, ಅದರ ನಿವಾಸಿಗಳನ್ನು ಕೀರ್ ಪ್ರಾಂತಕ್ಕೆ ಸೆರೆಯಾಗಿ ತಂದು, ರೆಚೀನನನ್ನು ಕೊಂದುಹಾಕಿದನು.
2KI 16:10 ಅರಸನಾದ ಆಹಾಜನು ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ, ದಮಸ್ಕದಲ್ಲಿ ಒಂದು ಬಲಿಪೀಠವನ್ನು ಕಂಡನು. ಅರಸನಾದ ಆಹಾಜನು ಆ ಬಲಿಪೀಠದ ರೂಪವನ್ನೂ, ಅದರ ಎಲ್ಲಾ ಕೈಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು.
2KI 16:11 ಯಾಜಕನಾದ ಊರೀಯನು ಅದರ ಪ್ರಕಾರ ಒಂದು ಬಲಿಪೀಠವನ್ನು ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬರುವ ಮೊದಲೇ ಕಟ್ಟಿ ಮುಗಿಸಿದನು.
2KI 16:12 ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ಕಂಡನು. ಅರಸನು ಬಲಿಪೀಠದ ಬಳಿಗೆ ಹೋಗಿ,
2KI 16:13 ಬಲಿಪೀಠದ ಮೇಲೆ ದಹನಬಲಿಯನ್ನೂ ತನ್ನ ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು, ಪಾನಗಳನ್ನು ಹೊಯ್ದನು, ಸಮಾಧಾನದ ಬಲಿಗಳ ರಕ್ತವನ್ನು ಚಿಮುಕಿಸಿದನು.
2KI 16:14 ಯೆಹೋವ ದೇವರ ಸಮ್ಮುಖದಲ್ಲಿ ಕಂಚಿನ ಬಲಿಪೀಠವನ್ನು ದೇವಾಲಯದ ಮುಂಭಾಗದಿಂದ ಅಂದರೆ ಯೆಹೋವ ದೇವರ ಆಲಯಕ್ಕೂ, ಬಲಿಪೀಠಕ್ಕೂ ಮಧ್ಯದಿಂದಲೂ ತಂದು, ಅದನ್ನು ಹೊಸ ಬಲಿಪೀಠಕ್ಕೆ ಉತ್ತರ ಕಡೆಯಲ್ಲಿ ಇಟ್ಟನು.
2KI 16:15 ಆಗ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯದಲ್ಲಿ ದಹನಬಲಿಯನ್ನೂ, ಸಾಯಂಕಾಲದ ಧಾನ್ಯ ಸಮರ್ಪಣೆಯನ್ನೂ, ಪಾನದ್ರವ್ಯವನ್ನೂ ದೊಡ್ಡ ಹೊಸ ಬಲಿಪೀಠದ ಮೇಲೆ ಅರ್ಪಿಸಿ, ದಹನಬಲಿಯ ರಕ್ತವೆಲ್ಲವನ್ನೂ ಚಿಮುಕಿಸಿದನು. ಆದರೆ ಕಂಚಿನ ಬಲಿಪೀಠವನ್ನು ನಾನು ಮಾರ್ಗದರ್ಶನಕ್ಕಾಗಿ ಉಪಯೋಗಿಸುವೆನು,” ಎಂದು ಆಜ್ಞಾಪಿಸಿದನು.
2KI 16:16 ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು.
2KI 16:17 ಅರಸನಾದ ಆಹಾಜನು ಪೀಠದ ಅಂಚುಗಳನ್ನು ಕೊಯ್ದು, ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ಅದರ ಮೇಲಿನಿಂದ ಇಳಿಸಿ, ಅದನ್ನು ಕಲ್ಲುಗಳ ಕಟ್ಟೆಯ ಮೇಲೆ ಇಟ್ಟನು.
2KI 16:18 ಯೆಹೋವ ದೇವರ ಆಲಯದ ಪ್ರಾಕಾರದ ಒಳಗೆ ಸಬ್ಬತ್ ದಿನದ ಆರಾಧನೆಗಾಗಿ, ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದನು, ಇವುಗಳನ್ನೆಲ್ಲ ಅಸ್ಸೀರಿಯದ ಅರಸನ ನಿಮಿತ್ತವಾಗಿ ಆಹಾಜನೇ ಬದಲಾಯಿಸಿದನು.
2KI 16:19 ಆಹಾಜನ ಆಳ್ವಿಕೆಯಲ್ಲಿಯ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 16:20 ಆಹಾಜನು ಮೃತನಾಗಿ ತನ್ನ ಪಿತೃಗಳ ಬಳಿಯಲ್ಲಿ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು.
2KI 17:1 ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಅರಸನಾಗಿ, ಒಂಬತ್ತು ವರ್ಷ ಆಳಿದನು.
2KI 17:2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸರ ಹಾಗಿರಲಿಲ್ಲ.
2KI 17:3 ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಅವನ ವಿರುದ್ಧ ಬಂದದ್ದರಿಂದ, ಹೋಶೇಯನು ಅವನಿಗೆ ಸೇವಕನಾಗಿ ಅವನಿಗೆ ಕಪ್ಪವನ್ನು ಕೊಟ್ಟನು.
2KI 17:4 ಆದರೆ ಅಸ್ಸೀರಿಯದ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನೆಂದರೆ, ಹೋಶೇಯನು ಅಸ್ಸೀರಿಯದ ಅರಸನಿಗೆ ವರ್ಷ ವರ್ಷಕ್ಕೂ ಕೊಡುವ ಕಪ್ಪವನ್ನು ಕೊಡದೆ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ದೂತರನ್ನು ಕಳುಹಿಸಿದನು. ಆದ್ದರಿಂದ ಅಸ್ಸೀರಿಯದ ಅರಸನು ಅವನನ್ನು ಕಟ್ಟಿ, ಸೆರೆಮನೆಯಲ್ಲಿ ಬಂಧಿಸಿದನು.
2KI 17:5 ಆಗ ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು, ಸಮಾರ್ಯಕ್ಕೆ ವಿರೋಧವಾಗಿ ಬಂದು ಅದನ್ನು ಮೂರು ವರ್ಷಗಳವರೆಗೂ ಮುತ್ತಿಗೆಹಾಕಿದನು.
2KI 17:6 ಹೋಶೇಯನ ಒಂಬತ್ತನೆಯ ವರ್ಷದಲ್ಲಿ ಅಸ್ಸೀರಿಯದ ಅರಸನು ಸಮಾರ್ಯವನ್ನು ವಶಪಡಿಸಿಕೊಂಡನು. ಅವನು ಇಸ್ರಾಯೇಲನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.
2KI 17:7 ಇಸ್ರಾಯೇಲರನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಇದೆಲ್ಲವೂ ಆಯಿತು. ಅವರು ಬೇರೆ ದೇವರುಗಳನ್ನು ಆರಾಧಿಸಿದರು.
2KI 17:8 ಅವರ ಮುಂದೆ ಯೆಹೋವ ದೇವರು ಓಡಿಸಿಬಿಟ್ಟಿದ್ದ ಜನರ ಮತ್ತು ಇಸ್ರಾಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು.
2KI 17:9 ಇಸ್ರಾಯೇಲರು ರಹಸ್ಯವಾಗಿ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಯುಕ್ತವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲುಗೊಂಡು ಕೋಟೆಯುಳ್ಳ ಪಟ್ಟಣಗಳವರೆಗೂ, ತಮ್ಮ ಸಮಸ್ತ ಪಟ್ಟಣಗಳಲ್ಲಿ ತಮಗೆ ಪೂಜಾಸ್ಥಳಗಳನ್ನು ಕಟ್ಟಿಸಿಕೊಂಡಿದ್ದರು.
2KI 17:10 ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ, ಹಸಿರಾದ ಎಲ್ಲಾ ಮರಗಳ ಕೆಳಗೂ ತಮಗೆ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದ್ದರು.
2KI 17:11 ಯೆಹೋವ ದೇವರು ತಮ್ಮ ಮುಂದೆ ಓಡಿಸಿಬಿಟ್ಟ ಇತರ ಜನರಂತೆ ಅವರು ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪವನ್ನು ಸುಟ್ಟು ಯೆಹೋವ ದೇವರನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು.
2KI 17:12 “ನೀವು ಈ ಕಾರ್ಯವನ್ನು ಮಾಡಬೇಡಿರಿ,” ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರೂ, ಅವರು ಮೂರ್ತಿಗಳಿಗೆ ಪೂಜೆ ಮಾಡಿದರು.
2KI 17:13 “ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ, ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ಮೋಶೆಯ ಎಲ್ಲಾ ನಿಯಮದ ಪ್ರಕಾರ ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳಿರಿ,” ಎಂದು ಯೆಹೋವ ದೇವರು ಸಮಸ್ತ ಪ್ರವಾದಿಗಳ ಮುಖಾಂತರವಾಗಿಯೂ, ಸಮಸ್ತ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ, ಯೆಹೂದಕ್ಕೂ ಎಚ್ಚರಿಕೆ ಕೊಟ್ಟಿದ್ದರು.
2KI 17:14 ಆದರೆ ಅವರು ಕೇಳದೆ ತಮ್ಮ ದೇವರಾದ ಯೆಹೋವ ದೇವರಲ್ಲಿ ನಂಬಿಕೆ ಇಡದೆ ತಮ್ಮ ಪಿತೃಗಳಂತೆ ದೇವರ ಆಜ್ಞೆಗಳಿಗೆ ಮಣಿಯದೆ,
2KI 17:15 ದೇವರ ಕಟ್ಟಳೆಗಳನ್ನೂ, ದೇವರು ತಮ್ಮ ಪಿತೃಗಳ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಅವರಿಗೆ ಹೇಳಿದ ಎಚ್ಚರಿಕೆಯನ್ನೂ ತಿರಸ್ಕರಿಸಿದರು. ಅವರು ವ್ಯರ್ಥವಾದ ವಿಗ್ರಹಗಳನ್ನು ಹಿಂಬಾಲಿಸಿ, ನಿಷ್ಪ್ರಯೋಜಕರಾದರು. “ನೀವು ಅವರ ಹಾಗೆ ಮಾಡಬೇಡಿರಿ,” ಎಂದು ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ್ದರೂ, ಅವರು ತಮ್ಮ ಸುತ್ತಲಿನ ಜನರನ್ನೇ ಅನುಸರಿಸಿದರು.
2KI 17:16 ಇದಲ್ಲದೆ ಅವರು ತಮ್ಮ ದೇವರಾದ ಯೆಹೋವ ದೇವರ ಸಮಸ್ತ ಆಜ್ಞೆಗಳನ್ನು ಬಿಟ್ಟುಬಿಟ್ಟು, ತಮಗೆ ತಾವೇ ಎರಡು ಎರಕದ ಕರುಗಳ ಮೂರ್ತಿಗಳನ್ನು ಮಾಡಿಕೊಂಡರು. ಅವರು ಅಶೇರ ಸ್ತಂಭವನ್ನು ನಿಲ್ಲಿಸಿ, ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು, ಬಾಳನನ್ನು ಸೇವಿಸಿ ತಮ್ಮ ಪುತ್ರಪುತ್ರಿಯರನ್ನೂ ಬೆಂಕಿಯಲ್ಲಿ ಬಲಿಕೊಟ್ಟರು.
2KI 17:17 ಕಣಿಗಳನ್ನೂ, ಶಕುನಗಳನ್ನೂ ಬಳಸಿ, ಯೆಹೋವ ದೇವರಿಗೆ ಕೋಪ ಬರುವಂತೆ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
2KI 17:18 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಬಹುಕೋಪಗೊಂಡು, ಅವರನ್ನು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿಯಲಿಲ್ಲ.
2KI 17:19 ಯೆಹೂದದವರು ಸಹ ತಮ್ಮ ಯೆಹೋವ ದೇವರ ಆಜ್ಞೆಗಳನ್ನು ಕೈಕೊಳ್ಳದೆ, ಇಸ್ರಾಯೇಲರ ಪದ್ಧತಿಗಳಲ್ಲಿಯೇ ನಡೆದರು.
2KI 17:20 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಸಂತತಿಯನ್ನೆಲ್ಲಾ ಅಲಕ್ಷ್ಯಮಾಡಿ, ಅವರನ್ನು ಕುಂದಿಸಿ, ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಡುವವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು.
2KI 17:21 ದೇವರು ಇಸ್ರಾಯೇಲನ್ನು ದಾವೀದನ ಸಂತಾನದಿಂದ ವಿಭಾಗಿಸಿದಾಗ, ಅವರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲನ್ನು ಯೆಹೋವ ದೇವರ ಮಾರ್ಗದಿಂದ ತಪ್ಪಿಸಿ, ಮಹಾ ಪಾಪಮಾಡಲು ಪ್ರೇರೇಪಿಸಿದನು.
2KI 17:22 ಇಸ್ರಾಯೇಲರು ಯಾರೊಬ್ಬಾಮನು ಮಾಡಿದ ಸಮಸ್ತ ಪಾಪಗಳಲ್ಲಿ ನಡೆದರು. ಅವುಗಳನ್ನು ತೊರೆದುಬಿಡಲಿಲ್ಲ.
2KI 17:23 ಯೆಹೋವ ದೇವರು ಪ್ರವಾದಿಗಳಾದ ತಮ್ಮ ಸೇವಕರ ಮುಖಾಂತರ ಎಚ್ಚರಿಸಿದ ಹಾಗೆ, ಇಸ್ರಾಯೇಲನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಹೀಗೆ ಇಸ್ರಾಯೇಲರು ಬಹು ಕಾಲದವರೆಗೂ ತಮ್ಮ ದೇಶದಿಂದ ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಇರಬೇಕಾಯಿತು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
2KI 17:24 ಅಸ್ಸೀರಿಯದ ಅರಸನು ಬಾಬಿಲೋನ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಊರುಗಳ ಜನರನ್ನು ಬರಮಾಡಿ, ಅವರನ್ನು ಇಸ್ರಾಯೇಲರಿಗೆ ಬದಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಅವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು, ಅದರ ಪಟ್ಟಣಗಳಲ್ಲಿ ವಾಸಿಸಿದರು.
2KI 17:25 ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ, ಯೆಹೋವ ದೇವರಿಗೆ ಭಯಪಡದ ಕಾರಣ, ಯೆಹೋವ ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದರು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು.
2KI 17:26 ಆದಕಾರಣ ಸೇವಕರು ಅಸ್ಸೀರಿಯದ ಅರಸನಿಗೆ, “ನೀನು ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನರು ಆ ದೇಶದ ದೇವರು ಅಪೇಕ್ಷಿಸುವುದನ್ನು ತಿಳಿಯದೆ ಇದ್ದಾರೆ. ಆದುದರಿಂದ, ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾರೆ. ಅವು ಅವರನ್ನು ಕೊಂದುಹಾಕುತ್ತವೆ,” ಎಂದು ತಿಳಿಸಿದರು.
2KI 17:27 ಆಗ ಅಸ್ಸೀರಿಯದ ಅರಸನು, “ನೀವು ಅಲ್ಲಿಂದ ತೆಗೆದುಕೊಂಡು ಬಂದ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ. ಅವನು ಅಲ್ಲಿ ವಾಸವಾಗಿರಲಿ. ಅವನೇ ಅವರಿಗೆ ಆ ದೇಶದ ದೇವರು ಅಪೇಕ್ಷಿಸುವುದನ್ನು ಬೋಧಿಸಲಿ,” ಎಂದು ಆಜ್ಞಾಪಿಸಿದನು.
2KI 17:28 ಆಗ ಅವರು ಸಮಾರ್ಯದಿಂದ ಕರೆತಂದ ಯಾಜಕರಲ್ಲಿ, ಒಬ್ಬನು ಬಂದು ಬೇತೇಲಿನಲ್ಲಿ ವಾಸವಾಗಿದ್ದು, ಅವರು ಯೆಹೋವ ದೇವರಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು.
2KI 17:29 ಆದರೆ ಪ್ರತಿ ಜನಾಂಗದವರೂ, ತಾವು ವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ, ಸಮಾರ್ಯದವರು ಮಾಡಿದ ಪೂಜಾಸ್ಥಳಗಳ ಮಂದಿರಗಳಲ್ಲಿ ಅವುಗಳನ್ನು ಇರಿಸಿದರು.
2KI 17:30 ಬಾಬಿಲೋನಿನ ಜನರು ಸುಕ್ಕೋತ್ ಬೆನೋತ್ ವಿಗ್ರಹವನ್ನು ಮಾಡಿದರು; ಕೂತವಿನ ಜನರು ನೇರ್ಗಲ್ ವಿಗ್ರಹವನ್ನು ಮಾಡಿಕೊಂಡರು; ಹಮಾತಿನ ಜನರು ಅಷೀಮಾವನ್ನು ಮಾಡಿಕೊಂಡರು;
2KI 17:31 ಅವ್ವೀಯರು ನಿಭಜ್, ತರ್ತಕ್ ಎಂಬ ದೇವತೆಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾದ ಅದ್ರಮ್ಮೆಲೆಕ್, ಅನಮ್ಮೇಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಅಗ್ನಿಬಲಿ ಕೊಡುತ್ತಿದ್ದರು.
2KI 17:32 ಅವರು ಯೆಹೋವ ದೇವರಿಗೆ ಆರಾಧನೆ ಸಲ್ಲಿಸಿದರು. ಆದರೂ ತಮ್ಮಲ್ಲಿರುವ ಪೂಜಾಸ್ಥಳಗಳ ಯಾಜಕರನ್ನು ನೇಮಿಸಿಕೊಂಡರು. ಇವರು ಪೂಜಾಸ್ಥಳಗಳ ಮೇಲಿರುವ ಮಂದಿರಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು.
2KI 17:33 ಅವರು ಯೆಹೋವ ದೇವರಿಗೆ ಆರಾಧನೆ ಮಾಡಿದರು. ಆದರೂ ಅವರು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳನ್ನು ಸಹ ಸೇವಿಸಿದರು.
2KI 17:34 ಈ ದಿವಸದವರೆಗೂ ಅವರು ತಮ್ಮ ಪೂರ್ವದ ಪದ್ಧತಿಯ ಪ್ರಕಾರ ಮಾಡುತ್ತಾರೆ. ಅವರು ಯೆಹೋವ ದೇವರಿಗೆ ಭಯಪಡದೆ, ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ, ತಮ್ಮ ನೀತಿಗಳ ಪ್ರಕಾರವಾಗಿಯೂ, ನಿಯಮದ ಪ್ರಕಾರವಾಗಿಯೂ ಯೆಹೋವ ದೇವರು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ.
2KI 17:35 ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ, “ನೀವು ಇತರ ದೇವರುಗಳಿಗೆ ಭಯಪಡದೆ ಅವುಗಳಿಗೆ ಅಡ್ಡಬೀಳದೆ, ಅವುಗಳನ್ನು ಸೇವಿಸದೆ, ಅವುಗಳಿಗೆ ಬಲಿಯನ್ನು ಅರ್ಪಿಸದೆ ಇರಬೇಕು.
2KI 17:36 ಆದರೆ ಮಹಾಶಕ್ತಿಯಿಂದಲೂ, ಚಾಚಿದ ಭುಜಪರಾಕ್ರಮದಿಂದಲೂ ಈಜಿಪ್ಟ್ ದೇಶದಿಂದ ನಿಮ್ಮನ್ನು ಬರಮಾಡಿದ ಯೆಹೋವ ದೇವರಿಗೆ ನೀವು ಭಯಪಟ್ಟು, ಅವರೊಬ್ಬರಿಗೇ ಅಡ್ಡಬಿದ್ದು, ಬಲಿ ಅರ್ಪಿಸಿರಿ.
2KI 17:37 ಇದಲ್ಲದೆ ದೇವರು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ, ನೀತಿಗಳನ್ನೂ, ನಿಯಮವನ್ನೂ, ಆಜ್ಞೆಯನ್ನೂ ನೀವು ನಿರಂತರವಾಗಿ ಕೈಗೊಳ್ಳಲು ಎಚ್ಚರಿಕೆಯಾಗಿರಬೇಕು. ಇತರ ದೇವರುಗಳಿಗೆ ಭಯಪಡಬೇಡಿರಿ.
2KI 17:38 ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ನೀವು ಮರೆಯದೆ, ಇತರ ದೇವರುಗಳಿಗೆ ಭಯಪಡದೆ,
2KI 17:39 ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಭಯಪಡಿರಿ. ಆಗ ಅವರು ನಿಮ್ಮನ್ನು ನಿಮ್ಮ ಶತ್ರುಗಳ ಕೈಯೊಳಗಿಂದ ವಿಮೋಚನೆ ಮಾಡುವರು,” ಎಂದು ಹೇಳಿದ್ದರು.
2KI 17:40 ಆದರೆ ಜನರು ಕೇಳದೆ ತಮ್ಮ ಪೂರ್ವದ ಪದ್ಧತಿಯ ಹಾಗೆ ಮಾಡಿದರು.
2KI 17:41 ಇವರು ಯೆಹೋವ ದೇವರಿಗೆ ಇಂದಿನವರೆಗೂ ಭಯಪಡದೆ, ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು. ಇವರ ಪಿತೃಗಳು ಮಾಡಿದ ಹಾಗೆ, ಇವರೂ, ಇವರ ಮಕ್ಕಳೂ, ಇವರ ಮೊಮ್ಮಕ್ಕಳೂ ಮಾಡುತ್ತಿದ್ದಾರೆ.
2KI 18:1 ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಅರಸನಾಗಿದ್ದ ಆಹಾಜನ ಮಗ ಹಿಜ್ಕೀಯನು ಆಳಲು ಆರಂಭಿಸಿದನು.
2KI 18:2 ಅವನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ. ಅವಳು ಜೆಕರ್ಯನ ಮಗಳಾಗಿದ್ದಳು.
2KI 18:3 ಹಿಜ್ಕೀಯನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
2KI 18:4 ಹಿಜ್ಕೀಯನು ಉನ್ನತ ಪೂಜಾಸ್ಥಳಗಳನ್ನು ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅಶೇರ ಸ್ತಂಭಗಳನ್ನು ಕಡಿದುಹಾಕಿದನು. ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಮುರಿದುಬಿಟ್ಟನು. ಏಕೆಂದರೆ ಆ ದಿವಸಗಳವರೆಗೂ ಇಸ್ರಾಯೇಲರು ಅದಕ್ಕೆ ಧೂಪ ಸುಡುತ್ತಿದ್ದರು. ಅದನ್ನು ನೆಹುಷ್ಟಾನ್ ಎಂದು ಕರೆಯುತ್ತಿದ್ದರು.
2KI 18:5 ಹಿಜ್ಕೀಯನು ಇಸ್ರಾಯೇಲಿನ ಯೆಹೋವ ದೇವರಲ್ಲಿ ಭರವಸೆವುಳ್ಳವನಾಗಿದ್ದನು. ಅವನಿಗೆ ಮುಂಚೆ ಇದ್ದವರಲ್ಲಿಯೂ, ಅವನ ತರುವಾಯ ಯೆಹೂದದ ಸಮಸ್ತ ಅರಸುಗಳಲ್ಲಿಯೂ ಅವನ ಹಾಗೆ ಒಬ್ಬರೂ ಇರಲಿಲ್ಲ.
2KI 18:6 ಅವನು ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡದೆ, ದೇವರನ್ನೇ ಆತುಕೊಂಡು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನು ಕೈಗೊಂಡನು.
2KI 18:7 ಯೆಹೋವ ದೇವರು ಅವನ ಸಂಗಡ ಇದ್ದರು. ಹಿಜ್ಕೀಯನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಯಿತು. ಅವನು ಅಸ್ಸೀರಿಯದ ಅರಸನನ್ನು ಸೇವಿಸದೆ, ಅವನ ಮೇಲೆ ತಿರುಗಿಬಿದ್ದನು.
2KI 18:8 ಅವರು ಕಾವಲು ಗೋಪುರದಿಂದ ಕೋಟೆಯುಳ್ಳ ಪಟ್ಟಣಗಳವರೆಗೂ ಫಿಲಿಷ್ಟಿಯರನ್ನು ಗಾಜಪ್ರಾಂತ್ಯದವರೆಗೆ ಸಂಹರಿಸಿದನು.
2KI 18:9 ಇಸ್ರಾಯೇಲಿನ ಅರಸನಾದ ಏಲನ ಮಗ ಹೋಶೇಯನ ಆಳ್ವಿಕೆಯ ಏಳನೆಯ ವರ್ಷ, ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಅದಕ್ಕೆ ಮುತ್ತಿಗೆಹಾಕಿದನು.
2KI 18:10 ಮೂರು ವರ್ಷದ ತರುವಾಯ ಸಮಾರ್ಯವನ್ನು ಅಸ್ಸೀರಿಯದವರು ಸ್ವಾಧೀನಮಾಡಿಕೊಂಡರು. ಇಸ್ರಾಯೇಲಿನ ಅರಸನಾದ ಹೋಶೇಯನ ಒಂಬತ್ತನೆಯ ವರ್ಷವಾದ, ಹಿಜ್ಕೀಯನ ಆರನೆಯ ವರ್ಷದಲ್ಲಿ ಸಮಾರ್ಯವು ಸ್ವಾಧೀನವಾಯಿತು.
2KI 18:11 ಅಸ್ಸೀರಿಯದ ಅರಸನು ಇಸ್ರಾಯೇಲರನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.
2KI 18:12 ಏಕೆಂದರೆ ಅವರು ತಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ಅವರ ಒಡಂಬಡಿಕೆಯನ್ನೂ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಸಮಸ್ತವನ್ನೂ ಮೀರಿದರು. ಅವರು ದೇವರ ಆಜ್ಞೆಗಳಿಗೆ ಕಿವಿಗೊಡಲಿಲ್ಲ, ಅವುಗಳಂತೆ ನಡೆಯಲಿಲ್ಲ.
2KI 18:13 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
2KI 18:14 ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಸ್ಸೀರಿಯದ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಬಿಟ್ಟು ಹಿಂದಿರುಗಿ ಹೋಗು. ನೀನು ನನ್ನ ಮೇಲೆ ವಿಧಿಸುವುದನ್ನು ನಾನು ಕೊಡುತ್ತೇನೆ,” ಎಂದು ಹೇಳಿ ಕಳುಹಿಸಿದನು. ಆಗ ಅಸ್ಸೀರಿಯದ ಅರಸನು ಯೆಹೂದದ ಅರಸನಾದ ಹಿಜ್ಕೀಯನು ಹತ್ತು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನೂ, ಒಂದು ಸಾವಿರ ಕಿಲೋಗ್ರಾಂ ಬಂಗಾರವನ್ನೂ ಕೊಡಬೇಕೆಂದು ನೇಮಕಮಾಡಿದನು.
2KI 18:15 ಆದ್ದರಿಂದ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿಯೂ, ಅರಸನ ಮನೆಯ ಬೊಕ್ಕಸಗಳಲ್ಲಿಯೂ, ಸಿಕ್ಕಿದ ಸಮಸ್ತ ಬೆಳ್ಳಿಯನ್ನೂ ಕೊಟ್ಟನು.
2KI 18:16 ಈ ಸಮಯದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು, ಯೆಹೋವ ದೇವರ ಮಂದಿರದ ಕದಗಳ ಮೇಲೆಯೂ, ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನೂ ಕತ್ತರಿಸಿ, ಅಸ್ಸೀರಿಯದ ಅರಸನಿಗೆ ಕೊಟ್ಟನು.
2KI 18:17 ಅಸ್ಸೀರಿಯದ ಅರಸನು ತನ್ನ ಅತಿ ಪ್ರಮುಖ ಅಧಿಕಾರಿಯನ್ನೂ, ಮುಖ್ಯ ನಾಯಕರನ್ನೂ, ಸೈನ್ಯಾಧಿಕಾರಿಯನ್ನೂ ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನೂ ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡರು.
2KI 18:18 ಅವರು ಅರಸನನ್ನು ಕರೆಕಳುಹಿಸಿದರು. ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವರ ಬಳಿಗೆ ಬಂದರು.
2KI 18:19 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?
2KI 18:20 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?
2KI 18:21 ಇಗೋ, ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು! ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.
2KI 18:22 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು,” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
2KI 18:23 “ ‘ಹಾಗಾದರೆ ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
2KI 18:24 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?
2KI 18:25 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.
2KI 18:26 ಆಗ ಹಿಲ್ಕೀಯನ ಮಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
2KI 18:27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
2KI 18:28 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.
2KI 18:29 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ. ಏಕೆಂದರೆ ಅವನು ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ಶಕ್ತನಲ್ಲ.
2KI 18:30 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರು, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ, ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವನು.
2KI 18:31 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ: ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
2KI 18:32 ಸ್ವಲ್ಪ ಕಾಲವಾದ ನಂತರ ನಾನು ಬಂದು, ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಎಣ್ಣೆಮರಗಳು, ಜೇನು ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ಜೀವವನ್ನು ಆಯ್ದುಕೊಳ್ಳಿರಿ, ಮರಣವನ್ನಲ್ಲ. “ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸಿ ತಪ್ಪು ಮಾರ್ಗದಲ್ಲಿ ನಡೆಸುವಾಗ, ಅವನ ಮಾತನ್ನು ಕೇಳಬೇಡಿರಿ.
2KI 18:33 ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?
2KI 18:34 ಹಮಾತ್, ಅರ್ಪಾದ್ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ, ಇವ್ವಗಳ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?
2KI 18:35 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
2KI 18:36 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
2KI 18:37 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ, ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
2KI 19:1 ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು.
2KI 19:2 ಇದಲ್ಲದೆ ಅವನು ಅರಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನಾದ ಪ್ರವಾದಿ ಯೆಶಾಯನ ಬಳಿಗೆ ಹೋಗಿರಿ,” ಎಂದು ಹೇಳಿ ಕಳುಹಿಸಿದನು.
2KI 19:3 ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ: ‘ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ.
2KI 19:4 ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು,’ ” ಎಂದರು.
2KI 19:5 ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದು ಹೇಳಿದಾಗ,
2KI 19:6 ಯೆಶಾಯನು ಅವರಿಗೆ, “ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಕೇಳಿದಂಥ ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿದಂಥ ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ.
2KI 19:7 ಇಗೋ, ನಾನು ಅವರ ಮೇಲೆ ಆತ್ಮವನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತನ್ನ ದೇಶಕ್ಕೆ ಹಿಂದಿರುಗುವನು. ಇದಲ್ಲದೆ ಅವನು ತನ್ನ ದೇಶದಲ್ಲಿ ಖಡ್ಗಕ್ಕೆ ತುತ್ತಾಗುವಂತೆ ಮಾಡುವೆನು,’ ” ಎಂದು ಹೇಳಿದನು.
2KI 19:8 ಹೀಗೆ ಸೈನ್ಯಾಧಿಕಾರಿಯು ಅಸ್ಸೀರಿಯದ ಅರಸನು ಲಾಕೀಷನ್ನು ಬಿಟ್ಟು ಹೊರಟಿದ್ದಾನೆಂದು ಕೇಳಿದಾಗ, ಅವನು ಲಿಬ್ನಕ್ಕೆ ಹೋಗಿ, ಅಲ್ಲಿ ಅರಸನು ಲಿಬ್ನದವರೊಂದಿಗೆ ಯುದ್ಧಮಾಡುತ್ತಿರುವುದನ್ನು ಕಂಡನು.
2KI 19:9 ಅಷ್ಟರಲ್ಲಿ ಕೂಷನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೊರಟಿದ್ದಾನೆಂಬ ಸುದ್ದಿಯನ್ನು ಅಸ್ಸೀರಿಯದ ಅರಸನು ಕೇಳಿ, ಹಿಜ್ಕೀಯನ ಬಳಿಗೆ ತಿರಿಗಿ ದೂತರನ್ನು ಕಳುಹಿಸಿ ಅವರಿಗೆ,
2KI 19:10 “ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನೆಂದರೆ: ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು.
2KI 19:11 ಇಗೋ, ಅಸ್ಸೀರಿಯದ ಅರಸರು ಸಮಸ್ತ ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ನೀನು ಕೇಳಿದಿಯಲ್ಲಾ. ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವೆಯೋ?
2KI 19:12 ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ?
2KI 19:13 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ, ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ,” ಎಂದು ಪತ್ರ ಬರೆದು ದೂತರ ಮುಖಾಂತರ ಕಳುಹಿಸಿದನು.
2KI 19:14 ಹಿಜ್ಕೀಯನು ಆ ದೂತರ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದಿದನು, ಅನಂತರ ಯೆಹೋವ ದೇವರ ಆಲಯಕ್ಕೆ ಹೋಗಿ ಅದನ್ನು ಯೆಹೋವ ದೇವರ ಮುಂದೆ ತೆರೆದಿಟ್ಟನು.
2KI 19:15 ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ.
2KI 19:16 ಯೆಹೋವ ದೇವರೇ, ನಿಮ್ಮ ಕಿವಿಗೊಟ್ಟು ಕೇಳಿರಿ. ಯೆಹೋವ ದೇವರೇ, ನಿಮ್ಮ ಕಣ್ಣುಗಳನ್ನು ತೆರೆದು ನೋಡಿರಿ. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತುಗಳನ್ನು ಕೇಳಿರಿ.
2KI 19:17 “ಯೆಹೋವ ದೇವರೇ, ಅಸ್ಸೀರಿಯದ ಅರಸರು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ, ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ.
2KI 19:18 ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ.
2KI 19:19 ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.
2KI 19:20 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನೆಂದರೆ: “ಇಸ್ರಾಯೇಲಿನ ಯೆಹೋವ ದೇವರ ಮಾತಿದು: ನೀನು ಅಸ್ಸೀರಿಯದ ಅರಸನಾದ ಸನ್ಹೇರೀಬನನ್ನು ಕುರಿತು ಮಾಡಿದ ಪ್ರಾರ್ಥನೆಯನ್ನು ಕೇಳಿದ್ದೇನೆ.
2KI 19:21 ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: “ ‘ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, ನಿನಗೆ ಅಪಹಾಸ್ಯ ಮಾಡುತ್ತಾಳೆ. ಯೆರೂಸಲೇಮಿನ ಪುತ್ರಿಯು ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ.
2KI 19:22 ನೀನು ಯಾರನ್ನು ನಿಂದಿಸಿ, ಯಾರನ್ನು ದೂಷಿಸಿದೆ? ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ?
2KI 19:23 ನೀನು ನಿನ್ನ ದೂತರ ಮುಖಾಂತರ ಯೆಹೋವ ದೇವರನ್ನು ನಿಂದಿಸಿರುವೆ. ಇದಲ್ಲದೆ ನೀನು ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿದ್ದೀ, “ನಾನು ನನ್ನ ರಥಸಮೂಹದೊಡನೆ ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ, ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. ಅದರ ಉನ್ನತವಾದ ದೇವದಾರುಗಳನ್ನೂ, ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. ಅದರ ಅಂಚಿನ ಗಡಿಸ್ಥಳಗಳಲ್ಲಿಯೂ, ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ.
2KI 19:24 ಪರದೇಶಗಳಲ್ಲಿ ನಾನು ಬಾವಿಗಳನ್ನು ಅಗೆದು, ನೀರು ಕುಡಿದಿದ್ದೇನೆ. ನನ್ನ ಅಂಗಾಲುಗಳಿಂದ ಈಜಿಪ್ಟಿನವರ ಎಲ್ಲಾ ನದಿಗಳನ್ನು ಬತ್ತಿಹೋಗುವಂತೆ ಮಾಡಿದ್ದೇನೆ.”
2KI 19:25 “ ‘ಹೀಗಾಗಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಣಯಿಸಿದ್ದನ್ನು ನೀನು ಕೇಳಲಿಲ್ಲವೋ? ಪುರಾತನ ದಿನಗಳಲ್ಲಿ ನಾನು ಯೋಚಿಸಿದ್ದನ್ನು, ಈಗ ನಾನು ಅದನ್ನು ನೆರವೇರಿಸಿದ್ದೇನೆ. ಆದ್ದರಿಂದಲೇ ನೀನು ಕೋಟೆಗಳುಳ್ಳ ಪಟ್ಟಣಗಳನ್ನು ಹಾಳಾದ ದಿಬ್ಬಗಳಾಗಿ ಮಾಡಿಬಿಟ್ಟಿರುವೆ.
2KI 19:26 ಆದ್ದರಿಂದ ಅವುಗಳ ನಿವಾಸಿಗಳು ಬಲಹೀನರಾಗಿ ಹೆದರಿ ಆಶಾಭಂಗಹೊಂದಿ ನಾಚಿಕೆಪಟ್ಟರು. ಅವರು ಹೊಲದ ಹುಲ್ಲಿನಂತೆಯೂ, ಹಸಿರು ಸಸಿಗಳಂತೆಯೂ, ಮಾಳಿಗೆಯ ಮೇಲಿನ ಹುಲ್ಲಿನಂತೆಯೂ, ಬೆಳೆಯುವುದಕ್ಕಿಂತ ಮುಂಚೆಯೇ ಬಾಡಿಹೋಗುವ ಪೈರಿನಂತೆಯೂ ಅವರಿದ್ದಾರೆ.
2KI 19:27 “ ‘ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು.
2KI 19:28 ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ, ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ, ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, ನೀನು ಬಂದ ದಾರಿಯಿಂದಲೇ ನಿನ್ನನ್ನು ಹಿಂದಿರುಗಿಸುವೆನು.’
2KI 19:29 “ಹಿಜ್ಕೀಯನೇ, ಇದು ನಿಮಗೆ ಸಂಕೇತವಾಗಿರುವದು, “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವಿರಿ.
2KI 19:30 ಯೆಹೂದದ ಮನೆತನದಲ್ಲಿ ತಪ್ಪಿಸಿಕೊಂಡು ಉಳಿದವರು ತಿರುಗಿ ದೇಶದಲ್ಲಿ ಬೇರೂರಿ ನೆಲೆಗೊಂಡು ಅಭಿವೃದ್ಧಿಯಾಗುವರು.
2KI 19:31 ಏಕೆಂದರೆ ಯೆರೂಸಲೇಮಿನಿಂದ ಉಳಿದವರೂ, ಚೀಯೋನ್ ಪರ್ವತದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೇನಾಧೀಶ್ವರ ಯೆಹೋವ ದೇವರ ಆಸಕ್ತಿಯು ಇದನ್ನು ನೆರವೇರಿಸುವುದು.
2KI 19:32 “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: “ ‘ಅವನು ಈ ಪಟ್ಟಣದೊಳಗೆ ಬರುವುದಿಲ್ಲ; ಅಲ್ಲಿ ಬಾಣವನ್ನು ಎಸೆಯುವುದಿಲ್ಲ; ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು; ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ.
2KI 19:33 ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು, ಈ ಪಟ್ಟಣದೊಳಗೆ ಬರುವುದೇ ಇಲ್ಲ, ಎಂದು ಯೆಹೋವ ದೇವರು ಹೇಳುತ್ತಾರೆ.
2KI 19:34 ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.’ ”
2KI 19:35 ಅದೇ ರಾತ್ರಿಯಲ್ಲಿ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು.
2KI 19:36 ಆಗ ಅಸ್ಸೀರಿಯದ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
2KI 19:37 ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಆಲಯದಲ್ಲಿ ಆರಾಧನೆ ಮಾಡುತ್ತಿರುವಾಗ, ಅವನ ಮಕ್ಕಳಾದ ಅದ್ರಮ್ಮೆಲೆಕ್, ಸರೆಚೆರ್ ಎಂಬವರು ಅವನನ್ನು ಖಡ್ಗದಿಂದ ಕೊಂದು, ಅರಾರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
2KI 20:1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
2KI 20:2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ,
2KI 20:3 “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.
2KI 20:4 ಯೆಶಾಯನು ಅರಮನೆಯ ಆವರಣದ ಮಧ್ಯಕ್ಕೆ ಹೋಗುವ ಮುಂಚೆ ಯೆಹೋವ ದೇವರ ವಾಕ್ಯವು ಅವನಿಗೆ ಬಂದಿತು,
2KI 20:5 ದೇವರು ಅವನಿಗೆ, “ನೀನು ಹಿಂದಿರುಗಿ ಹೋಗಿ ನನ್ನ ಜನರ ನಾಯಕನಾದ ಹಿಜ್ಕೀಯನಿಗೆ, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ. ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆ.
2KI 20:6 ಇದಲ್ಲದೆ ನಾನು ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ. ನಿನ್ನನ್ನೂ, ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ನನ್ನ ನಿಮಿತ್ತವಾಗಿಯೂ, ನನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ ಕಾಪಾಡುವೆನು,’ ಎಂದು ಹೇಳು,” ಎಂದರು.
2KI 20:7 ಆಗ ಯೆಶಾಯನು ಅಂಜೂರದ ಹಣ್ಣುಗಳ ಉಂಡೆಯನ್ನು ತೆಗೆದುಕೊಂಡು ಬರಲು ಹೇಳಿದ್ದನು. ಅವರು ಹಾಗೆಯೇ ತೆಗೆದುಕೊಂಡು ಬಂದು ಹುಣ್ಣಿನ ಮೇಲೆ ಹಾಕಿದ್ದರಿಂದ ಅವನು ಗುಣಹೊಂದಿದನು.
2KI 20:8 ಹಿಜ್ಕೀಯನು ಯೆಶಾಯನಿಗೆ, “ಯೆಹೋವ ದೇವರು ನನ್ನನ್ನು ಸ್ವಸ್ಥಮಾಡುವರೆಂಬುದಕ್ಕೆ ಮತ್ತು ನಾನು ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದನು.
2KI 20:9 ಯೆಶಾಯನು, “ಯೆಹೋವ ದೇವರು, ತಾವು ಹೇಳಿದ ಕಾರ್ಯವನ್ನು ಮಾಡುವರೆಂಬುದಕ್ಕೆ ಯೆಹೋವ ದೇವರ ಕಡೆಯಿಂದ ನಿನಗೆ ಉಂಟಾಗುವ ಗುರುತು, ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಬರಬೇಕೋ?” ಎಂದು ಕೇಳಿದನು.
2KI 20:10 ಅದಕ್ಕೆ ಹಿಜ್ಕೀಯನು, “ನೆರಳು ಹತ್ತು ಮೆಟ್ಟಲು ಮುಂದೆ ಹೋಗುವುದು ಸಾಮಾನ್ಯ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡು,” ಎಂದನು.
2KI 20:11 ಆಗ ಪ್ರವಾದಿಯಾದ ಯೆಶಾಯನು ಯೆಹೋವ ದೇವರಿಗೆ ಮೊರೆಯಿಟ್ಟದ್ದರಿಂದ, ದೇವರು ಆಹಾಜನ ಮೆಟ್ಟಲುಗಳಲ್ಲಿ ಇಳಿದು ಹೋದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡಿದರು.
2KI 20:12 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಹಿಜ್ಕೀಯನ ಬಳಿಗೆ ಕಳುಹಿಸಿದನು.
2KI 20:13 ಹಿಜ್ಕೀಯನು ಅವರ ಮಾತು ಕೇಳಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
2KI 20:14 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು. ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ಬಂದವರು,” ಎಂದು ಹೇಳಿದನು.
2KI 20:15 ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು. ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು.
2KI 20:16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವ ದೇವರ ವಾಕ್ಯವನ್ನು ಕೇಳು:
2KI 20:17 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ.
2KI 20:18 ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.
2KI 20:19 ಆಗ ಹಿಜ್ಕೀಯನು, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ,” ಎಂದು ಯೆಶಾಯನಿಗೆ ಹೇಳಿದನು. ಅವನು, ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು, ಎಂದುಕೊಂಡನು.
2KI 20:20 ಹಿಜ್ಕೀಯನ ಇತರ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ ಅವನು ಕೆರೆ ಮತ್ತು ಕಾಲುವೆಗಳನ್ನು ಮಾಡಿಸಿ ಪಟ್ಟಣದಲ್ಲಿ ನೀರನ್ನು ಬರಮಾಡಿದ್ದೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 20:21 ಹಿಜ್ಕೀಯನು ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಮಗ ಮನಸ್ಸೆಯು ಅವನಿಗೆ ಬದಲಾಗಿ ಅರಸನಾದನು.
2KI 21:1 ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
2KI 21:2 ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2KI 21:3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.
2KI 21:4 ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
2KI 21:5 ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.
2KI 21:6 ಇದಲ್ಲದೆ ಮನಸ್ಸೆಯು ತನ್ನ ಸ್ವಂತ ಮಗನನ್ನು ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನು ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.
2KI 21:7 “ಈ ಆಲಯದಲ್ಲಿಯೂ, ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿಯೂ, ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿಯೂ, ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು,” ಎಂದು ಯೆಹೋವ ದೇವರು ದಾವೀದನಿಗೂ, ಅವನ ಮಗನಾದ ಸೊಲೊಮೋನನಿಗೂ ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ತಾನು ಮಾಡಿದ ಅಶೇರ ವಿಗ್ರಹಸ್ತಂಭವನ್ನು ಇಟ್ಟನು.
2KI 21:8 ಯೆಹೋವ ದೇವರು, “ನಾನು ಅವರಿಗೆ ಆಜ್ಞಾಪಿಸಿದ ಎಲ್ಲದರ ಪ್ರಕಾರ ಮತ್ತು ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಸಮಸ್ತ ನಿಯಮದ ಪ್ರಕಾರ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ಕೊಟ್ಟ ದೇಶದಿಂದ ಪುನಃ ಇಸ್ರಾಯೇಲರು ಅಲೆದಾಡುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು.
2KI 21:9 ಆದರೆ ಜನರು ಕೇಳದೆ ಹೋದರು. ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು.
2KI 21:10 ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನೆಂದರೆ,
2KI 21:11 “ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಕೆಟ್ಟವುಗಳಿಗಿಂತಲೂ ಅಸಹ್ಯವಾದವುಗಳನ್ನು ಮಾಡಿದ್ದರಿಂದಲೂ, ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಕ್ಕೆ ಪ್ರೇರೇಪಿಸಿದ್ದರಿಂದಲೂ,
2KI 21:12 ಇಸ್ರಾಯೇಲಿನ ಯೆಹೋವ ದೇವರಾದ ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳು ಕಿರಗುಟ್ಟುವುವು.
2KI 21:13 ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ವಿರುದ್ಧ ಬಳಸಿದ ನೂಲನ್ನೂ, ಅಹಾಬನ ಮನೆಯ ವಿರುದ್ಧ ಬಳಸಿದ ಮಟ್ಟಗೋಲನ್ನೂ ಚಾಚಿ, ಒಬ್ಬನು ತಟ್ಟೆಯನ್ನು ಒರೆಸಿದಂತೆ ಅದನ್ನು ಒರೆಸಿ ತಲೆಕೆಳಗಾಗಿ ಹಾಕುವ ಹಾಗೆ ನಾನು ಯೆರೂಸಲೇಮನ್ನು ಅಳಿಸಿಬಿಡುವೆನು.
2KI 21:14 ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವುದನ್ನು ಬಿಟ್ಟುಬಿಟ್ಟು, ಅವರನ್ನು ಅವರ ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ, ಸೂರೆಯೂ ಆಗಿ ಹೋಗುವರು.
2KI 21:15 ಏಕೆಂದರೆ ಅವರ ತಂದೆಗಳು ಈಜಿಪ್ಟಿನಿಂದ ಹೊರಟ ದಿವಸ ಮೊದಲುಗೊಂಡು, ಇಂದಿನವರೆಗೂ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ, ಎಂದು ಹೇಳುತ್ತಾರೆ,” ಎಂಬುದೇ.
2KI 21:16 ಇದಲ್ಲದೆ ಮನಸ್ಸೆಯು ಯೆಹೋವ ದೇವರ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಪರಾಧದ ರಕ್ತದಿಂದ ತುಂಬಿಸಿದನು.
2KI 21:17 ಮನಸ್ಸೆಯ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನು ಮಾಡಿದ ಪಾಪವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 21:18 ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು, ಅವನ ಅರಮನೆಯ ತೋಟವಾದ ಉಜ್ಜನ ತೋಟದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು.
2KI 21:19 ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು. ಅವನ ತಾಯಿಯು ಯೋತ್ಬಾ ಊರಿನ ಹಾರೂಚನ ಮಗಳಾದ ಮೆಷುಲ್ಲೇಮೆತಳು.
2KI 21:20 ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.
2KI 21:21 ಅವನು ತನ್ನ ಪಿತೃಗಳ ದೇವರಾದ ಯೆಹೋವ ದೇವರ ಮಾರ್ಗವನ್ನು ಬಿಟ್ಟುಬಿಟ್ಟು,
2KI 21:22 ತನ್ನ ತಂದೆಯು ನಡೆದ ಸಮಸ್ತ ಮಾರ್ಗದಲ್ಲಿ ನಡೆದು, ತನ್ನ ತಂದೆಯು ಸೇವಿಸಿದ ವಿಗ್ರಹಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದನು.
2KI 21:23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.
2KI 21:24 ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2KI 21:25 ಆಮೋನನು ಮಾಡಿದ ಅವನ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 21:26 ಅವನ ಶವವನ್ನು, ಉಜ್ಜನ ತೋಟದಲ್ಲಿ ಅವನು ಮೊದಲೇ ತನಗೋಸ್ಕರ ಸಿದ್ದಪಡಿಸಿಟ್ಟಿದ್ದ ಸಮಾಧಿಯಲ್ಲಿ ಹೂಣಿಟ್ಟರು. ಅವನ ಮಗ ಯೋಷೀಯನು ಅವನಿಗೆ ಬದಲಾಗಿ ಅರಸನಾದನು.
2KI 22:1 ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತಿನ ಅದಾಯನ ಮಗಳಾದ ಯೆದೀದಾ ಎಂಬವಳು.
2KI 22:2 ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.
2KI 22:3 ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅರಸನು ಕಾರ್ಯದರ್ಶಿಯಾದ ಮೆಷುಲ್ಲಾಮನ ಮಗ, ಅಚಲ್ಯನ ಮಗನಾದ ಶಾಫಾನನನ್ನು ಯೆಹೋವ ದೇವರ ಆಲಯಕ್ಕೆ ಕಳುಹಿಸಿ,
2KI 22:4 “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ಅವನು ಯೆಹೋವ ದೇವರ ಆಲಯದ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.
2KI 22:5 ಅವರು ಅದನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಲಿ.
2KI 22:6 ಆಲಯ ದುರಸ್ತಿ ಮಾಡುವಂತೆ ಯೆಹೋವ ದೇವರ ಆಲಯದಲ್ಲಿ ಕೆಲಸ ಮಾಡುವವರಾದ ಬಡಗಿಯರಿಗೂ, ಶಿಲ್ಪಿಗಾರರಿಗೂ, ಕಲ್ಲುಕೆಲಸದವರಿಗೂ ಕೊಟ್ಟು, ಆಲಯವನ್ನು ದುರಸ್ತಿ ಮಾಡಲು ಮರಗಳನ್ನೂ, ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವುದಕ್ಕೆ ಕೊಡಲಿ.
2KI 22:7 ಆದರೆ ಅವರು ನಂಬಿಗಸ್ತರಾಗಿ ಕೆಲಸ ಮಾಡಿದ್ದರಿಂದ, ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳುವ ಅವಶ್ಯಕತೆ ಇಲ್ಲ, ಎಂದು ಹೇಳು,” ಎಂದನು.
2KI 22:8 ಆಗ ಮಹಾಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ನನಗೆ ಯೆಹೋವ ದೇವರ ಆಲಯದಲ್ಲಿ ಮೋಶೆಯ ನಿಯಮದ ಗ್ರಂಥವು ಸಿಕ್ಕಿರುತ್ತದೆ,” ಎಂದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು. ಅವನು ಅದನ್ನು ಓದಿದನು.
2KI 22:9 ಕಾರ್ಯದರ್ಶಿಯಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆ, “ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ, ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಿದ್ದಾರೆ,” ಎಂದನು.
2KI 22:10 ಇದಲ್ಲದೆ, “ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆ,” ಎಂದು ತೋರಿಸಿ, ಶಾಫಾನನು ಅದನ್ನು ಅರಸನ ಮುಂದೆ ಓದಿದನು.
2KI 22:11 ಅರಸನು ಮೋಶೆಯ ನಿಯಮದ ಪುಸ್ತಕದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು.
2KI 22:12 ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕಾಯನ ಮಗನಾದ ಅಕ್ಬೋರನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ,
2KI 22:13 “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಜನರಿಗೋಸ್ಕರವೂ, ಸಮಸ್ತ ಯೆಹೂದ್ಯರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ದೇವರ ಮಹಾಕೋಪಕ್ಕೆ ಪಾತ್ರರಾಗಿದ್ದೇವೆ,” ಎಂದನು.
2KI 22:14 ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಅಸಾಯ ಎಂಬವರು ಪ್ರವಾದಿನಿ ಹುಲ್ದಳ ಬಳಿಗೆ ವಿಚಾರಿಸಲು ಹೋದರು. ಆಕೆಯು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ. ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.
2KI 22:15 ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ:
2KI 22:16 ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಯೆಹೂದದ ಅರಸನು ಓದಿದ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದರಂತೆ ಕೇಡನ್ನು ಬರಮಾಡುವೆನು.
2KI 22:17 ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಹೊತ್ತಿ ಉರಿಯುತ್ತಿದೆ, ಅದು ಆರಿಹೋಗುವುದಿಲ್ಲ.’
2KI 22:18 ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ,
2KI 22:19 ಈ ಸ್ಥಳವೂ ಅದರ ನಿವಾಸಿಗಳೂ ನಾಶಕ್ಕೂ ಶಾಪಕ್ಕೂ ಗುರಿಯಾಗುವರೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ ನೀನು ನಿನ್ನನ್ನು ಯೆಹೋವ ದೇವರ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ ನಾನು ನಿನ್ನ ಮೊರೆಯನ್ನು ಕೇಳಿದೆನು.
2KI 22:20 ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.
2KI 23:1 ಅನಂತರ ಅರಸನಾದ ಯೋಷೀಯನು ಯೆಹೂದದ, ಯೆರೂಸಲೇಮಿನ ಹಿರಿಯರೆಲ್ಲರನ್ನು ಕರೆಕಳುಹಿಸಿ ತನ್ನ ಬಳಿಯಲ್ಲಿ ಒಟ್ಟಾಗಿ ಕೂಡಿಸಿದನು.
2KI 23:2 ಆಗ ಅರಸನೂ, ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ, ಯಾಜಕರೂ, ಪ್ರವಾದಿಗಳೂ, ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರು ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು.
2KI 23:3 ಅರಸನು ಸ್ತಂಭದ ಬಳಿಯಲ್ಲಿ ನಿಂತುಕೊಂಡು ಯೆಹೋವ ದೇವರನ್ನು ಹಿಂಬಾಲಿಸುವುದಕ್ಕೂ, ದೇವರ ಆಜ್ಞೆಗಳನ್ನೂ, ನಿಯಮಗಳನ್ನೂ, ಕಟ್ಟಳೆಗಳನ್ನೂ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಕೈಗೊಳ್ಳುವುದಕ್ಕೂ, ಈ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವುದಕ್ಕೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿದನು. ಜನರೆಲ್ಲರು ಹಾಗೆಯೇ ಒಡಂಬಡಿಕೆಗೆ ಒಪ್ಪಿದರು.
2KI 23:4 ಅರಸನಾದ ಯೋಷೀಯನು ಬಾಳನಿಗೋಸ್ಕರವೂ, ಅಶೇರನಿಗೋಸ್ಕರವೂ, ಆಕಾಶದ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಸಮಸ್ತ ಸಲಕರಣೆಗಳನ್ನು ಯೆಹೋವ ದೇವರ ಆಲಯದಿಂದ ಹೊರಗೆ ತೆಗೆದುಕೊಂಡು ಬರಬೇಕೆಂದು ಮಹಾಯಾಜಕನಾದ ಹಿಲ್ಕೀಯನಿಗೂ, ಮುಖ್ಯಯಾಜಕರಿಗೂ, ದ್ವಾರಪಾಲಕರಿಗೂ ಆಜ್ಞಾಪಿಸಿದನು. ಅರಸನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಕಣಿವೆಯ ಬಯಲಿನಲ್ಲಿ ಸುಡಿಸಿ, ಅವುಗಳ ಬೂದಿಯನ್ನು ಬೇತೇಲಿಗೆ ತರುವಂತೆ ಮಾಡಿದನು.
2KI 23:5 ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ, ಯೆರೂಸಲೇಮಿನ ಸುತ್ತಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸರು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ, ಸೂರ್ಯನಿಗೂ, ಚಂದ್ರನಿಗೂ, ಗ್ರಹಗಳಿಗೂ, ಆಕಾಶದ ಸಮಸ್ತ ಸೈನ್ಯಕ್ಕೂ, ಧೂಪಸುಡುವವರನ್ನೂ ತೆಗೆದುಹಾಕಿದನು.
2KI 23:6 ಅವನು ಅಶೇರ ಸ್ತಂಭವನ್ನು ಯೆಹೋವ ದೇವರ ಆಲಯದೊಳಗಿಂದ ಯೆರೂಸಲೇಮಿನ ಹೊರಗೆ ಕಿದ್ರೋನ್ ಹಳ್ಳಕ್ಕೆ ತರಿಸಿ, ಅದನ್ನು ಕಿದ್ರೋನ್ ಕಣಿವೆಯ ಬಳಿಯಲ್ಲಿ ಸುಟ್ಟು, ಅದನ್ನು ಧೂಳಾಗಿ ಪುಡಿಮಾಡಿ, ಆ ಧೂಳಿನ ಪುಡಿಯನ್ನು ಸಾಮಾನ್ಯ ಜನರ ಸಮಾಧಿಗಳ ಮೇಲೆ ಹಾಕಿದನು.
2KI 23:7 ಯೆಹೋವ ದೇವರ ಆಲಯದ ಬಳಿಯಲ್ಲಿದ್ದ ಅಶೇರದೇವತೆಗಾಗಿ ನೇಯ್ಗೆ ಕೆಲಸ ಮಾಡುತ್ತಿದ್ದ ಸ್ತ್ರೀಯರ ಹಾಗೂ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು.
2KI 23:8 ಯೋಷೀಯನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರಮಾಡಿ, ಗಿಬೆಯ ಪಟ್ಟಣದಿಂದ ಬೇರ್ಷೆಬದವರೆಗೂ, ಯಾಜಕರು ಧೂಪ ಸುಡುತ್ತಿದ್ದ ಉನ್ನತ ಪೂಜಾಸ್ಥಳಗಳನ್ನೂ ಅಶುದ್ಧ ಮಾಡಿದನು. ಅನಂತರ ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ದ್ವಾರದಲ್ಲಿದ್ದ ಬಾಗಿಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು.
2KI 23:9 ಆದರೆ ಉನ್ನತ ಪೂಜಾಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಬಲಿಪೀಠದ ಬಳಿಯಲ್ಲಿ ಸೇವೆ ಮಾಡದೇ ಇದ್ದರೂ, ತಮ್ಮ ಸಹೋದರರ ಮಧ್ಯದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು.
2KI 23:10 ಯಾವನೂ ತನ್ನ ಮಗನನ್ನಾದರೂ, ಮಗಳನ್ನಾದರೂ ಮೋಲೆಕನಿಗೋಸ್ಕರ ಬೆಂಕಿಯಲ್ಲಿ ಬಲಿ ಅರ್ಪಿಸದಂತೆ ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತನ್ನು ಅಶುದ್ಧ ಮಾಡಿದನು.
2KI 23:11 ಯೆಹೂದದ ಅರಸರು ಸೂರ್ಯನಿಗೆ ಪ್ರತಿಷ್ಠೆಪಡಿಸಿದ್ದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಯೋಷೀಯನು ಸುಟ್ಟುಹಾಕಿದನು. ಅವು ಯೆಹೋವ ದೇವರ ಆಲಯದ ದ್ವಾರದಲ್ಲಿ ಪ್ರಧಾನನಾದ ನಾತಾನ್ ಮೆಲೆಕನ ಕೊಠಡಿಯ ಹತ್ತಿರ ಇದ್ದವು. ಅರಸರು ಸೂರ್ಯನಿಗೆ ಸಮರ್ಪಿಸಿ ನಿಲ್ಲಿಸಿದ್ದ ರಥಗಳನ್ನು ಸಹ ಸುಟ್ಟುಬಿಟ್ಟನು.
2KI 23:12 ಯೆಹೂದದ ಅರಸರು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ, ಮನಸ್ಸೆಯು ಯೆಹೋವ ದೇವರ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠಗಳನ್ನೂ ಅರಸನು ಕೆಡವಿಸಿ, ಅಲ್ಲಿಂದ ಅದರ ಧೂಳನ್ನು ಕಿದ್ರೋನ್ ಕಣಿವೆಯಲ್ಲಿ ಹಾಕಿಸಿಬಿಟ್ಟನು.
2KI 23:13 ಇದಲ್ಲದೆ ಯೆರೂಸಲೇಮಿನ ಮುಂದೆ ವಿಘ್ನ ಬೆಟ್ಟದ ದಕ್ಷಿಣದಲ್ಲಿದ್ದ ಸೀದೋನ್ಯರ ಅಸಹ್ಯಕರವಾದ ಅಷ್ಟೋರೆತಿಗೂ, ಮೋವಾಬ್ಯರ ಅಸಹ್ಯಕರವಾದ ಕೆಮೋಷನಿಗೂ, ಅಮ್ಮೋನ್ಯರ ಅಸಹ್ಯಕರವಾದ ಮಿಲ್ಕೋಮನಿಗೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕಟ್ಟಿಸಿದ ಉನ್ನತ ಪೂಜಾಸ್ಥಳಗಳನ್ನೂ ಯೋಷೀಯನು ಅಶುದ್ಧ ಮಾಡಿದನು.
2KI 23:14 ಇದಲ್ಲದೆ ಯೋಷೀಯನು ವಿಗ್ರಹಗಳನ್ನು ಮುರಿದು, ಅಶೇರ ಸ್ತಂಭಗಳನ್ನು ಕಡಿದುಬಿಟ್ಟು, ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
2KI 23:15 ಇದಲ್ಲದೆ ಬೇತೇಲಿನಲ್ಲಿ ಇದ್ದ ಬಲಿಪೀಠವನ್ನೂ, ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನು ಮಾಡಿದ ಉನ್ನತ ಪೂಜಾಸ್ಥಳವನ್ನೂ ಸುಟ್ಟುಬಿಟ್ಟು, ಅದನ್ನು ಧೂಳಾಗಲು ಪುಡಿಮಾಡಿ ಅಶೇರ ಸ್ತಂಭವನ್ನು ಸುಟ್ಟುಬಿಟ್ಟನು.
2KI 23:16 ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು, ದೇವರ ಮನುಷ್ಯನು ಹೇಳಿದ ಈ ಮಾತುಗಳನ್ನು ಯೆಹೋವ ದೇವರ ವಾಕ್ಯದ ಪ್ರಕಾರ, ಬಲಿಪೀಠದ ಮೇಲೆ ಅವುಗಳನ್ನು ಸುಟ್ಟು ಅದನ್ನು ಅಶುದ್ಧ ಮಾಡಿದನು.
2KI 23:17 ಆಗ ಅರಸನು, “ನಾನು ಕಾಣುವ ಈ ಸಮಾಧಿ ಕಲ್ಲು ಯಾರದು?” ಎಂದು ಕೇಳಿದನು. ಅದಕ್ಕೆ ಆ ಊರಿನವರು ಅವನಿಗೆ, “ನೀನು ಈಗ ಬೇತೇಲಿನ ಬಲಿಪೀಠಕ್ಕೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದದ ದೇವರ ಮನುಷ್ಯನ ಸಮಾಧಿ,” ಎಂದರು.
2KI 23:18 “ಅದನ್ನು ಬಿಟ್ಟುಬಿಡಿರಿ. ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ,” ಎಂದನು. ಹಾಗೆಯೇ ಅವನು ಅವರ ಎಲುಬುಗಳನ್ನು ಸಮಾರ್ಯದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಬಿಟ್ಟುಬಿಟ್ಟರು.
2KI 23:19 ಇಸ್ರಾಯೇಲಿನ ಅರಸರು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ ಯೆಹೋವ ದೇವರ ಕೋಪಕ್ಕೆ ಕಾರಣವಾಗಿದ್ದ ಉನ್ನತ ಪೂಜಾಸ್ಥಳಗಳನ್ನು ಯೋಷೀಯನು ಕೆಡವಿಹಾಕಿ, ಬೇತೇಲಿನಲ್ಲಿ ತಾನು ಮಾಡಿದಂತೆ ಅವುಗಳಿಗೆ ಮಾಡಿದನು.
2KI 23:20 ಅಲ್ಲಿದ್ದ ಉನ್ನತ ಪೂಜಾಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು, ಯೋಷೀಯನು ಯೆರೂಸಲೇಮಿಗೆ ತಿರುಗಿಬಂದನು.
2KI 23:21 ಅರಸನಾದ ಯೋಷೀಯನು ಸಮಸ್ತ ಜನರಿಗೂ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರ ಪಸ್ಕಹಬ್ಬವನ್ನು ಆಚರಿಸಿರಿ,” ಎಂದು ಆಜ್ಞಾಪಿಸಿದನು.
2KI 23:22 ನಿಶ್ಚಯವಾಗಿ ಇಸ್ರಾಯೇಲಿಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳ ದಿವಸಗಳು ಮೊದಲುಗೊಂಡು, ಇಸ್ರಾಯೇಲಿನ ಯೆಹೂದದ ಅರಸರ ಸಕಲ ದಿವಸಗಳಲ್ಲಿಯೂ ಇಂಥಾ ಪಸ್ಕವನ್ನು ಆಚರಿಸಿರಲಿಲ್ಲ.
2KI 23:23 ಅರಸನಾದ ಯೋಷೀಯನ ಹದಿನೆಂಟನೆಯ ವರ್ಷದಲ್ಲಿ ಈ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಯೆಹೋವ ದೇವರಿಗೆ ಆಚರಿಸಲಾಯಿತು.
2KI 23:24 ಇದಲ್ಲದೆ ಯಾಜಕನಾದ ಹಿಲ್ಕೀಯನು ಯೆಹೋವ ದೇವರ ಆಲಯದಲ್ಲಿ ಕಂಡುಕೊಂಡ ಗ್ರಂಥದಲ್ಲಿ ಬರೆದಿದ್ದ ನಿಯಮದ ಮಾತುಗಳನ್ನು ಯೋಷೀಯನು ಈಡೇರಿಸುವಂತೆ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನಲ್ಲಿಯೂ ಭೂತಪ್ರೇತಗಳನ್ನು ವಿಚಾರಿಸುವವರನ್ನೂ, ಮಂತ್ರಗಾರರನ್ನೂ, ಮನೆದೇವರುಗಳನ್ನೂ, ವಿಗ್ರಹಗಳನ್ನೂ, ಸಮಸ್ತ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿಬಿಟ್ಟನು.
2KI 23:25 ತನ್ನ ಪೂರ್ಣಹೃದಯದಿಂದಲೂ, ತನ್ನ ಪೂರ್ಣಪ್ರಾಣದಿಂದಲೂ, ತನ್ನ ಪೂರ್ಣ ಬಲದಿಂದಲೂ ಮೋಶೆಯ ಸಮಸ್ತ ನಿಯಮದ ಪ್ರಕಾರ ಯೆಹೋವ ದೇವರ ಕಡೆಗೆ ತಿರುಗಿಕೊಂಡ ಯೋಷೀಯ ಅರಸನಿಗೆ ಸಮಾನನಾದ ಅರಸನು ಹಿಂದೆಯೂ ಅನಂತರವೂ ಇರಲಿಲ್ಲ.
2KI 23:26 ಆದರೂ ಮನಸ್ಸೆಯು ಮಾಡಿದ ದುಷ್ಕೃತ್ಯಗಳ ನಿಮಿತ್ತ ಯೆಹೂದ್ಯರ ಮೇಲೆ ಯೆಹೋವ ದೇವರ ಕೋಪವು ಇನ್ನೂ ನೆಲೆಯಾಗಿತ್ತು.
2KI 23:27 ಯೆಹೋವ ದೇವರು, “ನಾನು ಇಸ್ರಾಯೇಲನ್ನು ತೆಗೆದುಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು. ಇದಲ್ಲದೆ ನಾನು ಆಯ್ದುಕೊಂಡ ಯೆರೂಸಲೇಮ್ ಪಟ್ಟಣವನ್ನೂ, ‘ನನ್ನ ಹೆಸರು ಅಲ್ಲಿರುವುದು,’ ಎಂದು ನಾನು ಹೇಳಿದ ಆಲಯವನ್ನೂ ತೆಗೆದುಬಿಡುವೆನು,” ಎಂದು ಹೇಳಿದರು.
2KI 23:28 ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 23:29 ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ಸಹಾಯಮಾಡಲು ಯೂಫ್ರೇಟೀಸ್ ನದಿಯವರೆಗೆ ಹೋದನು. ಅರಸನಾದ ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದಾಗ, ನೆಕೋ ಅವನನ್ನು ಎದುರಿಸಿ ಮೆಗಿದ್ದೋವಿನಲ್ಲಿ ಕೊಂದುಹಾಕಿದನು.
2KI 23:30 ಯೋಷೀಯನ ಸೇವಕರು ಅವನ ಶವವನ್ನು ಮೆಗಿದ್ದೋವಿನಿಂದ ಯೆರೂಸಲೇಮಿಗೆ ರಥದಲ್ಲಿ ತೆಗೆದುಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ, ಅವನ ತಂದೆಗೆ ಬದಲಾಗಿ ಅವನನ್ನು ಅರಸನನ್ನಾಗಿ ಮಾಡಿದರು.
2KI 23:31 ಯೆಹೋವಾಹಾಜನು ಅರಸನಾದಾಗ ಇಪ್ಪತ್ತಮೂರು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಊರಿನ ಯೆರೆಮೀಯನ ಮಗಳಾದ ಹಮೂಟಲ್.
2KI 23:32 ಯೆಹೋವಾಹಾಜನು ತನ್ನ ಪೂರ್ವಿಕರಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2KI 23:33 ಆದರೆ ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಆಳದ ಹಾಗೆ ಹಮಾತ್ ದೇಶದ ರಿಬ್ಲಾ ಎಂಬ ಊರಲ್ಲಿ ಬಂಧಿಸಿಟ್ಟನು. ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರಬೇಕಾಯಿತು.
2KI 23:34 ಫರೋಹ ನೆಕೋವನು ಯೋಷೀಯನಿಗೆ ಬದಲಾಗಿ ಅವನ ಮಗನಾದ ಎಲ್ಯಾಕೀಮನನ್ನು ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು. ಯೆಹೋವಾಹಾಜನು ಅಲ್ಲೇ ಮರಣಹೊಂದಿದನು.
2KI 23:35 ಯೆಹೋಯಾಕೀಮನು ಬೆಳ್ಳಿಯನ್ನೂ, ಬಂಗಾರವನ್ನೂ ಫರೋಹನಿಗೆ ಕೊಟ್ಟನು. ಅವನು ಬೆಳ್ಳಿಯನ್ನೂ, ಬಂಗಾರವನ್ನೂ ನೆಕೋ ಫರೋಹನಿಗೆ ಕೊಡಲು ದೇಶದ ಜನರಿಂದ ಪ್ರತಿಯೊಬ್ಬರ ತೆರಿಗೆಯನ್ನು ಬಲವಂತವಾಗಿ ತೆಗೆದುಕೊಂಡನು.
2KI 23:36 ಯೆಹೋಯಾಕೀಮನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ರೂಮಾ ಊರಿನವಳೂ ಪೆದಾಯನ ಮಗಳೂ ಆದ ಜೆಬೂದಾ.
2KI 23:37 ಅವನು ತನ್ನ ಪೂರ್ವಿಕರಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2KI 24:1 ಯೆಹೋಯಾಕೀಮನ ಆಳಿಕೆಯಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶವನ್ನು ದಾಳಿಮಾಡಿದನು. ಯೆಹೋಯಾಕೀಮನು ಮೂರು ವರ್ಷ ಅವನ ಸೇವಕನಾಗಿದ್ದು, ತರುವಾಯ ಅವನ ಮೇಲೆ ತಿರುಗಿಬಿದ್ದನು.
2KI 24:2 ಯೆಹೋವ ದೇವರು ಬಾಬಿಲೋನಿಯರನ್ನೂ, ಅರಾಮ್ಯರನ್ನೂ, ಮೋವಾಬ್ಯರನ್ನೂ, ಅಮ್ಮೋನಿಯರನ್ನೂ ಅವನ ಮೇಲೆ ಕಳುಹಿಸಿದನು. ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ, ಯೆಹೂದವನ್ನು ನಾಶಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
2KI 24:3 ನಿಶ್ಚಯವಾಗಿ ಯೆಹೋವ ದೇವರ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಮನಸ್ಸೆಯು ತನ್ನ ಸಮಸ್ತ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ, ಯೆಹೂದವನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕುವಂತೆ ಇದಾಯಿತು.
2KI 24:4 ಇದಲ್ಲದೆ ಮನಸ್ಸೆಯು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಯೆಹೋವ ದೇವರು ಅದನ್ನು ಕ್ಷಮಿಸಲು ಸಿದ್ಧವಾಗಿರಲಿಲ್ಲ.
2KI 24:5 ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2KI 24:6 ಯೆಹೋಯಾಕೀಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.
2KI 24:7 ಆದರೆ ಈಜಿಪ್ಟಿನ ಅರಸನು ತನ್ನ ದೇಶದಿಂದ ತಿರುಗಿ ಬರಲಿಲ್ಲ. ಏಕೆಂದರೆ ಈಜಿಪ್ಟ್ ನದಿ ಮೊದಲುಗೊಂಡು ಯೂಫ್ರೇಟೀಸ್ ನದಿಯವರೆಗೂ ಈಜಿಪ್ಟಿನ ಅರಸನಿಗೆ ಇದ್ದದ್ದನ್ನೆಲ್ಲಾ ಬಾಬಿಲೋನಿನ ಅರಸನು ಸ್ವಾಧೀನಮಾಡಿಕೊಂಡಿದ್ದನು.
2KI 24:8 ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ.
2KI 24:9 ಅವನು ತನ್ನ ತಂದೆಯು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.
2KI 24:10 ಆ ಕಾಲದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮಿಗೆ ವಿರೋಧವಾಗಿ ಬಂದು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದರು.
2KI 24:11 ಅಷ್ಟರಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತಾನೇ ಆ ಪಟ್ಟಣಕ್ಕೆ ಬಂದನು.
2KI 24:12 ಆಗ ಯೆಹೂದದ ಅರಸನಾದ ಯೆಹೋಯಾಖೀನನೂ, ಅವನ ತಾಯಿಯೂ, ಅವನ ಸೇವಕರೂ, ಅವನ ಪ್ರಧಾನರೂ, ಅವನ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಶರಣಾದರು. ಬಾಬಿಲೋನಿನ ಅರಸನು ತನ್ನ ಆಳಿಕೆಯ ಎಂಟನೆಯ ವರ್ಷದಲ್ಲಿ ಯೆಹೋಯಾಕೀನನನ್ನು ಸೆರೆಹಿಡಿದನು.
2KI 24:13 ಯೆಹೋವ ದೇವರು ಮುಂತಿಳಿಸಿದ ಪ್ರಕಾರವೇ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದಲ್ಲಿ ಸಮಸ್ತ ಬೊಕ್ಕಸಗಳನ್ನೂ, ಅರಮನೆಯ ಬೊಕ್ಕಸಗಳನ್ನೂ, ಇಸ್ರಾಯೇಲಿನ ಅರಸನಾದ ಸೊಲೊಮೋನನು ಅರಸನ ಆಲಯದಲ್ಲಿ ಮಾಡಿದ ಬಂಗಾರದ ಸಮಸ್ತ ಪಾತ್ರೆಗಳನ್ನೂ ಸೂರೆಯಾಗಿ ತೆಗೆದುಕೊಂಡನು.
2KI 24:14 ಅವನು ಯೆರೂಸಲೇಮಿನವರೆಲ್ಲರನ್ನೂ, ಸಮಸ್ತ ಪ್ರಧಾನರನ್ನೂ, ಸಮಸ್ತ ಸ್ಥಿತಿಯುಳ್ಳ ಪರಾಕ್ರಮಶಾಲಿಗಳನ್ನೂ, ಹತ್ತು ಸಾವಿರ ಸೆರೆಯವರನ್ನೂ ಮತ್ತು ಸಮಸ್ತ ಕೌಶಲಗಾರರನ್ನೂ, ಕಮ್ಮಾರರನ್ನೂ ಅಲ್ಲಿಂದ ಒಯ್ದನು. ದೇಶದಲ್ಲಿ ಬಡವರು ಹೊರತು ಉಳಿದವರು ಯಾರೂ ಇರಲಿಲ್ಲ.
2KI 24:15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದನು. ಅರಸನ ತಾಯಿಯನ್ನೂ, ಅರಸನ ಹೆಂಡತಿಯರನ್ನೂ, ಅವನ ಅಧಿಕಾರಿಗಳನ್ನೂ, ದೇಶದ ಪ್ರತಿಷ್ಠಿತರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ಒಯ್ದನು.
2KI 24:16 ಬಾಬಿಲೋನಿನ ಅರಸನು ಸಮಸ್ತ ಸ್ಥಿತಿವಂತರಾದ ಏಳು ಸಾವಿರ ಸೈನಿಕರನ್ನೂ, ಕೌಶಲಗಾರರನ್ನೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಾಬಿಲೋನಿಗೆ ಸೆರೆಯಾಗಿ ಒಯ್ದನು.
2KI 24:17 ಬಾಬಿಲೋನಿನ ಅರಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ, ಅವನಿಗೆ ಚಿದ್ಕೀಯನೆಂದು ಬೇರೆ ಹೆಸರನ್ನಿಟ್ಟನು.
2KI 24:18 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್.
2KI 24:19 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2KI 24:20 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಅನಂತರ ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
2KI 25:1 ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು.
2KI 25:2 ಅರಸನಾದ ಚಿದ್ಕೀಯನ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆಹಾಕಿದನು.
2KI 25:3 ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
2KI 25:4 ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
2KI 25:5 ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ, ಯೆರಿಕೋವಿನ ಬಯಲು ಸ್ಥಳದಲ್ಲಿ ಅವನನ್ನು ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು.
2KI 25:6 ಅವರು ಅರಸನನ್ನು ಹಿಡಿದುಕೊಂಡರು. ರಿಬ್ಲದಲ್ಲಿರುವ ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
2KI 25:7 ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದರು. ತರುವಾಯ ಅವನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ ಅವನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
2KI 25:8 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದ ಐದನೆಯ ತಿಂಗಳಿನ, ಏಳನೆಯ ದಿನದಲ್ಲಿ ಬಾಬಿಲೋನಿನ ಅರಸನ ಸೇವಕನೂ, ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದು,
2KI 25:9 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.
2KI 25:10 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು.
2KI 25:11 ಕಾವಲಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು.
2KI 25:12 ಆದರೆ ಕಾವಲಿನ ಅಧಿಪತಿಯು ಹೊಲಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಬೇಸಾಯ ಮಾಡುವದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು.
2KI 25:13 ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
2KI 25:14 ಇದಲ್ಲದೆ ಅವರು ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಬಟ್ಟಲು ಮತ್ತು ಸಮಸ್ತ ಕಂಚಿನ ಸಲಕರಣೆಗಳನ್ನೂ ತೆಗೆದುಕೊಂಡು ಹೋದರು.
2KI 25:15 ಕಾವಲುಗಾರರ ಅಧಿಪತಿಯು ಅಗ್ನಿ ಪಾತ್ರೆಗಳನ್ನೂ, ತಟ್ಟೆಗಳನ್ನೂ, ಬಂಗಾರ ಬೆಳ್ಳಿಗಳಿಂದ ಮಾಡಿದ ಎಲ್ಲವನ್ನೂ ತೆಗೆದುಕೊಂಡನು.
2KI 25:16 ಸೊಲೊಮೋನನು ಯೆಹೋವ ದೇವರ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ಕಂಚಿನ ಸಮುದ್ರವೆಂಬ ಪಾತ್ರೆ, ಚಕ್ರದ ಬಂಡಿಗಳು, ಇವುಗಳನ್ನು ಮಾಡುವುದಕ್ಕೆ ತೂಕ ಮಾಡಲಾರದಷ್ಟು ಕಂಚು ಹಿಡಿದಿತ್ತು.
2KI 25:17 ಪ್ರತಿಯೊಂದು ಕಂಬ ಎಂಟು ಮೀಟರ್ ಎತ್ತರವಿತ್ತು. ಪ್ರತಿಯೊಂದರ ಮೇಲೆ ಸುಮಾರು ಒಂದೂವರೆ ಮೀಟರ್ ಎತ್ತರವಾದ ಒಂದು ಕಂಚಿನ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು.
2KI 25:18 ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು.
2KI 25:19 ಇದಲ್ಲದೆ ಪಟ್ಟಣದೊಳಗಿಂದ ಸೈನಿಕರ ಮೇಲಿದ್ದ ಒಬ್ಬ ಅಧಿಕಾರಿಯನ್ನೂ, ಅರಸನ ಐದು ಮಂದಿ ಸಲಹೆಗಾರರನ್ನೂ, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಧಿಪತಿಯ ಲೇಖಕನನ್ನೂ, ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶದ ಜನರಲ್ಲಿ ಅರವತ್ತು ಮಂದಿಯನ್ನೂ ತೆಗೆದುಕೊಂಡನು.
2KI 25:20 ಇವರನ್ನೆಲ್ಲಾ ಕಾವಲಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋಗಿ, ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.
2KI 25:21 ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು. ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು.
2KI 25:22 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಉಳಿಸಿದ ಜನರ ಮೇಲೆ, ಶಾಫಾನನ ಮೊಮ್ಮಗನೂ, ಅಹೀಕಾಮನ ಮಗನೂ ಆದ ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು.
2KI 25:23 ಆದರೆ ಬಾಬಿಲೋನಿನ ಅರಸನು ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಕೇಳಿದ ಮೇಲೆ, ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ, ನೆತನ್ಯನ ಮಗ ಇಷ್ಮಾಯೇಲನೂ, ಕಾರೇಹನ ಮಗ ಯೋಹಾನಾನ್, ನೆಟೋಫದವನಾದ ತನ್ಹುಮೆತನ ಮಗ ಸೆರಾಯ್, ಮಾಕಾತ್ಯರಲ್ಲಿ ಒಬ್ಬನ ಮಗ ಯಾಜನ್ಯ, ಇವರೆಲ್ಲರೂ ತಮ್ಮ ಜನರಸಹಿತವಾಗಿ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.
2KI 25:24 ಆಗ ಗೆದಲ್ಯನು ಅವರಿಗೂ, ಅವರ ಜನರಿಗೂ ಪ್ರಮಾಣಮಾಡಿ, “ಬಾಬಿಲೋನಿಯದ ಸೈನಿಕರಿಗೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು, ಬಾಬಿಲೋನಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೆಯದಾಗುವುದು,” ಎಂದನು.
2KI 25:25 ಆದರೆ ಏಳನೆಯ ತಿಂಗಳಲ್ಲಿ ಅರಸನ ಸಂತಾನದವನೂ, ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಅವನ ಸಂಗಡ ಹತ್ತು ಮಂದಿಯೂ ಬಂದು ಗೆದಲ್ಯನನ್ನೂ, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ, ಬಾಬಿಲೋನಿಯರನ್ನೂ ಕೊಂದುಹಾಕಿದರು.
2KI 25:26 ಆಗ ಹಿರಿಕಿರಿಯರಾದ ಸಮಸ್ತ ಜನರೂ, ದಂಡುಗಳ ಅಧಿಪತಿಗಳೂ ಬಾಬಿಲೋನಿಯದವರಿಗೆ ಹೆದರಿ ಎದ್ದು ಈಜಿಪ್ಟಿಗೆ ಹೋದರು.
2KI 25:27 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿವಸದಲ್ಲಿ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು.
2KI 25:28 ಇದಲ್ಲದೆ ಅವನ ಸಂಗಡ ಪ್ರೀತಿಯಿಂದ ಮಾತನಾಡಿ, ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸರಿಗಿಂತ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು.
2KI 25:29 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು.
2KI 25:30 ಅವನು ಬದುಕಿರುವವರೆಗೂ ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.
1CH 1:1 ಆದಾಮ, ಸೇತ್, ಎನೋಷ್,
1CH 1:2 ಕೇನಾನ್, ಮಹಲಲೇಲ್ ಯೆರೆದ್,
1CH 1:3 ಹನೋಕ್, ಮೆತೂಷೆಲಹ, ಲೆಮೆಕ್, ನೋಹ.
1CH 1:4 ನೋಹನ ಮಕ್ಕಳು: ಶೇಮ್, ಹಾಮ್, ಯೆಫೆತ್.
1CH 1:5 ಯೆಫೆತನ ಪುತ್ರರು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
1CH 1:6 ಗೋಮೆರನ ಪುತ್ರರು: ಅಷ್ಕೆನಜ್, ರೀಫತ್, ತೋಗರ್ಮ.
1CH 1:7 ಯಾವಾನನ ಮಕ್ಕಳು: ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.
1CH 1:8 ಹಾಮನ ಪುತ್ರರು: ಕೂಷ್, ಈಜಿಪ್ಟ್, ಪೂಟ್, ಕಾನಾನ್.
1CH 1:9 ಕೂಷನ ಪುತ್ರರು: ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ. ರಾಮನ ಪುತ್ರರು: ಶೆಬಾ ಮತ್ತು ದೆದಾನ್.
1CH 1:10 ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು.
1CH 1:11 ಈಜಿಪ್ಟನವರಿಂದ, ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು,
1CH 1:12 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು.
1CH 1:13 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ಆಮೇಲೆ ಹೇತನು ಹುಟ್ಟಿದನು.
1CH 1:14 ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,
1CH 1:15 ಹಿವ್ವಿಯರು, ಅರ್ಕಿಯರು, ಸೀನಿಯರು,
1CH 1:16 ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು.
1CH 1:17 ಶೇಮನ ಪುತ್ರರು: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್, ಅರಾಮನ ಪುತ್ರರು: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.
1CH 1:18 ಅರ್ಪಕ್ಷದ್ ಶೆಲಹನ ತಂದೆ; ಶೆಲಹ ಏಬೆರನ ತಂದೆ.
1CH 1:19 ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು. ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್.
1CH 1:20 ಯೊಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಪ್, ಹಜರ್ಮಾವೆತ್, ಯೆರಹ,
1CH 1:21 ಹದೋರಾಮ್, ಊಜಾಲ್, ದಿಕ್ಲಾ,
1CH 1:22 ಏಬಾಲ್, ಅಬೀಮಯೇಲ್, ಶೆಬಾ,
1CH 1:23 ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.
1CH 1:24 ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು. ಅರ್ಪಕ್ಷದ್, ಶೆಲಹ,
1CH 1:25 ಏಬೆರ್, ಪೆಲೆಗ್, ರೆಗೂ,
1CH 1:26 ಸೆರೂಗ್, ನಾಹೋರ್, ತೆರಹ,
1CH 1:27 ಅಬ್ರಾಮ್ ಇವನು ಅಬ್ರಹಾಮ ಎಂಬ ಹೆಸರು ಹೊಂದಿದವನು.
1CH 1:28 ಅಬ್ರಹಾಮನಿಗೆ ಇಬ್ಬರು ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.
1CH 1:29 ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು ನೆಬಾಯೋತ್, ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
1CH 1:30 ಮಿಷ್ಮಾ, ದೂಮಾ, ಮಸ್ಸಾ, ಹದದ್, ತೇಮ,
1CH 1:31 ಯೆಟೂರ್, ನಾಫೀಷ್, ಕೇದೆಮ. ಇಷ್ಮಾಯೇಲನ ಸಂತಾನದವರು ಇವರೇ.
1CH 1:32 ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು. ಅವಳಿಂದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬ ಆರು ಜನ ಮಕ್ಕಳು ಜನಿಸಿದರು. ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು.
1CH 1:33 ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು.
1CH 1:34 ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಇಸಾಕನಿಗೆ ಇಬ್ಬರು ಮಕ್ಕಳು ಏಸಾವ ಮತ್ತು ಯಾಕೋಬ.
1CH 1:35 ಏಸಾವನ ಪುತ್ರರು ಎಲೀಫಜ್, ರೆಯೂವೇಲ, ಯೆಯೂಷ್, ಯಳಾಮ್ ಹಾಗೂ ಕೋರಹ ಎಂಬವರು.
1CH 1:36 ಎಲೀಫಜನ ಮಕ್ಕಳು ತೇಮಾನ್, ಓಮಾರ್, ಚೆಫೀ, ಗತಾಮ್, ಕೆನಜ್; ತಿಮ್ನಾ ಅವಳಿಂದ ಜನಿಸಿದ ಅಮಾಲೇಕ್ ಎಂಬವರು.
1CH 1:37 ರೆಯೂವೇಲನ ಮಕ್ಕಳು ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ ಎಂಬವರು.
1CH 1:38 ಈ ಕೆಳಗೆ ನಮೂದಿಸಿದ ಎದೋಮಿನ ಮೂಲ ನಿವಾಸಿಗಳು ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, ದೀಶೋನ್, ಏಚೆರ್, ದೀಶಾನ್.
1CH 1:39 ಲೋಟಾನನ ಪುತ್ರರು ಯಾರೆಂದರೆ: ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
1CH 1:40 ಶೋಬಾಲನ ಮಕ್ಕಳು ಯಾರೆಂದರೆ: ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್. ಸಿಬೆಯೋನನ ಮಕ್ಕಳು ಅಯ್ಯಾಹ ಮತ್ತು ಅನಾಹ ಎಂಬುವರು.
1CH 1:41 ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಯಾರೆಂದರೆ: ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
1CH 1:42 ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಆಕಾನ್. ದೀಶಾನನ ಮಕ್ಕಳು ಯಾರೆಂದರೆ: ಊಚ್ ಮತ್ತು ಅರಾನ್.
1CH 1:43 ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ: ಬೆಯೋರನ ಮಗನಾದ ಬೆಲಗನು; ಅವನ ಪಟ್ಟಣದ ಹೆಸರು ದಿನ್ಹಾಬಾ.
1CH 1:44 ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
1CH 1:45 ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
1CH 1:46 ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
1CH 1:47 ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
1CH 1:48 ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
1CH 1:49 ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
1CH 1:50 ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
1CH 1:51 ಹದದನು ಮೃತನಾದನು. ಎದೋಮ್ಯರ ಮುಖಂಡರ ಹೆಸರುಗಳು ಯಾವುವೆಂದರೆ: ತಿಮ್ನಾ, ಅಲ್ವಾ, ಯೆತೇತ,
1CH 1:52 ಒಹೊಲೀಬಾಮ, ಏಲಾ, ಪೀನೋನ್
1CH 1:53 ಕೆನಜ್, ತೇಮಾನ್, ಮಿಬ್ಜಾರ,
1CH 1:54 ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಎದೋಮ್ಯರ ಮುಖಂಡರು.
1CH 2:1 ಇಸ್ರಾಯೇಲನ ಪುತ್ರರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,
1CH 2:2 ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
1CH 2:3 ಯೆಹೂದನ ಪುತ್ರರು: ಏರ್, ಓನಾನ್, ಶೇಲಹ. ಈ ಮೂವರು ಅವನಿಗೆ ಶೂನನ ಮಗಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಯೆಹೂದನ ಚೊಚ್ಚಲಮಗನಾದ ಏರನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟವನಾದ್ದರಿಂದ, ದೇವರು ಅವನನ್ನು ಮರಣಕ್ಕೆ ಒಪ್ಪಿಸಿದರು.
1CH 2:4 ಯೆಹೂದನ ಸೊಸೆ ತಾಮಾರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಪುತ್ರರೆಲ್ಲರೂ ಐದು ಮಂದಿ.
1CH 2:5 ಪೆರೆಚನ ಪುತ್ರರು: ಹೆಚ್ರೋನ್, ಹಾಮೂಲ್.
1CH 2:6 ಜೆರಹನ ಪುತ್ರರು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ, ಒಟ್ಟು ಐದು ಮಂದಿ.
1CH 2:7 ಕರ್ಮೀಯ ಪುತ್ರರು: ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲರನ್ನು ಆಪತ್ತಿಗೆ ಗುರಿಪಡಿಸಿದ ಆಕಾನನು.
1CH 2:8 ಏತಾನನ ಮಗನು ಅಜರ್ಯನು.
1CH 2:9 ಹೆಚ್ರೋನನಿಗೆ ಹುಟ್ಟಿದ ಪುತ್ರರು: ಯೆರಹ್ಮೇಲ್, ರಾಮ್, ಕೆಲೂಬಾಯ್.
1CH 2:10 ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು. ಅಮ್ಮೀನಾದಾಬನು ಯೆಹೂದನ ಮಕ್ಕಳಿಗೆ ನಾಯಕನಾದ ನಹಶೋನನ ತಂದೆ.
1CH 2:11 ನಹಶೋನನು ಸಲ್ಮನನ ತಂದೆಯಾಗಿದ್ದನು, ಸಲ್ಮನ ಬೋವಜನ ತಂದೆ,
1CH 2:12 ಬೋವಜನು ಓಬೇದನ ತಂದೆ, ಓಬೇದನು ಇಷಯನ ತಂದೆ.
1CH 2:13 ಇಷಯನು ತನ್ನ ಚೊಚ್ಚಲ ಮಗ ಎಲೀಯಾಬನನ್ನೂ, ಎರಡನೆಯವನಾದ ಅಬೀನಾದಾಬನನ್ನೂ, ಮೂರನೆಯವನಾದ ಶಿಮ್ಮನನ್ನೂ,
1CH 2:14 ನಾಲ್ಕನೆಯವನಾದ ನೆತನೆಯೇಲನನ್ನೂ, ಐದನೆಯವನಾದ ರದ್ದೈನನ್ನೂ,
1CH 2:15 ಆರನೆಯವನಾದ ಓಚೆಮನನ್ನೂ, ಏಳನೆಯವನಾದ ದಾವೀದನಿಗೆ ತಂದೆಯಾಗಿದ್ದನು.
1CH 2:16 ಅವರ ಇಬ್ಬರು ಸಹೋದರಿಯರು ಚೆರೂಯಳು, ಅಬೀಗೈಲಳು. ಚೆರೂಯಳ ಮೂವರು ಮಕ್ಕಳು ಅಬೀಷೈ, ಯೋವಾಬ್, ಅಸಾಯೇಲ್.
1CH 2:17 ಅಬೀಗೈಲಳು ಅಮಾಸನ ತಾಯಿ, ಅಮಾಸನ ತಂದೆಯು ಇಷ್ಮಾಯೇಲನ ವಂಶದ ಯೆತೆರನು.
1CH 2:18 ಹೆಚ್ರೋನನ ಮಗನಾದ ಕಾಲೇಬನು ಅಜೂಬಳಿಂದಲೂ ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಇವಳ ಪುತ್ರರು: ಯೇಷೆರನು, ಶೋಬಾಬನು, ಅರ್ದೋನನು.
1CH 2:19 ಅಜೂಬಳ ಮರಣದ ನಂತರ, ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು.
1CH 2:20 ಹೂರನು ಊರಿಯನ ತಂದೆ; ಊರಿಯನು ಬೆಚಲಯೇಲನ ತಂದೆ.
1CH 2:21 ತರುವಾಯ ಹೆಚ್ರೋನನು ಅರವತ್ತು ವರ್ಷದವನಾಗಿರುವಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬ ಎಂಬ ಮಗನನ್ನು ಹೆತ್ತಳು.
1CH 2:22 ಸೆಗೂಬನು ಯಾಯೀರನ ತಂದೆ, ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತು ಮೂರು ಪಟ್ಟಣಗಳು ಇದ್ದವು.
1CH 2:23 ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.
1CH 2:24 ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.
1CH 2:25 ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನ ಪುತ್ರರು: ಚೊಚ್ಚಲ ಮಗ ರಾಮ ಮತ್ತು ಬೂನ, ಓರೆನ, ಓಚೆಮ, ಅಹೀಯ.
1CH 2:26 ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು. ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ.
1CH 2:27 ಯೆರಹ್ಮೇಲನ ಚೊಚ್ಚಲಮಗನಾದ ರಾಮನ ಪುತ್ರರು: ಮಾಚ್, ಯಾಮೀನ್, ಏಕೆರ್.
1CH 2:28 ಓನಾಮನ ಪುತ್ರರು: ಶಮ್ಮಾಯ, ಯಾದ; ಶಮ್ಮಾಯನ ಪುತ್ರರು: ನಾದಾಬನು, ಅಬಿಷೂರನು.
1CH 2:29 ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.
1CH 2:30 ನಾದಾಬನ ಪುತ್ರರು ಸೆಲೆದ್, ಅಪ್ಪಯಿಮ್; ಸೆಲೆದನು ಮಕ್ಕಳಿಲ್ಲದೆ ಸತ್ತನು.
1CH 2:31 ಅಪ್ಪಯಿಮ್ ಇವನ ಪುತ್ರರು: ಇಷ್ಷೀಯು; ಇಷ್ಷೀಯನ ಮಗನು ಶೇಷಾನನು; ಶೇಷಾನನ ಮಗನು; ಅಹ್ಲಾಯಿಯನು;
1CH 2:32 ಶಮ್ಮಾಯನ ಸಹೋದರನಾದ ಯಾದನ ಪುತ್ರರು: ಯೆತೆರನ ಮತ್ತು ಯೋನಾತಾನ್. ಯೆತೆರನು ಮಕ್ಕಳಿಲ್ಲದೆ ಸತ್ತನು;
1CH 2:33 ಯೋನಾತಾನನ ಪುತ್ರರು: ಪೆಲೆತನು, ಜಾಜನು. ಇವರೇ ಯೆರಹ್ಮೇಲನ ವಂಶಜರು.
1CH 2:34 ಶೇಷಾನನಿಗೆ ಪುತ್ರರಿರಲಿಲ್ಲ. ಪುತ್ರಿಯರಿದ್ದರು. ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಈಜಿಪ್ಟಿನವನಾದ ಸೇವಕನಿದ್ದನು.
1CH 2:35 ಶೇಷಾನನು ತನ್ನ ಪುತ್ರಿಯನ್ನು ತನ್ನ ಸೇವಕ ಯರ್ಹನಿಗೆ ಮದುವೆಮಾಡಿಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.
1CH 2:36 ಅತ್ತೈ ನಾತಾನನ ತಂದೆ; ನಾತಾನನು ಜಾಬಾದನ ತಂದೆ.
1CH 2:37 ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾನನು ಓಬೇದನನ್ನು ಪಡೆದನು.
1CH 2:38 ಓಬೇದನು ಯೇಹುವನ್ನು ಪಡೆದನು; ಯೇಹುವು ಅಜರ್ಯನನ್ನು ಪಡೆದನು.
1CH 2:39 ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.
1CH 2:40 ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
1CH 2:41 ಶಲ್ಲೂಮನು ಯೆಕಮ್ಯಾಹನ ತಂದೆ; ಯೆಕಮ್ಯಾಹನು ಎಲೀಷಾಮನ ತಂದೆ.
1CH 2:42 ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು: ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.
1CH 2:43 ಹೆಬ್ರೋನನ ಪುತ್ರರು: ಕೋರಹನು, ತಪ್ಪೂಹನು, ರೆಕೆಮನು, ಶೆಮನು.
1CH 2:44 ಶೆಮನು ರಹಮ್ಯನ ತಂದೆ ರಹಮ್ಯನು ಯೊರ್ಕೆಯಾಮನ ತಂದೆ. ರೆಕೆಮನು ಶಮ್ಮಾಯನನ್ನು ಪಡೆದನು.
1CH 2:45 ಶಮ್ಮಾಯಿಯ ಮಗನು ಮಾವೋನ್ಯನು; ಈ ಮಾವೋನ್ಯನು ಬೇತ್ ಚೂರನಿಗೆ ತಂದೆಯಾಗಿದ್ದನು.
1CH 2:46 ಕಾಲೇಬನ ಉಪಪತ್ನಿಯಾದ ಏಫಾಳು ಹಾರಾನ್, ಮೋಚ, ಗಾಜೇಜ ಎಂಬುವರನ್ನು ಹೆತ್ತಳು. ಹಾರಾನನು ಗಾಜೇಜನ ತಂದೆ.
1CH 2:47 ಯಾದೈಯ ಪುತ್ರರು: ರೆಗೆಮ್, ಯೋತಾಮ್, ಗೇಷಾನ್, ಪೆಲಟ್, ಏಫ್, ಶಾಫ್.
1CH 2:48 ಕಾಲೇಬನ ಇನ್ನೊಬ್ಬ ಉಪಪತ್ನಿಯಾದ ಮಾಕಳು ಶೇಬರ್, ತಿರ್ಹನ ಎಂಬುವರನ್ನು ಹೆತ್ತಳು.
1CH 2:49 ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್, ಮಕ್‌ಬೇನ ಮತ್ತು ಗಿಬೆಯ ಊರುಗಳವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಸಾ.
1CH 2:50 ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ್. ಹೂರನ ಮಗ ಶೋಬಾಲ್ ಕಿರ್ಯತ್ ಯಾರೀಮ್ ಪಟ್ಟಣವನ್ನೂ,
1CH 2:51 ಅವನ ಇನ್ನೊಬ್ಬ ಮಗ ಸಲ್ಮ ಬೇತ್ಲೆಹೇಮನ್ನೂ, ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.
1CH 2:52 ಕಿರ್ಯತ್ ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹಾರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,
1CH 2:53 ಹಾಗೂ ಕಿರ್ಯತ್ ಯಾರೀಮನವರ ಗೋತ್ರಗಳು: ಯೆತೆರಿಯರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು, ಇವರಿಂದ ಚೊರ್‍ರಾತ್ಯರೂ, ಎಷ್ಟಾವೋಲ್ಯರೂ ಹುಟ್ಟಿದರು.
1CH 2:54 ಸಲ್ಮನ ವಂಶಜರು: ಬೇತ್ಲೆಹೇಮ್, ನೆಟೋಫಾ, ಅಟರೋತ್ ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಉತ್ಪತ್ತಿಯಾದರು.
1CH 2:55 ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.
1CH 3:1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು; ಕರ್ಮೇಲ್ಯಳಾದ ಅಬೀಗೈಲಳಿಂದ ಹುಟ್ಟಿದ ಎರಡನೆಯವನಾದ ದಾನಿಯೇಲನು,
1CH 3:2 ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು, ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು.
1CH 3:3 ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು, ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು.
1CH 3:4 ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು. ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
1CH 3:5 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ದಾವೀದನ ಹೆಂಡತಿ ಬತ್ಷೆಬೆಳು ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.
1CH 3:6 ಇದಲ್ಲದೆ ಇಬ್ಹಾರ್, ಎಲೀಷಾಮ, ಎಲೀಫೆಲೆಟ್,
1CH 3:7 ನೋಗಹ, ನೆಫೆಗ್, ಯಾಫೀಯ,
1CH 3:8 ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಈ ಒಂಬತ್ತು ಮಂದಿ ಮಕ್ಕಳಿದ್ದರು.
1CH 3:9 ಉಪಪತ್ನಿಗಳ ಮಕ್ಕಳು ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು; ತಾಮಾರಳು ಇವರ ಸಹೋದರಿಯಾಗಿದ್ದಳು.
1CH 3:10 ಸೊಲೊಮೋನನ ಮಗನು ರೆಹಬ್ಬಾಮನು; ಇವನ ಮಗನು ಅಬೀಯನು; ಇವನ ಮಗನು ಆಸನು; ಇವನ ಮಗನು ಯೆಹೋಷಾಫಾಟನು;
1CH 3:11 ಇವನ ಮಗನು ಯೆಹೋರಾಮನು; ಇವನ ಮಗನು ಅಹಜ್ಯನು; ಇವನ ಮಗನು ಯೋವಾಷನು.
1CH 3:12 ಇವನ ಮಗನು ಅಮಚ್ಯನು; ಇವನ ಮಗನು ಅಜರ್ಯನು; ಇವನ ಮಗನು ಯೋತಾಮನು.
1CH 3:13 ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು.
1CH 3:14 ಇವನ ಮಗನು ಆಮೋನನು; ಇವನ ಮಗನು ಯೋಷೀಯನು.
1CH 3:15 ಯೋಷೀಯನ ಮಕ್ಕಳು: ಚೊಚ್ಚಲಮಗನಾದ ಯೋಹಾನಾನ್, ಎರಡನೆಯವನಾದ ಯೆಹೋಯಾಕೀಮ್, ಮೂರನೆಯವನಾದ ಚಿದ್ಕೀಯ, ನಾಲ್ಕನೆಯವನಾದ ಶಲ್ಲೂಮ್.
1CH 3:16 ಯೆಹೋಯಾಕೀಮನ ಮಕ್ಕಳು: ಇವನ ಮಗನಾದ ಯೆಕೊನ್ಯ; ಇವನ ಮಗನು ಚಿದ್ಕೀಯ.
1CH 3:17 ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು: ಇವನ ಮಗ ಶೆಯಲ್ತಿಯೇಲ್,
1CH 3:18 ಮಲ್ಕೀರಾಮ, ಪೆದಾಯ್, ಶೆನಚ್ಚರ, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.
1CH 3:19 ಪೆದಾಯನ ಮಕ್ಕಳು: ಜೆರುಬ್ಬಾಬೆಲನು, ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮನು, ಹನನ್ಯನು. ಇವರ ಸಹೋದರಿಯಾದ ಶೆಲೋಮೀತಳು.
1CH 3:20 ಇವರಲ್ಲದೆ ಐವರು ಗಂಡು ಮಕ್ಕಳು ಅವನಿಗಿದ್ದರು: ಹಷುಬನು, ಓಹೆಲನು, ಬೆರೆಕ್ಯನು, ಹಸದ್ಯ, ಯೂಷಬ್ಹೆಸೆದ್
1CH 3:21 ಹನನ್ಯನ ವಂಶಜರು: ಪೆಲಟ್ಯನು, ಯೆಶಾಯನು; ರೆಫಾಯನ ಮಕ್ಕಳು, ಅರ್ನಾನನ ಮಕ್ಕಳು, ಓಬದ್ಯನ ಮಕ್ಕಳು, ಶೆಕನ್ಯನ ಮಕ್ಕಳು.
1CH 3:22 ಶೆಕನ್ಯನ ವಂಶಜರು: ಶೆಮಾಯನ ಮತ್ತು ಅವನ ಮಕ್ಕಳು ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಫಾಟ್, ಈ ಆರು ಮಂದಿಯು.
1CH 3:23 ನೆಯರ್ಯನ ಮಕ್ಕಳು: ಎಲ್ಯೋವೇನೈನು, ಹಿಜ್ಕೀಯನು, ಅಜ್ರೀಕಾಮನು, ಈ ಮೂರು ಮಂದಿಯು.
1CH 3:24 ಎಲ್ಯೋವೇನೈನ ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬ ಏಳುಮಂದಿ.
1CH 4:1 ಯೆಹೂದನ ವಂಶಜರು: ಪೆರೆಚನು, ಹೆಚ್ರೋನನು, ಕರ್ಮೀ, ಹೂರನು, ಶೋಬಾಲನು.
1CH 4:2 ಶೋಬಾಲನ ಮಗನಾದ ರೆವಾಯನು ಯಹತನ ತಂದೆ. ಯಹತನು ಅಹೂಮೈ ಮತ್ತು ಲಹದ್ ಎಂಬವರ ತಂದೆ. ಇವರೇ ಚೊರ್‍ರದ ಕುಟುಂಬದವರು.
1CH 4:3 ಏಟಾಮನ ಪುತ್ರರು: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಮತ್ತು ಇವರ ತಂಗಿ ಹಚೆಲೆಲ್‌ಪೋನೀ ಎಂಬವರು.
1CH 4:4 ಪೆನೂಯೇಲ್, ಗೆದೋರ್ ವಂಶದವರಿಗೆ ಮೂಲಪುರುಷನಾಗಿದ್ದನು. ಏಜೆರ್ ಹೂಷಾಹರ ಮೂಲಪುರುಷನಾಗಿದ್ದನು. ಇವರು ಎಫ್ರಾತಾಹ ಎಂಬಾಕೆಯ ಚೊಚ್ಚಲಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ ವಂಶದವರಿಗೆ ಮೂಲಪುರುಷನು.
1CH 4:5 ತೆಕೋವದ ತಂದೆ ಅಷ್ಹೂರನಿಗೆ ಹೆಲಾಹ, ನಾರ ಎಂಬ ಇಬ್ಬರು ಪತ್ನಿಯರಿದ್ದರು.
1CH 4:6 ನಾರಳು ಅವನಿಗೆ ಅಹುಜ್ಜಾಮ್, ಹೇಫೆರ್, ತೇಮಾನಿ, ಅಹಷ್ಟಾರ್ಯನನ್ನು ಹೆತ್ತಳು. ಇವರೇ ನಾರಳ ಮಕ್ಕಳು.
1CH 4:7 ಹೆಲಾಹಳ ಪುತ್ರರು: ಚೆರೆತ್, ಇಚ್ಹಾರ್, ಎತ್ನಾನ್.
1CH 4:8 ಕೋಚನು ಅನೂಬ್‌ನನ್ನೂ, ಚೊಬೇಬನನ್ನೂ, ಹಾರುಮನ ಮಗನಾದ ಅಹರ‍್ಹೇಲನ ಸಂತತಿಗಳನ್ನೂ ಪಡೆದನು.
1CH 4:9 ಯಾಬೇಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ, “ನಾನು ಇವನನ್ನು ವ್ಯಥೆಯಿಂದ ಹೆತ್ತೆನು,” ಎಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
1CH 4:10 ಆದರೆ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀವು ನನ್ನನ್ನು ನಿಜವಾಗಿ ಆಶೀರ್ವದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿಮ್ಮ ಹಸ್ತವು ನನ್ನ ಸಂಗಡ ಇರಲಿ; ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನ್ನು ಕೇಡಿನಿಂದ ತಪ್ಪಿಸಿರಿ,” ಎಂದು ಮೊರೆಯಿಟ್ಟನು. ದೇವರು ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿದರು.
1CH 4:11 ಶೂಹನ ಸಹೋದರ ಕೆಲೂಬನು ಎಷ್ಟೋನನ ತಂದೆ ಮೆಹೀರನನ್ನು ಪಡೆದನು.
1CH 4:12 ಎಷ್ಟೋನನಿಂದ ಬೇತ್ ರಾಫಾ, ಪಾಸೇಹ, ತೆಹಿನ್ನ ಎಂಬ ಮೂವರು ಮಕ್ಕಳು ಇದ್ದರು. ತೆಹಿನ್ನ ನಾಹಷ್ ಪಟ್ಟಣದ ಸ್ಥಾಪಕ. ಈ ಜನರ ವಂಶಜರು ರೇಕಾ ಎಂಬಲ್ಲಿ ವಾಸಿಸಿದ್ದರು.
1CH 4:13 ಕೆನಾಜನ ಪುತ್ರರು: ಒತ್ನಿಯೇಲನು ಸೆರಾಯನು. ಒತ್ನಿಯೇಲನ ಪುತ್ರರು: ಹತತ್ ಹಾಗು ಮೆಯೋನೋತೈ.
1CH 4:14 ಮೆಯೋನೋತೈ ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮರ ಸ್ಥಾಪಕನಾದ ಯೋವಾಬನ ತಂದೆ. ಈ ಜನರು ಕೈಕೆಲಸದವರಾದ್ದರಿಂದ ಗೇಹರಾಷೀಮರು ಎಂಬ ಹೆಸರು ಬಂತು.
1CH 4:15 ಯೆಫುನ್ನೆಯ ಮಗನಾದ ಕಾಲೇಬನ ಪುತ್ರರು: ಈರು, ಏಲ, ನಾಮ್ ಎಂಬವರು; ಏಲನ ಮಗನು ಕೆನಜ್.
1CH 4:16 ಯೆಹಲ್ಲೆಲೇಲನ ಪುತ್ರರು: ಜೀಫನು, ಜಿಫಾಹನು, ತೀರ್ಯನು, ಅಸರೇಲನು.
1CH 4:17 ಎಜ್ರನ ಪುತ್ರರು: ಯೆತೆರ್, ಮೆರೆದ್, ಏಫೆರ್, ಯಾಲೋನ್ ಎಂಬವರು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮ್, ಶಮ್ಮಾಯ, ಎಷ್ಟೆಮೋವನ ತಂದೆ ಇಷ್ಬಾಹನನ್ನೂ ಹೆತ್ತಳು.
1CH 4:18 ಇವರು ಮೆರೆದನು ಮದುವೆಯಾದ ಫರೋಹನ ಮಗಳು ಬಿತ್ಯಳ ಮಕ್ಕಳು. ಇದಲ್ಲದೆ ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿ, ಗೆದೋರ್ಯನ ತಂದೆ ಯೆರೆದನನ್ನೂ, ಸೋಕೋವಿನ ತಂದೆ ಹೆಬೆರನನ್ನೂ, ಜಾನೋಹನ ತಂದೆ ಯೆಕೂತೀಯೇಲನನ್ನೂ ಹೆತ್ತಳು.
1CH 4:19 ಹೋದೀಯನು ನಹಮನ ಸಹೋದರಿಯನ್ನು ಮದುವೆಯಾದನು. ಇವರ ಸಂತತಿಯವರು ಕೆಯೀಲದಲ್ಲಿ ವಾಸಿಸಿದ ಗರ್ಮ್ಯ ಗೋತ್ರದ ಮತ್ತು ಎಷ್ಟೆಮೋವಾಬದಲ್ಲಿ ವಾಸಿಸಿದ ಮಾಕಾತ್ ಗೋತ್ರದ ಪೂರ್ವಜರು.
1CH 4:20 ಶೀಮೋನನ ಪುತ್ರರು: ಅಮ್ನೋನನು, ರಿನ್ನನು, ಬೆನ್ಹನಾನನು, ತಿಲೋನನು. ಇಷ್ಷೀಯನ ಸಂತತಿ: ಜೋಹೆತನು, ಬೆನ್ ಜೋಹೆತನು.
1CH 4:21 ಯೆಹೂದನ ಮಗ ಶೇಲಹನ ಪುತ್ರರು: ಲೇಕಾಹ್ಯನ ತಂದೆ ಏರನು, ಮಾರೇಷನ ತಂದೆ ಲದ್ದ; ಬೇತ್ ಅಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳವರು,
1CH 4:22 ಕೋಜೇಬದವರಾದ ಯೊಕೀಮ್ಯರೂ, ಯೋವಾಷನು, ಸಾರಾಫ ಮೋವಾಬ್ ಮತ್ತು ಯೆಷೂಬಿ ಲೆಹೇಮಿನಲ್ಲಿ ಅಧಿಕಾರವುಳ್ಳವರಾಗಿದ್ದರು. ಈ ದಾಖಲೆಗಳು ಪ್ರಾಚೀನ ಕಾಲದಿಂದ ಬಂದವು.
1CH 4:23 ಇವರೇ ನೆಟಾಯಿಮ್, ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಕುಂಬಾರರು. ಅವರು ಅಲ್ಲಿಯೇ ಇದ್ದು ಅರಸನಿಗೋಸ್ಕರ ಕೆಲಸ ಮಾಡುತ್ತಿದ್ದರು.
1CH 4:24 ಸಿಮೆಯೋನನ ವಂಶಜರು: ನೆಮೂಯೇಲನು, ಯಾಮೀನನು, ಯಾರೀಬನು, ಜೆರಹನು ಮತ್ತು ಸೌಲನು.
1CH 4:25 ಅವನ ಮಗನಾದ ಶಲ್ಲೂಮನು, ಅವನ ಮಗನಾದ ಮಿಬ್ಸಾಮನು, ಅವನ ಮಗನಾದ ಮಿಷ್ಮಾವನು.
1CH 4:26 ಮಿಷ್ಮಾವನ ವಂಶಜರು: ಅವನ ಮಗ ಹಮ್ಮೂಯೇಲನು, ಅವನ ಮಗ ಜಕ್ಕೂರನು, ಅವನ ಮಗನಾದ ಶಿಮ್ಮಿಯಿ.
1CH 4:27 ಶಿಮ್ಮಿಯಿಗೆ ಹದಿನಾರು ಮಂದಿ ಪುತ್ರರೂ, ಆರು ಮಂದಿ ಪುತ್ರಿಯರೂ ಇದ್ದರು. ಆದರೆ ಅವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ. ಅವರ ಸಮಸ್ತ ಸಂತತಿಯು ಯೆಹೂದದ ಮಕ್ಕಳ ಹಾಗೆ ಹೆಚ್ಚಾಗಿರಲಿಲ್ಲ.
1CH 4:28 ಇವರು ಬೇರ್ಷೆಬದಲ್ಲಿಯೂ; ಮೋಲಾದದಲ್ಲಿಯೂ; ಹಚರ್ ಷೂವಾಲ್ ಎಂಬಲ್ಲಿಯೂ;
1CH 4:29 ಬಿಲ್ಹದಲ್ಲಿಯೂ ಎಚೆಮಿನಲ್ಲಿಯೂ, ತೋಲಾದ್,
1CH 4:30 ಬೆತೂಯೇಲ್, ಹೊರ್ಮದಲ್ಲಿಯೂ; ಚಿಕ್ಲಗಿನಲ್ಲಿಯೂ;
1CH 4:31 ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೇತ್ ಬಿರೀ ಮತ್ತು ಶಾರಯಿಮ್‌ನಲ್ಲಿಯೂ ವಾಸವಾಗಿದ್ದರು. ದಾವೀದನ ಆಳ್ವಿಕೆಯವರೆಗೂ ಇವು ಅವರ ಪಟ್ಟಣಗಳಾಗಿದ್ದವು.
1CH 4:32 ಅವರ ಸುತ್ತಲಿನ ಗ್ರಾಮಗಳು ಯಾವುವೆಂದರೆ: ಏಟಾಮ್, ಆಯಿನ್, ರಿಮ್ಮೋನ್, ತೋಕೆನ್, ಆಷಾನ್ ಎಂಬ ಐದು ಪಟ್ಟಣಗಳು.
1CH 4:33 ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳ್ ಪಟ್ಟಣದವರೆಗೆ ವಾಸವಾಗಿದ್ದರು. ಇವೇ ಅವರು ವಾಸವಾಗಿರುವ ಸ್ಥಳಗಳೂ, ಅವರ ವಂಶಾವಳಿಗಳೂ:
1CH 4:34 ಮೆಷೋಬಾಬನು, ಯಮ್ಲೇಕನು, ಅಮಚ್ಯನ ಮಗನಾದ ಯೋಷನು,
1CH 4:35 ಯೋಯೇಲನು, ಅಸಿಯೇಲನ ಮಗನಾದ ಸೆರಾಯನ ಮಗ ಯೊಷಿಬ್ಯನ ಮಗ ಯೇಹೂವು.
1CH 4:36 ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯಾ.
1CH 4:37 ಶೆಮಾಯನ ಮಗ ಶಿಮ್ರಿಯ ಮಗ ಯೆದಾಯನ ಮಗ ಅಲ್ಲೋನನ ಮಗ ಶಿಪ್ಫಿಯ ಮಗ ಜೀಜನು.
1CH 4:38 ಹೆಸರು ಹೆಸರಾಗಿ ಬರೆಯಲಾದ ಇವರು ತಮ್ಮ ಕುಟುಂಬಗಳಲ್ಲಿ ನಾಯಕರಾಗಿದ್ದರು. ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
1CH 4:39 ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದವರೆಗೂ ಹೋದರು.
1CH 4:40 ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
1CH 4:41 ಹೆಸರು ಹೆಸರಾಗಿ ಬರೆದಿರುವವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಅಲ್ಲಿಗೆ ಹೋಗಿ ಹಾಮ್ಯರ ಡೇರೆಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವುದರಿಂದ ಇಂದಿನವರೆಗೂ ಅವರ ಸ್ಥಳದಲ್ಲಿ ವಾಸಿಸಿದರು.
1CH 4:42 ಇದಲ್ಲದೆ ಅವರಲ್ಲಿ ಸಿಮೆಯೋನನ ಪುತ್ರರಲ್ಲಿ ಐನೂರು ಮಂದಿ ಇಷ್ಷೀಯ ಪುತ್ರರಾದ ಪೆಲಟ್ಯ, ನೆಯರ್ಯ, ರೆಫಾಯ, ಉಜ್ಜೀಯೇಲ್ ಎಂಬವರನ್ನು ತಮ್ಮ ಅಧಿಪತಿಗಳಾಗಿ ಮಾಡಿಕೊಂಡು. ಸೇಯೀರ್ ಎಂಬ ಪರ್ವತ ದೇಶಕ್ಕೆ ಹೋದರು.
1CH 4:43 ಅವರು ತಪ್ಪಿಸಿಕೊಂಡ ಉಳಿದ ಅಮಾಲೇಕ್ಯರನ್ನು ಕೊಂದು, ಅಲ್ಲಿ ಇಂದಿನವರೆಗೂ ವಾಸವಾಗಿದ್ದಾರೆ.
1CH 5:1 ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ.
1CH 5:2 ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲುತನವು ಯೋಸೇಫನದಾಗಿತ್ತು.
1CH 5:3 ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.
1CH 5:4 ಯೋಯೇಲನ ವಂಶಜರು: ಅವನ ಮಗ ಶೆಮಾಯನು; ಅವನ ಮಗ ಗೋಗನು; ಅವನ ಮಗ ಶಿಮ್ಮೀಯಿ.
1CH 5:5 ಅವನ ಮಗ ಮೀಕಾಯನು; ಅವನ ಮಗ ರೆವಾಯನು, ಅವನ ಮಗ ಬಾಳನು.
1CH 5:6 ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರಿನಿಂದ ಸೆರೆಯಾಗಿ ಒಯ್ದ ಅವನ ಮಗ ಬೇರನು; ಅವನೇ ರೂಬೇನ್ಯರಲ್ಲಿ ನಾಯಕನಾಗಿದ್ದನು.
1CH 5:7 ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾವಳಿಯನ್ನು ಲೆಕ್ಕಿಸಿದ ಅವನ ಮುಖ್ಯಸ್ಥರು ಯಾರೆಂದರೆ, ಯೆಹಿಯೇಲ್, ಜೆಕರ್ಯ,
1CH 5:8 ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ. ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು.
1CH 5:9 ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.
1CH 5:10 ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು.
1CH 5:11 ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದವರೆಗೂ ವಾಸವಾಗಿದ್ದರು.
1CH 5:12 ಬಾಷಾನಿನಲ್ಲಿ ಮುಖ್ಯನಾದವನು ಯೋಯೇಲನು, ಎರಡನೆಯವನು ಶಾಫಾಮನು, ಅನಂತರ ಯನ್ನೈ, ಶಾಫಾಟನು.
1CH 5:13 ಕುಟುಂಬಗಳಾಗಿ ಅವರ ಬಂಧುಗಳು: ಮೀಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈನು, ಯಕ್ಕಾನನು, ಜೀಯನು, ಏಬೆರನು; ಒಟ್ಟು ಏಳುಮಂದಿ.
1CH 5:14 ಇವರು ಹೂರಿಯ ಮಗ ಅಬೀಹೈಲನ ಪುತ್ರರು: ಈ ಹೂರೀಯು ಯಾರೋಹನ ಮಗನು, ಅವನು ಗಿಲ್ಯಾದನ ಮಗನು, ಅವನು ಮೀಕಾಯೇಲನ ಮಗನು, ಅವನು ಯೆಷೀಷೈಯನ ಮಗನು, ಅವನು ಯಹ್ದೋವಿನ ಮಗನು, ಅವನು ಬೂಜನ ಮಗನು.
1CH 5:15 ಅಬ್ದಿಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರದ ಮುಖ್ಯಸ್ಥನು.
1CH 5:16 ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
1CH 5:17 ಇವರೆಲ್ಲರು ಯೆಹೂದದ ಅರಸನಾದ ಯೋತಾಮನ ದಿವಸಗಳಲ್ಲಿಯೂ, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು.
1CH 5:18 ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು.
1CH 5:19 ಇವರು ಹಗ್ರೀಯರಾದ ಯೆಟೂರನು, ನಾಫೀಷನು, ನೊದಾಬನು ಎಂಬವರ ವಿರುದ್ಧ ಯುದ್ಧಮಾಡಿದರು.
1CH 5:20 ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.
1CH 5:21 ಅವರು ವೈರಿಗಳಿಂದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಐವತ್ತು ಸಾವಿರ ಒಂಟೆಗಳನ್ನು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳನ್ನು, ಎರಡು ಸಾವಿರ ಕತ್ತೆಗಳನ್ನು ಅಲ್ಲದೆ, ಒಂದು ಲಕ್ಷ ಜನರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದರು.
1CH 5:22 ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
1CH 5:23 ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.
1CH 5:24 ಅವರ ಪಿತೃಗಳ ಮನೆಯಲ್ಲಿರುವ ಯಜಮಾನರು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್. ಇವರು ಪರಾಕ್ರಮಶಾಲಿಗಳಾಗಿಯೂ, ಹೆಸರುಗೊಂಡವರಾಗಿಯೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರಾಗಿಯೂ ಇದ್ದರು.
1CH 5:25 ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.
1CH 5:26 ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
1CH 6:1 ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ.
1CH 6:2 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲನು.
1CH 6:3 ಅಮ್ರಾಮನ ಪುತ್ರರು: ಆರೋನನು, ಮೋಶೆಯು, ಮಿರ್ಯಾಮಳು. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.
1CH 6:4 ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,
1CH 6:5 ಅಬೀಷೂವನು ಬುಕ್ಕೀಯನನ್ನು ಪಡೆದನು, ಬುಕ್ಕೀಯನು ಉಜ್ಜೀಯನನ್ನು ಪಡೆದನು,
1CH 6:6 ಉಜ್ಜೀಯನು ಜೆರಹ್ಯನನ್ನು ಪಡೆದನು, ಜೆರಹ್ಯನು ಮೆರಾಯೋತನನ್ನು ಪಡೆದನು,
1CH 6:7 ಮೆರಾಯೋತನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
1CH 6:8 ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಅಹೀಮಾಚನನ್ನು ಪಡೆದನು,
1CH 6:9 ಅಹೀಮಾಚನು ಅಜರ್ಯನನ್ನು ಪಡೆದನು, ಅಜರ್ಯನು ಯೋಹಾನಾನನನ್ನು ಪಡೆದನು;
1CH 6:10 ಯೋಹಾನಾನನು ಅಜರ್ಯನನ್ನು ಪಡೆದನು. ಅಜರ್ಯನು ಯೆರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿಸಿದ ದೇವಾಲಯದೊಳಗೆ ಯಾಜಕ ಸೇವೆ ಮಾಡುತ್ತಿದ್ದವನು.
1CH 6:11 ಅಜರ್ಯನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
1CH 6:12 ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಶಲ್ಲೂಮನನ್ನು ಪಡೆದನು,
1CH 6:13 ಶಲ್ಲೂಮನು ಹಿಲ್ಕೀಯನನ್ನು ಪಡೆದನು, ಹಿಲ್ಕೀಯನು ಅಜರ್ಯನನ್ನು ಪಡೆದನು,
1CH 6:14 ಅಜರ್ಯನು ಸೆರಾಯನನ್ನು ಪಡೆದನು, ಸೆರಾಯನು ಯೆಹೋಚಾದಾಕನನ್ನು ಪಡೆದನು,
1CH 6:15 ಯೆಹೋವ ದೇವರು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ, ಯೆರೂಸಲೇಮಿನವರನ್ನು ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು.
1CH 6:16 ಲೇವಿಯ ಪುತ್ರರು: ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.
1CH 6:17 ಗೇರ್ಷೋಮನ ಪುತ್ರರ ಹೆಸರುಗಳು: ಲಿಬ್ನೀ, ಶಿಮ್ಮೀ.
1CH 6:18 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
1CH 6:19 ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:
1CH 6:20 ಗೇರ್ಷೋಮಿನವರು: ಅವನ ಮಗ ಲಿಬ್ನೀ, ಅವನ ಮಗ ಯಹತ್, ಅವನ ಮಗ ಜಿಮ್ಮ,
1CH 6:21 ಅವನ ಮಗ ಯೋವಾಹ, ಅವನ ಮಗ ಇದ್ದೋ, ಅವನ ಮಗನಾದ ಜೆರಹ, ಅವನ ಮಗ ಯೆವತ್ರೈ.
1CH 6:22 ಕೊಹಾತನ ಪುತ್ರರು: ಅವನ ಮಗ ಅಮ್ಮೀನಾದಾಬ್, ಅವನ ಮಗ ಕೋರಹ, ಅವನ ಮಗ ಅಸ್ಸೀರ್,
1CH 6:23 ಅವನ ಮಗ ಎಲ್ಕಾನಾ, ಅವನ ಮಗ ಎಬ್ಯಾಸಾಫ್, ಅವನ ಮಗ ಅಸ್ಸೀರ್,
1CH 6:24 ಅವನ ಮಗ ತಹತ್, ಅವನ ಮಗ ಉರೀಯೇಲ್, ಅವನ ಮಗ ಉಜ್ಜೀಯ, ಅವನ ಮಗ ಸೌಲ್.
1CH 6:25 ಎಲ್ಕಾನನ ವಂಶಜರು: ಅಮಾಸೈ, ಅಹಿಮೋತ್,
1CH 6:26 ಅವನ ಮಗ ಎಲ್ಕಾನ, ಅವನ ಮಗ ಚೋಫೈ, ಅವನ ಮಗ ನಹತ್,
1CH 6:27 ಅವನ ಮಗ ಎಲೀಯಾಬ್, ಅವನ ಮಗ ಯೆರೋಹಾಮ್, ಅವನ ಮಗ ಎಲ್ಕಾನ, ಅವನ ಮಗ ಸಮುಯೇಲ್.
1CH 6:28 ಸಮುಯೇಲನ ಪುತ್ರರು: ಚೊಚ್ಚಲ ಮಗ ವಷ್ಣಿ ಎಂಬ ಯೋಯೇಲ್ ಮತ್ತು ಎರಡನೆಯ ಮಗ ಅಬೀಯ.
1CH 6:29 ಮೆರಾರೀಯ ವಂಶಜರು: ಮಹ್ಲೀ, ಅವನ ಮಗ ಲಿಬ್ನೀ, ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,
1CH 6:30 ಅವನ ಮಗ ಶಿಮ್ಮಾ, ಅವನ ಮಗ ಹಗ್ಗೀಯ, ಅವನ ಮಗ ಅಸಾಯ.
1CH 6:31 ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು.
1CH 6:32 ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
1CH 6:33 ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,
1CH 6:34 ಅವನು ಎಲ್ಕಾನನ ಮಗನು, ಅವನು ಯೆರೋಹಾಮನ ಮಗನು, ಅವನು ಎಲೀಯೇಲನ ಮಗನು, ಅವನು ತೋಹನ ಮಗನು,
1CH 6:35 ಅವನು ಚೂಫನ ಮಗನು, ಅವನು ಎಲ್ಕಾನನ ಮಗನು, ಅವನು ಮಹತನ ಮಗನು, ಅವನು ಅಮಾಸೈಯ ಮಗನು,
1CH 6:36 ಅವನು ಎಲ್ಕಾನನ ಮಗನು, ಅವನು ಯೋಯೇಲನ ಮಗನು, ಅವನು ಅಜರ್ಯನ ಮಗನು, ಅವನು ಚೆಫನ್ಯನ ಮಗನು,
1CH 6:37 ಅವನು ತಹತನ ಮಗನು, ಅವನು ಅಸ್ಸೀರನ ಮಗನು, ಅವನು ಎಬ್ಯಾಸಾಫನ ಮಗನು, ಅವನು ಕೋರಹನ ಮಗನು,
1CH 6:38 ಅವನು ಇಚ್ಹಾರನ ಮಗನು, ಅವನು ಕೊಹಾತನ ಮಗನು, ಅವನು ಲೇವಿಯನ ಮಗನು, ಅವನು ಇಸ್ರಾಯೇಲನ ಮಗನು.
1CH 6:39 ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು. ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.
1CH 6:40 ಅವನು ಮೀಕಾಯೇಲನ ಮಗನು, ಅವನು ಬಾಸೇಯನ ಮಗನು, ಅವನು ಮಲ್ಕೀಯನ ಮಗನು,
1CH 6:41 ಅವನು ಎತ್ನಿಯ ಮಗನು, ಅವನು ಜೆರಹನ ಮಗನು, ಅವನು ಅದಾಯನ ಮಗನು,
1CH 6:42 ಅವನು ಏತಾನನ ಮಗನು, ಅವನು ಜಿಮ್ಮನ ಮಗನು, ಅವನು ಶಿಮ್ಮಿಯ ಮಗನು,
1CH 6:43 ಅವನು ಯಹತನ ಮಗನು, ಅವನು ಗೇರ್ಷೋಮನ ಮಗನು, ಅವನು ಲೇವಿಯ ಮಗನು.
1CH 6:44 ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು, ಅವನು ಮಲ್ಲೂಕನ ಮಗನು,
1CH 6:45 ಅವನು ಹಷಬ್ಯನ ಮಗನು, ಅವನು ಅಮಚ್ಯನ ಮಗನು, ಅವನು ಹಿಲ್ಕೀಯನ ಮಗನು,
1CH 6:46 ಅವನು ಅಮ್ಚೀಯ ಮಗನು, ಅವನು ಬಾನೀಯ ಮಗನು, ಅವನು ಶೆಮೆರನ ಮಗನು,
1CH 6:47 ಅವನು ಮಹ್ಲೀಯ ಮಗನು, ಅವನು ಮೂಷೀಯ ಮಗನು, ಅವನು ಮೆರಾರೀಯ ಮಗನು, ಅವನು ಲೇವಿಯ ಮಗನು.
1CH 6:48 ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು.
1CH 6:49 ಆದರೆ ಆರೋನನೂ, ಅವನ ಪುತ್ರರೂ ದಹನಬಲಿಯ ಪೀಠದ ಮೇಲೆಯೂ, ಧೂಪವನ್ನು ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಳದ ಸಮಸ್ತ ಕಾರ್ಯಕ್ಕೂ, ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ನೇಮಕವಾಗಿದ್ದರು.
1CH 6:50 ಆರೋನನ ವಂಶಜರು: ಅವನ ಮಗನು ಎಲಿಯಾಜರನು, ಅವನ ಮಗನು ಫೀನೆಹಾಸನು, ಅವನ ಮಗನು ಅಬೀಷೂವನು,
1CH 6:51 ಅವನ ಮಗನು ಬುಕ್ಕೀಯು, ಅವನ ಮಗನು ಉಜ್ಜೀ, ಅವನ ಮಗನು ಜೆರಹ್ಯಾಹನು,
1CH 6:52 ಅವನ ಮಗನು ಮೆರಾಯೋತನು, ಅವನ ಮಗನು ಅಮರ್ಯನು, ಅವನ ಮಗನು ಅಹೀಟೂಬನು,
1CH 6:53 ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು.
1CH 6:54 ಕೊಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಅವರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಚೀಟಿನ ಪಾಲನ್ನು ಅವರು ಪಡೆದುಕೊಂಡರು.
1CH 6:55 ಅವು ಯಾವುವೆಂದರೆ: ಕೊಹಾತ್ಯರ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ, ಯೆಹೂದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ, ಅದರ ಸುತ್ತಲಿರುವ ಗೋಮಾಳಗಳೂ ಅವರಿಗೆ ದೊರೆತವು.
1CH 6:56 ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ, ಯೆಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
1CH 6:57 ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ;
1CH 6:58 ಹೀಲೇನ್, ದೆಬೀರ್,
1CH 6:59 ಆಷಾನ್, ಯುತಾಹ ಮತ್ತು ಬೇತ್ ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು.
1CH 6:60 ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು. ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.
1CH 6:61 ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.
1CH 6:62 ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.
1CH 6:63 ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.
1CH 6:64 ಇಸ್ರಾಯೇಲರು ಲೇವಿಯರಿಗೆ ಈ ಪಟ್ಟಣಗಳನ್ನೂ, ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು.
1CH 6:65 ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
1CH 6:66 ಕೊಹಾತನ ಪುತ್ರರ ಮಿಕ್ಕಾದ ಕುಟುಂಬಗಳಿಗೂ, ಅವರ ಮೇರೆಗಳಲ್ಲಿ ಎಫ್ರಾಯೀಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು.
1CH 6:67 ಇದಲ್ಲದೆ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
1CH 6:68 ಯೊಕ್ಮೆಯಾಮನ್ನೂ, ಬೇತ್ ಹೋರೋನ್,
1CH 6:69 ಅಯ್ಯಾಲೋನ್, ಗತ್ ರಿಮ್ಮೋನನ್ನೂ, ಅದರ ಉಪನಗರಗಳನ್ನೂ ಕೊಟ್ಟರು.
1CH 6:70 ಇದಲ್ಲದೆ ಕೊಹಾತನ ಪುತ್ರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರನ್ನೂ, ಅದರ ಉಪನಗರಗಳನ್ನೂ; ಬಿಳ್ಳಾಮ್ ಉಪನಗರಗಳನ್ನೂ ಕೊಟ್ಟರು.
1CH 6:71 ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋಮನ ಪುತ್ರರಿಗೆ ಬಾಷಾನಿನಲ್ಲಿರುವ ಗೋಲಾನೂ, ಅದರ ಉಪನಗರಗಳನ್ನೂ; ಅಷ್ಟಾರೋತ್ ಅದರ ಉಪನಗರಗಳನ್ನೂ;
1CH 6:72 ಇಸ್ಸಾಕಾರನ ಗೋತ್ರದಿಂದ ಕೆದೆಷ್, ಅದರ ಉಪನಗರಗಳನ್ನೂ; ದಾಬೆರತ್ ಅದರ ಉಪನಗರಗಳನ್ನೂ;
1CH 6:73 ರಾಮೋತ್ ಅದರ ಉಪನಗರಗಳನ್ನೂ; ಅನೇಮ್, ಅದರ ಉಪನಗರಗಳನ್ನೂ;
1CH 6:74 ಆಶೇರನ ಗೋತ್ರದಿಂದ ಮಷಾಲ್, ಅಬ್ದೋನ್
1CH 6:75 ಹೂಕೋಕ್, ಅದರ ಉಪನಗರಗಳನ್ನೂ; ರೆಹೋಬ್, ಅದರ ಉಪನಗರಗಳನ್ನೂ;
1CH 6:76 ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷ್, ಅದರ ಉಪನಗರಗಳನ್ನೂ; ಹಮ್ಮೋನ್, ಅದರ ಉಪನಗರಗಳನ್ನೂ; ಕಿರ್ಯಾತಯಿಮ್, ಅದರ ಉಪನಗರಗಳೂ ದೊರಕಿದ್ದವು.
1CH 6:77 ಮೆರಾರೀಯ ಉಳಿದ ಮಕ್ಕಳಿಗೂ, ಜೆಬುಲೂನನ ಗೋತ್ರದಿಂದ ರಿಮ್ಮೋನೋ, ಅದರ ಉಪನಗರಗಳೂ, ತಾಬೋರ್, ಅದರ ಉಪನಗರಗಳೂ;
1CH 6:78 ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ;
1CH 6:79 ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;
1CH 6:80 ಗಾದನ ಗೋತ್ರದಿಂದ ಗಿಲ್ಯಾದಿನ ರಾಮೋತ್, ಅದರ ಉಪನಗರಗಳೂ; ಮಹನಯಿಮ್ ಅದರ ಉಪನಗರಗಳೂ;
1CH 6:81 ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.
1CH 7:1 ಇಸ್ಸಾಕಾರನ ಪುತ್ರರು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ.
1CH 7:2 ತೋಲನ ಪುತ್ರರು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುಯೇಲ್. ಇವರು ತಮ್ಮ ಕುಟುಂಬಗಳಿಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ದಾವೀದನ ದಿವಸಗಳಲ್ಲಿ ಅವರ ಲೆಕ್ಕ 22,600 ಮಂದಿ ಆಗಿತ್ತು.
1CH 7:3 ಉಜ್ಜೀಯನ ಪುತ್ರನು ಇಜರಾಹಿಯಾ. ಇಜರಾಹಿಯಾನ ಪುತ್ರರು: ಮೀಕಾಯೇಲ್, ಓಬದ್ಯ, ಯೋಯೇಲ್ ಮತ್ತು ಇಷೀಯ ಈ ಐದು ಮಂದಿಯೂ ಮುಖ್ಯಸ್ಥರಾಗಿದ್ದರು.
1CH 7:4 ಇವರ ಸಂಗಡ ಅವರ ವಂಶಗಳ ಪ್ರಕಾರವೂ, ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ 36,000 ಮಂದಿ ಯುದ್ಧವೀರರ ಗುಂಪುಗಳಿದ್ದವು. ಏಕೆಂದರೆ ಅವರ ಹೆಂಡತಿಯರು, ಮಕ್ಕಳು ಬಹಳ ಮಂದಿ ಇದ್ದರು.
1CH 7:5 ಇಸ್ಸಾಕಾರನ ಕುಟುಂಬಗಳಾಗಿರುವ ಸಹೋದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಿದಾಗ ಯುದ್ಧವೀರರೆಲ್ಲರೂ 87,000 ಮಂದಿಯಾಗಿದ್ದರು.
1CH 7:6 ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಯೆದೀಯಯೇಲ್ ಈ ಮೂರು ಮಂದಿ.
1CH 7:7 ಬೆಳನ ಪುತ್ರರು: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ; ಈ ಐದು ಮಂದಿ ತಮ್ಮ ಪಿತೃಗಳ ಕುಟುಂಬಗಳಲ್ಲಿ ಯಜಮಾನರಾಗಿಯೂ, ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿಯೂ ಇದ್ದು, ತಮ್ಮ ವಂಶಾವಳಿಗಳ ಪ್ರಕಾರ 22,034 ಮಂದಿ ದಾಖಲಿಸಿದ್ದರು.
1CH 7:8 ಬೆಕೆರನ ಪುತ್ರರು: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್, ಆಲೆಮೆತ್ ಇವರೆಲ್ಲರು ಬೆಕೆರನ ಪುತ್ರರು.
1CH 7:9 ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಅವರ ವಂಶಾವಳಿಯ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಕುಲಗಳ ಪ್ರಬಲ ಯೋಧರು ಮತ್ತು ನಾಯಕರ ಒಟ್ಟು ಸಂಖ್ಯೆ 20,200 ಆಗಿತ್ತು.
1CH 7:10 ಯೆದೀಯಯೇಲನ ಪುತ್ರನು ಬಿಲ್ಹಾನ್. ಬಿಲ್ಹಾನನ ಪುತ್ರರು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ;
1CH 7:11 ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು.
1CH 7:12 ಅಹೇರನ ಪುತ್ರರಾದ ಈರನೂ, ಹುಶೀಮನೂ ಎಂಬವರ ಮಕ್ಕಳು ಶುಪ್ಪೀಮನೂ, ಹುಪ್ಪೀಮನೂ ಇದ್ದರು.
1CH 7:13 ನಫ್ತಾಲಿಯ ಪುತ್ರರು: ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಇವರು ಬಿಲ್ಹಳ ಪುತ್ರರು.
1CH 7:14 ಮನಸ್ಸೆಯ ವಂಶಜರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಸ್ರೀಯೇಲ್ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.
1CH 7:15 ಆದರೆ ಈ ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸಹೋದರಿಯಾದ ಮಾಕಳನ್ನು ಹೆಂಡತಿಯಾಗಿ ತೆಗೆದುಕೊಂಡನು. ಅವನ ಮೊಮ್ಮಗನ ಹೆಸರು ಚೆಲೊಫಾದನು; ಈ ಚೆಲೋಫಾದನಿಗೆ ಪುತ್ರಿಯರು ಮಾತ್ರ ಇದ್ದರು.
1CH 7:16 ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಪೆರೆಷ್ ಎಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್. ಇವನಿಗೆ ಊಲಾಮ್, ರೆಕೆಮ್ ಎಂಬ ಇಬ್ಬರು ಪುತ್ರರಿದ್ದರು.
1CH 7:17 ಊಲಾಮ್ ಮಗನು ಬೆದಾನ್. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗ ಗಿಲ್ಯಾದನ ಪುತ್ರರು.
1CH 7:18 ಅವನ ಸಹೋದರಿ ಹಮ್ಮೋಲೆಕೆತಳು ಈಷ್ಹೋದನನ್ನೂ, ಅಬೀಯೆಜೆರನನ್ನೂ, ಮಹ್ಲನನ್ನೂ ಹೆತ್ತಳು.
1CH 7:19 ಶೆಮೀದನನ ಪುತ್ರರು: ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್.
1CH 7:20 ಎಫ್ರಾಯೀಮನ ವಂಶಜರು: ಶೂತೆಲಹ, ಅವನ ಮಗನು ಬೆರೆದ್; ಅವನ ಮಗನು ತಹಾತ್; ಅವನ ಮಗನು ಎಲ್ಲಾದ, ಅವನ ಮಗನು ತಹತ್;
1CH 7:21 ಅವನ ಮಗನು ಜಾಬಾದ್; ಅವನ ಮಗನು ಶೂತೆಲಹ, ಏಜೆರ್, ಎಲಿಯಾದ್. ಆ ದೇಶದಲ್ಲಿ ಹುಟ್ಟಿದ ಗತ್‌ನವರು ಇವರ ಪಶುಗಳನ್ನು ಹಿಡಿದುಕೊಳ್ಳಲು ಇಳಿದು ಬಂದಾಗ, ಇವರನ್ನು ಕೊಂದುಹಾಕಿದರು.
1CH 7:22 ಅವರ ತಂದೆಯಾದ ಎಫ್ರಾಯೀಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ, ಅವನ ಸಹೋದರರು ಅವನನ್ನು ಆದರಿಸಲು ಬಂದರು.
1CH 7:23 ಅವನು ತನ್ನ ಹೆಂಡತಿಯ ಬಳಿಗೆ ಸೇರಿದಾಗ, ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯ ಎಂದು ಹೆಸರಿಟ್ಟನು.
1CH 7:24 ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು.
1CH 7:25 ಇವರ ಪುತ್ರರು: ರೆಫಹನ ಮಗನು ರೆಷೆಫನು, ರೆಷೆಫನ ಮಗನು ತೆಲಹನು, ಅವನ ಮಗನು ತಹನನು,
1CH 7:26 ಅವನ ಮಗನು ಲದ್ದಾನ್, ಅವನ ಮಗನು ಅಮ್ಮೀಹೂದ, ಅವನ ಮಗನು ಎಲೀಷಾಮಾ,
1CH 7:27 ಅವನ ಮಗನು ನೂನನು, ಅವನ ಮಗನು ಯೆಹೋಶುವ.
1CH 7:28 ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ.
1CH 7:29 ಗಾಜವೂ, ಮನಸ್ಸೆಯ ಸಂತಾನದವರ ಮೇರೆಯಲ್ಲಿರುವ ಬೇತ್ ಷೆಯಾನೂ, ತಾನಕವೂ, ಮೆಗಿದ್ದೋ, ದೋರ್ ಮತ್ತು ಇವುಗಳ ಗ್ರಾಮಗಳು ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸವಾಗಿದ್ದರು.
1CH 7:30 ಆಶೇರನ ಪುತ್ರರು: ಇಮ್ನ, ಇಷ್ವ, ಇಷ್ವೀ, ಬೆರೀಯ, ಅವರ ಸಹೋದರಿಯಾದ ಸೆರಹಳು.
1CH 7:31 ಬೆರೀಯನ ಪುತ್ರರು: ಹೆಬೆರನು, ಮಲ್ಕೀಯೇಲ್ ಇವನು ಬಿರ್ಜಾಯಿತನ ತಂದೆಯು.
1CH 7:32 ಹೆಬೆರನು ಯಫ್ಲೇಟನನ್ನೂ, ಶೋಮೇರನನ್ನೂ, ಹೋತಾಮನನ್ನೂ, ಅವರ ಸಹೋದರಿಯಾದ ಶೂವಳನ್ನೂ ಪಡೆದನು.
1CH 7:33 ಯಫ್ಲೇಟನ ಪುತ್ರರು: ಪಾಸಕನು, ಬಿಮ್ಹಾಲನು, ಅಶ್ವಾತನು ಇವರೇ ಯಫ್ಲೇಟನ ಮಕ್ಕಳು.
1CH 7:34 ಶೆಮೆರನ ಪುತ್ರರು: ಅಹೀಯು, ರೊಹ್ಗನು, ಹುಬ್ಬನು, ಅರಾಮ್.
1CH 7:35 ಅವನ ಸಹೋದರನಾದ ಹೆಲೆಮನ ಪುತ್ರರು: ಚೋಫಹನು, ಇಮ್ನನು, ಶೇಲೆಷ್‌ನು, ಆಮಾಲನು.
1CH 7:36 ಚೋಫಹನ ಪುತ್ರರು: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ,
1CH 7:37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್, ಬೇರನು.
1CH 7:38 ಯೆತೆರನ ಪುತ್ರರು: ಯೆಫುನ್ನೆ, ಪಿಸ್ಪ, ಅರಾ.
1CH 7:39 ಉಲ್ಲನ ಪುತ್ರರು: ಆರಹ, ಹನ್ನೀಯೇಲ್, ರಿಚ್ಯ.
1CH 7:40 ಇವರೆಲ್ಲರು ಆಶೇರನ ಮಕ್ಕಳಾಗಿದ್ದು, ತಮ್ಮ ತಂದೆಯ ಕುಟುಂಬದಲ್ಲಿ ಯಜಮಾನರಾಗಿಯೂ, ಯುದ್ಧ ಪರಾಕ್ರಮಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ, ಪ್ರಭುಗಳಲ್ಲಿ ಶ್ರೇಷ್ಠರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ದಾಖಲಿಸಿದ ಲೆಕ್ಕದ ಪ್ರಕಾರ ಯುದ್ಧಕ್ಕೆ ಸಿದ್ಧವಿರುವ 26,000 ಮಂದಿ ಇದ್ದರು.
1CH 8:1 ಬೆನ್ಯಾಮೀನನ ಮಕ್ಕಳು: ಚೊಚ್ಚಲಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,
1CH 8:2 ನಾಲ್ಕನೆಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
1CH 8:3 ಬೆಳನ ಪುತ್ರರು: ಅದ್ದಾರ್, ಗೇರ, ಅಬೀಹೂದ್,
1CH 8:4 ಅಬೀಷೂವನು, ನಾಮಾನನು, ಅಹೋಹನು,
1CH 8:5 ಗೇರನು, ಶೆಫುಫಾನನು, ಹೂರಾಮನು.
1CH 8:6 ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.
1CH 8:7 ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.
1CH 8:8 ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ, ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹುಷೀಮಳೂ, ಬಾರಳೂ ಅವನಿಗೆ ಪತ್ನಿಯರಾಗಿದ್ದರು.
1CH 8:9 ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ,
1CH 8:10 ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಮಕ್ಕಳಾದ ಇವರು ಕುಟುಂಬಗಳಲ್ಲಿ ಯಜಮಾನರಾಗಿದ್ದರು.
1CH 8:11 ಹುಷೀಮಳಿಂದ ಅವನು ಅಬಿಟೂಬನನ್ನೂ, ಎಲ್ಪಾಲನನ್ನೂ ಪಡೆದನು.
1CH 8:12 ಎಲ್ಪಾಲನ ಪುತ್ರರು: ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.
1CH 8:13 ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಕುಟುಂಬಗಳಲ್ಲಿ ಬೆರೀಯ, ಶಮ ಯಜಮಾನರಾಗಿದ್ದರು.
1CH 8:14 ಅಹಿಯೋ, ಶಾಷಕ್, ಯೆರೀಮೋತ್,
1CH 8:15 ಜೆಬದ್ಯ, ಅರಾದ್, ಏದೆರ್,
1CH 8:16 ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಪುತ್ರರು.
1CH 8:17 ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
1CH 8:18 ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರು ಎಲ್ಪಾಲನ ಪುತ್ರರು.
1CH 8:19 ಶಿಮ್ಮಿಯ ಕುಮಾರರು: ಯಾಕೀಮ್, ಜಿಕ್ರಿ, ಜಬ್ದೀ,
1CH 8:20 ಎಲೀಯೆನೈ, ಚಿಲ್ಲೆತೈ, ಎಲೀಯೇಲ್,
1CH 8:21 ಅದಾಯಾ, ಬೆರಾಯ, ಶಿಮ್ರಾತ್.
1CH 8:22 ಶಾಷಕನ ಪುತ್ರರು: ಇಷ್ಪಾನ್, ಏಬೆರ್, ಎಲೀಯೇಲ್,
1CH 8:23 ಅಬ್ದೋನ್, ಜಿಕ್ರಿಯು, ಹಾನಾನ್,
1CH 8:24 ಹನನ್ಯ, ಏಲಾಮ್, ಅನೆತೋತೀಯ,
1CH 8:25 ಇಫ್ದೆಯಾಹ, ಪೆನೂಯೇಲ್.
1CH 8:26 ಶಂಷೆರೈ, ಶೆಹರ್ಯ, ಅತಲ್ಯ,
1CH 8:27 ಯಾರೆಷ್ಯ, ಎಲೀಯ, ಜಿಕ್ರಿ ಇವರು ಯೆರೋಹಾಮನ ಪುತ್ರರು.
1CH 8:28 ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
1CH 8:29 ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
1CH 8:30 ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು,
1CH 8:31 ಗೆದೋರನು, ಅಹಿಯೋನು, ಜೆಕೆರನು.
1CH 8:32 ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
1CH 8:33 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
1CH 8:34 ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
1CH 8:35 ಮೀಕನ ಪುತ್ರರು: ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.
1CH 8:36 ಆಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು, ಜಿಮ್ರಿಯು ಮೋಚನನ್ನು ಪಡೆದನು.
1CH 8:37 ಮೋಚನು ಬಿನ್ನನನ್ನು ಪಡೆದನು. ಅವನ ಮಗನು ರಾಫನು. ಅವನ ಮಗನು ಎಲ್ಲಾಸನು. ಅವನ ಮಗನು ಆಚೇಲನು.
1CH 8:38 ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು. ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು, ಇವರೆಲ್ಲರು ಆಚೇಲನ ಪುತ್ರರು.
1CH 8:39 ಅವನ ಸಹೋದರನಾದ ಏಷೆಕನ ಪುತ್ರರು: ಅವನ ಚೊಚ್ಚಲಮಗನಾದ ಉಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವನಾದ ಎಲೀಫೆಲೆಟನು.
1CH 8:40 ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು. ಇವರೆಲ್ಲರೂ ಬೆನ್ಯಾಮೀನನ ವಂಶಜರು.
1CH 9:1 ಇಸ್ರಾಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು.
1CH 9:2 ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.
1CH 9:3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ, ಬೆನ್ಯಾಮೀನನ ಮಕ್ಕಳೂ, ಎಫ್ರಾಯೀಮ್, ಮನಸ್ಸೆ ಎಂಬವರ ಮಕ್ಕಳು ಯಾರೆಂದರೆ:
1CH 9:4 ಯೆಹೂದನ ಮಗನಾದ ಪೆರೆಚನ ಮಕ್ಕಳಲ್ಲಿ ಒಬ್ಬನಾದ ಬಾನೀಯ ಮಗನಾದ ಇಮ್ರಿಯು, ಇವನ ಮಗನಾದ ಒಮ್ರಿ, ಇವನ ಮಗನು ಅಮ್ಮೀಹೂದನು, ಇವನ ಮಗನು ಉತೈ.
1CH 9:5 ಶೇಲಾಹನರಲ್ಲಿ ಚೊಚ್ಚಲಮಗನಾದ ಅಸಾಯನು, ಅವನ ಪುತ್ರರು.
1CH 9:6 ಜೆರಹನ ಪುತ್ರರಲ್ಲಿ ಯೆಯೂವೇಲನೂ, ಅವನ ಸಹೋದರರೂ 690 ಮಂದಿ.
1CH 9:7 ಬೆನ್ಯಾಮೀನ್ಯರಲ್ಲಿ ಹಸ್ಸೆನುವಾಹನ ಮಗನು ಹೋದವ್ಯನ ಮಗನು ಮೆಷುಲ್ಲಾಮನ ಮಗ ಸಲ್ಲು,
1CH 9:8 ಯೆರೋಹಾಮನ ಮಗ ಇಬ್ನೇಯಾಹನೂ; ಮಿಕ್ರಿಯ ಮಗ ಉಜ್ಜೀಯ ಮಗ ಏಲಾನೂ; ಇಬ್ನಿಯನ ಮಗ ರೆಯೂವೇಲನ ಮಗ, ಶೆಫಟ್ಯನ ಮಗ ಮೆಷುಲ್ಲಾಮನೂ,
1CH 9:9 ಅವರ ಸಹೋದರರೂ ತಮ್ಮ ವಂಶಗಳ ಪ್ರಕಾರ 956 ಮಂದಿ. ಇವರೆಲ್ಲರು ತಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದರು.
1CH 9:10 ಯಾಜಕರಲ್ಲಿ ಯಾರೆಂದರೆ ಯೆದಾಯನೂ, ಯೆಹೋಯಾರೀಬನೂ, ಯಾಕೀನನೂ;
1CH 9:11 ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;
1CH 9:12 ಮಲ್ಕೀಯನ ಮಗ ಪಷ್ಹೂರನ ಮಗ ಯೆರೋಹಾಮನ ಮಗ ಅದಾಯನು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ ಮೆಷುಲ್ಲಾಮನ ಮಗ ಯಹ್ಜೇರನ ಮಗ ಅದೀಯೇಲನ ಮಗ ಮಾಸೈಯನೂ;
1CH 9:13 ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.
1CH 9:14 ಲೇವಿಯರಲ್ಲಿ ಯಾರೆಂದರೆ: ಮೆರಾರೀಯ ಪುತ್ರರಲ್ಲಿ ಒಬ್ಬನಾದ ಹಷ್ಷೂಬನ ಮಗ ಅಜ್ರೀಕಾಮನ ಮಗ ಹಷಬ್ಯನ ಮಗ ಶೆಮಾಯನೂ;
1CH 9:15 ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;
1CH 9:16 ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.
1CH 9:17 ದ್ವಾರಪಾಲಕರು ಯಾರೆಂದರೆ: ಶಲ್ಲೂಮನೂ, ಅಕ್ಕೂಬನೂ, ಟಲ್ಮೋನನೂ, ಅಹೀಮನ್‌ನೂ, ಅವರ ಸಹೋದರರೂ. ಅವರಲ್ಲಿ ಶಲ್ಲೂಮನು ಮುಖ್ಯಸ್ಥನಾಗಿದ್ದನು.
1CH 9:18 ಇವರು ಈವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲಲ್ಲಿ ಕಾದುಕೊಂಡಿದ್ದರು. ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು.
1CH 9:19 ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮೊಮ್ಮಗನೂ ಕೋರೇಯನ ಮರಿಮಗನಾದ ಶಲ್ಲೂಮನೂ, ಅವನ ತಂದೆಯ ಮನೆಯವರಾಗಿರುವ ತನ್ನ ಸಹೋದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲಿದ್ದು, ದೇವದರ್ಶನ ಗುಡಾರದ ಬಾಗಿಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಯೆಹೋವ ದೇವರ ಗುಡಾರದ ದ್ವಾರಗಳ ಕಾವಲಿನವರಾಗಿದ್ದರು.
1CH 9:20 ಎಲಿಯಾಜರನ ಮಗನಾದ ಫೀನೆಹಾಸನು ಮುಂಚೆ ಅವರ ಮೇಲೆ ಅಧಿಕಾರಿಯಾಗಿದ್ದನು. ಯೆಹೋವ ದೇವರು ಅವರ ಸಂಗಡ ಇದ್ದರು.
1CH 9:21 ಮೆಷೆಲೆಮ್ಯನ ಮಗನಾದ ಜೆಕರ್ಯನು ದೇವದರ್ಶನ ಗುಡಾರದ ದ್ವಾರಪಾಲಕನಾಗಿದ್ದನು.
1CH 9:22 ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.
1CH 9:23 ಹೀಗೆಯೇ ಅವರಿಗೂ, ಅವರ ಮಕ್ಕಳಿಗೂ ಯೆಹೋವ ದೇವರ ಮನೆಯ ಬಾಗಿಲು ಕಾವಲಿತ್ತು. ಅದು ದೇವದರ್ಶನ ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರರಿಂದ ಕಾಯಬೇಕಾಗಿತ್ತು.
1CH 9:24 ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.
1CH 9:25 ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು.
1CH 9:26 ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.
1CH 9:27 ಅವರು ದೇವರ ಆಲಯದ ಸುತ್ತಲೂ ರಾತ್ರಿಯನ್ನು ಕಳೆಯುತ್ತಿದ್ದರು, ಏಕೆಂದರೆ ಅವರು ಅದನ್ನು ಕಾವಲು ಕಾಯಬೇಕಾಗಿತ್ತು. ಮತ್ತು ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುತ್ತಿದ್ದರು.
1CH 9:28 ಸೇವೆಯ ಸಲಕರಣೆಗಳನ್ನು ಒಳಗೆ ಲೆಕ್ಕದ ಪ್ರಕಾರ ತರುವುದಕ್ಕೂ, ಹೊರಗೆ ಲೆಕ್ಕದ ಪ್ರಕಾರ ತರುವುದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
1CH 9:29 ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.
1CH 9:30 ಯಾಜಕರ ಪುತ್ರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು.
1CH 9:31 ಕೋರಹಿಯನಾದ ಶಲ್ಲೂಮನ ಚೊಚ್ಚಲಮಗನಾದ ಮತ್ತಿತ್ಯನು ಲೇವಿಯರಲ್ಲಿ ಒಬ್ಬನಾಗಿದ್ದು, ತಟ್ಟೆಗಳ ಮೇಲೆ ಮಾಡುವ ಭಕ್ಷ್ಯಗಳ ಕೆಲಸದ ಮೇಲ್ವಿಚಾರಕನಾಗಿದ್ದನು.
1CH 9:32 ಕೊಹಾತ್ಯರ ಪುತ್ರರಾದ ಅವರ ಸಹೋದರರಲ್ಲಿ ಇನ್ನೂ ಕೆಲವರು ಸಮ್ಮುಖದ ರೊಟ್ಟಿಯನ್ನು ಪ್ರತಿ ಸಬ್ಬತ್ ದಿನದಲ್ಲಿ ಸಿದ್ಧಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
1CH 9:33 ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
1CH 9:34 ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
1CH 9:35 ಇದಲ್ಲದೆ ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
1CH 9:36 ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು.
1CH 9:37 ಗೆದೋರನು, ಅಹಿಯೋನು, ಜೆಕರೀಯನು, ಮಿಕ್ಲೋತನು.
1CH 9:38 ಮಿಕ್ಲೋತನು ಶಿಮಾಮನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
1CH 9:39 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
1CH 9:40 ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
1CH 9:41 ಮೀಕನ ಪುತ್ರರು: ಪಿತೋನನು, ಮೇಲಕನು, ತಹ್ರೀಯನು ಮತ್ತು ಆಹಾಜನು.
1CH 9:42 ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು; ಜಿಮ್ರಿಯು ಮೋಚನನ್ನು ಪಡೆದನು;
1CH 9:43 ಮೋಚನು ಬಿನ್ನನನ್ನು ಪಡೆದನು; ಅವನ ಮಗನು ರೆಫಾಯನು; ಅವನ ಮಗನು ಎಲ್ಲಾಸನು; ಅವನ ಮಗನು ಆಚೇಲನು.
1CH 9:44 ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು: ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು; ಇವರೆಲ್ಲರು ಆಚೇಲನ ಪುತ್ರರು.
1CH 10:1 ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
1CH 10:2 ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
1CH 10:3 ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು; ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
1CH 10:4 ಆಗ ಸೌಲನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ, ನೀನು ನಿನ್ನ ಖಡ್ಗವನ್ನು ಹಿರಿದು ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
1CH 10:5 ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
1CH 10:6 ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಮನೆಯವರೆಲ್ಲರೂ ಒಟ್ಟಾಗಿ ಅದೇ ದಿನ ಸತ್ತರು.
1CH 10:7 ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
1CH 10:8 ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಪುತ್ರರನ್ನೂ ಕಂಡರು.
1CH 10:9 ಅವರು ಅವನನ್ನು ಸುಲಿದುಕೊಂಡು ಅವನ ತಲೆಯನ್ನೂ, ಅವನ ಆಯುಧಗಳನ್ನೂ ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
1CH 10:10 ಸೌಲನ ಆಯುಧಗಳನ್ನು ತಮ್ಮ ದೇವರುಗಳ ಮಂದಿರದಲ್ಲಿ ಇಟ್ಟು, ಅವನ ತಲೆಯನ್ನು ದಾಗೋನನ ಆಲಯದಲ್ಲಿ ನೇತುಹಾಕಿದರು.
1CH 10:11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
1CH 10:12 ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.
1CH 10:13 ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ,
1CH 10:14 ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.
1CH 11:1 ಇಸ್ರಾಯೇಲರೆಲ್ಲರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ಇಗೋ, ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.
1CH 11:2 ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ, ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ನಿನ್ನ ದೇವರಾದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ, ಪಾಲಕನೂ ಆಗಿರುವೆ,’ ಎಂದು ವಾಗ್ದಾನ ಮಾಡಿದ್ದು ನಿಮ್ಮನ್ನು ಕುರಿತೇ,” ಎಂದು ಹೇಳಿ ವಂದಿಸಿದರು.
1CH 11:3 ಇಸ್ರಾಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದಾಗ, ಅರಸನಾದ ದಾವೀದನು ಹೆಬ್ರೋನಿನಲ್ಲಿ ಯೆಹೋವ ದೇವರ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಯೆಹೋವ ದೇವರು ಸಮುಯೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
1CH 11:4 ದಾವೀದನೂ, ಸಮಸ್ತ ಇಸ್ರಾಯೇಲರೂ ಯೆಬೂಸಿಯರ ವಿರುದ್ಧವಾಗಿ ಯೆರೂಸಲೇಮಿಗೆ ಹೋದರು.
1CH 11:5 ಆ ದೇಶದ ಮೂಲನಿವಾಸಿಗಳಾದ ಯೆಬೂಸಿಯರು ದಾವೀದನಿಗೆ, “ನೀನು ಇದರೊಳಗೆ ಬರಲು ಸಾಧ್ಯವಿಲ್ಲ,” ಎಂದರು. ಆದರೂ ದಾವೀದನು, ಚೀಯೋನಿನ ಕೋಟೆಯನ್ನು ವಶಪಡಿಸಿಕೊಂಡನು. ಅದೇ ದಾವೀದನ ಪಟ್ಟಣವು.
1CH 11:6 “ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ, ಅವನು ನನ್ನ ದಳಪತಿಯಾಗುವನು,” ಎಂದು ದಾವೀದ ಪ್ರಕಟಿಸಿದ್ದನು. ಹಾಗೆಯೇ ಚೆರೂಯಳ ಮಗ ಯೋವಾಬನು ಮೊದಲು ಹೋಗಿ ದಳಪತಿಯಾದನು.
1CH 11:7 ದಾವೀದನು ಕೋಟೆಯಲ್ಲಿ ವಾಸಮಾಡಿದನು. ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟರು.
1CH 11:8 ಅವನು ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಪಟ್ಟಣವನ್ನು ಪುನಃ ಕಟ್ಟಿದನು. ಆದರೆ ಪಟ್ಟಣದ ಉಳಿದ ಭಾಗವನ್ನು ಯೋವಾಬನು ಭದ್ರಮಾಡಿಸಿದನು.
1CH 11:9 ಹೀಗೆಯೇ ಸೇನಾಧೀಶ್ವರ ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ದಿನದಿನಕ್ಕೆ ಬಲಗೊಳ್ಳುತ್ತಾ ಇದ್ದನು.
1CH 11:10 ದಾವೀದನ ಬಳಿಯಲ್ಲಿದ್ದ ಮುಖ್ಯಸ್ಥರಾದ ಪರಾಕ್ರಮಶಾಲಿಗಳು ಇವರೇ. ಇಸ್ರಾಯೇಲನ್ನು ಕುರಿತು ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರ, ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮ ಸಂಪೂರ್ಣ ಸಹಾಯ ನೀಡಿದರು.
1CH 11:11 ದಾವೀದನ ಪರಾಕ್ರಮಶಾಲಿಗಳ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು. ಇವನು ತನ್ನ ಈಟಿಯಿಂದ ಮುನ್ನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.
1CH 11:12 ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು, ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
1CH 11:13 ಪಸ್ ದಮ್ಮೀಮ್ ಎಂಬಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕಾಗಿ ಸೇರಿದಾಗ ಇವನು ದಾವೀದನ ಸಂಗಡ ಇದ್ದನು. ಅಲ್ಲಿ ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು.
1CH 11:14 ಆಗ ಇವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು. ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
1CH 11:15 ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಗುಡ್ಡಕ್ಕೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು.
1CH 11:16 ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
1CH 11:17 ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು.
1CH 11:18 ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ, ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದು,
1CH 11:19 “ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗಿ ಮಾಡಲಿ. ನಾನು ಈ ಮನುಷ್ಯರ ಪ್ರಾಣದ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣದಾಶೆ ತೊರೆದು ಈ ನೀರನ್ನು ತಂದರಲ್ಲಾ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇಂಥಾ ಮಹಾಕಾರ್ಯಗಳನ್ನು ಈ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
1CH 11:20 ಇದಲ್ಲದೆ ಯೋವಾಬನ ಸಹೋದರನಾದ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು.
1CH 11:21 ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು; ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
1CH 11:22 ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು; ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
1CH 11:23 ಅವನು ಏಳುವರೆ ಅಡಿ ಎತ್ತರವಾಗಿದ್ದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು; ಆ ಈಜಿಪ್ಟಿನವನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಷ್ಟು ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ, ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು.
1CH 11:24 ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು.
1CH 11:25 ಅವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.
1CH 11:26 ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿಗಳು ಯಾರೆಂದರೆ: ಯೋವಾಬನ ಸಹೋದರನಾದ ಅಸಾಯೇಲನು; ಬೇತ್ಲೆಹೇಮ್ ಊರಿನ ದೋದೋವಿನ ಮಗ ಎಲ್ಹನಾನನು;
1CH 11:27 ಹರೋರಿಯನಾದ ಶಮ್ಮೋತನು; ಪೆಲೋನ್ಯನಾದ ಹೆಲೆಚನು;
1CH 11:28 ತೆಕೋವದ ಇಕ್ಕೇಷನ ಮಗನಾದ ಈರನು; ಅನಾತೋತಿನವನಾದ ಅಬೀಯೆಜೆರನು;
1CH 11:29 ಹುಷಾ ಊರಿನವನಾದ ಸಿಬ್ಬೆಕೈ; ಅಹೋಹ್ಯನಾದ ಈಲೈ;
1CH 11:30 ನೆಟೋಫದವನಾದ ಮಹರೈ; ನೆಟೋಫದವನಾದ ಬಾಣನ ಮಗ ಹೆಲೇದ್;
1CH 11:31 ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ, ಪಿರಾತೋನ್ಯನಾದ ಬೆನಾಯನು;
1CH 11:32 ಹೊಳೆಗಳುಳ್ಳ ಗಾಷ್ ಊರಿನವನಾದ ಹೂರೈ; ಅರಾಬಾ ತಗ್ಗಿನವನಾದ ಅಬೀಯೇಲನು;
1CH 11:33 ಬಹರೂಮ್ಯನಾದ ಅಜ್ಮಾವೆತನು; ಶಾಲ್ಬೋನ್ಯನಾದ ಎಲೆಯಖ್ಬಾನು;
1CH 11:34 ಗೀಜೋನ್ಯನಾದ ಹಾಷೇಮನ ಪುತ್ರರು; ಹರಾರ್ಯನಾದ ಶಾಗೇಯ ಮಗ ಯೋನಾತಾನನು;
1CH 11:35 ಹರಾರ್ಯನಾದ ಶಾಕಾರನ ಮಗನಾದ ಅಹೀಯಾಮನು; ಊರನ ಮಗನಾದ ಎಲಿಫಾಲನು;
1CH 11:36 ಮೆಕೆರಾತಿಯನಾದ ಹೇಫೆರನು; ಪೆಲೋನ್ಯನಾದ ಅಹೀಯನು;
1CH 11:37 ಕರ್ಮೇಲ್ಯನಾದ ಹೆಚ್ರೋ; ಎಜ್ಬೈನ ಮಗನಾದ ನಾರಾಯಿ;
1CH 11:38 ನಾತಾನನ ಸಹೋದರನಾದ ಯೋಯೇಲನು; ಹಗ್ರೀಯನ ಮಗನಾದ ಮಿಬ್ಹಾರನು;
1CH 11:39 ಅಮ್ಮೋನಿಯನಾದ ಚೆಲೆಕನು; ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;
1CH 11:40 ಯೆತೆರಿಯನಾದ ಈರನು; ಯೆತೆರಿಯನಾದ ಗಾರೇಬನು;
1CH 11:41 ಹಿತ್ತಿಯನಾದ ಊರೀಯನು; ಅಹ್ಲಾಯಿಯ ಮಗನಾದ ಜಾಬಾದನು;
1CH 11:42 ರೂಬೇನ್ಯನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು.
1CH 11:43 ಮಾಕನ ಮಗನಾದ ಹಾನಾನನು; ಮೆತೆನದವನಾದ ಯೋಷಾಫಾಟ್;
1CH 11:44 ಅಷ್ಟೆರಾತ್ಯನಾದ ಉಜ್ಜೀಯ; ಅರೋಯೇರಿನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಹೀಯೇಲ್;
1CH 11:45 ಶಿಮ್ರಿಯ ಮಗನಾದ ಎದೀಗಯೇಲ್; ಅವನ ಸಹೋದರನಾದ, ತೀಚೀಯನಾದ ಯೋಹ;
1CH 11:46 ಮಹಾವಿಯನಾದ ಎಲೀಯೇಲ್; ಎಲ್ನಾಮನ ಮಕ್ಕಳಾದ ಯೆರೀಬೈ ಮತ್ತು ಯೋಷವ್ಯ; ಮೋವಾಬ್ಯನಾದ ಇತ್ಮ;
1CH 11:47 ಎಲೀಯೇಲ್; ಓಬೇದ್; ಮೆಚೊಬಾಯದವನಾದ ಯಾಸೀಯೇಲ್.
1CH 12:1 ಕೀಷನ ಮಗ ಸೌಲನ ನಿಮಿತ್ತ ದಾವೀದನು ಇನ್ನೂ ಬಚ್ಚಿಟ್ಟುಕೊಂಡಿರುವಾಗ, ಚಿಕ್ಲಗಿನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ. ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ, ಯುದ್ಧಕ್ಕೆ ಸಹಾಯಕರೂ.
1CH 12:2 ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.
1CH 12:3 ಅವರ ಮುಖ್ಯಸ್ಥ ಅಹೀಗೆಜೆರ್, ಇವನ ನಂತರ ಯೋವಾಷ್. ಇವರಿಬ್ಬರೂ ಗಿಬೆಯ ಊರಿನ ಶೇಮಾನ ಪುತ್ರರು. ಅಜ್ಮಾವೆತನ ಪುತ್ರರಾದ ಯೆಜಿಯೇಲ್ ಮತ್ತು ಪೆಲೆಟ್, ಅನಾತೋತ್ ಊರಿನವರಾದ ಬೆರಾಕಾ, ಯೇಹು.
1CH 12:4 ಗಿಬ್ಯೋನ್ಯನಾದ ಇಷ್ಮಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾಗಿದ್ದ ಮತ್ತು ಮೂವತ್ತು ಮಂದಿಯ ಮುಖ್ಯಸ್ಥನಾಗಿದ್ದ; ಯೆರೆಮೀಯ, ಯಹಜಿಯೇಲ್, ಯೋಹಾನಾನ್, ಗೆದೇರದವನಾದ ಯೋಜಾಬಾದ್,
1CH 12:5 ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಹರುಫ್ಯನಾದ ಶೆಫಟ್ಯ,
1CH 12:6 ಕೋರಹಿಯರಾದ ಎಲ್ಕಾನ, ಇಷ್ಷೀಯ, ಅಜರಯೇಲ್, ಯೋವೆಜೆರ್, ಯಾಷೊಬ್ಬಾಮ,
1CH 12:7 ಗೆದೋರಿನಲ್ಲಿರುವ ಯೆರೋಹಾಮನ ಪುತ್ರರಾದ ಯೋಯೇಲಹ, ಜೆಬದ್ಯ.
1CH 12:8 ಇದಲ್ಲದೆ ಮರುಭೂಮಿಯಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ, ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು. ಅವರ ಮುಖಗಳು ಸಿಂಹಗಳಂತೆ ಭೀಕರವಾಗಿದ್ದವು. ಪರ್ವತಗಳ ಮೇಲೆ ಇವರು ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
1CH 12:9 ಅಧಿಕಾರದಲ್ಲಿ ಏಜೆರ್ ಮುಖ್ಯಸ್ಥನು; ಎರಡನೆಯವನು ಓಬದ್ಯ; ಮೂರನೆಯವನು ಎಲೀಯಾಬ್;
1CH 12:10 ನಾಲ್ಕನೆಯವನು ಮಿಷ್ಮನ್ನ, ಐದನೆಯವನು ಯೆರೆಮೀಯ;
1CH 12:11 ಆರನೆಯವನು ಅತ್ತೈ; ಏಳನೆಯವನು ಎಲೀಯೇಲ್;
1CH 12:12 ಎಂಟನೆಯವನು ಯೋಹಾನಾನ್, ಒಂಬತ್ತನೆಯವನು ಎಲ್ಜಾಬಾದ್;
1CH 12:13 ಹತ್ತನೆಯವನು ಯೆರೆಮೀಯ; ಹನ್ನೊಂದನೆಯವನು ಮಕ್ಬನ್ನೈ.
1CH 12:14 ಗಾದನ ಪುತ್ರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು. ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು.
1CH 12:15 ಇವರು ಮೊದಲನೆಯ ತಿಂಗಳಲ್ಲಿ ಯೊರ್ದನ್ ಹೊಳೆ ದಡಮೀರಿ ಹರಿಯುತ್ತಿದ್ದಾಗ, ಅದನ್ನು ದಾಟಿ ಪೂರ್ವ ಕಡೆಯಲ್ಲಿಯೂ, ಪಶ್ಚಿಮ ಕಡೆಯಲ್ಲಿಯೂ ತಗ್ಗುಗಳಲ್ಲಿ ಇರುವವರೆಲ್ಲರನ್ನು ಓಡಿಸಿಬಿಟ್ಟರು.
1CH 12:16 ಬೆನ್ಯಾಮೀನನ ಮತ್ತು ಯೆಹೂದ್ಯರಲ್ಲಿ ಕೆಲವರು ಕೋಟೆಯ ಸ್ಥಳದಲ್ಲಿದ್ದ ದಾವೀದನ ಬಳಿಗೆ ಬಂದರು.
1CH 12:17 ಆಗ ದಾವೀದನು ಅವರನ್ನು ಎದುರುಗೊಳ್ಳಲು ಹೊರಟುಹೋಗಿ ಅವರಿಗೆ ಉತ್ತರವಾಗಿ, “ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ, ನನ್ನ ಹೃದಯವು ನಿಮ್ಮ ಸಂಗಡ ಒಂದಾಗಿರುವುದು. ಆದರೆ ದೋಷವು ನನ್ನ ಕೈಯಲ್ಲಿ ಇಲ್ಲದಿರುವಾಗ, ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ, ನಮ್ಮ ಪಿತೃಗಳ ದೇವರು ನೋಡಿ ನ್ಯಾಯತೀರಿಸಲಿ,” ಎಂದನು.
1CH 12:18 ಆಗ ಆತ್ಮವು ಮೂವತ್ತು ಮಂದಿ ಅಧಿಪತಿಗಳ ಮುಖ್ಯಸ್ಥನಾದ ಅಮಾಸೈಯ ಮೇಲೆ ಬಂತು. ಅವನು ಹೀಗೆ ಹೇಳಿದನು, “ದಾವೀದನೇ, ನಾವು ನಿನ್ನವರು. ಇಷಯನ ಮಗನೇ, ನಾವು ನಿನ್ನ ಜೊತೆಯಿದ್ದೇವೆ; ಜಯವು ನಿನ್ನದೇ, ನಿನಗೆ ಸಹಾಯ ಮಾಡುವವರಿಗೆ ಜಯವು; ಏಕೆಂದರೆ ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾರೆ.” ಆಗ ದಾವೀದನು ಅವರನ್ನು ಅಂಗೀಕರಿಸಿ, ಅವರನ್ನು ದಂಡಿನ ಅಧಿಪತಿಗಳಾಗಿ ಮಾಡಿದನು.
1CH 12:19 ದಾವೀದನು ಸೌಲನ ಮೇಲೆ ಯುದ್ಧಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ, ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಕೊಡದೆ ಇದ್ದರು. ಏಕೆಂದರೆ ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ, “ಅವನು ನಮಗೆ ಮೋಸಮಾಡಿ, ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿದರೆ, ನಮ್ಮ ತಲೆಗಳು ಬಿದ್ದು ಹೋಗುವುವು,” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು.
1CH 12:20 ದಾವೀದನು ಹಿಂದಿರುಗಿ ಚಿಕ್ಲಗಿಗೆ ಹಿಂದಿರುಗುತ್ತಿದ್ದಾಗ ಅವನೊಂದಿಗೆ ಮನಸ್ಸೆ ಗೋತ್ರದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು.
1CH 12:21 ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು.
1CH 12:22 ಅದೇ ಕಾಲದಲ್ಲಿ ದಿನೇ ದಿನೇ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವವರೆಗೆ, ದಾವೀದನಿಗೆ ಸಹಾಯ ಕೊಡುವುದಕ್ಕೆ ಅವನ ಕಡೆಗೆ ಬರುತ್ತಿದ್ದರು.
1CH 12:23 ಯೆಹೋವ ದೇವರ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವುದಕ್ಕೆ, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿಕೊಂಡು ಬಂದ ದಂಡುಗಳ ಸಂಖ್ಯೆ ಇದು:
1CH 12:24 ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದುಕೊಂಡು, ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು 6,800 ಮಂದಿ.
1CH 12:25 ಯುದ್ಧಕ್ಕೆ ಪರಾಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ 7,100 ಮಂದಿ.
1CH 12:26 ಲೇವಿಯ ಮಕ್ಕಳಲ್ಲಿ 4,600 ಮಂದಿ.
1CH 12:27 ಆರೋನಿಯರಲ್ಲಿ ಯೆಹೋಯಾದಾವನು ನಾಯಕನಾಗಿದ್ದನು. ಅವನ ಸಂಗಡ 3,700 ಮಂದಿ.
1CH 12:28 ಇದಲ್ಲದೆ ಬಲವುಳ್ಳ ಪರಾಕ್ರಮಶಾಲಿಯಾದ ಪ್ರಾಯಸ್ತನಾಗಿದ್ದ ಚಾದೋಕನೂ, ಅವನ ತಂದೆಯ ಮನೆಯಿಂದ 22 ಮಂದಿ ಪ್ರಧಾನರೂ.
1CH 12:29 ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.
1CH 12:30 ಎಫ್ರಾಯೀಮನ ಮಕ್ಕಳಲ್ಲಿ 20,800 ಮಂದಿ, ಬಲವುಳ್ಳ ಪರಾಕ್ರಮಶಾಲಿಗಳೂ, ತಮ್ಮ ಪಿತೃಗಳ ಮನೆಯಲ್ಲಿ ಹೆಸರುಗೊಂಡವರೂ ಆಗಿದ್ದರು.
1CH 12:31 ಮನಸ್ಸೆಯ ಅರ್ಧಗೋತ್ರದಲ್ಲಿ 18,000 ಮಂದಿ. ಅವರು ದಾವೀದನನ್ನು ಅರಸನಾಗಿ ಮಾಡಲು ಬಂದವರ ಹೆಸರು ಹೆಸರಾಗಿ ಹೇಳಲು ಆಯ್ಕೆಯಾದವರು.
1CH 12:32 ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲರು ಮಾಡತಕ್ಕದ್ದು ಯಾವುದೆಂದು ತಿಳಿಯತಕ್ಕಂಥ ಕಾಲಗಳನ್ನು ಪರೀಕ್ಷಿಸಿ ತಿಳಿದವರು ಬಂದರು. ಅವರ ಯಜಮಾನರು 200 ಮಂದಿಯಾಗಿದ್ದರು. ಅವರ ಸಹೋದರರೆಲ್ಲರು ಇವರ ಆಜ್ಞಾಧೀನರಾಗಿದ್ದರು.
1CH 12:33 ಜೆಬುಲೂನನವರಲ್ಲಿ ದೃಢಹೃದಯದಿಂದ ಸಾಲಾಗಿ ನಡೆಯುವ ಸಕಲ ಆಯುಧಗಳನ್ನು ಧರಿಸಿಕೊಂಡ ಯುದ್ಧ ನಿಪುಣರಾದ ಸೈನ್ಯವಾಗಿ ಹೊರಡುವವರು 50,000 ಮಂದಿ.
1CH 12:34 ನಫ್ತಾಲಿಯವರಲ್ಲಿ 1,000 ಜನ ನಾಯಕರೂ ಗುರಾಣಿಬರ್ಜಿಗಳನ್ನು ಹಿಡಿದಿರುವ 37,000 ಸೈನಿಕರೂ
1CH 12:35 ದಾನನವರಲ್ಲಿ 28,600 ಮಂದಿ ಯುದ್ಧ ನಿಪುಣರು.
1CH 12:36 ಆಶೇರನವರಲ್ಲಿ ಯುದ್ಧಕ್ಕೆ ಹೋಗತಕ್ಕ ಹಾಗೆ ಯುದ್ಧ ನಿಪುಣರು ಸೈನ್ಯವಾಗಿ ಹೋಗುವವರು 40,000 ಮಂದಿ.
1CH 12:37 ಯೊರ್ದನ್ ನದಿ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು 1,20,000 ಮಂದಿ.
1CH 12:38 ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲರ ಮೇಲೆ ಅರಸನಾಗಿ ಮಾಡಲು ಹೆಬ್ರೋನಿಗೆ ಪೂರ್ಣಮನಸ್ಸಿನಿಂದ ಬಂದರು. ಇದಲ್ಲದೆ ಇಸ್ರಾಯೇಲಿನಲ್ಲಿದ್ದ ಮಿಕ್ಕಾದವರೆಲ್ಲರು ದಾವೀದನನ್ನು ಅರಸನಾಗಿ ಮಾಡಲು ಒಂದೇ ಮನಸ್ಸುಳ್ಳವರಾಗಿದ್ದರು.
1CH 12:39 ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಅವರ ಕುಟುಂಬದವರು ಅವರಿಗೋಸ್ಕರ ಸಿದ್ಧಮಾಡಿದ ಆಹಾರವನ್ನು ತಿನ್ನುತ್ತಾ, ಕುಡಿಯುತ್ತಾ ಇದ್ದರು.
1CH 12:40 ಇದಲ್ಲದೆ ಅವರ ನೆರೆಯವನಾದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ತಮ್ಮ ಎತ್ತು, ಕತ್ತೆ, ಹೇಸರಗತ್ತೆ ಮತ್ತು ಒಂಟೆಗಳ ಮೇಲೆಯೂ ರೊಟ್ಟಿಗಳನ್ನೂ ಆಹಾರವನ್ನೂ, ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ದನಕುರಿಗಳನ್ನೂ ಬಹಳವಾಗಿ ತಂದರು. ಇಸ್ರಾಯೇಲಿನಲ್ಲಿ ಸಂತೋಷವಿತ್ತು.
1CH 13:1 ದಾವೀದನು ಸಾವಿರ ಮಂದಿಗೂ, ನೂರು ಮಂದಿಗೂ ಪ್ರಧಾನರಾದವರ ಸಂಗಡ, ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.
1CH 13:2 ದಾವೀದನು ಇಸ್ರಾಯೇಲಿನ ಸಮಸ್ತ ಜನರಿಗೆ, “ನಿಮಗೆ ಒಳ್ಳೆಯದಾಗಿ ಕಂಡರೆ, ನಮ್ಮ ದೇವರಾದ ಯೆಹೋವ ದೇವರ ಚಿತ್ತವಾದರೆ, ನಮ್ಮ ಬಳಿಯಲ್ಲಿ ಕೂಡಿಬರುವ ಹಾಗೆ ಇಸ್ರಾಯೇಲಿನ ದೇಶವೆಲ್ಲದರಲ್ಲಿ ಉಳಿದಿರುವ ನಮ್ಮ ಸಹೋದರರನ್ನೂ, ತಮ್ಮ ಪಟ್ಟಣಗಳಲ್ಲಿ ಮತ್ತು ಉಪನಗರಗಳಲ್ಲಿ ಇರುವ ಯಾಜಕರನ್ನೂ, ಲೇವಿಯರನ್ನೂ ಎಲ್ಲಾ ಕಡೆಯಿಂದ ಕರೆಯಕಳುಹಿಸಿ,
1CH 13:3 ನಮ್ಮ ದೇವರ ಮಂಜೂಷವನ್ನು ನಮ್ಮ ಬಳಿಗೆ ತಿರುಗಿ ತರಿಸೋಣ. ಸೌಲನ ದಿವಸಗಳಲ್ಲಿ ಅದನ್ನು ವಿಚಾರಿಸಲಿಲ್ಲ,” ಎಂದನು.
1CH 13:4 ಹಾಗೆಯೇ ಮಾಡೋಣ ಎಂದು ಕೂಟದವರೆಲ್ಲರೂ ಹೇಳಿದರು. ಏಕೆಂದರೆ ಆ ಕಾರ್ಯವು ಸಮಸ್ತ ಜನರ ದೃಷ್ಟಿಗೆ ಯುಕ್ತವಾಗಿತ್ತು.
1CH 13:5 ಹೀಗೆ ದೇವರ ಮಂಜೂಷವನ್ನು ಕಿರ್ಯತ್ ಯಾರೀಮಿನಿಂದ ತರುವುದಕ್ಕೆ ದಾವೀದನು ಈಜಿಪ್ಟಿನ ಶೀಹೋರ್ ನದಿ ಮೊದಲ್ಗೊಂಡು ಲಿಬೋ ಹಮಾತಿನ ಪ್ರದೇಶದವರೆಗೆ ಇರುವ ಸಮಸ್ತ ಇಸ್ರಾಯೇಲರನ್ನು ಕೂಡಿಸಿದನು.
1CH 13:6 ಆಗ ಕೆರೂಬಿಗಳ ನಡುವೆ ವಾಸವಾಗಿರುವ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು, ದಾವೀದನೂ, ಸಮಸ್ತ ಇಸ್ರಾಯೇಲರೂ ಯೆಹೂದಕ್ಕೆ ಸೇರಿದ ಕಿರ್ಯತ್ ಯಾರೀಮಿನ ಬಾಲಾ ಎಂಬಲ್ಲಿಗೆ ಹೋದರು.
1CH 13:7 ಅವರು ಅಬೀನಾದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು, ಅದನ್ನು ಹೊಸ ಬಂಡಿಯ ಮೇಲೆ ಏರಿಸಿದರು. ಉಜ್ಜನು ಹಾಗೂ ಅಹಿಯೋವನು ಆ ಹೊಸ ಬಂಡಿಯನ್ನು ನಡೆಸಿದರು.
1CH 13:8 ಆಗ ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ದೇವರ ಮುಂದೆ ಹೋದರು.
1CH 13:9 ಆದರೆ ಅವರು ಕಿದೋನನ ಕಣದ ಬಳಿಗೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ತನ್ನ ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
1CH 13:10 ಉಜ್ಜನು ಮಂಜೂಷದ ಮೇಲೆ ಕೈ ಹಾಕಿದ್ದರಿಂದ ಯೆಹೋವ ದೇವರು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಶಿಕ್ಷಿಸಿದರು. ಅವನು ಅಲ್ಲಿಯೇ ದೇವರ ಮುಂದೆ ಮರಣಹೊಂದಿದನು.
1CH 13:11 ಯೆಹೋವ ದೇವರು ಉಜ್ಜನನ್ನು ಶಿಕ್ಷಿಸಿದ್ದರಿಂದ ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು, ಇಂದಿನವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಕರೆಯಲಾಗುತ್ತದೆ.
1CH 13:12 ದಾವೀದನು ಆ ದಿನ ಯೆಹೋವ ದೇವರಿಗೆ ಭಯಪಟ್ಟು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ಹೇಗೆ ತೆಗೆದುಕೊಂಡು ಹೋಗುವದು?” ಎಂದನು.
1CH 13:13 ಹಾಗೆಯೇ ದಾವೀದನು ಮಂಜೂಷವನ್ನು ದಾವೀದನ ಪಟ್ಟಣಕ್ಕೆ ತನ್ನ ಬಳಿಗೆ ಸೇರಿಸಿಕೊಳ್ಳದೆ, ಗಿತ್ತೀಯನಾದ ಓಬೇದ್ ಏದೋಮನ ಮನೆಗೆ ತೆಗೆದುಕೊಂಡು ಹೋದನು.
1CH 13:14 ದೇವರ ಮಂಜೂಷವು ಓಬೇದ್ ಏದೋಮನ ಮನೆಯಲ್ಲಿ ಮೂರು ತಿಂಗಳು ಇದ್ದುದರಿಂದ, ಯೆಹೋವ ದೇವರು ಓಬೇದ್ ಎದೋಮನನ್ನೂ, ಅವನ ಮನೆಯವರೆಲ್ಲರನ್ನೂ, ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದರು.
1CH 14:1 ಟೈರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು.
1CH 14:2 ಆಗ ದಾವೀದನು, ತನ್ನನ್ನು ಯೆಹೋವ ದೇವರು ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದರೆಂದೂ, ತಮ್ಮ ಜನರಾದ ಇಸ್ರಾಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದರೆಂದೂ ತಿಳಿದುಕೊಂಡನು.
1CH 14:3 ದಾವೀದನು ಯೆರೂಸಲೇಮಿನಲ್ಲಿ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡನು. ಇನ್ನೂ ಹೆಚ್ಚು ಪುತ್ರ, ಪುತ್ರಿಯರನ್ನೂ ಪಡೆದನು.
1CH 14:4 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
1CH 14:5 ಇಬ್ಹಾರ್, ಎಲೀಷೂವ, ಎಲ್ಪೆಲೆಟ,
1CH 14:6 ನೋಗಹ, ನೆಫೆಗ್, ಯಾಫೀಯ,
1CH 14:7 ಎಲೀಷಾಮ, ಎಲ್ಯಾದ, ಎಲೀಫೆಲೆಟ್.
1CH 14:8 ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದಾನೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರೆಲ್ಲರೂ ದಾವೀದನನ್ನು ಸೆರೆಹಿಡಿಯಲು ಹೋದರು. ದಾವೀದನು ಅದನ್ನು ಕೇಳಿ ಅವರಿಗೆದುರಾಗಿ ಹೊರಟನು.
1CH 14:9 ಆಗ ಫಿಲಿಷ್ಟಿಯರು ಬಂದು ರೆಫಾಯಿಮ್ ತಗ್ಗಿನಲ್ಲಿ ಇಳಿದುಕೊಂಡರು.
1CH 14:10 ಅದಕ್ಕೆ ದಾವೀದನು, “ನಾನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಬಹುದೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವಿರೋ?” ಎಂದು ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು ಅವನಿಗೆ, “ಹೋಗು, ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದು ಹೇಳಿದರು.
1CH 14:11 ಹಾಗೆಯೇ ದಾವೀದನು ಮತ್ತು ಅವನ ಸಂಗಡಿಗರೂ ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾರೆ,” ಎಂದನು. ಆದಕಾರಣ ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.
1CH 14:12 ಅಲ್ಲಿ ಫಿಲಿಷ್ಟಿಯರು ತಮ್ಮ ದೇವರುಗಳನ್ನು ಬಿಟ್ಟು ಹೋದುದರಿಂದ, ದಾವೀದನು ಅವುಗಳನ್ನು ಸುಟ್ಟುಹಾಕಬೇಕೆಂದು ಅಪ್ಪಣೆಮಾಡಿದನು.
1CH 14:13 ಫಿಲಿಷ್ಟಿಯರು ಮತ್ತೆ ತಿರುಗಿಬಂದು ತಗ್ಗಿನಲ್ಲಿ ಸುಲಿಗೆಮಾಡಲು ಪ್ರಾರಂಭಿಸಿದರು.
1CH 14:14 ಆದ್ದರಿಂದ ದಾವೀದನು ತಿರುಗಿ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ, “ನೀನು ಅವರ ಹಿಂದೆ ಹೋಗದೆ, ಅವರನ್ನು ಬಿಟ್ಟು ತಿರುಗಿಕೊಂಡು ಹೋಗಿ, ಬಾಕಾಮರಗಳಿಗೆ ಎದುರಾಗಿ ಅವರ ಮೇಲೆ ದಾಳಿಮಾಡು.
1CH 14:15 ಬಾಕಾಮರಗಳ ತುದಿಗಳಲ್ಲಿ ನಡೆದುಬರುವ ಶಬ್ದವನ್ನು ನೀನು ಕೇಳಿದಾಗಲೇ, ದೇವರು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು,” ಎಂದರು.
1CH 14:16 ಆಗ ದಾವೀದನು, ದೇವರು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ, ಅವನು ಗಿಬ್ಯೋನಿನಿಂದ ಗೆಜೆರಿನವರೆಗೆ ಫಿಲಿಷ್ಟಿಯರ ದಂಡನ್ನು ಸಂಹರಿಸಿದರು.
1CH 14:17 ದಾವೀದನ ಕೀರ್ತಿಯು ಸಮಸ್ತ ದೇಶಗಳಿಗೆ ಹರಡಿತು. ಯೆಹೋವ ದೇವರು ಅವನ ಭಯವನ್ನು ಸಮಸ್ತ ಜನಾಂಗಗಳ ಮೇಲೆ ಬರಮಾಡಿದರು.
1CH 15:1 ದಾವೀದನ ಪಟ್ಟಣಗಳಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿಕೊಂಡು, ದೇವರ ಮಂಜೂಷಕ್ಕೋಸ್ಕರ ಸ್ಥಳಗಳನ್ನು ಸಿದ್ಧಮಾಡಿ, ಅದರ ನಿಮಿತ್ತ ಗುಡಾರ ಹಾಕಿದನು.
1CH 15:2 ಆಗ ದಾವೀದನು, “ಲೇವಿಯರ ಹೊರತಾಗಿ ಮತ್ತ್ಯಾರೂ ದೇವರ ಮಂಜೂಷವನ್ನು ಹೊರಬಾರದು. ಯೆಹೋವ ದೇವರು ದೇವರ ಮಂಜೂಷವನ್ನು ಹೊರಲೂ, ಯುಗಯುಗಕ್ಕೆ ಅವರಿಗೆ ಸೇವೆಮಾಡಲೂ ಅವರನ್ನು ಆಯ್ದುಕೊಂಡಿದ್ದಾರೆ,” ಎಂದನು.
1CH 15:3 ದಾವೀದನು ಯೆಹೋವ ದೇವರ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತೆಗೆದುಕೊಂಡು ಬರುವ ನಿಮಿತ್ತ, ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲರನ್ನು ಕೂಡಿಸಿ ಬರಮಾಡಿದನು.
1CH 15:4 ದಾವೀದನು ಆರೋನನ ಮಕ್ಕಳನ್ನೂ, ಲೇವಿಯರನ್ನೂ ಬರಮಾಡಿದನು.
1CH 15:5 ಕೊಹಾತನ ಪುತ್ರರಲ್ಲಿ ಮುಖ್ಯಸ್ಥನಾದ ಉರೀಯೇಲನೂ, ಅವನ ಸಹೋದರರಾದ 120 ಮಂದಿಯೂ;
1CH 15:6 ಮೆರಾರೀಯ ಪುತ್ರರಲ್ಲಿ ಮುಖ್ಯಸ್ಥನಾದ ಅಸಾಯನೂ, ಅವನ ಸಹೋದರರಾದ 220 ಮಂದಿಯೂ;
1CH 15:7 ಗೇರ್ಷೋಮನ ಪುತ್ರರಲ್ಲಿ ಮುಖ್ಯಸ್ಥನಾದ ಯೋಯೇಲನೂ ಅವನ ಸಹೋದರರಾದ 130 ಮಂದಿಯೂ;
1CH 15:8 ಎಲೀಚಾಫಾನನ ಪುತ್ರರಲ್ಲಿ ಮುಖ್ಯಸ್ಥನಾದ ಶೆಮಾಯನೂ, ಅವನ ಸಹೋದರರಾದ 200 ಮಂದಿಯೂ;
1CH 15:9 ಹೆಬ್ರೋನನ ಪುತ್ರರಲ್ಲಿ ಮುಖ್ಯಸ್ಥನಾದ ಎಲೀಯೇಲನೂ, ಅವನ ಸಹೋದರರಾದ 80 ಮಂದಿಯೂ;
1CH 15:10 ಉಜ್ಜೀಯೇಲನ ಪುತ್ರರಲ್ಲಿ ಮುಖ್ಯಸ್ಥನಾದ ಅಮ್ಮೀನಾದಾಬನೂ, ಅವನ ಸಹೋದರರಾದ 112 ಮಂದಿಯು.
1CH 15:11 ಆಗ ದಾವೀದನು ಚಾದೋಕನು, ಅಬಿಯಾತರನು ಎಂಬ ಯಾಜಕರನ್ನೂ; ಉರೀಯೇಲನು, ಅಸಾಯನು, ಯೋಯೇಲನು, ಶೆಮಾಯನು, ಎಲೀಯೇಲನು, ಅಮ್ಮೀನಾದಾಬನು ಎಂಬ ಲೇವಿಯರನ್ನೂ ಕರೆಕಳುಹಿಸಿ ಅವರಿಗೆ,
1CH 15:12 “ನೀವು ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ್ದರಿಂದ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ನಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ, ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ.
1CH 15:13 ಏಕೆಂದರೆ ನೀವು ಮೊದಲು ಹಾಗೆ ಮಾಡದೆ ಇದ್ದುದರಿಂದ, ಕೋಪದಿಂದ ಯೆಹೋವ ದೇವರಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದರು. ಏಕೆಂದರೆ ನ್ಯಾಯದ ಪ್ರಕಾರ ನಾವು ಅವರನ್ನು ಹುಡುಕಲಿಲ್ಲ,” ಎಂದು ಹೇಳಿದನು.
1CH 15:14 ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ತರುವುದಕ್ಕೆ ಯಾಜಕರೂ, ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು.
1CH 15:15 ಮೋಶೆಯು ಆಜ್ಞಾಪಿಸಿದ ಯೆಹೋವ ದೇವರ ವಾಕ್ಯದ ಪ್ರಕಾರ ಲೇವಿಯರು ಕೋಲುಗಳನ್ನು ಹಾಕಿ, ದೇವರ ಮಂಜೂಷವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.
1CH 15:16 ಇದಲ್ಲದೆ ದಾವೀದನು ವಾದ್ಯಗಳನ್ನೂ ವಿಶೇಷವಾದ ವೀಣೆಗಳನ್ನೂ, ಕಿನ್ನರಿಗಳನ್ನೂ, ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನೂ ಎತ್ತುವ ಹಾಗೆ, ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವುದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.
1CH 15:17 ಹಾಗೆಯೇ ಲೇವಿಯರು ಯೋಯೇಲನ ಮಗನಾದ ಹೇಮಾನನನ್ನೂ, ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ, ಮೆರಾರೀಯ ಪುತ್ರರ ಸಂಬಂಧಿಕರಲ್ಲಿ ಕೂಷಾಯನ ಮಗ ಏತಾನನನ್ನೂ ನೇಮಿಸಿದರು.
1CH 15:18 ಅವರ ಸಂಗಡ ಎರಡನೆಯ ದರ್ಜೆಯವರಾದ ತಮ್ಮ ಸಹೋದರರಾಗಿರುವ ಜೆಕರ್ಯನನ್ನೂ ಬೇನನನ್ನೂ ಯಾಜೀಯೇಲನನ್ನೂ, ಶೆಮೀರಾಮೋತನನ್ನೂ ಯೆಹೀಯೇಲನನ್ನೂ, ಉನ್ನೀಯನ್ನೂ, ಎಲೀಯಾಬನನ್ನೂ, ಬೆನಾಯನನ್ನೂ, ಮಾಸೇಯನನ್ನೂ, ಮತ್ತಿತ್ಯನನ್ನೂ, ಎಲೀಫೆಲೇಹುನನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಓಬೇದ್ ಏದೋಮನನ್ನೂ ಯೆಹೀಯೇಲನನ್ನೂ ನೇಮಿಸಿದರು.
1CH 15:19 ಸಂಗೀತಗಾರರಾದ ಹೇಮಾನನೂ, ಆಸಾಫನೂ, ಏತಾನನೂ ಕಂಚಿನ ತಾಳಗಳನ್ನು ಬಾರಿಸುವವರು.
1CH 15:20 ಜೆಕರ್ಯ, ಅಜಿಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರನ್ನು ಅಲಮೋತ್ ಎಂಬ ತಾರಸ್ಥಾಯಿಯ ವೀಣೆಗಳನ್ನು ಬಾರಿಸುವುದಕ್ಕೆ ಆರಿಸಿಕೊಂಡರು.
1CH 15:21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದ್ ಏದೋಮ್, ಯೆಹೀಯೇಲ್, ಅಜಜ್ಯ ಎಂಬವರನ್ನು ಶೆಮಿನಿಥ್ ಎಂಬ ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವುದಕ್ಕೂ ನೇಮಿಸಿಕೊಂಡರು.
1CH 15:22 ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡುವುದಕ್ಕೆ ನೇಮಕವಾದನು. ಅವನು ಸಂಗೀತದಲ್ಲಿ ನಿಪುಣನಾದ್ದರಿಂದ ಅವನು ಮುಖ್ಯಸ್ಥನಾಗಿದ್ದನು.
1CH 15:23 ಬೆರೆಕ್ಯ, ಎಲ್ಕಾನಾ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.
1CH 15:24 ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೆಯೇಲ್, ಅಮಾಸೈಯೂ, ಜೆಕರ್ಯನೂ, ಬೆನಾಯನೂ, ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು. ಓಬೇದ್ ಏದೋಮನೂ, ಯೆಹೀಯನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.
1CH 15:25 ಹೀಗೆಯೇ ದಾವೀದನೂ, ಇಸ್ರಾಯೇಲಿನ ಹಿರಿಯರೂ, ಸಹಸ್ರಾಧಿಪತಿಗಳೂ ಸಂತೋಷವಾಗಿ ಓಬೇದ್ ಏದೋಮನ ಮನೆಯೊಳಗಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.
1CH 15:26 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದ್ದರಿಂದ, ಅವರು ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು.
1CH 15:27 ದಾವೀದನೂ, ಮಂಜೂಷವನ್ನು ಹೊರುವ ಲೇವಿಯರೂ, ಹಾಡುಗಾರರೂ, ಸಂಗೀತಗಾರರ ನಾಯಕನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡಿದ್ದನು.
1CH 15:28 ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.
1CH 15:29 ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಕುಣಿಯುತ್ತಾ, ಹಾಡುತ್ತಾ ಇರುವ ಅರಸನಾದ ದಾವೀದನನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.
1CH 16:1 ಅವರು ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ಅವರು ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
1CH 16:2 ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಅವನು ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
1CH 16:3 ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು.
1CH 16:4 ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
1CH 16:5 ಅವರು ಯಾರೆಂದರೆ: ಮುಖ್ಯಸ್ಥನಾದ ಆಸಾಫನೂ, ಅವನ ತರುವಾಯ ಜೆಕರ್ಯನೂ, ಯೆಜೀಯೇಲನೂ, ಶೆಮೀರಾಮೋತನೂ, ಯೆಹೀಯೇಲನೂ, ಮತ್ತಿತ್ಯನೂ, ಎಲೀಯಾಬನೂ, ಬೆನಾಯನೂ, ಓಬೇದ್ ಏದೋಮನೂ, ಯೆಹಿಯೇಲನೂ ಇವರು ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಿದ್ದರು. ಆದರೆ ಆಸಾಫನು ತಾಳಗಳನ್ನು ಬಾರಿಸುತ್ತಿದ್ದನು.
1CH 16:6 ಇದಲ್ಲದೆ ಯಾಜಕರಾದ ಬೆನಾಯನೂ, ಯಹಜಿಯೇಲನೂ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
1CH 16:7 ಆಸಾಫನಿಗೂ, ಅವನ ಜೊತೆ ಲೇವಿಯರಿಗೂ ಯೆಹೋವ ದೇವರ ಸ್ತೋತ್ರಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
1CH 16:8 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ, ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
1CH 16:9 ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ, ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
1CH 16:10 ದೇವರ ಪರಿಶುದ್ಧ ನಾಮವನ್ನು ಹೊಗಳಿರಿ, ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
1CH 16:11 ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
1CH 16:12 ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
1CH 16:13 ಅವರ ಸೇವಕನಾದ ಇಸ್ರಾಯೇಲಿನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
1CH 16:14 ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
1CH 16:15 ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
1CH 16:16 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕಮಾಡಿಕೊಳ್ಳಿರಿ.
1CH 16:17 ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು, ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
1CH 16:18 “ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
1CH 16:19 ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
1CH 16:20 ಅವರು ಜನಾಂಗದಿಂದ ಜನಾಂಗಕ್ಕೂ, ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
1CH 16:21 ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ:
1CH 16:22 ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ. ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.
1CH 16:23 ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ. ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
1CH 16:24 ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
1CH 16:25 ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
1CH 16:26 ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
1CH 16:27 ಅವರ ಸನ್ನಿಧಿಯಲ್ಲಿ ಘನತೆಯೂ ಪ್ರಭೆಯೂ; ಅವರ ಪರಿಶುದ್ಧ ಸ್ಥಳದಲ್ಲಿ ಬಲವೂ ಸಂತೋಷವೂ ಇವೆ.
1CH 16:28 ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ, ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
1CH 16:29 ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ದೇವರ ಸನ್ನಿಧಿಗೆ ಬನ್ನಿರಿ. ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
1CH 16:30 ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ. ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ.
1CH 16:31 ಆಕಾಶವು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಯೆಹೋವ ದೇವರು ಆಳುತ್ತಾರೆಂದು ಜನಾಂಗಗಳಲ್ಲಿ ಹೇಳಲಿ.
1CH 16:32 ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ. ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ.
1CH 16:33 ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ. ದೇವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ.
1CH 16:34 ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
1CH 16:35 ನಮ್ಮ ರಕ್ಷಣೆಯ ದೇವರೇ, “ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸಿರಿ, ಜನಾಂಗಗಳೊಳಗಿಂದ ನಮ್ಮನ್ನು ಬಿಡುಗಡೆ ಮಾಡಿ ಒಂದುಗೂಡಿಸಿರಿ.”
1CH 16:36 ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ, ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು.
1CH 16:37 ಪ್ರತಿದಿನದ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯಮಿತವಾಗಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಸೇವೆ ಸಲ್ಲಿಸಲು ದಾವೀದನು ಆಸಾಫ್ ಮತ್ತು ಅವನ ಸಹಚರರನ್ನು ನೇಮಿಸಿದನು.
1CH 16:38 ಓಬೇದ್ ಏದೋಮ್ ಮತ್ತು ಅವನ ಸಹಚರರಾದ ಅರವತ್ತೆಂಟು ಮಂದಿಯೂ, ದ್ವಾರಪಾಲಕರಾದ ಯೆದುತೂನನ ಮಗ ಓಬೇದ್ ಎದೋಮ್ ಮತ್ತು ಹೋಸ ನೇಮಕವಾಗಿದ್ದರು.
1CH 16:39 ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಲ್ಲಿ ಯೆಹೋವ ದೇವರ ಗುಡಾರದ ಮುಂದೆ ಸೇವೆಮಾಡುವದಕ್ಕೆ ದಾವೀದನು ಯಾಜಕನಾದ ಚಾದೋಕನನ್ನೂ ಮತ್ತು ಅವನ ಸಹೋದರರನ್ನು ನೇಮಿಸಿದನು.
1CH 16:40 ಯೆಹೋವ ದೇವರು ಇಸ್ರಾಯೇಲಿಗೆ ಆಜ್ಞಾಪಿಸಿದ ಮೋಶೆಯ ನಿಯಮದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡಲೂ ಅವರು ಪ್ರತಿದಿನವೂ ಉದಯಕಾಲದಲ್ಲಿ ಮತ್ತು ಸಾಯಂಕಾಲದಲ್ಲಿ ದಹನಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದರು.
1CH 16:41 “ದೇವರ ಪ್ರೀತಿ ನಿತ್ಯವಾಗಿ ನೆಲೆಗೊಂಡಿರುವುದು,” ಎಂದು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಹೇಮಾನನೂ, ಯೆದುತೂನನೂ ಹೆಸರು ಹೆಸರಾಗಿ ಆಯ್ಕೆಗೊಂಡು, ನೇಮಕರಾಗಿದ್ದರು.
1CH 16:42 ಅದರ ಸಂಗಡ ತುತೂರಿ ಊದಲು, ತಾಳ ಬಾರಿಸಲು, ದೇವರ ಗೀತವಾದ್ಯಗಳೂ ಸಹಿತವಾಗಿ ಹೇಮಾನನೂ, ಯೆದುತೂನನೂ ಮೇಲ್ವಿಚಾರಕರಾಗಿದ್ದರು. ಯೆದುತೂನನ ಪುತ್ರರು ದ್ವಾರಪಾಲಕರಾಗಿದ್ದರು.
1CH 16:43 ತರುವಾಯ ಜನರೆಲ್ಲರು ತಮ್ಮ ತಮ್ಮ ಮನೆಗೆ ಹೋದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸುವುದಕ್ಕೆ ಹೋದನು.
1CH 17:1 ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ, ಒಂದು ದಿನ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಗುಡಾರದಲ್ಲಿರುತ್ತದೆ,” ಎಂದನು.
1CH 17:2 ಆಗ ನಾತಾನನು ದಾವೀದನಿಗೆ, “ನಿನ್ನ ಹೃದಯದಲ್ಲಿ ಏನು ಇದೆಯೋ ಅದನ್ನು ಮಾಡು; ಏಕೆಂದರೆ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
1CH 17:3 ಅದೇ ರಾತ್ರಿಯಲ್ಲಿ ಯೆಹೋವ ದೇವರ ವಾಕ್ಯವು ನಾತಾನನಿಗೆ ಉಂಟಾಗಿ ಹೇಳಿದ್ದೇನೆಂದರೆ:
1CH 17:4 “ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ಯೆಹೋವ ದೇವರು ಹೇಳುವುದೇನೆಂದರೆ: ನಾನು ವಾಸವಾಗಿರುವುದಕ್ಕೆ ನೀನು ನನಗೆ ಆಲಯವನ್ನು ಕಟ್ಟಿಸಬೇಡ.
1CH 17:5 ಏಕೆಂದರೆ ನಾನು ಈಜಿಪ್ಟಿನಿಂದ ಇಸ್ರಾಯೇಲರನ್ನು ಬರಮಾಡಿದ ದಿವಸ ಮೊದಲುಗೊಂಡು, ಇಂದಿನವರೆಗೂ ಆಲಯದಲ್ಲಿ ವಾಸಮಾಡದೆ ಒಂದು ಗುಡಾರದ ಸ್ಥಳದಿಂದ ಇನ್ನೊಂದು ಗುಡಾರದ ಸ್ಥಳಕ್ಕೂ, ಒಂದು ತಂಗುವ ಸ್ಥಳದಿಂದ ಇನ್ನೊಂದು ತಂಗುವ ಸ್ಥಳಕ್ಕೂ ಹೋಗುತ್ತಿದ್ದೆನು.
1CH 17:6 ನಾನು ನನ್ನ ಜನರಾದ ಇಸ್ರಾಯೇಲರನ್ನು ಪರಿಪಾಲಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಜೊತೆಯಾದರೂ, “ನೀವು ನನಗೆ ದೇವದಾರು ಮನೆಯನ್ನು ಏಕೆ ಕಟ್ಟಲಿಲ್ಲ,” ಎಂದು ನಾನು ಸಮಸ್ತ ಇಸ್ರಾಯೇಲಿನ ಸಂಗಡ ಸಂಚರಿಸಿದ ಯಾವ ಸ್ಥಳದಲ್ಲಾದರೂ, ಯಾವಾಗಲಾದರೂ ಕೇಳಿದೆನೋ?’
1CH 17:7 “ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, ‘ಸೇನಾಧೀಶ್ವರ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ: ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡು, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿರುವಂತೆ ನೇಮಿಸಿದೆನು.
1CH 17:8 ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು, ನಿನ್ನ ಶತ್ರುಗಳನ್ನೆಲ್ಲಾ ನಿನ್ನ ಮುಂದೆಯೇ ಸಂಹರಿಸಿದೆನು. ಭೂಮಿಯಲ್ಲಿರುವ ಮಹಾಪುರುಷರ ಹೆಸರಿನ ಹಾಗೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
1CH 17:9 ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಏರ್ಪಡಿಸಿ, ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಲೆಗೊಳಿಸುವೆನು.
1CH 17:10 ಪೂರ್ವಕಾಲದಲ್ಲಿ ನಾನು ನನ್ನ ಜನರಾದ ಇಸ್ರಾಯೇಲರ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದೆ. ಆ ದಿವಸದಿಂದ ಈಚೆಗೆ, ದುಷ್ಟರು ಇನ್ನು ಮೇಲೆ ಇಸ್ರಾಯೇಲರನ್ನು ಕುಗ್ಗಿಸದೆ ಇರುವರು. ನಾನು ನಿನ್ನ ಸಮಸ್ತ ಶತ್ರುಗಳನ್ನು ತಗ್ಗಿಸಿದ್ದೇನೆ. “ ‘ಯೆಹೋವ ದೇವರಾದ ನಾನು ನಿನಗೆ ಮನೆಯನ್ನು ಕಟ್ಟುವೆನು, ಎಂದು ನಿನಗೆ ತಿಳಿಸುತ್ತೇನೆ.
1CH 17:11 ನಿನ್ನ ಆಯುಷ್ಕಾಲವು ಮುಗಿದ ಮೇಲೆ, ನೀನು ನಿನ್ನ ಪಿತೃಗಳ ಬಳಿಗೆ ಹೋಗಿ ವಿಶ್ರಮಿಸುವಾಗ, ನಾನು ನಿನ್ನ ಸಂತತಿಯಲ್ಲಿ ಒಬ್ಬನನ್ನು ನಿನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಅವನ ರಾಜ್ಯವನ್ನು ಸ್ಥಿರಮಾಡುವೆನು.
1CH 17:12 ಅವನೇ ನನಗೆ ದೇವಾಲಯವನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು.
1CH 17:13 ನಾನು ಅವನ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನ ಮೇಲಿಂದ ನನ್ನ ಪ್ರೀತಿಯನ್ನು ಹಿಂತೆಗೆದುಕೊಂಡ ಹಾಗೆ ಎಂದಿಗೂ ಅವನಿಂದ ಹಿಂತೆಗೆಯುವುದಿಲ್ಲ.
1CH 17:14 ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾಕಾಲಕ್ಕೂ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಯುಗಯುಗಾಂತರಕ್ಕೂ ಶಾಶ್ವತವಾಗಿರುವುದು,’ ” ಎಂದು ಹೇಳಿದರು.
1CH 17:15 ನಾತಾನನು ಈ ಸಮಸ್ತ ಪ್ರಕಟಣೆಯ ಮಾತುಗಳನ್ನು ದಾವೀದನಿಗೆ ತಿಳಿಸಿದನು.
1CH 17:16 ಅನಂತರ ಅರಸನಾದ ದಾವೀದನು ಒಳಗೆ ಪ್ರವೇಶಿಸಿ, ಯೆಹೋವ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು, “ದೇವರೇ, ಯೆಹೋವ ದೇವರೇ, ನನ್ನಂಥವನಿಗೆ ನೀವು ಈ ಪದವಿಯನ್ನು ಅನುಗ್ರಹಿಸಿ, ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು?
1CH 17:17 ಯೆಹೋವ ದೇವರೇ, ಇದು ನಿಮ್ಮ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನೀವು ನಿಮ್ಮ ಸೇವಕನ ಸಂತಾನದ ಭವಿಷ್ಯದ ಕುರಿತೂ ವಾಗ್ದಾನಮಾಡಿರುವಿರಿ. ಯೆಹೋವ ದೇವರೇ, ನೀವು ನನ್ನನ್ನು ಮನುಷ್ಯರಲ್ಲಿ ಅತ್ಯುನ್ನತ ವ್ಯಕ್ತಿಯಂತೆ ನೋಡಿರುವಿರಿ.
1CH 17:18 “ನಿಮ್ಮ ಸೇವಕನ ಘನತೆಯ ನಿಮಿತ್ತ, ದಾವೀದನು ಇನ್ನೂ ಹೆಚ್ಚಾಗಿ ಹೇಳಿಕೊಳ್ಳುವುದೇನಿದೆ? ಏಕೆಂದರೆ ನೀವು ನಿಮ್ಮ ಸೇವಕನನ್ನು ಚೆನ್ನಾಗಿ ಬಲ್ಲಿರಿ.
1CH 17:19 ಯೆಹೋವ ದೇವರೇ, ನಿಮ್ಮ ಸೇವಕನ ನಿಮಿತ್ತವಾಗಿಯೂ, ನಿಮ್ಮ ಚಿತ್ತಾನುಸಾರವಾಗಿಯೂ ಈ ಮಹಾಕಾರ್ಯಗಳನ್ನೆಲ್ಲಾ ನಡೆಸಿ, ಎಲ್ಲ ವಾಗ್ದಾನಗಳನ್ನು ತಿಳಿಯಪಡಿಸಿರುವಿರಿ.
1CH 17:20 “ಯೆಹೋವ ದೇವರೇ, ನಮ್ಮ ಕಿವಿಗಳಿಂದ ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿಮ್ಮ ಹಾಗೆ ಯಾರೂ ಇಲ್ಲ; ನಿಮ್ಮ ಹೊರತು ದೇವರು ಯಾರೂ ಇಲ್ಲ.
1CH 17:21 ಭೂಲೋಕದಲ್ಲಿ ನಿಮ್ಮ ಜನರಾದ ಇಸ್ರಾಯೇಲರಿಗೆ ಸಮಾನವಾದ ಜನಾಂಗ ಯಾವುದು? ದೇವರಾದ ನೀವೇ ಹೋಗಿ ಅವರನ್ನು ಸ್ವಜನರಾಗಿ ವಿಮೋಚಿಸಿ ನಿಮ್ಮ ಹೆಸರನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟಿನಿಂದ ವಿಮೋಚಿಸಿ ತಂದ ನಿಮ್ಮ ಪ್ರಜೆಗಳ ಎದುರಿನಿಂದ ಜನಾಂಗಗಳನ್ನು ಓಡಿಸುವ ಮೂಲಕ ವಿಸ್ಮಯಕರವಾದ ಮಹಾ ಅದ್ಭುತಗಳನ್ನು ಮಾಡಿದ್ದೀರಲ್ಲವೇ?
1CH 17:22 ನೀವು ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಮಾಡಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.
1CH 17:23 “ಈಗ ಯೆಹೋವ ದೇವರೇ, ನೀವು ನಿಮ್ಮ ಸೇವಕನನ್ನು ಕುರಿತೂ, ಅವನ ಕುಟುಂಬವನ್ನು ಕುರಿತೂ ಮಾಡಿದ ವಾಗ್ದಾನವನ್ನು ನೆರವೇರಿಸಿ ಅದನ್ನು ಶಾಶ್ವತವಾಗಿ ಸ್ಥಿರಪಡಿಸಿರಿ.
1CH 17:24 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲ್ ದೇವರಾಗಿದ್ದಾರೆಂದು ನಿಮ್ಮ ನಾಮವು ಶಾಶ್ವತವಾಗಿ ಘನಪಡಲಿ,’ ಎಂದು ಜನರು ಹೇಳಲಿ. ನಿಮ್ಮ ಸೇವಕನಾದ ದಾವೀದನ ಮನೆಯು ನಿಮ್ಮ ಮುಂದೆ ಸ್ಥಿರವಾಗಿರಲಿ.
1CH 17:25 “ಏಕೆಂದರೆ ನನ್ನ ದೇವರೇ, ನೀವು ನಿಮ್ಮ ಸೇವಕನಿಗೆ ಮನೆಯನ್ನು ಕಟ್ಟುವೆನೆಂದು ಪ್ರಕಟ ಮಾಡಿದ್ದರಿಂದ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ನಿಮ್ಮ ಸೇವಕನ ಹೃದಯದಲ್ಲಿ ಧೈರ್ಯ ಉಂಟಾಯಿತು.
1CH 17:26 ಯೆಹೋವ ದೇವರೇ, ನಿಮ್ಮ ಸೇವಕನಿಗೆ ಈ ಒಳ್ಳೆಯ ಸಂಗತಿಗಳನ್ನು ವಾಗ್ದಾನಮಾಡಿದ ನೀವು ದೇವರಾಗಿದ್ದೀರಿ.
1CH 17:27 ಈಗ ನಿಮ್ಮ ಸೇವಕನ ಮನೆಯು ನಿಮ್ಮ ಮುಂದೆ ಶಾಶ್ವತವಾಗಿ ಇರುವ ಹಾಗೆ, ಅದನ್ನು ಆಶೀರ್ವದಿಸಲು ಸಂತೋಷಪಡಿರಿ; ಯೆಹೋವ ದೇವರೇ, ನೀವು ಆಶೀರ್ವದಿಸಿದ್ದೀರಿ, ಅದು ನಿತ್ಯ ಆಶೀರ್ವಾದ ಹೊಂದಿರುವುದು.”
1CH 18:1 ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಅದರ ಸುತ್ತಲಿನ ಗ್ರಾಮಗಳನ್ನೂ ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
1CH 18:2 ಹಾಗೆಯೇ ಅವನು ಮೋವಾಬ್ಯರನ್ನು ಸಹ ಸೋಲಿಸಿದನು, ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.
1CH 18:3 ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಹಮಾತಿನ ಬಳಿಯಲ್ಲಿ ಚೋಬದ ಅರಸನಾದ ಹದದೆಜೆರನನ್ನು ಸೋಲಿಸಿದನು.
1CH 18:4 ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.
1CH 18:5 ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.
1CH 18:6 ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
1CH 18:7 ಆಗ ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.
1CH 18:8 ಇದಲ್ಲದೆ ಹದದೆಜೆರನ ಪಟ್ಟಣಗಳಾದ ಟಿಭತಿನಿಂದಲೂ, ಕೂನ್‌ದಿಂದಲೂ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು. ಅದರಿಂದ ಸೊಲೊಮೋನನು ಕಂಚಿನ ಕೊಳವನ್ನೂ, ಸ್ತಂಭಗಳನ್ನೂ, ವಿವಿಧ ಪಾತ್ರೆಗಳನ್ನೂ ಮಾಡಿಸಿದನು.
1CH 18:9 ದಾವೀದನು ಚೋಬದ ಅರಸನಾದ ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,
1CH 18:10 ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.
1CH 18:11 ಇವುಗಳನ್ನು ಅರಸನಾದ ದಾವೀದನು ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿಬಂಗಾರವನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.
1CH 18:12 ಇದಲ್ಲದೆ ಚೆರೂಯಳ ಮಗ ಅಬೀಷೈಯನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಎದೋಮ್ಯರ ಸೈನಿಕರನ್ನು ಕೊಂದನು.
1CH 18:13 ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
1CH 18:14 ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.
1CH 18:15 ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
1CH 18:16 ಅಹೀಟೂಬನ ಮಗ ಚಾದೋಕನೂ, ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಕಾರ್ಯದರ್ಶಿಯಾಗಿದ್ದನು.
1CH 18:17 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ, ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಅರಸನ ಬಳಿಯಲ್ಲಿ ಪ್ರಧಾನರಾಗಿದ್ದರು.
1CH 19:1 ಇದರ ತರುವಾಯ, ಅಮ್ಮೋನಿಯರ ಅರಸನಾದ ನಾಹಾಷನು ಮರಣಹೊಂದಿದನು; ಅವನಿಗೆ ಬದಲಾಗಿ ಅವನ ಮಗನು ಅರಸನಾದನು.
1CH 19:2 ಆಗ ದಾವೀದನು, “ಹಾನೂನನ ತಂದೆಯಾದ ನಾಹಾಷನು ನನಗೆ ದಯೆ ತೋರಿಸಿದ್ದರಿಂದ, ನಾನೂ ಅವನ ಮಗ ಹಾನೂನನಿಗೆ ದಯೆ ತೋರಿಸುವೆನು,” ಎಂದನು. ದಾವೀದನು ಅವನ ತಂದೆಯನ್ನು ಕುರಿತು ಹಾನೂನನಿಗೆ ಸಂತಾಪ ಸೂಚಿಸಲು ತನ್ನ ಸೇವಕರನ್ನು ಕಳುಹಿಸಿದನು. ಹೀಗೆಯೇ ದಾವೀದನ ದೂತರು ಹಾನೂನನಿಗೆ ಸಂತಾಪ ಸೂಚಿಸಲು, ಅಮ್ಮೋನಿಯರ ದೇಶಕ್ಕೆ ಬಂದರು.
1CH 19:3 ಆಗ ಅಮ್ಮೋನಿಯರ ಪ್ರಧಾನರು ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತಾಪ ಸೂಚಿಸುವವರನ್ನು ಕಳುಹಿಸಿದ್ದರಿಂದ, ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ಯೋಚಿಸುತ್ತೀಯೋ? ಅವನ ದೂತರು ಈ ದೇಶವನ್ನು ಸಂಚರಿಸಿ ನೋಡುವುದಕ್ಕೂ ಶೋಧಿಸುವುದಕ್ಕೂ ಅದನ್ನು ಕೆಡವಿ ಹಾಕುವುದಕ್ಕೂ ನಿನ್ನ ಬಳಿಗೆ ಬರಲಿಲ್ಲವೋ?” ಎಂದರು.
1CH 19:4 ಆದ್ದರಿಂದ ಹಾನೂನನು ದಾವೀದನ ದೂತರನ್ನು ಹಿಡಿದು ಅವರ ಗಡ್ಡ, ತಲೆ ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.
1CH 19:5 ಆಗ ಕೆಲವರು ಹೋಗಿ, ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದಾಗ, ಬಹಳ ಅಪಮಾನ ಹೊಂದಿದ ಅವರಿಗೆ ದಾವೀದನು ತನ್ನ ಆಳುಗಳನ್ನು ಅವರಿಗೆದುರಾಗಿ ಕಳುಹಿಸಿ, “ನಿಮ್ಮ ಗಡ್ಡಗಳು ಬೆಳೆಯುವವರೆಗೂ ಯೆರಿಕೋವಿನಲ್ಲಿ ಇರಿ. ಆಮೇಲೆ ತಿರುಗಿ ಬನ್ನಿರಿ,” ಎಂದು ಹೇಳಿಸಿದನು.
1CH 19:6 ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನಿಗೆ ಮತ್ತು ಅಮ್ಮೋನಿಯರಿಗೆ ತಿಳಿಯಿತು. ಆದ್ದರಿಂದ ಅರಾಮಿನಲ್ಲಿಯೂ, ಅರಾಮ್ ಮಾಕದಲ್ಲಿಯೂ, ಚೋಬದಲ್ಲಿಯೂ ರಥಗಳನ್ನೂ, ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕಳುಹಿಸಿದರು.
1CH 19:7 ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ, ಮಾಕದ ಅರಸನನ್ನೂ, ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಊರಿನ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋನಿಯರು ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.
1CH 19:8 ದಾವೀದನು ಇದನ್ನು ಕೇಳಿದಾಗ, ಅವನು ಯೋವಾಬನನ್ನೂ, ಪರಾಕ್ರಮಶಾಲಿಗಳಾದ ಸಮಸ್ತ ಸೈನಿಕರನ್ನೂ ಕಳುಹಿಸಿದನು.
1CH 19:9 ಆಗ ಅಮ್ಮೋನಿಯರು ಹೊರಟು, ಪಟ್ಟಣದ ದ್ವಾರದ ಹತ್ತಿರ ವ್ಯೂಹ ಕಟ್ಟಿದರು. ಆದರೆ ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಬೈಲಿನಲ್ಲಿ ಇಳಿದುಕೊಂಡಿದ್ದರು.
1CH 19:10 ಯೋವಾಬನು, ಯುದ್ಧವು ತನ್ನ ವಿರೋಧವಾಗಿ ಹಿಂದೆಯೂ, ಮುಂದೆಯೂ ಇರುವುದನ್ನು ಕಂಡಾಗ, ಅವನು ಇಸ್ರಾಯೇಲಿನ ಎಲ್ಲಾ ಶ್ರೇಷ್ಠ ಸೈನಿಕರನ್ನು ಆಯ್ದುಕೊಂಡು, ಅರಾಮ್ಯರಿಗೆ ಎದುರಾಗಿ ನಿಲ್ಲಿಸಿದನು.
1CH 19:11 ಆದರೆ ಉಳಿದ ಜನರನ್ನು ಅಮ್ಮೋನಿಯರಿಗೆದುರಾಗಿ ವ್ಯೂಹ ಕಟ್ಟುವ ಹಾಗೆ, ಅವರನ್ನು ತನ್ನ ತಮ್ಮನಾದ ಅಬೀಷೈಯನ ಕೈಯಲ್ಲಿ ಒಪ್ಪಿಸಿಕೊಟ್ಟು,
1CH 19:12 ಅವನಿಗೆ ಯೋವಾಬನು, “ಅರಾಮ್ಯರು ನನಗಿಂತ ಬಲವುಳ್ಳವರಾದರೆ, ನೀನು ನನಗೆ ಸಹಾಯಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳವರಾದರೆ, ನಾನು ಬಂದು ನಿನಗೆ ಸಹಾಯ ಮಾಡುವೆನು.
1CH 19:13 ದೃಢವಾಗಿರು; ನಾವು ನಮ್ಮ ಜನರಿಗೋಸ್ಕರವೂ, ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಧೈರ್ಯವಾಗಿ ಹೋರಾಡೋಣ. ಯೆಹೋವ ದೇವರು ತಮ್ಮ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ,” ಎಂದನು.
1CH 19:14 ಆಗ ಯೋವಾಬನೂ, ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ದಾಳಿಮಾಡಲು ಹತ್ತಿರವಾದಾಗ, ಅರಾಮ್ಯರು ಓಡಿಹೋದರು.
1CH 19:15 ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನಿಯರು ಕಂಡಾಗ, ಅವರೂ ಸಹ ಯೋವಾಬನ ತಮ್ಮನಾದ ಅಬೀಷೈಯನ ಎದುರಿನಿಂದ ಓಡಿಹೋಗಿ, ಪಟ್ಟಣದೊಳಗೆ ಅಡಗಿಕೊಂಡರು. ಆಗ ಯೋವಾಬನು ಯೆರೂಸಲೇಮಿಗೆ ತಿರುಗಿಹೋದನು.
1CH 19:16 ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಸೋತುಹೋದೆವೆಂದು ತಿಳಿದಾಗ, ಅವರು ದೂತರನ್ನು ಕಳುಹಿಸಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಇತರ ಅರಾಮ್ಯರನ್ನು ಕರೆಯಿಸಿಕೊಂಡರು. ಹದದೆಜೆರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.
1CH 19:17 ಅದನ್ನು ದಾವೀದನಿಗೆ ತಿಳಿಸಿದಾಗ, ಅವನು ಸಮಸ್ತ ಇಸ್ರಾಯೇಲರನ್ನು ಕೂಡಿಸಿಕೊಂಡು, ಯೊರ್ದನನ್ನು ದಾಟಿ, ಅವರಿಗೆದುರಾಗಿ ವ್ಯೂಹ ಕಟ್ಟಿದನು. ದಾವೀದನು ಅರಾಮ್ಯರಿಗೆದುರಾಗಿ ಸೈನ್ಯವನ್ನು ವ್ಯೂಹ ಕಟ್ಟಿದ ಮೇಲೆ, ಅವರು ಅವನ ವಿರುದ್ಧ ಯುದ್ಧಮಾಡಿದರು.
1CH 19:18 ಆದರೆ ಅರಾಮ್ಯರು ಇಸ್ರಾಯೇಲರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ಸಾವಿರ ರಥಗಳನ್ನೂ ಹಾಳು ಮಾಡಿ, ನಲವತ್ತು ಸಾವಿರ ಕಾಲಾಳುಗಳನ್ನೂ, ಅವರ ಸೇನಾಧಿಪತಿಯಾದ ಶೋಫಕನನ್ನೂ ಕೊಂದುಹಾಕಿದನು.
1CH 19:19 ಹದದೆಜೆರನ ಅಧೀನ ರಾಜರು ತಾವು ಇಸ್ರಾಯೇಲರ ಮುಂದೆ ಸೋತುಹೋದದ್ದನ್ನು ಕಂಡಾಗ, ಅವರು ದಾವೀದನ ಸಂಗಡ ಸಂಧಾನ ಮಾಡಿಕೊಂಡು, ಅವನಿಗೆ ಅಧೀನರಾದರು. ತರುವಾಯ ಅರಾಮ್ಯರು ಅಮ್ಮೋನಿಯರಿಗೆ ಮತ್ತೆ ಸಹಾಯ ಮಾಡುವುದಕ್ಕೆ ಮನಸ್ಸಿಲ್ಲದವರಾದರು.
1CH 20:1 ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ, ಯೋವಾಬನು ಬಲವಾದ ಸೈನ್ಯವನ್ನು ಕರೆದುಕೊಂಡು ಹೋಗಿ, ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ, ರಬ್ಬ ನಗರಕ್ಕೆ ಮುತ್ತಿಗೆಹಾಕಿದನು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣದ ಮೇಲೆ ದಾಳಿಮಾಡಿ, ಅದನ್ನು ನಾಶಮಾಡಿದನು.
1CH 20:2 ಇದಲ್ಲದೆ ದಾವೀದನು ರಬ್ಬಾ ನಗರಕ್ಕೆ ಬಂದಾಗ, ಮಲ್ಕಾಮ್ ಮೂರ್ತಿಯ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು. ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು.
1CH 20:3 ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
1CH 20:4 ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದದ್ದರಿಂದ ಫಿಲಿಷ್ಟಿಯರು ಸೋತುಹೋದರು.
1CH 20:5 ಅನಂತರ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾದಾಗ, ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
1CH 20:6 ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
1CH 20:7 ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮ್ಮನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
1CH 20:8 ಇವರು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.
1CH 21:1 ಸೈತಾನನು ಇಸ್ರಾಯೇಲಿಗೆ ವಿರೋಧವಾಗಿ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.
1CH 21:2 ಆದ್ದರಿಂದ ದಾವೀದನು ಯೋವಾಬನನ್ನೂ ಜನರ ಪ್ರಧಾನರನ್ನೂ ಕರೆದು ಅವರಿಗೆ, “ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ, ನೀವು ಹೋಗಿ ಬೇರ್ಷೆಬವು ಮೊದಲುಗೊಂಡು, ದಾನ್ ಊರಿನವರೆಗೆ ಇಸ್ರಾಯೇಲರನ್ನು ಲೆಕ್ಕಿಸಿ, ಅವರ ಲೆಕ್ಕವನ್ನು ನನಗೆ ತೆಗೆದುಕೊಂಡು ಬನ್ನಿರಿ,” ಎಂದನು.
1CH 21:3 ಆಗ ಯೋವಾಬನು, “ಯೆಹೋವ ದೇವರು ತಮ್ಮ ಜನರನ್ನು ಈಗ ಇರುವುದಕ್ಕಿಂತ ನೂರರಷ್ಟಾಗಿ ಹೆಚ್ಚಿಸಲಿ. ಆದರೆ ನನ್ನ ಒಡೆಯನಾದ ಅರಸನೇ, ಅವರೆಲ್ಲರೂ ನನ್ನ ಒಡೆಯನ ಸೇವಕರಲ್ಲವೋ, ನನ್ನ ಒಡೆಯನು ಈ ಕಾರ್ಯವನ್ನು ಅಪೇಕ್ಷಿಸುವುದು ಏಕೆ? ಇದು ಇಸ್ರಾಯೇಲಿನಲ್ಲಿ ಅಪರಾಧಕ್ಕೆ ಕಾರಣವಾಗುವುದು,” ಎಂದನು.
1CH 21:4 ಆದರೆ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆಗ ಅವನು ಹೊರಟು, ಇಸ್ರಾಯೇಲಿನ ಸಮಸ್ತ ಪ್ರಾಂತಗಳಿಗೆ ಹೋಗಿ, ಯೆರೂಸಲೇಮಿಗೆ ತಿರುಗಿಬಂದನು.
1CH 21:5 ಯೋವಾಬನು ದಾವೀದನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನೆಂದರೆ: ಸಮಸ್ತ ಇಸ್ರಾಯೇಲರಲ್ಲಿ ಖಡ್ಗ ಹಿಡಿಯತಕ್ಕ ಪರಾಕ್ರಮವುಳ್ಳ ಹನ್ನೊಂದು ಲಕ್ಷಮಂದಿ ಇದ್ದರು. ಯೆಹೂದದ ಜನರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಇದ್ದರು.
1CH 21:6 ಆದರೆ ಲೇವಿಯರನ್ನೂ, ಬೆನ್ಯಾಮೀನರನ್ನೂ ಅವರಲ್ಲಿ ಎಣಿಸಲಿಲ್ಲ. ಏಕೆಂದರೆ ಅರಸನ ಮಾತು ಯೋವಾಬನಿಗೆ ಅಸಹ್ಯಕರವಾಗಿತ್ತು.
1CH 21:7 ಇದಲ್ಲದೆ ಈ ಕಾರ್ಯವು ದೇವರ ಸಮ್ಮುಖದಲ್ಲಿ ಕೆಟ್ಟದ್ದಾದದ್ದರಿಂದ, ದೇವರು ಇಸ್ರಾಯೇಲನ್ನು ಶಿಕ್ಷಿಸಿದರು.
1CH 21:8 ದಾವೀದನು ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ, ಮಹಾಪಾಪ ಮಾಡಿದೆನು. ನೀವು ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ. ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.
1CH 21:9 ಆಗ ಯೆಹೋವ ದೇವರು ದಾವೀದನ ದರ್ಶಿಯಾದ ಗಾದನಿಗೆ,
1CH 21:10 “ನೀನು ದಾವೀದನ ಬಳಿಗೆ ಹೋಗಿ, ಅವನ ಸಂಗಡ ಮಾತಾಡಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನಗೆ ವಿರೋಧವಾಗಿ ಬರಮಾಡಬೇಕೋ ಅದನ್ನು ಆಯ್ದುಕೋ,’ ಎಂದು ಹೇಳು,” ಎಂದರು.
1CH 21:11 ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನೇ ಆಯ್ದುಕೋ,
1CH 21:12 ನಿನ್ನ ದೇಶದಲ್ಲಿ ಮೂರು ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳವರೆಗೆ ನಿನ್ನ ಶತ್ರುಗಳ ಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಯೆಹೋವ ದೇವರ ದೂತನು ಇಸ್ರಾಯೇಲಿನ ಸಮಸ್ತ ಪ್ರಾಂತಗಳಲ್ಲಿ ಯೆಹೋವ ದೇವರ ಖಡ್ಗದಿಂದ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ನೀನು ಆರಿಸಿಕೋ. ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು.
1CH 21:13 ಆಗ ದಾವೀದನು ಗಾದನಿಗೆ, “ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಯೆಹೋವ ದೇವರ ಕೈಯಲ್ಲಿಯೇ ಬೀಳುತ್ತೇನೆ. ಏಕೆಂದರೆ ಅವರ ಕರುಣೆಯು ದೊಡ್ಡದು, ಆದರೆ ಮನುಷ್ಯರ ಕೈಯಲ್ಲಿ ಬೀಳಲಾರೆನು,” ಎಂದನು.
1CH 21:14 ಆದಕಾರಣ ಯೆಹೋವ ದೇವರು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಕಳುಹಿಸಿದರು. ಆಗ ಇಸ್ರಾಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
1CH 21:15 ಇದಲ್ಲದೆ ಯೆರೂಸಲೇಮನ್ನು ನಾಶಮಾಡುವುದಕ್ಕೆ ದೇವರು ದೂತನನ್ನು ಕಳುಹಿಸಿದರು. ಅವನು ನಾಶಮಾಡುವುದನ್ನು ಯೆಹೋವ ದೇವರು ನೋಡಿ, ಆ ದಂಡನೆಗೋಸ್ಕರ ದುಃಖಪಟ್ಟು, ಜನರನ್ನು ನಾಶಮಾಡುವ ದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದರು. ಆಗ ಯೆಹೋವ ದೇವರ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು.
1CH 21:16 ಆಗ ದಾವೀದನು ತನ್ನ ಕಣ್ಣೆತ್ತಿ ಭೂಮಿಗೂ, ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಯೆಹೋವ ದೇವರ ದೂತನನ್ನು ಕಂಡನು. ಅವನ ಕೈಯಲ್ಲಿ ಯೆರೂಸಲೇಮಿನ ಮೇಲೆ ಚಾಚಿದ್ದ ಹಿರಿದ ಖಡ್ಗ ಇತ್ತು. ಆಗ ದಾವೀದನೂ, ಇಸ್ರಾಯೇಲಿನ ಹಿರಿಯರೂ ಗೋಣಿತಟ್ಟುಗಳನ್ನು ಹೊದ್ದುಕೊಂಡು ಬೋರಲಾಗಿ ಬಿದ್ದರು.
1CH 21:17 ದಾವೀದನು ದೇವರಿಗೆ, “ಜನರಲ್ಲಿ ಯುದ್ಧ ವೀರರನ್ನು ಲೆಕ್ಕಮಾಡಲು ಆಜ್ಞಾಪಿಸಿದವನು ನಾನಲ್ಲವೋ? ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಈ ಕೆಟ್ಟದ್ದನ್ನು ಮಾಡಿದೆನು, ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನನ್ನ ಯೆಹೋವ ದೇವರೇ, ನಿಮ್ಮ ಹಸ್ತವು ನಿಮ್ಮ ಜನರನ್ನು ಬಾಧಿಸದೆ, ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.
1CH 21:18 ಆಗ ಯೆಹೋವ ದೇವರ ದೂತನು ಗಾದನಿಗೆ, “ದಾವೀದನು ಹೋಗಿ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟುವ ಹಾಗೆ ದಾವೀದನಿಗೆ ಹೇಳು,” ಎಂದನು.
1CH 21:19 ಗಾದನು ಯೆಹೋವ ದೇವರ ಹೆಸರಿನಲ್ಲಿ ಹೇಳಿದ ಮಾತಿನ ಪ್ರಕಾರ ದಾವೀದನು ಹೋದನು.
1CH 21:20 ಒರ್ನಾನನು ಗೋಧಿಯನ್ನು ತುಳಿಸುತ್ತಿರುವಾಗ, ಹಿಂದಕ್ಕೆ ತಿರುಗಿ ದೂತನನ್ನು ಕಂಡದ್ದರಿಂದ ಅವನೂ, ಅವನ ಸಂಗಡ ಇದ್ದ ಅವನ ನಾಲ್ಕು ಮಂದಿ ಪುತ್ರರೂ ಅಡಗಿಕೊಂಡಿದ್ದರು.
1CH 21:21 ಆದರೆ ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡನು, ಆಗ ಅವನು ಕಣದಿಂದ ಹೊರಟು, ದಾವೀದನ ಮುಂದೆ ಮುಖ ಕೆಳಗೆಮಾಡಿ ಅಡ್ಡಬಿದ್ದನು.
1CH 21:22 ಆಗ ದಾವೀದನು ಒರ್ನಾನನಿಗೆ, “ಈ ವ್ಯಾಧಿಯು, ಜನರನ್ನು ಬಿಟ್ಟುಹೋಗುವಂತೆ ನಾನು ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ, ಈ ಕಣದ ಸ್ಥಳವನ್ನು ನನಗೆ ಕೊಡು. ಅದನ್ನು ಪೂರ್ಣ ಕ್ರಯಕ್ಕೆ ನನಗೆ ಕೊಡು,” ಎಂದನು.
1CH 21:23 ಒರ್ನಾನನು ದಾವೀದನಿಗೆ, “ನಿನಗಾಗಿ ತೆಗೆದುಕೋ, ಅರಸನಾದ ನನ್ನ ಒಡೆಯನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ, ಧಾನ್ಯ ಸಮರ್ಪಣೆಗೋಸ್ಕರ ಗೋಧಿ ಕೊಡುವುದಲ್ಲದೆ, ಸಮಸ್ತವನ್ನೂ ಕೊಡುವೆನು,” ಎಂದನು.
1CH 21:24 ಅರಸ ದಾವೀದನು ಒರ್ನಾನನಿಗೆ, “ಹಾಗಲ್ಲ, ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು, ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಲು ನನಗೆ ಇಷ್ಟವಿಲ್ಲ,” ಎಂದು ಹೇಳಿದನು.
1CH 21:25 ಅಂತೆಯೇ ಆ ಭೂಮಿಗಾಗಿ ಒರ್ನಾನನಿಗೆ ಏಳು ಕಿಲೋಗ್ರಾಂ ಬಂಗಾರವನ್ನು ಕೊಟ್ಟು,
1CH 21:26 ದಾವೀದನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. ಆಗ ಅವರು ಆಕಾಶದಿಂದ ದಹನಬಲಿಪೀಠದ ಮೇಲೆ ಅಗ್ನಿಯಿಂದ ಅವನಿಗೆ ಉತ್ತರಕೊಟ್ಟರು.
1CH 21:27 ಯೆಹೋವ ದೇವರು ದೂತನಿಗೆ ಹೇಳಿದ್ದರಿಂದ, ಅವನು ತನ್ನ ಖಡ್ಗವನ್ನು ಒರೆಗೆ ತಿರುಗಿ ಸೇರಿಸಿದನು.
1CH 21:28 ಯೆಹೋವ ದೇವರು ಯೆಬೂಸಿಯನಾದ ಒರ್ನಾನನ ಕಣದಲ್ಲಿ ತನಗೆ ಉತ್ತರ ಕೊಟ್ಟರೆಂದು ದಾವೀದನು ಕಂಡಾಗ, ಅವನು ಅಲ್ಲಿ ಬಲಿಗಳನ್ನು ಅರ್ಪಿಸಿದನು.
1CH 21:29 ಮರುಭೂಮಿಯಲ್ಲಿ ಮೋಶೆಯು ಮಾಡಿದ ಯೆಹೋವ ದೇವರ ಗುಡಾರವೂ, ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.
1CH 21:30 ದಾವೀದನು ದೇವರ ಹತ್ತಿರ ವಿಚಾರಿಸಲು, ಅದರ ಬಳಿಗೆ ಹೋಗಲಾರದೆ ಇದ್ದನು. ಏಕೆಂದರೆ ಅವನು ಯೆಹೋವ ದೇವರ ದೂತನ ಖಡ್ಗದ ನಿಮಿತ್ತ ಹೆದರಿದ್ದನು.
1CH 22:1 ಆಗ ದಾವೀದನು, “ಇದೇ ದೇವರಾದ ಯೆಹೋವ ದೇವರ ಆಲಯ, ಮತ್ತು ಇದೇ ಇಸ್ರಾಯೇಲರ ದಹನಬಲಿಪೀಠ,” ಎಂದನು.
1CH 22:2 ದಾವೀದನು ಇಸ್ರಾಯೇಲ್ ದೇಶದಲ್ಲಿರುವ ಪರದೇಶಸ್ಥರನ್ನು ಕೂಡಿಸಲು ಹೇಳಿ, ದೇವರ ಆಲಯವನ್ನು ಕಟ್ಟಿಸುವುದಕ್ಕೆ ಕೆತ್ತಿದ ಕಲ್ಲುಗಳನ್ನು ಕಡಿಯುವ ಹಾಗೆ ಕಲ್ಲುಕುಟಿಗರನ್ನು ನೇಮಿಸಿದನು.
1CH 22:3 ದಾವೀದನು ಬಾಗಿಲುಗಳ ಕದಗಳನ್ನು ಜೋಡಿಸುವುದಕ್ಕೆ ಬೇಕಾದ ಮೊಳೆಗಳಿಗೋಸ್ಕರ ಬಹಳ ಕಬ್ಬಿಣವನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ ಸಿದ್ಧಮಾಡಿಸಿದನು.
1CH 22:4 ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿಸಿದನು. ಏಕೆಂದರೆ ಸೀದೋನ್ಯರೂ, ಟೈರಿನವರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು.
1CH 22:5 ದಾವೀದನು, “ನನ್ನ ಮಗ ಸೊಲೊಮೋನನು ಎಳೆಯ ಪ್ರಾಯದವನಾಗಿದ್ದಾನೆ. ಯೆಹೋವ ದೇವರಿಗೆ ಕಟ್ಟಬೇಕಾದ ಆಲಯವು ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ, ಸೌಂದರ್ಯದಲ್ಲಿಯೂ ಅಧಿಕ ಘನವುಳ್ಳದ್ದಾಗಿರಬೇಕು. ನಾನು ಅದಕ್ಕೋಸ್ಕರ ಈಗ ಸಿದ್ಧಮಾಡುವೆನು,” ಎಂದು ಹೇಳಿದನು. ಆದ್ದರಿಂದ ದಾವೀದನು ಸಾಯುವುದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.
1CH 22:6 ತನ್ನ ಮಗ ಸೊಲೊಮೋನನನ್ನು ಕಳುಹಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಆಲಯವನ್ನು ಕಟ್ಟಿಸಲು ಅವನಿಗೆ ಆಜ್ಞಾಪಿಸಿದನು.
1CH 22:7 ದಾವೀದನು ಸೊಲೊಮೋನನಿಗೆ, “ನನ್ನ ಮಗನೇ, ನಾನು ನನ್ನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಿಸಬೇಕೆಂಬುದು ನನ್ನ ಹೃದಯದಲ್ಲಿ ಇತ್ತು.
1CH 22:8 ಆದರೆ ಯೆಹೋವ ದೇವರಿಂದ ನನಗೆ ಉಂಟಾದ ವಾಕ್ಯವೇನೆಂದರೆ: ‘ನೀನು ಬಹು ರಕ್ತವನ್ನು ಚೆಲ್ಲಿದ್ದೀಯೆ; ಮಹಾ ಯುದ್ಧಗಳನ್ನು ಮಾಡಿದ್ದೀಯೆ; ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಿಸಬೇಡ. ಏಕೆಂದರೆ ನೀನು ನನ್ನ ಸಮ್ಮುಖದಲ್ಲಿ ಭೂಮಿಯ ಮೇಲೆ ಬಹಳ ರಕ್ತವನ್ನು ಚೆಲ್ಲಿದಿ.
1CH 22:9 ಶಾಂತಿ ಸಮಾಧಾನದ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು. ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ವಿಶ್ರಾಂತಿಯನ್ನು ಕೊಡುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಶಾಂತಿ ಸಮಾಧಾನವನ್ನೂ ಕೊಡುವೆನು.
1CH 22:10 ಅವನು ನನ್ನ ನಾಮಕ್ಕೆ ಆಲಯವನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು. ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗಯುಗಾಂತರಕ್ಕೂ ಸ್ಥಿರಪಡಿಸುವೆನು,’ ಎಂದು ಹೇಳಿದ್ದಾರೆ.
1CH 22:11 “ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಕುರಿತು ಹೇಳಿದ ಪ್ರಕಾರ, ನೀನು ಕೃತಾರ್ಥನಾಗಿ, ನೀನು ನಿನ್ನ ದೇವರಾದ ಯೆಹೋವ ದೇವರ ಆಲಯವನ್ನು ಕಟ್ಟಿಸುವಂತೆ ಅವರು ನಿನ್ನ ಸಂಗಡ ಇರಲಿ.
1CH 22:12 ನೀನು ನಿನ್ನ ದೇವರಾದ ಯೆಹೋವ ದೇವರ ನಿಯಮವನ್ನು ಕೈಗೊಳ್ಳುವಂತೆ ದೇವರು ನಿನಗೆ ಬುದ್ಧಿಯನ್ನೂ, ಗ್ರಹಿಕೆಯನ್ನೂ ಕೊಟ್ಟು ಇಸ್ರಾಯೇಲನ್ನು ಕುರಿತು ನಿನಗೆ ಆಜ್ಞಾಪಿಸಲಿ.
1CH 22:13 ಯೆಹೋವ ದೇವರು ಇಸ್ರಾಯೇಲನ್ನು ಕುರಿತು ಮೋಶೆಗೆ ಆಜ್ಞಾಪಿಸಿದ ನ್ಯಾಯವಿಧಿಗಳನ್ನು ಕೈಗೊಳ್ಳಲು ನೀನು ಜಾಗ್ರತೆಯಾಗಿರು. ಆಗ ಸಫಲನಾಗುವಿ. ಬಲವಾಗಿರು, ದೃಢವಾಗಿರು. ಭಯಪಡಬೇಡ, ಹೆದರಬೇಡ.
1CH 22:14 “ಇಗೋ, ಕಷ್ಟಪಟ್ಟು ನಾನು ಯೆಹೋವ ದೇವರ ಆಲಯಕ್ಕೋಸ್ಕರ ಮೂರು ಸಾವಿರದ ನಾನೂರ ಎಪ್ಪತ್ತು ಮೆಟ್ರಿಕ್ ಟನ್ ಬಂಗಾರವನ್ನೂ, ಮೂವತ್ತ ನಾಲ್ಕು ಸಾವಿರದ ಐನೂರು ಮೆಟ್ರಿಕ್ ಟನ್ ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ, ಕಬ್ಬಿಣವನ್ನೂ ಮರಗಳನ್ನೂ, ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಸೇರಿಸಬಹುದು.
1CH 22:15 ಇದಲ್ಲದೆ ನಿನ್ನ ಬಳಿಯಲ್ಲಿ ಕೆಲಸದವರೂ, ಕಲ್ಲು ಕೆಲಸದವರೂ, ಕಲ್ಲುಕುಟಿಗರೂ, ಬಡಗಿಯವರೂ, ಸಮಸ್ತ ವಿವಿಧ ಕೆಲಸದ ಪ್ರವೀಣರೂ ಅನೇಕ ಮಂದಿ ಇದ್ದಾರೆ.
1CH 22:16 ಚಿನ್ನ, ಬೆಳ್ಳಿ, ಕಂಚು, ಕಬ್ಬಿಣ, ಮುಂತಾದವುಗಳಲ್ಲಿ ನಿಪುಣರು ಲೆಕ್ಕವಿಲ್ಲದಷ್ಟು ಇದ್ದಾರೆ. ಎದ್ದು ಕೆಲಸ ಮಾಡು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.
1CH 22:17 ಇದಲ್ಲದೆ, ದಾವೀದನು ತನ್ನ ಮಗ ಸೊಲೊಮೋನನಿಗೆ ಸಹಾಯಮಾಡಲು ಇಸ್ರಾಯೇಲಿನ ಪ್ರಧಾನರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ,
1CH 22:18 “ನಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ, ಅಲ್ಲವೇ? ಎಲ್ಲಾ ಕಡೆಗಳಲ್ಲಿ ನಿಮಗೆ ವಿಶ್ರಾಂತಿ ಕೊಟ್ಟಿದ್ದಾರೆ, ಅಲ್ಲವೇ? ನಿಶ್ಚಯವಾಗಿ ಅವರು ದೇಶ ನಿವಾಸಿಗಳನ್ನು ನನ್ನ ಕೈಯಲ್ಲಿ ಒಪ್ಪಿಸಿದ್ದರಿಂದ, ದೇಶವು ಯೆಹೋವ ದೇವರ ಮುಂದೆಯೂ, ಅವರ ಜನರ ಮುಂದೆಯೂ ಸ್ವಾಧೀನವಾಯಿತು.
1CH 22:19 ನಿಮ್ಮ ದೇವರಾದ ಯೆಹೋವ ದೇವರನ್ನು ಹುಡುಕಲು ನಿಮ್ಮ ಹೃದಯವನ್ನೂ, ನಿಮ್ಮ ಪ್ರಾಣವನ್ನೂ ಒಪ್ಪಿಸಿ, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ದೇವರ ಪರಿಶುದ್ಧ ಪಾತ್ರೆಗಳನ್ನು ಯೆಹೋವ ದೇವರ ನಾಮಕ್ಕಾಗಿ ಕಟ್ಟಲಾಗುವ ಆಲಯದೊಳಗೆ ತರುವ ಹಾಗೆ, ಎದ್ದು ಯೆಹೋವ ದೇವರಾದ ದೇವರಿಗೆ ಪರಿಶುದ್ಧ ಸ್ಥಳವನ್ನು ಕಟ್ಟಿಸಿರಿ,” ಎಂದನು.
1CH 23:1 ದಾವೀದನು ಮುದುಕನಾದ ಮೇಲೆ ತನ್ನ ಮಗ ಸೊಲೊಮೋನನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಿದನು.
1CH 23:2 ಇದಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರಮಾಡಿದನು.
1CH 23:3 ಲೇವಿಯರು ಮೂವತ್ತು ವರ್ಷ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು. ಅವರ ಪುರುಷರ ಲೆಕ್ಕವು ಮೂವತ್ತೆಂಟು ಸಾವಿರವಾಗಿತ್ತು.
1CH 23:4 ದಾವೀದನು ಹೇಳಿದ್ದೇನೆಂದರೆ, “ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಯೆಹೋವ ದೇವರ ಮನೆಯ ಕೆಲಸವನ್ನು ನಡಿಸುವವರಾಗಿದ್ದರು. ಮತ್ತು ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿಪತಿಗಳೂ ಆಗಿದ್ದರು.
1CH 23:5 ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು. ನಾಲ್ಕು ಸಾವಿರ ಮಂದಿ ಸ್ತುತಿಸುವುದಕ್ಕೆ ತಾನು ಸಿದ್ಧಮಾಡಿದ ವಾದ್ಯಗಳಿಂದ ಯೆಹೋವ ದೇವರನ್ನು ಸ್ತುತಿಸಿದರು.”
1CH 23:6 ಇದಲ್ಲದೆ ದಾವೀದನು ಗೇರ್ಷೋನ್ಯರು, ಕೊಹಾತ್ಯರು, ಮೆರಾರೀಯರು ಎಂಬ ಲೇವಿಯರನ್ನು ಮೂರು ವರ್ಗಗಳಾಗಿ ವಿಭಾಗಿಸಿದನು.
1CH 23:7 ಗೇರ್ಷೋನ್ಯರಲ್ಲಿ, ಲದ್ದಾನ್ ಮತ್ತು ಶಿಮ್ಮೀ.
1CH 23:8 ಲದ್ದಾನನ ಪುತ್ರರು: ಮೊದಲನೆಯವನು ಯೆಹೀಯೇಲ್, ಜೇತಾಮ್, ಯೋಯೇಲ್ ಎಂಬ ಮೂರು ಮಕ್ಕಳಿದ್ದರು.
1CH 23:9 ಶಿಮ್ಮೀಯ ಪುತ್ರರು: ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿಯು. ಇವರು ಲದ್ದಾನನ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು.
1CH 23:10 ಶಿಮ್ಮೀಯ ಪುತ್ರರು: ಯಹತ್, ಜೀನ, ಯೆಯೂಷ್, ಬೆರೀಯ ಶಿಮ್ಮನ ಈ ನಾಲ್ಕು ಮಂದಿ ಪುತ್ರರಲ್ಲಿ
1CH 23:11 ಯಹತನು ಮೊದಲನೆಯವನು, ಜೀಜನು ಎರಡನೆಯವನಾಗಿದ್ದನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳು ಇಲ್ಲದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಕೆಯಾಗಿದ್ದರು.
1CH 23:12 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
1CH 23:13 ಅಮ್ರಾಮನ ಪುತ್ರರು: ಆರೋನ್ ಮತ್ತು ಮೋಶೆ; ಆರೋನನನ್ನು ಮತ್ತು ಅವನ ಪುತ್ರರನ್ನು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಶಾಶ್ವತವಾಗಿ ಪ್ರತ್ಯೇಕಿಸಲಾಯಿತು. ಇವರು ಯೆಹೋವ ದೇವರ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಅವರ ಸೇವೆ ಮಾಡುವವರೂ, ಅವರ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.
1CH 23:14 ದೇವರ ಮನುಷ್ಯನಾದ ಮೋಶೆಯಾದರೋ, ಅವನ ಪುತ್ರರು ಲೇವಿಯ ಗೋತ್ರದಲ್ಲಿ ಲೆಕ್ಕಿತರಾಗಿದ್ದರು.
1CH 23:15 ಮೋಶೆಯ ಪುತ್ರರು: ಗೇರ್ಷೋಮ್ ಮತ್ತು ಎಲೀಯೆಜೆರ್.
1CH 23:16 ಗೇರ್ಷೋಮನ ಪುತ್ರರಲ್ಲಿ ಶೆಬೂಯೇಲನು ಮೊದಲನೆಯವನಾಗಿದ್ದನು.
1CH 23:17 ಎಲೀಯೆಜೆರನ ಪುತ್ರರು: ಮೊದಲನೆಯವನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಪುತ್ರರಿಲ್ಲ; ಆದರೆ ರೆಹಬ್ಯನ ಪುತ್ರರು ಬಹಳ ಮಂದಿ ಇದ್ದರು.
1CH 23:18 ಇಚ್ಹಾರನ ಪುತ್ರರಲ್ಲಿ ಶೆಲೋಮೋತನು ಮೊದಲನೆಯವನಾಗಿದ್ದನು.
1CH 23:19 ಹೆಬ್ರೋನನ ಪುತ್ರರಲ್ಲಿ ಯೆರೀಯ ಮೊದಲನೆಯವನೂ ಅಮರ್ಯ ಎರಡನೆಯವನು, ಯಹಜಿಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
1CH 23:20 ಉಜ್ಜೀಯೇಲನ ಪುತ್ರರಲ್ಲಿ ಮೀಕನು ಮೊದಲನೆಯವನು, ಇಷೀಯನು ಎರಡನೆಯವನು.
1CH 23:21 ಮೆರಾರೀಯ ಪುತ್ರರು: ಮಹ್ಲೀ ಮತ್ತು ಮೂಷೀ. ಮಹ್ಲೀಯ ಪುತ್ರರು: ಎಲಿಯಾಜರ್ ಮತ್ತು ಕೀಷ್.
1CH 23:22 ಎಲಿಯಾಜರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಪುತ್ರಿಯರು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಪುತ್ರರೊಂದಿಗೆ ಮದುವೆಯಾದರು.
1CH 23:23 ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೇಮೋತ್ ಎಂಬ ಈ ಮೂರು ಮಂದಿ.
1CH 23:24 ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಪುತ್ರರಾಗಿದ್ದರು. ತಮ್ಮ ಹೆಸರುಗಳಿಂದ, ಎಣಿಕೆಯಾಗಿದ್ದ ಇವರು ತಮ್ಮ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು. ಇವರು ಇಪ್ಪತ್ತು ವರ್ಷ ಪ್ರಾಯದವರು ಮೊದಲುಗೊಂಡು, ಯೆಹೋವ ದೇವರ ಮನೆಯ ಸೇವೆಗೋಸ್ಕರ ಕೆಲಸಮಾಡಿದರು.
1CH 23:25 ದಾವೀದನು, “ಇಸ್ರಾಯೇಲಿನ ದೇವರಾದ ಯೆಹೋವ ದೇವರು, ಅವರು ಯುಗಯುಗಾಂತರಕ್ಕೂ ಯೆರೂಸಲೇಮಿನಲ್ಲಿ ವಾಸಿಸುವ ಹಾಗೆ ತಮ್ಮ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದು ಹೇಳಿ,
1CH 23:26 ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
1CH 23:27 ಏಕೆಂದರೆ ದಾವೀದನ ಕಡೇ ಮಾತುಗಳ ಪ್ರಕಾರ, ಲೇವಿಯರು ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು.
1CH 23:28 ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,
1CH 23:29 ಯೆಹೋವ ದೇವರ ಮಂದಿರದ ಸೇವೆಯ ಕಾರ್ಯದಲ್ಲಿರುವ ಸಮ್ಮುಖದ ರೊಟ್ಟಿಗೋಸ್ಕರವೂ, ಅರ್ಪಣೆ ಬಲಿಯ ನಯವಾದ ಹಿಟ್ಟಿಗೋಸ್ಕರವೂ, ಹುಳಿಯಿಲ್ಲದ ರೊಟ್ಟಿಗಳಿಗೋಸ್ಕರವೂ, ಬಾಂಡ್ಲಿಯಲ್ಲಿ ಮಾಡಿದ್ದಕ್ಕೋಸ್ಕರವೂ, ಕರಿದಿದ್ದಕ್ಕೋಸ್ಕರವೂ, ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳ ಬಳಿಯಲ್ಲಿ ಅವರಿಗೆ ನೇಮಕವಾಗಿತ್ತು.
1CH 23:30 ಇದಲ್ಲದೆ ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ ನಿಂತು, ಯೆಹೋವ ದೇವರನ್ನು ಕೊಂಡಾಡುವುದಕ್ಕೂ, ಯೆಹೋವ ದೇವರನ್ನು ಸ್ತುತಿಸುವುದಕ್ಕೂ,
1CH 23:31 ಯೆಹೋವ ದೇವರ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವುದು.
1CH 23:32 ಯೆಹೋವ ದೇವರ ಮನೆಯ ಸೇವೆಯಲ್ಲಿ ದೇವದರ್ಶನ ಗುಡಾರದ ಕಾವಲನ್ನೂ, ಪರಿಶುದ್ಧ ಸ್ಥಾನದ ಕಾವಲನ್ನೂ, ತಮ್ಮ ಸಹೋದರರಾದ ಆರೋನನ ಪುತ್ರರ ಆಜ್ಞೆಯನ್ನೂ ಕೈಗೊಳ್ಳುವುದು ಅವರಿಗೆ ನೇಮಕವಾಗಿತ್ತು.
1CH 24:1 ಆರೋನನ ಪುತ್ರರಲ್ಲಿ ವರ್ಗಗಳಾಗಿ ವಿಭಾಗ ಆದವರು ಇವರೇ. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್.
1CH 24:2 ಆದರೆ ನಾದಾಬ್ ಮತ್ತು ಅಬೀಹೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದುದರಿಂದ ಎಲಿಯಾಜರನೂ, ಈತಾಮಾರನೂ ಯಾಜಕ ಸೇವೆ ಮಾಡಿದರು.
1CH 24:3 ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.
1CH 24:4 ಈತಾಮಾರನ ಪುತ್ರರಿಗಿಂತ ಎಲಿಯಾಜರನ ಪುತ್ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದುದರಿಂದ, ಅವರು ಸಹ ಹೀಗೆಯೇ ವಿಭಾಗಿಸಿದ್ದರು. ಎಲಿಯಾಜರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟು ಮಂದಿ ಮುಖ್ಯಸ್ಥರು.
1CH 24:5 ಇವರು ಸಹ ಚೀಟುಹಾಕುವ ಮೂಲಕ ನಿಷ್ಪಕ್ಷಪಾತವಾಗಿ ವಿಭಾಗವಾಗಿದ್ದರು. ಏಕೆಂದರೆ ಪರಿಶುದ್ಧ ಸ್ಥಾನದ ಪ್ರಧಾನರೂ, ದೇವರ ಪ್ರಧಾನರೂ ಎಲಿಯಾಜರನ ಪುತ್ರರೂ, ಈತಾಮಾರನ ಪುತ್ರರೂ ಇದ್ದರು.
1CH 24:6 ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೆಯೇಲ್ ಇವನ ಮಗ ಲೇಖಕನಾದ ಶೆಮಾಯನು ಅರಸನ ಮುಂದೆಯೂ; ಪ್ರಧಾನರು, ಯಾಜಕನಾದ ಚಾದೋಕನು, ಅಬಿಯಾತರನ ಮಗ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಅವರ ಹೆಸರುಗಳನ್ನು ಬರೆದನು. ಎಲಿಯಾಜರನಿಗೋಸ್ಕರ ಒಂದು ಶ್ರೇಷ್ಠ ಮನೆ ತೆಗೆದುಕೊಳ್ಳಲಾಯಿತು. ಅದರಂತೆಯೇ, ಈತಾಮಾರನಿಗೋಸ್ಕರವೂ ಒಂದು ತೆಗೆದುಕೊಳ್ಳಲಾಯಿತು.
1CH 24:7 ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು; ಎರಡನೆಯದು ಯೆದಾಯನಿಗೆ,
1CH 24:8 ಮೂರನೆಯದು ಹಾರಿಮನಿಗೆ; ನಾಲ್ಕನೆಯದು ಸೆಯೋರೀಮನಿಗೆ;
1CH 24:9 ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯಾಮಿನನಿಗೆ;
1CH 24:10 ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
1CH 24:11 ಒಂಬತ್ತನೆಯದು ಯೆಷೂವನಿಗೆ; ಹತ್ತನೆಯದು ಶೇಕನ್ಯನಿಗೆ;
1CH 24:12 ಹನ್ನೊಂದನೆಯದು ಎಲ್ಯಾಷೀಬನಿಗೆ; ಹನ್ನೆರಡನೆಯದು ಯಾಕೀಮನಿಗೆ,
1CH 24:13 ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಯೆಷೆಬಾಬನಿಗೆ;
1CH 24:14 ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
1CH 24:15 ಹದಿನೇಳನೆಯದು ಹೇಜೀರನಿಗೆ; ಹದಿನೆಂಟನೆಯದು ಹಪಿಚ್ಚೇಚನಿಗೆ;
1CH 24:16 ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
1CH 24:17 ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
1CH 24:18 ಇಪ್ಪತ್ಮೂರನೆಯದು ದೆಲಾಯನಿಗೆ; ಇಪ್ಪತ್ನಾಲ್ಕನೆಯದು ಮಾಜ್ಯನಿಗೆ.
1CH 24:19 ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು.
1CH 24:20 ಲೇವಿಯ ವಂಶಜರಲ್ಲಿ ಉಳಿದವರು ಯಾರೆಂದರೆ: ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾಯೇಲನ ಪುತ್ರರಲ್ಲಿ ಯೆಹ್ದೆಯಾಹನು.
1CH 24:21 ರೆಹಬ್ಯನನ್ನು ಕುರಿತು: ರೆಹಬ್ಯನ ಪುತ್ರರಲ್ಲಿ ಇಷೀಯನು ಮೊದಲನೆಯವನು.
1CH 24:22 ಇಚ್ಹಾರರಲ್ಲಿ ಶೆಲೋಮೋತನು ಮೊದಲನೆಯವನು. ಶೆಲೋಮೋತನ ಪುತ್ರರಲ್ಲಿ ಯಹತನು.
1CH 24:23 ಹೆಬ್ರೋನನ ಪುತ್ರರಲ್ಲಿ ಯೆರೀಯನು ಮೊದಲನೆಯವನು; ಎರಡನೆಯವನು ಅಮರ್ಯ; ಮೂರನೆಯವನು ಯಹಜಿಯೇಲ್; ನಾಲ್ಕನೆಯವನು ಯೆಕಮ್ಮಾಮ್.
1CH 24:24 ಉಜ್ಜೀಯೇಲನ ಕುಮಾರರಲ್ಲಿ ಮೀಕನು; ಮೀಕನ ಪುತ್ರರಲ್ಲಿ ಶಾಮೀರನು.
1CH 24:25 ಮೀಕನ ಸಹೋದರನು ಇಷೀಯನು; ಇಷೀಯನ ಪುತ್ರರಲ್ಲಿ ಜೆಕರ್ಯ.
1CH 24:26 ಮೆರಾರೀಯ ಪುತ್ರರಲ್ಲಿ ಮಹ್ಲೀ, ಮೂಷೀ; ಯಾಜ್ಯನ ಮಗನು ಬೆನೋನು.
1CH 24:27 ಮೆರಾರೀಯ ಪುತ್ರರಲ್ಲಿ ಯಾಜ್ಯನಿಗೆ ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಎಂಬ ಪುತ್ರರಿದ್ದರು.
1CH 24:28 ಮಹ್ಲೀಯನಿಗೆ ಎಲಿಯಾಜರನು ಹುಟ್ಟಿದನು; ಎಲಿಯಾಜರನಿಗೆ ಪುತ್ರರಿರಲಿಲ್ಲ.
1CH 24:29 ಕೀಷನಿಂದ ಯೆರಹ್ಮೇಲನು.
1CH 24:30 ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್. ಇವರು ತಮ್ಮ ಕುಟುಂಬಗಳ ಪ್ರಕಾರ ಲೇವಿಯರ ಪುತ್ರರಾಗಿದ್ದರು.
1CH 24:31 ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.
1CH 25:1 ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.
1CH 25:2 ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ ಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು.
1CH 25:3 ಯೆದುತೂನನ ಪುತ್ರರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು.
1CH 25:4 ಹೇಮಾನನ ಪುತ್ರರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂಯೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ್, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್, ಮಹಜೀಯೋತ್.
1CH 25:5 ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.
1CH 25:6 ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಹೀಗೆ ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
1CH 25:7 ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು.
1CH 25:8 ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
1CH 25:9 ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು. ಎರಡನೆಯದು ಗೆದಲ್ಯನಿಗೆ; ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ.
1CH 25:10 ಮೂರನೆಯದು ಜಕ್ಕೂರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ;
1CH 25:11 ನಾಲ್ಕನೆಯದು ಇಚ್ರೀಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:12 ಐದನೆಯದು ನೆತನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:13 ಆರನೆಯದು ಬುಕ್ಕೀಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:14 ಏಳನೆಯದು ಯೆಸರೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:15 ಎಂಟನೆಯದು ಯೆಶಾಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:16 ಒಂಬತ್ತನೆಯವನು ಮತ್ತನ್ಯ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:17 ಹತ್ತನೆಯದು ಶಿಮ್ಮಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:18 ಹನ್ನೊಂದನೆಯದು ಅಜರಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:19 ಹನ್ನೆರಡನೆಯದು ಹಷಬ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:20 ಹದಿಮೂರನೆಯದು ಶುಬಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:21 ಹದಿನಾಲ್ಕನೆಯವನು ಮತ್ತಿತ್ಯ; ಇವನೂ, ಇವನ ಸಹೋದರರೂ, ಮಕ್ಕಳೂ ಕೂಡಿ ಹನ್ನೆರಡು ಮಂದಿ.
1CH 25:22 ಹದಿನೈದನೆಯದು ಯೆರೆಮೋತನಿಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:23 ಹದಿನಾರನೆಯದು ಹನನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:24 ಹದಿನೇಳನೆಯದು ಯೊಷ್ಬೆಕಾಷನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:25 ಹದಿನೆಂಟನೆಯದು ಹನಾನೀಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:26 ಹತ್ತೊಂಬತ್ತನೆಯದು ಮಲ್ಲೋತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:27 ಇಪ್ಪತ್ತನೆಯದು ಎಲಿಯಾತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:28 ಇಪ್ಪತ್ತೊಂದನೆಯದು ಹೋತೀರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:29 ಇಪ್ಪತ್ತೆರಡನೆಯದು ಗಿದ್ದಲ್ತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:30 ಇಪ್ಪತ್ತಮೂರನೆಯದು ಮಹಜೀಯೋತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 25:31 ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
1CH 26:1 ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.
1CH 26:2 ಮೆಷೆಲೆಮ್ಯನ ಪುತ್ರರು: ಚೊಚ್ಚಲ ಮಗನು ಜೆಕರ್ಯನು; ಎರಡನೆಯವನು ಯೆದೀಯಯೇಲನು; ಮೂರನೆಯವನು ಜೆಬದ್ಯನು; ನಾಲ್ಕನೆಯವನು ಯತ್ನಿಯೇಲನು;
1CH 26:3 ಐದನೆಯವನು ಏಲಾಮನು; ಆರನೆಯವನು ಯೆಹೋಹಾನಾನನು; ಏಳನೆಯವನು ಎಲಿಹೋಯೇನೈನು.
1CH 26:4 ಓಬೇದ್ ಏದೋಮನ ಪುತ್ರರು: ಚೊಚ್ಚಲ ಮಗನು ಶೆಮಾಯ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ; ನಾಲ್ಕನೆಯವನು ಸಾಕಾರ; ಐದನೆಯವನು ನೆತನೆಯೇಲ್;
1CH 26:5 ಆರನೆಯವನು ಅಮ್ಮಿಯೇಲ್; ಏಳನೆಯವನು ಇಸ್ಸಾಕಾರ್ ಮತ್ತು ಎಂಟನೆಯವನು ಪೆಯುಲ್ಲೆತೈ. ಓಬೇದ್ ಎದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
1CH 26:6 ಇದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಪುತ್ರರು ಹುಟ್ಟಿದರು, ಅವರು ಪರಾಕ್ರಮಶಾಲಿಗಳಾಗಿದ್ದರು.
1CH 26:7 ಶೆಮಾಯನ ಪುತ್ರರು ಯಾರೆಂದರೆ: ಒತ್ನಿಯು, ರೆಫಾಯೇಲನು, ಓಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು.
1CH 26:8 ಇವರೆಲ್ಲರು ಓಬೇದ್ ಏದೋಮನ ಪುತ್ರರು; ಇವರೂ, ತಮ್ಮ ಪುತ್ರರೂ, ತಮ್ಮ ಸಹೋದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೆದೆದೋಮನವರು ಅರವತ್ತೆರಡು ಮಂದಿಯಾಗಿದ್ದರು.
1CH 26:9 ಮೆಷೆಲೆಮ್ಯನಿಗೆ ಬಲವುಳ್ಳ ಪುತ್ರರೂ, ಸಹೋದರರೂ ಹದಿನೆಂಟು ಮಂದಿಯಾಗಿದ್ದರು.
1CH 26:10 ಇದಲ್ಲದೆ ಮೆರಾರೀಯ ಮಕ್ಕಳಲ್ಲಿರುವ ಹೋಸ ಎಂಬವನಿಗೆ ಮಕ್ಕಳಿದ್ದರು. ಮೊದಲನೆಯವನು ಶಿಮ್ರಿಯು; ಅವನು ಚೊಚ್ಚಲ ಮಗನಲ್ಲ; ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು;
1CH 26:11 ಎರಡನೆಯವನು ಹಿಲ್ಕೀಯನು; ಮೂರನೆಯವನು ಟೆಬಲ್ಯನು; ನಾಲ್ಕನೆಯವನು ಜಕರೀಯನು. ಹೋಸನ ಸಮಸ್ತ ಪುತ್ರರು ಮತ್ತು ಸಹೋದರರೂ ಹದಿಮೂರು ಮಂದಿಯಾಗಿದ್ದರು.
1CH 26:12 ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.
1CH 26:13 ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.
1CH 26:14 ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗ ಬುದ್ಧಿಯುಳ್ಳ ಆಲೋಚನೆಯವನಾಗಿರುವ ಜೆಕರ್ಯನಿಗೋಸ್ಕರ ಹಾಕಿದ ಚೀಟು ಉತ್ತರ ಭಾಗಕ್ಕೆ ಇತ್ತು.
1CH 26:15 ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.
1CH 26:16 ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು. ಅವು ಮೇಲಕ್ಕೆ ಹೋಗುವ ರಾಜಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು.
1CH 26:17 ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ, ದಕ್ಷಿಣ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಉಗ್ರಾಣ ಮಂದಿರದ ಬಳಿಯಲ್ಲಿ ಇಬ್ಬರಿಬ್ಬರಾಗಿಯೂ,
1CH 26:18 ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.
1CH 26:19 ಕೋರಹೀಯರ ಪುತ್ರರಲ್ಲಿಯೂ, ಮೆರಾರೀಯ ಪುತ್ರರಲ್ಲಿಯೂ ವಿಭಾಗಿಸಿದ ದ್ವಾರಪಾಲಕರ ವರ್ಗಗಳು ಇವೆ.
1CH 26:20 ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.
1CH 26:21 ಲದ್ದಾನನ ವಂಶಜರು: ಗೇರ್ಷೋನ್ಯನಾದ ಲದ್ದಾನನ ಪುತ್ರರು ಕುಟುಂಬಗಳ ಮುಖ್ಯಸ್ಥರಾಗಿದ್ದರು. ಈ ಗೇರ್ಷೋನ್ಯನಾದ ಲಡಾನನ ಮಗನು ಯೆಹೀಯೇಲನು.
1CH 26:22 ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.
1CH 26:23 ಅಮ್ರಾಮಿಯರಲ್ಲಿಯೂ ಇಚ್ಹಾರರಲ್ಲಿಯೂ ಹೆಬ್ರೋನಿಯರಲ್ಲಿಯೂ ಉಜ್ಜೀಯೇಲರಲ್ಲಿಯೂ ಇವರ ಸಂತಾನದವರಲ್ಲಿ:
1CH 26:24 ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆಗಿರುವ ಶೆಬೂಯೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿದ್ದನು.
1CH 26:25 ಇವನ ಸಹೋದರರು, ಎಲೀಯೆಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮ, ಇವನ ಮಗನು ಜಿಕ್ರಿಯು, ಇವನ ಮಗನು ಶೆಲೋಮೋತನು.
1CH 26:26 ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.
1CH 26:27 ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.
1CH 26:28 ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.
1CH 26:29 ಇಚ್ಹಾರರಲ್ಲಿ ಕೆನನ್ಯನನ್ನು, ಅವನ ಪುತ್ರರನ್ನು ಪಾರುಪತ್ಯಗಾರರಿಗೋಸ್ಕರವೂ, ನ್ಯಾಯಾಧಿಪತಿಗಳಿಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ನೇಮಿಸಲಾಗಿತ್ತು.
1CH 26:30 ಹೆಬ್ರೋನಿಯರಲ್ಲಿ ಬಲವುಳ್ಳವರಾದ ಹಷಬ್ಯನೂ, ಅವನ ಸಹೋದರರೂ ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಅರಸನ ಸೇವೆಯಲ್ಲಿಯೂ ಸಾವಿರದ ಏಳು ನೂರು ಮಂದಿ ಪಶ್ಚಿಮವಾಗಿ ಯೊರ್ದನ್ ನದಿ ಈಚೆಯಲ್ಲಿ ಇಸ್ರಾಯೇಲರೊಳಗೆ ಅಧಿಪತಿಗಳಾಗಿದ್ದರು.
1CH 26:31 ಹೆಬ್ರೋನಿಯರಲ್ಲಿ ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀದನ ಆಳಿಕೆಯ ನಲ್ವತ್ತನೆಯ ವರ್ಷದಲ್ಲಿ ಆಯ್ಕೆಯಾಗಿದ್ದರು. ಆಗ ಗಿಲ್ಯಾದಿನ ಯಜ್ಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.
1CH 26:32 ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.
1CH 27:1 ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.
1CH 27:2 ಮೊದಲನೆಯ ತಿಂಗಳಿಗೋಸ್ಕರ ಮೊದಲನೆಯ ವರ್ಗದ ಮೇಲೆ ಜಬ್ದಿಯೇಲನ ಮಗ ಯಾಷೊಬ್ಬಾಮನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1CH 27:3 ಮೊದಲನೆಯ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಪ್ರಧಾನನಾದವನು ಪೆರೆಚನ ಮಕ್ಕಳಲ್ಲಿ ಒಬ್ಬನಾಗಿದ್ದನು.
1CH 27:4 ಎರಡನೆಯ ತಿಂಗಳಿನ ವರ್ಗದ ಮೇಲೆ ಅಹೋಹ್ಯನಾದ ದೊದಾಯಿಯು. ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು. ಅವನ ವರ್ಗದಲ್ಲಿ 24,000 ಜನರಿದ್ದರು.
1CH 27:5 ಮೂರನೆಯ ತಿಂಗಳಿನ ಸೈನ್ಯದ ಮೂರನೆಯ ಅಧಿಪತಿಯು, ಯಾಜಕನಾಗಿರುವ ಯೆಹೋಯಾದಾವನ ಮಗ ಬೆನಾಯನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1CH 27:6 ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು. ಅವನ ವರ್ಗದಲ್ಲಿ ಅವನ ಮಗ ಅಮ್ಮೀಜಾಬಾದನು ಇದ್ದನು.
1CH 27:7 ನಾಲ್ಕನೆಯ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋದರನಾದ ಅಸಾಯೇಲನು; ಅವನ ತರುವಾಯ ಅವನ ಮಗ ಜೆಬದ್ಯನು; ಅವನ ವರ್ಗದಲ್ಲಿ 24,000 ಜನರು.
1CH 27:8 ಐದನೆಯ ತಿಂಗಳಿನ ಐದನೆಯ ಅಧಿಪತಿಯು ಇಜ್ರಾಹನಾದ ಶಮ್ಹೂತನು; ಅವನ ವರ್ಗದಲ್ಲಿ 24,000 ಜನರು.
1CH 27:9 ಆರನೆಯ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗ ಈರನು; ಅವನ ವರ್ಗದಲ್ಲಿ 24,000 ಜನರು.
1CH 27:10 ಏಳನೆಯ ತಿಂಗಳಿನ ಏಳನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗದಲ್ಲಿ 24,000 ಜನರು.
1CH 27:11 ಎಂಟನೆಯ ತಿಂಗಳಿನ ಎಂಟನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ಹುಷಾತ್ಯನಾದ ಸಿಬ್ಬೆಕೈ; ಅವನ ವರ್ಗದಲ್ಲಿ 24,000 ಜನರು.
1CH 27:12 ಒಂಬತ್ತನೆಯ ತಿಂಗಳಿನ ಒಂಬತ್ತನೆಯವನು ಬೆನ್ಯಾಮೀನ್ಯರಲ್ಲಿ ಒಬ್ಬನಾಗಿರುವ ಅನಾತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ 24,000 ಜನರು.
1CH 27:13 ಹತ್ತನೆಯ ತಿಂಗಳಿನ ಹತ್ತನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು ಅವನ ವರ್ಗದಲ್ಲಿ 24,000 ಜನರು.
1CH 27:14 ಹನ್ನೊಂದನೆಯ ತಿಂಗಳಿನ ಹನ್ನೊಂದನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರಾತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ 24,000 ಜನರು.
1CH 27:15 ಹನ್ನೆರಡನೆಯ ತಿಂಗಳಿನ ಹನ್ನೆರಡನೆಯವನು ಒತ್ನಿಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದಾಯಿಯು; ಅವನ ವರ್ಗದಲ್ಲಿ 24,000 ಜನರು.
1CH 27:16 ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ಅಧಿಕಾರಿಗಳು ಯಾರೆಂದರೆ: ರೂಬೇನ್ಯರ ಮೇಲೆ ನಾಯಕನು, ಜಿಕ್ರಿಯ ಮಗ ಎಲೀಯೆಜೆರನು. ಸಿಮೆಯೋನ್ಯರ ಮೇಲೆ ನಾಯಕನು, ಮಾಕನ ಮಗ ಶೆಫಟ್ಯನು.
1CH 27:17 ಲೇವಿಯರ ಮೇಲೆ ಕೆಮುವೇಲನ ಮಗ ಹಷಬ್ಯನು. ಆರೋನ್ಯರ ಮೇಲೆ ಚಾದೋಕನು.
1CH 27:18 ಯೆಹೂದನಿಗೆ ದಾವೀದನ ಸಹೋದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ಮೀಕಾಯೇಲನ ಮಗ ಒಮ್ರಿಯು.
1CH 27:19 ಜೆಬುಲೂನನಿಗೆ ಓಬದ್ಯನ ಮಗ ಇಷ್ಮಾಯನು ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗ ಯೆರೀಮೋತನು.
1CH 27:20 ಎಫ್ರಾಯೀಮನ ಮಕ್ಕಳಲ್ಲಿ ಅಜಜ್ಯನ ಮಗ ಹೋಶೇಯನು; ಮನಸ್ಸೆಯ ಅರ್ಧ ಗೋತ್ರಕ್ಕೆ ಪೆದಾಯನ ಮಗ ಯೋಯೇಲನು.
1CH 27:21 ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗ ಇದ್ದೋನು; ಬೆನ್ಯಾಮೀನನ ಗೋತ್ರಕ್ಕೆ ಅಬ್ನೇರನ ಮಗ ಯಾಸೀಯೇಲನು;
1CH 27:22 ದಾನನ ಗೋತ್ರಕ್ಕೆ ಯೆರೋಹಾಮನ ಮಗ ಅಜರಯೇಲ್. ಇವರೇ ಇಸ್ರಾಯೇಲಿನ ಗೋತ್ರಗಳ ಪ್ರಧಾನರು.
1CH 27:23 ದಾವೀದನು ಇಪ್ಪತ್ತು ವರ್ಷಗಳೊಳಗೆ ಇದ್ದವರ ಲೆಕ್ಕ ತೆಗೆದುಕೊಳ್ಳಲಿಲ್ಲ. ಏಕೆಂದರೆ, “ಇಸ್ರಾಯೇಲನನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನು,” ಎಂದು ಯೆಹೋವ ದೇವರು ಹೇಳಿದ್ದರು.
1CH 27:24 ಚೆರೂಯಳ ಮಗ ಯೋವಾಬನು ಎಣಿಸಲು ಆರಂಭಿಸಿದನು. ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ಕೋಪಾಗ್ನಿಯು ಬಂದದ್ದರಿಂದ, ಅವನು ಪೂರ್ತಿಗೊಳಿಸಲಿಲ್ಲ. ಆ ಲೆಕ್ಕವು ಅರಸನಾದ ದಾವೀದನ ಇತಿಹಾಸಗಳ ಪುಸ್ತಕದಲ್ಲಿ ಲಿಖಿತವಾಗಲಿಲ್ಲ.
1CH 27:25 ಅರಸನ ಬೊಕ್ಕಸಗಳ ಮೇಲೆ ಅದೀಯೇಲನ ಮಗ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಗ್ರಾಮಗಳಲ್ಲಿಯೂ, ಬುರುಜುಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನನು ಇದ್ದನು.
1CH 27:26 ಹೊಲವನ್ನು ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗ ಎಜ್ರಿಯು ಇದ್ದನು.
1CH 27:27 ರಾಮಾ ಊರಿನ ಶಿಮ್ಮೀ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳುತ್ತಿದ್ದನು. ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ ಜವಾಬ್ದಾರಿಯಾಗಿದ್ದನು.
1CH 27:28 ತಗ್ಗಿನಲ್ಲಿರುವ ಓಲಿವ್ ಮರಗಳ ಮೇಲೆಯೂ, ಅತ್ತಿಮರಗಳ ಮೇಲೆಯೂ ಗೆದೇರ್ಯನಾದ ಬಾಳ್ ಹಾನಾನನು ಇದ್ದನು. ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಜವಾಬ್ದಾರಿಯಾಗಿದ್ದನು.
1CH 27:29 ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಜವಾಬ್ದಾರಿಯಾಗಿದ್ದನು. ತಗ್ಗುಗಳಲ್ಲಿರುವ ದನಗಳ ಮೇಲೆ ಅಡ್ಲಾಯಿಯ ಮಗನಾದ ಶಾಫಾಟನು ಜವಾಬ್ದಾರಿಯಾಗಿದ್ದನು.
1CH 27:30 ಒಂಟೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಇಷ್ಮಾಯೇಲನಾದ ಓಬೀಲ್. ಕತ್ತೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಮೇರೊನೋತ್ಯನಾದ ಯೆಹ್ದೆಯ.
1CH 27:31 ಕುರಿ ಮಂದೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಹಗ್ರೀಯನಾದ ಯಾಜೀಜ್. ಇವರೆಲ್ಲರು ಅರಸನಾದ ದಾವೀದನ ಸ್ವತ್ತಿನ ಮೇಲೆ ಪ್ರಧಾನರಾಗಿದ್ದರು.
1CH 27:32 ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯು, ವಿವೇಕಿಯೂ ಆದ ಲೇಖಕನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲ್ ಅರಸನ ಪುತ್ರರನ್ನು ನೋಡಿಕೊಳ್ಳುತ್ತಿದ್ದನು.
1CH 27:33 ಅರಸನ ಆಲೋಚನೆಗಾರನು ಅಹೀತೋಫೆಲ್; ಅರಸನ ಆಪ್ತ ಸ್ನೇಹಿತನು ಅರ್ಕಿಯನಾದ ಹೂಷೈ.
1CH 27:34 ಅಹೀತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ, ಅಬಿಯಾತರನೂ ಅರಸನ ಆಲೋಚನೆಗಾರರಾಗಿದ್ದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
1CH 28:1 ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನ ಗೋತ್ರಗಳ ಪ್ರಧಾನರನ್ನೂ, ವರ್ಗ ವರ್ಗವಾಗಿ ಅರಸನನ್ನು ಸೇವೆಮಾಡಿದ ಸಭೆಗಳ ಪ್ರಧಾನರನ್ನೂ, ಸಹಸ್ರಾಧಿಪತಿಗಳನ್ನೂ, ಶತಾಧಿಪತಿಗಳನ್ನೂ ಅರಸನ ಸ್ವತ್ತಿನ ಮೇಲೆಯೂ, ಅವನ ಪುತ್ರರ ಸ್ವತ್ತಿನ ಮೇಲೆಯೂ ಪಶುಗಳ ಮೇಲೆಯೂ ಇರುವ ಪ್ರಧಾನರನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಶೂರರನ್ನೂ ಯೆರೂಸಲೇಮಿನಲ್ಲಿ ಕೂಡಿ ಬರಲು ಕರೆಸಿದನು.
1CH 28:2 ಆಗ ಅರಸನಾದ ದಾವೀದನು ಎದ್ದು ನಿಂತು, “ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ. ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ನಿಮಿತ್ತವಾಗಿಯೂ, ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಗೆ ಆಲಯವನ್ನು ನಾನು ಕಟ್ಟಿಸಲು ಮನಸ್ಸು ಮಾಡಿ, ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.
1CH 28:3 ಆಗ ದೇವರು ನನಗೆ, ‘ನೀನು ಮಹಾ ಯುದ್ಧಗಳನ್ನು ನಡೆಸಿ, ಬಹಳ ರಕ್ತವನ್ನು ಸುರಿಸಿದವನು; ನನ್ನ ಹೆಸರಿಗೆ ನೀನು ಆಲಯವನ್ನು ಕಟ್ಟಿಸಬಾರದು,’ ಎಂದು ಹೇಳಿದರು.
1CH 28:4 “ಆದರೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರೊಳಗಿಂದ ನನ್ನನ್ನು ಆರಿಸಿಕೊಂಡರು. ಏಕೆಂದರೆ ಅವನು ನಾಯಕನಾಗಿರಲು ಯೆಹೂದ ಗೋತ್ರವನ್ನೂ, ಯೆಹೂದ ಗೋತ್ರದಿಂದ ನನ್ನ ಕುಟುಂಬವನ್ನೂ ಆದುಕೊಂಡು, ನನ್ನ ತಂದೆಯ ಪುತ್ರರಲ್ಲಿ ನನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಲು ಚಿತ್ತವುಳ್ಳವರಾಗಿದ್ದರು.
1CH 28:5 ಯೆಹೋವ ದೇವರು ನನಗೆ ಅನೇಕ ಪುತ್ರರನ್ನು ಕೊಟ್ಟಿರುವಾಗ, ನನ್ನ ಸಮಸ್ತ ಪುತ್ರರಲ್ಲಿ ಇಸ್ರಾಯೇಲಿನ ಮೇಲಿಗಾಗಿ, ಯೆಹೋವ ದೇವರ ರಾಜ್ಯದ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೆ ನನ್ನ ಮಗ ಸೊಲೊಮೋನನನ್ನು ಆದುಕೊಂಡರು.
1CH 28:6 ಇದಲ್ಲದೆ ದೇವರು ನನಗೆ, ‘ನಿನ್ನ ಮಗ ಸೊಲೊಮೋನನು ತಾನೇ ನನ್ನ ಆಲಯವನ್ನೂ, ನನ್ನ ಅಂಗಳಗಳನ್ನೂ ಕಟ್ಟಿಸುವನು. ಏಕೆಂದರೆ ಅವನನ್ನು ನನಗೆ ಮಗನಾಗಿರಲು ಆಯ್ದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು.
1CH 28:7 ಈ ಹೊತ್ತಿನ ಹಾಗೆ ನನ್ನ ಆಜ್ಞೆಗಳನ್ನೂ, ನನ್ನ ನ್ಯಾಯಗಳನ್ನೂ ಅವನು ನಡೆಸಲು ದೃಢನಾಗಿದ್ದರೆ, ಅವನ ರಾಜ್ಯವನ್ನು ಯುಗಯುಗಾಂತರಕ್ಕೂ ಸ್ಥಿರಪಡಿಸುವೆನು,’ ಎಂದರು.
1CH 28:8 “ಆದ್ದರಿಂದ ನೀವು ಈ ಉತ್ತಮ ದೇಶವನ್ನು ಸ್ವಾಧೀನಮಾಡಿಕೊಂಡು, ಅದನ್ನು ನಿರಂತರದಲ್ಲಿ ನಿಮ್ಮ ತರುವಾಯ ಇರುವ ನಿಮ್ಮ ಮಕ್ಕಳಿಗೆ ಬಾಧ್ಯತೆಯಾಗಿ ಕೊಡುವ ಹಾಗೆ, ಯೆಹೋವ ದೇವರ ಸಭೆಯಾದ ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿಯೂ, ನಮ್ಮ ದೇವರು ಕೇಳಿಸುವಂತೆ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ಹುಡುಕಿ ಕೈಗೊಳ್ಳಿರಿ ಎಂದು ಎಚ್ಚರಿಸುತ್ತೇನೆ.
1CH 28:9 “ಇದಲ್ಲದೆ ನನ್ನ ಮಗ ಸೊಲೊಮೋನನೇ, ನೀನು ನಿನ್ನ ತಂದೆಯ ದೇವರನ್ನು ಅರಿತುಕೊಂಡು, ಪೂರ್ಣಹೃದಯದಿಂದಲೂ, ಪೂರ್ಣಮನಸ್ಸಿನಿಂದಲೂ ದೇವರನ್ನು ಸೇವಿಸು. ಏಕೆಂದರೆ, ಯೆಹೋವ ದೇವರು ಸಕಲ ಹೃದಯಗಳನ್ನು ಪರಿಶೋಧಿಸಿ, ಯೋಚನೆಗಳ ಕಲ್ಪನೆಯನ್ನೆಲ್ಲಾ ತಿಳಿದಿದ್ದಾರೆ. ನೀನು ದೇವರನ್ನು ಹುಡುಕಿದರೆ, ದೇವರು ನಿನಗೆ ಸಿಕ್ಕುವರು. ನೀನು ದೇವರನ್ನು ಬಿಟ್ಟುಬಿಟ್ಟರೆ, ದೇವರು ಸಹ ನಿನ್ನನ್ನು ಎಂದೆಂದಿಗೂ ತೊರೆದುಬಿಡುವರು.
1CH 28:10 ಆದ್ದರಿಂದ ಜಾಗ್ರತೆಯಾಗಿರು. ಏಕೆಂದರೆ, ಯೆಹೋವ ದೇವರು ಪರಿಶುದ್ಧ ಆಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಧೈರ್ಯದಿಂದ ಕೆಲಸಕ್ಕೆ ಕೈ ಹಚ್ಚು,” ಎಂದನು.
1CH 28:11 ಆಗ ದಾವೀದನು ತನ್ನ ಮಗ ಸೊಲೊಮೋನನಿಗೆ, “ದ್ವಾರಾಂಗಳದ ಮಾದರಿಯನ್ನೂ, ಅದರ ಮನೆಗಳು, ಅದರ ಉಗ್ರಾಣಗಳು, ಅದರ ಮೇಲಿನ ಕೊಠಡಿಗಳು, ಅದರ ಅಂತರಂಗದ ಕೊಠಡಿಗಳು, ಕರುಣಾಸನದ ಸ್ಥಾನವು,
1CH 28:12 ಯೆಹೋವ ದೇವರ ಮನೆಯ ಅಂಗಳಗಳು, ಸುತ್ತಲಿರುವ ಕೊಠಡಿಗಳಾದ ಯೆಹೋವ ದೇವರ ಮನೆಯ ಉಗ್ರಾಣಗಳು, ಪ್ರತಿಷ್ಠೆ ಮಾಡಿದವುಗಳ ಉಗ್ರಾಣಗಳು, ಆತ್ಮದಿಂದ ತನಗುಂಟಾದ ಇವುಗಳ ಸಮಸ್ತ ಮಾದರಿಯನ್ನೂ ಕೊಟ್ಟನು.
1CH 28:13 ಇದಲ್ಲದೆ ಯಾಜಕರ, ಲೇವಿಯರ ವರ್ಗಗಳಿಗೋಸ್ಕರವೂ, ಯೆಹೋವ ದೇವರ ಮನೆಯ ಸೇವೆಯ ಸಮಸ್ತ ಕೆಲಸಕ್ಕೋಸ್ಕರವೂ ಯೆಹೋವ ದೇವರ ಮನೆಯಲ್ಲಿರುವ ಸೇವೆ ಮಾಡುವ ಸಮಸ್ತ ಪಾತ್ರೆಗಳಿಗೋಸ್ಕರವೂ ಸೂಚನೆಗಳನ್ನು ಕೊಟ್ಟನು.
1CH 28:14 ಸಕಲ ವಿಧವಾದ ಸೇವೆಗೆ ಸಮಸ್ತ ಬಂಗಾರದ ಸಲಕರಣೆಗಳಿಗೋಸ್ಕರ ಬಂಗಾರವನ್ನೂ, ಸಕಲ ವಿಧವಾದ ಸೇವೆಗೆ ಸಮಸ್ತ ಬೆಳ್ಳಿಯ ಸಾಮಾನುಗಳಿಗೋಸ್ಕರ ಬೆಳ್ಳಿಯನ್ನೂ ತೂಗಿಕೊಟ್ಟನು.
1CH 28:15 ಹೇಗೆಂದರೆ, ಬಂಗಾರದ ದೀಪಸ್ತಂಭಗಳಿಗೋಸ್ಕರವೂ, ಅದರ ಬಂಗಾರದ ದೀಪಗಳಿಗೋಸ್ಕರವೂ ಒಂದೊಂದು ಸ್ತಂಭಕ್ಕೋಸ್ಕರ ತೂಕವಾಗಿ ತೂಗಿಕೊಟ್ಟನು. ಬೆಳ್ಳಿಯ ದೀಪಸ್ತಂಭಗಳಿಗೋಸ್ಕರ ದೀಪಸ್ತಂಭಕ್ಕೂ, ಅದರ ದೀಪಗಳಿಗೂ ಒಂದೊಂದು ದೀಪಸ್ತಂಭದ ಕೆಲಸದ ಪ್ರಕಾರ ಅಳತೆಮಾಡಿ ತೂಗಿಕೊಟ್ಟನು.
1CH 28:16 ಆ ಪ್ರಕಾರವೇ ಸಮ್ಮುಖದ ರೊಟ್ಟಿಗಳ ಮೇಜುಗಳಿಗೋಸ್ಕರ ಒಂದೊಂದು ಮೇಜಿಗೆ ತೂಗಿಕೊಟ್ಟನು. ಬೆಳ್ಳಿಯ ಮೇಜುಗಳಿಗೋಸ್ಕರ ಬೆಳ್ಳಿಯನ್ನು ತೂಗಿಕೊಟ್ಟನು.
1CH 28:17 ಅದೇ ಪ್ರಕಾರ ಮುಳ್ಳುಗಳೂ, ಪಾತ್ರೆಗಳೂ, ಹೂಜೆಗಳೂ ಇವುಗಳಿಗೋಸ್ಕರ ಚೊಕ್ಕ ಬಂಗಾರವನ್ನು ಕೊಟ್ಟನು. ಬಂಗಾರದ ಬಟ್ಟಲುಗಳಿಗೋಸ್ಕರ, ಒಂದೊಂದು ಬಟ್ಟಲಿಗೋಸ್ಕರ ಅದರ ತೂಕವಾಗಿಯೂ; ಬೆಳ್ಳಿಯ ಒಂದೊಂದು ಬಟ್ಟಲಿಗೋಸ್ಕರ ಅದರ ತೂಕವಾಗಿಯೂ ಕೊಟ್ಟನು.
1CH 28:18 ಇದಲ್ಲದೆ ಧೂಪಪೀಠಕ್ಕೋಸ್ಕರ ಬಂಗಾರವನ್ನೂ, ರೆಕ್ಕೆಗಳನ್ನೂ ಚಾಚಿಕೊಂಡು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮುಚ್ಚುವ ಕೆರೂಬಿಗಳ ರಥದ ಮಾದರಿಗೋಸ್ಕರ ಬಂಗಾರವನ್ನೂ ತೂಗಿಕೊಟ್ಟನು.
1CH 28:19 “ಯೆಹೋವ ದೇವರು ತಮ್ಮ ಕೈಯನ್ನು ನನ್ನ ಮೇಲೆ ಇರಿಸಿ, ಈ ಯೋಜನೆಯ ಕೆಲಸಗಳನ್ನೆಲ್ಲಾ ನನಗೆ ತಿಳಿಯುವಂತೆ ಮಾಡಿದರು,” ಎಂದರು.
1CH 28:20 ದಾವೀದನು ತನ್ನ ಮಗ ಸೊಲೊಮೋನನಿಗೆ, “ನೀನು ಬಲಗೊಂಡು, ಧೈರ್ಯದಿಂದ ಮಾಡು; ಭಯಪಡಬೇಡ, ನಿರಾಶನಾಗಬೇಡ. ಏಕೆಂದರೆ ನನ್ನ ದೇವರಾಗಿರುವ ಯೆಹೋವ ದೇವರು ನಿನ್ನ ಸಂಗಡ ಇರುತ್ತಾರೆ. ಯೆಹೋವ ದೇವರ ಆಲಯದ ಸೇವೆಯ ಕಾರ್ಯವನ್ನೆಲ್ಲಾ ನೀನು ತೀರಿಸುವವರೆಗೂ, ಅವರು ನಿನ್ನನ್ನು ತೊರೆಯುವುದಿಲ್ಲ, ಕೈಬಿಡುವುದಿಲ್ಲ.
1CH 28:21 ಇಗೋ, ಯೆಹೋವ ದೇವರ ಆಲಯದ ಸಮಸ್ತ ಸೇವೆಗೋಸ್ಕರ ಯಾಜಕರ ಲೇವಿಯರ ವರ್ಗಗಳುಂಟು. ಎಲ್ಲಾ ಕೆಲಸಕ್ಕೂ, ಎಲ್ಲಾ ವಿಧವಾದ ಸೇವೆಗೂ, ಸಿದ್ಧ ಮನಸ್ಸುಳ್ಳಂಥ ಜಾಣತನದಿಂದ ಕೆಲಸ ಮಾಡುವವರು ನಿನ್ನ ಸಂಗಡ ಇದ್ದಾರೆ. ಇದಲ್ಲದೆ ಪ್ರಧಾನರೂ, ಸಕಲ ಜನರೂ ನಿನ್ನ ಮಾತುಗಳಿಗೆಲ್ಲಾ ವಿಧೇಯರಾಗಿರುವರು.”
1CH 29:1 ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನೆಂದರೆ, “ದೇವರು ಒಬ್ಬನನ್ನೇ ಆಯ್ದುಕೊಂಡ ನನ್ನ ಮಗ ಸೊಲೊಮೋನನು ಚಿಕ್ಕವನೂ ಎಳೆಯ ಪ್ರಾಯದವನೂ ಆಗಿದ್ದಾನೆ. ಆದರೆ ಕೆಲಸವು ದೊಡ್ಡದು. ಈ ಮಹಾ ಕಟ್ಟಡವು ಮನುಷ್ಯರಿಗೋಸ್ಕರವಲ್ಲ, ದೇವರಾದ ಯೆಹೋವ ದೇವರಿಗೋಸ್ಕರವೇ,
1CH 29:2 ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.
1CH 29:3 ಇದಲ್ಲದೆ ನಾನು ನನ್ನ ದೇವರ ಮನೆಯ ಮೇಲೆ ನನಗೆ ಭಕ್ತಿ ಇರುವುದರಿಂದ, ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು, ನನ್ನ ಸ್ವಂತ ಸ್ವತ್ತಿನಿಂದ ಬಂಗಾರವನ್ನೂ, ಬೆಳ್ಳಿಯನ್ನೂ ನನ್ನ ಪವಿತ್ರ ದೇವರ ಮನೆಗೆ ಕೊಟ್ಟಿದ್ದೇನೆ.
1CH 29:4 ಮನೆಗಳ ಗೋಡೆಗಳನ್ನು ಹೊದಿಸುವುದಕ್ಕೆ ಓಫೀರ್ ಬಂಗಾರದಲ್ಲಿ 100 ಮೆಟ್ರಿಕ್ ಟನ್ ಬಂಗಾರವನ್ನೂ, 240 ಮೆಟ್ರಿಕ್ ಟನ್ ಚೊಕ್ಕ ಬೆಳ್ಳಿಯನ್ನೂ ಕೊಟ್ಟಿದ್ದೇನೆ.
1CH 29:5 ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ತನ್ನನ್ನೇ ಯೆಹೋವ ದೇವರಿಗೆ ಇಷ್ಟಪೂರ್ವಕವಾಗಿ ಸಮರ್ಪಿಸಿಕೊಳ್ಳುವವರು ಯಾರು?” ಎಂದನು.
1CH 29:6 ಆಗ ಪಿತೃಗಳ ಪ್ರಧಾನರೂ, ಇಸ್ರಾಯೇಲ್ ಗೋತ್ರಗಳ ಪ್ರಧಾನರೂ, ಸಹಸ್ರಾಧಿಪತಿಗಳೂ ಶತಾಧಿಪತಿಗಳೂ, ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು,
1CH 29:7 ಯೆಹೋವ ದೇವರ ಮನೆಯ ಸೇವೆಗೋಸ್ಕರ ಬಂಗಾರವನ್ನೂ 17 0 ಮೆಟ್ರಿಕ್ ಟನ್, ಮತ್ತು 10,000 ಬಂಗಾರದ ನಾಣ್ಯಗಳನ್ನೂ 34 5 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 61 0 ಮೆಟ್ರಿಕ್ ಟನ್ ಕಂಚನ್ನೂ, 34 50 ಮೆಟ್ರಿಕ್ ಟನ್ ಕಬ್ಬಿಣವನ್ನೂ ಕೊಟ್ಟರು.
1CH 29:8 ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ, ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವುಗಳನ್ನು ಯೆಹೋವ ದೇವರ ಆಲಯದ ಬೊಕ್ಕಸಕ್ಕೆ ಕೊಟ್ಟರು.
1CH 29:9 ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ, ಜನರು ಸಂತೋಷಪಟ್ಟರು. ಏಕೆಂದರೆ ಅವರು ಪೂರ್ಣಮನಸ್ಸಿನಿಂದ ಮನಃಪೂರ್ವಕವಾಗಿ ಯೆಹೋವ ದೇವರಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷಪಟ್ಟನು.
1CH 29:10 ದಾವೀದನು ಸಮಸ್ತ ಕೂಟದ ಮುಂದೆ ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ನಮ್ಮ ತಂದೆಯಾದ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವು ಯುಗಯುಗಾಂತರಗಳಿಂದ ಯುಗಯುಗಾಂತರಗಳಿಗೂ ಸ್ತುತಿಗೆ ಪಾತ್ರರಾಗಿದ್ದೀರಿ.
1CH 29:11 ಯೆಹೋವ ದೇವರೇ, ಮಹತ್ವವೂ, ಪರಾಕ್ರಮವೂ, ಮಹಿಮೆಯೂ, ಜಯವೂ, ವೈಭವವೂ ನಿಮ್ಮವೇ. ಆಕಾಶಗಳಲ್ಲಿಯೂ, ಭೂಮಿಯಲ್ಲಿಯೂ ಇರುವುದೆಲ್ಲಾ ನಿಮ್ಮದೇ. ಯೆಹೋವ ದೇವರೇ, ರಾಜ್ಯವು ನಿಮ್ಮದು. ನೀವು ಸಮಸ್ತಕ್ಕೂ ತಲೆಯಾಗಿ ಉನ್ನತರು.
1CH 29:12 ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ. ನೀವು ಸಮಸ್ತವನ್ನು ಆಳಿಕೆಮಾಡುವವರು. ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ. ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ.
1CH 29:13 ಆದ್ದರಿಂದ ನಮ್ಮ ದೇವರೇ, ನಾವು ನಿಮ್ಮನ್ನು ಸ್ತುತಿಸಿ, ನಿಮ್ಮ ಮಹಿಮೆಯುಳ್ಳ ನಾಮವನ್ನು ಕೊಂಡಾಡುತ್ತೇವೆ.
1CH 29:14 “ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ.
1CH 29:15 ನಿಮ್ಮ ಕೈಯಿಂದಲೇ ನಿಮಗೆ ಅರ್ಪಿಸಿದೆವು. ಏಕೆಂದರೆ ನಾವು ನಿಮ್ಮ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ, ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಇವೆ; ನಿರೀಕ್ಷೆಯು ಇಲ್ಲ.
1CH 29:16 ನಮ್ಮ ದೇವರಾದ ಯೆಹೋವ ದೇವರೇ, ನಿಮ್ಮ ಪರಿಶುದ್ಧ ನಾಮಕ್ಕೋಸ್ಕರ ನಿಮಗೆ ಆಲಯವನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿಮ್ಮಿಂದ ಬಂದದ್ದು. ಸಮಸ್ತವೂ ನಿಮ್ಮದು.
1CH 29:17 ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.
1CH 29:18 ನಮ್ಮ ಪಿತೃಗಳಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾದ ಯೆಹೋವ ದೇವರೇ, ನಿಮ್ಮ ಜನರ ಹೃದಯದ ಮನೋಭಾವನೆಯಲ್ಲಿ ಭಕ್ತಿಯನ್ನು ನಿರಂತರವಾಗಿ ಕಾಪಾಡಿ, ಅವರ ಹೃದಯವನ್ನು ನಿಮಗೆ ಸಿದ್ಧಮಾಡಿ.
1CH 29:19 ಇದಲ್ಲದೆ ನಿಮ್ಮ ಆಜ್ಞೆಗಳನ್ನೂ, ನಿಮ್ಮ ಸಾಕ್ಷಿಗಳನ್ನೂ, ನಿಮ್ಮ ಕಟ್ಟಳೆಗಳನ್ನೂ ಕೈಗೊಳ್ಳಲೂ, ಸಮಸ್ತವನ್ನು ಮಾಡಲೂ ನಾನು ಯಾವುದಕ್ಕೋಸ್ಕರ ಸಿದ್ಧ ಮಾಡಿದೆನೋ, ಆ ಮಹಾ ಕಟ್ಟಡವನ್ನು ಕಟ್ಟಿಸಲೂ, ನನ್ನ ಮಗನಾದ ಸೊಲೊಮೋನನಿಗೆ ಪೂರ್ಣ ಹೃದಯವನ್ನು ಕೊಡಿರಿ,” ಎಂದನು.
1CH 29:20 ತರುವಾಯ ದಾವೀದನು ಸಮಸ್ತ ಸಭೆಗೆ, “ಈಗ ನಿಮ್ಮ ದೇವರಾದ ಯೆಹೋವ ದೇವರನ್ನು ಸ್ತುತಿಸಿರಿ,” ಎಂದನು. ಆಗ ಜನರೆಲ್ಲರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ತಮ್ಮ ತಲೆಗಳನ್ನು ಬಾಗಿಸಿ ಯೆಹೋವ ದೇವರನ್ನೂ, ಅರಸನನ್ನೂ ವಂದಿಸಿದರು.
1CH 29:21 ಮಾರನೆಯ ದಿವಸದಲ್ಲಿ ಅವರು ಯೆಹೋವ ದೇವರಿಗೆ ಬಲಿಗಳನ್ನು ವಧಿಸಿ, ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ, ಅವುಗಳ ಪಾನದ ಅರ್ಪಣೆಗಳನ್ನೂ, ಸಮಸ್ತ ಇಸ್ರಾಯೇಲರಿಗೋಸ್ಕರ ಬಹಳವಾಗಿ ಬಲಿಗಳನ್ನು ಅರ್ಪಿಸಿದರು.
1CH 29:22 ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು.
1CH 29:23 ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಯೆಹೋವ ದೇವರ ಸಿಂಹಾಸನದ ಮೇಲೆ ಕುಳಿತುಕೊಂಡು, ಸಮೃದ್ಧಿ ಹೊಂದಿದನು. ಸಮಸ್ತ ಇಸ್ರಾಯೇಲರು ಅವನಿಗೆ ವಿಧೇಯರಾದರು.
1CH 29:24 ಎಲ್ಲಾ ಪ್ರಧಾನರೂ, ಪರಾಕ್ರಮಶಾಲಿಗಳೂ, ಅರಸನಾದ ದಾವೀದನ ಸಮಸ್ತ ಪುತ್ರರೂ ಅರಸನಾದ ಸೊಲೊಮೋನನಿಗೆ ಅಧೀನರಾದರು.
1CH 29:25 ಇದಲ್ಲದೆ ಯೆಹೋವ ದೇವರು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ, ಇಸ್ರಾಯೇಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸನಿಗಾದರೂ ಇಲ್ಲದಂಥ ರಾಜ್ಯದ ವೈಭವವನ್ನು ಅವನಿಗೆ ಕೊಟ್ಟರು.
1CH 29:26 ಇಷಯನ ಮಗ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.
1CH 29:27 ಅವನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು.
1CH 29:28 ಅವನು ದೀರ್ಘಾಯುಷ್ಯದಿಂದಲೂ, ಐಶ್ವರ್ಯದಿಂದಲೂ, ಘನದಿಂದಲೂ ಕೂಡಿದವನಾಗಿ, ಒಳ್ಳೆಯ ಪ್ರಾಯದಲ್ಲಿ ಮರಣಹೊಂದಿದನು. ಅವನ ಮಗ ಸೊಲೊಮೋನನು ಅವನಿಗೆ ಬದಲಾಗಿ ಅರಸನಾದನು.
1CH 29:29 ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯವರೆಗೆ ಅವನ ಸಮಸ್ತ ಆಳಿಕೆಯೂ, ಅವನ ಪರಾಕ್ರಮವೂ, ಅವನ ಮೇಲೆಯೂ, ಇಸ್ರಾಯೇಲಿನ ಮೇಲೆಯೂ, ಬೇರೆ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಸಂಭವಿಸಿದ ಘಟನೆಗಳು,
1CH 29:30 ದರ್ಶಿಯಾದ ಸಮುಯೇಲನ ಪುಸ್ತಕದಲ್ಲಿ, ಪ್ರವಾದಿಯಾದ ನಾತಾನನ ಪುಸ್ತಕದಲ್ಲಿ ಮತ್ತು ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಲಿಖಿತವಾಗಿವೆ.
2CH 1:1 ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದಲ್ಲಿ ಬಲಗೊಂಡನು ಮತ್ತು ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದು, ಅವನನ್ನು ಉನ್ನತನನ್ನಾಗಿ ಮಾಡಿದರು.
2CH 1:2 ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಪ್ರಧಾನರಾದವರೊಂದಿಗೂ, ಸಮಸ್ತ ಇಸ್ರಾಯೇಲರ ಪಿತೃಗಳ ಶ್ರೇಷ್ಠರಾದ ಸಮಸ್ತ ಪ್ರಭುಗಳೊಂದಿಗೂ ಮಾತನಾಡಿದನು.
2CH 1:3 ಹೀಗೆ ಅವನೂ, ಅವನ ಸಂಗಡ ಸಮಸ್ತ ಸಮೂಹವೂ ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಯೆಹೋವ ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಮಾಡಿದ ದೇವದರ್ಶನ ಗುಡಾರವು ಅಲ್ಲಿತ್ತು.
2CH 1:4 ಆದರೆ ದಾವೀದನು ಯೆಹೋವ ದೇವರ ಮಂಜೂಷವನ್ನು ಕಿರ್ಯತ್ ಯಾರೀಮಿನಿಂದ ತಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಗುಡಾರವನ್ನು ಹಾಕಿಸಿದ್ದನು.
2CH 1:5 ಆದರೆ ಊರಿಯನ ಮಗ, ಹೂರನ ಮೊಮ್ಮಗನಾದ ಬೆಚಲಯೇಲನು ಮಾಡಿದ ಕಂಚಿನ ಬಲಿಪೀಠವು ಗಿಬ್ಯೋನಿನಲ್ಲಿ ಯೆಹೋವ ದೇವರ ಗುಡಾರದ ಮುಂದೆ ಇತ್ತು. ಅಲ್ಲಿ ಸೊಲೊಮೋನನೂ, ಸಭೆಯೂ ದೇವರ ಇಚ್ಛೆಯನ್ನು ವಿಚಾರಿಸಿದರು.
2CH 1:6 ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಯೆಹೋವ ದೇವರ ಮುಂದೆ ಇರುವ ಕಂಚಿನ ಪೀಠದ ಬಳಿಗೆ ಹೋಗಿ, ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.
2CH 1:7 ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.
2CH 1:8 ಅದಕ್ಕೆ ಸೊಲೊಮೋನನು ದೇವರಿಗೆ, “ನೀವು ನನ್ನ ತಂದೆ ದಾವೀದನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ, ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿರಿ.
2CH 1:9 ಈಗ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಮಾಡಿದ ವಾಗ್ದಾನವು ದೃಢವಾಗಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯಾತ ಜನರ ಮೇಲೆ ನನ್ನನ್ನು ಅರಸನನ್ನಾಗಿ ಮಾಡಿದ್ದೀರಿ.
2CH 1:10 ನಾನು ಈ ಜನರನ್ನು ಪರಿಪಾಲಿಸುವುದಕ್ಕೆ ಜ್ಞಾನವನ್ನೂ, ತಿಳುವಳಿಕೆಯನ್ನೂ ಕೊಡಿರಿ. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.
2CH 1:11 ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಹೃದಯದಲ್ಲಿ ಇದ್ದುದರಿಂದಲೂ ನೀನು ಐಶ್ವರ್ಯವನ್ನೂ, ಸ್ಥಿತಿಯನ್ನೂ, ಘನವನ್ನೂ, ನಿನ್ನ ಶತ್ರುಗಳ ಪ್ರಾಣವನ್ನೂ ಕೇಳದೆ ಮತ್ತು ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ, ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ, ಆ ನನ್ನ ಜನರಿಗೆ ನೀನು ನ್ಯಾಯತೀರಿಸುವ ಹಾಗೆ, ಜ್ಞಾನವನ್ನೂ, ತಿಳುವಳಿಕೆಯನ್ನೂ ನೀನು ಕೇಳಿದ್ದರಿಂದಲೂ;
2CH 1:12 ಜ್ಞಾನ ಮತ್ತು ತಿಳುವಳಿಕೆಯನ್ನು ನಿನಗೆ ಕೊಡುತ್ತೇನೆ. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸರಲ್ಲಿ ಯಾರಿಗೂ ಇಲ್ಲದಂಥ ಮತ್ತು ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ, ಆಸ್ತಿಯನ್ನೂ, ಘನವನ್ನೂ ಕೊಡುತ್ತೇನೆ,” ಎಂದರು.
2CH 1:13 ತರುವಾಯ ಸೊಲೊಮೋನನು ಗಿಬ್ಯೋನಿನ ಉನ್ನತ ಸ್ಥಳದಲ್ಲಿದ್ದ ದೇವದರ್ಶನ ಗುಡಾರವನ್ನು ಬಿಟ್ಟು, ಯೆರೂಸಲೇಮಿಗೆ ಬಂದು, ಇಸ್ರಾಯೇಲನ್ನು ಆಳಿದನು.
2CH 1:14 ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು.
2CH 1:15 ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.
2CH 1:16 ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು
2CH 1:17 ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.
2CH 2:1 ಯೆಹೋವ ದೇವರಿಗೋಸ್ಕರ ಒಂದು ಆಲಯವನ್ನೂ, ತನಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸಲು ಸೊಲೊಮೋನನು ಅಪ್ಪಣೆಕೊಟ್ಟನು.
2CH 2:2 ಅದಕ್ಕಾಗಿ 70,000 ಹೊರುವವರನ್ನೂ, 80,000 ಬೆಟ್ಟದಲ್ಲಿ ಕಡಿಯುವವರನ್ನೂ, ಇವರ ಮೇಲೆ ಕಾವಲಾಗಿರಲು 3,600 ಮಂದಿಯನ್ನೂ ಆಯ್ಕೆಮಾಡಿದನು.
2CH 2:3 ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ, “ನೀನು ನನ್ನ ತಂದೆ ದಾವೀದನಿಗೆ ವಾಸವಾಗಿರುವ ಅರಮನೆಯನ್ನು ಕಟ್ಟಿಸಲು, ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ, ಹಾಗೆಯೇ ನನಗೂ ಮಾಡು.
2CH 2:4 ನನ್ನ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವುದಕ್ಕೂ, ದೇವಸನ್ನಿಧಿಗೆ ಪರಿಮಳ ಧೂಪವನ್ನು ಅರ್ಪಿಸುವ ನಿತ್ಯ ಸಮ್ಮುಖದ ರೊಟ್ಟಿಗೋಸ್ಕರವೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಇಸ್ರಾಯೇಲರಿಗೆ ನಿರಂತರವಾಗಿರಲು ನೇಮಿಸಿದ ನಮ್ಮ ದೇವರಾದ ಯೆಹೋವ ದೇವರ ಹಬ್ಬಗಳಲ್ಲಿಯೂ, ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ನಮ್ಮ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.
2CH 2:5 “ನಾನು ಕಟ್ಟಿಸುವ ಆಲಯವು ದೊಡ್ಡದು. ಏಕೆಂದರೆ ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವರಾಗಿದ್ದಾರೆ.
2CH 2:6 ಆದರೆ ಅವರಿಗೋಸ್ಕರ ಆಲಯವನ್ನು ಕಟ್ಟಿಸಲು ಸಮರ್ಥನಾದವನು ಯಾರು? ಆಕಾಶವೂ ಉನ್ನತೋನ್ನತ ಆಕಾಶವೂ ಅವರಿಗೆ ಸಾಲದು. ಅವರ ಸನ್ನಿಧಿಯಲ್ಲಿ ಯಜ್ಞವನ್ನು ಅರ್ಪಿಸುವುದಕ್ಕೆ ಒಂದು ಆಲಯವನ್ನು ಕಟ್ಟಬಹುದೇ ಹೊರತು ಅವರಿಗೆ ಆಲಯವನ್ನು ಕಟ್ಟಿಸಲು ನಾನು ಎಷ್ಟರವನು?
2CH 2:7 “ಆದ್ದರಿಂದ ಬಂಗಾರದಲ್ಲಿಯೂ, ಬೆಳ್ಳಿಯಲ್ಲಿಯೂ, ಕಂಚಿನಲ್ಲಿಯೂ, ಕಬ್ಬಿಣದಲ್ಲಿಯೂ, ರಕ್ತವರ್ಣ, ಲೋಹಿತ ವರ್ಣ, ನೀಲ ವರ್ಣಗಳಲ್ಲಿಯೂ ಕೆಲಸವನ್ನು ಮಾಡಲು ಜ್ಞಾನವುಳ್ಳವನನ್ನು, ನನ್ನ ತಂದೆ ದಾವೀದನು ಸಿದ್ಧಮಾಡಿದ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ, ನನ್ನ ಬಳಿಯಲ್ಲಿರುವ ಕುಶಲಕರ್ಮಿಗಳ ಸಂಗಡ ಕೆತ್ತಲು ತಿಳುವಳಿಕೆಯುಳ್ಳವನಾಗಿ ಇರುವವನನ್ನು ನನ್ನ ಬಳಿಗೆ ಕಳುಹಿಸು.
2CH 2:8 “ನೀನು ಇಲ್ಲಿಗೆ ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಸುಗಂಧದ ಮರಗಳನ್ನೂ ಲೆಬನೋನಿನಿಂದ ನನ್ನ ಬಳಿಗೆ ಕಳುಹಿಸು. ಲೆಬನೋನಿನಲ್ಲಿ ಮರಗಳನ್ನು ಕಡಿಯಲು ನಿನ್ನ ಸೇವಕರು ನಿಪುಣರಾಗಿದ್ದಾರೆ. ನನ್ನ ಸೇವಕರು ಅವರ ಸಂಗಡ ಇರುವರು.
2CH 2:9 ನನಗೆ ಮರಗಳನ್ನು ಬಹಳವಾಗಿ ಸಿದ್ಧಮಾಡುವುದಕ್ಕೆ ನಾನು ಕಟ್ಟಿಸುವ ಆಲಯವು ದೊಡ್ಡದಾಗಿಯೂ, ಅದ್ಭುತಕರವಾದದ್ದಾಗಿಯೂ ಇರಬೇಕು.
2CH 2:10 ಮರ ಕಡಿಯುವ ನಿನ್ನ ಸೇವಕರಿಗಾಗಿ, ಎರಡು ಸಾವಿರ ಟನ್ ಗೋಧಿಯನ್ನೂ, ಮೂರು ಸಾವಿರ ಟನ್ ಜವೆಗೋಧಿಯನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ದ್ರಾಕ್ಷಾರಸವನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು,” ಎಂದು ಹೇಳಿಸಿದನು.
2CH 2:11 ಆಗ ಟೈರಿನ ಅರಸನಾದ ಹೀರಾಮನು ಉತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿದನು: “ಯೆಹೋವ ದೇವರು ತಮ್ಮ ಜನರನ್ನು ಪ್ರೀತಿಮಾಡಿದ್ದರಿಂದ, ನಿನ್ನನ್ನು ಜನರ ಮೇಲೆ ಅರಸನನ್ನಾಗಿ ಮಾಡಿದ್ದಾರೆ,” ಎಂದು ಹೇಳಿದನು.
2CH 2:12 ಇದಲ್ಲದೆ ಹೀರಾಮನು, “ಯೆಹೋವ ದೇವರಿಗೋಸ್ಕರ ಆಲಯವನ್ನೂ ತನ್ನ ರಾಜ್ಯಕ್ಕೋಸ್ಕರ ಅರಮನೆಯನ್ನೂ ಕಟ್ಟಿಸುವುದಕ್ಕೆ ಅರಸನಾದ ದಾವೀದನಿಗೆ ಬುದ್ಧಿ ವಿವೇಚನೆಯುಳ್ಳ ಒಬ್ಬ ಮಗನನ್ನು ಕೊಟ್ಟಿದ್ದಾರೆ; ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
2CH 2:13 “ಈಗ ನಾನು ಜ್ಞಾನಿಯೂ, ಕಲಾ ಪ್ರವೀಣನೂ ಆದ ಹೂರಾಮ ಅಬೀ ಎಂಬ ಒಬ್ಬನನ್ನು ಕಳುಹಿಸಿದ್ದೇನೆ.
2CH 2:14 ಅವನು ದಾನನ ಪುತ್ರಿಯರಲ್ಲಿರುವ ಒಬ್ಬಳ ಮಗನಾಗಿದ್ದಾನೆ. ಅವನ ತಂದೆ ಟೈರಿನವನು. ಅವನು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಕಲ್ಲು, ಮರ, ಧೂಮ್ರವರ್ಣ, ನೀಲವರ್ಣ, ನಯವಾದ ನಾರಿನ ವಸ್ತ್ರ, ರಕ್ತವರ್ಣ ಇವುಗಳಲ್ಲಿ ಕೆಲಸವನ್ನು ಮಾಡುವುದಕ್ಕೂ ತರಬೇತಿಯನ್ನು ಹೊಂದಿದ್ದನು. ತನಗೆ ಒಪ್ಪಿಸಲಾಗುವ ಎಲ್ಲಾ ತರಹದ ಕೆತ್ತನೆಯ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನಿನ್ನ ತಂದೆಯೂ ನನ್ನ ಒಡೆಯನಾದ ದಾವೀದನೂ ಗೊತ್ತುಮಾಡಿದ ಕಲಾಕುಶಲರೊಡನೆ ಇವನು ಕೆಲಸಮಾಡಲಿ.
2CH 2:15 “ಈಗ ನನ್ನ ಒಡೆಯನು ಹೇಳಿದ ಆ ಗೋಧಿಯನ್ನೂ, ಜವೆಗೋಧಿಯನ್ನೂ, ಎಣ್ಣೆಯನ್ನೂ, ದ್ರಾಕ್ಷಾರಸವನ್ನೂ ತನ್ನ ಸೇವಕರಿಗೆ ಕಳುಹಿಸಲಿ.
2CH 2:16 ಇದಲ್ಲದೆ ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ತೆಪ್ಪಗಳಲ್ಲಿ ಸಮುದ್ರದ ಮಾರ್ಗವಾಗಿ ಯೊಪ್ಪಕ್ಕೆ ತೆಗೆದುಕೊಂಡು ಬರುತ್ತೇವೆ. ನೀನು ಅವುಗಳನ್ನು ಯೆರೂಸಲೇಮಿಗೆ ಒಯ್ಯಬಹುದು.”
2CH 2:17 ಆಮೇಲೆ ಸೊಲೊಮೋನನು ತನ್ನ ತಂದೆ ದಾವೀದನು ಮಾಡಿಸಿದ ಜನಗಣತಿಯ ಆಧಾರದಿಂದ, ಇಸ್ರಾಯೇಲ್ ದೇಶದಲ್ಲಿದ್ದ ಪ್ರವಾಸಿಗಳಾಗಿದ್ದ ಇತರ ಜನರ ಜನಗಣತಿ ಮಾಡಿಸಿದ ನಂತರ, ಇತರ ಜನರ ಒಟ್ಟು ಸಂಖ್ಯೆ 1,53,600 ಮಂದಿ ಇದ್ದರು.
2CH 2:18 ಆಗ ಅವರಲ್ಲಿ 70,000 ಮಂದಿಯನ್ನು ಹೊರೆ ಹೊರುವುದಕ್ಕೂ, 80,000 ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವುದಕ್ಕೂ, 3,600 ಮಂದಿಯನ್ನು ಕೆಲಸದವರ ಮೇಲೆ ಕಾವಲಾಗಿರುವುದಕ್ಕೂ ಇರಿಸಿದನು.
2CH 3:1 ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆ ದಾವೀದನಿಗೆ ಯೆಹೋವ ದೇವರು ಕಾಣಿಸಿಕೊಂಡ ಸ್ಥಳವಾದ ಮೊರೀಯಾ ಬೆಟ್ಟದ ಮೇಲೆ, ದಾವೀದನು ಸಿದ್ಧಮಾಡಿದ ಸ್ಥಳವಾದ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
2CH 3:2 ತನ್ನ ಆಳಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿವಸದಲ್ಲಿ ಕಟ್ಟುವುದಕ್ಕೆ ಆರಂಭಿಸಿದನು.
2CH 3:3 ದೇವರ ಆಲಯವನ್ನು ಕಟ್ಟುವುದಕ್ಕೆ ಸೊಲೊಮೋನನು ಹಾಕಿಸಿದ ಅಸ್ತಿವಾರಗಳು ಏನೆಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಸುಮಾರು 27 ಮೀಟರ್ ಮತ್ತು ಅದರ ಅಗಲ 9 ಮೀಟರ್;
2CH 3:4 ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು; 54 ಮೀಟರ್ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಸಿದನು.
2CH 3:5 ಅವನು ದೊಡ್ಡ ತುರಾಯಿ ಮರಗಳಿಂದ ಮುಚ್ಚಿದ ಕೋಣೆಯನ್ನು ಶುದ್ಧ ಬಂಗಾರದಿಂದ ಹೊದಿಸಿ, ಅದರ ಮೇಲೆ ಖರ್ಜೂರದ ಗಿಡಗಳನ್ನೂ, ಸರಪಣಿಗಳನ್ನೂ ಕೆತ್ತಿಸಿದನು.
2CH 3:6 ಇದಲ್ಲದೆ ಸೌಂದರ್ಯದ ನಿಮಿತ್ತವಾಗಿ ಅಮೂಲ್ಯವಾದ ರತ್ನಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮ್ ದೇಶದ್ದು.
2CH 3:7 ಆಲಯದ ತೊಲೆಗಳನ್ನೂ, ಸ್ತಂಭಗಳನ್ನೂ, ಗೋಡೆಗಳನ್ನೂ, ಬಾಗಿಲುಗಳನ್ನೂ, ಅವನು ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳನ್ನೂ ಕೆತ್ತಿಸಿದನು.
2CH 3:8 ಅವನು ಮಹಾಪರಿಶುದ್ಧವಾದ ಸ್ಥಳವನ್ನು ಕಟ್ಟಿದನು. ಅದರ ಉದ್ದವು ಆಲಯದ ಅಗಲದ ಪ್ರಕಾರ 9 ಮೀಟರ್; ಅದರ ಅಗಲ 9 ಮೀಟರ್. ಅವನು ಅದನ್ನು 20,000 ಕಿಲೋಗ್ರಾಂ ಶುದ್ಧ ಬಂಗಾರದಿಂದ ಹೊದಿಸಿದನು.
2CH 3:9 ಅದರ ಮೊಳೆಗಳು ಐನೂರ ಎಪ್ಪತ್ತು ಕಿಲೋಗ್ರಾಂಗಳ ತೂಕ ಬಂಗಾರದ್ದಾಗಿತ್ತು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
2CH 3:10 ಮಹಾಪರಿಶುದ್ಧವಾದ ಸ್ಥಳದಲ್ಲಿ ಎರಡು ಕೆರೂಬಿಗಳನ್ನು ಮಾಡಿಸಿ, ಬಂಗಾರದಿಂದ ಅವುಗಳನ್ನು ಹೊದಿಸಿದನು.
2CH 3:11 ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದವಾಗಿದ್ದವು. ಒಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಎರಡೂವರೆ ಮೀಟರ್ ಉದ್ದವಾಗಿದ್ದು, ಇನ್ನೊಂದು ಕೆರೂಬಿಯ ರೆಕ್ಕೆಯವರೆಗೂ ಮುಟ್ಟಿತ್ತು.
2CH 3:12 ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿಕೊಂಡಿತ್ತು.
2CH 3:13 ಈ ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದಕ್ಕೆ ಚಾಚಿಕೊಂಡವು. ಅವು ತಮ್ಮ ಕಾಲುಗಳ ಮೇಲೆ ನಿಂತವು. ಅವುಗಳ ಮುಖಗಳು ಒಳಗಡೆಯಾಗಿದ್ದವು.
2CH 3:14 ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ಹೊಸೆದ ನಾರಿನಿಂದ ಮಾಡಿಸಿ, ಅದರಲ್ಲಿ ಕೆರೂಬಿಗಳುಳ್ಳದ್ದನ್ನಾಗಿ ಮಾಡಿಸಿದನು.
2CH 3:15 ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.
2CH 3:16 ಗರ್ಭಗುಡಿಯಲ್ಲಿ ಸರಪಣಿಗಳಂತೆ ಮಾಡಿ, ಸ್ತಂಭಗಳ ತುದಿಗಳ ಮೇಲೆ ಇಟ್ಟು, ನೂರು ದಾಳಿಂಬೆ ಹಣ್ಣುಗಳನ್ನು ಮಾಡಿ, ಸರಪಣಿಗಳ ಮೇಲೆ ಇರಿಸಿದನು.
2CH 3:17 ಆ ಸ್ತಂಭಗಳನ್ನು ಮಂದಿರದ ಮುಂಭಾಗದಲ್ಲಿ ಒಂದನ್ನು ಬಲಗಡೆಯಲ್ಲಿಯೂ, ಇನ್ನೊಂದನ್ನು ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
2CH 4:1 ಇವುಗಳಲ್ಲದೆ, ಸೊಲೊಮೋನನು ಕಂಚಿನ ಬಲಿಪೀಠವನ್ನು ಮಾಡಿಸಿದನು; ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ ಸುಮಾರು ಐದು ಮೀಟರ್.
2CH 4:2 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು; ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್; ಅದರ ಎತ್ತರ ಸುಮಾರು ಎರಡು ಮೀಟರ್; ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು;
2CH 4:3 ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು; ಇದು ಎರಕ ಹೊಯ್ಯುವಾಗ, ಎತ್ತುಗಳ ರೂಪಗಳು ಎರಡು ಸಾಲಾಗಿ ಎರಕ ಹೊಯ್ಸಿದನು.
2CH 4:4 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
2CH 4:5 ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಅರವತ್ತಾರು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
2CH 4:6 ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ, ಅವುಗಳಲ್ಲಿ ತೊಳೆಯುವ ನಿಮಿತ್ತವಾಗಿ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿದನು. ದಹನಬಲಿಗೋಸ್ಕರ ಅರ್ಪಿಸುವವುಗಳನ್ನು ಅವುಗಳಲ್ಲಿ ತೊಳೆಯುತ್ತಿದ್ದರು. ಆದರೆ ಆ ಕೊಳವು ಯಾಜಕರು ತೊಳೆದುಕೊಳ್ಳುವುದಕ್ಕೆ ಇತ್ತು.
2CH 4:7 ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು.
2CH 4:8 ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬಟ್ಟಲುಗಳನ್ನು ಮಾಡಿಸಿದನು.
2CH 4:9 ಯಾಜಕರ ಅಂಗಳವನ್ನೂ, ದೊಡ್ಡ ಅಂಗಳವನ್ನೂ, ಅಂಗಳಗಳಿಗೋಸ್ಕರ ಬಾಗಿಲುಗಳನ್ನೂ ಮಾಡಿಸಿ, ಆ ಬಾಗಿಲುಗಳನ್ನು ಕಂಚಿನಿಂದ ಹೊದಿಸಿದನು.
2CH 4:10 ಸಮುದ್ರ ಎಂದು ಕರೆಯಲಾದ ದೊಡ್ಡ ಪಾತ್ರೆಯನ್ನು ಬಲಗಡೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.
2CH 4:11 ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
2CH 4:12 ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
2CH 4:13 ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳನ್ನು ಮಾಡಿದನು.
2CH 4:14 ಇದಲ್ಲದೆ ಅವನು ಪೀಠಗಳನ್ನು ಅವುಗಳ ಮೇಲಿರುವ ತೊಟ್ಟಿಗಳನ್ನು ಮಾಡಿದನು.
2CH 4:15 ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
2CH 4:16 ಪಾತ್ರೆಗಳು, ಸಲಿಕೆಗಳು, ಮುಳ್ಳುಗಳು. ಅವುಗಳ ಎಲ್ಲಾ ವಸ್ತುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯು ಹೇಳಿದಂತೆ ಹೂರಾಮ ಅಬೀ ಹೊಳೆಯುವ ಕಂಚಿನಿಂದ ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿದನು.
2CH 4:17 ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ ಚರೇದನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
2CH 4:18 ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಆ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
2CH 4:19 ಸೊಲೊಮೋನನು ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು, ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಮೇಜುಗಳನ್ನು,
2CH 4:20 ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಶುದ್ಧ ಬಂಗಾರದ ದೀಪಸ್ತಂಭಗಳನ್ನೂ ಅವುಗಳ ದೀಪಗಳನ್ನೂ,
2CH 4:21 ಹೂವುಗಳನ್ನೂ, ದೀಪಗಳ ಚಿಮಟಿಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.
2CH 4:22 ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಆಲಯದ ಪ್ರವೇಶ ದ್ವಾರವೂ, ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳೂ, ಮಂದಿರದ ಮನೆ ಬಾಗಿಲುಗಳೂ ಬಂಗಾರದವುಗಳಾಗಿದ್ದವು.
2CH 5:1 ಹೀಗೆಯೇ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ದೇವರ ಆಲಯದ ಭಂಡಾರಕ್ಕೆ ಸೇರಿಸಿದನು.
2CH 5:2 ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
2CH 5:3 ಆದ್ದರಿಂದ ಏಳನೆಯ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಸಮಸ್ತ ಜನರು ಅರಸನ ಬಳಿಗೆ ಕೂಡಿಬಂದರು.
2CH 5:4 ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ, ಲೇವಿಯರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡರು.
2CH 5:5 ಒಡಂಬಡಿಕೆಯ ಮಂಜೂಷವನ್ನೂ, ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರಾದ ಲೇವಿಯರು ಹೊತ್ತುಕೊಂಡು ತಂದರು.
2CH 5:6 ಆಗ ಅರಸನಾದ ಸೊಲೊಮೋನನೂ ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ, ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
2CH 5:7 ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.
2CH 5:8 ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು.
2CH 5:9 ಆ ಕೋಲುಗಳು ಮಂಜೂಷಕ್ಕಿಂತಲೂ ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ.
2CH 5:10 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ, ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
2CH 5:11 ಅಲ್ಲಿ ಇದ್ದ ಸಮಸ್ತ ಯಾಜಕರು ವರ್ಗವ್ಯತ್ಯಾಸವಿಲ್ಲದೆ ತಮ್ಮನ್ನು ಶುದ್ಧಪಡಿಸಿಕೊಂಡಿದ್ದರು.
2CH 5:12 ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದ ಯಾಜಕರು ಪರಿಶುದ್ಧ ಸ್ಥಳದಿಂದ ಹೊರಟಾಗ, ನಯವಾದ ನಾರು ಬಟ್ಟೆಗಳನ್ನು ಧರಿಸಿಕೊಂಡಿದ್ದ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನ್ ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.
2CH 5:13 ತುತೂರಿ ಊದುವವರೂ, ಸಂಗೀತಗಾರರೂ ಯೆಹೋವ ದೇವರನ್ನು ಕೊಂಡಾಡುತ್ತಾ, ಹೊಗಳುತ್ತಾ ಧ್ವನಿ ಎತ್ತಿ ಸ್ತೋತ್ರ ಮಾಡುವಂತೆ ತುತೂರಿಗಳೂ, ತಾಳಗಳೂ ಮೊದಲಾದ ಗೀತ ವಾದ್ಯಗಳಿಂದ ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು, ಅವರ ಕೃಪೆಯು ಯುಗಯುಗಕ್ಕೆ ಇರುವುದು,” ಎಂದು ಯೆಹೋವ ದೇವರನ್ನು ಹೊಗಳುತ್ತಿದ್ದ ಹಾಗೆ, ಯೆಹೋವ ದೇವರ ಆಲಯವು ಮೇಘದಿಂದ ತುಂಬಿತು.
2CH 5:14 ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.
2CH 6:1 ಆಗ ಸೊಲೊಮೋನನು, “ಯೆಹೋವ ದೇವರೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀರಿ;
2CH 6:2 ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದನು.
2CH 6:3 ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.
2CH 6:4 ನಂತರ ಅರಸನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು.
2CH 6:5 ದೇವರು ತಮ್ಮ ಬಾಯಿಂದ, ‘ನನ್ನ ಜನರಾದ ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು, ನನ್ನ ನಾಮವು ಅದರಲ್ಲಿರುವ ಹಾಗೆ ಆಲಯವನ್ನು ಕಟ್ಟುವುದಕ್ಕೆ, ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ಆರಿಸಿಕೊಳ್ಳಲಿಲ್ಲ. ನನ್ನ ಜನರಾದ ಇಸ್ರಾಯೇಲರ ಮೇಲೆ ಆಳುವವನಾಗಿರಲು ನಾನು ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ.
2CH 6:6 ಆದರೆ ನನ್ನ ಹೆಸರು ಅಲ್ಲಿ ಇರುವಂತೆ ಯೆರೂಸಲೇಮನ್ನೂ, ಇಸ್ರಾಯೇಲರನ್ನು ಆಳುವುದಕ್ಕೆ ನಾನು ದಾವೀದನನ್ನೂ ಆರಿಸಿಕೊಂಡಿದ್ದೇನೆ,’ ಎಂದು ಹೇಳಿದ್ದರು.
2CH 6:7 “ಆದಕಾರಣ ನನ್ನ ತಂದೆ ದಾವೀದನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
2CH 6:8 ಯೆಹೋವ ದೇವರು ಆತನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೇ ಸರಿ.
2CH 6:9 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನಿಂದ ಹುಟ್ಟುವ ಮಗನೇ, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕು,’ ಎಂದು ಹೇಳಿದರು.
2CH 6:10 “ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ, ಯೆಹೋವ ದೇವರು ಮಾತುಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.
2CH 6:11 ಯೆಹೋವ ದೇವರು ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆಯು ಇರುವ ಮಂಜೂಷವನ್ನು ಅದರಲ್ಲಿ ಇಟ್ಟಿದ್ದೇನೆ,” ಎಂದನು.
2CH 6:12 ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಪ್ರಾರ್ಥನೆಗಾಗಿ ತನ್ನ ಕೈಗಳನ್ನು ಚಾಚಿದನು.
2CH 6:13 ಸೊಲೊಮೋನನು ಸುಮಾರು ಎರಡೂವರೆ ಮೀಟರ್ ಉದ್ದ, ಎರಡೂವರೆ ಮೀಟರ್ ಅಗಲ, ಒಂದೂವರೆ ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ, ಅಂಗಳದ ಮಧ್ಯದಲ್ಲಿಡಿಸಿದನು. ತಾನು ಅದರ ಮೇಲೆ ನಿಂತು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಮೊಣಕಾಲೂರಿ ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,
2CH 6:14 ಹೀಗೆ ಪ್ರಾರ್ಥಿಸಿದನು. “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಆಕಾಶದಲ್ಲಾದರೂ, ಭೂಮಿಯಲ್ಲಾದರೂ ನಿಮ್ಮ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣ ಹೃದಯದಿಂದ ನಿಮಗೆ ನಡೆದುಕೊಳ್ಳುವಂಥ ಸೇವಕರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸಿದ್ದೀರಿ.
2CH 6:15 ನಿಮ್ಮ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿ, ನೀವು ನಿಮ್ಮ ಬಾಯಿಂದ ಹೇಳಿದ್ದನ್ನು ಇಂದು ಈಡೇರಿಸಿದ್ದೀರಿ.
2CH 6:16 “ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿಮ್ಮ ಸಂತಾನದವರು, ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ನಿಯಮದ ಪ್ರಕಾರ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.
2CH 6:17 ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.
2CH 6:18 “ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವರೋ? ಇಗೋ, ಆಕಾಶವೂ, ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?
2CH 6:19 ಆದರೂ ನನ್ನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನ ಪ್ರಾರ್ಥನೆಗೂ, ಅವನ ವಿಜ್ಞಾಪನೆಗೂ ತಿರುಗಿಕೊಂಡು, ನಿಮ್ಮ ಸೇವಕನು ನಿಮ್ಮ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನು ಕೇಳಿರಿ.
2CH 6:20 ನಿಮ್ಮ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀವು ಕೇಳುವಂತೆ, ‘ಇಲ್ಲಿ ನನ್ನ ನಾಮಪ್ರಭಾವ ಇರುವುದು,’ ಎಂದು ನೀವು ಹೇಳಿದ ಈ ಆಲಯದ ಮೇಲೆ ರಾತ್ರಿ ಹಗಲೂ ನಿಮ್ಮ ಕಟಾಕ್ಷವಿರಲಿ.
2CH 6:21 ಇದಲ್ಲದೆ ನೀವು ನಿಮ್ಮ ಸೇವಕನ ಮತ್ತು ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.
2CH 6:22 “ತನ್ನ ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ, ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅಂಥವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
2CH 6:23 ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.
2CH 6:24 “ನಿಮ್ಮ ಜನರಾದ ಇಸ್ರಾಯೇಲರು ನಿಮಗೆ ವಿರೋಧವಾಗಿ ಪಾಪಮಾಡಿದ್ದರಿಂದ, ತಮ್ಮ ಶತ್ರುವಿನ ಮುಂದೆ ಪರಾಭವಗೊಂಡು, ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ, ಈ ಆಲಯಕ್ಕೆ ಬಂದು, ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
2CH 6:25 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಜನರಾದ ಇಸ್ರಾಯೇಲರ ಪಾಪವನ್ನು ಮನ್ನಿಸಿ, ನೀವು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡಿರಿ.
2CH 6:26 “ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,
2CH 6:27 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.
2CH 6:28 “ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,
2CH 6:29 ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತಾನು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,
2CH 6:30 ನೀವು ವಾಸಮಾಡುವ ಪರಲೋಕದಿಂದ ಕೇಳಿ ಮನ್ನಿಸಿ, ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.
2CH 6:31 ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗಗಳಲ್ಲಿ ನಡೆಯುವರು.
2CH 6:32 “ನಿಮ್ಮ ಜನರಾದ ಇಸ್ರಾಯೇಲಿನವನಲ್ಲದೆ ನಿಮ್ಮ ಮಹಾನಾಮದ ನಿಮಿತ್ತ ದೂರದೇಶದಿಂದ ಬಂದ ಒಬ್ಬ ಪರದೇಶಿಯು, ನಿಮ್ಮ ಬಲವಾದ ಕೈ, ನಿಮ್ಮ ಚಾಚಿದ ತೋಳು ಇವುಗಳ ಕುರಿತು ಕೇಳಿ, ಅವರು ಈ ಆಲಯದ ಕಡೆಗೆ ಬಂದು ಪ್ರಾರ್ಥನೆಮಾಡಿದರೆ,
2CH 6:33 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು.
2CH 6:34 “ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
2CH 6:35 ಆಗ ನೀವು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ, ಅವರಿಗೆ ನ್ಯಾಯವನ್ನು ತೀರಿಸಿರಿ.
2CH 6:36 “ಪಾಪ ಮಾಡದವನು ಯಾವನೂ ಇಲ್ಲವಲ್ಲಾ. ಆದ್ದರಿಂದ ಅವರು ನಿಮಗೆ ವಿರೋಧವಾಗಿ ಪಾಪಮಾಡಲು, ನೀವು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ, ಸಮೀಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಹೋಗುವಂತೆ ನೀವು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ,
2CH 6:37 ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಮಾನಸಾಂತರಪಟ್ಟು, ‘ನಾವು ಪಾಪಮಾಡಿದ್ದೇವೆ, ತಪ್ಪುಮಾಡಿ ದುಷ್ಟರಾಗಿ ನಡೆದಿದ್ದೇವೆ,’ ಎಂದು ಅವರನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿಮಗೆ ಪ್ರಾರ್ಥನೆಮಾಡಿ,
2CH 6:38 ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
2CH 6:39 ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ, ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಕ್ಷಮಿಸಿರಿ.
2CH 6:40 “ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿಮ್ಮ ಕಣ್ಣುಗಳು ತೆರೆದಿರಲಿ. ನಿಮ್ಮ ಕಿವಿಗಳು ಆಲಿಸುತ್ತಾ ಇರಲಿ.
2CH 6:41 “ಈಗ ದೇವರಾದ ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ;
2CH 6:42 ಯೆಹೋವ ದೇವರೇ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ.
2CH 7:1 ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸಿದ ಕೂಡಲೆ, ಬೆಂಕಿಯು ಆಕಾಶದಿಂದ ಇಳಿದು ದಹನಬಲಿಗಳನ್ನೆಲ್ಲಾ ದಹಿಸಿಬಿಟ್ಟಿತು. ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿತು.
2CH 7:2 ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿದ್ದರಿಂದ ಯಾಜಕರು ಆಲಯದಲ್ಲಿ ಹೋಗಲಾರದೆ ಇದ್ದರು.
2CH 7:3 ಇಸ್ರಾಯೇಲರೆಲ್ಲರೂ ಬೆಂಕಿಯು ಇಳಿದದ್ದನ್ನೂ, ಆಲಯದ ಮೇಲೆ ಇರುವ ಯೆಹೋವ ದೇವರ ಮಹಿಮೆಯನ್ನೂ ಕಂಡಾಗ, ಅವರು ನೆಲಕ್ಕೆ ತಮ್ಮ ಮುಖಗಳನ್ನು ಬಾಗಿ, ನೆಲಗಟ್ಟಿನ ಮೇಲೆ ಮೊಣಕಾಲೂರಿ ಆರಾಧಿಸುತ್ತಾ, ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ಯೆಹೋವ ದೇವರು ಒಳ್ಳೆಯವರು, ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.”
2CH 7:4 ಆಗ ಅರಸನೂ, ಸಮಸ್ತ ಜನರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು.
2CH 7:5 ಅರಸನಾದ ಸೊಲೊಮೋನನು 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಬಲಿಯಾಗಿ ಅರ್ಪಿಸಿದನು. ಹೀಗೆಯೇ ಅರಸನೂ, ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು.
2CH 7:6 ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಂತರು. ಹಾಗೆಯೇ ಲೇವಿಯರು ಯೆಹೋವ ದೇವರ ಗೀತವಾದ್ಯಗಳನ್ನು ಹಿಡಿದುಕೊಂಡು ನಿಂತರು. ಅರಸನಾದ ದಾವೀದನು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಇವುಗಳನ್ನು ಮಾಡಿಸಿದ್ದನು. “ಯೆಹೋವ ದೇವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಲೇವಿಯರ ಮುಂದೆ ನಿಂತು ತುತೂರಿಗಳನ್ನು ಊದುತ್ತಿದ್ದರು. ಸಮಸ್ತ ಇಸ್ರಾಯೇಲರೂ ನಿಂತಿದ್ದರು.
2CH 7:7 ಸೊಲೊಮೋನನು ಮಾಡಿಸಿದ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಯ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಸೊಲೊಮೋನನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆಮಾಡಿ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
2CH 7:8 ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ಅವನ ಸಂಗಡ ಏಳು ದಿವಸ ಹಬ್ಬವನ್ನು ಮಾಡಿದರು.
2CH 7:9 ಎಂಟನೆಯ ದಿನದಲ್ಲಿ ಪರಿಶುದ್ಧ ಸಮೂಹವನ್ನು ನಡೆಸಿದರು. ಏಕೆಂದರೆ ಏಳು ದಿವಸ ಬಲಿಪೀಠದ ಪ್ರತಿಷ್ಠೆಯನ್ನು ಮತ್ತು ಇನ್ನು ಏಳು ದಿವಸ ಹಬ್ಬವನ್ನು ಆಚರಿಸಿದರು.
2CH 7:10 ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿವಸದಲ್ಲಿ ಅವನು ಜನರಿಗೆ ಅವರವರ ಡೇರೆಗಳಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಯೆಹೋವ ದೇವರು ದಾವೀದನಿಗೂ, ಸೊಲೊಮೋನನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಹೋದರು.
2CH 7:11 ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದನು. ಅವನು ಯೆಹೋವ ದೇವರ ಆಲಯದಲ್ಲಿಯೂ, ತನ್ನ ಅರಮನೆಯಲ್ಲಿಯೂ ಮಾಡಬೇಕಾದ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸುವಲ್ಲಿ ಯಶಸ್ವಿಯಾದನು.
2CH 7:12 ಯೆಹೋವ ದೇವರು ರಾತ್ರಿಯಲ್ಲಿ ಸೊಲೊಮೋನನಿಗೆ ಪ್ರತ್ಯಕ್ಷರಾಗಿ ಅವನಿಗೆ, “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯನ್ನು ಅರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆಯ್ದುಕೊಂಡಿದ್ದೇನೆ.
2CH 7:13 “ಮಳೆಯಿಲ್ಲದಂತೆ ನಾನು ಆಕಾಶವನ್ನು ಮುಚ್ಚಿದರೂ ದೇಶವನ್ನು ತಿಂದುಬಿಡಲು ಮಿಡತೆಗಳಿಗೆ ಆಜ್ಞಾಪಿಸಿದರೂ, ಇಲ್ಲವೆ ನನ್ನ ಜನರ ಮಧ್ಯದಲ್ಲಿ ಘೋರ ವ್ಯಾಧಿಯನ್ನು ಕಳುಹಿಸಿದರೂ,
2CH 7:14 ನನ್ನ ಹೆಸರಿನಿಂದ ಕರೆಯಲಾದ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆಮಾಡಿ, ನನ್ನನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ, ಆಗ ನಾನು ಪರಲೋಕದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ, ಅವರ ದೇಶವನ್ನು ಗುಣ ಮಾಡುವೆನು.
2CH 7:15 ಈಗ ಈ ಸ್ಥಳದ ಪ್ರಾರ್ಥನೆಗೆ ನನ್ನ ಕಣ್ಣುಗಳು ತೆರೆದಿರುವುವು, ನನ್ನ ಕಿವಿಗಳು ಆಲೈಸುತ್ತಿರುವುವು.
2CH 7:16 ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ಈ ಆಲಯವನ್ನು ಆಯ್ದುಕೊಂಡು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
2CH 7:17 “ನೀನು ನಿನ್ನ ತಂದೆಯಾದ ದಾವೀದನಂತೆ, ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
2CH 7:18 ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲ,’ ಎಂದು ನಾನು ನಿನ್ನ ತಂದೆ ದಾವೀದನ ಸಂಗಡ ಮಾಡಿದ ಒಡಂಬಡಿಕೆಯ ಪ್ರಕಾರ ನಿನ್ನ ರಾಜ್ಯದ ಸಿಂಹಾಸನವನ್ನು ಸ್ಥಿರಪಡಿಸುತ್ತೇನೆ.
2CH 7:19 “ಆದರೆ ನೀವು, ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ತೊರೆದುಬಿಟ್ಟು, ನನ್ನಿಂದ ದೂರಹೋಗಿ ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ,
2CH 7:20 ಆಗ ನಾನು ಇಸ್ರಾಯೇಲಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ಕಿತ್ತುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಅದನ್ನು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಆಸ್ಪದವಾಗುವಂತೆ ಮಾಡುವೆನು.
2CH 7:21 ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು, ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
2CH 7:22 ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ, ಅವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು.
2CH 8:1 ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ,
2CH 8:2 ಹೀರಾಮನು ಸೊಲೊಮೋನನಿಗೆ ತಿರುಗಿ ಕೊಟ್ಟ ಪಟ್ಟಣಗಳನ್ನು ಸೊಲೊಮೋನನು ಕಟ್ಟಿಸಿ, ಇಸ್ರಾಯೇಲರನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು.
2CH 8:3 ಸೊಲೊಮೋನನು ಹಮಾತ್ ಚೋಬವನ್ನು ವಶಪಡಿಸಿಕೊಂಡನು.
2CH 8:4 ಅವನು ಮರುಭೂಮಿಯಲ್ಲಿರುವ ತದ್ಮೋರ್ ಪಟ್ಟಣವನ್ನೂ, ಹಮಾತಿನಲ್ಲಿರುವ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
2CH 8:5 ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು.
2CH 8:6 ಅಲ್ಲದೆ, ಬಾಲಾತ್ ಪಟ್ಟಣವನ್ನೂ, ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
2CH 8:7 ಸೊಲೊಮೋನನು ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
2CH 8:8 ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
2CH 8:9 ಆದರೆ ಸೊಲೊಮೋನನು ತನ್ನ ಕೆಲಸಕ್ಕಾಗಿ ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಆದರೆ ಅವರು ಯುದ್ಧಭಟರಾಗಿಯೂ, ಅಧಿಪತಿಗಳಲ್ಲಿ ಪ್ರಧಾನರಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇರುವಂತೆ ಮಾಡಿದನು.
2CH 8:10 ಇವರು ಅರಸನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನರಾಗಿದ್ದರು, ಇವರು ಇನ್ನೂರೈವತ್ತು ಮಂದಿ ಆಳುಗಳ ಮೇಲೆ ಅಧಿಕಾರಿಗಳಾಗಿದ್ದರು.
2CH 8:11 ಸೊಲೊಮೋನನು, “ಯೆಹೋವ ದೇವರ ಒಡಂಬಡಿಕೆಯ ಮಂಜೂಷವಿದ್ದ ಸ್ಥಳಗಳು ಪರಿಶುದ್ಧವಾಗಿರುವುದರಿಂದ, ನನ್ನ ಹೆಂಡತಿಯು ಇಸ್ರಾಯೇಲಿನ ಅರಸನಾದ ದಾವೀದನ ಅರಮನೆಯಲ್ಲಿ ವಾಸವಾಗಿರಕೂಡದು,” ಎಂದು ಹೇಳಿ ಸೊಲೊಮೋನನು ಫರೋಹನ ಮಗಳನ್ನು ದಾವೀದನ ಪಟ್ಟಣದಲ್ಲಿರಿಸದೆ ತಾನು ಆಕೆಗೋಸ್ಕರ ಕಟ್ಟಿಸಿದ ಅರಮನೆಯಲ್ಲಿ ಅವಳನ್ನು ಇರಿಸಿದನು.
2CH 8:12 ಆಗ ಸೊಲೊಮೋನನು ದ್ವಾರಾಂಗಳದ ಮುಂದೆ ತಾನು ಕಟ್ಟಿಸಿದ ಯೆಹೋವ ದೇವರ ಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದನು.
2CH 8:13 ದಿನಂಪ್ರತಿ ಮೋಶೆಯ ಆಜ್ಞೆಯ ಪ್ರಕಾರ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಯೂ ವರುಷಕ್ಕೆ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಗುಡಾರಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.
2CH 8:14 ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
2CH 8:15 ಅವರು ಯಾವ ಕಾರ್ಯದಲ್ಲಾದರೂ, ಬೊಕ್ಕಸಗಳಲ್ಲಾದರೂ ಅರಸನು ಯಾಜಕರಿಗೂ ಲೇವಿಯರಿಗೂ ಹೇಳಿದ ಆಜ್ಞೆಯನ್ನು ಮೀರಲಿಲ್ಲ.
2CH 8:16 ಯೆಹೋವ ದೇವರ ಆಲಯದ ಅಸ್ತಿವಾರ ಹಾಕಿದ ದಿವಸದವರೆಗೂ ಅದನ್ನು ಕಟ್ಟಿಸಿ ತೀರಿಸುವವರೆಗೂ ಸೊಲೊಮೋನನ ಕೆಲಸವೆಲ್ಲಾ ಮುಗಿದು, ಯೆಹೋವ ದೇವರ ಆಲಯವು ಸಿದ್ಧವಾಯಿತು.
2CH 8:17 ಆಗ ಸೊಲೊಮೋನನು ಎದೋಮ್ ದೇಶದ ಸಮುದ್ರತೀರದ ಬಳಿಯಲ್ಲಿರುವ ಎಚ್ಯೋನ್ ಗೆಬೆರ್, ಏಲೋತ್ ಎಂಬ ಊರುಗಳಿಗೆ ಹೊರಟುಹೋದನು.
2CH 8:18 ಹೀರಾಮನು ತನ್ನ ಸೇವಕರ ಮುಖಾಂತರ ಹಡಗುಗಳನ್ನೂ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಅವನ ಬಳಿಗೆ ಕಳುಹಿಸಿದನು. ಅವರು ಸೊಲೊಮೋನನ ಸೇವಕರ ಸಂಗಡ ಓಫೀರಿಗೆ ಹೋಗಿ, ಅಲ್ಲಿಂದ ಅರಸನಾದ ಸೊಲೊಮೋನನಿಗೆ 15,000 ಕಿಲೋಗ್ರಾಂ ಬಂಗಾರವನ್ನು ತೆಗೆದುಕೊಂಡು ಬಂದರು.
2CH 9:1 ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು. ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ, ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು.
2CH 9:2 ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು, ಅವುಗಳಲ್ಲಿ ಅವನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು.
2CH 9:3 ಶೆಬದ ರಾಣಿಯು ಸೊಲೊಮೋನನ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ,
2CH 9:4 ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.
2CH 9:5 ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ.
2CH 9:6 ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ನಿನ್ನ ಮಹಾಜ್ಞಾನದಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ.
2CH 9:7 ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು.
2CH 9:8 ನಿನ್ನ ದೇವರಾದ ಯೆಹೋವ ದೇವರಿಗೋಸ್ಕರ ಅರಸನಾಗಿರುವಂತೆ ತಮ್ಮ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ನಿನ್ನ ದೇವರು ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ಅವರನ್ನು ಯುಗಯುಗಕ್ಕೂ ಸ್ಥಿರಗೊಳಿಸಬೇಕೆಂದಿದ್ದಾರೆ. ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು.
2CH 9:9 ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಂಥ ಸುಗಂಧದ್ರವ್ಯಗಳಿಗೆ ಬೇರೆ ಯಾವುದು ಸಮನವಾದದ್ದು ಇರಲಿಲ್ಲ.
2CH 9:10 ಹೀರಾಮನ ಸೇವಕರೂ, ಸೊಲೊಮೋನನ ಸೇವಕರೂ ಓಫೀರಿನಿಂದ ಬಂಗಾರವನ್ನೂ, ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದರು.
2CH 9:11 ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ, ಅರಮನೆಗೋಸ್ಕರವೂ ಸೋಪಾನಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ ವೀಣೆಗಳನ್ನೂ ಮಾಡಿಸಿದನು. ಯೆಹೂದ ದೇಶದಲ್ಲಿ ಹಿಂದೆಂದೂ ಇಂಥವುಗಳನ್ನು ಕಂಡಿರಲಿಲ್ಲ.
2CH 9:12 ಅರಸನಾದ ಸೊಲೊಮೋನನು, ಶೆಬದ ರಾಣಿಯು ಅರಸನಿಗೆ ತಂದ ಕಾಣಿಕೆಗಳ ಪ್ರತಿಯಾಗಿ ಕೊಟ್ಟದ್ದಲ್ಲದೆ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು.
2CH 9:13 ಸೊಲೊಮೋನನಿಗೆ ಪ್ರತಿ ವರುಷ ಸುಮಾರು ಇಪ್ಪತ್ತಮೂರು ಸಾವಿರ ಕಿಲ್ರೊಗ್ರಾಂ ಬಂಗಾರವು ದೊರಕುತ್ತಿತ್ತು.
2CH 9:14 ಇದಲ್ಲದೆ ಸೊಲೊಮೋನನಿಗೆ ವರ್ತಕರೂ ವ್ಯಾಪಾರಸ್ಥರೂ ಅರೇಬಿಯದ ಅರಸರೂ ದೇಶದ ಅಧಿಪತಿಗಳೂ ಸಹ ಬೆಳ್ಳಿಬಂಗಾರವನ್ನು ತರುತ್ತಿದ್ದರು.
2CH 9:15 ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿ ಸುಮಾರು ಏಳು ಕಿಲೋಗ್ರಾಂ ತೂಕದ ಬಂಗಾರವಿತ್ತು.
2CH 9:16 ಹಾಗೆಯೇ ಬಂಗಾರದಿಂದ ಮುನ್ನೂರು ಸಣ್ಣ ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿಗೆ ಸುಮಾರು ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.
2CH 9:17 ಅರಸನು ದಂತದಿಂದ ದೊಡ್ಡ ಸಿಂಹಾಸನವನ್ನು ಮಾಡಿಸಿ, ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿದನು.
2CH 9:18 ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳಿದ್ದವು. ಸಿಂಹಾಸನಕ್ಕೆ ಬಂಗಾರದ ಪಾದ ಪೀಠ ಇತ್ತು. ಕುಳಿತುಕೊಳ್ಳುವ ಆಸನದ ಎರಡು ಕಡೆಗಳಲ್ಲಿ ಕೈಗಳಿದ್ದವು, ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
2CH 9:19 ಹನ್ನೆರಡು ಸಿಂಹಗಳು ಆರು ಮೆಟ್ಟಲುಗಳ ಮೇಲೆ ಎರಡು ಕಡೆಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇರಲಿಲ್ಲ.
2CH 9:20 ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಅರಮನೆಯ ಎಲ್ಲಾ ಸಾಮಗ್ರಿಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ದಿವಸಗಳಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ, ಆದುದರಿಂದ ಅವನಲ್ಲಿ ಬೆಳ್ಳಿಯ ವಸ್ತು ಒಂದಾದರೂ ಕಾಣಿಸಲಿಲ್ಲ.
2CH 9:21 ಅರಸನ ಹಡಗುಗಳು ಹೀರಾಮನ ಸೇವಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.
2CH 9:22 ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಸಮಸ್ತ ಅರಸರಿಗಿಂತ ಮಿಗಿಲಾಗಿದ್ದನು.
2CH 9:23 ದೇವರು ಸೊಲೊಮೋನನ ಹೃದಯದಲ್ಲಿ ಕೊಟ್ಟಿದ್ದ ಜ್ಞಾನವನ್ನು ಕೇಳುವುದಕ್ಕಾಗಿ ಭೂಲೋಕದಲ್ಲಿರುವ ಸಮಸ್ತ ಅರಸರು ಅವನ ದರ್ಶನವನ್ನು ಬಯಸಿದರು.
2CH 9:24 ಅವರೆಲ್ಲರೂ ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ, ಬಂಗಾರದ ಪಾತ್ರೆಗಳನ್ನೂ, ವಸ್ತ್ರಗಳನ್ನೂ, ಆಯುಧಗಳನ್ನೂ, ಸುಗಂಧಗಳನ್ನೂ, ಕುದುರೆಗಳನ್ನೂ, ಹೇಸರಗತ್ತೆಗಳನ್ನೂ ವರುಷ ವರುಷವೂ ನೇಮಕವಾದ ಪ್ರಕಾರ ತರುತ್ತಿದ್ದರು.
2CH 9:25 ಸೊಲೊಮೋನನಿಗೆ ನಾಲ್ಕು ಸಾವಿರ ಕುದುರೆ ಲಾಯಗಳು ಮತ್ತು ರಥಗಳು ಇದ್ದವು. ಇದಲ್ಲದೆ ಹನ್ನೆರಡು ಸಾವಿರ ರಾಹುತರಿದ್ದರು. ಅವರನ್ನು ರಥಗಳ ಪಟ್ಟಣಗಳಲ್ಲಿಯೂ ಅರಸನ ಬಳಿಯಲ್ಲಿ ಯೆರೂಸಲೇಮಿನಲ್ಲಿಯೂ ಇರಿಸಿದನು.
2CH 9:26 ಅವನು ಯೂಫ್ರೇಟೀಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ದೇಶವನ್ನು ಹಿಡಿದು ಈಜಿಪ್ಟಿನ ಮೇರೆಯವರೆಗೆ ಇರುವ ಸಮಸ್ತ ಅರಸರ ಮೇಲೆ ಆಳುತ್ತಾ ಇದ್ದನು.
2CH 9:27 ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.
2CH 9:28 ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಸಮಸ್ತ ದೇಶಗಳಿಂದಲೂ ಕುದುರೆಗಳನ್ನು ತೆಗೆದುಕೊಂಡು ಬರುತ್ತಿದ್ದರು.
2CH 9:29 ಸೊಲೊಮೋನನ ಉಳಿದ ಕ್ರಿಯೆಗಳು, ಮೊದಲನೆಯವುಗಳೂ, ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ, ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ, ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಬರೆದಿರುತ್ತವೆ.
2CH 9:30 ಹೀಗೆ ಸೊಲೊಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲಿನ ಮೇಲೆ ನಾಲ್ವತ್ತು ವರ್ಷಗಳು ಆಳಿದನು.
2CH 9:31 ಸೊಲೊಮೋನನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ತಂದೆ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ರೆಹಬ್ಬಾಮನು ಅವನಿಗೆ ಬದಲಾಗಿ ಅರಸನಾದನು.
2CH 10:1 ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವುದಕ್ಕೆ ಸಮಸ್ತ ಇಸ್ರಾಯೇಲರು ಶೆಕೆಮಿಗೆ ಬಂದರು.
2CH 10:2 ಅರಸನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸವಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ಇದನ್ನು ಕೇಳಿದಾಗ, ಅವನು ಈಜಿಪ್ಟಿನಿಂದ ತಿರುಗಿಬಂದನು.
2CH 10:3 ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲರೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ,
2CH 10:4 “ನಿನ್ನ ತಂದೆಯು ನಮ್ಮ ನೊಗವನ್ನು ಭಾರವಾಗಿ ಮಾಡಿದನು. ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ, ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ, ನಾವು ನಿನಗೆ ಸೇವೆಮಾಡುತ್ತೇವೆ,” ಎಂದರು.
2CH 10:5 ಅದಕ್ಕೆ ರೆಹಬ್ಬಾಮನು ಅವರಿಗೆ, “ಮೂರು ದಿವಸಗಳಾದ ತರುವಾಯ ತಿರುಗಿ ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದ್ದರಿಂದ ಜನರು ಹೊರಟು ಹೋದರು.
2CH 10:6 ಆಗ ಅರಸನಾದ ರೆಹಬ್ಬಾಮನು, ತನ್ನ ತಂದೆ ಸೊಲೊಮೋನನು ಬದುಕಿರುವಾಗ, ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ಅವರಿಗೆ, “ನಾನು ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
2CH 10:7 ಅವರು ಅವನಿಗೆ, “ನೀನು ಈ ಜನರಿಗೆ ದಯವುಳ್ಳವನಾಗಿ ಅವರನ್ನು ಮೆಚ್ಚಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.
2CH 10:8 ಆದರೆ ರೆಹಬ್ಬಾಮನು, ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು, ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಕೇಳಿ,
2CH 10:9 ಅವನು ಅವರಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಉತ್ತರ ಕೊಡಲು ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
2CH 10:10 ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವನಿಗೆ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರುವುದು.
2CH 10:11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು. ಆದರೆ ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಚೇಳು ಕೊರಡೆಗಳಿಂದ ಶಿಕ್ಷಿಸುವೆನು,’ ಎಂದು ನೀನು ಅವರಿಗೆ ಹೇಳು,” ಎಂದರು.
2CH 10:12 ಆಗ, “ಮೂರನೆಯ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ” ಎಂದು ಅರಸನು ಹೇಳಿದ ಪ್ರಕಾರ ಮೂರನೆಯ ದಿವಸದಲ್ಲಿ ಯಾರೊಬ್ಬಾಮನೂ, ಸಮಸ್ತ ಜನರೂ ಅರಸನಾದ ರೆಹಬ್ಬಾಮನ ಬಳಿಗೆ ಬಂದರು.
2CH 10:13 ಆದರೆ ಅರಸನು ಜನರಿಗೆ ಕಠಿಣವಾದ ಉತ್ತರವನ್ನು ಕೊಟ್ಟು, ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ನಿರಾಕರಿಸಿ,
2CH 10:14 ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ, “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿ ಮಾಡಿದನು. ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಶಿಕ್ಷಿಸಿದನು; ಆದರೆ ನಾನು ಮುಳ್ಳು ಕೊರಡೆಗಳಿಂದ ಶಿಕ್ಷಿಸುವೆನು,” ಎಂದನು.
2CH 10:15 ಅರಸನು ಜನರ ಮಾತನ್ನು ಕೇಳದೆಹೋದದ್ದು ದೇವರಿಂದಲೇ. ಹೀಗೆ ಯೆಹೋವ ದೇವರು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ಈಡೇರುವುದಕ್ಕೆ ಕಾರಣವಾಯಿತು.
2CH 10:16 ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲರು ತಿಳಿದಾಗ, ಜನರು ಅರಸನಿಗೆ ಉತ್ತರವಾಗಿ, “ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾಯೇಲರೇ, ನಿಮ್ಮ ಡೇರೆಗಳಿಗೆ ಹೋಗಿರಿ. ದಾವೀದನೇ, ಈಗ ನಿನ್ನ ಕುಟುಂಬವನ್ನು ನೀನೇ ನೋಡಿಕೋ,” ಎಂದು ಹೇಳಿ ಇಸ್ರಾಯೇಲರೆಲ್ಲರು ತಮ್ಮ ತಮ್ಮ ಡೇರೆಗಳಿಗೆ ಹೋದರು.
2CH 10:17 ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.
2CH 10:18 ಆಗ ರೆಹಬ್ಬಾಮನು ದಾಸರ ಮೇಲ್ವಿಚಾರಕನಾದ ಅದೋನೀರಾಮನನ್ನು ಕಳುಹಿಸಿದನು. ಆದರೆ ಇಸ್ರಾಯೇಲರು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು. ಆದ್ದರಿಂದ ಅರಸನಾದ ರೆಹಬ್ಬಾಮನು ಆತುರಪಟ್ಟು ತನ್ನ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು.
2CH 10:19 ಹೀಗೆ ಇಂದಿನವರೆಗೂ ಇಸ್ರಾಯೇಲರು ದಾವೀದನ ಕುಟುಂಬದವರೊಡನೆ ವಿರೋಧವಾಗಿ ತಿರುಗಿಬೀಳುತ್ತಲೇ ಇದ್ದಾರೆ.
2CH 11:1 ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು, ಯೆಹೂದ ಮತ್ತು ಬೆನ್ಯಾಮೀನವರ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
2CH 11:2 ಆದರೆ ಯೆಹೋವ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ,
2CH 11:3 “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನರಲ್ಲಿರುವ ಸಮಸ್ತ ಇಸ್ರಾಯೇಲರಿಗೂ ಹೇಳಬೇಕಾದದ್ದೇನೆಂದರೆ,
2CH 11:4 ‘ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ. ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯಾರೊಬ್ಬಾಮನ ಮೇಲೆ ಹೋಗದೆ ಹಿಂದಿರುಗಿ ಹೋದರು.
2CH 11:5 ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ, ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳನ್ನು ಕಟ್ಟಿಸಿದನು.
2CH 11:6 ಅವನು ಬೇತ್ಲೆಹೇಮನ್ನೂ, ಏಟಾಮನ್ನೂ, ತೆಕೋವನ್ನೂ,
2CH 11:7 ಬೇತ್ ಚೂರ್ ಪಟ್ಯಣವನ್ನೂ, ಸೋಕೋನನ್ನೂ, ಅದುಲ್ಲಾಮನ್ನೂ,
2CH 11:8 ಗತ್ ಊರನ್ನೂ ಮಾರೇಷಾವನ್ನೂ ಜೀಫನ್ನೂ,
2CH 11:9 ಅದೋರೈಮನ್ನೂ, ಲಾಕೀಷನ್ನೂ, ಅಜೇಕವನ್ನೂ,
2CH 11:10 ಚೊರ್ಗವನ್ನೂ, ಅಯ್ಯಾಲೋನನ್ನೂ, ಹೆಬ್ರೋನನ್ನೂ ಕಟ್ಟಿಸಿದನು. ಇವು ಯೆಹೂದದಲ್ಲಿಯೂ, ಬೆನ್ಯಾಮೀನರಲ್ಲಿಯೂ ಕೋಟೆಯುಳ್ಳ ಪಟ್ಟಣಗಳಾಗಿವೆ.
2CH 11:11 ಇದಲ್ಲದೆ ಅವನು ಕೋಟೆಗಳನ್ನು ಬಲಪಡಿಸಿ, ಅವುಗಳಲ್ಲಿ ನಾಯಕರನ್ನೂ, ಆಹಾರ, ಎಣ್ಣೆ, ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.
2CH 11:12 ಪ್ರತಿ ಪಟ್ಟಣದಲ್ಲಿ ಖೇಡ್ಯಗಳನ್ನೂ, ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾಮೀನವರು ಅವನ ಕಡೆ ಇದ್ದುದರಿಂದ, ಅವುಗಳನ್ನು ಭದ್ರಪಡಿಸಿದನು.
2CH 11:13 ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜಕರೂ, ಲೇವಿಯರೂ ತಮ್ಮ ಸಮಸ್ತ ಪ್ರಾಂತಗಳಿಂದ ಅವನ ಬಳಿಗೆ ಪುನಃ ಬಂದರು.
2CH 11:14 ಲೇವಿಯರು ತಮ್ಮ ಹುಲ್ಲುಗಾವಲು ಮತ್ತು ಆಸ್ತಿಯನ್ನು ತ್ಯಜಿಸಿ ಯೆಹೂದ ಮತ್ತು ಯೆರೂಸಲೇಮಿಗೆ ಬಂದರು, ಏಕೆಂದರೆ ಯಾರೊಬ್ಬಾಮನೂ ಅವನ ಮಕ್ಕಳು ಯೆಹೋವ ದೇವರಿಗೆ ಯಾಜಕ ಸೇವೆ ಮಾಡದ ಹಾಗೆ ತಿರಸ್ಕರಿಸಿದನು.
2CH 11:15 ಉನ್ನತ ಸ್ಥಳಗಳಿಗೋಸ್ಕರವೂ ದೆವ್ವಗಳಿಗೋಸ್ಕರವೂ, ಯಾರೊಬ್ಬಾಮನು ಮಾಡಿದ ಕರುಗಳ ಮೂರ್ತಿಪೂಜೆಗಾಗಿ ತಾನೇ ಯಾಜಕರನ್ನು ನೇಮಿಸಿದ್ದರಿಂದ,
2CH 11:16 ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕುವ ಮನಸ್ಸು ಮಾಡಿದ ಇಸ್ರಾಯೇಲಿನ ಪ್ರತಿಯೊಂದು ಕುಲಗಳಿಂದ ಕೆಲವರು ತಮ್ಮ ಪೂರ್ವಜರ ದೇವರಾದ ಯೆಹೋವ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು.
2CH 11:17 ಹೀಗೆ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ, ಸೊಲೊಮೋನನ ಮಗ ರೆಹಬ್ಬಾಮನನ್ನು ಮೂರು ವರ್ಷಗಳವರೆಗೂ ಬಲಪಡಿಸಿದರು. ಅವರು ಮೂರು ವರ್ಷಗಳವರೆಗೂ ದಾವೀದನ, ಸೊಲೊಮೋನನ ಮಾರ್ಗದಲ್ಲಿ ನಡೆದರು.
2CH 11:18 ರೆಹಬ್ಬಾಮನು ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು. ಈ ಮಹಲತ್ ದಾವೀದನ ಮಗ ಯೆರೀಮೋತ್ ಹಾಗು ಅಬೀಹೈಲರ ಮಗಳು. ಈ ಅಬೀಹೈಲಳು ಇಷಯನ ಮೊಮ್ಮಗಳೂ, ಎಲೀಯಾಬನ ಮಗಳೂ ಆಗಿದ್ದಳು.
2CH 11:19 ಅಬೀಹಾಯಿಲಳು ಯೆಗೂಷ್, ಶೆಮರ್ಯ, ಜಹಾಮ್ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು.
2CH 11:20 ಇವಳ ತರುವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಮದುವೆಮಾಡಿಕೊಂಡನು. ಇವಳು ಅವನಿಗೆ ಅಬೀಯನನ್ನೂ, ಅತ್ತೈಯನ್ನೂ, ಜೀಜನನ್ನೂ, ಶೆಲೋಮೀತನನ್ನೂ ಹೆತ್ತಳು.
2CH 11:21 ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ, ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಅವನು ಇಪ್ಪತ್ತೆಂಟು ಮಂದಿ ಪುತ್ರರನ್ನೂ, ಅರವತ್ತು ಮಂದಿ ಪುತ್ರಿಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿಯರಿಗಿಂತಲೂ, ಉಪಪತ್ನಿಯರಿಗಿಂತಲೂ ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಹೆಚ್ಚಾಗಿ ಪ್ರೀತಿಮಾಡಿದನು.
2CH 11:22 ರೆಹಬ್ಬಾಮನು ಮಾಕ ಎಂಬವಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ಯುವರಾಜನನ್ನಾಗಿ ಮಾಡಿದನು. ಏಕೆಂದರೆ ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು.
2CH 11:23 ಇದಲ್ಲದೆ ಅವನು ವಿವೇಕವಾಗಿ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾಮೀನಿನ ದೇಶಗಳಲ್ಲಿ ಇರುವ ಎಲ್ಲಾ ಬಲವಾದ ಪಟ್ಟಣಗಳಲ್ಲಿ ಚದರಿಸಿ, ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಅವರಿಗೆ ಅನೇಕ ಹೆಂಡತಿಯರನ್ನು ಕೊಟ್ಟನು.
2CH 12:1 ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ, ಅವನೂ, ಅವನ ಸಂಗಡ ಸಮಸ್ತ ಇಸ್ರಾಯೇಲರೂ ಯೆಹೋವ ದೇವರ ನಿಯಮವನ್ನು ಬಿಟ್ಟುಬಿಟ್ಟರು.
2CH 12:2 ಅವರು ಯೆಹೋವ ದೇವರಿಗೆ ವಿಶ್ವಾಸದ್ರೋಹಮಾಡಿದ್ದರಿಂದ, ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು.
2CH 12:3 ಅವನ ಸಂಗಡ ಸಾವಿರದ ಇನ್ನೂರು ರಥಗಳೂ, ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಈಜಿಪ್ಟಿನಿಂದ ಬಂದ ಲಿಬಿಯದವರೂ, ಸುಕ್ಕೀಯರೂ, ಕೂಷ್ಯರೂ ಲೆಕ್ಕವಿಲ್ಲದಷ್ಟು ಬಂದರು.
2CH 12:4 ಅವನು ಯೆಹೂದಕ್ಕೆ ಇದ್ದ ಕೋಟೆಯುಳ್ಳ ಪಟ್ಟಣಗಳನ್ನು ಹಿಡಿದು ಯೆರೂಸಲೇಮಿಗೆ ಬಂದನು.
2CH 12:5 ಆಗ ಪ್ರವಾದಿಯಾದ ಶೆಮಾಯನು ರೆಹಬ್ಬಾಮನ ಬಳಿಗೂ, ಶೀಶಕನ ನಿಮಿತ್ತ ಯೆರೂಸಲೇಮಿನಲ್ಲಿ ಕೂಡಿಕೊಂಡ ಯೆಹೂದದ ಪ್ರಧಾನರ ಬಳಿಗೂ ಬಂದು ಅವರಿಗೆ, “ನೀವು ನನ್ನನ್ನು ಬಿಟ್ಟುಬಿಟ್ಟದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಕೊಟ್ಟುಬಿಟ್ಟೆನೆಂದು ಯೆಹೋವ ದೇವರು ನಿಮಗೆ ಹೇಳುತ್ತಾರೆ,” ಎಂದನು.
2CH 12:6 ಆದ್ದರಿಂದ ಇಸ್ರಾಯೇಲಿನ ಪ್ರಧಾನರೂ, ಅರಸನೂ ತಮ್ಮನ್ನು ತಗ್ಗಿಸಿಕೊಂಡು, “ಯೆಹೋವ ದೇವರು ನೀತಿವಂತರು,” ಎಂದರು.
2CH 12:7 ಅವರು ತಮ್ಮನ್ನು ತಗ್ಗಿಸಿಕೊಂಡದ್ದನ್ನು ಯೆಹೋವ ದೇವರು ನೋಡಿದಾಗ, ಯೆಹೋವ ದೇವರ ವಾಕ್ಯವು ಶೆಮಾಯನಿಗೆ ಉಂಟಾಗಿ, “ಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಮಾಡದೆ, ಅವರು ತಪ್ಪಿಸಿಕೊಳ್ಳುವಂತೆ ಮಾಡುವೆನು. ಶೀಶಕನ ಮುಖಾಂತರ ನನ್ನ ಕೋಪವನ್ನು ಯೆರೂಸಲೇಮಿನ ಮೇಲೆ ಸುರಿದುಬಿಡುವುದಿಲ್ಲ.
2CH 12:8 ಆದರೂ ಅವರು ನನ್ನ ಸೇವೆಗೂ, ದೇಶಗಳ ಅರಸರ ಸೇವೆಗೂ ಇರುವ ವ್ಯತ್ಯಾಸವನ್ನು ಇವರು ತಿಳಿಯುವ ಹಾಗೆ ಅವನಿಗೆ ಸೇವಕರಾಗುವರು,” ಎಂದು ಹೇಳಿದನು.
2CH 12:9 ಈಜಿಪ್ಟಿನ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿ ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು.
2CH 12:10 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು.
2CH 12:11 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
2CH 12:12 ರೆಹಬ್ಬಾಮನು ತನ್ನನ್ನು ತಗ್ಗಿಸಿಕೊಂಡಾಗ, ಯೆಹೋವ ದೇವರ ಕೋಪವು ಅವನನ್ನು ಬಿಟ್ಟು ತಿರುಗಿತು. ಆತನು ಪೂರ್ಣವಾಗಿ ನಾಶಮಾಡಲಿಲ್ಲ. ಯೆಹೂದದಲ್ಲಿ ಸಹ ಕೆಲವು ಕಾರ್ಯಗಳು ಸುಲಕ್ಷಣಗಳು ಕಂಡುಬಂದವು.
2CH 12:13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನನ್ನು ಬಲಪಡಿಸಿಕೊಂಡು ರಾಜ್ಯವನ್ನು ಆಳಿದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
2CH 12:14 ಅವನು ಯೆಹೋವ ದೇವರನ್ನು ಹುಡುಕಲು ತನ್ನ ಹೃದಯವನ್ನು ಸ್ಥಿರಪಡಿಸದೆ ಇದ್ದುದರಿಂದ, ಕೆಟ್ಟದ್ದನ್ನು ಮಾಡಿದನು.
2CH 12:15 ರೆಹಬ್ಬಾಮನು ಅರಸನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ, ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋವನ ಪುಸ್ತಕದಲ್ಲಿಯೂ ಬರೆದಿರುತ್ತವೆ. ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.
2CH 12:16 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಬೀಯನು ಅವನಿಗೆ ಬದಲಾಗಿ ಅರಸನಾದನು.
2CH 13:1 ಅರಸನಾದ ಯಾರೊಬ್ಬಾಮನ ಆಳಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ಅರಸನಾಗಿ,
2CH 13:2 ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮೀಕಾಯ, ಇವಳು ಗಿಬೆಯದ ಉರಿಯೇಲನ ಮಗಳು. ಅಬೀಯನಿಗೂ, ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು.
2CH 13:3 ಆಗ ಅಬೀಯನು ಯುದ್ಧಭಟರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯ್ಕೆಯಾದ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷಮಂದಿ ಆಯ್ಕೆಯಾದ ಪರಾಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.
2CH 13:4 ಆಗ ಅಬೀಯನು ಎಫ್ರಾಯೀಮ್ ಬೆಟ್ಟದಲ್ಲಿರುವ ಚೆಮಾರಯಿಮ್ ಎಂಬ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರಾಯೇಲರೇ, ನನ್ನ ಮಾತು ಕೇಳಿರಿ.
2CH 13:5 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀದನಿಗೂ, ಅವನ ವಂಶದವರಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟರೆಂದು ನಿಮಗೆ ಗೊತ್ತಿಲ್ಲವೋ.
2CH 13:6 ಆದರೆ ದಾವೀದನ ಮಗ ಸೊಲೊಮೋನನ ಸೇವಕನಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ತನ್ನ ಯಜಮಾನನ ಮೇಲೆ ತಿರುಗಿಬಿದ್ದನು.
2CH 13:7 ಇದಲ್ಲದೆ ನಿಷ್ಪ್ರಯೋಜಕರಾದ ದುಷ್ಟರು ಅವನ ಬಳಿಗೆ ಕೂಡಿಬಂದು, ಸೊಲೊಮೋನನ ಮಗ ರೆಹಬ್ಬಾಮನು ಎಳೆಯ ಪ್ರಾಯದವನೂ, ನಿರ್ಣಯಿಸಲಾಗದವನೂ ಅವರನ್ನು ಎದುರಿಸಲು ಬಲವಿಲ್ಲದವನೂ ಆಗಿರುವುದರಿಂದ ಅವನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡರು.
2CH 13:8 “ಈಗ ದಾವೀದನ ವಂಶಜರ ಕೈಯಲ್ಲಿರುವ ಯೆಹೋವ ದೇವರ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೊಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು.
2CH 13:9 ನೀವು ಯೆಹೋವ ದೇವರ ಯಾಜಕರಾದ ಆರೋನನ ವಂಶದವರಾದ ಲೇವಿಯರನ್ನೂ ತಳ್ಳಿ ಹಾಕಿ, ಅನ್ಯದೇಶಗಳ ಜನರಂತೆ ನಿಮಗೆ ಯಾಜಕರನ್ನು ಮಾಡಿಕೊಳ್ಳಲಿಲ್ಲವೋ? ಯಾವನಾದರೂ ದನದ ಮರಿಯಾದ ಹೋರಿಯನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ಬಂದು, ತನ್ನನ್ನು ಪ್ರತಿಷ್ಠೆ ಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನಷ್ಟೇ.
2CH 13:10 “ನಮಗಾದರೋ ಯೆಹೋವ ದೇವರು ದೇವರಾಗಿದ್ದಾರೆ. ನಾವು ಅವರನ್ನು ಬಿಡಲಿಲ್ಲ. ಇದಲ್ಲದೆ ಯೆಹೋವ ದೇವರಿಗೆ ಸೇವೆ ಮಾಡುವ ಯಾಜಕರು ಆರೋನನ ಮಕ್ಕಳು. ಲೇವಿಯರು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು.
2CH 13:11 ಅವರು ಪ್ರತಿ ಉದಯದಲ್ಲಿಯೂ, ಪ್ರತಿ ಸಾಯಂಕಾಲದಲ್ಲಿಯೂ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುತ್ತಾ, ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ ಸಿದ್ಧಮಾಡಿ ಹಚ್ಚುತ್ತಾ ಇರುತ್ತಾರೆ. ನಾವು ನಮ್ಮ ದೇವರಾದ ಯೆಹೋವ ದೇವರ ಕಟ್ಟಳೆಯನ್ನು ಕೈಗೊಳ್ಳುತ್ತೇವೆ, ಆದರೆ ನೀವು ಅವರನ್ನು ಬಿಟ್ಟಿದ್ದೀರಿ.
2CH 13:12 ದೇವರು ತಾವೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾರೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡಿದುಕೊಂಡ ಅವರ ಯಾಜಕರು ನಮಗಿದ್ದಾರೆ. ಇಸ್ರಾಯೇಲರೇ, ನೀವು ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಯುದ್ಧಮಾಡಬೇಡಿರಿ. ನೀವು ಜಯಹೊಂದುವುದಿಲ್ಲ,” ಎಂದನು.
2CH 13:13 ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆ ಬರಮಾಡಿದನು. ಆದ್ದರಿಂದ ಇಸ್ರಾಯೇಲರು ಯೆಹೂದದವರ ಮುಂದೆಯೂ, ಅವರ ಹಿಂದೆಯೂ ಬಂದರು.
2CH 13:14 ಯೆಹೂದದವರು ಹಿಂದಕ್ಕೆ ನೋಡಿದಾಗ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಯೆಹೋವ ದೇವರಿಗೆ ಅವರು ಮೊರೆಯಿಟ್ಟರು. ಯಾಜಕರು ತುತೂರಿಗಳನ್ನು ಊದಿದರು.
2CH 13:15 ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು.
2CH 13:16 ಇಸ್ರಾಯೇಲರು ಯೆಹೂದದವರ ಎದುರಿನಿಂದ ಓಡಿಹೋದರು. ಹೀಗೆ ದೇವರು ಇಸ್ರಾಯೇಲರನ್ನು ಯೆಹೂದದವರ ಕೈಯಲ್ಲಿ ಒಪ್ಪಿಸಿದರು.
2CH 13:17 ಅಬೀಯನೂ, ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿದರು. ಇಸ್ರಾಯೇಲರಲ್ಲಿ ಐದು ಲಕ್ಷಮಂದಿ ಬಲಶಾಲಿಗಳಾದ ಸೈನಿಕರು ಹತರಾದರು.
2CH 13:18 ಹೀಗೆ ಆ ಕಾಲದಲ್ಲಿ ಇಸ್ರಾಯೇಲರು ತಗ್ಗಿಹೋದರು. ಆದರೆ ಯೆಹೂದದವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಮೇಲೆ ಆತುಕೊಂಡದ್ದರಿಂದ ಜಯ ಹೊಂದಿದರು.
2CH 13:19 ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ, ಅವುಗಳ ಗ್ರಾಮಗಳನ್ನೂ ವಶಪಡಿಸಿಕೊಂಡನು.
2CH 13:20 ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ತಿರುಗಿ ಬಲಗೊಳ್ಳಲಿಲ್ಲ. ಯೆಹೋವ ದೇವರ ಶಿಕ್ಷೆಯಿಂದ ಯಾರೊಬ್ಬಾಮನು ಸತ್ತನು.
2CH 13:21 ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ, ಇಪ್ಪತ್ತೆರಡು ಮಂದಿ ಪುತ್ರರೂ, ಹದಿನಾರು ಮಂದಿ ಪುತ್ರಿಯರೂ ಇದ್ದರು.
2CH 13:22 ಅಬೀಯನ ಮಿಕ್ಕಾದ ಕ್ರಿಯೆಗಳೂ, ಅವನ ನಡೆನುಡಿಗಳ ಮಾತುಗಳೂ ಪ್ರವಾದಿಯಾದ ಇದ್ದೋವನ ವರ್ತಮಾನಗಳಲ್ಲಿ ಬರೆದಿರುತ್ತವೆ.
2CH 14:1 ಅಬೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು, ಅವನ ದಿವಸಗಳಲ್ಲಿ ಹತ್ತು ವರ್ಷ ದೇಶವು ಶಾಂತವಾಗಿತ್ತು.
2CH 14:2 ಆಸನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನೂ, ಸರಿಯಾದದ್ದನ್ನೂ ಮಾಡಿದನು.
2CH 14:3 ಅವನು ಅನ್ಯದೇವರುಗಳ ಬಲಿಪೀಠಗಳನ್ನೂ, ಉನ್ನತ ಪೂಜಾಸ್ಥಳಗಳನ್ನೂ ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅವುಗಳ ಅಶೇರ ಸ್ತಂಭಗಳನ್ನು ಕಡಿದುಹಾಕಿದನು.
2CH 14:4 ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹುಡುಕಲೂ, ನಿಯಮವನ್ನೂ, ಆಜ್ಞೆಯನ್ನೂ ಕೈಗೊಳ್ಳಲು ಯೆಹೂದ್ಯರಿಗೆ ಆಜ್ಞಾಪಿಸಿದನು.
2CH 14:5 ಇದಲ್ಲದೆ ಅವನು ಉನ್ನತ ಪೂಜಾಸ್ಥಳಗಳನ್ನೂ, ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಶಾಂತವಾಗಿತ್ತು.
2CH 14:6 ಇದಲ್ಲದೆ ಅವನು ಯೆಹೂದದಲ್ಲಿ ಕೋಟೆಗಳುಳ್ಳ ಪಟ್ಟಣಗಳನ್ನು ಕಟ್ಟಿದನು. ಏಕೆಂದರೆ ದೇಶವು ಶಾಂತವಾಗಿತ್ತು. ಯೆಹೋವ ದೇವರು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರ್ಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
2CH 14:7 ಅವನು ಯೆಹೂದದವರಿಗೆ, “ದೇಶವು ನಮ್ಮ ಮುಂದೆ ಇರುವಾಗ ಈ ಪಟ್ಟಣಗಳನ್ನು ಕಟ್ಟಿ, ಅವುಗಳ ಸುತ್ತಲೂ ಗೋಡೆಗಳನ್ನೂ, ಗೋಪುರಗಳನ್ನೂ, ಬಾಗಿಲುಗಳನ್ನೂ, ಅಗುಳಿಗಳನ್ನೂ ಮಾಡೋಣ. ಏಕೆಂದರೆ ನಾವು ನಮ್ಮ ದೇವರಾದ ಯೆಹೋವ ದೇವರನ್ನು ಹುಡುಕಿದೆವು. ನಾವು ಅವರನ್ನು ಹುಡುಕಿದ್ದರಿಂದ ಅವರು ಎಲ್ಲಾ ಕಡೆಯಲ್ಲಿಯೂ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದನು. ಹಾಗೆಯೇ ಅವರು ಸೈನ್ಯವನ್ನು ಕಟ್ಟಿ ವೃದ್ಧಿಹೊಂದಿದರು.
2CH 14:8 ಇದಲ್ಲದೆ ಆಸನಿಗೆ ದೊಡ್ಡ ಗುರಾಣಿಗಳನ್ನೂ, ಈಟಿಗಳನ್ನೂ ಹಿಡಿಯುವ ಸೈನ್ಯವಿತ್ತು. ಯೆಹೂದದವರು ಮೂರು ಲಕ್ಷ ಮಂದಿಯೂ, ಬೆನ್ಯಾಮೀನವರಲ್ಲಿ ಚಿಕ್ಕ ಗುರಾಣಿಗಳನ್ನು ಹಿಡಿಯುವ, ಬಿಲ್ಲುಗಳನ್ನು ಎಸೆಯುವ ಎರಡು ಲಕ್ಷದ ಎಂಬತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿ ಯುದ್ಧವೀರರಾಗಿದ್ದರು.
2CH 14:9 ಆದರೆ ಕೂಷ್ಯನಾದ ಜೆರಹನು ಅವರಿಗೆ ವಿರೋಧವಾಗಿ ಹೊರಟು, ಮಾರೇಷಾದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ಯುದ್ಧವೀರರೂ, ಮುನ್ನೂರು ರಥಗಳೂ ಇದ್ದವು.
2CH 14:10 ಆಸನು ಅವನಿಗೆದುರಾಗಿ ಹೊರಟುಹೋದನು. ಮಾರೇಷಾದ ಬಳಿಯಲ್ಲಿ ಚೆಫಾತಾದ ತಗ್ಗಿನಲ್ಲಿ ವ್ಯೂಹ ಕಟ್ಟಿದರು.
2CH 14:11 ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.
2CH 14:12 ಆಗ ಯೆಹೋವ ದೇವರು ಕೂಷ್ಯರನ್ನು ಆಸನ ಮುಂದೆಯೂ, ಯೆಹೂದದವರ ಮುಂದೆಯೂ ಸೋಲುವಂತೆ ಮಾಡಿದರು. ಆದ್ದರಿಂದ ಕೂಷ್ಯರು ಓಡಿಹೋದರು.
2CH 14:13 ಆಗ ಆಸನೂ, ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನವರೆಗೂ ಹಿಂದಟ್ಟಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಷ್ಯರು ಸೋತುಹೋದರು. ಅವರು ಯೆಹೋವ ದೇವರ ಮುಂದೆಯೂ, ಅವರ ಸೈನ್ಯದ ಮುಂದೆಯೂ ನಾಶವಾದರು. ಯೆಹೂದ್ಯರು ಬಹು ಕೊಳ್ಳೆಯನ್ನು ಒಯ್ದರು.
2CH 14:14 ಇದಲ್ಲದೆ ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ವಶಪಡಿಸಿಕೊಂಡರು. ಯೆಹೋವ ದೇವರ ಭಯವು ಅವರ ಮೇಲೆ ಇತ್ತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದುದರಿಂದ, ಅವುಗಳನ್ನೆಲ್ಲಾ ವಶಪಡಿಸಿಕೊಂಡರು.
2CH 14:15 ಪಶುಗಳಿದ್ದ ಡೇರೆಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂಸಲೇಮಿಗೆ ತಿರುಗಿ ಬಂದರು.
2CH 15:1 ಆಗ ದೇವರ ಆತ್ಮವು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ,
2CH 15:2 ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು, ಅವನಿಗೆ, “ಆಸನೇ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರದವರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವ ದೇವರ ಸಂಗಡ ಇರುವವರೆಗೂ, ಅವರು ನಿಮ್ಮ ಸಂಗಡ ಇರುವರು. ನೀವು ಅವರನ್ನು ಹುಡುಕಿದರೆ ಅವರು ನಿಮಗೆ ಸಿಕ್ಕುವರು. ಆದರೆ ನೀವು ಅವರನ್ನು ಬಿಟ್ಟುಬಿಟ್ಟರೆ ಅವರು ನಿಮ್ಮನ್ನು ಬಿಟ್ಟುಬಿಡುವರು
2CH 15:3 ಬಹುಕಾಲ ಇಸ್ರಾಯೇಲರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ, ನಿಯಮವಿಲ್ಲದೆ ಇದ್ದರು.
2CH 15:4 ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿ ಅವರನ್ನು ಹುಡುಕಿದಾಗ ಅವರಿಗೆ ದೇವರು ಸಿಕ್ಕಿದರು.
2CH 15:5 ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ, ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು. ದೇಶದ ನಿವಾಸಿಗಳು ಬಹಳವಾಗಿ ಹೆದರಿದ್ದರು.
2CH 15:6 ಜನಾಂಗವು ಜನಾಂಗದಿಂದಲೂ, ಪಟ್ಟಣವು ಪಟ್ಟಣದಿಂದಲೂ ನಾಶವಾಯಿತು. ದೇವರು ಸಕಲ ಇಕ್ಕಟ್ಟುಗಳಿಂದ ಅವರನ್ನು ತೊಂದರೆಪಡಿಸಿದರು.
2CH 15:7 ಆದ್ದರಿಂದ ನೀವು ಬಲಗೊಳ್ಳಿರಿ. ನಿಮ್ಮ ಕೈಗಳು ಬಲಹೀನವಾಗದೆ ಇರಲಿ. ನಿಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕುವುದು,” ಎಂದನು.
2CH 15:8 ಆಸನು ಆ ಮಾತುಗಳನ್ನೂ, ಪ್ರವಾದಿಯಾದ ಓದೇದನ ಮಗ ಅಜರ್ಯನ ಪ್ರವಾದನಾ ಮಾತುಗಳನ್ನೂ ಕೇಳಿದಾಗ, ಅವನು ಬಲಗೊಂಡು ಯೆಹೂದ ಬೆನ್ಯಾಮೀನಿನ ಸಮಸ್ತ ದೇಶದೊಳಗಿಂದಲೂ, ಎಫ್ರಾಯೀಮನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯೆಹೋವ ದೇವರ ದ್ವಾರಾಂಗಳದ ಮುಂದೆ ಇದ್ದ ಯೆಹೋವ ದೇವರ ಬಲಿಪೀಠವನ್ನು ನೂತನಪಡಿಸಿದನು.
2CH 15:9 ತರುವಾಯ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ಯೆಹೂದ ದೇಶದಲ್ಲಿ ನೆಲೆಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು. ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದಾರೆಂದು ಇವರು ಕಂಡಾಗ, ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಬಂದಿದ್ದರು.
2CH 15:10 ಹೀಗೆಯೇ ಆಸನ ಆಳಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿಕೊಂಡರು.
2CH 15:11 ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯೆಹೋವ ದೇವರಿಗೆ ಬಲಿ ಅರ್ಪಿಸಿದರು.
2CH 15:12 ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ತಮ್ಮ ಪೂರ್ಣಹೃದಯದಿಂದಲೂ, ತಮ್ಮ ಪೂರ್ಣಪ್ರಾಣದಿಂದಲೂ ಹುಡುಕಬೇಕೆಂದೂ
2CH 15:13 ಯಾವನಾದರೂ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕದೆ ಹೋದರೆ; ಹಿರಿಯನಾದರೂ, ಕಿರಿಯನಾದರೂ, ಪುರುಷನಾದರೂ, ಸ್ತ್ರೀಯಾದರೂ ಸಾಯಬೇಕೆಂದು ಒಡಂಬಡಿಕೆ ಮಾಡಿಕೊಂಡರು.
2CH 15:14 ಮಹಾಶಬ್ದದಿಂದಲೂ, ಆರ್ಭಟದಿಂದಲೂ, ತುತೂರಿಗಳ ಶಬ್ದದಿಂದಲೂ, ಕೊಂಬುಗಳ ಶಬ್ದದಿಂದಲೂ ಯೆಹೋವ ದೇವರ ಮುಂದೆ ಆಣೆ ಇಟ್ಟರು.
2CH 15:15 ಯೆಹೂದದವರೆಲ್ಲರು ಪ್ರಮಾಣಕ್ಕೆ ಸಂತೋಷಪಟ್ಟರು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ಆಣೆ ಇಟ್ಟು, ತಮ್ಮ ಪೂರ್ಣ ಇಷ್ಟಪೂರ್ವಕವಾಗಿ ದೇವರನ್ನು ಹುಡುಕಿದರು; ದೇವರು ಅವರಿಗೆ ಸಿಕ್ಕಿದರು. ಯೆಹೋವ ದೇವರು ಅವರಿಗೆ ಸುತ್ತಲೂ ವಿಶ್ರಾಂತಿಕೊಟ್ಟರು.
2CH 15:16 ಅರಸನಾದ ಆಸನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಇದಲ್ಲದೆ ಆಸನು ಆ ಮೂರ್ತಿಯನ್ನು ಕಡಿದು ಚೂರುಚೂರು ಮಾಡಿ, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.
2CH 15:17 ಇಸ್ರಾಯೇಲಿನೊಳಗಿಂದ ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರಿಗೆ ಸಮರ್ಪಿತವಾಗಿತ್ತು.
2CH 15:18 ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ದೇವರ ಆಲಯಕ್ಕೆ ತಂದನು.
2CH 15:19 ಆಸನ ಆಳ್ವಿಕೆಯಲ್ಲಿ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿಲ್ಲದೆ ಇತ್ತು.
2CH 16:1 ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು, ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಪಟ್ಟಣದ ಸುತ್ತಲೂ ಕೋಟೆಯನ್ನು ಕಟ್ಟಿಸಿದನು.
2CH 16:2 ಆಗ ಆಸನು ಯೆಹೋವ ದೇವರ ಆಲಯದ ಮತ್ತು ತನ್ನ ಅರಮನೆಯ ಬೊಕ್ಕಸಗಳಿಂದ ಬೆಳ್ಳಿಬಂಗಾರವನ್ನು ತೆಗೆದು, ದಮಸ್ಕದಲ್ಲಿ ವಾಸವಾಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ ಅವನಿಗೆ,
2CH 16:3 “ನನ್ನ ತಂದೆ ಮತ್ತು ನಿನ್ನ ತಂದೆಯ ನಡುವೆ ಇದ್ದಂತೆ ನನ್ನ ಮತ್ತು ನಿನ್ನ ನಡುವೆ ಒಡಂಬಡಿಕೆ ಉಂಟು. ಇಗೋ ನಾನು ಬೆಳ್ಳಿಬಂಗಾರವನ್ನು ನಿನಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ, ನೀನು ಅವನ ಸಂಗಡ ಮಾಡಿದ ಒಡಂಬಡಿಕೆಯನ್ನು ಮುರಿಯಬೇಕು,” ಎಂದು ಹೇಳಿದನು.
2CH 16:4 ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನ್ನ ಸೈನ್ಯಾಧಿಪತಿಗಳನ್ನು ಕಳುಹಿಸಿದನು. ಅವರು ಇಯ್ಯೋನ್, ದಾನ್ ಆಬೇಲ್ಮಯಿಮ್, ನಫ್ತಾಲ್ಯರ ಸಮಸ್ತ ಉಗ್ರಾಣಗಳ ಪಟ್ಟಣಗಳನ್ನು ವಶಪಡಿಸಿಕೊಂಡರು.
2CH 16:5 ಬಾಷನು ಇದನ್ನು ಕೇಳಿದಾಗ ರಾಮ ಪಟ್ಟಣದ ಸುತ್ತಲೂ ಕೋಟೆ ಕಟ್ಟಿಸುವುದನ್ನು ಬಿಟ್ಟು, ಅದರ ಎಲ್ಲಾ ಕೆಲಸಗಳನ್ನು ನಿಲ್ಲಿಸಿಬಿಟ್ಟನು.
2CH 16:6 ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡು ಹೋದನು. ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ, ಅವುಗಳಿಂದ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.
2CH 16:7 ಅದೇ ಕಾಲದಲ್ಲಿ ದರ್ಶಿಯಾದ ಹನಾನೀಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ದೇವರಾದ ಯೆಹೋವ ದೇವರ ಮೇಲೆ ಆತುಕೊಳ್ಳದೆ, ಅರಾಮಿನ ಅರಸನ ಮೇಲೆ ಆತುಕೊಂಡದ್ದರಿಂದ, ಅರಾಮಿನ ಅರಸನ ಸೈನ್ಯವು ನಿಮ್ಮ ಕೈಯಿಂದ ತಪ್ಪಿಸಿಕೊಂಡಿತು.
2CH 16:8 ಕೂಷನವರೂ, ಲಿಬಿಯದವರೂ ಮಹಾ ಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ, ರಾಹುತರೂ ಇದ್ದರಲ್ಲವೇ? ಆಗ ನೀನು ಯೆಹೋವ ದೇವರನ್ನು ಆತುಕೊಂಡದ್ದರಿಂದ ದೇವರು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದರು.
2CH 16:9 ಏಕೆಂದರೆ ಯೆಹೋವ ದೇವರಿಗೆ ಪೂರ್ಣವಾಗಿ ಸಮರ್ಪಿಸಿಕೊಂಡವರ ಹೃದಯವನ್ನು ಬಲಪಡಿಸುವುದಕ್ಕೆ ಅವರ ಕಣ್ಣುಗಳು ಭೂಲೋಕದ ಎಲ್ಲಾ ಕಡೆ ಇವೆ. ಆದರೆ ಈಗ ನೀನು ಬುದ್ಧಿಹೀನನಾಗಿ ನಡೆದುಕೊಂಡಿದ್ದೀಯೆ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದನು.
2CH 16:10 ಆಗ ಆಸನು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಇದರ ನಿಮಿತ್ತ ಅವನ ಮೇಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವರನ್ನು ಬಾಧಿಸಿದನು.
2CH 16:11 ಆಸನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಯೆಹೂದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ.
2CH 16:12 ಆದರೆ ಆಸನು ತನ್ನ ಆಳಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು. ಅವನ ರೋಗವು ಅತಿಘೋರವಾಯಿತು. ಆದರೆ ಅವನು ತನ್ನ ರೋಗದಲ್ಲಿ ಯೆಹೋವ ದೇವರನ್ನು ಹುಡುಕದೆ, ವೈದ್ಯರನ್ನು ಹುಡುಕಿದನು.
2CH 16:13 ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ಆಳಿಕೆಯ ನಾಲ್ವತ್ತೊಂದನೆಯ ವರ್ಷದಲ್ಲಿ ಮರಣಹೊಂದಿದನು.
2CH 16:14 ಅವನು ತನಗೋಸ್ಕರ ದಾವೀದನ ಪಟ್ಟಣದಲ್ಲಿ ಅಗಿಸಿದ ಅವನ ಸ್ವಂತ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವರು ತೈಲಗಾರರ ವಿದ್ಯೆಯಿಂದ ಸಿದ್ಧಮಾಡಿದ ಸುಗಂಧಗಳಿಂದಲೂ, ನಾನಾ ವಿಧವಾದ ಪದಾರ್ಥಗಳಿಂದಲೂ ತುಂಬಿದ ಶವ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟರು. ಅವನ ಗೌರವಕ್ಕಾಗಿ ಮಹಾ ಅಗ್ನಿಕುಂಡವನ್ನೇರ್ಪಡಿಸಿದರು.
2CH 17:1 ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು.
2CH 17:2 ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.
2CH 17:3 ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.
2CH 17:4 ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು.
2CH 17:5 ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು.
2CH 17:6 ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು.
2CH 17:7 ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು.
2CH 17:8 ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು.
2CH 17:9 ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು.
2CH 17:10 ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ.
2CH 17:11 ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.
2CH 17:12 ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
2CH 17:13 ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.
2CH 17:14 ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು.
2CH 17:15 ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು.
2CH 17:16 ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು.
2CH 17:17 ಬೆನ್ಯಾಮೀನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು.
2CH 17:18 ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು.
2CH 17:19 ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.
2CH 18:1 ಯೆಹೋಷಾಫಾಟನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಗಿರುವಾಗ, ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.
2CH 18:2 ಕೆಲವು ವರ್ಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು. ಆಗ ಅಹಾಬನು ಅವನಿಗೋಸ್ಕರವೂ, ಅವನ ಸಂಗಡ ಇದ್ದ ಜನರಿಗೋಸ್ಕರವೂ ಅನೇಕ ಕುರಿದನಗಳನ್ನೂ ವಧಿಸಿ ಔತಣವನ್ನೇರ್ಪಡಿಸಿ, ತನ್ನ ಸಂಗಡ ಯುದ್ಧಕ್ಕಾಗಿ ಗಿಲ್ಯಾದಿನ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
2CH 18:3 ಇಸ್ರಾಯೇಲಿನ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಅದಕ್ಕವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಾವು ಯುದ್ಧದಲ್ಲಿ ನಿನ್ನ ಸಂಗಡ ಇರುವೆವು,” ಎಂದನು.
2CH 18:4 ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ಈ ಹೊತ್ತು ಮೊದಲು ಯೆಹೋವ ದೇವರ ಆಲೋಚನೆಯನ್ನು ವಿಚಾರಿಸಿರಿ,” ಎಂದನು.
2CH 18:5 ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
2CH 18:6 ಆದರೆ ಯೆಹೋಷಾಫಾಟನು, “ಯೆಹೋವ ದೇವರ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಬೇರೆ ಪ್ರವಾದಿ ಇಲ್ಲಿ ಇಲ್ಲವೋ?” ಎಂದು ಕೇಳಿದನು.
2CH 18:7 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.
2CH 18:8 ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು, “ಇಮ್ಲನ ಮಗನಾದ ಮೀಕಾಯನನ್ನು ಶೀಘ್ರವಾಗಿ ಕರೆದುಕೊಂಡು ಬಾ,” ಎಂದನು.
2CH 18:9 ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು, ಸಮಾರ್ಯದ ಬಾಗಿಲಿನ ಮುಂದೆ ಬಯಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸುತ್ತಿದ್ದರು.
2CH 18:10 ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
2CH 18:11 ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ, “ಗಿಲ್ಯಾದಿನ ರಾಮೋತಿಗೆ ಹೋಗಿ ಜಯ ಹೊಂದು. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
2CH 18:12 ಆದರೆ ಮೀಕಾಯನನ್ನು ಕರೆಯಲು ಹೋದ ದೂತನು ಅವನಿಗೆ, “ನೋಡು, ಎಲ್ಲ ಪ್ರವಾದಿಗಳು ಏಕಮನಸ್ಸಿನಿಂದ ಅರಸನಿಗೆ ಒಳ್ಳೆಯದನ್ನೇ ಪ್ರವಾದಿಸಿದ್ದಾರೆ. ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೆಯ ಮಾತು ಆಡು,” ಎಂದನು.
2CH 18:13 ಅದಕ್ಕೆ ಮೀಕಾಯನು, “ಯೆಹೋವ ದೇವರ ಜೀವದಾಣೆ, ನನ್ನ ದೇವರು ಏನು ಹೇಳುವರೋ, ಅದನ್ನೇ ಮಾತನಾಡುವೆನು,” ಎಂದನು.
2CH 18:14 ಅವನು ಅರಸನ ಬಳಿಗೆ ಬಂದಾಗ, ಅರಸನು ಅವನಿಗೆ, “ಮೀಕಾಯೆಹುವೇ, ನಾವು ಗಿಲ್ಯಾದಿನ ರಾಮೋತ್ ವಿರುದ್ಧವಾಗಿ ಯುದ್ಧಕ್ಕೆ ಹೋಗಬಹುದೋ ಅಥವಾ ಬೇಡವೋ?” ಎಂದನು. ಆಗ ಅವನು, “ಹೋಗಿ ಜಯ ಹೊಂದಿರಿ. ಅವರು ನಿಮ್ಮ ಕೈವಶರಾಗುವರು,” ಎಂದನು.
2CH 18:15 ಆಗ ಅರಸನು ಅವನಿಗೆ, “ನೀನು ಯೆಹೋವ ದೇವರ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು?” ಎಂದನು.
2CH 18:16 ಅದಕ್ಕೆ ಮೀಕಾಯನು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳ ಮೇಲೆ ಚದರಿಹೋದದ್ದನ್ನು ಕಂಡೆನು. ಆಗ ಯೆಹೋವ ದೇವರು, ‘ಇವರಿಗೆ ಯಜಮಾನನು ಇಲ್ಲ. ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂದಿರುಗಿ ಹೋಗಲಿ,’ ಎಂಬುದಾಗಿ ಹೇಳಿದರು,” ಎಂದನು.
2CH 18:17 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ಇವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು.
2CH 18:18 ಆಗ ಮೀಕಾಯನು, “ಆದ್ದರಿಂದ ಯೆಹೋವ ದೇವರ ವಾಕ್ಯವನ್ನು ಕೇಳು. ಯೆಹೋವ ದೇವರು ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡಿರುವುದನ್ನೂ ಆಕಾಶದ ಸಮಸ್ತ ಸೈನ್ಯವು ಅವರ ಬಲಗಡೆ ಮತ್ತು ಎಡಗಡೆಯಲ್ಲಿ ನಿಂತಿರುವುದನ್ನೂ ನಾನು ಕಂಡೆನು.
2CH 18:19 ಆಗ ಯೆಹೋವ ದೇವರು, ‘ಇಸ್ರಾಯೇಲಿನ ಅರಸನಾದ ಅಹಾಬನು ಹೋಗಿ ಗಿಲ್ಯಾದಿನ ರಾಮೋತಿನಲ್ಲಿ ಬೀಳುವ ಹಾಗೆ ಅವನನ್ನು ಮರುಳುಗೊಳಿಸುವವನು ಯಾರು?’ ಎಂದರು. “ಒಬ್ಬನು ಒಂದು ವಿಧವಾಗಿಯೂ ಮತ್ತೊಬ್ಬನು ಇನ್ನೊಂದು ವಿಧವಾಗಿಯೂ ಹೇಳುತ್ತಿದ್ದರು.
2CH 18:20 ಕೊನೆಯಲ್ಲಿ, ಒಂದು ಆತ್ಮವು ಹೊರಟುಬಂದು ಯೆಹೋವ ದೇವರ ಮುಂದೆ ನಿಂತು, ‘ನಾನು ಅವನನ್ನು ಮರುಳುಗೊಳಿಸುತ್ತೇನೆ,’ ಎಂದಿತು. “ಆಗ ಯೆಹೋವ ದೇವರು, ‘ಅದು ಹೇಗೆ?’ ಎಂದರು.
2CH 18:21 “ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಯೆಹೋವ ದೇವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ, ಹೊರಟುಹೋಗಿ ಹಾಗೆ ಮಾಡು,’ ಎಂದರು.
2CH 18:22 “ಆದ್ದರಿಂದ ಇಗೋ, ಯೆಹೋವ ದೇವರು ಈ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳನ್ನಾಡುವ ಆತ್ಮವನ್ನು ಇಟ್ಟಿದ್ದಾರೆ. ಇದಲ್ಲದೆ ಯೆಹೋವ ದೇವರು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾರೆ,” ಎಂದನು.
2CH 18:23 ಆಗ ಕೆನಾನನ ಮಗನಾದ ಚಿದ್ಕೀಯನು ಸಮೀಪಕ್ಕೆ ಬಂದು ಮೀಕಾಯನ ಕೆನ್ನೆಯ ಮೇಲೆ ಹೊಡೆದು, “ಯೆಹೋವ ದೇವರ ಆತ್ಮವು ನನ್ನನ್ನು ಬಿಟ್ಟು, ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಬಂದಿತು?” ಎಂದನು.
2CH 18:24 ಅದಕ್ಕೆ ಮೀಕಾಯನು, “ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ನೀನು ಹೋಗುವ ದಿವಸದಲ್ಲಿ ನೋಡುವೆ,” ಎಂದನು.
2CH 18:25 ಆಗ ಇಸ್ರಾಯೇಲಿನ ಅರಸನು ಹೇಳಿದ್ದೇನೆಂದರೆ, “ನೀವು ಮೀಕಾಯನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ, ಅರಸನ ಮಗನಾದ ಯೋವಾಷನ ಬಳಿಗೂ ತೆಗೆದುಕೊಂಡುಹೋಗಿ,
2CH 18:26 ‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ’ ಎಂದು ತಿಳಿಸು,” ಎಂದನು.
2CH 18:27 ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ, ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು.
2CH 18:28 ಹೀಗೆಯೇ ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.
2CH 18:29 ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ಯುದ್ಧದಲ್ಲಿ ಪ್ರವೇಶಿಸುವೆನು. ಆದರೆ ನೀನು ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡಿರು,” ಎಂದನು. ಹಾಗೆಯೇ ಇಸ್ರಾಯೇಲಿನ ಅರಸನು ವೇಷಹಾಕಿಕೊಂಡು ಯುದ್ಧಕ್ಕೆ ಹೋದನು.
2CH 18:30 ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲಿನ ಅರಸನನ್ನು ಮಾತ್ರ ಗುರಿಯಾಗಿಸಿಕೊಂಡು ಯುದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
2CH 18:31 ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆದರೆ ಯೆಹೋಷಾಫಾಟನು ಕೂಗಿಕೊಂಡನು. ಆಗ ಯೆಹೋವ ದೇವರು ಅವನಿಗೆ ಸಹಾಯಮಾಡಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.
2CH 18:32 ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳಿಗೆ ಗೊತ್ತಾದಾಗ, ಅವರು ಅವನನ್ನು ಬಿಟ್ಟುಹೋದರು.
2CH 18:33 ಆದರೆ ಅರಾಮ್ಯರ ಸೈನಿಕನೊಬ್ಬನು ಗುರಿ ಇಡದೆ ಬಿಲ್ಲಿಗೆ ಬಾಣವನ್ನೇರಿಸಿ ಹೊಡೆಯಲು, ಅದು ಇಸ್ರಾಯೇಲಿನ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆದ್ದರಿಂದ ಅವನು ತನ್ನ ರಥ ನಡೆಸುವವನಿಗೆ, “ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆಗೆ ತೆಗೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ,” ಎಂದನು.
2CH 18:34 ಆ ದಿವಸವೆಲ್ಲಾ ಯುದ್ಧವು ಬಹು ಘೋರವಾದದ್ದರಿಂದ ಇಸ್ರಾಯೇಲಿನ ಅರಸನಾದ ಅಹಾಬನು ಸಾಯಂಕಾಲದವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲಿಯೇ ಆತುಕೊಂಡು ನಿಂತಿದ್ದನು, ಸೂರ್ಯನು ಅಸ್ತಮಿಸಿದಾಗ ಅವನು ಮರಣಹೊಂದಿದನು.
2CH 19:1 ಯೆಹೂದದ ಅರಸನಾದ ಯೆಹೋಷಾಫಾಟನು ಸಮಾಧಾನವಾಗಿ ಯೆರೂಸಲೇಮಿನಲ್ಲಿರುವ ತನ್ನ ಅರಮನೆಗೆ ತಿರುಗಿಬಂದನು.
2CH 19:2 ಆಗ ಪ್ರವಾದಿ ಹನಾನೀಯ ಮಗ ಯೇಹುವು ಅವನನ್ನು ಎದುರುಗೊಂಡು, ಅರಸನಾದ ಯೆಹೋಷಾಫಾಟನಿಗೆ ಅವನು, “ದುಷ್ಟನಿಗೆ ಸಹಾಯ ಕೊಡುವವನಾಗಿ ಯೆಹೋವ ದೇವರನ್ನು ದ್ವೇಷಮಾಡುವವರನ್ನು ಪ್ರೀತಿಮಾಡಬಹುದೋ? ಆದಕಾರಣ ನಿನ್ನ ಮೇಲೆ ಯೆಹೋವ ದೇವರ ಸನ್ನಿಧಿಯಿಂದ ಕೋಪಾಗ್ನಿ ಇದೆ.
2CH 19:3 ಆದರೂ ನೀನು ದೇಶದಿಂದ ಅಶೇರ ಸ್ತಂಭಗಳನ್ನು ತೆಗೆದುಹಾಕಿ, ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ, ನಿನ್ನಲ್ಲಿ ಉತ್ತಮವಾದ ಕಾರ್ಯಗಳು ತೋರಿಬಂದಿವೆ,” ಎಂದನು.
2CH 19:4 ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸವಾಗಿದ್ದನು. ಅವನು ತಿರುಗಿ ಹೊರಟು ಬೇರ್ಷೆಬ ಮೊದಲುಗೊಂಡು ಎಫ್ರಾಯೀಮನ ಬೆಟ್ಟದ ಮಟ್ಟಿಗೂ ಜನರಲ್ಲಿ ಸಂಚರಿಸಿ, ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಕಡೆಗೆ ಅವರನ್ನು ತಿರುಗಿಸಿದನು.
2CH 19:5 ಇದಲ್ಲದೆ ಅವನು ದೇಶದೊಳಗೆ ಪಟ್ಟಣ ಪಟ್ಟಣದಲ್ಲಿ ಯೆಹೂದದ ಸಮಸ್ತ ಕೋಟೆಗಳುಳ್ಳ ಪಟ್ಟಣಗಳೊಳಗೆ ನ್ಯಾಯಾಧಿಪತಿಗಳಿಗೆ,
2CH 19:6 “ನೀವು ಮಾಡುವುದನ್ನು ನೋಡಿಕೊಳ್ಳಿರಿ. ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಯೆಹೋವ ದೇವರಿಗೋಸ್ಕರ ನ್ಯಾಯ ತೀರಿಸುತ್ತೀರಿ.
2CH 19:7 ಆದಕಾರಣ ಯೆಹೋವ ದೇವರ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡೆಯಿರಿ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಅನ್ಯಾಯವಾದರೂ, ಮುಖದಾಕ್ಷಿಣ್ಯವಾದರೂ, ಲಂಚ ತೆಗೆದುಕೊಳ್ಳುವುದಾದರೂ ಇಲ್ಲ,” ಎಂದನು.
2CH 19:8 ಅವರು ಯೆರೂಸಲೇಮಿಗೆ ತಿರುಗಿ ಬಂದ ತರುವಾಯ ಯೆಹೋಷಾಫಾಟನು ಯೆಹೋವ ದೇವರ ನ್ಯಾಯತೀರ್ವಿಕೆಗೋಸ್ಕರವೂ, ವ್ಯಾಜ್ಯಗಳಿಗೋಸ್ಕರವೂ ಯೆರೂಸಲೇಮಿನೊಳಗೆ ಲೇವಿಯರಲ್ಲಿಯೂ, ಯಾಜಕರಲ್ಲಿಯೂ, ಇಸ್ರಾಯೇಲ್ ಗೋತ್ರಪ್ರಧಾನರಲ್ಲಿಯೂ ಕೆಲವರನ್ನು ನೇಮಿಸಿ ಅವರಿಗೆ,
2CH 19:9 “ನೀವು ಈ ಕಾರ್ಯವನ್ನು ಯೆಹೋವ ದೇವರ ಭಯದಿಂದಲೂ ನಂಬಿಕೆಯಿಂದಲೂ ಪೂರ್ಣಹೃದಯದಿಂದಲೂ ಮಾಡಬೇಕು.
2CH 19:10 ಇದಲ್ಲದೆ ಜೀವಹತ್ಯ, ನ್ಯಾಯಕ್ಕೂ, ಆಜ್ಞೆಗೂ, ನಿಯಮಗಳಿಗೂ, ನ್ಯಾಯತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ, ರೌದ್ರವು ನಿಮ್ಮ ಮೇಲೆಯೂ, ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ. ಆಗ ನೀವು ಅಪರಾಧವಿಲ್ಲದವರಾಗಿರುವಿರಿ.
2CH 19:11 “ಮುಖ್ಯಯಾಜಕನಾದ ಅಮರ್ಯನು ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಯೆಹೂದದ ಮನೆಯ ನಾಯಕನಾಗಿರುವ ಇಷ್ಮಾಯೇಲನ ಮಗ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇರುವರು. ಇದಲ್ಲದೆ ಲೇವಿಯರು ನಿಮ್ಮ ಮುಂದೆ ಅಧಿಕಾರಿಗಳಾಗಿರುವರು. ನೀವು ಬಲಗೊಂಡು ಕೆಲಸ ನಡೆಸಿರಿ. ಯೆಹೋವ ದೇವರು ಒಳ್ಳೆಯವರ ಸಂಗಡ ಇರುವರು,” ಎಂದನು.
2CH 20:1 ಇದರ ತರುವಾಯ ಮೋವಾಬ್ಯರೂ, ಅಮ್ಮೋನಿಯರೂ, ಮೆಗೂನ್ಯರೂ ಯೆಹೋಷಾಫಾಟನ ಮೇಲೆ ಯುದ್ಧಮಾಡಲು ಬಂದರು.
2CH 20:2 ಆಗ ಕೆಲವರು ಬಂದು ಯೆಹೋಷಾಫಾಟನಿಗೆ, “ಅರಾಮಿನ ಈಚೆಯಲ್ಲಿರುವ ಲವಣ ಸಮುದ್ರದ ಆಚೆಯಿಂದ ನಿನಗೆ ವಿರೋಧವಾಗಿ ಮಹಾ ಸಮೂಹವೊಂದು ಬರುತ್ತದೆ. ಅವರು ಏನ್ಗೆದಿ ಎಂಬ ಹಜಜೋನ್ ತಾಮಾರಿನಲ್ಲಿ ಇದ್ದಾರೆ,” ಎಂದು ತಿಳಿಸಿದರು.
2CH 20:3 ಇದನ್ನು ಕೇಳಿ ಯೆಹೋಷಾಫಾಟನು ಭಯಪಟ್ಟು ಯೆಹೋವ ದೇವರನ್ನು ಹುಡುಕಲು ನಿರ್ಣಯಿಸಿಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸ ಮಾಡಬೇಕೆಂದು ಸಾರಿದನು.
2CH 20:4 ಆದ್ದರಿಂದ ಯೆಹೂದದವರು ಯೆಹೋವ ದೇವರಿಂದ ಸಹಾಯವನ್ನು ಕೇಳಿಕೊಳ್ಳಲು ಸಮಸ್ತ ಯೆಹೂದದ ಪಟ್ಟಣಗಳಿಂದ ಕೂಡಿಬಂದರು.
2CH 20:5 ಆಗ ಯೆಹೋಷಾಫಾಟನು ಹೊಸ ಅಂಗಳದ ಮುಂದೆ ಯೆಹೋವ ದೇವರ ಮಂದಿರದಲ್ಲಿರುವ ಯೆಹೂದದ ಯೆರೂಸಲೇಮಿನ ಜನಸಮೂಹದ ಮಧ್ಯದಲ್ಲಿ ನಿಂತು:
2CH 20:6 “ನಮ್ಮ ಪಿತೃಗಳ ದೇವರಾದ ಯೆಹೋವ ದೇವರೇ, ಪರಲೋಕದಲ್ಲಿರುವ ದೇವರು ನೀವಲ್ಲವೋ? ನೀವು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀರಲ್ಲವೋ? ಯಾವನೂ ನಿಮ್ಮನ್ನು ಎದುರಿಸಲಾಗದ ಹಾಗೆ ನಿಮ್ಮ ಕೈಯಲ್ಲಿ ಶಕ್ತಿಯೂ, ಪರಾಕ್ರಮವೂ ಇಲ್ಲವೋ?
2CH 20:7 ನೀವು ನಿಮ್ಮ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿಬಿಟ್ಟು, ಅದನ್ನು ನಿಮ್ಮ ಸ್ನೇಹಿತನಾದ ಅಬ್ರಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀವು, ನಮ್ಮ ದೇವರಲ್ಲವೋ?
2CH 20:8 ಅವರು ಅದರಲ್ಲಿ ನಿವಾಸಮಾಡಿ, ಅದರಲ್ಲಿ ನಿಮ್ಮ ಹೆಸರಿಗೆ ಪರಿಶುದ್ಧವಾದ ಸ್ಥಳವನ್ನು ಕಟ್ಟಿಸಿ,
2CH 20:9 ‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ?
2CH 20:10 “ಈಗ, ಅಮ್ಮೋನ್ ಮೋವಾಬ್, ಸೇಯೀರ್ ಬೆಟ್ಟದ ಜನರು, ಇಸ್ರಾಯೇಲರು ಈಜಿಪ್ಟ್ ದೇಶದೊಳಗಿಂದ ಹೊರಟು ಬರುವಾಗ, ಅವರ ಕಡೆಗೆ ಹೋಗಲು ನೀವು ಇವರಿಗೆ ಅಪ್ಪಣೆ ಕೊಡದೆ ಇದ್ದುದರಿಂದ, ಇವರು ಅವರನ್ನು ಬಿಟ್ಟು ತೊಲಗಿ ಅವರನ್ನು ನಾಶಮಾಡದೆ ಹೋದರು.
2CH 20:11 ಅವರು ಬಂದು, ನೀವು ನಮಗೆ ಸ್ವಾಧೀನಮಾಡಿಕೊಳ್ಳಲು ಕೊಟ್ಟ ನಿಮ್ಮ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಡಿಸುವುದರಿಂದ ನಮಗೆ ಪ್ರತೀಕಾರ ಮಾಡುತ್ತಾರೆ.
2CH 20:12 ನಮ್ಮ ದೇವರೇ, ನೀವು ಅವರಿಗೆ ನ್ಯಾಯತೀರಿಸುವುದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾ ಗುಂಪನ್ನು ಎದುರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯದು. ಆದರೆ ನಮ್ಮ ಕಣ್ಣುಗಳು ನಿಮ್ಮ ಮೇಲೆ ಇವೆ,” ಎಂದನು.
2CH 20:13 ಹೀಗೆ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಯೆಹೋವ ದೇವರ ಮುಂದೆ ನಿಂತರು.
2CH 20:14 ಆಗ ಜನಸಮೂಹದ ಮಧ್ಯದಲ್ಲಿ ಆಸಾಫನ ವಂಶದಲ್ಲಿ ಒಬ್ಬನಾದಂಥ ಲೇವಿಯನಾದ ಯಹಜಿಯೇಲನ ಮೇಲೆ ಯೆಹೋವ ದೇವರ ಆತ್ಮ ಬರಲು, ಇವನು ಮತ್ತನ್ಯನಿಗೆ ಹುಟ್ಟಿದ ಯೆಹೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ.
2CH 20:15 ಆಗ ಯಹಜೀಯೇಲನು, “ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ: ಈ ಮಹಾ ಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಏಕೆಂದರೆ ಯುದ್ಧವು ನಿಮ್ಮದಲ್ಲ, ದೇವರದೇ.
2CH 20:16 ನಾಳೆ ಬೆಳಿಗ್ಗೆ ನೀವು ಅವರ ವಿರೋಧವಾಗಿ ಹೋಗಿರಿ. ಅವರು ಚೀಚ್ ಎಂಬ ಕಣಿವೆಯಿಂದ ಬರುತ್ತಾರೆ. ಯೆರೂಯೇಲ್ ಮರುಭೂಮಿಯ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ.
2CH 20:17 ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು.
2CH 20:18 ಆಗ ಯೆಹೋಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು. ಯೆಹೂದದವರೆಲ್ಲರೂ, ಯೆರೂಸಲೇಮಿನ ನಿವಾಸಿಗಳೆಲ್ಲರೂ ಯೆಹೋವ ದೇವರ ಮುಂದೆ ಅಡ್ಡಬಿದ್ದು ಯೆಹೋವ ದೇವರನ್ನು ಆರಾಧಿಸಿದರು.
2CH 20:19 ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು.
2CH 20:20 ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು.
2CH 20:21 ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಯೆಹೋಷಾಫಾಟನು, ಪರಿಶುದ್ಧತ್ವದ ವೈಭವದಿಂದ ಯೆಹೋವ ದೇವರಿಗೆ ಹಾಡುವಂತೆ ಸಂಗೀತಗಾರರನ್ನು ನೇಮಿಸಿದನು. ಅವರು ಸೈನ್ಯದ ಮುಂದೆ ಹೋಗುತ್ತಾ, “ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂದು ಹಾಡುವಂತೆ ನೇಮಿಸಿದನು.
2CH 20:22 ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದರು.
2CH 20:23 ಅಮ್ಮೋನಿಯರು, ಮೋವಾಬ್ಯರು ಸೇಯೀರ್ ಪರ್ವತದ ನಿವಾಸಿಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯೀರನ ನಿವಾಸಿಗಳನ್ನು ಪೂರ್ಣವಾಗಿ ವಧಿಸಿದ ತರುವಾಯ, ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.
2CH 20:24 ಯೆಹೂದದವರು ಮರುಭೂಮಿಯಲ್ಲಿರುವ ಎತ್ತರದ ಸ್ಥಳಕ್ಕೆ ಬಂದು, ಅಲ್ಲಿನ ಗುಂಪನ್ನು ನೋಡಿದಾಗ, ಅವರಲ್ಲಿ ಒಬ್ಬನೂ ಉಳಿಯದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು.
2CH 20:25 ಯೆಹೋಷಾಫಾಟನೂ, ಅವನ ಜನರೂ ಅವರ ವಸ್ತ್ರಗಳನ್ನೂ, ವಸ್ತುಗಳನ್ನೂ ಕೊಳ್ಳೆಮಾಡಲು ಬಂದಾಗ, ಅವರು ಹೆಣಗಳ ಬಳಿಯಲ್ಲಿ ದ್ರವ್ಯವನ್ನೂ, ಆಭರಣಗಳನ್ನೂ ಬಹಳವಾಗಿ ಕಂಡುಕೊಂಡು, ತಾವು ಒಯ್ಯಲಿಕ್ಕಾಗದಷ್ಟು ಹೆಚ್ಚಾಗಿ ಸುಲಿದುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದುದರಿಂದ ಅದನ್ನು ಮೂರು ದಿವಸಗಳವರೆಗೂ ಸುಲಿದುಕೊಳ್ಳುತ್ತಾ ಇದ್ದರು.
2CH 20:26 ನಾಲ್ಕನೆಯ ದಿವಸದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡರು. ಅಲ್ಲಿ ಯೆಹೋವ ದೇವರನ್ನು ಸ್ತುತಿಸಿದರು. ಆದಕಾರಣ ಇಂದಿನವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ.
2CH 20:27 ಯೆಹೋವ ದೇವರು ಅವರ ಶತ್ರುಗಳ ಮೇಲೆ ಅವರು ಸಂತೋಷಪಡುವಂತೆ ಮಾಡಿದ್ದರಿಂದ, ಅವರು ಹರ್ಷಗೊಂಡು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಯೆಹೂದ ಮತ್ತು ಯೆರೂಸಲೇಮಿನವರ ಮುಂಭಾಗದಲ್ಲಿ ಯೆಹೋಷಾಫಾಟನೂ ಹೊರಟು,
2CH 20:28 ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದರು.
2CH 20:29 ಯೆಹೋವ ದೇವರು ಇಸ್ರಾಯೇಲರ ಶತ್ರುಗಳ ಮೇಲೆ ಯುದ್ಧ ಮಾಡಿದರೆಂದು ಜನರು ಕೇಳಿದಾಗ, ದೇವರ ಭಯವು ಆ ದೇಶದಲ್ಲಿ ಸಕಲ ರಾಜ್ಯಗಳ ಮೇಲೆ ಇತ್ತು.
2CH 20:30 ಹೀಗೆ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು. ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿಕೊಟ್ಟರು.
2CH 20:31 ಯೆಹೋಷಾಫಾಟನು ಯೆಹೂದ್ಯರ ಮೇಲೆ ಆಳಿದನು. ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.
2CH 20:32 ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
2CH 20:33 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ. ಜನರು ಅವರ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸ್ಥಿರ ಮಾಡಿಕೊಂಡಿರಲಿಲ್ಲ.
2CH 20:34 ಯೆಹೋಷಾಫಾಟನ ಇತರ ಕ್ರಿಯೆಗಳು, ಆರಂಭದಿಂದ ಅಂತ್ಯದವರೆಗೆ, ಇಸ್ರಾಯೇಲರ ಅರಸುಗಳ ಗ್ರಂಥದಲ್ಲಿ, ಅಂದರೆ, ಹನಾನೀಯ ಮಗನಾದ ಯೇಹುವಿನ ಗ್ರಂಥದಲ್ಲಿ ಬರೆದಿರುತ್ತವೆ.
2CH 20:35 ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು, ಬಹು ದುಷ್ಟನಾಗಿ ನಡೆದ ಇಸ್ರಾಯೇಲಿನ ಅರಸನಾದ ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡನು.
2CH 20:36 ಇದಲ್ಲದೆ ತಾರ್ಷೀಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಮಾಡಿಸಲು, ಅವನ ಸಂಗಡ ಒಪ್ಪಂದ ಮಾಡಿಕೊಂಡು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಮಾಡಿಸಿದರು.
2CH 20:37 ಆಗ ಮಾರೇಷಾ ಊರಿನ ದೋದವಾಹುವಿನ ಮಗನಾದ ಎಲೀಯೆಜೆರನು ಯೆಹೋಷಾಫಾಟನಿಗೆ ವಿರೋಧವಾಗಿ ಪ್ರವಾದಿಸಿ, “ನೀನು ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡಿದ್ದರಿಂದ, ಯೆಹೋವ ದೇವರು ನೀನು ಮಾಡಿದವುಗಳನ್ನು ನಾಶಮಾಡುವರು,” ಎಂದು ಹೇಳಿದನು. ಅದರಂತೆಯೇ, ಆ ಹಡಗುಗಳು ತಾರ್ಷೀಷಿಗೆ ಹೋಗದೆ ಒಡೆದುಹೋದವು.
2CH 21:1 ಯೆಹೋಷಾಫಾಟನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಪೂರ್ವಜರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಆಗ ಅವನಿಗೆ ಬದಲಾಗಿ ಅವನ ಮಗನಾದ ಯೆಹೋರಾಮನು ಅರಸನಾದನು.
2CH 21:2 ಇವನ ಸಹೋದರರಾಗಿರುವ ಯೆಹೋಷಾಫಾಟನ ಪುತ್ರರಾದ ಅಜರ್ಯನೂ, ಯೆಹೀಯೇಲನೂ, ಜೆಕರ್ಯನೂ, ಅಜರ್ಯನೂ, ಮೀಕಾಯೇಲನೂ, ಶೆಫಟ್ಯನೂ ಇದ್ದರು. ಇವರೆಲ್ಲರು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಪುತ್ರರು.
2CH 21:3 ಅವರ ತಂದೆ ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳ ಸಂಗಡ ಬೆಳ್ಳಿಯನ್ನೂ, ಬಂಗಾರವನ್ನೂ, ಬೆಲೆಯುಳ್ಳ ವಸ್ತುಗಳನ್ನೂ ಅವರಿಗೆ ದಾನಗಳಾಗಿ ಕೊಟ್ಟನು. ಆದರೆ ಯೆಹೋರಾಮನು ಚೊಚ್ಚಲ ಮಗನಾದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
2CH 21:4 ಯೆಹೋರಾಮನು ತನ್ನ ತಂದೆಯ ರಾಜ್ಯಕ್ಕೆ ಬಂದ ತರುವಾಯ, ಅವನು ತನ್ನನ್ನು ಬಲಪಡಿಸಿಕೊಂಡು ತನ್ನ ಸಮಸ್ತ ಸಹೋದರರನ್ನೂ, ಇಸ್ರಾಯೇಲಿನ ಪ್ರಧಾನರಲ್ಲಿ ಕೆಲವರನ್ನೂ ಖಡ್ಗದಿಂದ ಕೊಂದುಹಾಕಿದನು.
2CH 21:5 ಯೆಹೋರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
2CH 21:6 ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2CH 21:7 ಆದರೆ ಯೆಹೋವ ದೇವರು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿದ ಕಾರಣ, ದೇವರು ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
2CH 21:8 ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.
2CH 21:9 ಆಗ ಯೆಹೋರಾಮನು ತನ್ನ ಪ್ರಧಾನರ ಸಂಗಡ, ಎಲ್ಲಾ ರಥಬಲವನ್ನು ತೆಗೆದುಕೊಂಡುಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ, ತನ್ನ ರಥಗಳ ಅಧಿಪತಿಗಳನ್ನೂ ಸುತ್ತುವರೆದಿದ್ದ ಎದೋಮ್ಯರನ್ನು ಸೋಲಿಸಿದನು.
2CH 21:10 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಯೆಹೋರಾಮನು ತನ್ನ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು.
2CH 21:11 ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಪೂಜಾಸ್ಥಳಗಳನ್ನು ಮಾಡಿ, ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ, ಹಾಗೆಯೇ ಮಾಡಲು ಯೆಹೂದದವರನ್ನು ಬಲವಂತ ಮಾಡಿದನು.
2CH 21:12 ಆದಕಾರಣ ಪ್ರವಾದಿಯಾದ ಎಲೀಯನಿಂದ ಅವನಿಗೆ ಒಂದು ಪತ್ರವು ಬಂತು. ಅದರಲ್ಲಿ ಅವನು, “ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗಗಳಲ್ಲಿಯೂ, ಯೆಹೂದದ ಅರಸನಾದ ಆಸನ ಮಾರ್ಗಗಳಲ್ಲಿಯೂ ನಡೆಯದೆ,
2CH 21:13 ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು, ಅಹಾಬನ ಮನೆಯವರು ದೇವದ್ರೋಹ ಮಾಡಿದಂತೆ, ಯೆಹೂದದವರನ್ನೂ, ಯೆರೂಸಲೇಮಿನ ನಿವಾಸಿಗಳನ್ನೂ ದ್ರೋಹ ಮಾಡಲು ಪ್ರೇರೇಪಿಸಿ, ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆಯವರಾದ ನಿನ್ನ ಸಹೋದರರನ್ನು ಕೊಂದುಹಾಕಿದ್ದರಿಂದ,
2CH 21:14 ಯೆಹೋವ ದೇವರು ದೊಡ್ಡ ಬಾಧೆಯಿಂದ ನಿನ್ನ ಜನರನ್ನೂ, ನಿನ್ನ ಮಕ್ಕಳನ್ನೂ, ನಿನ್ನ ಹೆಂಡತಿಯರನ್ನೂ, ನಿನ್ನ ಸಮಸ್ತ ಸ್ಥಿತಿಯನ್ನೂ ಬಾಧಿಸುತ್ತಾರೆ.
2CH 21:15 ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವುದರಿಂದ ನಿನ್ನ ಕರುಳುಗಳು ಹೊರಕ್ಕೆ ಬರುವವರೆಗೆ ಕರುಳುಬೇನೆಯ ರೋಗದಿಂದ ನಿನಗೆ ಕಠಿಣರೋಗ ಬರುವುದು,’ ” ಎಂದು ಬರೆದಿದ್ದನು.
2CH 21:16 ಇದಲ್ಲದೆ ಕೂಷ್ಯರ ಬಳಿಯಲ್ಲಿದ್ದ ಫಿಲಿಷ್ಟಿಯರ ಮತ್ತು ಅರಬಿಯರ ಮನಸ್ಸನ್ನು ಯೆಹೋರಾಮನಿಗೆ ವಿರೋಧವಾಗಿ ಯೆಹೋವ ದೇವರು ಎಬ್ಬಿಸಿದರು.
2CH 21:17 ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ನುಗ್ಗಿ, ಅರಸನ ಅರಮನೆಯಲ್ಲಿ ಸಿಕ್ಕಿದ ಸಮಸ್ತ ಸ್ಥಿತಿಯನ್ನೂ, ಅವನ ಪುತ್ರರನ್ನೂ, ಅವನ ಹೆಂಡತಿಯರನ್ನೂ ತೆಗೆದುಕೊಂಡು ಹೋದರು. ಆದ್ದರಿಂದ ಅವನ ಪುತ್ರರಲ್ಲಿ ಚಿಕ್ಕವನಾದ ಯೆಹೋವಾಹಾಜನ ಹೊರತು ಅವನಿಗೆ ಪುತ್ರರು ಯಾರೂ ಉಳಿಯಲಿಲ್ಲ.
2CH 21:18 ಇದೆಲ್ಲದರ ತರುವಾಯ ಯೆಹೋವ ದೇವರು ಯೆಹೋರಾಮನ ಕರುಳುಗಳಲ್ಲಿ ವಾಸಿಯಾಗಲಾರದ ರೋಗದಿಂದ ಅವನನ್ನು ಬಾಧಿಸಿದರು.
2CH 21:19 ಎರಡು ವರ್ಷವಾದ ತರುವಾಯ, ಅವನ ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆ ಅವನು ಕಡುಬೇನೆಯಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೆ ಗೌರವಕ್ಕೋಸ್ಕರ ಅಗ್ನಿಕುಂಡ ಹಚ್ಚಲಿಲ್ಲ.
2CH 21:20 ಯೆಹೋರಾಮ್ ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. ಅವನು ಮರಣಹೊಂದಿದಾಗ ಯಾರೂ ಶೋಕಿಸಲಿಲ್ಲ ಆದರೂ ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಆದರೆ ಅರಸರ ಸಮಾಧಿಗಳಲ್ಲಿ ಅಲ್ಲ.
2CH 22:1 ಯೆರೂಸಲೇಮಿನ ನಿವಾಸಿಗಳು ಯೆಹೋರಾಮನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯನನ್ನು ಅರಸನಾಗಿ ಮಾಡಿದರು. ಏಕೆಂದರೆ ಪಾಳೆಯಕ್ಕೆ ಬಂದ ಅರಬಿಯರ ಗುಂಪು ಹಿರಿಯ ಮಕ್ಕಳನ್ನೆಲ್ಲಾ ಕೊಂದುಹಾಕಿದರು. ಹೀಗೆಯೇ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಲು ಆರಂಭಿಸಿದನು.
2CH 22:2 ಅಹಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಅತಲ್ಯಳು, ಈಕೆಯು ಒಮ್ರಿಯ ಮೊಮ್ಮಗಳು.
2CH 22:3 ಅವನ ತಾಯಿಯ ದುರ್ಬೋಧನೆಯಿಂದ ಅವನು ದುಷ್ಟನಾಗಿ ಅಹಾಬನ ಮನೆಯವರ ಮಾರ್ಗಗಳಲ್ಲಿ ನಡೆದನು.
2CH 22:4 ಅವನು ಅಹಾಬನ ಕುಟುಂಬದಂತೆಯೇ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು, ಏಕೆಂದರೆ ಅವನ ತಂದೆಯ ಮರಣದ ನಂತರ ಅವರು ಅವನ ಸಲಹೆಗಾರರಾದರು. ಆದಕಾರಣ ಎಲ್ಲವೂ ನಾಶವಾಯಿತು.
2CH 22:5 ಅಹಜ್ಯನು ಇವರ ಯೋಚನೆಯ ಪ್ರಕಾರ ನಡೆದು, ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗ ಯೋರಾಮನ ಸಂಗಡ ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು.
2CH 22:6 ಆದ್ದರಿಂದ ಅವನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಜರ್ಯನು ಅವನನ್ನು ನೋಡಲು ಹೋದನು.
2CH 22:7 ಯೋರಾಮನ ಬಳಿಗೆ ಅಹಜ್ಯನು ಬಂದಿದ್ದರಿಂದ ಅವನಿಗೆ ಉಂಟಾದ ನಷ್ಟವು ದೇವರಿಂದ ಆಯಿತು. ಹೇಗೆಂದರೆ, ಅಹಜ್ಯನು ಬಂದ ತರುವಾಯ ಯೆಹೋವ ದೇವರು ಅಹಾಬನ ಮನೆಯನ್ನು ಕಡಿದು ಬಿಡಲು ಅಭಿಷೇಕಿಸಿದ ನಿಂಷಿಯ ಮಗ ಯೇಹುವಿಗೆ ವಿರೋಧವಾಗಿ ಯೆಹೋರಾಮನ ಸಂಗಡ ಹೊರಟರು.
2CH 22:8 ಯೇಹುವು ಅಹಾಬನ ಮನೆಯ ಮೇಲೆ ನ್ಯಾಯ ತೀರಿಸುವಂತೆ ಅವನು ಯೆಹೂದ್ಯರ ಪ್ರಧಾನರನ್ನೂ, ಅಹಜ್ಯನನ್ನು ಸೇವಿಸುತ್ತಿರುವ ಅಹಜ್ಯನ ಸಹೋದರರ ಮಕ್ಕಳನ್ನೂ ಕಂಡುಹಿಡಿದು, ಅವರನ್ನು ಕೊಂದುಹಾಕಿದನು.
2CH 22:9 ಇದಲ್ಲದೆ ಯೇಹುವು ಅಹಜ್ಯನನ್ನು ಹುಡುಕಿದನು. ಅವನು ಸಮಾರ್ಯದಲ್ಲಿ ಬಚ್ಚಿಟ್ಟುಕೊಂಡದ್ದರಿಂದ ಅವನನ್ನು ಕಂಡುಹಿಡಿದು, ಯೇಹುವಿನ ಬಳಿಗೆ ಅವನನ್ನು ತೆಗೆದುಕೊಂಡು ಬಂದು, ಅವನನ್ನು ವಧಿಸಿದರು. “ಇವನು ಪೂರ್ಣಹೃದಯದಿಂದ ಯೆಹೋವ ದೇವರನ್ನು ಹುಡುಕಿದ ಯೆಹೋಷಾಫಾಟನ ಮಗನು,” ಎಂದು ಹೇಳಿ ಅವನನ್ನು ಸಮಾಧಿಮಾಡಿದರು. ಹೀಗೆ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುವದಕ್ಕೆ ಅಹಜ್ಯನ ಮನೆಯವರಲ್ಲಿ ಸಮರ್ಥರಾರೂ ಉಳಿಯಲಿಲ್ಲ.
2CH 22:10 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ಯೆಹೂದನ ಮನೆಯ ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.
2CH 22:11 ಆದರೆ ಅರಸನಾದ ಯೆಹೋರಾಮನ ಮಗಳಾದ ಯೆಹೋಷಬತಳು, ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನನ್ನೂ ಅವನ ದಾದಿಯನ್ನೂ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು. ಹೀಗೆಯೇ ಅರಸನಾದ ಯೆಹೋರಾಮನ ಪುತ್ರಿಯರಾಗಿರುವ ಯಾಜಕನಾದ ಯೆಹೋಯಾದಾವನ ಹೆಂಡತಿಯಾಗಿರುವ ಅಹಜ್ಯನ ಸಹೋದರಿಯಾದ ಯೆಹೋಷಬತಳು, ಅತಲ್ಯಳು ಅವನನ್ನು ಕೊಲ್ಲದ ಹಾಗೆ ಬಚ್ಚಿಟ್ಟಳು.
2CH 22:12 ಹೀಗೆಯೇ ಇವನು ಅವರ ಸಂಗಡ ಆರು ವರ್ಷ ದೇವರ ಆಲಯದಲ್ಲಿ ಗುಪ್ತವಾಗಿದ್ದನು. ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು.
2CH 23:1 ಏಳನೆಯ ವರ್ಷದಲ್ಲಿ ಯೆಹೋಯಾದಾವನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿಗಳಾಗಿರುವ ಯೆರೋಹಾಮನ ಮಗ ಅಜರ್ಯನನ್ನೂ, ಯೆಹೋಹಾನಾನನ ಮಗ ಇಷ್ಮಾಯೇಲನನ್ನೂ, ಓಬೇದನ ಮಗ ಅಜರ್ಯನನ್ನೂ, ಅದಾಯನ ಮಗ ಮಾಸೇಯನನ್ನೂ, ಜಿಕ್ರಿಯ ಮಗ ಎಲಿಷಾಫಾಟನನ್ನೂ ಕರೆದುಕೊಂಡು, ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು.
2CH 23:2 ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲಿನ ಕುಟುಂಬದಲ್ಲಿ ಮುಖ್ಯಸ್ಥರನ್ನೂ ಕೂಡಿಸಿಕೊಂಡು, ಯೆರೂಸಲೇಮಿಗೆ ಬಂದರು.
2CH 23:3 ಆಗ ಸಭೆಯವರೆಲ್ಲರು ದೇವರ ಆಲಯದಲ್ಲಿ ಅರಸನ ಸಂಗಡ ಒಡಂಬಡಿಕೆಯನ್ನು ಮಾಡಿದರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು, ಯೆಹೋವ ದೇವರು ದಾವೀದನ ವಂಶದವರ ಬಗ್ಗೆ ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ಆಳತಕ್ಕವನು ಇವನೇ.
2CH 23:4 ಈಗ ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ಯಾಜಕರೂ, ಲೇವಿಯರೂ ಆದ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ದ್ವಾರಪಾಲಕರಾಗಿರಬೇಕು.
2CH 23:5 ಇನ್ನೊಂದು ಭಾಗವು ಅರಮನೆಯನ್ನೂ, ಮತ್ತೊಂದು ಭಾಗವು ಅಸ್ತಿವಾರದ ಬಾಗಿಲನ್ನೂ, ಇತರ ಸಮಸ್ತ ಜನರೂ ಯೆಹೋವ ದೇವರ ಆಲಯದ ಅಂಗಳದಲ್ಲಿಯೂ ಇರಬೇಕು.
2CH 23:6 ಆದರೆ ಯಾಜಕರೂ, ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಬೇರೆ ಯಾರೂ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪ್ರತಿಷ್ಠಿತರಾದುದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಯೆಹೋವ ದೇವರ ಆಜ್ಞಾನುಸಾರವಾಗಿ ಹೊರಗಿರಬೇಕು.
2CH 23:7 ಇದಲ್ಲದೆ ಲೇವಿಯರಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಇವರ ಹೊರತು ಯಾವನಾದರೂ ಆಲಯದಲ್ಲಿ ಬಂದರೆ, ಅವನನ್ನು ಸಂಹರಿಸಬೇಕು. ಆದರೆ ಅರಸನು ಒಳಗೆ ಬರುವಾಗಲೂ, ಹೊರಗೆ ಹೋಗುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಹೇಳಿದನು.
2CH 23:8 ಹೀಗೆಯೇ ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಲೇವಿಯರೂ ಸಮಸ್ತ ಯೆಹೂದದವರೂ ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಕೂಡಿಸಿಕೊಂಡನು. ಏಕೆಂದರೆ ಯಾಜಕನಾದ ಯೆಹೋಯಾದನು ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ.
2CH 23:9 ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು,
2CH 23:10 ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಸಮಸ್ತ ಜನರನ್ನೂ ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ಇರಿಸಿದನು.
2CH 23:11 ಆಗ ಯೆಹೋಯಾದಾವನು ಅವನ ಮಕ್ಕಳೂ ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅವನನ್ನು ಅರಸನನ್ನಾಗಿ ಘೋಷಿಸಿ, ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.
2CH 23:12 ಆದರೆ ಅರಸನನ್ನು ಹರಸುತ್ತಾ, ಓಡುತ್ತಾ ಇದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ, ಅವಳು ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು.
2CH 23:13 ಅರಸನು ಪ್ರವೇಶಿಸುವ ಸ್ಥಳದಲ್ಲಿ ತನ್ನ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ, ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಹಾಗೆಯೇ ಹಾಡುಗಾರರು ಗೀತವಾದ್ಯಗಳನ್ನು ಹಿಡಿದು ಸ್ತುತಿಸುವವರೂ ಬೋಧಿಸುವವರೂ ಇದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ,” ಎಂದು ಕೂಗಿದಳು.
2CH 23:14 ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳನ್ನು ಹೊರಗೆ ಕರೆತಂದು ಅವರಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು.
2CH 23:15 ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಅರಮನೆಯ ಬಳಿಯಲ್ಲಿ ಕುದುರೆ ಬಾಗಿಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದುಹಾಕಿದರು.
2CH 23:16 ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ತನಗೂ, ಸಮಸ್ತ ಜನರಿಗೂ, ಅರಸನಿಗೂ ಒಡಂಬಡಿಕೆ ಮಾಡಿಸಿದನು.
2CH 23:17 ಸಮಸ್ತ ಜನರು ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು.
2CH 23:18 ಆಗ ಯೆಹೋಯಾದಾವನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವ ದೇವರ ಆಲಯದ ಪರಿಚಾರಕರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವ ದೇವರ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ಬೇರ್ಪಡಿಸಿದ್ದನು. ದಾವೀದನಿಂದ ನೇಮಕವಾದ ಪ್ರಕಾರ ಸಂತೋಷದಿಂದ ಹಾಡುತ್ತಾ ಮೋಶೆಯ ನಿಯಮದಲ್ಲಿ ಬರೆದಿರುವಂತೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುವುದು ಅವರ ಕರ್ತವ್ಯವಾಗಿತ್ತು.
2CH 23:19 ಯೆಹೋವ ದೇವರ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಿಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿದನು.
2CH 23:20 ಅವನು ಶತಾಧಿಪತಿಗಳನ್ನೂ, ಗೌರವಸ್ಥರನ್ನೂ, ಜನರ ಅಧಿಪತಿಗಳನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕರೆತಂದನು. ಅವರು ಹೆಬ್ಬಾಗಿಲಿನಿಂದ ಅರಮನೆಗೆ ಬಂದು, ಅರಸನನ್ನು ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದರು.
2CH 23:21 ಅತಲ್ಯಳನ್ನು ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
2CH 24:1 ಯೋವಾಷ್ ಅರಸನಾದಾಗ ಏಳು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ನಾಲ್ವತ್ತು ವರ್ಷ ಆಳಿದನು, ಅವನ ತಾಯಿ ಬೇರ್ಷೆಬ ಊರಿನವಳಾದ ಚಿಬ್ಯಳೆಂಬವಳು.
2CH 24:2 ಯೋವಾಷನು ಯಾಜಕನಾದ ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು.
2CH 24:3 ಯೆಹೋಯಾದಾವನು ಯೋವಾಷನಿಗೆ ಇಬ್ಬರು ಮಹಿಳೆಯರನ್ನು ಮದುವೆಮಾಡಿಕೊಟ್ಟನು. ಅವನು ಪುತ್ರಪುತ್ರಿಯರನ್ನು ಪಡೆದನು.
2CH 24:4 ಕ್ರಮೇಣ ಯೋವಾಷನು ಯೆಹೋವ ದೇವರ ಆಲಯವನ್ನು ದುರಸ್ತು ಮಾಡುವ ಮನಸ್ಸುಳ್ಳವನಾದನು.
2CH 24:5 ಆದ್ದರಿಂದ ಅವನು ಯಾಜಕರನ್ನೂ, ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆ, “ನೀವು ಯೆಹೂದ ಪಟ್ಟಣಗಳಿಗೆ ಹೊರಟುಹೋಗಿ ವರ್ಷ ವರ್ಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವುದಕ್ಕೆ ಸಮಸ್ತ ಇಸ್ರಾಯೇಲರಿಂದ ಹಣವನ್ನು ಕೂಡಿಸಿರಿ ಮತ್ತು ಕೆಲಸವನ್ನು ಶೀಘ್ರವಾಗಿ ನಡೆಸಿರಿ,” ಎಂದನು. ಆದರೂ ಲೇವಿಯರು ಅವಸರ ಮಾಡದೆ ಇದ್ದರು.
2CH 24:6 ಅರಸನು ಮುಖ್ಯಯಾಜಕನಾದ ಯೆಹೋಯಾದಾವನನ್ನು ಕರೆಕಳುಹಿಸಿ ಅವನಿಗೆ, “ಯೆಹೋವ ದೇವರ ಸೇವಕನಾದ ಮೋಶೆಯೂ, ಇಸ್ರಾಯೇಲಿನ ಸಭೆಯೂ ದೇವದರ್ಶನ ಗುಡಾರದ ನಿಮಿತ್ತ ಆಜ್ಞಾಪಿಸಿದ ಕಾಣಿಕೆಯನ್ನು ಯೆಹೂದದಿಂದಲೂ, ಯೆರೂಸಲೇಮಿನಿಂದಲೂ ಬರುವಂತೆ ಮಾಡಲು ನೀನು ಲೇವಿಯರನ್ನು ಏಕೆ ವಿಚಾರಿಸಲಿಲ್ಲ?” ಎಂದನು.
2CH 24:7 ಆ ದುಷ್ಟ ಸ್ತ್ರೀಯಾದ ಅತಲ್ಯಳ ಪುತ್ರರು ಯೆಹೋವ ದೇವರ ಆಲಯವನ್ನು ಒಡೆದುಬಿಟ್ಟು, ಯೆಹೋವ ದೇವರ ಆಲಯಕ್ಕೆ ಪ್ರತಿಷ್ಠೆ ಮಾಡಿದವುಗಳನ್ನೆಲ್ಲಾ ಬಾಳನಿಗೆ ಕೊಟ್ಟುಬಿಟ್ಟಿದ್ದರು.
2CH 24:8 ಅರಸನು ಹೇಳಿದ್ದರಿಂದ ಅವರು ಒಂದು ಪೆಟ್ಟಿಗೆಯನ್ನು ಮಾಡಿ, ಯೆಹೋವ ದೇವರ ಆಲಯದ ಬಾಗಿಲಿನ ಹೊರಗೆ ಇಟ್ಟರು.
2CH 24:9 ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಇಸ್ರಾಯೇಲರಿಗೆ ಆಜ್ಞಾಪಿಸಿದ ತೆರಿಗೆಯನ್ನು ಯೆಹೋವ ದೇವರಿಗೆ ತರಬೇಕೆಂದು ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಮಾಡಿದರು.
2CH 24:10 ಆಗ ಪ್ರಧಾನರೆಲ್ಲರೂ ಸಂತೋಷಪಟ್ಟು, ತೆರಿಗೆಯನ್ನು ತೆಗೆದುಕೊಂಡು ಬಂದು, ತುಂಬುವವರೆಗೆ ಪೆಟ್ಟಿಗೆಯೊಳಗೆ ಹಾಕಿದರು.
2CH 24:11 ಪೆಟ್ಟಿಗೆಯು ಲೇವಿಯರ ಕೈಯಿಂದ ಅರಸನ ಕಛೇರಿಗೆ ತಂದಾಗಲೆಲ್ಲಾ ಅದರಲ್ಲಿ ಬಹಳ ಹಣ ಕಾಣಿಸಿದ್ದರಿಂದ, ಅರಸನ ಕಾರ್ಯದರ್ಶಿಯೂ, ಮುಖ್ಯಯಾಜಕನ ಪರಿಚಾರಕನೂ ಬಂದು ಪೆಟ್ಟಿಗೆಯನ್ನು ಬರಿದುಮಾಡಿ, ತೆಗೆದುಕೊಂಡು ತಿರುಗಿ ಅದರ ಸ್ಥಳಕ್ಕೆ ಒಯ್ದಿಟ್ಟರು. ಹೀಗೆಯೇ ಅವರು ಪ್ರತಿದಿನ ಮಾಡಿ ಹಣವನ್ನು ಬಹಳ ಕೂಡಿಸಿದರು.
2CH 24:12 ಆಗ ಅರಸನೂ, ಯೆಹೋಯಾದಾವನೂ ಅದನ್ನು ಯೆಹೋವ ದೇವರ ಆಲಯದ ಸೇವೆಯ ಕಾರ್ಯವನ್ನು ಮಾಡುವವರಿಗೆ ಕೊಟ್ಟು ಅವರಿಂದ ಕೆಲಸ ಮಾಡಿಸಿದರು. ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ, ಬಡಗಿಯವರನ್ನೂ ಕೂಲಿಗೆ ಕರೆದುಕೊಂಡರು. ಯೆಹೋವ ದೇವರ ಆಲಯವನ್ನು ಭದ್ರ ಮಾಡುವ ನಿಮಿತ್ತ ಕಬ್ಬಿಣ, ಕಂಚಿನ ಕೆಲಸ ಮಾಡುವವರನ್ನು ಕೂಲಿಗೆ ಕರೆದುಕೊಂಡರು.
2CH 24:13 ಹೀಗೆ ಕೆಲಸದವರು ಕೆಲಸವನ್ನು ನಡೆಸಿದ್ದರಿಂದ, ಕೆಲಸವು ಅವರ ಕೈಯಿಂದ ಪೂರ್ಣವಾಯಿತು. ಅವರು ಯೆಹೋವ ದೇವರ ಆಲಯವನ್ನು ಮೊದಲಿದ್ದ ಸ್ಥಿತಿಗೆ ಅದನ್ನು ತಂದು ಭದ್ರಪಡಿಸಿದರು.
2CH 24:14 ಕೆಲಸ ಮುಗಿಸಿದ ಮೇಲೆ, ಮಿಕ್ಕ ಅರಸನ ಮುಂದೆಯೂ ಯೆಹೋಯಾದಾವನ ಮುಂದೆಯೂ ತಂದರು. ಅದರಿಂದ ಯೆಹೋವ ದೇವರ ಆಲಯಕ್ಕೋಸ್ಕರ ಬಂಗಾರ ಬೆಳ್ಳಿ ಪಾತ್ರೆಗಳಾದ ಸೇವೆಯ ಪಾತ್ರೆಗಳು, ಅರ್ಪಣೆಯ ಪಾತ್ರೆಗಳು, ಸೌಟುಗಳು ಮಾಡಲಾಗಿದ್ದವು. ಯೆಹೋಯಾದಾವನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಯೆಹೋವ ದೇವರ ಆಲಯದಲ್ಲಿ ದಹನಬಲಿಗಳನ್ನು ಅರ್ಪಿಸಿದರು.
2CH 24:15 ಯೆಹೋಯಾದಾವನು ವೃದ್ಧನಾಗಿ ಮರಣಹೊಂದಿದನು. ಅವನು ಸಾಯುವಾಗ ನೂರಾಮೂವತ್ತು ವರ್ಷಗಳುಳ್ಳವನಾಗಿದ್ದನು.
2CH 24:16 ಅವನು ದೇವರಿಗೋಸ್ಕರವಾಗಿಯೂ, ಆತನ ಆಲಯಕ್ಕೋಸ್ಕರವಾಗಿಯೂ ಇಸ್ರಾಯೇಲಿನಲ್ಲಿ ಒಳ್ಳೆಯದನ್ನು ಮಾಡಿದ್ದರಿಂದ, ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಅರಸರ ಬಳಿಯಲ್ಲಿ ಹೂಳಿಟ್ಟರು.
2CH 24:17 ಯೆಹೋಯಾದಾವನ ಮರಣದ ತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.
2CH 24:18 ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಆಲಯವನ್ನು ಬಿಟ್ಟು, ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದೇವರ ಕೋಪಾಗ್ನಿಯು ಬಂತು.
2CH 24:19 ಆದರೂ ಯೆಹೋವ ದೇವರು ತನ್ನ ಕಡೆಗೆ ಅವರನ್ನು ತಿರುಗಿಸುವುದಕ್ಕೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಇವರು ಅವರಿಗೆ ಸಾಕ್ಷಿಗಾಗಿ ಮಾತನಾಡಿದರು. ಆದರೂ ಅವರು ಕಿವಿಗೊಡದೆ ಹೋದರು.
2CH 24:20 ಆಗ ದೇವರ ಆತ್ಮ ಯಾಜಕ ಯೆಹೋಯಾದಾವನ ಮಗನಾದ ಜೆಕರ್ಯನ ಮೇಲೆ ಬಂದು, ಅವನು ಜನರ ಮುಂದೆ ನಿಂತು ಅವರಿಗೆ, “ನೀವು ವೃದ್ಧಿ ಹೊಂದಕೂಡದ ಹಾಗೆ ಯೆಹೋವ ದೇವರ ಆಜ್ಞೆಗಳನ್ನು ಮೀರುವುದೇನು? ನಿಮಗೆ ಶುಭವಾಗುವುದಿಲ್ಲ. ನೀವು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ದೇವರು ಸಹ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
2CH 24:21 ಆದ್ದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಯೆಹೋವ ದೇವರ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು.
2CH 24:22 ಹಾಗೆಯೇ ಅರಸನಾದ ಯೋವಾಷನು, ಇವನ ತಂದೆಯಾದ ಯೆಹೋಯಾದಾವನು ತನಗೆ ತೋರಿಸಿದ ದಯೆಯನ್ನು ಜ್ಞಾಪಕಮಾಡದೆ ಅವನ ಮಗನನ್ನು ಕೊಂದುಹಾಕಿದನು. ಜೆಕರ್ಯನು ಸಾಯುವಾಗ, “ಯೆಹೋವ ದೇವರು ನೋಡಿ ವಿಚಾರಿಸಲಿ,” ಎಂದು ಹೇಳಿದನು.
2CH 24:23 ವರ್ಷಾಂತ್ಯದಲ್ಲಿ ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು, ಯೆಹೂದ ಮತ್ತು ಯೆರೂಸಲೇಮಿಗೆ ಬಂದು, ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ, ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
2CH 24:24 ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ ಅರಾಮ್ಯರು ಚಿಕ್ಕ ಗುಂಪಿನ ಸೈನ್ಯದ ಸಂಗಡ ಬಂದಿದ್ದರೂ, ಯೆಹೋವ ದೇವರು ಅವರ ಮಹಾ ಸೈನ್ಯವನ್ನು ಶತ್ರುಗಳ ಕೈಯಲ್ಲಿ ಒಪ್ಪಿಸಿದನು. ಹೀಗೆಯೇ ಯೆಹೋವ ದೇವರು ಯೋವಾಷನಿಗೆ ವಿರೋಧವಾಗಿ ತೀರ್ಪು ಮಾಡಿದರು.
2CH 24:25 ಯೋವಾಷನು ತೀವ್ರ ಗಾಯಗೊಂಡು ಬಿದ್ದಿರುವಾಗ, ಅರಾಮೀಯರು ಅವನನ್ನು ಬಿಟ್ಟುಹೋದರು. ಅವರು ಹೋದ ತರುವಾಯ ಯಾಜಕನಾದ ಯೆಹೋಯಾದಾವನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಯೋವಾಷನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಅವನ ಮಂಚದ ಮೇಲೆಯೇ ಅವನನ್ನು ಕೊಂದುಹಾಕಿದರು. ಅವರು ಯೋವಾಷನನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಆದರೆ ಅರಸರ ಸಮಾಧಿಯಲ್ಲಿ ಅವನನ್ನು ಸಮಾಧಿಮಾಡಲಿಲ್ಲ.
2CH 24:26 ಯೋವಾಷನಿಗೆ ವಿರೋಧವಾಗಿ ಒಳಸಂಚು ಮಾಡಿದವರು ಯಾರೆಂದರೆ, ಅಮ್ಮೋನ್ ದೇಶದ ಶಿಮೆಯಾತ್ ಎಂಬಾಕೆಯ ಮಗ ಜಾಬಾದ್; ಮೋವಾಬ್ ದೇಶದ ಶಿಮ್ರೀತ್ ಎಂಬಾಕೆಯ ಮಗ ಯೆಹೋಜಾಬಾದನು.
2CH 24:27 ಆದರೆ ಅವನ ಪುತ್ರನನ್ನು ಕುರಿತೂ, ಅವನ ವಿರುದ್ಧ ನುಡಿದ ಪ್ರವಾದನೆಯ ಕುರಿತೂ, ದೇವರ ಆಲಯ ದುರಸ್ತು ಮಾಡುವುದನ್ನು ಕುರಿತೂ, ಅರಸರ ಚರಿತ್ರೆಯ ಪುಸ್ತಕದಲ್ಲಿ ಬರೆದಿರುತ್ತವೆ. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.
2CH 25:1 ಅಮಚ್ಯನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು.
2CH 25:2 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ಪೂರ್ಣಹೃದಯದಿಂದಲ್ಲ.
2CH 25:3 ಅವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು.
2CH 25:4 ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅಮಚ್ಯನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ.
2CH 25:5 ಇದಲ್ಲದೆ ಅಮಚ್ಯನು ಯೆಹೂದದವರನ್ನು ಕೂಡಿಸಿಕೊಂಡು, ಯೆಹೂದ ಬೆನ್ಯಾಮೀನ್ಯರೆಲ್ಲರಲ್ಲಿ ತಮ್ಮ ಪಿತೃಗಳ ಮನೆಗಳ ಪ್ರಕಾರ ಅವರನ್ನು ಸಾವಿರ ಜನರ ಮೇಲೆ ಅಧಿಪತಿಗಳಾಗಿಯೂ, ನೂರು ಜನರ ಮೇಲೆ ಅಧಿಪತಿಗಳಾಗಿಯೂ ಮಾಡಿದನು. ಅವನು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ಪ್ರಾಯವುಳ್ಳವರನ್ನು ಲೆಕ್ಕಿಸಿ ಆಯ್ದುಕೊಂಡನು. ಯುದ್ಧಕ್ಕೆ ಹೋಗತಕ್ಕಂಥ, ಈಟಿಯನ್ನೂ, ಖೇಡ್ಯವನ್ನೂ ಹಿಡಿದುಕೊಂಡಿರುವಂಥ, ಮೂರು ಲಕ್ಷ ಮಂದಿಯನ್ನು ಕೂಡಿಸಿದನು.
2CH 25:6 ಇದಲ್ಲದೆ ಇಸ್ರಾಯೇಲಿನವರಿಗೆ 3,400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟು, ಪರಾಕ್ರಮಶಾಲಿಗಳಾದ ಒಂದು ಲಕ್ಷ ಮಂದಿಯನ್ನು ಕೂಲಿಗೆ ತೆಗೆದುಕೊಂಡನು.
2CH 25:7 ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದಿರಲಿ. ಏಕೆಂದರೆ ಯೆಹೋವ ದೇವರು ಇಸ್ರಾಯೇಲರಾದ ಎಫ್ರಾಯೀಮನ ಸಮಸ್ತ ಜನರ ಸಂಗಡ ಇರುವುದಿಲ್ಲ.
2CH 25:8 ನೀವು ಹೋಗಿ ಯುದ್ಧದಲ್ಲಿ ಧೈರ್ಯದಿಂದ ಹೋರಾಡಿದರೂ ದೇವರು ಶತ್ರುವಿನ ಮುಂದೆ ನಿನ್ನನ್ನು ಸೋಲಿಸಿಬಿಡುವರು. ಏಕೆಂದರೆ ಸಹಾಯ ಕೊಡುವುದಕ್ಕೂ, ಬೀಳ ಮಾಡುವುದಕ್ಕೂ ದೇವರಿಗೆ ಶಕ್ತಿ ಉಂಟು,” ಎಂದನು.
2CH 25:9 ಆಗ ಅಮಚ್ಯನು ದೇವರ ಮನುಷ್ಯನಿಗೆ, “ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ 3,400 ಕಿಲೋಗ್ರಾಂ ಬೆಳ್ಳಿಯನ್ನು ಏನು ಮಾಡಬೇಕು?” ಎಂದನು. ಅದಕ್ಕೆ ದೇವರ ಮನುಷ್ಯನು, “ಯೆಹೋವ ದೇವರು ಇದಕ್ಕಿಂತ ಅಧಿಕವಾಗಿಯೇ ನಿನಗೆ ಕೊಡಲು ಶಕ್ತರು,” ಎಂದನು.
2CH 25:10 ಆಗ ಅಮಚ್ಯನು ಎಫ್ರಾಯೀಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವರನ್ನು ಕಳುಹಿಸಿಬಿಟ್ಟನು. ಆದಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪಗೊಂಡವರಾಗಿ ತಮ್ಮ ಮನೆಗೆ ತಿರುಗಿದರು.
2CH 25:11 ಅಮಚ್ಯನು ತನ್ನನ್ನು ಬಲಪಡಿಸಿ ತನ್ನ ಜನರನ್ನು ನಡೆಸಿಕೊಂಡು ಉಪ್ಪಿನ ತಗ್ಗಿಗೆ ಹೋಗಿ, ಅಲ್ಲಿ ಸೇಯೀರಿನ ಮಕ್ಕಳೊಳಗೆ ಹತ್ತು ಸಾವಿರ ಮಂದಿಯನ್ನು ಹೊಡೆದನು.
2CH 25:12 ಬದುಕಿದ್ದ ಬೇರೆ ಹತ್ತು ಸಾವಿರ ಮಂದಿಯನ್ನು ಯೆಹೂದ್ಯರು ಸೆರೆಯಾಗಿ ಒಯ್ದು, ಬಂಡೆಯ ಶಿಖರಕ್ಕೆ ಅವರನ್ನು ಕರೆದುಕೊಂಡು ಹೋಗಿ, ಅಲ್ಲಿಂದ ಅವರನ್ನು ದಬ್ಬಿ ಸಾಯಿಸಿದರು.
2CH 25:13 ತಮ್ಮ ಸಂಗಡ ಯುದ್ಧಕ್ಕೆ ಬಾರದ ಹಾಗೆ ಅಮಚ್ಯನು ಹಿಂದಕ್ಕೆ ಕಳುಹಿಸಿದ ಗುಂಪಿನವರು ಯೆಹೂದದ ಪಟ್ಟಣಗಳ ಮೇಲೆ ದಾಳಿಮಾಡಿ, ಸಮಾರ್ಯ ಮೊದಲುಗೊಂಡು ಬೇತ್ ಹೋರೋನಿನ ಮಟ್ಟಿಗೂ ಮೂರು ಸಾವಿರ ಮಂದಿಯನ್ನು ಕೊಂದು, ಬಹು ಕೊಳ್ಳೆಯನ್ನು ತೆಗೆದುಕೊಂಡು ಹೋದರು.
2CH 25:14 ಅಮಚ್ಯನು ಎದೋಮ್ಯರನ್ನು ಹೊಡೆದು ತಿರುಗಿ ಬಂದ ತರುವಾಯ, ಸೇಯೀರನ ಮಕ್ಕಳ ದೇವರುಗಳನ್ನು ತೆಗೆದುಕೊಂಡು ಬಂದು, ಅವು ತನಗೆ ದೇವರುಗಳಾಗಿರುವ ಹಾಗೆ ನಿಲ್ಲಿಸಿಕೊಂಡು, ಅವುಗಳ ಮುಂದೆ ಅಡ್ಡಬಿದ್ದು, ಅವುಗಳಿಗೆ ಧೂಪವನ್ನು ಸುಟ್ಟನು.
2CH 25:15 ಆದಕಾರಣ ಯೆಹೋವ ದೇವರ ಕೋಪವು ಅಮಚ್ಯನ ಮೇಲೆ ಬಂತು. ದೇವರು ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿದರು. ಪ್ರವಾದಿಯು ಅರಸನಿಗೆ, “ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆ ಹೋದ ದೇವರುಗಳನ್ನು ನೀನು ವಿಚಾರಿಸುವುದೇನು?” ಎಂದನು.
2CH 25:16 ಪ್ರವಾದಿಯು ಅರಸನ ಸಂಗಡ ಮಾತನಾಡುತ್ತಿರುವಾಗಲೇ ಅರಸನು ಅವನಿಗೆ, “ಅರಸನ ಆಲೋಚನಾ ಮಂತ್ರಿಯನ್ನಾಗಿ ನಿನ್ನನ್ನು ನೇಮಿಸಿದವರು ಯಾರು? ಸುಮ್ಮನಿರು! ನೀನು ಏಕೆ ಮರಣಹೊಂದಬೇಕೆಂದಿರುವೆ?” ಎಂದನು. ಆಗ ಪ್ರವಾದಿಯು, “ನೀನು ನನ್ನ ಯೋಚನೆಯನ್ನು ಕೇಳದೆ ಇದನ್ನು ಮಾಡಿದ್ದರಿಂದ, ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾರೆಂದು ನಾನು ಬಲ್ಲೆನು,” ಎಂದನು.
2CH 25:17 ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.
2CH 25:18 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು.
2CH 25:19 ನೀನು ಎದೋಮ್ಯರನ್ನು ಸೋಲಿಸಿ ಕೀರ್ತಿಯನ್ನು ಪಡೆದುಕೊಂಡೆನಲ್ಲಾ ಎಂದು ನಿನ್ನ ಹೃದಯವು ಗರ್ವಪಡದಿರಲಿ. ಈಗ ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದನು.
2CH 25:20 ಆದರೆ ಅಮಚ್ಯನು ಕೇಳದೆ ಹೋದನು. ಏಕೆಂದರೆ ಯೆಹೂದ್ಯರು ಎದೋಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ, ಅವರನ್ನು ಯೆಹೋವಾಷನ ಕೈಯಲ್ಲಿ ಒಪ್ಪಿಸುವಂತೆ ಇದು ದೇವರಿಂದ ಆಯಿತು.
2CH 25:21 ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ, ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು.
2CH 25:22 ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು.
2CH 25:23 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೋವಾಹಾಜನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಊರಿನ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು, ಮೂಲೆಯ ಬಾಗಿಲವರೆಗೂ, 180 ಮೀಟರ್ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು.
2CH 25:24 ಅವನು ಓಬೇದ್ ಏದೋಮನ ಬಳಿಯಲ್ಲಿ ಯೆಹೋವ ದೇವರ ಆಲಯದಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ, ಅರಮನೆಯ ಬೊಕ್ಕಸಗಳನ್ನೂ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.
2CH 25:25 ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು.
2CH 25:26 ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಯೆಹೂದ ಇಸ್ರಾಯೇಲರ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2CH 25:27 ಅಮಚ್ಯನು ಯೆಹೋವ ದೇವರ ಕಡೆಯಿಂದ ತೊಲಗಿಹೋದ ತರುವಾಯ, ಯೆರೂಸಲೇಮಿನವರು ಅವನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.
2CH 25:28 ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ಯೆಹೂದದ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು.
2CH 26:1 ಆಗ ಯೆಹೂದ ಜನರೆಲ್ಲರು ಹದಿನಾರು ವರ್ಷದವನಾದ ಉಜ್ಜೀಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2CH 26:2 ಅರಸನು ತನ್ನ ಪಿತೃಗಳ ಜೊತೆ ಸೇರಿದ ತರುವಾಯ, ಉಜ್ಜೀಯನು ಏಲೋತ್ ಪಟ್ಟಣವನ್ನು ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿದನು.
2CH 26:3 ಉಜ್ಜೀಯನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು.
2CH 26:4 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
2CH 26:5 ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾದ ಜೆಕರ್ಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಯೆಹೋವ ದೇವರನ್ನು ಹುಡುಕುವ ದಿವಸಗಳ ಮಟ್ಟಿಗೂ, ದೇವರು ಅವನನ್ನು ಅಭಿವೃದ್ಧಿ ಪಡಿಸಿದರು.
2CH 26:6 ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ, ಗತ್‌ನ ಗೋಡೆಯನ್ನೂ, ಯಬ್ನೆಯ ಗೋಡೆಯನ್ನೂ, ಅಷ್ಡೋದಿನ ಗೋಡೆಯನ್ನೂ ಕೆಡವಿಬಿಟ್ಟು, ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.
2CH 26:7 ಇದಲ್ಲದೆ ಫಿಲಿಷ್ಟಿಯರ ಮೇಲೆಯೂ, ಗುರ್ಬಾಳಿನಲ್ಲಿ ವಾಸವಾಗಿದ್ದ ಅರಬಿಯರ ಮೇಲೆಯೂ, ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿದಾಗ, ದೇವರು ಅವನಿಗೆ ಸಹಾಯ ಮಾಡಿದರು.
2CH 26:8 ಅಮ್ಮೋನ್ಯರು ಉಜ್ಜೀಯನಿಗೆ ಕಪ್ಪವನ್ನು ಕೊಟ್ಟರು. ಆದ್ದರಿಂದ ಅವನ ಹೆಸರು ಈಜಿಪ್ಟಿನ ಪ್ರದೇಶದವರೆಗೂ ಬಹಳವಾಗಿ ಹಬ್ಬಿತು. ಅವನು ಬಹಳವಾಗಿ ಬಲಪಡಿಸಿಕೊಂಡಿದ್ದನು.
2CH 26:9 ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಿಲ ಬಳಿಯಲ್ಲಿಯೂ, ತಗ್ಗಿನ ಬಾಗಿಲ ಬಳಿಯಲ್ಲಿಯೂ, ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು.
2CH 26:10 ತಗ್ಗಿನ ದೇಶದಲ್ಲಿಯೂ, ಬಯಲು ದೇಶದಲ್ಲಿಯೂ ಅವನಿಗೆ ಬಹು ಪಶುಗಳಿದ್ದವು. ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಹಾಗೆಯೇ ಪರ್ವತಗಳಲ್ಲಿಯೂ, ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿಗರೂ, ದ್ರಾಕ್ಷಿ ವ್ಯವಸಾಯದವರೂ ಇದ್ದರು. ಏಕೆಂದರೆ ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.
2CH 26:11 ಇದಲ್ಲದೆ ಲೇಖಕನಾದ ಯೆಹೀಯೇಲನ ಕೈಯಿಂದಲೂ, ಅಧಿಪತಿಯಾದ ಮಾಸೇಯನ ಕೈಯಿಂದ ಬರೆದಿರುವ ಲೆಕ್ಕದ ಪ್ರಕಾರ, ಗುಂಪುಗುಂಪಾಗಿ ಯುದ್ಧಕ್ಕೆ ಹೋಗುವ ಯುದ್ಧವೀರರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು.
2CH 26:12 ಪರಾಕ್ರಮಶಾಲಿಗಳಲ್ಲಿ ಕುಟುಂಬಗಳ ಮುಖ್ಯಸ್ಥರ ಲೆಕ್ಕವು 2,600 ಮಂದಿ.
2CH 26:13 ಅವರ ಕೈಕೆಳಗೆ ಅರಸನಿಗೆ ಸಹಾಯವಾಗಿ ಶತ್ರುವಿನ ಮೇಲೆ ಬಹಳ ಪರಾಕ್ರಮದಿಂದ ಯುದ್ಧಮಾಡುವ 3,07,500 ಮಂದಿಯುಳ್ಳ ಸೈನ್ಯವಿತ್ತು.
2CH 26:14 ಉಜ್ಜೀಯನು ಸಮಸ್ತ ದಂಡಿನಲ್ಲಿ ಅವರ ನಿಮಿತ್ತ ಗುರಾಣಿಗಳನ್ನೂ, ಈಟಿಗಳನ್ನೂ, ಶಿರಸ್ತ್ರಾಣಗಳನ್ನೂ, ಉಕ್ಕಿನ ಕವಚಗಳನ್ನೂ, ಬಿಲ್ಲುಗಳನ್ನೂ, ಕವಣೆಗಳನ್ನೂ ಸಿದ್ಧಮಾಡಿದನು.
2CH 26:15 ಇದಲ್ಲದೆ ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ, ಮಣ್ಣುದಿಬ್ಬಗಳ ಮೇಲೆಯೂ ಇರಲು, ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದ್ದರಿಂದ ಅವನ ಹೆಸರು ಬಹಳ ದೂರದವರೆಗೆ ಪ್ರಸಿದ್ಧಿಯಾಯಿತು. ಬಹು ಬಲಿಷ್ಠನಾಗುವ ಪರ್ಯಂತರ ಅವನು ಬಹು ಆಶ್ಚರ್ಯಕರವಾಗಿ ಸಹಾಯ ಪಡೆಯುತ್ತಿದ್ದನು.
2CH 26:16 ಆದರೆ ಅವನು ಬಲ ಹೊಂದಿದ ಮೇಲೆ ಅವನ ಗರ್ವವು ನಾಶಕ್ಕೆ ನಡೆಸಿತು. ಅವನು ಧೂಪಪೀಠದ ಮೇಲೆ ಧೂಪಸುಡುವುದಕ್ಕೂ, ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದನು.
2CH 26:17 ಆಗ ಯಾಜಕನಾದ ಅಜರ್ಯನೂ, ಅವನ ಸಂಗಡ ಯೆಹೋವ ದೇವರ ಪರಾಕ್ರಮವುಳ್ಳ ಯಾಜಕರಾದ ಎಂಬತ್ತು ಮಂದಿಯೂ ಅರಸನಾದ ಉಜ್ಜೀಯನ ಹಿಂದೆ ಪ್ರವೇಶಿಸಿ,
2CH 26:18 ಅವನನ್ನು ಎದುರಿಸಿ, “ಉಜ್ಜೀಯನೇ, ಯೆಹೋವ ದೇವರಿಗೆ ಧೂಪ ಸುಡುವುದು ಪ್ರತಿಷ್ಠಿತರಾದ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು. ನೀನು ಪರಿಶುದ್ಧ ಸ್ಥಳದಿಂದ ಹೊರಟು ಹೋಗು, ಅಪರಾಧ ಮಾಡಿದೆ. ದೇವರಾದ ಯೆಹೋವ ದೇವರಿಂದ ನಿನಗೆ ಗೌರವ ದೊರಕದು,” ಎಂದನು.
2CH 26:19 ಆಗ ಉಜ್ಜೀಯನು ಕೋಪಿಸಿಕೊಂಡನು. ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಆದರೆ ಅವನು ಯಾಜಕರ ಮೇಲೆ ಕೋಪ ಮಾಡುತ್ತಿರುವಾಗಲೇ, ಯೆಹೋವ ದೇವರ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಬಂದಿತು.
2CH 26:20 ಆಗ ಮುಖ್ಯಯಾಜಕನಾದ ಅಜರ್ಯನೂ, ಯಾಜಕರೆಲ್ಲರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದದ್ದರಿಂದ ಅವರು ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಹಾಕಿದರು. ಯೆಹೋವ ದೇವರು ತನ್ನನ್ನು ಬಾಧಿಸಿದ್ದರಿಂದ ಅವನು ಸ್ವತಃ ಹೊರಗೆ ಹೋಗಲು ತ್ವರೆಪಟ್ಟನು.
2CH 26:21 ಅರಸನಾದ ಉಜ್ಜೀಯನು ಮರಣದ ದಿವಸದವರೆಗೂ ಕುಷ್ಠರೋಗಿಯಾಗಿದ್ದು ಯೆಹೋವ ದೇವರ ಆಲಯದಿಂದ ಬಹಿಷ್ಕೃತನಾದನು. ಅವನು ಕುಷ್ಠರೋಗದ ನಿಮಿತ್ತ ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅವನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.
2CH 26:22 ಉಜ್ಜೀಯನ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದನು.
2CH 26:23 ಉಜ್ಜೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನು ಕುಷ್ಠರೋಗಿಯಾಗಿದ್ದರಿಂದ, ಅವರು ಅವನ ಶವವನ್ನು ರಾಜಕುಟುಂಬದ ಸ್ಮಶಾನ ಭೂಮಿಯ ಹತ್ತಿರದ ಹೊಲದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
2CH 27:1 ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
2CH 27:2 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. ಆದರೆ ಅವನ ತಂದೆಯಂತೆ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಲಿಲ್ಲ. ಆಗ ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.
2CH 27:3 ಅವನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿ, ಓಫೇಲ್ ಗೋಡೆಯನ್ನು ಎತ್ತರವಾಗಿ ಕಟ್ಟಿಸಿದನು.
2CH 27:4 ಇದಲ್ಲದೆ ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ ಕಾಡುಗಳ ಪ್ರದೇಶದಲ್ಲಿ ಕೋಟೆಗಳನ್ನೂ ಬುರುಜುಗಳನ್ನೂ ಕಟ್ಟಿಸಿದನು.
2CH 27:5 ಯೋತಾಮನು ಅಮ್ಮೋನ್ಯರ ಅರಸನ ಸಂಗಡ ಯುದ್ಧಮಾಡಿ ಅವನನ್ನು ಜಯಿಸಿದನು. ಆದ್ದರಿಂದ ಅಮ್ಮೋನಿಯರು ಅದೇ ವರ್ಷದಲ್ಲಿ 3,400 ಕಿಲೋಗ್ರಾಂ ಬೆಳ್ಳಿ, 1,600 ಮೆಟ್ರಿಕ್ ಟನ್ ಗೋಧಿ, 1,350 ಮೆಟ್ರಿಕ್ ಟನ್ ಜವೆಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನಿಯರು ಎರಡನೆಯ ವರ್ಷದಲ್ಲಿಯೂ, ಮೂರನೆಯ ವರ್ಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.
2CH 27:6 ಹೀಗೆ ಯೋತಾಮನು ತನ್ನ ದೇವರಾದ ಯೆಹೋವ ದೇವರ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿಕೊಂಡದ್ದರಿಂದ ಅವನು ಬಲಗೊಂಡನು.
2CH 27:7 ಯೋತಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಯುದ್ಧಗಳೂ, ಅವನ ಮಾರ್ಗಗಳೂ, ಅವು ಇಸ್ರಾಯೇಲರ ಮತ್ತು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2CH 27:8 ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು.
2CH 27:9 ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.
2CH 28:1 ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಆದರೆ ಅವನು ತನ್ನ ತಂದೆಯಾದ ದಾವೀದನ ಹಾಗೆ ನಡೆಯದೆ, ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಲಿಲ್ಲ.
2CH 28:2 ಆಹಾಜನು ಇಸ್ರಾಯೇಲಿನ ಅರಸರ ಮಾರ್ಗದಲ್ಲಿ ನಡೆದು, ಆರಾಧಿಸುವುದಕ್ಕಾಗಿ ಬಾಳನ ಎರಕ ಹೊಯ್ದ ವಿಗ್ರಹಗಳನ್ನು ಮಾಡಿಸಿದನು.
2CH 28:3 ಇದಲ್ಲದೆ ಆಹಾಜನು ಬೆನ್ ಹಿನ್ನೋಮ್ ತಗ್ಗಿನಲ್ಲಿ ಧೂಪವನ್ನರ್ಪಿಸಿ, ಯೆಹೋವ ದೇವರು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಇತರ ಜನಾಂಗಗಳ ಅಸಹ್ಯಕರವಾದ ಆಚಾರಗಳನ್ನು ಅನುಸರಿಸಿ ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಯಜ್ಞವಾಗಿ ಅರ್ಪಿಸಿದನು.
2CH 28:4 ಇದಲ್ಲದೆ ಅವನು ಪೂಜಾಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಎಲ್ಲಾ ಹಸಿರಾದ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.
2CH 28:5 ಆದ್ದರಿಂದ ಆಹಾಜನ ದೇವರಾದ ಯೆಹೋವ ದೇವರು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದರು. ಅರಾಮ್ಯರು ಅವನನ್ನು ಹೊಡೆದು, ಅವರಲ್ಲಿ ಅನೇಕರನ್ನು ಸೆರೆಹಿಡಿದು, ದಮಸ್ಕಕ್ಕೆ ತೆಗೆದುಕೊಂಡು ಹೋದರು. ಇದಲ್ಲದೆ ಆಹಾಜನು ಇಸ್ರಾಯೇಲಿನ ಅರಸನ ಕೈವಶವಾಗಿ, ಅವನಿಂದಲೂ ಕಠಿಣವಾಗಿ ಸೋತು ಹೋದನು.
2CH 28:6 ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ರೆಮಲ್ಯನ ಮಗ ಪೆಕಹನು ಒಂದೇ ದಿವಸದೊಳಗೆ ಅವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು. ಇವರೆಲ್ಲರು ಪರಾಕ್ರಮಶಾಲಿಗಳಾಗಿದ್ದರು.
2CH 28:7 ಇದಲ್ಲದೆ ಎಫ್ರಾಯೀಮ್ಯನಾಗಿರುವ ಪರಾಕ್ರಮಶಾಲಿಯಾದ ಜಿಕ್ರಿಯು ಅರಸನ ಮಗ ಮಾಸೇಯನನ್ನೂ, ಅರಮನೆಯ ನಾಯಕನಾದ ಅಜ್ರೀಕಾಮನನ್ನೂ, ಅರಸನಿಗೆ ಎರಡನೆಯವನಾದ ಎಲ್ಕಾನನನ್ನೂ ಕೊಂದುಹಾಕಿದನು.
2CH 28:8 ಇಸ್ರಾಯೇಲರು ತಮ್ಮ ಸಹೋದರರಲ್ಲಿ ಎರಡು ಲಕ್ಷಮಂದಿ ಸ್ತ್ರೀಯರನ್ನೂ, ಪುತ್ರಪುತ್ರಿಯರನ್ನೂ ಸೆರೆಯಾಗಿ ತೆಗೆದುಕೊಂಡು ಹೋದರು. ಅವರಿಂದ ಬಹು ಕೊಳ್ಳೆಯನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಬಂದರು.
2CH 28:9 ಯೆಹೋವ ದೇವರ ಪ್ರವಾದಿ ಒಬ್ಬನು ಅಲ್ಲಿ ಇದ್ದನು. ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯಕ್ಕೆದುರಾಗಿ ಹೊರಟುಹೋಗಿ ಅವರಿಗೆ, “ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ಯೆಹೂದದ ಮೇಲೆ ಕೋಪಗೊಂಡದ್ದರಿಂದ, ದೇವರು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿದ್ದಾರೆ. ನೀವು ಆಕಾಶಕ್ಕೆ ಮುಟ್ಟುವ ಉಗ್ರತೆಯಿಂದ ಅವರನ್ನು ಕೊಂದುಹಾಕಿದ್ದೀರಿ.
2CH 28:10 ಈಗ ನಿಮಗೆ ದಾಸರೂ, ದಾಸಿಯರೂ ಆಗಿರುವ ಹಾಗೆ ಯೆಹೂದದ ಮತ್ತು ಯೆರೂಸಲೇಮಿನ ಮಕ್ಕಳನ್ನು ನಿಮ್ಮ ವಶಮಾಡಬೇಕೆಂದು ಇದ್ದೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧಗಳು ಇಲ್ಲವೋ?
2CH 28:11 ಆದ್ದರಿಂದ ನೀವು ನನ್ನ ಮಾತು ಕೇಳಿ ನಿಮ್ಮ ನಿಮ್ಮ ಸಹೋದರರಲ್ಲಿ ನೀವು ಸೆರೆಯಾಗಿ ತೆಗೆದುಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಏಕೆಂದರೆ ಯೆಹೋವ ದೇವರ ಕೋಪಾಗ್ನಿಯು ನಿಮ್ಮ ಮೇಲೆ ಇರುವುದು,” ಎಂದನು.
2CH 28:12 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯನೂ, ಮೆಷಿಲ್ಲೇಮೋತನ ಮಗ ಬೆರೆಕ್ಯನೂ, ಶಲ್ಲೂಮನ ಮಗ ಹಿಜ್ಕೀಯನೂ, ಹದ್ಲೈಯನ ಮಗ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧವಾಗಿ ಎದ್ದು
2CH 28:13 ಅವರಿಗೆ, “ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ. ಏಕೆಂದರೆ ನಾವು ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದ್ದೇವೆ. ನೀವು ನಮ್ಮ ಪಾಪಗಳನ್ನೂ, ನಮ್ಮ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾಧವು ದೊಡ್ಡದಾಗಿದೆ. ಇಸ್ರಾಯೇಲಿನ ಮೇಲೆ ಯೆಹೋವ ದೇವರ ಉಗ್ರಕೋಪವು ಉಂಟಾಯಿತು,” ಎಂದರು.
2CH 28:14 ಆಗ ಸೈನ್ಯದವರು ಸೆರೆಯವರನ್ನೂ, ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ, ಸಮಸ್ತ ಕೂಟದ ಮುಂದೆಯೂ ಬಿಟ್ಟುಬಿಟ್ಟರು.
2CH 28:15 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದವರು ಎದ್ದು ಸೆರೆಯವರನ್ನು ತೆಗೆದುಕೊಂಡು, ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ, ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕೊಟ್ಟು, ಅವರ ತಲೆಗಳಿಗೆ ಎಣ್ಣೆಯನ್ನು ಹಚ್ಚಿ, ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ, ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ತೆಗೆದುಕೊಂಡು ಬಂದರು. ಆಗ ಅವರು ಸಮಾರ್ಯಕ್ಕೆ ಹಿಂದಿರುಗಿದರು.
2CH 28:16 ಅದೇ ಕಾಲದಲ್ಲಿ ಅರಸನಾದ ಆಹಾಜನು ಅಸ್ಸೀರಿಯದ ಅರಸರ ಬಳಿಗೆ ಕಳುಹಿಸಿ ಸಹಾಯ ಬೇಡಿಕೊಂಡನು.
2CH 28:17 ಏಕೆಂದರೆ ಎದೋಮ್ಯರು ತಿರುಗಿಬಂದು ಯೆಹೂದದವರನ್ನು ಸಂಹರಿಸಿ, ಕೆಲವರನ್ನು ಸೆರೆಯಾಗಿ ತೆಗೆದುಕೊಂಡು ಹೋದರು.
2CH 28:18 ಇದಲ್ಲದೆ ಫಿಲಿಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ, ಯೆಹೂದದ ದಕ್ಷಿಣ ಪ್ರಾಂತದಲ್ಲಿಯೂ ನುಗ್ಗಿ, ಬೇತ್ ಷೆಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ ಅದರ ಗ್ರಾಮಗಳನ್ನೂ, ತಿಮ್ನಾ ಅದರ ಗ್ರಾಮಗಳನ್ನೂ, ಗಿಮ್ಜೋ ಅದರ ಗ್ರಾಮಗಳನ್ನೂ ತೆಗೆದುಕೊಂಡು ಅಲ್ಲಿ ವಾಸವಾಗಿದ್ದರು.
2CH 28:19 ಇಸ್ರಾಯೇಲಿನ ಅರಸನಾದ ಆಹಾಜನ ನಿಮಿತ್ತ ಯೆಹೋವ ದೇವರು ಯೆಹೂದ್ಯ ಪ್ರಾಂತ್ಯವನ್ನು ತಗ್ಗಿಸಿದರು. ಏಕೆಂದರೆ ಅವನು ಯೆಹೂದ್ಯರನ್ನು ಅಧರ್ಮಕ್ಕೆ ಪ್ರಚೋದಿಸಿ, ಯೆಹೋವ ದೇವರಿಗೆ ಮಹಾ ದ್ರೋಹ ಮಾಡಿದನು. ಯೆಹೋವ ದೇವರಿಗೆ ಅತ್ಯಂತ ಅಪನಂಬಿಗಸ್ತನಾಗಿದ್ದನು.
2CH 28:20 ಆಗ ಅಸ್ಸೀರಿಯದ ಅರಸ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು, ಅವನಿಗೆ ನೆರವಾಗುವುದಕ್ಕೆ ಬದಲಾಗಿ ಬಾಧೆಪಡಿಸಿದನು.
2CH 28:21 ಆಹಾಜನು ಯೆಹೋವ ದೇವರ ಆಲಯದಿಂದಲೂ, ಅರಮನೆಯಿಂದಲೂ, ಪ್ರಧಾನರಿಂದಲೂ ಆಸ್ತಿಯ ಒಂದು ಪಾಲನ್ನು ತೆಗೆದುಕೊಂಡು, ಅಸ್ಸೀರಿಯದ ಅರಸನಿಗೆ ಕಾಣಿಕೆಯಾಗಿ ಕೊಟ್ಟನು, ಆದರೂ ಅವನು ಆಹಾಜನಿಗೆ ಸಹಾಯ ಮಾಡಲಿಲ್ಲ.
2CH 28:22 ಇದಲ್ಲದೆ ಈ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಇನ್ನೂ ಅಧಿಕವಾಗಿ ಯೆಹೋವ ದೇವರಿಗೆ ಅಪನಂಬಿಗಸ್ತನಾದನು.
2CH 28:23 ಕೊನೆಗೆ ಆಹಾಜನು, “ಅರಾಮಿನ ಅರಸರ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ, ಅವು ನನಗೆ ಸಹ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ,” ಎಂದುಕೊಂಡು ತನ್ನನ್ನು ಸೋಲಿಸಿದ ದಮಸ್ಕದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಆ ದೇವರುಗಳು ಅವನನ್ನೂ, ಸಮಸ್ತ ಇಸ್ರಾಯೇಲರನ್ನೂ ಬೀಳುವಂತೆ ಮಾಡಿದವು.
2CH 28:24 ಇದಲ್ಲದೆ ಆಹಾಜನು ದೇವರ ಮನೆಯ ಸಲಕರಣೆಗಳನ್ನು ಕೂಡಿಸಿ, ದೇವರ ಆಲಯದ ಸಾಮಗ್ರಿಗಳನ್ನು ಚೂರುಚೂರು ಮಾಡಿ ಕತ್ತರಿಸಿ, ಯೆಹೋವ ದೇವರ ಮನೆಯ ಬಾಗಿಲುಗಳನ್ನು ಮುಚ್ಚಿಬಿಟ್ಟು, ಯೆರೂಸಲೇಮಿನ ಸಮಸ್ತ ಮೂಲೆಗಳಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
2CH 28:25 ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪ ಸುಡುವುದಕ್ಕೆ ಎತ್ತರ ಸ್ಥಳಗಳನ್ನು ಕಟ್ಟಿಸಿ, ತನ್ನ ಪಿತೃಗಳ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದನು.
2CH 28:26 ಅವನ ಆಳ್ವಿಕೆಯಲ್ಲಿಯ ಇತರ ಕ್ರಿಯೆಗಳೂ, ಅವನ ಸಕಲ ಮಾರ್ಗಗಳೂ, ಮೊದಲನೆಯವುಗಳೂ, ಕಡೆಯವುಗಳೂ ಯೆಹೂದದ ಮತ್ತು ಇಸ್ರಾಯೇಲರ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2CH 28:27 ಆಹಾಜನು ಮೃತನಾಗಿ ತನ್ನ ಪಿತೃಗಳ ಬಳಿಯಲ್ಲಿ ಸೇರಿದನು. ಆದರೆ ಅವನನ್ನು ಇಸ್ರಾಯೇಲಿನ ಅರಸರ ಸಮಾಧಿಯ ಸ್ಥಳದಲ್ಲಿ ಹೂಣಿಡದೆ ಯೆರೂಸಲೇಮ್ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು.
2CH 29:1 ಹಿಜ್ಕೀಯನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ. ಅವಳು ಜೆಕರ್ಯನ ಮಗಳಾಗಿದ್ದಳು.
2CH 29:2 ಅವನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
2CH 29:3 ಹಿಜ್ಕೀಯನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಯೆಹೋವ ದೇವರ ಆಲಯದ ಬಾಗಿಲುಗಳನ್ನು ತೆರೆದು, ಅವುಗಳನ್ನು ಭದ್ರಪಡಿಸಿದನು.
2CH 29:4 ಇದಲ್ಲದೆ ಹಿಜ್ಕೀಯನು ಯಾಜಕರನ್ನೂ, ಲೇವಿಯರನ್ನೂ ಕರೆಕಳುಹಿಸಿ, ಅವರನ್ನು ಪೂರ್ವದಿಕ್ಕಿನ ಅಂಗಣದಲ್ಲಿ ಕೂಡಿಸಿಕೊಂಡು, ಅವರಿಗೆ ಹೇಳಿದ್ದೇನೆಂದರೆ,
2CH 29:5 “ಲೇವಿಯರೇ, ನನ್ನ ಮಾತನ್ನು ಕೇಳಿರಿ. ನೀವು ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆಮಾಡಿ, ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.
2CH 29:6 ಏಕೆಂದರೆ ನಮ್ಮ ಪಿತೃಗಳು ಅಪನಂಬಿಗಸ್ತರಾಗಿ, ನಮ್ಮ ದೇವರಾದ ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ, ಅವರನ್ನು ಬಿಟ್ಟುಬಿಟ್ಟರು. ಇದಲ್ಲದೆ ಅವರು ಯೆಹೋವ ದೇವರ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ, ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ.
2CH 29:7 ಇದಲ್ಲದೆ ಅವರು ದ್ವಾರಾಂಗಳದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ಆರಿಸಿ, ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿಸದೆ ಹೋದರು.
2CH 29:8 ಆದ್ದರಿಂದ ಯೆಹೂದ ಮತ್ತು ಯೆರೂಸಲೇಮಿನವರ ಮೇಲೆ ಯೆಹೋವ ದೇವರು ಕೋಪಗೊಂಡು, ಅವುಗಳನ್ನು ಭಯಭೀತಿಗೂ, ಅಪಹಾಸ್ಯಗಳಿಗೂ ಆಸ್ಪದ ಮಾಡಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು.
2CH 29:9 ಇದಕ್ಕೋಸ್ಕರ ನಮ್ಮ ಪಿತೃಗಳು ಖಡ್ಗದಿಂದ ಬಿದ್ದಿದ್ದಾರೆ. ನಮ್ಮ ಪುತ್ರ ಪುತ್ರಿಯರೂ, ನಮ್ಮ ಹೆಂಡತಿಯರೂ ಸೆರೆಯಲ್ಲಿದ್ದಾರೆ.
2CH 29:10 ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಉಗ್ರಕೋಪವು ನಮ್ಮನ್ನು ಬಿಟ್ಟುಹೋಗುವ ಹಾಗೆ, ನಾನು ಅವರ ಸಂಗಡ ಒಡಂಬಡಿಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
2CH 29:11 ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ. ಏಕೆಂದರೆ ತಮ್ಮ ಸಮ್ಮುಖದಲ್ಲಿ ನಿಲ್ಲುವುದಕ್ಕೂ, ತಮ್ಮನ್ನು ಸೇವಿಸುವುದಕ್ಕೂ, ತಮಗೆ ಸೇವಕರಾಗಿರುವುದಕ್ಕೂ, ತಮಗೆ ಧೂಪವನ್ನು ಸುಡುವುದಕ್ಕೂ ಯೆಹೋವ ದೇವರು ನಿಮ್ಮನ್ನು ಆಯ್ದುಕೊಂಡಿದ್ದಾರೆ,” ಎಂದನು.
2CH 29:12 ಆಗ ಲೇವಿಯರು ಸೇವೆಗಾಗಿ ಮುಂದೆ ಬಂದರು: ಕೊಹಾತ್ಯರಲ್ಲಿ ಅಮಾಸೈಯನ ಮಗ ಮಹತ್, ಅಜರ್ಯನ ಮಗ ಯೋಯೇಲ್, ಮೆರಾರೀಯರಲ್ಲಿ ಅಬ್ದೀಯನ ಮಗ ಕೀಷ್, ಯೆಹಲ್ಲೆಲೇಲನ ಮಗ ಅಜರ್ಯ, ಗೇರ್ಷೋನ್ಯರಲ್ಲಿ ಜಿಮ್ಮನ ಮಗ ಯೋವಾಹ, ಯೋವಾಹನ ಮಗ ಏದೆನ್,
2CH 29:13 ಎಲೀಚಾಫಾನ್ಯರಲ್ಲಿ ಶಿಮ್ರೀ, ಯೆಹೀಯೇಲ್, ಆಸಾಫ್ಯರಲ್ಲಿ ಜೆಕರ್ಯ, ಮತ್ತನ್ಯ,
2CH 29:14 ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮಿ; ಯೆದುತೂನ್ಯರಲ್ಲಿ ಶೆಮಾಯ ಹಾಗೂ ಉಜ್ಜೀಯೇಲ್.
2CH 29:15 ಇವರು ಅರಸನ ಆಜ್ಞಾಧಾರಕರಾಗಿ ಯೆಹೋವ ದೇವರ ವಾಕ್ಯವನ್ನು ಅನುಸರಿಸಿ, ತಮ್ಮ ಸಹೋದರರನ್ನು ಕೂಡಿಸಿ, ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯವನ್ನು ಶುಚಿಮಾಡಲು ಬಂದರು.
2CH 29:16 ಯಾಜಕರು ಯೆಹೋವ ದೇವರ ಆಲಯವನ್ನು ಶುದ್ಧಿಮಾಡಲು ಅದರ ಒಳಭಾಗವನ್ನು ಪ್ರವೇಶಿಸಿ, ಯೆಹೋವ ದೇವರ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಯೆಹೋವ ದೇವರ ಆಲಯದ ಅಂಗಳದೊಳಗೆ ತಂದರು. ಆಗ ಲೇವಿಯರು ಅದನ್ನು ತೆಗೆದುಕೊಂಡು, ಕಿದ್ರೋನ್ ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು.
2CH 29:17 ಅವರು ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಪ್ರತಿಷ್ಠೆ ಮಾಡಲು ಆರಂಭಿಸಿ, ಆ ತಿಂಗಳ ಎಂಟನೆಯ ದಿವಸದಲ್ಲಿ ಯೆಹೋವ ದೇವರ ದ್ವಾರಾಂಗಳದವರೆಗೂ ಬಂದರು. ಹೀಗೆಯೇ ಎಂಟು ದಿವಸಗಳಲ್ಲಿ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆಮಾಡಿ, ಅದನ್ನು ಮೊದಲನೆಯ ತಿಂಗಳಿನ ಹದಿನಾರನೆಯ ದಿವಸದಲ್ಲಿ ಮುಗಿಸಿದರು.
2CH 29:18 ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರ ಆಲಯವನ್ನೆಲ್ಲಾ, ದಹನಬಲಿಪೀಠವನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು, ಅದರ ಎಲ್ಲಾ ಪಾತ್ರೆಗಳನ್ನೂ ಶುದ್ಧಿಮಾಡಿದೆವು.
2CH 29:19 ಇದಲ್ಲದೆ ಅರಸನಾದ ಆಹಾಜನು ಆಳಿದಾಗ, ದೇವದ್ರೋಹಿಯಾಗಿ ಬಿಸಾಡಿದ ಎಲ್ಲಾ ಸಲಕರಣೆಗಳನ್ನು ಪುನಃ ತಂದು ಪ್ರತಿಷ್ಠೆ ಮಾಡಿದೆವು. ಅವು ಯೆಹೋವ ದೇವರ ಬಲಿಪೀಠದ ಮುಂದೆ ಇವೆ,” ಎಂದು ಹೇಳಿದರು.
2CH 29:20 ಆಗ ಅರಸನಾದ ಹಿಜ್ಕೀಯನು ಉದಯದಲ್ಲಿ ಎದ್ದು, ಪಟ್ಟಣದ ಪ್ರಧಾನರನ್ನು ಕೂಡಿಸಿ, ಯೆಹೋವ ದೇವರ ಆಲಯಕ್ಕೆ ಹೋದನು.
2CH 29:21 ಅವರು ರಾಜ್ಯಕ್ಕೋಸ್ಕರವೂ, ಪರಿಶುದ್ಧ ಸ್ಥಾನಕ್ಕೋಸ್ಕರವೂ, ಯೆಹೂದಕ್ಕೋಸ್ಕರವೂ ದೋಷಪರಿಹಾರದ ಬಲಿಯಾಗಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ, ಏಳು ಕುರಿಮರಿಗಳನ್ನೂ, ಏಳು ಮೇಕೆಗಳನ್ನೂ ತಂದರು. ಆಗ ಅರಸನು ಯಾಜಕರಾದ ಆರೋನನ ಸಂತಾನದವರಿಗೆ ಯೆಹೋವ ದೇವರ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಹೇಳಿದನು.
2CH 29:22 ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು, ಪೀಠದ ಮೇಲೆ ಚಿಮುಕಿಸಿದರು. ಟಗರುಗಳನ್ನು ವಧಿಸಿ ರಕ್ತವನ್ನು ಚಿಮುಕಿಸಿದರು. ಕುರಿಮರಿಗಳನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಅವುಗಳನ್ನು ವಧಿಸಿ, ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಮೇಲೆ ಚಿಮುಕಿಸಿದರು.
2CH 29:23 ಅರಸನ ಮುಂದೆಯೂ, ಸಭೆಯ ಮುಂದೆಯೂ ದೋಷಪರಿಹಾರದ ಬಲಿಗಾಗಿ ತಂದ ಹೋತಗಳನ್ನು ಹತ್ತಿರ ತೆಗೆದುಕೊಂಡು ಬಂದು, ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು.
2CH 29:24 ಆಗ ಸಮಸ್ತ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ, ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ, ದೋಷಪರಿಹಾರದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗಬೇಕೆಂದು ಅರಸನು ಆಜ್ಞಾಪಿಸಿದನು.
2CH 29:25 ಇದಲ್ಲದೆ ಅವನು ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನೂ ಹಿಡಿದ ಲೇವಿಯರನ್ನು ದಾವೀದನೂ, ಅರಸನ ದರ್ಶಿಯಾದ ಗಾದನೂ, ಪ್ರವಾದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ, ಯೆಹೋವ ದೇವರ ಆಲಯದಲ್ಲಿ ನಿಲ್ಲಿಸಿದನು. ಏಕೆಂದರೆ ಯೆಹೋವ ದೇವರ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹೀಗೆ ಇತ್ತು.
2CH 29:26 ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿದ್ದರು.
2CH 29:27 ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ, ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗಳಿಂದಲೂ ಯೆಹೋವ ದೇವರ ಹಾಡು ಆರಂಭವಾಯಿತು.
2CH 29:28 ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ತನಕ ಹಾಡುಗಾರರು ಹಾಡಿದರು. ತುತೂರಿ ಊದುವವರು ಊದಿದರು.
2CH 29:29 ಅವರು ಅರ್ಪಿಸುವುದು ತೀರಿಸಿದಾಗ ಅರಸನೂ, ಅವನ ಸಂಗಡ ಇದ್ದವರೆಲ್ಲರೂ ಮೊಣಕಾಲೂರಿ ಆರಾಧಿಸಿದರು.
2CH 29:30 ಇದಲ್ಲದೆ ಅರಸನಾದ ಹಿಜ್ಕೀಯನೂ, ಪ್ರಧಾನರೂ ದಾವೀದನ ಮಾತುಗಳಿಂದಲೂ, ಆಸಾಫನ ಕೀರ್ತನೆಗಳಿಂದಲೂ ಯೆಹೋವ ದೇವರನ್ನು ಸ್ತುತಿಸಬೇಕೆಂದು ಲೇವಿಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಮೊಣಕಾಲೂರಿಕೊಂಡು ಆರಾಧಿಸಿದರು.
2CH 29:31 ಹಿಜ್ಕೀಯನು ಅವರಿಗೆ ಉತ್ತರಕೊಟ್ಟು, “ಈಗ ನೀವು ನಿಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದರಿಂದ, ಸಮೀಪಕ್ಕೆ ಬಂದು ಬಲಿಗಳನ್ನೂ, ಸ್ತೋತ್ರ ಅರ್ಪಣೆಗಳನ್ನೂ ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬನ್ನಿರಿ,” ಎಂದನು. ಆಗ ಸಭೆಯವರು ಬಲಿಗಳನ್ನೂ, ಸ್ತೋತ್ರದ ಅರ್ಪಣೆಗಳನ್ನೂ ಮತ್ತು ಇಷ್ಟಪೂರ್ವಕ ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು.
2CH 29:32 ಸಭೆಯು ತಂದ ದಹನಬಲಿಗಳ ಲೆಕ್ಕವೇನೆಂದರೆ: ಎಪ್ಪತ್ತು ಹೋರಿಗಳು, ನೂರು ಟಗರುಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಯೆಹೋವ ದೇವರಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು.
2CH 29:33 ಪ್ರತಿಷ್ಠೆ ಮಾಡಲಾದವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಮೇಕೆಗಳೂ ಇದ್ದವು.
2CH 29:34 ಆದರೆ ಯಾಜಕರು ಸ್ವಲ್ಪ ಜನರಾಗಿದ್ದು, ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದುದರಿಂದ, ಕೆಲಸವು ತೀರುವವರೆಗೂ, ಮಿಕ್ಕ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವವರೆಗೂ ಲೇವಿಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಏಕೆಂದರೆ ಯಾಜಕರಿಗಿಂತ ತಮ್ಮನ್ನು ಪರಿಶುದ್ಧ ಮಾಡಿಕೊಳ್ಳುವುದರಲ್ಲಿ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.
2CH 29:35 ಇದಲ್ಲದೆ ದಹನಬಲಿಗಳೂ, ಸಮಾಧಾನದ ಬಲಿಗಳ ಕೊಬ್ಬೂ, ದಹನಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳವಾಗಿದ್ದವು. ಹೀಗೆ ಯೆಹೋವ ದೇವರ ಆಲಯದ ಸೇವೆಯು ಸಿದ್ಧವಾಯಿತು.
2CH 29:36 ಆಗ ದೇವರು ತಮ್ಮ ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ, ಜನರೆಲ್ಲರೂ ಸಂತೋಷಪಟ್ಟರು. ಏಕೆಂದರೆ ಈ ಕಾರ್ಯವು ತ್ವರೆಯಾಗಿ ನಡೆಯಿತು.
2CH 30:1 ಆಗ ಅವರು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಪಸ್ಕವನ್ನು ಆಚರಿಸಲು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯಕ್ಕೆ ಬರುವಂತೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ ಎಫ್ರಾಯೀಮ್ಯರಿಗೂ ಮನಸ್ಸೆಯವರಿಗೂ ಪತ್ರಗಳನ್ನು ಬರೆದನು.
2CH 30:2 ಯೆರೂಸಲೇಮಿನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೆಯ ತಿಂಗಳಲ್ಲಿ ಪಸ್ಕವನ್ನು ಆಚರಿಸಲು ತೀರ್ಮಾನಿಸಿಕೊಂಡರು.
2CH 30:3 ಯಾಜಕರು ತಮ್ಮನ್ನು ತಕ್ಕ ಹಾಗೆ ಪ್ರತಿಷ್ಠೆ ಮಾಡಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಕೂಡಿರಲಿಲ್ಲವಾದುದರಿಂದ ಆ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಇದ್ದರು.
2CH 30:4 ಈ ಕಾರ್ಯವು ಅರಸನಿಗೂ ಸಮಸ್ತ ಜನರಿಗೂ ಸ್ಪಷ್ಟವಾಯಿತು.
2CH 30:5 ಆದ್ದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬ ಮೊದಲುಗೊಂಡು ದಾನಿನವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿಸಿದರು. ಯೆಹೋವ ದೇವರ ನಿಯಮದ ಪ್ರಕಾರ ಅವರು ಬಹುಕಾಲದಿಂದ ಪಸ್ಕವನ್ನು ಆಚರಿಸಿರಲಿಲ್ಲ.
2CH 30:6 ಅದೇ ಪ್ರಕಾರ ಓಟಗಾರರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತೆಗೆದುಕೊಂಡು, ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಮತ್ತು ಯೆಹೂದ ದೇಶಗಳಿಗೆ ಹೋಗಿ, “ಇಸ್ರಾಯೇಲರೇ, ಅಬ್ರಹಾಮನ, ಇಸಾಕನ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿರಿ. ಆಗ ಅವರು ಅಸ್ಸೀರಿಯದ ಅರಸರ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಕಡೆಗೆ ತಿರುಗುವರು.
2CH 30:7 ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹಿಗಳಾದದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.
2CH 30:8 ಆದ್ದರಿಂದ ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಕಠಿಣಪಡಿಸಿಕೊಳ್ಳಬೇಡಿರಿ. ಯೆಹೋವ ದೇವರಿಗೆ ಅಧೀನರಾಗಿ ಅವರು ಯುಗಯುಗಕ್ಕೂ ಪ್ರತಿಷ್ಠೆ ಮಾಡಿದ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಯೆಹೋವ ದೇವರನ್ನು ಸೇವಿಸಿರಿ. ಆಗ ದೇವರು ತಮ್ಮ ಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವರು.
2CH 30:9 ನೀವು ಯೆಹೋವ ದೇವರ ಕಡೆಗೆ ತಿರುಗಿ ಈ ದೇಶಕ್ಕೆ ಬರುವಂತೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಅನುಕಂಪವನ್ನು ಹೊಂದುವರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಕೃಪೆಯೂ ಅನುಕಂಪವೂ ಉಳ್ಳವರಾಗಿದ್ದಾರೆ. ನೀವು ಅವರ ಕಡೆಗೆ ತಿರುಗಿದರೆ, ಅವರು ನಿಮ್ಮ ಕಡೆಯಿಂದ ತಮ್ಮ ಮುಖವನ್ನು ತಿರುಗಿಸುವುದಿಲ್ಲ,” ಎಂದು ಹೇಳಿದರು.
2CH 30:10 ಹೀಗೆಯೇ ಓಟಗಾರರು ಎಫ್ರಾಯೀಮನ, ಮನಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ, ಪಟ್ಟಣ ಪಟ್ಟಣವನ್ನು ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು.
2CH 30:11 ಆದರೂ ಆಶೇರ್, ಮನಸ್ಸೆ, ಜೆಬುಲೂನ್, ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
2CH 30:12 ಇದಲ್ಲದೆ ಯೆಹೋವ ದೇವರ ವಾಕ್ಯದಿಂದ ಉಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಗೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂದದವರ ಮೇಲೆ ಇತ್ತು.
2CH 30:13 ಎರಡನೆಯ ತಿಂಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿಕೊಂಡು ಮಹಾ ದೊಡ್ಡ ಸಮೂಹವಾಯಿತು.
2CH 30:14 ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ಮತ್ತು ಧೂಪಪೀಠಗಳನ್ನು ತೆಗೆದುಹಾಕಿದರು. ಆ ಧೂಪಪೀಠಗಳನ್ನೆಲ್ಲಾ ತೆಗೆದುಕೊಂಡುಹೋಗಿ ಕಿದ್ರೋನ್ ಹಳ್ಳದಲ್ಲಿ ಹಾಕಿದರು.
2CH 30:15 ಎರಡನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು. ಯಾಜಕರೂ, ಲೇವಿಯರೂ ನಾಚಿಕೆಪಟ್ಟು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯದೊಳಗೆ ದಹನಬಲಿಗಳನ್ನು ತಂದರು.
2CH 30:16 ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆಯ ನಿಯಮದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು, ಯಾಜಕರು, ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು.
2CH 30:17 ಜನರಲ್ಲಿ ಅನೇಕರು ಅಪರಿಶುದ್ಧರಾಗಿದ್ದರು. ಆದ್ದರಿಂದ ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವುದಕ್ಕೆ ಇದ್ದರು.
2CH 30:18 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವರಲ್ಲಿ ಅನೇಕರು ತಮ್ಮನ್ನು ಶುದ್ಧಮಾಡಿಕೊಳ್ಳದೆ ಮೋಶೆಯ ನಿಯಮಕ್ಕೆ ವಿರುದ್ಧ ರೀತಿಯಿಂದ ಪಸ್ಕದ ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿ, “ಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ,
2CH 30:19 ಯೆಹೋವ ದೇವರೇ, ತಮ್ಮ ಪಿತೃಗಳ ದೇವರಾದ ನಿಮ್ಮನ್ನು ಹುಡುಕಬೇಕೆಂದು ಮನಸ್ಸು ಮಾಡುವವರಿಗೆಲ್ಲ ಕ್ಷಮೆಯನ್ನು ಅನುಗ್ರಹಿಸಿರಿ,” ಎಂದು ವಿಜ್ಞಾಪನೆ ಮಾಡಿದನು.
2CH 30:20 ಯೆಹೋವ ದೇವರು ಹಿಜ್ಕೀಯನ ಮಾತನ್ನು ಕೇಳಿ, ಜನರನ್ನು ಸ್ವಸ್ಥಮಾಡಿದರು.
2CH 30:21 ಆದ್ದರಿಂದ ಯೆರೂಸಲೇಮಿನಲ್ಲಿದ್ದ ಇಸ್ರಾಯೇಲರು ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಲೇವಿಯರೂ ಯಾಜಕರೂ ಯೆಹೋವ ದೇವರಿಗೆ ಸಮರ್ಪಿತವಾದ ಮಹಾ ಶಬ್ದದ ವಾದ್ಯಗಳಿಂದ ಯೆಹೋವ ದೇವರಿಗೆ ಹಾಡಿ ಪ್ರತಿದಿನವೂ ಯೆಹೋವ ದೇವರನ್ನು ಸ್ತುತಿಸಿದರು.
2CH 30:22 ಹಿಜ್ಕೀಯನು ಯೆಹೋವ ದೇವರ ಕಾರ್ಯಗಳಲ್ಲಿ ಒಳ್ಳೆಯ ತಿಳುವಳಿಕೆಯನ್ನು ಹೊಂದಿದ್ದ ಸಮಸ್ತ ಲೇವಿಯರೊಡನೆ ಉತ್ತೇಜನದ ಮಾತುಗಳಿಂದ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳವರೆಗೂ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ, ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ಔತಣಮಾಡಿ ಆಚರಿಸಿದರು.
2CH 30:23 ಅಲ್ಲದೆ ಕೂಟವೆಲ್ಲಾ ಇನ್ನೂ ಏಳು ದಿವಸಗಳ ಕಾಲ ಹಬ್ಬವನ್ನು ಆಚರಿಸಬೇಕೆಂದು ತಿರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು.
2CH 30:24 ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ 1,000 ಹೋರಿಗಳನ್ನೂ 7,000 ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ 1,000 ಹೋರಿಗಳನ್ನೂ 10,000 ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡರು.
2CH 30:25 ಯೆಹೂದದ ಸಮೂಹದವರೆಲ್ಲರೂ ಯಾಜಕರೂ, ಲೇವಿಯರೂ, ಇಸ್ರಾಯೇಲಿನಿಂದ ಬಂದ ಸಮಸ್ತ ಜನರೂ, ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ, ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು.
2CH 30:26 ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. ಇಸ್ರಾಯೇಲಿನ ಅರಸನಾದ ದಾವೀದನ ಮಗ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥಾ ಆಚರಣೆಯು ನಡೆದಿರಲಿಲ್ಲ.
2CH 30:27 ಆಗ ಯಾಜಕರೂ ಲೇವಿಯರೂ ಎದ್ದು ಜನರನ್ನು ಆಶೀರ್ವದಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿದರು. ಅವರ ಪ್ರಾರ್ಥನೆಯು ದೇವರ ಪರಿಶುದ್ಧ ನಿವಾಸ ಸ್ಥಾನವಾದ ಪರಲೋಕಕ್ಕೆ ತಲುಪಿತು.
2CH 31:1 ಇದಾದನಂತರ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲರು ಯೆಹೂದ ಪಟ್ಟಣಗಳಿಗೆ ಹೊರಟುಹೋಗಿ, ವಿಗ್ರಹಗಳನ್ನು ಮುರಿದು, ಅಶೇರ ಸ್ತಂಭಗಳನ್ನು ಕಡಿದು, ಸಮಸ್ತ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್, ಮನಸ್ಸೆ ದೇಶಗಳಲ್ಲಿ ಯಾವುದನ್ನೂ ಉಳಿಸಲಿಲ್ಲ, ಉನ್ನತ ಪೂಜಾಸ್ಥಳಗಳನ್ನು ಮತ್ತು ಬಲಿಪೀಠಗಳನ್ನು ಕೆಡವಿಹಾಕಿದರು. ಆಗ ಇಸ್ರಾಯೇಲರೆಲ್ಲರು ತಮ್ಮ ತಮ್ಮ ಆಸ್ತಿಪಾಸ್ತಿಯಿರುವ ಪಟ್ಟಣಗಳಿಗೆ ತಿರುಗಿ ಹೋದರು.
2CH 31:2 ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜಕರ, ಲೇವಿಯರ ಸರತಿಗಳನ್ನು ನೇಮಿಸಿದನು. ದಹನಬಲಿಗಳನ್ನೂ ಮತ್ತು ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕೂ, ಸೇವಿಸುವುದಕ್ಕೂ ಯೆಹೋವ ದೇವರ ಪಾಳೆಯದ ಬಾಗಿಲುಗಳಲ್ಲಿ ಸ್ತೋತ್ರ ಮಾಡುವುದಕ್ಕೂ, ಕೊಂಡಾಡುವುದಕ್ಕೂ ಯಾಜಕರನ್ನೂ, ಲೇವಿಯರನ್ನೂ ನೇಮಿಸಿದನು.
2CH 31:3 ಅವನು ಯೆಹೋವ ದೇವರ ನಿಯಮದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಆಸ್ತಿಯಿಂದಲೇ ಅವನ ಭಾಗವನ್ನು ನೇಮಿಸಿದನು.
2CH 31:4 ಯಾಜಕರೂ ಲೇವಿಯರೂ ಯೆಹೋವ ದೇವರ ನಿಯಮದಲ್ಲಿ ಆಸಕ್ತರಾಗಿರುವುದಕ್ಕಾಗಿ ಅವರಿಗೆ ತಕ್ಕ ಭಾಗವನ್ನು ಕೊಡಬೇಕೆಂದು ಯೆರೂಸಲೇಮಿನಲ್ಲಿ ಜನರಿಗೆ ಅವನು ಆಜ್ಞಾಪಿಸಿದನು.
2CH 31:5 ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ, ಇವುಗಳ ಮೊದಲನೆಯ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳವಾಗಿ ತಂದರು.
2CH 31:6 ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲರು ಯೆಹೂದ್ಯರು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶಮಾಂಶದ ಪಾಲು ತಂದು, ರಾಶಿರಾಶಿಯಾಗಿ ಇಟ್ಟರು.
2CH 31:7 ಮೂರನೆಯ ತಿಂಗಳಲ್ಲಿ ರಾಶಿ ಮಾಡುವುದನ್ನು ಆರಂಭಿಸಿ, ಏಳನೆಯ ತಿಂಗಳಲ್ಲಿ ತೀರಿಸಿದರು.
2CH 31:8 ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ, ಅವರು ಯೆಹೋವ ದೇವರನ್ನೂ ಸ್ತುತಿಸಿದರು, ಅವರ ಜನರಾದ ಇಸ್ರಾಯೇಲರನ್ನೂ ಆಶೀರ್ವದಿಸಿದರು.
2CH 31:9 ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ, ಲೇವಿಯರನ್ನೂ ವಿಚಾರಿಸಿದನು.
2CH 31:10 ಚಾದೋಕ್ ಸಂತಾನದ ಮುಖ್ಯಯಾಜಕ ಅಜರ್ಯನು, “ಜನರು ದೇವರಾದ ಯೆಹೋವ ದೇವರಿಗೆ ಕಾಣಿಕೆಯಾಗಿ ಪ್ರತ್ಯೇಕಿಸತಕ್ಕದ್ದನ್ನು ಅವರ ಆಲಯಕ್ಕೆ ತಂದಂದಿನಿಂದ ಯೆಹೋವ ದೇವರು ತಮ್ಮ ಪ್ರಜೆಗೆ ಸಮೃದ್ಧಿಯನ್ನು ಅನುಗ್ರಹಿಸಿದ್ದಾರೆ. ನಾವು ಉಂಡು ತೃಪ್ತರಾಗಿ, ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತೇವೆ,” ಎಂದನು.
2CH 31:11 ಬಳಿಕ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.
2CH 31:12 ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು, ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
2CH 31:13 ಅರಸನಾದ ಹಿಜ್ಕೀಯನು ನೇಮಿಸಿದ ಪ್ರಕಾರ, ಯೆಹೀಯೇಲ್, ಅಜಜ್ಯ, ನಹತ್, ಅಸಾಯೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ, ಇವರು ಕೋನನ್ಯನ ಸಹೋದರನಾದ ಶಿಮ್ಮಿಯ ಕೈಕೆಳಗೆ ಆಡಳಿತಗಾರರಾಗಿದ್ದರು. ಅಜರ್ಯನು ದೇವರ ಆಲಯದ ಅಧಿಪತಿಯಾಗಿದ್ದನು.
2CH 31:14 ಲೇವಿಯನಾಗಿರುವ ಇಮ್ನನ ಮಗ ಕೋರೆಯು ಎಂಬ ಪೂರ್ವದಿಕ್ಕಿನಲ್ಲಿರುವ ದ್ವಾರಪಾಲಕನು ಯೆಹೋವ ದೇವರ ಕಾಣಿಕೆಗಳನ್ನೂ, ಮಹಾಪರಿಶುದ್ಧವಾದವುಗಳನ್ನೂ ಪಾಲು ಹಂಚುವುದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಕಾಣಿಕೆಗಳ ಮೇಲ್ವಿಚಾರಕನಾಗಿದ್ದನು.
2CH 31:15 ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ನಂಬಿಗಸ್ತಿಕೆಯಿಂದ ಸರತಿ ಸರತಿಯಾಗಿ ಹಿರಿಯರು ಕಿರಿಯರು ಎಂಬ ವ್ಯತ್ಯಾಸಮಾಡದೆ ಪಾಲು ಹಂಚುವುದಕ್ಕೆ ಏದೆನನೂ, ಮಿನ್ಯಾಮೀನನೂ, ಯೇಷೂವನ ಶೆಮಾಯನೂ, ಅಮರ್ಯನೂ, ಶೆಕನ್ಯನೂ ಇದ್ದರು.
2CH 31:16 ವಂಶಾವಳಿಯ ದಾಖಲೆಯ ಪ್ರಕಾರ ಮೂರು ವರ್ಷ ಪ್ರಾಯ ಮೊದಲ್ಗೊಂಡು ಮೇಲಿರುವ ಗಂಡು ಮಕ್ಕಳು ಹೊರತಾಗಿ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸುವವರೆಲ್ಲರಿಗೆ ಅವರ ಕೆಲಸಗಳಲ್ಲಿ ಅವರ ಸರತಿಗಳ ಪ್ರಕಾರ ಅವರ ಸೇವೆಗೆ ಅವರವರ ದಿನದ ಭಾಗವನ್ನು ಕೊಡುವುದಕ್ಕೂ,
2CH 31:17 ಹಾಗೆಯೇ ಇಪ್ಪತ್ತು ವರ್ಷ ಪ್ರಾಯ ಮೊದಲ್ಗೊಂಡು ವಂಶಾವಳಿಯ ದಾಖಲೆಯ ಪ್ರಕಾರ ಅವರವರ ಕೆಲಸಗಳಲ್ಲಿಯೂ, ಅವರವರ ಸರತಿಗಳಲ್ಲಿಯೂ ಇರುವ ಯಾಜಕರಿಗೂ, ಲೇವಿಯರಿಗೂ ಅವರ ಸಮಸ್ತ ಕೂಟದಲ್ಲಿ ವಂಶಾವಳಿಯ ದಾಖಲೆಯ ಪ್ರಕಾರ
2CH 31:18 ಅವರ ಹೆಂಡತಿಯರಿಗೂ ಚಿಕ್ಕವರಿಗೂ ಪುತ್ರಪುತ್ರಿಯರಿಗೂ ಪಾಲು ಕೊಡುವುದಕ್ಕೂ ಇದ್ದರು. ಏಕೆಂದರೆ ಅವರು ತಮ್ಮ ಉದ್ಯೋಗದಲ್ಲಿ ತಮ್ಮನ್ನೇ ತಾವು ಪರಿಶುದ್ಧಗೊಳಿಸುವಲ್ಲಿ ನಂಬಿಗಸ್ತರಾಗಿದ್ದರು.
2CH 31:19 ಯಾಜಕರಲ್ಲಿ ಸಮಸ್ತ ಗಂಡಸರಿಗೂ, ಲೇವಿಯರಲ್ಲಿ ಲಿಖಿತರಾದ ಸಮಸ್ತರಿಗೂ ಪಾಲನ್ನು ಕೊಡುವುದಕ್ಕೆ ತಮ್ಮ ಪಟ್ಟಣಗಳ ವಲಯಗಳಲ್ಲಿರುವ ಯಾಜಕರಾದ ಆರೋನನ ವಂಶಾವಳಿಯ ದಾಖಲೆಯ ಪ್ರಕಾರ ಮನುಷ್ಯರು ಪ್ರತಿ ಪಟ್ಟಣದಲ್ಲಿ ಇದ್ದರು.
2CH 31:20 ಹೀಗೆಯೇ ಹಿಜ್ಕೀಯನು ಸಮಸ್ತ ಯೆಹೂದದಲ್ಲಿ ತನ್ನ ದೇವರಾದ ಯೆಹೋವ ದೇವರ ಸಮ್ಮುಖದಲ್ಲಿ ಉತ್ತಮವಾದದ್ದನ್ನೂ, ಸರಿಯಾದದ್ದನ್ನೂ, ಸತ್ಯವಾದದ್ದನ್ನೂ ನಡೆಸಿದನು.
2CH 31:21 ಇದಲ್ಲದೆ ದೇವರ ಆಲಯದ ಸೇವೆಯಲ್ಲಿಯೂ, ಮೋಶೆಯ ನಿಯಮದಲ್ಲಿಯೂ, ದೇವರ ಆಜ್ಞೆಗಳಲ್ಲಿಯೂ ಅವನು ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳನ್ನು ತನ್ನ ಪೂರ್ಣಹೃದಯದಿಂದ ಮಾಡಿ, ಅವನು ಅಭಿವೃದ್ಧಿ ಹೊಂದಿದನು.
2CH 32:1 ಹಿಜ್ಕೀಯನು ಇಷ್ಟು ನಂಬಿಗಸ್ತಿಕೆಯಿಂದ ಎಲ್ಲವನ್ನೂ ಮಾಡಿದ ತರುವಾಯ, ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದಲ್ಲಿ ಪ್ರವೇಶಿಸಿ ಕೋಟೆಯುಳ್ಳ ಪಟ್ಟಣಗಳ ಬಳಿಯಲ್ಲಿ ದಂಡಿಳಿಸಿ, ಅವುಗಳನ್ನು ತನಗಾಗಿ ಜಯಿಸಬೇಕೆಂದು ಮುತ್ತಿಗೆಹಾಕಿದನು.
2CH 32:2 ಸನ್ಹೇರೀಬನು ಬಂದದ್ದನ್ನೂ, ಅವನು ಯೆರೂಸಲೇಮಿನ ಮೇಲೆ ಯುದ್ಧಮಾಡಲು ನಿಶ್ಚಯಿಸಿದ್ದನ್ನೂ ಹಿಜ್ಕೀಯನು ಕಂಡಾಗ,
2CH 32:3 ಅವನು ಪಟ್ಟಣದ ಹೊರಗಿರುವ ನೀರಿನ ಬುಗ್ಗೆಗಳನ್ನು ಮುಚ್ಚಿಸುವುದಕ್ಕೆ ತನ್ನ ಪ್ರಧಾನರ ಮತ್ತು ತನ್ನ ಪರಾಕ್ರಮಶಾಲಿಗಳ ಸಂಗಡ ಯೋಚಿಸಿಕೊಂಡನು. ಅವರು ಅವನಿಗೆ ಸಹಾಯ ಕೊಟ್ಟರು.
2CH 32:4 ಆದ್ದರಿಂದ ಅನೇಕ ಜನರು ಕೂಡಿಕೊಂಡು, “ನೀರು ಬುಗ್ಗೆಗಳನ್ನೂ, ದೇಶದ ಮಧ್ಯದಲ್ಲಿ ಹರಿಯುವ ಹಳ್ಳವನ್ನೂ ಮುಚ್ಚಿಬಿಟ್ಟು, ಅಸ್ಸೀರಿಯದ ಅರಸರು ಬಂದು ಬಹಳ ನೀರು ದೊರಕಿಸಿಕೊಳ್ಳುವುದು ಏಕೆ?” ಎಂದರು.
2CH 32:5 ಇದಲ್ಲದೆ ಅವನು ತನ್ನನ್ನು ಬಲಪಡಿಸಿಕೊಂಡು, ಬಿದ್ದುಹೋಗಿದ್ದ ಗೋಡೆಯನ್ನೆಲ್ಲಾ ಕಟ್ಟಿಸಿ, ಗೋಪುರಗಳ ಪರ್ಯಂತರ ಅದನ್ನು ಎತ್ತರಮಾಡಿ, ಅದರ ಹೊರಭಾಗದಲ್ಲಿ ಮತ್ತೊಂದು ಗೋಡೆಯನ್ನು ಕಟ್ಟಿಸಿ, ದಾವೀದನ ಪಟ್ಟಣದಲ್ಲಿರುವ ಮಿಲ್ಲೋವನ್ನು ದುರಸ್ತಿ ಮಾಡಿ ಈಟಿಗಳನ್ನೂ, ಗುರಾಣಿಗಳನ್ನೂ ಬಹಳವಾಗಿ ಮಾಡಿಸಿದನು.
2CH 32:6 ಜನರ ಮೇಲೆ ಯುದ್ಧದ ಸೈನ್ಯಗಳ ಅಧಿಪತಿಗಳನ್ನು ಇರಿಸಿ, ಪಟ್ಟಣದ ಬಾಗಿಲ ಬೀದಿಯಲ್ಲಿ ತನ್ನ ಬಳಿಗೆ ಅವರನ್ನು ಕೂಡಿಸಿಕೊಂಡು, ಈ ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಿದರು:
2CH 32:7 “ಬಲಗೊಳ್ಳಿರಿ, ಧೈರ್ಯವಾಗಿರಿ, ಅಸ್ಸೀರಿಯದ ಅರಸನ ನಿಮಿತ್ತವೂ, ಅವನ ಸಂಗಡ ಕೂಡಿರುವ ಮಹಾ ಗುಂಪಿನ ನಿಮಿತ್ತವೂ ಭಯಪಡಬೇಡಿರಿ, ನಿರಾಶರಾಗಬೇಡಿರಿ. ಏಕೆಂದರೆ ಅವನ ಸಂಗಡ ಇರುವವರಿಗಿಂತ ಮಿಗಿಲಾದದ್ದು ನಮ್ಮ ಸಂಗಡ ಇದೆ.
2CH 32:8 ನಮಗಾದರೋ ಸಹಾಯ ಮಾಡುವುದಕ್ಕೂ, ನಮ್ಮ ಯುದ್ಧಗಳನ್ನು ನಡಿಸುವುದಕ್ಕೂ ನಮ್ಮ ದೇವರಾದ ಯೆಹೋವ ದೇವರು ತಾವೇ ಇದ್ದಾರೆ,” ಎಂದು ಹೇಳಿದನು. ಆದ್ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಭರವಸೆಯುಳ್ಳವರಾದರು.
2CH 32:9 ಇದರ ತರುವಾಯ ಅಸ್ಸೀರಿಯದ ಅರಸನಾದ ಸನ್ಹೇರೀಬನೂ, ಅವನ ಸಂಗಡ ಕೂಡಿರುವ ಅವನ ಸಮಸ್ತ ಬಲವೂ ಲಾಕೀಷನ್ನು ಮುತ್ತಿಗೆ ಹಾಕಿದಾಗ, ಅವನು ಯೆರೂಸಲೇಮಿನಲ್ಲಿರುವ ಯೆಹೂದದ ಅರಸನಾದ ಹಿಜ್ಕೀಯನ ಬಳಿಗೂ, ಯೆರೂಸಲೇಮಿನಲ್ಲಿರುವ ಸಮಸ್ತ ಯೆಹೂದದವರ ಬಳಿಗೂ ತನ್ನ ಸೇವಕರನ್ನು ಕಳುಹಿಸಿದನು.
2CH 32:10 “ಅಸ್ಸೀರಿಯದ ಅರಸನಾದ ಸನ್ಹೇರೀಬನು ಹೀಗೆ ಹೇಳುತ್ತಾನೆ: ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಯೆರೂಸಲೇಮಿನಲ್ಲಿ ಉಳಿದಿರುವಿರಿ?
2CH 32:11 ‘ನಮ್ಮ ದೇವರಾದ ಯೆಹೋವ ದೇವರು ಅಸ್ಸೀರಿಯದ ಅರಸನ ಕೈಯಿಂದ ನಮ್ಮನ್ನು ಬಿಡಿಸುವರು,’ ಎಂದು ಹಿಜ್ಕೀಯನು ಹೇಳಿ, ನಿಮ್ಮನ್ನು ಹಸಿವೆ ಮತ್ತು ದಾಹದಿಂದ ಸಾಯಿಸುವುದಕ್ಕೆ ಒಪ್ಪಿಸಿಕೊಡಲು ಪ್ರೇರೇಪಿಸುತ್ತಾನಲ್ಲವೇ?
2CH 32:12 ಈ ಹಿಜ್ಕೀಯನು ಅವನ ಪೂಜಾಸ್ಥಳಗಳನ್ನೂ, ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ, ‘ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು, ಅದರ ಮೇಲೆ ಧೂಪವನ್ನರ್ಪಿಸಬೇಕು,’ ಎಂದು ಹೇಳಿದ್ದಾನಲ್ಲವೇ?
2CH 32:13 “ನಾನೂ, ನನ್ನ ಪಿತೃಗಳು ದೇಶಗಳ ಜನರಿಗೆ ಮಾಡಿದ್ದನ್ನು ನೀವು ತಿಳಿಯಲಿಲ್ಲವೋ? ಆ ದೇಶಗಳ ಜನಾಂಗಗಳ ದೇವರುಗಳು ಆ ದೇಶಗಳನ್ನು ನನ್ನ ಕೈಯೊಳಗಿಂದ ಹೇಗಾದರೂ ಬಿಡಿಸಲು ಸಾಮರ್ಥ್ಯವಿತ್ತೋ?
2CH 32:14 ನನ್ನ ಪಿತೃಗಳು ನಿರ್ಮೂಲ ಮಾಡಿದ ಆ ಜನಾಂಗಗಳ ಸಮಸ್ತ ದೇವರುಗಳಲ್ಲಿ ನನ್ನ ಕೈಯಿಂದ ತನ್ನ ಜನರನ್ನು ಬಿಡಿಸಲು ಸಾಮರ್ಥ್ಯವುಳ್ಳದ್ದು ಯಾವುದು? ಹಾಗಾದರೆ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?
2CH 32:15 ಆದ್ದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ನಿಮ್ಮನ್ನು ದಾರಿತಪ್ಪಿಸಲು ಬಿಡಬೇಡಿರಿ. ಅವನ ಮಾತು ನಂಬಬೇಡಿರಿ. ನನ್ನ ಕೈಯೊಳಗಿಂದಲೂ, ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು? ಅನ್ನುತ್ತಾನೆ,” ಎಂದು ಹೇಳಿದರು.
2CH 32:16 ಹೀಗೆ ಅವನ ಸೇವಕರು ಇನ್ನೂ ದೇವರಾದ ಯೆಹೋವ ದೇವರಿಗೆ ವಿರೋಧವಾಗಿಯೂ, ಅವರ ಸೇವಕನಾದ ಹಿಜ್ಕೀಯನಿಗೆ ವಿರೋಧವಾಗಿಯೂ ಮಾತನಾಡಿದರು.
2CH 32:17 ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ನಿಂದಿಸುವುದಕ್ಕೂ, ಅವರಿಗೆ ವಿರೋಧವಾಗಿ ಮಾತನಾಡುವುದಕ್ಕೂ ಪತ್ರಗಳನ್ನು ಬರೆದನು. ಅದರಲ್ಲಿ, “ಇತರ ದೇಶಗಳ ಜನಾಂಗಗಳ ದೇವರುಗಳು, ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ, ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸನು,” ಎಂದು ಬರೆದಿತ್ತು.
2CH 32:18 ಇದಲ್ಲದೆ ಅವರು ಪಟ್ಟಣವನ್ನು ಹಿಡಿಯುವ ಹಾಗೆ ಗೋಡೆಯ ಮೇಲೆ ಇರುವ ಯೆರೂಸಲೇಮಿನಲ್ಲಿರುವ ಜನರನ್ನು ಭಯಪಡಿಸುವುದಕ್ಕೂ, ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ದೊಡ್ಡ ಶಬ್ದದಿಂದ ಅವರನ್ನು ಕೂಗಿದರು.
2CH 32:19 ಮನುಷ್ಯರ ಕೈಕೆಲಸವಾದ ಭೂಮಿಯ ಜನರ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ, ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು.
2CH 32:20 ಇದರ ನಿಮಿತ್ತ ಅರಸನಾದ ಹಿಜ್ಕೀಯನೂ, ಆಮೋಚನ ಮಗನಾದ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು.
2CH 32:21 ಆಗ ಯೆಹೋವ ದೇವರು ತಮ್ಮ ದೂತನನ್ನು ಕಳುಹಿಸಿದರು. ಅವನು ಅಸ್ಸೀರಿಯದ ಅರಸನ ದಂಡಿನಲ್ಲಿರುವ ಸಮಸ್ತ ಪರಾಕ್ರಮಶಾಲಿಗಳನ್ನೂ, ನಾಯಕರನ್ನೂ, ಅಧಿಪತಿಗಳನ್ನೂ ನಿರ್ಮೂಲ ಮಾಡಿದನು. ಹೀಗೆ ಇವನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಿದನು. ಅವನು ತನ್ನ ದೇವರ ಆಲಯದಲ್ಲಿ ಪ್ರವೇಶಿಸಿದಾಗ, ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಖಡ್ಗದಿಂದ ಕೊಂದುಹಾಕಿದರು.
2CH 32:22 ಹೀಗೆ ಯೆಹೋವ ದೇವರು ಹಿಜ್ಕೀಯನನ್ನೂ, ಯೆರೂಸಲೇಮಿನ ನಿವಾಸಿಗಳನ್ನೂ, ಅಸ್ಸೀರಿಯದ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ, ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ, ಸಮಸ್ತ ಕಡೆಯಿಂದ ಅವರನ್ನು ನಡೆಸಿದರು.
2CH 32:23 ಅನೇಕರು ಯೆರೂಸಲೇಮಿನಲ್ಲಿರುವ ಯೆಹೋವ ದೇವರಿಗೆ ಅರ್ಪಣೆಗಳನ್ನೂ, ಯೆಹೂದದ ಅರಸನಾದ ಹಿಜ್ಕೀಯನಿಗೆ ಕಾಣಿಕೆಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಮುಂದೆ ಉನ್ನತವಾಗಿದ್ದನು.
2CH 32:24 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಅವನು ಯೆಹೋವ ದೇವರನ್ನು ಪ್ರಾರ್ಥಿಸಲು, ದೇವರು ಅವನ ಸಂಗಡ ಮಾತನಾಡಿ ಅವನಿಗೆ ಒಂದು ಅದ್ಭುತವಾದ ಗುರುತನ್ನು ಕೊಟ್ಟರು.
2CH 32:25 ಆದರೆ ಹಿಜ್ಕೀಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಹೋದನು. ಏಕೆಂದರೆ ಅವನ ಹೃದಯವು ಅಹಂಕಾರದಿಂದ ತುಂಬಿತ್ತು. ಆದ್ದರಿಂದ ಅವನ ಮೇಲೆಯೂ, ಯೆಹೂದ ಮತ್ತು ಯೆರೂಸಲೇಮಿನ ಮೇಲೆಯೂ ಯೆಹೋವ ದೇವರ ರೌದ್ರ ಉಂಟಾಯಿತು.
2CH 32:26 ಅನಂತರ ಹಿಜ್ಕೀಯನೂ, ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯದಲ್ಲಿ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ, ಹಿಜ್ಕೀಯನ ದಿವಸಗಳಲ್ಲಿ ಯೆಹೋವ ದೇವರ ರೌದ್ರವು ಅವರ ಮೇಲೆ ಬರಲಿಲ್ಲ.
2CH 32:27 ಹಿಜ್ಕೀಯನಿಗೆ ಅತ್ಯಧಿಕವಾದ ಐಶ್ವರ್ಯವೂ, ಘನವೂ ಇದ್ದುದರಿಂದ, ಅವನು ಬೆಳ್ಳಿಗೋಸ್ಕರವೂ, ಬಂಗಾರಕ್ಕೋಸ್ಕರವೂ, ರತ್ನಗಳಿಗೋಸ್ಕರವೂ, ಸುಗಂಧ ದ್ರವ್ಯಗಳಿಗೋಸ್ಕರವೂ, ಗುರಾಣಿಗಳಿಗೋಸ್ಕರವೂ, ಎಲ್ಲಾ ವಿಧದ ಮನೋಹರವಾದ ಆಭರಣಗಳಿಗೋಸ್ಕರವೂ ತನಗೆ ಉಗ್ರಾಣಗಳನ್ನು ಮಾಡಿಸಿದನು.
2CH 32:28 ಇದಲ್ಲದೆ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನೂ, ಸಕಲ ವಿಧವಾದ ಪಶುಗಳ ನಿಮಿತ್ತವಾಗಿ ಕೊಟ್ಟಿಗೆಗಳನ್ನೂ, ಕುರಿಮಂದೆಯ ನಿಮಿತ್ತವಾಗಿ ಹಟ್ಟಿಗಳನ್ನೂ ಮಾಡಿದನು.
2CH 32:29 ಇದಲ್ಲದೆ ತನಗೆ ಪಟ್ಟಣಗಳನ್ನೂ, ದನಕುರಿಗಳ ದೊಡ್ಡ ಹಿಂಡುಗಳನ್ನೂ ಬಹಳವಾಗಿ ಮಾಡಿಕೊಂಡನು. ಏಕೆಂದರೆ ದೇವರು ಅವನಿಗೆ ಬಹು ಹೆಚ್ಚಾಗಿ ಸಂಪತ್ತನ್ನು ಕೊಟ್ಟರು.
2CH 32:30 ಈ ಹಿಜ್ಕೀಯನು ಗೀಹೋನೆಂಬ ಮೇಲಿನ ಕಾಲುವೆಯನ್ನು ಮುಚ್ಚಿಬಿಟ್ಟು, ಅದನ್ನು ದಾವೀದನ ಪಟ್ಟಣದಲ್ಲಿ ಪಶ್ಚಿಮ ದಿಕ್ಕಿಗೆ ಕಾಲುವೆಯಾಗಿ ಬರಮಾಡಿದನು. ಹೀಗೆಯೇ ಹಿಜ್ಕೀಯನು ತನ್ನ ಸಮಸ್ತ ಕ್ರಿಯೆಗಳಲ್ಲಿ ವೃದ್ಧಿಹೊಂದಿದನು.
2CH 32:31 ಆದರೆ ದೇಶದಲ್ಲಿ ಅದ್ಭುತಕ್ಕೋಸ್ಕರ ವಿಚಾರಣೆ ಮಾಡಲು ಬಾಬಿಲೋನಿನ ಅಧಿಪತಿಗಳಿಂದ ತನ್ನ ಬಳಿಗೆ ಕಳುಹಿಸಲಾದ ರಾಯಭಾರಿಗಳ ಕಾರ್ಯದಲ್ಲಿ ಅವನು ತನ್ನ ಹೃದಯದಲ್ಲಿ ಇರುವ ಪ್ರತಿಯೊಂದನ್ನೂ ತಿಳಿದುಕೊಳ್ಳುವದಕ್ಕಾಗಿಯೂ ಪರಿಶೋಧಿಸುವುದಕ್ಕಾಗಿಯೂ ದೇವರು ಅವನನ್ನು ಕೈಬಿಟ್ಟರು.
2CH 32:32 ಹಿಜ್ಕೀಯನ ಇತರ ಕಾರ್ಯಗಳೂ ಅವನ ಭಕ್ತಿಕಾರ್ಯಗಳೂ ಆಮೋಚನ ಮಗ ಪ್ರವಾದಿಯಾದ ಯೆಶಾಯನ ದರ್ಶನದ ಪುಸ್ತಕದಲ್ಲಿ ಮತ್ತು ಯೆಹೂದ ಇಸ್ರಾಯೇಲ್ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2CH 32:33 ಹಿಜ್ಕೀಯನು ತನ್ನ ಪಿತೃಗಳ ಬಳಿಗೆ ಸೇರಿದನು. ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದುದರಲ್ಲಿ ಅವನನ್ನು ಹೂಳಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ, ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗ ಮನಸ್ಸೆಯು ಅವನಿಗೆ ಬದಲಾಗಿ ಅರಸನಾದನು.
2CH 33:1 ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು.
2CH 33:2 ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2CH 33:3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.
2CH 33:4 ಇದಲ್ಲದೆ ಯೆರೂಸಲೇಮಿನಲ್ಲಿ, “ನನ್ನ ಹೆಸರು ಯುಗಯುಗಕ್ಕೂ ಇರುವುದು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಹಳ ಬಲಿಪೀಠಗಳನ್ನು ಕಟ್ಟಿಸಿದನು.
2CH 33:5 ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.
2CH 33:6 ಇದಲ್ಲದೆ ಮನಸ್ಸೆಯು ಬೆನ್ ಹಿನ್ನೋಮ್ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನೂ ಮಾಟವನ್ನೂ ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.
2CH 33:7 ಮನಸ್ಸೆಯು ತಾನು ಮಾಡಿದ ವಿಗ್ರಹವನ್ನು ದೇವರ ಆಲಯದಲ್ಲಿ ಇಟ್ಟನು. ಆ ಆಲಯದ ಬಗ್ಗೆ ದೇವರು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಹೇಳಿದ್ದೇನೆಂದರೆ, “ನಾನು ಈ ಆಲಯದಲ್ಲಿ ಮತ್ತು ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಶಾಶ್ವತವಾಗಿ ಸ್ಥಾಪಿಸುತ್ತೇನೆ.
2CH 33:8 ನಾನು ಮೋಶೆಯ ಮುಖಾಂತರ ಆಜ್ಞಾಪಿಸಿದ ಎಲ್ಲಾ ಅಪ್ಪಣೆಗಳನ್ನೂ, ಕಾನೂನುಗಳನ್ನೂ, ವಿಧಿಗಳನ್ನೂ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ನೇಮಕ ಮಾಡಿದ ದೇಶವನ್ನು ಪುನಃ ಇಸ್ರಾಯೇಲರು ಬಿಟ್ಟುಹೋಗುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು.
2CH 33:9 ಆದರೆ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು.
2CH 33:10 ಯೆಹೋವ ದೇವರು ಮನಸ್ಸೆಯೊಂದಿಗೂ, ಅವನ ಜನರೊಂದಿಗೂ ಮಾತನಾಡಿದರು. ಆದರೆ ಅವರು ಲಕ್ಷಿಸಲಿಲ್ಲ.
2CH 33:11 ಆದಕಾರಣ ಯೆಹೋವ ದೇವರು ಅಸ್ಸೀರಿಯದ ಅರಸನ ಸೈನ್ಯದ ಅಧಿಪತಿಗಳನ್ನೂ ಅವನ ಮೇಲೆ ಬರಮಾಡಿದರು. ಆ ಅಧಿಪತಿಗಳು ಮನಸ್ಸೆಯ ಮೂಗಿಗೆ ಕೊಂಡಿಗಳನ್ನು ಹಾಕಿ, ಅವನಿಗೆ ಕಂಚಿನ ಸಂಕೋಲೆಗಳಿಂದ ಬಂಧಿಸಿ, ಅವನನ್ನು ಬಾಬಿಲೋನಿಗೆ ಒಯ್ದರು.
2CH 33:12 ಮನಸ್ಸೆಯು ಬಾಧೆಯಲ್ಲಿರುವಾಗ ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಂಡನು ಮತ್ತು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಪ್ರಾರ್ಥನೆಮಾಡಿದನು.
2CH 33:13 ಆಗ ಯೆಹೋವ ದೇವರು ಕನಿಕರಪಟ್ಟು, ಅವನ ಬಿನ್ನಹವನ್ನು ಕೇಳಿ, ಯೆರೂಸಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರುಗಿ ಬರಮಾಡಿದರು. ಆಗ ಯೆಹೋವ ದೇವರೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
2CH 33:14 ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ಮೀನು ಬಾಗಿಲ ದ್ವಾರದವರೆಗಿರುವ ತಗ್ಗಿನಲ್ಲಿ ಓಫೇಲ್ ಗುಡ್ಡದ ಸುತ್ತಲೂ ಗೋಡೆಯನ್ನು ಕಟ್ಟಿಸಿ, ಅದನ್ನು ಬಹಳ ಎತ್ತರಮಾಡಿ, ಯೆಹೂದದ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.
2CH 33:15 ಅವನು ಅನ್ಯದೇವರುಗಳನ್ನೂ, ಯೆಹೋವ ದೇವರ ಆಲಯದಲ್ಲಿರುವ ವಿಗ್ರಹವನ್ನೂ ಯೆಹೋವ ದೇವರ ಆಲಯದ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ, ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು.
2CH 33:16 ಅವನು ಯೆಹೋವ ದೇವರ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ಸಮಾಧಾನದ ಬಲಿಗಳನ್ನೂ, ಸ್ತೋತ್ರದ ಬಲಿಗಳನ್ನೂ ಅರ್ಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿದನು.
2CH 33:17 ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಮಾತ್ರ ಬಲಿಯನ್ನರ್ಪಿಸುವಾಗ, ಇನ್ನೂ ಉನ್ನತ ಸ್ಥಳಗಳಲ್ಲಿಯೇ ಬಲಿಯನ್ನು ಅರ್ಪಿಸುತ್ತಾ ಇದ್ದರು.
2CH 33:18 ಮನಸ್ಸೆಯ ಇತರ ಕ್ರಿಯೆಗಳೂ, ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಾಮದಲ್ಲಿ ಅವನ ಸಂಗಡ ಮಾತನಾಡಿದ ಪ್ರವಾದಿಗಳ ಮಾತುಗಳೂ, ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
2CH 33:19 ಇದಲ್ಲದೆ ಅವನ ಪ್ರಾರ್ಥನೆಯೂ, ಅವನು ದೇವರಿಗೆ ಭಿನ್ನವಿಸಿದ್ದೂ, ಅವನ ಸಮಸ್ತ ಪಾಪವೂ, ಅವನ ಅಪನಂಬಿಕೆಯೂ, ಅವನು ತಗ್ಗಿಸಿಕೊಳ್ಳುವುದಕ್ಕಿಂತ ಮುಂಚೆ ಕಟ್ಟಿಸಿದ ಉನ್ನತ ಸ್ಥಳಗಳನ್ನೂ, ನಿಲ್ಲಿಸಿದ ಅಶೇರ ಸ್ತಂಭಗಳೂ, ಕೆತ್ತಿಸಿದ ವಿಗ್ರಹಗಳೂ, ಸ್ಥಾಪಿಸಿದ ಸ್ಥಳಗಳೂ ಪ್ರವಾದಿಗಳ ದಾಖಲೆಗಳಲ್ಲಿ ಬರೆದಿರುತ್ತವೆ.
2CH 33:20 ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ಅವನ ಅರಮನೆಯಲ್ಲಿ ಹೂಳಿಟ್ಟರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು.
2CH 33:21 ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು.
2CH 33:22 ಆದರೆ ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಆಮೋನನು ತನ್ನ ತಂದೆ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಿ ಅವುಗಳನ್ನು ಪೂಜಿಸಿದನು.
2CH 33:23 ಆಮೋನನು ತನ್ನ ತಂದೆ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ, ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. ಆದರೆ ಆಮೋನನು ಅಧಿಕವಾಗಿ ಅಪರಾಧ ಮಾಡಿದನು.
2CH 33:24 ಆದ್ದರಿಂದ ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.
2CH 33:25 ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ದೇಶದ ಜನರು ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2CH 34:1 ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು.
2CH 34:2 ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.
2CH 34:3 ಅವನು ಇನ್ನೂ ಬಾಲಕನಾಗಿರುವಾಗ, ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪೂರ್ವಜನಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ ತೆಗೆದುಹಾಕಿ, ಯೆಹೂದ ಮತ್ತು ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.
2CH 34:4 ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯ ಸ್ತಂಭಗಳನ್ನು ಕಡಿದುಹಾಕಿ; ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ, ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿಗಳ ಮೇಲೆ ಚಿಲ್ಲಿಸಿ,
2CH 34:5 ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು; ಯೆಹೂದ ಪ್ರಾಂತ್ಯವನ್ನೂ, ಯೆರೂಸಲೇಮ ಪಟ್ಟಣವನ್ನೂ ಶುಚಿಮಾಡಿದರು.
2CH 34:6 ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ, ಎಫ್ರಾಯೀಮ್, ಸಿಮೆಯೋನ್, ನಫ್ತಾಲಿ ಪ್ರಾಂತ್ಯಗಳ ಪಟ್ಟಣಗಳ ಸುತ್ತಲೂ ಶುಚಿಮಾಡಿದರು.
2CH 34:7 ಅವನು ಬಲಿಪೀಠಗಳನ್ನೂ, ಅಶೇರ ಸ್ತಂಭಗಳನ್ನೂ ಕೆಡವಿಹಾಕಿ, ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿಮಾಡಿ, ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡವಿದ ತರುವಾಯ ಯೆರೂಸಲೇಮಿಗೆ ಹಿಂದಿರುಗಿದನು.
2CH 34:8 ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅವನು ದೇಶವನ್ನೂ, ಆಲಯವನ್ನೂ ಶುಚಿ ಮಾಡಿದ ತರುವಾಯ ತನ್ನ ದೇವರಾದ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಅಚಲ್ಯನ ಮಗನಾದ ಶಾಫಾನನನ್ನೂ, ಪಟ್ಟಣದ ಅಧಿಪತಿಯಾದ ಮಾಸೇಯನನ್ನೂ, ರಾಜಲೇಖಕನಾಗಿದ್ದ ಯೋವಾಹಾಜನ ಮಗನಾದ ಯೋವಾಹನನ್ನೂ ಕಳುಹಿಸಿದನು.
2CH 34:9 ಇವರು ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಜನರಿಂದಲೂ, ಇಸ್ರಾಯೇಲಿನ ಉಳಿದವರಿಂದಲೂ, ಯೆಹೂದ ಬೆನ್ಯಾಮೀನರಿಂದಲೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಂದಲೂ ಕೂಡಿಸಿದ ಹಣವನ್ನು ತೆಗೆದುಕೊಂಡು ದೇವರ ಆಲಯಕ್ಕೆ ತಂದು ಮಹಾಯಾಜಕನಾದ ಹಿಲ್ಕೀಯನಿಗೆ ಕೊಟ್ಟರು.
2CH 34:10 ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಯೆಹೋವ ದೇವರ ಆಲಯವನ್ನು ಭದ್ರಮಾಡಿ, ದುರಸ್ತಿ ಮಾಡುವವರಿಗೆ ಅದನ್ನು ಕೊಟ್ಟರು.
2CH 34:11 ಕೆತ್ತಿದ ಕಲ್ಲುಗಳನ್ನೂ, ತೊಲೆಗಳಿಗೋಸ್ಕರ ಮರಗಳನ್ನೂ, ಯೆಹೂದದ ಅರಸರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಹಲಿಗೆಗಳನ್ನು ಕೊಂಡುಕೊಳ್ಳಲೂ, ಬಡಗಿಯರಿಗೂ, ಕಲ್ಲುಕೆಲಸದವರಿಗೂ ಆ ಹಣವನ್ನು ಕೊಟ್ಟರು.
2CH 34:12 ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿದರು. ಅವರ ವಿಚಾರಣೆಯ ಮೇಲ್ವಿಚಾರಕರು ಯಾರೆಂದರೆ ಮೆರಾರೀಯ ಪುತ್ರರಲ್ಲಿ ಲೇವಿಯರಾದ ಯಹಾತನೂ, ಓಬದ್ಯನೂ; ಕೊಹಾತ್ಯರ ಮಕ್ಕಳಲ್ಲಿ ಜೆಕರ್ಯನೂ, ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವರಾದ ಲೇವಿಯರೆಲ್ಲರೂ ಅದನ್ನು ನಡೆಸುತ್ತಾ ಇದ್ದರು.
2CH 34:13 ಇದಲ್ಲದೆ ಕಾರ್ಮಿಕರ ಮೇಲೆಯೂ, ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ಮೇಲ್ವಿಚಾರಕರಾಗಿದ್ದರು. ಲೇವಿಯರಲ್ಲಿ ಕೆಲವರು ಕಾರ್ಯದರ್ಶಿಗಳೂ, ಬರಹಗಾರರೂ, ದ್ವಾರಪಾಲಕರೂ ಆಗಿದ್ದರು.
2CH 34:14 ಯೆಹೋವ ದೇವರ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತೆಗೆದುಕೊಂಡು ಬರುವಾಗ, ಯಾಜಕನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಯೆಹೋವ ದೇವರ ನಿಯಮದ ಗ್ರಂಥವನ್ನು ಕಂಡುಕೊಂಡನು.
2CH 34:15 ಆಗ ಹಿಲ್ಕೀಯನು ಉತ್ತರಕೊಟ್ಟು ಕಾರ್ಯದರ್ಶಿಯಾದ ಶಾಫಾನನಿಗೆ, “ಯೆಹೋವ ದೇವರ ಆಲಯದಲ್ಲಿ ನಿಯಮ ಗ್ರಂಥವು ನನಗೆ ಸಿಕ್ಕಿತು,” ಎಂದು ಹೇಳಿದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು.
2CH 34:16 ಶಾಫಾನನು ಆ ಗ್ರಂಥವನ್ನು ಅರಸನ ಬಳಿಗೆ ತೆಗೆದುಕೊಂಡುಹೋಗಿ, ಅರಸನಿಗೆ ಈ ಮಾತನ್ನು ತಿರುಗಿ ಹೇಳಿದನು. “ನಿನ್ನ ಸೇವಕರ ಕೈಗೆ ಒಪ್ಪಿಸಿದ್ದನ್ನೆಲ್ಲಾ ಅವರು ಮಾಡುತ್ತಿದ್ದಾರೆ.
2CH 34:17 ಇದಲ್ಲದೆ ಅವರು ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ತೆಗೆದು ಮೇಲ್ವಿಚಾರಕರ ಕೈಯಲ್ಲಿ ಮತ್ತು ಕೆಲಸದವರ ಕೈಯಲ್ಲಿ ಒಪ್ಪಿಸಿದ್ದಾರೆ.
2CH 34:18 ಕಾರ್ಯದರ್ಶಿಯಾದ ಶಾಫಾನನು ಅರಸನಿಗೆ ಯಾಜಕನಾದ ಹಿಲ್ಕೀಯನು ನನಗೆ ಗ್ರಂಥವನ್ನು ಕೊಟ್ಟಿದ್ದಾನೆ,” ಎಂದು ತಿಳಿಸಿದನು. ಆಗ ಶಾಫಾನನು ಅದನ್ನು ಅರಸನ ಮುಂದೆ ಓದಿದನು.
2CH 34:19 ಅರಸನು ದೇವರ ನಿಯಮದ ವಾಕ್ಯಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು.
2CH 34:20 ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕನ ಮಗನಾದ ಅಬ್ದೋನನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ,
2CH 34:21 “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಇಸ್ರಾಯೇಲ್ ಮತ್ತು ಯೆಹೂದದಲ್ಲಿ ಉಳಿದವರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ನಮ್ಮ ಮೇಲೆ ಸುರಿದ ಯೆಹೋವ ದೇವರ ಕೋಪವು ದೊಡ್ಡದಾಗಿದೆ,” ಎಂದು ಹೇಳಿದನು.
2CH 34:22 ಆಗ ಹಿಲ್ಕೀಯನೂ ಅರಸನ ಜನರೂ ಹಸ್ರನ ಮಗನೂ ತೊಕ್ಹತನ ಮಗನೂ ಪ್ರವಾದಿನಿ ಹುಲ್ದಳ ಬಳಿಗೆ ಹೋಗಿ ವಿಚಾರಿಸಿದರು. ಆಕೆಯು ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ, ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.
2CH 34:23 ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ:
2CH 34:24 ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನೂ, ಯೆಹೂದದ ಅರಸನ ಮುಂದೆ ಅವರು ಓದಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನೂ ಬರಮಾಡುವೆನು.
2CH 34:25 ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಯುವುದು, ಅದು ಆರಿಹೋಗುವುದಿಲ್ಲ.’
2CH 34:26 ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ,
2CH 34:27 ಈ ಸ್ಥಳಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ, ನಿನ್ನನ್ನು ನನ್ನ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ, ನಾನು ನಿನ್ನ ಮೊರೆಯನ್ನು ಕೇಳಿದೆನು,
2CH 34:28 ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು. ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.
2CH 34:29 ಅನಂತರ ಅರಸನಾದ ಯೋಷೀಯನು ಯೆಹೂದದ, ಯೆರೂಸಲೇಮಿನ ಹಿರಿಯರೆಲ್ಲರನ್ನು ಕರೆಕಳುಹಿಸಿ ತನ್ನ ಬಳಿಯಲ್ಲಿ ಒಟ್ಟಾಗಿ ಕೂಡಿಸಿದನು.
2CH 34:30 ಆಗ ಅರಸನೂ ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಯಾಜಕರೂ ಲೇವಿಯರೂ ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರ ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು.
2CH 34:31 ಅರಸನು ತನ್ನ ಸ್ತಂಭದಲ್ಲಿ ನಿಂತುಕೊಂಡು ಯೆಹೋವ ದೇವರನ್ನು ಹಿಂಬಾಲಿಸುವುದಕ್ಕೂ, ದೇವರ ಆಜ್ಞೆಗಳನ್ನೂ, ದೇವರ ಸಾಕ್ಷಿಗಳನ್ನೂ, ಕಟ್ಟಳೆಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಕೈಗೊಳ್ಳುವುದಕ್ಕೂ, ಈ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳನ್ನು ನೆರವೇರಿಸುವುದಕ್ಕೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿದನು.
2CH 34:32 ಇದಲ್ಲದೆ ಅವನು ಯೆರೂಸಲೇಮಿನಲ್ಲಿಯೂ, ಬೆನ್ಯಾಮೀನಿನಲ್ಲಿಯೂ ಪ್ರತಿಯೊಬ್ಬರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.
2CH 34:33 ಹೀಗೆ ಯೋಷೀಯನು ಇಸ್ರಾಯೇಲರಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದುಹಾಕಿ, ಇಸ್ರಾಯೇಲಿನಲ್ಲಿ ಸಿಕ್ಕಿದವರೆಲ್ಲರೂ ತಮ್ಮ ದೇವರಾದ ಯೆಹೋವ ದೇವರನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಡದೆ ಇದ್ದರು.
2CH 35:1 ಯೋಷೀಯನು ಯೆರೂಸಲೇಮಿನಲ್ಲಿ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಿದನು. ಮೊದಲನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು.
2CH 35:2 ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ; ಯೆಹೋವ ದೇವರ ಆಲಯದ ಸೇವೆ ಮಾಡುವುದಕ್ಕೆ ಅವರನ್ನು ಪ್ರೋತ್ಸಾಹಿಸಿದನು.
2CH 35:3 “ಸಮಸ್ತ ಇಸ್ರಾಯೇಲರಿಗೆ ಬೋಧಿಸಿದ ಮತ್ತು ಯೆಹೋವ ದೇವರಿಗೆ ಪ್ರತಿಷ್ಠಿತರಾದ ಲೇವಿಯರಿಗೆ ಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವೆಂದೆಣಿಸದೇ, ನೀವು ಅದನ್ನು ಇಸ್ರಾಯೇಲಿನ ಅರಸನಾಗಿರುವ ದಾವೀದನ ಮಗ ಸೊಲೊಮೋನನು ಕಟ್ಟಿಸಿದ ಆಲಯದಲ್ಲಿ ಇರಿಸಿ, ನಿಮ್ಮ ದೇವರಾದ ಯೆಹೋವ ದೇವರನ್ನೂ, ದೇವಜನರಾದ ಇಸ್ರಾಯೇಲರನ್ನೂ ಸೇವಿಸಿರಿ.
2CH 35:4 ಇದಲ್ಲದೆ ಇಸ್ರಾಯೇಲಿನ ಅರಸನಾದ ದಾವೀದನ ಮತ್ತು ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ, ನಿಮ್ಮ ಗೋತ್ರ ವರ್ಗಗಳ ಪ್ರಕಾರವಾಗಿಯೂ ಸಿದ್ಧಮಾಡಿಕೊಳ್ಳಿರಿ.
2CH 35:5 “ಇದರ ಹೊರತಾಗಿ, ಪವಿತ್ರ ಸ್ಥಳಗಳು ಸಾಮಾನ್ಯ ಜನರ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು, ಲೇವಿಯರು ಕೂಡ ಕುಲಗಳ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು.
2CH 35:6 ಪಸ್ಕದ ಕುರಿಮರಿಯನ್ನು ವಧಿಸಿ ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ,” ಎಂದನು.
2CH 35:7 ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಸಾಮಾನ್ಯ ಜನರಿಗೆ ಪಸ್ಕದ ಆಡುಮರಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ, ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನೂ ಕೊಟ್ಟನು. ಇವೆಲ್ಲಾ ಅರಸನ ಸ್ವಂತ ಸೊತ್ತಿನಿಂದಲೇ ಕೊಟ್ಟನು.
2CH 35:8 ಹಾಗೆಯೇ ಅವನ ಪ್ರಧಾನರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ, ಜೆಕರ್ಯನೂ, ಯೆಹೀಯೇಲನೂ ಪಸ್ಕದ ಬಲಿಗೋಸ್ಕರ ಎರಡು ಸಾವಿರದ ಆರುನೂರು ಪಸ್ಕದ ಬಲಿಗಳನ್ನೂ, ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
2CH 35:9 ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ, ಅವನ ಸಹೋದರನಾದ ಶೆಮಾಯನೂ, ನೆತನೆಯೇಲನೂ, ಹಷಬ್ಯನೂ, ಯೆಹಿಯೇಲನೂ, ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಪಸ್ಕದ ಬಲಿಗಳನ್ನೂ, ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
2CH 35:10 ಹೀಗೆ ಅರಸನ ಆಜ್ಞೆಯ ಪ್ರಕಾರ ಸೇವೆಯನ್ನು ಸಿದ್ಧಮಾಡಲಾಯಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.
2CH 35:11 ಲೇವಿಯರು ಪಸ್ಕದ ಕುರಿಮರಿಯನ್ನು ವಧಿಸಿದ ತರುವಾಯ, ಯಾಜಕರು ಅವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಆದರೆ ಲೇವಿಯರು ಚರ್ಮವನ್ನು ಸುಲಿದರು,
2CH 35:12 ಮೋಶೆಯ ಗ್ರಂಥದಲ್ಲಿ ಬರೆದಿರುವಂತೆ, ಜನರ ವಂಶಗಳ ಮನೆಗಳ ಪ್ರಕಾರ, ಯೆಹೋವ ದೇವರಿಗೆ ಅರ್ಪಿಸಲು ಅವರು ಕೊಡುವ ಹಾಗೆ ದಹನಬಲಿಗಳನ್ನು ತೆಗೆದು ಇಟ್ಟರು. ಹಾಗೆಯೇ ಎತ್ತುಗಳನ್ನು ತೆಗೆದಿಟ್ಟರು.
2CH 35:13 ಹೀಗೆ ಕಟ್ಟಳೆಯ ಪ್ರಕಾರ ಪಸ್ಕದ ಮಾಂಸವನ್ನು ಬೆಂಕಿಯಿಂದ ಸುಟ್ಟರು. ಆದರೆ ಪರಿಶುದ್ಧವಾದವುಗಳನ್ನು ಗಡಿಗೆಗಳಲ್ಲಿಯೂ, ತಪ್ಪಲೆಗಳಲ್ಲಿಯೂ, ಕೊಪ್ಪರಿಗೆಗಳಲ್ಲಿಯೂ ಬೇಯಿಸಿ, ಶೀಘ್ರವಾಗಿ ಜನರೆಲ್ಲರಿಗೆ ಕಳುಹಿಸಿದರು.
2CH 35:14 ತರುವಾಯ ತಮಗೋಸ್ಕರ, ಯಾಜಕರಿಗೋಸ್ಕರ ಭೋಜನವನ್ನು ಸಿದ್ಧಮಾಡಿದರು. ಏಕೆಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನಬಲಿಗಳನ್ನೂ, ಕೊಬ್ಬನ್ನೂ ಅರ್ಪಿಸುವುದರಲ್ಲಿದ್ದರು. ಆದ್ದರಿಂದ ಲೇವಿಯರು ತಮಗೋಸ್ಕರವೂ, ಆರೋನನ ಮಕ್ಕಳಾದ ಯಾಜಕರಿಗೋಸ್ಕರವೂ ಭೋಜನವನ್ನು ಸಿದ್ಧಮಾಡಿದರು.
2CH 35:15 ದಾವೀದನೂ, ಆಸಾಫನೂ, ಹೇಮಾನನೂ, ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು. ದ್ವಾರಪಾಲಕರು ಬಾಗಿಲಲ್ಲಿ ಇದ್ದರು. ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು. ಏಕೆಂದರೆ ಅವರ ಸಹೋದರರಾದ ಲೇವಿಯರಿಗೋಸ್ಕರ ಭೋಜನವನ್ನು ಸಿದ್ಧಮಾಡುತ್ತಿದ್ದರು.
2CH 35:16 ಹೀಗೆಯೇ ಅರಸನಾದ ಯೋಷೀಯನ ಆಜ್ಞೆಯ ಪ್ರಕಾರ ಪಸ್ಕವನ್ನು ಆಚರಿಸುವುದಕ್ಕೂ, ಯೆಹೋವ ದೇವರ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವುದಕ್ಕೂ, ಅದೇ ಸಮಯದಲ್ಲಿ ಯೆಹೋವ ದೇವರ ಸೇವೆಯು ಸಿದ್ಧವಾಯಿತು.
2CH 35:17 ಸಿದ್ಧವಾಗಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕವನ್ನು ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನೂ ಏಳು ದಿವಸ ಆಚರಿಸಿದರು.
2CH 35:18 ಪ್ರವಾದಿಯಾದ ಸಮುಯೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿರಲಿಲ್ಲ. ಇಸ್ರಾಯೇಲಿನ ಸಮಸ್ತ ಅರಸರಲ್ಲಿ ಯೋಷೀಯನೂ, ಯಾಜಕರೂ, ಲೇವಿಯರೂ, ಸಿದ್ಧವಾಗಿದ್ದ ಯೆಹೂದ ಹಾಗೂ ಇಸ್ರಾಯೇಲರೆಲ್ಲರೂ, ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
2CH 35:19 ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಈ ಪಸ್ಕಹಬ್ಬವನ್ನು ಆಚರಿಸಲಾಯಿತು.
2CH 35:20 ಯೋಷೀಯನು ಮಹಾ ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದ ನಂತರ, ಈಜಿಪ್ಟಿನ ಅರಸ ನೆಕೋ ಎಂಬವನು ಯುದ್ಧಮಾಡುವುದಕ್ಕಾಗಿ ಯೂಫ್ರೇಟೀಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಬಂದನು. ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದನು.
2CH 35:21 ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ, “ಯೆಹೂದದ ಅರಸನೇ, ನನಗೆ ನೀನು ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ. ನಾನು ಯುದ್ಧಮಾಡುವ ವೈರಿಯ ಮೇಲೆಯೇ ದಾಳಿಮಾಡುತ್ತೇನೆ. ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾರೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶಮಾಡದ ಹಾಗೆ ನೀನು ದೇವರ ಮುಂದೆ ಸುಮ್ಮನಿರು.”
2CH 35:22 ಆದಾಗ್ಯೂ ಯೋಷೀಯನು ತನ್ನ ಮುಖವನ್ನು ಅವನ ಕಡೆಯಿಂದ ತಿರುಗಿಸದೆ, ಅವನ ಸಂಗಡ ಯುದ್ಧಮಾಡಲು ತನ್ನ ವೇಷ ಮರೆಸಿಕೊಂಡು ಹೋದನು. ಯೋಷೀಯನು ದೇವರ ಬಾಯಿಂದ ಬಂದ ನೆಕೋ ಎಂಬವನ ಮಾತುಗಳನ್ನು ಕೇಳದೆ ಮೆಗಿದ್ದೋ ತಗ್ಗಿನಲ್ಲಿ ಯುದ್ಧಮಾಡಲು ಬಂದನು.
2CH 35:23 ಆಗ ಬಿಲ್ಲುಗಾರರು ಅರಸನಾದ ಯೋಷೀಯನ ಮೇಲೆ ಬಾಣವನ್ನು ಎಸೆದರು. ಅರಸನು ತನ್ನ ಸೇವಕರಿಗೆ, “ನನ್ನನ್ನು ಆಚೆಗೆ ಒಯ್ಯಿರಿ, ಏಕೆಂದರೆ ಬಹು ಗಾಯಪಟ್ಟಿದ್ದೇನೆ,” ಎಂದನು.
2CH 35:24 ಆದ್ದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು, ಅವನಿಗಿದ್ದ ಎರಡನೆಯ ರಥದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಮರಣ ಹೊಂದಲು, ಅವನ ಶವವನ್ನು ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಸಮಸ್ತ ಯೆಹೂದ ಮತ್ತು ಯೆರೂಸಲೇಮಿನವರು ಯೋಷೀಯನಿಗೋಸ್ಕರ ದುಃಖಪಟ್ಟರು.
2CH 35:25 ಯೆರೆಮೀಯನು ಯೋಷೀಯನಿಗೋಸ್ಕರ ದುಃಖ ಗೀತವನ್ನು ಬರೆದನು. ಹಾಡುಗಾರರೂ, ಹಾಡುಗಾರ್ತಿಯರೂ ಯೋಷೀಯನನ್ನು ಇದುವರೆಗೂ ತಮ್ಮ ಗೋಳಾಟ ಪದ್ಯಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಇಸ್ರಾಯೇಲಿನಲ್ಲಿ ಸಂಪ್ರದಾಯವಾಯಿತು ಮತ್ತು ಈ ಗೀತೆಗಳು ಪ್ರಲಾಪಗಳಲ್ಲಿ ಬರೆದಿರುತ್ತವೆ.
2CH 35:26 ಯೋಷೀಯನ ಮಿಕ್ಕಾದ ಕ್ರಿಯೆಗಳು ಯೆಹೋವ ದೇವರ ನಿಯಮದಲ್ಲಿ ಬರೆದಿರುವ ಪ್ರಕಾರ, ಅವನು ಮಾಡಿದ ಭಕ್ತಿಕಾರ್ಯಗಳೂ,
2CH 35:27 ಅವನ ಕ್ರಿಯೆಗಳೂ, ಮೊದಲನೆಯವುಗಳೂ, ಕಡೆಯವುಗಳೂ ಇಸ್ರಾಯೇಲ್ ಯೆಹೂದದ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ.
2CH 36:1 ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2CH 36:2 ಯೆಹೋವಾಹಾಜನು ಅರಸನಾದಾಗ ಇಪ್ಪತ್ತಮೂರು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು.
2CH 36:3 ಈಜಿಪ್ಟ್ ಅರಸನು ಯೆರೂಸಲೇಮಿನಲ್ಲಿ ಅವನನ್ನು ಸಿಂಹಾಸನದಿಂದ ತೆಗೆದುಹಾಕಿ, ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರುವಂತೆ ಮಾಡಿದನು.
2CH 36:4 ಇದಲ್ಲದೆ ಈಜಿಪ್ಟ್ ಅರಸನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಯೆಹೂದದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ನೆಕೋವನು ಎಲ್ಯಾಕೀಮನ ಸಹೋದರನಾದ ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು.
2CH 36:5 ಯೆಹೋಯಾಕೀಮನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಆದರೆ ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2CH 36:6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬಿಲೋನಿಗೆ ಒಯ್ಯುವುದಕ್ಕಾಗಿ ಅವನಿಗೆ ಕಂಚಿನ ಸಂಕೋಲೆಗಳನ್ನು ಹಾಕಿಸಿದನು.
2CH 36:7 ಇದಲ್ಲದೆ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದ ಪಾತ್ರೆಗಳಲ್ಲಿ ಕೆಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಬಾಬಿಲೋನಿನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
2CH 36:8 ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಅಸಹ್ಯಗಳೂ, ಅವನಲ್ಲಿ ಕಂಡುಕೊಂಡದ್ದೂ, ಇಸ್ರಾಯೇಲ್ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.
2CH 36:9 ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
2CH 36:10 ಆದರೆ ಒಂದು ವರ್ಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ, ಅವನನ್ನೂ ಮತ್ತು ಯೆಹೋವ ದೇವರ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಬರಮಾಡಿ, ಅವನ ಸಹೋದರನಾದ ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿದನು.
2CH 36:11 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು.
2CH 36:12 ಅವನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ, ಯೆಹೋವ ದೇವರು ಹೇಳಿದ ಮಾತುಗಳಂತೆ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
2CH 36:13 ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿಬಿದ್ದನು. ಹೇಗೆಂದರೆ ಅವನು ಇಸ್ರಾಯೇಲಿನ ಯೆಹೋವ ದೇವರ ಕಡೆಗೆ ತಿರುಗದೆ, ಹಟಮಾರಿಯಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
2CH 36:14 ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ, ಜನರೂ ಜನಾಂಗಗಳ ಅಸಹ್ಯಗಳನ್ನು ಹಿಂಬಾಲಿಸಿ ಬಹಳವಾಗಿ ಅಪನಂಬಿಗಸ್ತರಾಗಿ, ಯೆಹೋವ ದೇವರು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
2CH 36:15 ಅವರ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸೇವಕರನ್ನು ಅವನ ಬಳಿಗೆ ಪುನಃ ಕಳುಹಿಸಿದರು. ತಮ್ಮ ಜನರ ಮೇಲೆಯೂ, ತಮ್ಮ ನಿವಾಸ ಸ್ಥಾನದ ಮೇಲೆಯೂ ಅವರು ಕನಿಕರಪಟ್ಟರು.
2CH 36:16 ಆದರೆ ಯೆಹೋವ ದೇವರ ಕೋಪವು ತಮ್ಮ ಜನರಿಗೆ ವಿರೋಧವಾಗಿ ಏಳುವವರೆಗೂ, ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ, ದೇವರ ವಾಕ್ಯಗಳನ್ನು ತಿರಸ್ಕರಿಸಿ, ದೇವರ ಪ್ರವಾದಿಗಳಿಗೆ ಅಪಹಾಸ್ಯ ಮಾಡಿದರು.
2CH 36:17 ಆದ್ದರಿಂದ ದೇವರು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದರು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಖಡ್ಗದಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ, ಕನ್ಯಾಸ್ತ್ರೀಯ ಮೇಲಾದರೂ, ಅತಿವೃದ್ಧನ ಮೇಲಾದರೂ ಕನಿಕರಪಡಲಿಲ್ಲ. ದೇವರು ಸಮಸ್ತ ಜನರನ್ನು ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿದರು.
2CH 36:18 ಇದಲ್ಲದೆ ದೊಡ್ಡವೂ, ಸಣ್ಣವೂ ಆದ ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳು ಆಲಯದ ಬೊಕ್ಕಸಗಳು, ಅರಸನ ಬೊಕ್ಕಸಗಳು, ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬಿಲೋನಿಗೆ ತರಿಸಿದನು.
2CH 36:19 ಅವರು ದೇವರ ಆಲಯವನ್ನು ಸುಟ್ಟುಬಿಟ್ಟು, ಯೆರೂಸಲೇಮಿನ ಗೋಡೆಯನ್ನು ಕೆಡವಿಹಾಕಿ, ಅದರ ಅರಮನೆಗಳನ್ನು ಸುಟ್ಟುಬಿಟ್ಟು, ಅದರ ಬೆಲೆಯುಳ್ಳ ಸಲಕರಣೆಗಳನ್ನೆಲ್ಲಾ ನಾಶಮಾಡಿದರು.
2CH 36:20 ಇದಲ್ಲದೆ ಖಡ್ಗದಿಂದ ತಪ್ಪಿಸಿಕೊಂಡವರನ್ನು ಅವನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು. ಅವರು ಅಲ್ಲಿ ಪಾರಸಿಯ ಸಾಮ್ರಾಜ್ಯ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
2CH 36:21 ಹೀಗೆ ಯೆರೆಮೀಯನ ಮುಖಾಂತರವಾಗಿ ಹೇಳಿಸಿದ ಯೆಹೋವ ದೇವರ ವಾಕ್ಯವು ನೆರವೇರಿತು. ದೇಶವು ಅದರ ಸಬ್ಬತ್ ದಿನಗಳನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು, ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಇತ್ತು.
2CH 36:22 ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ,
2CH 36:23 “ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಸ್ವಂತನಾಡಿಗೆ ಹೋಗಬಹುದು. ದೇವರಾದ ಯೆಹೋವ ದೇವರು ಅವರ ಸಂಗಡ ಇರಲಿ!’ ” ಎಂದನು.
EZR 1:1 ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ:
EZR 1:2 “ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ.
EZR 1:3 ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಯೆಹೂದ, ಯೆರೂಸಲೇಮಿಗೆ ಹೋಗಿ, ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಒಂದು ದೇವಾಲಯವನ್ನು ಕಟ್ಟಲಿ, ಅವರ ಸಂಗಡ ಅವರ ದೇವರು ಇರಲಿ!
EZR 1:4 ಯೆಹೂದ್ಯರಲ್ಲಿ ಬದುಕುಳಿದವರು ಈಗ ವಾಸಿಸುತ್ತಿರುವ ಯಾವುದೇ ಪ್ರದೇಶದಲ್ಲಿ, ಜನರು ಅವರಿಗೆ ಬೆಳ್ಳಿ ಮತ್ತು ಬಂಗಾರ, ಸರಕುಗಳು ಮತ್ತು ಪ್ರಾಣಿಪಶುಗಳನ್ನು ಮತ್ತು ಯೆರೂಸಲೇಮಿನ ದೇವಾಲಯಕ್ಕೆ ಉಚಿತ ಕಾಣಿಕೆಗಳನ್ನು ಒದಗಿಸಬೇಕು.’ ”
EZR 1:5 ಆಗ ಯೆಹೂದ ಹಾಗೂ ಬೆನ್ಯಾಮೀನ್ ಕುಟುಂಬಗಳ ಮುಖ್ಯಸ್ಥರೂ, ಯಾಜಕರೂ, ಲೇವಿಯರೂ, ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಹೋಗಲು ಯೆಹೋವ ದೇವರಿಂದ ಪ್ರೇರಿತರಾದವರೆಲ್ಲರೂ ಎದ್ದರು.
EZR 1:6 ಅವರ ನೆರೆಯವರೆಲ್ಲರು ಎಲ್ಲಾ ಕಾಣಿಕೆಗಳಲ್ಲದೇ, ಬೆಳ್ಳಿ ಹಾಗೂ ಬಂಗಾರದಿಂದ ಮಾಡಿದ ವಸ್ತುಗಳಿಂದಲೂ, ಪಶುಗಳಿಂದಲೂ, ಬೆಲೆಯುಳ್ಳವುಗಳಿಂದಲೂ ಅವರಿಗೆ ಧಾರಾಳವಾಗಿ ಸಹಾಯ ಮಾಡಿದರು.
EZR 1:7 ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು, ತನ್ನ ದೇವರುಗಳ ಮಂದಿರಗಳಲ್ಲಿ ಇರಿಸಿದ್ದ ಯೆಹೋವ ದೇವರ ಆಲಯದ ಸಲಕರಣೆಗಳನ್ನು ಪಾರಸಿಯ ಅರಸನಾದ ಕೋರೆಷನು ತರಿಸಿದನು.
EZR 1:8 ಅವುಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸದವನಾದ ಮಿತ್ರದಾತನ ಕೈಯಿಂದ ತರಿಸಿ, ಯೆಹೂದದ ರಾಜಕುಮಾರನಾದ ಶೆಷ್ಬಚ್ಚರನಿಗೆ ಎಣಿಸಿಕೊಟ್ಟನು.
EZR 1:9 ಅವುಗಳ ಲೆಕ್ಕವು ಹೀಗಿವೆ: ಬಂಗಾರದ 30 ತಟ್ಟೆಗಳು. ಬೆಳ್ಳಿಯ 1,000 ತಟ್ಟೆಗಳು. ಬೆಳ್ಳಿಯ 29 ಪಾತ್ರೆಗಳು.
EZR 1:10 ಬಂಗಾರದ 30 ಬಟ್ಟಲುಗಳು. ಬೆಳ್ಳಿಯ 410 ಬಟ್ಟಲುಗಳು. ಇನ್ನಿತರು 1,000 ವಸ್ತುಗಳು.
EZR 1:11 ಒಟ್ಟು 5,400 ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳು. ಇವುಗಳನ್ನೆಲ್ಲಾ ಬಾಬಿಲೋನಿನಿಂದ ಯೆರೂಸಲೇಮಿಗೆ ಪ್ರಯಾಣಮಾಡಿದವರ ಸಂಗಡ ಶೆಷ್ಬಚ್ಚರನು ತೆಗೆದುಕೊಂಡು ಹೋದನು.
EZR 2:1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
EZR 2:2 ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
EZR 2:3 ಪರೋಷನ ವಂಶಜರು 2,172
EZR 2:4 ಶೆಫಟ್ಯನ ವಂಶಜರು 372
EZR 2:5 ಆರಹನ ವಂಶಜರು 775
EZR 2:6 ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812
EZR 2:7 ಏಲಾಮನ ವಂಶಜರು 1,254
EZR 2:8 ಜತ್ತೂವಿನ ವಂಶಜರು 945
EZR 2:9 ಜಕ್ಕೈನ ವಂಶಜರು 760
EZR 2:10 ಬಾನೀಯ ವಂಶಜರು 642
EZR 2:11 ಬೇಬೈನ ವಂಶಜರು 623
EZR 2:12 ಅಜ್ಗಾದನ ವಂಶಜರು 1,222
EZR 2:13 ಅದೋನೀಕಾಮಿನ ವಂಶಜರು 666
EZR 2:14 ಬಿಗ್ವೈ ವಂಶಜರು 2,056
EZR 2:15 ಅದೀನನ ವಂಶಜರು 454
EZR 2:16 ಹಿಜ್ಕೀಯನ ಮಗನಾದ ಆಟೇರ್ ವಂಶಜರು 98
EZR 2:17 ಬೇಚೈಯ ವಂಶಜರು 323
EZR 2:18 ಯೋರನ ವಂಶಜರು 112
EZR 2:19 ಹಾಷುಮನ ವಂಶಜರು 223
EZR 2:20 ಗಿಬ್ಬಾರನ ವಂಶಜರು 95
EZR 2:21 ಬೇತ್ಲೆಹೇಮನ ವಂಶಜರು 123
EZR 2:22 ನೆಟೋಫದ ಜನರು 56
EZR 2:23 ಅನಾತೋತ್ ಊರಿನವರು 128
EZR 2:24 ಅಜ್ಮಾವೆತಿನವರು 42
EZR 2:25 ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743
EZR 2:26 ರಾಮಾ ಗೆಬ ಎಂಬ ಪಟ್ಟಣದವರು 621
EZR 2:27 ಮಿಕ್ಮಾಷದ ಜನರು 122
EZR 2:28 ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223
EZR 2:29 ನೆಬೋ ಊರಿನವರು 52
EZR 2:30 ಮಗ್ಬೀಷನ ಜನರು 156
EZR 2:31 ಮತ್ತೊಬ್ಬ ಏಲಾಮನ ವಂಶಜರು 1,254
EZR 2:32 ಹಾರಿಮನ ವಂಶಜರು 320
EZR 2:33 ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725
EZR 2:34 ಯೆರಿಕೋವಿನ ವಂಶಜರು 345
EZR 2:35 ಸೆನಾಹನ ವಂಶಜರು 3,630.
EZR 2:36 ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973
EZR 2:37 ಇಮ್ಮೇರನ ವಂಶಜರು 1,052
EZR 2:38 ಪಷ್ಹೂರನ ವಂಶಜರು 1,247
EZR 2:39 ಹಾರಿಮನ ವಂಶಜರು 1,017.
EZR 2:40 ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
EZR 2:41 ಹಾಡುಗಾರರು: ಆಸಾಫನ ವಂಶಜರು 128.
EZR 2:42 ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139.
EZR 2:43 ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು.
EZR 2:44 ಕೆರೋಸ್, ಸೀಯಹಾ, ಪದೋನ್,
EZR 2:45 ಲೆಬಾನ, ಹಗಾಬ, ಅಕ್ಕೂಬ್
EZR 2:46 ಹಗಾಬ್, ಶಲ್ಮೈ, ಹಾನಾನ್,
EZR 2:47 ಗಿದ್ದೇಲ್, ಗಹರ್, ರೆವಾಯ,
EZR 2:48 ರೆಚೀನ್, ನೆಕೋದ, ಗಜ್ಜಾಮ್,
EZR 2:49 ಉಜ್ಜ, ಪಾಸೇಹ, ಬೇಸೈ,
EZR 2:50 ಅಸ್ನ, ಮೆಯನೀಮ್, ನೆಫೀಸೀಮ್,
EZR 2:51 ಬಕ್ಬೂಕ್, ಹಕ್ಕೂಫ, ಹರ್ಹೂರ್,
EZR 2:52 ಬಚ್ಲೂತ್, ಮೆಹೀದ, ಹರ್ಷ,
EZR 2:53 ಬರ್ಕೋಸ್, ಸೀಸೆರ, ತೆಮಹ,
EZR 2:54 ನೆಚೀಹ, ಹಟೀಫ, ಇವರ ವಂಶಜರು.
EZR 2:55 ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ,
EZR 2:56 ಯಾಲ, ದರ್ಕೋನ್, ಗಿದ್ದೇಲ್,
EZR 2:57 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು.
EZR 2:58 ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
EZR 2:59 ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
EZR 2:60 ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ.
EZR 2:61 ಯಾಜಕರಲ್ಲಿ: ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ, ಅವನ ಹೆಸರನ್ನು ಇಟ್ಟುಕೊಂಡಿದ್ದನು.
EZR 2:62 ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
EZR 2:63 ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
EZR 2:64 ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
EZR 2:65 ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು.
EZR 2:66 ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು,
EZR 2:67 ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು.
EZR 2:68 ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು.
EZR 2:69 ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.
EZR 2:70 ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
EZR 3:1 ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲರು, ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇಮಿಗೆ ಕೂಡಿಬಂದರು.
EZR 3:2 ಆಗ ಯೋಚಾದಾಕನ ಮಗನಾದ ಯೇಷೂವನೂ, ಅವನ ಜೊತೆ ಯಾಜಕರೂ, ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಅವನ ಸಹಾಯಕರು ಎದ್ದು ದೇವರ ಮನುಷ್ಯನಾದ ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವುದಕ್ಕೆ ಇಸ್ರಾಯೇಲ್ ದೇವರ ಬಲಿಪೀಠವನ್ನು ಕಟ್ಟಿಸಿದರು.
EZR 3:3 ಸುತ್ತಮುತ್ತಲಿನ ಜನರ ಭಯವಿದ್ದರೂ, ಅವರು ಬಲಿಪೀಠವನ್ನು ಅದರ ಅಸ್ತಿವಾರದ ಮೇಲೆ ಕಟ್ಟಿದರು. ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಅರ್ಪಿಸಿದರು.
EZR 3:4 ಇದಲ್ಲದೆ ದೇವರ ನಿಯಮದಲ್ಲಿ ಬರೆದಿರುವಂತೆ ಅವರು ಗುಡಾರಗಳ ಹಬ್ಬವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ಪ್ರತಿದಿನದ ದಹನಬಲಿಗಳನ್ನು ಅರ್ಪಿಸಿದರು.
EZR 3:5 ಅದರ ತರುವಾಯ ಅವರು ನಿತ್ಯ ದಹನಬಲಿ, ಅಮಾವಾಸ್ಯೆ ಬಲಿ, ಯೆಹೋವ ದೇವರ ಎಲ್ಲಾ ಪರಿಶುದ್ಧ ಹಬ್ಬಗಳಲ್ಲಿಯೂ ಜನರು ಅರ್ಪಿಸುವ ಸ್ವಂತ ಇಚ್ಛೆಯಿಂದ ತಂದ ಬಲಿದಾನಗಳ ಬಲಿಯನ್ನೂ ಸಮರ್ಪಿಸಿದರು.
EZR 3:6 ಏಳನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಯೆಹೋವ ದೇವರ ಮಂದಿರದ ಅಸ್ತಿವಾರವನ್ನು ಇನ್ನೂ ಹಾಕಿರಲಿಲ್ಲ.
EZR 3:7 ಅವರು ಕಲ್ಲುಕುಟಿಕರಿಗೂ, ಬಡಗಿಯವರಿಗೂ, ಹಣವನ್ನು ಕೊಟ್ಟು ಪಾರಸಿಯ ಅರಸನಾದ ಕೋರೆಷನಿಂದ ಹೊಂದಿದ ಅಪ್ಪಣೆಯ ಪ್ರಕಾರ, ಲೆಬನೋನಿನಿಂದ ಯೊಪ್ಪದ ಸಮುದ್ರದ ಮಟ್ಟಿಗೂ ದೇವದಾರು ಮರಗಳನ್ನು ತೆಗೆದುಕೊಂಡು ಬರಲು ಸೀದೋನ್ಯರಿಗೂ, ಟೈರಿನವರಿಗೂ ಅನ್ನಪಾನಗಳನ್ನೂ, ಎಣ್ಣೆಯನ್ನೂ ಕೊಟ್ಟರು.
EZR 3:8 ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೆಯ ವರ್ಷದ, ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ, ಉಳಿದ ಅವರ ಸಹೋದರರಾದ ಯಾಜಕರೂ, ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ, ಕೆಲಸವನ್ನು ಪ್ರಾರಂಭಿಸಿ ಇಪ್ಪತ್ತು ವರ್ಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಯೆಹೋವ ದೇವರ ಆಲಯದ ಕೆಲಸ ಮಾಡುವವರ ಮೇಲೆ ಮೇಲ್ವಿಚಾರಕರನ್ನಾಗಿ ನೇಮಿಸಿದರು.
EZR 3:9 ಯೇಷೂವನೂ, ಅವನ ಮಕ್ಕಳೂ, ಅವನ ಸಹೋದರರೂ, ಕದ್ಮಿಯೇಲ್ ಮತ್ತು ಅವನ ಮಕ್ಕಳೂ, ಇವರು ಹೋದವ್ಯನ ವಂಶಜರು. ಹೇನಾದಾದನ ಮಕ್ಕಳೂ, ಅವರ ಮಕ್ಕಳೂ, ಅವರ ಸಹೋದರರೂ, ಲೇವಿಯರೂ ಆಗ ದೇವರ ಆಲಯದಲ್ಲಿ ಕೆಲಸ ಮಾಡುವವರ ಮೇಲ್ವಿಚಾರಣೆ ಮಾಡಲು ನಿಂತರು.
EZR 3:10 ಕಟ್ಟುವವರು ಯೆಹೋವ ದೇವರ ಮಂದಿರಕ್ಕೆ ಅಸ್ತಿವಾರ ಹಾಕಿದಾಗ ಇಸ್ರಾಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಯೆಹೋವ ದೇವರನ್ನು ಸ್ತುತಿಸುವುದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವರಾಗಿ ತುತೂರಿಗಳನ್ನೂದುವ ಯಾಜಕರನ್ನೂ, ತಾಳಗಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಸಿದ್ಧಪಡಿಸಿದರು.
EZR 3:11 ಪರಸ್ಪರವಾಗಿ ಹಾಡುತ್ತಾ, ಕೃತಜ್ಞತಾಸ್ತುತಿ ಮಾಡುತ್ತಾ ಯೆಹೋವ ದೇವರನ್ನು ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು! ಅವರ ಅಚಲ ಪ್ರೀತಿ ಇಸ್ರಾಯೇಲರ ಮೇಲೆ ಶಾಶ್ವತ!” ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ, ಯೆಹೋವ ದೇವರ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.
EZR 3:12 ಮೊದಲಿನ ಮಂದಿರವನ್ನು ಕಂಡಿದ್ದ ವೃದ್ಧರಾದ ಯಾಜಕರೂ ಲೇವಿಯ ಅನೇಕ ಕುಟುಂಬಗಳ ಪ್ರಮುಖರೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ಮುಂದೆ ಹಾಕುತ್ತಿರುವಾಗ ದೊಡ್ಡ ಶಬ್ದದಿಂದ ಅತ್ತರು.
EZR 3:13 ಜನರು ಹೀಗೆ ಮಹಾಧ್ವನಿಯಿಂದ ಆರ್ಭಟಿಸುತ್ತಾ ಇದ್ದುದರಿಂದ, ಹರ್ಷಧ್ವನಿ ಯಾವುದು, ಅಳುವವರ ಧ್ವನಿ ಯಾವುದು ಎಂದು ಗುರುತಿಸಲಾಗಲಿಲ್ಲ. ಗದ್ದಲವು ಬಹು ದೂರದವರೆಗೂ ಕೇಳಿಸುತ್ತಿತ್ತು.
EZR 4:1 ಸೆರೆಯಿಂದ ಬಂದವರು ಇಸ್ರಾಯೇಲ್ ದೇವರಾದ ಯೆಹೋವ ದೇವರಿಗಾಗಿ ಆಲಯವನ್ನು ಕಟ್ಟುತ್ತಾರೆಂಬುದಾಗಿ ಯೆಹೂದದ ಮತ್ತು ಬೆನ್ಯಾಮೀನನ ಶತ್ರುಗಳು ಕೇಳಿದಾಗ
EZR 4:2 ಅವರು ಜೆರುಬ್ಬಾಬೆಲನ ಬಳಿಗೂ, ಕುಟುಂಬಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ, “ನಾವು ನಿಮ್ಮ ಹಾಗೆ ನಿಮ್ಮ ದೇವರನ್ನು ಹುಡುಕುತ್ತೇವೆ. ನಮ್ಮನ್ನು ಇಲ್ಲಿಗೆ ಬರಮಾಡಿದ ಅಸ್ಸೀರಿಯದ ಅರಸನಾದ ಏಸರ್‌ಹದ್ದೋನ್ ಎಂಬವನ ದಿವಸಗಳು ಮೊದಲುಗೊಂಡು, ಅವರಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ, ಕಟ್ಟುವುದರಲ್ಲಿ ನಾವು ಸಹಾಯ ಮಾಡುತ್ತೇವೆ,” ಎಂದರು.
EZR 4:3 ಆದರೆ ಜೆರುಬ್ಬಾಬೆಲನೂ, ಯೇಷೂವನೂ, ಮಿಕ್ಕಾದ ಇಸ್ರಾಯೇಲಿನ ಕುಟುಂಬಗಳ ಮುಖ್ಯಸ್ಥರೂ ಅವರಿಗೆ, “ನಮ್ಮ ದೇವರಿಗೆ ಆಲಯವನ್ನು ಕಟ್ಟುವುದರಲ್ಲಿ ನಿಮಗೆ ಭಾಗವಿಲ್ಲ. ಪಾರಸಿಯ ಅರಸನಾದ ಕೋರೆಷನು ನಮಗೆ ಆಜ್ಞಾಪಿಸಿದ ಹಾಗೆ, ನಾವು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರಿಗೆ ಅದನ್ನು ಕಟ್ಟುವೆವು,” ಎಂದರು.
EZR 4:4 ಆಗ ಸುತ್ತಲಿದ್ದ ಜನಾಂಗಗಳವರು ಯೆಹೂದದ ಜನರನ್ನು ನಿರಾಶರನ್ನಾಗಿ ಮಾಡಲು ಮತ್ತು ಕಟ್ಟುವುದನ್ನು ಮುಂದುವರಿಸುವ ವಿಷಯದಲ್ಲಿ ಭಯಪಡಿಸಲು ಮುಂದಿದ್ದರು.
EZR 4:5 ಪಾರಸಿಯ ಅರಸನಾದ ಕೋರೆಷನ ದಿನಗಳಿಂದ ಹಿಡಿದು, ಪಾರಸಿಯ ಅರಸನಾದ ದಾರ್ಯಾವೆಷನ ಆಳ್ವಿಕೆಯವರೆಗೂ, ಅವರ ಯೋಚನೆಯನ್ನು ವ್ಯರ್ಥಮಾಡುವುದಕ್ಕೆ ಅವರ ವಿರೋಧವಾಗಿ ವಕೀಲರನ್ನು ಹಣಕೊಟ್ಟು ಇಟ್ಟುಕೊಂಡರು.
EZR 4:6 ಆದರೆ ಅಹಷ್ವೇರೋಷನು ಆಳುವಾಗ, ಅವನ ಆಳ್ವಿಕೆಯ ಪ್ರಾರಂಭದಲ್ಲಿ, ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಸಲ್ಲಿಸಿದರು.
EZR 4:7 ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ, ಮಿತ್ರದಾತನೂ, ಟಾಬೆಯೇಲನೂ, ಮಿಕ್ಕಾದ ಅವರ ಜೊತೆಗಾರರೂ ಪಾರಸಿಯ ಅರಸನಾದ ಅರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯ ಭಾಷೆಯಲ್ಲಿಯೂ, ಅರಾಮ್ಯ ಲಿಪಿಯಲ್ಲಿಯೂ ಇತ್ತು.
EZR 4:8 ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಯೆರೂಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.
EZR 4:9 ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಪರ್ಷಿಯಾ, ಯೆರೆಕ್ ಹಾಗೂ ಬಾಬೆಲಿನವರು, ಶೂಷನಿನವರ ಮತ್ತು ಏಲಾಮ್ಯರ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಆಡಳಿತಗಾರರು,
EZR 4:10 ಮತ್ತು ಮಹಾ ಶ್ರೀಮತ್ ಆಸೆನಪ್ಪರನು ಕರೆದುತಂದು ಸಮಾರ್ಯ ಪಟ್ಟಣದಲ್ಲಿ ಮತ್ತು ಯೂಫ್ರೇಟೀಸ್ ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:
EZR 4:11 ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಿತ್ತು: ಅರ್ತಷಸ್ತ ರಾಜರಿಗೆ, ತಮ್ಮ ಸೇವಕರಾದ ಯೂಫ್ರೇಟೀಸ್ ನದಿಯ ಈಚೆಯವರು:
EZR 4:12 ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು, ಯೆರೂಸಲೇಮನ್ನು ಸೇರಿ, ರಾಜಕಂಟಕವಾದ ಆ ದುಷ್ಟ ಪಟ್ಟಣವನ್ನೂ, ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
EZR 4:13 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಕಟ್ಟುವುದು ಮುಗಿದರೆ, ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ. ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
EZR 4:14 ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು, ಅರಸರಿಗೆ ಅಪಮಾನವಾಗುವುದನ್ನು ಕಂಡು ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು, ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ.
EZR 4:15 ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರ ಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ, ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದೇಶದ್ರೋಹ ಮಾಡುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮವಾಯಿತೆಂದೂ ಆ ಚರಿತ್ರ ಗ್ರಂಥದಲ್ಲಿ ಕಂಡುಬರುತ್ತದೆ.
EZR 4:16 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ, ತಮಗೆ ಯೂಫ್ರೇಟೀಸ್ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸನಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
EZR 4:17 ಈ ಪತ್ರಕ್ಕೆ ಅರಸನು ಅವರಿಗೆ ಕೊಟ್ಟ ಉತ್ತರ: ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ, ಸಮಾರ್ಯದಲ್ಲಿರುವವರಿಗೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಇತರರಿಗೂ, ಕ್ಷೇಮಾಭಿಲಾಶೆಗಳು.
EZR 4:18 ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಿ ಅನುವಾದ ಮಾಡಲಾಯಿತು.
EZR 4:19 ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದೇಶದ್ರೋಹ ಮಾಡುತ್ತಾ ಬಂದಿದ್ದಾರೆ.
EZR 4:20 ಇದಲ್ಲದೆ ಯೆರೂಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ಯೂಫ್ರೇಟೀಸ್ ನದಿಯಾಚೆಯ ಎಲ್ಲಾ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಳುತ್ತಿದ್ದರೆಂದು ಕಂಡುಬಂದಿದೆ.
EZR 4:21 ಆದ್ದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಲು ಅವಕಾಶ ಕೊಡಬಾರದೆಂತಲೂ ಪ್ರಕಟಿಸಿರಿ.
EZR 4:22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿರಿ.
EZR 4:23 ಅರಸನಾದ ಅರ್ತಷಸ್ತನ ಪತ್ರದ ಪ್ರತಿಯು ರೆಹೂಮನಿಗೂ, ಕಾರ್ಯದರ್ಶಿ ಶಿಂಷೈಯಿಗೂ, ಅವರ ಜೊತೆಗಾರರಿಗೂ ಓದಿದ ತರುವಾಯ, ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ, ಒತ್ತಾಯದಿಂದ ಮತ್ತು ಅಧಿಕಾರದಿಂದ ಅವರನ್ನು ನಿಲ್ಲಿಸುವಂತೆ ಮಾಡಿದರು.
EZR 4:24 ಅಂದಿನಿಂದ ಪರ್ಷಿಯ ದೇಶದ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಯೆರೂಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸವು ನಿಂತುಹೋಯಿತು.
EZR 5:1 ಈಗ ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗ ಜೆಕರ್ಯನೂ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರಿಗೆ, ಇಸ್ರಾಯೇಲ್ ದೇವರ ನಾಮದಲ್ಲಿ ಅವರಿಗೆ ಪ್ರವಾದಿಸಿದರು.
EZR 5:2 ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಿಸಲು ಪ್ರಾರಂಭಿಸಿದರು. ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
EZR 5:3 ಆ ವೇಳೆಯಲ್ಲಿ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಪ್ರದೇಶಗಳ ಅಧಿಪತಿಯಾಗಿದ್ದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅವರ ಬಳಿಗೆ ಬಂದು, “ಈ ಆಲಯವನ್ನು ಪುನಃ ಕಟ್ಟಿ ತೀರಿಸುವುದಕ್ಕೆ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ಕೇಳಿದರು.
EZR 5:4 ಇದಲ್ಲದೆ ಅವರು, “ಈ ಕಟ್ಟಡವನ್ನು ಕಟ್ಟಿಸುವವರ ಹೆಸರುಗಳೇನು?” ಎಂದು ವಿಚಾರಿಸಿದರು.
EZR 5:5 ಆದರೆ ಈ ಕಾರ್ಯವು ದಾರ್ಯಾವೆಷನ ಬಳಿಗೆ ಬರುವವರೆಗೂ, ಅವರು ಇವರನ್ನು ನಿಲ್ಲಿಸದ ಹಾಗೆ ಇವರ ದೇವರ ಕಣ್ಣು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆಗ ಇದನ್ನು ಕುರಿತು ಅವರು ಉತ್ತರವನ್ನು ಪತ್ರದಲ್ಲಿ ಕಳುಹಿಸಿದರು.
EZR 5:6 ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈನೂ, ಶೆತರ್ ಬೋಜೆನೈಯೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅವನ ಜೊತೆಗಾರರೂ, ಅರಸನಾದ ದಾರ್ಯಾವೆಷನಿಗೆ ಪತ್ರ ಬರೆದು ಕಳುಹಿಸಿದರು.
EZR 5:7 ಅವರು ಅವನ ಬಳಿಗೆ ಕಳುಹಿಸಿದ ಪತ್ರದ ಪ್ರತಿಯಲ್ಲಿ: ಅರಸನಾದ ದಾರ್ಯಾವೆಷನಿಗೆ: ಸರ್ವತಾ ಕ್ಷೇಮ.
EZR 5:8 ಅರಸನಿಗೆ ತಿಳಿಯಬೇಕಾದದ್ದೇನೆಂದರೆ, ನಾವು ಯೆಹೂದರ ದೇಶದಲ್ಲಿರುವ ಮಹಾ ದೇವರ ಆಲಯಕ್ಕೆ ಹೋದೆವು. ಅದನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನು ಇಡುತ್ತಿದ್ದಾರೆ. ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಿಂದ ವೇಗವಾಗಿ ವೃದ್ಧಿಯಾಗುತ್ತದೆ.
EZR 5:9 “ಆಗ ಈ ಆಲಯವನ್ನು ಕಟ್ಟುವುದಕ್ಕೂ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ನಾವು ಆ ಹಿರಿಯರನ್ನು ಕೇಳಿದೆವು.
EZR 5:10 ಇದಲ್ಲದೆ ಅವರಲ್ಲಿರುವ ಮುಖ್ಯಸ್ಥರ ಹೆಸರುಗಳನ್ನು ನಿಮಗೆ ಬರೆದು ತಿಳಿಸುವಂತೆ ಅವರ ಹೆಸರುಗಳನ್ನು ಕೇಳಿದೆವು.
EZR 5:11 ಅವರು ನಮಗೆ ಕೊಟ್ಟ ಉತ್ತರವೇನೆಂದರೆ: “ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿದ್ದ ಆಲಯವನ್ನು ನಾವು ಪುನಃ ಕಟ್ಟುತ್ತಿದ್ದೇವೆ.
EZR 5:12 ಆದರೆ ನಮ್ಮ ಪಿತೃಗಳು ಪರಲೋಕದ ದೇವರಿಗೆ ಕೋಪವನ್ನು ಎಬ್ಬಿಸಿದ ಕಾರಣ, ದೇವರು ಅವರನ್ನು ಬಾಬಿಲೋನಿನ ಅರಸನಾಗಿದ್ದ ಕಸ್ದೀಯರ ದೇಶದವನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆ ಅರಸನು ಆ ಆಲಯವನ್ನು ಹಾಳು ಮಾಡಿ, ಜನರನ್ನು ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದನು.
EZR 5:13 “ಆದರೆ ಬಾಬಿಲೋನಿನ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ದೇವರ ಈ ಆಲಯವನ್ನು ಪುನಃ ಕಟ್ಟಲು ಆಜ್ಞೆಯನ್ನು ಕೊಟ್ಟನು.
EZR 5:14 ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತೆಗೆದುಕೊಂಡು, ಬಾಬಿಲೋನಿನ ಮಂದಿರಕ್ಕೆ ತಂದ ದೇವಸ್ಥಾನದ ಬೆಳ್ಳಿಬಂಗಾರದ ಸಾಮಗ್ರಿಗಳನ್ನು ಅರಸನಾದ ಕೋರೆಷನು ಬಾಬಿಲೋನಿನ ಮಂದಿರದಿಂದ ತೆಗೆದುಕೊಂಡು, ತಾನು ನೇಮಿಸಿದ ಅಧಿಪತಿಯಾದ ಶೆಷ್ಬಚ್ಚರನಿಗೆ ಒಪ್ಪಿಸಿಕೊಟ್ಟನು.
EZR 5:15 ಅವನಿಗೆ, ‘ಈ ಸಾಮಗ್ರಿಗಳನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ತೆಗೆದುಕೊಂಡು ಹೋಗು. ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟು,’ ಎಂದು ಆಜ್ಞಾಪಿಸಿದನು.
EZR 5:16 “ಆಗ ಶೆಷ್ಬಚ್ಚರನು ಬಂದು, ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ, ಇನ್ನೂ ಮುಗಿಯಲಿಲ್ಲ,” ಎಂದರು.
EZR 5:17 “ಆದ್ದರಿಂದ ಅರಸನಿಗೆ ಸರಿ ತೋರುವುದಾದರೆ, ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ, ಇಲ್ಲವೋ ಎಂಬುದನ್ನು ಬಾಬಿಲೋನಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
EZR 6:1 ಆಗ ಅರಸನಾದ ದಾರ್ಯಾವೆಷನ ಅಪ್ಪಣೆಯ ಪ್ರಕಾರ ಅವರು ಬಾಬಿಲೋನಿನ ಭಂಡಾರದಲ್ಲಿದ್ದ ಗ್ರಂಥಾಲಯದಲ್ಲಿ ಹುಡುಕಿದರು.
EZR 6:2 ಮೇದ್ಯರ ದೇಶದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಜ್ಞಾಪಕಾರ್ಥದ ಒಂದು ಸುರುಳಿ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:
EZR 6:3 ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನೆಂದರೆ: ಜನರು ಬಲಿಗಳನ್ನು ಸಮರ್ಪಿಸುವುದಕ್ಕಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಅಸ್ತಿವಾರಗಳನ್ನು ಬಲವಾಗಿ ಹಾಕಬೇಕು. ಅದರ ಎತ್ತರ 27 ಮೀಟರ್, ಅದರ ಅಗಲ 27 ಮೀಟರ್ ಆಗಿರಲಿ.
EZR 6:4 ದೊಡ್ಡ ಕಲ್ಲುಗಳ ಮೂರು ಸಾಲುಗಳೂ, ಹೊಸ ತೊಲೆಗಳ ಒಂದು ಸಾಲೂ ಇರಲಿ. ಅದರ ಖರ್ಚು ಅರಮನೆಯ ಬೊಕ್ಕಸದಿಂದ ಕೊಡಲಾಗುವುದು.
EZR 6:5 ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದುಕೊಂಡು ಬಾಬಿಲೋನಿಗೆ ಒಯ್ದ ದೇವರ ಆಲಯದ ಬೆಳ್ಳಿಬಂಗಾರದ ಸಲಕರಣೆಗಳನ್ನು ತಿರುಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತೆಗೆದುಕೊಂಡುಹೋಗಿ, ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇಡಬೇಕು.
EZR 6:6 ಬಳಿಕ ದಾರ್ಯಾವೆಷನು ಬರೆದು ಕಳುಹಿಸಿದ್ದು ಏನೆಂದರೆ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಯಾದ ತತ್ತೆನೈನೇ, ಶೆತರ್ ಬೋಜೆನೈಯೇ, ನದಿಯ ಆಚೆಯಲ್ಲಿರುವ ನಿಮ್ಮ ಜೊತೆಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರಿ.
EZR 6:7 ದೇವರ ಆಲಯವನ್ನು ಕಟ್ಟುವ ಕೆಲಸಕ್ಕೆ ನೀವು ಅಡ್ಡಿಮಾಡಬೇಡಿರಿ. ಯೆಹೂದ್ಯರ ಅಧಿಪತಿಯೂ, ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ.
EZR 6:8 ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವುದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನೆಂದರೆ: ಅವರು ಅಭ್ಯಂತರ ಮಾಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ತೆರಿಗೆಯಿಂದಲೇ ಈ ಮನುಷ್ಯರಿಗೆ ವೆಚ್ಚವನ್ನು ಕೊಡಬೇಕು.
EZR 6:9 ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿಗಳೂ, ಟಗರುಗಳೂ, ಕುರಿಮರಿಗಳೂ, ಗೋಧಿಯೂ, ಉಪ್ಪೂ, ದ್ರಾಕ್ಷಾರಸವೂ, ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಬೇಕು.
EZR 6:10 ಇದಲ್ಲದೆ ಅವರು ಪರಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ, ಅರಸನ ಪ್ರಾಣಕ್ಕೋಸ್ಕರವೂ, ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡಬೇಕು.
EZR 6:11 ನಾನು ಕೊಡುವ ಅಪ್ಪಣೆ ಏನೆಂದರೆ, ಯಾವನಾದರೂ ಈ ನನ್ನ ಆಜ್ಞೆಯನ್ನು ಬದಲು ಮಾಡಿದರೆ, ಅವನ ಮನೆಯಿಂದ ಒಂದು ತೊಲೆಯನ್ನು ತೆಗೆದು ಅದರಿಂದಲೇ ಅವನನ್ನು ಗಲ್ಲಿಗೆ ಏರಿಸಬೇಕು. ಅವನ ಮನೆಯನ್ನು ಇದರ ನಿಮಿತ್ತ ತಿಪ್ಪೆಯನ್ನಾಗಿ ಮಾಡಿಬಿಡಬೇಕು.
EZR 6:12 ಇದಲ್ಲದೆ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆ ಸ್ಥಳವನ್ನು ಆರಿಸಿಕೊಂಡಿರಲು, ಯೆರೂಸಲೇಮಿನ ಈ ದೇವಾಲಯವನ್ನು ಕಟ್ಟಬೇಕೆಂಬ ಆಜ್ಞೆಯನ್ನು ಬದಲಿಸುವುದಕ್ಕಾಗಲಿ, ದೇವಾಲಯವನ್ನು ನಾಶಮಾಡುವುದಕ್ಕಾಗಲಿ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ, ಜನರನ್ನೂ ದೇವರು ನಾಶಮಾಡಲಿ. ದಾರ್ಯಾವೆಷನಾದ ನಾನು ಈ ಆಜ್ಞೆಯನ್ನು ಕೊಟ್ಟಿದ್ದೇನೆ. ಇದನ್ನು ಶ್ರದ್ಧೆಯಿಂದ ಪಾಲಿಸಬೇಕು, ಎಂಬುದು.
EZR 6:13 ಆಗ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅರಸನಾದ ದಾರ್ಯಾವೆಷನು ಕಳುಹಿಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು.
EZR 6:14 ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗನಾದ ಜೆಕರ್ಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿಯನ್ನು ಹೊಂದಿದರು. ಅವರು ಇಸ್ರಾಯೇಲ್ ದೇವರ ಅಪ್ಪಣೆಯ ಪ್ರಕಾರವೂ, ಕೋರೆಷ್, ದಾರ್ಯಾವೆಷ್ ಹಾಗೂ ಅರ್ತಷಸ್ತ ಎಂಬ ಪರ್ಷಿಯದ ರಾಜರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು.
EZR 6:15 ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರ್ಷದ ಆಡಾರ್ ತಿಂಗಳ, ಮೂರನೆಯ ದಿವಸದಲ್ಲಿ ಈ ಆಲಯವನ್ನು ಕಟ್ಟಿ ಮುಗಿಸಲಾಯಿತು.
EZR 6:16 ಆಗ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಸೆರೆಯಿಂದ ಬಂದ ಮಿಕ್ಕಾದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠಾಪಿಸಿದರು.
EZR 6:17 ದೇವರ ಆಲಯದ ಪ್ರತಿಷ್ಠಾಪನೆಗೋಸ್ಕರ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ, ನಾನೂರು ಕುರಿಮರಿಗಳನ್ನೂ, ಇಸ್ರಾಯೇಲ್ ಕುಲ ಗೋತ್ರಗಳ ಲೆಕ್ಕದ ಪ್ರಕಾರ, ಸಮಸ್ತ ಇಸ್ರಾಯೇಲರ ದೋಷಪರಿಹಾರ ಬಲಿಗಾಗಿ ಹನ್ನೆರಡು ಮೇಕೆಯ ಹೋತಗಳನ್ನೂ ಅರ್ಪಿಸಿದರು.
EZR 6:18 ಮೋಶೆಯ ಗ್ರಂಥದಲ್ಲಿ ಬರೆದ ಹಾಗೆ ಯೆರೂಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆಗೋಸ್ಕರ ಯಾಜಕರನ್ನು ಮತ್ತು ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.
EZR 6:19 ಇದಲ್ಲದೆ ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿವಸದಲ್ಲಿ ಪಸ್ಕವನ್ನು ಆಚರಿಸಿದರು.
EZR 6:20 ಯಾಜಕರೂ ಲೇವಿಯರೂ ಕೂಡ ಶುದ್ಧ ಮಾಡಿಕೊಂಡಿದ್ದರು. ಅವರೆಲ್ಲರು ಶುದ್ಧರಾದ ನಂತರ, ಲೇವಿಯರು ಸೆರೆಯಿಂದ ಬಂದವರೆಲ್ಲರಿಗೋಸ್ಕರವೂ, ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಯನ್ನು ವಧಿಸಿದರು.
EZR 6:21 ಸೆರೆಯಿಂದ ತಿರುಗಿ ಬಂದ ಇಸ್ರಾಯೇಲರು ತಮ್ಮ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರನ್ನು ಹುಡುಕಲು ದೇಶದ ಜನಾಂಗಗಳ ಅಶುದ್ಧತೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು, ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು,
EZR 6:22 ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು. ಏಕೆಂದರೆ ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವುದಕ್ಕೆ ಅಸ್ಸೀರಿಯ ದೇಶದ ಅರಸನ ಹೃದಯವನ್ನು, ಅವರ ಕಡೆಗೆ ಮನಪರಿವರ್ತಿಸಿದ್ದರಿಂದ ಯೆಹೋವ ದೇವರು ಅವರನ್ನು ಸಂತೋಷಪಡಿಸಿದರು.
EZR 7:1 ಈ ಕಾರ್ಯಗಳಾದ ತರುವಾಯ ಪಾರಸಿಯ ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಎಜ್ರನು ಬಾಬಿಲೋನಿನಿಂದ ಹೊರಟುಹೋದನು. ಇವನು ಸೆರಾಯನ ಮಗನು; ಇವನು ಅಜರ್ಯನ ಮಗನು; ಇವನು ಹಿಲ್ಕೀಯನ ಮಗನು;
EZR 7:2 ಇವನು ಶಲ್ಲೂಮನ ಮಗನು; ಇವನು ಚಾದೋಕನ ಮಗನು; ಇವನು ಅಹೀಟೂಬನ ಮಗನು;
EZR 7:3 ಇವನು ಅಮರ್ಯನ ಮಗನು; ಇವನು ಅಜರ್ಯನ ಮಗನು; ಇವನು ಮೆರಾಯೋತನ ಮಗನು;
EZR 7:4 ಇವನು ಜೆರಹ್ಯನ ಮಗನು; ಇವನು ಉಜ್ಜೀಯನ ಮಗನು; ಇವನು ಬುಕ್ಕೀಯ ಮಗನು;
EZR 7:5 ಇವನು ಅಬೀಷೂವನ ಮಗನು; ಇವನು ಫೀನೆಹಾಸನ ಮಗನು; ಇವನು ಎಲಿಯಾಜರನ ಮಗನು; ಇವನು ಮುಖ್ಯಯಾಜಕನಾದ ಆರೋನನ ಮಗನು.
EZR 7:6 ಈ ಎಜ್ರನು ಬಾಬಿಲೋನಿನಿಂದ ಬಂದನು, ಅವನು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರು ಕೊಟ್ಟ ಮೋಶೆಯ ನಿಯಮದಲ್ಲಿ ಪಾಂಡಿತ್ಯ ಪಡೆದ ನಿಯಮಶಾಸ್ತ್ರಿ ಆಗಿದ್ದನು. ಅವನ ಮೇಲೆ ಅವನ ದೇವರಾಗಿರುವ ಯೆಹೋವ ದೇವರ ಕೈ ಇದ್ದುದರಿಂದ, ಅವನು ಕೇಳಿದ್ದನ್ನೆಲ್ಲಾ ಅರಸನು ಕೊಟ್ಟನು.
EZR 7:7 ಅವನ ಸಂಗಡ ಇಸ್ರಾಯೇಲರಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ದೇವಾಲಯದ ಸೇವಕರಲ್ಲಿಯೂ ಕೆಲವರು ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಹೋದರು.
EZR 7:8 ಅರಸನ ಏಳನೆಯ ವರ್ಷದ, ಐದನೆಯ ತಿಂಗಳಲ್ಲಿ ಎಜ್ರನು ಯೆರೂಸಲೇಮಿಗೆ ಬಂದನು.
EZR 7:9 ಅವನು ಮೊದಲನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಬಾಬಿಲೋನಿನಿಂದ ಹೊರಟು, ಐದನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆರೂಸಲೇಮಿಗೆ ಬಂದು ಸೇರಿದನು. ಏಕೆಂದರೆ ಅವನ ದೇವರಾದ ಯೆಹೋವ ದೇವರ ಹಸ್ತವು ಅವನ ಮೇಲಿತ್ತು.
EZR 7:10 ಏಕೆಂದರೆ ಎಜ್ರನು ಯೆಹೋವ ದೇವರ ನಿಯಮವನ್ನು ಅಭ್ಯಾಸ ಮಾಡುವುದಕ್ಕೂ ಅದನ್ನು ಕೈಗೊಂಡು ನಡೆಯುವುದಕ್ಕೂ ಇಸ್ರಾಯೇಲರಿಗೆ ಅದರ ತೀರ್ಪುಗಳನ್ನು ಹಾಗೂ ನಿಯಮಗಳನ್ನು ಬೋಧಿಸುವುದಕ್ಕೂ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನು.
EZR 7:11 ಯಾಜಕನು, ನಿಯಮಶಾಸ್ತ್ರಿಯು ಹಾಗೂ ಇಸ್ರಾಯೇಲರಿಗೆ ಕೊಡಲಾದ ಯೆಹೋವ ದೇವರ ಆಜ್ಞಾಸೂತ್ರಗಳಲ್ಲಿ ವಿದ್ವಾಂಸನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ನಕಲು ಇದು:
EZR 7:12 ರಾಜಾಧಿರಾಜನಾದ ಅರ್ತಷಸ್ತನು, ಯಾಜಕನೂ, ಪರಲೋಕ ದೇವರ ನಿಯಮದಲ್ಲಿ ಪ್ರವೀಣನೂ ಆದ ಎಜ್ರನಿಗೆ, ವಂದನೆಗಳು.
EZR 7:13 ನನ್ನ ರಾಜ್ಯದಲ್ಲಿರುವ ಇಸ್ರಾಯೇಲರಲ್ಲಿ, ಯಾಜಕರಲ್ಲಿ ಹಾಗು ಲೇವಿಯರಲ್ಲಿ ಯಾರಿಗೆ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸಿದೆಯೋ, ಅವರೆಲ್ಲರು ನಿನ್ನೊಂದಿಗೆ ಹೋಗಬಹುದೆಂದು ಅಪ್ಪಣೆ ಮಾಡುತ್ತೇನೆ.
EZR 7:14 ನೀನು ಹೋಗಿ ಯೆಹೂದದವರ ಮತ್ತು ಯೆರೂಸಲೇಮಿನವರ ಆಚರಣೆಯು ನಿನ್ನ ಕೈಯಲ್ಲಿರುವ ನಿನ್ನ ದೇವರ ನಿಯಮ ಗ್ರಂಥಕ್ಕೆ ಅನುಗುಣವಾಗಿ ಇದೆಯೋ, ಇಲ್ಲವೋ ವಿಮರ್ಶೆ ಮಾಡಬೇಕು.
EZR 7:15 ಅರಸನು ಮತ್ತು ಅವನ ಮಂತ್ರಿಗಳು ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರವನ್ನು,
EZR 7:16 ಬಾಬಿಲೋನ್ ಸಂಸ್ಥಾನದಲ್ಲಿ ಸಿಕ್ಕುವ ಬೆಳ್ಳಿಬಂಗಾರವನ್ನು ಹಾಗು ಇಸ್ರಾಯೇಲ್ ಜನ ಸಾಮಾನ್ಯರೂ, ಯಾಜಕರೂ, ಯೆರೂಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವಂತ ಇಚ್ಛೆಯಿಂದ ಕೊಡುವ ಕಾಣಿಕೆಗಳನ್ನು ಅಲ್ಲಿಗೆ ಒಪ್ಪಿಸಬೇಕು. ಹೀಗೆಂದು ತಿಳಿಸಿ, ನಾನೂ ಮತ್ತು ನನ್ನ ಏಳುಮಂದಿ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತಿದ್ದೇವೆ.
EZR 7:17 ನೀನು ಈ ಹಣದಿಂದ ಹೋರಿ, ಟಗರು, ಕುರಿ, ಇವುಗಳನ್ನೂ ಮತ್ತು ಇವುಗಳೊಡನೆ ಸಮರ್ಪಣೆಯಾಗತಕ್ಕ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಕೊಂಡುಕೊಂಡು, ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಬಲಿಪೀಠದ ಮೇಲೆ ಸಮರ್ಪಿಸಬೇಕು.
EZR 7:18 ಉಳಿದ ಬೆಳ್ಳಿಬಂಗಾರವನ್ನು, ನಿಮ್ಮ ದೇವರ ಚಿತ್ತದ ಪ್ರಕಾರ ನಿನಗೂ, ನಿನ್ನ ಸಹೋದರರಿಗೂ ಸರಿತೋರುವಂತೆ ವೆಚ್ಚ ಮಾಡಿರಿ.
EZR 7:19 ನಿನ್ನ ದೇವರ ಆಲಯದ ಆರಾಧನೆಗಾಗಿ ನಿನ್ನ ವಶಕ್ಕೆ ಕೊಡುವ ಸಾಮಗ್ರಿಗಳನ್ನು ಯೆರೂಸಲೇಮಿನ ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗು.
EZR 7:20 ನಿನ್ನ ದೇವರ ಆಲಯಕ್ಕಾಗಿ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ, ಅದನ್ನು ರಾಜ ಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು.
EZR 7:21 “ಅರ್ತಷಸ್ತ ರಾಜನಾದ ನಾನು, ಯೂಫ್ರೇಟೀಸ್ ನದಿ ಆಚೆಯ ಪ್ರಾಂತಗಳ ಭಂಡಾರ ಮುಖ್ಯಸ್ಥರಿಗೆ ಆಜ್ಞಾಪಿಸುವುದೇನೆಂದರೆ ಯಾಜಕನೂ, ಪರಲೋಕ ದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು.
EZR 7:22 3.4 ಮೆಟ್ರಿಕ್ ಟನ್ ಬೆಳ್ಳಿಯನ್ನು, 16 ಮೆಟ್ರಿಕ್ ಟನ್ ಗೋಧಿಯನ್ನು, 2,200 ಲೀಟರ್ ದ್ರಾಕ್ಷಾರಸವನ್ನು, 2,200 ಲೀಟರ್ ಎಣ್ಣೆಯನ್ನು, ಇಷ್ಟರ ಮಟ್ಟಿಗೂ ಕೊಡಬೇಕು. ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
EZR 7:23 ಅರಸನ ಮತ್ತು ಅವನ ಸಂತಾನದವರ ರಾಜ್ಯದ ಮೇಲೆ ದೇವ ಕೋಪವುಂಟಾಗದ ಹಾಗೆ, ನೀವು ಪರಲೋಕ ದೇವರ ಆಜ್ಞಾನುಸಾರ ಬೇಕಾದುದನ್ನೆಲ್ಲಾ ಯಾವ ಕೊರತೆಯೂ ಇಲ್ಲದೆ ಶ್ರದ್ಧೆಯಿಂದ ಒದಗಿಸಿಕೊಡಬೇಕು.
EZR 7:24 ಇದಲ್ಲದೆ, ಆ ದೇವಾಲಯದ ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ಚಾಕರ ಮುಂತಾದ ಸೇವಕರಲ್ಲಿ ಯಾವನಿಂದಲೂ ಶುಲ್ಕ, ತೆರಿಗೆ, ಸುಂಕ, ಇವುಗಳನ್ನು ವಸೂಲಿ ಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.”
EZR 7:25 “ಎಜ್ರನೇ, ನಿನ್ನಲ್ಲಿರುವ ನಿನ್ನ ದೇವರ ಜ್ಞಾನಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ, ದಂಡಾಧಿಕಾರಿಯನ್ನೂ ನೇಮಿಸು. ಅವರು ನದಿಯಾಚೆಯ ಇಸ್ರಾಯೇಲರಲ್ಲಿ, ನಿನ್ನ ದೇವರ ನಿಯಮಗಳನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀನು ಅದನ್ನು ಕಲಿಸಬೇಕು.
EZR 7:26 ನಿನ್ನ ದೇವರಾಜ್ಞೆಯನ್ನೂ, ರಾಜಾಜ್ಞೆಯನ್ನೂ ಕೈಗೊಳ್ಳದವರಿಗೆಲ್ಲಾ ಮರಣದಂಡನೆ ವಿಧಿಸುವುದು, ಗಡಿಪಾರು ಮಾಡುವುದು, ದಂಡ ತೆರಿಸುವುದು, ಬೇಡಿ ಹಾಕುವುದು, ಈ ವಿಧವಾದ ಶಿಕ್ಷೆಯನ್ನು ತಪ್ಪದೆ ನೀಡಬೇಕು.”
EZR 7:27 ಆಗ ಎಜ್ರನು, “ನಮ್ಮ ತಂದೆಗಳ ದೇವರಾಗಿರುವ ಯೆಹೋವ ದೇವರು ಸ್ತುತಿಹೊಂದಲಿ! ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಮಹಿಮೆಯನ್ನು ತರುವಂತೆ, ಅರಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟಿದ್ದಾರೆ.
EZR 7:28 ಅರಸನ ಮುಂದೆಯೂ, ಅವನ ಸಲಹೆಗಾರರ ಮುಂದೆಯೂ, ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆತೋರಿಸಿದ್ದಾರೆ. ಹೀಗೆಯೇ ನನ್ನ ದೇವರಾಗಿರುವ ಯೆಹೋವ ದೇವರ ಹಸ್ತವು ನನ್ನ ಮೇಲೆ ಇದ್ದುದರಿಂದ, ನಾನು ಧೈರ್ಯಗೊಂಡು ಇಸ್ರಾಯೇಲಿನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು,” ಎಂದನು.
EZR 8:1 ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಬಾಬಿಲೋನಿನಿಂದ ನನ್ನ ಸಂಗಡ ಹೊರಟು ಬಂದವರ ಕುಟುಂಬಗಳಲ್ಲಿ ಮುಖ್ಯಸ್ಥರು ಯಾರೆಂದರೆ:
EZR 8:2 ಫೀನೆಹಾಸನ ವಂಶಜರಲ್ಲಿ ಗೇರ್ಷೋಮನೂ, ಈತಾಮಾರನ ವಂಶಜರಲ್ಲಿ ದಾನಿಯೇಲನೂ; ದಾವೀದನ ವಂಶಜರಲ್ಲಿ ಹಟ್ಟೂಷನೂ.
EZR 8:3 ಇವನು ಶೆಕನ್ಯನ ವಂಶಜನು. ಪರೋಷಿನ ವಂಶಜರಲ್ಲಿ ಜೆಕರ್ಯನೂ, ಅವನ ಸಂಗಡ ವಂಶಜರಲ್ಲಿ 150 ಮಂದಿ ಗಂಡಸರು.
EZR 8:4 ಪಹತ್ ಮೋವಾಬನ ವಂಶಜರಲ್ಲಿ ಜೆರಹ್ಯನ ಮಗನಾದ ಎಲಿಹೋಯೇನೈನೂ, ಅವನ ಸಂಗಡ 200 ಮಂದಿ ಗಂಡಸರು.
EZR 8:5 ಜತ್ತುವಿನ ವಂಶಜರಲ್ಲಿ ಯಹಜಿಯೇಲನ ಮಗನಾದ ಶೆಕನ್ಯನು ಮತ್ತು ಅವನ ಸಂಗಡ 300 ಮಂದಿ ಗಂಡಸರು.
EZR 8:6 ಅದೀನನ ವಂಶಜರಲ್ಲಿ ಯೋನಾತಾನನ ಮಗ ಏಬೆದನೂ, ಅವನ ಸಂಗಡ 50 ಮಂದಿ ಗಂಡಸರು.
EZR 8:7 ಏಲಾಮನ ವಂಶಜರಲ್ಲಿ ಅತಲ್ಯನ ಮಗ ಯೆಶಾಯನೂ, ಅವನ ಸಂಗಡ 70 ಮಂದಿ ಗಂಡಸರು.
EZR 8:8 ಶೆಫಟ್ಯನ ವಂಶಜರಲ್ಲಿ ಮೀಕಾಯೇಲನ ಮಗ ಜೆಬದ್ಯನೂ, ಅವನ ಸಂಗಡ 80 ಮಂದಿ ಗಂಡಸರು.
EZR 8:9 ಯೋವಾಬನ ವಂಶಜರಲ್ಲಿ ಯೆಹೀಯೇಲನ ಮಗ ಓಬದ್ಯನೂ, ಅವನ ಸಂಗಡ 218 ಮಂದಿ ಗಂಡಸರು.
EZR 8:10 ಬಾನೀಯ ವಂಶಜರಲ್ಲಿ ಯೋಸಿಫ್ಯನ ಮಗ ಶೆಲೋಮೀತನು ಮತ್ತು ಅವನ ಸಂಗಡ 160 ಮಂದಿ ಗಂಡಸರು.
EZR 8:11 ಬೇಬೈನ ವಂಶಜರಲ್ಲಿ ಬೆಬಾಯಿಯ ಮಗ ಜೆಕರ್ಯನು; ಅವನ ಸಂಗಡ 28 ಮಂದಿ ಗಂಡಸರು.
EZR 8:12 ಅಜ್ಗಾದನ ವಂಶಜರಲ್ಲಿ ಹಕ್ಕಾಟಾನನ ಮಗ ಯೋಹಾನಾನನೂ, ಅವನ ಸಂಗಡ 110 ಮಂದಿ ಗಂಡಸರು;
EZR 8:13 ಅದೋನೀಕಾಮಿನ ವಂಶಜರಲ್ಲಿ ಕಡೇ ಪುತ್ರರಾದ ಎಲೀಫೆಲೆಟ್, ಯೆವಿಯೇಲನು, ಶೆಮಾಯನು ಎಂಬ ಹೆಸರುಳ್ಳವರೂ, ಅವರ ಸಂಗಡ 60 ಮಂದಿ ಗಂಡಸರು;
EZR 8:14 ಬಿಗ್ವೈ ವಂಶಜರಲ್ಲಿ ಜಕ್ಕೂರನ ಮಗನಾದ ಊತೈ ಮತ್ತು ಅವನ ಸಂಗಡ 70 ಮಂದಿ ಗಂಡಸರು.
EZR 8:15 ಇವರನ್ನು ನಾನು ಅಹಾವಕ್ಕೆ ಹರಿಯುವ ನದಿಯ ಬಳಿಯಲ್ಲಿ ಕೂಡಿಸಿಕೊಂಡು, ಅಲ್ಲಿ ಮೂರು ದಿವಸ ಡೇರೆಗಳಲ್ಲಿ ವಾಸಿಸಿದ್ದೆವು. ನಾನು ಜನರನ್ನೂ, ಯಾಜಕರನ್ನೂ ಶೋಧಿಸಿ ನೋಡುವಾಗ, ಲೇವಿಯರಲ್ಲಿ ಒಬ್ಬನೂ ಅಲ್ಲಿ ಸಿಕ್ಕಲಿಲ್ಲ.
EZR 8:16 ಆಗ ನಾನು ಎಲೀಯೆಜೆರನು, ಅರೀಯೇಲನು, ಶೆಮಾಯನು, ಎಲ್ನತಾನನು, ಯಾರೀಬನು, ಎಲ್ನಾತಾನನು, ನಾತಾನನು, ಜೆಕರ್ಯನು, ಮೆಷುಲ್ಲಾಮನು ಎಂಬ ಪ್ರಮುಖರನ್ನೂ, ಯೋಯಾರೀಬನು, ಎಲ್ನತಾನನು ಎಂಬ ಗ್ರಹಿಕೆಯುಳ್ಳವರನ್ನೂ ಕರೆಕಳುಹಿಸಿದೆನು.
EZR 8:17 ಕಾಸಿಫ್ಯದಲ್ಲಿರುವ ಅಧಿಪತಿಯಾದ ಇದ್ದೋನನ ಬಳಿಗೆ ಅಪ್ಪಣೆಕೊಟ್ಟು ಕಳುಹಿಸಿ, ಅವರು ನಮ್ಮ ದೇವರ ಆಲಯಕ್ಕೋಸ್ಕರ ಸೇವಕರನ್ನು ತರುವ ಹಾಗೆ ಅವರು ಕಸಿಪ್ಯವೆಂಬ ಸ್ಥಳದಲ್ಲಿರುವ ಇದ್ದೋವಿಗೂ, ಅವನ ಸಹೋದರರಾದ ನೆತಿನಿಯರಿಗೂ ಹೇಳಬೇಕಾದದ್ದನ್ನು ತಿಳಿಸಿದೆನು.
EZR 8:18 ನಮ್ಮ ದೇವರ ಕೃಪಾಹಸ್ತವು ನಮ್ಮ ಮೇಲೆ ಇದ್ದುದರಿಂದ, ಅವರು ಇಸ್ರಾಯೇಲಿನ ಮಗನಾಗಿರುವ ಲೇವಿಯ ಮಗ ಮಹ್ಲೀಯ ಪುತ್ರರಲ್ಲಿ ಬುದ್ಧಿವಂತನಾದ ಶೇರೇಬ್ಯನೂ, ಅವನ ಪುತ್ರರೂ, ಸಹೋದರರೂ ಆದ ಹದಿನೆಂಟು ಮಂದಿಯನ್ನೂ,
EZR 8:19 ಹಷಬ್ಯನೂ, ಅವನ ಸಂಗಡ ಮೆರಾರೀಯ ಪುತ್ರರಲ್ಲಿ ಯೆಶಾಯನೂ, ಅವನ ಸಹೋದರರೂ, ಅವರ ಪುತ್ರರೂ ಆದ ಇಪ್ಪತ್ತು ಮಂದಿಯನ್ನೂ,
EZR 8:20 ದಾವೀದನೂ, ಪ್ರಧಾನರೂ, ಲೇವಿಯರನ್ನು ಸೇವಿಸುವುದಕ್ಕೆ ನೇಮಿಸಿದ ದೇವಾಲಯದ ಸೇವಕರಲ್ಲಿ ಇನ್ನೂರ ಇಪ್ಪತ್ತು ಮಂದಿ ಸೇವಕರನ್ನೂ, ನಮ್ಮ ಬಳಿಗೆ ಕರೆದುಕೊಂಡು ಬಂದರು. ಅವರೆಲ್ಲರ ಹೆಸರುಗಳು ದಾಖಲೆಯಾಗಿದ್ದವು.
EZR 8:21 ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುವುದಕ್ಕೂ, ನಮಗೂ ನಮ್ಮ ಮಕ್ಕಳಿಗೂ, ನಮ್ಮ ಎಲ್ಲಾ ಸ್ಥಿತಿಗೂ ಅವರಿಂದ ಸರಿಯಾದ ಮಾರ್ಗವನ್ನು ಹುಡುಕುವುದಕ್ಕೂ, ನಾನು ಅಲ್ಲಿ ಅಹಾವ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಪ್ರಕಟಿಸಿದೆನು.
EZR 8:22 “ನಮ್ಮ ದೇವರ ಕೃಪಾಹಸ್ತವು ಅವರನ್ನು ಹುಡುಕುವವರೆಲ್ಲರ ಮೇಲೆಯೂ ಇದೆ, ಆದರೆ ಅವರ ಕೋಪವು ಅವರನ್ನು ತ್ಯಜಿಸುವ ಎಲ್ಲರ ವಿರುದ್ಧವಾಗಿರುತ್ತದೆ,” ಎಂದು ನಾವು ಅರಸನಿಗೆ ಹೇಳಿದ್ದರಿಂದ, ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಸೈನ್ಯವನ್ನೂ ಅಶ್ವಬಲವನ್ನೂ ಅರಸನಿಂದ ಕೇಳಲು ನಾಚಿಕೆಪಟ್ಟೆವು.
EZR 8:23 ಆದ್ದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ದೇವರು ನಮ್ಮ ವಿಜ್ಞಾಪನೆಯನ್ನು ಕೇಳಿದರು.
EZR 8:24 ನಾನು ಯಾಜಕರ ಪ್ರಮುಖರಲ್ಲಿ ಹನ್ನೆರಡು ಮಂದಿಯಾಗಿರುವ ಶೇರೇಬ್ಯ, ಹಷಬ್ಯ ಇವರ ಸಂಗಡ ಅವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಪ್ರತ್ಯೇಕಿಸಿ
EZR 8:25 ಅರಸನೂ, ಅವನ ಸಲಹೆಗಾರರೂ, ಅವನ ಪ್ರಧಾನರೂ ಅಲ್ಲಿದ್ದ ಎಲ್ಲಾ ಇಸ್ರಾಯೇಲರೂ ನಮ್ಮ ದೇವರ ಆಲಯಕ್ಕೆ ಅರ್ಪಿಸಿದ ಕಾಣಿಕೆಯಾದ ಬೆಳ್ಳಿಯನ್ನೂ, ಬಂಗಾರವನ್ನೂ, ಸಲಕರಣೆಗಳನ್ನೂ ಅವರಿಗೆ ತೂಕಮಾಡಿ ಕೊಟ್ಟೆನು.
EZR 8:26 ಅವರ ಕೈಗೆ ಕೊಟ್ಟ ಸಲಕರಣೆಗಳ ತೂಕ 22 ಬೆಳ್ಳಿ ಮೆಟ್ರಿಕ್ ಟನ್; ಬೆಳ್ಳಿಯ ನೂರು ಸಾಮಗ್ರಿಗಳ ತೂಕ 3.4 ಮೆಟ್ರಿಕ್ ಟನ್; ಬಂಗಾರ 3.4 ಮೆಟ್ರಿಕ್ ಟನ್.
EZR 8:27 ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ 8.4 ಕಿಲೋಗ್ರಾಂ, ಇವುಗಳಲ್ಲದೆ ಶ್ರೇಷ್ಠವಾದ ಕಂಚಿನ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.
EZR 8:28 ನಾನು ಅವರಿಗೆ, “ನೀವು ಯೆಹೋವ ದೇವರಿಗೆ ಪ್ರತಿಷ್ಠಿತರಾಗಿದ್ದೀರಿ. ಈ ವಸ್ತುಗಳು ಹಾಗೆಯೇ ಪ್ರತಿಷ್ಠಿತವು. ಈ ಬೆಳ್ಳಿ ಬಂಗಾರವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರಿಗೆ ಸಮರ್ಪಿತವಾದ ಕಾಣಿಕೆ.
EZR 8:29 ನೀವು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ, ಪ್ರಧಾನರ ಮುಂದೆಯೂ ಇಸ್ರಾಯೇಲ್ ಕುಟುಂಬಗಳ ಪ್ರಧಾನರ ಮುಂದೆಯೂ ತೂಕಮಾಡುವವರೆಗೆ ಜಾಗ್ರತೆಯಾಗಿ ಕಾಪಾಡಿರಿ,” ಎಂದೆನು.
EZR 8:30 ಹಾಗೆಯೇ ಯಾಜಕರೂ, ಲೇವಿಯರೂ ತೂಕದ ಹಾಗೆ ಬೆಳ್ಳಿಯನ್ನೂ, ಬಂಗಾರವನ್ನೂ, ವಸ್ತುಗಳನ್ನೂ ಯೆರೂಸಲೇಮಿನಲ್ಲಿರುವ ನಮ್ಮ ದೇವರ ಆಲಯಕ್ಕೆ ತೆಗೆದುಕೊಂಡು ಬಂದರು.
EZR 8:31 ನಾವು ಯೆರೂಸಲೇಮಿಗೆ ಹೋದ ಮೊದಲನೆಯ ತಿಂಗಳ, ಹನ್ನೆರಡನೆಯ ದಿವಸದಲ್ಲಿ ಅಹಾವ ನದಿಯನ್ನು ಬಿಟ್ಟು ಹೊರಟೆವು. ನಮ್ಮ ದೇವರ ಹಸ್ತವು ನಮ್ಮ ಮೇಲೆ ಇದ್ದುದರಿಂದ, ದೇವರು ಶತ್ರುವಿನ ಕೈಗೂ, ಮಾರ್ಗದಲ್ಲಿ ಹೊಂಚುಹಾಕುವವರ ಕೈಗೂ ನಮ್ಮನ್ನು ತಪ್ಪಿಸಿಬಿಟ್ಟರು.
EZR 8:32 ನಾವು ಯೆರೂಸಲೇಮಿಗೆ ಬಂದು, ಅಲ್ಲಿ ಮೂರು ದಿವಸ ವಿಶ್ರಮಿಸಿಕೊಂಡೆವು.
EZR 8:33 ತರುವಾಯ ನಾಲ್ಕನೆಯ ದಿವಸದಲ್ಲಿ ಆ ಬೆಳ್ಳಿಯೂ, ಬಂಗಾರವೂ, ಸಲಕರಣೆಗಳೂ ನಮ್ಮ ದೇವರ ಆಲಯದಲ್ಲಿ ಯಾಜಕರಾಗಿರುವ ಊರೀಯನ ಮಗ ಮೆರೇಮೋತನ ಕೈಯಿಂದ ತೂಕಮಾಡಿ ಕೊಟ್ಟೆವು. ಅವನ ಸಂಗಡ ಲೇವಿಯರಾದ ಫೀನೆಹಾಸನ ಮಗನಾಗಿರುವ ಎಲಿಯಾಜರನೂ, ಯೇಷೂವನ ಮಗ ಯೋಜಾಬಾದನೂ, ಬಿನ್ನೂಯ್ ಮಗ ನೋವದ್ಯನೂ ಇದ್ದರು.
EZR 8:34 ಅದರದರ ಲೆಕ್ಕದ ಪ್ರಕಾರವೂ, ತೂಕದ ಪ್ರಕಾರವೂ ಎಲ್ಲವುಗಳ ತೂಕವು ತಕ್ಷಣವೇ ಲಿಖಿತವಾಯಿತು.
EZR 8:35 ಸೆರೆಯಿಂದ ಮರಳಿ ಬಂದವರು ಇಸ್ರಾಯೇಲ್ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲರಿಗೋಸ್ಕರ ಹನ್ನೆರಡು ಹೋರಿಗಳನ್ನೂ, ತೊಂಬತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ದೋಷಪರಿಹಾರಕ್ಕಾಗಿ ಹನ್ನೆರಡು ಹೋತಗಳನ್ನೂ ಅರ್ಪಿಸಿದರು. ಇವೆಲ್ಲಾ ಯೆಹೋವ ದೇವರಿಗೆ ದಹನಬಲಿಯಾಗಿತ್ತು.
EZR 8:36 ಅವರು ಅರಸನ ಆಜ್ಞೆಗಳನ್ನು ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ, ಯಜಮಾನರಿಗೂ ಒಪ್ಪಿಸಿದರು. ಆಗ ಅವರು ಜನರಿಗೂ, ದೇವರ ಆಲಯಕ್ಕೂ ಸಹಾಯ ಮಾಡಿದರು.
EZR 9:1 ಈ ಸಂಗತಿಗಳನ್ನು ಮಾಡಿದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು, “ಇಸ್ರಾಯೇಲರೂ, ಯಾಜಕರೂ, ಲೇವಿಯರೂ ತಮ್ಮ ನೆರೆಯವರಿಂದ ಪ್ರತ್ಯೇಕಿಸಿಕೊಳ್ಳಲಿಲ್ಲ. ಅವರು ಕಾನಾನ್ಯರು, ಹಿತ್ತಿಯರು, ಪೆರಿಜೀಯರು, ಯೆಬೂಸಿಯರು, ಅಮ್ಮೋನ್ಯರು, ಮೋವಾಬ್ಯರು, ಈಜಿಪ್ಟರು, ಅಮೋರಿಯರು ಇವರ ಅಸಹ್ಯ ಸಂಗತಿಗಳ ಪದ್ಧತಿಗಳಂತೆ ನಡೆಯುತ್ತಾ ಇದ್ದಾರೆ.
EZR 9:2 ಇಸ್ರಾಯೇಲರು ತಮಗೂ, ತಮ್ಮ ಪುತ್ರರಿಗೂ ಅವರ ಪುತ್ರಿಯರನ್ನು ತೆಗೆದುಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ. ನಿಶ್ಚಯವಾಗಿ ಪ್ರಧಾನರು ಮತ್ತು ಅಧಿಕಾರಸ್ಥರು ಈ ಅಪನಂಬಿಗಸ್ತಿಕೆಗೆ ಮುಂದಾಳುಗಳಾದರು,” ಎಂದು ತಿಳಿಸಿದರು.
EZR 9:3 ನಾನು ಇದನ್ನು ಕೇಳಿದಾಗ ನನ್ನ ವಸ್ತ್ರವನ್ನೂ, ನನ್ನ ನಿಲುವಂಗಿಯನ್ನೂ ಹರಿದು ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕಿತ್ತು, ಸ್ತಬ್ಧನಾಗಿ ಕುಳಿತುಕೊಂಡೆನು.
EZR 9:4 ಆಗ ಸೆರೆಯಿಂದ ಬಂದವರ ಅಪರಾಧಕ್ಕೋಸ್ಕರ ಇಸ್ರಾಯೇಲ್ ದೇವರ ಮಾತುಗಳಿಗೆ ಹೆದರಿಕೊಂಡಿದ್ದ ಮನುಷ್ಯರೆಲ್ಲರೂ, ನನ್ನ ಬಳಿಗೆ ಕೂಡಿಬಂದರು. ಆದರೆ ನಾನು ಸಾಯಂಕಾಲದ ಬಲಿಯನ್ನು ಅರ್ಪಿಸುವವರೆಗೆ ಸ್ತಬ್ಧನಾಗಿ ಕುಳಿತುಕೊಂಡಿದ್ದೆನು.
EZR 9:5 ಆದರೆ ಸಾಯಂಕಾಲದ ಬಲಿಯನ್ನರ್ಪಿಸುವಾಗ, ನಾನು ನನ್ನ ಶೋಕ ಸ್ಥಿತಿಯಿಂದ ಎದ್ದು, ನನ್ನ ವಸ್ತ್ರವನ್ನೂ, ನನ್ನ ನಿಲುವಂಗಿಯನ್ನೂ ಹರಿದುಕೊಂಡವನಾಗಿ, ನನ್ನ ಮೊಣಕಾಲುಗಳನ್ನೂರಿ, ನನ್ನ ಕೈಗಳನ್ನು ನನ್ನ ದೇವರಾಗಿರುವ ಯೆಹೋವ ದೇವರ ಮುಂದೆ ಚಾಚಿ,
EZR 9:6 ಪ್ರಾರ್ಥಿಸಿದೆನು: “ನನ್ನ ದೇವರೇ, ನಾನು ನನ್ನ ಮುಖವನ್ನು ನಿಮ್ಮ ಮುಂದೆ ಎತ್ತಲಾರದೆ, ಲಜ್ಜೆಯಿಂದ ನಾಚಿಕೆಪಡುತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಮೀರಿ ಬೆಳೆದಿವೆ. ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿವೆ.
EZR 9:7 ನಮ್ಮ ತಂದೆಗಳ ದಿವಸಗಳು ಮೊದಲ್ಗೊಂಡು ಈ ದಿವಸದವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಅನ್ಯದೇಶಗಳ ಅರಸರ ಕೈಗೆ ಸಿಕ್ಕಿಬಿದ್ದೆವು. ನಮ್ಮ ಅಕ್ರಮಗಳಿಗೋಸ್ಕರ ನಾವೂ, ನಮ್ಮ ಅರಸರೂ ನಮ್ಮ ಯಾಜಕರೂ ಖಡ್ಗವೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ.
EZR 9:8 “ಈಗ ನಮ್ಮ ಯೆಹೋವ ದೇವರೇ, ಸ್ವಲ್ಪ ಹೊತ್ತು ನಮಗೆ ದಯೆತೋರಿ ನಮ್ಮ ದಾಸತ್ವದಿಂದ ನಮಗೆ ಬಿಡುಗಡೆ ಕೊಟ್ಟಿದ್ದೀರಿ. ನಮ್ಮ ಕಣ್ಣುಗಳನ್ನು ಬೆಳಗಿಸಿ, ತಮ್ಮ ಪರಿಶುದ್ಧ ಸ್ಥಾನದಲ್ಲಿ ನೆಲೆಗೊಳಿಸುವಂತೆ ಮಾಡಿದ್ದೀರಿ
EZR 9:9 ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸಲು ನಮಗೆ ನವಜೀವನ ಕೊಟ್ಟು, ಯೆಹೂದ ಮತ್ತು ಯೆರೂಸಲೇಮಿನಲ್ಲಿ ನಮಗೆ ಸಂರಕ್ಷಣೆಯ ಗೋಡೆ ಸಿಗುವಂತೆ, ಪಾರಸಿಯ ರಾಜರ ಸಮ್ಮುಖದಲ್ಲಿ ನಮಗೆ ದಯೆಯನ್ನು ದಯಪಾಲಿಸಿದ್ದೀರಿ.
EZR 9:10 “ಆದರೆ ಈಗ ನಮ್ಮ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ನಿಮ್ಮ ಆಜ್ಞೆಗಳನ್ನು ನಾವು ತೊರೆದಿದ್ದೇವೆ.
EZR 9:11 ನಿಮ್ಮ ಸೇವಕರಾದ ಪ್ರವಾದಿಗಳ ಮುಖಾಂತರ ನೀವು ಆ ನಿಮ್ಮ ಆಜ್ಞೆಗಳನ್ನು ಕೊಟ್ಟಿದ್ದೀರಿ. ‘ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ದೇಶವು, ಆ ದೇಶಗಳ ಜನರ ಅಶುದ್ಧತ್ವದಿಂದ ಮೈಲಿಗೆಯಾದ ದೇಶವಾಗಿದೆ. ಆ ಜನರು ತಮ್ಮ ಅಸಹ್ಯ ಅಭ್ಯಾಸಗಳಿಂದ ಅದನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯವರೆಗೂ ತುಂಬಿಸಿದ್ದಾರೆ.
EZR 9:12 ಆದ್ದರಿಂದ ನೀವು ಪ್ರಬಲವಾಗಿ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಮಕ್ಕಳಿಗೆ ಶಾಶ್ವತ ಸ್ವಾಸ್ತ್ಯವನ್ನಾಗಿ ಕೊಡುವ ಹಾಗೆ ನೀವು ನಿಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆಮಾಡಿಕೊಡಬೇಡಿರಿ. ಅವರ ಪುತ್ರಿಯರನ್ನು ನಿಮ್ಮ ಪುತ್ರರಿಗೆ ತೆಗೆದುಕೊಳ್ಳಬೇಡಿರಿ. ಅವರ ಸಮಾಧಾನವನ್ನೂ, ಅವರ ಮೇಲನ್ನೂ ಹುಡುಕಲೇ ಬೇಡಿರಿ,’ ಎಂದು ದೇವರೇ ನಮಗೆ ಹೇಳಿದಿರಲ್ಲವೇ?
EZR 9:13 “ನಮ್ಮ ದುಷ್ಕಾರ್ಯ ಹಾಗೂ ನಮ್ಮ ಮಹಾ ಅಪರಾಧಕ್ಕಾಗಿ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ, ನಮ್ಮ ದೇವರಾಗಿರುವ ನೀವು ನಮ್ಮ ಪಾಪಗಳಿಗಿಂತ ಕಡಿಮೆ ಶಿಕ್ಷೆ ನೀಡಿದ್ದೀರಿ ಮತ್ತು ನಮ್ಮಲ್ಲಿ ಈ ರೀತಿಯಾಗಿ ಇಷ್ಟುಮಂದಿಯನ್ನು ಉಳಿಸಿದ್ದೀರಿ.
EZR 9:14 ನಾವು ನಿಮ್ಮ ಆಜ್ಞೆಗಳನ್ನು ಪುನಃ ಮೀರಿ ಅಸಹ್ಯ ಅಭ್ಯಾಸಕರಾದ ಈ ಜನರ ಸಂಗಡ ವಿವಾಹ ಸಂಬಂಧ ಮಾಡಬಹುದೇ? ಹಾಗೆ ಮಾಡಿದರೆ, ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದಂತೆ ದಂಡಿಸಲು, ನೀವು ನಮ್ಮ ಮೇಲೆ ಕೋಪಗೊಳ್ಳುವುದು ಯೋಗ್ಯವೇ?
EZR 9:15 ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರೇ, ನೀವು ನೀತಿವಂತರು! ನಾವು ಇಂದು ತಪ್ಪಿಸಿಕೊಂಡು ಉಳಿದಿದ್ದೇವೆ. ನಾವು ನಮ್ಮ ಅಪರಾಧಗಳ ನಿಮಿತ್ತ ನಿಮ್ಮ ಮುಂದೆ ನಿಲ್ಲಲು ಯೋಗ್ಯರಲ್ಲದಿದ್ದರೂ, ನಮ್ಮ ಅಪರಾಧಗಳೊಂದಿಗೆ ನಿಮ್ಮ ಮುಂದೆ ನಿಂತಿದ್ದೇವೆ,” ಎಂದು ಪ್ರಾರ್ಥನೆಮಾಡಿದೆ.
EZR 10:1 ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.
EZR 10:2 ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು.
EZR 10:3 ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ.
EZR 10:4 ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು.
EZR 10:5 ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
EZR 10:6 ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು.
EZR 10:7 ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು.
EZR 10:8 ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು.
EZR 10:9 ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.
EZR 10:10 ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ.
EZR 10:11 ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು.
EZR 10:12 ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು.
EZR 10:13 ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.
EZR 10:14 ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.
EZR 10:15 ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು.
EZR 10:16 ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು.
EZR 10:17 ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು.
EZR 10:18 ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು.
EZR 10:19 ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು.
EZR 10:20 ಇಮ್ಮೇರನ ವಂಶಜರಲ್ಲಿ: ಹನಾನೀ, ಜೆಬದ್ಯ.
EZR 10:21 ಹಾರಿಮನ ವಂಶಜರಲ್ಲಿ: ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.
EZR 10:22 ಪಷ್ಹೂರನ ವಂಶಜರಲ್ಲಿ: ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ.
EZR 10:23 ಲೇವಿಯರಲ್ಲಿ ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್.
EZR 10:24 ಹಾಡುಗಾರರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್, ಊರಿ.
EZR 10:25 ಇಸ್ರಾಯೇಲರಲ್ಲಿ: ಪರೋಷನ ವಂಶಜರಲ್ಲಿ: ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ.
EZR 10:26 ಏಲಾಮನ ವಂಶಜರಲ್ಲಿ: ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ.
EZR 10:27 ಜತ್ತೂ ವಂಶಜರಲ್ಲಿ: ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ.
EZR 10:28 ಬೇಬೈನ ವಂಶಜರಲ್ಲಿ: ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ.
EZR 10:29 ಬಾನೀ ವಂಶಜರಲ್ಲಿ: ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
EZR 10:30 ಪಹತ್ ಮೋವಾಬಿನ ವಂಶಜರಲ್ಲಿ: ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ.
EZR 10:31 ಹಾರಿಮನ ವಂಶಜರಲ್ಲಿ: ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
EZR 10:32 ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ.
EZR 10:33 ಹಾಷುಮ್ ವಂಶಜರಲ್ಲಿ: ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ.
EZR 10:34 ಬಾನೀ ವಂಶಜರಲ್ಲಿ: ಮಾದೈ, ಅಮ್ರಾಮ್, ಉಯೇಲ್,
EZR 10:35 ಬೆನಾಯ, ಬೇದೆಯ, ಕೆಲೂಹಿ.
EZR 10:36 ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
EZR 10:37 ಮತ್ತನ್ಯ, ಮತ್ತೆನೈ, ಯಾಸೈ.
EZR 10:38 ಬಾನೀ, ಬಿನ್ನೂಯ್ ವಂಶಜರಲ್ಲಿ: ಶಿಮ್ಮೀ,
EZR 10:39 ಶೆಲೆಮ್ಯ, ನಾತಾನ್, ಅದಾಯ,
EZR 10:40 ಮಕ್ನದೆಬೈ, ಶಾಷೈ, ಶಾರೈ,
EZR 10:41 ಅಜರಯೇಲ್, ಶೆಲೆಮ್ಯ, ಶೆಮರ್ಯ,
EZR 10:42 ಶಲ್ಲೂಮ್, ಅಮರ್ಯ, ಯೋಸೇಫ್.
EZR 10:43 ನೆಬೋ ವಂಶಜರಲ್ಲಿ: ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ.
EZR 10:44 ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು.
NEH 1:1 ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ, ಕಿಸ್ಲೇವ್ ಎಂಬ ಮಾರ್ಗಶಿರ ತಿಂಗಳಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆನು.
NEH 1:2 ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಯೆಹೂದದಿಂದ ನನ್ನ ಬಳಿಗೆ ಬಂದರು. ಸೆರೆ ಹೋದವರಿಂದ ಉಳಿದಿರುವ ಯೆಹೂದ್ಯರ ಮತ್ತು ಯೆರೂಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆನು.
NEH 1:3 ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟ ನಿಂದೆಗಳಿಗೆ ಒಳಗಾಗಿದ್ದಾರೆ. ಯೆರೂಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.
NEH 1:4 ನಾನು ಈ ಸಮಾಚಾರವನ್ನು ಕೇಳಿದಾಗ, ನೆಲದ ಮೇಲೆ ಕೂತುಕೊಂಡು ಅತ್ತೆನು. ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.
NEH 1:5 ನಾನು ನನ್ನ ಪ್ರಾರ್ಥನೆಯಲ್ಲಿ: “ಪರಲೋಕ ದೇವರಾದ ಯೆಹೋವ ದೇವರೇ, ನೀವು ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿದ್ದೀರಿ. ನಿಮ್ಮನ್ನು ಪ್ರೀತಿಸಿ ನಿಮ್ಮ ಆಜ್ಞೆಗಳಿಗೆ ವಿಧೇಯರಾಗಿರುವವರೊಂದಿಗೆ, ನಿಮ್ಮ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವವರೇ, ಭಯಭಕ್ತಿಗೆ ಪಾತ್ರರಾದ ದೇವರೇ,
NEH 1:6 ಕೃಪೆಮಾಡಿ ನನಗೆ ಕಿವಿಗೊಡಿರಿ, ಕಟಾಕ್ಷಿಸಿ ನೋಡಿರಿ, ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿರಿ. ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಾಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ. ಅವರು ನಿಮಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆಮಾಡುತ್ತಾ ಇದ್ದೇನೆ. ನಾನೂ, ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು.
NEH 1:7 ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು. ನೀವು ನಿಮ್ಮ ದಾಸನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
NEH 1:8 “ದಯಮಾಡಿ ನಿಮ್ಮ ಸೇವಕನಾದ ಮೋಶೆಗೆ ಹೇಳಿದ ಈ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಮೋಶೆಯ ಮುಖಾಂತರ, ‘ನೀವು ದ್ರೋಹ ಮಾಡಿದರೆ, ನಾನು ನಿಮ್ಮನ್ನು ಜನಾಂಗಗಳ ನಡುವೆ ಚದರಿಸಿಬಿಡುವೆನು.
NEH 1:9 ಆದರೆ ನೀವು ನನ್ನ ಕಡೆಗೆ ತಿರುಗಿಕೊಂಡು ನನ್ನ ಆಜ್ಞೆಗಳನ್ನು ಅನುಸರಿಸಿ, ಅವುಗಳ ಪ್ರಕಾರ ನಡೆದರೆ, ನಿಮ್ಮಲ್ಲಿರುವವರು ಆಕಾಶದ ಅಂತ್ಯದವರೆಗೂ ಸೆರೆಯಾಗಿ ಹೋಗಿದ್ದರೂ, ನಾನು ಅಲ್ಲಿಂದ ಅವರನ್ನು ಕೂಡಿಸಿ, ನನ್ನ ಹೆಸರನ್ನಿಡಲು ಆಯ್ದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು,’ ಎಂದು ಹೇಳಿದ್ದೀರಿ.
NEH 1:10 “ಅವರು ನಿಮ್ಮ ಮಹಾಶಕ್ತಿಯಿಂದಲೂ, ನಿಮ್ಮ ಭುಜಪರಾಕ್ರಮಗಳಿಂದ ನೀವು ವಿಮೋಚಿಸಿದ ನಿಮ್ಮ ಸೇವಕರೂ, ನಿಮ್ಮ ಜನರೂ ಆಗಿರುತ್ತಾರೆ.
NEH 1:11 ದೇವರೇ, ನಿಮ್ಮ ಹೆಸರಲ್ಲಿ ಭಯಭಕ್ತಿಯಿಂದ ಹರ್ಷಿಸುವ ನಿಮ್ಮ ಸೇವಕರ ಪ್ರಾರ್ಥನೆಗೆ ಕಿವಿಗೊಡಿರಿ. ಇಂದು ನಿಮ್ಮ ಸೇವಕನಾದ ನನಗೆ ಯಶಸ್ವಿಯನ್ನು ಕೊಟ್ಟು, ಈ ಅರಸನ ದೃಷ್ಟಿಯಲ್ಲಿ ನನಗೆ ದಯೆ ದೊರಕುವಂತೆ ಮಾಡಿರಿ,” ಎಂದು ಬೇಡಿಕೊಂಡೆನು. ಆ ದಿವಸಗಳಲ್ಲಿ ನಾನು ಅರಸನಿಗೆ ಪಾನ ಸೇವಕನಾಗಿದ್ದೆನು.
NEH 2:1 ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷದ, ನಿಸಾನ ತಿಂಗಳಲ್ಲಿ, ಅವನ ಮುಂದೆ ದ್ರಾಕ್ಷಾರಸವನ್ನು ತೆಗೆದುಕೊಂಡು ಅರಸನಿಗೆ ಕೊಟ್ಟೆನು. ನಾನು ಅವನ ಸಮ್ಮುಖದಲ್ಲಿ ಹಿಂದೆ ಎಂದೂ ದುಃಖಿತನಾಗಿದ್ದಿಲ್ಲ.
NEH 2:2 ಆದಕಾರಣ ಅರಸನು ನನಗೆ, “ನಿನಗೆ ಕಾಯಿಲೆ ಇಲ್ಲದೆ ಇರುವಾಗ, ನಿನ್ನ ಮುಖವು ದುಃಖದಿಂದಿರುವುದೇನು? ನಿನಗೆ ರೋಗ ಏನೂ ಇಲ್ಲವಲ್ಲ? ಇದು ಮನೋವೇದನೆಯೇ ಹೊರತು ಬೇರೇನೂ ಅಲ್ಲ,” ಎಂದನು. ಆಗ ನಾನು ಬಹು ಭಯಪಟ್ಟು ಅರಸನಿಗೆ,
NEH 2:3 “ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿರುವಾಗ ನನ್ನ ಮುಖವು ದುಃಖವಿಲ್ಲದೆ ಇರಲು ಸಾಧ್ಯವೇ?” ಎಂದು ಹೇಳಿದೆನು.
NEH 2:4 ಅದಕ್ಕೆ ಅರಸನು ನನಗೆ, “ನಿನಗೆ ಬೇಕಾಗಿರುವುದೇನು?” ಎಂದನು. ಆಗ ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ
NEH 2:5 ಅರಸನಿಗೆ, “ಅರಸನಿಗೆ ಮೆಚ್ಚಿಗೆಯಾದರೆ ಮತ್ತು ನಿಮ್ಮ ಸೇವಕನಿಗೆ ನಿಮ್ಮ ಮುಂದೆ ದಯೆ ದೊರಕಿದರೆ, ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವುದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು,” ಎಂದೆನು.
NEH 2:6 ರಾಣಿಯು ಅವನ ಬಳಿಯಲ್ಲಿ ಕುಳಿತಿರುವಾಗ ಅರಸನು ನನಗೆ, “ನಿನ್ನ ಪ್ರಯಾಣ ಎಷ್ಟು ದಿವಸ? ನೀನು ತಿರುಗಿ ಯಾವಾಗ ಬರುತ್ತೀ?” ಎಂದನು. ನಾನು ಅರಸನಿಗೆ ಸಮಯ ಗೊತ್ತು ಮಾಡಿದೆನು. ಆಗ ಅರಸನು ನನ್ನನ್ನು ಕಳುಹಿಸಲು ಸಮ್ಮತಿಸಿದನು.
NEH 2:7 ತರುವಾಯ ನಾನು ಅರಸನಿಗೆ, “ಯೂಫ್ರೇಟೀಸ್ ನದಿ ಆಚೆಯ ರಾಜ್ಯಪಾಲರು ತಮ್ಮ ಪ್ರಾಂತಗಳಲ್ಲಿ ಹಾದು, ಯೆಹೂದದ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಬೇಕಾಗುತ್ತದೆ.
NEH 2:8 ರಾಜವನಪಾಲಕನಾದ ಆಸಾಫನು, ದೇವಾಲಯದ ಕೋಟೆಯ ಬಾಗಿಲುಗಳನ್ನೂ, ಪಟ್ಟಣದ ಪೌಳಿಗೋಡೆಯನ್ನೂ, ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನೂ ಕೊಡಬೇಕಾಗುತ್ತದೆ. ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು,” ಎಂದು ಬಿನ್ನವಿಸಿದೆನು. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ, ರಾಜನು ಅವುಗಳನ್ನು ನನಗೆ ಕೊಟ್ಟನು.
NEH 2:9 ಆಗ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಗಳ ಬಳಿಗೆ ಬಂದು, ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು. ಅರಸನು ನನ್ನ ಸಂಗಡ ಸೈನ್ಯಾಧಿಪತಿಗಳನ್ನೂ, ಕುದುರೆ ಸವಾರರನ್ನೂ ಕಳುಹಿಸಿದನು.
NEH 2:10 ಇಸ್ರಾಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬಾ ವಿಚಲಿತರಾದರು.
NEH 2:11 ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ, ನಾನೂ, ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.
NEH 2:12 ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟಿದ್ದನ್ನು ಯಾರಿಗೂ ತಿಳಿಸಲಿಲ್ಲ. ನಾನು ಸವಾರಿಮಾಡುತ್ತಿದ್ದ ವಾಹನ ಪಶುವಿನ ಹೊರತು ಬೇರೆ ಪಶು ನನ್ನೊಂದಿಗಿರಲಿಲ್ಲ.
NEH 2:13 ನಾನು ರಾತ್ರಿಯಲ್ಲಿ ಕಣಿವೆಯ ಬಾಗಿಲಿಂದ ಹೊರಟು, ಸರ್ಪದ ಬಾವಿಯನ್ನು ದಾಟಿ, ತಿಪ್ಪೆ ದಿಬ್ಬೆಯ ಬಾಗಿಲಿಗೆ ಬಂದು, ಯೆರೂಸಲೇಮಿನ ಕೆಡವಿ ಹಾಕಲಾದ ಗೋಡೆಗಳನ್ನೂ, ಬೆಂಕಿಯಿಂದ ಸುಡಲಾದ ಅದರ ಬಾಗಿಲುಗಳನ್ನೂ ಚೆನ್ನಾಗಿ ಕಂಡೆನು.
NEH 2:14 ಅಲ್ಲಿಂದ ಬುಗ್ಗೆಬಾಗಿಲನ್ನು ಹಾದು, ಅರಸನ ಕೊಳಕ್ಕೆ ಹೋದೆನು. ನನ್ನ ವಾಹನ ಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿಲ್ಲದ್ದರಿಂದ,
NEH 2:15 ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆನು. ಆಮೇಲೆ ಪುನಃ ಕಣಿವೆಯ ಬಾಗಿಲಿನಿಂದ ಮನೆಗೆ ಬಂದೆನು.
NEH 2:16 ನಾನು ಎಲ್ಲಿ ಹೋದೆನೆಂದೂ, ಏನು ಮಾಡಿದೆನೆಂದೂ ಅಧಿಕಾರಿಗಳು ತಿಳಿಯದೆ ಇದ್ದರು. ಅಲ್ಲಿಯವರೆಗೆ ನಾನು ಯೆಹೂದ್ಯರಿಗಾದರೂ, ಯಾಜಕರಿಗಾದರೂ, ಶ್ರೀಮಂತರಿಗಾದರೂ, ಅಧಿಕಾರಿಗಳಿಗಾದರೂ, ಕೆಲಸ ಮಾಡುವ ಇತರ ಜನರಿಗಾದರೂ ಗೊತ್ತಿರಲಿಲ್ಲ.
NEH 2:17 ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ? ಯೆರೂಸಲೇಮ್ ಪಟ್ಟಣ ಹಾಳುಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟೋಣ. ಹೀಗೆ ಮಾಡಿದರೆ, ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ.
NEH 2:18 ಇದಲ್ಲದೆ, ನನ್ನ ದೇವರ ಕೃಪಾಹಸ್ತ ನನ್ನನ್ನು ಹೇಗೆ ನಡೆಸಿತೆಂಬುದನ್ನೂ, ರಾಜನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆ. ಆಗ ಅವರು, “ಬನ್ನಿ, ಪುನಃ ಕಟ್ಟೋಣ,” ಎಂದು ಹೇಳಿ, ಆ ಒಳ್ಳೆಯ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.
NEH 2:19 ಆದರೆ ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ಯ ದಾಸನಾದ ಟೋಬೀಯನೂ, ಅರಬಿಯನಾದ ಗೆಷೆಮನೂ ಇದನ್ನು ಕೇಳಿದಾಗ, ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ, “ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರುಗಿಬೀಳುವಿರೋ?” ಎಂದರು.
NEH 2:20 ಆಗ ನಾನು ಅವರಿಗೆ, “ಪರಲೋಕದ ದೇವರು ನಮಗೆ ಸಫಲತೆ ಅನುಗ್ರಹಿಸುವರು. ಅವರ ಸೇವಕರಾದ ನಾವು ಪುನಃ ಕಟ್ಟುವ ಕಾರ್ಯ ಪ್ರಾರಂಭಿಸುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಯಾವುದೇ ಪಾಲಾದರೂ ಹಕ್ಕಾದರೂ ಐತಿಹಾಸಿಕ ಬಾಧ್ಯತೆಯಾದರೂ ಇರುವುದಿಲ್ಲ,” ಎಂದು ಹೇಳಿದೆನು.
NEH 3:1 ಆಗ ಮಹಾಯಾಜಕನಾದ ಎಲ್ಯಾಷೀಬನೂ, ಅವನ ಕುಟುಂಬದ ಯಾಜಕರೂ ಕುರಿ ಬಾಗಿಲನ್ನು ಕಟ್ಟಿ, ಅದನ್ನು ಪ್ರತಿಷ್ಠಿಸಿ, ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಶತ ಗೋಪುರದವರೆಗೆ ಗೋಡೆ ಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.
NEH 3:2 ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಯೆರಿಕೋವಿನವರು, ನಂತರ ಇಮ್ರಿಯ ಮಗನಾದ ಜಕ್ಕೂರನು.
NEH 3:3 ಮೀನು ಬಾಗಿಲನ್ನು ಪುನಃ ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅದರ ಮೇಲೆ ತೊಲೆಗಳನ್ನಿಟ್ಟು, ಅದಕ್ಕೆ ಬಾಗಿಲು, ತಿರುಗಣಿ ಅಗುಳಿಗಳನ್ನು ಹಚ್ಚಿದರು. ಅಲ್ಲಿಂದ ಮುಂದಕ್ಕೆ ಗೋಡೆಯನ್ನು
NEH 3:4 ಜೀರ್ಣೋದ್ಧಾರ ಮಾಡಿಸಿದವನು ಊರೀಯನ ಮಗನೂ, ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ, ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾಣನ ಮಗನಾದ ಚಾದೋಕ್,
NEH 3:5 ಅಲ್ಲಿಂದ ಮುಂದಕ್ಕೆ ತೆಕೋವದವರು ಗೋಡೆಯನ್ನು ದುರಸ್ತಿ ಮಾಡಿಸಿದರು. ಆದರೆ ತೆಕೋವದವರಲ್ಲಿ ಶ್ರೇಷ್ಠರಾದವರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.
NEH 3:6 ಹಳೆಯದು ಎಂಬ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಪಾಸೇಹನ ಮಗನಾದ ಯೋಯಾದನೂ, ಬೆಸೋದ್ಯನ ಮಗನಾದ ಮೆಷುಲ್ಲಾಮನೂ, ಇವರು ಅದರ ಮೇಲೆ ತೊಲೆಗಳನ್ನಿಟ್ಟು, ಅದಕ್ಕೆ ಬಾಗಿಲು ತಿರುಗಣಿ ಅಗುಳಿಗಳನ್ನು ಹಚ್ಚಿದರು.
NEH 3:7 ಅಲ್ಲಿಂದ ಯೂಫ್ರೇಟೀಸ್ ನದಿಯ ರಾಜ್ಯಪಾಲನ ಅಧಿಕಾರದಲ್ಲಿರುವ ಸ್ಥಳಗಳಿಂದ ಗಿಬ್ಯೋನ್ ಮತ್ತು ಮಿಚ್ಪ ಊರುಗಳ, ಗಿಬ್ಯೋನಿನವನಾದ ಮೆಲೆಟ್ಯ, ಮೇರೊನೋತಿನವನಾದ ಯಾದೋನ್ ಇವರೂ, ಜೀರ್ಣೋದ್ಧಾರ ಮಾಡಿದರು.
NEH 3:8 ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್, ಆಮೇಲೆ ಗಾಣಿಗನಾದ ಹನನ್ಯ, ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.
NEH 3:9 ಇದರ ಆಚೆಗೆ ಯೆರೂಸಲೇಮಿನ ಅರೆನಾಡೊಡೆಯನೂ, ಹೂರನ ಮಗನೂ ಆದ ರೆಫಾಯ.
NEH 3:10 ಇವನ ಮುಂದಕ್ಕೆ ಹರೂಮಫನ ಮಗನಾದ ಯೆದಾಯ, ಇವನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ಆಚೆಗೆ ಹಷಬ್ನೆಯನ ಮಗನಾದ ಹಟ್ಟೂಷ್.
NEH 3:11 ಗೋಡೆಯ ಇನ್ನೊಂದು ಭಾಗವನ್ನೂ, ಒಲೆ ಬುರುಜನ್ನೂ ಜೀರ್ಣೋದ್ಧಾರ ಮಾಡಿದವರು ಹಾರಿಮನ ಮಗನಾದ ಮಲ್ಕೀಯನೂ, ಪಹತ್ ಮೋವಾಬ್ಯನಾದ ಹಷ್ಷೂಬನೂ
NEH 3:12 ಇವನ ಸಮೀಪದಲ್ಲಿ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರೆನಾಡೊಡೆಯನೂ, ಹಲ್ಲೋಹೇಷನ ಮಗನೂ ಆದ ಶಲ್ಲೂಮನೂ, ಅವನ ಕುಮಾರಿಯರೂ.
NEH 3:13 ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರೂ. ಇವರು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿ, ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ 450 ಮೀಟರ್ ಗೋಡೆಯನ್ನು ಕಟ್ಟಿದರು.
NEH 3:14 ತಿಪ್ಪೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಬೇತ್ ಹಕ್ಕೆರೆಮಿನ ನಾಡೊಡೆಯನೂ, ರೇಕಾಬನ ಮಗನೂ ಆದ ಮಲ್ಕೀಯನೂ, ಇವರು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿದರು.
NEH 3:15 ಬುಗ್ಗೆಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ನಾಡೊಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್, ಇವನು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಮಾಳಿಗೆಯನ್ನು ಹಾಕಿ, ಕದ ತಿರುಗಣಿ ಅಗುಳಿಗಳನ್ನು ಹಚ್ಚಿ, ದಾವೀದನ ನಗರದಿಂದಿಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಶಿಲೋವ ಕೊಳದ ಗೋಡೆಯನ್ನು ಕಟ್ಟಿದನು.
NEH 3:16 ಇವನ ಆಚೆ ಎಂದರೆ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯರ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವನು ಬೇತ್ ಚೂರಿನ ಅರೆನಾಡೊಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.
NEH 3:17 ಇವನ ನಂತರ ಜೀರ್ಣೋದ್ಧಾರ ಮಾಡಿದವರು ಲೇವಿಯರು. ಅವರಲ್ಲಿ ಮೊದಲು ಬಾನೀಯ ಮಗನಾದ ರೆಹೂಮ್, ಇವನ ಸಮೀಪದಲ್ಲಿ ತನ್ನ ನಾಡಿನವರೊಡನೆ ಕಟ್ಟುತ್ತಿದ್ದ ಕೆಯೀಲದ ಅರೆನಾಡೊಡೆಯನಾದ ಹಷಬ್ಯ ಇವರು.
NEH 3:18 ಇವರ ನಂತರ, ಇವರ ಬಂಧುಗಳಲ್ಲಿ ಕೆಯೀಲದ ಎರಡನೆಯ ಅರೆನಾಡೊಡೆಯನೂ, ಹೇನಾದಾದನ ಮಗನೂ ಆದ ಬಿನ್ನೂಯ್.
NEH 3:19 ಇವನ ಸಮೀಪದಲ್ಲಿ ಗೋಡೆಯ ಮೂಲೆಯಲ್ಲಿರುವ ಆಯುಧ ಶಾಲೆಗೆ ಹೋಗುವ ಮೆಟ್ಟಿಲು ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ, ಯೇಷೂವನ ಮಗನೂ ಆದ ಏಜೆರನು ಜೀರ್ಣೋದ್ಧಾರ ಮಾಡಿದನು.
NEH 3:20 ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಉತ್ಸಾಹದಿಂದ ಭದ್ರಪಡಿಸಿದನು.
NEH 3:21 ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಎಂದರೆ ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ ಹಕ್ಕೋಚನ ಮೊಮ್ಮಗನೂ, ಊರೀಯನ ಮಗನೂ ಆದ ಮೆರೇಮೋತನು ಜೀರ್ಣೋದ್ಧಾರ ಮಾಡಿದನು.
NEH 3:22 ಮುಂದಿನ ಭಾಗವನ್ನು ಜೀರ್ಣೋದ್ಧಾರ ಮಾಡಿದವರು ಸುತ್ತಲಿನ ಪ್ರದೇಶದ ಯಾಜಕರು.
NEH 3:23 ಇವರ ಆಚೆ, ಬೆನ್ಯಾಮೀನ್ ಹಷ್ಷೂಬರು, ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದರು. ಇವರ ತರುವಾಯ ಅನನ್ಯನ ಮೊಮ್ಮಗನೂ, ಮಾಸೇಯನ ಮಗನೂ ಆದ ಅಜರ್ಯ, ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು.
NEH 3:24 ಇವನ ಆಚೆ, ಅಜರ್ಯನ ಮನೆಯಿಂದ ಮೂಲೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್.
NEH 3:25 ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆ ಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ, ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.
NEH 3:26 ಆ ಮೂಲೆ ಬುರುಜಿನ ಮತ್ತು ನೀರು ಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಾಲಯದ ಸೇವಕರ ನಿವಾಸ ಸ್ಥಾನವು.
NEH 3:27 ಆ ದೊಡ್ಡ ಮೂಲೆ ಬುರುಜಿನ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ಜೀರ್ಣೋದ್ಧಾರ ಮಾಡಿದರು.
NEH 3:28 ಯಾಜಕರು ಕುದುರೆ ಬಾಗಿಲಿನ ಆಚೆ ದಿನ್ನೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಜೀರ್ಣೋದ್ಧಾರ ಮಾಡಿದರು.
NEH 3:29 ಇವರ ಆಚೆ, ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ಆಚೆ, ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು.
NEH 3:30 ಇವನ ಆಚೆ ಶೆಲೆಮ್ಯನ ಮಗನಾದ ಹನನ್ಯ, ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಚಾಲಾಫನ ಆರನೆಯ ಮಗನಾದ ಹಾನೂನ್, ಇವನ ಆಚೆ, ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್.
NEH 3:31 ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ, ಇವನು ದಂಡು ಕೊಡುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.
NEH 3:32 ಈ ಮೂಲೆಯುಪ್ಪರಿಗೆಗೂ, ಕುರಿ ಬಾಗಿಲಿಗೂ ಮಧ್ಯದಲ್ಲಿದ್ದ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಅಕ್ಕಸಾಲಿಗರು, ವರ್ತಕರು ಇವರೇ.
NEH 4:1 ನಾವು ಗೋಡೆಯನ್ನು ಪುನಃ ಕಟ್ಟುವ ವರ್ತಮಾನವನ್ನು ಸನ್ಬಲ್ಲಟನು ಕೇಳಿದಾಗ, ಅವನು ಕೋಪಗೊಂಡು, ಯೆಹೂದ್ಯರಿಗೆ ಗೇಲಿಮಾಡಿ,
NEH 4:2 ತಮ್ಮ ಜೊತೆ ಕೆಲಸ ಮಾಡುವವರ ಮುಂದೆಯೂ ಸಮಾರ್ಯದಲ್ಲಿರುವ ಸೈನ್ಯದ ಮುಂದೆಯೂ, “ಈ ಬಲಹೀನರಾದ ಯೆಹೂದ್ಯರು ಮಾಡುವುದೇನು? ಅವರು ತಮ್ಮ ಗೋಡೆಯನ್ನು ಪುನಃ ಕಟ್ಟುತ್ತಾರೆಯೇ? ಬಲಿಯನ್ನು ಅರ್ಪಿಸುವರೋ? ಪಟ್ಟಣವು ಬೆಂಕಿಯಲ್ಲಿ ಸುಟ್ಟುಹೋದಾಗ, ಕಲ್ಲಿನ ತುಂಡುಗಳ ರಾಶಿಯಿಂದ ಕಟ್ಟಡಕ್ಕೆ ಸೂಕ್ತವಾದ ಕಲ್ಲುಗಳನ್ನು ಹೊರತೆಗೆಯಲು ಅವರಿಗೆ ಸಾಧ್ಯವಾಗುತ್ತದೆಯೇ?” ಎಂದು ಹೇಳಿದನು.
NEH 4:3 ಅವನ ಬಳಿಯಲ್ಲೇ ನಿಂತಿದ್ದ ಅಮ್ಮೋನಿಯನಾದ ಟೋಬೀಯನು, “ಅವರು ಕಟ್ಟುವ ಕಲ್ಲು ಗೋಡೆಯ ಮೇಲೆ ನರಿ ಹಾರಿದರೆ, ಅದು ಬಿದ್ದುಹೋಗುವುದು!” ಎಂದು ಅಣಕಿಸಿದನು.
NEH 4:4 ನಮ್ಮ ದೇವರೇ, ಆಲಿಸಿರಿ; ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ. ನೀವು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ಬರಮಾಡಿ, ಸೆರೆಯ ದೇಶದಲ್ಲಿ ಅವರನ್ನು ಸೂರೆಯಾಗಿ ಒಪ್ಪಿಸಿರಿ.
NEH 4:5 ಅವರು ಕಟ್ಟುವವರ ಮುಂದೆ ನಿಮ್ಮನ್ನು ಕೆಣಕಿದ್ದರಿಂದ ನೀವು ಅವರ ಅಪರಾಧವನ್ನು ಮುಚ್ಚಬೇಡಿರಿ. ನಿಮ್ಮ ಮುಂದೆ ಇರುವ ಅವರ ಪಾಪಗಳನ್ನು ಅಳಿಸಿಬಿಡಬೇಡಿರಿ ಎಂದು ನಾನು ಪ್ರಾರ್ಥಿಸಿದೆ.
NEH 4:6 ಹೀಗೆ ನಾವು ಪುನಃ ಗೋಡೆ ಕಟ್ಟುವುದನ್ನು ಮುಂದುವರಿಸಿದೆವು. ಗೋಡೆ ಅರ್ಧ ಎತ್ತರದವರೆಗೂ ಆಯಿತು. ಏಕೆಂದರೆ ಜನರು ಕೆಲಸ ಮಾಡುವುದಕ್ಕೆ ಮನಸ್ಸುಳ್ಳವರಾಗಿದ್ದರು.
NEH 4:7 ಯೆರೂಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂದು ಸನ್ಬಲ್ಲಟನೂ ಟೋಬೀಯನೂ ಅರಬಿಯರೂ ಅಮ್ಮೋನ್ಯರೂ ಅಷ್ಡೋದ್ಯರೂ ಕೇಳಿದಾಗ ಬಹು ಕೋಪಗೊಂಡರು.
NEH 4:8 ಅವರು ಯೆರೂಸಲೇಮಿಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೂ, ಅಭ್ಯಂತರಿಸುವುದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು.
NEH 4:9 ಆದರೆ ನಾವು ನಮ್ಮ ದೇವರಿಗೆ ಪ್ರಾರ್ಥನೆಮಾಡಿ, ಅವರಿಗೆ ಎದುರಾಗಿ ರಾತ್ರಿ ಹಗಲು ಕಾವಲು ಇಟ್ಟೆವು.
NEH 4:10 ಆಗ ಯೆಹೂದದವರು, “ಹೊರೆ ಹೊರುವವರ ಬಲವು ಕುಂದಿಹೋಯಿತು; ಕಲ್ಲುಮಣ್ಣಿನ ರಾಶಿ ಬಹಳವಾಗಿದೆ; ಈ ಗೋಡೆಯನ್ನು ಪುನಃ ಕಟ್ಟುವುದು ನಮ್ಮಿಂದಾಗದು,” ಎಂದರು.
NEH 4:11 ನಮ್ಮ ವೈರಿಗಳು, “ಅವರು ತಿಳಿಯದ ಹಾಗೆಯೂ, ನೋಡದ ಹಾಗೆಯೂ ನಾವು ಅವರ ನಡುವೆ ಬಂದು, ಅವರನ್ನು ಕೊಂದುಹಾಕಿ, ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು.
NEH 4:12 ಅವರ ಬಳಿಯಲ್ಲಿ ವಾಸವಾಗಿರುವ ಯೆಹೂದ್ಯರು ನಮ್ಮ ಬಳಿಗೆ ಬಂದು, “ನೀವು ತಿರುಗಿಕೊಳ್ಳುವ ಎಲ್ಲಾ ಸ್ಥಳಗಳಿಂದ ನಮ್ಮ ಮೇಲೆ ಯುದ್ಧಕ್ಕೆ ಬಂದಾರು,” ಎಂದು ನಮಗೆ ಹತ್ತು ಬಾರಿ ಹೇಳಿದರು.
NEH 4:13 ಆದಕಾರಣ ನಾನು ಗೋಡೆಯ ಹಿಂದೆ ಇರುವ ತಗ್ಗಿನ ಸ್ಥಳಗಳಲ್ಲಿಯೂ, ಎತ್ತರವಾದ ಸ್ಥಳಗಳಲ್ಲಿಯೂ ಜನರನ್ನು ನಿಲ್ಲಿಸಿದೆನು. ತಮ್ಮ ಖಡ್ಗಗಳನ್ನೂ, ತಮ್ಮ ಈಟಿಗಳನ್ನೂ, ತಮ್ಮ ಬಿಲ್ಲುಗಳನ್ನೂ ಹಿಡಿದುಕೊಂಡಿರುವ ಜನರನ್ನು, ಅವರವರ ವಂಶಗಳ ಪ್ರಕಾರ ನಿಲ್ಲಿಸಿದೆನು.
NEH 4:14 ನಾನು ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು ಶ್ರೇಷ್ಠರಿಗೂ, ಅಧಿಕಾರಸ್ಥರಿಗೂ, ಇತರ ಜನರಿಗೂ ಸಂಬೋಧಿಸಿ, “ನೀವು ಅವರಿಗೋಸ್ಕರ ಭಯಪಡಬೇಡಿರಿ. ದೊಡ್ಡವನಾಗಿಯೂ, ಭಯಂಕರನಾಗಿಯೂ ಇರುವ ಯೆಹೋವ ದೇವರನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಪುತ್ರರಿಗೋಸ್ಕರ, ಪುತ್ರಿಯರಿಗೋಸ್ಕರ, ನಿಮ್ಮ ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ,” ಎಂದೆನು.
NEH 4:15 ನಿಮ್ಮ ಶತ್ರುಗಳು ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ದೇವರು ಅದನ್ನು ವ್ಯರ್ಥ ಮಾಡಿದನೆಂದು ತಿಳಿದುಕೊಂಡರು. ನಮ್ಮನ್ನು ಬಿಟ್ಟುಹೋದರು. ನಾವೆಲ್ಲರು ನಮ್ಮ ನಮ್ಮ ಗೋಡೆಯ ಕೆಲಸಕ್ಕೆ ಮತ್ತೆ ಕೈಹಾಕಿದೆವು.
NEH 4:16 ಅಂದಿನಿಂದ ನನ್ನ ಸೇವಕರಲ್ಲಿ ಅರ್ಧ ಜನರು ಕೆಲಸದಲ್ಲಿ ನಿರತರಾದರು; ಮಿಕ್ಕ ಅರ್ಧ ಜನರು ಈಟಿಗಳನ್ನೂ, ಗುರಾಣಿಗಳನ್ನೂ, ಬಿಲ್ಲುಗಳನ್ನೂ, ಕವಚಗಳನ್ನೂ ಧರಿಸಿದರು. ಪ್ರಧಾನರು ಗೋಡೆ ಕಟ್ಟುವವರಾದ ಯೆಹೂದ ಮನೆಯವರ ಹಿಂದೆ ನಿಂತರು.
NEH 4:17 ಹೊರೆ ಹೊರುವವರು ಒಂದು ಕೈಯಿಂದ ಹೊರೆಹೊತ್ತು, ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತಾ ಇದ್ದರು.
NEH 4:18 ಕಟ್ಟುವವರಲ್ಲಿ ಪ್ರತಿಯೊಬ್ಬರೂ ತಮ್ಮ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಕಟ್ಟುತ್ತಿದ್ದರು. ತುತೂರಿ ಊದುವವನು ನನ್ನ ಬಳಿಯಲ್ಲಿದ್ದನು.
NEH 4:19 ಆಗ ನಾನು ಶ್ರೇಷ್ಠರಿಗೂ, ಅಧಿಕಾರಿಗಳಿಗೂ, ಇತರ ಜನರಿಗೂ, “ಕೆಲಸವು ದೊಡ್ಡದೂ, ವಿಸ್ತಾರವೂ ಆದದ್ದು. ನಾವು ಗೋಡೆಯ ಮೇಲೆ ಚದರಿ, ಒಬ್ಬರಿಗೊಬ್ಬರು ದೂರವಾಗಿದ್ದೇವೆ.
NEH 4:20 ನಿಮಗೆ ಕೊಂಬಿನ ಧ್ವನಿಯು ಯಾವ ಸ್ಥಳದಿಂದ ಕೇಳಿಬರುವುದೋ, ಆ ಸ್ಥಳಕ್ಕೆ ನಮ್ಮ ಹತ್ತಿರ ಕೂಡಿಬನ್ನಿರಿ. ನಮ್ಮ ದೇವರು ನಮಗೋಸ್ಕರ ಯುದ್ಧಮಾಡುವರು,” ಎಂದು ಹೇಳಿದೆನು.
NEH 4:21 ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಸೇವಕರಲ್ಲಿ ಅರ್ಧಮಂದಿ ಭರ್ಜಿ ಹಿಡಿದುಕೊಂಡಿದ್ದರು.
NEH 4:22 ಇದಲ್ಲದೆ ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯೂ, ಹಗಲಿನಲ್ಲಿ ಕೆಲಸ ನಡೆಸುವಂತೆಯೂ ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲೇ ವಾಸಮಾಡಬೇಕು,” ಎಂದು ಅಪ್ಪಣೆ ಮಾಡಿದೆನು.
NEH 4:23 ನಾನೂ, ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ಸ್ನಾನದ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ವಸ್ತ್ರಗಳನ್ನು ತೆಗೆದುಹಾಕಲಿಲ್ಲ.
NEH 5:1 ತರುವಾಯ ಜನರೂ, ಅವರ ಹೆಂಡತಿಯರೂ ತಮ್ಮ ಸಹೋದರರಾದ ಯೆಹೂದ್ಯರ ವಿರುದ್ಧ ಬಹಳ ಗೋಳಾಡ ತೊಡಗಿದರು.
NEH 5:2 ಅವರಲ್ಲಿ ಕೆಲವರು, “ನಾವೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ಅನೇಕರಾದುದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತೆಗೆದುಕೊಳ್ಳೋಣ,” ಎಂದರು.
NEH 5:3 ಕೆಲವರು, “ಈ ಬರಗಾಲದಲ್ಲಿ ನಾವು ಧಾನ್ಯ ಕೊಂಡುಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ, ಮನೆಗಳನ್ನೂ ಒತ್ತೆ ಇಟ್ಟೆವು,” ಎಂದರು.
NEH 5:4 ಇನ್ನು ಕೆಲವರು, “ಅರಸನಿಗೆ ತೆರಿಗೆಯನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ, ನಮ್ಮ ದ್ರಾಕ್ಷಿತೋಟಗಳ ಮೇಲೆಯೂ ಸಾಲವನ್ನು ತೆಗೆದುಕೊಳ್ಳಬೇಕಾಯಿತು.
NEH 5:5 ನಾವು ನಮ್ಮ ಸಹೋದರರ ಹಾಗೆಯೇ ಒಂದೇ ರಕ್ತಮಾಂಸದವರಾಗಿದ್ದೇವೆ; ನಮ್ಮ ಮಕ್ಕಳು ಅವರ ಮಕ್ಕಳ ಹಾಗೆಯೇ ಕ್ಷೇಮವಾಗಿದ್ದಾರೆ; ಆದರೂ ನಮ್ಮ ಪುತ್ರಪುತ್ರಿಯರನ್ನೂ ಗುಲಾಮರಾಗುವುದಕ್ಕೆ ತಂದಿದ್ದೇವೆ. ನಮ್ಮ ಪುತ್ರಿಯರಲ್ಲಿ ಕೆಲವರು ಆಗಲೇ ಗುಲಾಮರಾಗಿದ್ದಾರೆ. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಏಕೆಂದರೆ ನಮ್ಮ ಹೊಲಗಳೂ, ದ್ರಾಕ್ಷಿ ತೋಟಗಳೂ ಪರರ ಪಾಲಾಗಿವೆ,” ಎಂದರು.
NEH 5:6 ಅವರ ಕೂಗನ್ನೂ, ಈ ಆರೋಪಗಳನ್ನೂ ನಾನು ಕೇಳಿ ಬಹಳವಾಗಿ ಕೋಪಿಸಿಕೊಂಡೆನು.
NEH 5:7 ನಾನು ತುಸು ಆಲೋಚಿಸಿ ನೋಡಿದೆ. ಬಳಿಕ ಶ್ರೇಷ್ಠರನ್ನೂ, ಅಧಿಕಾರಿಗಳನ್ನೂ ಖಂಡಿಸಿ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದು ಸರಿಯೇ?” ಎಂದು ಹೇಳಿ ಅವರೊಡನೆ ಬಹಳವಾಗಿ ವಾಗ್ವಾದಿಸಿ, ಅವರಿಗೆ ವಿರೋಧವಾಗಿ ಮಹಾ ಸಭೆಯನ್ನು ಕೂಡಿಸಿದೆ.
NEH 5:8 “ಇತರ ಜನರಿಗೆ ಗುಲಾಮರಾಗಿ ಮಾರಟವಾಗಿರುವ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿಯಿದ್ದಷ್ಟು ಬಿಡಿಸುತ್ತಿದ್ದೆವು. ಆದರೆ ಈಗ ನೀವು ನಿಮ್ಮ ಸಹೋದರರನ್ನೇ ಮಾರಿಬಿಡುತ್ತಿದ್ದೀರಿ. ಆಮೇಲೆ ಅವರನ್ನು ನಾವು ಕೊಂಡುಕೊಳ್ಳಬೇಕೇನು?” ಎಂದೆನು. ಆಗ ಅವರು ಹೇಳಲು ಏನೂ ಸಿಗದ ಕಾರಣ ಅವರು ಮೌನವಾಗಿದ್ದರು.
NEH 5:9 ನಾನು ಅವರಿಗೆ, “ನೀವು ಮಾಡುವುದು ಒಳ್ಳೆಯದಲ್ಲ. ಇತರ ದೇಶದವರಾದ ನಮ್ಮ ಶತ್ರುಗಳ ನಿಂದೆಗೆ ಗುರಿಯಾಗದಂತೆ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲವೇ.
NEH 5:10 ನಾನು, ನನ್ನ ಸಹೋದರರು, ಸೇವಕರು ಸಹ ಅವರಿಗೆ ಹಣವನ್ನೂ, ಧಾನ್ಯವನ್ನೂ ಸಾಲವಾಗಿ ಕೊಟ್ಟಿದ್ದೇವೆ. ಬಡ್ಡಿ ತೆಗೆದುಕೊಳ್ಳುವ ಪದ್ಧತಿಯನ್ನು ಬಿಟ್ಟುಬಿಡೋಣ.
NEH 5:11 ಅವರ ಹೊಲ, ದ್ರಾಕ್ಷಿತೋಟ, ಓಲಿವ್ ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟು ಬಿಡಿ; ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿ ಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.
NEH 5:12 ಅದಕ್ಕವರು, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ಏನೂ ಕೇಳುವುದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ,” ಎಂದರು. ಆಗ ನಾನು ಯಾಜಕರನ್ನು ಕರೆದು, ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತೆಗೆದುಕೊಂಡೆನು.
NEH 5:13 ನಾನು ನನ್ನ ಬಟ್ಟೆಯನ್ನು ಝಾಡಿಸಿ, “ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಅವನ ಆಸ್ತಿಪಾಸ್ತಿಯಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಿ, ಬರಿದಾಗಲಿ,” ಎಂದೆನು. ಅದಕ್ಕೆ ಸಭೆಯವರೆಲ್ಲರೂ, “ಆಮೆನ್” ಎಂದು ಹೇಳಿ ಯೆಹೋವ ದೇವರನ್ನು ಸ್ತುತಿಸಿದರು. ಜನರು ತಾವು ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು.
NEH 5:14 ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ರಾಜ್ಯಪಾಲನಾದ ಕಾಲ ಮೊದಲ್ಗೊಂಡು ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷ ಮೊದಲ್ಗೊಂಡು ಮೂವತ್ತೆರಡನೆಯ ವರ್ಷದವರೆಗೆ ಹನ್ನೆರಡು ವರ್ಷವಾಗಿ ನಾನೂ, ನನ್ನ ಸಹೋದರರೂ ರಾಜ್ಯಪಾಲನಿಗೆ ಸಲ್ಲತಕ್ಕ ಆಹಾರವನ್ನು ತಿನ್ನಲಿಲ್ಲ.
NEH 5:15 ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು, ನಾಲ್ವತ್ತು ಬೆಳ್ಳಿನಾಣ್ಯ ಮೌಲ್ಯದ ರೊಟ್ಟಿಯನ್ನೂ, ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಿದ್ದರು. ಅವರ ಸೇವಕರು ಸಹ ಜನರ ಮೇಲೆ ದೊರೆತನ ನಡೆಸುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹಾಗೆ ಮಾಡಲಿಲ್ಲ.
NEH 5:16 ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ ಮತ್ತು ನನ್ನ ಎಲ್ಲಾ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
NEH 5:17 ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರೂ, ಯೆಹೂದ್ಯರೂ, ಅಧಿಕಾರಿಗಳೂ ನೂರ ಐವತ್ತು ಮಂದಿ ನನ್ನ ಪಂಕ್ತಿಯಲ್ಲೇ ಊಟಮಾಡುತ್ತಿದ್ದರು.
NEH 5:18 ಪ್ರತಿದಿನಕ್ಕೆ ಒಂದು ಎತ್ತು, ಉತ್ತಮವಾದ ಆರು ಕುರಿಗಳು, ಕೋಳಿಗಳು, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವು ನನಗೋಸ್ಕರ ಸಿದ್ಧವಾಗುತ್ತಿದ್ದವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದುದರಿಂದ ನಾನು ರಾಜ್ಯಪಾಲನಿಗೆ ಸಲ್ಲತಕ್ಕ ಆಹಾರವನ್ನು ಬೇಡಲಿಲ್ಲ.
NEH 5:19 “ನನ್ನ ದೇವರೇ, ನಾನು ಈ ಜನರಿಗೆ ಮಾಡಿದ ಎಲ್ಲವನ್ನು ನೆನಪು ಮಾಡಿಕೊಂಡು ನನಗೆ ಒಳಿತನ್ನು ಮಾಡಿರಿ,” ಎಂದು ಪ್ರಾರ್ಥಿಸಿದೆ.
NEH 6:1 ನಾನು ಹೆಬ್ಬಾಗಿಲುಗಳಲ್ಲಿ ಬಾಗಿಲುಗಳನ್ನು ಇಡುವುದಕ್ಕಿಂತ ಮುಂಚೆ ನಾನು ಗೋಡೆಯಲ್ಲಿ ಒಂದು ಸಂದನ್ನೂ ಬಿಡದೆ ಪುನಃ ಕಟ್ಟಿದೆನೆಂದು ಸನ್ಬಲ್ಲಟನೂ, ಟೋಬೀಯನೂ, ಅರಬಿಯನಾದ ಗೆಷೆಮನೂ, ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ,
NEH 6:2 ಸನ್ಬಲ್ಲಟನೂ, ಗೆಷೆಮನೂ ನನಗೆ, “ಓನೋ ಎಂಬ ಬಯಲಿನಲ್ಲಿರುವ ಗ್ರಾಮಗಳಲ್ಲಿ ಎದುರುಗೊಳ್ಳೋಣ ಬಾ,” ಎಂದರು. ಆದರೆ ಅವರು ನನಗೆ ಕೇಡು ಮಾಡಲು ಯೋಜಿಸಿಕೊಂಡಿದ್ದರು.
NEH 6:3 ಆದಕಾರಣ ನಾನು ಅವರ ಬಳಿಗೆ ದೂತರನ್ನು ಕಳುಹಿಸಿ, “ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ, ಬರಲಾರೆನು. ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವುದು,” ಎಂದು ಹೇಳಿದೆನು.
NEH 6:4 ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಉತ್ತರ ಕಳುಹಿಸಿದೆನು.
NEH 6:5 ಐದನೆಯ ಸಾರಿ ಸನ್ಬಲ್ಲಟನು ತನ್ನ ದೂತನ ಕೈಯಲ್ಲಿ ಮುಚ್ಚದಿದ್ದ ಒಂದು ಪತ್ರವನ್ನು ಕಳುಹಿಸಿದನು.
NEH 6:6 ಅದರಲ್ಲಿ ಹೀಗೆ ಬರೆದಿತ್ತು: “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ, ಯೆಹೂದ್ಯರೂ ತಿರುಗಿಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಪುನಃ ಕಟ್ಟಿಸುತ್ತಿದ್ದೀ.
NEH 6:7 ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದೂ ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವುದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದ್ದಿ ಎಂಬುದಾಗಿಯೂ ಜನಾಂಗಗಳಲ್ಲಿ ಸುದ್ದಿ ಉಂಟು. ಈಗ ಈ ವರ್ತಮಾನ ಅರಸನಿಗೆ ತಿಳಿಸಲಾಗುವುದು. ಆದಕಾರಣ ನಾವು ಕೂಡಿಕೊಂಡು ಯೋಚನೆ ಮಾಡಿಕೊಳ್ಳೋಣ ಬಾ.”
NEH 6:8 ಆಗ ನಾನು, “ನೀನು ಹೇಳಿದ ಕಾರ್ಯಗಳಲ್ಲಿ ಯಾವುದೂ ಮಾಡಿದ್ದಿಲ್ಲ. ನೀವು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸಿಕೊಂಡಿರುವೆ,” ಎಂದು ಹೇಳಿ ಕಳುಹಿಸಿದೆನು.
NEH 6:9 ಹೀಗೆ, “ಅವರ ಕೈಗಳು ಬಲಹೀನವಾಗುವುವು. ಕೆಲಸವು ಪೂರ್ತಿಯಾಗುವುದಿಲ್ಲ,” ಎಂದುಕೊಂಡು ಅವರೆಲ್ಲರು ನಮ್ಮನ್ನು ಭಯಪಡಿಸಿದರು. ನಾನಾದರೋ, “ದೇವರೇ, ನನ್ನ ಕೈಗಳನ್ನು ಬಲಪಡಿಸಿರಿ,” ಎಂದು ಪ್ರಾರ್ಥಿಸಿದೆನು.
NEH 6:10 ತರುವಾಯ ನಾನು ಅಡಗಿಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯ, ಇವನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನು, “ನಾವಿಬ್ಬರೂ ದೇವರ ಆಲಯದಲ್ಲಿ ಪವಿತ್ರಸ್ಥಾನದೊಳಗೆ ಹೋಗಿ, ಮಂದಿರದ ಬಾಗಿಲನ್ನು ಮುಚ್ಚಿಕೊಳ್ಳೋಣ ಬಾ, ಏಕೆಂದರೆ ಈ ರಾತ್ರಿಯೇ ನಿನ್ನನ್ನು ಕೊಂದುಹಾಕಲು ಬರುತ್ತಾರೆ,” ಎಂದು ಹೇಳಿದನು.
NEH 6:11 ಅದಕ್ಕೆ ನಾನು, “ನನ್ನಂಥಾ ಮನುಷ್ಯನು ಓಡಿ ಹೋಗುವನೋ? ನನ್ನಂಥವನು ಬದುಕಬೇಕೆಂದು ದೇವರ ಆಲಯದೊಳಗೆ ಹೋಗಬಹುದೇ? ನಾನು ಒಳಗೆ ಹೋಗುವುದಿಲ್ಲ,” ಎಂದೆನು.
NEH 6:12 ಆಗ ದೇವರು ಅವನನ್ನು ಕಳುಹಿಸಲಿಲ್ಲ. ಟೋಬೀಯನೂ, ಸನ್ಬಲ್ಲಟನೂ ಶೆಮಾಯನಿಗೆ ಲಂಚಕೊಟ್ಟು, ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿಸಿದರೆಂದು ನನಗೆ ಗೊತ್ತಾಯಿತು.
NEH 6:13 ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವಂತೆಯೂ ಅವರು ನನ್ನನ್ನು ನಿಂದಿಸುವುದಕ್ಕೆ ಅಪಕೀರ್ತಿಯ ಕಾರಣವು ಅವರಿಗೆ ಸಿಕ್ಕುವಂತೆಯೂ ಶೆಮಾಯನಿಗೆ ಲಂಚಕೊಟ್ಟಿದ್ದರು.
NEH 6:14 ನನ್ನ ದೇವರೇ, ನೀವು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ, ಸನ್ಬಲ್ಲಟನನ್ನೂ, ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
NEH 6:15 ಹೀಗೆ ಗೋಡೆಯು ಐವತ್ತೆರಡು ದಿವಸಗಳಲ್ಲಿ ಏಲುಲ್ ತಿಂಗಳದ ಇಪ್ಪತ್ತೈದನೆಯ ದಿವಸದಲ್ಲಿ ಮುಗಿಯಿತು.
NEH 6:16 ಈ ಸುದ್ದಿ ಸುತ್ತಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.
NEH 6:17 ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಶ್ರೇಷ್ಠರು ಟೋಬೀಯನ ಬಳಿಗೆ ಬಹಳ ಪತ್ರಗಳನ್ನು ಕಳುಹಿಸಿದರು. ಟೋಬೀಯನಿಂದ ಉತ್ತರ ಅವರಿಗೆ ಬರುತ್ತಿದ್ದವು.
NEH 6:18 ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾದುದರಿಂದ ಅವನ ಮಗ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತೆಗೆದುಕೊಂಡಿದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ನಂಬಿಗಸ್ತರಾಗಿರುವುದಾಗಿ ಪ್ರಮಾಣ ಮಾಡಿದರು.
NEH 6:19 ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ, ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀಯನೂ ನನ್ನನ್ನು ಭಯಪಡಿಸುವುದಕ್ಕೆ ಪತ್ರಗಳನ್ನು ಕಳುಹಿಸಿದನು.
NEH 7:1 ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು.
NEH 7:2 ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
NEH 7:3 ಆಗ ನಾನು ಅವರಿಗೆ, “ಬಿಸಿಲು ಏರುವುದಕ್ಕಿಂತ ಮೊದಲೇ ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು. ಇದಲ್ಲದೆ ನೀವು ಸಮೀಪದಲ್ಲಿ ನಿಂತಿರುವಾಗ, ಕದಗಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ. ಯೆರೂಸಲೇಮಿನ ನಿವಾಸಿಗಳಲ್ಲಿ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾಗಿ ಕಾವಲಾಗಿರಲು ನೇಮಿಸಿರಿ,” ಎಂದು ಹೇಳಿದೆನು.
NEH 7:4 ಪಟ್ಟಣವು ವಿಸ್ತಾರವಾಗಿಯೂ, ದೊಡ್ಡದಾಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚವಾಗಿದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
NEH 7:5 ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ:
NEH 7:6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
NEH 7:7 ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
NEH 7:8 ಪರೋಷನ ವಂಶಜರು 2,172 ಮಂದಿ ಇದ್ದರು.
NEH 7:9 ಶೆಫಟ್ಯನ ವಂಶಜರು 372 ಮಂದಿ ಇದ್ದರು.
NEH 7:10 ಆರಹನ ವಂಶಜರು 652 ಮಂದಿ ಇದ್ದರು.
NEH 7:11 ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,818 ಮಂದಿ ಇದ್ದರು.
NEH 7:12 ಏಲಾಮನ ವಂಶಜರು 1,254 ಮಂದಿ ಇದ್ದರು.
NEH 7:13 ಜತ್ತೂವಿನ ವಂಶಜರು 845 ಮಂದಿ ಇದ್ದರು.
NEH 7:14 ಜಕ್ಕೈನ ವಂಶಜರು 760 ಮಂದಿ ಇದ್ದರು.
NEH 7:15 ಬಿನ್ನೂಯನ ವಂಶಜರು 648 ಮಂದಿ ಇದ್ದರು.
NEH 7:16 ಬೇಬೈನ ವಂಶಜರು 628 ಮಂದಿ ಇದ್ದರು.
NEH 7:17 ಅಜ್ಗಾದನ ವಂಶಜರು 2,322 ಮಂದಿ ಇದ್ದರು.
NEH 7:18 ಅದೋನೀಕಾಮಿನ ವಂಶಜರು 667 ಮಂದಿ ಇದ್ದರು.
NEH 7:19 ಬಿಗ್ವೈ ವಂಶಜರು 2,067 ಮಂದಿ ಇದ್ದರು.
NEH 7:20 ಅದೀನನ ವಂಶಜರು 655 ಮಂದಿ ಇದ್ದರು.
NEH 7:21 ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 ಮಂದಿ ಇದ್ದರು.
NEH 7:22 ಹಾಷುಮನ ವಂಶಜರು 328 ಮಂದಿ ಇದ್ದರು.
NEH 7:23 ಬೇಚೈಯ ವಂಶಜರು 324 ಮಂದಿ ಇದ್ದರು.
NEH 7:24 ಹಾರೀಫನ ವಂಶಜರು 112 ಮಂದಿ ಇದ್ದರು.
NEH 7:25 ಗಿಬ್ಯೋನನ ವಂಶಜರು 95 ಮಂದಿ ಇದ್ದರು.
NEH 7:26 ಬೇತ್ಲೆಹೇಮಿನವರೂ ನೆಟೋಫದವರೂ 188 ಮಂದಿ ಇದ್ದರು.
NEH 7:27 ಅನಾತೋತ್ ಊರಿನವರು 128 ಮಂದಿ ಇದ್ದರು.
NEH 7:28 ಬೇತ್ ಅಜ್ಮಾವೆತಿನವರು 42 ಮಂದಿ ಇದ್ದರು.
NEH 7:29 ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 ಮಂದಿ ಇದ್ದರು.
NEH 7:30 ರಾಮಾ ಗೆಬ ಎಂಬ ಪಟ್ಟಣದವರು 621 ಮಂದಿ ಇದ್ದರು.
NEH 7:31 ಮಿಕ್ಮಾಷದ ಜನರು 122 ಮಂದಿ ಇದ್ದರು.
NEH 7:32 ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 123 ಮಂದಿ ಇದ್ದರು.
NEH 7:33 ಮತ್ತೊಂದು ನೆಬೋ ಊರಿನವರು 52 ಮಂದಿ ಇದ್ದರು.
NEH 7:34 ಮತ್ತೊಬ್ಬ ಏಲಾಮನ ವಂಶಜರು 1,254 ಮಂದಿ ಇದ್ದರು.
NEH 7:35 ಹಾರಿಮನ ವಂಶಜರು 320 ಮಂದಿ ಇದ್ದರು.
NEH 7:36 ಯೆರಿಕೋವಿನ ವಂಶಜರು 345 ಮಂದಿ ಇದ್ದರು.
NEH 7:37 ಲೋದ್, ಹಾದೀದ್, ಓನೋ ಎಂಬ ಊರಿನ ಜನರು 721 ಮಂದಿ ಇದ್ದರು.
NEH 7:38 ಸೆನಾಹನ ವಂಶಜರು 3,930 ಮಂದಿ ಇದ್ದರು.
NEH 7:39 ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973.
NEH 7:40 ಇಮ್ಮೇರನ ವಂಶಜರು 1,052.
NEH 7:41 ಪಷ್ಹೂರನ ವಂಶಜರು 1,247.
NEH 7:42 ಹಾರಿಮನ ವಂಶಜರು 1,017.
NEH 7:43 ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
NEH 7:44 ಹಾಡುಗಾರರು: ಆಸಾಫನ 148 ವಂಶಜರು.
NEH 7:45 ದೇವಾಲಯದ ದ್ವಾರಪಾಲಕರಾದ, ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು 138.
NEH 7:46 ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್,
NEH 7:47 ಕೆರೋಸ್, ಸೀಯ, ಪದೋನ್,
NEH 7:48 ಲೆಬಾನ, ಹಗಾಬ, ಶಲ್ಮೈ,
NEH 7:49 ಹಾನಾನ್, ಗಿದ್ದೇಲ್, ಗಹರ್,
NEH 7:50 ರೆವಾಯ, ರೆಚೀನ್, ನೆಕೋದ,
NEH 7:51 ಗಜ್ಜಾಮ್, ಉಜ್ಜ, ಪಾಸೇಹ,
NEH 7:52 ಬೇಸೈ, ಮೆಯನೀಮ್, ನೆಫೀಸೀಮ್,
NEH 7:53 ಬಕ್ಬೂಕ್, ಹಕ್ಕೂಫ, ಹರ್ಹೂರ್,
NEH 7:54 ಬಚ್ಲೂತ್, ಮೆಹೀದ, ಹರ್ಷ,
NEH 7:55 ಬರ್ಕೋಸ್, ಸೀಸೆರ, ತೆಮಹ,
NEH 7:56 ನೆಚೀಹ, ಹಟೀಫ, ಇವರ ವಂಶಜರು.
NEH 7:57 ಸೊಲೊಮೋನನ ಸೇವಕರ ವಂಶಜರು: ಸೋಟೈ, ಸೋಫೆರೆತ್, ಪೆರೀದ,
NEH 7:58 ಯಾಲ, ದರ್ಕೋನ್, ಗಿದ್ದೇಲ್,
NEH 7:59 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಮುಂತಾದವರ ಮಕ್ಕಳು.
NEH 7:60 ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
NEH 7:61 ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
NEH 7:62 ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 642 ಮಂದಿ.
NEH 7:63 ಯಾಜಕರಲ್ಲಿ, ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ ಅವನ ಹೆಸರನ್ನು ಇಟ್ಟುಕೊಂಡನು.
NEH 7:64 ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
NEH 7:65 ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
NEH 7:66 ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
NEH 7:67 ಅವರ ಹೊರತಾಗಿ ಅವರ ದಾಸರೂ ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 245 ಮಂದಿಯೂ ಇದ್ದರು.
NEH 7:68 ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು.
NEH 7:69 435 ಒಂಟೆಗಳು, 6,720 ಕತ್ತೆಗಳು ಇದ್ದವು.
NEH 7:70 ಕುಟುಂಬಗಳ ಕೆಲವು ಮುಖ್ಯಸ್ಥರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ರಾಜ್ಯಪಾಲನು ಬೊಕ್ಕಸಕ್ಕೆ 8.4 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 50 ಪಾತ್ರೆಗಳನ್ನೂ, 530 ಯಾಜಕರ ಅಂಗಿಗಳನ್ನೂ ಕೊಟ್ಟನು.
NEH 7:71 ಇದಲ್ಲದೆ ಮುಖ್ಯವಾದ ಪಿತೃಗಳಲ್ಲಿ ಕೆಲವರು ಕೆಲಸದ ಬೊಕ್ಕಸಕ್ಕೆ 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 1.2 ಮೆಟ್ರಿಕ್ ಟನ್ ಬೆಳ್ಳಿಯನ್ನು ಕೊಟ್ಟರು.
NEH 7:72 ಮಿಕ್ಕಾದ ಜನರು ಕೊಟ್ಟದ್ದೇನೆಂದರೆ: 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ 1.1 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 67 ಯಾಜಕರ ಅಂಗಿಗಳನ್ನೂ ಕೊಟ್ಟರು.
NEH 7:73 ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
NEH 8:1 ಜನರೆಲ್ಲರು ಏಕವಾಗಿ ನೀರು ಬಾಗಿಲಿಗೆ ಎದುರಾಗಿರುವ ಬೀದಿಯಲ್ಲಿ ಕೂಡಿಕೊಂಡು ಬಂದರು. ಯೆಹೋವ ದೇವರು ಇಸ್ರಾಯೇಲರಿಗೆ ಆಜ್ಞಾಪಿಸಿದ ಮೋಶೆಯ ನಿಯಮದ ಗ್ರಂಥವನ್ನು ತೆಗೆದುಕೊಂಡು ಬರಲು ಜನರು ನಿಯಮಶಾಸ್ತ್ರಿಯಾದ ಎಜ್ರನಿಗೆ ಹೇಳಿದರು.
NEH 8:2 ಹೀಗೆಯೇ ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯಿಂದ ಕೇಳುವವರೆಲ್ಲರ ಮುಂದೆಯೂ ಯಾಜಕನಾದ ಎಜ್ರನು ದೇವರ ನಿಯಮವನ್ನು ತೆಗೆದುಕೊಂಡು ಬಂದನು.
NEH 8:3 ಅನಂತರ ಎಜ್ರನು ನೀರಿನ ಬಾಗಿಲ ಮುಂಭಾಗದಲ್ಲಿರುವ ಬೀದಿಯಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯುಳ್ಳ ಎಲ್ಲರ ಮುಂದೆಯೂ ಬೆಳಗಿನಿಂದ ಮಧ್ಯಾಹ್ನದವರೆಗೆ ಓದಿದನು. ಜನರೆಲ್ಲರು ನಿಯಮದ ಗ್ರಂಥಕ್ಕೆ ಕಿವಿಗೊಟ್ಟರು.
NEH 8:4 ಆಗ ನಿಯಮಶಾಸ್ತ್ರಿಯಾದ ಎಜ್ರನು ಅದಕ್ಕೋಸ್ಕರ ಮಾಡಲಾಗಿದ್ದ ಒಂದು ಮರದ ಪೀಠದ ಮೇಲೆ ನಿಂತನು. ಅವನ ಬಳಿಯಲ್ಲಿ ಅವನ ಬಲಗಡೆಯಲ್ಲಿ ಮತ್ತಿತ್ಯ. ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ, ಅವನಿಗೆ ಎಡಗಡೆಯಲ್ಲಿ ಪೆದಾಯ್, ಮೀಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ನಿಂತಿದ್ದರು.
NEH 8:5 ಎಜ್ರನು ಸಕಲ ಜನರ ಕಣ್ಣು ಮುಂದೆ ದೇವರ ಗ್ರಂಥವನ್ನು ತೆರೆದನು. ಸಕಲ ಜನರಿಗಿಂತ ಎತ್ತರವಾದ ಸ್ಥಳದಲ್ಲಿ ನಿಂತಿದ್ದನು. ಅವನು ಅದನ್ನು ತೆರೆದಾಗ, ಜನರೆಲ್ಲರು ಎದ್ದು ನಿಂತರು.
NEH 8:6 ಆಗ ಎಜ್ರನು ಮಹಾ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಉತ್ತರವಾಗಿ, “ಆಮೆನ್, ಆಮೆನ್,” ಎಂದು ಹೇಳಿ ನೆಲದವರೆಗೂ ತಮ್ಮ ತಲೆಗಳನ್ನು ಬಗ್ಗಿಸಿ ಯೆಹೋವ ದೇವರನ್ನು ಆರಾಧಿಸಿದರು.
NEH 8:7 ಆಮೇಲೆ ಯೇಷೂವ, ಬಾನೀ, ಶೇರೇಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್, ಪೆಲಾಯ ಎಂಬ ಲೇವಿಯರು ನಿಯಮವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.
NEH 8:8 ಜನರು ಎದ್ದು ನಿಂತ ನಂತರ, ಅವರು ದೇವರ ನಿಯಮವನ್ನು ಸ್ಪಷ್ಟವಾಗಿ ಓದುತ್ತಾ, ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು.
NEH 8:9 ರಾಜಪಾಲನಾದ ನೆಹೆಮೀಯನೂ, ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನೂ, ಜನರನ್ನು ಬೋಧಿಸುತ್ತಿದ್ದ ಲೇವಿಯರೂ ಜನರೆಲ್ಲರಿಗೆ: “ಈ ದಿನವು ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಪರಿಶುದ್ಧವಾದುದರಿಂದ ದುಃಖಿಸದೆ, ಅಳದೆ ಇರಿ,” ಎಂದರು. ಏಕೆಂದರೆ ಜನರೆಲ್ಲರು ದೇವರ ನಿಯಮದ ಮಾತುಗಳನ್ನು ಕೇಳಿದಾಗ ಅತ್ತರು.
NEH 8:10 ಇದಲ್ಲದೆ ಎಜ್ರನು ಅವರಿಗೆ, “ನೀವು ಹೋಗಿ ಒಳ್ಳೆಯ ಆಹಾರವನ್ನು ತಿಂದು, ಸಿಹಿಯಾದದ್ದನ್ನು ಕುಡಿಯಿರಿ, ತಮಗಾಗಿ ಸಿದ್ಧಮಾಡಿಕೊಳ್ಳದವರಿಗೆ ಒಂದು ಪಾಲನ್ನು ಕಳುಹಿಸಿಕೊಡಿರಿ. ಈ ದಿನವು ನಮ್ಮ ಯೆಹೋವ ದೇವರಿಗೆ ಪರಿಶುದ್ಧವಾಗಿದೆ. ನೀವು ವ್ಯಥೆಪಡಬೇಡಿರಿ. ಯೆಹೋವ ದೇವರ ಆನಂದವೇ ನಿಮ್ಮ ಬಲ,” ಎಂದು ಹೇಳಿದನು.
NEH 8:11 ಲೇವಿಯರು ಕೂಡ, “ಈ ದಿನವು ಪರಿಶುದ್ಧವಾದುದರಿಂದ ನೀವು ಶಾಂತವಾಗಿದ್ದು, ವ್ಯಥೆಪಡಬೇಡಿರಿ,” ಎಂದು ಹೇಳಿ ಜನರನ್ನು ಸುಮ್ಮನಿರಿಸಿದರು.
NEH 8:12 ಆಗ ಜನರೆಲ್ಲರೂ ತಮಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ, ಅವರು ಅನ್ನಪಾನಗಳನ್ನು ತೆಗೆದುಕೊಂಡು, ಏನೂ ಇಲ್ಲದವರಿಗೆ ಆಹಾರ ಪಾಲುಗಳನ್ನು ಕಳುಹಿಸಲೂ ಮತ್ತು ಸಂತೋಷದಿಂದ ಆಚರಿಸಲೂ ಹೊರಟು ಹೋದರು.
NEH 8:13 ಎರಡನೆಯ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿರುವ ಮುಖ್ಯವಾದವರೂ ಯಾಜಕರೂ ಲೇವಿಯರೂ ದೇವರ ನಿಯಮದ ಮಾತುಗಳನ್ನು ತಿಳಿದುಕೊಳ್ಳುವ ಹಾಗೆ, ನಿಯಮಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.
NEH 8:14 ಆಗ ಅವರು ಏಳನೆಯ ತಿಂಗಳ ಹಬ್ಬದಲ್ಲಿ, ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ವಿಷಯ ನಿಯಮದಲ್ಲಿ ಬರೆದದ್ದನ್ನು ಕಂಡರು.
NEH 8:15 ಅದರಲ್ಲಿ, “ಪರ್ಣಶಾಲೆಗಳಿಗಾಗಿ ಬೆಟ್ಟಕ್ಕೆ ಹೋಗಿ ಓಲಿವ್, ಕಾಡು ಓಲಿವ್, ಸುಗಂಧ, ಖರ್ಜೂರ ಮುಂತಾದ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತೆಗೆದುಕೊಂಡು ಬನ್ನಿರಿ ಎಂದೂ, ತಮ್ಮ ಸಕಲ ಪಟ್ಟಣಗಳಲ್ಲಿಯೂ, ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು,” ಎಂದೂ ಬರೆದಿತ್ತು.
NEH 8:16 ಹಾಗೆಯೇ ಜನರು ಹೊರಟುಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ಅವರವರು ತಮ್ಮ ಮನೆಗಳ ಮೇಲೆಯೂ, ತಮ್ಮ ಅಂಗಳಗಳಲ್ಲಿಯೂ, ದೇವರ ಮನೆಯ ಅಂಗಳಗಳಲ್ಲಿಯೂ, ನೀರು ಬಾಗಿಲ ಬೀದಿಗಳಲ್ಲಿಯೂ, ಎಫ್ರಾಯೀಮನ ಬಾಗಿಲ ಬೀದಿಗಳಲ್ಲಿಯೂ ತಮಗೆ ಪರ್ಣಶಾಲೆಗಳನ್ನು ಹಾಕಿದರು.
NEH 8:17 ಈ ಪ್ರಕಾರ ಸೆರೆಯಿಂದ ತಿರುಗಿ ಬಂದ ಸಭೆಯವರೆಲ್ಲರು ಪರ್ಣಶಾಲೆಗಳನ್ನು ಹಾಕಿ, ಅದರಲ್ಲಿ ವಾಸವಾಗಿದ್ದರು. ನೂನನ ಮಗ ಯೆಹೋಶುವನ ದಿನವು ಮೊದಲುಗೊಂಡು ಆ ದಿವಸದವರೆಗೂ ಇಸ್ರಾಯೇಲರು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷವಿತ್ತು.
NEH 8:18 ಎಜ್ರನು ಮೊದಲನೆಯ ದಿವಸದಿಂದ ಕಡೇ ದಿವಸದವರೆಗೂ ದಿನದಿನವೂ ದೇವರ ನಿಯಮದ ಗ್ರಂಥವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೆಯ ದಿವಸದಲ್ಲಿ ಪದ್ಧತಿಯ ಪ್ರಕಾರ ಸಭೆಯು ಸೇರಿತ್ತು.
NEH 9:1 ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ ಇಸ್ರಾಯೇಲರು ಉಪವಾಸ ಮಾಡಿ, ಗೋಣಿತಟ್ಟನ್ನು ಉಟ್ಟುಕೊಂಡು, ತಮ್ಮ ಮೇಲೆ ಧೂಳನ್ನು ಹಾಕಿಕೊಂಡು ನೆರೆದುಬಂದರು.
NEH 9:2 ಆಗ ಇಸ್ರಾಯೇಲ್ ಸಂತಾನದವರು ತಮ್ಮನ್ನು ಸಮಸ್ತ ಜನರಿಂದ ಪ್ರತ್ಯೇಕಿಸಿಕೊಂಡು ನಿಂತು, ತಮ್ಮ ಪಾಪಗಳನ್ನೂ, ತಮ್ಮ ಪಿತೃಗಳ ಪಾಪಗಳನ್ನೂ ಅರಿಕೆಮಾಡಿದರು.
NEH 9:3 ಅವರು ತಮ್ಮ ಸ್ಥಳಗಳಲ್ಲಿ ನಿಂತು ಮೂರು ತಾಸುಗಳು ತಮ್ಮ ದೇವರಾಗಿರುವ ಯೆಹೋವ ದೇವರ ನಿಯಮದ ಗ್ರಂಥವನ್ನು ಓದಿದರು. ಮತ್ತೊಂದು ಮೂರು ತಾಸುಗಳು ತಮ್ಮ ಪಾಪಗಳನ್ನು ಅರಿಕೆಮಾಡಿ, ತಮ್ಮ ದೇವರಾಗಿರುವ ಯೆಹೋವ ದೇವರನ್ನು ಆರಾಧಿಸಿದರು.
NEH 9:4 ಆಗ ಮೆಟ್ಟಿಲುಗಳ ಮೇಲೆ ಲೇವಿಯರಲ್ಲಿ ಯೇಷೂವ, ಬಾನೀ, ಕದ್ಮಿಯೇಲ್, ಶೆಬನ್ಯ, ಬುನ್ನಿ, ಶೇರೇಬ್ಯ, ಬಾನೀ, ಕೆನಾನಿ ಎಂಬವರು ನಿಂತು ಮಹಾಶಬ್ದದಿಂದ ತಮ್ಮ ದೇವರಾಗಿರುವ ಯೆಹೋವ ದೇವರಿಗೆ ಮೊರೆಯಿಟ್ಟರು.
NEH 9:5 ಲೇವಿಯರಾದ ಯೇಷೂವ, ಕದ್ಮಿಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು ಜನರಿಗೆ: “ಏಳಿರಿ, ಎಂದೆಂದಿಗೂ ಏಕರೀತಿಯಾಗಿರುವ ನಿಮ್ಮ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿರಿ,” ಎಂದರು. ಅನಂತರ ಅವರು, “ಯೆಹೋವ ದೇವರೇ, ಸಕಲ ಸ್ತುತಿ ಆಶೀರ್ವಾದಗಳಿಗೆ ಉನ್ನತವಾದದ್ದು ನಿಮ್ಮ ಮಹಿಮೆಯುಳ್ಳ ಹೆಸರು.
NEH 9:6 ನೀವು ಒಬ್ಬರೇ ದೇವರಾಗಿದ್ದೀರಿ. ನೀವು ಆಕಾಶವನ್ನೂ ಅದರ ಸಮಸ್ತ ಸೈನ್ಯವನ್ನೂ, ಭೂಮಿಯನ್ನೂ, ಅದರಲ್ಲಿರುವ ಪ್ರತಿಯೊಂದನ್ನೂ, ಸಮುದ್ರಗಳನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿದ್ದೀರಿ. ಅವುಗಳಿಗೆಲ್ಲಾ ಜೀವ ಕೊಡುವವರು ನೀವೇ. ಇದಲ್ಲದೆ ಆಕಾಶಗಳ ಸೈನ್ಯವು ನಿಮ್ಮನ್ನು ಆರಾಧಿಸುತ್ತವೆ.
NEH 9:7 “ನೀವು ಅಬ್ರಾಮನನ್ನು ಆಯ್ದುಕೊಂಡಿರುವ ಯೆಹೋವ ದೇವರು. ನೀವು ಅವನನ್ನು ಊರ್ ಎಂಬ ಕಸ್ದೀಯರ ಪಟ್ಟಣದಿಂದ ಹೊರಗೆ ಬರಮಾಡಿ, ಅವನಿಗೆ ಅಬ್ರಹಾಮ್ ಎಂದು ಹೆಸರಿಟ್ಟಿರಿ.
NEH 9:8 ಅವನ ಹೃದಯವು ನಿಮ್ಮ ಮುಂದೆ ಪ್ರಾಮಾಣಿಕವಾದದ್ದೆಂದೂ ಗುರುತಿಸಿದಿರಿ. ಕಾನಾನ್ಯರೂ, ಹಿತ್ತಿಯರೂ, ಅಮೋರಿಯರೂ, ಪೆರಿಜೀಯರೂ, ಯೆಬೂಸಿಯರೂ, ಗಿರ್ಗಾಷಿಯರೂ ಇವರ ದೇಶವನ್ನು, ಅಬ್ರಾಮನ ಸಂತಾನಕ್ಕೆ ಕೊಡುವಂತೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿರಿ. ನೀತಿವಂತರಾದ ನೀವು ನಿಮ್ಮ ವಾಗ್ದಾನವನ್ನು ಈಡೇರಿಸಿದಿರಿ.
NEH 9:9 “ಇದಲ್ಲದೆ ಈಜಿಪ್ಟಿನಲ್ಲಿ ನಮ್ಮ ಪಿತೃಗಳ ದೀನಸ್ಥಿತಿಯನ್ನು ನೋಡಿದಿರಿ. ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿರಿ.
NEH 9:10 ಈಜಿಪ್ಟಿನವರು ಗರ್ವಿಗಳಾಗಿ ಇಸ್ರಾಯೇಲರನ್ನು ಕುಗ್ಗಿಸಿದಾಗ, ನೀವು ಫರೋಹನ ಮೇಲೆಯೂ, ಅವನ ಸಮಸ್ತ ಅಧಿಕಾರಿಗಳ ಮೇಲೆಯೂ, ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದಿರಿ. ಈ ಪ್ರಕಾರವೇ ನೀವು ಇಂದಿನವರೆಗೂ ನಿಮ್ಮ ಹೆಸರಿನ ಕೀರ್ತಿಯನ್ನು ಸ್ಥಾಪಿಸಿದ್ದೀರಿ.
NEH 9:11 ನೀವು ಜನರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ, ಅವರು ಸಮುದ್ರದ ನಡುವೆ ಒಣಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನಂತೆ ಮಹಾ ಜಲರಾಶಿಗಳಲ್ಲಿ ಮುಳುಗಿಸಿಬಿಟ್ಟಿರಿ
NEH 9:12 ಇದಲ್ಲದೆ ಹಗಲಿನಲ್ಲಿ ಮೇಘಸ್ತಂಭದಿಂದಲೂ, ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭದಿಂದಲೂ ಅವರನ್ನು ನಡೆಸಿದಿರಿ.
NEH 9:13 “ನೀವು ಸೀನಾಯಿ ಪರ್ವತದ ಮೇಲಕ್ಕೆ ಇಳಿದುಬಂದು, ಆಕಾಶದಿಂದ ಅವರ ಸಂಗಡ ಮಾತನಾಡಿದಿರಿ. ಸರಿಯಾದ ನ್ಯಾಯಗಳನ್ನೂ, ಸತ್ಯವಾದ ನಿಯಮಗಳನ್ನೂ, ಉತ್ತಮವಾದ ಕಟ್ಟಳೆಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕೊಟ್ಟಿರಿ.
NEH 9:14 ನೀವು ಪರಿಶುದ್ಧ ಸಬ್ಬತ್ ದಿನವನ್ನು ಅವರಿಗೆ ತಿಳಿಸಿ, ನಿಮ್ಮ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ, ನಿಯಮಗಳನ್ನೂ ಕೊಟ್ಟಿರಿ.
NEH 9:15 ಅವರು ಹಸಿದಾಗ ಆಕಾಶದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿದಿರಿ. ನಿಮ್ಮ ಉನ್ನತ ಹಸ್ತದಿಂದ ವಾಗ್ದಾನ ಮಾಡಿದ ದೇಶದಲ್ಲಿ ನೀವು ಅವರನ್ನು ಸೇರಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಹೇಳಿದಿರಿ.
NEH 9:16 “ಆದರೆ ನಮ್ಮ ಪಿತೃಗಳು ಗರ್ವಪಟ್ಟು ನಡೆದು, ಹಟಮಾರಿಗಳೂ, ಕಠಿಣರೂ ಆಗಿ ನಿಮ್ಮ ಆಜ್ಞೆಗಳಿಗೆ ಅವಿಧೇಯರಾದರು.
NEH 9:17 ಅವರು ನಿಮ್ಮ ಸ್ವರವನ್ನು ಕೇಳದೆಯೂ, ನೀವು ಅವರ ನಡುವೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕಮಾಡದೆ ಹೋದರು. ಅವರು ತಮ್ಮ ಹೃದಯವನ್ನು ಕಠಿಣ ಮಾಡಿಕೊಂಡು, ನಿಮಗೆ ಎದುರುಬಿದ್ದು, ತಮ್ಮ ದಾಸತ್ವಕ್ಕೆ ತಿರುಗಿ ಹೋಗುವಹಾಗೆ ನಾಯಕನನ್ನು ನೇಮಿಸಿಕೊಂಡರು. ಆದರೆ ನೀವು ಮನ್ನಿಸುವ ದೇವರಾಗಿಯೂ, ಕೃಪಾಪೂರ್ಣರೂ, ಅನುಕಂಪವುಳ್ಳವರೂ, ದೀರ್ಘಶಾಂತರೂ, ಪ್ರೀತಿಯಲ್ಲಿ ಸಮೃದ್ಧರೂ ಆಗಿರುವುದರಿಂದ ಅವರನ್ನು ಕೈಬಿಡಲಿಲ್ಲ.
NEH 9:18 ಆದರೆ ಅವರು ತಮಗೋಸ್ಕರ ಒಂದು ಎರಕದ ಕರುವನ್ನು ಮಾಡಿಕೊಂಡರು. ‘ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ಇದೇ,’ ಎಂದು ಹೇಳಿ, ನಿಮ್ಮನ್ನೇ ಬಹು ದೂಷಿಸಿ ಅಸಡ್ಡೆಮಾಡಿಬಿಟ್ಟರು.
NEH 9:19 “ಆದರೆ ನೀವು ನಿಮ್ಮ ಬಹು ಕರುಣೆಯಿಂದ ಮರುಭೂಮಿಯಲ್ಲಿ ಅವರನ್ನು ಕೈಬಿಡಲಿಲ್ಲ. ಹಗಲಿನಲ್ಲಿ ಅವರಿಗೆ ಮೇಘಸ್ತಂಭವು ದಾರಿ ತೋರಿಸದೆ ಇರಲಿಲ್ಲ. ರಾತ್ರಿಯಲ್ಲಿ ಅವರಿಗೆ ಬೆಳಕನ್ನೂ, ಅವರು ನಡೆಯತಕ್ಕ ಮಾರ್ಗವನ್ನೂ ತೋರಿಸುವ ಅಗ್ನಿ ಸ್ತಂಭವು ಅವರನ್ನು ಬಿಟ್ಟುಹೋಗಲಿಲ್ಲ.
NEH 9:20 ಇದಲ್ಲದೆ ನೀವು ಅವರಿಗೆ ಬೋಧಿಸುವ ನಿಮ್ಮ ಒಳ್ಳೆಯ ಆತ್ಮವನ್ನು ಕೊಟ್ಟಿರಿ. ಅವರ ಬಾಯಿಂದ ನಿಮ್ಮ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದ ಅವರಿಗೆ ನೀರನ್ನು ಕೊಟ್ಟಿರಿ.
NEH 9:21 ಹೀಗೆಯೇ ಮರುಭೂಮಿಯಲ್ಲಿ ನಾಲ್ವತ್ತು ವರ್ಷ ಅವರನ್ನು ಪೋಷಿಸುತ್ತಿದ್ದಿರಿ. ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ವಸ್ತ್ರಗಳು ಹಳೆಯದಾಗಲಿಲ್ಲ. ಅವರ ಕಾಲುಗಳು ಬಾತುಹೋಗಲಿಲ್ಲ.
NEH 9:22 “ನೀವು ಅವರಿಗೆ ರಾಜ್ಯಗಳನ್ನೂ, ಜನಾಂಗಗಳನ್ನೂ ವಶಪಡಿಸಿದಿರಿ. ಅವರಿಗೆ ಮೇರೆಗಳನ್ನು ವಿಭಾಗಿಸಿ ಕೊಟ್ಟಿರಿ. ಆಗ ಅವರು, ಹೆಷ್ಬೋನಿನ ಅರಸನಾದ ಸೀಹೋನನ ದೇಶವನ್ನೂ, ಬಾಷಾನಿನ ಅರಸನಾದ ಓಗನ ದೇಶವನ್ನೂ ಸ್ವಾಧೀನಮಾಡಿಕೊಂಡರು.
NEH 9:23 ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿದಿರಿ. ಅವರು ಸ್ವಾಧೀನಮಾಡಿಕೊಳ್ಳುವರು ಎಂದು ನೀವು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಬರಮಾಡಿದಿರಿ.
NEH 9:24 ಹಾಗೆಯೇ ಇಸ್ರಾಯೇಲರು ಹೋಗಿ, ಆ ದೇಶವನ್ನು ಸ್ವಾಧೀನಮಾಡಿಕೊಂಡರು. ನೀವು ಆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಅವರ ಮುಂದೆ ಕುಗ್ಗಿಸಿ, ಅವರಿಗೆ ಸರಿತೋರಿದ ಪ್ರಕಾರ ಮಾಡುವುದಕ್ಕೆ ಅವರನ್ನೂ, ಅವರ ಅರಸರನ್ನೂ, ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿರಿ.
NEH 9:25 ಅವರು ಕೋಟೆ ಪಟ್ಟಣಗಳನ್ನೂ, ರಸವತ್ತಾದ ಭೂಮಿಯನ್ನೂ ವಶಪಡಿಸಿಕೊಂಡರು. ಉತ್ತಮವಾದವುಗಳಿಂದ ತುಂಬಿದ ಮನೆಗಳನ್ನೂ, ಅಗಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಓಲಿವ್ ತೋಪುಗಳನ್ನೂ, ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು, ಪುಷ್ಟಿಯಾಗಿ ನಿಮ್ಮ ಮಹಾ ಉಪಕಾರದಲ್ಲಿ ಆನಂದಿಸುತ್ತಿದ್ದರು.
NEH 9:26 “ಆದರೂ ಅವರು ನಿಮಗೆ ಅವಿಧೇಯರಾಗಿ ತಿರುಗಿಬಿದ್ದು, ನಿಮ್ಮ ನಿಯಮವನ್ನು ಉಲ್ಲಂಘಿಸಿ, ತಮ್ಮನ್ನು ಎಚ್ಚರಿಸುವುದಕ್ಕೂ, ನಿಮ್ಮ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿಮ್ಮ ಪ್ರವಾದಿಗಳನ್ನೇ ಕೊಂದುಹಾಕಿದರು. ಹೀಗೆ ನಿಮ್ಮನ್ನೇ ಬಹು ದೂಷಿಸಿ ಅಸಡ್ಡೆಮಾಡಿಬಿಟ್ಟರು.
NEH 9:27 ಆದ್ದರಿಂದ ನೀವು ಬಾಧಿಸುವ ವಿರೋಧಿಗಳ ಕೈಗೆ ಅವರನ್ನು ಒಪ್ಪಿಸಿದಿರಿ. ಆದರೆ ತಮ್ಮ ಇಕ್ಕಟ್ಟಿನ ಕಾಲದಲ್ಲಿ ಅವರು ನಿಮಗೆ ಮೊರೆಯಿಟ್ಟಾಗ, ನೀವು ಪರಲೋಕದಿಂದ ಕೇಳಿ, ನಿಮ್ಮ ಮಹಾ ಕರುಣೆಯ ಪ್ರಕಾರ ಅವರ ವೈರಿಗಳ ಕೈಯಿಂದ ರಕ್ಷಿಸುವುದಕ್ಕೆ ರಕ್ಷಕರನ್ನು ಅವರಿಗೆ ಕಳುಹಿಸಿದಿರಿ.
NEH 9:28 “ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದಕಾರಣ ಅವರ ಶತ್ರುಗಳು ಅವರನ್ನು ಮತ್ತೆ ಆಳುವಂತೆ ಶತ್ರು ಕೈಗೆ ಅವರನ್ನು ಒಪ್ಪಿಸಿದಿರಿ. ಆದರೆ ಅವರು ತಿರುಗಿ ನಿಮ್ಮನ್ನು ಕೂಗಿಕೊಳ್ಳಲು, ನೀವು ಪರಲೋಕದಿಂದ ಕೇಳಿ, ನಿಮ್ಮ ಅನುಕಂಪಕ್ಕೆ ಅನುಸಾರವಾಗಿ ಅವರನ್ನು ಅನೇಕ ಸಾರಿ ವಿಮೋಚಿಸಿದಿರಿ.
NEH 9:29 “ನೀವು ಅವರನ್ನು ನಿಮ್ಮ ನಿಯಮಕ್ಕೆ ಮರಳಿ ಬರುವ ಹಾಗೆ ಅವರನ್ನು ಎಚ್ಚರಿಸಿದಿರಿ. ಆದರೆ ಅವರು ಗರ್ವಪಟ್ಟು, ನಿಮ್ಮ ಆಜ್ಞೆಗಳನ್ನು ಅನುಸರಿಸದೆ ಹೋದರು. ನಿಮ್ಮ ವಾಕ್ಯಗಳನ್ನು ಕೈಗೊಳ್ಳುವುದರಿಂದ ಮನುಷ್ಯರು ಬದುಕುವರು ಎಂಬುದನ್ನು ಅವರು ತಿಳಿದಿದ್ದರೂ, ಆ ನಿಮ್ಮ ವಾಕ್ಯಗಳಿಗೆ ವಿರೋಧವಾಗಿ ಪಾಪಮಾಡಿ, ತಮ್ಮ ಹೃದಯವನ್ನು ಕಠಿಣಪಡಿಸಿಕೊಂಡು ನಿಮ್ಮ ಮಾತನ್ನು ಕೇಳದೆ ಹೋದರು.
NEH 9:30 ನೀವು ಅನೇಕ ವರ್ಷ ಅವರನ್ನು ತಾಳಿಕೊಂಡಿರಿ. ನಿಮ್ಮ ಪ್ರವಾದಿಗಳ ಮುಖಾಂತರ ನಿಮ್ಮ ಆತ್ಮನಿಂದ ಅವರನ್ನು ಎಚ್ಚರಿಸಿದಿರಿ. ಆದರೆ ಅವರು ಕಿವಿಗೊಡದೆ ಇದ್ದುದರಿಂದ ನೀವು ಅವರನ್ನು ಅನ್ಯದೇಶದವರ ಕೈಯಲ್ಲಿ ಒಪ್ಪಿಸಿದಿರಿ.
NEH 9:31 ಆದರೂ ನೀವು ನಿಮ್ಮ ಮಹಾ ಕರುಣೆಯಲ್ಲಿ ಅವರನ್ನು ನಾಶಮಾಡಲಿಲ್ಲ. ಅವರನ್ನು ಕೈಬಿಡಲೂ ಇಲ್ಲ. ಏಕೆಂದರೆ ನೀವು ಕೃಪೆಯೂ, ಕರುಣೆಯೂ ಉಳ್ಳ ದೇವರಾಗಿದ್ದೀರಿ.
NEH 9:32 “ಆದಕಾರಣ ನಮ್ಮ ದೇವರೇ, ಪ್ರೀತಿಯ ಒಡಂಬಡಿಕೆಯನ್ನು ಕೈಗೊಳ್ಳುವಂಥ ಮಹಾ ಪರಾಕ್ರಮವುಳ್ಳ ಭಯಭಕ್ತಿಗೆ ಕಾರಣರಾದ ದೇವರೇ, ಅಸ್ಸೀರಿಯದ ಅರಸರ ಕಾಲ ಮೊದಲ್ಗೊಂಡು ಇಂದಿನವರೆಗೆ ನಮ್ಮ ಮೇಲೆಯೂ, ನಮ್ಮ ಅರಸರ ಮೇಲೆಯೂ, ನಮ್ಮ ಪ್ರಧಾನರ ಮೇಲೆಯೂ, ನಮ್ಮ ಯಾಜಕರ ಮೇಲೆಯೂ, ನಮ್ಮ ಪ್ರವಾದಿಗಳ ಮೇಲೆಯೂ, ನಮ್ಮ ಪಿತೃಗಳ ಮೇಲೆಯೂ, ನಿಮ್ಮ ಸಮಸ್ತ ಜನರ ಮೇಲೆಯೂ ಬಂದ ಇವೆಲ್ಲಾ ಕಷ್ಟಸಂಕಟಗಳು ನಿಮಗೆ ಅಲ್ಪವಾಗಿ ಕಾಣದಿರಲಿ.
NEH 9:33 ನೀವು ನಮ್ಮ ಮೇಲೆ ಬರಮಾಡಿದ ಎಲ್ಲದರಲ್ಲಿಯೂ ನ್ಯಾಯವಂತರಾಗಿರುವಿರಿ. ಏಕೆಂದರೆ ನೀವು ಮಾಡಿದ್ದು ಸತ್ಯಕ್ಕನುಸಾರವಾದದ್ದು. ಆದರೆ ನಾವು ದುಷ್ಟರಾಗಿ ನಡೆದೆವು.
NEH 9:34 ನಮ್ಮ ಅರಸರೂ, ನಮ್ಮ ಪ್ರಧಾನರೂ, ನಮ್ಮ ಯಾಜಕರೂ, ನಮ್ಮ ಪಿತೃಗಳೂ ನಿಮ್ಮ ನಿಯಮವನ್ನು ಕೈಗೊಳ್ಳದೆ, ನಿಮ್ಮ ಆಜ್ಞೆಗಳನ್ನೂ, ನೀವು ಅವರಿಗೆ ಎಚ್ಚರಿಸಿದ ನಿಮ್ಮ ಎಚ್ಚರಿಕೆಗಳನ್ನೂ ಕೇಳದೆ ಹೋದರು.
NEH 9:35 ಅವರು ತಮ್ಮ ರಾಜ್ಯದಲ್ಲಿಯೂ, ನೀವು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀವು ಅವರಿಗೆ ಕೊಟ್ಟ ವಿಸ್ತಾರವಾದ, ರಸವತ್ತಾದ ದೇಶದಲ್ಲಿಯೂ, ನಿಮ್ಮನ್ನು ಸೇವಿಸಲಿಲ್ಲ. ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ.
NEH 9:36 “ಈ ದಿವಸ ನಾವು ಗುಲಾಮರಾಗಿದ್ದೇವೆ. ಅದರ ಫಲವನ್ನೂ, ಅದರ ಉತ್ತಮವಾದದ್ದನ್ನೂ ತಿನ್ನುವುದಕ್ಕೆ ನೀವು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ನಾವು ಗುಲಾಮರಾಗಿದ್ದೇವೆ.
NEH 9:37 ನಮ್ಮ ಪಾಪಗಳ ನಿಮಿತ್ತ ನೀವು ನಮ್ಮ ಮೇಲೆ ಇಟ್ಟ ಅರಸರಿಗೆ ಅದರ ಹುಟ್ಟುವಳಿ ಬಹಳವಾಗಿ ಹೋಗುತ್ತಿದೆ. ಇದಲ್ಲದೆ ಅವರು ತಮ್ಮ ಇಚ್ಛೆಯ ಪ್ರಕಾರ ನಮ್ಮ ಮೇಲೆಯೂ, ನಮ್ಮ ಪಶುಗಳ ಮೇಲೆಯೂ ಆಳುತ್ತಾರೆ. ನಾವು ಬಹು ಇಕ್ಕಟ್ಟಿನಲ್ಲಿದ್ದೇವೆ.
NEH 9:38 “ಇದೆಲ್ಲದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ. ನಮ್ಮ ಪ್ರಧಾನರೂ, ಲೇವಿಯರೂ, ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ,” ಎಂದು ಪ್ರಾರ್ಥಿಸಿದರು.
NEH 10:1 ಮುದ್ರೆ ಹಾಕಿದವರು ಯಾರೆಂದರೆ: ಅಧಿಪತಿಯಾದ ಹಕಲ್ಯನ ಮಗ ನೆಹೆಮೀಯನು. ಚಿದ್ಕೀಯ,
NEH 10:2 ಸೆರಾಯ, ಅಜರ್ಯ, ಯೆರೆಮೀಯ,
NEH 10:3 ಪಷ್ಹೂರ, ಅಮರ್ಯ, ಮಲ್ಕೀಯನ,
NEH 10:4 ಹಟ್ಟೂಷ್, ಶೆಬನ್ಯ, ಮಲ್ಲೂಕ್,
NEH 10:5 ಹಾರಿಮ್, ಮೆರೇಮೋತ್, ಓಬದ್ಯ,
NEH 10:6 ದಾನಿಯೇಲ, ಗಿನ್ನೆತೋನ್, ಬಾರೂಕ್,
NEH 10:7 ಮೆಷುಲ್ಲಾಮ್, ಅಬೀಯ, ಮಿಯಾಮಿನ್,
NEH 10:8 ಮಾಜ್ಯ, ಬಿಲ್ಗೈ, ಶೆಮಾಯ ಇವರು ಯಾಜಕರಾಗಿದ್ದರು.
NEH 10:9 ಲೇವಿಯರು: ಅಜನ್ಯನ ಮಗನಾದ ಯೇಷೂವ, ಹೇನಾದಾದ್ ಎಂಬವನ ಮಕ್ಕಳಲ್ಲಿ ಬಿನ್ನೂಯ್, ಕದ್ಮಿಯೇಲ್,
NEH 10:10 ಅವರ ಸಂಗಡಿಗರಾದ ಶೆಬನ್ಯ, ಹೋದೀಯ, ಕೆಲೀಟ, ಪೆಲಾಯ, ಹಾನಾನ್,
NEH 10:11 ಮೀಕ, ರೆಹೋಬ್, ಹಷಬ್ಯ,
NEH 10:12 ಜಕ್ಕೂರ್, ಶೇರೇಬ್ಯ, ಶೆಬನ್ಯ,
NEH 10:13 ಹೋದೀಯ, ಬಾನೀ, ಬೆನೀನೂ ಎಂಬವರು.
NEH 10:14 ಜನರ ಮುಖ್ಯಸ್ಥರು ಪರೋಷ್, ಪಹತ್ ಮೋವಾಬ್, ಏಲಾಮ್, ಜತ್ತೂ, ಬಾನೀ,
NEH 10:15 ಬುನ್ನಿ, ಅಜ್ಗಾದ್, ಬೇಬೈ,
NEH 10:16 ಅದೋನೀಯ, ಬಿಗ್ವೈ, ಅದೀನ್,
NEH 10:17 ಆಟೇರ್, ಹಿಜ್ಕೀಯ, ಅಜ್ಜೂರ್,
NEH 10:18 ಹೋದೀಯ, ಹಾಷುಮ್, ಬೇಚೈ,
NEH 10:19 ಹಾರೀಫ್, ಅನಾತೋತ್, ನೇಬೈ,
NEH 10:20 ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್,
NEH 10:21 ಮೆಷೇಜಬೇಲ್, ಚಾದೋಕ್, ಯದ್ದೂವ,
NEH 10:22 ಪೆಲಟ್ಯ, ಹಾನಾನ್, ಅನಾಯ,
NEH 10:23 ಹೋಶೇಯ, ಹನನ್ಯ, ಹಷ್ಷೂಬ್,
NEH 10:24 ಹಲ್ಲೋಹೇಷ್, ಪಿಲ್ಹ, ಶೋಬೇಕ್,
NEH 10:25 ರೆಹೂಮ್, ಹಷಬ್ನ, ಮಾಸೇಯ
NEH 10:26 ಅಹೀಯ, ಹಾನಾನ್, ಆನಾನ್,
NEH 10:27 ಮಲ್ಲೂಕ್, ಹಾರಿಮ್, ಬಾಣನು.
NEH 10:28 ಜನರಲ್ಲಿ ಉಳಿದವರಾದ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ, ದೇವರ ನಿಯಮದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರೆಲ್ಲರೂ, ಅವರ ಹೆಂಡತಿಯರೂ, ಅವರ ಪುತ್ರರೂ, ಅವರ ಪುತ್ರಿಯರೂ, ತಿಳುವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ,
NEH 10:29 ತಮ್ಮ ಸಹೋದರರಾದ ತಮ್ಮ ಶ್ರೇಷ್ಠರ ಸಂಗಡ ಕೂಡಿಕೊಂಡು ದೇವರ ಸೇವಕ ಮೋಶೆಯ ಕೈಯಿಂದ ಕೊಟ್ಟ ದೇವರ ನಿಯಮದಂತೆ ನಡೆಯುತ್ತೇವೆಂದೂ, ನಮ್ಮ ಕರ್ತ ಆಗಿರುವ ಯೆಹೋವ ದೇವರ ಆಜ್ಞೆಗಳನ್ನೂ, ಅವರ ನ್ಯಾಯಗಳನ್ನೂ, ಅವರ ಕಟ್ಟಳೆಗಳನ್ನೂ, ಎಲ್ಲವನ್ನೂ ಕೈಗೊಂಡು ಮಾಡುತ್ತೇವೆಂದೂ ಆಣೆ ಇಟ್ಟು ಹೀಗೆ ಪ್ರಮಾಣ ಮಾಡಿದರು;
NEH 10:30 ನಾವು ನಮ್ಮ ಪುತ್ರಿಯರನ್ನು ಇತರ ಜನರಿಗೆ ಕೊಡುವುದಿಲ್ಲ, ನಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳುವುದಿಲ್ಲ ಎಂದು ಆಣೆ ಮಾಡುತ್ತೇವೆ.
NEH 10:31 ಬೇರೆ ದೇಶದ ಜನರು ಸಬ್ಬತ್ ದಿನದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲು ತೆಗೆದುಕೊಂಡು ಬಂದರೆ, ನಾವು ಅವುಗಳನ್ನು ಸಬ್ಬತ್ ದಿನದಲ್ಲಾದರೂ, ಪರಿಶುದ್ಧ ದಿನದಲ್ಲಾದರೂ ಅವರಿಂದ ಕೊಂಡುಕೊಳ್ಳುವುದಿಲ್ಲ. ಮತ್ತು ನಾವು ಏಳನೆಯ ವರ್ಷದಲ್ಲಿ ಭೂಮಿ ಕೆಲಸ ಮಾಡುವುದನ್ನು ಬಿಡುತ್ತೇವೆ ಮತ್ತು ಎಲ್ಲಾ ಸಾಲಗಳನ್ನು ರದ್ದುಗೊಳಿಸುತ್ತೇವೆ.
NEH 10:32 ವರ್ಷಕ್ಕೆ 4 ಗ್ರಾಂ ಬೆಳ್ಳಿಯನ್ನು ನಮ್ಮ ದೇವರ ಆಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.
NEH 10:33 ಈ ಹಣವನ್ನು, ಸಮ್ಮುಖದ ರೊಟ್ಟಿಗೋಸ್ಕರವೂ, ನಿತ್ಯಧಾನ್ಯ ಕಾಣಿಕೆಗೋಸ್ಕರವೂ, ವಿಶ್ರಾಂತಿಯ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಅರ್ಪಿಸುವ ನಿತ್ಯ ದಹನಬಲಿಗಳಿಗೋಸ್ಕರವೂ, ನೇಮಿಸಿದ ಹಬ್ಬಗಳಿಗೋಸ್ಕರವೂ, ಇಸ್ರಾಯೇಲರ ಪ್ರಾಯಶ್ಚಿತ್ತವಾದ ದೋಷಪರಿಹಾರದ ಬಲಿಗೋಸ್ಕರವೂ, ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ಉಪಯೋಗಿಸಬೇಕು.
NEH 10:34 ಮೋಶೆಯ ನಿಯಮದಲ್ಲಿ ಬರೆದ ಹಾಗೆ ನಮ್ಮ ದೇವರಾಗಿರುವ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸುವುದಕ್ಕೆ ನೇಮಿತವಾದ ಕಾಲಗಳಲ್ಲಿ, ವರ್ಷ ವರ್ಷಕ್ಕೆ ನಮ್ಮ ಪಿತೃಗಳ ಗೋತ್ರಗಳ ಪ್ರಕಾರ ನಮ್ಮ ದೇವಾಲಯದೊಳಗೆ ತೆಗೆದುಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ, ಲೇವಿಯರಿಗೂ, ಜನರಿಗೂ ಚೀಟಿಗಳನ್ನು ಹಾಕಿದೆವು.
NEH 10:35 ಯೆಹೋವ ದೇವರ ಆಲಯಕ್ಕೆ ಪ್ರತಿ ವರ್ಷದಲ್ಲಿಯೂ ನಮ್ಮ ಭೂಮಿಯ ಫಲಗಳಿಂದ ಪ್ರಥಮ ಫಲಗಳನ್ನು ತರುವುದಕ್ಕೂ,
NEH 10:36 ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ನಮ್ಮ ಪುತ್ರರಲ್ಲಿಯೂ, ನಮ್ಮ ಪಶುಗಳಲ್ಲಿಯೂ ಚೊಚ್ಚಲಾದವುಗಳನ್ನು; ನಮ್ಮ ದನಗಳಲ್ಲಿಯೂ, ಮಂದೆಗಳಲ್ಲಿಯೂ ಚೊಚ್ಚಲಾದವುಗಳನ್ನು, ನಮ್ಮ ದೇವರ ಆಲಯಕ್ಕೆ ತಂದು, ನಮ್ಮ ದೇವರ ಆಲಯದಲ್ಲಿ ಸೇವಿಸುವ ಯಾಜಕರಿಗೆ ಕೊಡುತ್ತೇವೆ;
NEH 10:37 ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನು ನಮ್ಮ ಕಾಣಿಕೆಗಳನ್ನೂ, ಸಕಲ ಮರಗಳ ಫಲವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ಲೇವಿಯರು ಒಕ್ಕಲುತನವಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವುದಕ್ಕೂ ಪ್ರಮಾಣ ಮಾಡಿದೆವು.
NEH 10:38 ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತನೆಯ ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಟ್ಟಡಿಗಳ ಬಳಿಯಿರುವ ಬೊಕ್ಕಸದ ಮನೆಗೆ ತರಬೇಕು.
NEH 10:39 ಏಕೆಂದರೆ ಪರಿಶುದ್ಧ ಸ್ಥಾನದ ಸಲಕರಣೆಗಳೂ, ಸೇವೆ ಮಾಡುವ ಯಾಜಕರೂ, ದ್ವಾರಪಾಲಕರೂ, ಹಾಡುಗಾರರೂ ಇರುವ ಕೊಟ್ಟಡಿಗಳಿಗೆ ಇಸ್ರಾಯೇಲರೂ, ಲೇವಿಯರ ಮಕ್ಕಳೂ, ಕಾಣಿಕೆಯಾದ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ತರಬೇಕು. “ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡುವುದಿಲ್ಲ,” ಎಂದು ಬರೆದುಕೊಟ್ಟರು.
NEH 11:1 ಈಗ ಜನರ ನಾಯಕರು ಯೆರೂಸಲೇಮಿನಲ್ಲಿ ನೆಲೆಸಿದರು. ಉಳಿದ ಜನರೊಳಗೆ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಹತ್ತರಲ್ಲೊಬ್ಬರು ಪವಿತ್ರ ನಗರವಾದ ಯೆರೂಸಲೇಮಿನಲ್ಲಿ ಬಂದು ವಾಸಿಸಲು ಚೀಟುಹಾಕಿದರು.
NEH 11:2 ಆಗ ಜನರು ಯೆರೂಸಲೇಮಿನಲ್ಲಿ ವಾಸವಾಗಿರಲು, ಸಮ್ಮತಿಪಟ್ಟವರೆಲ್ಲರನ್ನು ಆಶೀರ್ವದಿಸಿದರು.
NEH 11:3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು.
NEH 11:4 ಯೆರೂಸಲೇಮಿನಲ್ಲಿ ಯೆಹೂದ ಮಕ್ಕಳಲ್ಲಿಯೂ, ಬೆನ್ಯಾಮೀನ್ಯರಲ್ಲಿಯೂ ಕೆಲವರು ವಾಸವಾಗಿದ್ದರು. ಯೆಹೂದನ ವಂಶಜರಲ್ಲಿ: ಒಬ್ಬನು ಅತಾಯನು, ಇವನು ಉಜ್ಜೀಯನ ಮಗ, ಜೆಕರ್ಯನ ಮಗ, ಅಮರ್ಯನ ಮಗ, ಶೆಫಟ್ಯನ ಮಗ, ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.
NEH 11:5 ಇನ್ನೊಬ್ಬನು ಬಾರೂಕನ ಮಗ ಮಾಸೇಯ. ಇವನು ಕೊಲ್ಹೋಜೆಯ ಮಗ, ಇವನು ಹಜಾಯನ ಮಗ, ಇವನು ಅದಾಯನ ಮಗ, ಇವನು ಯೋಯಾರೀಬನ ಮಗ, ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.
NEH 11:6 ಯೆರೂಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಪುತ್ರರೆಲ್ಲಾ 468 ಮಂದಿ. ಇವರು ಪರಾಕ್ರಮಶಾಲಿಗಳು.
NEH 11:7 ಬೆನ್ಯಾಮೀನನ ವಂಶಜರು: ಸಲ್ಲು, ಇವನು ಮೆಷುಲ್ಲಾಮನ ಮಗ, ಯೆಶಾಯನ ಮಗ, ಇಥಿಯೇಲನ ಮಗ, ಮಾಸೇಯನ ಮಗ, ಕೊಲಾಯನ ಮಗ, ಪೆದಾಯನ ಮಗ, ಯೊವೇದನ ಮಗ,
NEH 11:8 ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಮಂದಿ 928.
NEH 11:9 ಜಿಕ್ರಿಯ ಮಗ, ಯೋಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನುವಾಹನ ಮಗ ಯೆಹೂದನು ಪಟ್ಟಣದ ಹೊಸ ಭಾಗದ ಮೇಲೆ ಮೇಲ್ವಿಚಾರಕನಾಗಿದ್ದನು.
NEH 11:10 ಯಾಜಕರಲ್ಲಿ ಯಾರೆಂದರೆ: ಯೋಯಾರೀಬನ ಮಗ ಯೆದಾಯನು, ಯಾಕೀನನು.
NEH 11:11 ಅಹೀಟೂಬನ ಮಗ, ಮೆರಾಯೋತನ ಮಗ, ಚಾದೋಕನ ಮಗ, ಮೆಷುಲ್ಲಾಮನ ಮಗ, ಹಿಲ್ಕೀಯನ ಮಗ ಸೆರಾಯನು ದೇವರ ಆಲಯದ ನಾಯಕನಾಗಿದ್ದನು.
NEH 11:12 ದೇವಾಲಯದ ಕೆಲಸವನ್ನು ನಡೆಸುವ ಅವರ ಸಹೋದರರು 822 ಮಂದಿ ಇದ್ದರು. ಮಲ್ಕೀಯನ ಮಗ, ಪಷ್ಹೂರನ ಮಗ, ಜೆಕರ್ಯನ ಮಗ, ಅಮ್ಚೀಯ ಮಗ, ಪೆಲಲ್ಯನ ಮಗ, ಯೆರೋಹಾಮನ ಮಗ ಅದಾಯನೂ.
NEH 11:13 ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ 242 ಮಂದಿಯಾಗಿದ್ದರು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ, ಅಹಜೈಯ ಮಗ, ಅಜರಯೇಲನ ಮಗ ಅಮಾಷಸಾಯಿ.
NEH 11:14 ಪರಾಕ್ರಮಶಾಲಿಗಳಾಗಿದ್ದ ಅವರ ಸಹೋದರರು 128 ಮಂದಿ ಇದ್ದರು. ಹಗ್ಗೆದೋಲೀಮನ ಮಗನಾದ ಜಬ್ದಿಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು.
NEH 11:15 ಲೇವಿಯರಲ್ಲಿ ಯಾರೆಂದರೆ: ಬುನ್ನಿಯ ಮಗ, ಹಷಬ್ಯನ ಮಗ, ಅಜ್ರೀಕಾಮನ ಮಗ, ಹಷ್ಷೂಬನ ಮಗ ಶೆಮಾಯನು.
NEH 11:16 ಲೇವಿಯರ ಮುಖ್ಯಸ್ಥರಲ್ಲಿ ಶಬ್ಬೆತೈನೂ, ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು.
NEH 11:17 ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು, ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.
NEH 11:18 ಪರಿಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ 284 ಮಂದಿಯಾಗಿದ್ದರು.
NEH 11:19 ದ್ವಾರಪಾಲಕರು: ಅಕ್ಕೂಬನೂ, ಟಲ್ಮೋನನೂ ಬಾಗಿಲುಗಳನ್ನು ಕಾಯುವವರಾದ ಅವರ ಸಂಗಡಿಗರೂ 172 ಮಂದಿಯಾಗಿದ್ದರು.
NEH 11:20 ಇಸ್ರಾಯೇಲರ ಮಿಕ್ಕಾದ ಯಾಜಕರೂ, ಲೇವಿಯರೂ ತಮ್ಮ ತಮ್ಮ ಸ್ವಾಧೀನವಾಗಿದ್ದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು.
NEH 11:21 ಆದರೆ ದೇವಾಲಯದ ಸೇವಕರು ಓಫೇಲ್ ಗುಡ್ಡದಲ್ಲಿ ವಾಸವಾಗಿದ್ದರು. ಜೀಹನೂ, ಗಿಷ್ಪನೂ ಅವರ ನಾಯಕರು.
NEH 11:22 ಮೀಕನ ಮಗ, ಮತ್ತನ್ಯನ ಮಗ, ಹಷಬ್ಯನ ಮಗ, ಬಾನೀಯ ಮಗ ಉಜ್ಜೀಯು ಯೆರೂಸಲೇಮಿನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು. ಆಸಾಫನ ವಂಶದಲ್ಲಿರುವ ಹಾಡುಗಾರನಾದ ಉಜ್ಜೀಯನು ದೇವರ ಆಲಯ ಕಾರ್ಯದ ಮೇಲೆ ಅಧಿಕಾರಿಯಾಗಿದ್ದನು.
NEH 11:23 ಏಕೆಂದರೆ ದಿನದಿನಕ್ಕೆ ಹಾಡುಗಾರರಿಗೋಸ್ಕರ ಪ್ರತಿದಿನ ಕಟ್ಟಳೆ ಇರಬೇಕೆಂದು ಅರಸನು ಅವರನ್ನು ಕುರಿತು ಆಜ್ಞಾಪಿಸಿದ್ದನು.
NEH 11:24 ಯೆಹೂದನ ಮಗ ಜೆರಹನ ಮಕ್ಕಳಲ್ಲಿ ಒಬ್ಬನಾಗಿರುವ ಮೆಷೇಜಬೇಲನ ಮಗನಾದ ಪೆತಹ್ಯನು ಜನರಿಗೋಸ್ಕರ ಸಕಲ ಕಾರ್ಯಗಳಲ್ಲಿ ಅರಸನ ಪ್ರತಿನಿಧಿಯಾಗಿದ್ದನು.
NEH 11:25 ಗ್ರಾಮಗಳಲ್ಲಿಯೂ, ಅವುಗಳ ಹೊಲಗಳಲ್ಲಿಯೂ ಇದ್ದವರು ಯಾರೆಂದರೆ: ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತ್ ಅರ್ಬ, ಅದರ ಗ್ರಾಮಗಳಲ್ಲಿಯೂ, ದೀಬೋನ್, ಅದರ ಗ್ರಾಮಗಳಲ್ಲಿಯೂ, ಯೆಕಬ್ಜೆಯೇಲ್, ಅದರ ಗ್ರಾಮಗಳಲ್ಲಿಯೂ,
NEH 11:26 ಯೇಷೂವ ಎಂಬ ಗ್ರಾಮದಲ್ಲಿಯೂ, ಮೋಲಾದ ಗ್ರಾಮದಲ್ಲಿಯೂ, ಬೇತ್ ಪೆಲೆಟ್ ಗ್ರಾಮದಲ್ಲಿಯೂ,
NEH 11:27 ಹಚರ್ ಷೂವಾಲ್ ಗ್ರಾಮದಲ್ಲಿಯೂ, ಬೇರ್ಷೆಬ ಮತ್ತು ಅವುಗಳ ಗ್ರಾಮಗಳಲ್ಲಿಯೂ
NEH 11:28 ಚಿಕ್ಲಗ್, ಮೆಕೋನ ಮತ್ತು ಅವುಗಳ ಗ್ರಾಮಗಳಲ್ಲಿಯೂ,
NEH 11:29 ಏನ್ರಿಮ್ಮೋನ್, ಚೊರ್ಗಾ, ಯರ್ಮೂತ್ ಎಂಬ ಗ್ರಾಮಗಳಲ್ಲಿಯೂ,
NEH 11:30 ಜಾನೋಹ, ಅದುಲ್ಲಾಮ್ ಮತ್ತು ಇವುಗಳ ಗ್ರಾಮಗಳೂ ಲಾಕೀಷ್ ಊರೂ ಇದರ ಪ್ರಾಂತಗಳೂ ಅಜೇಕವೂ ಅದರ ಗ್ರಾಮಗಳೂ ಯೆಹೂದದವರ ನಿವಾಸಸ್ಥಾನಗಳು. ಅವರು ಬೇರ್ಷೆಬ ಮೊದಲುಗೊಂಡು ಹಿನ್ನೋಮ್ ತಗ್ಗಿನವರೆಗೂ ವಾಸವಾಗಿದ್ದರು.
NEH 11:31 ಇದಲ್ಲದೆ ಬೆನ್ಯಾಮೀನ್ಯರು ಗೆಬ ಮೊದಲುಗೊಂಡು ಮಿಕ್ಮಾಷಿನವರೆಗೂ ವಾಸವಾಗಿದ್ದರು. ಅಯ್ಯಾ, ಬೇತೇಲ್ ಇವುಗಳ ಗ್ರಾಮಗಳೂ,
NEH 11:32 ಅನಾತೋತ್, ನೋಬ್, ಅನನ್ಯ,
NEH 11:33 ಹಾಚೋರ್, ರಾಮಾ, ಗಿತ್ತಯಿಮ್,
NEH 11:34 ಹಾದೀದ್, ಚೆಬೋಯಿಮ್, ನೆಬಲ್ಲಾಟ್,
NEH 11:35 ಲೋದ್, ಓನೋ ಮತ್ತು ಗೇಹರಾಷೀಮ್ ಎಂಬ ಕಸಬುಗಾರರ ತಗ್ಗೂ ಇವರಿಗೆ ಇದ್ದವು.
NEH 11:36 ಯೆಹೂದದ ಲೇವಿಯರ ಕೆಲವು ವರ್ಗಗಳವರು ಬೆನ್ಯಾಮೀನಿನಲ್ಲಿಯೂ ವಾಸಿಸುತ್ತಿದ್ದರು.
NEH 12:1 ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನ ಮತ್ತು ಯೇಷೂವನ ಸಂಗಡ ಹೋದ ಯಾಜಕರೂ ಲೇವಿಯರೂ ಯಾರೆಂದರೆ: ಸೆರಾಯ, ಯೆರೆಮೀಯ, ಎಜ್ರ,
NEH 12:2 ಅಮರ್ಯ, ಮಲ್ಲೂಕ್, ಹಟ್ಟೂಷ್,
NEH 12:3 ಶೆಕನ್ಯ, ರೆಹೂಮ್, ಮೆರೇಮೋತ್,
NEH 12:4 ಇದ್ದೋ, ಗಿನ್ನೆತೋನ್, ಅಬೀಯ,
NEH 12:5 ಮಿಯಾಮಿನ್, ಮಾದ್ಯ, ಬಿಲ್ಗ,
NEH 12:6 ಶೆಮಾಯ, ಯೋಯಾರೀಬ್, ಯೆದಾಯ,
NEH 12:7 ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ. ಇವರು ಯೇಷೂವನ ದಿವಸಗಳಲ್ಲಿ ಯಾಜಕರಲ್ಲಿಯೂ, ಅವರ ಸಂಗಡಿಗರಲ್ಲಿಯೂ ಮುಖ್ಯಸ್ಥರಾಗಿದ್ದರು.
NEH 12:8 ಲೇವಿಯರು ಯಾರೆಂದರೆ: ಯೇಷೂವ, ಬಿನ್ನೂಯ್, ಕದ್ಮಿಯೇಲ್, ಶೇರೇಬ್ಯ, ಯೆಹೂದ, ಕೃತಜ್ಞತೆಯ ಹಾಡುಗಳ ಜವಾಬ್ದಾರನಾಗಿದ್ದ ಮತ್ತನ್ಯನೂ, ಅವನ ಸಂಗಡಿಗರು.
NEH 12:9 ಇದಲ್ಲದೆ ಅವರ ಸಹೋದರರಾದ ಬಕ್ಬುಕ್ಯ, ಉನ್ನೀ ವರ್ಗಗಳಲ್ಲಿ ಅವರಿಗೆ ಎದುರುಗಡೆ ನಿಂತು ಹಾಡುತ್ತಿದ್ದರು.
NEH 12:10 ಇದಲ್ಲದೆ ಯೇಷೂವನು ಯೋಯಾಕೀಮನ ತಂದೆ, ಯೋಯಾಕೀಮನು ಎಲ್ಯಷೀಬನನ್ನು ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;
NEH 12:11 ಯೋಯಾದಾವನು ಯೋನಾತಾನನನ್ನು ಪಡೆದನು; ಯೋನಾತಾನನು ಯದ್ದೂವನನ್ನು ಪಡೆದನು.
NEH 12:12 ಯೋಯಾಕೀಮನ ಕಾಲದಲ್ಲಿ ಅವನ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದ ಯಾಜಕರು ಯಾರೆಂದರೆ: ಸೆರಾಯನ ವಂಶದವನಾದ ಮೆರಾಯನು, ಯೆರೆಮೀಯನ ವಂಶದವನಾದ ಹನನ್ಯಯನು,
NEH 12:13 ಎಜ್ರನ ವಂಶದವನಾದ ಮೆಷುಲ್ಲಾಮನು, ಅಮರ್ಯನ ವಂಶದವನಾದ ಯೆಹೋಹಾನಾನನು,
NEH 12:14 ಮಲ್ಲೂಕಿಯ ವಂಶದವನಾದ ಯೋನಾತಾನನು, ಶೆಬನ್ಯನ ವಂಶದವನಾದ ಯೋಸೇಫನು,
NEH 12:15 ಹಾರಿಮನ ವಂಶದವನಾದ ಅದ್ನನು, ಮೆರಾಯೋತನ ವಂಶದವನಾದ ಹೆಲ್ಕಾಯನು,
NEH 12:16 ಇದ್ದೋವಿನ ವಂಶದವನಾದ ಜೆಕರ್ಯನು, ಗಿನ್ನೆತೋನನ ವಂಶದವನಾದ ಮೆಷುಲ್ಲಾಮನು,
NEH 12:17 ಅಬೀಯನ ವಂಶದವನಾದ ಜಿಕ್ರಿಯು, ಮಿನ್ಯಾಮೀನನ, ಮೋವಾದ್ಯನ ವಂಶದವನಾದ ಪಿಲ್ಟೈ,
NEH 12:18 ಬಿಲ್ಗನ ವಂಶದವನಾದ ಶಮ್ಮೂವನು, ಶೆಮಾಯನ ವಂಶದವನಾದ ಯೆಹೋನಾತಾನನು,
NEH 12:19 ಯೋಯಾರೀಬನ ವಂಶದವನಾದ ಮತ್ತೆನೈ, ಯೆದಾಯನ ವಂಶದವನಾದ ಉಜ್ಜೀ,
NEH 12:20 ಸಲ್ಲೂ ವಂಶದವನಾದ ಕಲ್ಲಾಯನು, ಆಮೋಕನ ವಂಶದವನಾದ ಏಬೆರನು,
NEH 12:21 ಹಿಲ್ಕೀಯನ ವಂಶದವನಾದ ಹಷಬ್ಯನು, ಯೆದಾಯನ ವಂಶದವನಾದ ನೆತನೆಯೇಲನು.
NEH 12:22 ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ, ಇವರ ದಿವಸಗಳಲ್ಲಿ ಲೇವಿಯರೂ, ಯಾಜಕರೂ, ಪಾರಸಿಯನಾದ ದಾರ್ಯಾವೆಷನ ಆಳಿಕೆಯವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆಯಲಾಗಿದೆ.
NEH 12:23 ಎಲ್ಯಾಷೀಬನ ಮಗನಾದ ಯೋಹಾನಾನನ ಕಾಲದವರೆಗೆ ಲೇವಿ ಎಂಬವನ ಪುತ್ರರಾದ ಪಿತೃಗಳ ಮುಖ್ಯಸ್ಥರು ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.
NEH 12:24 ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.
NEH 12:25 ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.
NEH 12:26 ಯೋಚಾದಾಕನ ಮಗ ಯೇಷೂವನ ಮಗ ಯೋಯಾಕೀಮನ ದಿವಸಗಳಲ್ಲಿಯೂ; ರಾಜ್ಯಪಾಲನಾದ ನೆಹೆಮೀಯನ ದಿವಸಗಳಲ್ಲಿಯೂ; ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.
NEH 12:27 ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ, ಹಾಡುವುದರಿಂದಲೂ, ತಾಳಗಳಿಂದಲೂ, ವೀಣೆಗಳಿಂದಲೂ, ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವುದಕ್ಕೆ ಲೇವಿಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.
NEH 12:28 ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿರುವ ಬಯಲಿನಿಂದಲೂ, ನೆಟೋಫಾತ್ಯರ ಗ್ರಾಮಗಳಿಂದಲೂ,
NEH 12:29 ಬೇತ್ ಗಿಲ್ಗಾಲ್ ಊರಿಂದಲೂ, ಗೆಬದ ಅಜ್ಮಾವೆತಿನ ಹೊಲಗಳಿಂದಲೂ ಕೂಡಿಕೊಂಡರು. ಹಾಡುಗಾರರು ತಮಗೋಸ್ಕರ ಯೆರೂಸಲೇಮಿನ ಸುತ್ತಲೂ ಗ್ರಾಮಗಳನ್ನು ಕಟ್ಟಿಸಿಕೊಂಡಿದ್ದರು.
NEH 12:30 ಯಾಜಕರೂ, ಲೇವಿಯರೂ ತಮ್ಮನ್ನು ಶುದ್ಧ ಮಾಡಿಕೊಂಡು ಜನರನ್ನೂ, ಬಾಗಿಲುಗಳನ್ನೂ, ಗೋಡೆಯನ್ನೂ ಶುದ್ಧ ಮಾಡಿದರು.
NEH 12:31 ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ, ಸ್ತುತಿಸಲು ಎರಡು ಗುಂಪುಗಳನ್ನು ನೇಮಿಸಿದೆನು. ಒಂದು ಗುಂಪಿನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಿಲ ಕಡೆಗೆ ಹೋದರು.
NEH 12:32 ಅವರ ಹಿಂಭಾಗದಲ್ಲಿ ಹೋಷಾಯನೂ, ಯೆಹೂದದ ಪ್ರಧಾನರಲ್ಲಿ ಅರ್ಧ ಜನರೂ,
NEH 12:33 ಅಜರ್ಯನೂ, ಎಜ್ರನೂ, ಮೆಷುಲ್ಲಾಮನೂ,
NEH 12:34 ಯೆಹೂದನೂ, ಬೆನ್ಯಾಮೀನನೂ, ಶೆಮಾಯನೂ, ಯೆರೆಮೀಯನೂ;
NEH 12:35 ತುತೂರಿಗಳನ್ನು ಹಿಡಿಯುವ ಯಾಜಕರ ಮಕ್ಕಳಲ್ಲಿ ಆಸಾಫನ ಮಗ ಜಕ್ಕೂರನ ಮಗ, ಮೀಕಾಯನ ಮಗ, ಮತ್ತನ್ಯನ ಮಗ, ಶೆಮಾಯನ ಮಗ, ಯೋನಾತಾನನ ಮಗ ಜೆಕರ್ಯನೂ,
NEH 12:36 ದೇವರ ಮನುಷ್ಯನಾದ ದಾವೀದನ ಗೀತವಾದ್ಯಗಳನ್ನು ಹಿಡಿಯುವ ಜೆಕರೀಯನ ಸಹೋದರರಾದ ಶೆಮಾಯ, ಅಜರಯೇಲ್, ಮಿಲಲೈ, ಗಿಲಲೈ, ಮಾಯೈ, ನೆತನೆಯೇಲ್, ಯೆಹೂದ, ಹನಾನೀ ಎಂಬವರು ನಡೆದರು; ನಿಯಮಶಾಸ್ತ್ರಿಯಾದ ಎಜ್ರನು ಇವರ ಮುಂದೆ ನಡೆದನು.
NEH 12:37 ತಮಗೆ ಎದುರಾದ ಬುಗ್ಗೆಯ ಬಾಗಿಲಿಗೆ ಬಂದಾಗ ಗೋಡೆಯಲ್ಲಿ ಎತ್ತರವಾದ ದಾವೀದನ ಪಟ್ಟಣದ ಮೆಟ್ಟಿಲುಗಳಿಂದ ದಾವೀದನ ಅರಮನೆಯ ಮೇಲೆ ಪೂರ್ವದ ಕಡೆಗಿರುವ ನೀರಿನ ಬಾಗಿಲಿಗೆ ಹೋದರು.
NEH 12:38 ಸ್ತುತಿಸುವ ಮತ್ತೊಂದು ಭಜನಾ ಮಂಡಳಿ ಅವರಿಗೆದುರಾಗಿ ನಡೆದರು. ನಾನು ಅವರ ಹಿಂದೆ ನಡೆದೆನು. ಗೋಡೆಯ ಮೇಲೆ ಇದ್ದ ಅರ್ಧ ಜನರು ಬುರುಜುಗಳ ಗೋಪುರದ ಆಚೆಯಿಂದ ನಡೆದು, ಅಗಲವಾದ ಗೋಡೆಯನ್ನು,
NEH 12:39 ಎಫ್ರಾಯೀಮ್ ಬಾಗಿಲ ಮೇಲೆಯೂ, ಯೆಷಾನಾ ಬಾಗಿಲ ಮೇಲೆಯೂ, ಮೀನು ಬಾಗಿಲ ಮೇಲೆಯೂ ಹಾದು, ಹನನೇಲ್ ಗೋಪುರವನ್ನೂ, ಶತ ಗೋಪುರವನ್ನೂ ದಾಟಿ, ಕುರಿ ಬಾಗಿಲವರೆಗೆ ಬಂದು ಸೆರೆಮನೆಯ ಬಾಗಿಲ ಬಳಿಯಲ್ಲಿ ನಿಂತರು.
NEH 12:40 ಸ್ತುತಿ ಮಾಡುವ ಎರಡು ಗುಂಪುಗಳೂ, ನಾನೂ, ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಿಗಳೂ ದೇವರ ಆಲಯದಲ್ಲಿ ನಿಂತಿದ್ದೆವು.
NEH 12:41 ಆಗ ಯಾಜಕರಾದ ಎಲ್ಯಾಕೀಮನೂ, ಮಾಸೇಯನೂ, ಮಿನ್ಯಾಮೀನನೂ, ಮೀಕಾಯನೂ, ಎಲ್ಯೋವೇನೈನೂ, ಜೆಕರ್ಯನೂ, ಹನನ್ಯನೂ, ತುತೂರಿಗಳನ್ನು ಹಿಡಿದುಕೊಂಡವರೂ;
NEH 12:42 ಮಾಸೇಯನೂ, ಶೆಮಾಯನೂ, ಎಲಿಯಾಜರನೂ, ಉಜ್ಜೀಯೂ, ಯೆಹೋಹಾನಾನನೂ, ಮಲ್ಕೀಯನೂ, ಏಲಾಮನೂ, ಏಜೆರನೂ, ತಮ್ಮ ಮೇಲ್ವಿಚಾರಕನಾದ ಯೆಜ್ರಾಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.
NEH 12:43 ಆ ದಿವಸದಲ್ಲಿ ಮಹಾಬಲಿಗಳನ್ನು ಅರ್ಪಿಸಿ, ದೇವರು ಅವರನ್ನು ಮಹಾ ಸಂತೋಷದಿಂದ ಸಂತೋಷಿಸಲು ಮಾಡಿದ್ದರಿಂದ ಅವರು ಸಂತೋಷಪಟ್ಟರು. ಇದಲ್ಲದೆ ಅವರು ತಮ್ಮ ಮಡದಿಮಕ್ಕಳೂಡನೆ ಮಹೋತ್ಸವ ಮಾಡಿದರು. ಆದ್ದರಿಂದ ಯೆರೂಸಲೇಮಿನ ಸಂತೋಷ ಧ್ವನಿಯು ಬಹು ದೂರಕ್ಕೆ ಕೇಳಿಸಿತು.
NEH 12:44 ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.
NEH 12:45 ಇದಲ್ಲದೆ ದಾವೀದನೂ, ಅವನ ಮಗನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ, ದ್ವಾರಪಾಲಕರೂ ತಮ್ಮ ದೇವರ ಕಾವಲನ್ನೂ, ಶುದ್ಧೀಕರಣದ ಕಾವಲನ್ನೂ ಕಾಯುತ್ತಿದ್ದರು.
NEH 12:46 ಏಕೆಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿಯೇ ದೇವರಿಗೆ ಸ್ತೋತ್ರವನ್ನೂ, ಕೃತಜ್ಞತೆಯನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಿದ್ದರು.
NEH 12:47 ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.
NEH 13:1 ಅದೇ ದಿವಸದಲ್ಲಿ ಜನರು ಕೇಳುವಂತೆ ಮೋಶೆಯ ನಿಯಮ ಗ್ರಂಥವನ್ನು ಗಟ್ಟಿಯಾಗಿ ಓದುವಾಗ, “ಅಮ್ಮೋನಿಯರೂ, ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದು,” ಎಂದು ಅದರಲ್ಲಿ ಬರೆದದ್ದು ಸಿಕ್ಕಿತು.
NEH 13:2 ಏಕೆಂದರೆ ಅವರು ಅನ್ನಪಾನಗಳೊಡನೆ ಇಸ್ರಾಯೇಲರನ್ನು ಎದುರುಗೊಳ್ಳಲಿಲ್ಲ. ಅವರು ಇಸ್ರಾಯೇಲರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಕರೆಸಿದ್ದರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದರು.
NEH 13:3 ಆಗ ಜನರು ದೇವರ ನಿಯಮವನ್ನು ಕೇಳಿದಾಗ, ಇಸ್ರಾಯೇಲರೊಳಗಿಂದ ವಿದೇಶಿ ಜನರನ್ನು ಪ್ರತ್ಯೇಕಿಸಿದರು.
NEH 13:4 ಇದಕ್ಕೆ ಮುಂಚೆ ನಮ್ಮ ದೇವರ ಆಲಯದ ಉಗ್ರಾಣದ ಮೇಲೆ ವಿಚಾರಕನಾಗಿದ್ದ ಎಲ್ಯಾಷೀಬನೆಂಬ ಯಾಜಕನು ಟೋಬೀಯನ ಸಮೀಪ ಬಂಧುವಾಗಿದ್ದನು.
NEH 13:5 ಲೇವಿಯರಿಗೂ, ಹಾಡುಗಾರರಿಗೂ, ದ್ವಾರಪಾಲಕರಿಗೂ ನೇಮಕವಾದ ಕಾಣಿಕೆಗಳನ್ನೂ, ಧೂಪವನ್ನೂ, ಸಾಮಗ್ರಿಗಳನ್ನೂ, ಧಾನ್ಯದ ಹತ್ತನೆಯ ಪಾಲುಗಳನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇಡುತ್ತಿದ್ದ ದೊಡ್ಡ ಕೊಠಡಿಯನ್ನು ಎಲ್ಯಾಷೀಬನು ಟೋಬೀಯನಿಗೋಸ್ಕರ ಸಿದ್ಧ ಮಾಡಿಕೊಟ್ಟಿದ್ದನು.
NEH 13:6 ಆದರೆ ಇವೆಲ್ಲಾ ಸಂಭವಿಸುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆ. ತರುವಾಯ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,
NEH 13:7 ನಾನು ಯೆರೂಸಲೇಮಿಗೆ ಬಂದು ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವರ ಆಲಯದ ಅಂಗಳಗಳಲ್ಲಿ ಒಂದು ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನಾನು ಕಂಡಾಗ, ಅದು ನನಗೆ ಬಹಳ ವ್ಯಸನಕರವಾಯಿತು.
NEH 13:8 ಆ ಕೊಠಡಿಯೊಳಗಿಂದ ಟೋಬೀಯನ ವಸ್ತುಗಳನ್ನೆಲ್ಲಾ ಹೊರಗೆ ಹಾಕಿಸಿದೆನು.
NEH 13:9 ಆಗ ನಾನು ಹೇಳಿದ್ದರಿಂದ ಅವರು ಕೊಠಡಿಗಳನ್ನು ಶುದ್ಧ ಮಾಡಿದರು. ತರುವಾಯ ದೇವರ ಆಲಯದ ಪಾತ್ರೆಗಳನ್ನೂ ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತಿರುಗಿ ಅಲ್ಲಿ ತಂದು ಇಡಿಸಿದೆನು.
NEH 13:10 ಲೇವಿಯರ ಪಾಲನ್ನು ಅವರಿಗೆ ಕೊಡಲಿಲ್ಲವೆಂದು ನನಗೆ ತಿಳಿಯಿತು. ಸೇವೆಯನ್ನು ಮಾಡುವ ಲೇವಿಯರೂ, ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿ ಹೋಗುತ್ತಿದ್ದರು.
NEH 13:11 ಆಗ ನಾನು ಅಧಿಕಾರಿಗಳನ್ನು ಗದರಿಸಿ ಅವರಿಗೆ, “ದೇವರ ಮಂದಿರವನ್ನು ಅಲಕ್ಷ್ಯಮಾಡಿದ್ದೇಕೆ?” ಎಂದು ವಾದಿಸಿದೆನು. ಬಿಟ್ಟುಹೋದವರನ್ನು ತಿರಿಗಿ ಕರೆಯಿಸಿ, ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.
NEH 13:12 ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ಹತ್ತರಲ್ಲೊಂದು ಪಾಲನ್ನು ಕೊಠಡಿಗಳಲ್ಲಿ ತಂದರು.
NEH 13:13 ಆಗ ನಾನು ಯಾಜಕನಾದ ಶೆಲೆಮ್ಯನನ್ನೂ, ಲೇಖಕನಾದ ಚಾದೋಕನನ್ನೂ, ಲೇವಿಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗ ಹಾನಾನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು. ಅವರು ನಂಬಿಗಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ಹಂಚಿ ಕೊಡುವುದು ಅವರ ಕೆಲಸವಾಗಿತ್ತು.
NEH 13:14 ನನ್ನ ದೇವರೇ, ಇದಕ್ಕಾಗಿ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ. ನಾನು ನನ್ನ ದೇವರ ಆಲಯಕ್ಕೋಸ್ಕರವೂ, ಅದರ ಸೇವೆಗೋಸ್ಕರವೂ ನಂಬಿಗಸ್ತಿಕೆಯಿಂದ ಮಾಡಿದ ಭಕ್ತಿಕಾರ್ಯಗಳನ್ನು ಅಳಿಸಿಬಿಡಬೇಡಿರಿ.
NEH 13:15 ಆ ದಿನಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ ದಿನಗಳಲ್ಲಿ ಕೆಲವರು ದ್ರಾಕ್ಷಿಯ ಆಲೆಗಳಲ್ಲಿ ಕೆಲಸಮಾಡುವುದನ್ನೂ, ಸಿವುಡುಗಳನ್ನು ತರುವುದನ್ನೂ, ಕತ್ತೆಗಳ ಮೇಲೆ ಹೇರಿಕೊಂಡು ಬರುವುದನ್ನೂ ಮತ್ತು ಸಬ್ಬತ್ ದಿನಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ, ದ್ರಾಕ್ಷಿಹಣ್ಣುಗಳನ್ನೂ, ಅಂಜೂರದ ಹಣ್ಣುಗಳನ್ನೂ, ಎಲ್ಲಾ ಹೊರೆಗಳನ್ನೂ ತರುವುದನ್ನು ನಾನು ಕಂಡೆನು. ಆದ್ದರಿಂದ, ವಿಶ್ರಾಂತಿಯ ದಿನದಲ್ಲಿ ಮಾರುವುದರ ವಿರೋಧವಾಗಿ ನಾನು ಎಚ್ಚರಿಸಿದೆನು.
NEH 13:16 ಇದಲ್ಲದೆ ಮೀನುಗಳನ್ನೂ, ಎಲ್ಲಾ ಸರಕುಗಳನ್ನೂ ತೆಗೆದುಕೊಂಡು ಬಂದು ಸಬ್ಬತ್ ದಿನದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ಟೈರಿನವರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
NEH 13:17 ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ ಅವರಿಗೆ, “ಸಬ್ಬತ್ ದಿನವನ್ನು ನೀವು ಅಪವಿತ್ರ ಮಾಡುವ ಈ ಕೆಟ್ಟ ಕಾರ್ಯವೇನು?
NEH 13:18 ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ, ನಮ್ಮ ದೇವರು ನಮ್ಮ ಮೇಲೆಯೂ, ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲಿಲ್ಲವೋ? ಆದರೆ ನೀವು ಸಬ್ಬತ್ ದಿನವನ್ನು ಅಪವಿತ್ರ ಮಾಡುವುದರಿಂದ ಇಸ್ರಾಯೇಲಿನ ಮೇಲೆ ಇನ್ನೂ ದೇವರ ಕೋಪವನ್ನು ಬರಮಾಡುವಿರಿ.”
NEH 13:19 ಸಬ್ಬತ್ ದಿನಕ್ಕೆ ಮುಂಚೆ ಯೆರೂಸಲೇಮಿನ ಬಾಗಿಲುಗಳಲ್ಲಿ ಕತ್ತಲಾಗಲಾರಂಭಿಸಿದಾಗ ಬಾಗಿಲುಗಳನ್ನು ಹಾಕುವ ಹಾಗೆಯೂ, ಸಬ್ಬತ್ ದಿನವು ತೀರುವವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಸಬ್ಬತ್ ದಿನದಲ್ಲಿ ಹೊರೆ ಏನಾದರೂ ಒಳಗೆ ತರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಇಟ್ಟೆನು.
NEH 13:20 ಆಗ ವರ್ತಕರೂ, ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು.
NEH 13:21 ಆಗ ನಾನು ಅವರನ್ನು ಗದರಿಸಿ ಅವರಿಗೆ, “ನೀವು ಕೋಟೆಯ ಗೋಡೆಯ ಹೊರಗೆ ಏಕೆ ಇಳುಕೊಂಡಿದ್ದೀರಿ? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮನ್ನು ಸೆರೆಗೆ ಹಾಕುವೆನು,” ಎಂದೆನು. ಆ ದಿನದಿಂದ ಅವರು ಸಬ್ಬತ್ ದಿನದಲ್ಲಿ ಬರಲೇ ಇಲ್ಲ.
NEH 13:22 ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ.
NEH 13:23 ಆ ದಿನಗಳಲ್ಲಿ ಅಮ್ಮೋನ್, ಮೋವಾಬ್, ಅಷ್ಡೋದ್ ಎಂಬ ದೇಶಗಳ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕಂಡೆನು.
NEH 13:24 ಇವರ ಮಕ್ಕಳು ಅರ್ಧಮಂದಿ ಯೆಹೂದ್ಯರ ಭಾಷೆಯಲ್ಲಿ ಮಾತಾಡಲು ತಿಳಿಯದೆ, ಅಷ್ಡೋದ್ಯರ ಮತ್ತು ಬೇರೆ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.
NEH 13:25 ಆಗ ನಾನು ಅವರನ್ನು ಗದರಿಸಿ, ಶಪಿಸಿ, ಅವರಲ್ಲಿ ಕೆಲವರನ್ನು ಹೊಡೆದು, ಅವರ ಕೂದಲನ್ನು ಕಿತ್ತು, “ನೀವು ನಿಮ್ಮ ಪುತ್ರಿಯರನ್ನು ಅವರ ಪುತ್ರರಿಗೂ, ಅವರ ಪುತ್ರಿಯರನ್ನು ನಿಮ್ಮ ಪುತ್ರರಿಗೂ, ಮದುವೆಮಾಡಿಕೊಡಬೇಡಿರಿ, ಎಂದು ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣಮಾಡಿಸಿದೆನು.
NEH 13:26 ಇಸ್ರಾಯೇಲಿನ ಅರಸನಾದ ಸೊಲೊಮೋನನು ಇಂತಹ ಮದುವೆಗಳಿಂದ ಪಾಪ ಮಾಡಿದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ, ಅವನು ತನ್ನ ದೇವರಿಗೆ ವಿಶೇಷಪ್ರಿಯನಾಗಿದ್ದನು, ಆದ್ದರಿಂದಲೇ ದೇವರು ಅವನನ್ನು ಎಲ್ಲ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ವಿದೇಶಿ ಸ್ತ್ರೀಯರು ಅವನನ್ನು ಕೂಡ ಪಾಪಮಾಡುವ ಹಾಗೆ ಮಾಡಿದರು.
NEH 13:27 ನೀವು ವಿದೇಶಿ ಸ್ತ್ರೀಯರನ್ನು ಮದುವೆಮಾಡಿಕೊಂಡು, ನಮ್ಮ ದೇವರಿಗೆ ಅಪರಾಧಮಾಡಿ, ಅದೇ ಘೋರವಾದ ದುಷ್ಕೃತ್ಯವನ್ನು ಮಾಡಲು ನಾವು ಒಪ್ಪಿಕೊಳ್ಳುವುದಿಲ್ಲ ನಿಮ್ಮ ಮಾತು ಕೇಳಬಹುದೋ?” ಎಂದು ಗದರಿಸಿದೆನು.
NEH 13:28 ಮಹಾಯಾಜಕನಾದ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲಿ ಒಬ್ಬನು ಹೋರೋನಿನವನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು.
NEH 13:29 ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಒಡಂಬಡಿಕೆಯನ್ನೂ, ಅಶುದ್ಧ ಮಾಡಿದ್ದಾರೆ; ಇದನ್ನು ನೆನಪುಮಾಡಿಕೊಳ್ಳಿರಿ.
NEH 13:30 ಹೀಗೆಯೇ ನಾನು ಅವರನ್ನು ಇತರ ಜನರಿಂದ ಬಿಡಿಸಿ, ಶುದ್ಧಪಡಿಸಿದೆ. ಯಾಜಕರಿಗೂ, ಲೇವಿಯರಿಗೂ, ಅವರವರ ಕೆಲಸದ ಪ್ರಕಾರ,
NEH 13:31 ನೇಮಿತ ಕಾಲದಲ್ಲಿ ಸಲ್ಲತಕ್ಕ ಅರ್ಪಣೆಯ ಕಟ್ಟಿಗೆಗಳನ್ನೂ, ಪ್ರಥಮ ಫಲದ ವಿಷಯವಾಗಿ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ಇದನ್ನು ಸಹ ನನ್ನ ಮೇಲಿನ ನಿಮ್ಮ ದಯೆಯೊಂದಿಗೆ ನನ್ನನ್ನು ನೆನಪುಮಾಡಿಕೊಳ್ಳಿರಿ.
EST 1:1 ಭಾರತ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗಿನ ನೂರ ಇಪ್ಪತ್ತೇಳು ಸಂಸ್ಥಾನಗಳನ್ನು ಅಹಷ್ವೇರೋಷನು ಆಳುತ್ತಿದ್ದನು.
EST 1:2 ಆ ದಿವಸಗಳಲ್ಲಿ ಅರಸನಾದ ಅಹಷ್ವೇರೋಷನು ರಾಜಧಾನಿಯಾದ ಶೂಷನಿನಲ್ಲಿ ಅರಮನೆಯಲ್ಲಿರುವ ತನ್ನ ರಾಜಸಿಂಹಾಸನದ ಮೇಲೆ ಕುಳಿತಿರುವಾಗ
EST 1:3 ತನ್ನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಸಮಸ್ತ ಶ್ರೇಷ್ಠರಿಗೂ ಅಧಿಕಾರಿಗಳಿಗೂ ಔತಣವನ್ನು ಮಾಡಿಸಿದನು. ಪಾರಸಿಯ ಮತ್ತು ಮೇದ್ಯ ದೇಶಗಳ ಸೇನಾಧಿಪತಿಗಳೂ ಪ್ರಾಂತಗಳ ಶ್ರೇಷ್ಠರೂ ಪ್ರಧಾನರೂ ಉಪಸ್ಥಿತರಿದ್ದರು.
EST 1:4 ಅವನು ನೂರ ಎಂಬತ್ತು ದಿವಸಗಳವರೆಗೆ ತನ್ನ ಘನವುಳ್ಳ ರಾಜ್ಯದ ಐಶ್ವರ್ಯವನ್ನೂ ತನ್ನ ವೈಭವ ಹಾಗು ಆಡಂಬರವನ್ನು ತೋರಿಸಿದನು.
EST 1:5 ಆ ದಿವಸಗಳು ತೀರಿದ ತರುವಾಯ ಅರಸನು ಶೂಷನಿನ ಅರಮನೆಯಲ್ಲಿರುವ ಹಿರಿಕಿರಿಯರಾದ ಸಮಸ್ತ ಜನರಿಗೂ ಏಳು ದಿವಸಗಳವರೆಗೆ ಅರಸನ ಅರಮನೆಯ ತೋಟದ ಅಂಗಳದಲ್ಲಿ ಔತಣವನ್ನು ಮಾಡಿಸಿದನು.
EST 1:6 ಅಲ್ಲಿ ಬಿಳಿ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲಾಗಿದ್ದವು. ಬಿಳಿ ಹಸಿರೂ ನೀಲವರ್ಣವೂ ಆದ ತೆರೆಗಳಿದ್ದವು. ಮಂಚಗಳು ಬೆಳ್ಳಿ ಬಂಗಾರದವುಗಳಾಗಿ ಕೆಂಪು, ನೀಲಿ, ಬಿಳಿ, ಕಪ್ಪು ಬಣ್ಣಗಳ ಅಮೃತಶಿಲೆಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು.
EST 1:7 ಇದಲ್ಲದೆ ನಾನಾ ವಿಧವಾದ ಬಂಗಾರದ ಪಾತ್ರೆಗಳಲ್ಲಿ ಅರಸನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವನ್ನು ಧಾರಾಳವಾಗಿ ಕುಡಿಯಲು ಕೊಟ್ಟರು.
EST 1:8 ಮಧುಪಾನ ಸೇವನೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಇಚ್ಛಾನುಸಾರ ಕೊಡಬೇಕೆಂತಲೂ ಯಾರಿಗೂ ಒತ್ತಾಯ ಮಾಡಬಾರದೆಂದೂ ಸೇವಕರಿಗೆ ಅರಸನು ಆದೇಶವಿತ್ತಿದ್ದನು.
EST 1:9 ಇದಲ್ಲದೆ ರಾಣಿಯಾದ ವಷ್ಟಿ ಅರಸನಾದ ಅಹಷ್ವೇರೋಷನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಔತಣವನ್ನು ಮಾಡಿಸಿದಳು.
EST 1:10 ಏಳನೆಯ ದಿವಸದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸದಿಂದ ಅಮಲೇರಿದಾಗ ಬಹುರೂಪವತಿಯಾದ ವಷ್ಟಿ ರಾಣಿಯ ಸೌಂದರ್ಯವನ್ನು ಜನರಿಗೂ ಪ್ರಧಾನರಿಗೂ ಪ್ರದರ್ಶಿಸುವುದಕ್ಕೆ ರಾಣಿಗೆ ರಾಜಕಿರೀಟವನ್ನು ಧರಿಸಿಕೊಂಡು ತನ್ನ ಮುಂದೆ ಕರೆದುಕೊಂಡು ಬರುವುದಕ್ಕೆ ಅರಸನಾದ ಅಹಷ್ವೇರೋಷನ ಸಮ್ಮುಖದಲ್ಲಿ ಸೇವೆ ಮಾಡುವ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರಕಾಸ್ ಎಂಬ ಏಳುಮಂದಿ ಕಂಚುಕಿಗಳಿಗೆ ಹೇಳಿದನು.
EST 1:12 ಆದರೆ ಅರಸನು ಅವರಿಂದ ಹೇಳಿ ಕಳುಹಿಸಿದ ಮಾತಿಗೆ ವಷ್ಟಿ ರಾಣಿಯು, “ನಾನು ಬರುವುದಿಲ್ಲ,” ಎಂದು ಹೇಳಿದಳು. ಆದ್ದರಿಂದ ಅರಸನು ಬಹುಕೋಪಗೊಂಡು, ರೋಷಾವೇಶನಾದನು.
EST 1:13 ಆಗ ನೀತಿ ನ್ಯಾಯಗಳನ್ನು ತಿಳಿದ ಪಂಡಿತರೆಲ್ಲರೊಂದಿಗೆ ಅರಮನೆಯ ಸಂಗತಿಗಳನ್ನು ಆಲೋಚಿಸುವುದು ಅರಸನ ಪದ್ಧತಿಯಾಗಿತ್ತು. ಆದುದರಿಂದ ಅರಸನು ಕಾಲಜ್ಞಾನಿಗಳ ಸಂಗಡ ಈ ವಿಷಯವಾಗಿ ವಿಚಾರಿಸಿದನು.
EST 1:14 ಅರಸನಿಗೆ ಬಹು ಹತ್ತಿರವಾಗಿದ್ದ ಪಾರಸಿಯ ಮತ್ತು ಮೇದ್ಯ ದೇಶಗಳ ಏಳುಮಂದಿ ಪ್ರಧಾನರಾದ ಕರ್ಷೇನಾ, ಶೆತಾರ್, ಅದ್ಮಾತಾ, ತಾರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಇವರ ಸಂಗಡ ಮಾತನಾಡಿದನು. ರಾಜ್ಯದಲ್ಲಿ ಇವರು ಅರಸನ ಬಳಿಗೆ ಹೋಗಲು ವಿಶೇಷ ಅನುಮತಿಪಡೆದ ಅತ್ಯಂತ ಶ್ರೇಷ್ಠರಾಗಿದ್ದರು.
EST 1:15 ಅಹಷ್ವೇರೋಷನು, “ಅರಸನ ಅಧಿಕಾರಿಗಳ ಮುಖಾಂತರ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ಉಲ್ಲಂಘಿಸಿದ ವಷ್ಟಿ ರಾಣಿಯ ವಿರುದ್ಧ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕಾದ ಕ್ರಮವೇನು?” ಎಂದು ಕೇಳಿದನು.
EST 1:16 ಮೆಮೂಕಾನನು ಅರಸನ ಮುಂದೆಯೂ ಪ್ರಧಾನರ ಮುಂದೆಯೂ, “ವಷ್ಟಿ ರಾಣಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ಸಮಸ್ತ ಶ್ರೇಷ್ಠರಿಗೂ ಸಮಸ್ತ ಜನರಿಗೂ ಅಪರಾಧಮಾಡಿದ್ದಾಳೆ.
EST 1:17 ರಾಣಿಯ ವರ್ತನೆ ಇತರ ಎಲ್ಲಾ ಸ್ತ್ರೀಯರಿಗೂ ತಿಳಿದುಬರುವುದು. ‘ಅರಸನಾದ ಅಹಷ್ವೇರೋಷನು ವಷ್ಟಿರಾಣಿಯನ್ನು ತನ್ನ ಮುಂದೆ ಬರಲು ಹೇಳಿ ಕಳುಹಿಸಿದನು. ಆದರೆ ಅವಳು ಬರಲು ನಿರಾಕರಿಸಿದಳು,’ ಎಂದು ಹೇಳಿಕೊಂಡು ಅವರು ತಮ್ಮ ಗಂಡಂದಿರನ್ನೂ ತಿರಸ್ಕರಿಸುವರು.
EST 1:18 ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮತ್ತು ಮೇದ್ಯ ರಾಣಿಯರೆಲ್ಲರೂ ಈ ಹೊತ್ತು ಅರಸನ ಶ್ರೇಷ್ಠರಿಗೂ ಹಾಗೆಯೇ ಹೇಳುವರು. ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವುದು.
EST 1:19 “ಅರಸನಿಗೆ ಸಮ್ಮತಿಯಾದರೆ, ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯರ ಮತ್ತು ಮೇದ್ಯರ ಕಾನೂನುಗಳಲ್ಲಿ ಲಿಖಿತವಾಗಲಿ.
EST 1:20 ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲ ಗೊತ್ತಾದಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರವರೆಗೂ ತಮ್ಮ ಗಂಡಂದಿರಿಗೆ ಗೌರವಕೊಡುವರು,” ಎಂದು ಸಲಹೆ ನೀಡಿದನು.
EST 1:21 ಈ ಮಾತು ಅರಸನಿಗೂ ಶ್ರೇಷ್ಠರಿಗೂ ಸರಿಯೆಂದು ತೋರಿತು. ಆದುದರಿಂದ ಅರಸನು ಮೆಮೂಕಾನ್ ಮಾತಿನಂತೆಯೇ ಮಾಡಿದನು.
EST 1:22 ಪ್ರತಿಯೊಂದು ಕುಟುಂಬದಲ್ಲಿಯೂ ಪುರುಷನೇ ಅಧಿಕಾರ ನಡೆಸಬೇಕೆಂದೂ, ತನ್ನ ಸ್ವಜನರ ಭಾಷೆಯಲ್ಲಿಯೇ ವ್ಯವಹಾರ ನಡೆಸಬೇಕೆಂದೂ ಪ್ರಾಂತಗಳ ಹಾಗೂ ಜನಸಾಮಾನ್ಯರ ಭಾಷೆಗಳಲ್ಲಿ ಅರಸನು ಸಮಸ್ತ ಸಂಸ್ಥಾನಗಳಿಗೂ ಪತ್ರಗಳನ್ನು ಬರೆದು ಕಳುಹಿಸಿದನು.
EST 2:1 ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತವಾಗಿ ಅವನು ವಷ್ಟಿಯನ್ನೂ ಅವಳನ್ನೂ, ಅವಳ ವರ್ತನೆಯನ್ನೂ, ಅವಳಿಗೆ ವಿರೋಧವಾಗಿ ತಾನು ನೀಡಿದ ತೀರ್ಪನ್ನೂ ಜ್ಞಾಪಿಸಿಕೊಂಡನು.
EST 2:2 ಆಗ ಅರಸನ ಸೇವೆ ಮಾಡುವ ದಾಸರು ಅವನಿಗೆ, “ಅರಸನಿಗೋಸ್ಕರ ರೂಪವತಿಯಾದ ಕನ್ಯೆಯರನ್ನು ಹುಡುಕಲಿ.
EST 2:3 ರೂಪವತಿಯಾರಾದ ಸಮಸ್ತ ಕನ್ಯೆಯರು ರಾಜಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿಕಾರಿಗಳಾದ ಹೇಗೈ ಎಂಬವನ ವಶಕ್ಕೆ ಒಪ್ಪಿಸಲಿ. ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರಿಗಳನ್ನು ನೇಮಿಸಲಿ. ಹೇಗೈ ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಕೊಡಲಿ.
EST 2:4 ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು.
EST 2:5 ಶೂಷನಿನ ಅರಮನೆಯಲ್ಲಿ ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಮೀಯ ಮೊಮ್ಮಗನೂ, ಯಾಯೀರನ ಮಗನೂ ಆದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು.
EST 2:6 ಅವನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಸೆರೆಯಾಗಿ ತಂದ ಯೆಹೂದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಒಬ್ಬನಾಗಿದ್ದನು.
EST 2:7 ಇವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರ್ ಎಂಬ ಹೆಸರನ್ನು ಪಡೆದ ಹದೆಸ್ಸಳನ್ನು ಸಾಕುತ್ತಿದ್ದನು. ಏಕೆಂದರೆ ಅವಳಿಗೆ ತಂದೆತಾಯಿಗಳು ಇರಲಿಲ್ಲ. ಈಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆತಾಯಿಗಳು ಸತ್ತು ಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದನು.
EST 2:8 ಅರಸನ ಮಾತನ್ನು ಮತ್ತು ಅವನ ಕಟ್ಟಳೆಯನ್ನು ಕೇಳಿದ ತರುವಾಯ ಶೂಷನಿನ ಅರಮನೆಯಲ್ಲಿ ಹೇಗೈಯನ ವಶಕ್ಕೆ ಅನೇಕ ಕನ್ಯೆಯರನ್ನು ಒಪ್ಪಿಸಲಾಯಿತು. ಎಸ್ತೇರಳು ಸಹ ಅರಸನ ಅರಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಜವಾಬ್ದಾರಿಕೆಯ ಕೋಣೆಯಲ್ಲಿ ಇದ್ದಳು.
EST 2:9 ಎಸ್ತೇರಳು ಹೇಗೈಯ ಮೆಚ್ಚುಗೆಯನ್ನು ಗಳಿಸಿದ್ದರಿಂದ ಅವನ ಸಮ್ಮುಖದಲ್ಲಿ ಅವಳಿಗೆ ದಯೆ ದೊರಕಿತು. ಆದಕಾರಣ ಅವನು ತ್ವರೆಯಾಗಿ ಸೌಂದರ್ಯವರ್ಧಕ ಸಾಧನಗಳನ್ನೂ ಅರಸನ ಅರಮನೆಯಿಂದ ಏಳುಮಂದಿ ದಾಸಿಯರನ್ನೂ ಅವಳಿಗೆ ಕೊಟ್ಟನು. ಇದಲ್ಲದೆ ಸ್ತ್ರೀಯರಿದ್ದ ಕೋಣೆಯಲ್ಲಿ ಉತ್ತಮವಾದ ಭೋಜನಾಂಶಗಳನ್ನು ಅವಳಿಗೂ ಅವಳ ದಾಸಿಯರಿಗೂ ಕೊಟ್ಟನು. ಆಕೆಯನ್ನೂ ಮತ್ತು ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.
EST 2:10 ಆದರೆ ಎಸ್ತೇರಳು ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ತಿಳಿಸಲಿಲ್ಲ. ಏಕೆಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು.
EST 2:11 ಆದರೆ ಎಸ್ತೇರಳ ಕ್ಷೇಮವನ್ನೂ, ಅವಳಿಗೆ ಆಗುವಂಥಾದ್ದನ್ನೂ ತಿಳಿದುಕೊಳ್ಳುವುದಕ್ಕೆ ಮೊರ್ದೆಕೈ ಪ್ರತಿದಿನವೂ ಸ್ತ್ರೀಯರಿದ್ದ ಮನೆಯ ಅಂಗಳದ ಮುಂದೆ ತಿರುಗಾಡುತ್ತಿದ್ದನು.
EST 2:12 ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಸುಗಂಧ ತೈಲದಿಂದಲೂ ಆರು ತಿಂಗಳು ಸೌಂದರ್ಯವರ್ಧಕ ಸಾಧನಗಳಿಂದಲೂ ಕನ್ಯೆಯರ ಲೇಪನಕಾಲದ ಪ್ರಕಾರ ಹನ್ನೆರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇರೋಷನ ಬಳಿಗೆ ಪ್ರತಿಯೊಬ್ಬ ಕನ್ಯೆಯು ಹೋಗಲು ಅವರವರ ಸರದಿ ಬರುತ್ತಿತ್ತು.
EST 2:13 ಈ ಪ್ರಕಾರ ಕನ್ಯೆಯು ಅರಸನ ಬಳಿಗೆ ಪ್ರವೇಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಅರಮನೆಗೆ ಹೋಗಲು ಅವಳು ಏನು ಬೇಡುವಳೋ ಅದು ಅವಳಿಗೆ ಒದಗಿಸಲಾಗುತ್ತಿತ್ತು.
EST 2:14 ಆಗ ಅವಳು ಸಾಯಂಕಾಲದಲ್ಲಿ ರಾಜನಿವಾಸಕ್ಕೆ ಪ್ರವೇಶಿಸಿ ಮಾರನೆಯ ದಿವಸದಲ್ಲಿ ಉಪಪತ್ನಿಗಳ ಪಾಲಕನಾದ ಶವಷ್ಗಜ ಎಂಬ ರಾಜಕಂಚುಕಿಯ ವಶದಲ್ಲಿದ್ದ ಸ್ತ್ರೀಯರ ಎರಡನೆಯ ಮನೆಗೆ ಬರಬೇಕಾಗಿತ್ತು. ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದ ಹೊರತು ಅವಳು ಪುನಃ ಅರಸನ ಬಳಿಗೆ ಹೋಗಬಾರದು.
EST 2:15 ಮೊರ್ದೆಕೈಯ ದತ್ತುಮಗಳೂ, ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ, ಸ್ತ್ರೀಯರ ಪಾಲಕನೂ ರಾಜಕಂಚುಕಿಯೂ ಆದ ಹೇಗೈ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದಲೂ ದಯೆಹೊಂದಿದ್ದಳು.
EST 2:16 ಎಸ್ತೇರಳು ಅರಸನಾದ ಅಹಷ್ವೇರೋಷನ ಆಳಿಕೆಯ ಏಳನೆಯ ವರ್ಷದ ಹತ್ತನೆಯ ತಿಂಗಳಾದ ತೇಬೆತ್ ಎಂಬ ಪುಷ್ಯ ಮಾಸದಲ್ಲಿ ಅರಸನ ಬಳಿಗೆ ಕರೆತರಲಾಯಿತು.
EST 2:17 ಅರಸನು ಸಕಲ ಕನ್ಯೆಯರಿಗಿಂತ ಹೆಚ್ಚಾಗಿ ಎಸ್ತೇರಳನ್ನು ಮೆಚ್ಚಿಕೊಂಡನು. ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯೆಯರಿಗಿಂತ ಹೆಚ್ಚು ದಯೆಯೂ ಮೆಚ್ಚುಗೆಯೂ ದೊರಕಿತು. ಆದ್ದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಎಸ್ತೇರಳನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಆರಿಸಿಕೊಂಡನು.
EST 2:18 ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಗೌರವಾರ್ಥವಾಗಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಎಲ್ಲಾ ಪ್ರಾಂತಗಳಿಗೂ ರಜೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು.
EST 2:19 ಕನ್ಯೆಯರನ್ನು ಎರಡನೆಯ ಸಾರಿ ಕೂಡಿಸುವಾಗ, ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು.
EST 2:20 ಎಸ್ತೇರಳು ಮೊರ್ದೆಕೈಯು ತನಗೆ ಆಜ್ಞಾಪಿಸಿದ ಹಾಗೆ ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ಯಾರಿಗೂ ತಿಳಿಸಿರಲಿಲ್ಲ. ಏಕೆಂದರೆ ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಆಕೆ ಅವನ ಆಜ್ಞೆಯನ್ನು ಕೈಕೊಂಡು ನಡೆದಂತೆಯೇ ಈಗಲೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದಳು.
EST 2:21 ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ಕುಳಿತಿರುವಾಗ, ದ್ವಾರಪಾಲಕರಾದಂಥ ಅರಸನ ರಾಜಕಂಚುಕಿಗಳಾದ ಬಿಗೆತಾನ್ ಮತ್ತು ತೆರೆಷ್ ಎಂಬಿಬ್ಬರು ಅರಸನಾದ ಅಹಷ್ವೇರೋಷನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಬೇಕೆಂದು ಒಳಸಂಚು ಮಾಡಿದರು.
EST 2:22 ಈ ಕಾರ್ಯವು ಮೊರ್ದೆಕೈಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು. ಎಸ್ತೇರಳು ಮೊರ್ದೆಕೈಯ ಹೆಸರನ್ನು ಅರಸನಿಗೆ ಹೇಳಿ ಆ ಒಳಸಂಚಿನ ಬಗ್ಗೆ ತಿಳಿಸಿದಳು.
EST 2:23 ಈ ವಿಷಯ ವಿಚಾರಣೆಗೆ ಬಂದಾಗ ನಿಜವೆಂದು ಗೊತ್ತಾಯಿತು. ಆಗ ಆ ಇಬ್ಬರು ಅಧಿಕಾರಿಗಳನ್ನೂ ಗಲ್ಲಿಗೇರಿಸಲಾಯಿತು. ಇವೆಲ್ಲವನ್ನೂ ಅರಸನ ಮುಂದೆ ಇರುವ ರಾಜನ ಇತಿಹಾಸಗಳ ಪುಸ್ತಕದಲ್ಲಿ ಬರೆದಿಡಲಾಯಿತು.
EST 3:1 ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗನ ವಂಶದವನೂ ಹಮ್ಮೆದಾತನ ಮಗ ಹಾಮಾನನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ಅವನನ್ನು ತನ್ನ ಬಳಿಯಲ್ಲಿರುವ ಸಮಸ್ತ ಶ್ರೇಷ್ಠರಿಗಿಂತ ಉನ್ನತಸ್ಥಾನವನ್ನು ಕೊಟ್ಟು ಗೌರವಿಸಿದನು.
EST 3:2 ಆದಕಾರಣ ಅರಮನೆಯ ಬಾಗಿಲಲ್ಲಿರುವ ಅರಸನ ಸಮಸ್ತ ಸೇವಕರು ಬಗ್ಗಿ ಹಾಮಾನನಿಗೆ ಅಡ್ಡಬೀಳುತ್ತಿದ್ದರು. ಏಕೆಂದರೆ ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು. ಆದರೆ ಮೊರ್ದೆಕೈಯು ಬಗ್ಗದೆ ಅಡ್ಡಬೀಳದೆಯೂ ಇದ್ದನು.
EST 3:3 ಆಗ ಅರಮನೆಯ ಬಾಗಿಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ, “ನೀನು ಅರಸನ ಆಜ್ಞೆಯನ್ನು ಮೀರುವುದೇನು?” ಎಂದರು.
EST 3:4 ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಅವರಿಗೆ ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ನಡವಳಿಕೆಯನ್ನು ಸಹಿಸಬಹುದೋ ಎಂದು ಕಾಣಲು ಅವರು ಹಾಮಾನನಿಗೆ ದೂರು ಹೇಳಿದರು.
EST 3:5 ಹಾಮಾನನು, ಮೊರ್ದೆಕೈಯು ತನಗೆ ಬಗ್ಗಿ ಅಡ್ಡಬೀಳದೆ ಇರುವುದನ್ನು ಕಂಡಾಗ ಬಹು ಕೋಪಗೊಂಡನು.
EST 3:6 ಮೊರ್ದೆಕೈ ಮತ್ತು ಅವನ ಜನರು ಯೆಹೂದ್ಯರೆಂದು ಹಾಮಾನನಿಗೆ ಗೊತ್ತಾದಾಗ ಮೊರ್ದೆಕೈಯನ್ನು ಮಾತ್ರ ಕೊಲ್ಲಬಾರದೆಂದು ಅವನಿಗೆ ತೋರಿತು. ಅದರ ಬದಲು ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನರಾದ ಯೆಹೂದ್ಯರನ್ನೆಲ್ಲಾ ಸಂಹರಿಸಲು ಮಾರ್ಗವನ್ನು ಹುಡುಕಿದನು.
EST 3:7 ಅರಸನಾದ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆ ವರ್ಷದ ಮೊದಲನೆಯ ತಿಂಗಳು ಆದ ನಿಸಾನ ಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ಪೂರ್ ಅನ್ನು ಅಂದರೆ ಚೀಟನ್ನು ಹಾಕಿದರು. ಚೀಟು ಹನ್ನೆರಡನೆ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
EST 3:8 ಆಗ ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಸಕಲ ಪ್ರಾಂತಗಳಲ್ಲಿರುವ ಜನರೊಳಗೆ ಚದರಿ ಬಂದು ವಾಸಿಸುವ ಪ್ರತ್ಯೇಕವಾದ ಜನಾಂಗದ ಜನರಿದ್ದಾರೆ. ಅವರ ರೀತಿನೀತಿಗಳು ಎಲ್ಲಾ ಜನರಿಗಿಂತಲೂ ಬೇರೆಯಾಗಿರುತ್ತವೆ. ಈ ಜನರು ಅರಸನ ನಿಯಮಗಳನ್ನು ಕೈಗೊಳ್ಳುವುದೇ ಇಲ್ಲ. ಆದಕಾರಣ ಇಂಥವರನ್ನು ಸುಮ್ಮನೇ ಬಿಡುವುದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.
EST 3:9 ಅರಸನಿಗೆ ಸಮ್ಮತಿಯಾದರೆ, ಅವರೆಲ್ಲರಿಗೂ ಮರಣದಂಡನೆ ವಿಧಿಸುವಂತೆ ಒಂದು ಆಜ್ಞೆಯನ್ನು ಹೊರಡಿಸಬೇಕು. ಆಗ ನಾನು ರಾಜಭಂಡಾರಕ್ಕೆ 340 ಮೆಟ್ರಿಕ್ ಟನ್ ಬೆಳ್ಳಿಯನ್ನು ಖಜಾಂಚಿಗೆ ಕೊಡುವೆನು,” ಎಂದನು.
EST 3:10 ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನ ವಂಶಸ್ಥನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ ಕೊಟ್ಟನು.
EST 3:11 ಅರಸನು ಹಾಮಾನನಿಗೆ, “ಬೆಳ್ಳಿಯನ್ನು ನೀನೇ ಇಟ್ಟುಕೋ: ನಿನಗೆ ಸರಿ ತೋರುವ ಹಾಗೆ ಆ ಜನರಿಗೆ ಮಾಡು,” ಎಂದನು.
EST 3:12 ಮೊದಲನೆಯ ತಿಂಗಳ ಹದಿಮೂರನೆಯ ದಿವಸದಲ್ಲಿ ಅರಸನ ಲೇಖಕರನ್ನು ಕರೆಸಲಾಯಿತು. ಹಾಮಾನನು ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಪ್ರತಿ ಪ್ರಾಂತದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅವರವರ ಸ್ವದೇಶಿ ಲಿಪಿಗಳಲ್ಲಿಯೂ, ಭಾಷೆಗಳಲ್ಲಿಯೂ ಪತ್ರಗಳನ್ನು ಬರೆದರು. ಅರಸನಾದ ಅಹಷ್ವೇರೋಷನ ಹೆಸರಿನಲ್ಲಿಯೇ ಲಿಖಿತವಾದ ಈ ಪತ್ರಗಳು ಅರಸನ ಉಂಗುರದಿಂದ ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.
EST 3:13 ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನದಲ್ಲಿ, ಹಿರಿಯರೂ, ಕಿರಿಯರೂ, ಮಕ್ಕಳೂ, ಮಹಿಳೆಯರೂ, ಒಟ್ಟು ಎಲ್ಲಾ ಯೆಹೂದ್ಯರನ್ನು ಒಂದೇ ದಿನದಲ್ಲಿ ಕೊಂದುಹಾಕುವುದಕ್ಕೂ ನಾಶಮಾಡುವುದಕ್ಕೂ ಅವರ ಆಸ್ತಿಯನ್ನು ಕೊಳ್ಳೆ ಹೊಡೆಯುವದಕ್ಕೂ ಅರಸನ ಎಲ್ಲಾ ಪ್ರಾಂತಗಳಿಗೆ ಅಂಚೆಯವರ ಮೂಲಕ ಪತ್ರಗಳನ್ನು ಕಳುಹಿಸಲಾಯಿತು.
EST 3:14 ಎಲ್ಲರೂ ಆ ದಿನದಲ್ಲಿ ಸಿದ್ಧರಾಗಿರುವ ಹಾಗೆ ಪ್ರತಿ ಪ್ರಾಂತದಲ್ಲಿಯೂ ರಾಜಾಜ್ಞೆ ಜಾರಿಗೆ ತರುವುದರಲ್ಲಿ ಇತ್ತು. ರಾಜಾಜ್ಞೆಯಾಗಿ ಬರೆದ ಪತ್ರದ ಪ್ರತಿಯಲ್ಲಿ ಎಲ್ಲಾ ಜನರಲ್ಲಿಯೂ ಜಾರಿಗೆ ತರಲು ಪ್ರಕಟಿಸಬೇಕೆಂದು ಸಹ ಬರೆದಿತ್ತು.
EST 3:15 ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನಿನ ಅರಮನೆಯಲ್ಲಿಂದ ಆ ಆಜ್ಞೆಯು ಹೊರಡಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವೋ ತಳಮಳಗೊಂಡಿತ್ತು.
EST 4:1 ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು.
EST 4:2 ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.
EST 4:3 ಇದಲ್ಲದೆ ಅರಸನ ಮಾತೂ ಅವನ ಕಟ್ಟಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡರು.
EST 4:4 ಆಗ ಎಸ್ತೇರಳ ದಾಸಿಯರೂ ಅವಳ ಕಂಚುಕಿಯರೂ ಬಂದು ಮೊರ್ದೆಕೈ ಬಗ್ಗೆ ಅವಳಿಗೆ ತಿಳಿಸಿದರು. ಆದ್ದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆಕೈಯು ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಉಡುಪನ್ನು ಕಳುಹಿಸಿಕೊಟ್ಟಳು. ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ.
EST 4:5 ಆಗ ಎಸ್ತೇರಳು ತನ್ನ ಬಳಿಯಲ್ಲಿ ಸೇವೆಗಾಗಿ ನೇಮಿಸಲಾಗಿದ್ದ ಅರಸನ ರಾಜಕಂಚುಕಿಯರಲ್ಲಿ ಹತಾಕನನ್ನು ಕರೆದು, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ವರ್ತನೆಗೆ ಕಾರಣವನ್ನೂ ಅವನಿಂದ ತಿಳಿದುಕೊಂಡು ಬರಬೇಕೆಂದು ಆಜ್ಞಾಪಿಸಿದಳು.
EST 4:6 ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು.
EST 4:7 ಆಗ ಮೊರ್ದೆಕೈ ತನಗೆ ಆದ ಎಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣದ ವಿಷಯವನ್ನೂ ಅವನಿಗೆ ತಿಳಿಸಿದನು.
EST 4:8 ಯೆಹೂದ್ಯರನ್ನು ನಾಶಮಾಡಲು ಶೂಷನಿನಲ್ಲಿ ಪ್ರಕಟಗೊಂಡ ರಾಜಾಜ್ಞೆಯ ಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ, ಅವಳು ತನ್ನ ಜನರಿಗಾಗಿ ಅರಸನ ಮುಂದೆ ಹೋಗಿ ಬಿನ್ನಹ ಮಾಡುವಂತೆಯೂ ಆಕೆಗೆ ತಿಳಿಸಲು ಹೇಳಿದನು.
EST 4:9 ಆಗ ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು.
EST 4:10 ಎಸ್ತೇರಳು ಮತ್ತೊಮ್ಮೆ ಹತಾಕನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ,
EST 4:11 “ಅರಸನು ಹೇಳಿಕಳುಹಿಸದೆ ಅರಸನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವ ಗಂಡಸರಿಗಾಗಲಿ, ಹೆಂಗಸರಿಗಾಗಲಿ ಮರಣದಂಡನೆಯಾಗುವುದು. ಒಂದು ವೇಳೆ ಒಳಗೆ ಬಂದ ವ್ಯಕ್ತಿಯ ಕಡೆಗೆ ಅರಸನು ತನ್ನ ಸ್ವರ್ಣದಂಡವನ್ನು ಚಾಚಿದರೆ ಅವನಿಗೆ ಮಾತ್ರ ಮರಣದಂಡನೆಯಾಗದೆ ಜೀವದಿಂದ ಉಳಿಯುವರು. ಈ ರಾಜಾಜ್ಞೆಯನ್ನು ಅರಸನ ಸಮಸ್ತ ಸೇವಕರೂ ಅರಸನ ಪ್ರಾಂತಗಳ ಜನರೂ ತಿಳಿದಿದ್ದಾರೆ. ಆದರೆ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ನನಗೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು.
EST 4:12 ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು.
EST 4:13 ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ.
EST 4:14 ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು.
EST 4:15 ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ,
EST 4:16 “ನೀನು ಹೋಗಿ ಶೂಷನಿನಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವು ರಾತ್ರಿ ಹಗಲೂ ಮೂರು ದಿನ ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸಮಾಡಿರಿ. ಹಾಗೆಯೇ ನಾನೂ ನನ್ನ ದಾಸಿಯರೊಡನೆ ಉಪವಾಸ ಮಾಡುವೆನು. ಅನಂತರ ನಾನು ರಾಜಾಜ್ಞೆಯನ್ನು ಮೀರಿ ಅರಸನ ಬಳಿಗೆ ಹೋಗುವೆನು. ನಾನು ಸತ್ತರೂ ಸಾಯುವೆನು,” ಎಂದು ಹೇಳಿಕಳುಸಿದಳು.
EST 4:17 ಆಗ ಮೊರ್ದೆಕೈ ಹೊರಟುಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
EST 5:1 ಮೂರನೆಯ ದಿವಸದಲ್ಲಿ, ಎಸ್ತೇರಳು ರಾಜವಸ್ತ್ರ ಆಭರಣಗಳನ್ನು ಧರಿಸಿಕೊಂಡು ಅರಮನೆಗೆ ಎದುರಾಗಿರುವ ಅರಸನ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ನಿಂತಳು. ಅರಸನು ರಾಜಮಂದಿರದೊಳಗೆ ತನ್ನ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು.
EST 5:2 ಅರಸನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ, ಆಕೆಗೆ ತನ್ನ ಮೆಚ್ಚುಗೆಯನ್ನು ತೋರಿ ತನ್ನ ಕೈಯಲ್ಲಿದ್ದ ಸ್ವರ್ಣದಂಡವನ್ನು ಎಸ್ತೇರಳ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು.
EST 5:3 ಆಗ ಅರಸನು ಅವಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
EST 5:4 ಅದಕ್ಕೆ ಎಸ್ತೇರಳು ಅರಸನಿಗೆ, “ಸಮ್ಮತಿಯಾದರೆ ನಾನು ಅರಸನಿಗಾಗಿ ಸಿದ್ಧಮಾಡಿಸಿರುವ ಔತಣಕ್ಕೆ ಅರಸನೂ ಹಾಮಾನನೂ ಈ ಹೊತ್ತು ಬರಬೇಕು,” ಎಂದಳು.
EST 5:5 ಆಗ ಅರಸನು, “ಎಸ್ತೇರಳು ಹೇಳಿದ ಪ್ರಕಾರ ನಾವು ಮಾಡಲು, ಬೇಗನೆ ಹಾಮಾನನನ್ನು ಕರೆದುಕೊಂಡು ಬನ್ನಿರಿ,” ಎಂದು ಆಜ್ಞಾಪಿಸಿದನು. ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಅರಸನೂ ಹಾಮಾನನೂ ಬಂದರು.
EST 5:6 ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಈಗ ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
EST 5:7 ಅದಕ್ಕೆ ಎಸ್ತೇರಳು, “ನನ್ನ ಬೇಡಿಕೆಯೂ ನನ್ನ ವಿಜ್ಞಾಪನೆಯೂ ಇದೇ:
EST 5:8 ಅರಸನಿಗೆ ಸಮ್ಮತಿಯಾದರೆ, ಅರಸನಿಗೂ ಹಾಮಾನನಿಗೂ ನಾನು ಮಾಡಲಿರುವ ಔತಣಕ್ಕೆ ನಾಳೆಯೂ ಬರಬೇಕು. ಆಗ ಅರಸನ ಪ್ರಶ್ನೆಗೆ ಉತ್ತರಕೊಡುವೆನು,” ಎಂದಳು.
EST 5:9 ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು.
EST 5:10 ಆದರೂ ಹಾಮಾನನು ಬಿಗಿಹಿಡಿದುಕೊಂಡು ತನ್ನ ಮನೆಗೆ ಹೋದನು. ಅವನು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಯಿಸಿದನು.
EST 5:11 ಹಾಮಾನನು ತನ್ನ ಐಶ್ವರ್ಯದ ಘನವನ್ನೂ, ತನ್ನ ಮಕ್ಕಳ ಹೆಚ್ಚಳವನ್ನೂ, ಅರಸನು ತನ್ನನ್ನು ಹೆಚ್ಚಿಸಿದ್ದನ್ನೂ, ಅರಸನ ಪ್ರಭುಗಳ ಹಾಗೂ ಸೇವಕರ ಮೇಲೆ ಎತ್ತಿದ್ದನ್ನೂ ಹೀಗೆ ಎಲ್ಲವನ್ನೂ ಅವರಿಗೆ ವಿವರವಾಗಿ ಹೇಳಿದನು.
EST 5:12 ಇದಲ್ಲದೆ ಹಾಮಾನನು, “ಎಸ್ತೇರ್ ರಾಣಿಯು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೆ ಯಾರನ್ನು ಕರೆಯಲಿಲ್ಲ. ಮರುದಿನವೂ ಅರಸನೊಂದಿಗೆ ಔತಣಮಾಡಲು ನನ್ನನ್ನು ಆಹ್ವಾನಿಸಿದ್ದಾಳೆ.
EST 5:13 ಆದರೆ ಯೆಹೂದ್ಯನಾದ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ನನ್ನ ಕಣ್ಣೆದುರು ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಎಂದನು.
EST 5:14 ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು.
EST 6:1 ಆ ರಾತ್ರಿ ಅರಸನಿಗೆ ನಿದ್ರೆ ಬರಲಿಲ್ಲ. ಆದ್ದರಿಂದ ಅರಸನು ಇತಿಹಾಸ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತೆಗೆದುಕೊಂಡು ಬರಲು ಹೇಳಿದನು.
EST 6:2 ಅದನ್ನು ಅರಸನ ಮುಂದೆ ತಂದು ಓದಿಸಿದಾಗ, ದ್ವಾರಪಾಲಕರಾಗಿದ್ದ ರಾಜಕಂಚುಕಿಯರಲ್ಲಿ ಇಬ್ಬರಾದ ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನನ್ನು ಕೊಲ್ಲಬೇಕೆಂದು ಒಳಸಂಚುಮಾಡಿದ ಘಟನೆಯು ಬರೆದಿತ್ತು. ಮೊರ್ದೆಕೈಯು ಹೇಗೆ ಅದನ್ನು ಅರಸನಿಗೆ ತಿಳಿಸಿದನೆಂದು ಸಹ ಅದರಲ್ಲಿ ಬರೆದಿತ್ತು.
EST 6:3 ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತು?” ಎಂದು ವಿಚಾರಿಸಿದನು. ಅರಸನ ಸೇವಕರು, “ಮೊರ್ದೆಕೈಯನಿಗೆ ಏನೂ ಮಾಡಿಲ್ಲ,” ಎಂದು ಹೇಳಿದರು.
EST 6:4 ಆಗ ಅರಸನು, “ಯಾರು ಅಂಗಳದಲ್ಲಿ?” ಎಂದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲುಮರಕ್ಕೆ ಮೊರ್ದೆಕೈಯನ್ನು ನೇಣುಹಾಕಿಸಲು ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳಕ್ಕೆ ಬಂದಿದ್ದನು.
EST 6:5 ಆದ್ದರಿಂದ ಅರಸನ ಸೇವಕರು, “ಇಗೋ, ಹಾಮಾನನು ಅಂಗಳದಲ್ಲಿ ನಿಂತಿದ್ದಾನೆ,” ಎಂದರು. ಅದಕ್ಕೆ ಅರಸನು, “ಅವನು ಒಳಗೆ ಬರಲಿ,” ಎಂದನು.
EST 6:6 ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ, “ಅರಸನು ಒಬ್ಬ ವ್ಯಕ್ತಿಯನ್ನು ಸನ್ಮಾನಿಸಲು ಬಯಸಿದರೆ ಮನುಷ್ಯನಿಗೆ ಅಂಥ ವ್ಯಕ್ತಿಗೆ ಮಾಡಬೇಕಾದದ್ದೇನು?” ಎಂದು ವಿಚಾರಿಸಿದನು. ಆಗ ಹಾಮಾನನು ತನ್ನನ್ನು ಅಲ್ಲದೆ ಅರಸನು ಬೇರೆ ಯಾರನ್ನು ಸನ್ಮಾನಿಸಬೇಕೆಂದಿರುವನು ಎಂದುಕೊಂಡನು.
EST 6:7 ಆದ್ದರಿಂದ ಹಾಮಾನನು ಅರಸನಿಗೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಮಾಡಬೇಕಾದದ್ದೇನೆಂದರೆ,
EST 6:8 ಅರಸನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ, ಅರಸನು ಸವಾರಿ ಮಾಡುವ ಕುದುರೆಯನ್ನೂ, ಅರಸನ ತಲೆಯ ಮೇಲೆ ಧರಿಸಿಕೊಳ್ಳುವ ರಾಜಕಿರೀಟವನ್ನೂ ತರಿಸಬೇಕು.
EST 6:9 ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸನ ಪ್ರಧಾನರಲ್ಲಿ ಒಬ್ಬನ ವಶಕ್ಕೆ ಕೊಡಬೇಕು. ಇವನು ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿದ ತರುವಾಯ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!’ ಎಂದು ಪ್ರಕಟಿಸಬೇಕು,” ಎಂದನು.
EST 6:10 ಆಗ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತಿರುವ ಯೆಹೂದ್ಯನಾದ ಮೊರ್ದೆಕೈಗೆ ಹಾಗೆಯೇ ಮಾಡು. ನೀನು ಸಲಹೆಮಾಡಿದ್ದರಲ್ಲಿ ಒಂದನ್ನೂ ಬಿಡದೆ, ಎಲ್ಲವನ್ನೂ ಮಾಡು,” ಎಂದು ಹಾಮಾನನಿಗೆ ಆಜ್ಞಾಪಿಸಿದನು.
EST 6:11 ಆದ್ದರಿಂದ ಹಾಮಾನನು ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ಆ ವಸ್ತ್ರಗಳನ್ನು ತೊಡಿಸಿ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!” ಎಂದು ಸಾರಿದನು.
EST 6:12 ಅನಂತರ ಮೊರ್ದೆಕೈ ಪುನಃ ಅರಮನೆಯ ಬಾಗಿಲಿಗೆ ಬಂದನು. ಆದರೆ ಹಾಮಾನನು ದುಃಖಪಟ್ಟು ತಲೆಯನ್ನು ಮುಚ್ಚಿಕೊಂಡು ತನ್ನ ಮನೆಗೆ ಶೀಘ್ರವಾಗಿ ಹೋದನು.
EST 6:13 ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದದ್ದನ್ನೆಲ್ಲಾ ವಿವರವಾಗಿ ಹೇಳಿದನು. ಆಗ ಅವನ ಸಲಹೆಗಾರರೂ ಹೆಂಡತಿಯಾದ ಜೆರೆಷಳೂ ಅವನಿಗೆ, “ಯಾವನ ಮುಂದೆ ನಿನ್ನ ಬೀಳುವಿಕೆ ಪ್ರಾರಂಭವಾಯಿತೋ, ಆ ಮೊರ್ದೆಕೈ ಯೆಹೂದ್ಯನಾಗಿದ್ದರೆ ನೀನು ಅವನನ್ನು ಜಯಿಸಲಾರೆ. ನಿಶ್ಚಯವಾಗಿ, ನೀನು ಅವನಿಂದ ನಾಶವಾಗುವಿ,” ಎಂದರು.
EST 6:14 ಅವರು ಇನ್ನೂ ಅವನ ಸಂಗಡ ಮಾತನಾಡುತ್ತಿರುವಾಗಲೇ ರಾಜಕಂಚುಕಿಯವರು ಬಂದು, ಎಸ್ತೇರಳು ಏರ್ಪಡಿಸಿದ ಔತಣಕ್ಕೆ ಬೇಗನೆ ಬರಬೇಕೆಂದು ಹಾಮಾನನನ್ನು ಕರೆದರು.
EST 7:1 ಅರಸನೂ ಹಾಮಾನನೂ ಎಸ್ತೇರ್ ರಾಣಿಯ ಔತಣಕ್ಕೆ ಬಂದರು.
EST 7:2 ಎರಡನೆಯ ದಿವಸ ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
EST 7:3 ಆಗ ಎಸ್ತೇರ್ ರಾಣಿಯು ಉತ್ತರವಾಗಿ, “ಅರಸನೇ, ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವಳಾಗಿದ್ದರೆ, ನನ್ನ ಪ್ರಾಣವನ್ನೂ ನನ್ನ ಜನರ ಪ್ರಾಣವನ್ನೂ ಉಳಿಸಬೇಕು. ಇದೇ ನನ್ನ ವಿಜ್ಞಾಪನೆ. ಇದೇ ನನ್ನ ಬೇಡಿಕೆ.
EST 7:4 ಏಕೆಂದರೆ ನಾನು ಮತ್ತು ನನ್ನ ಜನರು ದುರಂತಕ್ಕೂ, ಕೊಲೆಗೂ, ಸರ್ವನಾಶಕ್ಕೂ ಮಾರಟವಾಗಿದ್ದೇವೆ. ಒಂದು ವೇಳೆ, ನಾವು ದಾಸರಾಗಿಯಾಗಲಿ, ದಾಸಿಯರಾಗಲಿ ಮಾರಾಟವಾಗಿದ್ದರೆ ನಾನು ಸುಮ್ಮನಿರುತ್ತಿದ್ದೆ. ಅಂಥ ಕಷ್ಟಕ್ಕಾಗಿ ನಾನು ಅರಸನನ್ನು ತೊಂದರೆಪಡಿಸದೆ ಸುಮ್ಮನೆ ಇದ್ದುಬಿಡುತ್ತಿದ್ದೆನು,” ಎಂದಳು.
EST 7:5 ಆಗ ಅರಸನಾದ ಅಹಷ್ವೇರೋಷನು ರಾಣಿಯಾದ ಎಸ್ತೇರಳಿಗೆ, “ಯಾರು ಅವನು? ಈ ಪ್ರಕಾರ ಮಾಡಲು ಧೈರ್ಯಗೊಂಡವನು ಯಾರು? ಅವನು ಎಲ್ಲಿದ್ದಾನೆ?” ಎಂದನು.
EST 7:6 ಅದಕ್ಕೆ ಎಸ್ತೇರಳು, “ಆ ವೈರಿಯೂ ಹಗೆಗಾರನೂ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನನೇ!” ಎಂದಳು. ಆಗ ಹಾಮಾನನು ಅರಸನ ಮುಂದೆಯೂ, ರಾಣಿಯ ಮುಂದೆಯೂ ಬೆಪ್ಪಾದನು.
EST 7:7 ಅರಸನು ಕೋಪಗೊಂಡು ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟು, ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು. ಏಕೆಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ಅವನಿಗೆ ತಿಳಿದಿತ್ತು.
EST 7:8 ಅರಸನು ಅರಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ಹಿಂದಿರುಗಿ ಬಂದಾಗ, ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು, “ನನ್ನ ಮುಂದೆಯೇ ಇವನು ರಾಣಿಯನ್ನು ಬಲಾತ್ಕಾರ ಮಾಡಬೇಕೆಂದಿರುವನೋ?” ಎಂದನು. ಆ ಮಾತು ಅರಸನ ಬಾಯಿಂದ ಹೊರಟ ಕೂಡಲೆ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಹಾಕಿದರು.
EST 7:9 ಆಗ ರಾಜಕಂಚುಕಿಯರಲ್ಲಿ ಒಬ್ಬನಾದ ಹರ್ಬೋನನು ಅರಸನ ಮುಂದೆ ಬಂದು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಮಾತಾಡಿದ ಮೊರ್ದೆಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಮಾಡಿಸಿದ ಇಪ್ಪತ್ತೆರಡು ಮೀಟರ್ ಗಲ್ಲುಮರವು ಹಾಮಾನನ ಮನೆಯ ಹತ್ತಿರ ಇದೆ,” ಎಂದನು. ಅದಕ್ಕೆ ಅರಸನು, “ಇವನನ್ನು ಅದರಲ್ಲಿ ನೇತುಹಾಕಿರಿ” ಎಂದನು.
EST 7:10 ಅವರು ಮೊರ್ದೆಕೈಗೋಸ್ಕರ ಹಾಮಾನನು ಸಿದ್ಧಮಾಡಿದ್ದ ಅದೇ ಗಲ್ಲುಮರದಲ್ಲಿ ಅವನನ್ನು ನೇತುಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
EST 8:1 ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಸೊತ್ತನ್ನು ರಾಣಿಯಾದ ಎಸ್ತೇರಳಿಗೆ ಕೊಟ್ಟನು. ಇದಲ್ಲದೆ ಮೊರ್ದೆಕೈ ಅರಸನ ಬಳಿಗೆ ಬಂದನು. ಏಕೆಂದರೆ ಮೊರ್ದೆಕೈ ತನಗೆ ಸಂಬಂಧಿಕನು ಎಂದು ಎಸ್ತೇರಳು ತಿಳಿಸಿದ್ದಳು.
EST 8:2 ಆಗ ಅರಸನು ತಾನು ಹಾಮಾನನಿಂದ ತೆಗೆದುಕೊಂಡ ತನ್ನ ಮುದ್ರೆಉಂಗುರವನ್ನು ಮೊರ್ದೆಕೈಗೆ ಕೊಟ್ಟನು. ಇದಲ್ಲದೆ ಎಸ್ತೇರಳು ಮೊರ್ದೆಕೈಯನ್ನು ಹಾಮಾನನ ಸೊತ್ತಿಗೆ ಅಧಿಕಾರಿಯಾಗಿ ನೇಮಿಸಿದಳು.
EST 8:3 ಎಸ್ತೇರಳು ಪುನಃ ಅರಸನ ಮುಂದೆ ಹೋಗಿ ಅವನ ಪಾದಗಳ ಮುಂದೆ ಬಿದ್ದು, ಅತ್ತುಕೊಂಡು ಬೇಡಿದಳು. ಅಗಾಗನ ವಂಶದನಾದ ಹಾಮಾನನ ಕೇಡನ್ನೂ ಅವನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ಯೋಚನೆಯನ್ನೂ ತೆಗೆದುಹಾಕಲು ಬೇಡಿಕೊಂಡಳು.
EST 8:4 ಆಗ ಅರಸನು ಎಸ್ತೇರಳ ಕಡೆಗೆ ಸ್ವರ್ಣದಂಡವನ್ನು ಚಾಚಿದ್ದರಿಂದ, ಎಸ್ತೇರಳು ಎದ್ದು ಅರಸನ ಮುಂದೆ ನಿಂತಳು.
EST 8:5 ಅವಳು, “ಅರಸನಿಗೆ ನನ್ನ ಮೇಲೆ ದಯೆಯಿದ್ದರೆ, ಈ ಕಾರ್ಯವು ಅರಸನಿಗೆ ಸರಿ ಎಂದೆಣಿಸಿದರೆ, ಅರಸನು ನನ್ನನ್ನು ಮೆಚ್ಚಿದ್ದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಕೊಂದುಹಾಕುವುದಕ್ಕೆ, ಅಗಾಗನ ವಂಶದ ಹಮ್ಮೆದಾತನ ಮಗ ಹಾಮಾನನು ಬರೆದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು.
EST 8:6 ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಹೇಗೆ ಸಹಿಸಲಿ? ಇಲ್ಲವೆ ನನ್ನ ಕುಟುಂಬದ ನಾಶವನ್ನು ನಾನು ನೋಡಿ ಹೇಗೆ ಸಹಿಸಲಿ?” ಎಂದಳು.
EST 8:7 ಆಗ ಅರಸನಾದ ಅಹಷ್ವೇರೋಷನು ಎಸ್ತೇರ್ ರಾಣಿಗೂ ಯೆಹೂದ್ಯನಾದ ಮೊರ್ದೆಕೈಗೂ ಹೇಳಿದ್ದೇನೆಂದರೆ, “ಇಗೋ, ಹಾಮಾನನು ಯೆಹೂದ್ಯರ ವಿರುದ್ಧ ಕೈಯೆತ್ತಿದ್ದರಿಂದ ಅವನ ಸೊತ್ತನ್ನು ಎಸ್ತೇರಳಿಗೆ ಕೊಟ್ಟೆನು. ಹಾಮಾನನನ್ನು ಗಲ್ಲಿಗೆ ಹಾಕಿದ್ದಾರೆ.
EST 8:8 ಈಗ ನೀವು ಯೆಹೂದ್ಯರಿಗೋಸ್ಕರ ಅರಸನ ಹೆಸರಿನಿಂದ ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋರುವ ಹಾಗೆ ಬೇರೆ ಒಂದು ಪತ್ರವನ್ನು ಬರೆದು, ಅರಸನ ಉಂಗುರದಿಂದ ಮುದ್ರೆಹಾಕಿರಿ. ಏಕೆಂದರೆ ಅರಸನ ಹೆಸರಿನಿಂದ ಬರೆಯಲಾದ ಹಾಗು ರಾಜಮುದ್ರೆಯನ್ನು ಹೊಂದಿರುವ ಲೇಖನವನ್ನು ಯಾರೂ ಈಗ ರದ್ದುಮಾಡಲಾಗದು,” ಎಂದು ಹೇಳಿದನು.
EST 8:9 ಆಗ ಮೂರನೆಯ ತಿಂಗಳಾದ ಸಿವಾನ್ ಎಂಬ ಮಾಸದ ಇಪ್ಪತ್ತಮೂರನೆಯ ದಿನದಲ್ಲಿ ಅರಸನ ಲೇಖಕರನ್ನು ಕರೆಯಲಾಯಿತು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ, ಸಕಲ ಯೆಹೂದ್ಯರಿಗೂ ಹಿಂದೂ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ, ಅಧಿಕಾರಿಗಳಿಗೂ, ಅವರವರ ಪ್ರಾಂತದ ಲಿಪಿಯಲ್ಲಿಯೂ, ಅವರವರ ಭಾಷೆಯಲ್ಲಿಯೂ ಪತ್ರಗಳನ್ನು ಬರೆಯಲಾಯಿತು.
EST 8:10 ಮೊರ್ದೆಕೈ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದ ಪತ್ರಗಳಿಗೆ ಅರಸನ ಉಂಗುರದಿಂದ ಮುದ್ರೆಹಾಕಿ, ಸವಾರಿ ಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರ ಮೂಲಕ ವೇಗವಾಗಿ ಕಳುಹಿಸಿದನು.
EST 8:11 ಅರಸನಾದ ಅಹಷ್ವೇರೋಷನ ಆಜ್ಞೆಯ ಪ್ರಕಾರ, ಸಮಸ್ತ ಪ್ರಾಂತಗಳ ಆಯಾ ಪಟ್ಟಣಗಳಲ್ಲಿರುವ ಎಲ್ಲಾ ಯೆಹೂದ್ಯರು ಒಟ್ಟಾಗಿ ಸೇರಿ ಪ್ರಾಣರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಕೊಡಲಾಗಿತ್ತು. ಯಾವುದೇ ದೇಶದವರು ಅಥವಾ ಪ್ರಾಂತದವರು ಆಯುಧಗಳೊಡನೆ ಅವರಿಗೆ ವಿರೋಧವಾಗಿ ಎದ್ದು ಅವರನ್ನಾಗಲಿ, ಅವರ ಮಹಿಳೆಯರನ್ನಾಗಲಿ, ಅವರ ಮಕ್ಕಳನ್ನಾಗಲಿ ದಾಳಿಮಾಡಲು ಬಂದರೆ, ಅಂಥವರನ್ನು ಕೊಂದುಹಾಕುವುದಕ್ಕೂ ನಾಶಮಾಡುವುದಕ್ಕೂ ವೈರಿಯ ಆಸ್ತಿಯನ್ನು ಕೊಳ್ಳೆ ಹೊಡೆಯುವುದಕ್ಕೂ ಅಧಿಕಾರಕೊಡಲಾಗಿತ್ತು.
EST 8:12 ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳ ಆಯಾ ಪಟ್ಟಣಗಳಲ್ಲಿರುವ ಎಲ್ಲಾ ಯೆಹೂದ್ಯರು ಇದನ್ನು ಮಾಡಲು ನೇಮಿಸಿದ ದಿನವು, ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೆಯ ದಿನವಾಗಿತ್ತು.
EST 8:13 ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು, ಅವರು ಆ ದಿನ ಸಿದ್ಧವಾಗಿರಬೇಕೆಂದು ಈ ಆಜ್ಞಾಪತ್ರದ ಪ್ರತಿಯು ಪ್ರಾಂತ ಪ್ರಾಂತಗಳಲ್ಲಿ ಕಾನೂನಾಗಿ ಸಕಲ ದೇಶದವರಿಗೂ ಸಾರಿ ಹೇಳಲಾಗಿತ್ತು.
EST 8:14 ಅಂಚೆಯವರು ಅರಸನ ಆಜ್ಞೆಯಿಂದ ಪ್ರೇರಿತರಾಗಿ ಅರಮನೆಯ ಕುದುರೆಗಳ ಮೇಲೆ ಅತಿ ಶೀಘ್ರವಾಗಿ ಹೊರಟರು. ಈ ಆಜ್ಞೆಯು ಶೂಷನ್ ನಗರದ ಅರಮನೆಯಲ್ಲಿ ಕೊಡಲಾಗಿತ್ತು.
EST 8:15 ಮೊರ್ದೆಕೈ ಶುಭ್ರವಾದ ನೀಲ ರಾಜವಸ್ತ್ರವನ್ನು ಧರಿಸಿ, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣವುಳ್ಳ ನಯವಾದ ನಾರಿನ ಶಾಲನ್ನು ಹೊದ್ದುಕೊಂಡು ಅರಸನ ಸಮ್ಮುಖದಿಂದ ಹೊರಟುಹೋದನು. ಶೂಷನ್ ಪಟ್ಟಣವು ಸಂಭ್ರಮವೂ ಸಂತೋಷವೂ ಉಳ್ಳದ್ದಾಗಿತ್ತು.
EST 8:16 ಯೆಹೂದ್ಯರಿಗೆ ಬೆಳಕೂ ಸಂತೋಷವೂ ಆನಂದವೂ ಘನವೂ ಉಂಟಾಗಿದ್ದವು.
EST 8:17 ಅರಸನ ಆಜ್ಞೆಯು ಪ್ರಕಟವಾದ ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ ಯೆಹೂದ್ಯರಿಗೆ ಸಂತೋಷವೂ ಆನಂದವೂ ಸಂಭ್ರಮವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಇತರ ದೇಶಗಳ ಅನೇಕ ಜನರು ಯೆಹೂದ್ಯರಾದರು. ಯೆಹೂದ್ಯರ ಭಯವು ಅವರ ಮೇಲೆ ಇತ್ತು.
EST 9:1 ಹನ್ನೆರಡನೆಯ ತಿಂಗಳಾದ ಆದಾರ್ ತಿಂಗಳೆಂಬ ಹದಿಮೂರನೆಯ ದಿನದಲ್ಲಿ ಅರಸನ ಆಜ್ಞೆಯು ನೆರವೇರುವುದಕ್ಕೆ ನಿರ್ಣಯವಾಗಿತ್ತು. ಯೆಹೂದ್ಯರ ಶತ್ರುಗಳು ಅದೇ ದಿನದಲ್ಲಿ ಅವರ ಮೇಲೆ ದೊರೆತನ ಮಾಡುವುದಾಗಿ ಎದುರುನೋಡಿದ್ದರು. ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮನ್ನು ಹಗೆಮಾಡುವವರ ಮೇಲೆ ದೊರೆತನ ಮಾಡಲಾರಂಭಿಸಿದರು.
EST 9:2 ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ತಮ್ಮ ತಮ್ಮ ಪಟ್ಟಣಗಳಲ್ಲಿ ಯೆಹೂದ್ಯರು ತಮ್ಮನ್ನು ಕೊಲ್ಲಲು ಹುಡುಕುವವರ ಮೇಲೆ ದಾಳಿಮಾಡಲು ಒಟ್ಟಾಗಿ ಸೇರಿದರು. ಆಗ ಯೆಹೂದ್ಯರ ಭಯವು ಸಮಸ್ತ ಜನರ ಮೇಲೆ ಇದ್ದುದರಿಂದ ಅವರ ಮುಂದೆ ನಿಲ್ಲುವವನು ಒಬ್ಬನೂ ಇರಲಿಲ್ಲ.
EST 9:3 ಇದಲ್ಲದೆ ಪ್ರಾಂತಗಳ ಉಪರಾಜರೂ, ಪ್ರತಿನಿಧಿಗಳೂ, ಅಧಿಪತಿಗಳೂ, ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಏಕೆಂದರೆ ಮೊರ್ದೆಕೈಯ ಭಯ ಅವರಿಗಿತ್ತು.
EST 9:4 ಏಕೆಂದರೆ ಮೊರ್ದೆಕೈ ಅರಮನೆಯಲ್ಲಿ ಪ್ರಮುಖನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತಗಳಿಗೂ ಹರಡಿತು. ಈ ಮೊರ್ದೆಕೈ ಅಧಿಕವಾಗಿ ಅಧಿಕಾರವಂತನಾದನು.
EST 9:5 ಹೀಗೆ ಯೆಹೂದ್ಯರು ತಮ್ಮ ಶತ್ರುಗಳೆಲ್ಲರನ್ನು ಸೋಲಿಸಿ, ಖಡ್ಗದಿಂದ ಸಂಹರಿಸಿದರು. ತಮ್ಮನ್ನು ಹಗೆಮಾಡುತ್ತಿದ್ದವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು.
EST 9:6 ಶೂಷನಿನ ಅರಮನೆಯಲ್ಲಿ ಯೆಹೂದ್ಯರು ಐನೂರು ಮಂದಿಗೆ ಮರಣದಂಡನೆ ವಿಧಿಸಿದರು.
EST 9:7 ಇದಲ್ಲದೆ ಪರ್ಷಂದಾತನು ದಲ್ಫೋನನು, ಅಸ್ಪಾತನು,
EST 9:8 ಪೊರಾತನು, ಅದಲ್ಯನು, ಅರಿದಾತನು,
EST 9:9 ಪರ್ಮಷ್ಟನು, ಅರಿಸಾಯನು, ಅರಿದಾಯನು, ವೈಜಾತನು ಎಂಬವರನ್ನು ಕೊಂದರು.
EST 9:10 ಇವರು ಯೆಹೂದ್ಯರ ವೈರಿಯಾದ ಹಮ್ಮೆದಾತನ ಮಗ ಹಾಮಾನನ ಹತ್ತು ಮಂದಿ ಪುತ್ರರು. ಆದರೆ ಅವರು ಇವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ.
EST 9:11 ಅದೇ ದಿವಸ ಶೂಷನಿನ ಅರಮನೆಯಲ್ಲಿ ಮರಣದಂಡನೆಯಾದವರ ಲೆಕ್ಕವು ಅರಸನ ಮುಂದೆ ಒಪ್ಪಿಸಲಾಯಿತು.
EST 9:12 ಆಗ ಅರಸನು ಎಸ್ತೇರ್ ರಾಣಿಗೆ, “ಯೆಹೂದ್ಯರು ಶೂಷನಿನ ಅರಮನೆಯಲ್ಲಿ ಐನೂರು ಮಂದಿಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿದ್ದಾರೆ. ಅವರು ಅರಸನ ಮಿಕ್ಕಾದ ಪ್ರಾಂತಗಳಲ್ಲಿ ಏನು ಮಾಡಿರಬಹುದೋ? ಈಗ ನಿನ್ನ ವಿಜ್ಞಾಪನೆ ಏನು? ಅದು ನಿನಗೆ ಕೊಡಲಾಗುವುದು. ಇನ್ನೂ ನಿನ್ನ ಬೇಡಿಕೆ ಏನು? ಅದು ಮಾಡಲಾಗುವುದು,” ಎಂದು ಹೇಳಿದನು.
EST 9:13 ಅದಕ್ಕೆ ಎಸ್ತೇರಳು, “ಅರಸನಿಗೆ ಸಮ್ಮತಿಯಾದರೆ, ಇಂದಿನಂತೆಯೇ ರಾಜಾಜ್ಞೆಯು ನಾಳೆಯೂ ಶೂಷನ್ ಪಟ್ಟಣದಲ್ಲಿ ಜಾರಿಗೆ ಬರಲು ಯೆಹೂದ್ಯರಿಗೆ ಅಪ್ಪಣೆ ಆಗಲಿ. ಹಾಮಾನನ ಹತ್ತು ಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸುವಂತೆ ಅಪ್ಪಣೆಯಾಗಲಿ,” ಎಂದಳು.
EST 9:14 ಆಗ ಅರಸನು ಹಾಗೆಯೇ ಮಾಡಲು ಆಜ್ಞಾಪಿಸಿದನು. ಆ ಆಜ್ಞೆಯು ಶೂಷನಿನಲ್ಲಿ ಜಾರಿಗೆಬಂದಾಗ ಅವರು ಹಾಮಾನನ ಹತ್ತು ಮಂದಿ ಪುತ್ರರ ಶವವನ್ನು ಗಲ್ಲಿಗೆ ಹಾಕಿದರು.
EST 9:15 ಇದಲ್ಲದೆ ಶೂಷನಿನಲ್ಲಿರುವ ಯೆಹೂದ್ಯರು ಆದಾರ್ ಎಂಬ ಫಾಲ್ಗುನಮಾಸದ ಹದಿನಾಲ್ಕನೆಯ ದಿವಸದಲ್ಲಿ ಶೂಷನಿನಲ್ಲಿ ಒಟ್ಟಾಗಿ ಸೇರಿ ಮುನ್ನೂರು ಮಂದಿಗೆ ಮರಣದಂಡನೆಯನ್ನು ವಿಧಿಸಿದರು. ಆದರೆ ಅವರು ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ.
EST 9:16 ಅರಸನ ಪ್ರಾಂತಗಳಲ್ಲಿರುವ ಮಿಕ್ಕ ಯೆಹೂದ್ಯರು ತಮ್ಮ ಪ್ರಾಣ ರಕ್ಷಣೆಗಾಗಿ ಎದ್ದು ನಿಂತು, ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆಯುವಂತೆ ಒಟ್ಟಾಗಿ ಸೇರಿದರು. ಅವರು ತಮ್ಮ ವೈರಿಗಳಲ್ಲಿ 75,000 ಮಂದಿಗೆ ಮರಣದಂಡನೆ ವಿಧಿಸಿದರು. ಆದರೆ ಅವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ.
EST 9:17 ಆದಾರ್ ಮಾಸದ ಹದಿಮೂರನೆಯ ದಿನ ಈ ಘಟನೆ ನಡೆಯಿತು. ಹದಿನಾಲ್ಕನೆಯ ದಿನದಂದು ಅವರು ವಿಶ್ರಮಿಸಿಕೊಂಡು, ಅದನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
EST 9:18 ಆದರೆ ಶೂಷನಿನಲ್ಲಿದ್ದ ಯೆಹೂದ್ಯರು ಹದಿಮೂರನೆಯ ಹಾಗೂ ಹದಿನಾಲ್ಕನೆಯ ದಿನಗಳಲ್ಲಿ ಒಟ್ಟಾಗಿ ಸೇರಿಬಂದದ್ದರಿಂದ, ಹದಿನೈದನೆಯ ದಿನದಲ್ಲಿ ಅವರು ವಿಶ್ರಮಿಸಿಕೊಂಡು, ಅದೇ ದಿನವನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
EST 9:19 ಆದಕಾರಣ ಗ್ರಾಮಗಳಲ್ಲಿಯೂ ಬಯಲು ಪ್ರಾಂತಗಳ ಪಟ್ಟಣಗಳಲ್ಲಿಯೂ ವಾಸವಾಗಿರುವ ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆಯ ದಿನವನ್ನು ಶುಭದಿನವಾಗಿಯೂ, ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ ಆಚರಿಸಿದರು.
EST 9:20 ಮೊರ್ದೆಕೈಯು ಈ ಘಟನೆಗಳನ್ನು ಬರೆದು ಅರಸನಾದ ಅಹಷ್ವೇರೋಷನ ಸಕಲ ಪ್ರಾಂತಗಳಲ್ಲಿ ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಯೆಹೂದ್ಯರು ಎಲ್ಲರಿಗೂ ಪತ್ರಗಳ ಮುಖಾಂತರ ಕಳುಹಿಸಿದನು.
EST 9:21 ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನಗಳನ್ನೂ ಪ್ರತಿವರ್ಷ ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮವೆಂದು ಭಾವಿಸುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು.
EST 9:22 ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆದ ಕಾಲವಾಗಿಯೂ, ಅವರ ದುಃಖ ಸಂತೋಷವೂ, ಗೋಳಾಟ ಉತ್ಸವವೂ ಬದಲಾದ ದಿನವಾಗಿಯೂ ಕೊಂಡಾಡುವಂತೆ ಆ ಪತ್ರದಲ್ಲಿ ಬರೆದಿತ್ತು. ಆದ್ದರಿಂದ ಆ ದಿನ ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ, ಬಡವರಿಗೆ ದಾನಗಳನ್ನು ಮಾಡುವ ದಿನವಾಗಿಯೂ ಪಾಲಿಸಬೇಕೆಂದೂ ಆ ಪತ್ರದಲ್ಲಿ ಬರೆದಿತ್ತು.
EST 9:23 ಆದ್ದರಿಂದ ಯೆಹೂದ್ಯರು ಮೊರ್ದೆಕೈಯು ತಮಗೆ ಬರೆದ ಪ್ರಕಾರವಾಗಿ, ತಾವು ಆರಂಭಮಾಡಿದ್ದ ಸಂಭ್ರಮವನ್ನು ಮುಂದುವರಿಸಲು ಒಪ್ಪಿಕೊಂಡರು.
EST 9:24 ಏಕೆಂದರೆ ಸಮಸ್ತ ಯೆಹೂದ್ಯರಿಗೂ ಕಡು ವೈರಿಯಾದ, ಅಗಾಗನ ವಂಶದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರ್ ಅಂದರೆ, ಚೀಟನ್ನು ಹಾಕಿದ್ದನು.
EST 9:25 ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು;
EST 9:26 ಆದ್ದರಿಂದ ಪೂರ್ ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ಪೂರಿಮ್ ಎಂಬ ಹೆಸರಾಯಿತು. ಅರಸನು ಪತ್ರದಲ್ಲಿ ಬರೆದ ಎಲ್ಲಾ ಮಾತುಗಳನ್ನೂ, ಅವುಗಳ ಸಂಬಂಧವಾಗಿ ತಾವು ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ
EST 9:27 ಯೆಹೂದ್ಯರು ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು, ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವಂತೆ ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಯಾವ ವಿಧದಲ್ಲಿಯೂ ಮೀರಕೂಡದ ಪದ್ಧತಿಯನ್ನಾಗಿ ಪಾಲಿಸಲು ತೀರ್ಮಾನಿಸಿದರು.
EST 9:28 ಇದಲ್ಲದೆ ಈ ಎರಡು ದಿನಗಳನ್ನು ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ, ಪ್ರತಿ ತಲೆಮಾರಿನಲ್ಲಿಯೂ, ಪ್ರತಿ ಕುಟುಂಬದಲ್ಲಿಯೂ ಸ್ಮರಿಸಿ ಆಚರಿಸಬೇಕು. ಈ ಪೂರಿಮ್ ದಿನಗಳು ಯೆಹೂದ್ಯರಲ್ಲಿ ಎಂದಿಗೂ ನಿಂತುಹೋಗಬಾರದು. ಅವರ ಸಂತಾನದವರಲ್ಲಿ ಅವುಗಳ ಜ್ಞಾಪಕವು ಅಳಿದು ಹೋಗಬಾರದು ಎಂದೂ ತೀರ್ಮಾನಿಸಿಕೊಂಡರು.
EST 9:29 ಆಗ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯೂ, ಈ ಪೂರಿಮ್ ದಿನವನ್ನು ಸ್ಥಿರಪಡಿಸುವುದಕ್ಕಾಗಿ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಎರಡನೆಯ ಪತ್ರವನ್ನು ಪೂರ್ಣ ಅಧಿಕಾರದಿಂದ ಬರೆದಳು.
EST 9:30 ಮೊರ್ದೆಕೈಯೂ ದಯೆ ಹಾಗೂ ಭರವಸೆಯ ಮಾತುಗಳಿಂದ ಅಹಷ್ವೇರೋಷನ ರಾಜ್ಯದ ನೂರ ಇಪ್ಪತ್ತೇಳು ಪ್ರಾಂತಗಳಲ್ಲಿರುವ ಸಮಸ್ತ ಯೆಹೂದ್ಯರಿಗೆ ಪತ್ರಗಳನ್ನು ಕಳುಹಿಸಿದನು.
EST 9:31 ಇದಲ್ಲದೆ ಈ ಪೂರಿಮ್ ದಿನಗಳನ್ನು ಯೆಹೂದ್ಯನಾದ ಮೊರ್ದೆಕೈಯೂ ರಾಣಿಯಾದ ಎಸ್ತೇರಳೂ ಎಲ್ಲಾ ಯೆಹೂದ್ಯರಿಗೂ, ಅವರ ಸಂತಾನದವರಿಗೂ ಉಪವಾಸ ಮಾಡಿ, ದುಃಖಿಸುವ ಕಾಲವನ್ನು ಸ್ಥಿರಪಡಿಸಿದ ಪ್ರಕಾರವೇ ಈ ಪೂರಿಮ್ ದಿನವನ್ನು ಸ್ಥಿರಪಡಿಸುವುವಂತೆ ಆಜ್ಞಾಪಿಸಿದ್ದರು.
EST 9:32 ಹೀಗೆಯೇ ಎಸ್ತೇರಳ ಆಜ್ಞೆಯು ಈ ಪೂರಿಮ್ ದಿವಸಗಳ ಕಾರ್ಯಗಳನ್ನು ಸ್ಥಿರಪಡಿಸಿದ್ದರಿಂದ ಅದು ಗ್ರಂಥದಲ್ಲಿ ಬರೆಯಲಾಯಿತು.
EST 10:1 ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು.
EST 10:2 ಅವನ ಅಧಿಕಾರದ ಕ್ರಿಯೆಗಳೂ ಅವನ ಪರಾಕ್ರಮವೂ ಅರಸನು ಮೊರ್ದೆಕೈಯನ್ನು ಹೆಚ್ಚಿಸಿದ ಮಹತ್ತಿನ ಪ್ರಸಿದ್ಧಿಯೂ ಮೇದ್ಯ ಮತ್ತು ಪಾರಸಿಯ ಅರಸರ ಇತಿಹಾಸಗಳ ಗ್ರಂಥದಲ್ಲಿ ಬರೆದಿರುತ್ತವೆ.
EST 10:3 ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಸಹೋದರರ ಸಮೂಹದಲ್ಲಿ ಹೆಚ್ಚಿನ ಗೌರವ ಪಾತ್ರನೂ ತನ್ನ ಜನರ ಹಿತಚಿಂತಕನೂ ತನ್ನ ಸಂತಾನದವರಿಗೆ ಕ್ಷೇಮಾಭಿವೃದ್ಧಿಯನ್ನು ಮಾತನಾಡುವವನೂ ಆಗಿದ್ದನು.
JOB 1:1 ಊಚ್ ದೇಶದಲ್ಲಿ ಯೋಬ ಎಂಬ ಮನುಷ್ಯನಿದ್ದನು. ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೆಟ್ಟದ್ದನ್ನು ತೊರೆಯುವವನೂ ಆಗಿದ್ದನು.
JOB 1:2 ಅವನಿಗೆ ಏಳುಮಂದಿ ಪುತ್ರರೂ ಮೂರು ಮಂದಿ ಪುತ್ರಿಯರೂ ಇದ್ದರು.
JOB 1:3 ಅವನಿಗೆ ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡಿ ಎತ್ತುಗಳು, ಐನೂರು ಕತ್ತೆಗಳು ಮತ್ತು ಅನೇಕ ಕೆಲಸಗಾರರಿದ್ದರು. ಅವನು ಪೂರ್ವದೇಶದ ಜನರೆಲ್ಲರಲ್ಲಿಯೇ ಹೆಚ್ಚು ಐಶ್ವರ್ಯವುಳ್ಳವನಾಗಿದ್ದನು.
JOB 1:4 ಅವನ ಪುತ್ರರು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ಏರ್ಪಡಿಸಿ, ತಮ್ಮ ಸಂಗಡ ಊಟಮಾಡುವದಕ್ಕೆ ತಮ್ಮ ಮೂವರು ಸಹೋದರಿಯರನ್ನು ಆಹ್ವಾನಿಸುತ್ತಿದ್ದರು.
JOB 1:5 ಔತಣದ ದಿನಗಳು ಮುಗಿದ ಬಳಿಕ, ಯೋಬನು, “ಬಹುಶಃ ನನ್ನ ಮಕ್ಕಳು ಪಾಪಮಾಡಿ, ಮನದಲ್ಲೇ ದೇವರನ್ನು ದೂಷಿಸಿರಬಹುದು,” ಎಂದುಕೊಂಡು, ಅವರನ್ನು ಶುದ್ಧಿಗೊಳಿಸಲು ವ್ಯವಸ್ಥೆ ಮಾಡುತ್ತಿದ್ದನು. ಬೆಳಿಗ್ಗೆ ಎದ್ದು ಪ್ರತಿಯೊಬ್ಬರಿಗಾಗಿ ದಹನಬಲಿಗಳನ್ನು ಅರ್ಪಿಸುತ್ತಿದ್ದನು. ಇದು ಯೋಬನ ದೈನಂದಿನ ವಾಡಿಕೆಯಾಗಿತ್ತು.
JOB 1:6 ಒಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿಬಂದಾಗ, ಸೈತಾನನು ಸಹ ಅವರೊಂದಿಗೆ ಸೇರಿಬಂದನು.
JOB 1:7 ಯೆಹೋವ ದೇವರು ಸೈತಾನನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಕೇಳಿದರು. ಸೈತಾನನು ಯೆಹೋವ ದೇವರಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗಾಡುತ್ತಾ ಇದ್ದು ಬಂದೆನು,” ಎಂದನು.
JOB 1:8 ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ,” ಎಂದರು.
JOB 1:9 ಆಗ ಸೈತಾನನು ಉತ್ತರವಾಗಿ ಯೆಹೋವ ದೇವರಿಗೆ, “ಲಾಭವಿಲ್ಲದೆ ಯೋಬನು ದೇವರಲ್ಲಿ ಭಯಭಕ್ತಿಯಿಟ್ಟಿದ್ದಾನೋ?
JOB 1:10 ನೀವು ಅವನಿಗೂ ಅವನ ಮನೆಗೂ ಅವನಲ್ಲಿ ಇರುವ ಎಲ್ಲವುಗಳ ಸುತ್ತಲು ಬೇಲಿ ಹಾಕಿದ್ದೀರಲ್ಲಾ? ಅವನು ಕೈಹಾಕಿದ ಕೆಲಸವನ್ನು ನೀವು ಆಶೀರ್ವದಿಸಿದ್ದೀರಿ, ಆದ್ದರಿಂದ ಅವನ ಕುರಿದನಗಳ ಹಿಂಡುಗಳು ಭೂಮಿಯ ಮೇಲೆಲ್ಲಾ ಹರಡುತ್ತಾ ಬಂದಿದೆ.
JOB 1:11 ಆದರೆ ನಿಮ್ಮ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡಿರಿ, ಆಗ ಅವನು ನಿಮ್ಮನ್ನು ಮುಖಾಮುಖಿಯಾಗಿ ಶಪಿಸುವನು,” ಎಂದನು.
JOB 1:12 ಯೆಹೋವ ದೇವರು ಸೈತಾನನಿಗೆ, “ಅವನಲ್ಲಿರುವ ಎಲ್ಲವೂ ನಿನ್ನ ಅಧಿಕಾರದಲ್ಲಿ ಇವೆ. ಆದರೆ ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ,” ಎಂದರು. ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋದನು.
JOB 1:13 ಒಂದು ದಿನ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತಾ ಔತಣಮಾಡುತ್ತಿದ್ದರು.
JOB 1:14 ಒಬ್ಬ ದೂತನು ಯೋಬನ ಬಳಿಗೆ ಬಂದು, “ಎತ್ತುಗಳು ಉಳುಮೆ ಮಾಡುತ್ತಾ ಇದ್ದವು. ಹೆಣ್ಣು ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು.
JOB 1:15 ಶೆಬದವರು ಅವುಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಸೇವಕರನ್ನು ಸಹ ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು.
JOB 1:16 ಅವನು ಇನ್ನೂ ಮಾತನಾಡುತ್ತಿರಲು ಮತ್ತೊಬ್ಬ ದೂತನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ ಸೇವಕರನ್ನೂ ಸುಟ್ಟುಹಾಕಿತು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು.
JOB 1:17 ಇವನು ಇನ್ನೂ ಮಾತನಾಡುತ್ತಿರಲು, ಇನ್ನೊಬ್ಬ ದೂತನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಒಂಟೆಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಆಳುಗಳನ್ನು ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು.
JOB 1:18 ಇವನು ಇನ್ನೂ ಮಾತನಾಡುತ್ತಿರಲು, ಮತ್ತೊಬ್ಬ ದೂತನು ಬಂದು, “ನಿನ್ನ ಪುತ್ರ ಪುತ್ರಿಯರೂ ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸ ಕಡಿಯುತ್ತಾ ಔತಣ ಮಾಡುತ್ತಿರುವಾಗ,
JOB 1:19 ಇದ್ದಕ್ಕಿದ್ದಂತೆ ಮರುಭೂಮಿ ಕಡೆಯಿಂದ ದೊಡ್ಡ ಗಾಳಿ ಬೀಸಿ, ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು. ಮನೆಯು ಯೌವನಸ್ಥರ ಮೇಲೆ ಬಿತ್ತು, ಅವರು ಸತ್ತುಹೋದರು. ನಾನೊಬ್ಬನು ಮಾತ್ರ, ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು.
JOB 1:20 ಆಗ ಯೋಬನು ಎದ್ದು ತನ್ನ ಮೇಲಂಗಿಯನ್ನು ಹರಿದುಕೊಂಡನು. ನಂತರ ತನ್ನ ತಲೆ ಬೋಳಿಸಿಕೊಂಡು, ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿ,
JOB 1:21 ಹೀಗೆ ಹೇಳಿದನು: “ಬೆತ್ತಲೆಯಾಗಿ ನನ್ನ ತಾಯಿಯ ಗರ್ಭದಿಂದ ಬಂದೆನು, ಬೆತ್ತಲೆಯಾಗಿ ಗತಿಸಿ ಹೋಗುವೆನು. ಯೆಹೋವ ದೇವರು ಕೊಟ್ಟರು, ಯೆಹೋವ ದೇವರು ತೆಗೆದುಕೊಂಡರು; ಯೆಹೋವ ದೇವರ ನಾಮಕ್ಕೆ ಸ್ತೋತ್ರವಾಗಲಿ.”
JOB 1:22 ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪು ಹೊರಿಸಲಿಲ್ಲ.
JOB 2:1 ಇನ್ನೊಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿ ಬಂದಿದ್ದರು. ಸೈತಾನನು ಸಹ ಅವರೊಂದಿಗೆ ಯೆಹೋವ ದೇವರ ಮುಂದೆ ಬಂದನು.
JOB 2:2 ಆಗ ಯೆಹೋವ ದೇವರು ಸೈತಾನನಿಗೆ, “ನೀನು ಎಲ್ಲಿಂದ ಬಂದೆ?” ಎಂದರು. ಸೈತಾನನು ಯೆಹೋವ ದೇವರಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗಾಡುತ್ತಾ ಇದ್ದು ಬಂದೆನು,” ಎಂದನು.
JOB 2:3 ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ, ಯಥಾರ್ಥನೂ, ದೇವರಿಗೆ ಭಯಪಡುವವನೂ, ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನಗೆ ಸೂಚಿಸಿದರೂ, ಅವನು ಇನ್ನೂ ತನ್ನ ಯಥಾರ್ಥತೆಯಲ್ಲಿ ದೃಢವಾಗಿದ್ದಾನೆ,” ಎಂದರು.
JOB 2:4 ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ,” ಎಂದ ಹಾಗೆ, “ಒಬ್ಬ ಮನುಷ್ಯನು ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಸರ್ವಸ್ವವನ್ನೂ ಕೊಡುವನು.
JOB 2:5 ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.
JOB 2:6 ಆಗ ಯೆಹೋವ ದೇವರು ಸೈತಾನನಿಗೆ, “ಹಾಗಾದರೆ ಅವನು ನಿನ್ನ ಕೈಯಲ್ಲಿ ಇದ್ದಾನೆ. ಅವನ ಪ್ರಾಣವನ್ನು ಮಾತ್ರ ಮುಟ್ಟಬಾರದು,” ಎಂದರು.
JOB 2:7 ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋಗಿ, ಯೋಬನಿಗೆ ಅಂಗಾಲಿನಿಂದ ನೆತ್ತಿಯವರೆಗೆ ಕೆಟ್ಟ ಹುಣ್ಣುಗಳು ಬರುವಂತೆ ಅವನನ್ನು ಬಾಧಿಸಿದನು.
JOB 2:8 ಯೋಬನು ಮುರಿದ ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯ ಮೇಲೆ ಕುಳಿತುಕೊಂಡನು.
JOB 2:9 ಆಗ ಯೋಬನ ಹೆಂಡತಿಯು ಅವನಿಗೆ, “ನೀನು ಇನ್ನೂ ಯಥಾರ್ಥತ್ವವನ್ನು ಬಿಡಲಿಲ್ಲವೇ? ದೇವರನ್ನು ಶಪಿಸಿ ಸತ್ತುಹೋಗು,” ಎಂದಳು.
JOB 2:10 ಆದರೆ ಯೋಬನು ಅವಳಿಗೆ, “ನೀನು ಹುಚ್ಚಳಂತೆ ಮಾತನಾಡುತ್ತಿರುವೆ? ನಾವು ದೇವರಿಂದ ಒಳ್ಳೆಯದನ್ನು ಹೊಂದಿದ್ದೇವೆ, ಕಷ್ಟವನ್ನು ಹೊಂದಬಾರದೋ?” ಎಂದನು. ಇವೆಲ್ಲವುಗಳಲ್ಲಿಯೂ ಪಾಪದ ಮಾತೊಂದೂ ಯೋಬನ ಬಾಯಿಂದ ಬರಲಿಲ್ಲ.
JOB 2:11 ಯೋಬನ ಮೂವರು ಸ್ನೇಹಿತರು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಅವನಿಗೆ ಬಂದ ಈ ಎಲ್ಲಾ ಕಷ್ಟನಷ್ಟವನ್ನು ಕುರಿತು ಕೇಳಿ, ಯೋಬನಿಗೆ ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸುವುದಕ್ಕೆ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡು, ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.
JOB 2:12 ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.
JOB 2:13 ಅನಂತರ ಯೋಬನು ಅನುಭವಿಸುತ್ತಿದ್ದ ಬಾಧೆಯು ಎಷ್ಟು ಕ್ರೂರವೆಂದು ಅವರು ನೋಡಿ, ಅವನ ಸಂಗಡ ಏಳು ಹಗಲು, ಏಳು ರಾತ್ರಿ ನೆಲದ ಮೇಲೆ ಕುಳಿತುಕೊಂಡಿದ್ದರು. ಒಬ್ಬನಾದರೂ ಒಂದು ಮಾತನ್ನೂ ಯೋಬನಿಗೆ ಹೇಳಲಿಲ್ಲ.
JOB 3:1 ಆಮೇಲೆ ಯೋಬನು ತನ್ನ ಬಾಯಿತೆರೆದು, ತನ್ನ ಜನ್ಮ ದಿವಸವನ್ನು ಶಪಿಸಿದನು.
JOB 3:2 ಯೋಬನು ಇಂತೆಂದನು:
JOB 3:3 “ನಾನು ಹುಟ್ಟಿದ ದಿವಸವೂ, ‘ಗಂಡು ಮಗುವನ್ನು ಗರ್ಭಧರಿಸಿದೆ!’ ಎಂದು ಹೇಳಿದ ರಾತ್ರಿಯೂ ನಾಶವಾಗಲಿ.
JOB 3:4 ಆ ದಿವಸವು ಕತ್ತಲಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
JOB 3:5 ಕತ್ತಲೂ ಕಾರ್ಗತ್ತಲೂ ಆ ದಿನವನ್ನು ವಶಮಾಡಿಕೊಳ್ಳಲಿ; ಮೋಡವು ಅದರ ಮೇಲೆ ಕವಿಯಲಿ; ಕತ್ತಲೆ ಅದನ್ನು ಭಯಪಡಿಸಲಿ.
JOB 3:6 ಆ ರಾತ್ರಿಯನ್ನು ಅಂಧಕಾರವು ಮುತ್ತಲಿ; ವರ್ಷದ ದಿನಗಳಲ್ಲಿ ಆ ದಿನವನ್ನು ಸೇರಿಸದಿರಲಿ. ಅದು ತಿಂಗಳುಗಳನ್ನು ಲೆಕ್ಕಿಸದಿರಲಿ.
JOB 3:7 ಇಗೋ ಆ ರಾತ್ರಿಯು ಬಂಜೆಯಾಗಲಿ; ಅದರಲ್ಲಿ ಆನಂದ ಧ್ವನಿಯು ಕೇಳದಿರಲಿ.
JOB 3:8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.
JOB 3:9 ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ ಅರುಣೋದಯವು ಆ ದಿನವನ್ನು ನೋಡದಿರಲಿ.
JOB 3:10 ಏಕೆಂದರೆ ಆ ದಿನವು ನನ್ನ ತಾಯಿಯ ಗರ್ಭದ ಬಾಗಿಲನ್ನು ಮುಚ್ಚಲಿಲ್ಲ, ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.
JOB 3:11 “ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ? ನಾನು ಗರ್ಭದಿಂದ ಬಂದಾಗಲೇ ಏಕೆ ಪ್ರಾಣ ಬಿಡಲಿಲ್ಲ?
JOB 3:12 ತಾಯಿಯ ಮಡಿಲು ನನ್ನನ್ನು ಸ್ವಿಕರಿಸಿದ್ದೇಕೆ? ತಾಯಿಯ ಮೊಲೆಹಾಲು ಕುಡಿಯಮಾಡಿದ್ದೇಕೆ?
JOB 3:13 ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು; ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.
JOB 3:14 ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮಗಾಗಿ ಕಟ್ಟಿಸಿಕೊಂಡ ರಾಜರೊಂದಿಗೂ ಮಂತ್ರಿಗಳೊಡನೆಯೂ ನಾನಿರುತ್ತಿದ್ದೆನು.
JOB 3:15 ಬಂಗಾರವನ್ನು ಕೂಡಿಸಿಟ್ಟು, ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡ ವಿಶ್ರಮಿಸಿಕೊಳ್ಳುತ್ತಿದ್ದೆನು.
JOB 3:16 ಗರ್ಭಸ್ರಾವವಾಗಿ ಹೂಣಿಟ್ಟ ಪಿಂಡದಂತೆಯೂ ಬೆಳಕನ್ನು ನೋಡದ ಕೂಸುಗಳಂತೆಯೂ ನಾನೇಕೆ ಆಗಲಿಲ್ಲ?
JOB 3:17 ಅಲ್ಲಿ ದುಷ್ಟರು ತೊಂದರೆ ಕೊಡುವುದು ಇರುವುದಿಲ್ಲ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿರುತ್ತಾರೆ.
JOB 3:18 ಸೆರೆಯವರು ಕೂಡ ಶಾಂತವಾಗಿರುತ್ತಾರೆ; ಬಾಧೆಪಡಿಸುವವನ ಶಬ್ದವನ್ನು ಕೇಳುವುದಿಲ್ಲ.
JOB 3:19 ಅಲ್ಲಿ ಕಿರಿಯರು ಹಿರಿಯರು ಎಂಬ ಭೇದ ಇಲ್ಲಾ; ಗುಲಾಮರು ಯಜಮಾನರಿಂದ ಬಿಡುಗಡೆಯಾಗಿರುತ್ತಾರೆ.
JOB 3:20 “ಕಷ್ಟದಲ್ಲಿ ಇರುವವನಿಗೆ ಬೆಳಕೂ ಕಹಿ ಮನಸ್ಸುಳ್ಳವರಿಗೆ ಜೀವವನ್ನು ಕೊಡುವುದೇಕೆ?
JOB 3:21 ಅವರು ನಿಕ್ಷೇಪಕ್ಕಾಗಿ ಅಗಿಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
JOB 3:22 ಅವರು ಸಮಾಧಿ ಸೇರಿದ ಮೇಲೆ ಸಂತೋಷ ಸಂಭ್ರಮದಿಂದ ಹರ್ಷಿಸುವರೋ?
JOB 3:23 ದೇವರು ಸುತ್ತಲೂ ಬೇಲಿಹಾಕಿ, ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?
JOB 3:24 ನಿಟ್ಟುಸಿರೇ ನನ್ನ ದೈನಂದಿನ ಆಹಾರವಾಗಿದೆ; ನನ್ನ ನರಳಾಟವು ಜಲಧಾರೆಯಂತಿದೆ.
JOB 3:25 ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ; ಯಾವುದಕ್ಕೆ ಹೆದರುತ್ತೇನೋ, ಅದೇ ತಪ್ಪದೆ ಸಂಭವಿಸುತ್ತದೆ.
JOB 3:26 ನನಗೆ ಶಾಂತಿ ಇಲ್ಲ, ವಿಶ್ರಾಂತಿಯೂ ಇಲ್ಲ; ನಾನು ಸಮಾಧಾನವಾಗಿಯೂ ಇಲ್ಲ, ಯಾವಾಗಲೂ ಕಳವಳವೇ ಇರುತ್ತದೆ.”
JOB 4:1 ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟನು:
JOB 4:2 “ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ, ನಿನಗೆ ಬೇಸರಿಕೆ ಉಂಟಾಗುವುದೋ? ಮಾತಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?
JOB 4:3 ಅನೇಕರಿಗೆ ನೀನು ಶಿಕ್ಷಣ ಕೊಟ್ಟದ್ದನ್ನೂ ಬಲಹೀನ ಕೈಗಳನ್ನು ಬಲಪಡಿಸಿದ್ದನ್ನೂ ಯೋಚಿಸು.
JOB 4:4 ಎಡವಿ ಬೀಳುವವನನ್ನು ನಿನ್ನ ನುಡಿಗಳು ಎದ್ದು ನಿಲ್ಲಿಸಿದವು. ಬಲಹೀನವಾದ ಮೊಣಕಾಲುಗಳನ್ನು ಬಲಪಡಿಸಿದೆ.
JOB 4:5 ಈಗ ಆಪತ್ತು ನಿನ್ನ ಮೇಲೆ ಬಂದದ್ದರಿಂದ ನೀನು ದಣಿಯುತ್ತಿರುವೆ; ನಿನಗೂ ಕಡುಕಷ್ಟ ತಟ್ಟಿದ್ದರಿಂದ ಕಳವಳಪಡುತ್ತಿರುವೆ.
JOB 4:6 ನಿನ್ನ ಭಯಭಕ್ತಿಯೇ ನಿನಗೆ ಭರವಸೆಯೂ ನಿನ್ನ ಸನ್ಮಾಮಾರ್ಗಗಳು ನಿನ್ನ ನಿರೀಕ್ಷೆಯೂ ಆಗಿರಬೇಕಲ್ಲವೇ?
JOB 4:7 “ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು? ನೀತಿವಂತರು ಅಳಿದು ಹೋದದ್ದು ಎಲ್ಲಿ?
JOB 4:8 ನಾನು ಕಂಡ ಹಾಗೆ ಕೆಟ್ಟತನವನ್ನು ಊಳುವವರೂ ದುಷ್ಟತನವನ್ನು ಬಿತ್ತುವವರೂ ಅದನ್ನೇ ಕೊಯ್ಯುವರು.
JOB 4:9 ದೇವರ ಉಸಿರಿನಿಂದ ಅವರು ಕ್ಷಯಿಸಿ ಹೋಗುತ್ತಾರೆ. ದೇವರ ದಂಡನೆಯಿಂದ ಅಂಥವರು ನಾಶವಾಗುತ್ತಾರೆ;
JOB 4:10 ಸಿಂಹಗಳು ಗರ್ಜಿಸಬಹುದು ಮತ್ತು ಕೂಗಬಹುದು, ಆದರೂ ಪ್ರಾಯದ ಸಿಂಹಗಳ ಹಲ್ಲುಗಳು ಮುರಿದುಹೋಗಿವೆ.
JOB 4:11 ಸಿಂಹವು ಬೇಟೆ ಇಲ್ಲದ್ದರಿಂದ ನಾಶವಾಗುತ್ತದೆ; ಸಿಂಹದ ಮರಿಗಳು ಚದರಿಹೋಗುವವು.
JOB 4:12 “ಒಂದು ಮಾತು ನನಗೆ ಗುಟ್ಟಾಗಿ ತಿಳಿದುಬಂತು, ಅದರ ಪಿಸುಮಾತು ನನ್ನ ಕಿವಿಗೆ ಬಿತ್ತು.
JOB 4:13 ರಾತ್ರಿ ಕನಸಿನ ಆಲೋಚನೆಗಳಲ್ಲಿಯೂ ಗಾಢನಿದ್ರೆಯು ಜನರಿಗೆ ಹತ್ತುವಾಗಲೂ
JOB 4:14 ಭಯವೂ ನಡುಕವೂ ನನ್ನನ್ನು ಹಿಡಿದು, ನನ್ನ ಎಲ್ಲಾ ಎಲುಬುಗಳನ್ನು ನಡುಗಿಸಿತು.
JOB 4:15 ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು, ಆಗ ನನ್ನ ಮೈ ರೋಮವೆಲ್ಲಾ ನಿಮಿರಿ ನಿಂತವು.
JOB 4:16 ಆ ಆತ್ಮ ನಿಂತಿದ್ದರೂ ಅದು ಏನೆಂದು ನನಗೆ ತಿಳಿಯಲಿಲ್ಲ. ಅದರ ರೂಪವು ನನ್ನ ಕಣ್ಣು ಮುಂದೆ ನಿಂತಿತ್ತು, ಆಗ ಒಂದು ಸೂಕ್ಷ್ಮ ಸ್ವರವು ಕೇಳಿಸಿತು:
JOB 4:17 ‘ಮನುಷ್ಯನು ದೇವರಿಗಿಂತ ಹೆಚ್ಚು ನೀತಿವಂತನಾಗಿರಲು ಸಾಧ್ಯವೇ? ಮಾನವನು ಸೃಷ್ಟಿಕರ್ತ ದೇವರಿಗಿಂತಲೂ ಶುದ್ಧನಾಗಿರಲು ಸಾಧ್ಯವೇ?
JOB 4:18 ತಮ್ಮ ಸೇವಕರಲ್ಲಿ ದೇವರು ನಂಬದೆ, ತಮ್ಮ ದೂತರಲ್ಲಿಯೇ ತಪ್ಪು ಕಂಡಿರಲು,
JOB 4:19 ಧೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನ ಮನೆಗಳ ನಿವಾಸಿಗಳು, ನುಸಿಗಿಂತಲೂ ಹೆಚ್ಚಾಗಿ ಜಜ್ಜಿಹೋದವರು, ಇನ್ನೂ ಹೆಚ್ಚಾಗಿ ದಂಡನೆಗೆ ಒಳಪಡುವರಲ್ಲವೇ?
JOB 4:20 ಬೆಳಿಗ್ಗೆಯಿಂದ ಸಂಜೆಯವರೆಗೆ ಜೀವಿಸಿದ ಅವರು ನಾಶವಾಗುತ್ತಾರೆ; ಯಾರ ಗಮನಕ್ಕೂ ಬಾರದೇ ನಿತ್ಯ ನಾಶವಾಗುತ್ತಾರೆ.
JOB 4:21 ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದು, ಅವರು ಜ್ಞಾನವಿಲ್ಲದೆ ಸಾಯುವರು.’
JOB 5:1 “ಈಗ ನೀನು ಕರೆದರೆ, ನಿನಗೆ ಉತ್ತರ ಕೊಡುವವರು ಇದ್ದಾರೋ? ಪರಿಶುದ್ಧರಲ್ಲಿ ಯಾರ ಕಡೆಗೆ ನೀನು ತಿರುಗಿಕೊಳ್ಳುವೆ?
JOB 5:2 ಮೂಢನನ್ನು ಅಸಮಾಧಾನವು ಕೊಲ್ಲುವುದು; ಮುಗ್ಧನನ್ನು ಅಸುಹೆ ಸಾಯುವಂತೆ ಮಾಡುವುದು.
JOB 5:3 ಮೂಢನು ಬೇರೂರುವುದನ್ನು ನಾನು ನೋಡಿದೆನು, ಕೂಡಲೇ ಅವನ ಮನೆ ಶಾಪಕ್ಕಿಡಾಗುವುದನ್ನು ಕಂಡೆನು.
JOB 5:4 ಅವನ ಮಕ್ಕಳು ಭದ್ರತೆಯಿಲ್ಲದವರಾಗುವರು; ಬಿಡಿಸತಕ್ಕವರಿಲ್ಲದೆ ಅವರು ನ್ಯಾಯಸ್ಥಾನದಲ್ಲಿ ಸೋತುಹೋಗುವರು.
JOB 5:5 ಹಸಿದವರು ಅವನ ಪೈರನ್ನು ತಿಂದುಬಿಡುವರು; ಮುಳ್ಳುಬೇಲಿ ಹಾಕಿದ್ದರೂ ಅದನ್ನು ತೆಗೆದುಕೊಳ್ಳುವರು; ಅವನ ಆಸ್ತಿಯನ್ನು ಬಾಯಾರಿಕೆಯಾದವರು ನುಂಗಿಬಿಡುವರು.
JOB 5:6 ಮಣ್ಣಿನಿಂದ ಕಷ್ಟಗಳು ಹುಟ್ಟುವುದಿಲ್ಲ; ಭೂಮಿಯಿಂದ ತೊಂದರೆ ಮೊಳೆಯುವುದಿಲ್ಲ.
JOB 5:7 ಆದರೂ ಕಿಡಿಗಳು ಹಾರುವ ಪ್ರಕಾರವೇ, ಮನುಷ್ಯನು ಶ್ರಮೆಹೊಂದಲು ಹುಟ್ಟುತ್ತಾನೆ.
JOB 5:8 “ನಾನು ನೀನಾಗಿದ್ದರೆ ದೇವರಿಗೇ ಬೇಡಿಕೊಳ್ಳುತ್ತಿದ್ದೆ; ನನ್ನ ವಿಷಯವನ್ನು ದೇವರ ಮುಂದೆಯೇ ಇಡುತ್ತಿದ್ದೆ.
JOB 5:9 ದೇವರು ಸಂಶೋಧನೆ ಮಾಡಲಾಗದಷ್ಟು ಮಹಾಕಾರ್ಯಗಳನ್ನೂ, ಅಸಂಖ್ಯವಾದ ಅದ್ಭುತ ಕೃತ್ಯಗಳನ್ನೂ ಮಾಡುತ್ತಾರೆ.
JOB 5:10 ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ; ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.
JOB 5:11 ದೇವರು ತಗ್ಗಿದವರನ್ನು ಉನ್ನತದಲ್ಲಿಡುತ್ತಾರೆ; ದುಃಖವುಳ್ಳವರನ್ನು ಭದ್ರತೆಗೆ ಒಯ್ಯುತ್ತಾರೆ.
JOB 5:12 ದೇವರು ವಂಚಕರ ಯೋಜನೆಗಳನ್ನು ಭಂಗಪಡಿಸುತ್ತಾರೆ. ಕುಯುಕ್ತಿಯುಳ್ಳವರ ಕೈಗಳು ಯಾವುದೇ ಯಶಸ್ಸನ್ನು ಸಾಧಿಸದಂತೆ ಮಾಡುತ್ತಾರೆ.
JOB 5:13 ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುತ್ತಾರೆ, ಮತ್ತು ಕುತಂತ್ರಿಯ ಯೋಜನೆಗಳನ್ನು ನಿರರ್ಥಕಮಾಡುತ್ತಾರೆ.
JOB 5:14 ಕುತಂತ್ರರು ಹಗಲಿನಲ್ಲಿಯೇ ಕತ್ತಲೆಯನ್ನು ಸಂಧಿಸುತ್ತಾರೆ; ಮಧ್ಯಾಹ್ನದಲ್ಲಿ ರಾತ್ರಿಯಂತೆ ತಡಕಾಡುತ್ತಾರೆ.
JOB 5:15 ದೇವರು ದಿಕ್ಕಿಲ್ಲದವರನ್ನು ದಬ್ಬಾಳಿಕೆಮಾಡುವವರ ಬಾಯಿಯೆಂಬ ಖಡ್ಗದಿಂದಲೂ, ಬಲಿಷ್ಠರ ಕೈಯೊಳಗಿಂದಲೂ ರಕ್ಷಿಸುತ್ತಾರೆ.
JOB 5:16 ಆದ್ದರಿಂದ ಬಡವರಿಗೆ ನಿರೀಕ್ಷೆಯುಂಟಾಗುವುದು; ಅನ್ಯಾಯವು ತನ್ನ ಬಾಯಿ ಮುಚ್ಚಿಕೊಳ್ಳುವುದು.
JOB 5:17 “ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು; ಸರ್ವಶಕ್ತರ ಶಿಕ್ಷೆಯನ್ನು ತಿರಸ್ಕರಿಸಬೇಡ.
JOB 5:18 ಗಾಯ ಮಾಡುವವರೂ ಗಾಯ ಕಟ್ಟುವವರೂ ದೇವರೇ; ಹೊಡೆಯುವುದೂ ಗುಣಪಡಿಸುವುದೂ ದೇವರ ಕೈಯೇ.
JOB 5:19 ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
JOB 5:20 ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ, ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.
JOB 5:21 ನೀನು ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ; ನಾಶ ಬಂದಾಗ ನೀನು ಭಯಪಡುವುದಿಲ್ಲ.
JOB 5:22 ನೀನು ನಾಶಕ್ಕೂ, ಕ್ಷಾಮಕ್ಕೂ ನಗುವೆ; ಕಾಡುಮೃಗಗಳಿಗೂ ನೀನು ಭಯಪಡುವುದಿಲ್ಲ.
JOB 5:23 ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು; ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.
JOB 5:24 ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ, ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
JOB 5:25 ನಿನ್ನ ಸಂತತಿಯು ಬಹಳವಾಗಿದೆ ಎಂದೂ, ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವೆ.
JOB 5:26 ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.
JOB 5:27 “ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು, ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”
JOB 6:1 ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:
JOB 6:2 “ಅಯ್ಯೋ, ನನ್ನ ವ್ಯಥೆಯನ್ನು ತೂಕಮಾಡಿ ನೋಡಿದರೆ ಒಳ್ಳೇದು, ನನ್ನ ದುಃಖವನ್ನೆಲ್ಲಾ ತಕ್ಕಡಿಗೆ ಹಾಕಿದರೆ ಲೇಸು.
JOB 6:3 ಏಕೆಂದರೆ ನನ್ನ ಕಷ್ಟ ಈಗಲೇ ಸಮುದ್ರದ ಮರಳಿಗಿಂತ ಭಾರವಾಗಿದೆ; ನನ್ನ ಮಾತುಗಳು ದುಡುಕಿದ್ದರಲ್ಲಿ ಆಶ್ಚರ್ಯವಿಲ್ಲ.
JOB 6:4 ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ; ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ; ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.
JOB 6:5 ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ? ಮೇವು ಇದ್ದರೆ ಎತ್ತು ಕೂಗುವುದೋ?
JOB 6:6 ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ? ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ?
JOB 6:7 ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ.
JOB 6:8 “ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು, ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು.
JOB 6:9 ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ, ದೇವರು ತಮ್ಮ ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ.
JOB 6:10 ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು; ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ; ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.
JOB 6:11 “ನಾನು ನಿರೀಕ್ಷೆಯಿಂದಿರಲು, ನನಗೆ ಶಕ್ತಿ ಎಲ್ಲಿದೆ? ನಾನು ಸಹನೆಯಿಂದಿರಲು, ನನಗೆ ಭವಿಷ್ಯ ಏನಿದೆ?
JOB 6:12 ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ? ನನ್ನ ಶರೀರ ಕಂಚಿನ ಶರೀರವೋ?
JOB 6:13 ನನಗೆ ಸಹಾಯವು ಇಲ್ಲದೆ ಹೋಗಿದೆಯಲ್ಲಾ? ಈಗ ಯಶಸ್ಸು ಸಹ ನನ್ನಿಂದ ತೊಲಗಿಹೋಗಿದೆಯಲ್ಲಾ.
JOB 6:14 “ಒಬ್ಬನು ಸರ್ವಶಕ್ತರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ, ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
JOB 6:15 ಆದರೆ ನನ್ನ ಸಹೋದರರಾದರೋ, ಉಕ್ಕಿ ಹರಿಯುವ ತೊರೆಯಂತೆಯೂ, ಬತ್ತಿದ ಹಳ್ಳದಂತೆಯೂ ಅಪನಂಬಿಗಸ್ತರಾಗಿದ್ದಾರೆ.
JOB 6:16 ಅವು ಮಂಜುಗಡ್ಡೆಯಿಂದ ಕಪ್ಪಾಗಿವೆ, ಅವುಗಳಲ್ಲಿ ಹಿಮ ಅಡಗಿಕೊಳ್ಳುತ್ತದೆ.
JOB 6:17 ಉಷ್ಣ ಸಮಯದಲ್ಲಿ ಅವು ಹರಿಯುವದಿಲ್ಲ; ಸೆಕೆಯಾದಾಗ ಬತ್ತಿ ಅದರ ಸ್ಥಳದಿಂದ ಮಾಯವಾಗುತ್ತವೆ.
JOB 6:18 ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣ ಮಾಡುವ ವರ್ತಕರ ಗುಂಪುಗಳು, ದಾರಿತಪ್ಪಿ ಮರಳುಗಾಡಿನಲ್ಲಿ ಅಲೆದು ನಾಶವಾಗುತ್ತವೆ.
JOB 6:19 ತೇಮದ ವರ್ತಕರ ಗುಂಪುಗಳು ನೀರಿಗಾಗಿ ಹಂಬಲಿಸುತ್ತಾರೆ; ಶೆಬದ ವ್ಯಾಪಾರಿಗಳು ನಿರೀಕ್ಷೆಯಿಂದ ನೋಡುತ್ತಾರೆ.
JOB 6:20 ಅವರು ನಿರೀಕ್ಷಿಸಿದ್ದರಿಂದ ವ್ಯಥೆಗೊಂಡರು; ಅವರು ಬಂದು ಸ್ಥಳಸೇರಿದರೂ ನಿರಾಶರಾದರು.
JOB 6:21 ಈಗ ನೀವು ಸಹ ಹಾಗೆಯೇ ನಿಸ್ಸಹಾಯಕರಾಗಿ ಇದ್ದೀರಿ; ಏಕೆಂದರೆ ನೀವು ನನ್ನ ವಿಪತ್ತನ್ನು ಕಂಡು ಹಿಂಜರಿಯುತ್ತೀರಿ.
JOB 6:22 ನಾನು ನಿಮ್ಮನ್ನು, ‘ನನಗೆ ದಾನಮಾಡಿರಿ,’ ಎಂದು ಬಿನ್ನವಿಸಿದೆನೋ? ‘ನಿಮ್ಮ ಆಸ್ತಿಯಿಂದ ನನಗಾಗಿ ಈಡು ಕೊಡಿರಿ,’ ಎಂದೆನೋ?
JOB 6:23 ‘ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ,’ ಎಂದೂ, ‘ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರಿ,’ ಎಂದೂ ನಾನು ಕೇಳಿದೆನೋ?
JOB 6:24 “ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
JOB 6:25 ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ! ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?
JOB 6:26 ನಾನು ಹೇಳಿದ ಮಾತುಗಳನ್ನು ತಿದ್ದಬೇಕೆನ್ನುವಿರೋ? ಬೇಸರದ ನನ್ನ ಮಾತುಗಳು ನಿಮಗೆ ಗಾಳಿಮಾತುಗಳೋ?
JOB 6:27 ತಂದೆಯಿಲ್ಲದವರಿಗಾಗಿ ಚೀಟು ಹಾಕುತ್ತೀರಿ, ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
JOB 6:28 “ಆದ್ದರಿಂದ ಈಗ ಸ್ವಲ್ಪ ದಯೆಯುಳ್ಳವರಾಗಿ ನನ್ನನ್ನು ದೃಷ್ಟಿಸಿರಿ; ನಾನು ನಿಮ್ಮೆದುರಿನಲ್ಲಿ ಸುಳ್ಳು ಹೇಳುವೆನೋ?
JOB 6:29 ಕರುಣೆ ತೋರಿಸಿರಿ, ಅನ್ಯಾಯವಾಗದಿರಲಿ; ಪುನಃ ಯೋಚಿಸಿರಿ, ನನ್ನ ಪ್ರಾಮಾಣಿಕತೆಯು ಪ್ರಶ್ನಿಸಲಾಗಿದೆ.
JOB 6:30 ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ? ವಿಪತ್ತುಗಳ ವಿವೇಚನೆಯು ನನಗಿಲ್ಲವೋ?
JOB 7:1 “ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?
JOB 7:2 ಗುಲಾಮನು ಸಾಯಂಕಾಲದ ನೆರಳನ್ನು ಅಪೇಕ್ಷಿಸುವ ಪ್ರಕಾರವೂ, ನಾನು ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾರವೂ ಇದ್ದೇನೆ.
JOB 7:3 ನನಗೆ ನಿರರ್ಥಕತೆಯ ತಿಂಗಳುಗಳನ್ನು ನೀಡಲಾಗಿದೆ; ಬೇಸರಿಕೆಯ ರಾತ್ರಿಗಳು ನನಗೆ ನೇಮಕವಾಗಿವೆ.
JOB 7:4 ಮಲಗುವ ವೇಳೆಯಲ್ಲಿ, ‘ಯಾವಾಗ ಏಳುವೆನೋ?’ ಅಂದುಕೊಳ್ಳುವೆನು, ರಾತ್ರಿ ಬೆಳೆಯುತ್ತಾ ಹೋಗುತ್ತದೆ; ಉದಯದವರೆಗೂ ಹೊರಳಿ ಹೊರಳಿ ಸಾಕಾಗುತ್ತದೆ.
JOB 7:5 ನನ್ನ ದೇಹವು ಹುಳಹಕ್ಕಳೆಗಳನ್ನೂ ಧರಿಸಿಕೊಂಡಿದೆ; ನನ್ನ ಚರ್ಮವು ಕಜ್ಜಿಯಿಂದ ಬಿರಿದು ಹೋಗಿದೆ.
JOB 7:6 “ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ದಿನಗಳು ನಿರೀಕ್ಷೆ ಇಲ್ಲದೆ ಮುಗಿಯುತ್ತವೆ.
JOB 7:7 ಓ ದೇವರೇ, ನನ್ನ ಜೀವವು ಕೇವಲ ಉಸಿರೆಂದು ನೆನಪುಮಾಡಿಕೊಳ್ಳಿರಿ. ನನ್ನ ಕಣ್ಣು ತಿರುಗಿ ಸಂತೋಷವನ್ನು ಕಾಣುವುದಿಲ್ಲ.
JOB 7:8 ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ.
JOB 7:9 ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು.
JOB 7:10 ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವುದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.
JOB 7:11 “ಆದ್ದರಿಂದ ನಾನು ನನ್ನ ಬಾಯಿ ಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತಾಡುವೆನು, ನನ್ನ ಆತ್ಮದ ಕಹಿಯಲ್ಲಿ ನಾನು ವಾದಿಸುವೆನು.
JOB 7:12 ನೀವು ನನಗೆ ಕಾವಲಿಡುವುದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಿಲವೋ?
JOB 7:13 ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು; ನನ್ನ ಮಂಚವು ನನ್ನ ಚಿಂತೆಯನ್ನು ಶಮನ ಮಾಡಲಿ ಎಂದುಕೊಳ್ಳುವಾಗ,
JOB 7:14 ನೀವು ಸ್ವಪ್ನಗಳಿಂದ ನನ್ನನ್ನು ಹೆದರಿಸುತ್ತೀರಿ; ದರ್ಶನಗಳಿಂದ ನನ್ನನ್ನು ಭಯಪಡಿಸುತ್ತೀರಿ.
JOB 7:15 ಆದ್ದರಿಂದ ನನ್ನ ದೇಹದಲ್ಲಿ ಸಂಕಟಪಡುವುದಕ್ಕಿಂತಲೂ ಉಸಿರುಕಟ್ಟಿ, ನಾನು ನನ್ನ ಪ್ರಾಣಬಿಡುವುದು ಲೇಸು.
JOB 7:16 ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ; ನಿರಂತರ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟುಬಿಡಿರಿ; ನನ್ನ ಬಾಳಿನ ದಿನಗಳಿಗೆ ಅರ್ಥವಿಲ್ಲ.
JOB 7:17 “ದೇವರೇ, ಮಾನವನು ಎಷ್ಟರವನು? ನೀವು ಮಾನವನಿಗೆ ಬಹು ಗೌರವ ಕೊಡುತ್ತೀರಿ, ಅವನ ಕಡೆಗೆ ಗಮನಹರಿಸುತ್ತೀರಿ.
JOB 7:18 ಮನುಷ್ಯನನ್ನು ಪ್ರತಿ ಉದಯದಲ್ಲಿ ವಿಚಾರಿಸುತ್ತೀರಿ, ನೀವು ಕ್ಷಣಕ್ಷಣಕ್ಕೆ ಅವನನ್ನು ಪರೀಕ್ಷಿಸುವುದೇಕೆ?
JOB 7:19 ನೀವು ನನ್ನ ಕಡೆಯಿಂದ ದೃಷ್ಟಿಯನ್ನು ತೊಲಗಿಸುವುದಿಲ್ಲವೋ? ನಾನು ಒಂದು ಕ್ಷಣ ಉಗುಳು ನುಂಗುವುದಕ್ಕೂ ನನ್ನನ್ನು ಬಿಡುವುದಿಲ್ಲ?
JOB 7:20 ಮನುಷ್ಯರನ್ನು ಕಾಯುವವರೇ, ನಾನು ಪಾಪಮಾಡಿದ್ದರೆ, ನಾವು ಮಾಡುವ ಪ್ರತಿಯೊಂದನ್ನೂ ನೋಡುವವರೇ, ನಾನು ನಿಮಗೆ ಏನು ಮಾಡಿದೆ? ನಾನು ನಿಮಗೆ ಭಾರವಾಗಿದ್ದೇನೋ? ನನ್ನನ್ನು ನಿಮ್ಮ ಗುರಿಯಾಗಿ ಇಟ್ಟುಕೊಳ್ಳುವುದು ಏಕೆ?
JOB 7:21 ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? ನನ್ನ ಪಾಪವನ್ನು ಕ್ಷಮಿಸಬಾರದೇ? ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.”
JOB 8:1 ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು:
JOB 8:2 “ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ? ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ.
JOB 8:3 ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ? ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?
JOB 8:4 ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ, ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು.
JOB 8:5 ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ, ಸರ್ವಶಕ್ತರಿಗೆ ಬಿನ್ನಹ ಮಾಡು.
JOB 8:6 ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.
JOB 8:7 ನಿನ್ನ ಆರಂಭವು ಅಲ್ಪವಾಗಿದ್ದರೂ, ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.
JOB 8:8 “ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು.
JOB 8:9 ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ; ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ.
JOB 8:10 ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ? ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ?
JOB 8:11 ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ? ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ?
JOB 8:12 ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ, ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು.
JOB 8:13 ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ; ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು.
JOB 8:14 ಅಂಥವರ ಭರವಸೆಯು ಭಂಗವಾಗುವುದು; ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು.
JOB 8:15 ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು; ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.
JOB 8:16 ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ; ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ.
JOB 8:17 ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ, ಕಲ್ಲುಗಳ ನಡುವೆ ನುಗ್ಗುತ್ತವೆ.
JOB 8:18 ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ, ‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು.
JOB 8:19 ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು; ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು.
JOB 8:20 “ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ; ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ.
JOB 8:21 ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು; ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು.
JOB 8:22 ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”
JOB 9:1 ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:
JOB 9:2 “ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು; ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?
JOB 9:3 ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ, ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.
JOB 9:4 ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
JOB 9:5 ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ; ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.
JOB 9:6 ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾರೆ; ಅದರ ಸ್ತಂಭಗಳು ನಡುಗುತ್ತವೆ.
JOB 9:7 ದೇವರು ಸೂರ್ಯನಿಗೆ ಪ್ರಕಾಶಿಸದಂತೆ ಅಪ್ಪಣೆ ಕೊಟ್ಟರೆ, ಪ್ರಕಾಶಿಸುತ್ತಿರಲಿಲ್ಲ; ನಕ್ಷತ್ರಗಳಿಗೆ ಮುದ್ರೆ ಹಾಕಿದ್ದರೆ, ನಕ್ಷತ್ರವೂ ಮಿನುಗುತ್ತಿರಲಿಲ್ಲ.
JOB 9:8 ದೇವರೊಬ್ಬರೇ ಆಕಾಶಗಳನ್ನು ಹರಡಿಸುತ್ತಾರೆ; ದೇವರು ಸಮುದ್ರದ ತೆರೆಗಳ ಮೇಲೆ ನಡೆಯುತ್ತಾರೆ.
JOB 9:9 ಸಪ್ತರ್ಷಿಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ ದಕ್ಷಿಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವರು ದೇವರೇ.
JOB 9:10 ದೇವರು ಕಂಡು ಹಿಡಿಯಲಾರದಂಥ ಮಹತ್ಕಾರ್ಯಗಳನ್ನೂ, ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾರೆ.
JOB 9:11 ದೇವರು ನನ್ನ ಮುಂದೆ ಹಾದುಹೋದಾಗ, ನನಗೆ ಅವರು ಕಾಣುವುದಿಲ್ಲ; ದೇವರು ದಾಟಿ ಹೋಗುತ್ತಾರೆ; ಆದರೆ ನಾನು ಅವರನ್ನು ಗ್ರಹಿಸಿಕೊಳ್ಳುವುದಿಲ್ಲ.
JOB 9:12 ದೇವರು ತೆಗೆದುಕೊಂಡರೆ, ಅವರಿಗೆ ಅಡ್ಡಿ ಮಾಡುವವರು ಯಾರು? ದೇವರನ್ನು, ‘ನೀವು ಏನು ಮಾಡುತ್ತೀರಿ?’ ಎಂದು ಕೇಳುವವರ‍್ಯಾರು.
JOB 9:13 ದೇವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ; ರಹಾಬನ ಸಹಾಯಕರು ಸಹ ದೇವರ ಕಾಲಿಗೆ ಅಡ್ಡಬಿದ್ದರಲ್ಲಾ.
JOB 9:14 “ದೇವರೊಂದಿಗೆ ವಾದಿಸಲು ನಾನು ಅಶಕ್ತನು; ದೇವರಿಗೆ ತಕ್ಕ ಉತ್ತರ ಕೊಡಲು ನಾನು ಎಷ್ಟರವನು?
JOB 9:15 ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.
JOB 9:16 ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ, ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.
JOB 9:17 ಏಕೆಂದರೆ ದೇವರು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾರೆ; ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸುತ್ತಾರೆ.
JOB 9:18 ನಾನು ಉಸಿರಾಡಲು ಕಷ್ಟಪಡುತ್ತಿದ್ದೇನೆ, ದೇವರು ಕಹಿಯಾದವುಗಳಿಂದ ನನ್ನನ್ನು ತುಂಬಿಸುತ್ತಾರೆ.
JOB 9:19 ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?
JOB 9:20 ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ; ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.
JOB 9:21 “ನಾನು ನಿರ್ದೋಷಿಯೇ ಹೌದು, ನನ್ನ ಬಗ್ಗೆ ನನಗೆ ಚಿಂತೆ ಇಲ್ಲ; ನನ್ನ ಬಾಳನ್ನೇ ತಿರಸ್ಕಾರ ಮಾಡುತ್ತೇನೆ.
JOB 9:22 ಇದೆಲ್ಲಾ ಒಂದೇ ವಿಷಯ; ಆದ್ದರಿಂದ ನಾನು ಇದನ್ನು ಹೇಳುತ್ತೇನೆ: ‘ನಿರ್ದೋಷಿಯನ್ನೂ, ಕೆಟ್ಟವನನ್ನೂ ದೇವರು ದಂಡಿಸುತ್ತಾರೆ.’
JOB 9:23 ವಿಪತ್ತು ಅಕಸ್ಮಾತ್ತಾಗಿ ಮರಣವನ್ನು ತಂದರೆ, ನಿರಪರಾಧಿಯ ಬುದ್ಧಿಹೀನತೆಗೆ ದೇವರು ನಗುವರು.
JOB 9:24 ಲೋಕವು ಕೆಟ್ಟವರ ಕೈವಶವಾಗಿದೆ; ನ್ಯಾಯಾಧಿಪತಿಗಳ ಮುಖಕ್ಕೆ ಮುಸುಕುಹಾಕಲಾಗಿದೆ; ಇದನ್ನು ಅನುಮತಿಸಿದವರು ದೇವರಲ್ಲದೆ ಮತ್ತೆ ಯಾರು?
JOB 9:25 “ಆದರೆ ನನ್ನ ದಿನಗಳು ಅಂಚೆಯವನಿಗಿಂತಲೂ ತ್ವರೆಯಾಗಿವೆ; ಆನಂದವನ್ನೂ ನೋಡದೆ ದಿನಗಳು ಓಡಿಹೋಗುತ್ತವೆ.
JOB 9:26 ಆಪಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ದಿನಗಳು ವೇಗವಾಗಿ ಗತಿಸಿಹೋಗುತ್ತವೆ.
JOB 9:27 ‘ನಾನು ನನ್ನ ದೂರುಗಳನ್ನು ಮರೆತು, ನನ್ನ ಭಾರವನ್ನು ಬಿಟ್ಟು, ಆದರಣೆ ಹೊಂದುವೆನು,’ ಎಂದು ತೀರ್ಮಾನಿಸಿಕೊಂಡರೆ,
JOB 9:28 ನನಗಾದ ವ್ಯಥೆಗಳಿಗೆಲ್ಲಾ ನಾನು ಇನ್ನೂ ಹೆದರುತ್ತಿದ್ದೇನೆ; ದೇವರು ನನ್ನನ್ನು ನಿರಪರಾಧಿ ಎಂದು ಎಣಿಸುವುದಿಲ್ಲವೆಂದು ಸಹ ನನಗೆ ಗೊತ್ತಿದೆ.
JOB 9:29 ನಾನು ಈಗಾಗಲೇ ಅಪರಾಧಿ ಎಂದು ನಿರ್ಣಯವಾಗಿರುವಾಗ, ನಾನು ಏಕೆ ವ್ಯರ್ಥವಾಗಿ ಹೋರಾಡಬೇಕು?
JOB 9:30 ನಾನು ಹಿಮದ ನೀರಿನಲ್ಲಿ ಸ್ನಾನಮಾಡಿ, ಸಾಬೂನಿನಿಂದ ನನ್ನ ಕೈಗಳನ್ನು ತೊಳೆದುಕೊಂಡರೂ,
JOB 9:31 ದೇವರು ನನ್ನನ್ನು ಕುಣಿಯಲ್ಲಿ ಮುಳುಗಿಸಿ ಬಿಡುವರು; ನನ್ನ ಸ್ವಂತ ವಸ್ತ್ರಗಳೇ ನನ್ನನ್ನು ಅಸಹ್ಯಪಡಬೇಕಾಗುವುದು.
JOB 9:32 “ದೇವರು ನನ್ನಂಥ ಕೇವಲ ಮನುಷ್ಯನಲ್ಲ, ನಾನು ದೇವರೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಲಯದ ಮುಂದೆ ಕೂಡಿ ವಾದಿಸುವುದು ಹೇಗೆ?
JOB 9:33 ನಮ್ಮಿಬ್ಬರನ್ನು ಒಟ್ಟು ಸೇರಿಸುವ ಮಧ್ಯಸ್ಥ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ,
JOB 9:34 ದೇವರ ಶಿಕ್ಷೆಯಕೋಲನ್ನು ನನ್ನ ಮೇಲಿನಿಂದ ತೊಲಗಿಸುವ ಒಬ್ಬ ಮಧ್ಯಸ್ಥ ಇದ್ದಿದ್ದರೆ, ದೇವರ ಭೀತಿಗೆ ನಾನು ಎಂದಿಗೂ ಹೆದರದೆ ಇರುತ್ತಿದ್ದೆ.
JOB 9:35 ಆಗ ನಾನು ದೇವರೊಂದಿಗೆ ಭಯಪಡದೆ ಮಾತನಾಡುತ್ತಿದ್ದೆ; ನನ್ನ ಸ್ವಂತ ಶಕ್ತಿಯಿಂದ ಈಗ ನಾನು ಅದನ್ನೆಲ್ಲಾ ನನಗೆ ಮಾಡಲು ಸಾಧ್ಯವಿಲ್ಲ.
JOB 10:1 “ನನ್ನ ಜೀವನವೇ ನನಗೆ ಬೇಸರವಾಗಿದೆ; ನನ್ನ ದೂರುಗಳನ್ನು ಮನಬಿಚ್ಚಿ ನುಡಿಯುವೆನು; ನನ್ನ ಪ್ರಾಣದ ಕಹಿಯಿಂದ ಮಾತನಾಡುವೆನು.
JOB 10:2 ನಾನು ದೇವರಿಗೆ ಹೀಗೆ ಹೇಳುತ್ತೇನೆ: ನನ್ನನ್ನು ಅಪರಾಧಿ ಎಂದು ನಿರ್ಣಯಿಸಬೇಡಿರಿ. ನನ್ನ ಮೇಲೆ ನಿಮಗಿರುವ ಆಪಾದನೆಗಳನ್ನು ನನಗೆ ತಿಳಿಸಿರಿ.
JOB 10:3 ದೇವರೇ, ನಿಮ್ಮ ಕೈಕೃತಿಯಾಗಿರುವ ನನ್ನನ್ನು ಜಜ್ಜುವುದೂ ನಿಮಗೆ ಮೆಚ್ಚಿಕೆಯೋ? ನೀವು ನನ್ನನ್ನು ಅಲಕ್ಷ್ಯ ಮಾಡುವಿರೋ? ನೀವು ದುಷ್ಟರ ಯೋಜನೆಯನ್ನು ಮೆಚ್ಚುವಿರೋ?
JOB 10:4 ನಿಮಗೆ ಮಾಂಸದ ಕಣ್ಣುಗಳುಂಟೋ? ಮನುಷ್ಯರು ನೋಡುವಂತೆಯೇ ನೀವೂ ನೋಡುತ್ತೀರೋ?
JOB 10:5 ದೇವರೇ, ನಿಮ್ಮ ದಿನಗಳು ಮನುಷ್ಯರ ದಿನಗಳ ಹಾಗಿವೆಯೋ? ನಿಮ್ಮ ವರ್ಷಗಳು ಮನುಷ್ಯರ ವರ್ಷಗಳಂತಿವೆಯೋ?
JOB 10:6 ಏಕೆಂದರೆ ನನ್ನ ತಪ್ಪುಗಳನ್ನು ಹುಡುಕುವ ನಿಮಗೆ ಗೊತ್ತಿದೆ; ಹೌದು, ನನ್ನ ಪಾಪವನ್ನು ವಿಚಾರಿಸುವ ನಿಮಗೇ ಗೊತ್ತಿದೆ.
JOB 10:7 ನಾನು ಅಪರಾಧಿಯಲ್ಲವೆಂದು ನಿಮಗೆ ಗೊತ್ತಿದೆ, ನಿಮ್ಮ ಕೈಯಿಂದ ತಪ್ಪಿಸುವವರು ಯಾರೂ ಇಲ್ಲವೆಂದೂ ನಿಮಗೆ ಗೊತ್ತಿದೆಯಲ್ಲವೇ?
JOB 10:8 “ನಿಮ್ಮ ಕೈಗಳು ನನ್ನನ್ನು ನಿರ್ಮಿಸಿದೆ, ನೀವೇ ನನ್ನನ್ನು ರೂಪಿಸಿದವರು; ಈಗ ನೀವೇ ನನಗೆ ವಿಮುಖರಾಗಿ ನನ್ನನ್ನು ತೆಗೆದುಹಾಕುವಿರಾ?
JOB 10:9 ನೀವು ಕುಂಬಾರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಈಗ ನೀವೇ ನನ್ನನ್ನು ಮಣ್ಣಿಗೆ ಸೇರಿಸುವಿರೋ?
JOB 10:10 ನೀವು ಹಾಲಿನಂತೆ ನನ್ನನ್ನು ಸುರಿಸಲಿಲ್ಲವೋ? ಮೊಸರಿನ ಹಾಗೆ ಹೆಪ್ಪುಗಟ್ಟಿಸಲಿಲ್ಲವೋ?
JOB 10:11 ದೇವರೇ, ನೀವು ಚರ್ಮವನ್ನೂ, ಮಾಂಸವನ್ನೂ ನನಗೆ ಹೊದಿಸಿದ್ದೀರಿ; ನೀವು ಎಲುಬು ನರಗಳಿಂದಲೂ ನನ್ನನ್ನು ಹೆಣೆದಿರುವಿರಿ.
JOB 10:12 ದೇವರೇ, ನೀವು ನನಗೆ ಜೀವ ಕೊಟ್ಟಿರಿ, ನೀವು ನನಗೆ ಒಡಂಬಡಿಕೆಯ ಪ್ರೀತಿಯನ್ನೂ ತೋರಿಸಿದ್ದೀರಿ; ನಿಮ್ಮ ಪರಾಮರಿಕೆಯಿಂದ ನನ್ನ ಆತ್ಮವನ್ನು ಕಾಪಾಡಿದ್ದೀರಿ.
JOB 10:13 “ಆದರೂ ನೀವು ಇವುಗಳನ್ನು ನಿಮ್ಮ ಹೃದಯದಲ್ಲಿ ಮರೆಮಾಡಿಕೊಂಡಿದ್ದೀರಿ; ಇದು ನಿಮ್ಮ ಉದ್ದೇಶ ಎಂದು ನನಗೆ ಗೊತ್ತಿದೆ:
JOB 10:14 ಅದೇನೆಂದರೆ, ನಾನು ಒಂದು ವೇಳೆ ಪಾಪಮಾಡಿದರೆ, ನೀವು ಅದನ್ನು ಕಂಡುಹಿಡಿದು ನನ್ನ ಅಪರಾಧಕ್ಕಾಗಿ ನನ್ನನ್ನು ದಂಡಿಸದೇ ಬಿಡುವುದಿಲ್ಲ ಎಂಬುದೇ.
JOB 10:15 ನಾನು ಅಪರಾಧಿಯಾಗಿದ್ದರೆ ನನಗೆ ಕಷ್ಟ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತಲಾರೆ; ಏಕೆಂದರೆ, ನಾಚಿಕೆಯಿಂದ ನಾನು ತುಂಬಿದ್ದೇನೆ, ನಾನು ಬಾಧೆಯಿಂದ ಮುಳುಗಿಹೋಗಿದ್ದೇನೆ.
JOB 10:16 ನಾನು ತಲೆಯೆತ್ತಿದರೆ, ಸಿಂಹದಂತೆ ನನ್ನನ್ನು ಬೇಟೆಯಾಡುತ್ತೀರಿ; ನನ್ನ ವಿರುದ್ಧ ನಿಮ್ಮ ಅದ್ಭುತ ಶಕ್ತಿಯನ್ನು ಪ್ರದರ್ಶಿಸುವಿರಿ.
JOB 10:17 ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ತರುತ್ತೀರಿ; ನನ್ನ ಮೇಲೆ ಅಧಿಕಬೇಸರಗೊಳ್ಳುತ್ತೀರಿ; ಅಲೆ ಅಲೆಯಾಗಿ ನಿಮ್ಮ ಸೈನ್ಯವು ನನಗೆ ಎದುರಾಗಿವೆ.
JOB 10:18 “ಹಾಗಾದರೆ ಏಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದ್ದೀರಿ? ಯಾರೂ ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
JOB 10:19 ನಾನು ಬದುಕಿರದೇ, ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು.
JOB 10:20 ನನ್ನ ಅಲ್ಪದಿನಗಳು ಮುಗಿದಿಲ್ಲವೋ? ಸ್ವಲ್ಪ ಹೊತ್ತು ಆನಂದಿಸಲು ನನ್ನನ್ನು ಬಿಟ್ಟುಬಿಡಿರಿ.
JOB 10:21 ನಾನು ಹಿಂದಿರುಗಲಾಗದ ಮಬ್ಬಾಗಿರುವ ಕತ್ತಲೆಯ ದೇಶಕ್ಕೆ ಸೇರಲಿರುವೆನು.
JOB 10:22 ಆ ದೇಶದಲ್ಲಿ ಕಾರ್ಗತ್ತಲೂ, ಗಾಢಾಂಧಕಾರವೂ ಮರಣದ ತುಂಬಿರುವುದು. ಕ್ರಮವಿಲ್ಲದ ಆ ದೇಶದಲ್ಲಿ ಬೆಳಕೂ ಕತ್ತಲೆಯೇ.”
JOB 11:1 ಆಗ ನಾಮಾಥ್ಯನಾದ ಚೋಫರನು ಹೀಗೆಂದನು:
JOB 11:2 “ಬಹಳ ಮಾತುಗಳಿಂದ ಉತ್ತರ ಕೊಡಬಾರದೋ? ಬಾಯಿ ಬಡುಕನು ನೀತಿವಂತನೆಂದು ಎನಿಸಿಕೊಳ್ಳುವನೋ?
JOB 11:3 ನಿನ್ನ ವ್ಯರ್ಥ ಮಾತಿಗೆ ಮನುಷ್ಯರು ಮೌನವಾಗಿರಬೇಕೋ? ನೀನು ಗೇಲಿ ಮಾಡುವಾಗ ಯಾವನೂ ನಿನ್ನನ್ನು ಖಂಡಿಸುವುದಿಲ್ಲವೋ?
JOB 11:4 ಏಕೆಂದರೆ ನೀನು, ‘ನನ್ನ ನಂಬಿಕೆ ತಪ್ಪಿಲ್ಲದ್ದು, ನಿಮ್ಮ ದೃಷ್ಟಿಯಲ್ಲಿ ನಾನು ಶುದ್ಧನಾಗಿದ್ದೇನೆ,’ ಎಂದು ದೇವರಿಗೆ ಹೇಳಿದ್ದೀ.
JOB 11:5 ಆಹಾ, ದೇವರು ಮಾತನಾಡಿ, ನಿನ್ನ ವಿರೋಧವಾಗಿ ತಮ್ಮ ತುಟಿಗಳನ್ನು ತೆರೆದು,
JOB 11:6 ಜ್ಞಾನದ ಮರ್ಮಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು, ನಿಜ ಜ್ಞಾನಕ್ಕೆ ಎರಡು ಬದಿಗಳಿವೆ; ದೇವರು ನಿನ್ನ ಪಾಪಗಳನ್ನು ತಮ್ಮ ಲಕ್ಷ್ಯಕ್ಕೆ ತರಲಿಲ್ಲ ಎಂದು ತಿಳಿದುಕೋ.
JOB 11:7 “ನೀನು ದೇವರ ರಹಸ್ಯಗಳನ್ನು ಕಂಡುಕೊಳ್ಳುವಿಯಾ? ಸರ್ವಶಕ್ತರ ಮಿತಿಯನ್ನು ನಿನ್ನಿಂದ ಪರೀಕ್ಷಿಸಲಾದೀತೇ?
JOB 11:8 ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?
JOB 11:9 ಅದರ ಅಳತೆ ಭೂಮಿಗಿಂತ ಉದ್ದವೂ, ಸಮುದ್ರಕ್ಕಿಂತ ಅಗಲವೂ ಆಗಿದೆ.
JOB 11:10 “ದೇವರು ಬಂದು ನಿನ್ನನ್ನು ಸೆರೆಮನೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ, ದೇವರನ್ನು ತಡೆಯುವವರು ಯಾರು?
JOB 11:11 ಖಂಡಿತವಾಗಿ ದೇವರು ಮೋಸಗಾರರನ್ನು ಗುರುತಿಸುತ್ತಾರೆ; ದೇವರು ದುಷ್ಟತನವನ್ನು ನೋಡಿ ಅದನ್ನು ಗ್ರಹಿಸಿಕೊಳ್ಳದೆ ಇರುತ್ತಾರೋ?
JOB 11:12 ಒಂದು ಕಾಡುಕತ್ತೆ ಮರಿಗೆ ಹೇಗೆ ಮನುಷ್ಯನಾಗಲು ಸಾಧ್ಯವಿಲ್ಲವೋ, ಹಾಗೆಯೇ ದಡ್ಡ ಮನುಷ್ಯನು ಜ್ಞಾನಿಯಾಗಲು ಸಾಧ್ಯವಿಲ್ಲ.
JOB 11:13 “ಆದರೂ ನೀನು ನಿನ್ನ ಹೃದಯವನ್ನು ದೇವರಿಗೆ ಸಮರ್ಪಿಸಿ, ನಿನ್ನ ಕೈಗಳನ್ನು ದೇವರ ಕಡೆಗೆ ಚಾಚಿ,
JOB 11:14 ನಿನ್ನ ಕೈಯಲ್ಲಿರುವ ಪಾಪವನ್ನು ದೂರಮಾಡಿಬಿಟ್ಟು, ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಿಸಲು ಅನುಮತಿಸದಿದ್ದರೆ,
JOB 11:15 ನೀನು ದೋಷದಿಂದ ಬಿಡುಗಡೆಯಾಗಿ ನಿನ್ನ ಮುಖವನ್ನು ಎತ್ತುವಿ; ಹೌದು, ನೀನು ಸ್ಥಿರವಾಗಿದ್ದು, ಹೆದರದೆ ಇರುವಿ.
JOB 11:16 ಖಂಡಿತವಾಗಿ ನಿನ್ನ ಕಷ್ಟವನ್ನು ಮರೆತುಬಿಡುವಿ; ಹರಿದುಹೋದ ನೀರಿನ ಹಾಗೆ ಅದನ್ನು ಜ್ಞಾಪಕಮಾಡಿಕೊಳ್ಳುವಿ.
JOB 11:17 ನಿನ್ನ ಜೀವಮಾನವು ಮಧ್ಯಾಹ್ನಕ್ಕಿಂತ ಪ್ರಜ್ವಲಿಸುವುದು; ನಿನ್ನ ಕತ್ತಲೆಯು ಬೆಳಗಿನಂತೆ ಇರುವುದು.
JOB 11:18 ನೀನು ನಿರೀಕ್ಷೆ ಇದೆ ಎಂದು ಭರವಸೆಯಿಂದ ಇರುವಿ; ನೀನು ನಿನ್ನ ಬಗ್ಗೆ ಯೋಚಿಸಿ ಭರವಸೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಿ.
JOB 11:19 ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು; ಅನೇಕರು ನಿನ್ನಿಂದ ಮೆಚ್ಚಿಕೆಯನ್ನು ಅಪೇಕ್ಷಿಸುವರು.
JOB 11:20 ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವುದಿಲ್ಲ; ಪ್ರಾಣಬಿಡಬೇಕೆಂಬುದೇ ಅವರ ನಿರೀಕ್ಷೆಯಾಗಿರುವುದು.”
JOB 12:1 ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
JOB 12:2 “ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವುದು.
JOB 12:3 ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು; ನಾನು ನಿಮಗಿಂತ ಕಡಿಮೆ ಇಲ್ಲ; ಇಂಥಾ ವಿಷಯಗಳನ್ನು ತಿಳಿಯದಿರುವವನು ಯಾರು?
JOB 12:4 “ನಾನು ನೀತಿವಂತನೂ, ನಿರ್ದೋಷಿಯಾದರೂ ಗೆಳೆಯರ ಗೇಲಿ ಪರಿಹಾಸ್ಯಕ್ಕೆ ಗುರಿಯಾದೆನು; ನಾನು ದೇವರಿಗೆ ಪ್ರಾರ್ಥಿಸಿದೆ; ದೇವರು ನನಗೆ ಉತ್ತರಕೊಟ್ಟರು;
JOB 12:5 ಸುಖಜೀವಿಗಳಾಗಿರುವ ಜನರು ತೊಂದರೆಯಲ್ಲಿ ಇರುವವರನ್ನು ಅಪಹಾಸ್ಯ ಮಾಡುತ್ತಾರೆ, ಎಡವಿ ಬೀಳುವ ಜನರಿಗೆ ಕಾದಿದೆ ಆಪತ್ತು.
JOB 12:6 ಕಳ್ಳರ ಗುಡಾರಗಳು ವೃದ್ಧಿಯಾಗಿವೆ; ದೇವರನ್ನು ಕೆರಳಿಸುವವರು ನಿಶ್ಚಿಂತರಾಗಿದ್ದಾರೆ; ದೇವರೇ ತಮ್ಮ ಕೈಯಲ್ಲಿ ಇರುವುದಾಗಿ ತಿಳಿಯುತ್ತಾರೆ.
JOB 12:7 “ಆದರೂ ಮೃಗಗಳನ್ನು ಕೇಳು, ಅವು ನಿನಗೆ ಬೋಧಿಸುವುವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವುವು.
JOB 12:8 ಭೂಮಿಯ ಸಂಗಡ ಮಾತನಾಡು, ಅದು ನಿನಗೆ ಬೋಧಿಸುವುದು, ಸಮುದ್ರದ ಮೀನುಗಳು ನಿನಗೆ ವಿವರಿಸುವುವು.
JOB 12:9 ಯೆಹೋವ ದೇವರ ಕೈ ಇವುಗಳನ್ನೆಲ್ಲಾ ಮಾಡಿತೆಂದು ಇವುಗಳಲ್ಲಿ ತಿಳಿಯದಿರುವುದು ಯಾವುದು?
JOB 12:10 ದೇವರ ಕೈಯಲ್ಲಿ ಎಲ್ಲಾ ಜೀವಿಗಳ ಪ್ರಾಣವೂ ಎಲ್ಲಾ ಮನುಷ್ಯರ ಶ್ವಾಸವೂ ಇವೆ.
JOB 12:11 ಬಾಯಿಯು ಆಹಾರವನ್ನು ರುಚಿ ನೋಡುವಂತೆ ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?
JOB 12:12 ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ದೀರ್ಘಾಯುಷ್ಯರಲ್ಲಿ ತಿಳುವಳಿಕೆಯನ್ನು ತರುವುದಿಲ್ಲವೋ?
JOB 12:13 “ಜ್ಞಾನವೂ, ಶಕ್ತಿಯೂ ದೇವರಲ್ಲಿವೆ; ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.
JOB 12:14 ದೇವರು ಕೆಡವಿದ್ದನ್ನು ತಿರುಗಿ ಕಟ್ಟಲಾಗುವುದಿಲ್ಲ; ದೇವರು ಸೆರೆಯಲ್ಲಿ ಹಾಕುವ ಮನುಷ್ಯನನ್ನು ಯಾರೂ ಬಿಡಿಸಲಾಗುವುದಿಲ್ಲ.
JOB 12:15 ದೇವರು ಮಳೆಯನ್ನು ತಡೆಹಿಡಿಯುತ್ತಾರೆ, ಭೂಮಿ ಒಣಗುತ್ತದೆ; ದೇವರು ನೀರನ್ನು ಬಿಟ್ಟರೆ, ಭೂಮಿಯನ್ನು ಹಾಳುಮಾಡುತ್ತದೆ.
JOB 12:16 ಬಲವೂ, ಜ್ಞಾನವೂ ದೇವರಲ್ಲಿವೆ; ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.
JOB 12:17 ದೇವರು ಸಲಹೆಗಾರರನ್ನು ಸೆರೆಹಿಡಿಯುತ್ತಾರೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ.
JOB 12:18 ದೇವರು ಅರಸರಿಂದ ಹಾಕಲಾದ ಬಂಧನಗಳನ್ನು ಬಿಚ್ಚಿ, ಅವರ ನಡುಗಳಿಗೆ ವಸ್ತ್ರವನ್ನು ಕಟ್ಟುತ್ತಾರೆ.
JOB 12:19 ದೇವರು ಯಾಜಕರನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ; ಪ್ರಧಾನರನ್ನು ಕೆಡವಿಬಿಡುತ್ತಾರೆ.
JOB 12:20 ದೇವರು ವಿಶ್ವಾಸಾರ್ಹ ಸಲಹೆಗಾರರನ್ನು ಮೌನಗೊಳಿಸುತ್ತಾರೆ; ವೃದ್ಧರ ವಿವೇಚನೆಯನ್ನು ತೆಗೆದುಬಿಡುತ್ತಾರೆ.
JOB 12:21 ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾರೆ; ಬಲಿಷ್ಠರ ಬಲವನ್ನು ಸಡಿಲಿಸುತ್ತಾರೆ.
JOB 12:22 ದೇವರು ಕತ್ತಲೆಯೊಳಗಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾರೆ, ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾರೆ.
JOB 12:23 ದೇಶಗಳನ್ನು ಬೆಳೆಸುವುದೂ, ದಂಡಿಸುವುದೂ ದೇವರ ಕೈಯಲ್ಲಿದೆ; ದೇಶಗಳನ್ನು ವಿಸ್ತಾರಮಾಡುವುದೂ, ಚದರಿಸುವುದೂ ದೇವರ ಅಧಿಕಾರದಲ್ಲಿದೆ.
JOB 12:24 ದೇವರು ಭೂಮಿಯ ಮುಖ್ಯಸ್ಥರ ವಿವೇಚನೆಯನ್ನು ತೆಗೆದುಬಿಡುತ್ತಾರೆ; ಅಂಥವರು ಮಾರ್ಗವಿಲ್ಲದ ಅಲೆಯ ಮಾಡುವುದೂ ದೇವರಿಗೆ ಸಾಧ್ಯ.
JOB 12:25 ನಾಯಕರು ಬೆಳಕು ಇಲ್ಲದ ಕತ್ತಲೆಯಲ್ಲಿ ತಡಕಾಡುವಂತೆಯೂ ಅವರು ಮತ್ತೇರಿದವರಂತೆ ದಿಗ್ಭ್ರಮೆಗೊಳಿಸುವಂತೆಯೂ ಮಾಡಲು ದೇವರು ಶಕ್ತರು.
JOB 13:1 “ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.
JOB 13:2 ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
JOB 13:3 ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು; ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
JOB 13:4 ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.
JOB 13:5 ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು; ಮೌನವೇ ನಿಮಗೆ ಜ್ಞಾನವು.
JOB 13:6 ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
JOB 13:7 ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ? ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?
JOB 13:8 ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
JOB 13:9 ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ? ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?
JOB 13:10 ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ, ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.
JOB 13:11 ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ? ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
JOB 13:12 ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು; ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.
JOB 13:13 “ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ; ನನಗೇನಾದರೂ ಆಗಲಿ.
JOB 13:14 ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
JOB 13:15 ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.
JOB 13:16 ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು; ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.
JOB 13:17 ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
JOB 13:18 ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.
JOB 13:19 ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ? ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.
JOB 13:20 “ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ; ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:
JOB 13:21 ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.
JOB 13:22 ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು; ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.
JOB 13:23 ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ. ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.
JOB 13:24 ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?
JOB 13:25 ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?
JOB 13:26 ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ; ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.
JOB 13:27 ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.
JOB 13:28 “ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ, ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.
JOB 14:1 “ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನೂ, ಕಷ್ಟಸಂಕಟಗಳಿಂದ ತುಂಬಿದವನೂ ಆಗಿದ್ದಾನೆ.
JOB 14:2 ಅವನು ಹೂವಿನ ಹಾಗೆ ಅರಳಿ ಬಾಡುವನು; ಅವನು ನೆರಳಿನಂತೆ ಓಡಿಹೋಗುತ್ತಾನೆ, ಶಾಶ್ವತವಾಗಿರುವದಿಲ್ಲ.
JOB 14:3 ಹಾಗಾದರೆ ಇಂಥವನ ಮೇಲೆ ದೇವರೇ, ನೀವು ನಿಮ್ಮ ಕಣ್ಣಿಟ್ಟೀದೀರಲ್ಲಾ? ನಿಮ್ಮ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುತ್ತೀರೋ?
JOB 14:4 ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು? ಯಾರೂ ತರಲಾರರು!
JOB 14:5 ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ; ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ; ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ.
JOB 14:6 ಆದ್ದರಿಂದ ಅವನು ವಿಶ್ರಾಂತಿ ಪಡೆಯಲೆಂದು ನಿಮ್ಮ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸಿಬಿಡಿರಿ; ಅವನು ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.
JOB 14:7 “ಮರಕ್ಕೆ ಸಹ ಒಂದು ನಿರೀಕ್ಷೆ ಇದೆ: ಅದೇನೆಂದರೆ, ಮರವನ್ನು ಕಡಿದು ಹಾಕಿದರೂ ತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ; ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ.
JOB 14:8 ಅದರ ಬೇರು ಭೂಮಿಯಲ್ಲಿ ಹಳೆಯದಾದರೂ, ನೆಲದಲ್ಲಿ ಅದರ ಬುಡ ಸತ್ತಿದ್ದರೂ,
JOB 14:9 ನೀರಿನ ವಾಸನೆಯಿಂದ ಅದು ಮೊಳೆತು, ಗಿಡದ ಹಾಗೆ ಅದು ಕೊಂಬೆಗಳನ್ನು ಬಿಡುವುದು.
JOB 14:10 ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ; ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ.
JOB 14:11 ಸರೋವರದ ನೀರು ಒಣಗಿ ಹೋಗುವಂತೆಯೂ, ಬರಗಾಲದಲ್ಲಿ ನದಿಗಳು ಬತ್ತಿಹೋಗುವಂತೆಯೂ,
JOB 14:12 ಮನುಷ್ಯನು ಸತ್ತು ಮಲಗಿದರೆ ಏಳುವುದೇ ಇಲ್ಲ; ಆಕಾಶಗಳು ಅಳಿದು ಹೋಗುವವರೆಗೆ ಅವನು ಎಚ್ಚರಗೊಳ್ಳುವುದಿಲ್ಲ; ನಿದ್ರೆಯಿಂದ ಎಬ್ಬಿಸಲಾಗುವುದೂ ಇಲ್ಲ.
JOB 14:13 “ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ! ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ, ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು!
JOB 14:14 ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ, ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು.
JOB 14:15 ದೇವರೇ, ನೀವು ನನ್ನನ್ನು ಕರೆಯುವಿರಿ, ನಾನು ನಿಮಗೆ ಉತ್ತರಕೊಡುವೆನು; ನಿಮ್ಮ ಈ ಸೃಷ್ಟಿಯ ಮೇಲೆ ನೀವು ಹಂಬಲಿಸುವಿರಿ.
JOB 14:16 ಆಗ ನೀವು ನನ್ನ ಹೆಜ್ಜೆಗಳನ್ನು ಲೆಕ್ಕಿಸುವಿರಿ; ಆದರೆ ನೀವು ನನ್ನ ಪಾಪದ ಬಗ್ಗೆ ದಾಖಲೆ ಇಡುವುದಿಲ್ಲ.
JOB 14:17 ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ; ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ.
JOB 14:18 “ಆದರೂ ಬೆಟ್ಟವು ಬಿದ್ದು ಹಾಳಾಗುವಂತೆಯೂ, ಬಂಡೆಯು ತನ್ನ ಸ್ಥಳದಿಂದ ತೊಲಗುವಂತೆಯೂ,
JOB 14:19 ನೀರು ಕಲ್ಲುಗಳನ್ನು ಸವೆಯಿಸುವಂತೆಯೂ, ಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆಯೂ, ಮನುಷ್ಯನ ನಿರೀಕ್ಷೆಯನ್ನು ನೀವು ನಾಶಮಾಡುತ್ತೀರಿ.
JOB 14:20 ನೀವು ಅವನ ಮೇಲೆ ಶಾಶ್ವತವಾಗಿ ಮೇಲುಗೈ ಸಾಧಿಸಿರುವದರಿಂದ ಅವನು ಹೊರಟು ಹೋಗುವನು; ನೀವು ಅವನ ಮುಖಭಾವವನ್ನು ಮಾರ್ಪಡಿಸಿ, ಅವನನ್ನು ಕಳುಹಿಸಿಬಿಡುತ್ತೀರಿ.
JOB 14:21 ಮಕ್ಕಳು ಘನತೆಯನ್ನು ಹೊಂದಿದರೆ, ಅದು ಸತ್ತವರಿಗೆ ತಿಳಿಯುವುದಿಲ್ಲ; ಅವರ ಮಕ್ಕಳು ಕಡಿಮೆ ಸ್ಥಿತಿಗೆ ಬಂದರೆ ಸಹ, ಅದನ್ನು ಸತ್ತವರು ಗ್ರಹಿಸಿಕೊಳ್ಳುವುದಿಲ್ಲ.
JOB 14:22 ಆದರೆ ಸತ್ತವರು ತಮ್ಮ ದೇಹದ ನೋವನ್ನು ಅನುಭವಿಸುವರು, ಅವರ ಆತ್ಮವು ಅವರಿಗಾಗಿ ಮಾತ್ರ ಪ್ರಲಾಪಿಸುತ್ತಿರುವುದು.”
JOB 15:1 ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು:
JOB 15:2 “ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಪೂರ್ವದಿಕ್ಕಿನ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟೋ?
JOB 15:3 ನಿಷ್ಪ್ರಯೋಜಕವಾದ ನುಡಿಗಳಿಂದಲೂ, ಕೆಲಸಕ್ಕೆ ಬಾರದ ಮಾತುಗಳಿಂದಲೂ ಜ್ಞಾನಿಯು ವಾದಿಸುವನೋ?
JOB 15:4 ನೀನಾದರೋ ದೇವರ ಭಯಭಕ್ತಿಯನ್ನು ಹಾಳುಮಾಡುತ್ತಿರುವೆ. ದೇವರ ಮೇಲಿನ ಭಕ್ತಿಯನ್ನು ಕಡಿಮೆ ಮಾಡುತ್ತಿರುವೆ.
JOB 15:5 ಏಕೆಂದರೆ ನಿನ್ನ ಪಾಪವೇ ನಿನ್ನ ಬಾಯಿಯನ್ನು ಪ್ರೇರೇಪಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆಯ್ದುಕೊಳ್ಳುತ್ತಿರುವೆ.
JOB 15:6 ನಾನಲ್ಲ, ನಿನ್ನ ಬಾಯಿಯೇ ನಿನ್ನನ್ನು ಖಂಡಿಸುತ್ತದೆ; ಹೌದು, ನಿನ್ನ ತುಟಿಗಳೇ ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.
JOB 15:7 “ನೀನು ಮೊದಲು ಹುಟ್ಟಿದ ಪುರುಷನೋ? ಬೆಟ್ಟಗಳಿಗೆ ಮುಂಚಿತವಾಗಿ ಹುಟ್ಟಿದವನೋ?
JOB 15:8 ನೀನು ದೇವರ ಆಲೋಚನಾ ಸಭೆಯಲ್ಲಿ ಸದಸ್ಯನೋ? ಜ್ಞಾನವು ನಿನಗೆ ಮಾತ್ರ ಮೀಸಲೋ?
JOB 15:9 ನಮಗೆ ತಿಳಿಯದೆ ಇರುವುದನ್ನು ನೀನು ಏನು ತಿಳಿದುಕೊಂಡಿರುವೆ? ನಮ್ಮಲ್ಲಿ ಇಲ್ಲದ ಯಾವ ಒಳನೋಟವನ್ನು ನೀನು ಅರ್ಥಮಾಡಿಕೊಂಡಿರುವೆ?
JOB 15:10 ತಲೆ ನರೆತವರೂ, ಹೆಚ್ಚು ಮುದುಕರಾದವರೂ, ನಿನ್ನ ತಂದೆಗಿಂತ ವೃದ್ಧರಾದವರೂ ನಮ್ಮಲ್ಲಿ ಇದ್ದಾರೆ.
JOB 15:11 ದೇವರ ಸಂತೈಸುವಿಕೆಗಳೂ ಮೃದುವಾದ ಹಿತವಚನಗಳು ನಿನಗೆ ಸಾಕಾಗಿರುವುದಿಲ್ಲವೋ?
JOB 15:12 ನಿನ್ನ ಹೃದಯವು ನಿನ್ನನ್ನು ಸೆಳೆದಿರುವುದು ಏಕೆ? ಏಕೆ ನಿನ್ನ ಕಣ್ಣು ಕಿಡಿಕಾರುತ್ತಿದೆ?
JOB 15:13 ನೀನು ದೇವರ ವಿರುದ್ಧ ನಿನ್ನ ಕೋಪವನ್ನು ಹೊರಹಾಕುತ್ತಿರುವೆ? ನಿನ್ನ ಬಾಯಿಂದ ಕೋಪದ ಮಾತುಗಳನ್ನು ಹೊರಡಿಸುತ್ತೀಯಲ್ಲಾ?
JOB 15:14 “ಮನುಷ್ಯನು ಎಷ್ಟರವನು? ಅವನು ಶುದ್ಧನಿರಲು ಸಾಧ್ಯವೇ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
JOB 15:15 ದೇವರು ತಮ್ಮ ಪರಿಶುದ್ಧರನ್ನು ಆತುಕೊಂಡಿರುವುದಿಲ್ಲ; ಆಕಾಶಗಳೂ ದೇವರ ದೃಷ್ಟಿಯಲ್ಲಿ ಶುದ್ಧವಲ್ಲ.
JOB 15:16 ಹಾಗಿರುವಾಗ, ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು, ದೇವರ ದೃಷ್ಟಿಯಲ್ಲಿ ಎಷ್ಟು ಅಲ್ಪನೂ ಅಶುದ್ಧನೂ ಆಗಿದ್ದಾನಲ್ಲವೇ?
JOB 15:17 “ಕೇಳು, ನಾನು ನಿನಗೆ ವಿವರಿಸುತ್ತೇನೆ, ನಾನು ನೋಡಿದ್ದನ್ನು ನಿನಗೆ ಹೇಳುತ್ತೇನೆ,
JOB 15:18 ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನ್ನೇ ಮರೆಮಾಡದೆ ನಮಗೆ ಪ್ರಕಟಿಸಿದರು.
JOB 15:19 ಅವರಿಗೆ ದೇಶವು ಕೊಡಲಾಗಿತ್ತು; ಅವರ ಮಧ್ಯದಲ್ಲಿ ಅಂದು ಪರದೇಶೀಯರು ಹಾದುಹೋಗುವಂತಿರಲಿಲ್ಲ.
JOB 15:20 ಜ್ಞಾನಿಗಳು ಹೇಳಿದ್ದೇನೆಂದರೆ: ದುಷ್ಟನು ತನ್ನ ಜೀವಮಾನವೆಲ್ಲಾ ವೇದನೆಪಡುತ್ತಾನೆ; ನಿರ್ದಯನು ತನ್ನ ವರ್ಷಗಳೆಲ್ಲ ತೊಂದರೆಗಳನ್ನು ಸಂಗ್ರಹಿಸುತ್ತಾನೆ.
JOB 15:21 ಭಯಂಕರವಾದ ಸಂಗತಿಗಳು ಅವನ ಕಿವಿಗೆ ಬೀಳುತ್ತವೆ; ಎಲ್ಲವು ಸುಖವಾಗಿರುವಾಗ ಸುಲಿಗೆ ಮಾಡುವವನು ದುಷ್ಟನ ಮೇಲೆ ದಾಳಿ ಮಾಡುತ್ತಾನೆ.
JOB 15:22 ಕತ್ತಲೆಯೊಳಗಿಂದ ಪಾರಾಗುತ್ತೇನೆಂದು ದುಷ್ಟನು ನಂಬುವುದಿಲ್ಲ; ಅವನ ಖಡ್ಗವು ಅವನಿಗಾಗಿ ಕಾದಿದೆ.
JOB 15:23 ಅವನು ಆಹಾರ ಎಲ್ಲಿ ಎಂದು ರಣಹದ್ದಿನ ಹಾಗೆ ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.
JOB 15:24 ಇಕ್ಕಟ್ಟೂ, ಸಂಕಟವೂ ಅವನನ್ನು ಹೆದರಿಸಿ, ಆಕ್ರಮಣ ಮಾಡಲು ಸಿದ್ಧನಾದ ರಾಜನಂತೆ ತೊಂದರೆಗಳು ಅವನನ್ನು ಆವರಿಸುತ್ತವೆ,
JOB 15:25 ಏಕೆಂದರೆ ದುಷ್ಟನು ದೇವರಿಗೆ ವಿರೋಧವಾಗಿ ಮುಷ್ಠಿ ತೋರಿಸಿದನಲ್ಲಾ, ಸರ್ವಶಕ್ತರ ಎದುರು ನಿಂತು ಶೂರನಂತೆ ಮೆರೆದನಲ್ಲಾ.
JOB 15:26 ದೇವರ ವಿರೋಧವಾಗಿ ಬಲವುಳ್ಳ ದೊಡ್ಡ ಗುರಾಣಿಯೊಂದಿಗೆ ಓಡುತ್ತಾನೆ.
JOB 15:27 “ದುಷ್ಟನು ತನ್ನ ಮುಖದಲ್ಲಿ ಕೊಬ್ಬೇರಿಸಿಕೊಂಡು, ತನ್ನ ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದಾನೆ.
JOB 15:28 ಹಾಳಾದ ಪಟ್ಟಣಗಳಲ್ಲಿಯೂ, ಯಾರೂ ವಾಸಿಸದ, ಕುಸಿಯಲು ಸಿದ್ಧವಾದಂಥ ಮನೆಗಳಲ್ಲಿಯೂ ವಾಸಮಾಡಿಕೊಂಡಿದ್ದಾನೆ.
JOB 15:29 ದುಷ್ಟನು ಐಶ್ವರ್ಯವಂತನಾಗುವುದಿಲ್ಲ; ಆದರೂ ಅವನ ಆಸ್ತಿಯು ಸ್ಥಿರವಲ್ಲ; ಅವನ ಸೊತ್ತು ಭೂಮಿಯ ಮೇಲೆ ವಿಸ್ತಾರವಾಗುವುದಿಲ್ಲ.
JOB 15:30 ಕತ್ತಲೆಯೊಳಗಿಂದ ಅವನು ಪಾರಾಗುವದಿಲ್ಲ; ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು; ದೇವರ ಬಾಯಿಯ ಶ್ವಾಸದಿಂದ ಅವನು ತೊಲಗಿ ಹೋಗುವನು.
JOB 15:31 ದುಷ್ಟನು ವ್ಯರ್ಥವಾದದ್ದನ್ನು ನಂಬಿ ಮೋಸಹೋಗದಿರಲಿ. ಏಕೆಂದರೆ, ವ್ಯರ್ಥವಾದವುಗಳಿಂದ ಅವನಿಗಾಗುವ ಪ್ರತಿಫಲವು ಶೂನ್ಯವೇ.
JOB 15:32 ದುಷ್ಟನು ತನ್ನ ಸಮಯಕ್ಕಿಂತ ಮೊದಲು ಬತ್ತಿ ಹೋಗುವನು; ಅವನ ಕೊಂಬೆಯು ಹಸಿರಾಗಿರುವುದಿಲ್ಲ.
JOB 15:33 ದ್ರಾಕ್ಷೆಯ ಬಳ್ಳಿಯಂತೆ ಅವನು ತನ್ನ ಮಾಗದ ಫಲವನ್ನು ಹಾಳುಮಾಡಿಕೊಳ್ಳುವನು; ದುಷ್ಟನು ಹೂವುಗಳನ್ನು ಉದುರಿಸುವ ಓಲಿವ್ ಎಣ್ಣೆಯ ಮರದ ಹಾಗೆ ಇರುವನು.
JOB 15:34 ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.
JOB 15:35 ಅವರು ಹಿಂಸೆಯನ್ನು ಗರ್ಭಧರಿಸಿ, ಕೆಟ್ಟದ್ದನ್ನು ಹೆರುವರು; ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”
JOB 16:1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 16:2 “ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ; ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ.
JOB 16:3 ನಿಮ್ಮ ವ್ಯರ್ಥ ಮಾತುಗಳಿಗೆ ಅಂತ್ಯ ಇಲ್ಲವೋ? ನನ್ನೊಂದಿಗೆ ವಾದಿಸಲು ನಿಮ್ಮನ್ನು ಒತ್ತಾಯಪಡಿಸಿದ್ದೇನು?
JOB 16:4 ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ, ನಾನು ಸಹ ನಿಮ್ಮ ಹಾಗೆ ಮಾತಾಡುತ್ತಿದ್ದೆ; ನಾನು ನಿಮ್ಮ ವಿರುದ್ಧ ಪದಪ್ರಯೋಗಿಸಿ ಮಾತಾಡಬಹುದಾಗಿತ್ತು; ಹೌದು, ನಿಮ್ಮ ವಿಷಯದಲ್ಲಿ ಗೇಲಿ ಮಾಡುತ್ತಾ, ನಾನು ನನ್ನ ತಲೆಯಾಡಿಸಬಹುದಾಗಿತ್ತು.
JOB 16:5 ಆದರೆ, ನಾನು ನನ್ನ ಬಾಯಿಮಾತಿನಿಂದ ನಿಮ್ಮನ್ನು ಪ್ರೋತ್ಸಾಹಿಸುವೆನು; ನನ್ನ ಆದರಣೆಯ ಮಾತುಗಳು ನಿಮಗೆ ಉಪಶಮನ ಮಾಡುವುದು.
JOB 16:6 “ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ; ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ.
JOB 16:7 ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ; ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ.
JOB 16:8 ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ; ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ;
JOB 16:9 ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ; ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ; ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ.
JOB 16:10 ನನ್ನ ಮೇಲೆ ಜನರು ತಮ್ಮ ಬಾಯಿ ಕಿಸಿಯುತ್ತಾರೆ; ನಿಂದಿಸಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ, ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ.
JOB 16:11 ದೇವರು ನನ್ನನ್ನು ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾರೆ; ಹೌದು, ದುಷ್ಟರ ಕೈಗೆ ನನ್ನನ್ನು ಎಸೆದುಬಿಟ್ಟಿದ್ದಾರೆ.
JOB 16:12 ನಾನು ನೆಮ್ಮದಿಯಿಂದ ಇದ್ದಾಗ ದೇವರು ನನ್ನನ್ನು ಚದರಿಸಿದ್ದಾರೆ; ನಾನು ಮಡಕೆ ಒಡೆದುಬಿದ್ದಂತೆ ಇದ್ದೇನೆ. ನನ್ನನ್ನು ತಮಗೆ ಗುರಿ ಹಲಗೆಯಾಗಿ ನಿಲ್ಲಿಸಿಕೊಂಡಿದ್ದಾರೆ.
JOB 16:13 ದೇವರ ಬಾಣಗಳು ನನ್ನನ್ನು ಸುತ್ತುವರಿದಿವೆ; ನಾನು ಕರುಣೆಯಿಲ್ಲದೆ ನೆಲದ ಮೇಲೆ ಪಿತ್ತವನ್ನು ಸುರಿದು ಬಿದ್ದವನಂತೆ ಇದ್ದೇನೆ. ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾರೆ.
JOB 16:14 ದೇವರು ಮತ್ತೆ ಮತ್ತೆ ನನ್ನನ್ನು ಮುರಿಯುತ್ತಿದ್ದಾರೆ; ಅದು ಶೂರನು ಓಡಿಬಂದು ನನ್ನ ಮೇಲೆ ದಾಳಿಮಾಡಿದಂತಿದೆ.
JOB 16:15 “ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ.
JOB 16:16 ನನ್ನ ಮುಖವು ಅಳುವುದರಿಂದ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ಅಂಧಕಾರವು ಕವಿದಿದೆ.
JOB 16:17 ಆದರೂ ನನ್ನ ಕೈಗಳಲ್ಲಿ ಹಿಂಸಾಚಾರವಿಲ್ಲ; ನನ್ನ ಪ್ರಾರ್ಥನೆಯು ಶುದ್ಧವಾಗಿದೆ.
JOB 16:18 “ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ, ನನ್ನ ಕೂಗು ವಿಶ್ರಾಂತಿ ಹೊಂದದಿರಲಿ!
JOB 16:19 ಈಗಲೂ ಪರಲೋಕದಲ್ಲಿ ನನಗೆ ಒಬ್ಬ ಸಾಕ್ಷಿ ಇದ್ದಾರೆ; ಹೌದು, ನನ್ನ ವಕೀಲರು ಉನ್ನತದಲ್ಲಿದ್ದಾರೆ.
JOB 16:20 ಆದರೆ ನನ್ನ ಮಿತ್ರ ನನಗಾಗಿ ವಿಜ್ಞಾಪನೆಮಾಡುತ್ತಿದ್ದಾರೆ; ನನ್ನ ಕಣ್ಣುಗಳು ದೇವರ ಮುಂದೆ ಕಣ್ಣೀರು ಸುರಿಸುತ್ತವೆ.
JOB 16:21 ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ, ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ.
JOB 16:22 “ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು, ಇನ್ನೂ ಕೆಲವೇ ವರ್ಷಗಳು ಉಳಿದಿವೆ.
JOB 17:1 ನನ್ನ ಆತ್ಮ ಮುರಿದುಹೋಗಿದೆ; ನನ್ನ ದಿನಗಳು ಮುಗಿದಿವೆ; ಸಮಾಧಿ ನನಗೆ ಸಿದ್ಧವಾಗಿದೆ.
JOB 17:2 ಅಪಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರೆ; ಅವರ ಹಗೆತನದ ಬಗ್ಗೆ ನಾನು ಎಚ್ಚರವಾಗಿರಬೇಕು.
JOB 17:3 “ದೇವರೇ, ನೀವು ಹಕ್ಕಾಗಿ ಕೇಳುವ ಈಡನ್ನು ನೀವೇ ನನಗೆ ಕೊಡಿರಿ; ನಿಮ್ಮನ್ನು ಬಿಟ್ಟು ಯಾರು ನನಗೆ ಭದ್ರತೆಯನ್ನು ಕೊಡುವವರು?
JOB 17:4 ತಿಳುವಳಿಕೆ ಪ್ರವೇಶಿಸದಂತೆ ನೀವು ನನ್ನ ಸ್ನೇಹಿತರ ಮನಸ್ಸನ್ನು ಮುಚ್ಚಿರುವಿರಿ; ಆದ್ದರಿಂದ ನೀವು ಅವರನ್ನು ಜಯಿಸುವುದಕ್ಕೆ ಬಿಡುವುದಿಲ್ಲ.
JOB 17:5 ಯಾರು ಸ್ವಂತ ಲಾಭಕ್ಕಾಗಿ ಸ್ನೇಹಿತರಿಗೆ ದ್ರೋಹ ಮಾಡುತ್ತಾರೋ, ಅಂಥವರ ಮಕ್ಕಳ ಕಣ್ಣುಗಳು ಮಂಕಾಗಿಬಿಡುವುದು.
JOB 17:6 “ದೇವರು ನನ್ನನ್ನು ಜನರ ಕಟ್ಟುಗಾದೆಗೆ ಆಸ್ಪದ ಮಾಡಿದ್ದಾರೆ; ನನ್ನನ್ನು ಕಾಣುವವರು ನನ್ನ ಮುಖಕ್ಕೆ ಉಗುಳುವಂತೆ ಮಾಡಿದ್ದಾರೆ.
JOB 17:7 ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಇವೆ.
JOB 17:8 ಪ್ರಾಮಾಣಿಕರು ಇದನ್ನು ನೋಡಿ ಬೆರಗಾಗಿದ್ದಾರೆ; ನಿರಪರಾಧಿಯು ಭಕ್ತಿಹೀನರ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
JOB 17:9 ಆದರೆ ನೀತಿವಂತನು ತನ್ನ ಮಾರ್ಗದಲ್ಲಿ ಮುಂದುವರಿಯುವನು; ಶುದ್ಧ ಕೈಗಳುಳ್ಳವರು ಬಲದಲ್ಲಿ ಬೆಳೆಯುತ್ತಾ ಇರುವರು.
JOB 17:10 “ಆದರೆ ನೀವೆಲ್ಲರೂ ಬಂದು ಮತ್ತೆ ವಾದ ಮಾಡಲು ಪ್ರಯತ್ನಿಸಿರಿ! ನಿಮ್ಮಲ್ಲಿ ನಾನು ಒಬ್ಬ ಜ್ಞಾನಿಯನ್ನು ಸಹ ಕಂಡುಕೊಳ್ಳಲಿಲ್ಲ.
JOB 17:11 ನನ್ನ ದಿನಗಳು ಮುಗಿದು ಹೋದವು; ನನ್ನ ಹೃದಯದ ಬಯಕೆಯಾಗಿರುವ ನನ್ನ ಉದ್ದೇಶಗಳು ಭಂಗವಾದವು.
JOB 17:12 ನನ್ನ ಸ್ನೇಹಿತರು ರಾತ್ರಿಯನ್ನು ಹಗಲು ಎಂದು ಸಾಧಿಸುತ್ತಾರೆ; ಕತ್ತಲಿಂದ ಬೆಳಕು ಬೇಗ ಬರಲಿದೆ ಎನ್ನುತ್ತಾರೆ.
JOB 17:13 ಸಮಾಧಿಯೇ ನನ್ನ ಮನೆಯೆಂದು ನಾನು ನಿರೀಕ್ಷಿಸಿದರೆ, ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿಕೊಂಡರೆ,
JOB 17:14 ಸಮಾಧಿಗೆ, ‘ನೀನು ನನ್ನ ತಂದೆ’ ಎಂದೂ, ಹುಳಕ್ಕೆ, ‘ನನ್ನ ತಾಯಿ, ನನ್ನ ತಂಗಿ’ ಎಂದೂ ನಾನು ಕರೆಯುವುದಾದರೆ,
JOB 17:15 ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?
JOB 17:16 ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”
JOB 18:1 ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು:
JOB 18:2 “ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ? ವಿವೇಕಿಯಾಗು, ಆಮೇಲೆ ಮಾತನಾಡೋಣ.
JOB 18:3 ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?
JOB 18:4 ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ? ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ? ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ?
JOB 18:5 “ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು; ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.
JOB 18:6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು; ಅವನ ಮೇಲಣ ತೂಗು ದೀಪವು ಆರಿಹೋಗುವುದು.
JOB 18:7 ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು; ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.
JOB 18:8 ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು; ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು.
JOB 18:9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು; ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.
JOB 18:10 ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು.
JOB 18:11 ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ, ಅವನ ಕಾಲುಗಳನ್ನು ಓಡುವಂತೆ ಮಾಡುವುವು.
JOB 18:12 ಅವನ ಬಲವು ಕುಸಿಯುವುದು; ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು.
JOB 18:13 ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು; ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.
JOB 18:14 ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು. ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು.
JOB 18:15 ಬೆಂಕಿಯು ಅವನ ಮನೆಯನ್ನು ಸುಡುವುದು; ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.
JOB 18:16 ಬುಡದಿಂದ ಅವನ ಬೇರುಗಳು ಒಣಗುವುವು; ಮೇಲಿನಿಂದ ಅವನ ರೆಂಬೆಯು ಬಾಡುವುದು.
JOB 18:17 ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು; ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.
JOB 18:18 ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು; ಅವನು ಲೋಕದಿಂದ ಬಹಿಷ್ಕರಿಸಲಾಗುವನು.
JOB 18:19 ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.
JOB 18:20 ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು; ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು.
JOB 18:21 ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”
JOB 19:1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 19:2 “ಎಷ್ಟರವರೆಗೆ ನನ್ನ ನೋಯಿಸಿ, ನನ್ನನ್ನು ಮಾತುಗಳಿಂದ ಜಜ್ಜುವಿರಿ?
JOB 19:3 ಈಗ ಹತ್ತು ಸಾರಿ ನನ್ನನ್ನು ನಿಂದಿಸಿದ್ದೀರಿ; ನಾಚಿಕೆಯಿಲ್ಲದೆ ನೀವು ನನ್ನ ಮೇಲೆ ಆಕ್ರಮಣ ಮಾಡುತ್ತೀರಿ.
JOB 19:4 ನಿಜವಾಗಿ ನಾನು ತಪ್ಪು ಮಾಡಿದ್ದರೆ ನಿಮಗೇನು? ನನ್ನ ತಪ್ಪು ನನ್ನ ಸಂಗಡ ಇರಲಿ.
JOB 19:5 ನೀವು ನನಗಿಂತ ಉತ್ತಮರು ಎಂದು ಭಾವಿಸುತ್ತಿದ್ದೀರಿ; ನನಗಾದ ಹೀನಸ್ಥಿತಿಯನ್ನು ನನಗೆ ವಿರೋಧವಾಗಿ ಉಪಯೋಗಿಸುತ್ತೀರಿ.
JOB 19:6 ದೇವರಿಂದಲೇ ನನಗೆ ಅನ್ಯಾಯವಾಗಿದೆ; ದೇವರು ತಮ್ಮ ಬಲೆಯನ್ನು ನನ್ನ ಮೇಲೆ ಬೀಸಿದ್ದಾರೆಂದು ನಿಮಗೆ ತಿಳಿದಿರಲಿ.
JOB 19:7 “ ‘ಹಿಂಸೆ,’ ಎಂದು ನಾನು ಕೂಗಿಕೊಂಡರೂ ನನಗೆ ಉತ್ತರ ಕೊಡುವವರಿಲ್ಲ; ಗಟ್ಟಿಯಾಗಿ ಮೊರೆಯಿಟ್ಟರೂ ನ್ಯಾಯ ದೊರಕುವುದಿಲ್ಲ.
JOB 19:8 ನಾನು ಮುಂದೆ ಹೋಗದಂತೆ ದೇವರು ನನ್ನ ದಾರಿಗೆ ಬೇಲಿ ಹಾಕಿದ್ದಾರೆ; ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾರೆ.
JOB 19:9 ದೇವರು ನನ್ನ ಘನತೆಯನ್ನು ತೆಗೆದುಹಾಕಿದ್ದಾರೆ; ನನ್ನ ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾರೆ.
JOB 19:10 ನನ್ನ ಸುತ್ತಲೂ ದಾಳಿಯಾಗಿದ್ದರಿಂದ, ನಾನು ಕ್ಷಯಿಸುತ್ತಿದ್ದೇನೆ; ಮರವನ್ನು ಕೀಳುವ ಹಾಗೆ ದೇವರು ನನ್ನ ನಿರೀಕ್ಷೆಯನ್ನು ಕಿತ್ತುಹಾಕಿದ್ದಾರೆ.
JOB 19:11 ದೇವರ ಶಿಕ್ಷೆಯು ನನ್ನ ಮೇಲೆ ಉರಿಯುತ್ತಿದೆ; ನಾನು ದೇವರಿಗೆ ವೈರಿಯಂತೆ ಪರಿಗಣಿಸಲಾಗಿದ್ದೇನೆ.
JOB 19:12 ದೇವರ ಸೇನೆ ಒಟ್ಟಿಗೆ ಬಂದು, ನನಗೆ ವಿರೋಧವಾಗಿ ದಿಬ್ಬನ್ನು ಕಟ್ಟಿ, ನನ್ನ ಗುಡಾರದ ಸುತ್ತಲೂ ಇಳಿದಿವೆ.
JOB 19:13 “ದೇವರು ನನ್ನ ಕುಟುಂಬದವರನ್ನು ನನ್ನಿಂದ ಅಗಲಿಸಿದ್ದಾರೆ; ನನ್ನ ಪರಿಚಿತರೆಲ್ಲರೂ ನನ್ನನ್ನು ತೊರೆದಿದ್ದಾರೆ.
JOB 19:14 ನನ್ನ ಬಂಧುಗಳು ನನ್ನನ್ನು ಕೈಬಿಟ್ಟಿದ್ದಾರೆ; ನನ್ನ ಆಪ್ತ ಸ್ನೇಹಿತರು ನನ್ನನ್ನು ಮರೆತುಬಿಟ್ಟಿದ್ದಾರೆ.
JOB 19:15 ನನ್ನ ಅತಿಥಿಗಳು, ನನ್ನ ದಾಸದಾಸಿಯರೂ ನನ್ನನ್ನು ಅನ್ಯನೆಂದು ಎಣಿಸುತ್ತಾರೆ; ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ.
JOB 19:16 ನನ್ನ ಸೇವಕನನ್ನು ಕರೆದರೂ, ಅವನು ನನಗೆ ಉತ್ತರ ಕೊಡುವುದಿಲ್ಲ; ನನ್ನ ಬಾಯಿತೆರೆದು ಅವನನ್ನು ಬೇಡಿಕೊಂಡರೂ ಅವನು ಬರುವುದಿಲ್ಲ.
JOB 19:17 ನನ್ನ ಶ್ವಾಸವು ನನ್ನ ಹೆಂಡತಿಗೆ ಅಸಹ್ಯವಾಗಿದೆ, ನನ್ನ ಕುಟುಂಬದವರಿಗೆ ನಾನು ಹೇಸಿಕೆಯಾದೆ.
JOB 19:18 ಚಿಕ್ಕವರೂ ಸಹ ನನ್ನನ್ನು ತಿರಸ್ಕರಿಸುತ್ತಾರೆ; ನಾನು ಕಾಣಿಸಿಕೊಂಡಾಗ ನನ್ನನ್ನು ಹಾಸ್ಯಮಾಡುತ್ತಾರೆ.
JOB 19:19 ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನಾನು ಪ್ರೀತಿ ಮಾಡಿದವರೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
JOB 19:20 ನಾನು ಕೇವಲ ಎಲುಬೂ ತೊಗಲೂ ಆಗಿಬಿಟ್ಟಿದ್ದೇನೆ; ನಾನು ನನ್ನ ಹಲ್ಲು ಚರ್ಮದಿಂದಲೇ ತಪ್ಪಿಸಿಕೊಂಡೆನು.
JOB 19:21 “ಕನಿಕರಿಸಿರಿ, ನನ್ನ ಸ್ನೇಹಿತರೇ, ನನ್ನನ್ನು ಕನಿಕರಿಸಿರಿ, ಏಕೆಂದರೆ ದೇವರ ಕೈ ನನ್ನನ್ನು ದಂಡಿಸಿದೆ.
JOB 19:22 ದೇವರಂತೆ ನೀವು ನನ್ನನ್ನು ಏಕೆ ಹಿಂಸಿಸುತ್ತೀರಿ? ನನಗೆ ತೊಂದರೆಪಡಿಸಿದ್ದು ಸಾಲದೋ?
JOB 19:23 “ಆಹಾ, ನನ್ನ ಮಾತುಗಳು ದಾಖಲಿಸಿದ್ದರೆ, ಆ ಮಾತುಗಳನ್ನು ಸುರುಳಿಗಳಲ್ಲಿ ಬರೆದಿದ್ದರೆ,
JOB 19:24 ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಅವುಗಳನ್ನು ಶಾಶ್ವತ ಶಾಸನವಾಗಿ ಮಾಡಿದ್ದರೆ ಎಷ್ಟೋ ಒಳಿತು!
JOB 19:25 ನನ್ನ ವಿಮೋಚಕರು ಜೀವಿಸುತ್ತಿದ್ದಾರೆ ಎಂದು ತಿಳಿದಿದ್ದೇನೆ. ಕಡೆಯ ದಿನದಲ್ಲಿ ಭೂಮಿಯ ಮೇಲೆ ನನ್ನ ವಿಮೋಚಕರು ಬಂದು ನಿಲ್ಲುವರೆಂದೂ ತಿಳಿದಿದ್ದೇನೆ.
JOB 19:26 ನನ್ನ ಚರ್ಮವು ಬಿರಿದು ಹಾಳಾದ ಬಳಿಕವೂ, ನಾನು ದೇಹದಾರಿಯಾಗಿಯೇ ದೇವರನ್ನು ನೋಡುವೆನು.
JOB 19:27 ದೇವರನ್ನು ನಾನೇ ನೋಡುವೆನು; ಬೇರೆಯವರಲ್ಲ, ನನ್ನ ಕಣ್ಣಾರೆ ಅವರನ್ನು ಕಾಣುವೆನು; ಅದಕ್ಕಾಗಿ ನನ್ನ ಹೃದಯವು ನನ್ನೊಳಗೆ ಹಂಬಲಿಕೆಯಿಂದ ಹಾರೈಸುತ್ತಿದೆ!
JOB 19:28 “ ‘ಸ್ನೇಹಿತರೇ, ಅವನ ದುರ್ಗತಿಗೆ ಕಾರಣ ಅವನಲ್ಲಿಯೇ ಇದೆ, ನಾವು ಅವನಿಗೆ ಹೇಗೆ ತೊಂದರೆಕೊಡೋಣ?’ ಎಂದು ನೀವು ಹೇಳಿದರೆ,
JOB 19:29 ನೀವು ಖಡ್ಗಕ್ಕೆ ಭಯಪಡಬೇಕಾಗುತ್ತದೆ; ಏಕೆಂದರೆ, ಕ್ರೋಧವು ದಂಡನೆಯನ್ನು ಖಡ್ಗದಿಂದ ತರುವುದು. ಆಗ ನ್ಯಾಯತೀರ್ಪು ಉಂಟೆಂದು ನಿಮಗೆ ತಿಳಿಯುವುದು.”
JOB 20:1 ನಾಮಾಥ್ಯನಾದ ಚೋಫರನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 20:2 “ನಾನು ತುಂಬಾ ಕಳವಳಗೊಂಡದ್ದರಿಂದ, ನನ್ನ ಆಲೋಚನೆಗಳು ನನ್ನನ್ನು ಉತ್ತರಿಸಲು ಪ್ರೇರೇಪಿಸಿದವು.
JOB 20:3 ನನ್ನನ್ನು ಅವಮಾನಿಸುವ ಖಂಡನೆಯನ್ನು ನಾನು ಕೇಳಿದ್ದೇನೆ; ಆದ್ದರಿಂದ ನನ್ನ ತಿಳುವಳಿಕೆಯು ನನ್ನನ್ನು ಉತ್ತರಿಸಲು ಪ್ರೇರೇಪಿಸುತ್ತದೆ.
JOB 20:4 “ದೇವರು ಮನುಷ್ಯನನ್ನು ಭೂಮಿಯಲ್ಲಿ ಇರಿಸಿದ ಕಾಲದಿಂದ ವಿಷಯ ಹೇಗಿದೆ ಎಂಬುದು ನಿನಗೆ ನಿಶ್ಚಯವಾಗಿ ಗೊತ್ತಿದೆ.
JOB 20:5 ದುಷ್ಟರ ಜಯವು ಅಲ್ಪ ಕಾಲ, ಭಕ್ತಿಹೀನರ ಸಂತೋಷವು ಕ್ಷಣ ಮಾತ್ರ.
JOB 20:6 ಹೆಮ್ಮೆಯು ಆಕಾಶಕ್ಕೆ ಏರಿದರೂ, ಅವನ ತಲೆ ಮೇಘಕ್ಕೆ ಮುಟ್ಟಿದರೂ,
JOB 20:7 ಗೊಬ್ಬರದ ಹಾಗೆ ಶಾಶ್ವತವಾಗಿ ಅವನು ನಾಶವಾಗುವನು; ಅವನನ್ನು ನೋಡಿದವರು, ‘ಅವನೆಲ್ಲಿ?’ ಎಂದು ಕೇಳುವರು.
JOB 20:8 ಭಕ್ತಿಹೀನನು ಕನಸಿನ ಹಾಗೆ ಹಾರಿಹೋಗುವನು, ಇನ್ನೆಂದಿಗೂ ಸಿಗಲಾರನು; ಅವನು ಕತ್ತಲೆಯ ಹಾಗೆ ಕಾಣದೆ ಹೋಗುವನು.
JOB 20:9 ಅವನನ್ನು ನೋಡಿದವರು ಇನ್ನು ಮುಂದೆ ನೋಡರು; ಅವನ ಸ್ಥಳವು ಇನ್ನು ಅವನನ್ನು ಕಾಣದು.
JOB 20:10 ಅವನ ಮಕ್ಕಳು ಬಡವರ ದಯೆಯನ್ನು ಬೇಡುವರು; ಅವನ ಮಕ್ಕಳ ಕೈಗಳು ಅವನ ಸಂಪತ್ತನ್ನು ಹಿಂತಿರುಗಿಸಬೇಕಾಗುವುದು.
JOB 20:11 ಅವನ ಎಲುಬುಗಳು ಯೌವನದ ಶಕ್ತಿಯಿಂದ ತುಂಬಿತ್ತು, ಅದು ಅವನ ಸಂಗಡ ಧೂಳಿನಲ್ಲಿ ಮಲಗುವುದು.
JOB 20:12 “ಅವನ ಕೆಟ್ಟತನವು ಬಾಯಿಗೆ ಸಿಹಿಯಾಗಿತ್ತು, ಅವನು ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟುಕೊಂಡಿದ್ದನು.
JOB 20:13 ಅದನ್ನು ಬಿಟ್ಟುಕೊಡಲು ಇಷ್ಟಪಡದೆ, ತನ್ನ ಬಾಯಿಯೊಳಗೆ ದೀರ್ಘಸಮಯ ಇಟ್ಟುಕೊಂಡರೂ,
JOB 20:14 ಅವನ ಆಹಾರವು ಅವನ ಕರುಳಲ್ಲಿ ಹುಳಿಯಾಗಿ, ಅದು ಅವನೊಳಗಿನ ಸರ್ಪಗಳ ವಿಷವಾಗುವುದು.
JOB 20:15 ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡಿಸಿ ಬಿಡುವನು.
JOB 20:16 ಅವನು ಸರ್ಪಗಳ ವಿಷವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲುವುದು.
JOB 20:17 ಅವನು ಜೇನು, ಮೊಸರೂ ಹರಿಯುವ ಹಳ್ಳಗಳನ್ನೂ, ಸಮೃದ್ಧಿಯಾಗಿ ಹರಿಯುವ ನದಿಗಳನ್ನೂ ನೋಡನು.
JOB 20:18 ಅವನು ತನ್ನ ಪ್ರಯಾಸದ ಫಲವನ್ನು ಸವಿಯದೆ ಪರರಿಗೆ ಕೊಡಬೇಕಾಗುವುದು; ಅವನು ತಾನು ಪಡೆದ ಲಾಭದ ಆನಂದವನ್ನು ಅನುಭವಿಸುವುದಿಲ್ಲ.
JOB 20:19 ಏಕೆಂದರೆ ಅವನು ಬಡವರನ್ನು ಜಜ್ಜಿ ಅವರನ್ನು ನಿರ್ಗತಿಕರನ್ನಾಗಿ ಮಾಡಿದನು; ತಾನು ನಿರ್ಮಿಸದ ಮನೆಗಳನ್ನು ವಶಪಡಿಸಿಕೊಂಡಿದ್ದಾನೆ.
JOB 20:20 “ಖಂಡಿತವಾಗಿ ಅವನ ಆಕಾಂಕ್ಷೆಗೆ ತೃಪ್ತಿ ಇರುವುದಿಲ್ಲ; ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಏನೂ ಉಳಿಸಿಕೊಳ್ಳುವುದಿಲ್ಲ.
JOB 20:21 ಅವನಿಗೆ ಆಹಾರವು ಉಳಿಯದು; ಆದ್ದರಿಂದ ಅವನ ಸಮೃದ್ಧಿಯು ಅಸ್ಥಿರವಾಗಿರುವುದು.
JOB 20:22 ಅವನ ಸಮೃದ್ಧಿಯಿಂದ ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು; ಘೋರ ದುಃಖವು ಅವನ ಮೇಲೆ ಬರುವುದು.
JOB 20:23 ಅವನ ಹೊಟ್ಟೆ ತುಂಬುವಾಗ, ದೇವದಂಡನೆ ಅವನ ಮೇಲೆ ಬರುವುದು; ಹೌದು, ದೇವದಂಡನೆಯು ಅವನ ಮೇಲೆ ಸುರಿಯುವುದು.
JOB 20:24 ಅವನು ಕಬ್ಬಿಣದ ಆಯುಧಕ್ಕೆ ತಪ್ಪಿಸಿಕೊಂಡು ಓಡಿಹೋದರೆ, ಕಂಚಿನ ಬಾಣ ಅವನನ್ನು ತಿವಿಯುವುದು.
JOB 20:25 ಅವನು ಆ ಬಾಣವನ್ನು ಎಳೆದರೆ, ಅದು ಬೆನ್ನಿನಿಂದ ಹೊರಡುವುದು; ಅವನ ಪಿತ್ತಕೋಶದಿಂದ ಅದರ ಮಿಂಚುವ ಮೊನೆ ಬರುವುದು; ಸಾವಿನ ಭಯವು ಅವನನ್ನೂ ಆವರಿಸುವುದು.
JOB 20:26 ಅವನ ನಿಕ್ಷೇಪಗಳಲ್ಲಿ ಅಂಧಕಾರವು ಪೂರ್ಣವಾಗಿ ಕವಿಯುವುದು; ಯಾರೂ ಹೊತ್ತಿಸದ ಬೆಂಕಿ ಅವನನ್ನು ದಹಿಸುವುದು; ಅವನ ಗುಡಾರದಲ್ಲಿ ಉಳಿದದ್ದೆಲ್ಲ ನಾಶವಾಗುವುದು.
JOB 20:27 ಆಕಾಶವು ಅವನ ಅಪರಾಧವನ್ನು ಪ್ರಕಟಿಸುವುದು; ಭೂಮಿಯು ಅವನಿಗೆ ವಿರೋಧವಾಗಿ ಏಳುವುದು.
JOB 20:28 ಅವನ ಮನೆಯ ಧನಧಾನ್ಯವು ತೊಲಗಿ ಹೋಗುವುದು; ದೇವದಂಡನೆಯ ದಿನದಲ್ಲಿ ಅದು ಪ್ರವಾಹದಿಂದ ಕೊಚ್ಚಿಕೊಂಡು ಹೋಗುವುದು.
JOB 20:29 ದುಷ್ಟನಿಗೆ ದೇವರಿಂದ ಬರುವ ಪಾಲೂ, ಅವನಿಗೆ ನೇಮವಾಗಿರುವ ಬಾಧ್ಯತೆಯೂ ಇವೇ.”
JOB 21:1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 21:2 “ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ, ಇವು ನೀವು ನನಗೆ ನೀಡುವ ಆದರಣೆಗಳಾಗಿರಲಿ.
JOB 21:3 ನಾನು ಮಾತನಾಡುವಾಗ, ನನ್ನನ್ನು ಸಹಿಸಿಕೊಳ್ಳಿರಿ; ನಾನು ಮಾತನಾಡಿದ ಮೇಲೆ ನೀವು ಪರಿಹಾಸ್ಯ ಮಾಡಬಹುದು.
JOB 21:4 “ನಾನೇನು ಮನುಷ್ಯನ ವಿಷಯವಾಗಿ ದೂರು ಹೇಳುತ್ತಿದ್ದೇನೋ? ನಾನೇಕೆ ಬೇಸರಪಡಬಾರದು.
JOB 21:5 ನನ್ನ ಕಡೆಗೆ ಗಮನಿಸಿರಿ; ನೀವು ನಿಮ್ಮ ಬಾಯಿಯ ಮೇಲೆ ಕೈ ಇಟ್ಟು ಬೆರಗಾಗಿರಿ.
JOB 21:6 ನಾನು ಈ ವಿಷಯವನ್ನು ನೆನಪು ಮಾಡಿಕೊಂಡಾಗ ಭಯಪಡುತ್ತೇನೆ; ನನ್ನ ದೇಹಕ್ಕೆ ನಡುಕ ಹಿಡಿಯುತ್ತದೆ.
JOB 21:7 ದುಷ್ಟರು ವೃದ್ಧರಾಗುವವರೆಗೆ ಏಕೆ ಬದುಕುತ್ತಾರೆ? ಅಂಥವರು ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು?
JOB 21:8 ಅವರೊಂದಿಗೆ ಅವರ ಸಂತಾನದವರು ಅವರ ಮುಂದೆ ಸುಸ್ಥಿರವಾಗುವುದನ್ನೂ, ಅವರ ಮಕ್ಕಳು ನೆಲೆಯಾಗಿರುವುದನ್ನೂ ನೋಡುವರು.
JOB 21:9 ಅವರ ಮನೆ ಸುರಕ್ಷಿತವಾಗಿ ನಿರ್ಭಯದಿಂದಿರುವುದು; ದೇವರ ದಂಡನೆಯ ಕೋಲು ಅವರ ಮೇಲೆ ಬೀಳದಿರುವುದು.
JOB 21:10 ಅವರ ಹೋರಿಯು ಅಭಿವೃದ್ಧಿಯಾಗಿರುವುದು; ಅವರ ಆಕಳು ತಪ್ಪದೆ ಈಯುವುದು.
JOB 21:11 ಅವರ ಮಕ್ಕಳು ಮಂದೆಯಾಗಿ ಹೊರನಡೆಯುತ್ತಾರೆ; ಅವರ ಚಿಕ್ಕವರು ಕುಣಿದಾಡುತ್ತಾ ಹೋಗುತ್ತಾರೆ.
JOB 21:12 ಅವರು ದಮ್ಮಡಿಯಿಂದಲೂ, ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ.
JOB 21:13 ಅವರು ಸಂಪತ್ತಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ; ಕೊನೆಗೆ ಸಮಾಧಾನದಿಂದ ಸಮಾಧಿಗೆ ಸೇರುತ್ತಾರೆ.
JOB 21:14 ಆದರೂ ಇವರು ದೇವರಿಗೆ, ‘ನಮ್ಮನ್ನು ಬಿಟ್ಟುಬಿಡು, ನಿಮ್ಮ ಮಾರ್ಗಗಳ ತಿಳುವಳಿಕೆ ನಮಗೆ ಬೇಡ.
JOB 21:15 ಸರ್ವಶಕ್ತರು ಯಾರು, ನಾವು ಅವರ ಸೇವೆ ಏಕೆ ಮಾಡಬೇಕು? ನಾವು ದೇವರಿಗೆ ಪ್ರಾರ್ಥನೆಮಾಡಿ ನಮಗೆ ಪ್ರಯೋಜನವೇನು?’ ಎಂದಿದ್ದಾರೆ.
JOB 21:16 ಆದರೆ ಅವರ ಸುಖವು ಅವರ ಕೈಯಲ್ಲಿ ಇಲ್ಲ; ಆದ್ದರಿಂದ ಆ ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ.
JOB 21:17 “ಆದರೂ ಎಷ್ಟು ಸಾರಿ ದುಷ್ಟರ ದೀಪವು ಆರಿಹೋಗುತ್ತದೆ? ಎಷ್ಟು ಸಾರಿ ವಿಪತ್ತು ಅವರ ಮೇಲೆ ಬರುತ್ತದೆ? ದೇವರು ವೇದನೆಗಳನ್ನು ತಮ್ಮ ಬೇಸರದಿಂದ ಹಂಚುವುದು ಎಷ್ಟು ಸಾರಿ?
JOB 21:18 ಅವರು ಗಾಳಿಯ ಮುಂದೆ ಹುಲ್ಲಿನ ಹಾಗೆ ಆದದ್ದು ಎಷ್ಟು ಸಾರಿ? ಬಿರುಗಾಳಿಯು ಹೊಡಕೊಂಡು ಹೋಗುವ ಹೊಟ್ಟಿನ ಹಾಗೆ ಕೊಚ್ಚಿಕೊಂಡು ಹೋದದ್ದು ಎಷ್ಟು ಸಾರಿ?
JOB 21:19 ‘ದೇವರು ದುಷ್ಟರ ಮಕ್ಕಳಿಗೆ ಅವರ ಅಪರಾಧ ಫಲವನ್ನು ಕಾದಿಡುತ್ತಾರೆ,’ ಎಂದು ಹೇಳುತ್ತಾರಲ್ಲಾ? ಆ ದುಷ್ಟರು ಅನುಭವಿಸುವ ಹಾಗೆ ದೇವರು ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸಲಿ.
JOB 21:20 ದುಷ್ಟರು ತಮ್ಮ ವಿನಾಶವನ್ನು ತಾವಾಗಿಯೇ ನೋಡಲಿ; ಸರ್ವಶಕ್ತರ ದಂಡನೆಯನ್ನು ಅವನು ಅನುಭವಿಸಲಿ.
JOB 21:21 ದುಷ್ಟರಿಗೆ ನೇಮಕವಾದ ತಿಂಗಳುಗಳು ಮುಗಿದು ಹೋದ ಮೇಲೆ ತಾವು ಬಿಟ್ಟುಹೋಗುವ ಕುಟುಂಬದವರ ಚಿಂತೆ ಅವರಿಗೆ ಎಲ್ಲಿ?
JOB 21:22 “ದೇವರಿಗೆ ಅರಿವನ್ನು ಬೋಧಿಸಬಹುದೇ? ಉನ್ನತರಿಗೂ ನ್ಯಾಯತೀರಿಸುವುದು ದೇವರೇ ಅಲ್ಲವೇ?
JOB 21:23 ಒಬ್ಬ ವ್ಯಕ್ತಿಯು ಸುಖವಾಗಿಯೂ, ಸಮೃದ್ಧನಾಗಿಯೂ, ನೆಮ್ಮದಿಯಿಂದ ಇರುವಾಗಲೂ ಸಾಯುತ್ತಾನೆ.
JOB 21:24 ಅವನ ದೇಹ ಚೆನ್ನಾಗಿ ಬೆಳೆದು ಪೋಷಣೆಯಾಗಿರುತ್ತದೆ; ಅವನ ಎಲುಬುಗಳು ಮಜ್ಜೆಯಿಂದ ತುಂಬಿರುತ್ತದೆ.
JOB 21:25 ಮತ್ತೊಬ್ಬನು ಎಂದಿಗೂ ಒಳ್ಳೆಯದನ್ನು ಅನುಭವಿಸದೆ, ಕಹಿಯಾದ ಮನೋವ್ಯಥೆಪಡುತ್ತಾ ಸಾಯುತ್ತಾನೆ.
JOB 21:26 ಇವರಿಬ್ಬರೂ ಮಣ್ಣಿಗೆ ಸೇರುತ್ತಾರೆ; ಹುಳುಗಳು ಅವರನ್ನು ಮುತ್ತಿಕೊಳ್ಳುತ್ತವೆ.
JOB 21:27 “ನೋಡಿರಿ, ನಿಮ್ಮ ಆಲೋಚನೆಗಳನ್ನು ನಾನು ಬಲ್ಲೆನು. ನೀವು ನನಗೆ ವಿರೋಧವಾಗಿ ಮಾಡುವ ಕುಯುಕ್ತಿಗಳನ್ನೂ ತಿಳಿದಿದ್ದೇನೆ.
JOB 21:28 ನೀವು, ‘ಪ್ರಧಾನನ ಮನೆ ಈಗ ಎಲ್ಲಿದೆ? ದುಷ್ಟರು ವಾಸಿಸಿದ ಗುಡಾರ ಎಲ್ಲಿ?’ ಎನ್ನುತ್ತೀರಿ.
JOB 21:29 ಮಾರ್ಗದಲ್ಲಿ ಹಾದು ಹೋಗುವವರನ್ನು ನೀವು ವಿಚಾರಿಸಲಿಲ್ಲವೋ? ಅವರ ಅನುಭವಗಳು ನಿಮಗೆ ಹಿಡಿಸಲಿಲ್ಲವೋ?
JOB 21:30 ಹೀಗೆ ಆಪತ್ತಿನ ದಿನ ದುಷ್ಟರು ತಪ್ಪಿಸಿಕೊಳ್ಳುತ್ತಾರೆ; ದೇವರ ದಂಡನೆಯ ದಿನದಲ್ಲಿ ಅವರು ಬಿಡುಗಡೆಯಾಗುತ್ತಾರೆ.
JOB 21:31 ದುಷ್ಟರ ಮಾರ್ಗವನ್ನು ಮುಖಾಮುಖಿಯಾಗಿ ಅವರಿಗೆ ತೋರಿಸುವವರು ಯಾರು? ಅವರು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿ ತೀರಿಸುವವರು ಯಾರು?
JOB 21:32 ದುಷ್ಟರನ್ನು ಸಮಾಧಿಗೆ ಒಯ್ಯುತ್ತಾರೆ. ಅವರ ಗೋರಿಗೆ ಕಾವಲು ಇಡುತ್ತಾರೆ.
JOB 21:33 ಕಣಿವೆಯಲ್ಲಿನ ಮಣ್ಣು ಅವರಿಗೆ ಸಿಹಿಯಾಗಿರುತ್ತದೆ; ಪ್ರತಿಯೊಬ್ಬರೂ ಅವರನ್ನು ಹಿಂಬಾಲಿಸುತ್ತಾರೆ. ಹೀಗೆ ಅವರನ್ನು ಲೆಕ್ಕವಿಲ್ಲದಷ್ಟು ಜನರು ಹಿಂಬಾಲಿಸುತ್ತಾರೆ.
JOB 21:34 “ವ್ಯರ್ಥವಾದ ನಿಮ್ಮ ಮಾತುಗಳಿಂದ ನೀವು ನನ್ನನ್ನು ಸಂತೈಸುವುದು ಹೇಗೆ? ನಿಮ್ಮ ಉತ್ತರಗಳಲ್ಲಿ ವಿಶ್ವಾಸದ್ರೋಹ ಬಿಟ್ಟು ಮತ್ತೇನೂ ಉಳಿದಿರುವುದಿಲ್ಲ.”
JOB 22:1 ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು:
JOB 22:2 “ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?
JOB 22:3 ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ? ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು?
JOB 22:4 “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?
JOB 22:5 ನಿನ್ನ ದುಷ್ಟತನವು ಬಹಳವಲ್ಲವೋ? ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ.
JOB 22:6 ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ; ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ.
JOB 22:7 ನೀನು ದಣಿದವರಿಗೆ ನೀರು ಕೊಡಲಿಲ್ಲ; ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ.
JOB 22:8 ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ, ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ,
JOB 22:9 ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ; ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ.
JOB 22:10 ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ; ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ.
JOB 22:11 ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು; ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು.
JOB 22:12 “ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ? ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ!
JOB 22:13 ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ?
JOB 22:14 ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?
JOB 22:15 ದುಷ್ಟರು ಮೊದಲಿನಿಂದಲೂ ನಡೆದ ದಾರಿಯಲ್ಲಿ ನೀನು ನಡೆಯುವಿಯಾ?
JOB 22:16 ಅಕಾಲ ಮರಣವು ಅವರನ್ನು ಅಪಹರಿಸಿತು; ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು.
JOB 22:17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು! ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು.
JOB 22:18 ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
JOB 22:19 ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು. ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು:
JOB 22:20 ‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು. ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’
JOB 22:21 “ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು; ಇದರಿಂದ ನಿನಗೆ ಸಮೃದ್ಧಿ ಬರುವುದು.
JOB 22:22 ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು; ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
JOB 22:23 ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ, ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ, ನೀನು ಪುನಃಸ್ಥಾಪಿತವಾಗುವೆ.
JOB 22:24 ನೀನು ಬಂಗಾರವನ್ನು ಧೂಳಿನಂತೆಯೂ, ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು.
JOB 22:25 ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು. ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು.
JOB 22:26 ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ. ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ.
JOB 22:27 ನೀನು ದೇವರಿಗೆ ಪ್ರಾರ್ಥನೆಮಾಡುವೆ, ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು; ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ.
JOB 22:28 ನೀನು ಏನಾದರೂ ನಿರ್ಣಯಿಸಿದ್ದರೆ, ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
JOB 22:29 ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು, ದೇವರು ಬಿದ್ದವರನ್ನು ರಕ್ಷಿಸುವರು.
JOB 22:30 ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ; ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”
JOB 23:1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 23:2 “ಇಂದಿಗೂ ನನ್ನ ದೂರು ಕಹಿಯಾಗಿದೆ; ನಾನು ನಿಟ್ಟುಸಿರಿಟ್ಟರೂ ದೇವರ ಹಸ್ತವು ಭಾರವಾಗಿದೆ.
JOB 23:3 ದೇವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ಎಷ್ಟೋ ಒಳ್ಳೆಯದು! ಸಾಧ್ಯವಾದರೆ ನಾನು ದೇವರು ವಾಸಿಸುವ ಸ್ಥಳದ ತನಕ ಹೋಗುತ್ತಿದ್ದೆ.
JOB 23:4 ನನ್ನ ನ್ಯಾಯವನ್ನು ದೇವರ ಮುಂದೆ ವಿವರಿಸುತ್ತಿದ್ದೆ; ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುತ್ತಿದ್ದೆ.
JOB 23:5 ದೇವರು ನನಗೆ ಉತ್ತರವಾಗಿ ಕೊಡುವ ಮಾತುಗಳನ್ನು ಕಂಡುಹಿಡಿದು, ದೇವರು ನನಗೆ ಹೇಳುವುದನ್ನು ಪರಿಗಣಿಸುತ್ತಿದ್ದೆ.
JOB 23:6 ದೇವರು ನನ್ನನ್ನು ಕಠಿಣವಾಗಿ ವಿರೋಧಿಸುತ್ತಾರೋ? ಇಲ್ಲ, ಖಂಡಿತವಾಗಿ ಅವರು ನನ್ನ ವಿರುದ್ಧ ಆರೋಪಗಳನ್ನು ಹೊರಿಸುವುದಿಲ್ಲ.
JOB 23:7 ದೇವರ ಸನ್ನಿಧಿಯಲ್ಲಿ ಯಥಾರ್ಥವಂತನು ತಾನು ನಿರಪರಾಧಿ ಎಂದು ದೃಢಪಡಿಸಲು ಸಾಧ್ಯ; ಅಲ್ಲಿ ನನಗೆ ನನ್ನ ನ್ಯಾಯಾಧಿಪತಿಯಿಂದ ಶಾಶ್ವತವಾಗಿ ಬಿಡುಗಡೆಯಾಗುವುದು.
JOB 23:8 “ಒಂದು ವೇಳೆ ನಾನು ಪೂರ್ವದೆಡೆಗೆ ಹೋದರೂ ದೇವರು ನನಗೆ ಕಾಣಿಸುವುದಿಲ್ಲ; ಪಶ್ಚಿಮದೆಡೆಗೆ ಹೋದರೂ ದೇವರು ಕಾಣಿಸುವುದಿಲ್ಲ.
JOB 23:9 ಉತ್ತರದಲ್ಲಿ ಹುಡುಕಿದರೂ ದೇವರನ್ನು ನೋಡಲಾರೆನು; ದಕ್ಷಿಣದೆಡೆಗೆ ತಿರುಗಿಕೊಂಡರೂ ದೇವರು ಕಾಣಿಸುವುದಿಲ್ಲ.
JOB 23:10 ಆದರೆ ದೇವರು ನಾನು ಹೋಗುವ ಮಾರ್ಗವನ್ನು ತಿಳಿದಿದ್ದಾರೆ; ದೇವರು ನನ್ನನ್ನು ಪರೀಕ್ಷಿಸಿದಾಗ, ನಾನು ಚೊಕ್ಕ ಬಂಗಾರವಾಗಿ ಹೊರಗೆ ಬರುವೆನು.
JOB 23:11 ನನ್ನ ಪಾದಗಳು ದೇವರ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಅನುಸರಿಸಿವೆ; ದೇವರ ಮಾರ್ಗವನ್ನು ಬಿಟ್ಟು ನಾನು ತೊಲಗದಂತೆ ನೋಡಿಕೊಂಡೆನು.
JOB 23:12 ದೇವರ ತುಟಿಗಳ ಆಜ್ಞೆಯಿಂದ ನಾನು ಹಿಂಜರಿಯಲಿಲ್ಲ; ನನ್ನ ದೈನಂದಿನ ಆಹಾರಕ್ಕಿಂತ ದೇವರ ಬಾಯಿಯ ಮಾತುಗಳನ್ನು ನನ್ನೆದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.
JOB 23:13 “ಆದರೆ ದೇವರು ಬದಲಾಗದವರು; ದೇವರನ್ನು ಬದಲಾಯಿಸುವವರು ಯಾರು? ದೇವರು ತಾವು ಬಯಸಿದ್ದನ್ನು ಮಾಡುತ್ತಾರೆ.
JOB 23:14 ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ. ಇಂಥ ಅನೇಕ ಯೋಜನೆಗಳು ದೇವರಲ್ಲಿವೆ.
JOB 23:15 ಆದ್ದರಿಂದ ನಾನು ದೇವರ ಮುಂದೆ ಗಾಬರಿಗೊಳ್ಳುತ್ತೇನೆ; ಇದನ್ನೆಲ್ಲಾ ಗ್ರಹಿಸಿಕೊಳ್ಳುವಾಗ ನಾನು ದೇವರಿಗೆ ಭಯಪಡುತ್ತೇನೆ.
JOB 23:16 ದೇವರು ನನ್ನ ಹೃದಯವನ್ನು ಹೆದರಿಸಿದ್ದಾರೆ; ಸರ್ವಶಕ್ತರು ನನ್ನನ್ನು ಗಾಬರಿಪಡಿಸಿದ್ದಾರೆ.
JOB 23:17 ಆದರೂ ನಾನು ಅಂಧಕಾರದಿಂದ ಮೌನವಾಗಲಿಲ್ಲ; ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲಿನ ನಿಮಿತ್ತ ನಾನು ಮಾತಾಡದೆ ಇರುವುದಿಲ್ಲ.
JOB 24:1 “ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ? ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?
JOB 24:2 ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ, ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.
JOB 24:3 ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
JOB 24:4 ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ; ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.
JOB 24:5 ಕಾಡುಕತ್ತೆಗಳ ಹಾಗೆ ಬಡವರು ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ; ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.
JOB 24:6 ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.
JOB 24:7 ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ; ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.
JOB 24:8 ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ; ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.
JOB 24:9 ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ; ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
JOB 24:10 ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ; ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.
JOB 24:11 ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ; ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.
JOB 24:12 ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ; ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ; ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.
JOB 24:13 “ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ; ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು; ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.
JOB 24:14 ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.
JOB 24:15 ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು. ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ; ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.
JOB 24:16 ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ. ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ; ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.
JOB 24:17 ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು; ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.
JOB 24:18 “ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ. ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ, ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.
JOB 24:19 ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.
JOB 24:20 ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು; ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು; ಇನ್ನು ಅವರ ನೆನಪು ಇರುವುದಿಲ್ಲ; ಮರದ ಹಾಗೆ ದುಷ್ಟರು ಮುರಿದುಹೋಗುವರು.
JOB 24:21 ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ; ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.
JOB 24:22 ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ; ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.
JOB 24:23 ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು; ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.
JOB 24:24 ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ; ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆ ಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.
JOB 24:25 “ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು? ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”
JOB 25:1 ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 25:2 “ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ; ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.
JOB 25:3 ದೇವರ ಸೈನ್ಯಗಳಿಗೆ ಲೆಕ್ಕ ಉಂಟೋ? ಯಾರ ಮೇಲೆ ದೇವರ ಬೆಳಕು ಮೂಡುವುದಿಲ್ಲ?
JOB 25:4 ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ಪರಿಶುದ್ಧನಾಗಿರುವುದು ಹೇಗೆ?
JOB 25:5 ಇಗೋ, ಚಂದ್ರನೂ ಪ್ರಕಾಶಮಾನವಾಗಿರುವದಿಲ್ಲ; ನಕ್ಷತ್ರಗಳಾದರೂ ದೇವರ ದೃಷ್ಟಿಗೆ ಶುದ್ಧವಾದವುಗಳಲ್ಲ.
JOB 25:6 ಹೀಗಿರುವಲ್ಲಿ ಹುಳುವಿನಂಥ ಮನುಷ್ಯನು ದೇವರ ದೃಷ್ಟಿಯಲ್ಲಿ ಎಷ್ಟೋ ಕಡಿಮೆ! ಕ್ರಿಮಿಯಂಥ ಮನವರು ಎಷ್ಟೋ ಅಲ್ಪರು!”
JOB 26:1 ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
JOB 26:2 “ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ? ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ?
JOB 26:3 ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ? ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ.
JOB 26:4 ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು? ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು?
JOB 26:5 “ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವ ಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ.
JOB 26:6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ; ನಾಶಲೋಕವು ದೇವರಿಗೆ ಮರೆಯಾಗಿಲ್ಲ.
JOB 26:7 ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ; ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ.
JOB 26:8 ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ; ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ.
JOB 26:9 ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ. ಅದರ ಮುಂದೆ ಮೋಡವನ್ನು ಕವಿಸುತ್ತಾರೆ.
JOB 26:10 ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ, ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.
JOB 26:11 ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ; ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.
JOB 26:12 ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ; ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ.
JOB 26:13 ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ; ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ.
JOB 26:14 ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ; ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ; ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”
JOB 27:1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
JOB 27:2 ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ, ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,
JOB 27:3 “ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ; ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.
JOB 27:4 ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ. ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.
JOB 27:5 ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ; ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.
JOB 27:6 ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ; ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ; ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.
JOB 27:7 “ನನ್ನ ಶತ್ರು ದುಷ್ಟನ ಹಾಗಿರಲಿ; ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.
JOB 27:8 ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ, ಅವನಿಗೆ ನಿರೀಕ್ಷೆ ಎಲ್ಲಿ?
JOB 27:9 ಭಕ್ತಿಹೀನನಿಗೆ ಯಾತನೆ ಬಂದರೆ, ದೇವರು ಅವನ ಮೊರೆಯನ್ನು ಕೇಳುವರೋ?
JOB 27:10 ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?
JOB 27:11 “ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು; ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.
JOB 27:12 ನೀವೆಲ್ಲರೂ ಇದನ್ನು ನೋಡಿದ್ದರೂ, ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?
JOB 27:13 “ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ; ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:
JOB 27:14 ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು; ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.
JOB 27:15 ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು; ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
JOB 27:16 ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ, ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,
JOB 27:17 ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು; ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
JOB 27:18 ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ, ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.
JOB 27:19 ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು; ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.
JOB 27:20 ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು; ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.
JOB 27:21 ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು; ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.
JOB 27:22 ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು, ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.
JOB 27:23 ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು; ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”
JOB 28:1 ಬೆಳ್ಳಿ ದೊರಕುವ ಗಣಿ ಇದೆ. ಬಂಗಾರ ಪರಿಷ್ಕರಿಸಲು ಸ್ಥಳವೂ ಇದೆ.
JOB 28:2 ಕಬ್ಬಿಣವನ್ನು ಭೂಮಿಯಿಂದ ತೆಗೆಯುತ್ತಾರೆ; ಅದಿರನ್ನು ತಾಮ್ರವಾಗಲು ಕರಗಿಸುತ್ತಾರೆ.
JOB 28:3 ಮನುಷ್ಯರು ಕತ್ತಲನ್ನು ಹೋಗಲಾಡಿಸುತ್ತಾರೆ; ಕಾರ್ಗತ್ತಲಲ್ಲಿಯೂ ಮರೆಯಾಗಿರುವ ಲೋಹಗಳಿಗಾಗಿ ಭೂಮಿಯ ಆಳ ಪ್ರದೇಶದೊಳಗೆ ಅವರು ಶೋಧಿಸುತ್ತಾರೆ.
JOB 28:4 ಜನ ನಿವಾಸದಿಂದ ದೂರವಾಗಿ ಗಣಿ ತೋಡಿ, ಮನುಷ್ಯರು ನಡೆದಾಡದ ಸ್ಥಳಗಳಲ್ಲಿ ಇತರರಿಂದ ಪ್ರತ್ಯೇಕವಾಗಿ ಕೆಲಸ ಮಾಡುತ್ತಾರೆ.
JOB 28:5 ಭೂಮಿ ಆಹಾರವನ್ನು ಕೊಡುತ್ತದೆ; ಆದರೆ ಅದರ ಕೆಳಭಾಗವು ಬೆಂಕಿಯ ಹಾಗೆ ಬದಲಾಗುವುದು.
JOB 28:6 ಭೂಮಿಯ ಬಂಡೆಗಳು ಇಂದ್ರನೀಲಗಳು ಸಿಗುತ್ತವೆ; ಅದರ ಧೂಳಿನಲ್ಲಿ ಬಂಗಾರದ ಗಟ್ಟಿಗಳು ಇರುತ್ತವೆ.
JOB 28:7 ಆ ದಾರಿ ಯಾವ ಪಕ್ಷಿಗೂ ತಿಳಿಯದು; ಹದ್ದಿನ ಕಣ್ಣು ಸಹ ಅದನ್ನು ಕಂಡಿಲ್ಲ.
JOB 28:8 ಕಾಡುಮೃಗಗಳು ಅದರ ಮೇಲೆ ನಡೆಯಲಿಲ್ಲ; ಸಿಂಹವು ಅದನ್ನು ದಾಟಲಿಲ್ಲ.
JOB 28:9 ಮಾನವನ ಹಸ್ತವು ಬಂಡೆಗಳನ್ನು ಒಡೆಯುತ್ತದೆ; ಪರ್ವತಗಳ ಬುಡಗಳನ್ನು ಸಹ ಬರಿದಾಗಿ ಮಾಡುತ್ತವೆ.
JOB 28:10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುತ್ತಾರೆ; ಅವರ ಕಣ್ಣು ಅದರ ಎಲ್ಲಾ ಸಂಪತ್ತನ್ನು ನೋಡುತ್ತದೆ.
JOB 28:11 ಜನರು ನದಿಗಳ ಮೂಲಗಳನ್ನು ಹುಡುಕುತ್ತಾರೆ; ಅಡಗಿದ್ದ ಸಂಗತಿಗಳನ್ನು ಬೆಳಕಿಗೆ ತರುತ್ತಾರೆ.
JOB 28:12 ಆದರೆ ಜ್ಞಾನವು ಎಲ್ಲಿ ದೊರಕುವುದು? ಗ್ರಹಿಕೆ ಇರುವ ಸ್ಥಳ ಎಲ್ಲಿ?
JOB 28:13 ಜ್ಞಾನದ ಮೌಲ್ಯ ಯಾರಿಗೂ ಗೊತ್ತಿಲ್ಲ; ಜೀವಿಸುವವರಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
JOB 28:14 ಸಾಗರ, “ಜ್ಞಾನವು ನನ್ನ ಹತ್ತಿರ ಇಲ್ಲ,” ಎನ್ನುತ್ತದೆ; ಸಮುದ್ರವು, “ಜ್ಞಾನವು ನನ್ನ ಬಳಿಯಲ್ಲಿ ಇಲ್ಲ,” ಎನ್ನುತ್ತದೆ.
JOB 28:15 ಚೊಕ್ಕ ಬಂಗಾರಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲಾಗದು; ಜ್ಞಾನದ ಬೆಲೆಗೆ ಬೆಳ್ಳಿಯನ್ನು ತೂಕಮಾಡಲಾಗದು.
JOB 28:16 ಜ್ಞಾನವನ್ನು ಓಫಿರಿನ ಬಂಗಾರಕ್ಕೂ, ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.
JOB 28:17 ಬಂಗಾರವೂ, ಸ್ಪಟಿಕವೂ ಜ್ಞಾನಕ್ಕೆ ಸಮವಾಗಿರುವುದಿಲ್ಲ; ಬಂಗಾರದ ಆಭರಣಗಳು ಸಹ ಜ್ಞಾನಕ್ಕೆ ಸಮವಲ್ಲ.
JOB 28:18 ಹವಳವೂ, ಸೂರ್ಯಕಾಂತ ಶಿಲೆಯೂ ಜ್ಞಾನಕ್ಕೆ ಹೋಲಿಸಲು ಅರ್ಹವಲ್ಲ; ಜ್ಞಾನದ ಬೆಲೆಯು ಮಾಣಿಕ್ಯಗಳಿಗಿಂತ ಎಷ್ಟೋ ಶ್ರೇಷ್ಠ!
JOB 28:19 ಕೂಷ್ ದೇಶದ ಪುಷ್ಯರಾಗವು ಸಹ ಜ್ಞಾನಕ್ಕೆ ಹೋಲಿಸಲಾಗುವುದಿಲ್ಲ; ಶುದ್ಧ ಬಂಗಾರದಿಂದಲೂ ಜ್ಞಾನವನ್ನು ಕೊಂಡುಕೊಳ್ಳಲಾಗದು.
JOB 28:20 ಆದರೆ ಜ್ಞಾನವು ಎಲ್ಲಿಂದ ಬರುವುದು? ಗ್ರಹಿಕೆಯ ಸ್ಥಳವು ಎಲ್ಲಿ?
JOB 28:21 ಎಲ್ಲಾ ಜೀವಿಗಳ ಕಣ್ಣಿಗೂ ಜ್ಞಾನ ಮರೆಯಾಗಿದೆ; ಆಕಾಶದ ಪಕ್ಷಿಗಳಿಗೂ ಅದು ಗೋಚರವಾಗದು.
JOB 28:22 ನಾಶಲೋಕವೂ ಮರಣವೂ, “ನಾವು ಜ್ಞಾನದ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅಷ್ಟೇ,” ಎನ್ನುತ್ತವೆ.
JOB 28:23 ದೇವರು ಮಾತ್ರ ಜ್ಞಾನ ಮಾರ್ಗವನ್ನು ತಿಳಿದಿರುತ್ತಾರೆ; ಹೌದು, ದೇವರೇ ಜ್ಞಾನ ಸ್ಥಳವನ್ನು ತಿಳಿದಿದ್ದಾರೆ.
JOB 28:24 ದೇವರೊಬ್ಬರೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ, ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವರಾಗಿದ್ದಾರೆ.
JOB 28:25 ದೇವರು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ, ನೀರುಗಳನ್ನು ತಕ್ಕ ಪ್ರಮಾಣಗಳಿಂದ ಅಳತೆಮಾಡಿ,
JOB 28:26 ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ
JOB 28:27 ಜ್ಞಾನವನ್ನು ಕಂಡು ಲಕ್ಷಿಸಿದರು. ಹೌದು, ದೇವರು ಜ್ಞಾನವನ್ನು ದೃಢಪಡಿಸಿದ್ದಲ್ಲದೆ, ಅದನ್ನು ಪರೀಕ್ಷೆಮಾಡಿದರು.
JOB 28:28 ದೇವರು ಮನುಷ್ಯನಿಗೆ, “ಇಗೋ, ಕರ್ತ ದೇವರಲ್ಲಿ ಭಯಭಕ್ತಿ ಇಡುವುದೇ ಜ್ಞಾನ! ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ,” ಎಂದು ಹೇಳಿದರು.
JOB 29:1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
JOB 29:2 “ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು; ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ?
JOB 29:3 ದೇವರ ದೀಪವು ನನ್ನ ತಲೆಯ ಮೇಲೆ ಬೆಳಗುತ್ತಿತ್ತು; ನಾನು ದೇವರ ಬೆಳಕಿನಿಂದ ಕತ್ತಲಲ್ಲಿ ನಡೆಯುತ್ತಿದ್ದೆ.
JOB 29:4 ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಸ್ನೇಹವು ನನ್ನ ಗುಡಾರದ ಮೇಲೆ ಇರುತ್ತಿತ್ತು.
JOB 29:5 ಆಗ ಸರ್ವಶಕ್ತರು ನನ್ನ ಸಂಗಡ ಇರುತ್ತಿದ್ದರು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.
JOB 29:6 ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು; ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು.
JOB 29:7 “ನಾನು ಪಟ್ಟಣದ ಮುಂಬಾಗಿಲಿಗೆ ಹೋದಾಗ, ಬೀದಿಯಲ್ಲಿ ನನ್ನ ಪೀಠದ ಮೇಲೆ ಕುಳಿತುಕೊಂಡಾಗ,
JOB 29:8 ಯುವಕರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು; ವೃದ್ಧರು ಸಹ ಎದ್ದು ನಿಲ್ಲುತ್ತಿದ್ದರು.
JOB 29:9 ಪ್ರಧಾನರು ನುಡಿಗಳನ್ನು ಬಿಗಿ ಹಿಡಿದು, ತಮ್ಮ ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು.
JOB 29:10 ಘನವಂತರು ಮೌನ ತಾಳುತ್ತಿದ್ದರು; ಅವರ ನಾಲಿಗೆ ಅವರ ಬಾಯಿಯ ಅಂಗಳಕ್ಕೆ ಅಂಟಿರುತ್ತಿತ್ತು.
JOB 29:11 ಕೇಳಿದ ಕಿವಿಯು ನನ್ನನ್ನು ಹರಸುತ್ತಿತ್ತು; ನೋಡಿದವರು ನನ್ನನ್ನು ಗೌರವಿಸುತ್ತಿದ್ದರು.
JOB 29:12 ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ನಾನು ರಕ್ಷಿಸುವವನಾಗಿದ್ದೆನು.
JOB 29:13 ಸಾಯುತ್ತಿದ್ದವರ ಆಶೀರ್ವಾದವು ನನ್ನ ಮೇಲೆ ಬರುತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ಮಾಡುತ್ತಿದ್ದೆನು.
JOB 29:14 ನಾನು ನೀತಿಯನ್ನು ನನ್ನ ಬಟ್ಟೆಯಂತೆ ಧರಿಸಿದ್ದೆನು; ನನ್ನ ನ್ಯಾಯವು ನಿಲುವಂಗಿಯ ಹಾಗೆಯೂ ಪೇಟದ ಹಾಗೆಯೂ ಇರುತ್ತಿತ್ತು.
JOB 29:15 ನಾನು ಕುರುಡನಿಗೆ ಕಣ್ಣೂ, ಕುಂಟನಿಗೆ ಕಾಲೂ ಆಗಿದ್ದೆನು.
JOB 29:16 ದರಿದ್ರರಿಗೆ ನಾನು ತಂದೆಯಾಗಿದ್ದೆನು; ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
JOB 29:17 ದುಷ್ಟರ ದವಡೆಗಳನ್ನು ಮುರಿಯುತ್ತಿದ್ದೆನು; ದುಷ್ಟರ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ಬಿಡಿಸುತ್ತಿದ್ದೆನು.
JOB 29:18 “ಆಗ ನಾನು, ‘ನನ್ನ ಮನೆಯಲ್ಲಿಯೇ ನಾನು ಸಾಯುವೆನು; ಮರಳಿನಂತೆ ನನ್ನ ದಿವಸಗಳು ಇರುತ್ತವೆ,
JOB 29:19 ನನ್ನ ಬೇರು ನೀರಿನ ಬಳಿ ಹಬ್ಬಿರುತ್ತದೆ; ರಾತ್ರಿಯಿಡಿ ನನ್ನ ಕೊಂಬೆಯ ಮೇಲೆ ಮಂಜು ಬಿದ್ದಿರುತ್ತದೆ.
JOB 29:20 ನನ್ನ ಘನವು ನನ್ನಲ್ಲಿ ಹೊಸದಾಗಿ ಇರುತ್ತದೆ; ನನ್ನ ಬಿಲ್ಲು ಸಹ ನನ್ನ ಕೈಯಲ್ಲಿ ಎಂದೆಂದಿಗೂ ಬಲಗೊಳ್ಳುತ್ತಾ ಇರುತ್ತದೆ,’ ಎಂದೆಲ್ಲಾ ಹೇಳುತ್ತಿದ್ದೆನು.
JOB 29:21 “ಜನರು ನನಗೆ ಕಿವಿಗೊಟ್ಟು ಎದುರುನೋಡುತ್ತಿದ್ದರು. ನನ್ನ ಆಲೋಚನೆ ಕೇಳಲು ಮೌನವಾಗಿರುತ್ತಿದ್ದರು.
JOB 29:22 ನನ್ನ ಮಾತಿನ ಮೇಲೆ ಅವರು ಬೇರೆ ಮಾತನಾಡುತ್ತಿರಲಿಲ್ಲ; ನನ್ನ ನುಡಿ ಅವರ ಕಿವಿಗೆ ಬೀಳುತ್ತಿತ್ತು.
JOB 29:23 ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು. ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು.
JOB 29:24 ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ; ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು.
JOB 29:25 ನಾನು ಅವರ ಪ್ರಧಾನನಾಗಿ ಕೂತು ಸೈನ್ಯಗಳ ನಡುವೆ ಅರಸನಂತೆ ಆಸೀನನಾಗಿದ್ದೆನು. ನಾನು ದುಃಖಿಸುವವರನ್ನು ಸಂತೈಸುವವನಾಗಿಯೂ ಇದ್ದೆನು.
JOB 30:1 “ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು, ನನ್ನನ್ನು ನೋಡಿ ಪರಿಹಾಸ್ಯ ಮಾಡುತ್ತಾರೆ. ಇವರ ಪಿತೃಗಳನ್ನು ನನ್ನ ಕುರಿಮಂದೆಯ ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆನು.
JOB 30:2 ಇವರ ಕೈಗಳ ಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಚೈತನ್ಯವು ಕುಗ್ಗಿಹೋಗಿತ್ತು!
JOB 30:3 ಅವರು ಬಡತನದಿಂದಲೂ ಹಸಿವಿನಿಂದಲೂ ಬಳಲಿಹೋಗಿದ್ದರು. ನಿರ್ಜನ ಮತ್ತು ಕತ್ತಲೆಯಾದ ಮರುಭೂಮಿಗಳ ಕಡೆಗೆ ಆಹಾರಕ್ಕಾಗಿ ಓಡಾಡುತ್ತಿದ್ದರು.
JOB 30:4 ಪೊದೆಗಳಲ್ಲಿನ ಉಪ್ಪಿನ ಸೊಪ್ಪು ಸಂಗ್ರಹಿಸುತ್ತಿದ್ದರು. ಜಾಲಿಯ ಬೇರುಗಳೇ ಅವರ ಆಹಾರವಾಗಿತ್ತು.
JOB 30:5 ಜನರು ಅವರನ್ನು ಹೊರಗೆ ಹಾಕುತ್ತಿದ್ದರು; ಕಳ್ಳರು ಎಂಬಂತೆ ಅವರನ್ನು ಓಡಿಸುತ್ತಿದ್ದರು.
JOB 30:6 ಆಗ ಅವರು ಭಯಂಕರ ತಗ್ಗುಗಳ ಸಂದುಗಳಲ್ಲಿಯೂ, ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸಿಸುತ್ತಿದ್ದರು.
JOB 30:7 ಪೊದೆಗಳ ನಡುವೆ ಇದ್ದುಕೊಂಡು ಅರಚುತ್ತಿದ್ದರು. ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
JOB 30:8 ಆಗ ಅವರು ಹುಚ್ಚರಂತೆಯೂ ಹೆಸರಿಲ್ಲದ ಮಕ್ಕಳಂತೆಯೂ ನಾಡಿನಿಂದ ಹೊರಗೆ ಅಲೆದಾಡುತ್ತಿದ್ದರು.
JOB 30:9 “ಆದರೆ ಈಗ ನಾನು ಅವರ ಹಾಸ್ಯದ ಹಾಡೂ, ಅವರಿಗೆ ಗಾದೆಯೂ ಆಗಿದ್ದೇನೆ.
JOB 30:10 ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ.
JOB 30:11 ಏಕೆಂದರೆ, ದೇವರು ನನ್ನ ಬಿಲ್ಲಿನ ಹಗ್ಗವನ್ನು ಸಡಲಿಸಿ, ಅವರಿಂದ ನನ್ನನ್ನು ಬಾಧಿಸಿದ್ದಾರೆ. ಆದ್ದರಿಂದ ಈಗ ಅವರು ಯಾವುದೇ ನಿರ್ಬಂಧವಿಲ್ಲದಂತೆ ನನ್ನ ಮೇಲೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ.
JOB 30:12 ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ.
JOB 30:13 ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; ‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ.
JOB 30:14 ಆ ಯುವಕರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬರುತ್ತಿದ್ದಾರೆ; ನಾಶನದಲ್ಲಿರುವ ನನ್ನ ಮೇಲೆ ಅವರು ಉರುಳಿಬೀಳಲಿದ್ದಾರೆ.
JOB 30:15 ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ.
JOB 30:16 “ಆದರೆ ಈಗ ನನ್ನ ಪ್ರಾಣವು ನನ್ನಲ್ಲಿಯೇ ಕರಗಿಹೋಗಿದೆ; ಸಂಕಟದ ದಿವಸಗಳು ನನ್ನನ್ನು ಬಿಗಿಹಿಡಿದಿವೆ.
JOB 30:17 ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ಕೊರೆಯುತ್ತಿವೆ; ನನ್ನ ಸಂಕಟಗಳು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
JOB 30:18 ದೇವರ ಅಧಿಕ ಬಲದಲ್ಲಿ ನನ್ನ ಬಟ್ಟೆಯು ರೋಗದಿಂದ ಬಿಗಿಯಾಗಿ, ಅಂಗಿಯ ಕೊರಳ ಪಟ್ಟಿಯಂತೆ ನನ್ನನ್ನು ಸುತ್ತಿಕೊಂಡಿದೆ.
JOB 30:19 ದೇವರು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾರೆ; ನಾನು ಧೂಳಿಗೂ ಬೂದಿಗೂ ಸಮಾನನಾಗಿದ್ದೇನೆ.
JOB 30:20 “ದೇವರೇ, ನಿಮಗೆ ಮೊರೆಯಿಡುತ್ತೇನೆ ಆದರೆ ನೀವು ನನಗೆ ಉತ್ತರ ಕೊಡುವುದಿಲ್ಲ, ನಾನು ಎದ್ದುನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿರಿ.
JOB 30:21 ನೀವು ನನಗೆ ಕ್ರೂರರಾಗಿದ್ದೀರಿ, ನಿಮ್ಮ ಹಸ್ತ ಶಕ್ತಿಯಿಂದ ನನಗೆ ಹಿಂಸೆಕೊಡುತ್ತೀರಿ.
JOB 30:22 ನನ್ನನ್ನು ಗಾಳಿಗೆ ಎತ್ತಿ ತೂರಿಬಿಟ್ಟಿರುವಿರಿ, ನನ್ನನ್ನು ಬಿರುಗಾಳಿಗೆ ತೊಳಲಾಡುವಂತೆ ಮಾಡಿದ್ದೀರಿ.
JOB 30:23 ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, ಸೇರಿಸುವಿರಿ ಎಂದು ನನಗೆ ಗೊತ್ತಿದೆ.
JOB 30:24 “ಆದರೂ ಮುರಿದ ಮನುಷ್ಯನಾಗಿರುವ ನಾನು ಸಹಾಯಕ್ಕಾಗಿ ಕೈಚಾಚಬಾರದೆ? ಆಪತ್ತಿಗೆ ಒಳಪಟ್ಟವನಾದ ನಾನು ಕೂಗಿಕೊಳ್ಳಬಾರದೆ?
JOB 30:25 ಕಷ್ಟದಲ್ಲಿ ಇದ್ದವರಿಗೋಸ್ಕರ ನಾನು ಕಣ್ಣೀರಿಡಲಿಲ್ಲವೆ? ದರಿದ್ರನಿಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೆ?
JOB 30:26 ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರಲು ಕೇಡು ಬಂದೊದಗಿತು; ನಾನು ಬೆಳಕನ್ನು ಎದುರು ನೋಡಲು, ಅಂಧಕಾರ ಬಂದು ಕವಿಯಿತು.
JOB 30:27 ನನ್ನ ಹೃದಯವು ಯಾವಾಗಲೂ ಅಶಾಂತಿಯಿಂದ ಕುದಿಯುತ್ತಿದೆ; ಸಂಕಟಗಳ ದಿವಸಗಳು ನನ್ನನ್ನು ಎದುರಿಸುತ್ತಿವೆ.
JOB 30:28 ಬಿಸಿಲು ನನ್ನ ಮೇಲೆ ಬೀಳದಿದ್ದರೂ ನಾನು ಕಪ್ಪಾಗಿ ಹೋದೆನು; ನಾನು ಸಭೆಯಲ್ಲಿ ಎದ್ದು ನಿಂತು ಸಹಾಯಕ್ಕಾಗಿ ಕೂಗಿದೆನು.
JOB 30:29 ನಾನು ನರಿಗಳಿಗೆ ಸಹೋದರನಾದೆನು; ಗೂಬೆಗಳಿಗೆ ನಾನು ಜೊತೆಯವನಾದೆನು.
JOB 30:30 ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ.
JOB 30:31 ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ.
JOB 31:1 “ಕನ್ನಿಕೆಯನ್ನು ಕಾಮದೃಷ್ಟಿಯಿಂದ ನೋಡುವುದಿಲ್ಲವೆಂದು ನನ್ನ ಕಣ್ಣುಗಳೊಂದಿಗೆ ನಾನು ಒಡಂಬಡಿಕೆಯನ್ನು ಮಾಡಿಕೊಂಡೆನು.
JOB 31:2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು? ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
JOB 31:3 ದುಷ್ಟರಿಗೆ ವಿಪತ್ತು ಇಲ್ಲವೋ? ಕೆಡುಕರಿಗೆ ವಿನಾಶ ಇಲ್ಲವೋ?
JOB 31:4 ದೇವರು ನನ್ನ ಮಾರ್ಗಗಳನ್ನು ನೋಡಿ, ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಾರಲ್ಲವೆ?
JOB 31:5 “ನಾನು ಕಪಟವಾಗಿ ನಡೆದುಕೊಂಡಿದ್ದರೆ, ಮೋಸಕ್ಕೆ ನನ್ನ ಕಾಲು ತ್ವರೆಪಟ್ಟಿದ್ದರೆ,
JOB 31:6 ದೇವರು ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗಿ ನೋಡಲಿ; ನಾನು ನಿರ್ದೋಷಿ ಎಂದು ದೇವರು ತಿಳಿದುಕೊಳ್ಳಲಿ.
JOB 31:7 ನಾನು ದಾರಿತಪ್ಪಿ ನಡೆದಿದ್ದರೆ, ನನ್ನ ಕಣ್ಣು ಕಂಡವುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಅಂಟಿಕೊಂಡಿದ್ದರೆ,
JOB 31:8 ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ; ನನ್ನ ಬೆಳೆಯು ಬುಡಮೇಲಾಗಲಿ.
JOB 31:9 “ನನ್ನ ಹೃದಯವು ಪರಸ್ತ್ರೀಗೆ ಮರುಳಾಗಿ, ನನ್ನ ನೆರೆಯವನ ಬಾಗಿಲ ಹತ್ತಿರ ನಾನು ಹೊಂಚುಹಾಕಿದ್ದರೆ,
JOB 31:10 ನನ್ನ ಹೆಂಡತಿ ಮತ್ತೊಬ್ಬನಿಗೋಸ್ಕರ ಧಾನ್ಯಬೀಸಲಿ, ಮತ್ತೊಬ್ಬರು ಅವಳ ಸಂಗಡ ಮಲಗಲಿ.
JOB 31:11 ಏಕೆಂದರೆ ನಾನು ಹಾಗೆಲ್ಲಾ ಮಾಡಿದ್ದರೆ, ಅಂಥ ನಡತೆ ದುಷ್ಕಾರ್ಯವಾಗುತ್ತಿತ್ತು, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು.
JOB 31:12 ಅದು ನಾಶಲೋಕದವರೆಗೆ ದಹಿಸುವಂಥಾ ಅಗ್ನಿಯಾಗುತ್ತಿತ್ತು, ಅದು ನನ್ನ ಆದಾಯವನ್ನೆಲ್ಲಾ ನಿರ್ಮೂಲ ಮಾಡುತ್ತಿತ್ತು.
JOB 31:13 “ಒಂದು ವೇಳೆ ನನಗೂ ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ,
JOB 31:14 ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡುತ್ತಿದ್ದೆನು? ದೇವರು ವಿಚಾರಿಸುವಾಗ, ನಾನು ಅವರಿಗೆ ಏನು ಉತ್ತರಕೊಡುತ್ತಿದ್ದೆನು?
JOB 31:15 ಗರ್ಭದಲ್ಲಿ ನನ್ನನ್ನು ಉಂಟುಮಾಡಿದ ದೇವರೇ ಅವರನ್ನೂ ಉಂಟು ಮಾಡಿದ್ದಾರಲ್ಲವೇ? ಅವರನ್ನೂ, ನನ್ನನ್ನೂ ತಾಯಂದಿರ ಗರ್ಭದಲ್ಲಿ ರೂಪಿಸಿದ ದೇವರು ಒಬ್ಬರೇ ಅಲ್ಲವೇ?
JOB 31:16 “ನಾನು ಬಡವರ ಬಯಕೆಗಳನ್ನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನ್ನು ನಾನು ಮಂಕಾಗಿಸಿದೆನೋ?
JOB 31:17 ದಿಕ್ಕಿಲ್ಲದವರು ಊಟ ಉಣ್ಣದ ಹಾಗೆ, ನಾನು ಮಾತ್ರ ತುತ್ತನ್ನೆಲ್ಲಾ ಒಂಟಿಯಾಗಿ ತಿಂದೆನೋ?
JOB 31:18 ಇಲ್ಲಾ, ನನ್ನ ಯೌವನಕಾಲದಿಂದ ನಾನು ಅನಾಥರನ್ನು ತಂದೆಯಂತೆ ಬೆಳೆಸಿದೆನು. ಹುಟ್ಟಿದಂದಿನಿಂದ ವಿಧವೆಯರಿಗೆ ಮಾರ್ಗದರ್ಶಿಯಾಗಿದ್ದೆನು.
JOB 31:19 ಬಟ್ಟೆ ಇಲ್ಲದೆ ಕಷ್ಟಪಡುವವರನ್ನೂ, ಹೊದಿಕೆ ಇಲ್ಲದೆ ನಡುಗುವವರನ್ನೂ ನಾನು ನೋಡಿದಾಗೆಲ್ಲಾ,
JOB 31:20 ಆ ಬಡವರು ನನ್ನ ಕುರಿ ಉಣ್ಣೆಯಿಂದ ಬೆಚ್ಚಗಾಗಿ, ತಮ್ಮ ಅಂತರಾಳದಿಂದ ನನ್ನನ್ನು ಹರಸಲಿಲ್ಲವೋ?
JOB 31:21 ನ್ಯಾಯಸ್ಥಾನದಲ್ಲಿ ನನಗೆ ಬೆಂಬಲ ಉಂಟೆಂದು ಕಂಡು, ನಾನು ದಿಕ್ಕಿಲ್ಲದವರ ಮೇಲೆ ನನ್ನ ಕೈಮಾಡಿದ್ದರೆ,
JOB 31:22 ನನ್ನ ಹೆಗಲು, ಬೆನ್ನಿನ ಕೀಲು ತಪ್ಪಿಹೋಗಲಿ; ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.
JOB 31:23 ಏಕೆಂದರೆ ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗೆ ಹೆದರಿಕೆಯಾಯಿತು; ದೇವರ ಪ್ರಭಾವದ ಭಯದ ನಿಮಿತ್ತ ನಾನು ಇಂಥ ಕೃತ್ಯವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ.
JOB 31:24 “ನಾನು ಬಂಗಾರದಲ್ಲಿ ನನ್ನ ನಿರೀಕ್ಷೆಯನ್ನು ಇಟ್ಟಿದ್ದರೆ, ಅಪರಂಜಿಗೆ, ‘ನೀನು ನನ್ನ ಭದ್ರತೆ,’ ಎಂದು ಹೇಳಿದ್ದರೆ,
JOB 31:25 ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ, ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ,
JOB 31:26 ನಾನು ಸೂರ್ಯನು ಹೊಳೆಯುವುದನ್ನು ಗಮನಿಸಿ, ಚಂದ್ರನು ಪ್ರಭೆಯಲ್ಲಿ ಚಲಿಸುವುದನ್ನು ನೋಡಿ,
JOB 31:27 ನನ್ನ ಹೃದಯವು ಮರುಳುಗೊಂಡು, ನನ್ನ ಕೈ ಅವುಗಳನ್ನು ನನ್ನ ಬಾಯಿಂದ ಗೌರವದಿಂದ ಮುಗಿದಿದ್ದರೆ,
JOB 31:28 ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು; ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು.
JOB 31:29 “ವೈರಿಯ ನಾಶಕ್ಕೆ ನಾನು ಸಂತೋಷಪಟ್ಟು, ವೈರಿಗೆ ಕೇಡು ಬಂದಾಗ ಹಿಗ್ಗಿಕೊಂಡು ಗರ್ವಪಟ್ಟೆನೋ?
JOB 31:30 ಇಲ್ಲ, ಅವನ ಸಾಯಲಿ ಎಂದು ನಾನು ಶಾಪ ಕೊಡಲಿಲ್ಲ. ನಾನು ನನ್ನ ಬಾಯಿಂದ ಅಂಥ ಪಾಪಮಾಡಲಿಲ್ಲ.
JOB 31:31 ನನ್ನ ಮನೆಯ ಕೆಲಸದವರು, ‘ಯೋಬನು ನೀಡಿದ ಭೋಜನದಿಂದ ತೃಪ್ತರಾಗದವರು ಯಾರು?’ ಎಂದು ಹೇಳಿಕೊಳ್ಳುತ್ತಿದ್ದರಲ್ಲವೆ?
JOB 31:32 ಆದರೆ ಯಾವ ಪರದೇಶಸ್ಥರೂ ಬೀದಿಯಲ್ಲಿ ತಂಗಬೇಕಾಗಿರಲಿಲ್ಲ; ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿಟ್ಟಿದ್ದೆನು.
JOB 31:33 ನಾನು ಹೃದಯದಲ್ಲಿ ನನ್ನ ಅಪರಾಧ ಪ್ರಜ್ಞೆಯನ್ನು ಅಡಗಿಸಿ, ಮಾನವರಂತೆ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.
JOB 31:34 ನಾನು ದೊಡ್ಡ ಸಮೂಹಕ್ಕೆ ಹೆದರಿದೆನೋ? ಕುಲಗಳ ಅವಹೇಳನಕ್ಕೆ ಕಳವಳಗೊಂಡರೂ, ಬಾಗಿಲಿನಿಂದ ಹೊರಗೆ ಹೋಗದೆ ಮೌನವಾಗಿದ್ದೆನೋ?
JOB 31:35 “ನನ್ನ ಕರೆಗೆ ಕಿವಿಗೊಡತಕ್ಕವರು ಒಬ್ಬರು ಈಗ ಇದ್ದರೆ ಎಷ್ಟೋ ಲೇಸು! ಸರ್ವಶಕ್ತರು ನನಗೆ ಉತ್ತರಕೊಡಲಿ; ನನ್ನ ವಿರೋಧಿಯು ನನ್ನ ಆಪಾದನಾ ಪತ್ರವನ್ನು ಬರೆದು ಕೊಡಲಿ.
JOB 31:36 ನಾನು ನನ್ನ ಹೆಗಲಲ್ಲಿ ಆ ಲಿಖಿತವನ್ನು ನಿಶ್ಚಯವಾಗಿ ಹೊತ್ತು ನಡೆಯುತ್ತಿದ್ದೆ; ಅದನ್ನು ಕಿರೀಟವಾಗಿ ಧರಿಸಿಕೊಳ್ಳುತ್ತಿದ್ದೆನು.
JOB 31:37 ನನ್ನ ಹೆಜ್ಜೆಗಳ ಲೆಕ್ಕವನ್ನು ದೇವರಿಗೆ ಒಪ್ಪಿಸುತ್ತಿದ್ದೆನು; ಒಬ್ಬ ಅಧಿಪತಿಯಂತೆ ನಾನು ದೇವರನ್ನು ಸಮೀಪಿಸುತ್ತಿದ್ದೆನು.
JOB 31:38 “ನನ್ನ ಹೊಲ ನನಗೆ ವಿರೋಧವಾಗಿ ಪ್ರತಿಭಟಿಸಿದ್ದರೆ, ಅದರ ನೇಗಿಲ ಗೆರೆಗಳೆಲ್ಲಾ ದೂರಿ ಅಳುತ್ತಿದ್ದರೆ,
JOB 31:39 ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ, ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ,
JOB 31:40 ಗೋಧಿಗೆ ಬದಲಾಗಿ ಮುಳ್ಳುಗಳೂ, ಜವೆಗೋಧಿಗೆ ಬದಲಾಗಿ ಕಳೆಗಳೂ ಬೆಳೆಯಲಿ.” ಹೀಗೆ ಯೋಬನ ಮಾತುಗಳು ಮುಗಿದವು.
JOB 32:1 ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.
JOB 32:2 ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.
JOB 32:3 ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.
JOB 32:4 ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.
JOB 32:5 ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು.
JOB 32:6 ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: “ನಾನು ಪ್ರಾಯದಲ್ಲಿ ಯುವಕನು, ನೀವು ಪ್ರಾಯಸ್ಥರು. ಆದ್ದರಿಂದ ನಾನು ಸಂಕೋಚಗೊಂಡು ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು.
JOB 32:7 ‘ದಿನ ಗತಿಸಿದವರು ಮಾತನಾಡಲಿ, ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು.
JOB 32:8 ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ.
JOB 32:9 ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ.
JOB 32:10 “ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ.
JOB 32:11 ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. ನೀವು ಹೇಳುತ್ತಿದ್ದ ಕಾರಣಗಳನ್ನೂ, ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು.
JOB 32:12 ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ.
JOB 32:13 ‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ.
JOB 32:14 ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ.
JOB 32:15 “ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ.
JOB 32:16 ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?
JOB 32:17 ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು.
JOB 32:18 ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ.
JOB 32:19 ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ.
JOB 32:20 ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು.
JOB 32:21 ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; ನಾನು ಯಾವ ಮನುಷ್ಯನನ್ನು ಹೊಗಳೆನು.
JOB 32:22 ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ.
JOB 33:1 “ಆದ್ದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು. ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
JOB 33:2 ಈಗ ನಾನು ಮಾತಾಡಲು ಪ್ರಾರಂಭಿಸಿದ್ದೇನೆ; ನನ್ನ ಮಾತುಗಳು ನನ್ನ ನಾಲಿಗೆಯ ತುದಿಯಲ್ಲಿವೆ.
JOB 33:3 ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುತ್ತವೆ; ನನ್ನ ತುಟಿಗಳು ನಾನು ತಿಳಿದುಕೊಂಡಿದ್ದನ್ನೇ ಯಥಾರ್ಥವಾಗಿ ಹೇಳುತ್ತವೆ.
JOB 33:4 ದೇವರ ಆತ್ಮರು ನನ್ನನ್ನು ಉಂಟುಮಾಡಿದರು. ಸರ್ವಶಕ್ತರ ಶ್ವಾಸವೇ ನನಗೆ ಜೀವವನ್ನು ಕೊಟ್ಟಿತು.
JOB 33:5 ನಿನಗೆ ಸಾಧ್ಯವಾದರೆ ನನಗೆ ಉತ್ತರಕೊಡು; ನನ್ನ ಎದುರಿನಲ್ಲೇ ನಿನ್ನ ವ್ಯಾಜ್ಯವನ್ನು ವಾದಿಸು.
JOB 33:6 ನೋಡು, ದೇವರ ದೃಷ್ಟಿಯಲ್ಲಿ ನಾನು ನಿನ್ನಂತೆಯೇ ಇದ್ದೇನೆ; ನಾನು ಸಹ ಜೇಡಿಮಣ್ಣಿನಿಂದ ರೂಪಿತವಾಗಿದ್ದೇನೆ.
JOB 33:7 ಆದ್ದರಿಂದ ನನ್ನ ಭೀತಿ ನಿನ್ನನ್ನು ಎಚ್ಚರಿಸದಿರಲಿ; ನನ್ನ ಒತ್ತಾಯ ನಿನ್ನ ಮೇಲೆ ಭಾರವಾಗಿರಬಾರದು.
JOB 33:8 “ನಿಶ್ಚಯವಾಗಿ, ನೀನು ಆಡಿದ್ದೆಲ್ಲಾ ನನ್ನ ಕಿವಿಗೆ ಬಿದ್ದಿವೆ. ನಾನೇ ಈ ರೀತಿಯಾಗಿ ನೀನು ಆಡಿದ ಮಾತುಗಳನ್ನು ಕೇಳಿದ್ದೇನೆ:
JOB 33:9 ‘ನಾನು ಶುದ್ಧನು, ನಾನು ತಪ್ಪುಮಾಡಲಿಲ್ಲ; ನಾನು ನಿರ್ದೋಷಿ, ನನ್ನಲ್ಲಿ ಏನೂ ಪಾಪವಿಲ್ಲ.
JOB 33:10 ಆದರೂ ದೇವರು ನನ್ನಲ್ಲಿ ತಪ್ಪು ಕಂಡುಹಿಡಿಯುತ್ತಿದ್ದಾರೆ; ದೇವರು ನನ್ನನ್ನು ಶತ್ರುವೆಂದು ಎಣಿಸುತ್ತಿದ್ದಾರೆ.
JOB 33:11 ದೇವರು ನನ್ನ ಕಾಲುಗಳಿಗೆ ಕೋಳ ಹಾಕಿದ್ದಾರೆ; ದೇವರು ನನ್ನ ಎಲ್ಲಾ ಹಾದಿಗಳನ್ನೂ ಪರಿಶೋಧಿಸುತ್ತಿದ್ದಾರೆ.’
JOB 33:12 “ಹೀಗೆಲ್ಲಾ ನೀನು ಮಾತಾಡಿದ್ದು ಸರಿಯಲ್ಲವೆಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ದೇವರು ಮನುಷ್ಯರಿಗಿಂತ ಬಹಳ ದೊಡ್ಡವರು.
JOB 33:13 ದೇವರು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ಕೊಡಲಿಲ್ಲ ಎಂದು ನೀನು ದೇವರೊಂದಿಗೆ ವ್ಯಾಜ್ಯವಾಡುವುದೇಕೆ?
JOB 33:14 ಏಕೆಂದರೆ ದೇವರು ಮಾತನಾಡುತ್ತಾರೆ. ಹೌದು, ವಿವಿಧ ರೀತಿಯಿಂದ ಮಾತನಾಡುತ್ತಾರೆ; ಆದರೂ ಯಾರು ದೇವರ ಸ್ವರವನ್ನು ಗ್ರಹಿಸಿಕೊಳ್ಳುವುದಿಲ್ಲ.
JOB 33:15 ಸ್ವಪ್ನದಲ್ಲಿ, ರಾತ್ರಿಯ ದರ್ಶನದಲ್ಲಿ, ಗಾಢನಿದ್ರೆಯು ಮನುಷ್ಯರಿಗೆ ಬಂದಾಗ, ಹಾಸಿಗೆಯ ಮೇಲಿನ ತೂಕಡಿಕೆಗಳಲ್ಲಿ ಸಹ,
JOB 33:16 ದೇವರು ಮನುಷ್ಯರ ಕಿವಿಗಳನ್ನು ತೆರೆದು, ಎಚ್ಚರಿಕೆಗಳಿಂದ ಮುದ್ರೆಹಾಕಿ ಮಾತಾಡುತ್ತಾರೆ.
JOB 33:17 ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವದಕ್ಕೂ, ಅವನ ಗರ್ವವನ್ನು ಅಡಗಿಸುವುದಕ್ಕೂ ದೇವರು ಹಾಗೆ ಮಾಡುತ್ತಾರೆ.
JOB 33:18 ಮನುಷ್ಯನ ಪ್ರಾಣವನ್ನು ಕುಣಿಯಿಂದ ತಡೆಯುತ್ತಾರೆ, ಅವನ ಜೀವವನ್ನು ಖಡ್ಗದಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾರೆ.
JOB 33:19 “ಇದಲ್ಲದೆ ಮನುಷ್ಯನು ತನ್ನ ಹಾಸಿಗೆಯಲ್ಲಿ ನೋವಿನಿಂದ ಬಿದ್ದಿರುವಾಗ, ಅವನ ಎಲುಬುಗಳಿಗೆ ನೋವು ಉಂಟಾದಾಗ, ದೇವರು ಅವನನ್ನು ತಿದ್ದುತ್ತಾರೆ.
JOB 33:20 ಆಗ ಮನುಷ್ಯನು ತನ್ನ ಹಸಿವನ್ನು ಕಳೆದುಕೊಳ್ಳುತ್ತಾನೆ, ಅವನ ಜೀವಕ್ಕೆ ಸವಿ ಊಟವೂ ಅಸಹ್ಯವಾಗುವುದು.
JOB 33:21 ಅವನ ಶರೀರವು ಕಾಣದ ಹಾಗೆ ಸವೆಯುವುದು; ಕಾಣದಿದ್ದ ಅವನ ಎಲುಬುಗಳು ಸಹ ಬಯಲಾಗುತ್ತವೆ.
JOB 33:22 ಹೀಗೆ ಮನುಷ್ಯನ ಆತ್ಮವು ಸಮಾಧಿಗೆ ಸಮೀಪಿಸುವುದು. ಅವನ ಪ್ರಾಣವು ಸಾವಿನ ಸಂದೇಶವಾಹಕರ ಹತ್ತಿರವಾಗುವುದು.
JOB 33:23 ಆಗ ಸಹಸ್ರ ದೂತರಲ್ಲಿ ಒಬ್ಬನು ಮಧ್ಯಸ್ಥನಾಗಿ ಆ ಮನುಷ್ಯನ ಯಥಾರ್ಥತೆಯನ್ನು ತಿಳಿಸುವುದಕ್ಕೆ ಅವನ ಬಳಿಯಲ್ಲಿದ್ದರೆ,
JOB 33:24 ಆ ಮಧ್ಯಸ್ಥನು ಅವನನ್ನು ಕರುಣಿಸಿ ದೇವರಿಗೆ, ‘ಅಧೋಲೋಕವೆಂಬ ಕುಣಿಗೆ ಇಳಿಯುವುದರಿಂದ ಇವನನ್ನು ಕಾಪಾಡಿರಿ; ನಾನು ಇವನಿಗಾಗಿ ವಿಮೋಚನೆಯ ಕ್ರಯವನ್ನು ಕಂಡುಹಿಡಿದಿದ್ದೇನೆ.
JOB 33:25 ಅವನ ದೇಹವು ಮಗುವಿನ ದೇಹಕ್ಕಿಂತ ಮೃದುವಾಗಿರಲಿ; ಅವನು ಪುನಃ ತನ್ನ ಯೌವನದ ದಿನಗಳಿಗೆ ಹಿಂದಿರುಗಲಿ,’ ಎಂದು ಹೇಳುತ್ತಿದ್ದನು.
JOB 33:26 ಆಗ ಆ ಮನುಷ್ಯನು ದೇವರಿಗೆ ಪ್ರಾರ್ಥನೆಮಾಡುವನು; ದೇವರು ಅವನಿಗೆ ತಮ್ಮ ಮೆಚ್ಚುಗೆಯನ್ನು ನೀಡುವರು; ಅವನು ಆನಂದ ಧ್ವನಿಯಿಂದ ದೇವರ ಮುಖವನ್ನು ನೋಡುವನು; ದೇವರು ಅವನನ್ನು ನೀತಿವಂತನೆಂದು ಪುನಃಸ್ಥಾಪಿಸುವರು.
JOB 33:27 ಅವನು ಜನರ ಮುಂದೆ ಹಾಡುತ್ತಾ ಹೀಗೆ ಹೇಳುವನು: ‘ನಾನು ಪಾಪಮಾಡಿದೆ, ನ್ಯಾಯವನ್ನು ಬಿಟ್ಟು ನಡೆದೆ. ಆದರೂ ದೇವರು ನನ್ನ ಪಾಪಕ್ಕೆ ತಕ್ಕಂತೆ ದಂಡಿಸಲಿಲ್ಲ. ದೇವರು ಮುಯ್ಯಿತೀರಿಸಲಿಲ್ಲ,
JOB 33:28 ದೇವರು ನನ್ನನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾರೆ; ನಾನು ಜೀವ ಬೆಳಕನ್ನು ಆನಂದಿಸಲು ಬಾಳುವೆನು.’
JOB 33:29 “ನೋಡು, ದೇವರು ಎರಡು ಸಾರಿಯಲ್ಲದೆ, ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮನುಷ್ಯರಿಗಾಗಿ ಮಾಡುವರು.
JOB 33:30 ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ ಬಂದು, ಜೀವ ಬೆಳಕನ್ನು ಅನುಭವಿಸುವಂತೆಯೇ ದೇವರು ಹೀಗೆ ಮಾಡುವರು.
JOB 33:31 “ಯೋಬನೇ, ನನ್ನ ಮಾತನ್ನು ಗಮನಕೊಟ್ಟು ಕೇಳು. ಮೌನವಾಗಿದ್ದು ಕೇಳು, ಈಗ ನಾನು ಮಾತನಾಡುತ್ತೇನೆ.
JOB 33:32 ನಿನಗೆ ಹೇಳುವುದಕ್ಕೆ ಏನಾದರೂ ಇದ್ದರೆ ಹೇಳು, ನನಗೆ ಉತ್ತರಕೊಡು, ಮಾತನಾಡು, ಏಕೆಂದರೆ ನಾನು ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.
JOB 33:33 ಇಲ್ಲವಾದರೆ ನಾನು ಹೇಳುವುದನ್ನು ಕೇಳು; ಮೌನವಾಗಿರು, ಈಗ ನಾನು ನಿನಗೆ ಜ್ಞಾನವನ್ನು ಬೋಧಿಸುತ್ತೇನೆ.”
JOB 34:1 ಎಲೀಹು ಮುಂದುವರೆಸಿ ಹೇಳಿದ್ದೇನೆಂದರೆ:
JOB 34:2 ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ಪಂಡಿತರೇ, ನನಗೆ ಕಿವಿಗೊಡಿರಿ.
JOB 34:3 ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
JOB 34:4 ನಾವು ಸರಿಯಾದುದನ್ನೇ ಆಯ್ದುಕೊಳ್ಳೋಣ; ಒಳ್ಳೆಯದು ಏನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
JOB 34:5 “ಏಕೆಂದರೆ ಯೋಬನು, ‘ನಾನು ನಿರ್ದೋಷಿಯಾಗಿದ್ದೇನೆ. ಆದರೆ ದೇವರು ನನಗೆ ನ್ಯಾಯವನ್ನು ನಿರಾಕರಿಸಿದ್ದಾರೆ.
JOB 34:6 ನನ್ನಲ್ಲಿ ನ್ಯಾಯವಿದ್ದರೂ ನನ್ನನ್ನು ಸುಳ್ಳುಗಾರನೆಂದು ಪರಿಗಣಿಸಲಾಗಿದೆ; ನಾನು ನಿರ್ದೋಷಿಯಾಗಿದ್ದರೂ ದೇವರ ಬಾಣವು ಗುಣಪಡಿಸಲಾಗದ ಗಾಯವನ್ನು ನನಗೆ ಉಂಟುಮಾಡಿದೆ,’ ಎಂದು ಹೇಳುತ್ತಿದ್ದಾನೆ.”
JOB 34:7 ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿಯುವಂತೆ ಅಪಹಾಸ್ಯ ಮಾಡುತ್ತಿದ್ದಾನೆ.
JOB 34:8 ಯೋಬನು ದುಷ್ಕರ್ಮಿಗಳೊಂದಿಗೆ ಸಹವಾಸ ಇಟ್ಟುಕೊಳ್ಳುತ್ತಾ ದುಷ್ಟಜನರ ಸಂಗಡ ನಡೆದಾಡುತ್ತಾನೆ.
JOB 34:9 “ಏಕೆಂದರೆ ಅವನು, ‘ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದರಿಂದ ಮನುಷ್ಯನಿಗೆ ಯಾವುದೇ ಲಾಭವಿಲ್ಲ,’ ಎಂದು ಹೇಳುತ್ತಾನೆ.”
JOB 34:10 “ಆದ್ದರಿಂದ ಬುದ್ಧಿವಂತರೇ, ನಾನು ಹೇಳುವುದನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾರೆಂಬ ಯೋಚನೆ ದೂರವಿರಲಿ. ಸರ್ವಶಕ್ತರು ಅನ್ಯಾಯವನ್ನು ಎಸಗುತ್ತಾರೆಂಬ ಭಾವನೆ ದೂರವಾಗಿರಲಿ.
JOB 34:11 ದೇವರು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕ ಫಲವನ್ನು ಕೊಡುತ್ತಾರೆ; ಹೌದು, ದೇವರು ಪ್ರತಿಯೊಬ್ಬರನ್ನು ಅವರವರ ನಡತೆಗೆ ತಕ್ಕಂತೆ ಅನುಭವಿಸಮಾಡುತ್ತಾರೆ.
JOB 34:12 ನಿಶ್ಚಯವಾಗಿ ದೇವರು ಕೆಟ್ಟದ್ದನ್ನು ಮಾಡುವುದಿಲ್ಲ, ಸರ್ವಶಕ್ತರು ನ್ಯಾಯವನ್ನು ಡೊಂಕು ಮಾಡುವುದಿಲ್ಲ.
JOB 34:13 ಭೂಮಿಯ ಮೇಲೆ ದೇವರನ್ನು ನೇಮಿಸಿದವರು ಯಾರು? ಸರ್ವಲೋಕವನ್ನು ದೇವರ ವಶಕ್ಕೆ ಒಪ್ಪಿಸಿಕೊಟ್ಟವರು ಯಾರು?
JOB 34:14 ಒಂದು ವೇಳೆ, ದೇವರು ತಮ್ಮ ಆತ್ಮವನ್ನೂ, ಶ್ವಾಸವನ್ನೂ, ನಮ್ಮಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನಸ್ಸುಮಾಡುವುದಾದರೆ,
JOB 34:15 ಎಲ್ಲಾ ಮನುಷ್ಯರೂ ಒಟ್ಟಿಗೆ ಅಳಿದುಹೋಗುವರು; ಇಡೀ ಮಾನವಕುಲವು ಧೂಳಿಗೆ ಹಿಂದಿರುಗುವುದು.”
JOB 34:16 “ಯೋಬನೇ, ಅರ್ಥಮಾಡಿಕೊಂಡು, ಇದನ್ನು ಕೇಳಿಸಿಕೋ; ನನ್ನ ಮಾತಿಗೆ ಕಿವಿಗೊಡು.
JOB 34:17 ನ್ಯಾಯವನ್ನು ದ್ವೇಷಿಸುವ ದೇವರು, ಆಳ್ವಿಕೆಮಾಡಲು ಸಾಧ್ಯವೇ? ನೀತಿವಂತರೂ, ಸರ್ವಶಕ್ತರೂ ಆಗಿರುವ ದೇವರ ಮೇಲೆ ನೀನು ತಪ್ಪುಹೊರಿಸುವಿಯೋ?
JOB 34:18 ದೇವರು ಅರಸನಿಗೆ, ‘ನೀನು ಮೂರ್ಖ,’ ಎಂದು ಹೇಳಬಲ್ಲರು. ದೇವರು ಪ್ರಧಾನರಿಗೆ, ‘ನೀವು ದುಷ್ಟರು’ ಎಂದು ಕರೆಯಬಲ್ಲರು ಅಲ್ಲವೇ?
JOB 34:19 ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ? ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.
JOB 34:20 ಜನರು ಮಧ್ಯರಾತ್ರಿಯಲ್ಲಿ ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಅವರು ತಲ್ಲಣಗೊಂಡು ಇಲ್ಲದೆ ಹೋಗುತ್ತಾರೆ; ಪರಾಕ್ರಮಿಗಳು ಸಹ ಮಾನವರ ಕೈ ಒಳಪಡದೆ ಗತಿಸಿಹೋಗುತ್ತಾರೆ.”
JOB 34:21 “ಏಕೆಂದರೆ ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಇರುತ್ತದೆ; ದೇವರು ಮನುಷ್ಯನ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಾರೆ.
JOB 34:22 ಆದ್ದರಿಂದ ದೇವರ ದೃಷ್ಟಿಯಿಂದ ದುಷ್ಟರು ಅಡಗಿಕೊಳ್ಳಲು, ಗಾಢಾಂಧಕಾರವೂ ಇಲ್ಲ, ನೆರಳೂ ಇರುವುದಿಲ್ಲ.
JOB 34:23 ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ. ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.
JOB 34:24 ಯಾವ ವಿಚಾರಣೆ ಇಲ್ಲದೆಯೇ ದೇವರು ಪರಾಕ್ರಮಿಗಳನ್ನು ದಂಡಿಸಬಹುದು. ದೇವರು ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.
JOB 34:25 ಏಕೆಂದರೆ, ದೇವರು ಅಂಥವರ ದುಷ್ಕಾರ್ಯಗಳನ್ನು ತಿಳಿದಿದ್ದಾರೆ. ರಾತ್ರಿಯಲ್ಲಿ ಅವರನ್ನು ಕೆಡವಿ ದಂಡನೆಗೆ ಗುರಿಮಾಡುವರು.
JOB 34:26 ಅವರ ದುಷ್ಟತನಕ್ಕಾಗಿ ದೇವರು ಎಲ್ಲರು ನೋಡುವಂತೆ ಅವರನ್ನು ಶಿಕ್ಷಿಸುವರು.
JOB 34:27 ಅವರು ದೇವರನ್ನು ಹಿಂಬಾಲಿಸದೆ, ದೇವರ ಮಾರ್ಗಗಳನ್ನೆಲ್ಲಾ ಅಲಕ್ಷ್ಯ ಮಾಡಿದ್ದರಷ್ಟೆ.
JOB 34:28 ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.
JOB 34:29 ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು? ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ, ದೇವದರ್ಶನ ಪಡೆಯಬಲ್ಲವರು ಯಾರು?
JOB 34:30 ಭಕ್ತಿಹೀನನು ಆಳಬಾರದು, ಯಾರೂ ಜನರಿಗೆ ಉರುಲಾಗಬಾರದು, ಎಂಬುದೇ ಇದರಲ್ಲಿ ದೇವರ ಉದ್ದೇಶ.”
JOB 34:31 “ಒಂದು ವೇಳೆ, ಯಾರಾದರೂ ದೇವರಿಗೆ, ‘ನಾನು ಪಾಪಮಾಡಿದ್ದೇನೆ, ಆದರೆ ಇನ್ನು ಮುಂದೆ ಪಾಪಮಾಡುವುದಿಲ್ಲ.
JOB 34:32 ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ. ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.
JOB 34:33 ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ, ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ? ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ; ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.”
JOB 34:34 “ತಿಳುವಳಿಕೆಯುಳ್ಳವರೂ, ನನ್ನನ್ನು ಆಲಿಸಿದ ಜ್ಞಾನಿಗಳೂ ನಿನ್ನ ವಿಷಯವಾಗಿ:
JOB 34:35 ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡಿದ್ದಾನೆ; ಅವನ ಮಾತುಗಳು ಬುದ್ಧಿಯಿಲ್ಲದ ಮಾತುಗಳು.
JOB 34:36 ಯೋಬನನ್ನು ಕಡೆಯವರೆಗೆ ಪರೀಕ್ಷಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಅವನು ದುಷ್ಟರ ಹಾಗೆ ಉತ್ತರ ಕೊಡುತ್ತಾನೆ.
JOB 34:37 ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ; ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”
JOB 35:1 ಎಲೀಹು ಮತ್ತೆ ಹೇಳಿದ್ದೇನೆಂದರೆ:
JOB 35:2 “ಯೋಬನೇ, ‘ನನ್ನ ನೀತಿಯು ದೇವರ ನೀತಿಗಿಂತ ದೊಡ್ಡದು,’ ಎಂದು ನೀನು ಹೇಳಿದ್ದು ಸರಿಯೆಂದು ನೆನಸುತ್ತೀಯೋ?
JOB 35:3 ಏಕೆಂದರೆ, ‘ನೀತಿಯಿಂದ ನನಗೇನು ಪ್ರಯೋಜನವಾಯಿತು? ನಾನು ಪಾಪಮಾಡದೆ ಇದ್ದುದರಿಂದ ನನಗೆ ಲಾಭವೇನು? ಎಂದು ನೀನು ದೇವರಿಗೆ ಕೇಳಿದಿ.’
JOB 35:4 “ನಾನು ನಿನಗೂ, ನಿನ್ನ ಸಂಗಡ ಇರುವ ಸ್ನೇಹಿತರಿಗೂ ಈಗ ಉತ್ತರ ಕೊಡುತ್ತೇನೆ.
JOB 35:5 ಆಕಾಶಗಳನ್ನು ದೃಷ್ಟಿಸಿ ನೋಡು; ನಿನಗಿಂತಲೂ ಎತ್ತರವಾಗಿರುವ ಮೇಘಗಳನ್ನು ದೃಷ್ಟಿಸು.
JOB 35:6 ನೀನು ಪಾಪಮಾಡಿದರೆ, ಅದು ದೇವರನ್ನು ಹೇಗೆ ಬಾಧಿಸುತ್ತದೆ? ನಿನ್ನ ಪಾಪಗಳು ಹೆಚ್ಚಾಗಿದ್ದರೆ, ಅದು ದೇವರಿಗೆ ಏನು ಮಾಡುವುದು?
JOB 35:7 ನೀನು ನೀತಿವಂತನಾಗಿದ್ದರೆ, ದೇವರಿಗೇನು ಕೊಟ್ಟಂತಾಯಿತು? ಅಥವಾ ದೇವರು ನಿನ್ನ ಕೈಯಿಂದ ಏನು ತೆಗೆದುಕೊಂಡಂತಾಯಿತು?
JOB 35:8 ನಿನ್ನ ದುಷ್ಟತನವು ನಿನ್ನಂಥವರನ್ನೇ ಬಾಧಿಸುವುದು; ನಿನ್ನ ನೀತಿಯಿಂದ ಬೇರೆ ಜನರಿಗೆ ಮಾತ್ರ ಲಾಭವಾಗುವುದು.
JOB 35:9 “ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ; ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
JOB 35:10 ಆದರೆ, ‘ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿ?
JOB 35:11 ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಬುದ್ಧಿಕಲಿಸಿಕೊಡುವ ದೇವರು ಎಲ್ಲಿ? ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುವ ದೇವರು ಎಲ್ಲಿ?’ ಎಂದು ಯಾರೂ ಹೇಳುವುದಿಲ್ಲ.
JOB 35:12 ಜನರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುತ್ತಾರೆ; ಆದರೂ ದೇವರು ಅವರಿಗೆ ಉತ್ತರವನ್ನು ದಯಪಾಲಿಸುವುದಿಲ್ಲ.
JOB 35:13 ನಿಶ್ಚಯವಾಗಿ ವ್ಯರ್ಥಮಾತನ್ನು ದೇವರು ಕೇಳುವುದಿಲ್ಲ; ಸರ್ವಶಕ್ತರು ಬರೀಮಾತನ್ನು ಲಕ್ಷಿಸುವುದಿಲ್ಲ.
JOB 35:14 ಹೀಗಿರಲು, ‘ದೇವರು ಕಾಣುವುದಿಲ್ಲ, ನನ್ನ ವ್ಯಾಜ್ಯವು ದೇವರ ಮುಂದೆ ಇದೆ; ದೇವರಿಗಾಗಿ ಕಾದಿರುತ್ತೇನೆ,’ ಎಂದು ನೀನು ಹೇಳಿದರೆ, ದೇವರು ನಿನಗೆ ಕಿವಿಗೊಡುವರೋ?
JOB 35:15 ದೇವರು ಕೋಪದಿಂದ ದುಷ್ಟರನ್ನು ದಂಡಿಸದೆ ಇರುವ ಕಾರಣ, ‘ಆಹಾ, ದೇವರು ದ್ರೋಹವನ್ನು ಅಷ್ಟಾಗಿ ಗಮನಿಸುವುದಿಲ್ಲ,’ ಎಂದು ನೀನು ಹೇಳುವಾಗ ದೇವರು ಕೇಳಿಸಿಕೊಳ್ಳುವರೋ?
JOB 35:16 ಆದ್ದರಿಂದ ಯೋಬನಾದ ನೀನು ವ್ಯರ್ಥವಾಗಿ ಬಾಯಿತೆರೆದು, ತಿಳುವಳಿಕೆಯಿಲ್ಲದೆ ಬಹಳ ಮಾತಾಡಿರುವಿ.”
JOB 36:1 ಎಲೀಹು ಮುಂದುವರಿದು ಹೇಳಿದ್ದೇನೆಂದರೆ:
JOB 36:2 “ನನ್ನನ್ನು ಸ್ವಲ್ಪ ತಾಳಿಕೋ, ನಾನು ನಿನಗೆ ತೋರಿಸಿಕೊಡುತ್ತೇನೆ. ಏಕೆಂದರೆ ದೇವರ ಪರವಾಗಿ ಇನ್ನೂ ಹೇಳತಕ್ಕ ಮಾತುಗಳು ಇವೆ.
JOB 36:3 ನಾನು ನನ್ನ ತಿಳುವಳಿಕೆಯನ್ನು ದೂರದಿಂದ ಪಡೆದುಕೊಳ್ಳುತ್ತೇನೆ. ನನ್ನ ಸೃಷ್ಟಿಕರ್ತ ನ್ಯಾಯವಂತರು ಎಂದು ನಿರೂಪಿಸುವೆನು.
JOB 36:4 ನಿಜವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದ ಒಬ್ಬನಾಗಿ ನಾನು ನಿನ್ನ ಬಳಿಯಲ್ಲಿಯೇ ಇದ್ದೇನೆ.
JOB 36:5 “ನೋಡು, ದೇವರು ಸರ್ವಶಕ್ತರು, ಆದರೂ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ. ಶಕ್ತಿವಂತರಾದ ದೇವರು ತಮ್ಮ ಉದ್ದೇಶದಲ್ಲಿ ದೃಢವಾಗಿದ್ದಾರೆ.
JOB 36:6 ದುಷ್ಟರು ಬಹುಕಾಲ ಬಾಳಲು ದೇವರು ಅನುಮತಿಸುವುದಿಲ್ಲ; ಆದರೆ ದೇವರು ಬಾಧೆಪಡುವವರಿಗೆ ಅವರ ಹಕ್ಕುಗಳನ್ನು ಕೊಡುತ್ತಾರೆ.
JOB 36:7 ದೇವರು ನೀತಿವಂತರಿಂದ ತಮ್ಮ ಕಣ್ಣುಗಳನ್ನು ತೊಲಗಿಸುವುದಿಲ್ಲ; ದೇವರು ನೀತಿವಂತರನ್ನು ಅರಸುಗಳ ಸಂಗಡ ಸಿಂಹಾಸನದಲ್ಲಿ ಕುಳ್ಳಿರಿಸುವರು; ಹೌದು, ದೇವರು ಅವರನ್ನು ಎಂದೆಂದಿಗೂ ಉನ್ನತಕ್ಕೇರಿಸುವರು.
JOB 36:8 ಒಂದು ವೇಳೆ ಜನರು ಸಂಕಟದ ಸಂಕೋಲೆಗಳಿಂದ ಬಂಧಿತರಾಗಿ, ಬಾಧೆಯ ಹಗ್ಗಗಳಿಂದ ಹಿಡಿಯಲಾಗಿದ್ದರೆ,
JOB 36:9 ದೇವರು ಅವರ ಕೃತ್ಯವನ್ನೂ ಸೊಕ್ಕಿನ ದ್ರೋಹಗಳನ್ನೂ ಅವರಿಗೆ ಹೇಳುವರು.
JOB 36:10 ದೇವರು ಅವರ ಕಿವಿಯನ್ನು ತಿದ್ದುವಿಕೆಗಾಗಿ ತೆರೆದು, ಜನರು ದುಷ್ಟತನವನ್ನು ಬಿಟ್ಟು ತಿರುಗಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುವರು.
JOB 36:11 ಒಂದು ವೇಳೆ, ಜನರು ವಿಧೇಯರಾಗಿ ದೇವರನ್ನು ಸೇವಿಸಿದರೆ, ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿ ಕಳೆಯುವರು. ತಮ್ಮ ವರ್ಷಗಳನ್ನು ಸಂತೃಪ್ತಿಯಲ್ಲಿಯೂ ಪೂರೈಸುವರು.
JOB 36:12 ಅವರು ವಿಧೇಯರಾಗದಿದ್ದರೆ, ಸಂಕಟದ ಸಾಗರದಲ್ಲಿ ಸಾಗಿಹೋಗುವರು; ತಿಳುವಳಿಕೆಯಿಲ್ಲದ ಬಾಳನ್ನು ಬಾಳುವರು.
JOB 36:13 “ಹೃದಯದಲ್ಲಿ ಭಕ್ತಿಹೀನರಾಗಿರುವವರು ಕೋಪವನ್ನು ಕೂಡಿಸುವರು; ದೇವರು ಅವರನ್ನು ಬಂಧಿಸಿದರೂ, ಅವರು ದೇವರಿಗೆ ಮೊರೆ ಇಡುವುದಿಲ್ಲ.
JOB 36:14 ಅವರು ತಮ್ಮ ಯೌವನದಲ್ಲಿ, ಪುರುಷಗಾಮಿಗಳ ಮಂದಿರದಲ್ಲಿ ಗತಿಸಿಹೋಗುವರು.
JOB 36:15 ಶ್ರಮೆ ಪಡುವವರನ್ನು ದೇವರು ಅವರ ಶ್ರಮೆಯ ಮೂಲಕವೇ ಬಿಡುಗಡೆ ಮಾಡುವರು; ದೇವರು ಅವರ ಹಿಂಸೆಯ ಮೂಲಕವೇ ಅವರೊಂದಿಗೆ ಮಾತನಾಡುವರು.
JOB 36:16 “ದೇವರು ನಿನ್ನನ್ನು ಇಕ್ಕಟ್ಟಿನೊಳಗಿಂದ ಬಿಡಿಸುವರು; ಇಕ್ಕಟ್ಟಿಲ್ಲದ ವಿಶಾಲ ಸ್ಥಳವು ನಿನಗೆ ದೊರೆಯುವುದು; ನಿನ್ನ ಆದರಣೆಗಾಗಿ ನಿನ್ನ ಮೇಜು ಉತ್ತಮ ಆಹಾರಗಳಿಂದ ತುಂಬಿರುವುದು.
JOB 36:17 ಆದರೆ ಈಗ ನೀನು ದುಷ್ಟರಿಗೆ ಬರಬೇಕಾದ ತೀರ್ಪಿನಿಂದ ತುಂಬಿರುವೆ. ನ್ಯಾಯವಿಚಾರಣೆಯೂ, ತೀರ್ಪೂ ನಿನ್ನನ್ನು ಹಿಡಿದಿರುತ್ತವೆ.
JOB 36:18 ಯಾರೂ ನಿನ್ನನ್ನು ಸಂಪತ್ತಿನಿಂದ ಆಕರ್ಷಿಸದಂತೆ ಜಾಗರೂಕನಾಗಿರು; ದೊಡ್ಡ ಲಂಚತನವು ನಿನ್ನನ್ನು ವಂಚಿಸಬಾರದು.
JOB 36:19 ನಿನ್ನ ಐಶ್ವರ್ಯವೂ, ಶಕ್ತಿಸಾಮರ್ಥ್ಯವೂ ಕಷ್ಟಾನುಭವವಿಲ್ಲದೆ ಸಾಗಿಸಲು ಸಾಧ್ಯವೇ?
JOB 36:20 ಜನರನ್ನು ಅವರ ಮನೆಗಳಿಂದ ಎಳೆದುಕೊಂಡು ಹೋಗುವುದಕ್ಕೆ ರಾತ್ರಿಯನ್ನು ಬಯಸಬೇಡ.
JOB 36:21 ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ! ನೀನು ಕಷ್ಟಕ್ಕಿಂತಲೂ ಕೇಡನ್ನು ಆರಿಸಿಕೊಂಡಿದ್ದೀ.
JOB 36:22 “ದೇವರು ತಮ್ಮ ಶಕ್ತಿಯಲ್ಲಿ ಉನ್ನತರಾಗಿದ್ದಾರೆ. ದೇವರಂಥ ಬೋಧಕರು ಯಾರಿದ್ದಾರೆ?
JOB 36:23 ದೇವರ ಮಾರ್ಗವನ್ನು ದೇವರಿಗೆ ನೇಮಿಸಿದವರ‍್ಯಾರು? ‘ನೀವು ಮಾಡಿರುವುದು ಅನ್ಯಾಯ,’ ಎಂದು ದೇವರಿಗೆ ಹೇಳುವವರು ಯಾರು?
JOB 36:24 ಮನುಷ್ಯರು ಹೊಗಳಿ ಹಾಡುವ ಹಾಡುಗಳಿಂದ, ದೇವರ ಕೃತ್ಯಗಳನ್ನು ಉನ್ನತಪಡಿಸಲು ನೆನಸಿಕೋ.
JOB 36:25 ಎಲ್ಲಾ ಮನುಷ್ಯರು ದೇವರ ಕೃತ್ಯಗಳನ್ನು ಕಂಡಿದ್ದಾರೆ; ಹೌದು, ಮನುಷ್ಯರು ದೂರದಿಂದ ನೋಡುತ್ತಾರೆ.
JOB 36:26 ದೇವರು ಮಹೋನ್ನತರು; ದೇವರು ನಮ್ಮ ಅರಿವಿಗೆ ನಿಲುಕರು. ದೇವರ ವರ್ಷಗಳು ಅಸಂಖ್ಯಾತವಾಗಿವೆ.
JOB 36:27 “ದೇವರು ನೀರಿನ ಹನಿಗಳನ್ನು ಕೂಡಿಸಿದಾಗ, ಮಂಜಿನಿಂದ ತಿಳಿಮಳೆ ಸುರಿಯುತ್ತವೆ.
JOB 36:28 ಮೋಡಗಳು ಮಳೆಗರೆಯುತ್ತವೆ. ಮನುಷ್ಯರ ಮೇಲೆ ಸಮೃದ್ಧಿಯಾಗಿ ಚಿಮುಕಿಸುತ್ತವೆ.
JOB 36:29 ಮೋಡಗಳ ವಿಸ್ತೀರ್ಣತೆಯನ್ನೂ, ದೇವರ ಗುಡಾರದಿಂದ ಗುಡುಗುವುದನ್ನೂ ಗ್ರಹಿಸಿಕೊಳ್ಳುವವರು ಯಾರು?
JOB 36:30 ಇಗೋ, ದೇವರು ಮಿಂಚನ್ನು ತಮ್ಮ ಸುತ್ತಲು ಚದರಿಸುತ್ತಾರೆ. ಸಮುದ್ರದ ಆಳವನ್ನು ಸಹ ಆವರಿಸುತ್ತಾರೆ.
JOB 36:31 ಈ ರೀತಿಯಾಗಿ ದೇವರು ದೇಶಗಳನ್ನು ಆಳುತ್ತಾರೆ ಸಮೃದ್ಧಿಯಾಗಿ ದೇವರು ಆಹಾರ ಕೊಡುತ್ತಾರೆ.
JOB 36:32 ದೇವರು ತಮ್ಮ ಕೈಯಲ್ಲಿ ಮಿಂಚನ್ನು ಹಿಡಿದುಕೊಂಡು, ಅದನ್ನು ಗುರಿಮುಟ್ಟುವಂತೆ ಆಜ್ಞಾಪಿಸುತ್ತಾರೆ.
JOB 36:33 ಬಿರುಗಾಳಿಯು ಬರುತ್ತಿದೆ ಎಂದು ದೇವರ ಸಿಡಿಲು ತಿಳಿಸುತ್ತದೆ; ದನಕರುಗಳು ಸಹ ದೇವರ ಆಗಮನವನ್ನು ತಿಳಿಸುತ್ತವೆ.
JOB 37:1 “ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ, ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ.
JOB 37:2 ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ. ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ.
JOB 37:3 ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ; ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ.
JOB 37:4 ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು; ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ; ದೇವರ ಸ್ವರ ಕೇಳುವಾಗ ಅದನ್ನು ತಡೆಯಲಾಗದು.
JOB 37:5 ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ; ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ.
JOB 37:6 ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ. ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ.
JOB 37:7 ಹೀಗೆ ದೇವರು ತಮ್ಮ ಕೃತ್ಯವನ್ನು ಜನರೆಲ್ಲರೂ ತಿಳುಕೊಳ್ಳುವಂತೆ ಮಾಡುತ್ತಾರೆ. ಸ್ವಲ್ಪಕಾಲ ಮನುಷ್ಯರ ದುಡಿಮೆಯನ್ನು ನಿಲ್ಲಿಸುತ್ತಾರೆ.
JOB 37:8 ಆಗ ಮೃಗಗಳು ಅಡಗುವ ಸ್ಥಳಕ್ಕೆ ಹೋಗುತ್ತವೆ, ತಮ್ಮ ಗುಹೆಗಳಲ್ಲಿ ಉಳಿಯುತ್ತವೆ.
JOB 37:9 ದಕ್ಷಿಣದಿಕ್ಕಿನಿಂದ ಬಿರುಗಾಳಿಯು ಬೀಸುತ್ತದೆ. ಉತ್ತರದಿಂದ ಚಳಿಯೂ ಬರುತ್ತದೆ.
JOB 37:10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆ ಆಗುವುದು; ವಿಶಾಲ ಸಮುದ್ರದ ನೀರು ಗಟ್ಟಿಯಾಗುವುದು.
JOB 37:11 ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ; ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ.
JOB 37:12 ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆ ದೇವರು ಆಜ್ಞಾಪಿಸಲು, ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ.
JOB 37:13 ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು, ಮೇಘಗಳನ್ನು ಬರಮಾಡುತ್ತಾರೆ.
JOB 37:14 “ಆದ್ದರಿಂದ ಯೋಬನೇ, ಇದಕ್ಕೆ ಕಿವಿಗೊಡು; ಮೌನವಾಗಿ ನಿಂತು ದೇವರ ಅದ್ಭುತಗಳನ್ನು ಧ್ಯಾನಿಸು.
JOB 37:15 ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ? ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ?
JOB 37:16 ಮೋಡಗಳ ತೂಗಾಟವನ್ನು ಬಲ್ಲೆಯಾ? ಜ್ಞಾನಪೂರ್ಣರಾದ ದೇವರ ಅದ್ಭುತಗಳನ್ನೂ ತಿಳಿದುಕೊಂಡಿರುವೆಯಾ?
JOB 37:17 ಭೂಮಿಯು ದಕ್ಷಿಣ ಗಾಳಿಯಿಂದ ಸ್ತಬ್ಧವಾಗಿರುವಾಗ, ನಿನ್ನ ವಸ್ತ್ರ ಹೇಗೆ ಬಿಸಿಯಾಗಿರುತ್ತವೆ?
JOB 37:18 ಎರಕ ಹೊಯ್ದ ಬಲವಾಗಿರುವ ಕನ್ನಡಿಯ ಹಾಗೆ, ನೀನು ದೇವರ ಸಂಗಡ ಸೇರಿಕೊಂಡು ಆಕಾಶಮಂಡಲವನ್ನು ವಿಸ್ತರಿಸಬಲ್ಲೆಯಾ?
JOB 37:19 “ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು; ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ.
JOB 37:20 ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ? ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ?
JOB 37:21 ಗಾಳಿ ಬೀಸಿ ಆಕಾಶ ಶುಭ್ರವಾದಾಗ, ಪ್ರಜ್ವಲಿಸುವ ಸೂರ್ಯನನ್ನು ದೃಷ್ಟಿಸಲಾಗದು ಹೌದು, ಯಾರೂ ದಿಟ್ಟಿಸಿ ನೋಡಲಾರರು.
JOB 37:22 ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ; ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ.
JOB 37:23 ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ; ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ.
JOB 37:24 ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ; ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”
JOB 38:1 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:
JOB 38:2 “ಅಜ್ಞಾನದ ಮಾತುಗಳಿಂದ ನನ್ನ ಯೋಜನೆಗಳನ್ನು ಮಂಕುಮಾಡುವ ನೀನು ಯಾರು?
JOB 38:3 ಶೂರನ ಹಾಗೆ ನಡುವನ್ನು ಕಟ್ಟಿಕೋ, ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು.
JOB 38:4 “ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ? ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.
JOB 38:5 ಭೂಮಿಯ ಅಳತೆಯನ್ನು ಗೊತ್ತುಮಾಡಿದವರು ಯಾರು? ನಿಶ್ಚಯವಾಗಿ ನಿನಗೆ ಗೊತ್ತಿರಬೇಕಲ್ಲಾ? ಭೂಮಿಯ ಮೇಲೆ ನೂಲು ಹಿಡಿದವರು ಯಾರು?
JOB 38:6 ಯಾವುದರ ಮೇಲೆ ಭೂಮಿಯ ಅಸ್ತಿವಾರ ಸ್ಥಿರಪಡಿಸಲಾಗಿದೆ? ಅದಕ್ಕೆ ಮೂಲೆಗಲ್ಲನ್ನು ಇಟ್ಟವರು ಯಾರು?
JOB 38:7 ಉದಯದ ನಕ್ಷತ್ರಗಳು ಕೂಡಿ ಹಾಡುತ್ತಿರುವಾಗ, ದೇವದೂತರೆಲ್ಲರೂ ಹರ್ಷಧ್ವನಿಮಾಡುತ್ತಿರುವಾಗ, ಭೂಮಿಗೆ ಮೂಲೆಗಲ್ಲು ಹಾಕಿದವರಾರು?
JOB 38:8 “ಭೂಗರ್ಭವನ್ನು ನುಗ್ಗಿಕೊಂಡು ಬಂದ, ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?
JOB 38:9 ನಾನು ಸಮುದ್ರಕ್ಕೆ ಮೇಘವನ್ನು ವಸ್ತ್ರವನ್ನಾಗಿ ತೊಡಿಸಿ, ಅದಕ್ಕೆ ಕಾರ್ಗತ್ತಲನ್ನು ಉಡಿಸಿದೆನು.
JOB 38:10 ನಾನು ಸಮುದ್ರಕ್ಕೆ ಮಿತಿಗಳನ್ನು ನಿಗದಿಪಡಿಸಿ, ಅಗುಳಿಗಳನ್ನೂ, ಬಾಗಿಲುಗಳನ್ನೂ ಇಟ್ಟೆನು.
JOB 38:11 ‘ಇಲ್ಲಿಯ ತನಕ ಬರಬಹುದು, ಇದನ್ನು ಮೀರಿ ಬರಕೂಡದು; ಇಲ್ಲಿಗೇ ನಿನ್ನ ತೆರೆಗಳ ಹೆಮ್ಮೆ ನಿಲ್ಲಲಿ,’ ಎಂದು ಆಜ್ಞಾಪಿಸಿದೆನು.
JOB 38:12 “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ, ‘ಅರುಣೋದಯವಾಗಲಿ,’ ಎಂದು ಆಜ್ಞಾಪಿಸಿರುವೆಯಾ? ಮುಂಜಾನೆಯ ಬೆಳಗಿಗೆ ಅದರ ಸ್ಥಳವನ್ನು ತಿಳಿಯಪಡಿಸಿರುವೆಯಾ?
JOB 38:13 ‘ದುಷ್ಟರನ್ನು ಅದರೊಳಗಿಂದ ಒದರಿಬಿಡು,’ ಎಂದು ನೀನು ಭೂಮಿಯ ಅಂಚುಗಳನ್ನು ಹಿಡಿದು ಉದಯಕ್ಕೆ ಎಂದಾದರೂ ಅಪ್ಪಣೆಮಾಡಿದೆಯಾ?
JOB 38:14 ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪ ತಾಳುತ್ತದೆ; ನೆರಿಗೆ ಕಟ್ಟಿದ ಉಡಿಗೆಯಂತೆ ಭೂಮಿಯ ವಿಶೇಷತೆಗಳು ಕಾಣಿಸುತ್ತವೆ.
JOB 38:15 ಅದರಂತೆ ದುಷ್ಟರಿಗೆ ಬೆಳಕು ನಿರಾಕರಿಸಲಾಗುವುದು; ಅವರ ಹಿಂಸಾಚಾರವೂ ಮುರಿದು ಹೋಗುವುದು.
JOB 38:16 “ನೀನು ಎಂದಾದರೂ ಸಮುದ್ರದ ಬುಗ್ಗೆಗಳಲ್ಲಿ ನಡೆದಿರುವೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
JOB 38:17 ನಿನಗೆ ಮರಣದ ಬಾಗಿಲುಗಳು ತೋರಿಸಲಾಗಿದೆಯೋ? ಘೋರಾಂಧಕಾರದ ಬಾಗಿಲುಗಳನ್ನು ನೀನು ಕಂಡಿರುವೆಯೋ?
JOB 38:18 ಭೂವಿಸ್ತಾರಗಳನ್ನು ನೀನು ಗ್ರಹಿಸಿರುವೆಯೋ? ಇದನ್ನೆಲ್ಲಾ ನೀನು ತಿಳಿದಿದ್ದರೆ ನನಗೆ ಹೇಳು ನೋಡೋಣ.
JOB 38:19 “ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
JOB 38:20 ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?
JOB 38:21 ನಿಜವಾಗಿಯೂ ನೀನು ಆಗ ಹುಟ್ಟಿದ್ದರೆ, ಇವೆಲ್ಲಾ ನಿನಗೆ ಗೊತ್ತಾಗುತಿತ್ತು. ಮತ್ತು ಈಗ ನೀನು ಬಹಳ ವರ್ಷಗಳ ವೃದ್ಧನಾಗಿರುತ್ತಿದ್ದೆ.
JOB 38:22 “ಯೋಬನೇ, ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿರುವೆಯಾ? ಕಲ್ಮಳೆಯ ಉಗ್ರಾಣಗಳನ್ನು ನೋಡಿರುವೆಯಾ?
JOB 38:23 ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿ ಇಟ್ಟಿರುವೆನು; ಯುದ್ಧಕದನಗಳ ದಿನಗಳಿಗಾಗಿಯೂ ಕಾದಿಟ್ಟಿರುವೆನು.
JOB 38:24 ಬೆಳಕಿನ ಮೂಲ ಮಾರ್ಗ ಎಲ್ಲಿದೆ? ಪೂರ್ವ ಗಾಳಿಯ ಮಾರ್ಗವು ಯಾವುದು?
JOB 38:25 ಮಳೆಯ ಪ್ರವಾಹಕ್ಕೆ ಕಾಲುವೆಗಳನ್ನು ಕಡಿದವರು ಯಾರು? ಸಿಡಿಲಿಗೆ ಮಾರ್ಗವನ್ನು ನೇಮಿಸಿದವರು ಯಾರು?
JOB 38:26 ಮಳೆ ಮನುಷ್ಯರಿಲ್ಲದ ಕಾಡಿನಲ್ಲಿಯೂ ನಿರ್ಜನ ಪ್ರದೇಶದಲ್ಲಿಯೂ, ಸುರಿಯುವುದು.
JOB 38:27 ಹಾಳು ಬೈಲುಗಳಿಗೆ ತೃಪ್ತಿಯನ್ನು ಉಂಟುಮಾಡುವುದು; ಹಸಿರಾದ ಹುಲ್ಲನ್ನು ಮೊಳಿಸುವುದು.
JOB 38:28 ಮಳೆಗೆ ತಂದೆ ಇದ್ದಾನೆಯೇ? ಮಂಜಿನ ಹನಿಗಳನ್ನು ಹೆತ್ತವಳಿದ್ದಾಳೆಯೆ?
JOB 38:29 ಯಾರ ಗರ್ಭದಿಂದ ಹಿಮಗಡ್ಡೆ ಹೊರಡುತ್ತದೆ? ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
JOB 38:30 ಕಲ್ಲಿನ ಹಾಗೆ ನೀರು ಗಟ್ಟಿಯಾಗುವುದು ಯಾವಾಗ? ಸಮುದ್ರದ ಮೇಲ್ಭಾಗವು ಹೆಪ್ಪುಗಟ್ಟುವುದು ಯಾವಾಗ?
JOB 38:31 “ನೀನು ಕೃತ್ತಿಕೆಯ ಸರಪಣಿಯನ್ನು ಬಂಧಿಸಬಲ್ಲೆಯಾ? ಮೃಗಶಿರದ ಸಂಕೋಲೆಯನ್ನು ಬಿಚ್ಚಬಲ್ಲೆಯಾ?
JOB 38:32 ನೀನು ನಕ್ಷತ್ರರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ಬರಮಾಡುವೆಯಾ? ಸಪ್ತರ್ಷಿ ತಾರೆಗಳನ್ನು ಅವುಗಳ ಪರಿವಾರ ಸಹಿತವಾಗಿ ನೀನು ನಡೆಸುವೆಯಾ?
JOB 38:33 ಖಗೋಳದ ನಿಯಮಗಳನ್ನು ನೀನು ತಿಳಿದಿರುವೆಯಾ? ದೇವರ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿರುವೆಯಾ?
JOB 38:34 “ನೀರು ಪ್ರವಾಹವಾಗಿ ನಿನ್ನನ್ನು ತಲುಪುವಂತೆ, ನಿನ್ನ ಧ್ವನಿಯೆತ್ತಿ ಮೋಡಗಳಿಗೆ ಅಪ್ಪಣೆಕೊಡುವೆಯಾ?
JOB 38:35 ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು, ‘ಇಗೋ, ನಾವು ಇಲ್ಲಿದ್ದೇವೆ,’ ಎಂದು ನಿನಗೆ ಹೇಳುತ್ತವೆಯೋ?
JOB 38:36 ಇಬಿಸ್ ಪಕ್ಷಿಗೆ ಜ್ಞಾನವನ್ನು ಕೊಟ್ಟವರು ಯಾರು? ಕೋಳಿಹುಂಜಕ್ಕೆ ಅರಿವನ್ನು ಕೊಟ್ಟವರು ಯಾರು?
JOB 38:37 ಮೋಡಗಳನ್ನು ಎಣಿಸುವ ಜ್ಞಾನ ಯಾರಿಗೆ ಇದೆ? ಆಕಾಶದಲ್ಲಿನ ಬುದ್ದಲಿಗಳನ್ನು ಸಾಗಿಸುವವರು ಯಾರು?
JOB 38:38 ಧೂಳುಮಣ್ಣನ್ನು ಒತ್ತಟ್ಟಿಗೆ ಸೇರುವಂತೆ ಮಾಡುವವರು ಯಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಯಾರು ಮಾಡುವರು?
JOB 38:39 “ಗುಹೆಯಲ್ಲಿ ಮಲಗಿರುವ ಸಿಂಹದ ಆಹಾರಕ್ಕೋಸ್ಕರ ನೀನು ಬೇಟೆಯಾಡುವೆಯಾ? ಪ್ರಾಯದ ಸಿಂಹಗಳ ಹಸಿವೆಯನ್ನು ನೀನು ನೀಗಿಸುವೆಯಾ?
JOB 38:40 ಪೊದೆಯಲ್ಲಿ ಹೊಂಚು ಹಾಕಿರುವ, ಪ್ರಾಯದ ಸಿಂಹಗಳ ಹಸಿವೆಯನ್ನು ತೀರಿಸುವೆಯಾ?
JOB 38:41 ಹಸಿದ ಕಾಗೆ ಮರಿಗಳು ಆಹಾರ ಇಲ್ಲದೆ ಅಲೆದು, ದೇವರಿಗೆ ಮೊರೆ ಇಡುವಾಗ, ತಾಯಿ ಕಾಗೆಗೆ ಆಹಾರವನ್ನು ಒದಗಿಸುವವರು ಯಾರು?
JOB 39:1 “ಕಾಡುಮೇಕೆಗಳು ಈಯುವ ಕಾಲವನ್ನು ನೀನು ತಿಳಿದಿರುವೆಯಾ? ಜಿಂಕೆಗಳ ಹೆರಿಗೆಯನ್ನು ನೋಡಿರುವೆಯಾ?
JOB 39:2 ಅವುಗಳ ಗರ್ಭ ತುಂಬುವ ತಿಂಗಳುಗಳನ್ನು ಎಣಿಸಿರುವೆಯಾ? ಅವು ಈಯುವ ಕಾಲವನ್ನು ತಿಳಿದಿರುವಿಯೋ?
JOB 39:3 ಅವು ಬಗ್ಗಿ ಮರಿಗಳನ್ನು ಹಾಕುತ್ತವೆ; ಅದರ ಪ್ರಸವ ವೇದನೆಯನ್ನು ಮರೆತುಬಿಡುತ್ತವೆ.
JOB 39:4 ಅವುಗಳ ಮರಿಗಳು ಪುಷ್ಟಿಯಾಗಿ ಕಾಡಿನಲ್ಲಿ ಬೆಳೆಯುತ್ತವೆ; ಅವು ತಾಯಿಯನ್ನು ಅಗಲಿದ ಬಳಿಕ ತಿರುಗಿ ಬರುವುದಿಲ್ಲ.
JOB 39:5 “ಕಾಡುಕತ್ತೆಗೆ ಸ್ವತಂತ್ರವನ್ನು ಕೊಟ್ಟವರು ಯಾರು? ಕಾಡುಕತ್ತೆಯ ಕಟ್ಟನ್ನು ಬಿಚ್ಚಿದವರು ಯಾರು?
JOB 39:6 ಮರುಭೂಮಿಯನ್ನು ಅದರ ನಿವಾಸವನ್ನಾಗಿ ಕೊಟ್ಟಿರುವುದು ನಾನೇ. ಸವಳುಬಯಲನ್ನು ಅದರ ವಾಸ ಸ್ಥಳವಾಗಿಯೂ ನೇಮಿಸಿದ್ದು ನಾನೇ.
JOB 39:7 ಪಟ್ಟಣದ ಗದ್ದಲವನ್ನು ಕಾಡುಕತ್ತೆಯು ಧಿಕ್ಕರಿಸುತ್ತದೆ; ಅದು ಓಡಿಸುವವನ ಕೂಗನ್ನು ಲಕ್ಷಿಸುವುದಿಲ್ಲ.
JOB 39:8 ಬೆಟ್ಟಗಳಲ್ಲಿ ಕಂಡದ್ದೆಲ್ಲಾ ಅದರ ಮೇವು; ಹಸುರಾಗಿರುವುದನ್ನು ಎಲ್ಲಿದ್ದರೂ ಹುಡುಕುತ್ತಲೇ ಇರುವುದು.
JOB 39:9 “ಕಾಡುಕೋಣವು ನಿನ್ನ ಸೇವೆ ಮಾಡಲು ಎಂದಾದರೂ ಒಪ್ಪಿದೆಯೆ? ಅದು ರಾತ್ರಿಯಲ್ಲಿ ನಿನ್ನ ಗೋದಲಿಯ ಬಳಿಯಲ್ಲಿ ಉಳಿದುಕೊಂಡಿದೆಯೆ?
JOB 39:10 ಕಾಡುಕೋಣವನ್ನು ಹಗ್ಗದಿಂದ ನೇಗಿಲ ಸಾಲಿಗೆ ಕಟ್ಟಿರುವೆಯಾ? ಅದು ಕಣಿವೆಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೆ?
JOB 39:11 ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ? ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ?
JOB 39:12 ಅದು ನಿನ್ನ ಧಾನ್ಯ ತೆನೆಗಳನ್ನು ಮನೆಗೆ ತರುವುದೆಂದು ನಂಬುವೆಯಾ? ನಿನ್ನ ಕಣದಲ್ಲಿ ಕಾಳು ಕೂಡಿಸುವದೆಂದೂ ಅದನ್ನು ನಿರೀಕ್ಷಿಸುವೆಯಾ?
JOB 39:13 “ಉಷ್ಟ್ರಪಕ್ಷಿ ಸಂತೋಷದಿಂದ ರೆಕ್ಕೆ ಬಡಿಯುತ್ತದೆ. ಆದರೂ ಕೊಕ್ಕರೆಯ ರೆಕ್ಕೆ ಗರಿಗಳೊಂದಿಗೆ ಅವುಗಳನ್ನು ಹೋಲಿಸಲಾಗದು.
JOB 39:14 ಏಕೆಂದರೆ ಉಷ್ಟ್ರಪಕ್ಷಿಯು ತನ್ನ ಮೊಟ್ಟೆಗಳನ್ನು ನೆಲದಲ್ಲಿ ಬಿಟ್ಟು, ಕೇವಲ ಮರಳಿನಿಂದ ಅವುಗಳಿಗೆ ಕಾವು ಕೊಡುತ್ತದೆ.
JOB 39:15 ಜನರು ಕಾಲಿನಿಂದ ಮೊಟ್ಟೆಗಳನ್ನು ಮೆಟ್ಟಿಯಾರು, ಇಲ್ಲವೆ ಕಾಡುಮೃಗ ಅದನ್ನು ಅವುಗಳನ್ನು ತುಳಿದೀತು ಎಂಬ ಚಿಂತೆ ಆ ಪಕ್ಷಿಗೆ ಇಲ್ಲ.
JOB 39:16 ತನ್ನ ಮರಿಗಳನ್ನು ತನ್ನವುಗಳಲ್ಲ ಎಂಬಂತೆ ಕ್ರೂರವಾಗಿ ನಡೆಸುತ್ತದೆ; ಉಷ್ಟ್ರಪಕ್ಷಿಯು ತನ್ನ ಹೆರಿಗೆ ವ್ಯರ್ಥವಾದರೂ ಅದಕ್ಕೆ ಚಿಂತೆ ಇಲ್ಲ.
JOB 39:17 ಏಕೆಂದರೆ ದೇವರು ಉಷ್ಟ್ರಪಕ್ಷಿಗೆ ಜ್ಞಾನವನ್ನು ಮರೆಮಾಡಿ, ತಿಳುವಳಿಕೆಯನ್ನು ಅದಕ್ಕೆ ಕೊಡಲಿಲ್ಲವಷ್ಟೆ.
JOB 39:18 ಆದರೂ ಆ ಪಕ್ಷಿ ತನ್ನ ರೆಕ್ಕೆಗಳನ್ನು ಹರಡಿ ಓಡಿದಾಗ, ಅದು ಕುದುರೆ ಸವಾರನನ್ನು ಸಹ ನೋಡಿ ಅಣಕಿಸುತ್ತದೆ.
JOB 39:19 “ಯೋಬನೇ, ಕುದುರೆಗೆ ಶಕ್ತಿ ಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಹೊದಿಸಿದವನು ನೀನೋ?
JOB 39:20 ಮಿಡತೆಯ ಹಾಗೆ ಅದನ್ನು ಹಾರುವಂತೆ ಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭಯಂಕರವಾಗಿದೆಯಲ್ಲಾ?
JOB 39:21 ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ; ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ.
JOB 39:22 ಭಯವನ್ನು ಕಂಡು ನಗುತ್ತದೆ; ಯಾವುದಕ್ಕೂ ಹೆದರುವುದಿಲ್ಲ; ಖಡ್ಗಕ್ಕೆ ಸಹ ಹಿಂದೆಗೆಯುವುದಿಲ್ಲ.
JOB 39:23 ಅದರ ಮೇಲೆ ಬತ್ತಳಿಕೆಯೂ, ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ.
JOB 39:24 ಕುದುರೆ ಕಹಳೆಯ ನಾದವನ್ನು ಕೇಳಿದರೂ ಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ.
JOB 39:25 ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ. ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.
JOB 39:26 “ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ?
JOB 39:27 ರಣಹದ್ದು ಎತ್ತರಕ್ಕೆ ಹಾರುವುದೂ, ಉನ್ನತ ಸ್ಥಳದಲ್ಲಿ ಗೂಡುಕಟ್ಟುವುದು ನಿನ್ನ ಅಪ್ಪಣೆಯಿಂದಲೋ?
JOB 39:28 ಅದು ಬಂಡೆಯ ಸಂದುಗಳಲ್ಲಿ ರಾತ್ರಿಯನ್ನು ಕಳೆಯುತ್ತದೆ; ಶಿಲಾಶಿಖರದ ದುರ್ಗಗಳಲ್ಲಿಯೂ ಅದು ತಂಗುತ್ತದೆ.
JOB 39:29 ಅಲ್ಲಿಂದಲೇ ಆಹಾರವನ್ನು ಹುಡುಕುತ್ತದೆ; ಅದರ ಕಣ್ಣುಗಳು ದೂರದಿಂದಲೇ ನೋಡುತ್ತವೆ.
JOB 39:30 ಅದರ ಮರಿಗಳು ತಂದ ಬೇಟೆಯನ್ನು ತಿಂದುಬಿಡುತ್ತವೆ; ಹೆಣ ಬಿದ್ದಲ್ಲಿಯೇ ರಣಹದ್ದು ಇರುವುದು.”
JOB 40:1 ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು:
JOB 40:2 “ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು, ದೇವರಿಗೇ ಪಾಠ ಕಲಿಸಿಕೊಡುವೆಯಾ? ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!”
JOB 40:3 ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ,
JOB 40:4 “ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ.
JOB 40:5 ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು.
JOB 40:6 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ:
JOB 40:7 “ಈಗ ಶೂರನಂತೆ ನಿನ್ನ ನಡು ಕಟ್ಟಿಕೋ; ನಾನು ನಿನಗೆ ಪ್ರಶ್ನೆಮಾಡುತ್ತೇನೆ; ನೀನು ನನಗೆ ಉತ್ತರಕೊಡು.
JOB 40:8 “ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ?
JOB 40:9 ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ?
JOB 40:10 ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ.
JOB 40:11 ನಿನ್ನ ಕಡುಕೋಪವನ್ನು ಎಲ್ಲಾ ಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು.
JOB 40:12 ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು.
JOB 40:13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು.
JOB 40:14 ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.
JOB 40:15 “ನಾನು ನಿನ್ನ ಹಾಗೆ ಸೃಷ್ಟಿಮಾಡಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ.
JOB 40:16 ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ. ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ!
JOB 40:17 ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ; ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ.
JOB 40:18 ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ; ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ.
JOB 40:19 ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು; ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ.
JOB 40:20 ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ; ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ.
JOB 40:21 ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ.
JOB 40:22 ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ.
JOB 40:23 ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.
JOB 40:24 ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ? ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?
JOB 41:1 “ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?
JOB 41:2 ಅದರ ಮೂಗಿನಲ್ಲಿ ಗಾಳ ಇಡುವೆಯಾ? ಅದರ ದವಡೆಗೆ ಮುಳ್ಳಿನಿಂದ ಚುಚ್ಚುವೆಯಾ?
JOB 41:3 ಅದು ಅನೇಕ ಸಾರಿ ಕರುಣೆಗಾಗಿ ನಿನಗೆ ವಿಜ್ಞಾಪನೆಮಾಡಿತೇ? ನಿನ್ನ ಸಂಗಡ ನಮ್ರತೆಯಿಂದ ಮಾತನಾಡೀತೇ?
JOB 41:4 ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?
JOB 41:5 ಸಾಕುಪಕ್ಷಿಯಂತೆ ಅದನ್ನು ಆಡಿಸಬಲ್ಲೆಯಾ? ಮನೆಯಲ್ಲಿರುವ ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟಿ ಹಾಕಬಲ್ಲೆಯಾ?
JOB 41:6 ಬೆಸ್ತರು ಅದಕ್ಕಾಗಿ ವ್ಯಾಪಾರ ಒಪ್ಪಂದ ಮಾಡುತ್ತಾರೆಯೆ? ಅವರು ಅದನ್ನು ವರ್ತಕರಲ್ಲಿ ಹಂಚಿ ಮಾರುವರೆ?
JOB 41:7 ಆ ಮೊಸಳೆಯ ಚರ್ಮವನ್ನು ಮುಳ್ಳುಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನ್ನು ಮೀನು ಹಿಡಿಯುವ ಈಟಿಯಿಂದ ತಿವಿಯಬಲ್ಲೆಯಾ?
JOB 41:8 ಅದರ ಮೇಲೆ ನಿನ್ನ ಕೈಹಾಕಿ ನೋಡು! ಆ ಹೋರಾಟವನ್ನು ನೆನೆಸಿಕೊಂಡರೆ, ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ!
JOB 41:9 ಅದನ್ನು ಹಿಡಿಯಬಹುದೆಂಬ ನಿರೀಕ್ಷೆಯು ವ್ಯರ್ಥವಾದದ್ದು; ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಹೆದರಿ ಬಿದ್ದುಹೋಗುವನು.
JOB 41:10 ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರುವಾಗ, ನನಗೆ ಎದುರಾಗಿ ನಿಲ್ಲಲು ಶಕ್ತರು ಯಾರು?
JOB 41:11 ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.
JOB 41:12 “ನಾನು ಲಿವ್ಯಾತಾನ್ ಮೊಸಳೆಯ ದೇಹದ ಭಾಗಗಳನ್ನೂ ಬಲವನ್ನೂ, ಅದರ ಆಕರ್ಷಕ ಸೊಬಗನ್ನೂ ವರ್ಣಿಸದೆ ಸುಮ್ಮನಿರಲಾರೆನು.
JOB 41:13 ಅದರ ಹೊರ ವಸ್ತ್ರವನ್ನು ತೆಗೆಯಬಲ್ಲವರು ಯಾರು? ಅದರ ಜೋಡು ದವಡೆಗಳೊಳಗೆ ಕಡಿವಾಣದಿಂದ ನುಗ್ಗಬಲ್ಲವರು ಯಾರು?
JOB 41:14 ಅದರ ಮುಖದ ಕದಗಳನ್ನು ತೆರೆಯಬಲ್ಲವರು ಯಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
JOB 41:15 ಗುರಾಣಿಗಳ ಸಾಲುಗಳು ಅದರ ಬೆನ್ನಿಗೆ ಹೆಮ್ಮೆಯಾಗಿವೆ; ಅವು ಒಟ್ಟಿಗೆ ಬಿಗಿಯಾಗಿ ಮುದ್ರಿಸಲಾಗಿವೆ.
JOB 41:16 ಗಾಳಿಯೂ ಅವುಗಳ ನಡುವೆ ನುಗ್ಗದಂತೆ, ಒಂದಕ್ಕೊಂದು ಹೊಂದಿಕೊಂಡಿವೆ.
JOB 41:17 ಆ ಅಡ್ಡಣಗಳು ಒಂದಕ್ಕೊಂದು ಅಂಟಿಕೊಂಡಿವೆ; ಪ್ರತ್ಯೇಕಿಸಲಾಗದಂತೆ ಹಿಡಿದುಕೊಂಡಿವೆ.
JOB 41:18 ಅದರ ಸೀನಿನ ತುಂತುರುಗಳು ಬೆಳಕಿನ ಹೊಳಪನ್ನು ಹೊರಹಾಕುವುದು; ಅದರ ಕಣ್ಣುಗಳು ಉದಯದ ಕಿರಣಗಳ ಹಾಗೆ ಇವೆ.
JOB 41:19 ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
JOB 41:20 ಆಪುಹುಲ್ಲಿಗೆ ಬೆಂಕಿಯಿಟ್ಟಾಗ ಕುದಿಯುವ ಪಾತ್ರೆಯೊಳಗಿಂದ ಆವಿ ಬರುವಂತೆ, ಅದರ ಮೂಗಿನೊಳಗಿಂದ ಹೊಗೆ ಹಾಯುವುದು.
JOB 41:21 ಅದರ ಶ್ವಾಸವೇ ಇದ್ದಲನ್ನು ಹೊತ್ತಿಸುವುದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡುವುದು.
JOB 41:22 ಅದರ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿರುವುದು; ಅದರ ಮುಂದೆ ಭಯವು ಸಾಗುತ್ತಿರುವುದು.
JOB 41:23 ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲದೆ ಇರುತ್ತವೆ.
JOB 41:24 ಅದರ ಹೃದಯವು ಬಂಡೆಯಂತೆಯೂ, ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
JOB 41:25 ಅದು ಎದ್ದರೆ ಶೂರರು ಸಹ ಹೆದರುತ್ತಾರೆ; ಅದರ ಹೊಡೆತಕ್ಕೆ ಭಯಭ್ರಾಂತರಾಗಿ ಹಿಂಜರಿಯುವರು.
JOB 41:26 ಖಡ್ಗದಿಂದ ಹೊಡೆದರೆ ಅದಕ್ಕೇನೂ ಆಗುವುದಿಲ್ಲ; ಭರ್ಜಿ, ಬಾಣ, ಕವಚ ಇವುಗಳಿಂದಲೂ ಅದಕ್ಕೆ ಏನು ಆಗುವುದಿಲ್ಲ.
JOB 41:27 ಕಬ್ಬಿಣವು ಅದಕ್ಕೆ ಒಣಹುಲ್ಲಿನಂತೆಯೂ, ಕಂಚು ಅದಕ್ಕೆ ಕೊಳೆತ ಕಟ್ಟಿಗೆಯಂತೆಯೂ ಇರುವುದು.
JOB 41:28 ಲಿವ್ಯಾತಾನ್ ಮೊಸಳೆಯನ್ನು ಬಿಲ್ಲುಬಾಣಗಳು ಓಡಿಸಲು ಅಸಾಧ್ಯ; ಕವಣೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
JOB 41:29 ದೊಣ್ಣೆಗಳು ಅದಕ್ಕೆ ಒಣಹುಲ್ಲಿನ ಹಾಗೆ ಇರುವುದು; ಭರ್ಜಿ ಅದಕ್ಕೆ ತಾಕಿದರೆ, ಅದು ನಗುವುದು.
JOB 41:30 ಅದರ ಹೊಟ್ಟೆಯ ಅಡಿಯಲ್ಲಿ ಚೂಪಾದ ಒಡೆದ ಮಡಕೆಗಳಂತಿವೆ, ಅದು ಕೆಸರಿನ ಮೇಲೆ ತೆನೆಬಡಿಯುವ ಯಂತ್ರದಿಂದ ಆಗುವ ಗುರುತಿನಂತಿರುವುದು.
JOB 41:31 ಅದು ಆಳವಾದ ನೀರನ್ನು ಕುದಿಯುವ ಹಂಡೆಯ ನೀರಿನಂತೆ ಕಲಕುವುದು; ಸಮುದ್ರವನ್ನು ತೈಲದ ಪಾತ್ರೆಯ ಹಾಗೆಯೂ ಕದಲಿಸುವುದು.
JOB 41:32 ಸಾಗರಕ್ಕೆ ನೆರೆ ಬಂತೋ ಎಂಬಂತೆ, ಅದು ತಾನು ಬಂದ ಹಾದಿಯನ್ನೇ ಬೆಳ್ಳಗಾಗುವಂತೆ ಮಾಡುವುದು.
JOB 41:33 ಭೂಮಿಯ ಮೇಲೆ ಇದಕ್ಕೆ ಸಮಾನವಾದದ್ದು ಇಲ್ಲ; ಇದು ಭಯಭೀತಿಯಿಲ್ಲದ ಸೃಷ್ಟಿ.
JOB 41:34 ಇದು ಪ್ರತಿ ಅಹಂಕಾರಿಯನ್ನು ನೋಡುವುದು; ಗರ್ವಪಡುವ ಎಲ್ಲರ ಮೇಲೆ ಇದು ರಾಜನಾಗಿರುವುದು.”
JOB 42:1 ಆಗ ಯೋಬನು ಯೆಹೋವ ದೇವರಿಗೆ ಕೊಟ್ಟ ಉತ್ತರ:
JOB 42:2 “ತಮಗೆ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ನಾನು ಬಲ್ಲೆ; ತಮ್ಮ ಯಾವ ಉದ್ದೇಶವನ್ನೂ ಅಡ್ಡಿಮಾಡಲು ಸಾಧ್ಯವಿಲ್ಲ ಎಂಬುದನ್ನು ಸಹ ತಿಳಿದಿದ್ದೇನೆ.
JOB 42:3 ‘ತಿಳುವಳಿಕೆಯಿಲ್ಲದೆ ನನ್ನ ಯೋಜನೆಯನ್ನು ಮಂಕುಮಾಡುವ ನೀನು ಯಾರು?’ ಎಂದು ತಾವು ಪ್ರಶ್ನಿಸಿದ್ದೀರಿ. ನಿಶ್ಚಯವಾಗಿ, ತಾವು ಹೇಳಿದಂತೆ ನನಗೆ ಅರ್ಥವಾಗದವುಗಳನ್ನು ಮಾತಾಡಿಬಿಟ್ಟೆ, ನನಗೆ ತಿಳಿಯದ ಸಂಗತಿಗಳನ್ನೂ ನನ್ನ ಬುದ್ಧಿಗೆ ಮೀರಿದ ಅದ್ಭುತಗಳನ್ನೂ ಕುರಿತು ಟೀಕಿಸಿಬಿಟ್ಟೆ.
JOB 42:4 “ತಾವು ನನಗೆ, ‘ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು,’ ಎಂದು ಅಪ್ಪಣೆ ಕೊಟ್ಟಿದ್ದೀರಿ.
JOB 42:5 ಇದುವರೆಗೆ ತಮ್ಮನ್ನು ಕುರಿತು ನಾನು ಬೇರೆಯವರಿಂದ ಕೇಳಿದ್ದೆ; ಆದರೆ ಈಗ ತಮ್ಮನ್ನು ಕಣ್ಣಾರೆ ಕಂಡಿದ್ದೇನೆ.
JOB 42:6 ಆದ್ದರಿಂದ ನಾನು ಹೇಳಿದ್ದನ್ನೆಲ್ಲಾ ಹಿಂತೆಗೆದುಕೊಂಡು, ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ,” ಎಂದನು.
JOB 42:7 ಯೆಹೋವ ದೇವರು ಯೋಬನ ಸಂಗಡ ಮಾತಾಡಿದ ತರುವಾಯ, ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ನನಗೆ ಕೋಪವಿದೆ. ಏಕೆಂದರೆ ನೀವು ನನ್ನ ದಾಸನಾದ ಯೋಬನಂತೆ ನೀವು ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ.
JOB 42:8 ಆದುದರಿಂದ ಈಗ ನೀವು ಏಳು ಹೋರಿಗಳನ್ನು, ಏಳು ಟಗರುಗಳನ್ನು ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಬನ್ನಿರಿ. ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ; ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ದಂಡಿಸದಂತೆ, ಅವನ ಪ್ರಾರ್ಥನೆಯನ್ನು ಸ್ವೀಕರಿಸುವೆನು. ನೀವು ನನ್ನ ದಾಸನಾದ ಯೋಬನಂತೆ ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ,” ಎಂದು ಹೇಳಿದರು.
JOB 42:9 ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು ಮತ್ತು ನಾಮಾಥ್ಯನಾದ ಚೋಫರನು ಹೋಗಿ ಯೆಹೋವ ದೇವರು ತಮಗೆ ಹೇಳಿದಂತೆ ಮಾಡಿದರು. ಯೆಹೋವ ದೇವರು ಯೋಬನ ಪ್ರಾರ್ಥನೆಯನ್ನು ಸ್ವೀಕರಿಸಿದರು.
JOB 42:10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥನೆ ಮಾಡಿದ ತರುವಾಯ ಯೆಹೋವ ದೇವರು ಅವನ ಸಂಪತ್ತನ್ನು ಪುನಃಸ್ಥಾಪಿಸಿದರು. ಯೆಹೋವ ದೇವರು ಯೋಬನಿಗೆ ಮೊದಲು ಇದ್ದವುಗಳಿಗಿಂತ ಎರಡರಷ್ಟು ಕೊಟ್ಟರು.
JOB 42:11 ಆಗ ಯೋಬನ ಎಲ್ಲಾ ಸಹೋದರರು, ಸಹೋದರಿಯರು, ಹಿಂದಿನ ಪರಿಚಿತರೆಲ್ಲರೂ ಅವನ ಬಳಿಗೆ ಬಂದರು. ಅವರು ಯೋಬನ ಸಂಗಡ ಅವನ ಮನೆಯಲ್ಲಿ ಊಟಮಾಡಿ, ಯೆಹೋವ ದೇವರು ಅವನ ಮೇಲೆ ಬರಮಾಡಿದ ಎಲ್ಲಾ ಆಪತ್ತಿಗಾಗಿ ಸಂತಾಪ ವ್ಯಕ್ತಪಡಿಸಿ ಅವನನ್ನು ಸಂತೈಸಿದರು. ಪ್ರತಿಯೊಬ್ಬರೂ ಒಂದೊಂದು ಬೆಳ್ಳಿ ನಾಣ್ಯವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಯೋಬನಿಗೆ ಕೊಟ್ಟರು.
JOB 42:12 ಇದಲ್ಲದೆ ಯೆಹೋವ ದೇವರು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಅಧಿಕವಾಗಿ ಆಶೀರ್ವದಿಸಿದರು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಕತ್ತೆಗಳೂ ದೊರಕಿದವು.
JOB 42:13 ಅವನಿಗೆ ಏಳು ಪುತ್ರರೂ ಮೂರು ಪುತ್ರಿಯರೂ ಹುಟ್ಟಿದರು.
JOB 42:14 ಯೋಬನು ಮೊದಲನೆಯವಳಿಗೆ ಯೆಮೀಮಳೆಂದೂ ಎರಡನೆಯವಳಿಗೆ ಕೆಚೀಯಳೆಂದೂ ಮೂರನೆಯವಳಿಗೆ ಕೆರೆನ್ ಹಪ್ಪೂಕ್ ಎಂದೂ ಹೆಸರಿಟ್ಟನು.
JOB 42:15 ಯೋಬನ ಪುತ್ರಿಯರ ಹಾಗೆ ಸೌಂದರ್ಯವತಿಯರು ದೇಶದಲ್ಲೆಲ್ಲೂ ಇರಲಿಲ್ಲ. ಅವರ ತಂದೆ ಅವರ ಅಣ್ಣತಮ್ಮಂದಿರಿಗೆ ಕೊಟ್ಟಹಾಗೆ ಅವರಿಗೂ ಸೊತ್ತನ್ನು ಹಂಚಿದನು.
JOB 42:16 ತರುವಾಯ ಯೋಬನು ನೂರ ನಾಲ್ವತ್ತು ವರ್ಷ ಬಾಳಿದನು. ನಾಲ್ಕನೆಯ ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು.
JOB 42:17 ಅನಂತರ ಯೋಬನು, ದಿನತುಂಬಿದ ಮುದುಕನಾಗಿ ಸತ್ತನು.
PSA 1:1 ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಿಗಳ ಮಾರ್ಗದಲ್ಲಿ ನಿಲ್ಲದೆ, ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,
PSA 1:2 ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ, ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು.
PSA 1:3 ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ, ಅದರ ಎಲೆ ಉದುರುವುದೇ ಇಲ್ಲ. ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು.
PSA 1:4 ಆದರೆ ದುಷ್ಟರು ಹಾಗಲ್ಲ! ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೇ ಇದ್ದಾರೆ.
PSA 1:5 ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು, ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ.
PSA 1:6 ಯೆಹೋವ ದೇವರು ನೀತಿವಂತರ ಮಾರ್ಗವನ್ನು ಅರಿತಿದ್ದಾರೆ; ಆದರೆ ದುಷ್ಟರ ಮಾರ್ಗವು ನಾಶಕ್ಕೆ ನಡೆಸುವುದು.
PSA 2:1 ರಾಷ್ಟ್ರಗಳು ಒಳಸಂಚು ಮಾಡುವುದೂ ಜನಾಂಗಗಳು ವ್ಯರ್ಥವಾಗಿ ಕುತಂತ್ರ ಮಾಡುವುದೂ ಏಕೆ?
PSA 2:2 ಯೆಹೋವ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ, ಭೂಲೋಕದ ಅರಸರು ನಿಂತುಕೊಳ್ಳುತ್ತಾರೆ. ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.
PSA 2:3 “ಅವರು ಹಾಕಿದ ಬೇಡಿಗಳನ್ನು ಮುರಿದು ಬಂಧಗಳನ್ನು ಹರಿದು ಬೀಸಾಡೋಣ,” ಎನ್ನುತ್ತಾರೆ.
PSA 2:4 ಪರಲೋಕದಲ್ಲಿ ಕೂತಿರುವ ದೇವರು ಅದಕ್ಕೆ ನಗುವರು, ಕರ್ತದೇವರು ಅವರನ್ನು ಕಂಡು ಅಪಹಾಸ್ಯ ಮಾಡುವರು.
PSA 2:5 ಕರ್ತದೇವರು ತಮ್ಮ ಕೋಪದಿಂದ ಅವರನ್ನು ಗದರಿಸುತ್ತಾ, ತಮ್ಮ ಬೇಸರದಿಂದ ಅವರನ್ನು ಕಳವಳಪಡಿಸಿ ಹೀಗೆ ಹೇಳುವರು,
PSA 2:6 “ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.”
PSA 2:7 ನಾನು ಯೆಹೋವ ದೇವರ ತೀರ್ಪನ್ನು ಹೀಗೆ ಪ್ರಕಟಿಸುವೆನು: ಅವರು ನನಗೆ ಹೇಳಿದ್ದು, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ.
PSA 2:8 ನನ್ನನ್ನು ಕೇಳು, ಆಗ ನಾನು ರಾಷ್ಟ್ರಗಳನ್ನು ನಿನ್ನ ವಾರಸಾಗಿಯೂ, ಭೂಮಿಯ ಕಟ್ಟಕಡೆಯವರೆಗೂ ಇರುವ ದೇಶಗಳನ್ನೂ ನಿಮ್ಮ ಸೊತ್ತಾಗಿಯೂ ಕೊಡುವೆನು.
PSA 2:9 ಕಬ್ಬಿಣದ ಗದೆಯಿಂದ ನೀನು ಅವರನ್ನು ದಂಡಿಸಿ, ಮಣ್ಣಿನ ಮಡಕೆಯಂತೆ ಚೂರುಚೂರಾಗಿ ಅವರನ್ನು ಒಡೆದುಹಾಕುವೆ.”
PSA 2:10 ಆದ್ದರಿಂದ, ರಾಜರುಗಳೇ, ಈಗ ಜ್ಞಾನವಂತರಾಗಿರಿ. ಭೂಲೋಕದ ಅಧಿಕಾರಿಗಳೇ, ಎಚ್ಚರಿಕೆಯಿಂದಿರಿ.
PSA 2:11 ಭಯಭಕ್ತಿಯಿಂದ ಯೆಹೋವ ದೇವರ ಸೇವೆಮಾಡಿರಿ, ನಡುಗುತ್ತಾ ಅವರ ಆಳ್ವಿಕೆಯಲ್ಲಿ ಉಲ್ಲಾಸಪಡಿರಿ.
PSA 2:12 ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು.
PSA 3:1 ದಾವೀದನ ಕೀರ್ತನೆ. ಅವನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ್ದು. ಯೆಹೋವ ದೇವರೇ, ನನ್ನ ವೈರಿಗಳು ಬಹುಜನ! ನನಗೆ ವಿರೋಧವಾಗಿ ಏಳುವವರು ಎಷ್ಟೋ ಜನ!
PSA 3:2 “ದೇವರು ಅವನನ್ನು ಬಿಡುಗಡೆ ಮಾಡುವುದಿಲ್ಲ,” ಎಂದು ಅನೇಕರು ನನ್ನ ಬಗ್ಗೆ ಹೇಳುತ್ತಾರೆ.
PSA 3:3 ಆದರೆ ಯೆಹೋವ ದೇವರೇ, ನೀವೇ ನನ್ನ ಸುತ್ತಲಿರುವ ಗುರಾಣಿಯೂ, ನನ್ನ ಮಹಿಮೆಯೂ ನನ್ನ ತಲೆ ಮೇಲೆತ್ತುವವರೂ ಆಗಿದ್ದೀರಿ.
PSA 3:4 ನಾನು ನನ್ನ ಧ್ವನಿಯೆತ್ತಿ ಯೆಹೋವ ದೇವರಿಗೆ ಮೊರೆಯಿಡುವೆನು, ಅವರು ತಮ್ಮ ಪರಿಶುದ್ಧ ಪರ್ವತದಿಂದ ನನಗೆ ಉತ್ತರಕೊಡುವರು.
PSA 3:5 ನಾನು ಮಲಗಿ ನಿದ್ರಿಸುವೆನು; ಯೆಹೋವ ದೇವರು ನನ್ನನ್ನು ಕಾಪಾಡಿದ್ದರಿಂದ ನಾನು ಎಚ್ಚರಗೊಂಡೆನು.
PSA 3:6 ಸಾವಿರಾರು ಜನರು ನನಗೆ ವಿರೋಧವಾಗಿ ನನ್ನ ಸುತ್ತುವರಿದರೂ ನಾನು ಭಯಪಡೆನು.
PSA 3:7 ಯೆಹೋವ ದೇವರೇ, ಏಳಿರಿ! ನನ್ನ ದೇವರೇ, ನನ್ನನ್ನು ರಕ್ಷಿಸಿರಿ. ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ; ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.
PSA 3:8 ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು. ನಿಮ್ಮ ಜನರ ಮೇಲೆ ನಿಮ್ಮ ಆಶೀರ್ವಾದವಿರಲಿ.
PSA 4:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ. ನನ್ನ ನೀತಿಯಾಗಿರುವ ದೇವರೇ, ನಾನು ಕರೆಯುವಾಗ ನನಗೆ ಸದುತ್ತರವನ್ನು ಕೊಡಿರಿ. ನನ್ನ ಸಂಕಟದಿಂದ ನನಗೆ ನೆಮ್ಮದಿಯನ್ನು ನೀಡಿರಿ; ನನ್ನನ್ನು ಕರುಣಿಸಿ, ನನ್ನ ಪ್ರಾರ್ಥನೆಯನ್ನು ಕೇಳಿರಿ.
PSA 4:2 ಓ ಮಾನವ, ನೀನು ಎಲ್ಲಿಯತನಕ ನನ್ನ ಮಹಿಮೆಯನ್ನು ಅವಮಾನಕ್ಕೆ ಗುರಿಪಡಿಸುವಿ? ನೀನು ಎಲ್ಲಿಯತನಕ ವ್ಯರ್ಥವಾದದ್ದನ್ನು ಪ್ರೀತಿಸಿ, ಸುಳ್ಳನ್ನು ಹುಡುಕುವಿ?
PSA 4:3 ಯೆಹೋವ ದೇವರು ತಮ್ಮ ನಂಬಿಗಸ್ತರನ್ನು ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ; ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.
PSA 4:4 ನಡುಗಿರಿ, ಪಾಪಮಾಡಬೇಡಿರಿ; ನೀವು ನಿಮ್ಮ ಹಾಸಿಗೆಯ ಮೇಲೆ ಇರುವಾಗ, ನಿಮ್ಮ ಹೃದಯಗಳಲ್ಲಿ ಧ್ಯಾನಮಾಡಿ ಮೌನವಾಗಿರಿ.
PSA 4:5 ನೀತಿಯ ಬಲಿಗಳನ್ನು ಅರ್ಪಿಸಿರಿ ಯೆಹೋವ ದೇವರಲ್ಲಿ ನಿಮ್ಮ ಭರವಸೆಯನ್ನು ಇಡಿರಿ.
PSA 4:6 ಯೆಹೋವ ದೇವರೇ, “ನಮಗೆ ಒಳ್ಳೆಯದನ್ನು ಮಾಡುವವರು ಯಾರು?” ಎಂದು ಕೇಳುವವರು ಅನೇಕರಿದ್ದಾರೆ. ನಿಮ್ಮ ಮುಖಪ್ರಕಾಶವು ನಮ್ಮ ಮೇಲೆ ಬೆಳಗಲಿ.
PSA 4:7 ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.
PSA 4:8 ಸಮಾಧಾನವಾಗಿ ಮಲಗಿ ನಿದ್ರೆ ಮಾಡುವೆನು, ಏಕೆಂದರೆ ಯೆಹೋವ ದೇವರೇ, ನೀವೊಬ್ಬರೇ ನನ್ನನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡುತ್ತೀರಿ.
PSA 5:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೊಳಲು ವಾದ್ಯದೊಡನೆ ಹಾಡತಕ್ಕದ್ದು, ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ, ನನ್ನ ಪ್ರಲಾಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.
PSA 5:2 ನನ್ನ ಅರಸರೇ, ನನ್ನ ದೇವರೇ, ಸಹಾಯಕ್ಕಾಗಿರುವ ನನ್ನ ಮೊರೆಯನ್ನು ಕೇಳಿರಿ, ನಿಮಗೇ ನಾನು ಪ್ರಾರ್ಥಿಸುತ್ತೇನೆ.
PSA 5:3 ಯೆಹೋವ ದೇವರೇ, ಉದಯಕಾಲದಲ್ಲಿ ನನ್ನ ಸ್ವರವನ್ನು ಕೇಳಿರಿ; ಮುಂಜಾನೆಯಲ್ಲಿ ನಾನು ನನ್ನ ಬೇಡಿಕೆಗಳನ್ನು ನಿಮ್ಮ ಮುಂದೆ ಸಮರ್ಪಿಸಿ, ಎದುರುನೋಡುತ್ತಾ ಕಾದುಕೊಂಡಿರುವೆನು.
PSA 5:4 ನೀವು ದುಷ್ಟತನವನ್ನು ಮೆಚ್ಚುವ ದೇವರಲ್ಲ; ಕೆಡುಕರು ನಿಮ್ಮ ಬಳಿಯಲ್ಲಿ ವಾಸಿಸುವುದಿಲ್ಲ.
PSA 5:5 ನಿಮ್ಮ ಸನ್ನಿಧಿಯಲ್ಲಿ ಗರ್ವಿಗಳು ನಿಂತುಕೊಳ್ಳಲಾರರು. ಅಧರ್ಮ ಮಾಡುವವರೆಲ್ಲರನ್ನು ನೀವು ದ್ವೇಷಿಸುತ್ತೀರಿ.
PSA 5:6 ಸುಳ್ಳಾಡುವವರನ್ನು ನೀವು ದಂಡಿಸುತ್ತೀರಿ. ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವ ದೇವರು ಅಸಹ್ಯಪಡುತ್ತಾರೆ.
PSA 5:7 ನಾನಾದರೋ, ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಿಮ್ಮ ಮನೆಗೆ ಬರುವೆನು; ಭಕ್ತಿಭಾವದಿಂದ ನಿಮ್ಮ ಪರಿಶುದ್ಧ ಆಲಯದ ಕಡೆಗೆ ತಲೆಬಾಗುವೆನು.
PSA 5:8 ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತ ನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ; ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ.
PSA 5:9 ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ; ಅವರ ಹೃದಯವು ನಾಶನದಿಂದ ತುಂಬಿದೆ. ಅವರ ಗಂಟಲು ತೆರೆದ ಸಮಾಧಿಯೇ; ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ.
PSA 5:10 ಓ ದೇವರೇ! ಅವರನ್ನು ಅಪರಾಧಿಗಳೆಂದು ನಿರ್ಣಯಿಸಿರಿ, ಅವರು ತಮ್ಮ ಸ್ವಂತ ಕುತಂತ್ರಗಳಿಂದ ಬಿದ್ದುಹೋಗಲಿ. ಅವರ ಬಹು ಪಾಪಗಳ ನಿಮಿತ್ತ ಅವರನ್ನು ಬಹಿಷ್ಕರಿಸಿರಿ, ಏಕೆಂದರೆ ಅವರು ನಿಮಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
PSA 5:11 ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ; ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ. ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆ ಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ.
PSA 5:12 ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ; ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.
PSA 6:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ. ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ, ರೋಷದಿಂದಲೂ ನನ್ನನ್ನು ದಂಡಿಸಬೇಡಿರಿ.
PSA 6:2 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಬಲಹೀನನಾಗಿದ್ದೇನೆ; ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿರಿ, ನನ್ನ ಎಲುಬುಗಳು ಬಹು ವ್ಯಥೆಗೊಳಗಾಗಿವೆ.
PSA 6:3 ನನ್ನ ಪ್ರಾಣವು ಬಹು ಸಂಕಟದಲ್ಲಿದೆ. ಎಲ್ಲಿಯತನಕ, ಯೆಹೋವ ದೇವರೇ, ಇನ್ನೂ ಎಲ್ಲಿಯತನಕ?
PSA 6:4 ಯೆಹೋವ ದೇವರೇ, ನನ್ನ ಕಡೆಗೆ ಹಿಂದಿರುಗಿರಿ, ನನ್ನನ್ನು ಬಿಡುಗಡೆ ಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ನಿಮಿತ್ತ ನನ್ನನ್ನು ರಕ್ಷಿಸಿರಿ.
PSA 6:5 ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು?
PSA 6:6 ನನ್ನ ನರಳಾಟದಿಂದ ದಣಿದು ಹೋಗಿದ್ದೇನೆ. ರಾತ್ರಿಯೆಲ್ಲಾ ನಾನು ಅಳುವುದರಿಂದ ನನ್ನ ಹಾಸಿಗೆಯು ಕಣ್ಣೀರಿನ ಪ್ರವಾಹದಿಂದ ತೇಲಾಡುತ್ತದೆ, ಕಣ್ಣೀರಿನಿಂದ ನನ್ನ ಮಂಚವನ್ನು ತೊಯಿಸಿದ್ದೇನೆ.
PSA 6:7 ದುಃಖದಿಂದ ನನ್ನ ಕಣ್ಣುಗಳು ಬಲಹೀನವಾಗಿವೆ, ನನ್ನ ಸಕಲ ವೈರಿಗಳಿಂದ ಅವು ಮೊಬ್ಬಾಗಿವೆ.
PSA 6:8 ಕೆಟ್ಟದ್ದನ್ನು ಮಾಡುವವರೇ, ನೀವೆಲ್ಲರು ನನ್ನಿಂದ ತೊಲಗಿಹೋಗಿರಿ, ಏಕೆಂದರೆ ಯೆಹೋವ ದೇವರು ನನ್ನ ಗೋಳಾಟವನ್ನು ಕೇಳಿದ್ದಾರೆ.
PSA 6:9 ಯೆಹೋವ ದೇವರು ನಾನು ಕರುಣೆಗಾಗಿ ಕೇಳಿದ ನನ್ನ ಮೊರೆಯನ್ನು ಆಲಿಸಿದ್ದಾರೆ; ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಸ್ವೀಕರಿಸುವರು.
PSA 6:10 ನನ್ನ ಶತ್ರುಗಳೆಲ್ಲರೂ ನಾಚಿಕೆಪಟ್ಟು ತತ್ತರಿಸುವರು; ಕ್ಷಣಮಾತ್ರದಲ್ಲಿ ಅವರು ಅವಮಾನಗೊಂಡು ಹಿಂದಿರುಗಿ ಹೋಗುವರು.
PSA 7:1 ಬೆನ್ಯಾಮೀನವನಾದ ಕೂಷನ ಮಾತುಗಳ ನಿಮಿತ್ತ ದಾವೀದನು ಯೆಹೋವ ದೇವರಿಗೆ ಹಾಡಿದ ಶಿಗ್ಗಯೋನ್ ಗೀತೆ. ನನ್ನ ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿದ್ದೇನೆ; ನನ್ನನ್ನು ಬೆನ್ನಟ್ಟಿದ ಎಲ್ಲರಿಂದಲೂ ನನ್ನನ್ನು ರಕ್ಷಿಸಿ ಕಾಪಾಡಿರಿ,
PSA 7:2 ಇಲ್ಲದಿದ್ದರೆ, ನನ್ನನ್ನು ಸಿಂಹದಂತೆ ಅವರು ಹರಿದುಬಿಡುವರು ರಕ್ಷಿಸಲು ಯಾರೂ ಇಲ್ಲವೆಂದು ನನ್ನನ್ನು ನಾಶಮಾಡಿಬಿಡುವರು.
PSA 7:3 ನನ್ನ ಯೆಹೋವ ದೇವರೇ, ನಾನು ಅನ್ಯಾಯ ಮಾಡಿದ್ದರೆ, ನನ್ನ ಕೈಗಳಲ್ಲಿ ಅಪರಾಧವಿದ್ದರೆ,
PSA 7:4 ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡುಮಾಡಿದ್ದರೆ, ಕಾರಣವಿಲ್ಲದೆ ನನ್ನ ವೈರಿಯಿಂದ ಏನನ್ನಾದರೂ ಸುಲಿದುಕೊಂಡಿದ್ದರೆ,
PSA 7:5 ಆಗ ನನ್ನ ವೈರಿಯು ಬೆನ್ನಟ್ಟಿ ನನ್ನನ್ನು ಹಿಡಿದುಕೊಳ್ಳಲಿ. ನನ್ನ ಜೀವವನ್ನು ನೆಲಕ್ಕೆ ಹಾಕಿ ತುಳಿದು ಬಿಡಲಿ ಮತ್ತು ನನ್ನ ಮಾನವನ್ನು ಮಣ್ಣು ಪಾಲಾಗುವಂತೆ ಮಾಡಲಿ.
PSA 7:6 ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ; ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ. ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.
PSA 7:7 ರಾಷ್ಟ್ರಗಳು ನಿಮ್ಮ ಸುತ್ತಲು ಬಂದು ಸೇರಲಿ, ಉನ್ನತದಿಂದ ನೀವು ಅವರ ಮೇಲೆ ಸಿಂಹಾಸನದಲ್ಲಿದ್ದು ಆಳಿರಿ.
PSA 7:8 ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ. ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ, ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.
PSA 7:9 ದುಷ್ಟರ ಕೆಟ್ಟತನವು ಅಂತ್ಯವಾಗುವಂತೆಯೂ ನೀತಿವಂತರ ಭದ್ರತೆಯು ನಿಶ್ಚಯವಾಗುವಂತೆಯೂ ಮಾಡಿರಿ. ನೀತಿಯುಳ್ಳ ದೇವರೇ, ನೀವು ಹೃದಯವನ್ನೂ ಮನಸ್ಸನ್ನೂ ಪರಿಶೋಧಿಸುವವರಾಗಿದ್ದೀರಿ.
PSA 7:10 ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ, ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.
PSA 7:11 ದೇವರು ನೀತಿಯುಳ್ಳ ನ್ಯಾಯಾಧಿಪತಿಯಾಗಿದ್ದಾರೆ. ದೇವರು ದುಷ್ಟನ ಮೇಲೆ ಸದಾ ರೋಷವುಳ್ಳವರಾಗಿದ್ದಾರೆ.
PSA 7:12 ಅಂಥವರು ತಿರುಗಿಕೊಳ್ಳದಿದ್ದರೆ ದೇವರು ತಮ್ಮ ಖಡ್ಗ ಮಸೆಯುವರು; ತಮ್ಮ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡುವರು.
PSA 7:13 ಅಂಥವರಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿದ್ದಾರೆ; ತಮ್ಮ ಅಗ್ನಿಬಾಣಗಳನ್ನು ಸಿದ್ಧಮಾಡುತ್ತಾರೆ.
PSA 7:14 ಅಂಥವರು ದುಷ್ಟತನವನ್ನು ಗರ್ಭಧರಿಸಿ, ಸೇಡನ್ನು ಗರ್ಭದಲ್ಲಿಟ್ಟುಕೊಂಡು ಸುಳ್ಳನ್ನು ಹೆರುವರು.
PSA 7:15 ಅಂಥವರು ಕುಣಿಯನ್ನು ಅಗೆದಿದ್ದಾರೆ. ಆದರೆ ತಾವು ಅಗೆದ ಕುಣಿಯೊಳಗೆ ತಾವೇ ಬೀಳುವರು.
PSA 7:16 ಅಂಥವರ ಕೇಡು ಅವರ ಮೇಲೆಯೇ ತಿರುಗುವುದು; ಅವರ ತಲೆಯ ಮೇಲೆ ಅವರ ಬಲಾತ್ಕಾರವೇ ಇಳಿಯುವುದು.
PSA 7:17 ನಾನು ಯೆಹೋವ ದೇವರನ್ನು ಕೊಂಡಾಡುವೆನು; ಏಕೆಂದರೆ, ಅವರು ನೀತಿಯುಳ್ಳವರು. ಮಹೋನ್ನತರಾದ ಯೆಹೋವ ದೇವರ ಹೆಸರನ್ನು ಕೀರ್ತನೆ ಮಾಡುವೆನು.
PSA 8:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಲ್ಲಿ ಹಾಡತಕ್ಕದ್ದು. ದಾವೀದನ ಕೀರ್ತನೆ. ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ವೈಭವವುಳ್ಳದ್ದಾಗಿದೆ! ನೀವು ನಿಮ್ಮ ಮಹಿಮೆಯನ್ನು ಆಕಾಶಗಳಲ್ಲಿ ಸ್ಥಾಪಿಸಿದ್ದೀರಿ.
PSA 8:2 ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಸ್ತೋತ್ರದ ಮೂಲಕ ನಿಮ್ಮ ಶತ್ರುಗಳ ವಿರೋಧವಾಗಿ ಭದ್ರಕೋಟೆಯನ್ನು ಸ್ಥಾಪಿಸಿ, ನಿಮ್ಮ ವೈರಿಗಳನ್ನೂ ಮುಯ್ಯಿ ತೀರಿಸುವವರನ್ನೂ ನೀವು ಸುಮ್ಮಗಿರಿಸಿದ್ದೀರಿ.
PSA 8:3 ನಿಮ್ಮ ಬೆರಳಿನ ಸೃಷ್ಟಿಯಾದ ಆಕಾಶಮಂಡಲವನ್ನೂ ನೀವು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡಿದಾಗ,
PSA 8:4 ನೀವು ಮಾನವರನ್ನು ನೆನಸಲು ಅವರು ಎಷ್ಟರವರು? ಮನುಷ್ಯಪುತ್ರನನ್ನು ಲಕ್ಷ್ಯವಿಡಲು ಅವನು ಯಾರು?
PSA 8:5 ನೀವು ಮನುಷ್ಯಪುತ್ರನನ್ನು ದೇವರಿಗಿಂತಲೂ ಸ್ವಲ್ಪ ಕಡಿಮೆ ಮಾಡಿ, ಮಹಿಮೆಯನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿಟ್ಟಿದ್ದೀರಿ.
PSA 8:6 ನೀವು ನಿಮ್ಮ ಕೈಕೃತಿಗಳ ಮೇಲೆ ಅವನನ್ನು ಅಧಿಕಾರಿಯನ್ನಾಗಿ ಮಾಡಿ, ಸಮಸ್ತವನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ:
PSA 8:7 ಎಲ್ಲಾ ಕುರಿದನಗಳನ್ನೂ ಅಡವಿಯ ಮೃಗಗಳನ್ನೂ
PSA 8:8 ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ಸಮುದ್ರದ ಹಾದಿಗಳಲ್ಲಿ ಸಂಚರಿಸುವ ಎಲ್ಲ ವಿಧವಾದ ಜೀವಜಂತುಗಳನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ.
PSA 8:9 ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದಾಗಿದೆ!
PSA 9:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಪುತ್ರನ ಮರಣದ” ರಾಗ. ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಾನು ನಿಮ್ಮನ್ನು ಸ್ತುತಿಸುವೆನು; ನಿಮ್ಮ ಅದ್ಭುತ ಕಾರ್ಯಗಳನ್ನೆಲ್ಲಾ ನಾನು ವರ್ಣಿಸುವೆನು.
PSA 9:2 ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು; ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.
PSA 9:3 ನನ್ನ ಶತ್ರುಗಳು ಹಿಂದಿರುಗಿ ಓಡುವರು; ಅವರು ನಿಮ್ಮ ಮುಂದೆ ಎಡವಿಬಿದ್ದು ನಾಶವಾಗುವರು.
PSA 9:4 ನೀವು ನನ್ನ ನ್ಯಾಯವನ್ನೂ ವ್ಯಾಜ್ಯವನ್ನೂ ತೀರಿಸಲು ನೀತಿಯುಳ್ಳ ನ್ಯಾಯಾಧಿಪತಿಯಾಗಿ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೀರಿ.
PSA 9:5 ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ; ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.
PSA 9:6 ವೈರಿಯನ್ನು ವಿನಾಶವು ನಿರಂತರವಾಗಿ ಬೆನ್ನಟ್ಟಿದೆ, ನೀವು ಅವರ ಪಟ್ಟಣಗಳನ್ನು ಕೆಡವಿದ್ದೀರಿ; ಅವರ ಸ್ಮರಣೆಯು ಅವರೊಂದಿಗೇ ನಾಶವಾಯಿತು.
PSA 9:7 ಯೆಹೋವ ದೇವರು ಸದಾ ಆಳುವವರು; ಅವರು ನ್ಯಾಯಕ್ಕಾಗಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ.
PSA 9:8 ಅವರು ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವರು; ಪ್ರಜೆಗಳಿಗೆ ಯಥಾರ್ಥವಾದ ತೀರ್ಪು ನೀಡುವರು.
PSA 9:9 ಯೆಹೋವ ದೇವರು ಕುಗ್ಗಿದವರಿಗೆ ಆಶ್ರಯವಾಗಿರುವರು, ಇಕ್ಕಟ್ಟಿನ ದಿವಸಗಳಲ್ಲಿ ಭದ್ರಕೋಟೆಯಾಗಿರುವರು.
PSA 9:10 ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು, ಏಕೆಂದರೆ ಯೆಹೋವ ದೇವರೇ, ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.
PSA 9:11 ಚೀಯೋನಿನಲ್ಲಿ ವಾಸಿಸುವ ಯೆಹೋವ ದೇವರಿಗೆ ಸ್ತುತಿಹಾಡಿರಿ; ಅವರ ಕ್ರಿಯೆಗಳನ್ನು ರಾಷ್ಟ್ರಗಳಲ್ಲಿ ಸಾರಿ ಹೇಳಿರಿ.
PSA 9:12 ಅವರು ಪ್ರಾಣಹತ್ಯೆ ಮಾಡುವವರನ್ನು ಮುಯ್ಯಿತೀರಿಸಲು ಜ್ಞಾಪಕಮಾಡಿಕೊಳ್ಳುವರು; ಬಾಧೆಗೆ ಒಳಗಾಗಿರುವ ದೀನರ ಕೂಗನ್ನು ಅವರು ಅಲಕ್ಷ್ಯಮಾಡುವುದಿಲ್ಲ.
PSA 9:13 ಯೆಹೋವ ದೇವರೇ, ನನ್ನ ವೈರಿಗಳು ನನ್ನನ್ನು ಹಿಂಸಿಸುವುದನ್ನು ನೋಡಿರಿ. ನನ್ನನ್ನು ಕರುಣಿಸಿ, ಮರಣ ದ್ವಾರದಿಂದ ನನ್ನನ್ನು ಮೇಲಕ್ಕೆತ್ತಿರಿ.
PSA 9:14 ಆಗ ಚೀಯೋನೆಂಬ ನಗರ ದ್ವಾರಗಳಲ್ಲಿ ನಿಮ್ಮ ಸ್ತುತಿಯನ್ನು ಸಾರುವೆನು. ನಿಮ್ಮ ರಕ್ಷಣೆಯಲ್ಲಿ ಆನಂದಿಸುವೆನು.
PSA 9:15 ರಾಷ್ಟ್ರಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲೇ ಅವರ ಕಾಲುಗಳು ಸಿಕ್ಕಿಕೊಂಡಿವೆ.
PSA 9:16 ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ; ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.
PSA 9:17 ದುಷ್ಟರು ಪಾತಾಳಕ್ಕೆ ತಿರುಗುವರು, ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು.
PSA 9:18 ಆದರೆ ದೇವರು ಬಡವರನ್ನು ಎಂದೆಂದಿಗೂ ಮರೆಯುವುದಿಲ್ಲ; ಕುಗ್ಗಿದವರ ನಿರೀಕ್ಷೆ ಎಂದೆಂದಿಗೂ ನಾಶವಾಗುವುದಿಲ್ಲ.
PSA 9:19 ಯೆಹೋವ ದೇವರೇ ಎದ್ದೇಳಿರಿ, ಮನುಷ್ಯರು ನನ್ನ ಮೇಲೆ ವಿಜಯ ಸಾಧಿಸದಿರಲಿ; ರಾಷ್ಟ್ರಗಳಿಗೆ ನಿಮ್ಮ ಮುಂದೆಯೇ ನ್ಯಾಯತೀರ್ಪಾಗಲಿ.
PSA 9:20 ಯೆಹೋವ ದೇವರೇ, ಅವರನ್ನು ಭಯದಲ್ಲಿರಿಸಿರಿ; ರಾಷ್ಟ್ರಗಳು ತಾವು ಮನುಷ್ಯರೇ ಎಂದು ತಿಳಿದುಕೊಳ್ಳಲಿ.
PSA 10:1 ಯೆಹೋವ ದೇವರೇ, ನೀವು ದೂರದಲ್ಲಿ ನಿಂತುಕೊಳ್ಳುವುದು ಏಕೆ? ಇಕ್ಕಟ್ಟಿನ ಕಾಲಗಳಲ್ಲಿ ನೀವು ಮರೆಯಾಗಿರುವುದೂ ಏಕೆ?
PSA 10:2 ದುಷ್ಟನು ಗರ್ವದಿಂದ ದೀನನನ್ನು ಬೇಟೆಯಾಡುತ್ತಾನೆ, ಅವನು ಕಲ್ಪಿಸಿದ ಕುಯುಕ್ತಿಗಳಲ್ಲಿ ಅವನೇ ಸಿಕ್ಕಿಬೀಳುತ್ತಾನೆ.
PSA 10:3 ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ.
PSA 10:4 ದುಷ್ಟನು ತನ್ನ ಗರ್ವದಲ್ಲಿ ದೇವರನ್ನು ಹುಡುಕುವುದಿಲ್ಲ; ಅವನ ಎಲ್ಲ ಯೋಚನೆಗಳಲ್ಲಿಯೂ ದೇವರಿಗೆ ಸ್ಥಳವೇ ಇಲ್ಲ.
PSA 10:5 ಅವನ ಮಾರ್ಗಗಳು ಯಾವಾಗಲೂ ಸಮೃದ್ಧಿಯಾಗಿರುತ್ತವೆ; ಆದರೆ ನಿಮ್ಮ ನಿಯಮಗಳು ಅವನ ದೃಷ್ಟಿಗೆ ಬಹು ದೂರವಾಗಿವೆ; ಅವನು ತನ್ನ ಎಲ್ಲಾ ವೈರಿಗಳನ್ನು ಹೀಯಾಳಿಸುತ್ತಾನೆ.
PSA 10:6 ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.”
PSA 10:7 ಅವನ ಬಾಯಿ ಸುಳ್ಳಿನಿಂದಲೂ ಬೆದರಿಕೆಯಿಂದಲೂ ತುಂಬಿದೆ. ಕೇಡೂ ನಾಶನವೂ ಅವನ ನಾಲಿಗೆಯ ಕೆಳಗೆ ಇರುತ್ತವೆ.
PSA 10:8 ಅವನು ಗ್ರಾಮಗಳಲ್ಲಿ ಹೊಂಚಿಕೊಂಡು ಮರೆಯಾದ ಸ್ಥಳಗಳಲ್ಲಿ, ನಿರಪರಾಧಿಯನ್ನು ಕೊಲ್ಲುತ್ತಾನೆ. ಅವನ ಕಣ್ಣುಗಳು ನಿರ್ಗತಿಕರನ್ನು ಹೊಂಚಿ ನೋಡುತ್ತವೆ;
PSA 10:9 ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ.
PSA 10:10 ಅವನ ಕೈಯಲ್ಲಿ ಸಿಕ್ಕುವವರು ಜಜ್ಜಿಹೋಗುತ್ತಾರೆ, ಅವನ ಬಲದ ಎದುರು ಸೋತುಹೋಗುತ್ತಾರೆ.
PSA 10:11 “ದೇವರು ಮರೆತುಬಿಟ್ಟಿದ್ದಾರೆ; ತಮ್ಮ ಮುಖ ಮರೆ ಮಾಡಿಕೊಂಡಿದ್ದಾರೆ; ಇನ್ನೆಂದೂ ಕಾಣಲಾರರು,” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ.
PSA 10:12 ಯೆಹೋವ ದೇವರೇ, ಎದ್ದೇಳಿರಿ! ದೇವರೇ, ನಿಮ್ಮ ಕೈ ಎತ್ತಿರಿ. ನಿಸ್ಸಹಾಯಕರನ್ನು ಮರೆಯಬೇಡಿರಿ.
PSA 10:13 ದುಷ್ಟರು ದೇವರನ್ನು ಅಲಕ್ಷ್ಯ ಮಾಡುವುದು ಏಕೆ? “ದೇವರು ನನ್ನನ್ನು ಲೆಕ್ಕ ಕೇಳುವುದಿಲ್ಲ,” ಎಂದು ಅವನು ತನಗೆ ತಾನೇ ಹೇಳಿಕೊಳ್ಳುವುದು ಏಕೆ?
PSA 10:14 ದೇವರೇ, ನೀವಾದರೋ ಬಾಧೆಪಡುವವರ ಕಷ್ಟಗಳನ್ನು ನೋಡಿದ್ದೀರಿ; ಅವರ ಸಂಕಟವನ್ನು ಪರಿಗಣಿಸಿ, ನೀವೇ ನೋಡಿಕೊಳ್ಳಿರಿ. ಗತಿಯಿಲ್ಲದವರು ತಮ್ಮನ್ನು ನಿಮಗೇ ಒಪ್ಪಿಸಿಕೊಡುತ್ತಾರೆ; ನೀವೇ ದಿಕ್ಕಿಲ್ಲದವರಿಗೆ ಸಹಾಯ ಮಾಡುವವರು.
PSA 10:15 ದುಷ್ಟನ ಭುಜಬಲವನ್ನು ಮುರಿದುಬಿಡಿರಿ; ಕೆಟ್ಟದ್ದನ್ನು ಮಾಡುವವರಿಗೆ ಅವರ ಕೆಟ್ಟತನಕ್ಕೆ ಲೆಕ್ಕ ಕೇಳಿರಿ; ಇಲ್ಲದಿದ್ದರೆ ನೀವು ಅವನನ್ನು ಲೆಕ್ಕ ಕೇಳುವುದಿಲ್ಲ ಅಂದುಕೊಳ್ಳುವನು.
PSA 10:16 ಯೆಹೋವ ದೇವರು ಯುಗಯುಗಾಂತರಗಳಿಗೂ ಅರಸರಾಗಿದ್ದಾರೆ; ರಾಷ್ಟ್ರಗಳು ಅವರ ದೇಶದೊಳಗಿಂದ ಹೊರಹಾಕಲಾಯಿತು.
PSA 10:17 ಯೆಹೋವ ದೇವರೇ, ನೀವು ಬಾಧೆಪಡುವವರ ಬಯಕೆಯನ್ನು ಆಲಿಸುತ್ತೀರಿ; ಅವರನ್ನು ಪ್ರೋತ್ಸಾಹಿಸಿ, ಅವರ ಕೂಗನ್ನು ಲಾಲಿಸುತ್ತೀರಿ.
PSA 10:18 ಅನಾಥರಿಗೂ, ಕುಗ್ಗಿದವರಿಗೂ ನ್ಯಾಯವನ್ನು ನಡಿಸಿಕೊಡಿರಿ. ಹೀಗಾದರೆ ಕೇವಲ ಮಣ್ಣಿನ ಮಾನವರಿಂದ ಅವರಿಗೆ ಇನ್ನೆಂದಿಗೂ ಭಯ ಉಂಟಾಗುವುದಿಲ್ಲ.
PSA 11:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ. ಹಾಗಾದರೆ, “ಒಂದು ಪಕ್ಷಿಯಂತೆ ನಿನ್ನ ಪರ್ವತಕ್ಕೆ ಹಾರಿ ಹೋಗು,” ಎಂದು ನೀವು ನನಗೆ ಹೇಗೆ ಹೇಳುವಿರಿ?
PSA 11:2 “ಇಗೋ, ದುಷ್ಟರು ತಮ್ಮ ಬಿಲ್ಲು ಬಗ್ಗಿಸಿ; ಬಾಣವನ್ನು ಬಿಲ್ಲಿಗೆ ಹೂಡಿ, ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವುದಕ್ಕೆ ಸಿದ್ಧಮಾಡಿದ್ದಾರೆ.
PSA 11:3 ಅಸ್ತಿವಾರಗಳೇ ಕೆಡವುತ್ತಿರಲು, ನೀತಿವಂತನು ಏನು ಮಾಡಲು ಸಾಧ್ಯ?”
PSA 11:4 ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ; ಯೆಹೋವ ದೇವರು ತಮ್ಮ ಪರಲೋಕ ಸಿಂಹಾಸನದಲ್ಲಿ ಇದ್ದಾರೆ. ಅವರು ಭೂಮಿಯಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾರೆ; ಅವರ ಕಣ್ಣುಗಳು ಮಾನವರೆಲ್ಲರನ್ನು ಪರಿಶೋಧಿಸುತ್ತವೆ.
PSA 11:5 ಯೆಹೋವ ದೇವರು ನೀತಿವಂತನನ್ನು ಪರೀಕ್ಷಿಸುತ್ತಾರೆ, ಆದರೆ ಅವರು ದುಷ್ಟರನ್ನೂ ಹಿಂಸಾತ್ಮಕರನ್ನೂ ವಿರೋಧಿಸುತ್ತಾರೆ.
PSA 11:6 ಅವರು ದುಷ್ಟರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಸುರಿಸಲಿ; ಇವೇ ದುಷ್ಟರ ಪಾಲಾಗಿರಲಿ.
PSA 11:7 ಏಕೆಂದರೆ ಯೆಹೋವ ದೇವರು ನೀತಿಯುಳ್ಳವರು. ಅವರು ನ್ಯಾಯವನ್ನು ಪ್ರೀತಿಸುತ್ತಾರೆ; ಯಥಾರ್ಥರು ಅವರ ಮುಖವನ್ನು ದೃಷ್ಟಿಸುವರು.
PSA 12:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ. ಯೆಹೋವ ದೇವರೇ, ರಕ್ಷಿಸಿರಿ, ಏಕೆಂದರೆ ದೇವಭಕ್ತರು ಮುಗಿದು ಹೋಗುತ್ತಿದ್ದಾರೆ; ಜನರಲ್ಲಿ ನಂಬಿಗಸ್ತರು ಇಲ್ಲದೆ ಹೋಗುತ್ತಿದ್ದಾರೆ.
PSA 12:2 ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ; ಅವರು ತಮ್ಮ ತುಟಿಯಿಂದ ಹೊಗಳಿ, ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.
PSA 12:3 ಹೊಗಳಿಕೆಯ ಎಲ್ಲಾ ತುಟಿಗಳನ್ನೂ ಗರ್ವ ಮಾತನಾಡುವ ಎಲ್ಲಾ ನಾಲಿಗೆಯನ್ನೂ ಯೆಹೋವ ದೇವರು ಮೌನವಾಗಿರಿಸಲಿ.
PSA 12:4 ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”
PSA 12:5 “ಬಡವರು ಹಿಂಸೆಗೆ ಒಳಗಾಗಿರುವುದರಿಂದಲೂ ಗತಿಯಿಲ್ಲದವರು ನರಳಾಡುವುದರಿಂದಲೂ ನಾನು ಈಗಲೇ ಏಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಪೀಡಿಸುವವರಿಂದ ನಾನು ಬಡವರನ್ನು ಕಾಪಾಡುವೆನು.”
PSA 12:6 ಯೆಹೋವ ದೇವರ ವಾಕ್ಯಗಳು ದೋಷವಿಲ್ಲದ್ದು. ಅವು ಮಣ್ಣಿನ ಕುಲುಮೆಯಲ್ಲಿ ಶುದ್ಧೀಕರಿಸಿದ ಬೆಳ್ಳಿಯಂತೆಯೂ ಏಳು ಸಾರಿ ಪುಟಕ್ಕೆ ಹಾಕಿದ ಬಂಗಾರದಂತೆಯೂ ಇವೆ.
PSA 12:7 ಯೆಹೋವ ದೇವರೇ, ನೀವು ಗತಿಯಿಲ್ಲದವರನ್ನು ದುಷ್ಟರಿಂದ ಯಾವಾಗಲೂ ಕಾಪಾಡಿ ಸಂರಕ್ಷಿಸುತ್ತೀರಿ,
PSA 12:8 ಮನುಷ್ಯರು ಅಸಹ್ಯವಾದದ್ದನ್ನು ಗೌರವಿಸುವಾಗ, ಆ ದುಷ್ಟರು ಎಲ್ಲಾ ಕಡೆಗಳಲ್ಲಿಯೂ ಸ್ವತಂತ್ರವಾಗಿ ಅಲೆದಾಡುತ್ತಿರುವರು.
PSA 13:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ? ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ?
PSA 13:2 ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು? ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ? ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು?
PSA 13:3 ನನ್ನ ದೇವರಾದ ಯೆಹೋವ ದೇವರೇ, ನನ್ನನ್ನು ನೋಡಿ ನನಗೆ ಸದುತ್ತರ ಕೊಡಿರಿ. ನನಗೆ ಮರಣ ನಿದ್ರೆ ಉಂಟಾಗದಂತೆ ನನ್ನ ಕಣ್ಣುಗಳನ್ನು ಬೆಳಗಿಸಿರಿ.
PSA 13:4 “ನಾನು ಅವನನ್ನು ಸೋಲಿಸಿದ್ದೇನೆ,” ಎಂದು ನನ್ನ ಶತ್ರು ಹೇಳದಿರಲಿ, ನಾನು ಬೀಳುವಾಗ ನನ್ನ ಶತ್ರುಗಳು ಆನಂದಿಸದಿರಲಿ.
PSA 13:5 ನಾನಾದರೋ ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೇನೆ. ನಿಮ್ಮ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾಸಪಡುವುದು.
PSA 13:6 ನಾನು ಯೆಹೋವ ದೇವರಿಗೆ ಸ್ತುತಿ ಹಾಡುವೆನು, ಏಕೆಂದರೆ ಅವರು ನನಗೆ ಒಳ್ಳೆಯವರಾಗಿದ್ದಾರೆ.
PSA 14:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋಗಿ, ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ.
PSA 14:2 ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ಯೆಹೋವ ದೇವರು ಸ್ವರ್ಗದಿಂದ, ಮನುಷ್ಯರ ಮೇಲೆ ದೃಷ್ಟಿಸಿದರು.
PSA 14:3 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ.
PSA 14:4 ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.
PSA 14:5 ದೇವರು ನೀತಿವಂತರ ಸಹವಾಸದಲ್ಲಿ ಇರುವುದರಿಂದ, ದುಷ್ಟತ್ವವನ್ನು ನಡೆಸುವವರು ಅತ್ಯಂತ ಭಯಭ್ರಾಂತರಾಗುವರು.
PSA 14:6 ದುಷ್ಟತ್ವ ನಡೆಸುವವರೇ, ನೀವು ಬಡವರ ಯೋಜನೆಗಳನ್ನು ನಿರಾಶೆಗೊಳಿಸುತ್ತೀರಿ, ಆದರೆ ಯೆಹೋವ ದೇವರೇ ಅವರ ಆಶ್ರಯವಾಗಿದ್ದಾರೆ.
PSA 14:7 ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ಯೆಹೋವ ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ, ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.
PSA 15:1 ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮ ಪರಿಶುದ್ಧ ಗುಡಾರದಲ್ಲಿ ವಾಸಿಸುವವರು ಯಾರು? ನಿಮ್ಮ ಪರಿಶುದ್ಧ ಪರ್ವತದಲ್ಲಿ ಬಾಳುವವರು ಯಾರು?
PSA 15:2 ದೋಷವಿಲ್ಲದವರಾಗಿ ಜೀವಿಸಿ, ನೀತಿಯನ್ನು ನಡೆಸಿ, ತಮ್ಮ ಹೃದಯದಿಂದ ಸತ್ಯವನ್ನಾಡುವವರೇ;
PSA 15:3 ಅವರ ನಾಲಿಗೆಯು ಚಾಡಿ ಹೇಳುವುದಿಲ್ಲ, ತಮ್ಮ ನೆರೆಯವರಿಗೆ ಕೇಡುಮಾಡುವುದಿಲ್ಲ, ಇತರರನ್ನು ನಿಂದಿಸುವುದೂ ಇಲ್ಲ;
PSA 15:4 ಅವರು ದುಷ್ಟರ ಸಹವಾಸ ಇಲ್ಲದವರೂ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು.
PSA 15:5 ಅವರು ಬಡವರಿಗೆ ಸಾಲ ಕೊಟ್ಟು ಬಡ್ಡಿಕೇಳದವರೂ; ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವರೂ ಆಗಿರಬೇಕು. ಈ ರೀತಿಯಾಗಿ ಬಾಳುವವರು ಎಂದಿಗೂ ಕದಲುವುದಿಲ್ಲ.
PSA 16:1 ಮಿಕತಾಮ ಗೀತೆ. ದಾವೀದನ ಕೀರ್ತನೆ. ನನ್ನ ದೇವರೇ, ನನ್ನನ್ನು ಕಾಪಾಡು, ಏಕೆಂದರೆ ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
PSA 16:2 ನಾನು ಯೆಹೋವ ದೇವರಿಗೆ, “ನೀವೇ ನನ್ನ ಕರ್ತ; ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು,” ಎಂದು ಹೇಳಿದೆನು.
PSA 16:3 ಭೂಲೋಕದಲ್ಲಿರುವ ದೇವಜನರ ಕುರಿತು, “ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು,” ಎಂದು ಹೇಳುವೆನು.
PSA 16:4 ಇತರ ದೇವರುಗಳನ್ನು ಅವಲಂಬಿಸಿರುವವರಿಗೆ ವ್ಯಥೆಗಳು ಹೆಚ್ಚೆಚ್ಚಾಗುವವು. ಅವರಂತೆ ರಕ್ತ ಬಲಿಗಳನ್ನು ನಾನು ಅರ್ಪಿಸುವುದಿಲ್ಲ. ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಉಚ್ಚರಿಸುವುದಿಲ್ಲ.
PSA 16:5 ಯೆಹೋವ ದೇವರೇ, ನೀವೇ ನನ್ನ ಪಾಲೂ, ನನ್ನ ಪಾತ್ರೆಯೂ ಆಗಿದ್ದೀರಿ; ನನ್ನ ಸ್ವಾಸ್ತ್ಯವನ್ನು ಸುರಕ್ಷಿತವಾಗಿ ಇಡುವವರು ನೀವೇ.
PSA 16:6 ನನ್ನ ಪಾಲಿಗೆ ಬಂದ ಮೇರೆಯ ಸ್ಥಳವೂ ಸುಂದರವಾದದ್ದು; ನಿಶ್ಚಯವಾಗಿಯೂ, ನನಗೆ ದೊರೆತ ಸ್ವತ್ತು ಆನಂದಕರವಾದದ್ದು.
PSA 16:7 ನನಗೆ ಸಮಾಲೋಚನೆ ನೀಡುತ್ತಿರುವ ಯೆಹೋವ ದೇವರನ್ನು ನಾನು ಸ್ತುತಿಸುತ್ತಿರುವೆನು; ರಾತ್ರಿಯಲ್ಲಿಯೂ ನನ್ನ ಹೃದಯವು ನನಗೆ ಬೋಧಿಸುತ್ತದೆ.
PSA 16:8 ನಾನು ಯೆಹೋವ ದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ಅವರು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲೆನು.
PSA 16:9 ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ಸುರಕ್ಷಿತವಾಗಿ ವಿಶ್ರಮಿಸುವುದು.
PSA 16:10 ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ; ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ.
PSA 16:11 ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ. ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ; ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.
PSA 17:1 ದಾವೀದನ ಪ್ರಾರ್ಥನೆ. ಯೆಹೋವ ದೇವರೇ, ನನ್ನ ಬೇಡಿಕೆ ನ್ಯಾಯವಾದದ್ದು, ನನ್ನ ಮೊರೆಗೆ ಕಿವಿಗೊಡಿರಿ. ನನ್ನ ಪ್ರಾರ್ಥನೆಯನ್ನು ಕೇಳಿರಿ, ಅದು ಕಪಟ ತುಟಿಗಳಿಂದ ಬಂದದ್ದಲ್ಲ.
PSA 17:2 ನನ್ನ ನ್ಯಾಯವು ನಿಮ್ಮಿಂದಲೇ ಬರಲಿ, ನಿಮ್ಮ ಕಣ್ಣುಗಳು ಸರಿಯಾದವುಗಳನ್ನೇ ನೋಡುತ್ತವೆ.
PSA 17:3 ನೀವು ನನ್ನ ಹೃದಯವನ್ನು ಶೋಧಿಸಿದರೂ, ನೀವು ರಾತ್ರಿಯಲ್ಲಿ ನನ್ನನ್ನು ಪರೀಕ್ಷಿಸಿ ವಿಚಾರಿಸಿದರೂ, ನಾನು ಕೆಟ್ಟಯೋಜನೆ ಮಾಡಿಕೊಳ್ಳಲಿಲ್ಲವೆಂದು ನೀವು ಕಂಡುಕೊಳ್ಳುವಿರಿ; ನನ್ನ ಬಾಯಿಯೂ ಅತಿಕ್ರಮಿಸುವುದಿಲ್ಲವೆಂದು ನಾನು ತೀರ್ಮಾನಿಸಿಕೊಂಡಿದ್ದೇನೆ.
PSA 17:4 ಮನುಷ್ಯರು ನನಗೆ ಲಂಚ ನೀಡಲು ಪ್ರಯತ್ನಿಸಿದರೂ, ನಿಮ್ಮ ತುಟಿಗಳ ಆಜ್ಞಾನುಸಾರ ನಾನು ಹಿಂಸಕರ ಮಾರ್ಗಗಳಿಂದ ನನ್ನನ್ನು ದೂರವಾಗಿಟ್ಟುಕೊಂಡಿದ್ದೇನೆ.
PSA 17:5 ನನ್ನ ಹೆಜ್ಜೆಗಳು ಜಾರದ ಹಾಗೆ ನನ್ನ ನಡೆಗಳನ್ನು ನಿಮ್ಮ ದಾರಿಯಲ್ಲಿ ಸ್ಥಿರಪಡಿಸಿಕೊಂಡಿದ್ದೇನೆ.
PSA 17:6 ನನ್ನ ದೇವರೇ, ನೀವು ನನಗೆ ಉತ್ತರ ಕೊಡುವುದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನೀವು ನಿಮ್ಮ ಕಿವಿಯನ್ನು ನನ್ನ ಕಡೆ ತಿರುಗಿಸಿ, ನನ್ನ ಪ್ರಾರ್ಥನೆಯನ್ನು ಆಲಿಸಿರಿ.
PSA 17:7 ನಿಮ್ಮ ಒಡಂಬಡಿಕೆಯ ಪ್ರೀತಿಯ ಅದ್ಭುತವನ್ನು ನನಗೆ ತೋರಿಸಿರಿ. ತಮ್ಮ ವೈರಿಗಳಿಂದ ಓಡಿಬಂದು ನಿಮ್ಮಲ್ಲಿ ಆಶ್ರಯ ಪಡೆಯುವವರಿಗೆ ಭುಜಬಲದಿಂದ ರಕ್ಷಿಸುವವರು ನೀವೇ.
PSA 17:8 ನಿಮ್ಮ ಕಣ್ಣುಗುಡ್ಡೆಯ ಹಾಗೆ ನನ್ನನ್ನು ಕಾಪಾಡಿರಿ, ನಿಮ್ಮ ರೆಕ್ಕೆಗಳ ನೆರಳಿನಲ್ಲಿ ನನ್ನನ್ನು ಮರೆಮಾಡಿರಿ.
PSA 17:9 ನನ್ನನ್ನು ಬಾಧಿಸುವ ದುಷ್ಟರಿಂದಲೂ, ನನ್ನನ್ನು ಸುತ್ತಿಕೊಳ್ಳುವ ನನ್ನ ಪ್ರಾಣಾಂತಕ ಶತ್ರುಗಳಿಂದಲೂ ತಪ್ಪಿಸಿ.
PSA 17:10 ಅವರು ತಮ್ಮ ಸೊಕ್ಕಿನ ಹೃದಯಗಳನ್ನು ಮುಚ್ಚಿಕೊಂಡಿದ್ದಾರೆ, ತಮ್ಮ ಬಾಯಿಂದ ಅವರು ಗರ್ವವನ್ನು ಮಾತನಾಡುತ್ತಾರೆ.
PSA 17:11 ನನ್ನನ್ನು ಬೀಳಿಸುವಂತೆ, ಅವರು ಈಗ ನನ್ನನ್ನು ಸುತ್ತಿಕೊಂಡಿದ್ದಾರೆ, ನನ್ನನ್ನು ನೆಲಕ್ಕೆ ಹಾಕಬೇಕೆಂದು ಅವರ ಕಣ್ಣುಗಳು ಕಾದಿವೆ.
PSA 17:12 ಅವರು ತಮ್ಮ ಬೇಟೆಯ ಹಸಿವೆಯಿಂದಿರುವ ಸಿಂಹದ ಹಾಗೆಯೂ, ಗುಪ್ತಸ್ಥಳಗಳಲ್ಲಿ ಹೊಂಚಿ ಕುಳಿತಿರುವ ಭೀಕರ ಸಿಂಹದ ಹಾಗೆಯೂ ಇದ್ದಾರೆ.
PSA 17:13 ಯೆಹೋವ ದೇವರೇ, ಎದ್ದು ಅವರನ್ನು ಎದುರಿಸಿ ಕೆಳಗೆ ಕೆಡವಿಬಿಡಿರಿ; ನಿಮ್ಮ ಖಡ್ಗದ ಮೂಲಕ ನನ್ನನ್ನು ದುಷ್ಟರಿಂದ ಕಾಪಾಡಿರಿ.
PSA 17:14 ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ.
PSA 17:15 ನಾನಾದರೋ ನೀತಿಯಲ್ಲಿ ನಿಮ್ಮ ಮುಖವನ್ನು ನೋಡುವೆನು. ನಾನು ಎಚ್ಚೆತ್ತಾಗ ನಿಮ್ಮ ಹೋಲಿಕೆಯನ್ನೇ ಕಂಡು ತೃಪ್ತನಾಗುವೆನು.
PSA 18:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆಹೋವ ದೇವರ ಸೇವಕನಾದ ದಾವೀದನು ಎಲ್ಲಾ ಶತ್ರುಗಳಿಂದಲೂ ಸೌಲನ ಕೈಯಿಂದಲೂ ತಪ್ಪಿಸಿಕೊಂಡಾಗ ಯೆಹೋವ ದೇವರಿಗೆ ಈ ಪದ್ಯವನ್ನು ಹಾಡಿದ್ದು. ದಾವೀದನು ಹೀಗೆ ಹೇಳಿದನು: ನನ್ನ ಬಲವಾಗಿರುವ ಯೆಹೋವ ದೇವರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ.
PSA 18:2 ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ; ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ನನ್ನ ಉನ್ನತವಾದ ದುರ್ಗ ಆಗಿದ್ದಾರೆ.
PSA 18:3 ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.
PSA 18:4 ಮರಣದ ಪಾಶಗಳು ನನ್ನನ್ನು ಸುತ್ತಿಕೊಂಡವು; ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು.
PSA 18:5 ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು.
PSA 18:6 ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಬೇಡಿದೆನು; ನನ್ನ ದೇವರಿಗೆ ಮೊರೆಯಿಟ್ಟೆನು; ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಸನ್ನಿಧಿ ಸೇರಿ ಅವರ ಕಿವಿಗೆ ಬಿತ್ತು.
PSA 18:7 ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು; ಪರ್ವತಗಳ ಅಸ್ತಿವಾರಗಳು ಸಹ ಕದಲಿದವು.
PSA 18:8 ಮೂಗಿನಿಂದ ಹೊಗೆ ಬಂದಂತೆಯೂ ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇರಲು,
PSA 18:9 ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು; ಅವರ ಪಾದಗಳ ಕೆಳಗೆ ಕಾರ್ಮೋಡಗಳಿದ್ದವು.
PSA 18:10 ಅವರು ಕೆರೂಬಿಯ ಮೇಲೆ ಕೂತು ಹಾರಿದರು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿಕೊಂಡರು.
PSA 18:11 ಅವರು ಕತ್ತಲನ್ನು ತಮ್ಮ ಹೊದಿಕೆಯನ್ನಾಗಿಯೂ ಮಳೆ ತರುವ ಆಕಾಶದ ಕಾರ್ಮೋಡಗಳನ್ನು ತಮ್ಮ ಸುತ್ತಲಿನ ಪರದೆಯನ್ನಾಗಿಯೂ ಮಾಡಿಕೊಂಡರು.
PSA 18:12 ಅವರ ಸನ್ನಿಧಿಯ ಪ್ರಕಾಶದಿಂದ ಮೋಡಗಳು, ಕಲ್ಮಳೆ ಹಾಗೂ ಗುಡುಗು ಮಿಂಚುಗಳು ಹೊರಹೊಮ್ಮಿದವು.
PSA 18:13 ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು; ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.
PSA 18:14 ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು; ಸಿಡಿಲಿನಿಂದ ವೈರಿಗಳನ್ನೆಲ್ಲ ಅಟ್ಟಿಸಿಬಿಟ್ಟರು.
PSA 18:15 ಯೆಹೋವ ದೇವರೇ, ನಿಮ್ಮ ಗದರಿಕೆಯಿಂದಲೂ, ನಿಮ್ಮ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿದವು, ಭೂಲೋಕದ ಅಸ್ತಿವಾರಗಳು ಬಯಲಾದವು.
PSA 18:16 ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು ಅಗಾಧವಾದ ಜಲರಾಶಿಗಳಿಂದ ಹೊರಗೆಳೆದರು.
PSA 18:17 ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ, ದ್ವೇಷಿಸುತ್ತಿದ್ದ ವೈರಿಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದರು.
PSA 18:18 ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು; ಆದರೆ ಯೆಹೋವ ದೇವರು ನನಗೆ ಆಧಾರವಾಗಿದ್ದರು.
PSA 18:19 ದೇವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು; ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ಕಾಪಾಡಿದರು.
PSA 18:20 ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು; ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಪ್ರತಿಫಲಕೊಟ್ಟರು.
PSA 18:21 ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಕೈಗೊಂಡೆನು; ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
PSA 18:22 ದೇವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು; ಅವರ ತೀರ್ಪುಗಳಿಂದ ನಾನು ತೊಲಗಿಹೋಗಲಿಲ್ಲ.
PSA 18:23 ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು ನಾನು ಪಾಪದಿಂದ ನನ್ನನ್ನು ಕಾಪಾಡಿಕೊಂಡೆನು.
PSA 18:24 ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ ಅವರ ದೃಷ್ಟಿಯಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಪ್ರತಿಫಲಕೊಟ್ಟರು.
PSA 18:25 ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ. ನಿರ್ದೋಷಿಗೆ ನೀವು ನಿರ್ದೋಷಿಯಾಗಿ ತೋರಿಸುತ್ತೀರಿ.
PSA 18:26 ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ. ವಕ್ರ ವ್ಯಕ್ತಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತೀರಿ.
PSA 18:27 ದೀನರನ್ನು ರಕ್ಷಿಸುತ್ತೀರಿ, ಆದರೆ ನೀವು ಗರ್ವಿಷ್ಠರ ಕಣ್ಣುಗಳನ್ನು ತಗ್ಗಿಸುತ್ತೀರಿ.
PSA 18:28 ಯೆಹೋವ ದೇವರೇ, ನೀವು ನನ್ನ ದೀಪವನ್ನು ಬೆಳಗಿಸಿರಿ. ನನ್ನ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.
PSA 18:29 ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು, ನನ್ನ ದೇವರೊಂದಿಗೆ ಕೋಟೆಗೋಡೆಯನ್ನೂ ಹಾರುವೆನು.
PSA 18:30 ದೇವರ ಮಾರ್ಗವು ಪರಿಪೂರ್ಣವಾದದ್ದು, ಯೆಹೋವ ದೇವರ ವಾಕ್ಯವು ದೋಷವಿಲ್ಲದ್ದು; ತಮ್ಮಲ್ಲಿ ಆಶ್ರಯ ಹೊಂದಿದ ಎಲ್ಲರಿಗೂ ಅವರು ಗುರಾಣಿಯಾಗಿದ್ದಾರೆ.
PSA 18:31 ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ರಕ್ಷಕ ಯಾರು?
PSA 18:32 ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ, ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.
PSA 18:33 ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.
PSA 18:34 ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು, ನನ್ನ ಭುಜದಿಂದ ಕಂಚಿನ ಬಿಲ್ಲನ್ನು ಬಗ್ಗಿಸುವಂತೆ ಮಾಡುತ್ತಾರೆ.
PSA 18:35 ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ. ನಿಮ್ಮ ಬಲಗೈ ನನಗೆ ಆಧಾರವಾಗಿದೆ; ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.
PSA 18:36 ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ, ಆದುದರಿಂದ ನನ್ನ ಹಿಮ್ಮಡಿಗಳು ಜಾರುವುದಿಲ್ಲ.
PSA 18:37 ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದಿದ್ದೇನೆ; ಅವರನ್ನು ಸಂಹರಿಸಿಬಿಡುವವರೆಗೂ ನಾನು ಹಿಂದಿರುಗಲಿಲ್ಲ.
PSA 18:38 ಏಳಲಾರದಂತೆ ಅವರನ್ನು ತುಳಿದುಬಿಟ್ಟೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದರು.
PSA 18:39 ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ, ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.
PSA 18:40 ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ; ನಾನು ನನ್ನ ವೈರಿಗಳನ್ನು ಸಂಹರಿಸಿದೆನು.
PSA 18:41 ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ ಯೆಹೋವ ದೇವರಿಗೂ ಮೊರೆಯಿಟ್ಟರು, ಆದರೆ ಅವರೂ ಉತ್ತರ ಕೊಡಲಿಲ್ಲ.
PSA 18:42 ಅವರನ್ನು ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.
PSA 18:43 ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ; ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಮಾಡಿರುವಿರಿ. ನಾನು ಅರಿಯದ ಜನರು ನನಗೆ ವಿಧೇಯರಾಗುವರು.
PSA 18:44 ವಿದೇಶಿಯರು ನನಗೆ ಅಧೀನರಾದರು; ನನ್ನ ಸುದ್ದಿ ಕೇಳಿದ ಕೂಡಲೇ ನನಗೆ ವಿಧೇಯರಾಗುವರು.
PSA 18:45 ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.
PSA 18:46 ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರವಾಗಲಿ. ನನ್ನ ರಕ್ಷಕರಾದ ದೇವರು ಮಹಿಮೆ ಹೊಂದಲಿ.
PSA 18:47 ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ ಜನರನ್ನು ನನಗೆ ಅಧೀನಪಡಿಸುವವರೂ ಆಗಿದ್ದಾರೆ.
PSA 18:48 ದೇವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ; ನೀವು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀರಿ, ಬಲಾತ್ಕಾರ ಮಾಡುವವನಿಂದ ನನ್ನನ್ನು ರಕ್ಷಿಸುತ್ತೀರಿ.
PSA 18:49 ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು, ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.
PSA 18:50 ದೇವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ ದಾವೀದನಿಗೂ ಅವನ ಸಂತತಿಯವರಿಗೂ ಒಡಂಬಡಿಕೆಯ ಪ್ರೀತಿಯನ್ನು ಯುಗಯುಗಕ್ಕೂ ಅನುಗ್ರಹಿಸುವರು.
PSA 19:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ; ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.
PSA 19:2 ಹಗಲೆಲ್ಲಾ ಅವು ಮಾತನಾಡುತ್ತವೆ; ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.
PSA 19:3 ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ, ಅವುಗಳ ಸ್ವರವು ಕೇಳುವುದೂ ಇಲ್ಲ.
PSA 19:4 ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ; ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ; ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.
PSA 19:5 ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು, ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.
PSA 19:6 ಆಕಾಶದ ಒಂದು ಕಡೆಯಿಂದ ಉದಯಿಸಿ ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ; ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
PSA 19:7 ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು, ಪ್ರಾಣಕ್ಕೆ ಜೀವಕರವಾಗಿದೆ; ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು, ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.
PSA 19:8 ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು ಅವು ಹೃದಯಕ್ಕೆ ಆನಂದಕರವಾಗಿವೆ; ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು, ಕಣ್ಣುಗಳಿಗೆ ಪ್ರಕಾಶಕರವಾಗಿವೆ.
PSA 19:9 ಯೆಹೋವ ದೇವರ ಭಯವು ಶುದ್ಧವಾಗಿದ್ದು, ಎಂದೆಂದಿಗೂ ಶಾಶ್ವತವಾಗಿದೆ. ಯೆಹೋವ ದೇವರ ತೀರ್ಪುಗಳು ಸತ್ಯವಾಗಿದ್ದು, ಅವೆಲ್ಲವೂ ನೀತಿಯುಳ್ಳದ್ದಾಗಿವೆ.
PSA 19:10 ಅವು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ಅಮೂಲ್ಯವಾಗಿವೆ; ಅವು ಜೇನಿಗಿಂತಲೂ, ಅಪ್ಪಟ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
PSA 19:11 ನಿಮ್ಮ ಸೇವಕನು ಅವುಗಳಿಂದ ಎಚ್ಚರಿಕೆ ಪಡೆಯುತ್ತಾನೆ; ಅವುಗಳನ್ನು ಕೈಗೊಳ್ಳುವುದರಲ್ಲಿ ದೊಡ್ಡ ಪ್ರತಿಫಲವುಂಟು.
PSA 19:12 ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ? ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.
PSA 19:13 ಬೇಕುಬೇಕೆಂದು ಪಾಪಮಾಡದಂತೆ ನಿಮ್ಮ ಸೇವಕನನ್ನು ಕಾಪಾಡು; ಅಂಥ ಪಾಪಗಳು ನನ್ನ ಮೇಲೆ ಆಳಿಕೆ ಮಾಡದಿರಲಿ. ಆಗ ನಾನು ತಪ್ಪಿಲ್ಲದವನಾಗಿ, ಮಹಾಪರಾಧದಿಂದ ಬಿಡುಗಡೆಯಾಗಿರುವೆನು.
PSA 19:14 ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ, ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.
PSA 20:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ; ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.
PSA 20:2 ದೇವರು ಪರಿಶುದ್ಧ ಸ್ಥಳದೊಳಗಿಂದ ನಿಮಗೆ ಸಹಾಯ ಕಳುಹಿಸಲಿ; ಅವರು ಚೀಯೋನಿನಿಂದ ನಿಮಗೆ ಆಧಾರ ನೀಡಲಿ.
PSA 20:3 ನಿಮ್ಮ ಯಜ್ಞಾರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿಕೊಂಡು, ನಿಮ್ಮ ದಹನಬಲಿಗಳನ್ನು ಸ್ವೀಕರಿಸಲಿ.
PSA 20:4 ದೇವರು ನಿಮ್ಮ ಹೃದಯದ ಬಯಕೆಯನ್ನು ನಿಮಗೆ ದಯಪಾಲಿಸಲಿ; ನಿಮ್ಮ ಎಲ್ಲಾ ಯೋಜನೆಗಳಲ್ಲಿಯೂ ಯಶಸ್ಸನ್ನು ನೀಡಲಿ.
PSA 20:5 ನಾವು ದೇವರ ಜಯದಲ್ಲಿ ಆನಂದ ಘೋಷಮಾಡಿ, ನಮ್ಮ ದೇವರ ಹೆಸರಿನಲ್ಲಿಯೇ ನಾವು ನಮ್ಮ ಧ್ವಜಗಳನ್ನು ಎತ್ತುವೆವು. ಯೆಹೋವ ದೇವರು ನಿಮ್ಮ ಬಿನ್ನಹಗಳನ್ನೆಲ್ಲಾ ಪೂರೈಸಲಿ.
PSA 20:6 ಈಗ ನಾನು ಇದನ್ನು ಬಲ್ಲೆನು: ಯೆಹೋವ ದೇವರು ತಮ್ಮ ಅಭಿಷಿಕ್ತನಿಗೆ ಜಯ ನೀಡುವರು. ತಮ್ಮ ಜಯದ ಬಲಗೈಯ ಶಕ್ತಿಯಿಂದಲೂ ತಮ್ಮ ಪರಿಶುದ್ಧ ಪರಲೋಕದಿಂದಲೂ ಅವನಿಗೆ ಉತ್ತರಕೊಡುವರು.
PSA 20:7 ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ; ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.
PSA 20:8 ಅವರು ಬಗ್ಗಿ ಬೀಳುತ್ತಾರೆ, ನಾವಾದರೋ ಎದ್ದು ಸ್ಥಿರವಾಗಿ ನಿಲ್ಲುವೆವು.
PSA 20:9 ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ! ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!
PSA 21:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮ ಬಲದಲ್ಲಿ ಅರಸನು ಆನಂದಿಸುತ್ತಾನೆ; ನೀವು ಆತನಿಗೆ ಕೊಡುವ ಜಯಗಳಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುತ್ತಾನೆ!
PSA 21:2 ಅರಸನ ಹೃದಯದ ಆಶೆಯನ್ನು ನೀವು ಈಡೇರಿಸಿದ್ದೀರಿ; ಆತನ ತುಟಿಗಳ ಬಿನ್ನಹವನ್ನು ಹಿಂದಿಟ್ಟುಕೊಳ್ಳಲಿಲ್ಲ.
PSA 21:3 ನೀವು ಉತ್ತಮ ಆಶೀರ್ವಾದಗಳಿಂದ ಅರಸನನ್ನು ಸ್ವಾಗತಿಸಿದ್ದೀರಿ; ಚೊಕ್ಕ ಬಂಗಾರದ ಕಿರೀಟವನ್ನು ಆತನ ತಲೆಯ ಮೇಲಿಟ್ಟಿದ್ದೀರಿ.
PSA 21:4 ಜೀವವನ್ನು ಅರಸನು ನಿಮ್ಮಿಂದ ಬೇಡಲು, ನೀವು ಆತನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟಿದ್ದೀರಿ.
PSA 21:5 ನೀವು ಕೊಟ್ಟ ಜಯಗಳ ಮೂಲಕ ಅರಸನ ಪ್ರಭಾವ ಹೆಚ್ಚಾಗಿದೆ; ಗೌರವವನ್ನೂ ಘನತೆಯನ್ನೂ ಆತನ ಮೇಲೆ ಇಟ್ಟಿರುತ್ತೀರಿ.
PSA 21:6 ನೀವು ನಿಶ್ಚಯವಾಗಿ ಅರಸನಿಗೆ ನಿತ್ಯ ಆಶೀರ್ವಾದ ದಯಪಾಲಿಸಿದ್ದೀರಿ; ನಿಮ್ಮ ಸನ್ನಿಧಿಯಲ್ಲಿ ಆತನು ಅಧಿಕ ಆನಂದಪಡುವಂತೆ ಮಾಡಿದ್ದೀರಿ.
PSA 21:7 ಏಕೆಂದರೆ ಅರಸನು ಯೆಹೋವ ದೇವರಲ್ಲಿ ಭರವಸೆ ಇಡುತ್ತಾನೆ; ಮಹೋನ್ನತರ ಒಡಂಬಡಿಕೆಯ ಪ್ರೀತಿಯಿಂದ ಅರಸನು ಕದಲದೆ ಇರುವನು.
PSA 21:8 ನಿಮ್ಮ ಹಸ್ತವು ನಿಮ್ಮ ಶತ್ರುಗಳನ್ನೆಲ್ಲಾ ವಶಪಡಿಸಿಕೊಳ್ಳುವುದು. ನಿಮ್ಮ ಬಲಗೈ ನಿಮ್ಮ ವೈರಿಗಳನ್ನು ಸಿಕ್ಕಿಸುವುದು.
PSA 21:9 ನೀವು ಬರುವ ಕಾಲದಲ್ಲಿ ಅವರನ್ನು ಅಗ್ನಿಕುಂಡದಂತೆ ದಹಿಸಿಬಿಡುವಿರಿ. ಯೆಹೋವ ದೇವರು ತಮ್ಮ ಬೇಸರದಿಂದ ಅವರನ್ನು ದಂಡಿಸಿಬಿಡುವರು; ಬೆಂಕಿಯು ಅವರನ್ನು ಭಸ್ಮ ಮಾಡುವುದು.
PSA 21:10 ಅವರ ವಂಶವನ್ನು ಭೂಲೋಕದೊಳಗಿಂದಲೂ ಅವರ ಸಂತತಿಯನ್ನು ಮಾನವರೊಳಗಿಂದಲೂ ಉಳಿಯದಿರಲಿ.
PSA 21:11 ಅವರು ನಿಮಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು, ಅವರು ಕುಯುಕ್ತಿಯನ್ನು ಕಲ್ಪಿಸಿದರೂ ಅದು ಕೈಗೂಡದಿರಲಿ.
PSA 21:12 ನಿಮ್ಮ ಬಿಲ್ಲನ್ನು ಅವರಿಗೆ ವಿರೋಧವಾಗಿ ಎತ್ತುವಾಗ ಅವರು ನಿಮಗೆ ಬೆನ್ನುಮಾಡಿ ಓಡಿಹೋಗಲಿ.
PSA 21:13 ಯೆಹೋವ ದೇವರೇ, ನಿಮ್ಮ ಬಲದಲ್ಲಿ ಉನ್ನತರಾಗಿದ್ದೀರಿ, ನಾವು ನಿಮ್ಮ ಪರಾಕ್ರಮವನ್ನು ಹಾಡಿ ಕೀರ್ತಿಸುವೆವು.
PSA 22:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಉದಯದ ಜಿಂಕೆ” ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ. ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ?
PSA 22:2 ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ.
PSA 22:3 ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ.
PSA 22:4 ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ.
PSA 22:5 ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ.
PSA 22:6 ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ.
PSA 22:7 ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ:
PSA 22:8 “ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, ಯೆಹೋವ ದೇವರೇ ಆತನನ್ನು ಕಾಪಾಡಲಿ. ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, ಅವರೇ ಆತನನ್ನು ಬಿಡಿಸಲಿ.”
PSA 22:9 ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ.
PSA 22:10 ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು.
PSA 22:11 ನನ್ನಿಂದ ದೂರವಾಗಿರಬೇಡಿರಿ, ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, ಸಹಾಯಕರು ನನಗೆ ಯಾರೂ ಇಲ್ಲ.
PSA 22:12 ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
PSA 22:13 ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ.
PSA 22:14 ನಾನು ಚೆಲ್ಲಿದ ನೀರಿನಂತಿದ್ದೇನೆ, ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. ನನ್ನ ಹೃದಯವು ಮೇಣದ ಹಾಗೆ ನನ್ನೊಳಗೆ ಕರಗಿಹೋಗಿದೆ.
PSA 22:15 ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ.
PSA 22:16 ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
PSA 22:17 ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; ಅವರು ನನ್ನನ್ನು ಕಂಡು ಹಿಗ್ಗುತ್ತಾರೆ.
PSA 22:18 ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.
PSA 22:19 ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.
PSA 22:20 ನನ್ನ ಪ್ರಾಣವನ್ನು ಖಡ್ಗದಿಂದಲೂ ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ.
PSA 22:21 ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ.
PSA 22:22 ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು.
PSA 22:23 ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ.
PSA 22:24 ಏಕೆಂದರೆ ಸಂಕಟಪಡುವವನ ಸಂಕಟವನ್ನು ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಆತನು ಮೊರೆ ಇಡಲು, ಅವರು ಕೇಳಿದರು.
PSA 22:25 ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು.
PSA 22:26 ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ.
PSA 22:27 ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.
PSA 22:28 ಏಕೆಂದರೆ ರಾಜ್ಯವು ಯೆಹೋವ ದೇವರದೇ; ಜನಾಂಗಗಳನ್ನು ಆಳುವವರು ಅವರೇ.
PSA 22:29 ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು.
PSA 22:30 ಸಂತಾನವು ದೇವರನ್ನು ಸೇವಿಸುವುದು; ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು.
PSA 22:31 ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ ಇದನ್ನೆಲ್ಲ ಮಾಡಿದವರು ದೇವರೇ!
PSA 23:1 ದಾವೀದನ ಕೀರ್ತನೆ. ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.
PSA 23:2 ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ; ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.
PSA 23:3 ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ. ತಮ್ಮ ಹೆಸರಿನ ನಿಮಿತ್ತ ನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.
PSA 23:4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀವು ನನ್ನೊಂದಿಗಿರುವುದರಿಂದ ನಾನು ಕೇಡಿಗೆ ಹೆದರೆನು; ನಿಮ್ಮ ದೊಣ್ಣೆಯೂ ನಿಮ್ಮ ಕೋಲೂ ನನ್ನನ್ನು ಸಂತೈಸುತ್ತವೆ.
PSA 23:5 ನೀವು ನನ್ನ ವೈರಿಗಳ ಮುಂದೆಯೇ ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ. ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.
PSA 23:6 ನಿಶ್ಚಯವಾಗಿ ಶುಭವೂ ಪ್ರೀತಿಯೂ ನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ; ನಾನು ಯೆಹೋವ ದೇವರ ಮನೆಯಲ್ಲಿ ಸದಾಕಾಲವೂ ವಾಸಿಸುವೆನು.
PSA 24:1 ದಾವೀದನ ಕೀರ್ತನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರದ್ದೇ; ಲೋಕವೂ ಅದರ ನಿವಾಸಿಗಳೂ ಅವರಿಗೇ ಸೇರಿದ್ದು.
PSA 24:2 ಏಕೆಂದರೆ ಅವರು ಸಮುದ್ರಗಳ ಮೇಲೆ ಅದನ್ನು ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರಪಡಿಸಿದ್ದಾರೆ.
PSA 24:3 ಯೆಹೋವ ದೇವರ ಪರ್ವತವನ್ನು ಹತ್ತುವವನು ಯಾರು? ಅವರ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು?
PSA 24:4 ಶುದ್ಧಹಸ್ತಗಳೂ ನಿರ್ಮಲವಾದ ಹೃದಯವೂ ಉಳ್ಳವನಾಗಿದ್ದು; ವಂಚನೆಯಿಂದ ಮುಕ್ತನಾಗಿ, ಮೋಸದಿಂದ ಆಣೆ ಇಡದೆಯೂ ಇರುವವನೇ.
PSA 24:5 ಇಂಥವರೇ ಯೆಹೋವ ದೇವರಿಂದ ಆಶೀರ್ವಾದವನ್ನು ಹೊಂದುವರು. ತಮ್ಮ ರಕ್ಷಕ ಆಗಿರುವ ದೇವರಿಂದಲೇ ನಿರ್ದೋಷಿಯಾಗುವರು.
PSA 24:6 ಇಂಥವರೇ ದೇವರನ್ನು ಹುಡುಕುವ ಸಂತತಿಯು; ಯಾಕೋಬನ ದೇವರೇ, ನಿಮ್ಮನ್ನು ಹುಡುಕುವವರು ಇಂಥವರೇ.
PSA 24:7 ದ್ವಾರಗಳೇ ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ.
PSA 24:8 ಈ ಮಹಿಮೆಯ ಅರಸ ಯಾರು? ಬಲವೂ ಪರಾಕ್ರಮವೂ ಉಳ್ಳ ಯೆಹೋವ ದೇವರೇ ಆಗಿರುತ್ತಾರೆ. ಯೆಹೋವ ದೇವರು ಯುದ್ಧದಲ್ಲಿ ಪರಾಕ್ರಮವುಳ್ಳವರು ಆಗಿರುತ್ತಾರೆ.
PSA 24:9 ದ್ವಾರಗಳೇ, ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ.
PSA 24:10 ಮಹಿಮೆಯ ಅರಸ ಯಾರು? ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ. ಇವರೇ ಮಹಿಮೆಯ ಅರಸರು.
PSA 25:1 ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.
PSA 25:2 ನನ್ನ ದೇವರೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; ನಾನು ನಾಚಿಕೆಪಡದಂತೆ ಮಾಡಿರಿ; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
PSA 25:3 ನಿಮ್ಮನ್ನು ನಿರೀಕ್ಷಿಸುವವರಲ್ಲಿ ಯಾರೂ ನಾಚಿಕೆಪಡದಿರಲಿ; ನಿಷ್ಕಾರಣವಾಗಿ ವಂಚನೆ ಮಾಡುವವರು ನಾಚಿಕೆಪಡಲಿ.
PSA 25:4 ಯೆಹೋವ ದೇವರೇ, ನಿಮ್ಮ ಮಾರ್ಗಗಳನ್ನು ನನಗೆ ತೋರಿಸಿರಿ; ನಿಮ್ಮ ದಾರಿಗಳನ್ನು ನನಗೆ ಕಲಿಸಿರಿ.
PSA 25:5 ನಿಮ್ಮ ಸತ್ಯದಲ್ಲಿ ಮಾರ್ಗದರ್ಶನ ನೀಡಿ ನನಗೆ ಬೋಧಿಸಿರಿ; ಏಕೆಂದರೆ ನೀವು ನನ್ನ ರಕ್ಷಕ ಆಗಿರುವ ದೇವರಾಗಿದ್ದೀರಿ; ನಿಮ್ಮನ್ನು ನಾನು ದಿನವೆಲ್ಲಾ ನಿರೀಕ್ಷಿಸುತ್ತಿದ್ದೇನೆ.
PSA 25:6 ಯೆಹೋವ ದೇವರೇ, ಆದಿಯಿಂದಿರುವ ನಿಮ್ಮ ಅನುಕಂಪವನ್ನೂ ನಿಮ್ಮ ಪ್ರೀತಿಯನ್ನೂ, ಕರುಣೆಯನ್ನೂ ಜ್ಞಾಪಕಮಾಡಿಕೊಳ್ಳಿರಿ.
PSA 25:7 ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ.
PSA 25:8 ಯೆಹೋವ ದೇವರು ಒಳ್ಳೆಯವರೂ ನ್ಯಾಯವುಳ್ಳವರೂ ಆಗಿದ್ದಾರೆ; ಆದ್ದರಿಂದ ಅವರು ಪಾಪಿಗಳಿಗೆ ತಮ್ಮ ಮಾರ್ಗಗಳನ್ನು ಬೋಧಿಸುತ್ತಾರೆ.
PSA 25:9 ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ, ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ.
PSA 25:10 ಯೆಹೋವ ದೇವರ ಒಡಂಬಡಿಕೆಯನ್ನು ಕೈಗೊಳ್ಳುವವರಿಗೆ ಅವರ ದಾರಿಯೆಲ್ಲವು ಪ್ರೀತಿ, ಸತ್ಯದಿಂದ ತುಂಬಿರುತ್ತವೆ.
PSA 25:11 ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ ನನ್ನನ್ನು ಮನ್ನಿಸಿರಿ.
PSA 25:12 ಯಾವನು ಯೆಹೋವ ದೇವರಿಗೆ ಭಯಪಡುವನೋ, ಅಂಥವನಿಗೆ ಅವರು ಆಯ್ದುಕೊಳ್ಳತಕ್ಕ ಮಾರ್ಗವನ್ನು ಬೋಧಿಸುವರು.
PSA 25:13 ಅಂಥವರು ಜೀವಮಾನವೆಲ್ಲಾ ಸಫಲರಾಗಿರುವರು. ಅಂಥವರ ಸಂತಾನವು ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದು.
PSA 25:14 ಯೆಹೋವ ದೇವರ ರಹಸ್ಯವು ಅವರಿಗೆ ಭಯಪಡುವವರೊಂದಿಗೆ ಇರುವುದು; ತಮ್ಮ ಒಡಂಬಡಿಕೆಯನ್ನು ಅವರು ಅಂಥವರಿಗೇ ತಿಳಿಸುವರು.
PSA 25:15 ನನ್ನ ಕಣ್ಣುಗಳು ಯಾವಾಗಲೂ ಯೆಹೋವ ದೇವರ ಕಡೆಗೆ ಇರುತ್ತವೆ; ಏಕೆಂದರೆ ಅವರೇ ನನ್ನ ಪಾದಗಳನ್ನು ಬಲೆಯಿಂದ ಬಿಡಿಸುವವರು.
PSA 25:16 ನೀವು ನನ್ನ ಕಡೆಗೆ ತಿರುಗಿ ನನ್ನನ್ನು ಕರುಣಿಸಿರಿ; ನಾನು ಒಬ್ಬಂಟಿಗನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
PSA 25:17 ನನ್ನ ಹೃದಯದ ಕಷ್ಟಗಳನ್ನು ಪರಿಹರಿಸಿರಿ; ನೀವು ನನ್ನ ಸಂಕಟಗಳಿಂದ ನನ್ನನ್ನು ಬಿಡಿಸಿರಿ.
PSA 25:18 ನನ್ನ ಬಾಧೆಯನ್ನೂ ವ್ಯಥೆಯನ್ನೂ ನೋಡಿರಿ; ನನ್ನ ಪಾಪಗಳನ್ನೆಲ್ಲಾ ತೆಗೆದುಹಾಕಿರಿ.
PSA 25:19 ನನ್ನ ಶತ್ರುಗಳನ್ನು ನೋಡಿರಿ, ಅವರು ಹೆಚ್ಚಾಗಿದ್ದಾರೆ; ತೀವ್ರ ಹಗೆಯಿಂದ ಅವರು ನನ್ನನ್ನು ದ್ವೇಷಿಸುತ್ತಾರೆ.
PSA 25:20 ನನ್ನ ಪ್ರಾಣವನ್ನು ಕಾಪಾಡಿ, ನನ್ನನ್ನು ಬಿಡಿಸಿರಿ; ನಾನು ನಾಚಿಕೆಪಡದಂತೆ ಮಾಡಿರಿ, ಏಕೆಂದರೆ ನಾನು ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
PSA 25:21 ಯಥಾರ್ಥತೆಯೂ ನಿಷ್ಕಪಟವೂ ನನ್ನನ್ನು ಕಾಯಲಿ, ಏಕೆಂದರೆ ನನ್ನ ನಿರೀಕ್ಷೆಯು ನಿಮ್ಮ ಮೇಲೆ ಇದೆ.
PSA 25:22 ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ವಿಮೋಚಿಸಿರಿ.
PSA 26:1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ, ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ; ನಾನು ಯೆಹೋವ ದೇವರಲ್ಲಿ ಕದಲದೆ ಭರವಸೆ ಇಟ್ಟಿದ್ದೇನೆ.
PSA 26:2 ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ; ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ.
PSA 26:3 ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ; ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ.
PSA 26:4 ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ; ವಂಚಕರ ಸಂಗಡ ನಾನು ಹೋಗುವುದಿಲ್ಲ.
PSA 26:5 ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ; ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ.
PSA 26:6 ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,
PSA 26:7 ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು.
PSA 26:8 ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.
PSA 26:9 ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ, ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ.
PSA 26:10 ಅವರ ಕೈಗಳಲ್ಲಿ ಕೇಡು ಇದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
PSA 26:11 ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ; ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ.
PSA 26:12 ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ; ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.
PSA 27:1 ದಾವೀದನ ಕೀರ್ತನೆ. ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ. ನಾನು ಯಾರಿಗೂ ಭಯಪಡೆನು? ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ. ನಾನು ಯಾರಿಗೂ ಹೆದರೆನು?
PSA 27:2 ದುಷ್ಟರು ನನ್ನನ್ನು ಬೀಳಿಸಬೇಕೆಂದು ನನಗೆ ವಿರೋಧವಾಗಿ ಸಮೀಪಿಸುವಾಗ, ನನ್ನ ವೈರಿಗಳು ತಾವೇ ಎಡವಿಬಿದ್ದರು.
PSA 27:3 ನನಗೆ ವಿರೋಧವಾಗಿ ಇಳಿದರೂ ನನ್ನ ಹೃದಯವು ಭಯಪಡದು; ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ ನಾನು ಭರವಸೆಯಿಂದಿರುವೆನು.
PSA 27:4 ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ, ಅದರ ದಯೆಯನ್ನು ನೋಡುತ್ತಾ ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ ಇರಬೇಕೆಂಬ ಒಂದೇ ವರವನ್ನು ಯೆಹೋವ ದೇವರಿಂದ ಕೇಳಿಕೊಂಡು ಅದನ್ನೇ ಹುಡುಕುತ್ತಿರುವೆನು.
PSA 27:5 ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು ತಮ್ಮ ಗುಡಾರದಲ್ಲಿ ಬಚ್ಚಿಡುವರು. ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು. ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು.
PSA 27:6 ಈಗ ನನ್ನ ತಲೆಯು ನನ್ನ ಸುತ್ತಲಿರುವ ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು, ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು; ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು.
PSA 27:7 ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ; ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ.
PSA 27:8 ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,” ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು.
PSA 27:9 ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ; ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ; ನೀವೇ ನನಗೆ ಸಹಾಯಕರಾಗಿದ್ದೀರಿ; ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ. ನನ್ನನ್ನು ಬಿಟ್ಟುಬಿಡಬೇಡಿರಿ.
PSA 27:10 ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ, ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು.
PSA 27:11 ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ; ನನ್ನ ವಿರೋಧಿಗಳ ನಿಮಿತ್ತ ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.
PSA 27:12 ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ; ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
PSA 27:13 ಇದೊಂದು ನನ್ನ ಭರವಸೆಯಾಗಿರುವುದು: ನಾನಂತೂ ಯೆಹೋವ ದೇವರ ಒಳಿತನ್ನು ಜೀವಿತರ ದೇಶದಲ್ಲಿ ಕಾಣುವೆನು.
PSA 27:14 ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; ಅವರು ನಿನ್ನ ಹೃದಯವನ್ನು ದೃಢಪಡಿಸುವರು; ಯೆಹೋವ ದೇವರಿಗಾಗಿ ಕಾದಿರು.
PSA 28:1 ದಾವೀದನ ಕೀರ್ತನೆ. ಯೆಹೋವ ದೇವರೇ, ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು.
PSA 28:2 ನಾನು ನಿಮಗೆ ಮೊರೆಯಿಡುವಾಗ, ನನ್ನ ಕೈಗಳನ್ನು ನಿಮ್ಮ ಮಹಾಪರಿಶುದ್ಧ ಸ್ಥಳದ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯನ್ನು ಲಾಲಿಸಿರಿ.
PSA 28:3 ದುಷ್ಟರ ಸಂಗಡವೂ ಅಪರಾಧ ಮಾಡುವವರ ಸಂಗಡವೂ ನನ್ನನ್ನು ಎಳೆಯಬೇಡಿರಿ; ಅವರು ತಮ್ಮ ನೆರೆಯವರೊಂದಿಗೆ ಸಮಾಧಾನವಾಗಿ ಮಾತನಾಡುತ್ತಾರೆ; ಆದರೆ ಕೇಡು ಅವರ ಹೃದಯದಲ್ಲಿ ಇದೆ.
PSA 28:4 ಅವರ ಕೃತ್ಯಗಳ ಪ್ರಕಾರವಾಗಿಯೂ, ಅವರ ಕೆಟ್ಟತನಗಳ ಪ್ರಕಾರವಾಗಿಯೂ ಅವರಿಗೆ ಪ್ರತಿಫಲಕೊಡಿರಿ; ಅವರ ಕೈಕೃತ್ಯಗಳ ಪ್ರಕಾರವಾಗಿ ಅವರಿಗೆ ಕೊಡಿರಿ, ಅರ್ಹತೆಗೆ ತಕ್ಕಂತೆಯೇ ಅವರಿಗೆ ಬರಮಾಡಿರಿ.
PSA 28:5 ಅವರು ಯೆಹೋವ ದೇವರ ಕೃತ್ಯಗಳನ್ನೂ, ಅವರ ಕೈಗಳ ಕೆಲಸವನ್ನೂ ಲಕ್ಷಿಸುವುದಿಲ್ಲ; ಆದ್ದರಿಂದ ದೇವರು ಅವರನ್ನು ವೃದ್ಧಿಗೊಳಿಸದೆ ದಂಡಿಸುವರು.
PSA 28:6 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಕರುಣೆಗಾಗಿ ನನ್ನ ಮೊರೆಯನ್ನು ಅವರು ಕೇಳಿದ್ದಾರೆ.
PSA 28:7 ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ; ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು; ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು; ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು.
PSA 28:8 ಯೆಹೋವ ದೇವರು ತಮ್ಮ ಜನರಿಗೆ ಬಲವಾಗಿದ್ದಾರೆ; ತಮ್ಮ ಅಭಿಷಿಕ್ತನಿಗೆ ರಕ್ಷಣೆಯ ಕೋಟೆ ಆಗಿದ್ದಾರೆ.
PSA 28:9 ನಿಮ್ಮ ಜನರನ್ನು ರಕ್ಷಿಸಿರಿ; ನಿಮ್ಮ ವಾರಸುದಾರರನ್ನು ಆಶೀರ್ವದಿಸಿರಿ; ನೀವು ಅವರ ಕುರುಬ ಆಗಿದ್ದು; ಅವರನ್ನು ಯಾವಾಗಲೂ ಮುನ್ನಡೆಸಿರಿ.
PSA 29:1 ದಾವೀದನ ಕೀರ್ತನೆ. ದೇವದೂತರೇ, ಬಲವು ಯೆಹೋವ ದೇವರದೇ, ಮಹಿಮೆ ಯೆಹೋವ ದೇವರದೇ ಎಂದು ಹೇಳಿ ಕೊಂಡಾಡಿರಿ.
PSA 29:2 ಯೆಹೋವ ದೇವರ ನಾಮಕ್ಕೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ವಸ್ತ್ರದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
PSA 29:3 ಯೆಹೋವ ದೇವರ ಧ್ವನಿಯು ಜಲರಾಶಿಗಳ ಮೇಲೆ ಇದೆ; ಮಹಿಮೆಯ ದೇವರು ಇದ್ದಾರೆ; ಯೆಹೋವ ದೇವರು ಮಹಾಸಾಗರಗಳ ಮೇಲೆ ಇದ್ದಾರೆ.
PSA 29:4 ಯೆಹೋವ ದೇವರ ಧ್ವನಿಯು ಶಕ್ತಿಯುಳ್ಳದ್ದು; ಯೆಹೋವ ದೇವರ ಧ್ವನಿಯು ವೈಭವವುಳ್ಳದ್ದು.
PSA 29:5 ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ; ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ.
PSA 29:6 ಲೆಬನೋನ್ ಪರ್ವತವು ಕರುವಿನ ಹಾಗೆಯೂ ಸಿರ್ಯೋನ್ ಬೆಟ್ಟವು ಎಳೆಯ ಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾರೆ.
PSA 29:7 ಯೆಹೋವ ದೇವರ ಧ್ವನಿಯು ಸಿಡಿಲಿನ ಮಿಂಚಿನಂತೆ ಅಪ್ಪಳಿಸುತ್ತದೆ.
PSA 29:8 ಯೆಹೋವ ದೇವರ ಶಬ್ದವು ಮರುಭೂಮಿಯನ್ನು ನಡುಗಿಸುತ್ತದೆ; ಯೆಹೋವ ದೇವರು ಕಾದೇಶ್ ಮರುಭೂಮಿಯನ್ನು ನಡುಗಿಸುತ್ತಾರೆ.
PSA 29:9 ಯೆಹೋವ ದೇವರ ಧ್ವನಿಯು ಜಿಂಕೆಗಳು ಈಯುವಂತೆ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ದೇವರ ಮಂದಿರದಲ್ಲಿ ಪ್ರತಿಯೊಬ್ಬರೂ “ಮಹಿಮೆ!” ಎಂದು ಘೋಷಿಸುತ್ತಾರೆ.
PSA 29:10 ಯೆಹೋವ ದೇವರು ಪ್ರಳಯದ ಮೇಲೆ ಕುಳಿತುಕೊಳ್ಳುತ್ತಾರೆ; ಯುಗಯುಗಕ್ಕೂ ಯೆಹೋವ ದೇವರು ಅರಸರಾಗಿ ಕುಳಿತುಕೊಂಡಿದ್ದಾರೆ.
PSA 29:11 ಯೆಹೋವ ದೇವರು ತಮ್ಮ ಜನರಿಗೆ ಬಲವನ್ನು ಕೊಡುವರು; ಯೆಹೋವ ದೇವರು ತಮ್ಮ ಜನರನ್ನು ಸಮಾಧಾನದಿಂದ ಆಶೀರ್ವದಿಸುವರು.
PSA 30:1 ದೇವಾಲಯದ ಸಮರ್ಪಣೆಗಾಗಿ ದಾವೀದನು ಸಂಯೋಜಿಸಿದ ಹಾಡು. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು; ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ. ನನ್ನನ್ನು ಮೇಲಕ್ಕೆ ಎತ್ತಿದ್ದೀರಿ.
PSA 30:2 ನನ್ನ ದೇವರಾದ ಯೆಹೋವ ದೇವರೇ, ಸಹಾಯಕ್ಕಾಗಿ ನಿಮಗೆ ಮೊರೆಯಿಡಲು, ನನ್ನನ್ನು ಸ್ವಸ್ಥಮಾಡಿದ್ದೀರಿ.
PSA 30:3 ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ; ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ.
PSA 30:4 ಯೆಹೋವ ದೇವರ ವಿಶ್ವಾಸಿಗಳೇ ಅವರನ್ನು ಕೊಂಡಾಡಿರಿ; ಅವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.
PSA 30:5 ಅವರ ಕೋಪವು ಕ್ಷಣಮಾತ್ರವೇ; ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ; ರಾತ್ರಿಯಲ್ಲಿ ದುಃಖ ಬಂದಿದ್ದರೂ; ಬೆಳಿಗ್ಗೆ ಆನಂದವು ಬರುವುದು.
PSA 30:6 ನಾನು ಸುರಕ್ಷಿತನಾಗಿದ್ದಾಗ, “ನಾನೆಂದೂ ಕದಲುವುದಿಲ್ಲ,” ಎಂದು ಹೇಳಿಕೊಂಡೆನು.
PSA 30:7 ಯೆಹೋವ ದೇವರೇ, ನಿಮ್ಮ ದಯೆಯಿಂದ ನನ್ನ ರಾಜ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀರಿ ಆದರೆ ನೀವು ನಿಮ್ಮ ಮುಖವನ್ನು ಮರೆಮಾಡಲು ನಾನು ಕಳವಳಗೊಂಡೆನು.
PSA 30:8 ಯೆಹೋವ ದೇವರೇ, ನಾನು ನಿಮಗೆ ಮೊರೆಯಿಟ್ಟೆನು; ಕರುಣೆಗಾಗಿ ಯೆಹೋವ ಕರ್ತ ಆಗಿರುವವರಿಗೆ ಬಿನ್ನವಿಸಿದೆನು.
PSA 30:9 ನಾನು ಸಮಾಧಿಯಲ್ಲಿ ಇಳಿದು ಹೋಗಿ ನಾಶವಾದರೆ, ಅದರಿಂದ ನಿಮಗೆ ಆಗುವ ಲಾಭವೇನು? ಧೂಳು ನಿಮ್ಮನ್ನು ಸ್ತುತಿಸುವುದೋ? ಅದು ನಿಮ್ಮ ನಂಬಿಗಸ್ತಿಕೆಯನ್ನು ಪ್ರಕಟಿಸುವುದೋ?
PSA 30:10 ಯೆಹೋವ ದೇವರೇ, ಲಾಲಿಸು; ನನ್ನನ್ನು ಕರುಣಿಸಿರಿ; ಯೆಹೋವ ದೇವರೇ, ನನಗೆ ಸಹಾಯಕರಾಗಿರಿ.
PSA 30:11 ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ; ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ.
PSA 30:12 ಆದ್ದರಿಂದ ನನ್ನ ಹೃದಯವು ಮೌನವಿರದೆ ನಿಮ್ಮನ್ನು ಯುಗಯುಗಕ್ಕೂ ಕೊಂಡಾಡುತ್ತಿರುವುದು. ನನ್ನ ದೇವರಾದ ಯೆಹೋವ ದೇವರೇ, ನಾನು ನಿಮ್ಮನ್ನು ಸದಾಕಾಲವೂ ಸ್ತುತಿಸುವೆನು.
PSA 31:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿಕೊಂಡಿದ್ದೇನೆ; ನಾನು ಎಂದಿಗೂ ನಾಚಿಕೆಪಡದಂತೆ ಮಾಡಿರಿ; ನಿಮ್ಮ ನೀತಿಯಲ್ಲಿ ನನ್ನನ್ನು ವಿಮೋಚಿಸಿರಿ.
PSA 31:2 ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ; ಬೇಗ ಬಂದು ನನ್ನನ್ನು ಬಿಡಿಸಿರಿ; ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ, ಬಲವಾದ ಕೋಟೆಯೂ ಆಗಿರಿ.
PSA 31:3 ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ; ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ನಡೆಸಿರಿ; ನನಗೆ ಮಾರ್ಗದರ್ಶಕರಾಗಿರಿ.
PSA 31:4 ವೈರಿಯು ಗುಪ್ತವಾಗಿ ಒಡ್ಡಿದ ಬಲೆಯೊಳಗಿಂದ ನನ್ನನ್ನು ಹೊರಗೆ ಎಳೆಯಿರಿ; ನೀವೇ ನನಗೆ ಆಶ್ರಯ.
PSA 31:5 ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ; ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.
PSA 31:6 ದೇವರಲ್ಲದವುಗಳನ್ನು ಅನುಸರಿಸುವವರಿಂದ ನಾನು ಪ್ರತ್ಯೇಕವಾಗಿದ್ದೇನೆ; ನಾನು ಯೆಹೋವ ದೇವರಲ್ಲಿಯೇ ಭರವಸೆ ಇಟ್ಟಿದ್ದೇನೆ.
PSA 31:7 ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು; ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು, ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.
PSA 31:8 ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ; ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.
PSA 31:9 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಇಕ್ಕಟ್ಟಿನಲ್ಲಿದ್ದೇನೆ; ನನ್ನ ಕಣ್ಣೂ ನನ್ನ ಪ್ರಾಣವೂ ನನ್ನ ದೇಹವೂ ದುಃಖದಿಂದ ಕ್ಷೀಣವಾಗಿವೆ.
PSA 31:10 ನನ್ನ ಜೀವವು ಚಿಂತೆಯಿಂದಲೂ, ನನ್ನ ವರ್ಷಗಳು ನಿಟ್ಟುಸಿರಿನಿಂದಲೂ ಕಳೆದುಹೋಗಿವೆ; ನನ್ನ ಅಪರಾಧದಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಕ್ಷೀಣವಾಗಿವೆ.
PSA 31:11 ನನ್ನ ವೈರಿಗಳೆಲ್ಲರ ನಿಮಿತ್ತವಾಗಿ ನನ್ನ ನೆರೆಯವರಿಗೆ ನಾನು ನಿಂದೆಯೂ, ಮಿತ್ರರಿಗೆ ಹೆದರಿಕೆಯೂ ಆಗಿದ್ದೇನೆ; ದಾರಿಯಲ್ಲಿ ನನ್ನನ್ನು ಕಂಡವರು ನನ್ನನ್ನು ಬಿಟ್ಟು ಓಡಿಹೋಗುತ್ತಾರೆ.
PSA 31:12 ನಾನು ಸತ್ತುಹೋದವರಂತೆ ಎಲ್ಲರು ನನ್ನನ್ನು ಮರೆತುಬಿಟ್ಟಿದ್ದಾರೆ; ನಾನು ಒಡೆದ ಮಡಕೆಯಂತೆ ಇದ್ದೇನೆ.
PSA 31:13 ಅನೇಕರು ಹೀಗೆ ಪಿಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತಲೂ ಅಂಜಿಕೆ ಇದೆ; ಅನೇಕರು ನನ್ನ ಪ್ರಾಣವನ್ನು ತೆಗೆಯಬೇಕೆಂದು ಒಳಸಂಚು ಮಾಡುತ್ತಿದ್ದಾರೆ.
PSA 31:14 ಯೆಹೋವ ದೇವರೇ, ನಾನು ನಿಮ್ಮಲ್ಲಿ ಭರವಸೆ ಇಟ್ಟಿದ್ದೇನೆ; “ನನ್ನ ದೇವರು ನೀವೇ,” ಎಂದು ಹೇಳಿಕೊಂಡಿದ್ದೇನೆ.
PSA 31:15 ನನ್ನ ಸಮಯವು ನಿಮ್ಮ ಕೈಯಲ್ಲಿ ಇವೆ; ನನ್ನ ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸಿರಿ.
PSA 31:16 ನಿಮ್ಮ ಮುಖವು ನಿಮ್ಮ ಸೇವಕನ ಮೇಲೆ ಪ್ರಕಾಶಿಸಲಿ; ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನನ್ನು ರಕ್ಷಿಸಿರಿ.
PSA 31:17 ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ.
PSA 31:18 ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ, ಕಠಿಣವಾಗಿಯೂ ಮಾತನಾಡುವ ಸುಳ್ಳಿನ ತುಟಿಗಳು ಮೌನವಾಗಲಿ.
PSA 31:19 ನಿಮ್ಮ ಒಳ್ಳೆಯತನವು ಎಷ್ಟೋ ಸಮೃದ್ಧ; ನೀವು ನಿಮಗೆ ಭಯಪಡುವವರಿಗೋಸ್ಕರ ಆ ಒಳ್ಳೆಯತನವನ್ನಿಟ್ಟಿದ್ದೀರಿ, ನಿಮ್ಮನ್ನು ಆಶ್ರಯಿಸಿಕೊಳ್ಳುವವರಿಗೆ ನೀವು ನಿಮ್ಮ ಒಳ್ಳೆಯತನವನ್ನು ಎಲ್ಲರ ಮುಂದೆ ದಯಪಾಲಿಸಿದ್ದೀರಿ.
PSA 31:20 ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ನೀವು ಅವರನ್ನು ನಿಮ್ಮ ಸಾನಿಧ್ಯದಲ್ಲಿಯೇ ಮರೆಮಾಡುತ್ತೀರಿ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ನಿಮ್ಮ ನಿವಾಸದಲ್ಲಿ ಅಡಗಿಸುತ್ತೀರಿ.
PSA 31:21 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಮುತ್ತಿಗೆ ಹಾಕಲಾದ ನಗರದಲ್ಲಿದ್ದ ನನಗೆ ದೇವರು ಆಶ್ಚರ್ಯಕರವಾದ ಒಡಂಬಡಿಕೆಯ ಪ್ರೀತಿಯನ್ನು ತೋರಿಸಿದ್ದಾರೆ.
PSA 31:22 “ನಾನು ನಿಮ್ಮ ಕಣ್ಣುಗಳ ಎದುರಿನಿಂದ ತೆಗೆದು ಹಾಕಲಾಗಿದ್ದೇನೆ” ಎಂದು ನನ್ನ ಗಾಬರಿಯಲ್ಲಿ ಹೇಳಿದೆನು; ಆದರೂ ನಾನು ಸಹಾಯಕ್ಕಾಗಿ ನಿಮಗೆ ಮೊರೆಯಿಡಲು ನೀವು ಕರುಣೆಗಾಗಿ ಕೂಗಿದ್ದನ್ನು ಕೇಳಿದ್ದೀರಿ.
PSA 31:23 ಭಕ್ತರೇ, ಯೆಹೋವ ದೇವರನ್ನು ಪ್ರೀತಿಸಿರಿ; ಯೆಹೋವ ದೇವರು ನಂಬಿಗಸ್ತರನ್ನು ಕಾಯುತ್ತಾರೆ; ಅಹಂಕಾರಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.
PSA 31:24 ಯೆಹೋವ ದೇವರಲ್ಲಿ ನಿರೀಕ್ಷಿಸುವವರೆಲ್ಲರೂ ದೃಢವಾಗಿರಿ; ನಿಮ್ಮ ಹೃದಯವು ಧೈರ್ಯದಿಂದ ಇರಲಿ.
PSA 32:1 ದಾವೀದನ ಕೀರ್ತನೆ. ಮಾಸ್ಕಿಲ ಪದ್ಯ. ಯಾರ ಉಲ್ಲಂಘನೆಗಳು ಕ್ಷಮಿಸಲಾಗಿವೆಯೋ, ಯಾರ ಪಾಪಗಳು ಮುಚ್ಚಲಾಗಿವೆಯೋ ಅವರೇ ಧನ್ಯರು.
PSA 32:2 ಯೆಹೋವ ದೇವರು ಯಾರ ಅನ್ಯಾಯವನ್ನು ಎಣಿಸುವುದಿಲ್ಲವೋ, ಯಾರ ಆತ್ಮದಲ್ಲಿ ವಂಚನೆ ಇರುವುದಿಲ್ಲವೋ ಆ ಮನುಷ್ಯನು ಧನ್ಯನು.
PSA 32:3 ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದು ಹೋದವು.
PSA 32:4 ದೇವರೇ, ರಾತ್ರಿ ಹಗಲು ನಿಮ್ಮ ಕೈ ನನ್ನ ಮೇಲೆ ಭಾರವಾಗಿತ್ತು; ನನ್ನ ಬಲವು ಬೇಸಿಗೆಯ ಬಿಸಿಲಿನಲ್ಲಿ ಕುಂದಿಹೋಗುವಂತೆ ಆಯಿತು.
PSA 32:5 ನನ್ನ ಪಾಪವನ್ನು ನಿಮಗೆ ತಿಳಿಸಿ, ನನ್ನ ಅನ್ಯಾಯವನ್ನು ಮರೆಮಾಡದೆ, “ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ ಅರಿಕೆ ಮಾಡುವೆನು,” ಎಂದು ಹೇಳಿದೆನು; ಆಗ, ನೀವು ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ.
PSA 32:6 ಆದುದರಿಂದ ಭಕ್ತರೆಲ್ಲರು ನೀವು ಸಿಕ್ಕುವ ಕಾಲದಲ್ಲಿ ನಿಮಗೆ ಪ್ರಾರ್ಥನೆ ಮಾಡಲಿ; ನಿಶ್ಚಯವಾಗಿ ನೀರಿನ ಮಹಾಪ್ರವಾಹಗಳು ಅವರ ಸಮೀಪಕ್ಕೆ ಬರುವುದಿಲ್ಲ.
PSA 32:7 ನೀವು ನನಗೆ ಮರೆಮಾಡುವ ಸ್ಥಳವಾಗಿರುವಿರಿ; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀರಿ; ವಿಮೋಚನಾ ಧ್ವನಿಗಳಿಂದ ನೀವು ನನ್ನನ್ನು ಸುತ್ತುವರಿಯುತ್ತೀರಿ.
PSA 32:8 ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ, ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು.
PSA 32:9 ವಿವೇಕವಿಲ್ಲದ ಕುದುರೆಯ ಹಾಗೆಯೂ, ಹೇಸರಗತ್ತೆಯ ಹಾಗೆಯೂ ಇರಬೇಡಿರಿ; ಬಾರಿನಿಂದಲೂ, ಕಡಿವಾಣದಿಂದಲೂ ಅವುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.
PSA 32:10 ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು.
PSA 32:11 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯ ಉಳ್ಳವರೇ, ಜಯಗೀತೆ ಹಾಡಿರಿ.
PSA 33:1 ನೀತಿವಂತರೇ, ಯೆಹೋವ ದೇವರಿಗಾಗಿ ಸಂತೋಷದಿಂದ ಹಾಡಿರಿ; ಯಥಾರ್ಥರು ಅವರನ್ನು ಕೊಂಡಾಡುವುದು ಯೋಗ್ಯವಾಗಿದೆ.
PSA 33:2 ಯೆಹೋವ ದೇವರನ್ನು ಕಿನ್ನರಿಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಅವರನ್ನು ಕೀರ್ತಿಸಿರಿ.
PSA 33:3 ದೇವರಿಗೆ ಹೊಸಹಾಡನ್ನು ಹಾಡಿರಿ. ದೊಡ್ಡ ಶಬ್ದದಿಂದ ಇಂಪಾಗಿ ಹಾಡಿರಿ.
PSA 33:4 ಏಕೆಂದರೆ ಯೆಹೋವ ದೇವರ ವಾಕ್ಯವು ಯಥಾರ್ಥವೂ ಸತ್ಯವೂ ಆಗಿರುತ್ತವೆ. ಅವರ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಂಬಿಗಸ್ತರಾಗಿರುತ್ತಾರೆ.
PSA 33:5 ಅವರು ನೀತಿಯನ್ನೂ, ನ್ಯಾಯವನ್ನೂ ಪ್ರೀತಿಸುತ್ತಾರೆ; ಭೂಲೋಕವೆಲ್ಲಾ ಯೆಹೋವ ದೇವರ ಒಡಂಬಡಿಕೆಯ ಪ್ರೀತಿಯಿಂದ ತುಂಬಿದೆ.
PSA 33:6 ಯೆಹೋವ ದೇವರ ವಾಕ್ಯದಿಂದ ಆಕಾಶವೂ, ಅವರ ಬಾಯಿಯ ಉಸಿರಿನಿಂದ ನಕ್ಷತ್ರ ಮಂಡಲವೂ ಉಂಟಾದವು.
PSA 33:7 ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ; ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.
PSA 33:8 ಭೂಲೋಕವೆಲ್ಲಾ ಯೆಹೋವ ದೇವರಿಗೆ ಭಯಪಡಲಿ; ಭೂಲೋಕ ನಿವಾಸಿಗಳೆಲ್ಲರೂ ಅವರಿಗೆ ಭಯಭಕ್ತಿಯಿಂದಿರಲಿ.
PSA 33:9 ಏಕೆಂದರೆ ಅವರು ಹೇಳಿದ ಮಾತ್ರಕ್ಕೆ ಸಮಸ್ತವೂ ಸೃಷ್ಟಿಯಾಯಿತು; ಅವರು ಆಜ್ಞಾಪಿಸಲು ಭೂಲೋಕವು ಸ್ಥಿರವಾಯಿತು.
PSA 33:10 ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.
PSA 33:11 ಆದರೆ ಯೆಹೋವ ದೇವರ ಆಲೋಚನೆಗಳು ಎಂದೆಂದಿಗೂ ಅವರ ಹೃದಯದ ಉದ್ದೇಶಗಳು ತಲತಲಾಂತರಕ್ಕೂ ನಿಲ್ಲುತ್ತವೆ.
PSA 33:12 ಯೆಹೋವ ದೇವರು ಯಾರ ದೇವರಾಗಿದ್ದಾರೋ, ಅಂಥ ಭಾಗ್ಯವಂತರು. ದೇವರು ತಮಗಾಗಿ ಆಯ್ದುಕೊಂಡ ಜನರೂ ಭಾಗ್ಯವಂತರು.
PSA 33:13 ಪರಲೋಕದಿಂದ ಯೆಹೋವ ದೇವರು ದೃಷ್ಟಿಸಿ, ಮಾನವರೆಲ್ಲರನ್ನೂ ನೋಡುತ್ತಾರೆ.
PSA 33:14 ತಮ್ಮ ನಿವಾಸ ಸ್ಥಳದಿಂದ ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.
PSA 33:15 ಎಲ್ಲರ ಹೃದಯಗಳನ್ನು ರೂಪಿಸುವವರು ದೇವರೇ, ಜನರು ಮಾಡುವ ಕೆಲಸಗಳನ್ನೆಲ್ಲಾ ಗಮನಿಸುವವರೂ ಅವರೇ.
PSA 33:16 ಅಧಿಕ ಸೈನ್ಯದಿಂದ ಅರಸನು ಜಯಹೊಂದುವುದಿಲ್ಲ; ಪರಾಕ್ರಮಶಾಲಿಯು ಅಧಿಕ ಶಕ್ತಿಯಿಂದ ಬಿಡುಗಡೆಯಾಗುವುದಿಲ್ಲ.
PSA 33:17 ಬಿಡುಗಡೆಗೆ ಕುದುರೆಯ ಬಲ ವ್ಯರ್ಥವಾಗಿದೆ; ಅದಕ್ಕೆ ಮಹಾಶಕ್ತಿ ಇದ್ದರೂ ಅದು ರಕ್ಷಿಸಲಾರದು.
PSA 33:18 ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ, ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.
PSA 33:19 ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ, ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.
PSA 33:20 ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ; ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.
PSA 33:21 ದೇವರಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಅವರ ಪರಿಶುದ್ಧ ಹೆಸರಿನಲ್ಲಿ ಭರವಸೆ ಇಟ್ಟಿದ್ದೇವೆ.
PSA 33:22 ನಾವು ನಿಮ್ಮನ್ನು ನಿರೀಕ್ಷಿಸುವ ಪ್ರಕಾರ, ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನಮ್ಮ ಮೇಲೆ ಇರಲಿ.
PSA 34:1 ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಕ್ಕೆ ಕಳುಹಿಸಿ ರಚಿಸಿದ ಕೀರ್ತನೆ. ನಾನು ಎಲ್ಲಾ ಕಾಲಗಳಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು; ಅವರ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.
PSA 34:2 ಯೆಹೋವ ದೇವರಲ್ಲಿ ನನ್ನ ಪ್ರಾಣವು ಹಿಗ್ಗುವುದು; ಇದನ್ನು ದೀನರು ಕೇಳಿ ಸಂತೋಷಪಡುವರು.
PSA 34:3 ನನ್ನ ಸಂಗಡ ಯೆಹೋವ ದೇವರನ್ನು ಮಹಿಮೆಪಡಿಸಿರಿ; ನಾವು ಒಟ್ಟಾಗಿ ಅವರ ಹೆಸರನ್ನು ಘನಪಡಿಸೋಣ.
PSA 34:4 ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು.
PSA 34:5 ದೇವರನ್ನು ದೃಷ್ಟಿಸಿದವರು ಪ್ರಕಾಶ ಹೊಂದಿದರು; ಅಂಥವರ ಮುಖಗಳು ನಾಚಿಕೆಯಿಂದ ಕುಂದಿಹೋಗುವುದಿಲ್ಲ.
PSA 34:6 ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು.
PSA 34:7 ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.
PSA 34:8 ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು.
PSA 34:9 ದೇವರ ಭಕ್ತರೇ, ನೀವು ಯೆಹೋವ ದೇವರಿಗೆ ಭಯಪಡಿರಿ; ಏಕೆಂದರೆ ದೇವಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇಲ್ಲ.
PSA 34:10 ಸಿಂಹಗಳು ಹಸಿದು ಬಳಲಬಹುದು, ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ.
PSA 34:11 ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಯೆಹೋವ ದೇವರ ಬಗ್ಗೆ ಭಯವನ್ನು ನಿಮಗೆ ಕಲಿಸುವೆನು.
PSA 34:12 ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು ಮತ್ತು ಬಹಳ ದಿನಗಳವರೆಗೆ ಬದುಕಬೇಕೆ?
PSA 34:13 ನೀನು ಕೇಡಿನಿಂದ ನಿನ್ನ ನಾಲಿಗೆಯನ್ನು, ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ನಿಯಂತ್ರಿಸಿಕೋ.
PSA 34:14 ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
PSA 34:15 ನೀತಿವಂತರ ಮೇಲೆ ಯೆಹೋವ ದೇವರು ದೃಷ್ಟಿ ಇಡುತ್ತಾರೆ, ಅವರು ಮೊರೆಯಿಡುವಾಗ ದೇವರು ಕಿವಿಗೊಡುತ್ತಾರೆ.
PSA 34:16 ಆದರೆ ಕೆಟ್ಟದ್ದನ್ನು ಮಾಡುವವರಿಗೆ ಯೆಹೋವ ದೇವರು ವಿಮುಖರಾಗಿದ್ದಾರೆ, ಅಂಥವರ ಹೆಸರನ್ನು ಭೂಮಿಯೊಳಗಿಂದ ತೆಗೆದುಹಾಕುವರು.
PSA 34:17 ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ.
PSA 34:18 ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ.
PSA 34:19 ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.
PSA 34:20 ಅವರು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾರೆ; ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ.
PSA 34:21 ಕೇಡು ದುಷ್ಟನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಶಿಕ್ಷೆಗೆ ಒಳಗಾಗುವರು.
PSA 34:22 ಯೆಹೋವ ದೇವರು ತಮ್ಮ ಸೇವಕರ ಪ್ರಾಣವನ್ನು ವಿಮೋಚಿಸುತ್ತಾರೆ; ದೇವರನ್ನು ಆಶ್ರಯಿಸುವವರು ಯಾರೂ ಶಿಕ್ಷೆಗೆ ಒಳಗಾಗುವುದಿಲ್ಲ.
PSA 35:1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ.
PSA 35:2 ಗುರಾಣಿಯನ್ನೂ ಖಡ್ಗವನ್ನೂ ಹಿಡಿದುಕೊಂಡು ನನ್ನ ಸಹಾಯಕ್ಕೆ ಎದ್ದು ಬನ್ನಿರಿ.
PSA 35:3 ಬರ್ಜಿಯನ್ನೂ ಭಲ್ಲೆಯನ್ನೂ ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿರಿ. “ನಾನೇ ನಿಮ್ಮ ರಕ್ಷಣೆ” ಎಂದು ನನಗೆ ಹೇಳಿರಿ.
PSA 35:4 ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
PSA 35:5 ಅವರು ಗಾಳಿಗೆ ಹಾರುವ ಹೊಟ್ಟಿನ ಹಾಗೆ ಆಗಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
PSA 35:6 ಅಂಥವರ ಮಾರ್ಗವು ಕತ್ತಲೆಯೂ ಜಾರುವಿಕೆಯೂ ಆಗಿರಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
PSA 35:7 ಏಕೆಂದರೆ ಕಾರಣವಿಲ್ಲದೆ ತಮ್ಮ ಬಲೆಯನ್ನು ನನಗೆ ಒಡ್ಡಿದ್ದಾರೆ; ಕಾರಣವಿಲ್ಲದೆ ನನಗೆ ಗುಂಡಿಯನ್ನು ಅಗೆದಿದ್ದಾರೆ.
PSA 35:8 ನಾಶವು ಅವರಿಗೆ ಅನಿರೀಕ್ಷಿತವಾಗಿ ಬರಲಿ; ಅವರು ಅಡಗಿಸಿಟ್ಟ ಬಲೆಯು ಅವರನ್ನೇ ಹಿಡಿಯಲಿ; ವಿನಾಶನಕ್ಕಾಗಿ ಅವರು ಗುಂಡಿಯಲ್ಲಿ ಬೀಳಲಿ.
PSA 35:9 ಆಗ ನನ್ನ ಪ್ರಾಣವು ಯೆಹೋವ ದೇವರಲ್ಲಿ ಉಲ್ಲಾಸಗೊಂಡು, ದೇವರ ರಕ್ಷಣೆಯಲ್ಲಿ ಸಂತೋಷಿಸುವುದು.
PSA 35:10 ಯೆಹೋವ ದೇವರೇ, “ನಿಮ್ಮ ಹಾಗೆ ಯಾರು ಇದ್ದಾರೆ? ಬಡವನನ್ನು ಅವನಿಗಿಂತ ಬಲಿಷ್ಠನಿಂದ ಕಾಪಾಡುತ್ತೀರಿ ದರಿದ್ರನನ್ನೂ, ಕೊರತೆಯುಳ್ಳವನನ್ನೂ ಸುಲಿದುಕೊಳ್ಳುವವನಿಂದ ಬಿಡಿಸುತ್ತೀರಿ,” ಎಂದು ನನ್ನ ಪೂರ್ಣ ಪ್ರಾಣವೇ ಹೇಳುವುದು.
PSA 35:11 ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ.
PSA 35:12 ನನ್ನ ಉಪಕಾರಕ್ಕೆ ಬದಲಾಗಿ ನನಗೆ ಕೇಡನ್ನು ಮಾಡಿ ನನ್ನನ್ನು ದುಃಖದಲ್ಲಿರುವವರಂತೆ ಬಿಟ್ಟುಬಿಟ್ಟಿದ್ದರೆ
PSA 35:13 ನಾನಾದರೋ ಅವರು ಅಸ್ವಸ್ಥರಾದಾಗ ಗೋಣಿತಟ್ಟು ಹೊದ್ದುಕೊಂಡು ಉಪವಾಸದಿಂದ ತಗ್ಗಿಸಿಕೊಂಡೆನು; ನನ್ನ ಪ್ರಾರ್ಥನೆಗಳಿಗೆ ಉತ್ತರ ದೊರೆಯಲಿಲ್ಲ.
PSA 35:14 ಆದುದರಿಂದ ಸ್ವಸ್ಥರಾದವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಎಂದು ಭಾವಿಸಿಕೊಂಡು, ನನ್ನ ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವನಾಗಿ ತಲೆಬಾಗಿ ಅಳುತ್ತಿದ್ದೆನು.
PSA 35:15 ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ.
PSA 35:16 ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ.
PSA 35:17 ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ.
PSA 35:18 ಆಗ ನಾನು ದೊಡ್ಡ ಸಭೆಗಳಲ್ಲಿ ನಿಮ್ಮನ್ನು ಕೊಂಡಾಡುವೆನು; ಬಹುಜನರಲ್ಲಿ ನಿಮ್ಮನ್ನು ಸ್ತುತಿಸುವೆನು.
PSA 35:19 ನಿಷ್ಕಾರಣವಾಗಿರುವ ನನ್ನ ಶತ್ರುಗಳು ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು ಕಣ್ಣು ಸನ್ನೆ ಮಾಡದೆ ಇರಲಿ.
PSA 35:20 ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರಾಗಿ ಬಾಳುವವರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.
PSA 35:21 ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.
PSA 35:22 ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; ನನಗೆ ದೂರವಾಗಿರಲೂ ಬೇಡಿರಿ.
PSA 35:23 ನನ್ನ ದೇವರೇ, ನನ್ನ ಯೆಹೋವ ದೇವರೇ, ನನ್ನ ನ್ಯಾಯವನ್ನು ನಿರ್ಣಯಿಸಿರಿ, ನನ್ನ ವ್ಯಾಜ್ಯದ ಪರವಾಗಿ ಎದ್ದೇಳಿರಿ.
PSA 35:24 ಯೆಹೋವ ದೇವರೇ, ನನ್ನ ದೇವರೇ, ನಿಮ್ಮ ನೀತಿಯ ಪ್ರಕಾರ ನನಗೆ ನ್ಯಾಯತೀರಿಸಿರಿ; ಅವರು ನನ್ನ ವಿರುದ್ಧ ಸಂತೋಷಪಡದೆ ಇರಲಿ.
PSA 35:25 ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.
PSA 35:26 ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊಂದಲಿ.
PSA 35:27 ನನ್ನ ನೀತಿಯಲ್ಲಿ ಸಂತೋಷಪಡುವವರು ಉತ್ಸಾಹಧ್ವನಿ ಮಾಡಿ, ಆನಂದಪಡಲಿ; “ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ.
PSA 35:28 ಆಗ ನನ್ನ ನಾಲಿಗೆಯು ನಿಮ್ಮ ನೀತಿಯನ್ನೂ ದಿನವೆಲ್ಲಾ ನಿಮ್ಮ ಸ್ತೋತ್ರವನ್ನೂ ವರ್ಣಿಸುವುದು.
PSA 36:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆಹೋವ ದೇವರ ಸೇವಕನಾದ ದಾವೀದನ ಕೀರ್ತನೆ. ನನ್ನ ಹೃದಯದಲ್ಲಿ ದೇವರಿಂದ ಬಂದ ಸಂದೇಶವು ದುಷ್ಟರ ಪಾಪದ ಬಗ್ಗೆ ಹೀಗಿರುತ್ತದೆ: ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.
PSA 36:2 ತಮ್ಮ ಪಾಪವನ್ನು ಹಗೆ ಮಾಡದೆ ಅಥವಾ ಪಾಪವನ್ನು ತಾವು ಕಂಡುಕೊಳ್ಳಲಾರದಷ್ಟು ಅವರು ತಮ್ಮ ದೃಷ್ಟಿಯಲ್ಲಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
PSA 36:3 ಅವರ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿರುತ್ತವೆ; ಬುದ್ಧಿಯಿಂದ ನಡೆಯುವುದನ್ನೂ ಒಳ್ಳೆಯದನ್ನು ಮಾಡುವುದನ್ನೂ ಅವರು ಬಿಟ್ಟಿದ್ದಾರೆ.
PSA 36:4 ಕುಯುಕ್ತಿಯನ್ನು ತಮ್ಮ ಹಾಸಿಗೆಯ ಮೇಲೆ ಕಲ್ಪಿಸುತ್ತಾರೆ; ಪಾಪದ ಮಾರ್ಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ; ಅವರು ಕೆಟ್ಟದ್ದಕ್ಕೆ ಅಸಹ್ಯಪಡುವುದಿಲ್ಲ.
PSA 36:5 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಆಕಾಶವನ್ನು ಮುಟ್ಟುತ್ತದೆ; ನಿಮ್ಮ ನಂಬಿಗಸ್ತಿಕೆಯು ಮೇಘಗಳವರೆಗೆ ಮುಟ್ಟಿದೆ.
PSA 36:6 ನಿಮ್ಮ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿಮ್ಮ ನ್ಯಾಯತೀರ್ಪುಗಳು ಮಹಾ ಅಗಾಧವೇ. ಯೆಹೋವ ದೇವರೇ, ನೀವು ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀರಿ.
PSA 36:7 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಎಷ್ಟೋ ಅಮೂಲ್ಯವಾದದ್ದು! ಮನುಷ್ಯರು ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಆಶ್ರಯಪಡೆಯುತ್ತಾರೆ.
PSA 36:8 ನಿಮ್ಮ ಆಲಯದ ಸಮೃದ್ಧಿಯಿಂದ ಅವರು ಸಂತೃಪ್ತಿ ಹೊಂದುವರು; ನಿಮ್ಮ ಹರ್ಷ ನದಿಯಿಂದ ಅವರಿಗೆ ಕುಡಿಯಲು ಕೊಡುವಿರಿ.
PSA 36:9 ಏಕೆಂದರೆ ನಿಮ್ಮ ಬಳಿಯಲ್ಲಿ ಜೀವದ ಬುಗ್ಗೆ ಉಂಟು; ನಿಮ್ಮ ಬೆಳಕಿನಲ್ಲಿ ನಾವು ಬೆಳಕನ್ನು ಕಾಣುವೆವು.
PSA 36:10 ನಿಮ್ಮನ್ನು ತಿಳಿದವರಿಗೆ ನಿಮ್ಮ ಪ್ರೀತಿಯು ಮುಂದುವರೆಯಲಿ ಯಥಾರ್ಥ ಹೃದಯದವರಿಗೆ ನಿಮ್ಮ ನೀತಿಯೂ ನೆಲೆಯಾಗಲಿ.
PSA 36:11 ಗರ್ವಿಷ್ಠರ ಪಾದ ನನಗೆ ವಿರೋಧವಾಗಿ ಬಾರದೇ ಇರಲಿ; ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.
PSA 36:12 ಕೇಡು ಮಾಡುವವರು ಬಿದ್ದಿದ್ದಾರೆ. ಅವರು ಏಳಲಾರದೆ ಕೆಳಗೆ ಬಿದ್ದಿದ್ದಾರೆ.
PSA 37:1 ದಾವೀದನ ಕೀರ್ತನೆ. ಕೆಟ್ಟವರನ್ನು ನೋಡಿ ಕೋಪಿಸಿಕೊಳ್ಳಬೇಡ. ಇಲ್ಲವೆ ಅಕ್ರಮ ಮಾಡುವವರ ಬಗ್ಗೆ ಹೊಟ್ಟೆಕಿಚ್ಚುಪಡಬೇಡ.
PSA 37:2 ಏಕೆಂದರೆ, ಅವರು ಹುಲ್ಲಿನ ಹಾಗೆ ಬೇಗ ಒಣಗಿ ಹೋಗುವರು. ಹಸಿರಾದ ಸೊಪ್ಪಿನ ಹಾಗೆ ಬಾಡಿಹೋಗುವರು.
PSA 37:3 ಯೆಹೋವ ದೇವರಲ್ಲಿ ಭರವಸೆ ಇಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ಹಸಿರುಗಾವಲನ್ನು ಅನುಭವಿಸುವಿ.
PSA 37:4 ಯೆಹೋವ ದೇವರಲ್ಲಿ ಆನಂದವಾಗಿರು; ಆಗ ಅವರು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವರು.
PSA 37:5 ನಿನ್ನ ಮಾರ್ಗವನ್ನು ಯೆಹೋವ ದೇವರಿಗೆ ಒಪ್ಪಿಸು; ಅವರಲ್ಲಿ ಭರವಸೆ ಇಡು; ಅವರು ನಿನಗೆ ಇದನ್ನು ಮಾಡುವರು:
PSA 37:6 ಅವರು ನಿನ್ನ ನೀತಿಯನ್ನು ಉದಯದ ಬೆಳಕಿನ ಹಾಗೆ ಮಾಡುವರು, ಅವರು ನಿನ್ನ ನ್ಯಾಯವನ್ನು ಮಧ್ಯಾಹ್ನದ ಸೂರ್ಯನ ಹಾಗೆ ಹೊಳೆಯುವಂತೆ ಮಾಡುವರು.
PSA 37:7 ಯೆಹೋವ ದೇವರ ಮುಂದೆ ಶಾಂತನಾಗಿರು; ಮೌನವಾಗಿದ್ದು ಅವರಿಗಾಗಿ ಎದುರು ನೋಡು; ತಮ್ಮ ಮಾರ್ಗದಲ್ಲಿ ಸಫಲವಾಗುವವರನ್ನು ಕಂಡು ಸಿಡುಕಬೇಡ. ಕುಯುಕ್ತಿಗಳನ್ನು ನಡೆಸುವ ಮನುಷ್ಯರನ್ನು ಕಂಡು ಕೋಪ ಮಾಡಿಕೊಳ್ಳಬೇಡ.
PSA 37:8 ಕೋಪವನ್ನು ಅಡಗಿಸು ಮತ್ತು ರೋಷವನ್ನು ಬಿಡು. ಸಿಡುಕಬೇಡ, ಅದು ಕೆಟ್ಟತನಕ್ಕೆ ನಡೆಸುತ್ತದೆ.
PSA 37:9 ಏಕೆಂದರೆ, ದುರ್ಮಾರ್ಗಿಗಳು ನಾಶವಾಗುವರು; ಯೆಹೋವ ದೇವರನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು.
PSA 37:10 ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಕಾಣದೆ ಹೋಗುವನು. ಅವನನ್ನು ಹುಡುಕಿದರೂ ಸಿಕ್ಕುವುದೇ ಇಲ್ಲ.
PSA 37:11 ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು. ದೀನರು ಬಹಳ ಸಮಾಧಾನವನ್ನೂ ಸಮೃದ್ಧಿಯನ್ನು ಅನುಭವಿಸುವರು.
PSA 37:12 ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ, ಆದರೆ ಅವನನ್ನು ಕಂಡು ಹಲ್ಲು ಕಡಿಯುತ್ತಾನೆ.
PSA 37:13 ದುಷ್ಟನ ದಿವಸ ಬರುತ್ತದೆಂದು ತಿಳಿದು ಯೆಹೋವ ದೇವರು ನಗುತ್ತಾರೆ.
PSA 37:14 ದುಷ್ಟರು ಬಡವನನ್ನೂ ದೀನನನ್ನೂ ಬೀಳಿಸಬೇಕೆಂದು ಖಡ್ಗವನ್ನು ಹಿರಿದಿದ್ದಾರೆ, ಸನ್ಮಾರ್ಗದವರನ್ನು ಕೊಲ್ಲುವುದಕ್ಕೂ ತಮ್ಮ ಬಿಲ್ಲುಗಳನ್ನು ಬಗ್ಗಿಸಿದ್ದಾರೆ.
PSA 37:15 ಆದರೆ ಅವರ ಖಡ್ಗ ಅವರ ಹೃದಯದಲ್ಲಿ ಇರಿದು ಬಿಡುವುದು; ಅವರ ಬಿಲ್ಲುಗಳು ಮುರಿದುಹೋಗುವವು.
PSA 37:16 ದುಷ್ಟರ ಐಶ್ವರ್ಯಕ್ಕಿಂತ ನೀತಿವಂತರ ಅಲ್ಪವೇ ಲೇಸು.
PSA 37:17 ಏಕೆಂದರೆ ದುಷ್ಟರ ತೋಳುಗಳು ಮುರಿದುಹೋಗುವವು, ಆದರೆ ನೀತಿವಂತರನ್ನು ಯೆಹೋವ ದೇವರು ಉದ್ಧಾರ ಮಾಡುವರು.
PSA 37:18 ನಿರ್ದೋಷಿಗಳು ತಮ್ಮ ದಿವಸಗಳನ್ನು ಯೆಹೋವ ದೇವರ ಪರಾಮರಿಕೆಯಲ್ಲಿ ಕಳೆಯುವರು. ನಿರಪರಾಧಿಯ ಬಾಧ್ಯತೆಯು ಯುಗಯುಗಕ್ಕೂ ಇರುವುದು.
PSA 37:19 ಆಪತ್ಕಾಲದಲ್ಲಿ ಅವರು ಕುಂದುವುದಿಲ್ಲ; ಕ್ಷಾಮದ ದಿವಸಗಳಲ್ಲಿ ಸಮೃದ್ಧಿಯನ್ನು ಅನುಭವಿಸುವರು.
PSA 37:20 ಆದರೆ ದುಷ್ಟರು ನಾಶವಾಗುವರು; ಯೆಹೋವ ದೇವರ ಶತ್ರುಗಳು ಗದ್ದೆಯ ಹೂಗಳಂತೆ ಬಾಡಿಹೋಗುವರು; ಹೊಗೆಯಂತೆ ಮಾಯವಾಗುವರು.
PSA 37:21 ದುಷ್ಟನು ಸಾಲ ಮಾಡಿ ಹಿಂದಿರುಗಿ ಕೊಡದೆ ಹೋಗುವನು. ಆದರೆ ನೀತಿವಂತನು ಧಾರಾಳವಾಗಿ ಕೊಡುತ್ತಾನೆ.
PSA 37:22 ಯೆಹೋವ ದೇವರು ಆಶೀರ್ವದಿಸುವವರು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವರು; ಆದರೆ ದೇವರ ಶಾಪಕ್ಕೆ ಗುರಿಯಾಗುವವರು ನಾಶವಾಗುವರು.
PSA 37:23 ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ ಅವರ ಹೆಜ್ಜೆಗಳನ್ನು ಸ್ಥಿರಪಡಿಸುವರು.
PSA 37:24 ಅವನು ಎಡವಿದರೂ ಬಿದ್ದುಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ತಾವೇ ತಮ್ಮ ಕೈಯಿಂದ ಅವನನ್ನು ಎತ್ತಿಹಿಡಿಯುವರು.
PSA 37:25 ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಟ್ಟಿರುವುದನ್ನಾಗಲಿ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆ ಬೇಡುವುದನ್ನಾಗಲಿ ಎಂದೂ ನಾನು ನೋಡಲಿಲ್ಲ.
PSA 37:26 ಅವರು ಯಾವಾಗಲೂ ಧಾರಾಳವಾಗಿ ಸಾಲ ಕೊಡುತ್ತಾರೆ; ನೀತಿವಂತನ ಸಂತತಿಯವರು ಆಶೀರ್ವಾದ ಹೊಂದುವರು.
PSA 37:27 ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು, ಆಗ ಯುಗಯುಗಕ್ಕೂ ನಾಡಿನಲ್ಲಿ ವಾಸಮಾಡುವೆ.
PSA 37:28 ಏಕೆಂದರೆ ಯೆಹೋವ ದೇವರು ನ್ಯಾಯವನ್ನು ಪ್ರೀತಿಸುತ್ತಾರೆ; ತಮ್ಮ ನಂಬಿಗಸ್ತ ಜನರನ್ನು ತೊರೆದುಬಿಡರು. ನೀತಿವಂತರು ಸದಾಕಾಲಕವೂ ಸುರಕ್ಷಿತರಾಗಿರುವರು; ಆದರೆ ದುಷ್ಟರ ಸಂತತಿಯು ಅಳಿದುಹೋಗುವುದು.
PSA 37:29 ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.
PSA 37:30 ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು; ಅವನ ನಾಲಿಗೆ ನ್ಯಾಯವನ್ನು ಮಾತನಾಡುವುದು.
PSA 37:31 ಅವನ ದೇವರ ನಿಯಮವೂ ಅವನ ಹೃದಯದಲ್ಲಿ ಇದೆ; ಅವನ ಹೆಜ್ಜೆ ಕದಲುವುದಿಲ್ಲ.
PSA 37:32 ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ; ಅವನನ್ನು ಕೊಲ್ಲಲು ಹುಡುಕುತ್ತಾನೆ.
PSA 37:33 ಆದರೆ ಯೆಹೋವ ದೇವರು ಅವನನ್ನು ದುಷ್ಟನ ಕೈಯಲ್ಲಿ ಬಿಡುವುದಿಲ್ಲ; ನ್ಯಾಯ ವಿಚಾರಣೆಯಲ್ಲಿ ನೀತಿವಂತನನ್ನು ಅಪರಾಧಿಯೆಂದು ತೀರ್ಪು ಕೊಡುವುದಿಲ್ಲ.
PSA 37:34 ಯೆಹೋವ ದೇವರನ್ನು ನಿರೀಕ್ಷಿಸು; ಅವರ ಮಾರ್ಗದಲ್ಲಿ ನಡೆ; ಆಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಂತೆ ನಿನ್ನನ್ನು ಅವರು ಉನ್ನತಕ್ಕೆ ತರುವರು; ದುಷ್ಟರ ವಿನಾಶವನ್ನು ನೀವು ಕಾಣುವಿರಿ.
PSA 37:35 ದುಷ್ಟರು ದೊಡ್ಡ ಅಧಿಕಾರದಲ್ಲಿರುವುದನ್ನು ನಾನು ಕಂಡೆನು; ಅವರು ಹಸಿರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದರು.
PSA 37:36 ಆದರೆ ಅವರು ಅಳಿದೇ ಹೋದರು; ಅವರನ್ನು ಹುಡುಕಿದೆನು; ಆದರೆ ಅವರು ಸಿಕ್ಕಲಿಲ್ಲ.
PSA 37:37 ನಿರ್ದೋಷಿಯನ್ನು ಗಮನಿಸು; ಯಥಾರ್ಥನನ್ನು ನೋಡು; ಸಮಾಧಾನ ಹುಡುಕುವವರಿಗೆ ಒಳ್ಳೆಯ ಭವಿಷ್ಯವಿದೆ.
PSA 37:38 ಆದರೆ ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರಿಗೆ ಒಳ್ಳೆಯ ಭವಿಷ್ಯವಿಲ್ಲ.
PSA 37:39 ನೀತಿವಂತರ ರಕ್ಷಣೆಯು ಯೆಹೋವ ದೇವರಿಂದಲೇ; ಇಕ್ಕಟ್ಟಿನ ಕಾಲದಲ್ಲಿ ದೇವರೇ ಅವರ ಕೋಟೆ.
PSA 37:40 ಯೆಹೋವ ದೇವರು ಅವರಿಗೆ ಸಹಾಯಮಾಡಿ ಅವರನ್ನು ಬಿಡಿಸುವರು. ದುಷ್ಟರಿಂದ ಅವರನ್ನು ತಪ್ಪಿಸಿ ಬಿಡಿಸುವರು. ಏಕೆಂದರೆ ಅವರು ದೇವರಲ್ಲಿ ಆಶ್ರಯ ಪಡೆದಿದ್ದಾರೆ.
PSA 38:1 ದಾವೀದನ ಕೀರ್ತನೆ. ದುರವಸ್ಥೆಯಲ್ಲಿರುವ ಭಕ್ತನ ದೇವರ ಸಹಾಯದ ಬೇಡಿಕೆ. ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ; ಮನನೊಂದು ನನ್ನನ್ನು ಶಿಕ್ಷಿಸಬೇಡಿರಿ.
PSA 38:2 ಏಕೆಂದರೆ, ನಿಮ್ಮ ಬಾಣಗಳು ನನ್ನಲ್ಲಿ ನಾಟಿವೆ. ನಿಮ್ಮ ಶಿಕ್ಷಾ ಹಸ್ತವು ನನ್ನ ಮೇಲೆ ಭಾರವಾಗಿದೆ.
PSA 38:3 ನಿಮ್ಮ ಬೇಸರದ ನಿಮಿತ್ತ ನನ್ನ ಶರೀರದಲ್ಲಿ ಸ್ವಸ್ಥತೆ ಏನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಕ್ಷೇಮವೇ ಇಲ್ಲ.
PSA 38:4 ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ; ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ.
PSA 38:5 ನನ್ನ ಮೂರ್ಖತನದ ನಿಮಿತ್ತ ನನಗಾದ ಗಾಯಗಳು ದುರ್ವಾಸನೆಯಿಂದ ಕೀವು ತುಂಬಿವೆ.
PSA 38:6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ. ದಿನವೆಲ್ಲಾ ದುಃಖದಿಂದ ನಾನು ಅಲೆಯುತ್ತಿದ್ದೇನೆ.
PSA 38:7 ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ. ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ.
PSA 38:8 ಬಲಹೀನನಾಗಿದ್ದೇನೆ, ಬಹಳ ಜಜ್ಜಿ ಹೋಗಿದ್ದೇನೆ; ನನ್ನ ಹೃದಯದ ವೇದನೆಯಿಂದ ನರಳುತ್ತಾ ಇದ್ದೇನೆ.
PSA 38:9 ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ; ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ.
PSA 38:10 ನನ್ನ ಹೃದಯ ಬಡಿದುಕೊಳ್ಳುತ್ತದೆ. ನನ್ನ ಶಕ್ತಿಯು ನನ್ನನ್ನು ಬಿಟ್ಟುಹೋಗಿದೆ; ನನ್ನ ಕಣ್ಣುಗಳ ಬೆಳಕು ಸಹ ಹೋಗಿಬಿಟ್ಟಿದೆ.
PSA 38:11 ನನ್ನ ಪ್ರಿಯರೂ, ನನ್ನ ಸ್ನೇಹಿತರೂ ನನ್ನ ಬಾಧೆಗೆ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.
PSA 38:12 ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಆಲೋಚಿಸುತ್ತಾರೆ.
PSA 38:13 ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳುವುದಿಲ್ಲ; ತನ್ನ ಬಾಯಿ ತೆರೆಯದ ಮೂಕನ ಹಾಗಿದ್ದೇನೆ.
PSA 38:14 ನಾನು ಕಿವಿ ಕೇಳಿಸದವನಂತೆ ಇದ್ದೇನೆ. ನಾನು ಪ್ರತ್ಯುತ್ತರ ಕೊಡಲಾರದಂತೆಯೂ ಇದ್ದೇನೆ.
PSA 38:15 ಯೆಹೋವ ದೇವರೇ, ನಿಮ್ಮನ್ನೇ ಎದುರು ನೋಡುತ್ತೇನೆ; ನನ್ನ ದೇವರಾದ ಯೆಹೋವ ದೇವರೇ, ನೀವು ಉತ್ತರ ಕೊಡುವಿರಿ.
PSA 38:16 ಏಕೆಂದರೆ ನಾನು, “ಅವರು ನನಗೋಸ್ಕರ ಸಂತೋಷಪಡದೆ ಇರಲಿ ನನ್ನ ಪಾದ ಜಾರುವಾಗ ಅವರು ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳದಿರಲಿ,” ಎಂದುಕೊಂಡೆನು.
PSA 38:17 ನಾನು ಎಡವಿ ಬೀಳಲಿದ್ದೇನೆ; ನನ್ನ ನೋವು ಯಾವಾಗಲೂ ನನ್ನ ಮುಂದೆ ಇದೆ.
PSA 38:18 ನನ್ನ ಅಕ್ರಮವನ್ನು ಅರಿಕೆ ಮಾಡುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.
PSA 38:19 ನನ್ನ ಶತ್ರುಗಳು ಬಲಗೊಂಡಿದ್ದಾರೆ. ನನ್ನನ್ನು ವಿನಾಕಾರಣವಾಗಿ ದ್ವೇಷಿಸುವವರು ಹೆಚ್ಚಿದ್ದಾರೆ.
PSA 38:20 ನನ್ನ ಶತ್ರುಗಳು ಒಳ್ಳೆಯದಕ್ಕೆ ಬದಲಾಗಿ ಕೇಡನ್ನು ಸಲ್ಲಿಸುತ್ತಿದ್ದಾರೆ. ನಾನು ಒಳ್ಳೆಯದನ್ನು ಹಿಂದಟ್ಟುವ ಕಾರಣ ನನ್ನನ್ನು ಎದುರಿಸುತ್ತಾರೆ.
PSA 38:21 ಯೆಹೋವ ದೇವರೇ, ನನ್ನನ್ನು ಬಿಡಬೇಡಿರಿ; ನನ್ನ ದೇವರೇ, ನನಗೆ ದೂರವಾಗಿರಬೇಡಿರಿ.
PSA 38:22 ನನ್ನ ರಕ್ಷಕ ಆಗಿರುವ ಯೆಹೋವ ದೇವರೇ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.
PSA 39:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದೂತೂನನಿಗಾಗಿ, ದಾವೀದನ ಕೀರ್ತನೆ. “ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು, ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು. ದುಷ್ಟರು ನನ್ನ ಮುಂದೆ ಇರುವಾಗ ನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,” ಎಂದು ತೀರ್ಮಾನಿಸಿಕೊಂಡೆನು.
PSA 39:2 ಆದ್ದರಿಂದ ನಾನು ಮೌನವಾಗಿದ್ದೆನು. ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು. ಆದರೆ ನನ್ನ ವ್ಯಥೆಯು ಅಧಿಕವಾಯಿತು.
PSA 39:3 ನನ್ನ ಹೃದಯವು ಸಂತಾಪದಿಂದ ಕಾವೇರಿತು. ನಾನು ಧ್ಯಾನವು ಬೆಂಕಿಯಂತೆ ಉರಿಯಿತು. ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:
PSA 39:4 “ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ, ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ.
PSA 39:5 ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ. ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ; ಪ್ರತಿ ಮನುಷ್ಯನ ಜೀವನ ಬರೀ ಉಸಿರೇ.
PSA 39:6 “ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ; ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ; ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು.
PSA 39:7 “ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು? ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ.
PSA 39:8 ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ; ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ.
PSA 39:9 ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ; ಇದನ್ನು ಮಾಡಿದವರು ನೀವೇ.
PSA 39:10 ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ; ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ.
PSA 39:11 ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗ ಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ. ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ.
PSA 39:12 “ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಗೆ ಕಿವಿಗೊಡಿರಿ; ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ; ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ; ನಾನೂ ಪ್ರವಾಸಿಯಾಗಿದ್ದೇನೆ.
PSA 39:13 ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”
PSA 40:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ನಾನು ಯೆಹೋವ ದೇವರಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಅವರು ನನ್ನ ಕಡೆಗೆ ತಿರುಗಿ, ನನ್ನ ಮೊರೆಯನ್ನು ಕೇಳಿದರು.
PSA 40:2 ನನ್ನನ್ನು ಜಾರುವ ಗುಂಡಿಯೊಳಗಿಂದ ಎತ್ತಿದರು. ಕೆಸರಿನ ಮಣ್ಣಿನಿಂದ ಎಬ್ಬಿಸಿದರು. ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ, ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದರು.
PSA 40:3 ನನ್ನ ಬಾಯಲ್ಲಿ ನೂತನ ಹಾಡನ್ನು ಹುಟ್ಟಿಸಿದ್ದಾರೆ, ಆ ಹಾಡು ನಮ್ಮ ದೇವರ ಸ್ತೋತ್ರವೇ. ಅನೇಕರು ಇದನ್ನು ಕಂಡು, ಭಯಪಟ್ಟು ಯೆಹೋವ ದೇವರಲ್ಲಿ ಭರವಸೆ ಇಡುವರು.
PSA 40:4 ಯೆಹೋವ ದೇವರನ್ನು ತನ್ನ ಭರವಸೆಯಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳದೆಯೂ ಇರುವ ಮನುಷ್ಯನು ಧನ್ಯನು.
PSA 40:5 ನನ್ನ ದೇವರಾದ ಯೆಹೋವ ದೇವರೇ, ನೀವು ಮಾಡಿದ ನಿಮ್ಮ ಅದ್ಭುತಕಾರ್ಯಗಳು ಎಷ್ಟೋ! ನಮ್ಮ ಕಡೆ ನಿಮಗಿರುವ ಯೋಜನೆಗಳೂ ಬಹಳ, ನಿಮಗೆ ಸರಿಸಾಟಿ ಯಾರೂ ಇಲ್ಲ. ನಿಮ್ಮ ಕೃತ್ಯಗಳನ್ನು ನಾನು ತಿಳಿಸಿ ಹೇಳಬೇಕಾದರೆ, ಅವು ಎಣಿಸಲು ಅಸಾಧ್ಯ.
PSA 40:6 ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ. ಆದರೆ ನೀವು ನನ್ನ ಕಿವಿಗಳನ್ನು ತೆರೆದಿರುವಿರಿ. ದಹನಬಲಿಗಳನ್ನೂ ಪಾಪ ಪರಿಹಾರದ ಬಲಿಗಳನ್ನೂ ನೀವು ಬಯಸಲಿಲ್ಲ.
PSA 40:7 ಆಗ ನಾನು, “ಇಗೋ, ನಾನು ಇದ್ದೇನೆ, ನಾನು ಬಂದಿದ್ದೇನೆ. ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿದೆ.
PSA 40:8 ನನ್ನ ದೇವರೇ, ನಿಮ್ಮ ಚಿತ್ತವನ್ನು ಮಾಡಲು ಬಯಸುತ್ತೇನೆ; ನಿಮ್ಮ ನಿಯಮವು ನನ್ನ ಅಂತರಂಗದಲ್ಲಿ ಇದೆ.”
PSA 40:9 ನಾನು ನಿಮ್ಮ ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿದೆನು; ಇಗೋ, ನಾನು ನನ್ನ ತುಟಿಗಳಿಂದ ಸಾರದೆ ಇರಲಿಲ್ಲವೆಂದು ನೀವೇ ತಿಳಿದಿದ್ದೀರಿ.
PSA 40:10 ನಾನು ನಿಮ್ಮ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಿಟ್ಟುಕೊಳ್ಳಲಿಲ್ಲ. ನಿಮ್ಮ ನಂಬಿಗಸ್ತಿಕೆಯನ್ನೂ ನಿಮ್ಮ ರಕ್ಷಣೆಯನ್ನೂ ನಿಮ್ಮ ಪ್ರೀತಿಯನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡದೆ ಸಾರಿದೆನು.
PSA 40:11 ಯೆಹೋವ ದೇವರೇ, ನಿಮ್ಮ ಕರುಣೆಯನ್ನು ನನ್ನಿಂದ ಹಿಂತೆಗೆಯಬೇಡಿರಿ; ನಿಮ್ಮ ಪ್ರೀತಿಯೂ ನಿಮ್ಮ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
PSA 40:12 ಲೆಕ್ಕವಿಲ್ಲದಷ್ಟು ಕೇಡುಗಳು ನನ್ನನ್ನು ಸುತ್ತಿಕೊಂಡಿವೆ. ನಾನು ಏನೂ ನೋಡಲಾರದಷ್ಟು ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿವೆ; ನನ್ನ ಪಾಪಗಳು ತಲೆಯ ಕೂದಲುಗಳಿಗಿಂತ ಹೆಚ್ಚಾಗಿವೆ, ಆದ್ದರಿಂದ ನನ್ನ ಹೃದಯವು ಕುಂದಿಹೋಗಿದೆ.
PSA 40:13 ಯೆಹೋವ ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ. ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.
PSA 40:14 ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು ನಾಚಿಕೆಪಟ್ಟು ಗಲಿಬಿಲಿಯಾಗಲಿ. ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ ಹಿಂಜರಿದು ಅವಮಾನ ಹೊಂದಲಿ.
PSA 40:15 “ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯಿಂದಲೇ ವಿಸ್ಮಯಗೊಳ್ಳಲಿ.
PSA 40:16 ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ; ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ಯೆಹೋವ ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.
PSA 40:17 ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ; ಆದರೂ ಯೆಹೋವ ದೇವರು ನನ್ನ ಹಿತಚಿಂತಕರಾಗಿದ್ದಾರೆ. ನನ್ನ ದೇವರೇ ನೀವೇ ನನ್ನ ಸಹಾಯವೂ ನನ್ನ ವಿಮೋಚಕರೂ ಆಗಿದ್ದೀರಿ, ನೀವು ತಡಮಾಡಬೇಡಿರಿ.
PSA 41:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಬಡವರನ್ನು ಪರಾಮರಿಸುವವರು ಧನ್ಯರು; ಕೇಡಿನ ಸಮಯದಲ್ಲಿ ಯೆಹೋವ ದೇವರು ಅವರನ್ನು ತಪ್ಪಿಸುವರು.
PSA 41:2 ಯೆಹೋವ ದೇವರು ಅವರನ್ನು ಕಾಪಾಡಿ ಸುರಕ್ಷಿತವಾಗಿಡುವರು; ಅವರು ಭೂಮಿಯಲ್ಲಿ ಧನ್ಯರಾಗಿರುವರು; ದೇವರು ಅವರ ಶತ್ರುಗಳ ಇಚ್ಛೆಗೆ ಅವರನ್ನು ಒಪ್ಪಿಸಿಕೊಡರು.
PSA 41:3 ಬಡವರನ್ನು ಪರಾಮರಿಸುವವರನ್ನು ಯೆಹೋವ ದೇವರು ವ್ಯಾಧಿಯ ಮಂಚದಲ್ಲಿ ಬಲಪಡಿಸುವರು; ಅವರ ಅಸ್ವಸ್ಥತೆಯನ್ನು ಯೆಹೋವ ದೇವರು ಹೋಗಲಾಡಿಸಿ ಮರುಸ್ಥಾಪಿಸುವರು.
PSA 41:4 “ಯೆಹೋವ ದೇವರೇ, ನನಗೆ ಕರುಣೆ ತೋರಿಸಿ ನನ್ನನ್ನು ಸ್ವಸ್ಥಮಾಡಿರಿ, ಏಕೆಂದರೆ ನಿಮಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದು ನಾನು ಹೇಳಿ ಬೇಡುವೆನು.
PSA 41:5 “ಅವನು ಸತ್ತು ಅವನ ಹೆಸರು ನಾಶವಾಗುವುದು ಯಾವಾಗ?” ಎಂದು ನನ್ನ ಶತ್ರುಗಳು ನನ್ನ ಕೇಡನ್ನು ಬಯಸಿ ಮಾತನಾಡುತ್ತಾರೆ.
PSA 41:6 ನನ್ನನ್ನು ನೋಡುವುದಕ್ಕೆ ಅವರಲ್ಲಿ ಒಬ್ಬನು ಬಂದರೆ, ಕಪಟವಾಗಿ ಮಾತನಾಡುತ್ತಾನೆ. ಅವನ ಹೃದಯ ಕೇಡನ್ನು ಕೂಡಿಟ್ಟುಕೊಳ್ಳುತ್ತಿದೆ. ಅವನು ಹೊರಗೆ ಹೋದ ಮೇಲೆ ಕೇಡನ್ನು ಹಬ್ಬಿಸುತ್ತಾನೆ.
PSA 41:7 ನನ್ನ ಶತ್ರುಗಳೆಲ್ಲರೂ ಸೇರಿ ನನ್ನ ಮೇಲೆ ಪಿಸುಗುಟ್ಟುತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ.
PSA 41:8 “ಕೆಟ್ಟ ರೋಗವು ಅವನನ್ನು ಹಿಡಿದಿದೆ, ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,” ಎಂದು ಹೇಳಿಕೊಳ್ಳುತ್ತಾರೆ.
PSA 41:9 ನನ್ನ ರೊಟ್ಟಿಯನ್ನು ತಿಂದವನೂ ನಾನು ನಂಬಿದ್ದವನೂ ಆಗಿರುವ ನನ್ನ ಆಪ್ತ ಸ್ನೇಹಿತನು ಸಹ ನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ.
PSA 41:10 ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ. ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು.
PSA 41:11 ನನ್ನ ಶತ್ರು ನನ್ನ ಮೇಲೆ ಜಯ ಹೊಂದದೆ ಇರುವುದರಿಂದಲೇ, ನೀವು ನನ್ನನ್ನು ಮೆಚ್ಚಿದ್ದೀರಿ ಎಂದು ನಾನು ತಿಳಿದುಕೊಳ್ಳುವೆ.
PSA 41:12 ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ; ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ.
PSA 41:13 ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ, ಯುಗಯುಗಕ್ಕೂ ಸ್ತುತಿಯಾಗಲಿ.
PSA 42:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಮಕ್ಕಳ ಮಾಸ್ಕಿಲ ಪದ್ಯ. ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವುದೋ, ಹಾಗೆಯೇ ನನ್ನ ಪ್ರಾಣವು ನಿಮ್ಮನ್ನು ಬಯಸುತ್ತದೆ.
PSA 42:2 ದೇವರಿಗೋಸ್ಕರ ಹೌದು ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ. ನಾನು ಯಾವಾಗ ಹೋಗಿ ದೇವರ ಮುಂದೆ ಕಾಣಿಸಿಕೊಳ್ಳಲಿ?
PSA 42:3 “ನಿನ್ನ ದೇವರು ಎಲ್ಲಿ?” ಎಂದು ಜನರು, ದಿನವೆಲ್ಲಾ ನನ್ನನ್ನು ಕೇಳುವುದರಿಂದ ಹಗಲುರಾತ್ರಿ ನನ್ನ ಕಣ್ಣೀರೇ ನನಗೆ ಆಹಾರವಾಗಿದೆ.
PSA 42:4 ಜನಸಮೂಹದೊಂದಿಗೆ ನಾನು ಉತ್ಸಾಹದಿಂದಲೂ ಸ್ತೋತ್ರದಿಂದಲೂ ಹಬ್ಬವನ್ನಾಚರಿಸಲು ದೇವರ ಆಲಯಕ್ಕೆ ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾ ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
PSA 42:5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
PSA 42:6 ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗಿಹೋಗಿದೆ; ಆದ್ದರಿಂದ ಯೊರ್ದನ್ ನಾಡಿನಿಂದಲೂ ಹೆರ್ಮೋನ್ ಬೆಟ್ಟಗಳಿಂದಲೂ ಮಿಸಾರ್ ಬೆಟ್ಟದಿಂದಲೂ ನಿಮ್ಮನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
PSA 42:7 ನಿಮ್ಮ ಜಲಪಾತಗಳ ಶಬ್ದವು ಒಂದು ಪ್ರವಾಹವು ಮತ್ತೊಂದು ಪ್ರವಾಹಕ್ಕೆ ಕರೆಯುವಂತಿದೆ. ಅದರಂತೆಯೇ ನಿಮ್ಮ ಎಲ್ಲಾ ಅಲೆಗಳೂ ತೆರೆಗಳೂ ನನ್ನ ಮೇಲೆ ಹಾದು ಹೋದಂತಿವೆ.
PSA 42:8 ಆದರೂ ಹಗಲಿನಲ್ಲಿ ಯೆಹೋವ ದೇವರು ತಮ್ಮ ಪ್ರೀತಿಯನ್ನು ಆಜ್ಞಾಪಿಸುವರು. ರಾತ್ರಿಯಲ್ಲಿ ದೇವರ ಹಾಡನ್ನು ಹಾಡುವೆನು. ನನ್ನ ಜೀವವಾಗಿರುವ ದೇವರಿಗೆ ನಾನು ಪ್ರಾರ್ಥನೆ ಮಾಡುವೆನು.
PSA 42:9 “ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದೀರಿ? ಏಕೆ ನಾನು ಶತ್ರುವಿನ ಬಾಧೆಪೀಡಿತನಾಗಿ ದುಃಖದಲ್ಲಿ ಸಾಗಬೇಕು?” ಎಂದು ನನ್ನ ಶರಣನಾದ ದೇವರಿಗೆ ಮೊರೆಯಿಡುವೆನು.
PSA 42:10 “ನಿನ್ನ ದೇವರು ಎಲ್ಲಿ?” ಎಂದು ದಿನವೆಲ್ಲಾ ನನಗೆ ಹೇಳಿ ನನ್ನ ವೈರಿಗಳು ಅಪಹಾಸ್ಯ ಮಾಡುವುದರಿಂದ ನನ್ನ ಎಲಬುಗಳೆಲ್ಲಾ ಮುರಿದುಹೊದಂತೆ ಇವೆ.
PSA 42:11 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
PSA 43:1 ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ, ಭಕ್ತಿಹೀನ ಜನತೆಯ ವಿರೋಧವಾಗಿ ನನ್ನ ನ್ಯಾಯವನ್ನು ವಾದಿಸಿರಿ. ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸಿರಿ.
PSA 43:2 ನೀವು ನನ್ನ ದೇವರು, ನನ್ನ ಬಲವಾದ ಕೋಟೆಯು; ನೀವು ಏಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ? ಏಕೆ ನಾನು ಶತ್ರುವಿನ ಬಾಧೆಯಿಂದ ದುಃಖದಲ್ಲಿ ನಡೆದುಕೊಳ್ಳಬೇಕು?
PSA 43:3 ನಿಮ್ಮ ಬೆಳಕನ್ನೂ ನಿಮ್ಮ ಸತ್ಯವನ್ನೂ ಕಳುಹಿಸಿರಿ; ಅವು ನನ್ನನ್ನು ನೀವು ವಾಸಿಸುವ ನಿಮ್ಮ ಪರಿಶುದ್ಧ ಪರ್ವತಕ್ಕೆ ನನ್ನನ್ನು ಬರಮಾಡಲಿ.
PSA 43:4 ದೇವರೇ, ನನ್ನ ದೇವರೇ, ಆಗ ನಿಮ್ಮ ಬಲಿಪೀಠದ ಬಳಿಗೆ ಬರುವೆನು. ನನ್ನ ಸಂತೋಷವೂ ಹರ್ಷವೂ ಆಗಿರುವ ನಿಮ್ಮ ಬಳಿಗೂ ಬಂದು, ಕಿನ್ನರಿಯಿಂದ ನಿಮ್ಮನ್ನು ಕೊಂಡಾಡುವೆನು.
PSA 43:5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
PSA 44:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಮಕ್ಕಳ ಮಾಸ್ಕಿಲ ಪದ್ಯ. ದೇವರೇ, ನಾವು ನಮ್ಮ ಕಿವಿಯಾರೆ ಕೇಳಿದ್ದೇವೆ; ನೀವು ಪೂರ್ವಕಾಲದಲ್ಲಿ ನಮ್ಮ ಪಿತೃಗಳ ದಿವಸಗಳಲ್ಲಿ ಮಾಡಿದ ಕಾರ್ಯವನ್ನು ನಮಗೆ ಅವರು ವಿವರಿಸಿದ್ದಾರೆ.
PSA 44:2 ನೀವು ನಿಮ್ಮ ಕೈಯಿಂದ ಜನಾಂಗಗಳನ್ನು ಹೊರಡಿಸಿ, ನಮ್ಮ ಪಿತೃಗಳನ್ನು ನೆಲೆಗೊಳಿಸಿದಿರಿ; ನೀವು ವೈರಿಗಳನ್ನು ತೆಗೆದುಹಾಕಿ, ನಮ್ಮ ಪಿತೃಗಳಿಗೆ ಸಮೃದ್ಧಿಯನ್ನುಂಟು ಮಾಡಿದಿರಿ.
PSA 44:3 ನಮ್ಮ ಪಿತೃಗಳು ತಮ್ಮ ಖಡ್ಗದಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರಿಗೆ ಜಯ ತರಲಿಲ್ಲ; ಆದರೆ ನಿಮ್ಮ ಬಲಗೈಯೂ ನಿಮ್ಮ ತೋಳೂ ನಿಮ್ಮ ಮುಖದ ಪ್ರಕಾಶವೇ ಅವರಿಗೆ ಜಯವನ್ನು ತಂದಿತು. ಏಕೆಂದರೆ ಅವರನ್ನು ನೀವು ಪ್ರೀತಿಸಿದಿರಿ.
PSA 44:4 ನೀವೇ ನನ್ನ ಅರಸರೂ ದೇವರೂ ಆಗಿದ್ದೀರಿ. ಯಾಕೋಬಿಗೆ ಜಯವನ್ನು ಆಜ್ಞಾಪಿಸುವ ದೇವರಾಗಿದ್ದೀರಿ.
PSA 44:5 ನಿಮ್ಮಿಂದ ನಮ್ಮ ವೈರಿಗಳನ್ನು ದಬ್ಬುವೆವು; ನಿಮ್ಮ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
PSA 44:6 ನಾನು ನನ್ನ ಬಿಲ್ಲಿನಲ್ಲಿ ಭರವಸೆ ಇಡುವುದಿಲ್ಲ; ನನ್ನ ಖಡ್ಗವು ನನಗೆ ಜಯ ತರುವುದಿಲ್ಲ.
PSA 44:7 ಆದರೆ ನೀವು ನಮ್ಮ ವೈರಿಗಳ ಮೇಲೆ ನಮಗೆ ಜಯವನ್ನು ಕೊಟ್ಟಿದ್ದೀರಿ. ನೀವು ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಿರಿ.
PSA 44:8 ದೇವರಲ್ಲಿ ದಿನವೆಲ್ಲಾ ನಾವು ಹಿಗ್ಗುತ್ತಿದ್ದೇವೆ; ನಿಮ್ಮ ಹೆಸರನ್ನು ಯುಗಯುಗಕ್ಕೂ ಕೊಂಡಾಡುವೆವು.
PSA 44:9 ಆದರೆ ಈಗ ನೀವು ನಮ್ಮನ್ನು ತಳ್ಳಿಬಿಟ್ಟದ್ದರಿಂದ ನಾವು ಕುಗ್ಗಿಹೋಗಿದ್ದೇವೆ. ನಮ್ಮ ಸೈನ್ಯಗಳ ಸಂಗಡ ನೀವು ಹೊರಡಲಿಲ್ಲ.
PSA 44:10 ವೈರಿಯ ಮುಂದೆ ನಾವು ಓಡಿಹೋಗುವಂತೆ ಮಾಡಿದ್ದೀರಿ. ನಮ್ಮ ವೈರಿಗಳು ನಮ್ಮ ಸೊತ್ತನ್ನು ಕೊಳ್ಳೆ ಹೊಡೆಯುತ್ತಾರೆ.
PSA 44:11 ಕಡಿಯತಕ್ಕ ಕುರಿಗಳಂತೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀರಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀರಿ.
PSA 44:12 ನಿಮ್ಮ ಜನರನ್ನು ನೀವು ಕ್ರಯವಿಲ್ಲದೆ ಮಾರಿಬಿಟ್ಟಂತಿದೆ. ಆ ಮಾರಾಟದಿಂದ ಲಾಭ ಏನೂ ಇಲ್ಲದಂತಿದೆ.
PSA 44:13 ನಮ್ಮ ನೆರೆಯವರಿಗೆ ನಾವು ನಿಂದೆಯಾಗಿದ್ದೇವೆ. ನಮ್ಮ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವೂ ಆಗಿದ್ದೇವೆ.
PSA 44:14 ನಮ್ಮನ್ನು ಇತರ ದೇಶಗಳವರ ಗಾದೆಗೆ ಆಸ್ಪದ ಮಾಡಿರುವಿರಿ; ಅವರು ನಮ್ಮನ್ನು ಪರಿಹಾಸ್ಯದ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.
PSA 44:15 ನಿಂದಕನ ಮತ್ತು ದೂಷಕನ ಮಾತುಗಳಿಗೂ ಮುಯ್ಯಿಗೆ ಮುಯ್ಯಿ ತೀರಿಸುವ ಶತ್ರುವಿನ ನಿಮಿತ್ತವೂ,
PSA 44:16 ಸದಾ ನನ್ನ ಅವಮಾನವು ನನ್ನ ಮುಂದೆ ಇದೆ; ನನ್ನ ಮುಖವು ನಾಚಿಕೆಯಿಂದ ಮುಚ್ಚಿದೆ.
PSA 44:17 ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಾವು ನಿಮ್ಮನ್ನು ಮರೆತುಬಿಡಲಿಲ್ಲ; ನಿಮ್ಮ ಒಡಂಬಡಿಕೆಯನ್ನು ಬಿಡಲಿಲ್ಲ.
PSA 44:18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿಮ್ಮ ಹಾದಿಯಿಂದ ತೊಲಗಲಿಲ್ಲ.
PSA 44:19 ಆದರೂ ನರಿಗಳ ವಾಸಸ್ಥಳದಂತೆ ನಮ್ಮ ದೇಶವಿದೆ. ಕಾರ್ಗತ್ತಲಿನ ನೆರಳು ನಮ್ಮನ್ನು ಮುಚ್ಚಿಬಿಟ್ಟಂತಿದೆ.
PSA 44:20 ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದ್ದರೆ,
PSA 44:21 ದೇವರೇ ಹೃದಯದ ರಹಸ್ಯಗಳನ್ನು ತಿಳಿದಿರುವ ನಿಮಗೆ ಅವೆಲ್ಲವೂ ಮರೆಯಾಗಿರುತ್ತಿರಲಿಲ್ಲ.
PSA 44:22 ಹೌದು, ನಿಮಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ. ವಧಿಸಲಿಕ್ಕಾಗಿರುವ ಕುರಿಗಳಂತೆ ಜನರು ನಮ್ಮನ್ನು ಎಣಿಸಿದ್ದಾರೆ.
PSA 44:23 ಯೆಹೋವ ದೇವರೇ, ಏಳಿರಿ, ಹೌದು ಎದ್ದೇಳಿರಿ ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡಿರಿ.
PSA 44:24 ಏಕೆ ನಿಮ್ಮ ಮುಖವನ್ನು ಮರೆಮಾಡಿಕೊಂಡಿದ್ದೀರಿ? ನಮ್ಮ ಸಂಕಟ ಬಾಧೆಗಳನ್ನು ಮರೆತುಬಿಡುವಿರಾ?
PSA 44:25 ನಮ್ಮ ಪ್ರಾಣವು ಮಣ್ಣು ಪಾಲಾದಂತಿದೆ. ನಮ್ಮ ಶರೀರವು ನೆಲ ಪಾಲಾದಂತಿದೆ.
PSA 44:26 ನಮಗೆ ಸಹಾಯಕರಾಗಿ ಏಳಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಗಾಗಿ ನಮ್ಮನ್ನು ವಿಮೋಚಿಸಿರಿ.
PSA 45:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ಕೋರಹೀಯನ ಪುತ್ರರ ಸಂಯೋಜನೆ. ಒಂದು ಮಸ್ಕಿಲ್. ಒಂದು ಮದುವೆಯ ಹಾಡು. ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
PSA 45:2 ನೀವು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರರಾಗಿದ್ದೀರಿ. ನಿಮ್ಮ ತುಟಿಗಳಲ್ಲಿ ಕೃಪೆಯ ಅಭಿಷೇಕವಿದೆ; ಆದ್ದರಿಂದ ದೇವರು ಎಂದೆಂದಿಗೂ ನಿಮ್ಮನ್ನು ಆಶೀರ್ವದಿಸಿದ್ದಾರೆ.
PSA 45:3 ಪರಾಕ್ರಮಶಾಲಿಯೇ, ನಿಮ್ಮ ಖಡ್ಗವನ್ನು ಸೊಂಟಕ್ಕೆ ಬಿಗಿದುಕೊಳ್ಳಿರಿ. ನಿಮ್ಮ ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಳ್ಳಿರಿ.
PSA 45:4 ನೀವು ಸತ್ಯತೆ ದೀನತ್ವ ಹಾಗು ನೀತಿಗೋಸ್ಕರ ನಿಮ್ಮ ಘನತೆಯಿಂದ ಜಯದ ಸವಾರಿ ಮಾಡಿರಿ. ನಿಮ್ಮ ಬಲಗೈ ಮಹಾಕೃತ್ಯಗಳನ್ನು ಪ್ರಕಾಶಪಡಿಸಲಿ.
PSA 45:5 ನಿಮ್ಮ ಹದವಾದ ಬಾಣಗಳು ರಾಜದ್ರೋಹಿಗಳನ್ನು ಇರಿಯಲಿ. ಜನಾಂಗಗಳು ನಿಮ್ಮ ಪಾದಕ್ಕೆ ಬೀಳಲಿ.
PSA 45:6 ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನ್ಯಾಯದಂಡವೇ ನಿಮ್ಮ ರಾಜದಂಡವಾಗಿದೆ.
PSA 45:7 ನೀವು ನೀತಿಯನ್ನು ಪ್ರೀತಿಸುತ್ತೀರಿ, ಅನೀತಿಯನ್ನು ದ್ವೇಷಿಸುತ್ತೀರಿ. ಆದ್ದರಿಂದ ದೇವರೇ, ನಿಮ್ಮ ದೇವರು, ನಿಮ್ಮ ಸಂಗಡಿಗರಿಗಿಂತ ನಿಮ್ಮನ್ನು ಉನ್ನತಗೊಳಿಸಿ ಆನಂದ ತೈಲದಿಂದ ಅಭಿಷೇಕಿಸಿದ್ದಾರೆ.
PSA 45:8 ನಿಮ್ಮ ವಸ್ತ್ರಗಳೆಲ್ಲಾ ರಸಗಂಧವೂ ಅಗರೂ ಚಂದನ ಇವುಗಳ ಸುವಾಸನೆ ಬೀರುತ್ತದೆ. ದಂತದ ಅರಮನೆಯೊಳಗಿಂದ ಉನ್ನತ ವಾದ್ಯಗಳು ನಿಮ್ಮನ್ನು ಆನಂದಗೊಳಿಸುವುದು.
PSA 45:9 ರಾಜ ಪುತ್ರಿಯರು ನಿಮ್ಮ ಗೌರವ ಸ್ತ್ರೀಯರಲ್ಲಿ ಇದ್ದಾರೆ. ನಿಮ್ಮ ಬಲಗಡೆ ರಾಣಿಯು ಓಫೀರ್ ಬಂಗಾರವನ್ನು ಧರಿಸಿದ್ದಾಳೆ.
PSA 45:10 ಕೇಳು ಮಗಳೇ, ಇದನ್ನು ಆಲೋಚಿಸಿ, ಕಿವಿಗೊಡು. ನಿಮ್ಮ ಜನರನ್ನೂ, ನಿಮ್ಮ ತಂದೆಯ ಮನೆಯನ್ನೂ ಮರೆತುಬಿಡು.
PSA 45:11 ನಿನ್ನ ಸೌಂದರ್ಯವನ್ನು ಮಹಾರಾಜರು ಮೆಚ್ಚಲಿ, ಅವರೇ ನಿನ್ನ ಒಡೆಯ ಅವರನ್ನು ಗೌರವಿಸು.
PSA 45:12 ಟೈರಿನ ಮಗಳು ಕಾಣಿಕೆಯೊಂದಿಗೆ ಬರುವಳು; ಐಶ್ವರ್ಯವಂತರು ನಿನ್ನನ್ನು ವರಿಸಲು ಹುಡುಕಿ ಬರುವರು.
PSA 45:13 ಅರಸನ ಮಗಳು ತನ್ನ ಅಂತಃಪುರದಲ್ಲಿ ಪೂರ್ಣ ವೈಭವದಿಂದ ಇದ್ದಾಳೆ. ಅವಳ ವಸ್ತ್ರವು ಚಿನ್ನದಿಂದ ನೇಯ್ದಿದೆ.
PSA 45:14 ಕಸೂತಿ ಉಡುಪುಗಳಲ್ಲಿ ಮಹಾರಾಜರ ಬಳಿಗೆ ಆಕೆಯು ಹೊರಡುತ್ತಾಳೆ, ಅವಳ ಸಂಗಡ ಸಖಿಯರಾದ ಕನ್ಯೆಯರು ಸಹ ಹೊರಡುವರು.
PSA 45:15 ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ಆಕೆಯನ್ನು ತರುತ್ತಿದ್ದಾರೆ. ಹೀಗೆ ಅವರು ರಾಜಭವನದೊಳಗೆ ಪ್ರವೇಶಿಸುವರು.
PSA 45:16 ನಿಮ್ಮ ಪಿತೃಗಳ ಸ್ಥಳಗಳನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವರು. ಮಹಾರಾಜರು ಅವರನ್ನು ಭೂಮಿಯ ದೇಶದಲ್ಲೆಲ್ಲಾ ರಾಜಪುತ್ರರಾಗಿ ಇರಿಸುವರು.
PSA 45:17 ತಲತಲಾಂತರವೂ ನಿಮ್ಮ ಹೆಸರನ್ನು ನಾನು ಸ್ಮರಿಸುವಂತೆ ಮಾಡುವೆನು. ಆದ್ದರಿಂದ ಜನರು ಯುಗಯುಗಾಂತರವೂ ನಿಮ್ಮನ್ನು ಹೊಗಳುವರು.
PSA 46:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರ ಸಂಯೋಜನೆ. ಅಲಾಮೊತ್ ರಾಗವನ್ನು ಆಧಾರಿಸಿದ ಒಂದು ಗೀತೆ. ದೇವರು ನಮ್ಮ ಆಶ್ರಯವೂ ಬಲವೂ ಆಗಿದ್ದಾರೆ; ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕರಾಗಿದ್ದಾರೆ.
PSA 46:2 ಆದ್ದರಿಂದ ಭೂಮಿಯು ಕಂಪಿಸಿದರೂ ಬೆಟ್ಟಗಳು ಸಮುದ್ರದಲ್ಲಿ ಮುಳುಗಿದರೂ,
PSA 46:3 ಅದರ ಸಮುದ್ರವು ಘೋಷಿಸಿ ನೊರೆಕಾರಿದರೂ, ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು.
PSA 46:4 ಒಂದು ನದಿ ಇದೆ; ಅದರ ಕಾಲುವೆಗಳು ದೇವರು ವಾಸಿಸುವ ಮಹೋನ್ನತ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ.
PSA 46:5 ದೇವರು ಅದರ ಮಧ್ಯದಲ್ಲಿ ಇದ್ದಾರೆ, ಅದು ಕದಲದು; ದೇವರು ಉದಯಕಾಲದಲ್ಲಿ ಅದಕ್ಕೆ ಸಹಾಯ ಮಾಡುವರು.
PSA 46:6 ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ. ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.
PSA 46:7 ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ. ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.
PSA 46:8 ಬನ್ನಿರಿ, ಯೆಹೋವ ದೇವರ ಕಾರ್ಯಗಳನ್ನು ನೋಡಿರಿ. ಅವರು ಭೂಮಿಯಲ್ಲಿ ಎಂಥಾ ಅತಿಶಯಗಳನ್ನು ಉಂಟುಮಾಡಿದ್ದಾರೆ.
PSA 46:9 ದೇವರು ಯುದ್ಧಗಳನ್ನು ಭೂಮಿಯ ಅಂತ್ಯದವರೆಗೆ ನಿಲ್ಲಿಸುತ್ತಾರೆ. ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ. ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.
PSA 46:10 “ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
PSA 46:11 ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ; ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.
PSA 47:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಗೀತೆ. ಎಲ್ಲಾ ಜನರೇ, ಕೈ ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
PSA 47:2 ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.
PSA 47:3 ಜನರನ್ನು ನಮ್ಮ ಕೆಳಗೆ ತಂದಿದ್ದಾರೆ. ಜನಾಂಗಗಳನ್ನು ನಮಗೆ ಅಧೀನಮಾಡಿದ್ದಾರೆ.
PSA 47:4 ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.
PSA 47:5 ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ. ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.
PSA 47:6 ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ; ನಮ್ಮ ರಾಜರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ.
PSA 47:7 ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು. ದೇವರನ್ನು ಸ್ತೋತ್ರದ ಕೀರ್ತನೆಯಿಂದ ಕೀರ್ತಿಸಿರಿ.
PSA 47:8 ದೇವರು ಜನಾಂಗಗಳನ್ನು ಆಳುತ್ತಾರೆ. ದೇವರು ತಮ್ಮ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾರೆ.
PSA 47:9 ರಾಷ್ಟ್ರಗಳ ಅಧಿಪತಿಗಳು ಅಬ್ರಹಾಮನ ದೇವರ ಜನರಾಗಿ ಕೂಡಿಬಂದಿದ್ದಾರೆ. ಏಕೆಂದರೆ, ಭೂಮಿಯ ರಾಜರೆಲ್ಲರೂ ದೇವರಿಗೆ ಸೇರಿದವರು. ದೇವರು ಬಹಳವಾಗಿ ಘನ ಹೊಂದಿದ್ದಾರೆ.
PSA 48:1 ಒಂದು ಗೀತೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ. ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ.
PSA 48:2 ಉತ್ತರ ದಿಕ್ಕಿನಲ್ಲಿರುವ ಮಹಾರಾಜರ ಪಟ್ಟಣವಾದ ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ.
PSA 48:3 ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ. ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ.
PSA 48:4 ಏಕೆಂದರೆ, ಇಗೋ, ಅರಸರು ಕೂಡಿಬಂದರು. ಅವರು ಒಟ್ಟಾಗಿ ದಾಳಿಮಾಡಲು ಬಂದರು.
PSA 48:5 ಅವರು ಪಟ್ಟಣವನ್ನು ಕಂಡು, ಬೆರಗಾದರು. ಅವರು ಭಯಪಟ್ಟು ಓಡಿಹೋದರು.
PSA 48:6 ಅಲ್ಲಿ ನಡುಕವವೂ ಹೆರುವವಳ ಹಾಗೆ ನೋವೂ ಅವರನ್ನು ಹಿಡಿಯಿತು.
PSA 48:7 ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್ ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ.
PSA 48:8 ನಾವು ಹೇಗೆ ಕೇಳಿದೆವೋ ಹಾಗೆಯೇ ಕಣ್ಣಾರೆ ಕಂಡೆವು, ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ, ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು: ದೇವರು ಪಟ್ಟಣವನ್ನು ಎಂದೆಂದಿಗೂ ಸ್ಥಿರಪಡಿಸುವರು.
PSA 48:9 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ.
PSA 48:10 ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ; ನಿಮ್ಮ ಬಲಗೈ ನೀತಿಯಿಂದ ತುಂಬಿದೆ.
PSA 48:11 ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದ ಪುತ್ರಿಯರು ಉಲ್ಲಾಸಪಡಲಿ.
PSA 48:12 ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ ಅದರ ಗೋಪುರಗಳನ್ನು ಎಣಿಸಿರಿ.
PSA 48:13 ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ ಅದರ ಗೋಪುರಗಳನ್ನು ಕಣ್ಣಿಟ್ಟು ನೋಡಿರಿ, ಅದರ ಅರಮನೆಗಳನ್ನು ಲಕ್ಷಿಸಿರಿ.
PSA 48:14 ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.
PSA 49:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ. ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳೇ,
PSA 49:2 ಸಾಮಾನ್ಯರೇ, ಉನ್ನತರೇ, ಐಶ್ವರ್ಯವಂತರೇ, ಬಡವರೇ ಎಲ್ಲರೂ ಕಿವಿಗೊಡಿರಿ.
PSA 49:3 ನನ್ನ ಬಾಯಿ ಜ್ಞಾನವನ್ನು ನುಡಿಯುವುದು, ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು.
PSA 49:4 ಸಾಮ್ಯಕ್ಕೆ ನನ್ನ ಕಿವಿಗೊಟ್ಟು ಒಗಟನ್ನು ಕಿನ್ನರಿಯಿಂದ ಬಿಚ್ಚುವೆನು.
PSA 49:5 ಕೇಡಿನ ದಿವಸಗಳಲ್ಲಿ ನನಗೆ ಒಳಸಂಚು ಮಾಡುವವರ ಅಕ್ರಮವು ನನ್ನನ್ನು ಸುತ್ತಿಕೊಳ್ಳುವಾಗ ನಾನು ಏಕೆ ಭಯಪಡಬೇಕು?
PSA 49:6 ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು, ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು.
PSA 49:7 ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು; ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು.
PSA 49:8 ಆತ್ಮದ ವಿಮೋಚನೆಯು ಬಹು ಬೆಲೆಯುಳ್ಳದ್ದು, ಅದಕ್ಕೆ ಸಾಕಷ್ಟು ಬೆಲೆಯನ್ನು ಕಟ್ಟಲು ಯಾರಿಗೂ ಸಾಧ್ಯವಿಲ್ಲ.
PSA 49:9 ಮನುಷ್ಯರು ಮರಣ ನಾಶವನ್ನು ಕಾಣದೆ, ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ.
PSA 49:10 ಏಕೆಂದರೆ, ಜ್ಞಾನಿಗಳು ಸಾಯುವುದನ್ನು ಕಾಣುತ್ತೇವೆ. ಹಾಗೆಯೇ ಮೂರ್ಖರೂ ಜ್ಞಾನಹೀನರೂ ಸಹ ನಾಶವಾಗುತ್ತಾರೆ. ಅವರ ಆಸ್ತಿಯನ್ನು ಇತರರು ಪಡೆಯುತ್ತಾರೆ.
PSA 49:11 ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು. ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ.
PSA 49:12 ಮನುಷ್ಯನು ಎಷ್ಟು ಆಸ್ತಿ ಗೌರವ ಸಂಪಾದಿಸಿದ್ದರೂ, ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.
PSA 49:13 ತಮ್ಮಲ್ಲಿಯೇ ಭರವಸೆ ಇಟ್ಟುಕೊಳ್ಳುವವರಿಗೂ ಇದೇ ಗತಿ. ಅಂಥವರ ಮಾತುಗಳನ್ನು ಒಪ್ಪಿ ಅನುಸರಿಸುವವರ ಗತಿಯೂ ಇದೆ.
PSA 49:14 ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. ಮರಣವೇ ಅವರ ಕುರುಬ; ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು ಅವರ ರೂಪ ಕ್ಷಯವಾಗುವುದು. ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು.
PSA 49:15 ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು. ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು.
PSA 49:16 ಒಬ್ಬನು ಐಶ್ವರ್ಯವಂತನಾದರೆ ಮತ್ತು ಅವನ ಮನೆಯ ಘನತೆ ದೊಡ್ಡದಾದರೆ ಕಳವಳ ಪಡಬೇಡ.
PSA 49:17 ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.
PSA 49:18 ಸಿರಿ ಬಂದಾಗ ಜನರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, ಜನಸ್ತುತಿಯಿಂದಲೂ ಕೂಡಿದವನಾದರೂ
PSA 49:19 ಅವನು ತನ್ನ ಪೂರ್ವಿಕರ ಬಳಿಗೆ ಹೋಗುವನು; ಅವರು ಸದಾಕಾಲಕ್ಕೂ ಜೀವ ಬೆಳಕನ್ನು ಕಾಣುವುದಿಲ್ಲ.
PSA 49:20 ಮನುಷ್ಯನು ಎಷ್ಟು ಘನತೆಯಲ್ಲಿದ್ದು ವಿವೇಕವಿಲ್ಲದವರಾದರೆ ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.
PSA 50:1 ಆಸಾಫನ ಕೀರ್ತನೆ. ದೇವಾಧಿ ದೇವರಾದ ಯೆಹೋವ ದೇವರು ತಾವೇ ಮಾತನಾಡುತ್ತಿದ್ದಾರೆ, ಸೂರ್ಯೋದಯದಿಂದ ಅಸ್ತಮಾನದವರೆಗೂ ಇರುವ ಭೂಲೋಕದವರು ಕರೆಯುತ್ತಿದ್ದಾರೆ.
PSA 50:2 ಪರಿಪೂರ್ಣ ಸೌಂದರ್ಯದ ಚೀಯೋನಿನಿಂದ ದೇವರು ಪ್ರಕಾಶಿಸುತ್ತಿದ್ದಾರೆ.
PSA 50:3 ನಮ್ಮ ದೇವರು ಬರುತ್ತಾರೆ, ಎಷ್ಟು ಮಾತ್ರವೂ ಮೌನವಾಗಿರುವುದಿಲ್ಲ. ಬೆಂಕಿಯು ಅವರ ಮುಂದೆ ಪ್ರಜ್ವಲಿಸುವುದು; ಅವರ ಸುತ್ತಲೂ ದೊಡ್ಡ ಬಿರುಗಾಳಿಯು ಬೀಸುವುದು.
PSA 50:4 ತಮ್ಮ ಜನರಿಗೆ ನ್ಯಾಯತೀರಿಸುವುದಕ್ಕೆ ಭೂಮಿ ಆಕಾಶಗಳನ್ನೂ ಹೀಗೆಂದು ಕರೆಯುತ್ತಿದ್ದಾರೆ:
PSA 50:5 “ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡ ನನ್ನ ಭಕ್ತರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.”
PSA 50:6 ಮತ್ತು ದೇವರು ನ್ಯಾಯಾಧಿಪತಿಯಾಗಿದ್ದಾರೆ. ಆಕಾಶಗಳು ದೇವರ ನೀತಿಯನ್ನು ಪ್ರಕಟಿಸುತ್ತವೆ.
PSA 50:7 “ನನ್ನ ಜನರೇ, ಕೇಳಿರಿ, ನಾನು ಮಾತನಾಡುತ್ತಿದ್ದೇನೆ, ಇಸ್ರಾಯೇಲೇ, ನಿಮಗೆ ವಿರೋಧವಾಗಿ ಹೀಗೆಂದು ನಾನು ಸಾಕ್ಷಿ ಕೊಡುವೆನು: ನಾನು ದೇವರು, ಹೌದು ನಿಮ್ಮ ದೇವರು ನಾನೇ.
PSA 50:8 ನಿಮ್ಮ ಯಜ್ಞಗಳ ವಿರೋಧವಾಗಿ ನಾನು ತಪ್ಪು ಹೊರಿಸುತ್ತಾಯಿಲ್ಲ, ಅಥವಾ ನನ್ನ ಮುಂದೆ ಯಾವಾಗಲೂ ಇರುವ ದಹನಬಲಿಗಳ ವಿರೋಧವಾಗಿಯೂ ನಾನು ತಪ್ಪು ಹೊರಿಸುತ್ತಾಯಿಲ್ಲ.
PSA 50:9 ನಿಮ್ಮ ಮನೆಯಿಂದ ಹೋರಿಯಾಗಲಿ ಕೊಟ್ಟಿಗೆಯಿಂದ ಹೋತಗಳಾಗಲಿ ನನಗೆ ಅವಶ್ಯವಿಲ್ಲ.
PSA 50:10 ಏಕೆಂದರೆ ಅಡವಿಯ ಮೃಗಗಳೆಲ್ಲವೂ ನನ್ನವೇ. ಸಾವಿರ ಬೆಟ್ಟಗಳಲ್ಲಿರುವ ಪಶುಗಳೂ ಸಹ ನನ್ನವೇ.
PSA 50:11 ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಬಯಲಿನ ಮೃಗಗಳು ನನ್ನವುಗಳಾಗಿವೆ.
PSA 50:12 ನನಗೆ ಹಸಿವಾದರೆ ನಿಮಗೆ ಹೇಳಬೇಕಾಗಿಲ್ಲ, ಏಕೆಂದರೆ ಭೂಲೋಕವೂ ಅದರಲ್ಲಿರುವುದೆಲ್ಲವೂ ನನ್ನವೇ.
PSA 50:13 ಹೋರಿಗಳ ಮಾಂಸವನ್ನು ನಾನು ಭುಜಿಸುವುದಿಲ್ಲ. ಹೋತಗಳ ರಕ್ತವನ್ನು ನಾನು ಕುಡಿಯುವುದಿಲ್ಲ.
PSA 50:14 “ದೇವರಾಗಿರುವ ನನಗೆ ಸ್ತೋತ್ರವನ್ನು ಬಲಿಯಾಗಿ ಅರ್ಪಿಸಿರಿ. ಮಹೋನ್ನತನಾಗಿರುವ ನನಗೆ ಹರಕೆಗಳನ್ನು ಸಲ್ಲಿಸಿರಿ.
PSA 50:15 ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆಯಿರಿ, ನಾನು ನಿಮ್ಮನ್ನು ಬಿಡಿಸುವೆನು, ನೀವು ನನ್ನನ್ನು ಘನಪಡಿಸುವಿರಿ.”
PSA 50:16 ಆದರೆ ದುಷ್ಟನಿಗೆ ದೇವರು ಹೇಳುವುದೇನೆಂದರೆ: “ನನ್ನ ನಿಯಮಗಳನ್ನು ಪಠಿಸುವುದಕ್ಕೆ ಹಕ್ಕು ನಿಮಗೆ ಏನಿದೆ? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಛರಿಸುವುದೇಕೆ?
PSA 50:17 ನೀನು ನನ್ನ ಶಿಕ್ಷಣವನ್ನು ದ್ವೇಷಿಸಿ, ನನ್ನ ವಾಕ್ಯಗಳನ್ನು ನಿಮ್ಮ ಹಿಂದೆ ಬಿಸಾಡಿಬಿಟ್ಟೀರಲ್ಲಾ.
PSA 50:18 ಕಳ್ಳನನ್ನು ಕಂಡರೆ ಅವನೊಂದಿಗೆ ಸೇರಿಕೊಳ್ಳುತ್ತೀರಿ. ವ್ಯಭಿಚಾರಿಗಳ ಸಂಗಡ ನಿಮಗೆ ಪಾಲು ಇದೆ.
PSA 50:19 ನೀವು ನಿಮ್ಮ ಬಾಯನ್ನು ಕೇಡಿಗೆ ಉಪಯೋಗಿಸುತ್ತೀರಿ. ನಿಮ್ಮ ನಾಲಿಗೆಯು ಮೋಸವನ್ನು ಜೋಡಿಸುತ್ತದೆ.
PSA 50:20 ನೀವು ಕುಳಿತುಕೊಂಡು ನಿಮ್ಮ ಸಹೋದರರಿಗೆ ವಿರೋಧವಾಗಿ ಸುಳ್ಳಾಡುತ್ತೀರಿ. ನಿಮ್ಮ ಒಡಹುಟ್ಟಿದವರ ಮೇಲೆ ಚಾಡಿ ಹೇಳುತ್ತೀರಿ.
PSA 50:21 ಇವುಗಳನ್ನೆಲ್ಲಾ ನೀವು ಮಾಡಿದ್ದೀರಿ, ಆದರೂ ನಾನು ಮೌನವಾಗಿದ್ದೆನು. ಆದ್ದರಿಂದ ನಾನೂ ಸಹ ನಿಮ್ಮ ಹಾಗೆ ಒಬ್ಬನೆಂದು ನೀವು ನೆನಸಿಕೊಂಡಿದ್ದೀರಿ. ಆದರೆ ಈಗ ನಾನು ನಿಮ್ಮನ್ನು ಗದರಿಸಿ ನಿಮ್ಮ ಕಣ್ಣು ಮುಂದೆಯೇ ನಿಮ್ಮ ಅಪರಾಧ ಪ್ರಕಟಿಸುವೆನು.
PSA 50:22 “ದೇವರನ್ನು ಮರೆತು ಬಿಡುವವರೇ, ಇದನ್ನು ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ. ಇಲ್ಲವಾದರೆ ಎಚ್ಚರಿಕೆಯಾಗಿರಿ. ನನ್ನ ಕೈಯಿಂದ ಬಿಡಿಸುವವರು ಯಾರೂ ಇರುವುದಿಲ್ಲವೆಂಬುದನ್ನು ಗ್ರಹಿಸಿಕೊಳ್ಳಿರಿ.
PSA 50:23 ಯಾರು ಧನ್ಯವಾದದ ಬಲಿಯನ್ನು ಅರ್ಪಿಸುವರೋ ಅವರೇ ನನ್ನನ್ನು ಘನಪಡಿಸುವರು. ತಮ್ಮ ನಡವಳಿಕೆಯನ್ನು ಕ್ರಮಪಡಿಸಿಕೊಳ್ಳುವವರಿಗೆ ನನ್ನ ರಕ್ಷಣೆಯನ್ನು ತೋರಿಸುವೆನು.”
PSA 51:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ದಾವೀದನು ಬತ್ಷೆಬೆಳ ಸಂಗಡ ಪಾಪಮಾಡಿದ ಮೇಲೆ, ಪ್ರವಾದಿಯಾದ ನಾತಾನನು ಅವನ ಹತ್ತಿರ ಬಂದಾಗ ರಚಿಸಿದ ಕೀರ್ತನೆ. ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನನ್ನು ಕರುಣಿಸಿರಿ. ನಿಮ್ಮ ಮಹಾ ಅನುಕಂಪಕ್ಕೆ ಅನುಸಾರವಾಗಿ ನನ್ನ ಅತಿಕ್ರಮಗಳನ್ನು ಅಳಿಸಿಬಿಡಿರಿ.
PSA 51:2 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ತೊಳೆದುಬಿಡಿರಿ; ನನ್ನ ಪಾಪದಿಂದ ನನ್ನನ್ನು ಶುದ್ಧಮಾಡಿರಿ.
PSA 51:3 ನನ್ನ ಅತಿಕ್ರಮಗಳನ್ನು ನಾನೇ ತಿಳಿದಿದ್ದೇನೆ, ನನ್ನ ಪಾಪವು ಯಾವಾಗಲೂ ನನ್ನ ಕಣ್ಮುಂದೆಯೇ ಇದೆ.
PSA 51:4 ನಿಮಗೇ ನಿಮಗೊಬ್ಬರಿಗೆ ಮಾತ್ರ ವಿರೋಧವಾಗಿ ನಾನು ಪಾಪಮಾಡಿ, ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದ್ದನ್ನೇ ಮಾಡಿದ್ದೇನೆ. ಹೀಗೆ ನೀವು ನ್ಯಾಯತೀರಿಸುವಾಗ ನೀತಿವಂತರಾಗಿಯೂ ನೀವು ತೀರ್ಪು ನಿರ್ಣಯಿಸುವಾಗ ನ್ಯಾಯವಂತರಾಗಿಯೂ ಇರುವಿರಿ.
PSA 51:5 ಹುಟ್ಟಿದಂದಿನಿಂದಲೇ ನಾನು ಪಾಪಿ. ನನ್ನ ತಾಯಿ ನನ್ನನ್ನು ಗರ್ಭಧರಿಸಿದಾಗಲೇ ನಾನು ಪಾಪಿಯೇ.
PSA 51:6 ಆದರೂ ಅಂತರಂಗದಲ್ಲಿ ನೀವು ಯಥಾರ್ಥವನ್ನು ಬಯಸುತ್ತೀರಿ. ನೀವು ಹೃದಯದ ಆಂತರ್ಯದಲ್ಲಿ ನನಗೆ ಜ್ಞಾನವನ್ನು ಬೋಧಿಸಿದ್ದೀರಿ.
PSA 51:7 ಹಿಸ್ಸೋಪಿನಿಂದ ನನ್ನನ್ನು ಶುಚಿಮಾಡಿರಿ, ಆಗ ನಾನು ಶುದ್ಧನಾಗುವೆನು. ನನ್ನನ್ನು ತೊಳೆಯಿರಿ, ಆಗ ಹಿಮಕ್ಕಿಂತ ಬೆಳ್ಳಗಾಗುವೆನು.
PSA 51:8 ನಾನು ಆನಂದವನ್ನೂ ಹರ್ಷವನ್ನೂ ಕೇಳುವಂತೆ ಮಾಡಿರಿ; ನೀವು ಜಜ್ಜಿದ ಎಲುಬುಗಳು ಆನಂದಪಡಲಿ.
PSA 51:9 ನನ್ನ ಪಾಪಗಳಿಗೆ ನಿಮ್ಮ ಮುಖವನ್ನು ಮರೆಮಾಡಿಕೊಳ್ಳಿರಿ; ನನ್ನ ಅಧರ್ಮಗಳನ್ನೆಲ್ಲಾ ಅಳಿಸಿಬಿಡಿರಿ.
PSA 51:10 ಓ ದೇವರೇ, ಶುದ್ಧ ಹೃದಯವನ್ನು ನನ್ನಲ್ಲಿ ಸೃಷ್ಟಿಮಾಡಿರಿ, ಸ್ಥಿರವಾದ ಆತ್ಮವನ್ನು ನನ್ನಲ್ಲಿ ನವೀಕರಿಸಿರಿ.
PSA 51:11 ನಿಮ್ಮ ಸನ್ನಿಧಿಯಿಂದ ನನ್ನನ್ನು ಹೊರ ದೂಡಬೇಡಿರಿ; ನಿಮ್ಮ ಪರಿಶುದ್ಧಾತ್ಮರನ್ನು ನನ್ನಿಂದ ತೆಗೆಯಬೇಡಿರಿ.
PSA 51:12 ನಿಮ್ಮ ರಕ್ಷಣೆಯ ಆನಂದವನ್ನು ನನಗೆ ಪುನಃ ಸ್ಥಾಪಿಸಿರಿ; ನನಗೆ ಸಿದ್ಧ ಆತ್ಮವನ್ನು ನೀಡಿ, ನನ್ನನ್ನು ಬೆಂಬಲಿಸಿರಿ.
PSA 51:13 ಆಗ ನಾನು ಅತಿಕ್ರಮಿಸಿದವರಿಗೆ ನಿಮ್ಮ ಮಾರ್ಗಗಳನ್ನು ಬೋಧಿಸುವೆನು; ಮತ್ತು ಪಾಪಿಗಳು ನಿಮ್ಮ ಕಡೆಗೆ ತಿರುಗಿಕೊಳ್ಳುವರು.
PSA 51:14 ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧದಿಂದ ನನ್ನನ್ನು ಬಿಡಿಸಿರಿ, ನನ್ನ ನಾಲಿಗೆಯು ನಿಮ್ಮ ನೀತಿಯನ್ನು ಹಾಡುವುದು.
PSA 51:15 ಕರ್ತಾ, ನನ್ನ ತುಟಿಗಳನ್ನು ತೆರೆಯಿರಿ. ಆಗ ನನ್ನ ಬಾಯಿ ನಿಮ್ಮ ಸ್ತೋತ್ರವನ್ನು ಪ್ರಸಿದ್ಧಿ ಮಾಡುವುದು.
PSA 51:16 ಯಜ್ಞವನ್ನು ನೀವು ಇಷ್ಟಪಡುವುದಿಲ್ಲ, ಇಲ್ಲವಾದರೆ ನಾನು ಅದನ್ನು ತರುತ್ತಿದ್ದೆನು. ದಹನಬಲಿಗಳಲ್ಲಿ ನೀವು ಸಂತೋಷಪಡುವುದಿಲ್ಲ.
PSA 51:17 ಓ ದೇವರೇ, ನಿಮಗೆ ಇಷ್ಟವಾದ ಯಜ್ಞಗಳು ಮುರಿದ ಆತ್ಮವೇ. ಮುರಿದಂಥ, ಜಜ್ಜಿದಂಥ ಹೃದಯವನ್ನು ದೇವರು ತಿರಸ್ಕರಿಸುವುದಿಲ್ಲ.
PSA 51:18 ನಿಮ್ಮ ಮೆಚ್ಚುಗೆಯಿಂದ ಚೀಯೋನಿಗೆ ಸಮೃದ್ಧಿಯನ್ನು ನೀಡಿರಿ, ಯೆರೂಸಲೇಮಿನ ಗೋಡೆಗಳನ್ನು ಕಟ್ಟಿರಿ.
PSA 51:19 ಆಗ ನೀತಿಯ ಯಜ್ಞಗಳಲ್ಲಿಯೂ ಸಂಪೂರ್ಣ ದಹನಬಲಿಗಳಲ್ಲಿಯೂ, ನೀವು ಸಂತೋಷಪಡುವಿರಿ; ಆಗ ನಿಮ್ಮ ಬಲಿಪೀಠದ ಮೇಲೆ ಹೋರಿಗಳನ್ನು ಅರ್ಪಿಸಲಾಗುವುದು.
PSA 52:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ, ಮಸ್ಕೀಲ್ ರಾಗದಲ್ಲಿ ದಾವೀದನು ರಚಿಸಿದ ಪದ್ಯ. ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ? ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ, ದೇವರ ಅನಂತ ಕೃಪೆಯು ಯಾವಾಗಲೂ ಇರುವದು.
PSA 52:2 ಮೋಸ ಮಾಡುವವನೇ, ಹದವಾದ ಕ್ಷೌರ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡನ್ನು ಕಲ್ಪಿಸುತ್ತದೆ.
PSA 52:3 ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ನೀನು ಪ್ರೀತಿಸುತ್ತಿ. ಸತ್ಯವನಾಡುವುದಕ್ಕಿಂತ ಸುಳ್ಳನ್ನೇ ನೀನು ಮಾತನಾಡುತ್ತಿ.
PSA 52:4 ಮೋಸದ ನಾಲಿಗೆಯೇ, ನಿನಗೆ ಹಾನಿಕರವಾದ ಮಾತುಗಳೇ ಇಷ್ಟ.
PSA 52:5 ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು. ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು. ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು.
PSA 52:6 ನೀತಿವಂತರು ಇದನ್ನು ಕಂಡು ಭಯಪಡುವರು. ಅವರು ನಿನ್ನ ಬಗ್ಗೆ ನಗಾಡಿ ಹೀಗನ್ನುವರು,
PSA 52:7 “ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ, ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದ ಮನುಷ್ಯನು ಇವನೇ!”
PSA 52:8 ನಾನಾದರೋ ದೇವರ ಆಲಯದಲ್ಲಿರುವ ಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು. ದೇವರ ಒಡಂಬಡಿಕೆಯ ಪ್ರೀತಿಯಲ್ಲಿ ಯುಗಯುಗಾಂತರವೂ ಭರವಸವಿಟ್ಟಿರುವೆನು.
PSA 52:9 ದೇವರೇ ನಿಮ್ಮ ಉಪಕಾರಕ್ಕಾಗಿ ಯಾವಾಗಲೂ ನಿಮ್ಮ ಭಕ್ತರ ಮುಂದೆ ನಿಮ್ಮನ್ನು ಸ್ತುತಿಸುತ್ತಿರುವೆನು. ನಿಮ್ಮ ಹೆಸರು ಒಳ್ಳೆಯದು. ಆದುದರಿಂದ ನಿಮ್ಮ ಹೆಸರನ್ನೇ ನಿರೀಕ್ಷಿಸಿಕೊಂಡಿರುವೆನು.
PSA 53:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ರಚಿಸಿದ ದಾವೀದನ ಕೀರ್ತನೆ. “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋದವರು ಅವರ ಮಾರ್ಗಗಳು ಅಸಹ್ಯಕರ. ಅವರಲ್ಲಿ ಒಳ್ಳೆಯದನ್ನು ಮಾಡುವವರು ಒಬ್ಬರೂ ಇಲ್ಲ.
PSA 53:2 ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ದೇವರು ಸ್ವರ್ಗದಿಂದ ಮನುಷ್ಯರ ಮೇಲೆ ದೃಷ್ಟಿಸಿದರು.
PSA 53:3 ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ. ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದರು.
PSA 53:4 ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಅವರು ದೇವರನ್ನು ಸ್ಮರಿಸುವುದೇ ಇಲ್ಲ.
PSA 53:5 ಭಯವಿಲ್ಲದಿರುವಲ್ಲಿ ಅವರು ಭಯಭ್ರಾಂತರಾದರು; ಏಕೆಂದರೆ ನಿಮಗೆ ವಿರೋಧವಾಗಿ ದಂಡು ಇಳಿಸುವವರನ್ನು ದೇವರು ಚದರಿಸಿಬಿಟ್ಟಿದ್ದಾರೆ. ನೀವು ಅವರನ್ನು ನಾಚಿಕೆಪಡಿಸಿದ್ದೀರಿ. ಏಕೆಂದರೆ ದೇವರು ಅವರನ್ನು ತಿರಸ್ಕರಿಸಿದ್ದಾರೆ.
PSA 53:6 ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.
PSA 54:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಜಿಫೆಂಬ ಸ್ಥಳದವರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ, ಮಸ್ಕಿಲ್ ರಾಗದಲ್ಲಿ ದಾವೀದನು ರಚಿಸಿದ ಕೀರ್ತನೆ. ದೇವರೇ, ನಿಮ್ಮ ಹೆಸರಿನಿಂದ ನನ್ನನ್ನು ರಕ್ಷಿಸಿರಿ. ನಿಮ್ಮ ಬಲದಿಂದ ನನಗೆ ನ್ಯಾಯತೀರಿಸಿರಿ.
PSA 54:2 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ನನ್ನ ಬಾಯಿಯ ಮಾತಿಗೆ ಕಿವಿಕೊಡಿರಿ.
PSA 54:3 ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಕ್ರೂರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವದೇ ಇಲ್ಲ.
PSA 54:4 ನಿಜವಾಗಿಯೂ ದೇವರು ನನ್ನ ಸಹಾಯಕರು. ಯೆಹೋವ ದೇವರು ನನ್ನ ಪ್ರಾಣವನ್ನು ಕಾಪಾಡುವವರು.
PSA 54:5 ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ. ನಿಮ್ಮ ನಂಬಿಗಸ್ತಿಕೆಯಿಂದ ನೀವು ಅವರನ್ನು ದಂಡಿಸಿರಿ.
PSA 54:6 ನಾನು ನಿಮಗೆ ಸ್ವಂತ ಇಚ್ಛೆಯಿಂದ ಬಲಿಯನ್ನು ಅರ್ಪಿಸುವೆನು. ಯೆಹೋವ ದೇವರೇ, ನಿಮ್ಮ ಒಳ್ಳೆಯ ಹೆಸರನ್ನು ಕೊಂಡಾಡುವೆನು.
PSA 54:7 ಏಕೆಂದರೆ ಎಲ್ಲಾ ಇಕ್ಕಟ್ಟಿನಿಂದ ನನ್ನನ್ನು ಬಿಡಿಸಿದ ದೇವರು ನೀವೇ. ನನ್ನ ವೈರಿಗಳ ಮೇಲೆ ಜಯ ಸಾಧಿಸಿದ್ದನ್ನು ನಾನು ನೋಡುವೆನು.
PSA 55:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಮಸ್ಕಿಲ್ ರಾಗದಲ್ಲಿ ದಾವೀದನು ರಚಿಸಿದ ಕೀರ್ತನೆ. ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ, ನನ್ನ ವಿಜ್ಞಾಪನೆಗೆ ನಿಮ್ಮನ್ನು ಮರೆಮಾಡಿಕೊಳ್ಳಬೇಡಿರಿ.
PSA 55:2 ನನ್ನನ್ನು ಆಲೈಸಿರಿ, ನನಗೆ ಉತ್ತರಕೊಡಿರಿ. ನಾನು ನನ್ನ ಚಿಂತೆಯಿಂದ ದುಃಖಿಸುತ್ತಾ ಬೇಸರವಾಗಿದ್ದೇನೆ.
PSA 55:3 ಶತ್ರುವಿನ ಗರ್ಜನೆಯಿಂದಲೂ ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ. ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ, ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ.
PSA 55:4 ನನ್ನ ಹೃದಯವು ನನ್ನ ಅಂತರಂಗದಲ್ಲಿ ನೊಂದುಕೊಳ್ಳುತ್ತದೆ. ಮರಣದ ಬೆದರಿಕೆಗಳು ನನ್ನ ಮೇಲೆ ಬಿದ್ದಿವೆ.
PSA 55:5 ಭಯವೂ ನಡುಗೂ ನನಗೆ ಬಂದಿವೆ; ಭೀತಿಯು ನನ್ನನ್ನು ಮುಚ್ಚಿದೆ.
PSA 55:6 “ಓ, ಪಾರಿವಾಳದಂತೆ ನನಗೆ ರೆಕ್ಕೆಗಳು ಇರುತ್ತಿದ್ದರೆ, ಹಾರಿಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆ.
PSA 55:7 ನಾನು ದೂರ ಹಾರಿಹೋಗಿ ಮರುಭೂಮಿಯಲ್ಲಿ ವಾಸಿಸುತ್ತಿದ್ದೆ.
PSA 55:8 ಚಂಡಮಾರುತದಿಂದಲೂ ಬಿರುಗಾಳಿಯಿಂದಲೂ ತಪ್ಪಿಸಿಕೊಳ್ಳುತ್ತಿದ್ದೆ,” ಎಂದುಕೊಂಡೆನು.
PSA 55:9 ಯೆಹೋವ ದೇವರೇ, ದುಷ್ಟರನ್ನು ಕಳವಳಗೊಳಿಸಿರಿ, ಅವರ ಮಾತುಗಳನ್ನು ನಿಲ್ಲಿಸಿಬಿಡಿರಿ. ಬಲಾತ್ಕಾರವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ಕಾಣುತ್ತಿದ್ದೇನೆ.
PSA 55:10 ಅವರು ಹಗಲಿರುಳು ಪಟ್ಟಣದ ಗೋಡೆಗಳನ್ನು ಸುತ್ತುತ್ತಾರೆ. ಕೇಡು ಅನಾಚಾರಗಳು ಅದರ ಮಧ್ಯದಲ್ಲಿ ಇವೆ.
PSA 55:11 ನಾಶಕರ ಶಕ್ತಿಗಳು ನಗರ ಮಧ್ಯದಲ್ಲಿ ಇವೆ. ಬೀದಿಗಳೊಳಗಿಂದ ಬೆದರಿಕೆಯೂ ವಂಚನೆಯೂ ತೊಲಗುವುದಿಲ್ಲ.
PSA 55:12 ನನ್ನನ್ನು ನಿಂದಿಸುವವನು ಶತ್ರುವಲ್ಲ, ಶತ್ರುವಾದರೆ ತಾಳಿಕೊಳ್ಳುತ್ತಿದ್ದೆ. ನನಗೆ ವಿರೋಧವಾಗಿರುವವನು ನನ್ನ ವೈರಿಯಾಗಿದ್ದರೆ, ಅವನಿಂದ ಅಡಗಿಕೊಳ್ಳುತ್ತಿದ್ದೆನು.
PSA 55:13 ಆದರೆ ನನ್ನ ಜೊತೆಗಾರನೂ ನನ್ನ ಆಪ್ತನೂ, ನನಗೆ ಸಮನಾದವನೇ ವಿರೋಧವಾಗಿದ್ದಾನೆ.
PSA 55:14 ದೇವರ ಆಲಯಕ್ಕೆ ಆರಾಧಕರ ಗುಂಪಿನೊಂದಿಗೆ ನಾವಿಬ್ಬರೂ ನಡೆದು ಹೋಗುವಾಗ ಮಧುರ ಅನ್ಯೋನ್ಯತೆಯನ್ನು ಅನುಭವಿಸಿದೆವು.
PSA 55:15 ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ. ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ, ಅವರ ಮನೆಯಲ್ಲಿ ದುಷ್ಟತನವು ಇದೆ.
PSA 55:16 ಆದರೆ ನಾನು ದೇವರನ್ನು ಕರೆಯುವೆನು. ಯೆಹೋವ ದೇವರು ನನ್ನನ್ನು ರಕ್ಷಿಸುವರು.
PSA 55:17 ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ ಹಂಬಲಿಸಿ ಮೊರೆಯಿಡುವೆನು. ದೇವರು ನನ್ನ ಧ್ವನಿಯನ್ನು ಕೇಳುವರು.
PSA 55:18 ಅನೇಕರು ನನ್ನನ್ನು ವಿರೋಧಿಸಿದರೂ ನನಗೆ ವಿರೋಧವಾಗಿ ಆಗುವ ಯುದ್ಧಗಳಲ್ಲಿ ದೇವರು ನನ್ನನ್ನು ಯಾವುದೇ ಹಾನಿಯಾಗದಂತೆ ವಿಮೋಚಿಸುವರು.
PSA 55:19 ಆದಿಯಿಂದ ಸಿಂಹಾಸನಾರೂಢರಾಗಿರುವ ದೇವರು, ಅವರ ಮೊರೆಯನ್ನು ಕೇಳಿ ಅವರನ್ನು ತಗ್ಗಿಸುವರು, ಏಕೆಂದರೆ, ಅವರು ದೇವರಿಗೆ ಭಯಪಡುವುದಿಲ್ಲ. ದೇವರು ಬದಲಾಗುವುದಿಲ್ಲ.
PSA 55:20 ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ. ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.
PSA 55:21 ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ; ಆದರೆ ಅವನ ಹೃದಯದಲ್ಲಿ ಕಾಳಗವಿದೆ; ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ; ಆದರೆ ಅವು ಬಿಚ್ಚುಗತ್ತಿಗಳಾಗಿವೆ.
PSA 55:22 ಯೆಹೋವ ದೇವರ ಮೇಲೆ ನಿಮ್ಮ ಭಾರವನ್ನು ಹಾಕಿರಿ. ಅವರು ನಿಮಗೆ ಆಧಾರವಾಗಿರುವರು. ದೇವರು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸುವುದಿಲ್ಲ.
PSA 55:23 ಆದರೆ ದೇವರೇ, ದುಷ್ಟರನ್ನು ನಾಶದ ಕುಣಿಯಲ್ಲಿ ಇಳಿಯ ಮಾಡುವಿರಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ. ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ.
PSA 56:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ದೂರದ ಓಕ್ ಮರದ ಮೇಲೆ ಪಾರಿವಾಳ ಕುಳಿತಿದೆ” ಎಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ. ದೇವರೇ ಕರುಣಿಸು, ಏಕೆಂದರೆ ಮನುಷ್ಯರು ನನ್ನನ್ನು ಬೆನ್ನಟ್ಟುತ್ತಿದ್ದಾರೆ. ದಿನವೆಲ್ಲಾ ವಿರೋಧಿಸುತ್ತಾ ನನ್ನನ್ನು ಬಾಧಿಸುತ್ತಿದ್ದಾರೆ.
PSA 56:2 ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.
PSA 56:3 ನಾನು ಭಯಪಡುವ ಸಮಯದಲ್ಲಿ ನಿಮ್ಮಲ್ಲಿ ಭರವಸೆ ಇಡುವೆನು.
PSA 56:4 ದೇವರ ಮಾತುಗಳಲ್ಲಿ ನಾನು ಹೆಮ್ಮೆಪಡುವೆನು. ದೇವರಲ್ಲಿಯೇ ಭರವಸೆ ಇಡುವೆನು, ನಾನು ಭಯಪಡುವುದಿಲ್ಲ. ಸಾಯುವ ಮನುಷ್ಯನು ನನಗೇನು ಮಾಡಬಲ್ಲ?
PSA 56:5 ಶತ್ರುಗಳು ನನ್ನ ಮಾತುಗಳನ್ನು ಸದಾ ಅಪಾರ್ಥ ಮಾಡಿಕೊಳ್ಳುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ಕೇಡಿಗಾಗಿವೆ.
PSA 56:6 ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ. ನನ್ನ ಪ್ರಾಣ ತೆಗೆಯಲು ಕುತೂಹಲದಿಂದ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
PSA 56:7 ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ದೇವರೇ ಜನರನ್ನು ಕಠಿಣವಾಗಿ ದಂಡಿಸಿರಿ.
PSA 56:8 ನನ್ನ ಗೋಳಾಟವನ್ನು ಎಣಿಕೆ ಮಾಡಿರಿ, ನಿಮ್ಮ ಸುರುಳಿಯಲ್ಲಿ ನನ್ನ ಕಣ್ಣೀರ ಲೆಕ್ಕಮಾಡಿರಿ, ಅವು ನಿಮ್ಮ ಗ್ರಂಥದಲ್ಲಿ ಬರೆದಿದೆಯಲ್ಲವೇ?
PSA 56:9 ನಾನು ನಿಮಗೆ ಮೊರೆಯಿಟ್ಟಾಗ, ನನ್ನ ಶತ್ರುಗಳು ಹಿಂದಿರುಗುವರು. ಇದರಿಂದ ದೇವರು ನನಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವೆನು.
PSA 56:10 ನಾನು ದೇವರಲ್ಲಿಯೂ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು. ಹೌದು, ದೇವರಲ್ಲಿಯೂ ಯೆಹೋವ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು.
PSA 56:11 ನಾನು ದೇವರಲ್ಲಿ ಭರವಸೆಯಿಡುವೆನು. ನಾನು ಭಯಪಡುವುದಿಲ್ಲ. ಮಾನವನು ನನಗೇನು ಮಾಡುವನು?
PSA 56:12 ನನ್ನ ದೇವರೇ ನಾನು ನಿಮಗೆ ಸಲ್ಲಿಸಿದ ಹರಕೆಗಳಿಗೆ ಅಧೀನವಾಗಿದ್ದೇನೆ. ನಾನು ಉಪಕಾರ ಸ್ತುತಿಯ ಕಾಣಿಕೆಗಳನ್ನು ನಿಮಗೆ ಸಲ್ಲಿಸುವೆನು.
PSA 56:13 ಏಕೆಂದರೆ ನೀವು ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀರಿ. ನಾನು ಜೀವದ ಬೆಳಕಿನಲ್ಲಿ ನಿಮ್ಮ ಮುಂದೆ ನಡೆದುಕೊಳ್ಳುವ ಹಾಗೆ ನೀವು ನನ್ನ ಪಾದಗಳನ್ನು ಎಡವದಂತೆ ಕಾಪಾಡಿದ್ದೀರಿ.
PSA 57:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನು ಸೌಲನ ಭಯದಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ. ದೇವರೇ ನನ್ನನ್ನು ಕರುಣಿಸಿರಿ, ನನ್ನನ್ನು ಕರುಣಿಸಿರಿ. ನನ್ನ ಪ್ರಾಣವು ನಿಮ್ಮನ್ನು ಆಶ್ರಯಿಸಿಕೊಂಡಿದೆ; ಆಪತ್ತುಗಳು ದಾಟುವವರೆಗೂ ನಿಮ್ಮ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
PSA 57:2 ಮಹೋನ್ನತನಾದ ದೇವರಿಗೆ, ಮೊರೆಯಿಡುತ್ತೇನೆ. ನನಗಾಗಿ ಕಾರ್ಯಗಳಿಗೆ ನ್ಯಾಯ ನೀಡುವ ದೇವರಿಗೆ ಮೊರೆಯಿಡುತ್ತೇನೆ.
PSA 57:3 ದೇವರು ಪರಲೋಕದಿಂದ ಸಹಾಯ ಕಳುಹಿಸಿ, ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು.
PSA 57:4 ನಾನು ಸಿಂಹಗಳಂಥವರ ಮಧ್ಯದಲ್ಲಿದ್ದೇನೆ. ಕ್ರೂರಮೃಗಗಳಂಥವರ ಮಧ್ಯದಲ್ಲಿ ಒತ್ತಾಯವಾಗಿ ವಾಸಮಾಡುತ್ತಿದ್ದೇನೆ. ಅವರ ಹಲ್ಲು, ಭಲ್ಲೆ, ಬಾಣಗಳೂ ಅವರ ನಾಲಿಗೆ ಹದವಾದ ಖಡ್ಗವೂ ಆಗಿವೆ.
PSA 57:5 ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
PSA 57:6 ಶತ್ರುಗಳು ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದಿದ್ದಾರೆ. ಅದರಲ್ಲಿ ತಾವೇ ಬಿದ್ದುಹೋದರು.
PSA 57:7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ. ಹೌದು, ನನ್ನ ಹೃದಯವು ಸ್ಥಿರವಾಗಿದೆ. ನಾನು ಸಂಗೀತದೊಡನೆ ಹಾಡುವೆನು.
PSA 57:8 ಎಚ್ಚರವಾಗು, ನನ್ನ ಪ್ರಾಣವೇ, ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯಕಾಲವನ್ನು ಎಚ್ಚರಗೊಳಿಸುವೆನು.
PSA 57:9 ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.
PSA 57:10 ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.
PSA 57:11 ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
PSA 58:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಕೀರ್ತನೆ. ಜನನಾಯಕರೇ, ನೀವು ನ್ಯಾಯವಾಗಿ ತೀರ್ಪನ್ನು ನುಡಿಯುತ್ತೀರೋ? ಜನರಲ್ಲಿ ನೀವು ಯಥಾರ್ಥವಾಗಿ ನ್ಯಾಯತೀರಿಸುವಿರೋ?
PSA 58:2 ಇಲ್ಲಾ, ನಿಮ್ಮ ಹೃದಯದಲ್ಲಿ ದುಷ್ಟತನವನ್ನು ಕಲ್ಪಿಸುತ್ತೀರಲ್ಲಾ, ದೇಶದಲ್ಲಿ ನಿಮ್ಮ ಕೈಗಳಿಂದ ಹಿಂಸಾಚಾರವನ್ನು ತೂಗುತ್ತೀರಲ್ಲಾ.
PSA 58:3 ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ. ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.
PSA 58:4 ಹಾವಿನ ವಿಷದ ಹಾಗೆ ಅವರಲ್ಲಿ ವಿಷ ಇದೆ. ಘಟಸರ್ಪದ ಹಾಗೆ ಮಂದವಾಗಿದ್ದಾರೆ.
PSA 58:5 ಚಮತ್ಕಾರದಿಂದ ಆಕರ್ಷಿಸಿ, ಕೌಶಲ್ಯದಿಂದ ನುಡಿಸುವ ಹಾವಾಡಿಗನ ನಾದವನ್ನು ಕೇಳದ ಹಾವಿನಂತೆ ಇದ್ದಾರೆ.
PSA 58:6 ಓ, ದೇವರೇ, ಅವರ ಹಲ್ಲುಗಳು ಮುರಿದು ಬೀಳಲಿ. ಯೆಹೋವ ದೇವರೇ, ಪ್ರಾಯದ ಸಿಂಹಗಳಂತಿರುವ ಅವರ ಕೋರೆಹಲ್ಲುಗಳು ನಾಶವಾಗಲಿ.
PSA 58:7 ಅವರು ನೀರಿನಂತೆ ಕರಗಿಹೋಗಲಿ. ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.
PSA 58:8 ಕರಗುವ ಗೊಂಡೆ ಹುಳದಂತೆ ಅವರು ನಾಶವಾಗಲಿ. ದಿನತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ಕಾಣದಿರಲಿ.
PSA 58:9 ಗಡಿಗೆಗಳು ಮುಳ್ಳಿನ ಬೆಂಕಿಯ ಶಾಖವನ್ನು ಇನ್ನೂ ಹಸಿಯಾಗಿ ಇಲ್ಲವೆ ಒಣಗಿರುವಾಗಲೇ, ಬಿರುಗಾಳಿ ಹಾರಿಸಿಬಿಡುವಂತೆ ಅವರಿಗೆ ಆಗಲಿ.
PSA 58:10 ನೀತಿವಂತರು ದುಷ್ಟರಿಗಾಗುವ ಪ್ರತಿದಂಡನೆಯನ್ನು ಕಂಡು ಹಿಗ್ಗಿ ತಮ್ಮ ಪಾದಗಳನ್ನು ದುಷ್ಟನ ರಕ್ತದ ಮೇಲಿಡಲಿ.
PSA 58:11 ಆಗ ಜನರು ಹೀಗೆ ಹೇಳಿಕೊಳ್ಳುವರು, “ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ. ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”
PSA 59:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ಸೌಲನು ಕಳುಹಿಸಿದವರು ದಾವೀದನ ಜೀವ ತೆಗೆಯಬೇಕೆಂದು ಅವನ ಮನೆಯ ಸುತ್ತಲೂ ಒಳಸಂಚುಮಾಡಿದಾಗ ಅವನು ರಚಿಸಿದ ಕಾವ್ಯ. ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ. ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸಿರಿ
PSA 59:2 ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ. ಕೊಲೆಪಾತಕರಿಂದ ನನ್ನನ್ನು ರಕ್ಷಿಸಿರಿ.
PSA 59:3 ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ.
PSA 59:4 ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.
PSA 59:5 ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.
PSA 59:6 ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
PSA 59:7 ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ. ಅವರ ತುಟಿಗಳಲ್ಲಿ ಖಡ್ಗಗಳು ಇವೆ. ಅವರು, “ನಮ್ಮನ್ನು ಕೇಳುವವರು ಯಾರು?” ಎಂದು ಅಂದುಕೊಳ್ಳುತ್ತಾರೆ.
PSA 59:8 ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ. ಇತರ ಜನಾಂಗವೆಲ್ಲ ಅಪಹಾಸ್ಯಕ್ಕಿಡಾಗಲಿ.
PSA 59:9 ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು. ನನ್ನ ದೇವರೇ, ನೀವು ನನ್ನ ಕೋಟೆಯಾಗಿರುವಿರಿ.
PSA 59:10 ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.
PSA 59:11 ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ, ನನ್ನ ಜನರು ಮರೆಯದ ಹಾಗೆ ಅವರು ಉಳಿದಿರಲಿ. ನಿಮ್ಮ ಪರಾಕ್ರಮದಿಂದ ಅವರನ್ನು ದಂಡಿಸಿರಿ.
PSA 59:12 ಅವರ ಬಾಯಿಯ ಪಾಪಕ್ಕೂ, ಅವರ ತುಟಿಗಳ ಮಾತಿಗೂ, ಅವರು ನುಡಿಯುವ ಶಾಪಕ್ಕೂ ಅವರ ಗರ್ವವೇ ಅವರನ್ನು ಹಿಡಿಯಲಿ.
PSA 59:13 ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.
PSA 59:14 ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
PSA 59:15 ಅವರು ಆಹಾರಕ್ಕಾಗಿ ಅಲೆದಾಡುವರು. ತೃಪ್ತಿಯಾಗದಿದ್ದರೆ ಗೊಣಗುಟ್ಟುವರು.
PSA 59:16 ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು. ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು. ಏಕೆಂದರೆ ನೀವು ನನಗೆ ಭದ್ರಕೋಟೆಯೂ, ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.
PSA 59:17 ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು. ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ. ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.
PSA 60:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಷೂಷನ್ ಎದೂತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ಪರಾಜಿತರು ದೈವೋತ್ತರವನ್ನು ಆಧಾರಮಾಡಿಕೊಂಡು ಪ್ರಾರ್ಥಿಸುವುದು. ಯೋವಾಬನು ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕೀರ್ತನೆ. ದೇವರೇ, ನನ್ನನ್ನು ಕೈಬಿಟ್ಟಿದ್ದೀರಾ? ನನ್ನನ್ನು ಚದರಿಸಿದ್ದೀರಾ? ನಮ್ಮ ಕಡೆಗೆ ಬೇಸರಗೊಂಡರೂ ನಮ್ಮನ್ನು ಪುನಃ ಸ್ಥಾಪಿಸಿರಿ.
PSA 60:2 ದೇಶವು ಕಂಪನಗೊಂಡು ಒಡೆದುಹೋಗಿದೆ. ಅದರ ಬಿರುಕುಗಳನ್ನು ಸ್ವಸ್ಥಮಾಡಿರಿ, ಅದು ನಡುಗುತ್ತಿದೆ.
PSA 60:3 ನಿಮ್ಮ ಜನರಿಗೆ ಕಠಿಣ ಕಾಲಗಳನ್ನು ನೀವು ತೋರಿಸಿದ್ದೀರಿ. ನಾವು ಭ್ರಮಣಗೊಳಿಸುವ ದ್ರಾಕ್ಷಾರಸವನ್ನು ಕುಡಿದವರಂತೆ ಆದೆವು.
PSA 60:4 ನಿಮ್ಮ ಭಕ್ತರಿಗೆ ಧ್ವಜವನ್ನು ನಿಲ್ಲಿಸಿದ್ದೀರಿ. ಶತ್ರುಗಳ ಬಿಲ್ಲಿನ ವಿರುದ್ಧ ಹಾರಿಸಬಹುದಾದ ಧ್ವಜವನ್ನೇ ನೀಡಿದ್ದೀರಿ.
PSA 60:5 ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
PSA 60:6 ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
PSA 60:7 ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
PSA 60:8 ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
PSA 60:9 ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
PSA 60:10 ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
PSA 60:11 ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
PSA 60:12 ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.
PSA 61:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ. ದೇವರೇ, ನನ್ನ ಮೊರೆಯನ್ನು ಕೇಳಿರಿ. ನನ್ನ ಪ್ರಾರ್ಥನೆಯನ್ನು ಆಲಿಸಿರಿ.
PSA 61:2 ನನ್ನ ಹೃದಯವು ಕುಂದಿ ಹೋಗಿರಲಾಗಿ ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು. ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ.
PSA 61:3 ನೀವೇ ನನಗೆ ಆಶ್ರಯವಾಗಿದ್ದೀರಿ. ಶತ್ರುವಿಗೆ ಎದುರಾಗಿ ಬಲವಾದ ಬುರುಜಾಗಿದ್ದೀರಿ.
PSA 61:4 ನಿಮ್ಮ ಗುಡಾರದಲ್ಲಿ ನಿತ್ಯವಾಗಿ ನಿವಾಸಿಸಲು ಹಾರೈಸುತ್ತಿದ್ದೇನೆ. ನಿಮ್ಮ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
PSA 61:5 ದೇವರೇ, ನೀವು ನನ್ನ ಹರಕೆಗಳನ್ನು ಕೇಳಿದ್ದೀರಿ. ನಿಮ್ಮ ಹೆಸರಿಗೆ ಭಯಪಡುವವರಿಗೆ ಕೊಡುವ ಸೊತ್ತನ್ನು ನನಗೂ ಕೊಟ್ಟಿದ್ದೀರಿ.
PSA 61:6 ಅರಸನ ಜೀವನದ ದಿನಗಳನ್ನು ಹೆಚ್ಚಿಸಿರಿ. ಆತನ ವರ್ಷಗಳನ್ನು ತಲತಲಾಂತರಗಳವರೆಗೆ ವೃದ್ಧಿಪಡಿಸಿರಿ.
PSA 61:7 ಆತನು ಎಂದೆಂದಿಗೂ ದೇವರ ಮುಂದೆ ಆಳಿಕೆಮಾಡಲಿ. ಆತನನ್ನು ಕಾಯುವ ಹಾಗೆ ನಿಮ್ಮ ಪ್ರೀತಿ, ಸತ್ಯವನ್ನು ನೇಮಿಸಿರಿ.
PSA 61:8 ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು. ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು.
PSA 62:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ. ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ, ನನ್ನ ರಕ್ಷಣೆಯು ದೇವರಿಂದಲೇ.
PSA 62:2 ದೇವರು ಮಾತ್ರವೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
PSA 62:3 ಹಾನಿಮಾಡುವವರೇ, ಎಷ್ಟರವರೆಗೆ ನೀವು ದಾಳಿಮಾಡುವಿರಿ. ಬಾಗುವ ಗೋಡೆಯಂತೆಯೂ, ಅಲ್ಲಾಡುವ ಬೇಲಿಯಂತೆಯೂ ನನ್ನನ್ನು ಕೆಡವಲು ಯತ್ನಿಸುವಿರಾ?
PSA 62:4 ಅವರು ನನ್ನನ್ನು ಉನ್ನತ ಸ್ಥಾನದಿಂದ ದಬ್ಬುವುದಕ್ಕೆ ಆಲೋಚಿಸುತ್ತಿದ್ದಾರೆ. ಅವರು ಸುಳ್ಳನ್ನು ಇಷ್ಟಪಡುತ್ತಾರೆ; ತಮ್ಮ ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುತ್ತಾರೆ.
PSA 62:5 ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ. ನನ್ನ ನಿರೀಕ್ಷೆಯು ದೇವರಿಂದಲೇ.
PSA 62:6 ದೇವರೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
PSA 62:7 ದೇವರು ನನ್ನ ರಕ್ಷಣೆಗೂ ನನ್ನ ಗೌರವಕ್ಕೂ ಆಧಾರವಾಗಿದ್ದಾರೆ. ದೇವರು ನನ್ನ ಬಲವಾದ ಬಂಡೆಯೂ ನನ್ನ ಆಶ್ರಯವೂ ಆಗಿದ್ದಾರೆ.
PSA 62:8 ಜನರೇ, ಎಲ್ಲಾ ಕಾಲದಲ್ಲಿಯೂ ದೇವರಲ್ಲಿ ಭರವಸೆ ಇಡಿರಿ. ನಿಮ್ಮ ಹೃದಯವನ್ನು ದೇವರ ಮುಂದೆ ಒಯ್ಯಿರಿ. ದೇವರು ನಮಗೆ ಆಶ್ರಯವಾಗಿದ್ದಾರೆ.
PSA 62:9 ಸಾಮಾನ್ಯ ಜನರು ಬರೀ ಉಸಿರೇ, ಉನ್ನತ ಜನರು ಬರೀ ಸುಳ್ಳೇ. ತಕ್ಕಡಿಯಲ್ಲಿ ತೂಗಿದರೆ ಅವರೇನೂ ಇಲ್ಲ, ಎಲ್ಲರೂ ಬರೀ ಉಸಿರೇ.
PSA 62:10 ಅನ್ಯಾಯದ ಸುಲಿಗೆಯಲ್ಲಿ ಭರವಸೆ ಇಡಬೇಡಿರಿ. ಸೂರೆಮಾಡಿದ್ದರಲ್ಲಿ ಗರ್ವಪಡಬೇಡಿರಿ. ಆಸ್ತಿಯು ಹೆಚ್ಚಾದರೆ ಅದರ ಮೇಲೆ ಮನಸ್ಸಿಡಬೇಡಿರಿ.
PSA 62:11 ಒಂದು ಸಾರಿ ದೇವರು ಮಾತನಾಡಿದ್ದಾರೆ. ನಾನು ಎರಡು ಸಾರಿ ಇದನ್ನು ಹೀಗೆಂದು ಕೇಳಿದ್ದೇನೆ: “ದೇವರೇ, ಶಕ್ತಿಯು ನಿಮಗೇ ಸೇರಿದೆ.
PSA 62:12 ಯೆಹೋವ ದೇವರೇ, ನಿಮ್ಮಲ್ಲಿ ಒಡಂಬಡಿಕೆಯ ಪ್ರೀತಿ ಇದೆ. ನೀವು ಪ್ರತಿ ಮನುಷ್ಯನಿಗೂ ಅವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುತ್ತೀರಿ.”
PSA 63:1 ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ.
PSA 63:2 ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ.
PSA 63:3 ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.
PSA 63:4 ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು.
PSA 63:5 ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು.
PSA 63:6 ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು.
PSA 63:7 ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು.
PSA 63:8 ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.
PSA 63:9 ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.
PSA 63:10 ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು.
PSA 63:11 ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.
PSA 64:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ. ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ.
PSA 64:2 ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ, ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ.
PSA 64:3 ಅವರು ತಮ್ಮ ನಾಲಿಗೆಯನ್ನು ಖಡ್ಗದಂತೆ ಮಸೆಯುತ್ತಾರೆ.
PSA 64:4 ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ. ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ.
PSA 64:5 ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ. ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ, “ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ.
PSA 64:6 ಅವರು ಅನ್ಯಾಯಗಳನ್ನು ಕಲ್ಪಿಸಿ, “ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ. ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ.
PSA 64:7 ಆದರೆ ದೇವರು ಅವರ ಬಾಣದಿಂದಲೇ, ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು.
PSA 64:8 ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ ಬೀಳುವಂತೆ ಮಾಡಿಕೊಳ್ಳುವರು. ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು.
PSA 64:9 ಎಲ್ಲಾ ಮನುಷ್ಯರೂ ಭಯಪಟ್ಟು ದೇವರ ಕಾರ್ಯಗಳನ್ನು ಸಾರುವರು. ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು.
PSA 64:10 ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು ದೇವರನ್ನೇ ಆಶ್ರಯಿಸಿಕೊಳ್ಳುವರು. ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು.
PSA 65:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಒಂದು ಗೀತೆ. ದೇವರೇ, ಚೀಯೋನಿನಲ್ಲಿ ನಿಮಗೋಸ್ಕರ ಸ್ತೋತ್ರವು ಕಾದಿದೆ. ನಿಮಗೆ ನಮ್ಮ ಹರಕೆಗಳನ್ನು ಪೂರೈಸುವೆವು.
PSA 65:2 ಪ್ರಾರ್ಥನೆಯನ್ನು ಕೇಳುವವರೇ, ಎಲ್ಲಾ ಜನರು ನಿಮ್ಮ ಬಳಿಗೆ ಬರುವರು.
PSA 65:3 ನಾವು ನಮ್ಮ ಪಾಪಗಳಿಂದ ತುಂಬಿಹೋಗಿರುವಾಗ ನೀವೇ ನಮ್ಮ ದ್ರೋಹಗಳಿಗಾಗಿ ದೋಷಪರಿಹಾರಕರು.
PSA 65:4 ನೀವು ಆಯ್ದುಕೊಂಡು ನಿಮ್ಮ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು. ಏಕೆಂದರೆ ನಿಮ್ಮ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿಮ್ಮ ಪರಿಶುದ್ಧ ಮಂದಿರವಾದ ನಿಮ್ಮ ಆಲಯದ ಒಳ್ಳೆಯ ಸಂಗತಿಗಳಿಂದ ನಮಗೆ ತೃಪ್ತಿಯಾಗಲಿ.
PSA 65:5 ಅತಿಶಯ ಹಾಗು ನೀತಿಯ ಕೃತ್ಯಗಳನ್ನು ನಡೆಸಿ, ನೀವು ನಮಗೆ ಉತ್ತರ ಕೊಡುವಿರಿ. ನಮ್ಮ ರಕ್ಷಣೆಯ ದೇವರೇ, ಭೂಮಿಯಲ್ಲಿರುವವರಿಗೂ, ಸಮುದ್ರದ ಆಚೆ ದೂರವಾಗಿರುವವರಿಗೂ ನೀವು ಭರವಸೆಯಾಗಿದ್ದೀರಿ.
PSA 65:6 ಬೆಟ್ಟಗಳನ್ನು ನಿಮ್ಮ ಶಕ್ತಿಯಿಂದ ರೂಪಿಸಿದವರು ನೀವೇ. ಜಲದಿಂದ ನಡು ಕಟ್ಟಿಕೊಂಡಿರುವವರೂ ನೀವೇ.
PSA 65:7 ಸಮುದ್ರಗಳ ಘೋಷವನ್ನೂ, ಅವುಗಳ ತೆರೆಗಳ ಘೋಷವನ್ನೂ, ಪ್ರಜೆಗಳ ಕೋಲಾಹಲವನ್ನೂ ಶಮನಗೊಳಿಸುವವರು ನೀವೇ.
PSA 65:8 ಇಡೀ ಭೂಮಿಯಲ್ಲಿರುವವರು ನಿಮ್ಮ ಅದ್ಭುತಕಾರ್ಯಗಳಿಗೆ ಅತಿಶಯಗೊಂಡಿದ್ದಾರೆ. ಉದಯಾಸ್ತಮಾನಗಳಲ್ಲಿ ಇರುವವರನ್ನು ಉತ್ಸಾಹ ಧ್ವನಿಗೈಯುವಂತೆ ಮಾಡುತ್ತೀರಿ.
PSA 65:9 ಭೂಮಿಯನ್ನು ಸಂಧಿಸಿ, ಅದಕ್ಕೆ ಮಳೆಬರುವಂತೆ, ಅದನ್ನು ಫಲವತ್ತಾಗಿ ಮಾಡುತ್ತೀರಿ. ದೇವರ ನದಿಯು ನೀರಿನಿಂದ ತುಂಬಿದೆ. ಹೀಗೆ ಭೂಮಿಯನ್ನು ಸಿದ್ಧಮಾಡಿ, ಜನರಿಗೆ ನೀವು ಧಾನ್ಯವನ್ನು ಒದಗಿಸುತ್ತೀರಿ.
PSA 65:10 ನೇಗಿಲ ಸಾಲುಗಳನ್ನು ಸಮಮಾಡುತ್ತೀರಿ. ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀರಿ, ಅದರ ಮೊಳಕೆಯನ್ನು ಆಶೀರ್ವದಿಸುತ್ತೀರಿ.
PSA 65:11 ವರ್ಷಕ್ಕೆ ನಿಮ್ಮ ಉದಾರತೆಯ ಕಿರೀಟವನ್ನು ಇಡುತ್ತೀರಿ. ನಿಮ್ಮ ಹಾದಿಗಳು ಸಮೃದ್ಧಿಯಿಂದ ತುಂಬಿ ಪ್ರವಾಹಿಸುತ್ತಿದೆ.
PSA 65:12 ಮರುಭೂಮಿಯ ಹುಲ್ಲುಗಾವಲಲ್ಲಿ ವೃಷ್ಟಿಯಾಗಿದೆ. ಗುಡ್ಡಗಳು ಉಲ್ಲಾಸವನ್ನು ಧರಿಸಿಕೊಂಡಿವೆ.
PSA 65:13 ಹುಲ್ಲುಗಾವಲುಗಳು ಮಂದೆಗಳಿಂದ ಹೊದಿಕೆಯಾಗಿವೆ. ಕಣಿವೆಗಳು ಸಹ ಧಾನ್ಯದಿಂದ ಮುಚ್ಚಿರುತ್ತವೆ. ಅವು ಉತ್ಸಾಹಗೊಂಡು ಹಾಡುತ್ತವೆ.
PSA 66:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಒಂದು ಗೀತೆ. ಒಂದು ಕೀರ್ತನೆ. ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹಧ್ವನಿ ಮಾಡಿರಿ.
PSA 66:2 ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
PSA 66:3 ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.
PSA 66:4 ಭೂಮಿಯೆಲ್ಲಾ ನಿಮ್ಮನ್ನು ಆರಾಧಿಸುವುದು. ನಿಮ್ಮನ್ನು ಕೀರ್ತಿಸುತ್ತಾ ಲೋಕವು ನಿಮ್ಮ ನಾಮವನ್ನು ಕೀರ್ತಿಸುತ್ತಿರುವುದು,” ಎಂದು ಹೇಳಿರಿ.
PSA 66:5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಮಾನವರ ಪರವಾಗಿ ಮಾಡಿರುವ ದೇವರ ಕಾರ್ಯಗಳು ಅತಿಶಯವಾಗಿವೆ.
PSA 66:6 ದೇವರು ಸಮುದ್ರವನ್ನು ಒಣ ಭೂಮಿಯನ್ನಾಗಿ ಮಾಡಿದರು. ಜನರು ಕಾಲಿನಿಂದ ನದಿಯನ್ನು ದಾಟಿದರು. ಬನ್ನಿರಿ, ದೇವರಲ್ಲಿ ಆನಂದಿಸೋಣ.
PSA 66:7 ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.
PSA 66:8 ಸಮಸ್ತ ಜನರೇ, ನೀವು ನಮ್ಮ ದೇವರನ್ನು ಸ್ತುತಿಸಿರಿ. ದೇವರನ್ನು ಸ್ತುತಿಸುವ ಶಬ್ದವು ಕೇಳಿಸಲಿ.
PSA 66:9 ದೇವರು ನಮ್ಮ ಜೀವನವನ್ನು ಕಾಪಾಡಿ, ನಮ್ಮ ಕಾಲು ಎಡವದಂತೆ ಮಾಡಿದ್ದಾರೆ.
PSA 66:10 ದೇವರೇ, ನೀವು ನಮ್ಮನ್ನು ಪರಿಶೋಧಿಸಿದ್ದೀರಿ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶುದ್ಧೀಕರಿಸಿದ್ದೀರಿ.
PSA 66:11 ನೀವು ಬಲೆಯೊಳಗೆ ನಮ್ಮನ್ನು ಸಿಕ್ಕಿಸಿದ್ದೀರಿ. ನಮ್ಮ ಬೆನ್ನಿನ ಮೇಲೆ ಭಾರವನ್ನು ಹೊರಿಸಿದ್ದೀರಿ.
PSA 66:12 ಮನುಷ್ಯರು ನಮ್ಮ ತಲೆ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀರಿ. ನಾವು ಬೆಂಕಿಯನ್ನೂ ನೀರನ್ನೂ ದಾಟುವಂತೆ ಮಾಡಿದ್ದೀರಿ. ಆದರೆ ನೀವು ನಮ್ಮನ್ನು ಸಮೃದ್ಧಿಯ ಸ್ಥಳದೊಳಗೆ ಬರಮಾಡಿದ್ದೀರಿ.
PSA 66:13 ನಾನು ದಹನಬಲಿಯೊಂದಿಗೆ ನಿಮ್ಮ ಆಲಯಕ್ಕೆ ಬರುವೆನು.
PSA 66:14 ನನ್ನ ಇಕ್ಕಟ್ಟಿನಲ್ಲಿ ತುಟಿ ಬಿಚ್ಚಿ ನನ್ನ ಬಾಯಿಂದ ನುಡಿದ ನನ್ನ ಹರಕೆಗಳನ್ನು ನಾನು ನಿಮಗೆ ಸಲ್ಲಿಸುವೆನು.
PSA 66:15 ಕೊಬ್ಬಿದ ದಹನಬಲಿಗಳನ್ನು ಕಾಣಿಕೆಯಾಗಿ ಟಗರುಗಳನ್ನು; ಹೋತ ಹೋರಿಗಳ ಯಜ್ಞವನ್ನು ಅರ್ಪಿಸುವೆನು.
PSA 66:16 ಸಮಸ್ತ ದೇವಭಕ್ತರೇ, ಬಂದು ಕೇಳಿರಿ. ದೇವರು ನನಗೆ ಮಾಡಿದ್ದನ್ನು ನಾನು ನಿಮಗೆ ತಿಳಿಸುವೆನು.
PSA 66:17 ನನ್ನ ದೇವರಿಗೆ ಮೊರೆಯಿಟ್ಟೆನು, ನನ್ನ ನಾಲಿಗೆಯಲ್ಲಿ ದೇವರ ಸ್ತೋತ್ರವಿತ್ತು.
PSA 66:18 ಪಾಪವನ್ನು ನಾನು ನನ್ನ ಹೃದಯದಲ್ಲಿ ಬೆಳೆಸಿಕೊಂಡಿದ್ದರೆ, ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಕೇಳುತ್ತಿರಲಿಲ್ಲ.
PSA 66:19 ಆದರೆ ಈಗ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾರೆ.
PSA 66:20 ನನ್ನ ಪ್ರಾರ್ಥನೆಯನ್ನು ತಿರಸ್ಕರಿಸದ ದೇವರಿಗೆ ಸ್ತೋತ್ರವಾಗಲಿ. ತಮ್ಮ ಪ್ರೀತಿಯನ್ನು ನನ್ನಿಂದ ತೊಲಗಿಸದೆ ಇರುವೆ. ದೇವರಿಗೆ ಸ್ತೋತ್ರವಾಗಲಿ.
PSA 67:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕ ಕೀರ್ತನೆ, ಒಂದು ಗೀತೆ. ದೇವರು ನಮ್ಮ ಮೇಲೆ ಕರುಣೆಯಿಟ್ಟು, ನಮ್ಮನ್ನು ಆಶೀರ್ವದಿಸಲಿ. ದೇವರು ತಮ್ಮ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ.
PSA 67:2 ಆಗ ದೇವರೇ, ನಿಮ್ಮ ಮಾರ್ಗಗಳು ಭೂಮಿಯಲ್ಲಿ ಗೊತ್ತಾಗುವುದು. ನಿಮ್ಮ ರಕ್ಷಣೆಯು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು.
PSA 67:3 ದೇವರೇ, ಜನರು ನಿಮ್ಮನ್ನು ಕೊಂಡಾಡಲಿ, ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.
PSA 67:4 ಜನಾಂಗಗಳು ಸಂತೋಷಪಟ್ಟು ಉತ್ಸಾಹದಿಂದ ಹಾಡಲಿ. ಏಕೆಂದರೆ ನೀವು ಜನರನ್ನು ನೀತಿಯಿಂದ ನ್ಯಾಯತೀರಿಸಿ, ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀರಿ.
PSA 67:5 ದೇವರೇ, ಜನರು ನಿಮ್ಮನ್ನು ಕೊಂಡಾಡಲಿ. ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.
PSA 67:6 ಭೂಮಿಯು ತನ್ನ ಬೆಳೆಯನ್ನು ಕೊಡುವುದು. ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವರು.
PSA 67:7 ದೇವರು ನಮ್ಮನ್ನು ಆಶೀರ್ವದಿಸುವರು. ಭೂಮಿಯಲ್ಲಿರುವ ಎಲ್ಲರೂ ದೇವರಲ್ಲಿ ಭಯಭಕ್ತಿಯುಳ್ಳವರಾಗಿರುವರು.
PSA 68:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಒಂದು ಗೀತೆ. ದೇವರು ಕ್ರಿಯಾಶೀಲರಾಗಲಿ. ಅವರ ಶತ್ರುಗಳು ಚದರಿಹೋಗಲಿ. ದೇವರನ್ನು ವಿರೋಧಿಸುವವರು ಅವರ ಸಮ್ಮುಖದಿಂದ ಓಡಿಹೋಗಲಿ.
PSA 68:2 ಗಾಳಿಯಿಂದ ಹೊಗೆ ಹಾರಿಹೋಗುವಂತೆ ಅವರು ಹಾರಿಹೋಗಲಿ. ಮೇಣವು ಬೆಂಕಿಯ ಮುಂದೆ ಕರಗುವಂತೆ, ದುಷ್ಟರು ದೇವರ ಮುಂದೆ ನಾಶವಾಗಲಿ.
PSA 68:3 ಆದರೆ ನೀತಿವಂತರು ಸಂತೋಷಿಸಲಿ. ದೇವರ ಮುಂದೆ ಉಲ್ಲಾಸಪಡಲಿ. ಹೌದು, ಅವರು ಹರ್ಷಾನಂದರಾಗಲಿ.
PSA 68:4 ದೇವರಿಗೆ ಹಾಡಿರಿ, ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ. ಮೇಘಾರೂಢರಾಗಿರುವ ದೇವರನ್ನು ಕೊಂಡಾಡಿರಿ. ಅವರ ಹೆಸರು ಯೆಹೋವ ದೇವರು, ಅವರ ಮುಂದೆ ಉಲ್ಲಾಸಪಡಿರಿ.
PSA 68:5 ದೇವರು ತಮ್ಮ ಪರಿಶುದ್ಧ ಸ್ಥಳದಲ್ಲಿ ದಿಕ್ಕಿಲ್ಲದವರಿಗೆ ತಂದೆ, ವಿಧವೆಯರಿಗೆ ರಕ್ಷಕರಾಗಿದ್ದಾರೆ.
PSA 68:6 ದೇವರು ಒಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾರೆ. ಸೆರೆಯವರನ್ನು ಹರ್ಷಗೊಳಿಸಿ ಬಿಡುಗಡೆ ಮಾಡುತ್ತಾರೆ. ಆದರೆ ಎದುರು ಬೀಳುವವರು ಒಣಭೂಮಿಯಲ್ಲಿ ವಾಸಿಸುತ್ತಾರೆ.
PSA 68:7 ದೇವರೇ, ನೀವು ನಿಮ್ಮ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ,
PSA 68:8 ಭೂಮಿಯು ಕದಲಿತು, ಆಕಾಶಗಳು ಸಹ ನಿಮ್ಮ ಮುಂದೆ ಮಳೆಗರೆದವು. ಇಸ್ರಾಯೇಲರ ದೇವರ ಮುಂದೆ, ಹೌದು, ದೇವರ ಮುಂದೆಯೇ ಸೀನಾಯಿ ಸಹ ಕದಲಿತು.
PSA 68:9 ದೇವರೇ, ನೀವು ಹೇರಳವಾಗಿ ಮಳೆಯನ್ನು ಸುರಿಸಿ, ದಣಿದ ನಿಮ್ಮ ಬಾಧ್ಯತೆಯನ್ನು ನೀವು ಉತ್ಸಾಹಪಡಿಸಿದಿರಿ.
PSA 68:10 ನಿಮ್ಮ ಪ್ರಜೆಗಳು ಅದರಲ್ಲಿ ವಾಸಮಾಡಿದರು. ದೇವರೇ, ನಿಮ್ಮ ಒಳ್ಳೆಯತನದಿಂದ ಬಡವರಿಗೋಸ್ಕರ ಒದಗಿಸಿದ್ದೀರಿ.
PSA 68:11 ಯೆಹೋವ ದೇವರು ವಾಕ್ಯವನ್ನು ಕೊಟ್ಟರು. ಆ ವಾಕ್ಯವನ್ನು ಹೀಗೆಂದು ಪ್ರಕಟಿಸಿದ ಮಹಿಳೆಯರ ಗುಂಪು ದೊಡ್ಡದಾಗಿತ್ತು:
PSA 68:12 “ಸೈನ್ಯದೊಡನೆ ಅರಸರು ಓಡಿಹೋದರು. ಪಾಳೆಯದಲ್ಲಿರುವ ಮಹಿಳೆಯರು ಕೊಳ್ಳೆಯನ್ನು ಹಂಚಿಕೊಳ್ಳುವರು.
PSA 68:13 ನೀವು ಪಾಳೆಯದ ಬೆಂಕಿಯ ಬಳಿ ಮಲಗಿದರೂ, ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಹೊಳೆಯುವಂತಿರುವಿರಿ.”
PSA 68:14 ಸರ್ವಶಕ್ತರಾದ ದೇವರು ಅರಸರನ್ನು ಅಲ್ಲಿ ಚದರಿಸಿದಾಗ ಸಲ್ಮೋನಿನಲ್ಲಿ ಬಿಳೀ ಹಿಮ ಬಿದ್ದಂತಿತ್ತು.
PSA 68:15 ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
PSA 68:16 ಉನ್ನತ ಬೆಟ್ಟಗಳೇ, ಏಕೆ ಕುಣಿಯುತ್ತೀರಿ? ದೇವರು ನಿವಾಸಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಯೆಹೋವ ದೇವರು ಅದರಲ್ಲಿ ಸದಾಕಾಲವೂ ವಾಸಿಸುವರು.
PSA 68:17 ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತ ಆಗಿರುವ ಯೆಹೋವ ದೇವರು ಅವುಗಳ ಸಮೇತವಾಗಿ ಸೀನಾಯಿ ಬೆಟ್ಟದಲ್ಲಿದ್ದ ಹಾಗೆ ಪವಿತ್ರಾಲಯದಲ್ಲಿದ್ದಾರೆ.
PSA 68:18 ನೀವು ಅನೇಕ ಸೆರೆಯವರ ಹಿಡಿದುಕೊಂಡು ಉನ್ನತಕ್ಕೆ ಹೋದಾಗ, ಯೆಹೋವ ದೇವರು ತಿರುಗಿಬೀಳುವವರ ಮಧ್ಯದಲ್ಲಿ ಸಹ ನಿವಾಸಿಸುವಂತೆ ಆ ತಿರುಗಿಬಿದ್ದ ಮನುಷ್ಯರಿಂದ ದಾನಗಳನ್ನು ಅಂಗೀಕರಿಸಿದ್ದೀರಿ.
PSA 68:19 ಪ್ರತಿದಿನವೂ ನಮ್ಮ ಭಾರವನ್ನು ಹೊರುವ ಕರ್ತದೇವರಿಗೆ ಸ್ತೋತ್ರ. ನಮ್ಮನ್ನು ರಕ್ಷಿಸುವ ದೇವರು ಸ್ತುತಿಹೊಂದಲಿ.
PSA 68:20 ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾರೆ. ಸಾರ್ವಭೌಮ ಯೆಹೋವ ದೇವರು ಮರಣದಿಂದ ಬಿಡುಗಡೆ ಮಾಡುತ್ತಾರೆ.
PSA 68:21 ದೇವರು ತಮ್ಮ ಶತ್ರುಗಳ ತಲೆಯನ್ನೂ, ತನ್ನ ಅಪರಾಧಗಳಲ್ಲಿ ಇನ್ನೂ ಮುಂದುವರಿಯುವವರ ಕೂದಲುಳ್ಳ ಮಂಡೆಯನ್ನೂ ಗಾಯಮಾಡುವರು.
PSA 68:22 ಯೆಹೋವ ದೇವರು ಹೀಗೆ ಹೇಳುತ್ತಾರೆ, “ಬಾಷಾನಿನಿಂದ ಅವರನ್ನು ತಿರುಗಿ ಬರಮಾಡುವೆನು; ಸಮುದ್ರದ ಅಗಾಧಗಳಿಂದ ಜನರನ್ನು ತಿರುಗಿ ಬರಮಾಡುವೆನು.
PSA 68:23 ಆಗ ನಿಮ್ಮ ಪಾದಗಳು ನಿಮ್ಮ ವೈರಿಗಳ ರಕ್ತದ ಮೇಲಿರಲಿ. ನಾಯಿಗಳು ಅದನ್ನು ನೆಕ್ಕಲಿ.”
PSA 68:24 ದೇವರೇ, ನಿಮ್ಮ ಮೆರವಣಿಗೆಯು ಪ್ರಕಟವಾಗಿದೆ. ನನ್ನ ಅರಸರಾಗಿರುವ ದೇವರ ಮೆರವಣಿಗೆಯು ಪರಿಶುದ್ಧ ಸ್ಥಳವನ್ನು ಪ್ರವೇಶಿಸುವುದು.
PSA 68:25 ಹಾಡುವವರು ಮುಂದಾಗಿಯೂ, ಬಾರಿಸುವವರು ಹಿಂದಾಗಿಯೂ, ದಮ್ಮಡಿ ಬಡಿಯುವ ಕನ್ಯೆಯರು ಮಧ್ಯದಲ್ಲಿಯೂ ಹಿಂಬಾಲಿಸುವರು.
PSA 68:26 ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.
PSA 68:27 ಬೆನ್ಯಾಮೀನನ ಚಿಕ್ಕ ಗೋತ್ರವು ಅವರನ್ನು ನಡೆಸುವುದು. ಯೆಹೂದದ ಪ್ರಧಾನರೂ, ಜೆಬುಲೂನನ ಪ್ರಧಾನರೂ ನಫ್ತಾಲಿಯ ಪ್ರಧಾನರೂ ಅಲ್ಲಿ ಇದ್ದಾರೆ.
PSA 68:28 ದೇವರೇ, ನಿಮ್ಮ ಶಕ್ತಿಯನ್ನು ಪ್ರಕಟಿಸಿರಿ, ಮೊದಲು ಮಾಡಿದಂತೆಯೇ ಈಗಲೂ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ.
PSA 68:29 ಯೆರೂಸಲೇಮಿನ ನಿಮ್ಮ ಮಂದಿರದ ನಿಮಿತ್ತ ಅರಸರು ನಿಮಗೆ ಕಾಣಿಕೆಗಳನ್ನು ಸಮರ್ಪಿಸಲಿ.
PSA 68:30 ಆಪು ಹುಲ್ಲಿನ ಮಧ್ಯದಲ್ಲಿರುವ ಕಾಡುಮೃಗಗಳ ಹಾಗೆಯೂ ಕರುಗಳ ಮಧ್ಯದಲ್ಲಿರುವ ಹೋರಿಗಳ ಹಾಗೆಯೂ ಇರುವ ಜನಾಂಗವನ್ನು ಗದರಿಸಿರಿ. ಮೃಗದಂಥವರು ತಗ್ಗಿಸಿಕೊಂಡು ಬೆಳ್ಳಿ ಗಟ್ಟಿಗಳನ್ನು ನಿಮಗೆ ತರಲಿ. ಆದರೆ ಯುದ್ಧದಲ್ಲಿ ಆನಂದಿಸುವ ರಾಷ್ಟ್ರಗಳನ್ನು ಚದರಿಸಿರಿ.
PSA 68:31 ಈಜಿಪ್ಟಿನಿಂದ ರಾಯಭಾರಿಗಳು ಬರುವರು. ಕೂಷ್ ದೇಶದವರು ತಾವಾಗಿಯೇ ಬಂದು ದೇವರಿಗೆ ಅಧೀನವಾಗುವರು.
PSA 68:32 ಭೂಮಿಯ ರಾಜ್ಯಗಳೇ, ದೇವರಿಗೆ ಹಾಡಿರಿ. ಯೆಹೋವ ದೇವರನ್ನು ಕೀರ್ತಿಸಿರಿ.
PSA 68:33 ಪೂರ್ವದ ಆಕಾಶಗಳಲ್ಲಿ ಸವಾರಿ ಮಾಡುವ ದೇವರಿಗೆ ಹಾಡಿರಿ. ದೇವರ ಸ್ವರವು ಗುಡುಗಿನಂತೆ ಇರುವುದು.
PSA 68:34 ದೇವರ ಶಕ್ತಿಯನ್ನು ಘೋಷಿಸಿರಿ. ಇಸ್ರಾಯೇಲರ ಮೇಲೆ ಅವರ ಪ್ರಭಾವವಿರುತ್ತದೆ. ಮೇಘಗಳಲ್ಲಿ ಅವರ ಶಕ್ತಿಯು ಇರುತ್ತದೆ.
PSA 68:35 ದೇವರೇ, ನಿಮ್ಮ ಪರಿಶುದ್ಧ ಸ್ಥಳದಲ್ಲಿ ನೀವು ಅತಿಶಯವಾಗಿದ್ದೀರಿ. ಇಸ್ರಾಯೇಲರ ದೇವರೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುವರು. ದೇವರಿಗೆ ಸ್ತುತಿಯಾಗಲಿ.
PSA 69:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ದಾವೀದನ ಕೀರ್ತನೆ. ದೇವರೇ, ನನ್ನನ್ನು ರಕ್ಷಿಸಿರಿ. ಏಕೆಂದರೆ, ಪ್ರವಾಹ ಕುತ್ತಿಗೆಯ ವರೆಗೆ ಬಂದಿದೆ.
PSA 69:2 ನೆಲವಿಲ್ಲದಿರುವ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತಿದ್ದೇನೆ. ಪ್ರವಾಹಗಳು ನನ್ನ ಮೇಲೆ ಹಾದುಹೋಗುವ ನೀರಿನ ಅಗಾಧಕ್ಕೆ ನಾನು ಬಂದಿದ್ದೇನೆ.
PSA 69:3 ನಾನು ಮೊರೆಯಿಟ್ಟು ದಣಿದಿದ್ದೇನೆ. ನನ್ನ ಗಂಟಲು ಒಣಗಿದೆ. ನಾನು ದೇವರನ್ನು ಎದುರು ನೋಡುವುದರಿಂದ ನನ್ನ ಕಣ್ಣು ಕ್ಷೀಣವಾಗಿವೆ.
PSA 69:4 ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.
PSA 69:5 ದೇವರೇ, ನೀವು ನನ್ನ ಮೂರ್ಖತನವನ್ನು ತಿಳಿದಿದ್ದೀರಿ. ನನ್ನ ಅಪರಾಧಗಳು ನಿಮಗೆ ಮರೆಯಾಗಿಲ್ಲ.
PSA 69:6 ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
PSA 69:7 ನಾನು ನಿಮ್ಮ ನಿಮಿತ್ತ ನಿಂದೆಗೆ ಒಳಗಾಗಿದ್ದೇನೆ. ಅವಮಾನವು ನನ್ನ ಮುಖವನ್ನು ಮುಚ್ಚಿದೆ.
PSA 69:8 ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.
PSA 69:9 ಏಕೆಂದರೆ ನಿಮ್ಮ ಆಲಯದ ಮೇಲಿನ ಆಸಕ್ತಿಯು ಬೆಂಕಿಯಂತೆ ನನ್ನನ್ನು ದಹಿಸಿಬಿಟ್ಟಿದೆ. ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
PSA 69:10 ನಾನು ಅತ್ತು ಉಪವಾಸ ಮಾಡಿದಾಗ ನಿಂದೆಗೆ ಒಳಗಾಗಬೇಕಾಯಿತು.
PSA 69:11 ಗೋಣಿತಟ್ಟನ್ನು ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ. ಇದರಿಂದ ನಾನು ಅವರಿಗೆ ಗಾದೆಯ ಮಾತಾದೆನು.
PSA 69:12 ಊರುಬಾಗಿಲಲ್ಲಿ ಕೂತುಕೊಳ್ಳುವವರು ಪರಿಹಾಸ್ಯ ಮಾಡುತ್ತಾರೆ. ನಾನು ಮದ್ಯಪಾನಿಗಳಿಗೆ ಗಾಯನ ವಿಷಯವಾಗಿದ್ದೇನೆ.
PSA 69:13 ಯೆಹೋವ ದೇವರೇ, ನಾನಾದರೋ ನಿಮಗೆ ಮೊರೆಯಿಟ್ಟಿದ್ದೇನೆ. ಇದು ನಿಮ್ಮ ಮೆಚ್ಚಿಕೆಯ ಸಕಾಲ. ಓ ದೇವರೇ, ನಿಮ್ಮ ಮಹಾಪ್ರೀತಿಯಿಂದ ನನಗೆ ನಿಮ್ಮ ನಿಶ್ಚಯ ರಕ್ಷಣೆಯನ್ನು ದಯಪಾಲಿಸಿರಿ.
PSA 69:14 ನನ್ನನ್ನು ಕೆಸರಿನೊಳಗಿಂದ ಬಿಡಿಸಿರಿ. ನಾನು ಮುಳುಗದೆ ಇರಲಿ. ನನ್ನನ್ನು ದ್ವೇಷಿಸಿಸುವವರಿಂದಲೂ ನೀರಿನ ಅಗಾಧದಿಂದಲೂ ನನಗೆ ಬಿಡುಗಡೆ ಆಗಲಿ.
PSA 69:15 ನೀರಿನ ಪ್ರವಾಹವು ನನ್ನ ಮೇಲೆ ಹಾದುಹೋಗದೆ ಇರಲಿ. ಅಗಾಧವು ನನ್ನನ್ನು ನುಂಗದೆ ಇರಲಿ. ಕುಣಿಯು ನನ್ನ ಮೇಲೆ ತನ್ನ ಬಾಯನ್ನು ಮುಚ್ಚದೆ ಇರಲಿ.
PSA 69:16 ಯೆಹೋವ ದೇವರೇ, ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನಗೆ ಉತ್ತರಕೊಡಿರಿ. ನಿಮ್ಮ ಮಹಾ ಕರುಣೆಯಿಂದ ನನ್ನ ಕಡೆಗೆ ತಿರುಗಿರಿ.
PSA 69:17 ನಿಮ್ಮ ಮುಖವನ್ನು ನಿಮ್ಮ ಸೇವಕನಿಗೆ ಮರೆಮಾಡಬೇಡಿರಿ. ನಾನು ಇಕ್ಕಟ್ಟಿನಲ್ಲಿದ್ದೇನೆ. ಬೇಗ ನನಗೆ ಉತ್ತರಕೊಡಿರಿ.
PSA 69:18 ನನಗೆ ಸಮೀಪವಾಗಿ ನನ್ನನ್ನು ಕಾಪಾಡಿರಿ. ನನ್ನ ಶತ್ರುಗಳ ನಿಮಿತ್ತ ನನ್ನನ್ನು ಬಿಡಿಸಿರಿ.
PSA 69:19 ನೀವು ನನಗಿರುವ ನಿಂದೆ, ನಾಚಿಕೆ ಹಾಗೂ ನನ್ನ ಅವಮಾನವನ್ನೂ ತಿಳಿದಿದ್ದೀರಿ. ನನ್ನ ವೈರಿಗಳೆಲ್ಲರು ನಿಮ್ಮ ಮುಂದೆ ಇದ್ದಾರೆ.
PSA 69:20 ನಿಂದೆಯು ನನ್ನ ಹೃದಯವನ್ನು ಮುರಿದಿದೆ. ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ. ಅನುತಾಪಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಇರಲಿಲ್ಲ. ಸಂತೈಸುವವರಿಗೋಸ್ಕರ ಸಹ ಎದುರು ನೋಡಿದೆನು, ಆದರೆ ಯಾರೂ ಸಿಕ್ಕಲಿಲ್ಲ.
PSA 69:21 ನನ್ನ ಆಹಾರಕ್ಕಾಗಿ ಕಹಿಯಾದದ್ದನ್ನು ಕೊಟ್ಟರು. ನನ್ನ ದಾಹಕ್ಕಾಗಿ ನನಗೆ ಹುಳಿರಸವನ್ನು ಕುಡಿಯಲು ಕೊಟ್ಟರು.
PSA 69:22 ಅವರ ಊಟವೇ ಅವರಿಗೆ ಉರುಲಾಗಲಿ. ಸುಖವಾಗಿರುವವರಿಗೆ ಅದು ಬೋನಾಗಲಿ.
PSA 69:23 ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ
PSA 69:24 ಅವರು ಕೋಪಕ್ಕೆ ಗುರಿಯಾಗಲಿ. ಅವರು ಬೇಸರಕ್ಕೆ ತುತ್ತಾಗಲಿ.
PSA 69:25 ಅವರ ವಾಸಸ್ಥಾನವು ಹಾಳಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
PSA 69:26 ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.
PSA 69:27 ಅಪರಾಧದ ಮೇಲೆ ಅಪರಾಧವು ಅವರ ಮೇಲೆ ಬರಲಿ. ಅವರು ನಿಮ್ಮ ರಕ್ಷಣೆಯಲ್ಲಿ ಸೇರದೆ ಇರಲಿ.
PSA 69:28 ಜೀವಪುಸ್ತಕದೊಳಗಿಂದ ಅವರ ಹೆಸರು ಅಳಿದು ಹೋಗಲಿ. ನೀತಿವಂತರ ಸಂಗಡ ಅವರ ಹೆಸರು ಬರೆಯದೆ ಇರಲಿ.
PSA 69:29 ದೇವರೇ, ನಾನು ನೊಂದು ವ್ಯಥೆಗೊಂಡಿದ್ದೇನೆ. ನಿಮ್ಮ ರಕ್ಷಣೆಯು ನನ್ನನ್ನು ಕಾಪಾಡಲಿ.
PSA 69:30 ನಾನು ದೇವರ ಹೆಸರನ್ನು ಹಾಡಿ ಸ್ತುತಿಸುವೆನು. ಸ್ತೋತ್ರದಿಂದ ದೇವರನ್ನು ಸ್ತುತಿಸುವೆನು.
PSA 69:31 ಅದು ಯೆಹೋವ ದೇವರಿಗೆ ಎಳೆಯ ಎತ್ತು ಯಜ್ಞಗಳಿಗಿಂತ, ಕೊಂಬೂ ಗೊರಸುಗಳುಳ್ಳ ಹೋರಿಗಳಿಗಿಂತ ಮೆಚ್ಚಿಕೆಯಾಗಿರುವುದು.
PSA 69:32 ಇದನ್ನು ದೀನರು ಕಂಡು ಸಂತೋಷಪಡುವರು. ದೇವರನ್ನು ಹುಡುಕುವವರೇ, ನಿಮ್ಮ ಹೃದಯವು ಚೈತನ್ಯಗೊಳ್ಳಲಿ.
PSA 69:33 ಯೆಹೋವ ದೇವರು ಬಡವರ ಮೊರೆಗೆ ಕಿವಿಗೊಡುತ್ತಾರೆ. ಸೆರೆಯಲ್ಲಿರುವ ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.
PSA 69:34 ಆಕಾಶವೂ ಭೂಮಿಯೂ ಸಮುದ್ರಗಳೂ, ಅವುಗಳಲ್ಲಿ ಸಂಚರಿಸುವುದೆಲ್ಲವೂ ದೇವರನ್ನು ಸ್ತುತಿಸಲಿ.
PSA 69:35 ದೇವರು ಚೀಯೋನನ್ನು ರಕ್ಷಿಸುವರು. ದೇವರು ಯೆಹೂದದ ಪಟ್ಟಣಗಳನ್ನು ಕಟ್ಟುವರು. ಜನರು ಅಲ್ಲಿ ವಾಸಮಾಡಿ, ಅದನ್ನು ಸ್ವಾಧೀನಮಾಡಿಕೊಳ್ಳುವರು.
PSA 69:36 ದೇವರ ಸೇವಕರ ಸಂತತಿಯು ಅದನ್ನು ಬಾಧ್ಯವಾಗಿ ಹೊಂದುವುದು. ದೇವರ ಹೆಸರನ್ನು ಪ್ರೀತಿಸುವವರು ಅದರಲ್ಲಿ ವಾಸಮಾಡುವರು.
PSA 70:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಬೇಡಿಕೆ. ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ; ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.
PSA 70:2 ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು ನಾಚಿಕೆಪಟ್ಟು ಗಲಿಬಿಲಿಯಾಗಲಿ. ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ ಹಿಂಜರಿದು ಅವಮಾನ ಹೊಂದಲಿ.
PSA 70:3 “ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯ ಫಲಕ್ಕಾಗಿ ಬೆಂಗೊಟ್ಟು ಓಡಲಿ.
PSA 70:4 ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ. ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.
PSA 70:5 ಆದರೆ ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ. ದೇವರೇ, ಬೇಗನೆ ನನ್ನ ಬಳಿಗೆ ಬನ್ನಿರಿ. ನನ್ನ ಸಹಾಯವೂ ನನ್ನನ್ನು ಬಿಡಿಸುವವರೂ ನೀವೇ, ಯೆಹೋವ ದೇವರೇ, ತಡಮಾಡದೆ ಬನ್ನಿರಿ.
PSA 71:1 ಯೆಹೋವ ದೇವರೇ, ನಿಮ್ಮಲ್ಲಿಯೇ ನಾನು ನನ್ನ ಭರವಸೆಯನ್ನಿಟ್ಟಿದ್ದೇನೆ. ನನಗೆ ಎಂದೂ ಆಶಾಭಂಗವಾಗದಿರಲಿ.
PSA 71:2 ನಿಮ್ಮ ನೀತಿಯಿಂದ ನನ್ನನ್ನು ಬಿಡಿಸಿ, ನನ್ನನ್ನು ಪಾರುಮಾಡಿರಿ. ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ, ನನ್ನನ್ನು ರಕ್ಷಿಸಿರಿ.
PSA 71:3 ನಾನು ಯಾವಾಗಲೂ ಆಶ್ರಯಿಸಿಕೊಳ್ಳುವ ಬಂಡೆಯಾಗಿರಿ. ನನ್ನನ್ನು ರಕ್ಷಿಸುವುದಕ್ಕೆ ಆಜ್ಞಾಪಿಸಿರಿ. ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ ಆಗಿದ್ದೀರಿ.
PSA 71:4 ನನ್ನ ದೇವರೇ, ದುಷ್ಟನ ಕೈಗೂ ಅನ್ಯಾಯ ಮಾಡುವವನ ಮತ್ತು ಕ್ರೂರನ ಕೈಗೂ ನನ್ನನ್ನು ಸಿಕ್ಕಿಸದಿರಿ.
PSA 71:5 ಸಾರ್ವಭೌಮ ಯೆಹೋವ ದೇವರೇ, ನೀವು ನನ್ನ ನಿರೀಕ್ಷೆ ಆಗಿದ್ದೀರಿ. ನನ್ನ ಯೌವನದಿಂದ ನನ್ನ ಭರವಸೆಯೂ ಆಗಿದ್ದೀರಿ.
PSA 71:6 ಹುಟ್ಟಿನಿಂದ ನೀವೇ ನನ್ನ ಭರವಸೆ. ತಾಯಿಯ ಗರ್ಭದಿಂದ ನೀವೇ ನನ್ನನ್ನು ಹೊರಗೆ ತಂದಿದ್ದೀರಿ. ನಾನು ಯಾವಾಗಲೂ ನಿಮ್ಮನ್ನು ಸ್ತುತಿಸುತ್ತಿರುವೆನು.
PSA 71:7 ಅನೇಕರು ನನ್ನ ಸ್ಥಿತಿಯನ್ನು ಕಂಡು ಆಶ್ಚರ್ಯ ಪಡುತ್ತಾರೆ. ಆದರೆ ನೀವು ನನ್ನ ಬಲವಾದ ಆಶ್ರಯವಾಗಿದ್ದೀರಿ.
PSA 71:8 ನನ್ನ ಬಾಯಿ ನಿಮ್ಮ ಸ್ತೋತ್ರದಿಂದ ತುಂಬಿರಲಿ. ನಾನು ದಿನವೆಲ್ಲಾ ನಿಮ್ಮ ವೈಭವವನ್ನೇ ಸಾರುತ್ತಿರುವೆ.
PSA 71:9 ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡಿರಿ. ನನ್ನ ಶಕ್ತಿಯು ಕುಂದುತ್ತಿರುವಾಗ ನನ್ನನ್ನು ಕೈಬಿಡಬೇಡಿರಿ.
PSA 71:10 ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಒಳಸಂಚು ಮಾಡುವವರು ಕೂಡಿಕೊಂಡು ದುರಾಲೋಚನೆ ಮಾಡುತ್ತಾರೆ.
PSA 71:11 ಅದೇನೆಂದರೆ, “ದೇವರು ಅವನನ್ನು ಕೈಬಿಟ್ಟಿದ್ದಾನೆ. ಅವನನ್ನು ಬೆನ್ನಟ್ಟಿ ಹಿಡಿಯಿರಿ, ಅವನನ್ನು ಬಿಡಿಸುವವರು ಯಾರೂ ಇಲ್ಲ,” ಎನ್ನುತ್ತಾರೆ.
PSA 71:12 ದೇವರೇ, ನನ್ನಿಂದ ದೂರವಾಗಿರಬೇಡಿರಿ. ದೇವರೇ, ಬೇಗ ಬಂದು ನನಗೆ ಸಹಾಯಮಾಡಿರಿ.
PSA 71:13 ನನ್ನನ್ನು ಆರೋಪಿಸುವವರು, ನಾಚಿಕೆಪಟ್ಟು ನಾಶವಾಗಲಿ. ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.
PSA 71:14 ಆದರೆ ನಾನು ಎಂದೆಂದೂ ನಿಮ್ಮನ್ನು ನಿರೀಕ್ಷಿಸುತ್ತಾ, ನಿಮ್ಮನ್ನು ಇನ್ನೂ ಹೆಚ್ಚೆಚ್ಚಾಗಿ ಸ್ತುತಿಸುವೆನು.
PSA 71:15 ನನ್ನ ಬಾಯಿ ದಿನವೆಲ್ಲಾ ನಿಮ್ಮ ನೀತಿಯನ್ನೂ ನಿಮ್ಮ ರಕ್ಷಣೆಯನ್ನೂ ಪ್ರಕಟಿಸುವುದು. ಅವುಗಳನ್ನು ವಿವರಿಸಲು ನನಗೆ ತಿಳಿಯದು.
PSA 71:16 ಸಾರ್ವಭೌಮ ಯೆಹೋವ ದೇವರೇ ನಾನು ನಿಮ್ಮ ಮಹಾಕೃತ್ಯಗಳನ್ನು ಸಾರುವೆನು. ನಿಮ್ಮ ನೀತಿ ಕೃತ್ಯಗಳನ್ನು ಪ್ರಕಟಪಡಿಸುವೆನು.
PSA 71:17 ದೇವರೇ, ನನ್ನ ಯೌವನದಿಂದ ನನಗೆ ನೀವು ಕಲಿಸಿದ್ದೀರಿ. ಈವರೆಗೂ ನಿಮ್ಮ ಅದ್ಭುತಕಾರ್ಯಗಳನ್ನು ಘೋಷಿಸುತ್ತಿದ್ದೇನೆ.
PSA 71:18 ದೇವರೇ, ನಾನು ಮುಪ್ಪಿನವನೂ, ನೆರೆಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿಮ್ಮ ಶಕ್ತಿಯನ್ನೂ, ಮುಂದಿನ ಪೀಳಿಗೆಗೆ ನಿಮ್ಮ ಪರಾಕ್ರಮವನ್ನೂ ತಿಳಿಸುವವರೆಗೂ ನನ್ನನ್ನು ಕೈಬಿಡಬೇಡಿರಿ.
PSA 71:19 ದೇವರೇ, ನಿಮ್ಮ ನೀತಿಯು ಆಕಾಶವನ್ನು ಮುಟ್ಟುತ್ತದೆ. ಮಹತ್ಕಾರ್ಯಗಳನ್ನು ಮಾಡಿದ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ?
PSA 71:20 ಅನೇಕ ಕಠಿಣವಾದ ಇಕ್ಕಟ್ಟುಗಳನ್ನು ನೋಡ ಮಾಡಿದ ನನ್ನನ್ನು ನೀವು ತಿರುಗಿ ಬದುಕಿಸಿದ್ದೀರಿ. ಭೂಮಿಯ ಅಧೋಭಾಗದಿಂದ ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ.
PSA 71:21 ನೀವು ನನ್ನ ಗೌರವವನ್ನು ಹೆಚ್ಚಿಸಿ ನನ್ನನ್ನು ಮತ್ತೊಮ್ಮೆ ಆದರಿಸಿರಿ.
PSA 71:22 ನನ್ನ ದೇವರೇ, ನಾನು ನಿಮ್ಮನ್ನು ಸ್ತುತಿಸುವೆನು. ನಿಮ್ಮ ನಂಬಿಗಸ್ತಿಕೆಗಾಗಿ ವೀಣೆಯಿಂದ ಕೊಂಡಾಡುವೆನು. ಇಸ್ರಾಯೇಲರ ಪರಿಶುದ್ಧರೇ, ಕಿನ್ನರಿಯಿಂದ ನಿಮ್ಮನ್ನು ಸ್ತುತಿಸುವೆನು.
PSA 71:23 ನೀವು ನನ್ನನ್ನು ಬಿಡಿಸಿದ್ದಕ್ಕಾಗಿ ನನ್ನ ತುಟಿಗಳು ಆನಂದದಿಂದ ಹಾಡಿ ಸ್ತುತಿಸುತ್ತವೆ.
PSA 71:24 ನನ್ನ ನಾಲಿಗೆಯು ಸಹ ದಿನವೆಲ್ಲಾ ನಿಮ್ಮ ನೀತಿಯನ್ನು ಮಾತನಾಡುವುದು, ಏಕೆಂದರೆ ನನಗೆ ಕೇಡು ಬಗೆಯುವವರು ನಾಚಿಕೊಂಡು ತಲೆ ತಗ್ಗಿಸಿದ್ದಾರೆ.
PSA 72:1 ಸೊಲೊಮೋನನ ಕೀರ್ತನೆ. ದೇವರೇ, ನಿಮ್ಮ ನ್ಯಾಯವನ್ನು ಅರಸನಿಗೆ ಕಲಿಸಿಕೊಡಿರಿ. ನಿಮ್ಮ ನೀತಿಯನ್ನು ರಾಜಕುಮಾರನಿಗೆ ಕಲಿಸಿಕೊಡಿರಿ.
PSA 72:2 ಅರಸನು ನಿಮ್ಮ ಜನರಿಗೆ ನೀತಿಯಿಂದಲೂ ನಿಮ್ಮ ಬಾಧೆಪಟ್ಟ ಪ್ರಜೆಗೆ ನ್ಯಾಯದಿಂದಲೂ ತೀರ್ಪುಮಾಡಲಿ.
PSA 72:3 ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ ನೀತಿಯ ಫಲವೂ ಜನರಿಗೆ ಬರಲಿ.
PSA 72:4 ಅರಸನು ಬಡವರ ನ್ಯಾಯ ಸ್ಥಾಪಿಸಲಿ. ಅವನು ಅಗತ್ಯತೆಯಲ್ಲಿರುವವರ ಮಕ್ಕಳನ್ನು ರಕ್ಷಿಸಲಿ. ದಬ್ಬಾಳಿಕೆ ಮಾಡುವವರನ್ನು ದಂಡಿಸಲಿ.
PSA 72:5 ಸೂರ್ಯನೂ ಚಂದ್ರನೂ ಇರುವವರೆಗೆ ತಲತಲಾಂತರಗಳು ಜನರು ಅರಸನಿಗೆ ಭಯಪಡಲಿ.
PSA 72:6 ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ, ಭೂಮಿಯನ್ನು ನೆನಸುತ್ತಾ ಸುರಿಯುವ ಮಳೆಗಳ ಹಾಗೆಯೂ ಅರಸನು ಇರಲಿ.
PSA 72:7 ಅರಸನ ದಿವಸಗಳಲ್ಲಿ ನೀತಿವಂತರು ವೃದ್ಧಿ ಆಗಲಿ. ಸಮೃದ್ಧಿಯಾದ ಸಮಾಧಾನವು ಚಂದ್ರನು ಇರುವವರೆಗೂ ಇರಲಿ.
PSA 72:8 ಸಮುದ್ರದಿಂದ ಸಮುದ್ರದವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಅರಸನು ಆಳಲಿ.
PSA 72:9 ಅರಸನ ಮುಂದೆ ಮರುಭೂಮಿಯ ನಿವಾಸಿಗಳು ಎರಗಲಿ. ಅರಸನ ಶತ್ರುಗಳು ಧೂಳನ್ನು ನೆಕ್ಕಲಿ.
PSA 72:10 ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ಅರಸನಿಗೆ ಸಲ್ಲಿಸಲಿ. ಶೆಬ ಮತ್ತು ಸೆಬದ ಅರಸರು ದಾನಗಳನ್ನು ತಂದೊಪ್ಪಿಸಲಿ.
PSA 72:11 ಹೌದು, ಎಲ್ಲಾ ಅರಸರು ನಮ್ಮ ಅರಸನ ಮುಂದೆ ಅಡ್ಡಬೀಳಲಿ. ಎಲ್ಲಾ ಜನಾಂಗಗಳು ಅರಸನಿಗೆ ಸೇವೆಸಲ್ಲಿಸಲಿ.
PSA 72:12 ಏಕೆಂದರೆ ಅರಸನಿಗೆ ಮೊರೆಯಿಡುವ ಬಡವರನ್ನೂ ಸಹಾಯಕನಿಲ್ಲದ ಬಾಧೆಪಡುವವರನ್ನೂ ಬಿಡಿಸುವನು.
PSA 72:13 ದರಿದ್ರನನ್ನೂ, ಬಡವನನ್ನೂ ಕರುಣಿಸುವನು. ಬಡವರ ಪ್ರಾಣಗಳನ್ನು ರಕ್ಷಿಸುವನು.
PSA 72:14 ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು. ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.
PSA 72:15 ಅರಸನು ಬಾಳಲಿ. ಆತನಿಗೆ ಶೆಬದ ಚಿನ್ನವನ್ನು ಕೊಡಲಿ. ಆತನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡಲಿ. ಇಡೀ ದಿನ ಆತನಿಗೆ ಆಶೀರ್ವಾದಗಳು ಉಂಟಾಗಲಿ.
PSA 72:16 ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರಲಿ; ಅದರ ಫಲವು ಲೆಬನೋನಿನ ಹಾಗೆ ಸಮೃದ್ಧಿಯಾಗಲಿ; ಪಟ್ಟಣದವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿ ಆಗಲಿ.
PSA 72:17 ಅರಸನ ನಾಮವು ಎಂದೆಂದಿಗೂ ಇರಲಿ. ಸೂರ್ಯನಿರುವವರೆಗೂ ಆತನ ಹೆಸರು ಇರಲಿ. ಮನುಷ್ಯರು ಅರಸನಲ್ಲಿ ಆಶೀರ್ವಾದ ಹೊಂದಲಿ. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತನೆಂದು ಕರೆಯಲಿ.
PSA 72:18 ಅದ್ಭುತಗಳನ್ನು ಮಾಡುವುದರಲ್ಲಿ ಸರಿಸಾಟಿಯಿಲ್ಲದ ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.
PSA 72:19 ದೇವರ ಘನವುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ. ದೇವರ ತೇಜಸ್ಸು ಭೂಮಿಯಲ್ಲೆಲ್ಲಾ ತುಂಬಲಿ.
PSA 72:20 ಇಷಯನ ಮಗ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.
PSA 73:1 ಆಸಾಫನ ಕೀರ್ತನೆ. ದೇವರು ನಿಜವಾಗಿಯೂ ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವರು.
PSA 73:2 ನನ್ನ ಪಾದಗಳು ಬಹಳಮಟ್ಟಿಗೆ ತಪ್ಪುವ ಹಾಗಿದ್ದವು. ನನ್ನ ಹೆಜ್ಜೆಗಳು ಜಾರುವುದಕ್ಕೆ ಬಹು ಸಮೀಪವಾಗಿದ್ದವು.
PSA 73:3 ಏಕೆಂದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡಾಗ ಮೂರ್ಖರ ಮೇಲೆ ಹೊಟ್ಟೆಕಿಚ್ಚುಪಟ್ಟೆನು.
PSA 73:4 ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ. ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ.
PSA 73:5 ಇತರರ ಹಾಗೆ ಅವರಿಗೆ ಯಾವುದೇ ಹೊರೆ ಇಲ್ಲ ಮಾನವರಿಗೆ ತಗುಲುವ ಯಾವುದೇ ವ್ಯಾಧಿಯೂ ಅವರಿಗೆ ತಗುಲುವುದಿಲ್ಲ.
PSA 73:6 ಆದ್ದರಿಂದ ಗರ್ವವು ಕಂಠಮಾಲೆಯಂತೆ ಅವರನ್ನು ಸುತ್ತಿದೆ. ದಬ್ಬಾಳಿಕೆ ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತಿದೆ.
PSA 73:7 ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ.
PSA 73:8 ಅವರು ಹಾಸ್ಯಮಾಡುವವರಾಗಿ ಕೇಡನ್ನೇ ಮಾತನಾಡುತ್ತಾರೆ ದಬ್ಬಾಳಿಕೆ ಮಾಡಲು ಗರ್ವದಿಂದ ಅವರು ಬೆದರಿಕೆ ಹಾಕುತ್ತಾರೆ.
PSA 73:9 ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ. ಭೂಲೋಕದಲ್ಲೆಲ್ಲಾ ಅವರ ಮಾತು ಮುಂದುವರೆದಿದೆ.
PSA 73:10 ಆದ್ದರಿಂದ ಜನರು ಅವರ ಕಡೆಗೆ ತಿರುಗುತ್ತಾರೆ. ಜನರಿಗೆ ಅವರ ಮಾತು ಬಹಳವಾಗಿ ದೊರೆಯುತ್ತದೆ.
PSA 73:11 ಅವರು, “ದೇವರಿಗೆ ಹೇಗೆ ಗೊತ್ತಾಗುವುದು? ಮಹೋನ್ನತನಿಗೆ ಏನಾದರೂ ತಿಳಿಯಲು ಸಾಧ್ಯವೇ?” ಎನ್ನುತ್ತಾರೆ.
PSA 73:12 ದುಷ್ಟರು ನಿಶ್ಚಿಂತರಾಗಿ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
PSA 73:13 ನನ್ನ ಹೃದಯವನ್ನು ಶುದ್ಧ ಮಾಡಿಕೊಂಡಿದ್ದು ವ್ಯರ್ಥವೋ? ನನ್ನ ಅಂಗೈಗಳನ್ನು ನಿರಪರಾಧದಲ್ಲಿ ತೊಳೆದಿದ್ದೂ ವ್ಯರ್ಥವೋ?
PSA 73:14 ಏಕೆಂದರೆ ನಾನು ದಿನವೆಲ್ಲಾ ಬಾಧೆಪಡುತ್ತಿದ್ದೇನೆ. ಪ್ರತಿ ಉದಯವೂ ನನಗೆ ಹೊಸ ಶಿಕ್ಷೆಯಾಗುತ್ತಿದೆ.
PSA 73:15 ನಾನು ಈ ಪ್ರಕಾರ ಬಾಯಿತೆರೆದು ಮಾತಾಡಿದ್ದರೆ, ನಿಮ್ಮ ಪ್ರಜೆಗೆ ದ್ರೋಹಿಯಾಗುತ್ತಿದ್ದೆನು.
PSA 73:16 ಇದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ನಾನು ಪ್ರಯತ್ನಿಸಿದಾಗ, ಅದು ನನಗೆ ಬಹಳವಾಗಿ ಕಷ್ಟಕರವಾಗಿತ್ತು.
PSA 73:17 ನಾನು ದೇವರ ಪರಿಶುದ್ಧ ಆಲಯಕ್ಕೆ ಬರುವವರೆಗೆ ನನಗೆ ಅರ್ಥವಾಗಲಿಲ್ಲ. ಅನಂತರ ಅವರ ಅಂತ್ಯವನ್ನು ನನಗೆ ಅರ್ಥವಾಯಿತು.
PSA 73:18 ನಿಶ್ಚಯವಾಗಿ ನೀವು ಜಾರುವ ಸ್ಥಳಗಳಲ್ಲಿ ಅವರನ್ನು ಬಿಟ್ಟಿದ್ದೀರಿ. ಅವರನ್ನು ದಂಡಿಸಿಬಿಡು.
PSA 73:19 ಕ್ಷಣಮಾತ್ರದಲ್ಲಿ ಅವರು ನಾಶವಾದರು. ಅವರು ದಿಗಿಲುಬಿದ್ದು ಸಂಪೂರ್ಣವಾಗಿ ನಾಶವಾದರು.
PSA 73:20 ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.
PSA 73:21 ನನ್ನ ಹೃದಯವು ದುಃಖಗೊಂಡು, ನನ್ನ ಆತ್ಮವು ಕಹಿಗೊಂಡಿತು.
PSA 73:22 ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿಮ್ಮ ಮುಂದೆ ಪಶುವಿನಂತೆ ಇದ್ದೆನು.
PSA 73:23 ಆದರೂ ನಾನು ನಿಮ್ಮ ಸಂಗಡ ಯಾವಾಗಲೂ ಇದ್ದೇನೆ. ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ.
PSA 73:24 ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ, ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ.
PSA 73:25 ಪರಲೋಕದಲ್ಲಿ ನನಗೆ ನೀವಲ್ಲದೆ ಮತ್ಯಾರಿದ್ದಾರೆ? ಇಹಲೋಕದಲ್ಲಿ ನಿಮ್ಮನ್ನಲ್ಲದೆ ಇನ್ನಾರನ್ನೂ ನಾನು ಬಯಸುವುದಿಲ್ಲ.
PSA 73:26 ನನ್ನ ತನುಮನಗಳು ಕುಂದುತ್ತವೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ, ನನ್ನ ಪಾಲೂ ಆಗಿದ್ದಾರೆ.
PSA 73:27 ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.
PSA 73:28 ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು. ನಿಮ್ಮ ಕ್ರಿಯೆಗಳನ್ನೆಲ್ಲಾ ಸಾರುವುದಕ್ಕೆ ಸಾರ್ವಭೌಮ ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.
PSA 74:1 ಆಸಾಫನ ಮಾಸ್ಕಿಲ ರಾಗದ ಕೀರ್ತನೆ. ದೇವರೇ, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಟ್ಟದ್ದೇಕೆ? ನಿಮ್ಮ ಮೇವಿನ ಕುರಿಮಂದೆಯ ವಿಷಯವಾಗಿ ಬೇಸರಗೊಳ್ಳುವುದು ಏಕೆ?
PSA 74:2 ಪೂರ್ವಕಾಲದಲ್ಲಿ ನೀವು ಕೊಂಡುಕೊಂಡ ನಿಮ್ಮ ಜನರನ್ನೂ ನೀವು ವಿಮೋಚಿಸಿದ ನಿಮ್ಮ ಬಾಧ್ಯತೆಯನ್ನೂ ನೀವು ವಾಸಮಾಡಿದ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೊಳ್ಳಿರಿ.
PSA 74:3 ನಿತ್ಯ ನಾಶವಾದ ಈ ಪ್ರದೇಶಗಳ ಕಡೆಗೂ ಈ ಪರಿಶುದ್ಧ ನಿವಾಸವನ್ನು ವೈರಿಗಳು ಹಾಳುಮಾಡಿದ್ದರ ಕಡೆಗೂ ನಿಮ್ಮ ಹೆಜ್ಜೆಗಳನ್ನು ತಿರುಗಿಸಿರಿ.
PSA 74:4 ನಿಮ್ಮ ವೈರಿಗಳು ನೀವು ನಮ್ಮನ್ನು ಸಂಧಿಸಿದ ಸ್ಥಳದಲ್ಲಿ ಗರ್ಜಿಸುತ್ತಾರೆ. ತಮ್ಮ ಗುರುತುಗಳನ್ನು ಆರಾಧನಾ ಚಿಹ್ನೆಗಳಾಗಿ ಇಟ್ಟಿದ್ದಾರೆ.
PSA 74:5 ದಟ್ಟವಾದ ಮರಗಳ ಮಧ್ಯೆ ಕೊಡಲಿ ಎತ್ತುವವನ ಹಾಗೆ ಆ ಜನರು ವರ್ತಿಸಿದ್ದಾರೆ.
PSA 74:6 ಈಗ ಚಿತ್ರ ಕೆಲಸಗಳನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆಯಿಂದಲೂ ಅವರು ಹೊಡೆದು ಹಾಕುತ್ತಿದ್ದಾರೆ.
PSA 74:7 ನಿಮ್ಮ ಪರಿಶುದ್ಧ ಸ್ಥಳಕ್ಕೆ ಬೆಂಕಿಹಚ್ಚಿದ್ದಾರೆ. ನಿಮ್ಮ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಅಪವಿತ್ರಗೊಳಿಸಿದ್ದಾರೆ.
PSA 74:8 “ಅವುಗಳನ್ನು ಒಟ್ಟಾಗಿ ಕೆಡವಿಬಿಡೋಣ,” ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಟ್ಟಿದ್ದಾರೆ.
PSA 74:9 ದೇವರಿಂದ ನಮಗೆ ಅದ್ಭುತವಾದ ಸಂಕೇತಗಳು ಕೊಟ್ಟಿರುವುದಿಲ್ಲ. ಪ್ರವಾದಿಗಳು ನಮಗೆ ಉಳಿದಿರುವುದಿಲ್ಲ. ಇದು ಎಷ್ಟು ಕಾಲ ಎಂದು ನಾವ್ಯಾರೂ ತಿಳಿದಿರುವುದಿಲ್ಲ.
PSA 74:10 ದೇವರೇ, ವೈರಿಯು ನಿಂದಿಸುವುದು ಎಷ್ಟರವರೆಗೆ? ಶತ್ರುವು ನಿಮ್ಮ ಹೆಸರನ್ನು ಎಂದೆಂದಿಗೂ ದೂಷಿಸುವನೋ?
PSA 74:11 ಏಕೆ ನಿಮ್ಮ ಕೈಯನ್ನು, ನಿಮ್ಮ ಬಲಗೈಯನ್ನು ಸಹ ಹಿಂದೆಳೆಯುತ್ತೀರಿ? ನಿಮ್ಮ ಎದೆಯೊಳಗಿಂದ ಅದನ್ನು ಹೊರಗೆ ತೆಗೆದು ಅವರನ್ನು ದಂಡಿಸಿರಿ.
PSA 74:12 ದೇವರೇ, ನೀವು ಪೂರ್ವದಿಂದಲೂ ನನ್ನ ಅರಸರಾಗಿದ್ದೀರಿ. ಭೂಲೋಕಕ್ಕೆ ರಕ್ಷಣೆಯನ್ನು ತರುವವರೂ ನೀವೇ ಆಗಿದ್ದೀರಿ.
PSA 74:13 ನೀವು ನಿಮ್ಮ ಬಲದಿಂದ ಸಮುದ್ರವನ್ನು ವಿಭಾಗಿಸಿದ್ದೀರಿ. ತಿಮಿಂಗಿಲಗಳ ತಲೆಗಳನ್ನು ನೀರಿನಲ್ಲಿ ಬಡಿಸಿದ್ದೀರಿ.
PSA 74:14 ನೀವು ಲಿವ್ಯಾತಾನ ಮೃಗದ ತಲೆಗಳನ್ನು ಬಡೆದಿರಲು ಅದನ್ನು ಮರುಭೂಮಿಯ ಜೀವಜಂತುಗಳಿಗೆ ಆಹಾರವಾಗಿ ಕೊಟ್ಟಿದ್ದೀರಿ.
PSA 74:15 ನೀವು ಬುಗ್ಗೆಯನ್ನೂ, ಪ್ರವಾಹವನ್ನೂ ವಿಭಾಗ ಮಾಡಿದ್ದೀರಿ. ನೀವು ಯಾವಾಗಲೂ ತುಂಬಿ ಹರಿಯುವ ನದಿಗಳನ್ನು ಒಣಗಿಸಿದ್ದೀರಿ.
PSA 74:16 ಹಗಲು ನಿಮ್ಮದು, ರಾತ್ರಿಯು ಸಹ ನಿಮ್ಮದು. ನೀವು ಸೂರ್ಯಚಂದ್ರನನ್ನೂ ಸ್ಥಾಪಿಸಿದ್ದೀರಿ.
PSA 74:17 ನೀವು ಭೂಮಿಯ ಮೇರೆಗಳನ್ನೆಲ್ಲಾ ನಿರ್ಣಯಿಸಿದ್ದೀರಿ. ಬೇಸಿಗೆ ಮತ್ತು ಚಳಿಗಾಲವನ್ನು ನೀವು ನಿರ್ಮಿಸಿದ್ದೀರಿ.
PSA 74:18 ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.
PSA 74:19 ನಿಮ್ಮ ಪಾರಿವಾಳದ ಪ್ರಾಣವನ್ನು ದುಷ್ಟಮೃಗಗಳಿಗೆ ಒಪ್ಪಿಸಕೊಡಬೇಡಿರಿ. ನಿಮ್ಮ ದೀನರ ಮಂಡಳಿಯನ್ನು ಸದಾಕಾಲಕ್ಕೆ ಮರೆತುಬಿಡಬೇಡಿರಿ.
PSA 74:20 ಒಡಂಬಡಿಕೆಗೆ ಗೌರವವನ್ನು ಕೊಡಿರಿ. ಏಕೆಂದರೆ ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿ ಇವೆ.
PSA 74:21 ಕುಗ್ಗಿದವನು ಅವಮಾನದಿಂದ ಹಿಂದಿರುಗದಿರಲಿ. ದೀನನೂ, ಬಡವನೂ ನಿಮ್ಮ ಹೆಸರನ್ನು ಸ್ತುತಿಸಲಿ.
PSA 74:22 ದೇವರೇ, ಏಳು; ನಿಮ್ಮ ನ್ಯಾಯವನ್ನು ವಾದಿಸಿರಿ. ದಿನವೆಲ್ಲಾ ಮೂರ್ಖನು ನಿಮ್ಮನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪಕಮಾಡಿಕೊಳ್ಳಿರಿ.
PSA 74:23 ನಿಮ್ಮ ವೈರಿಗಳ ಗದ್ದಲವನ್ನೂ ನಿಮ್ಮ ವಿರೋಧಿಗಳ ಆಕ್ರೋಶ ನಿರಂತರವಾಗಿ ಬೆಳೆಯುವ ಕಲಹವನ್ನೂ ಮರೆತುಬಿಡಬೇಡಿರಿ.
PSA 75:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಟೇತೆಂಬ ರಾಗ. ಆಸಾಫನ ಕೀರ್ತನೆ. ಒಂದು ಗೀತೆ. ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ, ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ, ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ.
PSA 75:2 “ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು. ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು,
PSA 75:3 ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ. ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ.
PSA 75:4 ‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ. ‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು.
PSA 75:5 ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ. ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ.
PSA 75:6 ಏಕೆಂದರೆ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ.
PSA 75:7 ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ.
PSA 75:8 ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. ಅದನ್ನು ಅವರು ಹೊಯ್ಯುತ್ತಾರೆ. ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
PSA 75:9 ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು.
PSA 75:10 ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.
PSA 76:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಆಸಾಫನ ಕೀರ್ತನೆ. ಒಂದು ಗೀತೆ. ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ.
PSA 76:2 ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು.
PSA 76:3 ದೇವರು ಅಲ್ಲಿಯೇ ಬಿಲ್ಲಿನ ಉರಿಬಾಣಗಳನ್ನೂ ಗುರಾಣಿಯನ್ನೂ ಖಡ್ಗವನ್ನೂ ಯುದ್ಧಾಯುಧಗಳನ್ನು ಮುರಿದುಬಿಟ್ಟರು.
PSA 76:4 ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ.
PSA 76:5 ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ.
PSA 76:6 ಯಾಕೋಬನ ದೇವರೇ, ನಿಮ್ಮ ಗದರಿಕೆಯಿಂದ ರಥವೂ ಕುದುರೆಯೂ ಚಲನೆಯಿಲ್ಲದೆ ಬಿದ್ದಿವೆ.
PSA 76:7 ನೀವು ಭಯಭಕ್ತಿಗೆ ಪಾತ್ರರು, ನೀವು ಒಂದು ಸಾರಿ ಬೇಸರಗೊಂಡರೆ, ನಿಮ್ಮ ಮುಂದೆ ನಿಲ್ಲುವವನ್ಯಾರು?
PSA 76:8 ಪರಲೋಕದಿಂದ ನ್ಯಾಯ ನಿರ್ಣಯವನ್ನು ಮಾಡಿದ್ದೀರಿ. ದೇವರೇ, ನ್ಯಾಯತೀರಿಸುವುದಕ್ಕೂ
PSA 76:9 ಭೂಮಿಯ ದೀನರೆಲ್ಲರನ್ನು ರಕ್ಷಿಸುವುದಕ್ಕೂ ನೀವು ಪ್ರಾರಂಭಿಸುವಾಗ ಭೂಮಿಯು ಭಯಗೊಂಡು ಮೌನವಾಯಿತು.
PSA 76:10 ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.
PSA 76:11 ನಿಮ್ಮ ದೇವರಾದ ಯೆಹೋವ ದೇವರಿಗೆ ಹರಕೆಮಾಡಿ ಸಲ್ಲಿಸಿರಿ. ದೇವರ ಸುತ್ತಲಿರುವವರೆಲ್ಲರು ಭಯಭಕ್ತಿಗೆ ಪಾತ್ರರಾದವರಿಗೆ ಕಾಣಿಕೆಗಳನ್ನು ತರಲಿ.
PSA 76:12 ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.
PSA 77:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು. ಆಸಾಫನ ಕೀರ್ತನೆ. ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ. ಹೌದು, ನನ್ನ ಸ್ವರದಿಂದ ದೇವರ ಕಡೆಗೆ ಕೂಗುತ್ತೇನೆ, ನನಗೆ ದೇವರು ಕಿವಿಗೊಡುವರು.
PSA 77:2 ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ.
PSA 77:3 ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿಸುವುದರಿಂದ ನನ್ನ ಆತ್ಮವು ಬಳಲಿ ಹೋಯಿತು.
PSA 77:4 ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು.
PSA 77:5 ಪೂರ್ವದ ದಿವಸಗಳನ್ನೂ ಆದಿಕಾಲದ ವರ್ಷಗಳನ್ನೂ ಯೋಚಿಸಿದೆ.
PSA 77:6 ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು. ನನ್ನ ಹೃದಯದಲ್ಲಿ ನಾನು ಧ್ಯಾನ ಮಾಡಿದೆ. ನನ್ನ ಆತ್ಮದಲ್ಲಿ ಪ್ರಶ್ನೆ ಹೀಗೆ ಮೂಡುತ್ತಿತ್ತು:
PSA 77:7 “ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ? ಇನ್ನೆಂದಿಗೂ ದಯೆತೋರದೆ ಇರುವರೋ?
PSA 77:8 ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ?
PSA 77:9 ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?”
PSA 77:10 ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು.
PSA 77:11 ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು.
PSA 77:12 ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿಮ್ಮ ಕೃತ್ಯಗಳನ್ನು ಯೋಚಿಸುವೆನು.”
PSA 77:13 ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು?
PSA 77:14 ಅದ್ಭುತಗಳನ್ನು ಮಾಡುವ ದೇವರು ನೀವೇ. ಜನರಲ್ಲಿ ನಿಮ್ಮ ಬಲವನ್ನು ತಿಳಿಯಮಾಡಿದ್ದೀರಿ.
PSA 77:15 ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ ನಿಮ್ಮ ಜನರನ್ನು ನಿಮ್ಮ ಬಲವಾದ ತೋಳಿನಿಂದ ವಿಮೋಚಿಸಿದ್ದೀರಿ.
PSA 77:16 ಜಲರಾಶಿಗಳು ನಿಮ್ಮನ್ನು ಕಂಡವು. ದೇವರೇ, ಜಲರಾಶಿಗಳು ನಿಮ್ಮನ್ನು ಕಂಡು ಹೊರಳಾಡಿದವು. ಅಗಾಧ ಸಾಗರಗಳು ಅಲ್ಲಕಲ್ಲೋಲವಾದವು.
PSA 77:17 ಮೋಡಗಳು ನೀರನ್ನು ಸುರಿಸಿದವು. ಆಕಾಶಗಳು ಗುಡುಗಿನಿಂದ ಶಬ್ದಮಾಡಿದವು. ನಿಮ್ಮ ಬಾಣಗಳು ಹಿಂದೆಯೂ ಮುಂದೆಯೂ ಹಾರಿ ಬಂದವು.
PSA 77:18 ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು. ಮಿಂಚುಗಳು ಜಗತ್ತನ್ನು ಬೆಳಗಿಸಿದವು. ಭೂಮಿಯು ನಡುಗಿ ಕದಲಿತು.
PSA 77:19 ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ.
PSA 77:20 ಮೋಶೆ ಆರೋನರ ಕೈಯಿಂದ ನಿಮ್ಮ ಜನರನ್ನು ಮಂದೆಯ ಹಾಗೆ ನಡೆಸಿದಿರಿ.
PSA 78:1 ಆಸಾಫನ ಮಸ್ಕೀಲ್ ಕೀರ್ತನೆ. ನನ್ನ ಜನರೇ, ನನ್ನ ಬೋಧನೆಗೆ ಕಿವಿಗೊಡಿರಿ; ನನ್ನ ಬಾಯಿ ಮಾತುಗಳನ್ನು ಲಾಲಿಸಿರಿ.
PSA 78:2 ನಾನು ಸಾಮ್ಯವನ್ನು ಹೇಳಲು ನನ್ನ ಬಾಯಿ ತೆರೆಯುವೆನು. ಪೂರ್ವದಿಂದಿರುವ ಗುಪ್ತವಾದವುಗಳನ್ನು ನುಡಿಯುವೆನು.
PSA 78:3 ಅವುಗಳನ್ನು ನಾವು ಕೇಳಿ ತಿಳಿದಿದ್ದೇವೆ. ನಮ್ಮ ಪಿತೃಗಳು ನಮಗೆ ವಿವರಿಸಿದರು.
PSA 78:4 ನಾವು ಸಹ ಯೆಹೋವ ದೇವರ ಸ್ತೋತ್ರಗಳನ್ನೂ ಅವರ ಶಕ್ತಿಯನ್ನೂ ದೇವರು ಮಾಡಿದ ಅದ್ಭುತಗಳನ್ನೂ ನಮ್ಮ ಮಕ್ಕಳಿಗೆ ವಿವರಿಸುವೆವು. ನಮ್ಮ ಮಕ್ಕಳು ಮುಂದಿನ ತಲೆಮಾರಿಗೆ ಮರೆಮಾಡದಿರುವರು.
PSA 78:5 ಅವರು ಯಾಕೋಬ ವಂಶದಲ್ಲಿ ಶಾಸನಗಳನ್ನು ಸ್ಥಾಪಿಸಿ, ಇಸ್ರಾಯೇಲಿನಲ್ಲಿ ನಿಯಮವನ್ನು ಇಟ್ಟು, ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, ಅವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ,
PSA 78:6 ಇದರಿಂದ ಮುಂದಿನ ತಲೆಮಾರಿಗೆ ವಾಕ್ಯವು ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
PSA 78:7 ಆಗ ಅವರು ದೇವರಲ್ಲಿ ತಮ್ಮ ಭರವಸೆ ಇಡುವರು. ಮತ್ತು ದೇವರ ಕ್ರಿಯೆಗಳನ್ನು ಮರೆತು ಬಿಡದೆ ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವರು.
PSA 78:8 ಆಗ ಅವರು ತಮ್ಮ ಪಿತೃಗಳ ಹಾಗೆ ಹಟಮಾರಿ ಮತ್ತು ದಂಗೆಕೋರ ಸಂತತಿಯವರು ಆಗಿರುವುದಿಲ್ಲ, ಅವರ ಹೃದಯವು ದೇವರಿಗೆ ಸತ್ಯವಾಗಿರಲಿಲ್ಲ, ಅವರ ಆತ್ಮವು ದೇವರಲ್ಲಿ ನಂಬಿಗಸ್ತಿಕೆಯಿಂದಲೂ ಇರಲಿಲ್ಲ.
PSA 78:9 ಎಫ್ರಾಯೀಮನ ಮಕ್ಕಳು ಆಯುಧಗಳನ್ನು ಧರಿಸಿ, ಬಿಲ್ಲುಗಳನ್ನು ಹೊತ್ತುಕೊಂಡಿದ್ದರೂ ಕಾಳಗದ ದಿವಸದಲ್ಲಿ ಹಿಂತಿರುಗಿಕೊಂಡರು.
PSA 78:10 ಅವರು ದೇವರ ಒಡಂಬಡಿಕೆಯನ್ನು ಕೈಗೊಳ್ಳಲಿಲ್ಲ. ದೇವರ ನಿಯಮದಲ್ಲಿ ನಡೆಯಲೊಲ್ಲದೆ ಇದ್ದರು.
PSA 78:11 ದೇವರು ಅವರಿಗೆ ತೋರಿಸಿದ ಕೃತ್ಯಗಳನ್ನೂ ದೇವರು ಮಾಡಿದ ಅದ್ಭುತಗಳನ್ನೂ ಮರೆತುಬಿಟ್ಟರು.
PSA 78:12 ದೇವರು ಪಿತೃಗಳ ಮುಂದೆ ಈಜಿಪ್ಟ್ ದೇಶದಲ್ಲಿ, ಚೋವನ್ ಬೈಲಿನಲ್ಲಿ ಅದ್ಭುತಗಳನ್ನು ಮಾಡಿದರು.
PSA 78:13 ದೇವರು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದರು. ನೀರನ್ನು ಗೋಡೆಯಾಗಿ ನಿಲ್ಲಿಸಿದರು.
PSA 78:14 ದೇವರು ಹಗಲಿನಲ್ಲಿ ಮೇಘದಿಂದಲೂ ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡೆಸಿದರು.
PSA 78:15 ಮರುಭೂಮಿಯಲ್ಲಿ ದೇವರು ಬಂಡೆಗಳನ್ನು ಸೀಳಿ, ಜನರಿಗೆ ಮಹಾ ಜಲಾಗಾಧಗಳ ಹಾಗೆ ನೀರನ್ನು ಕುಡಿಯಲು ಕೊಟ್ಟರು.
PSA 78:16 ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು, ನದಿಗಳನ್ನು ನೀರನ್ನು ಹರಿಯಮಾಡಿದರು.
PSA 78:17 ಆದರೆ ಜನರು ಇನ್ನೂ ದೇವರಿಗೆ ವಿರೋಧವಾಗಿ ಪಾಪಮಾಡಿ, ಮರುಭೂಮಿಯಲ್ಲಿ ಮಹೋನ್ನತರಿಗೆ ವಿರೋಧವಾಗಿ ಕೋಪವನ್ನೆಬ್ಬಿಸಿದರು.
PSA 78:18 ದೇವರನ್ನು ತಮ್ಮ ಹೃದಯದಲ್ಲಿ ಬೇಕೆಂದು ಪರೀಕ್ಷಿಸಿ, ತಮ್ಮ ದುರಾಶೆಗಳಿಗೋಸ್ಕರ ಆಹಾರವನ್ನು ಕೇಳಿದರು.
PSA 78:19 ಹೌದು, ಅವರು ದೇವರಿಗೆ ವಿರೋಧವಾಗಿ ಮಾತನಾಡಿ, “ದೇವರು ಅರಣ್ಯದಲ್ಲಿ ಭೋಜನವನ್ನು ಸಿದ್ಧ ಮಾಡಬಲ್ಲನೋ?
PSA 78:20 ಇಗೋ, ದೇವರು ಬಂಡೆಯನ್ನು ಹೊಡೆಯಲಾಗಿ, ನೀರು ಚಿಮ್ಮಿ ಹೊರಟಿತು. ಹಳ್ಳಗಳು ದಡಮೀರಿ ಹರಿದವು. ಅರಣ್ಯದಲ್ಲಿ, ರೊಟ್ಟಿಯನ್ನು ಸಹ ಕೊಡಬಲ್ಲನೋ? ತಮ್ಮ ಜನರಿಗೆ ಮಾಂಸವನ್ನು ಸಿದ್ಧಮಾಡುವನೋ?” ಎಂದರು.
PSA 78:21 ಯೆಹೋವ ದೇವರು ಇದನ್ನು ಕೇಳಿ ಬೇಸರಗೊಂಡರು. ಯಾಕೋಬ್ಯರಲ್ಲಿ ಬೆಂಕಿ ಹೊತ್ತಿತು. ಇಸ್ರಾಯೇಲರು ದಂಡನೆಗೆ ಒಳಗಾದರು.
PSA 78:22 ಏಕೆಂದರೆ ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ. ದೇವರ ರಕ್ಷಣೆಯಲ್ಲಿ ಭರವಸೆ ಇಡಲಿಲ್ಲ.
PSA 78:23 ಆದರೆ ದೇವರು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ, ಆಕಾಶದ ಕದಗಳನ್ನು ತೆರೆದರು.
PSA 78:24 ಉಣ್ಣುವುದಕ್ಕೆ ಮನ್ನವನ್ನು ಜನರ ಮೇಲೆ ಸುರಿಸಿ, ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟರು.
PSA 78:25 ದೇವದೂತರ ಆಹಾರವನ್ನು ಮಾನವರು ತಿಂದರು. ದೇವರು ಅವರಿಗೆ ಬೇಕಾದಷ್ಟು ಕಳುಹಿಸಿದರು.
PSA 78:26 ಮೂಡಣ ಗಾಳಿಯನ್ನು ಆಕಾಶದಲ್ಲಿ ಹುಟ್ಟಿಸಿ, ತಮ್ಮ ಶಕ್ತಿಯಿಂದ ದಕ್ಷಿಣ ಗಾಳಿಯನ್ನು ಬರಮಾಡಿದರು.
PSA 78:27 ಧೂಳಿನಂತೆ ಮಾಂಸವನ್ನು ಸುರಿಸಿದರು. ಸಮುದ್ರದ ಮರಳಿನಂತೆ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿದರು.
PSA 78:28 ಅವರ ಮಧ್ಯದಲ್ಲಿಯೂ ಅವರ ಗುಡಾರಗಳ ಸುತ್ತಲೂ ಸುರಿಸಿದರು.
PSA 78:29 ಆಗ ಅವರು ತಿಂದು ಬಹಳ ತೃಪ್ತಿಗೊಂಡರು. ಅವರು ಆಶಿಸಿದ್ದನ್ನು ದೇವರು ಕೊಟ್ಟರು.
PSA 78:30 ಅವರು ತಮ್ಮ ಆಶೆಯನ್ನು ಬಿಡದೆ, ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ,
PSA 78:31 ದೇವರ ಶಿಕ್ಷೆ ಅವರ ಮೇಲೆ ಬಿತ್ತು. ಅವರಲ್ಲಿ ಕೊಬ್ಬಿದವರು ಸತ್ತರು. ಇಸ್ರಾಯೇಲರ ಪ್ರಾಯಸ್ಥರು ಸಹ ಸತ್ತುಹೋದರು.
PSA 78:32 ಇದೆಲ್ಲಾ ಆದಾಗ್ಯೂ ಜನರು ಇನ್ನೂ ಪಾಪಮಾಡುತ್ತಿದ್ದರು. ದೇವರ ಅದ್ಭುತಗಳನ್ನು ಕಂಡರೂ ನಂಬಲಿಲ್ಲ.
PSA 78:33 ಆಗ ದೇವರು ಅವರ ದಿವಸಗಳನ್ನು ವ್ಯರ್ಥವಾಗಿಯೂ ಅವರ ವರ್ಷಗಳನ್ನು ಕಳವಳದಲ್ಲಿಯೂ ಕಳೆಯ ಹೋಗಲು ಅನುಮತಿಸಿದರು.
PSA 78:34 ದೇವರು ಜನರನ್ನು ದಂಡಿಸುವಾಗೆಲ್ಲಾ ಅವರು ದೇವರನ್ನು ಹುಡುಕಿದರು. ಆಸಕ್ತಿಯಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು.
PSA 78:35 ದೇವರು ತಮ್ಮ ಬಂಡೆ ಎಂದೂ ಮಹೋನ್ನತರಾದ ದೇವರು ತಮ್ಮ ವಿಮೋಚಕರೆಂದೂ ಜ್ಞಾಪಕ ಮಾಡಿಕೊಳ್ಳುತ್ತಿದ್ದರು.
PSA 78:36 ಆದರೂ ಅವರು ತಮ್ಮ ಬಾಯಿಗಳಿಂದ ದೇವರಿಗೆ ಮುಖಸ್ತುತಿ ಮಾಡಿ, ತಮ್ಮ ನಾಲಿಗೆಯಿಂದ ದೇವರನ್ನು ಸುಳ್ಳಾಗಿ ಹೋಗಳುತ್ತಿದ್ದರು.
PSA 78:37 ಅವರ ಹೃದಯವು ದೇವರ ಸಂಗಡ ಸ್ಥಿರವಾಗಿರಲಿಲ್ಲ. ಅವರು ದೇವರ ಒಡಂಬಡಿಕೆಯಲ್ಲಿ ನಂಬಿಗಸ್ತರಾಗಿರಲಿಲ್ಲ.
PSA 78:38 ಆದಾಗ್ಯೂ ದೇವರು ಅವರನ್ನು ಕರುಣಿಸಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಬಿಟ್ಟುಬಿಟ್ಟರು. ಹೌದು, ಅನೇಕ ಸಾರಿ ದೇವರು ಕೋಪಿಸಿಕೊಳ್ಳದಿದ್ದರು, ತಮ್ಮ ಬೇಸರವನ್ನು ದೇವರು ಪ್ರಯೋಗಿಸಲಿಲ್ಲ.
PSA 78:39 ಜನರು ಬರೀ ಮಾಂಸ ಮಾತ್ರದವರೂ ತಿರುಗಿಕೊಳ್ಳದೆ ಹೋಗುವ ಗಾಳಿಯೂ ಆಗಿದ್ದಾರೆಂದು ದೇವರು ಜ್ಞಾಪಕಮಾಡಿಕೊಂಡರು.
PSA 78:40 ಎಷ್ಟೋ ಸಾರಿ ಜನರು ಮರುಭೂಮಿಯಲ್ಲಿ ದೇವರಿಗೆ ಬೇಸರಮಾಡಿದರು. ಕಾಡಿನಲ್ಲಿ ದೇವರನ್ನು ದುಃಖಪಡಿಸಿದರು.
PSA 78:41 ಅವರು ತಿರುಗಿಬಿದ್ದು ದೇವರನ್ನು ಪರೀಕ್ಷಿಸಿದರು. ಇಸ್ರಾಯೇಲರ ಪರಿಶುದ್ಧರಿಗೆ ಬೇಸರಗೊಳಿಸಿದರು.
PSA 78:42 ದೇವರು ಅವರನ್ನು ವೈರಿಯಿಂದ ವಿಮೋಚಿಸಿದ್ದನ್ನೂ ತಾವು ತೋರಿಸಿದ ಶಕ್ತಿಯನ್ನೂ ಅವರು ಸ್ಮರಿಸಲಿಲ್ಲ.
PSA 78:43 ಈಜಿಪ್ಟಿನಲ್ಲಿ ಆದ ಸೂಚಕಕಾರ್ಯಗಳನ್ನೂ, ಚೋವನ್ ಬಯಲಿನಲ್ಲಿ ನಡೆಸಿದ ಅದ್ಭುತಗಳನ್ನು ಮಾಡಿದ ದಿವಸವನ್ನೂ ಅವರು ಜ್ಞಾಪಕ ಮಾಡಿಕೊಳ್ಳಲಿಲ್ಲ.
PSA 78:44 ಅವರು ಕುಡಿಯಲಾರದ ಹಾಗೆ ಅವರ ನದಿಗಳು ರಕ್ತವಾದವು. ಅವರ ಹೊಳೆಗಳು ಸಹ ರಕ್ತವಾಗಿ ಮಾರ್ಪಟ್ಟವು.
PSA 78:45 ಅವರಲ್ಲಿ ವಿವಿಧ ಹುಳುಗಳು ಬಂದವು. ಅವು ಅವರನ್ನು ಹಾನಿಮಾಡಿದವು. ಕಪ್ಪೆಗಳು ಸಹ ಕಳುಹಿಸಲಾದವು. ಅವು ಸಹ ಅವರನ್ನು ಹಾನಿಮಾಡಿದವು.
PSA 78:46 ಅವರ ಬೆಳೆಗಳು ಕಂಬಳಿ ಹುಳುಗಳಿಗೂ ಅವರ ವ್ಯವಸಾಯ ಮಿಡತೆಗಳಿಗೂ ತುತ್ತಾದವು.
PSA 78:47 ಅವರ ದ್ರಾಕ್ಷಿಬಳ್ಳಿಗಳು ಕಲ್ಮಳೆಯಿಂದಲೂ ಅವರ ಅತ್ತಿಮರಗಳು ಮಂಜಿನಿಂದಲೂ ನಾಶವಾದವು.
PSA 78:48 ಅವರ ದನಗಳು ಕಲ್ಮಳೆಗೂ ಅವರ ಪಶುಗಳು ಸಿಡಿಲಿಗೂ ಒಳಪಟ್ಟವು.
PSA 78:49 ದೇವರು ನಾಶದ ದೇವದೂತರನ್ನು ಕಳುಹಿಸುತ್ತಾ ತಮ್ಮ ಬೇಸರದಿಂದಲೂ ದುಃಖದಿಂದಲೂ ಇಕ್ಕಟ್ಟುಗಳನ್ನೂ ಅವರ ಮೇಲೆ ಸುರಿಯಮಾಡಿದರು.
PSA 78:50 ತಮ್ಮ ಬೇಸರಕ್ಕೆ ದಾರಿಯನ್ನು ಮಾಡಿ, ಅವರನ್ನು ಪೂರ್ಣವಾಗಿ ದಂಡಿಸಿದರು. ಅವರ ಜೀವವನ್ನು ವ್ಯಾಧಿಗೆ ಒಪ್ಪಿಸಿಬಿಟ್ಟು,
PSA 78:51 ಈಜಿಪ್ಟಿನಲ್ಲಿ ಚೊಚ್ಚಲರೆಲ್ಲರನ್ನೂ, ಹಾಮನ ಗುಡಾರಗಳಲ್ಲಿ ಪುರುಷತ್ವದ ಪ್ರಥಮ ಫಲವನ್ನೂ ದಂಡಿಸಿದರು.
PSA 78:52 ಆದರೆ ದೇವರು ಮಂದೆಯ ಹಾಗೆ ತಮ್ಮ ಜನರನ್ನು ಹೊರತಂದು, ಕುರಿಗಳನ್ನು ನಡೆಸುವಂತೆ ಮರುಭೂಮಿಯಲ್ಲಿ ಅವರನ್ನು ನಡೆಸಿದರು.
PSA 78:53 ಜನರನ್ನು ಸುರಕ್ಷಿತವಾಗಿ ನಡೆಸಿದ ಕಾರಣ ಅವರು ಹೆದರಲಿಲ್ಲ. ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
PSA 78:54 ಹೀಗೆ ದೇವರು ತಮ್ಮ ಭುಜಬಲದಿಂದ ಪವಿತ್ರ ನಾಡಿನ ತಮ್ಮ ಮೇರೆಗೂ, ಈ ಪರ್ವತ ನಾಡಿಗೂ ಅವರನ್ನು ಬರಮಾಡಿದರು.
PSA 78:55 ದೇವರು ಜನಾಂಗಗಳನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲರನ್ನು ವಾಸಿಸುವಂತೆ ಮಾಡಿದರು.
PSA 78:56 ಆದರೆ ಜನರು ಮಹೋನ್ನತರಾದ ದೇವರನ್ನು ಪರೀಕ್ಷಿಸಿ ವಿರೋಧಿಸಿದರು; ದೇವರ ಶಾಸನಗಳನ್ನು ಅವರು ಕೈಗೊಳ್ಳಲಿಲ್ಲ.
PSA 78:57 ತಮ್ಮ ಪಿತೃಗಳ ಹಾಗೆ ಉಪಕಾರ ನೆನಸದೆ, ಅಪನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ಓರೆಯಾದರು.
PSA 78:58 ತಮ್ಮ ಉನ್ನತ ಸ್ಥಳಗಳಿಂದ ದೇವರಿಗೆ ಬೇಸರಗೊಳಿಸಿದರು. ತಮ್ಮ ಮೂರ್ತಿಗಳಿಂದ ದೇವರಿಗೆ ದುಃಖಪಡಿಸಿದರು.
PSA 78:59 ದೇವರು ಇದನ್ನು ಕಂಡಾಗ, ಬೇಸರಗೊಂಡು ಇಸ್ರಾಯೇಲನ್ನು ಪರಿಪೂರ್ಣವಾಗಿ ತಿರಸ್ಕರಿಸಿಬಿಟ್ಟರು.
PSA 78:60 ದೇವರು ಸಿಲೋವಿನ ಗುಡಾರನ್ನೂ ಜನರೊಳಗೆ ಹಾಕಿದ ಗುಡಾರವನ್ನೂ ತಳ್ಳಿಬಿಟ್ಟರು.
PSA 78:61 ತಮ್ಮ ಬಲದ ಮಂಜೂಷವನ್ನು ಸೆರೆಗೆ ಒಪ್ಪಿಸಿಬಿಟ್ಟರು. ತಮ್ಮ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟರು.
PSA 78:62 ದೇವರು ತಮ್ಮ ಜನರನ್ನು ಖಡ್ಗಕ್ಕೆ ಒಪ್ಪಿಸಿಕೊಟ್ಟರು. ತಮ್ಮ ಸ್ವಾಸ್ಥತೆಗೆ ವಿರೋಧವಾಗಿದ್ದರು.
PSA 78:63 ಅವರ ಯುವಕರನ್ನು ಬೆಂಕಿಯು ದಹಿಸಿಬಿಟ್ಟಿತು. ಅವರ ಕನ್ಯೆಯರು ವಿವಾಹ ಗೀತೆಗಳನ್ನು ಹಾಡಲಿಲ್ಲ.
PSA 78:64 ಅವರ ಯಾಜಕರು ಖಡ್ಗದಿಂದ ಸಂಹಾರವಾದರು. ಅವರ ವಿಧವೆಯರು ಗೋಳಾಡಲಿಲ್ಲ.
PSA 78:65 ಆಗ ಯೆಹೋವ ದೇವರು ಪ್ರತಿಕ್ರಿಯೆಯನ್ನು ಪ್ರಕಟಿಸಿದರು. ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆ ಸಂರಕ್ಷಿಸಲಾದರು.
PSA 78:66 ತಮ್ಮ ವೈರಿಗಳನ್ನು ದಂಡಿಸಿದರು. ನಿತ್ಯನಿಂದೆಯೇ ಅವರ ಪಾಲಾಯಿತು.
PSA 78:67 ಆಗ ದೇವರು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯೀಮನ ಗೋತ್ರವನ್ನು ಆಯ್ದುಕೊಳ್ಳದೆ,
PSA 78:68 ಯೆಹೂದನ ಕುಲವನ್ನೂ, ತಾನು ಪ್ರೀತಿಮಾಡಿದ ಚೀಯೋನ್ ಪರ್ವತವನ್ನೂ ಆಯ್ದುಕೊಂಡರು.
PSA 78:69 ಉನ್ನತವಾದವುಗಳಂತೆಯೂ, ಯುಗಯುಗಕ್ಕೂ ತಾವು ಅಸ್ತಿವಾರ ಹಾಕಿದ ಭೂಮಿಯಂತೆಯೂ ತಮ್ಮ ಪರಿಶುದ್ಧ ಸ್ಥಳವನ್ನು ಕಟ್ಟಿದರು.
PSA 78:70 ತಮ್ಮ ಸೇವಕ ದಾವೀದನನ್ನು ಆಯ್ದುಕೊಂಡು, ಕುರಿಹಟ್ಟಿಯಿಂದ ಅವನನ್ನು ತೆಗೆದುಕೊಂಡರು.
PSA 78:71 ತಮ್ಮ ಪ್ರಜೆಯಾದ ಯಾಕೋಬ್ಯರನ್ನೂ ತಮ್ಮ ಬಾಧ್ಯತೆಯಾದ ಇಸ್ರಾಯೇಲರನ್ನೂ ಮೇಯಿಸುವ ಕುರುಬನನ್ನಾಗಿ ದಾವೀದನನ್ನು ನೇಮಿಸಿದರು.
PSA 78:72 ದಾವೀದನು ತಮ್ಮ ಹೃದಯದ ಯಥಾರ್ಥತೆಯ ಪ್ರಕಾರ ಜನರನ್ನು ಪೋಷಿಸಿ ತಮ್ಮ ಹಸ್ತ ಕೌಶಲ್ಯದಿಂದ ಅವರನ್ನು ನಡೆಸಿದನು.
PSA 79:1 ಆಸಾಫನ ಕೀರ್ತನೆ. ದೇವರೇ, ಜನಾಂಗಗಳು ನಿಮ್ಮ ಬಾಧ್ಯತೆಗೆ ಬಂದು, ನಿಮ್ಮ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
PSA 79:2 ನಿಮ್ಮ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ನಿಮ್ಮ ಭಕ್ತರ ಮಾಂಸವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿದ್ದಾರೆ.
PSA 79:3 ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ. ಅವರನ್ನು ಹೂಳಿಡುವವನೊಬ್ಬನೂ ಇಲ್ಲ.
PSA 79:4 ನಾವು ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
PSA 79:5 ಯೆಹೋವ ದೇವರೇ ಎಷ್ಟರವರೆಗೆ ಕೋಪಗೊಂಡಿರುವಿರಿ? ಸತತವೂ ನೀವು ಕೋಪದಿಂದಿರುವಿರೋ? ಎಷ್ಟರವರೆಗೆ ನಿಮ್ಮ ರೋಷವು ಬೆಂಕಿಯಂತೆ ಉರಿಯುವುದು?
PSA 79:6 ನಿಮ್ಮನ್ನು ಸ್ವೀಕರಿಸದ ಜನಾಂಗಗಳ ಮೇಲೆಯೂ, ನಿಮ್ಮ ಹೆಸರನ್ನು ಕರೆಯದ ರಾಜ್ಯಗಳ ಮೇಲೆಯೂ ನಿಮ್ಮ ಕೋಪವನ್ನು ಸುರಿಸಿಬಿಡಿರಿ.
PSA 79:7 ಏಕೆಂದರೆ ಅವರು ಯಾಕೋಬರನ್ನು ನುಂಗಿಬಿಟ್ಟಿದ್ದಾರೆ. ಅವರ ನಿವಾಸವನ್ನು ಹಾಳು ಮಾಡಿದ್ದಾರೆ.
PSA 79:8 ಪೂರ್ವಿಕರ ಪಾಪಗಳನ್ನು ನಮಗೆ ವಿರೋಧವಾಗಿ ಜ್ಞಾಪಕ ಮಾಡಿಕೊಳ್ಳಬೇಡಿರಿ. ನಿಮ್ಮ ಕರುಣೆಯು ಬೇಗ ನಮ್ಮನ್ನು ಎದುರುಗೊಳ್ಳಲಿ. ನಾವು ಬಹಳವಾಗಿ ಕುಗ್ಗಿಹೋಗಿದ್ದೇವೆ.
PSA 79:9 ನಮ್ಮ ರಕ್ಷಕರಾಗಿರುವವರೇ, ನಮ್ಮ ದೇವರೇ, ನಿಮ್ಮ ಹೆಸರಿನ ಘನದ ನಿಮಿತ್ತ ನಮಗೆ ಸಹಾಯಮಾಡಿರಿ. ನಿಮ್ಮ ಹೆಸರಿಗೆ ತಕ್ಕಂತೆ ನಮ್ಮನ್ನು ಬಿಡಿಸಿರಿ. ನಮ್ಮ ಪಾಪಗಳನ್ನು ತೊಳೆದುಬಿಡಿರಿ.
PSA 79:10 ಅವರ ದೇವರು ಎಲ್ಲಿ ಎಂದು ಇತರ ಜನಾಂಗಗಳು ಏಕೆ ಹೇಳಬೇಕು? ಚೆಲ್ಲಿರುವ ನಿಮ್ಮ ಸೇವಕರ ರಕ್ತದ ಪ್ರತಿದಂಡನೆಯು ನಮ್ಮ ಕಣ್ಣುಗಳ ಮುಂದೆ ಇತರ ಜನಾಂಗಗಳಲ್ಲಿ ಗೊತ್ತಾಗಲಿ.
PSA 79:11 ಸೆರೆಯವರ ನಿಟ್ಟುಸಿರು ನಿಮ್ಮ ಮುಂದೆ ಬರಲಿ. ನಿಮ್ಮ ಮಹಾಶಕ್ತಿಯ ಪ್ರಕಾರ ಸಾಯುವುದಕ್ಕಿರುವವರನ್ನು ಕಾಪಾಡಿರಿ.
PSA 79:12 ಯೆಹೋವ ದೇವರೇ, ನಿಮ್ಮನ್ನು ನಿಂದಿಸಿದ ನಮ್ಮ ನೆರೆಯವರಿಗೆ ಏಳರಷ್ಟು ಪ್ರತಿದಂಡನೆಯನ್ನು ಅವರ ಮಡಿಲಿಗೆ ಕೊಡಿರಿ.
PSA 79:13 ಆಗ ನಿಮ್ಮ ಜನರೂ, ನಿಮ್ಮ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿಮ್ಮನ್ನು ಕೊಂಡಾಡಿ, ತಲತಲಾಂತರಕ್ಕೂ ನಿಮ್ಮ ಸ್ತೋತ್ರವನ್ನು ಸಾರುವೆವು.
PSA 80:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಒಡಂಬಡಿಕೆಯ ಲಿಲಿಹೂಗಳು” ಎಂಬ ರಾಗ. ಆಸಾಫನ ಕೀರ್ತನೆ. ಮಂದೆಯಂತೆ ಯೋಸೇಫ್ಯರನ್ನು ನಡೆಸುವ ಇಸ್ರಾಯೇಲರ ಕುರುಬ ಆಗಿರುವ ದೇವರೇ, ಕಿವಿಗೊಡಿರಿ. ಕೆರೂಬಿಗಳ ಮಧ್ಯದಲ್ಲಿ ಆಸೀನವಾಗಿರುವ ದೇವರೇ ಪ್ರಕಾಶಿಸಿರಿ.
PSA 80:2 ಎಫ್ರಾಯೀಮ್, ಬೆನ್ಯಾಮೀನ್, ಮನಸ್ಸೆಯರ ಮುಂದೆ ನಿಮ್ಮ ಪರಾಕ್ರಮವನ್ನು ತೋರಿಸಲು ಬಂದು ನಮ್ಮನ್ನು ರಕ್ಷಿಸಿರಿ.
PSA 80:3 ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.
PSA 80:4 ಸರ್ವಶಕ್ತ ದೇವರಾಗಿರುವ ಯೆಹೋವ ದೇವರೇ, ಎಷ್ಟರವರೆಗೆ ನಿಮ್ಮ ಜನರ ಪ್ರಾರ್ಥನೆಗೆ ವಿರೋಧವಾಗಿ ಬೇಸರಗೊಳ್ಳುವಿರಿ?
PSA 80:5 ರೋದನವೇ ನಮ್ಮ ಅನ್ನವಾಗುವಂತೆಯೂ ಅಶ್ರುಧಾರೆಯೇ ಪಾನವಾಗುವಂತೆಯೂ ಅನುಮತಿಸಿದ್ದೀರಿ.
PSA 80:6 ನಮ್ಮ ನೆರೆಯವರ ವಿವಾದಕ್ಕೆ ನಮ್ಮನ್ನು ಗುರಿಮಾಡಿದ್ದೀರಿ. ನಮ್ಮ ಶತ್ರುಗಳು ನಮ್ಮನ್ನು ಅಪಹಾಸ್ಯ ಮಾಡುತ್ತಾರೆ.
PSA 80:7 ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.
PSA 80:8 ನೀವು ದ್ರಾಕ್ಷಾಲತೆಯನ್ನು ಈಜಿಪ್ಟಿನಿಂದ ತಂದು, ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿದ್ದೀರಿ.
PSA 80:9 ಅದಕ್ಕಾಗಿ ಸ್ಥಳ ಸಿದ್ಧಮಾಡಿದಿರಿ. ಆಗ ಅದು ಬೇರೂರಿ ದೇಶವನ್ನು ತುಂಬಿತು.
PSA 80:10 ಅದರ ನೆರಳಿನಿಂದ ಬೆಟ್ಟಗಳೂ ಅದರ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲಾದವು.
PSA 80:11 ಅದು ತನ್ನ ರೆಂಬೆಗಳನ್ನು ಸಮುದ್ರದವರೆಗೂ, ತನ್ನ ಬಳ್ಳಿಗಳನ್ನು ನದಿಯವರೆಗೂ ಹರಡಿಸಿತು.
PSA 80:12 ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ?
PSA 80:13 ಅಡವಿಯಿಂದ ಬಂದ ಹಂದಿಗಳು ಅದನ್ನು ಹಾಳು ಮಾಡುತ್ತವೆ; ಕಾಡಿನ ಮೃಗಗಳು ಅದನ್ನು ತಿಂದು ಹಾಕುತ್ತವೆ.
PSA 80:14 ಸೇನಾಧೀಶ್ವರ ದೇವರೇ, ನಿಮ್ಮ ದರ್ಶನವಾಗಲಿ. ನೀವು ಪರಲೋಕದಿಂದ ಕಟಾಕ್ಷಿಸಿರಿ. ಈ ದ್ರಾಕ್ಷಾಲತೆಯನ್ನು ಪರಾಮರಿಸಿರಿ.
PSA 80:15 ನಿಮ್ಮ ಬಲಗೈ ನೆಟ್ಟ ಸಸಿಯನ್ನೂ ನೀವು ನಿಮಗೆ ಬೆಳಸಿಕೊಂಡ ಬಳ್ಳಿಯನ್ನೂ ಪರಾಮರಿಸಿರಿ.
PSA 80:16 ನಿಮ್ಮ ದ್ರಾಕ್ಷಿಬಳ್ಳಿ ಕಡಿದು ಬೆಂಕಿಯಿಂದ ಸುಡಲಾಗಿದೆ. ನೀವು ಖಂಡಿಸಲು ನಿಮ್ಮ ಜನರು ಬಾಧಿತರಾಗಿ ಹೋಗುವರು.
PSA 80:17 ನಿಮ್ಮ ಬಲಗಡೆಯಲ್ಲಿರುವಾತನ ಮೇಲೆ ನಿಮ್ಮ ಹಸ್ತವಿರಲಿ. ನಿಮಗಾಗಿ ಆ ನರಪುತ್ರನನ್ನು ಎಬ್ಬಿಸಿದ್ದೀರಿ.
PSA 80:18 ಆಗ ನಾವು ನಿಮ್ಮಿಂದ ತೊಲಗುವುದಿಲ್ಲ. ನಮ್ಮನ್ನು ಉಜ್ಜೀವಿಸಿರಿ, ಆಗ ನಿಮ್ಮ ಹೆಸರನ್ನು ಕರೆಯುವೆವು.
PSA 80:19 ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.
PSA 81:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಗಿತ್ತೀ ರಾಗದಿಂದ ಹಾಡತಕ್ಕದ್ದು. ಆಸಾಫನ ಕೀರ್ತನೆ. ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿ ಗೈಯಿರಿ.
PSA 81:2 ವಾದ್ಯ ಪ್ರಾರಂಭಿಸಿರಿ; ದಮ್ಮಡಿಯನ್ನೂ, ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ಬಾರಿಸಿರಿ.
PSA 81:3 ಅಮಾವಾಸ್ಯೆಯಲ್ಲಿಯೂ ಉತ್ಸವ ದಿವಸವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.
PSA 81:4 ಏಕೆಂದರೆ ಇದು ಇಸ್ರಾಯೇಲಿಗೆ ಕಟ್ಟಳೆ. ಯಾಕೋಬನ ದೇವರ ನ್ಯಾಯ ಪ್ರಮಾಣವೇ.
PSA 81:5 ದೇವರು ಈಜಿಪ್ಟಿಗೆ ವಿರೋಧವಾಗಿ ಹೊರಟಾಗ, ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ನಾವು ತಿಳಿಯದ ಭಾಷೆಯನ್ನು ಕೇಳಿದಾಗ:
PSA 81:6 “ಅವರ ಹೆಗಲ ಮೇಲಿಂದ ಭಾರವನ್ನು ತೆಗೆದುಹಾಕಿದೆನು, ಬುಟ್ಟಿಗಳಿಂದ ಅವರ ಕೈಗಳು ಬಿಡುಗಡೆಯಾದವು.
PSA 81:7 ಇಕ್ಕಟ್ಟಿನಲ್ಲಿ ನೀವು ಕರೆಮಾಡಿದಿರಿ, ಆಗ ನಾನು ನಿಮ್ಮನ್ನು ವಿಮೋಚಿಸಿದೆನು. ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟೆನು. ಮೆರೀಬಾ ನೀರಿನ ಹತ್ತಿರ ನಿಮ್ಮನ್ನು ಪರೀಕ್ಷಿಸಿದೆನು.
PSA 81:8 ನನ್ನ ಜನರೇ ಕೇಳಿರಿ, ಇಸ್ರಾಯೇಲೇ, ನೀನು ನನ್ನ ಮಾತನ್ನು ಕೇಳಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ.
PSA 81:9 ನಿಮ್ಮಲ್ಲಿ ಅನ್ಯದೇವರು ಇರಬಾರದು; ಪರದೇವರಿಗೆ ಅಡ್ಡ ಬೀಳಬಾರದು.
PSA 81:10 ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ; ನಿಮ್ಮ ಬಾಯಿಯನ್ನು ಅಗಲವಾಗಿ ತೆರೆ, ಆಗ ಅದನ್ನು ತುಂಬಿಸುವೆನು.
PSA 81:11 “ಆದರೆ ನನ್ನ ಜನರು ನನ್ನ ಮಾತನ್ನು ಕೇಳಲಿಲ್ಲ; ಇಸ್ರಾಯೇಲು ನನಗೆ ಅಧೀನವಾಗಲಿಲ್ಲ.
PSA 81:12 ಆದ್ದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಂತೆ ನಡೆದುಕೊಂಡರು.
PSA 81:13 “ಹಾ, ನನ್ನ ಜನರು ನನ್ನ ಮಾತನ್ನು ಕೇಳಿದರೆ ಒಳ್ಳೆದಾಗಿತ್ತು! ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಮೇಲಾಗುತ್ತಿತ್ತು,
PSA 81:14 ತೀವ್ರವಾಗಿ ಅವರ ಶತ್ರುಗಳನ್ನು ಧೀನಪಡಿಸುವೆನು. ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
PSA 81:15 ಯೆಹೋವ ದೇವರನ್ನು ದ್ವೇಷಿಸುವವರು ತಮ್ಮನ್ನು ತಾವೇ ದೇವರಿಗೆ ಒಪ್ಪಿಸಿಕೊಡುವರು. ಆದರೂ ಅವರಿಗೆ ಶಿಕ್ಷೆ ತಪ್ಪುವುದಿಲ್ಲ.
PSA 81:16 ನಿಮಗಾದರೋ ಉತ್ತಮವಾದ ಗೋಧಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ನಿಮ್ಮನ್ನು ತೃಪ್ತಿಪಡಿಸುವೆನು.”
PSA 82:1 ಆಸಾಫನ ಕೀರ್ತನೆ. ದೇವರು ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ, ದೇವರುಗಳ ಮಧ್ಯದಲ್ಲಿ ನ್ಯಾಯತೀರಿಸುತ್ತಾರೆ.
PSA 82:2 “ಎಷ್ಟರವರೆಗೆ ಅನ್ಯಾಯವಾಗಿ ತೀರ್ಪು ನೀಡುವಿರಿ. ಎಲ್ಲಿಯತನಕ ದುಷ್ಟರಿಗೆ ಮುಖದಾಕ್ಷಿಣ್ಯ ಮಾಡುವಿರಿ?
PSA 82:3 ದರಿದ್ರನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿರಿ. ದೀನನಿಗೂ, ಬಡವನಿಗೂ ನ್ಯಾಯವನ್ನು ಕೊಡಿರಿ.
PSA 82:4 ದರಿದ್ರನನ್ನೂ, ಬಡವನನ್ನೂ ತಪ್ಪಿಸಿರಿ. ಅವರನ್ನು ದುಷ್ಟರ ಕೈಯೊಳಗಿಂದ ಬಿಡಿಸಿರಿ.
PSA 82:5 “ದೇವರುಗಳು ಅರಿಯರು ಏನೂ, ಅವರು ಗ್ರಹಿಸುವುದಿಲ್ಲ ಏನೂ. ಅವರು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತಿದೆ.
PSA 82:6 “ನಾನು ಮುಂದುವರೆಸಿ ಅವರಿಗೆ ಹೇಳಿದ್ದು, ‘ನೀವು ದೇವರುಗಳು, ನೀವೆಲ್ಲರು ಮಹೋನ್ನತ ದೇವರ ಮಕ್ಕಳು,’ ಎಂದು ಹೇಳಿದೆನು.
PSA 82:7 ಆದರೂ ಕೇವಲ ಮನುಷ್ಯರ ಹಾಗೆ ನೀವು ಸಾಯುವಿರಿ. ಇತರ ನಾಯಕರಂತೆಯೇ ಬಿದ್ದು ಹೋಗುವಿರಿ.”
PSA 82:8 ದೇವರೇ, ಬನ್ನಿರಿ ಭೂಮಿಗೆ ನ್ಯಾಯತೀರಿಸಿರಿ. ಏಕೆಂದರೆ ಜನಾಂಗಗಳೆಲ್ಲಾ ನಿಮಗೇ ಸೇರಿರುತ್ತವೆ.
PSA 83:1 ಒಂದು ಗೀತೆ. ಆಸಾಫನ ಕೀರ್ತನೆ. ದೇವರೇ, ಮೌನವಾಗಿರಬೇಡಿರಿ. ನಮ್ಮ ಕೂಗಿಗೆ ನಿಮ್ಮ ಪ್ರತಿಕ್ರಿಯೆ ನೀಡಿರಿ. ದೇವರೇ, ಸುಮ್ಮನಿರಬೇಡಿರಿ.
PSA 83:2 ಏಕೆಂದರೆ ಇಗೋ, ನಿಮ್ಮ ಶತ್ರುಗಳು ಘೋಷಿಸುತ್ತಾರೆ. ನಿಮ್ಮ ವೈರಿಗಳು ತಲೆ ಎತ್ತುತ್ತಾರೆ.
PSA 83:3 ನಿಮ್ಮ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿ ಕಲ್ಪಿಸುತ್ತಾರೆ. ನೀವು ಅಡಗಿಸಿಟ್ಟವರಿಗೆ ವಿರೋಧವಾಗಿ ಆಲೋಚಿಸಿಕೊಳ್ಳುತ್ತಾರೆ.
PSA 83:4 ಅವರು, “ಬನ್ನಿರಿ, ರಾಷ್ಟ್ರವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲರ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ,” ಎನ್ನುತ್ತಾರೆ.
PSA 83:5 ಅವರು ಏಕ ಮನಸ್ಕರಾಗಿ ಆಲೋಚನೆ ಮಾಡಿಕೊಂಡಿದ್ದಾರೆ. ನಿಮಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.
PSA 83:6 ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯದವರು ಮೋವಾಬ್ಯರು, ಹಗ್ರೀಯರು,
PSA 83:7 ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಟೈರಿನವರು, ಫಿಲಿಷ್ಟಿಯರು,
PSA 83:8 ಅಸ್ಸೀರಿಯರು ಎಲ್ಲರೂ ಅವರಲ್ಲಿ ಕೂಡಿಕೊಂಡಿರುವರು; ಅವರು ಲೋಟನ ಸಂತತಿಯವರಿಗೆ ಸಹಾಯಮಾಡಲು ಸಿದ್ಧರಾಗಿದ್ದಾರೆ.
PSA 83:9 ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡಿರಿ.
PSA 83:10 ಅವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.
PSA 83:11 ಅವರನ್ನೂ, ಅವರ ಅಧಿಪತಿಗಳನ್ನೂ, ಓರೇಬ್ ಮತ್ತು ಜೇಬನ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೆಬಹ ಮತ್ತು ಚಲ್ಮುನ್ನರ ಹಾಗೆಯೂ ಮಾಡಿರಿ.
PSA 83:12 ಅವರು, “ನಾವು ದೇವರ ಹುಲ್ಲುಗಾವಲು ಪ್ರದೇಶಗಳನ್ನು ಸ್ವಾಧೀನ ಮಾಡಿಕೊಳ್ಳೋಣ,” ಅನ್ನುತ್ತಾರೆ.
PSA 83:13 ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ, ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು.
PSA 83:14 ಅಡವಿ ಸುಡುವ ಬೆಂಕಿಯ ಹಾಗೆಯೂ, ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ
PSA 83:15 ನಿಮ್ಮ ಬಿರುಗಾಳಿಯಿಂದ ಅವರನ್ನು ಹಿಂಸಿಸಿ, ನಿಮ್ಮ ಸುಳಿಗಾಳಿಯಿಂದ ಅವರನ್ನು ತಲ್ಲಣ ಪಡಿಸಿರಿ.
PSA 83:16 ಯೆಹೋವ ದೇವರೇ, ನಿಮ್ಮ ನಾಮವನ್ನು ಅವರು ಹುಡುಕುವಂತೆ ಅವರ ಮುಖಗಳನ್ನು ನಾಚಿಕೆಯಿಂದ ತುಂಬಿಸಿರಿ.
PSA 83:17 ಅವರು ನಾಚಿಕೆಪಟ್ಟು ಕಳವಳಗೊಳ್ಳಲಿ. ಹೌದು, ಅವರು ಲಜ್ಜೆಪಟ್ಟು ನಾಶವಾಗಲಿ.
PSA 83:18 ಯೆಹೋವ ದೇವರು ಎಂಬ ಹೆಸರುಳ್ಳ ನೀವು ಮಾತ್ರವೇ ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ ಎಂದು ಅವರು ತಿಳಿದುಕೊಳ್ಳಲಿ.
PSA 84:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಿಂದ ಹಾಡತಕ್ಕದ್ದು. ಕೋರಹೀಯರ ಕೀರ್ತನೆ. ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ!
PSA 84:2 ಯೆಹೋವ ದೇವರ ಅಂಗಳಗಳಲ್ಲಿ ಸೇರಲು ನನ್ನ ಪ್ರಾಣವು ಬಯಸಿ ಕುಂದುತ್ತದೆ. ನನ್ನ ಹೃದಯವೂ, ನನ್ನ ಶರೀರವೂ ಜೀವವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.
PSA 84:3 ಓ ಸೇನಾಧೀಶ್ವರ ಯೆಹೋವ ದೇವರೇ, ನನ್ನ ಅರಸರಾಗಿರುವವರೇ, ನನ್ನ ದೇವರೇ, ಗುಬ್ಬಿಯು ಮನೆಯನ್ನೂ, ಬಾನಕ್ಕಿಯು ತನ್ನ ಮರಿಗಳನ್ನಿಡುವ ಗೂಡನ್ನೂ ನಿಮ್ಮ ಬಲಿಪೀಠಗಳ ಬಳಿಯಲ್ಲಿ ದೊರಕಿತಲ್ಲಾ.
PSA 84:4 ನಿಮ್ಮ ಆಲಯದಲ್ಲಿ ವಾಸವಾಗಿರುವವರು ಧನ್ಯರು; ನಿಮ್ಮನ್ನು ಅವರು ಯಾವಾಗಲೂ ಸ್ತುತಿಸುವರು.
PSA 84:5 ನಿಮ್ಮಲ್ಲಿ ಯಾರು ಬಲಹೊಂದಿರುವರೋ, ಯಾರು ಯಾತ್ರಿಗಳಾಗಿದ್ದಾರೋ ಅವರು ಧನ್ಯರು.
PSA 84:6 ಬಾಕಾ ತಗ್ಗನ್ನು ದಾಟುವಾಗ ಅವರು ಅದನ್ನು ಬುಗ್ಗೆಯಾಗಿ ಮಾಡುತ್ತಾರೆ. ಮುಂಗಾರು ಮಳೆಯು ಕೊಳಗಳನ್ನು ತುಂಬುತ್ತದೆ.
PSA 84:7 ಅವರು ಬಲದಿಂದ ಬಲಕ್ಕೆ ಸಾಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.
PSA 84:8 ಸರ್ವಶಕ್ತರಾದ ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ಯಾಕೋಬನ ದೇವರೇ, ಕಿವಿಗೊಡಿರಿ.
PSA 84:9 ನಮ್ಮ ಗುರಾಣಿಯಾಗಿರುವ ದೇವರೇ, ನೋಡಿರಿ. ನಿಮ್ಮ ಅಭಿಷಿಕ್ತನ ಮುಖವನ್ನು ದೃಷ್ಟಿಸಿ ನೋಡಿರಿ.
PSA 84:10 ಏಕೆಂದರೆ ನಿಮ್ಮ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಬಾಗಿಲು ಕಾಯುವವನಾಗಿರುವುದೇ ಲೇಸು.
PSA 84:11 ಯೆಹೋವ ದೇವರು ಸೂರ್ಯನಂತೆ ಪ್ರಕಾಶಿಸುವವವರೂ ಗುರಾಣಿಯೂ ಆಗಿದ್ದಾರೆ. ಯೆಹೋವ ದೇವರು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾರೆ. ನಿಷ್ಕಳಂಕವಾಗಿ ನಡೆದುಕೊಳ್ಳುವವರಿಗೆ ಅವರು ಒಳ್ಳೆಯದನ್ನು ಮಾಡಲು ಹಿಂದೆಗೆಯುವುದಿಲ್ಲ.
PSA 84:12 ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮಲ್ಲಿ ಭರವಸವಿಡುವವನೇ ಭಾಗ್ಯವಂತನು.
PSA 85:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಕೋರಹೀಯರ ಕೀರ್ತನೆ. ಯೆಹೋವ ದೇವರೇ, ನಿಮ್ಮ ದೇಶವನ್ನು ನೀವು ದಯೆ ತೋರಿಸಿದ್ದೀರಿ. ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರಮಾಡಿದ್ದೀರಿ.
PSA 85:2 ನಿಮ್ಮ ಜನರ ಅಕ್ರಮವನ್ನು ಪರಿಹರಿಸಿದ್ದೀರಿ. ಅವರ ಪಾಪವನ್ನೆಲ್ಲಾ ಮುಚ್ಚಿದ್ದೀರಿ.
PSA 85:3 ನಿಮ್ಮ ಕೋಪವನ್ನೆಲ್ಲಾ ತೆಗೆದುಬಿಟ್ಟಿದ್ದೀರಿ. ನಿಮ್ಮ ಬೇಸರದಿಂದ ತಿರುಗಿಕೊಂಡಿದ್ದೀರಿ.
PSA 85:4 ನಮ್ಮ ರಕ್ಷಕ ಆಗಿರುವ ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ, ನಮ್ಮ ಮೇಲಿರುವ ನಿಮ್ಮ ಅಸಂತೋಷವನ್ನು ತೊಲಗಿಸಿರಿ.
PSA 85:5 ಎಂದೆಂದಿಗೂ ನಮ್ಮ ಮೇಲೆ ಖಂಡಿಸುವಿರೋ? ತಲತಲಾಂತರಕ್ಕೂ ನಿಮ್ಮ ಬೇಸರ ಬೆಳೆಸುವಿರೋ?
PSA 85:6 ನಿಮ್ಮ ಜನರು ನಿಮ್ಮಲ್ಲಿ ಸಂತೋಷಪಡುವಂತೆ ನೀವು ತಿರುಗಿ ನಮ್ಮನ್ನು ಉಜ್ಜೀವಿಸುವುದಿಲ್ಲವೋ?
PSA 85:7 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಮಗೆ ತೋರಿಸಿರಿ. ನಿಮ್ಮ ರಕ್ಷಣೆಯನ್ನು ನಮಗೆ ಕೊಡಿರಿ.
PSA 85:8 ಯೆಹೋವ ದೇವರು ಏನು ಹೇಳುತ್ತಾರೋ ಅದನ್ನು ನಾನು ಕೇಳುವೆನು. ದೇವರು ತಮ್ಮ ಜನರಿಗೂ ತಮ್ಮ ಭಕ್ತರಿಗೂ ಸಮಾಧಾನವನ್ನು ವಾಗ್ದಾನಮಾಡುವರು. ಆದರೆ ಅವರ ಜನರು ಇನ್ನು ಬುದ್ಧಿಹೀನತೆಗೆ ತಿರುಗಿಕೊಳ್ಳದೆ ಇರಲಿ.
PSA 85:9 ನಿಶ್ಚಯವಾಗಿ ಮಹಿಮೆಯು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ದೇವರಿಗೆ ಭಯಪಡುವವರಿಗೆ ದೇವರ ರಕ್ಷಣೆಯು ಸಮೀಪವಾಗಿದೆ.
PSA 85:10 ಪ್ರೀತಿಯೂ ಸತ್ಯತೆಯೂ ಸಂಧಿಸಿಕೊಳ್ಳುತ್ತವೆ. ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುತ್ತವೆ.
PSA 85:11 ಸತ್ಯವು ಭೂಮಿಯಿಂದ ಮೊಳೆಯುವುದು. ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
PSA 85:12 ಯೆಹೋವ ದೇವರು ಒಳ್ಳೆಯದನ್ನು ಕೊಡುವರು. ನಮ್ಮ ಭೂಮಿಯು ತನ್ನ ಸುಗ್ಗಿಯನ್ನು ಕೊಡುವುದು.
PSA 85:13 ನೀತಿಯು ದೇವರ ಮುಂದೆ ನಡೆದುಕೊಂಡು ಹೋಗಿ, ದೇವರಿಗೆ ಮಾರ್ಗ ಸಿದ್ಧಪಡಿಸುವುದು.
PSA 86:1 ದಾವೀದನ ಪ್ರಾರ್ಥನೆ. ಯೆಹೋವ ದೇವರೇ, ನನಗೆ ಉತ್ತರಕೊಡಿರಿ. ನಾನು ದೀನನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ.
PSA 86:2 ನನ್ನ ಪ್ರಾಣವನ್ನು ಕಾಪಾಡಿರಿ, ನಾನು ನಿಮ್ಮ ಭಕ್ತ, ನೀವು ನನ್ನ ದೇವರು. ನಿಮ್ಮಲ್ಲಿ ಭರವಸವಿಟ್ಟಿರುವ ನಿಮ್ಮ ಸೇವಕನನ್ನು ರಕ್ಷಿಸಿರಿ.
PSA 86:3 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ. ನಿಮಗೆ ದಿನವೆಲ್ಲಾ ಮೊರೆಯಿಡುತ್ತೇನೆ.
PSA 86:4 ನಿಮ್ಮ ಸೇವಕನ ಪ್ರಾಣವನ್ನು ಸಂತೋಷಪಡಿಸಿರಿ. ಯೆಹೋವ ದೇವರೇ, ನಿಮ್ಮಲ್ಲೇ ನನ್ನ ಪ್ರಾಣವನ್ನು ಇಟ್ಟಿದ್ದೇನೆ.
PSA 86:5 ಯೆಹೋವ ದೇವರೇ, ನೀವು ಒಳ್ಳೆಯವರೂ ಕ್ಷಮಿಸುವುದಕ್ಕೆ ಸಿದ್ಧರೂ ಆಗಿದ್ದೀರಿ. ನಿಮ್ಮನ್ನು ಬೇಡುವವರೆಲ್ಲರಿಗೆ ಪ್ರೀತಿಯಲ್ಲಿ ಸಮೃದ್ಧಿವಂತರೂ ಆಗಿರುವಿರಿ.
PSA 86:6 ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ. ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸಿರಿ.
PSA 86:7 ನನ್ನ ಇಕ್ಕಟ್ಟಿನ ದಿವಸದಲ್ಲಿ ನಿಮ್ಮನ್ನು ಕರೆಯುವೆನು. ನೀವು ನನಗೆ ಉತ್ತರ ಕೊಡುವಿರಿ.
PSA 86:8 ಯೆಹೋವ ದೇವರೇ, ದೇವರುಗಳಲ್ಲಿ ನಿಮ್ಮ ಹಾಗೆ ಯಾರೂ ಇಲ್ಲ. ನಿಮ್ಮ ಕೆಲಸಗಳ ಹಾಗೆ ಒಂದೂ ಇಲ್ಲ.
PSA 86:9 ಯೆಹೋವ ದೇವರೇ, ನೀವು ಉಂಟುಮಾಡಿದ ಜನಾಂಗದವರೆಲ್ಲರೂ ಬಂದು ನಿಮ್ಮ ಮುಂದೆ ಅಡ್ಡಬಿದ್ದು, ನಿಮ್ಮ ಹೆಸರಿಗೆ ಮಹಿಮೆ ಸಲ್ಲಿಸುವರು.
PSA 86:10 ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.
PSA 86:11 ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ. ಆಗ, ನಿಮ್ಮ ಸತ್ಯದಲ್ಲಿ ನಡೆದುಕೊಳ್ಳುವೆನು; ನಿಮ್ಮ ಹೆಸರಿಗೆ ಭಯಪಡುವಂತೆ ನನಗೆ ವಿಭಾಗವಿಲ್ಲದೆ ಹೃದಯವನ್ನು ದಯಪಾಲಿಸಿರಿ.
PSA 86:12 ನನ್ನ ದೇವರಾದ ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು. ನಿಮ್ಮ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
PSA 86:13 ನಿಮ್ಮ ಪ್ರೀತಿಯು ನನ್ನ ಮೇಲೆ ಅಗಾಧವಾಗಿದೆ. ಕೆಳಗಿನ ಪಾತಾಳದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀರಿ.
PSA 86:14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಬಲಾತ್ಕಾರಿಗಳ ಗುಂಪು ನನ್ನ ಪ್ರಾಣವನ್ನು ಹುಡುಕುತ್ತದೆ. ಅವರು ನಿಮ್ಮನ್ನು ಗೌರವಿಸುವವರಲ್ಲ.
PSA 86:15 ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ.
PSA 86:16 ನನ್ನ ಕಡೆಗೆ ತಿರುಗಿಕೊಂಡು ನನ್ನನ್ನು ಕರುಣಿಸಿರಿ. ನಿಮ್ಮ ಸೇವಕನಿಗೆ ನಿಮ್ಮ ಬಲವನ್ನು ತೋರಿಸಿರಿ. ನನ್ನ ತಾಯಿ ನಿನ್ನ ಸೇವೆಮಾಡಿದಂತೆ ನಾನು ಸಹ ಸೇವೆಮಾಡುವುದರಿಂದ ನನ್ನನ್ನು ರಕ್ಷಿಸಿರಿ.
PSA 86:17 ನನಗಾಗಿ ನಿಮ್ಮ ಉಪಕಾರದ ಗುರುತೊಂದನ್ನು ತೋರಿಸಿರಿ. ಆಗ ನನ್ನ ವೈರಿಗಳು ಅದನ್ನು ಕಂಡು ನಾಚಿಕೆಪಡುವರು. ಏಕೆಂದರೆ ಯೆಹೋವ ದೇವರೇ, ನೀವು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀರಿ.
PSA 87:1 ಕೋರಹೀಯರ ಕೀರ್ತನೆ. ಒಂದು ಗೀತೆ. ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ.
PSA 87:2 ದೇವರು ಚೀಯೋನಿನ ದ್ವಾರಗಳನ್ನು ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ.
PSA 87:3 ದೇವರ ಪಟ್ಟಣವೇ, ನಿನ್ನ ವಿಷಯವಾದ ಮಹಿಮೆಯು ಏನೆಂದರೆ,
PSA 87:4 “ರಾಹಬ್, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು, ‘ಚೀಯೋನಿನಲ್ಲೇ ಹುಟ್ಟಿದವು.’ ”
PSA 87:5 ಚೀಯೋನಿನ ವಿಷಯವಾಗಿ, “ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು. ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು.
PSA 87:6 ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ, “ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು.
PSA 87:7 “ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,” ಎಂದು ಸಂಗೀತಕಾರರು ಹಾಡುವರು.
PSA 88:1 ದುಃಖದಲ್ಲಿ ಮುಳುಗಿರುವವನ ಮೊರೆ; ಕೋರಹೀಯರ ಕೀರ್ತನೆ; ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ಜೇರಹ ಕುಲದವನಾದ ಹೇಮಾನನ ಪದ್ಯ. ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ, ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.
PSA 88:2 ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ. ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.
PSA 88:3 ನನ್ನ ಪ್ರಾಣವು ಕಷ್ಟದಿಂದ ತುಂಬಿದೆ; ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ.
PSA 88:4 ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ; ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.
PSA 88:5 ಹತರಾದವರು ಸಮಾಧಿಯಲ್ಲಿ ಮಲಗಿದಂತೆ ನಾನೂ ಸತ್ತವರೊಂದಿಗೆ ಸೇರಿರುತ್ತೇನೆ. ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ. ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.
PSA 88:6 ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.
PSA 88:7 ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ. ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.
PSA 88:8 ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.
PSA 88:9 ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ. ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ. ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.
PSA 88:10 ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ? ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?
PSA 88:11 ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ? ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?
PSA 88:12 ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ ನಿಮ್ಮ ನೀತಿಯೂ ತಿಳಿಯಲಾಗುವುದೋ?
PSA 88:13 ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ. ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.
PSA 88:14 ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ. ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?
PSA 88:15 ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ. ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
PSA 88:16 ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ. ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.
PSA 88:17 ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ; ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.
PSA 88:18 ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ. ಅಂಧಕಾರವೇ ನನ್ನ ಪರಿಚಯವು.
PSA 89:1 ಮಾಸ್ಕಿಲ ರಾಗದಿಂದ ಹಾಡತಕ್ಕದ್ದು. ಜೇರಹ ಕುಲದವನಾದ ಏತಾನನ ಪದ್ಯ. ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿಮ್ಮ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.
PSA 89:2 ಎಂದೆಂದಿಗೂ ನಿಮ್ಮ ಪ್ರೀತಿಯನ್ನು ಸಾರುವೆನು. ಪರಲೋಕದಲ್ಲಿ ನಿಮ್ಮ ನಂಬಿಗಸ್ತಿಕೆಯನ್ನು ಸ್ಥಿರಪಡಿಸಿದ್ದೀರಿ ಎಂದು ಘೋಷಿಸುವೆನು.
PSA 89:3 ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸೇವಕನಾದ ದಾವೀದನಿಗೆ ಪ್ರಮಾಣ ಮಾಡಿದ್ದೇನೆ.
PSA 89:4 ‘ಎಂದೆಂದಿಗೂ ನಿಮ್ಮ ಸಂತತಿಯನ್ನು ಸ್ಥಿರಪಡಿಸುವೆನು ತಲತಲಾಂತರಕ್ಕೂ ನಿಮ್ಮ ಸಿಂಹಾಸನವನ್ನು ಕಟ್ಟುವೆನು.’ ”
PSA 89:5 ಯೆಹೋವ ದೇವರೇ, ಆಕಾಶಗಳು ನಿಮ್ಮ ಅದ್ಭುತಗಳನ್ನೂ ಪರಿಶುದ್ಧರ ಸಭೆಯಲ್ಲಿ ನಿಮ್ಮ ನಂಬಿಗಸ್ತಿಕೆಯನ್ನೂ ಕೊಂಡಾಡುವುವು.
PSA 89:6 ಪ್ರಪಂಚದಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು? ಪರಲೋಕ ಜೀವಿಗಳಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು?
PSA 89:7 ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.
PSA 89:8 ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ಹಾಗೆ ಶಕ್ತರು ಯಾರು ಇದ್ದಾರೆ? ಯೆಹೋವ ದೇವರೇ, ನೀವು ಶಕ್ತರು, ನಿಮ್ಮ ನಂಬಿಗಸ್ತಿಕೆಯು ನಿಮ್ಮನ್ನು ಸುತ್ತುವರಿದಿದೆ.
PSA 89:9 ನೀವು ಸಮುದ್ರದ ಏರುವಿಕೆಯನ್ನು ಆಳುತ್ತೀರಿ. ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀರಿ.
PSA 89:10 ಹತನಾದವನಂತೆ ನೀವು ರಹಬನ್ನು ಜಯಿಸಿದ್ದೀರಿ. ನಿಮ್ಮ ಭುಜಬಲದಿಂದ ನಿಮ್ಮ ಶತ್ರುಗಳನ್ನು ಚದರಿಸಿದ್ದೀರಿ.
PSA 89:11 ಆಕಾಶಗಳು ನಿಮ್ಮವು, ಭೂಮಿಯು ಸಹ ನಿಮ್ಮದು. ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನೀವು ಉಂಟುಮಾಡಿದ್ದೀರಿ.
PSA 89:12 ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ. ತಾಬೋರೂ, ಹೆರ್ಮೋನೂ ನಿಮ್ಮ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
PSA 89:13 ನಿಮ್ಮ ಭುಜವು ಶಕ್ತಿಯುತವಾದದ್ದು. ನಿಮ್ಮ ಕೈ ಬಲವುಳ್ಳದ್ದು; ನಿಮ್ಮ ಬಲಗೈ ಉನ್ನತವಾದದ್ದು.
PSA 89:14 ನೀತಿಯೂ, ನ್ಯಾಯವೂ ನಿಮ್ಮ ಸಿಂಹಾಸನದ ಅಸ್ತಿವಾರವಾಗಿವೆ. ಪ್ರೀತಿಯೂ, ಸತ್ಯತೆಯೂ ನಿಮ್ಮ ಮುಂದೆ ಹೋಗುತ್ತವೆ.
PSA 89:15 ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.
PSA 89:16 ನಿಮ್ಮ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು, ನಿಮ್ಮ ನೀತಿಯಲ್ಲಿ ಅವರು ಉನ್ನತಕ್ಕೇರುವರು.
PSA 89:17 ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ. ನಿಮ್ಮ ಮೆಚ್ಚುಗೆಯಿಂದ ನಮ್ಮ ಬಲವೆಂಬ ಕೊಂಬು ಉನ್ನತವಾಗುವುದು.
PSA 89:18 ನಮ್ಮ ಗುರಾಣಿಯು ಯೆಹೋವ ದೇವರದೇ. ನಮ್ಮ ಅರಸರು ಇಸ್ರಾಯೇಲರ ಪರಿಶುದ್ಧರಾಗಿರುವರು.
PSA 89:19 ಆ ಕಾಲದಲ್ಲಿ ನೀವು ದರ್ಶನದಲ್ಲಿ ನಿಮ್ಮ ಭಕ್ತರಿಗೆ ಹೇಳಿದ್ದೇನೆಂದರೆ: “ಒಬ್ಬ ಶೂರನಿಗೆ ನಾನು ಬಲವನ್ನು ಅನುಗ್ರಹಿಸಿದ್ದೇನೆ. ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತ ಸ್ಥಾನದಲ್ಲಿಟ್ಟಿದ್ದೇನೆ.
PSA 89:20 ನನ್ನ ಸೇವಕನಾದ ದಾವೀದನನ್ನು ಕಂಡು, ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
PSA 89:21 ನನ್ನ ಕೈ ಅವನನ್ನು ಪರಿಪಾಲಿಸುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
PSA 89:22 ಶತ್ರುವು ಅವನನ್ನು ಜಯಿಸಲಾರನು. ಯಾವ ದುಷ್ಟನೂ ಅವನನ್ನು ಹಿಂಸೆಪಡಿಸನು.
PSA 89:23 ಅವನ ಮುಂದೆ ಅವನ ವೈರಿಗಳನ್ನು ಓಡಿಸಿಬಿಡುವೆನು; ಅವನ ವಿರೋಧಿಗಳನ್ನು ದಂಡಿಸುವೆನು.
PSA 89:24 ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು. ನನ್ನ ಹೆಸರಿನಲ್ಲಿ ಅವನ ಬಲವೆಂಬ ಕೊಂಬು ಉನ್ನತವಾಗುವುದು.
PSA 89:25 ಸಮುದ್ರ ಹಾಗು ನದಿಗಳ ಮೇಲೆ ಅವನ ಬಲಗೈಯನ್ನೂ ಇರಿಸುವೆನು.
PSA 89:26 ಅವನು, ‘ನೀವು ನನ್ನ ತಂದೆಯೂ ನನ್ನ ದೇವರೂ ನನ್ನ ರಕ್ಷಣೆಯ ಬಂಡೆಯೂ ಆಗಿದ್ದೀರಿ’ ಎಂದು ನನಗೆ ಮೊರೆಯಿಡುವನು.
PSA 89:27 ನಾನು ಆತನನ್ನು ನನ್ನ ಚೊಚ್ಚಲ ಮಗನನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
PSA 89:28 ಎಂದೆಂದಿಗೂ ಆತನಿಗೋಸ್ಕರ ನನ್ನ ಪ್ರೀತಿಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಆತನೊಂದಿಗೆ ದೃಢವಾಗಿರುವುದು.
PSA 89:29 ಆತನ ಸಂತತಿಯನ್ನು ಸಹ ಎಂದೆಂದಿಗೂ ಆತನ ಸಿಂಹಾಸನವನ್ನು ಆಕಾಶ ಇರುವವರೆಗೂ ಮಾಡುವೆನು.
PSA 89:30 “ಆತನ ಸಂತತಿಯು ನನ್ನ ನಿಯಮವನ್ನು ಬಿಟ್ಟು, ನನ್ನ ಶಾಸನಗಳನ್ನು ಅನುಸರಿಸಿ ನಡೆಯದೆ,
PSA 89:31 ಅವರು ನನ್ನ ತೀರ್ಪುಗಳನ್ನು ಮುರಿದು, ನನ್ನ ಆಜ್ಞೆಗಳನ್ನು ಕೈಗೊಳ್ಳದೆ ಹೋದರೆ,
PSA 89:32 ಕೋಲಿನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
PSA 89:33 ಆದರೂ ನನ್ನ ಪ್ರೀತಿ, ಕರುಣೆಯನ್ನು ಆತನಿಂದ ಸಂಪೂರ್ಣವಾಗಿ ತೊಲಗಿಸೆನು. ಇಲ್ಲವೆ ನನ್ನ ನಂಬಿಗಸ್ತಿಕೆಯಿಂದ ನಾನು ಜಾರಿಹೋಗೆನು.
PSA 89:34 ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು. ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
PSA 89:35 ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ. ದಾವೀದನಿಗೆ ಸುಳ್ಳಾಡೆನು.
PSA 89:36 ಆತನ ಸಂತತಿಯು ಯುಗಯುಗಕ್ಕೂ ಇರುವುದು. ಆತನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವುದು.
PSA 89:37 ಚಂದ್ರನ ಹಾಗೆ ಅದು ಯುಗಯುಗಕ್ಕೂ ಸ್ಥಿರವಾಗಿರುವುದು; ಆಕಾಶದಲ್ಲಿರುವ ಸಾಕ್ಷಿಯ ಹಾಗೆ ನಂಬಿಗಸ್ತಿಕೆಯುಳ್ಳದ್ದಾಗಿರುವುದು.”
PSA 89:38 ಆದರೆ ನೀವು ತಿರಸ್ಕರಿಸಿ ಬಿಟ್ಟುಬಿಟ್ಟ, ನಿಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಬೇಸರವಾದಿರಿ.
PSA 89:39 ನಿಮ್ಮ ಸೇವಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ಮಣ್ಣುಪಾಲು ಮಾಡಿದ್ದೀರಿ.
PSA 89:40 ಅವನ ಗೋಡೆಗಳನ್ನೆಲ್ಲಾ ಮುರಿದು, ಅವನ ಕೋಟೆಗಳನ್ನು ಹಾಳುಮಾಡಲು ಅನುಮತಿಸಿದ್ದೀರಿ.
PSA 89:41 ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ. ತನ್ನ ನೆರೆಯವರಿಗೆ ಅವನು ನಿಂದೆಯಾಗಿದ್ದಾನೆ.
PSA 89:42 ಅವನ ವೈರಿಗಳ ಬಲಗೈ ಉನ್ನತವಾಗಿದೆ. ಅವನ ವೈರಿಗಳೆಲ್ಲಾ ಆನಂದಿಸುತ್ತಿದ್ದಾರೆ.
PSA 89:43 ಅವನ ಖಡ್ಗದ ಮೊನೆ ಮೊಂಡಾಗಿದೆ. ಯುದ್ಧದಲ್ಲಿ ನೀವು ಅವನನ್ನು ನಿಲ್ಲುವಂತೆ ಮಾಡಲಿಲ್ಲ.
PSA 89:44 ಅವನ ಪ್ರಭೆ ಮುಗಿದು ಹೋಗಿದೆ. ಅವನ ಸಿಂಹಾಸನ ಉರುಳಿಬಿಟ್ಟಿದೆ.
PSA 89:45 ಅವನ ಯೌವನದ ದಿವಸಗಳು ಕಡಿಮೆಯಾಗಿದೆ. ನಾಚಿಕೆ ಎಂಬ ವಸ್ತ್ರ ಅವನನ್ನು ಮುಚ್ಚಲು ನೀವು ಅನುಮತಿಸಿದ್ದೀರಿ.
PSA 89:46 ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ? ನಿಮ್ಮ ಬೇಸರವು ಬೆಂಕಿಯ ಹಾಗೆ ಉರಿಯುವುದು ಎಷ್ಟರವರೆಗೆ?
PSA 89:47 ನನ್ನ ಆಯುಸ್ಸು ಎಷ್ಟು ಕಡಿಮೆ ಎಂದು ಜ್ಞಾಪಕಮಾಡಿಕೊಳ್ಳಿರಿ. ನಿರ್ಮಿಸಿದ ಎಲ್ಲಾ ಮನುಷ್ಯರೂ ವ್ಯರ್ಥವಾಗಿದ್ದಾರೆ.
PSA 89:48 ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು?
PSA 89:49 ಯೆಹೋವ ದೇವರೇ, ನಿಮ್ಮ ಸತ್ಯದಲ್ಲಿ ನೀವು ದಾವೀದನಿಗೆ ಆಣೆಯಿಟ್ಟೆ. ನಿಮ್ಮ ಮೊದಲಿನ ಮಹಾ ಪ್ರೀತಿ ಎಲ್ಲಿ?
PSA 89:50 ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ. ಎಲ್ಲಾ ರಾಷ್ಟ್ರಗಳ ಅಪಹಾಸ್ಯವನ್ನು ನಾನು ಹೇಗೆ ಸಹಿಸಿದೆನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
PSA 89:51 ಯೆಹೋವ ದೇವರೇ, ನಿಮ್ಮ ಶತ್ರುಗಳು ನಿಂದಿಸುತ್ತಿದ್ದಾರೆ. ನಿಮ್ಮ ಅಭಿಷಿಕ್ತನ ಹೆಜ್ಜೆ ಹೆಜ್ಜೆಗೂ ನಿಂದಿಸುತ್ತಾರಲ್ಲಾ?
PSA 89:52 ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯಾಗಲಿ.
PSA 90:1 ದೇವರ ಮನುಷ್ಯನಾದ ಮೋಶೆಯ ಪ್ರಾರ್ಥನೆ. ಯೆಹೋವ ದೇವರೇ, ತಲತಲಾಂತರಗಳಲ್ಲಿ ನೀವು ನಮ್ಮ ವಾಸಸ್ಥಾನವಾಗಿದ್ದೀರಿ.
PSA 90:2 ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ ನೀವು ಲೋಕವನ್ನೂ ನಿರ್ಮಿಸುವುದಕ್ಕಿಂತ ಮುಂಚೆಯೂ ಯುಗಯುಗಾಂತರಕ್ಕೂ ನೀವು ದೇವರಾಗಿದ್ದೀರಿ.
PSA 90:3 ನೀವು ಮನುಷ್ಯರನ್ನು ಪುನಃ ಮಣ್ಣಿಗೆ ಸೇರಿಸುತ್ತೀರಿ. “ಮನುಷ್ಯ ಪುತ್ರರೇ, ಮಣ್ಣಿಗೆ ಮರಳಿರಿ,” ಎಂದು ಹೇಳುತ್ತೀರಿ.
PSA 90:4 ಸಾವಿರ ವರ್ಷಗಳು ನಿಮ್ಮ ದೃಷ್ಟಿಗೆ ಕಳೆದುಹೋದ ಒಂದು ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಇವೆ.
PSA 90:5 ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ. ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.
PSA 90:6 ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಒಣಗಿ ಬಿದ್ದು ಹೋಗುತ್ತದೆ.
PSA 90:7 ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ. ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.
PSA 90:8 ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ. ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.
PSA 90:9 ನಮ್ಮ ದಿವಸಗಳೆಲ್ಲಾ ನಿಮ್ಮ ಖಂಡನೆಯಿಂದಲೇ ದಾಟಿಹೋದವು. ನಮ್ಮ ವರ್ಷಗಳನ್ನು ನಿಟ್ಟುಸಿರಿನಲ್ಲಿ ಕಳೆಯುತ್ತಿದ್ದೇವೆ.
PSA 90:10 ನಮ್ಮ ಜೀವನದ ದಿನಗಳು ಎಪ್ಪತ್ತು ವರ್ಷ, ಬಲದಿಂದಿದ್ದರೆ ಎಂಬತ್ತು ವರ್ಷ. ಆದಾಗ್ಯೂ ಅವುಗಳ ಉತ್ತಮ ವರ್ಷಗಳು ಕಷ್ಟವೂ ಪ್ರಯಾಸವೂ ಆಗಿವೆ. ನಮ್ಮ ದಿನಗಳು ಬೇಗ ತೀರಿಹೋಗುತ್ತವೆ. ನಾವು ಹಾರಿಹೋಗುತ್ತೇವೆ.
PSA 90:11 ನಿಮ್ಮ ಕೋಪದ ಶಕ್ತಿಯನ್ನು ತಿಳಿದವರ‍್ಯಾರು? ನಿಮ್ಮ ಮೇಲಿನ ಭಯಭಕ್ತಿಗೆ ಕಾರಣವಾಗಿರುವ ನಿಮ್ಮ ಖಂಡನೆಯನ್ನು ಗ್ರಹಿಸುವವರ‍್ಯಾರು?
PSA 90:12 ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.
PSA 90:13 ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ? ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.
PSA 90:14 ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಮ್ಮನ್ನು ತೃಪ್ತಿಪಡಿಸಿರಿ. ಆಗ ನಮ್ಮ ದಿನಗಳೆಲ್ಲಾ ಉತ್ಸಾಹ ಧ್ವನಿಗೈದು ನಿಮ್ಮಲ್ಲಿ ಸಂತೋಷಪಡುವೆವು.
PSA 90:15 ನೀವು ನಮ್ಮನ್ನು ಬಾಧಿಸಿದಷ್ಟು ಕಾಲ ಹರ್ಷಗೊಳಿಸಿರಿ. ನಾವು ತೊಂದರೆಯನ್ನು ನೋಡಿದಷ್ಟು ವರ್ಷಗಳು ನಮ್ಮನ್ನು ಸಂತೋಷಪಡಿಸಿರಿ.
PSA 90:16 ನಿಮ್ಮ ಸೇವಕರಿಗೆ ನಿಮ್ಮ ಕೃತ್ಯಗಳನ್ನು ಪ್ರಕಟಿಸಿರಿ. ಅವರ ಮಕ್ಕಳಿಗೆ ನಿಮ್ಮ ಪ್ರಭೆಯೂ ತೋರಿ ಬರಲಿ.
PSA 90:17 ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ. ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ. ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.
PSA 91:1 ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು.
PSA 91:2 “ನನ್ನ ಆಶ್ರಯವೂ, ನನ್ನ ಕೋಟೆಯೂ, ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು.”
PSA 91:3 ನಿಶ್ಚಯವಾಗಿ ದೇವರು ನಿಮ್ಮನ್ನು ಬೇಡನ ಉರುಲಿನಿಂದ ರಕ್ಷಿಸುವರು. ಮರಣಾಂತಿಕವಾದ ಸಾಂಕ್ರಾಮಿಕ ರೋಗದಿಂದಲೂ ಬಿಡಿಸುವರು.
PSA 91:4 ತಮ್ಮ ರೆಕ್ಕೆಗಳಿಂದ ನಿಮ್ಮನ್ನು ಹೊದಿಸುವರು. ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿರಿ. ದೇವರ ಸತ್ಯತೆಯು ನಿಮ್ಮ ಖೇಡ್ಯವೂ ಕೋಟೆಯೂ ಆಗಿರುವುದು.
PSA 91:5 ರಾತ್ರಿಯ ಭಯಂಕರತೆಗೆ ನೀನು ಅಂಜಬೇಕಾಗಿಲ್ಲ, ಹಗಲಿನಲ್ಲಿ ಹಾರುವ ಬಾಣಕ್ಕೂ ಹೆದರಬೇಕಾಗಿರುವುದಿಲ್ಲ.
PSA 91:6 ಅಂಧಕಾರದಲ್ಲಿ ಬೆನ್ನಟ್ಟಿ ಬರುವ ವಿಪತ್ತಿಗೆ ಕಳವಳಪಡದಿರುವೆ. ಮಧ್ಯಾಹ್ನದಲ್ಲಿ ಹಾಳುಮಾಡುವ ವ್ಯಾಧಿಗೂ ನೀನು ಭಯಪಡದಿರುವೆ.
PSA 91:7 ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ.
PSA 91:8 ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ.
PSA 91:9 “ಮಹೋನ್ನತ ದೇವರು ನಮ್ಮ ಆಶ್ರಯ,” ಎಂದು ಹೇಳುವದಾದರೆ, ಯೆಹೋವ ದೇವರು ನಿಮ್ಮ ನಿವಾಸವಾಗಿ ಮಾಡಿಕೊಂಡರೆ,
PSA 91:10 ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ.
PSA 91:11 ಏಕೆಂದರೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವುದಕ್ಕೆ ದೇವರು ತಮ್ಮ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವರು.
PSA 91:12 ನಿಮ್ಮ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
PSA 91:13 ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆಯುವೆ. ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದುಬಿಡುವೆ.
PSA 91:14 “ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು.
PSA 91:15 ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು.
PSA 91:16 ದೀರ್ಘಾಯುಷ್ಯದಿಂದ ಆತನನ್ನು ತೃಪ್ತಿಪಡಿಸಿ, ನನ್ನ ರಕ್ಷಣೆಯನ್ನು ಆತನಿಗೆ ತೋರಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
PSA 92:1 ಕೀರ್ತನೆ. ಸಬ್ಬತ್ ದಿನದ ಗೀತೆ. ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವುದು ಒಳ್ಳೆಯದು. ಮಹೋನ್ನತರೇ, ನಿಮ್ಮ ಹೆಸರನ್ನು ಕೀರ್ತಿಸುವುದು ಒಳ್ಳೆಯದು.
PSA 92:2 ಬೆಳಿಗ್ಗೆ ನಿಮ್ಮ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ನಿಮ್ಮ ನಂಬಿಕೆಯನ್ನೂ ಸಾರುವುದು ಒಳ್ಳೆಯದು.
PSA 92:3 ಹತ್ತು ತಂತಿವಾದ್ಯದಿಂದಲೂ ವೀಣೆಯಿಂದಲೂ ಕಿನ್ನರಿಯ ಘನಸ್ವರದಿಂದಲೂ ಬಾರಿಸುವುದು ಒಳ್ಳೆಯದು.
PSA 92:4 ಯೆಹೋವ ದೇವರೇ, ನಿಮ್ಮ ಕ್ರಿಯೆಯಿಂದ ನನ್ನನ್ನು ಸಂತೋಷಪಡಿಸಿದ್ದೀರಿ. ನಿಮ್ಮ ಕೈಕೆಲಸಗಳಲ್ಲಿ ಜಯಧ್ವನಿಗೈಯುತ್ತೇನೆ.
PSA 92:5 ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.
PSA 92:6 ಇದನ್ನು ಬುದ್ಧಿಹೀನ ಮನುಷ್ಯನು ತಿಳಿದುಕೊಳ್ಳನು. ಮೂರ್ಖನು ಇದನ್ನು ಗ್ರಹಿಸನು.
PSA 92:7 ದುಷ್ಟರು ಹುಲ್ಲಿನ ಹಾಗೆ ಚಿಗುರಿದರೂ ಅಕ್ರಮ ಮಾಡುವವರೆಲ್ಲರು ವೃದ್ಧಿ ಆದರೂ ಅವರು ನಿತ್ಯ ದಂಡನೆಗೆ ಗುರಿಯಾಗುವರು.
PSA 92:8 ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.
PSA 92:9 ನಿಜವಾಗಿಯೂ ನಿಮ್ಮ ಶತ್ರುಗಳು ಯೆಹೋವ ದೇವರೇ, ನಿಮ್ಮ ಶತ್ರುಗಳು ನಾಶವಾಗುವರು. ಕೇಡು ಮಾಡುವವರೆಲ್ಲರು ಚದರಿಹೋಗುವರು.
PSA 92:10 ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.
PSA 92:11 ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.
PSA 92:12 ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.
PSA 92:13 ಅವರು ಯೆಹೋವ ದೇವರ ಆಲಯದಲ್ಲಿ ನೆಟ್ಟ ಸಸಿಗಳಂತಿರುವರು. ನಮ್ಮ ದೇವರ ಅಂಗಳಗಳಲ್ಲಿ ಅವರು ವೃದ್ಧಿ ಆಗುವರು.
PSA 92:14 ಮುದಿಪ್ರಾಯದಲ್ಲಿಯೂ ಫಲ ಕೊಡುವರು. ಅವರು ಹಸಿರಾಗಿ ಶೋಭಿಸುವರು.
PSA 92:15 “ಯೆಹೋವ ದೇವರು ಯಥಾರ್ಥವಂತರೂ ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,” ಎಂದು ನೀತಿವಂತರು ಘೋಷಿಸುವರು.
PSA 93:1 ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ.
PSA 93:2 ದೇವರೇ, ನಿಮ್ಮ ಸಿಂಹಾಸನವು ಪೂರ್ವಕಾಲದಿಂದ ಸ್ಥಿರವಾಗಿದೆ. ಯುಗಯುಗದಿಂದ ನೀವು ಇದ್ದೀರಿ.
PSA 93:3 ಯೆಹೋವ ದೇವರೇ, ಸಮುದ್ರಗಳಲ್ಲಿ ಪ್ರವಾಹಗಳು ಮೊರೆಯುತ್ತಿವೆ. ಸಮುದ್ರಗಳು ತಮ್ಮ ಧ್ವನಿಯನ್ನು ಎತ್ತಿವೆ. ಸಮುದ್ರಗಳು ತಮ್ಮ ಅಲೆಗಳ ಘೋಷವನ್ನು ಎತ್ತಿವೆ.
PSA 93:4 ಮಹಾಸಾಗರದ ಶಬ್ದಕ್ಕಿಂತಲೂ, ಸಮುದ್ರದ ಬಲವಾದ ಅಲೆಗಳಿಗಿಂತಲೂ ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ.
PSA 93:5 ದೇವರೇ, ನಿಮ್ಮ ಶಾಸನಗಳು ಬಹಳ ನಿಶ್ಚಯವಾದವುಗಳು. ಯೆಹೋವ ದೇವರೇ, ಪರಿಶುದ್ಧತೆಯು ಸದಾಕಾಲ ನಿಮ್ಮ ಆಲಯವನ್ನು ಅಲಂಕರಿಸುತ್ತದೆ.
PSA 94:1 ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ. ಮುಯ್ಯಿ ತೀರಿಸುವವರು ನೀವೇ; ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.
PSA 94:2 ಭೂಲೋಕದ ನ್ಯಾಯಾಧಿಪತಿಯೇ, ಗರ್ವಿಷ್ಠರಿಗೆ ತಕ್ಕ ಪ್ರತೀಕಾರವನ್ನು ಸಲ್ಲಿಸ ಬನ್ನಿರಿ.
PSA 94:3 ಯೆಹೋವ ದೇವರೇ, ಎಲ್ಲಿಯವರೆಗೆ? ದುಷ್ಟರು ಎಷ್ಟರವರೆಗೆ ಹಿಗ್ಗುತ್ತಿರಬೇಕು?
PSA 94:4 ಕೆಡುಕರು ಉಬ್ಬಿಕೊಂಡು ಮಾತನಾಡುತ್ತಾರೆ. ಕೇಡು ಮಾಡುವವರೆಲ್ಲರೂ ಕೊಚ್ಚಿಕೊಳ್ಳುತ್ತಾರೆ.
PSA 94:5 ಯೆಹೋವ ದೇವರೇ, ನಿಮ್ಮ ಜನರನ್ನು ಅವರು ಕುಗ್ಗಿಸುತ್ತಾರೆ. ನಿಮ್ಮ ಬಾಧ್ಯತೆಯನ್ನು ಬಾಧಿಸುತ್ತಾರೆ.
PSA 94:6 ವಿಧವೆಯನ್ನೂ ಪರದೇಶಸ್ಥನನ್ನೂ ಅವರು ಹತ್ಯಮಾಡುತ್ತಾರೆ. ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
PSA 94:7 “ಯೆಹೋವ ದೇವರು ನೋಡುವುದಿಲ್ಲ, ಯಾಕೋಬನ ದೇವರು ಗ್ರಹಿಸುವುದಿಲ್ಲ,” ಎಂದು ಅವರು ಹೇಳುತ್ತಾರೆ.
PSA 94:8 ಜನರಲ್ಲಿ ಬುದ್ಧಿಹೀನರೇ, ನೀವು ಗ್ರಹಿಸಿರಿ. ಮೂರ್ಖರೇ, ಯಾವಾಗ ಬುದ್ಧಿವಂತರಾಗುವಿರಿ?
PSA 94:9 ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ? ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?
PSA 94:10 ರಾಷ್ಟ್ರಗಳಿಗೆ ಶಿಕ್ಷಣ ಕೊಡುವ ದೇವರು ಶಿಕ್ಷಿಸುವುದಿಲ್ಲವೋ? ಮಾನವನಿಗೆ ಕಲಿಸುವ ದೇವರಲ್ಲಿ ಜ್ಞಾನದ ಕೊರತೆಯಿದೆಯೋ?
PSA 94:11 ಮನುಷ್ಯನ ಯೋಚನೆಗಳು ವ್ಯರ್ಥವಾದವುಗಳೆಂದು ಯೆಹೋವ ದೇವರು ತಿಳಿದುಕೊಳ್ಳುತ್ತಾರೆ.
PSA 94:12 ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು. ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.
PSA 94:13 ದುಷ್ಟನಿಗಾಗಿ ಕುಣಿಯು ಅಗಿಯುವವರೆಗೆ ಅಂಥವನಿಗೆ ವಿಶ್ರಾಂತಿಯನ್ನು ಕೊಡುವಿರಿ.
PSA 94:14 ಯೆಹೋವ ದೇವರು ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ. ದೇವರು ತಮ್ಮ ಬಾಧ್ಯತೆಯಾಗಿರುವವರನ್ನು ಎಂದೂ ಮರೆಯುವುದಿಲ್ಲ.
PSA 94:15 ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು; ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.
PSA 94:16 ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು? ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?
PSA 94:17 ಯೆಹೋವ ದೇವರು ನನಗೆ ಸಹಾಯ ಕೊಡದಿದ್ದರೆ, ನಾನು ಬೇಗನೇ ಮರಣದ ಮೌನದಲ್ಲಿ ವಾಸಿಸುತ್ತಿದ್ದೆನು.
PSA 94:18 “ನನ್ನ ಕಾಲು ಜಾರುತ್ತಿದೆ,” ಎಂದು ನಾನು ಹೇಳುತ್ತಿರುವಾಗಲೇ, ಯೆಹೋವ ದೇವರೇ, ನಿಮ್ಮ ಪ್ರೀತಿಯು ನನ್ನನ್ನು ಎತ್ತಿ ಹಿಡಿಯಿತು.
PSA 94:19 ನನ್ನ ಚಿಂತೆಗಳು ನನ್ನೊಳಗೆ ಹೆಚ್ಚುತ್ತಿರುವಾಗ, ನಿಮ್ಮ ಸಂತೈಸುವಿಕೆಯು ನನ್ನ ಮನಸ್ಸನ್ನು ಆನಂದಪಡಿಸುತ್ತದೆ.
PSA 94:20 ತೀರ್ಪುಗಳಿಂದ ಕೇಡನ್ನು ಕಲ್ಪಿಸುವ ಅಪರಾಧದ ನ್ಯಾಯಾಸನವು ನಿಮ್ಮ ಸಂಗಡ ಅನ್ಯೋನ್ಯವಾಗಿರುವುದೋ?
PSA 94:21 ನೀತಿವಂತನ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ಅವರ ನಿರಪರಾಧಿಗಳನ್ನು ಮರಣಕ್ಕೆ ಒಪ್ಪಿಸುತ್ತಾರೆ.
PSA 94:22 ಆದರೆ ಯೆಹೋವ ದೇವರು ನನಗೆ ದುರ್ಗವೂ, ನನ್ನ ದೇವರೂ, ನನ್ನ ಆಶ್ರಯದ ಬಂಡೆಯೂ ಆಗಿದ್ದಾರೆ.
PSA 94:23 ವೈರಿಯ ಅಪರಾಧವು ಅವರ ಮೇಲೆಯೇ ತಿರುಗಿ ಬೀಳಲಿ; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಯೆಹೋವ ದೇವರು ಅವರನ್ನು ಸಂಹರಿಸಿ ಬಿಡುವನು.
PSA 95:1 ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ.
PSA 95:2 ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ.
PSA 95:3 ಯೆಹೋವ ದೇವರು ಮಹಾ ದೇವರು, ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ.
PSA 95:4 ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ; ಬೆಟ್ಟಗಳ ಬಲವು ಅವರದೇ.
PSA 95:5 ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು; ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು.
PSA 95:6 ಬನ್ನಿರಿ, ಆರಾಧಿಸೋಣ; ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ.
PSA 95:7 ಅವರು ನಮ್ಮ ದೇವರು; ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.
PSA 95:8 “ನೀವು ಮೆರೀಬದಲ್ಲಿ ಮಾಡಿದಂತೆ, ಹೌದು, ಅಂದು ನೀವು ಮರುಭೂಮಿಯ ಮಸ್ಸಾ ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ.
PSA 95:9 ನಾನು ಮಾಡಿದ್ದನ್ನು ಕಂಡಿದ್ದರೂ, ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು.
PSA 95:10 ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, ‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.
PSA 95:11 ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.
PSA 96:1 ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.
PSA 96:2 ಯೆಹೋವ ದೇವರಿಗೆ ಹಾಡಿರಿ, ಅವರ ನಾಮವನ್ನು ಸ್ತುತಿಸಿರಿ; ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
PSA 96:3 ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
PSA 96:4 ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
PSA 96:5 ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
PSA 96:6 ಘನತೆಯೂ, ಪ್ರಭೆಯೂ ಅವರ ಮುಂದೆ ಇವೆ; ಬಲವೂ, ಸೌಂದರ್ಯವೂ ಅವರ ಪರಿಶುದ್ಧ ಸ್ಥಳದಲ್ಲಿ ಇವೆ.
PSA 96:7 ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
PSA 96:8 ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ಅವರ ಅಂಗಳಗಳಿಗೆ ಬನ್ನಿರಿ.
PSA 96:9 ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ; ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.
PSA 96:10 “ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಆದ್ದರಿಂದ ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ; ಅವರು ಜನರಿಗೆ ನೀತಿಯಲ್ಲಿ ನ್ಯಾಯತೀರಿಸುತ್ತಾರೆ,” ಎಂದು ಎಲ್ಲಾ ಜನಾಂಗಗಳಲ್ಲಿ ಹೇಳಿರಿ.
PSA 96:11 ಆಕಾಶವು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.
PSA 96:12 ಹೊಲಗಳೂ, ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ.
PSA 96:13 ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.
PSA 97:1 ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋಷಪಡಲಿ.
PSA 97:2 ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ; ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ.
PSA 97:3 ಬೆಂಕಿಯು ಅವರ ಮುಂದೆ ಹೋಗಿ ಅವರ ವೈರಿಗಳನ್ನು ಸುತ್ತಲೂ ದಹಿಸುವುದು.
PSA 97:4 ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ಕಂಡು ನಡುಗುತ್ತದೆ.
PSA 97:5 ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ, ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ.
PSA 97:6 ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ; ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ.
PSA 97:7 ವಿಗ್ರಹಗಳನ್ನು ಪೂಜಿಸಿ, ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!
PSA 97:8 ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ.
PSA 97:9 ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ; ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.
PSA 97:10 ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು; ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು.
PSA 97:11 ನೀತಿವಂತನಿಗೋಸ್ಕರ ಬೆಳಕೂ, ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು.
PSA 97:12 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ; ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.
PSA 98:1 ಒಂದು ಕೀರ್ತನೆ. ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಏಕೆಂದರೆ ಅವರು ಅದ್ಭುತಗಳನ್ನು ಮಾಡಿದ್ದಾರೆ; ಅವರ ಬಲಗೈಯೂ, ಅವರ ಪರಿಶುದ್ಧ ಭುಜವು ಅವರಿಗೆ ಜಯವನ್ನು ತಂದಿವೆ.
PSA 98:2 ಯೆಹೋವ ದೇವರು ತಮ್ಮ ರಕ್ಷಣೆಯನ್ನು ತಿಳಿಯಪಡಿಸಿದ್ದಾರೆ; ರಾಷ್ಟ್ರಗಳಿಗೆ ತಮ್ಮ ನೀತಿಯನ್ನು ಪ್ರಕಟಪಡಿಸಿದ್ದಾರೆ.
PSA 98:3 ಇಸ್ರಾಯೇಲರ ಕಡೆಗೆ ತಮ್ಮ ಪ್ರೀತಿಯನ್ನೂ, ತಮ್ಮ ಸತ್ಯತೆಯನ್ನೂ ಜ್ಞಾಪಕ ಮಾಡಿಕೊಂಡಿದ್ದಾರೆ; ಭೂಮಿಯ ಅಂತ್ಯಗಳಲ್ಲೆವೂ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.
PSA 98:4 ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಆನಂದಘೋಷ ಮಾಡಿರಿ. ಉತ್ಸಾಹಧ್ವನಿ ಮಾಡಿ ಸಂಗೀತದಿಂದ ಸ್ತುತಿಹಾಡಿರಿ.
PSA 98:5 ಯೆಹೋವ ದೇವರಿಗೆ ಕಿನ್ನರಿಯಿಂದ ಗಾನಮಾಡಿರಿ. ಕಿನ್ನರಿಯಿಂದಲೂ, ಕೀರ್ತನೆಯ ಶಬ್ದದಿಂದಲೂ ಹಾಡಿರಿ.
PSA 98:6 ತುತೂರಿಗಳಿಂದಲೂ, ಹೌದು, ಟಗರಿನ ಕೊಂಬಿನಿಂದಲೂ ಯೆಹೋವ ರಾಜರ ಮುಂದೆ ಆನಂದಘೋಷ ಮಾಡಿರಿ.
PSA 98:7 ಸಮುದ್ರವೂ, ಅದರಲ್ಲಿರುವುದೆಲ್ಲವೂ, ಲೋಕವೂ, ಅದರ ನಿವಾಸಿಗಳೂ ಪ್ರತಿಧ್ವನಿಸಲಿ.
PSA 98:8 ನದಿಗಳು ಚಪ್ಪಾಳೆ ತಟ್ಟಲಿ. ಬೆಟ್ಟಗಳು ಒಟ್ಟುಗೂಡಿ ಆನಂದ ಕೀರ್ತನೆ ಹಾಡಲಿ.
PSA 98:9 ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು.
PSA 99:1 ಯೆಹೋವ ದೇವರು ಆಳಿಕೆ ಮಾಡುತ್ತಾರೆ. ರಾಷ್ಟ್ರಗಳು ನಡುಗಲಿ. ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ. ಭೂಮಿಯು ಕದಲಲಿ.
PSA 99:2 ಯೆಹೋವ ದೇವರು ಚೀಯೋನಿನಲ್ಲಿ ಮಹೋನ್ನತರಾಗಿದ್ದಾರೆ. ಎಲ್ಲಾ ಜನಗಳ ಮೇಲೆ ಉನ್ನತರಾಗಿದ್ದಾರೆ.
PSA 99:3 ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ. ದೇವರು ಪರಿಶುದ್ಧರು.
PSA 99:4 ನ್ಯಾಯ ಪ್ರಿಯ ರಾಜರೇ, ನೀವು ನೀತಿಯನ್ನು ಸ್ಥಿರಪಡಿಸುತ್ತೀರಿ. ನ್ಯಾಯವನ್ನೂ ನೀತಿಯನ್ನೂ ಯಾಕೋಬ್ಯರಲ್ಲಿ ನೀವು ಮನದಟ್ಟಾಗಿಸಿರುವಿರಿ.
PSA 99:5 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ಅವರ ಪಾದಪೀಠದಲ್ಲಿ ಆರಾಧಿಸಿರಿ. ಏಕೆಂದರೆ ಅವರು ಪರಿಶುದ್ಧರಾಗಿದ್ದಾರೆ.
PSA 99:6 ಯೆಹೋವ ದೇವರ ಯಾಜಕರಲ್ಲಿ ಮೋಶೆಯೂ ಆರೋನನೂ ಇದ್ದಾರೆ. ದೇವರ ಹೆಸರೆತ್ತಿ ಕರೆದವರಲ್ಲಿ ಸಮುಯೇಲನೂ ಸಹ ಒಬ್ಬನು. ಇವರೆಲ್ಲರೂ ಯೆಹೋವ ದೇವರನ್ನು ಕರೆದರು. ದೇವರು ಅವರಿಗೆ ಉತ್ತರಕೊಟ್ಟರು.
PSA 99:7 ಮೇಘಸ್ತಂಭದಿಂದ ಅವರ ಸಂಗಡ ಮಾತನಾಡಿದರು. ದೇವರು ಅವರಿಗೆ ಕೊಟ್ಟ ಶಾಸನಗಳನ್ನೂ ತೀರ್ಪುಗಳನ್ನೂ ಅವರು ಕೈಗೊಂಡರು.
PSA 99:8 ನಮ್ಮ ದೇವರಾದ ಯೆಹೋವ ದೇವರೇ, ನೀವು ಅವರಿಗೆ ಉತ್ತರಕೊಟ್ಟಿದ್ದೀರಿ. ನೀವು ದುಷ್ಕೃತ್ಯಗಳಿಗಾಗಿ ಇಸ್ರಾಯೇಲರನ್ನು ದಂಡಿಸಿದರೂ ಅವರನ್ನು ಕ್ಷಮಿಸುವ ದೇವರಾಗಿದ್ದೀರಿ.
PSA 99:9 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ದೇವರ ಪರಿಶುದ್ಧ ಪರ್ವತದಲ್ಲಿ ಆರಾಧಿಸಿರಿ. ನಮ್ಮ ದೇವರಾದ ಯೆಹೋವ ದೇವರು ಪರಿಶುದ್ಧರು.
PSA 100:1 ಕೀರ್ತನೆ. ಕೃತಜ್ಞತೆಯ ಗೀತೆ. ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ.
PSA 100:2 ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ; ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ.
PSA 100:3 ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.
PSA 100:4 ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.
PSA 100:5 ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು. ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.
PSA 101:1 ದಾವೀದನ ಕೀರ್ತನೆ. ನಿಮ್ಮ ಪ್ರೀತಿ ನೀತಿಗಳನ್ನು ಕುರಿತು ಹಾಡುವೆನು; ಯೆಹೋವ ದೇವರೇ, ನಿಮ್ಮನ್ನು ಸ್ತುತಿಸುವೆನು.
PSA 101:2 ದೋಷರಹಿತ ಮಾರ್ಗದಲ್ಲಿ ನಡೆಯಲು ಜಾಗರೂಕನಾಗಿರುವೆನು; ನೀವು ಯಾವಾಗ ನನ್ನ ಬಳಿಗೆ ಬರುವಿರಿ? ನಾನು ನಿರ್ದೋಷ ಹೃದಯದಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
PSA 101:3 ನಾನು ಕೆಟ್ಟ ಕಾರ್ಯವನ್ನು ನನ್ನ ಕಣ್ಣುಗಳ ಮುಂದೆ ಒಪ್ಪಿಗೆಯಿಂದ ನೋಡುವುದಿಲ್ಲ. ಅವಿಶ್ವಾಸಿಗಳು ಮಾಡುವುದನ್ನು ದ್ವೇಷಿಸುವೆನು; ಅದರಲ್ಲಿ ನಾನು ಭಾಗವಹಿಸುವುದಿಲ್ಲ.
PSA 101:4 ಮೂರ್ಖಜನರು ನನ್ನಿಂದ ದೂರವಿರುವರು; ದುಷ್ಟತನವನ್ನು ಅರಿಯದಿರುವೆನು.
PSA 101:5 ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸುಮ್ಮನಿರಿಸುವೆನು; ಗರ್ವದ ಕಣ್ಣೂ, ಅಹಂಕಾರದ ಹೃದಯವೂ ಉಳ್ಳವನನ್ನು ಸಹಿಸಲಾರೆನು.
PSA 101:6 ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು; ನಿಷ್ಕಳಂಕವಾಗಿ ನಡೆಯುವವರೇ ನನ್ನ ಸೇವೆಯಲ್ಲಿರಬೇಕು.
PSA 101:7 ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು; ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನಿಂತುಕೊಳ್ಳನು.
PSA 101:8 ದುಷ್ಟತನ ಮಾಡುವವರೆಲ್ಲರನ್ನು ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು; ಯೆಹೋವ ದೇವರ ಪಟ್ಟಣದೊಳಗಿಂದ ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು.
PSA 102:1 ದುಃಖಿತನಾಗಿ ಯೆಹೋವ ದೇವರ ಮುಂದೆ ತನ್ನ ಚಿಂತೆಗಳನ್ನು ಹೇಳಿಕೊಳ್ಳುವ ಬಾಧಿತನ ಪ್ರಾರ್ಥನೆ. ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಯು ನಿಮಗೆ ಮುಟ್ಟಲಿ.
PSA 102:2 ನನಗೆ ಇಕ್ಕಟ್ಟು ಇರುವ ದಿವಸದಲ್ಲಿ ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ, ಸಹಾಯಮಾಡಿರಿ; ನಾನು ಕರೆಯುವಾಗ ನನ್ನ ಕಡೆಗೆ ತಿರುಗಿರಿ, ಬೇಗನೇ ನನಗೆ ಉತ್ತರಕೊಡಿರಿ.
PSA 102:3 ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗುತ್ತವೆ; ನನ್ನ ಎಲುಬುಗಳು ಬೂದಿ ಮುಚ್ಚಿದ ಕೆಂಡದಂತೆ ಸುಟ್ಟುಹೋಗಿವೆ.
PSA 102:4 ನನ್ನ ಹೃದಯವು ಬಾಡಿಹೋಗಿ ಹುಲ್ಲಿನ ಹಾಗೆ ಒಣಗಿಹೋಗಿದೆ; ನಾನು ಊಟಮಾಡುವುದಕ್ಕೆ ಸಹ ಮರೆತುಬಿಡುತ್ತೇನೆ.
PSA 102:5 ನಾನು ನನ್ನ ನಿಟ್ಟುಸಿರಿನಿಂದ ಮೊರೆಯಿಡುತ್ತಿದ್ದೇನೆ. ನನ್ನಲ್ಲಿ ಎಲುಬು ತೊಗಲು ಮಾತ್ರ ಉಳಿದಿರುತ್ತವೆ.
PSA 102:6 ನಾನು ಅರಣ್ಯದ ಗೂಬೆಗೆ ಸಮಾನನಾಗಿದ್ದೇನೆ; ನಾನು ಹಾಳೂರಿನ ಗೂಬೆಯ ಹಾಗಿದ್ದೇನೆ.
PSA 102:7 ನಿದ್ರೆಯಿಲ್ಲದೆ ಬಳಲುತ್ತಿದ್ದೇನೆ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.
PSA 102:8 ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರೆಲ್ಲರು ನನಗೆ ವಿರೋಧವಾಗಿ ಶಪಿಸುತ್ತಾರೆ.
PSA 102:9 ನಿಮ್ಮ ದುಃಖ ಬೇಸರದ ನಿಮಿತ್ತ, ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿದ್ದೇನೆ.
PSA 102:10 ಇದಕ್ಕೆ ಕಾರಣ ನೀವು ಗಮನ ಕೊಡದಿರುವುದೇ. ನೀವು ನನಗೆ ಲಕ್ಷ್ಯಕೊಡುತ್ತಾಯಿಲ್ಲ.
PSA 102:11 ನನ್ನ ದಿವಸಗಳು ಸಾಯಂಕಾಲದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತಿದ್ದೇನೆ.
PSA 102:12 ಆದರೆ ನೀವು ಯೆಹೋವ ದೇವರೇ, ಎಂದೆಂದಿಗೂ ಇರುತ್ತೀರಿ; ನಿಮ್ಮ ಪ್ರಸಿದ್ಧ ಕಾರ್ಯಗಳು ತಲತಲಾಂತರಕ್ಕೂ ಇರುತ್ತವೆ.
PSA 102:13 ನೀವು ಎದ್ದು ಚೀಯೋನನ್ನು ಕನಿಕರಿಸುವಿರಿ; ಅದನ್ನು ಕರುಣಿಸುವ ಕಾಲ ಇದೇ; ಹೌದು, ನೀವು ನಿರ್ಣಯಿಸಿದ ಸಮಯವು ಬಂದಿದೆ.
PSA 102:14 ಅದು ಕಲ್ಲು ಕುಪ್ಪೆಯಾಗಿ ಹೋಗಿದ್ದರೂ, ನಿಮ್ಮ ಸೇವಕರಿಗೆ ಅತಿ ಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
PSA 102:15 ಜನಾಂಗಗಳು ಯೆಹೋವ ದೇವರ ಹೆಸರಿಗೂ, ಭೂರಾಜರೆಲ್ಲರೂ ನಿಮ್ಮ ಮಹಿಮೆಗೂ ಭಯಪಡುವರು.
PSA 102:16 ಏಕೆಂದರೆ ಯೆಹೋವ ದೇವರು ಚೀಯೋನನ್ನು ಮರಳಿ ಕಟ್ಟುವರು; ಅವರು ತಮ್ಮ ಮಹಿಮೆಯಲ್ಲಿ ಕಾಣಿಸಿಕೊಳ್ಳುವರು.
PSA 102:17 ಅವರು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾರೆ; ದೇವರು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.
PSA 102:18 ಇದು ಮುಂದಿನ ಸಂತತಿಗೋಸ್ಕರ ಲಿಖಿತವಾಗಿರಲಿ; ಹುಟ್ಟಲಿಕ್ಕಿರುವ ಜನರು ಯೆಹೋವ ದೇವರನ್ನು ಸ್ತುತಿಸಲಿ.
PSA 102:19 ಯೆಹೋವ ದೇವರು ಉನ್ನತವಾದ ಪವಿತ್ರ ಸ್ಥಾನದಿಂದ ಕೆಳಕ್ಕೆ ನೋಡಿದ್ದಾರೆ; ಅವರು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾರೆ.
PSA 102:20 ಅವರು ಸೆರೆಯವರ ಗೋಳಾಟವನ್ನು ಕೇಳಿ, ಮರಣದಂಡನೆಗೆ ಪಾತ್ರನಾದವರನ್ನು ಬಿಡಿಸುವರು,
PSA 102:21 ಬಿಡುಗಡೆಯಾದವರು ಚೀಯೋನಿನಲ್ಲಿ ಯೆಹೋವ ದೇವರ ನಾಮವನ್ನು ಸಾರುವಂತೆಯೂ, ಯೆರೂಸಲೇಮಿನಲ್ಲಿ ತಮ್ಮ ಸ್ತೋತ್ರವನ್ನು ಪ್ರಕಟಿಸುವಂತೆಯೂ ಮಾಡಿದ್ದಾರೆ.
PSA 102:22 ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವ ದೇವರನ್ನು ಸೇವಿಸುತ್ತವೆ, ಎಂದು ಹೇಳಲಾಗುವುದು.
PSA 102:23 ದೇವರು ನನ್ನ ಜೀವಮಾನದ ಬಲವನ್ನು ಕುಂದಿಸಿದ್ದಾರೆ, ನನ್ನ ದಿನಗಳನ್ನೂ ಕಡಿಮೆ ಮಾಡಿದ್ದಾರೆ.
PSA 102:24 ಆದ್ದರಿಂದ ನಾನು, “ನನ್ನ ದೇವರೇ, ನನ್ನ ಆಯುಷ್ಯದ ಮಧ್ಯದಲ್ಲಿ ನನ್ನನ್ನು ತೆಗೆದುಕೊಳ್ಳಬೇಡಿರಿ; ನಿಮ್ಮ ವರ್ಷಗಳು ತಲತಲಾಂತರಗಳಿಗೂ ಇವೆ.
PSA 102:25 ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ; ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.
PSA 102:26 ಅವು ನಾಶವಾಗುವುವು; ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವುಗಳೆಲ್ಲಾ ವಸ್ತ್ರದ ಹಾಗೆ ಹಳೆಯದಾಗುವುದು; ಅಂಗಿಯ ಹಾಗೆ ಅವುಗಳನ್ನು ಬದಲಾಯಿಸುವಿರಿ; ಅವು ತೆಗೆದುಹಾಕಲಾಗುವುದು.
PSA 102:27 ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ.
PSA 102:28 ನಿಮ್ಮ ಸೇವಕರ ಮಕ್ಕಳು ನಿಮ್ಮ ಸನ್ನಿಧಿಯಲ್ಲಿ ಬದುಕುವರು; ಅವರ ಸಂತತಿಯು ನಿಮ್ಮ ಮುಂದೆ ನೆಲೆಯಾಗಿರುವುದು.”
PSA 103:1 ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ನನ್ನ ಅಂತರಾತ್ಮವೇ ಅವರ ಪರಿಶುದ್ಧ ನಾಮವನ್ನು ಸ್ತುತಿಸು.
PSA 103:2 ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ಅವರ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
PSA 103:3 ದೇವರು ನಿಮ್ಮ ಪಾಪಗಳನ್ನೆಲ್ಲಾ ಕ್ಷಮಿಸುತ್ತಾರೆ. ನಿಮ್ಮ ರೋಗಗಳನ್ನೆಲ್ಲಾ ವಾಸಿಮಾಡುತ್ತಾರೆ.
PSA 103:4 ದೇವರು ನಿಮ್ಮ ಜೀವವನ್ನು ಪಾತಾಳದಿಂದ ವಿಮೋಚಿಸುವರು; ಪ್ರೀತಿ ಅನುಕಂಪವನ್ನು ನಿನಗೆ ಕಿರೀಟವಾಗಿ ಶೃಂಗರಿಸುವರು.
PSA 103:5 ನಿಮ್ಮ ಯೌವನವು ಹದ್ದಿನ ಹಾಗೆ ನವೀಕರಿಸುವಂತೆ ಮಾಡುವರು. ಅವರು ನಿಮ್ಮ ಆಶೆಗಳನ್ನು ಒಳ್ಳೆಯವುಗಳಿಂದ ತೃಪ್ತಿಪಡಿಸುವರು.
PSA 103:6 ಯೆಹೋವ ದೇವರು ಕುಗ್ಗಿದವರೆಲ್ಲರಿಗೂ ನೀತಿಯನ್ನೂ, ನ್ಯಾಯವನ್ನೂ ಕಾರ್ಯರೂಪಕ್ಕೆ ತರುವರು.
PSA 103:7 ಅವರು ತಮ್ಮ ಮಾರ್ಗಗಳನ್ನು ಮೋಶೆಗೂ, ತಮ್ಮ ಕ್ರಿಯೆಗಳನ್ನು ಇಸ್ರಾಯೇಲರಿಗೂ ಪ್ರಕಟಿಸಿದರು:
PSA 103:8 ಯೆಹೋವ ದೇವರು, ಅನುಕಂಪವೂ ದಯೆಯೂ ದೀರ್ಘಶಾಂತಿಯೂ ಪೂರ್ಣ ಪ್ರೀತಿಯೂ ಉಳ್ಳವರಾಗಿದ್ದಾರೆ.
PSA 103:9 ಅವರು ಯಾವಾಗಲೂ ತಪ್ಪುಹುಡುಕುವವರಲ್ಲ; ದೇವರು ತಮ್ಮ ಕೋಪವನ್ನು ಎಂದೆಂದಿಗೂ ಕೂಡಿಟ್ಟುಕೊಳ್ಳುವವರು ಅಲ್ಲ;
PSA 103:10 ದೇವರು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಧರ್ಮಗಳ ಪ್ರಕಾರ ನಮಗೆ ಮುಯ್ಯಿತೀರಿಸಲಿಲ್ಲ.
PSA 103:11 ಏಕೆಂದರೆ, ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ದೇವರ ಪ್ರೀತಿಯು ತಮಗೆ ಭಯಪಡುವವರ ಮೇಲೆ ಅಷ್ಟು ಮಹೋನ್ನತವಾಗಿದೆ;
PSA 103:12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ, ಅವರು ನಮ್ಮ ಅತಿಕ್ರಮಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾರೆ.
PSA 103:13 ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.
PSA 103:14 ದೇವರು ನಮ್ಮ ಪ್ರಕೃತಿಯನ್ನು ಬಲ್ಲವರಾಗಿದ್ದಾರೆ; ನಾವು ಧೂಳಾಗಿದ್ದೇವೆಂದು ಅವರು ನೆನಪುಮಾಡಿ ಕೊಳ್ಳುತ್ತಾರೆ.
PSA 103:15 ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ, ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ;
PSA 103:16 ಗಾಳಿಯು ಅದರ ಮೇಲೆ ಬೀಸುತ್ತಲೇ ಹೂವು ಇಲ್ಲದೆ ಹೋಗುತ್ತದೆ; ಅದು ಇದ್ದ ಸ್ಥಳವನ್ನು ಪುನಃ ಕಾಣುವುದಿಲ್ಲ.
PSA 103:17 ಆದರೆ ಯೆಹೋವ ದೇವರ ಪ್ರೀತಿಯು ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು, ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು.
PSA 103:18 ದೇವರ ಒಡಂಬಡಿಕೆಯನ್ನು ಕೈಕೊಂಡು, ಅವರ ಸೂತ್ರಗಳನ್ನು ಪಾಲಿಸಲು ನೆನಸುವವರಿಗೂ ಅವರ ನೀತಿಯು ನೆಲೆಸಿರುವುದು.
PSA 103:19 ಯೆಹೋವ ದೇವರು ಪರಲೋಕದಲ್ಲಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ, ಅವರ ಸಾಮ್ರಾಜ್ಯದ ಆಳಿಕೆಯು ಎಲ್ಲರ ಮೇಲೆ ಇರುವುದು.
PSA 103:20 ದೇವರ ದೂತರೇ, ಅವರ ಮಾತನ್ನು ಕೇಳಿ, ಅವರಿಗೆ ವಿಧೇಯರಾಗುವ ಪರಾಕ್ರಮಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ.
PSA 103:21 ದೇವರ ಇಷ್ಟವನ್ನು ನಡೆಸುವ ಸೇವಕರೇ, ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ.
PSA 103:22 ದೇವರ ಆಳಿಕೆಯ ಎಲ್ಲಾ ಕಡೆಗಳಲ್ಲಿಯೂ ಇರುವುದು. ಅವರ ಎಲ್ಲಾ ಸೃಷ್ಟಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು.
PSA 104:1 ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ನನ್ನ ದೇವರಾದ ಯೆಹೋವ ದೇವರೇ, ನೀವು ಬಹಳ ದೊಡ್ಡವರಾಗಿದ್ದೀರಿ; ಘನತೆಯಿಂದಲೂ, ಪ್ರಭಾವದಿಂದಲೂ ಭೂಷಿತನಾಗಿರುವೆ.
PSA 104:2 ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ, ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.
PSA 104:3 ದೇವರು ನೀರಿನ ಮೇಲೆ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾರೆ. ಮೋಡಗಳನ್ನು ತಮ್ಮ ರಥವಾಗಿ ಮಾಡುತ್ತಾರೆ. ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಾರೆ.
PSA 104:4 ಅವರು ಗಾಳಿಗಳನ್ನು ತಮ್ಮ ದೂತರಾಗಿ ಮಾಡಿದ್ದಾರೆ, ಅಗ್ನಿ ಜ್ವಾಲೆಯನ್ನು ತಮ್ಮ ಸೇವಕರಾಗಿಯೂ ಮಾಡಿಕೊಂಡಿದ್ದಾರೆ.
PSA 104:5 ಯುಗಯುಗಾಂತರಗಳಿಗೂ ಅದು ಕದಲದ ಹಾಗೆ, ದೇವರು ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಸ್ಥಾಪಿಸಿದ್ದಾರೆ.
PSA 104:6 ಜಲಗಾಧವು ವಸ್ತ್ರದ ಹಾಗೆ ಅದನ್ನು ಮುಚ್ಚಿದೆ; ಬೆಟ್ಟಗಳ ಮೇಲೆ ಜಲರಾಶಿಗಳು ನಿಂತವು.
PSA 104:7 ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು; ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.
PSA 104:8 ಜಲರಾಶಿಗಳು ಬೆಟ್ಟಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀವು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
PSA 104:9 ಅವು ದಾಟದ ಹಾಗೆಯೂ, ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.
PSA 104:10 ಬುಗ್ಗೆಗಳನ್ನು ಹಳ್ಳಗಳಿಗೆ ಕಳುಹಿಸುತ್ತೀರಿ. ಅವು ಬೆಟ್ಟಗಳ ನಡುವೆ ಹರಿಯುತ್ತವೆ.
PSA 104:11 ಅವು ಕಾಡಿನ ಮೃಗಗಳಿಗೆಲ್ಲಾ ನೀರು ಕುಡಿಸುತ್ತವೆ; ಕಾಡುಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
PSA 104:12 ಆಕಾಶದ ಪಕ್ಷಿಗಳು, ಅವುಗಳ ಹತ್ತಿರ ವಾಸವಾಗಿದ್ದು, ಕೊಂಬೆಗಳ ಮಧ್ಯದಲ್ಲಿಂದ ಹಾಡುತ್ತವೆ.
PSA 104:13 ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ. ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
PSA 104:14 ದೇವರು ಪಶುಗಳಿಗೋಸ್ಕರ ಹುಲ್ಲನ್ನೂ, ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ. ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.
PSA 104:15 ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.
PSA 104:16 ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.
PSA 104:17 ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.
PSA 104:18 ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬೆಟ್ಟದ ಮೊಲಗಳಿಗೆ ಬಂಡೆಗಳು ಆಶ್ರಯವಾಗಿವೆ.
PSA 104:19 ದೇವರೇ, ಕಾಲಗಳ ಸೂಚನೆಗಾಗಿ ಚಂದ್ರನನ್ನು ಸೃಷ್ಟಿಸಿದ್ದೀರಿ, ಸೂರ್ಯನು ತನ್ನ ಅಸ್ತಮಾನವನ್ನು ತಿಳಿದಿದ್ದಾನೆ.
PSA 104:20 ನೀವು ಕತ್ತಲನ್ನು ಬರಮಾಡುತ್ತೀರಿ, ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗಗಳೆಲ್ಲಾ ಸಂಚರಿಸುತ್ತವೆ.
PSA 104:21 ಸಿಂಹದ ಮರಿಗಳು ಬೇಟೆಗೋಸ್ಕರವೂ, ದೇವರಿಂದ ತಮ್ಮ ಆಹಾರವನ್ನು ಹುಡುಕುವುದಕ್ಕೋಸ್ಕರವೂ ಗರ್ಜಿಸುತ್ತವೆ.
PSA 104:22 ಸೂರ್ಯೋದಯವಾಗಲು ಅವು ಕೂಡಿಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.
PSA 104:23 ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗಿ ಸಾಯಂಕಾಲದವರೆಗೆ ದುಡಿಯುತ್ತಾನೆ.
PSA 104:24 ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.
PSA 104:25 ದೊಡ್ಡದೂ, ವಿಶಾಲವಾದದ್ದೂ ಆದ ಸಮುದ್ರವಿದೆ; ಅದರಲ್ಲಿ ಲೆಕ್ಕವಿಲ್ಲದಷ್ಟು ಜೀವಜಂತುಗಳೂ, ಸಣ್ಣ ದೊಡ್ಡ ಜಲಚರಗಳೂ ಇವೆ.
PSA 104:26 ಅದರಲ್ಲಿ ಹಡಗುಗಳು ಹೋಗುತ್ತವೆ; ಅದರಲ್ಲಿ ಆಡುವುದಕ್ಕೆ ನೀವು ರೂಪಿಸಿದ ಲಿವ್ಯಾತಾನ ತಿಮಿಂಗಲವು ಇದೆ.
PSA 104:27 ದೇವರೇ, ನೀವು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವ ಹಾಗೆ, ಅವುಗಳೆಲ್ಲಾ ನಿಮ್ಮನ್ನು ಕಾದುಕೊಂಡಿರುತ್ತವೆ.
PSA 104:28 ನೀವು ಅವುಗಳಿಗೆ ಕೊಡಲು ಅವು ಕೂಡಿ ಬರುತ್ತವೆ; ನೀವು ನಿಮ್ಮ ಕೈ ತೆರೆಯಲು, ಒಳ್ಳೆಯವುಗಳಿಂದ ತೃಪ್ತಿ ಹೊಂದುತ್ತವೆ.
PSA 104:29 ನೀವು ನಿಮ್ಮ ಮುಖವನ್ನು ಮರೆಮಾಡಲು, ಅವು ಹೆದರುತ್ತವೆ. ನೀವು ಅವುಗಳ ಶ್ವಾಸವನ್ನು ತೆಗೆದುಬಿಡಲು, ಸತ್ತು ಹೋಗಿ, ಮಣ್ಣುಪಾಲಾಗುತ್ತವೆ.
PSA 104:30 ನೀವು ನಿಮ್ಮ ಶ್ವಾಸವನ್ನು ಕಳುಹಿಸಲು, ಜೀವಜಂತುಗಳು ಹುಟ್ಟುತ್ತವೆ; ಹೀಗೆ ನೀವು ಭೂಮಿಯನ್ನು ನೂತನಗೊಳಿಸುತ್ತೀರಿ.
PSA 104:31 ಯೆಹೋವ ದೇವರ ಮಹಿಮೆಯು ಯುಗಯುಗಕ್ಕೂ ಇರಲಿ; ಯೆಹೋವ ದೇವರು ತಮ್ಮ ಕೆಲಸಗಳಲ್ಲಿ ಸಂತೋಷಪಡಲಿ.
PSA 104:32 ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ; ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.
PSA 104:33 ನಾನು ಜೀವಿತ ಕಾಲವೆಲ್ಲಾ ಯೆಹೋವ ದೇವರಿಗೆ ಹಾಡುತ್ತಿರುವೆನು. ನಾನು ಬದುಕಿರುವವರೆಗೆ ದೇವರನ್ನು ಸ್ತುತಿಸುತ್ತಿರುವೆನು.
PSA 104:34 ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು; ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.
PSA 104:35 ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ; ದುಷ್ಟರು ಇಲ್ಲದೆ ಹೋಗಲಿ. ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ಯೆಹೋವ ದೇವರಿಗೆ ಸ್ತೋತ್ರವಾಗಲಿ.
PSA 105:1 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ; ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
PSA 105:2 ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ; ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
PSA 105:3 ದೇವರ ಪರಿಶುದ್ಧ ನಾಮವನ್ನು ಹೊಗಳಿರಿ; ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
PSA 105:4 ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
PSA 105:5 ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
PSA 105:6 ದೇವರ ಸೇವಕನಾದ ಅಬ್ರಹಾಮನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
PSA 105:7 ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
PSA 105:8 ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
PSA 105:9 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾರೆ.
PSA 105:10 ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು; ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
PSA 105:11 “ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
PSA 105:12 ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
PSA 105:13 ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
PSA 105:14 ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ ಹೀಗೆ ಹೇಳಿದರು:
PSA 105:15 “ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.”
PSA 105:16 ದೇವರು ಕ್ಷಾಮವನ್ನು ದೇಶದಲ್ಲಿ ಅನುಮತಿಸಿದರು. ಆಹಾರದ ಒದಗುವಿಕೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದರು.
PSA 105:17 ಆಗ ದೇವರು ಅವರ ಮುಂದೆ ಒಬ್ಬ ಮನುಷ್ಯನನ್ನು ಕಳುಹಿಸಿದರು. ಅವನೇ ದಾಸನಾಗಿ ಮಾರಲಾದ ಯೋಸೇಫನು.
PSA 105:18 ಸಂಕೋಲೆಗಳಿಂದ ಅವನ ಕಾಲನ್ನು ನೋಯಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಇರಿಸಿದರು.
PSA 105:19 ಯೆಹೋವ ದೇವರ ಮುಂತಿಳಿಸಿದ ವಾಕ್ಯವು ನೆರವೇರುವವರೆಗೆ ಅವನು ದೇವರ ಮಾತಿನಿಂದ ಪರಿಶೋಧಿತನಾದನು.
PSA 105:20 ಅರಸನು ಅವನನ್ನು ಕರೆದು ಸೆರೆಯಿಂದ ಬಿಡಿಸಿದನು. ಹೌದು, ಜನಗಳ ಅಧಿಪತಿಯಿಂದ ಅವನು ಬಿಡುಗಡೆಯಾದನು.
PSA 105:21 ಅರಸನು ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ, ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ,
PSA 105:22 ತನ್ನ ಪ್ರಧಾನರಿಗೆ ತನ್ನ ಇಷ್ಟ ಪ್ರಕಾರ ಶಿಕ್ಷಣ ಕೊಡುವುದಕ್ಕೂ, ತನ್ನ ಜ್ಞಾನವನ್ನು ಮಂತ್ರಿಗಳಿಗೆ ಬೋಧಿಸುವುದಕ್ಕೂ ಯೋಸೇಫನನ್ನು ನೇಮಿಸಿದನು.
PSA 105:23 ಅನಂತರ ಇಸ್ರಾಯೇಲನು ಈಜಿಪ್ಟಿಗೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
PSA 105:24 ದೇವರು ತಮ್ಮ ಜನರನ್ನು ಬಹಳ ಅಭಿವೃದ್ಧಿಗೊಳಿಸಿ, ಅವರನ್ನು ವೈರಿಗಳಿಗಿಂತ ಬಲಿಷ್ಟರನ್ನಾಗಿ ಮಾಡಿದರು.
PSA 105:25 ತಮ್ಮ ಜನರನ್ನು ದ್ವೇಷಿಸುವಂತೆಯೂ, ತಮ್ಮ ಸೇವಕರನ್ನು ಕುಯುಕ್ತಿಯಿಂದ ನಡೆಸುವಂತೆಯೂ ದೇವರು ಅವರ ಹೃದಯವನ್ನು ಮಾರ್ಪಡಿಸಿದನು.
PSA 105:26 ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.
PSA 105:27 ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
PSA 105:28 ದೇವರು ಕತ್ತಲೆಯನ್ನು ಕಳುಹಿಸಿ, ದೇಶವನ್ನೆಲ್ಲಾ ಕತ್ತಲು ಮಾಡಿದರು. ದೇವರ ಮಾತಿಗೆ ಈಜಿಪ್ಟನವರು ವಿರೋಧವಾಗಿ ತಿರುಗಿ ಬಿದ್ದರಲ್ಲವೇ?
PSA 105:29 ದೇವರು ಅವರ ನೀರನ್ನು ರಕ್ತವಾಗಿ ಮಾರ್ಪಡಿಸಿದರು. ಅವರ ಮೀನುಗಳನ್ನು ನಾಶಮಾಡಿದರು.
PSA 105:30 ಅವರ ದೇಶವು ಕಪ್ಪೆಗಳಿಂದ ತುಂಬಿಕೊಂಡಿತು; ಅವರ ಅರಸುಗಳ ಕೊಠಡಿಗಳಲ್ಲಿ ಸಹ ಅವು ನುಗ್ಗಿದವು.
PSA 105:31 ದೇವರು ಆಜ್ಞಾಪಿಸಲು ನೊಣದ ಗುಂಪುಗಳೂ, ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
PSA 105:32 ದೇವರು ಕಲ್ಮಳೆಯನ್ನೂ, ಅಗ್ನಿ ಜ್ವಾಲೆಗಳನ್ನೂ ಅವರ ದೇಶದಲ್ಲಿ ಬರಮಾಡಿದರು.
PSA 105:33 ಅವರ ದ್ರಾಕ್ಷಿಯ ಬಳ್ಳಿ, ಅಂಜೂರದ ಗಿಡಗಳು ಹಾಗೂ ಅವರ ಮೇರೆಗಳ ಮರಗಳು ಮುರಿದು ಬಿದ್ದವು.
PSA 105:34 ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.
PSA 105:35 ಅವು ಈಜಿಪ್ಟ್ ದೇಶದಲ್ಲಿ ಎಲ್ಲಾ ಸಸ್ಯಗಳನ್ನು ತಿಂದುಬಿಟ್ಟವು; ಅವರ ಭೂಮಿಯ ಫಲಗಳನ್ನು ಸಹ ತಿಂದುಬಿಟ್ಟವು.
PSA 105:36 ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲ ಮಕ್ಕಳೂ ಅವರ ಎಲ್ಲಾ ಪ್ರಮುಖರೂ ದೇವರ ಬಾಧೆಗೆ ಒಳಗಾದರು.
PSA 105:37 ದೇವರು ಬೆಳ್ಳಿ ಬಂಗಾರಗಳ ಸಂಗಡ ಇಸ್ರಾಯೇಲರನ್ನು ಹೊರಗೆ ಬರಮಾಡಿದರು. ಅವರ ಗೋತ್ರಗಳಲ್ಲಿ ಬಲಹೀನನಾದ ಒಬ್ಬನೂ ಇರಲಿಲ್ಲ.
PSA 105:38 ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.
PSA 105:39 ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.
PSA 105:40 ಅವರು ಕೇಳಿದಾಗ ದೇವರು ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ಆಹಾರದಿಂದ ಅವರನ್ನು ತೃಪ್ತಿಪಡಿಸಿದರು.
PSA 105:41 ದೇವರು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಮರುಭೂಮಿಯಲ್ಲಿ ನದಿಯಾಗಿ ಹರಿಯಿತು.
PSA 105:42 ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.
PSA 105:43 ದೇವರು ತಮ್ಮ ಜನರನ್ನು ಆನಂದದಿಂದಲೂ, ತಾವು ಆಯ್ದುಕೊಂಡವರನ್ನು ಉತ್ಸಾಹದಿಂದಲೂ ಹೊರತಂದರು.
PSA 105:44 ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.
PSA 105:45 ದೇವರ ಸೂತ್ರಗಳನ್ನು ಕೈಗೊಂಡು, ಅವರ ನಿಯಮಗಳನ್ನು ಇಸ್ರಾಯೇಲರು ಕಾಯಬೇಕೆಂಬ ಉದ್ದೇಶದಿಂದಲೇ ಹೀಗೆಲ್ಲಾ ಆಯಿತು. ಯೆಹೋವ ದೇವರನ್ನು ಸ್ತುತಿಸಿರಿ.
PSA 106:1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
PSA 106:2 ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ, ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?
PSA 106:3 ನ್ಯಾಯವನ್ನು ಕಾಪಾಡಿಕೊಂಡು ಯಾವಾಗಲೂ ಸರಿಯಾದವುಗಳನ್ನು ಪಾಲಿಸುವವರು ಧನ್ಯರು.
PSA 106:4 ದೇವರೇ, ನಿಮ್ಮ ಜನರ ಮೇಲಿರುವ ಮೆಚ್ಚುಗೆಯಿಂದ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ, ನಿಮ್ಮ ರಕ್ಷಣೆಯಿಂದ ನನ್ನನ್ನು ದರ್ಶಿಸಿರಿ.
PSA 106:5 ಯೆಹೋವ ದೇವರೇ, ನಾನು ನೀವು ಆಯ್ದುಕೊಂಡವರ ಸುಖವನ್ನು ಕಂಡು, ನಿಮ್ಮ ಜನರ ಸಂತೋಷದೊಂದಿಗೆ ಸಂತೋಷಿಸಿ, ನಿಮ್ಮ ಸ್ವಕೀಯರ ಸಂಗಡ ಹೊಗಳಿಕೊಳ್ಳುವೆನು.
PSA 106:6 ನಮ್ಮ ಪಿತೃಗಳಂತೆ ನಾವು ಕೂಡಾ ಪಾಪಮಾಡಿದ್ದೇವೆ; ಅಕ್ರಮ ಮಾಡಿದ್ದೇವೆ; ದುಷ್ಟಕೃತ್ಯಗಳನ್ನು ನಡೆಸಿದ್ದೇವೆ.
PSA 106:7 ನಮ್ಮ ಪಿತೃಗಳು ಈಜಿಪ್ಟಿನಲ್ಲಿ ನಿಮ್ಮ ಅದ್ಭುತಗಳಿಗೆ ಲಕ್ಷಕೊಡದೆ, ನಿಮ್ಮ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ ಅಂದರೆ ಕೆಂಪುಸಮುದ್ರದ ಹತ್ತಿರ ತಿರುಗಿಬಿದ್ದರು.
PSA 106:8 ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ, ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.
PSA 106:9 ದೇವರು ಕೆಂಪು ಸಮುದ್ರವನ್ನು ಗದರಿಸಲು, ಅದು ಒಣಗಿ ಹೋಯಿತು; ಹೀಗೆ ಮರುಭೂಮಿಯಲ್ಲಿ ನಡೆದು ಹೋದಂತೆ ಜಲಾಗಾಧದಲ್ಲಿ ಇಸ್ರಾಯೇಲರನ್ನು ನಡೆಸಿದರು.
PSA 106:10 ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿದರು, ಶತ್ರುವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದರು.
PSA 106:11 ಪ್ರವಾಹಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು, ವೈರಿಗಳಲ್ಲಿ ಒಬ್ಬನೂ ಉಳಿಯಲಿಲ್ಲ.
PSA 106:12 ಆಗ ಅವರು ದೇವರ ಮಾತುಗಳನ್ನು ನಂಬಿ, ದೇವರಿಗೆ ಸ್ತೋತ್ರವನ್ನು ಹಾಡಿದರು.
PSA 106:13 ಆದರೆ ಬೇಗನೇ ದೇವರು ಮಾಡಿದ ಕೆಲಸಗಳನ್ನು ಮರೆತುಬಿಟ್ಟು, ದೇವರ ಸಂಕಲ್ಪಕ್ಕೆ ಅವರು ಕಾದುಕೊಳ್ಳದೆ ಹೋದರು.
PSA 106:14 ಮರುಭೂಮಿಯಲ್ಲಿ ದುರಾಶೆಯಿಂದ ಆಶಿಸಿ, ಹಾಳು ಪ್ರದೇಶದಲ್ಲಿ ದೇವರನ್ನು ಪರೀಕ್ಷಿಸಿದರು.
PSA 106:15 ಆಗ ದೇವರು ಅವರ ಬೇಡಿಕೆಯಂತೆಯೇ ಅವರಿಗೆ ಕೊಟ್ಟುಬಿಟ್ಟರು; ಆದರೆ ಅವರ ದೇಹಕ್ಕೆ ಭೀಕರ ರೋಗವನ್ನು ಸಹ ಅನುಮತಿಸಿದರು.
PSA 106:16 ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
PSA 106:17 ಆಗ ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ, ಅಬೀರಾಮನ ಗುಂಪನ್ನು ಮುಚ್ಚಿಬಿಟ್ಟಿತು.
PSA 106:18 ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
PSA 106:19 ಅವರು ಹೋರೇಬಿನಲ್ಲಿ ಎರಕದ ಕರುವನ್ನು ಮಾಡಿ, ಆ ವಿಗ್ರಹಕ್ಕೆ ಅಡ್ಡಬಿದ್ದರು.
PSA 106:20 ಹೀಗೆ ಅವರು ತಮ್ಮ ಮಹಿಮೆಯುಳ್ಳ ದೇವರನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
PSA 106:21 ಅವರು ತಮ್ಮನ್ನು ರಕ್ಷಿಸಿದ ದೇವರನ್ನು ಬೇಗ ಮರೆತುಬಿಟ್ಟರು. ಹೌದು, ಈಜಿಪ್ಟ್ ದೇಶದಲ್ಲಿ ಮಹತ್ಕಾರ್ಯಗಳನ್ನೂ,
PSA 106:22 ಹಾಮ ದೇಶದಲ್ಲಿ ಅದ್ಭುತಗಳನ್ನೂ, ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.
PSA 106:23 ಆದ್ದರಿಂದ ದೇವರು ಅವರಿಗೆ ಪೂರ್ಣದಂಡನೆ ಕೊಡುವುದಾಗಿ ಹೇಳಿದರು. ಆದರೆ ಅವರು ಆಯ್ದುಕೊಂಡ ಮೋಶೆಯು, ದೇವರ ಕಠಿಣ ತೀರ್ಮಾನವನ್ನು ಶಾಂತಪಡಿಸಲು ಆಪತ್ತಿನಲ್ಲಿ ದೇವರ ಮುಂದೆ ಮಧ್ಯಸ್ಥನಾಗಿ ನಿಂತುಕೊಂಡನು.
PSA 106:24 ಹೌದು, ಇಸ್ರಾಯೇಲರು ಮನೋಹರವಾದ ದೇಶವನ್ನು ಹೀನೈಸಿ, ದೇವರ ಮಾತನ್ನು ನಂಬದೆ ಹೋದರು.
PSA 106:25 ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ ಯೆಹೋವ ದೇವರ ಮಾತನ್ನು ಹೇಳದೆ ಹೋದರು.
PSA 106:26 ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ, ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ
PSA 106:27 ತಮ್ಮ ಕೈಯನ್ನು ಎತ್ತಿ ಅವರಿಗೆ ಪ್ರಮಾಣ ಮಾಡಬೇಕಾಯಿತು.
PSA 106:28 ಇಸ್ರಾಯೇಲರು ಬಾಳ್ ಪೆಯೋರನ ದೇವತೆಗೆ ತಮ್ಮನ್ನು ಒಪ್ಪಿಸಿಕೊಟ್ಟರು; ಜೀವವಿಲ್ಲದ ದೇವರುಗಳಿಗೆ ಅರ್ಪಿಸಿದ ಯಜ್ಞಗಳನ್ನು ತಿಂದರು.
PSA 106:29 ತಮ್ಮ ಕ್ರಿಯೆಗಳಿಂದ ದೇವರನ್ನು ಅಸಂತೋಷಪಡಿಸಿದರು. ಆದ್ದರಿಂದ ವ್ಯಾಧಿಯು ಅವರಲ್ಲಿ ಹಬ್ಬಿತು.
PSA 106:30 ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ ವ್ಯಾಧಿ ನಿಂತುಹೋಯಿತು.
PSA 106:31 ಇದು ತಲತಲಾಂತರಕ್ಕೂ, ಯುಗಯುಗಕ್ಕೂ ಫೀನೆಹಾಸನಿಗೆ ನೀತಿ ಎಂದು ಎಣಿಸಲಾಯಿತು.
PSA 106:32 ಮೆರೀಬಾದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಅಲ್ಲಿ ಅವರ ನಿಮಿತ್ತ ಮೋಶೆಗೆ ಕೇಡು ಬಂತು.
PSA 106:33 ಏಕೆಂದರೆ ಇಸ್ರಾಯೇಲರು ದೇವರ ಆತ್ಮನಿಗೆ ತಿರುಗಿ ಬಿದ್ದದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
PSA 106:34 ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ ಜನಗಳನ್ನು ಅವರು ದಂಡಿಸದೆ ಹೋದರು.
PSA 106:35 ಆದರೆ ಇತರ ಜನಾಂಗಗಳ ಸಂಗಡ ಕೂಡಿಕೊಂಡು, ಅವರ ಪದ್ಧತಿಗಳನ್ನು ಕಲಿತುಕೊಂಡರು.
PSA 106:36 ಅವರ ವಿಗ್ರಹಗಳಿಗೆ ಆರಾಧನೆ ಮಾಡಿದರು; ಅವು ಅವರಿಗೆ ಉರುಲಿನಂತಾದವು.
PSA 106:37 ತಮ್ಮ ಗಂಡು ಮಕ್ಕಳನ್ನೂ, ಹೆಣ್ಣು ಮಕ್ಕಳನ್ನೂ ಸುಳ್ಳು ದೇವರುಗಳಿಗೆ ಬಲಿಕೊಟ್ಟರು.
PSA 106:38 ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ, ದೇಶವನ್ನು ರಕ್ತದಿಂದ ಅಶುದ್ಧ ಮಾಡಿದರು.
PSA 106:39 ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.
PSA 106:40 ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು. ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,
PSA 106:41 ಅವರನ್ನು ಇತರ ಜನಾಂಗಗಳ ಕೈಗೆ ಒಪ್ಪಿಸಿಕೊಟ್ಟರು. ಹೀಗೆ ಅವರ ವೈರಿಗಳು ಅವರನ್ನು ಆಳಿದರು.
PSA 106:42 ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅವರು ಅಧೀನರಾದರು.
PSA 106:43 ಅನೇಕ ಸಾರಿ ದೇವರು ಇಸ್ರಾಯೇಲರನ್ನು ಬಿಡಿಸಿದರು, ಆದರೆ ಅವರು ತಿರುಗಿಬೀಳುತ್ತಲೇ ಇದ್ದರು; ತಮ್ಮ ಅಕ್ರಮದಿಂದಲೇ ಅವರು ಕುಗ್ಗಿಹೋದರು;
PSA 106:44 ಆದರೂ ಅವರ ಕೂಗನ್ನು ದೇವರು ಕೇಳಿದಾಗ ಇಕ್ಕಟ್ಟಿನಲ್ಲಿದ್ದ ಅವರ ಮೇಲೆ ಲಕ್ಷ್ಯವಿಟ್ಟು,
PSA 106:45 ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,
PSA 106:46 ಅವರನ್ನು ಸೆರೆಹಿಡಿದವರ ಕರುಣೆ ತೋರುವಂತೆ ಮಾಡಿದರು.
PSA 106:47 ನಮ್ಮ ದೇವರಾದ ಯೆಹೋವ ದೇವರೇ, ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ, ನಮ್ಮನ್ನು ರಕ್ಷಿಸಿರಿ.
PSA 106:48 ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲರೂ, “ಆಮೆನ್!” ಎಂದು ಹೇಳಲಿ. ನೀವು ಯೆಹೋವ ದೇವರನ್ನು ಸ್ತುತಿಸಿರಿ.
PSA 107:1 ಯೆಹೋವ ದೇವರನ್ನು ಕೊಂಡಾಡಿರಿ, ಅವರು ಒಳ್ಳೆಯವರು; ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.
PSA 107:2 ಯೆಹೋವ ದೇವರು ವಿಮೋಚಿಸಿದವರು ಹಾಗೆ ಹೇಳಲಿ; ವೈರಿಯ ಕೈಯಿಂದ ಬಿಡುಗಡೆಯಾದವರು ಆ ಕಥೆಯನ್ನು ಹೇಳಲಿ
PSA 107:3 ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಸಹ ಹಾಗೆ ಹೇಳಲಿ.
PSA 107:4 ಮರುಭೂಮಿಯಲ್ಲಿಯೂ, ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು, ವಾಸಿಸುವುದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ ಹೋದರು.
PSA 107:5 ಹಸಿದು, ದಾಹಗೊಂಡು ಅವರ ಪ್ರಾಣವು ಕುಗ್ಗಿಹೋಯಿತು.
PSA 107:6 ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿದರು.
PSA 107:7 ಜನರು ವಾಸಿಸುವ ಪಟ್ಟಣಕ್ಕೆ ಹೋಗುವಹಾಗೆ, ಜನರನ್ನು ಸರಿಯಾದ ಹಾದಿಯಲ್ಲಿ ನಡೆಸಿದರು.
PSA 107:8 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರ ಉಪಕಾರಮಾಡಲಿ, ಮಾನವರಿಗೆ ದೇವರು ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
PSA 107:9 ದೇವರು ದಾಹಪಟ್ಟ ಪ್ರಾಣವನ್ನು ತೃಪ್ತಿಪಡಿಸಿ, ಹಸಿದ ಪ್ರಾಣವನ್ನು ಒಳ್ಳೆಯದರಿಂದ ತುಂಬಿಸಿದ್ದಾರೆ.
PSA 107:10 ಕೆಲವರು ಕತ್ತಲಲ್ಲಿ ಮತ್ತು ಮರಣದ ನೆರಳಿನಲ್ಲಿ ಕುಳಿತರು, ಕೆಲವರು ಸಂಕಟದಲ್ಲಿಯೂ, ಕಬ್ಬಿಣದ ಬೇಡಿಗಳಲ್ಲಿ ಬಂಧಿತರಾಗಿ ಸೆರೆಬಿದ್ದವರು ಕೆಲವರು.
PSA 107:11 ಅವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತರ ಯೋಜನೆಯ ಬಗ್ಗೆ ಹೀನೈಯಿಸಿದ್ದರಿಂದ ಅವರಿಗೆ ಹಾಗಾಯಿತು.
PSA 107:12 ದೇವರು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕನಿಲ್ಲದೆ ಕೆಳಗೆ ಬಿದ್ದರು.
PSA 107:13 ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
PSA 107:14 ಕತ್ತಲೆಯೊಳಗಿಂದಲೂ, ಮರಣದ ನೆರಳಿನಿಂದಲೂ ದೇವರು ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟರು.
PSA 107:15 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ದೇವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
PSA 107:16 ದೇವರು ಕಂಚಿನ ಕದಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದುಬಿಟ್ಟಿದ್ದಾರೆ.
PSA 107:17 ಮೂಢರು ತಮ್ಮ ದ್ರೋಹದಿಂದಲೂ ಕೆಲವರು ತಮ್ಮ ಅಕ್ರಮಗಳಿಂದಲೂ ಶ್ರಮೆ ಪಡುತ್ತಾರೆ.
PSA 107:18 ಅವರ ಪ್ರಾಣವು ಎಲ್ಲಾ ಆಹಾರಕ್ಕೂ ಅಸಹ್ಯಪಡುವಷ್ಟು ಅಸ್ವಸ್ಥರಾಗುತ್ತಾರೆ. ಅವರು ಮರಣದ ಬಾಗಿಲುಗಳಿಗೆ ಸಮೀಪಿಸುತ್ತಾರೆ.
PSA 107:19 ಆಗ ಅವರು ಸಹ ಇಕ್ಕಟ್ಟಿನಲ್ಲಿ ಅವರು ಯೆಹೋವ ದೇವರಿಗೆ ಕೂಗಿದರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
PSA 107:20 ದೇವರು ತಮ್ಮ ವಾಕ್ಯವನ್ನು ಕಳುಹಿಸಿ, ಅವರನ್ನು ಸ್ವಸ್ಥಮಾಡಿದರು; ನಾಶನದಿಂದಲೂ ಅವರನ್ನು ತಪ್ಪಿಸಿದರು.
PSA 107:21 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಕುಂದದ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
PSA 107:22 ಧನ್ಯವಾದ ಬಲಿಗಳನ್ನು ಅರ್ಪಿಸಿ, ದೇವರ ಕೆಲಸಗಳನ್ನು ಉತ್ಸಾಹದಿಂದ ಸಾರಲಿ.
PSA 107:23 ಕೆಲವರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುತ್ತಾರೆ. ಅವರು ಜಲರಾಶಿಯಲ್ಲಿ ವ್ಯಾಪಾರ ಮಾಡುವವರು,
PSA 107:24 ಯೆಹೋವ ದೇವರ ಕೆಲಸಗಳನ್ನೂ, ಅಗಾಧ ಜಲದಲ್ಲಿ ದೇವರ ಅದ್ಭುತಗಳನ್ನೂ ಕಾಣುತ್ತಾರೆ.
PSA 107:25 ದೇವರು ಆಜ್ಞಾಪಿಸಿ ಬಿರುಗಾಳಿಯನ್ನು ಎಬ್ಬಿಸಿದರು; ಅದು ಅದರ ತೆರೆಗಳನ್ನು ಎಬ್ಬಿಸಿತು.
PSA 107:26 ಅವರು ಆಕಾಶದವರೆಗೆ ಏರುತ್ತಾರೆ, ತಿರುಗಿ ಅಗಾಧಗಳವರೆಗೆ ಇಳಿಯುತ್ತಾರೆ; ಅಪಾಯದಲ್ಲಿ ಅವರ ಪ್ರಾಣವು ಕಳವಳದಿಂದ ಕರಗಿ ಹೋಗುತ್ತದೆ.
PSA 107:27 ಅವರು ಅತ್ತಿತ್ತ ತೂಗಾಡಿ ಕುಡುಕರಂತೆ ಓಲಾಡುತ್ತಿದ್ದರು. ಅವರ ಜ್ಞಾನವೆಲ್ಲಾ ಮುಗಿದು ಹೋಯಿತು.
PSA 107:28 ಆಗ ಅವರು ಸಹ ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿದನು.
PSA 107:29 ದೇವರು ಬಿರುಗಾಳಿಯನ್ನು ಶಾಂತ ಮಾಡಿದರು. ಅದರ ತೆರೆಗಳು ನಿಂತುಹೋದವು.
PSA 107:30 ಅವು ಶಾಂತವಾದಾಗ ಜನರು ಸಂತೋಷಪಟ್ಟರು. ಹೀಗೆ ಅವರು ಅಪೇಕ್ಷಿಸಿದ ಬಂದರಿಗೆ ದೇವರು ಅವರನ್ನು ನಡೆಸಿದರು.
PSA 107:31 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
PSA 107:32 ಜನರ ಸಭೆಯಲ್ಲಿ ದೇವರನ್ನು ಕೊಂಡಾಡಲಿ, ಹಿರಿಯರ ಸಭೆಯಲ್ಲಿ ದೇವರನ್ನು ಸ್ತುತಿಸಲಿ.
PSA 107:33 ದೇವರು ನದಿಗಳನ್ನು ಮರುಭೂಮಿಯಾಗಿ ಮಾರ್ಪಡಿಸಿದರು, ನೀರಿನ ಬುಗ್ಗೆಗಳನ್ನು ದಾಹಗೊಂಡ ಭೂಮಿಯಂತೆ ಮಾಡಿದರು.
PSA 107:34 ದೇವರು ಫಲವುಳ್ಳ ಭೂಮಿಯನ್ನು ಬಂಜರಾಗುವಂತೆ ಮಾಡಿದರು. ಇದಕ್ಕೆಲ್ಲ ಕಾರಣ ಅದರ ನಿವಾಸಿಗಳ ಕೆಟ್ಟತನವೇ ಆಗಿತ್ತು.
PSA 107:35 ದೇವರು ಮರುಭೂಮಿಯನ್ನು ನೀರಿನ ಕೆರೆಯಾಗಿಯೂ, ಒಣ ಭೂಮಿಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸಿದರು.
PSA 107:36 ಆದರೆ ದೇವರು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದರು; ಆ ಜನರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿದರು.
PSA 107:37 ಅವರು ಹೊಲಗಳನ್ನು ಬಿತ್ತಿ, ದ್ರಾಕ್ಷಿಯ ಬಳ್ಳಿಗಳನ್ನು ನೆಟ್ಟರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
PSA 107:38 ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು; ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.
PSA 107:39 ಆದರೆ ಜನರು ಸಂಖ್ಯೆಯಲ್ಲಿ ಕಡಿಮೆಯಾಗಿ ಚಿಂತೆ ಸಂಕಟದಿಂದ ಕುಗ್ಗಿಹೋದರು.
PSA 107:40 ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ, ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.
PSA 107:41 ಆದರೂ ದೇವರು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ, ಅವನ ಕುಟುಂಬಗಳನ್ನು ಮಂದೆಯ ಹಾಗೆ ಮಾಡಿದರು.
PSA 107:42 ನೀತಿವಂತರು ನೋಡಿ ಸಂತೋಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.
PSA 107:43 ಜ್ಞಾನಿಗಳು ಇವುಗಳನ್ನು ಗಮನಿಸಲಿ, ಯೆಹೋವ ದೇವರ ಪ್ರೀತಿಕೃತ್ಯಗಳನ್ನು ಗ್ರಹಿಸಿಕೊಳ್ಳಲಿ.
PSA 108:1 ಒಂದು ಗೀತೆ. ದಾವೀದನ ಕೀರ್ತನೆ. ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ಮನಃಪೂರ್ವಕವಾಗಿ ಹಾಡುತ್ತಾ, ನಿಮ್ಮ ಕೀರ್ತನೆಯನ್ನು ಮಾಡುವೆನು.
PSA 108:2 ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯವನ್ನು ಎಚ್ಚರಗೊಳಿಸುವೆನು.
PSA 108:3 ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.
PSA 108:4 ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.
PSA 108:5 ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
PSA 108:6 ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
PSA 108:7 ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
PSA 108:8 ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
PSA 108:9 ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
PSA 108:10 ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
PSA 108:11 ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
PSA 108:12 ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
PSA 108:13 ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.
PSA 109:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ.
PSA 109:2 ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.
PSA 109:3 ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ.
PSA 109:4 ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು.
PSA 109:5 ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ.
PSA 109:6 ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.
PSA 109:7 ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ.
PSA 109:8 ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ.
PSA 109:9 ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ.
PSA 109:10 ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ.
PSA 109:11 ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
PSA 109:12 ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ.
PSA 109:13 ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
PSA 109:14 ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
PSA 109:15 ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ.
PSA 109:16 ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು.
PSA 109:17 ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
PSA 109:18 ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು.
PSA 109:19 ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
PSA 109:20 ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ.
PSA 109:21 ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ.
PSA 109:22 ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ.
PSA 109:23 ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ.
PSA 109:24 ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು.
PSA 109:25 ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
PSA 109:26 ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ.
PSA 109:27 ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ.
PSA 109:28 ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ.
PSA 109:29 ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
PSA 109:30 ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು.
PSA 109:31 ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
PSA 110:1 ದಾವೀದನ ಕೀರ್ತನೆ. ಯೆಹೋವ ದೇವರು ನನ್ನ ಕರ್ತ ಆಗಿರುವವರಿಗೆ ಹೇಳಿದ್ದೇನೆಂದರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರಿ.”
PSA 110:2 ನಿಮ್ಮ ಬಲವಾದ ರಾಜದಂಡವನ್ನು ಯೆಹೋವ ದೇವರು ಚೀಯೋನಿನ ಹೊರಗೂ ವಿಸ್ತರಿಸುವರು. “ನಿಮ್ಮ ಶತ್ರುಗಳ ಮಧ್ಯದಲ್ಲಿ ದೊರೆತನ ಮಾಡಿರಿ,” ಎಂದು ಅವರು ನಿಮಗೆ ಹೇಳುವರು.
PSA 110:3 ನೀವು ನಿಮ್ಮ ಸೈನ್ಯವನ್ನು ಒಟ್ಟುಗೂಡಿಸುವ ದಿನದಲ್ಲಿ ನಿಮ್ಮ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಮುಂಜಾನೆಯ ಉದರದಿಂದ ಬರುವ ಇಬ್ಬನಿಯಂತೆ ನಿಮ್ಮ ಯೋಧರು ನಿಮ್ಮ ಕಡೆ ಇಳಿದು ಬರುವರು.
PSA 110:4 “ನೀವು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಯಾಜಕರಾಗಿದ್ದೀರಿ,” ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ. ಅವರು ತಮ್ಮ ಮನಸ್ಸನ್ನು ಬದಲಾಯಿಸರು.
PSA 110:5 ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿದ್ದಾರೆ; ಅವರು ತಮ್ಮ ತೀರ್ಪಿನ ದಿನದಲ್ಲಿ ಅರಸರನ್ನು ದಂಡಿಸುವರು.
PSA 110:6 ದೇವರು ಜನಾಂಗಗಳನ್ನು ನ್ಯಾಯತೀರಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳನ್ನು ದಂಡಿಸಿ ಅವರಿಗೆ ಮರಣದಂಡನೆ ವಿಧಿಸುವರು.
PSA 110:7 ಕರ್ತ ಆಗಿರುವವರು ದಾರಿಯುದ್ದಕ್ಕೂ ಹಳ್ಳದಿಂದ ನೀರು ಕುಡಿಯುತ್ತಾ, ಜಯದ ಮಾರ್ಗದಲ್ಲಿ ತಲೆಯೆತ್ತಿ ನಡೆದುಹೋಗುವರು.
PSA 111:1 ಯೆಹೋವ ದೇವರನ್ನು ಸ್ತುತಿಸಿರಿ. ನಾನು ಯೆಹೋವ ದೇವರನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ, ಸಭೆಯಲ್ಲಿಯೂ ಕೊಂಡಾಡುವೆನು.
PSA 111:2 ಯೆಹೋವ ದೇವರ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷ ಪಡುವವರೆಲ್ಲರು ಅವುಗಳನ್ನೇ ಧ್ಯಾನಿಸುತ್ತಾರೆ.
PSA 111:3 ದೇವರ ಕೆಲಸವು ಘನತೆಯೂ, ಮಹಿಮೆಯೂ ಉಳ್ಳದ್ದು; ದೇವರ ನೀತಿಯು ಎಂದೆಂದಿಗೂ ನಿಲ್ಲುವುದು.
PSA 111:4 ದೇವರು ತಮ್ಮ ಅದ್ಭುತಗಳ ಜ್ಞಾಪಕವನ್ನು ಉಳಿದಿರುವಂತೆ ಮಾಡಿದ್ದಾರೆ; ಯೆಹೋವ ದೇವರು ಕೃಪೆಯೂ, ಅನುಕಂಪವೂ ಉಳ್ಳವರು.
PSA 111:5 ಅವರು ತಮಗೆ ಭಯಪಡುವವರಿಗೆ ಆಹಾರ ಕೊಟ್ಟಿದ್ದಾರೆ; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವರು.
PSA 111:6 ಜನಾಂಗಗಳ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ದೇವರು ಶಕ್ತಿಯ ಕ್ರಿಯೆಗಳನ್ನು ತಮ್ಮ ಜನರಿಗೆ ತಿಳಿಸಿದ್ದಾರೆ.
PSA 111:7 ದೇವರ ಕೈಕೆಲಸಗಳು ಸತ್ಯವೂ, ನ್ಯಾಯವೂ ಆಗಿವೆ; ಅವರ ಸೂತ್ರಗಳೆಲ್ಲಾ ವಿಶ್ವಾಸಕ್ಕೆ ಯೋಗ್ಯವಾದವುಗಳು.
PSA 111:8 ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ; ಅವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಒಳಗೊಂಡಿರುತ್ತದೆ.
PSA 111:9 ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ; ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.
PSA 111:10 ಯೆಹೋವ ದೇವರ ಭಯವು ಜ್ಞಾನದ ಮೂಲವು; ಅವರ ಸೂತ್ರಗಳನ್ನು ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು; ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.
PSA 112:1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಭಯಪಟ್ಟು ಅವರ ಆಜ್ಞೆಗಳಲ್ಲಿ ಬಹಳವಾಗಿ ಸಂತೋಷಿಸುವವರು ಧನ್ಯರು.
PSA 112:2 ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು; ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.
PSA 112:3 ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು; ಅವರ ನೀತಿಯು ಶಾಶ್ವತವಾಗಿ ಉಳಿಯುವುದು.
PSA 112:4 ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಮೂಡುವುದು; ಅವರು ಕೃಪೆಯೂ, ಅನುಕಂಪವೂ, ನೀತಿಯೂ ಉಳ್ಳವವರಾಗಿರುವರು.
PSA 112:5 ದಯೆತೋರಿಸಿ ಸಾಲಕೊಡುವವರಿಗೆ, ಒಳ್ಳೆಯದಾಗುವುದು; ಅವರು ತಮ್ಮ ಕಾರ್ಯಗಳನ್ನು ನ್ಯಾಯದಿಂದ ನಡೆಸುವರು.
PSA 112:6 ನಿಶ್ಚಯವಾಗಿ ನೀತಿವಂತರು ಎಂದೆಂದಿಗೂ ಕದಲರು; ನೀತಿವಂತರು ನಿತ್ಯವಾಗಿ ಜ್ಞಾಪಕದಲ್ಲಿ ಇರುವರು.
PSA 112:7 ಅವರಿಗೆ ಅಶುಭದ ಸುದ್ದಿಯ ಭಯ ಇರುವುದಿಲ್ಲ; ಅವರ ಹೃದಯವು ಯೆಹೋವ ದೇವರಲ್ಲಿ ಭರವಸವಿಟ್ಟು ಸ್ಥಿರವಾಗಿರುವುದು.
PSA 112:8 ಅವರ ಹೃದಯವು ಸುರಕ್ಷಿತವಾಗಿರುವುದು. ಅವರು ತಮ್ಮ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವರು, ಭಯಪಡರು.
PSA 112:9 ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು; ಅವನ ಬಲವು ಘನದಿಂದ ಉನ್ನತವಾಗುವುದು.
PSA 112:10 ದುಷ್ಟರು ಇದನ್ನು ಕಂಡು ವ್ಯಥೆ ಪಡುವರು; ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು; ದುಷ್ಟರ ಆಶೆಯು ನಾಶವಾಗುವುದು.
PSA 113:1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಸೇವಕರೇ, ಯೆಹೋವ ದೇವರ ಹೆಸರನ್ನು ಸ್ತುತಿಸಿರಿ.
PSA 113:2 ಇಂದಿನಿಂದ ಯುಗಯುಗಕ್ಕೂ ಯೆಹೋವ ದೇವರ ಹೆಸರಿಗೆ ಸ್ತುತಿಯುಂಟಾಗಲಿ.
PSA 113:3 ಸೂರ್ಯೋದಯದಿಂದ ಅದರ ಅಸ್ತಮಾನದವರೆಗೂ ಯೆಹೋವ ದೇವರ ಹೆಸರು ಸ್ತುತಿಹೊಂದತಕ್ಕದ್ದು.
PSA 113:4 ಯೆಹೋವ ದೇವರು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವರು; ಅವರ ಮಹಿಮೆಯು ಆಕಾಶಗಳ ಮೇಲೆ ಮೆರೆಯುತ್ತದೆ.
PSA 113:5 ನಮ್ಮ ದೇವರಾದ ಯೆಹೋವ ದೇವರ ಹಾಗೆ ಯಾರು ಇದ್ದಾರೆ? ಉನ್ನತಲೋಕದಲ್ಲಿ ಅವರು ವಾಸಿಸುತ್ತಾರೆ.
PSA 113:6 ಆಕಾಶವನ್ನೂ, ಭೂಮಿಯನ್ನೂ ತಗ್ಗಿಸಿಕೊಂಡು ನೋಡುತ್ತಾರೆ.
PSA 113:7 ಧೂಳಿನೊಳಗಿಂದ ದರಿದ್ರರನ್ನು ಎಬ್ಬಿಸುತ್ತಾರೆ, ತಿಪ್ಪೆಯೊಳಗಿಂದ ಬಡವರನ್ನು ಎತ್ತುತ್ತಾರೆ.
PSA 113:8 ದೇವರು ಅವರನ್ನು ಅಧಿಪತಿಗಳ ಸಂಗಡ ಇರುವಂತೆ ಮಾಡುತ್ತಾರೆ. ತಮ್ಮ ಜನರ ಅಧಿಪತಿಗಳ ಸಂಗಡ ಕೂರಿಸುತ್ತಾರೆ.
PSA 113:9 ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.
PSA 114:1 ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ, ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ,
PSA 114:2 ಯೆಹೂದವು ದೇವರ ಪರಿಶುದ್ಧ ಸ್ಥಳವಾಯಿತು, ಇಸ್ರಾಯೇಲು ದೇವರ ರಾಜ್ಯವಾಯಿತು.
PSA 114:3 ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ನದಿ ಹಿಂದಿರುಗಿತು.
PSA 114:4 ಬೆಟ್ಟಗಳು ಟಗರುಗಳಂತೆ ಓಡಿತು, ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು.
PSA 114:5 ಸಮುದ್ರವೇ, ನಿನಗೆ ಏನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನ್ ನದಿಯೇ, ಏಕೆ ಹಿಂದಿರುಗುತ್ತೀ?
PSA 114:6 ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ?
PSA 114:7 ಯೆಹೋವ ದೇವರ ಸನ್ನಿಧಿಯಲ್ಲಿಯೂ, ಯಾಕೋಬಿನ ದೇವರ ಮುಂದೆಯೂ ಭೂಮಿಯೇ ನಡುಗು.
PSA 114:8 ದೇವರು ಬಂಡೆಯನ್ನು ನೀರಿನ ಕೆರೆಯಾಗಿಯೂ, ಕಗ್ಗಲ್ಲನ್ನು ನೀರಿನ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ.
PSA 115:1 ನಮಗಲ್ಲ ಯೆಹೋವ ದೇವರೇ, ನಮಗಲ್ಲ, ನಿಮ್ಮ ಹೆಸರಿಗೆ ಮಾತ್ರ ಮಹಿಮೆ, ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ.
PSA 115:2 “ಅವರ ದೇವರು ಎಲ್ಲಿ?” ಎಂದು ಜನಾಂಗಗಳು ಏಕೆ ಹೇಳಬೇಕು?
PSA 115:3 ನಮ್ಮ ದೇವರು ಪರಲೋಕದಲ್ಲಿದ್ದಾರೆ; ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ.
PSA 115:4 ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
PSA 115:5 ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
PSA 115:6 ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಮೂಗು ಉಂಟು, ಮೂಸುವದಿಲ್ಲ.
PSA 115:7 ಕೈಗಳುಂಟು, ಮುಟ್ಟುವುದಿಲ್ಲ; ಕಾಲುಗಳುಂಟು, ನಡೆಯುವುದಿಲ್ಲ; ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ.
PSA 115:8 ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
PSA 115:9 ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
PSA 115:10 ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
PSA 115:11 ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ.
PSA 115:12 ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು; ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು; ಆರೋನನ ಮನೆಯನ್ನು ಆಶೀರ್ವದಿಸುವರು.
PSA 115:13 ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು.
PSA 115:14 ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು.
PSA 115:15 ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ ನೀವು ಆಶೀರ್ವಾದ ಹೊಂದಿದವರು.
PSA 115:16 ಉನ್ನತ ಆಕಾಶಗಳು ಯೆಹೋವ ದೇವರದೇ, ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ.
PSA 115:17 ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ ಯೆಹೋವ ದೇವರನ್ನು ಸ್ತುತಿಸುವುದಿಲ್ಲ.
PSA 115:18 ಆದರೆ ನಾವು ಈಗಲೂ ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು. ಯೆಹೋವ ದೇವರನ್ನು ಸ್ತುತಿಸಿರಿ.
PSA 116:1 ನಾನು ಯೆಹೋವ ದೇವರನ್ನು ಪ್ರೀತಿಸುತ್ತೇನೆ; ಏಕೆಂದರೆ ಅವರು ನನ್ನನ್ನು ಕರುಣಿಸಬೇಕೆಂಬ ನನ್ನ ವಿನಂತಿಯನ್ನೂ ಕೇಳಿದ್ದಾರೆ.
PSA 116:2 ಅವರು ನನ್ನ ಸ್ವರಕ್ಕೆ ಕಿವಿಗೊಟ್ಟಿದ್ದರಿಂದ ನನ್ನ ಜೀವಮಾನಕಾಲವೆಲ್ಲಾ ಅವರನ್ನು ಬೇಡುವೆನು.
PSA 116:3 ಮರಣದ ಪಾಶಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆಗಳು ನನ್ನ ಮೇಲೆ ಬಂದವು; ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.
PSA 116:4 ಆಗ ನಾನು, “ಓ ಯೆಹೋವ ದೇವರೇ, ನನ್ನನ್ನು ರಕ್ಷಿಸಿರಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಬೇಡಿದೆನು.
PSA 116:5 ಯೆಹೋವ ದೇವರು ಕೃಪೆಯೂ ನೀತಿಯೂ ಉಳ್ಳವರು ನಮ್ಮ ದೇವರು ಅನುಕಂಪ ಭರಿತರು.
PSA 116:6 ಯೆಹೋವ ದೇವರು ಸರಳ ಹೃದಯದವರನ್ನು ಕಾಪಾಡುತ್ತಾರೆ; ನಾನು ಕೊರತೆಯಲ್ಲಿದ್ದಾಗ, ಅವರು ನನ್ನನ್ನು ರಕ್ಷಿಸಿದರು.
PSA 116:7 ನನ್ನ ಮನವೇ, ನೀನು ವಿಶ್ರಾಂತಿಯಿಂದಿರು; ಏಕೆಂದರೆ ಯೆಹೋವ ದೇವರು ನಿನಗೆ ಉಪಕಾರಿಯಾಗಿದ್ದಾರೆ.
PSA 116:8 ಏಕೆಂದರೆ ಯೆಹೋವ ದೇವರೇ, ನೀವು ನನ್ನನ್ನು ಮರಣಕ್ಕೂ, ನನ್ನ ಕಣ್ಣುಗಳನ್ನು ಕಣ್ಣೀರಿಗೂ, ನನ್ನ ಪಾದಗಳನ್ನು ಬೀಳದಂತೆಯೂ ತಪ್ಪಿಸಿದ್ದೀರಿ.
PSA 116:9 ಆದ್ದರಿಂದ ಜೀವಿತರ ಲೋಕದಲ್ಲಿ ಯೆಹೋವ ದೇವರ ಮುಂದೆ ನಡೆದುಕೊಳ್ಳುವೆನು.
PSA 116:10 “ನಾನು ಬಹಳ ಕುಗ್ಗಿ ಹೋಗಿದ್ದೇನೆ,” ಎಂದು ನಾನು ದೇವರಲ್ಲಿ ಭರವಸೆ ಇಟ್ಟಾಗ ಹೇಳಿದೆ.
PSA 116:11 “ಮನುಷ್ಯರೆಲ್ಲರು ಸುಳ್ಳುಗಾರರು,” ಎಂದು ನಾನು ನಿರಾಶೆಯಿಂದ ಹೇಳಿದ್ದೆನು.
PSA 116:12 ದೇವರು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೆ ಬದಲಾಗಿ ನಾನು ಯೆಹೋವ ದೇವರಿಗೆ ಏನು ಮಾಡಲಿ?
PSA 116:13 ನಾನು ರಕ್ಷಣೆಯ ಪಾತ್ರೆಯನ್ನು ತೆಗೆದುಕೊಂಡು, ಯೆಹೋವ ದೇವರ ಹೆಸರನ್ನು ಕರೆಯುವೆನು.
PSA 116:14 ನಾನು ಹೊತ್ತ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ದೇವರಿಗೆ ಸಲ್ಲಿಸುವೆನು.
PSA 116:15 ದೇವರ ಭಕ್ತರ ಮರಣವು ಯೆಹೋವ ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.
PSA 116:16 ಯೆಹೋವ ದೇವರೇ, ನಿಜವಾಗಿ ನಾನು ನಿಮ್ಮ ಸೇವಕನು; ಹೌದು, ನನ್ನ ತಾಯಿ ನಿಮಗೆ ಸೇವೆಮಾಡಿದಂತೆ ನಾನು ಸಹ ನಿಮ್ಮ ಸೇವಕನು; ನೀವು ನನ್ನ ಬಂಧನಗಳಿಂದ ನನ್ನನ್ನು ಬಿಡಿಸಿದ್ದೀರಿ.
PSA 116:17 ನಾನು ನಿಮಗೆ ಕೃತಜ್ಞತೆಯ ಬಲಿಯನ್ನು ಅರ್ಪಿಸುವೆನು; ಯೆಹೋವ ದೇವರ ಹೆಸರನ್ನು ಕರೆಯುವೆನು.
PSA 116:18 ಯೆರೂಸಲೇಮೇ, ನನ್ನ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ಸಲ್ಲಿಸುವೆನು,
PSA 116:19 ಯೆಹೋವ ದೇವರ ಆಲಯದ ಅಂಗಳಗಳಲ್ಲಿ ಯೆರೂಸಲೇಮ ಮಧ್ಯದಲ್ಲಿಯೇ ಯೆಹೋವ ದೇವರಿಗೆ ಸಲ್ಲಿಸುವೆನು. ಯೆಹೋವ ದೇವರನ್ನು ಸ್ತುತಿಸಿರಿ.
PSA 117:1 ಎಲ್ಲಾ ದೇಶಗಳೇ, ಯೆಹೋವ ದೇವರನ್ನು ಸ್ತುತಿಸಿರಿ; ಸಮಸ್ತ ಜನರೇ, ಯೆಹೋವ ದೇವರನ್ನು ಸ್ತುತಿಸಿರಿ.
PSA 117:2 ದೇವರ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ; ಯೆಹೋವ ದೇವರ ಸತ್ಯತೆಯು ಯುಗಯುಗಕ್ಕೂ ಇರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.
PSA 118:1 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
PSA 118:2 “ದೇವರ ಪ್ರೀತಿಯು ಯುಗಯುಗಕ್ಕೂ ಇದೆ,” ಎಂದು ಇಸ್ರಾಯೇಲ್ ಹೇಳಲಿ.
PSA 118:3 “ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಆರೋನನ ಮನೆಯವರು ಹೇಳಲಿ.
PSA 118:4 “ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಯೆಹೋವ ದೇವರಿಗೆ ಭಯಪಡುವವರು ಹೇಳಲಿ.
PSA 118:5 ಇಕ್ಕಟ್ಟಿನೊಳಗಿಂದ ಯೆಹೋವ ದೇವರಿಗೆ ಕೂಗಿದೆನು; ಯೆಹೋವ ದೇವರು ಉತ್ತರಕೊಟ್ಟು, ನನ್ನನ್ನು ವಿಶಾಲವಾದ ಸ್ಥಳಕ್ಕೆ ತಂದರು.
PSA 118:6 ಯೆಹೋವ ದೇವರು ನನ್ನ ಪರವಾಗಿದ್ದಾರೆ, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?
PSA 118:7 ಯೆಹೋವ ದೇವರು ನನ್ನೊಂದಿಗಿದ್ದಾರೆ, ಅವರು ನನಗೆ ಸಹಾಯಕರು; ನಾನು ವೈರಿಗಳ ಮೇಲೆ ಜಯ ಸಾಧಿಸುವೆನು.
PSA 118:8 ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು.
PSA 118:9 ಅಧಿಪತಿಗಳಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರ ಆಶ್ರಯ ಪಡೆಯುವುದು ಒಳ್ಳೆಯದು.
PSA 118:10 ಎಲ್ಲಾ ರಾಷ್ಟ್ರದವರು ನನ್ನನ್ನು ಸುತ್ತಿಕೊಂಡರು; ಆದರೆ ನಾನು ಯೆಹೋವ ದೇವರ ಹೆಸರಿನಲ್ಲಿ ಅವರನ್ನು ದಂಡಿಸುವೆನು.
PSA 118:11 ಅವರು ನನ್ನನ್ನು ಎಲ್ಲಾ ದಿಕ್ಕುಗಳಿಂದ ಸುತ್ತಿಕೊಂಡರು; ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಸೋಲಿಸುವೆನು.
PSA 118:12 ಜೇನುನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ, ಅವರು ಮುಳ್ಳಿನ ಬೆಂಕಿಯ ಹಾಗೆ ಕ್ಷಣಮಾತ್ರದಲ್ಲಿ ಇಲ್ಲವಾಗಿ ಹೋದರು; ಯೆಹೋವ ದೇವರ ಹೆಸರಿನಲ್ಲಿ ನಾನು ಅವರನ್ನು ಸೋಲಿಸುವೆನು.
PSA 118:13 ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು; ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.
PSA 118:14 ನನ್ನ ಬಲವೂ, ಬೆಂಬಲವೂ ಯೆಹೋವ ದೇವರೇ; ಅವರೇ ನನಗೆ ರಕ್ಷಣೆಯಾದರು.
PSA 118:15 ಜಯಘೋಷವೂ ಹರ್ಷಧ್ವನಿಯೂ ನೀತಿವಂತರ ಗುಡಾರಗಳಲ್ಲಿ ಪ್ರತಿಧ್ವನಿಸುತ್ತಿರುವುದು; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
PSA 118:16 ಯೆಹೋವ ದೇವರ ಬಲಗೈ ಎತ್ತರವಾಗಿ ಎತ್ತಲಾಗಿದೆ; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
PSA 118:17 ನಾನು ಸಾಯದೆ ಬದುಕಿರುವೆನು, ಯೆಹೋವ ದೇವರು ಮಾಡಿದ್ದನ್ನು ಸಾರುವೆನು.
PSA 118:18 ಏಕೆಂದರೆ ಯೆಹೋವ ದೇವರು ನನ್ನನ್ನು ಕಠಿಣವಾಗಿ ಶಿಕ್ಷಿಸಿದರು; ಆದರೆ ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
PSA 118:19 ನೀತಿಯ ಬಾಗಿಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಯೆಹೋವ ದೇವರಿಗೆ ಧನ್ಯವಾದ ಸಲ್ಲಿಸು.
PSA 118:20 ಇದೇ ಯೆಹೋವ ದೇವರ ಬಾಗಿಲು; ನೀತಿವಂತರು ಇದರಲ್ಲಿ ಪ್ರವೇಶಿಸುವರು.
PSA 118:21 ನಿಮಗೆ ಕೃತಜ್ಞತಾವಂದನೆ ಸಲ್ಲಿಸುವೆನು; ಏಕೆಂದರೆ ನನಗೆ ನೀವು ಉತ್ತರಕೊಟ್ಟು, ನನಗೆ ರಕ್ಷಣೆಯಾದಿರಿ.
PSA 118:22 ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
PSA 118:23 ಇದು ಯೆಹೋವ ದೇವರಿಂದಲೇ ಉಂಟಾಯಿತು; ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಯಿತು.
PSA 118:24 ಯೆಹೋವ ದೇವರು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.
PSA 118:25 ಯೆಹೋವ ದೇವರೇ ನಮ್ಮನ್ನು ರಕ್ಷಿಸಿರಿ, ಯೆಹೋವ ದೇವರೇ ನಮಗೆ ಜಯಕೊಡಿರಿ.
PSA 118:26 ಯೆಹೋವ ದೇವರ ಹೆಸರಿನಲ್ಲಿ ಬರುವವನು ಧನ್ಯನು; ಯೆಹೋವ ದೇವರ ಆಲಯದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸುವೆವು.
PSA 118:27 ಯೆಹೋವ ದೇವರು ದೇವರಾಗಿದ್ದಾನೆ; ನಮ್ಮ ಮೇಲೆ ಅವರ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ್ದಾರೆ. ಕೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಕೊಂಬುಗಳವರೆಗೆ ಮೆರವಣಿಗೆಯಾಗಿ ಬನ್ನಿರಿ.
PSA 118:28 ನೀವು ನನ್ನ ದೇವರಾಗಿದ್ದೀರಿ, ನಿಮಗೆ ಉಪಕಾರ ಸಲ್ಲಿಸುವೆನು; ನೀವು ನನ್ನ ದೇವರು; ನಿಮ್ಮನ್ನು ನಾನು ಉನ್ನತಪಡಿಸುವೆನು.
PSA 118:29 ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ; ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
PSA 119:1 ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು.
PSA 119:2 ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು
PSA 119:3 ಅಂಥವರು ಅನ್ಯಾಯವನ್ನು ಮಾಡದೆ, ದೇವರ ಮಾರ್ಗಗಳಲ್ಲಿ ನಡೆದುಕೊಳ್ಳುವರು.
PSA 119:4 ದೇವರೇ, ನಿಮ್ಮ ಸೂತ್ರಗಳನ್ನು ಪೂರ್ಣವಾಗಿ ಕೈಗೊಳ್ಳಬೇಕೆಂದು ನೀವು ಆಜ್ಞಾಪಿಸಿದ್ದೀರಿ.
PSA 119:5 ನಿಮ್ಮ ತೀರ್ಪುಗಳನ್ನು ಪಾಲಿಸುವುದರಲ್ಲಿ ನನ್ನ ಮಾರ್ಗಗಳು ಸ್ಥಿರವಾಗಿರಲಿ!
PSA 119:6 ನಿಮ್ಮ ಎಲ್ಲಾ ಅಪ್ಪಣೆಗಳನ್ನು ಪರಿಗಣಿಸುವಾಗ ನಾನು ನಾಚಿಕೆಗೆ ಗುರಿಯಾಗುವುದಿಲ್ಲ.
PSA 119:7 ನಾನು ನಿಮ್ಮ ನೀತಿಯುಳ್ಳ ನಿಯಮಗಳನ್ನು ಕಲಿಯುತ್ತಿರುವಾಗೆಲ್ಲಾ, ಯಥಾರ್ಥ ಹೃದಯದಿಂದ ನಿಮ್ಮನ್ನು ಕೊಂಡಾಡುವೆನು.
PSA 119:8 ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು; ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡಿರಿ.
PSA 119:9 ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.
PSA 119:10 ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ.
PSA 119:11 ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ.
PSA 119:12 ಯೆಹೋವ ದೇವರೇ, ನಿಮಗೆ ಸ್ತುತಿಯುಂಟಾಗಲಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
PSA 119:13 ನಿಮ್ಮ ಬಾಯಿಂದ ಬರುವ ನಿಯಮಗಳನ್ನೆಲ್ಲಾ ನನ್ನ ತುಟಿಗಳಿಂದ ನಾನು ವರ್ಣಿಸಿದ್ದೇನೆ.
PSA 119:14 ಮಹಾ ಸಂಪತ್ತಿನಲ್ಲಿ ಒಬ್ಬ ವ್ಯಕ್ತಿ ಆನಂದಿಸುವ ಹಾಗೆ ನಾನು ನಿಮ್ಮ ಶಾಸನಗಳನ್ನು ಅನುಸರಿಸುವುದರಲ್ಲಿ ಆನಂದಿಸುವೆನು.
PSA 119:15 ನಿಮ್ಮ ಸೂತ್ರಗಳನ್ನು ಧ್ಯಾನಮಾಡಿ, ನಿಮ್ಮ ಮಾರ್ಗಗಳನ್ನು ದೃಷ್ಟಿಸುವೆನು.
PSA 119:16 ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು.
PSA 119:17 ನಾನು ಜೀವದಿಂದಿದ್ದು ನಿಮ್ಮ ವಾಕ್ಯವನ್ನು ಕೈಗೊಳ್ಳುವಂತೆ ನಿಮ್ಮ ಸೇವಕನ ಮೇಲೆ ದಯೆಯಿಡಿರಿ.
PSA 119:18 ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ ನನ್ನ ಕಣ್ಣುಗಳನ್ನು ತೆರೆಯಿರಿ.
PSA 119:19 ಈ ಭೂಮಿಯಲ್ಲಿ ನಾನೊಬ್ಬ ಪ್ರವಾಸಿಯಾಗಿದ್ದೇನೆ; ನಿಮ್ಮ ಆಜ್ಞೆಗಳನ್ನು ನನಗೆ ಮರೆಮಾಡಬೇಡಿರಿ.
PSA 119:20 ನಿಮ್ಮ ನಿಯಮಗಳನ್ನು ಯಾವಾಗಲೂ ಹಂಬಲಿಸುತ್ತಿರುವುದರಿಂದ, ನನ್ನ ಪ್ರಾಣವು ಕರಗಿಹೋಗುತ್ತಿದೆ.
PSA 119:21 ನಿಮ್ಮ ಆಜ್ಞೆಗಳನ್ನು ಅನುಸರಿಸದೆ ತಪ್ಪಿಹೋಗುವ ಶಾಪಗ್ರಸ್ತರಾದ ಗರ್ವಿಷ್ಠರನ್ನು ನೀವು ಗದರಿಸುತ್ತೀರಿ.
PSA 119:22 ನಾನು ನಿಮ್ಮ ಶಾಸನಗಳನ್ನು ಕೈಗೊಂಡ ಕಾರಣ, ಗರ್ವಿಷ್ಠರ ನಿಂದೆಯನ್ನೂ, ತಿರಸ್ಕಾರವನ್ನೂ ನನ್ನಿಂದ ತೊಲಗಿಸಿರಿ.
PSA 119:23 ಅಧಿಕಾರಿಗಳು ನನಗೆ ವಿರೋಧವಾಗಿ ಕುಳಿತುಕೊಂಡು ಮಾತನಾಡಿಕೊಂಡರೂ, ನಿಮ್ಮ ಸೇವಕನು ನಿಮ್ಮ ತೀರ್ಪುಗಳನ್ನೇ ಧ್ಯಾನಿಸುತ್ತಿರುವೆನು.
PSA 119:24 ನಿಮ್ಮ ಶಾಸನಗಳು ನನಗೆ ಉಲ್ಲಾಸಕರವಾಗಿವೆ; ಅವೇ ನನ್ನ ಸಮಾಲೋಚಕರು.
PSA 119:25 ನಾನು ಧೂಳಿನಲ್ಲಿ ಬಿದ್ದಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸಿರಿ.
PSA 119:26 ನಾನು ನನ್ನ ಮಾರ್ಗಗಳನ್ನು ಲೆಕ್ಕ ಒಪ್ಪಿಸಲು, ನೀವು ನನಗೆ ಸದುತ್ತರವನ್ನು ಕೊಟ್ಟಿರುವಿರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
PSA 119:27 ನಿಮ್ಮ ಸೂತ್ರಗಳ ಮಾರ್ಗವನ್ನು ನಾನು ಅರ್ಥಮಾಡಿಕೊಳ್ಳಲು ಸಹಾಯಿಸಿರಿ, ಆಗ ನಿಮ್ಮ ಅದ್ಭುತಕಾರ್ಯಗಳನ್ನು ಧ್ಯಾನ ಮಾಡುವೆನು.
PSA 119:28 ನನ್ನ ಪ್ರಾಣವು ದುಃಖದಿಂದ ಬಲಹೀನವಾಗಿದೆ; ನಿಮ್ಮ ವಾಕ್ಯದಿಂದ ನನ್ನನ್ನು ಬಲಪಡಿಸಿರಿ.
PSA 119:29 ವಂಚನೆಯುಳ್ಳ ಮಾರ್ಗದಿಂದ ನನ್ನನ್ನು ಕಾಪಾಡಿರಿ; ನನಗೆ ಕೃಪೆ ನೀಡಿ ನಿಮ್ಮ ನಿಯಮವನ್ನು ನನಗೆ ಬೋಧನೆ ಮಾಡಿರಿ.
PSA 119:30 ನಂಬಿಗಸ್ತಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ; ನಾನು ನಿಮ್ಮ ನಿಯಮಗಳ ಮೇಲೆ ನನ್ನ ಹೃದಯವನ್ನಿಟ್ಟುಕೊಂಡಿದ್ದೇನೆ.
PSA 119:31 ಯೆಹೋವ ದೇವರೇ, ನಾನು ನಿಮ್ಮ ಶಾಸನಗಳನ್ನು ಬಿಗಿಯಾಗಿಟ್ಟುಕೊಂಡಿದ್ದೇನೆ; ನನ್ನನ್ನು ನಾಚಿಕೆಗೆ ಗುರಿಪಡಿಸಬೇಡಿರಿ.
PSA 119:32 ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ಓಡುವೆನು, ಏಕೆಂದರೆ ನೀವು ನನ್ನ ವಿವೇಕವನ್ನು ವಿಸ್ತಾರ ಮಾಡಿದ್ದೀರಿ.
PSA 119:33 ಯೆಹೋವ ದೇವರೇ, ನಿಮ್ಮ ತೀರ್ಪುಗಳ ವಿವರವನ್ನು ನನಗೆ ಬೋಧಿಸಿರಿ; ಆಗ ನಾನು ಅವುಗಳನ್ನು ಅಂತ್ಯದವರೆಗೂ ಹಿಂಬಾಲಿಸುವೆನು.
PSA 119:34 ನಿಮ್ಮ ನಿಯಮವನ್ನು ಹಿಂಬಾಲಿಸಿ, ಅದನ್ನು ಪೂರ್ಣಹೃದಯದಿಂದ ಕೈಕೊಳ್ಳಲು ನನಗೆ ವಿವೇಚನೆಯನ್ನು ನೀಡಿರಿ.
PSA 119:35 ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸಿರಿ, ಏಕೆಂದರೆ ನಾನು ಅದರಲ್ಲಿ ಆನಂದಿಸುತ್ತೇನೆ.
PSA 119:36 ಸ್ವಾರ್ಥದ ಲಾಭಗಳ ಕಡೆಗಲ್ಲ, ಆದರೆ ನಿಮ್ಮ ಶಾಸನಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸಿರಿ.
PSA 119:37 ವ್ಯರ್ಥವಾದವುಗಳಿಂದ ನನ್ನ ಕಣ್ಣುಗಳನ್ನು ತಿರುಗಿಸಿ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
PSA 119:38 ನಿಮಗೆ ಭಯಪಡುವವರಿಗಾಗಿ ನೀಡುವ ವಾಗ್ದಾನವನ್ನು ನಿಮ್ಮ ಸೇವಕನಿಗೆ ನೆರವೇರಿಸಿರಿ.
PSA 119:39 ನಾನು ಭಯಪಡುವ ನನ್ನ ನಿಂದೆಯನ್ನು ನನ್ನಿಂದ ತೊಲಗಿಸಿರಿ, ಏಕೆಂದರೆ ನಿಮ್ಮ ನಿಯಮಗಳು ಒಳ್ಳೆಯವುಗಳೇ.
PSA 119:40 ಇಗೋ ನಿಮ್ಮ ಸೂತ್ರಗಳಿಗಾಗಿ ನಾನು ಎಷ್ಟೋ ಹಂಬಲಿಸುತ್ತೇನೆ! ನಿಮ್ಮ ನೀತಿಗನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
PSA 119:41 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ದೊರಕಲಿ, ನಿಮ್ಮ ವಾಗ್ದಾನದ ರಕ್ಷಣೆಯು ನನಗೆ ಉಂಟಾಗಲಿ;
PSA 119:42 ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ಭರವಸೆಯಿಟ್ಟಿದ್ದೇನೆ.
PSA 119:43 ಸತ್ಯವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡಿರಿ, ಏಕೆಂದರೆ ನಿಮ್ಮ ನಿಯಮಗಳಲ್ಲಿ ನಾನು ನನ್ನ ನಿರೀಕ್ಷೆಯನ್ನಿಟ್ಟಿದ್ದೇನೆ.
PSA 119:44 ನಾನು ನಿಮ್ಮ ನಿಯಮವನ್ನು ಯಾವಾಗಲೂ ಮತ್ತು ಎಂದೆಂದಿಗೂ ಪಾಲಿಸುವೆನು.
PSA 119:45 ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, ನಾನು ಸ್ವತಂತ್ರವಾಗಿಯೇ ಜೀವಿಸುವೆನು.
PSA 119:46 ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ.
PSA 119:47 ನಿಮ್ಮ ಆಜ್ಞೆಗಳನ್ನು ನಾನು ಪ್ರೀತಿಸುವುದರಿಂದ, ನಾನು ಅವುಗಳಲ್ಲಿ ಆನಂದಿಸುವೆನು.
PSA 119:48 ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು.
PSA 119:49 ನಿಮ್ಮ ಸೇವಕನಿಗೋಸ್ಕರ ನಿಮ್ಮ ವಾಕ್ಯವನ್ನು ನೀವು ಜ್ಞಾಪಕಮಾಡಿಕೊಳ್ಳಿರಿ, ಏಕೆಂದರೆ ನೀವು ನನಗೆ ನಿರೀಕ್ಷೆಯನ್ನು ಕೊಟ್ಟಿದ್ದೀರಿ.
PSA 119:50 ನಿಮ್ಮ ವಾಗ್ದಾನವು ನನ್ನ ಜೀವದ ಸಂರಕ್ಷಣೆಯಾಗಿದೆ. ಅವು ನನ್ನ ಸಂಕಷ್ಟಗಳಲ್ಲಿ ಆದರಣೆಯಾಗಿವೆ.
PSA 119:51 ಅಹಂಕಾರಿಗಳು ನನ್ನನ್ನು ಕರುಣಿಸದೆ ಹಾಸ್ಯ ಮಾಡಿದರೂ, ನಾನು ನಿಮ್ಮ ನಿಯಮದಿಂದ ತೊಲಗುವುದಿಲ್ಲ.
PSA 119:52 ಯೆಹೋವ ದೇವರೇ, ನಿಮ್ಮ ಪುರಾತನ ನಿಯಮಗಳನ್ನು ನಾನು ನೆನಪು ಮಾಡಿಕೊಂಡು, ಅವುಗಳಲ್ಲಿ ಆದರಣೆಯನ್ನು ಪಡೆದುಕೊಂಡಿದ್ದೇನೆ.
PSA 119:53 ನಿಮ್ಮ ನಿಯಮವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ, ರೋಷವು ನನ್ನನ್ನು ಆವರಿಸಿಕೊಂಡಿದೆ.
PSA 119:54 ನನ್ನ ಪ್ರವಾಸದ ಮನೆಯಲ್ಲಿ ನಿಮ್ಮ ತೀರ್ಪುಗಳು ನನಗೆ ಗಾನ ವಿಷಯವಾಗಿದೆ.
PSA 119:55 ಯೆಹೋವ ದೇವರೇ, ರಾತ್ರಿಯಲ್ಲಿ ನಿಮ್ಮ ನಾಮಸ್ಮರಣೆ ಮಾಡುವುದರಿಂದ, ನಿಮ್ಮ ನಿಯಮವನ್ನು ಕೈಕೊಳ್ಳುತ್ತೇನೆ.
PSA 119:56 ನಾನು ನಿಮ್ಮ ಸೂತ್ರಗಳನ್ನು ಕೈಗೊಂಡಿದ್ದೇನೆ: ಇದೇ ನನ್ನ ಜೀವನದ ಶೈಲಿಯಾಗಿದೆ.
PSA 119:57 ಯೆಹೋವ ದೇವರೇ, ನೀವೇ ನನ್ನ ಪಾಲು; ನಿಮ್ಮ ವಾಕ್ಯಗಳನ್ನು ಪಾಲಿಸುವೆನೆಂದು ನಾನು ಪ್ರಮಾಣ ಮಾಡಿದ್ದೇನೆ.
PSA 119:58 ಪೂರ್ಣಹೃದಯದಿಂದ ನಾನು ನಿಮ್ಮ ಮುಖವನ್ನು ಹುಡುಕಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಕರುಣಿಸಿರಿ.
PSA 119:59 ನಾನು ನನ್ನ ನಡತೆಯನ್ನು ಪರಿಶೋಧಿಸುತ್ತಾ ನನ್ನ ಹೆಜ್ಜೆಗಳನ್ನು ನಿಮ್ಮ ಶಾಸನಗಳ ಕಡೆಗೆ ತಿರುಗಿಸಿದ್ದೇನೆ.
PSA 119:60 ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು ತಡಮಾಡದೆ ತ್ವರೆಪಟ್ಟಿದ್ದೇನೆ.
PSA 119:61 ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡಿದ್ದರೂ, ನಿಮ್ಮ ನಿಯಮವನ್ನು ನಾನು ಮರೆಯಲಿಲ್ಲ.
PSA 119:62 ನಿಮ್ಮ ನೀತಿಯುಳ್ಳ ನಿಯಮಗಳಿಗಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳುವೆನು.
PSA 119:63 ನಿಮಗೆ ಭಯಪಡುವವರೆಲ್ಲರಿಗೂ, ನಿಮ್ಮ ಸೂತ್ರಗಳನ್ನು ಹಿಂಬಾಲಿಸುವವರಿಗೂ ನಾನು ಮಿತ್ರನಾಗಿದ್ದೇನೆ.
PSA 119:64 ಯೆಹೋವ ದೇವರೇ, ಭೂಮಿಯು ನಿಮ್ಮ ಪ್ರೀತಿಯಿಂದ ತುಂಬಿದೆ; ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
PSA 119:65 ಯೆಹೋವ ದೇವರೇ, ನಿಮ್ಮ ವಾಕ್ಯದ ಪ್ರಕಾರ ನಿಮ್ಮ ಸೇವಕನಿಗೆ ಒಳ್ಳೆಯದನ್ನು ಮಾಡಿರಿ.
PSA 119:66 ತಿಳುವಳಿಕೆಯನ್ನೂ ಒಳ್ಳೆಯ ವಿವೇಚನೆಯನ್ನೂ, ನನಗೆ ಕಲಿಸಿರಿ, ಏಕೆಂದರೆ ನಿಮ್ಮ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೇನೆ.
PSA 119:67 ನಾನು ಬಾಧೆಪಡುವುದಕ್ಕಿಂತ ಮುಂಚೆ ದಾರಿತಪ್ಪಿಹೋಗುತ್ತಿದ್ದೆನು, ಆದರೆ ಈಗ ನಿಮ್ಮ ವಾಕ್ಯವನ್ನು ಪಾಲಿಸುತ್ತಿದ್ದೇನೆ.
PSA 119:68 ನೀವು ಒಳ್ಳೆಯವರೂ, ಒಳ್ಳೆಯದನ್ನು ಮಾಡುವವರೂ ಆಗಿದ್ದೀರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿರಿ.
PSA 119:69 ಅಹಂಕಾರಿಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು, ನಾನಾದರೋ ಪೂರ್ಣಹೃದಯದಿಂದ ನಿಮ್ಮ ಸೂತ್ರಗಳನ್ನು ಕೈಗೊಳ್ಳುವೆನು.
PSA 119:70 ಅವರ ಹೃದಯವು ಕಠಿಣವೂ ಮಂದವೂ ಆಗಿದೆ, ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ.
PSA 119:71 ನಾನು ಶ್ರಮೆಪಟ್ಟದ್ದು ನನಗೆ ಒಳ್ಳೆಯದಾಯಿತು ಅದರಿಂದ ನಿಮ್ಮ ತೀರ್ಪುಗಳನ್ನು ಕಲಿತೆನು.
PSA 119:72 ಸಾವಿರಾರು ಬೆಳ್ಳಿಬಂಗಾರ ನಾಣ್ಯಗಳಿಗಿಂತಲೂ ನಿಮ್ಮ ಬಾಯಿಯ ನಿಯಮವು ನನಗೆ ಹೆಚ್ಚು ಅಮೂಲ್ಯವಾದದ್ದಾಗಿದೆ.
PSA 119:73 ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ.
PSA 119:74 ನಿಮಗೆ ಭಯಪಡುವವರು ನನ್ನನ್ನು ನೋಡಿ ಆನಂದಿಸಲಿ, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷಿಸಿಕೊಂಡಿದ್ದೇನೆ.
PSA 119:75 ಯೆಹೋವ ದೇವರೇ, ನಿಮ್ಮ ನಿಯಮಗಳು ನೀತಿಯುಳ್ಳವುಗಳು; ನಿಮ್ಮ ನಂಬಿಗಸ್ತಿಕೆಯಿಂದಲೇ ನೀವು ನನ್ನನ್ನು ಕಷ್ಟಪಡಿಸಿದ್ದೀರಿ ಎಂದು ನನಗೆ ಗೊತ್ತಿದೆ.
PSA 119:76 ನೀವು ನಿಮ್ಮ ಸೇವಕನಿಗೆ ನೀಡಿದ ವಾಗ್ದಾನದ ಪ್ರಕಾರ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ಆದರಣೆಯಾಗಿರಲಿ.
PSA 119:77 ನಾನು ಜೀವಿಸುವಂತೆ ನಿಮ್ಮ ಅನುಕಂಪವು ನನಗೆ ಬರಲಿ, ಏಕೆಂದರೆ ನಿಮ್ಮ ನಿಯಮವೇ ನನ್ನ ಆನಂದವಾಗಿದೆ.
PSA 119:78 ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು.
PSA 119:79 ನಿಮಗೆ ಭಯಪಡುವವರು ನನ್ನ ಬಳಿಗೆ ಬರಲಿ, ನಿಮ್ಮ ಶಾಸನಗಳನ್ನು ಅರ್ಥಮಾಡಿಕೊಳ್ಳುವವರೂ ನನ್ನ ಬಳಿಗೆ ಬರಲಿ.
PSA 119:80 ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು.
PSA 119:81 ನನ್ನ ಪ್ರಾಣವು ನಿಮ್ಮ ರಕ್ಷಣೆಯ ಬಯಕೆಯಿಂದಲೇ ಕುಗ್ಗಿ ಹೋಗುತ್ತಿದೆ, ಆದರೂ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
PSA 119:82 ನನ್ನ ಕಣ್ಣುಗಳು ನಿಮ್ಮ ವಾಗ್ದಾನಕ್ಕಾಗಿ ಕಾಯುತ್ತಾ ಮಂದವಾಗುತ್ತಿವೆ; “ನೀವು ಯಾವಾಗ ನನಗೆ ಆದರಣೆ ನೀಡುವಿರಿ?” ಎಂದು ನಾನು ಕೇಳುತ್ತಿರುವೆನು.
PSA 119:83 ನಾನು ಹೊಗೆಯಲ್ಲಿರುವ ದ್ರಾಕ್ಷಾರಸದ ಚರ್ಮಚೀಲದಂತ್ತಿದ್ದರೂ, ನಿಮ್ಮ ತೀರ್ಪುಗಳನ್ನು ನಾನು ಮರೆಯಲಿಲ್ಲ.
PSA 119:84 ಎಷ್ಟು ಕಾಲ ನಿಮ್ಮ ಸೇವಕನು ಕಾಯಬೇಕು? ನನ್ನ ಹಿಂಸಕರಿಗೆ ಯಾವಾಗ ನೀವು ಶಿಕ್ಷಿಸುವಿರಿ?
PSA 119:85 ನಿಮ್ಮ ನಿಯಮಕ್ಕೆ ವಿರೋಧವಾಗಿ ಅಹಂಕಾರಿಗಳು ನನಗೆ ಬಲೆಹಿಡಿಯಲು ಕುಣಿಗಳನ್ನು ಅಗೆದಿದ್ದಾರೆ.
PSA 119:86 ನಿಮ್ಮ ಆಜ್ಞೆಗಳೆಲ್ಲಾ ಭರವಸೆಗೆ ಯೋಗ್ಯವಾದವುಗಳೇ; ಕಾರಣವಿಲ್ಲದೆ ಜನರು ನನ್ನನ್ನು ಹಿಂಸಿಸುವುದರಿಂದ ನನಗೆ ಸಹಾಯಮಾಡಿರಿ.
PSA 119:87 ಅವರು ನನ್ನನ್ನು ಬಹುಮಟ್ಟಿಗೆ ಭೂಮಿಯಿಂದ ಅಳಿಸಿಹಾಕಲು ನೋಡಿದರು, ಆದರೆ ನಾನು ನಿಮ್ಮ ಸೂತ್ರಗಳನ್ನು ತಿರಸ್ಕರಿಸಲಿಲ್ಲ.
PSA 119:88 ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನ ಜೀವನವನ್ನು ಪರಿಪಾಲಿಸಿರಿ, ಆಗ ನಿಮ್ಮ ಬಾಯಿಂದ ಹೊರಡುವ ಶಾಸನಗಳನ್ನು ಪಾಲಿಸುವೆನು.
PSA 119:89 ಯೆಹೋವ ದೇವರೇ, ನಿಮ್ಮ ವಾಕ್ಯವು ಶಾಶ್ವತವಾಗಿದೆ; ಅದು ಪರಲೋಕದಲ್ಲಿ ಸ್ಥಿರವಾಗಿದೆ.
PSA 119:90 ನಿಮ್ಮ ನಂಬಿಗಸ್ತಿಕೆಯು ಎಲ್ಲಾ ತಲೆಮಾರಿಗೂ ಮುಂದುವರಿಯುವುದು; ನೀವು ಸ್ಥಾಪಿಸಿದ ಭೂಮಿಯು ನೆಲೆಯಾಗಿರುವುದು.
PSA 119:91 ನಿಮ್ಮ ನಿಯಮಗಳು ಇಂದಿನವರೆಗೂ ನಿಂತಿರುತ್ತವೆ, ಏಕೆಂದರೆ ಸೃಷ್ಟಿಗಳೆಲ್ಲವೂ ನಿಮ್ಮ ಸೇವೆಯನ್ನು ಮಾಡುತ್ತವೆ.
PSA 119:92 ನಿಮ್ಮ ನಿಯಮವು ನನಗೆ ಆನಂದವಾಗಿರದಿದ್ದರೆ, ನನ್ನ ಕಷ್ಟದಲ್ಲಿ ನಾನು ನಾಶವಾಗುತ್ತಿದ್ದೆನು.
PSA 119:93 ನಿಮ್ಮ ಸೂತ್ರಗಳನ್ನು ನಾನು ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಅವುಗಳಿಂದ ನನ್ನ ಜೀವವನ್ನು ಪರಿಪಾಲಿಸಿದ್ದೀರಿ.
PSA 119:94 ನನ್ನನ್ನು ರಕ್ಷಿಸಿರಿ, ಏಕೆಂದರೆ ನಾನು ನಿಮ್ಮವನೇ; ನಿಮ್ಮ ಸೂತ್ರಗಳನ್ನು ನಾನು ಹುಡುಕಿದ್ದೇನಲ್ಲಾ.
PSA 119:95 ದುಷ್ಟರು ನನ್ನನ್ನು ನಾಶಮಾಡುವುದಕ್ಕೆ ನನಗಾಗಿ ಕಾಯುತ್ತಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಆಲೋಚಿಸುತ್ತಿರುವೆನು.
PSA 119:96 ಸರ್ವ ಸಂಪೂರ್ಣತೆಗೂ ಒಂದು ಮಿತಿಯಿರುವುದನ್ನು ನಾನು ನೋಡಿದ್ದೇನೆ; ಆದರೆ ನಿಮ್ಮ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ.
PSA 119:97 ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ! ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ.
PSA 119:98 ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ.
PSA 119:99 ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ. ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ.
PSA 119:100 ನಿಮ್ಮ ಸೂತ್ರಗಳನ್ನು ಕೈಗೊಂಡಿರುವುದರಿಂದ ನಾನು ಹಿರಿಯರಿಗಿಂತಲೂ ವಿವೇಕಿಯಾಗಿದ್ದೇನೆ.
PSA 119:101 ನಿಮ್ಮ ವಾಕ್ಯವನ್ನು ಅನುಸರಿಸಬೇಕೆಂದು, ನಾನು ಪ್ರತಿಯೊಂದು ದುರ್ಮಾರ್ಗದಿಂದ ನನ್ನ ಹೆಜ್ಜೆಗಳನ್ನು ಹಿಂದೆಗೆದಿದ್ದೇನೆ.
PSA 119:102 ನಿಮ್ಮ ನಿಯಮಗಳಿಂದ ನಾನು ತಪ್ಪಿಹೋಗಲಿಲ್ಲ, ಏಕೆಂದರೆ ನೀವೇ ನನಗೆ ಉಪದೇಶಿಸಿದ್ದೀರಿ.
PSA 119:103 ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ!
PSA 119:104 ನಾನು ನಿಮ್ಮ ಸೂತ್ರಗಳಿಂದ ತಿಳುವಳಿಕೆಯನ್ನು ಸಂಪಾದಿಸಿಕೊಂಡಿದ್ದೇನೆ; ಆದ್ದರಿಂದ ಪ್ರತಿಯೊಂದು ದುರ್ಮಾರ್ಗವನ್ನೂ ದ್ವೇಷಿಸುತ್ತೇನೆ.
PSA 119:105 ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
PSA 119:106 ನಿಮ್ಮ ನೀತಿಯ ನಿಯಮಗಳನ್ನು ಪಾಲಿಸುವೆನೆಂದು ನಾನು ಒಂದು ಶಪಥಮಾಡಿದ್ದೇನೆ; ಅದನ್ನು ನಾನು ದೃಢಪಡಿಸುವೆನು.
PSA 119:107 ನಾನು ಬಹಳ ಕಷ್ಟ ಅನುಭವಿಸಿದ್ದೇನೆ; ಯೆಹೋವ ದೇವರೇ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವನವನ್ನು ಕಾಪಾಡಿರಿ.
PSA 119:108 ಯೆಹೋವ ದೇವರೇ, ನನ್ನ ಬಾಯಿಂದ ಸಿದ್ಧಮನಸ್ಸಿನ ಸ್ತೋತ್ರಗಳನ್ನು ಸ್ವೀಕರಿಸಿರಿ, ನಿಮ್ಮ ನಿಯಮಗಳನ್ನು ನನಗೆ ಬೋಧಿಸಿರಿ.
PSA 119:109 ನನ್ನ ಜೀವನ ಆಗಾಗ ಅಪಾಯದಲ್ಲಿದೆ, ಆದಾಗ್ಯೂ ನಾನು ನಿಮ್ಮ ನಿಯಮವನ್ನು ಮರೆಯುವುದಿಲ್ಲ.
PSA 119:110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ; ಆದರೂ ನಾನು ನಿಮ್ಮ ಸೂತ್ರಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
PSA 119:111 ನಿಮ್ಮ ಶಾಸನಗಳನ್ನು ನಿತ್ಯ ಸೊತ್ತಾಗಿ ತೆಗೆದುಕೊಂಡಿದ್ದೇನೆ; ಏಕೆಂದರೆ ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿದೆ.
PSA 119:112 ನಿಮ್ಮ ತೀರ್ಪುಗಳನ್ನು ಕಡೆವರೆಗೂ ಪಾಲಿಸುವುದಕ್ಕೆ ನಾನು ನನ್ನ ಹೃದಯದಲ್ಲಿ ದೃಢಮಾಡಿಕೊಂಡಿದ್ದೇನೆ.
PSA 119:113 ಎರಡು ಮನಸ್ಸುಳ್ಳವರನ್ನು ನಾನು ದ್ವೇಷಿಸುತ್ತೇನೆ, ಆದರೂ ನಿಮ್ಮ ನಿಯಮವನ್ನು ನಾನು ಪ್ರೀತಿಸುತ್ತೇನೆ.
PSA 119:114 ನೀವೇ ನನ್ನ ಆಶ್ರಯವೂ, ಗುರಾಣಿಯೂ ಆಗಿದ್ದೀರಿ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟುಕೊಂಡಿದ್ದೇನೆ.
PSA 119:115 ನಿಯಮ ಮೀರುವವರೇ, ನನ್ನಿಂದ ತೊಲಗಿರಿ, ನಾನು ನನ್ನ ದೇವರ ಆಜ್ಞೆಗಳನ್ನು ಪಾಲಿಸಲು ಬಿಡಿರಿ!
PSA 119:116 ನನ್ನ ದೇವರೇ, ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ನೆಲೆಗೊಳಿಸಿರಿ, ಆಗ ನಾನು ಬದುಕುವೆನು; ನನ್ನ ನಿರೀಕ್ಷೆ ಮುರಿದುಹೋಗದಿರಲಿ.
PSA 119:117 ನನ್ನನ್ನು ಎತ್ತಿ ಹಿಡಿಯಿರಿ, ಆಗ ನಾನು ಬಿಡುಗಡೆಯಾಗುವೆನು; ನಿಮ್ಮ ತೀರ್ಪುಗಳಿಗೆ ಯಾವಾಗಲೂ ಗಮನಕೊಡುವೆನು.
PSA 119:118 ನಿಮ್ಮ ತೀರ್ಪುಗಳನ್ನು ಮೀರಿದವರನ್ನೆಲ್ಲಾ ನೀವು ತಿರಸ್ಕರಿಸುತ್ತೀರಿ, ಏಕೆಂದರೆ ಅವರ ಕುಯುಕ್ತಿಯು ವ್ಯರ್ಥವಾಗುವುದು.
PSA 119:119 ಭೂಮಿಯಲ್ಲಿರುವ ದುಷ್ಟರೆಲ್ಲರನ್ನು ಕಸದ ಹಾಗೆ ತೆಗೆದು ಹಾಕುತ್ತೀರಿ; ಆದ್ದರಿಂದ ನಾನು ನಿಮ್ಮ ಶಾಸನಗಳನ್ನು ಪ್ರೀತಿಸುತ್ತೇನೆ.
PSA 119:120 ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ.
PSA 119:121 ನಾನು ನೀತಿನ್ಯಾಯವನ್ನು ನಡೆಸಿದ್ದೇನೆ; ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಬೇಡಿರಿ.
PSA 119:122 ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ.
PSA 119:123 ನಿಮ್ಮ ರಕ್ಷಣೆಯನ್ನೂ ನಿಮ್ಮ ನೀತಿಯ ವಾಗ್ದಾನವನ್ನೂ ಕಾಯುತ್ತಾ, ನನ್ನ ಕಣ್ಣುಗಳು ಮಂದವಾದವು.
PSA 119:124 ನಿಮ್ಮ ಪ್ರೀತಿಗೆ ಅನುಸಾರವಾಗಿ ನಿಮ್ಮ ಸೇವಕನೊಂದಿಗೆ ವ್ಯವಹರಿಸಿ, ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
PSA 119:125 ನಾನು ನಿಮ್ಮ ಸೇವಕನು, ನಿಮ್ಮ ಶಾಸನಗಳನ್ನು ನಾನು ಅರ್ಥಮಾಡಿಕೊಳ್ಳುವಂತೆ ನನಗೆ ವಿವೇಚನೆಯನ್ನು ಕೊಡಿರಿ.
PSA 119:126 ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ.
PSA 119:127 ಆದ್ದರಿಂದ ನಾನು ನಿಮ್ಮ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ,
PSA 119:128 ಅದರ ನಿಮಿತ್ತ ನಿಮ್ಮ ಸೂತ್ರಗಳೆಲ್ಲವೂ ಸರಿಯಾದವುಗಳೆಂದು ನಾನು ಅಂಗೀಕರಿಸುತ್ತೇನೆ, ಪ್ರತಿಯೊಂದು ಮೋಸ ಮಾರ್ಗವನ್ನೂ ದ್ವೇಷಿಸುತ್ತೇನೆ.
PSA 119:129 ನಿಮ್ಮ ಶಾಸನಗಳು ಅದ್ಭುತವಾದವುಗಳೇ; ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ.
PSA 119:130 ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; ಅದು ಮುಗ್ಧರಿಗೆ ಅರಿವನ್ನು ನೀಡುವುದು.
PSA 119:131 ನಿಮ್ಮ ಆಜ್ಞೆಗಳಿಗಾಗಿರುವ ಬಯಕೆಯು, ನಾನು ಬಾಯಿತೆರೆದು ಹಂಬಲಿಸುವಂತೆ ಮಾಡುತ್ತದೆ.
PSA 119:132 ನಿಮ್ಮ ನಾಮವನ್ನು ಪ್ರೀತಿಸುವವರಿಗೆ ನೀವು ಯಾವಾಗಲೂ ಮಾಡುವಂತೆ, ನೀವು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕರುಣಿಸಿರಿ.
PSA 119:133 ನನ್ನ ಹೆಜ್ಜೆಗಳನ್ನು ನಿಮ್ಮ ವಾಕ್ಯದ ಪ್ರಕಾರ ಮುನ್ನಡೆಸಿರಿ; ಯಾವ ಪಾಪವಾದರೂ ನನ್ನನ್ನು ಆಳದಿರಲಿ.
PSA 119:134 ಜನರ ಬಲಾತ್ಕಾರದಿಂದ ನನ್ನನ್ನು ತಪ್ಪಿಸಿರಿ, ಆಗ ನಿಮ್ಮ ಸೂತ್ರಗಳನ್ನು ನಾನು ಪಾಲಿಸುವೆನು.
PSA 119:135 ನಿಮ್ಮ ಮುಖವನ್ನು ನಿಮ್ಮ ಸೇವಕನ ಮೇಲೆ ಪ್ರಕಾಶಿಸಿರಿ ಮತ್ತು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
PSA 119:136 ನಿಮ್ಮ ನಿಯಮವನ್ನು ಕೈಗೊಳ್ಳದೇ ಇರುವಾಗ ನನ್ನ ಕಣ್ಣಿನಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿವೆ.
PSA 119:137 ಯೆಹೋವ ದೇವರೇ, ನೀವು ನೀತಿವಂತರು, ನಿಮ್ಮ ನಿಯಮಗಳು ಸರಿಯಾದವುಗಳೇ.
PSA 119:138 ನೀವು ಕೊಟ್ಟ ನಿಮ್ಮ ಶಾಸನಗಳು ನೀತಿಯುಳ್ಳವುಗಳು; ಪೂರ್ಣ ಭರವಸೆಗೆ ಅವು ಯೋಗ್ಯವಾದವುಗಳು.
PSA 119:139 ನನ್ನ ವೈರಿಗಳು ನಿಮ್ಮ ಮಾತುಗಳನ್ನು ತಿರಸ್ಕರಿಸುವುದರಿಂದ, ನನ್ನ ಆಸಕ್ತಿಯು ನನ್ನನ್ನು ದಹಿಸಿಬಿಟ್ಟಿದೆ.
PSA 119:140 ನಿಮ್ಮ ವಾಗ್ದಾನಗಳು ಬಹು ಪರಿಶೋಧಿತವಾಗಿವೆ, ಆದ್ದರಿಂದ ನಿಮ್ಮ ಸೇವಕನು ಅವುಗಳನ್ನು ಪ್ರೀತಿಸುತ್ತಾನೆ.
PSA 119:141 ನಾನು ಅಲ್ಪನೂ, ತಿರಸ್ಕಾರ ಹೊಂದಿದವನು ಆಗಿದ್ದರೂ, ನಿಮ್ಮ ಸೂತ್ರಗಳನ್ನು ನಾನು ಮರೆಯುವುದಿಲ್ಲ.
PSA 119:142 ನಿಮ್ಮ ನೀತಿಯು ನಿತ್ಯವಾದದ್ದು ನಿಮ್ಮ ನಿಯಮವು ಸತ್ಯವಾದದ್ದು.
PSA 119:143 ಕಷ್ಟಸಂಕಟಗಳು ನನ್ನನ್ನು ಹಿಡಿದಿವೆ, ಆದರೂ ನಿಮ್ಮ ಆಜ್ಞೆಗಳು ನನಗೆ ಆನಂದದಾಯಕವಾಗಿವೆ.
PSA 119:144 ನಿಮ್ಮ ಶಾಸನಗಳು ಯಾವಾಗಲೂ ನೀತಿಯುಕ್ತವಾಗಿವೆ; ನಾನು ಬದುಕುವಂತೆ ನನಗೆ ವಿವೇಕವನ್ನು ಕೊಡಿರಿ.
PSA 119:145 ಯೆಹೋವ ದೇವರೇ, ಪೂರ್ಣಹೃದಯದಿಂದ ನಾನು ಮೊರೆಯಿಟ್ಟಿದ್ದೇನೆ; ನನಗೆ ಸದುತ್ತರ ನೀಡಿರಿ; ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು.
PSA 119:146 ನಿಮಗೇ ಮೊರೆಯಿಟ್ಟಿದ್ದೇನೆ; ನನ್ನನ್ನು ರಕ್ಷಿಸಿರಿ ನಾನು ನಿಮ್ಮ ಶಾಸನಗಳನ್ನು ಪಾಲಿಸುವೆನು.
PSA 119:147 ನಾನು ಸೂರ್ಯೋದಯಕ್ಕೆ ಮೊದಲು ಎದ್ದು ನಿಮಗೆ ಮೊರೆ ಇಟ್ಟಿದ್ದೇನೆ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟಿದ್ದೇನೆ.
PSA 119:148 ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ.
PSA 119:149 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಮೊರೆಯನ್ನು ಕೇಳಿರಿ; ನಿಮ್ಮ ನಿಯಮಗಳ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
PSA 119:150 ದುಷ್ಟತನಕ್ಕೆ ಒಳಸಂಚು ಮಾಡುವವರು ನನಗೆ ಸಮೀಪವಾಗಿದ್ದಾರೆ; ಆದರೆ ಅವರು ನಿಮ್ಮ ನಿಯಮಕ್ಕೆ ಅವರು ದೂರವಾಗಿದ್ದಾರೆ.
PSA 119:151 ಯೆಹೋವ ದೇವರೇ, ನೀವು ಸಮೀಪವಾಗಿದ್ದೀರಿ, ನಿಮ್ಮ ಆಜ್ಞೆಗಳೆಲ್ಲಾ ಸತ್ಯವಾಗಿವೆ.
PSA 119:152 ನಿಮ್ಮ ಶಾಸನಗಳು ಸದಾಕಾಲಕ್ಕೂ ಇರುವಂತೆ ಅವುಗಳನ್ನು ಸ್ಥಾಪಿಸಿದ್ದೀರೆಂದು ಬಹುಕಾಲದ ಹಿಂದೆಯೇ ನಾನು ಕಲಿತುಕೊಂಡಿದ್ದೇವೆ.
PSA 119:153 ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸಿರಿ; ಏಕೆಂದರೆ ನಿಮ್ಮ ನಿಯಮವನ್ನು ನಾನು ಮರೆತಿಲ್ಲ.
PSA 119:154 ನನ್ನ ಪರವಾಗಿ ವಾದಿಸಿ, ನನ್ನನ್ನು ವಿಮೋಚಿಸಿರಿ; ನಿಮ್ಮ ವಾಗ್ದಾನದ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
PSA 119:155 ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ಏಕೆಂದರೆ ಅವರು ನಿಮ್ಮ ತೀರ್ಪುಗಳನ್ನು ಹುಡುಕುವುದಿಲ್ಲ.
PSA 119:156 ಯೆಹೋವ ದೇವರೇ, ನಿಮ್ಮ ಅನುಕಂಪವು ಮಹತ್ತಾದವುಗಳು; ನಿಮ್ಮ ನಿಯಮಗಳ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
PSA 119:157 ನನ್ನನ್ನು ಹಿಂಸಿಸುವ ನನ್ನ ವೈರಿಗಳು ಅನೇಕರಾಗಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಬಿಟ್ಟುಬಿಡಲಿಲ್ಲ.
PSA 119:158 ನಾನು ಅಪನಂಬಿಗಸ್ತರನ್ನು ಕಂಡು ಅಸಹ್ಯಪಡುತ್ತೇನೆ, ಅವರು ನಿಮ್ಮ ಮಾತನ್ನು ಅಂಗೀಕರಿಸುತ್ತಾಯಿಲ್ಲಾ.
PSA 119:159 ನಿಮ್ಮ ಸೂತ್ರಗಳನ್ನು ನಾನು ಎಷ್ಟು ಪ್ರೀತಿಸುತ್ತೇನೆ ನೋಡಿರಿ; ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
PSA 119:160 ನಿಮ್ಮ ಮಾತುಗಳೆಲ್ಲಾ ಸತ್ಯವಾದವುಗಳೇ; ನಿಮ್ಮ ನೀತಿ ನಿಯಮಗಳೆಲ್ಲಾ ನಿತ್ಯವಾದವುಗಳೇ.
PSA 119:161 ಅಧಿಕಾರಿಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ಆದರೆ ನನ್ನ ಹೃದಯವು ನಿಮ್ಮ ವಾಕ್ಯಗಳಿಗೆ ನಡುಗುತ್ತದೆ.
PSA 119:162 ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ.
PSA 119:163 ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ.
PSA 119:164 ನಿಮ್ಮ ನೀತಿಯ ನಿಯಮಗಳ ನಿಮಿತ್ತ, ನಾನು ದಿನಕ್ಕೆ ಏಳು ಸಾರಿ ನಿಮ್ಮನ್ನು ಸ್ತುತಿಸುತ್ತೇನೆ.
PSA 119:165 ನಿಮ್ಮ ನಿಯಮ ಪ್ರಿಯರಿಗೆ ಅಪಾರ ಸಮಾಧಾನವಿರುತ್ತದೆ, ಅಂಥವರಿಗೆ ಆತಂಕವೇನೂ ಇರುವುದಿಲ್ಲ.
PSA 119:166 ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಕಾದುಕೊಂಡಿದ್ದೇನೆ; ನಾನು ನಿಮ್ಮ ಆಜ್ಞೆಗಳನ್ನು ಹಿಂಬಾಲಿಸುತ್ತಿದ್ದೇನೆ.
PSA 119:167 ನಾನು ನಿಮ್ಮ ಶಾಸನಗಳನ್ನು ಅನುಸರಿಸುವದರಿಂದ, ಅವುಗಳನ್ನು ಅತ್ಯಧಿಕವಾಗಿ ಪ್ರೀತಿಸುತ್ತೇನೆ.
PSA 119:168 ನಾನು ನಿಮ್ಮ ಸೂತ್ರಗಳನ್ನೂ ಶಾಸನಗಳನ್ನೂ ಪಾಲಿಸುತ್ತೇನೆ, ಏಕೆಂದರೆ ನನ್ನ ಮಾರ್ಗಗಳೆಲ್ಲವೂ ನಿಮಗೆ ತಿಳಿದಿರುತ್ತವೆ.
PSA 119:169 ಯೆಹೋವ ದೇವರೇ, ನನ್ನ ಮೊರೆ ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಕ್ಯದ ಪ್ರಕಾರ ನನಗೆ ಅರಿವನ್ನು ನೀಡಿರಿ.
PSA 119:170 ನನ್ನ ಬೇಡಿಕೆಯು ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಗ್ದಾನದ ಪ್ರಕಾರ ನನ್ನನ್ನು ಬಿಡಿಸಿರಿ.
PSA 119:171 ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ.
PSA 119:172 ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ.
PSA 119:173 ನಾನು ನಿಮ್ಮ ಸೂತ್ರಗಳನ್ನು ಆರಿಸಿಕೊಂಡಿರುವುದರಿಂದ, ನಿಮ್ಮ ಕೈ ನನಗೆ ನೆರವಾಗಲಿ.
PSA 119:174 ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಬಯಸುತ್ತಿದ್ದೇನೆ, ನಿಮ್ಮ ನಿಯಮವೇ ನನಗೆ ಆನಂದವಾಗಿದೆ.
PSA 119:175 ನಿಮ್ಮನ್ನು ಸ್ತುತಿಸಲು ನಾನು ಬದುಕಿರಲಿ; ನಿಮ್ಮ ನಿಯಮಗಳು ನನ್ನನ್ನು ಕಾಪಾಡಲಿ.
PSA 119:176 ತಪ್ಪಿಹೋದ ಕುರಿಯಂತೆ ನಾನು ದಾರಿತಪ್ಪಿದ್ದೇನೆ. ನಿಮ್ಮ ಸೇವಕನಾದ ನನ್ನನ್ನು ಬಂದು ಹುಡುಕಿರಿ, ಏಕೆಂದರೆ ನಿಮ್ಮ ಆಜ್ಞೆಗಳನ್ನು ನಾನು ಮರೆಯುವುದಿಲ್ಲ.
PSA 120:1 ಯಾತ್ರಾ ಗೀತೆ. ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು; ಅವರು ನನಗೆ ಉತ್ತರಕೊಟ್ಟರು.
PSA 120:2 ಯೆಹೋವ ದೇವರೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ, ಮೋಸದ ನಾಲಿಗೆಯಿಂದಲೂ ಬಿಡಿಸಿರಿ.
PSA 120:3 ಮೋಸದ ನಾಲಿಗೆಯೇ, ದೇವರು ನಿನಗೆ ಏನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
PSA 120:4 ಪರಾಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.
PSA 120:5 ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.
PSA 120:6 ನಾನು ಸಮಾಧಾನವನ್ನು ವಿರೋಧಿಸುವವರ ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.
PSA 120:7 ನಾನು ಶಾಂತಿ ಪ್ರಿಯನು; ಆದರೆ ನಾನು ಮಾತಾಡಿದರೆ ಅವರು ಯುದ್ಧಕ್ಕೆ ಬರುತ್ತಾರೆ.
PSA 121:1 ಯಾತ್ರಾ ಗೀತೆ. ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವುದು?
PSA 121:2 ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದಲೇ ನನ್ನ ಸಹಾಯವು ಬರುತ್ತದೆ.
PSA 121:3 ದೇವರು ನಿಮ್ಮ ಪಾದಗಳನ್ನು ಕದಲಗೊಡಿಸುವುದಿಲ್ಲ; ನಿಮ್ಮನ್ನು ಕಾಪಾಡುವ ದೇವರು ತೂಕಡಿಸುವುದೂ ಇಲ್ಲ.
PSA 121:4 ಇಗೋ, ಇಸ್ರಾಯೇಲನ್ನು ಕಾಪಾಡುವ ದೇವರು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ.
PSA 121:5 ಯೆಹೋವ ದೇವರು ನಿಮ್ಮನ್ನು ಕಾಪಾಡುವವರಾಗಿದ್ದಾರೆ; ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿ ನೆರಳಿನಂತೆ ಇದ್ದಾರೆ.
PSA 121:6 ಹಗಲಲ್ಲಿ ಸೂರ್ಯನೂ ನಿಮ್ಮನ್ನು ಹಾನಿಮಾಡುವುದಿಲ್ಲ. ರಾತ್ರಿಯಲ್ಲಿ ಚಂದ್ರನೂ ನಿಮ್ಮನ್ನು ಬಾಧಿಸುವುದಿಲ್ಲ.
PSA 121:7 ಯೆಹೋವ ದೇವರು ಎಲ್ಲಾ ಕೇಡಿನಿಂದ ನಿಮ್ಮನ್ನು ಕಾಪಾಡುವರು, ನಿಮ್ಮ ಪ್ರಾಣವನ್ನೂ ಕಾಪಾಡುವರು.
PSA 121:8 ಯೆಹೋವ ದೇವರು, ನೀವು ಹೋಗುವಾಗಲೂ ಬರುವಾಗಲೂ ಇಂದಿಗೂ ಎಂದೆಂದಿಗೂ ನಿಮ್ಮನ್ನು ಕಾಪಾಡುವರು.
PSA 122:1 ದಾವೀದನ ಯಾತ್ರಾ ಗೀತೆ. “ಯೆಹೋವ ದೇವರ ಆಲಯಕ್ಕೆ ಹೋಗೋಣ,” ಎಂದು ಜನರು ನನ್ನನ್ನು ಕರೆದಾಗ, ನನಗೆ ಸಂತೋಷವಾಯಿತು.
PSA 122:2 ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಿಲುಗಳಲ್ಲಿ ತಲುಪಿದೆ.
PSA 122:3 ಯೆರೂಸಲೇಮು, ಗಂಭೀರವಾಗಿಯೂ ಗಟ್ಟಿಯಾಗಿಯೂ ಕಟ್ಟಿರುವ ಪಟ್ಟಣವಾಗಿದೆ.
PSA 122:4 ಅಲ್ಲಿಗೆ ಗೋತ್ರಗಳು, ಯೆಹೋವ ದೇವರು ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು.
PSA 122:5 ಏಕೆಂದರೆ ಅಲ್ಲಿ ನ್ಯಾಯ ನಿರ್ಣಯಕ್ಕೆ ಸಿಂಹಾಸನಗಳೂ, ಅಂದರೆ, ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
PSA 122:6 ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥನೆಮಾಡಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಅಭಿವೃದ್ಧಿಯಾಗಲಿ.
PSA 122:7 ನಿನ್ನ ಪ್ರಾಕಾರದಲ್ಲಿ ಸಮಾಧಾನವಿರಲಿ, ನಿನ್ನ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.”
PSA 122:8 ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ “ನಿನ್ನಲ್ಲಿ ಸಮಾಧಾನವಿರಲಿ,” ಎಂದು ಈಗ ಹೇಳುತ್ತೇನೆ.
PSA 122:9 ನಮ್ಮ ದೇವರಾದ ಯೆಹೋವ ದೇವರ ಆಲಯದ ನಿಮಿತ್ತ ನಿನಗೆ ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ.
PSA 123:1 ಯಾತ್ರಾ ಗೀತೆ. ಪರಲೋಕದಲ್ಲಿ ಸಿಂಹಾಸನರಾಗಿರುವವರೇ, ನಿಮ್ಮ ಕಡೆಗೆ ನನ್ನ ಕಣ್ಣುಗಳನ್ನು ಎತ್ತಿದ್ದೇನೆ.
PSA 123:2 ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ, ಮತ್ತು ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರು, ನಮ್ಮನ್ನು ಕರುಣಿಸುವವರೆಗೆ ನಿರೀಕ್ಷೆಯಿಂದ ನೋಡುತ್ತಿರುವುದು.
PSA 123:3 ನಮ್ಮನ್ನು ಕರುಣಿಸು, ಯೆಹೋವ ದೇವರೇ, ನಮ್ಮನ್ನು ಕರುಣಿಸು; ಏಕೆಂದರೆ ನಾವು ಬಹಳವಾಗಿ ತಿರಸ್ಕಾರವನ್ನು ಅನುಭವಿಸಿದ್ದೇವೆ.
PSA 123:4 ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ.
PSA 124:1 ದಾವೀದನ ಯಾತ್ರಾ ಗೀತೆ. ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ, ಏನಾಗುತ್ತಿತ್ತು ಎಂದು ಇಸ್ರಾಯೇಲರೇ ಹೇಳಲಿ.
PSA 124:2 ವೈರಿಗಳು ನಮಗೆ ವಿರೋಧವಾಗಿ ಎದ್ದಾಗ ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ,
PSA 124:3 ಅವರು ನಮ್ಮ ಮೇಲೆ ರೋಷಗೊಂಡು ನಮ್ಮನ್ನು ನಾಶಮಾಡಿಬಿಡುತ್ತಿದ್ದರು.
PSA 124:4 ಆಗ ಪ್ರವಾಹವು ನಮ್ಮನ್ನು ಮುಳುಗಿಸುತ್ತಿತ್ತು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.
PSA 124:5 ರಭಸ ಪ್ರವಾಹ ನಮ್ಮನ್ನು ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು.
PSA 124:6 ಆದರೆ ನಮ್ಮನ್ನು ವೈರಿಗಳ ಹಲ್ಲುಗಳಿಗೆ ಬೇಟೆಯಾಗಿ ಕೊಡದೆ ಇದ್ದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
PSA 124:7 ನಾವು ಬೇಟೆಗಾರರ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತೆ ಇದ್ದೇವೆ. ನಾವು ಹರಿದುಹೋದ ಬಲೆಯಿಂದ ತಪ್ಪಿಸಿಕೊಂಡೆವು.
PSA 124:8 ನಮ್ಮ ಸಹಾಯವು ಆಕಾಶವನ್ನೂ, ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರ ಹೆಸರಿನಲ್ಲಿ ಒದಗಿ ಬಂತು.
PSA 125:1 ಯಾತ್ರಾ ಗೀತೆ. ಯೆಹೋವ ದೇವರಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿದ್ದಾರೆ; ಆ ಪರ್ವತವು ಯುಗಯುಗಕ್ಕೂ ಕದಲದೆ ಇರುವುದು.
PSA 125:2 ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ, ಯೆಹೋವ ದೇವರು ಈಗಿನಿಂದ ಯುಗಯುಗಕ್ಕೂ ತಮ್ಮ ಜನರ ಸುತ್ತಲೂ ಇದ್ದಾರೆ.
PSA 125:3 ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವುದಿಲ್ಲ.
PSA 125:4 ಯೆಹೋವ ದೇವರೇ, ಒಳ್ಳೆಯವರಿಗೂ, ಯಥಾರ್ಥ ಹೃದಯವುಳ್ಳವರಿಗೂ ಒಳ್ಳೆಯದನ್ನು ಮಾಡುತ್ತಾರೆ.
PSA 125:5 ಆದರೆ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು, ದುಷ್ಟರ ಸಂಗಡ ದೇವರು ತೊಲಗಿಸಲಿ. ಇಸ್ರಾಯೇಲರ ಮೇಲೆ ಸಮಾಧಾನವಿರಲಿ.
PSA 126:1 ಯಾತ್ರಾ ಗೀತೆ. ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡವರ ಹಾಗಿದ್ದೆವು.
PSA 126:2 ಆಗ ನಮ್ಮ ಬಾಯಿ ನಗೆಯಿಂದಲೂ, ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಜನಾಂಗಗಳು, “ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
PSA 126:3 ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ; ಆದಕಾರಣ ಸಂತೋಷಿಸುತ್ತಾ ಇದ್ದೇವೆ.
PSA 126:4 ಯೆಹೋವ ದೇವರೇ, ನೆಗೆವನಲ್ಲಿರುವ ಹೊಳೆಗಳ ಹಾಗೆ ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
PSA 126:5 ಕಣ್ಣೀರಿನಿಂದ ಬಿತ್ತುವವರು, ಆನಂದ ಗೀತದೊಡನೆ ಕೊಯ್ಯುವರು;
PSA 126:6 ಬಿತ್ತಲು ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವರು, ತಮ್ಮ ಸಿವುಡುಗಳನ್ನು ಹೊತ್ತುಕೊಂಡು ಆನಂದ ಗೀತದೊಡನೆ ತಿರುಗಿ ಬರುವರು.
PSA 127:1 ಸೊಲೊಮೋನನ ಯಾತ್ರಾ ಗೀತೆ. ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ; ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ, ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.
PSA 127:2 ನೀವು ಆಹಾರಕ್ಕಾಗಿ ಶ್ರಮೆಪಟ್ಟು, ಬೆಳಿಗ್ಗೆ ಬೇಗ ಏಳುವುದೂ, ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ, ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.
PSA 127:3 ಮಕ್ಕಳು ಯೆಹೋವ ದೇವರು ಕೊಟ್ಟ ಸೊತ್ತು. ಗರ್ಭಫಲವು ದೇವರ ಬಹುಮಾನ.
PSA 127:4 ಯೌವನದಲ್ಲಿ ಹುಟ್ಟಿದ ಮಕ್ಕಳು, ಯುದ್ಧವೀರನ ಕೈಯಲ್ಲಿಯ ಬಾಣಗಳಂತಿದ್ದಾರೆ.
PSA 127:5 ಬಾಣಗಳನ್ನು ಬತ್ತಳಿಕೆಯಿಂದ ತುಂಬಿಸಿಕೊಂಡಿರುವವರು ಧನ್ಯರು, ಶತ್ರುಗಳ ಸಂಗಡ ನ್ಯಾಯಾಲಯದಲ್ಲಿ ವಾದಿಸುವಾಗ ಅವರು ನಾಚಿಕೆಪಡರು.
PSA 128:1 ಯಾತ್ರಾ ಗೀತೆ. ಯೆಹೋವ ದೇವರಿಗೆ ಭಯಪಟ್ಟು ಅವರ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.
PSA 128:2 ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಆಶೀರ್ವಾದವನ್ನೂ ಅಭಿವೃದ್ಧಿಯನ್ನೂ ಹೊಂದುವಿ.
PSA 128:3 ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು. ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು, ಓಲಿವ್ ಮರಗಳ ಸಸಿಗಳ ಹಾಗೆ ಇರುವರು.
PSA 128:4 ಯೆಹೋವ ದೇವರಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವಾದ ಹೊಂದುವನು.
PSA 128:5 ಯೆಹೋವ ದೇವರು ನಿನ್ನನ್ನು ಚೀಯೋನಿನೊಳಗಿಂದ ನಿನ್ನ ಜೀವಮಾನವೆಲ್ಲಾ ಆಶೀರ್ವದಿಸಲಿ; ನೀನು ಯೆರೂಸಲೇಮಿನ ಸಮೃದ್ಧಿಯನ್ನು ಕಾಣುವಿ.
PSA 128:6 ನೀನು ಮಕ್ಕಳ ಮಕ್ಕಳನ್ನು ಕಾಣುವ ಬದುಕು ನಿನಗಿರಲಿ ಇಸ್ರಾಯೇಲರ ಮೇಲೆ ಸಮಾಧಾನವಿರಲಿ.
PSA 129:1 ಯಾತ್ರಾ ಗೀತೆ. “ನನ್ನ ಯೌವನದಿಂದ ನನ್ನನ್ನು ಶತ್ರುಗಳು ಬಹಳ ಬಾಧಿಸಿದ್ದಾರೆ,” ಎಂದು ಇಸ್ರಾಯೇಲು ಹೇಳಲಿ.
PSA 129:2 “ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ.
PSA 129:3 ಊಳುವವರು ನನ್ನ ಬೆನ್ನಿನ ಮೇಲೆ ಉತ್ತಿದರು, ಉದ್ದವಾದ ಗಾಯಗೆರೆಗಳನ್ನು ಮಾಡಿದರು
PSA 129:4 ಆದರೆ ಯೆಹೋವ ದೇವರು ನೀತಿವಂತರು; ದುಷ್ಟರು ಹಾಕಿದ ಬಂಧಗಳನ್ನು ದೇವರು ಕಡಿದು, ನಮ್ಮನ್ನು ಬಿಡುಗಡೆ ಮಾಡಿದ್ದಾರೆ.”
PSA 129:5 ಚೀಯೋನನ್ನು ದ್ವೇಷಿಸುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ.
PSA 129:6 ಅವರು ಮಾಳಿಗೆ ಮೇಲಿನ ಹುಲ್ಲಿನಂತೆ ಆಗಲಿ. ಅವು ಬೆಳೆಯುವುದಕ್ಕೆ ಮುಂಚೆ ಒಣಗಿ ಹೋಗುತ್ತದೆ.
PSA 129:7 ಅದರಿಂದ ಕೊಯ್ಯುವವನು ತನ್ನ ಕೈ ತುಂಬಿಸಿಕೊಳ್ಳನು, ಸಿವುಡು ಕಟ್ಟುವವನು ತನ್ನ ಉಡಿಯನ್ನೂ ತುಂಬಿಸಿಕೊಳ್ಳಲಾರನು.
PSA 129:8 “ಯೆಹೋವ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ; ಯೆಹೋವ ದೇವರು ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ,” ಎಂದು ಹಾದುಹೋಗುವವರು ಹೇಳದಿರಲಿ.
PSA 130:1 ಯಾತ್ರಾ ಗೀತೆ. ಯೆಹೋವ ದೇವರೇ, ಅಂತರಾಳದಿಂದ ನಿಮಗೆ ಮೊರೆಯಿಡುತ್ತೇನೆ.
PSA 130:2 ಯೆಹೋವ ದೇವರೇ, ನನ್ನ ಧ್ವನಿಯನ್ನು ಕೇಳಿರಿ. ನನ್ನ ಕೂಗಿಗೆ ಕರುಣೆ ತೋರಿಸಿ, ನಿಮ್ಮ ಕಿವಿಗಳು ನನ್ನ ವಿಜ್ಞಾಪನೆಗಳನ್ನು ಆಲೈಸಲಿ.
PSA 130:3 ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ, ನಿಮ್ಮ ಮುಂದೆ ಯಾರು ನಿಲ್ಲುವರು?
PSA 130:4 ಆದರೆ ನಿಮ್ಮಲ್ಲಿ ಕ್ಷಮಾಪಣೆ ಉಂಟು. ನಾವು ನಿಮ್ಮನ್ನು ಭಯಭಕ್ತಿಯಿಂದ ಸೇವೆಮಾಡುವಂತೆ ನಿಮ್ಮ ಕ್ಷಮಾಪಣೆಯಿದೆ.
PSA 130:5 ಯೆಹೋವ ದೇವರನ್ನು ನಿರೀಕ್ಷಿಸುತ್ತೇನೆ, ನನ್ನ ಅಂತರಾಳವು ಸಹ ನಿರೀಕ್ಷಿಸುತ್ತದೆ; ನಾನು ದೇವರ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
PSA 130:6 ಉದಯಕ್ಕಾಗಿ ಕಾವಲುಗಾರ ಕಾದಿರುತ್ತಾರೆ. ನಾನು ಆ ಕಾವಲುಗಾರರು ಕಾದಿರುವುದಕ್ಕಿಂತ ಹೆಚ್ಚಾಗಿಯೇ ಯೆಹೋವ ದೇವರಿಗಾಗಿ ನಿರೀಕ್ಷಿಸುತ್ತಿದ್ದೇನೆ.
PSA 130:7 ಇಸ್ರಾಯೇಲು ಯೆಹೋವ ದೇವರಲ್ಲಿ ನಿರೀಕ್ಷಿಸಲಿ, ಏಕೆಂದರೆ ಯೆಹೋವ ದೇವರ ಬಳಿಯಲ್ಲಿ ಒಂಡಬಡಿಕೆಯ ಪ್ರೀತಿ ಇರುತ್ತದೆ, ಸಂಪೂರ್ಣ ವಿಮೋಚನೆಯೂ ಇರುತ್ತದೆ.
PSA 130:8 ದೇವರು ಇಸ್ರಾಯೇಲನ್ನು ಅವರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು.
PSA 131:1 ದಾವೀದನ ಯಾತ್ರಾ ಗೀತೆ. ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.
PSA 131:2 ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆ ನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ. ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ.
PSA 131:3 ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು. ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.
PSA 132:1 ಯಾತ್ರಾ ಗೀತೆ. ಯೆಹೋವ ದೇವರೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
PSA 132:2 ದಾವೀದನು ಯೆಹೋವ ದೇವರಿಗೆ ಆಣೆ ಇಟ್ಟು, ಪರಾಕ್ರಮಿಯಾದ ಯಾಕೋಬನ ದೇವರಿಗೆ ಹೀಗೆಂದು ಪ್ರಮಾಣ ಮಾಡಿದನು:
PSA 132:3 “ಯೆಹೋವ ದೇವರಿಗೆ ಒಂದು ಸ್ಥಳವನ್ನೂ, ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ,
PSA 132:4 ನಾನು ನನ್ನ ಮನೆ ಸೇರೆನು; ನನ್ನ ಮಂಚವನ್ನು ಏರೆನು.
PSA 132:5 ನನ್ನ ಕಣ್ಣುಗಳಿಗೆ ನಿದ್ದೆಯನ್ನು ಕೊಡೆನು, ನನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡೆನು.”
PSA 132:6 ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು:
PSA 132:7 “ಬನ್ನಿರಿ ನಾವು ದೇವರ ಮಂದಿರಕ್ಕೆ ಹೋಗಿ, ಅವರ ಪಾದಪೀಠದಲ್ಲಿ ಆರಾಧಿಸೋಣ.
PSA 132:8 ‘ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ.
PSA 132:9 ನಿಮ್ಮ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ; ನಿಮ್ಮ ಭಕ್ತರು ಉತ್ಸಾಹಧ್ವನಿ ಮಾಡಲಿ.’ ”
PSA 132:10 ನಿಮ್ಮ ಸೇವಕನಾದ ದಾವೀದನ ನಿಮಿತ್ತ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ.
PSA 132:11 ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, “ನಿನ್ನ ಸಂತತಿಯವನನ್ನೇ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.
PSA 132:12 ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, ಕೈಗೊಂಡರೆ, ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.”
PSA 132:13 ಏಕೆಂದರೆ, ಯೆಹೋವ ದೇವರು ಚೀಯೋನನ್ನು ಆಯ್ದುಕೊಂಡು ಅದನ್ನು ತಮ್ಮ ವಾಸಕ್ಕಾಗಿ ಅಪೇಕ್ಷಿಸಿ ಹೀಗೆಂದಿದ್ದಾರೆ:
PSA 132:14 “ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯ ಸ್ಥಳವಾಗಿರುವುದು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ; ಇಲ್ಲಿಯೇ ಸಿಂಹಾಸನಾರೂಢನಾಗಿರುವೆನು.
PSA 132:15 ಧಾರಾಳವಾಗಿ ದವಸಧಾನ್ಯಗಳಿರಲೆಂದು ನಾನು ಚೀಯೋನನ್ನು ಆಶೀರ್ವದಿಸುವೆನು; ಇಲ್ಲಿ ವಾಸಿಸುವ ಬಡವರು ಉಂಡು ಸಂತೃಪ್ತಿಯಿಂದಿರುವರು.
PSA 132:16 ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು.
PSA 132:17 “ಇಲ್ಲಿ ದಾವೀದನಿಗೆ ಬಲದಾಯಕ ಅರಸನನ್ನು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.
PSA 132:18 ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”
PSA 133:1 ದಾವೀದನ ಯಾತ್ರಾ ಗೀತೆ. ಸಹೋದರರು ಒಂದಾಗಿ ಬಾಳುವುದು ಎಷ್ಟೋ ಒಳ್ಳೆಯದು! ಎಷ್ಟೋ ರಮ್ಯವಾದದ್ದು!
PSA 133:2 ಆ ಒಂದಾಗಿರುವಿಕೆಯು ತಲೆಯ ಮೇಲಿಂದ ಗಡ್ಡದ ಮೇಲೆ ಅಂದರೆ, ಆರೋನನ ಗಡ್ಡದ ಮೇಲೆ ಇಳಿದು, ಅವನ ವಸ್ತ್ರದ ಕೊರಳಪಟ್ಟಿಯವರೆಗೆ ಮೇಲೆ ಇಳಿಯುವ ಅಮೂಲ್ಯ ತೈಲದ ಹಾಗೆ ಇರುತ್ತದೆ.
PSA 133:3 ಆ ಒಂದಾಗಿರುವಿಕೆಯು ಹೆರ್ಮೋನ್ ಪರ್ವತದಿಂದ ಪ್ರಾರಂಭವಾಗಿ ಚೀಯೋನ್ ಪರ್ವತಗಳ ಮೇಲೆ ಬೀಳುವ ಮಂಜಿನ ಹಾಗೆಯೂ ಇದೆ. ಏಕೆಂದರೆ ಎಲ್ಲಿ ಒಂದಾಗಿರುವಿಕೆಯು ಇದೆಯೋ ಅಲ್ಲಿ ಯೆಹೋವ ದೇವರು ಆಶೀರ್ವಾದವನ್ನೂ, ಯುಗಯುಗಾಂತರಕ್ಕೂ ಜೀವವನ್ನೂ ಅನುಗ್ರಹಿಸುತ್ತಾರೆ.
PSA 134:1 ಯಾತ್ರಾ ಗೀತೆ. ಯೆಹೋವ ದೇವರ ಆಲಯದಲ್ಲಿ ಪ್ರತಿ ರಾತ್ರಿ ಸೇವೆ ಸಲ್ಲಿಸುವ ಯೆಹೋವ ದೇವರ ಎಲ್ಲಾ ಸೇವಕರೇ, ಯೆಹೋವ ದೇವರನ್ನು ಸ್ತುತಿಸಿರಿ.
PSA 134:2 ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ, ಯೆಹೋವ ದೇವರನ್ನು ಸ್ತುತಿಸಿರಿ.
PSA 134:3 ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ ಯೆಹೋವ ದೇವರು, ಚೀಯೋನಿನೊಳಗಿಂದ ನಿಮ್ಮನ್ನು ಆಶೀರ್ವದಿಸಲಿ.
PSA 135:1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಯೆಹೋವ ದೇವರ ಆಲಯದಲ್ಲಿಯೂ,
PSA 135:2 ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.
PSA 135:3 ಯೆಹೋವ ದೇವರನ್ನು ಸ್ತುತಿಸಿರಿ, ಯೆಹೋವ ದೇವರು ಒಳ್ಳೆಯವರು; ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ, ಏಕೆಂದರೆ ಅದು ರಮ್ಯವಾದದ್ದು.
PSA 135:4 ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.
PSA 135:5 ಯೆಹೋವ ದೇವರು ದೊಡ್ಡವರು; ನಮ್ಮ ಯೆಹೋವ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರೆಂದು ನಾನು ತಿಳಿದಿದ್ದೇನೆ.
PSA 135:6 ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.
PSA 135:7 ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.
PSA 135:8 ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.
PSA 135:9 ಈಜಿಪ್ಟೇ, ನಿಮ್ಮ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ದೇವರು ಫರೋಹನಿಗೂ, ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
PSA 135:10 ದೇವರು ದೊಡ್ಡ ಜನಾಂಗಗಳನ್ನೂ, ಬಲವಾದ ಅರಸರನ್ನೂ ದಂಡಿಸಿದರು.
PSA 135:11 ಅಮೋರಿಯರ ಅರಸನಾದ ಸೀಹೋನನನ್ನು, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ಅರಸರನ್ನೂ ದಂಡಿಸಿದರು.
PSA 135:12 ದೇವರು ದೇಶವನ್ನು ಸೊತ್ತಾಗಿ ತಮ್ಮ ಪ್ರಜೆಯಾದ ಇಸ್ರಾಯೇಲಿಗೆ ಕೊಟ್ಟರು.
PSA 135:13 ಯೆಹೋವ ದೇವರೇ, ನಿಮ್ಮ ನಾಮವೂ, ನಿಮ್ಮ ಪ್ರಭಾವವೂ ತಲತಲಾಂತರಕ್ಕೂ ಸ್ಮರಣೆಯಾಗಿರುವುದು.
PSA 135:14 ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.
PSA 135:15 ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
PSA 135:16 ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
PSA 135:17 ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಅವುಗಳ ಬಾಯಲ್ಲಿ ಶ್ವಾಸ ಇಲ್ಲ.
PSA 135:18 ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
PSA 135:19 ಇಸ್ರಾಯೇಲ್ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ಆರೋನನ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
PSA 135:20 ಲೇವಿಯ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ದೇವರಲ್ಲಿ ಭಯಭಕ್ತಿಯುಳ್ಳವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
PSA 135:21 ಯೆರೂಸಲೇಮಿನಲ್ಲಿ ವಾಸಿಸುವವ ಯೆಹೋವ ದೇವರನ್ನು ಕೊಂಡಾಡಿ ಸ್ತುತಿಸಿರಿ; ಅವರ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯೆಹೋವ ದೇವರಿಗೆ ಸ್ತೋತ್ರ.
PSA 136:1 ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು;
PSA 136:2 ದೇವಾಧಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
PSA 136:3 ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ;
PSA 136:4 ಅವರೊಬ್ಬರೇ ಮಹಾ ಅದ್ಭುತಗಳನ್ನು ಮಾಡುತ್ತಾರೆ;
PSA 136:5 ತಮ್ಮ ಜ್ಞಾನದಿಂದ ಪರಲೋಕಗಳನ್ನು ನಿರ್ಮಿಸಿದರು;
PSA 136:6 ನೀರಿನ ಮೇಲೆ ಭೂಮಿಯನ್ನು ವಿಸ್ತರಿಸಿದರು;
PSA 136:7 ದೊಡ್ಡ ಬೆಳಕುಗಳನ್ನು ನಿರ್ಮಿಸಿದರು;
PSA 136:8 ಸೂರ್ಯನು ಹಗಲನ್ನಾಳುವಂತೆ ಮಾಡಿದರು;
PSA 136:9 ರಾತ್ರಿಯನ್ನಾಳಲು ಚಂದ್ರನನ್ನೂ, ನಕ್ಷತ್ರಗಳನ್ನೂ ಇಟ್ಟರು;
PSA 136:10 ಈಜಿಪ್ಟಿನವರ ಚೊಚ್ಚಲ ಮಕ್ಕಳನ್ನು ದಂಡಿಸಿದರು;
PSA 136:11 ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ;
PSA 136:12 ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ ಅವರನ್ನು ಹೊರತಂದರು;
PSA 136:13 ಕೆಂಪು ಸಮುದ್ರವನ್ನು ವಿಭಾಗಿಸಿದರು;
PSA 136:14 ಇಸ್ರಾಯೇಲನ್ನು ಅದರ ನಡುವೆ ದಾಟಿಸಿದರು;
PSA 136:15 ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿದರು;
PSA 136:16 ತಮ್ಮ ಜನರನ್ನು ಮರುಭೂಮಿಯಲ್ಲಿ ನಡೆಸಿದರು;
PSA 136:17 ದೊಡ್ಡ ಅರಸರನ್ನು ದಂಡಿಸಿದರು;
PSA 136:18 ಶ್ರೇಷ್ಠ ಅರಸರನ್ನು ಸಹ ದಂಡಿಸಿದರು;
PSA 136:19 ಅಮೋರಿಯರ ಅರಸನಾದ ಸೀಹೋನನು ದಂಡನೆಹೊಂದಿದನು;
PSA 136:20 ಬಾಷಾನಿನ ಅರಸನಾದ ಓಗನು ಸಂಹಾರವಾದ ಮತ್ತೊಬ್ಬನು;
PSA 136:21 ಅವರ ದೇಶವನ್ನು ಬಾಧ್ಯತೆಯಾಗಿ ದೇವರು ಕೊಟ್ಟರು;
PSA 136:22 ತಮ್ಮ ಸೇವಕ ಇಸ್ರಾಯೇಲನಿಗೆ ಅದು ಸೊತ್ತಾಯಿತು;
PSA 136:23 ನಾವು ಹೀನ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನೆನಪಿಸಿಕೊಂಡರು;
PSA 136:24 ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು;
PSA 136:25 ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತಾರೆ;
PSA 136:26 ಪರಲೋಕದ ದೇವರನ್ನು ಕೊಂಡಾಡಿರಿ;
PSA 137:1 ಬಾಬಿಲೋನಿನ ನದಿಗಳ ಹತ್ತಿರ ನಾವು ಕುಳಿತುಕೊಂಡು, ಚೀಯೋನನ್ನು ಜ್ಞಾಪಕ ಮಾಡಿಕೊಂಡಾಗ ಅತ್ತೆವು.
PSA 137:2 ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗು ಹಾಕಿದೆವು.
PSA 137:3 ಏಕೆಂದರೆ ಅಲ್ಲಿ ನಮ್ಮನ್ನು ಸೆರೆಹಿಡಿದು ಬಂಧಿಸಿದವರು, ನಮಗೆ ಹಾಡನ್ನು ಹಾಡಲು ಹೇಳಿದ್ದರು; ನಮ್ಮನ್ನು ಪೀಡಿಸುವವರು ವಿನೋದಕ್ಕಾಗಿ ಹಾಡನ್ನು ಕೇಳಲು ಬಯಸಿದ್ದರು; “ಚೀಯೋನಿನ ಹಾಡುಗಳಲ್ಲಿ ಒಂದು ನಮಗೆ ಹಾಡಿರಿ,” ಎಂದರು.
PSA 137:4 ಅನ್ಯದೇಶದಲ್ಲಿ ನಾವು ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ?
PSA 137:5 ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ, ನನ್ನ ಬಲಗೈಯ ಕೌಶಲ್ಯ ಮರೆತು ಹೋಗಲಿ.
PSA 137:6 ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದಿದ್ದರೆ, ಯೆರೂಸಲೇಮನ್ನು ನನ್ನ ಎಲ್ಲಾ ಸಂತೋಷಕ್ಕಿಂತಲೂ ಹೆಚ್ಚಾಗಿಡದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.
PSA 137:7 ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ, “ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,” ಎಂದು ಹೇಳಿದ ಎದೋಮಿನವರನ್ನು ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ.
PSA 137:8 ಹಾಳಾಗಲಿಕ್ಕಿರುವ ಬಾಬಿಲೋನ್ ನಗರವೇ, ನೀನು ನಮಗೆ ಮಾಡಿದ್ದಕ್ಕೆ ಪ್ರತೀಕಾರವನ್ನು ನಿನಗೆ ಸಲ್ಲಿಸುವವನು ಧನ್ಯನು.
PSA 137:9 ನಿಮ್ಮ ಚಿಕ್ಕ ಕೂಸುಗಳನ್ನು ಹಿಡಿದು, ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
PSA 138:1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿಮ್ಮನ್ನು ಸ್ತುತಿಸುವೆನು.
PSA 138:2 ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಅಡ್ಡಬಿದ್ದು, ನಿಮ್ಮ ಒಡಂಬಡಿಕೆಯ ಪ್ರೀತಿ, ನಿಮ್ಮ ಸತ್ಯತೆಯ ನಿಮಿತ್ತ ನಿಮ್ಮ ಹೆಸರನ್ನು ಕೊಂಡಾಡುವೆನು; ನೀವು ನಿಮ್ಮ ವಾಕ್ಯವನ್ನು ನಿಮ್ಮ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀರಿ.
PSA 138:3 ನಾನು ಕರೆದಾಗ ನೀವು ನನಗೆ ಉತ್ತರಕೊಟ್ಟಿರುವಿರಿ. ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು, ನನ್ನನ್ನು ಬಲಪಡಿಸಿದ್ದೀರಿ.
PSA 138:4 ಯೆಹೋವ ದೇವರೇ, ನಿಮ್ಮ ತೀರ್ಪುಗಳನ್ನು ಭೂಮಿಯ ಅರಸರೆಲ್ಲರೂ ಕೇಳುವಾಗ, ನಿಮ್ಮನ್ನು ಕೊಂಡಾಡಲಿ.
PSA 138:5 ಹೌದು, ಅವರು ಯೆಹೋವ ದೇವರ ಮಾರ್ಗಗಳ ಯೆಹೋವ ದೇವರ ಮಹಿಮೆಯು ಮಹೋನ್ನತವಾಗಿದೆ.
PSA 138:6 ಯೆಹೋವ ದೇವರು ಉನ್ನತರಾಗಿದ್ದರೂ, ದೀನನನ್ನು ಗಮನಿಸುತ್ತಾರೆ; ಆದರೆ ಗರ್ವಿಷ್ಠನನ್ನು ದೂರದಿಂದ ತಿಳಿದುಕೊಳ್ಳುತ್ತಾರೆ.
PSA 138:7 ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ, ನೀವು ನನ್ನನ್ನು ಬದುಕಿಸಿ, ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿಮ್ಮ ಕೈಯನ್ನು ಚಾಚಿದ್ದೀರಿ; ನಿಮ್ಮ ಬಲಗೈಯಿಂದ ನನ್ನನ್ನು ರಕ್ಷಿಸಿದ್ದೀರಿ.
PSA 138:8 ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.
PSA 139:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ನೀವು ನನ್ನನ್ನು ಪರಿಶೋಧಿಸಿದ್ದೀರಿ; ನನ್ನನ್ನು ತಿಳಿದುಕೊಂಡಿದ್ದೀರಿ.
PSA 139:2 ನಾನು ಕುಳಿತಿರುವುದನ್ನೂ, ಏಳುವುದನ್ನೂ ನೀವು ತಿಳಿದುಕೊಂಡಿದ್ದೀರಿ; ನನ್ನ ಆಲೋಚನೆಗಳನ್ನು ದೂರದಿಂದ ಗ್ರಹಿಸಿಕೊಂಡಿದ್ದೀರಿ.
PSA 139:3 ನಾನು ನಡೆಯುವುದನ್ನೂ, ನಾನು ಮಲಗುವುದನ್ನೂ ನೀವು ವಿವೇಚಿಸಿದ್ದೀರಿ; ನನ್ನ ಮಾರ್ಗಗಳೆಲ್ಲಾ ನಿಮಗೆ ಸುಪರಿಚಿತವಾಗಿವೆ.
PSA 139:4 ನನ್ನ ನಾಲಿಗೆಯಲ್ಲಿ ಒಂದು ಮಾತು ಆರಂಭಿಸುವುದಕ್ಕಿಂತ ಮುಂಚೆಯೇ ಯೆಹೋವ ದೇವರೇ, ಅದು ನಿಮಗೆ ಪೂರ್ಣವಾಗಿ ತಿಳಿದಿರುತ್ತದೆ.
PSA 139:5 ನೀವು ನನ್ನ ಹಿಂದೆಯೂ, ಮುಂದೆಯೂ ಆವರಿಸಿಕೊಂಡು, ನಿಮ್ಮ ಕೈಯನ್ನು ನನ್ನ ಮೇಲೆ ಇಟ್ಟಿದ್ದೀರಿ.
PSA 139:6 ಇಂಥ ಅರಿವು ನನಗೆ ಅತ್ಯಂತ ವಿಸ್ಮಯವಾಗಿದೆ, ಅದು ನನಗೆ ನಿಲುಕಲಾರದಷ್ಟು ಉನ್ನತವಾಗಿದೆ.
PSA 139:7 ನಾನು ನಿಮ್ಮ ಆತ್ಮದಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿಮ್ಮ ಸನ್ನಿಧಿಯಿಂದ ತಪ್ಪಿಸಿಕೊಂಡು ನಾನು ಎಲ್ಲಿಗೆ ಹೊರಟು ಹೋಗಲಿ?
PSA 139:8 ನಾನು ಆಕಾಶಕ್ಕೆ ಏರಿ ಹೋದರೆ, ನೀವು ಅಲ್ಲಿ ಇದ್ದೀರಿ; ಪಾತಾಳಕ್ಕೆ ಹೋಗಿ ನಿದ್ರಿಸಿದರೂ ನೀವು ಅಲ್ಲಿಯೂ ಇದ್ದೀರಿ.
PSA 139:9 ಉದಯದ ರೆಕ್ಕೆಗಳನ್ನು ತೆಗೆದುಕೊಂಡು, ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ,
PSA 139:10 ಅಲ್ಲಿಯೂ ನಿಮ್ಮ ಕೈ ನನ್ನನ್ನು ನಡೆಸುವುದು, ನಿಮ್ಮ ಬಲಗೈ ನನ್ನನ್ನು ಹಿಡಿದಿರುವುದು.
PSA 139:11 “ಕತ್ತಲೆಯು ನನ್ನನ್ನು ಕವಿದುಕೊಳ್ಳಲಿ ಮತ್ತು ಬೆಳಕು ನನ್ನ ಸುತ್ತಲೂ ಇರುಳಾಗಲಿ,” ಎಂದು ನಾನು ಹೇಳಿದರೂ,
PSA 139:12 ಕತ್ತಲು ನಿಮಗೆ ಕತ್ತಲಾಗಿರುವುದಿಲ್ಲ; ರಾತ್ರಿಯು ಹಗಲಿನ ಹಾಗೆ ಪ್ರಕಾಶಿಸುವುದು, ಏಕೆಂದರೆ ಕತ್ತಲು ನಿಮಗೆ ಬೆಳಕಿನಂತಿರುವುದು.
PSA 139:13 ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ; ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ.
PSA 139:14 ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ ನಾನು ನಿಮ್ಮನ್ನು ಸ್ತುತಿಸುತ್ತೇನೆ; ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು, ನಾನು ಪೂರ್ಣವಾಗಿ ತಿಳಿದಿದ್ದೇನೆ.
PSA 139:15 ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ, ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ.
PSA 139:16 ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು; ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ.
PSA 139:17 ದೇವರೇ, ನಿಮ್ಮ ಆಲೋಚನೆಗಳು ನನಗೆ ಎಷ್ಟೋ ಅಮೂಲ್ಯವಾಗಿವೆ! ಅವುಗಳ ಎಣಿಕೆ ನನಗೆ ಎಷ್ಟೋ ಅಸಂಖ್ಯವಾಗಿವೆ!
PSA 139:18 ನಾನು ಅವುಗಳನ್ನು ಎಣಿಸಿದರೆ, ಅವು ಮರಳಿಗಿಂತಲೂ ಹೆಚ್ಚಾಗಿವೆ! ನಾನು ಎಚ್ಚರವಾಗುವಾಗ, ನಿಶ್ಚಯವಾಗಿಯೂ ನಿಮ್ಮ ಸಂಗಡ ಇರುವೆನು.
PSA 139:19 ದೇವರೇ, ಒಂದು ವೇಳೆ ನೀವು ದುಷ್ಟರೆಲ್ಲರನ್ನು ದಂಡಿಸಿಬಿಟ್ಟರೆ ಎಷ್ಟೋ ಒಳ್ಳೆಯದಾಗಿರುವುದು! ಕೊಲೆಪಾತಕರೇ, ನೀವು ನನ್ನಿಂದ ತೊಲಗಿ ಹೋದರೆ ಎಷ್ಟೋ ಹಿತ!
PSA 139:20 ಅವರು ನಿಮಗೆ ವಿರೋಧವಾಗಿ ಮಾತಾಡುತ್ತಾರೆ; ನಿಮ್ಮ ವೈರಿಗಳು ನಿಮ್ಮ ಹೆಸರನ್ನು ದುರುಪಯೋಗ ಮಾಡುತ್ತಾರೆ.
PSA 139:21 ಯೆಹೋವ ದೇವರೇ, ನಿಮ್ಮನ್ನು ದ್ವೇಷಿಸುವವರನ್ನು ನಾನು ದ್ವೇಷಿಸದಿರುವೆನೋ? ನಿಮಗೆ ವಿರೋಧವಾಗಿ ತಿರುಗಿ ಬಿದ್ದವರನ್ನು ನಾನು ಹೀನೈಸದಿರುವೆನೋ?
PSA 139:22 ನಾನು ಪೂರ್ಣ ದ್ವೇಷದಿಂದ ಅವರನ್ನು ಹಗೆಮಾಡುತ್ತೇನೆ; ನಾನು ಅವರನ್ನು ನನ್ನ ಶತ್ರುಗಳಂತೆ ಪರಿಗಣಿಸುತ್ತೇನೆ.
PSA 139:23 ದೇವರೇ, ನನ್ನನ್ನು ಪರಿಶೋಧಿಸಿ, ನನ್ನ ಹೃದಯವನ್ನು ತಿಳಿದುಕೊಳ್ಳಿರಿ; ನನ್ನನ್ನು ಪರೀಕ್ಷಿಸಿ, ನನ್ನ ಚಿಂತಾಲೋಚನೆಗಳನ್ನು ತಿಳಿದುಕೊಳ್ಳಿರಿ.
PSA 139:24 ನನ್ನಲ್ಲಿ ಕೇಡಿನ ಮಾರ್ಗವಿದೆಯೋ ಎಂದು ನೋಡಿರಿ, ನನ್ನನ್ನು ನಿತ್ಯ ಮಾರ್ಗದಲ್ಲಿ ನಡೆಸಿರಿ.
PSA 140:1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ಕೆಡುಕರಿಂದ ನನ್ನನ್ನು ತಪ್ಪಿಸಿರಿ, ಬಲಾತ್ಕಾರಿಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿರಿ.
PSA 140:2 ಅವರು ಹೃದಯದಲ್ಲಿ ಕೇಡನ್ನು ಕಲ್ಪಿಸುತ್ತಾರೆ; ಅವರು ಪ್ರತಿದಿನ ಕಲಹವೆಬ್ಬಿಸುತ್ತಾರೆ.
PSA 140:3 ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಹದಮಾಡುತ್ತಾರೆ; ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ.
PSA 140:4 ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ. ಹಿಂಸಕರಿಂದ ನನ್ನನ್ನು ರಕ್ಷಿಸು, ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.
PSA 140:5 ಗರ್ವಿಷ್ಠರು ನನಗೆ ಉರುಲನ್ನೂ, ಪಾಶಗಳನ್ನೂ ರಹಸ್ಯವಾಗಿ ಇಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನನಗೆ ಬೋನಿಟ್ಟಿದ್ದಾರೆ.
PSA 140:6 ನಾನು ಯೆಹೋವ ದೇವರಿಗೆ ಹೀಗೆ ಹೇಳಿದೆನು, “ನೀವು ನನ್ನ ದೇವರಾಗಿದ್ದೀರಿ; ಯೆಹೋವ ದೇವರೇ, ಕರುಣೆಗಾಗಿ ಬೇಡುವ ನನ್ನ ಮೊರೆಗೆ ಕಿವಿಗೊಡಿರಿ.
PSA 140:7 ನನ್ನ ರಕ್ಷಣೆಯ ಬಲವಾಗಿರುವ ಸಾರ್ವಭೌಮ ಯೆಹೋವ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಕಾಪಾಡುತ್ತೀರಿ.
PSA 140:8 ಯೆಹೋವ ದೇವರೇ, ದುಷ್ಟರಿಗೆ ಅವರ ಇಷ್ಟಾರ್ಥವನ್ನು ಕೊಡಬೇಡಿರಿ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡಿರಿ.”
PSA 140:9 ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು, ಅವರ ತಲೆಯ ಮೇಲೇ ಬರಲಿ.
PSA 140:10 ಉರಿ ಕೆಂಡಗಳು ಅವರ ಮೇಲೆ ಬೀಳಲಿ; ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ, ಇತರರು ಅವರನ್ನು ಕುಣಿಯಲ್ಲಿ ಕೆಡವಲಿ.
PSA 140:11 ಚಾಡಿಕೋರರು ದೇಶದಲ್ಲಿ ಉಳಿಯದಿರಲಿ; ಬಲಾತ್ಕಾರಿಯನ್ನು ಕೇಡು ಬೇಟೆಯಾಡಿ ಕೆಡವಲಿ.
PSA 140:12 ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು, ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.
PSA 140:13 ನಿಶ್ಚಯವಾಗಿ ನೀತಿವಂತರು ನಿಮ್ಮ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು; ಯಥಾರ್ಥರು ನಿಮ್ಮ ಸನ್ನಿಧಿಯಲ್ಲಿ ಬಾಳುವರು.
PSA 141:1 ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ, ನನ್ನ ಬಳಿಗೆ ಬರಲು ತ್ವರೆಪಡಿರಿ. ನಾನು ನಿಮ್ಮನ್ನು ಕರೆಯುವಾಗ, ನನಗೆ ಕಿವಿಗೊಡಿರಿ.
PSA 141:2 ನನ್ನ ಪ್ರಾರ್ಥನೆ ನಿಮ್ಮ ಮುಂದೆ ಧೂಪವಾಗಿರಲಿ, ನಾನು ನಿಮ್ಮ ಕಡೆ ಕೈ ಎತ್ತುವುದು ಸಾಯಂಕಾಲದ ಬಲಿಯಂತೆ ನಿಮಗೆ ಸಮರ್ಪಕವಾಗಿರಲಿ.
PSA 141:3 ಯೆಹೋವ ದೇವರೇ, ನನ್ನ ಬಾಯಿಗೆ ಕಾವಲಿಡಿರಿ; ನನ್ನ ತುಟಿಗಳ ಕದವನ್ನು ಕಾಯಿರಿ;
PSA 141:4 ಅಪರಾಧ ಮಾಡುವವರ ಸಂಗಡ ನಾನು ಸಹ ಸೇರಿಕೊಂಡು ಕೆಟ್ಟ ಕಾರ್ಯಗಳನ್ನು ಮಾಡಲು ನನ್ನ ಹೃದಯ ಸೆಳೆಯದಂತೆ ಕಾಪಾಡಿರಿ; ಅವರ ಸವಿ ಊಟಗಳನ್ನು ನಾನು ಉಣ್ಣದಿರಲಿ.
PSA 141:5 ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ. ಅವರು ನನ್ನನ್ನು ಗದರಿಸಲಿ, ಅದು ನನ್ನ ತಲೆಗೆ ಅಭಿಷೇಕ; ನನ್ನ ತಲೆ ಅದನ್ನು ಬೇಡವೆನ್ನದಿರಲಿ; ಆದರೂ ನನ್ನ ಪ್ರಾರ್ಥನೆ ಯಾವಾಗಲೂ ದುಷ್ಟರ ಕಾರ್ಯಗಳಿಗೆ ವಿರೋಧವಾಗಿಯೇ ಇರುವುದು.
PSA 141:6 ಅವರ ನ್ಯಾಯಾಧಿಪತಿಗಳು ಉನ್ನತ ಸ್ಥಳದಿಂದ ಕೆಳಬಿದ್ದಾಗ ಅವರು ನನ್ನ ಮಾತು ಕೇಳುವರು.
PSA 141:7 ಅವರು ಹೀಗೆ ಹೇಳುವರು, “ಒಬ್ಬನು ಹೊಲವನ್ನು ಉತ್ತು, ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳ ದ್ವಾರದಲ್ಲಿ ಎರಚಲಾಗುವುದು.”
PSA 141:8 ಆದರೆ ಸಾರ್ವಭೌಮ ಯೆಹೋವ ದೇವರೇ, ನನ್ನ ಕಣ್ಣುಗಳು ನಿಮ್ಮ ಕಡೆ ಇವೆ; ನಿಮ್ಮನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡಿರಿ.
PSA 141:9 ಅವರು ನನಗೆ ಒಡ್ಡಿದ ಉರುಲಿನಿಂದಲೂ, ಅಪರಾಧಗಳ ನೇಣುಗಳಿಂದಲೂ ನನ್ನನ್ನು ಕಾಪಾಡಿರಿ.
PSA 141:10 ನಾನು ತಪ್ಪಿಸಿಕೊಂಡು ಸುರಕ್ಷಿತವಾಗಿ ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿಯೇ ಬೀಳಲಿ.
PSA 142:1 ದಾವೀದನ ಮಾಸ್ಕಿಲ ರಾಗದ ಪದ್ಯ. ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ. ನನ್ನ ಸ್ವರವೆತ್ತಿ ಯೆಹೋವ ದೇವರಿಗೆ ಮೊರೆಯಿಟ್ಟಿದ್ದೇನೆ; ಸ್ವರವೆತ್ತಿ ನನ್ನ ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದೇನೆ.
PSA 142:2 ದೇವರ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ದೇವರ ಮುಂದೆ ತಿಳಿಸಿದ್ದೇನೆ.
PSA 142:3 ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ, ದೇವರೇ ನೀವು ನನ್ನ ದಾರಿಯನ್ನು ಕಾಯುತ್ತೀರಿ; ನಾನು ನಡೆಯುವ ದಾರಿಯಲ್ಲಿ ವೈರಿಗಳು ಗುಪ್ತವಾಗಿ ನನಗೆ ಉರುಲನ್ನು ಒಡ್ಡಿದ್ದಾರೆ.
PSA 142:4 ನೋಡಿರಿ ನನ್ನ ಬಲಗಡೆಯಲ್ಲಿ, ನನ್ನ ಪರವಾಗಿ ಯಾರೂ ಇಲ್ಲ; ಆಶ್ರಯವು ನನಗೆ ಇಲ್ಲ; ನನಗಾಗಿ ಚಿಂತಿಸುವವರು ಯಾರೂ ಇಲ್ಲ.
PSA 142:5 ಯೆಹೋವ ದೇವರೇ, ನಿಮಗೆ ಹೀಗೆಂದು ಮೊರೆಯಿಡುತ್ತೇನೆ: “ನೀವು ನನ್ನ ಆಶ್ರಯವೂ, ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀರಿ.”
PSA 142:6 ನನ್ನ ಕೂಗನ್ನು ಆಲೈಸಿರಿ, ಏಕೆಂದರೆ ನಾನು ಬಹಳ ಕುಂದಿಹೋಗಿದ್ದೇನೆ; ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸಿರಿ, ಏಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ.
PSA 142:7 ನಿಮ್ಮ ಹೆಸರನ್ನು ಕೊಂಡಾಡುವ ಹಾಗೆ ನನ್ನ ಸೆರೆಯಿಂದ ನನ್ನನ್ನು ಬಿಡಿಸಿರಿ; ಆಗ ನೀವು ನನಗೆ ಮಾಡಿದ ಉಪಕಾರವನ್ನು ಕಂಡು ನೀತಿವಂತರು ನನ್ನ ಹತ್ತಿರ ಸೇರಿಬರುವರು.
PSA 143:1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ವಿಜ್ಞಾಪನೆಗಳಿಗೆ ಕಿವಿಗೊಡಿರಿ; ನಿಮ್ಮ ನಂಬಿಗಸ್ತಿಕೆಯಲ್ಲಿಯೂ, ನಿಮ್ಮ ನೀತಿಯಲ್ಲಿಯೂ ನನಗೆ ಉತ್ತರಕೊಡಿರಿ.
PSA 143:2 ನಿಮ್ಮ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡಿರಿ, ಏಕೆಂದರೆ ಜೀವಿಸುವರಲ್ಲಿ ಒಬ್ಬರೂ ನಿಮ್ಮ ಮುಂದೆ ನೀತಿವಂತರಲ್ಲ.
PSA 143:3 ಏಕೆಂದರೆ ಶತ್ರುವು ನನ್ನನ್ನು ಬೆನ್ನಟ್ಟಿ, ನಾನು ನೆಲಕಚ್ಚುವಂತೆ ಮಾಡಿದ್ದಾನೆ. ಬಹುಕಾಲದ ಹಿಂದೆ ಸತ್ತವರ ಹಾಗೆ ನನ್ನನ್ನು ಕತ್ತಲೆಯಲ್ಲಿ ವಾಸಿಸುವಂತೆ ಮಾಡಿದ್ದಾನೆ.
PSA 143:4 ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
PSA 143:5 ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿಮ್ಮ ಕೈಕೆಲಸವನ್ನು ಆಲೋಚಿಸುತ್ತೇನೆ.
PSA 143:6 ನನ್ನ ಕೈಗಳನ್ನು ನಿಮ್ಮ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿಮಗಾಗಿ ದಾಹಗೊಂಡಿದೆ.
PSA 143:7 ಯೆಹೋವ ದೇವರೇ, ನನಗೆ ಬೇಗನೆ ಉತ್ತರಕೊಡಿರಿ; ನನ್ನ ಪ್ರಾಣವು ಕುಂದಿಹೋಗಿದೆ; ನಿಮ್ಮ ಮುಖವನ್ನು ನನಗೆ ಮರೆಮಾಡಬೇಡ; ಇಲ್ಲವಾದರೆ ಸಮಾಧಿಯಲ್ಲಿ ಇಳಿಯುವವರಿಗೆ ಸಮಾನನಾಗಿಬಿಡುತ್ತೇನೆ.
PSA 143:8 ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ವಾಕ್ಯವನ್ನು ತರಲಿ; ಏಕೆಂದರೆ ನಿಮ್ಮಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸಿರಿ, ಏಕೆಂದರೆ ನನ್ನ ಪ್ರಾಣವನ್ನು ನಿಮಗೇ ಒಪ್ಪಿಸಿದ್ದೇನೆ.
PSA 143:9 ಯೆಹೋವ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ; ನಾನು ನಿಮ್ಮಲ್ಲಿ ಅಡಗಿಕೊಳ್ಳುವಂತೆ ನಿಮ್ಮ ಬಳಿಗೆ ಬಂದಿದ್ದೇನೆ.
PSA 143:10 ನಿಮ್ಮ ಚಿತ್ತದಂತೆ ಮಾಡುವುದಕ್ಕೆ ನನಗೆ ಬೋಧಿಸಿರಿ, ಏಕೆಂದರೆ ನೀವು ನನ್ನ ದೇವರು; ನಿಮ್ಮ ಒಳ್ಳೆಯ ಆತ್ಮವು ನನ್ನನ್ನು ಸಮಹಾದಿಯಲ್ಲಿ ನಡೆಸಲಿ.
PSA 143:11 ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ, ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ.
PSA 143:12 ನಿಮ್ಮ ಒಂಡಬಡಿಕೆಯ ಪ್ರೀತಿಯಿಂದ ನನ್ನ ಶತ್ರುಗಳನ್ನು ಸುಮ್ಮನಿರಿಸುವೆನು, ನನ್ನ ವೈರಿಗಳೆಲ್ಲರೂ ನಾಶವಾಗಲಿ, ನಾನು ನಿಮ್ಮ ಸೇವಕನಾಗಿದ್ದೇನೆ.
PSA 144:1 ದಾವೀದನ ಕೀರ್ತನೆ. ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ. ದೇವರು ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ.
PSA 144:2 ಅವರು ನನ್ನನ್ನು ಪ್ರೀತಿಸುವ ದೇವರು, ಅವರು ನನ್ನ ಕೋಟೆಯೂ, ನನ್ನ ಬಲವಾದ ಆಶ್ರಯವೂ, ನನ್ನನ್ನು ತಪ್ಪಿಸುವವರೂ, ನನ್ನ ಭರವಸೆಯೂ, ನನ್ನ ಗುರಾಣಿಯೂ, ಜನಾಂಗಗಳನ್ನು ನನಗೆ ವಶಮಾಡುವವರೂ ಆಗಿದ್ದಾರೆ.
PSA 144:3 ಯೆಹೋವ ದೇವರೇ, ನೀವು ಮಾನವನನ್ನು ಲಕ್ಷವಿಡುವ ಹಾಗೆ ಅವನು ಎಷ್ಟರವನು? ನೀವು ಅವನನ್ನು ನೆನಸುವ ಹಾಗೆ ಮಾನವನು ಎಷ್ಟರವನು?
PSA 144:4 ಮನುಷ್ಯನು ಕೇವಲ ಉಸಿರಿನಂತಿದ್ದಾನೆ; ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ.
PSA 144:5 ಯೆಹೋವ ದೇವರೇ, ನಿಮ್ಮ ಆಕಾಶಗಳನ್ನು ಒಡೆದು ಇಳಿದು ಬನ್ನಿರಿ; ಬೆಟ್ಟಗಳನ್ನು ಮುಟ್ಟಿರಿ, ಆಗ ಅವುಗಳಿಂದ ಹೊಗೆ ಹೊರಹೊಮ್ಮುವುದು.
PSA 144:6 ಮಿಂಚಿನಿಂದ ವೈರಿಗಳನ್ನು ಚದರಿಸಿರಿ. ನಿಮ್ಮ ಬಾಣಗಳನ್ನು ಎಸೆದು, ಅವರನ್ನು ದಂಡಿಸಿರಿ.
PSA 144:7 ನಿಮ್ಮ ಕೈಯನ್ನು ಉನ್ನತದಿಂದ ಚಾಚಿ, ಮಹಾ ಜಲದಿಂದಲೂ, ಪರದೇಶದವರ ಕೈಯಿಂದಲೂ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ.
PSA 144:8 ಅವರ ಬಾಯಿ ಸುಳ್ಳನ್ನು ನುಡಿಯುತ್ತಿದೆ, ಅವರ ಬಲಗೈ ಮೋಸದ ಬಲಗೈ ಆಗಿದೆ.
PSA 144:9 ಓ ದೇವರೇ, ನಾನು ಹೊಸಹಾಡನ್ನು ನಿಮಗೆ ಹಾಡುವೆನು; ಹತ್ತು ತಂತಿಗಳ ವಾದ್ಯದಿಂದ ನಿಮ್ಮನ್ನು ಕೀರ್ತಿಸುವೆನು.
PSA 144:10 ಅರಸರಿಗೆ ಜಯವನ್ನು ಕೊಡುವ ದೇವರೇ, ನಿಮ್ಮ ಸೇವಕನಾದ ದಾವೀದನನ್ನೂ ಭಯಂಕರ ಖಡ್ಗದಿಂದ ಬಿಡಿಸಿದ್ದೀರಿ.
PSA 144:11 ಪರದೇಶದವರ ಕೈಯಿಂದ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ; ಅವರ ಬಾಯಿ ವಂಚನೆಯನ್ನು ನುಡಿಯುತ್ತಿದೆ. ಅವರ ಬಾಯಿ ಸುಳ್ಳನ್ನೇ ನುಡಿಯುತ್ತಿದೆ.
PSA 144:12 ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ಯೌವನದಲ್ಲಿ ಉತ್ತಮವಾಗಿ ಬೆಳೆದವರಾಗಿರಲಿ; ನಮ್ಮ ಹೆಣ್ಣುಮಕ್ಕಳು ಅರಮನೆಯ ಶೃಂಗಾರಕ್ಕಾಗಿ ಕೆತ್ತಿದ ಸುಂದರ ಸ್ತಂಭಗಳ ಹಾಗಿರಲಿ.
PSA 144:13 ನಮ್ಮ ಉಗ್ರಾಣಗಳು ನಾನಾ ವಿಧವಾದ ಧಾನ್ಯಗಳನ್ನು ತುಂಬಿರಲಿ. ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಹೊಲಗಳಲ್ಲಿ ಹತ್ತು ಸಹಸ್ರವಾಗಿ ಹೆಚ್ಚಲಿ.
PSA 144:14 ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ; ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ. ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.
PSA 144:15 ಹೀಗಿರುವ ಜನರು ಧನ್ಯರು; ಯೆಹೋವ ದೇವರು ಯಾರಿಗೆ ದೇವರಾಗಿದ್ದಾರೋ, ಅವರು ಧನ್ಯರು.
PSA 145:1 ದಾವೀದನ ಕೀರ್ತನೆ. ಅರಸರಾಗಿರುವ ನನ್ನ ದೇವರೇ, ನಿಮ್ಮನ್ನು ಘನಪಡಿಸುವೆನು; ನಿಮ್ಮ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
PSA 145:2 ಪ್ರತಿದಿನ ನಿಮ್ಮನ್ನು ಸ್ತುತಿಸುವೆನು; ಎಂದೆಂದಿಗೂ ಸ್ತುತಿಸುವೆನು.
PSA 145:3 ಯೆಹೋವ ದೇವರು ಮಹೋನ್ನತರೂ, ಬಹುಸ್ತುತಿಪಾತ್ರರೂ ಆಗಿದ್ದಾರೆ. ಅವರ ಮಹತ್ವವು ಅಗಮ್ಯವಾದದ್ದು.
PSA 145:4 ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ; ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.
PSA 145:5 ನಿಮ್ಮ ಘನತೆಯ ಪ್ರಭಾವದ ಮಹಿಮೆಗಳ ವಿಷಯವಾಗಿಯೂ ನಿಮ್ಮ ಅದ್ಭುತಕಾರ್ಯಗಳ ವಿಷಯವಾಗಿಯೂ ನಾನು ಧ್ಯಾನಿಸುತ್ತಿರುವೆನು,
PSA 145:6 ನಿಮ್ಮ ಅತಿಶಯ ಶಕ್ತಿಯ ವಿಷಯವಾಗಿ ಅವರು ಹೇಳುವರು; ನಿಮ್ಮ ಮಹಾಕಾರ್ಯವನ್ನು ನಾನು ಸಾರುವೆನು.
PSA 145:7 ನಿಮ್ಮ ಬಹು ಒಳ್ಳೆಯತನದ ಜ್ಞಾಪಕವನ್ನು ಅವರು ನುಡಿಯುವರು; ನಿಮ್ಮ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
PSA 145:8 ಯೆಹೋವ ದೇವರು ಕೃಪಾಳುವೂ, ಅನುಕಂಪವೂ, ದೀರ್ಘಶಾಂತಿಯೂ, ಪ್ರೀತಿ ಪೂರ್ಣರೂ ಆಗಿದ್ದಾರೆ.
PSA 145:9 ಯೆಹೋವ ದೇವರು ಸರ್ವರಿಗೂ ಒಳ್ಳೆಯವರು. ಅವರ ಅನುಕಂಪವು ತಮ್ಮ ಎಲ್ಲಾ ಸೃಷ್ಟಿಗಳ ಮೇಲೆ ಇದೆ.
PSA 145:10 ಯೆಹೋವ ದೇವರೇ, ನಿಮ್ಮ ನಂಬಿಗಸ್ತರು ನಿಮ್ಮನ್ನು ಸ್ತುತಿಸುವರು.
PSA 145:11 ನಿಮ್ಮ ರಾಜ್ಯದ ಮಹಿಮೆಯನ್ನು ಹೇಳುವರು; ನಿಮ್ಮ ಪರಾಕ್ರಮವನ್ನು ನುಡಿಯುವರು.
PSA 145:12 ಮಾನವರಿಗೆ ನಿಮ್ಮ ಪರಾಕ್ರಮ ಕ್ರಿಯೆಗಳನ್ನೂ, ನಿಮ್ಮ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು.
PSA 145:13 ನಿಮ್ಮ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿಮ್ಮ ಅಧಿಪತ್ಯವು ಎಲ್ಲಾ ತಲತಲಾಂತರಗಳಲ್ಲಿ ಇರುವುದು. ಯೆಹೋವ ದೇವರು ತಮ್ಮ ಎಲ್ಲಾ ಪ್ರತಿಜ್ಞೆಗಳಲ್ಲಿ ನಂಬಿಗಸ್ತರಾಗಿರುತ್ತಾರೆ. ಎಲ್ಲಾ ಕಾರ್ಯಗಳಲ್ಲಿಯೂ ಅವರ ಅನುಗ್ರಹ ಉಳಿದಿದೆ.
PSA 145:14 ಯೆಹೋವ ದೇವರು ಬೀಳುವವರೆಲ್ಲರನ್ನು ಉದ್ಧಾರ ಮಾಡುತ್ತಾರೆ. ತಗ್ಗಿಸಿಕೊಳ್ಳುವವರೆಲ್ಲರನ್ನು ಎತ್ತುತ್ತಾರೆ.
PSA 145:15 ದೇವರೇ, ಎಲ್ಲರ ಕಣ್ಣುಗಳು ನಿಮಗಾಗಿ ಕಾಯುತ್ತಿರುತ್ತವೆ. ನೀವು ಅವರಿಗೆ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀರಿ.
PSA 145:16 ನಿಮ್ಮ ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ಪೂರೈಸುತ್ತೀರಿ.
PSA 145:17 ಯೆಹೋವ ದೇವರು ತಮ್ಮ ಎಲ್ಲಾ ಮಾರ್ಗಗಳಲ್ಲಿ ನೀತಿವಂತರೂ ತಮ್ಮ ಸೃಷ್ಟಿಗೆಲ್ಲಾ ಪ್ರೀತಿ ತೋರಿಸುವವರೂ ಆಗಿದ್ದಾರೆ.
PSA 145:18 ಯೆಹೋವ ದೇವರನ್ನು ಕರೆಯುವವರು ಯಥಾರ್ಥವಾಗಿ ಕರೆಯುವುದಾದರೆ, ಅವರು ಅವರಿಗೆ ಸಮೀಪವಾಗಿದ್ದಾರೆ.
PSA 145:19 ತಮಗೆ ಭಯಪಡುವವರ ಇಷ್ಟವನ್ನು ನೆರವೇರಿಸುತ್ತಾರೆ. ಅವರ ಮೊರೆಯನ್ನು ಕೇಳಿ, ಅವರನ್ನು ರಕ್ಷಿಸುತ್ತಾರೆ.
PSA 145:20 ಯೆಹೋವ ದೇವರು, ತಮ್ಮನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾರೆ. ಆದರೆ ದುಷ್ಟರೆಲ್ಲರನ್ನು ದಂಡಿಸುತ್ತಾರೆ.
PSA 145:21 ನನ್ನ ಬಾಯಿ ಯೆಹೋವ ದೇವರ ಸ್ತೋತ್ರವನ್ನು ನುಡಿಯಲಿ; ಸಮಸ್ತ ಜೀವಿಗಳು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.
PSA 146:1 ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಯೆಹೋವ ದೇವರನ್ನು ಸ್ತುತಿಸು.
PSA 146:2 ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.
PSA 146:3 ಅಧಿಪತಿಗಳಲ್ಲಿಯೂ ರಕ್ಷಿಸಲಾಗದ ಮಾನವರಲ್ಲಿಯೂ ಭರವಸವಿಡಬೇಡಿರಿ.
PSA 146:4 ಅವರ ಶ್ವಾಸವು ಹೋಗಲು ಮಣ್ಣಿಗೆ ಸೇರುತ್ತಾರೆ, ಅದೇ ದಿವಸದಲ್ಲಿ ಅವರ ಆಲೋಚನೆಗಳೆಲ್ಲಾ ನಾಶವಾಗುತ್ತವೆ.
PSA 146:5 ಯಾಕೋಬನ ದೇವರನ್ನು ತಮ್ಮ ಸಹಾಯಕರಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಯೆಹೋವ ದೇವರ ಮೇಲೆ ನಿರೀಕ್ಷೆ ಇಡುವನು.
PSA 146:6 ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದ ದೇವರೇ ಎಂದೆಂದಿಗೂ ನಂಬಿಗಸ್ತರು.
PSA 146:7 ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ, ಹಸಿದವರಿಗೆ ಆಹಾರವನ್ನು ಕೊಡುತ್ತಾರೆ. ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ.
PSA 146:8 ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ. ಅವರು ದೀನರನ್ನು ಎತ್ತುತ್ತಾರೆ. ನೀತಿವಂತರನ್ನು ಪ್ರೀತಿಸುತ್ತಾರೆ.
PSA 146:9 ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ. ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ. ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ.
PSA 146:10 ಚೀಯೋನೇ, ನಿಮ್ಮ ದೇವರಾದ ಯೆಹೋವ ದೇವರು ತಲತಲಾಂತರಕ್ಕೂ, ಸರ್ವ ಸಂತತಿಗಳವರೆಗೂ ಆಳಿಕೆ ಮಾಡುತ್ತಾರೆ. ಯೆಹೋವ ದೇವರಿಗೆ ಸ್ತೋತ್ರ.
PSA 147:1 ಯೆಹೋವ ದೇವರನ್ನು ಸ್ತುತಿಸಿರಿ. ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು; ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.
PSA 147:2 ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ, ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.
PSA 147:3 ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ, ಅವರ ಗಾಯಗಳನ್ನು ಕಟ್ಟುತ್ತಾರೆ.
PSA 147:4 ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.
PSA 147:5 ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು; ಅವರ ವಿವೇಕಕ್ಕೆ ಎಣೆಯಿಲ್ಲ.
PSA 147:6 ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ; ದುಷ್ಟರನ್ನು ದಂಡಿಸುತ್ತಾರೆ.
PSA 147:7 ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ, ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.
PSA 147:8 ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ; ಭೂಮಿಗೆ ಮಳೆಯನ್ನು ಸುರಿಸುತ್ತಾರೆ; ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.
PSA 147:9 ದೇವರು ಪಶುಗಳಿಗೂ, ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.
PSA 147:10 ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ; ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.
PSA 147:11 ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ, ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.
PSA 147:12 ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು; ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.
PSA 147:13 ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ, ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.
PSA 147:14 ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ; ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.
PSA 147:15 ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ; ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.
PSA 147:16 ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.
PSA 147:17 ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ; ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?
PSA 147:18 ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ; ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.
PSA 147:19 ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ, ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.
PSA 147:20 ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ; ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ. ಯೆಹೋವ ದೇವರನ್ನು ಸ್ತುತಿಸಿರಿ.
PSA 148:1 ಯೆಹೋವ ದೇವರನ್ನು ಸ್ತುತಿಸಿರಿ. ಆಕಾಶ ಮಂಡಲದಿಂದ ಯೆಹೋವ ದೇವರಿಗೆ ಸ್ತುತಿ ಸಲ್ಲಲಿ! ಮಹೋನ್ನತದ ದೇವರನ್ನು ಸ್ತುತಿಸಿರಿ.
PSA 148:2 ದೇವರ ದೂತರುಗಳೇ, ದೇವರನ್ನು ಸ್ತುತಿಸಿರಿ; ದೇವರ ಪರಲೋಕದ ಎಲ್ಲಾ ಸೈನ್ಯಗಳೇ, ದೇವರನ್ನು ಸ್ತುತಿಸಿರಿ.
PSA 148:3 ಸೂರ್ಯ, ಚಂದ್ರರೇ, ದೇವರನ್ನು ಸ್ತುತಿಸಿರಿ; ಬೆಳಕುಳ್ಳ ಎಲ್ಲಾ ನಕ್ಷತ್ರಗಳೇ, ದೇವರನ್ನು ಸ್ತುತಿಸಿರಿ.
PSA 148:4 ಉನ್ನತ ಆಕಾಶಗಳೇ, ಆಕಾಶಗಳ ಮೇಲೆ ಇರುವ ಜಲಸಮೂಹವೇ, ದೇವರನ್ನು ಸ್ತುತಿಸಿರಿ.
PSA 148:5 ಯೆಹೋವ ದೇವರ ಹೆಸರನ್ನು ಅವು ಸ್ತುತಿಸಲಿ, ಏಕೆಂದರೆ ದೇವರು ಆಜ್ಞಾಪಿಸಲು, ಅವು ನಿರ್ಮಿಸಲಾದವು.
PSA 148:6 ಅವುಗಳನ್ನು ಯುಗ ಯುಗಗಳಿಗೂ ಸ್ಥಾಪಿಸಿದ್ದಾರೆ; ದೇವರು ತೀರ್ಪನ್ನು ಕೊಟ್ಟಿದ್ದಾರೆ, ಅದು ಮೀರಿ ಹೋಗುವುದಿಲ್ಲ.
PSA 148:7 ಭೂಮಿಯಿಂದ ಯೆಹೋವ ದೇವರನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,
PSA 148:8 ಮಿಂಚೇ, ಕಲ್ಮಳೆಯೇ, ಹಿಮವೇ, ಹಬೆಯೇ, ದೇವರ ಮಾತನ್ನು ಕೇಳುವ ಬಿರುಗಾಳಿಯೇ,
PSA 148:9 ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
PSA 148:10 ಕಾಡುಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ, ಹಾರುವ ಪಕ್ಷಿಗಳೇ,
PSA 148:11 ಭೂರಾಜರೇ, ಎಲ್ಲಾ ಪ್ರಜೆಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೇ,
PSA 148:12 ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ವೃದ್ಧರೇ.
PSA 148:13 ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಅವರ ಹೆಸರು ಮಾತ್ರ ಶ್ರೇಷ್ಠವಾಗಿದೆ; ಅವರ ಮಹಿಮೆಯು ಭೂಮ್ಯಾಕಾಶಗಳನ್ನು ಆವರಿಸಿದೆ.
PSA 148:14 ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ. ದೇವರ ಇಸ್ರಾಯೇಲರೆಲ್ಲರೂ, ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ. ಯೆಹೋವ ದೇವರನ್ನು ಸ್ತುತಿಸಿರಿ.
PSA 149:1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ, ಭಕ್ತರ ಸಭೆಯಲ್ಲಿ ದೇವರ ಸ್ತೋತ್ರವನ್ನೂ ಹಾಡಿರಿ.
PSA 149:2 ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ; ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ.
PSA 149:3 ದೇವರ ಹೆಸರನ್ನು ನರ್ತಿಸುತ್ತಾ ಸ್ತುತಿಸಲಿ; ದಮ್ಮಡಿಯಿಂದಲೂ ಕಿನ್ನರಿಯಿಂದಲೂ ದೇವರನ್ನು ಕೀರ್ತಿಸಲಿ.
PSA 149:4 ಏಕೆಂದರೆ ಯೆಹೋವ ದೇವರು ತಮ್ಮ ಜನರಲ್ಲಿ ಹರ್ಷಿಸುತ್ತಾರೆ. ದೀನರನ್ನು ಜಯದ ಕಿರೀಟದಿಂದ ಅಲಂಕರಿಸುತ್ತಾರೆ.
PSA 149:5 ಇಂಥಾ ಸನ್ಮಾನದಲ್ಲಿ ನಂಬಿಗಸ್ತರು ಸಂತೋಷಪಡಲಿ ಹಾಸಿಗೆಯಲ್ಲಿರುವಾಗಲೂ ಆನಂದಗಾನ ಹಾಡಲಿ.
PSA 149:6 ಉನ್ನತ ದೇವರ ಸ್ತೋತ್ರವು ಅವರ ಬಾಯಿಯಲ್ಲಿ ಇರಲಿ. ಇಬ್ಬಾಯಿ ಖಡ್ಗ ಅವರ ಕೈಯಲ್ಲಿಯೂ ಇರಲಿ.
PSA 149:7 ಜನಾಂಗಗಳಲ್ಲಿ ನ್ಯಾಯ ಪ್ರತೀಕಾರವಾಗಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ.
PSA 149:8 ಅಪರಾಧದ ಅರಸರನ್ನು ಸಂಕೋಲೆಗಳಿಂದಲೂ, ಪ್ರಮುಖರನ್ನು ಕಬ್ಬಿಣದ ಬೇಡಿಗಳಿಂದಲೂ ಬಂಧಿಸಲಿ.
PSA 149:9 ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ, ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.
PSA 150:1 ಯೆಹೋವ ದೇವರಿಗೆ ಸ್ತೋತ್ರ! ದೇವರನ್ನು ಅವರ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ; ದೇವರ ಶಕ್ತಿದಾಯಕ ಆಕಾಶಮಂಡಲದಲ್ಲಿ ಅವರನ್ನು ಸ್ತುತಿಸಿರಿ.
PSA 150:2 ದೇವರ ಮಹತ್ಕಾರ್ಯಗಳಿಗಾಗಿ ಅವರನ್ನು ಸ್ತುತಿಸಿರಿ; ದೇವರ ಮಹಾಪ್ರಭಾವಗಳಿಗಾಗಿ ಅವರನ್ನು ಸ್ತುತಿಸಿರಿ.
PSA 150:3 ತುತೂರಿಯ ಶಬ್ದದಿಂದ ದೇವರನ್ನು ಸ್ತುತಿಸಿರಿ, ಕಿನ್ನರಿಯಿಂದಲೂ, ವೀಣೆಯಿಂದಲೂ, ಅವರನ್ನು ಸ್ತುತಿಸಿರಿ.
PSA 150:4 ದಮ್ಮಡಿಯಿಂದಲೂ, ನಾಟ್ಯದಿಂದಲೂ ದೇವರನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಅವರನ್ನು ಸ್ತುತಿಸಿರಿ.
PSA 150:5 ತಾಳಗಳಿಂದ ದೇವರನ್ನು ಸ್ತುತಿಸಿರಿ; ಪ್ರತಿಧ್ವನಿಸುವ ಝಲ್ಲರಿಗಳಿಂದಲೂ ಅವರನ್ನು ಸ್ತುತಿಸಿರಿ.
PSA 150:6 ಶ್ವಾಸವುಳ್ಳದ್ದೆಲ್ಲಾ ಯೆಹೋವ ದೇವರನ್ನು ಸ್ತುತಿಸಲಿ. ಯೆಹೋವ ದೇವರಿಗೆ ಸ್ತೋತ್ರ!
PRO 1:1 ಇಸ್ರಾಯೇಲರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಜ್ಞಾನೋಕ್ತಿಗಳು:
PRO 1:2 ಜನರು ಜ್ಞಾನವನ್ನೂ ಶಿಸ್ತನ್ನೂ ಪಡೆದುಕೊಳ್ಳುವುದಕ್ಕೆ; ವಿವೇಕದ ಮಾತುಗಳನ್ನು ಗ್ರಹಿಸುವುದಕ್ಕೆ;
PRO 1:3 ಅಂದರೆ, ಶಿಕ್ಷಣ, ವಿವೇಕ ನಡವಳಿ, ಸರಿಯಾದದ್ದನ್ನು ಮಾಡುವುದು ನ್ಯಾಯ ಮತ್ತು ಯುಕ್ತವಾದವುಗಳನ್ನು ನಡೆಸುವ ಜ್ಞಾನೋಕ್ತಿಗಳು;
PRO 1:4 ಮುಗ್ಧರಿಗೆ ವಿವೇಕವನ್ನೂ ಯೌವನಸ್ಥರಿಗೆ ತಿಳುವಳಿಕೆ ಹಾಗೂ ಸ್ವವಿವೇಚನೆಯನ್ನೂ ಕೊಡುವುದಕ್ಕಾಗಿ ಈ ಜ್ಞಾನೋಕ್ತಿಗಳಿವೆ.
PRO 1:5 ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ; ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
PRO 1:6 ಜ್ಞಾನೋಕ್ತಿಗಳನ್ನು, ಸಾಮ್ಯಗಳನ್ನು, ಜ್ಞಾನಿಗಳ ಮಾತು ಹಾಗೂ ಒಗಟುಗಳನ್ನು ಅರ್ಥಮಾಡಿಕೊಳ್ಳಲು ಇವು ಬರೆಯಲಾಗಿವೆ.
PRO 1:7 ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ. ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ.
PRO 1:8 ಮಗನೇ, ನಿನ್ನ ತಂದೆಯ ಶಿಕ್ಷಣಗಳನ್ನು ಕೇಳು, ನಿನ್ನ ತಾಯಿಯ ಉಪದೇಶವನ್ನು ತೊರೆಯಬೇಡ.
PRO 1:9 ಅವು ನಿನ್ನ ತಲೆಗೆ ಸುಂದರ ಕಿರೀಟ ನಿನ್ನ ಕೊರಳನ್ನು ಅಲಂಕರಿಸುವ ಹಾರ.
PRO 1:10 ಮಗನೇ, ಪಾಪಿಗಳು ನಿನ್ನನ್ನು ಸೆಳೆದರೆ ನೀನು ಒಪ್ಪಬೇಡ.
PRO 1:11 ಒಂದು ವೇಳೆ ಅವರು ನಿನಗೆ, “ನಮ್ಮೊಂದಿಗೆ ಬಾ, ಜನರ ರಕ್ತಕ್ಕಾಗಿ ಒಳಸಂಚು ಮಾಡೋಣ, ನಿರಪರಾಧಿಯ ರಕ್ತಕ್ಕಾಗಿ;
PRO 1:12 ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ.
PRO 1:13 ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;
PRO 1:14 ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಾವೆಲ್ಲರೂ ಹಣಹಂಚಿಕೊಳ್ಳೋಣ,” ಎಂದು ಹೇಳುವುದಾದರೆ.
PRO 1:15 ಮಗನೇ, ಅವರೊಂದಿಗೆ ಸೇರಬೇಡ, ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
PRO 1:16 ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತಸುರಿಸುವುದಕ್ಕೆ ಆತುರಪಡುತ್ತವೆ.
PRO 1:17 ಪಕ್ಷಿಗಳ ಕಣ್ಣೆದುರಿಗೆ ಕಾಣುವಂತೆ ಬಲೆಯನ್ನು ಹರಡುವುದು ವ್ಯರ್ಥವಲ್ಲವೇ!
PRO 1:18 ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ. ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.
PRO 1:19 ಅಕ್ರಮ ಲಾಭದ ಬೆನ್ನಟ್ಟಿ ಹೋಗುವವರೆಲ್ಲರ ಗತಿ ಇದೇ. ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.
PRO 1:20 ಜ್ಞಾನವೆಂಬಾಕೆಯು ಬೀದಿಯಲ್ಲಿ ಕೂಗುತ್ತಾಳೆ, ಬಹಿರಂಗ ಸ್ಥಳಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
PRO 1:21 ಜನಭರಿತ ಬೀದಿಗಳಲ್ಲಿ ಆಕೆ ಕರೆಯುತ್ತಾಳೆ, ಪಟ್ಟಣದ ಹೆಬ್ಬಾಗಿಲುಗಳಲ್ಲಿ ಹೀಗೆಂದು ಭಾಷಣ ಮಾಡುತ್ತಾಳೆ:
PRO 1:22 “ಮುಗ್ಧರೇ ನೀವು ಎಷ್ಟು ಕಾಲ ಮುಗ್ಧತೆಯನ್ನು ಪ್ರೀತಿಸುವಿರಿ. ಕುಚೋದ್ಯಗಾರರೇ ಎಷ್ಟು ಕಾಲ ಕುಚೋದ್ಯಗಾರರಾಗಿರಲು ಇಚ್ಛಿಸುವಿರಿ? ಜ್ಞಾನಹೀನರೇ, ಎಷ್ಟು ಕಾಲ ಪರಿಜ್ಞಾನವನ್ನು ಹಗೆ ಮಾಡುವಿರಿ?
PRO 1:23 ನನ್ನ ಗದರಿಕೆ ಕೇಳಿ ನೀವು ಪಶ್ಚಾತ್ತಾಪಪಡಿರಿ! ಆಗ ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನಿಮಗೆ ನನ್ನ ಬೋಧನೆಗಳನ್ನು ಪ್ರಕಟಿಸುವೆನು.
PRO 1:24 ನಾನು ಕರೆದಾಗ ನೀವು ನನ್ನನ್ನು ತಿರಸ್ಕರಿಸಿದ್ದೀರಿ ನಾನು ನನ್ನ ಕೈಚಾಚಿದಾಗ ಯಾರೂ ಮನುಷ್ಯನೂ ಗಮನಿಸಲಿಲ್ಲ.
PRO 1:25 ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ; ನನ್ನ ಗದರಿಕೆಯನ್ನು ನೀವು ಬೇಡವೆಂದು ತಳ್ಳಿಬಿಟ್ಟಿದ್ದರಿಂದ
PRO 1:26 ಬಿರುಗಾಳಿಯಂತೆ ನಿಮಗೆ ವಿಪತ್ತು ಬಂದಾಗ ನಾನು ನಗುವೆನು. ಆಪತ್ತು ನಿಮ್ಮನ್ನು ಹಿಂದಿಕ್ಕಿದಾಗ, ನಾನು ಪರಿಹಾಸ್ಯ ಮಾಡುವೆನು.
PRO 1:27 ಚಂಡಮಾರುತವು ನಿಮ್ಮನ್ನು ಬಿರುಗಾಳಿಯಂತೆ ತಾಕಿದಾಗ, ವಿಪತ್ತು ಸುಂಟರಗಾಳಿಯಂತೆ ನಿಮ್ಮ ಮೇಲೆ ಬೀಸಿದಾಗ, ಯಾತನೆ ಮತ್ತು ತೊಂದರೆ ನಿಮ್ಮನ್ನು ಆವರಿಸಿದಾಗಲೂ ಪರಿಹಾಸ್ಯಕ್ಕೆ ಒಳಗಾಗುವಿರಿ.
PRO 1:28 “ಆಗ ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರ ಕೊಡೆನು. ಅವರು ನನ್ನನ್ನು ಆತುರದಿಂದ ಹುಡುಕುವರು, ಆದರೆ ಅವರು ನನ್ನನ್ನು ಕಂಡುಕೊಳ್ಳುವುದಿಲ್ಲ.
PRO 1:29 ಏಕೆಂದರೆ ಅವರು ಅರಿವನ್ನು ಹಗೆಮಾಡಿ, ಯೆಹೋವ ದೇವರಿಗೆ ಭಯಪಡುವುದನ್ನು ಆರಿಸಿಕೊಳ್ಳದೆ ಹೋದರು.
PRO 1:30 ನನ್ನ ಬುದ್ಧಿವಾದವನ್ನು ಸ್ವೀಕರಿಸದೆ, ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದರು.
PRO 1:31 ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ, ತಮ್ಮ ಸ್ವಂತ ಕುಯುಕ್ತಿಗಳಿಂದಲೇ ಹೊಟ್ಟೆ ತುಂಬಿಕೊಳ್ಳುವರು.
PRO 1:32 ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು. ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.
PRO 1:33 ನನಗೆ ಕಿವಿಗೊಡುವವರಾದರೋ ಸುರಕ್ಷಿತರಾಗಿ ಜೀವಿಸುವರು, ಕೇಡಿನ ಭಯವಿಲ್ಲದೇ ನೆಮ್ಮದಿಯಿಂದ ಇರುವರು.”
PRO 2:1 ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
PRO 2:2 ನೀನು ಜ್ಞಾನಕ್ಕೆ ಕಿವಿಗೊಟ್ಟು, ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
PRO 2:3 ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು, ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
PRO 2:4 ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
PRO 2:5 ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ; ದೇವರ ಅರಿವನ್ನು ಕಂಡುಕೊಳ್ಳುವೆ.
PRO 2:6 ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
PRO 2:7 ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.
PRO 2:8 ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ; ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.
PRO 2:9 ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ, ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.
PRO 2:10 ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ, ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.
PRO 2:11 ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು; ತಿಳುವಳಿಕೆಯು ನಿನ್ನನ್ನು ಕಾಪಾಡುವುದು.
PRO 2:12 ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.
PRO 2:13 ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.
PRO 2:14 ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.
PRO 2:15 ಅವರ ಮಾರ್ಗಗಳು ವಕ್ರವಾಗಿವೆ; ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.
PRO 2:16 ಜಾರಿಣಿಯಿಂದಲೂ ದಾರಿತಪ್ಪಿದ ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.
PRO 2:17 ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ, ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.
PRO 2:18 ಏಕೆಂದರೆ ಅವಳ ಮನೆ ಮರಣ ಮಾರ್ಗ. ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.
PRO 2:19 ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ; ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.
PRO 2:20 ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ ನೀತಿವಂತರ ದಾರಿಯನ್ನು ನೀನು ಹಿಡಿಯುವೆ.
PRO 2:21 ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.
PRO 2:22 ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.
PRO 3:1 ಮಗನೇ, ನನ್ನ ಉಪದೇಶವನ್ನು ಮರೆಯಬೇಡ; ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
PRO 3:2 ಏಕೆಂದರೆ ಅವು ನಿನ್ನ ದಿನಗಳನ್ನು ಹೆಚ್ಚಿಸಿ ದೀರ್ಘಾಯುಷ್ಯವನ್ನು ನೀಡುವುದು, ಸಮಾಧಾನವನ್ನೂ ಸಮೃದ್ಧಿಯನ್ನೂ ನಿನಗೆ ಕೊಡುವುದು.
PRO 3:3 ಪ್ರೀತಿ, ನಂಬಿಗಸ್ತಿಕೆಗಳು ನಿನ್ನನ್ನು ಬಿಡದಿರಲಿ; ಅವು ನಿನ್ನ ಕೊರಳಿನ ಸುತ್ತಲೂ ಕಟ್ಟಿರಲಿ, ನಿನ್ನ ಹೃದಯದ ಹಲಗೆಯ ಮೇಲೆ ಅವು ಬರೆದಿರಲಿ.
PRO 3:4 ಆಗ ದೇವರ ಮುಂದೆಯೂ ಮನುಷ್ಯರ ಮುಂದೆಯೂ ದಯೆಯನ್ನೂ, ಒಳ್ಳೆಯ ಹೆಸರನ್ನೂ ನೀನು ಪಡೆದುಕೊಳ್ಳುವೆ.
PRO 3:5 ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ.
PRO 3:6 ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.
PRO 3:7 ನಿನ್ನ ದೃಷ್ಟಿಯಲ್ಲಿ ನೀನೇ ಜ್ಞಾನಿ ಎಂದು ಇರಬೇಡ; ಯೆಹೋವ ದೇವರಿಗೆ ಭಯಪಟ್ಟು, ಕೆಟ್ಟದ್ದನ್ನು ತೊರೆದುಬಿಡು.
PRO 3:8 ನಿನ್ನ ದೇಹಕ್ಕೆ ಅದು ಆರೋಗ್ಯವನ್ನು ತರುವುದು; ನಿನ್ನ ಎಲುಬುಗಳಿಗೆ ಅದು ಪೋಷಣೆಯನ್ನೂ ತರುವುದು.
PRO 3:9 ನಿನ್ನ ಆಸ್ತಿಯಿಂದಲೂ ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.
PRO 3:10 ಆಗ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು; ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿರುವುದು.
PRO 3:11 ಮಗನೇ, ಯೆಹೋವ ದೇವರ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
PRO 3:12 ಏಕೆಂದರೆ ತಂದೆಯು ತನ್ನ ಮುದ್ದುಮಗನನ್ನು ಶಿಕ್ಷಿಸುವಂತೆ, ಯೆಹೋವ ದೇವರು ಯಾರನ್ನು ಪ್ರೀತಿಸುತ್ತಾರೋ, ಅವರನ್ನು ಶಿಸ್ತುಗೊಳಿಸುವರು.
PRO 3:13 ಜ್ಞಾನವನ್ನು ಕಂಡುಕೊಳ್ಳುವವನು ಧನ್ಯನು, ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
PRO 3:14 ಏಕೆಂದರೆ ಜ್ಞಾನವು ಬೆಳ್ಳಿಗಿಂತ ಹೆಚ್ಚು ಲಾಭವೂ; ಬಂಗಾರಕ್ಕಿಂತ ಹೆಚ್ಚು ಆದಾಯವನ್ನು ಕೊಡುವುದು.
PRO 3:15 ಜ್ಞಾನವು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯ; ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವುದಿಲ್ಲ.
PRO 3:16 ಜ್ಞಾನದ ಬಲಗೈಯಲ್ಲಿ ದೀರ್ಘಾಯುಷ್ಯವಿದೆ; ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ.
PRO 3:17 ಜ್ಞಾನದ ಮಾರ್ಗಗಳು ಸಂತೋಷಕರ; ಅದರ ದಾರಿಗಳೆಲ್ಲಾ ಶಾಂತಿಯ ದಾರಿಗಳೇ.
PRO 3:18 ಜ್ಞಾನವನ್ನು ಹಿಡಿದುಕೊಳ್ಳುವವರಿಗೆ ಜ್ಞಾನವು ಜೀವವೃಕ್ಷವಾಗಿದೆ; ಅದನ್ನು ಭದ್ರವಾಗಿ ಇಟ್ಟುಕೊಳ್ಳುವವರು ಧನ್ಯರು.
PRO 3:19 ಯೆಹೋವ ದೇವರು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದರು, ತಮ್ಮ ತಿಳುವಳಿಕೆಯ ಮೂಲಕ ಅವರು ಆಕಾಶಗಳನ್ನು ಸ್ಥಿರಪಡಿಸಿದರು.
PRO 3:20 ದೇವರು ತಮ್ಮ ಅರಿವಿನಿಂದಲೇ ಸೆಲೆಗಳು ಒಡೆದು, ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
PRO 3:21 ಮಗನೇ, ಜ್ಞಾನವನ್ನೂ ತಿಳುವಳಿಕೆಯನ್ನೂ ಕಾಪಾಡಿಕೋ, ನಿನ್ನ ಕಣ್ಣುಗಳಿಂದ ಅವು ತಪ್ಪಿಹೋಗದೆ ಇರಲಿ.
PRO 3:22 ಅವು ನಿನಗೆ ಜೀವವಾಗಿರಲಿ. ನಿನ್ನ ಕೊರಳಿಗೆ ಆಭರಣವೂ ಆಗಿರುವುವು.
PRO 3:23 ಆಗ ನಿನ್ನ ಮಾರ್ಗದಲ್ಲಿ ಸುರಕ್ಷಿತವಾಗಿರುವೆ; ನೀನು ಎಡವದೆ ನಡೆಯುವೆ.
PRO 3:24 ನೀನು ಮಲಗುವಾಗ ನಿನಗೆ ಹೆದರಿಕೆ ಇರುವುದಿಲ್ಲ; ನೀನು ಮಲಗಿದಾಗ ನಿದ್ರೆಯು ಸುಖವಾಗಿರುವುದು.
PRO 3:25 ಆಕಸ್ಮಿಕ ವಿಪತ್ತಿಗೆ ನೀನು ಅಂಜುವುದಿಲ್ಲ; ದುಷ್ಟರ ಮೇಲೆ ಬರುವ ನಾಶನಕ್ಕೂ ನೀನು ಭಯಪಡದಿರುವೆ.
PRO 3:26 ಏಕೆಂದರೆ ಯೆಹೋವ ದೇವರೇ ನಿನಗೆ ಭರವಸೆ ಆಗಿದ್ದಾರೆ, ನಿನ್ನ ಪಾದವು ಉರುಲಿಗೆ ಸಿಕ್ಕದಂತೆ ಅವರು ಕಾಪಾಡುವರು.
PRO 3:27 ನಿನಗೆ ಶಕ್ತಿಯಿರುವಾಗಲೇ ಇತರರಿಗೆ ಉಪಕಾರಮಾಡು ಒಳಿತು ಮಾಡುವುದನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಡ.
PRO 3:28 ಕೊಡತಕ್ಕದ್ದು ಈಗಾಗಲೇ ನಿನ್ನಲ್ಲಿರುವಾಗ, “ಹೋಗಿ ಬಾ, ನಾಳೆ ನಿನಗೆ ಕೊಡುತ್ತೇನೆ,” ಎಂದು ನಿನ್ನ ನೆರೆಯವನಿಗೆ ಹೇಳಬೇಡ.
PRO 3:29 ನಿನ್ನ ನೆರೆಯವನು ಭರವಸೆಯಿಂದ ನಿನ್ನ ಪಕ್ಕದಲ್ಲಿ ವಾಸಮಾಡುತ್ತಿರುವಾಗ, ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸಬೇಡ.
PRO 3:30 ಒಬ್ಬನು ನಿನಗೆ ಯಾವ ತೊಂದರೆ ಮಾಡದಿದ್ದರೆ, ಅವನೊಂದಿಗೆ ಕಾರಣವಿಲ್ಲದೆ ದೂರು ನುಡಿಯಬೇಡ.
PRO 3:31 ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೆಕಿಚ್ಚುಪಡಬೇಡ; ಅವನ ಮಾರ್ಗಗಳಲ್ಲಿ ಯಾವುದನ್ನೂ ನೀನು ಆರಿಸಿಕೊಳ್ಳಬೇಡ.
PRO 3:32 ಏಕೆಂದರೆ ವಕ್ರಬುದ್ಧಿ ಯೆಹೋವ ದೇವರಿಗೆ ಅಸಹ್ಯ; ಆದರೆ ದೇವರ ನಂಬಿಗಸ್ತಿಕೆ ನೀತಿವಂತರೊಂದಿಗೆ ಇದೆ.
PRO 3:33 ದುಷ್ಟರ ಮನೆಯ ಮೇಲೆ ದೈವಶಾಪವಿದೆ. ಆದರೆ ನೀತಿವಂತರ ನಿವಾಸದ ಮೇಲೆ ದೈವಾಶೀರ್ವಾದವಿರುವುದು.
PRO 3:34 ದೇವರು ಗರ್ವಿಷ್ಠ ಪರಿಹಾಸ್ಯಗಾರರನ್ನು ಪರಿಹಾಸ್ಯ ಮಾಡುತ್ತಾರೆ; ದೀನರಿಗಾದರೋ ದೇವರು ಕೃಪೆಯನ್ನು ಕೊಡುತ್ತಾರೆ.
PRO 3:35 ಜ್ಞಾನಿಗಳು ಸನ್ಮಾನಕ್ಕೆ ಬಾಧ್ಯನಾಗುವರು; ಆದರೆ ಜ್ಞಾನಹೀನರ ಪ್ರತಿಫಲವು ಅವಮಾನವೆ.
PRO 4:1 ಮಕ್ಕಳೇ, ತಂದೆಯ ಶಿಕ್ಷಣವನ್ನು ಕೇಳಿರಿ; ತಿಳುವಳಿಕೆಯನ್ನು ಗ್ರಹಿಸಲಿಕ್ಕೆ ಗಮನಕೊಡಿರಿ.
PRO 4:2 ಏಕೆಂದರೆ ನಾನು ನಿಮಗೆ ಸದುಪದೇಶವನ್ನು ಮಾಡುವೆನು, ನನ್ನ ಉಪದೇಶವನ್ನು ಬಿಟ್ಟುಬಿಡಬೇಡಿರಿ.
PRO 4:3 ನಾನೂ ಕೂಡ ನನ್ನ ತಂದೆಗೆ ನೆಚ್ಚಿನ ಮಗನೂ ನನ್ನ ತಾಯಿಗೆ ಮುದ್ದು ಮಗನೂ ಆಗಿದ್ದೆನು.
PRO 4:4 ನನ್ನ ತಂದೆ ನನಗೆ ಬೋಧಿಸಿ ಹೇಳಿದ್ದೇನೆಂದರೆ, “ನನ್ನ ಮಾತುಗಳನ್ನು ಮನಃಪೂರ್ವಕವಾಗಿ ಪಾಲಿಸು; ನನ್ನ ಆಜ್ಞೆಗಳನ್ನು ಕೈಗೊಳ್ಳು, ಆಗ ನೀನು ಬಾಳುವೆ.
PRO 4:5 ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು; ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.
PRO 4:6 ಜ್ಞಾನವನ್ನು ಬಿಟ್ಟುಬಿಡಬೇಡ, ಆಕೆ ನಿನ್ನನ್ನು ಕಾಪಾಡುವಳು; ಆಕೆಯನ್ನು ಪ್ರೀತಿಸು, ಆಕೆ ನಿನ್ನನ್ನು ಕಾಯುವಳು.
PRO 4:7 ಜ್ಞಾನವೇ ಮುಖ್ಯವಾದದ್ದು, ಆದ್ದರಿಂದ ಜ್ಞಾನವನ್ನು ಸಂಪಾದಿಸು; ನಿನ್ನಲ್ಲಿರುವ ಎಲ್ಲಾ ಸಂಪತ್ತನ್ನು ವ್ಯಯಮಾಡಿದರೂ ತಿಳುವಳಿಕೆಯನ್ನು ಪಡೆದುಕೋ.
PRO 4:8 ಜ್ಞಾನವನ್ನು ನೀನು ಅಮೂಲ್ಯವೆಂದು ಎಣಿಸು, ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿಕೊ, ಆಕೆಯು ನಿನ್ನನ್ನು ಘನಪಡಿಸುವಳು.
PRO 4:9 ಆಕೆಯನ್ನು ನಿನ್ನ ತಲೆಗೆ ಮಹಿಮೆಯ ಕಿರೀಟವಾಗಿರುವಳು; ಆಕೆಯನ್ನು ನಿನಗೆ ಘನತೆಯ ಕಿರೀಟವನ್ನು ಸಮರ್ಪಿಸುವಳು.”
PRO 4:10 ಮಗನೇ, ಆಲಿಸಿ ನನ್ನ ಮಾತುಗಳನ್ನು ಸ್ವೀಕರಿಸು, ಆಗ ನಿನ್ನ ಜೀವನದ ವರ್ಷಗಳು ಹೆಚ್ಚುವವು.
PRO 4:11 ಜ್ಞಾನ ಮಾರ್ಗದಲ್ಲಿ ನಾನು ನಿನಗೆ ಶಿಕ್ಷಣಕೊಡುವೆನು, ನೇರ ಮಾರ್ಗಗಳಲ್ಲಿ ನಿನ್ನನ್ನು ಮುನ್ನಡಿಸುವೆನು.
PRO 4:12 ನೀನು ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು; ನೀನು ಓಡುವಾಗ ಮುಗ್ಗರಿಸಿ ಬೀಳುವುದಿಲ್ಲ.
PRO 4:13 ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ; ಸದುಪದೇಶವನ್ನು ಕಾಪಾಡಿಕೋ, ಏಕೆಂದರೆ ಅದು ನಿನ್ನ ಜೀವವಾಗಿದೆ.
PRO 4:14 ದುಷ್ಟರ ದಾರಿಯೊಳಗೆ ನೀನು ಪ್ರವೇಶಿಸದಿರು ಕೆಟ್ಟವರ ಮಾರ್ಗದಲ್ಲಿ ನೀನು ಹೋಗಬೇಡ.
PRO 4:15 ಆ ದಾರಿಯಿಂದ ತೊಲಗು, ಅದರ ಪಕ್ಕದಲ್ಲಿ ಹಾದು ಹೋಗಬೇಡ; ಅದರಿಂದ ತಪ್ಪಿಸಿಕೊಂಡು, ನಿನ್ನ ಮಾರ್ಗದಲ್ಲಿ ಮುಂದೆ ನಡೆ.
PRO 4:16 ಕೇಡು ಮಾಡದಿದ್ದರೆ ದುಷ್ಟರಿಗೆ ನಿದ್ರೆಬಾರದು; ಯಾರನ್ನಾದರೂ ಬೀಳಿಸದಿದ್ದರೆ, ಅವರಿಗೆ ನಿದ್ರೆ ಹತ್ತುವುದಿಲ್ಲ.
PRO 4:17 ಅವರಿಗೆ ದುಷ್ಟತನವೇ ಆಹಾರ, ಬಲಾತ್ಕಾರವೇ ಅವರಿಗೆ ದ್ರಾಕ್ಷಾರಸ.
PRO 4:18 ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.
PRO 4:19 ಆದರೆ, ದುಷ್ಟರ ಮಾರ್ಗವು ಕಗ್ಗತ್ತಲಿನಂತಿದೆ. ಅವರು ಯಾವುದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
PRO 4:20 ಮಗನೇ, ನನ್ನ ಮಾತುಗಳಿಗೆ ಗಮನಕೊಡು; ನನ್ನ ನುಡಿಗಳಿಗೆ ಕಿವಿಗೊಡು.
PRO 4:21 ಆ ನುಡಿಗಳು ನಿನ್ನ ಕಣ್ಣುಗಳಿಂದ ತಪ್ಪಿ ಹೋಗದಿರಲಿ; ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.
PRO 4:22 ಏಕೆಂದರೆ ಆ ನುಡಿಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ, ದೇಹಕ್ಕೆಲ್ಲಾ ಆರೋಗ್ಯವೂ ಆಗಿವೆ.
PRO 4:23 ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.
PRO 4:24 ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ; ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.
PRO 4:25 ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ; ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ.
PRO 4:26 ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ; ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ.
PRO 4:27 ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ.
PRO 5:1 ಮಗನೇ, ನನ್ನ ಜ್ಞಾನಕ್ಕೆ ಗಮನಕೊಡು; ನನ್ನ ಒಳನೋಟದ ಮಾತುಗಳಿಗೆ ಕಿವಿಗೊಡು.
PRO 5:2 ಆಗ ನಿನ್ನ ವಿವೇಚನೆಯನ್ನು ಉಳಿಸಿಕೊಳ್ಳುವೆ. ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.
PRO 5:3 ಏಕೆಂದರೆ ಜಾರಿಣಿಯ ತುಟಿಗಳು ಜೇನುಗರೆಯುವುದು; ಅವಳ ಮಾತು ಎಣ್ಣೆಗಿಂತಲೂ ಮೃದು.
PRO 5:4 ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ, ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.
PRO 5:5 ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ; ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ.
PRO 5:6 ಜೀವಮಾರ್ಗದ ವಿಚಾರ ಅವಳಿಗಿಲ್ಲ; ಆದ್ದರಿಂದ ಅವಳ ಮಾರ್ಗಗಳು ಚಂಚಲವಾಗಿವೆ, ಅದರ ಅರಿವೂ ಅವಳಿಗಿಲ್ಲ.
PRO 5:7 ಮಕ್ಕಳಿರಾ, ನನ್ನ ಕಡೆಗೆ ಈಗ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳಿಂದ ದೂರವಾಗಬೇಡಿರಿ.
PRO 5:8 ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು; ಅವಳ ಮನೆಯ ಬಾಗಿಲ ಹತ್ತಿರಕ್ಕೆ ಹೋಗದೆ ಇರು.
PRO 5:9 ನೀನು ನಿನ್ನ ಗೌರವವನ್ನು ಬೇರೆಯವರಿಗೆ ಕಳೆಯಬೇಡ, ನಿನ್ನ ಘನತೆನ್ನು ಕ್ರೂರನಿಗೂ ಕೊಡಬೇಡ.
PRO 5:10 ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆ ಎಚ್ಚರಿಕೆ, ನಿನ್ನ ಪ್ರಯಾಸದ ಫಲವು ಪರರ ಮನೆ ಸೇರದಂತೆ ನೋಡಿಕೋ.
PRO 5:11 ನಿನ್ನ ಜೀವನದ ಅಂತ್ಯದಲ್ಲಿ ನಿನ್ನ ದೇಹವೂ ಕ್ಷೀಣಿಸಿದಾಗ, ನೀನು ನರಳಬೇಕಾದೀತು.
PRO 5:12 ಆಗ ನೀನು, “ಶಿಸ್ತನ್ನು ನಾನು ಎಷ್ಟೋ ಹಗೆ ಮಾಡಿದೆ; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
PRO 5:13 ನನ್ನ ಬೋಧಕರ ಸ್ವರಕ್ಕೆ ನಾನು ವಿಧೇಯನಾಗದೆ ಹೋದೆ. ನನ್ನ ಉಪದೇಶಕರಿಗೆ ನಾನು ಕಿವಿಗೊಡದೆ ಹೋದೆ.
PRO 5:14 ನಾನು ದೇವರ ಸಭೆಯಲ್ಲಿ ಗಂಭೀರ ಸಮಸ್ಯೆಗೆ ಒಳಗಾದೆ,” ಎಂದು ಹೇಳುವೆ.
PRO 5:15 ನಿನ್ನ ಸ್ವಂತ ಕೊಳದ ನೀರನ್ನು ಕುಡಿ, ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.
PRO 5:16 ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?
PRO 5:17 ಅವು ನಿನಗೆ ಸ್ವಂತವಾಗಿರಲಿ; ಪರರು ಭಾಗಿಗಳಾಗಿರಬಾರದು.
PRO 5:18 ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ; ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.
PRO 5:19 ಆಕೆಯು ಮನೋಹರವಾದ ಹರಿಣಿ, ಅಂದವಾದ ಜಿಂಕೆಯ ಹಾಗೆಯೂ; ಆಕೆಯ ಎದೆಯು ನಿನ್ನನ್ನು ಸದಾ ತೃಪ್ತಿಪಡಿಸಲಿ; ಆಕೆಯ ಪ್ರೀತಿಯಿಂದ ನೀನು ಸದಾ ಪರವಶನಾಗಿರು.
PRO 5:20 ಮಗನೇ, ಬೇರೆಯವನ ಹೆಂಡತಿಗೆ ವಶವಾಗುವುದೇಕೆ? ಅನ್ಯಳ ಎದೆಯನ್ನೇಕೆ ಅಪ್ಪಿಕೊಳ್ಳುವೆ?
PRO 5:21 ನಿನ್ನ ಮಾರ್ಗಗಳು ಯೆಹೋವ ದೇವರ ಮುಂದೆಯೇ ಇವೆ. ಅವರು ನಿನ್ನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾರೆ.
PRO 5:22 ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ; ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.
PRO 5:23 ಶಿಸ್ತುಪಾಲನೆಯಿಲ್ಲದೆ ಅವನು ನಾಶವಾಗುವನು; ತನ್ನ ಅತಿಮೂರ್ಖತನದಿಂದಲೇ ತಪ್ಪಿಹೋಗುವನು.
PRO 6:1 ಮಗನೇ, ನಿನ್ನ ನೆರೆಯವನಿಗೆ ನೀನು ಹೊಣೆಯಾಗಿದ್ದರೆ, ಪರನಿಗಾಗಿ ನಿನ್ನ ಕೈಯನ್ನು ಒಡ್ಡಿದ್ದರೆ,
PRO 6:2 ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ. ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ.
PRO 6:3 ಮಗನೇ, ನೀನು ನಿನ್ನ ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ, ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು: ಹೋಗಿ ನಿನ್ನನ್ನು ನೀನು ತಗ್ಗಿಸಿಕೋ, ನಿನ್ನ ನೆರೆಯವನಿಗೆ ವಿಶ್ರಾಂತಿಯನ್ನು ಕೊಡಬೇಡ.
PRO 6:4 ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ನಿನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.
PRO 6:5 ಬೇಟೆಗಾರನ ಕೈಯಿಂದ ಜಿಂಕೆಯೂ, ಬಲೆ ಬೀಸುವವನ ಕೈಯಿಂದ ಪಕ್ಷಿಯೂ ತಪ್ಪಿಸಿಕೊಳ್ಳುವಂತೆ ನೀನು ತಪ್ಪಿಸಿಕೋ.
PRO 6:6 ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವಂತನಾಗು.
PRO 6:7 ನಾಯಕನಾಗಲೀ, ಮೇಲ್ವಿಚಾರಕನಾಗಲೀ, ಅಧಿಕಾರಿಯಾಗಲೀ ಇರುವೆಗೆ ಇಲ್ಲದೆ ಹೋದರೂ,
PRO 6:8 ಬೇಸಿಗೆಯಲ್ಲಿ ಅದು ತನ್ನ ಆಹಾರವನ್ನು ಸಂಗ್ರಹಿಸುತ್ತದೆ. ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿಕೊಳ್ಳುತ್ತದೆ.
PRO 6:9 ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು? ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
PRO 6:10 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
PRO 6:11 ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.
PRO 6:12 ತೊಂದರೆಕೊಡುವವನೂ ಕೆಡುಕನೂ ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.
PRO 6:13 ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳು ಸನ್ನೆಮಾಡುತ್ತಾನೆ,
PRO 6:14 ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ; ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.
PRO 6:15 ಆದ್ದರಿಂದ ಅವನಿಗೆ ವಿಪತ್ತು ಬೇಗ ಬರುವುದು; ಯಾವ ಪರಿಹಾರವಿಲ್ಲದೆ ಅವನು ತಟ್ಟನೆ ನಾಶವಾಗುವನು.
PRO 6:16 ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ; ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:
PRO 6:17 ಹೆಮ್ಮೆಯ ದೃಷ್ಟಿ, ಸುಳ್ಳಾಡುವ ನಾಲಿಗೆ, ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,
PRO 6:18 ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ನುಗ್ಗಲು ತ್ವರೆಪಡುವ ಕಾಲುಗಳು,
PRO 6:19 ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
PRO 6:20 ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಗೊಳ್ಳು, ನಿನ್ನ ತಾಯಿಯ ಬೋಧನೆಯನ್ನು ತ್ಯಜಿಸಬೇಡ.
PRO 6:21 ಅವುಗಳನ್ನು ಯಾವಾಗಲೂ ನಿನ್ನ ಹೃದಯದಲ್ಲಿ ಬಂಧಿಸಿಕೋ. ಅವುಗಳನ್ನು ನಿನ್ನ ಕೊರಳಿಗೆ ಧರಿಸಿಕೋ.
PRO 6:22 ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ. ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.
PRO 6:23 ಆಜ್ಞೆಯೇ ದೀಪವಾಗಿದೆ, ಬೋಧನೆಯೇ ಬೆಳಕಾಗಿದೆ; ಶಿಕ್ಷಣದ ತಿದ್ದುವಿಕೆಗಳು ಜೀವ ಮಾರ್ಗವಾಗಿವೆ.
PRO 6:24 ಅವು ಕೆಟ್ಟ ಹೆಂಗಸಿನಿಂದಲೂ, ಪರಸ್ತ್ರೀಯ ವಂಚಕ ಮಾತಿನಿಂದಲೂ ನಿನ್ನನ್ನು ತಪ್ಪಿಸಿ ಕಾಪಾಡಬಲ್ಲವು.
PRO 6:25 ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ. ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.
PRO 6:26 ಏಕೆಂದರೆ ವೇಶ್ಯೆಯನ್ನು ಊಟದಿಂದ ಕೊಂಡುಕೊಳ್ಳಬಹುದು, ಆದರೆ ವ್ಯಭಿಚಾರಿಣಿ ಅಮೂಲ್ಯ ಜೀವವನ್ನೇ ಬೇಟೆಯಾಡುವಳು.
PRO 6:27 ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ, ಅವನ ವಸ್ತ್ರಗಳು ಸುಡುವುದಿಲ್ಲವೋ?
PRO 6:28 ಒಬ್ಬನು ಧಗಧಗಿಸುವ ಕೆಂಡದ ಮೇಲೆ ನಡೆದರೆ, ಅವನ ಪಾದಗಳು ಸುಡುವುದಿಲ್ಲವೋ?
PRO 6:29 ಪರನ ಹೆಂಡತಿಯನ್ನು ಕೂಡುವವನ ಗತಿಯು ಹೀಗೆಯೇ ಇರುವದು. ಅವಳನ್ನು ಮುಟ್ಟುವ ಯಾವನೂ ದಂಡನೆಯಿಂದ ತಪ್ಪಿಸಿಕೊಳ್ಳನು.
PRO 6:30 ಹಸಿದಾಗ ಕಳ್ಳನು ತನ್ನ ಹಸಿವೆಯನ್ನು ತೃಪ್ತಿಪಡಿಸಲು ಕಳವು ಮಾಡಿದರೆ, ಜನರು ಅವನನ್ನು ಹೀಯಾಳಿಸುವುದಿಲ್ಲ.
PRO 6:31 ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡಬೇಕಾಗುವುದು. ತನ್ನ ಮನೆಯ ಆಸ್ತಿಯನ್ನೆಲ್ಲಾ ಸಹ ಅವನು ಕೊಡಬೇಕಾಗುವುದು.
PRO 6:32 ವ್ಯಭಿಚಾರಿಯು ಬುದ್ಧಿಹೀನನಾಗಿದ್ದಾನೆ. ಹಾಗೆ ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುವನು.
PRO 6:33 ಅವನಿಗೆ ಗಾಯವೂ ಅವಮಾನವೂ ಆಗುತ್ತವೆ. ಅವನ ನಿಂದೆಯು ಎಂದಿಗೂ ಅಳಿಸಲಾಗದು.
PRO 6:34 ಏಕೆಂದರೆ ಮತ್ಸರವು ಪತಿಯ ಕ್ರೋಧವನ್ನು ಉದ್ರೇಕಿಸುವುದು. ಆದ್ದರಿಂದ ಮುಯ್ಯಿ ತೀರಿಸುವಾಗ ಅವನು ಕರುಣೆ ತೋರನು.
PRO 6:35 ಅವನು ಯಾವ ಪರಿಹಾರವನ್ನು ಒಪ್ಪುವುದಿಲ್ಲ; ಎಷ್ಟು ದೊಡ್ಡ ಲಂಚ ಕೊಟ್ಟರೂ ಅವನು ಅದನ್ನು ತಿರಸ್ಕರಿಸುವನು.
PRO 7:1 ಮಗನೇ, ನನ್ನ ಮಾತುಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.
PRO 7:2 ನನ್ನ ಆಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣುಗುಡ್ಡೆಯಂತೆ ನನ್ನ ಕಟ್ಟಳೆಗಳನ್ನು ಕಾಪಾಡು.
PRO 7:3 ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿಟ್ಟುಕೋ; ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
PRO 7:4 ಜ್ಞಾನಕ್ಕೆ, “ನೀನು ನನ್ನ ಸಹೋದರಿ,” ಎಂದೂ, ಒಳನೋಟಕ್ಕೆ, “ನನ್ನ ಬಂಧು” ಎಂದೂ ಹೇಳು.
PRO 7:5 ಅವು ವ್ಯಭಿಚಾರಿಣಿಯಿಂದಲೂ ಸವಿಮಾತನಾಡುವ ದಾರಿತಪ್ಪಿದ ಸ್ತ್ರೀಯಿಂದಲೂ ನಿನ್ನನ್ನು ಕಾಪಾಡುತ್ತವೆ.
PRO 7:6 ನಾನು ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ಇಣಕಿ ನೋಡಿದಾಗ,
PRO 7:7 ಮುಗ್ಧರ ನಡುವೆ, ಯುವಕರ ಮಧ್ಯದಲ್ಲಿ, ತಿಳುವಳಿಕೆಯಿಲ್ಲದ ಯೌವನಸ್ಥನನ್ನು ಕಂಡೆನು.
PRO 7:8 ಅವನು ಅವಳ ಮೂಲೆ ಮನೆಯ ದಿಕ್ಕಿನಲ್ಲಿ ಬೀದಿಯಿಂದ ಹಾದುಹೋಗುತ್ತಿದ್ದನು.
PRO 7:9 ಸಂಜೆಯ ಮಬ್ಬಿನಲ್ಲಿ ರಾತ್ರಿಯ ಕತ್ತಲೆಯು ಕವಿಯುತ್ತಿತ್ತು.
PRO 7:10 ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
PRO 7:11 ಅವಳು ಕೂಗಾಟದವಳು, ಹಟಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವುದೇ ಇಲ್ಲ.
PRO 7:12 ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ ಹೀಗೆ ಅವಳು ಮೂಲೆ ಮೂಲೆಗೂ ಹೊಂಚು ಹಾಕುತ್ತಾಳೆ.
PRO 7:13 ಅವಳು ಆ ಯುವಕನನ್ನು ಹಿಡಿದುಕೊಂಡು ಮುದ್ದಿಟ್ಟು, ನಾಚಿಕೆಯಿಲ್ಲದೆ ಅವಳು ಹೀಗೆನ್ನುತ್ತಾಳೆ:
PRO 7:14 “ಈ ದಿವಸ ನನ್ನ ಹರಕೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ನನ್ನ ಸಮಾಧಾನದ ಯಜ್ಞವನ್ನು ಅರ್ಪಿಸಿದ್ದೇನೆ.
PRO 7:15 ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ಹುಡುಕಿ ಕಂಡುಕೊಂಡಿದ್ದೇನೆ.
PRO 7:16 ಈಜಿಪ್ಟಿನ ನಯವಾದ ನಾರು ಮಡಿಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
PRO 7:17 ರಕ್ತಬೋಳ, ಅಗರು, ಲವಂಗ, ಚಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆಗೊಳಿಸಿದ್ದೇನೆ.
PRO 7:18 ಬಾ, ಬೆಳಗಿನವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಂಡು ಕಾಮ ವಿಲಾಸಗಳಿಂದ ನಾವು ಸಂತೋಷಿಸೋಣ.
PRO 7:19 ಏಕೆಂದರೆ ಯಜಮಾನನು ಮನೆಯಲ್ಲಿ ಇಲ್ಲ; ಅವನು ದೀರ್ಘ ಪ್ರಯಾಣದಲ್ಲಿದ್ದಾನೆ.
PRO 7:20 ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”
PRO 7:21 ಮನವೊಲಿಸುವ ಮಾತುಗಳಿಂದ ಅವಳು ಅವನನ್ನು ದಾರಿ ತಪ್ಪಿಸಿ, ಅವಳು ತನ್ನ ಮೋಹಕ ಮಾತುಗಳಿಂದ ಅವನನ್ನು ಆಕರ್ಷಿಸುತ್ತಾಳೆ.
PRO 7:22 ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ, ಅಥವಾ ಜಿಂಕೆಯು ಬಲೆಗೆ ಸಿಕ್ಕಿಬೀಳುವಂತೆ,
PRO 7:23 ಅವನು ತನ್ನ ಪ್ರಾಣವು ಅಪಾಯದಲ್ಲಿರುವುದನ್ನು ತಿಳಿಯದೆ, ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವವರೆಗೆ, ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
PRO 7:24 ಆದ್ದರಿಂದ ನನ್ನ ಮಕ್ಕಳೇ, ನನಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
PRO 7:25 ಅವಳ ಮಾರ್ಗಗಳಿಗೆ ನಿಮ್ಮ ಹೃದಯವು ತಿರುಗದೆ ಇರಲಿ; ತಪ್ಪಿಯೂ ಅವಳ ದಾರಿಯಲ್ಲಿ ಹೋಗಬೇಡಿರಿ.
PRO 7:26 ಏಕೆಂದರೆ ಅನೇಕರು ಅವಳಿಗೆ ಬಲಿಯಾಗಿ ಬಿದ್ದಿದ್ದಾರೆ. ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.
PRO 7:27 ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ.
PRO 8:1 ಜ್ಞಾನವು ಕರೆಯುತ್ತದಲ್ಲವೋ? ತಿಳುವಳಿಕೆ ಎಂಬಾಕೆಯು ತನ್ನ ಸ್ವರವನ್ನು ಎತ್ತಿ ಕೂಗಿ ಕರೆಯುವುದಿಲ್ಲವೋ?
PRO 8:2 ಉನ್ನತ ಸ್ಥಳಗಳ ತುದಿಯಲ್ಲಿಯೂ, ಹಾದಿಗಳ ಸಂಧಿಗಳಲ್ಲಿಯೂ ನಿಂತುಕೊಳ್ಳುತ್ತಾಳೆ.
PRO 8:3 ಪಟ್ಟಣದ ಪ್ರವೇಶ ದ್ವಾರಗಳಲ್ಲಿಯೂ ಒಳಗೆ ಬರುವಾಗ ಅವಳು ಸ್ವರವೆತ್ತಿ ಹೇಳುವುದೇನೆಂದರೆ,
PRO 8:4 “ಮನುಷ್ಯರೇ, ನಾನು ಕರೆಯುತ್ತಿರುವುದು ನಿಮ್ಮನ್ನೇ, ಮಾನವರಿಗಾಗಿಯೇ ನಾನು ಧ್ವನಿಗೈಯುತ್ತೇನೆ.
PRO 8:5 ಮುಗ್ಧರೇ, ಜ್ಞಾನವನ್ನು ಗ್ರಹಿಸಿರಿ. ಬುದ್ಧಿಹೀನರೇ, ನೀವು ತಿಳುವಳಿಕೆಯ ಹೃದಯದವರಾಗಿರಿ.
PRO 8:6 ಕೇಳಿರಿ, ಉತ್ಕೃಷ್ಟ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯುವೆನು.
PRO 8:7 ನನ್ನ ಬಾಯಿಯು ಸತ್ಯವನ್ನು ಮಾತಾಡುವುದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.
PRO 8:8 ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯುಕ್ತವಾಗಿವೆ; ಮೂರ್ಖತನವಾಗಲಿ, ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
PRO 8:9 ವಿವೇಚಿಸುವವನಿಗೆ ನನ್ನ ಎಲ್ಲ ಮಾತುಗಳು ನೇರವಾಗಿರುವುದು. ತಿಳುವಳಿಕೆ ಉಳ್ಳವನಿಗೆ ಅವು ಪ್ರಾಮಾಣಿಕವಾಗಿಯೂ ಇರುವುದು.
PRO 8:10 ಬೆಳ್ಳಿಗಿಂತ ನನ್ನ ಬೋಧನೆಯನ್ನು ಆರಿಸಿಕೋ ಉತ್ತಮ ಬಂಗಾರಕ್ಕಿಂತ ಮಿಗಿಲಾದ ತಿಳುವಳಿಕೆಯನ್ನು ಪಡೆದುಕೋ.
PRO 8:11 ಏಕೆಂದರೆ ಮಾಣಿಕ್ಯಗಳಿಗಿಂತ ಜ್ಞಾನವು ಅಮೂಲ್ಯವಾದದ್ದು. ಅಪೇಕ್ಷಿಸತಕ್ಕ ಯಾವ ವಸ್ತುಗಳನ್ನು ಅದಕ್ಕೆ ಹೋಲಿಸಲಾಗದು.
PRO 8:12 “ಜ್ಞಾನವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ತಿಳುವಳಿಕೆಯನ್ನೂ ವಿವೇಚನೆಯನ್ನೂ ನಾನು ಹೊಂದಿದ್ದೇನೆ.
PRO 8:13 ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.
PRO 8:14 ಸಮಾಲೋಚನೆಯೂ ಒಳ್ಳೆಯ ನ್ಯಾಯವೂ ನನ್ನಲ್ಲಿದೆ. ನನ್ನಲ್ಲಿ ಒಳನೋಟವೂ ಶಕ್ತಿಯೂ ಇವೆ.
PRO 8:15 ನನ್ನ ಮೂಲಕ ರಾಜರು ಆಳುವರು; ಪ್ರಧಾನರು ನ್ಯಾಯವಾದ ತೀರ್ಪು ಕೊಡುವರು.
PRO 8:16 ನನ್ನಿಂದ ಅಧಿಪತಿಗಳು ಆಳುತ್ತಾರೆ, ಕೀರ್ತಿವಂತರೆಲ್ಲರೂ ಭೂಮಿಯ ಮೇಲೆ ಆಳುವರು.
PRO 8:17 ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ; ಹಂಬಲಿಸಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
PRO 8:18 ಐಶ್ವರ್ಯವೂ ಘನತೆಯೂ, ಶಾಶ್ವತ ಸಂಪತ್ತು ಹಾಗೂ ಸಮೃದ್ಧಿಯು ನನ್ನೊಂದಿಗಿವೆ.
PRO 8:19 ನನ್ನ ಫಲವು ಬಂಗಾರಕ್ಕಿಂತಲೂ, ನನ್ನ ಆದಾಯವು ಉತ್ತಮವಾದ ಬೆಳ್ಳಿಗಿಂತಲೂ ಶ್ರೇಷ್ಠವಾಗಿವೆ.
PRO 8:20 ನೀತಿಯ ಮಾರ್ಗದಲ್ಲಿಯೂ ನ್ಯಾಯದ ದಾರಿ ನಡುವೆಯೂ ನಾನು ನಡೆಯುತ್ತೇನೆ.
PRO 8:21 ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದುವರು. ನಾನು ಅವರ ಬೊಕ್ಕಸಗಳನ್ನು ತುಂಬಿಸುವೆನು.
PRO 8:22 “ಯೆಹೋವ ದೇವರು ತಮ್ಮ ಸೃಷ್ಟಿಕ್ರಮದಲ್ಲಿ ನನ್ನನ್ನು ಮೊದಲು ನಿರ್ಮಿಸಿದರು, ದೇವರ ಪುರಾತನ ಕಾರ್ಯಗಳಲ್ಲಿ ನಾನೇ ಮೊದಲು;
PRO 8:23 ಪ್ರಾರಂಭದಲ್ಲಿ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲಿ ದೇವರು ನನ್ನನ್ನು ಸೃಷ್ಟಿಸಿದರು.
PRO 8:24 ಆಗಾಧಗಳು ಇಲ್ಲದೆ ಇರುವಾಗ ನಾನು ಹುಟ್ಟಿ ಬಂದೆನು, ನೀರಿನ ಬುಗ್ಗೆಗಳು ಇಲ್ಲದೆ ಇರುವಾಗಲೇ ನಾನಿದ್ದೆನು.
PRO 8:25 ಪರ್ವತಗಳು ಸ್ಥಾಪಿತವಾಗುವುದಕ್ಕಿಂತ ಮುಂಚೆಯೂ ಬೆಟ್ಟಗುಡ್ಡಗಳಿಗಿಂತ ಮೊದಲು ನಾನು ಜನಿಸಿದೆನು.
PRO 8:26 ಭೂಮಿಯನ್ನೂ ಹೊಲಗಳನ್ನೂ ಲೋಕದ ಅಣುಗಳನ್ನೂ ಅವರು ನಿರ್ಮಿಸದೆ ಇರುವಾಗಲೇ ನಾನು ಜನಿಸಿದೆನು.
PRO 8:27 ಅವರು ಆಕಾಶಗಳನ್ನು ಸಿದ್ಧಪಡಿಸಿದಾಗ ಸಾಗರದ ಮೇಲೆ ಚಕ್ರವನ್ನು ಹಾಕಿದಾಗ,
PRO 8:28 ಮೇಲೆ ಮೇಘಗಳನ್ನು ಅವರು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಅವರು ಬಲಪಡಿಸಿದಾಗ,
PRO 8:29 ಪ್ರವಾಹಗಳು ತನ್ನ ಆಜ್ಞೆಯನ್ನು ಮೀರದಂತೆ ಸಮುದ್ರಕ್ಕೆ ಅವರು ಮೇರೆಯನ್ನು ಮಾಡಿ ಭೂಮಿಯ ಅಸ್ತಿವಾರಗಳನ್ನು ನೇಮಿಸಿದಾಗ, ನಾನು ಅಲ್ಲಿ ಇದ್ದೆನು.
PRO 8:30 ಆಗ ನಾನು ಅವರೊಂದಿಗೆ ಕುಶಲ ಶಿಲ್ಪಿಯಂತೆ ಅವರ ಹತ್ತಿರ ಇದ್ದೆನು. ಅವರ ಸನ್ನಿಧಿಯಲ್ಲಿ ಯಾವಾಗಲೂ ಆನಂದಿಸುತ್ತಾ ಅನುದಿನವೂ ಸಂತೋಷಿಸುತ್ತಿದ್ದೆನು.
PRO 8:31 ಅವರ ಭೂಮಿಯ ವಾಸಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು; ಮಾನವರೊಂದಿಗೆ ಆನಂದಿಸುತ್ತಿದ್ದೆನು.
PRO 8:32 “ಆದ್ದರಿಂದ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.
PRO 8:33 ನನ್ನ ಬೋಧನೆಯನ್ನು ಕೇಳಿ ಬುದ್ಧಿವಂತರಾಗಿರಿ; ಅದನ್ನು ನೀವು ತಿರಸ್ಕರಿಸಬೇಡಿರಿ.
PRO 8:34 ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ, ನನ್ನ ಬಾಗಿಲುಗಳ ನಿಲುವುಗಳಲ್ಲಿ ನಿರೀಕ್ಷಿಸುತ್ತಾ, ನನ್ನ ಮಾತುಗಳನ್ನು ಕೇಳುವವರು ಧನ್ಯರು.
PRO 8:35 ಏಕೆಂದರೆ ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಯೆಹೋವ ದೇವರ ಕೃಪೆಯನ್ನು ಹೊಂದುವನು.
PRO 8:36 ಆದರೆ ನನ್ನನ್ನು ಬಿಟ್ಟು ದೂರಹೋಗುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”
PRO 9:1 ಜ್ಞಾನ ಎಂಬಾಕೆಯು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬಗಳನ್ನು ಕೆತ್ತಿಸಿದ್ದಾಳೆ.
PRO 9:2 ಆಕೆಯು ಮಾಂಸದ ಆಹಾರನ್ನು ತಯಾರಿಸಿ, ತನ್ನ ದ್ರಾಕ್ಷಾರಸವನ್ನು ಬೆರೆಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.
PRO 9:3 ಆಕೆಯು ತನ್ನ ದಾಸಿಯರನ್ನು ಕಳುಹಿಸುತ್ತಾಳೆ; ಆಕೆಯು ಪಟ್ಟಣದ ಅತಿ ಉನ್ನತ ಸ್ಥಳದಿಂದ ಕೂಗುತ್ತಾಳೆ,
PRO 9:4 “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
PRO 9:5 “ಬಾ, ನನ್ನ ಆಹಾರವನ್ನು ತಿಂದು, ನಾನು ಬೆರೆಸಿದ ದ್ರಾಕ್ಷಾರಸವನ್ನು ಕುಡಿ,” ಎಂದೂ
PRO 9:6 “ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ ಮತ್ತು ವಿವೇಕದ ಮಾರ್ಗದಲ್ಲಿ ಹೋಗು,” ಎಂದೂ ಕೂಗುತ್ತಾಳೆ.
PRO 9:7 ಪರಿಹಾಸ್ಯ ಮಾಡುವವನನ್ನು ಗದರಿಸುವವನು ತನ್ನನ್ನು ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
PRO 9:8 ಪರಿಹಾಸ್ಯ ಮಾಡುವವನನ್ನು ಗದರಿಸಬೇಡ ಅವನು ನಿನ್ನನ್ನು ಹಗೆ ಮಾಡುವನು; ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
PRO 9:9 ಜ್ಞಾನಿಗೆ ಶಿಕ್ಷಣ ನೀಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿಕೊಳ್ಳುವನು.
PRO 9:10 ಯೆಹೋವ ದೇವರ ಭಯವೇ ಜ್ಞಾನಕ್ಕೆ ಮೂಲವು. ಪರಿಶುದ್ಧರ ಪರಿಜ್ಞಾನವೇ ತಿಳುವಳಿಕೆಯಾಗಿದೆ.
PRO 9:11 ಏಕೆಂದರೆ ಜ್ಞಾನದ ಮೂಲಕ ನಿನ್ನ ಜೀವನದ ದಿನಗಳು ಹೆಚ್ಚುವುವು; ನಿನ್ನ ಜೀವನದ ವರ್ಷಗಳು ವೃದ್ಧಿಯಾಗುವುವು.
PRO 9:12 ನೀನು ಜ್ಞಾನಿಯಾದರೆ, ನಿನ್ನ ಜ್ಞಾನವು ನಿನಗೆ ಪ್ರತಿಫಲ ಕೊಡುವುದು; ನೀನು ನಿಂದಿಸುವವನಾದರೆ, ನೀನೇ ಅದರ ಫಲವನ್ನು ಅನುಭವಿಸುವಿ.
PRO 9:13 ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು; ಅವಳು ಅರಿವಿಲ್ಲದವಳು, ಏನೂ ತಿಳಿಯದವಳು.
PRO 9:14 ಅವಳು ತನ್ನ ಮನೆಯ ಬಾಗಿಲಿನಲ್ಲಿ ಕುಳಿತು, ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ನಿಂತು,
PRO 9:15 ತಮ್ಮ ಮಾರ್ಗವನ್ನು ಹಿಡಿದು ಹೋಗುವ ಪ್ರಯಾಣಿಕರನ್ನು ಕರೆಯುತ್ತಾಳೆ,
PRO 9:16 “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
PRO 9:17 “ಕದ್ದ ನೀರು ಸಿಹಿಯಾಗಿದೆ; ರಹಸ್ಯದಲ್ಲಿ ತಿನ್ನುವ ಆಹಾರವು ರುಚಿಯಾಗಿದೆ,” ಎಂದು ಹೇಳುತ್ತಾಳೆ.
PRO 9:18 ಆದರೆ ಆ ಮನೆ ಸತ್ತವರ ಸ್ಥಾನವಾಗಿದೆ. ಅವಳ ಅತಿಥಿಗಳು ಪಾತಾಳದ ಅಗಾಧದಲ್ಲಿ ಬಿದ್ದಿದ್ದಾರೆಂದು ಅವನಿಗೆ ತಿಳಿಯದು.
PRO 10:1 ಸೊಲೊಮೋನನ ಜ್ಞಾನೋಕ್ತಿಗಳು: ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ. ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.
PRO 10:2 ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ, ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.
PRO 10:3 ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ; ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.
PRO 10:4 ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.
PRO 10:5 ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು, ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.
PRO 10:6 ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ; ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.
PRO 10:7 ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ; ಆದರೆ ದುಷ್ಟನ ಹೆಸರು ಕೊಳೆಯುವುದು.
PRO 10:8 ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು; ಆದರೆ ಹರಟೆಯ ಮೂರ್ಖನು ಬೀಳುವನು.
PRO 10:9 ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ; ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.
PRO 10:10 ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ, ಆದರೆ ಹರಟೆಯ ಮೂರ್ಖನು ಬೀಳುವನು.
PRO 10:11 ನೀತಿವಂತನ ಬಾಯಿಯು ಜೀವದ ಬುಗ್ಗೆ; ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.
PRO 10:12 ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ; ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.
PRO 10:13 ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.
PRO 10:14 ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.
PRO 10:15 ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ; ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.
PRO 10:16 ನೀತಿವಂತರ ದುಡಿತವು ಜೀವವಾಗುವುದು; ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.
PRO 10:17 ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು; ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.
PRO 10:18 ದ್ವೇಷವನ್ನು ಮರೆಮಾಚುವವನು ಸುಳ್ಳುಗಾರ ಮತ್ತು ಚಾಡಿ ಹೇಳುವವನು ಮೂರ್ಖನು.
PRO 10:19 ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ. ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.
PRO 10:20 ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ; ದುಷ್ಟರ ಹೃದಯವು ಬೆಲೆಯಿಲ್ಲದ್ದು.
PRO 10:21 ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ, ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.
PRO 10:22 ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು; ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.
PRO 10:23 ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ; ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.
PRO 10:24 ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು; ಆದರೆ ನೀತಿವಂತರ ಇಷ್ಟವು ಸಫಲವಾಗುವುದು.
PRO 10:25 ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು; ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.
PRO 10:26 ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.
PRO 10:27 ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರ್ಷಗಳು ಕಡಿಮೆ ಆಗುವವು.
PRO 10:28 ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.
PRO 10:29 ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ; ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.
PRO 10:30 ನೀತಿವಂತರು ಎಂದಿಗೂ ಕದಲುವುದೇ ಇಲ್ಲ; ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.
PRO 10:31 ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ; ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.
PRO 10:32 ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು, ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.
PRO 11:1 ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ; ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.
PRO 11:2 ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ಆದರೆ ದೀನತೆಯೊಂದಿಗೆ ಜ್ಞಾನ ಬರುವುದು.
PRO 11:3 ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡೆಸುವುದು; ಅಪನಂಬಿಗಸ್ತರ ಕಪಟತನವೇ ಅವರನ್ನು ನಾಶಪಡಿಸುವುದು.
PRO 11:4 ಉಗ್ರತೆಯ ದಿನದಲ್ಲಿ ಸಂಪತ್ತು ಲಾಭಕರವಾಗುವುದಿಲ್ಲ; ಆದರೆ ನೀತಿಯ ನಡತೆ ಮರಣದಿಂದ ವಿಮೋಚಿಸುವುದು.
PRO 11:5 ನಿಷ್ಕಳಂಕರ ನೀತಿಯು ಅವರ ಮಾರ್ಗವನ್ನು ಸರಾಗ ಮಾಡುವುದು; ಆದರೆ ದುಷ್ಟರು ತಮ್ಮ ದುಷ್ಟತ್ವದಿಂದಲೇ ಬೀಳುವರು.
PRO 11:6 ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವುದು; ಆದರೆ ಅಪನಂಬಿಗಸ್ತರು ದುಷ್ಟ ಆಸೆಗಳಿಂದ ಸಿಕ್ಕಿಹಾಕಿಕೊಳ್ಳುತ್ತಾರೆ.
PRO 11:7 ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವುವು; ತನ್ನ ಬಲದಿಂದ ನಿರೀಕ್ಷಿಸಿದ್ದೆಲ್ಲವೂ ಇಲ್ಲದಂತಾಗುವುದು.
PRO 11:8 ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ, ದುಷ್ಟನು ಅದರ ಸ್ಥಳದಲ್ಲಿ ಸಿಕ್ಕಿಬೀಳುವನು.
PRO 11:9 ಒಬ್ಬ ಭಕ್ತಿಹೀನನು ಬಾಯಿಂದ ತನ್ನ ನೆರೆಯವನನ್ನು ಹಾಳು ಮಾಡುತ್ತಾನೆ, ಆದರೆ ನೀತಿವಂತನು ತಿಳುವಳಿಕೆಯ ಮೂಲಕ ಬಿಡಿಸಲಾಗುವನು.
PRO 11:10 ನೀತಿವಂತರು ಅಭಿವೃದ್ಧಿಹೊಂದಿದರೆ, ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ, ಜಯೋತ್ಸವ ಉಂಟಾಗುತ್ತದೆ.
PRO 11:11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಪ್ರಗತಿಯಾಗುತ್ತದೆ, ಆದರೆ ದುಷ್ಟರ ಬಾಯಿಂದ ಅದು ನಾಶವಾಗುತ್ತದೆ.
PRO 11:12 ಜ್ಞಾನವಿಲ್ಲದವನು ತನ್ನ ನೆರಯವನನ್ನು ಹೀನೈಸುತ್ತಾನೆ, ಆದರೆ ತಿಳುವಳಿಕೆಯುಳ್ಳವನು ಮೌನವಾಗಿರುತ್ತಾನೆ.
PRO 11:13 ಚಾಡಿಕೋರನು ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ, ಆದರೆ ನಂಬಿಗಸ್ತನು ಆ ಸಂಗತಿಯನ್ನು ಮುಚ್ಚುತ್ತಾನೆ.
PRO 11:14 ಆಲೋಚನೆ ಇಲ್ಲದೆ ಇರುವಲ್ಲಿ ಜನರು ಬೀಳುತ್ತಾರೆ, ಆದರೆ ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
PRO 11:15 ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ, ಹೊಣೆಗಾರನಾಗಿರದವನು ಸುರಕ್ಷಿತವಾಗಿರುವನು.
PRO 11:16 ದಯೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಸಂಪಾದಿಸಿಕೊಳ್ಳುತ್ತಾಳೆ, ನಿಷ್ಕರುಣ ವ್ಯಕ್ತಿ ಸಂಪತ್ತನ್ನು ಮಾತ್ರ ಪಡೆದುಕೊಳ್ಳುತ್ತಾನೆ.
PRO 11:17 ದಯೆಯುಳ್ಳವನು ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ, ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.
PRO 11:18 ದುಷ್ಟನು ಮೋಸದ ಸಂಬಳವನ್ನು ಸಂಪಾದಿಸುತ್ತಾನೆ, ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹವಾದ ಬಹುಮಾನವಿರುವುದು.
PRO 11:19 ನೀತಿವಂತನ ಮಾರ್ಗಗಳಲ್ಲಿ ಅಚಲವಾಗಿರುವವನು ಜೀವ ಹೊಂದುತ್ತಾನೆ, ಕೆಟ್ಟದ್ದನ್ನು ಬೆನ್ನಟ್ಟುವವನು ತನ್ನ ಮರಣವನ್ನು ಬೆನ್ನಟ್ಟುತ್ತಾನೆ.
PRO 11:20 ವಕ್ರ ಹೃದಯವುಳ್ಳವರು ಯೆಹೋವ ದೇವರಿಗೆ ಅಸಹ್ಯವಾದವರು, ಆದರೆ, ಸನ್ಮಾರ್ಗದಲ್ಲಿ ಯಥಾರ್ಥವಾಗಿ ಇರುವವರಲ್ಲಿ ಅವರು ಆನಂದಿಸುತ್ತಾರೆ.
PRO 11:21 ದುಷ್ಟನಿಗೆ ಶಿಕ್ಷೆ ತಪ್ಪುವುದಿಲ್ಲ; ನೀತಿವಂತರ ವಂಶವು ಬಿಡುಗಡೆ ಹೊಂದುವುದು.
PRO 11:22 ಹಂದಿಯ ಮೂಗಿಗೆ ಬಂಗಾರದ ಮೂಗುತಿಯು ಹೇಗೋ, ಹಾಗೆಯೇ ವಿವೇಕವಿಲ್ಲದ ಸ್ತ್ರೀಗೆ ಸೌಂದರ್ಯವು.
PRO 11:23 ನೀತಿವಂತರ ಅಪೇಕ್ಷೆಯು ಶುಭಕ್ಕಾಸ್ಪದ, ದುಷ್ಟರ ಅಪೇಕ್ಷೆಯು ತೀರ್ಪಿಗೀಡು.
PRO 11:24 ಒಬ್ಬನು ತನ್ನ ಸಂಪತ್ತನ್ನು ಉದಾರವಾಗಿ ವ್ಯಯಮಾಡಿದರೂ ಅವನು ವೃದ್ಧಿಯಾಗುತ್ತಾನೆ, ಆದರೆ ಇನ್ನೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನು ಬಡತನಕ್ಕೆ ಬರುತ್ತಾನೆ.
PRO 11:25 ಉದಾರಿಯು ಅಭಿವೃದ್ಧಿ ಹೊಂದುವನು; ಬೇರೆಯವರಿಗೆ ಚೈತನ್ಯ ಕೊಡುವವನು ಚೈತನ್ಯ ಹೊಂದುವನು.
PRO 11:26 ಧಾನ್ಯವನ್ನು ಬಚ್ಚಿಟ್ಟುಕೊಳ್ಳುವವನನ್ನು ಜನರು ಶಪಿಸುವರು; ಆದರೆ ಅದನ್ನು ಮಾರುವವನ ಮೇಲೆ ಆಶೀರ್ವಾದವು ನೆಲೆಯಾಗಿರುವುದು.
PRO 11:27 ಒಳ್ಳೆಯದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದುತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವುದು.
PRO 11:28 ತನ್ನ ಐಶ್ವರ್ಯದಲ್ಲಿ ಭರವಸೆ ಇಡುವವನು ಬಿದ್ದುಹೋಗುವನು, ಆದರೆ ನೀತಿವಂತರು ಹಸಿರೆಲೆಯ ಹಾಗೆ ಚಿಗುರುವರು.
PRO 11:29 ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಮೂರ್ಖನು ಜ್ಞಾನನಿಗೆ ಸೇವಕನಾಗಿರುವನು.
PRO 11:30 ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ.
PRO 11:31 ಇಗೋ, ಭೂಮಿಯ ಮೇಲೆ ನೀತಿವಂತರು ತಮ್ಮ ಫಲವನ್ನು ಹೊಂದಲಿಕ್ಕಿರುವಾಗ, ದುಷ್ಟರು ಮತ್ತು ಪಾಪಿಗಳು ಎಷ್ಟೋ ಹೆಚ್ಚಾಗಿ ತಮ್ಮ ಫಲವನ್ನು ಹೊಂದುತ್ತಾರೆ.
PRO 12:1 ಶಿಸ್ತನ್ನು ಪ್ರೀತಿಸುವವನು ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು.
PRO 12:2 ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ.
PRO 12:3 ಒಬ್ಬ ಮನುಷ್ಯನು ದುಷ್ಟತನದಿಂದ ಸ್ಥಿರವಾಗುವುದಿಲ್ಲ. ಆದರೆ ನೀತಿವಂತರನ್ನು ಕಿತ್ತುಹಾಕಲಾಗುವುದಿಲ್ಲ.
PRO 12:4 ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು.
PRO 12:5 ನೀತಿವಂತರ ಯೋಜನೆಗಳು ನ್ಯಾಯವಾಗಿವೆ; ದುಷ್ಟರ ಸಲಹೆ ಮೋಸಭರಿತ.
PRO 12:6 ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು.
PRO 12:7 ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.
PRO 12:8 ತನ್ನ ಜ್ಞಾನಕ್ಕನುಸಾರವಾಗಿ ಮನುಷ್ಯನು ಗೌರವ ಹೊಂದುವನು; ವಕ್ರಹೃದಯವುಳ್ಳವನು ಕಡೆಗಣಿಸಲಾಗುವನು.
PRO 12:9 ಹೊಟ್ಟೆಗೆ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸಾಮಾನ್ಯ ಸೇವಕನೇ ಮೇಲು.
PRO 12:10 ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ.
PRO 12:11 ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು.
PRO 12:12 ದುಷ್ಟರು ಕೆಟ್ಟವರ ಭದ್ರಕೋಟೆಯನ್ನು ಅಪೇಕ್ಷಿಸುತ್ತಾರೆ; ಆದರೆ ನೀತಿವಂತರ ಬೇರು ಫಲವನ್ನು ಕೊಡುತ್ತದೆ.
PRO 12:13 ದುಷ್ಟನು ತನ್ನ ತಪ್ಪು ಮಾತುಗಳಿಂದ ಬಲೆಗೆ ಬೀಳುವನು, ಆದರೆ ನೀತಿವಂತರು ಇಕ್ಕಟ್ಟಿನೊಳಗಿಂದ ತಪ್ಪಿಸಿಕೊಳ್ಳುವರು.
PRO 12:14 ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದರಿಂದ ತೃಪ್ತನಾಗುವನು, ಮನುಷ್ಯನ ಕೈಕೆಲಸಗಳು ಅವನಿಗೆ ಪ್ರತಿಫಲವನ್ನು ಕೊಡುವುವು.
PRO 12:15 ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ, ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು.
PRO 12:16 ಮೂರ್ಖನ ಕೋಪವು ತಟ್ಟನೆ ರಟ್ಟಾಗುವುದು, ಆದರೆ ಜಾಣನು ಅವಮಾನವನ್ನು ನಿರ್ಲಕ್ಷಿಸುತ್ತಾನೆ.
PRO 12:17 ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.
PRO 12:18 ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು.
PRO 12:19 ಸತ್ಯದ ತುಟಿಯು ಸದಾ ಸ್ಥಿರಗೊಳ್ಳುವುದು, ಸುಳ್ಳಾಡುವ ನಾಲಿಗೆಯು ಕ್ಷಣಿಕ.
PRO 12:20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
PRO 12:21 ನೀತಿವಂತನಿಗೆ ಯಾವ ಕೇಡೂ ಸಂಭವಿಸದು, ಆದರೆ ದುಷ್ಟರು ಕೇಡಿನಿಂದ ತುಂಬಿಕೊಳ್ಳುವರು.
PRO 12:22 ಸುಳ್ಳಾಡುವ ತುಟಿಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಆದರೆ ಸತ್ಯವಂತರಲ್ಲಿ ಅವರು ಆನಂದಿಸುತ್ತಾರೆ.
PRO 12:23 ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುತ್ತಾನೆ; ಆದರೆ ಮೂರ್ಖನ ಹೃದಯವು ಮೂರ್ಖತನವನ್ನು ಹೇಳುತ್ತದೆ.
PRO 12:24 ಚುರುಕು ಕೈಯುಳ್ಳವನು ಆಳುವನು; ಸೋಮಾರಿಗಳು ಗುಲಾಮರಾಗುವರು.
PRO 12:25 ಆತಂಕವು ಹೃದಯವನ್ನು ಕುಗ್ಗಿಸುವುದು, ಆದರೆ ಕನಿಕರದ ಮಾತು ಹುರಿದುಂಬಿಸುವುದು.
PRO 12:26 ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ.
PRO 12:27 ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವುದಿಲ್ಲ, ಆದರೆ ಶ್ರಮಪಡುವವರು ಅದನ್ನು ತೃಪ್ತಿಯಿಂದ ತಿನ್ನುತ್ತಾರೆ.
PRO 12:28 ನೀತಿಯ ಮಾರ್ಗದಲ್ಲಿ ಜೀವವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.
PRO 13:1 ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ; ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.
PRO 13:2 ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ, ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.
PRO 13:3 ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
PRO 13:4 ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ; ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.
PRO 13:5 ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ, ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.
PRO 13:6 ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ; ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.
PRO 13:7 ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ; ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.
PRO 13:8 ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ; ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.
PRO 13:9 ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ; ದುಷ್ಟರ ದೀಪವು ಆರಿಹೋಗುವುದು.
PRO 13:10 ಎಲ್ಲಿ ಗರ್ವವೋ ಅಲ್ಲಿ ಕಲಹ; ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.
PRO 13:11 ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು; ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.
PRO 13:12 ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ; ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.
PRO 13:13 ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.
PRO 13:14 ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.
PRO 13:15 ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ; ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.
PRO 13:16 ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.
PRO 13:17 ದುಷ್ಟ ದೂತನು ಕೇಡಿಗೆ ಬೀಳುತ್ತಾನೆ; ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.
PRO 13:18 ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು; ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.
PRO 13:19 ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ; ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.
PRO 13:20 ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.
PRO 13:21 ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ; ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.
PRO 13:22 ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು; ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.
PRO 13:23 ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ; ಅನ್ಯಾಯವು ಅದನ್ನು ಹಾರಿಸಿಬಿಡುವುದು.
PRO 13:24 ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ; ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.
PRO 13:25 ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.
PRO 14:1 ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
PRO 14:2 ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ, ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ.
PRO 14:3 ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ, ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು.
PRO 14:4 ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ, ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ.
PRO 14:5 ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು, ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.
PRO 14:6 ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ, ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ.
PRO 14:7 ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ, ಅವನ ಬಳಿಯಿಂದ ಹೊರಟು ಹೋಗು.
PRO 14:8 ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ. ಮೂಢರ ಬುದ್ಧಿಹೀನತೆಯು ಮೋಸಕರ.
PRO 14:9 ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು, ಆದರೆ ನೀತಿವಂತರಿಗೆ ದಯೆಯಿದೆ.
PRO 14:10 ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.
PRO 14:11 ದುಷ್ಟರ ಮನೆಯು ನಾಶವಾಗುವುದು, ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು.
PRO 14:12 ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ, ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ.
PRO 14:13 ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು, ಅದರ ಉಲ್ಲಾಸದ ಅಂತ್ಯವು ಸಂತಾಪವೇ.
PRO 14:14 ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು, ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.
PRO 14:15 ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
PRO 14:16 ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು, ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು.
PRO 14:17 ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ, ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ.
PRO 14:18 ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ, ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ.
PRO 14:19 ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ, ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ.
PRO 14:20 ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು; ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು.
PRO 14:21 ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ, ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು.
PRO 14:22 ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ? ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು.
PRO 14:23 ಎಲ್ಲಾ ಪ್ರಯಾಸದಲ್ಲಿ ಲಾಭವಿದೆ, ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ.
PRO 14:24 ಜ್ಞಾನವಂತರ ಕಿರೀಟವೇ ಅವರ ಸಂಪತ್ತು, ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ.
PRO 14:25 ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ, ಸುಳ್ಳುಸಾಕ್ಷಿಯು ಮೋಸಗಾರನು.
PRO 14:26 ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ. ಆತನ ಮಕ್ಕಳಿಗೆ ಆಶ್ರಯವು ಇರುವುದು.
PRO 14:27 ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ. ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ.
PRO 14:28 ಜನಸಮೂಹದಲ್ಲಿ ಅರಸನ ಘನತೆ ಇದೆ. ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
PRO 14:29 ತಾಳ್ಮೆಯುಳ್ಳವನು ಬಹು ವಿವೇಕಿ, ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು.
PRO 14:30 ಶಾಂತ ಹೃದಯವು ದೇಹಕ್ಕೆ ಜೀವ; ಆದರೆ ಮತ್ಸರವು ಎಲುಬುಗಳಿಗೆ ಕ್ಷಯ.
PRO 14:31 ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು, ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು.
PRO 14:32 ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ, ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ.
PRO 14:33 ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ, ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ.
PRO 14:34 ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.
PRO 14:35 ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.
PRO 15:1 ಮೃದುವಾದ ಉತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ. ಆದರೆ ಬಿರುಸಾದ ಮಾತುಗಳು ಕೋಪವನ್ನು ಎಬ್ಬಿಸುತ್ತದೆ.
PRO 15:2 ಜ್ಞಾನಿಯ ನಾಲಿಗೆಯು ಒಳ್ಳೆಯ ಪರಿಜ್ಞಾನವನ್ನು ಹರಡುತ್ತದೆ. ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನು ಹೊರಗೆಡವುತ್ತದೆ.
PRO 15:3 ಯೆಹೋವ ದೇವರ ಕಣ್ಣುಗಳು ಪ್ರತಿಯೊಂದು ಸ್ಥಳದಲ್ಲಿ ಇವೆ. ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಾ ಇರುವರು.
PRO 15:4 ಹಿತವಾದ ನಾಲಿಗೆಯು ಜೀವವೃಕ್ಷ. ಆದರೆ ವಕ್ರ ನಾಲಿಗೆಯು ಆತ್ಮಚೈತನ್ಯವನ್ನು ನಾಶಮಾಡುವುದು.
PRO 15:5 ಮೂರ್ಖನು ತನ್ನ ತಂದೆಯ ಶಿಸ್ತನ್ನು ತಿರಸ್ಕರಿಸುತ್ತಾನೆ. ಆದರೆ ಜಾಣನು ಗದರಿಕೆಯನ್ನು ಲಕ್ಷಿಸುವನು.
PRO 15:6 ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು. ಆದರೆ ದುಷ್ಟನ ಆದಾಯವು ವಿನಾಶ ತರುವುದು.
PRO 15:7 ಜ್ಞಾನಿಗಳ ತುಟಿಗಳು ಪರಿಜ್ಞಾನವನ್ನು ಹರಡುತ್ತವೆ. ಆದರೆ ಬುದ್ಧಿಹೀನರ ಹೃದಯವು ಹಾಗೆ ಮಾಡುವುದೇ ಇಲ್ಲ.
PRO 15:8 ದುಷ್ಟರ ಯಜ್ಞವು ಯೆಹೋವ ದೇವರಿಗೆ ಅಸಹ್ಯ. ಆದರೆ ಯಥಾರ್ಥವಂತರ ಪ್ರಾರ್ಥನೆಯು ಅವರಿಗೆ ಮೆಚ್ಚುಗೆ.
PRO 15:9 ದುಷ್ಟರ ಮಾರ್ಗವು ಯೆಹೋವ ದೇವರಿಗೆ ಅಸಹ್ಯ. ಆದರೆ ನೀತಿಯನ್ನು ಹಿಂಬಾಲಿಸುವವನನ್ನು ಅವರು ಪ್ರೀತಿಸುತ್ತಾರೆ.
PRO 15:10 ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ. ಗದರಿಕೆಯನ್ನು ಹಗೆಮಾಡುವವನು ಸಾಯುವನು.
PRO 15:11 ಮರಣವೂ ಪಾತಾಳವೂ ಯೆಹೋವ ದೇವರಿಗೆ ಕಾಣುತ್ತಿರುವಾಗ, ಮನುಷ್ಯರ ಹೃದಯಗಳು ಅವರಿಗೆ ಮುಚ್ಚುಮರೆಯೇ?
PRO 15:12 ಕುಚೋದ್ಯಗಾರನು ಬುದ್ಧಿವಾದವನ್ನು ದ್ವೇಷಿಸುತ್ತಾನೆ. ಅವನು ಜ್ಞಾನಿಗಳಿಂದ ದೂರವಿರುತ್ತಾನೆ.
PRO 15:13 ಸಂತೋಷದ ಹೃದಯವು ಹರ್ಷವುಳ್ಳ ಮುಖಭಾವ ತೋರುವುದು. ಆದರೆ ನೊಂದ ಹೃದಯವು ಆತ್ಮಚೈತನ್ಯವನ್ನು ಕುಂದಿಸುತ್ತದೆ.
PRO 15:14 ವಿವೇಕವುಳ್ಳವನ ಹೃದಯವು ಪರಿಜ್ಞಾನವನ್ನು ಹುಡುಕುತ್ತದೆ. ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನೇ ತಿನ್ನುತ್ತದೆ.
PRO 15:15 ಬಾಧಿತರ ದಿನಗಳೆಲ್ಲವೂ ದುಃಖಭರಿತ. ಆದರೆ ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
PRO 15:16 ತೊಂದರೆಯಿಂದ ಕೂಡಿದ ದೊಡ್ಡ ಸಂಪತ್ತಿಗಿಂತ ಯೆಹೋವ ದೇವರ ಭಯದಿಂದ ಕೂಡಿದ ಅಲ್ಪವೇ ಮೇಲು.
PRO 15:17 ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸಕ್ಕಿಂತಲೂ, ಪ್ರೀತಿ ಇರುವಲ್ಲಿ ಸಸ್ಯಾಹಾರ ಊಟವೇ ಉತ್ತಮ.
PRO 15:18 ಕೋಪಿಷ್ಟನು ವಿವಾದವನ್ನು ಎಬ್ಬಿಸುವನು. ಆದರೆ ತಾಳ್ಮೆಯಿಂದ ಇರುವವನು ಜಗಳವನ್ನು ಶಾಂತಗೊಳಿಸುವನು.
PRO 15:19 ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ. ಆದರೆ ಯಥಾರ್ಥವಂತನ ಮಾರ್ಗವು ರಾಜಮಾರ್ಗ.
PRO 15:20 ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸಗೊಳಿಸುತ್ತಾನೆ. ಬುದ್ಧಿಹೀನನಾದರೋ ತನ್ನ ತಾಯಿಯನ್ನು ತಿರಸ್ಕರಿಸುತ್ತಾನೆ.
PRO 15:21 ಬುದ್ಧಿಹೀನನು ಮೂರ್ಖತನದಲ್ಲಿ ಉಲ್ಲಾಸಿಸುವನು. ತಿಳುವಳಿಕೆಯನ್ನು ಹೊಂದಿರುವವನು ನೇರ ಮಾರ್ಗದಲ್ಲಿ ನಡೆಯುತ್ತಾನೆ.
PRO 15:22 ಸಲಹೆಯ ಕೊರತೆಯಿಂದ ಯೋಜನೆಗಳು ವಿಫಲಗೊಳ್ಳುತ್ತವೆ. ಆದರೆ ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸಫಲಗೊಳ್ಳುವುವು.
PRO 15:23 ಸೂಕ್ತವಾದ ಉತ್ತರವನ್ನು ನೀಡುವಲ್ಲಿ ಮನುಷ್ಯನು ಸಂತೋಷವನ್ನು ಕಂಡುಕೊಳ್ಳುತ್ತಾನೆ. ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು.
PRO 15:24 ಜೀವದ ಮಾರ್ಗವು ಜಾಣನನ್ನು ಮೇಲಕ್ಕೆತ್ತುವುದು. ಅದು ಅವನನ್ನು ಪಾತಾಳಕ್ಕೆ ಇಳಿಯುವದರಿಂದ ತಪ್ಪಿಸುವುದು.
PRO 15:25 ಯೆಹೋವ ದೇವರು ಗರ್ವಿಷ್ಠರ ಮನೆಯನ್ನು ಕೆಡವಿಬಿಡುವರು, ಆದರೆ ವಿಧವೆಯರ ಮೇರೆಯನ್ನು ಅವರು ನೆಲೆಗೊಳಿಸುವರು.
PRO 15:26 ದುಷ್ಟರ ಆಲೋಚನೆಯು ಯೆಹೋವ ದೇವರಿಗೆ ಅಸಹ್ಯವಾಗಿದೆ, ಆದರೆ ಸೌಜನ್ಯಶೀಲ ಮಾತುಗಳು ಅವರ ದೃಷ್ಟಿಯಲ್ಲಿ ಶುದ್ಧವಾಗಿವೆ.
PRO 15:27 ದುರಾಶೆಯುಳ್ಳವನು ತನ್ನ ಕುಟುಂಬವನ್ನು ಬಾಧಿಸುತ್ತಾನೆ. ಲಂಚವನ್ನು ಹಗೆಮಾಡುವವನು ಬದುಕುವನು.
PRO 15:28 ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ. ಆದರೆ ದುಷ್ಟರ ಬಾಯಿಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
PRO 15:29 ಯೆಹೋವ ದೇವರು ದುಷ್ಟರಿಗೆ ದೂರ; ಆದರೆ ನೀತಿವಂತರ ಪ್ರಾರ್ಥನೆಯನ್ನು ಅವರು ಕೇಳುತ್ತಾರೆ.
PRO 15:30 ಹರ್ಷಚಿತ್ತದ ನೋಟವು ಹೃದಯಕ್ಕೆ ಸಂತೋಷವನ್ನು ತರುತ್ತದೆ. ಒಳ್ಳೆಯ ವಾರ್ತೆಯು ಎಲುಬುಗಳನ್ನು ಪುಷ್ಟಿಗೊಳಿಸುತ್ತದೆ.
PRO 15:31 ಜೀವದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ವಾಸಿಸುವವನಾಗಿದ್ದಾನೆ.
PRO 15:32 ಶಿಸ್ತನ್ನು ನಿರಾಕರಿಸುವವನು, ತನಗೆ ತಾನೆ ಹಾನಿ ತಂದುಕೊಳ್ಳುತ್ತಾನೆ, ಆದರೆ ಗದರಿಕೆಗೆ ಕಿವಿಗೊಡುವವನು ವಿವೇಕವನ್ನು ಪಡೆಯುತ್ತಾನೆ.
PRO 15:33 ಯೆಹೋವ ದೇವರ ಭಯವೇ ಜ್ಞಾನವನ್ನು ಕಲಿಸುತ್ತದೆ. ನಮ್ರತೆ ಗೌರವಕ್ಕೆ ಮೊದಲು ಬರುತ್ತದೆ.
PRO 16:1 ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು, ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.
PRO 16:2 ಮನುಷ್ಯನ ಮಾರ್ಗಗಳೆಲ್ಲಾ ತನ್ನ ದೃಷ್ಟಿಯಲ್ಲಿ ಶುದ್ಧವಾಗಿವೆ, ಆದರೆ ಯೆಹೋವ ದೇವರು ಅವನ ಉದ್ದೇಶಗಳನ್ನು ಪರೀಕ್ಷಿಸುತ್ತಾರೆ.
PRO 16:3 ನಿನ್ನ ಕಾರ್ಯಗಳನ್ನು ಯೆಹೋವ ದೇವರಿಗೆ ಒಪ್ಪಿಸು, ಆಗ ನಿನ್ನ ಯೋಜನೆಗಳು ಸ್ಥಿರವಾಗುವುವು.
PRO 16:4 ಯೆಹೋವ ದೇವರು ಎಲ್ಲವುಗಳನ್ನು ಅದರದೇ ಆದ ಉದ್ದೇಶಗಳಿಗಾಗಿ ಮಾಡಿದ್ದಾರೆ. ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿದ್ದಾರೆ.
PRO 16:5 ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಯೆಹೋವ ದೇವರಿಗೆ ಅಸಹ್ಯ. ದುಷ್ಟನಿಗೆ ಶಿಕ್ಷೆಯು ತಪ್ಪುವುದಿಲ್ಲ.
PRO 16:6 ಪ್ರೀತಿ ಮತ್ತು ಸತ್ಯತೆಗಳಿಂದ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದೆ. ಯೆಹೋವ ದೇವರ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
PRO 16:7 ಮನುಷ್ಯನ ಮಾರ್ಗಗಳು ಯೆಹೋವ ದೇವರನ್ನು ಮೆಚ್ಚಿಸಿದಾಗ, ಅವರು ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನದಲ್ಲಿರುವಂತೆ ಮಾಡುತ್ತಾರೆ.
PRO 16:8 ಅನ್ಯಾಯದ ದೊಡ್ಡ ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
PRO 16:9 ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ, ಆದರೆ ಯೆಹೋವ ದೇವರು ಅವನ ಹೆಜ್ಜೆಗಳನ್ನು ಸ್ಥಾಪಿಸುತ್ತಾರೆ.
PRO 16:10 ಅರಸನ ತುಟಿಗಳಲ್ಲಿ ದೈವೋಕ್ತಿ. ನ್ಯಾಯತೀರ್ಪಿನಲ್ಲಿ ಅವನ ಬಾಯಿಯು ದೋಷ ಮಾಡುವುದಿಲ್ಲ.
PRO 16:11 ನ್ಯಾಯದ ತೂಕವೂ ತಕ್ಕಡಿಯೂ ಯೆಹೋವ ದೇವರದೇ. ಚೀಲದ ತೂಕಗಳು ಅವರ ಕೈಕೆಲಸವೇ.
PRO 16:12 ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು. ಏಕೆಂದರೆ ನೀತಿಯಿಂದ ಸಿಂಹಾಸನವು ಸ್ಥಾಪಿಸಲಾಗುತ್ತದೆ.
PRO 16:13 ನೀತಿಯ ತುಟಿಗಳಲ್ಲಿ ಅರಸರು ಆನಂದಿಸುತ್ತಾರೆ, ಯಥಾರ್ಥವಾದಿಯನ್ನು ಅವರು ಪ್ರೀತಿಸುತ್ತಾರೆ.
PRO 16:14 ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ, ಆದರೆ ಜ್ಞಾನಿಯು ಅದನ್ನು ಶಮನಪಡಿಸುವನು.
PRO 16:15 ಪ್ರಕಾಶಮಾನವಾದ ಅರಸನ ಮುಖದಲ್ಲಿ ಜೀವ, ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
PRO 16:16 ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವುದು ಎಷ್ಟೋ ಉತ್ತಮ.
PRO 16:17 ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ಬಹುದೂರ. ತನ್ನ ಮಾರ್ಗವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
PRO 16:18 ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ. ಬೀಳುವಿಕೆಯ ಮುಂಚೆ ಜಂಬದ ಆತ್ಮ.
PRO 16:19 ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳುವದಕ್ಕಿಂತ, ದೀನರೊಂದಿಗೆ ದೀನ ಆತ್ಮವುಳ್ಳವರಾಗಿ ಇರುವುದು ಉತ್ತಮ.
PRO 16:20 ಕಾರ್ಯವನ್ನು ಜ್ಞಾನದಿಂದ ನಡೆಸುವವನು ಒಳ್ಳೆಯದನ್ನು ಪಡೆಯುವನು. ಯೆಹೋವ ದೇವರಲ್ಲಿ ಭರವಸೆ ಇಡುವವನು ಧನ್ಯನು.
PRO 16:21 ಹೃದಯದಲ್ಲಿ ಜ್ಞಾನವಂತರು ವಿವೇಚನೆಯುಳ್ಳವರು ಎಂದು ಕರೆಯಲಾಗುವರು. ತುಟಿಗಳ ಮಾಧುರ್ಯ ಮನವೊಲಿಸುವವು.
PRO 16:22 ವಿವೇಕವು ವಿವೇಕಿಗಳಿಗೆ ಜೀವನದ ಬುಗ್ಗೆ, ಆದರೆ ಮೂರ್ಖತನವು ಮೂರ್ಖರಿಗೆ ಶಿಕ್ಷೆಯನ್ನು ತರುತ್ತದೆ.
PRO 16:23 ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
PRO 16:24 ವಿನಯದ ಮಾತುಗಳು ಜೇನುಗೂಡು ಪ್ರಾಣಕ್ಕೆ ಮಧುರವೂ, ಎಲುಬುಗಳಿಗೆ ಕ್ಷೇಮವೂ ಆಗಿವೆ.
PRO 16:25 ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು, ಆದರೆ ಅದರ ಅಂತ್ಯವು ಮರಣದ ಮಾರ್ಗವೇ.
PRO 16:26 ದುಡಿಯುವವನಿಗೆ ಅವನ ಹಸಿವೇ ದುಡಿಯುವಂತೆ ಮಾಡುವುದು, ಅವನ ಹಸಿವು ಅವನನ್ನು ಒತ್ತಾಯ ಮಾಡುವುದು.
PRO 16:27 ಭಕ್ತಿಹೀನನು ಕೇಡಿನ ಕುಣಿ ಅಗೆಯುತ್ತಾನೆ. ಅವನ ತುಟಿಗಳು ಉರಿಯುವ ಬೆಂಕಿಯಂತಿವೆ.
PRO 16:28 ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.
PRO 16:29 ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುತ್ತಾನೆ.
PRO 16:30 ವಕ್ರಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ.
PRO 16:31 ನರೆಗೂದಲು ಉಜ್ವಲ ಕಿರೀಟ, ಅದು ನೀತಿಯ ಜೀವಿತದಲ್ಲಿ ಒದಗುತ್ತದೆ.
PRO 16:32 ದೀರ್ಘಶಾಂತನು ಶೂರರಿಗಿಂತಲೂ ಶ್ರೇಷ್ಠ, ತನ್ನ ಮನಸ್ಸನ್ನು ಆಳುವವನು, ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
PRO 16:33 ಉಡಿಯಲ್ಲಿ ಚೀಟು ಹಾಕಬಹುದು, ಆದರೆ ಪ್ರತಿ ತೀರ್ಪು ಯೆಹೋವ ದೇವರದ್ದೇ.
PRO 17:1 ವಿವಾದದೊಂದಿಗೆ ತುಂಬಿದ ಔತಣದ ಮನೆಗಿಂತ, ಶಾಂತಿ ಸಮಾಧಾನದ ಒಣ ತುತ್ತು ಮೇಲು.
PRO 17:2 ನಾಚಿಕೆಪಡಿಸುವ ಮಗನ ಮೇಲೆ ಜಾಣನಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
PRO 17:3 ಸೋಸುವುದಕ್ಕೆ ಬೆಳ್ಳಿಗೆ ಕುಲುಮೆ ಪುಟ, ಬಂಗಾರಕ್ಕೆ ಆವಿಗೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರಿಶೋಧಿಸುತ್ತಾರೆ.
PRO 17:4 ಕೇಡು ಮಾಡುವವನು ಕೆಟ್ಟ ಮಾತುಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು.
PRO 17:5 ಬಡವರನ್ನು ಹಾಸ್ಯಮಾಡುವವನು, ತನ್ನನ್ನು ಸೃಷ್ಟಿಸಿದ ಯೆಹೋವ ದೇವರನ್ನು ನಿಂದಿಸುತ್ತಾನೆ; ಬೇರೆಯವರ ವಿಪತ್ತುಗಳಿಗೆ ಸಂತೋಷಿಸುವವನು ಶಿಕ್ಷೆಯನ್ನು ಹೊಂದುವನು.
PRO 17:6 ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆತಾಯಿಗಳೇ.
PRO 17:7 ಉತ್ತಮವಾದ ಪದಗಳು ಮೂರ್ಖನಿಗೆ ಸೂಕ್ತವಲ್ಲ; ಆಳುವವನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಆಯುಕ್ತವಲ್ಲವೇ.
PRO 17:8 ಕೊಡುವವನ ಕಣ್ಣಿಗೆ ಲಂಚವು ಆಕರ್ಷಣೆಯಾಗಿದೆ; ಪ್ರತಿ ತಿರುವಿನಲ್ಲಿಯೂ ಯಶಸ್ಸು ಬರುತ್ತದೆ ಎಂದು ಅವರು ಭಾವಿಸುತ್ತಾರೆ.
PRO 17:9 ದೋಷವನ್ನು ಕ್ಷಮಿಸುವವನು ಪ್ರೀತಿಯನ್ನು ಹುಡುಕುತ್ತಾನೆ; ಆದರೆ ದೋಷವನ್ನು ಎತ್ತಿ ಆಡುವವನು ಸ್ನೇಹಿತರಿಂದ ಪ್ರತ್ಯೇಕಗೊಳ್ಳುತ್ತಾನೆ.
PRO 17:10 ಬುದ್ಧಿಹೀನನ ಬೆನ್ನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟುತ್ತದೆ.
PRO 17:11 ತಿರುಗಿ ಬೀಳುವವನು ಕೆಟ್ಟದ್ದಕ್ಕೇ ತವಕಪಡುತ್ತಾನೆ; ಆದಕಾರಣ ಮರಣ ದೂತರನ್ನು ಅವನ ವಿರುದ್ಧ ಕಳುಹಿಸಲಾಗುವದು.
PRO 17:12 ತನ್ನ ಮೂಢತೆಯಲ್ಲಿರುವ ಬುದ್ಧಿಹೀನನನ್ನು ಸಂಧಿಸುವುದಕ್ಕಿಂತ ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಸಂಧಿಸುವುದು ಮೇಲು.
PRO 17:13 ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆಯಿಂದ ಕೇಡು ತೊಲಗುವುದೇ ಇಲ್ಲ.
PRO 17:14 ಕಲಹದ ಪ್ರಾರಂಭವು ಆಣೆಕಟ್ಟು ಒಡೆದಂತೆ ಇರುವುದು; ಆದಕಾರಣ ಆ ಕಲಹಕ್ಕೆ ಕೈಹಾಕುವುದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
PRO 17:15 ದುಷ್ಟರನ್ನು ನೀತಿವಂತರೆಂದು ನಿರ್ಣಯಿಸುವವನು, ನೀತಿವಂತರನ್ನು ಖಂಡಿಸುವವನೂ ಇವರಿಬ್ಬರೂ ಯೆಹೋವ ದೇವರಿಗೆ ಅಸಹ್ಯ.
PRO 17:16 ಜ್ಞಾನವನ್ನು ಸಂಪಾದಿಸುವುದಕ್ಕೆ ಬುದ್ಧಿಹೀನನ ಕೈಯಲ್ಲಿ ಹಣ ಏಕೆ? ಅವನಿಗೆ ಕಲಿಯಲು ಮನಸ್ಸಿಲ್ಲವಲ್ಲ.
PRO 17:17 ಸ್ನೇಹಿತನು ಎಲ್ಲಾ ಸಮಯದಲ್ಲಿ ಪ್ರೀತಿಸುತ್ತಾನೆ; ಆಪತ್ತಿನಲ್ಲಿ ಸಹಾಯಮಾಡುವಗೋಸ್ಕರ ಸಹೋದರನು ಹುಟ್ಟಿದ್ದಾನೆ.
PRO 17:18 ಬುದ್ಧಿಹೀನನು ಕೈ ಕುಲುಕಿ ತನ್ನ ನೆರೆಯವನಿಗೆ ಜಾಮಿನನಾಗುತ್ತಾನೆ.
PRO 17:19 ಕಲಹವನ್ನು ಪ್ರೀತಿಮಾಡುವವನು ಪಾಪವನ್ನು ಪ್ರೀತಿಮಾಡುತ್ತಾನೆ; ತನ್ನ ಗೋಡೆಯನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಆಮಂತ್ರಿಸುತ್ತಾನೆ.
PRO 17:20 ವಕ್ರಹೃದಯವುಳ್ಳವನು ಸಮೃದ್ಧಿಯನ್ನು ಹೊಂದುವುದಿಲ್ಲ; ಮೋಸದ ನಾಲಿಗೆಯುಳ್ಳವನು ಹಾನಿಗೆ ಬೀಳುವನು.
PRO 17:21 ಬುದ್ಧಿಹೀನ ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವುದಿಲ್ಲ.
PRO 17:22 ಹರ್ಷಹೃದಯವು ಒಳ್ಳೆಯ ಔಷಧ; ಆದರೆ ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
PRO 17:23 ನ್ಯಾಯದ ಮಾರ್ಗಗಳನ್ನು ತಿರುಗಿಸಿಬಿಡುವುದಕ್ಕೆ ದುಷ್ಟನು ಗುಪ್ತವಾಗಿ ಲಂಚವನ್ನು ತೆಗೆದುಕೊಳ್ಳುತ್ತಾನೆ.
PRO 17:24 ವಿವೇಕಿಯು ಜ್ಞಾನವನ್ನು ತನ್ನ ಮುಂದೆ ಇಟ್ಟುಕೊಳ್ಳುತ್ತಾನೆ. ಆದರೆ ಬುದ್ಧಿಹೀನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಅಲೆಯುವವು.
PRO 17:25 ಬುದ್ಧಿಹೀನನಾದ ಮಗನು ತನ್ನ ತಂದೆಗೆ ದುಃಖವೂ, ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
PRO 17:26 ನೀತಿವಂತನಿಗೆ ದಂಡ ವಿಧಿಸುವುದು ಒಳ್ಳೆಯದಲ್ಲದಿದ್ದರೆ, ಖಂಡಿತವಾಗಿಯೂ ಪ್ರಾಮಾಣಿಕ ಅಧಿಕಾರಿಗಳನ್ನು ಹೊಡೆಯುವುದು ಸರಿಯಲ್ಲ.
PRO 17:27 ಪರಿಜ್ಞಾನ ಹೊಂದಿರುವವನು ಮಿತವಾಗಿ ಮಾತನಾಡುತ್ತಾನೆ; ತಿಳುವಳಿಕೆಯನ್ನು ಹೊಂದಿರುವವನು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
PRO 17:28 ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆನಿಸಿಕೊಳ್ಳುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿ ಎನಿಸಿಕೊಳ್ಳುವನು.
PRO 18:1 ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.
PRO 18:2 ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ; ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ.
PRO 18:3 ದುಷ್ಟತ್ವವು ಬಂದಾಗ ತಾತ್ಸಾರವೂ, ಅವಮಾನದೊಂದಿಗೆ ನಿಂದೆಯೂ ಬರುತ್ತವೆ.
PRO 18:4 ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ, ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.
PRO 18:5 ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ, ದುಷ್ಟರಿಗೆ ಪಕ್ಷಪಾತ ತೋರಿಸುವುದು ಯುಕ್ತವಲ್ಲ.
PRO 18:6 ಜ್ಞಾನಹೀನನ ತುಟಿಗಳು ಕಲಹದಲ್ಲಿ ಸೇರುವುದರಿಂದ ಏಟುಗಳನ್ನು ತಿನ್ನುವುದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.
PRO 18:7 ಬುದ್ಧಿಹೀನನ ಬಾಯಿಯು ಅವನ ನಾಶನ; ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ.
PRO 18:8 ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಹೊಟ್ಟೆಯ ಒಳಭಾಗಗಳಿಗೆ ಇಳಿದು ಹೋಗುವುವು.
PRO 18:9 ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು, ಕೆಡುಕನಿಗೆ ಸಹೋದರನಾಗಿದ್ದಾನೆ.
PRO 18:10 ಯೆಹೋವ ದೇವರ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿ ಭದ್ರವಾಗಿರುತ್ತಾನೆ.
PRO 18:11 ಧನವಂತರ ಸಂಪತ್ತು ಅವರಿಗೆ ಬಲವಾದ ಪಟ್ಟಣವೂ ಅವನ ಕಲ್ಪನೆಯಲ್ಲಿ ಅದು ಸುರಕ್ಷತೆಯ ಎತ್ತರವಾದ ಗೋಡೆಯೂ ಆಗಿದೆ.
PRO 18:12 ನಾಶನಕ್ಕೆ ಮುಂಚೆ ಮನುಷ್ಯನ ಹೃದಯವು ಗರ್ವಿಷ್ಠವಾಗಿರುವುದು; ಸನ್ಮಾನಕ್ಕೆ ಮುಂಚೆ ದೀನತ್ವವು ಬರುತ್ತದೆ.
PRO 18:13 ಕೇಳಿಸಿಕೊಳ್ಳದೆ ಉತ್ತರ ಕೊಡುವವರಿಗೆ ಅದು ಮೂರ್ಖತನವೂ, ಅವಮಾನವೂ ಆಗಿದೆ.
PRO 18:14 ಮನುಷ್ಯನ ಆತ್ಮವು ಅಸ್ವಸ್ಥತೆಯನ್ನು ಸಹಿಸುವುದು; ಆದರೆ ಮುರಿದ ಆತ್ಮವನ್ನು ಸಹಿಸುವವರು ಯಾರು?
PRO 18:15 ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
PRO 18:16 ಕಾಣಿಕೆಯನ್ನು ಕೊಡುವವನಿಗೆ ಬಾಗಿಲು ತೆರೆಯುತ್ತದೆ; ಅದು ದೊಡ್ಡವರ ಸನ್ನಿಧಾನಕ್ಕೂ ಅವನನ್ನು ಕರೆದುಕೊಂಡು ಹೋಗುತ್ತದೆ.
PRO 18:17 ಪ್ರತಿವಾದಿ ಬಂದು ಪರಿಶೀಲಿಸುವವರೆಗೆ, ಮೊದಲು ವಾದಿಸುವವನು ನ್ಯಾಯವಂತನೆಂದು ತೋರುತ್ತಾನೆ.
PRO 18:18 ಚೀಟು ಹಾಕುವುದರಿಂದ ವ್ಯಾಜ್ಯಶಮನ; ಬಲಿಷ್ಠ ಪ್ರತಿವಾದಿಗಳ ವಿವಾದಗಳನ್ನು ಸಹ ಬಗೆಹರಿಸುತ್ತದೆ.
PRO 18:19 ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಬೇಸರಗೊಂಡ ಸಹೋದರನನ್ನು ಗೆಲ್ಲುವುದು ಕಷ್ಟಕರ; ಅವರ ಕಲಹಗಳು ಕೋಟೆಯ ಬಾಗಿಲಿಗೆ ಅಗುಳಿಗಳಂತೆ ಇವೆ.
PRO 18:20 ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿ ಹೊಂದುವುದು; ತನ್ನ ತುಟಿಗಳ ಆದಾಯದಿಂದ ಅವನು ತೃಪ್ತಿಹೊಂದುವನು.
PRO 18:21 ನಾಲಿಗೆಗೆ ಮರಣ ಮತ್ತು ಜೀವದ ಶಕ್ತಿಯಿದೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
PRO 18:22 ಪತ್ನಿಯನ್ನು ದೊರಕಿಸಿಕೊಂಡವನು ಒಳ್ಳೆಯದನ್ನು ಸಂಪಾದಿಸಿದವನಾಗಿ, ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ.
PRO 18:23 ಬಡವನು ಕರುಣೆಗಾಗಿ ವಿಜ್ಞಾಪನೆ ಮಾಡುತ್ತಾನೆ; ಆದರೆ ಧನಿಕನು ಕಠಿಣವಾಗಿ ಉತ್ತರ ಕೊಡುತ್ತಾರೆ.
PRO 18:24 ವಿಶ್ವಾಸಕ್ಕೆ ಅರ್ಹರಲ್ಲದ ಸ್ನೇಹಿತರನ್ನು ಹೊಂದಿರುವವನು ಶೀಘ್ರವೇ ನಾಶವಾಗುತ್ತಾನೆ; ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
PRO 19:1 ಬುದ್ಧಿಹೀನನ ವಕ್ರ ತುಟಿಗಳಿಗಿಂತ, ನಿರ್ದೋಷವಾಗಿ ನಡೆಯುವ ಬಡವನು ಉತ್ತಮ.
PRO 19:2 ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ; ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.
PRO 19:3 ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ, ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.
PRO 19:4 ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ; ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ.
PRO 19:5 ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.
PRO 19:6 ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ. ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.
PRO 19:7 ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ; ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ ಅವನಿಗೆ ಏನೂ ದೊರಕದು.
PRO 19:8 ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ; ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.
PRO 19:9 ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ; ಸುಳ್ಳಾಡುವವನು ಹಾಳಾಗಿ ಹೋಗುವನು.
PRO 19:10 ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ.
PRO 19:11 ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ; ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ.
PRO 19:12 ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
PRO 19:13 ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು; ಜಗಳವಾಡುವ ಹೆಂಡತಿ ಯಾವಾಗಲೂ ತೊಟ್ಟಿಕ್ಕುವ ಹನಿ.
PRO 19:14 ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು; ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ.
PRO 19:15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ; ಸೋಮಾರಿಯು ಹಸಿವೆಗೊಳ್ಳುವನು.
PRO 19:16 ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ, ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು.
PRO 19:17 ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ; ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು.
PRO 19:18 ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಮರಣಕ್ಕೆ ನೀನು ಕಾರಣನಾಗಬೇಡ.
PRO 19:19 ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು.
PRO 19:20 ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು; ಕಡೆಯಲ್ಲಿ ನೀನು ಜ್ಞಾನಿಯಾಗುವೆ.
PRO 19:21 ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ; ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು.
PRO 19:22 ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ. ಬಡವನು ಸುಳ್ಳುಗಾರನಿಗಿಂತ ಲೇಸು.
PRO 19:23 ಯೆಹೋವ ದೇವರ ಭಯವು ಜೀವದಾಯಕವು; ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ.
PRO 19:24 ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ, ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ!
PRO 19:25 ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು.
PRO 19:26 ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.
PRO 19:27 ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.
PRO 19:28 ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ; ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು.
PRO 19:29 ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ, ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.
PRO 20:1 ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ; ಇವುಗಳಿಂದ ಮೋಸ ಹೋದವನು ಜ್ಞಾನಿಯಲ್ಲ.
PRO 20:2 ಅರಸನ ಭಯವು ಸಿಂಹದ ಘರ್ಜನೆಯಂತಿದೆ; ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.
PRO 20:3 ಕಲಹವನ್ನು ತಡೆಯುವವನು, ಮಾನಕ್ಕೆ ಯೋಗ್ಯನು; ಆದರೆ ಬುದ್ಧಿಹೀನನು ಮಾತ್ರ ಜಗಳವಾಡಲು ಒತ್ತಾಯಿಸುತ್ತಾನೆ.
PRO 20:4 ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.
PRO 20:5 ಮನುಷ್ಯನ ಹೃದಯದ ಆಲೋಚನೆಯು ಆಳವಾದ ಬಾವಿಯ ನೀರಿನಂತಿದೆ; ವಿವೇಕಿಯು ಅದನ್ನು ಸೇದುವನು.
PRO 20:6 ಅನೇಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪ್ರಾಮಾಣಿಕತೆಯನ್ನು ಸಾರುವನು; ಆದರೆ ನಂಬಿಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
PRO 20:7 ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ; ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.
PRO 20:8 ಅರಸನು ತನ್ನ ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವಾಗ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
PRO 20:9 “ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ. ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?
PRO 20:10 ಮೋಸದ ತೂಕಗಳೂ, ಮೋಸದ ಅಳತೆಗಳೂ ಇವೆರಡೂ ಯೆಹೋವ ದೇವರಿಗೆ ಅಸಹ್ಯ.
PRO 20:11 ಚಿಕ್ಕ ಮಕ್ಕಳಾದರೋ ತಮ್ಮ ಕ್ರಿಯೆಗಳಿಂದಲೇ, ತಾವು ಶುದ್ಧರೋ ಯಥಾರ್ಥರೋ ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ.
PRO 20:12 ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಯೆಹೋವ ದೇವರು ಉಂಟುಮಾಡಿದ್ದಾನೆ.
PRO 20:13 ನೀವು ನಿದ್ರೆಯನ್ನು ಪ್ರೀತಿಸಿದರೆ, ನೀವು ಬಡತನದಲ್ಲಿ ಕೊನೆಗೊಳ್ಳುತ್ತೀರಿ; ನಿಮ್ಮ ಕಣ್ಣುಗಳನ್ನು ತೆರೆದರೆ, ಸಾಕಷ್ಟು ಆಹಾರ ಇರುತ್ತದೆ!
PRO 20:14 “ಇದು ಒಳ್ಳೆಯದಲ್ಲ ಇದು ಒಳ್ಳೆಯದಲ್ಲ!” ಎಂದು ಕೊಳ್ಳುವವನು ಹೇಳುತ್ತಾನೆ; ಆದರೆ ಅವನು ಕೊಂಡು ಹೋದ ಮೇಲೆ ಅದನ್ನೇ ಹೊಗಳುತ್ತಾನೆ.
PRO 20:15 ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ; ಆದರೆ ಪರಿಜ್ಞಾನದ ತುಟಿಗಳು ಅಪರೂಪದ ರತ್ನವಾಗಿವೆ.
PRO 20:16 ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ; ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
PRO 20:17 ವಂಚನೆಯಿಂದ ಸಿಕ್ಕಿದ ಆಹಾರವು ರುಚಿ; ಆದರೆ ಆಮೇಲೆ ಅವನ ಬಾಯಿಯು ಮರಳಿನಿಂದ ತುಂಬುವುದು.
PRO 20:18 ಸಲಹೆಯಿಂದ ಯೋಜನೆಗಳು ನೆರವೆರುವವು; ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.
PRO 20:19 ಚಾಡಿಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ; ಆದಕಾರಣ ಹರಟೆ ಹೊಡೆಯುವವನ ಸಹವಾಸ ಮಾಡಬೇಡ.
PRO 20:20 ತನ್ನ ತಂದೆಯನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಕತ್ತಲೆಯಲ್ಲಿ ಆರಿಹೋಗುವುದು.
PRO 20:21 ಪ್ರಾರಂಭದಲ್ಲಿ ತ್ವರೆಯಾಗಿ ಪಡೆದುಕೊಂಡ ಆಸ್ತಿಯೂ ಅಂತ್ಯದಲ್ಲಿ ಆಶೀರ್ವಾದವಾಗಿರುವುದಿಲ್ಲ.
PRO 20:22 ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ; ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.
PRO 20:23 ವ್ಯತ್ಯಾಸದ ತೂಕಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಅಪ್ರಾಮಾಣಿಕ ತಕ್ಕಡಿಗಳು ಅವರನ್ನು ಮೆಚ್ಚಿಸುವುದಿಲ್ಲ.
PRO 20:24 ಮನುಷ್ಯನ ಹೆಜ್ಜೆಗಳನ್ನು ಯೆಹೋವ ದೇವರು ನಿರ್ದೇಶಿಸುತ್ತಾರೆ. ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಳ್ಳಬಲ್ಲನು?
PRO 20:25 ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು ಆಮೇಲೆ ವಿಚಾರಿಸುವುದು ಉರುಲಾಗಿದೆ.
PRO 20:26 ಜ್ಞಾನಿಯಾದ ಅರಸನು ದುಷ್ಟರನ್ನು ತೂರುವನು; ಅವರ ಮೇಲೆ ಕಣದ ಚಕ್ರವನ್ನು ಎಳೆಯುವನು.
PRO 20:27 ಮನುಷ್ಯನ ಆತ್ಮವು ಯೆಹೋವ ದೇವರ ದೀಪವಾಗಿದೆ. ಅದು ಅವನ ಅಂತರಂಗವನ್ನು ಶೋಧಿಸುತ್ತದೆ.
PRO 20:28 ಪ್ರೀತಿಯೂ ನಂಬಿಗಸ್ತಿಕೆಯೂ ಅರಸನನ್ನು ಕಾಯುತ್ತವೆ; ಪ್ರೀತಿಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
PRO 20:29 ಯೌವನಸ್ಥರ ಮಹಿಮೆ ಅವರ ಬಲವೇ; ಮುದುಕರ ವೈಭವ ನರೆತ ತಲೆಯೇ.
PRO 20:30 ಗಾಯಗೊಳಿಸುವ ಏಟುಗಳು ದುಷ್ಟತ್ವವನ್ನು ತೊಳೆಯುತ್ತವೆ; ಪೆಟ್ಟುಗಳು ಅಂತರಂಗವನ್ನೂ ಶುದ್ಧಿಗೊಳಿಸುತ್ತವೆ.
PRO 21:1 ಅರಸನ ಹೃದಯವು ಯೆಹೋವ ದೇವರ ಕೈಯಲ್ಲಿ ನೀರಿನ ಕಾಲುವೆಗಳಂತೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.
PRO 21:2 ಮನುಷ್ಯನ ಪ್ರತಿಯೊಂದು ಮಾರ್ಗವು ಅವನ ದೃಷ್ಟಿಯಲ್ಲಿ ಸರಿಯಾಗಿದೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರೀಕ್ಷಿಸುತ್ತಾರೆ.
PRO 21:3 ಯಜ್ಞಕ್ಕಿಂತ ನೀತಿ ನ್ಯಾಯಗಳನ್ನು ನಡೆಸುವುದು ಯೆಹೋವ ದೇವರಿಗೆ ಎಷ್ಟೋ ಮೆಚ್ಚಿಗೆಯಾಗಿದೆ.
PRO 21:4 ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಇವೆಲ್ಲಾ ಪಾಪವೇ.
PRO 21:5 ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರತೆಯು ಬಡತನಕ್ಕೆ ನಡೆಸುತ್ತದೆ.
PRO 21:6 ಸುಳ್ಳಿನ ನಾಲಿಗೆಯಿಂದ ಸಂಪಾದಿಸಿದ ಸಂಪತ್ತು ಕ್ಷಣಿಕ ಆವಿಯಂತೆಯೂ ಮೃತ್ಯುಪಾಶದಂತೆಯೂ ಆಗಿದೆ.
PRO 21:7 ದುಷ್ಟರ ಹಿಂಸೆಯು ಅವರನ್ನು ನಾಶಪಡಿಸುವುದು; ಏಕೆಂದರೆ ನ್ಯಾಯವಾದದ್ದನ್ನು ಮಾಡುವುದನ್ನು ಅವರು ನಿರಾಕರಿಸುತ್ತಾರೆ.
PRO 21:8 ದೋಷಿಯ ಮಾರ್ಗವು ಡೊಂಕು, ಮುಗ್ಧನ ನಡತೆ ಯಥಾರ್ಥ.
PRO 21:9 ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.
PRO 21:10 ದುಷ್ಟರು ಕೇಡನ್ನು ಅಪೇಕ್ಷಿಸುತ್ತಾರೆ; ಅವನು ತನ್ನ ನೆರೆಯವನಿಗೂ ಯಾವ ದಯೆಯನ್ನೂ ತೋರಿಸನು.
PRO 21:11 ಪರಿಹಾಸ್ಯಕಾರರನ್ನು ಶಿಕ್ಷಿಸಿದರೆ, ಮುಗ್ಧರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ, ಅವನು ಪರಿಜ್ಞಾನವನ್ನು ಹೊಂದುತ್ತಾನೆ.
PRO 21:12 ನೀತಿವಂತನು ದುಷ್ಟರ ಮನೆಯನ್ನು ಗಮನಿಸುತ್ತಾನೆ; ದುಷ್ಟರನ್ನು ಕೇಡಿಗೆ ತಳ್ಳುವನು.
PRO 21:13 ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನೇ ಕೂಗಿದಾಗ ಯಾರೂ ಅವನಿಗೆ ಉತ್ತರ ಕೊಡುವುದಿಲ್ಲ.
PRO 21:14 ಗುಟ್ಟಾಗಿ ಕೊಡುವ ಬಹುಮಾನವು ಕೋಪವನ್ನು ಅಡಗಿಸುವುದು; ಮಡಿಲಲ್ಲಿ ಇಟ್ಟ ಲಂಚವು ಮಹಾ ಕೋಪವನ್ನು ಆರಿಸುವುದು.
PRO 21:15 ನ್ಯಾಯತೀರಿಸುವುದು ನೀತಿವಂತರಿಗೆ ಸಂತೋಷ; ಆದರೆ ಕೆಟ್ಟದ್ದನ್ನು ಮಾಡುವವರಿಗೆ ಭೀತಿ.
PRO 21:16 ವಿವೇಕದ ಹಾದಿಯಿಂದ ತಪ್ಪಿಸಿಕೊಳ್ಳುವವನು ಸತ್ತವರ ಸಹವಾಸದಲ್ಲಿ ವಿಶ್ರಾಂತಿ ಪಡೆಯುವನು.
PRO 21:17 ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ, ತೈಲವನ್ನೂ ಅಪೇಕ್ಷಿಸುವವನು ಎಂದಿಗೂ ಧನವಂತನಾಗನು.
PRO 21:18 ದುಷ್ಟರು ನೀತಿವಂತರಿಗೂ, ದ್ರೋಹಿಗಳು ಸನ್ಮಾರ್ಗಿಗಳಿಗೂ ಈಡಾಗಿದ್ದಾರೆ.
PRO 21:19 ಕಾಡುವ ಜಗಳಗಂಟಿ ಹೆಂಡತಿಯೊಂದಿಗೆ ವಾಸಮಾಡುವುದಕ್ಕಿಂತ, ಮರಭೂಮಿಯಲ್ಲಿ ವಾಸಿಸುವುದು ಲೇಸು.
PRO 21:20 ಜ್ಞಾನವಂತರ ನಿವಾಸದಲ್ಲಿ ಆಯ್ದ ಐಶ್ವರ್ಯವೂ, ಎಣ್ಣೆಯೂ ಇರುತ್ತವೆ; ಆದರೆ ಬುದ್ಧಿಹೀನನು ಇದ್ದದ್ದೆಲ್ಲವನ್ನು ನುಂಗಿಬಿಡುತ್ತಾನೆ.
PRO 21:21 ನೀತಿಯನ್ನೂ, ಕರುಣೆಯನ್ನೂ ಹಿಂಬಾಲಿಸುವವನು ಜೀವವನ್ನೂ, ನೀತಿಯನ್ನೂ, ಕೀರ್ತಿಯನ್ನೂ ಕಂಡುಕೊಳ್ಳುತ್ತಾನೆ.
PRO 21:22 ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ, ಅವರು ಭರವಸವಿಟ್ಟ ಬಲವಾದ ಕೋಟೆಯನ್ನು ಕೆಡವಿ ಹಾಕುತ್ತಾನೆ.
PRO 21:23 ತನ್ನ ಬಾಯಿಯನ್ನೂ, ನಾಲಿಗೆಯನ್ನೂ ಕಾಯುವವನು, ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
PRO 21:24 ಸೊಕ್ಕೇರಿ ಗರ್ವದಲ್ಲಿ ವರ್ತಿಸುವವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕ.
PRO 21:25 ಸೋಮಾರಿಯ ಆಸೆಯು ಅವನನ್ನು ಕೊಲ್ಲುತ್ತದೆ; ಅವನ ಕೈಗಳು ದುಡಿಯುವುದಕ್ಕೆ ನಿರಾಕರಿಸುತ್ತವೆ.
PRO 21:26 ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
PRO 21:27 ದುಷ್ಟರ ಯಜ್ಞವು ಅಸಹ್ಯ; ಅದನ್ನು ದುರ್ಬುದ್ಧಿಯಿಂದ ಅರ್ಪಿಸಿದರೆ, ಇನ್ನೂ ಎಷ್ಟೋ ಅಸಹ್ಯಕರ.
PRO 21:28 ಸುಳ್ಳುಸಾಕ್ಷಿಯವನು ನಾಶವಾಗುವನು; ಆದರೆ ಕೇಳಿದ್ದನ್ನೇ ನುಡಿಯುವವನ ಸಾಕ್ಷಿ ಸದಾ ನಿಲ್ಲುವುದು.
PRO 21:29 ದುಷ್ಟನು ತನ್ನ ಮುಖವನ್ನು ಕಠಿಣ ಮಾಡಿಕೊಳ್ಳುತ್ತಾನೆ; ಯಥಾರ್ಥವಂತನಾದರೋ ತನ್ನ ಮಾರ್ಗಗಳನ್ನು ಯೋಚಿಸುತ್ತಾರೆ.
PRO 21:30 ಯೆಹೋವ ದೇವರಿಗೆ ವಿರೋಧವಾಗಿ ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.
PRO 21:31 ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಆದರೆ ಜಯ ದೊರೆಯುವುದು ಯೆಹೋವ ದೇವರಿಂದಲೇ.
PRO 22:1 ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತಲೂ ಗೌರವದಿಂದಿರುವುದು ಉತ್ತಮ.
PRO 22:2 ಧನಿಕರು, ಬಡವರು ಇದನ್ನು ಸಾಮಾನ್ಯವಾಗಿ ಹೊಂದಿರುವರು: ಇವರೆಲ್ಲರನ್ನು ಸೃಷ್ಟಿಸಿದಾತ ಯೆಹೋವ ದೇವರೇ.
PRO 22:3 ಜಾಣನು ಕೇಡನ್ನು ಮುಂದಾಗಿ ಕಂಡು ತಾನು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾನೆ.
PRO 22:4 ಯೆಹೋವ ದೇವರ ಭಯವೂ ದೀನತೆಯೂ ಕೊಡುವ ಪ್ರತಿಫಲ, ಐಶ್ವರ್ಯವೂ ಮಾನವೂ ಜೀವವೂ ಆಗಿದೆ.
PRO 22:5 ದುಷ್ಟರ ದಾರಿಯಲ್ಲಿ ಮುಳ್ಳುಗಳೂ, ಉರುಲುಗಳೂ ಇವೆ; ತನ್ನ ಜೀವವನ್ನು ಕಾಪಾಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
PRO 22:6 ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ.
PRO 22:7 ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ; ಸಾಲಗಾರನು ಸಾಲಕೊಟ್ಟವನಿಗೆ ಗುಲಾಮನು.
PRO 22:8 ಕೆಟ್ಟತನವನ್ನು ಬಿತ್ತುವವನು ಕೇಡನ್ನು ಕೊಯ್ಯುವನು; ಅವನ ಕೋಪದ ಬೆತ್ತವು ಮುರಿದು ಹೋಗುವುದು.
PRO 22:9 ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು, ಏಕೆಂದರೆ ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
PRO 22:10 ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು; ವಿವಾದವೂ ನಿಂದೆಯೂ ನಿಂತುಹೋಗುವುವು.
PRO 22:11 ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ ಅರಸನು ಸ್ನೇಹಿತನಾಗಿರುವನು.
PRO 22:12 ಯೆಹೋವ ದೇವರ ಕಣ್ಣುಗಳು ತಿಳುವಳಿಕೆಯನ್ನು ಕಾಯುತ್ತವೆ; ಅವರು ದ್ರೋಹಿಯ ಮಾತುಗಳನ್ನು ಕೆಡವಿ ಹಾಕುತ್ತಾರೆ.
PRO 22:13 ಸೋಮಾರಿಯು, “ಹೊರಗೆ ಸಿಂಹವಿದೆ! ಅದು ನನ್ನನ್ನು ಬೀದಿಗಳಲ್ಲಿ ಕೊಂದುಹಾಕುತ್ತದೆ,” ಎಂದು ಹೇಳುತ್ತಾನೆ.
PRO 22:14 ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಯೆಹೋವ ದೇವರಿಗೆ ಸಿಟ್ಟನ್ನು ಎಬ್ಬಿಸುವವನು ಅದರಲ್ಲಿ ಬೀಳುವನು.
PRO 22:15 ಮೂರ್ಖತನ ಯುವಕನ ಹೃದಯದಲ್ಲಿ ಬಂಧಿಸಲಾಗಿದೆ; ಆದರೆ ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವುದು.
PRO 22:16 ತನ್ನ ಸಂಪತ್ತನ್ನು ವೃದ್ಧಿಗೊಳಿಸುವುದಕ್ಕೆ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ದಾನ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
PRO 22:17 ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.
PRO 22:18 ಏಕೆಂದರೆ ಅವುಗಳನ್ನು ನಿನ್ನ ಹೃದಯದಲ್ಲಿ ಇಟ್ಟು ಕಾಪಾಡು, ಅವು ನಿನ್ನ ತುಟಿಗಳ ಮೇಲೆ ಸಿದ್ಧವಿದ್ದರೆ ಮೆಚ್ಚುಗೆಯಾಗಿವೆ.
PRO 22:19 ನಿನ್ನ ಭರವಸೆಯು ಯೆಹೋವ ದೇವರಲ್ಲಿ ಇರುವಂತೆ ಈ ದಿವಸ ನಿನಗೇ ತಿಳಿಯಪಡಿಸಿದ್ದೇನೆ.
PRO 22:20 ನಾನು ನಿಮಗಾಗಿ ಮೂವತ್ತು ಹೇಳಿಕೆಗಳನ್ನು ಬರೆದಿಲ್ಲವೋ? ಸಲಹೆ ಮತ್ತು ಪರಿಜ್ಞಾನದ ಹೇಳಿಕೆಗಳು,
PRO 22:21 ಪ್ರಾಮಾಣಿಕವಾಗಿರಲು ಮತ್ತು ಸತ್ಯವನ್ನು ಮಾತನಾಡಲು ನಿಮಗೆ ಕಲಿಸುವುದು, ಆದ್ದರಿಂದ ನೀವು ಸೇವೆ ಸಲ್ಲಿಸುವವರಿಗೆ ಸತ್ಯವಾದ ವರದಿಗಳನ್ನು ಹಿಂತಿರುಗಿಸುವಂತೆ ನಾನು ನಿಮಗೆ ಬರೆದಿದ್ದೇನೆ.
PRO 22:22 ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ; ನ್ಯಾಯಾಲಯದಲ್ಲಿ ದರಿದ್ರರನ್ನು ತುಳಿಯಬೇಡ.
PRO 22:23 ಏಕೆಂದರೆ ಯೆಹೋವ ದೇವರು ಅವರ ವ್ಯಾಜ್ಯವನ್ನು ನಡೆಸಿ, ಸೂರೆ ಮಾಡಿದವರ ಪ್ರಾಣವನ್ನು ಸೂರೆ ಮಾಡುವರು.
PRO 22:24 ಮುಂಗೊಪಿಯೊಂದಿಗೆ ಸ್ನೇಹ ಬೆಳೆಸಬೇಡ; ಸುಲಭವಾಗಿ ಕೋಪಗೊಳ್ಳುವವರೊಂದಿಗೆ ಸಹವಾಸ ಮಾಡಬೇಡ;
PRO 22:25 ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು, ನಿನ್ನನ್ನೇ ಉರುಲಿಗೆ ಸಿಕ್ಕಿಸಿಕೊಳ್ಳುವೆ.
PRO 22:26 ಬೇರೆಯವರ ಸಾಲವನ್ನು ಖಾತರಿಪಡಿಸಲೂ ಬೇರೊಬ್ಬರಿಗೆ ಭದ್ರತೆಯನ್ನು ನೀಡಲು ಒಪ್ಪಬೇಡ.
PRO 22:27 ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?
PRO 22:28 ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.
PRO 22:29 ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆ ಸಲ್ಲಿಸುವನು.
PRO 23:1 ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ, ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು.
PRO 23:2 ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ.
PRO 23:3 ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ; ಏಕೆಂದರೆ ಅದು ಮೋಸದ ಆಹಾರವು.
PRO 23:4 ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ; ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
PRO 23:5 ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ. ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು.
PRO 23:6 ಜಿಪುಣನ ಆಹಾರವನ್ನು ತಿನ್ನಬೇಡ; ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.
PRO 23:7 ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ ಯೋಚನೆಯುಳ್ಳವನಂತೆ ಇದ್ದಾನೆ; ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.
PRO 23:8 ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ; ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ.
PRO 23:9 ಬುದ್ಧಿಹೀನರ ಸಂಗಡ ಮಾತಾಡಬೇಡ; ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು.
PRO 23:10 ಪೂರ್ವಕಾಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ.
PRO 23:11 ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ; ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು.
PRO 23:12 ಶಿಸ್ತಿಗೆ ನಿನ್ನ ಹೃದಯವನ್ನೂ ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು.
PRO 23:13 ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ; ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ.
PRO 23:14 ಅವರನ್ನು ಬೆತ್ತದಿಂದ ಹೊಡೆದು, ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ.
PRO 23:15 ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ, ನನ್ನ ಹೃದಯವು ಹರ್ಷಿಸುವುದು.
PRO 23:16 ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ, ನನ್ನ ಅಂತರಾತ್ಮವು ಸಂತೋಷಿಸುವುದು.
PRO 23:17 ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ; ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು.
PRO 23:18 ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
PRO 23:19 ಮಗನೇ, ಕೇಳಿ ಜ್ಞಾನವಂತನಾಗು; ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು.
PRO 23:20 ಅತಿ ಮದ್ಯಪಾನ ಮಾಡುವವರಲ್ಲಿ ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ.
PRO 23:21 ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು; ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು.
PRO 23:22 ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು, ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ.
PRO 23:23 ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; ಆದರೆ ಅವುಗಳನ್ನು ಮಾರಬೇಡ.
PRO 23:24 ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು; ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು.
PRO 23:25 ನಿನ್ನ ತಂದೆತಾಯಿಗಳು ಸಂತೋಷಿಸುವರು; ನಿನ್ನ ಹೆತ್ತ ತಾಯಿ ಆನಂದಿಸುವಳು.
PRO 23:26 ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.
PRO 23:27 ವೇಶ್ಯೆಯು ಆಳವಾದ ಕುಣಿ; ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ.
PRO 23:28 ಕಳ್ಳನಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
PRO 23:29 ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು?
PRO 23:30 ಮದ್ಯಪಾನದಲ್ಲಿ ಆಸಕ್ತರಾಗಿ, ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ!
PRO 23:31 ದ್ರಾಕ್ಷಾರಸವು ಕೆಂಪಾಗಿದ್ದು, ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ, ಅದನ್ನು ನೋಡಬೇಡ.
PRO 23:32 ಕೊನೆಗೆ ಅದು ಹಾವಿನಂತೆ ಕಚ್ಚುವುದು ಮತ್ತು ಸರ್ಪದಂತೆ ವಿಷವುಕ್ಕಿಸುವುದು.
PRO 23:33 ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ. ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ.
PRO 23:34 ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ.
PRO 23:35 “ಜನರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ನಾನು ಎಚ್ಚರವಾಗುವುದು ಯಾವಾಗ? ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ.
PRO 24:1 ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆ ಪಡದಿರು; ಇಲ್ಲವೆ ಅವರ ಸಂಗಡ ಇರುವುದಕ್ಕೆ ಅಪೇಕ್ಷಿಸಬೇಡ.
PRO 24:2 ಏಕೆಂದರೆ ಅವರ ಹೃದಯವು ಹಿಂಸೆಯನ್ನು ಯೋಜಿಸುತ್ತದೆ; ಅವರ ತುಟಿಗಳು ಹಾನಿಯನ್ನು ಪ್ರಸ್ತಾಪಿಸುತ್ತವೆ.
PRO 24:3 ಜ್ಞಾನದಿಂದ ಮನೆಯು ಕಟ್ಟಲಾಗುತ್ತದೆ. ತಿಳುವಳಿಕೆಯಿಂದ ಅದು ಸ್ಥಿರಗೊಳ್ಳುತ್ತದೆ.
PRO 24:4 ತಿಳುವಳಿಕೆಯಿಂದ ಅದರ ಕೋಣೆಗಳು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬುವುದು.
PRO 24:5 ಬಲವುಳ್ಳವನಿಗಿಂತ ಜ್ಞಾನಿಯು ಶಕ್ತಿಶಾಲಿ; ತಿಳುವಳಿಕೆಯುಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
PRO 24:6 ಖಂಡಿತವಾಗಿಯೂ ನಿಮಗೆ ಯುದ್ಧಮಾಡಲು ಮಾರ್ಗದರ್ಶನ ಬೇಕು, ಬಹುಮಂದಿ ಸಲಹೆಗಾರರು ಇರುವಲ್ಲಿ ಜಯವಿರುವುದು.
PRO 24:7 ಜ್ಞಾನವು ಬುದ್ಧಿಹೀನನಿಗೆ ನಿಲುಕದು; ಪುರದ್ವಾರದಲ್ಲಿ ಕೂಡಿಬಂದ ಸಭೆಯಲ್ಲಿ ಅವನು ತನ್ನ ಬಾಯಿಯನ್ನು ತೆರೆಯುವುದೇ ಇಲ್ಲ.
PRO 24:8 ಕೇಡನ್ನು ಕಲ್ಪಿಸುವವನು ಕುಚೋದ್ಯಗಾರನೆಂದು ಕರೆಯಲ್ಪಡುವನು.
PRO 24:9 ಬುದ್ಧಿಹೀನನ ಆಲೋಚನೆಯು ಪಾಪಮಯ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.
PRO 24:10 ಇಕ್ಕಟ್ಟಿನ ಸಮಯದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲವು ಕೊಂಚವಾಗಿದೆ.
PRO 24:11 ಅನ್ಯಾಯವಾಗಿ ಮರಣಕ್ಕೆ ಸಾಗಿಸುವನನ್ನು ಬಿಡಿಸುವುದಕ್ಕೆ ಯತ್ನಿಸು; ಕೊಲೆಗೆ ನೇಮಿತವಾದವರನ್ನು ನೀನು ರಕ್ಷಿಸು.
PRO 24:12 ನೀನು, “ಅದು ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದರೆ, ಹೃದಯವನ್ನು ಪರಿಶೋಧಿಸುವ ದೇವರು ಅದನ್ನು ತಿಳಿಯುವದಿಲ್ಲವೋ? ನಿನ್ನ ಜೀವವನ್ನು ಕಾಯುವಾತನು ಅದನ್ನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
PRO 24:13 ಮಗನೇ, ಜೇನನ್ನು ತಿನ್ನು, ಅದು ಚೆನ್ನಾಗಿದೆ; ಜೇನು ಗೂಡಿನ ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಾಗಿದೆ.
PRO 24:14 ಅಂತೆಯೇ ಜ್ಞಾನವು ನಿನಗೆ ಜೇನುತುಪ್ಪದಂತೆ ತಿಳಿದುಕೋ. ಅದು ಸಿಕ್ಕಿದಾಗ ನಿನಗೆ ಉಜ್ವಲ ಭವಿಷ್ಯವಿದೆ. ನಿನ್ನ ನಿರೀಕ್ಷೆಯು ನಿರರ್ಥಕವಾಗುವುದಿಲ್ಲ.
PRO 24:15 ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚು ಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ.
PRO 24:16 ಏಕೆಂದರೆ ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡು ಬಂದಾಗ ಬೀಳುವನು.
PRO 24:17 ನಿನ್ನ ಶತ್ರು ಬಿದ್ದರೆ ಆನಂದಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.
PRO 24:18 ಯೆಹೋವ ದೇವರು ಅದನ್ನು ಕಂಡು, ಅದು ಅವರಿಗೆ ಇಷ್ಟವಿಲ್ಲದ್ದರಿಂದ, ಅವರು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಿಬಿಟ್ಟಾರು.
PRO 24:19 ಕೆಟ್ಟವರನ್ನು ಕಂಡು ಉರಿಗೊಳ್ಳಬೇಡ; ಇಲ್ಲವೆ ದುಷ್ಟರನ್ನು ಕಂಡು ಅಸೂಯೆಪಡಬೇಡ.
PRO 24:20 ಏಕೆಂದರೆ ಕೆಡುಕನಿಗೆ ಭವಿಷ್ಯದ ನಿರೀಕ್ಷೆ ಇರುವುದಿಲ್ಲ; ದುಷ್ಟರ ದೀಪವು ಆರಿಹೋಗುವುದು.
PRO 24:21 ಮಗನೇ, ಯೆಹೋವ ದೇವರಿಗೂ, ಅರಸನಿಗೂ ಭಯಪಡು; ತಿರುಗಿಬೀಳುವವರ ಸಹವಾಸ ಮಾಡಬೇಡ,
PRO 24:22 ಏಕೆಂದರೆ ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವದು; ಅವರು ಯಾವ ವಿಪತ್ತುಗಳನ್ನು ತರಬಹುದು ಎಂದು ಯಾರಿಗೆ ತಿಳಿದಿದೆ?
PRO 24:23 ಇವು ಜ್ಞಾನಿಗಳ ಹೇಳಿಕೆಗಳಾಗಿವೆ: ನ್ಯಾಯ ವಿಚಾರಣೆಯಲ್ಲಿ ಪಕ್ಷಪಾತವು ಸರಿಯಲ್ಲ.
PRO 24:24 ಯಾವನು ದುಷ್ಟನಿಗೆ, “ನೀನು ನೀತಿವಂತನು” ಎಂದು ಹೇಳುತ್ತಾನೋ ಅವನನ್ನು ಜನರು ಶಪಿಸುವರು; ಜನಾಂಗಗಳು ಅವನನ್ನು ದೂಷಿಸುವರು.
PRO 24:25 ಆದರೆ ತಪ್ಪುಮಾಡಿದವರನ್ನು ತಿದ್ದುವವರಿಗೆ ಶುಭವಾಗುವುದು; ಅವರ ಮೇಲೆ ಒಳ್ಳೆಯ ಆಶೀರ್ವಾದವು ಬರುವುದು.
PRO 24:26 ಪ್ರಾಮಾಣಿಕವಾದ ಉತ್ತರವು ತುಟಿಗೆ ಮುದ್ದಿಟ್ಟಂತೆ.
PRO 24:27 ನಿನ್ನ ಹೊರಗಿನ ಕೆಲಸವನ್ನು ಕ್ರಮವಾಗಿ ಇರಿಸು. ನಿನ್ನ ಹೊಲಗಳನ್ನು ಸಿದ್ಧಪಡಿಸು; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.
PRO 24:28 ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ಮಾತುಗಳಿಂದ ಅವನಿಗೆ ಮೋಸ ಮಾಡಬೇಡ.
PRO 24:29 ನನಗೆ, “ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು,” ಎಂದು ಹೇಳಬೇಡ.
PRO 24:30 ನಾನು ಸೋಮಾರಿಯ ಹೊಲದ ಪಕ್ಕದಲ್ಲಿ ಬುದ್ಧಿಹೀನನ ದ್ರಾಕ್ಷಿತೋಟದ ಕಡೆಯಲ್ಲಿ ಹಾದು ಹೋದೆನು.
PRO 24:31 ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಗಿತ್ತು.
PRO 24:32 ಆಗ ನಾನು ಅದನ್ನು ನೋಡಿ ಚಿಂತಿಸತೊಡಗಿದೆ; ನಾನು ಕಂಡದ್ದರಿಂದ ಪಾಠ ಕಲಿತೆನು.
PRO 24:33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನು ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
PRO 24:34 ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.
PRO 25:1 ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳೇ.
PRO 25:2 ವಿಷಯವನ್ನು ರಹಸ್ಯ ಮಾಡುವುದು ದೇವರ ಮಹಿಮೆ. ಒಂದು ವಿಷಯವನ್ನು ಹುಡುಕುವುದು ರಾಜರ ಮಹಿಮೆ.
PRO 25:3 ಆಕಾಶದ ಎತ್ತರವನ್ನು, ಭೂಮಿಯ ಆಳವನ್ನು ಯಾರೂ ಗ್ರಹಿಸಲು ಸಾಧ್ಯವಿಲ್ಲ. ಹಾಗೆಯೇ ಅರಸರ ಹೃದಯವು ಅಗೋಚರ.
PRO 25:4 ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ರೂಪಗೊಳ್ಳುವುದು.
PRO 25:5 ಅರಸನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ, ಆಗ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವುದು.
PRO 25:6 ಅರಸನ ಸನ್ನಿಧಿಯಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನವನ್ನು ಕೇಳಬೇಡ.
PRO 25:7 ಘನವಂತರ ಸನ್ನಿಧಿಯಲ್ಲಿ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕಿಂತ, “ಮೇಲಕ್ಕೆ ಬಾ,” ಎಂದು ಅರಸನು ನಿನಗೆ ಹೇಳುವುದು ಲೇಸು. ನೀವು ಏನನ್ನೋ ಕಂಡಿದ್ದರಿಂದ,
PRO 25:8 ದುಡುಕಿ ವ್ಯಾಜ್ಯಮಾಡುವುದಕ್ಕಾಗಿ ಹೋಗಬೇಡ. ಏಕೆಂದರೆ ನಿನ್ನ ನೆರೆಯವನು ನಿನ್ನನ್ನು ಅವಮಾನ ಮಾಡಿದಾಗ, ನೀನು ಕಡೆಯಲ್ಲಿ ಏನು ಮಾಡುವೆ?
PRO 25:9 ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಇನ್ನೊಬ್ಬರ ಗುಟ್ಟನ್ನು ಬಹಿರಂಗಪಡಿಸಬೇಡ,
PRO 25:10 ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು; ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು.
PRO 25:11 ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ.
PRO 25:12 ಕೇಳುವ ಕಿವಿಗೆ ಜ್ಞಾನಿಯ ತಿದ್ದುವಿಕೆಯು ಬಂಗಾರದ ಮುರು; ಚೊಕ್ಕ ಬಂಗಾರದ ಆಭರಣ.
PRO 25:13 ಸುಗ್ಗಿಯ ಕಾಲದಲ್ಲಿ ಹಿಮದ ಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ತನಾದ ಸೇವಕನಿದ್ದಾನೆ; ಏಕೆಂದರೆ ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
PRO 25:14 ದಾನ ಕೊಡದೆ ಕೊಟ್ಟಿದ್ದೇನೆಂದು ಹೊಗಳಿಕೊಳ್ಳುವವನು, ಮಳೆ ಇಲ್ಲದ ಮೋಡಗಳ ಮತ್ತು ಗಾಳಿಯ ಹಾಗೆ ಇದ್ದಾನೆ.
PRO 25:15 ತಾಳ್ಮೆಯ ಮೂಲಕ ಪ್ರಭುವನ್ನು ಒಲಿಸಿಕೊಳ್ಳಬಹುದು; ಮೃದುವಾದ ಮಾತು ಎಲುಬನ್ನು ಮುರಿಯುತ್ತದೆ.
PRO 25:16 ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟೇ ತಿನ್ನು; ಹೊಟ್ಟೆ ತುಂಬಾ ತಿಂದರೆ ಕಾರಬೇಕಾದೀತು.
PRO 25:17 ನಿನ್ನ ನೆರೆಯವನ ಮನೆಗೆ ಅಪರೂಪಕ್ಕೆ ಹೆಜ್ಜೆ ಇಡು; ಇಲ್ಲವಾದರೆ ನಿನ್ನ ವಿಷಯವಾಗಿ ಅವನು ಬೇಸರಗೊಂಡು ನಿನ್ನನ್ನು ಹಗೆಮಾಡಾನು.
PRO 25:18 ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಖಡ್ಗ, ಹರಿತವಾದ ಬಾಣವಾಗಿದ್ದಾನೆ.
PRO 25:19 ಕಷ್ಟಕಾಲದಲ್ಲಿ ಅಪನಂಬಿಗಸ್ತನಾದ ಮನುಷ್ಯನಲ್ಲಿಯ ಭರವಸೆಯು ಮುರಿದ ಹಲ್ಲು, ಕೀಲು ತಪ್ಪಿದ ಪಾದವು.
PRO 25:20 ಮನಗುಂದಿದವನಿಗೆ ಸಂಗೀತ ಹಾಡುವುದು ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆಯೂ ಹುಳಿ ಉಪ್ಪನ್ನು ಗಾಯಕ್ಕೆ ಹಚ್ಚಿದಂತೆಯೂ.
PRO 25:21 ನಿನ್ನ ಶತ್ರು ಹಸಿದಿದ್ದರೆ ಉಣ್ಣುವುದಕ್ಕೆ ಅವನಿಗೆ ಊಟಕೊಡು; ಅವನು ಬಾಯಾರಿದ್ದರೆ ಕುಡಿಯುವುದಕ್ಕೆ ನೀರು ಕೊಡು.
PRO 25:22 ಏಕೆಂದರೆ ಅದು ಅವನ ತಲೆಯ ಮೇಲೆ ಉರಿಯುವ ಬೆಂಕಿಯ ಕೆಂಡಗಳನ್ನು ಸುರಿಯುವಂತಿರುವುದು; ಯೆಹೋವ ದೇವರು ನಿನಗೆ ಪ್ರತಿಫಲ ಕೊಡುವರು.
PRO 25:23 ಅನಿರೀಕ್ಷಿತ ಮಳೆಯನ್ನು ತರುವ ಉತ್ತರದ ಗಾಳಿಯಂತೆ ಚಾಡಿಯ ನಾಲಿಗೆ ಕೋಪದ ಮುಖ ಮಾಡುತ್ತದೆ.
PRO 25:24 ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.
PRO 25:25 ಬಾಯಾರಿದವನಿಗೆ ತಣ್ಣೀರು ಹೇಗೋ ದೂರದೇಶದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
PRO 25:26 ದುಷ್ಟರ ಮುಂದೆ ನೀತಿವಂತನು ಸೋಲುವುದು, ಕೆಸರಿನ ಬುಗ್ಗೆಗೂ ಕೊಳಕು ಒರತೆಗೂ ಸಮಾನ.
PRO 25:27 ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವುದು ಗೌರವವಲ್ಲ.
PRO 25:28 ತನ್ನ ಸ್ವಂತ ಆತ್ಮವನ್ನು ಆಳದಿರುವವನು, ಗೋಡೆ ಬಿದ್ದ ಹಾಳೂರಿಗೆ ಸಮಾನ.
PRO 26:1 ಬೇಸಿಗೆಯಲ್ಲಿ ಹಿಮದಂತೆಯೂ, ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನವು ಸರಿಯಲ್ಲ.
PRO 26:2 ಅಲೆದಾಡುವ ಪಕ್ಷಿಯಂತೆಯೂ, ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು.
PRO 26:3 ಕುದುರೆಗೆ ಬಾರುಗೋಲು, ಕತ್ತೆಗೆ ಕಡಿವಾಣವು, ಮೂಢನ ಬೆನ್ನಿಗೆ ಬೆತ್ತ.
PRO 26:4 ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನೂ ಅವನಿಗೆ ಸಮಾನನಾದೀಯೆ.
PRO 26:5 ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.
PRO 26:6 ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ತನ್ನ ಪಾದಗಳನ್ನು ತಾನೇ ಕಡಿದುಕೊಂಡು ಇಲ್ಲವೆ ಕೇಡನ್ನು ಕುಡಿಯುತ್ತಾನೆ.
PRO 26:7 ಕುಂಟನ ಕಾಲುಗಳು ಜೋಲಾಡುವ ಹಾಗೆಯೇ, ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುತ್ತದೆ.
PRO 26:8 ಮೂಢನಿಗೆ ಕೊಡುವ ಮಾನವು ಕವಣಿಯಲ್ಲಿಟ್ಟ ಕಲ್ಲಿನ ಹಾಗೆ.
PRO 26:9 ಕುಡುಕನ ಕೈಯಲ್ಲಿ ಮುಳ್ಳು ಕೋಲಿನಂತೆ ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುವುದು.
PRO 26:10 ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವ ಬಿಲ್ಲುಗಾರನಂತೆ.
PRO 26:11 ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
PRO 26:12 ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ಕಾಣುತ್ತಿದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ.
PRO 26:13 ಸೋಮಾರಿಯು, “ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಭೀಕರ ಸಿಂಹ ಇದೆ,” ಎಂದು ಹೇಳುತ್ತಾನೆ.
PRO 26:14 ಬಾಗಿಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ, ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆ.
PRO 26:15 ಸೋಮಾರಿಯು ತಟ್ಟೆಯಲ್ಲಿ ತನ್ನ ಕೈಯನ್ನು ಹಾಕಿ, ತಿರುಗಿ ಅದನ್ನು ತನ್ನ ಬಾಯಿಗೆ ತರಲಾರದಷ್ಟು ಆಯಾಸಪಡುತ್ತಾನೆ.
PRO 26:16 ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ, ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ.
PRO 26:17 ಒಬ್ಬನು ಹಾದುಹೋಗುತ್ತಾ ತನಗೆ ಸಂಬಂಧಿಸದೇ ಇರುವ ವ್ಯಾಜ್ಯದಲ್ಲಿ ತಲೆಹಾಕುವವನು ನಾಯಿಯ ಕಿವಿ ಹಿಡಿದವನಂತೆ ಇದ್ದಾನೆ.
PRO 26:18 ತನ್ನ ನೆರೆಯವನನ್ನು ಮೋಸಗೊಳಿಸಿ, “ಇದು ತಮಾಷೆಗೋಸ್ಕರ ಮಾಡುತ್ತೇನೆ,” ಎಂದು ಹೇಳುವವನು, ಕೊಳ್ಳಿಗಳನ್ನೂ, ಬಾಣಗಳನ್ನೂ, ಸಾವನ್ನೂ ಬೀರುವ ಹುಚ್ಚನಂತೆಯೇ.
PRO 26:20 ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ; ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು.
PRO 26:21 ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹ ಮಾಡುವವನು ಇರುವನು.
PRO 26:22 ಚಾಡಿಕೋರನ ಮಾತುಗಳು ರುಚಿಕರ ಭಕ್ಷ್ಯದ ಹಾಗೆ ಹೊಟ್ಟೆಯ ಅಂತರ್ಭಾಗಗಳಿಗೆ ಇಳಿಯುತ್ತವೆ.
PRO 26:23 ಕೆಟ್ಟ ಹೃದಯದಿಂದ ಸವಿನುಡಿಯುವ ತುಟಿಯು, ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟ ಬೋಕಿಯಂತೆ ಇದೆ.
PRO 26:24 ಶತ್ರುಗಳು ತಮ್ಮ ತುಟಿಗಳಿಂದ ವೇಷ ಧರಿಸುತ್ತಾರೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾರೆ.
PRO 26:25 ಸವಿಮಾತನ್ನಾಡಿದರೆ ಅವನನ್ನು ನಂಬಬೇಡ; ಏಕೆಂದರೆ ಅವನ ಹೃದಯದಲ್ಲಿ ಏಳು ಅಸಹ್ಯ ಕಾರ್ಯಗಳಿವೆ.
PRO 26:26 ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು.
PRO 26:27 ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು.
PRO 26:28 ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ಹಗೆ ಮಾಡುವನು; ಮುಖಸ್ತುತಿ ಮಾಡುವ ಬಾಯಿಯು ನಾಶವನ್ನುಂಟುಮಾಡುತ್ತದೆ.
PRO 27:1 ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಏಕೆಂದರೆ ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.
PRO 27:2 ನಿನ್ನ ಬಾಯಿ ಅಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.
PRO 27:3 ಕಲ್ಲು ಭಾರ, ಮರಳು ಭಾರ; ಆದರೆ ಇವೆರಡಕ್ಕಿಂತ ಮೂಢನ ಕೋಪವು ಬಹು ಭಾರ.
PRO 27:4 ಕ್ರೋಧವು ಕ್ರೂರ, ಕೋಪವು ಪ್ರವಾಹ; ಆದರೆ ಅಸೂಯೆದ ಮುಂದೆ ಯಾವನು ನಿಂತಾನು?
PRO 27:5 ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.
PRO 27:6 ಸ್ನೇಹಿತನು ಮಾಡುವ ಗಾಯಗಳು ಭರವಸೆಗೆ ಯೋಗ್ಯವಾದದ್ದು; ಆದರೆ ಶತ್ರುವಿನ ಮುದ್ದುಗಳು ಹೇರಳವಾಗಿವೆ.
PRO 27:7 ತೃಪ್ತಿ ಹೊಂದಿದವನು ಜೇನುತುಪ್ಪವನ್ನೂ ಅಸಹ್ಯಿಸಿಕೊಳ್ಳುತ್ತಾನೆ; ಆದರೆ ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ.
PRO 27:8 ತನ್ನ ಮನೆಯನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿಯಂತೆ ಇದ್ದಾನೆ.
PRO 27:9 ತೈಲವೂ ಸುಗಂಧದ್ರವ್ಯವೂ ಹೃದಯವನ್ನು ಸಂತೋಷಪಡಿಸುವ ಹಾಗೆ, ಆದರಣೆಯ ಸಲಹೆಯೂ ಸ್ನೇಹಿತನಿಗೆ ಮಧುರವಾಗಿರುತ್ತದೆ.
PRO 27:10 ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ಏಕೆಂದರೆ ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.
PRO 27:11 ನನ್ನನ್ನು ನಿಂದಿಸುವವರಿಗೆ ನಾನು ಉತ್ತರಿಸುವಂತೆಯೂ, ನನ್ನ ಹೃದಯವನ್ನು ಸಂತೋಷಪಡಿಸುವಂತೆಯೂ, ನನ್ನ ಮಗುವೇ, ಜ್ಞಾನಿಯಾಗಿರು.
PRO 27:12 ಜಾಣನು ಕೇಡನ್ನು ಮುಂದಾಗಿ ಕಂಡು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಹಾನಿಗೆ ಈಡಾಗುತ್ತಾನೆ.
PRO 27:13 ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ; ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
PRO 27:14 ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ, ಅದು ಶಾಪವೆಂದು ಪರಿಗಣಿಸಲಾಗುವುದು.
PRO 27:15 ಜಗಳ ಮಾಡುವ ಹೆಂಡತಿಯು ಮಳೆಗಾಲದಲ್ಲಿ ಸೋರುವ ಛಾವಣಿಯಂತಿದೆ.
PRO 27:16 ಅವಳನ್ನು ಅಡಗಿಸುವುದು, ಗಾಳಿಯನ್ನು ಅಡಗಿಸಿದಂತೆ; ಕೈಯಿಂದ ಎಣ್ಣೆಯನ್ನು ಹಿಡಿದಂತೆ.
PRO 27:17 ಕಬ್ಬಿಣವು ಕಬ್ಬಿಣವನ್ನು ಹರಿತ ಮಾಡುವಂತೆ ಒಬ್ಬನು ಮತ್ತೊಬ್ಬನನ್ನು ಹರಿತ ಮಾಡುವನು.
PRO 27:18 ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ಯಜಮಾನನಿಗಾಗಿ ಕಾಯುವವನು ಸನ್ಮಾನ ಹೊಂದುವನು.
PRO 27:19 ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಜೀವನವು ಅವನ ಹೃದಯವನ್ನು ಪ್ರತಿಬಿಂಬಿಸುತ್ತದೆ.
PRO 27:20 ಪಾತಾಳಕ್ಕೂ ವಿನಾಶಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ, ಮನುಷ್ಯನ ಕಣ್ಣುಗಳು ಎಂದಿಗೂ ತೃಪ್ತಿಹೊಂದುವುದಿಲ್ಲ.
PRO 27:21 ಬೆಳ್ಳಿ, ಬಂಗಾರಗಳ ಪುಟಕ್ಕೆ ಕುಲುಮೆ ಹೇಗೆಯೋ, ಹಾಗೆಯೇ ಹೊಗಳಿಕೆಯು ಮನುಷ್ಯನನ್ನು ಪರೀಕ್ಷಿಸುತ್ತದೆ.
PRO 27:22 ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಹಾಕಿ, ಒಣಕೆಯಿಂದ ಕುಟ್ಟಿದರೂ, ಅವನಿಂದ ಮೂರ್ಖನತವು ತೊಲಗುವುದಿಲ್ಲ.
PRO 27:23 ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
PRO 27:24 ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ತಲತಲಾಂತರಕ್ಕೂ ಇರುವುದಿಲ್ಲ.
PRO 27:25 ಒಣಹುಲ್ಲನ್ನು ಕೊಯ್ದು ನಂತರ ಹೊಸ ಬೆಳೆ ಕಾಣಿಸಿಕೊಂಡಾಗ ಮತ್ತು ಬೆಟ್ಟಗಳಿಂದ ಹುಲ್ಲು ಸಂಗ್ರಹಿಸಿದಾಗ,
PRO 27:26 ಆಗ ಕುರಿಮರಿಗಳು ನಿಮಗೆ ಬಟ್ಟೆಗಳನ್ನು ಒದಗಿಸುತ್ತವೆ, ಆಡುಗಳ ಬೆಲೆಗೆ ನೀವು ಹೊಲವನ್ನು ಖರೀದಿಸಬಹುದು,
PRO 27:27 ನಿನ್ನ ಊಟಕ್ಕಾಗಿಯೂ, ನಿನ್ನ ಮನೆಯವರ ಆಹಾರಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಬೇಕಾದಷ್ಟು ಆಡುಗಳ ಹಾಲು ಸಾಕಾಗುತ್ತದೆ.
PRO 28:1 ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟನು ಓಡಿಹೋಗುತ್ತಾನೆ. ಆದರೆ ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
PRO 28:2 ದೇಶದ ದಂಗೆಯಿಂದ ಅನೇಕರು ನಾಯಕರಾಗುತ್ತಾರೆ. ಆದರೆ ಒಳನೋಟ ಹಾಗು ತಿಳುವಳಿಕೆಯ ನಾಯಕನಿಂದಲೇ ದೇಶವು ಸುಸ್ಥಿರವಾಗುವುದು.
PRO 28:3 ಬಡವರನ್ನು ಹಿಂಸಿಸುವ ಅಧಿಕಾರಿಯು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.
PRO 28:4 ಬೋಧನೆಯನ್ನು ತ್ಯಜಿಸುವವರು ದುಷ್ಟರನ್ನು ಹೊಗಳುತ್ತಾರೆ; ಆದರೆ ಬೋಧನೆಯನ್ನು ಕೈಗೊಳ್ಳುವವರು ಅವರೊಂದಿಗೆ ಹೋರಾಡುತ್ತಾರೆ.
PRO 28:5 ನ್ಯಾಯವನ್ನು ದುಷ್ಟರು ಗ್ರಹಿಸುವುದಿಲ್ಲ; ಆದರೆ ಯೆಹೋವ ದೇವರನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.
PRO 28:6 ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ ನಿರ್ದೋಷಿಯಾಗಿ ನಡೆಯುವ ದರಿದ್ರನು ಶ್ರೇಷ್ಠನು.
PRO 28:7 ವಿವೇಚನೆಯ ಮಗನು ದೇವರ ಶಿಕ್ಷಣವನ್ನು ಕೈಗೊಳ್ಳುವನು. ಆದರೆ ಹೊಟ್ಟೆಬಾಕರ ಸಂಗಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.
PRO 28:8 ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು, ಬಡವರ ಮೇಲೆ ದಯೆ ತೋರಿಸುವವನಿಗೆ ಅದನ್ನು ಕೂಡಿಸುವನು.
PRO 28:9 ಶಿಕ್ಷಣವನ್ನು ಕೇಳದಂತೆ ತನ್ನ ಕಿವಿ ಮುಚ್ಚಿಕೊಳ್ಳುವವನ ಪ್ರಾರ್ಥನೆಯು ದೇವರಿಗೆ ಅಸಹ್ಯ.
PRO 28:10 ಪ್ರಾಮಾಣಿಕರನ್ನು ದುರ್ಮಾರ್ಗದಲ್ಲಿ ದಾರಿತಪ್ಪಿಸುವವನು, ತಾನೇ ತೋಡಿದ ಗುಂಡಿಯಲ್ಲಿ ಬೀಳುವನು. ನಿರ್ದೋಷಿಗಳಾದರೋ ಒಳ್ಳೆಯ ಸೊತ್ತನ್ನು ಪಡೆಯುವರು.
PRO 28:11 ಐಶ್ವರ್ಯವಂತನು ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾಗಿದ್ದಾನೆ. ಆದರೆ ವಿವೇಚನೆಯುಳ್ಳ ಬಡವನು ಅವನ ವಂಚನೆಯನ್ನು ನೋಡಬಲ್ಲನು.
PRO 28:12 ನೀತಿವಂತರಿಗೆ ಜಯವಾದರೆ, ದೊಡ್ಡ ಘನತೆ ಇರುವುದು. ಆದರೆ ದುಷ್ಟರಿಗೆ ಏಳಿಗೆಯಾದರೆ, ಮನುಷ್ಯರು ಅಡಗಿಕೊಳ್ಳುತ್ತಾರೆ.
PRO 28:13 ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನಿಗೆ ಏಳಿಗೆ ಆಗುವುದಿಲ್ಲ. ಆದರೆ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರಕುವುದು.
PRO 28:14 ಯಾವಾಗಲೂ ಯೆಹೋವ ದೇವರ ಭಯಭಕ್ತಿಯಲ್ಲಿ ನಡೆದುಕೊಳ್ಳುವವನು ಧನ್ಯನು. ಆದರೆ ಹೃದಯವನ್ನು ಕಠಿಣಪಡಿಸಿಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
PRO 28:15 ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ, ಬಡವರನ್ನು ದುಷ್ಟನು ಆಳುವನು.
PRO 28:16 ಗ್ರಹಿಕೆಯಿಲ್ಲದ ಅಧಿಕಾರಿಯು ಮಹಾ ಸುಲಿಗೆಗಾರನು. ಆದರೆ ಲೋಭವನ್ನು ಹಗೆಮಾಡುವವನು ದೀರ್ಘಾಯುಷ್ಯನು.
PRO 28:17 ನರಹತ್ಯದ ಅಪರಾಧ ಭಾವನೆಯಿಂದ ಇರುವವನು, ಮರಣದೆಡೆಗೆ ಓಡುತ್ತಿರುವನು, ಅವನನ್ನು ಯಾರೂ ತಡೆಯದಿರಲಿ.
PRO 28:18 ನಿರ್ದೋಷಿಯಾಗಿ ನಡೆಯುವವನು ಸಂರಕ್ಷಣೆ ಹೊಂದುವನು. ವಕ್ರಮಾರ್ಗಿಯು ತಟ್ಟನೆ ಬೀಳುವನು.
PRO 28:19 ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು. ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವುದು.
PRO 28:20 ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು, ನಿರ್ದೋಷಿಯಾಗಿರುವುದಿಲ್ಲ.
PRO 28:21 ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹ ಮಾಡುವನು.
PRO 28:22 ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ; ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ.
PRO 28:23 ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ, ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.
PRO 28:24 ತನ್ನ ತಂದೆಯಾನ್ನಾಗಲಿ, ತಾಯಿಯನ್ನಾಗಲಿ ದೋಚಿಕೊಂಡು, “ಇದು ದೋಷವಲ್ಲ,” ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.
PRO 28:25 ದುರಾಶೆಯುಳ್ಳವನು ಕಲಹವನ್ನೆಬ್ಬಿಸುವನು; ಯೆಹೋವ ದೇವರಲ್ಲಿ ಭರವಸವಿಡುವವನು ಪುಷ್ಟನಾಗುವನು.
PRO 28:26 ತನ್ನ ಬುದ್ಧಿಯಲ್ಲಿಯೇ ಭರವಸವಿಡುವವನು ಬುದ್ಧಿಹೀನನು; ಆದರೆ ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.
PRO 28:27 ಬಡವರಿಗೆ ದಾನ ಮಾಡುವವನು, ಕೊರತೆ ಪಡುವುದಿಲ್ಲ; ಆದರೆ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುವವನಿಗೆ ಅನೇಕ ಶಾಪಗಳು.
PRO 28:28 ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ, ಆದರೆ ಅವರು ನಾಶವಾದಾಗ ನೀತಿವಂತರು ವೃದ್ಧಿಯಾಗುತ್ತಾರೆ.
PRO 29:1 ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು.
PRO 29:2 ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ. ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.
PRO 29:3 ಜ್ಞಾನಪ್ರಿಯನು ತಂದೆಗೆ ಆನಂದ ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.
PRO 29:4 ನ್ಯಾಯದಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ, ಆದರೆ ಲಂಚಕೋರ ಅಧಿಕಾರಿ ದೇಶವನ್ನು ಕೆಡವಿ ಹಾಕುತ್ತಾನೆ.
PRO 29:5 ತನ್ನ ನೆರೆಯವನನ್ನು ಸುಮ್ಮನೇ ಹೊಗಳುತ್ತಿರುವವನು, ನೆರೆಯವನ ಕಾಲಿಗೆ ಬಲೆಯನ್ನು ಒಡ್ಡುತ್ತಾನೆ.
PRO 29:6 ಕೆಟ್ಟವನು ತನ್ನ ಪಾಪದಿಂದಲೇ ಸಿಕ್ಕಿಹಾಕಿಕೊಳ್ಳುತ್ತಾನೆ, ಆದರೆ ನೀತಿವಂತನು ಸಂತೋಷದಿಂದ ಹಾಡಿ ಹರ್ಷಿಸುತ್ತಾನೆ.
PRO 29:7 ಬಡವರ ನ್ಯಾಯಕ್ಕಾಗಿ ನೀತಿವಂತನು ಚಿಂತಿಸುತ್ತಾನೆ. ಆದರೆ ದುಷ್ಟನಿಗೆ ಅಂಥಾ ಚಿಂತೆಯೇ ಇಲ್ಲ.
PRO 29:8 ಪರಿಹಾಸ್ಯಗಾರರು ಪಟ್ಟಣದಲ್ಲಿ ಗಲಾಟೆ ಎಬ್ಬಿಸುತ್ತಾರೆ. ಆದರೆ ಜ್ಞಾನಿಗಳು ಕೋಪವನ್ನು ಆರಿಸುವರು.
PRO 29:9 ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯಮಾಡುವಾಗ, ಮೂರ್ಖನು ರೇಗಿದರೂ ಅಪಹಾಸ್ಯಮಾಡಿದರೂ ಸಮಾಧಾನವೇ ಇರುವುದಿಲ್ಲ.
PRO 29:10 ಕೊಲೆಪಾತಕರು ಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ಆದರೆ ಯಥಾರ್ಥವಂತರನ್ನು ನಾಶಮಾಡಲು ಯತ್ನಿಸುತ್ತಾರೆ.
PRO 29:11 ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು. ಆದರೆ ಜ್ಞಾನಿಯು ಕೋಪವನ್ನು ಶಾಂತಿಯಿಂದ ತಡೆಹಿಡಿಯುತ್ತಾನೆ.
PRO 29:12 ಒಬ್ಬ ಅಧಿಕಾರಿಯು ಸುಳ್ಳಿಗೆ ಕಿವಿಗೊಟ್ಟರೆ, ಅವನ ಸೇವಕರೆಲ್ಲರೂ ದುಷ್ಟರಾಗುತ್ತಾರೆ.
PRO 29:13 ಬಡವರಿಗೂ ದಬ್ಬಾಳಿಕೆ ನಡೆಸುವವರಿಗೂ ಒಂದು ಸಂಗತಿ ಹುದುವಾಗಿರುವುದು: ಯೆಹೋವ ದೇವರು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವರು ಎಂಬುದೇ.
PRO 29:14 ಅರಸನು ಬಡವರಿಗೆ ಪಕ್ಷಪಾತವಿಲ್ಲದೆ ನ್ಯಾಯತೀರಿಸಿದರೆ, ಅವನ ಸಿಂಹಾಸನವು ಎಂದೆಂದಿಗೂ ಸ್ಥಿರಗೊಳ್ಳುವುದು.
PRO 29:15 ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
PRO 29:16 ದುಷ್ಟರು ವೃದ್ಧಿಯಾದಾಗ, ಪಾಪವು ವೃದ್ಧಿಯಾಗುತ್ತದೆ. ಆದರೆ ನೀತಿವಂತರು ದುಷ್ಟರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
PRO 29:17 ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು; ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.
PRO 29:18 ದೈವ ಪ್ರಕಟನೆ ಇಲ್ಲದಿರುವಾಗ, ಜನರು ನಾಶವಾಗುತ್ತಾರೆ; ಆದರೆ ಜ್ಞಾನೋಪದೇಶವನ್ನು ಕೈಗೊಳ್ಳುವವನು ಧನ್ಯನು.
PRO 29:19 ಮಾತಿನಿಂದ ಮಾತ್ರ ಕೆಲಸಗಾರರನ್ನು ತಿದ್ದಲು ಸಾಧ್ಯವಿಲ್ಲ; ಏಕೆಂದರೆ ಅವರು ಅರ್ಥಮಾಡಿಕೊಂಡರೂ, ಅದರಂತೆ ನಡೆಯುವುದಿಲ್ಲ.
PRO 29:20 ದುಡುಕಿ ಮಾತನಾಡುವ ವ್ಯಕ್ತಿಯನ್ನು ನೀನು ನೋಡಿದ್ದೀಯೋ? ಅಂಥವನಿಗಿಂತಲೂ ಬುದ್ಧಿಹೀನನ ವಿಷಯದಲ್ಲಿ ಹೆಚ್ಚು ನಿರೀಕ್ಷೆ ಇದೆ.
PRO 29:21 ಬಾಲ್ಯದಿಂದ ಕೆಲಸಗಾರನನ್ನು ಅನುಕೂಲವಾಗಿ ಸಾಕಿ ಬಿಟ್ಟರೆ, ತರುವಾಯ ಅವನು ಎದುರು ಬೀಳಲು ಸಾಧ್ಯ.
PRO 29:22 ಕೋಪಿಷ್ಟನು ಜಗಳವನ್ನೆಬ್ಬಿಸುವನು, ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ.
PRO 29:23 ಗರ್ವವು ಮನುಷ್ಯನನ್ನು ಹೀನಸ್ಥಿತಿಗೆ ತರುವುದು; ಆದರೆ ಆತ್ಮದಲ್ಲಿ ದೀನರು ಮೆಚ್ಚಿಕೆಯನ್ನು ಪಡೆಯುವರು.
PRO 29:24 ಕಳ್ಳರ ಸಹವಾಸ ಮಾಡುವವರು ತಮಗೆ ತಾವೇ ಶತ್ರುಗಳು. ಅವರು ಆಣೆ ಇಟ್ಟರೂ ಅವರಲ್ಲಿ ಬದಲಾವಣೆ ಇರುವುದಿಲ್ಲ.
PRO 29:25 ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು; ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.
PRO 29:26 ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ. ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.
PRO 29:27 ನೀತಿವಂತರು ಅಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ದುಷ್ಟರು ಪ್ರಾಮಾಣಿಕರನ್ನು ತಿರಸ್ಕರಿಸುತ್ತಾರೆ.
PRO 30:1 ಜಾಕೆ ಎಂಬುವನ ಮಗನಾದ ಆಗೂರನ ದೈವಿಕ ಬುದ್ಧಿಮಾತುಗಳು. ಇವನು ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು: “ದೇವರೇ, ನಾನು ದಣಿದಿದ್ದೇನೆ, ಆದರೆ ನಾನು ಜಯಶಾಲಿಯಾಗುವೆನು.
PRO 30:2 ಖಂಡಿತವಾಗಿಯೂ ನಾನು ಮನುಷ್ಯನಲ್ಲ, ಮೃಗ. ನನಗೆ ಮನುಷ್ಯನ ಗ್ರಹಿಕೆ ಇಲ್ಲ.
PRO 30:3 ನಾನು ಜ್ಞಾನವನ್ನು ಕಲಿತುಕೊಂಡಿಲ್ಲ; ಅಲ್ಲದೆ ಪರಿಶುದ್ಧ ದೇವರ ಅರಿವು ನನಗಿಲ್ಲ.
PRO 30:4 ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? ಅವರ ಹೆಸರೇನು? ಅವರ ಮಗನ ಹೆಸರೇನು? ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!
PRO 30:5 “ದೇವರ ಪ್ರತಿಯೊಂದು ಮಾತು ದೋಷವಿಲ್ಲದ್ದು; ದೇವರಲ್ಲಿ ಭರವಸವಿಡುವವನಿಗೆ ಅವರು ಗುರಾಣಿಯಾಗಿದ್ದಾರೆ.
PRO 30:6 ದೇವರ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ. ಇಲ್ಲವಾದರೆ ದೇವರು ನಿನ್ನನ್ನು ಗದರಿಸಿ ನಿನ್ನನ್ನು ಸುಳ್ಳುಗಾರನೆಂದು ಸಾಬೀತುಪಡಿಸುವರು.
PRO 30:7 “ಯೆಹೋವ ದೇವರೇ, ನಾನು ನಿಮ್ಮನ್ನು ಎರಡು ವಿಷಯಗಳನ್ನು ಕೇಳುತ್ತೇನೆ. ನಿರಾಕರಿಸಬೇಡಿ ನಾನು ಸಾಯುವ ಮೊದಲು ಅವೆರಡನ್ನು ಅನುಗ್ರಹಿಸಿರಿ.
PRO 30:8 ವಂಚನೆ ಸುಳ್ಳನ್ನು ನನ್ನಿಂದ ದೂರಮಾಡಿರಿ. ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ನನಗೆ ಕೊಡಬೇಡಿರಿ. ನನಗೆ ಅನುದಿನದ ಆಹಾರವನ್ನು ದಯಪಾಲಿಸಿರಿ.
PRO 30:9 ನಾನು ಐಶ್ವರ್ಯವಂತನಾದರೆ ನಿನ್ನನ್ನು ನಿರಾಕರಿಸಿ, ‘ಯೆಹೋವ ದೇವರು ಯಾರು?’ ಎಂದು ಹೇಳೇನು. ನಾನು ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿಮ್ಮ ಹೆಸರಿಗೆ ಅಪಕೀರ್ತಿ ತಂದೇನು.
PRO 30:10 “ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ; ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ.
PRO 30:11 “ತಮ್ಮ ತಂದೆಯನ್ನು ಶಪಿಸಿ, ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವವರು ಇದ್ದಾರೆ.
PRO 30:12 ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ; ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ.
PRO 30:13 ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ. ಅವರ ದೃಷ್ಟಿ ಅಸಹ್ಯವಾಗಿದೆ.
PRO 30:14 ಖಡ್ಗಗಳಂತೆ ಹಲ್ಲುಗಳುಳ್ಳವರೂ ಚೂರಿಗಳಂತೆ ದವಡೆಗಳುಳ್ಳವರೂ ಬಡವರನ್ನು ಭೂಮಿಯಿಂದಲೂ ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ.
PRO 30:15 “ಜಿಗಣೆಗೆ, ‘ಕೊಡು! ಕೊಡು!’ ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳುಂಟು. “ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ, ಹೌದು, ‘ಸಾಕು!’ ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ:
PRO 30:16 ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ, ‘ಸಾಕು!’ ಎಂದು ಹೇಳದಿರುವ ಬೆಂಕಿ.
PRO 30:17 “ತನ್ನ ತಂದೆಯನ್ನು ಹಾಸ್ಯಮಾಡಿ, ತನ್ನ ತಾಯಿಯನ್ನು ಧಿಕ್ಕರಿಸುವ ಕಣ್ಣನ್ನು, ಕಣಿವೆಯ ಕಾಗೆಗಳು ಕಿತ್ತು ಕಕ್ಕುವವು. ರಣಹದ್ದುಗಳು ಅದನ್ನು ತಿಂದುಬಿಡುವವು.
PRO 30:18 “ನನಗೆ ಆಶ್ಚರ್ಯವಾದ ಮೂರು ಸಂಗತಿಗಳಿವೆ, ಹೌದು, ನನಗೆ ಅರ್ಥವಾಗದಿರುವ ನಾಲ್ಕು ಸಂಗತಿಗಳಿವೆ:
PRO 30:19 ಆಕಾಶದಲ್ಲಿ ಹದ್ದಿನ ಮಾರ್ಗ, ಬಂಡೆಯ ಮೇಲೆ ಸರ್ಪದ ಮಾರ್ಗ, ಸಮುದ್ರ ನಡುವೆ ಹಡಗಿನ ಮಾರ್ಗ, ಯುವಕ ಯುವತಿಯರ ಪ್ರೀತಿ ಮಾರ್ಗ.
PRO 30:20 “ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.
PRO 30:21 “ಭೂಮಿಯು ಮೂರು ವಿಷಯಗಳಿಂದ ಕಳವಳಗೊಳ್ಳುತ್ತದೆ, ನಾಲ್ವರನ್ನು ಅದು ತಾಳಲಾರದು:
PRO 30:22 ಅರಸನಾಗುವ ದಾಸನು, ತಿನ್ನಲು ಸಾಕಷ್ಟು ಪಡೆಯುವ ಮೂರ್ಖನು,
PRO 30:23 ತಿರಸ್ಕಾರಕ್ಕೆ ಅರ್ಹಳಾದ ಮಹಿಳೆ, ಮದುವೆಯಾಗುವುದು. ಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.
PRO 30:24 “ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ:
PRO 30:25 ಇರುವೆಗಳು ಬಲಹೀನ ಜೀವಿಗಳು, ಆದರೂ ಅವು ಬೇಸಿಗೆಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.
PRO 30:26 ಬೆಟ್ಟದ ಮೊಲಗಳು ಬಲಹೀನ ಪ್ರಾಣಿಗಳಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುತ್ತವೆ.
PRO 30:27 ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.
PRO 30:28 ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ ಅರಸನ ಅರಮನೆಗಳಲ್ಲಿ ಕಂಡುಬರುತ್ತವೆ.
PRO 30:29 “ಗಂಭೀರ ಗಮನದ ಮೂರು ಪ್ರಾಣಿಗಳಿವೆ, ಹೌದು, ಗಂಭೀರ ಗತಿಯ ನಾಲ್ಕಿವೆ:
PRO 30:30 ಮೃಗಗಳಲ್ಲಿ ಬಲಿಷ್ಠವಾಗಿರುವ ಸಿಂಹವು, ಯಾವುದಕ್ಕೂ ಹಿಮ್ಮೆಟ್ಟದು.
PRO 30:31 ಕತ್ತೆತ್ತಿ ನಡೆಯುವ ಹುಂಜ, ಹೋತವು, ತನ್ನ ಸುತ್ತಲೂ ಸೈನಿಕರಿರುವ ಅರಸನು.
PRO 30:32 “ನೀನು ಹೆಮ್ಮೆಪಟ್ಟು ಮೂರ್ಖನಾಗಿ ನಡೆದಿದ್ದರೆ, ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ, ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೊ.
PRO 30:33 ಹಾಲನ್ನು ಕಡೆಯುವುದರಿಂದ ಬೆಣ್ಣೆ, ಮೂಗನ್ನು ಹಿಂಡುವುದರಿಂದ ರಕ್ತ, ಹಾಗೆಯೇ ಕೋಪವನ್ನೆಬ್ಬಿಸುವುದರಿಂದ ಜಗಳ.”
PRO 31:1 ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:
PRO 31:2 ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು! ನನ್ನ ಪ್ರಾರ್ಥನೆಗೆ ಉತ್ತರವಾದ ನನ್ನ ಮಗನೇ ಕೇಳು!
PRO 31:3 ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು. ರಾಜರನ್ನೇ ಹಾಳುಮಾಡಬಲ್ಲ ಸ್ತ್ರೀಯರಿಗೆ ನಿನ್ನ ಹಣ ಸಮಯವನ್ನು ವ್ಯಯಮಾಡದಿರು.
PRO 31:4 ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ, ದ್ರಾಕ್ಷಾರಸ ಕುಡಿಯುವದು ರಾಜರಿಗೆ ಯೋಗ್ಯವಲ್ಲ. ಮದ್ಯಪಾನ ಅಧಿಕಾರಿಗಳಿಗೆ ಯೋಗ್ಯವಲ್ಲ;
PRO 31:5 ಕುಡಿದರೆ ಅವರು ನಿಯಮವನ್ನು ಮರೆತು, ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ.
PRO 31:6 ನಾಶವಾಗುವವರಿಗೆ ಮದ್ಯಪಾನವಿರಲಿ. ಮನೋವ್ಯಥೆಪಡುವವರಿಗೆ ಮದ್ಯವಿರಲಿ.
PRO 31:7 ಅವರು ಕುಡಿದು ಬಡತನವನ್ನು ಮರೆಯಲಿ. ತಮ್ಮ ಯಾತನೆಯನ್ನು ಜ್ಞಾಪಕಕ್ಕೆ ತಾರದಿರಲಿ.
PRO 31:8 ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು, ಅನಾಥರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಟ್ಟು ಮಾತನಾಡು.
PRO 31:9 ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು. ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು.
PRO 31:10 ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು.
PRO 31:11 ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ, ಅವನಿಗೆ ಯಾವ ಆದಾಯದ ಕೊರತೆಯೂ ಇರುವುದಿಲ್ಲ.
PRO 31:12 ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೆಯದನ್ನೇ ಮಾಡುವಳು.
PRO 31:13 ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು, ತನ್ನ ಚಟುವಟಿಕೆಯ ಕೈಗಳಿಂದ ಕೆಲಸ ಮಾಡುವಳು.
PRO 31:14 ಆಕೆಯು ವರ್ತಕರ ಹಡಗುಗಳಂತೆ ಇರುವಳು; ದೂರದಿಂದ ಆಹಾರವನ್ನು ಆಕೆಯು ತರುವಳು.
PRO 31:15 ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು; ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು, ತನ್ನ ದಾಸಿಯರಿಗೆ ದಿನದ ಕೆಲಸವನ್ನು ಹಂಚುವಳು.
PRO 31:16 ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ. ತನ್ನ ಕೈಕೆಲಸದ ಆದಾಯದಿಂದ ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
PRO 31:17 ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ. ತನ್ನ ಶಕ್ತಿಯುತ ತೋಳುಗಳಿಂದ ಕೆಲಸ ಮಾಡುತ್ತಾಳೆ.
PRO 31:18 ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ. ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
PRO 31:19 ಅವಳು ರಾಟೆಯ ಮೇಲೆ ಕೈಹಾಕಿ, ಕದಿರನ್ನು ಹಿಡಿಯುತ್ತಾಳೆ.
PRO 31:20 ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ. ಹೌದು, ದಿಕ್ಕಿಲ್ಲದವರಿಗೆ ದಾನ ಮಾಡುತ್ತಾಳೆ.
PRO 31:21 ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ. ಏಕೆಂದರೆ ಆಕೆಯ ಮನೆಯವರೆಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.
PRO 31:22 ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ. ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.
PRO 31:23 ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ. ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು.
PRO 31:24 ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ. ಆಕೆಯು ನಡುಕಟ್ಟುಗಳನ್ನು ತಯಾರಿಸಿ ವರ್ತಕರಿಗೆ ಒದಗಿಸುತ್ತಾಳೆ.
PRO 31:25 ಆಕೆಯ ಉಡುಪು ಬಲವೂ ಘನತೆಯೂ ಆಗಿವೆ. ಭವಿಷ್ಯತ್ತಿನ ಭಯವಿಲ್ಲದೆ ಆಕೆಯು ನಗುವಳು.
PRO 31:26 ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ. ಆಕೆಯ ನಾಲಿಗೆಯ ಮೇಲೆ ನಂಬಿಗಸ್ತ ಶಿಕ್ಷಣ ಇದೆ.
PRO 31:27 ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಸೋಮಾರಿಯಾಗಿ ಕೆಲಸಮಾಡದೆ ಆಹಾರವನ್ನು ತಿನ್ನುವುದಿಲ್ಲ.
PRO 31:28 ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು. ಆಕೆಯ ಪತಿಯು ಸಹ ಆಕೆಯನ್ನು,
PRO 31:29 “ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು.
PRO 31:30 ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ. ಆದರೆ ಯೆಹೋವ ದೇವರಿಗೆ ಭಯಪಡುವವಳೇ ಪ್ರಶಂಸನೀಯಳು.
PRO 31:31 ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ. ಪಟ್ಟಣದ ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
ECC 1:1 ದಾವೀದನ ಮಗನೂ ಯೆರೂಸಲೇಮಿನ ಅರಸನೂ ಆದ ಪ್ರಸಂಗಿಯ ಮಾತುಗಳು:
ECC 1:2 “ವ್ಯರ್ಥಗಳಲ್ಲಿ ವ್ಯರ್ಥ! ವ್ಯರ್ಥಗಳಲ್ಲಿ ವ್ಯರ್ಥ!” ಎಂದು ಪ್ರಸಂಗಿ ಹೇಳುತ್ತಾನೆ. “ಸಮಸ್ತವೂ ವ್ಯರ್ಥ! ಎಲ್ಲವೂ ವ್ಯರ್ಥ.”
ECC 1:3 ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸಗಳಿಂದ ಅವನಿಗೆ ಲಾಭವೇನು?
ECC 1:4 ಸಂತತಿಗಳು ಬರುತ್ತವೆ, ಸಂತತಿಗಳು ಹೋಗುತ್ತವೆ; ಆದರೆ ಭೂಮಿಯು ಶಾಶ್ವತವಾಗಿ ಉಳಿಯುತ್ತದೆ.
ECC 1:5 ಸೂರ್ಯನು ಉದಯಿಸುತ್ತಾನೆ, ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಳಕ್ಕೆ ಆತುರದಿಂದ ಹಿಂದಿರುಗುತ್ತಾನೆ.
ECC 1:6 ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. ಉತ್ತರದ ಕಡೆಗೆ ತಿರುಗುತ್ತದೆ. ಸುತ್ತುತ್ತಾ, ಸುತ್ತುತ್ತಾ ಹೋಗುತ್ತದೆ. ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರುಗುತ್ತದೆ.
ECC 1:7 ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ, ಆ ಸ್ಥಳಕ್ಕೆ ಅವು ಹಿಂದಿರುಗುತ್ತವೆ.
ECC 1:8 ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿವೆ. ಇದನ್ನು ಮನುಷ್ಯನು ವಿವರಿಸಲಾರನು. ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, ಕೇಳುವುದರಿಂದ ಕಿವಿಯು ದಣಿಯದು.
ECC 1:9 ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
ECC 1:10 “ನೋಡು, ಇದು ಹೊಸದು,” ಎಂದು ಯಾವ ವಿಷಯವಾಗಿ ಹೇಳಬಹುದೋ? ಅದು ನಮಗಿಂತ ಮುಂಚೆ ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
ECC 1:11 ಹಿಂದಿನ ಕಾಲದ ಜನರ ಜ್ಞಾಪಕವು ಈಗಿನವರಿಗಿಲ್ಲ. ಮುಂದಿನ ಕಾಲದಲ್ಲಿ ಬರುವವರ ಜ್ಞಾಪಕವು ಅವುಗಳ ಮುಂದಿನ ಕಾಲದ ಜನರಿಗೆ ಇರುವುದಿಲ್ಲ.
ECC 1:12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರ ಮೇಲೆ ಅರಸನಾಗಿದ್ದೆ.
ECC 1:13 ಆಕಾಶದ ಕೆಳಗೆ ನಡೆಯುವ ಕೆಲಸಗಳನ್ನೆಲ್ಲಾ ಜ್ಞಾನದಿಂದ ವಿಚಾರಿಸಿ, ವಿಮರ್ಶಿಸುವುದಕ್ಕೆ ನಾನು ನನ್ನ ಮನಸ್ಸು ಮಾಡಿದೆ. ದೇವರು ಮಾನವರ ಮೇಲೆ ಈ ಕಷ್ಟಕರವಾದ ಪ್ರಯಾಸವನ್ನು ಹೊರಿಸಿದ್ದಾರೆ.
ECC 1:14 ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ. ಗಾಳಿಯನ್ನು ಹಿಂದಟ್ಟುವಂತೆ ಎಲ್ಲವೂ ವ್ಯರ್ಥ.
ECC 1:15 ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದು ಅಸಾಧ್ಯ.
ECC 1:16 ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆನು, “ನೋಡು, ಯೆರೂಸಲೇಮಿನಲ್ಲಿ ನನಗಿಂತ ಮೊದಲು ಆಳಿದವರಿಗಿಂತ ನಾನು ಹೆಚ್ಚು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ಹಾಗೂ ತಿಳುವಳಿಕೆಯ ಅನುಭವ ನನಗಿದೆ.”
ECC 1:17 ಆಗ ಜ್ಞಾನವನ್ನೂ ಮನಗುಂದುವಿಕೆಯನ್ನೂ ಬುದ್ಧಿಹೀನತೆಯನ್ನೂ ತಿಳಿದುಕೊಳ್ಳುವಂತೆ ನಾನು ಮನಸ್ಸಿಟ್ಟೆನು, ಅದರ ಜೊತೆಗೆ ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ, ಎಂದು ನಾನು ಅರಿತುಕೊಂಡೆನು.
ECC 1:18 ಏಕೆಂದರೆ ಬಹು ಜ್ಞಾನವಿದ್ದಲ್ಲಿ ಬಹು ಸಂಕಟ, ಹೆಚ್ಚು ತಿಳುವಳಿಕೆ ಇದ್ದಲ್ಲಿ ಹೆಚ್ಚು ವ್ಯಥೆ ಇದೆ.
ECC 2:1 “ಈಗ ಬಾ, ಯಾವುದು ಒಳ್ಳೆಯದು ಎಂಬುದನ್ನು ಸುಖಭೋಗಗಳಿಂದ ನಿನ್ನನ್ನು ಪರೀಕ್ಷಿಸುವೆನು,” ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಂಡೆ. ಆದರೆ ಅದೂ ಕೂಡ ವ್ಯರ್ಥವಾದದ್ದೆಂದು ರುಜುವಾತಾಯಿತು.
ECC 2:2 “ನಗುವುದು ಮೂರ್ಖತನ, ಸುಖಭೋಗ ಏನನ್ನು ಸಾಧಿಸುತ್ತದೆ,” ಎಂದು ಹೇಳಿಕೊಂಡೆ.
ECC 2:3 ಆಕಾಶದ ಕೆಳಗೆ ಮನುಷ್ಯರು ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಹಿತ ಎಂದು ನಾನು ತಿಳಿದುಕೊಳ್ಳಲು ಬಯಸಿದೆ. ನನ್ನ ಮನಸ್ಸು ಇನ್ನೂ ಜ್ಞಾನದಿಂದಿರುವಾಗಲೇ ದ್ರಾಕ್ಷಾರಸದಿಂದ ಸಂತೋಷ ಪಡೋಣ, ಮೂರ್ಖತನವನ್ನು ಅಪ್ಪಿಕೊಳ್ಳೋಣ ಎಂದುಕೊಂಡೆ.
ECC 2:4 ನಾನು ಮಹಾ ಯೋಜನೆಗಳನ್ನು ನಡೆಸಿದೆನು: ನಾನು ನನಗಾಗಿ ಮನೆಗಳನ್ನು ಕಟ್ಟಿಸಿಕೊಂಡೆನು. ನಾನು ದ್ರಾಕ್ಷಿತೋಟಗಳನ್ನು ನೆಟ್ಟೆನು.
ECC 2:5 ನಾನು ಉದ್ಯಾನವನಗಳನ್ನೂ, ತೋಟಗಳನ್ನೂ ಮಾಡಿಕೊಂಡು, ಅವುಗಳಲ್ಲಿ ಸಕಲ ವಿಧವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು.
ECC 2:6 ಬೆಳೆಯುವ ಗಿಡಗಳ ತೋಪುಗಳಿಗೆ ನೀರು ಹಾಯಿಸುವುದಕ್ಕೆ ನಾನು ಜಲಾಶಯಗಳನ್ನು ಮಾಡಿಕೊಂಡೆನು.
ECC 2:7 ನನಗೆ ದಾಸ, ದಾಸಿಯರನ್ನು ಕೊಂಡುಕೊಂಡೆನು. ನನ್ನ ಮನೆಯಲ್ಲಿ ಜನಿಸಿದ ಇತರ ಗುಲಾಮರು ಸಹ ಇದ್ದರು. ನನಗಿಂತ ಮುಂಚೆ ಯೆರೂಸಲೇಮಿನಲ್ಲಿ, ಇದ್ದವರೆಲ್ಲರಿಗಿಂತಲೂ ಹೆಚ್ಚಾಗಿ ಬಹಳ ಸಂಪತ್ತು ಉಳ್ಳವನಾಗಿ ಹೆಚ್ಚು ದನಕುರಿಗಳ ಮಂದೆಗಳನ್ನು ಹೊಂದಿದೆನು.
ECC 2:8 ನಾನು ಬೆಳ್ಳಿಬಂಗಾರಗಳನ್ನು, ಅರಸರ ಮತ್ತು ಪ್ರಾಂತಗಳ ವಿಶೇಷ ಸಂಪತ್ತನ್ನು ಸಂಗ್ರಹಿಸಿಕೊಂಡೆನು. ಗಾಯಕ, ಗಾಯಕಿಯರನ್ನು ಮತ್ತು ಮನುಷ್ಯರಿಗೆ ಭೋಗವಿಲಾಸಕ್ಕಾಗಿ ಅನೇಕ ಉಪಪತ್ನಿಯರನ್ನು ಸಂಪಾದಿಸಿಕೊಂಡೆನು.
ECC 2:9 ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಹೆಚ್ಚು ಅಭಿವೃದ್ಧಿಹೊಂದಿ, ಶ್ರೀಮಂತನಾದೆನು. ಇದೆಲ್ಲದರಲ್ಲಿ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.
ECC 2:10 ನನ್ನ ಕಣ್ಣು ಬಯಸಿದ್ದೆಲ್ಲವನ್ನು ಅದರಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ. ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು. ಇದು ನನ್ನ ಎಲ್ಲಾ ಪ್ರಯಾಸದಿಂದ ನನಗೆ ಬಂದ ಬಹುಮಾನ.
ECC 2:11 ನನ್ನ ಕೈಗಳು ನಡೆಸಿದವುಗಳೆಲ್ಲವನ್ನೂ ನಾನು ಸಾಧಿಸಲು ಪ್ರಯಾಸಪಟ್ಟದ್ದನ್ನೂ ಪರಿಶೀಲಿಸಿ ನೋಡಿದೆ. ಗಾಳಿಯನ್ನು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥವಾಗಿತ್ತು. ಸೂರ್ಯನ ಕೆಳಗೆ ಯಾವುದೂ ಲಾಭಕರವಾಗಿ ಕಾಣಲಿಲ್ಲ.
ECC 2:12 ಅನಂತರ ಜ್ಞಾನವನ್ನೂ ಮನಗುಂದುವಿಕೆಯನ್ನೂ ಮೂಡತೆಯನ್ನೂ ಮತ್ತೆ ಯೋಚಿಸುವುದಕ್ಕೆ ನಾನು ತಿರುಗಿಕೊಂಡೆನು. ಈಗಾಗಲೇ ಮಾಡಿದ್ದನ್ನು ಬಿಟ್ಟು, ಅರಸನ ತರುವಾಯ ಬರುವವನು ಹೊಸದಾಗಿ ಏನು ಮಾಡಬಲ್ಲನು?
ECC 2:13 ಆಗ ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ, ಜ್ಞಾನವು ಮೂಢತನಕ್ಕಿಂತ ಶ್ರೇಷ್ಠವಾಗಿದೆ ಎಂದು ನಾನು ಕಂಡೆನು.
ECC 2:14 ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುತ್ತದೆ. ಆದರೆ ಮೂಢನು ಕತ್ತಲೆಯಲ್ಲಿ ನಡೆಯುತ್ತಾನೆ. ಇವರಿಬ್ಬರಿಗೂ ಒಂದೇ ಗತಿಯು ಸಂಭವಿಸುವುದೆಂದೂ ನಾನು ಗ್ರಹಿಸಿಕೊಂಡೆನು.
ECC 2:15 ಆಗ ನಾನು ನನ್ನ ಮನಸ್ಸಿನಲ್ಲಿ, “ಮೂಢನಿಗೆ ಸಂಭವಿಸುವ ಗತಿಯೂ ನನಗೂ ಸಂಭವಿಸುತ್ತದೆ. ನಾನು ಜ್ಞಾನಿಯಾಗುವುದರಿಂದ ಲಾಭವೇನು?” “ಇದು ಸಹ ವ್ಯರ್ಥವೇ,” ಎಂದುಕೊಂಡೆನು.
ECC 2:16 ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ಬಹಳ ದಿನಗಳವರೆಗೆ ಜ್ಞಾಪಕಮಾಡಿಕೊಳ್ಳುವುದಿಲ್ಲ. ಇವರಿಬ್ಬರನ್ನೂ ಮರೆತುಹೋದ ದಿನಗಳು ಈಗಾಗಲೇ ಬಂದಿವೆ. ಮೂಢನಂತೆ ಜ್ಞಾನಿಯೂ ಸಹ ಸಾಯಲೇಬೇಕು.
ECC 2:17 ಸೂರ್ಯನ ಕೆಳಗೆ ನಡೆಯುವ ಕಾರ್ಯವು ನನಗೆ ದುಃಖಕರವಾಗಿ ತೋರಿತು. ಆದಕಾರಣ ನಾನು ನನ್ನ ಜೀವನವನ್ನು ಹಗೆ ಮಾಡಿದೆನು. ಗಾಳಿಯನ್ನು ಬೆನ್ನಟ್ಟುವಂತೆ ಎಲ್ಲವೂ ವ್ಯರ್ಥವಾಗಿದೆ.
ECC 2:18 ನನ್ನ ತರುವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕಾದ್ದರಿಂದ ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆ ಮಾಡಿದೆನು.
ECC 2:19 ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ತೋರ್ಪಡಿಸಿಕೊಂಡದರ ಮೇಲೆಯೂ ಅವನು ಆಳುವನು. ಇದು ವ್ಯರ್ಥವೇ.
ECC 2:20 ಆದ್ದರಿಂದ ಸೂರ್ಯನ ಕೆಳಗೆ ಪ್ರಯಾಸಪಟ್ಟ ಎಲ್ಲಾ ಪ್ರಯಾಸದ ವಿಷಯವಾಗಿ, ನನ್ನ ಹೃದಯವು ನಿರಾಶೆಗೊಳ್ಳಲು ಪ್ರಾರಂಭಿಸಿತು.
ECC 2:21 ಒಬ್ಬ ಮನುಷ್ಯನು ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ಕೌಶಲಯುತವಾಗಿಯೂ ತನ್ನ ಕೆಲಸ ಮಾಡಬಹುದು. ಅನಂತರ ತನಗಿರುವುದೆಲ್ಲವನ್ನು ಪ್ರಯಾಸಪಡದೆ ಇದ್ದ ಮನುಷ್ಯನಿಗೆ ಪಾಲಾಗಿ ಅವನು ಬಿಟ್ಟುಬಿಡಬೇಕಾಗುತ್ತದೆ. ಇದೂ ವ್ಯರ್ಥವೂ ದೊಡ್ಡ ವ್ಯಸನವೂ ಆಗಿವೆ.
ECC 2:22 ಸೂರ್ಯನ ಕೆಳಗೆ ತಾನು ಪ್ರಯಾಸಪಟ್ಟ ತನ್ನ ಹೃದಯದ ಆಯಾಸಕ್ಕಾಗಿಯೂ ತನ್ನ ಎಲ್ಲಾ ಪ್ರಯಾಸಕ್ಕಾಗಿಯೂ ಮನುಷ್ಯನಿಗೆ ಏನು ಸಿಕ್ಕುತ್ತದೆ?
ECC 2:23 ಅವನ ದಿನಗಳೆಲ್ಲಾ ವ್ಯಸನವೇ. ಅವನ ಪ್ರಯಾಸವು ದುಃಖವೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಕೂಡ ವ್ಯರ್ಥವೇ.
ECC 2:24 ಒಬ್ಬ ವ್ಯಕ್ತಿ ತನ್ನ ಪ್ರಯಾಸದಲ್ಲಿ ತೃಪ್ತಿಹೊಂದುವಂತೆ ತಿಂದು ಕುಡಿಯುವುದಕ್ಕಿಂತ ಶ್ರೇಷ್ಠವಾದದ್ದು ಮನುಷ್ಯನಿಗೆ ಯಾವುದೂ ಇಲ್ಲ. ಇದೂ ಕೂಡ ದೇವರ ಕೈಯಿಂದಲೇ ಆಗುತ್ತದೆ ಎಂದು ನಾನು ಕಂಡೆನು.
ECC 2:25 ದೇವರಿಲ್ಲದೆ ಯಾರಿಗೆ ಊಟ ದೊರಕಿತು? ದೇವರಿಲ್ಲದೆ ಯಾರು ಸುಖಾನುಭವ ಹೊಂದುವರು?
ECC 2:26 ಏಕೆಂದರೆ ದೇವರು ಮೆಚ್ಚಿದವರಿಗೆ ಅವರು ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾರೆ. ಆದರೆ ದೇವರು ತಮಗೆ ಮೆಚ್ಚುಗೆಯಾದವನಿಗೆ ಕೊಡತಕ್ಕ ಐಶ್ವರ್ಯವನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ಪಾಪಿಗೆ ಕೊಡುತ್ತಾರೆ. ಏಕೆಂದರೆ ಇದು ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.
ECC 3:1 ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ. ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ.
ECC 3:2 ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ. ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕುವುದಕ್ಕೆ ಒಂದು ಸಮಯ.
ECC 3:3 ಕೊಲ್ಲುವುದಕ್ಕೆ ಒಂದು ಸಮಯ, ಸ್ವಸ್ಥ ಮಾಡುವುದಕ್ಕೆ ಒಂದು ಸಮಯ, ಕೆಡವಿಬಿಡುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ.
ECC 3:4 ಅಳುವುದಕ್ಕೆ ಒಂದು ಸಮಯ, ನಗುವುದಕ್ಕೆ ಒಂದು ಸಮಯ. ಗೋಳಾಡುವುದಕ್ಕೆ ಒಂದು ಸಮಯ, ಕುಣಿದಾಡುವುದಕ್ಕೆ ಒಂದು ಸಮಯ.
ECC 3:5 ಕಲ್ಲುಗಳನ್ನು ಎಸೆಯುವುದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸುವುದಕ್ಕೆ ಒಂದು ಸಮಯ. ಅಪ್ಪಿಕೊಳ್ಳುವುದಕ್ಕೆ ಒಂದು ಸಮಯ, ತಡೆದಿರುವುದಕ್ಕೂ ಒಂದು ಸಮಯ.
ECC 3:6 ಗಳಿಸುವುದಕ್ಕೆ ಒಂದು ಸಮಯ, ಕಳೆದುಕೊಳ್ಳುವುದಕ್ಕೆ ಒಂದು ಸಮಯ. ಕಾಪಾಡುವುದಕ್ಕೆ ಒಂದು ಸಮಯ, ಬಿಸಾಡುವುದಕ್ಕೆ ಒಂದು ಸಮಯ.
ECC 3:7 ಹರಿಯುವುದಕ್ಕೆ ಒಂದು ಸಮಯ, ಹೊಲಿಯುವುದಕ್ಕೆ ಒಂದು ಸಮಯ. ಸುಮ್ಮನೆ ಇರುವುದಕ್ಕೆ ಒಂದು ಸಮಯ, ಮಾತಾಡುವುದಕ್ಕೆ ಒಂದು ಸಮಯ.
ECC 3:8 ಪ್ರೀತಿಸುವುದಕ್ಕೆ ಒಂದು ಸಮಯ, ದ್ವೇಷಿಸುವುದಕ್ಕೆ ಒಂದು ಸಮಯ. ಯುದ್ಧದ ಸಮಯ, ಸಮಾಧಾನದ ಸಮಯ, ಹೀಗೆ ಒಂದೊಂದಕ್ಕೂ ತಕ್ಕ ಸಮಯವಿದೆ.
ECC 3:9 ಹಾಗಾದರೆ, ಪ್ರಯಾಸ ಪಡುವುದರಲ್ಲಿ ದುಡಿಯುವವನಿಗೆ ಲಾಭವೇನಿದೆ?
ECC 3:10 ದೇವರು ಮಾನವ ಜನಾಂಗದ ಮೇಲೆ ಹೊರಿಸಿರುವ ಭಾರವನ್ನು ನಾನು ನೋಡಿದ್ದೇನೆ.
ECC 3:11 ದೇವರು ಪ್ರತಿಯೊಂದನ್ನು ತಮ್ಮ ಸೂಕ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ್ದಾರೆ. ಜನರ ಹೃದಯದಲ್ಲಿ ನಿತ್ಯತೆಯನ್ನು ದೇವರೇ ಇಟ್ಟಿದ್ದಾರೆ. ಆದರೂ ಆದಿಯಿಂದ ಅಂತ್ಯದವರೆಗೂ ದೇವರು ಏನು ಮಾಡಿದ್ದಾರೆಂದು ಯಾರಿಗೂ ಗ್ರಹಿಸಲು ಸಾಧ್ಯವಿಲ್ಲ.
ECC 3:12 ಜನರು ತಮ್ಮ ಜೀವಮಾನದಲ್ಲಿ ಸಂತೋಷವಾಗಿದ್ದು ಒಳ್ಳೆಯದನ್ನು ಮಾಡುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲವೆಂದು ನಾನು ಬಲ್ಲೆನು.
ECC 3:13 ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ಸೇವಿಸಿ, ತನ್ನ ಎಲ್ಲಾ ಪ್ರಯಾಸಗಳಲ್ಲಿ ಸುಖವನ್ನು ಅನುಭವಿಸುವುದು ದೇವರ ದಾನದಿಂದಲೇ.
ECC 3:14 ದೇವರು ಮಾಡುವ ಕಾರ್ಯವೆಲ್ಲವೂ ಶಾಶ್ವತವಾಗಿರುವುದೆಂದು ನಾನು ಬಲ್ಲೆನು; ಅದಕ್ಕೆ ಯಾವುದನ್ನೂ ಕೂಡಿಸಲಾಗದು ಮತ್ತು ಯಾವುದನ್ನೂ ತೆಗೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮನುಷ್ಯರು ಭಯಭಕ್ತಿಯಿಂದ ಜೀವಿಸಬೇಕೆಂದು ದೇವರು ಇದನ್ನು ಮಾಡಿದ್ದಾರೆ.
ECC 3:15 ಇರುವಂಥದ್ದು ಈಗಾಗಲೇ ಇತ್ತು, ಬರುವಂಥದ್ದು ಆಗಲೇ ಇದೆ. ಗತಿಸಿಹೋದದ್ದನ್ನು ದೇವರು ಪುನಃಸ್ಥಾಪಿಸುವರು.
ECC 3:16 ಇದಕ್ಕಿಂತಲೂ ಬೇರೆಯಾದದ್ದನ್ನು ಸೂರ್ಯನ ಕೆಳಗೆ ನೋಡಿದೆನು: ನ್ಯಾಯತೀರ್ಪಿನ ಸ್ಥಳದಲ್ಲಿ ದುಷ್ಕೃತ್ಯ ಇತ್ತು. ನೀತಿಯ ಸ್ಥಾನದಲ್ಲಿಯೂ ದುಷ್ಟತ್ವ ಇತ್ತು.
ECC 3:17 ನಾನು ನನ್ನ ಹೃದಯದಲ್ಲಿ ಹೀಗೆ ಅಂದುಕೊಂಡೆನು, “ನೀತಿವಂತರನ್ನೂ ದುಷ್ಟರನ್ನೂ ದೇವರು ನ್ಯಾಯತೀರಿಸುವನು. ಏಕೆಂದರೆ ಪ್ರತಿಯೊಂದು ಉದ್ದೇಶಕ್ಕೂ, ಪ್ರತಿಯೊಂದು ಕೆಲಸಕ್ಕೂ ಪರೀಕ್ಷೆಯ ಸಮಯವಿದೆ.”
ECC 3:18 ಮತ್ತೆ ನನ್ನ ಮನಸ್ಸಿನಲ್ಲಿ ಯೋಚಿಸಿದೆ, “ಮನುಷ್ಯರು ಮೃಗಗಳಂತೆ ಇದ್ದಾರೆಂದು ತಿಳಿದುಕೊಳ್ಳಲು ದೇವರು ಅವರನ್ನು ಪರೀಕ್ಷಿಸುತ್ತಾರೆ.
ECC 3:19 ಏಕೆಂದರೆ ಮೃಗಗಳಿಗೆ ಸಂಭವಿಸುವುದು ಮನುಷ್ಯರಿಗೂ ಸಂಭವಿಸುತ್ತದೆ. ಇಬ್ಬರಿಗೂ ಒಂದೇ ಸಂಗತಿ ಸಂಭವಿಸುತ್ತದೆ. ಒಂದು ಹೇಗೆ ಸಾಯುತ್ತದೋ ಹಾಗೆ ಇನ್ನೊಂದೂ ಸಾಯುತ್ತದೆ. ಎಲ್ಲಕ್ಕೂ ಒಂದೇ ಪ್ರಾಣ ಇದೆ. ಆ ರೀತಿಯಲ್ಲಿ ಮೃಗಕ್ಕಿಂತ ಮನುಷ್ಯನಿಗೆ ಹೆಚ್ಚು ಶ್ರೇಷ್ಠತೆ ಇಲ್ಲ. ಎಲ್ಲವೂ ವ್ಯರ್ಥ.
ECC 3:20 ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು. ಎಲ್ಲವೂ ಮಣ್ಣಿಗೆ ಸೇರುತ್ತವೆ.
ECC 3:21 ಮನುಷ್ಯನ ಆತ್ಮವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಗೆ ಹೋಗುತ್ತದೆಂದೂ ಯಾರು ತಿಳಿದಾರು?”
ECC 3:22 ಆದಕಾರಣ ಮನುಷ್ಯನು ತನ್ನ ಕೆಲಸ ಕಾರ್ಯಗಳಲ್ಲಿ ಆನಂದಿಸುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲವೆಂದು ನಾನು ನೋಡಿದೆನು. ಏಕೆಂದರೆ ಇದೇ ಅವನ ಪಾಲು. ಆದ್ದರಿಂದ ತನ್ನ ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?
ECC 4:1 ಪುನಃ ನಾನು ಸೂರ್ಯನ ಕೆಳಗೆ ನಡೆಯುತ್ತಿರುವ ದಬ್ಬಾಳಿಕೆಯನ್ನೆಲ್ಲಾ ನೋಡಿದೆನು: ಹಿಂಸೆಗೊಂಡವರ ಕಣ್ಣೀರನ್ನೂ, ಅವರನ್ನು ಸಂತೈಸುವವರು ಯಾರೂ ಇಲ್ಲದಿರುವುದನ್ನೂ ನೋಡಿದೆನು. ಅಧಿಕಾರವು ಅವರ ದಬ್ಬಾಳಿಕೆಗಾರರ ಬಳಿಯಲ್ಲಿತ್ತು. ಆದರೆ ಅವರನ್ನು ಸಂತೈಸುವವರು ಒಬ್ಬರೂ ಇಲ್ಲ.
ECC 4:2 ಆದಕಾರಣ ನಾನು ಇದನ್ನು ನೋಡಿ ಜೀವದಿಂದ ಇರುವವರಿಗಿಂತ, ಮೃತಪಟ್ಟವರೇ ಮೇಲು ಎಂದು ನಾನು ತೀರ್ಮಾನಿಸಿದೆ.
ECC 4:3 ಆದರೆ ಇವರಿಬ್ಬರಿಗಿಂತಲೂ ಇನ್ನೂ ಹುಟ್ಟದೇ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಶ್ರೇಷ್ಠನು.
ECC 4:4 ಮನುಷ್ಯನು ಪಡುವ ಎಲ್ಲಾ ಪ್ರಯಾಸವನ್ನೂ ಸಾಧಿಸುವ ಎಲ್ಲಾ ಕಾರ್ಯಗಳನ್ನೂ ನೋಡಿದಾಗ ಇವು ಪರಸ್ಪರ ಮತ್ಸರಕ್ಕೆ ಕಾರಣವೆಂದು ನಾನು ತಿಳಿದುಕೊಂಡೆನು. ಇದು ಕೂಡ ಗಾಳಿಯನ್ನು ಬೆನ್ನಟ್ಟಿದ ಹಾಗೆ ವ್ಯರ್ಥವೇ.
ECC 4:5 ಸುಮ್ಮನೇ ಕೈಕಟ್ಟಿ ಕುಳಿತುಕೊಂಡು ಬುದ್ಧಿಹೀನರು, ತಮ್ಮನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ.
ECC 4:6 ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ ನೆಮ್ಮದಿಯಿಂದ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು.
ECC 4:7 ಆಗ ಮತ್ತೆ ನಾನು ಸೂರ್ಯನ ಕೆಳಗೆ ವ್ಯರ್ಥವಾದದ್ಡನ್ನು ಕಂಡೆನು:
ECC 4:8 ಜೊತೆಗಾರನಿಲ್ಲದೆ ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದನು. ಅವನಿಗೆ ಮಗನಾಗಲಿ, ಸಹೋದರನಾಗಲಿ ಇರಲಿಲ್ಲ. ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ತನ್ನ ಸಂಪತ್ತಿನಿಂದ ಅವನ ಕಣ್ಣು ತೃಪ್ತಿ ಹೊಂದಿರಲಿಲ್ಲ. ಅವನು, “ನಾನು ಸುಖಸಂತೋಷವನ್ನು ತೊರೆದು, ಯಾರಿಗೋಸ್ಕರ ಕಷ್ಟಪಡುತ್ತಲೇ ಇದ್ದೇನೆ?” ಎಂದುಕೊಂಡನು. ಇದು ಕೂಡ ವ್ಯರ್ಥವೇ, ಪ್ರಯಾಸದ ಕೆಲಸವೇ ಸರಿ.
ECC 4:9 ಒಬ್ಬನಿಗಿಂತ ಇಬ್ಬರು ಲೇಸು, ಏಕೆಂದರೆ ಅವರ ಪ್ರಯಾಸಕ್ಕೆ ಒಳ್ಳೆಯ ಪ್ರತಿಫಲವಿದೆ:
ECC 4:10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಆದರೆ ಅವನು ಒಬ್ಬೊಂಟಿಗನಾಗಿ ಬಿದ್ದರೆ ಅವನ ಗತಿ ದುರ್ಗತಿಯೇ ಏಕೆಂದರೆ ಅವನಿಗೆ ಸಹಾಯ ಮಾಡುವುದಕ್ಕೆ ಯಾರೂ ಇರುವುದಿಲ್ಲ.
ECC 4:11 ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ. ಆದರೆ ಒಬ್ಬನಷ್ಟೆ ಹೇಗೆ ಬೆಚ್ಚಗಿರುತ್ತಾನೆ?
ECC 4:12 ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ಕಿತ್ತು ಹೋಗುವುದಿಲ್ಲ.
ECC 4:13 ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮೂಢ ಮುದಿ ಅರಸನಿಗಿಂತ ಬಡವನಾದರೂ ಜ್ಞಾನಿಯಾದ ಒಬ್ಬ ಯುವಕನೇ ಮೇಲು.
ECC 4:14 ಆ ಯುವಕನು ಸೆರೆಮನೆಯಿಂದ ರಾಜ್ಯವನ್ನಾಳುವುದಕ್ಕಾಗಿ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.
ECC 4:15 ಸೂರ್ಯನ ಕೆಳಗೆ ಜೀವಿಸಿ ನಡೆದಾಡಿದವರೆಲ್ಲರೂ ಅರಸನ ಪ್ರತಿಯಾಗಿ ಯುವಕನನ್ನು ಹಿಂಬಾಲಿಸಿದ್ದನ್ನೂ ನಾನು ನೋಡಿದೆನು.
ECC 4:16 ಇವನ ಆಧಿಪತ್ಯಕ್ಕೆ ಒಳಪಟ್ಟ ಜನರ ಸಂಖ್ಯೆಯು ಅಪಾರ. ಆದರೆ ಯುವಕನ ಆಳ್ವಿಕೆಯ ಮುಂಚೆ ಇದ್ದವರು ಮತ್ತು ತರುವಾಯ ಬಂದವರು ಇವನನ್ನು ಮೆಚ್ಚಲಿಲ್ಲ. ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ ವ್ಯರ್ಥವೇ.
ECC 5:1 ದೇವರ ಆಲಯಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು. ಮೂರ್ಖರು ಅರ್ಪಿಸುವ ಯಜ್ಞಕ್ಕಿಂತ, ದೇವರ ಸಮೀಪವಾಗಿದ್ದು ಅವರಿಗೆ ಕಿವಿಗೊಟ್ಟು ಆಲಿಸುವುದು ಲೇಸು. ತಾವು ತಪ್ಪು ಮಾಡುತ್ತಿದ್ದಾರೆಂದು ಮೂಢರಿಗೆ ತಿಳಿಯುವುದಿಲ್ಲ.
ECC 5:2 ನೀನು ದುಡುಕಿ ಮಾತನಾಡಬೇಡ, ದೇವರ ಮುಂದೆ ಮಾತನಾಡಲು ನಿನ್ನ ಹೃದಯವು ಆತುರಪಡದೇ ಇರಲಿ. ದೇವರು ಪರಲೋಕದಲ್ಲಿದ್ದಾರೆ. ನೀನಾದರೋ ಭೂಮಿಯ ಮೇಲೆ ಇರುವೆ, ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.
ECC 5:3 ಬಹಳ ಚಿಂತೆ ಇದ್ದಾಗಲೂ ಕನಸು ಬರುತ್ತದೆ. ಮೂಢನು ಮಾತಾಡಿದರೆ ಸಾಕು, ಬಹು ಮಾತುಗಳು ಬರುತ್ತವೆ.
ECC 5:4 ದೇವರಿಗೆ ನೀನು ಹರಕೆಯನ್ನು ಮಾಡಿದರೆ, ಅದನ್ನು ತೀರಿಸಲು ತಡಮಾಡಬೇಡ. ದೇವರು ಮೂಢರನ್ನು ಮೆಚ್ಚುವುದಿಲ್ಲ. ನೀನು ಹರಕೆ ಮಾಡಿದ್ದನ್ನು ತೀರಿಸು.
ECC 5:5 ಹರಕೆಮಾಡಿ ತೀರಿಸದೆ ಇರುವುದಕ್ಕಿಂತ, ಹರಕೆ ಮಾಡದೆ ಇರುವುದು ಒಳ್ಳೆಯದು.
ECC 5:6 ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ನಡೆಸದಂತೆ ನೋಡಿಕೋ. “ನಾನು ಹರಕೆ ಮಾಡಿದ್ದು ತಪ್ಪು,” ಎಂದು ದೂತನ ಮುಂದೆ ಹೇಳಬೇಡ. ಇದರಿಂದ ದೇವರು ನಿನ್ನ ಮಾತಿಗೆ ಮೆಚ್ಚದೆ, ನಿನ್ನನ್ನು ಏಕೆ ದಂಡಿಸಬೇಕು?
ECC 5:7 ಬಹು ಕನಸುಗಳೂ ಬಹು ಮಾತುಗಳೂ ವ್ಯರ್ಥವಾದವುಗಳು. ಆದ್ದರಿಂದ ನೀನು ದೇವರಿಗೆ ಭಯಪಡು.
ECC 5:8 ದೇಶದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯ ನಿರಾಕರಿಸಿದ್ದನ್ನೂ ನೀನು ನೋಡಿದರೆ, ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಮತ್ತೊಬ್ಬ ಉನ್ನತ ಅಧಿಕಾರಿಗಳು ಇದ್ದಾರೆ.
ECC 5:9 ಭೂಮಿಯಿಂದ ಲಾಭವು ಎಲ್ಲರಿಗೂ ಇದೆ. ಹೊಲಗದ್ದೆಗಳಿಂದ ಅರಸನಿಗೂ ಲಾಭವಿದೆ.
ECC 5:10 ಹಣವನ್ನು ಪ್ರೀತಿಸುವವರಿಗೆ ಎಷ್ಟು ಹಣ ಇದ್ದರೂ ಸಾಕಾಗದು. ಆಸ್ತಿಯನ್ನು ಪ್ರೀತಿಸುವವನು ತನ್ನ ಆದಾಯದಿಂದ ತೃಪ್ತಿಗೊಳ್ಳುವುದಿಲ್ಲ. ಇದೂ ಸಹ ವ್ಯರ್ಥವೇ.
ECC 5:11 ಸೊತ್ತು ಹೆಚ್ಚಿದರೆ, ಅದನ್ನು ಅನುಭವಿಸುವವರು ಹೆಚ್ಚಾಗುವರು. ಯಜಮಾನರು ಅದನ್ನು ತಮ್ಮ ಕಣ್ಣಿಂದ ನೋಡುವುದೇ ಅವರಿಗಾಗುವ ಲಾಭ, ಬೇರೆ ಯಾವ ಪ್ರಯೋಜನವಿದೆ?
ECC 5:12 ಪ್ರಯಾಸ ಪಡುವವನು ಸ್ವಲ್ಪ ತಿಂದರೂ ಹೆಚ್ಚು ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ. ಆದರೆ ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆ ಮಾಡಗೊಡಿಸದು.
ECC 5:13 ಸೂರ್ಯನ ಕೆಳಗೆ ವ್ಯಸನಕರವಾದ ಕೇಡನ್ನು ನಾನು ನೋಡಿದೆ. ಅದು ಯಾವುದೆಂದರೆ: ಸಂಗ್ರಹಿಸಿದ ಆಸ್ತಿ ಯಜಮಾನನಿಗೆ ಹಾನಿ.
ECC 5:14 ಅದು ಹೇಗೆಂದರೆ, ಅನಾಹುತದಿಂದ ಆಸ್ತಿ ಕಳೆದುಹೋಗುತ್ತದೆ. ಅವನಿಗೆ ಮಗನಿದ್ದರೆ, ಅವನಿಗೆ ಏನೂ ಇರುವುದಿಲ್ಲ.
ECC 5:15 ತಾಯಿಯ ಗರ್ಭದಿಂದ ಅವನು ಹೇಗೆ ಬರಿಗೈಯಲ್ಲಿ ಬಂದನೋ, ಹಾಗೆ ಬರಿಗೈಯಲ್ಲಿ ಗತಿಸಿ ಹೋಗುವನು. ಅವನು ಪ್ರಯಾಸ ಪಟ್ಟದ್ದಕ್ಕಾಗಿ ಯಾವುದನ್ನು ತೆಗೆದುಕೊಂಡು ಹೋಗುವುದಿಲ್ಲ.
ECC 5:16 ಇದು ಕೂಡ ವ್ಯಸನಕರವಾದ ಕೇಡು: ಮನುಷ್ಯನು ಹೇಗೆ ಬಂದನೋ, ಹಾಗೆಯೇ ಹೋಗುವನು. ಗಾಳಿಗಾಗಿ ಪ್ರಯಾಸಪಟ್ಟವನಿಗೆ ಲಾಭವೇನಿದೆ?
ECC 5:17 ತನ್ನ ಜೀವಮಾನವೆಲ್ಲಾ ಅವನು ಕತ್ತಲೆಯಲ್ಲಿ ಕಳೆಯುತ್ತಾನೆ. ಅವನಿಗೆ ವ್ಯಾಧಿಯೊಂದಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
ECC 5:18 ದೇವರು ಮನುಷ್ಯನಿಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ಅವನು ಕೈಗೊಂಡ ಪ್ರಯಾಸದ ಸುಖವನ್ನು ಅನುಭವಿಸಿ, ತಿಂದು, ಕುಡಿಯುವುದು ತೃಪ್ತಿಕರವಾದದ್ದೂ ಆಗಿದೆ, ಎಂದು ಒಂದು ಒಳ್ಳೆಯದನ್ನು ಕಂಡುಕೊಂಡೆನು. ಏಕೆಂದರೆ ಇದು ಮನುಷ್ಯನ ಪಾಲು.
ECC 5:19 ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅವುಗಳನ್ನು ಅನುಭವಿಸುವುದಕ್ಕೆ ಸಾಮರ್ಥ್ಯ ಕೊಟ್ಟಿದ್ದರೆ, ಅವನು ತನ್ನ ಪಾಲನ್ನು ತೆಗೆದುಕೊಂಡು, ತನ್ನ ಪ್ರಯಾಸದಲ್ಲಿ ಆನಂದಿಸುವುದೂ ದೇವರ ದಾನದಿಂದಲೇ.
ECC 5:20 ಇಂಥವನು ತನ್ನ ಜೀವಮಾನದ ದಿನಗಳನ್ನು ಗಣನೆಗೆ ತಂದುಕೊಳ್ಳನು. ಏಕೆಂದರೆ ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾರೆ.
ECC 6:1 ಸೂರ್ಯನ ಕೆಳಗೆ ಇರುವ ಇನ್ನೊಂದು ಕೇಡನ್ನು ಕಂಡೆನು, ಅದು ಮನುಷ್ಯರ ಮೇಲೆ ಬಹು ಭಾರವಾಗಿದೆ.
ECC 6:2 ಅದೇನೆಂದರೆ, ಮನುಷ್ಯನು ಹೃದಯದಲ್ಲಿ ಬಯಸಿದ್ದನ್ನು ಕೊರತೆಯಾಗದಂತೆ ದೇವರು ಅವನಿಗೆ ಧನ, ಐಶ್ವರ್ಯ, ಸನ್ಮಾನವನ್ನು ಕೊಡುತ್ತಾರೆ. ಆದರೆ ಅದನ್ನು ಅನುಭವಿಸುವಂತೆ ದೇವರು ಸಾಮರ್ಥ್ಯವನ್ನು ಕೊಡುವುದಿಲ್ಲ. ಆದುದರಿಂದ ಪರರು ಅದನ್ನು ಅನುಭವಿಸುತ್ತಾರೆ. ಇದು ವ್ಯರ್ಥವೂ ವ್ಯಸನಕರವಾದ ಕೇಡು.
ECC 6:3 ಒಬ್ಬ ಮನುಷ್ಯನಿಗೆ ನೂರು ಮಕ್ಕಳಿರಬಹುದು ಮತ್ತು ಅವನು ಬಹಳ ವರ್ಷ ಬದುಕಿರಬಹುದು. ಅವನು ತನ್ನ ಐಶ್ವರ್ಯವನ್ನು ಅನುಭವಿಸದೆ, ಸರಿಯಾದ ಶವಸಂಸ್ಕಾರ ಇಲ್ಲದೆ ಹೋದರೆ ಅವನಿಗಿಂತಲೂ ಮೃತ ಸ್ಧಿತಿಯಲ್ಲಿ ಹುಟ್ಟಿರುವ ಕೂಸೇ ಮೇಲು ಎಂದುಕೊಂಡೆ.
ECC 6:4 ಆ ಕೂಸು ವ್ಯರ್ಥವಾಗಿ ಬಂದು ಕತ್ತಲೆಯಲ್ಲಿ ಹೊರಟು ಹೋಗುತ್ತದೆ. ಅದರ ಹೆಸರು ಅಂಧಕಾರದಿಂದ ಕವಿದಿರುವುದು.
ECC 6:5 ಇದಲ್ಲದೆ ಅದು ಸೂರ್ಯನನ್ನು ನೋಡಲಿಲ್ಲ, ಯಾವುದನ್ನು ಅರಿತಿರಲಿಲ್ಲ. ಆದರೂ ಅದು ಆ ಮನುಷ್ಯನಿಗಿಂತ ಹೆಚ್ಚು ವಿಶ್ರಾಂತಿ ಹೊಂದಿದೆ.
ECC 6:6 ಒಂದು ವೇಳೆ ಎರಡು ಸಾವಿರ ವರ್ಷಗಳು ಆ ಮನುಷ್ಯನು ಬದುಕಿದರೂ ಅವನು ತನ್ನ ಐಶ್ವರ್ಯವನ್ನು ಅನುಭವಿಸದಿದ್ದರೆ ಏನು ಪ್ರಯೋಜನ? ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ?
ECC 6:7 ಪ್ರತಿಯೊಬ್ಬನ ಪ್ರಯಾಸ ಅವನ ಹೊಟ್ಟೆಗಾಗಿಯೇ, ಆದರೆ ಅವನ ಹಸಿವು ತೃಪ್ತಿಹೊಂದುವುದಿಲ್ಲ.
ECC 6:8 ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಲಾಭ ಏನಿದೆ? ಇತರರ ಮುಂದೆ ಹೇಗೆ ವರ್ತಿಸಬೇಕು ಎಂದು ತಿಳಿದುಕೊಳ್ಳುವುದರಿಂದ ಬಡವರಿಗೇನು ಲಾಭ?
ECC 6:9 ಹೆಚ್ಚು ಅಪೇಕ್ಷಿಸಿ ಅಲೆದಾಡುವುದಕ್ಕಿಂತ ಕಣ್ಣೆದುರಿಗೆ ಇರುವುದನ್ನು ಅನುಭವಿಸುವುದು ಉತ್ತಮ. ಗಾಳಿಯನ್ನು ಬೆನ್ನಟ್ಟಿದಂತೆ ಇದೂ ಕೂಡ ವ್ಯರ್ಥವೇ.
ECC 6:10 ಜಗತ್ತಿನಲ್ಲಿ ಇರುವ ಎಲ್ಲದಕ್ಕೂ ಈಗಾಗಲೇ ಹೆಸರನ್ನು ಇಡಲಾಗಿದೆ. ಮನುಷ್ಯನು ಯಾರು ಎಂದೂ ಗೊತ್ತಾಗಿದೆ. ತನಗಿಂತ ಬಲಿಷ್ಟನೊಂದಿಗೆ ಯಾರೂ ಹೋರಾಡುವುದಿಲ್ಲ.
ECC 6:11 ಮಾತು ಹೆಚ್ಚಿದಷ್ಟೂ, ಕಡಿಮೆ ಅರ್ಥೈಸುತ್ತವೆ, ಅದರಿಂದ ಯಾರಿಗೆ ಏನು ಲಾಭ?
ECC 6:12 ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ಎಲ್ಲಾ ದಿವಸಗಳಲ್ಲಿ ಅವನಿಗೆ ಯಾವುದು ಒಳ್ಳೆಯದೆಂದು ಯಾರಿಗೆ ಗೊತ್ತು? ಅವನು ಹೊರಟುಹೋದ ಮೇಲೆ ಸೂರ್ಯನ ಕೆಳಗೆ ಏನಾಗುತ್ತದೆಂದು ಅವನಿಗೆ ಯಾರು ಹೇಳಬಲ್ಲರು?
ECC 7:1 ಅಮೂಲ್ಯವಾದ ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ. ಒಬ್ಬನ ಜನ್ಮ ದಿನಕ್ಕಿಂತ ಮರಣದ ದಿನವೇ ಮೇಲು.
ECC 7:2 ಔತಣದ ಮನೆಗೆ ಹೋಗುವುದಕ್ಕಿಂತ, ಶೋಕದ ಮನೆಗೆ ಹೋಗುವುದು ಲೇಸು. ಏಕೆಂದರೆ ಎಲ್ಲಾ ಮನುಷ್ಯರ ಅಂತ್ಯವು ಸಾವಾಗಿದೆ. ಇದರಿಂದ ಜೀವಂತರು ಇದನ್ನು ತಮ್ಮ ಹೃದಯದಲ್ಲಿ ಸ್ಮರಿಸಿಕೊಳ್ಳುವರು.
ECC 7:3 ನಗೆಗಿಂತ ದುಃಖವು ವಾಸಿ, ಏಕೆಂದರೆ ಮುಖದಲ್ಲಿ ದುಃಖ ಹೃದಯಕ್ಕೆ ಸುಖ.
ECC 7:4 ಜ್ಞಾನಿಗಳ ಹೃದಯವು ಶೋಕದ ಮನೆಯಲ್ಲಿರುವುದು, ಆದರೆ ಮೂಢರ ಹೃದಯವು ಉಲ್ಲಾಸದ ಮನೆಯಲ್ಲಿರುವುದು.
ECC 7:5 ಮೂಢರ ಹಾಡನ್ನು ಕೇಳುವುದಕ್ಕಿಂತ, ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.
ECC 7:6 ಗಡಿಗೆಯ ಕೆಳಗೆ ಉರಿಯುವ ಮುಳ್ಳುಕಡ್ಡಿ ಚಟಚಟನೆಯ ಶಬ್ದ ಹೇಗೋ, ಮೂಢನ ನಗುವು ಹಾಗೆಯೇ ಇರುವುದು. ಇದು ಕೂಡ ವ್ಯರ್ಥವೇ.
ECC 7:7 ದಬ್ಬಾಳಿಕೆ ಜ್ಞಾನಿಯನ್ನು ಮೂರ್ಖನನ್ನಾಗಿ ಮಾಡುತ್ತದೆ. ಲಂಚವು ಹೃದಯವನ್ನು ಕೆಡಿಸುತ್ತದೆ.
ECC 7:8 ಪ್ರಾರಂಭಕ್ಕಿಂತ ಅದರ ಅಂತ್ಯವೇ ಲೇಸು. ಗರ್ವಿಷ್ಠನಿಗಿಂತ ತಾಳ್ಮೆಯುಳ್ಳವನೇ ಉತ್ತಮ.
ECC 7:9 ನೀನು ಕೋಪಿಸಿಕೊಳ್ಳುವುದಕ್ಕೆ ಆತುರಪಡದಿರು, ಏಕೆಂದರೆ ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.
ECC 7:10 “ಹಿಂದಿನ ಕಾಲ ಈಗಿನ ಕಾಲಕ್ಕಿಂತ ಮೇಲಾಗಿರುವುದಕ್ಕೆ ಕಾರಣ ಏನು?” ಎಂದು ನೀನು ಕೇಳಬೇಡ. ಇದು ಬುದ್ಧಿವಂತರು ಕೇಳುವ ಪ್ರಶ್ನೆಯಲ್ಲ.
ECC 7:11 ಜ್ಞಾನವು ಆಸ್ತಿಯ ಹಾಗೆ ಒಳ್ಳೆಯದು; ಅದರಿಂದ ಜೀವಂತರೆಲ್ಲರಿಗೂ ಲಾಭಕರ.
ECC 7:12 ಧನವು ಹೇಗೋ ಹಾಗೆ ಜ್ಞಾನವು ಆಶ್ರಯ. ಆದರೆ ಜ್ಞಾನದ ಶ್ರೇಷ್ಠತೆ ಏನೆಂದರೆ, ಅದು ಜ್ಞಾನಿಗೆ ಜೀವದಾಯಕ.
ECC 7:13 ದೇವರ ಸೃಷ್ಟಿಕಾರ್ಯವನ್ನು ಯೋಚಿಸು: ದೇವರು ಮಾಡಿದ್ದನ್ನು, ಪುನಃ ಸರಿಪಡಿಸಲು ಯಾರಿಗೆ ಸಾಧ್ಯ?
ECC 7:14 ಸುಖ ದಿನದಲ್ಲಿ ಸಂತೋಷವಾಗಿರು. ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು: ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.
ECC 7:15 ನನ್ನ ವ್ಯರ್ಥದ ದಿನಗಳಲ್ಲಿ ಇವೆರಡು ವಿಷಯಗಳನ್ನು ನೋಡಿದ್ದೇನೆ: ನೀತಿವಂತನು ತನ್ನ ನೀತಿಯಲ್ಲಿ ಗತಿಸಿಹೋಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ, ಇಡೀ ಜೀವಮಾನವನ್ನು ಕಳೆಯುತ್ತಾನೆ.
ECC 7:16 ನೀನು ಅತಿಯಾಗಿ ನೀತಿವಂತನಾಗಿರಬೇಡ. ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿಯೂ ಮಾಡಿಕೊಳ್ಳಬೇಡ. ನಿನ್ನನ್ನು ನೀನೇ ಏಕೆ ನಾಶಪಡಿಸಿಕೊಳ್ಳುವೆ?
ECC 7:17 ನೀನು ದುಷ್ಟತನದಲ್ಲಿ ಸಾಗಬೇಡ, ಮೂರ್ಖತನದಲ್ಲಿಯೂ ಮುಂದುವರಿಯಬೇಡ. ನಿನ್ನ ಸಮಯಕ್ಕಿಂತ ಮೊದಲು ನೀನು ಏಕೆ ಸಾಯುವೆ?
ECC 7:18 ನೀನು ಇವುಗಳನ್ನು ಗ್ರಹಿಸಿಕೊಳ್ಳುವುದು ಒಳ್ಳೆಯದು. ಹೌದು, ಇವುಗಳನ್ನು ಮರೆಯಬೇಡ. ಏಕೆಂದರೆ ದೇವರಿಗೆ ಭಯಪಡುವವನು ಇವೆಲ್ಲವುಗಳಿಂದ ಪಾರಾಗುವನು.
ECC 7:19 ಪಟ್ಟಣದ ಹತ್ತು ಮಂದಿ ಅಧಿಕಾರಿಗಳ ಸ್ಥಿರತೆಗಿಂತ, ಜ್ಞಾನವು ಜ್ಞಾನಿಯನ್ನು ಹೆಚ್ಚಾಗಿ ಸ್ಥಿರಪಡಿಸುತ್ತದೆ.
ECC 7:20 ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು, ಭೂಮಿಯ ಮೇಲೆ ಒಬ್ಬನೂ ಇಲ್ಲ.
ECC 7:21 ಜನರು ಆಡಿದ ಎಲ್ಲಾ ಮಾತುಗಳನ್ನು ನೀನು ಲಕ್ಷಿಸಬೇಡ, ನಿನ್ನ ಕೆಲಸದವರೂ ನಿನ್ನನ್ನು ಶಪಿಸಬಹುದು.
ECC 7:22 ನೀನು ಸಹ ಅನೇಕ ವೇಳೆ ಇತರರನ್ನು ಶಪಿಸಿದ್ದೀ, ಇದು ನಿನ್ನ ಹೃದಯಕ್ಕೆ ತಿಳಿದಿದೆ.
ECC 7:23 ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ, “ನಾನು ಜ್ಞಾನಿಯಾಗಿರಲು ತೀರ್ಮಾನಿಸುತ್ತೇನೆ,” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು.
ECC 7:24 ದೂರದಲ್ಲಿರುವುದನ್ನೂ, ಅಗಾಧದಲ್ಲಿರುವುದನ್ನೂ ಯಾರು ಕಂಡುಕೊಂಡಾರು?
ECC 7:25 ಜ್ಞಾನದ ಮೂಲ ತತ್ವವನ್ನೂ, ದುಷ್ಟತನದ ಮೂಢತನವನ್ನೂ, ಮೂಢತ್ವದ ಹುಚ್ಚುತನವನ್ನೂ ಪರೀಕ್ಷಿಸಿ ತಿಳಿದುಕೊಳ್ಳುವಂತೆ ಮನಸ್ಸುಮಾಡಿದೆನು.
ECC 7:26 ಕೆಟ್ಟ ಹೆಂಗಸಿನ ಹೃದಯವು ಬೋನೂ ಬಲೆಯೂ ಆಗಿರುತ್ತದೆ. ಅವಳ ಕೈ ಸಂಕೋಲೆ ಆಗಿರುತ್ತದೆ. ಇದು ಮರಣಕ್ಕಿಂತಲೂ ಕಠೋರವಾದದ್ದು ಎಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸುವವನು, ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.
ECC 7:27 “ನೋಡು, ನಾನಿದನ್ನು ಹುಡುಕಿ ಕಂಡುಕೊಂಡಿದ್ದೇನೆ,” ಎಂದು ಪ್ರಸಂಗಿಯು ಹೇಳುತ್ತಿದ್ದಾನೆ: ನಾನು ಒಂದರ ನಂತರ ಮತ್ತೊಂದನ್ನು ಕೂಡಿಸಿ, ಸಂಶೋಧನೆಗಳನ್ನು ನಡೆಸಿದೆ;
ECC 7:28 ನಾನು ಹುಡುಕಿ ನೋಡಿದರೂ ನನಗೆ ಇದುವರೆಗೆ ಉತ್ತರ ಸಿಕ್ಕಲಿಲ್ಲ. ನಾನು ಸಾವಿರ ಪುರುಷರಲ್ಲಿ ಒಬ್ಬ ಸತ್ಯವಂತನನ್ನು ಕಂಡೆನು. ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ಸತ್ಯವಂತಳನ್ನು ಕಂಡುಕೊಳ್ಳಲಿಲ್ಲ.
ECC 7:29 ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ: ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದರು. ಮನುಷ್ಯರಾದರೋ ಅನೇಕ ಸ್ವಾರ್ಥ ಯೋಜನೆಗಳನ್ನು ಮಾಡಿಕೊಂಡಿದ್ದಾರೆ.
ECC 8:1 ಜ್ಞಾನಿಯ ಹಾಗೆ ಇರುವವರು ಯಾರು? ಈ ಸಂಗತಿಗಳ ಅರ್ಥವನ್ನು ವಿವರಿಸಬಲ್ಲವರು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖವನ್ನು ಬೆಳಗಿಸುತ್ತದೆ ಜ್ಞಾನವು ಕಠಿಣ ಮುಖಭಾವವನ್ನು ಸಹ ಬದಲಾಯಿಸುತ್ತದೆ.
ECC 8:2 ನೀವು ದೇವರ ಮುಂದೆ ಪ್ರಮಾಣ ಮಾಡಿದ್ದರಿಂದ, ಅರಸನ ಆಜ್ಞೆಯನ್ನು ಕೈಕೊಳ್ಳಿರಿ ಎಂದು ಹೇಳುತ್ತೇನೆ.
ECC 8:3 ಅರಸನನ್ನು ಬಿಟ್ಟುಹೋಗುವುದಕ್ಕೆ ಆತುರ ಪಡಬೇಡಿರಿ. ಅರಸನು ತನಗೆ ಇಷ್ಟಬಂದದ್ದನ್ನೆಲ್ಲಾ ಮಾಡುತ್ತಾನೆ. ನೀವು ಕೆಟ್ಟ ಕಾರ್ಯಕ್ಕಾಗಿ ನಿಲ್ಲಬೇಡಿರಿ.
ECC 8:4 ಅರಸನ ಮಾತುಗಳೇ ಸರ್ವೋನ್ನತವಾದುದರಿಂದ, “ನೀನು ಮಾಡುವುದೇನು?” ಎಂದು ಅವನಿಗೆ ಪ್ರಶ್ನಿಸುವವರಾರು?
ECC 8:5 ಅರಸನ ಆಜ್ಞೆಯನ್ನು ಪಾಲಿಸುವವನಿಗೆ ಕೇಡು ಸಂಭವಿಸುವುದಿಲ್ಲ, ಜ್ಞಾನಿಯ ಹೃದಯವು ಸರಿಯಾದ ಕಾಲ ಕ್ರಮವನ್ನು ತಿಳಿದುಕೊಳ್ಳುತ್ತದೆ.
ECC 8:6 ಮನುಷ್ಯನಿಗೆ ಕಷ್ಟಸಂಕಟವು ಭಾರವಾಗಿದ್ದರೂ ಪ್ರತಿಯೊಂದು ಕಾರ್ಯಕ್ಕೂ ಸರಿಯಾದ ಕಾಲ ಮತ್ತು ಕ್ರಮ ಇರುತ್ತದೆ.
ECC 8:7 ಏಕೆಂದರೆ ಮುಂದೆ ಆಗುವುದೇನೆಂದು ಯಾರಿಗೂ ತಿಳಿಯದು. ಮುಂದೆ ಏನಾಗುವುದೆಂದು ಮನುಷ್ಯನಿಗೆ ತಿಳಿಸುವವರು ಯಾರು ಇಲ್ಲ.
ECC 8:8 ನಮ್ಮ ಆತ್ಮವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗೆಯೇ ಸಾಯುವ ಸಮಯವನ್ನು ತಡೆಯುವ ಶಕ್ತಿಯು ಸಹ ಯಾರಿಗೂ ಇಲ್ಲ. ಯುದ್ಧ ಸಮಯದಲ್ಲಿ ಹೇಗೆ ವಿರಾಮ ಇರುವುದಿಲ್ಲವೋ, ಹಾಗೆಯೇ ದುಷ್ಟನಿಗೆ ದುಷ್ಟತ್ವದಿಂದ ಬಿಡುಗಡೆಯೇ ಇಲ್ಲ.
ECC 8:9 ನಾನು ಇದನ್ನೆಲ್ಲಾ ನೋಡಿ, ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ. ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡೆಸುವ ಕಾಲವೂ ಇದೆ.
ECC 8:10 ಇದಲ್ಲದೆ ದುರ್ಜನರು ಸತ್ತು ಸಮಾಧಿಯಾಗುವುದನ್ನೂ ನಾನು ನೋಡಿದ್ದೇನೆ. ಆದರೆ ಜನರು ಪರಿಶುದ್ಧ ಸ್ಥಳಕ್ಕೆ ಹೋಗಿ ಬಂದ ಆ ದುಷ್ಟರನ್ನು ಅವರಿದ್ದ ಪಟ್ಟಣದಲ್ಲಿ ಹೊಗಳುತ್ತಾರೆ. ಇದೂ ಸಹ ನಿರರ್ಥಕವಾದದ್ದು.
ECC 8:11 ಏಕೆಂದರೆ ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವುದರಿಂದ ಮನುಷ್ಯರ ಹೃದಯವು ಅವರನ್ನು ಕೆಟ್ಟದ್ದು ಮಾಡುವ ಯುಕ್ತಿಯಲ್ಲಿಯೇ ತುಂಬಿರುವುದು.
ECC 8:12 ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ, ಬಹುಕಾಲ ಬದುಕಿದರೂ ದೇವರಿಗೆ ಹೆದರಿ ದೈವಭಕ್ತಿಯುಳ್ಳವರಿಗೆ ಒಳ್ಳೆಯದಾಗುವುದೆಂದು ನಾನು ಬಲ್ಲೆನು.
ECC 8:13 ದುಷ್ಟರು ದೇವರಿಗೆ ಭಯಪಡುವುದಿಲ್ಲ. ಆದ್ದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ನೆರಳಿನ ಹಾಗಿರುವ ದುಷ್ಟರ ದಿನಗಳು ಹೆಚ್ಚುವುದಿಲ್ಲ.
ECC 8:14 ಭೂಮಿಯ ಮೇಲೆ ನಡೆಯುವ ಇನ್ನೊಂದು ವ್ಯರ್ಥ ಕಾರ್ಯವಿದು: ದುಷ್ಟರಿಗೆ ಆಗಬೇಕಾದ ಶಿಕ್ಷೆಯನ್ನು ನೀತಿವಂತರು ಅನುಭವಿಸುತ್ತಾರೆ. ನೀತಿವಂತರಿಗೆ ಆಗಬೇಕಾದ ಪ್ರತಿಫಲವನ್ನು ದುಷ್ಟರು ಅನುಭವಿಸುತ್ತಾರೆ. ಇದು ಸಹ ವ್ಯರ್ಥವೆಂದು ನಾನು ಹೇಳುತ್ತೇನೆ.
ECC 8:15 ಆದುದರಿಂದ ನಾನು ಸಂತೋಷವನ್ನು ಮೆಚ್ಚಿದೆನು. ಏಕೆಂದರೆ ಮನುಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವುದೂ ತಿನ್ನುವುದೂ ಸಂತೋಷಪಡುವುದೇ ಹೊರತು ಬೇರೇನೂ ಒಳ್ಳೆಯದಿಲ್ಲ. ಸೂರ್ಯನ ಕೆಳಗೆ ದೇವರು ಮನುಷ್ಯನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟಕ್ಕೆ ಸುಖಾನುಭವವು ಅವನಿಗೆ ಸೇರಿರುತ್ತದೆ.
ECC 8:16 ಜ್ಞಾನವನ್ನು ತಿಳಿದುಕೊಳ್ಳುವುದಕ್ಕೂ ಭೂಮಿಯ ಮೇಲೆ ಮಾಡುವ ಪರಿಶ್ರಮವನ್ನು ನೋಡುವುದಕ್ಕೂ ನಾನು ನನ್ನ ಹೃದಯವನ್ನು ಪ್ರಯೋಗಿಸಿದೆನು. ಜನರು ರಾತ್ರಿ ಹಗಲು ತಮ್ಮ ಕಣ್ಣುಗಳಿಗೆ ನಿದ್ರೆ ಹಚ್ಚಗೊಡದವರೂ ಇದ್ದಾರೆ.
ECC 8:17 ತರುವಾಯ ದೇವರ ಮಾಡುವ ಎಲ್ಲಾ ಕೆಲಸಗಳನ್ನು ನಾನು ನೋಡಿದೆನು. ಅದೇನೆಂದರೆ, ಸೂರ್ಯನ ಕೆಳಗೆ ಮಾಡುವ ದೇವರ ಕೆಲಸಗಳನ್ನು ಮನುಷ್ಯನು ಗ್ರಹಿಸಲಾರನು. ಮನುಷ್ಯನು ಅದನ್ನು ಹುಡುಕುವುದಕ್ಕೆ ಎಷ್ಟು ಕಷ್ಟಪಟ್ಟರೂ ಅದನ್ನು ಕಂಡುಕೊಳ್ಳಲಾರನು. ಹೌದು, ಜ್ಞಾನಿಯು ಸಹ ದೇವರು ಮಾಡುವುದನ್ನು ತಿಳಿದುಕೊಳ್ಳಲು ಯೋಚಿಸಿದರೂ ಅವನು ಅದನ್ನು ಕಂಡುಕೊಳ್ಳಲಾರನು.
ECC 9:1 ನಾನು ಇವೆಲ್ಲವುಗಳ ಮೇಲೆ ಅಭ್ಯಾಸ ಮಾಡಿ ಈ ತೀರ್ಮಾನಕ್ಕೆ ಬಂದೆನು. ಅದೇನೆಂದರೆ, ನೀತಿವಂತರ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಆದರೆ ಅವರಿಗೆ ಪ್ರೀತಿ ಕಾದಿದೆಯೋ ಅಥವಾ ದ್ವೇಷ ಕಾದಿದೆಯೋ ಎಂದು ಯಾರಿಗೂ ಗೊತ್ತಿಲ್ಲ.
ECC 9:2 ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ದುಷ್ಟನಿಗೂ ಒಳ್ಳೆಯವನಿಗೂ ಕೆಟ್ಟವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಯಜ್ಞ ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನಿಗೆ ಹೇಗೋ ಹಾಗೆಯೇ ಪಾಪಿಗೂ ಇರುವುದು. ಆಣೆಯಿಡುವವನಿಗೆ ಹೇಗೋ ಹಾಗೆಯೇ, ಆಣೆಯಿಡಲು ಭಯಪಡುವವನಿಗೂ ಇರುವುದು.
ECC 9:3 ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ವ್ಯಸನವು. ಎಲ್ಲರಿಗೂ ಒಂದೇ ಗತಿ ಇದೆ. ಹೌದು, ಮನುಷ್ಯರ ಹೃದಯದಲ್ಲಿ ಕೆಟ್ಟತನ ತುಂಬಿವೆ. ಅವರು ಬದುಕಿರುವ ತನಕ ಅವರ ಹೃದಯಗಳಲ್ಲಿ ಹುಚ್ಚುತನವಿದೆ. ಅನಂತರ ಅವರು ಸಾಯುತ್ತಾರೆ.
ECC 9:4 ಜೀವಂತರ ಗುಂಪಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವುದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಉತ್ತಮ.
ECC 9:5 ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿದ್ದಾರೆ, ಆದರೆ ಸತ್ತವರಿಗೆ ಏನೂ ತಿಳಿಯದು; ಅವರಿಗೆ ಇನ್ನು ಮೇಲೆ ಪ್ರತಿಫಲ ಇಲ್ಲ. ಅವರ ಹೆಸರನ್ನು ಸಹ ಜನರು ಮರೆತುಬಿಡುತ್ತಾರೆ.
ECC 9:6 ಅವರ ಪ್ರೀತಿಯೂ ಅವರ ದ್ವೇಷವೂ ಅವರ ಅಸೂಯೆ ಕೂಡ, ಅವರು ಸತ್ತಾಗಲೇ ಅಳಿದುಹೋಗುತ್ತವೆ. ಸೂರ್ಯನ ಕೆಳಗೆ ನಡೆಯುವ ಯಾವ ಸಂಗತಿಗಳಲ್ಲಿಯೂ ಸತ್ತವರಿಗೆ ಇನ್ನೆಂದಿಗೂ ಪಾಲು ಇಲ್ಲ.
ECC 9:7 ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
ECC 9:8 ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ, ನಿನ್ನ ತಲೆಗೆ ಯಾವಾಗಲೂ ಎಣ್ಣೆ ಹಚ್ಚಿರಲಿ.
ECC 9:9 ಈ ನಿರರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ದೇವರು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ, ನೀನು ಪ್ರೀತಿಸುವ ನಿನ್ನ ಹೆಂಡತಿಯೊಡನೆ ಆನಂದದಿಂದ ವಾಸಿಸು. ಸೂರ್ಯನ ಕೆಳಗೆ ನೀನು ಪಡುವ ನಿನ್ನ ಜೀವನದ ಕಷ್ಟದಲ್ಲಿ ಇದೇ ನಿನ್ನ ಪಾಲಾಗಿದೆ.
ECC 9:10 ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
ECC 9:11 ನಾನು ಮತ್ತೆ ಸೂರ್ಯನ ಕೆಳಗೆ ನೋಡಿದ್ದೇನೆಂದರೆ, ವೇಗಿಗಳಿಗೆ ಓಟವೂ ಪರಾಕ್ರಮಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ಆಹಾರವೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವುದು ಎಂಬ ನಿಶ್ಚಯ ಇಲ್ಲ. ಏಕೆಂದರೆ ಕಾಲವೂ ಅವಕಾಶವೂ ಅವರೆಲ್ಲರಿಗೆ ಒಳಪಟ್ಟಿರುತ್ತವೆ.
ECC 9:12 ಇದಲ್ಲದೆ, ಅವರವರ ಸಮಯ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿಯದು. ಕ್ರೂರ ಬಲೆಯಿಂದ ಹಿಡಿಯುವ ಮೀನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗಳಂತೆಯೂ ಕೇಡಿನ ಕಾಲವು ತಟ್ಟನೆ ಬೀಳುವಾಗ ಜನರು ಸಿಕ್ಕಿಕೊಳ್ಳುತ್ತಾರೆ.
ECC 9:13 ಸೂರ್ಯನ ಕೆಳಗೆ ನಾನು ಜ್ಞಾನವನ್ನು ಈ ವಿಧವಾಗಿ ನೋಡಿದ್ದೇನೆ. ಇದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
ECC 9:14 ಒಂದು ಕಾಲದಲ್ಲಿ ಒಂದು ಸಣ್ಣ ನಗರವಿತ್ತು, ಅದರಲ್ಲಿ ಕೆಲವೇ ಜನರಿದ್ದರು. ಆಗ ಅಲ್ಲಿ ಒಬ್ಬ ಮಹಾ ಅರಸನು ಬಂದು ಅದನ್ನು ಮುತ್ತಿಗೆ ಹಾಕಿ, ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
ECC 9:15 ಆಗ ಅದರಲ್ಲಿ ಒಬ್ಬ ಜ್ಞಾನಿಯಾದ ಬಡ ಮನುಷ್ಯನು ಬಂದು, ತನ್ನ ಜ್ಞಾನದಿಂದ ಆ ಪಟ್ಟಣವನ್ನು ರಕ್ಷಿಸಿದನು. ಆದರೂ ಆ ಬಡ ಮನುಷ್ಯನನ್ನು ಯಾರೂ ಜ್ಞಾಪಕ ಮಾಡಿಕೊಳ್ಳಲಿಲ್ಲ.
ECC 9:16 ಇದನ್ನು ನೋಡಿ ನಾನು, “ಬಲಕ್ಕಿಂತ ಜ್ಞಾನವು ಉತ್ತಮ; ಆದರೆ ಜನರು ಬಡವನ ಜ್ಞಾನವನ್ನು ತಿರಸ್ಕಾರ ಮಾಡುತ್ತಾರೆ, ಅವನ ಮಾತುಗಳನ್ನು ಯಾರೂ ಲಕ್ಷಿಸುವುದಿಲ್ಲ,” ಎಂದುಕೊಂಡೆನು.
ECC 9:17 ಹುಚ್ಚರನ್ನು ಆಳುವವನ ಕೂಗಾಟಕ್ಕಿಂತಲೂ ಜ್ಞಾನಿಯ ಸಮಾಧಾನದ ಮಾತಿಗೆ ಮಹತ್ವ ಇದೆ.
ECC 9:18 ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು.
ECC 10:1 ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ. ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ.
ECC 10:2 ಜ್ಞಾನಿಯ ಹೃದಯವು ಬಲಗಡೆ ಸಾಗಿದರೆ, ಮೂರ್ಖನ ಹೃದಯವು ಎಡಗಡೆ ಸಾಗುವುದು.
ECC 10:3 ಮೂರ್ಖನು ಮಾರ್ಗದಲ್ಲಿ ನಡೆಯುವಾಗಲೂ, ತಾನು ಅರಿವಿಲ್ಲದ ಮೂರ್ಖನೆಂದು ಪ್ರತಿಯೊಬ್ಬರಿಗೂ ಪ್ರಕಟಿಸುತ್ತಾನೆ.
ECC 10:4 ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ, ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ. ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ.
ECC 10:5 ಮತ್ತೊಂದು ವ್ಯಸನವನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. ಅದು ಆಳುವವರಿಂದ ಬರುವ ತಪ್ಪಿನಿಂದಾದದ್ದು.
ECC 10:6 ಅದು ಯಾವುದೆಂದರೆ, ಮೂರ್ಖರನ್ನು ಉನ್ನತ ಪದವಿಗೆ ನೇಮಿಸುವುದು. ಘನವಂತರನ್ನು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವಂತೆ ಮಾಡುವುದು.
ECC 10:7 ಕುದುರೆಗಳ ಮೇಲೆ ಸವಾರಿ ಮಾಡುವ ಸೇವಕರನ್ನೂ ಅಧಿಕಾರಿಗಳು ಸೇವಕರ ಹಾಗೆ ನಡೆದುಕೊಂಡು ಹೋಗುವುದನ್ನೂ ನಾನು ನೋಡಿದ್ದೇನೆ.
ECC 10:8 ಗುಂಡಿಯನ್ನು ಅಗೆಯುವವನೇ ಅದರಲ್ಲಿ ಬೀಳುವನು. ಗೋಡೆಯನ್ನು ಒಡೆಯುವವನನ್ನು ಹಾವು ಕಡಿಯುವುದು.
ECC 10:9 ಗಣಿಯಿಂದ ಬಂಡೆಗಳನ್ನು ಸೀಳುವವನು ಗಾಯಗೊಳ್ಳುವನು. ಮರಕಡಿಯುವವನು ಅದರಿಂದಲೇ ಅಪಾಯಕ್ಕೊಳಗಾಗುವನು.
ECC 10:10 ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ, ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುವುದು, ಆದರೆ ಜ್ಞಾನವೇ ಯಶಸ್ಸನ್ನು ತರುತ್ತದೆ.
ECC 10:11 ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, ಹಾವಾಡಿಗನಿಗೆ ಏನು ಪ್ರಯೋಜನ?
ECC 10:12 ಜ್ಞಾನಿಯ ಮಾತುಗಳು ಹಿತಕರ. ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ.
ECC 10:13 ಅವನ ಮಾತುಗಳು ಆರಂಭದಲ್ಲಿ ಮೂಢತನವಾಗಿರುವುದು. ಅವನ ಮಾತಿನ ಅಂತ್ಯವು ಹುಚ್ಚುತನವಾಗಿರುವುದು.
ECC 10:14 ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ. ಆದರೂ ಅವನು ಭವಿಷ್ಯ ಏನೆಂದು ತಿಳಿಯನು. ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ.
ECC 10:15 ಮೂಢರ ಕಷ್ಟವು ಅವರನ್ನು ದಣಿಸುತ್ತದೆ. ನಗರಕ್ಕೆ ಹೇಗೆ ಹೋಗಬೇಕೆಂದು ಸಹ ಅವನಿಗೆ ತಿಳಿಯದು.
ECC 10:16 ಬಾಲಕನಾಗಿದ್ದವನು ದೇಶಕ್ಕೆ ಅರಸನಾಗಿದ್ದರೆ, ನಾಯಕರೆಲ್ಲರು ಬೆಳಿಗ್ಗೆಯೇ ಔತಣಕ್ಕೆ ಕೂತುಕೊಂಡರೆ ಅಯ್ಯೋ ಕಷ್ಟ!
ECC 10:17 ಶ್ರೇಷ್ಠ ಹಿನ್ನೆಲೆಯವನು ದೇಶಕ್ಕೆ ಅರಸನಾದರೆ, ರಾಜಕುಮಾರರು ಕುಡುಕರಾಗುವುದಕ್ಕೆ ಬದಲು, ಸರಿಯಾದ ಸಮಯದಲ್ಲಿ ಶಕ್ತಿಗಾಗಿ ಊಟ ಮಾಡಿದರೆ ಅದು ದೇಶಕ್ಕೆ ಆಶೀರ್ವಾದ.
ECC 10:18 ಸೋಮಾರಿತನದಿಂದ ಮನೆ ಕುಸಿಯುತ್ತದೆ. ಜೋಲುಗೈಯಿಂದ ಮನೆ ಸೋರುತ್ತದೆ.
ECC 10:19 ವಿನೋದಕ್ಕಾಗಿ ಔತಣ ಮಾಡುತ್ತಾರೆ, ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ; ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು.
ECC 10:20 ನಿನ್ನ ಆಲೋಚನೆಯಲ್ಲಿಯೂ ಅರಸನನ್ನು ನಿಂದಿಸಬೇಡ. ನೀನು ಮಲಗುವ ಕೋಣೆಯಲ್ಲಿ ಐಶ್ವರ್ಯವಂತರನ್ನು ಶಪಿಸಬೇಡ. ಏಕೆಂದರೆ ಆಕಾಶದ ಪಕ್ಷಿಗಳು ನಿನ್ನ ಮಾತನ್ನು ತೆಗೆದುಕೊಂಡು ಹೋಗಬಹುದು. ಹಾರುವ ಪಕ್ಷಿ ನಿನ್ನ ಸುದ್ದಿಯನ್ನು ತಿಳಿಸಬಹುದು.
ECC 11:1 ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಕಳುಹಿಸು. ಬಹಳ ದಿನಗಳ ಮೇಲೆ ಅದರಿಂದ ನಿನಗೆ ಲಾಭ ಸಿಗುವುದು.
ECC 11:2 ನಿನ್ನ ಹಣವನ್ನು ಏಳೆಂಟು ಮಂದಿಗೆ ವೆಚ್ಚಮಾಡು. ಏಕೆಂದರೆ ಭೂಮಿಯ ಮೇಲೆ ಮುಂದೆ ಯಾವ ವಿಪತ್ತು ಬರುವುದೋ ನಿನಗೆ ತಿಳಿಯದು.
ECC 11:3 ಮೋಡಗಳು ಮಳೆಯಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಸುರಿದುಬಿಡುತ್ತವೆ. ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ, ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವುದು.
ECC 11:4 ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ. ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.
ECC 11:5 ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನೀನು ಹೇಗೆ ಗ್ರಹಿಸಲಾರೆಯೋ, ಹಾಗೆಯೇ, ಸರ್ವ ಸೃಷ್ಟಿಕರ್ತ ಆಗಿರುವ ದೇವರ ಕೆಲಸವನ್ನು ನೀನು ಗ್ರಹಿಸಲಾರೆ.
ECC 11:6 ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು. ಸಾಯಂಕಾಲದವರೆಗೂ ನಿನ್ನ ಕೈಗೆ ಬಿಡುವು ಕೊಡಬೇಡ. ಏಕೆಂದರೆ ಇದು ಸಫಲವೋ ಅದು ಸಫಲವೋ ನಿನಗೆ ತಿಳಿಯದು. ಎರಡೂ ಒಳ್ಳೆಯ ಬೆಳೆಯನ್ನು ಕೊಡಲು ಸಾಧ್ಯವಿದೆ.
ECC 11:7 ಬೆಳಕು ಹಿತಕರ. ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.
ECC 11:8 ಒಬ್ಬನು ಅನೇಕ ವರ್ಷಗಳು ಬದುಕಿ, ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಕತ್ತಲೆಯ ದಿನಗಳನ್ನು ನೆನಪಿಸಿಕೊಳ್ಳಲಿ, ಏಕೆಂದರೆ ಅಂಥ ದಿನಗಳು ಬಹಳ. ಮುಂದಾಗುವುದೆಲ್ಲವೂ ವ್ಯರ್ಥವೇ.
ECC 11:9 ಯುವಕನೇ, ನಿನ್ನ ಯೌವನದಲ್ಲಿ ಸಂತೋಷಪಡು. ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ. ನೀನು ನಿನ್ನ ಮನಸ್ಸಿಗೆ ಬಂದಂತೆಯೂ ನಿನ್ನ ಕಣ್ಣಿನ ನೋಟದಂತೆಯೂ ನಡೆ. ಆದರೆ ಈ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯವಿಚಾರಿಸುವರು ಎಂದು ತಿಳಿದುಕೋ.
ECC 11:10 ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು. ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು. ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.
ECC 12:1 ಕಷ್ಟದ ದಿನಗಳು ಬರುವುದಕ್ಕೆ ಮೊದಲು, “ಇವುಗಳಲ್ಲಿ ನನಗೆ ಸಂತೋಷವಿಲ್ಲ,” ಎಂದು ನೀನು ಹೇಳುವ ವರ್ಷಗಳು ಸಮೀಪಿಸುವುದಕ್ಕೆ ಮೊದಲು, ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ದೇವರನ್ನು ಸ್ಮರಿಸು.
ECC 12:2 ಸೂರ್ಯ ಚಂದ್ರ ನಕ್ಷತ್ರಗಳೂ ನಿನಗೆ ಮೊಬ್ಬಾಗಿ, ಮಳೆಯ ಮೋಡಗಳು ಮತ್ತೆ ಬರುವುದಕ್ಕಿಂತ ಮೊದಲು ದೇವರನ್ನು ಸ್ಮರಿಸು.
ECC 12:3 ಆ ದಿನದಲ್ಲಿ ಮನೆ ಕಾಯುವವರು ನಡುಗುವರು. ಬಲವಾದ ಮನುಷ್ಯರು ಸಹ ತಾವಾಗಿಯೇ ಬಗ್ಗುವರು. ಅರೆಯುವವರು ಕೆಲವರೇ ಉಳಿದಿರುವುದರಿಂದ ಸುಮ್ಮನಿರುವರು. ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.
ECC 12:4 ಬೀದಿ ಬಾಗಿಲುಗಳು ಮುಚ್ಚಿರುವುವು, ಅರೆಯುವ ಶಬ್ದವು ಕಡಿಮೆಯಾಗುವುದು; ಪಕ್ಷಿಯ ಶಬ್ದವಾದಾಗ ಎದ್ದೇಳುವುದು ತಡವಾಗುವುದು. ಮುಂಜಾನೆಯ ಗಾನಸ್ವರ ಮಂದವಾಗುವುದು.
ECC 12:5 ಎತ್ತರವನ್ನು ಕಂಡು ಹೆದರಿಕೆಯಾಗುವುದು. ದಾರಿಯ ಅಪಾಯಗಳ ಬಗ್ಗೆ ಅಂಜಿಕೆಯಾಗುವುದು. ಬಾದಾಮಿಯ ಮರದಂತೆ ಹೂವು ಬಿಡುವುದು. ಮಿಡತೆಯು ಸಹ ಭಾರಾವಾಗಿರುವುದು. ಆಸೆ ಕುಂದಿಹೋಗುವುದು. ಈ ರೀತಿಯಾಗಿ ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಟು ಹೋಗುವರು. ಗೋಳಾಡುವವರು ಬೀದಿಯಲ್ಲಿ ತಿರುಗಾಡುವರು.
ECC 12:6 ಬೆಳ್ಳಿಯಂತ ಸರ ಕಿತ್ತುಹೋಗುವುದು, ಬಂಗಾರದಂತ ಬಟ್ಟಲು ಜಜ್ಜಿ ಹೋಗುವುದು. ಮಣ್ಣಿನ ಮಡಕೆಯು ಬುಗ್ಗೆಯ ಹತ್ತಿರ ಒಡೆದು ಹೋಗುವುದು. ಬಾವಿಯ ರಾಟೆ ಮುರಿಯುವುದು.
ECC 12:7 ಆಮೇಲೆ ಮಣ್ಣಿನ ದೇಹ ಅದು ಇದ್ದ ಹಾಗೆಯೇ ಭೂಮಿಗೆ ಸೇರುವುದು. ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂದಿರುಗುವುದು.
ECC 12:8 “ವ್ಯರ್ಥ, ವ್ಯರ್ಥವೇ! ಎಲ್ಲವೂ ವ್ಯರ್ಥವೇ!” ಎಂದು ಪ್ರಸಂಗಿ ಹೇಳುತ್ತಾನೆ.
ECC 12:9 ಇದಲ್ಲದೆ ಜ್ಞಾನವಂತ ಪ್ರಸಂಗಿಯು ಇನ್ನೂ ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು. ಅನೇಕ ಜ್ಞಾನೋಕ್ತಿಗಳನ್ನು ಅವನು ಪರೀಕ್ಷಿಸಿ, ವಿಚಾರಿಸಿ ಕ್ರಮಪಡಿಸಿದನು.
ECC 12:10 ಪ್ರಸಂಗಿಯು ಸೂಕ್ತ ವಾಕ್ಯಗಳನ್ನು ಹುಡುಕಿ ಕಂಡುಹಿಡಿದನು. ಹಾಗೆ ಬರೆದವುಗಳು ಯಥಾರ್ಥ ಮತ್ತು ಸತ್ಯವಾದ ಮಾತುಗಳು.
ECC 12:11 ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗಿರುತ್ತವೆ. ಅವರು ಸಂಗ್ರಹಿಸಿದ ವಚನಗಳು ಒಬ್ಬ ಆತ್ಮಿಕ ಕುರುಬನಿಂದ ನೆಟ್ಟ ಮೊಳೆಗಳ ಹಾಗೆ ಕೊಡಲಾಗಿವೆ.
ECC 12:12 ನನ್ನ ಮಗುವೇ, ಇವುಗಳನ್ನಲ್ಲದೇ, ನೀನು ಎಚ್ಚರಿಕೆಯಿಂದ ಇರಬೇಕಾದ ವಿಷಯಗಳು ಇನ್ನೂ ಇವೆ. ಬಹಳ ಪುಸ್ತಕಗಳ ರಚನೆಗೆ ಅಂತ್ಯವಿಲ್ಲ. ಅತಿಯಾದ ಅಭ್ಯಾಸವು ದೇಹಕ್ಕೆ ಆಯಾಸ.
ECC 12:13 ಈಗ ನಾವು ಎಲ್ಲಾ ವಿಷಯವನ್ನೂ ಕೇಳಿ ಮುಗಿಯಿತು. ದೇವರಿಗೆ ಭಯಪಡು ಮತ್ತು ದೇವರ ಆಜ್ಞೆಗಳನ್ನು ಪಾಲಿಸು. ಇದೇ ಮನುಷ್ಯನ ಪ್ರಮುಖ ಕರ್ತವ್ಯ.
ECC 12:14 ಏಕೆಂದರೆ ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ, ದೇವರು ಆ ಎಲ್ಲಾ ಕಾರ್ಯಗಳನ್ನೂ ಪ್ರತಿಯೊಂದು ರಹಸ್ಯವನ್ನೂ ನ್ಯಾಯವಿಚಾರಣೆಗೆ ತರುವರು.
SOL 1:1 ಸೊಲೊಮೋನನ ಪರಮಗೀತೆ.
SOL 1:2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.
SOL 1:3 ನೀನು ಹಚ್ಚಿಕೊಂಡಿರುವ ಸುಗಂಧ ತೈಲದ ಪರಿಮಳವು ಮೆಚ್ಚಿಕೆಯಾಗಿದೆ. ನಿನ್ನ ಹೆಸರು ಸುರಿದ ಸುಗಂಧ ತೈಲವಾಗಿದೆ. ಆದ್ದರಿಂದ ಕನ್ಯೆಯರು ನಿನ್ನನ್ನು ಪ್ರೀತಿ ಮಾಡುತ್ತಾರೆ!
SOL 1:4 ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಲು ಅವಸರಪಡು! ಅರಸನು ನನ್ನನ್ನು ತನ್ನ ಕೊಠಡಿಯೊಳಗೆ ಕರೆದುಕೊಂಡು ಬರಲಿ. ಸ್ನೇಹಿತರು ನಾವು ನಿನ್ನಲ್ಲಿ ಉಲ್ಲಾಸಪಟ್ಟು, ಸಂತೋಷ ಪಡುತ್ತೇವೆ. ದ್ರಾಕ್ಷಾರಸಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಯನ್ನು ಹೊಗಳುತ್ತೇವೆ. ಪ್ರಿಯತಮೆ ಅವರು ಯಥಾರ್ಥವಾಗಿ ನಿನ್ನನ್ನು ಮೆಚ್ಚುತ್ತಾರೆ!
SOL 1:5 ಯೆರೂಸಲೇಮಿನ ಪುತ್ರಿಯರೇ, ನಾನು ಕಪ್ಪಾದವಳು ಆದರೂ ಸುಂದರಿ. ಕೇದಾರಿನ ಗುಡಾರಗಳಂತೆಯೂ, ಸೊಲೊಮೋನನ ಡೇರೆಯ ತೆರೆಗಳಂತೆಯೂ ಚೆಲುವೆ.
SOL 1:6 ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ. ನನ್ನ ಸಹೋದರರು ನನ್ನ ಮೇಲೆ ಕೋಪಮಾಡಿಕೊಂಡು, ದ್ರಾಕ್ಷಿತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ಆದರೆ ನನ್ನ ಸ್ವಂತ ದ್ರಾಕ್ಷಿತೋಟವನ್ನು ನಾನು ಅಲಕ್ಷ್ಯ ಮಾಡಬೇಕಾಯಿತು.
SOL 1:7 ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸುವುದು ಎಲ್ಲಿ? ಮಧ್ಯಾಹ್ನದಲ್ಲಿ ನೀನು ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ? ನನಗೆ ತಿಳಿಸು. ನಾನು ನಿನ್ನ ಜೊತೆಗಾರರ ಮಂದೆಗಳ ಬಳಿಯಲ್ಲಿ ಮುಸುಕು ಹಾಕಿದವಳಂತೆ ಏಕೆ ಅಲೆಯಬೇಕು?
SOL 1:8 ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನಿನಗೆ ಗೊತ್ತಿಲ್ಲವಾದರೆ, ನೀನು ಮಂದೆಯ ಜಾಡಿನಲ್ಲಿಯೇ ಹೋಗಿ, ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.
SOL 1:9 ನನ್ನ ಪ್ರಿಯಳೇ, ಫರೋಹನ ರಥಕ್ಕೆ ಕಟ್ಟಿದ ಕುದುರೆಗೆ ನಿನ್ನನ್ನು ಹೋಲಿಸಿದ್ದೇನೆ.
SOL 1:10 ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ, ನಿನ್ನ ಕೊರಳು ಕಂಠ ಮಾಲೆಗಳಿಂದಲೂ ರಮ್ಯವಾಗಿವೆ.
SOL 1:11 ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು.
SOL 1:12 ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ, ನನ್ನ ಪರಿಮಳ ತೈಲವು ಸುವಾಸನೆಯನ್ನು ಬೀರುತ್ತಿತ್ತು.
SOL 1:13 ನನ್ನ ಪ್ರಿಯತಮನು ನನ್ನ ಸ್ತನಗಳ ಮಧ್ಯದಲ್ಲಿ ವಿಶ್ರಾಂತಿ ಪಡೆಯುವ ರಕ್ತಬೋಳದ ಚೀಲದಂತಿರುವನು.
SOL 1:14 ನನ್ನ ಪ್ರಿಯನು ನನಗೆ ಏನ್ಗೆದಿಯ ದ್ರಾಕ್ಷಿ ತೋಟಗಳಲ್ಲಿರುವ ಗೋರಂಟಿ ಹೂಗೊಂಚಲಿನಂತೆ ಇರುವನು.
SOL 1:15 ನನ್ನ ಪ್ರಿಯಳೇ, ನೀನು ಎಷ್ಟು ಸೌಂದರ್ಯವಂತೆ! ಆಹಾ, ನೀನು ಸೌಂದರ್ಯವಂತಳೇ! ನಿನ್ನ ಕಣ್ಣುಗಳು ಪಾರಿವಾಳಗಳಂತಿವೆ.
SOL 1:16 ನನ್ನ ಪ್ರಿಯನೇ, ಇಗೋ, ನೀನು ಎಷ್ಟು ಸೌಂದರ್ಯವಂತನು! ಹೌದು, ರಮ್ಯವಾದವನು! ಹಸಿರು ಚಿಗುರುಗಳೇ ನಮ್ಮ ಮಂಚವಾಗಿದೆ.
SOL 1:17 ನಮ್ಮ ಮನೆಯ ತೊಲೆಗಳು ದೇವದಾರು ಮರಗಳು. ನಮ್ಮ ಮೇಲ್ಛಾವಣಿ ತುರಾಯಿ ಮರಗಳು.
SOL 2:1 ಶಾರೋನಿನ ಗುಲಾಬಿ ಹೂವೂ, ತಗ್ಗಿನ ತಾವರೆಯೂ ನಾನೇ.
SOL 2:2 ಮುಳ್ಳುಪೊದರಿನ ನಡುವೆ ತಾವರೆಯಂತೆ ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು.
SOL 2:3 ಅಡವಿಯ ಮರಗಳಲ್ಲಿ ಸೇಬಿನ ಮರದಂತೆ ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು.
SOL 2:4 ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ.
SOL 2:5 ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.
SOL 2:6 ಅವನ ಎಡಗೈ ನನ್ನ ತಲೆದಿಂಬಾಗಿರಲಿ. ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
SOL 2:7 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
SOL 2:8 ನನ್ನ ಪ್ರಿಯನ ಸ್ವರವು! ಇಗೋ! ಅವನು ಪರ್ವತಗಳ ಮೇಲೆ ಹಾರುತ್ತಾ, ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ.
SOL 2:9 ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ.
SOL 2:10 ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: “ನನ್ನ ಪ್ರಿಯಳೇ ಎದ್ದು ಬಾ, ನನ್ನ ಸುಂದರಿಯೇ, ಹೊರಟು ಬಾ.
SOL 2:11 ಇಗೋ! ಚಳಿಗಾಲ ಕಳೆಯಿತು, ಮಳೆ ನಿಂತುಹೋಯಿತು.
SOL 2:12 ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. ಪಕ್ಷಿಗಳು ಹಾಡುವ ಕಾಲ ಬಂತು. ಪಾರಿವಾಳಗಳ ಸ್ವರ ನಮ್ಮ ಊರಲ್ಲಿ ಕೇಳಿಸುತ್ತಿದೆ.
SOL 2:13 ಅಂಜೂರದ ಕಾಯಿಗಳು ಹಣ್ಣಾಗಿವೆ. ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. ಎದ್ದು ಬಾ, ನನ್ನ ಪ್ರಿಯಳೇ, ನನ್ನ ಸುಂದರಿಯೇ, ನನ್ನೊಂದಿಗೆ ಬಾ.”
SOL 2:14 ಬಂಡೆಯ ಬಿರುಕುಗಳಲ್ಲಿಯೂ ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. ನಿನ್ನ ಮುಖವನ್ನು ನನಗೆ ತೋರಿಸು. ನಿನ್ನ ಸ್ವರವನ್ನು ನನಗೆ ಕೇಳಿಸು. ನಿನ್ನ ಸ್ವರವು ಇಂಪಾಗಿದೆ. ನಿನ್ನ ಮುಖವು ಸುಂದರವಾಗಿಯೂ ಇದೆ.
SOL 2:15 ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ. ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ.
SOL 2:16 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.
SOL 2:17 ನನ್ನ ಪ್ರಿಯನೇ, ಹೊತ್ತು ಮೂಡುವ ಮುಂಚೆ ಕತ್ತಲು ಕವಿಯುವ ಮೊದಲು ಹೊರಟು ಬಾ. ಒರಟಾದ ಪರ್ವತಗಳ ಮೇಲಿರುವ ಜಿಂಕೆಯಂತಿರು. ಹೌದು, ಪ್ರಾಯದ ದುಪ್ಪಿಯಂತೆಯೂ ಇರು.
SOL 3:1 ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು; ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲಿಲ್ಲ.
SOL 3:2 ನಾನು ಎದ್ದು, ಪಟ್ಟಣವನ್ನು ಸಂಚರಿಸಿ, ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ.
SOL 3:3 ನಾನು ಪಟ್ಟಣವನ್ನು ಕಾಯುವ ಕಾವಲುಗಾರರಿಗೆ ಸಿಕ್ಕಿಬಿದ್ದಾಗ, “ನನ್ನ ಪ್ರಾಣ ಪ್ರಿಯನನ್ನು ನೀವು ಕಂಡಿರಾ?” ಎಂದು ವಿಚಾರಿಸಿದೆ.
SOL 3:4 ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ, ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು. ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ, ಹೌದು, ನನ್ನ ಹೆತ್ತವಳ ಕೋಣೆಗೆ ಅವನನ್ನು ಬಿಡದೆ ಕರೆದುಕೊಂಡು ಹೋದೆನು.
SOL 3:5 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
SOL 3:6 ರಕ್ತಬೋಳ, ಸಾಂಬ್ರಾಣಿಗಳಿಂದಲೂ ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು?
SOL 3:7 ನೋಡಿರಿ! ಇದು ಸೊಲೊಮೋನನ ರಥ. ಇಸ್ರಾಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಅದರ ಸುತ್ತಲಿದ್ದಾರೆ.
SOL 3:8 ಯುದ್ಧ ನಿಪುಣರಾದ ಅವರೆಲ್ಲರೂ ಖಡ್ಗ ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬರೂ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ.
SOL 3:9 ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡಿದ್ದನು.
SOL 3:10 ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಅದರ ಕೆಳಗಿನ ಭಾಗವನ್ನು ಬಂಗಾರದಿಂದಲೂ ಅದರ ಹೊದಿಕೆಯನ್ನು ಧೂಮ್ರವರ್ಣದ ವಸ್ತ್ರದಿಂದಲೂ ಮಾಡಿಸಿದ್ದನು. ಯೆರೂಸಲೇಮಿನ ಪುತ್ರಿಯರು ಪ್ರೀತಿಯಿಂದ ಅದನ್ನು ಅಲಂಕರಿಸಿದ್ದರು.
SOL 3:11 ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. ಅರಸನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಂದು, ಅವನ ಹೃದಯ ಸಂತೋಷಗೊಂಡ ದಿನದಲ್ಲಿ, ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.
SOL 4:1 ಇಗೋ, ನನ್ನ ಪ್ರಿಯಳೇ, ನೀನು ಎಷ್ಟು ಸುಂದರಿ! ಆಹಾ, ನೀನು ಎಷ್ಟು ಸುಂದರಿಯು. ನಿನ್ನ ಮುಸುಕಿನೊಳಗಿನ ನಿನ್ನ ಕಣ್ಣುಗಳು ಪಾರಿವಾಳಗಳೇ. ನಿನ್ನ ತಲೆಕೂದಲು ಗಿಲ್ಯಾದಿನ ಪರ್ವತದಿಂದ ಇಳಿದು ಬರುವ ಮೇಕೆ ಮಂದೆಯ ಹಾಗೆ ಇದೆ.
SOL 4:2 ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು.
SOL 4:3 ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ. ನಿನ್ನ ಮಾತು ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.
SOL 4:4 ನಿನ್ನ ಕೊರಳು ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲಾದ ಬುರುಜಿನ ಹಾಗೆ ಇದೆ. ಅದರಲ್ಲಿ ಶೂರರ ಸಾವಿರ ಗುರಾಣಿಗಳು ತೂಗುಹಾಕಿ ಇವೆ.
SOL 4:5 ನಿನ್ನ ಎರಡು ಸ್ತನಗಳು ನೆಲದಾವರೆಯ ನಡುವೆ ಮೇಯುವ ಹುಲ್ಲೆಯ ಅವಳಿಮರಿಗಳ ಹಾಗಿವೆ.
SOL 4:6 ಹೊತ್ತು ಮೂಡುವವರೆಗೂ ನೆರಳು ಓಡಿ ಹೋಗುವವರೆಗೂ ನಾನು ರಕ್ತಬೋಳದ ಪರ್ವತಕ್ಕೂ ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು.
SOL 4:7 ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ, ನಿನ್ನಲ್ಲಿ ದೋಷವೇನೂ ಇಲ್ಲ.
SOL 4:8 ಬಾ, ವಧುವೇ, ಲೆಬನೋನಿನಿಂದ ಬಾ, ಲೆಬನೋನಿನಿಂದ ನನ್ನೊಡನೆ ಬಾ. ಅಮಾನದ ಶಿಖರಗಳಿಂದ, ಸೆನೀರ್, ಹೆರ್ಮೋನ್ ಶಿಖರಗಳಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ಇಳಿದು ಬಾ.
SOL 4:9 ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ, ನೀನು ನಿನ್ನ ಒಂದೇ ಕಿರುನೋಟದಿಂದಲೂ, ನಿನ್ನ ಕೊರಳಿನ ಒಂದೇ ಕಂಠ ಹಾರದಿಂದಲೂ, ನನ್ನ ಹೃದಯವನ್ನು ಸೆಳಕೊಂಡಿರುವೆ.
SOL 4:10 ನನ್ನ ಪ್ರಿಯಳೇ, ವಧುವೇ! ನಿನ್ನ ಪ್ರೀತಿಯು ಎಷ್ಟೋ ಚೆಂದ. ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧಗಳಿಗಿಂತ ನಿನ್ನ ತೈಲದ ಸುವಾಸನೆಯು ಎಷ್ಟೋ ಉತ್ತಮ!
SOL 4:11 ನನ್ನ ವಧುವೇ, ನಿನ್ನ ತುಟಿಗಳಿಂದ ಜೇನು ಸುರಿಯುತ್ತಿದೆ. ಹಾಲೂ, ಜೇನೂ ನಿನ್ನ ನಾಲಿಗೆ ಅಡಿಯಲ್ಲಿವೆ. ನಿನ್ನ ವಸ್ತ್ರಗಳ ಸುವಾಸನೆಯು ಲೆಬನೋನಿನ ಸುಗಂಧದಂತಿದೆ.
SOL 4:12 ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ ಮುದ್ರಿಸಿದ ಬಾವಿಯೂ ಆಗಿರುವೆ.
SOL 4:13 ನಿನ್ನ ತೋಟದಲ್ಲಿ ದಾಳಿಂಬೆ ವನವೂ ಫಲಕೊಡುವ ಉತ್ತಮ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಇವೆ.
SOL 4:14 ಜಟಾಮಾಂಸಿ ಅಷ್ಟೇ ಅಲ್ಲದೆ ಕೇಸರಿಯೂ ಬಜೆಯೂ ದಾಲ್ಚಿನ್ನಿಯೂ ಸಕಲ ಸಾಂಬ್ರಾಣಿ ಗಿಡಮೂಲಿಕೆಗಳೂ ರಕ್ತಬೋಳವೂ ಅಗರೂ ಸಕಲವಿಧ ಶ್ರೇಷ್ಠ ಸುಗಂಧ ದ್ರವ್ಯಗಳೂ ಬೆಳೆದಿವೆ.
SOL 4:15 ನೀನು ತೋಟದ ಬುಗ್ಗೆಯೂ ಉಕ್ಕಿಬರುವ ಒರತೆಯೂ ಲೆಬನೋನಿನಿಂದ ಹರಿಯುವ ಹೊಳೆಯೂ ಆಗಿರುವೆ.
SOL 4:16 ಉತ್ತರಗಾಳಿಯೇ, ಬೀಸು, ದಕ್ಷಿಣ ಗಾಳಿಯೇ ಬಾ ನನ್ನ ತೋಟದ ಮೇಲೆ ಬೀಸು. ಸುಗಂಧ ಸುವಾಸನೆ ಹರಡಲಿ. ನನ್ನ ಪ್ರಿಯನು ತನ್ನ ತೋಟಕ್ಕೆ ಬಂದು ಉತ್ತಮ ಫಲಗಳನ್ನು ರುಚಿಸಲಿ.
SOL 5:1 ನನ್ನ ಪ್ರಿಯಳೇ, ನನ್ನ ವಧುವೇ, ನಾನು ನನ್ನ ತೋಟಕ್ಕೆ ಬಂದಿರುವೆ. ನನ್ನ ರಕ್ತಬೋಳ ಸುಗಂಧಗಳನ್ನೂ ಕೂಡಿಸಿರುವೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರು ಸ್ನೇಹಿತರೇ, ಊಟಮಾಡಿರಿ, ಕುಡಿಯಿರಿ. ಹೌದು ಪ್ರಿಯರೇ, ಸಮೃದ್ಧಿಯಾಗಿ ಪಾನಮಾಡಿರಿ.
SOL 5:2 ನಾನು ನಿದ್ರಿಸುತ್ತಿದ್ದರೂ, ನನ್ನ ಹೃದಯವು ಎಚ್ಚರವಾಗಿತ್ತು. ಇಗೋ! ಬಾಗಿಲು ತಟ್ಟುವ ನನ್ನ ಪ್ರಿಯನ ಶಬ್ದವಿದು: “ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಪಾರಿವಾಳವೇ, ಪರಿಪೂರ್ಣಳೇ, ಬಾಗಿಲು ತೆಗೆ! ನನ್ನ ತಲೆ ಮಂಜಿನಿಂದ ನೆನೆದಿದೆ. ನನ್ನ ಕೂದಲು ರಾತ್ರಿಯ ಹನಿಗಳಿಂದ ತೋಯ್ದಿದೆ.”
SOL 5:3 ನಾನು ನನ್ನ ಅಂಗಿಯನ್ನು ತೆಗೆದು ಹಾಕಿರಲು, ಅದನ್ನು ಮತ್ತೆ ಹಾಕಿಕೊಳ್ಳುವುದು ಹೇಗೆ? ನಾನು ನನ್ನ ಕಾಲುಗಳನ್ನು ತೊಳೆದುಕೊಂಡಿರಲು, ನಾನು ಮತ್ತೆ ಅವುಗಳನ್ನು ಕೊಳೆ ಮಾಡುವುದು ಹೇಗೆ?
SOL 5:4 ಅನಂತರ ನನ್ನ ಪ್ರಿಯನು ಬಾಗಿಲ ಸಂದಿನಲ್ಲಿ ತನ್ನ ಕೈ ಹಾಕಿದನು. ನನ್ನ ಹೃದಯವು ಅವನಿಗಾಗಿ ಮಿಡಿಯಿತು.
SOL 5:5 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ಎದ್ದಾಗ, ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವು ತೊಟ್ಟಿಕ್ಕಿತು. ನನ್ನ ಬೆರಳುಗಳಿಂದಲೂ ರಕ್ತಬೋಳವು ಸುರಿಯಿತು.
SOL 5:6 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆದೆನು. ಆದರೆ ಅಷ್ಟರಲ್ಲಿ ನನ್ನ ಪ್ರಿಯನು ಹಿಂದಿರುಗಿ ಹೋಗಿಬಿಟ್ಟಿದ್ದನು. ಅವನು ಹೋಗಿದ್ದರಿಂದ ನನ್ನ ಹೃದಯ ಕುಗ್ಗಿಹೋಯಿತು. ಅವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ. ಅವನನ್ನು ಕರೆದೆನು, ಉತ್ತರವೇ ಇಲ್ಲ.
SOL 5:7 ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡುಹಿಡಿದರು. ನನ್ನನ್ನು ಹೊಡೆದು, ಗಾಯ ಮಾಡಿದರು. ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಿದುಕೊಂಡರು.
SOL 5:8 ಯೆರೂಸಲೇಮಿನ ಪುತ್ರಿಯರೇ, ನಿಮಗೆ ಆಣೆಯಿಟ್ಟು ಹೇಳುತ್ತೇನೆ. ನೀವು ನನ್ನ ಪ್ರಿಯನನ್ನು ಕಂಡರೆ, ನಾನು ಪ್ರೀತಿಯಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ.
SOL 5:9 ಸ್ತ್ರೀಯರಲ್ಲಿ ಅತಿ ಸುಂದರಿಯೇ, ಬೇರೆಯವರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? ನೀನು ನಮಗೆ ಹೀಗೆ ಆಣೆ ಇಡುವುದಕ್ಕೆ ಬೇರೆಯವರ ಪ್ರಿಯರಿಗಿಂತ ನಿನ್ನ ಪ್ರಿಯನ ವಿಶೇಷವೇನು?
SOL 5:10 ನನ್ನ ಪ್ರಿಯನು, ತೇಜೋಮಯನು, ಕೆಂಪೂ ಬಣ್ಣವುಳ್ಳವನು. ಹತ್ತು ಸಾವಿರ ಜನರಲ್ಲಿ ಶ್ರೇಷ್ಠನು.
SOL 5:11 ಅವನ ತಲೆಯು ಚೊಕ್ಕ ಬಂಗಾರದಂತಿದೆ. ಅವನ ಗುಂಗುರು ಕೂದಲು ಕಾಗೆಯಂತೆ ಕಪ್ಪಾಗಿದೆ.
SOL 5:12 ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ, ಹಾಲಿನಿಂದ ತೊಳೆದಿರುವ, ಪಾರಿವಾಳಗಳ ಕಣ್ಣುಗಳಂತಿವೆ.
SOL 5:13 ಅವನ ಕೆನ್ನೆಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳಂತಿವೆ. ಅವನ ತುಟಿಗಳು ಸುಗಂಧ ರಕ್ತಬೋಳವನ್ನು ಸುರಿಸುವ ಕೆಂದಾವರೆಗಳು.
SOL 5:14 ಅವನ ಕೈಗಳು ಗೋಮೇಧಿಕ ರತ್ನದ ಬಂಗಾರದ ಸಲಾಕೆಗಳಂತಿವೆ. ಅವನ ದೇಹ ಇಂದ್ರನೀಲಗಳಿಂದ ಹೊಳೆಯುವ ದಂತದ ಹಾಗೆ ಇದೆ.
SOL 5:15 ಅವನ ಕಾಲುಗಳು ಶುದ್ಧ ಬಂಗಾರದ ಮೇಲೆ ನಿಂತಿರುವ ಚಂದ್ರಕಾಂತ ಸ್ತಂಭಗಳು. ಅವನ ತೋರಿಕೆಯು ಲೆಬನೋನಿನ ದೇವದಾರುಗಳ ಹಾಗೆ ಶ್ರೇಷ್ಠವಾಗಿವೆ.
SOL 5:16 ಅವನ ಬಾಯಿ ಮಾತು ಬಹು ಮಧುರ. ಹೌದು, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಪುತ್ರಿಯರೇ, ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
SOL 6:1 ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವಂತೆ ನಿನ್ನ ಪ್ರಿಯನು ಯಾವ ಕಡೆಗೆ ಹೋಗಿದ್ದಾನೆ?
SOL 6:2 ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, ಸುಗಂಧ ಸಸ್ಯಗಳಿರುವ ಉದ್ಯಾನವನಕ್ಕೆ ಹೋಗಿದ್ದಾನೆ.
SOL 6:3 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.
SOL 6:4 ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, ಯೆರೂಸಲೇಮಿನ ಹಾಗೆ ರಮ್ಯಳು, ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ.
SOL 6:5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಏಕೆಂದರೆ ಅವು ನನ್ನನ್ನು ಜಯಿಸಿವೆ. ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ ಮೇಕೆಯ ಮಂದೆಯಂತಿದೆ.
SOL 6:6 ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು.
SOL 6:7 ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.
SOL 6:8 ಅರಸನಿಗೆ ಅರವತ್ತು ಮಂದಿ ರಾಣಿಯರೂ ಎಂಬತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ.
SOL 6:9 ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. ತನ್ನ ಹೆತ್ತವಳಿಗೆ ಪ್ರಿಯಳು. ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು:
SOL 6:10 ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ ಆಗಿರುವ ಈ ಉದಯವಂತೆ ಯಾರು?
SOL 6:11 ದ್ರಾಕ್ಷಿಬಳ್ಳಿಯು ಚಿಗುರಿದೆಯೋ, ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು ಕಣಿವೆಯಲ್ಲಿನ ಫಲಗಳನ್ನು ನೋಡಲು ನಾನು ಬಾದಾಮಿಯ ತೋಟಕ್ಕೆ ಹೋದೆನು.
SOL 6:12 ನಾನು ಅದನ್ನು ಅರಿತುಕೊಳ್ಳುವ ಮೊದಲು, ನನ್ನ ಆಸೆ ನನ್ನ ಜನ ಪ್ರಧಾನರ ನಡುವೆ ರಥದ ಮೇಲೆ ಕೂತಿರುವಂತೆ ನನ್ನನ್ನು ನಡೆಸಿತು.
SOL 6:13 ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! ಪ್ರಿಯಕರ ಎರಡು ಗುಂಪಿನ ನರ್ತಕಿಯರ ನಡುವೆ ಕುಣಿಯುತ್ತಿರುವ, ಶೂಲಮ್ ಊರಿನವಳನ್ನು ನೀವು ನೋಡುವುದೇಕೆ?
SOL 7:1 ಓ ರಾಜಪುತ್ರಿಯೇ! ಕೆರಗಳನ್ನು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದರವಾಗಿವೆ! ನಿನ್ನ ಅಂದದ ಕಾಲುಗಳು ಶಿಲ್ಪಿಯ ಕೈಕೆಲಸದ ಆಭರಣಗಳಂತಿವೆ.
SOL 7:2 ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ ದುಂಡು ಬಟ್ಟಲಿನ ಹಾಗಿದೆ. ನಿನ್ನ ಹೊಟ್ಟೆ ನೆಲದಾವರೆಗಳಿಂದ ಸುತ್ತಿಕೊಂಡಿರುವ ಹೂವುಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ.
SOL 7:3 ನಿನ್ನ ಸ್ತನಗಳೆರಡೂ ಹುಲ್ಲೆಯ ಅವಳಿಮರಿಗಳ ಹಾಗಿವೆ.
SOL 7:4 ನಿನ್ನ ಕೊರಳು ದಂತದ ಗೋಪುರ. ನಿನ್ನ ಕಣ್ಣುಗಳು ಬತ್ ರಬ್ಬೀಮ್ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಕೊಳಗಳು. ನಿನ್ನ ಮೂಗು, ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದ ಹಾಗಿದೆ.
SOL 7:5 ನಿನ್ನ ತಲೆಯು ಕರ್ಮೆಲ್ ಬೆಟ್ಟದಂತೆ ವೈಭವ. ನಿನ್ನ ತಲೆಕೂದಲು ಧೂಮ್ರ ಬಣ್ಣದ ಹಾಗೆ ಇದೆ. ಹೆಣೆದ ಆ ಜಡೆಯಿಂದ ಅರಸನಿಗೂ ಆಕರ್ಷಣ.
SOL 7:6 ನನ್ನ ಪ್ರೇಮವೇ, ನೀನು ನಿನ್ನ ಹರ್ಷದಿಂದ ಎಷ್ಟೋ ಸುಂದರಿಯೂ ಎಷ್ಟೋ ಮನೋಹರಳೂ ಆಗಿರುವೆ.
SOL 7:7 ನಿನ್ನ ನೀಳ ಆಕಾರವು ಖರ್ಜೂರ ಮರದಂತಿದೆ. ನಿನ್ನ ಸ್ತನಗಳು ಅದರ ಗೊಂಚಲುಗಳು.
SOL 7:8 ನಾನು, “ಆ ಖರ್ಜೂರದ ಮರವನ್ನು ಹತ್ತಿ ಅದರ ಗರಿಗಳನ್ನು ಹಿಡಿಯುವೆ,” ಎಂದುಕೊಂಡೆನು. ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳಂತಿರಲಿ, ನಿನ್ನ ಉಸಿರು ಸೇಬು ಹಣ್ಣಿನ ಪರಿಮಳದಂತೆಯೂ ಇರಲಿ.
SOL 7:9 ನಿನ್ನ ಬಾಯಿಯ ಮುದ್ದುಗಳು ಉತ್ತಮ ದ್ರಾಕ್ಷಾರಸದ ಹಾಗಿರಲಿ. ಪ್ರಿಯತಮೆ ನನ್ನ ಪ್ರಿಯಕರನ ತುಟಿ, ಹಲ್ಲುಗಳಲ್ಲಿ ದ್ರಾಕ್ಷಾರಸವು ನೇರವಾಗಿ ಹರಿದು ಇಂಪಾಗಿ ರುಚಿಸಲಿ.
SOL 7:10 ನಾನು ನನ್ನ ಪ್ರಿಯನವಳು. ಅವನ ಆಸೆಯು ನನ್ನ ಕಡೆಗಿರುವುದು.
SOL 7:11 ನನ್ನ ಪ್ರಿಯನೇ, ಬಾ ಹೋಗೋಣ. ನಾವು ಗ್ರಾಮಗಳಲ್ಲಿ ವಸತಿಯಾಗಿರೋಣ ಬಾ.
SOL 7:12 ನಾವು ಬೆಳಗ್ಗೆ ಹೊರಟು, ದ್ರಾಕ್ಷಿ ತೋಟಗಳಿಗೆ ಹೋಗೋಣ ಬಾ. ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂಬಿಟ್ಟಿದೆಯೋ ನೋಡೋಣ ಬಾ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಅರ್ಪಿಸುವೆನು.
SOL 7:13 ನನ್ನ ಪ್ರಿಯನೇ, ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ. ನಮ್ಮ ಬಾಗಿಲ ಬಳಿಯಲ್ಲಿ ನಿನಗೋಸ್ಕರ ನಾನು ರುಚಿಯುಳ್ಳ ಮಾಗಿದ ಹೊಸ ಹಣ್ಣುಗಳನ್ನು ಸಿದ್ಧಪಡಿಸಿದ್ದೇನೆ.
SOL 8:1 ನೀನು ನನ್ನ ತಾಯಿಯ ಹಾಲು ಕುಡಿದ ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು! ನಾನು ನಿನ್ನನ್ನು ಕಂಡು ಹೊರಗೆಯೇ ನಿನಗೆ ಮುದ್ದಿಡುತ್ತಿದ್ದೆ. ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ.
SOL 8:2 ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.
SOL 8:3 ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ. ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
SOL 8:4 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
SOL 8:5 ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಪ್ರಿಯತಮೆ ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು. ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ. ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು.
SOL 8:6 ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. ಪ್ರೀತಿಯು ಮರಣದಷ್ಟು ಬಲವಾಗಿದೆ. ಮತ್ಸರವು ಸಮಾಧಿಯಷ್ಟು ಕ್ರೂರ. ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ ಜ್ವಾಲೆಯ ಹಾಗಿರುವುದು.
SOL 8:7 ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ತನ್ನ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೂ, ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು.
SOL 8:8 ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ. ಅವಳನ್ನು ಮದುವೆಗಾಗಿ ಮಾತಾಡಲು ಯಾರಾದರೂ ಬಂದರೆ, ನಾವೇನು ಮಾಡೋಣ?
SOL 8:9 ಅವಳು ಗೋಡೆಯಾದರೆ, ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು. ಅವಳು ಬಾಗಿಲಾದರೆ, ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು.
SOL 8:10 ನಾನು ಗೋಡೆಯಂಥವಳೇ, ನನ್ನ ಯೌವನವು ಬುರುಜುಗಳು. ಹೀಗೆ ನಾನು ಅವನ ದೃಷ್ಟಿಯಲ್ಲಿ ಸಮಾಧಾನ ಹೊಂದುವೆನು.
SOL 8:11 ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು. ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು. ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.
SOL 8:12 ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ. ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ. ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ.
SOL 8:13 ತೋಟಗಳಲ್ಲಿ ವಾಸವಾಗಿರುವಳೇ, ಸ್ನೇಹಿತರು ನನ್ನ ಸಂಗಡ ಇದ್ದಾರೆ. ನಾನು ನಿನ್ನ ಧ್ವನಿಯನ್ನು ಕೇಳ ಮಾಡು!
SOL 8:14 ನನ್ನ ಪ್ರಿಯನೇ, ಸುಗಂಧ ಸಸ್ಯ ಪರ್ವತಗಳ ಮೇಲಿರುವ ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ ನೀನು ಬೇಗ ಬಾ.
ISA 1:1 ಯೆಹೂದ ದೇಶದ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದರ್ಶನವು.
ISA 1:2 ಆಕಾಶಗಳೇ, ಕೇಳಿರಿ. ಭೂಮಿಯೇ, ಕಿವಿಗೊಡು. ಏಕೆಂದರೆ ಯೆಹೋವ ದೇವರು ಮಾತನಾಡುತ್ತಿದ್ದಾರೆ: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ISA 1:3 ಎತ್ತು ತನ್ನ ಯಜಮಾನನನ್ನು, ಕತ್ತೆಯು ತನ್ನ ಒಡೆಯನ ಕೊಟ್ಟಿಗೆಯನ್ನು ತಿಳಿದಿರುವುವು. ಆದರೆ ಇಸ್ರಾಯೇಲಿಗೆ ತಿಳಿದಿಲ್ಲ. ನನ್ನ ಜನರಿಗೂ ತಿಳಿಯುವುದಿಲ್ಲ.”
ISA 1:4 ಅಯ್ಯೋ ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ! ದುಷ್ಟ ಸಂತತಿಯೇ, ಭ್ರಷ್ಟರಾದ ಮಕ್ಕಳೇ! ಯೆಹೋವ ದೇವರನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧರನ್ನು ತಿರಸ್ಕರಿಸಿದ್ದಾರೆ ಅವರಿಂದ ದೂರವಾಗಿದ್ದಾರೆ.
ISA 1:5 ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಏಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ? ತಲೆಯೆಲ್ಲಾ ಗಾಯವಾಗಿದೆ, ಹೃದಯವೆಲ್ಲಾ ಬಾಧಿತವಾಗಿದೆ.
ISA 1:6 ಅಂಗಾಲಿನಿಂದ ನಡುನೆತ್ತಿಯವರೆಗೂ ಬಾಸುಂಡೆ, ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ. ಅವುಗಳನ್ನು ತೊಳೆಯಲಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಿಲ್ಲ.
ISA 1:7 ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ. ನಿಮ್ಮ ಹೊಲಗಳನ್ನು ಪರರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಇತರ ಜನರಿಂದ ಕೆಡವಿಬಿದ್ದು ಹಾಳಾಗಿದೆ.
ISA 1:8 ಚೀಯೋನ್ ಪುತ್ರಿಯು ದ್ರಾಕ್ಷಿ ತೋಟದಲ್ಲಿರುವ ಮನೆಯ ಹಾಗೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಿರುವ ಪಟ್ಟಣದ ಹಾಗೆಯೂ ಇದೆ.
ISA 1:9 ಸೇನಾಧೀಶ್ವರ ಯೆಹೋವ ದೇವರು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
ISA 1:10 ಸೊದೋಮಿನ ಅಧಿಪತಿಗಳೇ, ನೀವು ಯೆಹೋವ ದೇವರ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳೇ! ನಮ್ಮ ದೇವರ ನಿಯಮಕ್ಕೆ ಕಿವಿಗೊಡಿರಿ.
ISA 1:11 “ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು?” ಎಂದು ಯೆಹೋವ ದೇವರು ನುಡಿಯುತ್ತಾರೆ. “ಟಗರುಗಳ ದಹನಬಲಿಗಳು, ಪುಷ್ಟಪಶುಗಳ ಕೊಬ್ಬು ಇದೆಲ್ಲಾ ನನಗೆ ಬೇಸರ. ಹೋರಿ, ಕುರಿ, ಹೋತಗಳ ರಕ್ತಕ್ಕೆ, ನಾನು ಸಂತೋಷಪಡುವುದಿಲ್ಲ.
ISA 1:12 ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಬರುತ್ತೀರಲ್ಲಾ, ನನ್ನ ಪ್ರಾಕಾರಗಳನ್ನು ತುಳಿಯಲು ಯಾರು ನಿಮ್ಮನ್ನು ಕೇಳಿಕೊಂಡರು.
ISA 1:13 ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತರಬೇಡಿರಿ! ನಿಮ್ಮ ಧೂಪವು ನನಗೆ ಅಸಹ್ಯ. ಅಮಾವಾಸ್ಯೆಗಳು, ಸಬ್ಬತ್ ದಿನಗಳು, ಸಭೆಗಳು ಕೂಡುವುದು ಇವು ಬೇಡ. ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ಸಹಿಸಲಾರೆನು.
ISA 1:14 ನಿಮ್ಮ ಅಮಾವಾಸ್ಯೆಗಳನ್ನೂ, ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ದ್ವೇಷಿಸುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ.
ISA 1:15 ನೀವು ಪ್ರಾರ್ಥಿಸಲು ನಿಮ್ಮ ಕೈಗಳನ್ನು ಚಾಚುವಾಗ, ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. “ನಿಮ್ಮ ಕೈಗಳು ರಕ್ತದಿಂದ ತೊಯ್ದಿವೆ!
ISA 1:16 “ನಿಮ್ಮನ್ನು ತೊಳೆದುಕೊಂಡು ಶುದ್ಧಮಾಡಿಕೊಳ್ಳಿರಿ. ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟಕೃತ್ಯಗಳನ್ನು ತೆಗೆದುಹಾಕಿರಿ. ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ.
ISA 1:17 ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ. ನ್ಯಾಯವನ್ನು ಹುಡುಕಿರಿ. ಹಿಂಸೆಪಡುವವರನ್ನು ಉಪಚರಿಸಿರಿ. ಅನಾಥರಿಗೆ ನ್ಯಾಯತೀರಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
ISA 1:18 “ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.
ISA 1:19 ನೀವು ಒಪ್ಪಿ ವಿಧೇಯರಾದರೆ ದೇಶದ ಸತ್ಫಲವನ್ನು ಸವಿಯುವಿರಿ.
ISA 1:20 ಆದರೆ ನೀವು ತಿರಸ್ಕರಿಸಿ ತಿರುಗಿಬಿದ್ದರೆ, ಖಡ್ಗದ ಬಾಯಿಗೆ ತುತ್ತಾಗುವಿರಿ,” ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
ISA 1:21 ನಂಬಿಗಸ್ತಿಕೆಯ ಪಟ್ಟಣವು ವ್ಯಭಿಚಾರದ ಪಟ್ಟಣವಾಗಿದೆಯಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆಯಾಗಿತ್ತು. ಆದರೆ ಈಗ ಕೊಲೆಗಾರರಿಂದ ತುಂಬಿದೆ.
ISA 1:22 ನಿನ್ನ ಬೆಳ್ಳಿಯು ಕಂದಾಯಿತು. ನಿನ್ನ ದ್ರಾಕ್ಷಾರಸವು ನೀರಿನಿಂದ ಬೆರಕೆಯಾಯಿತು.
ISA 1:23 ನಿನ್ನ ಪ್ರಭುಗಳು ಎದುರುಬೀಳುವವರೂ, ಕಳ್ಳರ ಜೊತೆಗಾರರೂ ಆಗಿದ್ದಾರೆ. ಪ್ರತಿಯೊಬ್ಬನೂ ಲಂಚ ಪ್ರಿಯನೂ, ಬಹುಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ. ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವುದಿಲ್ಲ.
ISA 1:24 ಆದ್ದರಿಂದ ಸರ್ವಶಕ್ತರಾದ ದೇವರೂ, ಇಸ್ರಾಯೇಲಿನ ಪರಾಕ್ರಮಿಯೂ ಆದ ಯೆಹೋವ ದೇವರು ಹೇಳುವುದೇನೆಂದರೆ, “ಆಹಾ! ನನ್ನ ವೈರಿಗಳ ಮೇಲೆ ನನ್ನ ಕೋಪವನ್ನು ಹೊರಹಾಕುತ್ತೇನೆ ಮತ್ತು ನನ್ನ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ.
ISA 1:25 ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ, ನಿನ್ನ ಮಲಿನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಹಾಕುವೆನು.
ISA 1:26 ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ, ನಿನ್ನ ಆಲೋಚನಾಪರರನ್ನು ಪ್ರಾರಂಭದಲ್ಲಿದ್ದ ಹಾಗೆಯೂ ತಿರುಗಿ ಒದಗಿಸಿ ಕೊಡುವೆನು. ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ, ನಂಬಿಗಸ್ತಿಕೆಯ ಪಟ್ಟಣವೆಂದೂ ಎನಿಸಿಕೊಳ್ಳುವೆ.”
ISA 1:27 ಚೀಯೋನ್ ಪಟ್ಟಣವು ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ಚಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.
ISA 1:28 ಆದರೆ ದ್ರೋಹಿಗಳೂ, ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಯೆಹೋವ ದೇವರನ್ನು ತೊರೆದವರು ನಿರ್ಮೂಲವಾಗುವರು.
ISA 1:29 “ನೀವು ಇಷ್ಟಪಟ್ಟ ಪವಿತ್ರ ಏಲಾ ಮರಗಳ ನಿಮಿತ್ತ ನಾಚಿಕೊಳ್ಳುವಿರಿ. ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
ISA 1:30 ನೀವು ಬಾಡಿದ ಎಲೆಯುಳ್ಳ ಏಲಾ ಮರದಂತೆಯೂ, ನೀರಿಲ್ಲದ ತೋಟದಂತೆಯೂ ಇರುವಿರಿ.
ISA 1:31 ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕೆಲಸ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವುವು.”
ISA 2:1 ಆಮೋಚನ ಮಗ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ:
ISA 2:2 ಆ ಅಂತ್ಯಕಾಲದಲ್ಲಿ, ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಎಲ್ಲಾ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
ISA 2:3 ಅನೇಕ ಪ್ರಜೆಗಳು ಬಂದು ಹೀಗೆ ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ, ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ದೇವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು, ನಾವು ಅವರ ದಾರಿಗಳಲ್ಲಿ ನಡೆಯುವೆವು.” ಏಕೆಂದರೆ ಚೀಯೋನಿನಿಂದ ದೇವರ ನಿಯಮವೂ, ಯೆರೂಸಲೇಮಿನಿಂದ ಯೆಹೋವ ದೇವರ ವಾಕ್ಯವೂ ಹೊರಡುವುವು.
ISA 2:4 ಅವರು ಅನೇಕ ಜನಾಂಗಗಳ ಮಧ್ಯದಲ್ಲಿ ನ್ಯಾಯತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವರು. ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ, ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
ISA 2:5 ಯಾಕೋಬಿನ ಮನೆತನದವರೇ ಬನ್ನಿರಿ, ಯೆಹೋವ ದೇವರ ಬೆಳಕಿನಲ್ಲಿ ನಡೆಯೋಣ.
ISA 2:6 ಯಾಕೋಬಿನ ಮನೆತನದವರು ಪೂರ್ವದೇಶಗಳ ಮಂತ್ರತಂತ್ರಗಳಲ್ಲಿ ಮಗ್ನರಾಗಿ, ಫಿಲಿಷ್ಟಿಯರಂತೆ ಕಣಿ ಹೇಳುವವರಾಗಿಯೂ, ಬೇರೆ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆಯುಳ್ಳವರಾಗಿಯೂ ಇರುವುದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀರಿ.
ISA 2:7 ಅವರ ದೇಶವು ಬೆಳ್ಳಿ ಬಂಗಾರಗಳಿಂದ ತುಂಬಿದೆ. ಅವರ ಬೊಕ್ಕಸಗಳಿಗೆ ಮಿತಿಯಿಲ್ಲ. ಅವರ ದೇಶವು ಕುದುರೆಗಳಿಂದ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ.
ISA 2:8 ಅವರ ದೇಶವು ವಿಗ್ರಹಗಳಿಂದ ತುಂಬಿದೆ. ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನು ಆರಾಧಿಸುವರು.
ISA 2:9 ಆದ್ದರಿಂದ ಮನುಷ್ಯರು ನಮ್ರರಾಗುತ್ತಾರೆ; ಎಲ್ಲರೂ ತಲೆಬಾಗುತ್ತಾರೆ; ಅವರನ್ನು ಕ್ಷಮಿಸಬೇಡಿ.
ISA 2:10 ಯೆಹೋವ ದೇವರ ಭಯಕ್ಕೂ, ಅವರ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ. ಧೂಳಿನಲ್ಲಿ ನೀನು ಅಡಗಿಕೋ.
ISA 2:11 ಮನುಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವುದು. ಮನುಷ್ಯರ ಗರ್ವವು ತಗ್ಗುವುದು. ಆಗ ಯೆಹೋವ ದೇವರೊಬ್ಬರೇ ಆ ದಿನದಲ್ಲಿ ಉನ್ನತವಾಗಿರುವರು.
ISA 2:12 ಸೇನಾಧೀಶ್ವರ ಯೆಹೋವ ದೇವರ ದಿನವು ಗರ್ವ ಹಾಗೂ ಅಹಂಭಾವದಿಂದ ತುಂಬಿರುವವರ ಮೇಲೆಯೂ, ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವುದು, ದೇವರು ಅವರನ್ನು ತಗ್ಗಿಸುವರು.
ISA 2:13 ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳೂ ಹಾಗೂ ಬಾಷಾನಿನ ಎಲ್ಲಾ ಏಲಾ ಮರಗಳ ಮೇಲೆಯೂ
ISA 2:14 ಎಲ್ಲಾ ಉನ್ನತವಾಗಿರುವ ಪರ್ವತಗಳು, ಎತ್ತರವಾದ ಗುಡ್ಡಗಳು,
ISA 2:15 ಎಲ್ಲಾ ಎತ್ತರವಾದ ಗೋಪುರಗಳು, ಭದ್ರವಾದ ಎಲ್ಲಾ ಗೋಡೆಗಳ ಮೇಲೆಯೂ,
ISA 2:16 ಎಲ್ಲಾ ತಾರ್ಷೀಷಿನ ಹಡಗುಗಳು ನೋಡತಕ್ಕ ಮನೋಹರವಾದ ಪ್ರತಿಯೊಂದು ನೌಕೆಗಳ ಮೇಲೆಯೂ ಆ ದಿನವು ತಪ್ಪದೇ ಬರುವುದು.
ISA 2:17 ಜನರ ಅಟ್ಟಹಾಸವು ತಗ್ಗಿಹೋಗುವುದು. ಆ ದಿನದಲ್ಲಿ ಯೆಹೋವ ದೇವರೊಬ್ಬರೇ ಉನ್ನತವಾಗಿರುವರು.
ISA 2:18 ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡುವುವು.
ISA 2:19 ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ, ಯೆಹೋವ ದೇವರಿಗೂ ಅವರ ಮಹಿಮೆಗೂ, ಅವರ ಘನಕ್ಕೂ ಹೆದರಿ, ಬಂಡೆಗಳ ಸಂದುಗಳಿಗೂ, ಭೂಮಿಯ ಗವಿಗಳಿಗೂ ಜನರು ಸೇರಿಕೊಳ್ಳುವರು.
ISA 2:20 ಆ ದಿನದಲ್ಲಿ ಮನುಷ್ಯರು ಪೂಜಿಸುವುದಕ್ಕೋಸ್ಕರ ಮಾಡಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಚಿನ್ನದ ವಿಗ್ರಹಗಳನ್ನೂ ಇಲಿ ಬಾವಲಿಗಳಿಗಾಗಿ ಬಿಸಾಡಿಬಿಡುವರು.
ISA 2:21 ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ, ಯೆಹೋವ ದೇವರ ಭಯಕ್ಕೂ, ಅವರ ಮಹಿಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ, ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಜನರು ನುಗ್ಗುವರು.
ISA 2:22 ಉಸಿರು ಇರುವವರೆಗೆ ಬದುಕುವ ನರಮಾನವನ ಮೇಲಿನ ಭರವಸೆಯನ್ನು ಬಿಟ್ಟುಬಿಡಿರಿ. ಏಕೆಂದರೆ ಅವನ ಗಣನೆ ಎಷ್ಟರವರೆಗೆ?
ISA 3:1 ಇಗೋ, ಕರ್ತನೂ ಸರ್ವಶಕ್ತನೂ ಆಗಿರುವ ಯೆಹೋವ ದೇವರೆಂಬ ನಾನು ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದದಿಂದಲೂ ತೆಗೆದುಬಿಡುವೆನು.
ISA 3:2 ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಶಕುನದವನು, ಹಿರಿಯನು,
ISA 3:3 ಸೇನಾಪತಿ, ಅಧಿಕಾರಿ, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆದುಬಿಡುವೆನು.
ISA 3:4 “ಬಾಲಕರನ್ನು ಅವರ ಪ್ರಭುಗಳನ್ನಾಗಿ ಮಾಡಿ, ಮಕ್ಕಳು ಅವರ ಮೇಲೆ ಆಳುವಂತೆ ಮಾಡುವೆನು.”
ISA 3:5 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು, ನೆರೆಯವನಿಗೆ ವಿರೋಧವಾಗಿ ನೆರೆಯವನು ಹಿಂಸಿಸುವನು. ಹುಡುಗನು ವೃದ್ಧನ ವಿರೋಧವಾಗಿಯೂ, ನೀಚನು ಘನವಂತನ ವಿರೋಧವಾಗಿಯೂ ಸೊಕ್ಕಿನಿಂದ ವರ್ತಿಸುವರು.
ISA 3:6 ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು ಹೀಗೆ ಹೇಳುವನು, “ನಿನಗೆ ವಸ್ತ್ರವಿದೆ, ನಮ್ಮನ್ನು ನೀನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ.”
ISA 3:7 ಆ ದಿನದಲ್ಲಿ ಅವನು ಆಣೆಯಿಟ್ಟು, “ನಾನು ಉಪಶಮನ ಮಾಡುವವನಾಗುವುದಿಲ್ಲ. ಏಕೆಂದರೆ ನನ್ನ ಮನೆಯಲ್ಲಿ ಅನ್ನವಾಗಲಿ, ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ,” ಎಂದು ಉತ್ತರಿಸುವನು.
ISA 3:8 ಏಕೆಂದರೆ ಯೆರೂಸಲೇಮು ಹಾಳಾಗಿದೆ, ಯೆಹೂದವು ಬಿದ್ದುಹೋಗಿದೆ. ಅವರ ನಡೆನುಡಿಗಳು ಯೆಹೋವ ದೇವರಿಗೆ ವಿರುದ್ಧವಾಗಿ ದೇವರ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತಾರೆ.
ISA 3:9 ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಸೊದೋಮಿನಂತೆ ಮರೆಮಾಡದೆ ಪ್ರಕಟ ಮಾಡುತ್ತಾರೆ. ಅವರಿಗೆ ಕಷ್ಟ! ಏಕೆಂದರೆ ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
ISA 3:10 ನೀತಿವಂತರಿಗೆ ನೀವು, “ಅವರಿಗೆ ಒಳ್ಳೆಯದಾಗಲಿ!” ಎಂದು ಹೇಳಿರಿ. ಏಕೆಂದರೆ ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
ISA 3:11 ಕೆಡುಕರಿಗೆ ಕಷ್ಟ! ಅವರಿಗೆ ಕೇಡೇ ಇರಲಿ. ಏಕೆಂದರೆ ಅವರ ಕೈಗಳ ಪ್ರತಿಫಲವು ಅವರಿಗೆ ಕೊಡಲಾಗುವುದು.
ISA 3:12 ನನ್ನ ಪ್ರಜೆಗಳನ್ನು ಹುಡುಗರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು. ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ. ನೀವು ನಡೆಯುವ ದಾರಿಯನ್ನು ಹಾಳು ಮಾಡಿದ್ದಾರೆ.
ISA 3:13 ನ್ಯಾಯಾಧೀಶರನ್ನು ಯೆಹೋವ ದೇವರು ಸ್ವಾಧೀನಪಡಿಸಿಕೊಂಡಿದ್ದಾರೆ; ಅವರು ಜನರನ್ನು ನಿರ್ಣಯಿಸಲು ಎದ್ದರು.
ISA 3:14 ಯೆಹೋವ ದೇವರು ತಮ್ಮ ಪ್ರಜೆಗಳ ಹಿರಿಯರ ಸಂಗಡ, ಮತ್ತು ಅವರ ಅಧಿಪತಿಗಳ ಸಂಗಡ ನ್ಯಾಯತೀರಿಸಲು ಪ್ರವೇಶಿಸುವರು. ಏಕೆಂದರೆ, “ನೀವು ನನ್ನ ದ್ರಾಕ್ಷಿತೋಟವನ್ನು ತಿಂದುಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
ISA 3:15 ನೀವು ನನ್ನ ಪ್ರಜೆಯನ್ನು ಹೊಡೆದು, ಚೂರುಗಳನ್ನಾಗಿ ಮಾಡಿ, ಬಡವರ ಮುಖಗಳನ್ನು ಹಿಂಡುವುದರ ಅರ್ಥವೇನು?” ಎಂದು ಸರ್ವಶಕ್ತ ದೇವರಾದ ಯೆಹೋವ ದೇವರು ವಾದಿಸುತ್ತಾರೆ.
ISA 3:16 ಇದಲ್ಲದೆ ಯೆಹೋವ ದೇವರು ಇಂತೆನ್ನುತ್ತಾರೆ: “ಚೀಯೋನ್ ಪುತ್ರಿಯರು ಅಹಂಕಾರಿಗಳಾಗಿದ್ದು, ಕತ್ತು ತೂಗುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ, ನಾಜೂಕಿನಿಂದ ಹೆಜ್ಜೆ ಇಡುತ್ತಾ, ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ;
ISA 3:17 ಆದ್ದರಿಂದ ಯೆಹೋವ ದೇವರು ಚೀಯೋನ್ ಪುತ್ರಿಯರ ನಡುನೆತ್ತಿಗೆ ಹುಣ್ಣನ್ನು ಅನುಮತಿಸಿ, ಅವರನ್ನು ಬೋಳುಮಾಡುವರು.”
ISA 3:18 ಆ ದಿನದಲ್ಲಿ ಯೆಹೋವ ದೇವರು ಅವರ ಕಾಲಂದಿಗೆ, ತುರುಬು ಬಲೆ, ಅರ್ಧಚಂದ್ರ,
ISA 3:19 ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,
ISA 3:20 ಕಂಠ ವಸ್ತ್ರ, ಕಾಲ ಸರಪಣಿ, ಡಾಬು, ಸುಗಂಧ ಭರಣಿ, ತಾಯಿತಿ,
ISA 3:21 ಮುದ್ರೆ ಉಂಗುರ, ಮೂಗುತಿ,
ISA 3:22 ಹಬ್ಬದ ಉಡಿಗೆ ತೊಡಿಗೆ, ಮೇಲಂಗಿ, ಶಾಲು, ಕೈಚೀಲ,
ISA 3:23 ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.
ISA 3:24 ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ನಡುಪಟ್ಟಿಗೆ ಬದಲಾಗಿ ಹಗ್ಗ, ಜಡೆಯ ಬದಲಾಗಿ ಬೋಳುತಲೆ, ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು, ಸೌಂದರ್ಯಕ್ಕೆ ಬದಲಾಗಿ ಬರೆ, ಇವೆಲ್ಲ ಅವರಿಗೆ ಬಂದೊದಗುವುದು.
ISA 3:25 ನಿನ್ನ ಗಂಡಸರು ಖಡ್ಗಕ್ಕೆ ತುತ್ತಾಗುವರು. ನಿನ್ನ ಶೂರರು ಯುದ್ಧದಲ್ಲಿ ಬೀಳುವರು.
ISA 3:26 ಚೀಯೋನ್ ಬಾಗಿಲುಗಳಲ್ಲಿ ಪ್ರಲಾಪವು, ದುಃಖವು ತುಂಬಿರುವುದು. ಅವಳು ನಿರ್ಗತಿಕಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.
ISA 4:1 ಆ ದಿವಸದಲ್ಲಿ ಏಳುಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು, “ನಾವು ಸ್ವಂತವಾಗಿ ದುಡಿದು ಉಣ್ಣುವೆವು, ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು, ನಮ್ಮ ನಿಂದೆಯನ್ನು ನೀಗಿಸುವುದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು,” ಎಂದು ಕೇಳಿಕೊಳ್ಳುವರು.
ISA 4:2 ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.
ISA 4:3 ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು.
ISA 4:4 ಯೆಹೋವ ದೇವರು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಪುತ್ರಿಯರ ಕಲ್ಮಷವನ್ನು ತೊಳೆದು, ಯೆರೂಸಲೇಮಿನ ಮೇಲಿನ ರಕ್ತದ ಕಲೆಗಳನ್ನು ತೆಗೆದುಹಾಕುವರು.
ISA 4:5 ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.
ISA 4:6 ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು.
ISA 5:1 ನನ್ನ ಪ್ರಿಯನ ದ್ರಾಕ್ಷಿತೋಟದ ವಿಷಯವಾದ ಹಾಡನ್ನು ನನ್ನ ಪ್ರಾಣ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದ ಬಳಿಯಲ್ಲಿ ನನ್ನ ಅತಿ ಪ್ರಿಯನಿಗೆ ದ್ರಾಕ್ಷಿ ತೋಟವಿದೆ.
ISA 5:2 ಅವನು ಅದಕ್ಕೆ ಬೇಲಿಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿ ಸಸಿಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷಿ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಬಿಟ್ಟಿತು.
ISA 5:3 “ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷಿ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ISA 5:4 ನನ್ನ ದ್ರಾಕ್ಷಿತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಅದು ಒಳ್ಳೆಯ ದ್ರಾಕ್ಷಿ ಫಲವನ್ನು ಫಲಿಸುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿದ್ದು ಏಕೆ?
ISA 5:5 ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.
ISA 5:6 ಅದನ್ನು ನಾನು ಹಾಳಾಗಲು ಬಿಡುವೆನು. ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾಪಿಸುವೆನು.”
ISA 5:7 ಸೇನಾಧೀಶ್ವರ ಯೆಹೋವ ದೇವರ ದ್ರಾಕ್ಷಿತೋಟವು ಇಸ್ರಾಯೇಲಿನ ಮನೆತನವು. ಯೆಹೂದದ ಜನವೋ ದೇವರ ಇಷ್ಟದ ಗಿಡವು. ಅವರು ನ್ಯಾಯವನ್ನು ನಿರೀಕ್ಷಿಸಲು, ಹಿಂಸೆಯೂ, ನೀತಿಯನ್ನು ನಿರೀಕ್ಷಿಸಲು ಗೋಳಾಟವು ಸಿಕ್ಕಿತು.
ISA 5:8 ಅಯ್ಯೋ, ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ, ಹೊಲಕ್ಕೆ ಹೊಲ ಸೇರಿಸುವ ನಿಮಗೆ ಕಷ್ಟ!
ISA 5:9 ಸೇನಾಧೀಶ್ವರ ಯೆಹೋವ ದೇವರು ನನ್ನ ಕಿವಿಗಳಲ್ಲಿ ಹೇಳುವುದೇನೆಂದರೆ: “ನಿಜವಾಗಿಯೂ ದೊಡ್ಡ ಮನೆಗಳು ಬರಿದಾಗುವುವು ಸುಂದರ ಭವನಗಳು ನಿವಾಸಿಗಳಿಲ್ಲದೆ ಹಾಳಾಗುವುವು.
ISA 5:10 ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಇಪ್ಪತ್ತೆರಡು ಲೀಟರ್ ದ್ರಾಕ್ಷಾರಸವನ್ನು ಕೊಡುವುದು. ಸುಮಾರು ನೂರಾ ಅರವತ್ತು ಕಿಲೋಗ್ರಾಂ ಬೀಜಬಿತ್ತಿದರೆ, ಕೇವಲ ಹದಿನಾರು ಕಿಲೋಗ್ರಾಂ ಧಾನ್ಯ ಮಾತ್ರ ಸಿಗುವುದು.”
ISA 5:11 ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳಗಿನ ಜಾವದಲ್ಲಿ ಎದ್ದು ರಾತ್ರಿವರೆಗೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲಕಳೆಯುವವರಿಗೆ ಕಷ್ಟ!
ISA 5:12 ಅವರ ಹಬ್ಬಗಳಲ್ಲಿ ಕಿನ್ನರಿ, ವೀಣೆ, ದಮ್ಮಡಿ, ಕೊಳಲು ಮತ್ತು ಮದ್ಯಪಾನ ಇರುವುವು. ಆದರೆ ಯೆಹೋವ ದೇವರ ಕೆಲಸವನ್ನು ಅವರು ಲಕ್ಷಿಸರು ಇಲ್ಲವೆ ಅವರ ಕೈಗೆಲಸವನ್ನು ಲಕ್ಷಿಸುವುದಿಲ್ಲ.
ISA 5:13 ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋದರು; ಅವರ ಘನವಂತರು ಹಸಿವಿನಿಂದ ಸಾಯುವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವುದು.
ISA 5:14 ಹೀಗಿರುವುದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ವೈಭವ, ಸಮೂಹ, ಕೋಲಾಹಲ, ಉಲ್ಲಾಸಪಡುವುದು ಇವೆಲ್ಲವೂ ಅದರಲ್ಲಿ ಬೀಳುವುವು.
ISA 5:15 ನರಮಾನವರು ತಗ್ಗಿಹೋಗುವರು. ಅಹಂಭಾವದ ಕಣ್ಣುಗಳು ಕಂಗೆಡುವುವು.
ISA 5:16 ಆದರೆ ಸೇನಾಧೀಶ್ವರ ಯೆಹೋವ ದೇವರು ನ್ಯಾಯತೀರ್ಪಿನಲ್ಲಿ ಉನ್ನತವಾಗಿರುವರು. ಪರಿಶುದ್ಧ ದೇವರು ತಮ್ಮ ನ್ಯಾಯದಲ್ಲಿ ಪರಿಶುದ್ಧರೆಂದು ಕಾಣಿಸಿಕೊಳ್ಳುವರು.
ISA 5:17 ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು.
ISA 5:18 ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧವನ್ನೂ, ಬಂಡಿಹಗ್ಗದಿಂದಲೋ ಎಂಬಂತೆ ಪಾಪವನ್ನೂ ಎಳೆದು,
ISA 5:19 ನಾವು ಅವರ ಕೆಲಸವನ್ನು ನೋಡುವಂತೆ, “ದೇವರು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ. ನಾವು ಇಸ್ರಾಯೇಲಿನ ಪರಿಶುದ್ಧರ ಆಲೋಚನೆಯನ್ನು ತಿಳಿದುಕೊಳ್ಳುವ ಹಾಗೆ ಅದು ಸಮೀಪಿಸಿ ಬರಲಿ ಎಂದು ಹೇಳುವವರಿಗೆ ಕಷ್ಟ!”
ISA 5:20 ಕೇಡಿಗೆ ಮೇಲೆಂದೂ, ಮೇಲಿಗೆ ಕೇಡೆಂದೂ ಕರೆದು, ಕತ್ತಲೆಯನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಯೆಂದೂ; ಕಹಿಯನ್ನು ಸಿಹಿ ಎಂದೂ, ಸಿಹಿಯನ್ನು ಕಹಿ ಎಂದೂ ಎಣಿಸುವವರಿಗೆ ಕಷ್ಟ!
ISA 5:21 ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳು ತಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳು ಆಗಿರುವವರಿಗೆ ಕಷ್ಟ!
ISA 5:22 ಅಯ್ಯೋ, ದ್ರಾಕ್ಷಾರಸ ಕುಡಿಯುವುದರಲ್ಲಿ ಶೂರರೂ, ಮದ್ಯ ಸಾಹಸಿಗಳೂ,
ISA 5:23 ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ, ನೀತಿಯನ್ನು ನೀತಿವಂತನಿಂದ ತೆಗೆದು ಹಾಕುವವರಿಗೂ ಕಷ್ಟ!
ISA 5:24 ಏಕೆಂದರೆ ಅವರು ಸೇನಾಧೀಶ್ವರ ಯೆಹೋವ ದೇವರ ನಿಯಮವನ್ನು ನಿರಾಕರಿಸಿದ್ದರಿಂದಲೂ, ಇಸ್ರಾಯೇಲಿನ ಪರಿಶುದ್ಧರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿ ಬಿಡುವ ಹಾಗೆಯೂ, ಜ್ವಾಲೆಯು ಒಣಹುಲ್ಲನ್ನು ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆಯುವಂತೆಯೂ, ಚಿಗುರು ಅದರ ಧೂಳಿನಂತೆಯೂ ಏರಿ ಹೋಗುವುವು.
ISA 5:25 ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, ಬೆಟ್ಟಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇರುವುದು.
ISA 5:26 ಅವರು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಕಟ್ಟಕಡೆಯಿಂದ ಅವರಿಗೆ ಸೀಟಿ ಹಾಕುವರು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು,
ISA 5:27 ಅವರಲ್ಲಿ ಯಾರೂ ದಣಿದು ಮುಗ್ಗರಿಸರು, ಅವರು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ, ಅವರ ನಡುಕಟ್ಟು ಬಿಚ್ಚಿಕೊಳ್ಳುವುದಿಲ್ಲ. ಕೆರದ ಬಾರು ಹರಿಯುವುದಿಲ್ಲ.
ISA 5:28 ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಅವರ ರಥಗಳ ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.
ISA 5:29 ಅವರ ಗರ್ಜನೆಯು ಸಿಂಹ ಆರ್ಭಟಿಸಿದಂತಿದೆ. ಪ್ರಾಯದ ಸಿಂಹ ಆರ್ಭಟಿಸಿದಂತಿದೆ. ಹೌದು, ಗರ್ಜಿಸುತ್ತಾ ಬೇಟೆಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ, ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.
ISA 5:30 ಆ ದಿನದಲ್ಲಿ ಅವರು ಸಮುದ್ರವು ಭೋರ್ಗರೆಯುವಂತೆ ಅದರ ಮೇಲೆ ಗರ್ಜಿಸುವರು. ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವನ್ನೂ, ದುಃಖವನ್ನೂ ನೋಡುವೆ. ಸೂರ್ಯ ಕೂಡ ಮೋಡಗಳಿಂದ ಕಪ್ಪಾಗುವುದು.
ISA 6:1 ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಯೆಹೋವ ದೇವರು ಉನ್ನತೋನ್ನತವಾಗಿ ಸಿಂಹಾಸನದ ಮೇಲೆ ಕೂತಿರುವುದನ್ನು ಕಂಡೆನು. ಅವರ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.
ISA 6:2 ಅವರ ಮೇಲೆ ಸೆರಾಫಿಯರು ನಿಂತಿದ್ದರು. ಪ್ರತಿಯೊಬ್ಬನಿಗೂ ಆರು ರೆಕ್ಕೆಗಳಿದ್ದವು. ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದರು.
ISA 6:3 ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರ ಯೆಹೋವ ದೇವರು ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು. ಭೂಮಂಡಲವೆಲ್ಲಾ ಅವರ ಮಹಿಮೆಯಿಂದ ತುಂಬಿದೆ,” ಎಂದು ಕೂಗಿ ಹೇಳಿದನು.
ISA 6:4 ಕೂಗುವವನ ಸ್ವರಕ್ಕೆ ದ್ವಾರದ ನಿಲುವುಗಳು ಕದಲಿದವು; ಧೂಮವು ಆಲಯವನ್ನೆಲ್ಲ ತುಂಬಿತು.
ISA 6:5 ಆಗ ನಾನು, “ಅಯ್ಯೋ, ನಾನು ನಾಶವಾದೆನಲ್ಲಾ! ಏಕೆಂದರೆ, ನಾನು ಅಶುದ್ಧ ತುಟಿಯವನು. ನಾನು ಅಶುದ್ಧ ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು. ನನ್ನ ಕಣ್ಣುಗಳು ರಾಜಾಧಿರಾಜರೂ ಸೇನಾಧೀಶ್ವರ ಯೆಹೋವ ದೇವರನ್ನು ಕಂಡವು!” ಎಂದೆನು.
ISA 6:6 ಆಗ ಸೆರಾಫಿಯರಲ್ಲಿ ಒಬ್ಬನು ಬಲಿಪೀಠದಿಂದ ತಾನು ಉರಿಯುವ ಕೆಂಡವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಹಾರಿ ಬಂದು,
ISA 6:7 ಅದರಿಂದ ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳನ್ನು ತಗಲಿದೆ. ನಿನ್ನ ದೋಷವು ತೊಲಗಿದೆ, ನಿನ್ನ ಪಾಪಪರಿಹಾರ ಆಯಿತು,” ಎಂದು ಹೇಳಿದನು.
ISA 6:8 ಆಗ, “ಯಾರನ್ನು ಕಳುಹಿಸಲಿ, ಯಾರು ನಮಗೋಸ್ಕರ ಹೋಗುವರು?” ಎಂಬ ಯೆಹೋವ ದೇವರ ನುಡಿಯನ್ನು ನಾನು ಕೇಳಿ, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿರಿ,” ಎಂದೆನು.
ISA 6:9 ಅದಕ್ಕೆ ಅವರು, “ನೀನು ಈ ಜನರ ಬಳಿಗೆ ಹೋಗಿ: “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ,’
ISA 6:10 ತಮ್ಮ ಕಣ್ಣುಗಳಿಂದ ನೋಡದಂತೆಯೂ, ತಮ್ಮ ಕಿವಿಗಳಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗದಂತೆಯೂ ಈ ಜನರ ಹೃದಯವನ್ನು ಕಠಿಣಗೊಳಿಸಿ, ಅವರ ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣುಗಳನ್ನು ಮೊಬ್ಬಾಗಿಸು,” ಎಂದು ನನಗೆ ಹೇಳಿದರು.
ISA 6:11 ಆಗ ನಾನು, “ಯೆಹೋವ ದೇವರೇ, ಇದು ಎಷ್ಟರವರೆಗೆ?” ಎಂದೆನು. ಅದಕ್ಕೆ ಅವರು ಹೀಗೆ ಉತ್ತರಕೊಟ್ಟರು, “ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯನಿಲ್ಲದೆ, ಹೊಲಗಳು ಸಂಪೂರ್ಣವಾಗಿ ಹಾಳಾಗುವವರೆಗೂ,
ISA 6:12 ಯೆಹೋವ ದೇವರಾದ ನಾನು ಮನುಷ್ಯರನ್ನು ದೂರ ಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗಿರುವುದು.
ISA 6:13 ಆದರೆ ದೇಶದಲ್ಲಿ ಹತ್ತನೆಯ ಪಾಲು ಉಳಿದಿದ್ದರೂ, ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ. ಅದೇ ರೀತಿಯಾಗಿ ಪವಿತ್ರ ಜನರು ದೇಶದಲ್ಲಿ ಬುಡವಾಗಿ ಉಳಿದಿರುವರು.”
ISA 7:1 ಯೋತಾಮನ ಮಗನೂ, ಉಜ್ಜೀಯನ ಮೊಮ್ಮಗನೂ, ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ, ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ, ಇಸ್ರಾಯೇಲರ ಅರಸನೂ ಆದ ಪೆಕಹ ಎಂಬುವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.
ISA 7:2 ಸಿರಿಯಾದವರು ಎಫ್ರಾಯೀಮ್ಯರೊಂದಿಗೆ ಜತೆಗೂಡಿದ್ದಾರೆಂದು ದಾವೀದನ ವಂಶದವರಿಗೆ ತಿಳಿದಾಗ, ಆಹಾಜನ ಮತ್ತು ಅವರ ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.
ISA 7:3 ಆಗ ಯೆಹೋವ ದೇವರು ಯೆಶಾಯನಿಗೆ, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಳ್ಳು.
ISA 7:4 ಅವನಿಗೆ, ಈ ಪ್ರಕಾರ ಹೇಳಬೇಕು: ‘ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ. ರೆಚೀನ, ಅರಾಮ್ಯರು, ಮತ್ತು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.
ISA 7:5 ಏಕೆಂದರೆ, ಸಿರಿಯಾದವರೂ ಎಫ್ರಾಯೀಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ಒಳಸಂಚುಮಾಡಿ,
ISA 7:6 “ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ, ಅದನ್ನು ವ್ಯಥೆಪಡಿಸಿ, ಅದರಲ್ಲಿ ನಮಗಾಗಿ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ, ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೆಯೇಲನ ಮಗನನ್ನು ನೇಮಿಸಿಕೊಳ್ಳೋಣ,” ಎಂದುಕೊಂಡಿದ್ದಾರೆ.
ISA 7:7 ಅದಕ್ಕೆ ಸಾರ್ವಭೌಮ ಯೆಹೋವ ದೇವರು, “ ‘ಅದು ನಿಲ್ಲುವುದಿಲ್ಲ, ಅದು ಆಗುವುದೇ ಇಲ್ಲ.
ISA 7:8 ಏಕೆಂದರೆ, ದಮಸ್ಕವು ಸಿರಿಯಾದ ರಾಜಧಾನಿ ಮತ್ತು ದಮಸ್ಕದ ತಲೆಯು ರೆಚೀನ ಮಾತ್ರ, ಅರವತ್ತೈದು ವರುಷಗಳೊಳಗೆ ಎಫ್ರಾಯೀಮರು ರಾಷ್ಟ್ರವಾಗದೆ ಭಂಗಪಡುವರು.
ISA 7:9 ಎಫ್ರಾಯೀಮಿನ ರಾಜಧಾನಿ ಸಮಾರ್ಯ. ಸಮಾರ್ಯದ ರಾಜಧಾನಿ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ,’ ಎಂದು ಹೇಳುತ್ತಾರೆ.”
ISA 7:10 ಯೆಹೋವ ದೇವರು ಆಹಾಜನಿಗೆ ಹೇಳಿದ್ದೇನೆಂದರೆ:
ISA 7:11 “ನಿನ್ನ ದೇವರಾದ ಯೆಹೋವ ದೇವರಿಂದ ಒಂದು ಗುರುತನ್ನು ಕೇಳು. ಅದು ಕೆಳಗೆ ಆಳದಲ್ಲಿದ್ದರೂ, ಮೇಲೆ ಎತ್ತರಲ್ಲಿದ್ದರೂ ಅದನ್ನು ಕೇಳಿಕೋ,” ಎಂದು ಹೇಳಿದರು.
ISA 7:12 ಆದರೆ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ; ಯೆಹೋವ ದೇವರನ್ನು ಪರೀಕ್ಷಿಸುವುದೂ ಇಲ್ಲ” ಎಂದನು.
ISA 7:13 ಅದಕ್ಕೆ ಯೆಶಾಯನು, “ದಾವೀದನ ವಂಶದವರೇ! ಈಗ ಕೇಳಿರಿ, ಮನುಷ್ಯರ ತಾಳ್ಮೆಯನ್ನು ಪರೀಕ್ಷಿಸುವುದು ಸಾಕಾಗುವುದಿಲ್ಲವೇ? ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುವಿರಾ?
ISA 7:14 ಆದಕಾರಣ ಯೆಹೋವ ದೇವರು ತಾವೇ ಒಂದು ಗುರುತನ್ನು ನಿನಗೆ ಕೊಡುವರು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು. ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.
ISA 7:15 ಆ ಮಗು ಬೆಳೆದು, ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವಳಿಕೆಯು ಬರುವ ತನಕ ಮೊಸರನ್ನು ಮತ್ತು ಜೇನನ್ನು ತಿನ್ನುವುದು.
ISA 7:16 ಹೌದು, ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕಿಂತ ಮುಂಚೆಯೇ, ನೀನು ಭಯಪಡುವ ಆ ಅರಸರುಗಳ ದೇಶ ನಿರ್ಜನವಾಗುವುದು.
ISA 7:17 ಯೆಹೋವ ದೇವರು ನಿನ್ನ ಮೇಲೆಯೂ, ನಿನ್ನ ಜನರ ಮೇಲೆಯೂ, ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾಯೀಮು ಅಗಲಿದ ದಿನದಿಂದ ಅಂದರೆ ಅಸ್ಸೀರಿಯದ ಅರಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವರು.”
ISA 7:18 ಆ ದಿನದಲ್ಲಿ ಈಜಿಪ್ಟಿನ ನದಿಗಳ ಕಟ್ಟಕಡೆಯಿಂದ ನೊಣಕ್ಕೂ, ಅಸ್ಸೀರಿಯ ದೇಶದ ಜೇನುಹುಳಕ್ಕೂ ಯೆಹೋವ ದೇವರು ಸಿಳ್ಳುಹಾಕುವರು.
ISA 7:19 ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವುವು.
ISA 7:20 ಅದೇ ದಿನದಲ್ಲಿ ಯೆಹೋವ ದೇವರು ಯೂಫ್ರೇಟೀಸ್ ನದಿಯ ಆಚೆಗಿರುವ ಅಸ್ಸೀರಿಯದ ರಾಜನೆಂಬುವನಿಂದ ಬಾಡಿಗೆ ಕ್ಷೌರದ ಕತ್ತಿಯಿಂದ ಯೆಹೂದದ ತಲೆ ಮತ್ತು ಕಾಲಿನ ಕೂದಲನ್ನು ಬೋಳಿಸುವರು ಹಾಗೂ ಗಡ್ಡವನ್ನು ತೆಗೆದುಬಿಡುವರು.
ISA 7:21 ಆ ದಿನದಲ್ಲಿ ಮನುಷ್ಯನು ಒಂದು ಹಸುವಿನ ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.
ISA 7:22 ಅವು ಸಮೃದ್ಧಿಯಾಗಿ ಹಾಲನ್ನು ಕೊಡುವುದರಿಂದ ಅವನು ಮೊಸರನ್ನು ತಿನ್ನುವನು. ಏಕೆಂದರೆ ಆ ದೇಶದಲ್ಲಿ ಉಳಿದಿರುವವರೆಲ್ಲರೂ ಮೊಸರನ್ನು ಮತ್ತು ಜೇನುತುಪ್ಪವನ್ನು ತಿನ್ನುವರು.
ISA 7:23 ಆ ದಿನದಲ್ಲಿ ಸಾವಿರ ಬೆಳ್ಳಿ ನಾಣ್ಯಗಳ ಬೆಲೆಯ ಸಮಸ್ತ ದ್ರಾಕ್ಷಿಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿಗಳಿಂದ ಆಗುವುದು.
ISA 7:24 ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವುದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.
ISA 7:25 ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ. ಆದರೆ ಅದು ಎತ್ತುಗಳನ್ನು ಬಿಡುವುದಕ್ಕೂ, ಕುರಿಗಳು ತುಳಿದಾಡುವುದಕ್ಕೂ ಗುರಿಯಾಗುವುದು.
ISA 8:1 ಯೆಹೋವ ದೇವರು, “ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಸಾಮಾನ್ಯ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್, ಎಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ ಎಂದು ಬರೆ,” ಎಂಬುದಾಗಿ ನನಗೆ ಹೇಳಿದರು.
ISA 8:2 ನಾನು ಯಾಜಕನಾದ ಊರೀಯನನ್ನೂ ಯೆಬೆರೆಕ್ಯನ ಮಗನಾದ ಜೆಕರ್ಯನನ್ನೂ ನಂಬಿಗಸ್ತ ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
ISA 8:3 ಅನಂತರ ನಾನು ಪ್ರವಾದಿನಿಯಾದ ನನ್ನ ಹೆಂಡತಿಯನ್ನು ಕೂಡಲು, ಆಕೆಯು ಗರ್ಭಧರಿಸಿ ಒಬ್ಬ ಗಂಡುಮಗುನ್ನು ಹೆತ್ತಳು. ಆಗ ಯೆಹೋವ ದೇವರು ನನಗೆ, “ಆ ಮಗುವಿಗೆ, ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು, ಎಂದು ಹೇಳಿದರು.
ISA 8:4 ಏಕೆಂದರೆ ಆ ಮಗುವು, ‘ಅಪ್ಪಾ’ ಅಥವಾ ‘ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮುಂಚೆ ಅಸ್ಸೀರಿಯದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದರು.
ISA 8:5 ಯೆಹೋವ ದೇವರು ಮತ್ತೊಮ್ಮೆ ನನಗೆ,
ISA 8:6 “ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ ರೆಮಲ್ಯನ ಮಗನನ್ನೂ ನೆಚ್ಚಿಕೊಂಡು ಮೆರೆದಿದ್ದರಿಂದ,
ISA 8:7 ಯೆಹೋವ ದೇವರಾದ ನಾನು ಎಲ್ಲಾ ಪ್ರತಾಪದಿಂದ ಕೂಡಿದ ಅಸ್ಸೀರಿಯದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವೆನು. ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
ISA 8:8 ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುಯೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವುವು.”
ISA 8:9 ಜನಾಂಗಗಳೇ, ನೀವು ಯುದ್ಧವನ್ನು ಘೋಷಿಸಿರಿ, ಆದರೂ ಚದರಿಹೋಗುವಿರಿ! ಎಲ್ಲಾ ದೂರ ದೇಶದವರೇ ಕಿವಿಗೊಡಿರಿ. ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ! ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ!
ISA 8:10 ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವುದು, ನಿಮ್ಮ ಯೋಜನೆಯನ್ನು ಪ್ರಸ್ತಾಪಿಸಿರಿ, ಆದರೆ ಅದು ನಿಲ್ಲುವುದಿಲ್ಲ, ಏಕೆಂದರೆ ದೇವರು ನಮ್ಮ ಸಂಗಡ ಇದ್ದಾರೆ.
ISA 8:11 ನಾನು ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ಯೆಹೋವ ದೇವರು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ನನಗೆ,
ISA 8:12 “ಇವರು ಯಾವುದನ್ನು ಒಳಸಂಚು ಎಂದು ಹೇಳುತ್ತಾರೋ, ನೀವು ಅದನ್ನು ಒಳಸಂಚು ಎಂದು ಹೇಳಬೇಡಿರಿ. ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
ISA 8:13 ಸೇನಾಧೀಶ್ವರ ಯೆಹೋವ ದೇವರನ್ನೇ ಪ್ರತಿಷ್ಠೆ ಪಡಿಸಿಕೊಳ್ಳಿರಿ; ನೀವು ಭಯಪಡಬೇಕಾದುದು ಅವರಿಗೇ, ನೀವು ಹೆದರಬೇಕಾಗಿರುವುದು ಅವರಿಗೇ.
ISA 8:14 ಅವರೇ ನಿಮಗೆ ಪರಿಶುದ್ಧ ಸ್ಥಳವಾಗಿರುವರು. ಆದರೆ ಇಸ್ರಾಯೇಲ್ ಮತ್ತು ಯಹೂದ ಎರಡು ಮನೆಗಳಿಗೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ, ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಬೋನೂ ಆಗಿರುವರು.
ISA 8:15 ಅವರಲ್ಲಿ ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬಲೆಗೆ ಸಿಕ್ಕಿ ಬೀಳುವರು.”
ISA 8:16 ಸಾಕ್ಷಿಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ದೇವರ ಶಿಕ್ಷಣವನ್ನು ಮುದ್ರಿಸು.
ISA 8:17 ಯಾಕೋಬಿನ ವಂಶದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವ ದೇವರಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು. ನಾನು ದೇವರ ಮೇಲೆ ಭರವಸೆ ಇಡುವೆನು.
ISA 8:18 ಇಗೋ, ನಾನೂ ಯೆಹೋವ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
ISA 8:19 ಲೊಚಗುಟ್ಟುವ, ಪಿಸುಮಾತಾಡುವ ಮಂತ್ರಗಾರರನ್ನೂ; ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ, ಜನರು ತಮ್ಮ ದೇವರನ್ನೇ ಹುಡುಕುವುದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವುದುಂಟೋ?
ISA 8:20 ದೇವರ ಶಿಕ್ಷಣ ಮತ್ತು ಎಚ್ಚರಿಸುವ ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಒಂದು ವೇಳೆ ಅವರು ಹೇಳದಿದ್ದರೆ, ಅವರಲ್ಲಿ ಮುಂಜಾವಿನ ಬೆಳಕು ಮೂಡಿಬರುವುದಿಲ್ಲ.
ISA 8:21 ಅವರು ಘೋರಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯುವರು. ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜನನ್ನೂ, ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
ISA 8:22 ಅವರು ಭೂಮಿಯನ್ನು ದೃಷ್ಟಿಸಿದರೂ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು, ಕಾರ್ಗತ್ತಲೆಗೆ ಅವರನ್ನು ದೂಡಲಾಗುವುದು.
ISA 9:1 ಆದರೂ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬುಲೂನ್ ನಾಡು ಮತ್ತು ನಫ್ತಾಲಿ ನಾಡುಗಳನ್ನು ಅವರು ಅವಮಾನಕ್ಕೆ ಗುರಿಮಾಡಿ, ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಇತರ ಜನರಿರುವ ಗಲಿಲಾಯ ನಾಡು, ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾರೆ.
ISA 9:2 ಕತ್ತಲೆಯಲ್ಲಿ ನಡೆಯುವ ಈ ಜನರಿಗೆ ಮಹಾ ಬೆಳಕು ಕಾಣಿಸಿತು, ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಉದಯಿಸಿತು.
ISA 9:3 ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ. ಸುಗ್ಗಿ ಕಾಲದ ಸಂತೋಷದಂತೆಯೂ, ಕೊಳ್ಳೆಯನ್ನು ಹಂಚಿಕೊಳ್ಳುವಾಗ ಉಲ್ಲಾಸಿಸುವ ಹಾಗೆಯೂ ನಿಮ್ಮ ಮುಂದೆ ಸಂತೋಷಿಸುವರು.
ISA 9:4 ಏಕೆಂದರೆ ಅವನ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ, ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.
ISA 9:5 ಯುದ್ಧವೀರರ ಪ್ರತಿ ಯುದ್ಧವು ಗಲಿಬಿಲಿಯ ಗದ್ದಲದಿಂದ ರಕ್ತದಲ್ಲಿ ಹೊರಳಾಡಿಸಿದ ವಸ್ತ್ರಗಳು ಆಗಿರುತ್ತವೆ. ಆದರೆ ಇವು ಬೆಂಕಿಗೆ ಆಹುತಿಯಾಗುತ್ತವೆ. ಅದು ಬೆಂಕಿಗೆ ಇಂಧನವಾಗಿರುತ್ತದೆ.
ISA 9:6 ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನನ್ನು ನಮಗಾಗಿ ಕೊಡಲಾಗಿದೆ. ಆಡಳಿತವು ಅವರ ಬಾಹುವಿನ ಮೇಲಿರುವುದು, ಅದ್ಭುತವಾದವರು ಸಮಾಲೋಚಕರು, ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ, ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.
ISA 9:7 ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು, ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು, ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು ಇದನ್ನು ನೆರವೇರಿಸುವುದು.
ISA 9:8 ಯೆಹೋವ ದೇವರು ಯಾಕೋಬನಿಗೆ ವಿರೋಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದರು, ಅದು ಇಸ್ರಾಯೇಲರಿಗೆ ತಗುಲಿತು.
ISA 9:9 ಗರ್ವದಿಂದಲೂ, ಹೆಮ್ಮೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯೀಮ್ಯರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಈ ಮಾತು ಗೊತ್ತಾಗುವುದು. ಅದೇನೆಂದರೆ,
ISA 9:10 “ಇಟ್ಟಿಗೆಗಳು ಬಿದ್ದು ಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು. ಅತ್ತಿಮರಗಳನ್ನು ಕಡಿದಿದ್ದರೂ ಅಲ್ಲಿಯೇ ನಾವು ದೇವದಾರು ವೃಕ್ಷಗಳನ್ನು ನೆಡುವೆವು,”
ISA 9:11 ಹೀಗಿರುವುದರಿಂದ ಯೆಹೋವ ದೇವರು ರೆಚೀನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ,
ISA 9:12 ಅವನ ಶತ್ರುಗಳಾದ ಪೂರ್ವದಿಂದ ಅರಾಮ್ಯರನ್ನು ಮುಂದೆಯೂ, ಪಶ್ಚಿಮದಿಂದ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವರು. ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿಬಿಡುವರು. ಏಕೆಂದರೆ, ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
ISA 9:13 ಆದರೂ ಜನರು ತಮ್ಮನ್ನು ಶಿಕ್ಷಿಸಿದ ದೇವರ ಕಡೆಗೆ ತಿರುಗದೆಯೂ, ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕದೆಯೂ ಇದ್ದರು.
ISA 9:14 ಆದಕಾರಣ ಯೆಹೋವ ದೇವರು ಇಸ್ರಾಯೇಲಿನಿಂದ ತಲೆ ಬಾಲಗಳನ್ನೂ ಖರ್ಜೂರದ ಕೊಂಬೆಗಳನ್ನೂ ಒಂದೇ ದಿನದಲ್ಲಿ ಕಡಿದುಹಾಕುವರು.
ISA 9:15 ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು, ಸುಳ್ಳು ಬೋಧಿಸುವ ಪ್ರವಾದಿಯು ಬಾಲವಾಗಿರುವನು.
ISA 9:16 ಈ ಜನರನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ, ಅವರನ್ನು ಹಿಂಬಾಲಿಸುವವರು ನಾಶವಾಗುವರು.
ISA 9:17 ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ. ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ. ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ, ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
ISA 9:18 ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ, ಮುಳ್ಳುಗಳನ್ನು ನುಂಗಿಬಿಟ್ಟು, ಅಡವಿಯ ಪೊದೆಗಳನ್ನು ಹತ್ತಿಕೊಳ್ಳಲು, ಅದು ಹೊಗೆ ಹೊಗೆಯಾಗಿ ಸುತ್ತಿಕೊಂಡು ಮೇಲಕ್ಕೆ ಏರುತ್ತದೆ.
ISA 9:19 ಸೇನಾಧೀಶ್ವರ ಯೆಹೋವ ದೇವರ ಕೋಪದಿಂದ ದೇಶವು ಒಣಗಿಹೋಗಿದೆ, ಜನರು ಉರಿಯುವ ಸೌದೆಯಂತಿದ್ದಾರೆ. ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ.
ISA 9:20 ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು ತಿಂದರೂ ಹಸಿದೇ ಇರುವನು, ಅವನು ಎಡಗಡೆಯಲ್ಲಿರುವುದನ್ನು ತಿಂದರೂ ಅವು ಅವನನ್ನು ತೃಪ್ತಿಪಡಿಸಲಾರವು. ಒಬ್ಬೊಬ್ಬನೂ ತನ್ನ ನೆರೆಯವನನ್ನು ಹಾನಿ ಮಾಡುತ್ತಿದ್ದಾನೆ.
ISA 9:21 ಹೀಗೆ ಮನಸ್ಸೆಯು ಎಫ್ರಾಯೀಮನ್ನು ಮತ್ತು ಎಫ್ರಾಯೀಮು ಮನಸ್ಸೆಯನ್ನು ಹಾನಿ ಮಾಡುತ್ತಿವೆ. ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
ISA 10:1 ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಕಾನೂನುಗಳನ್ನು ಬರೆಯುವವರಿಗೆ ಕಷ್ಟ!
ISA 10:2 ಇವರು ವಿಧವೆಯರನ್ನು ಸೂರೆಮಾಡಿ, ದಿಕ್ಕಿಲ್ಲದವರಿಂದ ಸುಲಿದುಕೊಂಡು ದೀನರಿಗೆ ನ್ಯಾಯವನ್ನು ತಪ್ಪಿಸಿ, ನನ್ನ ಜನರಲ್ಲಿ ಬಡವರ ನ್ಯಾಯವನ್ನು ತೆಗೆಯಬೇಕೆಂದಿದ್ದಾರೆ.
ISA 10:3 ವಿಚಾರಣೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?
ISA 10:4 ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ, ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
ISA 10:5 “ಅಯ್ಯೋ, ನನ್ನ ಕೋಪದ ಕೋಲಾದ ಅಸ್ಸೀರಿಯವೇ, ನನ್ನ ಕೈಯಲ್ಲಿರುವ ಬೆತ್ತವು ನನ್ನ ಕೋಪವೇ.
ISA 10:6 ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.
ISA 10:7 ಅದರ ಅಭಿಪ್ರಾಯವೋ ಹಾಗಲ್ಲ. ಅದರ ಹೃದಯವು ಈ ಪ್ರಕಾರ ಆಲೋಚಿಸುವುದಿಲ್ಲ. ಜನಾಂಗಗಳನ್ನು ಕಡಿದುಬಿಡುವುದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವುದು ಅದರ ಹೃದಯದ ಉದ್ದೇಶವು.
ISA 10:8 ಏಕೆಂದರೆ ಅವನು, ‘ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?
ISA 10:9 ಕಲ್ನೋ, ಕರ್ಕೆಮೀಷಿನ ಹಾಗಲ್ಲವೋ? ಹಮಾತ್ ಅರ್ಪಾದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗಲ್ಲವೋ?
ISA 10:10 ಯೆರೂಸಲೇಮಿನಲ್ಲಿಯೂ ಸಮಾರ್ಯದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ,
ISA 10:11 ನಾನು ಸಮಾರ್ಯ ಮತ್ತು ಅದರ ವಿಗ್ರಹಗಳಿಗೆ ಮಾಡಿದಂತೆಯೇ ಯೆರೂಸಲೇಮಿಗೆ ಮತ್ತು ಅದರ ವಿಗ್ರಹಗಳಿಗೆ ಮಾಡುತ್ತೇನೆಯೇ?’ ”
ISA 10:12 ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”
ISA 10:13 ಏಕೆಂದರೆ ಅಸ್ಸೀರಿಯ ತನ್ನೊಳಗೆ ಹೀಗೆ ಅಂದುಕೊಂಡನು, “ ‘ನನ್ನ ಕೈಯ ಬಲದಿಂದಲೂ ನನ್ನ ಜ್ಞಾನದಿಂದಲೂ ಅದನ್ನು ಮಾಡಿದೆ. ಏಕೆಂದರೆ, ನಾನು ವಿವೇಕಿ. ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿಗಳನ್ನು ಕೊಳ್ಳೆಹೊಡೆದು, ಅದರ ಅರಸರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
ISA 10:14 ಜನರ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ; ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಕೂಡಿಸುವಂತೆ, ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬಾಯಿತೆರೆದು ಕೀಚುಗುಟ್ಟಲು ಯಾರೂ ಇರಲಿಲ್ಲ.’ ”
ISA 10:15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿಕೊಂಡೀತೆ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಕೋಲು ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ಬೆತ್ತ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
ISA 10:16 ಆದಕಾರಣ ಸೇನಾಧೀಶ್ವರ ಯೆಹೋವ ದೇವರು ಅವನ ಕೊಬ್ಬಿದ ಯೋಧರಿಗೆ ಕ್ಷಯವನ್ನು ಉಂಟುಮಾಡುವರು, ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವುದು.
ISA 10:17 ಇಸ್ರಾಯೇಲಿನ ಬೆಳಕು ಬೆಂಕಿಯಾಗುವುದು, ಅದರ ಪರಿಶುದ್ಧರು ಜ್ವಾಲೆಯಂತಿರುವರು, ಅದು ಒಂದೇ ದಿನದಲ್ಲಿ ಅವನ ಮುಳ್ಳು, ದತ್ತೂರಿಗಳನ್ನು ದಹಿಸಿ ನುಂಗಿಬಿಡುವುದು.
ISA 10:18 ದೇಹಾತ್ಮದಂಥ ಅದರ ಉದ್ಯಾನವನವನ್ನೂ, ಫಲಭರಿತ ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
ISA 10:19 ಅವನ ಉಳಿದ ವನವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆಯಾಗಿರುವುದು.
ISA 10:20 ಆ ದಿನದಲ್ಲಿ ಇಸ್ರಾಯೇಲರಲ್ಲಿ ಉಳಿದವರೂ, ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು, ಇಸ್ರಾಯೇಲಿನ ಪರಿಶುದ್ಧರಾದ ಯೆಹೋವ ದೇವರ ಸತ್ಯವಾಗಿ ಆಧಾರಮಾಡಿಕೊಳ್ಳುವರು.
ISA 10:21 ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ಹಿಂದಿರುಗುವರು.
ISA 10:22 ತಮ್ಮ ಜನರಾದ ಇಸ್ರಾಯೇಲರು ಸಮುದ್ರದ ಉಸುಬಿನಂತಿದ್ದರೂ, ಅವರಲ್ಲಿ ಉಳಿದವರು ಮಾತ್ರ ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು; ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು.
ISA 10:23 ಏಕೆಂದರೆ ಸೇನಾಧೀಶ್ವರ ಯೆಹೋವ ದೇವರೆಂಬ ಕರ್ತ ಆಗಿರುವವರು, ಎಲ್ಲಾ ದೇಶದ ಮಧ್ಯದಲ್ಲಿ ತಿಳಿಸಿದ ವಿನಾಶವನ್ನು ಉಂಟುಮಾಡುವರು.
ISA 10:24 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರಂತೆ ನಿಮ್ಮನ್ನು ಕೋಲಿನಿಂದ ಹೊಡೆದು, ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಸ್ಸೀರಿಯದವರಿಗೆ ಭಯಪಡಬೇಡಿರಿ.
ISA 10:25 ನನ್ನ ಕೋಪವು ಅವರ ದಂಡನೆಗಾಗುವುದು; ಆದ್ದರಿಂದ ಇನ್ನು ಸ್ವಲ್ಪಕಾಲದಲ್ಲಿ ಕೋಪವು ತೀರಿಹೋಗುವುದು.
ISA 10:26 ಸೇನಾಧೀಶ್ವರ ಯೆಹೋವ ದೇವರು ಓರೇಬ್ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ, ಅವರು ಕೋಲನ್ನು ಸಮುದ್ರದ ಮೇಲೆ ಚಾಚಿ, ಈಜಿಪ್ಟಿನವರ ಮೇಲೆ ಎತ್ತಿದಂತೆ ಎತ್ತುವರು.
ISA 10:27 ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವುದು ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
ISA 10:28 ಅವರು ಅಯ್ಯಾಥಿಗೆ ಬಂದರು. ಮಿಗ್ರೋನನ್ನು ಹಾದು ಹೋಗಿ, ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟಿದ್ದಾರೆ.
ISA 10:29 ಅವರು ಕಣಿವೆಯನ್ನು ದಾಟಿದ್ದಾರೆ; ಗಿಬೆಯದಲ್ಲಿ ಇಳುಕೊಂಡಿದ್ದಾರೆ. ರಾಮಾ ಜನತೆ ಹೆದರುತ್ತಿದೆ; ಸೌಲನ ಗಿಬೆಯದ ಜನತೆ ಓಡಿಹೋಗಿದೆ.
ISA 10:30 ಗಲ್ಲೀಮ್ ಮಗಳೇ, ನಿನ್ನ ಸ್ವರವೆತ್ತಿ ಕೂಗು; ಬಡ ಅನಾತೋತೇ, ಲಯೆಷಿನವರೆಗೂ ಕೇಳಿಸುವಂತೆ ಕೂಗು.
ISA 10:31 ಮದ್ಮೇನ ದಿಕ್ಕುಪಾಲಾಯಿತು. ಗೆಬೀಮಿನ ನಿವಾಸಿಗಳು ಓಡಿಹೋಗಲು ಕೂಡಿಕೊಂಡರು.
ISA 10:32 ಆ ದಿನದಲ್ಲಿ ಅವರು ನೋಬಿನಲ್ಲಿ ಇಳಿದುಕೊಳ್ಳುವರು. ಚೀಯೋನ್ ನಗರಿಯ ಪರ್ವತದ ಕಡೆಗೆ, ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
ISA 10:33 ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು, ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
ISA 10:34 ಅವರು ಅಡವಿಯ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನು ಪರಾಕ್ರಮಿಯಾಗಿರುವವರ ಮುಂದೆ ಬಿದ್ದುಹೋಗುವುದು.
ISA 11:1 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಕೊಂಬೆಯು ಫಲಕೊಡುವುದು.
ISA 11:2 ಅವನ ಮೇಲೆ ಯೆಹೋವ ದೇವರ ಆತ್ಮ, ಜ್ಞಾನ ಮತ್ತು ವಿವೇಕದಾಯಕ ಆತ್ಮ, ಸಮಾಲೋಚನೆ ಮತ್ತು ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆ ಮತ್ತು ಯೆಹೋವ ದೇವರ ಭಯದ ಆತ್ಮ,
ISA 11:3 ಅವರು ಯೆಹೋವ ದೇವರ ಭಯದಲ್ಲಿ ಆನಂದಿಸುವರು. ಅವರು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ತಮ್ಮ ಕಿವಿಗಳ ಕೇಳ್ವಿಕೆಯ ಪ್ರಕಾರವೂ ತೀರ್ಪು ಮಾಡುವುದಿಲ್ಲ.
ISA 11:4 ಆದರೆ ಭೂಮಿಯ ಬಡವರಿಗೆ ನೀತಿಯಿಂದ ನ್ಯಾಯತೀರಿಸುವರು. ಭೂಲೋಕದ ದೀನರಿಗೆ ನ್ಯಾಯವಾಗಿ ತೀರ್ಪುಮಾಡುವರು, ಭೂಮಿಯನ್ನು ತಮ್ಮ ಬಾಯಿಯ ಕೋಲಿನಿಂದ ಹೊಡೆಯುವರು. ತಮ್ಮ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವರು.
ISA 11:5 ನೀತಿಯೇ ಅವರಿಗೆ ನಡುಕಟ್ಟು, ನಂಬಿಗಸ್ತಿಕೆಯೇ ಅವರ ಸೊಂಟದ ಪಟ್ಟಿ.
ISA 11:6 ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆ ಮರಿಯೊಂದಿಗೆ ಮಲಗುವುದು; ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವುವು; ಇವುಗಳನ್ನು ಒಂದು ಪುಟ್ಟ ಮಗುವು ನಡೆಸುವುದು.
ISA 11:7 ಹಸುವು ಕರಡಿಯ ಸಂಗಡ ಮೇಯುವುವು; ಅವುಗಳ ಮರಿಗಳು ಜೊತೆಯಾಗಿ ಮಲಗುವುವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯುವುದು.
ISA 11:8 ಹಸುಳೆಯು ನಾಗರ ಹಾವಿನ ಹುತ್ತದ ಮೇಲೆ ಆಡುವುದು ಮತ್ತು ಪುಟ್ಟ ಮಗುವು ಹಾವಿನ ಬಿಲದ ಒಳಗೆ ಕೈ ಹಾಕುವುದು.
ISA 11:9 ನನ್ನ ಪರಿಶುದ್ಧ ಪರ್ವತದಲ್ಲಿ ಯಾರೂ ಕೇಡುಮಾಡುವುದಿಲ್ಲ, ಯಾರೂ ಹಾಳುಮಾಡುವುದಿಲ್ಲ. ಏಕೆಂದರೆ ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
ISA 11:10 ಆ ದಿನದಲ್ಲಿ ಇಷಯನ ವಂಶದಿಂದ ಜನರಿಗೆ ಒಂದು ಬೇರು ಗುರುತಿನ ಧ್ವಜವಾಗಿ ನಿಲ್ಲುವುದು. ಅವರ ವಿಶ್ರಾಂತಿ ಸ್ಥಳವು ಮಹಿಮೆಯುಳ್ಳದ್ದಾಗಿರುವುದು.
ISA 11:11 ಆ ದಿನದಲ್ಲಿ ಯೆಹೋವ ದೇವರು ಉಳಿದ ತಮ್ಮ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೇ ಸಾರಿ ಕೈಹಾಕಿ ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾತ್ ಮತ್ತು ಮೆಡಿಟರೇನಿಯನ್ ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವರು.
ISA 11:12 ಜನಾಂಗಗಳಿಗೆ ಗುರುತಾಗಿ ಧ್ವಜವನ್ನೆತ್ತಿ ಇಸ್ರಾಯೇಲಿನಿಂದ ತಳ್ಳಿಬಿಟ್ಟವರನ್ನು ಕೂಡಿಸುವನು. ಯೆಹೂದದಿಂದ ಚದರಿದವರನ್ನು ಭೂಮಿಯ ನಾಲ್ಕು ಕಡೆಗಳಿಂದ ಒಟ್ಟುಗೂಡಿಸುವನು.
ISA 11:13 ಎಫ್ರಾಯೀಮಿನ ಹೊಟ್ಟೆಕಿಚ್ಚು ತೊಲಗಿ, ಯೆಹೂದದ ವಿರೋಧಿಗಳು ಇಲ್ಲದಂತಾಗುವರು. ಹೀಗೆ ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚು ಪಡುವುದಿಲ್ಲ; ಯೆಹೂದವು ಎಫ್ರಾಯೀಮಿಗೆ ವಿರೋಧವಾಗಿರುವುದಿಲ್ಲ.
ISA 11:14 ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಟಿಯರ ಇಳಿಜಾರು ಪ್ರದೇಶದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆ ಮಾಡುವರು, ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ದಾಳಿಮಾಡುವರು ಮತ್ತು ಅಮ್ಮೋನಿಯರು ಅವರಿಗೆ ಅಧೀನರಾಗುವರು.
ISA 11:15 ಯೆಹೋವ ದೇವರು ಈಜಿಪ್ಟಿನ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ತೆಗೆದುಹಾಕುವರು, ಅವರು ತಮ್ಮ ಉಷ್ಣಗಾಳಿಯಿಂದ ಯೂಫ್ರೇಟೀಸ್ ನದಿಯ ಮೇಲೆ ಕೈಯನ್ನು ಝಾಡಿಸಿ, ಅದನ್ನು ಏಳು ಹೊಳೆಗಳಾಗಿ ಒಡೆದು, ಮನುಷ್ಯರ ಕೆರಗಳು ನೆನೆಯದಂತೆ ದಾಟಿಸುವರು.
ISA 11:16 ಇದಲ್ಲದೆ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟು ಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಸ್ಸೀರಿಯದಿಂದ ತಪ್ಪಿಸಿಕೊಂಡು ಬರುವ ತಮ್ಮ ಉಳಿದ ಜನರಿಗೆ ವಿಶಾಲವಾದ ಮಾರ್ಗವು ಇರುವುದು.
ISA 12:1 ಆ ದಿನದಲ್ಲಿ ನೀನು ಹೇಳುವುದೇನೆಂದರೆ: “ಯೆಹೋವ ದೇವರೇ, ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುವೆನು; ನೀವು ನನ್ನ ಮೇಲೆ ಕೋಪಗೊಂಡಿದ್ದರೂ, ಆ ನಿಮ್ಮ ಕೋಪವು ಪರಿಹಾರವಾಗಿ ನನ್ನನ್ನು ಸಂತೈಸುತ್ತೀರಲ್ಲವೆ?
ISA 12:2 ನಿಜವಾಗಿಯೂ ದೇವರೇ ನನಗೆ ರಕ್ಷಣೆಯು, ನಾನು ಭರವಸವಿಡುವೆನು ಮತ್ತು ಭಯಪಡೆನು. ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ, ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.”
ISA 12:3 ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
ISA 12:4 ಆ ದಿನದಲ್ಲಿ ನೀವು ಹೀಗೆ ಹೇಳುವಿರಿ, “ಯೆಹೋವ ದೇವರನ್ನು ಕೊಂಡಾಡಿರಿ. ಅವರ ಹೆಸರನ್ನೆತ್ತಿ ಜನರ ಮಧ್ಯದಲ್ಲಿ ಅವರ ಕ್ರಿಯೆಗಳನ್ನು ಪ್ರಕಟಿಸಿರಿ. ಅವರ ನಾಮವನ್ನು ಉನ್ನತೋನ್ನತವೆಂದು ಎತ್ತಿ ಹೇಳಿರಿ.
ISA 12:5 ಯೆಹೋವ ದೇವರಿಗೆ ಹಾಡಿರಿ. ಏಕೆಂದರೆ, ಅವರು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾರೆ. ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.
ISA 12:6 ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ. ಏಕೆಂದರೆ, ಇಸ್ರಾಯೇಲಿನ ಪರಿಶುದ್ಧರು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವರಾಗಿದ್ದಾರೆ.”
ISA 13:1 ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ:
ISA 13:2 ಶತ್ರುಗಳು ಬಂದು ಶ್ರೇಷ್ಠರ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
ISA 13:3 ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ, ನನ್ನ ಜಯದಲ್ಲಿ ಉಲ್ಲಾಸಿಸುವವರನ್ನೂ, ನನ್ನ ಶೂರರನ್ನೂ ಸಹ ನನ್ನ ಕೋಪವನ್ನು ತೆಗೆದುಕೊಂಡು ಹೋಗಲು ಕರೆದಿದ್ದೇನೆ.
ISA 13:4 ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ. ಒಟ್ಟಿಗೆ ಕೂಡಿಕೊಂಡ ರಾಜ್ಯಗಳ ಜನಾಂಗಗಳ ಆರ್ಭಟ, ಸೇನಾಧೀಶ್ವರ ಯೆಹೋವ ದೇವರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾರೆ.
ISA 13:5 ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.
ISA 13:6 ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.
ISA 13:7 ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.
ISA 13:8 ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.
ISA 13:9 ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.
ISA 13:10 ಏಕೆಂದರೆ, ಆಕಾಶದ ನಕ್ಷತ್ರಗಳು ಮತ್ತು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವುದಿಲ್ಲ.
ISA 13:11 ಅವರ ಕೆಟ್ಟ ಕಾರ್ಯಗಳಿಗೋಸ್ಕರವೂ, ದುಷ್ಟರ ಅಪರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸುವೆನು, ಗರ್ವಿಷ್ಠರ ಅಹಂಕಾರವನ್ನು ನಿಲ್ಲಿಸಿಬಿಡುವೆನು. ಭಯಂಕರವಾದವರ ಹೆಮ್ಮೆಯನ್ನು ತಗ್ಗಿಸುವೆನು.
ISA 13:12 ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ, ಓಫೀರ್ ಬಂಗಾರಕ್ಕಿಂತಲೂ ಜನರು ವಿರಳವಾಗಿರುವಂತೆ ಮಾಡುವೆನು.
ISA 13:13 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರ ಕೋಪವೂ, ಅವರ ತೀಕ್ಷ್ಣರೋಷವೂ ಪ್ರಕಟವಾಗುವ ಆ ದಿನದಂದು, ಆಕಾಶಮಂಡಲ ನಡುಗುವುದು. ಭೂಮಂಡಲ ಅದರ ಸ್ಥಳದಿಂದ ಕದಲುವುದು.
ISA 13:14 ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.
ISA 13:15 ಸಿಕ್ಕಿದ ಪ್ರತಿಯೊಬ್ಬನೂ ಇರಿತಕ್ಕೆ ಗುರಿಯಾಗುವನು. ಅಟ್ಟಿಹಿಡಿಯಲಾದ ಪ್ರತಿಯೊಬ್ಬನೂ ಖಡ್ಗಕ್ಕೆ ತುತ್ತಾಗುವನು.
ISA 13:16 ಅವರ ಮಕ್ಕಳೂ ಸಹ ಅವರ ಕಣ್ಣೆದುರಿಗೆ ಹತರಾಗುವರು. ಅವರ ಮನೆಗಳು ಸೂರೆಮಾಡಲಾಗುವುದು. ಅವರ ಹೆಂಡತಿಯರು ಅತ್ಯಾಚಾರಕ್ಕೆ ಈಡಾಗುವರು.
ISA 13:17 ಇಗೋ, ಬೆಳ್ಳಿಯನ್ನು ಲಕ್ಷಿಸದೆ, ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧವಾಗಿ ನಾನು ಎಬ್ಬಿಸುವೆನು.
ISA 13:18 ಅವರ ಬಿಲ್ಲುಗಳು ಸಹ ಯುವಕರನ್ನು ಸಂಹರಿಸುವುವು. ಇವರು ಹಸುಳೆಗಳನ್ನು ಕರುಣಿಸರು. ಇವರು ಮಕ್ಕಳನ್ನು ಕನಿಕರಿಸುವುದಿಲ್ಲ.
ISA 13:19 ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.
ISA 13:20 ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.
ISA 13:21 ಆದರೆ ಕಾಡುಮೃಗಗಳು ಅಲ್ಲಿ ಮಲಗುವುವು. ಅವರ ಮನೆಗಳು ನರಿಗಳಿಂದ ತುಂಬಿರುವುವು, ಅಲ್ಲಿ ಗೂಬೆಗಳು ವಾಸಿಸುವುವು ಮತ್ತು ಕಾಡುಮೇಕೆಗಳು ಅಲ್ಲಿ ಕುಣಿದಾಡುವುವು.
ISA 13:22 ಅವರ ಕೋಣೆಗಳಲ್ಲಿ ತೋಳಗಳು ಕೂಗುವುವು, ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ನರಿಗಳು ವಾಸಿಸುವುವು. ಬಾಬಿಲೋನಿಗೆ ಕಾಲವು ಸಮೀಪಿಸಿತು. ಇನ್ನು ಅದರ ದಿನಗಳು ಮುಂದುವರಿಯುವುದಿಲ್ಲ.
ISA 14:1 ಯೆಹೋವ ದೇವರು ಯಾಕೋಬ್ಯರನ್ನು ಕರುಣಿಸುವರು. ಇಸ್ರಾಯೇಲರನ್ನು ಪುನಃ ಆಯ್ದುಕೊಳ್ಳುವರು. ಅವರನ್ನು ಅವರ ಸ್ವಂತ ದೇಶದಲ್ಲಿ ಸೇರಿಸುವರು. ಪರದೇಶದವರು ಅವರೊಂದಿಗೆ ಕೂಡಿಬಂದು, ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
ISA 14:2 ದೇಶಗಳು ಇನ್ನೊಮ್ಮೆ ಅವರನ್ನು ತೆಗೆದುಕೊಂಡು ಅವನ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಯೆಹೋವ ದೇವರ ದೇಶದಲ್ಲಿ, ಆ ಜನಾಂಗದವರನ್ನು ಗಂಡು ಹೆಣ್ಣುಗಳನ್ನಾಗಿ ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದವರನ್ನು ಸೆರೆಹಿಡಿಯುವರು. ತಮ್ಮನ್ನು ದಬ್ಬಾಳಿಕೆಗಾರರ ಮೇಲೆ ಅಧಿಕಾರ ನಡೆಸುವರು.
ISA 14:3 ಯೆಹೋವ ದೇವರು ನಿಮ್ಮ ಸಂಕಟದಿಂದಲೂ, ಕಳವಳದಿಂದಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ
ISA 14:4 ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬಿಲೋನಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: ಹೀಗೆ ದಬ್ಬಾಳಿಕೆಗಾರನು ಕೊನೆಗೊಂಡನು. ಅವನ ಕೋಪ ಹೀಗೆ ಮುಗಿಯಿತು.
ISA 14:5 ಆಳುತ್ತಿದ್ದ ದುಷ್ಟರ ಕೋಲನ್ನೂ, ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು.
ISA 14:6 ಆ ಅಧಿಪತಿಗಳು ಕಡುಕೋಪದಿಂದ ಎಡೆಬಿಡದೆ ಜನರನ್ನು ದಂಡಿಸಿ, ನಿಲ್ಲದ ದಬ್ಬಾಳಿಕೆಯಿಂದ ರಾಷ್ಟ್ರಗಳನ್ನು ಅಧೀನಪಡಿಸಿಕೊಂಡಿದ್ದರು.
ISA 14:7 ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ. ಅವರು ಉಲ್ಲಾಸದ ಧ್ವನಿಯಿಂದ ಹಾಡುತ್ತಾರೆ.
ISA 14:8 ತುರಾಯಿ ಮರಗಳೂ, ಲೆಬನೋನಿನ ದೇವದಾರು ಮರಗಳೂ, “ಈಗ ನೀನು ಬಿದ್ದದ್ದರಿಂದ ನಮ್ಮನ್ನು ಕಡಿಯಲು ಯಾರೂ ಬರುವುದಿಲ್ಲ,” ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
ISA 14:9 ನಿನಗೋಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವುದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವರನ್ನು ಎಂದರೆ, ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರ ಆತ್ಮಗಳನ್ನು ಕಲಕಿ ಎಚ್ಚರಿಸಿ, ಜನಾಂಗಗಳ ಎಲ್ಲಾ ರಾಜರನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
ISA 14:10 ಅವರೆಲ್ಲರು, “ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ. ನೀನು ನಮ್ಮ ಸಮಾನನಾಗಿದ್ದೀ,” ಎಂದು ಮಾತನಾಡಿ ಹೇಳುವರು.
ISA 14:11 ನಿನ್ನ ವೈಭವವೂ, ನಿನ್ನ ವೀಣೆಗಳ ಸ್ವರವೂ ಸಮಾಧಿಗೆ ಇಳಿದಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ.
ISA 14:12 ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಬಿದ್ದೆ?
ISA 14:13 ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ, “ನಾನು ಆಕಾಶಕ್ಕೆ ಏರಿ, ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು. ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ ನಾನು ಆಸೀನನಾಗುವೆನು.
ISA 14:14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ, ಮಹೋನ್ನತರಿಗೆ ಸಮಾನನಾಗುವೆನು.”
ISA 14:15 ಆದರೆ ಪಾತಾಳದ ಕುಣಿಯ ಕಡೆಗೂ, ಸಮಾಧಿಗೂ ಇಳಿಯುವೆ.
ISA 14:16 ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ, ನಿನ್ನ ಗತಿಯನ್ನು ಯೋಚಿಸುತ್ತಾ, “ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ,
ISA 14:17 ಲೋಕವನ್ನು ಕಾಡನ್ನಾಗಿ ಮಾಡಿ, ನಗರಗಳನ್ನು ಕೆಡವಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಇವನೋ?” ಎಂದುಕೊಳ್ಳುವರು.
ISA 14:18 ಜನಾಂಗಗಳ ಅರಸರೆಲ್ಲಾ ವೈಭವದಿಂದ ತಮ್ಮ ತಮ್ಮ ಸಮಾಧಿಗಳಲ್ಲಿ ಮಲಗುತ್ತಾರೆ.
ISA 14:19 ಆದರೆ ನೀನು ತಿರಸ್ಕರಿಸಿದ ಕೊಂಬೆಯಂತೆಯೂ, ಖಡ್ಗ ತಿವಿದು ಕಲ್ಲುಗುಂಡಿಗೆ ಪಾಲಾದ ಹೆಣಗಳ ಹೊದಿಕೆಯಂತೆಯೂ, ಪರರ ತುಳಿತಕ್ಕೆ ಈಡಾಗಿ, ಸಮಾಧಿಯೊಳಗಿಂದ ಹೊರಗೆ ಬಿಸಾಡಿರುವ ಶವದ ಹಾಗಿದ್ದೀ.
ISA 14:20 ನೀನು ಆ ರಾಜರಂತೆ ಸಮಾಧಿಗೆ ಸೇರದಿರುವಿ. ಏಕೆಂದರೆ ನಿನ್ನ ದೇಶವನ್ನು ನೀನು ನಾಶಮಾಡಿ, ನಿನ್ನ ಜನರನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಲಿ.
ISA 14:21 ಅವರು ಏಳದೆ ಇಲ್ಲವೆ ದೇಶವನ್ನು ವಶಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ, ಅವರ ತಂದೆಗಳ ಅಪರಾಧದ ನಿಮಿತ್ತ, ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ.
ISA 14:22 “ಅವರಿಗೆ ವಿರುದ್ಧವಾಗಿ ಏಳುತ್ತೇನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 14:23 “ಅದನ್ನು ಮುಳ್ಳುಹಂದಿಗಳ ನಿವಾಸವಾಗಿಯೂ, ಕೊಳಚೆ ಪ್ರದೇಶವನ್ನಾಗಿಯೂ ಪರಿವರ್ತಿಸುವೆನು. ನಾಶನದ ಕಸಬರಿಗೆಯಿಂದ ಅದನ್ನು ಗುಡಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ISA 14:24 ಸೇನಾಧೀಶ್ವರ ಯೆಹೋವ ದೇವರು ಆಣೆ ಇಟ್ಟು ಹೇಳುವುದೇನೆಂದರೆ, “ನಾನು ಯೋಚಿಸಿದ ರೀತಿಯಲ್ಲಿ ಖಂಡಿತವಾಗಿ ಆಗುವುದು. ನಾನು ಉದ್ದೇಶಿಸಿದ ರೀತಿಯಲ್ಲಿಯೇ ನೆರವೇರುವುದು.
ISA 14:25 ಅಸ್ಸೀರಿಯವನ್ನು ನನ್ನ ದೇಶದಲ್ಲಿ ಮುರಿದುಬಿಡುವೆನು. ನನ್ನ ಪರ್ವತಗಳ ಮೇಲೆ ಅವರನ್ನು ತುಳಿದುಬಿಡುವೆನು. ಅವನ ನೊಗವು ನನ್ನ ಜನರ ಮೇಲಿಂದ ತೊಲಗಿ, ಅವರ ಭಾರವು ಅವರ ಭುಜಗಳ ಮೇಲಿನಿಂದ ತೊಲಗುವುದು.”
ISA 14:26 ಇದೇ ಸಮಸ್ತ ಭೂಮಿಯ ವಿಷಯ ಆಲೋಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.
ISA 14:27 ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಉದ್ದೇಶಿಸಿದ್ದಾರೆ. ಅದನ್ನು ಯಾರು ವ್ಯರ್ಥಪಡಿಸುವರು? ಅವರು ಎತ್ತಿದ ಕೈಯನ್ನು, ಹಿಂದಕ್ಕೆ ತಳ್ಳುವವರು ಯಾರು? ಎಂಬುದೇ.
ISA 14:28 ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೈವೋಕ್ತಿ ಬಂದಿತು:
ISA 14:29 ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ನೀವು ಉಲ್ಲಾಸಿಸಬೇಡಿರಿ. ಏಕೆಂದರೆ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಫಲವು ಹಾರುವ ವಿಷಸರ್ಪವೇ.
ISA 14:30 ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು. ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು. ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು. ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು.
ISA 14:31 ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಫಿಲಿಷ್ಟಿಯರೇ ಕರಗಿ ಹೋಗಿರಿ. ಹೊಗೆಯು ಉತ್ತರದಿಂದ ಬರುತ್ತದೆ. ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ.
ISA 14:32 ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡಬೇಕು? “ಯೆಹೋವ ದೇವರು ಚೀಯೋನನ್ನು ಸ್ಥಾಪಿಸಿದ್ದಾರೆ. ಬಾಧೆಪಟ್ಟ ಅವರ ಜನರು ಅದನ್ನು ಆಶ್ರಯಿಸಿಕೊಳ್ಳುವರು.”
ISA 15:1 ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು.
ISA 15:2 ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.
ISA 15:3 ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕದಿಂದ ಗೋಳಾಡುವನು.
ISA 15:4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ. ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು. ಅವರ ಹೃದಯಗಳು ತತ್ತರಿಸುತ್ತವೆ.
ISA 15:5 ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. ಲೂಹೀತ್ ದಿಣ್ಣೆಯನ್ನು ಅಳುತ್ತಾ ಹತ್ತುವರು. ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ದನಿಗೈಯುವರು.
ISA 15:6 ನಿಮ್ರೀಮ್ ಹೊಳೆಯು ಬತ್ತಿಹೋಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು ಅಲ್ಲಿ ಹಸಿರಾದದ್ದು ಇಲ್ಲ.
ISA 15:7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
ISA 15:8 ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. ಅದರ ಕಿರಿಚಾಟ ಎಗ್ಲಯಿಮ್ ಹಾಗೂ ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ.
ISA 15:9 ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು. ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು. ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.
ISA 16:1 ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಯನ್ನು ಸೆಲ ಬಂಡೆಯಿಂದ ಮರುಭೂಮಿಯ ಕಡೆಗೆ, ಚೀಯೋನ್ ಪುತ್ರಿಯರ ಪರ್ವತಕ್ಕೆ ಕಳುಹಿಸಿರಿ.
ISA 16:2 ಗೂಡಿನಿಂದ ಹೊರಗೆ ಬಂದ ಹಕ್ಕಿಗಳ ಮರಿಗಳಂತೆ ಅಲೆದಾಡುವ ಹಾಗೆ, ಮೋವಾಬಿನ ಪುತ್ರಿಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.
ISA 16:3 ಆಲೋಚಿಸಿ, ತೀರ್ಮಾನಿಸಿರಿ. ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳನ್ನು ರಾತ್ರಿಯಂತೆ ಮಾಡಿರಿ. ವಲಸಿಗರನ್ನು ಅಡಗಿಸಿರಿ. ಅಲೆಯುವವರನ್ನು ಬಯಲಿಗೆ ತರಬೇಡ.
ISA 16:4 ಮೋವಾಬ್ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ. ವಿನಾಶಕರಿಗೆ ವಶವಾಗದಂತೆ ಅವರಿಗೆ ಆಶ್ರಯ ನೀಡಿರಿ. ದಬ್ಬಾಳಿಕೆ ಮುಗಿಯುತ್ತಾ ಬಂತು. ಸೂರೆಮಾಡುವುದು ನಿಲ್ಲುವುದು, ಪೀಡಿಸುವವರು ದೇಶದಿಂದ ಅಳಿದುಹೋಗುವರು.
ISA 16:5 ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು.
ISA 16:6 ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ. ಆಕೆಗೆ ಬಹಳ ಗರ್ವ. ಆಕೆಯ ಅಹಂಕಾರವು, ಆಕೆಯ ಗರ್ವವು ಮತ್ತು ಆಕೆಗೆ ಕೋಪವು ಸಹ ಉಂಟು. ಆದರೆ ಆಕೆಯ ಕೊಚ್ಚಿಕೊಳ್ಳುವಿಕೆ ಬರಿದಾದದ್ದು.
ISA 16:7 ಆದ್ದರಿಂದ ಮೋವಾಬಿನ ನಿಮಿತ್ತ ಮೋವಾಬ್ಯರು ಗೋಳಾಡುವರು, ಒಟ್ಟಾಗಿ ಗೋಳಾಡುವರು. ಏಕೆಂದರೆ ಕೀರ್ ಹರೆಷೆಥಿನ ದ್ರಾಕ್ಷಿಯ ಕಡುಬುಗಳಿಗೋಸ್ಕರ ನೀವು ದುಃಖಿಸುವಿರಿ. ನಿಜವಾಗಿಯೂ ಅವರು ನೊಂದು ಹೋಗಿದ್ದಾರೆ.
ISA 16:8 ಹೆಷ್ಬೋನ್ ಊರಿನ ಹೊಲ ಮತ್ತು ಸಿಬ್ಮ ಊರಿನ ದ್ರಾಕ್ಷಿ ಸಹ ನಿಸ್ಸಾರವಾಗಿವೆ. ಇತರ ಜನರ ಪ್ರಭುಗಳು ವಿಶಾಲವಾದ ದ್ರಾಕ್ಷಿಗಿಡಗಳನ್ನು ತುಳಿದು ಹಾಕಿದ್ದಾರೆ, ಆ ದ್ರಾಕ್ಷಿಗಿಡಗಳು ಯಜ್ಜೇರ್ ಊರಿನವರೆಗೂ ವ್ಯಾಪಿಸಿ, ಮರುಭೂಮಿಯಲ್ಲಿ ಹರಡಿತ್ತು. ಅದರ ಕೊಂಬೆಗಳು ಹಬ್ಬಿ, ಸಮುದ್ರದವರೆಗೆ ವಿಶಾಲವಾಗಿತ್ತು.
ISA 16:9 ಆದಕಾರಣ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರ್ ಪಟ್ಟಣದೊಂದಿಗೆ ಅಳುವೆನು. ಓ ಹೆಷ್ಬೋನ್ ಮತ್ತು ಎಲೆಯಾಲೆ ಪಟ್ಟಣಗಳೇ, ನಿಮ್ಮನ್ನು ನನ್ನ ಕಣ್ಣೀರಿನಿಂದ ತೋಯಿಸುವೆನು! ಏಕೆಂದರೆ ಶತ್ರುಗಳು ಬಿದ್ದುಹೋದ ನಿಮ್ಮ ಬೇಸಿಗೆಯ ಫಲಗಳಿಗೂ, ಬೆಳೆಗಳಿಗೂ ಆರ್ಭಟಿಸುತ್ತಾರೆ.
ISA 16:10 ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೊಲಗಿವೆ. ದ್ರಾಕ್ಷಿತೋಟಗಳಲ್ಲಿ ಕೀರ್ತನೆಗಳಾಗಲೀ, ಆರ್ಭಟವಾಗಲೀ ಇರುವದಿಲ್ಲ. ದ್ರಾಕ್ಷಿ ತೊಟ್ಟಿಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.
ISA 16:11 ಆದ್ದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವೂ, ಕೀರ್ ಹೆರೆಸೆಥ್ ನಿಮಿತ್ತ ನನ್ನ ಅಂತರಂಗವೂ ಕಿನ್ನರಿಯಂತೆ ಮಿಡಿಯುತ್ತಾ ದುಃಖಿಸುತ್ತಿದೆ.
ISA 16:12 ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು, ಅವಳ ದೇವಾಲಯಕ್ಕೆ ಪ್ರಾರ್ಥಿಸುವುದಕ್ಕೆ ಬಂದರೂ ಅದಕ್ಕೆ ಸಫಲವಾಗದು.
ISA 16:13 ಯೆಹೋವ ದೇವರು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ:
ISA 16:14 ಆದರೆ ಈಗ ಯೆಹೋವ ದೇವರು ಮಾತನಾಡಿ, “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರುಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ದೊಡ್ಡ ಜನಸಂಖ್ಯೆಯಲ್ಲಿ ಅಳಿದುಉಳಿಯುವವರು ಬಲಹೀನರಾದ ಕೆಲವು ಜನರಾಗಿರುವರು,” ಎಂದು ಹೇಳಿದ್ದಾರೆ.
ISA 17:1 ದಮಸ್ಕದ ವಿಷಯವಾದ ಪ್ರವಾದನೆ: ಇಗೋ, ದಮಸ್ಕವು ಇನ್ನು ಪಟ್ಟಣವಾಗಿರದೆ ಅದು ಹಾಳು ದಿಬ್ಬವಾಗಿರುವುದು.
ISA 17:2 ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, ಅವು ಯಾರ ಹೆದರಿಕೆಯೂ ಇಲ್ಲದೆ ಮಲಗುವ ಮಂದೆಗಳಿಗೆ ಸ್ಥಳವಾಗುವುವು.
ISA 17:3 ಎಫ್ರಾಯೀಮಿನಿಂದ ಕೋಟೆಯೂ, ದಮಸ್ಕದ ರಾಜ್ಯಾಧಿಕಾರವೂ, ಅರಾಮ್ಯರಲ್ಲಿ ಉಳಿದವುಗಳೂ ಸಹ ಇಲ್ಲವಾಗಿ ಹೋಗುವುವು. ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರುವರು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ISA 17:4 ಆ ದಿವಸದಲ್ಲಿ ಯಾಕೋಬ್ಯರ ವೈಭವ ತಗ್ಗುವುದು. ಅವರ ಕೊಬ್ಬು ಕರಗುವುದು.
ISA 17:5 ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ, ರೆಫಾಯಿಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವುದು.
ISA 17:6 ಆದರೂ ಎಣ್ಣೆಮರವನ್ನು ಅಲ್ಲಾಡಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ ಎರಡು ಮೂರು ಕಾಯಿಗಳಿರುವುವು. ಅದರ ಫಲವತ್ತಾದ ಆ ಮರದ ರೆಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿದಿರುವುವು. ಅದೇ ರೀತಿಯಾಗಿ, ಇಸ್ರಾಯೇಲರಲ್ಲಿ ಕೆಲವರು ಮಾತ್ರ ಉಳಿದಿರುವರು, ಎಂದು ಇಸ್ರಾಯೇಲಿನ ಯೆಹೋವ ದೇವರು ಹೇಳುತ್ತಾರೆ.
ISA 17:7 ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು.
ISA 17:8 ಅವರು ತಮ್ಮ ಕೈಕೆಲಸವಾದ ಬಲಿಪೀಠಗಳನ್ನು ದೃಷ್ಟಿಸುವರು. ಬೆರಳುಗಳು ಮಾಡಿದ ಧೂಪಪೀಠಗಳನ್ನು, ಅಶೇರ ಸ್ತಂಭಗಳನ್ನು ಗೌರವಿಸುವುದಿಲ್ಲ.
ISA 17:9 ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು.
ISA 17:10 ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು, ನಿನ್ನ ಬಂಡೆಯೂ, ಕೋಟೆಯೂ ಆಗಿರುವವರನ್ನು ಮರೆತು ಬಿಟ್ಟಿದ್ದೀ. ನೀನು ರಮ್ಯವಾದ ಗಿಡಗಳನ್ನು ಮತ್ತು ದೇಶಾಂತರದ ದ್ರಾಕ್ಷಿಯ ಸಸಿಗಳನ್ನು ಹಾಕಿದ್ದರೂ,
ISA 17:11 ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ.
ISA 17:12 ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ!
ISA 17:13 ಪ್ರಚಂಡ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ, ಅವರು ದೂರಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರಗಾಳಿಯಿಂದ ಸುತ್ತಿ ಆಡುವ ಧೂಳಿನಂತೆಯೂ ಓಡಿಹೋಗುವರು.
ISA 17:14 ಸಾಯಂಕಾಲದಲ್ಲಿ ಭಯಭ್ರಾಂತಿ, ಉದಯಕ್ಕೆ ಮುಂಚೆ ಅವು ಇಲ್ಲದಂತಾಗುವುದು. ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.
ISA 18:1 ಕೂಷ್ ನದಿಯ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡಿಗೆ ಕಷ್ಟ!
ISA 18:2 ಇದು ಆಪಿನ ದೋಣಿಗಳಲ್ಲಿ ಸಮುದ್ರ ಮಾರ್ಗದಿಂದ ರಾಯಭಾರಿಗಳನ್ನು ನೀರಿನ ಮೇಲೆ ಕಳುಹಿಸುತ್ತದೆ. ಶೀಘ್ರವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನುಣುಪಾದ ಚರ್ಮವುಳ್ಳ ಜನರ ಬಳಿಗೂ, ಸರ್ವರಿಗೂ ಭಯಪ್ರಧರಾಗಿರುವ ಜನರ ಬಳಿಗೂ, ವಿಚಿತ್ರ ಭಾಷೆಯಿರುವ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ರಾಷ್ಟ್ರದವರ ಬಳಿಗೂ ಹೋಗಿರಿ.
ISA 18:3 ಜಗದ ಸಕಲ ನಿವಾಸಿಗಳೇ! ಭೂಮಿಯಲ್ಲಿ ವಾಸಿಸುವವರೇ! ಬೆಟ್ಟಗಳ ಮೇಲೆ ಧ್ವಜವನ್ನು ಎತ್ತುವಾಗ ಅದನ್ನು ನೀವು ನೋಡುವಿರಿ, ತುತೂರಿಯನ್ನು ಊದುವಾಗ ಕೇಳಿಸಿಕೊಳ್ಳುವಿರಿ.
ISA 18:4 ಯೆಹೋವ ದೇವರು ನನಗೆ ಹೀಗೆ ಹೇಳಿದರು, “ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು. ಬಿಸಿಹಗಲಿನ ಸೂರ್ಯನಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು.”
ISA 18:5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ, ಚಿಗುರುಗಳನ್ನು ಕಡಿದುಹಾಕುವರು.
ISA 18:6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ, ಭೂಮಿಯ ಮೃಗಗಳಿಗೂ ಆಹಾರವಾಗುವುವು. ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ, ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು.
ISA 18:7 ಆಗ ಎತ್ತರವಾದ ಹಾಗೂ ನುಣುಪು ಚರ್ಮವುಳ್ಳ ಜನರಿಂದಲೂ, ಸರ್ವರಿಗೂ ಭಯಪ್ರಧರಾದ ಜನರಿಂದಲೂ, ವಿಚಿತ್ರ ಭಾಷೆಯಿಂದ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ಜನರಿಂದಲೂ ಸರ್ವಶಕ್ತರಾದ ಯೆಹೋವ ದೇವರಿಗೆ ಕಾಣಿಕೆಗಳು ತರಲಾಗುವುದು. ಹೌದು, ಸೇನಾಧೀಶ್ವರ ಯೆಹೋವ ದೇವರ ಹೆಸರುಳ್ಳ ಚೀಯೋನ್ ಪರ್ವತಕ್ಕೆ ಕಾಣಿಕೆಗಳು ತರಲಾಗುವುದು.
ISA 19:1 ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.
ISA 19:2 ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು. ಸಹೋದರನಿಗೆ ವಿರುದ್ಧವಾಗಿ ಸಹೋದರನೂ, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೊರಾಡುವವು.
ISA 19:3 ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು ಅವರ ಆಲೋಚನೆಯನ್ನು ಭಂಗಪಡಿಸುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ, ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು.
ISA 19:4 ಈಜಿಪ್ಟಿನವರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನಾಳುವನು, ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ISA 19:5 ನೈಲ್ ನದಿಯ ನೀರು ಬತ್ತಿಹೋಗುವುದು. ನದಿ ತೀರವೂ ಇಂಗಿ ಒಣಗಿಹೋಗುವುದು.
ISA 19:6 ಕಾಲುವೆಗಳು ನಾರುವುವು. ಈಜಿಪ್ಟನ ಉಪನದಿಗಳು ದೂರಕ್ಕೆ ಇಳಿದು ನೀರಿಲ್ಲದೆ ಹೋಗುವುವು. ಜಂಬು ಹುಲ್ಲು ಬಾಡುವುದು.
ISA 19:7 ನೈಲ್ ನದಿಯ ಹತ್ತಿರದ ತೀರವು ಬರುಡಾಗುವುದು. ನದಿಯ ಬಳಿಯಲ್ಲಿ ಬಿತ್ತಿದ ಬೀಜಗಳೆಲ್ಲವೂ ಒಣಗಿ, ಗಾಳಿಗೆ ತೂರಿಹೋಗುವುವು.
ISA 19:8 ಮೀನುಗಾರರು ಕೂಡ ದುಃಖಿಸುವರು ಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು. ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿ ಹೋಗುವರು.
ISA 19:9 ನಯವಾದ ನಾರಿನ ಕೆಲಸದವರು ಬಟ್ಟೆ ನೇಯುವವರು ನಿರಾಶರಾಗಿರುವರು.
ISA 19:10 ಬಟ್ಟೆಯಲ್ಲಿ ಕೆಲಸ ಮಾಡುವವರು ಖಿನ್ನರಾಗುತ್ತಾರೆ, ಮತ್ತು ಎಲ್ಲಾ ವೇತನದಾರರು ಹೃದಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ISA 19:11 ಚೋವನ್ ಪಟ್ಟಣದ ಅಧಿಪತಿಗಳು ಕೇವಲ ಬುದ್ಧಿಹೀನರು; ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿದೆ. ನೀವು ಫರೋಹನನಿಗೆ, “ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜನ ಶಿಷ್ಯನೆಂದು ಹೇಳುವುದು ಹೇಗೆ”?
ISA 19:12 ನಿನ್ನ ಜ್ಞಾನಿಗಳು ಎಲ್ಲಿ? ನಿನಗೆ ಅವರು ಹೇಳಲಿ. ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿನವರ ವಿರೋಧವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದುಕೊಳ್ಳಲಿ.
ISA 19:13 ಚೋವನಿನ ಶ್ರೇಷ್ಠರು ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಈಜಿಪ್ಟಿನ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ. ಅದನ್ನು ತಪ್ಪು ದಾರಿಗೆಳೆದಿದ್ದಾರೆ.
ISA 19:14 ಯೆಹೋವ ದೇವರು ಅವರ ಮಧ್ಯದಲ್ಲಿ ತತ್ತರಿಸುವ ಆತ್ಮವನ್ನು ಸುರಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಈಜಿಪ್ಟ್ ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
ISA 19:15 ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ, ಒಂದು ಕಡ್ಡಿಯಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
ISA 19:16 ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು.
ISA 19:17 ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು.
ISA 19:18 ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ.”
ISA 19:19 ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು.
ISA 19:20 ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು.
ISA 19:21 ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು.
ISA 19:22 ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.
ISA 19:23 ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು.
ISA 19:24 ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು.
ISA 19:25 ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.
ISA 20:1 ಅಸ್ಸೀರಿಯದ ಅರಸನಾದ ಸರ್ಗೋನನು ಕಳುಹಿಸಿದ ವರ್ಷದಲ್ಲಿ ಪ್ರಮುಖ ಸೇನಾಪತಿ, ಅಷ್ಡೋದಿಗೆ ಬಂದು ಅದನ್ನು ಮುತ್ತಿಗೆ ಹಾಕಿ ಆಕ್ರಮಿಸಿಕೊಂಡನು.
ISA 20:2 ಅದೇ ಸಮಯದಲ್ಲಿ ಯೆಹೋವ ದೇವರು ಆಮೋಚನ ಮಗ ಯೆಶಾಯನಿಗೆ, “ನಿನ್ನ ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಕೆರಗಳನ್ನು ತೆಗೆದಿಡು,” ಎಂದು ಹೇಳಿದರು. ಅವನು ಹಾಗೆ ಮಾಡಿ, ಬೆತ್ತಲೆಯಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.
ISA 20:3 ಆಗ ಯೆಹೋವ ದೇವರು, “ನನ್ನ ಸೇವಕನಾದ ಯೆಶಾಯನು ಈಜಿಪ್ಟ್ ಮತ್ತು ಕೂಷಿಗು, ಗುರುತಾಗಿಯೂ, ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು.
ISA 20:4 ಹಾಗೆಯೇ ಅಸ್ಸೀರಿಯದ ಅರಸನು ಈಜಿಪ್ಟಿನವರನ್ನು ಬಂಧಿಸಿ, ಕೂಷಿನ ಕೈದಿಗಳನ್ನು ಅವರು ದೊಡ್ಡವರಾಗಲೀ, ಸಣ್ಣವರಾಗಲೀ ಬಟ್ಟೆ, ಕೆರಗಳಿಲ್ಲದೆ ಈಜಿಪ್ಟಿನ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು.
ISA 20:5 ಆಗ ನನ್ನ ಜನರು ಅವನು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಳ್ಳುತ್ತಿದ್ದ ಈಜಿಪ್ಟಿನ ವಿಷಯವಾಗಿಯೂ, ನಿರಾಶರಾಗಿ ನಾಚಿಕೆಪಡುವರು.
ISA 20:6 ಆ ದಿನದಲ್ಲಿ ಕರಾವಳಿಯ ನಿವಾಸಿಗಳು, ‘ಇಗೋ, ಅಸ್ಸೀರಿಯದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ, ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?’ ಎಂದುಕೊಳ್ಳುವರು.”
ISA 21:1 ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತಾರೆ.
ISA 21:2 ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
ISA 21:3 ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ.
ISA 21:4 ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ಗಾಬರಿಗೊಂಡಿದೆ. ನಡುಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನಾ ಬಯಸಿದ ಸಂಜೆಯೇ ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
ISA 21:5 ಔತಣ ಸಿದ್ಧವಾಗಿದೆ. ಬುರುಜಿನ ಮೇಲೆ ಕಾವಲಿರು. ಉಣ್ಣು, ಕುಡಿ, ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿರಿ.
ISA 21:6 ಕರ್ತರು ನನಗೆ ಹೇಳಿದ್ದೇನೆಂದರೆ, “ಹೋಗು, ಕಾವಲುಗಾರರನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.
ISA 21:7 ಅವನು ಜೋಡಿ ಜೋಡಿಯಾಗಿ ಬರುವ ರಥ ಸವಾರರ ಸಾಲನ್ನು ಕತ್ತೆಗಳ, ಒಂಟೆಗಳ, ರಥ ಸಾಲುಗಳನ್ನು ನೋಡಿದರೆ, ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ.”
ISA 21:8 ಬಳಿಕ ಅವನು ಸಿಂಹದಂತೆ ಕೂಗಿ ಹೀಗೆ ಹೇಳಿದನು, “ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.
ISA 21:9 ಇಗೋ, ಎರಡು ಕುದುರೆಗಳನ್ನು ಹೊಂದಿರುವ ರಥದಲ್ಲಿ ಒಬ್ಬ ವ್ಯಕ್ತಿ ಸವಾರಿ ಮಾಡಿ ಬರುತ್ತಿದ್ದಾನೆ ಬಾಬಿಲೋನ್ ಬಿದ್ದುಹೋಯಿತು, ಬಾಬಿಲೋನ್ ಬಿದ್ದುಹೋಯಿತು! ಅದರ ಕೆತ್ತಿದ ದೇವತೆಗಳ ವಿಗ್ರಹಗಳೆಲ್ಲ ಮುರಿದು ನೆಲಸಮವಾಗಿವೆ.”
ISA 21:10 ಕಣದಲ್ಲಿ ತುಳಿತಕ್ಕೆ ಈಡಾದ ನನ್ನ ಜನರೇ ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.
ISA 21:11 ದೂಮ ವಿಷಯವಾದ ಪ್ರವಾದನೆ: ಸೇಯೀರಿನಿಂದ ನನ್ನನ್ನು ಯಾರೋ ಹೀಗೆ ಕರೆಯುತ್ತಿದ್ದಾರೆ, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು?”
ISA 21:12 ಕಾವಲುಗಾರನು ಹೀಗೆ ಉತ್ತರಿಸಿದನು, “ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ. ವಿಚಾರಿಸಬೇಕಾದರೆ ವಿಚಾರಿಸಿರಿ, ತಿರುಗಿ ಬನ್ನಿರಿ.”
ISA 21:13 ಅರೇಬಿಯದ ವಿಷಯವಾದ ಪ್ರವಾದನೆ: ಓ ದೇದಾನ್ಯರ ವ್ಯಾಪಾರಿಗಳ ಗುಂಪಿನವರೇ ಅರೇಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.
ISA 21:14 ತೇಮಾ ದೇಶದ ನಿವಾಸಿಗಳೇ, ಬಾಯಾರಿದವರಿಗೆ ನೀರನ್ನು ತರುತ್ತಾರೆ. ಓಡಿ ಹೋಗುವವರನ್ನು ತಮ್ಮ ರೊಟ್ಟಿಯಿಂದ ನಿವಾರಿಸುತ್ತಾರೆ.
ISA 21:15 ಏಕೆಂದರೆ ಹಿರಿದ ಖಡ್ಗ, ಬಾಗಿದ ಬಿಲ್ಲು, ಕಠಿಣ ಯುದ್ಧ ಇವುಗಳಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರಷ್ಟೆ.
ISA 21:16 ಏಕೆಂದರೆ ಕರ್ತರು ನನಗೆ ಹೀಗೆ ಹೇಳುತ್ತಾರೆ: “ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವುದು.
ISA 21:17 ಬಿಲ್ಲುಗಾರರಲ್ಲಿ ಕೆಲವರೂ, ಕೇದಾರಿನ ಬಲಿಷ್ಠರಲ್ಲಿ ಕೆಲವರು ಮಾತ್ರ ಉಳಿಯುವರು,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ನುಡಿದಿದ್ದಾರೆ.
ISA 22:1 ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ: ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
ISA 22:2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಹತರಾದವರು ಖಡ್ಗದಿಂದ ಹತರಾದವರಲ್ಲ; ಯುದ್ಧದಲ್ಲಿ ಸತ್ತವರೂ ಅಲ್ಲ.
ISA 22:3 ನಿನ್ನ ಅಧಿಕಾರಸ್ಥರೆಲ್ಲ ಒಟ್ಟಿಗೆ ಓಡಿದರೂ ಬಿಲ್ಲುಗಾರರಿಲ್ಲದೆಯೇ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದರೂ ನಿನ್ನ ಜನರು ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
ISA 22:4 ಹೀಗಿರಲು ನಾನು ಹೀಗೆ ಹೇಳಿದೆನು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ. ಬಹು ಸಂಕಟದಿಂದ ನಾನು ಅಳುವೆನು. ಏಕೆಂದರೆ ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.”
ISA 22:5 ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು, ದರ್ಶನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ. ಅದು ಗೋಡೆಗಳು ಹೊಡೆದುರುಳಿಸುವ ದಿನವು. ಪರ್ವತಗಳಿಗೆ ಜನರು ಕೂಗಾಡುವ ದಿನವದು.
ISA 22:6 ಏಲಾಮಿನವರು ಕುದುರೆಗಳ, ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆರೆದರು.
ISA 22:7 ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿರುವುವು. ರಾಹುತರು ಪಟ್ಟಣದ ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
ISA 22:8 ಕರ್ತರು ಯೆಹೂದದ ಸಂರಕ್ಷಣೆಯ ಮುಸುಕನ್ನು ತೆಗೆದಿದ್ದಾರೆ. ಆ ದಿವಸದಲ್ಲಿ ಅಡವಿ ಅರಮನೆಯ ಯುದ್ಧ ಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತೀಯೆ.
ISA 22:9 ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ. ಕೆಳಗಿನ ಕೊಳಕ್ಕೆ ನೀರನ್ನು ತುಂಬಿಸುತ್ತೀರಿ.
ISA 22:10 ಯೆರೂಸಲೇಮಿನ ಮನೆಗಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
ISA 22:11 ಎರಡು ಗೋಡೆಗಳ ನಡುವೆ ಹಳೆಯ ಕೆರೆಯ ನೀರಿಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಕಾಲುವೆ ಮಾಡುತ್ತೀರಿ. ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸುವುದಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದವರನ್ನು ನೀನು ಲಕ್ಷಿಸುವುದಿಲ್ಲ.
ISA 22:12 ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.
ISA 22:13 ಆದರೆ ಉತ್ಸಾಹವು, ಸಂತೋಷವು, ದನ ಕೊಳ್ಳುವುದು, ಕುರಿ ಕಡಿಯುವುದು, ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
ISA 22:14 ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದು ಏನೆಂದರೆ: “ನಿಶ್ಚಯವಾಗಿ ಈ ದುಷ್ಕೃತ್ಯಗಳನ್ನು ನೀವು ಸಾಯುವ ತನಕ ಮನ್ನಿಸುವುದೇ ಇಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳಿದ್ದಾರೆ.
ISA 22:15 ಸೇನಾಧೀಶ್ವರ ಯೆಹೋವ ದೇವರು ಪುನಃ ಹೀಗೆ ನುಡಿದಿದ್ದಾರೆ: “ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನ ಎಂಬ ಖಜಾಂಚಿಯ ಬಳಿಗೆ ಹೋಗಿ ಹೀಗೆ ಹೇಳು:
ISA 22:16 ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ, ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ?
ISA 22:17 “ಯೆಹೋವ ದೇವರು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯುವರು.
ISA 22:18 ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ತಿರುಗಿಸಿ, ವಿಸ್ತಾರವಾದ ದೇಶಕ್ಕೆ ಬಿಸಾಡುವರು. ಅಲ್ಲೇ ನೀನು ಸಾಯುವೆ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವುವು.
ISA 22:19 ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
ISA 22:20 “ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,
ISA 22:21 ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟಿನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಜನರಿಗೂ ತಂದೆಯಾಗಿರುವನು.
ISA 22:22 ದಾವೀದನ ಮನೆಗೆ ಬೀಗದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು. ಅವನು ತೆರೆದರೆ ಯಾರೂ ಮುಚ್ಚರು, ಅವನು ಮುಚ್ಚಿದರೆ ಯಾರೂ ತೆರೆಯರು.
ISA 22:23 ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾಸನವಾಗಿರುವನು.
ISA 22:24 ಬಟ್ಟಲು ಮೊದಲುಗೊಂಡು ಕೊಡದ ತನಕ, ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿಸುವರು.
ISA 22:25 “ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.
ISA 23:1 ಟೈರಿನ ವಿಷಯವಾದ ಪ್ರವಾದನೆ: ತಾರ್ಷೀಷಿನ ಹಡಗುಗಳೇ, ಗೋಳಾಡಿರಿ, ಏಕೆಂದರೆ ಟೈರ್ ಹಾಳಾಗಿರುವುದರಿಂದ ನಿಮಗೆ ಮನೆಯಿಲ್ಲ ಮತ್ತು ಬಂದರವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.
ISA 23:2 ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಸೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ ಮೌನವಾಗಿರಿ.
ISA 23:3 ಪ್ರವಾಹದಿಂದ ಶೀಹೋರಿನ ಧಾನ್ಯವೂ, ನೈಲ್ ನದಿಯ ಸುಗ್ಗಿಯೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು.
ISA 23:4 ಸೀದೋನೇ ಮತ್ತು ಸಮುದ್ರದ ಕೋಟೆಯೇ ನಾಚಿಕೆಪಡಿರಿ. ಏಕೆಂದರೆ ಇದೇ ಸಮುದ್ರದ ಘೋಷಣೆಯಾಗಿದೆ: “ನಾವು ಪ್ರಸವವೇದನೆ ಪಡುವುದಿಲ್ಲ, ಹೆರುವುದಿಲ್ಲ, ಇಲ್ಲವೆ ಪುತ್ರಪುತ್ರಿಯರನ್ನು ಸಾಕಿ ಸಲಹುವುದಿಲ್ಲ,”
ISA 23:5 ಈಜಿಪ್ಟಿನಿಂದ ಸುದ್ದಿ ಆದ ಹಾಗೆ ಟೈರಿನ ಸುದ್ದಿಗೆ ಬಹಳ ವೇದನೆ ಪಡುವರು.
ISA 23:6 ತಾರ್ಷೀಷಿಗೆ ದಾಟಿ ಹೋಗಿರಿ, ದ್ವೀಪ ನಿವಾಸಿಗಳೇ ಗೋಳಾಡಿರಿ.
ISA 23:7 ನಿಮ್ಮ ಉಲ್ಲಾಸದ ಪಟ್ಟಣವೂ, ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವುದಕ್ಕೆ ತೆಗೆದುಕೊಂಡು ಹೋಗುವವು.
ISA 23:8 ಅದು ಕಿರೀಟದಾಯಕವಾದ ಪಟ್ಟಣವು. ಅದರ ವರ್ತಕರಾದ ಪ್ರಭುಗಳು, ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ಟೈರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು?
ISA 23:9 ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇಕೆಂತಲೂ, ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವಮಾನಪಡಿಸಬೇಕೆಂತಲೂ ಸೇನಾಧೀಶ್ವರ ಯೆಹೋವ ದೇವರೇ ಹೀಗೆ ಸಂಕಲ್ಪಿಸಿದ್ದಾರೆ.
ISA 23:10 ತಾರ್ಷೀಷಿನ ಮಗಳೇ, ನೈಲ್ ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು. ಅಲ್ಲಿ ಇನ್ನು ನಿನ್ನನ್ನು ತಡೆಯುವವರು ಯಾರೂ ಇಲ್ಲ.
ISA 23:11 ಯೆಹೋವ ದೇವರು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ. ಅವರು ವ್ಯಾಪಾರದ ಪಟ್ಟಣವನ್ನು ಕಾನಾನಿನ ದುರ್ಗಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾರೆ.
ISA 23:12 “ಹಿಂಸೆಗೆ ಈಡಾದ ಕನ್ಯೆಯಂತಿರುವ ಸೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಸಂತೃಪ್ತಿ ಇಲ್ಲ. “ಎದ್ದು, ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು. ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.”
ISA 23:13 ಕಸ್ದೀಯರ ದೇಶವು! ಅಸ್ಸೀರಿಯದವರು ಅದನ್ನು ಕಾಡುಮೃಗಗಳಿಗೆ ಈಡು ಮಾಡುವ ತನಕ ಈ ಜನರು ಇರಲಿಲ್ಲ. ಗೋಪುರಗಳನ್ನು ಕಟ್ಟಿಸಿಕೊಂಡು ಅವರು ಅದರ ಅರಮನೆಗಳನ್ನು ಕಟ್ಟಿಸಿಕೊಂಡು ಅದನ್ನು ನಾಶಮಾಡಿದ್ದಾರೆ.
ISA 23:14 ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯಸ್ಥಾನವು ಹಾಳಾಯಿತು, ಎಂದು ಆತನು ಹೇಳಿದ್ದಾನೆ.
ISA 23:15 ಆ ದಿವಸದಲ್ಲಿ ಟೈರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ ಜ್ಞಾಪಕಕ್ಕೆ ಬಾರದೆ ಇರುವುದು. ಎಪ್ಪತ್ತು ವರ್ಷಗಳ ಕೊನೆಯಲ್ಲಿ ಟೈರ್ ಪಟ್ಟಣವು ವೇಶ್ಯೆಯ ವಿಷಯವಾದ ಈ ಗೀತೆಯ ಹಾಗಾಗುವುದು:
ISA 23:16 “ಮರೆತುಹೋದ ವೇಶ್ಯೆಯೇ, ಕಿನ್ನರಿಯನ್ನು ತೆಗೆದುಕೋ. ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು.”
ISA 23:17 ಎಪ್ಪತ್ತು ವರುಷಗಳಾದ ಮೇಲೆ ಯೆಹೋವ ದೇವರು ಟೈರನ್ನು ಪರಾಮರಿಸುವರು. ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕದವರಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ವ್ಯಾಪಾರ ಮಾಡುವುದು.
ISA 23:18 ಆದರೆ ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಯೆಹೋವ ದೇವರಿಗೆ ಪರಿಶುದ್ಧವಾಗುವುದು. ಅವಳ ಆದಾಯವು ಯೆಹೋವ ದೇವರ ಸನ್ನಿಧಾನದಲ್ಲಿ ವಾಸಿಸುವವರೆಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.
ISA 24:1 ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.
ISA 24:2 ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು.
ISA 24:3 ಭೂಮಿಯು ಬಟ್ಟಬರಿದಾಗುವುದು, ಸಂಪೂರ್ಣ ಸುಲಿಗೆಯಾಗುವುದು. ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ.
ISA 24:4 ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. ಲೋಕವು ಸೊರಗಿ ಬಾಡಿಹೋಗುವುದು. ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು.
ISA 24:5 ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ದೈವನಿಯಮಗಳನ್ನು ಬದಲಾಯಿಸಿ, ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು.
ISA 24:6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, ಕೆಲವರು ಮಾತ್ರ ಉಳಿದಿದ್ದಾರೆ.
ISA 24:7 ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
ISA 24:8 ದಮ್ಮಡಿಗಳ ಉತ್ಸಾಹವು ಮುಗಿದಿದೆ. ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
ISA 24:9 ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು.
ISA 24:10 ಹಾಳುಪಟ್ಟಣವು ಬಿದ್ದುಹೋಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
ISA 24:11 ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. ಉಲ್ಲಾಸವೆಲ್ಲ ಅಸ್ತಮಿಸಿದೆ. ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ.
ISA 24:12 ಪಟ್ಟಣದಲ್ಲಿ ಹಾಳೇ ಉಳಿದಿವೆ. ನಾಶನವು ಹೆಬ್ಬಾಗಿಲಿಗೆ ಬಡಿದಿದೆ.
ISA 24:13 ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.
ISA 24:14 ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು.
ISA 24:15 ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.
ISA 24:16 ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”
ISA 24:17 ಭೂಮಿಯ ನಿವಾಸಿಗಳೇ, ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ.
ISA 24:18 ಆಗ ಭಯದ ಶಬ್ದಕ್ಕೆ ಓಡಿಹೋಗುವವನು ಗುಂಡಿಯೊಳಗೆ ಬೀಳುವನು. ಗುಂಡಿಯೊಳಗಿಂದ ಏರಿಬರುವವನು ಬಲೆಗೆ ಸಿಕ್ಕಿಬೀಳುವನು. ಆಕಾಶದ ದ್ವಾರಗಳು ತೆರೆದಿವೆ. ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
ISA 24:19 ಭೂಮಿಯು ಬಿರುಕುಬಿಟ್ಟಿದೆ, ಬಿರಿದು ಬಿರಿದಿದೆ, ಭೂಮಿಯು ಕದಲಿಹೋಗಿದೆ.
ISA 24:20 ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.
ISA 24:21 ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.
ISA 24:22 ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.
ISA 24:23 ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.
ISA 25:1 ಯೆಹೋವ ದೇವರೇ, ನೀವೇ ನನ್ನ ದೇವರು. ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ, ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ, ನಿಮ್ಮ ನಾಮವನ್ನು ಕೊಂಡಾಡುವೆನು.
ISA 25:2 ಏಕೆಂದರೆ ನೀವು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳುದಿಬ್ಬವನ್ನಾಗಿಯೂ ವಿದೇಶಿಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದಂತೆ ಮಾಡಿದ್ದೀರಿ.
ISA 25:3 ಬಲಿಷ್ಠವಾದ ಜನಾಂಗವು ನಿಮ್ಮನ್ನು ಘನಪಡಿಸುವರು, ಭಯಂಕರವಾದ ಜನರ ಪಟ್ಟಣವು ನಿಮಗೆ ಅಂಜುವುದು.
ISA 25:4 ನೀವು ದೀನರಿಗೆ ಕೋಟೆಯೂ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ, ಭೀಕರರ ಶ್ವಾಸವು ಬಿಸಿಲಿಗೆ ನೆರಳೂ, ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋಸ್ಕರ ಆಶ್ರಯವೂ ಆಗಿದ್ದೀರಿ.
ISA 25:5 ಮೇಘವು ಒಣನೆಲದ ಕಾವನ್ನು ಆರಿಸುವ ಹಾಗೆ, ನೀವು ವಿದೇಶಿಯರ ಗದ್ದಲವನ್ನು ಅಡಗಿಸುವಿರಿ; ಮೋಡದ ನೆರಳಿನಿಂದ ಬಿಸಿಲು ತಡೆಯುವ ಹಾಗೆಯೇ, ನೀವು ಕ್ರೂರಿಗಳ ಉತ್ಸಾಹಗಾನವನ್ನು ನಿಲ್ಲಿಸಿಬಿಡುವಿರಿ.
ISA 25:6 ಸೇನಾಧೀಶ್ವರ ಯೆಹೋವ ದೇವರು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ ಕೊಬ್ಬಿದ ಔತಣವನ್ನೂ, ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ, ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸವನ್ನೂ ಸಿದ್ಧಮಾಡುವರು.
ISA 25:7 ಸಮಸ್ತ ಜನಾಂಗಗಳನ್ನು ಮುಚ್ಚಿರುವ ಪರದೆಯನ್ನೂ, ಸಕಲ ದೇಶದವರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವರು.
ISA 25:8 ಅವರು ಮರಣವನ್ನು ಜಯದಲ್ಲಿ ನುಂಗಿಬಿಡುವರು. ಸಾರ್ವಭೌಮ ಯೆಹೋವ ದೇವರು ಎಲ್ಲಾ ಮುಖಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವರು. ತಮ್ಮ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕುವರು. ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
ISA 25:9 ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.
ISA 25:10 ಈ ಪರ್ವತದಲ್ಲಿ ಯೆಹೋವ ದೇವರ ಕೈ ವಿಶ್ರಮಿಸಿಕೊಳ್ಳುವುದು. ಒಣಹುಲ್ಲನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ತುಳಿತಕ್ಕೆ ಈಡಾಗುವುದು.
ISA 25:11 ಈಜುವವನು ಈಜುವುದಕ್ಕೆ ಕೈಗಳನ್ನು ಹರಡಿಕೊಂಡ ಹಾಗೆ, ಅವರು ತಮ್ಮ ಕೈಗಳನ್ನು ಚಾಚುವರು. ಆದರೆ ದೇವರು ಅವರ ಗರ್ವವನ್ನೂ ಅವರ ಕೈ ಕೆಲಸವನ್ನೂ ತಗ್ಗಿಸಿಬಿಡುವರು.
ISA 25:12 ದುರ್ಗದಂತೆ ಎತ್ತರವಾಗಿರುವ ನಿನ್ನ ಕೋಟೆಗಳನ್ನು ಕೆಡವಿ, ತಗ್ಗಿಸಿ, ನೆಲಸಮಮಾಡುವರು, ಅದು ಧೂಳುಪಾಲಾಗುವುದು.
ISA 26:1 ಆ ದಿವಸದಲ್ಲಿ ಯೆಹೂದ ದೇಶದಲ್ಲಿ ಈ ಹಾಡನ್ನು ಹಾಡುವರು: ನಮಗೆ ಬಲವಾದ ಪಟ್ಟಣವಿದೆ, ರಕ್ಷಣೆಯನ್ನು ಕೋಟೆಯನ್ನಾಗಿಯೂ, ಹೊರಪೌಳಿಯನ್ನಾಗಿಯೂ ದೇವರು ಮಾಡುವರು.
ISA 26:2 ಬಾಗಿಲುಗಳನ್ನು ತೆರೆಯಿರಿ. ಸತ್ಯವನ್ನು ಕೈಗೊಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.
ISA 26:3 ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವೆ, ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ.
ISA 26:4 ನೀವು ಯೆಹೋವ ದೇವರಲ್ಲಿ ಸದಾ ಭರವಸವಿಡಿರಿ, ಏಕೆಂದರೆ ಯೆಹೋವ ದೇವರು, ಹೌದು ಯೆಹೋವ ದೇವರೇ, ನಿತ್ಯವಾದ ಬಂಡೆಯಾಗಿದ್ದಾರೆ.
ISA 26:5 ಅವರು ಎತ್ತರದಲ್ಲಿ ವಾಸಿಸುವವರನ್ನು ಇಳಿಸಿದ್ದಾರೆ. ಉನ್ನತದಲ್ಲಿರುವ ಪಟ್ಟಣವನ್ನು ತಗ್ಗಿಸಿದ್ದಾರೆ. ಅದನ್ನು ಕೆಡವಿ ನೆಲಸಮಮಾಡಿ ಧೂಳಿಗೆ ತಂದಿದ್ದಾರೆ.
ISA 26:6 ಕಾಲು, ಬಡವರ ಕಾಲುಗಳೂ, ದೀನರ ಪಾದಗಳೂ ಅದನ್ನು ತುಳಿಯುವುವು.
ISA 26:7 ನೀತಿವಂತನ ಮಾರ್ಗವು ಸಮಾನವಾಗಿದೆ. ನೀನು ಅತ್ಯಧಿಕವಾದ ಯಥಾರ್ಥವಂತನು, ನೀತಿವಂತನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ,
ISA 26:8 ಹೌದು, ಯೆಹೋವ ದೇವರೇ, ನಿಮ್ಮ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ ನಾವು ನಿಮಗೋಸ್ಕರ ಕಾದುಕೊಂಡಿದ್ದೇವೆ, ನಿಮ್ಮ ನಾಮಸ್ಮರಣೆಯೇ ನಮ್ಮ ಹೃದಯದ ಬಯಕೆ.
ISA 26:9 ರಾತ್ರಿಯಲ್ಲಿ ನಿಮ್ಮನ್ನು ಮನಃಪೂರ್ವಕವಾಗಿ ಬಯಸಿದ್ದೇನೆ. ನನ್ನಲ್ಲಿರುವ ನನ್ನ ಆತ್ಮದೊಂದಿಗೆ ನಿಮ್ಮನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ. ಏಕೆಂದರೆ ಭೂಮಿಗೆ ನಿಮ್ಮ ನ್ಯಾಯತೀರ್ಪುಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.
ISA 26:10 ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ ನೀತಿಯನ್ನು ಅವನು ಕಲಿಯಲಾರನು. ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾಯವನ್ನು ಆಚರಿಸುವನು ಮತ್ತು ಯೆಹೋವ ದೇವರ ಮಹತ್ವವನ್ನು ಲಕ್ಷಿಸುವುದಿಲ್ಲ.
ISA 26:11 ಯೆಹೋವ ದೇವರೇ, ನಿಮ್ಮ ಕೈ ಮೇಲಕ್ಕೆ ಎತ್ತಲಾಗಿದೆ. ಆದರೆ ಅವರು ಅದನ್ನು ಕಾಣುವುದಿಲ್ಲ. ನಿಮ್ಮ ಜನರಿಗಾಗಿ ನಿಮ್ಮ ಉತ್ಸಾಹವನ್ನು ಅವರು ನೋಡಲಿ ಮತ್ತು ನಾಚಿಕೆಪಡಲಿ; ನಿನ್ನ ವಿರೋಧಿಗಳಿಗಾಗಿದ್ದ ಅಗ್ನಿಯು ಅದನ್ನು ದಹಿಸಿಬಿಡಲಿ.
ISA 26:12 ಯೆಹೋವ ದೇವರೇ, ನಮಗೆ ಸಮಾಧಾನವನ್ನು ವಿಧಿಸುವಿರಿ. ಏಕೆಂದರೆ ನೀವು ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀರಿ.
ISA 26:13 ಯೆಹೋವ ದೇವರೇ, ನಮ್ಮ ದೇವರೇ, ನಿಮ್ಮ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿಮ್ಮ ನಾಮವನ್ನು ಮಾತ್ರವೇ ನಾವು ಗೌರವಿಸುವೆವು.
ISA 26:14 ಈಗ ಅವರು ಸತ್ತಿದ್ದಾರೆ, ಅವರು ಬದುಕುವುದಿಲ್ಲ. ತೀರಿಹೋದ ಆ ಆತ್ಮಗಳು ಎದ್ದು ಬರುವುದಿಲ್ಲ. ನೀವು ಅವರನ್ನು ದಂಡಿಸಿ ಅಳಿಸಿಬಿಟ್ಟಿದ್ದೀರಿ. ಅವರ ನೆನಪೇ ಉಳಿಯದ ಹಾಗೆ ಮಾಡಿದ್ದೀರಿ.
ISA 26:15 ಜನಾಂಗವನ್ನು ಹೆಚ್ಚಿಸಿದ್ದೀರಿ. ಯೆಹೋವ ದೇವರೇ, ಜನಾಂಗವನ್ನು ಹೆಚ್ಚಿಸಿದ್ದೀರಿ. ನೀವು ಮಹಿಮೆ ಹೊಂದಿದ್ದೀರಿ. ನೀವು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆಯವರೆಗೂ ವಿಸ್ತರಿಸಿದ್ದೀರಿ.
ISA 26:16 ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು. ನಿಮ್ಮ ಶಿಕ್ಷೆ ಅವರ ಮೇಲಿರುವಾಗ, ಅವರು ಪ್ರಾರ್ಥನೆಯನ್ನು ಮಾಡಿದರು.
ISA 26:17 ಗರ್ಭಿಣಿ ಸ್ತ್ರೀಯು ಹೆರುವುದಕ್ಕೆ ಸಮೀಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆಯಲ್ಲಿ ಅರಚುವಂತೆ, ಯೆಹೋವ ದೇವರೇ, ನಾವು ನಿಮ್ಮ ಸಮ್ಮುಖದಲ್ಲಿದ್ದೆವು.
ISA 26:18 ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು. ಭೂಮಿಗೆ ನಮ್ಮಿಂದ ಯಾವ ಬಿಡುಗಡೆಯೂ ಆಗಲಿಲ್ಲ. ಭೂಲೋಕದ ಜನರಿಗೆ ಜನ್ಮ ಕೊಡಲಿಲ್ಲ.
ISA 26:19 ಆದರೆ ಮೃತರಾದ ನಿನ್ನ ಜನರು ಬದುಕುವರು. ಅವರ ದೇಹಗಳು ಏಳುವುವು. ಧೂಳಿನ ನಿವಾಸಿಗಳೇ, ಎಚ್ಚೆತ್ತು ಹರ್ಷಧ್ವನಿಗೈಯಿರಿ! ಯೆಹೋವ ದೇವರೇ, ನಿಮ್ಮ ಇಬ್ಬನಿ ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಪಡಿಸುವುದು.
ISA 26:20 ನನ್ನ ಜನರೇ, ಹೋಗಿರಿ. ನಿಮ್ಮ ಕೋಣೆಗಳಲ್ಲಿ ಸೇರಿ, ಬಾಗಿಲನ್ನು ಮುಚ್ಚಿಕೊಳ್ಳಿರಿ. ಸ್ವಲ್ಪ ಹೊತ್ತು ರೋಷವು ಹಾದುಹೋಗುವ ತನಕ ಅಡಗಿಕೊಂಡಿರಿ.
ISA 26:21 ಭೂನಿವಾಸಿಗಳ ದುಷ್ಕೃತ್ಯಕ್ಕೆ ಶಿಕ್ಷಿಸುವುದಕ್ಕೆ ಯೆಹೋವ ದೇವರು ತಮ್ಮ ಸ್ಥಳದಿಂದ ಹೊರಟಿದ್ದಾರೆ. ಭೂಮಿಯು ಸಹ ತನ್ನಲ್ಲಿ ಕೊಂದುಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ, ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟ ಮಾಡುವುದು.
ISA 27:1 ಆ ದಿನದಲ್ಲಿ ಯೆಹೋವ ದೇವರು, ತಮ್ಮ ಬಲವಾದ ಭೀಕರ ಖಡ್ಗದಿಂದ ವೇಗವಾಗಿ ಓಡುವ ಲೆವಿಯಾತಾನ ಸರ್ಪವನ್ನೂ, ಡೊಂಕಾಗಿ ಹರಿಯುವ ಲೆವಿಯಾತಾನ ಸರ್ಪವನ್ನೂ ದಂಡಿಸಿ, ಸಮುದ್ರದಲ್ಲಿರುವ ಘಟಸರ್ಪವನ್ನೂ ಕೊಂದುಹಾಕುವರು.
ISA 27:2 ಆ ದಿನದಲ್ಲಿ, ಫಲಭರಿತ ದ್ರಾಕ್ಷಿತೋಟದ ವಿಷಯವಾಗಿ ಹಾಡಿರಿ.
ISA 27:3 ಯೆಹೋವ ದೇವರಾದ ನಾನೇ ಅದನ್ನು ಕಾಯುತ್ತೇನೆ. ಸತತವಾಗಿ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ. ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
ISA 27:4 ರೌದ್ರವು ನನ್ನಲ್ಲಿ ಇಲ್ಲ. ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ, ನಾನು ಅವುಗಳನ್ನು ಹಾದು ಹೋಗಿ, ಅವುಗಳನ್ನು ಒಟ್ಟಿಗೆ ಸುಡುವೆನು.
ISA 27:5 ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
ISA 27:6 ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು. ಇಸ್ರಾಯೇಲು ಹೂ ಅರಳಿ ಚಿಗುರುವುದು. ಭೂಲೋಕವನ್ನೆಲ್ಲಾ ಫಲದಿಂದ ತುಂಬಿಸುವನು.
ISA 27:7 ಆಕೆಯನ್ನು ಹೊಡೆದವರನ್ನು ಆತನು ಹೊಡೆದಂತೆ ಯೆಹೋವ ದೇವರು ಆಕೆಯನ್ನು ಹೊಡೆದರೋ? ಆಕೆಯನ್ನು ಕೊಂದವರು ಹತರಾದಂತೆ ಆಕೆಯು ಸಂಹಾರವಾದಳೋ?
ISA 27:8 ಯುದ್ಧದಿಂದಲೂ ಸೆರೆಯಿಂದಲೂ ಆಕೆಯೊಂದಿಗೆ ತೃಪ್ತರಾಗಿರಿ. ಆತನು ತನ್ನ ಕೋಪದ ಪೆಟ್ಟಿನಿಂದ ಪೂರ್ವದ ಬಿರುಗಾಳಿ ಬೀಸುವಾಗ ಆಗುವಂತೆ, ಆಕೆಯನ್ನು ಹೊರಗೋಡಿಸುವನು.
ISA 27:9 ಹೀಗಿರುವದರಿಂದ ಯಾಕೋಬನು ಬಲಿಪೀಠಗಳ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿಪುಡಿಮಾಡಿ, ಅಶೇರ ಸ್ತಂಭಗಳನ್ನೂ ಧೂಪವೇದಿಗಳನ್ನೂ ಇನ್ನು ಪ್ರತಿಷ್ಠಾಪಿಸದೆ ಹೋದರೆ ಅದೇ ಯಾಕೋಬನ ಅಪರಾಧಕ್ಕೆ ಪ್ರಾಯಶ್ಚಿತ್ತವಾಗುವುದು ಮತ್ತು ಅವನ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲವು ಇದೇ ಆಗಿದೆ.
ISA 27:10 ಕೋಟೆಯ ಪಟ್ಟಣವು ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗುವುದು. ಅಲ್ಲಿ ದನಕರುಗಳು ಮೇದು ಮಲಗುವ ಗೋಮಾಳವಾಗಿದೆ. ಅವು ಅಲ್ಲಿನ ಚಿಗುರುಗಳನ್ನು ತಿಂದುಬಿಡುವುವು.
ISA 27:11 ಅಲ್ಲಿನ ರೆಂಬೆಗಳು ಒಣಗಿ ಮುರಿದುಹೋಗಿವೆ. ಸ್ತ್ರೀಯರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಇದು ವಿವೇಕವಿಲ್ಲದ ಜನ. ಆದ್ದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವುದಿಲ್ಲ. ಅವರ ಸೃಷ್ಟಿಕರ್ತನು ಅವರನ್ನು ಕರುಣಿಸುವುದಿಲ್ಲ.
ISA 27:12 ಇಸ್ರಾಯೇಲರೇ, ಯೆಹೋವ ದೇವರು ಯೂಫ್ರೇಟೀಸ್ ನದಿ ಮೊದಲುಗೊಂಡು ಈಜಿಪ್ಟ್ ದೇಶದ ನದಿಯವರೆಗೆ ಹೊಡೆಯುವರು, ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೂಡಿಸುವರು.
ISA 27:13 ಆ ದಿನದಲ್ಲಿ ದೊಡ್ಡ ತುತೂರಿಯು ಊದಲಾಗುವುದು. ಆಗ ಅಸ್ಸೀರಿಯ ದೇಶದಲ್ಲಿ ಚದರಿಹೋದವರೂ, ಈಜಿಪ್ಟ್ ದೇಶದಲ್ಲಿ ಗಡೀಪಾರಾದವರೂ, ಯೆರೂಸಲೇಮಿನ ಪರಿಶುದ್ಧ ಪರ್ವತದ ಬಳಿಗೆ ಬಂದು ಯೆಹೋವ ದೇವರನ್ನು ಆರಾಧಿಸುವರು.
ISA 28:1 ಕುಡುಕರಿಂದ ಕೂಡಿದ ಎಫ್ರಾಯೀಮಿನ ಕಿರೀಟದಂತಿರುವ ನಗರಕ್ಕೆ ಕಷ್ಟ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಕಷ್ಟ!
ISA 28:2 ಇಗೋ, ಕರ್ತರಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ, ಹೊಡೆದು ಬಿಡುವ ಬಿರುಗಾಳಿಯಂತೆಯೂ, ಪ್ರಳಯ ಮಾಡುವ ದೊಡ್ಡ ನೀರನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈಯಿಂದ ಬೀಳಿಸುವನು.
ISA 28:3 ಕುಡುಕರಾದ ಎಫ್ರಾಯೀಮ್ಯರ ಗರ್ವದ ಕಿರೀಟವು ಕಾಲಿನ ತುಳಿತಕ್ಕೆ ಈಡಾಗುವುದು.
ISA 28:4 ಫಲವತ್ತಾದ ಕಣಿವೆಗೆ ತಲೆಯ ಮೇಲಿರುವ ಅಲಂಕಾರದ ಶೃಂಗಾರವಾಗಿದ್ದು, ಬೇಸಿಗೆ ಮುಂಚೆ ಮಾಗಿದ ಅಂಜೂರದ ಹಣ್ಣಿನ ಹಾಗೆ ಇರುವುದು. ಜನರು ಅವರನ್ನು ನೋಡಿ ಕೈಗೆ ತೆಗೆದುಕೊಂಡ ತಕ್ಷಣ ಅವರು ನುಂಗುತ್ತಾರೆ.
ISA 28:5 ಆ ದಿನದಲ್ಲಿ ಸೇನಾಧೀಶ್ವರ ಯೆಹೋವ ದೇವರು ತನ್ನ ಜನರಲ್ಲಿ ಉಳಿದವರಿಗೆ ಮಹಿಮೆಯ ಕಿರೀಟವೂ ಮತ್ತು ಸುಂದರವಾದ ಮಕುಟವೂ ಆಗಿರುವರು.
ISA 28:6 ನ್ಯಾಯಕ್ಕೋಸ್ಕರ ಕೂತುಕೊಂಡವನಿಗೆ ನ್ಯಾಯದ ಆತ್ಮವೂ, ಬಾಗಿಲಿನ ಕಡೆಗೆ ಯುದ್ಧವನ್ನು ತಿರುಗಿಸುವವನಿಗೆ ಪರಾಕ್ರಮವೂ ಆಗಿರುವನು.
ISA 28:7 ಇವರು ಸಹ ದ್ರಾಕ್ಷಾರಸದಿಂದ ಮತ್ತರಾಗಿದ್ದಾರೆ. ಮದ್ಯದಿಂದಲೂ ಓಲಾಡುತ್ತಿದ್ದಾರೆ. ಯಾಜಕನೂ ಪ್ರವಾದಿಯೂ ಮದ್ಯದಿಂದ ಮತ್ತರಾಗಿದ್ದಾರೆ. ದ್ರಾಕ್ಷಾರಸದಿಂದ ತೂರಾಡುತ್ತಿದ್ದಾರೆ. ಮದ್ಯದಿಂದ ಓಲಾಡುತ್ತಿದ್ದಾರೆ. ದರ್ಶನವಾಗುತ್ತಿರುವಾಗಲೂ ಅವರು ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.
ISA 28:8 ಮೇಜುಗಳೆಲ್ಲಾ ಸ್ಥಳ ಉಳಿಯದ ಹಾಗೆ ಅಸಹ್ಯವಾದ ಕಕ್ಕುವಿಕೆಯಿಂದ ತುಂಬಿವೆ.
ISA 28:9 ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಮತ್ತು ಯಾರಿಗೆ ಬೋಧನೆಯನ್ನು ತಿಳಿದುಕೊಳ್ಳುವ ಹಾಗೆ ಮಾಡುತ್ತಾನೆ? ಆಗತಾನೇ ಹಾಲು ಬಿಟ್ಟ ಕೂಸುಗಳಿಗೋ, ಎಳೆಯ ಮಕ್ಕಳಿಗೋ?
ISA 28:10 ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ.
ISA 28:11 ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರೊಡನೆ ಮಾತನಾಡುತ್ತಾನೆ.
ISA 28:12 ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ. ನಿಮಗೆ ಅನುಕೂಲವಾದ ಉಪಶಮನ ಇದೇ,” ಎಂದು ಹೇಳಿದಾಗಲೂ ಅವರು ಕೇಳಲಿಲ್ಲ.
ISA 28:13 ಆಗ ಯೆಹೋವ ದೇವರು ಅವರಿಗೆ ಹೀಗೆ ಹೇಳಿದರು: ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಇದರಿಂದ ಅವರು ಎಡವಿಬಿದ್ದು ಗಾಯಗೊಳ್ಳಬಹುದು. ಮತ್ತು ಬಲೆಯಲ್ಲಿ ಸಿಕ್ಕಿ ಬೀಳುವರು.
ISA 28:14 ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನರನ್ನು ಆಳುವ ಹಾಸ್ಯದ ಜನರಾದ ನೀವು ಯೆಹೋವ ದೇವರ ಮಾತನ್ನು ಕೇಳಿರಿ.
ISA 28:15 “ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ. ವಿಪರೀತವಾದ ಶಿಕ್ಷೆಯು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು; ನಮ್ಮ ಅಸತ್ಯವನ್ನು ಆಶ್ರಯವಾಗಿ ಮಾಡಿಕೊಂಡು, ಮೋಸದಲ್ಲಿ ಅಡಗಿಕೊಂಡಿದ್ದೇವೆ,” ಎನ್ನುತ್ತೀರಲ್ಲಾ?
ISA 28:16 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪರೀಕ್ಷಿತವಾಗಿಯೂ, ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ. ಭರವಸೆ ಇಡುವವನು ಆತುರಪಡನು.
ISA 28:17 ನಾನು ನ್ಯಾಯವನ್ನು ಅಳತೆಗೋಲನ್ನಾಗಿಯೂ ಮತ್ತು ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು. ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು. ಅಡಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿ ಬಿಡುವುದು.
ISA 28:18 ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವುದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವುದಿಲ್ಲ. ವಿಪರೀತ ಬಾಧೆಯು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.
ISA 28:19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು. ಏಕೆಂದರೆ ಅದು ಹೊತ್ತಾರೆಯಿಂದ ಹೊತ್ತಾರೆಗೆ, ಹಗಲು ರಾತ್ರಿಯೂ ಹಾದುಹೋಗುವುದು.” ಆಗ ದೇವರ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.
ISA 28:20 ಮೈ ಚಾಚುವುದಕ್ಕೆ ಹಾಸಿಗೆ ಚಿಕ್ಕದಾಗಿರುವುದು. ಮುದುರಿಕೊಂಡು ಮಲಗುವುದಕ್ಕೆ, ಹೊದಿಕೆಯ ಅಗಲ ಸಾಲದು.
ISA 28:21 ಯೆಹೋವ ದೇವರು ಪೆರಾಚೀಮ್ ಪರ್ವತದಲ್ಲಿ ಎದ್ದಂತೆ ಏಳುವರು. ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ, ಅಪರೂಪವಾದ ತಮ್ಮ ಕೆಲಸವನ್ನು ನಡಿಸಿ, ಅಪೂರ್ವವಾದ ತಮ್ಮ ಕಾರ್ಯವನ್ನು ನೆರವೇರಿಸುವನು.
ISA 28:22 ಹೀಗಿರುವುದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗಬೇಡಿರಿ. ಸರ್ವಶಕ್ತ ಆಗಿರುವ ಕರ್ತ ಯೆಹೋವ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರ ತರಲು ನಿರ್ಣಯಿಸಿದೆ, ಎಂಬ ತೀರ್ಪನ್ನು ನಾನು ಕೇಳಿದ್ದೇನೆ.
ISA 28:23 ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
ISA 28:24 ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣುಹೆಂಟೆಯನ್ನು ತೆಗೆದು, ದಿನವೆಲ್ಲಾ ಹೊಡೆಯುವನೋ?
ISA 28:25 ಅದರ ಮೇಲ್ಭಾಗವನ್ನು ಹಸನು ಮಾಡಿದ ಮೇಲೆ ಅಗಸೆಯನ್ನು ಚೆಲ್ಲಿ, ಜೀರಿಗೆಯನ್ನು ಚದರಿಸಿ ಮತ್ತು ಗೋಧಿಯನ್ನು ಸಾಲುಸಾಲಾಗಿಯೂ, ಜವೆಗೋಧಿಯನ್ನು ನೇಮಕವಾದ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೇ.
ISA 28:26 ಏಕೆಂದರೆ ಅವನ ದೇವರು ಅವನಿಗೆ ಸೂಚಿಸುತ್ತಾರೆ. ಮತ್ತು ಸರಿಯಾದ ಮಾರ್ಗವನ್ನು ಕಲಿಸುತ್ತಾರೆ.
ISA 28:27 ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವುದಿಲ್ಲ. ಜೀರಿಗೆಯನ್ನು ಒಕ್ಕುವುದು ಬಂಡಿಯ ಚಕ್ರ ತಿರುಗಿಸುವುದರಿಂದ ಅಲ್ಲ. ಅಗಸೆಯು ಕೋಲಿನಿಂದಲೂ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದ ಆಗಿರುತ್ತದೆ.
ISA 28:28 ರೊಟ್ಟಿಗಾಗಿ ಗೋಧಿಯ ಕಾಳನ್ನು ಪುಡಿಮಾಡಬೇಕು; ಯಾವಾಗಲೂ ಅದನ್ನು ಒಕ್ಕುತ್ತಿರುವುದಿಲ್ಲ. ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವುದಿಲ್ಲ ಅವನ ಕುದುರೆ ಸವಾರದಿಂದ ಒಕ್ಕುತ್ತಿರುವುದಿಲ್ಲ.
ISA 28:29 ಈ ವಿವೇಕವು ಸಹ ಅತಿಶಯ ಆಲೋಚನಾಪರರೂ, ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.
ISA 29:1 ಅಯ್ಯೋ, ಅರೀಯೇಲೇ, ಅರೀಯೇಲೇ, ದಾವೀದನು ವಾಸಿಸಿದ ಪಟ್ಟಣವೇ! ವರುಷಕ್ಕೆ ವರುಷವನ್ನು ಕೂಡಿಸಿರಿ. ನಿಮ್ಮ ಹಬ್ಬಗಳ ಚಕ್ರ ಮುಂದುವರಿಯಲಿ.
ISA 29:2 ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ, ದುಃಖವೂ ಇರುವುದು. ಅವಳು ನನಗೆ ಬಲಿಪೀಠದ ಒಲೆಯಂತೆ ಇರುತ್ತಾಳೆ.
ISA 29:3 ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ, ದಿಬ್ಬ ಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.
ISA 29:4 ಆಗ ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ. ನಿನ್ನ ನುಡಿಯು ಧೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು. ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರುವುದು. ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.
ISA 29:5 ಅದೂ ಅಲ್ಲದೆ ನಿನ್ನ ವೈರಿಗಳ ಗುಂಪು ಸೂಕ್ಷ್ಮವಾದ ಧೂಳಿನಂತಾಗುವುದು. ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರುವುದು. ಹೌದು, ಅದು ಕ್ಷಣಮಾತ್ರದಲ್ಲಿ ಫಕ್ಕನೆ ಆಗುವುದು.
ISA 29:6 ಸೇನಾಧೀಶ್ವರ ಯೆಹೋವ ದೇವರು ಗುಡುಗಿನಿಂದಲೂ, ಮಹಾಶಬ್ದದಿಂದಲೂ, ಬಿರುಗಾಳಿ ಸುಳಿಗಾಳಿಯಿಂದಲೂ, ದಹಿಸುವ ಅಗ್ನಿಜ್ವಾಲೆಯಿಂದಲೂ ಪ್ರತ್ಯಕ್ಷರಾಗುವರು.
ISA 29:7 ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ ಬಾಧಿಸುವ ಸಕಲ ಜನಾಂಗಗಳು ರಾತ್ರಿಯ ದರ್ಶನದ ಕನಸಿನಂತೆ ಮಾಯವಾಗುವುವು.
ISA 29:8 ಹಸಿದ ಮನುಷ್ಯನು ಕನಸು ಕಂಡು ಇಗೋ, ಉಣ್ಣುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚೆತ್ತಾಗ ಪ್ರಾಣ ತುಂಬಿದ ಹಾಗೆಯೂ, ಬಾಯಾರಿದವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚರವಾದಾಗ ಬಲಹೀನನಾಗಿದ್ದು, ಪ್ರಾಣ ಆಶಿಸುವ ಹಾಗೆಯೇ ಚೀಯೋನ್ ಪರ್ವತಕ್ಕೆ ವಿರೋಧವಾಗಿ ಯುದ್ಧಮಾಡುವ ಎಲ್ಲಾ ಜನಾಂಗಗಳ ಸಮೂಹವಿರುವುದು.
ISA 29:9 ತಾಮಸ ಮಾಡಿ ಆಶ್ಚರ್ಯಪಡಿರಿ. ಕುರುಡು ಮಾಡಿಕೊಂಡು ದೃಷ್ಟಿಯಿಲ್ಲದವರಾಗಿರಿ ಇವರು ಅಮಲೇರಿದ್ದಾರೆ. ಆದರೆ ದ್ರಾಕ್ಷಾರಸದಿಂದಲ್ಲ. ಅವರು ಕೂಗಾಡುತ್ತಾರೆ, ಆದರೆ ಮದ್ಯದಿಂದಲ್ಲ.
ISA 29:10 ಯೆಹೋವ ದೇವರು ನಿಮ್ಮ ಮೇಲೆ ಗಾಢನಿದ್ರೆಯ ಆತ್ಮವನ್ನು ಹೊಯ್ದು, ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾರೆ. ಪ್ರವಾದಿಗಳನ್ನೂ, ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನು ಮುಚ್ಚಿದ್ದಾರೆ.
ISA 29:11 ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿದ ಗ್ರಂಥದ ವಾಕ್ಯಗಳ ಹಾಗಾಯಿತು. ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು, “ಇದನ್ನು ಓದು,” ಎಂದು ವಿನಂತಿಸಿದರೆ ಅವನು, “ಮುದ್ರೆ ಹಾಕಿದೆಯೆಲ್ಲಾ, ಆಗುವುದಿಲ್ಲ,” ಅನ್ನುವನು.
ISA 29:12 ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು ನನಗೆ ಓದಲು ಬರುವುದಿಲ್ಲ ಅನ್ನುವನು.
ISA 29:13 ಕರ್ತರು ಹೇಳುವುದೇನೆಂದರೆ: “ಈ ಜನರು ಬಾಯಿಂದ ನನ್ನನ್ನು ಸಮೀಪಿಸಿ, ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.
ISA 29:14 ಹೀಗಿರುವುದರಿಂದ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು. ಅವರ ಜ್ಞಾನಿಗಳ ಜ್ಞಾನವು ಅಳಿಯುವುದು. ಅವರ ವಿವೇಕಿಗಳ ವಿವೇಕವು ಅಡಗಿಕೊಳ್ಳುವುದು.”
ISA 29:15 ತಮ್ಮ ಆಲೋಚನೆಗಳನ್ನು ಯೆಹೋವ ದೇವರಿಗೆ ಮರೆಮಾಡುವುದಕ್ಕೆ ಅಗಾಧದಲ್ಲಿ ಹೋಗಿ, ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು? ಎಂದುಕೊಂಡು, ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸುವವರಿಗೆ ಕಷ್ಟ!
ISA 29:16 ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು, ಕುಂಬಾರನು ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು! ಉಂಟುಮಾಡಿದವನಿಗೆ ಉಂಟುಮಾಡಿದ್ದು, “ನೀನು ನನ್ನನ್ನು ಉಂಟುಮಾಡಲಿಲ್ಲ,” ಎಂತಲೂ, ಮಡಕೆ ಕುಂಬಾರನಿಗೆ, “ನಿನಗೆ ಏನೂ ಗೊತ್ತಿಲ್ಲ,” ಎಂತಲೂ ಹೇಳಬಹುದೇ?
ISA 29:17 ಆದರೂ ಇನ್ನು ಸ್ವಲ್ಪಕಾಲದಲ್ಲಿ ಲೆಬನೋನ್ ಫಲವುಳ್ಳ ಹೊಲವಾಗಿದ್ದು, ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವುದಿಲ್ಲವೋ?
ISA 29:18 ಆ ದಿನದಲ್ಲಿ ಕಿವುಡರು ಗ್ರಂಥದ ಮಾತುಗಳನ್ನು ಕೇಳುವರು ಮತ್ತು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ, ಅಂಧಕಾರದೊಳಗಿಂದಲೂ ಕಾಣುವುವು.
ISA 29:19 ದೀನರ ಸಂತೋಷವು ಯೆಹೋವ ದೇವರಲ್ಲಿ ಹೆಚ್ಚಾಗುವುವು. ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸುವರು.
ISA 29:20 ಭಯಂಕರನು ಇಲ್ಲವಾಗುತ್ತಾನೆ. ಅಪಹಾಸ್ಯ ಮಾಡುವವರು ಕಣ್ಮರೆಯಾಗುತ್ತಾರೆ. ಕೇಡಿಗೆ ಕಾಯುವವರೆಲ್ಲರೂ ನಾಶವಾಗುತ್ತಾರೆ.
ISA 29:21 ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.
ISA 29:22 ಆದ್ದರಿಂದ ಅಬ್ರಹಾಮನನ್ನು ವಿಮೋಚಿಸಿದ ಯೆಹೋವ ದೇವರು ಯಾಕೋಬಿನ ಮನೆತನದ ವಿಷಯವಾಗಿ ಹೇಳುವುದೇನೆಂದರೆ, “ಈಗ ಯಾಕೋಬ್ಯರು ನಾಚಿಕೆಪಡುವುದಿಲ್ಲ. ಅವನ ಮುಖವು ಕಳೆಗುಂದುವುದಿಲ್ಲ.
ISA 29:23 ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು ತನ್ನ ಮಧ್ಯದಲ್ಲಿ ಕಾಣುವಾಗ ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ, ಯಾಕೋಬಿನ ಪರಿಶುದ್ಧನನ್ನು ಪ್ರತಿಷ್ಠಿಸುವರು, ಇಸ್ರಾಯೇಲಿನ ದೇವರಿಗೆ ಭಯಪಡುವರು.
ISA 29:24 ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗೊಣಗುಟ್ಟುವವರು ಬೋಧನೆ ಕಲಿಯುವರು.”
ISA 30:1 “ದ್ರೋಹಿಗಳಾದ ಮಕ್ಕಳಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಆಲೋಚನೆಯನ್ನು ಮಾಡುತ್ತಾರೆ ಆದರೆ ನನ್ನಿಂದಲ್ಲ. ನನ್ನ ಆತ್ಮ ಪ್ರೇರಿತರಾಗದೆ ಉಪಾಯಗಳನ್ನು ಮಾಡುತ್ತಾರೆ, ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
ISA 30:2 ಫರೋಹನಲ್ಲಿ ತಾವು ಬಲಗೊಳ್ಳುವ ಆಶ್ರಯವನ್ನು ಈಜಿಪ್ಟಿನ ನೆರಳಿನಲ್ಲಿ ಭರವಸವಿಡಬೇಕೆಂದು ನನ್ನ ಮಾತನ್ನು ಕೇಳದೆ, ಈಜಿಪ್ಟಿಗೆ ಪ್ರಯಾಣವಾಗಿ ಹೊರಟಿದ್ದಾರೆ.
ISA 30:3 ಆದರೆ ಫರೋಹನ ಆಶ್ರಯದಿಂದ ನಿಮಗೆ ನಾಚಿಕೆಯೂ, ಈಜಿಪ್ಟ್ ನೆರಳಿನ ಭರವಸೆಯಿಂದ ನಿಮಗೆ ನಿಂದೆಯೂ ಉಂಟಾಗುವುದು.
ISA 30:4 ಏಕೆಂದರೆ ಅವನ ಪ್ರಧಾನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿಗಳು ಹಾನೇಸಿಗೆ ಬಂದಿದ್ದಾರೆ.
ISA 30:5 ತಮಗೆ ಪ್ರಯೋಜನವಾಗದೆ ಸಹಾಯಕ್ಕೂ, ಪ್ರಯೋಜನಕ್ಕೂ ಅಲ್ಲ. ನಿಂದೆಗೂ, ನಾಚಿಕೆಗೂ ಇರುವ ಜನಕ್ಕೆ ಎಲ್ಲರೂ ನಾಚಿಕೆಪಡುತ್ತಾರೆ.
ISA 30:6 ನೆಗೆವಿನ ಮೃಗಗಳ ವಿಷಯವಾದ ಪ್ರವಾದನೆ: ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿಗಳ ಬೆನ್ನ ಮೇಲೆ ತಮ್ಮ ಬದುಕನ್ನೂ, ಒಂಟೆಗಳ ಮೇಲೆ ತಮ್ಮ ದ್ರವ್ಯಗಳನ್ನು ತಮಗೆ ಪ್ರಯೋಜನವಿಲ್ಲದ ಜನಕ್ಕೆ ತೆಗೆದುಕೊಂಡು ಹೋಗುತ್ತಾರೆ.
ISA 30:7 ಏಕೆಂದರೆ ಈಜಿಪ್ಟಿನವರ ಸಹಾಯವು ವ್ಯರ್ಥವೇ ವ್ಯರ್ಥ. ಆದ್ದರಿಂದ ನಾನು ಅವಳಿಗೆ ಇದನ್ನು ಕುರಿತು ಅವರ ಬಲವು ನಿಂತು ಹೋಗಿದೆ ಎಂದು ನಾನು ಕೂಗಿದ್ದೇನೆ.
ISA 30:8 ಈಗ ಹೋಗಿ ಇದನ್ನು ಅದರ ಮುಂದೆ ಹಲಗೆಯಲ್ಲಿ ಬರೆ. ಅದನ್ನು ಸುರುಳಿಯಲ್ಲಿ ಬರೆಯಿರಿ, ಮುಂದೆ ಬರುವ ನಿತ್ಯಕಾಲಕ್ಕಾಗಿ ಶಾಶ್ವತ ಸಾಕ್ಷಿಯಾಗಿರಲಿ.
ISA 30:9 ಏನೆಂದರೆ ಇವರು ತಿರುಗಿಬೀಳುವ ಜನರೇ. ಸುಳ್ಳಾಡುವ ಮಕ್ಕಳು. ಯೆಹೋವ ದೇವರ ಉಪದೇಶಕ್ಕೆ ಕಿವಿಗೊಡದ ಮಕ್ಕಳೇ.
ISA 30:10 ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.
ISA 30:11 “ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗದಿಂದ ತೊಲಗಿರಿ. ಇಸ್ರಾಯೇಲರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ,” ಎಂದು ಹೇಳುತ್ತಾರೆ.
ISA 30:12 ಆದಕಾರಣ ಇಸ್ರಾಯೇಲರ ಪರಿಶುದ್ಧನು ಹೇಳುವುದೇನೆಂದರೆ, “ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲಾತ್ಕಾರ, ಕುಯುಕ್ತಿಗಳನ್ನು ನಂಬಿ, ಅವುಗಳನ್ನೇ ಆಧಾರ ಮಾಡಿಕೊಂಡದ್ದರಿಂದ
ISA 30:13 ಎತ್ತರವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿ ಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವುದು.
ISA 30:14 ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲಿ, ಬಾವಿಯಿಂದ ನೀರನ್ನು ತೆಗೆಯುವುದಕ್ಕಾಗಲಿ, ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.”
ISA 30:15 ಏಕೆಂದರೆ ಇಸ್ರಾಯೇಲಿನ ಪರಿಶುದ್ಧನಾದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.
ISA 30:16 ಆದರೆ ನೀವು, ‘ಬೇಡವೇ ಬೇಡ. ಏಕೆಂದರೆ ನಾವು ಕುದುರೆಗಳ ಮೇಲೆ ಓಡುವೆವು,’ ಎಂದುಕೊಂಡಿದ್ದರಿಂದ ನೀವು ಓಡಿಹೋಗುವಿರಿ, ನಾವು ವೇಗವಾಗಿ ಸವಾರಿ ಮಾಡುವೆವು, ಎಂದುಕೊಂಡಿದ್ದರಿಂದ ಆ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.
ISA 30:17 ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”
ISA 30:18 ಹೀಗಿರಲು ಯೆಹೋವ ದೇವರು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತವಾಗಿ ಕಾಣಿಸಿಕೊಳ್ಳುವನು. ಏಕೆಂದರೆ ಯೆಹೋವ ದೇವರು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
ISA 30:19 ಏಕೆಂದರೆ, ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳಬೇಕಾಗಿಲ್ಲ. ನೀವು ಕೂಗಿ ದುಃಖಿಸಿದ ಶಬ್ದವನ್ನು ದೇವರು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವರು. ದೇವರು ನಿಮ್ಮ ಸ್ವರವನ್ನು ಕೇಳಿದ ಕೂಡಲೇ ಸದುತ್ತರವನ್ನು ದಯಪಾಲಿಸುವರು.
ISA 30:20 ಕರ್ತದೇವರು ನಿಮಗೆ ಕಷ್ಟವನ್ನು, ಶ್ರಮೆಯನ್ನು, ಅನ್ನಪಾನಗಳನ್ನಾಗಿ ಕೊಟ್ಟರೂ, ಇನ್ನೂ ನಿಮ್ಮ ಬೋಧಕರು ನಮಗೆ ಮರೆಯಾಗಿ ಇರುವುದಿಲ್ಲ. ಆದರೆ ನಿನ್ನ ಕಣ್ಣುಗಳು ನಿಮ್ಮ ಬೋಧಕರನ್ನು ನೋಡುತ್ತಿರುವುವು.
ISA 30:21 ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ, “ಇದೇ ಮಾರ್ಗ ಇದರಲ್ಲೇ ನಡೆಯಿರಿ,” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.
ISA 30:22 ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ, ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನೂ ನೀವು ಹೊಲಸ್ಸಾಗಿ ಭಾವಿಸಿ, ಆ ವಿಗ್ರಹಕ್ಕೆ, “ತೊಲಗಿಹೋಗು,” ಎಂದು ಹೇಳಿ, ಅದನ್ನು ಹೊಲೆಯ ಬಟ್ಟೆಯಂತೆ ಬಿಸಾಡಿ ಬಿಡುವಿರಿ.
ISA 30:23 ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸುವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.
ISA 30:24 ಹೊಲಗೆಯ್ಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ, ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.
ISA 30:25 ಮಹಾ ಸಂಹಾರದ ದಿವಸದಲ್ಲಿ ಗೋಪುರಗಳು ಬೀಳುವಾಗ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ, ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು ನೀರಿನ ಕಾಲುವೆಗಳೂ ಹರಿಯುತ್ತಿರುವುವು.
ISA 30:26 ಇಷ್ಟೇ ಅಲ್ಲದೆ ಯೆಹೋವ ದೇವರು ತನ್ನ ಜನರ ವ್ರಣವನ್ನು ಕಟ್ಟಿ, ಅವರ ಪೆಟ್ಟಿನ ಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ, ಏಳು ದಿನಗಳ ಬೆಳಕಿನಂತಾಗುವುದು.
ISA 30:27 ಇಗೋ, ಯೆಹೋವ ದೇವರ ನಾಮವು ದೂರದಿಂದ ಬರುತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇಳುವ ಹೊಗೆಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ಆತನ ನಾಲಿಗೆಯು ದಹಿಸುವ ಅಗ್ನಿಯಂತಿದೆ.
ISA 30:28 ಆತನ ಶ್ವಾಸವು ತುಂಬುತ್ತಾ, ಕಂಠದವರೆಗೂ ಏರುವ ತೊರೆಯಂತಿದೆ. ಜನಾಂಗಗಳನ್ನು ಏನೂ ಉಳಿಸದ ಜರಡಿಯಿಂದ ಜಾಲಿಸುವುದಕ್ಕೆ ಬರುತ್ತಾನೆ. ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆಗಳಲ್ಲಿರುವುದು.
ISA 30:29 ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಆದಂತೆ ನಿಮಗೆ ಹಾಡು ಇರುವುದು. ಯೆಹೋವ ದೇವರ ಪರ್ವತವಾಗಿರುವ ಇಸ್ರಾಯೇಲಿನ ಬಂಡೆಯ ಬಳಿಗೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವುದು.
ISA 30:30 ಆಗ ಯೆಹೋವ ದೇವರು ತನ್ನ ಗಂಭೀರವಾದ ಧ್ವನಿಯನ್ನು ಕೇಳ ಮಾಡಿ, ತೀವ್ರ ಕೋಪ, ದಹಿಸುವ ಅಗ್ನಿ ಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ, ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿಸುವನು.
ISA 30:31 ಯೆಹೋವ ದೇವರು ದಂಡದಿಂದ ದಂಡಿಸುವಾಗ, ಅಸ್ಸೀರಿಯವು ಆತನ ಧ್ವನಿಯಿಂದಲೇ ಮುರಿದು ಹೋಗುವುದು.
ISA 30:32 ಯೆಹೋವ ದೇವರು ಅದರ ಮೇಲೆ ತರುವಂಥ ನೇಮಿಸಿದ ದಂಡವು ಹಾದು ಹೋಗುವಲ್ಲೆಲ್ಲಾ ಅದು ದಮ್ಮಡಿ, ಕಿನ್ನರಿಗಳ ಸಂಗಡ ಇರುವುದು. ಆತನು ಅವರೊಂದಿಗೆ ಯುದ್ಧಗಳಲ್ಲಿ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು.
ISA 30:33 ಪೂರ್ವದಿಂದ ತೋಫೆತ್ ಸಿದ್ಧವಾಗಿದೆ. ಹೌದು, ಅದು ಆಳವಾಗಿಯೂ, ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಚಿತೆಯೊಳಗೆ ಬೆಂಕಿಯೂ, ಬಹಳ ಕಟ್ಟಿಗೆಯೂ ತುಂಬಿರುವುದು. ಯೆಹೋವ ದೇವರ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವುದು.
ISA 31:1 ಸಹಾಯಕ್ಕಾಗಿ ಈಜಿಪ್ಟನ್ನು ಸೇರಿ, ಅಶ್ವಬಲವನ್ನು, ಆಶ್ರಯಿಸುವವರಿಗೆ ಕಷ್ಟ! ಏಕೆಂದರೆ ರಥಗಳು ಬಹಳವೆಂದೂ, ಅವರ ನಂಬಿಕೆಯು ರಥಗಳ ಮೇಲೆ ಏಕೆಂದರೆ ಅವರು ಅನೇಕರು, ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವುದಿಲ್ಲ. ಇಲ್ಲವೆ ಯೆಹೋವ ದೇವರಿಂದ ಸಹಾಯವನ್ನು ಬಯಸುವುದಿಲ್ಲ.
ISA 31:2 ಆದರೂ ಅವರು ಜ್ಞಾನಿ, ಕೇಡನ್ನು ಬರಮಾಡುವರು. ಅವರು ತಮ್ಮ ಮಾತನ್ನು ಹಿಂದೆಗೆಯುವುದಿಲ್ಲ. ಆದರೆ ಕೆಡುಕರ ಮನೆತನಕ್ಕೂ, ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
ISA 31:3 ಈಜಿಪ್ಟಿನವರು ಮನುಷ್ಯ ಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮೂಳೆಮಾಂಸವೇ. ಹೀಗಿರುವುದರಿಂದ ಯೆಹೋವ ದೇವರು ತನ್ನ ಕೈಚಾಚುವಾಗ ಸಹಾಯ ಮಾಡಿದವನು ಮತ್ತು ಸಹಾಯ ಪಡೆದವನೂ ಬಿದ್ದುಹೋಗುವನು. ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
ISA 31:4 ಯೆಹೋವ ದೇವರು ನನಗೆ ಹೀಗೆ ಹೇಳಿದ್ದಾನೆ: ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಕಾವಲುಗಾರನ ಕೂಗನ್ನು ಕೇಳಿ, ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ, ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವುದೋ, ಹಾಗೆಯೇ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತಕ್ಕೋಸ್ಕರವೂ, ಅದರ ಗುಡ್ಡಕ್ಕೋಸ್ಕರವೂ ಯುದ್ಧಮಾಡಲು ಇಳಿದು ಬರುವರು.
ISA 31:5 ರೆಕ್ಕೆಗಳನ್ನು ಚಾಚಿದ ಪಕ್ಷಿಗಳಂತೆ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮನ್ನು ಕಾಪಾಡುವರು. ಅದನ್ನು ರಕ್ಷಿಸಿ ಕಾಯುವರು. ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವರು.
ISA 31:6 ಇಸ್ರಾಯೇಲರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದ್ದೀರೋ, ಆತನ ಕಡೆಗೆ ತಿರುಗಿಕೊಳ್ಳಿರಿ.
ISA 31:7 ಏಕೆಂದರೆ ನೀವು ನಿಮ್ಮ ಸ್ವಂತ ಕೈಗಳು ಪಾಪಕ್ಕೋಸ್ಕರ ಮಾಡಿದ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನು ಬಿಸಾಡಿಬಿಡುವನು.
ISA 31:8 ಆಗ ಅಸ್ಸೀರಿಯದವರು ಖಡ್ಗದಿಂದ ಬೀಳುವರು. ಅದು ಮನುಷ್ಯರ ಖಡ್ಗವಲ್ಲ, ಖಡ್ಗವು ಅವರನ್ನು ನುಂಗುವುದು. ಅದು ಮಾನವ ಖಡ್ಗವಲ್ಲ. ಅವರು ಖಡ್ಗದಿಂದ ತಪ್ಪಿಸಿಕೊಳ್ಳಲು ಓಡುವರು. ಅವರ ಯೌವನಸ್ಥರು ಜೀತದಾಳುಗಳಾಗುವರು.
ISA 31:9 ಭಯಾನಕತೆಯಿಂದ ಅವರ ಕೋಟೆ ಬೀಳುವುದು, ಯುದ್ಧದ ದೃಶ್ಯವನ್ನು ನೋಡಿ ಅವರ ಸೇನಾಪತಿಗಳು ಧ್ವಜಸ್ಥಾನದಿಂದ ದಿಕ್ಕುಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ, ಯೆರೂಸಲೇಮಿನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಯೆಹೋವ ದೇವರು ಘೋಷಿಸುತ್ತಾರೆ.
ISA 32:1 ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.
ISA 32:2 ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ, ಬಿರುಗಾಳಿಗೋಸ್ಕರ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿಯ ನೀರಿನ ಕಾಲುವೆಗಳ ಹಾಗೂ, ಬಾಯಾರಿದ ನಾಡಿಗೆ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.
ISA 32:3 ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.
ISA 32:4 ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆ ಸ್ವಚ್ಛವಾಗಿ ಮಾತನಾಡುವುದಕ್ಕೆ ಸಿದ್ಧವಾಗಿರುವುದು.
ISA 32:5 ಇನ್ನು ಮೇಲೆ ಮೂರ್ಖನು ಘನವಂತನೆನಿಸಿಕೊಳ್ಳನು. ಮೋಸಗಾರನು ಮಹನೀಯನೆನಿಸಿಕೊಳ್ಳನು.
ISA 32:6 ಏಕೆಂದರೆ ಮೂರ್ಖನು ಮೂರ್ಖವಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾಸಿಸುವಂತೆಯೂ, ಯೆಹೋವ ದೇವರಿಗೆ ವಿರೋಧವಾಗಿ ಸಂಪೂರ್ಣವಾಗಿ ತಪ್ಪಿ ಹೋಗುವವರಂತೆಯೂ, ಹಸಿವೆಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
ISA 32:7 ಮೋಸಗಾರನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವನು ಬಡವರನ್ನು ಸುಳ್ಳು ಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.
ISA 32:8 ಘನವಂತನಾದರೋ, ಘನಕಾರ್ಯಗಳನ್ನು ಕಲ್ಪಿಸುವನು. ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
ISA 32:9 ನಿಶ್ಚಿಂತೆಯರಾದ ಮಹಿಳೆಯರೇ, ಏಳಿರಿ. ನನ್ನ ಸ್ವರವನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
ISA 32:10 ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷಿ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.
ISA 32:11 ನಿಶ್ಚಿಂತೆಯುಳ್ಳ ಸ್ತ್ರೀಯರೇ, ನೀವು ನಡುಗಿರಿ. ನಿರ್ಭೀತ ಪುತ್ರಿಯರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ, ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
ISA 32:12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ನಿಮಿತ್ತವೂ ನಿಮ್ಮ ಎದೆ ಬಡಿದುಕೊಳ್ಳಿರಿ.
ISA 32:13 ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ.
ISA 32:14 ಅರಮನೆ ಹಾಳುಬಿದ್ದಿದೆ. ಗಲಭೆಯಪಟ್ಟಣವು ನಿರ್ಜನವಾಗುವುದು, ಪರ್ವತ ಮತ್ತು ಬುರುಜು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ, ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.
ISA 32:15 ಆದರೆ ದೇವರು ಉನ್ನತಲೋಕದಲ್ಲಿ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು, ಫಲಭರಿತ ಭೂಮಿ ಸಮೃದ್ಧವಾದ ಅರಣ್ಯವಾಗಿ ಮಾರ್ಪಡುವುದು.
ISA 32:16 ನ್ಯಾಯವು ಮರುಭೂಮಿಯಲ್ಲಿ ನೆಲೆಗೊಳ್ಳುವುದು, ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವುದು.
ISA 32:17 ನೀತಿಯ ಕೆಲಸವು ಸಮಾಧಾನವೂ, ನೀತಿಯ ಫಲವು ನಿತ್ಯವಾದ ಶಾಂತಿಯೂ, ಭರವಸೆಯೂ ಆಗಿರುವುದು.
ISA 32:18 ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ, ಭದ್ರವಾದ ಸ್ಥಳಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
ISA 32:19 ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗುವುದು. ಪಟ್ಟಣವು ಸಂಪೂರ್ಣವಾಗಿ ನೆಲಸಮವಾಗುವುದು.
ISA 32:20 ನೀರಿರುವ ಎಲ್ಲಾ ಕಡೆಗಳಲ್ಲಿ ಬಿತ್ತನೆ ಮಾಡಿ, ದನಕತ್ತೆಗಳನ್ನು ಮೇಯಲು ಬಿಡುವ ನೀವು ಧನ್ಯರೇ ಸರಿ.
ISA 33:1 ಹಾಳು ಮಾಡುತ್ತಿರುವವನೇ, ನಿನಗೆ ಕಷ್ಟ! ನಿನ್ನನ್ನು ಯಾರೂ ಸೂರೆಮಾಡದಿದ್ದರೂ ನೀನು ಸೂರೆಮಾಡುತ್ತಿರುವೆ; ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆ ಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳು ಮಾಡುತ್ತಿರುವ ನೀನು, ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.
ISA 33:2 ಯೆಹೋವ ದೇವರೇ, ನಮ್ಮ ಕಡೆಗೆ ಕೃಪೆ ತೋರಿಸಿರಿ. ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.
ISA 33:3 ನಿಮ್ಮ ಸೈನ್ಯದ ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀವು ಏಳುವಾಗ ರಾಜ್ಯಗಳು ಚದರಿ ಹೋಗುತ್ತವೆ.
ISA 33:4 ನಿಮ್ಮ ಕೊಳ್ಳೆಯನ್ನು ಇತರರು ಮಿಡತೆಗಳಂತೆ ಕೊಳ್ಳೆಮಾಡುವರು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು.
ISA 33:5 ಯೆಹೋವ ದೇವರು ಉನ್ನತೋನ್ನತನಾಗಿದ್ದಾನೆ. ಏಕೆಂದರೆ ಆತನು ಮೇಲಿನ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿ ಮತ್ತು ನ್ಯಾಯಗಳಿಂದ ತುಂಬಿಸಿದ್ದಾನೆ.
ISA 33:6 ಅವರು ನಿಮ್ಮ ಸಮಯಕ್ಕೆ ಖಚಿತವಾದ ಆಧಾರವಾಗುತ್ತಾರೆ. ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾಗಿಯೂ ಇರುವನು. ಯೆಹೋವ ದೇವರ ಭಯವೇ ಅವನ ಬೊಕ್ಕಸವಾಗಿರುವುದು.
ISA 33:7 ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.
ISA 33:8 ರಾಜ ಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತು ಹೋದರು. ಅವನು ಒಪ್ಪಂದವನ್ನು ಮೀರಿದ್ದಾನೆ. ಪಟ್ಟಣಗಳನ್ನು ತಿರಸ್ಕಾರ ಮಾಡಿ, ಯಾವ ಮನುಷ್ಯನನ್ನು ಗಣನೆಗೆ ತಾರನು.
ISA 33:9 ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನು ನಾಚಿಕೆಪಟ್ಟು ಕಡಿದು ಬೀಳುವುದು. ಶಾರೋನ್ ಬೆಂಗಾಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ.
ISA 33:10 ಯೆಹೋವ ದೇವರು ಹೀಗೆನ್ನುತ್ತಾರೆ, “ನಾನು ಈಗ ಏಳುವೆನು. ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು. ಈಗ ಉನ್ನತೋನ್ನತನಾಗುವೆನು.
ISA 33:11 ನೀವು ಒಣಹುಲ್ಲನ್ನು ಗರ್ಭಧರಿಸಿ, ಪೈರಿನ ಮೋಟನ್ನು ಹೆರುವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗುವುದು.
ISA 33:12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವುವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿ ಹಚ್ಚಿದಂತಾಗುವುದು.”
ISA 33:13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ.
ISA 33:14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯದಿಂದ ಕಪಟಿಗಳು ಆಶ್ಚರ್ಯಕ್ಕೊಳಗಾಗಿ ಹೀಗೆ ಎಂದುಕೊಳ್ಳುವರು, “ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ವಾಸಿಸಬಲ್ಲರು?”
ISA 33:15 ನೀತಿಯಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈಚಾಚಿದೆ. ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ಕಾಣದಂತೆ ಕಣ್ಣು ಮುಚ್ಚಿಕೊಳ್ಳುವವರೇ ಉನ್ನತ ಸ್ಥಳದಲ್ಲಿ ವಾಸಿಸುವರು.
ISA 33:16 ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿರುವುವು. ರೊಟ್ಟಿಯು ಅವನಿಗೆ ಒದಗುವುದು. ನೀರು ತಪ್ಪುವುದಿಲ್ಲ.
ISA 33:17 ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವುವು. ಅತಿವಿಸ್ತಾರವಾದ ದೇಶವನ್ನು ಕಣ್ಣು ತುಂಬಾ ನೋಡುವಿರಿ.
ISA 33:18 ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕ ಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ.
ISA 33:19 ನೀನು ತಿಳಿಯಲಾಗದ ಹಾಗೆ ಕಠಿಣ ಭಾಷೆಯೂ, ಗ್ರಹಿಸಲಾಗದ ಹಾಗೆ ಅಪರೂಪವಾದ ಮಾತನ್ನು ಆಡಿದ ಜನರನ್ನೂ ಇನ್ನು ಮುಂದೆ ನೀನು ನೋಡುವುದಿಲ್ಲ.
ISA 33:20 ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ. ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ.
ISA 33:21 ಅಲ್ಲಿ ಯೆಹೋವ ದೇವರು ನಮ್ಮ ಬಲಶಾಲಿಯಾಗಿರುತ್ತಾರೆ. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟುವುದಿಲ್ಲ.
ISA 33:22 ಏಕೆಂದರೆ ಯೆಹೋವ ದೇವರು ನಮ್ಮ ನ್ಯಾಯಾಧಿಪತಿಯಾಗಿದ್ದಾರೆ. ಯೆಹೋವ ದೇವರು ನಮಗೆ ಆಜ್ಞೆಕೊಡುವವರು. ಯೆಹೋವ ದೇವರೇ, ನಮ್ಮ ರಾಜ. ಯೆಹೋವ ದೇವರೇ ನಮ್ಮನ್ನು ರಕ್ಷಿಸುವವರು.
ISA 33:23 ನಿನ್ನ ಹಗ್ಗಗಳು ಸಡಲಿ, ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು. ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು.
ISA 33:24 ಚೀಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನಾಗಿದ್ದೇನೆ,” ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಪಾಪವು ಕ್ಷಮಿಸಲಾಗುವುದು.
ISA 34:1 ರಾಷ್ಟ್ರಗಳೇ, ಕೇಳುವುದಕ್ಕೆ ಹತ್ತಿರ ಬನ್ನಿರಿ, ಕಿವಿಗೊಡಿರಿ. ಭೂಮಿಯೂ, ಅದರಲ್ಲಿರುವ ಸಮಸ್ತವೂ; ಲೋಕವೂ, ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.
ISA 34:2 ಯೆಹೋವ ದೇವರ ಕೋಪವು ಸಕಲ ರಾಷ್ಟ್ರಗಳ ಮೇಲೂ, ಅವುಗಳ ಎಲ್ಲಾ ಸೈನ್ಯಗಳ ಮೇಲೂ ರೋಷಗೊಂಡು, ಅವರನ್ನು ಕೊಲೆಗೆ ಗುರಿಮಾಡಿ, ಸಂಪೂರ್ಣವಾಗಿ ನಾಶಮಾಡಿದ್ದಾನೆ.
ISA 34:3 ಅವರಲ್ಲಿ ಹತರಾದವರು, ಬೀದಿಪಾಲಾಗುವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವುದು. ಅವರ ರಕ್ತ ಪ್ರವಾಹದಿಂದ ಪರ್ವತಗಳು ತೋಯಿಸುವುದು.
ISA 34:4 ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವುದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿ ಎಲೆ ಒಣಗಿ, ಗಿಡದಿಂದ ಬೀಳುವಂತೆಯೂ, ಅಂಜೂರ ಮರದಿಂದ ಸುಕ್ಕುಗಟ್ಟಿದ ಅಂಜೂರ ಹಣ್ಣುಗಳು ಉದುರುವಂತೆ ತಾರಾಮಂಡಲವೆಲ್ಲಾ ಬಾಡಿ ಬೀಳುವದು.
ISA 34:5 ನನ್ನ ಖಡ್ಗವು ಪರಲೋಕದಲ್ಲಿ ರೋಷಪಾನ ಮಾಡುವುದು. ಇಗೋ, ಅದು ಎದೋಮಿನ ಮತ್ತು ನಾನು ಶಪಿಸಿದ ಜನರ ಮೇಲೆಯೂ, ನ್ಯಾಯತೀರಿಸುವುದಕ್ಕಾಗಿ ಕೆಳಗೆ ಇಳಿದು ಬರುವುದು.
ISA 34:6 ಯೆಹೋವ ದೇವರ ಖಡ್ಗವು ರಕ್ತದಲ್ಲಿ ಸ್ನಾನ ಮಾಡಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಮುಚ್ಚಲಾಗಿದೆ. ಏಕೆಂದರೆ ಯೆಹೋವ ದೇವರಿಗೆ ಬೊಚ್ರದಲ್ಲಿ ಬಲಿಯು, ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯು ಉಂಟು.
ISA 34:7 ಕಾಡುಕೋಣಗಳೂ ಹೋರಿಗೂಳಿಗಳೂ ಈ ಯಜ್ಞಪಶುಗಳೊಂದಿಗೆ ಬೀಳುವುವು; ನಾಡು ರಕ್ತದಿಂದ ತೊಯ್ದಿರುವುದು; ಅಲ್ಲಿನ ಧೂಳು ಕೊಬ್ಬಿನಿಂದ ಜಿಡ್ಡಾಗಿರುವುದು.
ISA 34:8 ಏಕೆಂದರೆ ಅದು ಯೆಹೋವ ದೇವರು ಮುಯ್ಯಿ ತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.
ISA 34:9 ಎದೋಮಿನ ಪ್ರವಾಹಗಳು ಇಳಿಜಾರಾಗಿ ಮಾರ್ಪಡುವುವು. ಅದರ ಧೂಳು ಗಂಧಕವಾಗುವುದು, ದೇಶವು ಉರಿಯುವ ಡಾಂಬರಿನಂತೆ ಇರುವುದು.
ISA 34:10 ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರುವುದಿಲ್ಲ. ಅದರ ಹೊಗೆಯು ನಿರಂತರವಾಗಿ ಏಳುತ್ತಿರುವುದು. ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರುವುದು, ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು.
ISA 34:11 ಆದರೆ ಬಕಪಕ್ಷಿಯು ಮತ್ತು ಮುಳ್ಳುಹಂದಿಯು ಅದನ್ನು ಆವರಿಸಿಕೊಳ್ಳುವುವು. ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವುವು. ಗಲಿಬಿಲಿ ಎಂಬ ನೂಲನ್ನು, ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು.
ISA 34:12 ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು. ಆದರೆ ಅಲ್ಲಿ ಯಾರೂ ಇರುವುದಿಲ್ಲ. ಅವಳ ಪ್ರಭುಗಳು ಇಲ್ಲದಂತಾಗುವರು.
ISA 34:13 ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವುವು, ಅದರ ಕೋಟೆಗಳಲ್ಲಿ ಮುಳ್ಳುಪೊದೆಗಳು ಇರುವುವು. ಅದು ನರಿಗಳ ನಿವಾಸವೂ, ಗೂಬೆಗಳಿಗೆ ಸ್ಥಾನವೂ ಆಗುವುದು.
ISA 34:14 ಮರುಭೂಮಿಯ ಕಾಡುಮೃಗಗಳು ತೋಳಗಳೊಂದಿಗೆ ಸಂಧಿಸುವುವು, ಕಾಡುಮೇಕೆಗಳು ಪರಸ್ಪರ ಕರೆಯುತ್ತವೆ. ರಾತ್ರಿ ಮೃಗಗಳು ಸಹ ಅಲ್ಲಿ ಮಲಗುತ್ತವೆ. ತಮಗಾಗಿ ವಿಶ್ರಾಂತಿ ಸ್ಥಳಗಳನ್ನು ಕಂಡುಕೊಳ್ಳುತ್ತವೆ.
ISA 34:15 ಅಲ್ಲಿ ಗೂಬೆಯು ಗೂಡನ್ನು ಮಾಡಿಕೊಂಡು, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳನ್ನು ತನ್ನ ರೆಕ್ಕೆಗಳ ನೆರಳಿನಲ್ಲಿ ಕಾಪಾಡುವುದು. ಅಲ್ಲಿಯೂ ಸಹ ಹದ್ದುಗಳು ಪ್ರತಿಯೊಂದೂ ಜೊತೆಜೊತೆಯಾಗಿ ಸೇರಿರುತ್ತವೆ.
ISA 34:16 ಯೆಹೋವ ದೇವರ ಗ್ರಂಥದಲ್ಲಿ ನೀವು ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ತಪ್ಪದು. ಜೊತೆಯಿಲ್ಲದೆ ಒಂದೂ ಇರುವುದಿಲ್ಲ. ಏಕೆಂದರೆ ನನ್ನ ಬಾಯಿಯೇ ಅದನ್ನು ಆಜ್ಞಾಪಿಸಿತು. ಅವರ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತು.
ISA 34:17 ಅವರೇ ಅವುಗಳಿಗೋಸ್ಕರ ಚೀಟು ಹಾಕಿದ್ದಾರೆ. ಅವರ ಕೈಯೇ ಅದನ್ನು ಗೆರೆ ಎಳೆದು, ಅವರಿಗೆ ಹಂಚಿಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿಕೊಳ್ಳುವುವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವುವು.
ISA 35:1 ಅರಣ್ಯವೂ, ಮರುಭೂಮಿಯೂ ಆನಂದಿಸುವುದು: ಒಣ ನೆಲವು ಹರ್ಷಿಸಿ, ತಾವರೆಯಂತೆ ಕಳಕಳಿಸುವುದು.
ISA 35:2 ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು.
ISA 35:3 ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ.
ISA 35:4 ಭಯಭ್ರಾಂತ ಹೃದಯವುಳ್ಳವರಿಗೆ ಬಲಗೊಳ್ಳಿರಿ, ಹೆದರಬೇಡಿರಿ. ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, ದೇವರು ಪ್ರತಿಫಲವನ್ನು ಕೊಡುವುದಕ್ಕೂ ತಾವೇ ಬಂದು ನಿಮ್ಮನ್ನು ರಕ್ಷಿಸುವರು, ಎಂದು ಅವರಿಗೆ ಹೇಳಿರಿ.
ISA 35:5 ಆಗ, ಕುರುಡರ ಕಣ್ಣು ಕಾಣುವುದು. ಕಿವುಡರ ಕಿವಿಗಳು ಕೇಳಿಸುವುವು.
ISA 35:6 ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.
ISA 35:7 ಒಣ ನೆಲವು ಸರೋವರವಾಗುವುದು, ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು.
ISA 35:8 ಅಲ್ಲಿ ರಾಜಮಾರ್ಗ ಇರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನು ಅದರ ಮೇಲೆ ಹಾದು ಹೋಗನು. ಆದರೆ ಅದು ದೇವಜನರಿಗಾಗಿ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿ ತಪ್ಪನು.
ISA 35:9 ಸಿಂಹವು ಅಲ್ಲಿ ಇರದು, ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗವು. ಅದು ಅಲ್ಲಿ ಕಾಣುವುದೇ ಇಲ್ಲ. ಆದರೆ ಬಿಡುಗಡೆಯಾದವರೇ ಅಲ್ಲಿ ನಡೆಯುವರು.
ISA 35:10 ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.
ISA 36:1 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
ISA 36:2 ಆಗ ಅಸ್ಸೀರಿಯದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡನು.
ISA 36:3 ಆಗ ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವನ ಬಳಿಗೆ ಬಂದರು.
ISA 36:4 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?
ISA 36:5 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?
ISA 36:6 ಇಗೋ! ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು. ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.
ISA 36:7 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
ISA 36:8 “ ‘ಹಾಗಾದರೆ, ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
ISA 36:9 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?
ISA 36:10 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.
ISA 36:11 ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
ISA 36:12 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
ISA 36:13 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.
ISA 36:14 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ ಏಕೆಂದರೆ ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
ISA 36:15 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರೆಂದೂ, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲವೆಂದೂ ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವರು.’
ISA 36:16 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
ISA 36:17 ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.
ISA 36:18 “ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆಯಾಗಿರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?
ISA 36:19 ಹಮಾತ್, ಅರ್ಪಾದ್, ಸೆಫರ್ವಯಿಮಿನ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?
ISA 36:20 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
ISA 36:21 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
ISA 36:22 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
ISA 37:1 ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು.
ISA 37:2 ಇದಲ್ಲದೆ ಅವನು ಅರಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನಾದ ಪ್ರವಾದಿ ಯೆಶಾಯನ ಬಳಿಗೆ ಹೋಗಿರಿ,” ಎಂದು ಹೇಳಿ ಕಳುಹಿಸಿದನು.
ISA 37:3 ಆಗ ಅವರು ಯೆಶಾಯನಿಗೆ, “ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ.
ISA 37:4 ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು, ಎಂಬುದಾಗಿ ಹಿಜ್ಕೀಯನು ಅನ್ನುತ್ತಾನೆ,” ಎಂದು ಹೇಳಿದರು.
ISA 37:5 ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದು ಹೇಳಿದಾಗ,
ISA 37:6 ಯೆಶಾಯನು ಅವರಿಗೆ, “ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಕೇಳಿದಂಥ ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿದಂಥ ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ.
ISA 37:7 ಇಗೋ, ನಾನು ಅವರ ಮೇಲೆ ಆತ್ಮವನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತನ್ನ ದೇಶಕ್ಕೆ ಹಿಂದಿರುಗುವನು. ಇದಲ್ಲದೆ ಅವನು ತನ್ನ ದೇಶದಲ್ಲಿ ಖಡ್ಗಕ್ಕೆ ತುತ್ತಾಗುವಂತೆ ಮಾಡುವೆನು,’ ” ಎಂದು ಹೇಳಿದನು.
ISA 37:8 ಹೀಗೆ ಸೈನ್ಯಾಧಿಕಾರಿಯು ಅಸ್ಸೀರಿಯದ ಅರಸನು ಲಾಕೀಷನ್ನು ಬಿಟ್ಟು ಹೊರಟಿದ್ದಾನೆಂದು ಕೇಳಿದಾಗ, ಅವನು ಲಿಬ್ನಕ್ಕೆ ಹೋಗಿ, ಅಲ್ಲಿ ಅರಸನು ಲಿಬ್ನದವರೊಂದಿಗೆ ಯುದ್ಧಮಾಡುತ್ತಿರುವುದನ್ನು ಕಂಡನು.
ISA 37:9 ಅಷ್ಟರಲ್ಲಿ ಕೂಷನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೊರಟಿದ್ದಾನೆಂಬ ಸುದ್ದಿಯನ್ನು ಅಸ್ಸೀರಿಯದ ಅರಸನು ಕೇಳಿ,
ISA 37:10 “ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು.
ISA 37:11 ಇಗೋ, ಅಸ್ಸೀರಿಯದ ಅರಸರು ಸಮಸ್ತ ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ನೀನು ಕೇಳಿದಿಯಲ್ಲಾ. ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವೆಯೋ?
ISA 37:12 ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ?
ISA 37:13 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ, ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ,” ಎಂದು ಪತ್ರ ಬರೆದು ದೂತರ ಮುಖಾಂತರ ಕಳುಹಿಸಿದನು.
ISA 37:14 ಹಿಜ್ಕೀಯನು ಆ ದೂತರ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದಿದನು, ಅನಂತರ ಯೆಹೋವ ದೇವರ ಆಲಯಕ್ಕೆ ಹೋಗಿ ಅದನ್ನು ಯೆಹೋವ ದೇವರ ಮುಂದೆ ತೆರೆದಿಟ್ಟನು.
ISA 37:15 ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ,
ISA 37:16 “ಸೇನಾಧೀಶ್ವರ ಯೆಹೋವ ದೇವರೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ.
ISA 37:17 ಯೆಹೋವ ದೇವರೇ, ನಿಮ್ಮ ಕಿವಿಗೊಟ್ಟು ಕೇಳಿರಿ. ಯೆಹೋವ ದೇವರೇ, ನಿಮ್ಮ ಕಣ್ಣುಗಳನ್ನು ತೆರೆದು ನೋಡಿರಿ. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತುಗಳನ್ನು ಕೇಳಿರಿ.
ISA 37:18 “ಯೆಹೋವ ದೇವರೇ, ಅಸ್ಸೀರಿಯದ ಅರಸರು ಸಕಲ ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ, ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ.
ISA 37:19 ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ.
ISA 37:20 ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.
ISA 37:21 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನೆಂದರೆ, “ನೀನು ಅಸ್ಸೀರಿಯದ ಅರಸನಾದ ಸನ್ಹೇರೀಬನನ್ನು ಕುರಿತು, ಇಸ್ರಾಯೇಲಿನ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದ್ದನ್ನು ಕೇಳಿ,
ISA 37:22 ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: “ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, ನಿನಗೆ ಅಪಹಾಸ್ಯ ಮಾಡುತ್ತಾಳೆ. ಯೆರೂಸಲೇಮಿನ ಪುತ್ರಿಯು ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ.
ISA 37:23 ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದೆ? ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ?
ISA 37:24 ನೀನು ನಿನ್ನ ದೂತರ ಮುಖಾಂತರ ಯೆಹೋವ ದೇವರನ್ನು ನಿಂದಿಸಿರುವೆ. ಇದಲ್ಲದೆ ನೀನು, ‘ನಾನು ನನ್ನ ರಥಸಮೂಹದೊಡನೆ ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. ಅದರ ಉನ್ನತವಾದ ದೇವದಾರುಗಳನ್ನೂ ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. ಅದರ ಅಂಚಿನ ಉನ್ನತವಾದ ಸ್ಥಳವನ್ನೂ, ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ.
ISA 37:25 ಪರದೇಶಗಳಲ್ಲಿ ನಾನು ಬಾವಿಗಳನ್ನು ಅಗೆದು, ನೀರು ಕುಡಿದಿದ್ದೇನೆ. ನನ್ನ ಅಂಗಾಲುಗಳಿಂದ ಈಜಿಪ್ಟಿನವರ ಎಲ್ಲಾ ನದಿಗಳನ್ನು ಬತ್ತಿಹೋಗುವಂತೆ ಮಾಡಿದ್ದೇನೆ, ಎಂದು ಕೊಚ್ಚಿಕೊಂಡಿದ್ದೀ.’
ISA 37:26 “ಹೀಗಾಗಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಣಯಿಸಿದ್ದನ್ನು ನೀನು ಕೇಳಲಿಲ್ಲವೋ? ಪುರಾತನ ದಿನಗಳಲ್ಲಿ ನಾನು ಯೋಚಿಸಿದ್ದನ್ನು, ಈಗ ನಾನು ಅದನ್ನು ನೆರವೇರಿಸಿದ್ದೇನೆ. ಆದ್ದರಿಂದಲೇ ನೀನು ಕೋಟೆಗಳುಳ್ಳ ಪಟ್ಟಣಗಳನ್ನು ಹಾಳಾದ ದಿಬ್ಬಗಳಾಗಿ ಮಾಡಿಬಿಟ್ಟಿರುವೆ
ISA 37:27 ಆದ್ದರಿಂದ ಅವುಗಳ ನಿವಾಸಿಗಳು ಬಲಹೀನರಾಗಿ ಹೆದರಿ ಆಶಾಭಂಗಹೊಂದಿ ನಾಚಿಕೆಪಟ್ಟರು. ಅವರು ಹೊಲದ ಹುಲ್ಲಿನಂತೆಯೂ, ಹಸಿರು ಸಸಿಗಳಂತೆಯೂ, ಮಾಳಿಗೆಯ ಮೇಲಿನ ಹುಲ್ಲಿನಂತೆಯೂ, ಬೆಳೆಯುವುದಕ್ಕಿಂತ ಮುಂಚೆಯೇ ಬಾಡಿಹೋಗುವ ಪೈರಿನಂತೆಯೂ ಅವರಿದ್ದಾರೆ.
ISA 37:28 “ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು.
ISA 37:29 ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ; ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, ನೀನು ಬಂದ ದಾರಿಯಿಂದಲೇ ನಿನ್ನನ್ನು ಹಿಂದಿರುಗಿಸುವೆನು.
ISA 37:30 “ಹಿಜ್ಕೀಯನೇ, “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವುದೇ ನಿಮಗೆ ಸಂಕೇತವಾಗಿರುವದು.
ISA 37:31 ಯೆಹೂದದ ಮನೆತನದಲ್ಲಿ ತಪ್ಪಿಸಿಕೊಂಡು ಉಳಿದವರು ತಿರುಗಿ, ದೇಶದಲ್ಲಿ ಬೇರೂರಿ ನೆಲೆಗೊಂಡು ಅಭಿವೃದ್ಧಿಯಾಗುವರು.
ISA 37:32 ಏಕೆಂದರೆ ಯೆರೂಸಲೇಮಿನಿಂದ ಉಳಿದವರೂ, ಚೀಯೋನ್ ಪರ್ವತದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೇನಾಧೀಶ್ವರ ಯೆಹೋವ ದೇವರ ಆಸಕ್ತಿಯು ಇದನ್ನು ನೆರವೇರಿಸುವುದು.
ISA 37:33 “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: “ಅವನು ಈ ಪಟ್ಟಣದೊಳಗೆ ಬರುವುದಿಲ್ಲ. ಅಲ್ಲಿ ಬಾಣವನ್ನು ಎಸೆಯುವುದಿಲ್ಲ. ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು. ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ.
ISA 37:34 ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು, ಈ ಪಟ್ಟಣದೊಳಗೆ ಬರುವುದೇ ಇಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 37:35 “ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.”
ISA 37:36 ಆಗ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು.
ISA 37:37 ಆಗ ಅಸ್ಸೀರಿಯದ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
ISA 37:38 ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಆಲಯದಲ್ಲಿ ಆರಾಧನೆ ಮಾಡುತ್ತಿರುವಾಗ, ಅವನ ಮಕ್ಕಳಾದ ಅದ್ರಮ್ಮೆಲೆಕ್, ಸರೆಚೆರ್ ಎಂಬವರು ಅವನನ್ನು ಖಡ್ಗದಿಂದ ಕೊಂದು, ಅರಾರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
ISA 38:1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
ISA 38:2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು.
ISA 38:3 “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.
ISA 38:4 ಆಗ ಯೆಹೋವ ದೇವರ ವಾಕ್ಯವು ಯೆಶಾಯನಿಗೆ ಬಂದಿತು,
ISA 38:5 “ನೀನು ಹೋಗಿ ಹಿಜ್ಕೀಯನಿಗೆ ಹೀಗೆ ಹೇಳು, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ.
ISA 38:6 ನಿನ್ನನ್ನೂ ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ಕಾಪಾಡುವೆನು.
ISA 38:7 “ ‘ಯೆಹೋವ ದೇವರು ತಾವು ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ.
ISA 38:8 ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವುದು,’ ” ಎಂದನು. ಅದರಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.
ISA 38:9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣಹೊಂದಿದ ನಂತರ ಬರೆದದ್ದು:
ISA 38:10 “ನನ್ನ ಜೀವನದ ಮಧ್ಯಪ್ರಾಯದಲ್ಲೇ ನಾನು ಪಾತಾಳದ ದ್ವಾರದೊಳಗೆ ಹೋಗಬೇಕು. ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರುಷಗಳು ನನಗೆ ತಪ್ಪಿಹೋಯಿತು,” ಎಂದು ನಾನು ಅಂದುಕೊಂಡೆನು.
ISA 38:11 ನಾನು ಹೀಗೆ ಯೋಚಿಸಿದೆ, “ಯೆಹೋವ ದೇವರನ್ನು ಜೀವಿತರ ದೇಶದಲ್ಲಿ ಯೆಹೋವ ದೇವರನ್ನು ಕಾಣೆನೆಂದುಕೊಂಡೆನು; ಭೂಲೋಕ ನಿವಾಸಿಗಳಲ್ಲಿ ಒಬ್ಬ ಮನುಷ್ಯನನ್ನೂ ಕಾಣೆನೆಂದುಕೊಂಡೆನು.
ISA 38:12 ನನ್ನ ಆಶ್ರಯವು ಕುರುಬನ ಗುಡಾರದಂತೆ ಕಿತ್ತು ನನ್ನ ಕಡೆಯಿಂದ ಒಯ್ಯಲಾಗಿದೆ. ದೇವರು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಹಗಲುರಾತ್ರಿ ದೇವರೇ, ನೀವು ನನ್ನನ್ನು ಅಂತ್ಯಗೊಳಿಸುತ್ತೀರಿ.
ISA 38:13 ಹೌದು, ದೇವರು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ, ಬೆಳಗಿನತನಕ ತಡೆದುಕೊಂಡೇ ಇದ್ದೆನು. ನೀವು ನನ್ನನ್ನು ಅಂತ್ಯಗೊಳಿಸುತ್ತೀರಲ್ಲಾ ಎಂದು ಹಗಲುರಾತ್ರಿ ಪ್ರಲಾಪಿಸಿದೆನು.
ISA 38:14 ನಾನು ಬಾನಕ್ಕಿಯಂತೆಯೂ, ಬಕದಂತೆಯೂ ಕೀಚುಗುಟ್ಟಿದೆನು. ಪಾರಿವಾಳದಂತೆ ಗುಬ್ಬಳಿಸುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವುದರಿಂದ ಕ್ಷೀಣವಾದವು. ಕರ್ತದೇವರೇ, ನಾನು ಬಾಧೆಪಡುತ್ತಿದ್ದೇನೆ, ನೀವು ನನಗೆ ಆಶ್ರಯರಾಗಿರಿ.”
ISA 38:15 ಆದರೆ, ನಾನು ಏನು ಹೇಳಲಿ, ಆತನು ನನಗೆ ಮಾತುಕೊಟ್ಟು, ತಾನೇ ಅದನ್ನು ನೆರವೇರಿಸಿದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ವಿನಯದಿಂದ ನಡೆಯುವೆನು.
ISA 38:16 ಕರ್ತದೇವರೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ. ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು. ಹೀಗೆ ನನ್ನನ್ನು ನೀವು ಸ್ವಸ್ಥಮಾಡಿ ಬದುಕುವಂತೆ ಮಾಡಿದಿರಿ.
ISA 38:17 ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು. ಆದರೆ ನನ್ನ ಆತ್ಮವನ್ನು ನಾಶದಿಂದ ಬಿಡುಗಡೆ ಮಾಡಿದ್ದು ನಿಮ್ಮ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
ISA 38:18 ಸಮಾಧಿಯು ನಿನ್ನನ್ನು ಹೊಗಳುವುದಿಲ್ಲ. ಮರಣವು ನಿನ್ನನ್ನು ಕೊಂಡಾಡುವುದಿಲ್ಲ. ಕುಣಿಯೊಳಕ್ಕೆ ಹೋಗುವವರು ನಿಮ್ಮ ಸತ್ಯತೆಯಲ್ಲಿ ಭರವಸವಿಡಲಾರರು.
ISA 38:19 ಜೀವಂತನು; ಜೀವಂತನೇ ನಿನ್ನನ್ನು ಸ್ತುತಿಸುವೆನು. ಹೌದು, ಜೀವಂತನಾದ ನಾನೇ ಈ ಹೊತ್ತು ನಿಮ್ಮನ್ನು ಹೊಗಳುವೆನು. ತಂದೆಯು ಮಕ್ಕಳಿಗೆ ನಿಮ್ಮ ನಿಷ್ಠೆಯನ್ನು ಬೋಧಿಸುವನು.
ISA 38:20 ಯೆಹೋವ ದೇವರು ನನ್ನನ್ನು ರಕ್ಷಿಸುವರು. ಆದ್ದರಿಂದ ಯೆಹೋವ ದೇವರ ಆಲಯದಲ್ಲಿ ನಮ್ಮ ಜೀವಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ನಮ್ಮ ಹಾಡುಗಳನ್ನು ನಾವು ಹಾಡುವೆವು.
ISA 38:21 “ಅಂಜೂರದ ಹಣ್ಣುಗಳ ಉಂಡೆಯನ್ನು ತರಿಸಿ, ಹುಣ್ಣಿನ ಮೇಲೆ ಇಟ್ಟರೆ, ಅವನು ಗುಣಹೊಂದುವನು,” ಎಂದು ಯೆಶಾಯನು ಹೇಳಿದನು.
ISA 38:22 ಇದಲ್ಲದೆ ಹಿಜ್ಕೀಯನು, “ನಾನು ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದ್ದನು.
ISA 39:1 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಕಳುಹಿಸಿದನು.
ISA 39:2 ಹಿಜ್ಕೀಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
ISA 39:3 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು. ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ನನ್ನ ಬಳಿಗೆ ಬಂದವರು,” ಎಂದು ಹೇಳಿದನು.
ISA 39:4 ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು. ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು.
ISA 39:5 ಆಗ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರ ಯೆಹೋವ ದೇವರ ವಾಕ್ಯವನ್ನು ಕೇಳು.
ISA 39:6 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವ ದೇವರು ಹೇಳಿದರು.
ISA 39:7 ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.
ISA 39:8 ಆಗ ಹಿಜ್ಕೀಯನು, “ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು,” ಎಂದುಕೊಂಡು ಯೆಶಾಯನಿಗೆ, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ!” ಎಂದನು.
ISA 40:1 ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾರೆ.
ISA 40:2 ಯೆರೂಸಲೇಮಿನ ಸಂಗಡ ನೀವು ಮೃದುವಾಗಿ ಮಾತನಾಡಿರಿ. ಅದರ ಕಠಿಣ ಸೇವೆ ತೀರಿತೆಂದೂ, ಅದರ ಪಾಪಕ್ಕೆ ಪ್ರಾಯಶ್ಚಿತ್ತವಾಗಿದೆ, ಎಂದು ಘೋಷಿಸಿರಿ, ಏಕೆಂದರೆ ಅದು ಎಲ್ಲಾ ಪಾಪಗಳಿಗೂ ಯೆಹೋವ ದೇವರ ಕೈಯಿಂದ ಎರಡರಷ್ಟು ಹೊಂದಿದ್ದಾಯಿತು.
ISA 40:3 “ಮರುಭೂಮಿಯಲ್ಲಿ ಯೆಹೋವ ದೇವರ ಮಾರ್ಗವನ್ನು ಸಿದ್ಧಮಾಡಿರಿ. ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆಮಾಡಿರಿ.
ISA 40:4 ಪ್ರತಿಯೊಂದು ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು. ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು. ಒರಟಾದ ನೆಲವು ಸಮವಾಗಬೇಕು.
ISA 40:5 ಆಗ ಯೆಹೋವ ದೇವರ ಮಹಿಮೆಯು ಗೋಚರವಾಗುವುದು. ಮಾನವರೆಲ್ಲರೂ ಒಟ್ಟಿಗೆ ಅದನ್ನು ಕಾಣುವರು. ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.”
ISA 40:6 ವಾಣಿಯು, “ಗಟ್ಟಿಯಾಗಿ ಕೂಗು,” ಎಂದಿತು. ಅದಕ್ಕೆ, “ನಾನು ಏನೆಂದು ಕೂಗಲಿ?” ಎಂದು ಕೇಳಲು, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅವರ ಸೊಬಗೆಲ್ಲಾ ಹೊಲದ ಹೂವಿನಂತಿದೆ,
ISA 40:7 ಯೆಹೋವ ದೇವರ ಶ್ವಾಸವು ಅದರ ಮೇಲೆ ಬೀಸುವುದರಿಂದ, ಹುಲ್ಲು ಒಣಗಿಹೋಗುವುದು. ಹೂವು ಉದುರಿ ಹೋಗುವುದು. ಮಾನವರೆಲ್ಲರೂ ಹುಲ್ಲೇ ಆಗಿದ್ದಾರೆ.
ISA 40:8 ಹುಲ್ಲು ಒಣಗಿಹೋಗುವುದು, ಹೂವು ಬಾಡಿಹೋಗುವುದು. ಆದರೆ ನಮ್ಮ ದೇವರ ವಾಕ್ಯವಾದರೋ ಸದಾಕಾಲ ಇರುವುದು,” ಎಂದು ಉತ್ತರವಾಯಿತು.
ISA 40:9 ಶುಭಸಮಾಚಾರವನ್ನು ತಿಳಿಸುವ ಚೀಯೋನೇ, ನೀನು ಉನ್ನತ ಪರ್ವತವನ್ನು ಏರು. ಶುಭಸಮಾಚಾರವನ್ನು ತಿಳಿಸುವ ಯೆರೂಸಲೇಮೇ, ಬಲವಾಗಿ ನಿನ್ನ ಧ್ವನಿ ಎತ್ತು, ಭಯಪಡಬೇಡ. ಯೆಹೂದದ ಪಟ್ಟಣಗಳಿಗೆ, “ಇಗೋ, ನಿನ್ನ ದೇವರು!” ಎಂದು ಹೇಳು.
ISA 40:10 ಇಗೋ, ಸಾರ್ವಭೌಮ ಯೆಹೋವ ದೇವರು ಬಲದೊಂದಿಗೆ ಬರುವರು. ಅವರ ತೋಳು ತಮಗೋಸ್ಕರ ಆಳುವುದು. ಅವರ ಬಹುಮಾನವು ಅವರ ಸಂಗಡ ಅವರ ಪ್ರತಿಫಲವು ಅವರ ಮುಂದೆಯೂ ಇದೆ.
ISA 40:11 ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು. ಕುರಿಮರಿಗಳನ್ನು ಕೂಡಿಸಿ, ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು, ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.
ISA 40:12 ಸಮುದ್ರದ ನೀರನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ, ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ, ಭೂಮಿಯ ಧೂಳನ್ನು ಅಳತೆಮಾಡಿ ತಿಳಿದುಕೊಂಡವನೂ, ಬೆಟ್ಟಗಳ ಮಟ್ಟವನ್ನೂ, ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನೂ ಯಾರು?
ISA 40:13 ಯೆಹೋವ ದೇವರ ಮನಸ್ಸನ್ನು ಅರ್ಥ ಮಾಡಿಕೊಂಡವನು ಯಾರು? ಸಲಹೆಗಾರನಾಗಿ ಅವರಿಗೆ ಬೋಧಿಸಿದವನು ಯಾರು?
ISA 40:14 ತನಗೆ ಜ್ಞಾನ ದೊರೆಯಲು ಯೆಹೋವ ದೇವರು ಯಾರ ವಿಚಾರ ತೆಗೆದುಕೊಂಡನು. ಆತನಿಗೆ ಸರಿಯಾದ ಮಾರ್ಗವನ್ನು ಕಲಿಸಿದವನು ಯಾರು? ಆತನಿಗೆ ಜ್ಞಾನವನ್ನು ಕಲಿಸಿದವನಾರು ಇಲ್ಲವೆ ತಿಳುವಳಿಕೆಯ ಮಾರ್ಗವನ್ನು ಆತನಿಗೆ ತೋರಿಸಿದವನಾರು?
ISA 40:15 ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆಯಿಂದ ಉದುರುವ ತುಂತುರಿನಂತೆಯೂ, ತಕ್ಕಡಿಯಲ್ಲಿನ ಧೂಳಿನ ಹಾಗೂ ಇರುತ್ತವೆ. ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
ISA 40:16 ಲೆಬನೋನು ಯಜ್ಞವೇದಿಯ ಬೆಂಕಿಗೆ ಸಾಲದು: ಅದರ ಪ್ರಾಣಿಗಳು ದಹನಬಲಿಗಳಿಗೆ ಸಾಧನವು.
ISA 40:17 ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ. ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ, ವ್ಯರ್ಥವಾಗಿಯೂ ಇವೆ.
ISA 40:18 ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?
ISA 40:19 ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ. ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು.
ISA 40:20 ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು ಹುಳಿತುಹೋಗದ ಮರವನ್ನು ಹುಡುಕಿ, ಬಾಗಿಬೀಳದ ವಿಗ್ರಹವನ್ನು ತಯಾರಿಸುವುದಕ್ಕೆ ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು.
ISA 40:21 ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ತಿಳಿದಿಲ್ಲವೋ? ಭೂಮಿಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗಲಿಲ್ಲವೋ?
ISA 40:22 ಆಕಾಶಮಂಡಲವನ್ನು ತೆರೆಯಂತೆ ವಿಸ್ತರಿಸಿ, ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ, ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
ISA 40:23 ಅದು ದೇಶಾಧಿಪತಿಗಳನ್ನು ನಿರ್ನಾಮ ಮಾಡುತ್ತದೆ, ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡುತ್ತದೆ.
ISA 40:24 ಇವರು ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರಿದಾಗಲೇ, ಆತನ ಶ್ವಾಸವನ್ನು ಇವರ ಮೇಲೆ ಊದಿದಾಗಲೇ ಒಣಗಿ ಹೋಗುವರು. ಬಿರುಗಾಳಿಯು ಇವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವುದು.
ISA 40:25 ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಪರಿಶುದ್ಧ ದೇವರು ಕೇಳುತ್ತಾರೆ.
ISA 40:26 ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ. ಇಗೋ, ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ, ಅವುಗಳ ಸೈನ್ಯವನ್ನೆಲ್ಲಾ ಲೆಕ್ಕ ಮಾಡಿ ಹೊರಗೆ ತರುವನು. ಏಕೆಂದರೆ ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ತಪ್ಪದು.
ISA 40:27 ನನ್ನ ಮಾರ್ಗವು ಯೆಹೋವ ದೇವರಿಗೆ ಮರೆಯಾಗಿದೆ. ನನ್ನ ನ್ಯಾಯವು ನನ್ನ ದೇವರಿಂದ ದಾಟಿಹೋಯಿತಲ್ಲಾ! ಎಂದು ಯಾಕೋಬೇ ಏಕೆ ಹೇಳುತ್ತೀ? ಇಸ್ರಾಯೇಲೇ ಏಕೆ ಮಾತನಾಡುತ್ತೀ?
ISA 40:28 ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಯೆಹೋವ ದೇವರು ನಿರಂತರವಾದ ದೇವರೂ, ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವುದಿಲ್ಲ, ಬಳಲುವುದಿಲ್ಲ, ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
ISA 40:29 ಆತನು ದಣಿದವನಿಗೆ ಶಕ್ತಿಯನ್ನೂ, ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
ISA 40:30 ಯೌವನಸ್ಥರೋ ದಣಿದು ಬಳಲುವರು ಮತ್ತು ತರುಣರು ಸಂಪೂರ್ಣವಾಗಿ ಬೀಳುವರು.
ISA 40:31 ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು. ಅವರು ಹದ್ದುಗಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಅವರು ಓಡಿ ದಣಿಯರು. ನಡೆದು ಬಳಲರು.
ISA 41:1 ದ್ವೀಪಗಳೇ, ನನ್ನ ಮುಂದೆ ಮೌನದಿಂದಿರಿ. ರಾಷ್ಟ್ರಗಳು ತಮ್ಮ ಬಲವನ್ನು ನವೀಕರಿಸಲಿ! ಅವರು ನನ್ನ ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಸಮೀಪಕ್ಕೆ ಒಟ್ಟಾಗಿ ಬರೋಣ.
ISA 41:2 ಪೂರ್ವದಿಂದ ನೀತಿವಂತನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು, ರಾಷ್ಟ್ರಗಳನ್ನು ಅವನ ಮುಂದೆ ಕೊಟ್ಟುಬಿಟ್ಟು, ಅವನನ್ನು ರಾಜರ ಮೇಲೆ ಆಳುವುದಕ್ಕೆ ಮಾಡಿದವನು ಯಾರು? ಅವನ ಖಡ್ಗವನ್ನು ಧೂಳನ್ನಾಗಿಯೂ, ಅವನ ಬಿಲ್ಲನ್ನು ಹಾರಿಹೋಗುವ ಹೊಟ್ಟಿನಂತೆಯೂ ಅವರನ್ನು ಕೊಟ್ಟನು.
ISA 41:3 ತಾನು ಎಂದೂ ಹೆಜ್ಜೆ ಇಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದಟ್ಟುತ್ತಾ ಹೋದನು.
ISA 41:4 ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನೂ ಆದಿಯಿಂದ ತಲತಲಾಂತರಗಳನ್ನು ಬರಮಾಡಿದವನು ಯಾರು? ಯೆಹೋವ ಎಂಬ ನಾನೇ ಮೊದಲನೆಯವನು, ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.
ISA 41:5 ದ್ವೀಪಗಳೆಲ್ಲವೂ ಕಂಡು ಬೆರಗಾದವು. ಭೂಮಿಯ ಕಟ್ಟಕಡೆಯು ನಡುಗಿತು. ಅವರು ಸಮೀಪಕ್ಕೆ ಬಂದರು.
ISA 41:6 ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯ ಮಾಡಲಿ. ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರಿ!” ಎಂದು ಹೇಳಲಿ.
ISA 41:7 ಹಾಗೆಯೇ ಶಿಲ್ಪಿಯು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು. ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ತಟ್ಟುವವನನ್ನು ಉತ್ತೇಜಿಸಿದನು. ಬೆಸುಗೆ “ಚೆನ್ನಾಗಿದೆ” ಎಂದು ಹೇಳಿ, ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
ISA 41:8 “ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆಯ್ದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,
ISA 41:9 ನಿನ್ನನ್ನು ಭೂಮಿಯ ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ದೂರದ ಕೊನೆಯಿಂದ ಕರೆದು, ‘ನೀನು ನನ್ನ ಸೇವಕನು,’ ನಿನ್ನನ್ನು ನಾನು ಆಯ್ದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವುದಿಲ್ಲ.
ISA 41:10 ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ.
ISA 41:11 “ನಿನಗೆ ವಿರೋಧವಾಗಿ ಉರಿಗೊಂಡವರೆಲ್ಲರೂ ಅವಮಾನ ಹೊಂದಿ, ಆಶಾಭಂಗಪಡುವರು. ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು.
ISA 41:12 ನಿನ್ನೊಡನೆ ಹೋರಾಡಿದವರನ್ನು ಹುಡುಕಿದವರೂ ಅವರು ನಿನಗೆ ಕಾಣಿಸರು. ನಿನ್ನ ಸಂಗಡ ಯುದ್ಧ ಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
ISA 41:13 ನೀನಂತೂ ಹೆದರಬೇಡ; ಏಕೆಂದರೆ ಯೆಹೋವ ದೇವರಾದ ನಾನೇ ನಿನಗೆ ಸಹಾಯ ಮಾಡುತ್ತೇನೆ, ನಿನ್ನ ದೇವರಾಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ!
ISA 41:14 ಹುಳುವಿನಂತಿರುವ ಯಾಕೋಬೇ, ಪುಟ್ಟ ಇಸ್ರಾಯೇಲೇ, ಭಯಪಡಬೇಡ. ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!
ISA 41:15 ಇಗೋ, ನಿನ್ನನ್ನು ಹದವಾದ, ಹೊಸ ಮೊನೆಹಲ್ಲಿನ ಹಂತೀಕುಂಟೆಯನ್ನಾಗಿ ಮಾಡುವೆನು. ನೀನು ಬೆಟ್ಟಗಳನ್ನು ಹೊಕ್ಕು, ಪುಡಿಪುಡಿಮಾಡಿ, ಗುಡ್ಡಗಳನ್ನು ಹೊಟ್ಟಿನಂತೆ ಮಾಡುವೆ.
ISA 41:16 ನೀನು ಅವುಗಳನ್ನು ತೂರಲು, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು. ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವ ದೇವರಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧರಲ್ಲಿ ಮಹಿಮೆ ಹೊಂದುವೆ.
ISA 41:17 ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ, ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ, ಯೆಹೋವನಾದ ನಾನೇ ಅವರಿಗೆ ಉತ್ತರಕೊಡುವೆನು. ಇಸ್ರಾಯೇಲ್ ದೇವರಾಗಿರುವ ನಾನು ಅವರನ್ನು ಕೈಬಿಡೆನು.
ISA 41:18 ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು ತಗ್ಗುಗಳ ಮಧ್ಯದಲ್ಲಿ ಬುಗ್ಗೆಗಳನ್ನು ಹೊರಡಿಸಿ, ಮರುಭೂಮಿಯನ್ನು ನೀರಿನ ಕೆರೆಯನ್ನಾಗಿಯೂ, ಒಣನೆಲವನ್ನು ನೀರಿನ ಒರತೆಗಳನ್ನಾಗಿಯೂ ಮಾಡುವೆನು.
ISA 41:19 ಮರುಭೂಮಿಯಲ್ಲಿ ದೇವದಾರು, ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
ISA 41:20 ಆಗ ಯೆಹೋವ ದೇವರ ಹಸ್ತವು ಇದನ್ನು ಮಾಡಿದೆ ಎಂದೂ, ಇಸ್ರಾಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ಕಂಡು ತಿಳಿದು, ಮನಸ್ಸಿಗೆ ಗ್ರಹಿಸಿಕೊಳ್ಳುವರು.
ISA 41:21 “ನಿಮ್ಮ ವ್ಯಾಜ್ಯವನ್ನು ತನ್ನಿರಿ” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಬಲವಾದ ನ್ಯಾಯಗಳನ್ನು ತನ್ನಿರಿ,” ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.
ISA 41:22 “ವಿಗ್ರಹಗಳೇ, ಮುಂದೆ ಏನಾಗಲಿದೆ ಎಂದು ನಮಗೆ ಹೇಳಿ. ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು, ಅವುಗಳ ಪರಿಣಾಮವನ್ನು ಇಲ್ಲವೆ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.
ISA 41:23 ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ. ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.
ISA 41:24 ನೀವು ಶೂನ್ಯವೇ, ನಿಮ್ಮ ಕಾರ್ಯವು ವ್ಯರ್ಥವೇ. ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.
ISA 41:25 “ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇ. ಸೂರ್ಯೋದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸುವನು. ಅವನು ಜೇಡಿ ಮಣ್ಣಿನಂತೆಯೂ, ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಅವನು ಬರುವನು.
ISA 41:26 ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ, ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸುವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.
ISA 41:27 ನಾನು ಮೊದಲನೆಯವನಾಗಿ ಚೀಯೋನಿಗೆ, ‘ಇಗೋ, ಅವರನ್ನು ನೋಡು’ ಎಂದು ಹೇಳಿ, ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
ISA 41:28 ನಾನು ನೋಡಿದಾಗ, ಅಲ್ಲಿ ಯಾರೂ ಇಲ್ಲ. ನಾನು ಅವರನ್ನು ಕೇಳುವ ಪ್ರಶ್ನೆಗೆ, ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.
ISA 41:29 ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.”
ISA 42:1 “ಇಗೋ, ನನ್ನ ಸೇವಕನು. ಇವನಿಗೆ ನಾನೇ ಆಧಾರ, ನಾನು ಆಯ್ದುಕೊಂಡವನಲ್ಲಿ ನನ್ನ ಆತ್ಮವು ಆನಂದಿಸುವುದು; ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಇತರ ಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
ISA 42:2 ಅವನು ಕೂಗುವುದಿಲ್ಲ, ಶಬ್ದವನ್ನು ಎತ್ತುವುದಿಲ್ಲ, ಬೀದಿಗಳಲ್ಲಿ ತನ್ನ ಧ್ವನಿಯನ್ನು ಕೇಳಗೊಡಿಸುವುದಿಲ್ಲ.
ISA 42:3 ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ನಂಬಿಕೆಯಿಂದ ನ್ಯಾಯವನ್ನು ಹೊರತರುತ್ತಾನೆ.
ISA 42:4 ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಈತನು ಬಿಟ್ಟುಕೊಡುವುದಿಲ್ಲ, ಮನಗುಂದುವುದಿಲ್ಲ, ದ್ವೀಪಗಳು ಈತನ ಬೋಧನೆಗೆ ಎದುರುನೋಡುವುವು.”
ISA 42:5 ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನೂ, ಅದರಿಂದ ಉತ್ಪತ್ತಿಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ, ಅದರಲ್ಲಿ ಸಂಚರಿಸುವವರಿಗೆ ಆತ್ಮವನ್ನೂ ಕೊಡುತ್ತೇನೆಂದು ದೇವರಾದ ಯೆಹೋವ ದೇವರು ಹೇಳುತ್ತಾರೆ.
ISA 42:6 “ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಸೆರೆಯವರನ್ನು ಸೆರೆಯಿಂದಲೂ, ಕತ್ತಲೆಯಲ್ಲಿ ವಾಸಿಸುವವರನ್ನು ಕಾರಾಗೃಹದಿಂದಲೂ ಹೊರತರಬೇಕು,” ಎಂದು ಯೆಹೋವ ದೇವರಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ, ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಇತರ ಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
ISA 42:8 ನಾನೇ ಯೆಹೋವ ದೇವರು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತುತಿಯನ್ನು ಎರಕದ ವಿಗ್ರಹಗಳಿಗೂ ಕೊಡೆನು.
ISA 42:9 ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ.
ISA 42:10 ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರಮಾಡಿರಿ.
ISA 42:11 ಮರುಭೂಮಿಯು, ಅದರ ಪಟ್ಟಣಗಳು ಘೋಷಿಸಲಿ. ಕೇದಾರ್ ಊರಿನ ನಿವಾಸಿಗಳು ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ. ಸೆಲ ಪಟ್ಟಣದವರೂ ಹರ್ಷಧ್ವನಿಗೈಯಲಿ; ಅವರು ಪರ್ವತದ ತುದಿಯಲ್ಲಿ ಆರ್ಭಟಿಸಲಿ.
ISA 42:12 ಅವರು ಯೆಹೋವ ದೇವರಿಗೆ ಮಹಿಮೆಯನ್ನು ಸಲ್ಲಿಸಲಿ! ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
ISA 42:13 ಯೆಹೋವ ದೇವರು ಪರಾಕ್ರಮಶಾಲಿಯಾಗಿ ಮುಂದೆ ಹೋಗುವರು; ಯುದ್ಧವೀರನ ಹಾಗೆ ತಮ್ಮ ರೌದ್ರವನ್ನು ಎಬ್ಬಿಸುವರು. ಆರ್ಭಟಿಸಿ ಗರ್ಜಿಸಿ ತಮ್ಮ ಶತ್ರುಗಳಿಗೆ ವಿರೋಧವಾಗಿ ಜಯಶಾಲಿಯಾಗುವರು.
ISA 42:14 “ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು. ನಾನು ನಾಶಮಾಡಿ, ಒಂದೇ ಸಾರಿ ನುಂಗಿಬಿಡುವೆನು.
ISA 42:15 ನಾನು ಬೆಟ್ಟಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ; ನದಿಗಳನ್ನು ದ್ವೀಪಗಳನ್ನಾಗಿಯೂ, ಕೆರೆಗಳನ್ನು ಬತ್ತಿಹೋಗುವಂತೆಯೂ ಮಾಡುವೆನು.
ISA 42:16 ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡೆಸುವೆನು. ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ, ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವುದಿಲ್ಲ.
ISA 42:17 ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, ‘ನೀವೇ ನಮ್ಮ ದೇವರುಗಳು,’ ಎಂದು ಹೇಳುವವರು ಹಿಂದೆ ಬಿದ್ದು, ನಾಚಿಕೆಗೆ ಈಡಾಗುವರು.
ISA 42:18 “ಕಿವುಡರೇ, ಕೇಳಿರಿ; ಕುರುಡರೇ, ನೀವು ದೃಷ್ಟಿಸಿ ನೋಡಿರಿ.
ISA 42:19 ನನ್ನ ಸೇವಕನಲ್ಲದೆ ಕುರುಡನು ಯಾರು? ನಾನು ಕಳುಹಿಸಿದ ಸೇವಕನಲ್ಲದೆ ಕಿವುಡನು ಯಾರು? ಸಂಪೂರ್ಣನಂತೆ ಕುರುಡನು ಯಾರು? ಯೆಹೋವ ದೇವರ ಸೇವಕನಂತೆ ಕುರುಡನು ಯಾರು?
ISA 42:20 ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ, ನಿನಗೆ ಗಮನವಿಲ್ಲ. ಅವನ ಕಿವಿಗಳು ತೆರೆದಿದ್ದರೂ, ಕೇಳನು.”
ISA 42:21 ಯೆಹೋವ ದೇವರು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು. ಆತನು ನಿಯಮವನ್ನು ಹೆಚ್ಚಿಸಿ, ಘನಪಡಿಸುವನು.
ISA 42:22 ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆ ಹೋಗಿದ್ದಾರೆ. ಅವರೆಲ್ಲರೂ ಹಳ್ಳಕೊಳ್ಳಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಸೆರೆಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಅವರು ಸೂರೆಯಾದರೂ, ತಪ್ಪಿಸುವವನು ಒಬ್ಬನೂ ಇಲ್ಲ. ಕೊಳ್ಳೆಯಾದದ್ದನ್ನು, “ತಿರುಗಿ ಹಿಂದಕ್ಕೆ ಕೊಡು,” ಎಂದು ಹೇಳುವ ಒಬ್ಬನೂ ಇಲ್ಲ.
ISA 42:23 ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?
ISA 42:24 ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪಮಾಡಿದೆವು? ಅದು ಯೆಹೋವ ದೇವರಿಗೆ ವಿರೋಧವಾಗಿಯಲ್ಲವೇ. ಏಕೆಂದರೆ ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ನಿಯಮಕ್ಕೆ ಅವಿಧೇಯರಾದರು.
ISA 42:25 ಆದ್ದರಿಂದ ಆತನು ತನ್ನ ಯುದ್ಧದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ, ಅವನಿಗೆ ತಿಳಿಯಲಿಲ್ಲ. ಅದು ಅವನನ್ನು ಸುಟ್ಟರೂ, ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.
ISA 43:1 ಈಗಲಾದರೋ ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ, ರೂಪಿಸಿದ ಯೆಹೋವ ದೇವರು ಹೇಳುವುದೇನೆಂದರೆ: “ಹೆದರಬೇಡ, ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.
ISA 43:2 ನೀನು ಜಲರಾಶಿಯನ್ನು ದಾಟಿಹೋಗುವಾಗ, ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ, ಅವು ನಿನ್ನನ್ನು ಮುಳುಗಿಸುವುದಿಲ್ಲ; ಬೆಂಕಿಯಲ್ಲಿ ನಡೆಯುವಾಗ, ನೀನು ಸುಟ್ಟುಹೋಗುವುದಿಲ್ಲ; ಜ್ವಾಲೆಯು ನಿನ್ನನ್ನು ದಹಿಸದು.
ISA 43:3 ಏಕೆಂದರೆ ನಾನೇ ನಿನ್ನ ಯೆಹೋವ ದೇವರೂ ನಿನ್ನ ದೇವರಾದ ಇಸ್ರಾಯೇಲಿನ ಪರಿಶುದ್ಧನೂ, ನಿನ್ನ ರಕ್ಷಕನೂ ಆಗಿದ್ದೇನೆ. ಈಜಿಪ್ಟನ್ನು ನಿನ್ನ ವಿಮೋಚನೆಗೂ, ಇಥಿಯೋಪಿಯ ಮತ್ತು ಸೆಬಾ ಸೀಮೆಗಳನ್ನು ನಿನಗೋಸ್ಕರ ಕೊಟ್ಟಿದ್ದೇನೆ.
ISA 43:4 ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ, ಮಾನ್ಯನೂ, ಪ್ರಿಯನೂ ಆಗಿರುವುದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ, ನಿನ್ನ ಪ್ರಾಣಕ್ಕೆ ಜನಾಂಗಗಳನ್ನೂ ಕೊಡುವೆನು.
ISA 43:5 ಭಯಪಡಬೇಡ, ಏಕೆಂದರೆ ನಾನೇ ನಿನ್ನೊಂದಿಗೆ ಇದ್ದೇನೆ. ನಿನ್ನ ಸಂತತಿಯವರನ್ನು ಪೂರ್ವದಿಂದ ತರುವೆನು. ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
ISA 43:6 ‘ನಾನು ಒಪ್ಪಿಸಿಬಿಡು,’ ಎಂದು ಉತ್ತರದಿಕ್ಕಿಗೂ ‘ತಡೆಯಬೇಡ,’ ಎಂದು ದಕ್ಷಿಣದಿಕ್ಕಿಗೂ ಹೇಳಿ, ದೂರದಲ್ಲಿರುವ ನನ್ನ ಪುತ್ರರನ್ನೂ, ದಿಗಂತಗಳಲ್ಲಿರುವ ನನ್ನ ಪುತ್ರಿಯರನ್ನೂ,
ISA 43:7 ನನ್ನ ಹೆಸರಿನಿಂದ ಕರೆಯಲಾದ ಪ್ರತಿಯೊಬ್ಬನನ್ನೂ ಬರಮಾಡುವೆನು. ಏಕೆಂದರೆ ಅವರನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ. ನಾನು ಅವರನ್ನು ನಿರ್ಮಿಸಿದ್ದೇನೆ. ಹೌದು, ನಾನು ಅವರನ್ನು ಉಂಟುಮಾಡಿದ್ದೇನೆ.”
ISA 43:8 ಕಣ್ಣಿದ್ದರೂ ಕುರುಡರಾದ, ಕಿವಿಯಿದ್ದರೂ ಕಿವುಡರಾದ ಜನರನ್ನು ಕರೆ.
ISA 43:9 ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ. ಎಲ್ಲಾ ಜನರೂ ಸೇರಿಕೊಳ್ಳಲಿ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಸಂಗತಿಗಳನ್ನು ಮುಂತಿಳಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸುವುದಕ್ಕೆ ಸಾಕ್ಷಿಗಳನ್ನು ಕರೆತರಲಿ. ಆ ಸಾಕ್ಷಿಗಳು ಇದನ್ನು ಕೇಳಿ, ನಿಜವೆಂದು ಹೇಳಲಿ.
ISA 43:10 ಯೆಹೋವ ದೇವರು ಹೇಳುವುದೇನೆಂದರೆ, “ನೀವು ನನಗೆ ಸಾಕ್ಷಿಗಳಾಗಿದ್ದೀರಿ,” “ನಾನು ಇರುವಾತನೇ ಆಗಿದ್ದೇನೆಂದು, ನೀವು ತಿಳಿದು, ನಂಬಿ, ಗ್ರಹಿಸಿರಿ; ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆಯೂ, ನನ್ನ ಅನಂತರದಲ್ಲಿಯೂ ಯಾವ ದೇವರೂ ಇರುವುದಿಲ್ಲ.
ISA 43:11 ನಾನೇ, ನಾನೇ, ಯೆಹೋವ ದೇವರು ಆಗಿದ್ದೇನೆ. ನನ್ನ ಹೊರತು ಯಾವ ರಕ್ಷಕನೂ ಇಲ್ಲ.
ISA 43:12 ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ, ನಾನೇ ರಕ್ಷಣೆಯನ್ನು ಪ್ರಕಟಿಸಿ, ತೋರಿಸಿದ್ದೇನೆ. ಆದ್ದರಿಂದ ನೀವು ನನ್ನ ಸಾಕ್ಷಿಗಳು,” “ನಾನೇ ದೇವರು ಎಂದು ಯೆಹೋವ ದೇವರು ನುಡಿಯುತ್ತಾರೆ.
ISA 43:13 ಹೌದು, ಅಂದಿನಿಂದಲೇ ನಾನಿದ್ದೇನೆ. ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು?”
ISA 43:14 ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿಮಗೋಸ್ಕರ ಬಾಬಿಲೋನಿಗೆ ಕಳುಹಿಸಿ, ಅವರ ಘನವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.
ISA 43:15 ಯೆಹೋವನಾದ ನಾನು ನಿಮ್ಮ ಪರಿಶುದ್ಧನೂ, ಇಸ್ರಾಯೇಲನ್ನು ಸೃಷ್ಟಿಸಿದವನೂ, ನಿಮ್ಮ ಅರಸನೂ ಆಗಿದ್ದೇನೆ.
ISA 43:16 ಯೆಹೋವ ದೇವರು ಇಂತೆನ್ನುತ್ತಾರೆ: ಸಮುದ್ರದ ಮುಖಾಂತರವಾಗಿ ಮಾರ್ಗಮಾಡಿದವನೂ; ಬಲವಾದ ನೀರಿನಲ್ಲಿ ದಾರಿ ಮಾಡಿದವನೂ;
ISA 43:17 ರಥಗಳನ್ನು, ಕುದುರೆಗಳನ್ನು, ದಂಡನ್ನು, ಪರಾಕ್ರಮಶಾಲಿಗಳನ್ನು ಹೊರಡಿಸಿ, ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ, ದೀಪದ ಬತ್ತಿ ನಂದಿ ಆರಿಹೋಗುವಂತೆಯೂ ಮಾಡಿದಾತನು ಇಂತೆನ್ನುತ್ತಾನೆ:
ISA 43:18 “ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ. ಹಳೆಯ ಸಂಗತಿಗಳನ್ನು ಯೋಚಿಸಬೇಡಿರಿ.
ISA 43:19 ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು. ಅದು ಈಗಲೇ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸುವೆನು. ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುವೆನು.
ISA 43:20 ಕಾಡುಮೃಗಗಳು, ನರಿಗಳು, ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯಲ್ಲಿ ನೀರನ್ನು, ಮರುಭೂಮಿಯಲ್ಲಿ ನದಿಗಳನ್ನು ನಾನು ಆಯ್ದುಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು.
ISA 43:21 ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
ISA 43:22 “ಆದರೂ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ. ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
ISA 43:23 ನಿನ್ನ ದಹನಬಲಿಯ ಎಳೆಯ ಕುರಿಗಳನ್ನು ನನಗೆ ತರಲಿಲ್ಲ. ನಿನ್ನ ಯಜ್ಞಗಳಿಂದ ನನ್ನನ್ನು ಸನ್ಮಾನಿಸಲಿಲ್ಲ. ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
ISA 43:24 ನೀನು ನನಗೋಸ್ಕರ ಹಣದಿಂದ ಪರಿಮಳ ತೈಲವನ್ನು ಕೊಂಡುಕೊಳ್ಳಲಿಲ್ಲ. ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ಅಕ್ರಮಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.
ISA 43:25 “ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.
ISA 43:26 ನನಗೆ ಜ್ಞಾಪಕಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತನೆಂದು ತೋರಿಸು.
ISA 43:27 ನಿನ್ನ ಮೂಲಪಿತೃ ಪಾಪಮಾಡಿದ್ದಾನೆ. ನಿನ್ನ ಬೋಧಕರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.
ISA 43:28 ಆದಕಾರಣ ಪವಿತ್ರಾಲಯದ ಪ್ರಧಾನರನ್ನು ನಾಚಿಕೆಪಡಿಸಿ, ಯಾಕೋಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.
ISA 44:1 “ಈಗಲಾದರೋ ನನ್ನ ಸೇವಕನಾದ ಯಾಕೋಬೇ ಮತ್ತು ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು:
ISA 44:2 ನಿನ್ನ ನಿರ್ಮಾಣ ಮಾಡಿ, ಗರ್ಭದಿಂದಲೂ ರೂಪಿಸುತ್ತಾ ಬಂದು, ನಿನಗೆ ಸಹಾಯ ಮಾಡುವವರಾದ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಸೇವಕನಾದ ಯಾಕೋಬೇ, ನಾನು ಆಯ್ದುಕೊಂಡ ಯೆಶುರೂನೇ, ಭಯಪಡಬೇಡ.
ISA 44:3 ಏಕೆಂದರೆ ನಾನು ಬಾಯಾರಿದ ಭೂಮಿಯ ಮೇಲೆ ನೀರನ್ನು ಸುರಿಸುವೆನು. ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು. ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ, ನಿನ್ನಿಂದ ಹುಟ್ಟುವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸುವೆನು.
ISA 44:4 ನೀರಿನ ಕಾಲುವೆಗಳ ಬಳಿಯಲ್ಲಿ, ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿಯಾಗುವರು.
ISA 44:5 ಒಬ್ಬನು, ‘ನಾನು ಯೆಹೋವನವನು,’ ಅನ್ನುವನು, ಇನ್ನೊಬ್ಬನು ನಾನು, ‘ಯಾಕೋಬನ ಹೆಸರಿನವನು,’ ಎಂದು ಹೇಳಿಕೊಳ್ಳುವನು. ಮತ್ತೊಬ್ಬನು ತನ್ನ ಕೈಯ ಮೇಲೆ, ‘ಯೆಹೋವ ದೇವರಿಗೆ ಸ್ವಂತ,’ ಎಂದು ಬರೆಯಿಸಿಕೊಂಡು, ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡಹೆಸರನ್ನು ಇಟ್ಟುಕೊಳ್ಳುವನು.
ISA 44:6 “ಇಸ್ರಾಯೇಲಿನ ಅರಸನೂ ವಿಮೋಚಕನೂ, ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ: ನಾನೇ ಮೊದಲನೆಯವನು, ನಾನೇ ಕಡೆಯವನು. ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
ISA 44:7 ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ, ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರಬೇಕಾದದ್ದನ್ನು ಅವರು ನನಗೆ ತಿಳಿಸಲಿ.
ISA 44:8 ಹೆದರಬೇಡ, ಇಲ್ಲವೆ ಭಯಪಡಬೇಡ! ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ ಮತ್ತು ಅದನ್ನು ಪ್ರಕಟಿಸಲಿಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಇಲ್ಲ, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”
ISA 44:9 ವಿಗ್ರಹಗಳನ್ನು ಕೆತ್ತುವವರು ನಿರರ್ಥಕರು. ಅವರ ಇಷ್ಟ ಬೊಂಬೆಗಳು ಏತಕ್ಕೂ ಬಾರವು. ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.
ISA 44:10 ದೇವರನ್ನು ರೂಪಿಸಿದವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಎಂಥವರು?
ISA 44:11 ಅವನೂ, ಅವನ ಸಂಗಡಿಗರೂ ನಾಚಿಕೆಗೆ ಒಳಗಾಗುವರು ಮತ್ತು ಆ ಕೆತ್ತನೆಯ ಕೆಲಸದವರು ಮನುಷ್ಯ ಮಾತ್ರದವರೇ. ಅವರೆಲ್ಲರೂ ಒಟ್ಟುಗೂಡಿ ನಿಂತುಕೊಳ್ಳಲಿ. ಅವರು ಭಯಪಟ್ಟು, ಒಟ್ಟಿಗೆ ಲಜ್ಜೆಪಡುವರು.
ISA 44:12 ಕಮ್ಮಾರನು ಸಲಕರಣೆಯನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಅವನು ಸುತ್ತಿಗೆ ಹಿಡಿದು ತನ್ನ ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುತ್ತಾನೆ; ಅವನು ಹಸಿದು ಬಲಹೀನನಾಗಿದ್ದರೂ, ನೀರು ಕುಡಿಯದೇ ದಣಿಯುತ್ತಾನೆ.
ISA 44:13 ಬಡಗಿಯು ಮರಕ್ಕೆ ನೂಲನ್ನು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ. ಉಳಿಬಾಚಿಗಳಿಂದ ಕೆತ್ತುತ್ತಾನೆ. ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾರಕ್ಕೆ ತಂದು, ಮಂದಿರದಲ್ಲಿ ಇಡಲು ಮನುಷ್ಯನ ಅಂದದಂತೆ ರೂಪಿಸುತ್ತಾನೆ.
ISA 44:14 ಅರಣ್ಯದ ಮಧ್ಯದಲ್ಲಿ ಇರುವ ಮರಗಳಲ್ಲಿ ದೇವದಾರುಗಳನ್ನು ಕಡಿದು, ತುರಾಯಿ, ಸೈಪ್ರಸ್ ಮತ್ತು ಏಲಾ ಮರಗಳನ್ನು ತನ್ನ ಕೆಲಸಕ್ಕೋಸ್ಕರ ತೆಗೆದುಕೊಳ್ಳುತ್ತಾನೆ. ಪೀತದಾರ ಮರವನ್ನು ಅವನು ನೆಡಲು, ಮಳೆಯು ಅದನ್ನು ಬೆಳೆಯಿಸುವುದು.
ISA 44:15 ಆಗ ಅದು ಮನುಷ್ಯರು ಉರಿಸುವುದಕ್ಕಾಗುವುದು. ಏಕೆಂದರೆ ಅದರಿಂದ ಚಳಿಕಾಯಿಸಿಕೊಳ್ಳುತ್ತಾನೆ. ಅದನ್ನು ಬೆಂಕಿ ಹಚ್ಚಿ, ರೊಟ್ಟಿಯನ್ನು ಸುಡುತ್ತಾನೆ. ಅವನು ಅದರಿಂದ ಒಂದು ದೇವರನ್ನು ಮಾಡಿ, ಅದಕ್ಕೆ ನಮಸ್ಕರಿಸುತ್ತಾನೆ. ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡ ಬೀಳುವನು.
ISA 44:16 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು. ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು. ಮಾಂಸವನ್ನು ಸುಟ್ಟು ತೃಪ್ತಿಹೊಂದುವನು. ಅವನು ಚಳಿಕಾಯಿಸಿಕೊಳ್ಳುತ್ತಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು.
ISA 44:17 ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ, ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ, ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ, “ನೀನೇ ನನ್ನ ದೇವರು, ನನ್ನನ್ನು ಕಾಪಾಡು,” ಎಂದು ಬೇಡಿಕೊಳ್ಳುವನು.
ISA 44:18 ಅವರು ಏನೂ ತಿಳಿಯದವರು ಇಲ್ಲವೆ ಏನೂ ಗ್ರಹಿಸಲಾರದವರು. ಏಕೆಂದರೆ ಆತನು ಅವರ ಕಣ್ಣು ಕಾಣದಂತೆಯೂ, ಹೃದಯಗಳು ಗ್ರಹಿಸದಂತೆಯೂ ಮುಚ್ಚಿಬಿಟ್ಟಿದ್ದಾನೆ.
ISA 44:19 “ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು. ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ, ಮಾಂಸವನ್ನು ಸುಟ್ಟು ತಿಂದೆನಲ್ಲಾ. ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ? ಮರದ ತುಂಡಿಗೆ ಅಡ್ಡಬೀಳಬಹುದೋ?” ಎಂದುಕೊಳ್ಳುವಷ್ಟು ಜ್ಞಾನ ವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿನಲ್ಲಿ ಅರ್ಥೈಸಿಕೊಳ್ಳುವುದಿಲ್ಲ.
ISA 44:20 ಅವನು ತಿನ್ನುವುದು ಬೂದಿಯೇ. ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿತಪ್ಪಿಸಿದ ಕಾರಣ, ನನ್ನ ಬಲಗೈ ಸುಳ್ಳನ್ನು ಹಿಡಿದಿದೆಯಲ್ಲಾ ಎಂದುಕೊಳ್ಳಲೂ ಆಗದು. ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
ISA 44:21 “ಯಾಕೋಬೇ, ಇಸ್ರಾಯೇಲೇ! ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನೀನು ನನ್ನ ಸೇವಕನಾಗಿದ್ದೀ. ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು. ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು.
ISA 44:22 ನಾನು ನಿನ್ನ ದ್ರೋಹಗಳನ್ನು ಮೋಡದಂತೆ ಅಳಿಸಿಬಿಟ್ಟಿದ್ದೇನೆ. ನಿನ್ನ ಪಾಪಗಳನ್ನು ಮುಂಜಾನೆಯ ಮಂಜಿನಂತೆ ಹಾರಿಸಿದ್ದೇನೆ. ನನ್ನ ಕಡೆಗೆ ತಿರುಗಿಕೋ. ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದ್ದೇನೆ.”
ISA 44:23 ಆಕಾಶಗಳೇ, ಹರ್ಷಧ್ವನಿಗೈಯಿರಿ. ಏಕೆಂದರೆ ಯೆಹೋವ ದೇವರು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಕೆಳಭಾಗವೇ ಆರ್ಭಟಿಸು. ಪರ್ವತಗಳೇ, ವನವೇ, ಅದರಲ್ಲಿರುವ ಎಲ್ಲಾ ಮರಗಳೇ ಉತ್ಸಾಹಧ್ವನಿ ಮಾಡಿರಿ. ಏಕೆಂದರೆ ಯೆಹೋವ ದೇವರು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
ISA 44:24 “ನಿನ್ನನ್ನು ಗರ್ಭದಿಂದ ರೂಪಿಸಿದವರೂ ನಿನ್ನ ವಿಮೋಚಕರೂ ಆದ ಯೆಹೋವ ದೇವರು ಇಂತೆನ್ನುತ್ತಾರೆ: “ಎಲ್ಲವನ್ನು ಉಂಟುಮಾಡಿದ ಯೆಹೋವ ದೇವರು ನಾನೇ. ನಾನೊಬ್ಬನೇ ಆಕಾಶವನ್ನು ವಿಸ್ತರಿಸಿ, ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.
ISA 44:25 ಸುಳ್ಳುಗಾರರ ಗುರುತುಗಳನ್ನು ನಿರರ್ಥಕ ಮಾಡುವವನೂ ಮತ್ತು ಕಣಿ ಹೇಳುವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ, ಅವರ ತಿಳುವಳಿಕೆಯನ್ನು ಬುದ್ಧಿಹೀನವಾಗ ಮಾಡುವವನೂ
ISA 44:26 ತನ್ನ ಸೇವಕನ ಮಾತುಗಳನ್ನು ಸ್ಥಾಪಿಸುವವನು, ಮತ್ತು ತನ್ನ ದೂತರ ಆಲೋಚನೆಯನ್ನು ಪೂರೈಸುವವನು. “ಯೆರೂಸಲೇಮಿಗೆ, ‘ನೀನು ನಿವಾಸವಾಗುವೆ,’ ಯೆಹೂದ ಪಟ್ಟಣಗಳಿಗೆ, ‘ಅವು ಪುನಃ ಕಟ್ಟಲಾಗುವುದು,’ ಮತ್ತು ಅದರ ಹಾಳು ಸ್ಥಳಗಳಿಗೆ, ‘ನಾನು ಪುನಃಸ್ಥಾಪಿಸುವೆನು,’ ಎಂದು ಹೇಳುವವನು,
ISA 44:27 ಅಗಾಧಕ್ಕೆ, ‘ಒಣಗಿಸಿಬಿಡುವೆನು,’ ‘ನಿನ್ನಲ್ಲಿ ಸೇರುವ ನದಿಗಳನ್ನು ಒಣಗಿಸುವೆನು,’ ಎಂದು ಅನ್ನುವವನೂ;
ISA 44:28 ಕೋರೆಷನ ವಿಷಯವಾಗಿ ಹೀಗೆ ಹೇಳುವೆನು, ‘ನನ್ನ ಕುರುಬನು, ನನ್ನ ಇಷ್ಟವನ್ನೆಲ್ಲಾ ಪೂರೈಸುವವನು, ಯೆರೂಸಲೇಮಿಗೆ, “ನೀನು ಪುನಃ ನಿರ್ಮಾಣವಾಗುವೆ,” ದೇವಾಲಯಕ್ಕೆ, “ನಿನಗೆ ಅಸ್ತಿವಾರವು ಹಾಕಲಾಗುವುದು,” ಎಂದು ಅನ್ನುವವನೂ ನಾನೇ.’
ISA 45:1 “ಯೆಹೋವ ದೇವರು ತಾವೇ ಅಭಿಷೇಕಿಸಿದ ಕೋರೆಷನಿಗೆ ಹೇಳುವುದೇನೆಂದರೆ: ರಾಷ್ಟ್ರಗಳನ್ನು ನೀನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯಲು ನಾನು ನಿನ್ನ ಬಲಗೈಯನ್ನು ಹಿಡಿದು ನಡೆಸುವೆನು.
ISA 45:2 ನಾನು ನಿನ್ನ ಮುಂದೆ ಹೋಗಿ ಬೆಟ್ಟಗುಡ್ಡಗಳನ್ನು ಸಮಮಾಡಿ, ಕಂಚಿನ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.
ISA 45:3 ನಿನ್ನನ್ನು ಹೆಸರು ಹಿಡಿದು ಕರೆಯುವ ಯೆಹೋವ ದೇವರು ನಾನೇ! ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನೂ ನಿನಗೆ ಕೊಡುವೆನು.
ISA 45:4 ಏಕೆಂದರೆ ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆಯ್ದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಹೆಸರನ್ನು ಇಟ್ಟಿದ್ದೇನೆ.
ISA 45:5 ನಾನೇ ಯೆಹೋವ ದೇವರು, ಮತ್ತೊಬ್ಬನಿಲ್ಲ. ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನ್ನನ್ನು ಬಲಪಡಿಸುವೆನು.
ISA 45:6 ಪೂರ್ವದಿಂದ ಪಶ್ಚಿಮದವರೆಗೆ ಇರುವವರೆಲ್ಲರೂ ನನ್ನ ಹೊರತು ಮತ್ತೊಬ್ಬನು ಇಲ್ಲ, ನಾನೇ ಯೆಹೋವ ದೇವರು ಮತ್ತೊಬ್ಬ ದೇವರು ಇಲ್ಲ ಎಂದು ನನ್ನನ್ನು ತಿಳಿದುಕೊಳ್ಳುವರು.
ISA 45:7 ಬೆಳಕನ್ನು ರೂಪಿಸುವವನೂ, ಕತ್ತಲನ್ನು ನಿರ್ಮಿಸುವವನೂ, ಸಮಾಧಾನವನ್ನು ಉಂಟುಮಾಡುವವನೂ, ವಿಪತ್ತನ್ನು ಬರಮಾಡುವವನೂ ನಾನೇ. ಯೆಹೋವನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
ISA 45:8 “ಆಕಾಶಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ. ಗಗನವು ನೀತಿಯನ್ನು ಸುರಿಸಲಿ. ಭೂಮಿಯು ತೆರೆದು ರಕ್ಷಣೆಯನ್ನು ತರಲಿ. ನೀತಿಯು ಅದರೊಟ್ಟಿಗೆ ಮೊಳೆಯಲಿ. ಇದನ್ನು ಸೃಷ್ಟಿಸಿದ ಯೆಹೋವ ದೇವರು ನಾನೇ!
ISA 45:9 “ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ! ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದೂ, ‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ ಆ ಮಡಕೆ ಹೇಳುವುದುಂಟೇ?
ISA 45:10 ನೀನು ಹುಟ್ಟಿಸಿದ್ದು ಏಕೆ? ಎಂದು ತನ್ನ ತಂದೆಯನ್ನು ಕೇಳುವವನಿಗೂ, ‘ನೀನು ಹಡೆದದ್ದು ಏಕೆ?’ ಎಂದು ತಾಯಿಗೆ ಕೇಳುವವನಿಗೂ ಶಾಪ!
ISA 45:11 “ಇಸ್ರಾಯೇಲಿನ ಪರಿಶುದ್ಧನೂ, ಅದನ್ನು ರೂಪಿಸಿದವನೂ ಆಗಿರುವ ಯೆಹೋವ ದೇವರು, ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ, ನನ್ನ ಕೈಕೆಲಸದ ವಿಷಯವಾಗಿಯೂ ನೀವು ನನಗೆ ಆಜ್ಞಾಪಿಸುವುದೇನು?
ISA 45:12 ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನುಷ್ಯನನ್ನು ಸೃಷ್ಟಿಸಿದೆನು. ನಾನೇ, ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು. ನಾನು ಅದರ ನಕ್ಷತ್ರಸೈನ್ಯಕ್ಕೆಲ್ಲಾ ಅಪ್ಪಣೆಕೊಟ್ಟೆನು.
ISA 45:13 ನಾನೇ, ಅವನನ್ನು ನೀತಿಯಲ್ಲಿ ಎಬ್ಬಿಸಿದ್ದೇನೆ. ಅವನ ಮಾರ್ಗಗಳನ್ನು ಸರಾಗ ಮಾಡುತ್ತೇನೆ. ಅವನು ನನ್ನ ಪಟ್ಟಣವನ್ನು ಕಟ್ಟಿ, ಕ್ರಯವನ್ನಾಗಲೀ, ಬಹುಮಾನವನ್ನಾಗಲೀ ಕೇಳಿಕೊಳ್ಳದೆ, ನನ್ನ ಸೆರೆಯವರನ್ನು ಕಳುಹಿಸಿಬಿಡುವನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾನೆ.
ISA 45:14 ಯೆಹೋವ ದೇವರು ಹೇಳುವುದೇನೆಂದರೆ: “ಈಜಿಪ್ಟಿನ ಆದಾಯವೂ, ಇಥಿಯೋಪಿಯದ ವ್ಯಾಪಾರವೂ, ಎತ್ತರದ ಮನುಷ್ಯರಾದ ಶೆಬದವರೂ ನಿಮ್ಮಲ್ಲಿಗೆ ಸೇರಿ, ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು, ನಿಮ್ಮ ಮುಂದೆ ಅಡ್ಡಬಿದ್ದು, ‘ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊಬ್ಬನಿಲ್ಲ; ಬೇರೆ ದೇವರು ಇಲ್ಲವೇ ಇಲ್ಲ.’ ”
ISA 45:15 ಇಸ್ರಾಯೇಲರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.
ISA 45:16 ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
ISA 45:17 ಆದರೆ ಇಸ್ರಾಯೇಲರು ಶಾಶ್ವತವಾದ ರಕ್ಷಣೆಯೊಂದಿಗೆ ಯೆಹೋವ ದೇವರಲ್ಲಿ ಸಂರಕ್ಷಣೆ ಹೊಂದುವರು. ನೀವು ಯುಗಯುಗಾಂತರಕ್ಕೂ ಎಂದಿಗೂ ನಾಚಿಕೆಪಡುವುದಿಲ್ಲ, ಅವಮಾನ ಹೊಂದುವುದಿಲ್ಲ.
ISA 45:18 ಆಕಾಶಗಳನ್ನು ನಿರ್ಮಿಸಿದ ಯೆಹೋವ ದೇವರು ಇಂತೆನ್ನುತ್ತಾನೆ, “ದೇವರು ತಾನೇ ಭೂಮಿಯನ್ನು ನಿರ್ಮಿಸಿ, ಅದನ್ನು ಉಂಟುಮಾಡಿದನು. ಆತನೇ ಅದನ್ನು ಸ್ಥಾಪಿಸಿದನು. ಅದನ್ನು ವ್ಯರ್ಥವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದನು. ನಾನೇ ಯೆಹೋವ ದೇವರು, ನಾನಲ್ಲದೆ ಇನ್ನಾರೂ ಇಲ್ಲ.
ISA 45:19 ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ. ‘ವ್ಯರ್ಥವಾಗಿ ನನ್ನನ್ನು ಹುಡುಕಿರಿ’ ಎಂದು ಯಾಕೋಬನ ವಂಶದವರಿಗೆ ನಾನು ಹೇಳಲಿಲ್ಲ. ಯೆಹೋವನಾದ ನಾನೇ ನೀತಿಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
ISA 45:20 “ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸಮೀಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತುಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.
ISA 45:21 ನೀವು ಏನು ಸಾರಬೇಕೋ ಅದನ್ನು ಈಗ ತನ್ನಿರಿ ಹೌದು, ಒಟ್ಟಿಗೆ ಅವರು ಆಲೋಚಿಸಲಿ ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಪ್ರಾರಂಭದಿಂದ ಇದನ್ನು ತಿಳಿಸಿದವರು ಯಾರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲ. ನನ್ನ ಹೊರತಾಗಿ ನೀತಿಯುಳ್ಳ ದೇವರೂ, ರಕ್ಷಕನೂ ಇಲ್ಲವೇ ಇಲ್ಲ.
ISA 45:22 “ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿರಿ, ರಕ್ಷಣೆಯನ್ನು ಪಡೆಯಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
ISA 45:23 ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ. ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ. ಅದು ಹಿಂದಿರುಗದು. ಪ್ರತಿಯೊಬ್ಬರು ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ಪ್ರತಿಜ್ಞೆ ಮಾಡುವುದು.
ISA 45:24 ಯೆಹೋವ ದೇವರಲ್ಲಿ ಮಾತ್ರ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಅವರ ಬಳಿಗೆ ಬರುವರು.” ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಗೆ ಈಡಾಗುವರು, ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.
ISA 45:25 ಇಸ್ರಾಯೇಲಿನ ಸಂತಾನದವರೆಲ್ಲರೂ ಯೆಹೋವ ದೇವರಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
ISA 46:1 ಬೇಲ್ ದೇವತೆಯು ತಗ್ಗಿದೆ, ನೆಬೋ ದೇವತೆಯು ಕುಗ್ಗಿದೆ. ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು. ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.
ISA 46:2 ಒಟ್ಟಿಗೆ ಕುಗ್ಗಿ ಬಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ, ತಾವೇ ಸೆರೆಗೆ ಹೋದವು.
ISA 46:3 ಯಾಕೋಬನ ಮನೆತನದವರೇ, ಇಸ್ರಾಯೇಲ್ ಮನೆತನದಲ್ಲಿ ಉಳಿದಿರುವವರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದಾತನ ಮಾತನ್ನು ಕೇಳಿರಿ.
ISA 46:4 ನಿಮ್ಮ ಮುಪ್ಪಿನ ತನಕ ನಾನೇ ಆಧಾರ; ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು; ನಾನೇ ಹೊರುವೆನು; ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.
ISA 46:5 ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸುತ್ತೀರಿ? ನನ್ನ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡುವಿರಿ?
ISA 46:6 ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆ ಮಾಡುವರು.
ISA 46:7 ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರ ಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.
ISA 46:8 ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು, ಅದನ್ನು ತಿರುಗಿ ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ.
ISA 46:9 ಪುರಾತನ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ. ಏಕೆಂದರೆ ನಾನೇ ದೇವರು, ಮತ್ತೊಬ್ಬನಿಲ್ಲ. ನಾನೇ ದೇವರು, ನನಗೆ ಸರಿಸಮಾನನು ಇಲ್ಲ.
ISA 46:10 ಆರಂಭದಲ್ಲಿಯೇ ಅಂತ್ಯವನ್ನೂ, ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ. ನನ್ನ ಆಲೋಚನೆಯು ನಿಲ್ಲುವುದೆಂದೂ, ನನಗೆ ಮೆಚ್ಚಿದ್ದನ್ನು ಮಾಡುವೆನೆಂದೂ ಅರುಹಿದ್ದೇನೆ.
ISA 46:11 ಪೂರ್ವದಿಂದ ಒಂದು ಕ್ರೂರವಾದ ಪಕ್ಷಿಯೂ, ದೂರದೇಶದಿಂದ ನನ್ನ ಆಜ್ಞೆಯನ್ನು ನಡೆಸುವ ಮನುಷ್ಯನೂ ಬರಲಿ, ಎಂದು ಕರೆದಿದ್ದೇನೆ. ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಮಾಡುವೆನು.
ISA 46:12 ಕಠಿಣ ಹೃದಯವುಳ್ಳವರೇ, ನೀತಿಗೆ ದೂರವಾದವರೇ, ನನಗೆ ಕಿವಿಗೊಡಿರಿ.
ISA 46:13 ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು. ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾಗದು, ನನ್ನ ಮಹಿಮೆಯಾಗಿರುವ ಇಸ್ರಾಯೇಲಿಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟುಮಾಡುವೆನು.
ISA 47:1 ಬಾಬಿಲೋನಿನ ಪುತ್ರಿಯಾದ ಕನ್ನಿಕೆಯೇ, ಕೆಳಕ್ಕೆ ಇಳಿದುಬಂದು, ಧೂಳಿನಲ್ಲಿ ಕುಳಿತುಕೋ! ಕಸ್ದೀಯರ ಪುತ್ರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಏಕೆಂದರೆ ಇನ್ನು ಮೇಲೆ ನಿನ್ನನ್ನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯುವುದಿಲ್ಲ.
ISA 47:2 ಬೀಸುವ ಕಲ್ಲನ್ನು ಹಿಡಿದು, ಹಿಟ್ಟನ್ನು ಬೀಸು. ಮುಸುಕನ್ನು ತೆಗೆದುಹಾಕಿ, ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ, ನದಿಗಳನ್ನು ಹಾದುಹೋಗು.
ISA 47:3 ನಿನ್ನ ಬೆತ್ತಲೆತನವು ಮರೆಮಾಡದೇ ಇದ್ದುದರಿಂದ ನೀನು ನಾಚಿಕೆಗೆ ಈಡಾಗುವೆ. ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.
ISA 47:4 ನಮ್ಮ ವಿಮೋಚಕರಿಗೆ ಸೇನಾಧೀಶ್ವರರಾದ ಯೆಹೋವ ದೇವರು ಎಂಬುದೇ ಅವರ ಹೆಸರು. ಅವರೇ ಇಸ್ರಾಯೇಲಿನ ಪರಿಶುದ್ಧರು.
ISA 47:5 ಕಸ್ದೀಯರ ಪುತ್ರಿಯೇ, “ಮೌನವಾಗಿ ಕುಳಿತುಕೋ, ಕತ್ತಲೆಯೊಳಗೆ ಹೋಗು. ಏಕೆಂದರೆ ಇನ್ನು ಮೇಲೆ ನಿನ್ನನ್ನು ರಾಜ್ಯಗಳ ರಾಣಿ ಎಂದು ಕರೆಯುವುದಿಲ್ಲ.
ISA 47:6 ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸೊತ್ತನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು. ನೀನು ಅವರಿಗೆ ಕರುಣೆಯನ್ನು ತೋರಿಸದೆ, ವೃದ್ಧರ ಮೇಲೆಯೂ, ಬಹು ಭಾರವಾದ ನೊಗವನ್ನು ಹೊರಿಸಿದೆ.
ISA 47:7 ‘ನಾನು ಶಾಶ್ವತವಾದ ರಾಣಿ’ ಎಂದು ನೀನು ಅಂದುಕೊಂಡದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೊಳ್ಳಲಿಲ್ಲ. ಅವರ ಅಂತ್ಯವನ್ನೂ ನೆನಸಿಕೊಳ್ಳಲಿಲ್ಲ.
ISA 47:8 “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ. ‘ನಾನು ವಿಧವೆಯಾಗಿ ಕೂತುಕೊಳ್ಳುವುದಿಲ್ಲ. ಪುತ್ರ ಶೋಕವನ್ನು ಅನುಭವಿಸುವುದಿಲ್ಲ,’ ಎನ್ನುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
ISA 47:9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವೆಯ ಸ್ಥಿತಿಯು ಇವೆರಡೂ ನಿನಗೆ ಬರುವುದು. ನಿನ್ನ ಮಂತ್ರಗಳು ಬಹಳವಾಗಿರುವುದರಿಂದಲೂ, ನಿನ್ನ ಮಾಟಗಳು ಹೆಚ್ಚಾಗಿರುವುದರಿಂದಲೂ, ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವುವು.
ISA 47:10 ಏಕೆಂದರೆ ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆ ಇಟ್ಟು, ‘ನನ್ನನ್ನು ಯಾರೂ ನೋಡುವುದಿಲ್ಲ’ ಎಂದು ಹೇಳಿದೆ. ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ದಾರಿ ತಪ್ಪಿಸಿದ್ದರಿಂದ, ನಿನ್ನ ಹೃದಯದಲ್ಲಿ: ‘ಈಗ ಇರುವವಳು ನಾನೇ. ನನ್ನ ಹೊರತು ಇನ್ನು ಯಾರೂ ಇಲ್ಲ,’ ಎಂದುಕೊಂಡೆ.
ISA 47:11 ಆದ್ದರಿಂದ ನಿನ್ನ ಮಂತ್ರಕ್ಕೂ ಮೀರಿದ ಕೇಡು ನಿನ್ನ ಮೇಲೆ ಬರುವುದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನಿನಗೆ ತಿಳಿಯದ ನಾಶನವು ಫಕ್ಕನೆ ನಿನ್ನ ಮೇಲೆ ಬರುವುದು.”
ISA 47:12 ನಿನ್ನ ಮಾಟಗಳ ಸಂಗಡ ನಿಂತುಕೋ. ನಿನ್ನ ಬಾಲ್ಯಾರಭ್ಯ ಬೇಸತ್ತು, ಅಭ್ಯಾಸಿಸಿರುವ ನಿನ್ನ ಮಂತ್ರ ತಂತ್ರಗಳನ್ನೂ, ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು. ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ಭಯ ಉಂಟಾದೀತು.
ISA 47:13 ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಳಜ್ಞರು, ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
ISA 47:14 ಇಗೋ, ಅವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು. ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು ಇಲ್ಲವೆ ಕಾಯಿಸಿಕೊಳ್ಳುವುದಕ್ಕೆ ಕೆಂಡವಿರುವುದಿಲ್ಲ. ಹತ್ತಿರ ಕೂತುಕೊಳ್ಳಲು ಬೆಂಕಿಯೂ ಇಲ್ಲ.
ISA 47:15 ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವುವು. ನಿನ್ನ ಬಾಲ್ಯ ಪ್ರಾಯದಿಂದ ನಿನ್ನ ವರ್ತಕರು ಚದರಿ, ತಮ್ಮ ತಮ್ಮ ಪ್ರಾಂತಕ್ಕೆ ಹೋಗಿ ಬಿಡುವರು. ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
ISA 48:1 “ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.
ISA 48:2 ಏಕೆಂದರೆ ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.
ISA 48:3 ಪೂರ್ವಕಾಲದಲ್ಲೇ ಹಳೆಯ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತಿಳಿಸಿದ್ದೇನೆ. ನಾನು ತಟ್ಟನೆ ನಡೆಸಲು, ಅವು ನೆರವೇರಿದವು.
ISA 48:4 ಏಕೆಂದರೆ ನೀನು ಹಟಗಾರ. ನಿನ್ನ ಕತ್ತಿನ ನರಗಳು ಕಬ್ಬಿಣ, ನಿನ್ನ ಹಣೆ ಕಂಚಿನದು ಎಂದು ನಾನು ತಿಳಿದುಕೊಂಡಿದ್ದೇನೆ.
ISA 48:5 ‘ಈ ಕಾರ್ಯಗಳನ್ನು ನನ್ನ ವಿಗ್ರಹಗಳು ನಡಿಸಿದೆ. ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ,’ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ಇವು ಸಂಭವಿಸುವುದಕ್ಕಿಂತ ಮೊದಲೇ ತಿಳಿಸಿದೆನು.
ISA 48:6 ನೀನು ಕೇಳಿದ್ದೀ, ಇವೆಲ್ಲವುಗಳನ್ನು ದೃಷ್ಟಿಸು. ನೀವು ಅದನ್ನು ಒಪ್ಪಿಕೊಳ್ಳದೆ ಇದ್ದೀರೋ? “ಇಂದಿನಿಂದ ಹೊಸ ಸಂಗತಿಗಳನ್ನೂ, ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನೂ ನಿನಗೆ ಹೇಳುತ್ತೇನೆ.
ISA 48:7 ಈಗಲೇ ಉಂಟಾಗುತ್ತಿವೆ, ಪುರಾತನ ಕಾಲದಲ್ಲಿ ಆಗಿಲ್ಲ; ‘ಇದೆಲ್ಲ ನನಗೆ ಮೊದಲೇ ತಿಳಿದಿತ್ತು,’ ಎಂದು ನೀನು ಕೊಚ್ಚಿಕೊಳ್ಳದಂತೆ, ನಾನು ಇವುಗಳನ್ನು ನಿನಗೆ ಮುಂತಿಳಿಸಲಿಲ್ಲ.
ISA 48:8 ನೀನು ಕೇಳಿಲ್ಲ, ತಿಳಿದೂ ಇಲ್ಲ. ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ. ಏಕೆಂದರೆ ನೀನು ದೊಡ್ಡ ವಂಚಕನೆಂದೂ, ಗರ್ಭದಿಂದಲೇ ನೀನು ದ್ರೋಹಿ ಎಂದೂ ನಾನು ತಿಳಿದುಕೊಂಡಿದ್ದೇನೆ.
ISA 48:9 ನಾನು ನನ್ನ ಹೆಸರಿನ ನಿಮಿತ್ತ ನನ್ನ ಕೋಪವನ್ನು ತಡೆ ಮಾಡಿದೆನು. ನಾನು ನನ್ನ ಹೆಸರಿಗೆ ಕಳಂಕ ಬಾರದಂತೆ, ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.
ISA 48:10 ನಾನು ನಿನ್ನನ್ನು ಪರಿಶೋಧಿಸಿದ್ದೇನೆ. ಆದರೆ ಬೆಳ್ಳಿಯಂತೆ ಅಲ್ಲ, ಸಂಕಟದ ಕುಲುಮೆಯಿಂದ ನಿನ್ನನ್ನು ಆಯ್ದುಕೊಂಡಿದ್ದೇನೆ.
ISA 48:11 ನನಗಾಗಿಯೇ, ನನಗೋಸ್ಕರವೇ ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.
ISA 48:12 “ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು. ಆತನು ನಾನೇ, ನಾನೇ ಮೊದಲನೆಯವನು, ನಾನೇ ಕಡೆಯವನು.
ISA 48:13 ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಅವುಗಳನ್ನು ಕರೆಯಲು, ಅವು ಒಟ್ಟಾಗಿ ನಿಂತುಕೊಂಡವು.
ISA 48:14 “ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಯೆಹೋವ ದೇವರು ಆಯ್ಕೆ ಮಾಡಿದ ಮಿತ್ರನು ಬಾಬಿಲೋನಿನ ವಿರುದ್ಧ ತನ್ನ ಉದ್ದೇಶವನ್ನು ಪೂರೈಸುತ್ತಾನೆ. ತನ್ನ ತೋಳು ಕಸ್ದೀಯರ ಮೇಲೆ ಇರುವುದು.
ISA 48:15 ನಾನೇ, ನಾನಾಗಿಯೇ ಮಾತನಾಡಿದ್ದೇನೆ. ನಾನೇ ಅವನನ್ನು ಕರೆದದ್ದು; ಅವನನ್ನು ನಾನೇ ಬರಮಾಡಿದ್ದೇನೆ. ಅವನ ಮಾರ್ಗವು ಯಶಸ್ವಿಯಾಗುವುದು.
ISA 48:16 “ನನ್ನ ಸಮೀಪಕ್ಕೆ ಬಂದು ಇದನ್ನು ಕೇಳಿರಿ. “ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಭೂಮಿಯು ಉಂಟಾದಂದಿನಿಂದ ಅಲ್ಲಿ ನಾನು ಇದ್ದೇನೆ.” ಈಗ ಸಾರ್ವಭೌಮ ಯೆಹೋವ ದೇವರು ತಮ್ಮ ಪವಿತ್ರಾತ್ಮರ ಸಮೇತ ನನ್ನನ್ನು ಕಳುಹಿಸಿದ್ದಾರೆ.
ISA 48:17 ನಿನ್ನ ವಿಮೋಚಕನೂ, ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಯೆಹೋವ ದೇವರ ಮಾತಿದು, “ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವ ದೇವರು ಆಗಿದ್ದೇನೆ.
ISA 48:18 ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ, ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು,
ISA 48:19 ನಿನ್ನ ಸಂತಾನವು ಸಹ ಮರಳಿನಂತೆಯೂ, ನಿನ್ನ ಮಕ್ಕಳು ಅಸಂಖ್ಯಾತ ಧಾನ್ಯಗಳಂತೆಯೂ ಇರುವರು. ಅವರ ಹೆಸರುಗಳು ನನ್ನ ಸಮ್ಮುಖದಿಂದ, ಅಳಿದುಹೋಗದೆ ಇರುವುದು.”
ISA 48:20 ಬಾಬಿಲೋನಿನಿಂದ ಹೊರಡಿರಿ. ಕಸ್ದೀಯರ ಕಡೆಯಿಂದ ಓಡಿಹೋಗಿರಿ. ಹರ್ಷಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ. ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ. “ಯೆಹೋವ ದೇವರು ತಮ್ಮ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾರೆ,” ಎಂದು ನೀವು ಹೇಳಿರಿ.
ISA 48:21 ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ. ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು. ದೇವರು ಬಂಡೆಯನ್ನು ಸೀಳಲು, ನೀರು ರಭಸದಿಂದ ಹೊರಗೆ ಬಂತು.
ISA 48:22 “ದುಷ್ಟರಿಗೆ ಸಮಾಧಾನವೇ ಇಲ್ಲ,” ಎಂದು ಯೆಹೋವ ದೇವರು ನುಡಿಯುತ್ತಾರೆ.
ISA 49:1 ದ್ವೀಪಗಳೇ, ನನ್ನ ಮಾತನ್ನು ಕೇಳಿರಿ. ದೂರದ ರಾಷ್ಟ್ರಗಳೇ, ಕಿವಿಗೊಡಿರಿ! ನನ್ನ ಜನನದ ಮುಂಚೆಯೇ ಯೆಹೋವ ದೇವರು ನನ್ನನ್ನು ಕರೆದರು. ತಾಯಿಯ ಉದರದಲ್ಲಿದ್ದಾಗಲೇ ನನಗೆ ಹೆಸರಿಟ್ಟರು.
ISA 49:2 ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ. ನನ್ನನ್ನು ಆತನು ನುಣುಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
ISA 49:3 ಆತನು ನನಗೆ, “ನೀನು ನನ್ನ ಸೇವಕನು. ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ!” ಎಂದು ಹೇಳಿದನು.
ISA 49:4 ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ. ನನ್ನ ಶಕ್ತಿಯೆಲ್ಲ ಶೂನ್ಯವಾಯಿತು, ನನ್ನ ಸಾಮರ್ಥ್ಯವೆಲ್ಲ ವ್ಯರ್ಥವಾಯಿತು,” ಎಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಯೆಹೋವ ದೇವರ ಬಳಿಯಲ್ಲಿಯೂ, ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
ISA 49:5 ಈಗ ಯೆಹೋವ ದೇವರು ಹೀಗೆ ಹೇಳುತ್ತಾರೆ, ಯಾಕೋಬ್ಯರನ್ನು ತನ್ನ ಬಳಿಗೆ ಕರೆತರುವಂತೆಯೂ, ಇಸ್ರಾಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳುವಂತೆಯೂ ದೇವರು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನು. ಆದರೂ ನಾನು ಯೆಹೋವ ದೇವರ ದೃಷ್ಟಿಯಲ್ಲಿ ಮಾನ್ಯನಾಗಿರುವೆನು. ನನ್ನ ದೇವರೇ ನನಗೆ ಬಲವು.
ISA 49:6 ಆತನೇ ಈಗ ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.”
ISA 49:7 ಮನಃಪೂರ್ವಕವಾಗಿ ತಿರಸ್ಕೃತನಾದವನೂ ಜನಾಂಗಕ್ಕೆ ಅಸಹ್ಯನೂ, ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೋವ ದೇವರ ನಂಬಿಗಸ್ತಿಕೆಯನ್ನೂ, ನೀನು ಆಯ್ದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ಕಂಡು ಅರಸರು ಎದ್ದು ನಿಲ್ಲುತ್ತಾರೆ, ಅಧಿಪತಿಗಳು ಸಹ ಆರಾಧಿಸುವರು.”
ISA 49:8 ಯೆಹೋವ ದೇವರು ಹೇಳುವುದೇನೆಂದರೆ: “ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡಿ, ಭೂಮಿಯನ್ನು ಸ್ಥಾಪಿಸುವುದಕ್ಕೂ, ಹಾಳಾಗಿರುವ ಸ್ಥಳಗಳನ್ನು ಸೊತ್ತಾಗಿ ಹೊಂದುವುದಕ್ಕೂ, ಜನರ ಒಡಂಬಡಿಕೆಯನ್ನಾಗಿಯೂ ನೇಮಿಸಿದ್ದೇನೆ.
ISA 49:9 ನೀನು ಬಂಧಿತರಿಗೆ, ‘ಹೊರಗೆ ಬನ್ನಿರಿ,’ ಕತ್ತಲೆಯಲ್ಲಿರುವವರಿಗೆ, ‘ಬೆಳಕಿಗೆ ಬನ್ನಿರಿ,’ ಎಂದು ಹೇಳಬಹುದು. “ಅವರು ದಾರಿಗಳಲ್ಲಿ ಮೇಯಿಸುವರು. ಅವರ ಎಲ್ಲಾ ಎತ್ತರವಾದ ಪ್ರದೇಶಗಳೂ ಕೂಡ ಅವರಿಗೆ ಹುಲ್ಲುಗಾವಲಾಗಿರುವುವು.
ISA 49:10 ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಇರದು. ಝಳವೂ, ಬಿಸಿಲೂ ಬಡಿಯದು. ಏಕೆಂದರೆ ಅವರನ್ನು ಕರುಣಿಸುವ ದೇವರು ಅವರನ್ನು ನಡೆಸುತ್ತಾ, ನೀರುಕ್ಕುವ ಒರತೆಗಳ ಬಳಿಗೆ ತರುವರು.
ISA 49:11 ನನ್ನ ಬೆಟ್ಟಗಳನ್ನೆಲ್ಲಾ ಸಮ ದಾರಿಯನ್ನಾಗಿ ಮಾಡಿ, ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು.
ISA 49:12 ಇವರು ದೂರದಿಂದ ಬರುತ್ತಾರೆ. ಇವರು ಉತ್ತರದಿಂದ ಮತ್ತು ಪಶ್ಚಿಮದಿಂದ ಇವರು ಸೀನಿಮ್ ದೇಶದಿಂದ ಬರುತ್ತಿದ್ದಾರೆ.”
ISA 49:13 ಆಕಾಶವೇ, ಹರ್ಷಧ್ವನಿ ಮಾಡು; ಭೂಮಿಯೇ, ಉಲ್ಲಾಸಪಡು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವ ದೇವರು ತನ್ನ ಜನರನ್ನು ಆಧರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
ISA 49:14 ಆದರೆ ಚೀಯೋನ್ ಎಂಬಾಕೆಯು, “ಯೆಹೋವ ದೇವರು ನನ್ನನ್ನು ತಳ್ಳಿಬಿಟ್ಟಿದ್ದಾನೆ. ನನ್ನ ಯೆಹೋವ ದೇವರು ನನ್ನನ್ನು ಮರೆತುಬಿಟ್ಟಿದ್ದಾನಲ್ಲಾ!” ಎಂದುಕೊಂಡಳು.
ISA 49:15 “ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆಯುವುದಿಲ್ಲ.
ISA 49:16 ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ. ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
ISA 49:17 ನಿನ್ನ ಮಕ್ಕಳು ತ್ವರೆಪಟ್ಟು ಬರುತ್ತಿದ್ದಾರೆ. ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟು ಹೋಗುವರು.
ISA 49:18 ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವ ದೇವರು ಹೇಳುವುದೇನೆಂದರೆ,” ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವೆ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿಕೊಳ್ಳುವೆ.
ISA 49:19 “ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಿಬಿದ್ದ ನಿನ್ನ ದೇಶವೂ ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. ನಿನ್ನನ್ನು ನುಂಗಿದವರು ದೂರವಾಗುವರು.
ISA 49:20 ನಿಮ್ಮ ದುಃಖದ ಸಮಯದಲ್ಲಿ ಜನಿಸಿದ ಮಕ್ಕಳು ‘ಸ್ಥಳವು ನನಗೆ ಇಕ್ಕಟ್ಟಾಯಿತು. ನಾನು ವಾಸಿಸುವುದಕ್ಕೆ ಸ್ಥಳಕೊಡು,’ ಎಂದು ಇನ್ನೂ ನಿಮ್ಮ ವಿಚಾರಣೆಯಲ್ಲಿ ಹೇಳುತ್ತಾರೆ.
ISA 49:21 ‘ನನಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನು ದುಃಖಿತ ಮತ್ತು ಬಂಜೆಯಾಗಿದ್ದೆ; ನನ್ನನ್ನು ಗಡಿಪಾರು ಮಾಡಿ ತಿರಸ್ಕರಿಸಲಾಯಿತು. ಇವುಗಳನ್ನು ತಂದವರು ಯಾರು? ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, ಇವರನ್ನು ಸಾಕಿದವರು ಯಾರು? ಅವರೆಲ್ಲಿದ್ದರು?’ ” ಎಂದುಕೊಳ್ಳುವೆ.
ISA 49:22 ಸಾರ್ವಭೌಮ ಯೆಹೋವ ದೇವರು, ಇಂತೆನ್ನುತ್ತಾರೆ, “ಇಗೋ, ನಾನು ರಾಷ್ಟ್ರಗಳ ಕಡೆಗೆ ಕೈಯೆತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಪುತ್ರರನ್ನು ಕೈಹಿಡಿದು ತರುವರು. ನಿನ್ನ ಪುತ್ರಿಯರನ್ನು ಹೆಗಲ ಮೇಲೆ ತರುವರು.
ISA 49:23 ಅರಸರು ನಿನಗೆ ಸಾಕು ತಂದೆಗಳು. ಅವರ ರಾಣಿಯರು ನಿನಗೆ ದಾದಿಗಳಾಗುವರು. ಅವರು ಭೂಮಿಯ ಕಡೆಗೆ ತಮ್ಮ ಮುಖವನ್ನು ಬಾಗಿಸಿ, ಅಡ್ಡಬಿದ್ದು, ನಿನ್ನ ಪಾದದ ಧೂಳನ್ನು ನೆಕ್ಕುವರು. ಆಗ ನಾನೇ ಯೆಹೋವ ಎಂದು ನೀನು ತಿಳಿದುಕೊಳ್ಳುವೆ. ಏಕೆಂದರೆ ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿಕೆಗೆ ಈಡಾಗರು.”
ISA 49:24 ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದುಕೊಳ್ಳಬಹುದೋ? ಭಯಂಕರನಿಂದ ಸೆರೆಯವರನ್ನು ಬಿಡಿಸಬಹುದೋ?
ISA 49:25 ಆದರೆ ಯೆಹೋವ ದೇವರು ಹೀಗೆನ್ನುತ್ತಾರೆ: “ಶೂರನ ಸೆರೆಯವರು ಅಪಹರಿಸಲಾಗುವರು. ಭೀಕರನ ಕೊಳ್ಳೆ ಕಸಿದುಕೊಳ್ಳಲಾಗುವುದು. ಏಕೆಂದರೆ ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ, ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.
ISA 49:26 ನಿನ್ನ ಹಿಂಸಕರು ಸ್ವಮಾಂಸವನ್ನೇ ಭುಜಿಸುವಂತೆ ಅನುಮತಿಸುವೆನು. ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ಸ್ವರಕ್ತವನ್ನೇ ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬ್ಯರ ಶೂರನೂ ಎಂದು ನರಮಾನವರೆಲ್ಲರಿಗೂ ಗೊತ್ತಾಗುವುದು.”
ISA 50:1 ಯೆಹೋವ ದೇವರು ಹೇಳುವುದೇನೆಂದರೆ, “ನಾನು ಬಿಟ್ಟುಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೆನು? ನಿಮ್ಮ ಪಾಪಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ. ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ.
ISA 50:2 ನಾನು ಬಂದಾಗ ಏಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಏಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಕೈ ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೆ ನನಗೆ ಬಿಡಿಸುವುದಕ್ಕೆ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಮರುಭೂಮಿಯನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ಮೀನುಗಳು ಬಾಯಾರಿ, ಸತ್ತು ನಾರುವುವು.
ISA 50:3 ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ, ಗೋಣಿತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು.”
ISA 50:4 ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವೆ ಎಂಬುದನ್ನು ನಾನು ತಿಳಿಯುವ ಹಾಗೆ ಸಾರ್ವಭೌಮ ಯೆಹೋವ ದೇವರು ಶಿಕ್ಷಿತರ ನಾಲಿಗೆಯನ್ನು ನನಗೆ ಕೊಟ್ಟಿದ್ದಾರೆ. ಆತನು ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ, ಸುರಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಎಚ್ಚರಗೊಳಿಸುತ್ತಾರೆ.
ISA 50:5 ಸಾರ್ವಭೌಮ ಯೆಹೋವ ದೇವರು ನನ್ನ ಕಿವಿಯನ್ನು ತೆರೆದಿದ್ದಾರೆ, ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.
ISA 50:6 ನಾನು ಹೊಡೆಯುವವರಿಗೆ ಬೆನ್ನನ್ನೂ, ಕೂದಲು ಕೀಳುವವರಿಗೆ ನನ್ನ ಗಡ್ಡವನ್ನೂ ಒಡ್ಡಿದೆನು. ನನ್ನ ಮುಖವನ್ನು ನಿಂದೆಗೂ, ಉಗುಳುವಿಕೆಗೂ ಮರೆಮಾಡಲಿಲ್ಲ.
ISA 50:7 ಸಾರ್ವಭೌಮ ಯೆಹೋವ ದೇವರು, ನನಗೆ ಸಹಾಯ ಮಾಡುವನು. ಆದಕಾರಣ ನಾನು ಅವಮಾನ ಪಡುವುದಿಲ್ಲ. ಆದ್ದರಿಂದ ನನ್ನ ಮುಖವನ್ನು ಕಗ್ಗಲ್ಲಿನಂತೆ ಮಾಡಿಕೊಂಡಿದ್ದೇನೆ. ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು.
ISA 50:8 ನನಗೆ ನೀತಿ ನಿರ್ಣಯಿಸುವಾತನು ಸಮೀಪದಲ್ಲಿಯೇ ಇದ್ದಾನೆ, ನನ್ನೊಂದಿಗೆ ವ್ಯಾಜ್ಯವಾಡುವವರು ಯಾರು? ನಾವು ಪರಸ್ಪರ ಎದುರಿಸೋಣ! ನನ್ನ ಎದುರಾಳಿ ಯಾರು? ಅವನು ನನ್ನ ಸಮೀಪಕ್ಕೆ ಬರಲಿ.
ISA 50:9 ಇಗೋ, ಸಾರ್ವಭೌಮ ಯೆಹೋವ ದೇವರು ನನಗೆ ಸಹಾಯ ಮಾಡುವರು. ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು. ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವುದು.
ISA 50:10 ನಿಮ್ಮೊಳಗೆ ಯೆಹೋವ ದೇವರಿಗೆ ಭಯಪಟ್ಟು, ಅವರ ಸೇವಕನ ಮಾತನ್ನು ಕೇಳಿ, ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಟ್ಟು, ತನ್ನ ದೇವರ ಮೇಲೆ ಆತುಕೊಳ್ಳಲಿ.
ISA 50:11 ಕಿಡಿಗಳಿಂದ ಆವರಿಸಿಕೊಳ್ಳುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ, ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಕೈಯಿಂದ ನಿಮಗಾಗುವುದು ಇದೇ. ನೀವು ಯಾತನೆಯಲ್ಲಿ ಬಿದ್ದುಕೊಂಡಿರುವಿರಿ.
ISA 51:1 ನೀತಿಯನ್ನು ಹಿಂಬಾಲಿಸುವವರೇ, ಯೆಹೋವ ದೇವರನ್ನು ಹುಡುಕುವವರೇ, ನನ್ನ ಕಡೆಗೆ ಕಿವಿಗೊಡಿರಿ. ನಿಮ್ಮನ್ನು ಯಾವ ಬಂಡೆಯೊಳಗಿಂದ ಒಡೆದು ಕಡಿದಿರುತ್ತಾರೋ ಮತ್ತು ಯಾವ ಗುಂಡಿಯೊಳಗಿಂದ ಅಗೆದಿರುತ್ತಾರೋ ಆ ಬಂಡೆಯಾದಾತನನ್ನು ನೋಡಿರಿ.
ISA 51:2 ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ. ನಾನು ಅವನನ್ನು ಕರೆದಾಗ ಅವನು ಒಬ್ಬನೇ ಮನುಷ್ಯ, ನಾನು ಅವನನ್ನು ಆಶೀರ್ವದಿಸಿ, ವೃದ್ಧಿಗೊಳಿಸಿದೆನು.
ISA 51:3 ಯೆಹೋವ ದೇವರು ಚೀಯೋನನ್ನು ಸಂತೈಸೇ ಸಂತೈಸುವರು. ಅವರು ಅದರ ಹಾಳಾದ ಸ್ಥಳಗಳನ್ನು ಕರುಣೆಯಿಂದ ನೋಡುವರು. ಅದರ ಮರುಭೂಮಿಯನ್ನು ಏದೆನ್ ಹಾಗೆಯೂ, ಹಾಳು ಪ್ರದೇಶವನ್ನು ಯೆಹೋವ ದೇವರ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ, ಉಲ್ಲಾಸವೂ, ಉಪಕಾರ ಸ್ತುತಿಯೂ, ಇಂಪಾದ ಸ್ವರವೂ ಕಂಡು ಬರುವುವು.
ISA 51:4 ನನ್ನ ಜನರೇ, ಕೇಳಿರಿ. ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ. ಏಕೆಂದರೆ ನಿಯಮವು ನನ್ನಿಂದ ಹೊರಡುವುದು ಮತ್ತು ನನ್ನ ನ್ಯಾಯವನ್ನು ಜನಾಂಗಕ್ಕೆ ಬೆಳಕನ್ನಾಗಿ ಮಾಡುವೆನು.
ISA 51:5 ನನ್ನ ನೀತಿಯು ತ್ವರೆಯಾಗಿ ಸಮೀಪಿಸಿತು. ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ಕೈ ಜನಾಂಗಕ್ಕೆ ನ್ಯಾಯವನ್ನು ತೀರಿಸುವುದು. ನನ್ನ ಭುಜದ ಮೇಲೆ ಭರವಸೆ ಇಟ್ಟು, ದ್ವೀಪಗಳು ನನಗೋಸ್ಕರ ಕಾದುಕೊಂಡಿರುತ್ತವೆ.
ISA 51:6 ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಏಕೆಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವುವು. ಭೂಮಿಯು ಹಳೆಯ ಬಟ್ಟೆಯಂತಾಗುವುದು ಮತ್ತು ಅದರಲ್ಲಿ ವಾಸಿಸುವವರು ಸೊಳ್ಳೆಗಳೋಪಾದಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವುದು, ನನ್ನ ನೀತಿಯು ಎಂದಿಗೂ ರದ್ದಾಗದು.
ISA 51:7 ನೀತಿಯನ್ನು ಅರಿತು, ನನ್ನ ನಿಯಮವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ, ನನಗೆ ಕಿವಿಗೊಡಿರಿ. ಮನುಷ್ಯರ ನಿಂದೆಗೆ ಭಯಪಡಬೇಡಿರಿ, ಅವರ ದೂಷಣೆಗೆ ಹೆದರಬೇಡಿರಿ.
ISA 51:8 ಏಕೆಂದರೆ ನುಸಿಯು ಬಟ್ಟೆಯನ್ನು ತಿನ್ನುವಂತೆ, ಅವರನ್ನು ತಿಂದುಬಿಡುವುದು ಮತ್ತು ಹುಳವು ಅವರನ್ನು ಉಣ್ಣೆಯಂತೆ ತಿನ್ನುವುದು. ಆದರೆ ನನ್ನ ನೀತಿಯು ಶಾಶ್ವತವಾಗಿರುವುದು ಮತ್ತು ನನ್ನ ರಕ್ಷಣೆಯು ತಲತಲಾಂತರಗಳಿಗೂ ಇರುವುದು.
ISA 51:9 ಯೆಹೋವ ದೇವರ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು ಬಲವನ್ನು ಧರಿಸಿಕೋ. ಹಿಂದಿನ ಜನಾಂಗಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
ISA 51:10 ಸಮುದ್ರವನ್ನೂ, ದೊಡ್ಡ ಅಗಾಧದ ನೀರನ್ನೂ ಬತ್ತಿಸಿ, ವಿಮುಕ್ತರಾದವರು, ಹಾದು ಹೋಗುವುದಕ್ಕೆ ಸಮುದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
ISA 51:11 ಆದಕಾರಣ ಯೆಹೋವ ದೇವರು ವಿಮೋಚಿಸಿದವರು, ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.
ISA 51:12 “ನಾನೇ, ನಾನೇ ನಿಮ್ಮನ್ನು ಸಂತೈಸುವವನಾಗಿದ್ದೇನೆ. ಹಾಗಾದರೆ ಸಾಯುವ ಮನುಷ್ಯನಿಗೂ, ಹುಲ್ಲಿನಂತ್ತಿರುವ ಮಾನವನಿಗೂ ಭಯಪಡುವ ನೀನು ಯಾರು?
ISA 51:13 ಆಕಾಶವನ್ನು ಹಾಸಿ, ಭೂಮಿಯ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟುಮಾಡಿದ ಯೆಹೋವ ದೇವರನ್ನು ನೀನು ಮರೆತುಬಿಟ್ಟು, ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶಪಡಿಸುವನೋ ಎಂಬಂತೆ ಅಂಜಿಕೊಂಡಿದ್ದೀಯಲ್ಲಾ, ಆ ಹಿಂಸಕನ ಕೋಪವು ಎಲ್ಲಿ?
ISA 51:14 ಸೆರೆಯಲ್ಲಿ ಕುಗ್ಗಿರುವವನು ತಾನು ಸಾಯದಂತೆಯೂ, ತನಗೆ ಆಹಾರದ ಕೊರತೆ ಇರದಂತೆಯೂ, ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.
ISA 51:15 ಆದರೆ ತೆರೆಗಳು ಬೋರ್ಗರೆಯುವಾಗ, ಸಮುದ್ರವನ್ನು ವಿಭಾಗಿಸಿದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ, ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.
ISA 51:16 ಆಕಾಶಗಳನ್ನು ನೆಡುವುದಕ್ಕೂ, ಭೂಮಿಯ ಅಸ್ತಿವಾರವನ್ನು ಹಾಕುವುದಕ್ಕೂ, ಚೀಯೋನಿಗೆ ನೀನು ನನ್ನ ಜನರೆಂದು ಹೇಳುವುದಕ್ಕೂ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು, ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.”
ISA 51:17 ಯೆಹೋವ ದೇವರ ಕೈಯಿಂದ ಆತನ ಕೋಪದ ಪಾತ್ರೆಯನ್ನು ಕುಡಿದ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು! ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
ISA 51:18 ಅವಳು ಹೆತ್ತ ಎಲ್ಲಾ ಪುತ್ರರಲ್ಲಿ ಅವಳನ್ನು ನಡೆಸುವುದಕ್ಕೆ ಒಬ್ಬನೂ ಇಲ್ಲ. ಅವಳು ಬೆಳೆಯಿಸಿದ ಎಲ್ಲಾ ಪುತ್ರರಲ್ಲಿ, ಅವಳ ಕೈಯನ್ನು ಹಿಡಿಯುವವನು ಒಬ್ಬನೂ ಇಲ್ಲ.
ISA 51:19 ಈ ಎರಡು ಸಂಗತಿಗಳು ನಿನಗೆ ಸಂಭವಿಸಿವೆ, ನಿನಗೋಸ್ಕರ ಚಿಂತಿಸುವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಖಡ್ಗವೋ, ಯಾರು ನಿನ್ನನ್ನು ಸಂತೈಸುವರು?
ISA 51:20 ನಿನ್ನ ಪುತ್ರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ, ಎಲ್ಲಾ ಬೀದಿಗಳು ಕೂಡುವ ಚೌಕಗಳಲ್ಲಿ ಅವರು ಬಿದ್ದಿದ್ದಾರೆ. ಅವರು ಯೆಹೋವ ದೇವರ ರೋಷದಿಂದಲೂ, ನಿನ್ನ ದೇವರ ಗದರಿಕೆಯಿಂದಲೂ ತುಂಬಿದ್ದಾರೆ.
ISA 51:21 ನೀನು ಹಿಂಸೆಗೊಳಗಾಗಿದ್ದೀ. ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ. ಆದ್ದರಿಂದ ಈಗ ಇದನ್ನು ಕೇಳು.
ISA 51:22 ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ, ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನಾನು ನಿನ್ನ ಕೈಯೊಳಗಿಂದ ತತ್ತರಿಸುವಂಥ ಪಾತ್ರೆಯನ್ನೂ, ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ. ಇನ್ನು ಮೇಲೆ ನೀನು ಅದನ್ನು ತಿರುಗಿ ಕುಡಿಯುವುದೇ ಇಲ್ಲ.
ISA 51:23 ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳು ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ ಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ, ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”
ISA 52:1 ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಧರಿಸಿಕೋ! ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ವೈಭವದ ಉಡುಪುಗಳನ್ನು ಹಾಕಿಕೋ ಏಕೆಂದರೆ ಇಂದಿನಿಂದ ಸುನ್ನತಿ ಇಲ್ಲದವರೂ, ಅಶುದ್ಧರೂ ನಿನ್ನೊಳಗೆ ಬರುವುದಿಲ್ಲ.
ISA 52:2 ಯೆರೂಸಲೇಮೇ ಧೂಳನ್ನು ಝಾಡಿಸಿಕೋ, ಎದ್ದು ಆಸನದ ಮೇಲೆ ಕುಳಿತುಕೋ. ಸೆರೆಯಾದ ಚೀಯೋನ್ ಪುತ್ರಿಯೇ, ನಿನ್ನ ಕುತ್ತಿಗೆಯ ಬಂಧನಗಳನ್ನು ಬಿಚ್ಚಿಕೋ.
ISA 52:3 ಏಕೆಂದರೆ ಯೆಹೋವ ದೇವರು ಹೇಳುವುದೇನೆಂದರೆ: “ನಿಮ್ಮನ್ನು ನೀವೇ ನಿಷ್ಪಲವಾಗಿ ಮಾಡಿಕೊಂಡಿರಿ. ಹಣವಿಲ್ಲದೆ ನೀವು ವಿಮೋಚನೆ ಹೊಂದುವಿರಿ.”
ISA 52:4 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವುದಕ್ಕೆ ಈಜಿಪ್ಟಿಗೆ ಹೋದರು. ಅಸ್ಸೀರಿಯದವರು ಕಾರಣವಿಲ್ಲದೆ ಅವರಿಗೆ ಬಾಧೆಪಡಿಸಿದರು.
ISA 52:5 “ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ. ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ. ನನ್ನ ನಾಮವು ಪ್ರತಿದಿನವೂ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ! ಎಂದು ಯೆಹೋವ ದೇವರು ಹೇಳುತ್ತಾರೆ.
ISA 52:6 ಆದ್ದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಅದು ನಾನೇ ಎಂದು ಅವರು ಗ್ರಹಿಸುವರು.”
ISA 52:7 ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಒಳ್ಳೆಯ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವವನ ಪಾದಗಳು ಪರ್ವತಗಳ ಮೇಲೆ ಎಷ್ಟೊಂದು ಅಂದವಾಗಿವೆ!
ISA 52:8 ನಿನ್ನ ಕಾವಲುಗಾರರು ಧ್ವನಿಯನ್ನೆತ್ತುವರು. ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು. ಏಕೆಂದರೆ ಯೆಹೋವ ದೇವರು ಚೀಯೋನನ್ನು ತಿರುಗಿ ತರುವಾಗ, ಅವರು ಅದನ್ನು ತಮ್ಮ ಕಣ್ಣಿನಿಂದಲೇ ಕಾಣುವರು.
ISA 52:9 ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ, ಒಟ್ಟಾಗಿ ಹಾಡಿರಿ. ಏಕೆಂದರೆ ಯೆಹೋವ ದೇವರು ತನ್ನ ಪ್ರಜೆಗಳನ್ನು ಸಂತೈಸಿದ್ದಾರೆ. ಆತನು ಯೆರೂಸಲೇಮನ್ನು ವಿಮೋಚಿಸಿದ್ದಾರೆ.
ISA 52:10 ಯೆಹೋವ ದೇವರು ತಮ್ಮ ಪವಿತ್ರ ಬಾಹುವನ್ನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತೋರಿಸಿಕೊಂಡಿದ್ದಾನೆ ಮತ್ತು ಭೂಮಿಯ ಅಂತ್ಯದವರೆಗೂ ನಮ್ಮ ದೇವರ ರಕ್ಷಣೆಯನ್ನು ಕಾಣುವರು.
ISA 52:11 ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ. ಅವಳ ಮಧ್ಯದಿಂದ ಹೊರಗೆ ಹೋಗಿರಿ. ಯೆಹೋವ ದೇವರ ದೇವಾಲಯದ ಪಾತ್ರೆಗಳನ್ನು ಹೊರುವವರೇ, ನೀವು ಶುದ್ಧರಾಗಿರಿ.
ISA 52:12 ನೀವು ತ್ವರೆಯಾಗಿ ಹೋಗುವುದಿಲ್ಲ, ಓಡಿ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರೇ ನಿಮ್ಮ ಮುಂದೆ ಹೋಗುವರು, ಇಸ್ರಾಯೇಲಿನ ದೇವರು ನಿಮ್ಮ ಹಿಂದೆ ಕಾವಲು ಕಾಯುವರು.
ISA 52:13 ನನ್ನ ಸೇವಕನು ವಿವೇಕಿಯಾಗಿ ಕಾರ್ಯವನ್ನು ಸಾಧಿಸಿ, ಅವನು ಉನ್ನತನಾಗಿ ಮೇಲೆಕ್ಕೇರಿ ಮಹೋನ್ನತನಾಗಿರುವನು.
ISA 52:14 ಅವನ ಮುಖವು ಮನುಷ್ಯರಿಗಿಂತಲೂ, ಅವನ ಆಕಾರವು ನರಪುತ್ರರಿಗಿಂತಲೂ ಕುರೂಪವಾಗಿರುವುದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ,
ISA 52:15 ಹಾಗೆಯೇ ಅನೇಕ ಜನಾಂಗಗಳನ್ನು ಆತನು ವಿಸ್ಮಯಗೊಳಿಸುವನು. ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು. ಏಕೆಂದರೆ ಅವರಿಗೆ ತಿಳಿಸದಿರುವ ಸಂಗತಿಯನ್ನು ಅವರು ನೋಡುವರು, ಕೇಳದೇ ಇರುವುದನ್ನು ಗ್ರಹಿಸಿಕೊಳ್ಳುವರು.
ISA 53:1 ನಮ್ಮ ಸುದ್ದಿಯನ್ನು ಯಾರು ನಂಬಿದ್ದಾರೆ? ಯೆಹೋವ ದೇವರ ಬಾಹುವು ಯಾರಿಗೆ ಪ್ರಕಟವಾಯಿತು?
ISA 53:2 ಅವನು ಚಿಗುರಿನಂತೆಯೂ, ಒಣ ನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಯೆಹೋವ ದೇವರ ಮುಂದೆ ಬೆಳೆಯುವನು. ಅವನಿಗೆ ಯಾವ ಸೌಂದರ್ಯವಾಗಲಿ ಇಲ್ಲವೆ ಘನತೆಯಾಗಲಿ ಇರಲಿಲ್ಲ. ನಾವು ಅವನನ್ನು ನೋಡಿದಾಗ, ಅವನಲ್ಲಿ ಆಕರ್ಷಿಸತಕ್ಕ ಯಾವ ಚಂದವು ಇರಲಿಲ್ಲ.
ISA 53:3 ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ, ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು. ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು. ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು.
ISA 53:4 ನಿಶ್ಚಯವಾಗಿಯೂ ಆತನು ನಮ್ಮ ನೋವನ್ನು ತೆಗೆದುಕೊಂಡನು; ಹೌದು, ನಮ್ಮ ದುಃಖಗಳನ್ನು ಸಹ ಹೊತ್ತುಕೊಂಡನು. ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಶಿಕ್ಷೆಹೊಂದಿದವನು, ಬಾಧೆಪಟ್ಟವನು ಎಂದು ಭಾವಿಸಿಕೊಂಡೆವು.
ISA 53:5 ನಮ್ಮ ಉಲ್ಲಂಘನೆಗಳಿಗಾಗಿ ಆತನು ತಿವಿತಕ್ಕೆ ಒಳಗಾದನು. ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಿಹೋದನು. ನಮಗೆ ಸಮಾಧಾನವನ್ನು ತಂದ ದಂಡನೆಯು ಆತನ ಮೇಲಿತ್ತು. ಆತನ ಗಾಯಗಳಿಂದ ನಮಗೆ ಗುಣವಾಯಿತು.
ISA 53:6 ನಾವೆಲ್ಲರೂ ದಾರಿತಪ್ಪಿದ ಕುರಿಗಳಂತೆ ಇದ್ದೆವು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು. ಯೆಹೋವ ದೇವರು ನಮ್ಮ ಎಲ್ಲಾ ದುಷ್ಕೃತ್ಯಗಳನ್ನು ಆತನ ಮೇಲೆ ಹಾಕಿದರು.
ISA 53:7 ಆತನು ದಬ್ಬಾಳಿಕೆಗೆ ಗುರಿಯಾಗಿ ಬಾಧೆಪಟ್ಟನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಬಲಿಗೆ ಎಳೆದುಕೊಂಡು ಹೋಗುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
ISA 53:8 ಆತನನ್ನು ದಬ್ಬಾಳಿಕೆಯಿಂದಲೂ, ನ್ಯಾಯತೀರ್ಪಿನಿಂದಲೂ ಎಳೆದುಕೊಂಡು ಹೋದರು. ಆತನ ಕಾಲದವರಲ್ಲಿ ಯಾರು ಮರುಗಿದರು? ಏಕೆಂದರೆ ಆತನನ್ನು ಜೀವಿತರ ಲೋಕದಿಂದ ತೆಗೆದುಹಾಕಿದರು. ನನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಶಿಕ್ಷೆಯನ್ನು ಹೊಂದಿದನು.
ISA 53:9 ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ, ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು.
ISA 53:10 ಆದರೂ ಆತನನ್ನು ಜಜ್ಜುವುದು ಯೆಹೋವ ದೇವರ ಚಿತ್ತವಾಗಿತ್ತು. ಯೆಹೋವ ದೇವರು ಆತನನ್ನು ಸಂಕಟಕ್ಕೆ ಒಳಪಡಿಸಿದನು. ಯೆಹೋವ ದೇವರು ಆತನ ಪ್ರಾಣವನ್ನು ದೋಷಪರಿಹಾರದ ಬಲಿಯನ್ನಾಗಿ ಮಾಡುವಾಗ, ಆತನು ತನ್ನ ಸಂತಾನವನ್ನು ಕಾಣುವನು. ಆತನು ತನ್ನ ದಿವಸಗಳನ್ನು ಉದ್ದ ಮಾಡಿದ ಮೇಲೆ ಮತ್ತು ಯೆಹೋವ ದೇವರ ಚಿತ್ತವು ಆತನ ಕೈಯಲ್ಲಿ ಸಫಲವಾಗುವುದು.
ISA 53:11 ಆತನು ತನ್ನ ಪ್ರಾಣದ ವೇದನೆಯನ್ನು ಸಹಿಸಿದ ತರುವಾಯ, ಜೀವದ ಬೆಳಕನ್ನು ಕಂಡು ತೃಪ್ತನಾಗುವನು. ತನ್ನ ತಿಳುವಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕರಿಗೆ ನೀತಿವಂತನಾಗಿ ನಿರ್ಣಯಿಸುವನು. ಏಕೆಂದರೆ ಆತನೇ ಅವರ ಅಪರಾಧಗಳನ್ನು ಹೊತ್ತುಕೊಳ್ಳುವನು.
ISA 53:12 ಆದ್ದರಿಂದ ನಾನು ಆತನಿಗೋಸ್ಕರ ದೊಡ್ಡವರೊಂದಿಗೆ ಪಾಲನ್ನು ಕೊಡುವೆನು ಮತ್ತು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲು ಹಂಚಿಕೊಳ್ಳುವನು. ಏಕೆಂದರೆ ಆತನು ತನ್ನ ಪ್ರಾಣವನ್ನು ಮರಣದವರೆಗೂ ಹೊಯ್ದುಬಿಟ್ಟು, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡನು. ಅನೇಕರ ಪಾಪವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾಪನೆ ಮಾಡಿದನು.
ISA 54:1 “ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಕೂಗು! ಏಕೆಂದರೆ ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 54:2 “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ಮತ್ತು ನಿವಾಸದ ಪರದೆಗಳು ಹರಡಲಿ. ಹಿಂದೆಗೆಯಬೇಡ; ನಿನ್ನ ಗುಡಾರದ ಹಗ್ಗಗಳನ್ನು ಉದ್ದಮಾಡಿ, ಅದರ ಗೂಟಗಳನ್ನು ಬಲಪಡಿಸು.
ISA 54:3 ನೀನು ಬಲಗಡೆಗೂ, ಎಡಗಡೆಗೂ ಹಬ್ಬಿಕೊಳ್ಳುವೆ. ನಿನ್ನ ಸಂತಾನವು ಜನಾಂಗಗಳನ್ನು ವಶಪಡಿಸಿಕೊಂಡು, ಹಾಳಾದ ಪಟ್ಟಣಗಳನ್ನು ನಿವಾಸವಾಗ ಮಾಡುವುದು.
ISA 54:4 “ಹೆದರಬೇಡ, ಏಕೆಂದರೆ ನಿನಗೆ ನಾಚಿಕೆಯಾಗುವುದಿಲ್ಲ. ಗಾಬರಿಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತುಬಿಡುವೆ. ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವುದಿಲ್ಲ.
ISA 54:5 ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು. ನಿನ್ನ ವಿಮೋಚಕನು ಇಸ್ರಾಯೇಲಿನ ಪರಿಶುದ್ಧನೇ. ಸಮಸ್ತ ಭೂಮಿಯ ದೇವರು ಎಂದು ಆತನನ್ನು ಕರೆಯಲಾಗುತ್ತದೆ.
ISA 54:6 ನೀನು ತ್ಯಜಿಸಿದ ಮನನೊಂದಿರುವ ಯೌವನದ ಪತ್ನಿಯ ಹಾಗೆ ತಿರಸ್ಕಾರಹೊಂದಿರುವೆ. ಯೆಹೋವ ದೇವರು ನಿನ್ನನ್ನು ಕರೆದಿದ್ದಾನೆ, ಎಂದು ನಿನ್ನ ದೇವರು ಹೇಳುತ್ತಾರೆ.
ISA 54:7 ಕ್ಷಣಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ. ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
ISA 54:8 ನನಗೆ ಬೇಸರವಾದಾಗ ನನ್ನ ಮುಖವನ್ನು ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು. ಆದರೆ ಶಾಶ್ವತವಾದ ದಯೆಯಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ, ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.
ISA 54:9 “ಇದು ನನಗೆ ನೋಹನ ಕಾಲದ ಪ್ರಳಯದಂತಿದೆ. ನೋಹನ ಕಾಲದ ಪ್ರಳಯವು ಪುನಃ ಭೂಮಿಯನ್ನು ಆವರಿಸುವುದಿಲ್ಲ ಎಂದು ನಾನು ಪ್ರಮಾಣ ಮಾಡಿದ ಹಾಗೆಯೇ, ಇನ್ನು ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ, ನಿನ್ನನ್ನು ಗದರಿಸುವುದಿಲ್ಲ, ಎಂದು ಪ್ರಮಾಣ ಮಾಡಿದ್ದೇನೆ.
ISA 54:10 ಪರ್ವತಗಳು ಸ್ಥಳವನ್ನು ಬಿಟ್ಟು ಹೋದರೂ, ಬೆಟ್ಟಗಳು ಕದಲಿ ಹೋದರೂ, ನನ್ನ ಕುಂದದ ಪ್ರೀತಿಯು ನಿನ್ನನ್ನು ಬಿಟ್ಟು ಹೋಗದು, ನನ್ನ ಸಮಾಧಾನದ ಒಡಂಬಡಿಕೆಯು ನಿನ್ನನ್ನು ಬಿಟ್ಟು ಕದಲದು,” ಎಂದು ನಿನ್ನನ್ನು ಕರುಣಿಸುವ ಯೆಹೋವ ದೇವರು ಹೇಳುತ್ತಾರೆ.
ISA 54:11 ಸಂಕಟಕ್ಕೊಳಗಾದವಳೇ! ಬಿರುಗಾಳಿಯಿಂದ ಬಡಿಯಲಾಗಿ ಆದರಣೆ ಹೊಂದದವಳೇ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು, ನಿನ್ನ ಅಸ್ತಿವಾರವನ್ನು ನೀಲಮಣಿಗಳಿಂದ ಹಾಕಿ ಗಾರೆಯಿಂದ ಕಟ್ಟುವೆನು.
ISA 54:12 ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ಮತ್ತು ನಿನ್ನ ಮೇರೆಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡುವೆನು.
ISA 54:13 ನಿನ್ನ ಮಕ್ಕಳೆಲ್ಲಾ ಯೆಹೋವ ದೇವರಿಂದಲೇ ಬೋಧನೆ ಪಡೆಯುವರು. ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು.
ISA 54:14 ನೀನು ನೀತಿಯಲ್ಲಿ ನೆಲೆಗೊಂಡಿರುವೆ. ಬಾಧೆಯಿಂದ ದೂರವಾಗಿರುವೆ. ನೀನು ಭೀತಿಯಿಂದ ಭಯಪಡುವುದಿಲ್ಲ, ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.
ISA 54:15 ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ, ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ದಾಳಿಮಾಡುತ್ತಾರೋ, ಅವರು ನಿನಗೆ ಅಧೀನವಾಗುವರು.
ISA 54:16 “ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ, ತನ್ನ ಕೆಲಸಕ್ಕೆ ಆಯುಧಗಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ. ನಾಶಮಾಡುವ ಕೆಡುಕನನ್ನು ಸೃಷ್ಟಿಸಿದವನೂ ನಾನೇ.
ISA 54:17 ನಿನಗೆ ವಿರೋಧವಾಗಿ ನಿರ್ಮಿಸಿದ ಆಯುಧಗಳು ಸಫಲವಾಗುವುದಿಲ್ಲ. ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯತೀರ್ಪಿನಲ್ಲಿ ನೀನು ಖಂಡಿಸುವೆ. ಇದೇ ಯೆಹೋವ ದೇವರ ಸೇವಕರ ಬಾಧ್ಯತೆಯು, ಇದು ನನ್ನಿಂದ ಅವರಿಗೆ ದೊರೆಯುವ ಸಮರ್ಥನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 55:1 ಬಾಯಾರಿದ ಸಕಲ ಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನೂ ಬರಲಿ. ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ. ಬನ್ನಿರಿ, ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡುಕೊಳ್ಳಿರಿ.
ISA 55:2 ಆಹಾರವಲ್ಲದಕ್ಕೆ ಹಣವನ್ನು ವ್ಯರ್ಥ ಮಾಡುವುದು ಏಕೆ? ತೃಪ್ತಿಪಡಿಸದವುಗಳಿಗೆ ನಿಮ್ಮ ದುಡಿತವನ್ನು ವೆಚ್ಚಮಾಡುವುದು ಏಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯದನ್ನು ನೀವು ಉಣ್ಣಿರಿ. ನೀವು ಮೃಷ್ಟಾನ್ನದಲ್ಲಿ ಆನಂದಿಸಿ!
ISA 55:3 ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ, ಆಲಿಸಿದರೆ ಬದುಕಿ ಬಾಳುವಿರಿ. ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.
ISA 55:4 ನಾನು ಅವನನ್ನು ಜನರಿಗೆ ಸಾಕ್ಷಿಯನ್ನಾಗಿಯೂ, ಜನರಿಗೆ ನಾಯಕನನ್ನಾಗಿಯೂ, ಅಧಿಪತಿಯನ್ನಾಗಿಯೂ ಕೊಟ್ಟೆನು.
ISA 55:5 ನಿನ್ನ ದೇವರಾದ ಯೆಹೋವ ದೇವರ ನಿಮಿತ್ತವೂ, ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆಯುವೆ, ಏಕೆಂದರೆ ಆತನು ನಿನಗೆ ಕೊಟ್ಟ ವೈಭವದಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವುವು.
ISA 55:6 ಯೆಹೋವ ದೇವರು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ, ಆತನು ಸಮೀಪದಲ್ಲಿರುವಾಗ, ಆತನಿಗೆ ಬಿನ್ನಹ ಮಾಡಿರಿ.
ISA 55:7 ದುಷ್ಟನು ತನ್ನ ದುರ್ಮಾರ್ಗವನ್ನೂ, ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು, ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು. ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.
ISA 55:8 ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ. ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ, ಎಂದು ಯೆಹೋವ ದೇವರು ಹೇಳುತ್ತಾರೆ.
ISA 55:9 ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ, ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
ISA 55:10 ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸಿರುಗೊಳಿಸಿ, ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, ಹಾಗೆಯೇ
ISA 55:11 ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
ISA 55:12 ಏಕೆಂದರೆ ನೀವು ಆನಂದದೊಡನೆ ಹೋಗುವಿರಿ, ಸಮಾಧಾನದಿಂದ ಬರುವಿರಿ. ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವುವು.
ISA 55:13 ಮುಳ್ಳಿಗೆ ಬದಲಾಗಿ ತುರಾಯಿ ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವುವು. ಇದು ಯೆಹೋವ ದೇವರ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.
ISA 56:1 ಯೆಹೋವ ದೇವರು ಹೇಳುವುದೇನೆಂದರೆ: “ನ್ಯಾಯವನ್ನು ಕೈಗೊಳ್ಳಿರಿ, ನೀತಿಯಲ್ಲಿ ನಡೆಯಿರಿ. ಏಕೆಂದರೆ ನನ್ನ ರಕ್ಷಣೆಯು ಬರುವುದಕ್ಕೂ, ನನ್ನ ನೀತಿಯು ಪ್ರಕಟವಾಗುವುದಕ್ಕೂ ಸಮೀಪವಾಗಿದೆ.
ISA 56:2 ಇದನ್ನು ಮಾಡುವ ಮನುಷ್ಯನೂ, ಇದನ್ನು ಹಿಡಿದುಕೊಳ್ಳುವವರ ಪುತ್ರನೂ ಎಂದರೆ ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಗೊಳ್ಳುವವನೂ ಮತ್ತು ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.”
ISA 56:3 ಯೆಹೋವ ದೇವರನ್ನು ಸೇರಿಕೊಂಡ ವಿದೇಶೀಯನು, “ಯೆಹೋವ ದೇವರು ತಮ್ಮ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವರು,” ಎಂದು ಹೇಳದಿರಲಿ. ಮತ್ತು ನಪುಂಸಕನು, “ನಾನು ಕೇವಲ ಒಣಗಿದ ಮರ,” ಎಂದು ಹೇಳದಿರಲಿ.
ISA 56:4 ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಸಬ್ಬತ್ ದಿನವನ್ನು ಕೈಗೊಂಡು, ನನಗೆ ಮೆಚ್ಚಿಗೆಯಾದದ್ದನ್ನು ಆಯ್ದುಕೊಂಡು, ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವ ನಪುಂಸಕರಿಗೆ,
ISA 56:5 ನನ್ನ ಆಲಯದಲ್ಲಿಯೂ ಗೋಡೆಗಳ ಬಳಿಗೂ ಪುತ್ರ ಪುತ್ರಿಯರಿಗಿಂತ ಉತ್ತಮವಾದ ಸ್ಥಳವನ್ನೂ, ಹೆಸರನ್ನೂ ನಾನು ಕೊಡುತ್ತೇನೆ. ನಾನು ಅವರಿಗೆ ಎಂದಿಗೂ ಅಳಿಯದ ಶಾಶ್ವತವಾದ ಹೆಸರನ್ನು ಕೊಡುವೆನು.
ISA 56:6 ಯೆಹೋವ ದೇವರಾದ ನನ್ನನ್ನು ಸೇವಿಸುವುದಕ್ಕೂ, ನನ್ನ ಹೆಸರನ್ನು ಪ್ರೀತಿಸಿ, ನನಗೆ ಸೇವಕರಾಗಿರಲು ತಾವಾಗಿ ಯೆಹೋವ ದೇವರೊಂದಿಗೆ ಸೇರಿಕೊಂಡಿರುವ ವಿದೇಶಿಯರು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ, ಅದನ್ನು ಕೈಗೊಂಡು, ನನ್ನ ಒಡಂಬಡಿಕೆಯನ್ನು ಭದ್ರವಾಗಿ ಪಾಲಿಸುವವರನ್ನು
ISA 56:7 ನನ್ನ ಪರಿಶುದ್ಧ ಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವನ್ನು ಉಂಟುಮಾಡುವೆನು. ನನ್ನ ಬಲಿಪೀಠದ ಮೇಲೆ ಅವರು ಅರ್ಪಿಸುವ ದಹನಬಲಿಗಳು, ಯಜ್ಞಗಳು ನನಗೆ ಒಪ್ಪಿಗೆಯಾಗುವುವು, ಏಕೆಂದರೆ ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವು ಎಂದು ಎನಿಸಿಕೊಳ್ಳುವುದು.”
ISA 56:8 ಇಸ್ರಾಯೇಲಿನ ಸೆರೆಹೋದ ಜನರನ್ನು ಕೂಡಿಸುವಂಥ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು.”
ISA 56:9 ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವುದಕ್ಕೆ ಬನ್ನಿರಿ.
ISA 56:10 ಇಸ್ರಾಯೇಲಿನ ಕಾವಲುಗಾರರು ಕುರುಡರು. ಅವರೆಲ್ಲರೂ ಅರಿವಿಲ್ಲದವರು. ಅವರೆಲ್ಲರೂ ಮೂಕ ನಾಯಿಗಳು, ಅವು ಬೊಗಳಲಾರವು, ಕನಸು ಕಾಣುತ್ತವೆ, ಬಿದ್ದುಕೊಂಡಿರುತ್ತವೆ. ನಿದ್ರೆಯನ್ನು ಪ್ರೀತಿಸುತ್ತವೆ.
ISA 56:11 ಹೌದು, ಎಂದಿಗೂ ಸಾಕೆನ್ನದ ಹೊಟ್ಟೆಬಾಕ ನಾಯಿಗಳು ಮತ್ತು ಅವರು ಗ್ರಹಿಕೆ ಇಲ್ಲದ ಕುರುಬರು, ಅವರೆಲ್ಲರೂ ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ, ಪ್ರತಿಯೊಬ್ಬನೂ ತನ್ನ ಲಾಭ ಸಿಕ್ಕುವ ಕಡೆಗೂ ತಿರುಗಿಕೊಳ್ಳುವನು.
ISA 56:12 “ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು. ನಮ್ಮನ್ನು ನಾವೇ ಬೇಕಾದಷ್ಟು ಮದ್ಯದಿಂದ ತುಂಬಿಕೊಳ್ಳುವ! ನಾಳೆಯು ಈ ದಿವಸದಂತೆಯೇ ಇರುವುದು. ಅಥವಾ ಇದಕ್ಕಿಂತಲೂ ಚೆನ್ನಾಗಿರುವುದು,” ಎಂದು ಪ್ರತಿಯೊಬ್ಬನೂ ಹೇಳುತ್ತಾನೆ.
ISA 57:1 ನೀತಿವಂತನು ನಾಶವಾಗುವನು ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು. ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾದರು ಎಂಬುದನ್ನು ಯಾರೂ ಯೋಚಿಸರು.
ISA 57:2 ಅವರು ಸಮಾಧಾನಕ್ಕೆ ಪ್ರವೇಶಿಸುತ್ತಾರೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬರೂ ತಮ್ಮ ಮರಣದ ಹಾಸಿಗೆಗಳಲ್ಲಿ ವಿಶ್ರಮಿಸಿಕೊಳ್ಳುತ್ತಾರೆ.
ISA 57:3 “ಆದರೆ ನೀವು ಮಾಟಗಾತಿಯ ಮಕ್ಕಳೇ, ವೇಶ್ಯೆ ಮತ್ತು ವ್ಯಭಿಚಾರಿಗಳ ಸಂತಾನದವರೇ, ಇಲ್ಲಿಗೆ ಬನ್ನಿರಿ.
ISA 57:4 ಯಾರನ್ನು ಹಾಸ್ಯಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲಿಸಿ, ನಾಲಿಗೆಯನ್ನು ಚಾಚುತ್ತೀರಿ?
ISA 57:5 ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿಕೊಂಡು, ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ, ಸುಳ್ಳಿನ ಸಂತತಿಯೂ ಅಲ್ಲವೋ?
ISA 57:6 ಹಳ್ಳದ ನುಣುಪಾದ ಕಲ್ಲುಗಳು ನಿಮ್ಮ ಪಾಲು. ಅವುಗಳೇ ಹೌದು, ಅವೇ ನಿನ್ನ ಪಾಲು. ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಧಾನ್ಯ ಸಮರ್ಪಣೆಯನ್ನು ಅರ್ಪಿಸಿದ್ದೀಯೆ. ನಾನು ಇದನ್ನೆಲ್ಲಾ ಕಂಡು ನನ್ನ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ?
ISA 57:7 ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀಯೆ, ಬಲಿಯನ್ನರ್ಪಿಸಲು ಆ ಬೆಟ್ಟವನ್ನೇರಿದ್ದೀ.
ISA 57:8 ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕದ ಚಿಹ್ನೆಯನ್ನು ಇಟ್ಟಿದ್ದೀಯೆ. ಏಕೆಂದರೆ ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿಕೊಂಡಿದ್ದೀ. ಏರಿಹೋಗಿ ನಿನ್ನ ಮಂಚವನ್ನು ಅಗಲಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ. ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿ ಮಾಡಿದ್ದೀಯೆ.
ISA 57:9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ.
ISA 57:10 ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ, ‘ಏನೂ ಪ್ರಯೋಜನವಿಲ್ಲ,’ ಎಂದುಕೊಳ್ಳಲಿಲ್ಲ. ನೀನು ಹೊಸ ಬಲವನ್ನು ತಂದುಕೊಂಡು, ಬೇಸರಗೊಳ್ಳದೆ ಮುಂದುವರೆದಿರುವೆ.
ISA 57:11 “ನೀನು ಯಾರಿಗೆ ಹೆದರಿ, ಬೆದರಿ, ನನ್ನನ್ನು ಮರೆತು, ನನಗೆ ಸುಳ್ಳಾಡಿ ಮೋಸ ಮಾಡಿರುವೆ. ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ! ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ, ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ?
ISA 57:12 ನಾನೇ ನಿನ್ನ ನೀತಿಯನ್ನೂ, ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಏಕೆಂದರೆ ಅವು ನಿನಗೆ ಪ್ರಯೋಜನವಾಗುವುದಿಲ್ಲ.
ISA 57:13 ನೀನು ಸಹಾಯಕ್ಕಾಗಿ ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ರಕ್ಷಿಸಲಿ. ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು. ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವುದು. ಆದರೆ ನನ್ನಲ್ಲಿ ಆಶ್ರಯಿಸುವವನು, ದೇಶವನ್ನು ವಶಮಾಡಿಕೊಂಡು, ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.”
ISA 57:14 ನಂತರ ಹೀಗೆ ಹೇಳಲಾಗುವುದು: ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ, ನನ್ನ ಜನರ ದಾರಿಯೊಳಗಿಂದ ಆತಂಕವನ್ನು ಎತ್ತಿ ಹಾಕಿರಿ,
ISA 57:15 ಏಕೆಂದರೆ ಉನ್ನತನೂ, ಮಹೋನ್ನತನೂ, ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ: “ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ, ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.
ISA 57:16 ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. ಯಾವಾಗಲೂ ಕೋಪಿಸಿಕೊಳ್ಳೆನು. ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
ISA 57:17 ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪಗೊಂಡು, ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾದೆನು. ಅವನು ಮೊಂಡುತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
ISA 57:18 ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ, ಅವನನ್ನು ನಡೆಸುತ್ತೇನೆ. ಅವನಿಗೂ, ಅವನ ದುಃಖಿತರಿಗೂ ಆದರಣೆಗಳನ್ನು ಪುನಃಸ್ಥಾಪಿಸುವೆನು.
ISA 57:19 ನಾನು ತುಟಿಗಳಿಗೆ ಸ್ತೋತ್ರವನ್ನು ಉಂಟುಮಾಡುವೆನು; ದೂರವಾದವನಿಗೂ ಸಮೀಪವಾದವನಿಗೂ ಸಮಾಧಾನವಿರಲಿ, ಸಮಾಧಾನವಿರಲಿ. ನಾನು ಅವರನ್ನು ಸ್ವಸ್ಥ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 57:20 ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ, ಮೈಲಿಗೆಯನ್ನೂ ಕಾರುವಂಥ ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿದ್ದಾರೆ.
ISA 57:21 “ದುಷ್ಟರಿಗೆ ಸಮಾಧಾನವೇ ಇಲ್ಲ,” ಎಂದು ನನ್ನ ದೇವರು ಹೇಳುತ್ತಾರೆ.
ISA 58:1 “ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು. ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನು ಘೋಷಿಸು.
ISA 58:2 ಆದರೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕುತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ಆಜ್ಞೆಗಳನ್ನು ಬಿಡದೆ, ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ, ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸಮೀಪಿಸುವುದರಲ್ಲಿ ಸಂತೋಷಿಸುತ್ತಾರೆ.
ISA 58:3 ‘ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸಲಿಲ್ಲ?’ ‘ನಮ್ಮ ಪ್ರಾಣವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ?’ ಎಂದು ಅವರು ಅಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ಇಷ್ಟದ ಕೆಲಸವನ್ನು ನಡೆಸಿ ಮತ್ತು ನಿಮ್ಮ ಕೆಲಸದವರನ್ನು ದುಡಿತಕ್ಕೆ ಎಳೆಯುತ್ತೀರಿ.
ISA 58:4 ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಹೊಡೆದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.
ISA 58:5 ನಾನು ಆಯ್ದುಕೊಂಡದ್ದು ಇಂಥಾ ಉಪವಾಸವೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ಯೆಹೋವ ದೇವರಿಗೆ ಮೆಚ್ಚಿಗೆಯಾಗುವ ಉಪವಾಸ ಎನ್ನುತ್ತೀರೋ?
ISA 58:6 “ನಾನು ಆಯ್ದುಕೊಳ್ಳುವ ಉಪವಾಸವು ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ, ಭಾರವಾದ ಹೊರೆಯನ್ನು ಬಿಚ್ಚುವುದೂ, ದಬ್ಬಾಳಿಕೆಯಾದವರನ್ನು ಬಿಡಿಸುವುದೂ, ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?
ISA 58:7 ಹಸಿದವರಿಗೆ ಅನ್ನ ಕೊಡುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬಟ್ಟೆಯಿಲ್ಲದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೇ ನನಗೆ ಇಷ್ಟಕರವಾದ ಉಪವಾಸ ವ್ರತ?
ISA 58:8 ಆಗ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವುದು. ನಿನ್ನ ಆರೋಗ್ಯ ತ್ವರಿತವಾಗಿ ಕಾಣಿಸಿಕೊಳ್ಳುತ್ತದೆ. ನಿನ್ನ ನೀತಿ ನಿನಗೆ ಮುಂಬಲವಾಗಿರುವುದು. ಯೆಹೋವ ದೇವರ ಮಹಿಮೆಯು ನಿನಗೆ ಹಿಂಬಲವಾಗಿರುವುದು.
ISA 58:9 ಆಗ ನೀನು ಕರೆದರೆ ಯೆಹೋವ ದೇವರು ಉತ್ತರಕೊಡುವರು. ನೀನು ಕೂಗುವೆ, ಆಗ ಅವರು, ‘ನಾನು ಇಲ್ಲಿ ಇದ್ದೇನೆ,’ ಅನ್ನುವರು. “ನೀನು ನಿನ್ನ ಮಧ್ಯದೊಳಗಿಂದ ದಬ್ಬಾಳಿಕೆಯ ನೊಗವನ್ನೂ, ಬೆರಳ ಸನ್ನೆಯನ್ನೂ, ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ,
ISA 58:10 ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ದಬ್ಬಾಳಿಕೆಗೆ ಒಳಗಾದವನ ಪ್ರಾಣವನ್ನು ತೃಪ್ತಿಪಡಿಸಿದರೆ, ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವುದು. ನಿನ್ನ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು.
ISA 58:11 ಯೆಹೋವ ದೇವರು ನಿನ್ನನ್ನು ನಿತ್ಯವೂ ನಡೆಸುತ್ತಾ, ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ, ನಿನ್ನ ಎಲುಬುಗಳನ್ನು ಬಲಪಡಿಸುವರು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಇರುವೆ. ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ
ISA 58:12 ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು. ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳನ್ನು ನೀನು ಎಬ್ಬಿಸುವೆ. ಬಿದ್ದ ಗೋಡೆಯನ್ನು ಎಬ್ಬಿಸುವ ದೇಶ ಎಂದೂ, ನಿವಾಸಿಗಳಿಗಾಗಿ ನಡೆದಾಡಲು ಹಾದಿಗಳನ್ನು ಉಂಟುಮಾಡುವ ದೇಶ ಎಂದೂ ನಿನಗೆ ಬಿರುದು ಬರುವುದು.
ISA 58:13 “ನೀನು ಸಬ್ಬತ್ ದಿನದಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟವನ್ನು ಮಾಡದೆ ಹೋದರೆ, ಸಬ್ಬತ್ ದಿನವನ್ನು ಆನಂದಕರವಾದದ್ದೆಂದೂ, ಯೆಹೋವ ದೇವರ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ, ಸ್ವಂತ ಇಷ್ಟಗಳನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,
ISA 58:14 ಆಗ ಯೆಹೋವ ದೇವರಲ್ಲಿ ಆನಂದಗೊಳ್ಳುವಿ. ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿಸುವಂತೆ ನಿನಗೆ ಮಾಡುವೆನು.” ಏಕೆಂದರೆ ಯೆಹೋವ ದೇವರ ಬಾಯಿ ಇದನ್ನು ನುಡಿದಿದೆ.
ISA 59:1 ಯೆಹೋವ ದೇವರ ಕೈ ರಕ್ಷಿಸಲಾರದ ಹಾಗೆ ಮೋಟುಗೈಯಲ್ಲ. ಆತನ ಕಿವಿ ಕೇಳಲಾರದ ಹಾಗೆ ಮಂದವಾಗಿಲ್ಲ.
ISA 59:2 ನಿಮ್ಮ ಅಕ್ರಮಗಳೇ, ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿವೆ. ನಿಮ್ಮ ಪಾಪಗಳೇ, ಆತನು ಹೇಳಿದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಸಿವೆ.
ISA 59:3 ಏಕೆಂದರೆ ನಿಮ್ಮ ಕೈಗಳು ರಕ್ತದಿಂದಲೂ, ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ. ನಿಮ್ಮ ತುಟಿಗಳು ಸುಳ್ಳನ್ನು ಆಡುತ್ತವೆ. ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.
ISA 59:4 ನೀತಿಗೋಸ್ಕರ ಕರೆಯುವವನು ಯಾವನೂ ಇಲ್ಲ, ಸತ್ಯಕ್ಕೋಸ್ಕರ ನ್ಯಾಯ ವಿಚಾರಿಸುವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡುತ್ತಾರೆ. ಸುಳ್ಳನ್ನು ಮಾತನಾಡುತ್ತಾರೆ. ಕೇಡನ್ನು ಗರ್ಭಧರಿಸಿ, ಅಕ್ರಮವನ್ನು ಹೆರುತ್ತಾರೆ.
ISA 59:5 ಹಾವಿನಂತೆ ಮೊಟ್ಟೆಗಳನ್ನು ಮರಿಮಾಡುತ್ತಾರೆ. ಜೇಡರ ಹುಳದಂತೆ ಬಲೆಯನ್ನು ನೇಯುತ್ತಾರೆ. ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು. ಒಡೆದುಬಿಡುವವನಿಗೆ ವಿಷದ ಮರಿ ಹೊರಡುವುದು.
ISA 59:6 ಅವರ ನೂಲು ವಸ್ತ್ರಕ್ಕಾಗದು. ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದುಕೊಳ್ಳರು. ಅವರ ಕೆಲಸಗಳು ಅಕ್ರಮದ ಕೆಲಸಗಳೇ. ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಇವೆ.
ISA 59:7 ಅವರ ಕಾಲುಗಳು ಪಾಪಕ್ಕೆ ಓಡುತ್ತವೆ. ಅಪರಾಧವಿಲ್ಲದ ರಕ್ತವನ್ನು ಚೆಲ್ಲುವುದಕ್ಕೆ ತ್ವರೆ ಪಡುತ್ತವೆ. ಅವರ ಆಲೋಚನೆಗಳು ಅಧರ್ಮದ ಆಲೋಚನೆಗಳೇ. ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿವೆ.
ISA 59:8 ಸಮಾಧಾನದ ಮಾರ್ಗವನ್ನೇ ಅವರು ಅರಿಯರು. ಅವರ ದಾರಿಗಳಲ್ಲಿ ನ್ಯಾಯವಿಲ್ಲ. ತಮ್ಮ ಹಾದಿಗಳನ್ನು ವಕ್ರಮಾಡಿಕೊಂಡಿದ್ದಾರೆ. ಅವುಗಳಲ್ಲಿ ನಡೆಯುವವರೆಲ್ಲರೂ ಸಮಾಧಾನವನ್ನರಿಯರು.
ISA 59:9 ಆದಕಾರಣ ನ್ಯಾಯ ನಿರ್ಣಯವು ನಮಗೆ ದೂರವಾಗಿದೆ. ನೀತಿಯು ನಮ್ಮನ್ನು ತಲುಪುವುದಿಲ್ಲ, ಬೆಳಕನ್ನು ಎದುರು ನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ; ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲಿಯೇ ನಡೆಯುತ್ತೇವೆ.
ISA 59:10 ಕುರುಡರ ಹಾಗೆ ಗೋಡೆಯನ್ನು ತಡವರಿಸುತ್ತೇವೆ. ಕಣ್ಣಿಲ್ಲದವರ ಹಾಗೆ ಮುಟ್ಟಿ ನೋಡುತ್ತೇವೆ. ಮಧ್ಯಾಹ್ನದಲ್ಲಿ ರಾತ್ರಿಯಂತೆ ಎಡವುತ್ತೇವೆ. ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
ISA 59:11 ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ. ನಾವು ಪಾರಿವಾಳಗಳಂತೆ ದುಃಖದಿಂದ ಕೊರಗುತ್ತೇವೆ. ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ. ಆದರೆ ಅದು ಸಿಕ್ಕದು, ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
ISA 59:12 ಏಕೆಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ. ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ. ನಮ್ಮ ದ್ರೋಹಗಳು ನಮ್ಮ ಸಂಗಡ ಇವೆ. ನಮ್ಮ ಅಕ್ರಮಗಳನ್ನು ನಾವೇ ಬಲ್ಲೆವು.
ISA 59:13 ದ್ರೋಹಮಾಡಿದ್ದೇವೆ, ಯೆಹೋವ ದೇವರಿಗೆ ಸುಳ್ಳಾಡಿದ್ದೇವೆ. ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ. ಬಲಾತ್ಕಾರದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತನಾಡಿದ್ದೇವೆ. ಸುಳ್ಳು ಮಾತುಗಳಿಂದ ಬಸುರಾಗಿ ಅವುಗಳನ್ನು ಹೃದಯದಿಂದ ನುಡಿದಿದ್ದೇವೆ.
ISA 59:14 ನಾವು ನ್ಯಾಯವನ್ನು ಸಹ ಹಿಂದಕ್ಕೆ ತಳ್ಳಿಬಿಟ್ಟಿದ್ದೇವೆ. ನೀತಿಯನ್ನು ದೂರದಲ್ಲಿ ನಿಲ್ಲಿಸಿಬಿಟ್ಟಿದ್ದೇವೆ. ಸತ್ಯವು ಬೀದಿಯಲ್ಲಿ ಎಡವುತ್ತದೆ. ಯಥಾರ್ಥತೆಗೆ ಪ್ರವೇಶಿಸ ಇಲ್ಲಾ. ಸತ್ಯವು ಬೀದಿಯಲ್ಲಿ ಎಡವುತ್ತದೆ. ಯಥಾರ್ಥತೆಯು ಪ್ರವೇಶಿಸಕೂಡದು.
ISA 59:15 ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಬೇಟೆಯಾಗುತ್ತಾನೆ. ಯೆಹೋವ ದೇವರು ಇದನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು.
ISA 59:16 ಮಧ್ಯಸ್ಥಿಕನು ಒಬ್ಬನೂ ಇಲ್ಲವೆಂದು ಕಂಡು ಸ್ಥಬ್ಧನಾದನು. ಆದ್ದರಿಂದ ಆತನ ಸ್ವಹಸ್ತವೇ ಆತನಿಗೆ ರಕ್ಷಣೆಯ ಸಾಧನವಾಯಿತು. ಆತನ ನೀತಿಯೇ ಆತನಿಗೆ ಆಧಾರವಾಯಿತು.
ISA 59:17 ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪ್ರತೀಕಾರದ ವಸ್ತ್ರಗಳನ್ನು ಹೊದಿಕೆಯಾಗಿ ಹೊದ್ದುಕೊಂಡು, ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
ISA 59:18 ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು. ತನ್ನ ವೈರಿಗಳಿಗೆ ಉರಿಯನ್ನೂ, ತನ್ನ ಶತ್ರುಗಳಿಗೆ ಪ್ರತಿಫಲವನ್ನೂ, ದ್ವೀಪಗಳಿಗೆ ಪ್ರತಿಫಲವನ್ನೂ ಸಲ್ಲಿಸುವನು.
ISA 59:19 ಆಗ ಪಶ್ಚಿಮದ ಕಡೆಯವರು ಯೆಹೋವ ದೇವರ ಹೆಸರಿಗೂ, ಸೂರ್ಯೋದಯದ ಕಡೆಯವರು ದೇವರ ಘನಕ್ಕೂ ಭಯಪಡುವರು. ವೈರಿಯು ಪ್ರಳಯದಂತೆ ಬರುವಾಗ, ಯೆಹೋವ ದೇವರ ಆತ್ಮವು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವರು.
ISA 59:20 “ವಿಮೋಚಕನು ಚೀಯೋನಿಗೂ ಯಾಕೋಬಿನಲ್ಲಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರಿಗಾಗಿಯೂ ಬರುವನು,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 59:21 ಮಾತ್ರವಲ್ಲದೆ, “ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ. ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ಮೇಲಿರುವ ನನ್ನ ಆತ್ಮನೂ, ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ, ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ, ನಿನ್ನ ಸಂತಾನದ ಬಾಯಿಂದಲೂ ತೊಲಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 60:1 ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು.
ISA 60:2 ಇಗೋ, ಕತ್ತಲೆ ಭೂಮಿಯನ್ನೂ, ಗಾಢಾಂಧಕಾರವು ಜನರನ್ನೂ ಮುಚ್ಚುವುದು. ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು. ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು.
ISA 60:3 ಇತರ ಜನಾಂಗಗಳು ನಿನ್ನ ಪ್ರಕಾಶಕ್ಕೂ, ಅರಸರು ನಿನ್ನ ಉದಯದ ಕಾಂತಿಗೂ ಬರುವರು.
ISA 60:4 ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು. ಅವರೆಲ್ಲರು ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ. ನಿನ್ನ ಪುತ್ರರು ದೂರದಿಂದ ಬರುವರು, ನಿನ್ನ ಪುತ್ರಿಯರು ಕಂಕುಳಿನಲ್ಲಿ ಕುಳಿತು ಬರುವರು.
ISA 60:5 ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವುದು, ಏಕೆಂದರೆ ಸಮುದ್ರದ ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವುದು. ಇತರ ಜನಾಂಗಗಳ ಆಸ್ತಿಯು ನಿನ್ನ ಬಳಿಗೆ ಬರುವುದು.
ISA 60:6 ಒಂಟೆಗಳ ಸಮೂಹವು ನಿನ್ನ ದೇಶದಲ್ಲಿ ತುಂಬಿಕೊಳ್ಳುವುದು. ಮಿದ್ಯಾನಿನ ಏಫಾದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೆಬದಿಂದಲೂ ಬರುವುವು. ಬಂಗಾರವನ್ನೂ, ಧೂಪವನ್ನೂ ತರುವುವು. ಯೆಹೋವ ದೇವರ ಸ್ತೋತ್ರಗಳನ್ನು ಸಾರುವುವು.
ISA 60:7 ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು. ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು. ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು. ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು.
ISA 60:8 ಮೇಘದಂತೆಯೂ, ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು?
ISA 60:9 ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರ ದೂರದಿಂದ ನಿನ್ನ ಪುತ್ರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಯೆಹೋವ ದೇವರ ಬಳಿಗೂ, ನಿನ್ನನ್ನು ವೈಭವದಿಂದ ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ.
ISA 60:10 ಇದಲ್ಲದೆ ವಿದೇಶಿಯರು ನಿನ್ನ ಗೋಡೆಗಳನ್ನು ಕಟ್ಟುವರು. ಅವರ ಅರಸರು ಸಹ ನಿನಗೆ ಸೇವೆಮಾಡುವರು. ಏಕೆಂದರೆ ನನ್ನ ಬೇಸರದಲ್ಲಿ ನಿನ್ನನ್ನು ಹೊಡೆದೆನು. ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.
ISA 60:11 ಆದ್ದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವುವು. ಇತರ ಜನಾಂಗಗಳ ಆಸ್ತಿ ನಿನ್ನ ಬಳಿಗೆ ತರುತ್ತಿರುವರು. ಅವರ ಅರಸರು ಸಹ ಬಂಧುಗಳಾಗಿ ನಿನ್ನ ಮೆರವಣಿಗೆಯಲ್ಲಿ ಮುನ್ನಡೆಸಿದರು ಹಗಲುರಾತ್ರಿ ಅವು ಮುಚ್ಚಿರುವುದಿಲ್ಲ.
ISA 60:12 ನಿನ್ನನ್ನು ಸೇವಿಸದ ಜನಾಂಗವೂ, ರಾಜ್ಯವೂ ನಾಶವಾಗುವುದು. ಆ ಜನಾಂಗಗಳು ಸಂಪೂರ್ಣವಾಗಿ ಹಾಳಾಗುವುವು.
ISA 60:13 ಲೆಬನೋನಿನ ವೈಭವವು ತುರಾಯಿ, ಅಗಸೆ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವುದಕ್ಕೆ ನಿನ್ನ ಬಳಿಗೆ ಬರುವುವು. ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.
ISA 60:14 ಆಗ ನಿನ್ನನ್ನು ಕುಗ್ಗಿಸಿದವರು, ಬಗ್ಗಿಕೊಂಡು ನಿನ್ನ ಬಳಿಗೆ ಬರುವರು. ನಿನ್ನನ್ನು ಅಸಹ್ಯಿಸಿದವರೆಲ್ಲರೂ ನಿನ್ನ ಪಾದಗಳಿಗೆ ಅಡ್ಡಬಿದ್ದು, ನಿನ್ನನ್ನು ಯೆಹೋವ ದೇವರ ಪಟ್ಟಣವೆಂದೂ, ಇಸ್ರಾಯೇಲಿನ ಪರಿಶುದ್ಧನ ಚೀಯೋನೆಂದೂ ಕರೆಯುವರು.
ISA 60:15 ನಿನ್ನೊಳಗೆ ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯ ಘನತೆಯನ್ನು ದಯಪಾಲಿಸಿ ನಿನ್ನನ್ನು ಎಲ್ಲಾ ಸಂತತಿಗಳಲ್ಲಿಯೂ ಉಲ್ಲಾಸವಾಗಿರುವಂತೆ ಮಾಡುವೆನು.
ISA 60:16 ಇತರ ಜನಾಂಗಗಳವರಿಂದ ಹಾಲನ್ನು ಕುಡಿಯುವೆ. ಅರಸರು ನಿನಗೆ ಹಾಲು ಕುಡಿಸುವರು. ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬಿನ ಪರಾಕ್ರಮಿಯೂ ಎಂದು ತಿಳಿದುಕೊಳ್ಳುವೆ.
ISA 60:17 ಕಂಚಿನ ಬದಲಾಗಿ ನಿನಗೆ ಬಂಗಾರವನ್ನು ತರುವೆನು. ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ, ಮರಕ್ಕೆ ಬದಲಾಗಿ ಕಂಚನ್ನೂ, ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು. ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ನೀತಿಯನ್ನು ನಿನಗೆ ಅಧಿಕಾರಿಯನ್ನಾಗಿ ಮಾಡುವೆನು.
ISA 60:18 ಬಲಾತ್ಕಾರವೂ, ನಿನ್ನ ದೇಶದೊಳಗೆ ಹಾಳಾದದ್ದೂ, ನಾಶವೂ, ನಿನ್ನ ಮೇರೆಗಳಲ್ಲಿ ಕೇಳಿಬರುವುದಿಲ್ಲ. ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ, ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿಡುವೆ.
ISA 60:19 ಇನ್ನು ಮೇಲೆ ಸೂರ್ಯನು ನಿನಗೆ ಹಗಲಿನಲ್ಲಿ ಬೆಳಕಾಗಿರುವುದಿಲ್ಲ. ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವುದಿಲ್ಲ. ಆದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನಿನ್ನ ದೇವರು ನಿನ್ನ ಬೆಳಗುವ ತೇಜಸ್ಸಾಗಿರುವರು.
ISA 60:20 ನಿನ್ನ ಸೂರ್ಯನು ಅಸ್ತಮಿಸುವುದಿಲ್ಲ. ನಿನ್ನ ಚಂದ್ರನು ಕಾಣದೆ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನೀನು ದುಃಖಿಸುವ ದಿನಗಳು ಸಮಾಪ್ತಿಯಾಗುವುದು.
ISA 60:21 ನಿನ್ನ ಜನರೆಲ್ಲರೂ ನೀತಿವಂತರಾಗಿರುವರು. ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು. ನಾನು ಮಹಿಮೆ ಹೊಂದುವುದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ, ನನ್ನ ಕೈ ಸೃಷ್ಟಿಯೂ ಆಗಿರುವರು.
ISA 60:22 ಕನಿಷ್ಠನು ಸಾವಿರವಾಗುವನು, ಅಲ್ಪನಿಂದ ಬಲವಾದ ಜನಾಂಗವಾಗುವುದು. ಯೆಹೋವನೆಂಬ ನಾನು ಕ್ಲುಪ್ತ ಕಾಲದಲ್ಲಿ ಇದನ್ನು ಬಹು ಬೇಗನೆ ಉಂಟುಮಾಡುವೆನು.
ISA 61:1 ಸಾರ್ವಭೌಮ ಯೆಹೋವ ದೇವರ ಆತ್ಮರು ನನ್ನ ಮೇಲೆ ಇದ್ದಾರೆ. ಏಕೆಂದರೆ ಯೆಹೋವ ದೇವರು ನನ್ನನ್ನು ಬಡವರಿಗೆ ಶುಭಸಂದೇಶವನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಮುರಿದ ಹೃದಯಗಳನ್ನು ಕಟ್ಟುವುದಕ್ಕೂ, ಬಂಧಿತರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಮತ್ತು ಕೈದಿಗಳಿಗೆ ಕತ್ತಲೆಯಿಂದ ಬಿಡುಗಡೆ ಮಾಡಲು
ISA 61:2 ಯೆಹೋವ ದೇವರ ಮೆಚ್ಚುಗೆಯ ವರ್ಷವನ್ನು ಸಾರಿ ಹೇಳುವುದಕ್ಕೂ, ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧ ಮಾಡುವುದಕ್ಕೂ, ದುಃಖವುಳ್ಳವರೆಲ್ಲರನ್ನು ಆದರಿಸುವುದಕ್ಕೂ,
ISA 61:3 ಚೀಯೋನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯದ ಕಿರೀಟವನ್ನೂ, ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ, ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರ ಎಂಬ ಮೇಲಂಗಿಯನ್ನು ಕೊಡುವುದಕ್ಕೂ ನನ್ನನ್ನು ನೇಮಿಸಿದ್ದಾರೆ. ಆಗ ಅವರಿಗೆ ನೀತಿವೃಕ್ಷಗಳೆಂದೂ, ಯೆಹೋವ ದೇವರು ತಾನು ಮಹಿಮೆ ಹೊಂದುವುದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವುದು.
ISA 61:4 ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ, ಮುಂಚೆ ಹಾಳುಬಿದ್ದವುಗಳನ್ನು ಎಬ್ಬಿಸುವರು. ಅನೇಕ ತಲಾಂತರಗಳಿಂದ ಹಾಳಾದ ಪಟ್ಟಣಗಳನ್ನೂ, ನೂತನ ಪಡಿಸುವರು.
ISA 61:5 ಪರನಾಡಿನವರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು. ಇತರರು ನಿಮಗೆ ನೇಗಿಲು ಹೂಡುವವರೂ, ದ್ರಾಕ್ಷಿತೋಟ ಕಾಯುವವರೂ ಆಗಿರುವರು.
ISA 61:6 ಆದರೆ ನೀವು ಯೆಹೋವ ದೇವರ ಯಾಜಕರೆಂಬ ಬಿರುದನ್ನು ಹೊಂದುವಿರಿ. ನಮ್ಮ ದೇವರ ಸೇವಕರೆಂದು ನಿಮಗೆ ಹೆಸರಾಗುವುದು, ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ. ಅವರ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
ISA 61:7 ನಿಮ್ಮ ನಾಚಿಕೆಗೆ ಬದಲಾಗಿ ಮಾನವು ಎರಡರಷ್ಟಾಗುವುದು. ಅವಮಾನಕ್ಕೆ ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು. ಆದ್ದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನಮಾಡಿಕೊಳ್ಳುವರು. ನಿತ್ಯವಾದ ಸಂತೋಷವು ನಿಮಗೆ ಆಗುವುದು.
ISA 61:8 ಏಕೆಂದರೆ ಯೆಹೋವನಾದ ನಾನು ನ್ಯಾಯವನ್ನು ಪ್ರೀತಿಮಾಡುತ್ತೇನೆ. ಸುಲಿಗೆಯನ್ನೂ ಅನ್ಯಾಯವನ್ನೂ ಹಗೆಮಾಡುತ್ತೇನೆ. ನನ್ನ ನಿಷ್ಠೆಯಲ್ಲಿ ನಾನು ನನ್ನ ಜನರಿಗೆ ಪ್ರತಿಫಲ ನೀಡುತ್ತೇನೆ ಮತ್ತು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
ISA 61:9 ಆಗ ಅವರ ಸಂತಾನವು ಇತರ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು. ಅವರಿಂದಾದ ಉತ್ಪತ್ತಿ ಜನರ ಮಧ್ಯದಲ್ಲಿ ತಿಳಿಸಲಾಗುವುದು. ಅವರನ್ನು ನೋಡುವವರೆಲ್ಲರೂ, ಅವರೇ ಯೆಹೋವ ದೇವರು ಆಶೀರ್ವದಿಸಿದ ಸಂತಾನ ಎಂದು ಒಪ್ಪಿಕೊಳ್ಳುವರು.
ISA 61:10 ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.
ISA 61:11 ಏಕೆಂದರೆ ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವುದೋ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳೆಯಿಸುವುದೋ, ಹಾಗೆಯೇ ಸಾರ್ವಭೌಮ ಯೆಹೋವ ದೇವರು ನೀತಿಯನ್ನೂ, ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವರು.
ISA 62:1 ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.
ISA 62:2 ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.
ISA 62:3 ಯೆಹೋವ ದೇವರ ಕೈಯಲ್ಲಿ ಮಹಿಮೆಯ ಕಿರೀಟವಾಗಿಯೂ, ನಿನ್ನ ದೇವರ ಅಂಗೈಯಲ್ಲಿ ರಾಜ ಮುಕುಟವಾಗಿಯೂ ಇರುವೆ.
ISA 62:4 ಇನ್ನು ಮೇಲೆ ನೀನು ಗಂಡಬಿಟ್ಟವಳೆಂದು ಎನಿಸಿಕೊಳ್ಳುವುದಿಲ್ಲ ನಿನ್ನ ದೇಶಕ್ಕೆ ಹಾಳಾದದ್ದು ಎಂಬ ಹೆಸರೂ ಇರುವುದಿಲ್ಲ. ಆದರೆ ನೀನು ಹೆಪ್ಸಿಬಾ ಎಂದೂ ನಿನ್ನ ದೇಶಕ್ಕೆ ಬ್ಯೂಲಾ ಎಂದೂ ಹೆಸರಾಗುವುದು. ಏಕೆಂದರೆ ಯೆಹೋವ ದೇವರು ನಿನ್ನನ್ನು ಮೆಚ್ಚುವರು, ನಿನ್ನ ದೇಶಕ್ಕೆ ವಿವಾಹವಾಗುವುದು.
ISA 62:5 ಯುವಕನು ಕನ್ಯೆ ಯುವತಿಯನ್ನು ವರಿಸುವಂತೆ, ನಿನ್ನ ಜನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು. ವರನು ವಧುವಿನ ಮೇಲೆ ಆನಂದ ಪಡುವ ಪ್ರಕಾರ, ನಿನ್ನ ದೇವರು ನಿನ್ನ ಮೇಲೆ ಆನಂದಿಸುವರು.
ISA 62:6 ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ. ಅವರು ಹಗಲಿರುಳು ಮೌನವಾಗಿರುವುದೇ ಇಲ್ಲ. ಯೆಹೋವ ದೇವರಿಗೆ ಜ್ಞಾಪಕಪಡಿಸುವವರೇ, ನೀವೂ ಸುಮ್ಮನಿರಬೇಡಿರಿ.
ISA 62:7 ಯೆರೂಸಲೇಮನ್ನು ಸ್ಥಾಪಿಸಿ, ಲೋಕಪ್ರಸಿದ್ಧಿಗೆ ತರುವ ತನಕ ಆತನಿಗೂ ವಿಶ್ರಾಂತಿ ಕೊಡಬೇಡಿರಿ.
ISA 62:8 ಯೆಹೋವ ದೇವರು ತನ್ನ ಬಲಗೈಯಿಂದಲೂ, ತನ್ನ ಬಲವುಳ್ಳ ತೋಳಿನಿಂದಲೂ ಆಣೆಯಿಟ್ಟು ಹೇಳಿದ್ದೇನೆಂದರೆ: “ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವುದಿಲ್ಲ. ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ವಿದೇಶಿಯರು ಕುಡಿಯುವುದಿಲ್ಲ.
ISA 62:9 ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆ ಹಾಕಿದವರೇ, ಅದನ್ನು ಉಂಡು ಯೆಹೋವ ದೇವರನ್ನು ಸ್ತುತಿಸುವರು. ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು.”
ISA 62:10 ಹಾದುಹೋಗಿರಿ, ಬಾಗಿಲುಗಳಲ್ಲಿ ಹಾದುಹೋಗಿರಿ, ಜನರಿಗೆ ದಾರಿಯನ್ನು ಸಿದ್ಧಮಾಡಿರಿ, ಎತ್ತರಿಸಿರಿ, ರಾಜಮಾರ್ಗವನ್ನು ಎತ್ತರಿಸಿ, ಕಲ್ಲುಗಳನ್ನು ಆಯ್ದು ಕೂಡಿಸಿರಿ. ಜನಾಂಗಗಳಿಗೋಸ್ಕರ ಧ್ವಜವನ್ನು ಎತ್ತಿರಿ.
ISA 62:11 ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’ ”
ISA 62:12 ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.
ISA 63:1 ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”
ISA 63:2 ನಿನ್ನ ವಸ್ತ್ರಗಳು ಏಕೆ ಕೆಂಪಾದವು? ನಿನ್ನ ಬಟ್ಟೆಗಳು ಏಕೆ ದ್ರಾಕ್ಷಿಯನ್ನು ತುಳಿಯುವವನ ಹಾಗಿವೆ?
ISA 63:3 “ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ;
ISA 63:4 ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.
ISA 63:5 ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು. ಆಗ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನು ಉಂಟುಮಾಡಿತು. ನನ್ನ ಕೋಪವೇ ನನಗೆ ಆಧಾರವಾಯಿತು.
ISA 63:6 ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.”
ISA 63:7 ಯೆಹೋವ ದೇವರು ನಮಗೆ ಮಾಡಿದ್ದೆಲ್ಲದರ ಪ್ರಕಾರ, ಯೆಹೋವ ದೇವರ ಪ್ರೀತಿ ಕೃಪೆಗಳನ್ನೂ, ಯೆಹೋವ ದೇವರ ಕಾರ್ಯಗಳನ್ನು ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು. ಆತನು ತನ್ನ ಅಂತಃಕರುಣೆಯ ಪ್ರಕಾರವೂ, ತನ್ನ ಕೃಪೆಯ ಮಹಾ ಒಳ್ಳೆಯತನದ ಪ್ರಕಾರವೂ, ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
ISA 63:8 ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು.
ISA 63:9 ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
ISA 63:10 ಆದರೆ ಅವರು ತಿರುಗಿಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು.
ISA 63:11 ಆಗ ಆತನು ಪೂರ್ವಕಾಲದ ದಿವಸಗಳನ್ನೂ, ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು “ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
ISA 63:12 ಮೋಶೆಯ ಬಲಗೈಯ ಮುಖಾಂತರ ತನ್ನ ಬಲವಾದ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡೆಸಿದವನೂ, ತನಗೆ ನಿತ್ಯವಾದ ಹೆಸರನ್ನು ಉಂಟುಮಾಡುವ ಹಾಗೆ ಅವರ ಮುಂದೆ ಜನರಾಶಿಯನ್ನೂ ಇಬ್ಬಾಗಿಸಿದವನು ಎಲ್ಲಿ?
ISA 63:13 ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡೆಸಿದವನು ಎಲ್ಲಿ?”
ISA 63:14 ಪಶುವು ತಗ್ಗಿಗೆ ಇಳಿಯುವ ಪ್ರಕಾರ, ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ.
ISA 63:15 ಆಕಾಶದಿಂದ ಕೆಳಗೆ ನೋಡಿರಿ, ನಿಮ್ಮ ಪವಿತ್ರವೂ ಮಹಿಮೆಯೂ ಆದ ನಿಮ್ಮ ಸಿಂಹಾಸನದಿಂದ ದೃಷ್ಟಿಸಿ ನೋಡಿರಿ. ನಿಮ್ಮ ಆಸಕ್ತಿಯೂ, ನಿಮ್ಮ ಪರಾಕ್ರಮವೂ, ನಿಮ್ಮ ಹೃದಯದ ಘೋಷವೂ, ನಮ್ಮ ವಿಷಯವಾದ ನಿಮ್ಮ ಕರುಣೆ ಕನಿಕರಗಳೂ ಎಲ್ಲಿ? ಬಿಗಿಹಿಡಿದುಕೊಂಡಿದ್ದೀರೋ?
ISA 63:16 ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ
ISA 63:17 ಯೆಹೋವ ದೇವರೇ, ಏಕೆ ನಮ್ಮನ್ನು ನಿಮ್ಮ ಮಾರ್ಗಗಳಿಂದ ತಪ್ಪಿಹೋಗುವಂತೆ ಅನುಮತಿಸಿದ್ದೀರಿ? ಏಕೆ ನಮ್ಮ ಹೃದಯವನ್ನು ನಿಮಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀರಿ? ನಿಮ್ಮ ಸೇವಕರಿಗೋಸ್ಕರವೂ, ನಿಮ್ಮ ಬಾಧ್ಯರಾಗಿರುವ ಗೋತ್ರಗಳ ನಿಮಿತ್ತ ನೀವು ಹಿಂದಿರುಗಿರಿ.
ISA 63:18 ಸ್ವಲ್ಪಕಾಲ ಮಾತ್ರ ನಿಮ್ಮ ಪರಿಶುದ್ಧ ಜನರು ಅದನ್ನು ಸ್ವಾಧೀನಮಾಡಿಕೊಂಡರು. ನಮ್ಮ ಶತ್ರುಗಳು ನಿಮ್ಮ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ.
ISA 63:19 ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ.
ISA 64:1 ಆಹಾ, ಆಕಾಶಗಳನ್ನು ಹರಿದುಬಿಟ್ಟು ಇಳಿದು ಬಾ! ನಿಮ್ಮ ದರ್ಶನವನ್ನು ಕಂಡು ಪರ್ವತಗಳು ಗಡಗಡನೆ ನಡುಗುವಂತೆಯೂ,
ISA 64:2 ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ, ಬೆಂಕಿ ನೀರನ್ನು ಉಕ್ಕಿಸುವಂತೆಯೂ, ನೀನು ಇಳಿದುಬಂದು ನಿನ್ನ ಹೆಸರನ್ನು ನಿನ್ನ ವೈರಿಗಳಿಗೆ ತಿಳಿಯುವಂತೆ ಮಾಡು!
ISA 64:3 ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದೆ, ಬೆಟ್ಟಗಳು ನಿನ್ನ ಸಮ್ಮುಖಕ್ಕೆ ಕರಗಿ ಹೋದವು.
ISA 64:4 ದೇವರೇ, ನಿನಗೋಸ್ಕರ ಕಾದುಕೊಳ್ಳುವವರಿಗೆ ನೀನು ಮಾಡುವುದನ್ನು ಲೋಕದ ಉತ್ಪತ್ತಿಗೆ ಮುಂಚೆ ದೇವರೇ ನಿನ್ನ ಹೊರತಾಗಿ ಯಾರೂ ಕೇಳಲಿಲ್ಲ. ಯಾರ ಕಿವಿಯೂ ಕೇಳಲಿಲ್ಲ. ಯಾರ ಕಣ್ಣೂ ಕಾಣಲಿಲ್ಲ.
ISA 64:5 ಸಂತೋಷಪಟ್ಟು ನೀತಿಯನ್ನು ಕೈಗೊಳ್ಳುವವರನ್ನೂ, ನಿಮ್ಮ ಮಾರ್ಗಗಳನ್ನು ಜ್ಞಾಪಕ ಮಾಡುವವನನ್ನೂ ನೀವು ಸಹಾಯಮಾಡಲು ಬರುತ್ತೀರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಆದ್ದರಿಂದ ನೀವು ಬೇಸರಗೊಂಡಿರುವಿರಿ. ಹಾಗಾದರೆ, ನಮ್ಮಂಥವರಿಗೆ ರಕ್ಷಣೆ ಇದೆಯೇ?
ISA 64:6 ನಾವೆಲ್ಲರೂ ಅಶುದ್ಧನ ಹಾಗೆ ಇದ್ದೇವೆ. ನಮ್ಮ ನೀತಿ ಕಾರ್ಯಗಳೆಲ್ಲಾ ಮೈಲಿಗೆ ವಸ್ತ್ರದ ಹಾಗೆ ಇವೆ. ನಾವೆಲ್ಲರೂ ಎಲೆಯ ಹಾಗೆ ಒಣಗಿಹೋಗಿದ್ದೇವೆ. ನಮ್ಮ ಪಾಪಗಳು ಗಾಳಿಯಂತೆ ನಮ್ಮನ್ನು ಬಡಿದುಕೊಂಡು ಹೋಗಿವೆ.
ISA 64:7 ನಿನ್ನ ಹೆಸರನ್ನು ಕರೆಯುವವನೂ, ನಿನ್ನನ್ನು ಹಿಡಿದುಕೊಳ್ಳುವುದಕ್ಕೆ ಎಚ್ಚರಗೊಳ್ಳುವವನು ಒಬ್ಬನೂ ಇಲ್ಲ. ಏಕೆಂದರೆ ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ. ನಮ್ಮ ಪಾಪಗಳಿಗಾಗಿ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
ISA 64:8 ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.
ISA 64:9 ಯೆಹೋವ ದೇವರೇ, ಅತ್ಯಧಿಕವಾಗಿ ಬೇಸರಗೊಳ್ಳಬೇಡ. ಎಂದೆಂದಿಗೂ ಪಾಪವನ್ನು ಜ್ಞಾಪಕ ಮಾಡಬೇಡ. ನೋಡಿರಿ, ನಾವು ಬೇಡುತ್ತೇವೆ, ದೃಷ್ಟಿ ಇಡಿರಿ. ನಾವೆಲ್ಲರೂ ನಿನ್ನ ಜನರೇ.
ISA 64:10 ನಿನ್ನ ಪರಿಶುದ್ಧ ಪಟ್ಟಣಗಳು ಅಡವಿಯಾದವು. ಚೀಯೋನು ಅಡವಿಯಾಯಿತು. ಯೆರೂಸಲೇಮು ಹಾಳಾಯಿತು.
ISA 64:11 ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಶೃಂಗಾರವಾದ ದೇವಾಲಯ ಬೆಂಕಿಯಿಂದ ಸುಟ್ಟುಹೋಯಿತು. ನಮ್ಮ ಅಮೂಲ್ಯ ವಸ್ತುಗಳೆಲ್ಲ ನಾಶವಾದವು.
ISA 64:12 ಇವು ಹೀಗಿರಲಾಗಿ ಯೆಹೋವ ದೇವರೇ, ನೀವು ಹಿಂಜರಿಯುತ್ತೀರೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿರೋ?
ISA 65:1 “ಕೇಳದವರಿಗೂ ನಾನು ನನ್ನನ್ನು ಪ್ರಕಟಿಸಿಕೊಂಡಿದ್ದೇನೆ. ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ಹೆಸರನ್ನು ಕರೆಯದ ಜನಾಂಗಕ್ಕೆ, ‘ಇಗೋ, ಇದ್ದೇನೆ; ಇಗೋ, ಇದ್ದೇನೆ,’ ಎಂದು ಹೇಳಿದೆನು.
ISA 65:2 ಒಳ್ಳೆಯದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿಬೀಳುವ ಜನರಿಗೆ ದಿನವೆಲ್ಲಾ ನಾನು ಕೈಚಾಚಿ ಕರೆದೆನು.
ISA 65:3 ಇವರು ಯಾವಾಗಲೂ ನನ್ನ ಮುಖದ ಮುಂದೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು. ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಬಲಿಪೀಠದ ಮೇಲೆ ಧೂಪ ಸುಡುವರು.
ISA 65:4 ಸಮಾಧಿಗಳಲ್ಲಿ ಉಳಿದು, ಗವಿಗಳಲ್ಲಿ ತಂಗುವರು. ಹಂದಿಯ ಮಾಂಸವನ್ನು ತಿನ್ನುವರು ತಮ್ಮ ಪಾತ್ರೆಗಳಲ್ಲಿ ಅಶುದ್ಧ ಪದಾರ್ಥಗಳ ಸಾರನ್ನು ಇಟ್ಟುಕೊಂಡು,
ISA 65:5 ‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ. ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು. ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ, ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.
ISA 65:6 “ನನ್ನ ಮುಂದೆ ಅದು ಬರೆಯಲಾಗಿದೆ. ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ. ಅವರ ಮಡಿಲಲ್ಲಿ ಪ್ರತಿಫಲ ಕೊಡುತ್ತೇನೆ.
ISA 65:7 ನಿಮ್ಮ ಪಾಪಗಳಿಗೂ, ನಿಮ್ಮ ತಂದೆಗಳ ಪಾಪಗಳಿಗೂ ಕೂಡ ಪ್ರತಿಫಲ ಕೊಡುತ್ತೇನೆ” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು, ಗುಡ್ಡಗಳ ಮೇಲೆ ನನ್ನನ್ನು ಪರಿಹಾಸ್ಯ ಮಾಡಿದರಲ್ಲಾ. ಹೀಗಿರುವುದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಮಡಿಲಲ್ಲಿ ಅಳೆದು ಸುರಿಸುವೆನು.”
ISA 65:8 ಯೆಹೋವ ದೇವರು ಹೀಗೆನ್ನುತ್ತಾರೆ: “ರಸ ದೊರೆಯಬಹುದಾದ ದ್ರಾಕ್ಷಿ ಗೊಂಚಲನ್ನು ಒಬ್ಬನು ನೋಡಿ, ‘ಹಾಳು ಮಾಡಬೇಡ, ಅದರಲ್ಲಿ ಪ್ರಯೋಜನವಿದೆ,’ ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು ಇವರನ್ನೆಲ್ಲಾ ಹಾಳುಮಾಡಬಾರದು ಎಂದುಕೊಳ್ಳುವೆನು.
ISA 65:9 ಯಾಕೋಬಿನೊಳಗಿಂದ ಒಂದು ಸಂತಾನವನ್ನೂ, ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನು ಹೊರಗೆ ಬರಮಾಡುವೆನು. ನಾನು ಆಯ್ದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು. ನನ್ನ ಸೇವಕರು ಅದರಲ್ಲಿ ವಾಸವಾಗುವರು.
ISA 65:10 ನನ್ನನ್ನು ಹುಡುಕುವ ನನ್ನ ಜನರಿಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ, ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾಗಿಯೂ ಇರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.
ISA 65:11 “ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ, ಗಾದ್ ಎಂಬ ಅದೃಷ್ಟ ದೇವತೆಗೆ ಮದ್ಯವನ್ನು ತುಂಬಾ ಬೆರೆಸಿದ ನಿಮಗೆ
ISA 65:12 ಖಡ್ಗವನ್ನೇ ಗತಿಯಾಗ ಮಾಡುವೆನು. ಆದ್ದರಿಂದ ನಿಮ್ಮನ್ನು ಖಡ್ಗಕ್ಕೆ ನೇಮಿಸುವೆನು. ನೀವೆಲ್ಲರು ಕೊಲೆಗೆ ಬೊಗ್ಗಿಕೊಳ್ಳುವಿರಿ. ಏಕೆಂದರೆ, ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ. ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.”
ISA 65:13 ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಸೇವಕರು ತಿನ್ನುವರು. ಆದರೆ ನೀವು ಹಸಿದಿರುವಿರಿ. ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿ ಇರುವಿರಿ. ಇಗೋ, ನನ್ನ ಸೇವಕರು ಸಂತೋಷಪಡುವರು, ಆದರೆ ನೀವು ನಾಚಿಕೆ ಪಡುವಿರಿ.
ISA 65:14 ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
ISA 65:15 ನಿಮ್ಮ ಹೆಸರನ್ನು ನಾನು ಆಯ್ದುಕೊಂಡವರಿಗೆ ಶಾಪವಾಗಿ ಉಳಿಸುವಿರಿ. ಹೇಗೆಂದರೆ, ಸಾರ್ವಭೌಮ ಯೆಹೋವ ದೇವರು ಅಪನಂಬಿಗಸ್ತರಾದ ನಿಮ್ಮನ್ನು ಕೊಂದುಹಾಕಿ, ತಮ್ಮ ಸೇವಕರಿಗಾದರೋ ಬೇರೆ ಹೆಸರನ್ನು ನೀಡುವರು.
ISA 65:16 ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸುವವನು, ಸತ್ಯ ದೇವರಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವನು; ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು, ಸತ್ಯ ದೇವರಲ್ಲಿ ಆಣೆ ಇಟ್ಟುಕೊಳ್ಳುವನು. ಏಕೆಂದರೆ ಮುಂಚಿನ ಕಷ್ಟಗಳು ಮರೆತು ಹೋಗಿವೆ, ಮತ್ತು ಅವು ನನ್ನ ಕಣ್ಣಿಗೆ ಮರೆಯಾಗಿವೆ.
ISA 65:17 “ನಾನು ಹೊಸ ಆಕಾಶವನ್ನೂ, ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವುದಿಲ್ಲ ಇಲ್ಲವೆ ಅವು ಸ್ಮರಣೆಗೆ ಬರುವುದಿಲ್ಲ.
ISA 65:18 ಆದರೆ ನಾನು ಸೃಷ್ಟಿಸುವುದರ ವಿಷಯದಲ್ಲಿ ಸಂತೋಷಿಸಿ, ಎಂದೆಂದಿಗೂ ಉಲ್ಲಾಸಪಡಿರಿ. ಏಕೆಂದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸವನ್ನೂ, ನನ್ನ ಜನರಲ್ಲಿ ಸಂತೋಷವನ್ನೂ ಸೃಷ್ಟಿಸುತ್ತೇನೆ.
ISA 65:19 ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷ ಪಡುವೆನು. ಅದರಲ್ಲಿ ಅಳುವ ಧ್ವನಿಯೂ, ಪ್ರಲಾಪದ ಧ್ವನಿಯೂ ಇನ್ನು ಕೇಳಿಬರುವುದಿಲ್ಲ.
ISA 65:20 “ಅಲ್ಲಿ ಕೆಲವು ದಿನಗಳು ಮಾತ್ರ ಬದುಕತಕ್ಕ ಕೂಸೂ, ವೃದ್ಧನೂ ಇರುವುದಿಲ್ಲ. ಮಗುವು ನೂರು ವರುಷದವನಾಗಿ ಸಾಯುವುದು. ಆದರೆ ನೂರು ವರುಷವನ್ನು ತಲುಪಲು ವಿಫಲನಾದವನನ್ನು ಶಾಪಗ್ರಸ್ತ ಎಂದು ಪರಿಗಣಿಸಲಾಗುತ್ತದೆ.
ISA 65:21 ಇದಲ್ಲದೆ ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
ISA 65:22 ಅವರು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಿಲ್ಲ. ಅವರು ನೆಟ್ಟ ತೋಟದ ಫಲವನ್ನು ಇನ್ನೊಬ್ಬರು ತಿನ್ನುವುದಿಲ್ಲ. ಏಕೆಂದರೆ, ಮರಗಳ ಹಾಗೆ ನನ್ನ ಜನರು ಬಹುಕಾಲ ಬಾಳುವರು. ನಾನು ಆಯ್ದುಕೊಂಡವರು ತಮ್ಮ ಕೈಕೆಲಸಗಳನ್ನು ಅನುಭವಿಸುವರು.
ISA 65:23 ಅವರು ವ್ಯರ್ಥವಾಗಿ ದುಡಿಯರು. ಕಷ್ಟವನ್ನು ಎದುರುಗೊಳ್ಳುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರ ಆಶೀರ್ವಾದ ಹೊಂದಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವಾದ ಹೊಂದುವುದು.
ISA 65:24 ಅವರು ಕರೆಯುವುದಕ್ಕಿಂತ ಮುಂಚೆ ನಾನು ಉತ್ತರಕೊಡುವೆನು. ಅವರು ಇನ್ನೂ ಮಾತನಾಡುತ್ತಿರುವಾಗಲೇ ನಾನು ಕೇಳುವೆನು.
ISA 65:25 ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವುದು; ಹಾವಿಗೆ ಮಣ್ಣೇ ಆಹಾರವಾಗುವುದು; ಅವು ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾವ ಕೇಡೂ ಮಾಡುವುದಿಲ್ಲ, ನಾಶವೂ ಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 66:1 ಯೆಹೋವ ದೇವರು ಹೇಳುವುದೇನೆಂದರೆ: “ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ, ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?
ISA 66:2 ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯೇ. ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಕಟಾಕ್ಷಿಸುವವನು ಎಂಥವನೆಂದರೆ: ದೀನನೂ, ಮನಮುರಿದವನೂ, ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.
ISA 66:3 ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡುವವನ ಹಾಗಿದ್ದಾನೆ. ಕುರಿಮರಿಯನ್ನು ಬಲಿ ಕೊಡುವವನು, ನಾಯಿಯ ಕುತ್ತಿಗೆಯನ್ನು ಕಡಿಯುವವನ ಹಾಗಿದ್ದಾನೆ. ಕಾಣಿಕೆಯನ್ನು ಅರ್ಪಿಸುವವನು, ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಹಾಕುವವನು, ವಿಗ್ರಹವನ್ನು ಪೂಜಿಸುವವನ ಹಾಗಿದ್ದಾನೆ. ಹೀಗೆ, ಅವರು ಸ್ವಂತ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ. ಅವರ ಪ್ರಾಣವು ಅವರ ಅಸಹ್ಯಗಳಲ್ಲಿ ಹರ್ಷಿಸುತ್ತವೆ.
ISA 66:4 ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು, ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು. ಏಕೆಂದರೆ ನಾನು ಕೂಗಿದಾಗ, ಯಾರು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ, ಇವರು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.”
ISA 66:5 ಯೆಹೋವ ದೇವರ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, ‘ಯೆಹೋವ ದೇವರು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ’ ಎಂದು ಹೇಳಿದ್ದಾರಲ್ಲಾ. ಅವರಿಗಂತೂ ಅವಮಾನವಾಗುವುದು.
ISA 66:6 ಪಟ್ಟಣದೊಳಗಿನ ಗದ್ದಲದ ಶಬ್ದವು ದೇವಾಲಯದೊಳಗಿಂದ ಸ್ವರವು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಯೆಹೋವ ದೇವರ ಸ್ವರವಾಗಿದೆ.
ISA 66:7 “ಅವಳಿಗೆ ನೋವು ಆಗುವುದಕ್ಕಿಂತ ಮುಂಚೆಯೇ ಹೆತ್ತಳು. ವೇದನೆ ಬರುವುದಕ್ಕಿಂತ ಮುಂಚೆಯೇ ಗಂಡು ಕೂಸು ಪಡೆದಳು.
ISA 66:8 ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥ ಸಂಗತಿಯನ್ನು ಕಂಡವರಾರು? ಒಂದೇ ದಿನದಲ್ಲಿ ದೇಶ ಒಂದು ಹುಟ್ಟೀತೇ? ಕ್ಷಣಮಾತ್ರದಲ್ಲಿ ರಾಷ್ಟ್ರವನ್ನು ಹೆರಲಿಕ್ಕಾದೀತೇ? ಆದರೂ ಪ್ರಸವವೇದನೆ ತೊಡಗಿದೊಡನೆ ಚೀಯೋನೆಂಬಾಕೆ ಮಕ್ಕಳನ್ನು ಹೆತ್ತಿದ್ದಾಳೆ.
ISA 66:9 ನಾನು ಪ್ರಸವಕ್ಕೆ ತಂದಮೇಲೆ ಹೆರಿಗೆಯಾಗದಂತೆ ತಡೆಯುವೆನೋ?” ಎಂದು ಯೆಹೋವ ದೇವರು ಹೇಳುತ್ತಾನೆ. “ನಾನು ಪ್ರಸವಕ್ಕೆ ತಂದಮೇಲೆ, ಪ್ರಸವವಾಗದೆ ಇರಲು ಗರ್ಭ ಮುಚ್ಚಿಬಿಡುವೆನೇ?” ಎಂದು ನಿನ್ನ ದೇವರು ಕೇಳುತ್ತಾನೆ.
ISA 66:10 “ಯೆರೂಸಲೇಮಿನ ಸಂಗಡ ನೀವು ಸಂತೋಷಿಸಿರಿ. ಅವಳನ್ನು ಪ್ರೀತಿ ಮಾಡುವವರೆಲ್ಲಾ ಆಕೆಯೊಂದಿಗೆ ಉಲ್ಲಾಸಪಡಿರಿ. ಅವಳಿಗೋಸ್ಕರ ದುಃಖಿಸಿದವರೆಲ್ಲರೂ, ಆಕೆಯ ಸಂತೋಷಕ್ಕಾಗಿ ಆನಂದಪಡಿರಿ.
ISA 66:11 ಆಕೆಯ ಸಾಂತ್ವನ ಸ್ತನವನ್ನು ಕುಡಿದು ನೀವು ತೃಪ್ತಿಯಾಗಿರುವಿರಿ. ನೀವು ಕುಡಿಯುವಿರಿ ಮತ್ತು ಅದರ ಸಮೃದ್ಧಿಯು ನಿಮ್ಮ ಸಂತೋಷಕ್ಕೆ ಕಾರಣವಾಗಿದೆ.”
ISA 66:12 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ನದಿಯಂತೆ ಸಮಾಧಾನವನ್ನೂ, ಹರಿಯುವ ಹಳ್ಳದಂತೆ ಜನಾಂಗಗಳ ವೈಭವವನ್ನೂ ಆಕೆಯ ಕಡೆಗೆ ಬರಮಾಡುವೆನು. ಆಗ ನೀವು ಪಾನ ಮಾಡುವಿರಿ; ನಿಮ್ಮನ್ನು ಆಕೆಯ ಪಕ್ಕೆಯಲ್ಲಿ ಎತ್ತಿಕೊಂಡುಹೋಗುವರು. ನೀವು ಆಕೆಯ ಮಡಿಲಲ್ಲಿ ನಲಿದಾಡುವಿರಿ.
ISA 66:13 ತಾಯಿ ತನ್ನ ಮಗುವನ್ನು ಆದರಿಸುವ ಪ್ರಕಾರವೇ, ನಾನು ನಿಮ್ಮನ್ನು ಆದರಿಸುವೆನು. ಯೆರೂಸಲೇಮಿನ ನಿಮಿತ್ತವೇ, ಆದರಣೆ ಪಡುವಿರಿ.”
ISA 66:14 ನೀವು ಅದನ್ನು ಕಾಣುವಾಗ, ನಿಮ್ಮ ಹೃದಯವು ಸಂತೋಷಿಸುವುದು. ನಿಮ್ಮ ಎಲುಬುಗಳು ಹಸಿರು ಹುಲ್ಲಿನ ಹಾಗೆ ಚಿಗುರುವುವು. ಯೆಹೋವ ದೇವರ ಕೈ ತಮ್ಮ ಸೇವಕರ ಮೇಲೆಯೂ, ಅವರ ರೌದ್ರವು ತಮ್ಮ ಶತ್ರುಗಳ ಮೇಲೆ ಕಾಣಬರುವುದು.
ISA 66:15 ಯೆಹೋವ ದೇವರು ಬೆಂಕಿಯೊಡನೆ ಬರುವರು. ಅವರ ರಥಗಳು ಬಿರುಗಾಳಿಯ ಹಾಗೆ ಇರುವುವು. ಕಠಿಣವಾದ ತಮ್ಮ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತಮ್ಮ ಗದರಿಕೆಯನ್ನೂ ಸಲ್ಲಿಸುವುದಕ್ಕಾಗಿಯೇ ಬರುವರು.
ISA 66:16 ಏಕೆಂದರೆ ಬೆಂಕಿಯಿಂದಲೂ ತಮ್ಮ ಖಡ್ಗದಿಂದಲೂ ಯೆಹೋವ ದೇವರು ಮನುಷ್ಯರಿಗೆಲ್ಲಾ ನ್ಯಾಯತೀರಿಸುವರು. ಯೆಹೋವ ದೇವರಿಂದ ಹತರಾಗುವವರು ಅನೇಕರಾಗಿರುವರು.
ISA 66:17 “ತೋಟಗಳಲ್ಲಿ ಒಬ್ಬರ ಹಿಂದೊಬ್ಬರು ಮಧ್ಯದಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು, ಪವಿತ್ರ ಮಾಡಿಕೊಳ್ಳುವವರೂ; ಹಂದಿ ಮಾಂಸವನ್ನೂ, ಅಸಹ್ಯವಾದದ್ದನ್ನೂ, ಇಲಿಯನ್ನೂ ತಿನ್ನುವವರು ಒಟ್ಟಾಗಿ ದಹಿಸಿ ಹೋಗುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
ISA 66:18 “ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು. ಆಗ ಅವರು ಬಂದು ನನ್ನ ಮಹಿಮೆಯನ್ನು ನೋಡುವರು.
ISA 66:19 “ಅವರ ಮಧ್ಯದಲ್ಲಿ ಗುರುತನ್ನಿಟ್ಟು, ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ, ತಾರ್ಷೀಷ್, ಪೂಲ್, ಬಿಲ್ಲು ಪ್ರಯೋಗಿಸುವುದರಲ್ಲಿ ಪ್ರವೀಣರಾದ ಲೂದ್, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ನನ್ನ ಸಮಾಚಾರವನ್ನು ಕೇಳದ ನನ್ನ ಮಹಿಮೆಯನ್ನು ಕಾಣದೆ ಇರುವ ದೂರ ದ್ವೀಪನಿವಾಸಿಗಳಿಗೂ ಕಳುಹಿಸುವೆನು. ಅವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.
ISA 66:20 ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥಗಳಲ್ಲಿಯೂ ಪಲ್ಲಕ್ಕಿಗಳಲ್ಲಿಯೂ ಹೇಸರಗತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಯೆಹೋವ ದೇವರಿಗೆ ಕಾಣಿಕೆಯಾಗಿ ಇಸ್ರಾಯೇಲರು ಕಾಣಿಕೆಯನ್ನು ಶುದ್ಧಪಾತ್ರೆಯಲ್ಲಿ ಯೆಹೋವ ದೇವರು ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸಲೇಮಿಗೆ ತರುವರೆಂದು ಯೆಹೋವ ದೇವರು ಹೇಳುತ್ತಾರೆ.
ISA 66:21 ಅವರಲ್ಲಿ ಯಾಜಕರಿಗಾಗಿಯೂ ಲೇವಿಯರಿಗಾಗಿಯೂ ಅವರಿಂದ ತೆಗೆದುಕೊಳ್ಳುವೆನು” ಎಂದು ಯೆಹೋವ ದೇವರು ಹೇಳುತ್ತಾರೆ.
ISA 66:22 “ನಾನು ಉಂಟುಮಾಡುವ ಹೊಸ ಆಕಾಶವೂ ಹೊಸ ಭೂಮಿಯೂ ನನ್ನ ಮುಂದೆ ನೆಲೆಯಾಗಿರುವ ಪ್ರಕಾರವೇ, ನಿಮ್ಮ ಸಂತಾನವೂ ನಿಮ್ಮ ಹೆಸರೂ ನೆಲೆಯಾಗುವುದು,” ಎಂದು ಯೆಹೋವ ದೇವರು ಘೋಷಿಸುತ್ತಾರೆ.
ISA 66:23 ಇದಾದ ಮೇಲೆ, “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್ ದಿನದಲ್ಲಿಯೂ ಮನುಷ್ಯರೆಲ್ಲಾ ನನ್ನ ಮುಂದೆ ಆರಾಧಿಸುವುದಕ್ಕೆ ಬರುವರು” ಎಂದು ಯೆಹೋವ ದೇವರು ಹೇಳುತ್ತಾರೆ.
ISA 66:24 “ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹಮಾಡಿದ ಮನುಷ್ಯರ ಹೆಣಗಳನ್ನು ನೋಡುವರು. ಅವುಗಳನ್ನು ಕಡಿಯುವ ಹುಳ ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ, ಅವರು ಎಲ್ಲಾ ಮನುಷ್ಯರಿಗೆ ಹೇಸಿಗೆಯಾಗುವರು.”
JER 1:1 ಬೆನ್ಯಾಮೀನ್ ಸೀಮೆಗೆ ಸೇರಿ ಅನಾತೋತ್ ಊರಿನ ಯಾಜಕ ವರ್ಗದವನೂ, ಹಿಲ್ಕೀಯನ ಮಗನೂ ಆದ ಯೆರೆಮೀಯನ ಪ್ರವಾದನೆಗಳು.
JER 1:2 ಯೆಹೂದದ ಅರಸನೂ ಆಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವ ದೇವರ ವಾಕ್ಯವು ಇವನಿಗೆ ಕೇಳಿಬಂತು.
JER 1:3 ಅಲ್ಲದೆ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಕಾಲದ ಆಳ್ವಿಕೆಯ ಹನ್ನೊಂದನೆಯ ವರ್ಷದ ಐದನೆಯ ತಿಂಗಳಿನಲ್ಲಿ ಯೆರೂಸಲೇಮಿನವರು ಸೆರೆ ಹೋಗುವ ತನಕ ಯೆಹೋವ ದೇವರ ವಾಕ್ಯವು ಒದಗುತ್ತಿತ್ತು.
JER 1:4 ಯೆಹೋವ ದೇವರು ಈ ವಾಕ್ಯವನ್ನು ನನಗೆ ದಯಪಾಲಿಸಿದರು,
JER 1:5 “ನಾನು ನಿನ್ನನ್ನು ತಾಯಿಯ ಗರ್ಭದಲ್ಲಿ ನಿರ್ಮಿಸುವುದಕ್ಕಿಂತ ಮುಂಚೆಯೇ ನಿನ್ನನ್ನು ತಿಳಿದಿದ್ದೆನು. ನೀನು ಹುಟ್ಟುವುದಕ್ಕಿಂತ ಮುಂಚೆ ನಿನ್ನನ್ನು ಪ್ರತಿಷ್ಠಿಸಿದ್ದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯಾಗಿ ನೇಮಿಸಿದ್ದೇನೆ.”
JER 1:6 ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ ನಾನು ಮಾತು ಬಲ್ಲವನಲ್ಲ, ನಾನು ಚಿಕ್ಕವನು,” ಎಂದೆನು.
JER 1:7 ಆಗ ಯೆಹೋವ ದೇವರು ನನಗೆ, “ ‘ನಾನು ಚಿಕ್ಕವನೆಂದು ಹೇಳಬೇಡ.’ ಏಕೆಂದರೆ ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ನೀನು ಹೋಗಬೇಕು. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾತನಾಡಬೇಕು.
JER 1:8 ಅವರಿಗೆ ಭಯಪಡಬೇಡ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಎಂದು ಯೆಹೋವ ದೇವರಾದ ನಾನು ಹೇಳುತ್ತೇನೆ.
JER 1:9 ಆಗ ಯೆಹೋವ ದೇವರು ಕೈಚಾಚಿ, ನನ್ನ ಬಾಯಿಯನ್ನು ಮುಟ್ಟಿ ನನಗೆ, “ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
JER 1:10 ನೋಡು, ಈ ಹೊತ್ತು ನೀನು ಕೀಳುವುದಕ್ಕೂ, ಕೆಳಗೆ ಹಾಕಿಬಿಡುವುದಕ್ಕೂ, ನಾಶಮಾಡುವುದಕ್ಕೂ, ಕೆಡವಿ ಹಾಕುವುದಕ್ಕೂ, ಕಟ್ಟುವುದಕ್ಕೂ, ನೆಡುವುದಕ್ಕೂ ನಾನು ನಿನ್ನನ್ನು ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ನಿನ್ನನ್ನು ನೇಮಿಸಿದ್ದೇನೆ,” ಎಂದರು.
JER 1:11 ಇದಲ್ಲದೆ ಯೆಹೋವ ದೇವರ ವಾಕ್ಯವು ನನಗೆ, “ಯೆರೆಮೀಯನೇ, ನೀನು ಏನು ಕಾಣುತ್ತೀ?” ಎಂದು ಕೇಳಿದರು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ,” ಎಂದೆನು.
JER 1:12 ಆಗ ಯೆಹೋವ ದೇವರು ನನಗೆ, “ನೀನು ಚೆನ್ನಾಗಿ ನೋಡಿದ್ದೀ. ಏಕೆಂದರೆ ನನ್ನ ವಾಕ್ಯವನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆಂದು, ತಿಳಿದುಕೊ” ಎಂದರು.
JER 1:13 ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, “ನೀನು ಏನು ನೋಡುತ್ತೀ?” ಎಂದು ಕೇಳಿದ್ದಕ್ಕೆ, ನಾನು, “ಬೇಯುವ ಮಡಕೆಯನ್ನು ನೋಡುತ್ತೇನೆ, ಅದರ ಬಾಯಿ ಉತ್ತರದ ಕಡೆಗೆ ಇದೆ,” ಎಂದೆನು.
JER 1:14 ಆಗ ಯೆಹೋವ ದೇವರು ನನಗೆ, “ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವುದು.
JER 1:15 ಏಕೆಂದರೆ ನಾನು ಉತ್ತರದಲ್ಲಿರುವ ರಾಜ್ಯಗಳ ಕುಲಗಳನ್ನೆಲ್ಲಾ ಕರೆಯುತ್ತೇನೆ. “ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ, ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.
JER 1:16 ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯುವೆನು.
JER 1:17 “ಆದ್ದರಿಂದ ಈಗ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು, ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಅವರ ಸಂಗಡ ಮಾತನಾಡು. ನಾನು ನಿನ್ನನ್ನು ಅವರ ಮುಂದೆ ದಿಗಿಲುಪಡಿಸದ ಹಾಗೆ ನೀನು ಅವರಿಗೆ ಭಯಪಡಬೇಡ.
JER 1:18 ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧವಾಗಿಯೂ, ಅದರ ಪ್ರಧಾನರಿಗೆ ವಿರೋಧವಾಗಿಯೂ, ಅದರ ಯಾಜಕರಿಗೆ ವಿರೋಧವಾಗಿಯೂ, ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತ್ತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ, ಕಬ್ಬಿಣದ ಸ್ತಂಭವಾಗಿಯೂ, ಕಂಚಿನ ಗೋಡೆಗಳಾಗಿಯೂ ಮಾಡಿದ್ದೇನೆ.
JER 1:19 ಅವರು ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಗೆಲ್ಲುವುದಿಲ್ಲ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಇದು ಯೆಹೋವ ದೇವರ ನುಡಿ.
JER 2:1 ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು:
JER 2:2 “ನೀನು ಹೋಗಿ ಯೆರೂಸಲೇಮ್ ನಗರಕ್ಕೆ ಕೇಳಿಸುವಂತೆ ಈ ಸಂದೇಶವನ್ನು ಸಾರು: “ಯೆಹೋವ ದೇವರು ಹೀಗೆನ್ನುತ್ತಾರೆ, “ ‘ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆ ಇಲ್ಲದ ಅರಣ್ಯ ಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ, ಇದು ನಿನ್ನ ಹಿತಕ್ಕಾಗಿಯೇ.
JER 2:3 ಇಸ್ರಾಯೇಲು ಯೆಹೋವ ದೇವರಿಗೆ ಪರಿಶುದ್ಧವೂ, ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿದೆ ಅವಳನ್ನು ತಿಂದು ಬಿಟ್ಟವರೆಲ್ಲರೂ ಅಪರಾಧಿಗಳಾಗುವರು. ಅವರಿಗೆ ಕೇಡು ಬರುವುದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
JER 2:4 ಓ ಯಾಕೋಬಿನ ಮನೆತನವೇ, ಇಸ್ರಾಯೇಲಿನ ಮನೆತನದ ಎಲ್ಲಾ ಕುಲಗಳೇ, ಯೆಹೋವ ದೇವರ ವಾಕ್ಯವನ್ನು ನೀವು ಕೇಳಿರಿ.
JER 2:5 ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ, ವ್ಯರ್ಥವಾಗುವ ಹಾಗೆ ನನ್ನಲ್ಲಿ ಏನು ತಪ್ಪನ್ನು ಕಂಡಿದ್ದಾರೆ?
JER 2:6 ಅವರು, ‘ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿ ನಮ್ಮನ್ನು ಮರುಭೂಮಿಯಲ್ಲಿ ಕಾಡು ಕುಳಿಗಳು ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದುಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡೆಸಿದ ಯೆಹೋವ ದೇವರು ಎಲ್ಲಿ?’ ಎಂದು ಪ್ರಶ್ನೆ ಮಾಡಲಿಲ್ಲ.
JER 2:7 ನಾನು ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಸಾರವನ್ನೂ, ಮೇಲನ್ನೂ ತಿನ್ನುವ ಹಾಗೆ ಕರೆದುಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸೊತ್ತನ್ನು ಅಸಹ್ಯ ಮಾಡಿದಿರಿ.
JER 2:8 ಯಾಜಕರು, ‘ಯೆಹೋವ ದೇವರು ಎಲ್ಲಿ?’ ಎಂದು ಕೇಳಲಿಲ್ಲ. ದೈವನಿಯಮವನ್ನು ಉಪದೇಶಿಸುವವರು ನನ್ನನ್ನು ತಿಳಿಯಲಿಲ್ಲ. ನಾಯಕರು ನನಗೆ ವಿರೋಧವಾಗಿ ದ್ರೋಹಮಾಡಿದರು. ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು. ಪ್ರಯೋಜನವಿಲ್ಲದವುಗಳನ್ನು ಹಿಂದಟ್ಟಿದರು.
JER 2:9 “ಆದ್ದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯವಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಇದಲ್ಲದೆ ನಿಮ್ಮ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.
JER 2:10 ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ. ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳಿದುಕೊಳ್ಳಿರಿ. ಅಂಥದ್ದು ಉಂಟೋ ಎಂದು ನೋಡಿರಿ.
JER 2:11 ಜನಾಂಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದರೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವಾದ ದೇವರನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ.
JER 2:12 ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 2:13 “ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು, ತಮಗೆ ನೀರು ಹಿಡಿಯಲಾರದ ಒಡಕ ತೊಟ್ಟಿಗಳನ್ನೂ ಕೆತ್ತಿದ್ದಾರೆ.
JER 2:14 ಇಸ್ರಾಯೇಲನು ಸೇವಕನೋ? ಮನೆಯಲ್ಲಿ ಹುಟ್ಟಿದ ಗುಲಾಮನೋ? ಅವನು ಏಕೆ ಸುಲಿಗೆಯಾದನು?
JER 2:15 ಪ್ರಾಯದ ಸಿಂಹಗಳು ಅವನಿಗೆ ವಿರೋಧವಾಗಿ ಗರ್ಜಿಸಿ, ಅಬ್ಬರಿಸುತ್ತವೆ. ಅವನ ದೇಶವನ್ನು ಹಾಳು ಮಾಡುತ್ತವೆ. ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ.
JER 2:16 ನೋಫ್ ಮತ್ತು ತಹಪನೇಸ್ ಪಟ್ಟಣಗಳವರು ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ.
JER 2:17 ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡೆಯಲ್ಲವೋ?
JER 2:18 ಈಗ ಶೀಹೋರಿನ ನೀರು ಕುಡಿಯುವುದಕ್ಕಾಗಿ ಈಜಿಪ್ಟಿನ ದಾರಿಯಲ್ಲಿ ನಿನಗೇನು ಕೆಲಸ? ಯೂಫ್ರೇಟೀಸ್ ನದಿಯ ನೀರು ಕುಡಿಯುವುದಕ್ಕಾಗಿ ಅಸ್ಸೀರಿಯದ ದಾರಿಯಲ್ಲಿ ನಿನಗೇನು ಕೆಲಸ?
JER 2:19 ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು. ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು. ಹೀಗಿರುವುದರಿಂದ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ, ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ, ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
JER 2:20 “ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು, ನಿನ್ನ ಬಂಧನಗಳನ್ನು ಹರಿದುಬಿಟ್ಟೆನು. ಆದರೆ, ‘ನಾನು ಸೇವೆಮಾಡುವುದಿಲ್ಲ!’ ಎಂದು ನೀನು ಹೇಳಿದೆ. ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೂ ನೀನು ವೇಶ್ಯೆಯಾಗಿ ನಡೆದಿದ್ದೀ.
JER 2:21 ಅತ್ಯುತ್ತಮ ಬೀಜದಿಂದ ಬೆಳೆದ ಉತ್ಕೃಷ್ಟ ದ್ರಾಕ್ಷಾಲತೆಯನ್ನಾಗಿ ನಿನ್ನನ್ನು ನೆಟ್ಟಿದೆ. ಆದರೆ ನೀನು ಕಾಡುದ್ರಾಕ್ಷಿಬಳ್ಳಿಯ ಹಾಳು ರೆಂಬೆಗಳಾದದ್ದು ಹೇಗೆ?
JER 2:22 ನೀನು ಸಾಬೂನಿನಿಂದ ತೊಳೆದುಕೊಂಡರೂ, ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
JER 2:23 “ಇದಲ್ಲದೆ ನೀನು, ‘ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ,’ ಎಂದು ಹೇಳುವುದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು. ನೀನು ಮಾಡಿದ್ದನ್ನು ತಿಳಿದುಕೋ. ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ.
JER 2:24 ಮರುಭೂಮಿಯ ಅಭ್ಯಾಸವುಳ್ಳ ಕಾಡುಕತ್ತೆಯೇ. ಅವಳ ಅತ್ಯಾಶೆಯಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತಾಳೆ. ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವರೆಲ್ಲರೂ ಆಯಾಸ ಪಡುವುದಿಲ್ಲ. ಅವಳ ಸಂಗಮಿಸುವ ಋತುಗಳಲ್ಲಿ ಅವಳನ್ನು ಕಾಣುವರು.
JER 2:25 ಆದರೆ ನಾನು, ‘ನಿನ್ನ ಕಾಲು ಸವೆಯದಂತೆಯೂ, ನಿನ್ನ ಗಂಟಲು ಆರದಂತೆಯೂ ತಡೆದುಕೋ,’ ಎಂದೆನು. ಆದರೆ ನೀನು, ‘ಇಲ್ಲ, ನಿರೀಕ್ಷೆ ಇಲ್ಲ, ನಾನು ಅನ್ಯದೇವರುಗಳನ್ನು ಪ್ರೀತಿಸುತ್ತೇನೆ, ಅವುಗಳ ಹಿಂದೆ ನಾನು ಹೋಗುತ್ತೇನೆ,’ ಎಂದು ಹೇಳಿದೆ.
JER 2:26 “ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲ್ ಜನರಿಗೆ ನಾಚಿಕೆ ಆಯಿತು. ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಇವರೆಲ್ಲರೂ ನಾಚಿಕೆಗೆ ಈಡಾಗುವರು.
JER 2:27 ಅವರು ಮರಕ್ಕೆ, ‘ನೀನು ನನ್ನ ತಂದೆ,’ ಎಂದೂ ಕಲ್ಲಿಗೆ, ‘ನೀನು ನನ್ನನ್ನು ಹೆತ್ತಿದ್ದೀ,’ ಎಂದೂ ಹೇಳುತ್ತಾರಲ್ಲಾ. ಏಕೆಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ಅವರ ಕಷ್ಟಕಾಲದಲ್ಲಿ ಎದ್ದು, ‘ನಮ್ಮನ್ನು ರಕ್ಷಿಸು,’ ಎಂದು ಮೊರೆಯಿಡುವರು.
JER 2:28 ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
JER 2:29 “ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 2:30 “ನಾನು ನಿಮ್ಮ ಜನರನ್ನು ದಂಡಿಸಿದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ. ನಿಮ್ಮ ಸ್ವಂತ ಖಡ್ಗವು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
JER 2:31 “ಇಸ್ರಾಯೇಲರೇ, ನೀವು ಯೆಹೋವ ದೇವರ ವಾಕ್ಯವನ್ನು ಗಮನಿಸಿರಿ: “ನಾನು ಇಸ್ರಾಯೇಲಿನ ಮರುಭೂಮಿಯಾದೆನೋ? ಗಾಡಾಂಧಕಾರದ ದೇಶವಾದೆನೋ? ನನ್ನ ಜನರು, ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ, ನಾವು ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವುದಿಲ್ಲ,’ ಎಂದು ಹೇಳುವುದು ಹೇಗೆ?
JER 2:32 ಯುವತಿಯು ತನ್ನ ಆಭರಣಗಳನ್ನೂ ಇಲ್ಲವೆ ಮದಲಗಿತ್ತಿ ತನ್ನ ಒಡ್ಯಾಣವನ್ನು ಮರೆತುಬಿಡುವಳೋ? ಆದರೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
JER 2:33 ಪ್ರಿಯಕರರನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಏಕೆ ಚಂದ ಮಾಡಿಕೊಳ್ಳುತ್ತೀ? ಇದರಿಂದ ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
JER 2:34 ಇದಲ್ಲದೆ ನಿನ್ನ ಸೆರಗುಗಳಲ್ಲಿ ಅಪರಾಧವಿಲ್ಲದ ಬಡವರ ರಕ್ತವು ಸಿಕ್ಕಿದೆ. ಅಂತರಂಗದ ಶೋಧನೆಯಿಂದಲ್ಲ, ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೀ.
JER 2:35 ಆದರೂ ನೀನು, ‘ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ದೇವರ ಕೋಪವು ನನ್ನನ್ನು ಬಿಟ್ಟು ತಿರುಗುವುದು,’ ಎಂದು ಹೇಳುತ್ತೀ. ನೀನು, ‘ನಾನು ಪಾಪಮಾಡಲಿಲ್ಲ’ ಎಂದು ಹೇಳುವುದರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
JER 2:36 ನಿನ್ನ ಮಾರ್ಗವನ್ನು ಬೇರೆ ಮಾಡಿಕೊಳ್ಳುವಷ್ಟು ಏಕೆ ಬಹಳವಾಗಿ ತಿರುಗಾಡುತ್ತೀ? ಅಸ್ಸೀರಿಯದ ನಿಮಿತ್ತ ನಾಚಿಕೆ ಪಟ್ಟ ಹಾಗೆ ಈಜಿಪ್ಟಿನ ನಿಮಿತ್ತವೂ ನಾಚಿಕೆಪಡುವೆ.
JER 2:37 ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟು ಹೋಗುವೆ. ಏಕೆಂದರೆ ಯೆಹೋವ ದೇವರು ನೀನು ಭರವಸೆ ಇಟ್ಟವುಗಳನ್ನು ತಿರಸ್ಕರಿಸಿದ್ದಾರೆ, ಅವುಗಳ ಮುಖಾಂತರ ನಿನ್ನ ಕಾರ್ಯ ಸಫಲವಾಗುವುದಿಲ್ಲ.”
JER 3:1 “ಒಬ್ಬನು ತನ್ನ ಹೆಂಡತಿಯನ್ನು ವಿಚ್ಛೇದನಮಾಡಿದರೆ, ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನ ಜೊತೆ ಇದ್ದರೆ, ಅವನು ಅವಳನ್ನು ಮತ್ತೆ ಸೇರಿಸಿಕೊಳ್ಳುವನೋ? ಸೇರಿಸಿಕೊಂಡರೆ, ಆ ದೇಶವು ಸಂಪೂರ್ಣವಾಗಿ ಅಪವಿತ್ರವಾಗುವುದಿಲ್ಲವೋ? ಆದರೆ ನೀನು ನಿನ್ನ ಅನೇಕ ಪ್ರೇಮಿಗಳ ಸಂಗಡ ವೇಶ್ಯೆಯಂತೆ ಇದ್ದೀ. ನೀನು ಈಗ ನನ್ನ ಬಳಿಗೆ ಹಿಂತಿರುಗುವೆಯಾ?” ಎಂದು ಯೆಹೋವ ದೇವರು ಹೇಳುತ್ತಾರೆ.
JER 3:2 “ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆ ಎತ್ತು. ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಮರುಭೂಮಿಯಲ್ಲಿ ಅರಬೀಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ. ಹೀಗೆ ನಿನ್ನ ವೇಶ್ಯೆತನಗಳಿಂದಲೂ, ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀಯೆ.
JER 3:3 ಆದ್ದರಿಂದ ಮಳೆಗಳು ನಿಂತುಹೋದವು, ಹಿಂಗಾರೇ ಆಗಲಿಲ್ಲ. ವೇಶ್ಯೆಯ ನೋಟ ನಿನಗಿತ್ತು. ನಾಚುವುದನ್ನು ನಿರಾಕರಿಸಿದೆ.
JER 3:4 ಈಗಲೂ ನನಗೆ, ‘ನನ್ನ ತಂದೆಯೇ, ನನ್ನ ಯೌವನದ ಸ್ನೇಹಿತನು ನೀನೇ,’ ಎಂದು ನೀನು ಕರೆಯುತ್ತಿರುವೆ.
JER 3:5 ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ? ಇಗೋ, ನೀನು ಹೀಗೆ ಮಾತನಾಡಿದರೇನು? ಆದರೆ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕೃತ್ಯಗಳನ್ನು ಮಾಡಿದ್ದಿ.”
JER 3:6 ಯೆಹೋವ ದೇವರು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೀನು ನೋಡಿದೆಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೆಯೂ ಹೋಗಿ, ಅಲ್ಲಿ ವೇಶ್ಯೆತನ ಮಾಡಿದ್ದಾಳೆ.
JER 3:7 ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು ನನ್ನ ಬಳಿಗೆ ತಿರುಗಿಕೋ ಎಂದೆನು. ಆದರೆ ಅವಳು ತಿರುಗಿಕೊಳ್ಳಲಿಲ್ಲ. ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
JER 3:8 ಆಗ ನಾನು ಕಂಡದ್ದೇನೆಂದರೆ, ಭ್ರಷ್ಟಳಾದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು, ತ್ಯಾಗ ಪತ್ರವನ್ನು ಕೊಟ್ಟಿದ್ದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಭಯಪಡದೆ, ತಾನು ಕೂಡ ಹೋಗಿ ವೇಶ್ಯೆತನ ಮಾಡಿದಳು.
JER 3:9 ಆದದ್ದೇನೆಂದರೆ, ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ, ಕಲ್ಲುಗಳ ಮತ್ತು ಮರಗಳ ಸಂಗಡ ವ್ಯಭಿಚಾರ ಮಾಡಿದಳು.
JER 3:10 ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.
JER 3:11 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲ್, ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.
JER 3:12 ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು. “ ‘ಭ್ರಷ್ಟಳಾದ ಇಸ್ರಾಯೇಲೇ, ತಿರುಗಿಕೋ,’ ಎಂದು ಯೆಹೋವ ದೇವರು ಕರೆಯುತ್ತಾರೆ. ‘ನಾನು ನನ್ನ ಕೋಪವನ್ನು ನಿಮ್ಮ ಮೇಲೆ ಬೀಳ ಮಾಡುವುದಿಲ್ಲ. ಏಕೆಂದರೆ ನಾನು ಕರುಣಾಸಾಗರನು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಾನು ಎಂದೆಂದಿಗೂ ಕೋಪವಿಟ್ಟುಕೊಳ್ಳುವುದಿಲ್ಲ.
JER 3:13 ನಿನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡಿ, ಒಂದೊಂದು ಹಸುರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯ ದೇವರುಗಳಿಗೆ ಚದರಿಸಿ, ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆ ಮಾಡು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
JER 3:14 “ಓ ಭ್ರಷ್ಟರಾದ ಜನರೇ, ತಿರುಗಿಕೊಳ್ಳಿರಿ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ಏಕೆಂದರೆ, ನಾನು ನಿಮಗೆ ಪತಿ. ಪಟ್ಟಣದೊಳಗಿಂದ ಒಬ್ಬನನ್ನು, ಗೋತ್ರದೊಳಗಿಂದ ಇಬ್ಬರನ್ನು ತೆಗೆದುಕೊಂಡು, ಚೀಯೋನಿಗೆ ಕರೆದುಕೊಂಡು ಬರುವೆನು.
JER 3:15 ನನ್ನ ಹೃದಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು. ಅವರು ತಿಳುವಳಿಕೆಯಿಂದಲೂ, ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
JER 3:16 ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.
JER 3:17 ಆ ಕಾಲ ಬಂದಾಗ ಯೆರೂಸಲೇಮನ್ನೇ, ‘ಯೆಹೋವ ದೇವರ ಸಿಂಹಾಸನ,’ ಎಂದು ಕರೆಯುವರು. ನನ್ನ ನಾಮ ಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದು ಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
JER 3:18 ಆ ಕಾಲದಲ್ಲಿ ಯೆಹೂದದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತಗಳನ್ನು ಬಿಟ್ಟು, ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
JER 3:19 ಯೆಹೋವ ದೇವರು ಹೇಳುವುದೇನೆಂದರೆ: “ಎಲೈ ಇಸ್ರಾಯೇಲ್, ನಾನು ಎಷ್ಟೋ ಸಂತೋಷದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು ಎಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು, ‘ತಂದೆ,’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆ ಎಂದಿದ್ದೆ.
JER 3:20 ನಿಶ್ಚಯವಾಗಿ ಹೆಂಡತಿ ತನ್ನ ಗಂಡನನ್ನು ವಂಚಿಸಿಬಿಡುವ ಕಾರಣ, ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 3:21 ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಿತು. ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿಕೆಗಳೇ. ಏಕೆಂದರೆ ಅವರು ತಮ್ಮ ಮಾರ್ಗವನ್ನು ಡೊಂಕು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟಿದ್ದರು.
JER 3:22 “ಭ್ರಷ್ಟರಾದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಭ್ರಷ್ಟತನವನ್ನು ನಾನು ಸ್ವಸ್ಥ ಮಾಡುವೆನು.” “ಇಗೋ, ನಿಮ್ಮ ಬಳಿಗೆ ಬರುತ್ತೇವೆ, ಏಕೆಂದರೆ ನೀವು ಯೆಹೋವ ದೇವರು, ನಮ್ಮ ದೇವರಾಗಿದ್ದೀರಿ.
JER 3:23 ನಿಶ್ಚಯವಾಗಿ ಗುಡ್ಡಗಳಿಂದಲೂ, ಬೆಟ್ಟಗಳ ಸಮೂಹದಿಂದಲೂ ನಮಗೆ ಮೋಸವಾಗಿದೆ. ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವ ದೇವರಲ್ಲಿಯೇ ಇದೆ.
JER 3:24 ನಾಚಿಕೆಯಾದದ್ದು, ನಮ್ಮ ಚಿಕ್ಕತನದಿಂದ ನಮ್ಮ ತಂದೆಗಳ ಕಷ್ಟವನ್ನೂ, ಅವರ ಕುರಿಗಳನ್ನೂ, ಅವರ ದನಗಳನ್ನೂ, ಅವರ ಪುತ್ರರನ್ನೂ, ಅವರ ಪುತ್ರಿಯರನ್ನೂ ತಿಂದುಬಿಟ್ಟಿದೆ.
JER 3:25 ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ. ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ. ಏಕೆಂದರೆ ನಾವೂ, ನಮ್ಮ ಪೂರ್ವಜರೂ ನಮ್ಮ ಚಿಕ್ಕತನದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ. ನಮ್ಮ ಯೆಹೋವ ದೇವರ ಸ್ವರಕ್ಕೆ ಕಿವಿಗೊಡಲಿಲ್ಲ.”
JER 4:1 “ಇಸ್ರಾಯೇಲೇ, ನೀನು ಹಿಂದಿರುಗುವಿಯಾದರೆ ನನ್ನ ಕಡೆ ಹಿಂದಿರುಗಿ ಬಾ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ನೀನು ನಿನ್ನ ಅಸಹ್ಯಗಳನ್ನು ನನ್ನ ಎದುರಿನಿಂದ ತೆಗೆದುಬಿಟ್ಟರೆ, ಅಲೆದಾಡದೆ ಇರುವೆ.
JER 4:2 ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿಯಿಂದಲೂ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡುವೆ. ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯ ಬಯಸುವರು. ನನ್ನಲ್ಲಿಯೇ ಹೆಮ್ಮೆಪಡುವರು.”
JER 4:3 ಏಕೆಂದರೆ ಯೆಹೋವ ದೇವರು ಯೆಹೂದದ ಮತ್ತು ಯೆರೂಸಲೇಮಿನ ಜನರಿಗೆ ಹೀಗೆ ಹೇಳುತ್ತಾರೆ: “ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಗೆಯ್ಯಿರಿ. ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ.
JER 4:4 ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರಿಗೋಸ್ಕರ ಸುನ್ನತಿ ಮಾಡಿಕೊಳ್ಳಿರಿ; ನಿಮ್ಮ ಹೃದಯಗಳ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲದಿದ್ದರೆ ನನ್ನ ಉಗ್ರವು ಬೆಂಕಿಯ ಹಾಗೆ ಹೊರಟು, ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸಲಾಗದ ಹಾಗೆ ಉರಿಯುವುದು.”
JER 4:5 “ಯೆಹೂದದಲ್ಲಿ ಪ್ರಚಾರಪಡಿಸಿರಿ, ಯೆರೂಸಲೇಮಿನಲ್ಲಿ ಪ್ರಕಟಿಸಿರಿ, ‘ಇಡೀ ದೇಶದಲ್ಲಿ ತುತೂರಿ ಊದಿರಿ!’ ಎಂದು ಹೇಳಿರಿ. ಗಟ್ಟಿಯಾಗಿ ಹೀಗೆ ಕೂಗಿರಿ, ‘ಕೂಡಿಕೊಂಡು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ!’ ಎಂದು ಹೇಳಿರಿ.
JER 4:6 ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ವಿಳಂಬವಿಲ್ಲದೆ ಸುರಕ್ಷತೆಗಾಗಿ ಓಡಿಹೋಗಿರಿ. ಏಕೆಂದರೆ ನಾನು ಉತ್ತರದಿಂದ ಕೇಡನ್ನೂ, ದೊಡ್ಡ ನಾಶವನ್ನೂ ತರುತ್ತೇನೆ.”
JER 4:7 ಸಿಂಹವು ತನ್ನ ಪೊದೆಯೊಳಗಿಂದ ಏರಿ ಬರುತ್ತದೆ. ಇತರ ಜನಾಂಗಗಳನ್ನು ನಾಶ ಮಾಡುವವನು ಹೊರಟಿದ್ದಾನೆ. ನಿನ್ನ ದೇಶವನ್ನು ಹಾಳು ಮಾಡುವುದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ. ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವುದು.
JER 4:8 ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ. ಯೆಹೋವ ದೇವರ ಉಗ್ರಕೋಪದ ಉರಿಯು ನಮ್ಮಿಂದ ಹಿಂದಿರುಗಲಿಲ್ಲ.
JER 4:9 ಆ ದಿವಸದಲ್ಲಿ, “ಅರಸನ ಹೃದಯವೂ ಎದೆಗುಂದುವುದು. ಅಧಿಪತಿಯ ಹೃದಯವೂ ಕುಗ್ಗುವುದು. ಯಾಜಕರು ಭ್ರಮೆಗೊಳ್ಳುವರು. ಪ್ರವಾದಿಗಳು ಸ್ತಬ್ಧರಾಗುವರು,” ಎಂದು ಯೆಹೋವ ದೇವರು ನುಡಿಯುತ್ತಾರೆ.
JER 4:10 ಆಗ ನಾನು ಹೇಳಿದ್ದೇನೆಂದರೆ, “ಹಾ, ಸಾರ್ವಭೌಮ ಯೆಹೋವ ದೇವರೇ, ನಿಶ್ಚಯವಾಗಿ ನೀವು ಈ ಜನರಿಗೂ, ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು,’ ಎಂದು ಹೇಳಿ, ಬಹಳ ಮೋಸ ಮಾಡಿದಿರಿ. ಖಡ್ಗವು ಅವರ ಕುತ್ತಿಗೆಗೆ ಬಂದಿದೆ” ಎಂದೆನು.
JER 4:11 ಆ ಸಮಯದಲ್ಲಿ ಈ ಜನರಿಗೂ, ಯೆರೂಸಲೇಮಿಗೂ ಈ ಮಾತುಗಳನ್ನು ತಿಳಿಸಲಾಗುವುದು: “ಒಣ ಗಾಳಿಯು ಮರುಭೂಮಿಯ ಉನ್ನತ ಸ್ಥಳಗಳಿಂದ ನನ್ನ ಜನರ ಪುತ್ರಿಯರ ಕಡೆಗೆ ಬರುತ್ತದೆ. ಅದು ತೂರುವುದಕ್ಕೂ, ಶುದ್ಧಮಾಡುವುದಕ್ಕೂ ಆಗತಕ್ಕದ್ದಲ್ಲ.
JER 4:12 ಅದಕ್ಕಿಂತ ಬಿರುಸಾದ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವುದು. ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯತೀರ್ಪುಗಳನ್ನು ಕೊಡುವೆನು.”
JER 4:13 ಇಗೋ, ಮೇಘಗಳ ಹಾಗೆ ಏರಿ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು. ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.
JER 4:14 ಯೆರೂಸಲೇಮೇ, ನಿನಗೆ ರಕ್ಷಣೆಯಾಗುವ ಹಾಗೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರವರೆಗೆ ನಿನ್ನಲ್ಲಿ ತಂಗುವುವು.
JER 4:15 ಏಕೆಂದರೆ ಒಂದು ಶಬ್ದವು ದಾನಿನಿಂದ ಪ್ರಕಟಮಾಡುತ್ತದೆ; ಎಫ್ರಾಯೀಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
JER 4:16 “ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯಪಡಿಸಿರಿ. ಏನೆಂದರೆ, ‘ಮುತ್ತಿಗೆ ಹಾಕುವ ಸೈನ್ಯದವರು ದೂರದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ಯುದ್ಧದ ಕೂಗನ್ನು ಎಬ್ಬಿಸುತ್ತಾರೆ.
JER 4:17 ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ. ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
JER 4:18 “ನಿನ್ನ ಮಾರ್ಗವೂ, ನಿನ್ನ ಕ್ರಿಯೆಗಳೂ, ಇವುಗಳನ್ನು ನಿನಗೆ ಉಂಟುಮಾಡಿದವು, ಇದೇ ನಿನ್ನ ಶಿಕ್ಷೆ. ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ನಾಟುವುದಿಲ್ಲವೋ?”
JER 4:19 ಓ, ನನ್ನ ಕರುಳು, ನನ್ನ ಕರುಳು! ನಾನು ನೋವಿನಿಂದ ನರಳುತ್ತೇನೆ. ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ. ನಾನು ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿ ಶಬ್ದವನ್ನೂ, ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ.
JER 4:20 ನಾಶನದ ಮೇಲೆ ನಾಶನದ ಸುದ್ದಿಬರುತ್ತಿದೆ. ದೇಶವೆಲ್ಲಾ ಹಾಳಾಯಿತು. ಫಕ್ಕನೆ ನನ್ನ ಗುಡಾರಗಳೂ, ಕ್ಷಣಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
JER 4:21 ಎಷ್ಟರವರೆಗೆ ನಾನು ಯುದ್ಧದ ಧ್ವಜವನ್ನು ನೋಡುತ್ತಿರಲಿ? ತುತೂರಿಯ ಶಬ್ದವನ್ನು ಎಷ್ಟರವರೆಗೆ ನಾನು ಕೇಳಲಿ?
JER 4:22 “ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ. ನನ್ನನ್ನು ಅವರು ಅರಿಯರು; ಮೂರ್ಖ ಮಕ್ಕಳಾಗಿದ್ದಾರೆ, ಅವರು ಗ್ರಹಿಕೆಯಿಲ್ಲದವರು; ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ, ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.”
JER 4:23 ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ, ಹಾಳಾಗಿಯೂ, ಶೂನ್ಯವಾಗಿಯೂ ಇತ್ತು. ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
JER 4:24 ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹಗುರವಾಗಿ ಅದುರಿದವು.
JER 4:25 ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿ ಹೋಗಿದ್ದವು.
JER 4:26 ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಮರುಭೂಮಿಯಾಯಿತು; ಅದರ ಪಟ್ಟಣಗಳೆಲ್ಲಾ ಯೆಹೋವ ದೇವರ ಮುಂದೆಯೂ, ಅವರ ಉಗ್ರಕೋಪದ ಉರಿಯ ಮುಂದೆಯೂ ಬಿದ್ದು ಹೋಗಿದ್ದವು.
JER 4:27 ಏಕೆಂದರೆ ಯೆಹೋವ ದೇವರು ಹೀಗೆ ಹೇಳಿದ್ದಾರೆ: “ದೇಶವೆಲ್ಲಾ ಹಾಳಾಗುವುದು. ಆದರೂ ನಾನು ಅದನ್ನು ಪೂರ್ಣ ನಾಶ ಮಾಡಿಲ್ಲ.
JER 4:28 ಇದರ ನಿಮಿತ್ತ ಭೂಮಿಯು ದುಃಖಿಸುವುದು. ಮೇಲಿರುವ ಆಕಾಶವು ಕಪ್ಪಾಗುವುದು. ಏಕೆಂದರೆ ನಾನು ಅದನ್ನು ಹೇಳಿದ್ದರಿಂದ ನಿಶ್ಚಯಿಸಿದ್ದೇನೆ. ಮಾನಸಾಂತರ ಪಡುವುದಿಲ್ಲ. ಇಲ್ಲವೆ ಅದರಿಂದ ಹಿಂದಿರುಗುವುದಿಲ್ಲ.”
JER 4:29 ರಾವುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವುದು. ಪೊದೆಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು. ಪಟ್ಟಣಗಳೆಲ್ಲಾ ನಾಶವಾಗುವುವು. ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.
JER 4:30 ಆಗ ನೀನು ನಿರ್ಜನನಾದಾಗ ಏನು ಮಾಡುವೆ? ನೀನು ಕಡುಕೆಂಪು ಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡರೇನು? ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು? ನೀವು ವ್ಯರ್ಥವಾಗಿ ನಿನ್ನನ್ನು ಅಲಂಕರಿಸಿಕೊಳ್ಳುತ್ತಿ. ನಿನ್ನ ಪ್ರೇಮಿಗಳು ನಿನ್ನನ್ನು ತಿರಸ್ಕರಿಸುತ್ತಾರೆ; ಅವರು ನಿನ್ನನ್ನು ಕೊಲ್ಲಲು ಬಯಸುತ್ತಾರೆ.
JER 4:31 ಏಕೆಂದರೆ ಪ್ರಸವವೇದನೆ ಪಡುವವಳಂತೆ, ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ. ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ, “ಅಯ್ಯೋ, ನನಗೀಗ ಕಷ್ಟ! ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,” ಎಂದು ಅರಚಿಕೊಳ್ಳುತ್ತಾಳೆ.
JER 5:1 “ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ, ನ್ಯಾಯವನ್ನು ಮಾಡುವವನೂ, ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ, ತಿಳಿದು ಹುಡುಕಿರಿ; ಸಿಕ್ಕಿದರೆ ಅವಳಿಗೆ ಮನ್ನಿಸುವೆನು.
JER 5:2 ಅವರು, ‘ಯೆಹೋವ ದೇವರು ಜೀವದಾಣೆ,’ ಎಂದು ಪ್ರಮಾಣ ಮಾಡಿದರೂ ಆ ಪ್ರಮಾಣ ಸುಳ್ಳಾಗಿಯೇ ಇರುತ್ತದೆ.”
JER 5:3 ಓ ಯೆಹೋವ ದೇವರೇ, ನಿಮ್ಮ ಕಣ್ಣುಗಳು ಸತ್ಯದ ಮೇಲೆ ಇವೆಯಲ್ಲವೋ? ಅವರನ್ನು ಹೊಡೆದಿರಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ತುಳಿದಿರಿ, ಆದರೆ ತಿದ್ದುಕೊಳ್ಳಲು ಒಪ್ಪಲಿಲ್ಲ. ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ. ಅವರು ಪಶ್ಚಾತ್ತಾಪಕ್ಕೆ ನಿರಾಕರಿಸಿದ್ದಾರೆ.
JER 5:4 ಆದ್ದರಿಂದ ನಾನು, “ನಿಶ್ಚಯವಾಗಿ ಇವರು ಬಡವರು ಮತ್ತು ಬುದ್ಧಿಹೀನರು. ಏಕೆಂದರೆ, ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ಅರಿಯರು.
JER 5:5 ನಾನು ನಾಯಕರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡುವೆನು. ಏಕೆಂದರೆ, ಅವರು ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿದಿದ್ದಾರೆ,” ಆದರೆ ಇವರು ಕೂಡ ಒಮ್ಮತವಾಗಿ ನೊಗವನ್ನು ಮುರಿದು, ಬಂಧನಗಳನ್ನು ಹರಿದುಬಿಟ್ಟಿದ್ದಾರೆ.
JER 5:6 ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು. ಕಾಡಿನ ತೋಳವು ಅವರನ್ನು ಸೂರೆಮಾಡುವುದು. ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು. ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು. ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ. ಅವರ ಹಿಂಜಾರುವಿಕೆಯು ಹೆಚ್ಚಾಗಿವೆ.
JER 5:7 ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ. ನಾನು ಅವರನ್ನು ತೃಪ್ತಿಪಡಿಸಿದ ಮೇಲೆ, ಅವರು ವ್ಯಭಿಚಾರ ಮಾಡಿದ್ದಾರೆ. ವೇಶ್ಯೆಯರ ಮನೆಗಳಲ್ಲಿ ಗುಂಪಾಗಿ ಸೇರಿದ್ದಾರೆ.
JER 5:8 ಅವರು ಕುದುರೆಗಳಂತೆ, ಬಲಶಾಲಿ ಮತ್ತು ಕಾಮವನ್ನು ಹೊಂದಿದವರಾಗಿದ್ದಾರೆ. ತಮ್ಮ ತಮ್ಮ ನೆರೆಯವರ ಹೆಂಡತಿಯರನ್ನು ಕಂಡು ಹೇಕರಿಸುತ್ತಾರೆ.
JER 5:9 ಇವುಗಳ ನಿಮಿತ್ತ ನಾನು ಶಿಕ್ಷಿಸಬಾರದೇ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ? ಎಂದು ಯೆಹೋವ ದೇವರು ಹೇಳುತ್ತಾರೆ.
JER 5:10 ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ. ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ.
JER 5:11 ಇಸ್ರಾಯೇಲನ ಮನೆತನದವರೂ, ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾರೆ, ಎಂದು ಯೆಹೋವ ದೇವರು ಹೇಳುತ್ತಾರೆ.
JER 5:12 ಆ ಜನರು ಯೆಹೋವ ದೇವರನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ,
JER 5:13 ಪ್ರವಾದಿಗಳು ಆಡುವುದೆಲ್ಲಾ ಬರೀ ಗಾಳಿ ಮಾತುಗಳು, ದೈವೋಕ್ತಿ ಎಂಬುದು ಅವುಗಳಲ್ಲಿ ಇಲ್ಲ, ಅವರು ಹೇಳುವುದೆಲ್ಲಾ ಅವರಿಗೇ ತಗಲಲಿ,” ಎಂದುಕೊಂಡಿದ್ದಾರೆ.
JER 5:14 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಯೆರೆಮೀಯನಿಗೆ ಹೀಗೆನ್ನುತ್ತಾರೆ: “ಇಗೋ, ಅವರು ಹೀಗೆ ಮಾತಾಡಿದ್ದರಿಂದ ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು, ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು. ಆ ಬೆಂಕಿ ಅವರನ್ನು ಸುಟ್ಟುಹಾಕುವುದು.”
JER 5:15 ಯೆಹೋವ ದೇವರು ಹೀಗೆ ಹೇಳುತ್ತಾರೆ, “ಓ ಇಸ್ರಾಯೇಲ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆ. ಅದು ಬಲವಾದ ಜನಾಂಗವು. ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.
JER 5:16 ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ. ಅವರೆಲ್ಲರೂ ಪರಾಕ್ರಮಶಾಲಿಗಳೇ.
JER 5:17 ನಿನ್ನ ಪುತ್ರರು, ನಿನ್ನ ಪುತ್ರಿಯರು ನಿನ್ನ ಪೈರನ್ನೂ, ನಿನ್ನ ರೊಟ್ಟಿಯನ್ನೂ ನುಂಗಿಬಿಡುವರು. ನಿನ್ನ ಕುರಿಗಳನ್ನೂ, ನಿನ್ನ ದನಗಳನ್ನೂ ನುಂಗಿಬಿಡುವರು. ನಿನ್ನ ದ್ರಾಕ್ಷಿ ಲತೆಗಳನ್ನೂ, ಅಂಜೂರದ ಗಿಡಗಳನ್ನೂ ನುಂಗಿಬಿಡುವರು. ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
JER 5:18 “ಆದರೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ಅಳಿಸಿಬಿಡುವುದಿಲ್ಲ,” ಎಂದು ಯೆಹೋವ ದೇವರು ಅನ್ನುತ್ತಾರೆ.
JER 5:19 “ ‘ನಮ್ಮ ದೇವರಾದ ಯೆಹೋವ ದೇವರು ನಮಗೆ ಯಾತಕ್ಕೆ ಇವುಗಳನ್ನೆಲ್ಲಾ ಮಾಡುತ್ತಾರೆ,’ ಎಂದು ನೀವು ಕೇಳುವಾಗ, ನೀನು ಅವರಿಗೆ ಹೀಗೆ ಹೇಳಬೇಕು: ‘ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ, ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ.’
JER 5:20 “ಯಾಕೋಬ ವಂಶಜರಲ್ಲಿ ಇದನ್ನು ತಿಳಿಸಿರಿ. ಯೆಹೂದದಲ್ಲಿ ಪ್ರಕಟಿಸಿರಿ.
JER 5:21 ಏನೆಂದರೆ, ಓ ಮೂಢ ಬುದ್ಧಿಹೀನ ಜನರೇ, ಕಣ್ಣುಗಳಿದ್ದು ಕಾಣದವರೇ, ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ.
JER 5:22 ನೀವು ನನಗೆ ಭಯಪಡುವುದಿಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ? ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ, ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ. ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು.
JER 5:23 ಆದರೆ ಈ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು. ಅವರು ತಿರುಗಿಬಿದ್ದು ಹೋಗಿಬಿಟ್ಟಿದ್ದಾರೆ.
JER 5:24 ತಮ್ಮ ಹೃದಯದಲ್ಲಿ, ‘ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡುವಂಥ ಸುಗ್ಗಿಗೆ ನೇಮಕವಾದ ವಾರಗಳನ್ನು ನಮಗೆ ಪ್ರತ್ಯೇಕಿಸುವಂಥ ನಮ್ಮ ದೇವರಾದ ಯೆಹೋವ ದೇವರಿಗೆ ಭಯಪಡೋಣ,’ ಎಂದುಕೊಳ್ಳುವುದಿಲ್ಲ.
JER 5:25 ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಇವೆ; ನಿಮ್ಮ ಪಾಪಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಗೆದಿವೆ.
JER 5:26 “ಏಕೆಂದರೆ ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ. ಬೇಟೆಗಾರನ ಹಾಗೆ ಹೊಂಚುಹಾಕುತ್ತಾರೆ; ಪಕ್ಷಿಗಳನ್ನು ಬಲೆಗೆ ಬೀಳಿಸುವ ಮನುಷ್ಯರಂತೆ ಕಾಯುತ್ತಿದ್ದಾರೆ ಮತ್ತು ಜನರನ್ನು ಹಿಡಿಯಲು ಬಲೆ ಹಾಕುತ್ತಾರೆ.
JER 5:27 ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ, ಅವರ ಮನೆಗಳು ಮೋಸದಿಂದ ತುಂಬಿವೆ. ಆದ್ದರಿಂದ ಅವರು ಶಕ್ತಿವಂತರೂ, ಐಶ್ವರ್ಯವಂತರೂ ಆಗಿದ್ದಾರೆ.
JER 5:28 ಅವರು ಕೊಬ್ಬಿದ್ದಾರೆ ಮತ್ತು ನಯವಾಗಿ ಬೆಳೆದಿದ್ದಾರೆ. ಅವರ ಕೆಟ್ಟ ಕೆಲಸಗಳಿಗೆ ಮಿತಿಯಿಲ್ಲ; ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವುದಿಲ್ಲ; ಆದರೂ ಅವರು ಸಫಲವಾಗುತ್ತಾರೆ, ಬಡವರ ನ್ಯಾಯವನ್ನು ತೀರಿಸರು.
JER 5:29 ಇವುಗಳ ನಿಮಿತ್ತ ನಾನು ದಂಡಿಸಬಾರದೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?
JER 5:30 “ಭಯಂಕರವಾದ ಮತ್ತು ಆಶ್ಚರ್ಯವಾದ ಕಾರ್ಯವು ದೇಶದಲ್ಲಿ ನಡೆಯುತ್ತದೆ.
JER 5:31 ಏನೆಂದರೆ, ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ. ಯಾಜಕರು ತಮ್ಮ ಅಧಿಕಾರದಿಂದ ದೊರೆತನ ಮಾಡುತ್ತಾರೆ. ನನ್ನ ಜನರು ಅದನ್ನು ಪ್ರೀತಿ ಮಾಡುತ್ತಾರೆ. ಆದರೆ ಅಂತ್ಯದಲ್ಲಿ ನೀವು ಏನು ಮಾಡುವಿರಿ?
JER 6:1 “ಓ ಬೆನ್ಯಾಮೀನನ ಮಕ್ಕಳೇ! ನಿಮ್ಮ ಸುರಕ್ಷತೆಗಾಗಿ ಯೆರೂಸಲೇಮಿನಿಂದ ಓಡಿಹೋಗಿರಿ, ತೆಕೋವದಲ್ಲಿ ತುತೂರಿ ಊದಿರಿ; ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಕೇಡೂ ದೊಡ್ಡ ನಾಶವೂ ಉತ್ತರದ ಕಡೆಯಿಂದ ತೋರುತ್ತವೆ.
JER 6:2 ಸುಂದರಿ ಮತ್ತು ಕೋಮಲಳಾದ ಚೀಯೋನಿನ ಮಗಳನ್ನು ನಾನು ನಾಶಮಾಡುತ್ತೇನೆ.
JER 6:3 ಕುರುಬರು ತಮ್ಮ ಮಂದೆಗಳ ಸಂಗಡ ಅವಳ ವಿರುದ್ಧ ಬರುವರು. ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು. ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.”
JER 6:4 “ಚೀಯೋನಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ. ಏಳಿರಿ, ಮಧ್ಯಾಹ್ನದಲ್ಲಿ ದಾಳಿಮಾಡೋಣ. ನಮಗೆ ಕಷ್ಟ! ಏಕೆಂದರೆ ಹೊತ್ತು ಮುಳುಗುತ್ತದೆ; ಸಂಜೆಯ ನೆರಳುಗಳು ಉದ್ದವಾಗುತ್ತವೆ.
JER 6:5 ಏಳಿರಿ, ರಾತ್ರಿಯಲ್ಲಿ ದಾಳಿಮಾಡೋಣ. ಅವಳ ಕೋಟೆಗಳನ್ನು ನಾಶಮಾಡೋಣ.”
JER 6:6 ಏಕೆಂದರೆ, ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಚೀಯೋನ್ ಸುತ್ತಲಿರುವ ಮರಗಳನ್ನು ಕಡಿಯಿರಿ. ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ. ಇದೇ ನೀವು ದಂಡಿಸತಕ್ಕ ಪಟ್ಟಣವು. ಅವಳಲ್ಲಿ ಬರೀ ದಬ್ಬಾಳಿಕೆಯೇ ತುಂಬಿದೆ.
JER 6:7 ಬುಗ್ಗೆಯು ನೀರನ್ನು ಹರಿಯ ಮಾಡುವಂತೆ, ಅವಳು ತನ್ನ ಕೆಟ್ಟತನವನ್ನು ಹರಿಯ ಮಾಡುತ್ತಾಳೆ. ಬಲಾತ್ಕಾರವೂ ಸುಲಿಗೆಯೂ ಅವಳಲ್ಲಿ ಕೇಳ ಬರುತ್ತದೆ. ದುಃಖವೂ ಗಾಯಗಳೂ ಯಾವಾಗಲೂ ನನ್ನ ಮುಂದೆ ಇವೆ.
JER 6:8 ಓ ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ, ನಾನು ನಿಮ್ಮನ್ನು ಹಾಳಾಗಿಯೂ, ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತೆಗೆದುಕೋ.”
JER 6:9 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿ ಗಿಡದ ಹಾಗೆ ಪೂರ್ಣವಾಗಿ ಹಕ್ಕಲಾಯುವರು; ದ್ರಾಕ್ಷಿ ಕೂಡಿಸುವವನ ಹಾಗೆ ನಿನ್ನ ಕೈಯನ್ನು ರೆಂಬೆಗಳಲ್ಲಿ ಹಿಂದಕ್ಕೆ ತಿರುಗಿಸು.”
JER 6:10 ನಾನು ಯಾರ ಸಂಗಡ ಮಾತನಾಡಲಿ? ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ? ಇಗೋ, ಅವರು ಆಲೈಸಲಾರದ ಹಾಗೆ ಅವರ ಕಿವಿ ಮುಚ್ಚಿಹೋಗಿವೆ. ಇಗೋ, ಯೆಹೋವ ದೇವರ ವಾಕ್ಯವು ಅವನಿಗೆ ನಿಂದೆಯಾಗಿದೆ, ಅದರಲ್ಲಿ ಅವರಿಗೆ ಸಂತೋಷವಿಲ್ಲ.
JER 6:11 ಆದ್ದರಿಂದ ಯೆಹೋವ ದೇವರ ಕೋಪದಿಂದ ನಾನು ತುಂಬಿದ್ದೇನೆ. ಅದನ್ನು ನನ್ನೊಳಗೆ ಹಿಡಿಯುವುದು ನನಗೆ ಸಾಕಾಯಿತು. “ಅದನ್ನು ದೂರ ಇರುವ ಮಕ್ಕಳ ಮೇಲೆ ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು. ಏಕೆಂದರೆ, ನಿಶ್ಚಯವಾಗಿ ಗಂಡನ, ಹೆಂಡತಿಯ ಸಂಗಡ, ವೃದ್ಧನ, ದಿನತುಂಬಿದವನ ಸಂಗಡ ಹಿಡಿಯಲಾಗುವರು.
JER 6:12 ಅವರ ಮನೆಗಳೂ ಹೊಲಗಳೂ, ಹೆಂಡತಿಯರೂ ಸಹಿತವಾಗಿ ಬೇರೊಬ್ಬರ ಪಾಲಾಗುವುವು. ಏಕೆಂದರೆ, ದೇಶದ ನಿವಾಸಿಗಳ ಮೇಲೆ ನನ್ನ ಕೈಚಾಚುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 6:13 “ಏಕೆಂದರೆ, ಅವರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರತನಕ, ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರವರೆಗೆ ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.
JER 6:14 ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, ‘ಸಮಾಧಾನ, ಸಮಾಧಾನ,’ ಎಂದು ಹೇಳುತ್ತಾರೆ.
JER 6:15 ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ. ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 6:16 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ, ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ, ಒಳ್ಳೆಯ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ. ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕುವುದು, ಆದರೆ ಅವರು, ‘ನಾವು ನಡೆಯುವುದಿಲ್ಲ,’ ಎಂದರು.
JER 6:17 ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ, ತುತೂರಿಯ ಶಬ್ದವನ್ನು ಆಲೈಸಿರಿ, ಎಂದೆನು. ಆದರೆ ಅವರು, ‘ನಾವು ಆಲೈಸುವುದಿಲ್ಲ,’ ಎಂದರು.
JER 6:18 ಆದ್ದರಿಂದ ಜನಾಂಗಗಳೇ, ಕೇಳಿರಿ; ಓ ಸಾಕ್ಷಿಗಳೇ, ಅವರಲ್ಲಿ ಇರುವಂಥದ್ದನ್ನು ತಿಳಿದುಕೊಳ್ಳಿರಿ.
JER 6:19 ಈ ಭೂಮಿಯೇ, ಕೇಳು. ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ. ಏಕೆಂದರೆ, ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು; ನನ್ನ ನಿಯಮವನ್ನು ತಿರಸ್ಕರಿಸಿದರು.
JER 6:20 ಶೆಬದಿಂದ ಸಾಂಬ್ರಾಣಿಯೂ ದೂರದೇಶದಿಂದ ಒಳ್ಳೆಯ ಸುಗಂಧವೂ ನನಗೆ ಬರುವುದು ಏತಕ್ಕೆ? ನಿಮ್ಮ ದಹನಬಲಿಗಳು ಮೆಚ್ಚುಗೆಯಾಗಲಿಲ್ಲ. ನಿಮ್ಮ ಬಲಿಗಳು ನನಗೆ ರುಚಿಯಿಲ್ಲ.”
JER 6:21 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಈ ಜನರ ಮುಂದೆ ಅಡೆತಡೆಗಳನ್ನು ಇಡುತ್ತೇನೆ. ತಂದೆಯೂ, ಮಕ್ಕಳೂ ಕೂಡ ಅವುಗಳ ಮೇಲೆ ಬೀಳುವರು. ನೆರೆಯವರೂ, ಅವರ ಸ್ನೇಹಿತರೂ ನಾಶವಾಗುವರು.”
JER 6:22 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದು. ದೊಡ್ಡ ಜನಾಂಗವು ಲೋಕದ ಕಟ್ಟಕಡೆಯಿಂದ ಎದ್ದು ಬರುತ್ತದೆ.
JER 6:23 ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ; ಅವರು ಕ್ರೂರರು; ಕನಿಕರ ತೋರಿಸುವುದಿಲ್ಲ. ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ. ಓ ಚೀಯೋನಿನ ಪುತ್ರಿಯೇ, ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.”
JER 6:24 ಅದರ ಕೀರ್ತಿಯನ್ನು ಕೇಳಿದ್ದೇವೆ; ನಮ್ಮ ಕೈಗಳು ಜೋಲಾಡುತ್ತವೆ, ಸಂಕಟವೂ, ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.
JER 6:25 ಹೊಲಕ್ಕೆ ಹೋಗಬೇಡ; ದಾರಿಯಲ್ಲಿ ನಡೆಯಬೇಡ. ಏಕೆಂದರೆ ಶತ್ರುವಿನ ಖಡ್ಗವೂ, ಅಂಜಿಕೆಯೂ ಸುತ್ತಲೂ ಇವೆ.
JER 6:26 ಓ ನನ್ನ ಮಗಳೇ, ನನ್ನ ಪ್ರಜೆಗಳೇ, ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು. ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ, ಬಹು ಕಠಿಣವಾದ ಗೋಳಾಟವನ್ನು ಮಾಡು. ನಾಶ ಮಾಡುವವನು ಫಕ್ಕನೆ ನಮ್ಮ ಮೇಲೆ ಬರುವನು.
JER 6:27 “ನೀನು ನನ್ನ ಜನರ ಮಾರ್ಗವನ್ನು ಪರೀಕ್ಷಿಸಿ ತಿಳಿದುಕೊಳ್ಳುವಂತೆ, ನಾನು ನಿನ್ನನ್ನು ನನ್ನ ಜನವೆಂಬ ಅದುರಿಗೆ ಲೋಹ ಶೋಧಕನನ್ನಾಗಿ ನೇಮಿಸಿದ್ದೇನೆ.
JER 6:28 ಅವರೆಲ್ಲರು ಕಠಿಣ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ಕಂಚು, ಕಬ್ಬಿಣಕ್ಕೆ ಸಮಾನರು, ಎಲ್ಲರೂ ಕೇಡಿಗರು.
JER 6:29 ಕುಲುಮೆಯು ಸುಡುತ್ತದೆ, ಬೆಂಕಿಯೊಳಗಿಂದ ಸೀಸವು ಕರಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ಅವನ ಪರಿಶ್ರಮವೆಲ್ಲ ವ್ಯರ್ಥ, ಕೆಟ್ಟವರಿಂದ ಕಲ್ಮಷವನ್ನು ಅವನಿಂದ ತೆಗೆಯಲಾಗಲಿಲ್ಲ.
JER 6:30 ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವುದು; ಏಕೆಂದರೆ, ಯೆಹೋವ ದೇವರು ಅವರನ್ನು ತಳ್ಳಿದ್ದಾರೆ.”
JER 7:1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ:
JER 7:2 “ಯೆಹೋವ ದೇವರ ಆಲಯದ ಬಾಗಿಲಲ್ಲಿ ನಿಂತುಕೊಂಡು ಈ ವಾಕ್ಯವನ್ನು ಅಲ್ಲಿ ಸಾರು: “ ‘ಯೆಹೂದ್ಯರೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಈ ಬಾಗಿಲುಗಳಲ್ಲಿ ಸೇರುವವರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ.
JER 7:3 ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ನೆಟ್ಟಗೆಮಾಡಿರಿ. ಆಗ ನಿಮ್ಮನ್ನು ಈ ಸ್ಥಳದಲ್ಲಿ ವಾಸಿಸುವಂತೆ ಮಾಡುವೆನು.
JER 7:4 “ಇವುಗಳೇ ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ,” ಎಂದು ಹೇಳುವ ಮೋಸಕರ ಮಾತುಗಳಲ್ಲಿ ನಂಬಿಕೆ ಇಡಬೇಡಿರಿ.
JER 7:5 ಏಕೆಂದರೆ ನೀವು ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ, ಪೂರ್ಣವಾಗಿ ನೆಟ್ಟಗೆ ಮಾಡಿದರೆ; ಮನುಷ್ಯನಿಗೂ, ಅವನ ನೆರೆಯವನಿಗೂ ಪೂರ್ಣವಾಗಿ ನ್ಯಾಯ ನಡೆಸಿದರೆ;
JER 7:6 ಪರದೇಶಿಯನ್ನೂ, ದಿಕ್ಕಿಲ್ಲದವನನ್ನೂ, ವಿಧವೆಯನ್ನೂ ಸಂಕಟ ಪಡಿಸದಿದ್ದರೆ; ಈ ಸ್ಥಳದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲದಿದ್ದರೆ; ಇಲ್ಲವೆ ನಿಮ್ಮ ಕೇಡಿಗಾಗಿ ಬೇರೆ ದೇವರುಗಳನ್ನು ಹಿಂಬಾಲಿಸದಿದ್ದರೆ;
JER 7:7 ನಾನು ನಿಮ್ಮನ್ನು ಈ ಸ್ಥಳದಲ್ಲಿ ಎಂದರೆ, ನಾನು ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಂತೆ ಮಾಡುವೆನು.
JER 7:8 ನೀವು ಪ್ರಯೋಜನವಿಲ್ಲದ ಮೋಸಕರ ಮಾತುಗಳಲ್ಲಿ ನಂಬಿಕೆ ಇಡುತ್ತೀರಿ.
JER 7:9 “ ‘ಕಳ್ಳತನ, ಹತ್ಯೆ, ವ್ಯಭಿಚಾರಗಳನ್ನು ನೀವು ನಡೆಸುವಿರೋ? ಸುಳ್ಳು ಪ್ರಮಾಣವನ್ನು ಮಾಡಿ, ಬಾಳನಿಗೆ ಧೂಪವನ್ನು ಸುಡುವಿರೋ? ನಿಮಗೆ ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿ,
JER 7:10 ಆಮೇಲೆ ಬಂದು ನನ್ನ ಹೆಸರನ್ನು ಹೊಂದಿರುವ ಈ ಆಲಯದಲ್ಲಿ ನನ್ನ ಮುಂದೆ ನಿಂತುಕೊಂಡು, “ನಾವು ಸುರಕ್ಷಿತರು” ಎಂದು ಹೇಳಿ ಈ ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲಾಗಿದ್ದೇವೆಂದು ಹೇಳುವಿರೋ?
JER 7:11 ನನ್ನ ಹೆಸರನ್ನು ಹೊಂದಿರುವ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.
JER 7:12 “ ‘ಆದರೆ ಈಗ ಶೀಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಎಂದರೆ, ನಾನು ಮೊದಲು ನನ್ನ ಹೆಸರನ್ನು ಸ್ಥಾಪಿಸಿದ ಸ್ಥಳಕ್ಕೆ ಹೋಗಿರಿ; ಅದಕ್ಕೆ ನಾನು, ನನ್ನ ಜನರಾದ ಇಸ್ರಾಯೇಲರ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ.
JER 7:13 ಈಗ ಯೆಹೋವ ದೇವರು ಹೇಳುವುದೇನೆಂದರೆ, ನೀವು ಈ ಕೆಲಸಗಳನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮನ್ನು ಕರೆದರೂ, ನೀವು ಉತ್ತರ ಕೊಡದೆ ಹೋದಿರಿ.
JER 7:14 ಆದಕಾರಣ ನನ್ನ ಹೆಸರಿನಿಂದ ಕರೆಯಲಾದಂಥ ಮತ್ತು ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ, ನಿಮ್ಮ ಪಿತೃಗಳಿಗೆ ಕೊಟ್ಟ ಸ್ಥಳಕ್ಕೂ, ಶೀಲೋವಿಗೆ ಮಾಡಿದ ಹಾಗೆ ಮಾಡುವೆನು.
JER 7:15 ನಿಮ್ಮ ಸಹೋದರರೆಲ್ಲರನ್ನೂ, ಎಫ್ರಾಯೀಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ, ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.’
JER 7:16 “ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಇಲ್ಲವೆ ನನಗೆ ವಿಜ್ಞಾಪನೆ ಮಾಡಬೇಡ. ಏಕೆಂದರೆ ನಾನು ಅದನ್ನು ಕೇಳಿಸಿಕೊಳ್ಳುವುದಿಲ್ಲ.
JER 7:17 ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡುವುದನ್ನು ನೀನು ನೋಡುವುದಿಲ್ಲವೋ?
JER 7:18 ‘ಗಗನದ ಒಡತಿ,’ ಎಂದು ಇವರು ಕರೆಯುವ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯ ದೇವತೆಗಳಿಗೆ ಪಾನ ನೈವೇದ್ಯವನ್ನು ಅರ್ಪಿಸುತ್ತಾರೆ.”
JER 7:19 ಯೆಹೋವ ದೇವರು ಅನ್ನುತ್ತಾನೆ: “ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖ ಮುಚ್ಚಿಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರಲ್ಲವೇ?”
JER 7:20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ಈ ಸ್ಥಳದ ಮೇಲೆಯೂ, ಮನುಷ್ಯರ ಮೇಲೆಯೂ, ಮೃಗಗಳ ಮೇಲೆಯೂ, ಹೊಲದ ಮರಗಳ ಮೇಲೆಯೂ, ಭೂಮಿಯ ಫಲದ ಮೇಲೆಯೂ ನನ್ನ ಕೋಪ ಮತ್ತು ಉಗ್ರತೆಯು ಹೊಯ್ಯಲಾಗುವುದು. ಅದು ಉರಿಯುವುದು ಮತ್ತು ಆರಿಹೋಗುವುದಿಲ್ಲ.
JER 7:21 “ ‘ಇಸ್ರಾಯೇಲಿನ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ದಹನಬಲಿಗಳನ್ನು ನಿಮ್ಮ ಬಲಿಗಳ ಸಂಗಡ ಕೂಡಿಸಿ, ಮಾಂಸವನ್ನು ತಿನ್ನಿರಿ.
JER 7:22 ಏಕೆಂದರೆ, ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ದಿವಸದಲ್ಲಿ, ದಹನಬಲಿಗಳ ಮತ್ತು ಬಲಿಗಳ ವಿಷಯ ನಾನು ಅವರ ಸಂಗಡ ಮಾತನಾಡಲಿಲ್ಲ; ಇಲ್ಲವೆ ಅವರಿಗೆ ಆಜ್ಞಾಪಿಸಲಿಲ್ಲ.
JER 7:23 ಆದರೆ ನಾನು ಇದನ್ನು ಅವರಿಗೆ, “ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು; ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೆಯದಾಗುವಂತೆ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ,” ಎಂದು ಆಜ್ಞಾಪಿಸಿ ಹೇಳಿದೆನು.
JER 7:24 ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ಆದರೆ ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ, ಕಲ್ಪನೆಯ ಪ್ರಕಾರವೂ ನಡೆದುಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
JER 7:25 ನಿಮ್ಮ ಪಿತೃಗಳು ಈಜಿಪ್ಟ್ ದೇಶವನ್ನು ಬಿಟ್ಟುಹೋದ ದಿನದಿಂದ ಇಂದಿನವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ಪ್ರತಿದಿನವೂ ನಿಮ್ಮ ಬಳಿಗೆ ಕಳುಹಿಸುತ್ತಾ ಬಂದೆನು.
JER 7:26 ಆದರೂ ಅವರು ನನ್ನ ಮಾತಿಗೆ ಕಿವಿಗೊಡದೆ, ತಮ್ಮನ್ನು ಕಠಿಣ ಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.’
JER 7:27 “ಆದ್ದರಿಂದ ನೀನು ಈ ಮಾತುಗಳನ್ನೆಲ್ಲಾ ಅವರಿಗೆ ಹೇಳಬೇಕು. ಆದರೆ ಅವರು ನಿನ್ನ ಮಾತನ್ನು ಕೇಳುವುದಿಲ್ಲ. ಅವರನ್ನು ನೀನು ಕರೆಯುವೆ. ಆದರೆ ಅವರು ನಿನಗೆ ಉತ್ತರ ಕೊಡುವುದಿಲ್ಲ.
JER 7:28 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.
JER 7:29 “ ‘ಓ ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು. ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು. ಏಕೆಂದರೆ ಯೆಹೋವ ದೇವರು ತನ್ನ ಕೋಪಕ್ಕೆ ಪಾತ್ರರಾದ ಈ ಸಂತತಿಯನ್ನು ನಿರಾಕರಿಸಿ ತಳ್ಳಿಬಿಟ್ಟಿದ್ದಾರೆ.
JER 7:30 “ ‘ಯೆಹೂದನ ಮಕ್ಕಳು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದಾರೆಂದು ಯೆಹೋವ ದೇವರು ಹೇಳುತ್ತಾರೆ. ನನ್ನ ಹೆಸರನ್ನು ಹೊಂದಿರುವ ಆಲಯದಲ್ಲಿ ಅದನ್ನು ಅಪವಿತ್ರ ಮಾಡುವುದಕ್ಕೆ ತಮ್ಮ ಅಸಹ್ಯವಾದವುಗಳನ್ನು ಇಟ್ಟಿದ್ದಾರೆ.
JER 7:31 ಬೆನ್ ಹಿನ್ನೋಮ್ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಪುತ್ರಪುತ್ರಿಯರನ್ನು ಬೆಂಕಿಯಲ್ಲಿ ಸುಡುವುದಕ್ಕೆ ಕಟ್ಟಿದ್ದಾರೆ. ಇದನ್ನು ನಾನು ಆಜ್ಞಾಪಿಸಲಿಲ್ಲ. ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
JER 7:32 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ, ಇಗೋ, ದಿನಗಳು ಬರಲಿವೆ, ಆ ಕಣಿವೆಗೆ ತೋಫೆತ್ ಮತ್ತು ಬೆನ್ ಹಿನ್ನೋಮ್ ಎಂಬ ಹೆಸರುಗಳು ಹೋಗಿ, ಸಂಹಾರದ ಕಣಿವೆ ಎಂದು ಕರೆಯಲಾಗುವುದು. ಏಕೆಂದರೆ, ಸ್ಥಳವಿಲ್ಲದವರೆಗೂ ತೋಫೆತಿನಲ್ಲಿ ಅವರು ಹೂಳಿಡುವರು.
JER 7:33 ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು. ಯಾರೂ ಅವುಗಳನ್ನು ಬೆದರಿಸುವುದಿಲ್ಲ.
JER 7:34 ಆಗ ನಾನು ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸದ ಶಬ್ದವನ್ನೂ, ಸಂತೋಷ ಶಬ್ದವನ್ನೂ, ಮದುಮಗನ ಶಬ್ದವನ್ನೂ, ಮದುಮಗಳ ಶಬ್ದವನ್ನೂ ನಿಲ್ಲಿಸುವೆನು. ಏಕೆಂದರೆ, ದೇಶವು ಹಾಳಾಗುವುದು.
JER 8:1 “ ‘ಯೆಹೋವ ದೇವರು ಹೇಳುವುದೇನೆಂದರೆ, ಆ ಕಾಲದಲ್ಲಿ ಅವರು ಯೆಹೂದದ ಅರಸರ ಎಲುಬುಗಳನ್ನೂ, ಅದರ ಪ್ರಧಾನರ ಎಲುಬುಗಳನ್ನೂ, ಯಾಜಕರ ಎಲುಬುಗಳನ್ನೂ, ಪ್ರವಾದಿಗಳ ಎಲುಬುಗಳನ್ನೂ, ಯೆರೂಸಲೇಮಿನ ನಿವಾಸಿಗಳ ಎಲುಬುಗಳನ್ನೂ ಅವರ ಸಮಾಧಿಗಳೊಳಗಿಂದ ಹೊರಗೆ ತರುವರು.
JER 8:2 ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು.
JER 8:3 ಈ ಕೆಟ್ಟ ಮನೆತನದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು ಎಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’
JER 8:4 “ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಅವರು ಬಿದ್ದು ಮತ್ತೆ ಏಳರೋ? ಹಿಂದಿರುಗಿದವನು ಮತ್ತೆ ಬರುವುದಿಲ್ಲವೋ?
JER 8:5 ಹಾಗಾದರೆ ಈ ಯೆರೂಸಲೇಮಿನ ಜನರು ಎಂದಿಗೂ ಹಿಂದಿರುಗದಂತೆ ಏಕೆ ಬಿಟ್ಟು ಹೋಗಿದ್ದಾರೆ? ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ, ಹಿಂದಿರುಗುವುದಕ್ಕೆ ನಿರಾಕರಿಸುತ್ತಾರೆ.
JER 8:6 ನಾನು ಕಿವಿಗೊಟ್ಟು ಕೇಳಿದೆನು. ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ. ಯಾವನಾದರೂ, “ನಾನು ಎಂಥಾ ಕೆಲಸ ಮಾಡಿದ್ದೇನೆ,” ಎಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ. ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ, ಪ್ರತಿಯೊಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.
JER 8:7 ಹೌದು, ಆಕಾಶದಲ್ಲಿಯ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿಯುತ್ತದೆ. ಪಾರಿವಾಳವೂ, ಬಾನಕ್ಕಿಯೂ, ಕೊಕ್ಕರೆಯೂ ತಮ್ಮ ಗಮನಾಗಮನದ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಯೆಹೋವ ದೇವರು ಅಪೇಕ್ಷಿಸುವುದನ್ನು ಅರಿಯರು.
JER 8:8 “ ‘ “ನಾವು ಜ್ಞಾನಿಗಳು, ಯೆಹೋವ ದೇವರ ನಿಯಮವು ನಮ್ಮ ಸಂಗಡ ಇದೆ,” ಎಂದು ನೀವು ಹೇಳುವುದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ನಿಯಮಶಾಸ್ತ್ರಿಗಳ ಲೇಖನಿಯು ಮೋಸಕರವಾಗಿದೆ.
JER 8:9 ಜ್ಞಾನಿಗಳು ನಾಚಿಕೊಂಡಿದ್ದಾರೆ. ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ. ಇಗೋ, ಯೆಹೋವ ದೇವರ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಯಾವ ಜ್ಞಾನವಿದೆ.
JER 8:10 ಆದ್ದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ, ಅವರ ಹೊಲಗಳನ್ನು ಹೊಸ ಮಾಲಿಕನಿಗೆ ನಾನು ಕೊಟ್ಟುಬಿಡುವೆನು. ಏಕೆಂದರೆ, ಚಿಕ್ಕವನು ಮೊದಲುಗೊಂಡು ದೊಡ್ಡವರತನಕ ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರವರೆಗೆ ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.
JER 8:11 ಏಕೆಂದರೆ, ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, “ಸಮಾಧಾನ, ಸಮಾಧಾನ,” ಎಂದು ಹೇಳುತ್ತಾರೆ.
JER 8:12 ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ, ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು, ಎಂದು ಯೆಹೋವ ದೇವರು ಹೇಳುತ್ತಾರೆ.
JER 8:13 “ ‘ನಾನು ಅವರ ಫಸಲನ್ನು ನಿರ್ಮೂಲ ಮಾಡಿಬಿಡುವೆನು, ಎಂದು ಯೆಹೋವ ದೇವರು ಹೇಳುತ್ತಾರೆ. ದ್ರಾಕ್ಷಿ ಗಿಡದಲ್ಲಿ ದ್ರಾಕ್ಷಿ ಹಣ್ಣುಗಳು ಇರುವುದಿಲ್ಲ. ಅಂಜೂರ ಮರದಲ್ಲಿ ಅಂಜೂರ ಹಣ್ಣುಗಳು ಇರುವುದಿಲ್ಲ. ಎಲೆಯು ಬಾಡುವುದು. ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟು ಹೋಗುವುವು.’ ”
JER 8:14 ನಾವು ಏಕೆ ಸುಮ್ಮನೆ ಕೂತುಕೊಳ್ಳುತ್ತೇವೆ? ನೀವು ಕೂಡಿಕೊಳ್ಳಿರಿ, ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ, ಅಲ್ಲಿ ನಾಶವಾಗೋಣ. ಏಕೆಂದರೆ, ನಾವು ನಮ್ಮ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ ಕಾರಣ, ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ನಾಶಮಾಡಿ, ನಮಗೆ ವಿಷದ ನೀರನ್ನು ಕುಡಿಯಲು ಕೊಟ್ಟಿದ್ದಾರೆ.
JER 8:15 ಸಮಾಧಾನಕ್ಕೆ ಕಾದುಕೊಂಡೆವು, ಆದರೆ ಒಳ್ಳೆಯದೇನೂ ಬರಲಿಲ್ಲ. ಆರೋಗ್ಯದ ಸಮಯಕ್ಕೆ ಕಾದಿದ್ದೆವು. ಆದರೆ ಇಗೋ, ಆತಂಕವನ್ನು ನೋಡುತ್ತೇವೆ.
JER 8:16 ಅವನ ಕುದುರೆಗಳ ಶ್ವಾಸವು ದಾನಿನಿಂದ ಕೇಳಿಸಿತು. ಅವನ ಬಲವಾದವುಗಳ ಕೆನೆತದ ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ. ಏಕೆಂದರೆ, ಅವರು ದೇಶವನ್ನೂ, ಅದರಲ್ಲಿರುವುದೆಲ್ಲವನ್ನೂ, ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನುಂಗಲು ಬಂದಿದ್ದಾರೆ.
JER 8:17 “ನಾನು ನಿಮ್ಮಲ್ಲಿ ವಿಷಸರ್ಪಗಳನ್ನು ಮಂತ್ರಕ್ಕೆ ಅಧೀನವಾಗದ ನಾಗಗಳನ್ನೂ ಕಳುಹಿಸುತ್ತೇನೆ. ಅವು ನಿಮ್ಮನ್ನು ಕಚ್ಚುವವು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 8:18 ದುಃಖದ ನಿಮಿತ್ತ ನನ್ನನ್ನು ಆಧರಿಸಿ ಕೊಳ್ಳಲು ನಾನು ಮನಸ್ಸು ಮಾಡಿದಾಗ, ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ.
JER 8:19 ದೂರದೇಶದಿಂದ ನನ್ನ ಜನರು ಕೂಗುವ ಮೊರೆಯಿದು: “ಯೆಹೋವ ದೇವರು ಚೀಯೋನಿನಲ್ಲಿ ಇಲ್ಲವೋ? ಅವಳ ಅರಸನು ಅವಳಲ್ಲಿ ಇಲ್ಲವೋ?” ಎಂಬುದೇ ಆದರೂ ಅವರು ತಮ್ಮ ವಿಗ್ರಹಗಳಿಂದಲೂ, ವಿಚಿತ್ರವಾದ ವ್ಯರ್ಥತ್ವಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಏಕೆ?
JER 8:20 “ಸುಗ್ಗಿ ಮುಗಿಯಿತು. ಬೇಸಿಗೆ ಕಾಲ ತೀರಿತು. ನಾವಾದರೋ ರಕ್ಷಣೆ ಹೊಂದಲಿಲ್ಲ.”
JER 8:21 ನನ್ನ ಜನರು ತುಳಿತಕ್ಕೆ ಒಳಗಾದದ್ದರಿಂದ ನಾನೂ ತುಳಿತಕ್ಕೆ ಒಳಗಾದೆನು. ದುಃಖಿಸಿದೆನು. ಭಯವು ನನ್ನನ್ನು ಹಿಡಿಯಿತು.
JER 8:22 ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ? ಅಲ್ಲಿ ವೈದ್ಯನಿಲ್ಲವೋ? ಹಾಗಾದರೆ ನನ್ನ ಜನರ ಗಾಯಕ್ಕೆ ಏಕೆ ಸ್ವಸ್ಥತೆ ಇಲ್ಲ?
JER 9:1 ಓ, ನನ್ನ ತಲೆ ಚಿಲುಮೆಯೂ, ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೆಯದು, ಆಗ ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲುರಾತ್ರಿ ಅಳುವೆನು.
JER 9:2 ಆಹಾ, ಮರುಭೂಮಿಯಲ್ಲಿ ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೆಯದು, ಆಗ ನನ್ನ ಜನರನ್ನು ಬಿಟ್ಟು ಹೊರಟು ಹೋಗುತ್ತಿದ್ದೆನು. ಏಕೆಂದರೆ ಅವರೆಲ್ಲರು ವ್ಯಭಿಚಾರಿಗಳೇ, ವಂಚಕರ ಕೂಟವೇ.
JER 9:3 “ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವುದಿಲ್ಲ. ಏಕೆಂದರೆ ಅವರು ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಹೋಗುತ್ತಾ, ನನ್ನನ್ನು ಅರಿಯದೆ ಇದ್ದಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 9:4 “ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ. ಯಾವ ಸಹೋದರನಲ್ಲಾದರೂ ನಂಬಿಕೆ ಇಡಬೇಡಿರಿ. ಏಕೆಂದರೆ ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸ ಮಾಡುವರು; ನೆರೆಯವರೆಲ್ಲರೂ ಚಾಡಿ ಹೇಳುತ್ತಾ ತಿರುಗಾಡುವರು.
JER 9:5 ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತನಾಡರು. ಸುಳ್ಳುಗಳನ್ನು ಹೇಳುವುದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಪಾಪದಿಂದ ತಮ್ಮನ್ನು ಸುಸ್ತಾಗಿಸಿಕೊಳ್ಳುತ್ತಾರೆ.
JER 9:6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಇದೆ. ಮೋಸದಿಂದಲೇ ನನ್ನನ್ನು ನಿರಾಕರಿಸುತ್ತಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 9:7 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: “ಇಗೋ, ನಾನು ಅವರನ್ನು ಕರಗಿಸಿ ಪರಿಶೋಧಿಸುತ್ತೇನೆ. ಏಕೆಂದರೆ ನನ್ನ ಜನರ ಪಾಪಗಳಿಗೋಸ್ಕರ ನಾನು ಇನ್ನೇನು ಮಾಡಲಿ?
JER 9:8 ಅವರ ನಾಲಿಗೆ ಎಸೆದ ಬಾಣದಂತಿದೆ. ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ, ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾರೆ.
JER 9:9 ಇವುಗಳ ನಿಮಿತ್ತ ನಾನು ಅವರನ್ನು ದಂಡಿಸಬಾರದೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?”
JER 9:10 ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. ದನಗಳ ಕೂಗು ಕಿವಿಗೆ ಬೀಳುವುದಿಲ್ಲ. ಆಕಾಶದ ಪಕ್ಷಿಗಳೂ, ಮೃಗಗಳೂ ಸಹ ಓಡಿ ಹೋಗಿವೆ.
JER 9:11 ಯೆರೂಸಲೇಮನ್ನು ದಿಬ್ಬಗಳಾಗಿಯೂ, ನರಿಗಳ ಸ್ಥಾನವಾಗಿಯೂ ಮಾಡುತ್ತೇನೆ. ಯೆಹೂದದ ಪಟ್ಟಣಗಳನ್ನು ನಿವಾಸವಿಲ್ಲದೆ ಹಾಳು ಮಾಡುತ್ತೇನೆ.
JER 9:12 ಇದನ್ನು ಗ್ರಹಿಸುವ ಜ್ಞಾನಿಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಯೆಹೋವ ದೇವರ ಬಾಯಿ ಯಾರ ಸಂಗಡ ಮಾತನಾಡಿತು? ದೇಶವು ಯಾವುದಕ್ಕಾಗಿ ನಾಶವಾಗಿ ಹಾದು ಹೋಗುವವನಿಲ್ಲದೆ ಮರುಭೂಮಿಯ ಹಾಗೆ ಹಾಳಾಯಿತು?
JER 9:13 ಯೆಹೋವ ದೇವರು ಹೇಳುವುದೇನೆಂದರೆ, “ನಾನು ಅವರ ಮುಂದೆ ಇಟ್ಟ ನನ್ನ ನಿಯಮವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ,
JER 9:14 ತಮ್ಮ ಹೃದಯದ ಕಾಠಿಣ್ಯದ ಪ್ರಕಾರವಾಗಿಯೂ, ತಮ್ಮ ಪಿತೃಗಳು ಅವರಿಗೆ ಬೋಧಿಸಿದ ಬಾಳ್ ದೇವತೆಗಳನ್ನು ಹಿಂಬಾಲಿಸಿದರು.”
JER 9:15 ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರಿಗೆ ಹೌದು, ಈ ಜನರಿಗೆ ಮಾಚಿಪತ್ರೆಯನ್ನು ತಿನ್ನುವುದಕ್ಕೆ ಕೊಡುತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡುತ್ತೇನೆ.
JER 9:16 ಅವರಿಗೂ, ಅವರ ತಂದೆಗಳಿಗೂ ತಿಳಿಯದ ಇತರ ಜನಾಂಗಗಳಲ್ಲಿ ಅವರನ್ನು ಚದರಿಸುವೆನು. ಅವರನ್ನು ತೀರಿಸುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.”
JER 9:17 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಆಲೋಚನೆ ಮಾಡಿರಿ; ದುಃಖಿಸುವ ಸ್ತ್ರೀಯರನ್ನು ಕರೆಯಿರಿ, ಅವರು ಬರಲಿ; ಜಾಣೆಯರನ್ನು ಕರೆಕಳುಹಿಸಿರಿ, ಅವರು ಬರಲಿ.
JER 9:18 ಅವರು ತ್ವರೆಪಟ್ಟು ನಮಗೋಸ್ಕರ ಗೋಳಾಟವನ್ನು ಎತ್ತಲಿ; ನಮ್ಮ ಕಣ್ಣುಗಳು ಕಣ್ಣೀರು ಸುರಿಸಲಿ; ನಮ್ಮ ರೆಪ್ಪೆಗಳು ನೀರು ಎರೆಯಲಿ.
JER 9:19 ‘ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ, ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆ ಪಡುತ್ತೇವೆ, ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿಬಂತು.’ ”
JER 9:20 ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.
JER 9:21 ಏಕೆಂದರೆ, ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು. ನಮ್ಮ ಕೋಟೆಗಳಲ್ಲಿ ಸೇರಿತು. ಹೊರಗಡೆ ಮಕ್ಕಳನ್ನೂ, ಬೀದಿಗಳಲ್ಲಿ ಯೌವನಸ್ಥರನ್ನೂ ಕಡಿದು ಹಾಕುತ್ತದೆ.
JER 9:22 ಯೆಹೋವ ದೇವರು ನನಗೆ ಹೀಗೆಂದರು: “ ‘ಮನುಷ್ಯರ ಹೆಣಗಳು ಗೊಬ್ಬರದಂತೆ ಬಯಲಿನಲ್ಲಿ ಬೀಳುವುವು. ಧಾನ್ಯ ಕೊಯ್ಯುವವನು ಉಳಿಸಿದ ಕೈಹಿಡಿಯಂತೆ ಕೂಡಿಸುವವನಿಲ್ಲದೆ ಬೀಳುವುವು.’ ”
JER 9:23 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳ ಪಡದಿರಲಿ. ಬಲಿಷ್ಠನು ತನ್ನ ಬಲದಲ್ಲಿ ಹೆಚ್ಚಳ ಪಡದಿರಲಿ. ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳ ಪಡದಿರಲಿ.
JER 9:24 ಆದರೆ ಹೆಚ್ಚಳ ಪಡುವವನು, ಯೆಹೋವ ದೇವರಾದ ನಾನು ಭೂಮಿಯಲ್ಲಿ ದಯೆಯನ್ನೂ, ನ್ಯಾಯವನ್ನೂ, ನೀತಿಯನ್ನೂ ನಡೆಸುವವನಾಗಿದ್ದೇನೆಂದು ಗ್ರಹಿಸಿ ತಿಳಿದುಕೊಳ್ಳುವುದರಲ್ಲಿಯೇ ಹೆಚ್ಚಳ ಪಡಲಿ. ಇವುಗಳಲ್ಲಿ ನಾನು ಸಂತೋಷಪಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 9:25 “ಇಗೋ, ನಾನು ಸುನ್ನತಿ ಇಲ್ಲದವರ ಸಂಗಡ ಸುನ್ನತಿ ಉಳ್ಳವರೆಲ್ಲರನ್ನೂ, ಈಜಿಪ್ಟನ್ನೂ, ಯೆಹೂದವನ್ನೂ, ಎದೋಮನ್ನೂ, ಅಮ್ಮೋನನ ಮಕ್ಕಳನ್ನೂ, ಮೋವಾಬನ್ನೂ, ಮರುಭೂಮಿಯ ನಿವಾಸಿಗಳಾಗಿರುವ ಕಟ್ಟಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿವಸಗಳು ಬರುತ್ತವೆ. ಏಕೆಂದರೆ ಈ ಜನಾಂಗಗಳವರು ಸುನ್ನತಿಯಿಲ್ಲದವರು. ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿ ಇಲ್ಲದವರಾಗಿದ್ದಾರೆ,” ಎಂದು ಯೆಹೋವ ದೇವರು ಅನ್ನುತ್ತಾರೆ.
JER 10:1 ಇಸ್ರಾಯೇಲಿನ ವಂಶದವರೇ, ಯೆಹೋವ ದೇವರು ನಿಮಗೆ ಹೇಳುವ ವಾಕ್ಯವನ್ನು ಕೇಳಿರಿ.
JER 10:2 ಯೆಹೋವ ದೇವರು ಹೀಗೆ ಹೇಳುತ್ತಾರೆ: ಬೇರೆ ಜನಾಂಗಗಳ ಆಚರಣೆಗಳನ್ನು ಅನುಸರಿಸಬೇಡಿರಿ. ಅವರು ಆಕಾಶದ ಗುರುತುಗಳಿಗೆ ಹೆದರುತ್ತಾರೆ. ನೀವು ಅವುಗಳಿಗೆ ಹೆದರಬೇಡಿರಿ.
JER 10:3 ಜನಾಂಗಗಳ ಪದ್ಧತಿಗಳು ವ್ಯರ್ಥವಾಗಿವೆ. ಹೇಗೆಂದರೆ, ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ. ಅದು ಕೊಡಲಿಯಿಂದ ಕಡಿದ ಬಡಿಗೆಯವನ ಕೈಕೆಲಸವೇ.
JER 10:4 ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ. ಮೊಳೆಗಳಿಂದಲೂ ಸುತ್ತಿಗೆಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ.
JER 10:5 ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಅವರ ವಿಗ್ರಹಗಳು ಮಾತನಾಡುವುದಿಲ್ಲ. ಅವುಗಳನ್ನು ಹೊತ್ತುಕೊಳ್ಳತಕ್ಕದ್ದು, ಏಕೆಂದರೆ ಅವು ನಡೆಯಲಾರವು. ಅವುಗಳಿಗೆ ಭಯಪಡಬೇಡಿರಿ. ಏಕೆಂದರೆ, ಅವು ಕೆಟ್ಟದ್ದನ್ನು ಮಾಡಲಾರವು. ಒಳ್ಳೆಯದನ್ನು ಮಾಡುವುದೂ ಸಹ ಅವುಗಳಲ್ಲಿ ಇಲ್ಲ.
JER 10:6 ಓ ಯೆಹೋವ ದೇವರೇ, ನಿಮ್ಮ ಹಾಗೆ ಯಾರೂ ಇಲ್ಲ. ನೀವು ಮಹೋತ್ತಮರು, ನಿಮ್ಮ ಹೆಸರು ಪರಾಕ್ರಮದಲ್ಲಿ ಮಹತ್ತರವಾದದ್ದು.
JER 10:7 ಓ ಜನಾಂಗಗಳ ಅರಸರಾದವರೇ, ನಿಮಗೆ ಭಯಪಡದವನ್ಯಾರು? ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು. ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ, ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ ನಿಮ್ಮ ಹಾಗೆ ಯಾರೂ ಇಲ್ಲ.
JER 10:8 ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ.
JER 10:9 ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ, ಬಂಗಾರವನ್ನು ಊಫಜಿನಿಂದ ತರುತ್ತಾರೆ. ಅದು ಕೆತ್ತನೆಯವನ ಕೆಲಸವು ಮತ್ತು ಎರಕ ಹೊಯ್ಯುವವನ ಕೈಯಿಂದ ಉಂಟಾದವುಗಳೂ ಆಗಿವೆ. ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ. ಅವುಗಳೆಲ್ಲಾ ಕೌಶಲ್ಯಗಾರರ ಕೈಕೆಲಸವೇ.
JER 10:10 ಆದರೆ ಯೆಹೋವ ದೇವರು ನಿಜವಾದ ದೇವರಾಗಿದ್ದಾರೆ. ಅವರು ಜೀವಸ್ವರೂಪರಾದ ದೇವರೂ, ನಿತ್ಯನಾದ ಅರಸರೂ ಆಗಿದ್ದಾರೆ. ಅವರ ರೌದ್ರದಿಂದ ಭೂಮಿ ಕಂಪಿಸುವುದು. ಅವರ ಉಗ್ರತೆಯನ್ನು ಜನಾಂಗಗಳು ತಾಳಲಾರವು.
JER 10:11 “ನೀವು ಅವರಿಗೆ ಹೀಗೆ ಹೇಳಬೇಕು: ‘ಆಕಾಶಗಳನ್ನೂ ಭೂಮಿಯನ್ನೂ ಉಂಟು ಮಾಡದ ದೇವರುಗಳು, ಭೂಮಿಯ ಮೇಲಿನಿಂದಲೂ ಈ ಆಕಾಶದ ಕೆಳಗಿನಿಂದಲೂ ನಾಶವಾಗುವುವು.’ ”
JER 10:12 ಆದರೆ ದೇವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ, ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ.
JER 10:13 ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ. ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.
JER 10:14 ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ. ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ. ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ, ಅವುಗಳಲ್ಲಿ ಉಸಿರೇ ಇಲ್ಲ.
JER 10:15 ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ. ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು.
JER 10:16 ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ. ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.
JER 10:17 ಮುತ್ತಿಗೆಗೆ ಒಳಗಾದವರೇ, ನಿಮ್ಮ ದೇಶ ಬಿಡಲು ನಿಮ್ಮ ಸೊತ್ತುಗಳನ್ನು ಕೂಡಿಸಿರಿ.
JER 10:18 ಏಕೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಈ ಒಂದೇ ಸಾರಿ ದೇಶದ ನಿವಾಸಿಗಳನ್ನು ಕವಣೆಯಿಂದ ಎಸೆದುಬಿಡುತ್ತೇನೆ. ಅವರಿಗೆ ತಗಲುವ ಹಾಗೆ ಅವರನ್ನು ಸಂಕಟಪಡಿಸುತ್ತೇನೆ.”
JER 10:19 ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ವಾಸಿಪಡಿಸಲಾಗದು. ಆದರೆ ನಾನು ನಿಶ್ಚಯವಾಗಿ, “ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು.
JER 10:20 ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ. ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ; ಅವರು ಇಲ್ಲ. ಇನ್ನು ಮೇಲೆ ನನ್ನ ಡೇರೆಯನ್ನು ಹರಡುವುದಕ್ಕೂ, ನನ್ನ ಪರದೆಗಳನ್ನು ನಿಲ್ಲಿಸುವುದಕ್ಕೂ ಒಬ್ಬನೂ ಇಲ್ಲ.
JER 10:21 ಏಕೆಂದರೆ, ಕುರುಬರು ಪಶುಗಳಂತಾದರು. ಅವರು ಯೆಹೋವ ದೇವರನ್ನು ಹುಡುಕಲಿಲ್ಲ. ಆದ್ದರಿಂದ ಅವರು ಸಫಲವಾಗುವುದಿಲ್ಲ. ಅವರ ಮಂದೆಗಳೆಲ್ಲಾ ಚದರಿಸಲಾಗುವುವು.
JER 10:22 ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವುದಕ್ಕೂ, ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೂ, ಸುದ್ದಿಯ ಶಬ್ದವೂ, ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ.
JER 10:23 ಓ ಯೆಹೋವ ದೇವರೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ, ತನ್ನ ಹೆಜ್ಜೆ ನೆಟ್ಟಗೆ ಮಾಡುವುದು ನಡೆಯುವ ಮನುಷ್ಯನದ್ದಲ್ಲವೆಂದೂ ಬಲ್ಲೆನು.
JER 10:24 ಓ ಯೆಹೋವ ದೇವರೇ, ನನ್ನನ್ನು ಶಿಸ್ತುಪಡಿಸಿರಿ. ಆದರೆ ಮಿತಿಮೀರಿ ದಂಡಿಸಬೇಡಿರಿ, ನಿಮ್ಮ ಕೋಪದಲ್ಲಿ ಅಲ್ಲ. ಇಲ್ಲವಾದರೆ ನಾನು ಇಲ್ಲದೆಹೋಗುವೆನು.
JER 10:25 ನಿಮ್ಮನ್ನು ತಿಳಿಯದವರ ಮೇಲೆಯೂ, ನಿಮ್ಮ ಹೆಸರನ್ನು ಅರಿಯದ ದೇಶಗಳ ಮೇಲೆಯೂ, ನಿಮ್ಮ ಕೋಪವನ್ನು ಸುರಿದುಬಿಡಿರಿ. ಏಕೆಂದರೆ, ಅವರು ಯಾಕೋಬ್ಯರನ್ನು ನುಂಗಿಬಿಟ್ಟಿದ್ದಾರೆ. ಹೌದು, ಅವರನ್ನು ನುಂಗಿದ್ದಲ್ಲದೆ, ಅವರ ಸ್ವದೇಶವನ್ನು ಸಹ ನಾಶಮಾಡಿದ್ದಾರೆ.
JER 11:1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
JER 11:2 “ಒಡಂಬಡಿಕೆಯ ಈ ವಚನಗಳನ್ನು ಕೇಳಿ, ಯೆಹೂದ್ಯರಿಗೂ ಯೆರೂಸಲೇಮಿನ ನಿವಾಸಿಗಳಿಗೂ ಸಾರು.
JER 11:3 ನೀನು ಅವರಿಗೆ ಹೇಳಬೇಕಾದುದು: ಇಸ್ರಾಯೇಲ್ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.
JER 11:4 ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ, ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ, ನನ್ನ ಪ್ರಜೆಯಾಗುವಿರಿ; ನಾನು ನಿಮ್ಮ ದೇವರಾಗಿರುವೆನು.
JER 11:5 ಹಾಲು ಜೇನು ಹರಿಯುವ ನಾಡನ್ನು, ಎಂದರೆ ಇಂದು ನೀವಿರುವ ನಾಡನ್ನು ಕೊಡುವುದಾಗಿ ನಿಮ್ಮ ಮೂಲ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವ ಮಾತು.” “ಓ ಯೆಹೋವ ದೇವರೇ, ಹಾಗೆಯೇ ಆಗಲಿ,” ಎಂದೆನು.
JER 11:6 ತರುವಾಯ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಮಾತುಗಳನ್ನೆಲ್ಲಾ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿಯ ಬೀದಿಗಳಲ್ಲಿಯೂ ಸಾರಿ ಹೇಳು. ‘ಹೇಗೆಂದರೆ, ಈ ಒಡಂಬಡಿಕೆಯ ಮಾತುಗಳನ್ನು ಕೇಳಿ, ಅವುಗಳನ್ನು ಮಾಡಿರಿ.
JER 11:7 ಏಕೆಂದರೆ ನಾನು ನಿಮ್ಮ ತಂದೆಗಳಿಗೆ, “ನನ್ನ ಮಾತನ್ನು ಕೇಳಿ,” ಎಂದು ಖಂಡಿತವಾಗಿ ಹೇಳಿದೆನು. ಅವರನ್ನು ಈಜಿಪ್ಟ್ ದೇಶದೊಳಗಿಂದ ಮೇಲೆ ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಜ್ಞಾಪಿಸುತ್ತಾ ಬಂದಿದ್ದೇನೆ.
JER 11:8 ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡೆದುಕೊಂಡರು. ಆದ್ದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.’ ”
JER 11:9 ತರುವಾಯ, ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಯೆಹೂದದ ಮನುಷ್ಯರಲ್ಲಿಯೂ ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡುಬಂದಿದೆ.
JER 11:10 ನನ್ನ ಮಾತುಗಳನ್ನು ಕೇಳಲೊಲ್ಲದ ತಮ್ಮ ಪಿತೃಗಳ ಅಕ್ರಮಗಳಿಗೆ ತಿರುಗಿಕೊಂಡಿದ್ದಾರೆ. ಬೇರೆ ದೇವರುಗಳನ್ನು ಸೇವಿಸುವುದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ. ಇಸ್ರಾಯೇಲಿನ ವಂಶದವರೂ ಯೆಹೂದದ ವಂಶದವರೂ ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಗಳನ್ನು ಮೀರಿದ್ದಾರೆ.
JER 11:11 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ಅವರು ತಪ್ಪಿಸಿಕೊಳ್ಳಲಾಗದ ಕೇಡನ್ನು ಅವರ ಮೇಲೆ ತರುವೆನು. ಅವರು ನನಗೆ ಕೂಗಿದರೂ ನಾನು ಅವರನ್ನು ಕೇಳುವುದಿಲ್ಲ.
JER 11:12 ಆಗ ಯೆಹೂದದ ಪಟ್ಟಣಗಳೂ ಯೆರೂಸಲೇಮಿನ ನಿವಾಸಿಗಳೂ ಹೋಗಿ ತಾವು ಧೂಪವನ್ನರ್ಪಿಸುವ ದೇವರುಗಳಿಗೆ ಕೂಗುವರು. ಆದರೆ ಇವು ಅವರ ಕೇಡಿನ ಕಾಲದಲ್ಲಿ ಅವರನ್ನು ರಕ್ಷಿಸುವುದೇ ಇಲ್ಲ.
JER 11:13 ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು. ಯೆರೂಸಲೇಮಿಗೆ ಎಷ್ಟು ಬೀದಿಗಳೋ, ಅಷ್ಟು ಬಲಿಪೀಠಗಳನ್ನು ನಾಚಿಗೆಗೆ ಎಂದರೆ, ಅಷ್ಟು ಬಲಿಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವುದಕ್ಕೆ ಇಟ್ಟಿದ್ದೀ.’
JER 11:14 “ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಏಕೆಂದರೆ, ತಮ್ಮ ಕೇಡಿನ ನಿಮಿತ್ತ ನನ್ನ ಕೂಗುವ ಸಮಯದಲ್ಲಿ ನಾನು ಕೇಳೆನು.
JER 11:15 “ನನ್ನ ಪ್ರಿಯಳಿಗೆ ನನ್ನ ಆಲಯದಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡೆಸಿದ್ದಾಳೆ. ನೀನು ಸಮರ್ಪಿಸಿದ ಮಾಂಸದ ಬಲಿಯು ನಿನ್ನ ಶಿಕ್ಷೆಯನ್ನು ರದ್ದುಗೊಳಿಸುವುದೋ? ನೀನು ಕೆಟ್ಟತನ ಮಾಡುವಾಗ ಉಲ್ಲಾಸಪಡುತ್ತೀ.”
JER 11:16 ಸೌಂದರ್ಯವಾದ ಒಳ್ಳೆಯ ಹಣ್ಣುಳ್ಳ ಹಸುರಾದ ಓಲಿವ್ ಗಿಡವೆಂದು ಯೆಹೋವ ದೇವರು ನಿನಗೆ ಹೆಸರಿಟ್ಟರು. ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸುವನು. ಅದರ ಕೊಂಬೆಗಳು ಮುರಿದು ಹೋಗುವುವು.
JER 11:17 ಇಸ್ರಾಯೇಲಿನ ವಂಶವೂ ಯೆಹೂದದ ವಂಶವೂ ನನಗೆ ಕೋಪವನ್ನೆಬ್ಬಿಸುವ ಹಾಗೆ ಬಾಳನಿಗೆ ಧೂಪವನ್ನರ್ಪಿಸಿ, ತಮಗೆ ವಿರೋಧವಾಗಿ ಮಾಡಿಕೊಂಡ ಕೇಡಿನ ನಿಮಿತ್ತ, ನಿನ್ನನ್ನು ನೆಟ್ಟ ಸೇನಾಧೀಶ್ವರ ಯೆಹೋವ ದೇವರು ನಿನ್ನ ಮೇಲೆ ಕೆಡುಕಾಗಲಿ ಎಂದು ಪ್ರಕಟಿಸಿದ್ದಾರೆ.
JER 11:18 ಯೆಹೋವ ದೇವರು ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.
JER 11:19 ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. ಆದರೆ ನನ್ನ ವಿರುದ್ಧ ಸಂಚು ಹೂಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. “ಮರವನ್ನು ಫಲ ಸಹಿತ ನಾಶ ಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ, ಅವನ ಹೆಸರೇ ಇಲ್ಲದಂತಾಗಲಿ.”
JER 11:20 ಆದರೆ ನೀತಿಯಾಗಿ ನ್ಯಾಯತೀರಿಸುವಂಥ ಅಂತರಿಂದ್ರಿಯಗಳನ್ನೂ, ಹೃದಯವನ್ನೂ ಶೋಧಿಸುವಂಥ ಸೇನಾಧೀಶ್ವರ ಯೆಹೋವ ದೇವರೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ಏಕೆಂದರೆ ನಿನಗೆ ನನ್ನ ವ್ಯಾಜ್ಯವನ್ನು ಒಪ್ಪಿಸಿದ್ದೇನೆ.
JER 11:21 ಆದ್ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ ನೀನು, “ನಮ್ಮ ಕೈಯಿಂದ ಸಾಯದ ಹಾಗೆ ಯೆಹೋವ ದೇವರ ಹೆಸರಿನಲ್ಲಿ ಪ್ರವಾದನೆ ಹೇಳಬೇಡ,” ಅನ್ನುವವರಿಗೆ ಯೆಹೋವ ದೇವರು ಹೇಳುವುದೇನೆಂದರೆ,
JER 11:22 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಶಿಕ್ಷಿಸುತ್ತೇನೆ, ಯೌವನಸ್ಥರು ಖಡ್ಗದಿಂದ ಸಾಯುವರು. ಅವರ ಪುತ್ರಪುತ್ರಿಯರು ಹಸಿವೆಯಿಂದ ಸಾಯುವರು.
JER 11:23 ಅವರಲ್ಲಿ ಶೇಷವು ಇರುವುದಿಲ್ಲ. ಏಕೆಂದರೆ ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಎಂದರೆ ಅವರ ಶಿಕ್ಷೆಯ ವರ್ಷವನ್ನೇ ತರುತ್ತೇನೆ.”
JER 12:1 ಓ ಯೆಹೋವ ದೇವರೇ, ನಾನು ನಿಮ್ಮ ಸಂಗಡ ವಾದಿಸುವಾಗ, ನೀವು ನೀತಿವಂತರೇ ಆಗಿದ್ದೀರಿ. ಆದರೂ ನಾನು ನಿಮ್ಮ ಸಂಗಡ ನ್ಯಾಯವಾದವುಗಳನ್ನು ಕುರಿತು ಮಾತನಾಡುವೆನು. ದುಷ್ಟರ ಮಾರ್ಗವು ಸಮೃದ್ಧಿಯಾಗುವುದು ಏಕೆ? ಮಹಾ ವಂಚನೆ ಮಾಡುವವರೆಲ್ಲರು ಸುಖವಾಗಿರುವುದು ಏಕೆ?
JER 12:2 ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದು ಏಕೆ? ನೀವು ಅವರನ್ನು ನಾಟಿದ್ದೀರಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ, ನೀವು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.
JER 12:3 ಯೆಹೋವ ದೇವರೇ, ನೀವು ನನ್ನನ್ನು ತಿಳಿದಿದ್ದೀರಿ, ನನ್ನನ್ನು ನೋಡುತ್ತಾ ನಿಮ್ಮೊಂದಿಗೆ ಅನ್ಯೋನ್ಯವಾಗಿರುವ ನನ್ನ ಹೃದಯವನ್ನು ಪರೀಕ್ಷಿಸುತ್ತೀರಿ, ಅವರನ್ನು ಕುರಿಗಳನ್ನೋ ಎಂಬಂತೆ ಕೊಲೆಗೆ ಎಳೆದು ವಧೆಯ ದಿನಕ್ಕೆ ಗೊತ್ತುಮಾಡಿರಿ.
JER 12:4 ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲು, ಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಪಕ್ಷಿಗಳು ಬಡಿದುಕೊಂಡು ಹೋಗಿವೆ; ಆಹಾ, ಅವನು ನಮ್ಮ ಅಂತ್ಯ ಗತಿಯನ್ನು ನೋಡುವುದೇ ಇಲ್ಲ, ಎಂದು ಹೇಳಿದ್ದಾರಷ್ಟೆ.
JER 12:5 “ಕಾಲಾಳುಗಳ ಸಂಗಡ ಓಡುವಾಗ ನಿನಗೆ ಆಯಾಸವಾದರೆ, ಕುದುರೆಗಳ ಸಂಗಡ ಹೇಗೆ ಹೋರಾಡುವೆ? ನೀನು ಸುರಕ್ಷಿತವಾದ ದೇಶದಲ್ಲಿ ಎಡವಿದರೆ, ಯೊರ್ದನಿನ ದಟ್ಟ ಅಡವಿಯಲ್ಲಿ ಹೇಗೆ ಸುಧಾರಿಸುವೆ?
JER 12:6 ಏಕೆಂದರೆ, ನಿನ್ನ ಸಹೋದರರೂ, ನಿನ್ನ ತಂದೆಯ ಮನೆತನದವರೂ ನಿನಗೆ ವಂಚನೆ ಮಾಡಿದ್ದಾರೆ. ಹೌದು, ಇವರೇ ನಿನಗೆ ವಿರೋಧವಾಗಿ ಬಂದು ಜೋರಾಗಿ ಕೂಗಿದ್ದಾರೆ. ಅವರು ನಿನಗೆ ಒಳ್ಳೆಯ ಮಾತುಗಳನ್ನು ಹೇಳಿದರೂ, ಅವರನ್ನು ನಂಬಬೇಡ.
JER 12:7 “ನನ್ನ ಮನೆಯನ್ನು ಬಿಟ್ಟಿದ್ದೇನೆ, ನನ್ನ ಸೊತ್ತನ್ನು ತ್ಯಜಿಸಿದ್ದೇನೆ. ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.
JER 12:8 ನನ್ನ ಸೊತ್ತು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು. ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದ್ದರಿಂದ ಅದನ್ನು ಹಗೆ ಮಾಡಿದ್ದೇನೆ.
JER 12:9 ನನ್ನ ಸೊತ್ತು ನನಗೆ ಚಿತ್ರವರ್ಣದ ಪಕ್ಷಿಯಾಯಿತು. ಸುತ್ತಲಾಗಿ ಹದ್ದುಗಳು ಅದಕ್ಕೆ ವಿರೋಧವಾಗಿವೆ. ಬನ್ನಿ, ಕಾಡುಮೃಗಗಳನ್ನೆಲ್ಲಾ ಕೂಡಿಸಿರಿ, ನುಂಗುವುದಕ್ಕೆ ಅವುಗಳನ್ನು ತನ್ನಿರಿ.
JER 12:10 ಅನೇಕ ಕುರುಬರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಹೊಲವನ್ನು ತುಳಿದುಬಿಟ್ಟಿದ್ದಾರೆ; ನಾನು ಮೆಚ್ಚಿದ ಭಾಗವನ್ನು ಹಾಳಾದ ಮರುಭೂಮಿಯಾಗಿ ಮಾಡಿದ್ದಾರೆ.
JER 12:11 ಅದನ್ನು ಹಾಳು ಮಾಡಿದ್ದಾರೆ. ಅದು ಒಣಗಿ ಬರಿದಾಗಿ ಹೋಗಿದೆ. ದೇಶವೆಲ್ಲಾ ಹಾಳಾಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವುದಿಲ್ಲ.
JER 12:12 ಮರುಭೂಮಿಯಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ನಾಶಮಾಡುವವರು ಬಂದಿದ್ದಾರೆ. ಏಕೆಂದರೆ, ಯೆಹೋವ ದೇವರ ಖಡ್ಗವು ದೇಶದ ಒಂದು ಕಡೆಯಿಂದ ದೇಶದ ಇನ್ನೊಂದು ಕಡೆಯವರೆಗೂ ನುಂಗಿಬಿಡುತ್ತದೆ. ಯಾವ ಮನುಷ್ಯನೂ ಸುರಕ್ಷಿತವಾಗಿ ಉಳಿಯುವುದಿಲ್ಲ.
JER 12:13 ಗೋಧಿಯನ್ನು ಬಿತ್ತಿದ್ದಾರೆ, ಆದರೆ ಮುಳ್ಳುಗಳನ್ನು ಕೊಯ್ಯುವವರು ಕಷ್ಟಪಟ್ಟಿದ್ದಾರೆ, ಆದರೆ ಪ್ರಯೋಜನವಾಗುವುದಿಲ್ಲ. ಯೆಹೋವ ದೇವರ ಉಗ್ರಕೋಪದ ಉರಿಯಿಂದ ನಿಮ್ಮ ಸುಗ್ಗಿಯ ನಿಮಿತ್ತ ನಾಚಿಕೆ ಪಡುವಿರಿ.”
JER 12:14 ಯೆಹೋವ ದೇವರ ಸ್ವಜನರಾದ ಇಸ್ರಾಯೇಲರಿಗೆ ದಯಪಾಲಿಸಿದ ಸೊತ್ತಿಗೆ ಕೈಹಾಕುವ ಕೆಟ್ಟ ನೆರೆಯವರಿಗೆ ಕೊಟ್ಟ ಎಚ್ಚರಿಕೆ: “ಈ ನಾಡಿನವರನ್ನು ಅವರವರ ನಾಡಿನಿಂದಲೇ ಸಸಿಯಂತೆ ಕಿತ್ತುಬಿಡುವೆನು. ಯೆಹೂದ ವಂಶವನ್ನು ಅವರ ಮಧ್ಯೆಯಿಂದ ಕಿತ್ತುಬಿಡುವೆನು.
JER 12:15 ನಾನು ಅವರನ್ನು ಕಿತ್ತು ಹಾಕಿದ ಮೇಲೆ, ನಾನು ಹಿಂದಿರುಗಿ ಅವರನ್ನು ಕರುಣಿಸುವೆನು. ತಮ್ಮ ತಮ್ಮ ಸೊತ್ತಿಗೂ, ತಮ್ಮ ತಮ್ಮ ದೇಶಕ್ಕೂ ಅವರನ್ನು ತಿರುಗಿ ಬರಮಾಡುವೆನು.
JER 12:16 ಇವರು ಮೊದಲು ಬಾಳನ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ನನ್ನ ಜನರಿಗೆ ಕಲಿಸಿಕೊಟ್ಟ ಪ್ರಕಾರ, ‘ಈಗ ಯೆಹೋವ ದೇವರ ಜೀವದಾಣೆ,’ ಎಂದು ಹೇಳಿ ನನ್ನ ಹೆಸರಿನ ಆಣೆ ಇಟ್ಟುಕೊಳ್ಳುವುದಕ್ಕೆ ನನ್ನ ಜನರ ಮಾರ್ಗಗಳನ್ನು ಜಾಗ್ರತೆಯಾಗಿ ಕಲಿತುಕೊಂಡರೆ, ಆಗ ಅವರು ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು.
JER 12:17 ಆದರೆ ಅವರು ಕೇಳದೆ ಹೋದರೆ, ಆ ಜನಾಂಗವನ್ನು ಸಂಪೂರ್ಣವಾಗಿ ಕಿತ್ತು ನಾಶಮಾಡುವೆನು,” ಎಂದು ಯೆಹೋವ ದೇವರು ನುಡಿಯುತ್ತಾರೆ.
JER 13:1 ಯೆಹೋವ ದೇವರು ನನಗೆ, “ನೀನು ಹೋಗಿ, ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.
JER 13:2 ನಾನು ಯೆಹೋವ ದೇವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
JER 13:3 ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು,
JER 13:4 ಯೂಫ್ರೇಟೀಸ್ ನದಿಗೆ ಹೋಗಿ ಅದನ್ನು ಅಲ್ಲಿಯ ಬಂಡೆಯ ಸಂದಿಯೊಳಗೆ ಬಚ್ಚಿಡು,” ಎಂಬುದಾಗಿ ಯೆಹೋವ ದೇವರ ಎರಡನೆಯ ಆದೇಶ ನನಗೆ ಬಂದಿತು.
JER 13:5 ಆಗ ಯೆಹೋವ ದೇವರ ಅಪ್ಪಣೆಯ ಮೇರೆಗೆ ನಾನು ಹೋಗಿ, ಯೂಫ್ರೇಟೀಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
JER 13:6 ಬಹು ದಿನಗಳ ಮೇಲೆ ಯೆಹೋವ ದೇವರು ನನಗೆ, “ಹೊರಡು, ಯೂಫ್ರೇಟೀಸ್ ನದಿಗೆ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
JER 13:7 ಆಗ ನಾನು ಯೂಫ್ರೇಟೀಸ್ ನದಿಗೆ ಹೋಗಿ ಹುಡುಕಿ, ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
JER 13:8 ಆಗ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನೆಂದರೆ,
JER 13:9 “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ, ಯೆರೂಸಲೇಮಿನ ಮಹಾ ಗರ್ವವನ್ನು ಕೆಡಿಸುವೆನು.
JER 13:10 ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡೆದುಕೊಂಡು, ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಅವುಗಳನ್ನು ಆರಾಧಿಸುವುದಕ್ಕೂ ಹಿಂಬಾಲಿಸುವ ಈ ದುಷ್ಟಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
JER 13:11 ಯಾವ ಪ್ರಕಾರ ಇದು ಮನುಷ್ಯನ ನಡುವಿಗೆ ಹತ್ತಿಕೊಳ್ಳುವುದೋ, ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ, ಯೆಹೂದದ ಮನೆತನವನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು, ಆದರೆ ಅವರು ಕೇಳದೇ ಹೋದರು ಎಂದು ಯೆಹೋವ ದೇವರ ಅನ್ನುತ್ತಾರೆ.’
JER 13:12 “ಆದ್ದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು: ‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವು. ಆಗ ಅವರು ನಿನಗೆ ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ,’ ಎಂದು ನಿನಗೆ ಹೇಳುವರು.
JER 13:13 ಆಗ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
JER 13:14 ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು ಹಾಗೂ ನಾಶಮಾಡದೆ ಬಿಡೆನು,’ ಇದು ಯೆಹೋವ ದೇವರಾದ ನನ್ನ ನುಡಿ.”
JER 13:15 ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಏಕೆಂದರೆ ಯೆಹೋವ ದೇವರು ಮಾತನಾಡಿದ್ದಾರೆ.
JER 13:16 ಅವರು ಕತ್ತಲೆಯನ್ನು ತರುವುದಕ್ಕಿಂತ ಮೊದಲು ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವುದಕ್ಕಿಂತ ಮುಂಚೆ ನಿಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ನೀವು ಬೆಳಕನ್ನು ನಿರೀಕ್ಷಿಸಿದ್ದೀರಿ. ಆದರೆ ಅವರು ಗಾಡಾಂಧಕಾರದ ಗುಡ್ಡಗಳನ್ನು ತಂದಾರು.
JER 13:17 ನೀವು ಕೇಳದಿದ್ದರೆ, ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು, ಯೆಹೋವ ದೇವರ ಮಂದೆಯು ಸೆರೆಯಾಗಿ ಹೋದದ್ದರಿಂದ ಬಹಳವಾಗಿ ಅಳುವೆನು. ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.
JER 13:18 ರಾಜನಿಗೂ ರಾಜಮಾತೆಗೂ ಹೀಗೆ ಹೇಳಿರಿ, “ನೆಲದಲ್ಲಿ ಕೂತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ.”
JER 13:19 ದಕ್ಷಿಣ ದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ.
JER 13:20 ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು, ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?
JER 13:21 ನಿಮ್ಮ ವಿಶೇಷ ಮಿತ್ರರಾಗಿ ನೀವು ಬೆಳೆಸಿದವರನ್ನು ಯೆಹೋವ ದೇವರು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳೋ ಎಂಬಂತೆ ಹಿಡಿಯುವುದಲ್ಲವೆ?
JER 13:22 ಒಂದು ವೇಳೆ, “ಇವು ನನಗೆ ಏಕೆ ಸಂಭವಿಸಿದವು?” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ನೆರಿಗೆಯು ಕೀಳಲಾಗುವುದು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.
JER 13:23 ಕೂಷ್ಯನು ತನ್ನ ಚರ್ಮವನ್ನೂ, ಚಿರತೆಯು ತನ್ನ ಮಚ್ಚೆಯನ್ನೂ ಮಾರ್ಪಡಿಸುವುದಕ್ಕಾಗುವುದೋ? ಹಾಗಾದರೆ ಕೆಟ್ಟತನದ ಅಭ್ಯಾಸವುಳ್ಳವರಾದ ನೀವೂ ಸಹ ಒಳ್ಳೆಯದನ್ನು ಮಾಡುವುದಕ್ಕಾದೀತೇ?
JER 13:24 “ಅಡವಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತೆ ಅವರನ್ನು ಚದರಿಸುವೆನು.
JER 13:25 ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನನ್ನನ್ನು ಮರೆತುಬಿಟ್ಟು, ಸುಳ್ಳು ದೇವರುಗಳಲ್ಲಿ ಭರವಸೆಯಿಟ್ಟಿದ್ದೀಯೇ.
JER 13:26 ಆದ್ದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ, ನಿನ್ನ ಮುಖದ ಮೇಲೆ ಎತ್ತುವೆನು.
JER 13:27 ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ನಿನ್ನ ಕೀಳಾದ ವೇಶ್ಯತನವನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯ ಕಾರ್ಯಗಳನ್ನು ಕಂಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ಇನ್ನೆಷ್ಟು ಕಾಲ ನೀನು ಅಶುದ್ಧಳಾಗಿರುವೆ?”
JER 14:1 ಕ್ಷಾಮವನ್ನು ಕುರಿತು ಯೆರೆಮೀಯನಿಗೆ ಉಂಟಾದ ಯೆಹೋವ ದೇವರ ವಾಕ್ಯವು:
JER 14:2 “ಯೆಹೂದವು ದುಃಖಪಡುತ್ತದೆ. ಅವಳ ನಗರಗಳು ಸೊರಗುತ್ತವೆ; ಅವರು ಭೂಮಿಗಾಗಿ ಗೋಳಾಡುತ್ತಾರೆ, ಯೆರೂಸಲೇಮಿನ ಕೂಗು ಏರಿ ಬಂತು.
JER 14:3 ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ. ಇವರು ಬಾವಿಗಳಿಗೆ ಬರುತ್ತಾರೆ. ಆದರೆ ನೀರು ಸಿಕ್ಕಲ್ಲ. ಬರೀ ಪಾತ್ರೆಗಳುಳ್ಳವರಾಗಿ ತಿರುಗಿಕೊಳ್ಳುತ್ತಾರೆ. ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ, ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.
JER 14:4 ದೇಶದಲ್ಲಿ ಮಳೆ ಇಲ್ಲದ ಕಾರಣ ಭೂಮಿಯು ಬಿರುಕುಬಿಟ್ಟಿದೆ. ಒಕ್ಕಲಿಗರು ನಿರಾಶರಾಗಿ ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.
JER 14:5 ಹೌದು, ಜಿಂಕೆಯು ಸಹ ಹೊಲದಲ್ಲಿ ಹುಲ್ಲು ಇಲ್ಲದ್ದರಿಂದ, ತನ್ನ ಮರಿಯನ್ನು ಹಾಕಿ, ಬಿಟ್ಟು ಬಿಡುತ್ತದೆ.
JER 14:6 ಕಾಡುಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು, ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ. ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.”
JER 14:7 ಯೆಹೋವ ದೇವರೇ, ನಮ್ಮ ಅಕ್ರಮಗಳು ನಮಗೆ ವಿರೋಧವಾಗಿ ಸಾಕ್ಷಿ ಕೊಟ್ಟರೂ, ನೀನೇ ನಿನ್ನ ಹೆಸರಿಗೋಸ್ಕರ ಕಾರ್ಯ ಸಾಧಿಸು. ಏಕೆಂದರೆ, ನಮ್ಮ ಹಿಂಜಾರುವಿಕೆಗಳು ಅನೇಕವಾಗಿವೆ; ನಿಮಗೆ ವಿರೋಧವಾಗಿ ಪಾಪಮಾಡಿದ್ದೇವೆ.
JER 14:8 ಓ ಇಸ್ರಾಯೇಲಿನ ನಿರೀಕ್ಷೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವವರೇ, ನೀನು ಏಕೆ ದೇಶದಲ್ಲಿ ಅನ್ಯನ ಹಾಗೆಯೂ, ರಾತ್ರಿ ಕಳೆಯುವುದಕ್ಕೆ ಇಳಿದುಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?
JER 14:9 ಏಕೆ ಸ್ತಬ್ಧನಂತೆಯೂ, ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ? ಆದರೂ ಯೆಹೋವ ದೇವರೇ, ನೀವು ನಮ್ಮ ಮಧ್ಯದಲ್ಲಿರುತ್ತೀರಿ, ನಾವು ನಿಮ್ಮ ಹೆಸರನ್ನು ಹೊಂದಿದ್ದೇವೆ, ನಮ್ಮನ್ನು ಕೈಬಿಡಬೇಡಿರಿ.
JER 14:10 ಯೆಹೋವ ದೇವರು ಈ ಜನರಿಗೆ ಹೀಗೆ ಹೇಳುತ್ತಾರೆ: “ಹೀಗೆ ತಿರುಗಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ತಮ್ಮ ಕಾಲುಗಳನ್ನು ಹಿಂದೆಗೆಯುವುದಿಲ್ಲ. ಆದ್ದರಿಂದ ಯೆಹೋವ ದೇವರು ಅವರನ್ನು ಅಂಗೀಕರಿಸುವುದಿಲ್ಲ. ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವೆನು. ಅವರ ಪಾಪಗಳಿಗಾಗಿ ಅವರನ್ನು ದಂಡಿಸುವೆನು.”
JER 14:11 ಆಗ ಯೆಹೋವ ದೇವರು ನನಗೆ, “ಈ ಜನರಿಗೋಸ್ಕರ ಒಳ್ಳೆಯದಕ್ಕಾಗಿ ಪ್ರಾರ್ಥನೆ ಮಾಡಬೇಡ.
JER 14:12 ಅವರು ಉಪವಾಸ ಮಾಡಿದರೂ, ನಾನು ಅವರ ಮೊರೆಯನ್ನು ಕೇಳುವುದಿಲ್ಲ. ಅವರು ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವರನ್ನು ಅಂಗೀಕರಿಸುವುದಿಲ್ಲ. ಆದರೆ ನಾನು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ನಿರ್ಮೂಲ ಮಾಡಿಬಿಡುತ್ತೇನೆ,” ಎಂದು ಹೇಳಿದರು.
JER 14:13 ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ, ಪ್ರವಾದಿಗಳು ಅವರಿಗೆ: ‘ನೀವು ಖಡ್ಗವನ್ನು ನೋಡುವುದಿಲ್ಲ. ನಿಮಗೆ ಕ್ಷಾಮವು ಬಾರದು. ಆದರೆ ಯೆಹೋವ ದೇವರು ನಿಮಗೆ ಈ ಸ್ಥಳದಲ್ಲಿ ಸ್ಥಿರಸಮಾಧಾನ ಕೊಡುತ್ತಾರೆ,’ ಎಂದು ಹೇಳುತ್ತಾರೆ,” ಎಂದೆನು.
JER 14:14 ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳುಗಳನ್ನು ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಆಜ್ಞೆಕೊಡಲಿಲ್ಲ. ಅವರ ಸಂಗಡ ಮಾತಾಡಲಿಲ್ಲ. ಸುಳ್ಳಿನ ದರ್ಶನವನ್ನೂ, ಶಕುನವನ್ನೂ, ಮಾಯ ಮಂತ್ರವನ್ನೂ, ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.
JER 14:15 ಆದ್ದರಿಂದ ಯೆಹೋವ ದೇವರು ತಾನು ಕಳುಹಿಸದೆ, ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು, ‘ಈ ದೇಶದಲ್ಲಿ ಖಡ್ಗವೂ ಬರವೂ ಇರುವುದಿಲ್ಲ,’ ಎಂದು ಹೇಳುವಂಥ ಪ್ರವಾದಿಗಳನ್ನು ಕುರಿತು, ಖಡ್ಗದಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ.
JER 14:16 ಅವರು ಪ್ರವಾದಿಸುವ ಜನರು ಕ್ಷಾಮದ ಮತ್ತು ಖಡ್ಗದ ನಿಮಿತ್ತ ಯೆರೂಸಲೇಮಿನ ಬೀದಿಪಾಲಾಗುವರು. ಅವರನ್ನೂ, ಅವರ ಹೆಂಡತಿಯರನ್ನೂ, ಅವರ ಪುತ್ರಪುತ್ರಿಯರನ್ನೂ ಹೂಳಿಡುವುದಕ್ಕೆ ಯಾರೂ ಇರುವುದಿಲ್ಲ. ಏಕೆಂದರೆ ಅವರಿಗೆ ಅರ್ಹವಾದ ಆಪತ್ತನ್ನು ನಾನು ಅವರ ಮೇಲೆ ಸುರಿಯುತ್ತೇನೆ.
JER 14:17 “ಆದ್ದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು. “ ‘ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ. ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ಏಟಿನಿಂದಲೂ, ದೊಡ್ಡ ಪೆಟ್ಟಿನಿಂದಲೂ ಗಾಯಗೊಂಡಿದ್ದಾಳೆ.
JER 14:18 ನಾನು ಹೊಲಕ್ಕೆ ಹೋದರೆ ಇಗೋ, ಖಡ್ಗದಿಂದ ಸತ್ತವರು ಕಾಣಿಸುತ್ತಾರೆ. ಪಟ್ಟಣದಲ್ಲಿ ಪ್ರವೇಶಿಸಿದರೆ ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು ಕಾಣಿಸಿಕೊಳ್ಳುತ್ತಾರೆ. ಹೌದು, ಪ್ರವಾದಿಯೂ, ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.’ ”
JER 14:19 ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಟ್ಟಿದ್ದೀಯೋ? ಚೀಯೋನಿನ ಮೇಲೆ ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದೀಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟು ಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ. ಕ್ಷೇಮ ಕಾಲವನ್ನು ಎದುರು ನೋಡಿದೆವು, ಹಾ, ಅಂಜಿಕೆಯೇ.
JER 14:20 ಯೆಹೋವ ದೇವರೇ, ನಮ್ಮ ದುಷ್ಟತನವನ್ನೂ, ನಮ್ಮ ಪಿತೃಗಳ ದುರಾಚಾರವನ್ನೂ ತಿಳಿದುಕೊಂಡಿದ್ದೇವೆ, ನಿಮಗೆ ವಿರುದ್ಧವಾಗಿ ಪಾಪಮಾಡಿದ್ದೇವಲ್ಲಾ.
JER 14:21 ನಿಮ್ಮ ನಾಮದ ಮೇಲೆ ದೃಷ್ಟಿಯಿಡಿ, ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ, ಅವಮಾನಪಡಿಸಬೇಡಿ. ನೀವು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರಿ.
JER 14:22 ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.
JER 15:1 ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಮೋಶೆಯೂ ಸಮುಯೇಲನೂ ನನ್ನ ಮುಂದೆ ನಿಂತರೂ, ನನ್ನ ಮನಸ್ಸು ಈ ಜನರ ಮೇಲೆ ಇರುವುದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿಬಿಡು. ಅವರು ಹೋಗಲಿ.
JER 15:2 ಅವರು ನಿನಗೆ, ‘ನಾವು ಎಲ್ಲಿ ಹೋಗಬೇಕು?’ ಎಂದು ಹೇಳಿದರೆ, ನೀನು ಅವರಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಮರಣಕ್ಕೆ ಇರುವವರು ಮರಣಕ್ಕೆ; ಖಡ್ಗಕ್ಕೆ ಇರುವವರು ಖಡ್ಗಕ್ಕೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ; ಸೆರೆಗೆ ಇರುವವರು ಸೆರೆಗೆ,’ ಎಂದು ಹೇಳಬೇಕು.
JER 15:3 “ನಾನು ಅವರಿಗೆ ವಿರೋಧವಾಗಿ ನಾಲ್ಕು ವಿಧವಾದ ವಿನಾಶಗಳನ್ನು ಎಂದರೆ, ಕೊಲ್ಲುವುದಕ್ಕೆ ಖಡ್ಗವನ್ನೂ, ಹರಿಯುವುದಕ್ಕೆ ನಾಯಿಗಳನ್ನು, ನುಂಗುವುದಕ್ಕೂ ನಾಶಮಾಡುವುದಕ್ಕೂ ಆಕಾಶದ ಪಕ್ಷಿಗಳನ್ನೂ, ಕಾಡುಮೃಗಗಳನ್ನೂ ನೇಮಿಸುತ್ತೇನೆ ಎಂಬುದು ಯೆಹೋವ ದೇವರಾದ ನನ್ನ ಮಾತು.
JER 15:4 ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯು ಯೆರೂಸಲೇಮಿನಲ್ಲಿ ನಡಿಸಿದ್ದಕ್ಕೆ ಪ್ರತಿಫಲವಾಗಿ ನಾನು ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಂತೆ ಮಾಡುವೆನು.
JER 15:5 “ಯೆರೂಸಲೇಮೇ, ನಿನ್ನ ಮೇಲೆ ಯಾರು ಕನಿಕರಪಡುವರು, ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವುದಕ್ಕೆ ಯಾರು ಹೋಗುವರು?
JER 15:6 ನೀನು ನನ್ನನ್ನು ಬಿಟ್ಟುಬಿಟ್ಟಿದ್ದೀ,” ಎಂದು ಯೆಹೋವ ದೇವರು ಹೇಳುತ್ತಾರೆ. “ನೀನು ಹಿಂಜಾರಿದೆ. ಆದ್ದರಿಂದ ನನ್ನ ಕೈಯನ್ನು ನಿನಗೆ ವಿರೋಧವಾಗಿ ಚಾಚಿ, ನಿನ್ನನ್ನು ನಾಶಮಾಡುವೆನು. ನಿನಗೆ ಅನುಕಂಪ ತೋರಿಸುವುದರಲ್ಲಿ ದಣಿದಿದ್ದೇನೆ.
JER 15:7 ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. ನನ್ನ ಜನರನ್ನು ನಾಶಮಾಡಿ ಅವರಿಗೆ ಶೋಕವನ್ನು ನೀಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು, ಹಿಂದಿರುಗದೆ ಇದ್ದುದರಿಂದ
JER 15:8 ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಕಿಗಿಂತ ಹೆಚ್ಚಾಗಿರುವರು, ಯುವಕರ ತಾಯಿಗಳ ಮೇಲೆ ನಾಶ ಮಾಡುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು, ಅವರ ಮೇಲೆ ಕಳವಳವನ್ನೂ, ದಿಗಿಲನ್ನೂ ತಟ್ಟನೆ ಬೀಳಿಸುವೆನು.
JER 15:9 ಏಳುಮಂದಿಯನ್ನು ಹೆತ್ತವಳು ಕುಂದುತ್ತಾಳೆ. ತನ್ನ ಪ್ರಾಣವನ್ನು ಬಿಡುತ್ತಾಳೆ. ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ. ಅವಳು ನಾಚಿಕೆಪಡುತ್ತಾಳೆ, ಅವಮಾನಗೊಳ್ಳುತ್ತಾಳೆ. ಇದಲ್ಲದೆ ಅವರ ಶೇಷವನ್ನು ಅವರ ಶತ್ರುಗಳ ಮುಂದೆ ಖಡ್ಗಕ್ಕೆ ಒಪ್ಪಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 15:10 ನನ್ನ ತಾಯಿಯೇ, ನನಗೆ ಕಷ್ಟ! ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ, ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ. ಆದರೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
JER 15:11 ಇದಕ್ಕೆ ಯೆಹೋವ ದೇವರು, ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. ನಿಜನಿಜವಾಗಿ ನಿನ್ನ ಶತ್ರುವನ್ನು ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ನಿನಗೆ ಶರಣಾಗತನನ್ನಾಗಿ ಮಾಡುವೆನು.
JER 15:12 ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ಕಂಚನ್ನು ಮುರಿಯುವುದು ಯಾರಿಂದಾದೀತು? ಎಂದು ಹೇಳಿದನು.
JER 15:13 ನಿನ್ನ ಸಕಲ ಪ್ರಾಂತಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡು ಮಾಡಿ,
JER 15:14 ನಿನ್ನ ಶತ್ರುಗಳ ಕೈಗೆ ಕೊಟ್ಟು, ನಿನ್ನನ್ನು ಗೊತ್ತಿಲ್ಲದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.
JER 15:15 ಅದಕ್ಕೆ ನಾನು ಯೆಹೋವ ದೇವರೇ, ನೀನೇ ಬಲ್ಲೆ, ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿ ತೀರಿಸು, ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ ಏಕೆಂದರೆ ನೀವು ಕನಿಕರ ಉಳ್ಳವರು, ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಚಿತ್ತಕ್ಕೆ ತಂದುಕೋ.
JER 15:16 ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರ ಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವ ದೇವರೇ, ನಾನು ನಿನ್ನ ಹೆಸರಿನವನಲ್ಲವೇ!
JER 15:17 ನಾನು ವಿನೋದಗಾರರ ಕೂಟದಲ್ಲಿ ಕೂತುಕೊಳ್ಳಲಿಲ್ಲ, ಉಲ್ಲಾಸ ಪಡಲೂ ಇಲ್ಲ; ನೀವು ನನ್ನ ಮೇಲೆ ಕೈ ಇಟ್ಟಿದ್ದರಿಂದ ಒಂಟಿಗನಾಗಿ ಕೂತುಕೊಂಡೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ;
JER 15:18 ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣ ಹೋಗಲೊಲ್ಲದೇಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ? ಎಂದು ಅರಿಕೆಮಾಡಿಕೊಂಡೆನು.
JER 15:19 ಆದಕಾರಣ ಯೆಹೋವ ದೇವರು ಹೀಗೆನ್ನುತ್ತಾರೆ: ನೀನು ಮಾನಸಾಂತರಪಟ್ಟರೆ, ನೀನು ನನಗೆ ಸೇವೆಮಾಡುವಂತೆ ನಾನು ನಿನ್ನನ್ನು ಪುನಃಸ್ಥಾಪಿಸುವೆನು. ನೀನು ತುಚ್ಛವಾದವುಗಳಿಗೆ ಬದಲಾಗಿ ಅಮೂಲ್ಯವಾದವುಗಳನ್ನೇ ಮಾತನಾಡುತ್ತಿದ್ದರೆ, ನೀನು ನನ್ನ ಬಾಯಿಯ ಹಾಗಿರುವೆ. ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂದಿರುಗಬೇಡ.
JER 15:20 ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ಕಂಚಿನ ಗೋಡೆಯಾಗಿ ಮಾಡುತ್ತೇನೆ. ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಜಯಿಸಲಾರರು. ಏಕೆಂದರೆ ನಾನೇ ನಿನ್ನನ್ನು ರಕ್ಷಿಸುವುದಕ್ಕೂ, ನಿನ್ನನ್ನು ತಪ್ಪಿಸುವುದಕ್ಕೂ ನಿನ್ನ ಸಂಗಡ ಇದ್ದೇನೆ, ಎಂದು ಯೆಹೋವ ದೇವರು ಹೇಳುತ್ತಾರೆ.
JER 15:21 “ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ದುಷ್ಟರ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.”
JER 16:1 ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ,
JER 16:2 “ನೀನು ಮದುವೆಯಾಗಬೇಡ. ನಿನಗೆ ಪುತ್ರರಾಗಲಿ, ಪುತ್ರಿಯರಾಗಲಿ ಈ ಸ್ಥಳದಲ್ಲಿ ಹುಟ್ಟದಿರಲಿ.”
JER 16:3 ಏಕೆಂದರೆ ಈ ಸ್ಥಳದಲ್ಲಿ ಹುಟ್ಟಿರುವ ಪುತ್ರಪುತ್ರಿಯರನ್ನು ಕುರಿತು ಮತ್ತು ಅವರ ತಾಯಂದಿರನ್ನೂ, ಅವರನ್ನು ಪಡೆದ ತಂದೆಗಳನ್ನೂ ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ:
JER 16:4 “ಅವರು ಮರಣಕರವಾದ ಬೇನೆಗಳಿಂದ ಸಾಯುವರು. ಅವರಿಗೋಸ್ಕರ ಗೋಳಾಟ ಆಗುವುದಿಲ್ಲ. ಅವರಿಗೆ ಸಮಾಧಿಯಾಗುವುದಿಲ್ಲ. ಭೂಮಿಯ ಮೇಲೆ ಅವರು ಗೊಬ್ಬರವಾಗುವರು. ಖಡ್ಗದಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು.”
JER 16:5 ಯೆಹೋವ ದೇವರು ಹೀಗೆ ಹೇಳುತ್ತಾರೆ: “ದುಃಖದ ಮನೆಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡುವುದಕ್ಕೂ, ದುಃಖ ಪಡುವುದಕ್ಕೂ ಹೋಗಬೇಡ. ಏಕೆಂದರೆ ನಾನು ನನ್ನ ಸಮಾಧಾನವನ್ನೂ, ಪ್ರೀತಿಯನ್ನೂ, ಕನಿಕರವನ್ನೂ ಈ ಜನರಿಂದ ತೆಗೆದುಹಾಕಿದ್ದೇನೆ.
JER 16:6 ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು. ಅವರಿಗೆ ಸಮಾಧಿಯಾಗುವುದಿಲ್ಲ, ಅವರಿಗೋಸ್ಕರ ಯಾರೂ ತಮ್ಮನ್ನು ಕೊಯ್ದುಕೊಳ್ಳುವುದಿಲ್ಲ, ತಮ್ಮ ತಲೆ ಬೋಳಿಸಿಕೊಳ್ಳುವುದೂ ಇಲ್ಲ.
JER 16:7 ಸತ್ತವನಿಗಾಗಿ ದುಃಖ ಪಡುವವರನ್ನು ಸಂತೈಸುವುದಕ್ಕೋಸ್ಕರ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ, ತಾಯಿಯನ್ನಾಗಲಿ ಕಳೆದುಕೊಂಡವರಿಗೂ ಕೂಡ ಯಾರೂ ಸಾಂತ್ವನದ ಪಾನಪಾತ್ರೆಯನ್ನು ನೀಡುವುದಿಲ್ಲ.
JER 16:8 “ಅವರ ಸಂಗಡ ಕೂತುಕೊಂಡು ಉಣ್ಣುವುದಕ್ಕೂ ಕುಡಿಯುವುದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸಬೇಡ.
JER 16:9 ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮ ಕಣ್ಣುಗಳ ಮುಂದೆ ನಿಮ್ಮ ದಿನಗಳಲ್ಲಿಯೇ ಉಲ್ಲಾಸದ ಸ್ವರವನ್ನೂ, ಸಂತೋಷದ ಸ್ವರವನ್ನೂ, ಮದುಮಗನ ಸ್ವರವನ್ನೂ, ಮದುಮಗಳ ಸ್ವರವನ್ನೂ ಈ ಸ್ಥಳದೊಳಗಿಂದ ನಿಲ್ಲಿಸಿಬಿಡುವೆನು.
JER 16:10 “ನೀನು ಈ ಜನರಿಗೆ ಈ ಮಾತುಗಳನ್ನೆಲ್ಲಾ ತಿಳಿಸಿದ ಮೇಲೆ ಅವರು ನಿನಗೆ, ‘ಏಕೆ ಯೆಹೋವ ದೇವರು ನಮ್ಮ ಮೇಲೆ ಈ ದೊಡ್ಡ ಕೇಡನ್ನು ಮಾತಾಡಿದ್ದಾರೆ? ನಮ್ಮ ಅಕ್ರಮ ಏನು? ನಾವು ನಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಮಾಡಿರುವ ಪಾಪವೇನು?’ ಎಂದು ಹೇಳಿದರೆ, ನೀನು ಅವರಿಗೆ ಹೀಗೆ ಹೇಳಬೇಕು:
JER 16:11 ‘ನಿಮ್ಮ ಪಿತೃಗಳು ನನ್ನನ್ನು ಬಿಟ್ಟುಬಿಟ್ಟದ್ದರಿಂದಲೇ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಅವರು ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳನ್ನು ಆರಾಧಿಸಿ, ನನ್ನನ್ನು ತೊರೆದುಬಿಟ್ಟು, ನನ್ನ ನಿಯಮವನ್ನು ಕೈಗೊಳ್ಳಲಿಲ್ಲ.
JER 16:12 ನೀವು ನಿಮ್ಮ ತಂದೆಗಳಿಗಿಂತ ಇನ್ನೂ ಕೆಟ್ಟ ಕೆಲಸ ಮಾಡಿದ್ದೀರಿ. ಏಕೆಂದರೆ ಇಗೋ, ನನ್ನನ್ನು ಕೇಳದ ಹಾಗೆ ನಿಮ್ಮ ನಿಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡೆದುಕೊಂಡಿದ್ದೀರಿ.
JER 16:13 ಆದ್ದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ, ನಿಮಗೂ, ನಿಮ್ಮ ಪಿತೃಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು. ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆ ಮಾಡುವಿರಿ ಮತ್ತು ನಾನು ನಿಮಗೆ ಕನಿಕರ ತೋರಿಸುವುದಿಲ್ಲ.’
JER 16:14 “ಆದ್ದರಿಂದ ಇಗೋ, ಯೆಹೋವ ದೇವರು ಹೇಳುವುದೇನೆಂದರೆ: ‘ಇಗೋ, ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ಯೆಹೋವ ದೇವರ ಜೀವದಾಣೆ,’ ಎಂದು ಇನ್ನು ಹೇಳುವುದಿಲ್ಲ.
JER 16:15 ‘ಆದರೆ ಯೆಹೋವ ದೇವರ ಜೀವದಾಣೆ, ಇಸ್ರಾಯೇಲರನ್ನು ಉತ್ತರ ದೇಶದಿಂದಲೂ, ನಾನು ಅವರನ್ನು ಅಟ್ಟಿಬಿಟ್ಟಿದ್ದ ಸಮಸ್ತ ದೇಶಗಳಿಂದಲೂ ಬರಮಾಡಿ, ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರುಗಿ ಬರಮಾಡುವೆನು,’ ಎಂದು ಹೇಳುವ ದಿನಗಳು ಬರುವುವು.
JER 16:16 “ಇಗೋ, ನಾನು ಅನೇಕ ಮೀನುಗಾರರನ್ನು ಕಳುಹಿಸುತ್ತೇನೆ. ಇವರು ಅವರನ್ನು ಹಿಡಿಯುವರು. ಆಮೇಲೆ ಅನೇಕ ಬೇಟೆಗಾರರನ್ನು ಕಳುಹಿಸುವೆನು. ಇವರು ಎಲ್ಲಾ ಬೆಟ್ಟಗಳ ಮೇಲೆಯೂ, ಎಲ್ಲಾ ಗುಡ್ಡಗಳ ಮೇಲೆಯೂ, ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡುವರು.
JER 16:17 ನನ್ನ ಕಣ್ಣುಗಳು ಅವರ ಎಲ್ಲಾ ಮಾರ್ಗಗಳ ಮೇಲೆ ಇವೆ. ಅವು ನನ್ನ ಮುಖಕ್ಕೆ ಮರೆಯಾದವುಗಳಲ್ಲ, ಅವರ ಅಕ್ರಮವು ನನ್ನ ದೃಷ್ಟಿಗೆ ಅಡಗಿರುವುದಿಲ್ಲ.
JER 16:18 ಆದರೆ ಮೊದಲು ನಾನು ಅವರ ಅಕ್ರಮಕ್ಕೂ, ಅವರ ಪಾಪಕ್ಕೂ ಎರಡಷ್ಟು ಪ್ರತಿಫಲ ಕೊಡುತ್ತೇನೆ. ಅವರು ನನ್ನ ದೇಶವನ್ನು ತಮ್ಮ ದುಷ್ಕೃತ್ಯಗಳಿಂದ ಅಪವಿತ್ರ ಮಾಡಿ, ನನ್ನ ಸೊತ್ತನ್ನು ತಮ್ಮ ಅಸಹ್ಯ ವಿಗ್ರಹಗಳಿಂದ ತುಂಬಿಸಿದ್ದಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 16:19 ಓ ಯೆಹೋವ ದೇವರೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಜಗದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಬರುವುವು. “ನಮ್ಮ ಪೂರ್ವಜರು ನಿಶ್ಚಯವಾಗಿ ಸುಳ್ಳಾದದ್ದನ್ನು ಪಾರಂಪರ್ಯವಾಗಿ ಹೊಂದಿದ್ದಾರೆ. ಅವು ವ್ಯರ್ಥವೇ. ಅವುಗಳಲ್ಲಿ ಏನೂ ಪ್ರಯೋಜನವಿಲ್ಲ.
JER 16:20 ಮನುಷ್ಯನು ದೇವರುಗಳನ್ನು ತನಗೆ ಮಾಡುವುದುಂಟೇ? ಹಾಗೆ ಮಾಡಿಕೊಂಡರೂ ಅವು ದೇವರುಗಳಲ್ಲ!”
JER 16:21 “ಆದ್ದರಿಂದ ಇಗೋ, ನಾನು ಇದೊಂದು ಸಾರಿ ಅವರಿಗೆ ತಿಳಿಯುವಂತೆ ಮಾಡುವೆನು. ನನ್ನ ಕೈಯನ್ನೂ, ನನ್ನ ಪರಾಕ್ರಮವನ್ನೂ ಅವರಿಗೆ ತಿಳಿಸುವೆನು. ನನ್ನ ಹೆಸರು ಯೆಹೋವ ದೇವರೇ, ಎಂದು ಅವರು ತಿಳಿದುಕೊಳ್ಳುವರು.
JER 17:1 “ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ, ವಜ್ರದ ಮೊನೆಯಿಂದಲೂ ಬರೆಯಲಾಗಿದೆ. ಅದು ಅವರ ಹೃದಯದ ಹಲಗೆಯ ಮೇಲೆಯೂ ಅವರ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲಾಗಿದೆ.
JER 17:2 ಅವರ ಮಕ್ಕಳು ಅವರ ಬಲಿಪೀಠಗಳನ್ನೂ ಹಸಿರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ಅಶೇರ ಸ್ತಂಭಗಳನ್ನೂ ಜ್ಞಾಪಕ ಮಾಡಿಕೊಳ್ಳುತ್ತಾರಲ್ಲಾ.
JER 17:3 ನಾಡಿನಲ್ಲಿರುವ ನನ್ನ ಪರ್ವತವೇ, ನಿನ್ನ ಎಲ್ಲಾ ಪ್ರಾಂತಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಪೂಜಾಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು.
JER 17:4 ಆಗ ನಿನ್ನ ದೋಷದಿಂದಲೇ ನೀನು ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ. ನಿನಗೆ ತಿಳಿಯದ ದೇಶದಲ್ಲಿ ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ. ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”
JER 17:5 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮಾನವನ ಸಾಮರ್ಥ್ಯಗಳನ್ನು ತನ್ನ ಆಧಾರವಾಗಿ ಮಾಡಿಕೊಂಡ ವ್ಯಕ್ತಿ ಶಾಪಗ್ರಸ್ತ, ಅವನು ಮನುಷ್ಯನ ಶಕ್ತಿಯ ಮೇಲೆ ಭರವಸೆ ಇಡುವನು. ಯೆಹೋವ ದೇವರ ಕಡೆಯಿಂದ ಯಾವನ ಹೃದಯವು ತೊಲಗುವುದೋ, ಅವನು ಶಾಪಗ್ರಸ್ತನು.
JER 17:6 ಅವನು ಅಡವಿಯಲ್ಲಿರುವ ಜಾಲಿ ಗಿಡದ ಹಾಗಿರುವನು. ಒಳ್ಳೆಯದು ಬರುವಾಗ ನೋಡದೆ ಇರುವನು. ನಿವಾಸಿಗಳಿಲ್ಲದ ಚೌಳು ನೆಲವಾಗಿರುವ ಮರುಭೂಮಿಯ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.
JER 17:7 “ಯಾವನು ಯೆಹೋವ ದೇವರಲ್ಲಿ ನಂಬಿಕೆ ಇಟ್ಟಿರುವನೋ, ಯಾವನಿಗೆ ಯೆಹೋವ ದೇವರು ಭರವಸೆಯಾಗಿದ್ದಾನೋ, ಆ ಮನುಷ್ಯನು ಧನ್ಯನು.
JER 17:8 ಏಕೆಂದರೆ ಅವನು ನೀರಿನ ಬಳಿಯಲ್ಲಿ ನೆಡಲಾದ, ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು. ಬಿಸಿಲಿನ ಧಗೆಗೆ ಭಯಪಡದೆ, ಹಸುರೆಲೆಯನ್ನು ಚಿಗುರಿಸುತ್ತಾ. ಬರಗಾಲದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.”
JER 17:9 ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾಗಿಯೂ ಗುಣಪಡಿಸಲು ಅಸಾಧ್ಯವಾದದ್ದೂ ಆಗಿದೆ. ಅದನ್ನು ತಿಳಿಯುವವನ್ಯಾರು?
JER 17:10 “ಯೆಹೋವ ದೇವರಾದ ನಾನೇ ಹೃದಯವನ್ನು ಪರೀಕ್ಷಿಸುತ್ತೇನೆ. ಅಂತರಿಂದ್ರಿಯಗಳನ್ನು ಶೋಧಿಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ, ಅವನ ಕ್ರಿಯೆಗಳ ಫಲದ ಪ್ರಕಾರವೂ ಪ್ರತಿಫಲ ಕೊಡುತ್ತೇನೆ.”
JER 17:11 ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಹಾಗೆ, ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಹಾಗೆಯೇ ಇದ್ದಾನೆ. ಅವನು ತನ್ನ ಮಧ್ಯಪ್ರಾಯದಲ್ಲಿ ಅದನ್ನು ಬಿಡುವನು. ತನ್ನ ಅಂತ್ಯದಲ್ಲಿ ಅವನು ಮೂರ್ಖನೆಂದು ಸಾಬೀತಾಗುತ್ತದೆ.
JER 17:12 ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ.
JER 17:13 ಇಸ್ರಾಯೇಲಿನ ನಿರೀಕ್ಷೆಯಾದ ಓ ಯೆಹೋವ ದೇವರೇ, ನಿಮ್ಮನ್ನು ತೊರೆದುಬಿಟ್ಟವರೆಲ್ಲರೂ ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಯೆಹೋವ ದೇವರಿಂದ ತೊಲಗಿ ಹೋದವರನ್ನು ಧೂಳಿನಲ್ಲಿ ಬರೆಯಲಾಗುತ್ತದೆ.
JER 17:14 ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿ, ಆಗ ಸ್ವಸ್ಥವಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿತನಾಗುವೆನು. ಏಕೆಂದರೆ, ನೀವೇ ನನಗೆ ಸ್ತುತ್ಯರು.
JER 17:15 ಇಗೋ, ಅವರು ನನಗೆ, “ಯೆಹೋವ ದೇವರ ವಾಕ್ಯವು ಎಲ್ಲಿ? ಅದು ಈಗ ನೆರವೇರಲಿ,” ಅನ್ನುತ್ತಾರೆ.
JER 17:16 ನಾನಾದರೋ ಸಭಾಪಾಲನೆಯಲ್ಲಿ ನಿಮ್ಮನ್ನು ಹಿಂಬಾಲಿಸುವುದನ್ನು ಬಿಡುವುದಕ್ಕೆ ಆತುರಪಡಲಿಲ್ಲ; ವಿಪತ್ತಿನ ಅನಿವಾರ್ಯ ದಿನವನ್ನು ಅಪೇಕ್ಷಿಸಲಿಲ್ಲ; ನೀವೇ ಬಲ್ಲೆ; ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.
JER 17:17 ನೀವು ನನ್ನನ್ನು ಭಯಪಡಿಸಬೇಡಿ. ಕೇಡಿನ ದಿನದಲ್ಲಿ ನೀವೇ ನನ್ನ ಆಶ್ರಯವಾಗಿದ್ದೀರಿ.
JER 17:18 ನನ್ನನ್ನು ಹಿಂಸಿಸುವವರು ನಾಚಿಕೆಗೆ ಗುರಿಯಾಗಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲು ಪಡಲಿ; ಆದರೆ ನಾನು ದಿಗಿಲು ಪಡದಿರಲಿ. ಆದರೆ ನಾನು ದಿಗಿಲು ಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡಿ. ಎರಡರಷ್ಟಾದ ನಾಶದಿಂದ ಅವರನ್ನು ನಾಶಪಡಿಸಿ.
JER 17:19 ಯೆಹೋವ ದೇವರು ನನಗೆ, “ಹೋಗಿ, ಯೆಹೂದದ ಅರಸರು ಪ್ರವೇಶಿಸುವ, ಹೊರಡುವ ಜನರ ಬಾಗಿಲಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು,
JER 17:20 ಅವರಿಗೆ ಹೀಗೆ ಹೇಳು: ‘ಯೆಹೂದದ ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ.
JER 17:21 ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮಗೆ ನೀವೇ ಎಚ್ಚರಿಕೆಯಾಗಿರಿ. ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತೆಗೆದುಕೊಂಡು ಬರಬೇಡಿರಿ.
JER 17:22 ಸಬ್ಬತ್ ದಿನದಲ್ಲಿ ಹೊರೆಯನ್ನು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗಬೇಡಿರಿ. ಯಾವ ಕೆಲಸವನ್ನೂ ಮಾಡಬೇಡಿರಿ. ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರಕಾರವೇ, ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು.
JER 17:23 ಆದರೆ ಅವರು ವಿಧೇಯರಾಗಲಿಲ್ಲ, ಕಿವಿಗೊಟ್ಟು ಕೇಳಲಿಲ್ಲ. ಆದರೆ ವಿಧೇಯರಾಗದ ಹಾಗೆಯೂ, ಉಪದೇಶ ಹೊಂದದ ಹಾಗೆಯೂ ಹಟಮಾರಿಯಾಗಿದ್ದರು.
JER 17:24 ಯೆಹೋವ ದೇವರಾದ ನನ್ನ ನುಡಿ ಇದೇ: ನೀವು ನನ್ನನ್ನು ಜಾಗ್ರತೆಯಿಂದ ಕೇಳಿ, ಸಬ್ಬತ್ ದಿನದಲ್ಲಿ, ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತೆಗೆದುಕೊಂಡು ಬಾರದೆ, ಸಬ್ಬತ್ ದಿನದಲ್ಲಿ ಯಾವುದೊಂದು ಕೆಲಸಮಾಡದೆ ಪರಿಶುದ್ಧಮಾಡಿದರೆ,
JER 17:25 ದಾವೀದನ ಸಿಂಹಾಸನದ ಮೇಲೆ ಕೂರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು, ಯೆಹೂದದ ಮನುಷ್ಯರಾಗಿಯೂ, ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು, ಅವರೂ, ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು. ಈ ಪಟ್ಟಣದಲ್ಲಿ ಎಂದೆಂದಿಗೂ ವಾಸಮಾಡಿದರು.
JER 17:26 ಇದಲ್ಲದೆ ಯೆಹೂದದ ಪಟ್ಟಣಗಳಿಂದಲೂ, ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ, ಬೆನ್ಯಾಮೀನನ ದೇಶದಿಂದಲೂ, ಬಯಲಿನಿಂದಲೂ, ಬೆಟ್ಟಗಳಿಂದಲೂ, ದಕ್ಷಿಣದಿಂದಲೂ ದಹನಬಲಿಗಳನ್ನೂ, ಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತರುವರು. ಸ್ತೋತ್ರದ ಅರ್ಪಣೆಗಳನ್ನು ಯೆಹೋವ ದೇವರ ಆಲಯಕ್ಕೆ ತರುವರು.
JER 17:27 ಆದರೆ ನೀವು ಸಬ್ಬತ್ ದಿನವನ್ನು ಪರಿಶುದ್ಧಮಾಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು, ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದರೆ ಯೆರೂಸಲೇಮಿನ ದ್ವಾರಗಳಲ್ಲಿ ಬೆಂಕಿಯನ್ನು ಹಚ್ಚುವೆನು. ಅದು ಆರಿಹೋಗದೆ, ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.’ ”
JER 18:1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
JER 18:2 “ನೀನು ಎದ್ದು ಕುಂಬಾರನ ಮನೆಗೆ ಇಳಿದು ಹೋಗು. ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೊಡುತ್ತೇನೆ,” ಎಂದರು.
JER 18:3 ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು. ಇಗೋ, ಅವನು ಚಕ್ರದ ಮೇಲೆ ಕೆಲಸ ಮಾಡುತ್ತಿದ್ದನು.
JER 18:4 ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟು ಹೋಯಿತು. ಆಗ ಕುಂಬಾರನಿಗೆ ಒಳ್ಳೆಯದೆಂದು ತೋರುವ ಪ್ರಕಾರ, ಅದನ್ನು ಮತ್ತೊಂದು ಪಾತ್ರೆಯನ್ನಾಗಿ ಮಾಡಿದನು.
JER 18:5 ಅನಂತರ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ,
JER 18:6 “ಈ ಇಸ್ರಾಯೇಲಿನ ಮನೆತನದವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡಲಾರೆನೇ, ಎಂದು ಯೆಹೋವ ದೇವರು ಅನ್ನುತ್ತಾರೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ, ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
JER 18:7 ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವುದಕ್ಕೂ ಕೆಡವುದಕ್ಕೂ ನಾಶಮಾಡುವುದಕ್ಕೂ ಮಾತಾಡುತ್ತೇನೋ,
JER 18:8 ನಾನು ಆ ಜನಾಂಗಕ್ಕೆ ವಿರೋಧವಾಗಿ ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ, ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.
JER 18:9 ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಮಾತನಾಡುತ್ತೇನೋ,
JER 18:10 ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ, ನಾನು ಅದಕ್ಕೆ ಉಪಕಾರ ಮಾಡುತ್ತೇನೆಂದು ಹೇಳಿದ ಒಳ್ಳೆಯದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.
JER 18:11 “ಹೀಗಿರುವುದರಿಂದ ಈಗ ಯೆಹೂದದ ಮನುಷ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ. ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ. ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂದಿರುಗಿರಿ. ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ಒಳ್ಳೆಯದಾಗಿ ಮಾಡಿರಿ.
JER 18:12 ಆದರೆ ಅವರೋ ಏನೂ ಪ್ರಯೋಜನ ಇಲ್ಲ. ಏಕೆಂದರೆ ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು. ನಾವೆಲ್ಲರೂ ನಮ್ಮ ದುಷ್ಟ ಹೃದಯದ ಮೊಂಡುತನವನ್ನು ಅನುಸರಿಸುತ್ತೇವೆ,’ ಎಂದರು.”
JER 18:13 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ: “ಇತರ ಜನಾಂಗಗಳಲ್ಲಿ ವಿಚಾರಿಸಿರಿ. ಇಂಥವುಗಳನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಕನ್ಯೆಯು ಮಹಾ ಭಯಂಕರವಾದದ್ದನ್ನು ಮಾಡಿದ್ದಾಳೆ.
JER 18:14 ಹೊಲದ ಬಂಡೆಯಿಂದ ಬರುವ ಲೆಬನೋನಿನ ಹಿಮವು ತಪ್ಪುವುದೇ? ದೂರದಿಂದ ಇಳಿದು ಹರಿಯುವ ತಂಪಾದ ಪ್ರವಾಹದ ನೀರು ಬತ್ತುವುದೇ?
JER 18:15 ನನ್ನ ಜನರಾದರೋ ನನ್ನನ್ನು ಮರೆತುಬಿಟ್ಟಿದ್ದಾರೆ. ವ್ಯರ್ಥವಾದ ವಿಗ್ರಹಗಳಿಗೆ ಧೂಪವನ್ನರ್ಪಿಸಿದ್ದಾರೆ. ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರನ್ನು ಎಡವುವಂತೆ ಮಾಡಿ, ಮಾರ್ಗವಲ್ಲದ ಕಾಲು ದಾರಿಗಳಲ್ಲಿ ಅವರನ್ನು ನಡೆಯುವಂತೆ ಮಾಡಿವೆ.
JER 18:16 ಹೀಗೆ ತಮ್ಮ ದೇಶವನ್ನು ಹಾಳಾಗಿಯೂ, ನಿತ್ಯವಾದ ಹಾಸ್ಯಾಸ್ಪದವಾಗಿಯೂ ಮಾಡಿದ್ದಾರೆ. ಅದನ್ನು ಹಾದುಹೋಗುವವರೆಲ್ಲರೂ ವಿಸ್ಮಿತರಾಗಿ ತಲೆ ಅಲ್ಲಾಡಿಸುವರು.
JER 18:17 ಮೂಡಣ ಗಾಳಿಯಿಂದ ಆದ ಹಾಗೆ, ಅವರನ್ನು ಶತ್ರುವಿನ ಮುಂದೆ ಚದರಿಸುವೆನು. ಅವರ ಆಪತ್ತಿನ ದಿವಸದಲ್ಲಿ ಅವರಿಗೆ ಮುಖವನ್ನಲ್ಲ ಬೆನ್ನನ್ನು ತೋರಿಸುವೆನು.”
JER 18:18 ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು.
JER 18:19 ಓ ಯೆಹೋವ ದೇವರೇ, ನನಗೆ ಕಿವಿಗೊಡು. ನನ್ನ ಸಂಗಡ ವ್ಯಾಜ್ಯವಾಡುವವರ ಮಾತನ್ನು ಕೇಳು.
JER 18:20 ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಏಕೆಂದರೆ, ಅವರು ನನ್ನ ಪ್ರಾಣಕ್ಕೆ ಕುಳಿಯನ್ನು ಅಗೆದಿದ್ದಾರೆ. ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವುದಕ್ಕೂ, ನಿನ್ನ ಉಗ್ರವನ್ನು ಅವರಿಂದ ತಿರುಗಿಸುವುದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
JER 18:21 ಆದ್ದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು. ಖಡ್ಗದ ಬಲದಿಂದ ಅವರ ರಕ್ತವನ್ನು ಸುರಿದುಬಿಡು. ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ. ಅವರ ಗಂಡಸರು ಹತರಾಗಲಿ. ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗಕ್ಕೆ ತುತ್ತಾಗಲಿ.
JER 18:22 ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ, ಕೂಗು ಅವರ ಮನೆಗಳೊಳಗಿಂದ ಕೇಳ ಬರಲಿ. ಏಕೆಂದರೆ, ನನ್ನನ್ನು ಹಿಡಿಯುವುದಕ್ಕೆ ಕುಳಿ ಅಗೆದಿದ್ದಾರೆ. ನನ್ನ ಕಾಲುಗಳಿಗೆ ಉರುಲುಗಳನ್ನು ಒಡ್ಡಿದ್ದಾರೆ.
JER 18:23 ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ. ಅವರ ಅಕ್ರಮವನ್ನು ಮನ್ನಿಸಬೇಡಿ. ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.
JER 19:1 ಯೆಹೋವ ದೇವರು ನನಗೆ ಹೀಗೆಂದನು: “ಹೋಗಿ, ಕುಂಬಾರನ ಮಣ್ಣಿನ ಮಡಕೆಯನ್ನು ತೆಗೆದುಕೊಂಡು, ಜನರ ಹಿರಿಯರಿಂದಲೂ, ಯಾಜಕರ ಹಿರಿಯರಿಂದಲೂ ಕೆಲವರನ್ನು ಕರೆದುಕೊಂಡು,
JER 19:2 ಮುರಿದ ಪಾತ್ರೆಗಳ ಪ್ರವೇಶದ್ವಾರದ ಮೂಲಕ ಬೆನ್ ಹಿನ್ನೋಮ್ ತಗ್ಗಿಗೆ ಹೋಗಿ, ನಾನು ನಿನಗೆ ಹೇಳುವ ಮಾತುಗಳನ್ನು ಅಲ್ಲಿ ಸಾರಿ ಹೇಳು.
JER 19:3 ‘ಓ ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ಇಗೋ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುತ್ತೇನೆ. ಅದನ್ನು ಕೇಳುವವರೆಲ್ಲರ ಕಿವಿಗೆ ಜುಮ್ಮೆನ್ನುವುದು.
JER 19:4 ಏಕೆಂದರೆ ಅವರು ನನ್ನನ್ನು ಬಿಟ್ಟು ಈ ಸ್ಥಳವನ್ನು ಅಶುದ್ಧಮಾಡಿ; ಅವರೂ, ಅವರ ತಂದೆಗಳೂ, ಯೆಹೂದದ ಅರಸರೂ ಅರಿಯದ ಬೇರೆ ದೇವರುಗಳಿಗೆ ಅಲ್ಲಿ ಧೂಪ ಸುಟ್ಟು, ಈ ಸ್ಥಳವನ್ನು ಅಪರಾಧವಿಲ್ಲದವರ ರಕ್ತದಿಂದ ತುಂಬಿಸಿ,
JER 19:5 ತಮ್ಮ ಮಕ್ಕಳನ್ನು ಬಾಳನಿಗೆ ದಹನಬಲಿಗಳಾಗಿ ಬೆಂಕಿಯಲ್ಲಿ ಸುಡುವುದಕ್ಕೆ ಬಾಳನ ಉನ್ನತ ಪೂಜಾಸ್ಥಳಗಳನ್ನು ಕಟ್ಟಿದ್ದಾರೆ. ಇಂಥಾದ್ದನ್ನು ನಾನು ಆಜ್ಞಾಪಿಸಲಿಲ್ಲ. ನಾನು ಹೇಳಲಿಲ್ಲ, ನನ್ನ ಮನಸ್ಸಿಗೆ ಬರಲಿಲ್ಲ.
JER 19:6 ಹೀಗಿರುವುದರಿಂದ ಯೆಹೋವ ದೇವರು ಹೇಳುವುದೇನೆಂದರೆ: ಇಗೋ, ದಿನಗಳು ಬರುವುವು. ಆಗ ಈ ಸ್ಥಳವು ಇನ್ನು ತೋಫೆತೆಂದು ಇಲ್ಲವೆ ಬೆನ್ ಹಿನ್ನೋಮ್ ತಗ್ಗೆಂದು ಅಲ್ಲ, ಕೊಲೆಯ ತಗ್ಗೆಂದು ಕರೆಯಲಾಗುವುದು.
JER 19:7 “ ‘ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು. ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಿಂದಲೂ ಅವರನ್ನು ಖಡ್ಗದಿಂದ ಬೀಳುವಂತೆ ಮಾಡುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು.
JER 19:8 ಈ ಪಟ್ಟಣವನ್ನು ಭಯಾನಕವಾಗಿಯೂ, ಹಾಸ್ಯಾಸ್ಪದವಾಗಿಯೂ ಮಾಡುವೆನು. ಅದರ ಬಳಿಯಲ್ಲಿ ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಪಟ್ಟು, ಅಪಹಾಸ್ಯ ಮಾಡುವರು.
JER 19:9 ಅವರು ತಮ್ಮ ಪುತ್ರಪುತ್ರಿಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಮುತ್ತಿಗೆಯಲ್ಲಿಯೂ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.’
JER 19:10 “ಆಗ ನೀನು, ನಿನ್ನ ಸಂಗಡ ಬಂದ ಮನುಷ್ಯರ ಮುಂದೆ ಆ ಮಡಕೆಯನ್ನು ಒಡೆದು,
JER 19:11 ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾನೆ: ಯಾವ ಪ್ರಕಾರ ಒಬ್ಬನು ಕುಂಬಾರನ ಮಡಕೆಯನ್ನು ಅದು ತಿರುಗಿ ಒಂದುಗೂಡದ ಹಾಗೆ ಒಡೆಯುತ್ತಾನೋ, ಅದೇ ಪ್ರಕಾರ ನಾನು ಈ ಜನರನ್ನೂ, ಈ ಪಟ್ಟಣವನ್ನೂ ಒಡೆದುಬಿಡುವೆನು. ಆಗ ಹೂಳಿಡುವುದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಳಿಡುವರು.
JER 19:12 ಹೀಗೆ ಈ ಸ್ಥಳಕ್ಕೂ, ಅದರ ನಿವಾಸಿಗಳಿಗೂ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಈ ಪಟ್ಟಣವನ್ನು ತೋಫೆತಿನ ಹಾಗೆಯೇ ಮಾಡುವೆನು.
JER 19:13 ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪ ಸುಟ್ಟು, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ, ಆ ಎಲ್ಲಾ ಮನೆಗಳ ನಿಮಿತ್ತವಾಗಿ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವುವು, ಎಂಬುದೇ.’ ”
JER 19:14 ಆಗ ಯೆರೆಮೀಯನು, ಯೆಹೋವ ದೇವರು ಅವನನ್ನು ಪ್ರವಾದಿಸುವುದಕ್ಕೆ ಕಳುಹಿಸಿದ ತೋಫೆತಿನಿಂದ ಬಂದು ಯೆಹೋವ ದೇವರ ಆಲಯದ ಅಂಗಳದಲ್ಲಿ ನಿಂತುಕೊಂಡು, ಜನರಿಗೆಲ್ಲಾ ಹೇಳಿದ್ದೇನೆಂದರೆ:
JER 19:15 “ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾನೆ: ‘ಇಗೋ, ನಾನು ಈ ಪಟ್ಟಣದ ಮೇಲೆಯೂ, ಅದರ ಎಲ್ಲಾ ಊರುಗಳ ಮೇಲೆಯೂ, ಅದಕ್ಕೆ ವಿರೋಧವಾಗಿ ಹೇಳಿದ ಕೇಡನ್ನೆಲ್ಲಾ ತರಿಸುತ್ತೇನೆ. ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದ ಹಾಗೆ ತಮ್ಮ ಹೃದಯಗಳನ್ನು ಕಠಿಣ ಮಾಡಿಕೊಂಡಿದ್ದಾರೆ, ಎಂಬುದೇ.’ ”
JER 20:1 ಯೆರೆಮೀಯನು ಈ ಮಾತುಗಳನ್ನು ಪ್ರವಾದಿಸಲಾಗಿ, ಯೆಹೋವ ದೇವರ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗ ಪಷ್ಹೂರನು ಕೇಳಿದನು.
JER 20:2 ಆಗ ಪಷ್ಹೂರನು ಪ್ರವಾದಿಯಾದ ಯೆರೆಮೀಯನನ್ನು ಹೊಡೆದು, ಅವನನ್ನು ಯೆಹೋವ ದೇವರ ಆಲಯದ ಬಳಿಯಲ್ಲಿದ್ದ ಬೆನ್ಯಾಮೀನನ ಮೇಲ್ಭಾಗದಲ್ಲಿದ್ದ ಬಾಗಿಲಲ್ಲಿದ್ದ ಮರದ ಉಪಕರಣಕ್ಕೆ ಕಟ್ಟಿದರು.
JER 20:3 ಮಾರನೆ ದಿವಸದಲ್ಲಿ, ಪಷ್ಹೂರನು ಯೆರೆಮೀಯನನ್ನು ಬಂಧನದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ, “ಯೆಹೋವ ದೇವರು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ ಮಾಗೋರ್ ಮಿಸ್ಸಾಬೀಬ್ ಎಂದು ಕರೆಯುತ್ತಾರೆಂದು ಹೇಳಿದನು.
JER 20:4 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲು ಪಡುವಂತೆ ಮಾಡುತ್ತೇನೆ. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ನಿನ್ನ ಕಣ್ಣುಗಳು ಅದನ್ನು ನೋಡುವುವು. ಯೆಹೂದ್ಯರನ್ನೆಲ್ಲಾ ನಾನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅವರನ್ನು ಬಾಬಿಲೋನಿಗೆ ಒಯ್ದು ಖಡ್ಗದಿಂದ ಕೊಲ್ಲುವನು.
JER 20:5 ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ, ಅದರ ಎಲ್ಲಾ ನಿಧಿನಿಕ್ಷೇಪಗಳನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ, ಯೆಹೂದದ ಅರಸರ ಎಲ್ಲಾ ಭಂಡಾರಗಳನ್ನೂ ಅವರ ಶತ್ರುಗಳ ಕೈಗೆ ಒಪ್ಪಿಸುವೆನು. ಅವರು ಅವುಗಳನ್ನು ಸುಲಿದುಕೊಂಡು, ತೆಗೆದುಕೊಂಡು ಬಾಬಿಲೋನಿಗೆ ಒಯ್ಯುವರು.
JER 20:6 ಪಷ್ಹೂರನೇ, ನೀನೂ, ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ. ಬಾಬಿಲೋನಿಗೆ ಹೋಗಿ ಅಲ್ಲಿಯೇ ಸಾಯುವೆ. ಅಲ್ಲಿಯೇ ಸಮಾಧಿಯಾಗುವೆ. ನಿನಗೂ, ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವುದು.’ ”
JER 20:7 ಓ ಯೆಹೋವ ದೇವರೇ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆನು. ನೀವು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿರಿ. ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ. ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡುತ್ತಾನೆ.
JER 20:8 ಏಕೆಂದರೆ, ನಾನು ಮಾತನಾಡುವವನಾದ್ದರಿಂದ ಬಲತ್ಕಾರವೂ, ಕೊಳ್ಳೆಯೂ ಎಂದು ಗಟ್ಟಿಯಾಗಿ ಕೂಗುತ್ತೇನೆ. ಆದ್ದರಿಂದ ಯೆಹೋವ ದೇವರ ವಾಕ್ಯವು ನನಗೆ ಪ್ರತಿದಿನ ಪರಿಹಾಸ್ಯಕ್ಕೂ, ಗೇಲಿಗೂ ಗುರಿಮಾಡಿತು.
JER 20:9 “ಆಗ ನಾನು ಆತನನ್ನು ಕುರಿತು ಏನೂ ಹೇಳುವುದಿಲ್ಲ. ಆತನ ಹೆಸರಿನಲ್ಲಿ ಇನ್ನು ಮಾತನಾಡುವುದೇ ಇಲ್ಲ,” ಎಂದು ಅಂದುಕೊಂಡೆನು. ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲಾಗಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು. ಬಿಗಿ ಹಿಡಿದು ದಣಿದೆನು. ನನ್ನಿಂದ ಆಗದೆ ಹೋಯಿತು.
JER 20:10 ಏಕೆಂದರೆ ಅನೇಕರ ಚಾಡಿಯನ್ನು ಕೇಳಿದೆನು. “ಸುತ್ತಲೂ ಭಯವಿದೆ. ಅವನನ್ನು ಖಂಡಿಸಿರಿ! ಅವನನ್ನು ಖಂಡಿಸೋಣ!” ನನ್ನ ಆಪ್ತರೆಲ್ಲರೂ ನಾನು ಕುಂಟುವುದನ್ನು ನೋಡಿಕೊಳ್ಳುತ್ತಾ ಒಂದು ವೇಳೆ ಅವನು ಮೋಸಗೊಂಡಾನು. “ಆಗ ನಾವು ಅವನನ್ನು ಗೆದ್ದು, ಅವನಲ್ಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.”
JER 20:11 ಆದರೆ ಯೆಹೋವ ದೇವರು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾರೆ. ಆದ್ದರಿಂದ ನನ್ನನ್ನು ಹಿಂಸಿಸುವವರು ಎಡವುವರು, ಗೆಲ್ಲುವುದಿಲ್ಲ. ಅನುಕೂಲವಾಗದೆ ಇದ್ದುದರಿಂದ ಅವರು ಬಹಳವಾಗಿ ನಾಚಿಕೆಪಡುವರು. ಅವರ ಅವಮಾನವು ಎಂದಿಗೂ ಮರೆಯದ ಅವಮಾನವಾಗಿರುವುದು.
JER 20:12 ಓ ಸೇನಾಧೀಶ್ವರ ಯೆಹೋವ ದೇವರೇ, ನೀತಿವಂತರನ್ನು ಪರಿಶೋಧಿಸುವವರೇ, ಅಂತರಿಂದ್ರಿಯಗಳನ್ನೂ, ಹೃದಯವನ್ನೂ ನೋಡುವವರೇ, ನೀವು ಅವರಿಗೆ ಪ್ರತಿದಂಡನೆ ಮಾಡುವುದನ್ನು ನಾನು ನೋಡುವಂತೆ ಮಾಡಿ. ಏಕೆಂದರೆ, ನಿಮಗೆ ನನ್ನ ವ್ಯಾಜ್ಯವನ್ನು ತಿಳಿಯಮಾಡಿದ್ದೇನೆ.
JER 20:13 ಯೆಹೋವ ದೇವರಿಗೆ ಹಾಡಿರಿ, ಯೆಹೋವ ದೇವರನ್ನು ಸ್ತುತಿಸಿರಿ. ಏಕೆಂದರೆ, ಅವರು ಬಡವನ ಪ್ರಾಣವನ್ನು ಕೇಡು ಮಾಡುವವರ ಕೈಯಿಂದ ತಪ್ಪಿಸಿದ್ದಾರೆ.
JER 20:14 ನಾನು ಹುಟ್ಟಿದ ದಿವಸವು ಶಾಪಗ್ರಸ್ತವಾಗಲಿ. ನನ್ನ ತಾಯಿ ನನ್ನನ್ನು ಹೆತ್ತ ದಿವಸವು ಶುಭವೆನಿಸಿಕೊಳ್ಳದಿರಲಿ.
JER 20:15 ನನ್ನ ತಂದೆಗೆ, “ನಿನಗೆ ಗಂಡು ಕೂಸು ಹುಟ್ಟಿದೆ,” ಎಂಬ ಸಮಾಚಾರವನ್ನು ಹೇಳಿ ಬಹಳ ಸಂತೋಷ ಉಂಟುಮಾಡಿದವನು ಶಾಪಗ್ರಸ್ತನಾಗಲಿ!
JER 20:16 ಆ ಮನುಷ್ಯನು, ಯೆಹೋವ ದೇವರು ಕನಿಕರಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ. ಅವನು ಬೆಳಿಗ್ಗೆ ಕೂಗನ್ನೂ, ಮಧ್ಯಾಹ್ನದಲ್ಲಿ ಆರ್ಭಟವನ್ನೂ ಕೇಳಲಿ.
JER 20:17 ನಾನು ಗರ್ಭ ಬಿಟ್ಟಾಗಲೇ ಅವರು ನನ್ನನ್ನು ಕೊಲ್ಲದೆ ಹೋದದ್ದರಿಂದ, ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು, ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೆಯದಾಗಿತ್ತು.
JER 20:18 ನಾನು ಕಷ್ಟವನ್ನೂ, ಚಿಂತೆಯನ್ನೂ ನೋಡುವುದಕ್ಕೂ, ನನ್ನ ದಿವಸಗಳು ನಾಚಿಕೆಯಲ್ಲಿ ಕಳೆದುಹೋಗುವುದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಏಕೆ?
JER 21:1 ಅರಸನಾದ ಚಿದ್ಕೀಯನು ಮಲ್ಕೀಯನ ಮಗ ಪಷ್ಹೂರನನ್ನೂ, ಮಾಸೇಯನ ಮಗನಾದ ಯಾಜಕನಾದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ,
JER 21:2 “ನಮಗೋಸ್ಕರ ಯೆಹೋವ ದೇವರನ್ನು ವಿಚಾರಿಸು. ಏಕೆಂದರೆ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ. ಒಂದು ವೇಳೆ ಅವನು ನಮ್ಮನ್ನು ಬಿಟ್ಟು ಹೊರಟು ಹೋಗುವಹಾಗೆ ಯೆಹೋವ ದೇವರು ಹಿಂದಿನ ಕಾಲದಂತೆಯೇ ತಮ್ಮ ಎಲ್ಲಾ ಅದ್ಭುತಗಳ ಪ್ರಕಾರ ನಮಗೆ ಮಾಡುವರು,” ಎಂದು ಅವರ ಮೂಲಕ ವಿಜ್ಞಾಪಿಸಿದಾಗ, ಯೆರೆಮೀಯನಿಗೆ ಯೆಹೋವ ದೇವರ ವಾಕ್ಯವು ಬಂತು.
JER 21:3 ಆಗ ಯೆರೆಮೀಯನು ಅವರಿಗೆ ಹೇಳಿದ್ದೇನೆಂದರೆ, “ಚಿದ್ಕೀಯನಿಗೆ ಹೀಗೆ ಹೇಳಿರಿ:
JER 21:4 ‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬಿಲೋನಿನ ಅರಸನಿಗೂ, ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವುದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನೂ, ನಾನು ಹಿಂದಕ್ಕೆ ತಳ್ಳಿ, ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿಬರುವಂತೆ ಮಾಡುವೆನು.
JER 21:5 ನಾನೇ ಚಾಚಿದ ಕೈಯಿಂದಲೂ, ಬಲವಾದ ತೋಳಿನಿಂದಲೂ, ಕೋಪದಿಂದಲೂ, ಉಗ್ರದಿಂದಲೂ, ಮಹಾರೌದ್ರದಿಂದಲೂ ನಿಮಗೆ ವಿರೋಧವಾಗಿ ಯುದ್ಧಮಾಡುವೆನು.
JER 21:6 ಈ ಪಟ್ಟಣದ ನಿವಾಸಿಗಳನ್ನೂ, ಮನುಷ್ಯರನ್ನೂ, ಮೃಗಗಳನ್ನೂ ಸಹಿತವಾಗಿ ಹೊಡೆಯುವೆನು. ಅವರು ದೊಡ್ಡ ವ್ಯಾಧಿಯಿಂದ ಸಾಯುವರು.
JER 21:7 ಯೆಹೋವ ದೇವರು ಹೇಳುವುದೇನೆಂದರೆ, ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಸೇವಕರನ್ನೂ, ಜನರನ್ನೂ ಈ ಪಟ್ಟಣದಲ್ಲಿ ವ್ಯಾಧಿಯಿಂದಲೂ, ಖಡ್ಗದಿಂದಲೂ, ಕ್ಷಾಮದಿಂದಲೂ ಉಳಿದವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಶತ್ರುಗಳ ಕೈಗೂ ಒಪ್ಪಿಸುವೆನು. ಅವನು ಅವರನ್ನು ಖಡ್ಗದ ಬಾಯಿಂದ ಹೊಡೆಯುವನು. ಅವರ ಮೇಲೆ ಕರುಣೆ ಇಡುವುದಿಲ್ಲ, ಕನಿಕರಿಸುವುದಿಲ್ಲ, ಅಂತಃಕರಣ ಪಡುವುದಿಲ್ಲ.’
JER 21:8 “ಈ ಜನಕ್ಕೆ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಜೀವದ ಮಾರ್ಗವನ್ನೂ, ಮರಣದ ಮಾರ್ಗವನ್ನೂ ನಿಮ್ಮ ಮುಂದೆ ಇಡುತ್ತೇನೆ.
JER 21:9 ಈ ಪಟ್ಟಣದಲ್ಲಿ ನಿಲ್ಲುವವನು ಖಡ್ಗದಿಂದಲೂ, ಕ್ಷಾಮದಿಂದಲೂ, ವ್ಯಾಧಿಯಿಂದಲೂ ಸಾಯುವನು. ಆದರೆ ಹೊರಗೆ ಹೋಗಿ, ನಿಮಗೆ ಮುತ್ತಿಗೆ ಹಾಕುವ ಕಸ್ದೀಯರ ಕಡೆಗೆ ಸೇರುವವನು ಬದುಕುವನು. ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.
JER 21:10 ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವುದು. ಏಕೆಂದರೆ ನಾನು ಒಳ್ಳೆಯದಕ್ಕಲ್ಲ, ಕೆಟ್ಟದ್ದಕ್ಕೆ ಈ ಪಟ್ಟಣಕ್ಕೆ ವಿರೋಧವಾಗಿ ನನ್ನ ಮುಖವನ್ನಿಟ್ಟಿದ್ದೇನೆಂದು ಯೆಹೋವ ದೇವರು ಅನ್ನುತ್ತಾರೆ. ಅದು ಬಾಬಿಲೋನಿನ ಅರಸನ ಕೈಯಲ್ಲಿ ಒಪ್ಪಿಸಲಾಗುವುದು. ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.’
JER 21:11 “ಯೆಹೂದದ ಅರಸನ ಮನೆಯವರಿಗೆ ಹೀಗೆ ಹೇಳು: ‘ಯೆಹೋವ ದೇವರ ವಾಕ್ಯವನ್ನು ಕೇಳಿರಿ,
JER 21:12 ದಾವೀದನ ಮನೆಯವರೇ, ಯೆಹೋವ ದೇವರು ಹೇಳುವುದೇನೆಂದರೆ, “ ‘ಬೆಳಿಗ್ಗೆ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ. ಇಲ್ಲದಿದ್ದರೆ ನನ್ನ ಕೋಪವು ಬೆಂಕಿಯ ಹಾಗೆ ಹೊರಟು, ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸಲಾಗದ ಹಾಗೆ ಉರಿಯುವುದು.
JER 21:13 ಇಗೋ, ತಗ್ಗಿನ ನಗರಿಯೇ, ಬಯಲಿನ ಬಂಡೆಯಲ್ಲಿ ವಾಸಮಾಡುವವರೇ, “ನಮ್ಮ ಮೇಲೆ ಯಾರು ಇಳಿದು ಬರುವರೆಂದು ನಮ್ಮ ನಿವಾಸಗಳಲ್ಲಿ ಯಾರು ಸೇರುವರೆಂದು, ಅನ್ನುವವರೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 21:14 ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸುತ್ತೇನೆ, ಎಂದು ಯೆಹೋವ ದೇವರು ಹೇಳುತ್ತಾರೆ. ಅದರ ಅಡವಿಗೆ ಬೆಂಕಿ ಹಚ್ಚುತ್ತೇನೆ. ಅದರ ಸುತ್ತಲಿಗಿರುವುದನ್ನೆಲ್ಲಾ ಅದು ನುಂಗಿಬಿಡುವುದು.’ ”
JER 22:1 ಯೆಹೋವ ದೇವರು ಹೀಗೆ ಹೇಳುತ್ತಾನೆ: “ಯೆಹೂದದ ಅರಸನ ಮನೆಗೆ ಇಳಿದು ಹೋಗಿ, ಅಲ್ಲಿ ಈ ವಾಕ್ಯವನ್ನು ಹೇಳು:
JER 22:2 ‘ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಯೆಹೂದದ ಅರಸನೇ, ನೀನೂ, ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಸಹಿತವಾಗಿ ಯೆಹೋವ ದೇವರ ವಾಕ್ಯವನ್ನು ಕೇಳಿರಿ.
JER 22:3 ಯೆಹೋವ ದೇವರು ಹೇಳುವುದೇನೆಂದರೆ: ನ್ಯಾಯವನ್ನೂ, ನೀತಿಯನ್ನೂ ನಡೆಸಿರಿ. ಸುಲಿಗೆಯಾದವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ. ಪರದೇಶಸ್ಥನಿಗೆ, ದಿಕ್ಕಿಲ್ಲದವನಿಗೆ ಮತ್ತು ವಿಧವೆಗೆ ಉಪದ್ರವವನ್ನಾದರೂ, ಬಲಾತ್ಕಾರವನ್ನಾದರೂ ಮಾಡಬೇಡಿರಿ. ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲಬೇಡಿರಿ.
JER 22:4 ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ, ಆಗ ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವರೂ, ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡುವ ಅರಸರು ತಮ್ಮ ಸೇವಕರ ಮತ್ತು ತಮ್ಮ ಜನರಸಹಿತವಾಗಿ ಈ ಅರಮನೆಯ ಬಾಗಿಲುಗಳಿಂದ ಪ್ರವೇಶಿಸಿದರು.
JER 22:5 ಆದರೆ ನೀವು ಈ ವಾಕ್ಯಗಳನ್ನು ಕೇಳದೆ ಹೋದರೆ, ಈ ಅರಮನೆ ಹಾಳಾಗುವುದು ಎಂದು ನನ್ನ ಮೇಲೆ ಆಣೆ ಇಡುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ.’ ”
JER 22:6 ಯೆಹೋವ ದೇವರು ಯೆಹೂದದ ಅರಸನ ಅರಮನೆಗೆ ಹೀಗೆ ಹೇಳುತ್ತಾರೆ: “ನೀನು ನನಗೆ ಗಿಲ್ಯಾದೂ, ಲೆಬನೋನಿನ ಗಿರಿಶೃಂಗ ಆಗಿದ್ದೀ. ಆದರೂ ನಿಶ್ಚಯವಾಗಿ ನಿನ್ನನ್ನು ಮರುಭೂಮಿಯಾಗಿಯೂ, ನಿವಾಸಿಗಳಿಲ್ಲದ ಪಟ್ಟಣಗಳನ್ನಾಗಿಯೂ ಮಾಡುವೆನು.
JER 22:7 ನಿನಗೆ ವಿರೋಧವಾಗಿ ತಮ್ಮ ತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡುತ್ತೇನೆ. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
JER 22:8 “ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು. ‘ಯೆಹೋವ ದೇವರು ಈ ದೊಡ್ಡ ಪಟ್ಟಣಕ್ಕೆ ಏಕೆ ಈ ಪ್ರಕಾರ ಮಾಡಿದ್ದಾರೆ?’ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವರು.
JER 22:9 ‘ಆಗ ಅವರು ತಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮಸ್ಕರಿಸಿ ಸೇವಿಸಿದ್ದರಿಂದಲೇ,’ ಎಂದು ಅವರು ಉತ್ತರಕೊಡುವರು.”
JER 22:10 ಮರಣ ಹೊಂದಿದ ಅರಸನಿಗಾಗಿ ಅಳಬೇಡಿರಿ. ಅವನಿಗಾಗಿ ಗೋಳಾಡಬೇಡಿರಿ. ಹೊರಟು ಹೋದವನಿಗಾಗಿ ಬಹಳವಾಗಿ ಅಳಿರಿ. ಏಕೆಂದರೆ ಅವನು ತಿರುಗಿ ಬರುವುದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವುದೇ ಇಲ್ಲ.
JER 22:11 ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ, ಈ ಸ್ಥಳದಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದೇ ಇಲ್ಲ.
JER 22:12 ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದಲ್ಲಿಯೇ ಸಾಯುವನು. ಅವನು ಈ ದೇಶವನ್ನು ಇನ್ನು ನೋಡುವುದಿಲ್ಲ.”
JER 22:13 “ಅನೀತಿಯಿಂದ ತನ್ನ ಅರಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳುವವನಿಗೂ, ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸ ತೆಗೆದುಕೊಳ್ಳುವವನೂ ಕಷ್ಟ!
JER 22:14 ಅವನು, ‘ನಾನು ವಿಸ್ತಾರವಾದ ಅರಮನೆಯನ್ನೂ, ವಿಶಾಲವಾದ ಕೊಠಡಿಗಳನ್ನೂ ಕಟ್ಟಿಸಿಕೊಳ್ಳುವೆನೆಂದು ಹೇಳಿ.’ ಕಿಟಕಿಗಳನ್ನು ಕೊರೆದು, ದೇವದಾರಿನ ಹಲಗೆಗಳನ್ನು ಹಾಕಿ, ಕೆಂಪು ಬಣ್ಣವನ್ನು ಹಚ್ಚುವವನಿಗೂ ಕಷ್ಟ!
JER 22:15 “ಹೆಚ್ಚು ಹೆಚ್ಚು ದೇವದಾರುಗಳನ್ನು ಹೊಂದಲು ಅದು ನಿಮ್ಮನ್ನು ರಾಜನನ್ನಾಗಿಸುತ್ತದೆಯೇ? ನಿನ್ನ ತಂದೆ ಉಂಡು, ಕುಡಿದು ನ್ಯಾಯವನ್ನೂ, ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾಗಲಿಲ್ಲವೋ?
JER 22:16 ಬಡವನ ಮತ್ತು ದರಿದ್ರನ ನ್ಯಾಯವನ್ನು ತೀರಿಸಿದನು. ಆಗ ಅವನಿಗೆ ಒಳ್ಳೆಯದಾಯಿತು. ನನ್ನನ್ನು ತಿಳಿದುಕೊಳ್ಳುವುದು ಇದೇ ಅಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
JER 22:17 “ಆದರೆ ನಿನ್ನ ಕಣ್ಣುಗಳು, ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ ಅಪರಾಧವಿಲ್ಲದವನ ರಕ್ತ ಚೆಲ್ಲುವುದರ ಮೇಲೆ ಮತ್ತು ಪೀಡೆಯನ್ನೂ, ಬಲಾತ್ಕಾರವನ್ನೂ ಮಾಡುವುದರ ಮೇಲೆಯೇ ಹೊರತು, ಮತ್ಯಾವುದರ ಮೇಲೆಯೂ ಇರುವುದಿಲ್ಲ.”
JER 22:18 ಆದ್ದರಿಂದ ಯೋಷೀಯನ ಮಗ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವರು ಅವನನ್ನು ಕುರಿತು ಗೋಳಾಡಿ, ‘ಅಯ್ಯೋ, ನನ್ನ ಸಹೋದರನೇ, ಅಯ್ಯೋ, ನನ್ನ ಸಹೋದರಿಯೇ,’ ಎಂದು ಅನ್ನುವುದಿಲ್ಲ. ‘ಅಯ್ಯೋ, ದೊರೆಯೇ, ಅಯ್ಯೋ, ಅವನ ವೈಭವವೇ,’ ಎಂದು ಅವನನ್ನು ಕುರಿತು ಗೋಳಾಡುವುದಿಲ್ಲ.
JER 22:19 ಕತ್ತೆಯನ್ನು ಹೂಳಿಡುವ ಪ್ರಕಾರ ಅವನನ್ನು ಹೂಳಿಡುವರು. ಅವನನ್ನು ಎಳೆದುಕೊಂಡು ಹೋಗಿ, ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.”
JER 22:20 “ಲೆಬನೋನಿಗೆ ಹೋಗಿ ಕೂಗು, ಬಾಷಾನಿನಲ್ಲಿ ನಿನ್ನ ಸ್ವರವನ್ನೆತ್ತು, ಅಬಾರೀಮಿನಲ್ಲಿ ಮೊರೆಯಿಡು; ಏಕೆಂದರೆ ನಿನ್ನ ಜೊತೆಗಾರರು ನಾಶವಾಗಿದ್ದಾರೆ.
JER 22:21 ನಿನ್ನ ಏಳಿಗೆಗೆ ನಿನ್ನ ಸಂಗಡ ಮಾತನಾಡಿದೆನು. ಆದರೆ ನೀನು, ‘ನಾನು ಕೇಳುವುದಿಲ್ಲ,’ ಎಂದೆ. ನನ್ನ ಮಾತಿಗೆ ಕಿವಿಗೊಡದೆ ಇರುವುದೇ ನಿನ್ನ ಯೌವನದ ರೀತಿಯಾಗಿದೆ.
JER 22:22 ನಿನ್ನ ಕುರುಬರನ್ನೆಲ್ಲಾ ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಜೊತೆಗಾರರು ಸೆರೆಗೆ ಹೋಗುವರು. ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ, ಅವಮಾನವೂ ಆಗುವುದು.
JER 22:23 ಓ, ‘ಲೆಬನೋನಿನಲ್ಲಿ’ ವಾಸಮಾಡುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡವಳೇ, ನಿನ್ನ ಮೇಲೆ ಬೇನೆಗಳೂ, ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ದುಃಖಕರವಾಗಿರುವೆ.
JER 22:24 “ನನ್ನ ಜೀವದಾಣೆ, ಯೆಹೋಯಾಕೀಮನ ಮಗ ಯೆಹೂದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಉಂಗುರವಾಗಿದ್ದರೂ, ನಿನ್ನನ್ನು ಅಲ್ಲಿಂದ ಕಿತ್ತುಹಾಕಿ,
JER 22:25 ನಿನ್ನ ಪ್ರಾಣವನ್ನು ಹುಡುಕುವವರ ಕೈಗೂ, ನೀನು ಹೆದರಿಕೊಂಡವರ ಕೈಗೂ ಅಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಹಾಗೂ ಬಾಬಿಲೋನಿಯ ಕೈಗೆ ಒಪ್ಪಿಸಿ ಬಿಡುತ್ತೇನೆ.
JER 22:26 ನಿನ್ನನ್ನೂ, ನಿನ್ನ ಹೆತ್ತ ತಾಯಿಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಹಾಕಿಬಿಡುವೆನು. ನೀವು ಅಲ್ಲೇ ಸಾಯುವಿರಿ.
JER 22:27 ಆದರೆ ಅವರು ತಿರುಗಿ ಬರುವುದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂದಿರುಗಲಾರರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 22:28 ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದುಹೋದ ಮಡಿಕೆಯೆ? ಮೆಚ್ಚುಗೆ ಇಲ್ಲದ ಪಾತ್ರೆಯೆ? ಏಕೆ ಕೊನ್ಯನೂ, ಅವನ ಸಂತಾನವೂ ಬೀದಿಪಾಲಾಗಿದ್ದಾರೆ, ತಮಗೆ ತಿಳಿಯದ ದೇಶಕ್ಕೆ ಗಡಿಪಾರಾಗಿದ್ದಾರೆ?
JER 22:29 ಓ ದೇಶವೇ, ದೇಶವೇ, ದೇಶವೇ, ಯೆಹೋವ ದೇವರ ವಾಕ್ಯವನ್ನು ಕೇಳು.
JER 22:30 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ, ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆಯಿರಿ. ಏಕೆಂದರೆ ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕುಳಿತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವುದಿಲ್ಲ.”
JER 23:1 “ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:2 ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧವಾಗಿ ಹೀಗೆ ಹೇಳುತ್ತಾರೆ: “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ಮತ್ತು ಅವುಗಳ ಮೇಲೆ ಕಾಳಜಿ ತೋರಿಸಲಿಲ್ಲ. ಇಗೋ, ನೀನು ಮಾಡಿದ ಕೆಟ್ಟತನಕ್ಕಾಗಿ ನಾನು ನಿನಗೆ ಶಿಕ್ಷೆಯನ್ನು ಕೊಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:3 “ಆದರೆ ನಾನು ನನ್ನ ಮಂದೆಯ ಶೇಷವನ್ನು, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ, ಅವರನ್ನು ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು. ಅವರು ಪೀಳಿಗೆಯಾಗಿ ಹೆಚ್ಚುವರು.
JER 23:4 ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ. ಅವರು ಇನ್ನು ಮೇಲೆ ಭಯಪಡುವುದೇ ಇಲ್ಲ, ಅಂಜುವುದಿಲ್ಲ, ಕೊರತೆ ಪಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:5 “ಇಗೋ, ದಿನಗಳು ಬರಲಿವೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಎಬ್ಬಿಸುತ್ತೇನೆ. ಒಬ್ಬ ಅರಸನು ರಾಜ್ಯವನ್ನಾಳಿ ವೃದ್ಧಿಯಾಗುವನು. ಭೂಮಿಯಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.
JER 23:6 ಆತನ ದಿನಗಳಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು. ಇಸ್ರಾಯೇಲರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಎಂದರೆ, ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಅವರಿಗಿರುವುದು.
JER 23:7 “ಆದ್ದರಿಂದ ಇಗೋ, ದಿನಗಳು ಬರಲಿವೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ, ‘ಇಸ್ರಾಯೇಲನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಯೆಹೋವ ದೇವರ ಜೀವದಾಣೆ,’ ಎಂದು ಹೇಳುವುದೇ ಇಲ್ಲ.
JER 23:8 ಆದರೆ, ‘ಇಸ್ರಾಯೇಲಿನ ಮನೆತನದವರ ಸಂತಾನವನ್ನು ಉತ್ತರ ದೇಶದಿಂದಲೂ ಬರಮಾಡಿದ ಯೆಹೋವ ದೇವರ ಜೀವದಾಣೆ,’ ಎಂದು ಹೇಳುವರು. ಅವರು ತಮ್ಮ ದೇಶದಲ್ಲಿಯೇ ವಾಸಮಾಡುವರು.”
JER 23:9 ಪ್ರವಾದಿಗಳ ನಿಮಿತ್ತ: ನನ್ನ ಹೃದಯವು ನನ್ನಲ್ಲಿ ಮುರಿದಿದೆ. ನನ್ನ ಎಲುಬುಗಳೆಲ್ಲಾ ಕದಲುತ್ತವೆ. ಯೆಹೋವ ದೇವರ ನಿಮಿತ್ತವೂ, ಆತನ ಪರಿಶುದ್ಧ ವಾಕ್ಯಗಳ ನಿಮಿತ್ತವೂ, ಮತ್ತನಾದ ಮನುಷ್ಯನ ಹಾಗೆಯೂ, ದ್ರಾಕ್ಷಾರಸಕ್ಕೆ ಒಳಗಾದ ಪುರುಷನ ಹಾಗೆಯೂ ಇದ್ದೇನೆ.
JER 23:10 ಏಕೆಂದರೆ ದೇಶವು ವ್ಯಭಿಚಾರಗಳಿಂದ ತುಂಬಿದೆ. ದೇಶವು ಶಾಪದಿಂದ ದುಃಖಿಸುತ್ತದೆ. ಮರುಭೂಮಿಯ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ. ಪ್ರವಾದಿಗಳು ಕೆಟ್ಟ ಮಾರ್ಗವನ್ನು ಅನುಸರಿಸುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಅನ್ಯಾಯವಾಗಿ ಬಳಸುತ್ತಾರೆ.
JER 23:11 “ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ. ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:12 “ಆದ್ದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗಿರುವುದು. ಅವರು ಮುಗ್ಗರಿಸಿಬೀಳುವರು. ನಾನು ಕೇಡನ್ನು ದಂಡನೆಯ ವರ್ಷವನ್ನಾಗಿ ಅವರ ಮೇಲೆ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:13 “ಸಮಾರ್ಯದ ಪ್ರವಾದಿಗಳಲ್ಲಿ ಅಸಹ್ಯಕರ ವಿಷಯವನ್ನು ನೋಡಿದ್ದೇನೆ. ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ, ನನ್ನ ಜನರಾದ ಇಸ್ರಾಯೇಲನ್ನು ತಪ್ಪುವಂತೆ ಮಾಡಿದ್ದಾರೆ.
JER 23:14 ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ. ಅವರು ವ್ಯಭಿಚಾರ ಮಾಡಿ, ಸುಳ್ಳಿನಲ್ಲಿ ನಡೆದುಕೊಂಡದ್ದಲ್ಲದೆ, ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ. ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ, ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ.”
JER 23:15 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಪ್ರವಾದಿಗಳ ವಿಷಯವಾಗಿ ಹೇಳುವುದೇನೆಂದರೆ: “ನಾನು ಅವರಿಗೆ ಕಹಿಯಾದ ಆಹಾರ ತಿನ್ನುವುದಕ್ಕೆ ಕೊಡುವೆನು. ವಿಷದ ನೀರನ್ನು ಕುಡಿಯ ಕೊಡುವೆನು. ಏಕೆಂದರೆ ಯೆರೂಸಲೇಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.”
JER 23:16 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿಗೊಡಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಯೆಹೋವ ದೇವರ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನವನ್ನು ಹೇಳುತ್ತಾರೆ.
JER 23:17 ಆದರೂ ನನ್ನನ್ನು ಅಸಹ್ಯಿಸುವವರಿಗೆ, ಅವರು, ‘ನಿಮಗೆ ಸಮಾಧಾನವಾಗುವುದು, ಎಂದು ಯೆಹೋವ ದೇವರು ಹೇಳಿದ್ದಾರೆ,’ ಎಂದು ಹೇಳುತ್ತಲೇ ಇದ್ದಾರೆ. ತಮ್ಮ ಹೃದಯದ ಹಟದ ಪ್ರಕಾರ ನಡೆದುಕೊಳ್ಳುವವರೆಲ್ಲರಿಗೆ ‘ನಿಮ್ಮ ಮೇಲೆ ಕೇಡು ಬರುವುದಿಲ್ಲ,’ ಎನ್ನುತ್ತಾರೆ.
JER 23:18 ಆದರೆ ಯಾರು ಯೆಹೋವ ದೇವರ ಆಲೋಚನೆಯ ಸಭೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳಿದುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯವನ್ನು ಲಕ್ಷ್ಯವಿಟ್ಟು ಕೇಳಿದ್ದಾರೆ?
JER 23:19 ಇಗೋ, ಯೆಹೋವ ದೇವರ ಬಿರುಗಾಳಿಯು ಉಗ್ರವಾಗಿ ಹೊರಟಿದೆ. ಅಘೋರವಾದ ಆ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣವಾಗಿ ಬೀಳುವುದು
JER 23:20 ಆತನು ತನ್ನ ಹೃದಯದ ಆಲೋಚನೆಗಳನ್ನು ನಡೆಸಿ ತೀರಿಸುವವರೆಗೂ ಯೆಹೋವ ದೇವರ ಕೋಪವು ತಿರುಗುವುದಿಲ್ಲ. ಅಂತ್ಯ ದಿವಸಗಳಲ್ಲಿ ನೀವು ಅದನ್ನು ಸಂಪೂರ್ಣವಾಗಿ ಗ್ರಹಿಸುವಿರಿ.
JER 23:21 ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ; ಆದರೂ ಅವರು ತಮ್ಮ ಸಂದೇಶದೊಂದಿಗೆ ಓಡಿದ್ದಾರೆ ನಾನು ಅವರ ಸಂಗಡ ಮಾತನಾಡಲಿಲ್ಲ. ಆದರೂ ಪ್ರವಾದಿಸಿದರು.
JER 23:22 ಆದರೆ ಅವರು ನನ್ನ ಆಲೋಚನಾ ಸಭೆಯಲ್ಲಿ ನಿಂತಿದ್ದರೆ, ಆಗ ಅವರು ಜನರಿಗೆ ನನ್ನ ವಾಕ್ಯಗಳನ್ನು ಹೇಳಿಕೊಟ್ಟು, ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ, ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು.”
JER 23:23 ಯೆಹೋವ ದೇವರು ಹೀಗೆನ್ನುತ್ತಾರೆ, “ಹತ್ತಿರದಲ್ಲಿ ಇದ್ದರೆ ಮಾತ್ರ ನಾನು ದೇವರೋ? ದೂರದಲ್ಲಿದ್ದರೆ ನಾನು ದೇವರಲ್ಲವೋ?”
JER 23:24 ನನ್ನ ಕಣ್ಣಿಗೆ ಬೀಳದಂತೆ ಯಾವನಾದರೂ ಗುಪ್ತಸ್ಥಳಗಳಲ್ಲಿ ಮರೆಮಾಚಿಕೊಳ್ಳಲು ಸಾಧ್ಯವೇ? ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಭೂಮ್ಯಾಕಾಶಗಳಲ್ಲಿ ವ್ಯಾಪಿಸಿರುವವನಲ್ಲವೇ?” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:25 “ ‘ನನಗೆ ಕನಸು ಬಿತ್ತು, ಕನಸು ಬಿತ್ತು,’ ಎಂದು ನನ್ನ ಹೆಸರು ಹೇಳಿ ಸುಳ್ಳು ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.
JER 23:26 ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರವರೆಗೆ ಇರುವುದು? ಹೌದು, ಅವರು ತಮ್ಮ ಮನಸ್ಸಿನ ಭ್ರಮೆಗಳನ್ನು ಪ್ರವಾದಿಸುವವರೇ.
JER 23:27 ಅವರ ಪಿತೃಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ, ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತುಬಿಡುವಂತೆ ಮಾಡುವುದಕ್ಕೆ ಯೋಚಿಸುತ್ತಾರೆ.
JER 23:28 ಕನಸುಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ ಆದರೆ ನನ್ನ ವಾಕ್ಯವನ್ನು ಕೇಳಿದವನು ಅದನ್ನು ಯಥಾರ್ಥವಾಗಿ ನುಡಿಯಲಿ. ಹೊಟ್ಟನ್ನು ಕಾಳಿನೊಂದಿಗೆ ಹೋಲಿಸಲಾದೀತೆ?” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:29 “ನನ್ನ ವಾಕ್ಯ ಬೆಂಕಿಗೆ ಸಮಾನ, ಬಂಡೆಯನ್ನು ಪುಡಿಪುಡಿ ಮಾಡುವ ಸುತ್ತಿಗೆಗೆ ಸಮಾನ.” ಇದು ಯೆಹೋವ ದೇವರಾದ ನನ್ನ ನುಡಿ.
JER 23:30 ಆದ್ದರಿಂದ ಇಗೋ, “ತನ್ನ ನೆರೆಯವನಿಂದ ನನ್ನ ವಾಕ್ಯಗಳನ್ನು ಕದ್ದುಕೊಳ್ಳುವ ಪ್ರತಿಯೊಬ್ಬ ಪ್ರವಾದಿಗೆ ನಾನು ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 23:31 “ಇಗೋ, ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಯೆಹೋವ ದೇವರು ನುಡಿಯುತ್ತಾರೆ,’ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆ.
JER 23:32 ಸುಳ್ಳಿನ ಕನಸುಗಳನ್ನು ಪ್ರವಾದಿಸಿ, ತಮ್ಮ ಸುಳ್ಳುಗಳಿಂದಲೂ ತಮ್ಮ ನಿರರ್ಥಕವಾದ ವಿಚಾರಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆ ಕೊಡಲಿಲ್ಲ. ಆದ್ದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವುದೇ ಇಲ್ಲ,” ಎಂದು ಯೆಹೋವ ದೇವರು ನುಡಿಯುತ್ತಾರೆ.
JER 23:33 “ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಯೆಹೋವ ದೇವರು ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ, ನೀನು ಅವರಿಗೆ ಹೀಗೆಂದು ಹೇಳು: ‘ನೀವೇ, ಯೆಹೋವ ದೇವರ ಹೊರೆ. ನಿಮ್ಮನ್ನು ಆತನು ಎಸೆದುಬಿಡುವನು.’
JER 23:34 ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ‘ಯೆಹೋವ ದೇವರು ಹೊರೆ,’ ಎಂದು ಹೇಳಿದ್ದೇಯಾದರೆ, ನಾನು ಅವನನ್ನೂ, ಅವನ ಮನೆಯವರನ್ನೂ ದಂಡಿಸುವೆನು.
JER 23:35 ‘ಯೆಹೋವ ದೇವರು ಕೊಟ್ಟ ಉತ್ತರವೇನು? ಯೆಹೋವ ದೇವರು ನುಡಿದದ್ದು ಏನು?’ ಎಂದು ನಿಮ್ಮ ನಿಮ್ಮ ನೆರೆಹೊರೆಯವರನ್ನು ಮತ್ತು ಅಣ್ಣತಮ್ಮಂದಿರನ್ನು ವಿಚಾರಿಸಬೇಕೇ ಹೊರತು,
JER 23:36 ‘ಯೆಹೋವ ದೇವರ ಹೊರೆ,’ ಎಂಬ ಮಾತನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೆ ಹೊರೆ. ಜೀವಸ್ವರೂಪನಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರ ಯೆಹೋವ ದೇವರ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.
JER 23:37 ‘ಯೆಹೋವ ದೇವರಿಂದ ನಿಮಗೆ ಯಾವ ಉತ್ತರ ದೊರಕಿತು? ಯೆಹೋವ ದೇವರು ಏನು ನುಡಿದಿದ್ದಾರೆ?’ ಎಂದು ಪ್ರವಾದಿಯನ್ನು ಕೇಳಿರಿ.
JER 23:38 ‘ಯೆಹೋವ ದೇವರ ಹೊರೆ,’ ಎಂದು ಹೇಳಬೇಡಿ. ಹೇಳಿದರೆ ಯೆಹೋವ ದೇವರು ಇಂತೆನ್ನುತ್ತಾನೆ: ‘ನಾನು ನಿಮಗೆ, ಯೆಹೋವ ದೇವರು ಹೊರೆ,’ ಎಂಬ ಮಾತನ್ನು ಎತ್ತಲೇಕೂಡದೆಂದು ಹೇಳಿ ಕಳುಹಿಸಿದರೂ, ನೀವು ಎತ್ತಿದ್ದೀರಿ.
JER 23:39 ಈ ಕಾರಣ ನಿಮ್ಮನ್ನು ಮತ್ತು ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ನಗರವನ್ನು ನನ್ನೆದುರಿನಿಂದ ಎತ್ತಿ ಎಸೆದುಬಿಡುವೆನು.
JER 23:40 ನೀವು ನಿಂದೆಗೆ ಗುರಿಯಾಗುವಿರಿ. ಎಂದಿಗೂ ಮರೆಯಲಾಗದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.”
JER 24:1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಬಡಗಿಯರನ್ನೂ, ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಗೆ ಒಯ್ದನು. ಯೆಹೋವ ದೇವರ ದೇವಾಲಯದ ಮುಂದೆ ಇಟ್ಟಿರುವ ಎರಡು ಬುಟ್ಟಿ ಅಂಜೂರದ ಹಣ್ಣುಗಳನ್ನು ಯೆಹೋವ ದೇವರು ನನಗೆ ತೋರಿಸಿದರು.
JER 24:2 ಒಂದು ಬುಟ್ಟಿಯಲ್ಲಿ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳು ತುಂಬಿದ್ದವು. ಅವು ಅತ್ಯುತ್ತಮವಾದ ಅಂಜೂರದ ಹಣ್ಣುಗಳು. ಇನ್ನೊಂದು ಬುಟ್ಟಿಯಲ್ಲಿ ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.
JER 24:3 ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.
JER 24:4 ಆಗ ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು:
JER 24:5 “ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುವುದನ್ನು ಕೇಳು, ‘ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳುಹಿಸಿಬಿಟ್ಟು, ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂತವರು. ನಾನು ಅವರನ್ನು ಒಳ್ಳೆಯವರಂತೆ ಪರಿಗಣಿಸುತ್ತೇನೆ.
JER 24:6 ಏಕೆಂದರೆ ನಾನು ಅವರ ಒಳ್ಳೆಯದರ ಮೇಲೆ ನನ್ನ ದೃಷ್ಟಿಯನ್ನು ಇಟ್ಟುಕೊಳ್ಳುತ್ತೇನೆ. ಈ ದೇಶಕ್ಕೆ ಅವರನ್ನು ತಿರುಗಿ ಬರಮಾಡುವೆನು. ಕೆಡವಿಹಾಕದೆ ಅವರನ್ನು ಕಟ್ಟುವೆನು. ಕೀಳದೆ ಅವರನ್ನು ನೆಡುವೆನು.
JER 24:7 ನಾನೇ ಯೆಹೋವನೆಂದು ನನ್ನನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಹಿಂದಿರುಗಿಕೊಳ್ಳುವರು.
JER 24:8 “ ‘ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ, ಈಜಿಪ್ಟ್ ದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 24:9 ‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.
JER 24:10 ನಾನು ಅವರಿಗೂ, ಅವರ ತಂದೆಗಳಿಗೂ ಕೊಟ್ಟ ದೇಶದೊಳಗಿಂದ ಅವರು ನಾಶವಾಗುವವರೆಗೂ ಖಡ್ಗವನ್ನೂ, ಕ್ಷಾಮವನ್ನೂ, ವ್ಯಾಧಿಯನ್ನೂ ಅವರಲ್ಲಿ ಕಳುಹಿಸುವೆನು.’ ”
JER 25:1 ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅಂದರೆ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಪ್ರವಾದಿ ಯೆರೆಮೀಯನಿಗೆ ಯೆಹೂದ್ಯರೆಲ್ಲರ ವಿಷಯವಾಗಿ ದೈವೋಕ್ತಿಯೊಂದು ಉಂಟಾಯಿತು.
JER 25:2 ಪ್ರವಾದಿಯಾದ ಯೆರೆಮೀಯನು ಯೆಹೂದದ ಸಮಸ್ತ ಜನರಿಗೂ, ಯೆರೂಸಲೇಮಿನ ಎಲ್ಲಾ ನಿವಾಸಿಗಳಿಗೂ ತಿಳಿಸಿದ್ದು ಏನೆಂದರೆ:
JER 25:3 ಆಮೋನನ ಮಗನೂ, ಯೆಹೂದದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಿಂದ ಈ ದಿವಸದವರೆಗೆ ಅಂದರೆ, ಕಳೆದ ಇಪ್ಪತ್ತಮೂರು ವರ್ಷಗಳಿಂದ ಯೆಹೋವ ದೇವರು ತಮ್ಮ ವಾಕ್ಯವನ್ನು ನನಗೆ ತಿಳಿಸಿದ್ದಾರೆ. ಅದನ್ನು ನಾನು ನಿಮಗೆ ತಡಮಾಡದೆ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.
JER 25:4 ಇದಲ್ಲದೆ ಯೆಹೋವ ದೇವರು ತಮ್ಮ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಕಳುಹಿಸಿದ್ದಾರೆ. ಬೆಳಿಗ್ಗೆ ಎದ್ದು ಕಳುಹಿಸಿದ್ದಾರೆ. ಆದರೆ ನೀವು ಕೇಳಲಿಲ್ಲ. ಕೇಳುವುದಕ್ಕೆ ನಿಮ್ಮ ಕಿವಿ ಕೊಡಲಿಲ್ಲ.
JER 25:5 ಅವರು ಹೇಳಿದ್ದೇನೆಂದರೆ: “ನಿಮ್ಮ ನಿಮ್ಮ ಕೆಟ್ಟ ಮಾರ್ಗವನ್ನೂ, ನಿಮ್ಮ ಕೆಟ್ಟ ದೃಶ್ಯಗಳ ಕೆಟ್ಟತನವನ್ನೂ ಬಿಟ್ಟು ಮತ್ತೆ ತಿರುಗಿಕೊಳ್ಳಿರಿ. ಆಗ ಯೆಹೋವ ದೇವರು ನಿಮಗೂ, ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಿರಿ.
JER 25:6 ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಆರಾಧಿಸುವುದಕ್ಕೂ ಹಿಂಬಾಲಿಸಬೇಡಿರಿ. ನಿಮ್ಮ ಕೈಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ. ಆಗ ನಿಮಗೆ ಯಾವ ಕೇಡೂ ಮಾಡೆನು.”
JER 25:7 “ಆದರೂ ನೀವು ನನಗೆ ಕಿವಿಗೊಡದೆ, ನಿಮಗೆ ಕೇಡು ಬರುವ ಹಾಗೆ ನಿಮ್ಮ ಕೈಕೆಲಸಗಳಿಂದ ನನಗೆ ಕೋಪವನ್ನೆಬ್ಬಿಸಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 25:8 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ನನ್ನ ಮಾತುಗಳನ್ನು ಕೇಳದ ಕಾರಣ
JER 25:9 ಇಗೋ, ನಾನು ಕಳುಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ, ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನೂ ತೆಗೆದುಕೊಂಡು, ಈ ದೇಶಕ್ಕೆ ವಿರೋಧವಾಗಿಯೂ, ಅವರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ತರಿಸಿ, ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ಭಯಕ್ಕೂ, ಪರಿಹಾಸ್ಯಕ್ಕೂ ಗುರಿಮಾಡಿ ನಿತ್ಯ ನಾಶಮಾಡುವೆನು.
JER 25:10 ನಾನು ಈ ದೇಶಗಳಿಂದ ಸಂತೋಷದ ಶಬ್ದ ಮತ್ತು ಸಂತೋಷದ ಶಬ್ದವನ್ನು ಮಾತ್ರ ತೆಗೆದುಹಾಕುತ್ತೇನೆ, ವಧು ಅಥವಾ ವಧುವಿನ ಧ್ವನಿ ಅಲ್ಲಿ ಕೇಳಿಸುವುದಿಲ್ಲ, ಬೀಸುಕಲ್ಲಿನ ಸದ್ದನ್ನು ಅಡಗಿಸುವೆನು. ದೀಪಕ್ಕೆ ಎಣ್ಣೆ ಇಲ್ಲದಂತೆ ಮಾಡುವೆನು.
JER 25:11 ಈ ದೇಶವೆಲ್ಲಾ ಹಾಳಾಗಿ ಭಯಕ್ಕೆ ಗುರಿಯಾಗುವುದು. ಈ ಜನಾಂಗಗಳು ಬಾಬಿಲೋನಿನ ಅರಸನನ್ನು ಎಪ್ಪತ್ತು ವರ್ಷ ಸೇವಿಸುವರು.
JER 25:12 “ಎಪ್ಪತ್ತು ವರ್ಷ ತುಂಬಿದ ಮೇಲೆ ನಾನು ಬಾಬಿಲೋನಿನ ಅರಸನನ್ನೂ, ಆ ಜನಾಂಗವನ್ನೂ, ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು.
JER 25:13 ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ, ಯೆರೆಮೀಯನು ಜನಾಂಗಗಳಿಗೆ ವಿರೋಧವಾಗಿ ಪ್ರವಾದಿಸಿ, ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡುವೆನು.
JER 25:14 ಅನೇಕ ಜನಾಂಗಗಳೂ, ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆಗಳ ಪ್ರಕಾರವೂ, ಅವರ ಕೈಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 25:15 ಇಸ್ರಾಯೇಲಿನ ದೇವರಾದ ಯೆಹೋವ ದೇವರು ನನಗೆ ಹೀಗೆಂದರು: “ಈ ರೌದ್ರದ ದ್ರಾಕ್ಷಾರಸದ ಪಾತ್ರೆಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತೆಗೆದುಕೋ.
JER 25:16 ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತ ಕದಲಿ ಓಲಾಡುವರು.”
JER 25:17 ಆಗ ನಾನು ಪಾತ್ರೆಯನ್ನು ಯೆಹೋವ ದೇವರ ಕೈಯಿಂದ ತೆಗೆದುಕೊಂಡು, ಯೆಹೋವ ದೇವರು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
JER 25:18 ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅದರ ಅರಸುಗಳಿಗೂ, ಅಧಿಕಾರಿಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳು ಮಾಡಿ, ಭಯಕ್ಕೂ, ಪರಿಹಾಸ್ಯಕ್ಕೂ, ಶಾಪಕ್ಕೂ ಗುರಿ ಮಾಡುವ ಹಾಗೆ ಕುಡಿಸಿದೆನು.
JER 25:19 ಈಜಿಪ್ಟಿನ ಅರಸನಾದ ಫರೋಹನಿಗೂ, ಅವನ ಸೇವಕರಿಗೂ, ಅವನ ಅಧಿಕಾರಿಗಳಿಗೂ, ಅವನ ಎಲ್ಲಾ ಜನರಿಗೂ,
JER 25:20 ವಿದೇಶೀಯ ಜನರೆಲ್ಲರಿಗೂ, ಊಚ್ ದೇಶದ ಅರಸರೆಲ್ಲರಿಗೂ, ಫಿಲಿಷ್ಟಿಯ ದೇಶದ ಅರಸರಾದ, ಅಷ್ಕೆಲೋನಿಗೂ, ಗಾಜಕ್ಕೂ, ಎಕ್ರೋನಿಗೂ, ಅಷ್ಡೋದಿನ ಉಳಿದವರಿಗೂ,
JER 25:21 ಎದೋಮಿಗೂ, ಮೋವಾಬಿಗೂ, ಅಮ್ಮೋನ್ಯರಿಗೂ,
JER 25:22 ಟೈರಿನ ಅರಸರೆಲ್ಲರಿಗೂ, ಸೀದೋನಿನ ಅರಸರೆಲ್ಲರಿಗೂ, ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ,
JER 25:23 ದೆದಾನಿಗೂ, ತೇಮಾಕ್ಕೂ, ಬೂಜಿಗೂ, ಕಟ್ಟಕಡೆಯ ಮೂಲೆಯವರೆಗೂ,
JER 25:24 ಅರೇಬಿಯದ ಅರಸರೆಲ್ಲರಿಗೂ, ಮರುಭೂಮಿಯಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ,
JER 25:25 ಜಿಮ್ರಿಯ ಅರಸರೆಲ್ಲರಿಗೂ, ಏಲಾಮಿನ ಅರಸರೆಲ್ಲರಿಗೂ, ಮೇದ್ಯದ ಅರಸರೆಲ್ಲರಿಗೂ,
JER 25:26 ಹತ್ತಿರದಲ್ಲಿಯೂ, ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿರುವ ಉತ್ತರ ದಿಕ್ಕಿನ ಅರಸರೆಲ್ಲರಿಗೂ, ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯಗಳಿಗೂ ಕುಡಿಸಿದೆನು. ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
JER 25:27 “ಆದ್ದರಿಂದ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರಿ.’
JER 25:28 ಅವರು ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಂಡು ಕುಡಿಯಲು ತಿರಸ್ಕರಿಸಿದರೆ, ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀವು ನಿಶ್ಚಯವಾಗಿ ಕುಡಿಯಬೇಕು.
JER 25:29 ಏಕೆಂದರೆ ಇಗೋ, ನನ್ನ ಹೆಸರಿನಿಂದ ಕರೆಯಲಾಗಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವುದಕ್ಕೆ ಆರಂಭ ಮಾಡುತ್ತೇನೆ. ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ನಾನು ಭೂನಿವಾಸಿಗಳೆಲ್ಲರ ಮೇಲೆ ಖಡ್ಗವನ್ನು ಕರೆಯುತ್ತೇನೆಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’
JER 25:30 “ಆದ್ದರಿಂದ ನೀನು ಅವರಿಗೆ ವಿರೋಧವಾಗಿ ಈ ವಾಕ್ಯಗಳನ್ನೆಲ್ಲಾ ಪ್ರವಾದಿಸಿ, ಅವರಿಗೆ ಹೇಳತಕ್ಕದ್ದೇನೆಂದರೆ, “ ‘ಯೆಹೋವ ದೇವರು ಉನ್ನತದಿಂದ ಗರ್ಜಿಸಿ, ತಮ್ಮ ಪರಿಶುದ್ಧ ನಿವಾಸದೊಳಗಿಂದ ತಮ್ಮ ಶಬ್ದವನ್ನು ಕೊಡುವರು. ತಮ್ಮ ನಿವಾಸದ ಮೇಲೆ ಗಟ್ಟಿಯಾಗಿ ಗರ್ಜಿಸಿ, ದ್ರಾಕ್ಷಿ ತುಳಿಯುವವರ ಹಾಗೆ ಆರ್ಭಟವನ್ನು ಭೂನಿವಾಸಿಗಳೆಲ್ಲರಿಗೆ ವಿರೋಧವಾಗಿ ಎತ್ತುವರು.
JER 25:31 ಭೂಮಿಯ ಅಂತ್ಯಗಳವರೆಗೆ ಘೋಷವು ಬರುವುದು. ಯೆಹೋವ ದೇವರಿಗೆ ಜನಾಂಗಗಳ ಸಂಗಡ ವ್ಯಾಜ್ಯವಿದೆ. ಅವರು ಎಲ್ಲಾ ಮನುಷ್ಯರ ಸಂಗಡ ನ್ಯಾಯಕ್ಕೆ ನಿಲ್ಲುವರು. ದುಷ್ಟರನ್ನು ಖಡ್ಗಕ್ಕೆ ಒಪ್ಪಿಸುವರು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
JER 25:32 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವುದು. ಭೂಮಿಯ ಮೇರೆಗಳಿಂದ ಮಹಾ ಬಿರುಗಾಳಿ ಏಳುವುದು.”
JER 25:33 ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯವರೆಗೆ ಯೆಹೋವ ದೇವರಿಂದ ಹತರಾದವರು ಇರುವರು. ಅವರಿಗೋಸ್ಕರ ಗೋಳಾಡುವುದಿಲ್ಲ. ಅವರನ್ನು ಕೂಡಿಸುವುದಿಲ್ಲ. ಅವರನ್ನು ಹೂಳಿಡುವುದಿಲ್ಲ. ಅವರು ಭೂಮಿಯ ಮೇಲೆ ಗೊಬ್ಬರದಂತಿರುವರು.
JER 25:34 ಕುರುಬರೇ, ಗೋಳಿಟ್ಟು ಕೂಗಿರಿ. ಮಂದೆಯಲ್ಲಿನ ಪ್ರಮುಖರೇ, ಧೂಳಿನಲ್ಲಿ ಹೊರಳಾಡಿರಿ. ಏಕೆಂದರೆ ನಿಮ್ಮನ್ನು ಕೊಲ್ಲುವುದಕ್ಕೂ, ಚದರಿಸುವುದಕ್ಕೂ ದಿನಗಳು ತುಂಬಿ ಇವೆ. ಆಗ ನೀವು ಒಡೆದುಹೋದ ಅಂದವಾದ ಪಾತ್ರೆಯಂತೆ ಬೀಳುವಿರಿ.
JER 25:35 ಆಗ ಕುರುಬರಿಗೆ ಓಡಿ ಹೋಗುವುದಕ್ಕೂ, ಮಂದೆಯ ಪ್ರಮುಖರಿಗೆ ತಪ್ಪಿಸಿಕೊಳ್ಳುವುದಕ್ಕೂ ಮಾರ್ಗವಿಲ್ಲದೆ ಹೋಗುವುದು.
JER 25:36 ಕುರುಬರ ಕೂಗಿನ ಶಬ್ದವು, ಮಂದೆಯ ಗೋಳಾಡುವಿಕೆಯೂ ಪ್ರಮುಖರಿಗೆ ಕೇಳಿಸುತ್ತಿದೆ. ಏಕೆಂದರೆ ಯೆಹೋವ ದೇವರು ಅವರ ಮೇವಿನ ಸ್ಥಳವನ್ನು ಹಾಳು ಮಾಡಿದ್ದಾರೆ.
JER 25:37 ಸಮಾಧಾನವುಳ್ಳ ಗೋಮಾಳಗಳು ಯೆಹೋವ ದೇವರ ಕೋಪದ ದೆಸೆಯಿಂದ ಕೆಡವಿಬಿದ್ದವು.
JER 25:38 ಅವರು ಸಿಂಹದಂತೆ ತಮ್ಮ ಗವಿಯನ್ನು ತೊರೆದುಬಿಟ್ಟಿದ್ದಾರೆ. ಏಕೆಂದರೆ ಉಪದ್ರವ ಪಡಿಸುವವನ ಉರಿಯ ನಿಮಿತ್ತವೂ, ಅವರ ಕೋಪದ ಉರಿಯ ನಿಮಿತ್ತವೂ ಅವರ ದೇಶವು ಹಾಳಾಯಿತು.
JER 26:1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ದೊರೆತನದ ಪ್ರಾರಂಭದಲ್ಲಿ ಈ ವಾಕ್ಯವು ಯೆಹೋವ ದೇವರಿಂದ ಉಂಟಾಯಿತು.
JER 26:2 “ಯೆಹೋವ ದೇವರು ಹೀಗೆ ಹೇಳುತ್ತಾನೆ: ಯೆಹೋವ ದೇವರು ಆಲಯದ ಅಂಗಳದಲ್ಲಿ ನಿಂತುಕೊಂಡು, ಯೆಹೋವ ದೇವರ ಆಲಯದಲ್ಲಿ ಆರಾಧಿಸುವುದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು. ಒಂದು ಮಾತಾದರೂ ಕಡಿಮೆ ಮಾಡಬೇಡ.
JER 26:3 ಒಂದು ವೇಳೆ ಅವರು ಕೇಳಿ, ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವುದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪ ಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿಕೊಂಡಾರು.
JER 26:4 ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾನೆ, ನೀವು ನನಗೆ ಕಿವಿಗೊಡದೆ, ನಾನು ನಿಮ್ಮ ಮುಂದೆ ಇಟ್ಟ ನನ್ನ ನಿಯಮದಲ್ಲಿ ನಡೆದುಕೊಳ್ಳದೆ,
JER 26:5 ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳುಹಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆ ಹೋದರೆ,
JER 26:6 ಆಗ ನಾನು ಈ ಆಲಯವನ್ನು ಶೀಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲಾ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.’ ”
JER 26:7 ಹೀಗೆ ಯೆರೆಮೀಯನು ಈ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಸಾರುವುದನ್ನು ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಕೇಳುತ್ತಿದ್ದರು.
JER 26:8 ಯೆರೆಮೀಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಅವನನ್ನು ಹಿಡಿದು, “ನೀನು ನಿಶ್ಚಯವಾಗಿ ಸಾಯಬೇಕು.
JER 26:9 ಈ ದೇವಾಲಯಕ್ಕೆ ಶೀಲೋವಿನ ಹಾಗೆ ಆಗುವುದೆಂದೂ, ಈ ಪಟ್ಟಣವೂ ನಿವಾಸಿಗಳಿಲ್ಲದೆ ಹಾಳಾಗುವುದೆಂದೂ ಯೆಹೋವ ದೇವರ ಹೆಸರಿನಲ್ಲಿ ಏಕೆ ನೀನು ಪ್ರವಾದಿಸಿದ್ದೀ?” ಎಂದರು. ಆಗ ಜನರೆಲ್ಲರು ಯೆಹೋವ ದೇವರ ಆಲಯದಲ್ಲಿ ಯೆರೆಮೀಯನಿಗೆ ವಿರೋಧವಾಗಿ ಕೂಡಿಕೊಂಡರು.
JER 26:10 ಯೆಹೂದದ ಪ್ರಧಾನರು ಈ ಸಂಗತಿಗಳನ್ನು ಕೇಳಿದಾಗ, ಅರಸನ ಅರಮನೆಯಿಂದ ಯೆಹೋವ ದೇವರ ಆಲಯಕ್ಕೆ ಬಂದು, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಕುಳಿತುಕೊಂಡರು.
JER 26:11 ಆಗ ಯಾಜಕರೂ, ಪ್ರವಾದಿಗಳೂ, ಅಧಿಕಾರಿಗಳಿಗೂ, ಜನರೆಲ್ಲರಿಗೂ, “ಈ ಮನುಷ್ಯನು ಮರಣಕ್ಕೆ ತಕ್ಕವನು. ಏಕೆಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ, ಇವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ,” ಎಂದರು.
JER 26:12 ಆಗ ಯೆರೆಮೀಯನು ಪ್ರಧಾನರೆಲ್ಲರಿಗೂ ಜನರೆಲ್ಲರಿಗೂ: “ನೀವು ಕೇಳಿದ ವಾಕ್ಯಗಳನ್ನೆಲ್ಲಾ ಈ ಆಲಯಕ್ಕೆ ವಿರೋಧವಾಗಿಯೂ, ಈ ಪಟ್ಟಣಕ್ಕೆ ವಿರೋಧವಾಗಿಯೂ ಪ್ರವಾದಿಸುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ.
JER 26:13 ಹೀಗಿರುವುದರಿಂದ ನಿಮ್ಮ ಮಾರ್ಗಗಳನ್ನೂ, ನಿಮ್ಮ ಕೃತ್ಯಗಳನ್ನೂ ತಿದ್ದಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿರಿ. ಆಗ ಯೆಹೋವ ದೇವರು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು.
JER 26:14 ನಾನಾದರೋ ನಿಮ್ಮ ಕೈಯಲ್ಲಿ ಇದ್ದೇನೆ. ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ.
JER 26:15 ಆದರೂ ನೀವು ನನ್ನನ್ನು ಕೊಂದುಹಾಕಿದರೆ, ನಿಮ್ಮ ಮೇಲೆಯೂ, ಈ ಪಟ್ಟಣದ ಮೇಲೆಯೂ, ಅದರ ನಿವಾಸಿಗಳ ಮೇಲೆಯೂ ನಿರ್ದೋಷಿಯ ರಕ್ತವನ್ನು ಬರಮಾಡುತ್ತೀರೆಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ವಾಕ್ಯಗಳನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದನು.
JER 26:16 ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ, “ಈ ಮನುಷ್ಯನು ಮರಣದಂಡನೆಗೆ ತಕ್ಕವನಲ್ಲ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ,” ಎಂದರು.
JER 26:17 ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟಕ್ಕೆಲ್ಲಾ ಹೇಳಿದ್ದೇನೆಂದರೆ:
JER 26:18 “ಮೊರೇಷೆತಿನವನಾದ ಮೀಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ, ಯೆಹೂದದ ಜನರಿಗೆಲ್ಲಾ ಹೇಳಿದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಚೀಯೋನನ್ನು ಹೊಲದ ಹಾಗೆ ಉಳಲಾಗುವುದು; ಯೆರೂಸಲೇಮು ಹಾಳುದಿಬ್ಬಗಳಾಗುವುದು; ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.’
JER 26:19 ಯೆಹೂದದ ಅರಸನಾದ ಹಿಜ್ಕೀಯನೂ, ಎಲ್ಲಾ ಯೆಹೂದ್ಯರೂ ಅವನನ್ನು ಕೊಂದು ಹಾಕಿದರೋ? ಇಲ್ಲವೇ ಇಲ್ಲ. ಅವನು ಯೆಹೋವ ದೇವರಿಗೆ ಭಯಪಟ್ಟು, ಯೆಹೋವ ದೇವರ ಸಮ್ಮುಖದಲ್ಲಿ ಮೊರೆಯಿಟ್ಟನಲ್ಲವೋ? ಆಮೇಲೆ ಯೆಹೋವ ದೇವರು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು!” ಎಂದರು.
JER 26:20 ಕಿರ್ಯತ್ ಯಾರೀಮಿನವನಾದ ಶೆಮಾಯನ ಮಗ ಊರೀಯ ಎಂಬುವವನು ಸಹ ಯೆಹೋವ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆಮೀಯನ ಎಲ್ಲಾ ಮಾತುಗಳ ಪ್ರಕಾರ, ಈ ಪಟ್ಟಣಕ್ಕೂ, ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.
JER 26:21 ಆಗ ಅರಸನಾದ ಯೆಹೋಯಾಕೀಮನೂ, ಅವನ ಪರಾಕ್ರಮಶಾಲಿಗಳೆಲ್ಲರೂ, ಪ್ರಧಾನರೆಲ್ಲರೂ ಅವನ ಮಾತುಗಳನ್ನೆಲ್ಲಾ ಕೇಳಿದಾಗ, ಅರಸನು ಅವನನ್ನು ಕೊಂದುಹಾಕಬೇಕೆಂದಿದ್ದನು. ಆದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ, ಈಜಿಪ್ಟಿಗೆ ಸೇರಿಕೊಂಡನು.
JER 26:22 ಆದರೆ ಅರಸನಾದ ಯೆಹೋಯಾಕೀಮನು ಈಜಿಪ್ಟ್ ಜನರನ್ನು, ಅಕ್ಬೋರನ ಮಗ ಎಲ್ನಾಥಾನನನ್ನೂ, ಅವನ ಸಂಗಡ ಇನ್ನೂ ಕೆಲವರನ್ನೂ ಈಜಿಪ್ಟಿಗೆ ಕಳುಹಿಸಿದನು.
JER 26:23 ಅವರು ಊರೀಯನನ್ನು ಈಜಿಪ್ಟಿನಿಂದ ತೆಗೆದುಕೊಂಡು ಅರಸನಾದ ಯೆಹೋಯಾಕೀಮನ ಬಳಿಗೆ ತಂದರು. ಇವನು ಅವನನ್ನು ಖಡ್ಗದಿಂದ ಹೊಡೆದು, ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.
JER 26:24 ಇತ್ತ ಯಾಜಕರೂ, ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ, ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.
JER 27:1 ಯೆಹೂದದ ಅರಸನಾದ ಯೋಷೀಯನ ಮಗನೂ, ಯೆಹೋಯಾಕೀಮನ ದೊರೆತನದ ಪ್ರಾರಂಭದಲ್ಲಿ ಈ ವಾಕ್ಯವು ಯೆಹೋವ ದೇವರಿಂದ ಯೆರೆಮೀಯನಿಗೆ ಬಂತು.
JER 27:2 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.
JER 27:3 ಅವುಗಳನ್ನು ಎದೋಮಿನ ಅರಸನಿಗೂ, ಮೋವಾಬಿನ ಅರಸನಿಗೂ, ಅಮ್ಮೋನ್ಯರ ಅರಸನಿಗೂ, ಟೈರಿನ ಅರಸನಿಗೂ, ಸೀದೋನಿನ ಅರಸನಿಗೂ, ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಯೆರೂಸಲೇಮಿನಲ್ಲಿ ಬಂದಿರುವ ರಾಯಭಾರಿಗಳ ಕೈಯಿಂದ ಕಳುಹಿಸು.
JER 27:4 ‘ಇಸ್ರಾಯೇಲರ ದೇವರೂ ಸೇನಾಧೀಶ್ವರರೂ ಆದ ಯೆಹೋವ ದೇವರು ನಿಮ್ಮ ಯಜಮಾನರಿಗೆ ನೀವು ಹೀಗೆ ಅರಿಕೆಮಾಡುವಂತೆ ಅಪ್ಪಣೆಕೊಟ್ಟಿದ್ದಾರೆ ಎಂಬುದಾಗಿ ಹೇಳಿ ಅವರು, “ತಮ್ಮ ತಮ್ಮ ಯಜಮಾನರಿಗೆ ಹೀಗೆ ಹೇಳಬೇಕು:
JER 27:5 ನಾನೇ ಭೂಮಿಯನ್ನೂ, ಭೂಮಿಯ ಮೇಲಿರುವ ಮನುಷ್ಯರನ್ನೂ, ಮೃಗಗಳನ್ನೂ ನನ್ನ ಮಹಾ ಬಲದಿಂದಲೂ, ನನ್ನ ಚಾಚಿದ ಕೈಯಿಂದಲೂ ಉಂಟುಮಾಡಿ, ನನಗೆ ಸರಿ ತೋಚಿದವರಿಗೆ ಅದನ್ನು ಕೊಟ್ಟಿದ್ದೇನೆ.
JER 27:6 ಈಗ ಈ ನಾಡುಗಳನ್ನೆಲ್ಲಾ ಬಾಬಿಲೋನಿಯದ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈವಶ ಮಾಡಿದ್ದೇನೆ. ಅವನ ಸೇವೆಗಾಗಿ ಕಾಡುಮೃಗಗಳನ್ನೂ ಕೊಟ್ಟಿದ್ದೇನೆ.
JER 27:7 ಅವನ ದೇಶಕ್ಕೆ ನಿಯಮಿತ ಕಾಲ ಬರುವ ತನಕ, ಎಲ್ಲ ರಾಷ್ಟ್ರಗಳು ಅವನಿಗೂ, ಅವನ ಮಗನಿಗೂ, ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ, ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು,” ಎಂಬುದು.
JER 27:8 “ ‘ “ಆದರೆ ಯಾವುದೇ ರಾಷ್ಟ್ರ ಅಥವಾ ರಾಜ್ಯ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲು, ಅದರ ಅರಸನ ನೊಗಕ್ಕೆ ಹೆಗಲು ಕೊಡಲು ಒಪ್ಪದೆ ಹೋದರೆ, ಆ ರಾಷ್ಟ್ರವನ್ನು ನಾನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ದಂಡಿಸುತ್ತಾ ಬರುವೆನು. ಕೊನೆಗೆ ಆ ಅರಸನ ಕೈಯಿಂದಲೇ ಅದನ್ನು ನಿರ್ಮೂಲ ಮಾಡಿಸುವೆನು, ಇದು ಯೆಹೋವ ದೇವರಾದ ನನ್ನ ನುಡಿ.
JER 27:9 ‘ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ,’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ.
JER 27:10 ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು, ನೀವು ದೇಶ ಭ್ರಷ್ಟರಾಗಿ ನಾಶವಾಗುವಿರಿ.
JER 27:11 ಯಾವ ರಾಷ್ಟ್ರ ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು, ಅವನ ಅಡಿಯಾಳಾಗುವುದೋ; ಆ ರಾಷ್ಟ್ರದವರನ್ನು ನಾನು ಅವರ ಸ್ವಂತ ನಾಡಿನಲ್ಲೇ ನೆಲೆಗೊಳಿಸುವೆನು. ಅವರು ಅಲ್ಲೇ ಉತ್ತು, ಬಿತ್ತು ವಾಸಮಾಡುವರು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.” ’ ”
JER 27:12 ಯೆಹೂದದ ಅರಸ ಚಿದ್ಕೀಯನಿಗೂ ನಾನು ಅದೇ ಮಾತುಗಳನ್ನು ಹೇಳಿದೆ: “ನೀವು ಬಾಬಿಲೋನಿನ ಅರಸನ ನೊಗಕ್ಕೆ ಹೆಗಲು ಕೊಟ್ಟು, ಅವನಿಗೂ, ಅವನ ಜನರಿಗೂ ಅಡಿಯಾಳಾಗಬೇಕು. ಆಗ ಬದುಕುವಿರಿ.
JER 27:13 ಬಾಬಿಲೋನಿಯದ ಅರಸನ ಅಡಿಯಾಳಾಗಲು ನಿರಾಕರಿಸಿದ ರಾಷ್ಟ್ರವು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯಬೇಕಾಗುವುದೆಂದು ಯೆಹೋವ ದೇವರೇ ನುಡಿದಿದ್ದಾರೆ. ಅಂಥ ಗತಿ ನಿಮಗೂ, ನಿಮ್ಮ ಪ್ರಜೆಗೂ ಏಕೆ ಬರಬೇಕು?
JER 27:14 ‘ನೀವು ಬಾಬಿಲೋನಿಯದ ಅರಸನ ಅಡಿಯಾಳಾಗುವುದಿಲ್ಲ,’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
JER 27:15 ಅವರನ್ನು ನಾನು ಕಳುಹಿಸಲಿಲ್ಲ, ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತಾ ಇದ್ದಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಮತ್ತು ನಿಮಗೆ ಪ್ರವಾದಿಸುವ ಪ್ರವಾದಿಗಳನ್ನು ಹೊರದೂಡಬೇಕಾಗುವುದು, ನೀವು ನಾಶವಾಗುವಿರಿ, ಎಂದು ಯೆಹೋವ ದೇವರೇ ನುಡಿದಿದ್ದಾರೆ.”
JER 27:16 ಬಳಿಕ ನಾನು ಯಾಜಕರಿಗೂ, ಈ ಜನರೆಲ್ಲರಿಗೂ ಹೀಗೆಂದು ಸಾರಿದೆ: “ಇಗೋ, ಕೇಳಿ ಯೆಹೋವ ದೇವರ ನುಡಿ: ‘ದೇವಾಲಯದ ಉಪಕರಣಗಳನ್ನು ಬೇಗನೆ ಬಾಬಿಲೋನಿನಿಂದ ಹಿಂದಕ್ಕೆ ತರಲಾಗುವುದು,’ ಎಂಬುದಾಗಿ ನಿಮಗೆ ಪ್ರವಾದಿಸುವವರ ಮಾತುಗಳನ್ನು ಕೇಳಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
JER 27:17 ಅವರಿಗೆ ನೀವು ಕಿವಿಗೊಡಲೇಬಾರದು. ಬಾಬಿಲೋನಿಯದ ಅರಸನಿಗೆ ಅಡಿಯಾಳಾಗಿರಿ. ಆಗ ಬದುಕುವಿರಿ. ಈ ನಗರವೇಕೆ ನಾಶವಾಗಬೇಕು?
JER 27:18 ಅವರು ನಿಜವಾದ ಪ್ರವಾದಿಗಳಾಗಿದ್ದರೆ, ಯೆಹೋವ ದೇವರ ವಾಕ್ಯ ಅವರಲ್ಲಿ ನೆಲಸಿದ್ದರೆ, ದೇವಾಲಯದಲ್ಲೂ, ಯೆಹೂದದ ಅರಸನ ಅರಮನೆಯಲ್ಲೂ, ಯೆರೂಸಲೇಮಿನಲ್ಲೂ, ಇನ್ನು ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಸೇನಾಧೀಶ್ವರ ಯೆಹೋವ ದೇವರಿಗೆ ವಿಜ್ಞಾಪನೆಮಾಡಿ ಬೇಡಿಕೊಳ್ಳಲಿ.
JER 27:19 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ, ಯೆಹೂದದ ಅರಸನೂ ಆದ ಯೆಕೊನ್ಯನನ್ನು ಮತ್ತು ಯೆಹೂದದ ಹಾಗೂ ಯೆರೂಸಲೇಮಿನ ಎಲ್ಲ ಮಂತ್ರಿಗಳನ್ನು ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ, ಕೆಲವು ವಸ್ತುಗಳನ್ನು ಅಂದರೆ ಕಂಬಗಳು, ಕಂಚಿನ ಕಡಲು, ಪೀಠಗಳು, ನಗರದಲ್ಲಿ ಉಳಿದಿರುವ ಮತ್ತಿತರ ಉಪಕರಣಗಳು ಇವನ್ನು ತೆಗೆದುಕೊಂಡು ಹೋಗಲಿಲ್ಲ.
JER 27:21 ದೇವಾಲಯದಲ್ಲೂ, ಯೆಹೂದದ ಅರಸನ ಅರಮನೆಯಲ್ಲೂ, ಯೆರೂಸಲೇಮಿನಲ್ಲೂ ಉಳಿದಿರುವ ಈ ಉಪಕರಣಗಳ ವಿಷಯವಾಗಿ ಇಸ್ರಾಯೇಲರ ದೇವರೂ ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ:
JER 27:22 ‘ಅವುಗಳನ್ನು ಬಾಬಿಲೋನಿಗೆ ಒಯ್ಯಲಾಗುವುದು. ನಾನು ಬಿಡಿಸುವತನಕ ಅವು ಅಲ್ಲೇ ಇರುವುವು. ಬಳಿಕ ನಾನು ಅವುಗಳನ್ನು ತಂದು ಈ ಸ್ಥಳಕ್ಕೆ ಸೇರಿಸುವೆನು.’ ಇದು ಯೆಹೋವ ದೇವರಾದ ನನ್ನ ನುಡಿ.”
JER 28:1 ಅದೇ ವರ್ಷದಲ್ಲಿ ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಪ್ರಾರಂಭದಲ್ಲಿ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ ಗಿಬ್ಯೋನಿನವನಾದ ಅಜ್ಜೂರನ ಮಗನಾದ ಹನನ್ಯನೆಂಬ ಪ್ರವಾದಿಯು ಯೆಹೋವ ದೇವರ ಆಲಯದಲ್ಲಿ ಯಾಜಕರ ಮುಂದೆಯೂ, ಜನರೆಲ್ಲರ ಮುಂದೆಯೂ ನನಗೆ ಹೇಳಿದ್ದೇನೆಂದರೆ,
JER 28:2 “ಇಸ್ರಾಯೇಲಿನ ದೇವರೂ ಸೇನಾಧೀಶ್ವರ ಯೆಹೋವ ದೇವರೂ ಹೀಗೆ ಹೇಳುತ್ತಾರೆ: ‘ನಾನು ಬಾಬಿಲೋನಿನ ಅರಸನ ನೊಗವನ್ನು ಮುರಿದಿದ್ದೇನೆ.
JER 28:3 ಎರಡು ವರ್ಷದೊಳಗಾಗಿ ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ತೆಗೆದುಕೊಂಡು, ಬಾಬಿಲೋನಿಗೆ ಒಯ್ದ ಯೆಹೋವ ದೇವರ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು.
JER 28:4 ಯೆಹೂದದ ಅರಸನಾದ ಯೆಹೋಯಾಕೀಮನ ಮಗ ಯೆಕೊನ್ಯನನ್ನು ಬಾಬಿಲೋನಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನ ನೊಗವನ್ನು ಮುರಿದುಬಿಡುವೆನು.”
JER 28:5 ಆಗ ಪ್ರವಾದಿಯಾದ ಯೆರೆಮೀಯನು ಯಾಜಕರ ಮುಂದೆಯೂ, ಯೆಹೋವ ದೇವರ ಆಲಯದಲ್ಲಿ ನಿಂತಿರುವ ಜನರೆಲ್ಲರ ಮುಂದೆಯೂ ಪ್ರವಾದಿಯಾದ ಹನನ್ಯನಿಗೆ,
JER 28:6 “ಆಮೆನ್, ಯೆಹೋವ ದೇವರು ಹಾಗೆಯೇ ಮಾಡಲಿ; ನೀನು ಪ್ರವಾದಿಸಿದೆ; ನಿನ್ನ ವಾಕ್ಯಗಳನ್ನು ಯೆಹೋವ ದೇವರು ನೆರವೇರಿಸಿ, ಯೆಹೋವ ದೇವರ ಆಲಯದ ಪಾತ್ರೆಗಳನ್ನೂ, ಸೆರೆಯವರೆಲ್ಲರನ್ನೂ ಬಾಬಿಲೋನಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.
JER 28:7 ಆದರೂ ನಾನು ನಿನಗೂ, ಜನರ ಕಿವಿಗಳಿಗೂ ಬೀಳುವಂತೆ ಹೇಳುವ ಈ ವಾಕ್ಯವನ್ನು ಕೇಳು.
JER 28:8 ನನಗೆ ಮುಂಚೆಯೂ, ನಿನಗೆ ಮುಂಚೆಯೂ ಇದ್ದ ಹಿಂದಿನ ಪ್ರವಾದಿಗಳು ಅನೇಕ ದೇಶಗಳಿಗೂ, ದೊಡ್ಡ ರಾಜ್ಯಗಳಿಗೂ ವಿರೋಧವಾಗಿ ಯುದ್ಧವನ್ನು ಕೇಡನ್ನೂ, ವ್ಯಾಧಿಯನ್ನೂ ಕುರಿತು ಪ್ರವಾದಿಸಿದರು.
JER 28:9 ಸಮಾಧಾನವನ್ನು ಕುರಿತು ಪ್ರವಾದಿಸುವ ಪ್ರವಾದಿಯಾದರೆ, ಆ ಪ್ರವಾದಿಯ ವಾಕ್ಯವು ಉಂಟಾಗುವಾಗ, ಅವನು ಯೆಹೋವ ದೇವರಿಂದ ನಿಜವಾಗಿ ಕಳುಹಿಸಲಾದ ಪ್ರವಾದಿ, ಎಂದು ತಿಳಿಯತಕ್ಕದ್ದು,” ಎಂದನು.
JER 28:10 ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಕುತ್ತಿಗೆಯಿಂದ ನೊಗವನ್ನು ತೆಗೆದು, ಅದನ್ನು ಮುರಿದುಬಿಟ್ಟನು.
JER 28:11 ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನೆಂದರೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇದೇ ಪ್ರಕಾರ ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರ್ಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು,’ ” ಎಂದನು. ಆಗ ಪ್ರವಾದಿಯಾದ ಯೆರೆಮೀಯನು ತನ್ನ ಮಾರ್ಗವಾಗಿ ಹೊರಟುಹೋದನು.
JER 28:12 ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆಮೀಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ, ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,
JER 28:13 “ನೀನು ಹೋಗಿ ಹನನ್ಯನಿಗೆ ಹೀಗೆ ಹೇಳು: ‘ನೀವು ಮರದ ನೊಗಗಳನ್ನು ಮುರಿದಿದ್ದೀ; ಆದರೆ ಅವಕ್ಕೆ ಬದಲಾಗಿ ನಿನ್ನ ಮೇಲೆ ಕಬ್ಬಿಣದ ನೊಗಗಳನ್ನು ಉಂಟುಮಾಡು,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 28:14 ಇಸ್ರಾಯೇಲರ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಡುವೆನು. ಅವರು ಅವನಿಗೆ ಸೇವೆಮಾಡುವರು; ಕಾಡುಮೃಗಗಳನ್ನು ಸಹ ಅವನಿಗೆ ಕೊಡುವೆನು.’ ”
JER 28:15 ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನೆಂದರೆ, “ಹನನೀಯನೇ, ಕೇಳು. ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ. ಆದರೆ ನೀನು ಈ ಜನರನ್ನು ಸುಳ್ಳಿನಲ್ಲಿ ಭರವಸೆ ಇಡುವಂತೆ ಮಾಡುತ್ತೀ.
JER 28:16 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ನಿನ್ನನ್ನು ಭೂಮಿಯ ಮೇಲಿನಿಂದ ಬಿಸಾಡಿಬಿಡುತ್ತೇನೆ. ಈ ವರ್ಷವೇ ನೀನು ಸಾಯುವೆ. ಏಕೆಂದರೆ ನೀನು ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಬಗೆದಿದ್ದೀ,’ ” ಎಂದನು.
JER 28:17 ಹಾಗೆಯೇ ಪ್ರವಾದಿಯಾದ ಹನನ್ಯನು ಅದೇ ವರ್ಷದಲ್ಲಿ ಏಳನೆಯ ತಿಂಗಳಲ್ಲಿ ಸತ್ತನು.
JER 29:1 ಪ್ರವಾದಿಯಾದ ಯೆರೆಮೀಯನು ಸೆರೆಯಲ್ಲಿರುವ ಹಿರಿಯರಲ್ಲಿ ಉಳಿದವರಿಗೂ ಯಾಜಕರಿಗೂ ಪ್ರವಾದಿಗಳಿಗೂ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಒಯ್ದ ಜನರೆಲ್ಲರಿಗೂ
JER 29:2 ಅರಸನಾದ ಯೆಕೊನ್ಯನೂ ರಾಜಮಾತೆಯೂ ಕಂಚುಕಿಗಳೂ ಯೆಹೂದದ ಯೆರೂಸಲೇಮಿನ ಪ್ರಧಾನರೂ ಬಡಿಗೆಯವರೂ ಕಮ್ಮಾರರೂ ಯೆರೂಸಲೇಮನ್ನು ಬಿಟ್ಟುಹೋದ ಮೇಲೆ ಈ ಪತ್ರವನ್ನು ಬರೆದನು.
JER 29:3 ಯೆಹೂದದ ಅರಸನಾದ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಕಳುಹಿಸಿದ ಶಾಫಾನನ ಮಗ ಎಲ್ಲಾಸನ ಕೈಯಿಂದಲೂ ಹಿಲ್ಕೀಯನ ಮಗನಾದ ಗೆಮರೀಯನ ಕೈಯಿಂದಲೂ ಕಳುಹಿಸಿದ ಪತ್ರ:
JER 29:4 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮಿನಿಂದ ಬಾಬಿಲೋನಿಗೆ ನಾನು ಕರೆದೊಯ್ದ ಸೆರೆಯವರೆಲ್ಲರಿಗೆ ಹೇಳುವುದೇನೆಂದರೆ:
JER 29:5 “ಮನೆಗಳನ್ನು ಕಟ್ಟಿ ವಾಸಮಾಡಿರಿ. ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ.
JER 29:6 ಮದುವೆಮಾಡಿಕೊಂಡು, ಪುತ್ರಪುತ್ರಿಯರನ್ನು ಪಡೆಯಿರಿ. ನಿಮ್ಮ ಪುತ್ರರಿಗೆ ಹೆಂಡತಿಯರನ್ನು ಹುಡುಕಿರಿ. ನಿಮ್ಮ ಪುತ್ರಿಯರನ್ನು ಮದುವೆಮಾಡಿಕೊಡಿರಿ; ಅವರು ಪುತ್ರಪುತ್ರಿಯರನ್ನು ಹೆರಲಿ. ಹೀಗೆ ನೀವು ಕಡಿಮೆಯಾಗದೆ, ಅಲ್ಲಿ ಹೆಚ್ಚಿರಿ.
JER 29:7 ನಾನು ನಿಮ್ಮನ್ನು ಸೆರೆಯಾಗಿ ಒಯ್ದ ಪಟ್ಟಣದ ಸಮಾಧಾನ ಮತ್ತು ಸಮೃದ್ಧಿಯನ್ನು ಹುಡುಕಿರಿ. ಅದಕ್ಕೋಸ್ಕರ ಯೆಹೋವ ದೇವರಿಗೆ ಪ್ರಾರ್ಥನೆಮಾಡಿರಿ. ಏಕೆಂದರೆ ಅದರ ಸಮಾಧಾನದಿಂದ ನಿಮಗೆ ಸಮಾಧಾನವಾಗುವುದು.”
JER 29:8 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ.
JER 29:9 ಏಕೆಂದರೆ ಅವರು ನಿಮಗೆ ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 29:10 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನಲ್ಲಿ ಎಪ್ಪತ್ತು ವರ್ಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿಸುವೆನು. ನನ್ನ ಒಳ್ಳೆಯ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ, ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು.
JER 29:11 ನಾನು ನಿಮ್ಮನ್ನು ಕುರಿತು ಮಾಡುವ ಯೋಜನೆಗಳನ್ನು ಬಲ್ಲೆನು. ಅವು ಕೇಡಿಗಲ್ಲ, ಹಿತಕ್ಕಾಗಿರುವ ಯೋಜನೆಗಳು. ನಿಮಗೆ ಭವಿಷ್ಯವನ್ನೂ, ನಿರೀಕ್ಷೆಯನ್ನೂ ಕೊಡುವುದಕ್ಕಿವೆ.
JER 29:12 ಆಗ ನನ್ನನ್ನು ಕರೆಯುವಿರಿ. ಹೋಗಿ ನನಗೆ ಪ್ರಾರ್ಥನೆ ಮಾಡುವಿರಿ. ನಾನು ನಿಮಗೆ ಕಿವಿಗೊಡುವೆನು.
JER 29:13 ನನ್ನನ್ನು ಹುಡುಕುವಿರಿ. ಪೂರ್ಣಹೃದಯದಿಂದ ನನ್ನನ್ನು ಹುಡುಕುವಾಗ, ನನ್ನನ್ನು ಕಂಡುಕೊಳ್ಳುವಿರಿ.
JER 29:14 ನಿಮಗೆ ದೊರೆಯುವೆನು. ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಿಂದಲೂ, ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನು. ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿದೆನೋ, ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.”
JER 29:15 ಆದರೆ, “ಯೆಹೋವ ದೇವರು ನಮಗೆ ಬಾಬಿಲೋನಿನಲ್ಲಿ ಪ್ರವಾದಿಗಳನ್ನು ಎಬ್ಬಿಸಿದ್ದಾನೆ,” ಎಂದು ನೀವು ಹೇಳಿದ್ದರಿಂದ,
JER 29:16 ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಅರಸನನ್ನು ಕುರಿತು, ನಿಮ್ಮ ಸಂಗಡ ಸೆರೆಗೆ ಹೊರಡದೆ, ಈ ಪಟ್ಟಣದಲ್ಲಿ ವಾಸವಾಗಿರುವ ನಿಮ್ಮ ಸಹೋದರರಾದ ಜನರೆಲ್ಲರನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ
JER 29:17 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ಅವರಲ್ಲಿ ಖಡ್ಗವನ್ನೂ ಕ್ಷಾಮವನ್ನೂ ವ್ಯಾಧಿಯನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿರುವುದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರಗಳ ಹಾಗೆ ಮಾಡುವೆನು.
JER 29:18 ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ಹಿಂಸಿಸಿ, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ಭಯಕ್ಕೂ ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
JER 29:19 ಏಕೆಂದರೆ ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ. ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಿಗ್ಗೆ ಪುನಃ ಕಳುಹಿಸಿದೆನು. ಆದರೆ ಅವರು ಕೇಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 29:20 ಆದ್ದರಿಂದ ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಕಳುಹಿಸಿದ ಸೆರೆಯವರೆಲ್ಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ,
JER 29:21 ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಪ್ರವಾದಿಸುವ ಕೊಲಾಯನ ಮಗ ಅಹಾಬನ ವಿಷಯವೂ, ಮಾಸೇಯನ ಮಗ ಚಿದ್ಕೀಯನ ವಿಷಯವೂ, ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸುತ್ತೇನೆ. ಅವನು ಅವರನ್ನು ನಿಮ್ಮ ಕಣ್ಣುಗಳ ಮುಂದೆ ಕೊಂದುಹಾಕುವನು.
JER 29:22 ಬಾಬಿಲೋನಿನಲ್ಲಿರುವ ಯೆಹೂದದ ಸೆರೆಯವರೆಲ್ಲರು ಅವರಿಂದ ಶಾಪವನ್ನು ತೆಗೆದುಕೊಂಡು, ‘ಬಾಬಿಲೋನಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ, ಅಹಾಬನ ಹಾಗೆಯೂ ಯೆಹೋವ ದೇವರು ನಿನಗೆ ಮಾಡಲಿ,’ ಎಂದು ಹೇಳುವರು.
JER 29:23 ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 29:24 ನೆಹೆಲಾಮ್ಯನಾದ ಶೆಮಾಯನಿಗೆ ನೀನು ಹೀಗೆ ಹೇಳು:
JER 29:25 “ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನಿನ್ನ ಹೆಸರಿನಲ್ಲಿ ಯೆರೂಸಲೇಮಿನವರೆಲ್ಲರಿಗೂ, ಮಾಸೇಯನ ಮಗ ಯಾಜಕನಾದ ಚೆಫನ್ಯನಿಗೂ ಯಾಜಕರೆಲ್ಲರಿಗೂ ಪತ್ರಗಳನ್ನು ಕಳುಹಿಸಿದೆಯಲ್ಲಾ?
JER 29:26 ‘ಏಕೆಂದರೆ, ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯನಿಗೆ ಯೆಹೋವ ದೇವರ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ, ನೀನು ಅಂಥವರನ್ನು ಕೋಳದಲ್ಲಿಯೂ, ಸೆರೆಯಲ್ಲಿಯೂ ಇಡುವ ಹಾಗೆಯೂ, ಯೆಹೋವ ದೇವರು ಯಾಜಕನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕನಾಗಿ ಇಟ್ಟಿದ್ದಾರೆ.
JER 29:27 ಹೀಗಿರಲಾಗಿ ನಿಮಗೆ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಗದರಿಸಲಿಲ್ಲ?
JER 29:28 ಏಕೆಂದರೆ, ಅವನು ಸೆರೆಯು ಬಹಳ ದೀರ್ಘವಾಗುವುದು, ಮನೆಗಳನ್ನು ಕಟ್ಟಿ ವಾಸಮಾಡಿರಿ; ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ; ಎಂದು ನಮಗೆ ಬಾಬಿಲೋನಿಗೆ ಹೇಳಿ ಕಳುಹಿಸಿದ್ದಾನೆ.’ ”
JER 29:29 ಆಗ ಯಾಜಕನಾದ ಚೆಫನ್ಯನು ಈ ಪತ್ರವನ್ನು ಪ್ರವಾದಿಯಾದ ಯೆರೆಮೀಯನಿಗೆ ಓದಿ ಹೇಳಿದನು.
JER 29:30 ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು:
JER 29:31 “ನೀನು ಸೆರೆಯವರೆಲ್ಲರಿಗೆ ಹೇಳಿ ಕಳುಹಿಸಬೇಕಾದದ್ದೇನೆಂದರೆ, ‘ಯೆಹೋವ ದೇವರು ನೆಹೆಲಾಮ್ಯನಾದ ಶೆಮಾಯನ ವಿಷಯವಾಗಿ ಹೀಗೆ ಹೇಳುತ್ತಾರೆ. ಶೆಮಾಯನು, ನಾನು ಅವನನ್ನು ಕಳುಹಿಸದೆ ಇರುವಾಗ, ನಿಮಗೆ ಪ್ರವಾದಿಸಿ, ನಿಮ್ಮನ್ನು ಸುಳ್ಳಿನಲ್ಲಿ ನಂಬಿಕೆ ಇಡಮಾಡಿದ ಕಾರಣ,
JER 29:32 ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ನೆಹೆಲಾಮ್ಯನಾದ ಶೆಮಾಯನನ್ನೂ, ಅವನ ಸಂತಾನವನ್ನೂ ದಂಡಿಸುತ್ತೇನೆ. ಈ ಜನರೊಳಗೆ ವಾಸಿಸುವುದಕ್ಕೆ ಅವನಿಗೆ ಒಬ್ಬನೂ ಇರುವುದಿಲ್ಲ. ನಾನು ನನ್ನ ಜನರಿಗೆ ಮಾಡುವ ಒಳ್ಳೆಯದನ್ನು ಅವನು ನೋಡುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಅವನು ಯೆಹೋವ ದೇವರಿಗೆ ವಿರೋಧವಾಗಿ ಬೋಧಿಸಿದ್ದಾನೆ.’ ”
JER 30:1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
JER 30:2 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ನೀನು ಬರೆದಿಡು.
JER 30:3 ಏಕೆಂದರೆ, ದಿನಗಳು ಬರುವವು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ನನ್ನ ಜನರಾದ ಇಸ್ರಾಯೇಲ್ ಹಾಗು ಯೆಹೂದದ ಸೆರೆಯವರನ್ನು ತಿರುಗಿ ಬರಮಾಡುತ್ತೇನೆ. ಆಗ ನಾನು ಅವರ ಪಿತೃಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ. ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು,’ ಎಂದು ಯೆಹೋವ ದೇವರು ಹೇಳುತ್ತಾರೆ.”
JER 30:4 ಯೆಹೋವ ದೇವರು ಇಸ್ರಾಯೇಲನ್ನೂ, ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ,
JER 30:5 “ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾವು ನಡುಗುವಿಕೆಯ ಮತ್ತು ಭಯದ ಧ್ವನಿಯನ್ನು ಕೇಳಿದ್ದೇವೆಯೇ ಹೊರತು, ಸಮಾಧಾನದ್ದಲ್ಲ.
JER 30:6 ಈಗ ವಿಚಾರಿಸಿ ನೋಡಿರಿ. ಪುರುಷನು ಮಗುವನ್ನು ಹೆರಬಲ್ಲನೇ. ನಾನು ಏಕೆ ಪುರುಷರೆಲ್ಲರೂ ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲಕ್ಕೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಏಕೆ ಮುಖಗಳೆಲ್ಲಾ ಕಳೆಗುಂದಿದವು?
JER 30:7 ಅಯ್ಯೋ, ಈ ದಿನವು ಘೋರವಾದದ್ದು, ಅದಕ್ಕೆ ಎಣೆ ಇಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.’
JER 30:8 “ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ, ‘ನಾನು ಆ ದಿನದಲ್ಲಿ ಅವನು ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದು ಬಿಟ್ಟು, ಬಂಧನಗಳನ್ನು ಕಿತ್ತು ಹಾಕುವೆನು; ಇನ್ನು ವಿದೇಶಿಯರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು.
JER 30:9 ಆದರೆ ಅವರು ತಮ್ಮ ದೇವರಾದ ಯೆಹೋವ ದೇವರಿಗೂ, ನಾನು ಅವರಿಗೋಸ್ಕರ ಎಬ್ಬಿಸುವ ಅವರ ಅರಸನಾದ ದಾವೀದನಿಗೂ ಸೇವೆಮಾಡುವರು.
JER 30:10 “ ‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ, ಇಸ್ರಾಯೇಲೇ ಹೆದರಬೇಡ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ. ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು. ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು.
JER 30:11 ಏಕೆಂದರೆ ನಿನ್ನನ್ನು ರಕ್ಷಿಸುವುದಕ್ಕೆ ನಾನು ನಿನ್ನ ಸಂಗಡ ಇದ್ದೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಿನ್ನನ್ನು ಎಲ್ಲಿ ಚದರಿಸಿದೆನೋ, ಆ ಎಲ್ಲಾ ಜನಾಂಗಗಳನ್ನು ನಾನು ಸಂಪೂರ್ಣವಾಗಿ ಮುಗಿಸಿಬಿಟ್ಟಾಗ್ಯೂ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ. ಮಿತಿಯಲ್ಲಿ ನಿನ್ನನ್ನು ಸರಿಪಡಿಸುವೆನು. ನಾನು ಶಿಕ್ಷಿಸದೆ ಬಿಡುವುದಿಲ್ಲ.’
JER 30:12 “ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಿನ್ನ ಗಾಯವು ಗುಣವಾಗದಂಥಾದ್ದು. ನಿನ್ನ ಬಾಸುಂಡೆಯು ಅಘೋರವಾದದ್ದು.
JER 30:13 ನಿನಗೋಸ್ಕರ ವಾದಿಸುವವರು ಯಾರೂ ಇರುವುದಿಲ್ಲ. ನಿನ್ನ ಗಾಯವನ್ನು ನಿನಗೆ ಕಟ್ಟುವ ಹಾಗೆ ವಾಸಿಮಾಡುವ ಔಷಧಗಳು ನಿನಗೆ ಇಲ್ಲ.
JER 30:14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವುದಿಲ್ಲ. ನಿನ್ನ ಅಕ್ರಮಗಳು ಬಹಳವೂ, ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದ ಶತ್ರುವಿನ ಗಾಯದಿಂದಲೂ, ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ;
JER 30:15 ನಿನ್ನ ಗಾಯದ ನೋವಿನ ನಿಮಿತ್ತ ಏಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗದಂಥಾದ್ದೇ. ನಿನ್ನ ಅಕ್ರಮ ಬಹಳವಾಗಿರುವುದರಿಂದಲೂ, ನಿನ್ನ ಪಾಪಗಳು ಪ್ರಬಲವಾಗಿರುವುದರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
JER 30:16 “ ‘ಆದರೂ ನಿನ್ನನ್ನು ನುಂಗಿಬಿಡುವವರನ್ನು ನುಂಗಿಬಿಡಲಾಗುವುದು. ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಹೋಗುವನು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು. ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.
JER 30:17 ಚೀಯೋನು ಬೇಡವಾದದ್ದು, ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಎಂದು ಅವರು ನಿನ್ನ ವಿಷಯ ಹೇಳುವುದನ್ನು ನಾನು ಸಹಿಸಲಾರದೆ, ನಿನಗೆ ಕ್ಷೇಮವನ್ನುಂಟು ಮಾಡಿ, ನಿನ್ನ ಗಾಯಗಳನ್ನು ಸ್ವಸ್ಥ ಮಾಡುವೆನು,’ ಎಂಬುದಾಗಿ ಯೆಹೋವ ದೇವರು ಹೇಳುತ್ತಾರೆ.
JER 30:18 “ಯೆಹೋವ ದೇವರು ಮತ್ತೆ ಹೀಗೆ ಹೇಳಿದ್ದು, “ ‘ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ. ಅವನ ನಿವಾಸಗಳನ್ನು ಕರುಣಿಸುತ್ತೇನೆ. ಪಟ್ಟಣವು ಅದರ ದಿನ್ನೆಯ ಮೇಲೆ ಕಟ್ಟಲಾಗುವುದು. ಅರಮನೆಯು ತಕ್ಕ ಸ್ಥಳದಲ್ಲಿ ನೆಲೆಯಾಗಿರುವುದು.
JER 30:19 ಅವುಗಳೊಳಗಿಂದ ಕೃತಜ್ಞತಾಸ್ತುತಿಯೂ, ಹರ್ಷಧ್ವನಿಯೂ ಹೊರಡುವುದು. ಅವರನ್ನು ಹೆಚ್ಚು ಮಾಡುವೆನು. ಅವರು ಕೊಂಚವಾಗಿರರು, ಅವರನ್ನು ಘನಪಡಿಸುವೆನು. ಮತ್ತು ಅವರು ತಿರಸ್ಕಾರಕ್ಕೆ ಒಳಗಾಗುವುದಿಲ್ಲ.
JER 30:20 ಅವರ ಮಕ್ಕಳು ಸಹ ಪೂರ್ವಕಾಲದ ಹಾಗೆ ಇರುವರು. ಅವರ ಸಭೆಯು ನನ್ನ ಮುಂದೆ ಸ್ಥಾಪಿತವಾಗುವುದು. ಅವರನ್ನು ಬಾಧಿಸುವವರೆಲ್ಲರನ್ನು ಶಿಕ್ಷಿಸುವೆನು.
JER 30:21 ಅವರ ಪ್ರಮುಖನು ಅವರೊಳಗೆ ಇರುವರು. ಅವರನ್ನು ಆಳುವವನು ಅವರ ಮಧ್ಯದಲ್ಲಿಂದ ಹೊರಡುವನು. ನಾನು ಅವನನ್ನು ಹತ್ತಿರ ಬರಮಾಡುವೆನು. ಅವನು ನನಗೆ ಸಮೀಪಿಸುವನು. ಆದರೆ ನನಗೆ ಸಮೀಪಿಸುವುದಕ್ಕೆ ತನ್ನ ಹೃದಯ ನಿಶ್ಚಯಮಾಡಿಕೊಂಡ ಇವನ್ಯಾರು,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 30:22 ‘ನೀವು ನನಗೆ ಪ್ರಜೆಯಾಗಿರುವಿರಿ. ನಾನು ನಿಮಗೆ ದೇವರಾಗಿರುವೆನು.’ ”
JER 30:23 ಇಗೋ, ಯೆಹೋವ ದೇವರ ಬಿರುಗಾಳಿ ರೌದ್ರವಾಗಿ ಹೊರಡುತ್ತದೆ. ಅದು ಬಡಿದುಕೊಂಡು ಹೋಗುವ ಬಿರುಗಾಳಿಯೇ. ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವುದು.
JER 30:24 ಯೆಹೋವ ದೇವರು ತಮ್ಮ ಹೃದಯಾಲೋಚನೆಯನ್ನು ನಡಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು; ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.
JER 31:1 “ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು,” ಎಂದು ಯೆಹೋವ ದೇವರು ಸಾರುತ್ತಾರೆ.
JER 31:2 ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ಅವರಿಗೆ ವಿಶ್ರಾಂತಿ ಕೊಡುವುದಕ್ಕೆ ಹೋಗಲಾಗಿ, ಖಡ್ಗಕ್ಕೆ ತಪ್ಪಿಸಿಕೊಂಡ ಇಸ್ರಾಯೇಲಿನ ಜನರಿಗೆ ಮರುಭೂಮಿಯಲ್ಲಿ ದಯೆ ದೊರಕಿತು.”
JER 31:3 ಯೆಹೋವ ದೇವರು ಪೂರ್ವದಲ್ಲಿ ನನಗೆ ಕಾಣಿಸಿಕೊಂಡು, “ಹೌದು, ಶಾಶ್ವತ ಪ್ರೀತಿಯಿಂದ ನಿನ್ನನ್ನು ಪ್ರೀತಿಸಿದ್ದೇನೆ. ಕುಂದದ ದಯೆಯಿಂದಲೇ ನಿನ್ನನ್ನು ಸೆಳೆದುಕೊಂಡಿದ್ದೇನೆ.
JER 31:4 ಇಸ್ರಾಯೇಲಿನ ಕನ್ಯೆಯೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು. ನೀನು ಪುನಃ ನಿರ್ಮಿತವಾಗುವೆ. ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷ ಪಡುವವರ ನಾಟ್ಯದಲ್ಲಿ ಹೊರಡುವೆ.
JER 31:5 ಸಮಾರ್ಯದ ಪರ್ವತಗಳಲ್ಲಿ ತಿರುಗಿ ದ್ರಾಕ್ಷಿಗಿಡಗಳನ್ನು ನೆಡುವೆ. ರೈತರು ನೆಟ್ಟು ಸಾಧಾರಣವಾದವುಗಳಂತೆ ಫಲ ಅನುಭವಿಸುವರು.
JER 31:6 ಒಂದು ದಿನ ಬರುವದು, ಆಗ ಎಫ್ರಾಯೀಮನ ಪರ್ವತಗಳ ಮೇಲಿರುವ ಕಾವಲುಗಾರರು, ‘ಏಳಿರಿ, ಚೀಯೋನಿಗೆ, ನಮ್ಮ ಯೆಹೋವ ದೇವರ ಬಳಿಗೆ ಹೋಗೋಣ,’ ” ಎಂದು ಕೂಗುವರು.
JER 31:7 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಯಾಕೋಬನ ವಿಷಯ ಸಂತೋಷದಿಂದ ಹಾಡಿ, ಮೂಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ. ಸಾರಿರಿ. ಸ್ತುತಿಸಿರಿ. ‘ಯೆಹೋವ ದೇವರೇ, ನಿನ್ನ ಜನರನ್ನೂ, ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು,’ ಎಂದು ಹೇಳಿರಿ.
JER 31:8 ಇಗೋ, ನಾನು ಅವರನ್ನು ಉತ್ತರ ದೇಶದಿಂದ ತಂದು ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ. ಅವರಲ್ಲಿ ಕುರುಡರೂ, ಕುಂಟರೂ, ಗರ್ಭಿಣಿಯಾದವರೂ, ದಿನತುಂಬಿದ ಗರ್ಭಿಣಿಯರೂ ಇರುವರು. ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗಿ ಬರುವರು.
JER 31:9 ಅವರು ಅಳುತ್ತಾ ಬರುವರು. ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು. ಅವು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು. ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ. ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.
JER 31:10 “ಜನಾಂಗಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ಸಾರಿರಿ! ‘ಇಸ್ರಾಯೇಲನ್ನು ಚದರಿಸಿದಾತನೇ ಅವರನ್ನು ಕೂಡಿಸಿ, ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವರನ್ನು ಕಾಯುವನು’ ಎಂದು ಪ್ರಕಟಿಸಿರಿ.
JER 31:11 ಏಕೆಂದರೆ ಯೆಹೋವ ದೇವರು ಯಾಕೋಬ್ಯರನ್ನು ವಿಮೋಚಿಸಿದ್ದಾರೆ. ಅವರಿಗಿಂತ ಬಲಿಷ್ಠರ ಕೈಯೊಳಗಿಂದ ಅವರನ್ನು ಬಿಡಿಸಿದ್ದಾರೆ.
JER 31:12 ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು; ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ, ಅಂತು ಯೆಹೋವ ದೇವರು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹದಂತೆ ಬರುವರು. ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು; ಅವರು ಇನ್ನು ಮುಂದೆ ದುಃಖಪಡುವುದಿಲ್ಲ.
JER 31:13 ಆಗ ಕನ್ನಿಕೆಯರೂ, ಪ್ರಾಯದವರೂ, ವೃದ್ಧರ ಸಹಿತವಾಗಿ ನಾಟ್ಯವಾಡುತ್ತಾ ಹರ್ಷಿಸುವರು. ಏಕೆಂದರೆ ನಾನು ಅವರ ದುಃಖವನ್ನು ಆನಂದಕ್ಕೆ ಬದಲಾಯಿಸುವೆನು. ನಾನು ಅವರನ್ನು ಆಧರಿಸಿ, ಅವರ ದುಃಖದಿಂದ ಬಿಡಿಸಿ, ಅವರಿಗೆ ಸಂತೋಷವನ್ನುಂಟು ಮಾಡುವೆನು.
JER 31:14 ಇದಲ್ಲದೆ ಯಾಜಕರನ್ನು ಹೇರಳವಾಗಿ ತೃಪ್ತಿಗೊಳಿಸುವೆನು. ನನ್ನ ಜನರು ನನ್ನ ಒಳ್ಳೆಯತನದಿಂದ ತೃಪ್ತಿಪಡುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:15 ಯೆಹೋವ ದೇವರು ಮತ್ತೆ ಹೀಗೆ ಹೇಳುತ್ತಾರೆ: “ರಾಮದಲ್ಲಿ ರೋದನೆಯೂ, ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಿಸುತ್ತಿದೆ. ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ, ಆದರಣೆ ಹೊಂದದೆ ಹೋಗಿದ್ದಾಳೆ. ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”
JER 31:16 ಯೆಹೋವ ದೇವರು ಇಂತೆನ್ನುತ್ತಾರೆ: “ನಿನ್ನ ಧ್ವನಿಯು ಗೋಳಾಡದಿರಲಿ; ನಿನ್ನ ಕಣ್ಣು ನೀರು ಸುರಿಸದಿರಲಿ; ನಿನ್ನ ಪ್ರಯಾಸವು ಸಾರ್ಥಕವಾಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು.
JER 31:17 ನಿನ್ನ ಭವಿಷ್ಯದಲ್ಲಿ ನಿರೀಕ್ಷೆಯಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಿನ್ನ ಮಕ್ಕಳು ತಮ್ಮ ಸ್ವಂತ ದೇಶಕ್ಕೆ ತಿರುಗಿ ಬರುವರು.”
JER 31:18 “ಎಫ್ರಾಯೀಮನು ಅಂಗಲಾಚುವುದನ್ನು ನಿಶ್ಚಯವಾಗಿ ಕೇಳಿದೆನು. ಹೇಗೆಂದರೆ, ‘ನೀನು ನನ್ನನ್ನು ಶಿಕ್ಷಿಸಿದೆ. ಪಳಗದ ಹೋರಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು. ನನ್ನನ್ನು ತಿರುಗಿಸು, ಆಗ ತಿರುಗಿಕೊಳ್ಳುವೆನು. ಯೆಹೋವ ದೇವರೇ, ನೀವೇ ನನ್ನ ದೇವರಾಗಿದ್ದೀರಿ.
JER 31:19 ನಾನು ನಿಮ್ಮಿಂದ ದೂರವಾದ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳುವಳಿಕೆ ಹೊಂದಿದ ಮೇಲೆಯೇ ದುಃಖದಿಂದ ನನ್ನ ಎದೆಯನ್ನು ಬಡಿದುಕೊಂಡೆನು. ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ನಾನು ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’
JER 31:20 ಯೆಹೋವ ದೇವರು ಮುಂದುವರೆಸಿ, ‘ಎಫ್ರಾಯೀಮನು ನನಗೆ ಪ್ರಿಯ ಪುತ್ರನಲ್ಲವೇ? ಅವನು ನನಗೆ ಹರ್ಷಗೊಂಡಿರುವ ನನ್ನ ಮಗುವಲ್ಲವೋ? ನಾನು ಅವನಿಗೆ ವಿರೋಧವಾಗಿ ಆಗಾಗ ಮಾತಾಡಿದ್ದರೂ, ಅವನನ್ನು ಇನ್ನು ಬಹಳವಾಗಿ ಜ್ಞಾಪಕ ಮಾಡುತ್ತೇನೆ. ಆದ್ದರಿಂದ ಅವನಿಗೋಸ್ಕರ ನನ್ನ ಹೃದಯ ಮರುಗುತ್ತದಲ್ಲಾ ಅವನನ್ನು ಕನಿಕರಿಸುವೆನು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:21 “ನಿನಗೋಸ್ಕರ ದಾರಿ ತೋರುವ ಕಂಬಗಳನ್ನೂ ಮತ್ತು ಕೈಮರಗಳನ್ನೂ ನಿಲ್ಲಿಸಿಕೋ ಹೆದ್ದಾರಿಯ ಕಡೆಗೆ ನೀನು ಹೋದ ದಾರಿಗೂ ನಿನ್ನ ಹೃದಯವನ್ನು ಇಟ್ಟುಕೋ. ಇಸ್ರಾಯೇಲಿನ ಕನ್ಯಾ ಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
JER 31:22 ವಿಶ್ವಾಸದ್ರೋಹಿ ಇಸ್ರಾಯೇಲ್ ಮಗಳೇ ಎಷ್ಟರವರೆಗೆ ಅಡ್ಡಾಡುವೆ? ಏಕೆಂದರೆ ಯೆಹೋವ ದೇವರು ಭೂಮಿಯಲ್ಲಿ ಹೊಸದನ್ನು ಸೃಷ್ಟಿಸುತ್ತಾರೆ. ಹೆಂಗಸು ಗಂಡಸನ್ನು ಕಾಪಾಡುವಳು.”
JER 31:23 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರ ಸೆರೆಯನ್ನು ತಿರುಗಿ ತರುವಾಗ, ‘ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,’ ಎಂದು ಇನ್ನೂ ಹೇಳುವರು.
JER 31:24 ಯೆಹೂದದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ, ಮಂದೆಯ ಸಂಗಡ ಹೊರಡುವವರೂ ವಾಸವಾಗುವರು.
JER 31:25 ದಣಿದ ಪ್ರಾಣವನ್ನು ತೃಪ್ತಿಪಡಿಸಿದ್ದೇನೆ. ಕುಂದಿದ ಪ್ರಾಣಗಳನ್ನೆಲ್ಲಾ ತುಂಬಿಸಿದ್ದೇನೆ.”
JER 31:26 ಅಷ್ಟರಲ್ಲಿ ಎಚ್ಚೆತ್ತು ನೋಡಿದೆನು. ನನ್ನ ನಿದ್ದೆ ನನಗೆ ಮಧುರವಾಗಿತ್ತು.
JER 31:27 ಯೆಹೋವ ದೇವರು ಹೇಳುವುದೇನೆಂದರೆ, “ದಿನಗಳು ಬರುತ್ತವೆ. ಆಗ ನಾನು ಇಸ್ರಾಯೇಲ್ ಮತ್ತು ಯೆಹೂದ ರಾಜ್ಯಗಳಲ್ಲಿ ಮನುಷ್ಯರನ್ನೂ ಪ್ರಾಣಿಗಳನ್ನೂ ಬಿತ್ತಿ ಭರ್ತಿಮಾಡುವೆನು.
JER 31:28 ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:29 “ಆ ದಿನಗಳಲ್ಲಿ, “ ‘ತಂದೆಗಳು ಹುಳಿ ದ್ರಾಕ್ಷಿಯನ್ನು ತಿಂದದ್ದರಿಂದ, ಮಕ್ಕಳ ಹಲ್ಲುಗಳು ಚಳಿತು ಹೋದವೆಂದು ಇನ್ನು ಹೇಳುವುದಿಲ್ಲ.’
JER 31:30 ಆದರೆ ಒಬ್ಬೊಬ್ಬನು ಸ್ವಂತ ಪಾಪಕ್ಕಾಗಿ ಸಾಯುವನು. ಹುಳಿ ದ್ರಾಕ್ಷಿಯನ್ನು ತಿಂದ ಮನುಷ್ಯನು ಯಾವನೋ, ಅವನ ಹಲ್ಲುಗಳು ಚಳಿತು ಹೋಗುವುವು.”
JER 31:31 ಯೆಹೋವ ದೇವರು ಹೇಳುವುದನ್ನು ಕೇಳಿ: “ನಾನು ಇಸ್ರಾಯೇಲ್ ವಂಶದವರೊಂದಿಗೂ, ಯೆಹೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
JER 31:32 ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು ಈಜಿಪ್ಟ್ ದೇಶದಿಂದ ಕರೆದು ತಂದಾಗ, ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ, ಆ ನನ್ನ ಒಡಂಬಡಿಕೆಯನ್ನು ಅವರು ಮೀರಿ ನಡೆದರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:33 “ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ನಿಯಮವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
JER 31:34 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ, ‘ಯೆಹೋವ ದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು. ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ.”
JER 31:35 ಇದು ಯೆಹೋವ ದೇವರಾದ ನನ್ನ ನುಡಿ, ಯೆಹೋವ ದೇವರು, ಹಗಲಲ್ಲಿ ಬೆಳಕು ನೀಡಲು ಸೂರ್ಯನನ್ನು ನೇಮಿಸಿದವರು. ಇರುಳಲ್ಲಿ ಬೆಳಕು ನೀಡಲು ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದವರು. ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ಕೆರಳಿಸುವವರು, ಸೇನಾಧೀಶ್ವರ ಯೆಹೋವ ದೇವರು ಎಂಬ ನಾಮಧೇಯದಿಂದ ಪ್ರಸಿದ್ಧರು.
JER 31:36 “ಈ ನಿಯಮಗಳು ನನ್ನ ಸನ್ನಿಧಿಯಿಂದ ಯಾವಾಗ ಇಲ್ಲದೆ ಹೋಗುವುವೋ, ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತುಹೋಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:37 ಹಾಗೆಯೇ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮೇಲಿನ ಆಕಾಶಮಂಡಲವನ್ನು ಅಳೆಯಬಹುದಾದರೆ, ಕೆಳಗಿನ ಭೂಮಂಡಲದ ವಿಸ್ತಾರವನ್ನು ಪರೀಕ್ಷಿಸಬಹುದಾದರೆ, ಆಗ ಮಾತ್ರ ಅದರ ದುಷ್ಕೃತ್ಯಗಳನ್ನು ಮುನ್ನಿಟ್ಟು, ಇಸ್ರಾಯೇಲ್ ವಂಶವನ್ನು ನಾನು ನಿರಾಕರಿಸಿ ಬಿಡಲು ಸಾಧ್ಯ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 31:38 ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ಹನನೇಲನ ಬುರುಜು ಮೊದಲುಗೊಂಡು ಮೂಲೆಯ ಬಾಗಿಲಿನವರೆಗೂ ಪಟ್ಟಣವು ಕರ್ತರಿಗೆ ಕಟ್ಟಲಾಗುವ ದಿನಗಳು ಬರಲಿದೆ.
JER 31:39 ಅಳತೆ ದಾರವು ಅದಕ್ಕೆ ಎದುರಾಗಿ ಗಾರೇಬಿನ ಗುಡ್ಡದ ಮೇಲೆ ನೇರವಾಗಿ ಹೊರಟು, ಗೋಯದವರೆಗೂ ಆವರಿಸಿಕೊಳ್ಳುವುದು.
JER 31:40 ಹೆಣ ಹೂಣುವ ಮತ್ತು ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲವೂ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಈ ಪಟ್ಟಣವು ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”
JER 32:1 ನೆಬೂಕದ್ನೆಚ್ಚರನ ಹದಿನೆಂಟನೆಯ ವರ್ಷವಾಗಿದ್ದ, ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವು.
JER 32:2 ಆಗ ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೆ ಮುತ್ತಿಗೆ ಹಾಕಿತ್ತು. ಪ್ರವಾದಿಯಾದ ಯೆರೆಮೀಯನು ಯೆಹೂದದ ಅರಸನ ಅರಮನೆಯಲ್ಲಿರುವ ಸೆರೆಮನೆಯ ಅಂಗಳದಲ್ಲಿ ಬಂಧಿಸಲಾಗಿದ್ದನು.
JER 32:3 ಯೆಹೂದದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವ ದೇವರೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ವಶಪಡಿಸಿಕೊಳ್ಳುವನು.
JER 32:4 ಈ ಯೆಹೂದದ ಅರಸ ಚಿದ್ಕೀಯನು ಬಾಬಿಲೋನಿಯರ ಕೈಯಿಂದ ತಪ್ಪಿಸಿಕೊಳ್ಳಲಾಗದೆ, ಅದರ ಅರಸನ ವಶವಾಗುವುದು ಖಂಡಿತ. ಅವನ ಮುಂದೆ ಸಾಕ್ಷಾತ್ತಾಗಿ ನಿಂತು ಮುಖಾಮುಖಿಯಾಗಿ ಮಾತನಾಡುವನು.
JER 32:5 ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರಿಸುವವರೆಗೂ ಅವನು ಅಲ್ಲಿಯೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಯೆಹೋವ ದೇವರ ನುಡಿ,’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.
JER 32:6 ಆಗ ಯೆರೆಮೀಯನು ತಿಳಿಸಿದ್ದು, “ಯೆಹೋವ ದೇವರ ವಾಕ್ಯವು ನನಗೆ ಬಂತು,
JER 32:7 ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು, ‘ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಏಕೆಂದರೆ ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು,’ ಎಂದು ಹೇಳುವನು.
JER 32:8 “ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು, ಯೆಹೋವ ದೇವರ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆ ಬಂದು, ‘ಬೆನ್ಯಾಮೀನಿನ ದೇಶದಲ್ಲಿರುವ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಏಕೆಂದರೆ ಬಾಧ್ಯದ ಅಧಿಕಾರವೂ ನಿನ್ನದು; ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ,’ ಎಂದು ಬೇಡಿಕೊಂಡು ಹೇಳಿದನು. “ಆಗ ಅದು ಯೆಹೋವ ದೇವರ ವಾಕ್ಯವೆಂದು ನಾನು ತಿಳಿದುಕೊಂಡೆನು.
JER 32:9 ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು, ಅವನಿಗೆ ಹದಿನೇಳು ಬೆಳ್ಳಿನಾಣ್ಯ ತೂಕಮಾಡಿ ಕ್ರಯಕೊಟ್ಟೆನು.
JER 32:10 ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆಹಾಕಿ, ಸಾಕ್ಷಿಗಳನ್ನಿಟ್ಟು, ಬೆಳ್ಳಿಯನ್ನು ತ್ರಾಸಿನಲ್ಲಿ ತೂಕಮಾಡಿದೆನು.
JER 32:11 ಮೇಲೆ ನಾನು ಕ್ರಯಪತ್ರವನ್ನು, ಅಂದರೆ ಚಕ್ಕು ಬಂದಿ ಷರತ್ತುಗಳಿಂದ ಕೂಡಿ ಮುದ್ರಿತವಾದ ಪತ್ರವನ್ನೂ, ಮುಚ್ಚಿದ್ದ ಪತ್ರವನ್ನೂ ತೆಗೆದುಕೊಂಡು,
JER 32:12 ಮಹ್ಸೇಯನ ಮೊಮ್ಮಗನೂ, ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆ. ನನ್ನ ಚಿಕ್ಕಪ್ಪನ ಮಗ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲ ಯೆಹೂದ್ಯರ ಎದುರಿನಲ್ಲಿ ಈ ಕ್ರಯಪತ್ರವನ್ನು ಕೊಟ್ಟೆ.
JER 32:13 “ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇನೆಂದರೆ:
JER 32:14 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. ಈ ಪತ್ರಗಳನ್ನೂ, ಮುದ್ರೆ ಹಾಕಿದ ಈ ಕ್ರಯ ಪತ್ರವನ್ನೂ, ತೆರೆದಿರುವ ಈ ಪತ್ರವನ್ನೂ ತೆಗೆದು, ಅವು ಬಹು ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
JER 32:15 ಇಸ್ರಾಯೇಲಿನ ದೇವರೂ ಸರ್ವಶಕ್ತರೂ ಆದ ಯೆಹೋವ ದೇವರು ಈ ದೇಶದಲ್ಲಿ ತಿರುಗಿ ಮನೆಗಳೂ, ಹೊಲಗಳೂ, ದ್ರಾಕ್ಷಿಯ ತೋಟಗಳೂ ಸ್ವಾಧೀನವಾಗುವುವೆಂದು ಹೇಳುತ್ತಾರೆ.’
JER 32:16 “ನಾನು ಆ ಕ್ರಯಪತ್ರವನ್ನು ನೇರೀಯನ ಮಗನಾದ ಬಾರೂಕನಿಗೆ ಕೊಟ್ಟ ಮೇಲೆ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದೆನು:
JER 32:17 “ಸಾರ್ವಭೌಮ ಯೆಹೋವ ದೇವರೇ, ಇಗೋ, ನೀವು ನಿಮ್ಮ ಮಹಾ ಬಲದಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ. ನಿಮಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ.
JER 32:18 ನೀವು ಸಾವಿರಾರು ತಲೆಗಳವರೆಗೆ ಪ್ರೀತಿ, ದಯೆತೋರಿಸಿ, ತಂದೆಗಳ ಅಕ್ರಮಗಳನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸುರಿಸುವವರಾಗಿದ್ದೀರಿ. ಮಹತ್ವವುಳ್ಳವರೂ, ಪರಾಕ್ರಮವುಳ್ಳ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಎಂಬುದು ನಿಮ್ಮ ಹೆಸರು.
JER 32:19 ನೀವು ನಿಮ್ಮ ಯೋಜನೆಯಲ್ಲಿ ದೊಡ್ಡವರು, ಕ್ರಿಯೆಯಲ್ಲಿ ಬಲಿಷ್ಠರು. ನಿಮ್ಮ ಕಣ್ಣುಗಳು ಮನುಷ್ಯರ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರವಾಗಿಯೂ ಕೊಡುವ ಹಾಗೆ ತೆರೆದಿವೆ.
JER 32:20 ನೀವು ಈ ದಿನದವರೆಗೂ ಈಜಿಪ್ಟ್ ದೇಶದಲ್ಲಿಯೂ ಇಸ್ರಾಯೇಲಿನಲ್ಲಿಯೂ ಜನಾಂಗಗಳೊಳಗೂ ಗುರುತುಗಳನ್ನೂ, ಲಕ್ಷಣಗಳನ್ನೂ ಇಟ್ಟಿದ್ದೀರಿ. ಇಂದಿನವರೆಗೂ ನಿಮಗೆ ಹೆಸರನ್ನು ಸ್ಥಿರಪಡಿಸಿಕೊಂಡಿದ್ದೀರಿ.
JER 32:21 ನಿಮ್ಮ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ, ಲಕ್ಷಣಗಳಿಂದಲೂ, ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಮಹಾಭಯದಿಂದಲೂ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದಿದ್ದೀರಿ.
JER 32:22 ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶವಾದ ಈ ದೇಶವನ್ನು ಅವರಿಗೆ ಕೊಟ್ಟಿದ್ದೀರಿ.
JER 32:23 ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನಿಮ್ಮ ನಿಯಮದಲ್ಲಿ ನಡೆದುಕೊಳ್ಳಲಿಲ್ಲ. ಮಾಡಬೇಕೆಂದು ನೀವು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಲಿಲ್ಲ. ಆದ್ದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀರಿ.
JER 32:24 “ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ. ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರ ಕೈಯಲ್ಲಿ ಖಡ್ಗ, ಕ್ಷಾಮ, ವ್ಯಾಧಿಗಳ ಮೂಲಕವಾಗಿ ಒಪ್ಪಿಸಲಾಗಿದೆ. ನೀನು ಹೇಳಿದ್ದು ಉಂಟಾಯಿತು. ಇಗೋ, ನೀನು ಅದನ್ನು ನೋಡುತ್ತೀ.
JER 32:25 ಆದರೂ ಓ ಸಾರ್ವಭೌಮ ಯೆಹೋವ ದೇವರೇ, ನೀನು ನನಗೆ, ‘ಹೊಲವನ್ನು ಹಣಕ್ಕೆ ಕೊಂಡುಕೋ, ಸಾಕ್ಷಿಗಳನ್ನು ಇಡು,’ ಎಂದು ಹೇಳಿದ್ದೀ. ಆದರೂ ಪಟ್ಟಣವು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಲಾಗಿದೆಯಲ್ಲಾ?”
JER 32:26 ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,
JER 32:27 “ಇಗೋ, ನಾನೇ ಯೆಹೋವ ದೇವರು, ಸಮಸ್ತ ಜನರ ದೇವರು, ನನಗೆ ಯಾವುದಾದರೂ ಅಸಾಧ್ಯವಾದ ಕಾರ್ಯ ಉಂಟೋ?
JER 32:28 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಈ ಪಟ್ಟಣವನ್ನು ಬಾಬಿಲೋನಿಯರ ಕೈಯಲ್ಲಿಯೂ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಒಪ್ಪಿಸುತ್ತೇನೆ. ಅವನು ಅದನ್ನು ವಶಪಡಿಸಿಕೊಳ್ಳುವನು.
JER 32:29 ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರು ಬಂದು, ಈ ಪಟ್ಟಣಕ್ಕೆ ಬೆಂಕಿ ಹಚ್ಚಿ; ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವನ್ನರ್ಪಿಸಿ, ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ ಅವುಗಳನ್ನೂ ಸುಟ್ಟುಬಿಡುವರು.
JER 32:30 “ಏಕೆಂದರೆ ಇಸ್ರಾಯೇಲರೂ, ಯೆಹೂದದ ಮಕ್ಕಳೂ ತಮ್ಮ ಚಿಕ್ಕಂದಿನಿಂದ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾತ್ರ ಮಾಡಿದ್ದಾರೆ. ಇಸ್ರಾಯೇಲರೂ ತಮ್ಮ ಕೈಕೆಲಸಗಳಿಂದ ನನಗೆ ಕೋಪೋದ್ರೇಕವನ್ನೂ ಎಬ್ಬಿಸಿದ್ದಾರೆ, ಎಂದು ಯೆಹೋವ ದೇವರು ಹೇಳುತ್ತಾರೆ.
JER 32:31 ಈ ಪಟ್ಟಣವು ಕಟ್ಟಿದ ದಿನದಿಂದ ಈ ದಿನದವರೆಗೂ ನನ್ನ ಕೋಪಕ್ಕೂ, ನನ್ನ ಉಗ್ರಕ್ಕೂ ಗುರಿಯಾಗಿತ್ತು. ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.
JER 32:32 ಇಸ್ರಾಯೇಲರೂ, ಯೆಹೂದದ ಮಕ್ಕಳೂ, ಅವರೂ, ಅವರ ಅರಸರೂ, ಅವರ ಪ್ರಧಾನರೂ, ಅವರ ಯಾಜಕರೂ, ಅವರ ಪ್ರವಾದಿಗಳೂ, ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದರು
JER 32:33 ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ನಾನು ಅವರಿಗೆ ಬೋಧಿಸಿದೆನು. ಪುನಃ ಬೋಧಿಸಿದೆನು. ಆದರೂ ಉಪದೇಶ ಹೊಂದುವುದಕ್ಕೆ ಅವರು ಕಿವಿಗೊಡಲಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ.
JER 32:34 ಆದರೆ ನನ್ನ ಹೆಸರಿನಿಂದ ಕರೆಯಲಾಗಿರುವ ಮನೆಯಲ್ಲಿ ಅದನ್ನು ಅಪವಿತ್ರ ಮಾಡುವ ಹಾಗೆ ತಮ್ಮ ಅಸಹ್ಯ ವಸ್ತುಗಳನ್ನು ಇಟ್ಟಿದ್ದಾರೆ.
JER 32:35 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿ ಕೊಡುವುದಕ್ಕಾಗಿ ಬೆನ್ ಹಿನ್ನೋಮ್ ತಗ್ಗಿನಲ್ಲಿ ಬಾಳ್ ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೇ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆ ಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.
JER 32:36 “ ‘ಹೀಗಾದರೂ ಈಗ ಅದು ಖಡ್ಗದಿಂದಲೂ ಬರದಿಂದಲೂ ವ್ಯಾಧಿಯಿಂದಲೂ ಬಾಬಿಲೋನಿನ ಅರಸನ ಕೈವಶವಾಗಿದೆ,’ ಎಂದು ನೀವು ಹೇಳುವ ಈ ಪಟ್ಟಣದ ವಿಷಯ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ:
JER 32:37 ನಾನು ನನ್ನ ಕೋಪದಲ್ಲಿಯೂ, ನನ್ನ ಉಗ್ರದಲ್ಲಿಯೂ, ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶದೊಳಗಿಂದ ಅವರನ್ನು ಕೂಡಿಸಿ, ಈ ಸ್ಥಳಕ್ಕೆ ತಿರುಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.
JER 32:38 ಅವರು ನನ್ನ ಜನರಾಗಿರುವರು. ನಾನು ಅವರಿಗೆ ದೇವರಾಗಿರುವೆನು.
JER 32:39 ಅವರಿಗೂ, ಅವರ ತರುವಾಯ ಅವರ ಮಕ್ಕಳಿಗೂ ಹಿತವಾಗುವ ಹಾಗೆಯೂ; ಅವರು ಯಾವಾಗಲೂ ನನಗೆ ಭಯಪಡುವ ಹಾಗೆಯೂ ಅವರಿಗೆ ಒಂದೇ ಹೃದಯವನ್ನೂ, ಒಂದೇ ಮಾರ್ಗವನ್ನೂ ಕೊಡುವೆನು.
JER 32:40 ಅವರಿಗೆ ಒಳ್ಳೆಯದನ್ನು ಮಾಡುವ ಹಾಗೆ ನಾನು ತಿರುಗಿಸಿಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ. ಅವರು ನನ್ನನ್ನು ಬಿಡದ ಹಾಗೆ ಭಯವನ್ನು ಅವರ ಹೃದಯದಲ್ಲಿ ಇಡುತ್ತೇನೆ.
JER 32:41 ಹೌದು, ಅವರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಅವರೊಂದಿಗೆ ಆನಂದಪಡುವೆನು. ನಿಜವಾಗಿ ನನ್ನ ಪೂರ್ಣಹೃದಯದಿಂದಲೂ, ನನ್ನ ಪೂರ್ಣಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
JER 32:42 “ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ, ಹಾಗೆಯೇ ನಾನು ವಾಗ್ದಾನ ಮಾಡಿದ ಸಮೃದ್ಧಿಯನ್ನೆಲ್ಲಾ ಅವರ ಮೇಲೆ ಬರಮಾಡುವೆನು.
JER 32:43 ‘ಜನಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ,’ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಳ್ಳುವರು, ಕೊಡುವರು.
JER 32:44 ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ ಹೊಲಗಳನ್ನು ಹಣಕ್ಕೆ ಕೊಂಡುಕೊಂಡು, ಪತ್ರಗಳನ್ನು ಬರೆದು ಮುದ್ರೆಹಾಕಿ, ಸಾಕ್ಷಿಗಳನ್ನು ಇಟ್ಟುಕೊಳ್ಳುವರು. ಏಕೆಂದರೆ ನಾನು ಅವರ ಸೆರೆಯಿಂದ ಹಿಂದಿರುಗುವಂತೆ ಮಾಡುವೆನು,” ಎಂದು ಯೆಹೋವ ದೇವರು ನುಡಿಯುತ್ತಾರೆ.
JER 33:1 ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಅವನು ಇನ್ನು ಸೆರೆಮನೆಯ ಅಂಗಳದಲ್ಲಿ ಸೆರೆಯಾಗಿದ್ದಾಗ ಎರಡನೆಯ ಸಾರಿ ಉಂಟಾಯಿತು.
JER 33:2 “ಭೂಮಿಯನ್ನು ಸೃಷ್ಟಿಮಾಡುವ ಯೆಹೋವ ದೇವರೂ ಅದನ್ನು ಸ್ಥಾಪಿಸುವುದಕ್ಕಾಗಿ ಅದನ್ನು ರೂಪಿಸಿದ ಯೆಹೋವನೆಂಬ ಹೆಸರುಳ್ಳವನೂ ಹೇಳುವುದೇನೆಂದರೆ,
JER 33:3 ‘ನನ್ನನ್ನು ಕರೆ, ಆಗ ನಿನಗೆ ಉತ್ತರಕೊಡುವೆನು. ನಿನಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹಾಕಾರ್ಯಗಳನ್ನೂ ನಿನಗೆ ಹೇಳಿಕೊಡುವೆನು.’
JER 33:4 ದಿಬ್ಬಗಳಿಂದಲೂ ಖಡ್ಗದಿಂದಲೂ ಕೆಡವಿರುವ ಈ ಪಟ್ಟಣದ ಮನೆಗಳ ವಿಷಯವಾಗಿವೂ ಯೆಹೂದದ ಅರಸರ ಅರಮನೆಗಳ ವಿಷಯವಾಗಿಯೂ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ.
JER 33:5 ಅವರು ಕಸ್ದೀಯರ ಸಂಗಡ ಯುದ್ಧ ಮಾಡುವುದಕ್ಕೂ ನಾನು ನನ್ನ ಕೋಪದಲ್ಲಿಯೂ, ‘ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವುದಕ್ಕೂ ಬರುತ್ತಾರೆ. ಏಕೆಂದರೆ ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅವರ ಸಮಸ್ತ ದುಷ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
JER 33:6 “ ‘ಇಗೋ, ನಾನು ಅದಕ್ಕೆ ಕ್ಷೇಮವನ್ನೂ, ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಪಡಿಸಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
JER 33:7 ಯೆಹೂದದ ಸೆರೆಯನ್ನೂ, ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ, ಅವರನ್ನು ಮುಂಚಿನ ಹಾಗೆ ಕಟ್ಟುವೆನು.
JER 33:8 ಅವರು ಯಾವುದರಿಂದ ನನಗೆ ವಿರೋಧವಾಗಿ ಪಾಪ ಮಾಡಿದರೋ, ಆ ಅಕ್ರಮದಿಂದೆಲ್ಲಾ ಅವರನ್ನು ಶುದ್ಧಮಾಡುವೆನು. ಅವರು ಯಾವವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದಾರೋ, ಆ ಅಕ್ರಮಗಳನ್ನೆಲ್ಲಾ ಮನ್ನಿಸುವೆನು.
JER 33:9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖ ಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲಾ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.’
JER 33:10 “ಯೆಹೋವ ದೇವರು ಹೇಳುವುದೇನೆಂದರೆ: ‘ “ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು,” ಎಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ
JER 33:11 ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ ಮತ್ತು ಹಾಡುತ್ತಾ ಕೃತಜ್ಞತಾ ಬಲಿಯನ್ನು ಯೆಹೋವ ದೇವರ ಆಲಯಕ್ಕೆ ತರುವವರ ಸ್ವರ ಹೀಗೆ ಹೇಳುವವು, “ ‘ “ಸೇನಾಧೀಶ್ವರ ಯೆಹೋವ ದೇವರಿಗೆ ಕೃತಜ್ಞತಾ ಸ್ತೋತ್ರಮಾಡಿರಿ, ಏಕೆಂದರೆ ಯೆಹೋವ ದೇವರು ಒಳ್ಳೆಯವರು. ಆತನ ಪ್ರೀತಿ ಶಾಶ್ವತವಾಗಿರುತ್ತದೆ.” ಏಕೆಂದರೆ ನಾನು ಈ ದೇಶದ ಸಮೃದ್ಧಿಯನ್ನು ಮೊದಲಿನಂತೆ ಪುನಃಸ್ಥಾಪಿಸುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 33:12 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿ ಕುರುಬರು ತಮ್ಮ ಹಿಂಡುಗಳಿಗೆ ವಿಶ್ರಾಂತಿ ನೀಡಲು ಮತ್ತೆ ಹುಲ್ಲುಗಾವಲುಗಳು ಇರುತ್ತವೆ.
JER 33:13 ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ, ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಮಂದೆಗಳು ಎಣಿಸುವವನ ಕೈಕೆಳಗೆ ಹಾದುಹೋಗುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 33:14 “ ‘ಇಗೋ, ದಿನಗಳು ಬರಲಿವೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ಇಸ್ರಾಯೇಲಿನ ಮತ್ತು ಯೆಹೂದದ ಮನೆಯವರ ಸಂಗಡ ಹೇಳಿದ ಒಳ್ಳೆಯ ವಾಗ್ದಾನವನ್ನು ನೆರವೇರಿಸುವೆನು.
JER 33:15 “ ‘ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು. ಆತನು ದೇಶದಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.
JER 33:16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಯೆರೂಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಅಂದರೆ ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.’
JER 33:17 ಯೆಹೋವ ದೇವರಾದ ನಾನು ಹೇಳುವುದೇನೆಂದರೆ: ‘ದಾವೀದನು ಎಂದಿಗೂ ಇಸ್ರಾಯೇಲ್ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಒಬ್ಬ ವ್ಯಕ್ತಿಯನ್ನು ಹೊಂದಲು ವಿಫಲನಾಗುವುದಿಲ್ಲ
JER 33:18 ಅದಕ್ಕೆ ಆ ಸಂತಾನದವರಲ್ಲಿ ಒಬ್ಬ ಗಂಡಸು ಇಲ್ಲದೆ ಇರನು. ಅಂತೆಯೇ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ದಹನಬಲಿಯನ್ನು, ನೈವೇದ್ಯವನ್ನು ಹಾಗು ಕಾಣಿಕೆಯನ್ನು ಒಪ್ಪಿಸತಕ್ಕ ಒಬ್ಬನು ಲೇವಿಯರಾದ ಯಾಜಕರು ಇದ್ದೇ ಇರುವನು.’ ”
JER 33:19 ಯೆಹೋವ ದೇವರು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದರು:
JER 33:20 “ಯೆಹೋವ ದೇವರಾದ ನನ್ನ ನುಡಿ ಇದು: ‘ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೇ?
JER 33:21 ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೆ ನನ್ನ ಪರಿಚಾರಕರಾದ ಲೇವಿ ಕುಲದ ಯಾಜಕರೊಂದಿಗೆ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು.
JER 33:22 ಆದರೆ ನನ್ನ ದಾಸ ದಾವೀದನ ಸಂತಾನವನ್ನೂ ನನ್ನ ಪರಿಚಾರಕರಾದ ಲೇವಿಯರನ್ನೂ ಅಸಂಖ್ಯಾತ ನಕ್ಷತ್ರಗಣದಷ್ಟು ಮತ್ತು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕಗೊಳಿಸುವೆನು.’ ”
JER 33:23 ಇದಲ್ಲದೆ ಯೆಹೋವ ದೇವರು ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು:
JER 33:24 “ ‘ಯೆಹೋವ ದೇವರಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ, ಎಂದು ಜನರು ಆಡಿಕೊಳ್ಳುತ್ತಿದ್ದಾರೆ.’ ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರಲ್ಲವೇ?
JER 33:25 ಯೆಹೋವನಾದ ನಾನು ಹೇಳುವುದನ್ನು ಕೇಳು: ‘ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ,
JER 33:26 ಆಗ ಮಾತ್ರ ನಾನು ಯಾಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ. ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ, ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.’ ”
JER 34:1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಅವನ ಆಡಳಿತದ ಭೂಮಿಯ ಎಲ್ಲಾ ರಾಜ್ಯಗಳೂ ಎಲ್ಲಾ ಜನಾಂಗಗಳೂ ಯೆರೂಸಲೇಮಿಗೂ ಅದರ ಎಲ್ಲಾ ಪಟ್ಟಣಗಳಿಗೂ ವಿರೋಧವಾಗಿ ಯುದ್ಧಮಾಡುವಾಗ ಯೆಹೋವ ದೇವರಿಂದ ಯೆರೆಮೀಯನಿಗೆ ಬಂದ ವಾಕ್ಯವೇನೆಂದರೆ:
JER 34:2 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈ ಪಟ್ಟಣವನ್ನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅದನ್ನು ಬೆಂಕಿಯಿಂದ ಸುಡುವನು.
JER 34:3 ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ. ಆದರೆ ನಿಶ್ಚಯವಾಗಿ ಹಿಡಿಯಲಾಗಿ, ಅವನ ಕೈವಶವಾಗುವೆ. ನೀವು ಬಾಬಿಲೋನಿನ ಅರಸನನ್ನು ಪ್ರತ್ಯಕ್ಷವಾಗಿ ಕಾಣುವಿರಿ. ಅವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವನು. ನೀನು ಬಾಬಿಲೋನಿಗೆ ಹೋಗುವಿ.
JER 34:4 “ ‘ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವ ದೇವರ ವಾಗ್ದಾನವನ್ನು ಕೇಳು. ನಿನ್ನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಖಡ್ಗದಿಂದ ಸಾಯುವುದಿಲ್ಲ.
JER 34:5 ನೀನು ಶಾಂತಿಯುತವಾಗಿ ಸಾಯುವೆ. ನಿನಗಿಂತ ಮೊದಲು ಆಳಿದ ನಿನ್ನ ಪಿತೃಗಳಾದ ಅರಸರನ್ನು ಗೌರವಿಸಲು ಬೆಂಕಿಯನ್ನು ಹೊತ್ತಿಸಿದ ಪ್ರಕಾರ ನಿನಗೂ ಹಾಕುವರು. “ಅಯ್ಯೋ, ಒಡೆಯನೇ,” ಎಂದು ಹೇಳಿ ನಿನಗೋಸ್ಕರ ಗೋಳಾಡುವರು. ನಾನೇ ಈ ವಾಗ್ದಾನವನ್ನು ಮಾಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.’ ”
JER 34:6 ಆಗ ಪ್ರವಾದಿಯಾದ ಯೆರೆಮೀಯನು ಈ ವಾಕ್ಯಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.
JER 34:7 ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೂ ಯೆಹೂದದಲ್ಲಿ ಮಿಕ್ಕ ಸಮಸ್ತ ಪಟ್ಟಣಗಳಿಗೂ ಎಂದರೆ, ಲಾಕೀಷಿಗೂ ಅಜೇಕಕ್ಕೂ ವಿರೋಧವಾಗಿ ಯುದ್ಧ ಮಾಡಿದಾಗಲೇ ಹೇಳಿದನು. ಏಕೆಂದರೆ ಯೆಹೂದದ ಪಟ್ಟಣಗಳಲ್ಲಿ ಈ ಕೋಟೆಯುಳ್ಳ ಪಟ್ಟಣಗಳು ಮಾತ್ರ ನಿಂತಿದ್ದವು.
JER 34:8 ಗುಲಾಮರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಅರಸನಾದ ಚಿದ್ಕೀಯನು ಯೆರೂಸಲೇಮಿನ ಎಲ್ಲಾ ಜನರೊಂದಿಗೆ ಒಡಂಬಡಿಕೆಯನ್ನು ಮಾಡಿದ ನಂತರ ಯೆಹೋವ ದೇವರಿಂದ ಯೆರೆಮೀಯನಿಗೆ ಈ ಮಾತು ಬಂದಿತು.
JER 34:9 ಪ್ರತಿಯೊಬ್ಬರೂ ತಮ್ಮ ಗಂಡು ಮತ್ತು ಹೆಣ್ಣು ಹಿಬ್ರಿಯ ಗುಲಾಮರನ್ನು ಇಬ್ಬರನ್ನೂ ಮುಕ್ತಗೊಳಿಸಬೇಕು. ಯೆಹೂದ್ಯರಾದ ಸಹೋದರ ಸಹೋದರಿಯರನ್ನು ಯಾರೂ ಬಂಧನದಲ್ಲಿ ಇಟ್ಟುಕೊಳ್ಳಲಿಲ್ಲ.
JER 34:10 ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡರು. ಇನ್ನು ಮುಂದೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅವರು ಒಪ್ಪಿದರು ಮತ್ತು ಅವರನ್ನು ಬಿಡುಗಡೆ ಮಾಡಿದರು.
JER 34:11 ಆದರೆ ನಂತರ ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು ಮತ್ತು ಅವರು ಬಿಡುಗಡೆ ಮಾಡಿದ ಗುಲಾಮರನ್ನು ಮರಳಿ ತೆಗೆದುಕೊಂಡು ಅವರನ್ನು ಮತ್ತೆ ಗುಲಾಮರನ್ನಾಗಿ ಮಾಡಿದರು.
JER 34:12 ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾಗಿ:
JER 34:13 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ದಾಸರ ದೇಶದೊಳಗಿಂದ ಹೊರಗೆ ತಂದ ದಿವಸದಲ್ಲಿ ಅವರ ಸಂಗಡ ಒಡಂಬಡಿಕೆ ಮಾಡಿ,
JER 34:14 ‘ಏಳು ವರ್ಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಜೀತದಾಳಾಗಿದ್ದ ತನ್ನ ಸಹೋದರನಾದ ಹಿಬ್ರಿಯನನ್ನು ಕಳುಹಿಸಬೇಕೆಂದೂ, ಅವನು ನಿನಗೆ ಆರು ವರ್ಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕು,’ ಎಂದು ಹೇಳಿದೆನು. ಆದರೆ ನಿಮ್ಮ ಪಿತೃಗಳು ನನ್ನ ಮಾತನ್ನು ಕೇಳಲಿಲ್ಲ. ಅವರು ಕಿವಿಗೊಡಲಿಲ್ಲ.
JER 34:15 ನೀವೋ ಕೂಡಲೆ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ಬಿಡುಗಡೆಯನ್ನು ಪ್ರಕಟಿಸಿ, ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಿರಿ. ನನ್ನ ಹೆಸರಿನಿಂದ ಖ್ಯಾತಗೊಂಡಿರುವ ದೇವಾಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡಿರಿ.
JER 34:16 ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ.
JER 34:17 “ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಪ್ರತಿಯೊಬ್ಬನು ತನ್ನ ಸಹೋದರನಿಗೂ, ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವುದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಖಡ್ಗ, ಬರ, ವ್ಯಾಧಿ ಇವುಗಳಿಗಾಗಿಯೇ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಯೆಹೋವ ದೇವರು ಹೇಳುತ್ತಾರೆ ಮತ್ತು ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನೂ ತಿರಸ್ಕಾರ ಹೊಂದುವಂತೆ ಮಾಡುವೆನು.
JER 34:18 ನನ್ನ ಒಡಂಬಡಿಕೆಯನ್ನು ಮೀರಿದ ಮನುಷ್ಯರನ್ನೂ, ಕರುವನ್ನೂ ಎರಡು ಭಾಗಮಾಡಿ, ಅದರ ತುಂಡುಗಳ ನಡುವೆ ದಾಟಿ ಹೋಗಿ, ನನ್ನ ಮುಂದೆ ಮಾಡಿದ ಒಡಂಬಡಿಕೆಯ ವಾಕ್ಯಗಳನ್ನು ಸ್ಥಾಪಿಸದೆ ಇರುವವರನ್ನೂ,
JER 34:19 ಯೆಹೂದದ ಪ್ರಧಾನರನ್ನೂ, ಯೆರೂಸಲೇಮಿನ ಪ್ರಧಾನರನ್ನೂ, ಕಂಚುಕಿಯರನ್ನೂ, ಯಾಜಕರನ್ನೂ, ಕರುವಿನ ತುಂಡುಗಳ ನಡುವೆ ದಾಟಿಹೋದ ದೇಶದ ಜನರೆಲ್ಲರನ್ನೂ,
JER 34:20 ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಒಪ್ಪಿಸುವೆನು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗುವುವು.
JER 34:21 “ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ, ನಿಮ್ಮನ್ನು ಬಿಟ್ಟುಹೋಗಿರುವ ಬಾಬಿಲೋನಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.
JER 34:22 ಯೆಹೋವ ದೇವರು ಹೇಳುತ್ತಾರೆ, ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರುಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು ಮತ್ತು ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗಿ ಮಾಡುವೆನು.”
JER 35:1 ಯೋಷೀಯನ ಮಗನಾದ ಯೆಹೂದದ ಅರಸ ಯೆಹೋಯಾಕೀಮನ ಕಾಲದಲ್ಲಿ ಯೆರೆಮೀಯನಾದ ನನಗೆ ಯೆಹೋವ ದೇವರಿಂದ ಬಂದ ವಾಕ್ಯ ಇದು:
JER 35:2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರನ್ನು ಯೆಹೋವ ದೇವರ ಆಲಯದ ಒಂದು ಕೋಣೆಯೊಳಕ್ಕೆ ಕರೆದು, ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.”
JER 35:3 ಆಗ ನಾನು ಹಬಚ್ಚಿನ್ಯನ ಮಗ, ಯೆರೆಮೀಯನ ಮಗನಾದ, ಯಾಜನ್ಯನೂ, ಅವನ ಸಹೋದರರನ್ನೂ, ಅವನ ಪುತ್ರರೆಲ್ಲರನ್ನೂ ರೇಕಾಬನ ಸಮಸ್ತ ಮನೆಯವರನ್ನೂ ಕರೆಯುವುದಕ್ಕೆ ಹೋದೆನು.
JER 35:4 ಕರೆದುಕೊಂಡು ಯೆಹೋವ ದೇವರ ಆಲಯಕ್ಕೆ ದ್ವಾರಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ ಹಾನಾನನ ಪುತ್ರರ ಕೊಠಡಿಗೆ ತಂದು,
JER 35:5 ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಹೂಜೆಗಳನ್ನೂ, ಪಂಚ ಪಾತ್ರೆಗಳನ್ನೂ ಇಟ್ಟು ಅವರಿಗೆ, “ದ್ರಾಕ್ಷಾರಸ ಕುಡಿಯಿರಿ,” ಎಂದನು.
JER 35:6 ಆದರೆ ಅವರು, “ನಾವು ದ್ರಾಕ್ಷಾರಸ ಕುಡಿಯುವುದಿಲ್ಲ; ಏಕೆಂದರೆ ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ ಈ ಆಜ್ಞೆಯನ್ನು ಕೊಟ್ಟನು. ಅದು ಏನೆಂದರೆ ನೀವಾದರೂ, ನಿಮ್ಮ ಮಕ್ಕಳಾದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬೇಡಿರಿ;
JER 35:7 ಮನೆ ಕಟ್ಟಬೇಡಿರಿ, ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷಿತೋಟವನ್ನು ನೆಡಬೇಡಿರಿ, ಅಂಥದ್ದು ನಿಮಗಿರಬಾರದು. ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿವಸಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು.
JER 35:8 ಈ ಪ್ರಕಾರ ನಾವು ನಮ್ಮ ಪೂರ್ವಜನಾದ ರೇಕಾಬನ ಮಗ ಯೆಹೋನಾದಾಬನ ಮಾತನ್ನು, ಅವನು ನಮಗೆ ಆಜ್ಞಾಪಿಸಿದ್ದೆಲ್ಲದರಲ್ಲಿ ನಾವೂ, ನಮ್ಮ ಹೆಂಡತಿಯರೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ನಮ್ಮ ದಿವಸಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ,
JER 35:9 ವಾಸಮಾಡುವುದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ಇದ್ದೇವೆ. ನಮಗೆ ದ್ರಾಕ್ಷಿ ತೋಟಗಳೂ, ಹೊಲಗಳೂ, ಬೀಜವೂ ಇಲ್ಲ.
JER 35:10 ಗುಡಾರಗಳಲ್ಲಿ ವಾಸಮಾಡುತ್ತೇವೆ. ನಮ್ಮ ಪೂರ್ವಜನಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಕೇಳಿ ನಡೆದಿದ್ದೇವೆ.
JER 35:11 ಆದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ, ‘ನಾವು ಬನ್ನಿ, ಕಸ್ದೀಯರ ದಂಡಿಗೂ, ಅರಾಮಿನ ದಂಡಿಗೂ ತಪ್ಪಿಸಿಕೊಂಡು, ಯೆರೂಸಲೇಮಿಗೆ ಹೋಗೋಣ,’ ಎಂದೆವು. ಹೀಗೆ ಯೆರೂಸಲೇಮಿನಲ್ಲಿಯೇ ಉಳಿದುಕೊಂಡಿದ್ದೇವೆ,” ಎಂದರು.
JER 35:12 ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,
JER 35:13 “ಇಸ್ರಾಯೇಲರ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಆದ ನಾನು ಹೇಳುವುದು ಇದು: ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆಂದು ತಿಳಿಸು: ‘ನೀವು ಬುದ್ಧಿ ತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೇ?’ ಎಂದು ಯೆಹೋವ ದೇವರು ಕೇಳುತ್ತಾರೆ.
JER 35:14 ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.”
JER 35:15 ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳುಹಿಸುತ್ತಾ ಬಂದೆ. “ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ, ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ವಾಸಿಸುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ.” ಆದರೆ ನೀವು ಕೇಳಲಿಲ್ಲ. ಕಿವಿಗೊಡಲೂ ಇಲ್ಲ.
JER 35:16 ರೇಕಾಬನ ಮಗ ಯೆಹೋನಾದಾಬನ ಸಂತಾನದವರು ತಮ್ಮ ಪೂರ್ವಜನು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸಿದರು. ಆದರೆ ಈ ಜನರು ನನ್ನ ಮಾತನ್ನು ಕೇಳದೆ ಹೋದರು.
JER 35:17 “ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರೂ, ಇಸ್ರಾಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ‘ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ, ಅವರು ಕೇಳಲಿಲ್ಲ; ಕೂಗಿದರೂ ಉತ್ತರ ಕೊಡಲಿಲ್ಲ.’ ”
JER 35:18 ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆನ್ನುತ್ತಾರೆ: ನೀವು ನಿಮ್ಮ ಪೂರ್ವಜನಾದ ಯೆಹೋನಾದಾಬನ ಅಪ್ಪಣೆಯನ್ನು ಕೇಳಿ, ಅವನ ಎಲ್ಲ ವಿಧಿಗಳನ್ನು ಅನುಸರಿಸಿ, ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ
JER 35:19 ರೇಕಾಬನ ಮಗ ಯೋನಾದಾಬನ ಸಂತಾನದವರಲ್ಲಿ ನನ್ನ ಸಮ್ಮುಖ ಸೇವೆ ಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು, ಇಸ್ರಾಯೇಲರ ದೇವರೂ ಸರ್ವಶಕ್ತರೂ ಆದ ಯೆಹೋವ ದೇವರು ಇದನ್ನು ನುಡಿದಿದ್ದಾರೆ,” ಎಂದನು.
JER 36:1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಈ ವಾಕ್ಯವು ಬಂದಿತು:
JER 36:2 “ಗ್ರಂಥದ ಸುರುಳಿಯನ್ನು ತೆಗೆದುಕೊಂಡು ನಾನು ಇಸ್ರಾಯೇಲ್, ಯೆಹೂದ ಮತ್ತು ಸಕಲ ಜನಾಂಗಗಳ ವಿರೋಧವಾಗಿಯೂ ನಿನ್ನ ಸಂಗಡ ಮಾತನಾಡಿದ ದಿನದಿಂದ, ಯೋಷೀಯನ ದಿವಸಗಳು ಮೊದಲುಗೊಂಡು ಈ ದಿವಸದವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
JER 36:3 ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.
JER 36:4 ಆಗ ಯೆರೆಮೀಯನು ನೇರೀಯನ ಮಗ ಬಾರೂಕನನ್ನು ಕರೆದನು. ಬಾರೂಕನು ಯೆರೆಮೀಯನ ಬಾಯಿಂದ ಯೆಹೋವ ದೇವರು ಅವನಿಗೆ ಹೇಳಿದ್ದ ಮಾತುಗಳನ್ನೆಲ್ಲಾ ಕೇಳಿ, ಗ್ರಂಥದ ಸುರುಳಿಯನ್ನು ಬರೆದನು.
JER 36:5 ಆಮೇಲೆ ಯೆರೆಮೀಯನು ಬಾರೂಕನಿಗೆ ಆಜ್ಞಾಪಿಸಿದ್ದೇನೆಂದರೆ, “ನಾನು ಇಲ್ಲಿ ಬಂಧಿಸಲಾಗಿದ್ದೇನೆ. ಯೆಹೋವ ದೇವರ ಆಲಯಕ್ಕೆ ಹೋಗಲಾರೆನು.
JER 36:6 ಆದ್ದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ, ನೀನು ಬರೆದು ಸುರುಳಿಯಲ್ಲಿ ಯೆಹೋವ ದೇವರ ಆಲಯದೊಳಗೆ ಉಪವಾಸದ ದಿವಸದಲ್ಲಿ ಯೆಹೋವ ದೇವರ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
JER 36:7 ಒಂದು ವೇಳೆ ಅವರ ವಿಜ್ಞಾಪನೆ ಯೆಹೋವ ದೇವರ ಮುಂದೆ ಬಂದೀತು. ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು. ಏಕೆಂದರೆ ಯೆಹೋವ ದೇವರು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ, ಉರಿಯೂ ಅಪಾರವಾಗಿದೆ.”
JER 36:8 ಆಗ ನೇರೀಯನ ಮಗ ಬಾರೂಕನು ಪ್ರವಾದಿಯಾದ ಯೆರೆಮೀಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿ, ಸುರುಳಿಯಲ್ಲಿನ ಯೆಹೋವ ದೇವರ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಓದಿದನು.
JER 36:9 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಐದನೆಯ ವರ್ಷದ ಒಂಬತ್ತನೆಯ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ, ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಯೆಹೋವ ದೇವರ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದನು.
JER 36:10 ಆಗ ಬಾರೂಕನು ಪುಸ್ತಕದಿಂದ ಯೆರೆಮೀಯನ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಲೇಖಕನಾಗಿರುವ ಶಾಫಾನನ ಮಗನಾಗಿರುವ ಗೆಮರೀಯನ ಕೊಠಡಿಯಲ್ಲಿ ಮೇಲಿನ ಅಂಗಳದಲ್ಲಿ, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರು ಕೇಳುವಂತೆ ಓದಿ ಹೇಳಿದನು.
JER 36:11 ಶಾಫಾನನ ಮೊಮ್ಮಗನೂ, ಗೆಮರೀಯನ ಮಗನೂ ಆದ ಮೀಕಾಯನು ಸುರುಳಿಯಿಂದ ಓದಲಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿದನು. ಅಲ್ಲಿಂದ ಅರಮನೆಯಲ್ಲಿದ್ದ ಲೇಖಕನ ಕೊಠಡಿಗೆ ಇಳಿದು ಹೋದನು.
JER 36:12 ಅಲ್ಲಿ ಲೇಖಕ ಎಲೀಷಾಮನು, ಶೆಮಾಯನ ಮಗ ದೆಲಾಯನು, ಅಕ್ಬೋರನ ಮಗ ಎಲ್ನಾಥಾನನು, ಶಾಫಾನನ ಮಗ ಗೆಮರೀಯನು, ಹನನ್ಯನ ಮಗ ಚಿದ್ಕೀಯನು ಹೀಗೆ ರಾಜ್ಯಾಧಿಕಾರಿಗಳೆಲ್ಲರೂ ಕುಳಿತುಕೊಂಡಿದ್ದರು.
JER 36:13 ಆಗ ಮೀಕಾಯನು ಅವರಿಗೆ ಬಾರೂಕನು ಆ ಪುಸ್ತಕವನ್ನು ಜನರಿಗೆ ಓದಿ ಹೇಳಿದಾಗ, ತಾನು ಕೇಳಿದ ವಾಕ್ಯಗಳನ್ನೆಲ್ಲಾ ತಿಳಿಸಿದನು.
JER 36:14 ಅಧಿಕಾರಿಗಳೆಲ್ಲರು ಸೇರಿ ನೆತನ್ಯನ ಮಗನೂ, ಶೆಲೆಮ್ಯನ ಮೊಮ್ಮಗನೂ, ಕೂಷಿಯ ಮರಿಮಗನೂ ಆದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿದನು. “ನೀನು ಜನರ ಮುಂದೆ ಓದಿದ ಸುರುಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ,” ಎಂದು ಹೇಳಿ ಕಳುಹಿಸಿದರು. ಅಂತೆಯೇ ನೇರೀಯನ ಮಗ ಬಾರೂಕನು ಸುರುಳಿಯನ್ನು ತನ್ನ ಕೈಯಲ್ಲೆ ತೆಗೆದುಕೊಂಡು ಅವರ ಬಳಿಗೆ ಕೂಡಲೇ ಬಂದನು.
JER 36:15 ಆಗ ಅವರು ಅವನಿಗೆ, “ಈಗ ಕುಳಿತುಕೊಂಡು ನಮಗೆ ಓದಿ ಹೇಳು,” ಎಂದರು. ಆಗ ಬಾರೂಕನು ಅವರಿಗೆ ಓದಿ ಹೇಳಿದನು.
JER 36:16 ಆಗ ಅವರು ಆ ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು, “ನಾವು ನಿಶ್ಚಯವಾಗಿ ಈ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇವೆ,” ಎಂದು ಬಾರೂಕನಿಗೆ ಹೇಳಿದರು.
JER 36:17 ಅವರು ಬಾರೂಕನಿಗೆ, “ನೀನು ಅವನ ಬಾಯಿಂದ ಈ ವಾಕ್ಯಗಳನ್ನೆಲ್ಲಾ ಹೇಗೆ ಬರೆದೆ, ನಮಗೆ ತಿಳಿಸು,” ಎಂದರು.
JER 36:18 ಆಗ ಬಾರೂಕನು ಅವರಿಗೆ, “ಅವನು ಈ ವಾಕ್ಯಗಳನ್ನೆಲ್ಲಾ ನನಗೆ ಹೇಳಿಕೊಟ್ಟನು. ನಾನು ಅವುಗಳನ್ನು ಮಸಿಯಿಂದ ಸುರುಳಿಯಲ್ಲಿ ಬರೆದೆನು,” ಎಂದನು.
JER 36:19 ಆಗ ಪ್ರಧಾನರು ಬಾರೂಕನಿಗೆ, “ನೀನೂ, ಯೆರೆಮೀಯನೂ ಹೋಗಿ ಅಡಗಿಕೊಳ್ಳಿರಿ; ನೀವು ಎಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು,” ಎಂದರು.
JER 36:20 ಆಮೇಲೆ ಅವರು ಅರಸನ ಬಳಿಗೆ ಅಂಗಳಕ್ಕೆ ಹೋದರು; ಆದರೆ ಆ ಸುರುಳಿಯನ್ನು ಲೇಖಕನಾದ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟರು ಮತ್ತು ಅರಸನಿಗೆ ಆ ವಾಕ್ಯಗಳನ್ನೆಲ್ಲಾ ಹೇಳಿದರು.
JER 36:21 ಹೀಗೆ ಅರಸನು ಯೆಹೂದಿಯನ್ನು, ಆ ಸುರುಳಿಯನ್ನು ತೆಗೆದುಕೊಂಡು ಬರುವ ಹಾಗೆ ಕಳುಹಿಸಿದನು; ಅವನು ಅದನ್ನು ಲೇಖಕನಾದ ಎಲೀಷಾಮನ ಕೊಠಡಿಯೊಳಗಿಂದ ತೆಗೆದುಕೊಂಡನು. ಯೆಹೂದಿಯು ಅದನ್ನು ಅರಸನಿಗೂ, ಅರಸನ ಬಳಿಯಲ್ಲಿ ನಿಂತ ಎಲ್ಲಾ ಪ್ರಧಾನರಿಗೂ ಓದಿ ಹೇಳಿದನು.
JER 36:22 ಆಗ ಒಂಬತ್ತನೆಯ ತಿಂಗಳಿನ ಅರಸನು ಚಳಿಗಾಲದ ಮನೆಯಲ್ಲಿ ಕುಳಿತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು.
JER 36:23 ಆಗ ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿಯಿಂದ ಕೊಯ್ದು, ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರುಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟುಹೋಗುವವರೆಗೂ ಹಾಕಿಬಿಟ್ಟನು.
JER 36:24 ಈ ವಾಕ್ಯಗಳನ್ನೆಲ್ಲಾ ಕೇಳಿದ ಅರಸನಾದರೂ, ಅವರ ಸೇವಕರಾದ ಒಬ್ಬರಾದರೂ ಹೆದರಲಿಲ್ಲ.
JER 36:25 ಹೀಗಾದರೂ ಎಲ್ನಾಥಾನನೂ, ದೆಲಾಯನೂ, ಗೆಮರೀಯನೂ ಆ ಸುರುಳಿಯನ್ನು ಸುಡಬಾರದೆಂದು ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.
JER 36:26 ಆದರೆ ಅರಸನು ರಾಜಪುತ್ರ ಯೆರಹ್ಮೇಲನಿಗೂ, ಅಜ್ರಿಯೇಲನ ಮಗನಾದ ಸೆರಾಯನಿಗೂ, ಅಬ್ದೆಯೇಲನ ಮಗ ಶೆಲೆಮ್ಯನಿಗೂ, ಲೇಖಕನಾದ ಬಾರೂಕನನ್ನೂ, ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಆಜ್ಞಾಪಿಸಿದನು. ಆದರೆ ಯೆಹೋವ ದೇವರು ಅವರನ್ನು ಅಡಗಿಸಿದ್ದರು.
JER 36:27 ಅರಸನು ಆ ಸುರುಳಿಯನ್ನು ಬಾರೂಕನು ಯೆರೆಮೀಯನ ಬಾಯಿಂದ ಬರೆದಿದ್ದ ವಾಕ್ಯಗಳನ್ನೂ, ಸುಟ್ಟ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು:
JER 36:28 “ನೀನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಮುಂಚಿನ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
JER 36:29 ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ, ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಹಾಳು ಮಾಡುವುದು ಖಂಡಿತ, ಎಂದು ಇದರಲ್ಲಿ ಏಕೆ ಬರೆದಿದ್ದೀ?” ಎಂದು ಹೇಳಿ ನೀನು ಈ ಸುರುಳಿಯನ್ನು ಸುಟ್ಟಿದ್ದೀ.
JER 36:30 ಆದ್ದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವವನು ಅವನಿಗೆ ಇರುವುದಿಲ್ಲ. ಅವನ ಹೆಣವು ಹಗಲಿನಲ್ಲಿ ಬಿಸಿಲಿಗೂ, ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲಾಗುವುದು.
JER 36:31 ಅವನನ್ನೂ, ಅವನ ಸಂತಾನವನ್ನೂ, ಅವನ ಸೇವಕರನ್ನೂ, ಅವರ ಅಕ್ರಮಕ್ಕಾಗಿ ದಂಡಿಸುವೆನು. ಅವರ ಮೇಲೆಯೂ, ಯೆರೂಸಲೇಮಿನ ನಿವಾಸಿಗಳ ಮೇಲೆಯೂ, ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡದಂಥ ಕೇಡನ್ನೆಲ್ಲಾ ಬರಮಾಡುವೆನು.’ ”
JER 36:32 ಆಗ ಯೆರೆಮೀಯನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗ ಲೇಖಕನಾದ ಬಾರೂಕನಿಗೆ ಕೊಟ್ಟನು. ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಸುರುಳಿಯ ವಾಕ್ಯಗಳನ್ನೆಲ್ಲಾ ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು. ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲಾದವು.
JER 37:1 ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು.
JER 37:2 ಆದರೆ ಅವನೂ ಅವನ ಸೇವಕರೂ ದೇಶದ ಜನರೂ ಯೆಹೋವ ದೇವರ ಪ್ರವಾದಿಯಾದ ಯೆರೆಮೀಯನಿಂದ ಹೇಳಿಸಿದ ವಾಕ್ಯಗಳಿಗೆ ಕಿವಿಗೊಡಲಿಲ್ಲ.
JER 37:3 ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ, ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ, ಪ್ರವಾದಿಯಾದ ಯೆರೆಮೀಯನ ಬಳಿಗೆ ಕಳುಹಿಸಿ, “ನಮಗೋಸ್ಕರ ನಮ್ಮ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸು,” ಎಂದು ಹೇಳಿಸಿದನು.
JER 37:4 ಆಗ ಯೆರೆಮೀಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು. ಏಕೆಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ.
JER 37:5 ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ, ಯೆರೂಸಲೇಮನ್ನು ಬಿಟ್ಟುಹೋದರು.
JER 37:6 ಆಗ ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಯೆರೆಮೀಯನಿಗೆ ಬಂದಿತು:
JER 37:7 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನೆಂದರೆ, ಇಗೋ, ನಿಮ್ಮ ಸಹಾಯಕ್ಕೆ ಹೊರಟ, ‘ಫರೋಹನ ಸೈನ್ಯವು, ಅದರ ಸ್ವದೇಶವಾದ ಈಜಿಪ್ಟಿಗೆ ಹಿಂದಿರುಗುವುದು.
JER 37:8 ಕಸ್ದೀಯರು ತಿರುಗಿಕೊಂಡು, ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು.’
JER 37:9 “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಕಸ್ದೀಯರು ನಿಜವಾಗಿ ನಮ್ಮನ್ನು ಬಿಟ್ಟು ಹೋಗುವರು,’ ಎಂದುಕೊಂಡು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ; ಏಕೆಂದರೆ ಅವರು ತೊಲಗುವುದೇ ಇಲ್ಲ.
JER 37:10 ನಿಮ್ಮ ಸಂಗಡ ಯುದ್ಧಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿದ್ದಾಗ್ಯೂ, ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು, ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.”
JER 37:11 ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ, ಯೆರೂಸಲೇಮನ್ನು ಬಿಟ್ಟುಹೋದ ಮೇಲೆ,
JER 37:12 ಯೆರೆಮೀಯನು ಬೆನ್ಯಾಮೀನನ ದೇಶಕ್ಕೆ ಹೋಗುವುದಕ್ಕೂ, ಜನರ ಮಧ್ಯದಿಂದ ತನ್ನ ಪಾಲನ್ನು ತೆಗೆದುಕೊಳ್ಳುವುದಕ್ಕೂ ಯೆರೂಸಲೇಮಿನಿಂದ ಹೊರಟನು.
JER 37:13 ಆಗ ಅವನು ಬೆನ್ಯಾಮೀನನ ಬಾಗಿಲಲ್ಲಿ ಇರುವಾಗ, ಅಲ್ಲಿ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನಾದ ಇರೀಯನೆಂಬ ಪಹರೆಯ ನಾಯಕನು ಇದ್ದನು. ಇವನು ಪ್ರವಾದಿಯಾದ ಯೆರೆಮೀಯನನ್ನು, “ನೀನು ಕಸ್ದೀಯರ ಪಕ್ಷಕ್ಕೆ ಸೇರುತ್ತೀ,” ಎಂದು ಹೇಳಿ ಹಿಡಿದನು.
JER 37:14 ಆದರೆ ಯೆರೆಮೀಯನು ಹೇಳಿದ್ದೇನೆಂದರೆ, ಸುಳ್ಳು; ನಾನು ಕಸ್ದೀಯರ ಕಡೆಗೆ ಸೇರುವವನಲ್ಲ. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆಮೀಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು.
JER 37:15 ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.
JER 37:16 ಯೆರೆಮೀಯನು ಆ ಬಂಧಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು.
JER 37:17 ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, ಅರಮನೆಗೆ ಕರೆತಂದನು, “ಯೆಹೋವ ದೇವರಿಂದ ಮಾತು ಉಂಟೋ,” ಎಂದು ಹೇಳಿದನು. ಯೆರೆಮೀಯನು, “ಹೌದು, ಉಂಟು. ನೀನು ಬಾಬಿಲೋನಿನ ಅರಸನ ಕೈಗೆಸಿಕ್ಕಿಬೀಳುವೆ,” ಎಂದನು.
JER 37:18 ಇದಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇನೆಂದರೆ: “ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ, ನಿನ್ನ ಸೇವಕರಿಗೂ, ಈ ಜನರಿಗೂ ವಿರೋಧವಾಗಿ ಏನು ಅಪರಾಧ ಮಾಡಿದ್ದೇನೆ?
JER 37:19 ಬಾಬಿಲೋನಿನ ಅರಸನು ನಿಮ್ಮ ಮೇಲೆಯೂ, ಈ ದೇಶದ ಮೇಲೆಯೂ ಬರುವುದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
JER 37:20 ಆದ್ದರಿಂದ ಈಗ ಕಿವಿಗೊಡು. ನನ್ನ ಒಡೆಯನಾದ ಅರಸನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀಕಾರವಾಗಲಿ. ಲೇಖಕನಾದ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ,” ಎಂದನು.
JER 37:21 ಆಗ ಅರಸನಾದ ಚಿದ್ಕೀಯನು ಯೆರೆಮೀಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ, ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವವರೆಗೆ, ಅವನಿಗೆ ರೊಟ್ಟಿಗಾರರ ಬೀದಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿ ಕೊಡಬೇಕೆಂದು ಆಜ್ಞಾಪಿಸಿದನು; ಹಾಗೆಯೇ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ನಿಂತನು.
JER 38:1 ಮತ್ತಾನನ ಮಗ ಶೆಫಟ್ಯ, ಪಷ್ಹೂರನ ಮಗ ಗೆದಲ್ಯ, ಶೆಲೆಮ್ಯನ ಮಗ ಯೂಕಲ ಹಾಗೂ ಮಲ್ಕೀಯನ ಮಗ ಪಷ್ಹೂರ, ಇವರು ಯೆರೆಮೀಯನು ಜನರೆಲ್ಲರಿಗೆ ಹೇಳುತ್ತಿದ್ದುದನ್ನು ಕೇಳುತ್ತಿದ್ದರು.
JER 38:2 “ಯೆಹೋವ ದೇವರು ಹೀಗೆನ್ನುತ್ತಾರೆ: ‘ನಗರದಲ್ಲಿ ನಿಲ್ಲುವವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವರು. ನಗರವನ್ನು ಬಿಟ್ಟು ಹೋಗಿ, ಬಾಬಿಲೋನಿಯರನ್ನು ಮೊರೆಹೋಗುವವರು ಬದುಕುವರು. ತಮ್ಮ ಪ್ರಾಣದೊಂದಿಗೆ ತಪ್ಪಿಸಿಕೊಂಡವರು, ಬದುಕುವರು.
JER 38:3 ಬಾಬಿಲೋನಿನ ಅರಸನು ಈ ನಗರವನ್ನು ಆಕ್ರಮಿಸುವನು. ಇದು ಅವನ ವಶವಾಗುವುದು ನಿಶ್ಚಯ,’ ಎಂದು ಯೆಹೋವ ದೇವರು ಸಾರುತ್ತಿದ್ದಾರೆ.”
JER 38:4 ಆಗ ಆ ಪ್ರಧಾನರು ಅರಸನಿಗೆ, “ಈ ಮನುಷ್ಯನು ಸಾಯಬೇಕು; ಇವನು ಅವರ ಸಂಗಡ ಇಂಥಾ ಮಾತುಗಳನ್ನು ಆಡಿ, ಈ ಪಟ್ಟಣದಲ್ಲಿ ಉಳಿದ ಎಲ್ಲಾ ಸೈನಿಕರನ್ನೂ, ಎಲ್ಲಾ ಜನರನ್ನೂ ಎದೆಗುಂದುವಂತೆ ಮಾಡುತ್ತಿದ್ದಾನೆ. ಈ ಮನುಷ್ಯನು ಈ ಜನರ ಕ್ಷೇಮವನ್ನಲ್ಲ, ಅವರ ಹಾನಿಯನ್ನೇ ಹಾರೈಸುತ್ತಾನೆ,” ಎಂದು ಹೇಳಿದರು.
JER 38:5 ಆಗ ಅರಸನಾದ ಚಿದ್ಕೀಯನು, “ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡುವುದಿಲ್ಲ,” ಎಂದನು.
JER 38:6 ಆಗ ಅವರು ಯೆರೆಮೀಯನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸೆರೆಮನೆಯ ಅಂಗಳದಲ್ಲಿದ್ದ ರಾಜವಂಶೀಯನಾದ ಮಲ್ಕೀಯನ ಬಾವಿಯಲ್ಲಿ ನೀರು ಇರಲಿಲ್ಲ. ಕೆಸರು ಮಾತ್ರ ಇತ್ತು. ಯೆರೆಮೀಯನನ್ನು ಕೆಸರಿನಲ್ಲಿ ಹಾಕಿದರು.
JER 38:7 ಆಗ ಅರಸನು ಮನೆಯಲ್ಲಿರುವ ಕಂಚುಕಿಯಾದ ಕೂಷ್ಯನಾದ ಎಬೆದ್ಮೆಲೆಕನು ಅವರು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದರೆಂದು ಕೇಳಿದಾಗ, ಅರಸನು ಬೆನ್ಯಾಮೀನನ ಬಾಗಿಲಲ್ಲಿ ಕೂತಿರಲಾಗಿ,
JER 38:8 ಎಬೆದ್ಮೆಲೆಕನು ಅರಸನ ಅರಮನೆಯನ್ನು ಬಿಟ್ಟು, ಹೊರಟು ಅರಸನ ಸಂಗಡ ಮಾತನಾಡಿ,
JER 38:9 “ನನ್ನ ಒಡೆಯನಾದ ಅರಸನೇ, ಈ ಮನುಷ್ಯರು ಬಾವಿಯಲ್ಲಿ ಹಾಕಿದ ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ; ಏಕೆಂದರೆ ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ,” ಎಂದನು.
JER 38:10 ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡು ಹೋಗಿ, ಪ್ರವಾದಿಯಾದ ಯೆರೆಮೀಯನನ್ನು ಅವನು ಸಾಯುವುದಕ್ಕಿಂತ ಮುಂಚೆ ಬಾವಿಯೊಳಗಿಂದ ಮೇಲಕ್ಕೆತ್ತು,” ಎಂದು ಆಜ್ಞಾಪಿಸಿದನು.
JER 38:11 ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರೆದುಕೊಂಡು, ಖಜಾನೆ ಕೆಳಗಿರುವ ಅರಮನೆಗೆ ಹೋಗಿ, ಅಲ್ಲಿಂದ ಹರಿದುಹೋದ ಹಳೆಯ ಬಟ್ಟೆಗಳನ್ನೂ, ಸವೆದು ಹೋದ ಹಳೆಯ ವಸ್ತ್ರಗಳನ್ನೂ ತೆಗೆದುಕೊಂಡು, ಅವುಗಳನ್ನು ಹಗ್ಗಗಳಂತೆ ಯೆರೆಮೀಯನ ಬಳಿಗೆ ಬಾವಿಯೊಳಗೆ ಇಳಿಸಿದನು.
JER 38:12 ಕೂಷ್ಯನಾದ ಎಬೆದ್ಮೆಲೆಕನು ಯೆರೆಮೀಯನಿಗೆ, “ಈ ಹರಿದು ಸವೆದು ಹೋದ ಹಳೆಯ ಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ,” ಎಂದನು. ಯೆರೆಮೀಯನು ಹಾಗೆ ಮಾಡಿದನು.
JER 38:13 ಹೀಗೆ ಹಗ್ಗಗಳಿಂದ ಯೆರೆಮೀಯನನ್ನು ಎಳೆದು, ಅವನನ್ನು ಬಾವಿಯೊಳಗಿಂದ ಎತ್ತಿದನು. ಆಮೇಲೆ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ಉಳಿದನು.
JER 38:14 ಆಗ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ತನ್ನ ಬಳಿಗೆ ಕರೆಯಿಸಿ, ಯೆಹೋವ ದೇವರ ಆಲಯದಲ್ಲಿರುವ ಮೂರನೆಯ ದ್ವಾರಕ್ಕೆ ಕರೆದುಕೊಂಡು ಹೋದನು. ಆಗ ಅರಸನು ಯೆರೆಮೀಯನಿಗೆ, “ನಾನು ನಿನ್ನಿಂದ ಒಂದು ಕೇಳುತ್ತೇನೆ, ನನಗೆ ಯಾವುದನ್ನಾದರೂ ಬಚ್ಚಿಡಬೇಡ,” ಎಂದನು.
JER 38:15 ಆಗ ಯೆರೆಮೀಯನು ಚಿದ್ಕೀಯನಿಗೆ, “ನಾನು ನಿನಗೆ ತಿಳಿಸಿದರೆ, ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವುದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ, ನೀನು ನನ್ನನ್ನು ಕೇಳುವುದಿಲ್ಲ,” ಎಂದು ಹೇಳಿದನು.
JER 38:16 ಹೀಗೆ ಅರಸನಾದ ಚಿದ್ಕೀಯನು ಯೆರೆಮೀಯನಿಗೆ ಅಂತರಂಗದಲ್ಲಿ ಪ್ರಮಾಣಮಾಡಿ, “ನಮಗೆ ಈ ಪ್ರಾಣವನ್ನು ಉಂಟುಮಾಡಿದ ಯೆಹೋವ ದೇವರ ಜೀವದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಈ ಮನುಷ್ಯರ ಕೈಯಲ್ಲಿ ಒಪ್ಪಿಸುವುದಿಲ್ಲ,” ಎಂದನು.
JER 38:17 ಆಗ ಯೆರೆಮೀಯನು ಚಿದ್ಕೀಯನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿಶ್ಚಯವಾಗಿ ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ, ನಿನ್ನ ಪ್ರಾಣವು ಬದುಕುವುದು. ಈ ಪಟ್ಟಣವು ಬೆಂಕಿಯಿಂದ ಸುಡಲಾಗುವುದಿಲ್ಲ. ನೀನೂ, ನಿನ್ನ ಮನೆಯವರೂ ಬದುಕುವಿರಿ.
JER 38:18 ಆದರೆ ನೀನು ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ, ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲಾಗುವುದು. ಅವರು ಅದನ್ನು ಬೆಂಕಿಯಿಂದ ಸುಡುವರು. ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವುದಿಲ್ಲ,’ ” ಎಂದನು.
JER 38:19 ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ನಾನು ಕಸ್ದೀಯರಿಗೆ ಒಳಗಾಗಿರುವ ಯೆಹೂದ್ಯರ ವಿಷಯ ಅಂಜುತ್ತೇನೆ. ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು. ಆಗ ಅವರು ನನ್ನನ್ನು ಹಿಂಸಿಸಬಹುದು,” ಎಂದನು.
JER 38:20 ಆದರೆ ಯೆರೆಮೀಯನು, “ಅವರು ನಿನ್ನನ್ನು ಒಪ್ಪಿಸುವುದಿಲ್ಲ” ನಾನು ನಿನಗೆ ಹೇಳುವ ಯೆಹೋವ ದೇವರ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೆಯದಾಗುವುದು. ನಿನ್ನ ಪ್ರಾಣ ಬದುಕುವುದು.
JER 38:21 ಆದರೆ ನೀನು ಶರಣಾಗತಿಯನ್ನು ನಿರಾಕರಿಸಿದರೆ, ಯೆಹೋವ ದೇವರು ನನಗೆ ತೋರಿಸಿದ ಮಾತು ಇದೇ:
JER 38:22 ಇಗೋ, ಯೆಹೂದದ ಅರಸನ ಅರಮನೆಯಲ್ಲಿ ಉಳಿದ ಹೆಂಗಸರೆಲ್ಲರು ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಕರೆತರಲಾಗಿ ಹೇಳುವುದೇನೆಂದರೆ, “ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ. ನಿನ್ನ ಕಾಲುಗಳು ಕೆಸರಿನಲ್ಲಿ ಹೂತಿರುವುದನ್ನು ನೋಡಿ, ಹಿಂದಿರುಗಿದ್ದಾರೆಂದು ನಿಂದಿಸುವರು.
JER 38:23 “ಹಾಗೆ ನಿನ್ನ ಹೆಂಡತಿಯರನ್ನೂ, ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ಹೊರಗೆ ತರುವರು. ನೀನು ಅವರ ಕೈಗೆ ತಪ್ಪಿಸಿಕೊಳ್ಳುವುದಿಲ್ಲ. ಬಾಬಿಲೋನಿನ ಅರಸನ ಕೈಯಿಂದ ಸೆರೆಯಾಗುವೆ. ಈ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗುವುದು,” ಎಂದನು.
JER 38:24 ಆಗ ಚಿದ್ಕೀಯನು ಯೆರೆಮೀಯನಿಗೆ, “ನೀನು ಸಾಯದ ಹಾಗೆ ಈ ಮಾತುಗಳನ್ನು ಯಾರಿಗೂ ತಿಳಿಸಬಾರದು.
JER 38:25 ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿದ್ದೇನೆಂದು ಕೇಳಿ, ‘ನಿನ್ನ ಬಳಿಗೆ ಬಂದು, ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು. ನಾವು ನಿನ್ನನ್ನು ಕೊಂದುಹಾಕುವುದಿಲ್ಲ. ಅರಸನು ನಿನ್ನ ಸಂಗಡ ಮಾತಾಡಿದ್ದನ್ನು ಸಹ ತಿಳಿಸು,’ ಎಂದು ಹೇಳಿದರೆ,
JER 38:26 ನೀನು ಅವರಿಗೆ, ‘ನನ್ನನ್ನು ತಿರುಗಿ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯುವ ಹಾಗೆ ತೆಗೆದುಕೊಂಡು ಹೋಗಬೇಡವೆಂದು ಅರಸನ ಮುಂದೆ ಬಿನ್ನಹ ಮಾಡಿದೆನೆಂದು ಹೇಳು,’ ಎಂದು ಹೇಳಿದನು.”
JER 38:27 ಆಗ ಪ್ರಧಾನರೆಲ್ಲರೂ ಯೆರೆಮೀಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು. ಆಗ ಅವರು ಸುಮ್ಮನಾದರು. ಏಕೆಂದರೆ ಆ ಕಾರ್ಯದ ವಿಷಯವನ್ನು ಅವರು ಗ್ರಹಿಸಲಿಲ್ಲ.
JER 38:28 ಈ ಪ್ರಕಾರ ಯೆರೂಸಲೇಮು ಸೆರೆಯಾಗುವ ದಿವಸದವರೆಗೆ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ವಾಸವಾಗಿದ್ದನು. ಯೆರೂಸಲೇಮು ಹಿಡಿಯಲಾಗುವಾಗ ಅಲ್ಲೇ ಇದ್ದನು.
JER 39:1 ಯೆಹೂದದ ಅರಸನಾದ ಚಿದ್ಕೀಯನ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯದೊಂದಿಗೆ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದನ್ನು ಮುತ್ತಿಗೆ ಹಾಕಿದರು.
JER 39:2 ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣವು ಒಡೆಯಲಾಯಿತು.
JER 39:3 ನೇರ್ಗಲ್ ಸರೆಚರ್, ಸಮ್ಗರ್‌ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಚೋಯಿಸರ ಮುಖ್ಯಸ್ಥ ನೇರ್ಗಲ್ ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲಾ ಪದಾಧಿಕಾರಿಗಳು ಪುರಪ್ರವೇಶ ಮಾಡಿ, ಮಧ್ಯಮ ದ್ವಾರದೊಳಗೆ ಕುಳಿತುಕೊಂಡರು.
JER 39:4 ಇವರನ್ನು ನೋಡಿ ಯೆಹೂದದ ಅರಸನಾದ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
JER 39:5 ಆಗ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ, ಯೆರಿಕೋವಿನ ಬಯಲು ಸ್ಥಳದಲ್ಲಿ ಚಿದ್ಕೀಯನನ್ನು ಹಿಡಿದರು. ಅನಂತರ ಹಮಾತ್ ನಾಡಿನ ರಿಬ್ಲದಲ್ಲಿರುವ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಅವನನ್ನು ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
JER 39:6 ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಶ್ರೇಷ್ಠರನ್ನೂ ರಿಬ್ಲದಲ್ಲಿ ಕೊಲ್ಲಿಸಿದನು.
JER 39:7 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಕಂಚಿನ ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು.
JER 39:8 ಅರಮನೆಯನ್ನೂ, ಜನರ ಮನೆಗಳನ್ನೂ, ಬಾಬಿಲೋನಿಯರು ಬೆಂಕಿಯಿಂದ ಸುಟ್ಟರು. ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.
JER 39:9 ಆಗ ಪಟ್ಟಣದೊಳಗೆ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆ ಹೋದವರನ್ನೂ, ಇತರ ಸಮಸ್ತ ಜನರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು.
JER 39:10 ಆದರೆ ಜನರೊಳಗೆ ಏನಿಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶದಲ್ಲಿ ಬಿಟ್ಟು, ಅವರಿಗೆ ಆಗಲೇ ದ್ರಾಕ್ಷಿತೋಟಗಳನ್ನೂ, ಹೊಲಗಳನ್ನೂ ಕೊಟ್ಟನು.
JER 39:11 ಇದಲ್ಲದೆ ಯೆರೆಮೀಯನ ವಿಷಯವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇನೆಂದರೆ:
JER 39:12 “ಅವನನ್ನು ಚೆನ್ನಾಗಿ ನೋಡಿಕೋ, ಅವನಿಗೆ ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಹೇಗೆ ಹೇಳುವನೋ, ಹಾಗೆಯೇ ಅವನಿಗೆ ಮಾಡು,” ಎಂದನು.
JER 39:13 ಹೀಗೆ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನನ್ನೂ, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳನ್ನೂ ಕಳುಹಿಸಿದನು.
JER 39:14 ಅವರು ಕಳುಹಿಸಿ ಯೆರೆಮೀಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ, ಶಾಫಾನನ ಮೊಮ್ಮಗನೂ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮನೆಗೆ ಕರೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು.
JER 39:15 ಯೆರೆಮೀಯನು ಸೆರೆಮನೆಯ ಅಂಗಳದಲ್ಲಿರುವಾಗ ಯೆಹೋವ ದೇವರ ವಾಕ್ಯವು ಅವನಿಗೆ ಹೇಳಿದ್ದೇನೆಂದರೆ:
JER 39:16 “ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ, ಹೇಳತಕ್ಕದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಒಳ್ಳೆಯದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ. ಅವು ಆ ದಿವಸಗಳಲ್ಲಿ ನಿನ್ನ ಮುಂದೆಯೇ ನೆರವೇರುವುವು.
JER 39:17 ಆದರೆ ಆ ದಿವಸದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲಾಗುವುದಿಲ್ಲ.
JER 39:18 ಏಕೆಂದರೆ ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು. ನೀನು ಖಡ್ಗದಿಂದ ಬೀಳುವುದಿಲ್ಲ. ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ, ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವುದೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂಬುದು.
JER 40:1 ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಸಂಕೋಲೆಗಳಿಂದ ಕಟ್ಟಿಸಿ, ಬಾಬಿಲೋನಿಗೆ ಒಯ್ಯುವ ಯೆರೂಸಲೇಮಿನ ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತೆಗೆದುಕೊಂಡುಹೋಗಿ, ರಾಮದಿಂದ ಬಿಟ್ಟು ಕಳುಹಿಸಿದ ಮೇಲೆ, ಯೆರೆಮೀಯನಿಗೆ ಯೆಹೋವ ದೇವರಿಂದ ವಾಕ್ಯವು ಬಂದಿತು.
JER 40:2 ಕಾವಲಿನವರ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ, ಅವನಿಗೆ ಹೇಳಿದ್ದೇನೆಂದರೆ, “ನಿನ್ನ ದೇವರಾದ ಯೆಹೋವ ದೇವರು ಈ ಸ್ಥಳಕ್ಕೆ ಈ ಕೇಡನ್ನು ಪ್ರಕಟಿಸಿದ್ದಾರೆ. ಹೇಳಿದ ಪ್ರಕಾರವೇ ಯೆಹೋವ ದೇವರು ಅದನ್ನು ಬರಮಾಡಿದ್ದಾನೆ.
JER 40:3 ನೀವು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಆತನ ಮಾತುಗಳನ್ನು ಕೇಳದೆ ಹೋದದ್ದರಿಂದಲೇ ಈ ಕಾರ್ಯವು ನಿಮಗೆ ಸಂಭವಿಸಿದೆ.
JER 40:4 ಈಗ ಇಗೋ, ನಿನ್ನ ಕೈಗೆ ಹಾಕಿದ ಬೇಡಿಗಳನ್ನು ಈ ದಿವಸ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ನಿನಗೆ ಒಳ್ಳೆಯದೆಂದು ತೋಚಿದರೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆನು; ಆದರೆ ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ನಿನಗೆ ಕೆಟ್ಟದ್ದೆಂದು ತೋಚಿದರೆ ಅದನ್ನು ಬಿಡು. ಇಗೋ, ದೇಶವೆಲ್ಲಾ ನಿನ್ನ ಮುಂದೆ ಇದೆ; ಎಲ್ಲಿ ಹೋಗುವುದಕ್ಕೆ ನಿನಗೆ ಒಳ್ಳೆಯದೆಂದೂ, ಸರಿಯೆಂದೂ ಕಾಣುತ್ತದೋ, ಅಲ್ಲಿಗೆ ಹೋಗು,” ಎಂಬುದು.
JER 40:5 ಯೆರೆಮೀಯನು ಇನ್ನು ಹಿಂದಿರುಗದೆ ಇರುವಾಗ, ನೆಬೂಜರದಾನನು ಹೇಳಿದ್ದೇನೆಂದರೆ: “ಬಾಬಿಲೋನಿನ ಅರಸನು ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನ ಬಳಿಗೆ ತಿರುಗಿಕೋ; ಅವನ ಸಂಗಡ ಜನರೊಳಗೆ ವಾಸಮಾಡು. ಇಲ್ಲವೆ ಎಲ್ಲಿ ಹೋಗುವುದಕ್ಕೆ ನಿನಗೆ ಸರಿಯಾಗಿ ಕಾಣುತ್ತದೋ, ಅಲ್ಲಿಗೆ ಹೋಗು,” ಎಂದು ಹೇಳಿ, ಕಾವಲಿನವರ ಅಧಿಪತಿಯು ಅವನಿಗೆ ಆಹಾರವನ್ನೂ, ಬಹುಮಾನವನ್ನೂ ಕೊಟ್ಟು ಕಳುಹಿಸಿಬಿಟ್ಟನು.
JER 40:6 ಯೆರೆಮೀಯನು ಅಹೀಕಾಮನ ಮಗ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಹೋಗಿ, ದೇಶದಲ್ಲಿ ಉಳಿದ ಜನರ ಸಂಗಡ ಅವನ ಬಳಿಯಲ್ಲಿ ವಾಸಮಾಡಿದನು.
JER 40:7 ಬಾಬಿಲೋನಿನ ಅರಸನು ಅಹೀಕಾಮನ ಮಗ ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಮತ್ತು ಬಾಬಿಲೋನಿಗೆ ಸೆರೆಹೋಗದೆ ಇದ್ದ ದೇಶಿಯರಲ್ಲಿ ಬಡವರಾದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿಯನ್ನು ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ ಕೇಳಿದಾಗ,
JER 40:8 ನೆತನ್ಯನ ಮಗ ಇಷ್ಮಾಯೇಲನೂ; ಕಾರೇಹನ ಮಗ ಯೋಹಾನಾನ್, ಯೋನಾತಾನ್; ತನ್ಹುಮೆತನ ಮಗ ಸೆರಾಯ್; ನೆಟೋಫದವನಾದ ಏಫಯನ ಪುತ್ರರೂ; ಮಾಕಾತ್ಯರಲ್ಲಿ ಒಬ್ಬನ ಮಗ ಯಾಜನ್ಯ; ಇವರೆಲ್ಲರೂ ತಮ್ಮ ಜನರಸಹಿತವಾಗಿ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.
JER 40:9 ಆಗ ಶಾಫಾನನ ಮಗ ಅಹೀಕಾಮನ ಮಗ ಗೆದಲ್ಯನು ಅವರಿಗೂ, ಅವರ ಜನರಿಗೂ ಪ್ರಮಾಣಮಾಡಿ, “ ‘ಬಾಬಿಲೋನಿಯರಿಗೆ ಸೇವೆ ಮಾಡುವುದಕ್ಕೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು, ಬಾಬಿಲೋನಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೆಯದಾಗುವುದು,’ ಎಂದನು.
JER 40:10 ನಾನಾದರೋ ಇಗೋ, ನಾನು ನಮ್ಮ ಬಳಿಗೆ ಬರುವ ಬಾಬಿಲೋನಿಯರ ಹತ್ತಿರ ಕಾದುಕೊಳ್ಳುವುದಕ್ಕೆ ಮಿಚ್ಪದಲ್ಲಿ ವಾಸಮಾಡುವೆನು. ಆದರೆ ನೀವು ದ್ರಾಕ್ಷಾರಸವನ್ನೂ, ಹಣ್ಣುಗಳನ್ನೂ, ಎಣ್ಣೆಯನ್ನೂ ಕೂಡಿಸಿ, ನಿಮ್ಮ ಪಾತ್ರೆಗಳಲ್ಲಿ ಇಟ್ಟು, ನೀವು ಹಿಡಿದಿರುವ ನಿಮ್ಮ ಪಟ್ಟಣಗಳಲ್ಲಿ ವಾಸವಾಗಿರಿ,” ಎಂಬುದು.
JER 40:11 ಹಾಗೆಯೇ ಮೋವಾಬಿನಲ್ಲಿಯೂ, ಅಮ್ಮೋನನ ಮಕ್ಕಳಲ್ಲಿಯೂ, ಎದೋಮಿನಲ್ಲಿಯೂ, ಸಕಲ ದೇಶಗಳಲ್ಲಿಯೂ ಇದ್ದ ಯೆಹೂದ್ಯರೆಲ್ಲರೂ ಬಾಬಿಲೋನಿನ ಅರಸನು ಯೆಹೂದದ ಒಂದು ಶೇಷವನ್ನು ಬಿಟ್ಟಿದ್ದನೆಂದೂ, ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನನ್ನು ಅವರಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನೆಂದು ಕೇಳಿದಾಗ
JER 40:12 ಯೆಹೂದ್ಯರೆಲ್ಲರೂ, ಅವರು ಓಡಿಸಲಾಗಿದ್ದ ಎಲ್ಲಾ ಸ್ಥಳಗಳಿಂದ ತಿರುಗಿಕೊಂಡು, ಯೆಹೂದ ದೇಶಕ್ಕೆ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದು, ಬಹು ಅಧಿಕವಾಗಿ ದ್ರಾಕ್ಷಾರಸವನ್ನೂ, ಬೇಸಿಗೆ ಕಾಲದ ಹಣ್ಣುಗಳನ್ನೂ ಕೂಡಿಸಿದರು.
JER 40:13 ಇದಲ್ಲದೆ ಕಾರೇಹನ ಮಗ ಯೋಹಾನಾನನೂ, ಸೀಮೆಯಲ್ಲಿದ್ದ ಎಲ್ಲಾ ಸೇನಾಧಿಪತಿಗಳೂ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದು,
JER 40:14 “ಅಮ್ಮೋನನ ಮಕ್ಕಳ ಅರಸನಾದ ಬಾಲೀಸನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದಿದೆಯೋ?” ಎಂದನು. ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
JER 40:15 ಆಗ ಕಾರೇಹನ ಮಗ ಯೋಹಾನಾನನು ಮಿಚ್ಪದಲ್ಲಿ ರಹಸ್ಯವಾಗಿ ಗೆದಲ್ಯನ ಸಂಗಡ ಮಾತನಾಡಿ, “ನನ್ನನ್ನು ಹೋಗಗೊಡಿಸು, ನಾನು ನೆತನ್ಯನ ಮಗ ಇಷ್ಮಾಯೇಲನನ್ನು ಯಾರಿಗೂ ತಿಳಿಯದ ಹಾಗೆ ಕೊಂದು ಹಾಕುತ್ತೇನೆ. ಅವನು ನಿನ್ನನ್ನು ಕೊಂದರೆ, ನಿನ್ನ ಬಳಿಗೆ ಕೂಡಿಕೊಳ್ಳುವ ಯೆಹೂದ್ಯರೆಲ್ಲರು ಚದರಿಹೋಗಿ, ಯೆಹೂದದಲ್ಲಿ ಉಳಿದವರು ನಾಶವಾಗುತ್ತಾರಲ್ಲಾ. ಏಕೆ ಹೀಗೆ ಆಗಬೇಕು?” ಎಂದು ವಿಜ್ಞಾಪಿಸಿದನು.
JER 40:16 ಆದರೆ ಅಹೀಕಾಮನ ಮಗ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಈ ಕೆಲಸ ಮಾಡಬೇಡ, ಏಕೆಂದರೆ ನೀನು ಇಷ್ಮಾಯೇಲನ ವಿಷಯವಾಗಿ ಸುಳ್ಳಾಗಿ ಮಾತನಾಡುತ್ತೀ,” ಎಂದನು.
JER 41:1 ಏಳನೆಯ ತಿಂಗಳಲ್ಲಿ ಅರಸನ ಸಂತಾನದವನೂ, ಅರಸನ ಪ್ರಧಾನರಲ್ಲಿ ಒಬ್ಬನೂ ಆದಂಥ ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಅವನ ಸಂಗಡ ಹತ್ತು ಮಂದಿಯೂ ಮಿಚ್ಪದಲ್ಲಿದ್ದ ಅಹೀಕಾಮನ ಮಗ ಗೆದಲ್ಯನ ಬಳಿಗೆ ಬಂದರು. ಅವರು ಮಿಚ್ಪದಲ್ಲಿಯೇ ಊಟಮಾಡುತ್ತಿದ್ದಾಗ,
JER 41:2 ನೆತನ್ಯನ ಮಗ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಜನರಸಹಿತವಾಗಿ ಎದ್ದು, ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮೊಮ್ಮಗ ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಹೊಡೆದು ಕೊಂದುಹಾಕಿದನು.
JER 41:3 ಇದಲ್ಲದೆ ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಅಲ್ಲಿ ಸಿಕ್ಕಿದ ಯೆಹೂದ್ಯರೆಲ್ಲರನ್ನೂ, ಕಸ್ದೀಯರೆಲ್ಲರನ್ನೂ, ಸೈನಿಕರನ್ನೂ ಇಷ್ಮಾಯೇಲನು ಕೊಂದುಹಾಕಿದನು.
JER 41:4 ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೆಯ ದಿನದಲ್ಲಿ, ಅದು ಯಾರಿಗೂ ತಿಳಿಯದ ವೇಳೆಯಲ್ಲಿ
JER 41:5 ಶೆಕೆಮಿನಿಂದಲೂ ಶೀಲೋವಿನಿಂದಲೂ ಸಮಾರ್ಯದಿಂದಲೂ ಎಂಬತ್ತು ಜನರು ಗಡ್ಡವನ್ನೂ ಕ್ಷೌರ ಮಾಡಿದವರಾಗಿಯೂ ವಸ್ತ್ರಗಳನ್ನು ಹರಿದುಕೊಂಡವರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಯೆಹೋವ ದೇವರ ಆಲಯಕ್ಕೆ ತರುವುದಕ್ಕೋಸ್ಕರ ಕಾಣಿಕೆಯನ್ನೂ, ಧೂಪವನ್ನೂ ಕೈಯಲ್ಲಿ ತೆಗೆದುಕೊಂಡು ಬಂದರು.
JER 41:6 ಆಗ ನೆತನ್ಯನ ಮಗ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು. ಅವರನ್ನು ಎದುರುಗೊಂಡ ಮೇಲೆ ಅವರಿಗೆ, “ಅಹೀಕಾಮನ ಮಗ ಗೆದಲ್ಯನ ಬಳಿಗೆ ಬನ್ನಿ,” ಎಂದನು.
JER 41:7 ಆಗ ಅವರು ಪಟ್ಟಣದ ಮಧ್ಯಕ್ಕೆ ಬಂದಾಗ, ನೆತನ್ಯನ ಮಗ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು, ಬಾವಿಯೊಳಗೆ ಹಾಕಿಬಿಟ್ಟರು.
JER 41:8 ಆದರೆ ಆ ಎಂಬತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಂದು ಹಾಕಬೇಡ. ಏಕೆಂದರೆ ನಮಗೆ ಹೊಲದಲ್ಲಿ ಗೋಧಿ, ಜವೆಗೋಧಿ, ಎಣ್ಣೆ, ಜೇನು ಇವುಗಳನ್ನು ಬಚ್ಚಿಟ್ಟಿದ್ದೇವೆ” ಎಂದು ಬಿನ್ನವಿಸಿದರು. ಆದ್ದರಿಂದ ಅವನು ಹಿಂದೆಗೆದು ಅವರನ್ನು, ಅವರ ಸಹೋದರರ ಮಧ್ಯದಲ್ಲಿ ಕೊಂದುಹಾಕಲಿಲ್ಲ.
JER 41:9 ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದುಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಬಾವಿಯು, ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ತೋಡಿಸಿದ್ದ ಬಾವಿಯೇ ಆಗಿತ್ತು. ಇದನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದು ಹಾಕಿದವರಿಂದ ತುಂಬಿಸಿದನು.
JER 41:10 ಇಷ್ಮಾಯೇಲನು ಮಿಚ್ಪದಲ್ಲಿದ್ದ ಜನರ ಉಳಿದವರನ್ನೆಲ್ಲಾ ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟು, ಉಳಿದ ಜನರೆಲ್ಲರನ್ನು ಸೆರೆಯಾಗಿ ಒಯ್ದನು. ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು, ಅಮ್ಮೋನ್ಯರ ಬಳಿಗೆ ದಾಟಿಹೋಗುವುದಕ್ಕೆ ಹೊರಟನು.
JER 41:11 ಆದರೆ ಕಾರೇಹನ ಮಗ ಯೋಹಾನಾನನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ್ದ ಕೇಡನ್ನೆಲ್ಲಾ ಕೇಳಿದ ಮೇಲೆ,
JER 41:12 ಆ ಮನುಷ್ಯರನ್ನೆಲ್ಲಾ ಕರೆದುಕೊಂಡು ನೆತನ್ಯನ ಮಗ ಇಷ್ಮಾಯೇಲನ ಸಂಗಡ ಯುದ್ಧಮಾಡುವುದಕ್ಕೆ ಹೋಗಿ, ಗಿಬ್ಯೋನಿನಲ್ಲಿರುವ ದೊಡ್ಡ ಕೆರೆಯ ಬಳಿಯಲ್ಲಿ ಅವನನ್ನು ಕಂಡರು.
JER 41:13 ಆಗ ಇಷ್ಮಾಯೇಲನ ಸಂಗಡ ಇದ್ದ ಜನರೆಲ್ಲರೂ, ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ನೋಡಿದಾಗ, ಸಂತೋಷಪಟ್ಟರು.
JER 41:14 ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ತಂದ ಜನರೆಲ್ಲರು ಸುತ್ತಿಕೊಂಡು ತಿರುಗಿಕೊಂಡು, ಕಾರೇಹನ ಮಗನಾದ ಯೋಹಾನಾನನ ಬಳಿಗೆ ಬಂದರು.
JER 41:15 ಆದರೆ ನೆತನ್ಯನ ಮಗನಾದ ಇಷ್ಮಾಯೇಲನು ಎಂಟು ಜನರ ಸಂಗಡ ಯೋಹಾನಾನನಿಗೆ ತಪ್ಪಿಸಿಕೊಂಡು, ಅಮ್ಮೋನ್ಯರ ಬಳಿಗೆ ಹೋದನು.
JER 41:16 ಆಗ ಕಾರೇಹನ ಮಗನಾದ ಯೋಹಾನಾನನೂ, ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗ ಗೆದಲ್ಯನನ್ನು ಕೊಂದುಹಾಕಿದ ತರುವಾಯ, ತಪ್ಪಿಸಿಬಿಟ್ಟಿದ್ದ ಉಳಿದ ಜನರೆಲ್ಲರನ್ನು ಎಂದರೆ, ಗಿಬ್ಯೋನನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಕಂಚುಕಿಯರನ್ನೂ ಮಿಚ್ಪದಿಂದ ಕರೆದುಕೊಂಡು ಹೊರಟು,
JER 41:17 ಈಜಿಪ್ಟಿಗೆ ಹೋಗುವುದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು.
JER 41:18 ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗ ಗೆದಲ್ಯನನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದುಹಾಕಿದ್ದರಿಂದಲೇ, ಅವರಿಗೆ ಭಯಪಟ್ಟರು.
JER 42:1 ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ, ಹೋಷಾಯನ ಮಗನಾದ ಎಜನೀಯನೂ, ಕಿರಿಯರು ಮೊದಲುಗೊಂಡು ಹಿರಿಯರವರೆಗೆ ಜನರೆಲ್ಲರು ಹತ್ತಿರ ಬಂದು,
JER 42:2 ಪ್ರವಾದಿಯಾದ ಯೆರೆಮೀಯನಿಗೆ, “ನಮ್ಮ ವಿಜ್ಞಾಪನೆ ನಿಮ್ಮ ಮುಂದೆ ಬರಲಿ. ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ, ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ? ನಮಗೋಸ್ಕರವೂ ಎಂದರೆ ಈ ಸಮಸ್ತ ಶೇಷಕ್ಕೋಸ್ಕರವೂ,
JER 42:3 ನಾವು ನಡೆಯತಕ್ಕ ಮಾರ್ಗವನ್ನೂ, ನಾವು ಮಾಡತಕ್ಕ ಕಾರ್ಯವನ್ನೂ ನಿನ್ನ ದೇವರಾದ ಯೆಹೋವ ದೇವರು ನಮಗೆ ತಿಳಿಸುವ ಹಾಗೆ, ನಿನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡು,” ಎಂದರು.
JER 42:4 ಆಗ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಾನು ಕೇಳಿದ್ದೇನೆ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುತ್ತೇನೆ. ಯೆಹೋವ ದೇವರು ನಿಮಗೆ ಯಾವ ಉತ್ತರವನ್ನು ಕೊಡುವರೋ, ಅದನ್ನು ನಿಮಗೆ ತಿಳಿಸುವೆನು. ಒಂದು ಮಾತನ್ನಾದರೂ ನಿಮ್ಮಿಂದ ಹಿಂದೆಗೆಯುವುದಿಲ್ಲ,” ಎಂದು ಹೇಳಿದನು.
JER 42:5 ಆಗ ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾರೋ, ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ, ಯೆಹೋವ ದೇವರು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳುವಾಗ, ನಮಗೆ ಒಳ್ಳೆಯದಾಗುವ ಹಾಗೆ,
JER 42:6 ನಾವು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ, ಆ ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಅದು ಹಿತವಾದರೂ ಸರಿಯೇ, ಅಹಿತವಾದರೂ ಸರಿಯೇ ಕೇಳುವೆವು,” ಎಂದರು.
JER 42:7 ಹತ್ತು ದಿವಸಗಳಾದ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂತು.
JER 42:8 ಆಗ ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೇನಾಪತಿಗಳೆಲ್ಲರನ್ನೂ, ಕಿರಿಯರು ಮೊದಲುಗೊಂಡು ಹಿರಿಯರೆಲ್ಲರವರೆಗೆ ಜನರೆಲ್ಲರನ್ನೂ ಕರೆದು,
JER 42:9 ಅವರಿಗೆ ಹೇಳಿದ್ದೇನೆಂದರೆ, “ಯಾರ ಮುಂದೆ ನಿಮ್ಮ ವಿಜ್ಞಾಪನೆಯನ್ನು ತರುವುದಕ್ಕೆ ನನ್ನನ್ನು ಕಳುಹಿಸಿದ್ದೀರೋ, ಆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ:
JER 42:10 ‘ನೀವು ಇನ್ನು ಈ ದೇಶದಲ್ಲಿ ವಾಸಮಾಡಿದರೆ, ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತು ಹಾಕದೆ ನೆಡುವೆನು. ಏಕೆಂದರೆ ನಾನು ನಿಮಗೆ ಮಾಡಿರುವ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಡುತ್ತೇನೆ.
JER 42:11 ನೀವು ಭಯಪಡುವ ಬಾಬಿಲೋನಿನ ಅರಸನಿಗೆ ಭಯಪಡಬೇಡಿರಿ; ಅವನಿಗೆ ಭಯಪಡಬೇಡಿರೆಂದು ಯೆಹೋವ ದೇವರು ಹೇಳುತ್ತಾರೆ; ಏಕೆಂದರೆ ನಿಮ್ಮನ್ನು ರಕ್ಷಿಸುವುದಕ್ಕೂ, ಅವನ ಕೈಯಿಂದ ನಿಮ್ಮನ್ನು ತಪ್ಪಿಸುವುದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ.
JER 42:12 ಇದಲ್ಲದೆ ನಾನು ನಿಮಗೆ ಕರುಣೆಯನ್ನು ತೋರಿಸುವೆನು; ಆಗ ಅವನು ನಿಮ್ಮನ್ನು ಕರುಣಿಸಿ, ನಿಮ್ಮನ್ನು ತಿರುಗಿ ನಿಮ್ಮ ಸ್ವದೇಶಕ್ಕೆ ಬರಮಾಡುವನು.’
JER 42:13 “ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ‘ನಾವು ಈ ದೇಶದಲ್ಲಿ ವಾಸಮಾಡುವುದಿಲ್ಲ’ ಎಂದು ಹೇಳಿದರೆ,
JER 42:14 ನೀವು, ‘ಇಲ್ಲ, ನಾವು ಈಜಿಪ್ಟ್ ದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧವನ್ನು ನೋಡುವುದಿಲ್ಲ, ತುತೂರಿಯ ಶಬ್ದವನ್ನು ಕೇಳುವುದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವುದಿಲ್ಲ.’ ಅಲ್ಲಿ ವಾಸಮಾಡುವೆವೆಂದು ಹೇಳಿದರೆ,
JER 42:15 ಯೆಹೂದದ ಶೇಷವೇ, ಹಾಗಾದರೆ ಈಗ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವು ನಿಶ್ಚಯವಾಗಿ ನಿಮ್ಮ ಮುಖಗಳನ್ನು ಈಜಿಪ್ಟಿಗೆ ಹೋಗುವಹಾಗೆ ಇಟ್ಟರೆ ಮತ್ತು ನೀವು ಅಲ್ಲಿ ತಂಗುವುದಕ್ಕೆ ಹೋದರೆ,
JER 42:16 ನೀವು ಭಯಪಡುವ ಖಡ್ಗವು ಈಜಿಪ್ಟ್ ದೇಶದಲ್ಲಿ ನಿಮ್ಮನ್ನು ಹಿಡಿಯುವುದು. ನೀವು ಹೆದರಿಕೊಳ್ಳುವ ಕ್ಷಾಮವು ಈಜಿಪ್ಟ್ ದೇಶಕ್ಕೆ ನಿಮ್ಮನ್ನು ಹಿಂದಟ್ಟುವುದು, ನೀವು ಅಲ್ಲೇ ಸಾಯುವಿರಿ.
JER 42:17 ಈಜಿಪ್ಟಿಗೆ ಹೋಗಿ ಅಲ್ಲಿ ವಾಸಿಸುವ ಹಾಗೆ ತಮ್ಮ ಮುಖಗಳನ್ನಿಡುವ ಮನುಷ್ಯರಿಗೆಲ್ಲಾ ಹೀಗಾಗುವುದು. ಅವರು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವರು. ನಾನು ಅವರ ಮೇಲೆ ಬರಮಾಡುವ ಕೇಡಿಗೆ ತಪ್ಪಿಸಿಕೊಂಡು ಉಳಿಯುವವನು ಒಬ್ಬನೂ ಅವರೊಳಗೆ ಇರುವುದಿಲ್ಲ.’
JER 42:18 ಇಸ್ರಾಯೇಲಿನ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಯೆರೂಸಲೇಮಿನ ಮೇಲೆ ಹೇಗೆ ಸುರಿಯಿತೋ, ಹಾಗೆಯೇ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೇ, ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ಸ್ಥಳವನ್ನು ನೀವು ಮತ್ತೆ ನೋಡಲಾರಿರಿ.’
JER 42:19 “ಯೆಹೂದದ ಶೇಷವೇ, ಯೆಹೋವ ದೇವರು ನಿಮ್ಮ ವಿಷಯವಾಗಿ ಹೇಳಿದ್ದೇನೆಂದರೆ: ‘ಈಜಿಪ್ಟಿಗೆ ಹೋಗಬೇಡಿರಿ,’ ಇದನ್ನು ಖಚಿತಪಡಿಸಿಕೊಳ್ಳಿ: ನಾನು ಇಂದು ನಿಮಗೆ ಎಚ್ಚರಿಕೆ ನೀಡುತ್ತೇನೆ.
JER 42:20 ನೀವೇ ನನ್ನ ಬಳಿಗೆ ಬಂದು ನಮ್ಮ ದೇವರಾದ ಯೆಹೋವ ದೇವರನ್ನು ನಮಗಾಗಿ ಪ್ರಾರ್ಥಿಸು, ‘ನಮ್ಮ ದೇವರಾದ ಯೆಹೋವ ದೇವರು ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು,’ ಎಂದು ಹೇಳಿ ಮಾರಣಾಂತಿಕ ತಪ್ಪನ್ನು ಮಾಡಿದ್ದೀರಿ.
JER 42:21 ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಶಬ್ದವನ್ನಾದರೂ ಅವರು ಯಾವುದರ ವಿಷಯವಾಗಿ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೋ ಅದರಲ್ಲಿ ಯಾವುದನ್ನಾದರೂ ಕೇಳಲಿಲ್ಲ.
JER 42:22 ಹೀಗಿರುವುದರಿಂದ ನೀವು ವಾಸಿಸುವುದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವಿರೆಂದು ಈಗ ನಿಶ್ಚಯವಾಗಿ ತಿಳಿದುಕೊಳ್ಳಿರಿ,” ಎಂದನು.
JER 43:1 ಯೆರೆಮೀಯನು ಜನರೆಲ್ಲರಿಗೆ ಅವರ ದೇವರಾದ ಯೆಹೋವ ದೇವರು ಯಾವ ವಿಷಯವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದರೋ, ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ,
JER 43:2 ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಗರ್ವಿಷ್ಠ ಮನುಷ್ಯರೆಲ್ಲರೂ ಮಾತನಾಡಿ ಯೆರೆಮೀಯನಿಗೆ, “ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾಗಿರುವುದಕ್ಕೆ ಈಜಿಪ್ಟಿಗೆ ಹೋಗಬಾರದೆಂದು ಹೇಳುವುದಕ್ಕೆ ನಮ್ಮ ದೇವರಾದ ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ.
JER 43:3 ಆದರೆ ಅವರು ನಮ್ಮನ್ನು ಕೊಂದುಹಾಕುವ ಹಾಗೆಯೂ, ನಮ್ಮನ್ನು ಬಾಬಿಲೋನಿಗೆ ಸೆರೆ ಒಯ್ಯುವ ಹಾಗೆಯೂ, ನಮ್ಮನ್ನು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರೇಪಿಸಿದ್ದಾನೆ,” ಎಂದರು.
JER 43:4 ಈ ಪ್ರಕಾರ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ, ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ, ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ.
JER 43:5 ಆದರೆ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವುದಕ್ಕೆ ತಿರುಗಿ ಬಂದ ಯೆಹೂದದಲ್ಲಿ ಉಳಿದವರನ್ನು,
JER 43:6 ಅಂದರೆ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ, ಪ್ರವಾದಿಯಾದ ಯೆರೆಮೀಯನನ್ನೂ, ನೇರೀಯನ ಮಗ ಬಾರೂಕನನ್ನೂ ತೆಗೆದುಕೊಂಡು ಈಜಿಪ್ಟ್ ದೇಶಕ್ಕೆ ಹೋದರು.
JER 43:7 ಏಕೆಂದರೆ ಅವರು ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ. ಹೀಗೆ ಅವರು ಈಜಿಪ್ಟಿಗೆ ಹೋಗಿ ತಹಪನೇಸಿಗೆ ಬಂದರು.
JER 43:8 ಆಗ ತಹಪನೇಸಿನಲ್ಲಿ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು.
JER 43:9 “ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದ್ಯರ ಮುಂದೆ ಬಚ್ಚಿಟ್ಟು, ಅವರಿಗೆ ಹೇಳತಕ್ಕದ್ದೇನೆಂದರೆ:
JER 43:10 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು. ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.
JER 43:11 ಅವನು ಬಂದು ಈಜಿಪ್ಟ್ ದೇಶವನ್ನು ಹೊಡೆದು, ಮರಣಕ್ಕೆ ಇರುವವರನ್ನು ಮರಣಕ್ಕೂ, ಸೆರೆಗೆ ಇರುವವರನ್ನು ಸೆರೆಗೂ, ಖಡ್ಗಕ್ಕೆ ಇರುವವರನ್ನು ಖಡ್ಗಕ್ಕೂ ಒಪ್ಪಿಸುವನು.
JER 43:12 ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.
JER 43:13 ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”
JER 44:1 ಈಜಿಪ್ಟ್ ದೇಶದ ಕೆಳಗಿನ ಪ್ರಾಂತದ ಮಿಗ್ದೋಲ್, ತಹಪನೇಸ್, ಮೆಂಫೀಸ್ ಪಟ್ಟಣಗಳಲ್ಲಿಯೂ ಹಾಗೂ ಈಜಿಪ್ಟನ ದಕ್ಷಿಣ ಭಾಗವಾದ ಪತ್ರೋಸ್ ಪ್ರಾಂತದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆರೆಮೀಯನಿಗೆ ಬಂದ ವಾಕ್ಯವು:
JER 44:2 “ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಎಲ್ಲಾ ಪಟ್ಟಣಗಳ ಮೇಲೆಯೂ ಬರಮಾಡಿದ ಎಲ್ಲಾ ಕೇಡನ್ನು ನೀವು ಕಂಡಿದ್ದೀರಿ.
JER 44:3 ಅವರು ನನಗೆ ಕೋಪವನ್ನು ಎಬ್ಬಿಸುವ ಹಾಗೆ ನೀವೂ ನಿಮ್ಮ ಪೂರ್ವಜರೂ ಅರಿಯದ ಬೇರೆ ದೇವರುಗಳನ್ನು ಸೇವಿಸಿ, ಧೂಪ ಸುಟ್ಟು ಮಾಡಿದ ಕೆಟ್ಟತನದ ನಿಮಿತ್ತ ಇಗೋ, ಅವು ಈ ಹೊತ್ತು ಹಾಳಾಗಿವೆ. ಅವುಗಳಲ್ಲಿ ವಾಸಮಾಡುವವನು ಯಾರೂ ಇಲ್ಲ.
JER 44:4 ಆದರೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಪುನಃ ಕಳುಹಿಸಿ, ‘ನಾನು ಹಗೆ ಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇಬೇಡಿರಿ!’ ಎಂದು ಹೇಳಿದೆನು.
JER 44:5 ಆದರೆ ತಮ್ಮ ಕೆಟ್ಟತನದಿಂದ ತಿರುಗದೆ, ಬೇರೆ ದೇವರುಗಳಿಗೆ ಧೂಪಸುಡುವುದನ್ನು ಬಿಡದೆ ಕೇಳಲಿಲ್ಲ, ನೀವು ಕಿವಿಗೊಡಲಿಲ್ಲ.
JER 44:6 ಆದ್ದರಿಂದ ನನ್ನ ರೌದ್ರವೂ ನನ್ನ ಕೋಪವೂ ಸುರಿದು, ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಉರಿಯಿತು. ಅವು ಈ ದಿನದವರೆಗೂ ಹಾಳೂ, ಬೀಳೂ ಆದವು.
JER 44:7 “ಆದ್ದರಿಂದ ಈಗ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ: ಏಕೆ ನಿಮಗೆ ಉಳಿದಿರುವವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ, ಹೆಂಗಸರನ್ನೂ, ಮಗುವನ್ನೂ, ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು, ನಿಮ್ಮ ಪ್ರಾಣಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳುತ್ತೀರಿ?
JER 44:8 ಏಕೆ ನೀವು ನೀವೇ ನಿರ್ಮೂಲರಾಗುವ ಹಾಗೆಯೂ, ನೀವು ಭೂಮಿಯ ಎಲ್ಲಾ ಜನಾಂಗಗಳಲ್ಲಿ ಶಾಪವೂ, ನಿಂದೆಯೂ ಆಗುವ ಹಾಗೆಯೂ, ನೀವು ತಂಗುವುದಕ್ಕೆ ಹೋಗಿರುವ ಈಜಿಪ್ಟ್ ದೇಶದಲ್ಲಿ ಬೇರೆ ದೇವರುಗಳಿಗೆ ಧೂಪ ಸುಟ್ಟು, ನನಗೆ ಕೋಪವನ್ನು ಎಬ್ಬಿಸುತ್ತೀರಿ?
JER 44:9 ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ಪಿತೃಗಳು ಕೆಟ್ಟತನಗಳನ್ನೂ, ಯೆಹೂದದ ಅರಸರ ಕೆಟ್ಟತನಗಳನ್ನೂ, ಅವರ ಹೆಂಡತಿಯರ ಕೆಟ್ಟತನಗಳನ್ನೂ, ನಿಮ್ಮ ಸ್ವಂತ ಕೆಟ್ಟತನಗಳನ್ನೂ, ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ?
JER 44:10 ಈ ದಿನದವರೆಗೂ ಅವರು ತಗ್ಗಿಸಿಕೊಳ್ಳಲಿಲ್ಲ, ಭಯಪಡಲಿಲ್ಲ. ನಾನು ನಿಮ್ಮ ಮುಂದೆಯೂ, ನಿಮ್ಮ ತಂದೆಗಳ ಮುಂದೆಯೂ ಇಟ್ಟ ನನ್ನ ನಿಯಮದಲ್ಲಿ ನಡೆಯಲಿಲ್ಲ.
JER 44:11 “ಆದ್ದರಿಂದ ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿನ್ನ ಮೇಲೆ ವಿಪತ್ತನ್ನು ಬರಮಾಡಲು ಮತ್ತು ಎಲ್ಲಾ ಯೆಹೂದವನ್ನು ನಾಶಮಾಡಲು ನಿರ್ಧರಿಸಿದ್ದೇನೆ.
JER 44:12 ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ತಂಗಬೇಕೆಂದು ತಮ್ಮ ಮುಖಗಳನ್ನು ಇಟ್ಟಿರುವ ಯೆಹೂದದಲ್ಲಿ ಉಳಿದಿರುವವರನ್ನು ತೆಗೆದುಕೊಳ್ಳುತ್ತೇನೆ. ಅವರೆಲ್ಲರು ಈಜಿಪ್ಟ್ ದೇಶದಲ್ಲಿ ನಾಶವಾಗುವರು. ಖಡ್ಗದಿಂದಲೂ ಕ್ಷಾಮದಿಂದಲೂ ಅಳಿದುಹೋಗುವರು. ಚಿಕ್ಕವನು ಮೊದಲುಗೊಂಡು ದೊಡ್ಡವನವರೆಗೂ ಖಡ್ಗದಿಂದಲೂ ಕ್ಷಾಮದಿಂದಲೂ ಸಾಯುವರು. ಅಸಹ್ಯವೂ ಭಯವೂ ಶಾಪವೂ ನಿಂದೆಯೂ ಆಗುವುವು.
JER 44:13 ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಈಜಿಪ್ಟ್ ದೇಶದಲ್ಲಿ ವಾಸಮಾಡುವವರನ್ನು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಶಿಕ್ಷಿಸುವೆನು.
JER 44:14 ಈಜಿಪ್ಟ್ ದೇಶಕ್ಕೆ ಅಲ್ಲಿ ವಾಸಿಸುವುದಕ್ಕೆ ಹೋಗಿರುವ ಯೆಹೂದದ ಉಳಿದಿರುವವರು ತಾವು ತಿರುಗಿಕೊಂಡು, ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿದರೂ, ಒಬ್ಬನಾದರೂ ಯೆಹೂದ ದೇಶಕ್ಕೆ ಹಿಂದಿರುಗುವುದಿಲ್ಲ. ಓಡಿಹೋಗುವ ಸ್ವಲ್ಪ ಜನರೇ ಅಲ್ಲದೆ ಇನ್ಯಾರೂ ಹಿಂತಿರುಗುವುದಿಲ್ಲ,” ಎಂಬುದು.
JER 44:15 ಆಗ ತಮ್ಮ ಹೆಂಡತಿಯರು ಅನ್ಯ ದೇವತೆಗಳಿಗೆ ಧೂಪ ಹಾಕುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು, ಅಂತು ಈಜಿಪ್ಟಿನಲ್ಲೂ ಪತ್ರೋಸಿನಲ್ಲೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ ಹೀಗೆ ಹೇಳಿದರು:
JER 44:16 “ಯೆಹೋವ ದೇವರ ಹೆಸರಿನಿಂದ ನೀನು ನಮಗೆ ನುಡಿದ ಮಾತನ್ನು ಕೇಳಲೊಲ್ಲೆವು.
JER 44:17 ಆದರೆ ಸ್ವಂತ ಬಾಯಿಂದ ಹೊರಡುವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ. ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನಾರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ. ನಾವೂ, ನಮ್ಮ ತಂದೆಗಳೂ, ನಮ್ಮ ಅರಸರೂ, ನಮ್ಮ ಪ್ರಧಾನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ಮಾಡುವೆವು. ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.
JER 44:18 ಆದರೆ ನಾವು ಗಗನದ ಒಡತಿಗೆ ಧೂಪ ಸುಡುವುದನ್ನೂ, ಪಾನಾರ್ಪಣೆಗಳನ್ನೂ ಅವಳಿಗೆ ಹೊಯ್ಯುವುದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು. ಖಡ್ಗದಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು.”
JER 44:19 ಇದಲ್ಲದೆ, “ನಾವು ಗಗನದ ಒಡತಿಗೆ ಧೂಪ ಸುಟ್ಟು, ಅವಳಿಗೆ ಪಾನಾರ್ಪಣೆಗಳನ್ನು ಹೊಯ್ದಾಗ, ನಮ್ಮ ಗಂಡಂದಿರನ್ನು ಬಿಟ್ಟು, ಅವಳ ಪೂಜೆಗೋಸ್ಕರ ದೋಸೆಗಳನ್ನು ಮಾಡಿ, ಅವಳಿಗೆ ಪಾನಾರ್ಪಣೆಗಳನ್ನು ಅರ್ಪಿಸಿದೆವೋ?” ಎಂದರು.
JER 44:20 ಆಗ ಯೆರೆಮೀಯನು ಜನರೆಲ್ಲರಿಗೂ, ಗಂಡಸರಿಗೂ, ಹೆಂಗಸರಿಗೂ, ತನಗೆ ಉತ್ತರ ಕೊಟ್ಟಿದ್ದ ಜನರೆಲ್ಲರಿಗೂ ಹೇಳಿದ್ದೇನೆಂದರೆ,
JER 44:21 “ನೀವೂ, ನಿಮ್ಮ ಪಿತೃಗಳೂ, ನಿಮ್ಮ ಅರಸರೂ, ನಿಮ್ಮ ಪ್ರಧಾನರೂ, ದೇಶದ ಜನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟ ಧೂಪವನ್ನೇ, ಯೆಹೋವ ದೇವರು ಜ್ಞಾಪಕ ಮಾಡಿಕೊಂಡಿದ್ದು ಅಲ್ಲವೋ?
JER 44:22 ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ, ನೀವು ಮಾಡಿದ ಅಸಹ್ಯಗಳನ್ನೂ ಯೆಹೋವ ದೇವರು ಇನ್ನು ತಾಳಲಾರದ್ದರಿಂದ, ನಿಮ್ಮ ದೇಶವು ಈ ದಿನ ಇರುವ ಪ್ರಕಾರ, ನಿವಾಸಿಗಳಿಲ್ಲದೆ ಹಾಳಾಗಿಯೂ, ವಿಸ್ಮಯವಾಗಿಯೂ, ಶಾಪವಾಗಿಯೂ ಇದೆ.
JER 44:23 ನೀವು ಧೂಪ ಸುಟ್ಟು, ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಯೆಹೋವ ದೇವರ ಮಾತನ್ನು ಕೇಳದೆ, ದೈವನಿಯಮವನ್ನೂ, ದೈವತೀರ್ಪುಗಳನ್ನೂ, ದೈವಷರತ್ತುಗಳನ್ನೂ ಅನುಸರಿಸದೆ, ದೇವರಿಗೆ ವಿಧೇಯರಾಗದೆ ಇದ್ದುದರಿಂದಲೇ, ಈ ಕೇಡು ಈ ದಿನ ನಿಮಗೆ ಸಂಭವಿಸಿದೆ,” ಎಂದನು.
JER 44:24 ಇದಲ್ಲದೆ, ಯೆರೆಮೀಯನು ಎಲ್ಲಾ ಜನರಿಗೂ, ಎಲ್ಲಾ ಹೆಂಗಸರಿಗೂ, “ಈಜಿಪ್ಟ್ ದೇಶದಲ್ಲಿರುವ ಯೆಹೂದ್ಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ.
JER 44:25 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವೂ, ನಿಮ್ಮ ಹೆಂಡತಿಯರೂ ಗಗನದ ಒಡತಿಗೆ ಧೂಪ ಸುಡುತ್ತೇವೆಂದೂ, ಅವಳಿಗೆ ಪಾನಾರ್ಪಣೆಗಳನ್ನು ಹೊಯ್ಯುತ್ತೇವೆಂದೂ ನಾವು ಮಾಡಿರುವ ಪ್ರಮಾಣಗಳನ್ನು ನಿಶ್ಚಯವಾಗಿ ನಡೆಸುವೆವೆಂದೂ, ನಿಮ್ಮ ಬಾಯಿಗಳಿಂದ ಹೇಳಿ ನಿಮ್ಮ ಕೈಗಳಿಂದ ಸಹ ಈಡೇರಿಸಿದ್ದೀರಿ.’ “ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ನಡೆಸುವಿರಿ.
JER 44:26 ಆದರೆ, ಈಜಿಪ್ಟ್ ದೇಶದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವ ದೇವರ ವಾಕ್ಯವನ್ನು ಕೇಳಿರಿ: ‘ಇಗೋ, ನಾನು ನನ್ನ ಸ್ವಂತ ಹೆಸರಿನಿಂದ ಪ್ರಮಾಣ ಮಾಡಿದ್ದೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ, ‘ಈಜಿಪ್ಟ್‌ನಲ್ಲಿರುವ ಯಾವುದೇ ಯೆಹೂದದ ವ್ಯಕ್ತಿಯು ಪ್ರಮಾಣ ಮಾಡಲು ನನ್ನ ಶ್ರೇಷ್ಠ ಹೆಸರನ್ನು ಬಳಸಲು ಸಾಧ್ಯವಾಗುವುದಿಲ್ಲ. “ಸಾರ್ವಭೌಮ ಯೆಹೋವ ದೇವರ ಜೀವದಾಣೆ,” ಎಂದು ಮತ್ತೆಂದೂ ಅವರು ಹೇಳುವುದಿಲ್ಲ.
JER 44:27 ನಾನು ಒಳ್ಳೆಯದಕ್ಕಾಗಿ ಅಲ್ಲ; ಕೆಟ್ಟದ್ದಕ್ಕಾಗಿ ಅವರ ಮೇಲೆ ಎಚ್ಚರವಾಗಿರುವೆನು. ಈಜಿಪ್ಟ್ ದೇಶದಲ್ಲಿರುವ ಯೆಹೂದದ ಮನುಷ್ಯರೆಲ್ಲರೂ ಮುಗಿದು ಅಂತ್ಯವಾಗುವವರೆಗೆ ಖಡ್ಗದಿಂದಲೂ ಬರದಿಂದಲೂ ನಾಶವಾಗುವರು.
JER 44:28 ಆದರೆ ಖಡ್ಗಕ್ಕೆ ತಪ್ಪಿಸಿಕೊಂಡ ಸ್ವಲ್ಪ ಜನರು ಈಜಿಪ್ಟ್ ದೇಶದೊಳಗಿಂದ ಯೆಹೂದ ದೇಶಕ್ಕೆ ಹಿಂದಿರುಗಿ ಹೋಗುವರು. ಆಗ ಈಜಿಪ್ಟ್ ದೇಶದಲ್ಲಿ ತಂಗುವುದಕ್ಕೆ ಬಂದಿರುವ ಯೆಹೂದದ ಉಳಿದವರೆಲ್ಲಾ ನನ್ನ ಮಾತು ನಿಲ್ಲುವುದೋ, ಅವರ ಮಾತು ನಿಲ್ಲುವುದೋ ಎಂಬುದನ್ನು ತಿಳಿದುಕೊಳ್ಳುವರು.
JER 44:29 “ ‘ನನ್ನ ಮಾತುಗಳು ನಿಮಗೆ ವಿರೋಧವಾಗಿ ಕೇಡಿಗಾಗಿ ನಿಶ್ಚಯವಾಗಿ ನಿಲ್ಲುವುವೆಂದು ನೀವು ತಿಳಿಯುವ ಹಾಗೆ ನಾನು ಈ ಸ್ಥಳದಲ್ಲಿ ನಿಮ್ಮನ್ನು ದಂಡಿಸುವೆನೆಂಬುದಕ್ಕೆ ಇದೇ ನಿಮಗೆ ಗುರುತು,’ ಎಂದು ಯೆಹೋವ ದೇವರು ಹೇಳುತ್ತಾರೆ.
JER 44:30 ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಶತ್ರುವಾದಂಥ ಅವನ ಪ್ರಾಣವನ್ನು ಹುಡುಕಿದಂಥ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಹೇಗೆ ಒಪ್ಪಿಸಿದೆನೋ, ಹಾಗೆಯೇ ಈಜಿಪ್ಟಿನ ಅರಸನಾದ ಫರೋಹ ಹೋಫ್ರನನ್ನು ಅವನ ಪ್ರಾಣವನ್ನು ಹುಡುಕುವ ಅವನ ಶತ್ರುಗಳ ಕೈಯಲ್ಲಿ ಒಪ್ಪಿಸುತ್ತೇನೆ.’ ”
JER 45:1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ನೇರೀಯನ ಮಗನಾದ ಬಾರೂಕನ ಈ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ, ಸುರುಳಿಯಲ್ಲಿ ಬರೆದ ಮೇಲೆ ಪ್ರವಾದಿಯಾದ ಯೆರೆಮೀಯನು ಅವನಿಗೆ ಹೇಳಿದ ವಾಕ್ಯವೇನೆಂದರೆ,
JER 45:2 “ಬಾರೂಕನೇ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ನಿನ್ನನ್ನು ಕುರಿತು ಹೀಗೆ ಹೇಳುತ್ತಾರೆ.
JER 45:3 ‘ಈಗ ನನಗೆ ಕಷ್ಟ! ಏಕೆಂದರೆ, ಯೆಹೋವ ದೇವರು ನನ್ನ ನೋವಿಗೆ ಚಿಂತೆಯನ್ನು ಕೂಡಿಸಿದ್ದಾರೆ. ನಿಟ್ಟುಸಿರು ಬಿಡುವುದರಿಂದ ದಣಿದಿದ್ದೇನೆ. ವಿಶ್ರಾಂತಿಯನ್ನು ಕಾಣೆನೆಂದು ನೀನು ಹೇಳಿದಿಯಲ್ಲಾ.’
JER 45:4 ಆದರೆ ನಿಮಗೆ ಹೇಳಲು ಯೆಹೋವ ದೇವರು ನನಗೆ ಹೇಳಿದ್ದಾರೆ. ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ. ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.
JER 45:5 ಹಾಗಾದರೆ ನೀನು ನಿನಗೋಸ್ಕರ ದೊಡ್ಡವುಗಳನ್ನು ಹುಡುಕುತ್ತೀಯೋ? ಹುಡುಕಬೇಡ. ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ. ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನೀನು ಉಳಿಸಿಕೊಳ್ಳುವಂತೆ ಮಾಡುವೆನು, ಎಂದು ನಿನಗೆ ಹೇಳಿದ್ದಾರೆ,’ ಎಂದನು.”
JER 46:1 ಇತರ ಜನಾಂಗಗಳಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
JER 46:2 ಈಜಿಪ್ಟನ್ನು ಕುರಿತದ್ದು: ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿಯಿರುವ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಆ ಸೈನ್ಯದ ಮೇಲೆ ದಾಳಿಮಾಡಿದ್ದರ ವಿಷಯ:
JER 46:3 “ಗುರಾಣಿಯನ್ನೂ, ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸಮೀಪಿಸಿರಿ;
JER 46:4 ರಾಹುತರೇ, ಕುದುರೆಗಳನ್ನು ಕಟ್ಟಿರಿ; ವಾಹನಾಶ್ವಗಳನ್ನು ಹತ್ತಿರಿ. ಎದ್ದು ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಂತುಕೊಳ್ಳಿರಿ; ಈಟಿಗಳನ್ನು ಮೆರುಗು ಮಾಡಿರಿ; ಕವಚಗಳನ್ನು ತೊಟ್ಟುಕೊಳ್ಳಿರಿ.
JER 46:5 ಆಹಾ, ನಾನು ಕಂಡದ್ದೇನು? ಅವರು ದಿಗಿಲುಪಟ್ಟು ಹಿಂದಿರುಗಿದ್ದನ್ನು, ಅವರ ಪರಾಕ್ರಮಶಾಲಿಗಳು ಪೆಟ್ಟುತಿಂದಿದ್ದಾರೆ. ಹಿಂದೆ ನೋಡದೆ ಓಡಿಹೋಗುತ್ತಾರೆ, ಏಕೆಂದರೆ ಸುತ್ತಲು ದಿಗಿಲು ಕವಿದಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 46:6 “ವೇಗಶಾಲಿಗಳು ಓಡಿ ಹೋಗದಿರಲಿ; ಪರಾಕ್ರಮಶಾಲಿಯು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿಬೀಳುವರು.
JER 46:7 “ನೈಲ್ ನದಿಯಂತೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?
JER 46:8 ಈಜಿಪ್ಟ್ ನೈಲ್ ನದಿಯ ಪ್ರಳಯದ ಹಾಗೆ ಏರುತ್ತದೆ; ಅದರ ನೀರು ನದಿಗಳ ಹಾಗೆ ಕದಲುತ್ತವೆ; ‘ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ; ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ,’ ಎಂದು ಅವಳು ಹೇಳುತ್ತಾಳೆ.
JER 46:9 ಕುದುರೆಗಳೇ ಬನ್ನಿರಿ; ಸಾರಥಿಗಳೇ ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ, ಪೂಟ್ಯರೂ, ಬಿಲ್ಲನ್ನು ಹಿಡಿದು ಬಗ್ಗಿಸುವ ಲೂದ್ಯರೂ ಹೊರಗೆ ಬರಲಿ.
JER 46:10 ಏಕೆಂದರೆ ಇದು ಸೇನಾಧೀಶ್ವರ ಯೆಹೋವನಾದ ದೇವರ ದಿವಸವೇ. ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು, ಖಡ್ಗವು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವುದು. ಏಕೆಂದರೆ ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೇನಾಧೀಶ್ವರ ಯೆಹೋವರಾದ ದೇವರಿಗೆ ಬಲಿ ಆಗುತ್ತದೆ.
JER 46:11 “ಈಜಿಪ್ಟಿನ ಮಗಳಾದ ಕನ್ನಿಕೆಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತೆಗೆದುಕೋ. ನೀನು ಬಹಳ ಔಷಧವನ್ನು ತೆಗೆದುಕೊಳ್ಳುವುದು ವ್ಯರ್ಥವಾಗಿದೆ. ಏಕೆಂದರೆ ನಿನಗೆ ಗುಣವಾಗುವುದಿಲ್ಲ!
JER 46:12 ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿವೆ; ನಿನ್ನ ಕೂಗು ದೇಶವನ್ನು ತುಂಬಿಸಿದೆ. ಏಕೆಂದರೆ ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ. ಇಬ್ಬರೂ ಬಿದ್ದು ಹೋಗಿದ್ದಾರೆ.”
JER 46:13 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಬಂದು ಈಜಿಪ್ಟ್ ದೇಶವನ್ನು ಹೇಗೆ ಹೊಡೆಯುವನೆಂಬುದರ ವಿಷಯವಾಗಿ ಯೆಹೋವ ದೇವರು ಪ್ರವಾದಿಯಾದ ಯೆರೆಮೀಯನಿಗೆ ಹೇಳಿದ ವಾಕ್ಯವು:
JER 46:14 “ಈಜಿಪ್ಟಿನಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿಸಿ, ನೋಫಿನಲ್ಲಿಯೂ, ತಹಪನೇಸಿನಲ್ಲಿಯೂ ಪ್ರಕಟಿಸಿ, ‘ನಿಮ್ಮ ಸ್ಥಾನಗಳನ್ನು ತೆಗೆದುಕೊಳ್ಳಿ ಮತ್ತು ಸಿದ್ಧರಾಗಿ, ಏಕೆಂದರೆ ಖಡ್ಗವು ನಿನ್ನ ಸುತ್ತಲೂ ಸಂಹರಿಸುವುದು,’ ಎಂದು ಹೇಳಿರಿ.
JER 46:15 ನಿನ್ನ ಬಲಿಷ್ಠರು ಏಕೆ ಬಡಕೊಂಡು ಹೋಗಿದ್ದಾರೆ? ಯೆಹೋವ ದೇವರು ಅವರನ್ನು ಓಡಿಸಿದ್ದರಿಂದ ಅವರು ನಿಲ್ಲಲಿಲ್ಲ.
JER 46:16 ಅವರು ಪದೇಪದೇ ಎಡವುತ್ತಾರೆ. ಹೌದು, ಒಬ್ಬರ ಮೇಲೊಬ್ಬರು ಬಿದ್ದರು. ‘ಅವರು ಉಪದ್ರವ ಪಡಿಸುವವರ ಖಡ್ಗವನ್ನು ಬಿಟ್ಟು, ಸ್ವಂತ ಜನರ ಬಳಿಗೂ, ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ,’ ಎಂದು ಹೇಳಿದರು.
JER 46:17 ಈಜಿಪ್ಟಿನ ಅರಸನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
JER 46:18 “ಸೇನಾಧೀಶ್ವರ ಯೆಹೋವ ದೇವರೆಂದು ಹೆಸರುಳ್ಳ ಅರಸನು ಹೇಳುವುದೇನೆಂದರೆ, ‘ನನ್ನ ಜೀವದಾಣೆ,’ ಬೆಟ್ಟಗಳಲ್ಲಿ ತಾಬೋರಿನಂತೆಯೂ, ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯವಾಗಿ ಬರುವನು.
JER 46:19 ಈಜಿಪ್ಟಿನ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜುಗೊಳಿಸಿಕೋ; ಏಕೆಂದರೆ ನೋಫ್ ಪಟ್ಟಣವು ಹಾಳಾಗುವುದು; ನಿವಾಸಿಗಳಿಲ್ಲದ ಬೀಡಾಗುವುದು.
JER 46:20 “ಈಜಿಪ್ಟ್ ದೇಶವು ಬಹಳ ಅಂದವಾದ ಕಡಸಾಗಿದೆ; ಆದರೆ ಉತ್ತರದಿಂದ ತೊಣಚೆಯು ಬಂದೇ ಬರುತ್ತದೆ.
JER 46:21 ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಕರುಗಳಂತಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಏಕೆಂದರೆ ಅವರ ಆಪತ್ತಿನ ದಿವಸವೂ, ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
JER 46:22 ಅದರ ಶಬ್ದವು ಸರ್ಪದಂತೆ ಹೊರಡುವುದು; ಏಕೆಂದರೆ ಅವರು ದಂಡಿನ ಸಂಗಡ ಸಂಚರಿಸಿ, ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು.
JER 46:23 ಆದರೆ ಅಡವಿಯನ್ನು ಅದು ಶೋಧಿಸಕೂಡದ್ದಾಗಿದ್ದರೂ, ಕಡಿದುಹಾಕುವರು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ಅವರು ಮಿಡತೆಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ.
JER 46:24 ಈಜಿಪ್ಟಿನ ಮಗಳು ನಾಚಿಕೆಪಡುವಳು. ಉತ್ತರದ ಜನರ ಕೈಗೆ ಸಿಕ್ಕಿಬೀಳುವಳು.”
JER 46:25 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ತೆಬೆಸ್ ನಗರದಲ್ಲಿನ ಆಮೋನ್ ದೇವತೆಯನ್ನೂ, ಫರೋಹನನ್ನೂ, ಈಜಿಪ್ಟನ್ನೂ, ಅದರ ದೇವರುಗಳನ್ನೂ, ಅದರ ಅರಸರನ್ನೂ, ಅಂತೂ ಫರೋಹನನ್ನೂ, ಅವನಲ್ಲಿ ನಂಬಿಕೆ ಇಡುವ ಎಲ್ಲರನ್ನೂ ದಂಡಿಸುವೆನು.
JER 46:26 ಅವರ ಪ್ರಾಣವನ್ನೂ ಹುಡುಕುವವರ ಕೈಯಲ್ಲಿಯೂ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ, ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸಿಬಿಡುವೆನು. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸವಾಗುವುದೆಂದು ಯೆಹೋವ ದೇವರು ಹೇಳುತ್ತಾರೆ.
JER 46:27 “ಆದರೆ ನೀನು, ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೂ, ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶದಿಂದಲೂ ರಕ್ಷಿಸುವೆನು; ಅವನನ್ನು ಭಯಪಡಿಸುವುದಕ್ಕೆ ಯಾರು ಇರುವುದಿಲ್ಲ.
JER 46:28 ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿ ಓಡಿಸಿದೆನೋ, ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ಮುಗಿಸಿಬಿಡುತ್ತೇನೆ; ಆದರೆ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದರೂ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ.”
JER 47:1 ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
JER 47:2 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ, ಅದು ತುಂಬಿ ತುಳುಕುವ ಪ್ರಳಯವಾಗುವುದು; ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ಆಕ್ರಮಿಸುವುವು; ಆಗ ಮನುಷ್ಯರು ಕೂಗುವರು; ದೇಶದ ನಿವಾಸಿಗಳೆಲ್ಲರು ಗೋಳಾಡುವರು.
JER 47:3 ಅವನ ಬಲವಾದ ಕುದುರೆಗಳ ಗೊರಸುಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.
JER 47:4 ಏಕೆಂದರೆ ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವುದಕ್ಕೂ ಟೈರಿನಿಂದಲೂ ಸೀದೋನಿನಿಂದಲೂ ಉಳಿದವರನ್ನು ಕಡಿದುಬಿಡುವುದಕ್ಕೂ ಆ ದಿವಸ ಬಂತು. ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆಮಾಡುವನು.
JER 47:5 ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?
JER 47:6 “ಅಯ್ಯೋ, ಯೆಹೋವ ದೇವರ ಖಡ್ಗವೇ, ಎಷ್ಟರವರೆಗೆ ವಿಶ್ರಮಿಸಿಕೊಳ್ಳದೇ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ; ವಿಶ್ರಮಿಸಿಕೋ, ಸುಮ್ಮನಿರು.
JER 47:7 ಅದು ಹೇಗೆ ಸುಮ್ಮನಿರುವುದು? ಅಷ್ಕೆಲೋನಿಗೆ ವಿರೋಧವಾಗಿ ಮತ್ತು ಸಮುದ್ರ ತೀರಕ್ಕೆ ವಿರೋಧವಾಗಿ ಯೆಹೋವ ದೇವರೇ ಅದಕ್ಕೆ ಆಜ್ಞಾಪಿಸಿದ್ದಾರಲ್ಲಾ? ಅಲ್ಲಿ ಅದನ್ನು ನೇಮಿಸಿದ್ದಾನೆ.”
JER 48:1 ಮೋವಾಬನ್ನು ಕುರಿತದ್ದು: ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೆಬೋ ಊರಿನವರಿಗೆ ಕಷ್ಟ! ಆ ಊರು ಸೂರೆಯಾಯಿತು; ಕಿರ್ಯಾತಯಿಮು ಶತ್ರುವಿನ ಕೈವಶವಾಗಿ ಅವಮಾನಕ್ಕೆ ಗುರಿಯಾಗಿದೆ; ಬಲವಾದ ಕೋಟೆಯು ಸಹ ಚದರಿ ನಾಚಿಕೆಗೆ ಈಡಾಗಿದೆ.
JER 48:2 ಮೋವಾಬಿನ ಸ್ತೋತ್ರ ಇನ್ನು ಮೇಲೆ ಇರುವುದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ರಾಷ್ಟ್ರವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ; ಮದ್ಮೆನೇ, ನೀನು ಸಹ ಸುಮ್ಮನಾಗುವೆ; ಖಡ್ಗವು ನಿನ್ನನ್ನು ಹಿಂದಟ್ಟುವುದು.
JER 48:3 ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶವು, ಹೊರಡುವುದು.
JER 48:4 ಮೋವಾಬು ನಾಶವಾಯಿತು: ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು.
JER 48:5 ಲೂಹೀತ್ ದಿಣ್ಣೆಯನ್ನು ಅಳುತ್ತಲೇ ಹತ್ತುವರು; ಹೊರೊನಯಿಮಿನ ಇಳಿಜಾರಿನಲ್ಲಿ ಶತ್ರುಗಳು ನಾಶದ ಶಬ್ದವನ್ನು ಕೇಳಿದ್ದಾರೆ.
JER 48:6 ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಮರುಭೂಮಿಯಲ್ಲಿರುವ ಒಣ ಗಿಡದ ಹಾಗಿರಿ.
JER 48:7 ಏಕೆಂದರೆ ನಿನ್ನ ಕ್ರಿಯೆಗಳಲ್ಲಿಯೂ, ನಿನ್ನ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟಿದ್ದರಿಂದ, ನೀನು ಸಹ ಸೆರೆಯಾಗುವಿ ಮತ್ತು ಕೆಮೋಷನು, ಅವನ ಯಾಜಕರು, ಅವನ ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.
JER 48:8 ಒಂದೊಂದು ಪಟ್ಟಣದ ಮೇಲೆ ವಿನಾಶಕನು ಬರುವನು; ಯೆಹೋವ ದೇವರು ಹೇಳಿದ ಹಾಗೆಯೇ, ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳಲಾರದು. ತಗ್ಗೂ ಸಹ ನಾಶವಾಗುವುದು; ಮತ್ತು ಬಯಲು ಹಾಳಾಗುವುದು.
JER 48:9 ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಏಕೆಂದರೆ ಅದರ ಪಟ್ಟಣಗಳು ಹಾಳಾಗುವುವು; ಅವುಗಳಲ್ಲಿ ನಿವಾಸಿಗಳಿರುವುದಿಲ್ಲ.
JER 48:10 “ಯೆಹೋವ ದೇವರು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ರಕ್ತದಿಂದ ತನ್ನ ಖಡ್ಗವನ್ನು ಹಿಂದೆಗೆಯುವವನಿಗೆ ಶಾಪವಾಗಲಿ.
JER 48:11 “ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯಲಾಗುವುದಿಲ್ಲ; ಸೆರೆಗೆ ಹೋಗಲಿಲ್ಲ; ಆದ್ದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
JER 48:12 ಆದ್ದರಿಂದ ಇಗೋ, ದಿನಗಳು ಬರುವವು” ಎಂದು ಯೆಹೋವ ದೇವರು ಅನ್ನುತ್ತಾರೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು; ಅದರ ಪಾತ್ರೆಗಳನ್ನು ಬರಿದುಮಾಡಿ, ತಮ್ಮ ಬುದ್ದಲಿಗಳನ್ನು ಒಡೆಯುವರು.
JER 48:13 ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ, ಹಾಗೆಯೇ ಮೋವಾಬು ಕೆಮೋಷನ ವಿಷಯ ನಾಚಿಕೆಪಡುವುದು.
JER 48:14 “ ‘ನಾವು ಪರಾಕ್ರಮಶಾಲಿಗಳೂ, ಯುದ್ಧಕ್ಕೆ ಬಲಿಷ್ಠರೂ,’ ಎಂದು ನೀವು ಹೇಳುವುದು ಹೇಗೆ?
JER 48:15 ಮೋವಾಬು ಸೂರೆಯಾಯಿತು. ಅದರ ಪಟ್ಟಣಗಳು ಏರಿ ಹೋದವು, ಅದರ ಶ್ರೇಷ್ಠ ಯೌವನಸ್ಥರು ಹತರಾಗುವುದಕ್ಕೆ ಹೋಗಿದ್ದಾರೆ,” ಎಂದು ಸರ್ವಶಕ್ತ ಯೆಹೋವ ಎಂಬ ಹೆಸರುಳ್ಳ ರಾಜಾಧಿರಾಜರ ನುಡಿ.
JER 48:16 “ಮೋವಾಬಿಗೆ ಆಪತ್ತು ಬರುವುದಕ್ಕೆ ಸಮೀಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ.
JER 48:17 ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ, ‘ಬಲವಾದ ಕೋಲೂ, ಮಹಿಮೆಯ ಬೆತ್ತವೂ ಹೇಗೆ ಮುರಿದುಹೋಯಿತು?’ ಎಂದು ಹೇಳಿರಿ.
JER 48:18 “ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ಒಣಭೂಮಿಯ ಬಾಯಾರಿದವಳಂತೆ ಕೂತುಕೋ, ಏಕೆಂದರೆ ಮೋವಾಬನ್ನು ವಿನಾಶ ಮಾಡುವವನು ನಿನ್ನ ಮೇಲೆ ಬರುವನು; ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿಬಿಡುವನು.
JER 48:19 ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿ ಹೋಗುವವನನ್ನೂ, ತಪ್ಪಿಸಿಕೊಳ್ಳುವವನನ್ನೂ ಏನಾಯಿತೆಂದು ಕೇಳು.
JER 48:20 ಮೋವಾಬು ಚದರಿಹೋಯಿತೆಂದು ನಾಚಿಕೆಗೆ ಈಡಾಗಿದೆ. ಗೋಳಾಡಿರಿ, ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನಲ್ಲಿ ತಿಳಿಸಿರಿ.
JER 48:21 ಇದಲ್ಲದೆ ಬಯಲುಸೀಮೆಯ ಮೇಲೆ ನ್ಯಾಯ ತೀರ್ವಿಕೆ ಬಂತು; ಹೋಲೋನ್, ಯಹಚ, ಮೇಫಾತ್,
JER 48:22 ದೀಬೋನ್, ನೆಬೋ, ಬೇತ್ ದಿಬ್ಲಾತಯಿಮ್,
JER 48:23 ಕಿರ್ಯಾತಯಿಮ್, ಬೇತ್ ಗಾಮುಲ್, ಬೇತ್ ಮೆಯೋನ್,
JER 48:24 ಬೊಚ್ರ, ಕೆರೀಯೋತ್, ಹೀಗೆ ಸಮೀಪದಲ್ಲಾಗಲಿ, ದೂರದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು.
JER 48:25 ಮೋವಾಬಿನ ಕೊಂಬು ಕಡಿದು ಹಾಕಲಾಗಿದೆ; ಅದರ ತೋಳು ಮುರಿಯಲಾಗಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 48:26 “ಅದನ್ನು ನೀವು ಅಮಲೇರಿಸಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ವಾಂತಿ ಮಾಡಿದ್ದರಲ್ಲಿ ಹೊರಳಾಡುವುದು; ಅದೇ ಹಾಸ್ಯಕ್ಕಾಗಿರುವುದು.
JER 48:27 ಏಕೆಂದರೆ ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕ್ಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ಏಕೆಂದರೆ ನೀನು ಅದರ ವಿಷಯ ಯಾವಾಗ ಮಾತನಾಡಿದಂದಿನಿಂದ ತಲೆ ಅಲ್ಲಾಡಿಸಿದ್ದೀಯಲ್ಲಾ.
JER 48:28 ಮೋವಾಬಿನಲ್ಲಿ ವಾಸವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರಿ; ಸಂದುಗಳ ಬಾಯಿಗಳ ಪಕ್ಕಗಳಲ್ಲಿ ಗೂಡು ಕಟ್ಟುವ ಪಾರಿವಾಳದ ಹಾಗಿರಿ.
JER 48:29 “ಮೋವಾಬಿನ ಹೆಮ್ಮೆಯನ್ನು ಕುರಿತು, ಅದರ ಮಹಾ ಗರ್ವವನ್ನು ಕುರಿತು, ಅದರ ಡಂಭವನ್ನೂ, ಅಹಂಕಾರವನ್ನೂ, ಬಡಾಯಿಯನ್ನೂ, ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.
JER 48:30 ನಾನು ಅದರ ಕೋಪೋದ್ರೇಕವನ್ನು ಬಲ್ಲೆನೆಂದು, ಅದು ವ್ಯರ್ಥ”, ಎಂದು ಯೆಹೋವ ದೇವರು ಅನ್ನುತ್ತಾರೆ; “ಆದರೆ ಅದು ಹಾಗೆ ಆಗುವುದಿಲ್ಲ; ಅವನ ಸುಳ್ಳುಗಳು ಸರಿಬೀಳುವುದಿಲ್ಲ.
JER 48:31 ಆದ್ದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವುದು.
JER 48:32 ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲು ನಿನ್ನ ನಿಮಿತ್ತವಾಗಿ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ, ನಿನ್ನ ದ್ರಾಕ್ಷಿ ಸುಗ್ಗಿಯ ಮೇಲೆಯೂ ವಿನಾಶ ಮಾಡುವವನು ಬಿದ್ದಿದ್ದಾನೆ.
JER 48:33 ಫಲವುಳ್ಳ ಹೊಲದಿಂದಲೂ, ಮೋವಾಬಿನ ದೇಶದಿಂದಲೂ ಸಂತೋಷವೂ, ಉಲ್ಲಾಸವೂ ತೆಗೆಯಲಾಗಿವೆ; ಏಕೆಂದರೆ ದ್ರಾಕ್ಷಿ ಆಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಆರ್ಭಟದ ಸಂಗಡ ಅವರು ಯಾರೂ ತುಳಿಯುವುದಿಲ್ಲ; ಆರ್ಭಟವೇ ಆರ್ಭಟವಾಗುವುದಿಲ್ಲ.
JER 48:34 “ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಲೆಯವರೆಗೂ, ಯಹಚಿನವರೆಗೂ, ಚೋಗರ್ ಮೊದಲ್ಗೊಂಡು ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಮೂರು ವರ್ಷದ ಕಡಸಿನಂತೆ ತಮ್ಮ ಶಬ್ದವನ್ನೆತ್ತಿದ್ದರು; ಏಕೆಂದರೆ ನಿಮ್ರೀಮ್‌ನ ನೀರು ಸಹ ಹಾಳಾದವು.
JER 48:35 ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 48:36 “ಆದ್ದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ಏಕೆಂದರೆ ಅವನು ಮಾಡಿಕೊಂಡ ದ್ರವ್ಯ ನಾಶವಾಯಿತು.
JER 48:37 ಏಕೆಂದರೆ ಎಲ್ಲಾ ತಲೆಗಳು ಬೋಳಾಗುವುವು; ಎಲ್ಲಾ ಗಡ್ಡಗಳು ಕ್ಷೌರವಾಗುವುವು; ಎಲ್ಲಾ ಕೈಗಳ ಮೇಲೆ ಗಾಯಗಳು, ಸೊಂಟಗಳ ಮೇಲೆ ಗೋಣಿತಟ್ಟು ಇರುವುವು.
JER 48:38 ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿ ಇರುವುದು. ಏಕೆಂದರೆ ಯಾರಿಗೂ ಬೇಡದ ಮಡಕೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ.
JER 48:39 “ಆಹಾ, ಭಂಗವಾಯಿತು! ಕಿರುಚಿಕೊಳ್ಳುತ್ತಾರಲ್ಲಾ! ಓಹೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ! ಅದರ ನೆರೆಹೊರೆಯವರು ಅಣಕಿಸುವುದಕ್ಕೂ, ಬೆಚ್ಚಿಬೀಳುವುದಕ್ಕೂ ಆಸ್ಪದವಾಗಿದೆ.”
JER 48:40 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಅವನು ಹದ್ದಿನ ಹಾಗೆ ಹಾರಿ, ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು.
JER 48:41 ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.
JER 48:42 ಏಕೆಂದರೆ ಮೋವಾಬು ಅದು ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ, ಜನಾಂಗವಲ್ಲದ ಹಾಗೆ ನಾಶವಾಗುವುದು.
JER 48:43 ಮೋವಾಬಿನ ನಿವಾಸಿಯೇ, ಹೆದರಿಕೆಯೂ, ಕುಳಿಯೂ, ಬೋನೂ ನಿನ್ನ ಮೇಲೆ ಇರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 48:44 “ಹೆದರಿಕೆಗೆ ಓಡಿಹೋಗುವವನು ಗುಂಡಿಯಲ್ಲಿ ಬೀಳುವನು. ಗುಂಡಿಯೊಳಗಿಂದ ಏರಿಬರುವವನು, ಬೋನಿನಲ್ಲಿ ಸಿಕ್ಕಿಬೀಳುವನು. ಏಕೆಂದರೆ ನಾನು ಅದರ ಮೇಲೆ ಅಂದರೆ, ಮೋವಾಬಿನ ಮೇಲೆಯೇ ಅವರ ದಂಡನೆಯ ವರ್ಷವನ್ನು ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 48:45 “ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ, ಸೀಹೋನನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ, ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವುದು.
JER 48:46 ಮೋವಾಬೇ, ನೀನೇ ಅಯ್ಯೋ! ಕೆಮೋಷಿನ ಜನರು ನಾಶವಾದರು; ಏಕೆಂದರೆ ನಿನ್ನ ಗಂಡು ಹೆಣ್ಣುಮಕ್ಕಳು, ಗಡೀಪಾರಾಗಿ ಸೆರೆಯಾದರು.
JER 48:47 “ಆದರೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸಮೃದ್ಧಿಯನ್ನು ತಿರುಗಿ ತರುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ಈವರೆಗೆ ಮೋವಾಬಿನ ನ್ಯಾಯ ತೀರ್ವಿಕೆಯು ಇರುವುದು.
JER 49:1 ಅಮ್ಮೋನ್ಯರನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿಗೆ ಪುತ್ರರಿಲ್ಲವೋ? ಅವನಿಗೆ ಬಾಧ್ಯಸ್ಥನಿಲ್ಲವೋ? ಮಲ್ಕಾಮ್ ದೇವತೆಯು ಗಾದನ್ನು ಬಾಧ್ಯವಾಗಿ ತೆಗೆದುಕೊಳ್ಳುವುದು ಏಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವುದು ಏಕೆ?
JER 49:2 ಆದ್ದರಿಂದ ಇಗೋ, ದಿನಗಳು ಬರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ಮಾಡುವೆನು; ಅದು ಹಾಳು ದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯವನ್ನು ಹೊಂದುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:3 “ಹೆಷ್ಬೋನೇ ಗೋಳಾಡು; ಏಕೆಂದರೆ ಆಯಿ ಎಂಬ ನಗರ ಹಾಳಾಯಿತು; ರಬ್ಬಾದ ನಿವಾಸಿಗಳೇ ಗೋಳಾಡಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆ, ಅವನ ಯಾಜಕರು, ಅವನ ಪ್ರಧಾನರು ಒಟ್ಟಾಗಿ ಸೆರೆಗೆ ಹೋಗುವರು.
JER 49:4 ಹಿಂದಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ, ನಿನ್ನ ಬೊಕ್ಕಸಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯವಾಗಿ ಏಕೆ ಹೆಚ್ಚಳ ಪಡುತ್ತೀ?
JER 49:5 ಇಗೋ, ನಾನು ನಿನ್ನ ಸುತ್ತಲಿರುವವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಅನ್ನುತ್ತಾರೆ. “ಆಗ ನಿಮ್ಮಲ್ಲಿ ಪ್ರತಿಯೊಬ್ಬನನ್ನೂ ಅಟ್ಟಲಾಗುವುದು; ಓಡಿಹೋದವರನ್ನು ಕೂಡಿಸುವವನು ಒಬ್ಬನೂ ಇರುವುದಿಲ್ಲ.
JER 49:6 “ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:7 ಎದೋಮ್ಯರನ್ನು ಕುರಿತದ್ದು: ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. “ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವುದಿಲ್ಲವೋ? ವಿವೇಕಿಗಳಿಂದ ಆಲೋಚನೆಯು ನಾಶವಾಯಿತೋ? ಅವರ ಜ್ಞಾನವು ಕ್ಷೀಣಿಸಿದೆಯೇ?
JER 49:8 ದೇದಾನಿನ ನಿವಾಸಿಗಳೇ, ಓಡಿಹೋಗಿರಿ; ತಿರುಗಿಕೊಳ್ಳಿರಿ; ಆಳವಾದ ಗುಹೆಯಲ್ಲಿ ವಾಸಮಾಡಿರಿ; ಏಕೆಂದರೆ ಏಸಾವನ ಆಪತ್ತನ್ನೂ, ನಾನು ಅವನನ್ನು ಶಿಕ್ಷಿಸುವ ಕಾಲವನ್ನೂ ಅವನ ಮೇಲೆ ಬರಮಾಡುತ್ತೇನೆ.
JER 49:9 ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? ಕಳ್ಳರು ರಾತ್ರಿ ವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಕದಿಯುವುದಿಲ್ಲವೇ?
JER 49:10 ಆದರೆ ನಾನು ಏಸಾವನನ್ನು ಬರಿದು ಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ, ಅವನ ನೆರೆಯವರೂ, ಅವನೂ ಇಲ್ಲವಾದರು.
JER 49:11 ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು. ನಾನೇ ರಕ್ಷಿಸುವೆನು. ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ.”
JER 49:12 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪಾತ್ರೆಯಲ್ಲಿ ಕುಡಿಯುವುದಕ್ಕೆ ಯಾರಿಗೆ ನ್ಯಾಯ ತೀರ್ವಿಕೆ ಆಗಲಿಲ್ಲವೋ, ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಶಿಕ್ಷಿಸದೆ ಹೋಗಬೇಕು? ನೀವು ಶಿಕ್ಷಿಸದೆ ಹೋಗುವುದಿಲ್ಲ, ನಿಶ್ಚಯವಾಗಿ ಕುಡಿಯುವೆ.
JER 49:13 ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.
JER 49:14 ಯೆಹೋವ ದೇವರಿಂದ ನಾನು ಸುದ್ದಿಯನ್ನು ಕೇಳಿದ್ದೇನೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ; “ನೀವು ಒಟ್ಟುಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ!”
JER 49:15 “ಏಕೆಂದರೆ ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿಯೂ, ಜನರ ತಿರಸ್ಕಾರಕ್ಕೆ ಈಡಾಗುವಂತೆಯೂ ಮಾಡುವೆನು.
JER 49:16 ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ನಿನ್ನ ಭಯಂಕರವೂ ನಿನ್ನ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಸ್ಥಳದಲ್ಲಿ ಕಟ್ಟಿದರೂ, ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:17 “ಎದೋಮು ಸಹ ಹಾಳಾಗುವುದು; ಅದರ ಬಳಿಯಲ್ಲಿ ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಪಟ್ಟು, ಅಪಹಾಸ್ಯ ಮಾಡುವರು.
JER 49:18 ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ, ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:19 “ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು. ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”
JER 49:20 ಆದ್ದರಿಂದ ಯೆಹೋವ ದೇವರು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ, ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ. ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವುವು. ಖಂಡಿತವಾಗಿ, ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.
JER 49:21 ಎದೋಮ್ಯರು ತಟ್ಟನೆ ಬೀಳುವ ಶಬ್ದದಿಂದ ಭೂಮಿಯು ಕಂಪಿಸುವುದು. ಆಗ ಉಂಟಾಗುವ ಗೋಳು ಕೆಂಪು ಸಮುದ್ರದವರೆಗೂ ಪ್ರತಿಧ್ವನಿಸುವುದು.
JER 49:22 ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು.
JER 49:23 ದಮಸ್ಕದ ವಿಷಯವಾಗಿ: “ಹಮಾತ್ ಮತ್ತು ಅರ್ಪಾದ್ ನಗರಗಳು ಆಶಾಭಂಗಗೊಂಡಿವೆ, ಅವು ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯಪಟ್ಟಿವೆ; ಸಮುದ್ರದಂತೆ ಕಳವಳಪಡುತ್ತದೆ; ಅದು ಸುಮ್ಮನಿರಲಾರದು.
JER 49:24 ದಮಸ್ಕವು ನಿತ್ರಾಣವಾಯಿತು; ಓಡಿಹೋಗುವುದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡಿದುಕೊಂಡಿದೆ; ಹೆರುವ ಸ್ತ್ರೀಯ ಹಾಗೆ ಸಂಕಟವೂ, ವೇದನೆಗಳೂ ಅದನ್ನು ಹಿಡಿದಿವೆ.
JER 49:25 ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲಾಗಿದೆ ಅಲ್ಲವೋ?
JER 49:26 ಆದ್ದರಿಂದ ಅದರ ಯೌವನಸ್ಥರು ಅದರ ಚೌಕಗಳಲ್ಲಿ ಬೀಳುವರು; ಯುದ್ಧಭಟರೆಲ್ಲರೂ ಆ ದಿವಸದಲ್ಲಿ ಕಡಿದುಹಾಕಲಾಗುವರು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
JER 49:27 “ಏಕೆಂದರೆ ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವುದು.”
JER 49:28 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದಾಳಿಮಾಡಿದ ಕೇದಾರ್ ಹಾಗೂ ಹಾಚೋರ್ ರಾಜ್ಯಗಳನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ, “ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ. ಪೂರ್ವದಿಕ್ಕಿನ ಮನುಷ್ಯರನ್ನು ಸುಲಿದುಕೊಳ್ಳಿರಿ.
JER 49:29 ಅವರ ಗುಡಾರಗಳನ್ನೂ, ಅವರ ಮಂದೆಗಳನ್ನೂ ತೆಗೆದುಕೊಳ್ಳುವರು. ಅವರ ಗುಡಾರದ ಪರದೆಗಳನ್ನೂ, ಅವರ ಎಲ್ಲಾ ಸಾಮಾನುಗಳನ್ನೂ, ಅವರ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯ, ಎಂದು ಅವರಿಗೆ ಕೂಗುವರು.
JER 49:30 “ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿ ಬಿಡಿರಿ, ಆಳವಾದ ಗುಹೆಯಲ್ಲಿ ವಾಸವಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ; ನಿಮಗೆ ವಿರೋಧವಾಗಿ ಯೋಜನೆಯನ್ನು ಮಾಡಿದ್ದಾನೆ.
JER 49:31 “ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.
JER 49:32 ಅವರ ಒಂಟೆಗಳು ಕೊಳ್ಳೆಯಾಗುವುವು; ಅವರ ದನಗಳ ಸಮೂಹವು ಸುಲಿಗೆಯಾಗುವುದು; ಕಟ್ಟಕಡೆಯ ಮೂಲೆಗಳಲ್ಲಿ ಇರುವವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಸರ್ವಕಡೆಯಿಂದ ಅವರ ಮೇಲೆ ಆಪತ್ತನ್ನು ತರಿಸುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:33 ಹಾಚೋರು ನರಿಗಳ ನಿವಾಸವೂ, ಎಂದೆಂದಿಗೂ ಹಾಳಾದ ಸ್ಥಳವೂ ಆಗುವುದು. ಅಲ್ಲಿ ಯಾವನಾದರೂ ವಾಸಮಾಡುವುದಿಲ್ಲ. ಯಾವ ನರಪುತ್ರನಾದರೂ ಅಲ್ಲಿ ತಂಗುವುದಿಲ್ಲ.
JER 49:34 ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆಮೀಯನಿಗೆ ಯೆಹೋವ ದೇವರಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು:
JER 49:35 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಏಲಾಮಿನ ಬಿಲ್ಲನ್ನೂ, ಅವರ ಪರಾಕ್ರಮವನ್ನೂ, ಶ್ರೇಷ್ಠತ್ವವನ್ನೂ ಮುರಿಯುತ್ತೇನೆ
JER 49:36 ಆಕಾಶದ ನಾಲ್ಕು ದಿಕ್ಕುಗಳಿಂದ ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ತಂದು, ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿನಿಂದ ಓಡಿಸಲಾದವರು ಸೇರದ ಜನಾಂಗವು ಇರುವುದಿಲ್ಲ.
JER 49:37 ಏಕೆಂದರೆ ಏಲಾಮನ್ನು ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರುವಂತೆ ಮಾಡುವೆನು; ಅವರ ಮೇಲೆ ಕೇಡನ್ನೂ, ನನ್ನ ಕೋಪದ ಉಗ್ರವನ್ನೂ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವನನ್ನು ಮುಗಿಸಿಬಿಡುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.
JER 49:38 ಇದಲ್ಲದೆ ಏಲಾಮಿನಲ್ಲಿ ನನ್ನ ಸಿಂಹಾಸನವನ್ನಿಟ್ಟು, ಅದರೊಳಗಿಂದ ಅರಸನನ್ನೂ, ಪ್ರಧಾನರನ್ನೂ ನಾಶಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 49:39 “ಆದಾಗ್ಯೂ ಅಂತ್ಯ ದಿವಸಗಳಲ್ಲಿ ಆಗುವುದೇನೆಂದರೆ, ನಾನು ಏಲಾಮಿನ ಸಮೃದ್ಧಿಯನ್ನು ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 50:1 ಬಾಬಿಲೋನಿಯರ ದೇಶವಾದ ಬಾಬಿಲೋನಿಯದ ಕುರಿತು ಪ್ರವಾದಿ ಯೆರೆಮೀಯನಿಂದ ಯೆಹೋವ ದೇವರು ನುಡಿಸಿದ ವಾಕ್ಯ ಇದು:
JER 50:2 “ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವನ್ನೆತ್ತಿ ಪ್ರಕಟಿಸಿರಿ; ಮರೆಮಾಡದೇ ಹೀಗೆ ಸಾರಿರಿ, ‘ಬಾಬಿಲೋನ್ ಶತ್ರುವಶವಾಯಿತು; ಬೇಲ್ ದೇವತೆಗೆ ನಾಚಿಕೆಯಾಯಿತು; ಮೆರೋದಾಕ್ ತುಂಡುತುಂಡಾಗಿ ಮುರಿದು ಹೋದನು. ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಮತ್ತು ಅವಳ ವಿಗ್ರಹಗಳು ಭಯದಿಂದ ತುಂಬಿವೆ.’
JER 50:3 ಏಕೆಂದರೆ ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳುಮಾಡಿಬಿಡುವುದು; ಅವಳಲ್ಲಿ ಯಾರೂ ವಾಸಿಸುವುದಿಲ್ಲ; ಮನುಷ್ಯರೂ, ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ.
JER 50:4 “ಆ ದಿವಸಗಳಲ್ಲಿಯೂ ಆ ಕಾಲದಲ್ಲಿಯೂ ಇಸ್ರಾಯೇಲರು ಬರುವರು; ಅವರೂ, ಯೆಹೂದ್ಯರೂ ಒಟ್ಟಾಗಿ ಕೂಡಿಕೊಳ್ಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಯೆಹೋವ ದೇವರನ್ನು ಹುಡುಕುವರು.
JER 50:5 ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ ಬನ್ನಿ; ಮರೆತು ಹೋಗದ ನಿತ್ಯವಾದ ಒಡಂಬಡಿಕೆಯಿಂದ ಯೆಹೋವ ದೇವರನ್ನು ಸೇರಿಕೊಳ್ಳೋಣ, ಅನ್ನುವರು.
JER 50:6 “ನನ್ನ ಜನರು ಕಳೆದುಹೋದ ಕುರಿಗಳಾಗಿದ್ದಾರೆ; ಅವರ ಕುರುಬರು ಅವರನ್ನು ತಪ್ಪಿಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು.
JER 50:7 ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ; ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ, ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು.
JER 50:8 “ಬಾಬಿಲೋನಿನೊಳಗಿಂದ ಓಡಿಹೋಗಿರಿ; ಬಾಬಿಲೋನಿನ ಸೀಮೆಯಿಂದ ಹೊರಡಿರಿ; ಮಂದೆಯ ಮುಂದೆ ಹೋತಗಳ ಹಾಗೆ ಇರಿ.
JER 50:9 ಏಕೆಂದರೆ ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ, ಬಾಬಿಲೋನಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧವಾಗಿ ಯುದ್ಧ ಸಿದ್ಧಮಾಡುವರು. ಅಲ್ಲಿಂದ ಅದು ಹಿಡಿಯಲಾಗುವುದು. ಅವರ ಬಾಣಗಳು ಬಲಿಷ್ಠನಾದ ಪ್ರವೀಣ ಶೂರನಂತಿರುವುವು. ಯಾವುದೂ ವ್ಯರ್ಥವಾಗಿ ತಿರುಗದು.
JER 50:10 ಬಾಬಿಲೋನಿನ ದೇಶವು ಸುಲಿಗೆಯಾಗುವುದು; ಅದನ್ನು ಸುಲಿದುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವುದು, ಎಂದು ಯೆಹೋವ ದೇವರು ಹೇಳುತ್ತಾರೆ.
JER 50:11 “ಏಕೆಂದರೆ ನನ್ನ ಸೊತ್ತನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ, ನೀವು ಉಲ್ಲಾಸಿಸಿದ್ದರಿಂದಲೂ, ಕೊಬ್ಬಿದ ಕಡಸಿನ ಹಾಗೆ ಗರ್ವ ಪಟ್ಟದ್ದರಿಂದಲೂ, ಗಂಡು ಕುದುರೆಗಳ ಹಾಗೆ ಹೂಂಕರಿಸಿದ್ದರಿಂದಲೂ,
JER 50:12 ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗಗಳಲ್ಲಿ ಅಂತ್ಯವಾದದ್ದು ಕಾಡೂ, ಒಣ ಭೂಮಿಯೂ, ಮರುಭೂಮಿಯೂ ಆಗುವುದು.
JER 50:13 ಯೆಹೋವ ದೇವರ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವುದಿಲ್ಲ; ಸಂಪೂರ್ಣ ಹಾಳಾಗುವುದು; ಬಾಬಿಲೋನನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಗಾಯಗಳ ವಿಷಯ ವಿಸ್ಮಯಪಟ್ಟು ಸಿಳ್ಳುಹಾಕುವರು.
JER 50:14 “ಬಿಲ್ಲನ್ನು ಬಗ್ಗಿಸುವವರೇ, ಬಾಬಿಲೋನಿಗೆ ವಿರೋಧವಾಗಿ ಸುತ್ತಲೂ ಯುದ್ಧ ಸಿದ್ಧಮಾಡಿರಿ; ಅದಕ್ಕೆ ಎಸೆಯಿರಿ; ಬಾಣಗಳನ್ನು ಕಡಿಮೆ ಮಾಡಬೇಡಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿತಲ್ಲಾ.
JER 50:15 ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಅದರ ಬುರುಜುಗಳು ಬಿದ್ದು ಹೋದವು; ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಅದು ಯೆಹೋವ ದೇವರ ಪ್ರತಿದಂಡನೆ; ಆದ್ದರಿಂದ ನೀವೂ ಅದಕ್ಕೆ ಮುಯ್ಯಿತೀರಿಸಿರಿ. ಅದು ಇತರರಿಗೆ ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ.
JER 50:16 ಬಿತ್ತುವವನನ್ನೂ, ಸುಗ್ಗಿಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬಿಲೋನಿನೊಳಗಿಂದ ಕಡಿದುಬಿಡಿರಿ; ಕಷ್ಟಪಡುವ ಖಡ್ಗದ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿಹೋಗುವರು.
JER 50:17 “ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಸ್ಸೀರಿಯನ ಅರಸನು ಅವನನ್ನು ತಿಂದುಬಿಟ್ಟನು. ಕಡೆಯಲ್ಲಿ ಬಾಬಿಲೋನಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.”
JER 50:18 ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅಸ್ಸೀರಿನ ಅರಸನನ್ನು ಶಿಕ್ಷಿಸಿದ ಹಾಗೆ ಬಾಬಿಲೋನಿನ ಅರಸನನ್ನೂ, ಅವನ ದೇಶವನ್ನೂ ಶಿಕ್ಷಿಸುತ್ತೇನೆ.
JER 50:19 ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರುಗಿ ಬರಮಾಡುತ್ತೇನೆ; ಅವನು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯೀಮ್ ಬೆಟ್ಟದಲ್ಲಿಯೂ, ಗಿಲ್ಯಾದಿನಲ್ಲಿಯೂ ತೃಪ್ತಿ ಹೊಂದುವುದು.”
JER 50:20 ಯೆಹೋವ ದೇವರು ಹೇಳುತ್ತಾರೆ, “ಆ ದಿವಸಗಳಲ್ಲಿಯೂ, ಆ ಕಾಲದಲ್ಲಿಯೂ ಇಸ್ರಾಯೇಲಿನ ಅಕ್ರಮವನ್ನು ಹುಡುಕಿದರೂ, ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವುದಿಲ್ಲ. ಏಕೆಂದರೆ ನಾನು ಉಳಿಸುವವರನ್ನು ಮನ್ನಿಸುತ್ತೇನೆ.
JER 50:21 “ಮೆರಾಥಯಿಮ್ ದೇಶಕ್ಕೆ ವಿರೋಧವಾಗಿ, ಪೆಕೋದಿನ ನಿವಾಸಿಗಳಿಗೆ ವಿರೋಧವಾಗಿಯೂ ದಂಡೆತ್ತಿ ಹೋಗು; ಅವರನ್ನು ಹಿಂದಟ್ಟಿ ಸಂಹರಿಸು. ಸಂಪೂರ್ಣ ನಾಶಮಾಡು.” “ನಾನು ನಿನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾಡು, ಎಂದು ಯೆಹೋವ ದೇವರು ಹೇಳುತ್ತಾರೆ.
JER 50:22 ಯುದ್ಧದ ಶಬ್ದವೂ, ದೊಡ್ಡ ನಾಶನವೂ ದೇಶದಲ್ಲಿ ಇರುವುದು.
JER 50:23 ಇಗೋ, ಲೋಕವನ್ನೆಲ್ಲಾ ಹೊಡೆದ ಸುತ್ತಿಗೆಯು ಮುರಿದು ತುಂಡುತುಂಡಾಯಿತು! ಹೇಗೆ ಬಾಬೆಲ್ ರಾಜ್ಯವು ಜನಾಂಗಗಳ ನಡುವೆ ಹಾಳಾಯಿತಲ್ಲಾ!
JER 50:24 ನಾನು ಬೋನನ್ನು ಇಟ್ಟೆನು; ಹೌದು, ಬಾಬಿಲೋನೇ ನೀನು ಸಿಕ್ಕಿಕೊಂಡೆ. ಆದರೆ ನಿನಗೆ ತಿಳಿಯದೆ ಇತ್ತು. ನೀನು ಯೆಹೋವ ದೇವರಿಗೆ ವಿರೋಧವಾಗಿ ಜಗಳವಾಡಿದ್ದರಿಂದಲೇ ಸಿಕ್ಕಿಕೊಂಡೆ ಮತ್ತು ವಶವಾದೆ.
JER 50:25 ಯೆಹೋವ ದೇವರು ತನ್ನ ಆಯುಧ ಶಾಲೆಯನ್ನು ತೆರೆದು, ತನ್ನ ರೋಷದ ಆಯುಧಗಳನ್ನು ಹೊರಗೆ ತಂದಿದ್ದಾರೆ. ಏಕೆಂದರೆ ಬಾಬಿಲೋನಿನ ದೇಶದಲ್ಲಿ ಸಾರ್ವಭೌಮ ಸೇನಾಧೀಶ್ವರ ಯೆಹೋವ ದೇವರಿಗೆ ಕೆಲಸವಿದೆ.
JER 50:26 ಕಟ್ಟಕಡೆಯ ಮೇರೆಯಿಂದ ಅದಕ್ಕೆ ವಿರೋಧವಾಗಿ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಅದನ್ನು ದಿಬ್ಬಗಳಂತೆ ತುಳಿಯಿರಿ. ಸಂಪೂರ್ಣವಾಗಿ ನಾಶಮಾಡಿರಿ. ಅದಕ್ಕೆ ಒಂದೂ ಉಳಿಯದಿರಲಿ.
JER 50:27 ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ, ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ. ದಂಡನೆಯ ದಿನವು ಸಂಭವಿಸಿದೆ.
JER 50:28 ಅವರು ಚೀಯೋನಿನಲ್ಲಿ ನಮ್ಮ ದೇವರಾದ ಯೆಹೋವ ದೇವರ ಪ್ರತಿದಂಡನೆಯನ್ನೂ, ಆತನ ಆಲಯದ ಪ್ರತಿದಂಡನೆಯನ್ನೂ ತಿಳಿಸುತ್ತಾ, ಬಾಬಿಲೋನಿನ ದೇಶದಿಂದ ತಪ್ಪಿಸಿಕೊಂಡು ಓಡಿ ಹೋಗುವವರ ಸ್ವರವನ್ನು ಕೇಳಿರಿ.
JER 50:29 “ಬಾಬಿಲೋನಿಗೆ ವಿರೋಧವಾಗಿ ಬಿಲ್ಲುಬಾಣಗಾರರನ್ನೆಲ್ಲ ಒಟ್ಟಾಗಿ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ. ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ ಅದು ಮಾಡಿದಂತೆಯೇ ಅದಕ್ಕೆ ಮಾಡಿ. ಏಕೆಂದರೆ ಅದು ಅಹಂಕಾರದಿಂದ ಇಸ್ರಾಯೇಲರ ಪರಿಶುದ್ಧ ಯೆಹೋವ ದೇವರನ್ನು ಅಸಡ್ಡೆಮಾಡಿತು.
JER 50:30 ಆದ್ದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಸೈನಿಕರೆಲ್ಲಾ ಆ ದಿವಸದಲ್ಲಿ ಸುಮ್ಮನಾಗುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 50:31 “ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,” ಎಂದು ಸೈನ್ಯಗಳ ದೇವರಾದ ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಿನ್ನ ದಿವಸವೂ, ನಿನ್ನ ಶಿಕ್ಷೆಯ ಕಾಲವೂ ಬಂತು.
JER 50:32 ಅಹಂಕಾರದಿಂದ ಕೂಡಿದ ರಾಜ್ಯ ಎಡವಿ ಬೀಳುವುದು. ಅದನ್ನು ಯಾರೂ ಎತ್ತರು. ಅದರ ನಗರಗಳಿಗೆ ಬೆಂಕಿ ಹೊತ್ತಿಸುವೆನು. ಅದು ಸುತ್ತಮುತ್ತಣದನ್ನೆಲ್ಲ ನುಂಗಿಬಿಡುವುದು.”
JER 50:33 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಸ್ರಾಯೇಲರೂ, ಯೆಹೂದ್ಯರೂ ಕೂಡ ಹಿಂಸೆಗೆ ಗುರಿಯಾಗಿದ್ದಾರೆ; ಅವರನ್ನು ಸೆರೆಗೆ ಒಯ್ಯುವವರೆಲ್ಲರು ಅವರನ್ನು ಬಿಟ್ಟುಬಿಡುವುದಿಲ್ಲವೆಂದು, ಬಲವಾಗಿ ಪಟ್ಟುಹಿಡಿದಿದ್ದಾರೆ.
JER 50:34 ಅವರ ವಿಮೋಚಕನು ಬಲಿಷ್ಠನೇ, ಸೇನಾಧೀಶ್ವರ ಯೆಹೋವ ದೇವರೆಂಬುದೇ ಅವರ ಹೆಸರು; ಅವರು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ, ಬಾಬಿಲೋನಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ, ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವರು.
JER 50:35 “ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದರ ಜನಸಾಮಾನ್ಯರನ್ನು, ಪ್ರಧಾನರನ್ನು, ಪಂಡಿತರನ್ನು ಇವರೆಲ್ಲರನ್ನು ಹತಿಸಲಿದೆ ಖಡ್ಗ,
JER 50:36 ಸುಳ್ಳು ಪ್ರವಾದಿಗಳ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗುವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು.
JER 50:37 ಅದರ ಕುದುರೆಗಳಿಗೆ ವಿರೋಧವಾಗಿಯೂ, ಅವರ ರಥಗಳಿಗೆ ವಿರೋಧವಾಗಿಯೂ, ಅವರೊಳಗಿರುವ ಎಲ್ಲಾ ಸಕಲ ಜನರಿಗೆ ವಿರೋಧವಾಗಿಯೂ ಖಡ್ಗ ಉಂಟು; ಅವರ ಹೆಂಗಸರಂತೆ ಅಶಕ್ತರಾಗುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವು ಕೊಳ್ಳೆಯಾಗುವುವು.
JER 50:38 ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿಹೋಗುವುದು; ಏಕೆಂದರೆ ಅದು ವಿಗ್ರಹಗಳ ದೇಶವೇ, ಅವರು ಭಯಂಕರವಾದ ವಿಗ್ರಹಗಳಿಂದ ಹುಚ್ಚರಾದರು.
JER 50:39 “ಆದ್ದರಿಂದ ಅರಣ್ಯದ ಕಾಡುಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವುವು; ಉಷ್ಟ್ರಪಕ್ಷಿಗಳೂ ಸಹ ಅದರಲ್ಲಿ ವಾಸಮಾಡುವುವು; ತಲತಲಾಂತರಗಳವರೆಗೂ ಯಾರೂ ಅದರಲ್ಲಿ ತಂಗುವುದಿಲ್ಲ.
JER 50:40 ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ” ಎಂದು ಯೆಹೋವ ದೇವರು ಅನ್ನುತ್ತಾರೆ.
JER 50:41 “ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದು ಅನೇಕ ಅರಸರು ಎಚ್ಚರಗೊಳ್ಳುವರು. ಅವರು ಲೋಕದ ಕಟ್ಟಕಡೆಯಿಂದ ಬರುತ್ತಾರೆ.
JER 50:42 ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ. ಅವರು ಕ್ರೂರರು, ಕನಿಕರ ತೋರಿಸುವುದಿಲ್ಲ. ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ. ಬಾಬಿಲೋನಿನ ಮಗಳೇ, ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.
JER 50:43 ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ; ಅವನ ಕೈಗಳು ನಿತ್ರಾಣವಾದವು; ಸಂಕಟವೂ, ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.
JER 50:44 ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು; ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”
JER 50:45 ಆದ್ದರಿಂದ ಯೆಹೋವ ದೇವರು ಬಾಬಿಲೋನಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ, ಅವರು ಬಾಬಿಲೋನಿಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ; ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವವು; ಖಂಡಿತವಾಗಿ, ಅವುಗಳ ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.
JER 50:46 ಬಾಬಿಲೋನು ಶತ್ರುವಶ ಆಯಿತೆಂಬ ಕೋಲಾಹಲಕ್ಕೆ ಭೂಮಿಯು ಕಂಪಿಸುವುದು; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
JER 51:1 ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಬಾಬಿಲೋನಿಗೆ ವಿರೋಧವಾಗಿಯೂ, ನನಗೆದುರಾಗಿ ಎದ್ದಿರುವ ಲೇಬ್ ಕಾಮೈ ಪ್ರಜೆಗಳ ವಿರೋಧವಾಗಿಯೂ ನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು.
JER 51:2 ವಿದೇಶಿಯರನ್ನು ಬಾಬಿಲೋನಿಗೆ ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದು ಮಾಡುವರು; ಏಕೆಂದರೆ ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.
JER 51:3 ಬಿಲ್ಲು ಬಗ್ಗಿಸುವವನಿಗೆ ವಿರೋಧವಾಗಿಯೂ, ಕವಚದಲ್ಲಿ ತನ್ನನ್ನು ಹೆಚ್ಚಿಸಿಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
JER 51:4 ಈ ಪ್ರಕಾರ ಬಾಬಿಲೋನಿಯರ ದೇಶದಲ್ಲಿ ಹತರಾಗಿ ಬೀಳುವರು. ಅದರ ಬೀದಿಗಳಲ್ಲಿಯೇ ಕತ್ತಿಗೆ ತುತ್ತಾಗುವರು.
JER 51:5 ಏಕೆಂದರೆ ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲನ್ನಾಗಲಿ, ಯೆಹೂದವನ್ನಾಗಲಿ ಕೈಬಿಡಲಿಲ್ಲ.
JER 51:6 “ಬಾಬಿಲೋನಿನೊಳಗಿಂದ ಓಡಿಹೋಗಿರಿ; ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಪಾಪದಲ್ಲಿ ನಾಶವಾಗಬೇಡಿರಿ; ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
JER 51:7 ಬಾಬಿಲೋನ್ ಯೆಹೋವ ದೇವರ ಕೈಯಲ್ಲಿ ಭೂಮಿಗೆಲ್ಲಾ ಅಮಲೇರಿಸಿದ ಚಿನ್ನದ ಪಾತ್ರೆಯಾಗಿತ್ತು; ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; ಆದ್ದರಿಂದ ಜನಾಂಗಗಳು ಹುಚ್ಚರಾದರು.
JER 51:8 ಇದ್ದಕ್ಕಿದ್ದ ಹಾಗೆ ಬಾಬಿಲೋನ್ ಬಿದ್ದು ಹಾಳಾಗಿದೆ; ಅದರ ವಿಷಯ ಗೋಳಾಡಿರಿ; ಅದರ ನೋವಿಗೆ ತೈಲ ತೆಗೆದುಕೊಳ್ಳಿರಿ; ಒಂದು ವೇಳೆ ವಾಸಿಯಾದೀತು.
JER 51:9 “ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು; ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳವರೆಗೂ ಏರುತ್ತದೆ.’
JER 51:10 “ ‘ಯೆಹೋವ ದೇವರು ನಮ್ಮ ನೀತಿಯನ್ನು ಹೊರಗೆ ತಂದಿದ್ದಾರೆ; ಬನ್ನಿ, ನಮ್ಮ ದೇವರಾದ ಯೆಹೋವ ದೇವರ ಕ್ರಿಯೆಯನ್ನು ಚೀಯೋನಿನಲ್ಲಿ ಸಾರಿ ಹೇಳೋಣ.’
JER 51:11 “ಬಾಣಗಳನ್ನು ಮೆರುಗು ಮಾಡಿರಿ; ಡಾಲುಗಳನ್ನು ಎತ್ತಿಕೊಳ್ಳಿರಿ, ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ; ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ. ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು, ಅವರ ದೇವಾಲಯದ ಪ್ರತಿದಂಡನೆಯಾಗಿದೆ.
JER 51:12 ಬಾಬಿಲೋನಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ; ಪಹರೆಯನ್ನು ಬಲಪಡಿಸಿರಿ; ಕಾವಲುಗಾರರನ್ನು ನಿಲ್ಲಿಸಿರಿ; ಹೊಂಚಿಕೊಳ್ಳುವವರನ್ನು ಸಿದ್ಧಮಾಡಿರಿ; ಏಕೆಂದರೆ ಯೆಹೋವ ದೇವರು ಬಾಬಿಲೋನಿನ ನಿವಾಸಿಗಳಿಗೆ ವಿರೋಧವಾಗಿ ತಾನು ಹೇಳಿದ್ದನ್ನು ಯೋಚಿಸಿದ್ದನ್ನು ಮಾಡಿದ್ದಾರೆ.
JER 51:13 ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳವಳೇ, ನಿನ್ನ ಅಂತ್ಯವೂ, ನಿನ್ನ ನಾಶನದ ಕಾಲವು ಬಂತು.
JER 51:14 ಸೇನಾಧೀಶ್ವರ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟು: ನಿಶ್ಚಯವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧವಾಗಿ ಆರ್ಭಟವನ್ನು ಎತ್ತುವರು.
JER 51:15 “ಅವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ, ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ.
JER 51:16 ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ; ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.
JER 51:17 “ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ; ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ; ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ; ಅವುಗಳಲ್ಲಿ ಉಸಿರೇ ಇಲ್ಲ.
JER 51:18 ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ; ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು.
JER 51:19 ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ; ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.
JER 51:20 “ನೀನು ನನ್ನ ಗದೆಯೂ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರುಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ.
JER 51:21 ನಿನ್ನಿಂದ ಕುದುರೆಯನ್ನೂ, ಅದರ ಮೇಲೆ ಹತ್ತಿದವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ರಥವನ್ನೂ, ಅದರಲ್ಲಿ ಸವಾರಿ ಮಾಡುವವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
JER 51:22 ನಿನ್ನಿಂದ ಗಂಡಸರನ್ನೂ, ಹೆಂಗಸರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಹಿರಿಯರನ್ನೂ, ಕಿರಿಯರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಯುವಕನನ್ನೂ ಯುವತಿಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
JER 51:23 ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
JER 51:24 “ಬಾಬಿಲೋನಿನವರು ಮತ್ತು ಕಸ್ದೀಯರು ಚೀಯೋನಿನಲ್ಲಿ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು” ಎಂದು ಯೆಹೋವ ದೇವರು ಹೇಳುತ್ತಾರೆ.
JER 51:25 “ಲೋಕವನ್ನೆಲ್ಲಾ ನಾಶಮಾಡುವ ನಾಶಕ ಪರ್ವತವೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ. “ನಿನ್ನ ಮೇಲೆ ನನ್ನ ಕೈಯನ್ನು ಚಾಚಿ, ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ, ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
JER 51:26 ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು. ನೀನು ಎಂದೆಂದಿಗೂ ಹಾಳಾಗುವೆ,” ಎಂದು ಯೆಹೋವ ದೇವರು ಹೇಳುತ್ತಾರೆ.
JER 51:27 “ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರಾರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆಗಳನ್ನು ಬರಮಾಡಿರಿ.
JER 51:28 ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ, ಮೇದ್ಯರ ಅರಸರನ್ನೂ, ಅದರ ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
JER 51:29 ಆಗ ದೇಶವು ನೊಂದು ನಡುಗುವುದು. ಏಕೆಂದರೆ ಬಾಬಿಲೋನ್ ದೇಶವು ನಿರ್ಜನವಾಗಲಿ ಎಂದು ಅದರ ವಿರೋಧವಾಗಿ ಯೆಹೋವ ದೇವರ ಉದ್ದೇಶಗಳು ಸ್ಥಿರವಾಗಿವೆ.
JER 51:30 ಬಾಬಿಲೋನಿನ ಪರಾಕ್ರಮಶಾಲಿಗಳು ಯುದ್ಧಮಾಡುವುದನ್ನು ಬಿಟ್ಟಿದ್ದಾರೆ; ಅವರ ಭದ್ರಸ್ಥಾನಗಳಲ್ಲಿ ನಿಂತಿದ್ದಾರೆ. ಅವರ ಪರಾಕ್ರಮತನ ತಪ್ಪಿತು; ಅವರು ಬಲಹೀನರಾಗಿದ್ದಾರೆ. ಆ ದೇಶದ ನಿವಾಸಗಳನ್ನು ಸುಟ್ಟಿದ್ದಾರೆ; ಅದರ ಹೆಬ್ಬಾಗಿಲುಗಳು ಮುರಿದುಹೋಗಿವೆ.
JER 51:31 ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನ ಕಡೆ ಓಡುತ್ತಾನೆ. ಒಬ್ಬ ದೂತ ಇನ್ನೊಬ್ಬ ದೂತನ ಕಡೆಗೆ ಓಡಿಹೋಗಿ, ಬಾಬಿಲೋನಿನ ಅರಸನಿಗೆ ಈ ಸಮಾಚಾರವನ್ನು ತಿಳಿಸುತ್ತಾನೆ, ನಿನ್ನ ರಾಜಧಾನಿಯನ್ನು ಎಲ್ಲಾ ಕಡೆಯಿಂದ ಆಕ್ರಮಿಸಿದ್ದಾರೆ,
JER 51:32 ಹಾಯ್ಗಡಗಳನ್ನು ಹಿಡಿದಿದ್ದಾರೆ, ಜೊಂಡು ಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ, ರಣವೀರರು ಬೆಚ್ಚಿಬಿದ್ದಿದ್ದಾರೆ.”
JER 51:33 ಏಕೆಂದರೆ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ: “ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬಿಲೋನಿನ ಮಗಳು ಇದ್ದಾಳೆ. ಇನ್ನು ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಸುಗ್ಗಿಕಾಲ ಬರುವುದು.”
JER 51:34 “ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮ್ಮನ್ನು ನುಂಗಿಬಿಟ್ಟಿದ್ದಾನೆ. ನಮ್ಮನ್ನು ಜಜ್ಜಿದ್ದಾನೆ. ನಮ್ಮನ್ನು ಬರೀ ಪಾತ್ರೆಯಾಗಿ ಮಾಡಿದ್ದಾನೆ. ಘಟಸರ್ಪದ ಹಾಗೆ ನಮ್ಮನ್ನು ನುಂಗಿಬಿಟ್ಟಿದ್ದಾನೆ. ನಮ್ಮನ್ನು ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ. ನಮ್ಮನ್ನು ಉಗುಳಿಬಿಟ್ಟಿದ್ದಾನೆ.
JER 51:35 ನಮಗೂ, ನಮ್ಮ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬಿಲೋನಿನ ಮೇಲೆ ಇರಲಿ,” ಎಂದು ಚೀಯೋನ್ ನಿವಾಸಿಗಳು ಹೇಳುತ್ತಾರೆ; “ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ,” ಎಂದು ಯೆರೂಸಲೇಮು ಹೇಳುವುದು.
JER 51:36 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ. “ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ. ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ. ಅದರ ಸಮುದ್ರವನ್ನು ಒಣಗಿಸುತ್ತೇನೆ. ಅದರ ಬುಗ್ಗೆಯನ್ನು ಬತ್ತಿಹೋಗುವಂತೆ ಮಾಡುತ್ತೇನೆ.
JER 51:37 ಬಾಬಿಲೋನ್ ದಿಬ್ಬಗಳಾಗುವುದು. ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವಾಗಿ ಆಶ್ಚರ್ಯಕ್ಕೂ, ನಾಶಕ್ಕೂ, ಸಿಳ್ಳಿಡುವಿಕೆಗೂ ಒಳಗಾಗುವುದು.
JER 51:38 ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು. ಸಿಂಹಗಳ ಮರಿಗಳ ಹಾಗೆ ಶಬ್ದಮಾಡುವರು.
JER 51:39 ಅವರು ಉರಿಗೊಂಡಿರುವಾಗ, ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ, ಅವರು ಅದರಿಂದ ಸಂಭ್ರಮಪಟ್ಟು, ಎಂದಿಗೂ ಎಚ್ಚರಗೊಳ್ಳದೆ, ದೀರ್ಘ ನಿದ್ರೆ ಮಾಡುವಂತೆ ತಲೆಗೇರುವತನಕ ಕುಡಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 51:40 “ಕುರಿ, ಟಗರು, ಹೋತಗಳ ಹಾಗೆ ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. ಇದು ಯೆಹೋವನಾದ ನನ್ನ ನುಡಿ.
JER 51:41 “ಶೇಷಕ್ ಹೇಗೆ ಶತ್ರುವಶವಾಗಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬಿಲೋನ್ ಜನಾಂಗಗಳೊಳಗೆ ಹೇಗೆ ಎಷ್ಟು ನಿರ್ಜನವಾಯಿತು!
JER 51:42 ಸಮುದ್ರವೇ ಬಾಬಿಲೋನಿನ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದೆ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
JER 51:43 ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.
JER 51:44 ಏಕೆಂದರೆ ನಾನು ಬಾಬಿಲೋನಿನಲ್ಲಿರುವ ಬೇಲ್‌ನನ್ನು ದಂಡಿಸಿ, ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ಕಕ್ಕಿಸುವೆನು. ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವುದಿಲ್ಲ. ಹೌದು, ಬಾಬಿಲೋನಿನ ಗೋಡೆ ಬೀಳುವುದು.
JER 51:45 “ನನ್ನ ಜನರೇ, ಅದರೊಳಗಿಂದ ಹೊರಡಿರಿ. ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ಯೆಹೋವ ದೇವರ ಕೋಪಕ್ಕೆ ತಪ್ಪಿಸಿರಿ.
JER 51:46 ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಗೆ ನೀವು ಭಯಪಡದ ಹಾಗೆ, ಒಂದು ವರ್ಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರ್ಷದಲ್ಲಿ ಇನ್ನೊಂದು ಸುದ್ದಿಯೂ ಬರುವುದು. ದೇಶದಲ್ಲಿ ಬಲಾತ್ಕಾರವಿರುವುದು, ಆಳುವವನು ಆಳುವವನಿಗೆ ವಿರೋಧವಾಗಿರುವನು.
JER 51:47 ಆದ್ದರಿಂದ ಇಗೋ, ದಿನಗಳು ಬರುವುವು. ಆಗ ನಾನು ಬಾಬಿಲೋನಿನ ವಿಗ್ರಹಗಳಿಗೆ ದಂಡಿಸುವೆನು. ಆದರೆ ದೇಶವೆಲ್ಲಾ ನಾಚಿಕೆಪಡುವುದು. ಹತರಾದವರ ದೇಹಗಳು ಅದರ ಮಧ್ಯದಲ್ಲಿ ಅಲ್ಲಿ ಇಲ್ಲಿ ಬಿದ್ದಿವೆ.
JER 51:48 ಆಗ ಭೂಮಿ ಆಕಾಶಗಳೂ, ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶವನ್ನು ನೋಡಿ ಜಯಘೋಷ ಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 51:49 “ಬಾಬಿಲೋನ್‌ನಿಂದಾಗಿ ಭೂಮಿಯಲ್ಲೆಲ್ಲಾ ಹತರಾದಂತೆಯೇ, ಇಸ್ರಾಯೇಲಿನ ಹತ್ಯೆಯಿಂದಾಗಿ ಬಾಬಿಲೋನ್ ಬೀಳಬೇಕು.
JER 51:50 ಖಡ್ಗದಿಂದ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ. ದೂರದಲ್ಲಿ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.”
JER 51:51 “ನಾಚಿಕೆ ಪಡುತ್ತೇವೆ, ಏಕೆಂದರೆ ನಿಂದೆಯನ್ನು ಕೇಳಿದ್ದೇವೆ. ಅವಮಾನ ನಿಮ್ಮ ಮುಖಗಳನ್ನು ಮುಚ್ಚಿದೆ. ಏಕೆಂದರೆ ವಿದೇಶಿಗಳು ಯೆಹೋವ ದೇವರ ಆಲಯದ ಪರಿಶುದ್ಧ ಸ್ಥಳಗಳಲ್ಲಿ ಪ್ರವೇಶಿಸಿದ್ದಾರೆ.”
JER 51:52 “ಇಗೋ, ಅಂಥ ದಿನಗಳು ಬರುತ್ತವೆ,” ಎಂದು ಯೆಹೋವ ದೇವರು ಹೇಳುತ್ತಾರೆ, “ಅದು ನಾನು ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ಗಾಯಪಟ್ಟವರು ನರಳಾಡುವರು.
JER 51:53 ಬಾಬಿಲೋನ್ ಆಕಾಶಕ್ಕೆ ಏರಿದರೂ, ಅದರ ಬಲದ ಉನ್ನತಸ್ಥಾನವನ್ನು ಭದ್ರಮಾಡಿದರೂ, ಸೂರೆಮಾಡುವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
JER 51:54 “ಬಾಬಿಲೋನಿನಿಂದ ಕೂಗುವ ಶಬ್ದವು! ಕಸ್ದೀಯರ ದೇಶದಿಂದ ದೊಡ್ಡ ನಾಶದ ಶಬ್ದವೂ ಬರುವುದು.
JER 51:55 ಏಕೆಂದರೆ ಯೆಹೋವ ದೇವರು ಬಾಬಿಲೋನನ್ನು ಸೂರೆಮಾಡಿದ್ದಾರೆ; ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿದ್ದಾರೆ; ಅವಳ ತೆರೆಗಳು ನೀರಿನ ಹಾಗೆ ಘೋಷಿಸುವಾಗ, ಅವುಗಳ ಶಬ್ದದ ಧ್ವನಿಯು ಹೊರಟಿತು.
JER 51:56 ಏಕೆಂದರೆ ವಿನಾಶ ಮಾಡುವವನು ಅದರ ಮೇಲೆ ಅಂದರೆ ಬಾಬಿಲೋನಿನ ಮೇಲೆಯೇ ಬಂದಿದ್ದಾನೆ. ಅದರ ಪರಾಕ್ರಮಶಾಲಿಗಳು ಸೆರೆಯಾಗಿಬಿಟ್ಟಿದ್ದಾರೆ. ಅವಳ ಬಿಲ್ಲುಗಳು ಮುರಿದುಹೋಗಿವೆ. ಏಕೆಂದರೆ ಪ್ರತಿದಂಡನೆಗಳ ದೇವರಾದ ಯೆಹೋವ ದೇವರು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವರು.
JER 51:57 ಇದಲ್ಲದೆ ನಾನು ಅವಳ ಪ್ರಧಾನರನ್ನೂ, ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ, ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ. ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ.
JER 51:58 ಮಾತ್ರವಲ್ಲದೆ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: “ಬಾಬಿಲೋನಿನ ಅಗಲವಾದ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು. ಅವಳ ಎತ್ತರವಾದ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗುವುವು; ಜನರು ವ್ಯರ್ಥಕ್ಕಾಗಿಯೂ, ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸಪಡುವರು.”
JER 51:59 ಪ್ರವಾದಿಯಾದ ಯೆರೆಮೀಯನು ಮಹ್ಸೇಯನ ಮಗನಾದ ನೇರೀಯನ ಮಗ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಾಬಿಲೋನಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಅಂಗರಕ್ಷಕ ಸೇನೆಯ ನಾಯಕನಾಗಿದ್ದನು.
JER 51:60 ಹೀಗೆ ಯೆರೆಮೀಯನು ಬಾಬಿಲೋನಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬಿಲೋನಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಗ್ರಂಥದಲ್ಲಿ ಬರೆದನು.
JER 51:61 ಯೆರೆಮೀಯನು ಸೆರಾಯನಿಗೆ ಹೇಳಿದ್ದೇನೆಂದರೆ, “ನೀನು ಬಾಬಿಲೋನಿಗೆ ಬಂದು
JER 51:62 ಈ ವಾಕ್ಯಗಳನ್ನೆಲ್ಲಾ ಓದುತ್ತಿರುವಾಗ ಹೇಳತಕ್ಕದ್ದೇನೆಂದರೆ, ‘ಓ ಯೆಹೋವ ದೇವರೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯರಾಗಲಿ, ಮೃಗಗಳಾಗಲಿ, ನಿವಾಸಿಗಳಾಗಲಿ ಎಂದಿಗೂ ಇರದಂತೆ, ಅದು ಸದಾಕಾಲ ಹಾಳಾಗಿಯೇ ಉಳಿಯಲಿ,’ ಎಂದು ನೀವೇ ಮಾತನಾಡ್ದಿದೀರಿ.
JER 51:63 ನೀನು ಈ ಗ್ರಂಥವನ್ನು ಓದಿ ಮುಗಿಸಿದ ಮೇಲೆ, ಅದಕ್ಕೆ ಕಲ್ಲು ಕಟ್ಟಿ, ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ,
JER 51:64 ಹೀಗೆ ಹೇಳು, ‘ಈ ಪ್ರಕಾರ ಬಾಬಿಲೋನ್ ಮುಳುಗಿ ಹೋಗುವುದು. ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು. ಅವರು ಬೀಳುವರು.’ ” ಇಲ್ಲಿಯ ತನಕ ಯೆರೆಮೀಯನ ವಾಕ್ಯಗಳು.
JER 52:1 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು; ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್.
JER 52:2 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
JER 52:3 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
JER 52:4 ಅವನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು.
JER 52:5 ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆಹಾಕಿದನು.
JER 52:6 ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
JER 52:7 ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
JER 52:8 ಆಗ ಬಾಬಿಲೋನಿಯರ ದಂಡು ಅರಸನಾದ ಚಿದ್ಕೀಯನನ್ನು ಯೆರಿಕೋವಿನ ಬಯಲಿನಲ್ಲಿ ಹಿಂದಟ್ಟಿದರು; ಅಷ್ಟರಲ್ಲಿ ಅವನ ಸೈನಿಕರೆಲ್ಲ ಅವನನ್ನು ಬಿಟ್ಟು ಚದರಿಹೋಗಿದ್ದರು.
JER 52:9 ಅನಂತರ ಬಾಬಿಲೋನಿಯರು ಚಿದ್ಕೀಯನನ್ನು ಹಿಡಿದರು. ಅವನನ್ನು ಹಮಾತ್ ನಾಡಿನ ರಿಬ್ಲದಲ್ಲಿರುವ ತಮ್ಮ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
JER 52:10 ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಪದಾಧಿಕಾರಿಗಳನ್ನು ರಿಬ್ಲದಲ್ಲಿ ಕೊಲ್ಲಿಸಿದನು.
JER 52:11 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ, ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟನು.
JER 52:12 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದ ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಬಾಬಿಲೋನಿನ ಅರಸನ ಸೇವಕನೂ, ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದು,
JER 52:13 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.
JER 52:14 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು.
JER 52:15 ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವರಾದ ಕೆಲವರನ್ನೂ, ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು.
JER 52:16 ಆದರೆ ನೆಬೂಜರದಾನನು ಹೊಲಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಬೇಸಾಯ ಮಾಡುವದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು.
JER 52:17 ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಎಲ್ಲಾ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
JER 52:18 ಇದಲ್ಲದೆ ಅವರು ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಸಾಂಬ್ರಾಣಿಕಳಸ ಮತ್ತು ಸಮಸ್ತ ಕಂಚಿನ ಸಲಕರಣೆಗಳನ್ನೂ ತೆಗೆದುಕೊಂಡು ಹೋದರು.
JER 52:19 ಕಾವಲುಗಾರರ ಅಧಿಪತಿಯು ಬೋಗುಣಿಗಳನ್ನೂ, ಅಗ್ನಿ ಪಾತ್ರೆಗಳನ್ನೂ, ಬಟ್ಟಲುಗಳನ್ನೂ ಬೋಗುಣಿಗಳನ್ನೂ, ದೀಪಸ್ತಂಭಗಳನ್ನೂ, ಸೌಟುಗಳನ್ನೂ, ಪಾನಾರ್ಪಣೆಯ ಪಾತ್ರೆ ಬಂಗಾರ ಬೆಳ್ಳಿಗಳಿಂದ ಮಾಡಿದ ಎಲ್ಲವನ್ನೂ ತೆಗೆದುಕೊಂಡನು.
JER 52:20 ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ನೀರನ್ನು ಸಂಗ್ರಹಿಸಲು ಮಾಡಿದ ದೊಡ್ಡ ಕಂಚಿನ ಪಾತ್ರೆ, ಪೀಠಗಳನ್ನು ಹೊರುವ ಹನ್ನೆರಡು ಕಂಚಿನ ಹೋರಿಗಳು, ಇವುಗಳನ್ನು ಮಾಡುವುದಕ್ಕೆ ತೂಕ ಮಾಡಲಾರದಷ್ಟು ಕಂಚು ಹಿಡಿದಿತ್ತು.
JER 52:21 ಕಂಬಗಳಲ್ಲಿ ಮೊದಲನೆಯ ಕಂಬ ಎಂಟು ಮೀಟರ್ ಎತ್ತರವಿತ್ತು, ಅದರ ಸುತ್ತಳತೆ ಸುಮಾರು ಐದು ಮೀಟರ್.
JER 52:22 ಕಂಬದ ಮೇಲೆ ಎತ್ತರವಾದ ಒಂದು ಕಂಚಿನ ಕುಂಭವಿತ್ತು, ಆ ಕುಂಭದ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು. ಎರಡನೆಯ ಕಂಬವು ದಾಳಿಂಬೆ ಹಣ್ಣುಗಳಿಂದ ಹಾಗೆಯೇ ಅಲಂಕಾರವಾಗಿತ್ತು.
JER 52:23 ನಾಲ್ಕು ಪಕ್ಕಗಳಲ್ಲಿ ತೊಂಬತ್ತಾರು ದಾಳಿಂಬೆ ಹಣ್ಣುಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಿಗೆ ನೂರು ದಾಳಿಂಬೆ ಹಣ್ಣುಗಳಿದ್ದವು.
JER 52:24 ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು.
JER 52:25 ಇದಲ್ಲದೆ ಪಟ್ಟಣದೊಳಗಿಂದ ಸೈನಿಕರ ಮೇಲಿದ್ದ ಒಬ್ಬ ಅಧಿಕಾರಿಯನ್ನೂ, ಅರಸನ ಏಳುಮಂದಿ ಸಲಹೆಗಾರರನ್ನೂ, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಧಿಪತಿಯ ಲೇಖಕನನ್ನೂ, ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶದ ಜನರಲ್ಲಿ ಅರವತ್ತು ಮಂದಿಯನ್ನೂ ತೆಗೆದುಕೊಂಡನು.
JER 52:26 ಇವರನ್ನೆಲ್ಲಾ ಕಾವಲಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋಗಿ, ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.
JER 52:27 ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು. ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು.
JER 52:28 ನೆಬೂಕದ್ನೆಚ್ಚರನು ಸೆರೆಯಾಗಿ ಒಯ್ದ ಜನರ ಪಟ್ಟಿ ಹೀಗಿದೆ: ಅವನು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಸೆರೆಗೊಯ್ದದ್ದು 3,023 ಮಂದಿ ಯೆಹೂದ್ಯರನ್ನು;
JER 52:29 ನೆಬೂಕದ್ನೆಚ್ಚರನ ಹದಿನೆಂಟನೆಯ ವರ್ಷದಲ್ಲಿ 832 ಮಂದಿಯನ್ನು ಅವನು ಯೆರೂಸಲೇಮಿನಿಂದ ಸೆರೆಗೊಯ್ದನು;
JER 52:30 ನೆಬೂಕದ್ನೆಚ್ಚರನು ಇಪ್ಪತ್ತು ಮೂರನೆಯ ವರ್ಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು 745 ಮಂದಿ ಯೆಹೂದ್ಯರನ್ನು ಸೆರೆಗೊಯ್ದನು. ಹೀಗೆ ಸೆರೆಯಾದವರ ಮೊತ್ತ 4,600 ಮಂದಿ.
JER 52:31 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿವಸದಲ್ಲಿ ಆದದ್ದೇನೆಂದರೆ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು.
JER 52:32 ಇದಲ್ಲದೆ ಅವನ ಸಂಗಡ ಪ್ರೀತಿಯಿಂದ ಮಾತನಾಡಿ, ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸರಿಗಿಂತ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು.
JER 52:33 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು.
JER 52:34 ಅವನ ಜೀವಿತ ಕಾಲವೆಲ್ಲಾ ಸಾಯುವ ತನಕ, ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.
LAM 1:1 ಜನಭರಿತವಾಗಿದ್ದ ನಗರಿಯು ಹೇಗೆ ಬರಿದಾಗಿ ಹೋಗಿದೆ! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ, ಈಗ ಹೇಗೆ ವಿಧವೆಯಾಗಿದ್ದಾಳೆ! ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ, ಹೇಗೆ ಈಗ ದಾಸಿಯಂತಾಗಿದ್ದಾಳೆ!
LAM 1:2 ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ, ಆಕೆಯ ಕಣ್ಣೀರು, ಆಕೆಯ ಕೆನ್ನೆಗಳ ಮೇಲಿದೆ. ಆಕೆಯ ಎಲ್ಲಾ ಪ್ರಿಯರಲ್ಲಿ, ಆಕೆಯನ್ನು ಸಂತೈಸುವವರು ಒಬ್ಬರೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ, ಆಕೆಗೆ ವಂಚನೆಮಾಡಿ, ಆಕೆಗೆ ಶತ್ರುಗಳಾದರು.
LAM 1:3 ಯೆಹೂದವೆಂಬಾಕೆಯು ಸಂಕಟದ ನಿಮಿತ್ತವೂ, ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋದಳು. ಆಕೆಯು ಬೇರೆ ಜನಾಂಗಗಳೊಳಗೆ ವಾಸಮಾಡುವವಳಾಗಿ, ವಿಶ್ರಾಂತಿಯನ್ನು ಕಾಣಳು. ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು.
LAM 1:4 ಚೀಯೋನಿನ ಮಾರ್ಗಗಳು ದುಃಖಿಸುತ್ತವೆ. ಏಕೆಂದರೆ ಆಕೆಯ ನಿರ್ಧರಿತ ಹಬ್ಬಗಳಿಗೆ ಯಾರೂ ಬರಲಿಲ್ಲ. ಆಕೆಯ ಎಲ್ಲಾ ಬಾಗಿಲುಗಳು ಹಾಳು ಬಿದ್ದಿವೆ. ಆಕೆಯ ಯಾಜಕರು ನರಳುತ್ತಾರೆ. ಆಕೆಯ ಕನ್ಯೆಯರು ದುಃಖಿಸುತ್ತಾರೆ. ಆಕೆಯು ಕಹಿ ವೇದನೆಯಲ್ಲಿದ್ದಾಳೆ.
LAM 1:5 ಆಕೆಯ ವೈರಿಗಳು ಆಕೆಯ ಯಜಮಾನರಾಗಿದ್ದಾರೆ. ಆಕೆಯ ಶತ್ರುಗಳು ನೆಮ್ಮದಿಯಿಂದ ಇದ್ದಾರೆ. ಏಕೆಂದರೆ ಆಕೆಯ ಅನೇಕ ಪಾಪಗಳ ನಿಮಿತ್ತ ಯೆಹೋವ ದೇವರು ಆಕೆಯನ್ನು ಸಂಕಟಪಡಿಸಿದ್ದಾರೆ. ಆಕೆಯ ಮಕ್ಕಳು ಶತ್ರುವಿನ ಮುಂದೆ ಸೆರೆಗೆ ಹೋಗಿದ್ದಾರೆ.
LAM 1:6 ಚೀಯೋನ್ ಪುತ್ರಿಯ ಎಲ್ಲಾ ವೈಭವವು ಅವಳನ್ನು ಬಿಟ್ಟುಹೋಯಿತು. ಅವಳ ಪ್ರಧಾನರು ಹುಲ್ಲುಗಾವಲು ಕಾಣದ ಜಿಂಕೆಗಳ ಹಾಗಾದರು, ಅವರು ಹಿಂದಟ್ಟುವವನ ಮುಂದೆ ತ್ರಾಣವಿಲ್ಲದವರ ಹಾಗೆ ಓಡಿಹೋದರು.
LAM 1:7 ಯೆರೂಸಲೇಮು ಕಷ್ಟದ ಮತ್ತು ಸಂಕಟದ ದಿನಗಳಲ್ಲಿ ಪೂರ್ವದಿನಗಳಲ್ಲಿ ತನಗಿದ್ದ ಸಂಪತ್ತೆಲ್ಲವನ್ನು ಜ್ಞಾಪಕ ಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ, ಅವಳಿಗೆ ಯಾರೂ ಸಹಾಯ ಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ನಾಶನದ ವಿಷಯವಾಗಿ ಅಪಹಾಸ್ಯ ಮಾಡಿದರು.
LAM 1:8 ಯೆರೂಸಲೇಮು ಘೋರ ಪಾಪಮಾಡಿದೆ. ಆದ್ದರಿಂದ ಅವಳು ಅಶುದ್ಧಳಾಗಿದ್ದಾಳೆ. ಅವಳನ್ನು ಸನ್ಮಾನಿಸಿದವರೆಲ್ಲರೂ, ಅವಳನ್ನು ಹೀನೈಸುತ್ತಾರೆ. ಏಕೆಂದರೆ ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ. ಹೌದು, ಅವಳು ನರಳುತ್ತಾ ಹಿಂದಕ್ಕೆ ತಿರುಗುತ್ತಾಳೆ.
LAM 1:9 ಅವಳ ಅಶುದ್ಧವು ಅವಳ ನೆರಿಗೆಗೆ ಅಂಟಿಕೊಂಡಿದೆ. ಅವಳು ತನ್ನ ಭವಿಷ್ಯವನ್ನು ಜ್ಞಾಪಕಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅವಳು ಭಯಂಕರವಾಗಿ ಇಳಿದು ಬಂದಳು. ಅವಳನ್ನು ಆದರಿಸುವವರು ಯಾರೂ ಇಲ್ಲ. “ಓ ಯೆಹೋವ ದೇವರೇ, ನನ್ನ ಸಂಕಟವನ್ನು ನೋಡಿರಿ, ಶತ್ರುವು ಜಯಿಸಿದ್ದಾನೆ.”
LAM 1:10 ವೈರಿಯು ಆಕೆಯ ಎಲ್ಲಾ ಬೊಕ್ಕಸಗಳ ಮೇಲೆ ತನ್ನ ಕೈಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರಬಾರದೆಂದು ನೀನು ಆಜ್ಞಾಪಿಸಿದ ಇತರ ಜನಾಂಗಗಳು, ತನ್ನ ಪರಿಶುದ್ಧ ಸ್ಥಳದಲ್ಲಿ ಸೇರುವುದನ್ನು ನೋಡಿದ್ದಾಳೆ.
LAM 1:11 ಅವಳ ಜನರೆಲ್ಲರು ನರಳಾಡುತ್ತಾರೆ. ಅವರು ರೊಟ್ಟಿ ಹುಡುಕುತ್ತಾರೆ. ಅವರು ಪ್ರಾಣವನ್ನು ಉಳಿಸಿಕೊಳ್ಳಲು, ಅವರು ಆಹಾರಕ್ಕಾಗಿ ತಮ್ಮ ಬೊಕ್ಕಸಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ “ಯೆಹೋವ ದೇವರೇ, ನೋಡು, ಲಕ್ಷಿಸಿ; ಏಕೆಂದರೆ ನಾನು ಭ್ರಷ್ಠಳಾದೆನು.”
LAM 1:12 ಹಾದು ಹೋಗುವವರೇ, ಇದು ನಿಮಗೆ ಏನೂ ಇಲ್ಲವೋ? ಸುತ್ತಲೂ ದೃಷ್ಟಿಸಿ ನೋಡಿರಿ. ಯೆಹೋವ ದೇವರ ಉಗ್ರಕೋಪದ ದಿನದಲ್ಲಿ ನನ್ನನ್ನು ಸಂಕಟ ಪಡಿಸಿದ ಇಂಥಾ ದುಃಖವು, ಯಾರಿಗಾದರೂ ಉಂಟೋ ನೋಡಿರಿ.
LAM 1:13 ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿದ್ದಾನೆ. ಆತನು ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ, ಆತನು ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾರೆ. ಆತನು ನನ್ನನ್ನು ದಿನವೆಲ್ಲಾ ಹಾಳಾಗಿಯೂ, ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.
LAM 1:14 ನನ್ನ ಪಾಪಗಳು ನನಗೆ ನೊಗವಾಗಿ, ನನ್ನ ಕುತ್ತಿಗೆಯ ಮೇಲೆ ಅವು ಬಂದಿವೆ. ಕರ್ತದೇವರು ನನ್ನ ಶಕ್ತಿಯನ್ನು ಕುಂದಿಸಿದ್ದಾರೆ. ಯೆಹೋವ ದೇವರು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ, ಅವರನ್ನು ನಾನು ಎದುರಿಸಲಾರದಂತೆ ಮಾಡಿದ್ದಾರೆ.
LAM 1:15 ಕರ್ತದೇವರು ನನ್ನ ಶೂರರನ್ನೆಲ್ಲಾ ತಿರಸ್ಕರಿಸಿದ್ದಾರೆ. ಅವರು ನನಗೆ ವಿರುದ್ಧ ಸೈನ್ಯವನ್ನು ಬರಮಾಡಿ, ನನ್ನ ಯುವಕರನ್ನು ಜಜ್ಜಿದ್ದಾರೆ. ಕರ್ತದೇವರು ಯೆಹೂದದ ಕನ್ಯೆಯನ್ನು ದ್ರಾಕ್ಷಿಯ ತೊಟ್ಟಿಯಂತೆ ತುಳಿದಿದ್ದಾರೆ.
LAM 1:16 ಇವುಗಳ ನಿಮಿತ್ತ ನಾನು ಅಳುತ್ತೇನೆ. ನನ್ನ ಕಣ್ಣೀರು ಕಣ್ಣಿನಿಂದ ತುಂಬಿ ಹರಿಯುತ್ತದೆ. ಏಕೆಂದರೆ ನನ್ನನ್ನು ಆದರಿಸುವವರೂ, ನನ್ನ ಪ್ರಾಣವನ್ನು ಬದುಕಿಸುವ ಆದರಿಕರೂ ನನ್ನಿಂದ ದೂರವಾಗಿದ್ದಾರೆ. ನನ್ನ ಮಕ್ಕಳು ಹಾಳಾಗಿದ್ದಾರೆ. ಏಕೆಂದರೆ ನನ್ನ ಶತ್ರುವು ಜಯಿಸಿದ್ದಾನೆ.
LAM 1:17 ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ. ಅವಳನ್ನು ಆದರಿಸುವವನು ಒಬ್ಬನೂ ಇಲ್ಲ. ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ. ಯೆರೂಸಲೇಮ್ ಅವರ ಮಧ್ಯದಲ್ಲಿ ಅಶುದ್ಧ ವಸ್ತುವಿನಂತಿದೆ.
LAM 1:18 ಯೆಹೋವ ದೇವರು ನೀತಿವಂತನು. ಏಕೆಂದರೆ ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದೇನೆ. ಎಲ್ಲಾ ಜನರೇ ಕೇಳಿರಿ, ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ನನ್ನ ದುಃಖವನ್ನು ನೋಡಿರಿ. ನನ್ನ ಕನ್ಯೆಯರೂ, ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
LAM 1:19 ನಾನು ನನ್ನ ಪ್ರಿಯರನ್ನು ಕರೆದೆನು. ಆದರೆ ಅವರು ನನ್ನನ್ನು ಮೋಸಗೊಳಿಸಿದರು. ನನ್ನ ಯಾಜಕರು, ನನ್ನ ಹಿರಿಯರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ರೊಟ್ಟಿಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
LAM 1:20 ಯೆಹೋವ ದೇವರೇ ನೋಡು, ಏಕೆಂದರೆ ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಆತ್ಮವು ಕಳವಳಗೊಂಡಿದೆ. ನನ್ನ ಹೃದಯವು ನನ್ನೊಂದಿಗೆ ತಿರುಗಿಕೊಂಡಿದೆ. ಏಕೆಂದರೆ ನಾನು ಘೋರವಾಗಿ ಬಿದ್ದಿದ್ದೇನೆ. ಹೊರಗೆ ಖಡ್ಗದಿಂದ ಸಂಹಾರ, ಮನೆಯೊಳಗೆ ಮರಣ.
LAM 1:21 ನಾನು ನರಳಾಡುವುದನ್ನು ಅವರು ಕೇಳಿದರೂ, ನನ್ನನ್ನು ಆದರಿಸಲು ಅಲ್ಲಿರಲಿಲ್ಲ. ನನ್ನ ಎಲ್ಲಾ ಶತ್ರುಗಳು ನನ್ನ ಕಷ್ಟದ ವಿಷಯವನ್ನು ಕೇಳಿದರು. ನೀವು ಹಾಗೆ ಮಾಡಿದಿರೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು, ಅವರು ನನ್ನ ಹಾಗೆಯೇ ಆಗುವರು.
LAM 1:22 ಅವರ ಎಲ್ಲಾ ಕೆಟ್ಟತನವು ನಿನ್ನ ಮುಂದೆ ಇರಲಿ. ನನ್ನ ಎಲ್ಲಾ ದ್ರೋಹಗಳ ನಿಮಿತ್ತ, ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು. ಏಕೆಂದರೆ ನನ್ನ ನರಳಾಟವು ಅನೇಕವಾಗಿವೆ. ನನ್ನ ಹೃದಯವು ಮೂರ್ಛೆಗೊಂಡಿದೆ.
LAM 2:1 ಕರ್ತದೇವರು ಹೇಗೆ ತಮ್ಮ ಕೋಪದ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದರು. ತನ್ನ ಕೋಪದ ದಿನದಲ್ಲಿ, ತನ್ನ ಪಾದಪೀಠವನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ.
LAM 2:2 ಕರ್ತದೇವರು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾರೆ. ಯೆಹೂದದ ಪುತ್ರಿಯ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿ ಹಾಕಿದ್ದಾರೆ. ಅವರು ಅವುಗಳನ್ನು ನೆಲಸಮ ಮಾಡಿದ್ದಾರೆ. ಅವರು ಆಕೆಯ ರಾಜ್ಯವನ್ನೂ, ಪ್ರಭುಗಳನ್ನೂ ಅಗೌರವಿಸಿ ನೆಲಕ್ಕೆ ದಬ್ಬಿದ್ದಾರೆ.
LAM 2:3 ಅವರು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಮುರಿದು ಹಾಕಿದ್ದಾರೆ. ಅವರು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾರೆ. ತನ್ನ ಸುತ್ತಲೂ ಇರುವವರನ್ನು ದಹಿಸುವ ಬೆಂಕಿಯಂತೆ, ಅವರು ಯಾಕೋಬನಿಗೆ ವಿರುದ್ಧವಾಗಿ ದಹಿಸಿಬಿಟ್ಟಿದ್ದಾರೆ.
LAM 2:4 ಅವರು ಶತ್ರುವಿನ ಹಾಗೆಯೇ ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ. ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು, ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾರೆ. ಅವರು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಪುತ್ರಿಯ ಡೇರೆಯಲ್ಲಿ ಸುರಿದಿದ್ದಾರೆ.
LAM 2:5 ಕರ್ತದೇವರು ಶತ್ರುವಿನಂತೆ ಆಗಿ, ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. ಯೆಹೂದದ ದುಃಖವನ್ನೂ, ಪ್ರಲಾಪವನ್ನೂ ಹೆಚ್ಚಿಸಿದ್ದಾರೆ.
LAM 2:6 ಅವರು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾರೆ. ಅವರು ತನ್ನ ಸಭಾ ಸ್ಥಾನಗಳನ್ನು ನಾಶಮಾಡಿದ್ದಾರೆ. ಯೆಹೋವ ದೇವರು ಚೀಯೋನಿಗೆ ಪವಿತ್ರ ಹಬ್ಬಗಳನ್ನೂ, ಸಬ್ಬತ್ ದಿನಗಳನ್ನೂ ಮರೆತುಬಿಡುವಂತೆ ಮಾಡಿದ್ದಾರೆ. ತನ್ನ ಕೋಪದ ಉರಿಯಲ್ಲಿ ಅರಸನನ್ನೂ, ಯಾಜಕನನ್ನೂ ತುಚ್ಛೀಕರಿಸಿದ್ದಾರೆ.
LAM 2:7 ಕರ್ತದೇವರು ತನ್ನ ಬಲಿಪೀಠವನ್ನು ತಳ್ಳಿಬಿಟ್ಟಿದ್ದಾರೆ. ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯ ಪಡಿಸಿದ್ದಾನೆ. ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ. ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ, ಅವರು ಯೆಹೋವ ದೇವರು ಆಲಯದಲ್ಲಿ ಶಬ್ದ ಮಾಡಿದ್ದಾರೆ.
LAM 2:8 ಯೆಹೋವ ದೇವರು ಚೀಯೋನಿನ ಗೋಡೆಯನ್ನು ನಾಶಮಾಡಬೇಕೆಂದು ಉದ್ದೇಶಿಸಿದ್ದಾರೆ. ಅಳತೆಯ ಗೆರೆಯನ್ನು ಎಳೆದಿದ್ದಾರೆ. ತನ್ನ ಕೈಯನ್ನು ಕೆಡಿಸುವುದರಿಂದ ಹಿಂದೆಗೆಯಲಿಲ್ಲ. ಆದ್ದರಿಂದ ಕಲ್ಲಿನ ಪ್ರಾಕಾರವನ್ನು ಮತ್ತು ಗೋಡೆಯನ್ನು ಗೋಳಾಡುವಂತೆ ಆತನು ಮಾಡಿದ್ದಾನೆ. ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ.
LAM 2:9 ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ. ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಅವಳ ಪ್ರಭುಗಳು ಇತರ ಜನಾಂಗಗಳ ಮಧ್ಯೆ ಇರುವರು. ಇನ್ನು ದೈವನಿಯಮವು ನಿಂತುಹೋಗಿವೆ. ಆಕೆಯ ಪ್ರವಾದಿಗಳು ಸಹ ಯೆಹೋವ ದೇವರಿಂದ ದರ್ಶನವನ್ನು ಕಂಡುಕೊಳ್ಳುವುದಿಲ್ಲ.
LAM 2:10 ಚೀಯೋನಿನ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಶಬ್ದವಾಗಿದ್ದಾರೆ. ಅವರು ತಮ್ಮ ತಲೆಗಳ ಮೇಲೆ ಧೂಳು ಹಾಕಿಕೊಂಡಿದ್ದಾರೆ. ಅವರು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ. ಯೆರೂಸಲೇಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬಗ್ಗಿಸಿಕೊಂಡಿದ್ದಾರೆ.
LAM 2:11 ನನ್ನ ಕಣ್ಣುಗಳು ಕಣ್ಣೀರಿನಿಂದ ಕುಂದಿ ಹೋಗುತ್ತವೆ. ನನ್ನ ಆತ್ಮವು ಕಳವಳಗೊಂಡಿದೆ. ನನ್ನ ಹೃದಯವು ನೆಲದ ಮೇಲೆ ಹರಡಿದೆ. ಏಕೆಂದರೆ ನನ್ನ ಜನರು ನಾಶವಾಗಿದ್ದಾರೆ. ಮಕ್ಕಳೂ ಶಿಶುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.
LAM 2:12 ಅವರು ನಗರದ ಬೀದಿಗಳಲ್ಲಿ ಗಾಯಪಟ್ಟವರ ಹಾಗೆ ಮೂರ್ಛೆ ಹೋದಾಗ, ತಮ್ಮ ತಾಯಂದಿರ ಎದೆಯಲ್ಲಿ ಪ್ರಾಣ ಸುರಿದಾಗ, “ತಿನ್ನಲಿಕ್ಕೆ ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ?” ಎಂದು ತಮ್ಮ ತಾಯಂದಿರಿಗೆ ಕೇಳುತ್ತಾರೆ.
LAM 2:13 ಯೆರೂಸಲೇಮಿನ ಪುತ್ರಿಯೇ, ನಾನು ಯಾವುದನ್ನು ನಿನಗೆ ಸಾಕ್ಷಿಯನ್ನಾಗಿಡಲಿ? ಯಾವುದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಕನ್ಯೆಯೇ, ನಿನ್ನನ್ನು ಆದರಿಸುವವರು ಯಾರು?
LAM 2:14 ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮತ್ತು ಮೂರ್ಖತನದ ದರ್ಶನಗಳನ್ನು ನೋಡಿದ್ದಾರೆ. ಅವರು ನಿನ್ನ ಬಂಧನವನ್ನು ನೀಗಿಸುವುದಕ್ಕಾಗಿ ನಿನ್ನ ಪಾಪವನ್ನು ಬಯಲಿಗೆ ತರಲಿಲ್ಲ. ಆದರೆ ನಿನಗಾಗಿ ಸುಳ್ಳಿನ ಪ್ರವಾದನೆಗಳನ್ನು ಕೊಟ್ಟು ಗಡಿಪಾರು ಮಾಡುವುದಕ್ಕೆ ಕಾರಣರಾಗಿದ್ದಾರೆ.
LAM 2:15 ದಾರಿಯಲ್ಲಿ ಹೋಗುವವರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ. ಅವರು ಯೆರೂಸಲೇಮಿನ ಪುತ್ರಿಯ ವಿಷಯದಲ್ಲಿ ಸಿಳ್ಳುಹಾಕಿ, ತಲೆಯಾಡಿಸಿ ಆ ಮನುಷ್ಯರು ಕರೆಯುತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ, ಸರ್ವಭೂಮಿಯ ಸಂತೋಷವೂ ಆಗಿರುವ ನಗರಿಯು ಇದೆಯೋ?
LAM 2:16 ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿತೆರೆದಿದ್ದಾರೆ. “ನಾವು ಆಕೆಯನ್ನು ನುಂಗಿಬಿಟ್ಟೆವು. ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ. ಅದನ್ನು ನಾವು ಕಣ್ಣಾರೆ ಕಂಡಿದ್ದೇವೆ,” ಎಂದು ಅವರು ಕೊಚ್ಚಿಕೊಳ್ಳುತ್ತಾರೆ.
LAM 2:17 ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. ಅವರು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. ಅವರು ಕೆಡವಿ ಕನಿಕರಿಸಲಿಲ್ಲ. ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ.
LAM 2:18 ಅವರ ಹೃದಯವು ಕರ್ತದೇವರ ಕಡೆಗೆ ಕೂಗಿ, ಚೀಯೋನಿನ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನಿನಗೆ ವಿಶ್ರಾಂತಿ ಬೇಡ, ನಿನ್ನ ಕಣ್ಣ ರೆಪ್ಪೆಯನ್ನು ಮುಚ್ಚಬೇಡ.
LAM 2:19 ಎದ್ದೇಳು, ರಾತ್ರಿಯಲ್ಲಿ ಕೂಗು. ನಿನ್ನ ಹೃದಯವನ್ನು ಕರ್ತದೇವರ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ ನೀರಿನಂತೆ ಹೊಯ್ದುಬಿಡಿರಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಏಕೆಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ.
LAM 2:20 ಯೆಹೋವ ದೇವರೇ, ಕಟಾಕ್ಷಿಸಿ: ನೀವು ಇದನ್ನು ಯಾರಿಗೆ ಮಾಡಿದಿರೋ ಯೋಚಿಸಿರಿ. ಸ್ತ್ರೀಯರು ತಮ್ಮ ಫಲವಾದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಮತ್ತು ಪ್ರವಾದಿಯು ಕರ್ತದೇವರ ಪರಿಶುದ್ಧ ಸ್ಥಳದಲ್ಲಿ ಹತರಾಗಬೇಕೋ?
LAM 2:21 ಯುವಕರು ಮತ್ತು ವೃದ್ಧರು ಬೀದಿಗಳ ನೆಲದ ಮೇಲೆ ಮಲಗಿದ್ದಾರೆ. ನನ್ನ ಯುವಕರು, ಯುವತಿಯರು ಖಡ್ಗದಿಂದ ಹತರಾಗಿದ್ದಾರೆ. ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿರಿ, ಕೊಂದುಹಾಕಿದಿರಿ, ಕನಿಕರಿಸಲಿಲ್ಲ.
LAM 2:22 ಹಬ್ಬದ ದಿನಕ್ಕೆ ಕರೆಯುವಂತೆಯೇ ನನ್ನ ವಿರುದ್ಧವಾಗಿ ಪ್ರತಿಯೊಂದು ದಿಕ್ಕಿನಲ್ಲಿಯ ವಿರೋಧಿಗಳನ್ನು ಕರೆದಿದ್ದೀರಿ. ಯೆಹೋವ ದೇವರ ಕೋಪದ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಾರರು, ಉಳಿದುಕೊಳ್ಳಲಾರರು. ನಾನು ಬೆಳೆಸಿ ಸಾಕಿದವರನ್ನು ವೈರಿಯು ನಾಶಮಾಡಿದ್ದಾನೆ.
LAM 3:1 ಯೆಹೋವ ದೇವರ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
LAM 3:2 ಅವರು ನನ್ನನ್ನು ಕರೆತಂದು ನಡೆಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.
LAM 3:3 ನಿಶ್ಚಯವಾಗಿ ಅವರು ನನಗೆ ವಿರೋಧವಾಗಿ ತಿರುಗಿದ್ದಾರೆ. ಅವರು ದಿನವೆಲ್ಲಾ ತಮ್ಮ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾರೆ.
LAM 3:4 ನನ್ನ ಮಾಂಸ, ಚರ್ಮವನ್ನು ಆತನು ಹಳೆಯದನ್ನಾಗಿ ಮಾಡಿದ್ದಾರೆ. ಅವರು ನನ್ನ ಎಲುಬುಗಳನ್ನು ಮುರಿದಿದ್ದಾರೆ.
LAM 3:5 ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ.
LAM 3:6 ಅವರು ನನ್ನನ್ನು ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾರೆ.
LAM 3:7 ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ.
LAM 3:8 ನಾನು ಕರೆದು ಕೂಗಿದರೂ ಅವರು ನನ್ನ ಪ್ರಾರ್ಥನೆಯನ್ನು ಲಾಲಿಸುವುದಿಲ್ಲ.
LAM 3:9 ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
LAM 3:10 ಅವರು ನನಗೆ ಹೊಂಚು ಹಾಕುವ ಕರಡಿಯ ಹಾಗೆಯೂ, ಗುಪ್ತ ಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾರೆ.
LAM 3:11 ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, ನನ್ನನ್ನು ಹಾಳು ಮಾಡಿದ್ದಾರೆ.
LAM 3:12 ಅವರು ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ, ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾರೆ.
LAM 3:13 ಅವರು ತನ್ನ ಬತ್ತಳಿಕೆಯಲ್ಲಿನ ಬಾಣಗಳನ್ನು ನನ್ನ ಅಂತರಂಗಗಳಲ್ಲಿ ತೂರಿ ಹೋಗುವಹಾಗೆ ಮಾಡಿದ್ದಾರೆ.
LAM 3:14 ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ, ದಿನವೆಲ್ಲವೂ ಅವರ ಗೇಲಿಯ ಹಾಡಾಗಿಯೂ ಇದ್ದೇನೆ.
LAM 3:15 ಅವರು ನನ್ನನ್ನು ಕಹಿಯಿಂದ ತುಂಬಿಸಿ, ವಿಷ ಸಸ್ಯಗಳಿಂದ ನನ್ನನ್ನು ತಣಿಸಿದ್ದಾರೆ.
LAM 3:16 ಅವರು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು, ಅವರು ನನ್ನನ್ನು ಧೂಳಿನಲ್ಲಿ ತುಳಿದಿದ್ದಾರೆ.
LAM 3:17 ನನ್ನ ಪ್ರಾಣವನ್ನು ಸಮಾಧಾನದಿಂದ ದೂರ ಮಾಡಿದ್ದಾರೆ, ನಾನು ಸಮೃದ್ಧಿಯನ್ನು ಮರೆತುಬಿಟ್ಟೆನು.
LAM 3:18 “ಅಯ್ಯೋ, ನನ್ನ ಬಲವು ಮತ್ತು ನನ್ನ ನಿರೀಕ್ಷೆಯು ಯೆಹೋವ ದೇವರಿಂದ ನಾಶವಾದವು,” ಎಂದು ನಾನು ಹೇಳಿದೆನು.
LAM 3:19 ನನ್ನ ಸಂಕಟವನ್ನು, ನನ್ನ ಅಲೆದಾಡುವಿಕೆಯನ್ನು, ನನ್ನ ಕಹಿಯನ್ನು, ನನ್ನ ವಿಷತನವನ್ನು ನಾನು ಜ್ಞಾಪಕಮಾಡಿಕೊಂಡಿದ್ದೇನೆ.
LAM 3:20 ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
LAM 3:21 ಇದನ್ನು ನಾನು ನನ್ನ ಮನಸ್ಸಿಗೆ ತಂದುಕೊಳ್ಳುತ್ತೇನೆ. ಆದ್ದರಿಂದ ನನಗೆ ನಿರೀಕ್ಷೆ ಇದೆ.
LAM 3:22 ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.
LAM 3:23 ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು. ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
LAM 3:24 “ಯೆಹೋವ ದೇವರೇ ನನ್ನ ಪಾಲು, ಆದ್ದರಿಂದ ನಾನು ಅವರಿಗಾಗಿ ಕಾದಿರುತ್ತೇನೆ,” ಎಂದು ನಾನು ನನ್ನೊಳಗೆ ಎಂದುಕೊಳ್ಳುವೆನು.
LAM 3:25 ಆತನನ್ನು ನಿರೀಕ್ಷಿಸುವವರಿಗೂ, ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ.
LAM 3:26 ಮನುಷ್ಯನು ಮೌನವಾಗಿ ಯೆಹೋವ ದೇವರ ರಕ್ಷಣೆಗೆ ಕಾಯುವುದು ಒಳ್ಳೆಯದು.
LAM 3:27 ತನ್ನ ಯೌವನದಲ್ಲಿ ನೊಗವನ್ನು ಹೊಂದಿರುವುದು ಮಾನವನಿಗೆ ಒಳ್ಳೆಯದು.
LAM 3:28 ಅವನು ಒಂಟಿಯಾಗಿ ಕುಳಿತು ಮೌನವಾಗಿರಲಿ. ಏಕೆಂದರೆ ಯೆಹೋವ ದೇವರೇ ಅದನ್ನು ಅವನ ಮೇಲೆ ಹೊರಿಸಿದ್ದಾರೆ.
LAM 3:29 ಒಂದು ವೇಳೆ ನಿರೀಕ್ಷೆ ಇರಬಹುದೇನೋ ಎಂದು ಅವನು ತನ್ನ ಮುಖವನ್ನು ಧೂಳಿನಲ್ಲಿ ಇಟ್ಟುಕೊಳ್ಳಲಿ.
LAM 3:30 ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. ಅವನು ನಿಂದೆಯಿಂದಲೇ ತುಂಬಿರಲಿ.
LAM 3:31 ಏಕೆಂದರೆ ಕರ್ತದೇವರು ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.
LAM 3:32 ಆತನು ದುಃಖಪಡಿಸಿದರೂ, ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.
LAM 3:33 ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ, ದುಃಖವನ್ನೂ ಕೊಡುವುದಿಲ್ಲ.
LAM 3:34 ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವುದನ್ನೂ,
LAM 3:35 ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ನಿರಾಕರಿಸುವುದನ್ನೂ,
LAM 3:36 ಮನುಷ್ಯನನ್ನು ಅವನ ಜಗಳದಲ್ಲಿ ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ.
LAM 3:37 ಕರ್ತದೇವರು ಆಜ್ಞಾಪಿಸದೆ ಇರುವಾಗ, ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
LAM 3:38 ಮಹೋನ್ನತರ ಬಾಯಿಂದ ಕೇಡೂ, ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ?
LAM 3:39 ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗೊಣಗುಟ್ಟುವುದೇಕೆ?
LAM 3:40 ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ.
LAM 3:41 ನಮ್ಮ ಹೃದಯಗಳನ್ನು ನಮ್ಮ ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
LAM 3:42 ನಾವು ದ್ರೋಹಮಾಡಿದ್ದೇವೆ ಮತ್ತು ಎದುರು ಬಿದ್ದಿದ್ದೇವೆ, ನೀವು ಮನ್ನಿಸಲಿಲ್ಲ.
LAM 3:43 ಕೋಪದಲ್ಲಿ ನಮ್ಮನ್ನು ಮುಚ್ಚಿ ಹಿಂಸಿಸಿದ್ದೀರಿ. ಕನಿಕರಿಸದೆ ಕೊಂದು ಹಾಕಿರುವಿರಿ.
LAM 3:44 ನಮ್ಮ ಪ್ರಾರ್ಥನೆಯು ನಿನ್ನ ಸನ್ನಿಧಿಗೆ ಸೇರದಂತೆ ನಿನ್ನನ್ನು ಮೇಘದಿಂದ ಮುಚ್ಚಿಕೊಂಡಿದ್ದೀರಿ.
LAM 3:45 ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ, ಕಸವನ್ನಾಗಿಯೂ ಮಾಡಿದ್ದೀಯೆ.
LAM 3:46 ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
LAM 3:47 ಭಯವನ್ನೂ, ನಾಶವನ್ನೂ ನಾವು ಅನುಭವಿಸಿದ್ದೇವೆ.
LAM 3:48 ನನ್ನ ಜನರ ನಾಶದ ನಿಮಿತ್ತವಾಗಿ, ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದು ಹೋಗುತ್ತದೆ.
LAM 3:49 ಯೆಹೋವ ದೇವರು ಕಟಾಕ್ಷಿಸಿ, ಪರಲೋಕದಿಂದ ನೋಡುವ ತನಕ ನೇತ್ರವು ನಿರಂತರ ಕಣ್ಣೀರು ಸುರಿಸುತ್ತದೆ.
LAM 3:50 ವಿಶ್ರಮಿಸಿಕೊಳ್ಳುವುದೂ ಇಲ್ಲ.
LAM 3:51 ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ.
LAM 3:52 ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.
LAM 3:53 ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
LAM 3:54 ನನ್ನ ತಲೆಯ ಮೇಲೆ ನೀರು ಹರಿಯಿತು. ಆಗ ನಾನು ನಾಶವಾದೆನು ಅಂದುಕೊಂಡೆನು.
LAM 3:55 ಯೆಹೋವ ದೇವರೇ, ನಾನು ಆಳವಾದ ಕಾರಾಗೃಹದಿಂದ ನಿಮ್ಮ ಹೆಸರನ್ನು ಎತ್ತಿ ಬೇಡಿಕೊಂಡೆನು.
LAM 3:56 ನೀನು ನನ್ನ ಸ್ವರವನ್ನು ಕೇಳಿದ್ದೀ. “ನನ್ನ ಶ್ವಾಸಕ್ಕೂ, ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಬೇಡಿರಿ.”
LAM 3:57 ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸಮೀಪಕ್ಕೆ ಬಂದು, “ಭಯಪಡಬೇಡ,” ಎಂದು ಹೇಳಿದಿರಿ.
LAM 3:58 ಕರ್ತದೇವರೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡೆಸಿ, ನನ್ನ ಜೀವವನ್ನು ವಿಮೋಚಿಸಿದ್ದೀರಿ.
LAM 3:59 ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, ನೀವು ನನ್ನ ನ್ಯಾಯವನ್ನು ತೀರಿಸಿರಿ.
LAM 3:60 ನನಗೆ ವಿರುದ್ಧವಾಗಿ ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ.
LAM 3:61 ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,
LAM 3:62 ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿರಿ.
LAM 3:63 ಅವರನ್ನು ನೋಡು! ಕುಳಿತು ಅಥವಾ ನಿಂತಾಗ, ಅವರು ತಮ್ಮ ಹಾಡುಗಳಲ್ಲಿ ನನ್ನನ್ನು ಅಣಕಿಸುತ್ತಾರೆ.
LAM 3:64 ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡಿ.
LAM 3:65 ಅವರಿಗೆ ದುಃಖಕರವಾದ ಹೃದಯವನ್ನೂ, ನಿಮ್ಮ ಶಾಪವನ್ನೂ ಕೊಡಿ.
LAM 3:66 ಯೆಹೋವ ದೇವರೇ, ಆಕಾಶದ ಕೆಳಗಿನಿಂದ ಕೋಪದಿಂದ ಅವರನ್ನು ಹಿಂಸಿಸಿ ಹಾಳುಮಾಡಿರಿ.
LAM 4:1 ಬಂಗಾರವು ಹೇಗೆ ಮಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧಸ್ಥಳದ ಕಲ್ಲುಗಳೂ ಬೀದಿಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.
LAM 4:2 ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಪುತ್ರರು, ಈಗ ಕುಂಬಾರನ ಕೈಕೆಲಸದ ಮಣ್ಣಿನ ಮಡಕೆಯಂತೆ ತಿರಸ್ಕೃತರಾಗಿದ್ದಾರಲ್ಲಾ!
LAM 4:3 ನರಿಗಳೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಹಾಲು ಕುಡಿಸುತ್ತವೆ. ಆದರೆ ನನ್ನ ಜನರು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿದ್ದಾರೆ.
LAM 4:4 ಹಸುಳೆಗಳ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ. ಎಳೆಯ ಕೂಸುಗಳು ಅನ್ನ ಕೇಳುತ್ತವೆ. ಆದರೆ ಅವರಿಗೆ ಯಾರೂ ಅದನ್ನು ಕೊಡುವುದಿಲ್ಲ.
LAM 4:5 ರುಚಿಯಾದವುಗಳನ್ನು ಒಮ್ಮೆ ತಿಂದವರು ಬೀದಿಗಳಲ್ಲಿ ಹಾಳಾಗಿದ್ದಾರೆ. ಚಿಕ್ಕಂದಿನಿಂದಲೂ ಶ್ರೇಷ್ಠ ವಸ್ತ್ರವನ್ನು ತೊಡುತ್ತಿದ್ದವರು, ತಿಪ್ಪೆಗಳಲ್ಲಿ ಬಿದ್ದುಕೊಂಡಿದ್ದಾರೆ.
LAM 4:6 ನನ್ನ ಜನರ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು. ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲಾಯಿತು ಮತ್ತು ಅವಳಿಗೆ ಸಹಾಯಮಾಡಲು ಯಾವ ಕೈಗಳೂ ಇರಲಿಲ್ಲ.
LAM 4:7 ಅವಳ ರಾಜಕುಮಾರರು ಹಿಮಕ್ಕಿಂತಲೂ ಪ್ರಕಾಶಮಾನವಾಗಿದ್ದರು. ಹಾಲಿಗಿಂತಲೂ ಬೆಳ್ಳಗಿದ್ದರು. ಅವರು ಮೈಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು. ಅವರ ಹೊಳಪು ಇಂದ್ರನೀಲ ಮಣಿಯ ಹಾಗಿತ್ತು.
LAM 4:8 ಆದರೆ ಈಗ ಅವರ ರೂಪವು ಕಲ್ಲಿದ್ದಲಿನಂತೆ ಕಪ್ಪಾಗಿದೆ. ಬೀದಿಗಳಲ್ಲಿ ಅವರು ಯಾರೆಂಬುದು ತಿಳಿಯಲಿಲ್ಲ. ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ. ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
LAM 4:9 ಖಡ್ಗದಿಂದ ಹತರಾದವರು ಹಸಿವೆಯಿಂದ ಹತರಾದವರಿಗಿಂತಲೂ ಲೇಸು. ಏಕೆಂದರೆ, ಇವರು ಭೂಮಿಯ ಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದು, ಕ್ಷಯಿಸಿ ಹೋದರು.
LAM 4:10 ಕನಿಕರ ತುಂಬಿದ ಸ್ತ್ರೀಯರ ಕೈಗಳು ತಮ್ಮ ಸ್ವಂತ ಮಕ್ಕಳನ್ನೇ ಬೇಯಿಸಿದವು. ಇವರು ನನ್ನ ಜನರ ನಾಶದಲ್ಲಿ ಅವರಿಗೆ ಆಹಾರವಾದರು.
LAM 4:11 ಯೆಹೋವ ದೇವರು ತಮ್ಮ ರೋಷವನ್ನು ತೀರಿಸಿದ್ದಾರೆ. ಅವರು ತಮ್ಮ ಉಗ್ರವಾದ ಕೋಪವನ್ನು ಸುರಿದಿದ್ದಾರೆ. ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
LAM 4:12 ಭೂರಾಜರೂ, ವಿರೋಧಿಯೂ, ಶತ್ರುವೂ ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.
LAM 4:13 ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ, ಅವಳ ಯಾಜಕರ ಅಕ್ರಮಗಳಿಗೋಸ್ಕರವೂ ಹೀಗಾಯಿತು. ಏಕೆಂದರೆ ಇವರು ನೀತಿವಂತರ ರಕ್ತವನ್ನು ಅವರ ಮಧ್ಯದಲ್ಲಿ ಚೆಲ್ಲಿದ್ದರು.
LAM 4:14 ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು. ಅವರು ರಕ್ತದಿಂದ ತಮ್ಮನ್ನು ತಾವೇ ಕಲುಷಿತಗೊಳಿಸಿಕೊಂಡರು. ಆದ್ದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೇ ಹೋದರು.
LAM 4:15 ಅವರು ಜನರಿಗೆ, ನೀವು ದೂರ ಹೋಗಿರಿ, ನೀವು ಅಶುದ್ಧವಾಗಿದ್ದೀರಿ; ದೂರ ಹೋಗಿರಿ, ದೂರ ಹೋಗಿರಿ, ಮುಟ್ಟಬೇಡಿರಿ, ಎಂದು ಕೂಗಿಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರುವಾಗ, ಅವರು ಇನ್ನು ಮೇಲೆ ಅಲ್ಲಿ ವಾಸಮಾಡುವುದಿಲ್ಲ, ಎಂದು ಬೇರೆ ಜನಾಂಗಗಳೊಳಗೆ ಹೇಳಿದರು.
LAM 4:16 ಯೆಹೋವ ದೇವರ ಕೋಪವು ಅವರನ್ನು ಚದುರಿಸಿತು. ಅವರು ಇನ್ನು ಅವರನ್ನು ಲಕ್ಷಿಸುವುದಿಲ್ಲ. ಅವರು ಯಾಜಕರನ್ನು ಗೌರವಿಸಲಿಲ್ಲ. ಅವರು ಹಿರಿಯರಿಗೆ ದಯೆ ತೋರಿಸಲಿಲ್ಲ.
LAM 4:17 ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು. ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.
LAM 4:18 ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಶತ್ರುಗಳು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ. ನಮ್ಮ ಅಂತ್ಯವು ಸಮೀಪಿಸಿತು, ನಮ್ಮ ದಿನಗಳು ತೀರಿದವು. ಏಕೆಂದರೆ ನಮ್ಮ ಅಂತ್ಯವು ಬಂದಿತು.
LAM 4:19 ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರವಾಗಿದ್ದಾರೆ. ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ, ಅರಣ್ಯದಲ್ಲಿ ಹೊಂಚು ಹಾಕಿದರು.
LAM 4:20 ಯಾರ ವಿಷಯವಾಗಿ ನಾವು ಅವನ ನೆರಳಿನ ಕೆಳಗೆ ಬೇರೆ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿಕೊಂಡೆವೋ, ನಮ್ಮ ಮೂಗಿನ ಉಸಿರಾದ ಆ ಯೆಹೋವ ದೇವರ ಅಭಿಷಿಕ್ತನು ಅವರ ಬಲೆಗಳಲ್ಲಿ ಸಿಕ್ಕಿಕೊಂಡನು.
LAM 4:21 ಎದೋಮಿನ ಪುತ್ರಿಯೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು ಮತ್ತು ಸಂತೋಷಪಡು; ಆದರೆ ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವುದು. ನೀನು ಕುಡಿದು, ಬೆತ್ತಲೆಯಾಗಿರುವೆ.
LAM 4:22 ಚೀಯೋನ್ ಪುತ್ರಿಯೇ, ನಿನ್ನ ಅಕ್ರಮದ ಶಿಕ್ಷೆಯು ತೀರಿ ಹೋಯಿತು. ಅವರು ಇನ್ನು ಮೇಲೆ ನಿನ್ನ ಗಡಿಪಾರನ್ನು ಹೆಚ್ಚಿಸುವುದಿಲ್ಲ. ಎದೋಮಿನ ಪುತ್ರಿಯೇ, ಅವರು ನಿನ್ನ ಅಕ್ರಮವನ್ನು ವಿಚಾರಿಸುವನು. ಆತನು ನಿನ್ನ ಪಾಪಗಳನ್ನು ಬಹಿರಂಗಪಡಿಸುವರು.
LAM 5:1 ಯೆಹೋವ ದೇವರೇ, ನಮಗೆ ಏನು ಸಂಭವಿಸಿದೆ ಎಂದು ಜ್ಞಾಪಕಮಾಡಿಕೊಳ್ಳಿರಿ. ಪರಿಗಣಿಸಿ, ನಮ್ಮ ನಿಂದೆಯನ್ನು ನೋಡಿರಿ.
LAM 5:2 ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ, ನಮ್ಮ ಮನೆಗಳು ಪರರಿಗೂ ವಶವಾದವು.
LAM 5:3 ನಾವು ಅನಾಥರು, ತಂದೆ ಇಲ್ಲದವರು, ನಮ್ಮ ತಾಯಂದಿರು ವಿಧವೆಯರು.
LAM 5:4 ನಾವು ನಮ್ಮ ನೀರನ್ನು ಹಣಕೊಟ್ಟು ಕುಡಿಯಬೇಕಾಗಿದೆ. ನಮ್ಮ ಸೌದೆಯು ನಮಗೇ ಮಾರಲಾಗಿದೆ.
LAM 5:5 ನಮ್ಮನ್ನು ಹಿಂಬಾಲಿಸುವವರು ನಮ್ಮ ನೆರಳಿನಲ್ಲೇ ಇದ್ದಾರೆ; ನಾವು ದಣಿದಿದ್ದೇವೆ ಮತ್ತು ವಿಶ್ರಾಂತಿಯನ್ನು ಕಾಣುವುದಿಲ್ಲ.
LAM 5:6 ಸಾಕಷ್ಟು ರೊಟ್ಟಿಯನ್ನು ಪಡೆಯಲು ನಾವು ಈಜಿಪ್ಟ್ ಮತ್ತು ಅಸ್ಸೀರಿಯಕ್ಕೆ ಅಧೀನರಾಗಿದ್ದೇವೆ.
LAM 5:7 ನಮ್ಮ ತಂದೆಗಳು ಪಾಪಮಾಡಿ ಇಲ್ಲವಾದರು. ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
LAM 5:8 ಆಳುಗಳು ನಮ್ಮ ಮೇಲೆ ಆಳಿದ್ದಾರೆ. ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವುದಿಲ್ಲ.
LAM 5:9 ಅಡವಿಯ ಖಡ್ಗದ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
LAM 5:10 ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
LAM 5:11 ಅವರು ಚೀಯೋನಿನಲ್ಲಿ ಸ್ತ್ರೀಯರ ಮೇಲೆ ಮತ್ತು ಯೆಹೂದದ ನಗರಗಳಲ್ಲಿ ಕನ್ಯೆಯರ ದೌರ್ಜನ್ಯ ಮಾಡಲಾಗಿದೆ.
LAM 5:12 ರಾಜಕುಮಾರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ. ಹಿರಿಯರಿಗೆ ಗೌರವವಿಲ್ಲ.
LAM 5:13 ಅವರು ಯೌವನಸ್ಥರನ್ನು ಅರೆಯುವುದಕ್ಕೆ ತೆಗೆದುಕೊಂಡರು ಮತ್ತು ಹುಡುಗರು ಕಟ್ಟಿಗೆಯ ಕೆಳಗೆ ಬಿದ್ದರು.
LAM 5:14 ಪಟ್ಟಣದ ದ್ವಾರದಿಂದ ಹಿರಿಯರು ಹೋಗಿದ್ದಾರೆ. ಯುವಜನರು ತಮ್ಮ ಸಂಗೀತವನ್ನು ನಿಲ್ಲಿಸಿದ್ದಾರೆ.
LAM 5:15 ನಮ್ಮ ಹೃದಯಾನಂದವು ತೀರಿತು. ನಮ್ಮ ನರ್ತನವು ಶೋಕವಾಗಿ ಮಾರ್ಪಟ್ಟಿತು.
LAM 5:16 ಕಿರೀಟವು ನಮ್ಮ ತಲೆಯ ಮೇಲಿನಿಂದ ಬಿದ್ದುಹೋಯಿತು. ಅಯ್ಯೋ, ನಾವು ಪಾಪಮಾಡಿದ್ದೇವೆ.
LAM 5:17 ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ. ಏಕೆಂದರೆ ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
LAM 5:18 ಏಕೆಂದರೆ ಚೀಯೋನ್ ಪರ್ವತವು ಹಾಳಾಗಿರುವುದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡುವುವು.
LAM 5:19 ಯೆಹೋವ ದೇವರೇ, ನೀವು ಎಂದೆಂದಿಗೂ ಇರುತ್ತೀರಿ. ನಿಮ್ಮ ಸಿಂಹಾಸನವು ತಲತಲಾಂತರಗಳವರೆಗೂ ಇರುವುದು.
LAM 5:20 ನೀವು ನಮ್ಮನ್ನು ಯಾವಾಗಲೂ ಮರೆಯುವುದೇಕೆ? ಇಷ್ಟುಕಾಲ ನಮ್ಮನ್ನು ಮರೆತಿರುವುದೇಕೆ?
LAM 5:21 ಯೆಹೋವ ದೇವರೇ, ನಾವು ನಿಮ್ಮ ಕಡೆ ಹಿಂದಿರುಗುವಂತೆ, ನಮ್ಮನ್ನು ನಿಮ್ಮ ಕಡೆಗೆ ಪುನಃ ಸ್ಥಾಪಿಸಿಕೊಳ್ಳಿ. ನಮ್ಮ ದಿನಗಳನ್ನು ಹಿಂದಿನಂತೆಯೇ ನವೀಕರಿಸಿರಿ.
LAM 5:22 ಯೆಹೋವ ದೇವರೇ, ನೀವು ನಮ್ಮ ಮೇಲೆ ಮಿತಿಮೀರಿ ಸಿಟ್ಟುಗೊಂಡಿರುವಿರೋ? ನಮ್ಮನ್ನು ಸಂಪೂರ್ಣವಾಗಿ ಕೈಬಿಟ್ಟಿರುವಿರೋ?
EZE 1:1 ನಾನು ಸೆರೆಯವರ ಜೊತೆ ಕೆಬಾರ್ ನದಿಯ ಬಳಿಯಲ್ಲಿರುವಾಗ ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ, ಐದನೆಯ ದಿನದಲ್ಲಿ ಆಕಾಶ ತೆರೆಯಿತು. ನಾನು ದೇವರ ದರ್ಶನಗಳನ್ನು ಕಂಡೆನು.
EZE 1:2 ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಕೀನನ ಸೆರೆಯ ಐದನೆಯ ವರ್ಷದಲ್ಲಿ,
EZE 1:3 ಯೆಹೋವ ದೇವರ ವಾಕ್ಯವು ಬಾಬಿಲೋನಿಯರ ದೇಶದ ಕೆಬಾರ್ ನದಿಯ ಬಳಿಯಲ್ಲಿ, ಬೂಜಿಯ ಮಗ ಹಾಗೂ ಯಾಜಕ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು ಮತ್ತು ಅಲ್ಲಿ ಯೆಹೋವ ದೇವರ ಕೈ ಅವನ ಮೇಲಿತ್ತು.
EZE 1:4 ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ ಜ್ವಾಲೆಯ ಮಧ್ಯೆ ಹೊಳೆಯುವ ಲೋಹ ಬೆಳಗಿತು.
EZE 1:5 ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರಟಿತು. ಅವುಗಳಿಗೆ ಮನುಷ್ಯನ ರೂಪವಿತ್ತು.
EZE 1:6 ಪ್ರತಿಯೊಂದಕ್ಕೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು.
EZE 1:7 ಅವುಗಳ ಕಾಲುಗಳು ನೆಟ್ಟಗಿದ್ದು, ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು, ಕಂಚಿಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.
EZE 1:8 ಅವುಗಳ ರೆಕ್ಕೆಗಳ ಕೆಳಗೆ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು. ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು.
EZE 1:9 ಅವುಗಳ ರೆಕ್ಕೆಗಳು ಪರಸ್ಪರರ ರೆಕ್ಕೆಗಳನ್ನು ಸ್ಪರ್ಶಿಸುತ್ತಿದ್ದವು. ಪ್ರತಿಯೊಂದೂ ನೇರವಾಗಿ ಮುಂದೆ ಹೋಗುತ್ತಿದ್ದವು ಮತ್ತು ಅವರು ತಿರುಗದೆ ಮುಂದೆ ಸಾಗುತ್ತಿದ್ದರು.
EZE 1:10 ಅವುಗಳ ಮುಖಗಳು ಹೀಗಿದ್ದವು: ಪ್ರತಿಯೊಂದರ ಮುಂದಿನ ನಾಲ್ಕು ಮುಖಗಳು ಮನುಷ್ಯನ ಮುಖದಂತಿತ್ತು; ಬಲಗಡೆಯ ನಾಲ್ಕು ಮುಖಗಳು ಸಿಂಹದ ಮುಖದಂತಿತ್ತು; ಎಡಗಡೆಯ ನಾಲ್ಕು ಮುಖಗಳು ಹೋರಿಯ ಮುಖದಂತಿತ್ತು; ಹಿಂದಿನ ನಾಲ್ಕು ಮುಖಗಳು ಗರುಡಪಕ್ಷಿಯ ಮುಖದಂತಿತ್ತು.
EZE 1:11 ಅವುಗಳ ಮುಖಗಳು ಹೀಗಿದ್ದವು. ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಿಕೊಂಡಿದ್ದವು. ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು, ಒಂದಕ್ಕೊಂದು ಅಂಟಿಕೊಂಡಿದ್ದವು. ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು.
EZE 1:12 ಅವೆಲ್ಲವೂ ನೆಟ್ಟಗೆ ಮುಂದಕ್ಕೆ ಹೋದವು. ಅವುಗಳ ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಹೋದವು, ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.
EZE 1:13 ಆ ಜೀವಿಗಳ ಮಧ್ಯೆ ಅದ್ಭುತ ಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು. ಅದು ಆ ಜೀವಿಗಳ ನಡುವೆ ಓಲಾಡುತ್ತಿತ್ತು. ಆ ಉರಿ ತೇಜೋಮಯವಾಗಿತ್ತು. ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
EZE 1:14 ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾಡುತ್ತಾ ಇದ್ದವು.
EZE 1:15 ಆಗ ನಾನು ಆ ಜೀವಿಗಳನ್ನು ನೋಡಲಾಗಿ, ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖವುಳ್ಳದ್ದಾಗಿರುವುದನ್ನು ನಾನು ನೋಡಿದೆನು.
EZE 1:16 ಆ ಚಕ್ರಗಳ ಆಕಾರವೂ, ಅವುಗಳ ಕೆಲಸವೂ ಪೀತರತ್ನದ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ಮಾದರಿಯಾಗಿದ್ದವು. ಅವುಗಳ ಆಕಾರವೂ, ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು.
EZE 1:17 ಅವು ಚಲಿಸುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು ಮತ್ತು ಅವು ಹೋಗುವಾಗ ತಿರುಗಲಿಲ್ಲ.
EZE 1:18 ಅವುಗಳ ಚಕ್ರಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು. ಆ ನಾಲ್ಕು ಚಕ್ರಗಳ ಸುತ್ತಲೂ ಅನೇಕ ಕಣ್ಣುಗಳಿದ್ದವು.
EZE 1:19 ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು. ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಏಳುವಾಗ, ಚಕ್ರಗಳು ಮೇಲಕ್ಕೆ ಏಳುತ್ತಿದ್ದವು.
EZE 1:20 ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಅವುಗಳು ಹೋದವು. ಚಕ್ರಗಳು ಸಹ ಅವುಗಳಿಗೆದುರಾಗಿ ಮೇಲಕ್ಕೆ ಏಳುತ್ತಿದ್ದವು. ಏಕೆಂದರೆ ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು.
EZE 1:21 ಆ ಜೀವಿಗಳು ಮುಂದುವರಿಯುವಾಗ, ಚಕ್ರಗಳೂ ಮುಂದುವರಿಯುತ್ತಿದ್ದವು. ಅವು ನಿಂತು ಹೋಗುವಾಗ, ಇವೂ ನಿಂತು ಹೋಗುತ್ತಿದ್ದವು. ಅವು ನೆಲದಿಂದ ಮೇಲಕ್ಕೆ ಏಳುವಾಗ, ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು. ಏಕೆಂದರೆ ಆ ಜೀವಿಗಳ ಆತ್ಮ ಚಕ್ರಗಳಲ್ಲಿಯೂ ಇತ್ತು.
EZE 1:22 ಜೀವಿಯ ತಲೆಗಳ ಮೇಲೆ ಗಗನ ಮಂಡಲ ವಿಶಾಲ ರೂಪವು ವಜ್ರದಂತಿತ್ತು. ಮತ್ತು ಅದು ಅದ್ಭುತವಾಗಿತ್ತು.
EZE 1:23 ಆ ಗಗನ ಮಂಡಲದ ಕೆಳಗೆ ಆ ಜೀವಿಗಳ ರೆಕ್ಕೆಗಳು ಒಂದರ ಕಡೆಗೆ ಒಂದರಂತೆ ಚಾಚಿದವು. ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.
EZE 1:24 ಅವು ಚಲಿಸುವಾಗ, ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು. ಅದು ಜಲಪ್ರವಾಹದ ಶಬ್ದದಂತೆಯೂ, ಸರ್ವಶಕ್ತರ ಧ್ವನಿಯ ಹಾಗೆಯೂ, ಸೈನ್ಯದ ಶಬ್ದದ ಹಾಗೆಯೂ ಇತ್ತು. ಅವು ನಿಲ್ಲುವಾಗ ಅವುಗಳ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.
EZE 1:25 ಅವುಗಳು ನಿಂತು, ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ, ಅವುಗಳ ತಲೆಗಳ ಮೇಲಿರುವ ಗಗನ ಮಂಡಲದೊಳಗಿಂದ ಒಂದು ಶಬ್ದವಾಯಿತು.
EZE 1:26 ಅವುಗಳ ತಲೆಗಳ ಮೇಲಿರುವ ಗಗನ ಮಂಡಲದ ಮೇಲ್ಭಾಗದಲ್ಲಿ ನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.
EZE 1:27 ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಲೋಹವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆನು.
EZE 1:28 ಮಳೆ ಬೀಳುವ ದಿನದಲ್ಲಿ ಮೇಘದಲ್ಲಿ ಮಳೆಬಿಲ್ಲು ಹೇಗೆ ಕಾಣಿಸುವುದೋ ಹಾಗೆ ಅದರ ಸುತ್ತಲೂ ಆ ಪ್ರಕಾಶವು ಕಾಣಿಸಿತು. ಇದೇ ಯೆಹೋವ ದೇವರ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ಕಂಡಾಗ ನಾನು ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು ಮತ್ತು ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.
EZE 2:1 ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಎದ್ದು ನಿಲ್ಲು, ನಿನ್ನ ಸಂಗಡ ಮಾತನಾಡಬೇಕು.”
EZE 2:2 ಹೀಗೆ ಅವರು ನನ್ನ ಸಂಗಡ ಮಾತನಾಡುವಾಗ, ದೇವರಾತ್ಮರು ನನ್ನೊಳಗೆ ಪ್ರವೇಶಿಸಿ, ನನ್ನನ್ನು ನಿಂತುಕೊಳ್ಳುವಂತೆ ಮಾಡಿದರು. ಆಗ ಅವರು ನನ್ನೊಂದಿಗೆ ಮಾತನಾಡುವುದನ್ನು ಚೆನ್ನಾಗಿ ಕೇಳಿದೆನು.
EZE 2:3 ಅವರು, “ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿ ಬಿದ್ದಿರುವ ಮತ್ತು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ. ಅವರೂ, ಅವರ ಪಿತೃಗಳೂ ಇಂದಿನವರೆಗೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.
EZE 2:4 ಅವರು ಕಠಿಣ ಹೃದಯದವರು ಮತ್ತು ಹಠಮಾರಿ ಆಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ. ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಹೇಳಬೇಕು.
EZE 2:5 ಅವರು ಕೇಳಲಿ ಅಥವಾ ಕೇಳದೇ ಇರಲಿ, ಏಕೆಂದರೆ ಅವರು ತಿರುಗಿಬೀಳುವ ಜನರು, ಆದರೆ ತಮ್ಮೊಳಗೆ ಪ್ರವಾದಿ ಇರುವನೆಂದು ತಿಳಿದುಕೊಂಡರೆ ಸಾಕು.
EZE 2:6 ಮನುಷ್ಯಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ, ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು. ಅವರು ದ್ರೋಹಿ ವಂಶದವರು. ಅವರ ಬಿರುನುಡಿಗೆ ದಿಗಿಲು ಪಡಬೇಡ.
EZE 2:7 ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು.
EZE 2:8 ಆದರೆ ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವುದನ್ನು ಕೇಳು: ಆ ತಿರುಗಿಬೀಳುವ ಜನರ ಹಾಗೆ ನೀನೂ ತಿರುಗಿಬೀಳಬೇಡ. ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವುದನ್ನು ತಿನ್ನು,” ಎಂದರು.
EZE 2:9 ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು. ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು.
EZE 2:10 ಆ ಸುರುಳಿಯನ್ನು ನನ್ನೆದುರಿನಲ್ಲೇ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಪ್ರಲಾಪ, ಶೋಕ ಮತ್ತು ಶಾಪದ ಪದಗಳನ್ನು ಬರೆಯಲಾಗಿತ್ತು.
EZE 3:1 ಇದಾದ ಮೇಲೆ ದೇವರು ನನಗೆ, “ಮನುಷ್ಯಪುತ್ರನೇ, ನಿನಗೆ ಸಿಕ್ಕಿದ್ದ ಈ ಸುರುಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಜನರ ಸಂಗಡ ಮಾತನಾಡು,” ಎಂದರು.
EZE 3:2 ಆಗ ನಾನು ನನ್ನ ಬಾಯನ್ನು ತೆರೆದೆನು, ಅವರು ನನಗೆ ತಿನ್ನುವುದಕ್ಕೆ ಸುರುಳಿಯನ್ನು ಕೊಟ್ಟರು.
EZE 3:3 ಆಗ ಅವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು, ಹೊಟ್ಟೆಯನ್ನು ತುಂಬಿಸಿಕೋ,” ಎಂದರು. ಆಗ ನಾನು ಅದನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು.
EZE 3:4 ನನಗೆ ಅವರು, “ಮನುಷ್ಯಪುತ್ರನೇ, ಹೋಗು; ಇಸ್ರಾಯೇಲಿನ ಜನರ ಬಳಿಗೆ ಹೋಗಿ, ನನ್ನ ಮಾತುಗಳನ್ನು ಅವರಿಗೆ ಹೇಳು.
EZE 3:5 ನಿನ್ನನ್ನು ಅಸ್ಪಷ್ಟ ಭಾಷೆಯ ಮತ್ತು ಅನ್ಯಭಾಷೆಯ ಜನರ ಬಳಿಗೆ ಕಳುಹಿಸದೆ, ಇಸ್ರಾಯೇಲಿನ ಜನರ ಬಳಿಗೆ ಕಳುಹಿಸುತ್ತಿದ್ದೇನೆ.
EZE 3:6 ನಾನು ನಿನ್ನನ್ನು ಅಸ್ಪಷ್ಟ ಮಾತು ಮತ್ತು ಅನ್ಯಭಾಷೆ ಹೊಂದಿರುವ ಅನೇಕ ಜನರ ಬಳಿ ಕಳುಹಿಸುತ್ತಿಲ್ಲ. ಏಕೆಂದರೆ ಅವರ ಪದಗಳು ನಿಮಗೆ ಅರ್ಥವಾಗುವುದಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ, ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು.
EZE 3:7 ಆದರೆ ಇಸ್ರಾಯೇಲಿನ ಜನರೋ ನಿನ್ನ ಮಾತನ್ನು ಕೇಳಲು ಸಿದ್ಧರಿಲ್ಲ. ಏಕೆಂದರೆ ಅವರು ನನ್ನ ಮಾತನ್ನು ಕೇಳಲು ಸಿದ್ಧರಿಲ್ಲ. ಅವರೆಲ್ಲರು ಗರ್ವಿಗಳು ಹಾಗೂ ಹಟಮಾರಿಗಳು.
EZE 3:8 ಆದರೆ ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ. ಅವರ ಹಟಮಾರಿತನಕ್ಕೆ ಪ್ರತಿಯಾಗಿ, ನಿನ್ನನ್ನು ಹಟವಾದಿಯನ್ನಾಗಿಸುವೆನು.
EZE 3:9 ನಾನು ನಿನ್ನ ಹಣೆಯನ್ನು ಅತ್ಯಂತ ಕಠಿಣವಾದ ಕಲ್ಲಿನಂತೆಯೂ ವಜ್ರದಂತೆಯೂ ಮಾಡುವೆನು. ಅವರು ತಿರುಗಿಬೀಳುವ ಜನರಾದರೂ ನೀನು ಅವರಿಗೆ ಭಯಪಡಬೇಡ ಅಥವಾ ಗಾಬರಿಯಾಗಬೇಡ,” ಎಂದರು.
EZE 3:10 ಇದಲ್ಲದೆ ಅವರು ನನಗೆ, “ಮನುಷ್ಯಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲ್ಲಾ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ.
EZE 3:11 ಸೆರೆಯಾಗಿರುವ ನಿನ್ನ ಜನರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರು ಕೇಳಿದರೂ ಕೇಳದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಅವರಿಗೆ ಹೇಳು,” ಎಂದನು.
EZE 3:12 ಆಮೇಲೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ಮಹಿಮೆಯಿಂದ ಕೂಡಿದ ಯೆಹೋವ ದೇವರ ಮಹಿಮೆಯು ಅವರ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು.
EZE 3:13 ನಾನು ಒಂದಕ್ಕೊಂದು ತಗಲುವ ಆ ಜೀವಿಗಳ ರೆಕ್ಕೆಗಳ ಶಬ್ದವನ್ನೂ, ಅವುಗಳ ಬಳಿಯಲ್ಲಿದ್ದ ಚಕ್ರಗಳ ಶಬ್ದವನ್ನೂ, ಮಹಾ ಘೋಷದ ಶಬ್ದವು ನುಗ್ಗಿ ಬರುತ್ತಿರುವುದನ್ನೂ ಕೇಳಿದೆನು.
EZE 3:14 ಹೀಗೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ನಾನು ಕಹಿತನ ಮತ್ತು ಕೋಪದ ಆತ್ಮದಿಂದ ಮುನ್ನಡೆದೆನು. ಆದರೆ ಯೆಹೋವ ದೇವರ ಕೈ ನನ್ನ ಮೇಲೆ ಬಲವಾಗಿತ್ತು.
EZE 3:15 ಆಮೇಲೆ ನಾನು ಕೆಬಾರ್ ನದಿಯ ದಡದಲ್ಲಿ ವಾಸಿಸುತ್ತಿದ್ದ ತೆಲ್ ಅಬೀಬಿನ ಸೆರೆಯವರ ಬಳಿಗೆ ಬಂದೆನು. ನಾನು ಬಹು ದುಃಖಿತನಾಗಿ ಅವರು ಕುಳಿತಿದ್ದ ಕಡೆಗೆ ನಾನು ಏಳು ದಿನಗಳ ಕಾಲ ಅವರ ಜೊತೆಗೆ ಕುಳಿತುಕೊಂಡೆನು.
EZE 3:16 ಏಳು ದಿವಸಗಳಾದ ಮೇಲೆ ಯೆಹೋವ ದೇವರ ವಾಕ್ಯವು ನನಗೆ ಬಂದು,
EZE 3:17 “ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಆದ್ದರಿಂದ ನೀನು ನನ್ನ ಬಾಯಿಂದ ಹೊರಡುವ ವಾಕ್ಯವನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು.
EZE 3:18 ನಾನು ದುಷ್ಟನಿಗೆ, ‘ನೀನು ನಿಶ್ಚಯವಾಗಿ ಸಾಯುವೆ,’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸದೆ, ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ನೀನು ಅವನಿಗೆ ಬುದ್ಧಿಹೇಳದೆ ಹೋದರೆ, ಆ ದುಷ್ಟ ಮನುಷ್ಯನು ತನ್ನ ಪಾಪಗಳಿಂದಲೇ ಸಾಯಬೇಕಾಗುವದು; ಆದರೆ ಅವನ ಸಾವಿಗೆ ನಿನ್ನನ್ನೇ ಹೊಣೆಮಾಡುವೆನು.
EZE 3:19 ಆದರೆ ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ, ದುರ್ಮಾರ್ಗವನ್ನೂ ಬಿಟ್ಟು ತಿರುಗಿಕೊಳ್ಳದೆ ಹೋದರೆ, ಅವನು ತನ್ನ ಪಾಪಗಳಿಂದಲೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.
EZE 3:20 “ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡತಡೆಯನ್ನು ಇಡುವೆನು, ಅವನು ಸಾಯುವನು. ನೀನು ಅವನನ್ನು ಎಚ್ಚರಿಸದೆ ಇದ್ದುದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು. ಅವನು ಮಾಡಿರುವ ಸುಕೃತ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಸಾವಿಗೆ ನೀನೇ ಹೊಣೆಯಾಗುವೆ.
EZE 3:21 ಆದರೂ ನೀತಿವಂತನು ಪಾಪಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆ ಎಚ್ಚರಗೊಂಡರೆ, ಈ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.”
EZE 3:22 ಆಗ ಅಲ್ಲಿ ಯೆಹೋವ ದೇವರ ಹಸ್ತವು ನನ್ನ ಮೇಲಿತ್ತು. ನನಗೆ ಅವರು ಹೇಳಿದ್ದೇನೆಂದರೆ, “ಎದ್ದೇಳು, ಬಯಲು ಸೀಮೆಗೆ ಹೋಗು ಮತ್ತು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು.”
EZE 3:23 ಆಮೇಲೆ ನಾನು ಎದ್ದು ಬಯಲುಸೀಮೆಯ ಕಡೆಗೆ ಹೋದೆನು. ಯೆಹೋವ ದೇವರ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ನಾನು ಅಡ್ಡ ಬಿದ್ದೆನು.
EZE 3:24 ಆಮೇಲೆ ದೇವರಾತ್ಮ ನನ್ನೊಳಗೆ ಪ್ರವೇಶಿಸಿ, ನನ್ನನ್ನು ನನ್ನ ಪಾದದ ಮೇಲೆ ನಿಲ್ಲಿಸಿ ಮಾತನಾಡಿ, ನನಗೆ ಹೇಳಿದ್ದೇನೆಂದರೆ, “ಹೋಗು, ನಿನ್ನ ಮನೆಯಲ್ಲಿ ನೀನು ಅಡಗಿಕೋ.
EZE 3:25 ಮನುಷ್ಯಪುತ್ರನೇ, ಇಗೋ, ಅವರು ನಿನ್ನನ್ನು ಹಗ್ಗಗಳಿಂದ ಕಟ್ಟುವರು. ನೀನು ಅವರಿಂದ ಹೊರಗೆ ಹೋಗಲು ಆಗುವುದಿಲ್ಲ.
EZE 3:26 ಇದಲ್ಲದೆ ನಾನು ನಿನ್ನ ನಾಲಿಗೆ ಸೇದಿ ಹೋಗುವಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವವನಾಗಲಾರೆ. ಅವರು ತಿರುಗಿಬೀಳುವ ಜನರಾಗಿದ್ದಾರೆ.
EZE 3:27 ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆಯುವೆನು. ಆಗ ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ.’ ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಏಕೆಂದರೆ ಅವರು ತಿರುಗಿಬೀಳುವ ಜನರಾಗಿದ್ದಾರೆಂದು ಹೇಳಬೇಕು.
EZE 4:1 “ಮನುಷ್ಯಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು, ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ.
EZE 4:2 ಆ ನಕ್ಷೆಯ ಸುತ್ತಲು ದಿಬ್ಬ ಹಾಕಿ, ಒಡ್ಡು ಕಟ್ಟಿ, ಪಾಳೆಯಗಳನ್ನು ಮಾಡಿ, ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ, ಅದನ್ನು ಮುತ್ತಿಗೆ ಹಾಕು.
EZE 4:3 ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು, ಅದನ್ನು ನಿನಗೂ, ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ, ಆ ಪಟ್ಟಣದ ಮೇಲೆ ದೃಷ್ಟಿಯಿಡು, ಅದು ಮುತ್ತಲಾಗುವುದು. ನೀನು ಅದನ್ನು ಮುತ್ತಿದಂತಾಗುವುದು. ಇದು ಇಸ್ರಾಯೇಲಿನ ಜನರಿಗೆ ಒಂದು ಸಂಕೇತ.
EZE 4:4 “ನೀನು ನಿನ್ನ ಎಡಗಡೆಯಲ್ಲಿ ಮಲಗಿ, ಇಸ್ರಾಯೇಲಿನ ಜನರ ಅಕ್ರಮಗಳನ್ನು ನಿಮ್ಮ ಮೇಲಿಡಬೇಕು. ನೀನು ಎಡಗಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ನಿಮ್ಮ ಮೇಲೆ ಹೊತ್ತುಕೊಂಡಿರಬೇಕು.
EZE 4:5 ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರ ತೊಂಬತ್ತು ದಿವಸಗಳಾಗಿವೆ. ಹೀಗೆ ನೀನು ಇಸ್ರಾಯೇಲಿನ ಜನರ ಅಕ್ರಮಗಳನ್ನು ಹೊರಬೇಕು.
EZE 4:6 “ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಗಡೆಯಲ್ಲಿ ಮಲಗಿ, ಯೆಹೂದ ಜನರ ಅಕ್ರಮವನ್ನು ನಲವತ್ತು ದಿವಸ ಹೊರಬೇಕು. ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ.
EZE 4:7 ನೀನು ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು. ನಿನ್ನ ಭುಜವನ್ನು ನೀನು ಬರಿದುಮಾಡಿಕೊಂಡು, ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು.
EZE 4:8 ನಾನು ನಿನ್ನ ಮೇಲೆ ಹಗ್ಗಗಳನ್ನು ಇಡುತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿಯುವವರೆಗೂ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
EZE 4:9 “ನೀನು ಗೋಧಿ, ಜವೆಗೋಧಿ, ಅವರೆ, ಅಲಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು, ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು, ನೀನು ಒಂದು ಕಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು, ಮುನ್ನೂರ ತೊಂಬತ್ತು ದಿನಗಳು ಅವರಿಂದಲೇ ತಿನ್ನಬೇಕು.
EZE 4:10 ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ 230 ಗ್ರಾಂ ಇರಲಿ, ನೀನು ಅದನ್ನು ಆಗಾಗ್ಗೆ ತಿನ್ನಬೇಕು.
EZE 4:11 ನೀನು ನೀರನ್ನು ಸಹ ಅಳತೆಯ ಪ್ರಕಾರ ಸುಮಾರು ಅರ್ಧ ಲೀಟರ್ ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು.
EZE 4:12 ಇದಲ್ಲದೆ ನೀನು ಆಹಾರವನ್ನು ಜವೆಗೋಧಿಯ ರೊಟ್ಟಿಗಳಂತೆ ತಿನ್ನಬೇಕು. ಅದನ್ನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ ಅವರ ಕಣ್ಣುಗಳ ಮುಂದೆ ಅಡಿಗೆ ಮಾಡಬೇಕು.”
EZE 4:13 ಯೆಹೋವ ದೇವರು ಹೇಳಿದ್ದೇನೆಂದರೆ, “ಈ ರೀತಿಯಾಗಿ ಇಸ್ರಾಯೇಲಿನ ಜನರು ನಾನು ಅವರನ್ನು ಓಡಿಸುವ ಜನಾಂಗಗಳ ನಡುವೆ ಅಶುದ್ಧ ಆಹಾರವನ್ನು ತಿನ್ನುವರು.”
EZE 4:14 ಅದಕ್ಕೆ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದ ದಿನದಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ. ಯಾವ ಅಸಹ್ಯ ಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ.
EZE 4:15 ಆಗ ಅವರು ನನಗೆ, “ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಬಳಸಲು ನಿನಗೆ ಅನುಮತಿಸಿದ್ದೇನೆ. ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು,” ಎಂದನು.
EZE 4:16 ಇದಾದ ಮೇಲೆ ಅವರು ನನಗೆ, “ಮನುಷ್ಯಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ಮುರಿಯುವೆನು. ಅವರು ತೂಕದ ಪ್ರಕಾರ ಚಿಂತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ನಿರಾಶೆಯಿಂದ ಕುಡಿಯುವರು.
EZE 4:17 ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಸ್ತಬ್ಧರಾಗಿ, ಒಬ್ಬರ ಸಂಗಡ ಒಬ್ಬರು ತಮ್ಮ ಪಾಪಗಳಿಗಾಗಿ ಕ್ಷಯಿಸಿ ಹೋಗುವರು.
EZE 5:1 “ಮನುಷ್ಯಪುತ್ರನೇ, ನೀನು ಹರಿತವಾದ ಖಡ್ಗವನ್ನು ತೆಗೆದುಕೊಂಡು ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ, ಅದರಿಂದ ನಿನ್ನ ತಲೆಯನ್ನೂ ನಿನ್ನ ಗಡ್ಡವನ್ನೂ ಬೋಳಿಸಿಬಿಟ್ಟು, ಆಮೇಲೆ ಅದನ್ನು ತೂಕ ಮಾಡುವುದಕ್ಕೆ ತಕ್ಕಡಿಯನ್ನು ತೆಗೆದುಕೋ. ಆ ಕೂದಲನ್ನು ಭಾಗ ಮಾಡು.
EZE 5:2 ಅದರ ಮೂರನೆಯ ಒಂದು ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು. ಮೂರನೆಯ ಒಂದು ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು. ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಖಡ್ಗವನ್ನು ಬೀಸುವೆನು.
EZE 5:3 ನೀನು ಅವುಗಳೊಳಗಿಂದ ಕೆಲವು ಕೂದಲನ್ನು ಲೆಕ್ಕದಲ್ಲಿ ತೆಗೆದು, ನಿನ್ನ ಸೆರಗುಗಳಲ್ಲಿ ಕಟ್ಟು,” ಎಂದನು.
EZE 5:4 ಆಮೇಲೆ ಅವುಗಳೊಳಗಿಂದ ಕೆಲವನ್ನು ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ, ಅವುಗಳನ್ನು ಬೆಂಕಿಯಿಂದ ಸುಡು. ಏಕೆಂದರೆ ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರಿಗೂ ಹೋಗುವುದು.
EZE 5:5 “ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ಇದು ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ನಡುವೆ ಇಟ್ಟಿದ್ದೇನೆ.
EZE 5:6 ಆಕೆಯು ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ, ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತನಕ್ಕೆ ತಿರುಗಿಸಿಬಿಟ್ಟಳು. ಅವರು ನನ್ನ ನ್ಯಾಯಗಳನ್ನೂ ಅನುಸರಿಸದೆ ನನ್ನ ನಿಯಮಗಳನ್ನೂ ನಿರಾಕರಿಸಿದ್ದಾರೆ.
EZE 5:7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದುದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ, ನನ್ನ ನ್ಯಾಯಗಳನ್ನು ಪಾಲಿಸದೇ ಇದ್ದುದರಿಂದಲೂ, ನಿಮ್ಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ,
EZE 5:8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ, ನಿನಗೆ ವಿರೋಧವಾಗಿದ್ದೇನೆ. ಜನಾಂಗಗಳ ಕಣ್ಣುಗಳ ಮುಂದೆ ನಿಮ್ಮ ಜನರನ್ನು ದಂಡಿಸುವೆನು.
EZE 5:9 ನಾನು ಮಾಡದೆ ಇದ್ದದ್ದನ್ನೂ, ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿಮ್ಮ ಅಸಹ್ಯಗಳ ನಿಮಿತ್ತವಾಗಿ ನಿಮ್ಮಲ್ಲಿ ಮಾಡುತ್ತೇನೆ.
EZE 5:10 ಆದ್ದರಿಂದ ನಿಮ್ಮ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು. ಮಕ್ಕಳು ಅವರ ತಂದೆಗಳನ್ನು ತಿನ್ನುವರು. ಹೀಗೆ ನಿಮ್ಮಲ್ಲಿ ನ್ಯಾಯತೀರ್ಪನ್ನು ನಡಿಸುವೆನು. ನಿಮ್ಮಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.
EZE 5:11 ಆದಕಾರಣ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನಿಶ್ಚಯವಾಗಿ ನೀವು ನನ್ನ ಪರಿಶುದ್ಧ ಸ್ಥಳವನ್ನು ನಿಮ್ಮ ಎಲ್ಲಾ ಹೇಸಿಗೆಗಳಿಂದಲೂ, ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ, ನಾನೂ ಸಹ ನಿಮ್ಮನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವುದೂ ಇಲ್ಲ, ಕ್ಷಮಿಸುವುದೂ ಇಲ್ಲ.
EZE 5:12 ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು.
EZE 5:13 “ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ರೋಷವನ್ನು ಅವರ ಮೇಲೆ ಕಾರಿ, ಸಮಾಧಾನ ಹೊಂದುವೆನು. ಹೀಗೆ ನಾನು ನನ್ನ ರೋಷವನ್ನು ಅವರ ಮೇಲೆ ತೀರಿಸಿದ ತರುವಾಯ, ಯೆಹೋವ ದೇವರಾದ ನಾನು ರೋಷದಿಂದ ಮಾತನಾಡಿದ್ದೇನೆ ಎಂದು ಅವರು ತಿಳಿಯುವರು.
EZE 5:14 “ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳು ಮಾಡಿ, ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು.
EZE 5:15 ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ.
EZE 5:16 ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು. ನಿನ್ನ ಮೇಲೆ ಭಯಂಕರವಾದ ಕ್ಷಾಮವನ್ನು ಬರಮಾಡಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.
EZE 5:17 ನಾನು ಕಳುಹಿಸುವ ಕ್ಷಾಮದಿಂದ ದುಷ್ಟಮೃಗಗಳಿಂದ ನಿನಗೆ ಪುತ್ರ ಶೋಕ ಪ್ರಾಪ್ತಿಯಾಗುವುದು. ವ್ಯಾಧಿಯೂ, ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು, ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು. ಇದು ಯೆಹೋವ ದೇವರಾದ ನನ್ನ ನುಡಿ.”
EZE 6:1 ಯೆಹೋವ ದೇವರು ಈ ವಾಕ್ಯವು ನನಗೆ ಬಂದಿತು:
EZE 6:2 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು, ಅವುಗಳಿಗೆ ವಿರೋಧವಾಗಿ ಹೀಗೆ ಪ್ರವಾದಿಸು,
EZE 6:3 ‘ಇಸ್ರಾಯೇಲಿನ ಪರ್ವತಗಳೇ, ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಹೌದು, ಸಾರ್ವಭೌಮ ಯೆಹೋವ ದೇವರು ಪರ್ವತಗಳಿಗೂ ಗುಡ್ಡಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳುತ್ತಾರೆ, ನಾನೇ ನಿಮ್ಮ ಮೇಲೆ ಖಡ್ಗವನ್ನು ಹಿಡಿದು, ನಿಮ್ಮ ಪೂಜಾಸ್ಥಳಗಳನ್ನು ನಾಶಮಾಡುತ್ತೇನೆ.
EZE 6:4 ನಿಮ್ಮ ಯಜ್ಞವೇದಿಗಳು ಹಾಳಾಗುವುವು. ನಿಮ್ಮ ಧೂಪವೇದಿಗಳು ಚೂರುಚೂರಾಗುವುವು. ನಿಮ್ಮ ಜನರು ನಿಮ್ಮ ವಿಗ್ರಹಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.
EZE 6:5 ಇಸ್ರಾಯೇಲರ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಬಲಿಪೀಠಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿ ಬಿಡುವೆನು.
EZE 6:6 ನೀವು ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳಾಗುವುವು. ಪೂಜಾ ಸ್ಥಳಗಳೂ ನಾಶವಾಗುವುವು. ಹೀಗೆ ನಿಮ್ಮ ಬಲಿಪೀಠಗಳು ಸಹ ನಾಶವಾಗಿ, ನಿಮ್ಮ ವಿಗ್ರಹಗಳು ಒಡೆದುಹೋಗಿ ಇಲ್ಲದಂತಾಗುವುವು. ನೀವು ರೂಪಿಸಿದ ಎಲ್ಲವೂ ಕಡಿದು ಬಿದ್ದು ಅಳಿದುಹೋಗುವುವು.
EZE 6:7 ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು. ಆಗ ನೀವು ನಾನೇ ಯೆಹೋವ ದೇವರೆಂದು ತಿಳಿಯುವಿರಿ.
EZE 6:8 “ ‘ಆದರೆ ನಾನು ಕೆಲವರನ್ನು ಉಳಿಸುತ್ತೇನೆ; ಹೇಗೆಂದರೆ, ನೀವು ದೇಶಗಳ ಮತ್ತು ಜನಾಂಗಗಳ ನಡುವೆ ಚದರಿಹೋದಾಗ ನಿಮ್ಮಲ್ಲಿ ಕೆಲವರು ಖಡ್ಗದಿಂದ ತಪ್ಪಿಸಿಕೊಳ್ಳುವಿರಿ.
EZE 6:9 ನಿಮ್ಮಲ್ಲಿ ತಪ್ಪಿಸಿಕೊಂಡವರು, ತಾವು ಸೆರೆಯಾಗಿ ಹೋಗುವಾಗ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ಅನ್ಯದೇವತೆಗಳಲ್ಲಿ ವಿಶ್ವಾಸವಿಟ್ಟು, ನನ್ನನ್ನೂ ತೊರೆದ ತಮ್ಮ ಹೃದಯವನ್ನು ಮತ್ತು ಅನ್ಯ ದೇವರ ವಿಗ್ರಹಗಳಲ್ಲಿ ಮೋಹಗೊಂಡ ತಮ್ಮ ಕಣ್ಣುಗಳನ್ನು ಮುರಿದವನು ನಾನೇ ಎಂಬುದಾಗಿ ಜ್ಞಾಪಕಮಾಡಿಕೊಳ್ಳುವರು. ಅವರು ತಮ್ಮ ಅಸಹ್ಯ ಕಾರ್ಯಗಳನ್ನು ಮಾಡುವ ಕೇಡುಗಳ ನಿಮಿತ್ತ ತಮ್ಮ ಬಗ್ಗೆ ತಾವೇ ಅಸಹ್ಯಪಡುವರು.
EZE 6:10 ನಾನೇ ಯೆಹೋವ ದೇವರೆಂದೂ, ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ, ನಾನು ವ್ಯರ್ಥವಾಗಿ ಹೇಳುವುದಿಲ್ಲವೆಂದೂ ತಿಳಿದುಕೊಳ್ಳುವರು.
EZE 6:11 “ ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು, “ಆಹಾ!” ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.
EZE 6:12 ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು. ಹತ್ತಿರದಲ್ಲಿರುವವನು ಖಡ್ಗದಿಂದ ಬೀಳುವನು. ಉಳಿದ ಮುತ್ತಿಗೆಯಲ್ಲಿರುವವನು ಕ್ಷಾಮದಿಂದ ಸಾಯುವನು. ಹೀಗೆ ನಾನು ಅವರ ಮೇಲೆ ನನ್ನ ರೋಷವನ್ನು ತೀರಿಸಿಕೊಳ್ಳುವೆನು.
EZE 6:13 ಆಮೇಲೆ ಅವರಲ್ಲಿ ಹತರಾದವರು, ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಬಲಿಪೀಠಗಳ ಸುತ್ತಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ, ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸಿರಾದ ಮರದ ಕೆಳಗೂ, ಪ್ರತಿಯೊಂದು ದಪ್ಪವಾದ ಏಲಾ ಮರದ ಕೆಳಗಡೆಯೂ, ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವುದರಲ್ಲಿಯೂ ನಾನೇ ಯೆಹೋವ ದೇವರೆಂದು ತಿಳಿಯುವಿರಿ.
EZE 6:14 ನಾನು ಅವರ ವಿರುದ್ಧ ಕೈಯೆತ್ತಿ, ಅವರು ವಾಸವಾಗಿರುವ ದೇಶವನ್ನೆಲ್ಲಾ ಮರುಭೂಮಿಯಿಂದ ದಿಬ್ಲದವರೆಗೂ ಹಾಳುಪಾಳುಮಾಡುವೆನು, ನಾನೇ ಯೆಹೋವ ದೇವರು, ಎಂದು ಅವರಿಗೆ ತಿಳಿಯುವುದು.’ ”
EZE 7:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 7:2 “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳುತ್ತಾರೆ: “ ‘ಅಂತ್ಯವು ಬಂದಿದೆ! ಈ ದೇಶದ ನಾಲ್ಕು ಮೂಲೆಗಳಲ್ಲಿಯೂ ಅಂತ್ಯವು ಬಂದಿದೆ!
EZE 7:3 ಈಗಲೇ ನಿನಗೆ ಅಂತ್ಯವು ಬಂದಿದೆ. ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡುತ್ತೇನೆ. ನಿನ್ನ ನಡತೆಯ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯ ಕಾರ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿತೀರಿಸುವೆನು.
EZE 7:4 ನನ್ನ ಕಣ್ಣುಗಳು ನಿನ್ನನ್ನು ಕನಿಕರಿಸುವುದೂ ಇಲ್ಲ. ನಾನು ನಿನ್ನನ್ನು ಬಿಡುವುದೂ ಇಲ್ಲ. ಆದರೆ ನಿನ್ನ ದುರ್ಮಾರ್ಗಗಳ ಪ್ರಕಾರ, ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ. ನಿನ್ನ ಅಸಹ್ಯ ಕಾರ್ಯಗಳು ನಿನ್ನ ಮಧ್ಯೆ ಇರುವುವು. ಆಗ ನಾನೇ ಯೆಹೋವ ದೇವರು ಎಂದು ನಿಮಗೆ ತಿಳಿಯುವುದು.’
EZE 7:5 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಕೇಡು! ಎಂದೂ ಕೇಳದ ಕೇಡು, ಇಗೋ ಬಂದಿತು.
EZE 7:6 ಅಂತ್ಯವು ಬಂದಿತು, ಅಂತ್ಯವು ಬಂದುಬಿಟ್ಟಿತು, ನಿನ್ನನ್ನು ಚಚ್ಚುವುದಕ್ಕೆ ಎಚ್ಚರಗೊಂಡಿದೆ, ಇಗೋ ಬಂದೇ ಬಂತು.
EZE 7:7 ಓ ದೇಶ ನಿವಾಸಿಯೇ, ನಿನಗಾಗಿ ವಿನಾಶದ ದಿನ ಬಂದಿತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು. ಪರ್ವತಗಳ ಮೇಲೆ ಸಂತೋಷವಲ್ಲ ಭೀತಿಯಿದೆ.
EZE 7:8 ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ರೋಷವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿ ಬಿಡುವೆನು. ನಾನು ನಿನ್ನ ನಡತೆಯ ಪ್ರಕಾರ ಮುಯ್ಯಿತೀರಿಸುವೆನು. ನಿನ್ನ ಎಲ್ಲಾ ಅಸಹ್ಯಕಾರ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿತೀರಿಸುವೆನು.
EZE 7:9 ನಾನು ಕಟಾಕ್ಷಿಸುವುದೂ ಇಲ್ಲ, ನಿನ್ನನ್ನು ಕನಿಕರಿಸುವುದೂ ಇಲ್ಲ. ನಿನ್ನ ನಡತೆಗಳಿಗೂ, ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕ ಹಾಗೆ ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ನಾನೇ ಹೊಡೆಯುತ್ತಿರುವ ಯೆಹೋವ ದೇವರೆಂದು ನಿಮಗೆ ತಿಳಿಯುವುದು.
EZE 7:10 “ ‘ಇಗೋ ಆ ದಿನವು ಬಂತು, ನೋಡು ವಿನಾಶದ ದಿನ ಹೊರಟುಹೋಯಿತು, ಕೋಲು ಚಿಗುರಿತು, ಅಹಂಕಾರವು ಅರಳಿತು,
EZE 7:11 ಬಲಾತ್ಕಾರವು ದುಷ್ಟತನದ ಕೋಲಿನಲ್ಲಿ ಬೆಳೆದಿತ್ತು. ಅವರಲ್ಲಿಯೂ ಅವರ ಜನಸಮೂಹದಲ್ಲಿಯೂ, ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವುದಿಲ್ಲ, ಅವರಲ್ಲಿ ಯಾವ ಮೌಲ್ಯವು ಇರುವುದಿಲ್ಲ.
EZE 7:12 ಸಮಯವು ಬಂತು, ದಿನವು ಬಂದೇಬಿಟ್ಟಿತು. ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲದಿರಲಿ, ಮಾರುವವನು ದುಃಖಿಸದಿರಲಿ. ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ರೌದ್ರವಿದೆ.
EZE 7:13 ಮಾರಿದವನು ಎಷ್ಟು ವರ್ಷ ಬದುಕಿದರೂ, ಮಾರಿದ ಸೊತ್ತು ಅವನ ವಶಕ್ಕೆ ತಿರುಗಿ ಬಾರದು. ಉಂಟಾದ ದಿವ್ಯದರ್ಶನ ಸಮಾಜದವರಿಗೆಲ್ಲಾ ಸಂಬಂಧಿಸಿದೆ, ಎಂದಿಗೂ ತಿರುಗದು, ಯಾರೂ ತಮ್ಮ ಪಾಪಗಳಿಂದ ತಮ್ಮ ಜೀವವನ್ನು ಉಳಿಸಿಕೊಳ್ಳರು.
EZE 7:14 “ ‘ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧ ಮಾಡಿಕೊಂಡಿದ್ದಾರೆ. ಆದರೆ ಯಾರೂ ಯುದ್ಧಕ್ಕೆ ಹೋಗುವುದಿಲ್ಲ. ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ಕೋಪವಿದೆ.
EZE 7:15 ಹೊರಗೆ ಖಡ್ಗವೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊರಗಿರುವವರನ್ನು ಖಡ್ಗವು ಸಾಯಿಸುವುದು, ಪಟ್ಟಣದಲ್ಲಿರುವವರನ್ನು ವ್ಯಾಧಿಯೂ ಕ್ಷಾಮವೂ ತಿಂದುಬಿಡುವುದು.
EZE 7:16 ಆದರೆ ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಳ್ಳುವರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಗೋಳಾಡಿ, ಪರ್ವತಗಳ ಮೇಲೆ ಇರುವರು.
EZE 7:17 ಕೈಗಳೆಲ್ಲಾ ಜೋತಾಡುವುವು, ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ಆಗುವುವು.
EZE 7:18 ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡುವುದು. ಎಲ್ಲಾ ಮುಖಗಳ ಮೇಲೆ ನಾಚಿಕೆಯೂ, ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವುವು.
EZE 7:19 “ ‘ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ವಸ್ತುವಿನಂತಿರುವುದು. ಅವರ ಬೆಳ್ಳಿ ಬಂಗಾರಗಳು ಯೆಹೋವ ದೇವರ ಕೋಪದ ದಿವಸದಲ್ಲಿ ಅವರನ್ನು ಪಾರು ಮಾಡಲಾರವು. ಇದರಿಂದ ಅವರ ಹಸಿವು ನೀಗುವುದಿಲ್ಲ, ಅವರ ಹೊಟ್ಟೆಗಳನ್ನು ತುಂಬಿಸುವುದಿಲ್ಲ. ಏಕೆಂದರೆ ಅವರ ಆಸ್ತಿಯು ಪಾಪ ಕೃತ್ಯಗಳಿಗೆ ಕಾರಣವಾಗಿತ್ತು.
EZE 7:20 ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. ಇದಲ್ಲದೆ ಹೇಯವೂ ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು. ಆದಕಾರಣ ಅದನ್ನು ಅವರಿಗೆ ಅಶುದ್ಧಪದಾರ್ಥವನ್ನಾಗಿ ಮಾಡಿ
EZE 7:21 ನಾನು ಅದನ್ನು ವಿದೇಶಿಯರ ಕೈಗೆ ಕೊಳ್ಳೆಯಾಗಿಯೂ, ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು. ಅವರು ಅದನ್ನು ಅಪವಿತ್ರಪಡಿಸುವರು.
EZE 7:22 ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು. ನನ್ನ ಅತ್ಯಂತ ಅಮೂಲ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರಪಡಿಸುವರು.
EZE 7:23 “ ‘ಸರಪಳಿಯನ್ನು ತಯಾರುಮಾಡು. ದೇಶವು ರಕ್ತಾಪರಾಧದಿಂದ ತುಂಬಿದೆ ಮತ್ತು ನಗರವು ಹಿಂಸೆಯಿಂದ ತುಂಬಿದೆ.
EZE 7:24 ಆದಕಾರಣ ನಾನು ಇತರ ಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶಪಡಿಸಿಕೊಳ್ಳುವರು. ನಾನು ಬಲಿಷ್ಠರ ಅಹಂಕಾರವನ್ನು ನಿಲ್ಲಿಸುತ್ತೇನೆ. ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವುವು.
EZE 7:25 ನಾಶವು ಬರುತ್ತದೆ. ಅವರು ಸಮಾಧಾನವನ್ನು ಹುಡುಕುತ್ತಾರೆ, ಆದರೆ ಅದು ಇರುವುದಿಲ್ಲ.
EZE 7:26 ಕೇಡಿನ ಮೇಲೆ ಕೇಡು ಬರುವುದು, ಸುದ್ದಿಯ ಮೇಲೆ ಸುದ್ದಿ ಬರುವುದು, ಅವರು ಪ್ರವಾದಿಯಿಂದ ದರ್ಶನವನ್ನು ಹುಡುಕುವರು. ಆದರೆ ಯಾಜಕರಿಂದ ನಿಯಮ ಬೋಧನೆಯು ಅಡಗಿಹೋಗುವುದು, ಹಿರಿಯರಿಂದ ಸಮಾಲೋಚನೆಯು ಇಲ್ಲವಾಗುವುದು.
EZE 7:27 ಅರಸನು ದುಃಖಿಸುವನು, ರಾಜಕುಮಾರನಿಗೆ ನಿರಾಶೆಯು ಅವನ ಉಡುಪಾಗಿರುತ್ತದೆ. ದೇಶದ ಜನರ ಕೈಗಳು ತತ್ತರಿಸುವುವು, ಅವರ ದುರ್ನಡತೆಗೆ ತಕ್ಕ ಪ್ರತೀಕಾರ ಮಾಡುವೆನು. ಅವರ ದುಷ್ಕರ್ಮಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. “ ‘ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
EZE 8:1 ಆರನೆಯ ವರ್ಷದ ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ, ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ, ಅಲ್ಲಿ ಸಾರ್ವಭೌಮ ಯೆಹೋವ ದೇವರ ಹಸ್ತ ನನ್ನ ಮೇಲೆ ಸ್ಪರ್ಶವಾಯಿತು.
EZE 8:2 ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ಕಾಣಿಸಿತು. ಸೊಂಟದ ಕೆಳಗಿನ ರೂಪವು ಬೆಂಕಿಯಂತಿತ್ತು ಮತ್ತು ಅವನ ಸೊಂಟದ ಮೇಲಿನ ಭಾಗವು ಹೊಳೆಯುವ ಲೋಹದಂತೆ ಪ್ರಕಾಶಮಾನವಾಗಿತ್ತು.
EZE 8:3 ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿದನು. ಆಗ ದೇವರಾತ್ಮರು ದೇವದರ್ಶನದಲ್ಲಿ ಯೆರೂಸಲೇಮಿನ ಉತ್ತರದ ಕಡೆಗೆ ಎದುರಾಗಿರುವ ಒಳ ಅಂಗಳದ ಕಡೆಗೆ, ರೋಷಗೊಳಿಸುವ ವಿಗ್ರಹವು ಇದ್ದಲ್ಲಿಗೆ ನನ್ನನ್ನು ಎತ್ತಿಕೊಂಡು ಹೋದರು.
EZE 8:4 ಇಸ್ರಾಯೇಲಿನ ದೇವರ ಮಹಿಮೆಯು, ನಾನು ಆ ಬಯಲುಸೀಮೆಯಲ್ಲಿ ನೋಡಿದ ಆಕಾರದ ಪ್ರಕಾರವೇ ಅಲ್ಲಿ ಇತ್ತು.
EZE 8:5 ಆಗ ಅವರು ನನಗೆ, “ಮನುಷ್ಯಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದ ಪ್ರವೇಶದ್ವಾರದ ಮುಂದೆ ನಿಂತಿತ್ತು.
EZE 8:6 ಅವರು ನನಗೆ, “ಮನುಷ್ಯಪುತ್ರನೇ, ಅವರು ಮಾಡುತ್ತಿರುವುದನ್ನು ನೋಡುತ್ತಿರುವೆಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವಹಾಗೆ, ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯಗಳನ್ನು ನೋಡುತ್ತಿರುವೆಯಾ? ಆದರೆ ನೀನು ಇನ್ನೂ ಹೆಚ್ಚಿನ ಅಸಹ್ಯಗಳನ್ನು ನೋಡುವೆ,” ಎಂದನು.
EZE 8:7 ಆಗ ಅವನು ನನ್ನನ್ನು ಅಂಗಳದ ಬಾಗಿಲಿಗೆ ತಂದನು ಮತ್ತು ನಾನು ನೋಡುವಾಗ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು.
EZE 8:8 ಆಮೇಲೆ ಆತನು ನನಗೆ, “ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ,” ಎಂದು ಹೇಳಿದನು. ನಾನು ಗೋಡೆಯನ್ನು ಕೊರೆದಾಗ ಒಂದು ಬಾಗಿಲನ್ನು ಕಂಡೆನು.
EZE 8:9 ಆಗ ಆತನು ನನಗೆ, “ನೀನು ಒಳಗೆ ಹೋಗಿ ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದನು. ನಾನು ಒಳಗೆ ಹೋಗಿ ನೋಡಿದೆನು.
EZE 8:10 ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ, ಅಸಹ್ಯ ಮೃಗಗಳೂ, ಇಸ್ರಾಯೇಲರು ಪೂಜಿಸುವ ಸಕಲ ಮೂರ್ತಿಗಳೂ ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.
EZE 8:11 ಇಸ್ರಾಯೇಲಿನ ಮನೆತನದವರಲ್ಲಿ ಎಪ್ಪತ್ತು ಮಂದಿ ಹಿರಿಯರೂ, ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿದ್ದರು. ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾರತಿ ಇತ್ತು. ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.
EZE 8:12 ಆಗ ದೇವರು ನನಗೆ, “ಮನುಷ್ಯಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಯೆಹೋವ ದೇವರು ನಾಡನ್ನು ತೊರೆದುಬಿಟ್ಟಿದ್ದಾರೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.
EZE 8:13 ಇದಲ್ಲದೆ ಅವರು, “ಮತ್ತೊಂದು ಸಾರಿ ತಿರುಗಿಕೋ. ಅವರು ಮಾಡುವ ಇನ್ನೂ ಮಹಾ ಅಸಹ್ಯ ಕಾರ್ಯಗಳನ್ನು ನೋಡುವೆ,” ಎಂದರು.
EZE 8:14 ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಉತ್ತರದ ಕಡೆಗೆ ಎದುರಾಗಿದ್ದ ಬಾಗಿಲಿನ ಕಡೆಗೆ ತಂದನು. ಅಲ್ಲಿ ತಮ್ಮೂಜ್ ದೇವತೆಗೋಸ್ಕರ ಅಳುವ ಹೆಂಗಸರು ಕೂತಿದ್ದರು.
EZE 8:15 ಆಮೇಲೆ ಅವನು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಮತ್ತೊಂದು ಸಾರಿ ತಿರುಗಿಕೋ. ಇವುಗಳಿಂದ ಇನ್ನೂ ಅಸಹ್ಯವಾದವುಗಳನ್ನು ಕಾಣುವೆ,” ಎಂದು ಹೇಳಿದನು.
EZE 8:16 ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಬಂದನು. ಇಗೋ, ಯೆಹೋವ ದೇವರ ಮಂದಿರದ ಬಾಗಿಲಲ್ಲಿ ದ್ವಾರಾಂಗಳಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಸುಮಾರು ಇಪ್ಪತ್ತೈದು ಮಂದಿಯು ಯೆಹೋವ ದೇವರ ಮಂದಿರಕ್ಕೆ ಬೆನ್ನುಹಾಕಿ, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನಿಟ್ಟು, ಸೂರ್ಯನಮಸ್ಕಾರ ಮಾಡುತ್ತಿದ್ದರು.
EZE 8:17 ಆಗ ಅವರು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದ ಮನೆತನದವರಿಗಲ್ಲವೇ? ಏಕೆಂದರೆ ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರಲ್ಲವೇ? ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟುಕೊಳ್ಳುತ್ತಾರೆ.
EZE 8:18 ಆದ್ದರಿಂದ ನಾನು ಸಹ ರೋಷದಿಂದಲೇ ಇರುವೆನು. ನಾನು ಅವರನ್ನು ಕನಿಕರಿಸುವುದೂ ಇಲ್ಲ, ನಾನು ಅವರನ್ನು ಉಳಿಸುವುದೂ ಇಲ್ಲ. ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರುಚಿದರೂ, ನಾನು ಅವರನ್ನು ಕೇಳಿಸಿಕೊಳ್ಳುವುದೂ ಇಲ್ಲ,” ಎಂದನು.
EZE 9:1 ಆಗ ಅವರು ದೊಡ್ಡ ಧ್ವನಿಯಿಂದ, “ನಗರದ ಜನರಿಗೆ ನ್ಯಾಯತೀರಿಸಲು ನೇಮಕವಾಗಿರುವವರೇ, ನಿಮ್ಮ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ,” ಎಂದು ಹೇಳುವುದನ್ನು ನಾನು ಕೇಳಿದೆನು.
EZE 9:2 ಕೂಡಲೇ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು. ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು.
EZE 9:3 ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ, ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು. ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಯೆಹೋವ ದೇವರು ಕೂಗಿ ಅವನಿಗೆ,
EZE 9:4 “ಯೆರೂಸಲೇಮಿನ ಪಟ್ಟಣದ ಮಧ್ಯೆ ಹಾದು ಹೋಗಿ, ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು,” ಎಂದರು.
EZE 9:5 ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ, ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ,
EZE 9:6 ವೃದ್ಧ, ಯುವಕ, ಯುವತಿಯರನ್ನು ಮತ್ತು ಎಳೆಗೂಸುಗಳನ್ನು ಮತ್ತು ಹೆಂಗಸರನ್ನು ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ, ಅವನನ್ನು ಮುಟ್ಟಬೇಡಿರಿ. ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ” ಎಂದಾಗ, ಅವರು ಆಲಯದ ಮುಂದೆ ಇದ್ದ ಹಿರಿಯರಿಂದ ಪ್ರಾರಂಭಿಸಿದರು.
EZE 9:7 ದೇವರು ಅವರಿಗೆ, “ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿರಿ, ಹೊರಡಿರಿ,” ಎಂದು ಹೇಳಿದರು. ಆಗ ಅವರು ಹೊರಟು ನಗರದಲ್ಲಿದ್ದವರನ್ನು ಕೊಂದರು.
EZE 9:8 ಅವರು ಹೊಡೆಯುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನೀವು ಯೆರೂಸಲೇಮಿನ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿರಾ?” ಎಂದೆನು.
EZE 9:9 ಆಗ ಅವರು ನನಗೆ, “ಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ. ದೇಶವು ರಕ್ತದಿಂದ ತುಂಬಿದೆ, ಪಟ್ಟಣವು ಅಧರ್ಮದಿಂದ ತುಂಬಿದೆ. ‘ಯೆಹೋವ ದೇವರು ದೇಶವನ್ನು ತೊರೆದುಬಿಟ್ಟಿದ್ದಾರೆ, ಯೆಹೋವ ದೇವರು ನೋಡುವುದಿಲ್ಲ,’ ಎಂದು ಅವರು ಹೇಳುತ್ತಾರೆ.
EZE 9:10 ನಾವಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು,” ಎಂದು ಹೇಳಿದರು.
EZE 9:11 ನಾರುಮಡಿಯನ್ನು ಧರಿಸಿಕೊಂಡು ದೌತಿಯನ್ನು ತನ್ನ ನಡುವಿಗೆ ಕಟ್ಟಿಕೊಂಡಂಥ ಆ ಮನುಷ್ಯನು, “ವರ್ತಮಾನವನ್ನು ತಂದು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ,” ಎಂದನು.
EZE 10:1 ಆಗ ನಾನು ನೋಡಲಾಗಿ, ಕೆರೂಬಿಗಳ ತಲೆಯ ಮೇಲಿದ್ದ ಆಕಾಶಮಂಡಲದಲ್ಲಿ ನೀಲಮಣಿಯಂತೆ ಸಿಂಹಾಸನದ ಆಕಾರದಂತಿರುವ ರೂಪವನ್ನು ಕಂಡೆನು. ಅದು ಅವುಗಳ ಮೇಲೆ ಕಾಣಿಸಿತು.
EZE 10:2 ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡಿದ್ದ ಮನುಷ್ಯನಿಗೆ, “ನೀನು ಕೆರೂಬಿಗಳ ಕೆಳಗೆ ಇರುವ ಸುಡುವ ಕಲ್ಲಿದ್ದಲನ್ನು ನಿನ್ನ ಕೈತುಂಬ ತೆಗೆದುಕೊಂಡು ಅದನ್ನು ಪಟ್ಟಣದ ಮೇಲೆ ಎರಚು,” ಎಂದರು. ಹಾಗೆಯೇ ನಾನು ನೋಡುತ್ತಿದ್ದಂತೆಯೇ ಅವನು ಒಳಗೆ ಪ್ರವೇಶಿಸಿದನು.
EZE 10:3 ಆ ಮನುಷ್ಯನು ಒಳಗೆ ಹೋದಾಗ ಕೆರೂಬಿಗಳು ಆಲಯದ ದಕ್ಷಿಣ ಭಾಗದ ಬಳಿಯಲ್ಲಿ ನಿಂತಿದ್ದರು. ಮೇಘವು ಒಳಗಿನ ಅಂಗಳವನ್ನು ತುಂಬಿಸಿಕೊಂಡಿತ್ತು.
EZE 10:4 ಆಗ ಯೆಹೋವ ದೇವರ ಮಹಿಮೆಯು ಕೆರೂಬಿಗಳ ಮೇಲಿನಿಂದ ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಿಗೆ ಹೋಯಿತು. ಆಲಯವು ಮೇಘದಿಂದ ತುಂಬಿತ್ತು. ಆಗ ಯೆಹೋವ ದೇವರ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು.
EZE 10:5 ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತ ದೇವರು ಮಾತನಾಡುವ ಹಾಗೆ ಹೊರಗಣ ಅಂಗಳದವರೆಗೂ ಕೇಳಿಬಂತು.
EZE 10:6 ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ, “ಚಕ್ರಗಳ ಮಧ್ಯದಿಂದಲೂ, ಕೆರೂಬಿಯರ ಮಧ್ಯದಿಂದಲೂ ಬೆಂಕಿಯನ್ನು ತೆಗೆದುಕೊಳ್ಳಲು,” ಆಜ್ಞಾಪಿಸಿದನು. ಮನುಷ್ಯನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು.
EZE 10:7 ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಬೆಂಕಿಗೆ ಚಾಚಿ, ಸ್ವಲ್ಪ ತೆಗೆದುಕೊಂಡು ನಾರುಮಡಿಯನ್ನು ಧರಿಸಿಕೊಂಡಿದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು.
EZE 10:8 ಕೆರೂಬಿಯರಲ್ಲಿ ಅವರ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು.
EZE 10:9 ನಾನು ನೋಡಿದಾಗ, ಇಗೋ ಒಬ್ಬೊಬ್ಬ ಕೆರೂಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು. ಆ ಚಕ್ರಗಳ ವರ್ಣವು ಹೊಳೆಯುವ ಪೀತರತ್ನದ ಹಾಗಿತ್ತು.
EZE 10:10 ಆ ನಾಲ್ಕಕ್ಕೂ ಒಂದೇ ರೂಪವಿತ್ತು. ಚಕ್ರದೊಳಗೆ ಇನ್ನೊಂದು ಚಕ್ರವು ರಚಿಸಿದ್ದ ಹಾಗೆ ಇದ್ದವು.
EZE 10:11 ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು. ಕೆರೂಬಿಗಳು ಹೋದಂತೆ ಚಕ್ರಗಳು ತಿರುಗಲಿಲ್ಲ. ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.
EZE 10:12 ಅವುಗಳ ದೇಹ, ಬೆನ್ನು, ಕೈ, ರೆಕ್ಕೆ ಮತ್ತು ಚಕ್ರಗಳು ಇವೆಲ್ಲವುಗಳ ಸುತ್ತಲೂ ಕಣ್ಣುಗಳಿಂದ ತುಂಬಿದ್ದವು, ಮತ್ತು ಅವನ ಎಲ್ಲಾ ನಾಲ್ಕು ಚಕ್ರಗಳು ಕಣ್ಣುಗಳಿಂದ ತುಂಬಿದ್ದವು.
EZE 10:13 ಆ ಚಕ್ರಗಳನ್ನು, “ತಿರುಗುವ ಚಕ್ರಗಳು” ಎಂದು ಕರೆಯುತ್ತಾರೆ ಎಂದು ನಾನು ಕೇಳಿದೆ.
EZE 10:14 ಒಬ್ಬೊಬ್ಬ ಕೆರೂಬಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯ ಮುಖವು ಮನುಷ್ಯನ ಮುಖ, ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.
EZE 10:15 ಆಗ ಕೆರೂಬಿಯರು ಮೇಲಕ್ಕೆತ್ತಲಾದರು. ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಜೀವಗಳು ಇವೇ.
EZE 10:16 ಕೆರೂಬಿಯರು ಚಲಿಸಿದಾಗ, ಚಕ್ರಗಳು ಅವರ ಸಂಗಡ ಹೋದವು. ಕೆರೂಬಿಯರು ಭೂಮಿಯನ್ನು ಬಿಟ್ಟು ಮೇಲೇರುವಾಗ ತಮ್ಮ ರೆಕ್ಕೆಗಳನ್ನು ಚಾಚಿದಾಗ, ಅವರ ಚಕ್ರಗಳು ಪಕ್ಕಕ್ಕೆ ತಿರುಗಲಿಲ್ಲ.
EZE 10:17 ಜೀವಿಗಳ ಆತ್ಮ ಆ ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತು ಹೋದಾಗ ಇವೂ ನಿಂತುಹೋದವು. ಅವು ಏರಿದಾಗ, ಇವೂ ಅವುಗಳ ಜೊತೆಯಲ್ಲೇ ಏರಿದವು.
EZE 10:18 ಆಗ ಯೆಹೋವ ದೇವರ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು.
EZE 10:19 ನಾನು ನೋಡುವಾಗಲೇ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿಕೊಂಡು, ಭೂಮಿಯನ್ನು ಬಿಟ್ಟು ಮೇಲಕ್ಕೇರಿ ಹೋದರು. ಅವು ಹೊರಟಾಗ, ಚಕ್ರಗಳೂ ಅದರ ಸಂಗಡ ಇದ್ದವು. ಅವರು ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಇಸ್ರಾಯೇಲಿನ ದೇವರ ಮಹಿಮೆಯು ಅವರ ಮೇಲೆ ಇತ್ತು.
EZE 10:20 ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ. ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.
EZE 10:21 ಪ್ರತಿಯೊಬ್ಬನಿಗೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು. ಅವರ ರೆಕ್ಕೆಗಳ ಕೆಳಗೆ ಮನುಷ್ಯರ ಕೈಗಳ ರೂಪವಿತ್ತು.
EZE 10:22 ಅವುಗಳ ಮುಖಗಳ ರೂಪವು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಆ ಮುಖಗಳ ಹಾಗೆ ಇತ್ತು. ಅವರಲ್ಲಿ ಪ್ರತಿಯೊಬ್ಬರೂ ನೇರವಾಗಿ ಹೋಗುತ್ತಿದ್ದರು.
EZE 11:1 ಆಮೇಲೆ ದೇವರಾತ್ಮರು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿಗೆ, ನನ್ನನ್ನು ಎತ್ತಿಕೊಂಡು ಹೋದರು. ಪ್ರವೇಶದ್ವಾರದಲ್ಲಿ ಇಪ್ಪತ್ತೈದು ಮಂದಿ ಮನುಷ್ಯರು ಇದ್ದರು. ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗ ಯಾಜನ್ಯನನ್ನೂ, ಬೆನಾಯನ ಮಗ ಪೆಲಟೀಯನನ್ನೂ ನೋಡಿದೆನು.
EZE 11:2 ಆಮೇಲೆ ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ, ದುರಾಲೋಚನೆಗಳನ್ನು ಹೇಳಿಕೊಡುವವರು ಈ ಜನರೇ.
EZE 11:3 ಅವರು, ‘ಇತ್ತೀಚಿಗೆ ನಮ್ಮ ಮನೆಗಳು ನಿರ್ಮಾಣವಾಗಿಲ್ಲವೇ? ಈ ಪಟ್ಟಣವು ಪಾತ್ರೆ, ಮತ್ತು ನಾವು ಅದರಲ್ಲಿರುವ ಮಾಂಸ,’ ಎನ್ನುತ್ತಾರೆ.
EZE 11:4 ಆದ್ದರಿಂದ ಮನುಷ್ಯಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.”
EZE 11:5 ಯೆಹೋವ ದೇವರ ಆತ್ಮವು ನನ್ನ ಮೇಲೆ ಬಂದು ತಿಳಿಸಲು ಹೇಳಿದ್ದೇನೆಂದರೆ: “ಇಸ್ರಾಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನು ನಾನು ಬಲ್ಲೆನು.
EZE 11:6 ನೀವು ಈ ಪಟ್ಟಣದಲ್ಲಿ ನರಹತ್ಯೆಯನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
EZE 11:7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಕೊಂದು ಹಾಕಿದವರ ದೇಹಗಳೇ ಮಾಂಸ, ಈ ಪಟ್ಟಣವು ಬೇಯಿಸುವ ಪಾತ್ರೆ. ಆದರೆ ನಾನು ನಿಮ್ಮನ್ನು ಅದರಿಂದ ಹೊರಗೆ ತರುತ್ತೇನೆ.
EZE 11:8 ನೀವು ಖಡ್ಗಕ್ಕೆ ಭಯಪಟ್ಟಿರಿ. ನಾನು ನಿಮ್ಮ ಮೇಲೆ ಒಂದು ಖಡ್ಗವನ್ನು ತರುತ್ತೇನೆ. ಇದು ಸಾರ್ವಭೌಮ ಯೆಹೋವ ದೇವರ ನುಡಿ.
EZE 11:9 ನಾನು ನಿಮ್ಮನ್ನು ಪಟ್ಟಣದ ಮಧ್ಯದಿಂದ ಹೊರಗೆ ತಂದು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನ್ಯಾಯತೀರ್ಪುಗಳನ್ನು ನಡೆಸುವೆನು.
EZE 11:10 ನೀವು ಖಡ್ಗದಿಂದ ನಾಶವಾಗುವಿರಿ. ನಾನು ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.
EZE 11:11 ಈ ಪಟ್ಟಣವು ಪಾತ್ರೆಯಾಗುವುದಿಲ್ಲ. ನೀವು ಅದರಲ್ಲಿ ಮಾಂಸವೂ ಆಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಾನು ನ್ಯಾಯತೀರಿಸುವೆನು.
EZE 11:12 ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. ಏಕೆಂದರೆ ನೀವು ನನ್ನ ನಿಯಮಗಳಂತೆ ನಡೆಯಲಿಲ್ಲ. ನನ್ನ ನ್ಯಾಯವಿಧಿಗಳನ್ನು ಪಾಲಿಸಲಿಲ್ಲ. ಆದರೆ ನಿಮ್ಮ ಸುತ್ತಲಿರುವ ಇತರ ಜನಾಂಗಗಳ ಆಚಾರಗಳ ಪ್ರಕಾರ ಮಾಡಿದ್ದೀರಿ.”
EZE 11:13 ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು.
EZE 11:14 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 11:15 “ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಾಯೇಲ್ ವಂಶದ ಎಲ್ಲರಿಗೆ, ಯೆರೂಸಲೇಮಿನಲ್ಲೇ ಉಳಿದಿರುವವರು, ‘ಯೆಹೋವ ದೇವರ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೇ?
EZE 11:16 “ಆದ್ದರಿಂದ ನಾನು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರನ್ನು ಇತರ ಜನಾಂಗಗಳಿಂದ ದೂರ ಹಾಕಿದರೂ, ದೇಶಗಳಲ್ಲಿ ಚದರಿಸಿದರೂ, ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದವರೆಗೆ ಪರಿಶುದ್ಧ ಸ್ಥಳವಾಗಿರುವೆನು.’
EZE 11:17 “ಆದ್ದರಿಂದ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಶ್ಚಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ, ನೀವು ಚದರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ. ಇಸ್ರಾಯೇಲ್ ದೇಶವನ್ನು ನಿಮಗೆ ತಿರುಗಿ ಕೊಡುವೆನು.’
EZE 11:18 “ಅವರು ಅಲ್ಲಿಗೆ ಹಿಂತಿರುಗಿ ಮತ್ತು ಅದರಲ್ಲಿರುವ ಎಲ್ಲಾ ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ತೆಗೆದುಹಾಕುತ್ತಾರೆ.
EZE 11:19 ಅವರಿಗೆ ಒಂದೇ ಮನಸ್ಸನ್ನು ಕೊಡುವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು. ಅವರೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆಯುವೆನು. ಅವರಿಗೆ ಮೃದು ಹೃದಯವನ್ನು ಕೊಡುವೆನು.
EZE 11:20 ಆಗ ಅವರು ನನ್ನ ನಿಯಮಗಳನ್ನು ಕೈಗೊಂಡು ಜಾಗರೂಕತೆಯಿಂದ ಪಾಲಿಸುವರು. ನನ್ನ ನಿಯಮಗಳನ್ನು ಕೈಗೊಳ್ಳುವರು. ಅವರು ನನ್ನ ಜನರಾಗುವರು, ನಾನು ಅವರ ದೇವರಾಗುವೆನು.
EZE 11:21 ಆದರೆ ಯಾರ ಹೃದಯವು ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ಅನುಸರಿಸುತ್ತದೋ, ನಾನು ಅವರ ದುರ್ಮಾರ್ಗವನ್ನು ಅವರ ತಲೆಗೇ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 11:22 ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
EZE 11:23 ಯೆಹೋವ ದೇವರ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ, ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಪರ್ವತದ ಮೇಲೆ ನಿಂತಿತು.
EZE 11:24 ಅನಂತರ ದೇವರಾತ್ಮರು, ದೇವರ ಆತ್ಮರಿಂದಾದ ದರ್ಶನದಲ್ಲಿ ನನ್ನನ್ನು ಬಾಬಿಲೋನಿಯರ ದೇಶಕ್ಕೆ ಸೆರೆಯವರ ಬಳಿಗೆ ಎತ್ತಿಕೊಂಡು ಹೋದರು. ಆಗ ನಾನು ನೋಡಿದ ದರ್ಶನವು ನನ್ನಿಂದ ಮೇಲೆ ಹೋಯಿತು.
EZE 11:25 ಆಮೇಲೆ ಯೆಹೋವ ದೇವರು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯಲ್ಲಿರುವವರಿಗೆ ಹೇಳಿದೆನು.
EZE 12:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 12:2 “ಮನುಷ್ಯಪುತ್ರನೇ, ನೀನು ತಿರುಗಿಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವ, ಅವರಿಗೆ ನೋಡುವುದಕ್ಕೆ ಕಣ್ಣುಗಳುಂಟು, ಆದರೆ ನೋಡುವುದಿಲ್ಲ; ಕೇಳುವುದಕ್ಕೆ ಕಿವಿಗಳುಂಟು, ಕೇಳುವುದಿಲ್ಲ. ಅವರು ತಿರುಗಿಬೀಳುವ ಮನೆತನದವರು.
EZE 12:3 “ಆದ್ದರಿಂದ ಮನುಷ್ಯಪುತ್ರನೇ, ನೀನು ಸಲಕರಣೆಗಳನ್ನು ಸಿದ್ಧಮಾಡಿ, ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿಹೋಗು, ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿಗಳಾದವರ ಮನೆತನದವರಾದರೂ, ಒಂದು ವೇಳೆ ಅರ್ಥಮಾಡಿಕೊಳ್ಳಬಹುದು.
EZE 12:4 ನಿನ್ನ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು ಅವುಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು. ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ
EZE 12:5 ನೀನು ಅವರ ಕಣ್ಣುಗಳ ಮುಂದೆಯೇ ಗೋಡೆಯನ್ನು ಕೊರೆದು, ಅಲ್ಲಿಂದ ನಿನ್ನ ಸಲಕರಣೆಗಳನ್ನು ಹೊತ್ತುಕೊಂಡು ಹೊರಗೆ ಹೊರಟು ಹೋಗು.
EZE 12:6 ಅವರ ಕಣ್ಣುಗಳ ಮುಂದೆ ಸಲಕರಣೆಗಳನ್ನು ಹೆಗಲಿನ ಮೇಲೆ ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೋಗಬೇಕು; ನೆಲವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ.”
EZE 12:7 ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು. ನನ್ನ ಸರಕುಗಳನ್ನು ಹಗಲಿನಲ್ಲಿಯೇ ಹೊರಗೆ ತಂದೆನು. ಸಂಜೆಯಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು. ಅದನ್ನು ನಾನು ಮುಸ್ಸಂಜೆಯಲ್ಲಿ ಹೊರಗೆ ತಂದು, ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
EZE 12:8 ಬೆಳಗಿನ ಜಾವದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 12:9 “ಮನುಷ್ಯಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೇ?
EZE 12:10 “ಅವರಿಗೆ ನೀನು ಹೀಗೆ ಹೇಳಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ಈ ಪ್ರವಾದನೆಯು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ, ಅದರಲ್ಲಿರುವ ಸಮಸ್ತ ಇಸ್ರಾಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ.
EZE 12:11 ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಗುರುತಾಗಿದ್ದೇನೆ.’ “ನಾನು ಮಾಡಿದ ಹಾಗೆ ಅವರಿಗೆ ಮಾಡಲಾಗುವುದು. ಅವರು ಗುಲಾಮರಾಗಿ ಸೆರೆಗೆ ಹೋಗುವರು.
EZE 12:12 “ಅವರ ಮಧ್ಯದಲ್ಲಿರುವ ರಾಜಪುತ್ರನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೊರಟು ಹೋಗುವನು. ಅವರು ಗೋಡೆಯನ್ನು ಕೊರೆದು, ಆ ಕಿಂಡಿಯ ಮೂಲಕ ತಮ್ಮ ಸಲಕರಣೆಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖವನ್ನು ಮುಚ್ಚಿಕೊಳ್ಳುವನು.
EZE 12:13 ನನ್ನ ಬಲೆಯನ್ನೂ ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯರ ನಾಡಾದ ಬಾಬಿಲೋನಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
EZE 12:14 ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ, ಅವನ ಎಲ್ಲಾ ಸೈನ್ಯಗಳನ್ನೂ, ಎಲ್ಲಾ ದಿಕ್ಕುಗಳಿಗೆ ಚದರಿಸಿ, ಅವರ ಹಿಂದೆ ಖಡ್ಗವನ್ನು ಬೀಸುವೆನು.
EZE 12:15 “ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳ ಮೇಲೆ ಚೆಲ್ಲಾಪಿಲ್ಲಿಮಾಡುವಾಗ, ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.
EZE 12:16 ಆದರೆ ಅವರು ಎಲ್ಲಿ ಹೋಗುವರೋ, ಆ ಜನಾಂಗಗಳೊಳಗೆ ಅವರ ಹೇಯ ಕಾರ್ಯಗಳನ್ನು ಇವರು ತಿಳಿದುಕೊಳ್ಳುವಂತೆ ಅವರಲ್ಲಿ ಕೆಲವರನ್ನು ಖಡ್ಗದಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.”
EZE 12:17 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 12:18 “ಮನುಷ್ಯಪುತ್ರನೇ, ಆಹಾರವನ್ನು ನಡುಗುತ್ತಾ ಊಟಮಾಡು ಮತ್ತು ನೀರನ್ನು ನಡುಗುವಿಕೆಯಿಂದಲೂ, ಎಚ್ಚರಿಕೆಯಿಂದಲೂ ಕುಡಿ.
EZE 12:19 ನಿನ್ನ ದೇಶದ ಜನರಿಗೆ ಹೀಗೆ ಹೇಳು, ‘ಯೆರೂಸಲೇಮಿನ ನಿವಾಸಿಗಳಿಗೆ ಮತ್ತು ಇಸ್ರಾಯೇಲರ ದೇಶಕ್ಕೆ ಸಾರ್ವಭೌಮ ಯೆಹೋವ ದೇವರು ಹೇಳಿದ್ದೇನೆಂದರೆ, ಅವರು ತಮ್ಮ ರೊಟ್ಟಿಯನ್ನು ಎಚ್ಚರಿಕೆಯಿಂದಲೇ ತಿನ್ನುವರು, ನೀರನ್ನು ಅಂಜಿಕೆಯಿಂದಲೇ ಕುಡಿಯುವರು. ಅದರಲ್ಲಿ ವಾಸವಾಗಿರುವವರೆಲ್ಲರ ಹಿಂಸಾಚಾರದಿಂದ ಅವರ ದೇಶವು ಸೊತ್ತನ್ನೆಲ್ಲಾ ಕಳೆದುಕೊಂಡು ಹಾಳಾಗುವುದು.
EZE 12:20 ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವುವು. ದೇಶವು ನಿರ್ಜನವಾಗುವುದು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’ ”
EZE 12:21 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 12:22 “ಮನುಷ್ಯಪುತ್ರನೇ, ‘ದಿನಗಳು ಬಹಳವಾಗುತ್ತಿವೆ. ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂದು ಇಸ್ರಾಯೇಲ್ ದೇಶದಲ್ಲಿ ಹೇಳಿಕೊಳ್ಳುವ ಈ ಗಾದೆ ಏನು’?
EZE 12:23 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನಾನು ಈ ಗಾದೆಯನ್ನು ನಿಲ್ಲಿಸುತ್ತೇನೆ. ಅದನ್ನು ಇನ್ನು ಮೇಲೆ ಇಸ್ರಾಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವುದಿಲ್ಲ. ದಿನಗಳು ಹತ್ತಿರವಾಗಿವೆ. ಪ್ರತಿದರ್ಶನವು ನೆರವೇರಲಿದೆ’ ಎಂದು ಅವರಿಗೆ ಹೇಳು.
EZE 12:24 ‘ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ಸುಳ್ಳು ದರ್ಶನವೂ, ಮೋಸದ ಶಕುನವೂ ಇರುವುದಿಲ್ಲ.
EZE 12:25 ನಾನೇ ಯೆಹೋವ ದೇವರು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವುದು; ಅದು ಇನ್ನು ನಿಧಾನವಾಗುವುದಿಲ್ಲ. ದ್ರೋಹಿಗಳಾದ ಮನೆತನದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡೆಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 12:26 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 12:27 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು, ‘ಇವನಿಗಾದ ದರ್ಶನವು ಬಹುದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆ,’ ಎಂದು ಹೇಳುತ್ತಾರೆ.”
EZE 12:28 “ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ, ನನ್ನ ಯಾವುದೇ ಮಾತು ಇನ್ನು ತಡವಾಗದು. ನಾನು ಹೇಳಿದ್ದೆಲ್ಲವನ್ನು ನೆರವೇರುವುದೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 13:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 13:2 “ನರಪುತ್ರನೇ, ಪ್ರವಾದಿಸುತ್ತಿರುವ ಇಸ್ರಾಯೇಲಿನ ಮನೆತನದ ಪ್ರವಾದಿಗಳಿಗೆ ವಿರುದ್ಧವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಕಲ್ಪನೆಗಳಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು: ‘ಯೆಹೋವ ದೇವರ ವಾಕ್ಯವನ್ನು ಕೇಳಿರಿ;
EZE 13:3 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುತ್ತಿರುವ ಮೂರ್ಖ ಪ್ರವಾದಿಗಳೇ ನಿಮಗೆ ಕಷ್ಟ!
EZE 13:4 ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳಂತಿದ್ದಾರೆ.
EZE 13:5 ಯೆಹೋವ ದೇವರ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ಇಸ್ರಾಯೇಲ್ ಮನೆತನದವರ ಸುತ್ತಲೂ ಗೋಡೆಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರಲಿಲ್ಲ.
EZE 13:6 “ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು, ಯೆಹೋವ ದೇವರು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.
EZE 13:7 ನಾನು ಮಾತಾಡದೇ ಇದ್ದರೂ, “ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.
EZE 13:8 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಸುಳ್ಳಾಗಿ ಮಾತನಾಡಿದ್ದರಿಂದಲೂ, ಸುಳ್ಳನ್ನು ದರ್ಶಿಸಿದ್ದರಿಂದಲೂ ಇಗೋ, ನಾನು ನಿಮಗೆ ವಿರೋಧವಾಗಿರುವೆನು. ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 13:9 ಸುಳ್ಳಾದದ್ದನ್ನು ದರ್ಶಿಸಿ, ಸುಳ್ಳು ಕಣಿ ಹೇಳುವ ಪ್ರವಾದಿಗಳಿಗೆ ವಿರುದ್ಧವಾಗಿ ನನ್ನ ಹಸ್ತವಿರುವುದು. ಅವರು ನನ್ನ ಜನರ ಸಭೆಯಲ್ಲಿ ಇರುವುದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲಾಗುವುದೂ ಇಲ್ಲ. ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವುದೂ ಇಲ್ಲ. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
EZE 13:10 “ ‘ಏಕೆಂದರೆ ಸಮಾಧಾನವಿಲ್ಲದಿರುವಾಗ ಅವರು, “ಸಮಾಧಾನವಿದೆ,” ಎಂದು ಹೇಳಿ, ನನ್ನ ಜನರನ್ನು ತಪ್ಪು ದಾರಿಗೆ ನಡೆಸಿದ್ದಾರೆ. ಒಬ್ಬನು ದುರ್ಬಲ ಗೋಡೆಯನ್ನು ಕಟ್ಟಿದರೆ, ಈ ಪ್ರವಾದಿಗಳ ಗುಂಪು ಅದಕ್ಕೆ ಸುಣ್ಣ ಹಚ್ಚಿದ್ದಾರೆ.
EZE 13:11 ಆದ್ದರಿಂದ ಸುಣ್ಣ ಹಚ್ಚುತ್ತಿರುವವನಿಗೆ ಅದು ಬೀಳುವುದೆಂದು ಹೇಳು. ಅಲ್ಲಿ ವಿಪರೀತ ಮಳೆ ಬರುವುದು ಮತ್ತು ದೊಡ್ಡ ಕಲ್ಮಳೆಯು ಬೀಳುವುದು. ಬಿರುಗಾಳಿಯು ಅದನ್ನು ಸೀಳಿಬಿಡುವುದು.
EZE 13:12 “ಗೋಡೆ ಬಿದ್ದುಹೋದ ಮೇಲೆ, ನೀವು ಹಚ್ಚಿದ ಸುಣ್ಣ ಎಲ್ಲಿ?” ಎಂದು ನಿಮಗೆ ಕೇಳುವರಲ್ಲವೆ?
EZE 13:13 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದನ್ನು ನನ್ನ ರೋಷದಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ, ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳು ಸುರಿಯುವುವು.
EZE 13:14 ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ, ನೆಲಸಮಮಾಡಿ, ಅದರ ಅಸ್ತಿವಾರವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವಾಗ, ನೀವು ಅದರಲ್ಲಿ ನಾಶವಾಗುವಿರಿ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿದುಬರುವುದು.
EZE 13:15 ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿಕೊಂಡು, “ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇರುವುದಿಲ್ಲವೆಂದೂ,
EZE 13:16 ಯೆರೂಸಲೇಮಿನ ವಿಷಯ ಪ್ರವಾದಿಸಿ, ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ಇರುವುದಿಲ್ಲವೆಂದೂ, ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.” ’
EZE 13:17 “ಈಗ ಮನುಷ್ಯಪುತ್ರನೇ, ನೀನು ತಮ್ಮ ಸ್ವಂತ ಕಲ್ಪನೆಯಿಂದ ಪ್ರವಾದಿಸುವ ನಿನ್ನ ಜನರ ಪುತ್ರಿಯರಿಗೆ ವಿರೋಧವಾಗಿ ನಿನ್ನ ಮುಖವನ್ನಿಟ್ಟು, ಅವರಿಗೆ ವಿರೋಧವಾಗಿ ಪ್ರವಾದಿಸಿ,
EZE 13:18 ಹೀಗೆ ಹೇಳು ಎಂದು, ‘ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಪ್ರಾಣಗಳನ್ನು ಬೇಟೆಯಾಡಬೇಕೆಂದು ಎಲ್ಲರ ಮೊಣಕೈಗಳಿಗೆ ದಿಂಡುಗಳನ್ನು ಹೊಲೆದು ಮತ್ತು ಪ್ರತಿಯೊಬ್ಬನ ಎತ್ತರದ ತಲೆಗಳಿಗೆ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಪುತ್ರಿಯರಿಗೆ ಕಷ್ಟ! ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ, ನಿಮ್ಮ ಬಳಿಗೆ ಬರುವ ಪ್ರಾಣಗಳನ್ನು ಬದುಕಿಸುವಿರೋ?
EZE 13:19 ಸುಳ್ಳಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಸಾಯದಿರುವವರನ್ನು ಸಾಯಿಸಿ, ಸಾಯುವವರನ್ನು ಬದುಕಿಸಿ, ಒಂದು ಹಿಡಿ ಜವೆಗೋಧಿಗೂ, ತುಂಡು ರೊಟ್ಟಿಗೂ ನನ್ನನ್ನು ನನ್ನ ಜನರೊಳಗೆ ಅಪವಿತ್ರಗೊಳಿಸುವಿರೋ?
EZE 13:20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ವಿರೋಧವಾಗಿದ್ದೇನೆ. ಅವುಗಳನ್ನು ನಿಮ್ಮ ತೋಳುಗಳಿಂದ ಹರಿದುಬಿಡುವೆನು. ನೀವು ಬೇಟೆಯಾಡುವಂತೆ ಬೇಟೆಯಾಡಿದ ಪ್ರಾಣಗಳನ್ನು ಬಿಡಿಸುತ್ತೇನೆ.
EZE 13:21 ನಿಮ್ಮ ವಸ್ತ್ರಗಳನ್ನು ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುತ್ತೇನೆ. ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ. ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
EZE 13:22 ಏಕೆಂದರೆ ನಾನು ಯಾವನನ್ನು ದುಃಖಪಡಿಸಲಿಲ್ಲವೋ, ಆ ನೀತಿವಂತರ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು, ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವರನ್ನು ಪ್ರೋತ್ಸಾಹಿಸಿದ್ದೀರಿ.
EZE 13:23 ಆದ್ದರಿಂದ ನೀವು ಇನ್ನು ಮೇಲೆ ಸುಳ್ಳು ದರ್ಶನಗಳನ್ನು ಕಾಣುವುದಿಲ್ಲ ಮತ್ತು ಸುಳ್ಳು ದೈವೋಕ್ತಿಗಳನ್ನು ಅಭ್ಯಾಸಿಸುವುದಿಲ್ಲ. ಏಕೆಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ಬಿಡಿಸುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.’ ”
EZE 14:1 ಆಮೇಲೆ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನ ಮುಂದೆ ಕುಳಿತುಕೊಂಡರು.
EZE 14:2 ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 14:3 “ಮನುಷ್ಯಪುತ್ರನೇ, ಈ ಮನುಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ, ತಮ್ಮ ಅಕ್ರಮವಾದ ವಿಘ್ನಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವೆಲ್ಲವುಗಳಿಗಾಗಿ ನಾನು ಅವರನ್ನು ವಿಚಾರಿಸಬೇಕೇ?
EZE 14:4 ಆದ್ದರಿಂದ ನೀನು ಅವರ ಸಂಗಡ ಮಾತನಾಡಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲಿ ನೆಲೆಗೊಳಿಸಿ, ತಮ್ಮ ಅಕ್ರಮದ ವಿಘ್ನಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬರುವ ಅವನಿಗೆ ಯೆಹೋವ ದೇವರಾದ ನಾನು ಅವರ ವಿಗ್ರಹಗಳ ಸಮೂಹಕ್ಕೆ ತಕ್ಕ ಹಾಗೆ ಉತ್ತರಕೊಡುವೆನು.
EZE 14:5 ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’
EZE 14:6 “ಆದ್ದರಿಂದ ಇಸ್ರಾಯೇಲಿನ ಮನೆತನದವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮಾನಸಾಂತರಪಟ್ಟು ನಿಮ್ಮ ವಿಗ್ರಹಗಳನ್ನು ಬಿಟ್ಟು ನೀವಾಗಿಯೇ ತಿರುಗಿಕೊಳ್ಳಿರಿ. ನಿಮ್ಮ ಅಸಹ್ಯವಾದವುಗಳನ್ನೆಲ್ಲಾ ಬಿಟ್ಟು, ನಿಮ್ಮ ಮುಖಗಳನ್ನು ತಿರುಗಿಸಿರಿ.
EZE 14:7 “ ‘ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಇಸ್ರಾಯೇಲಿನಲ್ಲಿ ನೆಲೆಸಿರುವ ವಿದೇಶಿಗಳಲ್ಲಾಗಲಿ, ಯಾವನಾದರೂ ನನ್ನಿಂದ ಅಗಲಿ ವಿಗ್ರಹಗಳನ್ನು ಹೃದಯದಲ್ಲಿ ನೆಲೆಗೊಳಿಸಿಕೊಂಡು ಪಾಪಕಾರಿಯಾದ ಆ ವಿಘ್ನವನ್ನು ತನ್ನ ಮುಂದೆಯೇ ಇಟ್ಟುಕೊಂಡು, ಪ್ರವಾದಿಯ ಬಳಿಗೆ ಬಂದು, ಅವನ ಮೂಲಕ ದೈವೋತ್ತರವನ್ನು ಕೇಳಿಕೊಂಡರೆ, ಯೆಹೋವ ದೇವರಾದ ನಾನೇ ಉತ್ತರಕೊಡುವೆನು.
EZE 14:8 ನಾನು ಅಂಥವನ ಮೇಲೆ ಬಹುಕೋಪಗೊಂಡು, ಅವನನ್ನು ಗುರುತನ್ನಾಗಿಯೂ, ಗಾದೆಯನ್ನಾಗಿಯೂ ಮಾಡಿ, ನನ್ನ ಜನರ ಮಧ್ಯದೊಳಗಿಂದ ತೆಗೆದುಬಿಡುವೆನು. ಹೀಗೆ ನಾನೇ ಯೆಹೋವ ದೇವರು ಎಂದು ನಿಮಗೆ ಗೊತ್ತಾಗುವುದು.
EZE 14:9 “ ‘ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ, ಯೆಹೋವ ದೇವರಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ. ನಾನು ನನ್ನ ಕೈಯನ್ನು ಅವನ ವಿರುದ್ಧವಾಗಿ ಚಾಚಿ, ನನ್ನ ಜನರಾದ ಇಸ್ರಾಯೇಲರ ಮಧ್ಯದೊಳಗಿಂದ ಅವನನ್ನು ನಾಶಪಡಿಸುವೆನು.
EZE 14:10 ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು. ವಿಚಾರಿಸುವವನ ದಂಡನೆಯು ಹೇಗೆಯೋ ಹಾಗೆಯೇ, ಪ್ರವಾದಿಗೆ ದಂಡನೆಯೂ ಇರುವುದು.
EZE 14:11 ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ, ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವುದರಿಂದ ಅವರು ನನ್ನ ಜನರಾಗಿರುವರು, ಅವರಿಗೆ ನಾನು ದೇವರಾಗಿರುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 14:12 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 14:13 “ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ, ಅದರ ಜೀವನಾಧಾರವನ್ನು ತೆಗೆದುಹಾಕಿ, ಕ್ಷಾಮವು ಬರುವ ಹಾಗೆ ಮಾಡುವೆನು. ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಡುವೆನು.
EZE 14:14 ನೋಹನೂ ದಾನಿಯೇಲನೂ ಯೋಬನೂ ಎಂಬ ಈ ಮೂವರು ಅದರಲ್ಲಿದ್ದರೂ ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರವೇ ಉಳಿಸಿಕೊಳ್ಳುತ್ತಿದ್ದರು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 14:15 “ನಾನು ದುಷ್ಟಮೃಗಗಳನ್ನು ದೇಶದಲ್ಲಿ ಹಾದುಹೋಗುವಂತೆ ಮಾಡಿ, ಅದನ್ನು ನಿರ್ಜನಪಡಿಸಿ, ಹಾಳು ಮಾಡಿ, ಯಾರೂ ಮೃಗಗಳ ನಿಮಿತ್ತ ಹಾದುಹೋಗದಂತೆ ಮಾಡಿದರೆ,
EZE 14:16 ಈ ಮೂರು ಮನುಷ್ಯರಲ್ಲಿ ಅದರಲ್ಲಿ ಇದ್ದರೂ, ನನ್ನ ಜೀವದಾಣೆ ಅವರು ಪುತ್ರರನ್ನಾಗಲಿ, ಪುತ್ರಿಯರನ್ನಾಗಲಿ ಬಿಡಿಸಲು ಆಗುತ್ತಿರಲಿಲ್ಲ, ತಾವು ಮಾತ್ರ ತಪ್ಪಿಸಿಕೊಳ್ಳುವರು. ಆದರೆ ದೇಶವು ಹಾಳಾಗುವುದು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 14:17 “ಇಲ್ಲವೆ ನಾನು ಆ ದೇಶದ ಮೇಲೆ ಖಡ್ಗವನ್ನು ತರಿಸಿ, ‘ಖಡ್ಗವೇ, ಆ ದೇಶದಲ್ಲಿ ಹಾದುಹೋಗು,’ ಎಂದು ಹೇಳಿ, ಅದು ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟಾಗ,
EZE 14:18 ಈ ಮೂವರು ಅದರಲ್ಲಿದ್ದರೂ, ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 14:19 “ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಮರಣದಂಡನೆಯಾಗಿ ಅದರ ಮೇಲೆ ನನ್ನ ರೋಷವನ್ನು ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ತೆಗೆದುಹಾಕುವಾಗ,
EZE 14:20 ನೋಹನೂ, ದಾನಿಯೇಲನೂ, ಯೋಬನೂ ಅದರಲ್ಲಿದ್ದರೂ ನನ್ನ ಜೀವದಾಣೆ, ಅವರು ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 14:21 “ನಾನು ಖಡ್ಗ, ಬರಗಾಲ ಕ್ಷಾಮ, ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ, ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವುದು?
EZE 14:22 ಆದರೂ ಅದರಲ್ಲಿ ಪುತ್ರಪುತ್ರಿಯರಲ್ಲಿ ಕೆಲವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಉಳಿದು ಒಯ್ಯಲಾಗುವರು. ಅವರು ನಿಮ್ಮ ಬಳಿಗೆ ಬಂದಾಗ, ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ತಂದ ಕೇಡಿನ ವಿಷಯವಾಗಿಯೂ ಸಮಾಧಾನ ಹೊಂದುವಿರಿ.
EZE 14:23 ನೀವು ಅವರ ದುರ್ಮಾರ್ಗಗಳನ್ನೂ ದುಷ್ಕೃತ್ಯಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಅದರೊಳಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 15:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 15:2 “ಮನುಷ್ಯಪುತ್ರನೇ, ದ್ರಾಕ್ಷಿ ಗಿಡವು ಅಡವಿಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
EZE 15:3 ಇದರಿಂದ ಕಟ್ಟಿಗೆಯನ್ನು ತೆಗೆದುಕೊಂಡು ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವನನ್ನಾದರೂ ನೇತುಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
EZE 15:4 ಇದನ್ನು ಬೆಂಕಿಗೆ ಸೌದೆಯಾಗಿ ಹಾಕುತ್ತಾರೆ. ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡುತ್ತದೆ. ಅದರ ಮಧ್ಯ ಭಾಗವು ಸುಟ್ಟು ಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವುದೋ?
EZE 15:5 ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ, ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟುಹೋದ ಮೇಲೆ ಯಾವ ಕೆಲಸಕ್ಕೆ ಬಂದೀತು?”
EZE 15:6 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ವನವೃಕ್ಷಗಳಲ್ಲಿ ದ್ರಾಕ್ಷಿಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಯಾಗಿ ಮಾಡಿರುವೆನೋ ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ವಿನಾಶಕ್ಕೆ ಗುರಿಮಾಡಿದ್ದೇನೆ.
EZE 15:7 ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಬೆಂಕಿಯೊಳಗಿಂದ ಹೊರಗೆ ಬಂದು ತಪ್ಪಿಸಿಕೊಂಡರೂ, ಮತ್ತೊಂದು ಬೆಂಕಿಯು ಅವರನ್ನು ದಹಿಸಿಬಿಡುವುದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ, ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
EZE 15:8 ಅವರು ದ್ರೋಹ ಮಾಡಿದ್ದರಿಂದ ನಾನು ಆ ದೇಶವನ್ನು ಹಾಳುಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 16:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 16:2 “ನರಪುತ್ರನೇ, ಯೆರೂಸಲೇಮಿಗೆ ಅದರ ಅಸಹ್ಯವಾದವುಗಳನ್ನು ತಿಳಿದುಕೊಳ್ಳುವ ಹಾಗೆ ಮಾಡಿ,
EZE 16:3 ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾರೆ: ನಿಮ್ಮ ಪೂರ್ವಜರು ಮತ್ತು ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ; ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.
EZE 16:4 ನಿನ್ನ ಹುಟ್ಟಿದ ಸ್ಥಳದ ವಿಷಯವು: ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸಲಾಗಲಿಲ್ಲ; ಶುದ್ಧವಾಗುವ ಹಾಗೆ ನೀರಿನಲ್ಲಿ ತೊಳೆಯಲಾಗಲಿಲ್ಲ; ನಿನಗೆ ಉಪ್ಪನ್ನು ಸ್ವಲ್ಪವೂ ಸವರಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ;
EZE 16:5 ನಿನ್ನನ್ನು ಕರುಣಿಸಿ, ಕಟಾಕ್ಷಿಸಿ ಯಾರೂ ನಿನಗೆ ಒಂದು ಸಹಾಯವನ್ನೂ ಮಾಡಲಿಲ್ಲ. ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಕಿದರು.
EZE 16:6 “ ‘ನಾನು ನಿನ್ನ ಬಳಿಯಲ್ಲಿ ಹಾದುಹೋಗುವಾಗ, ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ನೋಡಿದಾಗ, “ಬದುಕು” ಎಂದೆನು.
EZE 16:7 ಹೊಲದಲ್ಲಿಯ ಮೊಳಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು, ನೀನು ಬಲಿತು, ಪ್ರಾಯವು ತುಂಬಿ, ನೀನು ಅತಿ ಸುಂದರಿಯಾದೆ, ನಿನ್ನ ಸ್ತನಗಳು ರೂಪಗೊಂಡವು, ನಿನ್ನ ಕೂದಲು ಬೆಳೆಯಿತು, ಮೊದಲು ನೀನು ಬರೀ ಬೆತ್ತಲೆಯಾಗಿದ್ದೆ.
EZE 16:8 “ ‘ಈಗ ನಾನು ನಿನ್ನ ಬಳಿ ಹಾದುಹೋಗುವಾಗ ನಿನ್ನನ್ನು ನೋಡಲು, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು. ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡಿದ್ದರಿಂದ ನೀನು ನನ್ನವಳಾದೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 16:9 “ ‘ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ನಿನ್ನ ರಕ್ತವನ್ನು ನಿನ್ನಿಂದ ತೊಳೆದೆನು, ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.
EZE 16:10 ನಾನು ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲುಹಂದಿಯ ತೊಗಲಿನ ಪಾದರಕ್ಷೆಗಳನ್ನು ಕೊಟ್ಟೆನು. ನಯವಾದ ನಾರುಮಡಿಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು;
EZE 16:11 ಆಭರಣಗಳಿಂದ ನಿನ್ನನ್ನು ಅಲಂಕರಿಸಿದೆನು: ನಾನು ನಿನ್ನ ಕೈಗಳಿಗೆ ಕಡಗಗಳನ್ನು ನಿನ್ನ ಕೊರಳಿಗೆ ಸರವನ್ನು ಹಾಕಿದೆನು.
EZE 16:12 ನಿನ್ನ ಮೂಗಿಗೆ ಮೂಗುತಿಯನ್ನೂ, ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ, ನಿನ್ನ ತಲೆಯ ಮೇಲೆ ಸುಂದರ ಕಿರೀಟವನ್ನೂ ಇಟ್ಟೆನು.
EZE 16:13 ನಿನ್ನ ಒಡವೆಗಳು ಬೆಳ್ಳಿ ಬಂಗಾರಗಳು, ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ, ನಿನ್ನ ಆಹಾರವು ನಯವಾದ ಹಿಟ್ಟು, ಜೇನು, ಎಣ್ಣೆ ತಿನ್ನುತ್ತಿದ್ದೆ. ನಿನ್ನ ಲಾವಣ್ಯವು ಅತಿ ಮನೋಹರವಾಗಿ ವೃದ್ಧಿಗೊಂಡು ನೀನು ರಾಣಿಯಾದೆ.
EZE 16:14 ನಾನು ನಿನಗೆ ಅನುಗ್ರಹಿಸಿದ ನನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು, ಇದು ಸಾರ್ವಭೌಮ ಯೆಹೋವ ದೇವರ ನುಡಿ.
EZE 16:15 “ ‘ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸೆಯಿಟ್ಟು, ನಿನ್ನ ಕೀರ್ತಿಯ ನಿಮಿತ್ತವಾಗಿ ವೇಶ್ಯೆಯಾದೆ. ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ವ್ಯಭಿಚಾರ ಮಾಡಿದೆ ಮತ್ತು ನಿನ್ನ ಸೌಂದರ್ಯ ಅವನದಾಯಿತು.
EZE 16:16 ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾ ಸ್ಥಳದಲ್ಲಿ ವ್ಯಭಿಚಾರ ಮಾಡಿದೆ; ನೀನು ಅವನ ಬಳಿಗೆ ಹೋದೆ ಮತ್ತು ಅವನು ನಿನ್ನ ಸೌಂದರ್ಯವನ್ನು ತೆಗೆದುಕೊಂಡಿದ್ದಾನೆ.
EZE 16:17 ಇದಲ್ಲದೆ ನಾನು ನಿನಗೆ ಬೆಳ್ಳಿಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದೆ.
EZE 16:18 ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು, ಅವರಿಗೆ ಹೊದಿಸಿ, ನನ್ನ ಎಣ್ಣೆಯನ್ನೂ, ಧೂಪವನ್ನೂ ಅವರ ಮುಂದೆ ಇಟ್ಟೆ.
EZE 16:19 ನಾನು ನಿಮಗೆ ಒದಗಿಸಿದ ಆಹಾರ, ಹಿಟ್ಟು, ಎಣ್ಣೆ ಮತ್ತು ಜೇನುತುಪ್ಪವನ್ನು ನಾನು ನಿಮಗೆ ತಿನ್ನಲು ಕೊಟ್ಟಿದ್ದೇನೆ. ನೀವು ಅವರ ಮುಂದೆ ಪರಿಮಳಯುಕ್ತ ಧೂಪವನ್ನು ಅರ್ಪಿಸಿದ್ದೀರಿ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 16:20 “ ‘ಇದಾದ ಮೇಲೆ ನನಗೆ ಹುಟ್ಟಿದ ನನ್ನ ಪುತ್ರರನ್ನೂ, ಪುತ್ರಿಯರನ್ನೂ ವಿಗ್ರಹಗಳ ಆಹಾರಕ್ಕಾಗಿ ಯಜ್ಞವಾಗಿ ಅರ್ಪಿಸಿದೆ. ಈ ನಿನ್ನ ವ್ಯಭಿಚಾರ ಸಾಕಾಗಲಿಲ್ಲವೋ?
EZE 16:21 ನೀನು ನನ್ನ ಮಕ್ಕಳನ್ನು ಕೊಂದು, ವಿಗ್ರಹಗಳಿಗೆ ಬಲಿಯಾಗಿ ಅರ್ಪಿಸಿದೆ.
EZE 16:22 ಎಲ್ಲಾ ಅಸಹ್ಯ ಕಾರ್ಯಗಳನ್ನೂ, ವ್ಯಭಿಚಾರಗಳನ್ನೂ ಮಾಡುತ್ತಿದ್ದಾಗ, ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ, ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದುದನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.
EZE 16:23 “ ‘ನಿನಗೆ ಕಷ್ಟ! ಕಷ್ಟ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಅವನ ಎಲ್ಲಾ ದುಷ್ಟತನದ ಹೊರತಾಗಿ,
EZE 16:24 ನೀವು ನಿಮಗಾಗಿ ಒಂದು ದಿಬ್ಬವನ್ನು ನಿರ್ಮಿಸಿದ್ದೀರಿ ಮತ್ತು ಪ್ರತಿ ಸಾರ್ವಜನಿಕ ಚೌಕದಲ್ಲಿ ಎತ್ತರದ ದೇವಾಲಯವನ್ನು ನಿರ್ಮಿಸಿದ್ದೀರಿ.
EZE 16:25 ಪ್ರತಿಯೊಂದು ದಾರಿಯ ಕೊನೆಯಲ್ಲಿಯೂ ಎತ್ತರದ ದೇವಾಲಯವನ್ನು ನಿರ್ಮಿಸಿ, ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು, ಹಾದುಹೋಗುವ ಪ್ರತಿಯೊಬ್ಬನಿಗೂ ನಿನ್ನ ಕಾಲುಗಳನ್ನು ಅಗಲಿಸಿದೆ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದೆ.
EZE 16:26 ಇದಲ್ಲದೆ ಅತಿಕಾಮಿಗಳಾದ ನಿನ್ನ ನೆರೆಯವರಾದ ಈಜಿಪ್ಟಿನವರ ಸಂಗಡ ವ್ಯಭಿಚಾರ ಮಾಡಿದೆ; ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದೆ;
EZE 16:27 ಆದ್ದರಿಂದ ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಭೂಪ್ರದೇಶವನ್ನು ಕಡಿಮೆ ಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು, ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಪುತ್ರಿಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ.
EZE 16:28 ಇದಲ್ಲದೆ ಅಸ್ಸೀರಿಯರೊಂದಿಗೂ ವ್ಯಭಿಚಾರ ಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ; ಹೌದು, ಅವರ ಸಂಗಡ ವ್ಯಭಿಚಾರ ಮಾಡಿದ್ದೀಯೆ; ಆದರೂ ತೃಪ್ತಿಯಾಗಲಿಲ್ಲ.
EZE 16:29 ಇದಲ್ಲದೆ ಈ ನಿನ್ನ ವ್ಯಭಿಚಾರವನ್ನು ವ್ಯಾಪಾರಸ್ಥರಾದ ಬಾಬಿಲೋನಿಯ ದೇಶದವರೆಗೂ ಹೆಚ್ಚು ಮಾಡಿದಿ. ಆದರೂ ನೀನು ಇದರಲ್ಲಿ ತೃಪ್ತಿ ಹೊಂದಲಿಲ್ಲ.
EZE 16:30 “ ‘ನೀನು ನಾಚಿಕೆಯಿಲ್ಲದ ವೇಶ್ಯೆಯಂತೆ ವರ್ತಿಸಿದಾಗ ನಾನು ಕೋಪದಿಂದ ತುಂಬಿದೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 16:31 ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ, ದಿಬ್ಬವನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು, ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿ ನೀನಲ್ಲ.
EZE 16:32 “ ‘ಆದರೆ ಗಂಡನಿಗೆ ಬದಲಾಗಿ ಪರರನ್ನು ಬಯಸುವ ವ್ಯಭಿಚಾರಿಯಾದ ಹೆಂಡತಿಯಾಗಿರುವೆ!
EZE 16:33 ಸಾಮಾನ್ಯವಾಗಿ ವ್ಯಭಿಚಾರಿಗಳಿಗೆ ಬಹುಮಾನ ಕೊಡುತ್ತಾರೆ. ಆದರೆ ನೀನೇ ನಿನ್ನ ಪ್ರಿಯರಿಗೆಲ್ಲ ಬಹುಮಾನಗಳನ್ನು ಕೊಟ್ಟು, ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಲಂಚ ಕೊಡುತ್ತಿರುವೆ.
EZE 16:34 ಹೀಗಿರುವುದರಿಂದ ನಿನ್ನ ವ್ಯಭಿಚಾರವು ಇತರ ವೇಶ್ಯೆಯರ ವ್ಯಭಿಚಾರಕ್ಕಿಂತ ಭಿನ್ನ. ವ್ಯಭಿಚಾರ ಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ. ನೀನು ಬಹುಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವುದಿಲ್ಲ. ಆದ್ದರಿಂದ ನೀನು ಭಿನ್ನಳಾಗಿದ್ದು.
EZE 16:35 “ ‘ಆದಕಾರಣ ವ್ಯಭಿಚಾರಿಣಿಯೇ, ನೀನು ಯೆಹೋವ ದೇವರ ವಾಕ್ಯವನ್ನು ಕೇಳು.
EZE 16:36 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನಿನ್ನ ಮೋಹವನ್ನು ಸುರಿಸಿದ ಕಾರಣದಿಂದಲೂ, ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ, ನಿನ್ನ ಅಸಹ್ಯ ವಿಗ್ರಹಗಳಿಂದಲೂ, ನೀನು ಆಹುತಿ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ,
EZE 16:37 ನೀನು ಆನಂದಪಟ್ಟ ನಿನ್ನ ಪ್ರಿಯರೆಲ್ಲರನ್ನು ಮತ್ತು ಹಗೆಮಾಡಿದವರೆಲ್ಲರನ್ನು ಸಹ ಕೂಡಿಸುವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ, ಅವರೆದುರಿಗೆ ನಿನ್ನನ್ನು ಬೆತ್ತಲೆ ಮಾಡಿ, ನಿನ್ನ ಮಾನವನ್ನು ಬಯಲು ಮಾಡುವೆ. ಆಗ ಅವರು ನಿನ್ನನ್ನು ಬೆತ್ತಲೆಯಾಗಿ ನೋಡುವರು.
EZE 16:38 ವ್ಯಭಿಚಾರ ಮಾಡಿದ ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ನಿನ್ನ ಮೇಲೆ ರಕ್ತ ಸುರಿಸುವೆನು.
EZE 16:39 ಅನಂತರ ನಿನ್ನನ್ನು ಅವರ ಕೈಗಳಿಗೆ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ, ನಿನ್ನ ಉನ್ನತ ಸ್ಥಾನಗಳನ್ನು ಒಡೆದು ಬಿಡುವರು. ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಆಭರಣಗಳನ್ನು ಕಸಿದುಕೊಂಡು, ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿಹೋಗುವರು.
EZE 16:40 ಅವರು ನಿನಗೆ ವಿರುದ್ಧವಾಗಿ ಒಂದು ಗುಂಪನ್ನು ಕರೆದುಕೊಂಡು ಬಂದು, ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಖಡ್ಗಗಳಿಂದ ನಿನ್ನನ್ನು ತಿವಿಯುವರು.
EZE 16:41 ಅವರು ನಿನ್ನ ಮನೆಗಳನ್ನು ಸುಟ್ಟು, ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯತೀರಿಸುವರು. ನೀನು ವ್ಯಭಿಚಾರ ಮಾಡುವುದನ್ನು ನಾನು ನಿಲ್ಲಿಸುವೆನು. ನೀನು ನಿನ್ನ ಪ್ರಿಯರಿಗೆ ಕೂಲಿ ಸಹ ಕೊಡುವುದನ್ನು ನಿಲ್ಲಿಸುವೆನು.
EZE 16:42 ಈ ರೀತಿ ನಿನ್ನ ಮೇಲಿನ ನನ್ನ ಸಿಟ್ಟನ್ನು ತೀರಿಸುವೆನು. ನನ್ನ ರೋಷವನ್ನು ನಿನ್ನ ಕಡೆಯಿಂದ ತೊಲಗಿಸುತ್ತೇನೆ, ಶಾಂತನಾಗಿ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ.
EZE 16:43 “ ‘ನೀನು ನಿನ್ನ ಯೌವನದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ, ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿನ್ನ ಇತರ ಎಲ್ಲಾ ಅಸಹ್ಯವಾದವುಗಳ ಜೊತೆಗೆ, ಈ ಅಪವಿತ್ರತೆಯನ್ನು ನೀನು ಮಾಡಲಿಲ್ಲವೇ?
EZE 16:44 “ ‘ “ತಾಯಿಯಂತೆ ಮಗಳು,” ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಪ್ರತಿಯೊಬ್ಬರು ಹೇಳುವರು.
EZE 16:45 ಗಂಡನಿಗೂ, ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು. ಗಂಡನಿಗೂ, ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ. ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.
EZE 16:46 ನಿನ್ನ ಉತ್ತರ ದಿಕ್ಕಿನಲ್ಲಿ ಪುತ್ರಿಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ. ದಕ್ಷಿಣ ದಿಕ್ಕಿನಲ್ಲಿ ಪುತ್ರಿಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ.
EZE 16:47 ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ. ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ. ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ.
EZE 16:48 ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು ಮತ್ತು ಅವಳ ಪುತ್ರಿಯರು; ನೀನು ನಿನ್ನ ಪುತ್ರಿಯರು ಮಾಡಿದೆ ಹಾಗೆ ಮಾಡಿಲಿಲ್ಲ.
EZE 16:49 “ ‘ಸೊದೋಮ್ ಎಂಬ ನಿನ್ನ ತಂಗಿಯ ಪಾಪವನ್ನು ನೋಡು; ಗರ್ವವ, ಅತಿ ಭೋಜನ, ಸ್ವಾರ್ಥತೆ; ಇವು ಆಕೆಯಲ್ಲಿಯೂ ಆಕೆಯ ಪುತ್ರಿಯರಲ್ಲಿಯೂ ಇದ್ದವು. ಆಕೆಯು ದೀನ ದರಿದ್ರರಿಗೆ ಸಹಾಯ ಮಾಡಲಿಲ್ಲ.
EZE 16:50 ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯವಾದವುಗಳನ್ನು ನಡೆಸಿದರು. ಆದ್ದರಿಂದ ನಾನು ಅದನ್ನು ನೋಡಿ, ಅವರನ್ನು ನಿರ್ಮೂಲ ಮಾಡಿದೆನು.
EZE 16:51 ಸಮಾರ್ಯವೆಂಬಾಕೆಯು ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದೆ. ನೀನು ಮಾಡಿದ ಲೆಕ್ಕವಿಲ್ಲದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ.
EZE 16:52 ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆಪಡು. ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ. ಅವರು ನಿನಗಿಂತ ನೀತಿವಂತರು. ಹೌದು, ನೀನು ನಿನ್ನ ಸಹೋದರಿಯರನ್ನು ನೀತಿವಂತರೆಂದು ತೋರ್ಪಡಿಸಿದ್ದರಿಂದ ನೀನೇ ನಾಚಿಕೆಪಟ್ಟು, ನಿನ್ನ ನಿಂದೆಯನ್ನು ಹೊತ್ತುಕೋ.
EZE 16:53 “ ‘ಸೊದೋಮ್ ಮತ್ತು ಆಕೆಯ ಕುಮಾರಿಯರ ಹಾಗೂ ಸಮಾರ್ಯ ಮತ್ತು ಆಕೆಯ ಕುಮಾರಿಯ ಸೌಭಾಗ್ಯವನ್ನು ಪುನಃ ನೀಡುವೆನು. ಅದರೊಂದಿಗೆ ನಿನ್ನ ಸೌಭಾಗ್ಯವನ್ನೂ ಮರಳಿಸುವೆನು.
EZE 16:54 ಏಕೆಂದರೆ ನೀನು ನಿನ್ನ ನಿಂದೆಯನ್ನು ಹೊತ್ತುಕೊಂಡು, ಅವರನ್ನು ಆಧರಿಸುವಾಗ ಲಜ್ಜೆಪಡುವೆ, ನಾಚಿಕೆಗೊಳ್ಳುವೆ.
EZE 16:55 ಆಗ ಸಮಾರ್ಯ, ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ, ಅವರ ಪುತ್ರಿಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ, ನಿನ್ನ ಪುತ್ರಿಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ.
EZE 16:56 ನಿನ್ನ ಸಹೋದರಿಯರಾದ ಸೊದೋಮನ್ನು ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲಿಲ್ಲ.
EZE 16:57 ಅರಾಮಿನ ಪುತ್ರಿಯರಿಂದಲೂ ಮತ್ತು ಅದರ ಸುತ್ತಲಿರುವಂತ ಎಲ್ಲವುಗಳಿಂದಲೂ ಮತ್ತು ನಿನ್ನನ್ನು ಉದಾಸೀನ ಮಾಡಿದಂಥ ಎಲ್ಲಾ ಫಿಲಿಷ್ಟಿಯರ ಪುತ್ರಿಯರಿಂದಲೂ, ನಿನಗೆ ನಿಂದೆಯು ಬಂದ ಹಾಗೆ ನಿನ್ನ ಕೆಟ್ಟತನವು ಪ್ರಕಟವಾಗುವುದಕ್ಕೆ ಪೂರ್ವದಲ್ಲಿಯೇ
EZE 16:58 ನೀನು ನಿನ್ನ ದುಷ್ಕರ್ಮಗಳ ಮತ್ತು ನಿನ್ನ ಅಸಹ್ಯಗಳ ಫಲವನ್ನು ಅನುಭವಿಸಬೇಕಾಗಿ ಬಂತು, ಎಂದು ಯೆಹೋವ ದೇವರು ಹೇಳುತ್ತಾರೆ.
EZE 16:59 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ. ನೀನು ಒಡಂಬಡಿಕೆಯನ್ನು ಮೀರಿ, ನನ್ನ ಆಣೆಯನ್ನು ತಿರಸ್ಕರಿಸಿರುವೆ.
EZE 16:60 ಆದರೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ನಿನಗಾಗಿ ನಿತ್ಯವಾದ ಒಡಂಬಡಿಕೆಯೊಂದನ್ನು ಸ್ಥಾಪಿಸುವೆನು.
EZE 16:61 ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು, ನಿನ್ನ ಸಹೋದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವೆ. ಅವರನ್ನು ನಿನ್ನ ಪುತ್ರಿಯರಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆಯಿಂದಲ್ಲ.
EZE 16:62 ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು. ಆದ್ದರಿಂದ ನಾನೇ ಯೆಹೋವ ದೇವರೆಂದು ನಿಮಗೆ ಗೊತ್ತಾಗುವುದು.
EZE 16:63 ಆಗ ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ಜ್ಞಾಪಕಕ್ಕೆ ತಂದುಕೊಂಡು, ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದು ಎಂದು ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 17:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 17:2 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನ್ನು ಒಗಟಾಗಿ ಹೇಳು.
EZE 17:3 ಅವರಿಗೆ ಹೇಳತಕ್ಕದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಶಕ್ತಿಶಾಲಿ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ಮತ್ತು ವಿಧವಿಧವಾದ ಬಣ್ಣಬಣ್ಣದ ಪುಕ್ಕಗಳಿಂದ ತುಂಬಿದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಕೊಂಬೆಯನ್ನು ಹಿಡಿದು,
EZE 17:4 ಅದರ ಚಿಗುರುಗಳ ಕೊನೆಯನ್ನು ಕಿತ್ತು, ವ್ಯಾಪಾರದ ದೇಶಕ್ಕೆ ತೆಗೆದುಕೊಂಡುಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.
EZE 17:5 “ ‘ಅದು ದೇಶದ ಬೀಜವನ್ನೂ ಸಹ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿಯಲ್ಲಿ ಇರಿಸಿತು. ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿತು.
EZE 17:6 ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷಿಗಿಡವಾಯಿತು. ಅದರ ರೆಂಬೆಗಳು ಅವನ ಕಡೆಗೆ ತಿರುಗಿಕೊಂಡವು. ಅದರ ಬೇರುಗಳು ಅದರ ಕೆಳಗಿದ್ದವು. ಹೀಗೆ ಅದು ದ್ರಾಕ್ಷಿಗಿಡವಾಯಿತು. ಕೊಂಬೆಗಳು ಹುಟ್ಟಿಕೊಂಡು ಬಳ್ಳಿಗಳು ಹಬ್ಬಿದವು.
EZE 17:7 “ ‘ಶಕ್ತಿಶಾಲಿ ರೆಕ್ಕೆಗಳೂ, ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು. ಆಗ ಆ ದ್ರಾಕ್ಷಿ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅವನ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅವನ ಮೂಲಕ ನೀರನ್ನು ಪಡೆಯುತ್ತಿತ್ತು.
EZE 17:8 ಅದು ಕೊಂಬೆಗಳನ್ನು ಬೆಳೆಸಿ ಫಲಕೊಡುವ ಹಾಗೆಯೂ, ಒಳ್ಳೆಯ ದ್ರಾಕ್ಷಿಗಿಡ ಆಗುವ ಹಾಗೆಯೂ, ಒಳ್ಳೆಯ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲಾಗಿತ್ತು.’
EZE 17:9 “ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮೃದ್ಧಿಯಾಗಿರುವುದೋ? ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ, ಅದು ಒಣಗುವುದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿ ಹೋದಾಗ, ಅದನ್ನು ಬೇರುಸಹಿತ ಕೀಳಬೇಕಾದರೆ ಮಹಾಬಲವಾಗಲಿ ಅಥವಾ ಬಹಳ ಜನರಾಗಲಿ ಇರಬೇಕಿಲ್ಲ.
EZE 17:10 ಹೌದು, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವುದೇ? ಅದಕ್ಕೆ ಪೂರ್ವದಿಕ್ಕಿನ ಗಾಳಿ ಬಡಿಯುವಾಗ ಅದು ಸಂಪೂರ್ಣವಾಗಿ ಒಣಗುವುದಿಲ್ಲವೇ? ಅದು ಮೊಳೆತ ಪಾತಿಗಳಲ್ಲಿಯೇ ಒಣಗಿ ಹೋಗುವುದಿಲ್ಲವೇ?’ ”
EZE 17:11 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 17:12 “ ‘ಇದರ ಅಭಿಪ್ರಾಯ ನಿಮಗೆ ತಿಳಿಯುವುದಿಲ್ಲವೋ?’ ಎಂದು ತಿರುಗಿಬೀಳುವ ಮನೆಯವರಿಗೆ ಹೇಳು ಮತ್ತು ಅವರಿಗೆ, ‘ಇಗೋ, ಬಾಬಿಲೋನಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸನನ್ನೂ, ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಒಯ್ದಿದ್ದಾನೆ.
EZE 17:13 ಅರಸನ ಸಂತಾನದವರನ್ನು ಕರೆದುಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿ, ಅವನಿಂದ ಪ್ರಮಾಣ ಮಾಡಿಸಿ, ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
EZE 17:14 ಆ ರಾಜ್ಯವು ಮೇಲೇಳದ ಹಾಗಿದ್ದರೂ, ಅವನು ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.
EZE 17:15 ಆದರೆ ಅರಸನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು, ತನ್ನ ರಾಯಭಾರಿಗಳನ್ನು ಈಜಿಪ್ಟಿಗೆ ಕಳುಹಿಸಿ, ತನಗೆ ಕುದುರೆಗಳನ್ನೂ, ಬಹಳ ಜನರನ್ನೂ ಕೊಡಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿಯಾಗುವನೋ? ಇಂತಹ ಸಂಗತಿಗಳನ್ನು ಮಾಡುವವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆಯನ್ನು ಮುರಿದು ತಪ್ಪಿಸಿಕೊಳ್ಳಲಾಗುವುದೋ?
EZE 17:16 “ ‘ನಿಶ್ಚಯವಾಗಿ ಯಾವನಿಂದ ಅರಸನಾಗಿ ಆಯ್ಕೆಗೊಂಡನೋ ಎಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಡಂಬಡಿಕೆಯನ್ನು ಮೀರಿದನೋ, ನನ್ನ ಜೀವದಾಣೆ ಅವನು ಇರುವಲ್ಲಿಯೇ ಬಾಬಿಲೋನಿನ ಮಧ್ಯದಲ್ಲಿ ಇವನು ಸಾಯುವನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 17:17 ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನೂ, ಕೋಟೆಗಳನ್ನೂ ಕಟ್ಟಿದರೂ ಯುದ್ಧದಲ್ಲಿ ಅವನಿಗೆ ಏನೂ ಪ್ರಯೋಜನವಾಗುವುದಿಲ್ಲ.
EZE 17:18 ಅವನು ಒಡಂಬಡಿಕೆಯನ್ನು ಮುರಿದು, ಪ್ರಮಾಣ ವಚನವನ್ನು ತಿರಸ್ಕರಿಸಿದನು. ಅವನು ಒಡಂಬಡಿಕೆಯಲ್ಲಿ ತನ್ನ ಹಸ್ತವನ್ನಿಟ್ಟಿದ್ದರೂ ಈ ಎಲ್ಲಾ ಸಂಗತಿಗಳನ್ನು ಮಾಡಿದ್ದರಿಂದ ಅವನು ತಪ್ಪಿಸಿಕೊಳ್ಳಲಾರನು.
EZE 17:19 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ ನಿಶ್ಚಯವಾಗಿ ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ, ಅವನು ಮೀರಿದ ಒಡಂಬಡಿಕೆಯನ್ನೂ ಅವನ ತಲೆಯ ಮೇಲೆಯೇ ಹೊರಿಸುವೆನು.
EZE 17:20 ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ. ಆಗ ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಬಾಬಿಲೋನಿಗೆ ಕರೆತಂದಿದ್ದೇನೆ ಮತ್ತು ಅವನು ನನಗೆ ನಂಬಿಕೆದ್ರೋಹ ಮಾಡಿದ ಕಾರಣ ಅಲ್ಲಿ ಅವನಿಗೆ ನ್ಯಾಯತೀರ್ಪು ವಿಧಿಸುತ್ತೇನೆ.
EZE 17:21 ಅವನ ಸೈನ್ಯಗಳೆಲ್ಲಾ ಖಡ್ಗದಿಂದ ಬೀಳುವುದು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಹೋಗುವರು. ಆಗ ಯೆಹೋವ ದೇವರಾದ ನಾನೇ ಅದನ್ನು ಹೇಳಿದೆನೆಂದು ನಿಮಗೆ ತಿಳಿಯುವುದು.
EZE 17:22 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು. ಇದರ ತುದಿಯಲ್ಲಿರುವ ಎಳೆಯದಾದ ಕೊಂಬೆಯನ್ನು ಕತ್ತರಿಸಿ, ಎತ್ತರವಾದ ಪರ್ವತದ ಮೇಲೆ ನಾಟುವೆನು.
EZE 17:23 ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು. ಅದು ಕೊಂಬೆಗಳಲ್ಲಿ ಹುಟ್ಟಿಕೊಂಡು ಫಲಫಲಿಸುವುದು; ಸೊಂಪಾದ ದೇವದಾರು ಆಗುವುದು. ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಗಳೂ, ಅದರ ಕೊಂಬೆಗಳ ನೆರಳಿನ ಕೆಳಗೆ ವಾಸಮಾಡುವುವು.
EZE 17:24 ಯೆಹೋವ ದೇವರಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರ ಪಡಿಸಿ, ಹಸುರಾಗಿರುವುದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ, ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವುದು. “ ‘ಯೆಹೋವ ದೇವರಾದ ನಾನೇ ಮಾತನಾಡಿ, ಅದನ್ನು ನಡೆಸಿದ್ದೇನೆ.’ ”
EZE 18:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 18:2 “ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಈ ಗಾದೆಯನ್ನು ಉಲ್ಲೇಖಿಸುವುದರ ಅರ್ಥವೇನು: “ ‘ಪಿತೃಗಳು ಹುಳಿದ್ರಾಕ್ಷಿಗಳನ್ನು ತಿಂದರು, ಮಕ್ಕಳ ಹಲ್ಲು ಚಳಿತು ಹೋಯಿತು.’
EZE 18:3 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವುದಿಲ್ಲ.
EZE 18:4 ಎಲ್ಲಾ ಪ್ರಾಣಗಳು ನನ್ನವೇ, ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ. ಪಾಪ ಮಾಡುವವನೇ ಸಾಯುವನು.
EZE 18:5 “ಆದರೆ ಒಬ್ಬ ಮನುಷ್ಯನು ನೀತಿವಂತನಾಗಿದ್ದು, ನೀತಿಯನ್ನೂ ನ್ಯಾಯವನ್ನೂ ನಡೆಸಿ,
EZE 18:6 ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಾಗಿರುವ ಸ್ತ್ರೀಯನ್ನು ಸಮೀಪಿಸದೆ,
EZE 18:7 ಯಾರನ್ನೂ ಉಪದ್ರವಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸೆ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಿರುವವನಿಗೆ ಬಟ್ಟೆಯನ್ನು ಹೊದಿಸಿ,
EZE 18:8 ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯದಿಂದ ತನ್ನ ಕೈಯನ್ನು ಹಿಂತೆಗೆದು ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
EZE 18:9 ಸತ್ಯವನ್ನು ನಡೆಸುವುದಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಗೊಂಡು ಸತ್ಯಪರನಾಗಿ ನಡೆದರೆ, ಅವನು ನೀತಿವಂತನು ಮತ್ತು ನಿಶ್ಚಯವಾಗಿ ಬದುಕುವನು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.
EZE 18:10 “ಒಂದು ವೇಳೆ ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
EZE 18:11 ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ, “ಪರ್ವತಗಳ ಪೂಜಾಸ್ಥಳಗಳಲ್ಲಿ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ,
EZE 18:12 ಬಡವರನ್ನೂ, ದರಿದ್ರರನ್ನೂ ಉಪದ್ರವಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ, ಒತ್ತೆಗಳನ್ನು ಹಿಂದೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯವಾದವುಗಳನ್ನು ಮಾಡಿ,
EZE 18:13 ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭ ಪಡೆಯುವವನು ಆಗಿದ್ದರೆ, ಅವನು ಬದುಕುವನೋ? ಅವನು ಬದುಕುವುದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿದ್ದರಿಂದ ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.
EZE 18:14 “ಒಂದು ವೇಳೆ ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಆಲೋಚಿಸಿ, ಇಂಥಾ ಕಾರ್ಯಗಳನ್ನು ನಡೆಸದೆ,
EZE 18:15 “ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ,
EZE 18:16 ಯಾರನ್ನೂ ಹಿಂಸಿಸದೆ, ಒತ್ತೆಯನ್ನು ಕೇಳದೆ, ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಾದವನಿಗೆ ವಸ್ತ್ರವನ್ನು ಹೊದಿಸಿ,
EZE 18:17 ತನ್ನ ಕೈಯನ್ನು ಪಾಪ ಮಾಡುವುದರಿಂದ ಹಿಂತೆಗೆದು ಬಡ್ಡಿಯನ್ನೂ, ಲಾಭವನ್ನೂ ತೆಗೆದುಕೊಳ್ಳದೆ, ನನ್ನ ವಿಧಿಗಳನ್ನು ಪಾಲಿಸಿ, ನನ್ನ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವುದಿಲ್ಲ, ಅವನು ನಿಶ್ಚಯವಾಗಿ ಬದುಕುವನು.
EZE 18:18 ಇವನ ತಂದೆಯಾದರೊ ಸ್ವಜನರನ್ನು ಬಲಾತ್ಕಾರ ಮಾಡಿದ್ದರಿಂದಲೂ, ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ, ತನ್ನ ಜನರ ಮಧ್ಯದಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದಲೂ ಅವನು ತನ್ನ ಅಕ್ರಮದಲ್ಲಿ ಸಾಯುವನು.
EZE 18:19 “ಆದರೂ ಇನ್ನೂ ನೀವು ಹೇಳುವುದೇನು? ‘ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲವೇ?’ ಎಂದು ಹೇಳುವಿರಿ. ಮಗನು ನ್ಯಾಯವನ್ನೂ, ನೀತಿಯನ್ನೂ ಮಾಡಿ, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು.
EZE 18:20 ಪಾಪ ಮಾಡುವವನೇ ಸಾಯುವನು. ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲ; ನೀತಿವಂತನ ನೀತಿಯು ಅವನ ಮೇಲೆಯೇ ಇರುವುದು; ದುಷ್ಟನ ದುಷ್ಟತನವು ಅವನ ಮೇಲೆಯೇ ಇರುವುದು.
EZE 18:21 “ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು, ನ್ಯಾಯವನ್ನೂ, ನೀತಿಯನ್ನೂ ನಡೆಸಿದರೆ, ಅವನು ಸಾಯದೆ ಖಂಡಿತವಾಗಿ ಬದುಕುವನು.
EZE 18:22 ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
EZE 18:23 ದುಷ್ಟನು ಸಾಯುವುದರಲ್ಲಿ ನನಗೆ ಸ್ವಲ್ಪ ಸಂತೋಷವಿರುವುದೋ?” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. “ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ಬದುಕಿದರೆ ನನಗೆ ಸಂತೋಷವಲ್ಲವೇ?
EZE 18:24 “ಆದರೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ, ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿರುವ ಎಲ್ಲಾ ಸುಕೃತ್ಯಗಳು ಅವನ ಲೆಕ್ಕಕ್ಕೆ ಸೇರುವುದಿಲ್ಲ. ಅವನು ಮಾಡಿರುವ ಅಪರಾಧದಿಂದಲೂ, ಪಾಪದಿಂದಲೂ ಅವುಗಳಲ್ಲಿಯೇ ಅವನು ಸಾಯುವನು.
EZE 18:25 “ಆದರೆ ನೀವು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತೀರಿ. ಇಸ್ರಾಯೇಲ್ ಜನರೇ, ಈಗ ಕೇಳಿರಿ, ನನ್ನ ಮಾರ್ಗವು ಸರಿಯಲ್ಲವೇ? ನಿಜಕ್ಕೂ ನಿಮ್ಮ ಮಾರ್ಗಗಳೇ ಸರಿಯಲ್ಲ.
EZE 18:26 ಒಬ್ಬ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಪಾಪವನ್ನು ಮಾಡಿದರೆ, ಅವನು ಅದಕ್ಕಾಗಿ ಸಾಯಬೇಕು; ಹೌದು, ಅವನು ಮಾಡಿದ ಪಾಪದಿಂದಲೇ ಅವನು ಸಾಯಬೇಕು.
EZE 18:27 ಒಬ್ಬ ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯವನ್ನು ಅನುಸರಿಸಿದರೆ, ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
EZE 18:28 ಏಕೆಂದರೆ ಅವನು ತಾನು ಮಾಡಿದ ದುಷ್ಕೃತ್ಯಗಳನ್ನು ಯೋಚಿಸಿ, ಅವುಗಳನ್ನು ಬಿಟ್ಟು ತಿರುಗಿಕೊಳ್ಳುವುದರಿಂದ ಸಾಯದೆ ನಿಶ್ಚಯವಾಗಿ ಬದುಕುವನು.
EZE 18:29 ಆದರೆ ಇಸ್ರಾಯೇಲ್ ಜನರು, ‘ಯೆಹೋವ ದೇವರ ಮಾರ್ಗ ನೀತಿಯುಕ್ತವಲ್ಲ,’ ಎನ್ನುತ್ತಾರೆ. ಇಸ್ರಾಯೇಲ್ ಜನರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಅನೀತಿಯ ಮಾರ್ಗಗಳಲ್ಲವೇ?
EZE 18:30 “ಆದ್ದರಿಂದ ಇಸ್ರಾಯೇಲ್ ಜನರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ಪ್ರತಿಯೊಬ್ಬನಿಗೆ ನ್ಯಾಯತೀರಿಸುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿಮ್ಮ ದುಷ್ಟತನಗಳನ್ನೆಲ್ಲಾ ಬಿಟ್ಟು ತಿರುಗಿಕೊಳ್ಳಿರಿ. ಆಗ ಪಾಪವು ನಿಮ್ಮ ಪತನಕ್ಕೆ ಕಾರಣವಾಗುವುದಿಲ್ಲ.
EZE 18:31 ನೀವು ಮಾಡುವ ದುಷ್ಕೃತ್ಯಗಳನ್ನೆಲ್ಲಾ ನಿಮ್ಮಿಂದ ಎಸೆದುಬಿಡಿರಿ. ಹೊಸ ಹೃದಯವನ್ನೂ, ಹೊಸ ಆತ್ಮವನ್ನೂ ನೀವು ಪಡೆದುಕೊಳ್ಳಿರಿ. ಇಸ್ರಾಯೇಲಿನ ಮನೆತನದವರೇ, ನೀವು ಸಾಯುವುದೇಕೆ?
EZE 18:32 ಏಕೆಂದರೆ ಯಾವುದೇ ವ್ಯಕ್ತಿಯ ಸಾವಿನಲ್ಲಿ ನನಗೆ ಸಂತೋಷವಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಆದಕಾರಣ ಮಾನಸಾಂತರಪಟ್ಟು ಬಾಳಿರಿ.
EZE 19:1 “ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನರ ವಿಷಯವಾಗಿ ಈ ಪ್ರಲಾಪವನ್ನೆತ್ತಿ,
EZE 19:2 ಹೀಗೆ ಹೇಳು: “ ‘ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ತನ್ನ ಮರಿಗಳನ್ನು ಸಾಕಿ, ಯುವ ಸಿಂಹಗಳ ನಡುವೆ ವಾಸಿಸಿತು.
EZE 19:3 ಅವಳೂ ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು, ಇದು ಪ್ರಾಯದ ಸಿಂಹವಾಯಿತು. ಇದು ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.
EZE 19:4 ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು, ಅವರ ಗುಂಡಿಯಲ್ಲಿ ಇದನ್ನು ಹಿಡಿದುಕೊಂಡರು. ಸಂಕೋಲೆಗಳಿಂದ ಬಂಧಿಸಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
EZE 19:5 “ ‘ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕಳೆದುಕೊಂಡೆನೆಂದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು, ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.
EZE 19:6 ಅದೂ ಸಿಂಹಗಳ ನಡುವೆ ತಿರುಗಾಡಿ, ಪ್ರಾಯದ ಸಿಂಹವಾಗಿ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.
EZE 19:7 ಅವರ ಅರಮನೆಗಳನ್ನು ಹಾಳುಮಾಡಿತು, ಅವರ ನಗರಗಳನ್ನೂ ನಾಶಮಾಡಿತು, ಅದರ ಘರ್ಜನೆಯ ಶಬ್ದದಿಂದಾಗಿ ದೇಶವೂ, ಅದರಲ್ಲಿದ್ದ ಎಲ್ಲರೂ ದಂಗಾದವು.
EZE 19:8 ಆಗ ಜನಾಂಗಗಳು ಸುತ್ತಲಿನ ಪ್ರಾಂತಗಳೊಳಗಿಂದ ಕೂಡಿಬಂದು, ಅದಕ್ಕೆ ವಿರೋಧವಾಗಿ ನಿಂತು, ಅದರ ಮೇಲೆ ಬಲೆಯನ್ನೊಡ್ಡಿದರು, ಆಗ ಅದು ಅವರ ಗುಂಡಿಯಲ್ಲಿ ಸಿಕ್ಕಿಬಿದ್ದಿತು.
EZE 19:9 ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಪಂಜರದಲ್ಲಿ ಹಾಕಿ, ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾಯೇಲಿನ ಪರ್ವತಗಳ ಮೇಲೆ ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿದರು.
EZE 19:10 “ ‘ನಿನ್ನ ತಾಯಿ ನೀರಿನ ಬಳಿಯಲ್ಲಿ ನೆಟ್ಟ ದ್ರಾಕ್ಷಿ ಗಿಡದ ಹಾಗೆ ಇದ್ದಾಳೆ. ಅದು ಸಮೃದ್ಧಿಯಾದ ನೀರಾವರಿಯಿಂದ ಫಲವುಳ್ಳದ್ದಾಗಿಯೂ ಇದೆ.
EZE 19:11 ಆಳುವವರ ರಾಜದಂಡಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ. ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ. ಹಾಗೆಯೇ ಅದು ಬಹು ಕೊಂಬೆಗಳ ಮಧ್ಯದಲ್ಲಿ ಎತ್ತರವಾಗಿ ಕಾಣಬರುತ್ತಿದೆ.
EZE 19:12 ಆದರೆ ಆ ಲತೆಯನ್ನು ರೋಷದಲ್ಲಿ ಕಿತ್ತು ನೆಲಕ್ಕೆ ಬಿಸಾಡಿದರು. ಪೂರ್ವದಿಕ್ಕಿನ ಗಾಳಿಯು ಅದರ ಫಲವನ್ನು ಒಣಗಿಸಿತು. ಅದರ ಬಲವಾದ ಬಳ್ಳಿಗಳು ಮುರಿದು ಒಣಗಿಹೋದವು. ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
EZE 19:13 ಈಗ ಅದು ಮರುಭೂಮಿಯಲ್ಲಿ ಒಣಗಿ, ನೀರಿಲ್ಲದಂಥ ಪ್ರದೇಶದಲ್ಲಿ ನೆಡಲಾಗಿದೆ.
EZE 19:14 ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು, ಅದರಲ್ಲಿ ಫಲವನ್ನು ತಿಂದುಬಿಟ್ಟಿದೆ. ಅದರಲ್ಲಿ ಆಳುವುದಕ್ಕೆ ರಾಜದಂಡಕ್ಕಾಗಿ ತಕ್ಕ ಬಲವುಳ್ಳ ಬಳ್ಳಿಯು ಈಗ ಇಲ್ಲ.’ ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.”
EZE 20:1 ಏಳನೆಯ ವರ್ಷದ, ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವ ದೇವರ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತುಕೊಂಡರು.
EZE 20:2 ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 20:3 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
EZE 20:4 “ನೀನು ಅವರಿಗೆ ನ್ಯಾಯತೀರಿಸುವೆಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸುವೆಯೋ? ಹಾಗಾದರೆ ಅವರ ಪಿತೃಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
EZE 20:5 ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇಸ್ರಾಯೇಲನ್ನು ಆಯ್ದುಕೊಂಡ ದಿವಸದಲ್ಲಿ ಯಾಕೋಬನ ವಂಶದವರಿಗೆ ನನ್ನ ಕೈಯೆತ್ತಿ, “ನಿಮ್ಮ ಸಾರ್ವಭೌಮ ಯೆಹೋವ ದೇವರು ನಾನೇ” ಎಂದು ಈಜಿಪ್ಟ್ ದೇಶದಲ್ಲಿ ಅವರಿಗೆ ಹೇಳಿದೆನು.
EZE 20:6 ನಾನು ಅವರಿಗೆ ಪ್ರಮಾಣಮಾಡಿ ಈಜಿಪ್ಟ್ ದೇಶದಿಂದ ಹೊರಗೆ ತಂದು, ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ದೇಶಕ್ಕೆ ಅವರನ್ನು ಆ ದಿವಸದಲ್ಲಿ ಕರೆತಂದೆನು.
EZE 20:7 ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”
EZE 20:8 “ ‘ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ಕಣ್ಣಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ. ಅವರು ಈಜಿಪ್ಟಿನ ವಿಗ್ರಹಗಳನ್ನು ಬಿಡಲಿಲ್ಲ. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಈಜಿಪ್ಟ್ ದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
EZE 20:9 ಆದರೆ ಅವರು ಯಾರ ಮಧ್ಯದಲ್ಲಿದ್ದರೋ, ನಾನು ಯಾರ ಮುಂದೆ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯಪಡಿಸಿದೆನೋ ಆ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸವನ್ನು ಮಾಡಿದೆನು.
EZE 20:10 ಆದ್ದರಿಂದ ನಾನು ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆತಂದು, ಮರುಭೂಮಿಯೊಳಗೆ ಅವರನ್ನು ಬರಮಾಡಿದೆನು.
EZE 20:11 ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು, ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
EZE 20:12 ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ, ಅವರಿಗೂ ಗುರುತಾಗಿರುವುದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
EZE 20:13 “ ‘ಆದರೆ ಇಸ್ರಾಯೇಲ್ ಜನರು ಮರುಭೂಮಿಯಲ್ಲಿಯೂ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ, ನನ್ನ ಅಪ್ಪಣೆಗಳನ್ನು ತಿರಸ್ಕರಿಸಿದರು. ಅವುಗಳಿಗೆ ವಿಧೇಯನಾಗುವವನು ಅವುಗಳಿಂದ ಜೀವಿಸುವನು. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿದು, ಅವರನ್ನು ಮರುಭೂಮಿಯಲ್ಲಿ ನಾಶಮಾಡುವೆನೆಂದು ಹೇಳಿದೆನು.
EZE 20:14 ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
EZE 20:15 ಆದರೂ ಹಾಲೂ ಜೇನೂ ಹರಿಯುವಂಥ ದೇಶಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಮರುಭೂಮಿಯಲ್ಲಿ ಅವರಿಗೆ ನನ್ನ ಕೈಯೆತ್ತಿ ಪ್ರಮಾಣಮಾಡಿದೆನು.
EZE 20:16 ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ವಿಶ್ರಾಂತಿಯ ದಿನಗಳನ್ನು ಅಪವಿತ್ರ ಮಾಡಿದ್ದರು.
EZE 20:17 ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು. ನಾನು ಅವರನ್ನು ಮರುಭೂಮಿಯಲ್ಲಿ ಅಂತ್ಯಗೊಳಿಸಲಿಲ್ಲ.
EZE 20:18 ಮರುಭೂಮಿಯಲ್ಲಿ ನಾನು ಅವರ ಮಕ್ಕಳಿಗೆ ಹೇಳಿದ್ದೇನೆಂದರೆ, “ನೀವು ನಿಮ್ಮ ತಂದೆಗಳ ನಿಯಮಗಳನ್ನು ಅನುಸರಿಸಬೇಡಿರಿ, ಅವರ ನ್ಯಾಯಗಳನ್ನು ಕೈಕೊಳ್ಳಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿರಿ.
EZE 20:19 ನಾನೇ ಯೆಹೋವ ದೇವರೂ ನಿಮ್ಮ ದೇವರೂ ಆಗಿದ್ದೇನೆ. ನನ್ನ ನಿಯಮಗಳಲ್ಲೇ ನಡೆಯಿರಿ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಕೈಗೊಂಡು ಅವುಗಳನ್ನೇ ಮಾಡಿರಿ.
EZE 20:20 ನನ್ನ ಸಬ್ಬತ್ ದಿನಗಳನ್ನು ಪರಿಶುದ್ಧ ಮಾಡಿರಿ, ನಾನೇ ನಿಮ್ಮ ದೇವರಾದ ಯೆಹೋವ ದೇವರು ಎಂದು ಅವು ನಿಮಗೂ ನನಗೂ, ನೀವು ತಿಳಿಯುವ ಹಾಗೆ ಗುರುತುಗಳಾಗಿರುವುವು.”
EZE 20:21 “ ‘ಆದರೆ ಮಕ್ಕಳು ನನಗೆ ವಿರೋಧವಾಗಿ ತಿರುಗಿಬಿದ್ದರು. ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ, ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಪಾಲಿಸಿ ನಡೆಯಲಿಲ್ಲ. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದಿರಿ. ಆಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ, ನನ್ನ ಕೋಪವನ್ನು ಮರುಭೂಮಿಯಲ್ಲಿ ಅವರ ಮೇಲೆ ತೀರಿಸಿ ಬಿಡುವೆನೆಂದೂ ಹೇಳಿದೆನು.
EZE 20:22 ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
EZE 20:23 ನಾನು ಅವರನ್ನು ಇತರ ಜನಾಂಗಗಳಲ್ಲಿ ಚದರಿಸುತ್ತೇನೆಂದೂ, ದೇಶಗಳಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಅವರ ಮೇಲೆ ಕೈಯೆತ್ತಿ ಪ್ರಮಾಣಮಾಡಿದೆನು.
EZE 20:24 ಏಕೆಂದರೆ ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದರು. ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
EZE 20:25 ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ, ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
EZE 20:26 ಅವರು ತಮ್ಮ ಚೊಚ್ಚಲು ಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿದುಕೊಳ್ಳುವರು.’
EZE 20:27 “ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡಿ ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನಗೆ ವಿರುದ್ಧವಾಗಿ ಬಹಳ ಅಪರಾಧಮಾಡಿದ್ದರಲ್ಲಿಯೂ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
EZE 20:28 ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಮರಗಳನ್ನೂ ನೋಡಿ, ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಸುವಾಸನೆಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
EZE 20:29 ಆಗ ನಾನು ಅವರಿಗೆ ಹೇಳಿದ್ದೇನೆಂದರೆ: ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದವರೆಗೂ ಬಾಮಾ ಎಂದು ಕರೆಯುವರು.’ ”
EZE 20:30 “ಆದ್ದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದ ವಿಗ್ರಹಗಳ ಹಿಂದೆ ಹೋಗುತ್ತೀರೋ?
EZE 20:31 ನಿಮ್ಮ ದಾನಗಳನ್ನು ತರುವಾಗಲೂ, ಬೆಂಕಿಯಲ್ಲಿ ನಿಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಾಗಲೂ, ನೀವು ಇಂದಿನವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಇಸ್ರಾಯೇಲ್ ವಂಶದವರೇ, ನೀವು ನನ್ನನ್ನು ವಿಚಾರಿಸಲು ಅನುಮತಿಸಬೇಕೆ? ನನ್ನ ಜೀವದಾಣೆ ನಾನು ನಿಮ್ಮನ್ನು ವಿಚಾರಿಸಲು ಅನುಮತಿಸುವುದಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 20:32 “ ‘ “ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”
EZE 20:33 ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡೆಸುತ್ತೇನೆ.
EZE 20:34 ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ, ನಿಮ್ಮನ್ನು ಜನರೊಳಗಿಂದ ಹೊರತಂದು ನೀವು ಚದರಿಹೋಗಿರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸುವೆನು.
EZE 20:35 ನಿಮ್ಮನ್ನು ಜನರಿರುವ ಮರುಭೂಮಿಯೊಳಗೆ ತಂದು, ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ನ್ಯಾಯತೀರ್ಪು ಮಾಡುವೆನು.
EZE 20:36 ಅದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಈಜಿಪ್ಟ್ ದೇಶದ ಮರುಭೂಮಿಯಲ್ಲಿ ನ್ಯಾಯತೀರ್ಪು ಮಾಡಿದೆನು. ಈಗಲೂ ನಿಮ್ಮ ಸಂಗಡ ನ್ಯಾಯತೀರ್ಪು ಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 20:37 ನೀವು ನನ್ನ ಕೋಲಿನ ಕೆಳಗೆ ನಡೆಯುವಾಗ, ನನ್ನ ಗಮನವು ನಿಮ್ಮ ಮೇಲೆ ಇರುತ್ತದೆ ಮತ್ತು ನಾನು ನಿಮ್ಮನ್ನು ಒಡಂಬಡಿಕೆಗೆ ತರುತ್ತೇನೆ.
EZE 20:38 ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.
EZE 20:39 “ ‘ನಿಮ್ಮ ವಿಷಯವಾಗಿ, ಓ ಇಸ್ರಾಯೇಲಿನ ಮನೆತನದವರೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೋಗಿರಿ, ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ. ಆದರೆ ನಂತರ ನೀವು ಖಂಡಿತವಾಗಿಯೂ ನನ್ನ ಮಾತನ್ನು ಕೇಳುತ್ತೀರಿ ಮತ್ತು ನಿಮ್ಮ ದಾನಗಳಿಂದಲೂ, ನಿಮ್ಮ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
EZE 20:40 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಪರಿಶುದ್ಧ ಪರ್ವತದಲ್ಲಿಯೇ, ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನದವರೆಲ್ಲರೂ, ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ, ನಿಮ್ಮ ಉತ್ತಮ ಅರ್ಪಣೆಗಳನ್ನೂ, ನಿಮ್ಮ ಕಾಣಿಕೆಗಳ ಪ್ರಥಮ ಫಲವನ್ನೂ, ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
EZE 20:41 ನಾನು ನಿಮ್ಮನ್ನು ಇತರ ಜನಾಂಗಗಳೊಳಗಿಂದ ಹೊರತಂದು, ನೀವು ಚದರಿಸುವ ದೇಶದೊಳಗಿಂದ ಕೂಡಿಸುವಾಗ, ನಿಮ್ಮನ್ನು ಸುವಾಸನೆಯಂತೆ ಅಂಗೀಕರಿಸುವೆನು. ಇತರ ಜನಾಂಗಗಳ ಮುಂದೆ ನನ್ನನ್ನು ಪರಿಶುದ್ಧನೆಂದು ತೋರಿಸುವೆನು.
EZE 20:42 ನಾನು ನಿಮ್ಮ ಮೇಲೆ ಇಸ್ರಾಯೇಲ್ ದೇಶದಲ್ಲಿ ನನ್ನ ಕೈಯೆತ್ತಿ ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಿಂದ ನಿಮ್ಮನ್ನು ಕರೆದುಕೊಂಡು ಬರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ.
EZE 20:43 ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು, ನೀವು ಯಾವ ಸಂಗತಿಗಳಿಂದ ಅಶುದ್ಧವಾಗಿದ್ದೀರೋ, ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕ ಮಾಡಿಕೊಳ್ಳುವಿರಿ. ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿಯಲ್ಲಿಯೇ ನೀವು ಅಸಹ್ಯರಾಗುವಿರಿ.
EZE 20:44 ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳ ಪ್ರಕಾರವಲ್ಲ, ನಿಮ್ಮ ದುಷ್ಕೃತ್ಯಗಳ ಪ್ರಕಾರವಲ್ಲ, ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 20:45 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 20:46 “ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ, ದಕ್ಷಿಣದ ಕಡೆಗೆ ಮಾತನಾಡು. ದಕ್ಷಿಣ ಬಯಲು ಮರುಭೂಮಿಗೆ ವಿರೋಧವಾಗಿ ಪ್ರವಾದಿಸು.
EZE 20:47 ದಕ್ಷಿಣದ ಮರುಭೂಮಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರ ವಾಕ್ಯವನ್ನು ಕೇಳು. ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ. ಅದು ನಿನ್ನಲ್ಲಿರುವ ಎಲ್ಲಾ ಹಸಿಮರಗಳನ್ನು ಮತ್ತು ಎಲ್ಲಾ ಒಣ ಮರಗಳನ್ನು ತಿಂದುಬಿಡುವುದು. ಉರಿಯುವ ಜ್ವಾಲೆ ಆರಿಹೋಗುವುದಿಲ್ಲ. ದಕ್ಷಿಣ ಮೊದಲುಗೊಂಡು ಉತ್ತರದವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟುಹೋಗುವುವು.
EZE 20:48 ಯೆಹೋವ ದೇವರಾದ ನಾನೇ ಅದನ್ನು ಹಚ್ಚಿದೆನೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವರು, ಅದು ಆರಿಹೋಗುವುದಿಲ್ಲ.’ ”
EZE 20:49 ಆಗ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ‘ಅವನು ಸಾಮ್ಯಗಳನ್ನು ಹೇಳುವುದಿಲ್ಲವೇ?’ ಎಂದು ನನ್ನ ವಿಷಯದಲ್ಲಿ ಅವರು ಹೇಳುತ್ತಾರೆ,” ಎಂದೆನು.
EZE 21:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 21:2 “ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖವಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸಿ,
EZE 21:3 ‘ಇಸ್ರಾಯೇಲ್ ದೇಶಕ್ಕೆ ಹೇಳಬೇಕಾದದ್ದೇನೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರಗೆ ತೆಗೆದು, ನಿನ್ನೊಳಗಿರುವ ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವೆನು.
EZE 21:4 ಆಮೇಲೆ ನಾನು ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವುದರಿಂದ ನನ್ನ ಖಡ್ಗವು ದಕ್ಷಿಣದಿಂದ ಮೊದಲುಗೊಂಡು ಉತ್ತರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆಯನ್ನು ಬಿಟ್ಟು ಹೋಗುವುದು.
EZE 21:5 ಆಗ ಯೆಹೋವ ದೇವರಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹೊರಗೆ ತೆಗೆದೆನೆಂದು ಜನರೆಲ್ಲರಿಗೂ ತಿಳಿಯುವುದು, ಅದು ಮತ್ತೆ ತಿರುಗಿ ಬರುವುದೇ ಇಲ್ಲ.’
EZE 21:6 “ಆದ್ದರಿಂದ ಮನುಷ್ಯಪುತ್ರನೇ, ನರಳಾಡು! ಮುರಿದ ಹೃದಯ ಮತ್ತು ಕಹಿ ದುಃಖದಿಂದ ಅವರ ಮುಂದೆ ನರಳಾಡು.
EZE 21:7 ‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 21:8 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 21:9 “ಮನುಷ್ಯಪುತ್ರನೇ, ಪ್ರವಾದಿಸಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು: “ ‘ಆ ಒಂದು ಖಡ್ಗವು ಹದಮಾಡಲಾಗಿದೆ; ಮೆರುಗೂ ಸಹ ಮಾಡಲಾಗಿದೆ.
EZE 21:10 ಸಂಹರಿಸಲು ಸಾಣೆಹಿಡಿದಿದೆ; ಮಿಂಚುವಂತೆ ಮಸೆಯಲಾಗಿದೆ. “ ‘ಹಾಗಾದರೆ ನನ್ನ ಮಗ ಯೆಹೂದದ ರಾಜದಂಡದಲ್ಲಿ ನಾವು ಸಂತೋಷ ಪಡಬಹುದೋ? ಅಂಥ ಪ್ರತಿಯೊಂದು ಬೆತ್ತವನ್ನೂ ಖಡ್ಗವು ತಿರಸ್ಕರಿಸುತ್ತದೆ.
EZE 21:11 “ ‘ಖಡ್ಗವು ಕೈಯಲ್ಲಿ ಅದು ಹಿಡಿಯಲಾಗುವ ಹಾಗೆ ಮಸೆಯಲು ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಖಡ್ಗಕ್ಕೆ ಹದವನ್ನೂ, ಸಾಣೆಯನ್ನೂ ಮಾಡಲಾಗಿದೆ.
EZE 21:12 ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು. ಏಕೆಂದರೆ ಅದು ನನ್ನ ಜನರ ಮೇಲೆಯೂ, ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಇರುವುದು. ಖಡ್ಗದ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವುದು. ಆದ್ದರಿಂದ ನಿನ್ನ ಎದೆಯನ್ನು ಬಡಿದುಕೋ.
EZE 21:13 “ ‘ಪರಿಶೋಧನೆಯು ಖಂಡಿತವಾಗಿ ಬರುವುದಿಲ್ಲ. ಖಡ್ಗವು ತಿರಸ್ಕರಿಸುವ ಯೆಹೂದದ ರಾಜದಂಡವು ಮುಂದುವರಿಯದಿದ್ದರೆ ಹೇಗೆ? ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
EZE 21:14 “ಆದ್ದರಿಂದ ನೀನು ಮನುಷ್ಯಪುತ್ರನೇ, ಕೈಗೆ ಕೈತಟ್ಟಿ ಪ್ರವಾದಿಸು. ಹತರಾದವರ ಖಡ್ಗವಾದ ಆ ಖಡ್ಗವೇ ಎರಡರಷ್ಟು, ಮೂರರಷ್ಟು ಸಂಹರಿಸಲಿ. ಪ್ರಜೆಯನ್ನು ಹತಿಸುವ ಆ ಖಡ್ಗ ಸುತ್ತಲೂ ಬೀಸಿ ಆ ಕೊಠಡಿಗಳಲ್ಲಿ ಸೇರುವವರನ್ನು ಆ ದೊಡ್ಡ ಖಡ್ಗ ಸಂಹರಿಸುವುದು.
EZE 21:15 ಅವರ ಹೃದಯವು ಕರಗುವ ಹಾಗೆಯೂ, ಅವರ ಎಲ್ಲಾ ಬಾಗಿಲುಗಳಲ್ಲಿ ಪತನವು ಹೆಚ್ಚಾಗುವ ಹಾಗೆಯೂ ಖಡ್ಗದ ಮೊನೆ ಇಟ್ಟಿದ್ದೇನೆ. ಆಹಾ, ಮಿಂಚಿನಂತೆ ಹೊಡೆಯಲು ಈ ಬಲೆ ಹೆಣೆಯಲಾಗಿದೆ ಅದನ್ನು ಕೊಲೆಮಾಡುವುದಕ್ಕೆ ಮಸೆಯಲಾಗಿದೆ.
EZE 21:16 ಖಡ್ಗವೇ ಬಲಕ್ಕೆ ಹೊಡೆ, ಎಡಕ್ಕೆ ಹೊಡೆ, ನಿನ್ನ ಅಲಗು ತಿರುಗಿದ ಕಡೆಗೆಲ್ಲಾ ಹೊಡೆ.
EZE 21:17 ನಾನೂ ಸಹ ಕೈತಟ್ಟಿ ನನ್ನ ರೋಷವನ್ನು ತೀರಿಸಿಕೊಳ್ಳುವೆನು, ಎಂದು ಯೆಹೋವ ದೇವರಾದ ನಾನು ಹೇಳಿದ್ದೇನೆ.”
EZE 21:18 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 21:19 “ಮನುಷ್ಯಪುತ್ರನೇ, ಬಾಬಿಲೋನಿನ ಅರಸನ ಖಡ್ಗವು ಬರುವ ಹಾಗೆ ನೀನು ಎರಡು ಮಾರ್ಗಗಳನ್ನು ನೇಮಿಸಿಕೋ. ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟ ಹಾಗಿರಲಿ. ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
EZE 21:20 ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ, ಯೆಹೂದದ ಕೋಟೆ ಕೊತ್ತಲಗಳಿಂದ ಕುಡಿದ ಯೆರೂಸಲೇಮಿಗೂ ಆ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.
EZE 21:21 ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ.
EZE 21:22 ಅವನ ಬಲಗೈಯಲ್ಲಿ ಯೆರೂಸಲೇಮಿಗಾಗಿ ಶಕುನವು ಇತ್ತು. ಅಲ್ಲಿ ಅವನು ಬಡಿಯುವ ಆಯುಧಗಳನ್ನಿಟ್ಟು, ಬಾಯಿಬಿಟ್ಟು ಸಂಹಾರ ಧ್ವನಿಗೈದು, ಆರ್ಭಟವಿಟ್ಟು ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ದಿಬ್ಬ ಹಾಕಿ, ಒಡ್ಡು ಕಟ್ಟಿದ್ದು ಸೂಚನೆಯಾಗಿದೆ.
EZE 21:23 ಆದರೆ ಅವರು ತಾವು ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ನಂಬಿಕೆ ಇಟ್ಟಿದ್ದರಿಂದ, ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವುದು. ಆದರೆ ಅವನು ಅವರ ಅಕ್ರಮವನ್ನು ಜ್ಞಾಪಕಪಡಿಸಿ, ಅವರನ್ನು ಸೆರೆಯಾಗಿ ಒಯ್ಯುವನು.
EZE 21:24 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಿಮ್ಮ ದ್ರೋಹಗಳು ಪ್ರಕಟವಾಗಿ, ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ, ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಗೆ ಸಿಕ್ಕಿ ಬೀಳುವಿರಿ.
EZE 21:25 “ ‘ದುಷ್ಟನಾದ ಭ್ರಷ್ಟ ಇಸ್ರಾಯೇಲಿನ ರಾಜಕುಮಾರನೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
EZE 21:26 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಮೊದಲಿದ್ದ ಹಾಗೆಯೇ ಇರುವುದಿಲ್ಲ; ತಗ್ಗಿಸಿಕೊಂಡವನನ್ನು ಹೆಚ್ಚಿಸಿ, ಹೆಚ್ಚಿಸಿಕೊಂಡವನನ್ನು ತಗ್ಗಿಸು.
EZE 21:27 ಬಾ, ನಾಶನ! ನಾಶನ! ನಾನು ಅದನ್ನು ಪಾಳು ಬೀಳುವಂತೆ ಮಾಡುವೆನು. ಅದು ಯಾರದೋ, ಅವನು ಬರುವವರೆಗೆ ನಾನು ಅದನ್ನು ಪುನಃ ಕಟ್ಟಿಸುವುದಿಲ್ಲ; ಅವನಿಗೆ ನಾನು ಅದನ್ನು ಒಪ್ಪಿಸುವೆನು.’
EZE 21:28 “ಮನುಷ್ಯಪುತ್ರನೇ, ನೀನು ಪ್ರವಾದಿಸಿ, ಸಾರ್ವಭೌಮ ಯೆಹೋವ ದೇವರು ಅಮ್ಮೋನಿಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾರೆ, ‘ಹೌದು, ನೀನು ಹೀಗೆ ಹೇಳು: “ ‘ಒಂದು ಖಡ್ಗವು, ಒಂದು ಖಡ್ಗವು ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಬಹಳವಾಗಿ ಮಸೆಯಲಾಗಿದೆ. ಥಳಥಳಿಸುತ್ತಾ ನುಂಗುವಹಾಗಿದೆ.
EZE 21:29 ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ, ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಹೀಗೆ ನಿನ್ನನ್ನು ಹತರಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ. ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
EZE 21:30 “ ‘ಖಡ್ಗವನ್ನು ಒರೆಗೆ ಸೇರಿಸು, ನೀನು ಸೃಷ್ಟಿಯಾದ ಸ್ಥಳದಲ್ಲಿಯೇ ನಿನ್ನ ಪೂರ್ವಜರ ನಾಡಿನಲ್ಲಿಯೇ ನಿನಗೆ ನ್ಯಾಯತೀರಿಸುವೆನು.
EZE 21:31 ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರವಾದ ಬೆಂಕಿ ನಿನ್ನ ಮೇಲೆ ಊದಿ ನಾಶಪಡಿಸುವುದರಲ್ಲಿ ಗಟ್ಟಿಗರಾದ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು.
EZE 21:32 ನೀನು ಅಗ್ನಿಗೆ ಆಹುತಿಯಾಗುವೆ. ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು. ಇನ್ನು ಮೇಲೆ ನೀನು ಜ್ಞಾಪಕಕ್ಕೆ ಬರುವುದಿಲ್ಲವೆಂದು, ಯೆಹೋವ ದೇವರಾದ ನಾನೇ ಹೇಳಿದ್ದೇನೆ.’ ”
EZE 22:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 22:2 “ಮನುಷ್ಯಪುತ್ರನೇ, ಈಗ ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ? ಹಾಗಾದರೆ ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವೆ.
EZE 22:3 ಆಮೇಲೆ ನೀನು ಹೇಳಬೇಕಾದದ್ದೇನೆಂದರೆ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪಟ್ಟಣವು ಅದರ ಮಧ್ಯದಲ್ಲಿ ಅದರ ದಂಡನೆಯ ಕಾಲ ಬರುವಂತೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧಮಾಡುವಂತೆ ತನ್ನಲ್ಲಿ ವಿಗ್ರಹ ಮಾಡಿಕೊಂಡಿದೆ.
EZE 22:4 ನೀನು ಚೆಲ್ಲಿದ ನಿನ್ನ ರಕ್ತದಿಂದ ನೀನು ಅಪರಾಧಿಯಾದೆ; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧನಾದೆ; ನಿನ್ನ ದಿನಗಳನ್ನು ಸಮೀಪಿಸಿರುವೆ; ಮತ್ತು ನಿಮ್ಮ ವರ್ಷಗಳ ಅಂತ್ಯವು ಬಂದಿದೆ. ಆದ್ದರಿಂದ ನಿನ್ನನ್ನು ಇತರ ಜನಾಂಗಗಳಿಗೆ ನಾಚಿಕೆಯಾಗಿಯೂ, ಎಲ್ಲಾ ದೇಶಗಳಿಗೂ ನಿಂದೆಯಾಗಿಯೂ ಮಾಡಿದ್ದೇನೆ.
EZE 22:5 ಕುಖ್ಯಾತ ನಗರವೇ, ಬಹಳ ತೊಂದರೆಗೊಳಗಾದವಳೇ, ನಿನ್ನನ್ನು ಹತ್ತಿರದವರೂ, ದೂರದವರೂ ಅಪಹಾಸ್ಯ ಮಾಡುವರು.
EZE 22:6 “ ‘ಇಸ್ರಾಯೇಲಿನ ಅರಸರು ಪ್ರತಿಯೊಬ್ಬನು ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾರೆ.
EZE 22:7 ನಿನ್ನಲ್ಲಿ ತಂದೆಯನ್ನೂ, ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ. ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ. ನಿನ್ನಲ್ಲಿ ದಿಕ್ಕಿಲ್ಲದವನನ್ನೂ, ವಿಧವೆಯನ್ನೂ ಪೀಡಿಸಿದ್ದಾರೆ.
EZE 22:8 ನೀನು ನನ್ನ ಪರಿಶುದ್ಧ ಸಂಗತಿಗಳನ್ನು ತಿರಸ್ಕರಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರ ಪಡಿಸಿದ್ದಿ.
EZE 22:9 ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಚಾಡಿ ಹೇಳುವವರು ಇದ್ದಾರೆ; ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನುತ್ತಾರೆ; ನಿನ್ನಲ್ಲಿ ಅವರು ದ್ರೋಹವನ್ನು ಮಾಡಿದ್ದಾರೆ.
EZE 22:10 ನಿಮ್ಮಲ್ಲಿ ತಂದೆಯ ಹಾಸಿಗೆಯನ್ನು ಅವಮಾನಿಸುವವರು ಇದ್ದಾರೆ, ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.
EZE 22:11 ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ಅಸಹ್ಯಕರವಾದದ್ದನ್ನು ಮಾಡಿದ್ದಾನೆ; ಮತ್ತೊಬ್ಬನು ಅತ್ಯಾಚಾರದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಮಾನಭಂಗಪಡಿಸಿದ್ದಾನೆ.
EZE 22:12 ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚ ತೆಗೆದುಕೊಂಡಿದ್ದಾರೆ. ಬಡ್ಡಿಯನ್ನು ಲಾಭವನ್ನೂ ತೆಗೆದುಕೊಂಡಿದ್ದಾರೆ. ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭ ಮಾಡಿಕೊಂಡಿದ್ದಾರೆ. ನನ್ನನ್ನು ಮರೆತುಬಿಟ್ಟಿದ್ದಾರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 22:13 “ ‘ಆದ್ದರಿಂದ ನೀನು ಮಾಡಿದ ಈ ದುರ್ಲಾಭದಿಂದಲೂ, ನಿನ್ನಲ್ಲಿರುವ ನಿನ್ನ ರಕ್ತಾಪರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
EZE 22:14 ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವುದೋ? ನಿನ್ನ ಕೈಗಳು ಬಲವಾಗಿರುವುವೋ? ಯೆಹೋವ ದೇವರಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುವೆನು.
EZE 22:15 ನಿನ್ನನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು. ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.
EZE 22:16 ಆಗ ನೀನು ಇತರ ಜನಾಂಗಗಳ ಮುಂದೆ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವಿ; ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.’ ”
EZE 22:17 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 22:18 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ ಕಸದ ಹಾಗಾದರೂ, ಅವರೆಲ್ಲರೂ ಗುಹೆಯಲ್ಲಿರುವ ತಾಮ್ರ, ತವರ, ಕಬ್ಬಿಣದ ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಸದ ಹಾಗೆಯೂ ಇದ್ದಾರೆ.
EZE 22:19 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವೆಲ್ಲರೂ ಕೆಟ್ಟವರಾಗಿರುವುದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ.
EZE 22:20 ಅವರು ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒರೆಯೊಳಗೆ ಕೂಡಿಸಿ, ಅದಕ್ಕೆ ಬೆಂಕಿಯನ್ನು ಊದಿ ಕರಗಿಸುವರೋ, ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿ ಮತ್ತು ನನ್ನ ರೋಷದಲ್ಲಿ ಒಟ್ಟುಗೂಡಿಸಿ ನಿಮ್ಮನ್ನು ನಗರದೊಳಗೆ ಹಾಕಿ ಕರಗಿಸುತ್ತೇನೆ.
EZE 22:21 ನಾನು ನಿಮ್ಮನ್ನು ಕೂಡಿಸಿ, ನನ್ನ ರೋಷದ ಬೆಂಕಿಯನ್ನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿಹೋಗುವಿರಿ.
EZE 22:22 ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ. ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದವರು ಯೆಹೋವ ದೇವರಾದ ನಾನೇ ಎಂದು ನಿಮಗೆ ತಿಳಿಯುತ್ತದೆ.’ ”
EZE 22:23 ಯೆಹೋವ ದೇವರ ವಾಕ್ಯವು ಮತ್ತೆ ನನಗೆ ಬಂದಿತು,
EZE 22:24 “ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು, ‘ದೇವರ ರೌದ್ರದ ದಿವಸದಲ್ಲಿ ನೀನು ಶುದ್ಧಿಯಾಗದ ದೇಶವಾಗಿಯೂ, ಮಳೆಯಿಲ್ಲದ ದೇಶವಾಗಿಯೂ ಇರುವೆ.’
EZE 22:25 ಬೇಟೆಯನ್ನು ಸುಲಿದುಕೊಳ್ಳುವ ಗರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಅವಳ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ, ಸಂಪತ್ತನ್ನೂ, ಅಮೂಲ್ಯವಾದ ವಸ್ತುವನ್ನೂ ದೋಚಿಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
EZE 22:26 ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ. ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ. ಅವರು ಪರಿಶುದ್ಧವಾದದ್ದಕ್ಕೂ, ಅಪವಿತ್ರವಾದದ್ದಕ್ಕೂ ಬೇಧವೆಣಿಸಲಿಲ್ಲ. ಶುದ್ಧ, ಅಶುದ್ಧಗಳ ವ್ಯತ್ಯಾಸವಿಲ್ಲ ಎಂದು ಬೋಧಿಸಿದರು. ನನ್ನ ಸಬ್ಬತ್ ದಿನಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದ್ದರಿಂದ ನಾನು ಅವರಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.
EZE 22:27 ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.
EZE 22:28 ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಯೆಹೋವ ದೇವರು ಮಾತನಾಡದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ’ ಎಂದು ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ.
EZE 22:29 ದೇಶದ ಜನರು ಬಲಾತ್ಕಾರದಿಂದ ಸೂರೆಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ, ದರಿದ್ರರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯ ಕೊಡದೆ ವಿದೇಶಿಯರನ್ನು ಬಲಾತ್ಕಾರ ಪಡಿಸಿದ್ದಾರೆ.
EZE 22:30 “ಗೋಡೆಯನ್ನು ಕಟ್ಟಿ ನಾಡನ್ನು ನಾನು ಹಾಳುಮಾಡದಂತೆ ನಾಡಿನ ಪರವಾಗಿ ಪೌಳಿಗೋಡೆಯ ಬಿರುಕಿನಲ್ಲಿ ನಿಲ್ಲುವ ಒಬ್ಬ ಮನುಷ್ಯನನ್ನು ಅವರೊಳಗೆ ನಾನು ಹುಡುಕಿದೆನು. ಆದರೆ ಯಾರೂ ಸಿಕ್ಕಲಿಲ್ಲ.
EZE 22:31 ಆದ್ದರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ. ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ. ಅವರ ದುರ್ನಡತೆಯ ಹೊಣೆಯನ್ನು ಅವರ ತಲೆಗಳ ಮೇಲೆ ಹೊರಿಸಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 23:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 23:2 “ಮನುಷ್ಯಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು;
EZE 23:3 ಅವರು ಈಜಿಪ್ಟಿನಲ್ಲಿ ವೇಶ್ಯೆ ಆದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲಾದವು; ಅವುಗಳ ತೊಟ್ಟುಗಳು ನಸುಕಲಾದವು.
EZE 23:4 ಅವರುಗಳ ಹೆಸರುಗಳೇನೆಂದರೆ ಒಹೊಲ ಎಂಬವಳು ದೊಡ್ಡವಳು. ಒಹೊಲೀಬ ಎಂಬವಳು ಚಿಕ್ಕವಳು. ಅವರು ನನ್ನವರಾಗಿದ್ದು ಪುತ್ರಪುತ್ರಿಯರನ್ನು ಹೆತ್ತರು; ಅವರ ಹೆಸರುಗಳಾದ ಒಹೊಲ ಎಂಬುದು ಸಮಾರ್ಯವು ಮತ್ತು ಒಹೊಲೀಬ ಎಂಬುದು ಯೆರೂಸಲೇಮು ಆಗಿದೆ.
EZE 23:5 “ಒಹೊಲಳು ಇನ್ನು ನನ್ನ ವಶವಾಗಿರುವಾಗಲೇ ವ್ಯಭಿಚಾರ ಮಾಡಿದಳು. ಅವಳು ತನ್ನ ಪ್ರಿಯರನ್ನು ತನ್ನ ನೆರೆಯವರಾದ ಅಸ್ಸೀರಿಯದವರನ್ನು,
EZE 23:6 ಅವರೆಲ್ಲರೂ ನೀಲಿ ಬಣ್ಣದಿಂದ ಹೊದಿಕೆಯಾದ ಯೋಧರೂ, ಅಧಿಕಾರಸ್ಥರೂ, ಅಪೇಕ್ಷಿಸತಕ್ಕ ಯೌವನಸ್ಥರೂ, ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರೂ ಆಗಿರುವ ಅಂಥವರನ್ನು ಮೋಹಿಸಿದಳು.
EZE 23:7 ಅವರಿಗೆ ಅವಳು ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು, ಅವರೆಲ್ಲರೂ ಅಸ್ಸೀರಿಯದಲ್ಲಿನ ಗಣ್ಯವ್ಯಕ್ತಿಗಳಾಗಿದ್ದರು. ಅವಳು ಯಾರನ್ನು ಮೋಹಿಸಿದಳೋ, ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರ ಪಡಿಸಿಕೊಂಡಳು.
EZE 23:8 ಅವಳು ಈಜಿಪ್ಟಿನಲ್ಲಿ ಇದ್ದಾಗಿನಿಂದಲೂ ವ್ಯಭಿಚಾರವನ್ನು ಬಿಡಲಿಲ್ಲ. ಅವಳ ಯೌವನದಲ್ಲಿ ಪುರುಷರು ಅವಳ ಸಂಗಡ ಮಲಗಿದರು. ಅವರೆಲ್ಲರೂ ಅವಳ ಕನ್ಯತ್ವದ ಸ್ತನಗಳನ್ನು ಒತ್ತಿ, ಅವಳ ಮೇಲೆ ವ್ಯಭಿಚಾರ ನಡೆಸಿದರು.
EZE 23:9 “ಆದ್ದರಿಂದ ನಾನು ಅವಳನ್ನು ಮೋಹಿಸಿದ ಅವಳ ಪ್ರಿಯರ ಕೈಗೆ ಅಸ್ಸೀರಿಯರ ಕೈಗೆ ಒಪ್ಪಿಸಿದೆನು.
EZE 23:10 ಅವರು ಅವಳ ಬೆತ್ತಲೆತನವನ್ನು ಬಯಲುಪಡಿಸಿದರು ಮತ್ತು ಅವಳ ಪುತ್ರರನ್ನೂ, ಅವಳ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು. ನ್ಯಾಯತೀರ್ಪು ಮಾಡುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.
EZE 23:11 “ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ, ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆಸಿದಳು.
EZE 23:12 ಅವಳು ಯೋಧರಾದ ಅಸ್ಸೀರಿಯರನ್ನೂ, ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಉಡುಪು ಧರಿಸಿ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರಾಗಿಯೂ, ಅಪೇಕ್ಷಿಸತಕ್ಕ ಯೌವನಸ್ಥರಾಗಿಯೂ ಇರುವಂಥವರನ್ನು ಮೋಹಿಸಿದಳು.
EZE 23:13 ಅವಳೂ ಅಪವಿತ್ರಳಾದದ್ದನ್ನು ಕಂಡೆನು. ಅವರಿಬ್ಬರು ಒಂದೇ ಮಾರ್ಗವನ್ನು ಹಿಡಿದರು.
EZE 23:14 “ಅವಳು ತನ್ನ ವ್ಯಭಿಚಾರತ್ವವನ್ನು ಇನ್ನೂ ಹೆಚ್ಚಿಸಿದಳು. ಗೋಡೆಯ ಮೇಲೆ ಕೆಂಪು ಬಣ್ಣದಿಂದ ಚಿತ್ರಿಸಲಾದ ಕಸ್ದೀಯರ ಪುರುಷರನ್ನು ನೋಡಿದಳು. ಅವರು,
EZE 23:15 ಚಿತ್ರದಲ್ಲಿನ ಪುರುಷರು ತಮ್ಮ ಸೊಂಟದ ಸುತ್ತಲೂ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು ಮತ್ತು ತಲೆಯ ಮೇಲೆ ಬೀಸುವ ಪೇಟಗಳನ್ನು ಹೊಂದಿದ್ದರು; ಅವರೆಲ್ಲರೂ ಬಾಬಿಲೋನ್ ನಿವಾಸಿಗಳಂತೆ, ಬಾಬಿಲೋನಿನ ರಥದ ಅಧಿಕಾರಿಗಳಂತೆ ಕಾಣುತ್ತಿದ್ದರು.
EZE 23:16 ಅವಳ ಕಣ್ಣುಗಳಿಂದ ಅವರನ್ನು ನೋಡಿದಾಗ ತಕ್ಷಣವೇ ಅವರನ್ನು ಮೋಹಿಸಿದಳು. ಅವರ ಬಳಿಗೆ ಕಸ್ದೀಯಕ್ಕೆ ದೂತರನ್ನು ಕಳುಹಿಸಿದಳು.
EZE 23:17 ಆಗ ಬಾಬಿಲೋನಿನವರು ಅವರ ಪ್ರೀತಿಯ ಹಾಸಿಗೆಯ ಮೇಲೆ ಬಂದು ಆಕೆಯನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು. ಅವಳು ಅವರಿಂದ ಅಪವಿತ್ರಳಾದ ಮೇಲೆ ಅವರ ಬಗ್ಗೆ ಇವಳಿಗೇ ಜಿಗುಪ್ಸೆ ಹುಟ್ಟಿತು.
EZE 23:18 ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನ್ನು ಬಯಲು ಪಡಿಸಿಕೊಂಡಾಗ, ತನ್ನ ಜಿಗುಪ್ಸೆ ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
EZE 23:19 ಆದರೂ ಅವಳು ಈಜಿಪ್ಟ್ ದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿದಳು.
EZE 23:20 ಕತ್ತೆಗಳಂತೆ ಬೆದೆಯುಳ್ಳವರು ಕುದುರೆಗಳಂತೆ ದಾಟುವವರು ಆದ ತನ್ನ ಪ್ರಿಯರನ್ನು ಮೋಹಿಸಿದಳು.
EZE 23:21 ಹೀಗೆ ಈಜಿಪ್ಟಿನಿಂದ ನಿನ್ನ ಯೌವನದ ಸ್ತನಗಳ ತೊಟ್ಟುಗಳನ್ನು ಬತ್ತಿಸಿಕೊಂಡು ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.
EZE 23:22 “ಆದ್ದರಿಂದ ಒಹೊಲೀಬಳೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಯಾರಿಂದ ನಿನ್ನ ಮನಸ್ಸಿನಲ್ಲಿ ಜಿಗುಪ್ಸೆ ಹುಟ್ಟಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ. ನಾನು ಅವರನ್ನು ಪ್ರತಿಯೊಂದು ಕಡೆಯಲ್ಲಿಯೂ ವಿರೋಧವಾಗಿ ತರುತ್ತೇನೆ.
EZE 23:23 ಬಾಬಿಲೋನಿನವರು ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು, ಕೋಯದವರು, ಎಲ್ಲಾ ಅಸ್ಸೀರಿಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿ ಹೊಂದಿದವರೂ ಎಲ್ಲರೂ ಕುದುರೆಗಳ ಮೇಲೆ ಬೀಳುವಂತೆ ಮಾಡುವೆನು.
EZE 23:24 ಅವರು ರಥಗಳ ಸಂಗಡವಾಗಿಯೂ ಬಂಡಿಗಳ ಸಂಗಡವಾಗಿಯೂ ಜನಗಳ ಸಮೂಹದ ಸಂಗಡವಾಗಿಯೂ ಬಲವುಳ್ಳವರಾಗಿ ತಮ್ಮ ಆಯುಧಗಳೊಂದಿಗೆ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣವನ್ನೂ ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯತೀರ್ಪಿನ ಅಧಿಕಾರ ಕೊಡುವೆನು. ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.
EZE 23:25 ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು. ಅವರು ನಿನ್ನಲ್ಲಿ ಕೋಪ ತೀರಿಸಿಕೊಳ್ಳುವರು. ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದುಹಾಕು; ನಿನ್ನಲ್ಲಿ ಉಳಿದವರು ಖಡ್ಗದಿಂದ ಬೀಳುವರು. ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.
EZE 23:26 ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಒಡವೆಗಳನ್ನು ಕಸಿದುಕೊಳ್ಳುವರು.
EZE 23:27 ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಈಜಿಪ್ಟಿನಲ್ಲಿ ಇದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು. ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಈಜಿಪ್ಟನ್ನು ಜ್ಞಾಪಕಕ್ಕೆ ತರದೇ ಇರುವೆ.
EZE 23:28 “ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಕುಂದಿಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ.
EZE 23:29 ಅವರು ನಿನ್ನ ವಿಷಯದಲ್ಲಿ ಹಗೆತೀರಿಸಿಕೊಳ್ಳುವರು. ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವುದು.
EZE 23:30 ನೀನು ಇತರ ಜನಾಂಗಗಳ ಹಿಂದೆ ಹೋಗಿ ವ್ಯಭಿಚಾರ ಮಾಡಿದ್ದರಿಂದಲೂ ಅವರ ವಿಗ್ರಹಗಳಿಂದ ನಿನ್ನನ್ನು ಅಪವಿತ್ರ ಪಡಿಸಿಕೊಂಡಿದ್ದರಿಂದಲೂ ಇವುಗಳನ್ನು ನಿನಗೆ ಮಾಡುತ್ತೇನೆ.
EZE 23:31 ನೀನು ನಿನ್ನ ಸಹೋದರಿಯ ಮಾರ್ಗದಲ್ಲಿಯೇ ನಡೆದದ್ದರಿಂದ ಅವಳ ಪಾತ್ರೆಯನ್ನು ನಿನ್ನ ಕೈಗೆ ಕೊಡುತ್ತೇನೆ.
EZE 23:32 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವೆ. ನೀನು ಹಾಸ್ಯಕ್ಕೂ ನಿಂದೆಗೂ ಗುರಿಯಾಗುವೆ. ಅದೇ ನಿನಗೆ ಹೆಚ್ಚಾಗುವುದು.
EZE 23:33 ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶವೂ ಆಗುವುದು. ನೀನು ಮತ್ತಿನಿಂದಲೂ ದುಃಖದಿಂದಲೂ ತುಂಬಿರುವೆ.
EZE 23:34 ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವೆ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವೆ; ಏಕೆಂದರೆ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.
EZE 23:35 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನಿನ ಮೇಲೆ ಮರೆಮಾಡಿದ ಮೇಲೆ ನೀನು ನಿನ್ನ ದುಷ್ಕರ್ಮವನ್ನೂ ವ್ಯಭಿಚಾರದ ಪ್ರತಿಫಲವನ್ನೂ ಅನುಭವಿಸಲೇಬೇಕು.”
EZE 23:36 ಯೆಹೋವ ದೇವರು ನನಗೆ ಹೀಗೆ ಹೇಳಿದರು: “ನರಪುತ್ರನೇ, ಒಹೊಲಳಿಗೂ ಒಹೊಲೀಬಳಿಗೂ ನ್ಯಾಯತೀರಿಸುವೆಯೋ? ಹೌದು, ಅವರ ಅಸಹ್ಯಕರ ಕೃತ್ಯಗಳನ್ನು ಅವರಿಗೆ ತಿಳಿಸು.
EZE 23:37 ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಇದೆ: ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ. ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ.
EZE 23:38 ಇದನ್ನು ಮಾಡಿದ ದಿನದಲ್ಲಿಯೇ ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರಪಡಿಸಿ ನನ್ನ ವಿಶ್ರಾಂತಿಯ ದಿನಗಳನ್ನು ಕೆಡಿಸಿದ್ದಾರೆ.
EZE 23:39 ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದುಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವುದಕ್ಕೆ ಬಂದರು. ಅವರು ನನ್ನ ಆಲಯದ ಒಳಗೆ ಹೀಗೆ ಮಾಡಿದ್ದಾರೆ.
EZE 23:40 “ದೂತನನ್ನು ಕಳುಹಿಸಿ ದೂರದಿಂದ ಬರಬೇಕೆಂದು ಮನುಷ್ಯರಿಗೆ ಕರೆಯ ಕಳುಹಿಸಿದ್ದಾರೆ. ಅವರು ಬಂದಾಗ ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ನಿನ್ನ ಆಭರಣಗಳಿಂದ ಅಲಂಕರಿಸಿಕೊಂಡೆ.
EZE 23:41 ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ನನ್ನ ಧೂಪವನ್ನು ನನ್ನ ಎಣ್ಣೆಯನ್ನು ಇಟ್ಟಿದ್ದ ಮೇಜನ್ನು ಸಿದ್ಧಮಾಡಿದೆ.
EZE 23:42 “ಅವಳ ಸಂಗಡ ವಿನೋದಪ್ರಿಯ ಸಮೂಹದ ಶಬ್ದವು ಇತ್ತು. ಸಾಧಾರಣ ಮನುಷ್ಯರ ಸಂಗಡ ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಆ ಮಹಿಳೆ ಮತ್ತು ಅವಳ ಸಹೋದರಿಯ ಕೈಗಳ ಮೇಲೆ ಕಡಗಳನ್ನೂ ತಮ್ಮ ತಲೆಗಳ ಮೇಲೆ ಶೃಂಗಾರವಾದ ಕಿರೀಟವನ್ನೂ ಇಟ್ಟರು.
EZE 23:43 ಆಮೇಲೆ ನಾನು ಅವಳಿಗೆ ಹೇಳಿದ್ದೇನೆಂದರೆ, ‘ವ್ಯಭಿಚಾರದಿಂದ ಸವೆದು ಹೋದವಳು ಅವಳೇ, ಮತ್ತೆ ಅವರು ಅವಳ ಸಂಗಡ ವ್ಯಭಿಚರಿಸಬಹುದೇ?’
EZE 23:44 ಆದರೂ ವ್ಯಭಿಚಾರಿಣಿಯನ್ನು ಸೇರುವ ಹಾಗೆ ಅವರು ಅವಳನ್ನು ಸೇರಿದರು. ಹಾಗೆಯೇ ದುಷ್ಕರ್ಮಿ ಸ್ತ್ರೀಯರಾದ ಒಹೊಲಳ ಬಳಿಗೂ ಒಹೊಲೀಬಳ ಬಳಿಗೂ ಹೋದರು.
EZE 23:45 ನೀತಿಯುಳ್ಳ ನ್ಯಾಯಾಧೀಶರು ಅವರಿಗೆ ನ್ಯಾಯತೀರಿಸಿ ವ್ಯಭಿಚಾರಿಣಿಯರಿಗೂ ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು. ಏಕೆಂದರೆ ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತವಾಗಿದೆ.
EZE 23:46 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ, ಅವರನ್ನು ಸೂರೆಗೂ ಹೆದರಿಕೆಗೂ ಒಪ್ಪಿಸುವೆನು.
EZE 23:47 ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಖಡ್ಗಗಳಿಂದ ಕೊಯ್ದು ಅವರ ಪುತ್ರರನ್ನೂ ಪುತ್ರಿಯರನ್ನೂ ಕೊಂದುಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟುಬಿಡುವರು.
EZE 23:48 “ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕರ್ಮದ ಪ್ರಕಾರ ಮಾಡದಿರಲೆಂದು ಅವರಿಗೆ ಬೋಧಿಸಿ ದೇಶದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.
EZE 23:49 ನಿಮ್ಮ ದುಷ್ಕರ್ಮದ ಫಲವನ್ನು ನೀವೇ ಅನುಭವಿಸುವಂತೆ ಮಾಡುವೆ. ನೀವು ನಿಮ್ಮ ವಿಗ್ರಹಗಳ ಆರಾಧನೆಯಿಂದಾದ ಪಾಪಗಳನ್ನು ಹೊರುವಿರಿ. ಆಗ ಸಾರ್ವಭೌಮ ಯೆಹೋವ ದೇವರು ನಾನೇ ಎಂದು ತಿಳಿದುಕೊಳ್ಳುವಿರಿ.”
EZE 24:1 ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 24:2 “ಮನುಷ್ಯಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ. ಅದೇ ದಿನದಲ್ಲಿ ಬಾಬಿಲೋನಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಾನೆ.
EZE 24:3 ದಂಗೆಕೋರ ಮನೆತನದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಹಂಡೆಯನ್ನು ಒಲೆಯ ಮೇಲಿಡು, ಮೇಲಿಟ್ಟು ಅದರಲ್ಲಿ ನೀರನ್ನು ಸುರಿ.
EZE 24:4 ಮಾಂಸದ ತುಂಡುಗಳನ್ನೂ ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೆಯ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆಯ ಎಲುಬುಗಳ ಜೊತೆ ಅದನ್ನು ತುಂಬಿಸು.
EZE 24:5 ಹಿಂಡಿನಲ್ಲಿ ಶ್ರೇಷ್ಠವಾದದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ.
EZE 24:6 “ ‘ಆದಕಾರಣ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ರಕ್ತಮಯವಾದ ಆ ಪಟ್ಟಣಕ್ಕೆ ಕಷ್ಟ! ಯಾವುದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ ಆ ಹಂಡೆಗೆ ಕಷ್ಟ! ಅದರಿಂದ ತುಂಡುತುಂಡಾಗಿ ಹೊರಗೆ ತೆಗೆ. ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
EZE 24:7 “ ‘ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ. ಧೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ.
EZE 24:8 ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕೆ ರೋಷವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿ ಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿದ್ದೇನೆ.
EZE 24:9 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಆ ರಕ್ತಾಪರಾಧವುಳ್ಳ ಪಟ್ಟಣಕ್ಕೆ ಕಷ್ಟ! ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
EZE 24:10 ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸವನ್ನು ಚೆನ್ನಾಗಿ ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಎಲುಬುಗಳು ಸುಡಲಿ.
EZE 24:11 ಆಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ, ಒಳಗಣ ಕಲ್ಮಶವು ಕರಗಿ ಕಿಲುಬು ಇಲ್ಲವಾಗುವಂತೆ ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು.
EZE 24:12 ಅದರ ಕಲ್ಮಶವು ನನ್ನಲ್ಲಿ ಆಯಾಸವನ್ನುಂಟು ಮಾಡೀತೆ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ. ಅದು ಬೆಂಕಿಯಿಂದಲೂ ನೀಗಲಿಲ್ಲ.
EZE 24:13 “ ‘ನಿನ್ನ ಅಶುದ್ಧತ್ವವು ದುಷ್ಕರ್ಮವುಳ್ಳದ್ದು. ನಾನು ನಿನ್ನನ್ನು ಪರಿಶುದ್ಧಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರದಿಂದ ಇನ್ನು ಶುದ್ಧವಾಗುವುದಿಲ್ಲ.
EZE 24:14 “ ‘ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ. ನಾನು ಕೆಲಸ ಮಾಡುವ ಸಮಯ ಬಂದಿದೆ. ನಾನು ಅದನ್ನು ಮಾಡದೆ ಬಿಡುವುದಿಲ್ಲ. ಕಟಾಕ್ಷ ತೋರಿಸುವುದಿಲ್ಲ. ಹಿಂದೆಗೆಯೆನು. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯತೀರಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 24:15 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 24:16 “ಮನುಷ್ಯಪುತ್ರನೇ, ಒಂದೇ ಏಟಿನಿಂದ ನೇತ್ರಾನಂದವಾಗಿರುವುದನ್ನು ನಿನ್ನಿಂದ ತೆಗೆಯುತ್ತೇನೆ. ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.
EZE 24:17 ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ಮುಂಡಾಸವನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ನಿನ್ನ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳಬೇಡ, ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನಬೇಡಿರಿ.”
EZE 24:18 ಹಾಗೆಯೇ ನಾನು ಬೆಳಗಿನ ಜಾವದಲ್ಲಿ ಜನರೊಂದಿಗೆ ಮಾತನಾಡಿದೆನು. ಸಂಜೆ ನನ್ನ ಹೆಂಡತಿ ಸತ್ತಳು. ಮರುದಿನ ಬೆಳಿಗ್ಗೆ ನಾನು ಆಜ್ಞಾಪಿಸಿದಂತೆ ಮಾಡಿದೆನು.
EZE 24:19 ಆಗ ಜನರು, “ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ? ಯಾಕೆ ಹೀಗೆ ವರ್ತಿಸುತ್ತಿದ್ದೀಯಾ?” ಎಂದು ಕೇಳಿದರು.
EZE 24:20 ಆದ್ದರಿಂದ ನಾನು ಅವರಿಗೆ ಹೀಗೆ ಹೇಳಿದೆನು, “ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 24:21 ಇಸ್ರಾಯೇಲರ ಮನೆತನದವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ ಎಂದು ಹೇಳು: ಇಗೋ, ನಾನು ನನ್ನ ಪವಿತ್ರಾಲಯವನ್ನೂ, ನಿಮ್ಮ ಮುಖ್ಯಬಲವನ್ನೂ, ನಿಮ್ಮ ನೇತ್ರಾನಂದಕರವಾದದ್ದನ್ನೂ, ನಿಮ್ಮ ಮನಸ್ಸು ಅಭಿಲಾಷಿಸುವುದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳು ಖಡ್ಗದಿಂದ ಬೀಳುವರು.
EZE 24:22 ನಾನು ಮಾಡಿದ ಹಾಗೆ ನೀವು ಮಾಡುವಿರಿ; ನಿಮ್ಮ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳುವುದಿಲ್ಲ ಅಥವಾ ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನುವುದಿಲ್ಲ.
EZE 24:23 ನಿಮ್ಮ ಮುಂಡಾಸಗಳು ನಿಮ್ಮ ತಲೆಯ ಮೇಲೆಯೂ ನಿಮ್ಮ ಪಾದರಕ್ಷೆಯು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವುವು. ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರಳುವಿರಿ.
EZE 24:24 ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು; ಅವನು ಮಾಡಿದ ಎಲ್ಲವುಗಳ ಹಾಗೆ ನೀವು ಮಾಡುವಿರಿ. ಈ ರೀತಿ ಆದಾಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ತಿಳಿಯುವಿರಿ.’
EZE 24:25 “ಮನುಷ್ಯಪುತ್ರನೇ, ಅವರ ಮಹತ್ತರ ಸಂತೋಷವನ್ನೂ ಅವರ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವುದನ್ನೂ ಅವರ ಪುತ್ರಪುತ್ರಿಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ ದಿನದಲ್ಲಿ,
EZE 24:26 ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ?
EZE 24:27 ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿ ತೆರೆದಿರುವುದು. ನೀನು ಇನ್ನು ಮೂಕನಾಗಿರದೆ ಮಾತನಾಡುವೆ ಮತ್ತು ಅವರಿಗೆ ಗುರುತಾಗಿರುವೆ, ಆಗ ನಾನೇ ಯೆಹೋವ ದೇವರೆಂದು ತಿಳಿಯುವರು.”
EZE 25:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 25:2 “ಮನುಷ್ಯಪುತ್ರನೇ, ನೀನು ಅಮ್ಮೋನ್ಯರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು.
EZE 25:3 ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ
EZE 25:4 ನಾನು ನಿಮ್ಮನ್ನು ಪೂರ್ವದೇಶದ ಜನರಿಗೆ ಸೊತ್ತಾಗಿ ಕೊಡುತ್ತೇನೆ, ಅವರು ತಮ್ಮ ಗುಡಾರಗಳನ್ನು ನಿನ್ನಲ್ಲಿ ನೆಲೆಗೊಳಿಸುವರು. ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿಮ್ಮ ಫಲವನ್ನು ತಿಂದು ನಿಮ್ಮ ಹಾಲನ್ನೇ ಕುಡಿಯುವರು.
EZE 25:5 ನಾನು ರಬ್ಬಾ ಪಟ್ಟಣವನ್ನು ಒಂಟೆಗಳ ನಿವಾಸ ಸ್ಥಳವಾಗಿ ಮತ್ತು ಅಮ್ಮೋನ್ ದೇಶವನ್ನು ಮಂದೆಗಳು ಮಲಗುವ ಸ್ಥಳವನ್ನಾಗಿ ಮಾಡುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
EZE 25:6 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ,
EZE 25:7 ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಇತರ ಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಾಂಗಗಳೊಳಗಿಂದ ನಿಮ್ಮನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನ ಹೆಸರನ್ನು ಅಳಿಸಿಬಿಡುವೆನು. ನಾನು ನಿಮ್ಮನ್ನು ನಾಶಮಾಡುವೆನು. ಆಗ ನಾನೇ ಯೆಹೋವ ದೇವರೆಂದು ತಿಳಿಯುವಿರಿ.’ ”
EZE 25:8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಮೋವಾಬು ಮತ್ತು ಸೇಯೀರು, “ಇಗೋ, ಯೆಹೂದನ ಮನೆಯು ಸಮಸ್ತ ಇತರ ಜನಾಂಗಗಳ ಹಾಗಿದೆ,” ಎಂದು ಹೇಳುವರು.
EZE 25:9 ಆದ್ದರಿಂದ ಇಗೋ, ದೇಶದ ವೈಭವಗಳಾದ ಮೋವಾಬಿನ ಗಡಿಯ ಪಟ್ಟಣಗಳಾದ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾತಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.
EZE 25:10 ಆ ಅಮ್ಮೋನನ್ನೂ ಪೂರ್ವದವರೆಗೆ ಸೊತ್ತಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವರಿಗೆ ಸೊತ್ತಾಗಿ ಕೊಡುವೆನು.
EZE 25:11 ಮೋವಾಬ್ಯರಿಗೆ ನಾನು ಶಿಕ್ಷೆಯನ್ನು ವಿಧಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
EZE 25:12 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಏಕೆಂದರೆ ಎದೋಮು ಯೆಹೂದನ ಮನೆತನದವರಿಗೆ ಮುಯ್ಯಿಗೆ ಮುಯ್ಯಿ ತೀರಿಸಿದ್ದರಿಂದ ಅತಿ ಅಪರಾಧಮಾಡಿ ಅವರಲ್ಲಿ ಸೇಡು ತೀರಿಸಿಕೊಂಡಿತು.
EZE 25:13 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎದೋಮಿನ ವಿರುದ್ಧ ನನ್ನ ಕೈಯನ್ನು ಚಾಚುತ್ತೇನೆ: ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ. ಅದನ್ನು ಕಾಡನ್ನಾಗಿ ಮಾಡುತ್ತೇನೆ, ತೇಮಾನು ಮೊದಲುಗೊಂಡು ದೆದಾನಿಯವರು ಖಡ್ಗದಿಂದ ಬೀಳುವರು.
EZE 25:14 ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿತೀರಿಸುವೆನು, ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು, ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು, ಇದು ಸಾರ್ವಭೌಮ ಯೆಹೋವ ದೇವರ ನುಡಿ.’ ”
EZE 25:15 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ತೀರಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಯೆಹೂದವನ್ನು ಕೆಡಿಸಿದರು.
EZE 25:16 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಫಿಲಿಷ್ಟಿಯರ ವಿರುದ್ಧ ನನ್ನ ಕೈಯನ್ನು ಚಾಚುವೆನು. ಕೆರೇತಿಯರನ್ನು ಕಡಿದುಬಿಡುವೆನು: ಉಳಿದವರನ್ನು ಸಮುದ್ರ ತೀರದಲ್ಲಿ ನಾಶಮಾಡುವೆನು.
EZE 25:17 ನಾನು ದೊಡ್ಡ ಪ್ರತಿದಂಡನೆಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ಮುಯ್ಯಿತೀರಿಸುವೆನು. ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
EZE 26:1 ಹನ್ನೊಂದನೆಯ ವರ್ಷ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು.
EZE 26:2 “ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’
EZE 26:3 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಟೈರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವುದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.
EZE 26:4 ಅವರು ಟೈರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ಧೂಳನ್ನು ಒರಸಿ ಅದನ್ನು ಬೋಳು ಬಂಡೆಯಂತೆ ಮಾಡುವೆನು.
EZE 26:5 ಅದು ಸಮುದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿರುವುದು. ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಅದು ಜನಾಂಗಗಳಿಗೆ ಕೊಳ್ಳೆಯಾಗಿರುವುದು,
EZE 26:6 ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು.
EZE 26:7 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಉತ್ತರದ ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡವೂ ಸವಾರರ ಸಂಗಡವೂ ರಥಗಳ ಸಂಗಡವೂ ಬಹುಜನರ ಸಂಗಡವೂ ಟೈರಿನ ಮೇಲೆ ತರುತ್ತೇನೆ.
EZE 26:8 ಅವನು ಪ್ರಧಾನ ಭೂಮಿಯಲ್ಲಿನ ನಿನ್ನ ಪುತ್ರಿಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಗುರಾಣಿಯನ್ನು ಎತ್ತುವನು.
EZE 26:9 ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು.
EZE 26:10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು.
EZE 26:11 ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ನಿನ್ನ ಜನರನ್ನು ಖಡ್ಗದಿಂದ ಕೊಲ್ಲುವನು; ನಿನ್ನ ಬಲವಾದ ಕಂಬಗಳು ನೆಲಕ್ಕೆ ಬೀಳುವುವು.
EZE 26:12 ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಒಡೆದು, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ ನಿನ್ನ ಮರಗಳನ್ನೂ ಧೂಳನ್ನೂ ನೀರಿನಲ್ಲಿ ಹಾಕುವರು.
EZE 26:13 ಆಗ ನಿನ್ನ ಹಾಡುಗಳ ಶಬ್ದವನ್ನು ನಿಲ್ಲಿಸುವೆನು. ನಿನ್ನ ಕಿನ್ನರಿಗಳ ಧ್ವನಿ ಇನ್ನು ಕೇಳಿಸುವುದಿಲ್ಲ.
EZE 26:14 ನಿನ್ನನ್ನು ಬೋಳು ಬಂಡೆಯಂತೆ ಮಾಡುವೆನು. ನೀನು ಅಲ್ಲಿ ಬಲೆಹಾಸುವ ಸ್ಥಳವಾಗುವೆ. ನೀನು ಪುನಃ ಕಟ್ಟಲಾಗದೆ ಹೋಗುವಿ. ಯೆಹೋವ ದೇವರಾದ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 26:15 “ಸಾರ್ವಭೌಮ ಯೆಹೋವ ದೇವರು ಟೈರಿಗೆ ಹೀಗೆ ಹೇಳುತ್ತಾರೆ: ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ಸಮುದ್ರತೀರದ ಪ್ರದೇಶಗಳು ನಡುಗುವುದಿಲ್ಲವೇ?
EZE 26:16 ಆಮೇಲೆ ಸಮುದ್ರತೀರದ ಎಲ್ಲಾ ರಾಜಕುಮಾರರು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲುವಂಗಿಗಳನ್ನು ತೆಗೆದುಹಾಕುವರು, ಕಸೂತಿ ಕೆಲಸದಿಂದ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು. ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳುವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯವಾಗಿ ಭಯಭೀತರಾದರು.
EZE 26:17 ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವುದೇನೆಂದರೆ: “ ‘ಸಮುದ್ರಗಳ ಬಳಿಯಲ್ಲಿ ವಾಸಿಸಿದವಳೇ, ಪ್ರಸಿದ್ಧ ಪಟ್ಟಣವೇ, ಸಮುದ್ರದ ಮೇಲೆ ಬಲಗೊಂಡ ನಗರವೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದೆ?
EZE 26:18 ಈಗ ನೀನು ಬೀಳುವ ದಿವಸದಲ್ಲಿ ಸಮುದ್ರ ತೀರಗಳು ನಡುಗುವುವು. ಹೌದು, ನೀನು ಅಳಿದು ಹೋದುದ್ದಕ್ಕೆ ಸಮುದ್ರ ತೀರಗಳು ಗಾಬರಿಯಾಗುವುವು.’
EZE 26:19 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧ ಜಲರಾಶಿಯನ್ನು ನಿನ್ನ ಮೇಲೆ ಬರಮಾಡುವೆನು.
EZE 26:20 ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವವುಳ್ಳವರ ಲೋಕದಲ್ಲಿ ನೆಲೆಗೊಳಿಸದೆ ನಿರ್ಜನವಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರೊಂದಿಗೆ ವಾಸಿಸುವಂತೆ ಸೇರಿಸುವೆನು.
EZE 26:21 ನಾನೂ ನಿನ್ನನ್ನು ಭಯಂಕರವಾದ ಅಂತ್ಯಕ್ಕೆ ತರುವೆನು. ಇನ್ನು ಮೇಲೆ ನೀನು ಇರುವುದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡುಕಿದರೂ ನೀನು ಸಿಗುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 27:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 27:2 “ಮನುಷ್ಯಪುತ್ರನೇ, ಈಗ ಟೈರಿನ ಬಗ್ಗೆ ನೀನು ಗೋಳಾಟವನ್ನೆತ್ತು;
EZE 27:3 ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “ ‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ!
EZE 27:4 ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.
EZE 27:5 ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿದ್ದಾರೆ. ನಿನಗೆ ಸ್ತಂಭಗಳನ್ನು ಮಾಡುವುದಕ್ಕೆ ಲೆಬನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
EZE 27:6 ನಿನ್ನ ಹುಟ್ಟುಗೋಲನ್ನು ಬಾಷಾನಿನ ಅಲ್ಲೋನ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಮ್ ದ್ವೀಪಗಳಿಂದ ತಂದ ಹಲಗೆಗಳಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಶೃಂಗರಿಸಿದ್ದಾರೆ.
EZE 27:7 ಈಜಿಪ್ಟಿನ ಕಸೂತಿಯ ನಾರುಮಡಿಯಿಂದ ನಿನ್ನ ಪಟವನ್ನು ಮಾಡಿದರು ಮತ್ತು ಅದು ನಿನ್ನ ಧ್ವಜವಾಗಿತ್ತು. ನಿಮ್ಮ ಮೇಲ್ಕಟ್ಟುಗಳು ಎಲೀಷ ಕರಾವಳಿಯಿಂದ ನೀಲಿ ಮತ್ತು ನೇರಳೆ ಬಣ್ಣದ್ದಾಗಿದ್ದವು.
EZE 27:8 ಸೀದೋನಿನ ಮತ್ತು ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವವರಾಗಿದ್ದಾರೆ. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
EZE 27:9 ಗೆಬಾಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸುತ್ತಿದ್ದವು.
EZE 27:10 “ ‘ಪಾರಸಿಯರೂ ಲೂದ್ಯರೂ ಹಾಗೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನೂ ಶಿರಸ್ತ್ರಾಣವನ್ನೂ ನಿನ್ನ ಗೋಡೆಯಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
EZE 27:11 ಅರ್ವಾದಿನವರು ಮತ್ತು ಹೆಲೆಕರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಇದ್ದರು. ಗಮ್ಮಾದ್ಯರು ನಿನ್ನ ಗೋಪುರಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
EZE 27:12 “ ‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.
EZE 27:13 “ ‘ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ನರಪ್ರಾಣಿಗಳನ್ನೂ ಕಂಚಿನ ಪಾತ್ರೆಗಳನ್ನೂ ನಿನ್ನ ಬಜಾರಿನಲ್ಲಿ ಮಾರಾಟಕ್ಕಿಟ್ಟರು.
EZE 27:14 “ ‘ತೋಗರ್ಮದ ಮನೆತನದವರು ಕುದುರೆಗಳಿಂದಲೂ ಕುದುರೆ ಸವಾರಿಗಳಿಂದಲೂ ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
EZE 27:15 “ ‘ದೆದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದ ಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.
EZE 27:16 “ ‘ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮ್ಯರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
EZE 27:17 “ ‘ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಮಿಠಾಯಿ, ಜೇನು, ಎಣ್ಣೆ ಮತ್ತು ಸುಗಂಧ ತೈಲದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.
EZE 27:18 “ ‘ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.
EZE 27:19 ವೆದಾನ್ ಮತ್ತು ಯಾವಾನ್ ಊರುಗಳು ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ, ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಬಜಾರಿನಲ್ಲಿ ಇದ್ದವು.
EZE 27:20 “ ‘ದೆದಾನ್ ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
EZE 27:21 “ ‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.
EZE 27:22 “ ‘ಶೆಬದವರು, ರಾಮದವರು ನಿನ್ನ ಕಡೆಯ ವರ್ತಕರಾಗಿ ಎಲ್ಲಾ ಶ್ರೇಷ್ಠವಾದ ಸುಗಂಧ ದ್ರವ್ಯದಿಂದಲೂ ಎಲ್ಲಾ ಬೆಲೆಯುಳ್ಳ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
EZE 27:23 “ ‘ಹಾರಾನ್, ಕನ್ನೆ, ಏದೆನ್, ಶೆಬ, ಅಸ್ಸೀರಿಯ ಮತ್ತು ಕಿಲ್ಮದ್ ನಿನ್ನ ವ್ಯಾಪಾರಿಗಳಾಗಿದ್ದರು.
EZE 27:24 ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು.
EZE 27:25 “ ‘ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಗೆ ಸರಕುಗಳನ್ನು ತರುತ್ತಿದ್ದವು. ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.
EZE 27:26 ಹುಟ್ಟು ಹಾಕುವವರು ನಿನ್ನನ್ನು ಸಿಕ್ಕಿಸಿದ್ದಾರೆ. ಪೂರ್ವದಿಕ್ಕಿನ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
EZE 27:27 ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಿನ್ನ ನಾವಿಕರೂ ನಿನ್ನ ಅಂಬಿಗರೂ ನಿನ್ನ ಒಡಕುಗಳನ್ನು ಮುಚ್ಚುವವರೂ ನಿನ್ನ ವ್ಯಾಪಾರಿಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
EZE 27:28 ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.
EZE 27:29 ಹುಟ್ಟುಹಾಕುವ ಅಂಬಿಗರೆಲ್ಲರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,
EZE 27:30 ನಿನ್ನ ನಿಮಿತ್ತ ಧ್ವನಿಗೈದು ದುಃಖದಿಂದ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿ,
EZE 27:31 ನಿನಗಾಗಿ ತಲೆ ಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
EZE 27:32 ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕಗೀತೆಯನ್ನೆತ್ತಿ ಹೀಗೆ ಪ್ರಲಾಪಿಸುವರು; “ಸಮುದ್ರದ ನಡುವೆ ಹಾಳಾಗಿರುವ ಟೈರ್‌ನಂಥ ಪಟ್ಟಣ ಯಾವುದು?”
EZE 27:33 ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.
EZE 27:34 ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.
EZE 27:35 ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಭಯಭೀತರಾಗಿದ್ದಾರೆ. ಅವರ ಅರಸರು ಬಹಳವಾಗಿ ಭಯಪಟ್ಟಿದ್ದಾರೆ. ರಾಜರು ನಡುಗಿ ಭೀತಿಗೊಂಡರು.
EZE 27:36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’ ”
EZE 28:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 28:2 “ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ಗರ್ವದಿಂದ, “ನಾನು ಒಬ್ಬ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿರುವೆನು,” ಎಂದು ಹೇಳಿಕೊಂಡಿದ್ದೀ. ಆದರೆ ನೀನು ದೇವರಲ್ಲ, ಮನುಷ್ಯನೇ, ಆದರೂ ನಿನ್ನನ್ನು ನೀನೇ ದೇವರಿಗೆ ಸಮನೆಂದು ಭಾವಿಸಿದೆ.
EZE 28:3 ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆಯಾ? ನಿಮ್ಮಿಂದ ಮರೆಮಾಡಲು ಯಾವುದೇ ರಹಸ್ಯವಿಲ್ಲ.
EZE 28:4 ನಿನ್ನ ಜ್ಞಾನದಿಂದಲೂ ನಿನ್ನ ವಿವೇಕದಿಂದಲೂ ನಿನಗೆ ಐಶ್ವರ್ಯವನ್ನು ಗಳಿಸಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
EZE 28:5 ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ ನಿನ್ನ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯ ಗರ್ವಪಟ್ಟಿದೆ.
EZE 28:6 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ದೇವರಂತೆ ಬುದ್ಧಿವಂತನು ಎಂದು ಭಾವಿಸಿಕೊಂಡಿರುವೆ;
EZE 28:7 ಆದ್ದರಿಂದ ಭಯಂಕರ ಜನಾಂಗದವರಾದ ವಿದೇಶಿಯರನ್ನು ನಾನು ನಿನ್ನ ಮೇಲೆ ಬೀಳಮಾಡುವೆನು. ಅವರು ನಿನ್ನ ಸೌಂದರ್ಯ ಮತ್ತು ಜ್ಞಾನದ ವಿರುದ್ಧವಾಗಿ ಖಡ್ಗವನ್ನು ಹಿರಿಯುವರು; ನಿನ್ನ ಹೊಳೆಯುವ ವೈಭವವನ್ನು ಕೆಡಿಸುವರು.
EZE 28:8 ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು. ಸಮುದ್ರಗಳ ಮಧ್ಯದಲ್ಲಿ ಭಯಂಕರವಾದ ಮರಣದ ಹಾಗೆ ನೀನು ಸಾಯುವೆ.
EZE 28:9 ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು, “ನಾನು ದೇವರು,” ಎಂದು ಹೇಳುವೆಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರಪ್ರಾಣಿಯೇ;
EZE 28:10 ನೀನು ವಿದೇಶಿಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ. ಏಕೆಂದರೆ ನಾನೇ ಇದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.’ ”
EZE 28:11 ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದಿತು,
EZE 28:12 “ಮನುಷ್ಯಪುತ್ರನೇ, ಟೈರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನೀನು ಸರ್ವಸುಲಕ್ಷಣ ಶಿರೋಮಣಿ. ಸಂಪೂರ್ಣಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.
EZE 28:13 ದೇವರ ತೋಟವಾದ ಏದೆನಿನಲ್ಲಿ ನೀನಿದ್ದೆ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು, ಸ್ಪಟಿಕ ಚಿನ್ನ ಈ ಅಮೂಲ್ಯವಾದವುಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
EZE 28:14 ನೀನು ರಕ್ಷಕ ಕೆರೂಬಿಯಾಗಿ ಅಭಿಷೇಕಹೊಂದಿದೆ. ನಾನೇ ನಿನ್ನನ್ನು ನೇಮಿಸಿದ್ದೇನೆ. ನೀನು ದೇವರ ಪರಿಶುದ್ಧ ಪರ್ವತದ ಮೇಲೆ ಇದ್ದೆ; ನೀನು ಉರಿಯುತ್ತಿರುವ ಕಲ್ಲುಗಳ ನಡುವೆ ನಡೆದೆ.
EZE 28:15 ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.
EZE 28:16 ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರವು ತುಂಬಿ ನೀನು ಪಾಪಿಯಾದೆ; ಆದ್ದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ತಳ್ಳಿಬಿಟ್ಟೆನು. ಓ ರಕ್ಷಕ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
EZE 28:17 ನೀನು ನಿನ್ನ ಸೌಂದರ್ಯದ ನಿಮಿತ್ತ ಉಬ್ಬಿದ ಮನಸ್ಸುಳ್ಳವನಾದೆ. ನಿನ್ನ ಮೆರೆತದ ನಿಮಿತ್ತ ನಿನ್ನ ಬುದ್ಧಿಯನ್ನು ಕಳೆದುಕೊಂಡೆ. ಇದರಿಂದ ನಾನು ನಿನ್ನನ್ನು ನೆಲಕ್ಕೆ ದೊಬ್ಬಿ ನೀನು ಅರಸರಿಗೆ ನೋಟವಾಗಲೆಂದೆ ಅವರ ಕಣ್ಣಮುಂದೆ ಎಸೆದೆನು.
EZE 28:18 ನಿನ್ನ ಅಪಾರವಾದ ಪಾಪಗಳಿಂದಲೂ ಅನ್ಯಾಯವಾದ ವ್ಯಾಪಾರಗಳಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸುಮಾಡಿದೆ. ಆದಕಾರಣ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು, ಅದು ನಿನ್ನನ್ನು ನುಂಗಿಬಿಟ್ಟಿತು. ನೋಡುವವರೆಲ್ಲರ ಮುಂದೆ ನಿನ್ನನ್ನು ಬೂದಿಮಾಡುವೆನು.
EZE 28:19 ನಿನ್ನನ್ನು ಅರಿತ ಜನರೆಲ್ಲರೂ ನಿನ್ನ ವಿಷಯದಲ್ಲಿ ಭಯಗೊಳ್ಳುವರು. ನೀನು ಸಂಪೂರ್ಣ ಭೀತಿಗೊಳಗಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’ ”
EZE 28:20 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 28:21 “ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.
EZE 28:22 ನೀನು ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಸೀದೋನೇ ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧವಾಗುವಾಗ ನಾನೇ ಯೆಹೋವ ದೇವರೆಂದು ತಿಳಿಯುವರು.
EZE 28:23 ನಾನು ಅದರಲ್ಲಿ ವ್ಯಾಧಿಯನ್ನೂ ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟುಮಾಡುವೆನು, ಖಡ್ಗವು ಸುತ್ತುಮುತ್ತಲು ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು, ಆಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿದುಬರುವುದು.
EZE 28:24 “ ‘ಇಸ್ರಾಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನಿರದು, ಹೀನೈಸುವ ನೆರೆಹೊರೆಯವರೆಂಬ ಮುಳ್ಳಿನ ಬಾಧೆ ಇನ್ನಾಗದು. ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.
EZE 28:25 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಾಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.
EZE 28:26 ಅವರು ನಿರ್ಭಯವಾಗಿ ಅಲ್ಲಿ ವಾಸಿಸುವರು. ಮನೆಗಳನ್ನು ಕಟ್ಟುವರು; ದ್ರಾಕ್ಷಿತೋಟಗಳನ್ನು ನೆಡುವರು. ಹೌದು, ಅವರ ಸುತ್ತಲೂ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯವಾಗಿ ವಾಸಿಸುವರು, ಆಗ ಯೆಹೋವನಾದ ನಾನೇ ಅವರ ದೇವರೆಂದು ತಿಳಿಯುವರು.’ ”
EZE 29:1 ಹತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹನ್ನೆರಡನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 29:2 “ನರಪುತ್ರನೇ, ನೀನು ಈಜಿಪ್ಟಿನ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನಿಗೂ ಸಮಸ್ತ ಈಜಿಪ್ಟಿಗೂ ವಿರೋಧವಾಗಿ ಪ್ರವಾದಿಸು.
EZE 29:3 ನೀನು ಮಾತನಾಡಿ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು ಈ ನೈಲ್ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.
EZE 29:4 ಆದರೆ ನಿನ್ನ ದವಡೆಗಳಲ್ಲಿ ಗಾಳಗಳನ್ನು ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ ನಿನ್ನನ್ನು ನಿನ್ನ ನದಿಯೊಳಗಿಂದ ಮೇಲೆ ಎಳೆದು ನಿನ್ನ ಮೀನುಗಳು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು.
EZE 29:5 ನಿನ್ನನ್ನೂ ನಿನ್ನ ನದಿಗಳ ಮೀನುಗಳನ್ನೂ ಅರಣ್ಯದಲ್ಲಿ ಹಾಕುವೆನು. ನೀನು ಬಯಲುಗಳ ಮೇಲೆ ಬಿದ್ದಿರುವೆ; ನಿನ್ನನ್ನು ಯಾರೂ ಹೊರುವುದೂ ಇಲ್ಲ, ಸೇರಿಸುವುದೂ ಇಲ್ಲ. ನಿನ್ನನ್ನೂ ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಕಾಡಿನ ಪಾಲುಮಾಡುವೆನು. ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ ನಿನ್ನನ್ನು ಆಹಾರವನ್ನಾಗಿ ಕೊಟ್ಟಿದ್ದೇನೆ.
EZE 29:6 ಆಗ ಎಲ್ಲಾ ಈಜಿಪ್ಟಿನ ನಿವಾಸಿಗಳು ನಾನೇ ಯೆಹೋವನೆಂದು ತಿಳಿಯುವರು. “ ‘ಅವರು ಇಸ್ರಾಯೇಲರ ಮನೆತನದವರಿಗೆ ದಂಟಿನ ಊರುಗೋಲಾಗಿದ್ದರು.
EZE 29:7 ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದೆ; ಅವರು ನಿನ್ನನ್ನು ಆದರಿಸಿಕೊಂಡಾಗ ನೀನು ಮುರಿದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.
EZE 29:8 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾನೆ: ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.
EZE 29:9 ನೀನು, “ಆ ನೈಲ್ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು,” ಹೇಳಿಕೊಂಡದ್ದರಿಂದ, “ ‘ಈಜಿಪ್ಟ್ ದೇಶವು ಹಾಳು ಮರುಭೂಮಿಯಾಗುವುದು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು.
EZE 29:10 ಆದ್ದರಿಂದ ಇಗೋ, ನಾನು ನಿನಗೂ ನಿನ್ನ ನದಿಗಳಿಗೂ ವಿರುದ್ಧವಾಗಿದ್ದೇನೆ. ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.
EZE 29:11 ಯಾವ ಮನುಷ್ಯನ ಪಾದವಾದರೂ ಅದರಲ್ಲಿ ಹಾದು ಹೋಗುವುದಿಲ್ಲ. ಮೃಗಗಳ ಪಾದವೂ ಅದರಲ್ಲಿ ಹಾದು ಹೋಗುವುದಿಲ್ಲ ಅಥವಾ ನಲವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವುದಿಲ್ಲ.
EZE 29:12 ನಾನು ಈಜಿಪ್ಟ್ ದೇಶವನ್ನು ಹಾಳುಬಿದ್ದಿರುವ ದೇಶಗಳಲ್ಲಿ ಸೇರಿಸುವೆನು. ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ನಡುವೆ ನಲವತ್ತು ವರ್ಷಗಳು ಹಾಳಾಗಿರುವುವು. ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದುರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.
EZE 29:13 “ ‘ಆದರೂ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಲವತ್ತು ವರ್ಷಗಳ ಕೊನೆಯಲ್ಲಿ ನಾನು ಈಜಿಪ್ಟಿನವರನ್ನು ಚದುರಿರುವ ರಾಷ್ಟ್ರಗಳಿಂದ ಒಟ್ಟುಗೂಡಿಸುವೆನು.
EZE 29:14 ನಾನು ಈಜಿಪ್ಟಿನವರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸ್ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡುವೆನು. ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು.
EZE 29:15 ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠ ರಾಜ್ಯವೆನಿಸಿಕೊಳ್ಳುವುದು. ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆ ಎತ್ತದು. ಅದು ಜನಾಂಗಗಳ ಮೇಲೆ ದೊರೆತನ ಮಾಡಲಾಗದಂತೆ ಅದನ್ನು ಕ್ಷೀಣಗತಿಗೆ ತರುವೆನು.
EZE 29:16 ಇನ್ನು ಅದು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಇವರು ಅವರ ಕಡೆಗೆ ನೋಡಿದಾಗ ಪಾಪವನ್ನು ಜ್ಞಾಪಕಕ್ಕೆ ತರುವರು. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
EZE 29:17 ಇಪ್ಪತ್ತೇಳನೆಯ ವರ್ಷದಲ್ಲಿ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 29:18 “ಮನುಷ್ಯಪುತ್ರನೇ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಟೈರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ಟೈರನಿಂದ ಪ್ರತಿಫಲವೇನೂ ದೊರೆಯಲಿಲ್ಲ.
EZE 29:19 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಅದರ ಕೊಳ್ಳೆಯನ್ನೂ ಅದರ ಸುಲಿಗೆಯನ್ನೂ ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವುದು.
EZE 29:20 ಅವನು ಅದಕ್ಕೆ ವಿರುದ್ಧವಾಗಿ ಪಟ್ಟ ಕಷ್ಟಗಳಿಗೋಸ್ಕರ ನಾನು ಅವನಿಗೆ ಈಜಿಪ್ಟ್ ದೇಶವನ್ನು ಕೊಟ್ಟಿದ್ದೇನೆ; ನನಗೋಸ್ಕರ ಸೇವೆಮಾಡಿದ್ದಾರೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 29:21 “ಆ ದಿನದಲ್ಲಿ ನಾನು ಇಸ್ರಾಯೇಲರ ಮನೆತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.”
EZE 30:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 30:2 “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ “ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.
EZE 30:3 ಏಕೆಂದರೆ ಆ ದಿನವು ಸಮೀಪವಾಯಿತು, ಯೆಹೋವ ದೇವರ ದಿನವು, ಆ ಕಾರ್ಮುಗಿಲಿನ ದಿನವು ಸಮೀಪವಾಯಿತು. ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.
EZE 30:4 ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು. ಕೂಷ್ ಪಟ್ಟಣವು ಸಂಕಟಪಡುವುದು. ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ, ಅವಳ ಸಂಪತ್ತು ಸೂರೆಯಾಗುವುದು. ಅವಳ ಅಡಿಪಾಯಗಳು ಕಿತ್ತುಹೋಗುವವು.
EZE 30:5 ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.
EZE 30:6 “ ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಸಹಾಯಕರು ಬೀಳುವರು. ಅದರ ಶಕ್ತಿಯ ಮದವು ಇಳಿದುಹೋಗುವುದು. ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ ಖಡ್ಗದಿಂದ ಹತರಾಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 30:7 ಆಗ ಅವರು ಹಾಳಾಗಿರುವ ದೇಶಗಳೊಳಗೆ ತಾವೂ ಹಾಳಾಗುವರು. ಹಾಳಾದ ಪಟ್ಟಣಗಳ ಮಧ್ಯದಲ್ಲಿ ಅದರ ಪಟ್ಟಣಗಳು ಹಾಳಾಗಿ ಇರುವುವು.
EZE 30:8 ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು.
EZE 30:9 “ ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ.
EZE 30:10 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ : “ ‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು.
EZE 30:11 ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು. ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
EZE 30:12 ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ವಿದೇಶಿಯರ ಕೈಯಿಂದ ನಾಶಮಾಡಿಸುವೆನು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.
EZE 30:13 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾನು ಮೂರ್ತಿಗಳನ್ನು ನಾಶಮಾಡುವೆನು. ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು. ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ, ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.
EZE 30:14 ನಾನು ಪತ್ರೋಸನ್ನು ನಾಶಮಾಡಿ, ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು. ತೆಬೆಸ್ ಪಟ್ಟಣವನ್ನು ದಂಡಿಸುವೆನು.
EZE 30:15 ಈಜಿಪ್ಟಿಗೆ ರಕ್ಷಣೆಯ ಕೋಟೆಯಾದ ಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು.
EZE 30:16 ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲು ಪೆಲೂಸಿಯಮ್ ಪ್ರಾಣಸಂಕಟ ಪಡುವುದು. ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು, ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು.
EZE 30:17 ಓನಿನ ಮತ್ತು ಪಿಬೇಸೆತಿನ ಯೌವನಸ್ಥರು ಖಡ್ಗದಿಂದ ಸಾಯುವರು. ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು.
EZE 30:18 ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗ ತಹಪನೇಸಿನಲ್ಲಿ ಹಗಲು ಕತ್ತಲಾಗುವುದು. ಅದರ ಶಕ್ತಿಯ ಮದವು ಅಡಗಿಹೋಗುವುದು. ಅದನ್ನು ಮೇಘವು ಮುಚ್ಚುವುದು. ಅದರ ಪುತ್ರಿಯರು ಸೆರೆಗೆ ಹೋಗುವರು.
EZE 30:19 ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
EZE 30:20 ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ,
EZE 30:21 “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ.
EZE 30:22 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ.
EZE 30:23 ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
EZE 30:24 ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.
EZE 30:25 ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು.
EZE 30:26 ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
EZE 31:1 ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 31:2 “ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನೊಂದಿಗೂ ಮತ್ತು ಅವನ ಸಮೂಹದೊಂದಿಗೂ ಮಾತನಾಡಿ, “ ‘ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನವಾಗಿರುವೆ?
EZE 31:3 ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಬಹಳ ಎತ್ತರವಾಗಿದೆ, ಅದರ ತುದಿಯು ದಟ್ಟವಾದ ಕೊಂಬೆಗಳ ನಡುವೆಯಿತ್ತು.
EZE 31:4 ಅದನ್ನು ಜಲಪ್ರವಾಹಗಳು ಬೆಳೆಸಿದವು, ಆಳವಾದ ಬುಗ್ಗೆಗಳು ಅದನ್ನು ಎತ್ತರಕ್ಕೆ ಬೆಳೆಸಿದವು. ಅವುಗಳ ತೊರೆಗಳು ಅದರ ಬುಡದ ಸುತ್ತಲೂ ಹರಿದು ತಮ್ಮ ಕಾಲುವೆಗಳನ್ನು ಹೊಲದ ಎಲ್ಲಾ ಮರಗಳಿಗೆ ಕಳುಹಿಸಿದವು.
EZE 31:5 ಆದ್ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರಗಳಿಗಿಂತ ಎತ್ತರವಾಗಿತ್ತು. ಅದು ಹಬ್ಬಿದ್ದುದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
EZE 31:6 ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು. ಅದರ ರೆಂಬೆಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮ ಕೊಟ್ಟವು. ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
EZE 31:7 ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.
EZE 31:8 ದೇವರ ತೋಟದ ದೇವದಾರುಗಳು ಅದನ್ನು ಮರೆಮಾಡಲಿಲ್ಲ. ತುರಾಯಿ ಮರಗಳು ಅದರ ಕೊಂಬೆಗಳಿಗೆ ಸಮವಾಗಲಿಲ್ಲ. ಆಲದ ಮರಗಳು ಅದರ ರೆಂಬೆಗಳಷ್ಟೂ ಇಲ್ಲ. ಆ ದೇವರ ತೋಟದ ಯಾವುದೇ ಮರವು ಇದರ ಸೌಂದರ್ಯಕ್ಕೆ ಸಮವಾಗಿಲ್ಲ.
EZE 31:9 ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು. ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾ ಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು.
EZE 31:10 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು.
EZE 31:11 ಆದ್ದರಿಂದ ನಾನು ಅವನನ್ನು ಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಕೊಟ್ಟಿದ್ದೇನೆ. ಇವನು ನಿಶ್ಚಯವಾಗಿ ಅದನ್ನು ದಂಡಿಸುತ್ತಾನೆ ಅದರ ದುಷ್ಟತ್ವದ ನಿಮಿತ್ತ ನಾನು ಅದನ್ನು ತಳ್ಳಿಹಾಕಿದ್ದೇನೆ.
EZE 31:12 ಜನಾಂಗಗಳಲ್ಲಿ ಭಯಂಕರವಾದ ವಿದೇಶಿಯರು ಅದನ್ನು ಕಡಿದುಹಾಕುವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅದರ ಕೊಂಬೆಗಳು ಬೀಳುವುವು. ದೇಶದ ಹಳ್ಳಗಳಲ್ಲೆಲ್ಲಾ ಅದರ ರೆಂಬೆಗಳು ಮುರಿದು ಹೋಗುವುವು. ಭೂಮಿಯ ಜನಗಳೆಲ್ಲಾ ಅದರ ನೆರಳಿನಿಂದ ದೂರ ಸರಿದು ಅದನ್ನು ಬಿಟ್ಟುಬಿಡುವರು.
EZE 31:13 ಕೆಳಗೆ ಬಿದ್ದ ಮರದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವುವು. ಎಲ್ಲಾ ಕಾಡುಮೃಗಗಳು ಅದರ ರೆಂಬೆಗಳ ಬಳಿಯಲ್ಲಿರುವುವು.
EZE 31:14 ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗುಲಿಸದೆ ಇರುವುದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವುವು. ಅವುಗಳಿಗೆ ಅಧೋಲೋಕವೇ ಗತಿಯಾಗುವುದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವುವು.
EZE 31:15 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು.
EZE 31:16 ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು.
EZE 31:17 ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು.
EZE 31:18 “ ‘ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆಯಿಂದಲೂ ಏದೆನಿನ ಯಾವ ಮರಗಳಿಗೆ ಸಮನಾಗಿರುವೆ? ಆದರೂ ನೀನು ಏದೆನಿನ ಮರಗಳ ಸಂಗಡ ಭೂಮಿಯ ಕೆಳಭಾಗಗಳಿಗೆ ದೂಡಿದವನಾಗುವೆ. ಸುನ್ನತಿಯಿಲ್ಲದವರ ಮಧ್ಯದಲ್ಲಿ ಖಡ್ಗದಿಂದ ಹತರಾದವರ ಸಂಗಡ ಮಲಗುವೆ. “ ‘ಇದೇ ಫರೋಹನನೂ ಅವನ ಎಲ್ಲಾ ಜನಸಮೂಹವೂ ಆಗಿವೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 32:1 ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 32:2 “ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನ ವಿಷಯವಾಗಿ ಪ್ರಲಾಪವನ್ನೆತ್ತಿ ಅವನಿಗೆ ಹೇಳಬೇಕಾದದ್ದೇನೆಂದರೆ: “ ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ, ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಮಾಡಿದೆ.
EZE 32:3 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಆದ್ದರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು. ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
EZE 32:4 ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು. ಬಯಲಿನ ಮೇಲೆ ಬಿಸಾಡುವೆನು. ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
EZE 32:5 ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ಆ ನಿನ್ನ ರಾಶಿಯಿಂದ ಕಣಿವೆಗಳನ್ನು ತುಂಬಿಸುವೆನು.
EZE 32:6 ನಾನು ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸುವೆನು. ಹಳ್ಳಗಳು ನಿನ್ನ ಮಾಂಸದಿಂದ ತುಂಬುವುವು.
EZE 32:7 ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗಿ ಮಾಡಿ, ನಾನು ಸೂರ್ಯನನ್ನು ಮೋಡದಿಂದ ಮುಚ್ಚಿ ಬಿಡುವೆನು. ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
EZE 32:8 ಆಕಾಶದಲ್ಲಿ ಪ್ರಕಾಶಿಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು. ನಾನು ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 32:9 ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ, ನಿನ್ನ ವಿನಾಶದ ಸುದ್ದಿಯನ್ನು ಹರಡಿ ಅನೇಕ ಜನಗಳ ಹೃದಯದಲ್ಲಿ ಗಲಿಬಿಲಿ ಎಬ್ಬಿಸುವೆನು.
EZE 32:10 ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ಭಯಭೀತಿಗೊಳ್ಳುವಂತೆ ಮಾಡುವೆನು, ನಾನು ಅವರ ಮುಂದೆ ನನ್ನ ಖಡ್ಗವನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
EZE 32:11 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಬಾಬಿಲೋನಿನ ಅರಸನ ಖಡ್ಗವು ನಿನ್ನ ವಿರುದ್ಧ ಬರುವುದು.
EZE 32:12 ಪರಾಕ್ರಮಶಾಲಿಗಳ ಖಡ್ಗಗಳಿಂದ ಜನಾಂಗಗಳಲ್ಲಿ ಭಯಂಕರರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು. ಅವರು ಈಜಿಪ್ಟಿನ ಮಹತ್ತನ್ನು ಕೆಡಿಸುವರು. ಅದರ ಜನಸಮೂಹವೆಲ್ಲಾ ಹಾಳಾಗುವುದು.
EZE 32:13 ನಾನು ಆ ಬಹು ಪ್ರವಾಹಗಳ ಬಳಿಯಲ್ಲಿರುವ ಅದರ ಮೃಗಗಳನ್ನೆಲ್ಲಾ ನಾಶಮಾಡುವೆನು. ಆ ನೀರಿನಲ್ಲಿ ಇನ್ನು ಮೇಲೆ ಮನುಷ್ಯನ ಪಾದವಾಗಲಿ, ಪ್ರಾಣಿಗಳ ಗೊರಸಾಗಲಿ ಕಲಕಿಸುವುದಿಲ್ಲ.
EZE 32:14 ಆಮೇಲೆ ನಾನು ಆ ನೀರುಗಳನ್ನು ಆಳವಾಗಿ ಮಾಡುವೆನು. ಅದರ ನದಿಗಳನ್ನು ಎಣ್ಣೆಯ ಹಾಗೆ ಹರಿಯುವಂತೆ ಮಾಡುವೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 32:15 ನಾನು ಈಜಿಪ್ಟ್ ದೇಶವನ್ನು ಹಾಳು ಮಾಡಿ ಅದರ ಸೊತ್ತನ್ನೆಲ್ಲಾ ಧ್ವಂಸಮಾಡಿ ಅದರ ನಿವಾಸಿಗಳನ್ನೆಲ್ಲಾ ಹೊಡೆಯುವಾಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿಯುವುದು.’
EZE 32:16 “ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ. ಈಜಿಪ್ಟಿನ ವಿಷಯವಾಗಿಯೂ ಅದರ ಎಲ್ಲಾ ಜನಸಮೂಹದ ವಿಷಯವಾಗಿಯೂ ಜನಾಂಗಗಳ ಪುತ್ರಿಯರು ಇದನ್ನು ಕುರಿತು ಗೋಳಾಡುವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 32:17 ಇದಲ್ಲದೆ ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ:
EZE 32:18 “ಮನುಷ್ಯಪುತ್ರನೇ, ಈಜಿಪ್ಟಿನ ಜನಸಮೂಹದ ವಿಷಯವಾಗಿ ಗೋಳಾಡು; ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಪುತ್ರಿಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಕೆಯೊಳಗೆ ಇಳಿಯುವವರ ಜೊತೆ ತಳ್ಳಿಬಿಡು.
EZE 32:19 ‘ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.’
EZE 32:20 ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಖಡ್ಗವನ್ನು ಎಳೆಯಲಾಗುತ್ತದೆ. ಅವಳನ್ನು ತನ್ನ ಎಲ್ಲಾ ಗುಂಪುಗಳೊಂದಿಗೆ ಎಳೆದುಕೊಂಡು ಹೋಗಲಿ.
EZE 32:21 ಸತ್ತವರ ಕ್ಷೇತ್ರದೊಳಗಿಂದ ಪ್ರಬಲ ನಾಯಕರು ಈಜಿಪ್ಟ್ ಮತ್ತು ಅವಳ ಮಿತ್ರರಾಷ್ಟ್ರಗಳ ಬಗ್ಗೆ ಹೇಳುವರು, ‘ಅವರು ಇಳಿದು ಹೋಗಿ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿ ಮಲಗಿದ್ದಾರೆ.’
EZE 32:22 “ಅಲ್ಲಿ ಅಸ್ಸೀರಿಯ ಮತ್ತು ಅದರ ಎಲ್ಲಾ ಗುಂಪು ಇರುವುದು. ಅಸ್ಸೀರಿಯದ ಸುತ್ತಲೂ ಖಡ್ಗದಿಂದ ಹತರಾದವರ ಸಮಾಧಿಗಳಿರುವುವು;
EZE 32:23 ಅವರ ಸಮಾಧಿಗಳು ಕುಳಿಯ ಕಡೆಗಳಲ್ಲಿ ಇಡಲಾಗಿವೆ. ಅವಳ ಸೇನೆಯು ಸಮಾಧಿಯ ಸುತ್ತಲೂ ಇವೆ. ಜೀವಿತರ ದೇಶದಲ್ಲಿ ಭಯವನ್ನು ಹರಡಿದವರೆಲ್ಲರೂ ಖಡ್ಗದಿಂದ ಹತರಾದರು.
EZE 32:24 “ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ. ಅವರೆಲ್ಲರೂ ಖಡ್ಗದಿಂದ ಹತರಾದವರೇ. ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದು ಹೋದವರೇ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
EZE 32:25 ಅವರು ಅವರ ಎಲ್ಲಾ ಸಮೂಹಕ್ಕೂ ಹತರಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ. ಅದರ ಸುತ್ತಲೂ ಅವರ ಸಮಾಧಿಗಳಿವೆ. ಅವರೆಲ್ಲರೂ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿದ್ದಾರೆ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಕುಳಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡು ಹತರಾದವರ ಮಧ್ಯದಲ್ಲಿ ಇಡಲಾಗಿದೆ.
EZE 32:26 “ಅಲ್ಲಿ ಮೆಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ. ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಸುನ್ನತಿಯಿಲ್ಲದೆ ಖಡ್ಗದಿಂದ ಹತರಾದವರು.
EZE 32:27 ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತಹ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಖಡ್ಗಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ. ಅವರ ಗುರಾಣಿಗಳು ಅವರ ಮೂಳೆಗಳ ಮೇಲೆ ಇಡಲಾದವು. ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರರಾಗಿದ್ದರೂ ಅವರ ಅಕ್ರಮಗಳು ಅವರ ಎಲುಬುಗಳ ಮೇಲೆ ಇರುವುವು.
EZE 32:28 “ಫರೋಹನೇ, ನೀನೂ ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲಾಗುವೆ. ಖಡ್ಗದಿಂದ ಹತರಾದವರ ಸಂಗಡ ಮಲಗುವೆ.
EZE 32:29 “ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಅದರ ಪ್ರಧಾನರೂ ಶೂರರಾಗಿದ್ದರೂ ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಅವರು ಸುನ್ನತಿಯಿಲ್ಲದವರ ಸಂಗಡ ಮತ್ತು ಕುಣಿಗೆ ಇಳಿಯುವವರ ಸಂಗಡ ಹತರಾದವರು.
EZE 32:30 “ಅಲ್ಲಿ ಉತ್ತರದ ರಾಜಕುಮಾರರೂ ಸೀದೋನ್ಯರೆಲ್ಲರೂ ಹತರಾದವರೊಂದಿಗೆ ಇಳಿದು ಅಲ್ಲಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಖಡ್ಗದಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.
EZE 32:31 “ಫರೋಹನು ಹಾಗೂ ಆತನ ಸೈನ್ಯವು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಜನಸಮೂಹದ ವಿಷಯವಾಗಿ ಸಮಾಧಾನ ಹೊಂದುವನು, ಫರೋಹನು ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 32:32 ಏಕೆಂದರೆ ನಾನು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದೇ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಖಡ್ಗದಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ನಡುವೆ ಸೇರಿಹೋಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 33:1 ಯೆಹೋವ ದೇವರ ವಾಕ್ಯವು ನನಗೆ ಬಂದು:
EZE 33:2 “ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ನಾನು ಬಂದು ದೇಶದ ಮೇಲೆ ಯಾವಾಗ ಖಡ್ಗವನ್ನು ತರುವೆನೋ ಆಗ ಆ ದೇಶದ ಜನರು ತಮ್ಮ ಪ್ರಾಂತದ ಒಬ್ಬ ಮನುಷ್ಯನನ್ನು ಆರಿಸಿ ತಮಗೆ ಕಾವಲುಗಾರನನ್ನಾಗಿ ಇಟ್ಟರೆ,
EZE 33:3 ಅವನು ಖಡ್ಗವು ದೇಶದ ಮೇಲೆ ಬರುವುದನ್ನು ನೋಡಿ, ಕೊಂಬನ್ನೂದಿ ಜನರನ್ನು ಎಚ್ಚರಿಸಲಿ,
EZE 33:4 ಯಾವನು ಕೊಂಬಿನ ಧ್ವನಿಯನ್ನು ಕೇಳಿ ಎಚ್ಚರವಾಗುವುದಿಲ್ಲವೋ ಅವನನ್ನು ಖಡ್ಗವು ನಾಶಮಾಡಿದರೆ ಅವನ ಸಾವಿಗೆ ಅವನೇ ಹೊಣೆಯಾಗುವನು.
EZE 33:5 ಏಕೆಂದರೆ ಅವನು ಕೊಂಬಿನ ಧ್ವನಿಯನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲ. ತನ್ನ ಸಾವಿಗೆ ತಾನೇ ಕಾರಣನಾಗುವನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು.
EZE 33:6 ಆದರೆ ಕಾವಲುಗಾರನು ಬರುವ ಖಡ್ಗವನ್ನು ನೋಡಿ, ಒಂದು ವೇಳೆ ಕೊಂಬನ್ನು ಊದದೆ ಜನರನ್ನೂ ಎಚ್ಚರಿಸದೆ ಹೋದರೆ, ಆಗ ಖಡ್ಗವು ಬಿದ್ದು ಆ ಜನರೊಳಗೆ ಯಾರನ್ನಾದರೂ ನಾಶಮಾಡಿದರೆ, ಅವನು ತನ್ನ ಪಾಪದಲ್ಲಿಯೇ ನಾಶವಾಗುವನು. ಆದರೆ ನಾನು ಅವನ ಸಾವಿಗೆ ಕಾವಲುಗಾರನನ್ನೇ ಹೊಣೆಮಾಡುವೆನು.’
EZE 33:7 “ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಆದ್ದರಿಂದ ನೀನು ನನ್ನ ಬಾಯಿಂದ ಹೊರಡುವ ವಾಕ್ಯವನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು.
EZE 33:8 ಯಾವಾಗ ನಾನು ದುಷ್ಟನಿಗೆ, ‘ದುಷ್ಟ ಮನುಷ್ಯನೇ, ನೀನು ನಿಶ್ಚಯವಾಗಿ ಸಾಯುವೆ,’ ಎಂದು ಹೇಳುವಾಗ ಒಂದು ವೇಳೆ ನೀನು ಅವನೊಂದಿಗೆ ಮಾತನಾಡದೆ ಅವನ ದುರ್ಮಾರ್ಗಗಳಿಂದ ತಪ್ಪಿಸಲು ಅವನನ್ನು ಎಚ್ಚರಿಸದಿದ್ದರೆ ಆ ದುಷ್ಟ ಮನುಷ್ಯನು ತನ್ನ ಪಾಪಗಳಿಂದಲೇ ಸಾಯಬೇಕಾಗುವದು; ಆದರೆ ಅವನ ಸಾವಿಗೆ ನಿನ್ನನ್ನೇ ಹೊಣೆಮಾಡುವೆನು.
EZE 33:9 ಆದರೆ ನೀನು ದುಷ್ಟನನ್ನು ಅವನ ದುರ್ಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತಿರುಗಿಕೊಳ್ಳದೆ ಹೋದರೆ ಅವನು ತನ್ನ ಪಾಪಗಳಿಂದಲೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.
EZE 33:10 “ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಹೀಗೆ ಹೇಳು: ‘ನೀವು ಹೇಳುತ್ತಿರುವುದು ಇದನ್ನೇ: “ನಮ್ಮ ಅಪರಾಧಗಳೂ ನಮ್ಮ ಪಾಪಗಳೂ ನಮ್ಮ ಮೇಲಿದ್ದು ನಾವು ಅವುಗಳಲ್ಲೇ ಕ್ಷೀಣಿಸುತ್ತಾ ಹೋದರೆ ಹೇಗೆ ಬದುಕುವೆವು ಎಂದು ಹೇಳುವಿರಲ್ಲಾ?” ’
EZE 33:11 ಅವರಿಗೆ ಹೇಳು, ‘ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷವಾಗುವುದಿಲ್ಲ. ಆದರೆ ಆ ದುಷ್ಟನು ದುರ್ಮಾರ್ಗದಿಂದ ತಿರುಗಿಕೊಂಡು ಜೀವಿಸುವುದಾದರೆ ಅದರಲ್ಲಿಯೇ ನನಗೆ ಸಂತೋಷ ಸಿಗುವುದು; ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿಕೊಳ್ಳಿರಿ. ನೀವು ಸಾಯುವುದು ಏಕೆ? ಇದು ಸಾರ್ವಭೌಮ ಯೆಹೋವ ದೇವರ ವಾಕ್ಯ.’
EZE 33:12 “ಆದ್ದರಿಂದ, ನರಪುತ್ರನೇ, ನೀನು ನಿನ್ನ ಜನರ ಮಕ್ಕಳಿಗೆ ಹೇಳು: ‘ಒಬ್ಬ ನೀತಿವಂತನು ಅವಿಧೇಯನಾದರೆ, ಆ ವ್ಯಕ್ತಿಯ ಹಿಂದಿನ ನೀತಿಯು ಯಾವುದಕ್ಕೂ ಲೆಕ್ಕವಿಲ್ಲ. ಹಾಗೆಯೇ ದುಷ್ಟನು ಪಶ್ಚಾತ್ತಾಪಪಟ್ಟರೆ, ಆ ವ್ಯಕ್ತಿಯ ಹಿಂದಿನ ದುಷ್ಟತನವು ಖಂಡನೆಯನ್ನು ತರುವುದಿಲ್ಲ. ಪಾಪಮಾಡುವ ನೀತಿವಂತನು ಹಿಂದೆ ನೀತಿವಂತರಾಗಿದ್ದರೂ ಬದುಕಲು ಬಿಡುವುದಿಲ್ಲ.’
EZE 33:13 ನಾನು ನೀತಿವಂತನಿಗೆ, ನೀನು ನಿಶ್ಚಯವಾಗಿ ಬದುಕುವೆ ಎಂದು ಹೇಳುವಾಗ, ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನು ಮಾಡಿರುವ ಎಲ್ಲಾ ಸುಕೃತ್ಯಗಳು ಅವನ ಲೆಕ್ಕಕ್ಕೆ ಸೇರುವುದಿಲ್ಲ. ಅವನು ಮಾಡಿರುವ ಅಕ್ರಮಗಳಿಂದಲೇ ಅವನು ಸಾಯುವನು.
EZE 33:14 ನಾನು ದುಷ್ಟನಿಗೆ, ‘ನೀನು ನಿಶ್ಚಯವಾಗಿ ಸಾಯುವೆ’ ಎಂದು ಹೇಳುವಾಗ ಅವನು ಪಾಪದಿಂದ ಬಿಟ್ಟು ತಿರುಗಿಕೊಂಡು ಮತ್ತು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ
EZE 33:15 ದುಷ್ಟನು ತನ್ನ ಒತ್ತೆಯನ್ನು ಮತ್ತು ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು ಅನ್ಯಾಯವನ್ನು ಮಾಡದೆ ಜೀವನಾಧಾರವಾದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತವಾಗಿ ಬದುಕುವನು.
EZE 33:16 ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ನ್ಯಾಯವನ್ನೂ ನೀತಿಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.
EZE 33:17 “ಆದರೂ ನಿನ್ನ ಜನರ ಮಕ್ಕಳು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತಾರೆ. ಅವರಿಗಾದರೋ ಅವರ ಮಾರ್ಗವೇ ನೀತಿಯುಕ್ತವಲ್ಲ.
EZE 33:18 ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು, ಅಕ್ರಮವನ್ನು ಮಾಡುವನೋ ಅವನು ಖಂಡಿತವಾಗಿಯೂ ಅದರಲ್ಲಿಯೇ ಸಾಯುವನು.
EZE 33:19 ಆದರೆ ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯವನ್ನು ಅನುಸರಿಸಿದರೆ ಅವನು ಅವುಗಳಿಂದ ಉಳಿಯುವನು.
EZE 33:20 ಆದರೂ, ‘ನೀವು ಯೆಹೋವ ದೇವರ ಮಾರ್ಗ ನೀತಿಯುಕ್ತವಲ್ಲ,’ ಅನ್ನುತ್ತೀರಿ. ಇಸ್ರಾಯೇಲಿನ ಮನೆತನದವರೇ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ಮಾರ್ಗಗಳ ಪ್ರಕಾರ ನಾನು ನ್ಯಾಯತೀರಿಸುವೆನು.”
EZE 33:21 ನಮ್ಮ ಸೆರೆಯ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ, ಯೆರೂಸಲೇಮಿನಿಂದ ತಪ್ಪಿಸಿಕೊಂಡವನೊಬ್ಬನು ನನ್ನ ಬಳಿಗೆ ಬಂದು, “ಪಟ್ಟಣವು ನಾಶವಾಗಿದೆ,” ಎಂದು ಹೇಳಿದನು.
EZE 33:22 ಆಗ ಅವನು ತಪ್ಪಿಸಿಕೊಂಡು ಬರುವುದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಯೆಹೋವ ದೇವರ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲಾಗಿತ್ತು. ನನ್ನ ಬಾಯಿ ತೆರೆದಿತ್ತು. ನಾನು ಮೌನವಾಗಿರಲಿಲ್ಲ.
EZE 33:23 ಆಮೇಲೆ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 33:24 “ಮನುಷ್ಯಪುತ್ರನೇ, ಇಸ್ರಾಯೇಲಿನ ದೇಶದ ಹಾಳು ಪ್ರದೇಶಗಳಲ್ಲಿ ವಾಸಿಸುವರು ಹೀಗೆ ಹೇಳುತ್ತಾರೆ, ‘ಅಬ್ರಹಾಮನು ಒಬ್ಬೊಂಟಿಗನಾಗಿದ್ದರೂ ಈ ದೇಶ ಅವನಿಗೆ ಸೊತ್ತಾಗಿ ಸಿಕ್ಕಿತು. ಆದರೆ ನಾವು ಬಹಳ ಜನರಾಗಿದ್ದು ದೇಶವು ನಮಗೆ ಸೊತ್ತಾಗಿ ಕೊಡಲಾಗಿದೆ,’ ಎಂದು ಹೇಳುತ್ತಾರೆ.
EZE 33:25 ಆದ್ದರಿಂದ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಮಾಂಸವನ್ನು ರಕ್ತದ ಸಂಗಡ ತಿನ್ನುವಿರಲ್ಲವೇ? ನಿಮ್ಮ ಕಣ್ಣುಗಳನ್ನು ನಿಮ್ಮ ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವಿರಲ್ಲಾ, ಹೀಗಾದರೆ ನೀವು ದೇಶವನ್ನು ಸ್ವಾಧೀನಪಡಿಸಿಕೊಂಡೀರಾ?
EZE 33:26 ನೀವು ನಿಮ್ಮ ಖಡ್ಗದ ಮೇಲೆ ಭರವಸೆ ಇಟ್ಟು ಅಸಹ್ಯವಾದ ಕೆಲಸಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ನಿಮ್ಮ ನೆರೆಯವನ ಹೆಂಡತಿಯನ್ನು ಕೆಡಿಸುವಿರಿ. ಹೀಗಾದರೆ ನೀವು ದೇಶವನ್ನು ಸ್ವಾಧೀನಪಡಿಸಿಕೊಂಡಿರೇನು?’
EZE 33:27 “ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ಹಾಳು ಸ್ಥಳಗಳಲ್ಲಿರುವವರು ಖಡ್ಗದಿಂದ ಬೀಳುವರು. ಬಯಲಿನಲ್ಲಿರುವವರನ್ನು ಕಾಡುಮೃಗಗಳಿಗೆ ಆಹಾರವನ್ನಾಗಿ ಕೊಡುತ್ತೇನೆ. ಕೋಟೆಗಳಲ್ಲಿಯೂ ಗುಹೆಗಳಲ್ಲಿಯೂ ಇರುವವರು ವ್ಯಾಧಿಗಳಿಂದ ಸಾಯುವರು.
EZE 33:28 ನಾನು ಈ ದೇಶವನ್ನು ಹಾಳುಪಾಳುಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವುದು. ಇಸ್ರಾಯೇಲಿನ ಪರ್ವತಗಳು ಹಾಳಾಗಿರುವುದರಿಂದ ಯಾರೂ ಅದರ ಮೂಲಕ ಹಾದು ಹೋಗುವುದಿಲ್ಲ.
EZE 33:29 ಆಮೇಲೆ ಅವರು ಮಾಡಿದ ಎಲ್ಲಾ ಅಸಹ್ಯಗಳಿಂದಾಗಿ ನಾನು ಆ ದೇಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು.’
EZE 33:30 “ಮನುಷ್ಯಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲೂ ಮನೆಯ ಬಾಗಿಲುಗಳಲ್ಲೂ ನಿಂತು ನಿಜ ಪ್ರಸ್ತಾಪವನ್ನೆತ್ತಿ ಒಬ್ಬರಿಗೊಬ್ಬರು, ‘ಯೆಹೋವ ದೇವರ ಬಾಯಿಂದ ಹೊರಟ ಮಾತೇನೆಂದು ಕೇಳೋಣ ಬನ್ನಿ’ ಎಂದು ಹೇಳಿಕೊಳ್ಳುತ್ತಿದ್ದಾರೆ.
EZE 33:31 ಶ್ರದ್ಧೆ ಇರುವ ನನ್ನ ಭಕ್ತರಂತೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು. ಅವರು ನಿನ್ನ ವಾಕ್ಯಗಳನ್ನು ಕೇಳುವರು. ಆದರೆ ಅವರು ಅವುಗಳನ್ನು ಪಾಲಿಸುವುದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು. ಆದರೆ ಅವರ ಹೃದಯವು ಅನ್ಯಾಯದ ಲಾಭದ ಕಡೆಗೆ ಹೋಗುವುದು.
EZE 33:32 ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತೆಗೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ.
EZE 33:33 “ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವುದು.”
EZE 34:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
EZE 34:2 “ಮನುಷ್ಯಪುತ್ರನೇ, ಇಸ್ರಾಯೇಲಿನ ಕುರುಬರಿಗೆ ವಿರುದ್ಧವಾಗಿ ಪ್ರವಾದಿಸಿ ಅವರಿಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ತಮ್ಮನ್ನು ತಾವೇ ಮೇಯಿಸಿಕೊಳ್ಳುವ ಇಸ್ರಾಯೇಲಿನ ಕುರುಬರಿಗೆ ಕಷ್ಟ! ಕುರುಬರು ಮಂದೆಗಳನ್ನು ಮೇಯಿಸಬಾರದೋ?
EZE 34:3 ನೀವು ಮೊಸರನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ನೀವು ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿಸುವುದಿಲ್ಲ.
EZE 34:4 ನೀವು ದುರ್ಬಲರನ್ನು ಬಲಪಡಿಸಲಿಲ್ಲ ಅಥವಾ ರೋಗಿಗಳನ್ನು ಗುಣಪಡಿಸಲಿಲ್ಲ ಅಥವಾ ಮುರಿದದ್ದನ್ನು ಕಟ್ಟುವುದಿಲ್ಲ. ಕಳೆದುಹೋದದ್ದನ್ನು ಹುಡುಕುವುದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರುವುದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
EZE 34:5 ಅವು ಚದರಿಹೋದವು. ಏಕೆಂದರೆ ಅಲ್ಲಿ ಕುರುಬರಿಲ್ಲ; ಅವರು ಚದರಿಹೋದಾಗ ಎಲ್ಲಾ ಕಾಡುಮೃಗಗಳಿಗೆ ಆಹಾರವಾದವು.
EZE 34:6 ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ. ಹೌದು, ನನ್ನ ಮಂದೆಯು ಎಲ್ಲಾ ಭೂಮಿಯ ಮೇಲೆಲ್ಲಾ ಚದರಿಹೋಗಿದೆ. ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.
EZE 34:7 “ ‘ಆದ್ದರಿಂದ ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
EZE 34:8 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದುದರಿಂದಲೂ ನನ್ನ ಮಂದೆಯು ಕುರುಬನಿಲ್ಲದೆ ಕಾಡುಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರುಬರು ನನ್ನ ಮಂದೆಯನ್ನು ಹುಡುಕದೆ ಇದ್ದುದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದೆ ಇದ್ದುದರಿಂದಲೂ
EZE 34:9 ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
EZE 34:10 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ. ನನ್ನ ಮಂದೆಯನ್ನು ಅವರ ಕೈಯಿಂದ ವಿಚಾರಿಸುವೆನು. ಅವರು ಮಂದೆ ಮೇಯಿಸುವುದನ್ನು ನಿಲ್ಲಿಸಿಬಿಡುತ್ತೇನೆ, ಇನ್ನು ಮೇಲೆ ಕುರುಬರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳರು. ಏಕೆಂದರೆ ನಾನು ನನ್ನ ಮಂದೆಯನ್ನು ಅವರಿಗೆ ಆಹಾರವಾಗದ ಹಾಗೆ ಅವರ ಬಾಯಿಂದ ತಪ್ಪಿಸುತ್ತೇನೆ.
EZE 34:11 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ ನನ್ನ ಕುರಿಗಳನ್ನು ಹುಡುಕಿ ಅವುಗಳನ್ನು ಮೇಯಿಸುತ್ತೇನೆ.
EZE 34:12 ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ, ಕಾರ್ಮುಗಿಲಿನ ಕಾರ್ಗತ್ತಲಿನ ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು.
EZE 34:13 ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳನ್ನು ಸ್ವಂತ ದೇಶಕ್ಕೆ ತರುವೆನು. ಅವುಗಳನ್ನು ಇಸ್ರಾಯೇಲಿನ ಪರ್ವತಗಳ ಮೇಲೆ ಹಳ್ಳಗಳಲ್ಲಿ ನಿವಾಸಿಗಳುಳ್ಳ ಎಲ್ಲಾ ದೇಶಗಳಲ್ಲಿಯೂ ಮೇಯಿಸುವೆನು.
EZE 34:14 ನಾನು ಒಳ್ಳೆಯ ಮೇವಿನಲ್ಲಿ ಅವುಗಳನ್ನು ಮೇಯಿಸುವೆನು. ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಮಂದೆಯು ಇರುವುದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವುವು.
EZE 34:15 ನಾನೇ ನನ್ನ ಮಂದೆಯನ್ನು ಮೇಯಿಸಿ, ನಾನೇ ಅವುಗಳನ್ನು ಮಲಗಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 34:16 ಕಳೆದುಹೋದದ್ದನ್ನು ನಾನೇ ಹುಡುಕುವೆನು. ದಾರಿ ತಪ್ಪಿದ್ದನ್ನು ನಾನೇ ಮತ್ತೆ ತರುವೆನು, ಮುರಿದ ಅಂಗವನ್ನು ನಾನೇ ಕಟ್ಟುವೆನು. ದುರ್ಬಲವಾದುದನ್ನು ಬಲಗೊಳಿಸುವೆನು, ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸುವೆನು. ನಾನು ನ್ಯಾಯದಿಂದ ಮಂದೆಯನ್ನು ಮೇಯಿಸುವೆನು.
EZE 34:17 “ ‘ನಿಮಗೆ ನನ್ನ ಮಂದೆಯೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಕುರಿಗಳ ನಡುವೆ ಮತ್ತು ಟಗರುಗಳ ಹೋತಗಳ ನಡುವೆ ನಾನು ನ್ಯಾಯತೀರಿಸುವೆನು.
EZE 34:18 ಒಳ್ಳೆಯ ಮೇವನ್ನು ಚೆನ್ನಾಗಿ ಮೇದು ಮಿಕ್ಕ ಮೇವನ್ನು ತುಳಿದು ಕಸಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದು ಮಿಕ್ಕಿದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ?
EZE 34:19 ನನ್ನ ಮಂದೆಗಳಾದರೋ ನಿಮ್ಮ ಕಾಲಲ್ಲಿ ಕಸಮಾಡಿದ್ದನ್ನು ತಿನ್ನುವುವು. ನಿನ್ನ ಕಾಲಿನಿಂದ ಕಲಕಿ ಹೊಲಸಾದದ್ದನ್ನು ಕುಡಿಯುವುವು.
EZE 34:20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ, ನಾನು, ನಾನೇ ಕೊಬ್ಬಿದ ಕುರಿಗಳಿಗೂ ಮತ್ತು ಬಡಕಲಾದ ಕುರಿಗಳಿಗೂ ನ್ಯಾಯತೀರಿಸುತ್ತೇನೆ.
EZE 34:21 ಏಕೆಂದರೆ ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿಬಿಟ್ಟಿರಿ.
EZE 34:22 ಆದ್ದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ. ಅವು ಎಂದೆಂದೂ ಕೊಳ್ಳೆಯಾಗುವುದಿಲ್ಲ. ನಾನು ಕುರಿಮೇಕೆಗಳ ಮಧ್ಯೆ ನ್ಯಾಯತೀರಿಸುವೆನು.
EZE 34:23 ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
EZE 34:24 ಯೆಹೋವ ದೇವರಾದ ನಾನೇ ಅವುಗಳಿಗೆ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವೆನೆಂದು ಯೆಹೋವ ದೇವರಾದ ನಾನೇ ಅದನ್ನು ಮಾತಾಡಿದ್ದೇನೆ.
EZE 34:25 “ ‘ಅವರ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ದುಷ್ಟಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು. ಆದ್ದರಿಂದ ಅವರು ನಿರ್ಭಯವಾಗಿ ಮರುಭೂಮಿಯಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
EZE 34:26 ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವಾದವನ್ನಾಗಿ ಮಾಡುವೆನು. ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು. ದಿವ್ಯಾಶೀರ್ವಾದದ ಮಳೆಯಾಗುವುದು.
EZE 34:27 ಬಯಲಿನ ಮರವು ಅದರ ಫಲವನ್ನು ಕೊಡುವುದು. ಭೂಮಿಯು ಅದರ ಆದಾಯವನ್ನು ಕೊಡುವುದು. ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು. ನಾನೇ ಅದರ ನೊಗದ ಬಂಧನಗಳ್ನು ಬಿಡಿಸಿ ಅವರಿಂದ ಸೇವೆಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು.
EZE 34:28 ಅವರು ಇನ್ನು ಮೇಲೆ ಇತರ ಜನಾಂಗಗಳಿಗೆ ಕೊಳ್ಳೆಯಾಗುವುದಿಲ್ಲ; ಕಾಡುಮೃಗಗಳು ಅವರನ್ನು ತಿನ್ನುವುದಿಲ್ಲ. ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯವಾಗಿ ವಾಸಿಸುವರು.
EZE 34:29 ನಾನು ಅವರಿಗಾಗಿ ಒಂದು ಪ್ರಸಿದ್ಧ ಫಲವೃಕ್ಷವನ್ನು ಬೆಳೆಯಿಸುವೆನು. ಇನ್ನು ಮೇಲೆ ಅವರು ದೇಶದಲ್ಲಿ ಬರಗಾಲದಿಂದ ನಾಶವಾಗುವುದಿಲ್ಲ. ಅವರು ಇತರ ಜನರ ತಿರಸ್ಕಾರಕ್ಕೆ ಇನ್ನು ಮೇಲೆ ಗುರಿಯಾಗುವುದೇ ಇಲ್ಲ.
EZE 34:30 ಆಗ ಅವರು ತಮ್ಮ ಯೆಹೋವ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 34:31 ನೀವು ನನ್ನ ಕುರಿಗಳು, ನನ್ನ ಹುಲ್ಲುಗಾವಲಿನ ಕುರಿಗಳು, ಮತ್ತು ನಾನು ನಿಮ್ಮ ದೇವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 35:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 35:2 “ಮನುಷ್ಯಪುತ್ರನೇ, ನೀನು ಸೇಯೀರ್ ಪರ್ವತಕ್ಕೆ ಅಭಿಮುಖನಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸಿ,
EZE 35:3 ಅದಕ್ಕೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
EZE 35:4 ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವೆ; ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.
EZE 35:5 “ ‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕಾಲದಲ್ಲಿ ಅವರನ್ನು ಖಡ್ಗದ ಬಾಯಿಗೆ ಗುರಿಮಾಡಿದ ಕಾರಣ ಅವರ ಶಿಕ್ಷೆಯು ತಪ್ಪದು.
EZE 35:6 ಆದುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು. ರಕ್ತಪಾತವು ನಿನ್ನನ್ನು ಬೆನ್ನಟ್ಟುವುದು. ನೀನು ರಕ್ತಪಾತಕ್ಕೆ ಹೇಸದೆ ಹೋದಕಾರಣ ರಕ್ತ ಪ್ರವಾಹವೇ ನಿನ್ನ ಬೆನ್ನು ಹತ್ತುವುದು.
EZE 35:7 ಹೀಗೆ ನಾನು ಸೇಯೀರ್ ಪರ್ವತವನ್ನು ಸಂಪೂರ್ಣ ಹಾಳುಮಾಡುವೆನು. ಅದರೊಳಗೆ ಹಾದುಹೋಗುವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
EZE 35:8 ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವರು. ನಿನ್ನ ಖಡ್ಗದಿಂದ ಹತರಾದವರು ನಿನ್ನ ಹಳ್ಳಕೊಳ್ಳಗಳಲ್ಲಿಯೂ ಪರ್ವತಗಳ ಮೇಲೆಯೂ ಬೀಳುವರು.
EZE 35:9 ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ನಿನ್ನ ನಗರಗಳು ನಿರ್ಜನವಾಗುವುವು, ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.
EZE 35:10 “ ‘ಯೆಹೋವ ದೇವರು ಅವುಗಳಲ್ಲಿದ್ದರೂ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನ ವಶವಾಗುವುವು. ಎಂದೂ ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.
EZE 35:11 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೆಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದಾಗ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
EZE 35:12 ಆಗ ನಾನೇ ಯೆಹೋವನೆಂದು ನೀನು ತಿಳಿಯುವೆ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ, “ಅವು ಹಾಳಾಗಿವೆ ನಮಗೆ ನುಂಗುವುದಕ್ಕೆ ಕೊಡಲಾಗಿವೆ,” ಎಂದು ಹೇಳಿ ಮಾತನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಯೆಹೋವ ದೇವರೆಂಬ ನಾನೇ ಕೇಳಿರುವೆನೆಂದು ತಿಳಿಯುವೆ.
EZE 35:13 ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
EZE 35:14 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡುತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.
EZE 35:15 ಹೇಗೆ ನೀನು ಇಸ್ರಾಯೇಲರ ಸ್ವಾಸ್ತ್ಯದ ನಾಶನಕ್ಕೆ ಹೇಗೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಸೇಯೀರ್ ಪರ್ವತವೇ ಮತ್ತು ಸಮಸ್ತ ಎದೋಮೇ ಸಂಪೂರ್ಣವಾಗಿ ಹಾಳಾಗುವೆ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.’ ”
EZE 36:1 “ನರಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು. ಹೇಳು, ‘ಇಸ್ರಾಯೇಲ್ ಪರ್ವತಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
EZE 36:2 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು. ’
EZE 36:3 ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.
EZE 36:4 ಆದ್ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ, ಪರ್ವತಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ
EZE 36:5 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’
EZE 36:6 ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.
EZE 36:7 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನನ್ನ ಕೈಯೆತ್ತಿ ಪ್ರಮಾಣ ಮಾಡಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿರುವ ಆ ಜನಾಂಗಗಳು ತಮ್ಮ ನಿಂದೆಯನ್ನು ಹೊರುವರು.
EZE 36:8 “ ‘ಆದರೆ ಓ ಇಸ್ರಾಯೇಲ್ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹರಡಿಸಿ ನನ್ನ ಜನರಾದ ಇಸ್ರಾಯೇಲರಿಗೆ ಫಲಕೊಡುವಿರಿ. ಏಕೆಂದರೆ ಅವರ ಬರುವಿಕೆಯು ಸಮೀಪವಾಗಿದೆ.
EZE 36:9 ನಾನು ನಿಮ್ಮವನಾಗಿದ್ದೇನೆ ನಾನು ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ಉಳುಮೆ ಮಾಡಿ ಬಿತ್ತಲಾಗುತ್ತದೆ.
EZE 36:10 ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದವರನ್ನೂ ಎಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿಸುತ್ತೇನೆ. ಪಟ್ಟಣಗಳು ಜನಭರಿತವಾಗುವುವು. ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವುವು.
EZE 36:11 ನಾನು ನಿಮ್ಮ ಮೇಲೆ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು. ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವುವು. ನಾನು ನಿಮ್ಮನ್ನು ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
EZE 36:12 ನನ್ನ ಜನರಾದ ಇಸ್ರಾಯೇಲ್ಯರನ್ನು ನಿಮ್ಮಲ್ಲಿ ವಾಸಿಸುವಂತೆ ಮಾಡುವೆನು. ಅವರು ನಿನ್ನನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ನೀವು ಅವರ ಸೊತ್ತಾಗಿರುವಿರಿ; ನೀವು ಎಂದಿಗೂ ಅವರ ಮಕ್ಕಳಿಂದ ವಂಚಿತರಾಗುವುದಿಲ್ಲ.
EZE 36:13 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವೆ,” ಎಂದು ಅವರು ನಿನಗೆ ಹೇಳುವರು.
EZE 36:14 ಆದ್ದರಿಂದ ಇನ್ನು ಮೇಲೆ ನೀನು ಮನುಷ್ಯರನ್ನು ನುಂಗುವುದಿಲ್ಲ. ಇನ್ನು ಮೇಲೆ ನಿನ್ನ ಜನಾಂಗದವರನ್ನೂ ಮಕ್ಕಳಿಲ್ಲದವರನ್ನಾಗಿ ಮಾಡುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 36:15 ಅಲ್ಲದೆ ಇನ್ನು ಮೇಲೆ ನೀನು ಇತರ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗಗಳಿಂದ ಅವಮಾನ ಅನುಭವಿಸುವುದಿಲ್ಲ. ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
EZE 36:16 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 36:17 “ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
EZE 36:18 ಆದ್ದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷವನ್ನು ಅವರ ಮೇಲೆ ಸುರಿಸಿದೆನು.
EZE 36:19 ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶಗಳಲ್ಲಿ ಚದರಿಹೋದರು. ಅವರ ದುರ್ಮಾರ್ಗ ದುರಾಚಾರಗಳಿಗೆ ಅನುಸಾರವಾಗಿ ಅವರನ್ನು ನ್ಯಾಯತೀರಿಸಿದೆನು.
EZE 36:20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಇವರೇ, ‘ಯೆಹೋವ ದೇವರ ಜನರು ಮತ್ತು ಇವರು ಆತನ ದೇಶದಿಂದ ಹೊರಟು ಹೋದರು,’ ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡಿದರು.
EZE 36:21 ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ಕುರಿತು ಮನಮರುಗಿದೆನು.
EZE 36:22 “ಆದ್ದರಿಂದ ನೀನು ಇಸ್ರಾಯೇಲರ ಮನೆತನದವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡುತ್ತಿಲ್ಲ. ಆದರೆ ನೀವು ಇತರ ಜನಾಂಗಗಳ ನಡುವೆ ಅಪವಿತ್ರಪಡಿಸಿದ ನನ್ನ ಪರಿಶುದ್ಧ ನಾಮಕ್ಕಾಗಿ ಮಾಡುತ್ತೇನೆ.
EZE 36:23 ನೀನು ನನ್ನ ಮಹತ್ವದ ನಾಮವನ್ನು ಅಪವಿತ್ರತೆಗೆ ಗುರಿಮಾಡಿದ ಇತರ ಜನಾಂಗಗಳಲ್ಲಿ ನನ್ನ ಪವಿತ್ರ ನಾಮವನ್ನು ತೋರಿಸುವೆನು. ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮೂಲಕವಾಗಿ ನನ್ನನ್ನು ಪವಿತ್ರನೆಂದು ತೋರಿಸುವಾಗ ಅವರು ನಾನು ಯೆಹೋವ ದೇವರೆಂಬುದನ್ನು ತಿಳಿದುಕೊಳ್ಳುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 36:24 “ ‘ನಾನು ನಿಮ್ಮನ್ನು ಇತರ ಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
EZE 36:25 ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
EZE 36:26 ನಿಮಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮವನ್ನು ನಿಮ್ಮೊಳಗೆ ಇಡುವೆನು. ನಿಮ್ಮೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
EZE 36:27 ನನ್ನ ಆತ್ಮವನ್ನು ನಿಮ್ಮೊಳಗೆ ಇಡುವೆನು. ನೀವು ನನ್ನ ನಿಯಮಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಜಾಗರೂಕತೆಯಿಂದ ಅನುಸರಿಸಿ ನಡೆಯುವಿರಿ.
EZE 36:28 ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿಸುವಿರಿ; ನೀವು ನನ್ನ ಜನರಾಗಿರುವಿರಿ. ನಾನು ನಿಮ್ಮ ದೇವರಾಗಿರುವೆನು.
EZE 36:29 ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು. ಬೆಳೆ ಬೆಳೆಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವುದಿಲ್ಲ.
EZE 36:30 ಜನಾಂಗಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನೂ ಹೆಚ್ಚಿಸುವೆನು.
EZE 36:31 ಆಮೇಲೆ ನೀವು ನಿಮ್ಮ ನಿಮ್ಮ ದುರ್ಮಾರ್ಗಗಳನ್ನೂ ದುರಾಚಾರಗಳನ್ನೂ ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
EZE 36:32 ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳಿಗೆ ನಾಚಿಕೆಪಟ್ಟು ಲಜ್ಜೆಹೊಂದಿರಿ.
EZE 36:33 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು. ಹಾಳಾಗಿರುವ ಸ್ಥಳಗಳಲ್ಲಿಯೂ ಕಟ್ಟಡಗಳು ಪುನಃ ಏಳುವುವು.
EZE 36:34 ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಹಾಳುಬಿದ್ದ ಹಾಗೆ ಕಾಣದೆ ಉಳುಮೆಗೊಂಡಿರುವುದು.
EZE 36:35 “ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ,” ಎಂದು ಹೇಳುವರು.
EZE 36:36 ಯೆಹೋವ ದೇವರಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ ಮತ್ತು ನಾನೇ ಇದನ್ನು ಮಾಡುತ್ತೇನೆ.’
EZE 36:37 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.
EZE 36:38 ಮೀಸಲಾದ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು. ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವುವು. ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
EZE 37:1 ಯೆಹೋವ ದೇವರ ಕೈ ನನ್ನ ಮೇಲೆ ಇತ್ತು; ಅದು ಆತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಯಲ್ಲಿ ಇಳಿಸಿತು.
EZE 37:2 ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದನು. ತೆರೆದಿರುವ ಆ ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
EZE 37:3 ಆತನು ನನಗೆ, “ನರಪುತ್ರನೇ, ಈ ಎಲುಬುಗಳು ಜೀವಿಸುವಂಥವೇ?” ಎಂದಾಗ, ನಾನು ಉತ್ತರವಾಗಿ, “ಸಾರ್ವಭೌಮ ಯೆಹೋವ ದೇವರೇ, ನೀವೇ ತಿಳಿದಿರುವಿರಿ,” ಎಂದೆನು.
EZE 37:4 ಅವರು ನನಗೆ ಹೇಳಿದ್ದೇನೆಂದರೆ, “ಈ ಎಲುಬುಗಳ ಮೇಲೆ ಪ್ರವಾದಿಸಿ, ಅವುಗಳಿಗೆ ಹೇಳು: ‘ಒಣಗಿದ ಎಲುಬುಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ,
EZE 37:5 ಸಾರ್ವಭೌಮ ಯೆಹೋವ ದೇವರು ಈ ಎಲುಬುಗಳಿಗೆ ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ. ನೀವು ಬದುಕುವಿರಿ;
EZE 37:6 ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ತಂದು ಮತ್ತು ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.’ ”
EZE 37:7 ಅದರಂತೆ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು. ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು. ಅದು ಕದಲುತ್ತಿತ್ತು, ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು.
EZE 37:8 ನಾನು ನೋಡಿದಾಗ, ನರಗಳು ಮತ್ತು ಮಾಂಸವು ಅವುಗಳ ಮೇಲೆ ಬಂದವು. ಅವುಗಳ ಮೇಲೆ ಚರ್ಮವು ಮುಚ್ಚಿಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ.
EZE 37:9 ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯಪುತ್ರನೇ, ಆ ಉಸಿರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತಶರೀರಗಳು ಬದುಕುವಂತೆ ಅದರ ಮೇಲೆ ಊದು.’ ”
EZE 37:10 ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು, ಅವುಗಳಲ್ಲಿ ಉಸಿರು ಬಂತು. ಅವುಗಳಲ್ಲಿ ಪಾದದ ಮೇಲೆ ಅವುಗಳು ನಿಂತವು, ಅತ್ಯಂತ ಮಹಾಸೈನ್ಯವಾದವು.
EZE 37:11 ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ. ಇಗೋ, ‘ನಮ್ಮ ಎಲುಬುಗಳು ಒಣಗಿಹೋದವು. ನಮ್ಮ ನಿರೀಕ್ಷೆಯು ಸಹ ಕಳೆದು ಹೋಗಿದೆ. ಸಂಪೂರ್ಣವಾಗಿ ನಾಶವಾದೆವು ಎಂದು ಅವರು ಹೇಳುವರು.’
EZE 37:12 ಆದ್ದರಿಂದ ನೀನು ಪ್ರವಾದಿಸಿ ಅವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು.
EZE 37:13 ನನ್ನ ಜನರೇ, ಯಾವಾಗ ನಾನು ನಿಮ್ಮ ಸಮಾಧಿಗಳನ್ನು ತೆರೆದು ಹೊರಗೆ ಬರಮಾಡುವೆನೋ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
EZE 37:14 ನನ್ನ ಆತ್ಮವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು; ಆಗ ಯೆಹೋವ ದೇವರಾದ ನಾನೇ ಇದನ್ನು ನುಡಿದು ನೆರವೇರಿಸಿದ್ದೇನೆ ಎಂದು ನೀವು ತಿಳಿಯುವಿರಿ, ಎಂದು ಯೆಹೋವ ದೇವರು ಹೇಳುತ್ತಾರೆ.’ ”
EZE 37:15 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 37:16 “ಮನುಷ್ಯಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಯೆಹೂದನದು ಮತ್ತು ಅವನ ಜೊತೆಗಾರರಾದ ಇಸ್ರಾಯೇಲಿನ ಮಕ್ಕಳದು,’ ಎಂದು ಬರೆದಿಡು. ಆಮೇಲೆ ಮತ್ತೊಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯೀಮಿನ ಕೋಲು ಯೋಸೇಫನಿಗೂ ಅವನ ಜೊತೆಗಾರರಾದ ಇಸ್ರಾಯೇಲನ ಮನೆತನದವರೆಲ್ಲರಿಗೂ ಇರುವ ಕೋಲು,’ ಎಂದು ಬರೆದಿಡು.
EZE 37:17 ಆ ಎರಡನ್ನು ಒಂದೇ ಕೋಲಾಗುವ ಹಾಗೆ ಜೋಡಿಸು. ಅವು ಒಂದಾಗಿ ನಿನ್ನ ಕೈಯಲ್ಲಿರುವುವು.
EZE 37:18 “ ‘ಇದರ ಅರ್ಥವೇನೆಂದು ನೀನು ನಮಗೆ ಹೇಳುವುದಿಲ್ಲವೋ?’ ಎಂದು ನಿನ್ನ ದೇಶದ ಜನರು ನಿನ್ನನ್ನು ಪ್ರಶ್ನಿಸುವಾಗ,
EZE 37:19 ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎಫ್ರಾಯೀಮಿನ ಕೈಯಲ್ಲಿರುವ ಯೋಸೇಫನ ಕೋಲನ್ನೂ ಅವನ ಜೊತೆಗಾರರಾದ ಇಸ್ರಾಯೇಲರ ಗೋತ್ರಗಳನ್ನೂ ತೆಗೆದುಕೊಂಡು ಅವನ ಸಂಗಡ ಅಂದರೆ ಯೆಹೂದನ ಕೋಲಿನ ಸಂಗಡ ಸೇರಿಸಿ ಅವುಗಳನ್ನು ಒಂದೇ ಕೋಲನ್ನಾಗಿ ಮಾಡುವೆನು. ಅವರು ನನ್ನ ಕೈಯಲ್ಲಿ ಒಂದಾಗುವರು,’ ಎಂದು ಹೇಳು.
EZE 37:20 ನೀನು ಬರೆದ ಆ ಕೋಲುಗಳು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿ ಹಿಡಿದು ಅವರಿಗೆ ಹೇಳು:
EZE 37:21 ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ಇಸ್ರಾಯೇಲರನ್ನು ಅವರು ಹೋಗಿರುವ ಕಡೆಯಿಂದ ಒಂದುಗೂಡಿಸಿ ಅವರ ಸ್ವಂತ ದೇಶಕ್ಕೆ ತರುವೆನು.
EZE 37:22 ನಾನು ಅವರನ್ನು ಇಸ್ರಾಯೇಲ್ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ. ಅವರೆಲ್ಲರಿಗೂ ಒಬ್ಬನೇ ಅರಸನಾಗಿರುವನು. ಇನ್ನು ಮೇಲೆ ಅವರು ಎರಡು ಜನಾಂಗದವರಾಗಿಯೂ, ಭಿನ್ನರಾಜ್ಯದವರಾಗಿಯೂ ಇರುವುದಿಲ್ಲ.
EZE 37:23 ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
EZE 37:24 “ ‘ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು. ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು; ನನ್ನ ನ್ಯಾಯಗಳನ್ನು ಅನುಸರಿಸಿ, ನನ್ನ ನಿಯಮಗಳನ್ನು ಪಾಲಿಸುವಂತೆ ಮಾಡುವೆನು.
EZE 37:25 ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ಪಿತೃಗಳು ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮೊಮ್ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ರಾಜಕುಮಾರನಾಗಿರುವನು.
EZE 37:26 ಇದಾದ ಮೇಲೆ ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ಧಿಗೊಳಿಸುವೆನು. ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
EZE 37:27 ನನ್ನ ಗುಡಾರವು ಸಹ ಅವರೊಂದಿಗಿರುವುದು. ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.
EZE 37:28 ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಯೆಹೋವ ದೇವರಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಎಲ್ಲಾ ದೇಶದ ಜನಾಂಗಗಳು ಸಹ ತಿಳಿದುಕೊಳ್ಳುವರು.’ ”
EZE 38:1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
EZE 38:2 “ಓ ಮನುಷ್ಯಪುತ್ರನೇ, ರೋಷ್, ಮೆಷೆಕ್ ಮತ್ತು ತೂಬಲ್‌ನ ಮುಖ್ಯ ರಾಜಕುಮಾರನಾದ ಮಾಗೋಗ್ ದೇಶದ ಗೋಗನ ಕಡೆಗೆ ನಿನ್ನ ಮುಖವನ್ನು ತಿರುಗಿಸು; ಮತ್ತು ಅವನ ವಿರುದ್ಧವಾಗಿ ಪ್ರವಾದಿಸು.
EZE 38:3 ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ರೋಷ್, ಮೆಷೆಕ್, ತೂಬಲಿಗೆ ಮುಖ್ಯ ರಾಜಕುಮಾರನಾದ ಗೋಗನೇ, ನಾನು ನಿನಗೆ ವಿರೋಧವಾಗಿದ್ದೇನೆ.
EZE 38:4 ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕುವೆನು. ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಮತ್ತು ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧಗಳನ್ನು ತೊಟ್ಟಿರುವರು, ಇವರೊಂದಿಗೆ ಚಿಕ್ಕ ಮತ್ತು ದೊಡ್ಡ ಗುರಾಣಿಗಳುಳ್ಳ ಮಹಾಸಮೂಹವನ್ನು ತರುವೆನು. ಇವರೆಲ್ಲರೂ ಖಡ್ಗಗಳನ್ನು ಹಿಡಿದಿರುವರು.
EZE 38:5 ಅವರೊಂದಿಗೆ ಪಾರಸಿಯರೂ ಕೂಷ್ಯರೂ ಮತ್ತು ಪೂಟ್ಯರೂ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.
EZE 38:6 ಗೋಮೆರ್ ಮತ್ತು ಅದರ ಎಲ್ಲಾ ದಳಗಳನ್ನೂ, ಉತ್ತರ ದಿಕ್ಕಿನ ತೋಗರ್ಮದವರನ್ನೂ ಮತ್ತು ಅದರ ಎಲ್ಲಾ ದಳಗಳನ್ನೂ, ಹೀಗೆ ನಿನ್ನ ಸಂಗಡವಿರುವ ಅನೇಕ ಜನರನ್ನೂ ನಿನ್ನೊಂದಿಗೆ ಬರಮಾಡುವೆನು.
EZE 38:7 “ ‘ನೀನು ಸಿದ್ಧನಾಗಿ ನಿನ್ನ ಸಂಗಡ ಕೂಡಿಬಂದಿರುವ ನಿನ್ನ ಎಲ್ಲಾ ಕೂಟಗಳನ್ನು ಸಿದ್ಧಮಾಡಿಕೊಂಡು ನೀನು ಅವರ ಅಧಿಕಾರವನ್ನು ತೆಗೆದುಕೊ.
EZE 38:8 ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಕರೆಯುವೆನು; ನೀನು ಯುದ್ಧದಿಂದ ಉಳಿದುಕೊಂಡ ದೇಶಕ್ಕೂ, ಯಾವಾಗಲೂ ಹಾಳಾಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ, ಜನಾಂಗಗಳಿಂದ ಒಟ್ಟುಗೂಡಿ ಭದ್ರವಾಗಿ ವಾಸಿಸುವವರ ವಿರೋಧವಾಗಿ ವರ್ಷಗಳ ಅಂತ್ಯದಲ್ಲಿ ಬರುವೆ.
EZE 38:9 ನೀನು ಮೇಲೇರಿ ಬಿರುಗಾಳಿಯಂತೆ ಬರುವೆ. ನೀನೂ ನಿನ್ನ ಎಲ್ಲಾ ದಂಡುಗಳೂ ಅನೇಕ ಜನರಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ.
EZE 38:10 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಆ ದಿನದಲ್ಲಿ ನಿನ್ನ ಮನಸ್ಸಿಗೆ ಕೆಲವು ಆಲೋಚನೆಗಳು ಬರುವುವು ಮತ್ತು ನೀನು ಒಂದು ಕುತಂತ್ರವನ್ನು ಮಾಡುವೆ.
EZE 38:11 ನೀವು ಹೇಳುವಿರಿ, “ಗೋಡೆಯಿಲ್ಲದ ಹಳ್ಳಿಗಳಿಲ್ಲದ ದೇಶದ ಮೇಲೆ ನಾನು ಆಕ್ರಮಣ ಮಾಡುತ್ತೇನೆ. ಪೌಳಿಗೋಡೆಗಳಿಲ್ಲದೆ ಇಲ್ಲವೆ ಬಾಗಿಲುಗಳು ಅಗುಳಿಗಳು ಇಲ್ಲದೆ ಅವರು ಶಾಂತಿಯುತ ಮತ್ತು ನಿರ್ಭಯವಾಗಿ ವಾಸಿಸುವವರ ಮೇಲೆ ದಾಳಿಮಾಡುತ್ತೇನೆ.
EZE 38:12 ನಾನು ಸುಲಿಗೆಯನ್ನು ಮತ್ತು ಕೊಳ್ಳೆಯನ್ನು ತೆಗೆದುಕೊಳ್ಳುವೆನು. ಹೀಗೆ ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳನ್ನು ಎದುರಿಸುವೆನು. ಜನಾಂಗಗಳಿಂದ ಒಟ್ಟುಗೂಡಿ, ಪಶುಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಿಸುವವರ ಮೇಲೆಯೂ ಕೈಹಾಕುವೆನು,” ಎಂದು ಹೇಳುವೆ.
EZE 38:13 ಶೆಬ, ದೆದಾನ್ ಮತ್ತು ತಾರ್ಷೀಷಿನ ವರ್ತಕರು, ಅವಳ ಎಲ್ಲಾ ಹಳ್ಳಿಗಳೊಂದಿಗೆ ಅಲ್ಲಿ ನಿನಗೆ, “ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದೆಯಾ? ಕೊಳ್ಳೆ ಹೊಡೆಯುವುದಕ್ಕಾಗಿಯೇ ನಿನ್ನ ತಂಡವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ಪಶುಗಳನ್ನೂ ಸಂಪತ್ತನ್ನೂ ತೆಗೆದುಕೊಂಡು ಮಹಾ ಸುಲಿಗೆ ತೆಗೆದುಕೊಳ್ಳಬೇಕೆಂದೋ?” ಎನ್ನುವರು.’
EZE 38:14 “ಆದ್ದರಿಂದ ಮನುಷ್ಯಪುತ್ರನೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಗೋಗಿಗೆ ಪ್ರವಾದಿಸಿ ಹೇಳು, ನನ್ನ ಜನರಾದ ಇಸ್ರಾಯೇಲರು ಸುಖವಾಗಿ ವಾಸಿಸುವರೋ ಆ ದಿನದಲ್ಲಿ ಅದು ನಿನಗೆ ತಿಳಿಯುವುದಿಲ್ಲವೋ
EZE 38:15 ನೀನು ಉತ್ತರ ಭಾಗಗಳ ನಿನ್ನ ಸ್ಥಳದಿಂದ ಬರುವೆ. ನೀನೂ ನಿನ್ನ ಸಂಗಡ ಅನೇಕ ಜನರೂ ಕುದುರೆಗಳನ್ನು ಹತ್ತಿದವರಾಗಿ ಬಲವಾದ ಸೈನ್ಯವಾಗಿಯೂ ಮಹಾ ದಂಡಾಗಿಯೂ ಬರುವೆ.
EZE 38:16 ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲರಿಗೆ ವಿರೋಧವಾಗಿ ಅವರ ಮೇಲೆ ಬರುವೆ. ಇದು ನಡೆಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಇತರ ಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ವಿರೋಧವಾಗಿ ಬರಮಾಡುವೆನು.
EZE 38:17 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗಳಿಗೆ ಮುಂಚೆ ಪ್ರವಾದಿಸಿದೆಯಲ್ಲವೇ?
EZE 38:18 ಆ ದಿನದಲ್ಲಿ ಗೋಗನು ಇಸ್ರಾಯೇಲ್ ದೇಶಕ್ಕೆ ವಿರೋಧವಾಗಿ ಬರುವಾಗ, ನಾನು ರೋಷದಿಂದ ಬುಸುಗುಟ್ಟುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 38:19 ಏಕೆಂದರೆ ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನದಂದು ಇಸ್ರಾಯೇಲ್ ದೇಶದಲ್ಲಿ ಮಹಾಕಂಪನ ಉಂಟಾಗುವುದು.
EZE 38:20 ಆಗ ಸಮುದ್ರದ ಮೀನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವುವು; ಪರ್ವತಗಳು ಉರುಳಿಹೋಗುವುವು. ಝರಿಗಳು ಕವಚಿಕೊಳ್ಳುತ್ತಾ, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವುದು.
EZE 38:21 ನನ್ನ ಎಲ್ಲಾ ಪರ್ವತಗಳಲ್ಲೂ ನಾನು ಅವನಿಗೆ ವಿರುದ್ಧವಾಗಿ ಖಡ್ಗವನ್ನು ಕರೆಯುವೆನೆಂದೂ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಪ್ರತಿಯೊಬ್ಬ ಮನುಷ್ಯನ ಖಡ್ಗವೂ ಅವನ ಸಹೋದರನಿಗೆ ವಿರೋಧವಾಗಿರುವುದು.
EZE 38:22 ನಾನು ಅವನೊಂದಿಗೆ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ ಸಾವಿಗೂ ಗುರಿಮಾಡುವೆನು. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.
EZE 38:23 ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಬಹು ಜನಾಂಗಗಳು ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.’
EZE 39:1 “ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು, ರೋಷ್, ಮೆಷೆಕ್ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಿನಗೆ ನಾನು ವಿರೋಧವಾಗಿದ್ದೇನೆ.
EZE 39:2 ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ ಮುಂದರಿಸಿ ಉತ್ತರ ದಿಕ್ಕಿನ ಕಟ್ಟಕಡೆಯಿಂದ ಬರಮಾಡಿ ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,
EZE 39:3 ನಾನು ನಿನ್ನ ಎಡಗೈಯಿಂದ ನಿನ್ನ ಬಿಲ್ಲನ್ನು ಹೊಡೆಯುವೆನು ಮತ್ತು ನಿನ್ನ ಬಲಗೈಯಿಂದ ನಿನ್ನ ಬಾಣಗಳನ್ನು ಉದುರಿ ಬೀಳುವಂತೆ ಮಾಡುವೆನು.
EZE 39:4 ನೀನೂ ನಿನ್ನ ಎಲ್ಲಾ ದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ. ಮಾಂಸತಿನ್ನುವ ಎಲ್ಲ ತರಹದ ಪಕ್ಷಿಗಳಿಗೂ ಮತ್ತು ಕಾಡುಮೃಗಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.
EZE 39:5 ನೀನು ತೆರೆದ ಬಯಲಿನಲ್ಲಿ ಬೀಳುವೆ, ಏಕೆಂದರೆ ನಾನೇ ಇದನ್ನು ಹೇಳಿರುವೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 39:6 ನಾನು ಮಾಗೋಗ್ ಮತ್ತು ಅವರೊಂದಿಗೆ ದ್ವೀಪಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ, ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.
EZE 39:7 “ ‘ಹೀಗೆ ನನ್ನ ಜನರಾದ ಇಸ್ರಾಯೇಲ್ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಗೊಳಿಸುವೆನು. ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದಂತೆ ಮಾಡುವೆನು. ಇಸ್ರಾಯೇಲಿನಲ್ಲಿ ಪರಿಶುದ್ಧನಾದ ಯೆಹೋವ ದೇವರು ನಾನೇ ಎಂದು ಇತರ ದೇಶದವರಿಗೆ ಗೊತ್ತಾಗುವುದು.
EZE 39:8 ಇದು ಬಂದಿತು, ಇದು ನೆರವೇರಿತು. ನಾನು ಮುಂತಿಳಿಸಿದ ದಿನವು ಇದೇ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 39:9 “ ‘ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು, ಶತ್ರುವಿನ ಆಯುಧಗಳಿಗೆ ಬೆಂಕಿಯಿಕ್ಕಿ ಸುಟ್ಟುಬಿಡುವರು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.
EZE 39:10 ಅದಕ್ಕಾಗಿ ಅವರು ಬಯಲಿನಿಂದ ಮರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಅರಣ್ಯಗಳಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವುದೂ ಇಲ್ಲ, ಅವರು ಆಯುಧಗಳನ್ನು ಬೆಂಕಿಗೆ ಸೌದೆಯಾಗಿ ಉಪಯೋಗಿಸುವರು. ಅವರು ಸೂರೆಯಾದವುಗಳನ್ನು ಸೂರೆ ಮಾಡುವರು ಮತ್ತು ಕೊಳ್ಳೆ ಹೊಡೆದವರನ್ನು ತಾವು ಕೊಳ್ಳೆಹೊಡೆಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 39:11 “ ‘ಆ ದಿನದಲ್ಲಿ ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ. ಸಮುದ್ರದ ಪೂರ್ವದಲ್ಲಿರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ, ಆಗ ಅದು ಹಾದು ಹೋಗುವವರನ್ನು ನಿಲ್ಲಿಸುವುದು. ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನು ಸಮಾಧಿಮಾಡುವರು. ಆ ಕಣಿವೆಯನ್ನು ಹಾಮೋನ್ ಗೋಗ್ ಎಂದು ಕರೆಯುವರು.
EZE 39:12 “ ‘ಇಸ್ರಾಯೇಲನ ಮನೆತನದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳವರೆಗೂ ಸಮಾಧಿಮಾಡುವರು.
EZE 39:13 ದೇಶದ ಎಲ್ಲಾ ಜನರು ಅವರನ್ನು ಹೂಳಿಡುವರು. ನಾನು ಮಹಿಮೆಯನ್ನು ಹೊಂದುವ ದಿನವು ಅವರಿಗೆ ಸ್ಮರಣ ದಿನವಾಗಿರುವುದು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 39:14 ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹೂಳಿಡುವುದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನಿರಂತರವಾಗಿ ನೇಮಿಸುವರು. “ ‘ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.
EZE 39:15 ಪ್ರಯಾಣಿಕರು ಆ ದೇಶದಲ್ಲಿ ಹಾದುಹೋಗುತ್ತಿರುವಾಗ ಯಾವುದಾದರೊಂದು ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ಹಾಕುವರು, ಹೂಣಿಡುವವರು ಅದನ್ನು ಹಾಮೋನ್ ಗೋಗಿನ ಕಣಿವೆಯಲ್ಲಿ ಹೂಳಿಡುವ ತನಕ ಆ ಗುರುತು ಹಾಗೆಯೇ ಇರುವದು.
EZE 39:16 ಆ ನಗರಕ್ಕೆ ಹಾಮೋನ ಎಂದು ಹೆಸರಾಗುವದು, ಹೀಗೆ ಅವರು ದೇಶವನ್ನು ಶುದ್ಧಿಮಾಡುವರು.’
EZE 39:17 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಪ್ರತಿಯೊಂದು ಕಾಡುಮೃಗಗಳಿಗೂ, ‘ಮಾತನಾಡಿ ಒಟ್ಟಾಗಿ ಬನ್ನಿರಿ. ನಾನು ನಿಮಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ. ಇದು ಇಸ್ರಾಯೇಲ್ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ಅಲ್ಲಿ ನೀವು ಮಾಂಸವನ್ನು ತಿನ್ನಬಹುದು ಮತ್ತು ರಕ್ತವನ್ನು ಕುಡಿಯಬಹುದು.
EZE 39:18 ಟಗರು, ಕುರಿಮರಿ, ಹೋತ, ಹೋರಿ ಮತ್ತು ಬಾಷಾನಿನ ಕೊಬ್ಬಿದ ಪ್ರಾಣಿಗಳಂತೆ ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ರಾಜಕುಮಾರರ ರಕ್ತವನ್ನು ಕುಡಿಯುವಿರಿ.
EZE 39:19 ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವವರೆಗೂ ಕೊಬ್ಬನ್ನು ತಿಂದು ಮತ್ತೇರುವವರೆಗೂ ರಕ್ತವನ್ನು ಕುಡಿಯಬಹುದು.
EZE 39:20 ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ ರಾಹುತ ಶೂರ ಸಕಲ ವಿಧವಾದ ಸೈನಿಕ ಇವರನ್ನು ಬೇಕಾದಷ್ಟು ಭಕ್ಷಿಸುವಿರಿ,’ ಇದು ಸಾರ್ವಭೌಮ ಯೆಹೋವ ದೇವರ ನುಡಿ.
EZE 39:21 “ನಾನು ನನ್ನ ಮಹಿಮೆಯನ್ನು ಇತರ ಜನಾಂಗಗಳಲ್ಲಿ ಸ್ಥಾಪಿಸಲು ಎಲ್ಲಾ ಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವುವು.
EZE 39:22 ಹೀಗೆ ಇಸ್ರಾಯೇಲನ ಮನೆತನದವರು ಯೆಹೋವ ದೇವರಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವರಾಗಿರುವೆನು ಎಂದು ತಿಳಿಯುವರು.
EZE 39:23 ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಇತರ ಜನಾಂಗಗಳು ತಿಳಿಯುವುವು. ಅವರು ನನಗೆ ವಿರೋಧವಾಗಿ ವಿಶ್ವಾಸದ್ರೋಹಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಖಡ್ಗದಿಂದ ಹತರಾದರು.
EZE 39:24 ಅವರ ಅಶುದ್ಧತ್ವದ ಪ್ರಕಾರವೂ ಅವರ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
EZE 39:25 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪವಿತ್ರ ನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಆಸಕ್ತನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರುವೆನು.
EZE 39:26 ನಾನು ನನ್ನ ಜನರನ್ನು ಇತರ ಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಬಹು ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
EZE 39:27 ಅನಂತರ ಅವರು ಸ್ವದೇಶದಲ್ಲಿ ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ವಾಸಿಸುತ್ತಿರುವಾಗ ತಾವು ನನಗೆ ಮಾಡಿದ ಎಲ್ಲಾ ದ್ರೋಹಗಳ ಹೊರೆಯನ್ನು ಹೊರುತ್ತಾ ತಮ್ಮ ನಾಚಿಕೆಯನ್ನು ಮರೆತುಬಿಡುವರು.
EZE 39:28 ನಾನು ಅವರನ್ನು ಜನಾಂಗಗಳೊಳಗಿಂದ ಸೆರೆಹೋಗುವಂತೆ ಮಾಡಿ, ಆಮೇಲೆ ಅವರಲ್ಲಿ ಒಬ್ಬರನ್ನಾದರೂ ಉಳಿಸದೆ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ಯೆಹೋವ ದೇವರೆಂದು ಅವರು ತಿಳಿಯುವರು.
EZE 39:29 ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವುದಿಲ್ಲ. ನಾನು ನನ್ನ ಆತ್ಮವನ್ನು ಇಸ್ರಾಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 40:1 ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೆಯ ದಿನದಲ್ಲಿ, ಪಟ್ಟಣವು ನಾಶವಾದ ಮೇಲೆ, ಹದಿನಾಲ್ಕನೆಯ ವರ್ಷದ ಅದೇ ದಿನದಲ್ಲಿ, ಯೆಹೋವ ದೇವರ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.
EZE 40:2 ದೇವರ ದರ್ಶನಗಳಲ್ಲಿ ಅವರು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ನಿಲ್ಲಿಸಿದರು. ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
EZE 40:3 ಅವರು ನನ್ನನ್ನು ಅಲ್ಲಿಗೆ ತಂದಾಗ, ಅಲ್ಲಿ ಕಂಚಿನಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲೂ ಅಳತೆಯ ಕೋಲೂ ಇತ್ತು. ಅವನು ಬಾಗಿಲಲ್ಲೇ ನಿಂತಿದ್ದನು.
EZE 40:4 ಆ ಮನುಷ್ಯನು ನನಗೆ, “ಮನುಷ್ಯಪುತ್ರನೇ ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ಮತ್ತು ನಾನು ತೋರಿಸುವ ಎಲ್ಲಾ ಸಂಗತಿಗಳಿಗೆ ನೀನು ಮನಸ್ಸಿಡು. ನಾನು ನಿನಗೆ ಅವುಗಳನ್ನೆಲ್ಲಾ ತೋರಿಸುವುದಕ್ಕಾಗಿಯೇ ಇಲ್ಲಿಗೆ ನಿನ್ನನ್ನು ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ಜನರಿಗೆ ತಿಳಿಸು,” ಎಂದರು.
EZE 40:5 ನಾನು ದೇವಾಲಯದ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಒಂದು ಗೋಡೆಯನ್ನು ಕಂಡೆನು. ಆ ಮನುಷ್ಯನ ಕೈಯಲ್ಲಿದ್ದ ಅಳತೆ ಕೋಲು ಸುಮಾರು ಮೂರು ಮೀಟರ್ ಉದ್ದವಿತ್ತು, ಪ್ರತಿಯೊಂದೂ ಒಂದು ಮೀಟರ್ ಮತ್ತು ಒಂದು ಅಂಗೈ ಅಗಲವಾಗಿತ್ತು. ಆ ಮನುಷ್ಯನು ಗೋಡೆಯನ್ನು ಅಳೆದನು. ಅದು ಒಂದು ಕೋಲು ಅಗಲ ಮತ್ತು ಒಂದು ಕೋಲು ಎತ್ತರವಾಗಿತ್ತು.
EZE 40:6 ಆಮೇಲೆ ಅವನು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಬಾಗಿಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಿಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
EZE 40:7 ಕಾವಲುಗಾರರ ಕೋಣೆಯ ಉಪವಿಭಾಗಗಳು ಒಂದು ಕೋಲು ಉದ್ದ ಮತ್ತು ಒಂದು ಕೋಲು ಅಗಲವಿದ್ದವು ಮತ್ತು ಕೋಣೆಯ ಉಪವಿಭಾಗಗಳ ನಡುವಿನ ಗೋಡೆಗಳು ಸುಮಾರು ಮೂರು ಮೀಟರ್ ದಪ್ಪವಾಗಿದ್ದವು. ಮತ್ತು ದೇವಾಲಯಕ್ಕೆ ಎದುರಾಗಿರುವ ದ್ವಾರಮಂಟಪದ ಮುಂದಿನ ಹೆಬ್ಬಾಗಿಲಿನ ಹೊಸ್ತಿಲು ಒಂದು ಕೋಲು ಆಳವಾಗಿತ್ತು.
EZE 40:8 ನಂತರ ಅವನು ಹೆಬ್ಬಾಗಿಲಿನ ದ್ವಾರಮಂಟಪವನ್ನು ಅಳೆದನು.
EZE 40:9 ಆಮೇಲೆ ಬಾಗಿಲಿನ ದ್ವಾರಾಂಗಣವನ್ನು ಸುಮಾರು ನಾಲ್ಕು ಮೀಟರ್ ಅದರ ಕಂಬಗಳನ್ನು ಸುಮಾರು ಒಂದು ಮೀಟರ್ ಎಂದು ಅಳೆದನು. ಹೆಬ್ಬಾಗಿಲಿನ ದ್ವಾರಮಂಟಪವು ದೇವಾಲಯಕ್ಕೆ ಎದುರಾಗಿತ್ತು.
EZE 40:10 ಪೂರ್ವದಿಕ್ಕಿನ ಕೋಣೆಯ ಉಪವಿಭಾಗಗಳು ಈ ಕಡೆಯಲ್ಲಿ ಮೂರೂ ಆ ಕಡೆಯಲ್ಲಿ ಮೂರೂ ಇದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡೂ ಕಡೆಯ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
EZE 40:11 ಅನಂತರ ಅವನು ಹೆಬ್ಬಾಗಿಲ ದ್ವಾರವನ್ನು ಅಳೆದನು. ಅದರ ಅಗಲ ಸುಮಾರು ಐದು ಮೀಟರ್ ಹಾಗು ಉದ್ದ ಸುಮಾರು ಆರುವರೆ ಮೀಟರ್ ಇತ್ತು.
EZE 40:12 ಪ್ರತಿಯೊಂದು ಕೋಣೆಯ ಉಪವಿಭಾಗಗಳ ಮುಂದೆ ಸುಮಾರು ಅರ್ಧ ಮೀಟರ್ ಎತ್ತರದ ಗೋಡೆಯಿತ್ತು. ಕೋಣೆಯ ಉಪವಿಭಾಗಗಳು ಸುಮಾರು ಮೂರು ಚದರ ಮೀಟರ್ ಆಗಿದ್ದವು.
EZE 40:13 ಆಗ ಅವನು, ಒಂದು ಕೋಣೆಯ ಉಪವಿಭಾಗದ ಮಾಳಿಗೆಯಿಂದ ಇನ್ನೊಂದು ಕೋಣೆಯ ಉಪವಿಭಾಗದ ಮಾಳಿಗೆಯವರೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಸುಮಾರು ಹದಿಮೂರು ಮೀಟರಿತ್ತು.
EZE 40:14 ಬಾಗಿಲಿನ ಚೌಕಟ್ಟಿನ ಕಂಬಗಳನ್ನು ಅಳತೆಮಾಡಲು ಸುಮಾರು ಮೂವತ್ತೆರಡು ಮೀಟರ್ ಇದ್ದವು. ಅದು ಬಾಗಿಲಿನ ಸುತ್ತಮುತ್ತಲಿರುವ ಕಂಬದವರೆಗೂ ಇತ್ತು.
EZE 40:15 ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳಬಾಗಿಲಿನ ದ್ವಾರದ ಅಂಗಳದವರೆಗೂ ಸುಮಾರು ಇಪ್ಪತ್ತೇಳು ಮೀಟರ್ ದೂರವಿತ್ತು.
EZE 40:16 ಕೋಣೆಯ ಉಪವಿಭಾಗಗಳು ಮತ್ತು ಬಾಗಿಲ ಚೌಕಟ್ಟಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು. ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು. ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು.
EZE 40:17 ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆತಂದನು. ಅಲ್ಲಿ ನಾನು ಕೆಲವು ಕೋಣೆಗಳನ್ನು ಮತ್ತು ಅಂಗಳದ ಸುತ್ತಲೂ ನಿರ್ಮಿಸಲಾದ ಒಂದು ಕಾಲುದಾರಿಯನ್ನು ಕಂಡೆನು. ಕಾಲುದಾರಿ ಉದ್ದಕ್ಕೂ ಮೂವತ್ತು ಕೋಣೆಗಳಿದ್ದವು.
EZE 40:18 ಬಾಗಿಲುಗಳ ಪಾರ್ಷ್ವದಲ್ಲಿಯೂ ಬಾಗಿಲುಗಳ ಉದ್ದಕ್ಕೆ ಸರಿಯಾಗಿಯೂ ಇದ್ದ ಆ ಕಲ್ಲು ಹಾಸಿದ ನೆಲವು ಕೆಳಗಿನ ನೆಲಗಟ್ಟಾಗಿತ್ತು.
EZE 40:19 ಆಗ ಅವನು ಕೆಳಗಿನ ಬಾಗಿಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
EZE 40:20 ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರಗಿನ ಬಾಗಿಲಿನ ಉದ್ದವನ್ನೂ ಅಗಲವನ್ನೂ ಅಳೆದನು.
EZE 40:21 ಅದರ ಕೋಣೆಯ ಉಪವಿಭಾಗಗಳು ಈ ಕಡೆಗೂ ಆ ಕಡೆಗೂ ಮೂರು ಇದ್ದವು. ಅದರ ಕಂಬಗಳು ಮತ್ತು ಅದರ ಕೈಸಾಲೆಗಳು ಮೊದಲನೆಯ ಬಾಗಿಲಿನ ಅಳತೆಯಂತೆ ಇದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
EZE 40:22 ಅದರ ಕಿಟಕಿಗಳೂ ಅದರ ಕೈಸಾಲೆಗಳೂ ಅದರ ಖರ್ಜೂರದ ಗಿಡಗಳೂ ಪೂರ್ವ ಕಡೆಯ ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು.
EZE 40:23 ಒಳಗಿನ ಅಂಗಳದ ಬಾಗಿಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಿಲಿಗೆ ಎದುರಾಗಿತ್ತು. ಅವನು ಬಾಗಿಲಿನಿಂದ ಬಾಗಿಲಿಗೆ ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
EZE 40:24 ಆಮೇಲೆ ಆತನು ನನ್ನನ್ನು ದಕ್ಷಿಣದ ಕಡೆಗೆ ಕರೆತಂದನು ಅಲ್ಲಿಯೂ ಬಾಗಿಲು ಇತ್ತು, ಅವನು ಅದರ ಕಂಬಗಳನ್ನು ಅದರ ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು.
EZE 40:25 ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
EZE 40:26 ಅದಕ್ಕೆ ಏರುವ ಹಾಗೆ ಏಳೂ ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು. ಅದರ ಕಂಬಗಳು ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರದಿಂದ ಅಲಂಕರಿಸಲಾಗಿತ್ತು.
EZE 40:27 ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಿಲಿತ್ತು. ಅವನು ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿಗೆ ದಕ್ಷಿಣವಾಗಿ ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.
EZE 40:28 ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಿಲನ್ನು ಅಳೆದನು.
EZE 40:29 ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
EZE 40:30 ಸುತ್ತಲಿರುವ ಕೈಸಾಲೆಗಳೂ ಸುಮಾರು ಇಪ್ಪತ್ತೈದು ಮೀಟರ್ ಉದ್ದವಾಗಿಯೂ ಸುಮಾರು ಹದಿಮೂರು ಮೀಟರ್ ಅಗಲವಾಗಿಯೂ ಇದ್ದವು.
EZE 40:31 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗಿದ್ದವು. ಅದರ ಕಂಬಗಳಲ್ಲಿ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು. ಅದಕ್ಕೆ ಏರುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
EZE 40:32 ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ಬಾಗಿಲನ್ನು ಅಳೆದನು.
EZE 40:33 ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
EZE 40:34 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು; ಮೇಲೆ ಹತ್ತುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
EZE 40:35 ಅವನು ನನ್ನನ್ನು ಉತ್ತರದ ಬಾಗಿಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
EZE 40:36 ಅಲ್ಲಿಯ ಕೋಣೆಯ ಉಪವಿಭಾಗಗಳು, ಅಲ್ಲಿನ ಕಂಬಗಳು, ಅಲ್ಲಿನ ಕೈಸಾಲೆಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.
EZE 40:37 ಅದರ ಪಡಸಾಲೆಗಳು ಹೊರಗಿನ ಅಂಗಳದ ಕಡೆಗೆ ಇದ್ದವು. ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು; ಮೇಲೆ ಹತ್ತುವುದಕ್ಕೆ ಎಂಟು ಮೆಟ್ಟಲುಗಳು ಇದ್ದವು.
EZE 40:38 ಕೊಠಡಿಗಳೂ ಅವುಗಳ ಪ್ರವೇಶಗಳೂ ಬಾಗಿಲುಗಳ ಕಂಬಗಳ ಬಳಿಯಲ್ಲಿ, ದಹನಬಲಿಯನ್ನು ತೊಳೆಯುವಲ್ಲಿ ಇದ್ದವು;
EZE 40:39 ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡು ಮೇಜುಗಳು ಈ ಕಡೆಗೆ ಮತ್ತು ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.
EZE 40:40 ಉತ್ತರ ಹೆಬ್ಬಾಗಿಲ ಪ್ರವೇಶಸ್ಥಾನದ ಮೆಟ್ಟಲುಗಳ ಹತ್ತಿರ, ಆ ಬಾಗಿಲ ಕೈಸಾಲೆಯ ಹೊರಗೆ, ಒಂದು ಕೊನೆಯಲ್ಲಿ ಎರಡು ಮೇಜುಗಳೂ ಇದ್ದವು.
EZE 40:41 ಬಾಗಿಲಿನ ಕೊನೆಯಲ್ಲಿ ಈ ಕಡೆ ನಾಲ್ಕು ಮೇಜುಗಳೂ ಆ ಕಡೆ ನಾಲ್ಕು ಮೇಜುಗಳೂ ಈ ರೀತಿ ಎಂಟು ಮೇಜುಗಳಿದ್ದವು; ಇವುಗಳ ಮೇಲೆ ಅವರು ಯಜ್ಞಗಳನ್ನು ಅರ್ಪಿಸುತ್ತಿದ್ದರು.
EZE 40:42 ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ನಿರ್ಮಿತವಾಗಿದ್ದವು. ಅವುಗಳ ಉದ್ದ ಮತ್ತು ಅಗಲ ಸುಮಾರು ಎಂಬತ್ತು ಸೆಂಟಿಮೀಟರ್, ಎತ್ತರವೂ ಸುಮಾರು ಐವತ್ತಮೂರು ಸೆಂಟಿಮೀಟರ್. ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿಸುವ ಸಲಕರಣೆಗಳನ್ನೂ ಇಡುತ್ತಿದ್ದರು.
EZE 40:43 ಒಳಗೆ ಸುತ್ತಲಾಗಿ ಅಂಗೈ ಅಗಲದಷ್ಟು ಕೊಂಡಿಗಳು ಜಡಿಯಲಾಗಿದ್ದವು. ಮೇಜುಗಳ ಮೇಲೆ ಬಲಿಯ ಮಾಂಸವಿತ್ತು.
EZE 40:44 ಅನಂತರ ಅವನು ನನ್ನನ್ನು ಒಳಗಿನ ಪ್ರಾಕಾರಕ್ಕೆ ಕರೆತಂದರು. ಅಲ್ಲಿ ಎರಡು ಕೊಠಡಿಗಳು ಇದ್ದವು. ಒಂದು ಉತ್ತರದ ಬಾಗಿಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಿಲಿನ ಕಡೆಗೆ ಉತ್ತರಕ್ಕೆ ಅಭಿಮುಖವಾಗಿತ್ತು.
EZE 40:45 ಅವನು ನನಗೆ ಹೇಳಿದ್ದೇನೆಂದರೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.
EZE 40:46 ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಬಲಿಪೀಠದ ಮೇಲ್ವಿಚಾರಕರಾದ ಯಾಜಕರದು. ಚಾದೋಕನ ಪುತ್ರರಾದ ಇವರು ಲೇವಿಯ ಕುಲದವರಲ್ಲಿ ಯೆಹೋವ ದೇವರ ಸನ್ನಿಧಿಯ ಸೇವಕರಾಗಿದ್ದಾರೆ.”
EZE 40:47 ಹೀಗೆ ಅವನು ಅಂಗಳವನ್ನು ಅಳೆದನು. ಅದರ ಉದ್ದವು ಸುಮಾರು ಐವತ್ತು ಮೀಟರ್, ಅಗಲವು ಸುಮಾರು ಐವತ್ತು ಮೀಟರ್ ಚಚ್ಚೌಕವಾಗಿತ್ತು. ಆ ಬಲಿಪೀಠವು ದೇವಾಲಯದ ಮುಂದೆ ಇತ್ತು.
EZE 40:48 ಅವನು ನನ್ನನ್ನು ಮನೆಯ ದ್ವಾರಮಂಟಪಕ್ಕೆ ಕರೆದುಕೊಂಡು ಹೋಗಿ, ದ್ವಾರಮಂಟಪ ಪ್ರತಿಯೊಂದು ಕಂಬವನ್ನೂ ಅಳೆದನು. ದ್ವಾರಮಂಟಪ ಅಗಲವು ಸುಮಾರು ಏಳು ಮೀಟರ್ ಮತ್ತು ಪಕ್ಕದ ಗೋಡೆಗಳ ಅಗಲವು ಎರಡೂ ಬದಿಗಳಲ್ಲಿ ಸುಮಾರು ಒಂದೂವರೆ ಮೀಟರ್ ಆಗಿತ್ತು.
EZE 40:49 ದ್ವಾರಮಂಟಪದ ಅಗಲವು ಸುಮಾರು ಹನ್ನೊಂದು ಮೀಟರ್ ಮತ್ತು ಮುಂಭಾಗದಿಂದ ಹಿಂಭಾಗಕ್ಕೆ ಸುಮಾರು ಆರು ಮೀಟರ್. ಅದನ್ನು ಹತ್ತಲು ಮೆಟ್ಟಿಲುಗಳಿದ್ದವು ಮತ್ತು ಎರಡೂ ಬದಿಗಳಲ್ಲಿ ಬಾಗಿಲಿನ ಚೌಕಟ್ಟುಗಳ ಬದಿಗಳಲ್ಲಿ ಕಂಬಗಳು ಇದ್ದವು.
EZE 41:1 ಆಮೇಲೆ, ಆ ಮನುಷ್ಯನು ನನ್ನನ್ನು ದೇವಾಲಯಕ್ಕೆ ಕರೆತಂದು ಕಂಬಗಳನ್ನು ಎರಡೂ ಕಡೆಯಲ್ಲಿ ಸುಮಾರು 3.2 ಮೀಟರ್ ಎಂದು ಅಳೆದನು. ಇದೇ ಆ ಗುಡಾರದ ಉದ್ದಗಲವಾಗಿತ್ತು.
EZE 41:2 ಬಾಗಿಲಿನ ಅಗಲವು ಸುಮಾರು ಐದು ಮೀಟರ್ ಮತ್ತು ಅದರ ಎರಡೂ ಬದಿಗಳಲ್ಲಿ ಗೋಡೆಗಳ ಅಗಲ ಸುಮಾರು ಎರಡೂವರೆ ಮೀಟರ್. ಅವನು ಮುಖ್ಯಸಭಾಂಗಣವನ್ನೂ ಅಳೆದನು. ಅದು ಸುಮಾರು ಇಪ್ಪತ್ತೊಂದು ಮೀಟರ್ ಉದ್ದ ಮತ್ತು ಸುಮಾರು ಹನ್ನೊಂದು ಮೀಟರ್ ಅಗಲವಿತ್ತು.
EZE 41:3 ಅನಂತರ ಅವನು ಒಳಗೆ ಹೋಗಿ ಪರಿಶುದ್ಧಸ್ಥಳದ ಪ್ರವೇಶದ್ವಾರದ ಕಂಬಗಳನ್ನು ಅಳೆದನು; ಒಂದೊಂದು ಕಂಬವು ಸುಮಾರು ಒಂದು ಮೀಟರ್ ಅಗಲವಿತ್ತು. ಪ್ರವೇಶದ್ವಾರವು ಸುಮಾರು ಮೂರು ಮೀಟರ್ ಅಗಲವಾಗಿತ್ತು ಮತ್ತು ಅದರ ಎರಡೂ ಬದಿಯ ಗೋಡೆಯು ಸುಮಾರು ನಾಲ್ಕು ಮೀಟರ್ ಅಗಲವಾಗಿತ್ತು.
EZE 41:4 ಅವನು ಒಳಗಿನ ಪರಿಶುದ್ಧಸ್ಥಳದ ಉದ್ದವನ್ನು ಅಳೆದನು; ಅದು ಸುಮಾರು ಹತ್ತು ಮೀಟರ್ ಆಗಿತ್ತು; ಅದರ ಅಗಲವು ಮುಖ್ಯ ಸಭಾಂಗಣದ ಕೊನೆಯವರೆಗೂ ಸುಮಾರು ಹತ್ತು ಮೀಟರ್ ಆಗಿತ್ತು. ಅವನು ನನಗೆ, “ಇದು ಅತ್ಯಂತ ಪವಿತ್ರ ಸ್ಥಳವಾಗಿದೆ” ಎಂದು ಹೇಳಿದನು.
EZE 41:5 ಅನಂತರ ಅವನು ಆಲಯದ ಗೋಡೆಯನ್ನು ಅಳೆದನು; ಅದು ಸುಮಾರು ಮೂರು ಮೀಟರ್ ದಪ್ಪವಾಗಿತ್ತು, ಮತ್ತು ಆಲಯದ ಸುತ್ತಲಿನ ಕೋಣೆಗಳ ಅಗಲವು ಪ್ರತಿ ಬದಿಯಲ್ಲಿ ಸುಮಾರು ಎರಡು ಮೀಟರ್ ಆಗಿತ್ತು.
EZE 41:6 ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತಾಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತು ಕೊಠಡಿಗಳಿದ್ದವು. ಪಕ್ಕದ ಕೋಣೆಗಳಿಗೆ ಆಧಾರವಾಗಿ ದೇವಾಲಯದ ಗೋಡೆಯ ಸುತ್ತಲೂ ಮುಂಚಾಚಿರುವಿಕೆಗಳು ಇದ್ದವು. ಇದರಿಂದಾಗಿ ಪೋಷಕ ಭಾಗಗಳನ್ನು ದೇವಾಲಯದ ಗೋಡೆಯೊಳಗೆ ಸೇರಿಸಲಾಗಿಲ್ಲ.
EZE 41:7 ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದುಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.
EZE 41:8 ಆಲಯದ ಸುತ್ತಮುತ್ತಲೂ ಒಂದು ಜಗಲಿಯನ್ನು ನಾನು ನೋಡಿದೆನು. ಅದು ಪಕ್ಕದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆಯ ಕೋಲಿನಷ್ಟು ಎತ್ತರವಾಗಿತ್ತು.
EZE 41:9 ಹೊರಗಡೆಯಲ್ಲಿ ಪಕ್ಕದ ಕೊಠಡಿಗಳಿಗಾದ ಗೋಡೆಯ ದಪ್ಪವು ಐದು ಮೊಳ ಮತ್ತು ಉಳಿದದ್ದು ಒಳಗಿನ ಕಡೆಯ ಕೊಠಡಿಗಳ ಸ್ಥಳವಾಗಿತ್ತು.
EZE 41:10 ಕೊಠಡಿಗಳ ನಡುವೆ ಆಲಯದ ಸುತ್ತಲೂ ಪ್ರತಿಯೊಂದು ಕಡೆಗೂ ಇಪ್ಪತ್ತು ಮೊಳ ಅಗಲವಿತ್ತು;
EZE 41:11 ಪಕ್ಕದ ಕೊಠಡಿಗಳ ಬಾಗಿಲುಗಳು ತೆರೆದ ಸ್ಥಳದ ಕಡೆಗೆ ಇದ್ದವು. ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ತೆರೆದ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
EZE 41:12 ಈಗ ಪ್ರತ್ಯೇಕಿಸಿದ ಸ್ಥಳಕ್ಕೆ ಎದುರಾಗಿ ಪಶ್ಚಿಮದ ಕಡೆಗಿದ್ದ ಕಟ್ಟಡವು ಎಪ್ಪತ್ತು ಮೊಳ ಅಗಲವಾಗಿತ್ತು; ಕಟ್ಟಡದ ಗೋಡೆಯು ಸುತ್ತಲೂ ಐದು ಮೊಳ ದಪ್ಪವಾಗಿತ್ತು. ಅದರ ಉದ್ದವು ತೊಂಬತ್ತು ಮೊಳವಾಗಿತ್ತು.
EZE 41:13 ಹೀಗೆ ಅವನು ಆಲಯವನ್ನು ನೂರು ಮೊಳ ಉದ್ದವೆಂದೂ; ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದೂ ಅಳೆದನು;
EZE 41:14 ಇದಲ್ಲದೆ ಆಲಯದ ಮುಂಭಾಗವು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳಗಳು ನೂರು ಮೊಳ ಅಗಲವಾಗಿದ್ದವು.
EZE 41:15 ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂಥ ಕಟ್ಟಡವನ್ನು ಅಂದರೆ ಶಾಲೆಗಳನ್ನೂ ಆ ಕಡೆ ಮತ್ತು ಈ ಕಡೆ ನೂರು ಮೊಳವೆಂದೂ ಅಳೆದನು. ಮುಖ್ಯ ಸಭಾಂಗಣ, ಗರ್ಭಗೃಹ ಮತ್ತು ಅಂಗಳದ ಮುಂಭಾಗದಲ್ಲಿ ದ್ವಾರಮಂಟಪ,
EZE 41:16 ಹಾಗೆಯೇ ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಿಲುಗಳು ಮತ್ತು ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತುಗಳಲ್ಲಿ ಬಾಗಿಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಕೆಯಾಗಿದ್ದವು. ನೆಲ, ಕಿಟಕಿಯವರೆಗಿನ ಗೋಡೆ ಮತ್ತು ಕಿಟಕಿಗಳನ್ನು ಮುಚ್ಚಲಾಯಿತು.
EZE 41:17 ಬಾಗಿಲಿನ ಮೇಲಕ್ಕೂ ಒಳಗಿನ ಆಲಯದವರೆಗೂ ಮತ್ತು ಹೊರಗೂ ಸುತ್ತಲೂ ಇದ್ದ ಗೋಡೆ, ಹೀಗೆ ಒಳಗೂ ಹೊರಗೂ ಎಲ್ಲವನ್ನೂ ಅಳೆದನು.
EZE 41:18 ಅದು ಕೆರೂಬಿಗಳು ಮತ್ತು ಖರ್ಜೂರದ ಮರಗಳ ಚಿತ್ರಗಳಿಂದ ಕೂಡಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಮತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖಗಳು ಇದ್ದವು.
EZE 41:19 ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಮನುಷ್ಯನ ಮುಖವು, ಆ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಮತ್ತು ಸುತ್ತಮುತ್ತಲೂ ಚಿತ್ರಮಯವಾಗಿತ್ತು.
EZE 41:20 ನೆಲವು ಮೊದಲುಗೊಂಡು ಬಾಗಿಲಿನ ಮೇಲಿನವರೆಗೂ ದೇವಾಲಯದ ಗೋಡೆಯಲ್ಲಿಯೂ ಕೆರೂಬಿಗಳು ಮತ್ತು ಖರ್ಜೂರದ ಮರಗಳು ಚಿತ್ರಮಯವಾಗಿದ್ದವು.
EZE 41:21 ಮುಖ್ಯ ಸಭಾಂಗಣದ ಕಂಬಗಳು ಚಚ್ಚೌಕವಾಗಿದ್ದವು. ಮಹಾಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು.
EZE 41:22 ಸುಮಾರು ಒಂದೂವರೆ ಮೀಟರ್ ಎತ್ತರ ಮತ್ತು ಸುಮಾರು ಒಂದು ಮೀಟರ್ ಉದ್ದ ಮತ್ತು ಅಗಲವಿರುವ ಮರದ ಬಲಿಪೀಠವಿತ್ತು. ಅದರ ಮೂಲೆಗಳು, ಅದರ ತಳ ಮತ್ತು ಅದರ ಬದಿಗಳು ಮರದಿಂದ ಆಗಿದ್ದವು. ಆ ಮನುಷ್ಯನು ನನಗೆ, “ಇದು ಯೆಹೋವ ದೇವರ ಮುಂದೆ ಇರುವ ಮೇಜು” ಎಂದು ಹೇಳಿದನು.
EZE 41:23 ದೇವಾಲಯಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಎರಡು ಬಾಗಿಲುಗಳಿದ್ದವು.
EZE 41:24 ಆ ಎರಡು ಬಾಗಿಲುಗಳಿಗೆ ಎರಡು ಕದಗಳಿದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಿಲಿಗೆ ಎರಡು, ಇನ್ನೊಂದು ಬಾಗಿಲಿಗೆ ಎರಡು ಇದ್ದವು.
EZE 41:25 ಆಲಯದ ಬಾಗಿಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಚಿತ್ರಿತವಾಗುವ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಾಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.
EZE 41:26 ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗಣದ ಪಕ್ಕಕ್ಕೂ ಆಲಯದ ಪಕ್ಕದ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪದ ಹಲಗೆಗಳೂ ಸಹ ಇದ್ದವು.
EZE 42:1 ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆತಂದನು.
EZE 42:2 ಉತ್ತರ ಭಾಗದಲ್ಲಿ ಬಾಗಿಲು ಇದ್ದ ಕಟ್ಟಡವು ಸುಮಾರು ಐವತ್ತೆರಡು ಮೀಟರ್ ಉದ್ದ ಮತ್ತು ಇಪ್ಪತ್ತಾರು ಮೀಟರ್ ಅಗಲವಿತ್ತು.
EZE 42:3 ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡಸಾಲೆಗಳ ಮೇಲೆ ಪಡಸಾಲೆಗಳಿದ್ದವು.
EZE 42:4 ಕೊಠಡಿಗಳ ಮುಂದೆ ಸುಮಾರು ಐದು ಮೀಟರ್ ಅಗಲ ಮತ್ತು ಸುಮಾರು ಐವತ್ತೆರಡು ಮೀಟರ್ ಉದ್ದದ ಒಳ ಮಾರ್ಗವಿತ್ತು. ಅದರ ಬಾಗಿಲುಗಳು ಉತ್ತರಕ್ಕೆ ಎದುರಾಗಿದ್ದವು.
EZE 42:5 ಈಗ ಮೇಲಿನ ಕೊಠಡಿಗಳೇ ಚಿಕ್ಕದಾಗಿದ್ದವು. ಏಕೆಂದರೆ ಕಟ್ಟಡದ ಕೆಳಗಿನ ಭಾಗಕ್ಕಿಂತಲೂ ಮತ್ತು ಮಧ್ಯ ಭಾಗಕ್ಕಿಂತಲೂ ಪಡಸಾಲೆಗಳು ಎತ್ತರದಲ್ಲಿದ್ದವು.
EZE 42:6 ಇವು ಮೂರು ಅಂತಸ್ತುಗಳಾಗಿದ್ದವು. ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ. ಆದ್ದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಚಿಕ್ಕದಾಗಿದ್ದವು.
EZE 42:7 ಕೊಠಡಿಗಳಿಗೆ ಎದುರಾಗಿ ಹೊರಗಿದ್ದ ಗೋಡೆಯು ಕೊಠಡಿಗಳ ಮುಂದೆ ಹೊರಗಿನ ಅಂಗಳದ ಕಡೆಗೆ ಇದ್ದದ್ದು ಐವತ್ತು ಮೊಳ ಉದ್ದವಾಗಿತ್ತು.
EZE 42:8 ಏಕೆಂದರೆ ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿಯೂ ಮತ್ತು ದೇವಾಲಯದ ಮುಂದೆ ನೂರು ಮೊಳಗಳಿದ್ದವು.
EZE 42:9 ಈ ಕೊಠಡಿಗಳ ಕೆಳಗೆ ಹೊರಗಿನ ಅಂಗಳದಿಂದ ಅವುಗಳೊಳಗೆ ಪ್ರವೇಶಿಸುವ ಹಾಗೆ ಪೂರ್ವದಿಕ್ಕಿಗೆ ಪ್ರವೇಶವಿತ್ತು.
EZE 42:10 ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು.
EZE 42:11 ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು. ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು. ಉತ್ತರ ದಿಕ್ಕಿನ ಬಾಗಿಲುಗಳು
EZE 42:12 ದಕ್ಷಿಣ ಕಡೆಗಿದ್ದ ಕೊಠಡಿಗಳ ಬಾಗಿಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ ಪೂರ್ವದ ಕಡೆಯ ಗೋಡೆಗೆ ಸರಿಯಾದ ಮಾರ್ಗದ ಕೊನೆಯಲ್ಲಿ ಒಂದು ಬಾಗಿಲಿತ್ತು.
EZE 42:13 ಆಗ ಅವನು ನನಗೆ, “ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರ ಮತ್ತು ದಕ್ಷಿಣದ ಕೊಠಡಿಗಳು ಪರಿಶುದ್ಧವಾದವು. ಅಲ್ಲಿ ಯೆಹೋವ ದೇವರಿಗಾಗಿ ಬರುವ ಯಾಜಕರು ಅತಿ ಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ. ಮತ್ತು ಕಾಣಿಕೆಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅಲ್ಲಿಡುತ್ತಾರೆ. ಆ ಸ್ಥಳವು ಪರಿಶುದ್ಧ.
EZE 42:14 ಯಾಜಕರು ಅವುಗಳಲ್ಲಿ ಪ್ರವೇಶಿಸುವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು. ಏಕೆಂದರೆ ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸಮೀಪಿಸಬೇಕು,” ಎಂದನು.
EZE 42:15 ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
EZE 42:16 ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುಮಾರು 265 ಮೀಟರ್ ಆಗಿತ್ತು.
EZE 42:17 ಉತ್ತರದ ಕಡೆಯಲ್ಲಿಯೂ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಸುಮಾರು 265 ಮೀಟರ್ ಎಂದು ಅಳೆದನು.
EZE 42:18 ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗವನ್ನು ಸುಮಾರು 265 ಮೀಟರ್ ಎಂದು ಅಳೆದನು.
EZE 42:19 ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಸುಮಾರು 265 ಮೀಟರ್ ಎಂದು ಅಳೆದನು.
EZE 42:20 ಅವನು ನಾಲ್ಕು ಕಡೆಗಳಿಂದ ಅಳೆದನು. ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಸ್ಥಳವನ್ನೂ ಪ್ರತ್ಯೇಕಪಡಿಸುವ ಹಾಗೆ ಅದಕ್ಕೆ ಸುತ್ತಲು ಸುಮಾರು 265 ಮೀಟರ್ ಉದ್ದ ಮತ್ತು ಸುಮಾರು 265 ಮೀಟರ್ ಗೋಡೆ ಇತ್ತು.
EZE 43:1 ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಬಾಗಿಲಿಗೆ ಕರೆದುಕೊಂಡು ಹೋದನು.
EZE 43:2 ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವಮಾರ್ಗವಾಗಿ ಬಂದಿತು ಮತ್ತು ಅವರ ಧ್ವನಿಯು ಹರಿಯುವ ನೀರಿನ ಘರ್ಜನೆಯಂತಿತ್ತು; ಭೂಮಿಯು ಅವರ ಮಹಿಮೆಯಿಂದ ಪ್ರಕಾಶಿಸುತ್ತಿತ್ತು.
EZE 43:3 ನಾನು ಕಂಡ ದರ್ಶನವು, ಅವನು ಪಟ್ಟಣವನ್ನು ನಾಶಮಾಡಲು ಬಂದಾಗ ನಾನು ನೋಡಿದ ದೃಷ್ಟಿಯಂತೆ ಮತ್ತು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ದರ್ಶನಗಳಂತೆ ಮತ್ತು ಆಗ ನಾನು ಬೋರಲು ಬಿದ್ದೆನು.
EZE 43:4 ಆಗ ಯೆಹೋವ ದೇವರ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿಸಿತು.
EZE 43:5 ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆತಂದಿತು. ಯೆಹೋವ ದೇವರ ಮಹಿಮೆಯಿಂದ ಆಲಯವು ತುಂಬಿಕೊಂಡಿತು.
EZE 43:6 ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವುದನ್ನು ಕೇಳಿದೆನು. ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿದ್ದನು.
EZE 43:7 ಅವರು ನನಗೆ, “ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ನನ್ನ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲರ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಎಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರದಿಂದಲೂ ಅವರ ಅರಸರ ಮರಣದ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ವಿಧಿಗಳ ಅರ್ಪಣೆಯಿಂದ ಅಪವಿತ್ರಗೊಳಿಸುವುದಿಲ್ಲ.
EZE 43:8 ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ. ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿಬಿಟ್ಟಿದ್ದೇನೆ.
EZE 43:9 ಈಗ ಅವರು ತಮ್ಮ ವ್ಯಭಿಚಾರವನ್ನು ಮತ್ತು ನಿಮ್ಮ ರಾಜರ ಅಂತ್ಯಕ್ರಿಯೆಯ ವಿಧಿಗಳನ್ನು ಬಿಟ್ಟುಬಿಡಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ.
EZE 43:10 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ದೇವಾಲಯನ್ನು ವಿವರಿಸಿರಿ. ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಅದರ ಪರಿಪೂರ್ಣತೆಯನ್ನು ಪರಿಗಣಿಸಲಿ.
EZE 43:11 ಅವರು ಮಾಡಿದ ಎಲ್ಲದಕ್ಕಾಗಿ ನಾಚಿಕೆಪಟ್ಟರೆ, ದೇವಾಲಯದ ರೂಪವನ್ನೂ, ಅದರ ಆಕಾರವನ್ನೂ, ಅದರ ಆಗಮನ ನಿರ್ಗಮನಗಳನ್ನೂ, ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ಕಟ್ಟಳೆಗಳನ್ನೂ ಅವರಿಗೆ ವಿವರಿಸು. ಅವರು ಅದರ ರಚನಾವಿಧಾನಗಳಿಗೆ ನಂಬಿಗಸ್ತರಾಗಿರುವಂತೆಯೂ ಅವರು ಅದರ ಎಲ್ಲಾ ಕಟ್ಟಳೆಗಳನ್ನೂ ಅನುಸರಿಸುವಂತೆಯೂ ಅವರ ಮುಂದೆಯೇ ಇವುಗಳನ್ನು ಬರೆ.
EZE 43:12 “ಇದು ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿ ಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧವಾಗಿದೆ. ಇಗೋ, ಇದೇ ಆ ಆಲಯದ ನಿಯಮವಾಗಿದೆ.
EZE 43:13 “ಬಲಿಪೀಠವು ಮೀಟರ್ ಅಳತೆಯ ಪ್ರಕಾರ ಹೀಗಿರಬೇಕು. ಕೆಳಭಾಗದ ಎತ್ತರ ಐವತ್ತು ಸೆಂಟಿಮೀಟರ್, ಮೇಲಿನ ಬಿಡುವಿನ ಅಗಲವು ಸುತ್ತಲೂ ಐವತ್ತು ಸೆಂಟಿಮೀಟರ್, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್;
EZE 43:14 ಕೆಳಭಾಗದ ಎತ್ತರವು ಒಂದು ಮೊಳ ಮೇಲಿನ ಕೈ ಅಗಲದಷ್ಟು ಅಂಚಿನ ಉದ್ದವು ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಲೂ ದಿಂಡಿನ ಅಗಲವು ಒಂದು ಮೊಳ. ಇದೇ ಬಲಿಪೀಠ. ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರವು ಎರಡು ಮೊಳ, ಅದರ ಮೇಲಣ ಬಿಡುವಿನ ಅಗಲ ಒಂದು ಮೊಳ. ಸಣ್ಣ ಅಂಚು ಮೊದಲುಗೊಂಡು ದೊಡ್ಡ ಅಂಚಿನವರೆಗೂ ನಾಲ್ಕು ಮೊಳ ಮತ್ತು ಅಗಲವು ಒಂದು ಮೊಳ.
EZE 43:15 ಅಗ್ನಿಕುಂಡದ ಅಂತಸ್ತಿನ ಎತ್ತರವು ಎರಡು ಮೀಟರ್ ಆ ಅಗ್ನಿಕುಂಡದ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು.
EZE 43:16 ಬಲಿಪೀಠದ ಉದ್ದವು ಹನ್ನೆರಡು ಮೊಳ, ಅಗಲ ಹನ್ನೆರಡು, ನಾಲ್ಕು ಕಡೆಯ ಚೌಕಗಳು ಚಚ್ಚೌಕವಾಗಿರಬೇಕು.
EZE 43:17 ಅದರ ಅಂಚು ನಾಲ್ಕು ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ಅದರ ತಳವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಎದುರಾಗಿರಬೇಕು.”
EZE 43:18 ಅವರು ನನಗೆ ಹೇಳಿದ್ದೇನೆಂದರೆ: “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಬಲಿಪೀಠವನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.
EZE 43:19 ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಬಳಿಗೆ ಸಮೀಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯರಿಗೂ ದೋಷಪರಿಹಾರ ಬಲಿಗಾಗಿ ಎಳೆಯ ಹೋರಿಯನ್ನು ಕೊಡಬೇಕು.
EZE 43:20 ಅದರ ರಕ್ತವನ್ನು ತೆಗೆದುಕೊಂಡು ಅದರ ನಾಲ್ಕು ಕೊಂಬುಗಳ ಅಂಚಿನ ನಾಲ್ಕು ಮೂಲೆಗಳಿಗೂ ಸುತ್ತಲೂ ಹಚ್ಚಿ ಬಲಿಪೀಠವನ್ನು ಶುದ್ಧೀಕರಿಸಿ ಮತ್ತು ಅದಕ್ಕೆ ಪ್ರಾಯಶ್ಚಿತ್ತವನ್ನು ಮಾಡಿರಿ.
EZE 43:21 ಇದಲ್ಲದೆ ನೀನು ಹೋರಿಯನ್ನೂ ಸಹ ದೋಷಪರಿಹಾರ ಬಲಿಗೆ ತೆಗೆದುಕೊಂಡು ಆಲಯದ ನೇಮಕವಾದ ಸ್ಥಳದಲ್ಲಿ, ಪರಿಶುದ್ಧ ಸ್ಥಳದಲ್ಲಿ ಹೊರಗೆ ಸುಡಬೇಕು.
EZE 43:22 “ಎರಡನೆಯ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ದೋಷಪರಿಹಾರ ಬಲಿಯಾಗಿ ಅರ್ಪಿಸಬೇಕು. ಅವರು ಬಲಿಪೀಠವನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.
EZE 43:23 ಹೀಗೆ ಅವರು ಶುದ್ಧಮಾಡಿದಾಗ ಕೊನೆಯಲ್ಲಿ ದೋಷವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.
EZE 43:24 ನೀನು ಅವುಗಳನ್ನು ಯೆಹೋವ ದೇವರ ಮುಂದೆ ಅರ್ಪಿಸಬೇಕು. ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಬೇಕು.
EZE 43:25 “ಏಳು ದಿನಗಳ ತನಕ ಪ್ರತಿದಿನವೂ ನೀನು ದೋಷಪರಿಹಾರ ಬಲಿಗಾಗಿ ಮೇಕೆಯನ್ನು ಸಿದ್ಧಮಾಡಬೇಕು ಮತ್ತು ಪೂರ್ಣಾಂಗವಾದ ಪ್ರಾಯದ ಹೋರಿಯನ್ನೂ ಮಂದೆಯೊಳಗಿನ ಟಗರನ್ನೂ ಸಿದ್ಧಮಾಡಬೇಕು.
EZE 43:26 ಏಳು ದಿನಗಳ ತನಕ ಅವರು ಬಲಿಪೀಠವನ್ನು ಶುದ್ಧಮಾಡಿ ತಮ್ಮನ್ನು ತಾವೇ ಪ್ರತಿಷ್ಠಿಸಿಕೊಳ್ಳಬೇಕು.
EZE 43:27 ಈ ದಿನಗಳು ತೀರಿದಾಗ ಎಂಟನೆಯ ದಿನದ ತರುವಾಯ ಯಾಜಕರು ಬಲಿಪೀಠದ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
EZE 44:1 ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ಧಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು. ಅದು ಮುಚ್ಚಿತ್ತು.
EZE 44:2 ಆಮೇಲೆ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಬಾಗಿಲು ಮುಚ್ಚೇ ಇರಬೇಕು. ಇದು ತೆರೆಯಬಾರದು. ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು. ಏಕೆಂದರೆ ಇಸ್ರಾಯೇಲರ ಯೆಹೋವ ದೇವರು ಇದರಿಂದ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ಮುಚ್ಚಿರಬೇಕು.
EZE 44:3 ಇದು ಪ್ರಭುವಿಗಾಗಿ ಇದೆ; ಪ್ರಭುವು ಅವರೊಳಗೆ ಕುಳಿತುಕೊಂಡು, ಯೆಹೋವ ದೇವರ ಮುಂದೆ ರೊಟ್ಟಿಯನ್ನು ತಿನ್ನಬೇಕು. ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.”
EZE 44:4 ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು. ನಾನು ನೋಡಿದೆ ಯೆಹೋವ ದೇವರ ಮಹಿಮೆಯು ಯೆಹೋವ ದೇವರ ಆಲಯವನ್ನು ತುಂಬಿಕೊಂಡಿತು, ನಾನು ಬೋರಲು ಬಿದ್ದೆನು.
EZE 44:5 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಯೆಹೋವ ದೇವರ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿಯೂ ನಿಯಮದ ವಿಷಯವಾಗಿಯೂ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ. ಆಲಯದೊಳಗಿನ ಪ್ರವೇಶವನ್ನೂ ಪರಿಶುದ್ಧಸ್ಥಳದ ಪ್ರತಿಯೊಂದು ಹಾದುಹೋಗುಗಳನ್ನೂ ಗಮನಿಸು.
EZE 44:6 ತಿರುಗಿಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ.
EZE 44:7 ಅವುಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿಗೋಸ್ಕರ ನನ್ನ ಒಡಂಬಡಿಕೆಯನ್ನು ಮೀರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧ ಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ.
EZE 44:8 ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ, ಬದಲಿಗೆ ಅನ್ಯದೇಶೀಯರನ್ನು ನನ್ನ ಪರಿಶುದ್ಧ ಸ್ಥಳದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿದಿರಿ.
EZE 44:9 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲರೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಬಾರದು.
EZE 44:10 “ ‘ಇಸ್ರಾಯೇಲರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರೂ ಸಹ ತಮ್ಮ ಪಾಪಗಳನ್ನು ಹೊರುವರು.
EZE 44:11 ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.
EZE 44:12 ಆದರೆ ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲಿನ ಮನೆತನದವರಿಗೆ ಪಾಪದ ಆತಂಕವಾದದ್ದರಿಂದ, ನಾನು ಅವರಿಗೆ ವಿರುದ್ಧವಾಗಿ ನನ್ನ ಕೈಯನ್ನು ಚಾಚಿದ್ದೇನೆ. ಅವರು ತಮ್ಮ ಪಾಪವನ್ನು ಹೊರುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 44:13 ಅವರು ಯಾಜಕರಾಗಿ ನನ್ನನ್ನು ಸಮೀಪಿಸದೆ ಮಹಾಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸಮೀಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.
EZE 44:14 ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆಗೋಸ್ಕರವೂ ಅದರಲ್ಲಿ ಮಾಡುವಂತಹ ಎಲ್ಲವುಗಳಿಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿಕೊಳ್ಳುವವರನ್ನಾಗಿ ಮಾಡುವೆನು.
EZE 44:15 “ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 44:16 ಇವರು ಮಾತ್ರ ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ಇವರು ಮಾತ್ರ ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಮತ್ತು ನನಗೆ ಕಾವಲುಗಾರರಾಗಿ ಸೇವೆ ಸಲ್ಲಿಸಬೇಕು.
EZE 44:17 “ ‘ಅವರು ಒಳಗಿನ ಅಂಗಳಗಳ ಬಾಗಿಲನ್ನು ಪ್ರವೇಶಿಸುವಾಗ ನಾರಿನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಅವರು ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ ಒಳಗಡೆಯೂ ಸೇವಿಸುತ್ತಿರುವಾಗ ಅವರ ಮೇಲೆ ಉಣ್ಣೆಯ ಉಡುಪೂ ಇರಕೂಡದು.
EZE 44:18 ಅವರ ತಲೆಗಳ ಮೇಲೆ ನಾರಿನ ಮುಂಡಾಸಗಳೂ, ಅವರ ಸೊಂಟಗಳ ಮೇಲೆ ನಾರಿನ ಒಳಉಡುಪುಗಳೂ ಇರಬೇಕು. ಅವರು ಬೆವರು ಬರುವಂಥವುಗಳನ್ನು ಕಟ್ಟಿಕೊಳ್ಳಬಾರದು.
EZE 44:19 ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
EZE 44:20 “ ‘ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದಕೂದಲನ್ನು ಬೆಳೆಸದೆ ತಮ್ಮ ತಲೆ ಕೂದಲುಗಳನ್ನು ಕತ್ತರಿಸಬೇಕು.
EZE 44:21 ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿಯಬಾರದು.
EZE 44:22 ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ಸಂತಾನದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.
EZE 44:23 ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧಾಶುದ್ಧ ವ್ಯತ್ಯಾಸವನ್ನೂ ವಿವರಿಸಬೇಕು.
EZE 44:24 “ ‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು.
EZE 44:25 “ ‘ಯಾಜಕರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆತಾಯಿ, ಮಗ, ಮಗಳು, ಸಹೋದರ, ಗಂಡನಿಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
EZE 44:26 ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
EZE 44:27 ಅವನು ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವುದಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಪರಿಹಾರಕ ಬಲಿಯನ್ನು ಅರ್ಪಿಸಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 44:28 “ ‘ಅದು ಅವರಿಗೆ ಬಾಧ್ಯತೆಯಾಗಿರುವುದು; ನಾನೇ ಅವರಿಗೆ ಬಾಧ್ಯನಾಗಿರುವೆನು. ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯವನ್ನು ಕೊಡಬಾರದು. ಏಕೆಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.
EZE 44:29 ಧಾನ್ಯ ಸಮರ್ಪಣೆಯನ್ನು ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅವರು ತಿನ್ನಬೇಕು. ಇಸ್ರಾಯೇಲಿನಲ್ಲಿ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
EZE 44:30 ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕನದ್ದಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ನೀವು ಯಾಜಕರಿಗೆ ಕೊಡತಕ್ಕದ್ದು.
EZE 44:31 ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.
EZE 45:1 “ ‘ಇದಲ್ಲದೆ ನೀವು ದೇಶವನ್ನು ಚೀಟುಹಾಕಿ ಸೊತ್ತಾಗಿ ಹಂಚುವಾಗ, ಒಂದು ಪರಿಶುದ್ಧ ಭಾಗವನ್ನು ಪ್ರತ್ಯೇಕಿಸಿ, ಯೆಹೋವ ದೇವರಿಗೆ ಕಾಣಿಕೆಯಾಗಿ ಕೊಡಬೇಕು. ಅದು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರಲಿ. ಇದು ಅದರ ಎಲ್ಲಾ ಮೇರೆಗಳಲ್ಲಿ ಸುತ್ತಲಾಗಿ ಪರಿಶುದ್ಧವಾಗಿರಲಿ.
EZE 45:2 ಇಲ್ಲಿ ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವುದು. ಮತ್ತು ಅದರ ಸುತ್ತಲೂ ಸುಮಾರು ಇಪ್ಪತ್ತಾರು ಮೀಟರ್ ತೆರೆದ ಭೂಮಿ ಇರಬೇಕು. ಇರುವುದು.
EZE 45:3 ಈ ಅಳತೆಯು, ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಮತ್ತು ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು ಮತ್ತು ಪರಿಶುದ್ಧ ಸ್ಥಳವೂ ಅತಿ ಶುದ್ಧವಾದದ್ದೂ ಇರಬೇಕು; ಪರಿಶುದ್ಧವಾದ ಜಾಗವೂ ಆಗಿರಬೇಕು.
EZE 45:4 ದೇಶದ ಪರಿಶುದ್ಧ ಭಾಗವು ಯೆಹೋವ ದೇವರಿಗೆ ಸೇವೆ ಮಾಡಲು ಸಮೀಪಿಸುವಂತೆ, ಪರಿಶುದ್ಧಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು.
EZE 45:5 ಇಪ್ಪತ್ತೈದು ಸಾವಿರ ಮೊಳ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಲಯದಲ್ಲಿ ಸೇವೆ ಮಾಡುವ ಲೇವಿಯರಿಗೆ ತಮಗೆ ಸೊತ್ತಾಗಿ ಇಪ್ಪತ್ತು ಕೊಠಡಿಗಳಿಗಾಗಿ ಇರಬೇಕು.
EZE 45:6 “ ‘ನೀವು ಪಟ್ಟಣದ ಸೊತ್ತನ್ನು ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು. ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವುದು.
EZE 45:7 “ ‘ಕಾಣಿಕೆಯಾದ ಪರಿಶುದ್ಧಭಾಗದ ಮುಂದೆಯೂ ಪಟ್ಟಣದ ಸೊತ್ತಿನ ಮುಂದೆಯೂ ಅದರ ಪಶ್ಚಿಮದ ಕಡೆಯಲ್ಲಿ ಪಶ್ಚಿಮಕ್ಕೂ ಅದರ ಪೂರ್ವದ ಕಡೆಯಲ್ಲಿ ಪೂರ್ವಕ್ಕೂ ಪ್ರಭುವಿಗೆ ಪಾಲು ಇರಬೇಕು. ಅದರ ಉದ್ದವು ಭಾಗಗಳಲ್ಲಿ ಒಂದಕ್ಕೆ ಎದುರಾಗಿ, ಪಶ್ಚಿಮ ಮೇರೆ ಮೊದಲುಗೊಂಡು ಪೂರ್ವ ಮೇರೆಯ ತನಕ ಒಂದು ಗೋತ್ರದ ಸ್ವಾಸ್ತ್ಯದ ಉದ್ದಕ್ಕೆ ಸರಿಸಮಾನವಾಗಿರುವುದು.
EZE 45:8 ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸೊತ್ತಾಗಿರುವುದು. ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವ ಪಡಿಸುವುದೇ ಇಲ್ಲ. ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲಾಗುವುದು.
EZE 45:9 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನೂ ಸುಲಿಗೆಯನ್ನೂ ಬಿಡಿರಿ. ನ್ಯಾಯವನ್ನೂ ನೀತಿಯನ್ನೂ ನಡೆಸಿರಿ. ನನ್ನ ಜನರನ್ನು ಓಡಿಸಬೇಡಿರಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 45:10 ನ್ಯಾಯವಾದ ತಕ್ಕಡಿಯೂ ನ್ಯಾಯವಾದ ಎಫಾವೂ ನ್ಯಾಯವಾದ ಬಾತ್ ಅಳತೆಯೂ ನಿಮಗಿರಬೇಕು.
EZE 45:11 ಎಫಾ ಎಂಬ ಧಾನ್ಯದ ಅಳತೆ ಮತ್ತು ಬತ್ ಎಂಬ ರಸದ್ರವ್ಯದ ಅಳತೆ ಒಂದೇ ಪ್ರಮಾಣವಾಗಿರಬೇಕು; ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಎಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಹೋಮೆರ್ ಎರಡಕ್ಕೂ ಪ್ರಮಾಣಿತ ಅಳತೆಗೆ ಸಂಬಂಧವಾಗಿರಬೇಕು.
EZE 45:12 ಒಂದು ಶೆಕೆಲ್ ಇಪ್ಪತ್ತು ಗೇರಾ ತೂಕವಾಗಿರಬೇಕು. ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು ಶೇಕೆಲು, ಇಪ್ಪತ್ತೈದು ಶೇಕೆಲು ಅಥವಾ ಹದಿನೈದು ಶೆಕೆಲ್ ತೂಕದ್ದಾಗಿರಲಿ.
EZE 45:13 “ ‘ಇದು ಸಮರ್ಪಿಸಬೇಕಾದ ವಿಶೇಷ ಕಾಣಿಕೆ: ನೀವು ಜವೆಗೋಧಿಯ ಓಮೆರಿನಲ್ಲಿ ಏಫದ ಆರನೆಯ ಪಾಲನ್ನು ಕಾಣಿಕೆಯಾಗಿ ಕೊಡಬೇಕು.
EZE 45:14 ಒಂದು ಬಾತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗ, ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಎಫಾ ಅಳತೆಯ ಆರನೆಯ ಒಂದು ಪಾಲು; ಒಂದು ಬಾತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ, ಒಂದು ಕೋರ್ ಅಂದರೆ, ಹತ್ತು ಬಾತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬಾತ್ ಅಳತೆಯ ಹತ್ತನೆಯ ಒಂದು ಪಾಲು; ಏಕೆಂದರೆ ಹತ್ತು ಬಾತ್ ಒಂದೇ ಓಮೆರ್.
EZE 45:15 ಇಸ್ರಾಯೇಲಿನ ನೀರಿರುವ ಹುಲ್ಲುಗಾವಲುಗಳಿಂದ ಇನ್ನೂರು ಮಂದಿಯ ಹಿಂಡಿನಿಂದ ಒಂದು ಕುರಿಯನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಜನರಿಗಾಗಿ ಪ್ರಾಯಶ್ಚಿತ್ತವನ್ನು ಮಾಡಲು ಧಾನ್ಯಯಜ್ಞಗಳು, ದಹನಬಲಿಗಳು ಮತ್ತು ಸಮಾಧಾನದ ಅರ್ಪಣೆಗಳಿಗಾಗಿ ಬಳಸಲಾಗುವುದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 45:16 ದೇಶದಲ್ಲಿರುವ ಜನರೆಲ್ಲರೂ ಈ ಕಾಣಿಕೆಯನ್ನು ಇಸ್ರಾಯೇಲನ ಪ್ರಭುವಿಗಾಗಿ ಕೊಡಬೇಕು.
EZE 45:17 ಹಬ್ಬಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವಿಶ್ರಾಂತಿಯ ದಿನಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವುದು ಪ್ರಭುವಿನ ಕೆಲಸವಾಗಿರುವುದು. ಆತನು ಇಸ್ರಾಯೇಲ್ಯರಿಗೆ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಳನ್ನು, ಧಾನ್ಯದ ಅರ್ಪಣೆಗಳನ್ನು, ದಹನಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಒದಗಿಸುವನು.
EZE 45:18 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೆಯ ಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡಬೇಕು.
EZE 45:19 ಯಾಜಕನು ದೋಷಪರಿಹಾರ ಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;
EZE 45:20 ತಿಳಿಯದೆ ಅಥವಾ ಅಜ್ಞಾನದಿಂದ ಪಾಪಮಾಡುವ ಪ್ರತಿಯೊಬ್ಬರಿಗೂ ತಿಂಗಳ ಏಳನೇ ದಿನದಲ್ಲಿ ನೀವು ಅದೇ ರೀತಿ ಮಾಡಬೇಕು; ಈ ರೀತಿಯಾಗಿ ನೀವು ದೇವಾಲಯಕ್ಕೆ ಪ್ರಾಯಶ್ಚಿತ್ತವನ್ನು ಮಾಡಬೇಕು.
EZE 45:21 “ ‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ನಿಮಗೆ ಏಳು ದಿನಗಳ ಹಬ್ಬವಾಗಿರುವ ಪಸ್ಕಹಬ್ಬವು ಇರಬೇಕು. ಅದರಲ್ಲಿ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
EZE 45:22 ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ದೋಷಪರಿಹಾರ ಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.
EZE 45:23 ಹಬ್ಬದ ಏಳು ದಿವಸಗಳಲ್ಲಿ ಪ್ರತಿದಿನವೂ ಅವನು ಯೆಹೋವ ದೇವರಿಗೆ ದಹನಬಲಿಗಾಗಿ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಮತ್ತು ಪ್ರತಿದಿನವೂ ದೋಷಪರಿಹಾರ ಬಲಿಗಾಗಿ ಮೇಕೆಯ ಮರಿಯನ್ನೂ ಸಿದ್ಧಮಾಡಬೇಕು.
EZE 45:24 ಅವನು ಒಂದೊಂದು ಹೋರಿಗೆ ಮತ್ತು ಟಗರಿಗೆ ಐದು ಕಿಲೋಗ್ರಾಂ ಗೋಧಿಹಿಟ್ಟನ್ನೂ ಸುಮಾರು ಮೂರುವರೆ ಲೀಟರ್ ಎಣ್ಣೆಯನ್ನು ಧಾನ್ಯ ಸಮರ್ಪಣೆಯಾಗಿ ಅರ್ಪಿಸಬೇಕು.
EZE 45:25 “ ‘ಏಕೆಂದರೆ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿವಸಗಳಲ್ಲಿಯೂ ಅವನು ದೋಷಪರಿಹಾರಕ ಬಲಿಪ್ರಾಣಿ, ದಹನಬಲಿಪ್ರಾಣಿ, ಧಾನ್ಯ ಸಮರ್ಪಣೆ, ಎಣ್ಣೆ ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.
EZE 46:1 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಒಳಗಿನ ಅಂಗಳದ ಪೂರ್ವದಿಕ್ಕಿನ ಎದುರಾಗಿರುವ ಬಾಗಿಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲಾಗಬೇಕು. ಆದರೆ ಸಬ್ಬತ್ ದಿನದಲ್ಲಿ ಅದು ತೆರೆದಿರಬೇಕು. ಅಮಾವಾಸ್ಯೆಯ ದಿನದಲ್ಲೂ ಅದು ತೆರೆದಿರಬೇಕು.
EZE 46:2 ರಾಜಕುಮಾರನು ಆ ಬಾಗಿಲಿನ ದ್ವಾರಮಂಟಪ ಮಾರ್ಗವಾಗಿ ಹೊರಗಿನಿಂದ ಪ್ರವೇಶಿಸಿ ಬಾಗಿಲಿನ ಕಂಬದ ಬಳಿಯಲ್ಲಿ ನಿಲ್ಲಬೇಕು. ಆಗ ಯಾಜಕರು ಅವನ ದಹನಬಲಿಯನ್ನು ಅವನ ಸಮಾಧಾನದ ಬಲಿಗಳನ್ನು ಸಿದ್ಧಮಾಡಬೇಕು. ಬಾಗಿಲಿನ ಹೊಸ್ತಿಲಲ್ಲಿ ಆರಾಧಿಸಿ ಹೋಗಬೇಕು. ಆದರೆ ಬಾಗಿಲು ಸಂಜೆಯವರೆಗೂ ಮುಚ್ಚದಿರಬೇಕು.
EZE 46:3 ದೇಶದ ಜನರು ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಈ ಬಾಗಿಲಿನ ಕದದ ಹತ್ತಿರ ಯೆಹೋವ ದೇವರ ಮುಂದೆ ಇದೇ ರೀತಿ ಆರಾಧಿಸಬೇಕು.
EZE 46:4 ರಾಜಕುಮಾರನು ಯೆಹೋವ ದೇವರಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
EZE 46:5 ಟಗರಿನ ಜೊತೆಗೆ ಕೊಡುವ ಧಾನ್ಯ ಸಮರ್ಪಣೆಯು ಸುಮಾರು ಹದಿನಾರು ಕಿಲೋಗ್ರಾಂ ಆಗಿರಬೇಕು ಮತ್ತು ಕುರಿಮರಿಗಳ ಜೊತೆಗೆ ಕೊಡುವ ಧಾನ್ಯ ಸಮರ್ಪಣೆಯು ಅವನ ಕೈಲಾದಷ್ಟು ಆಗಿರಬೇಕು. ಇದರ ಜೊತೆಗೆ ಪ್ರತಿ ಎಫಾ ಪ್ರಮಾಣದ ಧಾನ್ಯ ಸಮರ್ಪಣೆಯಾಗಿ ಸುಮಾರು ಮೂರುವರೆ ಲೀಟರ್ ಎಣ್ಣೆಯನ್ನು ಅರ್ಪಿಸಬೇಕು.
EZE 46:6 ಅಮಾವಾಸ್ಯೆಯ ದಿನದಲ್ಲಿ ಪೂರ್ಣಾಂಗವಾದ ಒಂದು ಎಳೆಯ ಹೋರಿ, ಆರು ಕುರಿಮರಿಗಳು, ಒಂದು ಟಗರನ್ನು ಅರ್ಪಿಸಬೇಕು. ಇವು ದೋಷವಿಲ್ಲದ್ದಾಗಿರಬೇಕು.
EZE 46:7 ಅವನು ಹೋರಿಗೆ ಒಂದು ಎಫವನ್ನೂ ಟಗರಿಗೆ ಒಂದು ಎಫವನ್ನೂ ಮತ್ತು ಕುರಿಮರಿಗೆ ಅವನ ಕೈಲಾಗುವಷ್ಟನ್ನು ಎಫ ಒಂದಕ್ಕೆ ಎಣ್ಣೆಯ ಒಂದು ಹಿನ್ನಿನ ಜೊತೆಗೆ ಅವನು ಧಾನ್ಯ ಸಮರ್ಪಣೆಗಾಗಿ ಸಿದ್ಧಮಾಡಬೇಕು.
EZE 46:8 ರಾಜಕುಮಾರನು ಪ್ರವೇಶಿಸುವಾಗ, ಅವನು ಬಾಗಿಲಿನ ದ್ವಾರಮಂಟಪದ ಪ್ರಕಾರವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
EZE 46:9 “ ‘ಆದರೆ ದೇಶದ ಜನರು ನಿಶ್ಚಿತ ಹಬ್ಬಗಳಲ್ಲಿ ಯೆಹೋವ ದೇವರ ಮುಂದೆ ಬರುವಾಗ ಉತ್ತರದ ಬಾಗಿಲಿನಿಂದ ಪ್ರವೇಶಿಸಿ ಆರಾಧಿಸಿದ ಮೇಲೆ ಅವನು ದಕ್ಷಿಣದ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಮತ್ತು ದಕ್ಷಿಣ ಬಾಗಿಲಿನ ಮಾರ್ಗವಾಗಿ ಪ್ರವೇಶಿಸುವವನು ಉತ್ತರ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನ ಮಾರ್ಗವಾಗಿ ಪ್ರವೇಶಿಸಿದ ಬಾಗಿಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು. ಆದರೆ ಅದಕ್ಕೆ ಎದುರಾಗಿರುವ ಬಾಗಿಲಿನಿಂದ ಹೊರಗೆ ಹೋಗಬೇಕು.
EZE 46:10 ರಾಜಕುಮಾರನು ಅವರ ಮಧ್ಯದಲ್ಲೆ ಅವರು ಒಳಗೆ ಹೋಗುವಾಗ ಒಳಗೆ ಹೋಗಬೇಕು, ಹೊರಗೆ ಹೋಗುವಾಗ ಹೊರಗೆ ಬರಬೇಕು.
EZE 46:11 ನಿಶ್ಚಿತ ಹಬ್ಬಗಳಲ್ಲಿಯೂ ಸಭೆಗಳಲ್ಲಿಯೂ ಧಾನ್ಯ ಸಮರ್ಪಣೆಗೆ ಹೋರಿಗೆ ಒಂದು ಎಫವೂ ಟಗರಿಗೆ ಒಂದು ಎಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಎಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.
EZE 46:12 “ ‘ರಾಜಕುಮಾರನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಯೆಹೋವ ದೇವರಿಗೆ ಸಮರ್ಪಿಸುವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಿಲನ್ನು ಅವನಿಗೆ ತೆರೆಯಬೇಕು. ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಹಾಗೆ ಸಮರ್ಪಣೆಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಿಲನ್ನು ಮುಚ್ಚಬೇಕು.
EZE 46:13 “ ‘ನೀನು ಪ್ರತಿದಿನವೂ ಯೆಹೋವ ದೇವರಿಗೆ ಒಂದು ವರ್ಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ಧಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
EZE 46:14 ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಸುಮಾರು ಎರಡುವರೆ ಕಿಲೋಗ್ರಾಂ ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಸುಮಾರು ಒಂದುವರೆ ಲೀಟರ್ ಎಣ್ಣೆಯನ್ನು ಸಿದ್ಧಮಾಡಬೇಕು. ಇದು ಯೆಹೋವ ದೇವರಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದ ಧಾನ್ಯ ಸಮರ್ಪಣೆಯಾಗಿದೆ.
EZE 46:15 ಹೀಗೆ ಅವರು ಕುರಿಮರಿಯನ್ನು ಧಾನ್ಯ ಸಮರ್ಪಣೆಯನ್ನು ಎಣ್ಣೆಯನ್ನು ಪ್ರತಿದಿನದ ಮುಂಜಾನೆಯಲ್ಲಿ ಎಡೆಬಿಡದ ದಹನಬಲಿಯನ್ನಾಗಿ ಸಿದ್ಧಮಾಡಬೇಕು.
EZE 46:16 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ರಾಜಕುಮಾರನು ತನ್ನ ಪುತ್ರರಲ್ಲಿ ಯಾವನಿಗಾದರೂ ದಾನವನ್ನು ಕೊಟ್ಟರೆ ಅದರ ಬಾಧ್ಯತೆಯು ಅವನ ಕುಮಾರರಿಗೆ ಸಲ್ಲಬೇಕು. ಏಕೆಂದರೆ ಅದು ಬಾಧ್ಯವಾಗಿ ಅವರ ಸೊತ್ತಾಗಿದೆ.
EZE 46:17 ಆದರೆ ಆತನು ತನ್ನ ಸೊತ್ತಿನೊಳಗಿಂದ ತನ್ನ ಸೇವಕರಲ್ಲಿ ಒಬ್ಬರಿಗೆ ದಾನವಾಗಿ ಕೊಟ್ಟರೆ, ಅದು ಬಿಡುಗಡೆ ವರ್ಷದವರೆಗೂ ಅವನಿಗಾಗಿದ್ದು ಆಮೇಲೆ ಮತ್ತೆ ರಾಜಕುಮಾರನಿಗೆ ಸೇರಬೇಕು. ಅವನ ಸೊತ್ತು ಅವನ ಮಕ್ಕಳಿಗೆ ಮಾತ್ರ ಸೇರಬೇಕು. ಇದು ಅವರದೇ.
EZE 46:18 ಇದಾದ ಮೇಲೆ ರಾಜಕುಮಾರನು ಜನರ ಸೊತ್ತನ್ನು ಬಲವಂತವಾಗಿ ತೆಗೆದುಕೊಂಡು ಬಾಧ್ಯತೆಯೊಳಗಿಂದ ಅವರನ್ನು ತಳ್ಳಬಾರದು. ನನ್ನ ಜನರು ತಮ್ಮ ತಮ್ಮ ಬಾಧ್ಯತೆಯನ್ನು ಕಳೆದುಕೊಳ್ಳಬಾರದು. ತಂದೆಯು ತನ್ನ ಸ್ವಂತ ಬಾಧ್ಯತೆಯಿಂದಲೇ ತನ್ನ ಪುತ್ರರಿಗೆ ಸೊತ್ತನ್ನು ಕೊಡಬೇಕು.’ ”
EZE 46:19 ಆಮೇಲೆ ಅವನು ನನ್ನನ್ನು ಬಾಗಿಲಿನ ಪಕ್ಕದಲ್ಲಿದ್ದ ಪ್ರವೇಶವಿದ್ದ ಉತ್ತರಕ್ಕೆ ಅಭಿಮುಖವಾದ ಯಾಜಕರ ಪರಿಶುದ್ಧ ಕೊಠಡಿಗೆ ಕರೆದುಕೊಂಡು ಹೋದನು. ಅಲ್ಲಿ ಅವುಗಳ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.
EZE 46:20 ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಬೇಯಿಸಿದ ಧಾನ್ಯ ಸಮರ್ಪಣೆಯನ್ನು ಸುಡುವಂತೆ ಏರ್ಪಡಿಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡುವುದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು,” ಎಂದು ಹೇಳಿದನು.
EZE 46:21 ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅಂಗಳದ ನಾಲ್ಕು ಮೂಲೆಗಳನ್ನು ಹಾದುಹೋಗುವಂತೆ ಮಾಡಿದನು. ಅಂಗಳದ ಒಂದೊಂದು ಮೂಲೆಯಲ್ಲಿ ಒಂದು ಅಂಗಳವನ್ನು ನಾನು ಕಂಡೆನು.
EZE 46:22 ಅಂಗಳದ ನಾಲ್ಕು ಮೂಲೆಯಲ್ಲಿ ನಲವತ್ತು ಮೊಳ ಉದ್ದವಾಗಿಯೂ ಮೂವತ್ತು ಮೊಳ ಅಗಲವಾಗಿಯೂ ಕೂಡಿಕೊಂಡಿದ್ದವು. ಆ ನಾಲ್ಕೂ ಮೂಲೆಗಳಿಗೂ ಒಂದೇ ಅಳತೆಯಾಗಿತ್ತು.
EZE 46:23 ಅವುಗಳಲ್ಲಿ ಎಂದರೆ ಆ ನಾಲ್ಕರಲ್ಲಿ ಸುತ್ತಲೂ ಸಾಲು ಇತ್ತು. ಆ ಸಾಲುಗಳ ಕೆಳಗೆ ಸುತ್ತಲೂ ಒಲೆಗಳಿದ್ದವು.
EZE 46:24 ಆಮೇಲೆ ಅವನು ನನಗೆ, “ಇವು ಮನೆಯ ಸೇವಕರು ಜನರ ಬಲಿಯನ್ನು ಬೇಯಿಸುವಂಥ ಸ್ಥಳಗಳು ಎಂದು ಹೇಳಿದನು.”
EZE 47:1 ಆ ಮನುಷ್ಯನು ನನ್ನನ್ನು ಮತ್ತೆ ಆಲಯದ ಬಾಗಿಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು, ಏಕೆಂದರೆ ಆಲಯದ ಮುಂಭಾಗದಲ್ಲಿ ನೀರು ಇತ್ತು. ಆ ನೀರು ಆಲಯದ ದಕ್ಷಿಣಕ್ಕೆ ಕೆಳಗಡೆ ಹರಿಯಿತು.
EZE 47:2 ಆಮೇಲೆ ಅವನು ನನ್ನನ್ನು ಬಾಗಿಲಿನ ಮಾರ್ಗವಾಗಿ ಉತ್ತರದ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಿಲಿನವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಮತ್ತು ದಕ್ಷಿಣ ಭಾಗದಿಂದ ನೀರು ಜಿನುಗುತ್ತಿತ್ತು.
EZE 47:3 ಕೈಯಲ್ಲಿ ಅಳತೆಮಾಡುವ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು. ಅಲ್ಲಿ ನೀರು ಪಾದ ಮುಳುಗುವಷ್ಟಿತ್ತು.
EZE 47:4 ಅವನು ಸಾವಿರಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು.
EZE 47:5 ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂಥ ನದಿಯಾಗಿತ್ತು. ಏಕೆಂದರೆ ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು.
EZE 47:6 ಅವರು ನನಗೆ, “ಮನುಷ್ಯಪುತ್ರನೇ, ನೀನು ಇದನ್ನು ನೋಡಿದೆಯಾ?” ಆಗ ಅವನು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು.
EZE 47:7 ನಾನು ತಿರುಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆ ಕಡೆಯೂ ಈ ಕಡೆಯೂ ಅತಿ ಹೆಚ್ಚು ಮರಗಳಿದ್ದವು.
EZE 47:8 ಆಗ ಅವನು, “ಈ ನೀರು ಪೂರ್ವಸೀಮೆಗೆ ಹೋಗಿ ಅರಾಬಾ ಎಂಬ ಒಣಭೂಮಿಗೆ ಇಳಿದು ಲವಣ ಸಮುದ್ರ ಸೇರುವುದು. ಲವಣ ಸಮುದ್ರ ಸೇರಿದ ಮೇಲೆ ಅಲ್ಲಿಯ ನೀರು ಸಿಹಿಯಾಗುವುದು.
EZE 47:9 ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂಥ ಸಮಸ್ತ ಜೀವಿಗಳು ಬದುಕುವುವು ಮತ್ತು ಮೀನುಗಳ ಬಹುದೊಡ್ಡ ಸಮೂಹವಾಗುವುವು. ಏಕೆಂದರೆ ಈ ನೀರು ಅಲ್ಲಿಗೆ ಬರುವಾಗ ಅವು ಶುದ್ಧವಾಗುವುವು. ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವುವು.
EZE 47:10 ಏನ್ಗೆದಿ ಮೊದಲುಗೊಂಡು ಎನ್ ಎಗ್ಲಯಿಮಿನವರೆಗೂ ಬೆಸ್ತರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವುವು. ಅದರ ಮೀನುಗಳು ಮಹಾಸಾಗರದ ಮೀನುಗಳಾಗಿ ಜಾತ್ಯಾನುಸಾರವಾಗಿ ಬಹಳವಾಗಿರುವುವು.
EZE 47:11 ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಶುದ್ಧವಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು.
EZE 47:12 ನದಿಯ ಎರಡೂ ದಡಗಳಲ್ಲಿ ಆಹಾರಕ್ಕಾಗಿ ಎಲ್ಲಾ ತರಹದ ಮರಗಳು ಬೆಳೆಯುವುವು. ಅವುಗಳ ಎಲೆಗಳು ಬಾಡುವುದಿಲ್ಲ. ಅವುಗಳ ಹಣ್ಣು ಮುಗಿದುಹೋಗುವುದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸುವುವು. ಏಕೆಂದರೆ ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟುಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಅವುಗಳ ಎಲೆಗಳು ಔಷಧಕ್ಕೂ ಆಗುವುವು.”
EZE 47:13 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾಗಿದೆ. ಯೋಸೇಫನಿಗೆ ಎರಡು ಪಾಲುಗಳು ಕೊಡಲಾಗಿದೆ.
EZE 47:14 ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು. ಏಕೆಂದರೆ ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈಯೆತ್ತಿ ಪ್ರಮಾಣ ಮಾಡಿದ್ದೇನೆ. ಈ ದೇಶವು ನಿಮಗೆ ಬಾಧ್ಯವಾಗಿ ಬರುವುದು.
EZE 47:15 “ಇದೇ ದೇಶದ ಮೇರೆಯು: “ಉತ್ತರದ ಕಡೆಗೆ ಮಹಾ ಸಮುದ್ರದಿಂದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಲೆಬೊ ಹಮಾತ್ ದಾಟಿ ಚೆದಾದಿಗೆ ಸೇರುವವರೆಗೂ;
EZE 47:16 ಹಮಾತೂ ಬೇರೋತವು, ದಮಸ್ಕದವರೆಗೂ ಹಾಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
EZE 47:17 ಹೀಗೆ ಹಚರ್ ಏನಾನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಾಮಾತಿನ ಮೇರೆಯೂ ಉತ್ತರದ ಕಡೆಯಾಗಿರುವುದು. ಇದು ಉತ್ತರ ಮೇರೆ.
EZE 47:18 ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.
EZE 47:19 ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು. ಇದೇ ದಕ್ಷಿಣದ ಮೇರೆ.
EZE 47:20 ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ.
EZE 47:21 “ಹೀಗೆ ನೀವು ಈ ದೇಶವನ್ನು ಇಸ್ರಾಯೇಲನ ಗೋತ್ರಗಳ ಪ್ರಕಾರ ಪಾಲುಮಾಡಿಕೊಳ್ಳಬೇಕು.
EZE 47:22 ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂಥವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ವಿದೇಶಿಯರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು. ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದವರೆಂದು ಪರಿಗಣಿಸಬೇಕು. ಅವರಿಗೆ ಇಸ್ರಾಯೇಲಿನ ಗೋತ್ರಗಳೊಳಗೆ ಬಾಧ್ಯತೆಯಾಗಬೇಕು.
EZE 47:23 ವಿದೇಶಿಯರು ಯಾವ ಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಅವರಿಗೆ ಸೊತ್ತನ್ನು ಕೊಡಬೇಕು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 48:1 “ಗೋತ್ರಗಳ ಹೆಸರುಗಳು ಯಾವುವೆಂದರೆ: “ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಯೂ ಹಾಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಕಡೆಗಳು, ದಾನ್ ಗೋತ್ರಕ್ಕೆ ಒಂದು ಭಾಗವಾಗಿದೆ.
EZE 48:2 ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
EZE 48:3 ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ನಫ್ತಾಲಿಗೆ ಒಂದು ಭಾಗವಾಗಿದೆ.
EZE 48:4 ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ಮನಸ್ಸೆಗೆ ಒಂದು ಭಾಗ.
EZE 48:5 ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಎಫ್ರಾಯೀಮಿಗೆ ಒಂದು ಭಾಗ.
EZE 48:6 ಎಫ್ರಾಯೀಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೆ ರೂಬೇನ್ ಗೆ ಒಂದು ಭಾಗ.
EZE 48:7 ರೂಬೇನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ, ಪಶ್ಚಿಮದ ಕಡೆಯವರೆಗೂ ಯೆಹೂದಕ್ಕೆ ಒಂದು ಭಾಗ.
EZE 48:8 “ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯವರೆಗೂ ಇರಬೇಕು.
EZE 48:9 “ನೀವು ಯೆಹೋವ ದೇವರಿಗೆ ಅರ್ಪಿಸುವಂತಹ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು.
EZE 48:10 ಅವರಿಗಾಗಿ ಎಂದರೆ ಯಾಜಕರಿಗಾಗಿ ಇದೇ ಪರಿಶುದ್ಧ ಕಾಣಿಕೆ ಆಗಿರಬೇಕು. ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು. ಅದರ ಮಧ್ಯದಲ್ಲಿ ಯೆಹೋವ ದೇವರ ಪರಿಶುದ್ಧ ಸ್ಥಳವೂ ಇರಬೇಕು.
EZE 48:11 ಇದು ನನಗೆ ನಂಬಿಗಸ್ತರಾಗಿ ನಡೆದುಕೊಂಡ ಚಾದೋಕನ ಪುತ್ರರಲ್ಲಿ ಪ್ರತಿಷ್ಠಿತರಾಗಿರುವ ಯಾಜಕರದಾಗಿರಬೇಕು; ಇಸ್ರಾಯೇಲರು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ಚಾದೋಕಿನವರು ತಪ್ಪಿಹೋಗಲಿಲ್ಲ.
EZE 48:12 ಮೀಸಲಾಗಿರುವ ಈ ನಾಡಿನ ವಿಶೇಷ ಕಾಣಿಕೆಯು ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧವಾದದ್ದಾಗಿರಬೇಕು.
EZE 48:13 “ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಒಟ್ಟು ಉದ್ದ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.
EZE 48:14 ಅವರು ಅದರಲ್ಲಿ ಏನನ್ನೂ ಮಾರಬಾರದು, ಏನನ್ನೂ ಬದಲಾಯಿಸಬಾರದು. ದೇಶದ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವ ದೇವರಿಗೆ ಪರಿಶುದ್ಧವಾಗಿದೆ.
EZE 48:15 “ಸುಮಾರು ಎರಡೂವರೆ ಕಿಲೋಮೀಟರ್ ಅಗಲ ಮತ್ತು ಸುಮಾರು ಹದಿಮೂರು ಕಿಲೋಮೀಟರ್ ಉದ್ದದ ಉಳಿದ ಪ್ರದೇಶವು ನಗರದ ಸಾಮಾನ್ಯ ಬಳಕೆಗಾಗಿ, ಇದು ಮನೆಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿರುತ್ತದೆ. ನಗರವು ಅದರ ಮಧ್ಯದಲ್ಲಿ ಇರುತ್ತದೆ;
EZE 48:16 ಮತ್ತು ಅದರ ಅಳತೆಯು ಈ ರೀತಿ ಇರುತ್ತದೆ: ಉತ್ತರದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ದಕ್ಷಿಣದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ಪೂರ್ವಕ್ಕೆ ಸುಮಾರು ಎರಡೂವರೆ ಕಿಲೋಮೀಟರ್, ಪಶ್ಚಿಮಕ್ಕೆ ಸುಮಾರು ಎರಡೂವರೆ ಕಿಲೋಮೀಟರ್.
EZE 48:17 ಪಟ್ಟಣದ ಹುಲ್ಲುಗಾವಲು ಹೀಗಿರಬೇಕು. ಉತ್ತರದಲ್ಲಿ 135 ಮೀಟರ್ ದಕ್ಷಿಣದಲ್ಲಿ 135 ಮೀಟರ್ ಪೂರ್ವದಲ್ಲಿ 135 ಮೀಟರ್; ಪಶ್ಚಿಮದಲ್ಲಿ 135 ಮೀಟರ್.
EZE 48:18 ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿರುವಂಥದ್ದೂ ಉದ್ದದಲ್ಲಿ ಉಳಿದ ಭೂಮಿಯು ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧಭಾಗಕ್ಕೆ ಎದುರಾಗಿರಬೇಕು. ಅದರ ಆದಾಯವು ಪಟ್ಟಣದಲ್ಲಿ ಸೇವೆಮಾಡುವವರ ಆಹಾರಕ್ಕಾಗುವಷ್ಟು ಇರಬೇಕು.
EZE 48:19 ಪಟ್ಟಣದಲ್ಲಿ ಸೇವೆಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದಲೇ ಅದರಲ್ಲಿಯೇ ಸೇವೆಮಾಡಬೇಕು.
EZE 48:20 ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.
EZE 48:21 “ಪರಿಶುದ್ಧ ಭಾಗವೂ ಪಟ್ಟಣದ ಸೊತ್ತಿಗೂ ಈ ಕಡೆಗೂ ಆ ಕಡೆಗೂ ಉಳಿದ ಭೂಮಿಯು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರುವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂಥದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ ಮಧ್ಯದಲ್ಲಿರುವುವು.
EZE 48:22 ಇದಲ್ಲದೆ ಲೇವಿಯರ ಸೊತ್ತಿನಿಂದ ಮೊದಲುಗೊಂಡು ಪಟ್ಟಣದ ಸೊತ್ತಿನಿಂದ ಪ್ರಧಾನನ ನಡುವೆ ಇರುವಂಥದ್ದು ಯೆಹೂದದ ಮೇರೆಗೂ ಬೆನ್ಯಾಮೀನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಸಲ್ಲಬೇಕು.
EZE 48:23 “ಮಿಕ್ಕ ಗೋತ್ರಗಳ ವಿಷಯವೇನೆಂದರೆ: “ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಬೆನ್ಯಾಮೀನನ ಒಂದು ಭಾಗವಾಗಿದೆ.
EZE 48:24 ಬೆನ್ಯಾಮೀನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಸಿಮೆಯೋನ್ ಒಂದು ಭಾಗವಾಗಿದೆ.
EZE 48:25 ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಸ್ಸಾಕಾರ್ ನ ಒಂದು ಭಾಗವಾಗಿದೆ.
EZE 48:26 ಇಸ್ಸಾಕಾರ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಜೆಬುಲೂನ್ ನ ಒಂದು ಭಾಗವಾದೆ;
EZE 48:27 ಜೆಬುಲೂನ್ ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಗಾದ್ ನ ಒಂದು ಭಾಗವಾಗಿದೆ.
EZE 48:28 ಗಾದಿನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು.
EZE 48:29 “ನೀವು ಇಸ್ರಾಯೇಲಿನ ಗೋತ್ರಗಳಿಗೆ ಚೀಟುಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೆ. ಅದರ ಭಾಗಗಳು ಇವೇ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
EZE 48:30 “ಪಟ್ಟಣದ ಹೊರಗೆ ನಿರ್ಗಮನ ಹೀಗಿರಬೇಕು: “ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
EZE 48:31 ಪಟ್ಟಣದ ಬಾಗಿಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು. ಉತ್ತರಕ್ಕೆ ಮೂರು ಬಾಗಿಲುಗಳು: ರೂಬೇನ್ ಬಾಗಿಲು ಒಂದು, ಯೆಹೂದ ಬಾಗಿಲು ಒಂದು, ಲೇವಿ ಬಾಗಿಲು ಒಂದು.
EZE 48:32 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪೂರ್ವದಲ್ಲಿ ಮೂರು ಬಾಗಿಲುಗಳಿರುತ್ತವೆ: ಯೋಸೇಫ್ ಬಾಗಿಲು ಒಂದು, ಬೆನ್ಯಾಮೀನನ ಬಾಗಿಲು, ಒಂದು ದಾನ್ ಬಾಗಿಲು ಒಂದು.
EZE 48:33 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ದಕ್ಷಿಣದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಸಿಮೆಯೋನ್ ಬಾಗಿಲು, ಒಂದು ಇಸ್ಸಾಕಾರ್ ನ ಬಾಗಿಲು, ಒಂದು ಜೆಬುಲೂನ್ ನ ಬಾಗಿಲು.
EZE 48:34 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪಶ್ಚಿಮದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಗಾದ್ ಬಾಗಿಲು, ಇನ್ನೊಂದು ಆಶೇರ್ ಬಾಗಿಲು, ಮತ್ತೊಂದು ನಫ್ತಾಲಿ ಬಾಗಿಲು.
EZE 48:35 “ಸುತ್ತಲೂ ಹದಿನೆಂಟು ಸಾವಿರ ಅಳತೆಗಳು. “ಆ ದಿನದಿಂದ ಆ ಪಟ್ಟಣದ ಹೆಸರು, ‘ಯೆಹೋವ ದೇವರ ನೆಲೆ’ ” ಎಂಬುದೇ ಆಗಿರುವುದು.
DAN 1:1 ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆಹಾಕಿದನು.
DAN 1:2 ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ದೇವಾಲಯದ ಕೆಲವು ವಸ್ತುಗಳನ್ನು ಕೂಡ ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ, ತನ್ನ ದೇವರ ಆಲಯಕ್ಕೂ ತಂದು, ಅವುಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
DAN 1:3 ಅರಸನು ತನ್ನ ಕಂಚುಕಿಯರ ಮುಖ್ಯಸ್ಥನಾದ ಅಶ್ಪೆನಜನ ಸಂಗಡ ಮಾತನಾಡಿ ಅವನು ಇಸ್ರಾಯೇಲರೊಳಗೆ ಕೆಲವರನ್ನು ಅರಸನ ಸಂತಾನದೊಳಗಿಂದಲೂ, ಪ್ರಧಾನರೊಳಗಿಂದಲೂ
DAN 1:4 ಶಾರೀರಿಕ ನ್ಯೂನತೆ ಇಲ್ಲದವರಾಗಿಯೂ, ಸುಂದರವಾಗಿಯೂ, ಅವರು ಎಲ್ಲಾ ರೀತಿಯ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅವರು ವಿವೇಕವುಳ್ಳವರಾಗಿಯೂ ಮತ್ತು ತ್ವರಿತವಾಗಿ ಅರ್ಥಮಾಡಿಕೊಳ್ಳುವವರಾಗಿಯೂ, ಅರಸನ ಅರಮನೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಬಾಬಿಲೋನಿಯರ ವಿದ್ಯೆಯನ್ನೂ, ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು.
DAN 1:5 ಅರಸನು ರಾಜಭೋಜನದಲ್ಲಿಯೂ, ತಾನು ಕುಡಿಯುವ ದ್ರಾಕ್ಷಾರಸದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿಸಿದನು. ಹೀಗೆ ಅವರು ಮೂರು ವರ್ಷಗಳ ಕಾಲ ಪೋಷಿಸಲಾದ ಮೇಲೆ ಅರಸನ ಸನ್ನಿಧಿಯ ಸೇವಕರಾಗುವರು.
DAN 1:6 ಇವರಲ್ಲಿ ಯೆಹೂದದಿಂದ ದಾನಿಯೇಲ, ಹನನ್ಯ, ಮೀಶಾಯೇಲ್, ಅಜರ್ಯ ಎಂಬವರಿದ್ದರು.
DAN 1:7 ಇವರಿಗೆ ಕಂಚುಕಿಯರ ಯಜಮಾನನು ದಾನಿಯೇಲನಿಗೆ ಬೇಲ್ತೆಶಚ್ಚರ್ ಎಂದೂ, ಹನನ್ಯನಿಗೆ ಶದ್ರಕ್ ಎಂದೂ, ಮೀಶಾಯೇಲನಿಗೆ ಮೇಶಕ್ ಎಂದೂ, ಅಜರ್ಯನಿಗೆ ಅಬೇದ್‌ನೆಗೋ ಎಂಬ ಹೆಸರಿಟ್ಟನು.
DAN 1:8 ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು.
DAN 1:9 ಆಗ ದೇವರು ದಾನಿಯೇಲನ ಮೇಲೆ ಕಂಚುಕಿಯರ ಯಜಮಾನನ ದಯೆ, ಕನಿಕರ ತೋರುವಂತೆ ಮಾಡಿದರು.
DAN 1:10 ಕಂಚುಕಿಯ ಯಜಮಾನನು ದಾನಿಯೇಲನಿಗೆ, “ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯ ಅರಸನಿಗೆ ನಾನು ಭಯಪಡುತ್ತೇನೆ. ಏಕೆಂದರೆ ಅರಸನು ಏಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಇತರ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು. ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ?” ಎಂದನು.
DAN 1:11 ಆಮೇಲೆ ದಾನಿಯೇಲನು ಕಂಚುಕಿಯರ ಯಜಮಾನನು ಹನನ್ಯ, ಮೀಶಾಯೇಲ್, ಅಜರ್ಯ ಮತ್ತು ತನ್ನನ್ನು ನೋಡಿಕೊಳ್ಳುವುದಕ್ಕೆ ಇಟ್ಟಿದ್ದ ಮೇಲ್ವಿಚಾರಕನಿಗೆ,
DAN 1:12 “ನಿನ್ನ ಸೇವಕರನ್ನು ಹತ್ತು ದಿವಸಗಳವರೆಗೂ ಪರೀಕ್ಷಿಸಿ ನೋಡು. ಅವರು ನಮ್ಮ ಆಹಾರಕ್ಕೆ ಕೇವಲ ಕಾಯಿಪಲ್ಯಗಳನ್ನು, ಕುಡಿಯುವುದಕ್ಕೆ ಕೇವಲ ನೀರನ್ನು ಕೊಡಲಿ.
DAN 1:13 ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ. ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು,” ಎಂದು ಬೇಡಿಕೊಂಡನು.
DAN 1:14 ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ, ಹತ್ತು ದಿವಸಗಳವರೆಗೂ ಅವರನ್ನು ಪರೀಕ್ಷಿಸಿದನು.
DAN 1:15 ಹತ್ತು ದಿವಸಗಳಾದ ಮೇಲೆ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆಲ್ಲರಿಗಿಂತ ಇವರು ಆರೋಗ್ಯಕರವಾಗಿಯೂ, ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದರು.
DAN 1:16 ಹೀಗೆ ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂಥ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು.
DAN 1:17 ಈ ನಾಲ್ಕು ಯೌವನಸ್ಥರಿಗೆ ದೇವರು ಎಲ್ಲಾ ವಿದ್ಯೆಯಲ್ಲಿಯೂ, ಜ್ಞಾನದಲ್ಲಿಯೂ, ತಿಳುವಳಿಕೆಯನ್ನೂ, ವಿವೇಕವನ್ನೂ ಕೊಟ್ಟರು. ದಾನಿಯೇಲನು ಸಕಲ ದರ್ಶನಗಳಲ್ಲಿಯೂ, ಕನಸುಗಳಲ್ಲಿಯೂ ತಿಳುವಳಿಕೆಯುಳ್ಳವನಾಗಿದ್ದನು.
DAN 1:18 ಅರಸನು ಅವರನ್ನು ಕರೆತರಬೇಕೆಂದು ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು.
DAN 1:19 ಅರಸನು ಅವರ ಸಂಗಡ ಮಾತನಾಡಿದನು. ಅವರೆಲ್ಲರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ್ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದ್ದರಿಂದಲೇ ಇವರು ಅರಸನ ಸನ್ನಿಧಿಯ ಸೇವಕರಾದರು.
DAN 1:20 ಅರಸನು ಅವರ ಹತ್ತಿರ ವಿಚಾರಿಸಿದಾಗ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರರಿಗಿಂತಲೂ, ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡನು.
DAN 1:21 ದಾನಿಯೇಲನು ರಾಜ ಕೋರೆಷನ ಆಳಿಕೆಯ ಮೊದಲನೆಯ ವರ್ಷದ ತನಕ ಅಲ್ಲಿಯೇ ಇದ್ದನು.
DAN 2:1 ನೆಬೂಕದ್ನೆಚ್ಚರನ ಆಳಿಕೆಯ ಎರಡನೆಯ ವರ್ಷದಲ್ಲಿ ನೆಬೂಕದ್ನೆಚ್ಚರನು ಕನಸುಗಳನ್ನು ಕಂಡನು. ಅವನ ಆತ್ಮವು ಕಳವಳಗೊಂಡಿತು. ಅವನಿಗೆ ನಿದ್ರೆಯೇ ಬರಲಿಲ್ಲ.
DAN 2:2 ಆದ್ದರಿಂದ, ಅರಸನು ತನ್ನ ಕನಸನ್ನು ತಿಳಿಸಲು ಮಂತ್ರಗಾರರನ್ನೂ, ಜೋತಿಷ್ಯರನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಲು ಆಜ್ಞಾಪಿಸಿದನು. ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು.
DAN 2:3 ಆಗ ಅರಸನು ಅವರಿಗೆ, “ನಾನು ಒಂದು ಕನಸು ಕಂಡಿದ್ದೇನೆ. ಅದರ ಅರ್ಥವೇನೋ ಎಂದು ತಿಳಿಯಲು ನನ್ನ ಮನಸ್ಸು ತತ್ತರಗೊಂಡಿದೆ,” ಎಂದನು.
DAN 2:4 ಆಗ ಪಂಡಿತರು ಅರಸನಿಗೆ ಅರಮಾಯ ಭಾಷೆಯಲ್ಲಿ, “ಅರಸನೇ, ನಿರಂತರವಾಗಿ ಬಾಳು! ಕನಸನ್ನು ನಿನ್ನ ಸೇವಕರಿಗೆ ಹೇಳು, ಆಗ ನಾವು ಅದರ ಅರ್ಥವನ್ನು ತಿಳಿಸುವೆವು,” ಎಂದು ಹೇಳಿದರು.
DAN 2:5 ಅರಸನು ಪಂಡಿತರಿಗೆ ಉತ್ತರವಾಗಿ, “ನನ್ನ ಈ ಮಾತು ಖಂಡಿತ. ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ, ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು. ನಿಮ್ಮ ಮನೆಗಳನ್ನು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
DAN 2:6 ಆದರೆ ನೀವು ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸಿದರೆ, ದಾನಬಹುಮಾನಗಳನ್ನೂ, ಬಹಳ ಘನತೆಯನ್ನೂ ನನ್ನಿಂದ ಪಡೆಯುವಿರಿ. ಹೀಗಿರಲಾಗಿ ಕನಸನ್ನೂ, ಅದರ ವ್ಯಾಖ್ಯಾನವನ್ನೂ ನನಗೆ ತಿಳಿಸಿರಿ,” ಎಂದು ಹೇಳಿದನು.
DAN 2:7 ಅವರು ಮತ್ತೆ ಉತ್ತರವಾಗಿ, “ಅರಸನು ತನ್ನ ಸೇವಕರಿಗೆ ಕನಸನ್ನು ಮೊದಲು ಹೇಳಲಿ. ಆಗ ಅದರ ಅರ್ಥವನ್ನು ನಾವು ತಿಳಿಸುವೆವು,” ಎಂದರು.
DAN 2:8 ಆಗ ಅರಸನು ಉತ್ತರವಾಗಿ, “ನಾನು ಇದನ್ನು ದೃಢವಾಗಿ ನಿರ್ಧರಿಸಿದ್ದೇನೆಂದು ಹೇಳಿದ್ದರಿಂದ ನೀವು ಸಮಯ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿದ್ದೀರೆಂದು ನನಗೆ ನಿಶ್ಚಯವಾಗಿದೆ.
DAN 2:9 ನೀವು ಕನಸನ್ನು ನನಗೆ ಹೇಳದಿದ್ದರೆ, ನಿಮಗೆ ಒಂದೇ ಒಂದು ಶಿಕ್ಷೆಯಿದೆ. ತಪ್ಪು ಮಾರ್ಗಕ್ಕೆ ನಡೆಸುವ ಹಾಗೂ ಕೆಟ್ಟ ಸಂಗತಿಗಳನ್ನು ನನಗೆ ಹೇಳಿ, ಪರಿಸ್ಥಿತಿಯನ್ನು ನೀವು ನನಗೆ ವಿರೋಧವಾಗಿ ಒಪ್ಪಂದ ಮಾಡಿಕೊಂಡಿದ್ದೀರಿ, ಬದಲಾವಣೆಯನ್ನು ನಿರೀಕ್ಷಿಸುವಂತೆ. ಆದ್ದರಿಂದ ಕನಸನ್ನು ನನಗೆ ಹೇಳಲೇಬೇಕು. ಆಗ ಅದನ್ನು ವ್ಯಾಖ್ಯಾನ ಮಾಡಿ, ವಿವರಿಸುವಿರೆಂದು ನಾನು ತಿಳಿಯುವೆನು,” ಎಂದನು.
DAN 2:10 ಆಗ ಪಂಡಿತರು ಅರಸನಿಗೆ ಉತ್ತರವಾಗಿ, “ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕದಲ್ಲಿಲ್ಲ! ಆದ್ದರಿಂದ ಯಾವ ಅರಸನಾದರೂ, ಯಾವ ಪ್ರಭುವಾದರೂ, ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ, ಜೋತಿಷ್ಯನಲ್ಲೂ, ಪಂಡಿತನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.
DAN 2:11 ಅರಸನು ಕೇಳುವ ಸಂಗತಿಯು ಕಷ್ಟಕರವಾದದ್ದು. ಮಾನವರ ಮಧ್ಯದಲ್ಲಿ ವಾಸಿಸದ ದೇವರುಗಳೇ ಹೊರತು, ಬೇರಾರೂ ಇದನ್ನು ಅರಸನ ಸನ್ನಿಧಿಯಲ್ಲಿ ತಿಳಿಸಲಾರರು.”
DAN 2:12 ಇದನ್ನು ಕೇಳಿ ಅರಸನು ಕೋಪ ಮತ್ತು ರೌದ್ರವುಳ್ಳವನಾಗಿ, ಬಾಬಿಲೋನಿನಲ್ಲಿರುವ ಎಲ್ಲಾ ಜ್ಞಾನಿಗಳನ್ನು ಕೊಲೆಮಾಡಬೇಕೆಂದು ಆಜ್ಞಾಪಿಸಿದನು.
DAN 2:13 ಹಾಗೆಯೇ ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು. ದಾನಿಯೇಲನನ್ನೂ, ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
DAN 2:14 ಬಾಬಿಲೋನಿನ ಜ್ಞಾನಿಗಳನ್ನು ಕೊಲ್ಲಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಜ್ಞಾನದಿಂದಲೂ ಚಾತುರ್ಯದಿಂದಲೂ ಉತ್ತರಕೊಟ್ಟನು.
DAN 2:15 ದಾನಿಯೇಲನು ಅರಸನ ಅಧಿಪತಿಯಾದ ಅರ್ಯೋಕನಿಗೆ ಉತ್ತರವಾಗಿ, “ಅರಸನಿಂದ ಇಂಥ ಕಠಿಣವಾದ ಆಜ್ಞೆ ಏಕೆ?” ಎಂದು ಕೇಳಲು, ಅರ್ಯೋಕನು ದಾನಿಯೇಲನಿಗೆ ಆ ಸಂಗತಿಯ ಬಗ್ಗೆ ವಿವರಿಸಿದನು.
DAN 2:16 ಆಗ ದಾನಿಯೇಲನು ಅರಮನೆಗೆ ಹೋಗಿ ತನಗೆ ಸಮಯ ಕೊಡಲು ಇಷ್ಟಪಟ್ಟರೆ, ತಾನು ಅರಸನಿಗೆ ಅದರ ಅರ್ಥವನ್ನು ತಿಳಿಸುವೆನೆಂದು ಹೇಳಿದನು.
DAN 2:17 ಆಮೇಲೆ ದಾನಿಯೇಲನು ತನ್ನ ಮನೆಗೆ ಹೋಗಿ ತನ್ನ ಜೊತೆಗಾರರಾದ ಹನನ್ಯ, ಮೀಶಾಯೇಲ್, ಅಜರ್ಯರಿಗೆ ಈ ಸಂಗತಿಯನ್ನು ತಿಳಿಸಿದನು.
DAN 2:18 ದಾನಿಯೇಲನು ಅವನ ಜೊತೆಗಾರರೊಂದಿಗೆ ಉಳಿದ ಬಾಬಿಲೋನಿನ ಜ್ಞಾನಿಗಳ ಸಂಗಡ ಕೊಲೆಯಾಗದಂತೆ ಅವನು ತನ್ನ ಜೊತೆಗಾರರಿಗೆ ಅವರು ಈ ರಹಸ್ಯದ ಸಂಗತಿಯನ್ನು ಕುರಿತು ಪರಲೋಕದ ದೇವರಿಂದ ಕರುಣೆಯನ್ನು ಬೇಡಿಕೊಳ್ಳಬೇಕೆಂದು ಹೇಳಿದನು.
DAN 2:19 ಆ ರಹಸ್ಯವು ದಾನಿಯೇಲನಿಗೆ ರಾತ್ರಿ ದರ್ಶನದಲ್ಲಿ ಪ್ರಕಟವಾಯಿತು. ದಾನಿಯೇಲನು ಪರಲೋಕದ ದೇವರನ್ನು ಸ್ತುತಿಸಿ,
DAN 2:20 ಹೀಗೆಂದು ಹೇಳಿದನು: “ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರವಾಗಲಿ! ಏಕೆಂದರೆ ಜ್ಞಾನವೂ, ಬಲವೂ ಅವರದಾಗಿದೆ.
DAN 2:21 ಅವರು ಕಾಲವನ್ನೂ, ಸಮಯವನ್ನೂ ಬದಲಾಯಿಸುತ್ತಾ ಅವರು ಅರಸರನ್ನು ಕಡೆಗಣಿಸುತ್ತಾರೆ ಮತ್ತು ಇತರರನ್ನು ಮೇಲಕ್ಕೆತ್ತುತ್ತಾರೆ. ಜ್ಞಾನಿಗಳಿಗೆ ಜ್ಞಾನವನ್ನೂ, ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡುವರು.
DAN 2:22 ಅಗಾಧವಾದವುಗಳನ್ನು, ರಹಸ್ಯವಾದವುಗಳನ್ನು ಪ್ರಕಟ ಮಾಡುತ್ತಾರೆ. ಕತ್ತಲೆಯಲ್ಲಿ ಇರುವಂಥವುಗಳನ್ನು ತಿಳಿದಿರುವಂತವರಾಗಿದ್ದಾರೆ. ಬೆಳಕು ಅವರೊಳಗೆ ವಾಸಿಸುತ್ತದೆ.
DAN 2:23 ನನ್ನ ಪಿತೃಗಳ ದೇವರೇ, ನಾನು ನಿಮ್ಮನ್ನು ಕೊಂಡಾಡಿ, ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಏಕೆಂದರೆ ನೀವು ನನಗೆ ಜ್ಞಾನವನ್ನೂ, ಬಲವನ್ನೂ ಕೊಟ್ಟು; ನಾವು ನಿನ್ನಿಂದ ಅಪೇಕ್ಷಿಸಿಕೊಂಡದ್ದನ್ನು ನಮಗೆ ತಿಳಿಯಪಡಿಸಿದ್ದೀರಿ; ನೀವು ಈಗ ನಮಗೆ ಅರಸನ ಕನಸನ್ನು ತಿಳಿಯಪಡಿಸಿದ್ದೀರಿ.”
DAN 2:24 ದಾನಿಯೇಲನು ಬಾಬಿಲೋನಿನ ಜ್ಞಾನಿಗಳನ್ನು ನಾಶಮಾಡಲು ಅರಸನ ಆಜ್ಞೆಯನ್ನು ಹೊಂದಿದ ಅರ್ಯೋಕನ ಹತ್ತಿರ ಹೋಗಿ ಅವನಿಗೆ, “ನೀನು ಬಾಬಿಲೋನಿನ ಜ್ಞಾನಿಗಳನ್ನು ಕೊಲ್ಲಬೇಡ. ನನ್ನನ್ನು ಅರಸನ ಮುಂದೆ ಕರೆದುಕೊಂಡು ಹೋಗು. ಆಗ ನಾನು ಅರಸನಿಗೆ ಅವನ ಕನಸಿನ ಅರ್ಥವನ್ನು ತಿಳಿಸುತ್ತೇನೆ,” ಎಂದನು.
DAN 2:25 ಅರ್ಯೋಕನು ದಾನಿಯೇಲನನ್ನು ತ್ವರೆಯಾಗಿ ಅರಸನ ಮುಂದೆ ಕರೆದುಕೊಂಡು ಹೋಗಿ, ಆತನಿಗೆ, “ಯೆಹೂದ್ಯರ ಸೆರೆಯವರಲ್ಲಿ ನನಗೆ ಒಬ್ಬ ಮನುಷ್ಯನು ಸಿಕ್ಕಿದ್ದಾನೆ. ಅವನು ಅರಸನಿಗೆ ಅವನ ಕನಸಿನ ಅರ್ಥವನ್ನು ತಿಳಿಸುತ್ತಾನೆ,” ಎಂದನು.
DAN 2:26 ಅರಸನು ಬೇಲ್ತೆಶಚ್ಚರನೆಂಬ ದಾನಿಯೇಲನನ್ನು ಕುರಿತು, “ನಾನು ಕಂಡ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸುವ ಸಾಮರ್ಥ್ಯವು ನಿನಗಿದೆಯೋ?” ಎಂದನು.
DAN 2:27 ದಾನಿಯೇಲನು ಅರಸನ ಸನ್ನಿಧಿಯಲ್ಲಿ ಉತ್ತರವಾಗಿ, “ಅರಸನು ಕೇಳುವ ರಹಸ್ಯವನ್ನು ಜ್ಞಾನಿಗಳೂ, ಜ್ಯೋತಿಷ್ಯರೂ, ಮಂತ್ರಗಾರರೂ, ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.
DAN 2:28 ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತಹ ದೇವರು ಪರಲೋಕದಲ್ಲಿ ಇದ್ದಾರೆ. ಅವರು ಮುಂಬರುವ ದಿವಸಗಳಲ್ಲಿ ಸಂಭವಿಸುವಂಥವುಗಳನ್ನು ಅರಸನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸುತ್ತಾರೆ. ನಿನ್ನ ಕನಸಿನಲ್ಲಿ ನಿನ್ನ ಹಾಸಿಗೆಯಲ್ಲಿ ನೀನು ಮಲಗಿದಾಗ, ನಿನ್ನ ಮನಸ್ಸಿನಲ್ಲಿ ಹಾದುಹೋದ ದರ್ಶನಗಳು ಇವೇ ಆಗಿವೆ.
DAN 2:29 “ಅರಸನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ, ಇನ್ನು ಮುಂದೆ ಏನು ಸಂಭವಿಸುವುದೋ, ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತ್ತು. ಆ ರಹಸ್ಯಗಳನ್ನು ವ್ಯಕ್ತಪಡಿಸುವವರು, ಮುಂದೆ ಸಂಭವಿಸುವುದು ಏನೆಂಬುದನ್ನು ನಿನಗೆ ಗೋಚರಪಡಿಸುತ್ತಾರೆ.
DAN 2:30 ಆದರೆ ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನೆಂದಲ್ಲದಿದ್ದರೂ, ಕನಸಿನ ಅರ್ಥವು ಅರಸನಾದ ನಿನಗೆ ಗೋಚರವಾಗಿ, ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದುಬರಲೆಂದು ನನಗೆ ಪ್ರಕಟವಾಗಿದೆ.
DAN 2:31 “ರಾಜನೇ, ನೀನು ನೋಡಲಾಗಿ, ಇಗೋ ಒಂದು ದೊಡ್ಡ ಪ್ರತಿಮೆಯು ಕಾಣಿಸಿತು. ಮಹಾ ಪ್ರಕಾಶಮಾನವಾದ ಆ ದೊಡ್ಡ ಪ್ರತಿಮೆಯು ನಿನ್ನ ಮುಂದೆ ನಿಂತಿತ್ತು. ಅದರ ಆಕಾರವು ಭಯಂಕರವಾಗಿತ್ತು.
DAN 2:32 ಈ ಪ್ರತಿಮೆಯ ತಲೆಯು ಅಪ್ಪಟ ಬಂಗಾರದಿಂದಲೂ, ಅದರ ಎದೆಯು ಮತ್ತು ತೋಳುಗಳು ಬೆಳ್ಳಿಯಿಂದಲೂ, ಅದರ ಹೊಟ್ಟೆಯು ಮತ್ತು ತೊಡೆಗಳು ಕಂಚಿನಿಂದಲೂ,
DAN 2:33 ಅದರ ಕಾಲುಗಳು ಕಬ್ಬಿಣದಿಂದಲೂ, ಅದರ ಪಾದಗಳು ಅರ್ಧ ಕಬ್ಬಿಣವೂ ಅರ್ಧ ಮಣ್ಣೂ ಆಗಿತ್ತು.
DAN 2:34 ನೀವು ನೋಡುತ್ತಿರಲಾಗಿ, ಒಂದು ಗುಂಡು ಬಂಡೆಯು ಮಾನವ ಹಸ್ತದ ಸಹಾಯವಿಲ್ಲದೆ ಒಡೆದು, ಅರ್ಧ ಕಬ್ಬಿಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದಗಳಿಗೆ ಬಡಿದು ಚೂರುಚೂರು ಮಾಡಿತು.
DAN 2:35 ಆಗ ಕಬ್ಬಿಣವೂ, ಮಣ್ಣೂ, ಕಂಚು, ಬೆಳ್ಳಿಯೂ, ಬಂಗಾರವೂ ಕೂಡ ಒಡೆದು, ಚೂರುಚೂರಾಗಿ, ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾದವು. ಅವುಗಳಿಗೆ ನೆಲೆ ಸಿಗದೆ, ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು. ಪ್ರತಿಮೆಯನ್ನು ಬಡಿದ ಕಲ್ಲು, ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
DAN 2:36 “ಇದೇ ಕನಸು. ಇದರ ಅರ್ಥವನ್ನು ನಾವು ಅರಸನ ಮುಂದೆ ಹೇಳುತ್ತೇವೆ.
DAN 2:37 ಅರಸನೇ, ನೀನು ಅರಸರಿಗೆ ಅರಸನಾಗಿರುವೆ. ಏಕೆಂದರೆ ಪರಲೋಕದ ದೇವರು ನಿನಗೆ ರಾಜ್ಯವನ್ನೂ, ಬಲವನ್ನೂ, ಅಧಿಕಾರವನ್ನೂ, ಘನವನ್ನೂ ಕೊಟ್ಟಿದ್ದಾರೆ.
DAN 2:38 ಜನರನ್ನು, ಭೂಮಿಯ ಮೃಗಗಳನ್ನು, ಆಕಾಶದ ಪಕ್ಷಿಗಳನ್ನು, ಜೀವಿಸುವಂಥಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು, ಅವೆಲ್ಲವುಗಳಿಗೆ ನಿನ್ನನ್ನು ಆಳುವವನಾಗಿ ಮಾಡಿದ್ದಾರೆ. ಆ ಬಂಗಾರದ ತಲೆಯು ನೀನೇ.
DAN 2:39 “ನಿನ್ನ ತರುವಾಯ ನಿನಗಿಂತ ಕನಿಷ್ಠವಾದ ಇನ್ನೊಂದು ರಾಜ್ಯ ಏಳುವುದು. ಅನಂತರ ಮೂರನೆಯ ಕಂಚಿನ ರಾಜ್ಯ ಬರುವುದು. ಅದು ಸಮಸ್ತ ಭೂಮಿಯ ಮೇಲೂ ದೊರೆತನ ನಡೆಸುವುದು.
DAN 2:40 ಆಮೇಲೆ ನಾಲ್ಕನೆಯ ರಾಜ್ಯವು ಕಬ್ಬಿಣದ ಹಾಗೆ ಬಲವಾಗಿ ಇರುವುದು. ಏಕೆಂದರೆ ಕಬ್ಬಿಣವು ಸಮಸ್ತ ವಸ್ತುಗಳನ್ನು ವಶಮಾಡಿಕೊಂಡು, ಚೂರುಚೂರು ಮಾಡುತ್ತದೆ. ಕಬ್ಬಿಣವು ಹೇಗೆ ಎಲ್ಲವನ್ನು ಚೂರು ಮಾಡುವುದೋ, ಹಾಗೆಯೇ ಆ ರಾಜ್ಯವು ಇತರರೆಲ್ಲರನ್ನು ಚೂರುಚೂರಾಗಿ ಮಾಡಿ ಧ್ವಂಸ ಮಾಡುವುದು.
DAN 2:41 ಪಾದಗಳನ್ನೂ, ಕಾಲಿನ ಬೆರಳುಗಳನ್ನೂ ಅರ್ಧ ಮಣ್ಣಿನಿಂದಲೂ, ಅರ್ಧ ಕಬ್ಬಿಣದಿಂದಲೂ ಉಂಟಾದವೆಂದು ನೀನು ನೋಡಿದೆಯಲ್ಲಾ? ಅದೇ ರೀತಿ ಆ ರಾಜ್ಯವು ವಿಭಾಗವಾಗಿರುವುದು. ಆದರೆ ಅದರ ಬಲವು ನೀನು ಜೇಡಿಮಣ್ಣಿನ ಸಂಗಡ ಜೊತೆಗೂಡಿದ ಕಬ್ಬಿಣವನ್ನು ನೋಡಿದ ಹಾಗಿರುವುದು.
DAN 2:42 ಪಾದದ ಬೆರಳುಗಳು ಅರ್ಧ ಕಬ್ಬಿಣದಿಂದಲೂ, ಅರ್ಧ ಮಣ್ಣಿನಿಂದಲೂ ಮಾಡಿದ ಹಾಗೆ, ರಾಜ್ಯವು ಅರ್ಧ ಮುರಿದದ್ದಾಗಿಯೂ, ಅರ್ಧ ಬಲವಾದದ್ದಾಗಿಯೂ ಇರುವುದು.
DAN 2:43 ನೀನು ಕಬ್ಬಿಣವು ಜೇಡಿಮಣ್ಣಿನ ಸಂಗಡ ಮಿಶ್ರವಾಗಿರುವುದನ್ನು ನೋಡಿದ ಹಾಗೆ, ಜನರು ಮಿಶ್ರವಾಗಿರುವರು ಮತ್ತು ಕಬ್ಬಿಣವು ಮಣ್ಣಿನ ಸಂಗಡ ಕೂಡಿಕೊಳ್ಳದ ಪ್ರಕಾರ, ಅವರು ಒಬ್ಬರ ಸಂಗಡ ಒಬ್ಬರು ಕೂಡಿಕೊಳ್ಳುವುದಿಲ್ಲ.
DAN 2:44 “ಆ ಅರಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವರು. ಅದು ಬೇರೆ ಜನರಿಗೆ ಸೇರಿ ಹೋಗುವುದಿಲ್ಲ. ಅದು ಆ ರಾಜ್ಯಗಳನ್ನೆಲ್ಲಾ ಧ್ವಂಸಮಾಡಿ, ಮುಗಿಸಿ, ತಾನು ಎಂದೆಂದಿಗೂ ನಿಲ್ಲುವುದು.
DAN 2:45 ಮಾನವ ಹಸ್ತಗಳಿಲ್ಲದೆ, ಆದರೆ ಬೆಟ್ಟದೊಳಗಿಂದ ಕಡಿದು ತೆಗೆದ ಗುಂಡು ಬಂಡೆಯು ಕಬ್ಬಿಣವನ್ನೂ, ಕಂಚನ್ನೂ, ಮಣ್ಣನ್ನೂ, ಬೆಳ್ಳಿಯನ್ನೂ ಹಾಗೂ ಬಂಗಾರವನ್ನೂ ತುಂಡುತುಂಡಾಗಿ ಮಾಡಿದ ಆ ಗುಂಡು ಕಲ್ಲಿನ ದರ್ಶನವು ಇದೆ. “ಇದರಿಂದ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಮಹಾ ದೇವರು ಅರಸನಿಗೆ ತೋರಿಸಿದ್ದಾರೆ. ಕನಸು ನಿಜವಾದದ್ದು, ಅದರ ಅರ್ಥವು ನಂಬತಕ್ಕದ್ದು,” ಎಂದನು.
DAN 2:46 ಆಗ ಅರಸನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು, ದಾನಿಯೇಲನಿಗೆ ನಮಸ್ಕರಿಸಿ, ಅವನಿಗೆ ಕಾಣಿಕೆಗಳನ್ನೂ, ಸುಗಂಧ ದ್ರವ್ಯವನ್ನೂ ಅರ್ಪಿಸಬೇಕೆಂದೂ ಆಜ್ಞಾಪಿಸಿದನು.
DAN 2:47 ಅರಸನು ದಾನಿಯೇಲನಿಗೆ ಉತ್ತರವಾಗಿ, “ನೀನು ಈ ರಹಸ್ಯವನ್ನು ಪ್ರಕಟಮಾಡಲು ಸಮರ್ಥನಾದ್ದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ, ಅರಸುಗಳ ಒಡೆಯರಾಗಿಯೂ, ರಹಸ್ಯಗಳನ್ನು ಪ್ರಕಟ ಮಾಡುವವರಾಗಿಯೂ ಇದ್ದಾರೆ,” ಎಂದನು.
DAN 2:48 ಆಗ ಅರಸನು ದಾನಿಯೇಲನನ್ನು ಉನ್ನತ ಸ್ಥಾನದಲ್ಲಿರಿಸಿ, ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟನು. ಸಮಸ್ತ ಬಾಬಿಲೋನಿನ ಪ್ರಾಂತಗಳಿಗೆ ಅಧಿಕಾರಿಯನ್ನಾಗಿಯೂ, ಬಾಬಿಲೋನಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿಪತಿಯನ್ನಾಗಿಯೂ ನೇಮಿಸಿದನು.
DAN 2:49 ದಾನಿಯೇಲನು ಅರಸನನ್ನು ಬೇಡಿಕೊಂಡಿದ್ದರಿಂದ, ಅರಸನು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರನ್ನು ಬಾಬಿಲೋನಿನ ಸಂಸ್ಥಾನದ ಕಾರ್ಯಾಧಿಕಾರಿಗಳನ್ನಾಗಿ ನೇಮಿಸಿದನು. ದಾನಿಯೇಲನು ಅರಸನ ಅರಮನೆಯಲ್ಲಿ ಉಳಿದನು.
DAN 3:1 ಅರಸನಾದ ನೆಬೂಕದ್ನೆಚ್ಚರನು ಸುಮಾರು 27 ಮೀಟರ್ ಎತ್ತರ ಮತ್ತು ಸುಮಾರು ಎರಡೂವರೆ ಮೀಟರ್ ಅಗಲ ಇರುವ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬಿಲೋನ್ ಪ್ರಾಂತದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
DAN 3:2 ಆಮೇಲೆ ನೆಬೂಕದ್ನೆಚ್ಚರನು ಉಪರಾಜರನ್ನೂ ರಾಜ್ಯಪಾಲರನ್ನೂ ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಖಜಾಂಚಿದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಕರೆಯಿಸಿದನು.
DAN 3:3 ಆಗ ಉಪರಾಜರು, ರಾಜ್ಯಪಾಲರು, ಅಧಿಕಾರಸ್ಥರು, ನ್ಯಾಯಾಧಿಪತಿಗಳು, ಖಜಾಂಚಿದವರು, ಸಲಹೆಗಾರರು, ಪಂಡಿತರು, ಎಲ್ಲಾ ಪ್ರಾಂತಗಳ ಅಧಿಕಾರಿಗಳು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಕೂಡಿಬಂದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತರು.
DAN 3:4 ಆಗ ಘೋಷಣೆ ಮಾಡುವವರು ಗಟ್ಟಿಯಾಗಿ ಕೂಗಿ, “ಪ್ರಜೆಗಳೇ, ಜನಾಂಗಗಳೇ, ವಿವಿಧ ಭಾಷೆಯವರೇ
DAN 3:5 ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳಿದ ಕೂಡಲೇ, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.
DAN 3:6 ಯಾರು ಅಡ್ಡಬೀಳದೆ, ನಮಸ್ಕರಿಸದೆ ಇರುವರೋ ಅಂಥವರನ್ನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯಲ್ಲಿ ಹಾಕಲಾಗುವುದು. ಇದು ರಾಜಾಜ್ಞೆ,” ಎಂದನು.
DAN 3:7 ಆದ್ದರಿಂದ ಜನರೆಲ್ಲರು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ಶಬ್ದವನ್ನು ಕೇಳಿದ ಕೂಡಲೇ, ಎಲ್ಲಾ ಪ್ರಜೆಗಳು ಜನಾಂಗಗಳು ವಿವಿಧ ಭಾಷೆಯವರು ಅಡ್ಡಬಿದ್ದು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸಿದರು.
DAN 3:8 ಆ ಸಮಯದಲ್ಲಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸಲು ಅರಸನ ಸನ್ನಿಧಿಗೆ ಬಂದು
DAN 3:9 ಅರಸನಾದ ನೆಬೂಕದ್ನೆಚ್ಚರನಿಗೆ, “ಅರಸನೇ, ನೀನು ನಿರಂತರವಾಗಿ ಬಾಳು.
DAN 3:10 ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾಗಸ್ವರ ಮುಂತಾದ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿದಾಗ ಪ್ರತಿಯೊಬ್ಬ ಮನುಷ್ಯನು ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ ಅರಸನು ಆಜ್ಞೆಯನ್ನು ಹೊರಡಿಸಿದ್ದಾನೆ.
DAN 3:11 ಅಡ್ಡಬೀಳದೆ ಆರಾಧಿಸದೆ ಇರುವವರನ್ನು ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಬೇಕೆಂದು ಆಜ್ಞೆಮಾಡಿದಿಯಲ್ಲಾ?
DAN 3:12 ಆದರೆ ನೀನು ಬಾಬಿಲೋನಿನ ಪ್ರಾಂತದ ಕೆಲಸಗಳ ಮೇಲೆ ಇಟ್ಟಿರುವ ಯೆಹೂದ್ಯರಾದ ಕೆಲವರು ಎಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಅವರು ನಿನ್ನನ್ನು ಲಕ್ಷಿಸುವುದಿಲ್ಲ. ಅವರು ನಿನ್ನ ದೇವರುಗಳನ್ನಾಗಲಿ, ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನಾದರೂ ಆರಾಧಿಸುವುದಿಲ್ಲ,” ಎಂದು ಹೇಳಿದರು.
DAN 3:13 ನೆಬೂಕದ್ನೆಚ್ಚರನು ಉಗ್ರಕೋಪವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್‌ನೆಗೋ ಅವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆತಂದರು.
DAN 3:14 ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರೇ, ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇದ್ದೀರಿ ಎಂಬ ಮಾತು ನಿಜವೋ?
DAN 3:15 ಈಗ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಆರಾಧಿಸದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಲಾಗುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು?” ಎಂದು ಹೇಳಿದನು.
DAN 3:16 ಆಗ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರು ಅರಸನಿಗೆ ಉತ್ತರವಾಗಿ, “ನೆಬೂಕದ್ನೆಚ್ಚರನೇ, ಈ ವಿಷಯದ ಬಗ್ಗೆ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ.
DAN 3:17 ಒಂದು ವೇಳೆ ಹಾಗೆ ಇದ್ದರೆ, ನಿಶ್ಚಯವಾಗಿ ನಾವು ಆರಾಧಿಸುವ ನಮ್ಮ ದೇವರು ಉರಿಯುವ ಬೆಂಕಿಯ ಕುಲುಮೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥರಾಗಿದ್ದಾರೆ. ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವರು.
DAN 3:18 ಆದರೆ ಒಂದು ವೇಳೆ ಅವರು ತಪ್ಪಿಸದಿದ್ದರೂ, ಅರಸನೇ ನಾವು ನಿನ್ನ ದೇವರುಗಳನ್ನು ಸೇವಿಸುವುದಿಲ್ಲವೆಂದೂ, ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲವೆಂದೂ ನಿನಗೆ ತಿಳಿದಿರಲಿ,” ಎಂದರು.
DAN 3:19 ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ, ಅವನ ಮುಖಭಾವವು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಆ ಕುಲುಮೆಯನ್ನು ಸಾಧಾರಣವಾದ ಉರಿಗಿಂತ ಏಳರಷ್ಟು ಹೆಚ್ಚಾಗಿ ಉರಿ ಹಾಕಬೇಕೆಂದು ಆಜ್ಞಾಪಿಸಿದನು.
DAN 3:20 ಇದಲ್ಲದೆ ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾದವರಿಗೆ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಕುಲುಮೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.
DAN 3:21 ಆಗ ಆ ಮನುಷ್ಯರು ತಮ್ಮ ಶಲ್ಯ, ಇಜಾರು, ಮುಂಡಾಸ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡವರಾಗಿರುವಾಗ, ಧಗಧಗನೆ ಉರಿಯುವ ಬೆಂಕಿಯ ಕುಲುಮೆಯಲ್ಲಿ ಅವರನ್ನು ಹಾಕಿದರು.
DAN 3:22 ಅರಸನ ಆಜ್ಞೆಯು ಅವಸರವಾಗಿಯೂ, ಕುಲುಮೆಯು ಬಹು ಉರಿಯಾಗಿಯೂ ಇದ್ದುದರಿಂದ, ಬೆಂಕಿಯ ಜ್ವಾಲೆಯು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಬೆಂಕಿಗೆ ಹಾಕಲು ಎತ್ತಿದ ಆ ಸೈನಿಕರನ್ನೇ ಸಂಹರಿಸಿತು.
DAN 3:23 ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಿನೊಂದಿಗೆ ಧಗಧಗನೆ ಉರಿಯುವ ಬೆಂಕಿಯ ಕುಲುಮೆಯ ನಡುವೆ ಬಿದ್ದರು.
DAN 3:24 ಆಗ ಅರಸನಾದ ನೆಬೂಕದ್ನೆಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು, ತನ್ನ ಆಲೋಚನಾಗಾರರ ಸಂಗಡ ಮಾತನಾಡಿ, “ನಾವು ಮೂವರು ಮನುಷ್ಯರನ್ನು ಕಟ್ಟಿ, ಬೆಂಕಿಯಲ್ಲಿ ಹಾಕಿದೆವಲ್ಲವೇ?” ಎಂದನು. ಆಗ ಅವರು ಅರಸನಿಗೆ, “ಅರಸನೇ, ಹೌದು ಸತ್ಯ,” ಎಂದು ಉತ್ತರಿಸಿದರು.
DAN 3:25 ಅರಸನು ಅವರಿಗೆ ಉತ್ತರವಾಗಿ, “ಇಗೋ, ಕಟ್ಟಿಲ್ಲದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿರುವುದನ್ನು ನೋಡುತ್ತೇನೆ. ಅವರಿಗೆ ಯಾವ ಹಾನಿಯೂ ಇಲ್ಲ. ಅಲ್ಲದೆ ನಾಲ್ಕನೆಯವರ ರೂಪವು ದೇವಪುತ್ರನ ಹಾಗಿದೆ,” ಎಂದು ಹೇಳಿದನು.
DAN 3:26 ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಕುಲುಮೆಯ ಬಾಯಿಯ ಸಮೀಪಕ್ಕೆ ಬಂದು, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ,” ಎಂದನು. ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
DAN 3:27 ಆಗ ಉಪರಾಜರು, ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು, ಎಲ್ಲರೂ ಒಟ್ಟುಗೂಡಿ ಅವರನ್ನು ಸುತ್ತುವರಿದು, ಅವರ ಶರೀರದ ಮೇಲೆ ಬೆಂಕಿಯಿಂದ ಯಾವ ಅಪಾಯವಾಗಿರದೇ ಇರುವುದನ್ನೂ, ಅವರ ತಲೆಗೂದಲುಗಳಲ್ಲಿ ಒಂದಾದರೂ ಸುಡದಿರುವುದನ್ನೂ, ಅವರ ಅಂಗಿಗಳು ನಾಶವಾಗದಿರುವುದನ್ನೂ, ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವುದನ್ನೂ ಕಂಡರು.
DAN 3:28 ನೆಬೂಕದ್ನೆಚ್ಚರನು ಮಾತನಾಡಿ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ದೂತನನ್ನು ಕಳುಹಿಸಿ, ತಮ್ಮ ಸೇವಕರನ್ನು ರಕ್ಷಿಸಿದ್ದಾರೆ. ಅವರು ದೇವರಲ್ಲಿ ನಂಬಿಕೆ ಇಟ್ಟರು. ಅರಸನ ಆಜ್ಞೆಯನ್ನು ಮೀರಿದರು. ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ, ಆರಾಧಿಸದೆ ಇರುವ ಹಾಗೆ ತಮ್ಮ ಪ್ರಾಣಗಳನ್ನು ಕೊಡಲೂ ಸಿದ್ಧರಾದರು.
DAN 3:29 ಆದ್ದರಿಂದ ಸಕಲ ಪ್ರಜೆ, ಜನಾಂಗ, ಭಾಷೆಗಳಲ್ಲಿ ಯಾರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ವಿರೋಧವಾಗಿ ದೂಷಣೆ ಮಾಡುವರೋ, ಅವರನ್ನು ತುಂಡುತುಂಡಾಗಿ ಮಾಡಿರಿ, ಅವರ ಮನೆಗಳು ತಿಪ್ಪೆ ಗುಂಡಿಗಳಾಗಿ ಮಾಡಿರಿ, ಎಂದು ನಾನು ರಾಜಾಜ್ಞೆಯನ್ನು ವಿಧಿಸುತ್ತೇನೆ. ಏಕೆಂದರೆ ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರೂ ಇರುವುದಿಲ್ಲ,” ಎಂದನು.
DAN 3:30 ಆಗ ಅರಸನು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರನ್ನು ಬಾಬಿಲೋನ್ ಪ್ರಾಂತದಲ್ಲಿ ಉನ್ನತ ಪದವಿಗೆ ತಂದನು.
DAN 4:1 ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ, ಜನಾಂಗಗಳಿಗೂ, ಭಾಷೆಯವರಿಗೂ, ನಿಮಗೆ ಶಾಂತಿಯು ಹೆಚ್ಚಾಗಲಿ.
DAN 4:2 ಮಹೋನ್ನತ ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂದು ನನಗೆ ವಿಹಿತವಾಗಿ ತೋರಿ ಬಂದಿದೆ.
DAN 4:3 ಅವರ ಸೂಚಕಕಾರ್ಯಗಳು ಎಷ್ಟೋ ದೊಡ್ಡವುಗಳು!
DAN 4:4 ನೆಬೂಕದ್ನೆಚ್ಚರನು ಎಂಬ ನಾನು ನನ್ನ ಅರಮನೆಯಲ್ಲಿ ಸಂತೃಪ್ತನಾಗಿದ್ದೆ ಮತ್ತು ಸಮೃದ್ಧನಾಗಿದ್ದೆ.
DAN 4:5 ನನ್ನನ್ನು ಭಯಪಡಿಸುವಂಥಹ ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಮಲಗಿದ್ದಾಗ, ನನ್ನ ಮನಸ್ಸಿನಲ್ಲಿ ಹಾದುಹೋದ ಚಿತ್ರಗಳು ಮತ್ತು ದರ್ಶನಗಳು ನನ್ನನ್ನು ಭಯಭೀತಗೊಳಿಸಿದವು.
DAN 4:6 ಆದ್ದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವುದಕ್ಕೋಸ್ಕರ ಬಾಬಿಲೋನಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.
DAN 4:7 ಆಗ ಮಂತ್ರಗಾರರು, ಜೋತಿಷ್ಯರು, ಪಂಡಿತರು, ಶಕುನಗಾರರು ಒಳಗೆ ಬಂದರು. ನಾನು ಕನಸನ್ನು ಅವರಿಗೆ ತಿಳಿಸಿದೆನು. ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.
DAN 4:8 ಕೊನೆಗೆ ದಾನಿಯೇಲನು ನನ್ನ ಬಳಿಗೆ ಬಂದನು. ಅವನು ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರ್ ಎಂಬ ಅಡ್ಡಹೆಸರನ್ನು ಹೊಂದಿದ್ದನು. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿತ್ತು. ಅವನಿಗೆ ನನ್ನ ಕನಸನ್ನು ಹೀಗೆ ತಿಳಿಸಿದೆ.
DAN 4:9 “ಮಂತ್ರಗಾರರಲ್ಲಿ ಪ್ರಾಮುಖ್ಯನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರುಗಳ ಆತ್ಮವಿರುವುದೆಂದು ನಾನು ಬಲ್ಲೆನು. ಯಾವುದೇ ರಹಸ್ಯವು ನಿನಗೆ ಅಸಾಧ್ಯವಾದದ್ದಲ್ಲ. ಆದ್ದರಿಂದ ನಾನು ಕಂಡ ಕನಸಿನ ದರ್ಶನ, ಅದರ ಅರ್ಥವನ್ನೂ ನೀನು ನನಗೆ ಹೇಳು.
DAN 4:10 ಹಾಸಿಗೆಯಲ್ಲಿ ಮಲಗಿದ್ದಾಗ ನಾನು ಕಂಡ ದರ್ಶನಗಳು: ನಾನು ನೋಡಲಾಗಿ ಭೂಮಿಯ ಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.
DAN 4:11 ಆ ಮರವು ವಿಶಾಲವಾಗಿಯೂ, ಬಲವಾಗಿಯೂ ಬೆಳೆಯಿತು ಹಾಗೂ ಅದು ಆಕಾಶವನ್ನು ಮುಟ್ಟುತ್ತಿತ್ತು. ಭೂಲೋಕದ ಕಟ್ಟಕಡೆಯವರೆಗೆ ಅದು ಕಾಣಿಸುತ್ತಿತ್ತು.
DAN 4:12 ಅದರ ಎಲೆಗಳು ಅಂದವಾಗಿದ್ದವು. ಅದರ ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರವಿತ್ತು. ಕಾಡುಮೃಗಗಳಿಗೆ ಅದರ ಕೆಳಗೆ ನೆರಳಲ್ಲಿ ಆಶ್ರಯ ದೊರಕುತ್ತಿತ್ತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು. ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ದೊರಕುತ್ತಿತ್ತು.
DAN 4:13 “ನನ್ನ ಹಾಸಿಗೆಯ ಮೇಲೆ ಮಲಗಿದ್ದಾಗ, ದರ್ಶನಗಳನ್ನು ನಾನು ನೋಡಲಾಗಿ, ಒಬ್ಬ ದೂತನಾದ ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು.
DAN 4:14 ಅವನು ಗಟ್ಟಿಯಾಗಿ ಕೂಗಿ: ‘ಮರವನ್ನು ಕಡಿಯಿರಿ. ಅದರ ಕೊಂಬೆಗಳನ್ನು ಕತ್ತರಿಸಿ, ಅದರ ಎಲೆಗಳನ್ನು ಉದುರಿಸಿ, ಅದರ ಫಲವನ್ನು ಚದುರಿಸಿಬಿಡಿರಿ. ಮೃಗಗಳು ಅದರ ಕೆಳಗಿನಿಂದಲೂ, ಪಕ್ಷಿಗಳು ಅದರ ಕೊಂಬೆಗಳಿಂದಲೂ ಹೋಗಿಬಿಡಲಿ.
DAN 4:15 ಆದರೆ ಅದರ ಬುಡವೂ, ಬೇರೂ, ಕಬ್ಬಿಣ, ಕಂಚಿನ ಕಟ್ಟುಳ್ಳದ್ದಾಗಿ ನೆಲದಲ್ಲಿ ಹೊಲದ ಹುಲ್ಲಿನಲ್ಲಿ ಇರಲಿ. “ ‘ಅವನು ಆಕಾಶದ ಮಂಜಿನಿಂದ ತೇವವಾಗಲಿ, ಭೂಮಿಯ ಗಿಡಗಳ ಮಧ್ಯದಲ್ಲಿರುವ ಮೃಗಗಳೊಂದಿಗೆ ಅವನು ವಾಸಿಸಲಿ.
DAN 4:16 ಅವನಿಗೆ ಏಳು ವರ್ಷಕಾಲ, ಮನುಷ್ಯ ಹೃದಯ ಹೋಗಿ ಮೃಗದ ಹೃದಯ ಬರಲಿ.
DAN 4:17 “ ‘ಈ ತೀರ್ಮಾನವು ದೂತರಿಂದ ಪ್ರಕಟವಾಯಿತು, ಪರಿಶುದ್ಧರು ಅಂತಿಮ ನಿರ್ಣಯವನ್ನು ಘೋಷಿಸುವರು, ಮಹೋನ್ನತರು ಜನರ ರಾಜ್ಯಗಳ ಮೇಲೆ ಸರ್ವಾಧಿಕಾರಿಯಾಗಿರುವರೆಂದೂ, ರಾಜ್ಯಗಳನ್ನು ತಮ್ಮ ಮನಸ್ಸಿಗೆ ಬಂದವರಿಗೆ ಕೊಡುವರೆಂದೂ, ಅವುಗಳ ಮೇಲೆ ಕೀಳಾದವರನ್ನು ನೇಮಿಸುವರೆಂದೂ ಇದರಿಂದ ಜೀವಿತರು ತಿಳಿದುಕೊಳ್ಳುವರು.’
DAN 4:18 “ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೇಲ್ತೆಶಚ್ಚರನೆಂಬ ನೀನು ಅದರ ಅರ್ಥವನ್ನು ಹೇಳು. ಏಕೆಂದರೆ ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿಶುದ್ಧ ದೇವರುಗಳ ಆತ್ಮವು ಇರುವುದರಿಂದ ನೀನು ಹೇಳಲು ಶಕ್ತನು,” ಎಂದನು.
DAN 4:19 ಆಗ ಬೇಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ, “ಬೇಲ್ತೆಶಚ್ಚರನೇ, ಕನಸಾದರೂ, ಅದರ ಅರ್ಥವಾದರೂ ನಿನ್ನನ್ನು ಕಳವಳಪಡಿಸದಿರಲಿ,” ಎಂದನು. ಬೇಲ್ತೆಶಚ್ಚರನು ಉತ್ತರವಾಗಿ, “ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ, ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.
DAN 4:20 ನೀನು ಕಂಡ ಮರವು ಬೆಳೆದು, ಬಲಗೊಂಡು ಆಕಾಶದ ತುದಿಯನ್ನು ಮುಟ್ಟಿ, ಇಡೀ ಭೂಮಿಗೆ ಗೋಚರಿಸುತ್ತಿತ್ತು.
DAN 4:21 ಅದರ ಎಲೆಗಳು ಅಂದವಾಗಿದ್ದು, ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರ ಇತ್ತು. ಅದರ ಕೆಳಗೆ ಕಾಡುಮೃಗಗಳು ವಾಸಮಾಡಿದ್ದವು. ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸ ಮಾಡಿದ್ದವು.
DAN 4:22 ಅರಸನೇ, ಆ ಮರವು ನೀನೇ ಆಗಿರುವೆ. ನೀನು ಬೆಳೆದು ಬಲವಾಗಿರುವೆ. ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ, ನಿನ್ನ ಅಧಿಕಾರವು ಭೂಮಿಯ ಅಂತ್ಯದವರೆಗೂ ಮುಟ್ಟುವುದು.
DAN 4:23 “ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದುಬಂದು, ‘ಮರವನ್ನು ಕಡಿದು ನಾಶಮಾಡಿರಿ. ಆದರೆ ಅದರ ಬೇರಿನ ಮೋಟನ್ನು ನೆಲದಲ್ಲಿ ಉಳಿಸಿ, ಮೋಟನ್ನು ಕಬ್ಬಿಣ ಮತ್ತು ಕಂಚುಗಳಿಂದ ಕಟ್ಟಿ, ಬಯಲಿನ ಎಳೆಯ ಹುಲ್ಲಿನಲ್ಲಿಯೂ, ಬೇರುಗಳನ್ನು ಭೂಮಿಯಲ್ಲಿಯೂ ಬಿಡಿರಿ. ಅವನು ಆಕಾಶದ ಮಂಜಿನಿಂದ ತೇವವಾಗಲಿ. ಏಳು ಕಾಲಗಳು ಕಳೆಯುವ ತನಕ ಅವನು ಕಾಡುಮೃಗಗಳ ಹಾಗೆ ಜೀವಿಸಲಿ, ಎಂದು ಸಾರುವುದನ್ನು ಅರಸನಾದ ನೀನು ನೋಡಿದೆಯಲ್ಲಾ.’
DAN 4:24 “ಅರಸನೇ, ಇದರ ವ್ಯಾಖ್ಯಾನವು ಏನೆಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ:
DAN 4:25 ನಿನ್ನನ್ನು ಮನುಷ್ಯರೊಳಗಿಂದ ಬಹಿಷ್ಕರಿಸಿ ಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವುದು. ಪಶುಗಳಂತೆ ನೀನು ಹುಲ್ಲನ್ನು ತಿನ್ನುವೆ. ಆಕಾಶದ ಮಂಜಿನಿಂದ ನಿನ್ನನ್ನು ತೋಯಿಸುವುದು. ಮಹೋನ್ನತರು ಮನುಷ್ಯರ ರಾಜ್ಯವನ್ನು ಆಳುವರೆಂದೂ, ತಮಗೆ ಬೇಕಾದವರಿಗೆ ಅದನ್ನು ಕೊಡುತ್ತಾರೆಂದೂ ನೀನು ತಿಳಿಯುವವರೆಗೂ, ಆ ಏಳು ಕಾಲಗಳು ಕಳೆದುಹೋಗುವುವು.
DAN 4:26 ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂಬ ಆಜ್ಞೆಯ ಅರ್ಥ ಏನೆಂದರೆ, ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಪುನಃಸ್ಥಾಪನೆಯಾಗುವುದು.
DAN 4:27 ಆದ್ದರಿಂದ ಅರಸನೇ, ನನ್ನ ಆಲೋಚನೆಯು ನಿನಗೆ ಸರಿಯಾದದ್ದಾಗಿರಲಿ. ಸರಿಯಾದದ್ದನ್ನು ಮಾಡುವುದರಿಂದ ನಿನ್ನ ಪಾಪಗಳನ್ನು ಬಿಟ್ಟುಬಿಡು. ದಬ್ಬಾಳಿಕೆಯಾದವರಿಗೆ ದಯೆ ತೋರುವುದರಿಂದ ನಿನ್ನ ದುಷ್ಟತ್ವವನ್ನು ಬಿಟ್ಟುಬಿಡು. ಹೀಗಾದರೆ ಒಂದು ವೇಳೆ ನಿನ್ನ ಸಮೃದ್ಧಿ ಮುಂದುವರಿಯುವುದು.”
DAN 4:28 ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭವಿಸಿತು.
DAN 4:29 ಹನ್ನೆರಡು ತಿಂಗಳಾದ ಮೇಲೆ ಅರಸನು ಬಾಬಿಲೋನಿನ ರಾಜ್ಯದ ಅರಮನೆಯ ಮೇಲ್ಗಡೆ ತಿರುಗಾಡಿದನು.
DAN 4:30 ಆಗ ಅರಸನು, “ನಾನು ನನ್ನ ಪರಾಕ್ರಮದ ಬಲದಿಂದಲೂ, ನನ್ನ ಮಹಿಮೆಯ ಕೀರ್ತಿಗಾಗಿಯೂ ಕಟ್ಟಿಸಿದ ಮಹಾ ಬಾಬಿಲೋನು ಇದಲ್ಲವೇ?” ಎಂದನು.
DAN 4:31 ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಧ್ವನಿ ಉಂಟಾಯಿತು: “ಅರಸನಾದ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ದೈವೋಕ್ತಿ ಏನೆಂದರೆ: ನಿನ್ನ ರಾಜ್ಯವು ನಿನ್ನಿಂದ ತೆಗೆಯಲಾಗುವುದು.
DAN 4:32 ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ನೀನು ದನಗಳ ಹಾಗೆ ಹುಲ್ಲನ್ನು ಮೇಯುವೆ. ಮಹೋನ್ನತರು ಮನುಷ್ಯರ ರಾಜ್ಯವನ್ನಾಳುವರೆಂದು ತಮ್ಮ ಮನಸ್ಸಿಗೆ ಸರಿ ಬಂದವರಿಗೆ ಅದನ್ನು ಕೊಡುವೆರೆಂದು ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವುವು,” ಎಂಬುದೇ.
DAN 4:33 ಆ ನುಡಿ ಕೂಡಲೆ ನೆರವೇರಿತು. ನೆಬೂಕದ್ನೆಚ್ಚರನು ಸಮಾಜದಿಂದ ಬಹಿಷ್ಕೃತನಾದನು. ದನಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ, ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೆ ಬೆಳೆಯುವವರೆಗೆ ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು.
DAN 4:34 ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು.
DAN 4:35 ದೇವರ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರೂ
DAN 4:36 ಇದೇ ಸಮಯದಲ್ಲಿ ನನ್ನ ಬುದ್ಧಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ, ನನ್ನ ತೇಜಸ್ಸೂ ತಿರುಗಿ ಬಂದವು. ನನ್ನ ಆಲೋಚನಾಗಾರರೂ, ನನ್ನ ಪ್ರಭುಗಳೂ ನನ್ನನ್ನು ಹುಡುಕಿ ಬಂದರು. ನಾನು ನನ್ನ ರಾಜ್ಯದಲ್ಲಿ ಪುನಃ ನೆಲೆಗೊಂಡೆನು. ಮೊದಲಿಗಿಂತಲೂ ನನಗೆ ಹೆಚ್ಚಿನ ಪ್ರತಿಭೆ ದೊರೆಯಿತು.
DAN 4:37 ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸರನ್ನು ಸ್ತುತಿಸಿ, ಹೆಚ್ಚಿಸಿ ಘನಪಡಿಸುತ್ತೇನೆ. ಅವರ ಕ್ರಿಯೆಗಳೆಲ್ಲಾ ಸತ್ಯವೇ. ಅವರ ಮಾರ್ಗಗಳು ನ್ಯಾಯವೇ. ಗರ್ವದಲ್ಲಿ ನಡೆಯುವವರನ್ನು ಅವರೇ ತಗ್ಗಿಸಬಲ್ಲರು.
DAN 5:1 ಅರಸನಾದ ಬೇಲ್ಯಚ್ಚರನು ತನ್ನ ಪ್ರಧಾನರಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಅವರೊಂದಿಗೆ ಅವನು ದ್ರಾಕ್ಷಾರಸವನ್ನು ಕುಡಿದನು.
DAN 5:2 ಬೇಲ್ಯಚ್ಚರನು ತನ್ನ ದ್ರಾಕ್ಷಾರಸವನ್ನು ಕುಡಿಯುತ್ತಿರುವಾಗ, ತನ್ನ ತಂದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದೊಳಗಿಂದ ತಂದ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನು ತಂದು, ಅದರಲ್ಲಿ ಅರಸನು ಮತ್ತು ಪ್ರಧಾನರು, ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವಂತೆ ಆಜ್ಞಾಪಿಸಿದನು.
DAN 5:3 ಆಗ ಅವರು ಯೆರೂಸಲೇಮಿನ ದೇವರ ಆಲಯದೊಳಗಿಂದ ತಂದಿದ್ದ ಬಂಗಾರದ ಪಾತ್ರೆಗಳನ್ನು ತಂದರು. ಅರಸನೂ ಅವರ ಪ್ರಧಾನರೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
DAN 5:4 ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದರು.
DAN 5:5 ಕೂಡಲೇ ಒಬ್ಬ ಮನುಷ್ಯನ ಕೈಬೆರಳುಗಳು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಬರೆಯಲಾರಂಭಿಸಿದವು. ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.
DAN 5:6 ಆಗ ಅರಸನ ಮುಖವು ಕಳೆಗುಂದಿತು. ಅವನು ತುಂಬಾ ಭಯಭೀತನಾದನು. ಅವನ ಸೊಂಟದ ಕೀಲುಗಳು ಸಡಿಲಗೊಂಡವು. ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
DAN 5:7 ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ, ಪಂಡಿತರನ್ನೂ, ಶಕುನ ಹೇಳುವವರನ್ನೂ ಕರೆಸಿ, ಬಾಬಿಲೋನಿನ ಜ್ಞಾನಿಗಳಿಗೆ, “ಯಾರು ಈ ಬರಹವನ್ನು ಓದಿ, ಅದರ ಅರ್ಥವನ್ನು ನನಗೆ ತಿಳಿಸುವರೋ, ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ರಾಜ್ಯದ ಮೂರನೆಯ ಅಧಿಕಾರಿಯಾಗಿ ಮಾಡುವೆನು,” ಎಂದು ಹೇಳಿದನು.
DAN 5:8 ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹವನ್ನು ಓದಲೂ, ಅದರ ಅರ್ಥವನ್ನು ಅರಸನಿಗೆ ತಿಳಿಸಲೂ ಅವರಿಗೆ ಆಗದೆ ಹೋಯಿತು.
DAN 5:9 ಆಗ ಅರಸನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು. ಅವನ ಮುಖವು ಕಳೆಗುಂದಿತು. ಅವನ ಪ್ರಧಾನರು ಭಯಗೊಂಡರು.
DAN 5:10 ಆಗ ಅರಸನ ಮತ್ತು ಅವನ ಪ್ರಧಾನರ ಮಾತುಗಳನ್ನು ಕೇಳಿ ರಾಣಿಯು ಔತಣದ ಮನೆಗೆ ಬಂದಳು. ಆಗ ಮಾತನಾಡಿ, “ಅರಸನೇ, ನಿರಂತರವಾಗಿ ಬಾಳು! ನಿನ್ನ ಆಲೋಚನೆಗಳು ನಿನ್ನನ್ನು ಕಳವಳಪಡಿಸದಿರಲಿ. ನಿನ್ನ ಮುಖವು ಕಳೆಗುಂದದಿರಲಿ!
DAN 5:11 ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ. ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿಯೂ, ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ, ಜ್ಯೋತಿಷ್ಯರಿಗೂ, ಪಂಡಿತರಿಗೂ, ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
DAN 5:12 ಏಕೆಂದರೆ ಬೇಲ್ತೆಶಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವುದಕ್ಕೂ, ಕಠಿಣವಾದ ಸಂಗತಿಗಳನ್ನು ತಿಳಿಸುವುದಕ್ಕೂ, ಒಗಟುಗಳನ್ನು ವಿವರಿಸುವುದಕ್ಕೂ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಉತ್ತಮ ಆತ್ಮವೂ, ಜ್ಞಾನವೂ, ವಿವೇಕವೂ ಸಿಕ್ಕಿದವು. ಈಗ ಆ ದಾನಿಯೇಲನನ್ನು ಕರೆಯಿಸಿದರೆ, ಅವನು ಈ ಬರಹದ ಅರ್ಥವನ್ನು ವಿವರಿಸುವನು,” ಎಂದಳು.
DAN 5:13 ಆಗ ದಾನಿಯೇಲನನ್ನು ಅರಸನ ಮುಂದೆ ತಂದರು. ಅರಸನು ದಾನಿಯೇಲನಿಗೆ, “ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ?
DAN 5:14 ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ, ಒಳನೋಟ, ಬುದ್ಧಿಯೂ, ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ.
DAN 5:15 ಈಗ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ಬಂದಿದ್ದಾರೆ. ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು.
DAN 5:16 ಈಗ ನೀನು ಅರ್ಥಗಳನ್ನು ವಿವರಿಸಿ, ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ. ಹೀಗಾದರೆ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ನಿನ್ನಿಂದ ಸಾಧ್ಯವಾದರೆ, ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದ ಮೂರನೆಯ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದು ಹೇಳಿದನು.
DAN 5:17 ಆಗ ದಾನಿಯೇಲನು ಅರಸನ ಮುಂದೆ, “ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳು ಮತ್ತೊಬ್ಬರಿಗೆ ದೊರಕಲಿ. ಆದರೂ ನಾನು ಅರಸನಿಗಾಗಿ ಬರಹವನ್ನು ಓದಿ, ಅದರ ಅರ್ಥವನ್ನು ಅರಸನಿಗೆ ತಿಳಿಸುವೆನು,” ಎಂದನು.
DAN 5:18 “ಅರಸನೇ, ಮಹೋನ್ನತರಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ಸಾರ್ವಭೌಮತ್ವವನ್ನೂ, ಮಹತ್ತನ್ನೂ, ಕೀರ್ತಿಯನ್ನೂ, ಘನವನ್ನೂ ಕೊಟ್ಟರು.
DAN 5:19 ಅವರು ಅವನಿಗೆ ಕೊಟ್ಟ ಮಹತ್ತಿನ ನಿಮಿತ್ತ ಸಕಲ ಪ್ರಜೆಗಳೂ, ಜನಾಂಗಗಳೂ, ಭಾಷೆಯವರೂ ಅವನ ಮುಂದೆ ಹೆದರಿ ನಡುಗಿದರು. ತನಗೆ ಬೇಕಾದವರನ್ನು ಬದುಕಿಸಿ ಬೇಡವಾದವರನ್ನು ಕೊಂದನು. ಇಷ್ಟವಿದ್ದವರನ್ನು ಸುಸ್ಥಿತಿಗೆ ಏರಿಸಿ, ಇಷ್ಟವಿಲ್ಲದವರನ್ನು ಕೆಳಕ್ಕಿಳಿಸಿದನು.
DAN 5:20 ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು.
DAN 5:21 ಅವನು ಮಾನವ ಸಮಾಜದಿಂದ ಬಹಿಷ್ಕೃತನಾದನು. ಮಹೋನ್ನತರಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾರೆಂದೂ, ಅವರು ತಮಗೆ ಬೇಕಾದವರನ್ನು ಅದಕ್ಕೆ ನೇಮಿಸುತ್ತಾರೆಂದೂ ತಿಳಿಯುವ ತನಕ ಅವನು ಮೃಗಬುದ್ಧಿಯುಳ್ಳವನಾಗಿದ್ದನು. ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು. ಅವನು ದನಗಳಂತೆ ಹುಲ್ಲನ್ನು ಮೇಯುತ್ತಿದ್ದನು. ಅವನ ಶರೀರ ಆಕಾಶದ ಮಂಜಿನಿಂದ ತೇವವಾಯಿತು.
DAN 5:22 “ಅವನ ಮಗ ಬೇಲ್ಯಚ್ಚರನೇ, ನೀನು ಇದನ್ನೆಲ್ಲಾ ತಿಳಿದುಕೊಂಡಿದ್ದರೂ ತಗ್ಗಿಸಿಕೊಳ್ಳದೆ
DAN 5:23 ಪರಲೋಕದ ಒಡೆಯನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ. ಅವರ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು. ಆಗ ನೀನು ನಿನ್ನ ಪ್ರಧಾನರು ಮತ್ತು ಪತ್ನಿಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು, ಬುದ್ಧಿ, ಕಣ್ಣು ಕಿವಿಗಳಿಲ್ಲದ ಬೆಳ್ಳಿಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿರಿ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನದಲ್ಲಿವೆಯೋ, ಆ ದೇವರನ್ನು ಘನಪಡಿಸಲೇ ಇಲ್ಲ.
DAN 5:24 ಅದಕ್ಕಾಗಿಯೇ ಆತನು ಕಳುಹಿಸಿದ ಕೈಯ ಭಾಗವು ಬಂದು ಆ ಬರಹವನ್ನು ಬರೆದಿದೆ.
DAN 5:25 “ಆ ಬರಹವು ಏನೆಂದರೆ: ಮೆನೇ ಮೆನೇ, ತೆಕೇಲ್, ಉಫರ್ಸಿನ್.
DAN 5:26 “ಇದರ ಅರ್ಥವು ಹೀಗಿದೆ: “ಮೆನೇ ಎಂದರೆ ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ.
DAN 5:27 “ತೆಕೇಲ್ ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನೀನು ಕೊರತೆಯುಳ್ಳವನಾಗಿ ಕಂಡುಬಂದಿರುವೆ.
DAN 5:28 “ಫರ್ಸಿನ್ ಎಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯರಿಗೂ, ಪಾರಸಿಯರಿಗೂ ಕೊಡಲಾಗಿದೆ,” ಎಂಬದಾಗಿ ಅರಿಕೆಮಾಡಿದನು.
DAN 5:29 ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ಇವನು ರಾಜ್ಯದ ಮೂರನೇ ಉನ್ನತ ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿದನು.
DAN 5:30 ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಹತನಾದನು.
DAN 5:31 ಮೇದ್ಯನಾದ ದಾರ್ಯಾವೆಷನು ತನ್ನ ಅರವತ್ತೆರಡು ವಯಸ್ಸಿನಲ್ಲಿ ರಾಜ್ಯವನ್ನು ವಶಪಡಿಸಿಕೊಂಡನು.
DAN 6:1 ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವುದಕ್ಕೋಸ್ಕರ ನೂರಿಪ್ಪತ್ತು ಮಂದಿ ಉಪರಾಜರನ್ನು ಆಯಾ ರಾಜ್ಯದ ಆಯಾ ಭಾಗಗಳ ಮೇಲೆ ಆಳಲು ಇರಿಸಿದನು.
DAN 6:2 ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವುದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ನಷ್ಟವಾಗದಂತೆ ಲೆಕ್ಕ ಒಪ್ಪಿಸಲಾಯಿತು. ಇವರಲ್ಲಿ ದಾನಿಯೇಲನು ಒಬ್ಬನಾಗಿದ್ದನು.
DAN 6:3 ಈ ದಾನಿಯೇಲನಲ್ಲಿ ಉತ್ತಮ ಯೋಗ್ಯತೆಗಳು ಇದ್ದುದರಿಂದ ಅವನು ಉಪರಾಜರಿಗಿಂತಲೂ, ದೇಶಾಧಿಪತಿಗಿಂತಲೂ ಶ್ರೇಷ್ಠನಾಗಿದ್ದನು. ಈ ಕಾರಣದಿಂದ ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಉದ್ದೇಶಿಸಿದ್ದನು.
DAN 6:4 ಹೀಗಿರಲು ಉಪರಾಜರೂ, ದೇಶಾಧಿಪತಿಗಳೂ ರಾಜ್ಯಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪು ಹೊರಿಸುವುದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ನಿರ್ಲಕ್ಷ್ಯತೆ ಇಲ್ಲದಿರುವುದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.
DAN 6:5 ಆಗ ಆ ಮನುಷ್ಯರು, “ಈ ದಾನಿಯೇಲನ ಮೇಲೆ ತಪ್ಪು ಹೊರಿಸಬೇಕಾದರೆ ಇವನ ದೇವರ ಹಾಗೂ ಧರ್ಮದ ಮೂಲಕವೇ ಹೊರತು ಇನ್ನಾವುದರಲ್ಲೂ ನಮಗೆ ಅವಕಾಶ ದೊರಕದು,” ಎಂದುಕೊಂಡರು.
DAN 6:6 ಆಗ ಉಪರಾಜರೂ, ದೇಶಾಧಿಪತಿಯೂ ಅರಸನ ಬಳಿಯಲ್ಲಿ ಕೂಡಿಬಂದು, “ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.
DAN 6:7 ರಾಜ್ಯದ ಎಲ್ಲಾ ದೇಶಾಧಿಪತಿಗಳೂ, ರಾಜ್ಯಪಾಲರೂ, ನಾಯಕರೂ, ಉಪರಾಜರೂ, ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನೆಂದರೆ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ಪ್ರಾರ್ಥನೆ ಮಾಡಿದ್ದಾದರೆ ಅಂಥವರು ಸಿಂಹಗಳ ಗವಿಗೆ ಹಾಕಲಾಗುವುದು ಎಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆಯನ್ನು ಕೊಡತಕ್ಕದ್ದು.
DAN 6:8 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಬದಲಾಗದ ಮೇದ್ಯರ ಮತ್ತು ಪಾರಸಿಯರ ನಿಯಮಗಳ ಪ್ರಕಾರ ಇದು ರದ್ದಾಗದಂತೆ ನಿರ್ಣಯವನ್ನು ರೂಪಿಸಿ, ಶಾಸನಕ್ಕೆ ರುಜುಹಾಕು,” ಎಂದು ವಿನಂತಿಸಿದರು.
DAN 6:9 ಆದಕಾರಣ ದಾರ್ಯಾವೆಷನು ಆ ಬರಹಕ್ಕೂ, ನಿರ್ಣಯಕ್ಕೂ ರುಜು ಹಾಕಿದನು.
DAN 6:10 ಶಾಸನಕ್ಕೆ ರುಜು ಹಾಕಿದ್ದಾಯಿತೆಂದು ದಾನಿಯೇಲನಿಗೆ ತಿಳಿದಾಗ, ಅವನು ತನ್ನ ಮನೆಗೆ ಹೋದನು. ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆದಿರಲು, ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ಸ್ತೋತ್ರವನ್ನೂ ಸಲ್ಲಿಸಿದನು.
DAN 6:11 ಆಮೇಲೆ ಆ ಮನುಷ್ಯರೆಲ್ಲಾ ಕೂಡಿಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಮಾಡುತ್ತಿರುವುದನ್ನು ಕಂಡರು.
DAN 6:12 ಅನಂತರ ಅವರು ಅರಸನ ಮುಂದೆ ಬಂದು ರಾಜಾಜ್ಞೆಯ ವಿಷಯವಾಗಿ: “ಅರಸನೇ ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡುವರೋ, ಅವರನ್ನು ಸಿಂಹದ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀನು ರುಜು ಹಾಕಲಿಲ್ಲವೇ?” ಎಂದರು. ಅದಕ್ಕೆ ಅರಸನು ಉತ್ತರವಾಗಿ, “ಮೇದ್ಯ, ಪಾರಸಿಯರ ಬದಲಾಗದಂಥ ಧರ್ಮವಿಧಿಗಳ ಪ್ರಕಾರ ಅದು ಸ್ಥಿರವಾದ ನಿಬಂಧನೆ” ಎಂದನು.
DAN 6:13 ಆಗ ಅವರು ಉತ್ತರವಾಗಿ ಅರಸನ ಮುಂದೆ, “ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ, ನೀನು ರುಜು ಹಾಕಿದ ನಿರ್ಣಯವನ್ನೂ ಲಕ್ಷಿಸದೆ, ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ,” ಎಂದರು.
DAN 6:14 ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ, ಆಗ ತನ್ನಲ್ಲಿಯೇ ಬಹಳವಾಗಿ ಬೇಸರಗೊಂಡು ದಾನಿಯೇಲನನ್ನು ಅದರಿಂದ ತಪ್ಪಿಸಬೇಕೆಂದು ತನ್ನ ಹೃದಯದಲ್ಲಿ ತಿಳಿದು, ಸೂರ್ಯಾಸ್ತಮಾನದವರೆಗೂ ಪ್ರಯತ್ನಪಟ್ಟನು.
DAN 6:15 ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿಬಂದು ಅರಸನಿಗೆ, “ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ, ಆಜ್ಞೆಯಾದರೂ ರದ್ದಾಗಬಾರದು ಎಂಬ ಮೇದ್ಯ ಮತ್ತು ಪಾರಸಿಯರ ನಿಯಮದಲ್ಲಿದೆ ಎಂದು ನಿನಗೆ ತಿಳಿದಿರಬೇಕು,” ಎಂದರು.
DAN 6:16 ಆಗ ರಾಜನು ಆಜ್ಞಾಪಿಸಲು, ಅವರು ದಾನಿಯೇಲನನ್ನು ತಂದು ಸಿಂಹದ ಗುಹೆಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ, “ನೀನು ಯಾವಾಗಲೂ ಸೇವಿಸುವ ನಿನ್ನ ದೇವರು ನಿನ್ನನ್ನು ಕಾಪಾಡಲಿ!” ಎಂದು ಹೇಳಿದನು.
DAN 6:17 ಗುಹೆಯ ಬಾಯಿಯನ್ನು ಬಂಡೆಯಿಂದ ಮುಚ್ಚಲಾಯಿತು. ಇದಲ್ಲದೆ ದಾನಿಯೇಲನ ಪರಿಸ್ಥಿತಿಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನೂ, ತನ್ನ ಪ್ರಧಾನರ ಮುದ್ರೆಯನ್ನೂ ಅದಕ್ಕೆ ಹಾಕಿದನು.
DAN 6:18 ಆಮೇಲೆ ಅರಸನು ತನ್ನ ಅರಮನೆಗೆ ಹಿಂದಿರುಗಿ, ಉಪವಾಸದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳನ್ನು ಅವನ ಮುಂದೆ ತರಲಿಲ್ಲ. ಅರಸನಿಗೆ ನಿದ್ರೆ ಬರಲಿಲ್ಲ.
DAN 6:19 ಮುಂಜಾನೆಗೆ ಮೊದಲೇ ಅರಸನು ಎದ್ದು, ತ್ವರೆಯಾಗಿ ಸಿಂಹಗಳ ಗವಿಯ ಬಳಿಗೆ ಹೋದನು.
DAN 6:20 ಅವನು ಗವಿಯ ಹತ್ತಿರ ಬಂದಾಗ, ದುಃಖದ ಧ್ವನಿಯಲ್ಲಿ ದಾನಿಯೇಲನನ್ನು ಕೂಗಿದನು. ಅರಸನು ಮಾತನಾಡಿ ದಾನಿಯೇಲನಿಗೆ, “ಜೀವಸ್ವರೂಪರಾದ ದೇವರ ಸೇವಕನಾದ ದಾನಿಯೇಲನೇ, ನೀನು ಯಾವಾಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಿ ಕಾಪಾಡಲು ಸಮರ್ಥರಾಗಿದ್ದಾರೆಯೇ?” ಎಂದು ಕೇಳಿದನು.
DAN 6:21 ಆಗ ದಾನಿಯೇಲನು ಅರಸನಿಗೆ, “ಅರಸನೇ, ನೀನು ನಿರಂತರವಾಗಿ ಬಾಳು.
DAN 6:22 ನನ್ನ ದೇವರು ತಮ್ಮ ದೂತನನ್ನು ಕಳುಹಿಸಿ, ನನಗೆ ಯಾವ ಹಾನಿಯೂ ಆಗದಂತೆ ಸಿಂಹಗಳ ಬಾಯಿಗಳನ್ನು ಮುಚ್ಚಿಹಾಕಿದ್ದಾರೆ. ಏಕೆಂದರೆ ಅವರ ಮುಂದೆ ನಾನು ಯಥಾರ್ಥನೆಂದು ಗೋಚರವಾಗಿದ್ದೇನೆ. ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ತಪ್ಪನ್ನು ಮಾಡಲಿಲ್ಲ,” ಎಂದು ಹೇಳಿದನು.
DAN 6:23 ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆಮಾಡಿದನು. ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಅವನು ದೃಢವಾದ ಭರವಸೆ ಇಟ್ಟಿದ್ದರಿಂದ ಯಾವ ಹಾನಿಯೂ ಆಗಿರಲಿಲ್ಲ.
DAN 6:24 ಆಗ ಅರಸನು ಆಜ್ಞಾಪಿಸಲಾಗಿ, ದಾನಿಯೇಲನ ಮೇಲೆ ತಪ್ಪು ಹೊರಿಸಿದ್ದ ಮನುಷ್ಯರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗುಹೆಯಲ್ಲಿ ಹಾಕಿದರು. ಅವರು ಗುಹೆಯ ತಳವನ್ನು ಮುಟ್ಟುವುದಕ್ಕೆ ಮೊದಲೇ ಸಿಂಹಗಳು ಅವರ ಮೇಲೆ ಹಾರಿ ಬಂದು, ಅವರ ಎಲುಬುಗಳನ್ನೆಲ್ಲಾ ತುಂಡುತುಂಡಾಗಿ ಮುರಿದುಹಾಕಿದವು.
DAN 6:25 ಆಗ ಅರಸನಾದ ದಾರ್ಯಾವೆಷನು ಭೂಲೋಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ, ಭಾಷೆಗಳವರೆಗೆ ಬರೆದದ್ದೇನೆಂದರೆ, “ನೀವು ಅಪಾರವಾಗಿ ಸಮೃದ್ಧಿಗೊಳ್ಳಿರಿ.
DAN 6:26 “ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯನು ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂಬ ನಿರ್ಣಯ ಹೊರಡಿಸಿದ್ದೇನೆ.
DAN 6:27 ಅವರೇ ಉದ್ಧರಿಸುವವರೂ ರಕ್ಷಿಸುವವರೂ ಆಗಿದ್ದು,
DAN 6:28 ಹೀಗೆ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ, ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಸಮೃದ್ಧವಾಗಿ ಬಾಳಿದನು.
DAN 7:1 ಬಾಬಿಲೋನಿನ ಅರಸನಾದ ಬೇಲ್ಯಚ್ಚರನ ಮೊದಲನೆಯ ವರ್ಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ಮಲಗಿದ್ದಾಗ ಕನಸನ್ನೂ, ದರ್ಶನಗಳನ್ನೂ ಕಂಡು, ತನ್ನ ಕನಸಿನ ತಾತ್ಪರ್ಯವನ್ನು ಬರೆದಿಟ್ಟನು.
DAN 7:2 ದಾನಿಯೇಲನು, “ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿಯು ಮಹಾಸಾಗರವನ್ನು ಕಲಕುತ್ತಿದ್ದವು.
DAN 7:3 ಒಂದಕ್ಕೊಂದು ಬೇರೆ ಬೇರೆ ರೂಪದ ನಾಲ್ಕು ದೊಡ್ಡ ಮೃಗಗಳು ಸಮುದ್ರದೊಳಗಿಂದ ಮೇಲೆ ಬಂದವು.
DAN 7:4 “ಮೊದಲನೆಯದು ಸಿಂಹದ ಹಾಗಿತ್ತು, ಆದರೆ ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ನಾನು ಗಮನಿಸಲು, ಅದರ ರೆಕ್ಕೆಗಳನ್ನು ಕಿತ್ತುಹಾಕಲಾಗಿ, ಅದು ನೆಲದಿಂದ ಎತ್ತರಕ್ಕೆ ಮನುಷ್ಯನಂತೆ ಕಾಲೂರಿ ನಿಂತಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲಾಯಿತು.
DAN 7:5 “ಇದಲ್ಲದೆ, ಎರಡನೆಯ ಮೃಗವು ಕರಡಿಯ ಹಾಗಿರುವಂಥದ್ದನ್ನು ಕಂಡೆನು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿದ್ದವು. ಅದಕ್ಕೆ, ‘ಎದ್ದೇಳು, ಹೆಚ್ಚು ಮಾಂಸವನ್ನು ತಿನ್ನು,’ ಎಂದು ಹೇಳಿದರು.
DAN 7:6 “ಇದಾದ ಮೇಲೆ ನಾನು ನೋಡಲಾಗಿ, ಚಿರತೆಯ ಹಾಗಿರುವ ಇನ್ನೊಂದು ಮೃಗವಿತ್ತು. ಇದರ ಬೆನ್ನಿನ ಮೇಲೆ ಪಕ್ಷಿಯ ರೆಕ್ಕೆಗಳು ನಾಲ್ಕು ಇವೆ. ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇವೆ. ಇದಕ್ಕೆ ಆಳುವ ಅಧಿಕಾರವು ಕೊಡಲಾಗಿತ್ತು.
DAN 7:7 “ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ, ನಾಲ್ಕನೆಯ ಮೃಗವು ಭಯಂಕರವೂ, ಘೋರವೂ, ಬಹು ಬಲವುಳ್ಳದ್ದೂ ಆಗಿತ್ತು. ಅದಕ್ಕೆ ದೊಡ್ಡ ಕಬ್ಬಿಣದ ಹಲ್ಲುಗಳು ಇವೆ. ಅದು ತಿಂದು ತುಂಡುತುಂಡು ಮಾಡಿ, ಮಿಕ್ಕದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದೂ, ಹತ್ತು ಕೊಂಬುಗಳುಳ್ಳದ್ದೂ ಆಗಿತ್ತು.
DAN 7:8 “ಆ ಕೊಂಬುಗಳ ಬಗ್ಗೆ ನಾನು ಆಲೋಚಿಸುತ್ತಿರುವಾಗ ಇಗೋ, ಮತ್ತೊಂದು ಚಿಕ್ಕ ಕೊಂಬು ಅವುಗಳಲ್ಲಿ ಎದ್ದು ಕಾಣುತ್ತಿದೆ. ಇದರ ಮುಂದೆ ಮೊದಲಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಈ ಕೊಂಬಿನಲ್ಲಿ ಮನುಷ್ಯರ ಕಣ್ಣುಗಳ ಹಾಗೆ ಕಣ್ಣುಗಳೂ, ಬಡಾಯಿ ಕೊಚ್ಚುವ ಬಾಯಿಯೂ ಇದ್ದವು.
DAN 7:9 “ನಾನು ನೋಡುತ್ತಿದ್ದ ಹಾಗೆಯೇ, “ಸಿಂಹಾಸನಗಳನ್ನು ಜೋಡಿಸಿದರು. ಅದರ ಮೇಲೆ ಪುರಾತನ ಮನುಷ್ಯನು ಕುಳಿತುಕೊಂಡನು. ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ, ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ, ಆತನ ಸಿಂಹಾಸನವು ಅಗ್ನಿ ಜ್ವಾಲೆಯಂತೆಯೂ, ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.
DAN 7:10 ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟುಬಂದು, ಸಹಸ್ರ ಸಹಸ್ರವಾಗಿ ಆತನಿಗೆ ಸೇವೆ ಮಾಡಿದವು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದವು. ನ್ಯಾಯ ಸಭೆಯು ಕುಳಿತಿತ್ತು ಮತ್ತು ಪುಸ್ತಕಗಳು ತೆರೆದಿದ್ದವು.
DAN 7:11 “ನಾನು ನೋಡುತ್ತಿರಲು, ಆ ಕೊಂಬು ಬಡಾಯಿಕೊಚ್ಚಿಕೊಂಡದ್ದರಿಂದ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.
DAN 7:12 ಮಿಕ್ಕ ಮೃಗಗಳನ್ನು ಅವುಗಳ ಅಧಿಕಾರದಿಂದ ಹೊರಹಾಕಲಾಯಿತು. ಆದರೆ ಕೆಲವು ಕಾಲದ ಮೇಲೆ ತಕ್ಕ ಸಮಯ ಬರುವವರೆಗೂ ಅವುಗಳ ಜೀವವನ್ನು ಉಳಿಸಿದರು.
DAN 7:13 “ನಾನು ಕಂಡ ರಾತ್ರಿಯ ದರ್ಶನದಲ್ಲಿ ಮನುಷ್ಯಪುತ್ರನಂತಿರುವವನು ಆಕಾಶದ ಮೇಘಗಳ ಸಂಗಡ ಪುರಾತನ ಮನುಷ್ಯನ ಬಳಿಗೆ ಸಮೀಪಿಸಿದನು. ಅವನನ್ನು ಆತನ ಬಳಿಗೆ ತಂದರು.
DAN 7:14 ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು, ಮಹತ್ವವು, ರಾಜ್ಯವು ಇವುಗಳನ್ನು ಕೊಡಲಾಯಿತು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂಥ ರಾಜ್ಯವಾಗಿದೆ.
DAN 7:15 “ದಾನಿಯೇಲನೆಂಬ ನಾನು ನನ್ನ ಆತ್ಮದಲ್ಲಿ ನೊಂದುಕೊಂಡೆನು. ನನ್ನ ಮನಸ್ಸಿನಲ್ಲಿ ಹಾದುಹೋದ ದರ್ಶನಗಳ ನಿಮಿತ್ತ ಕಳವಳಗೊಂಡೆನು.
DAN 7:16 ನಾನು ಹತ್ತಿರ ನಿಂತವರಲ್ಲಿ ಒಬ್ಬನ ಬಳಿಗೆ ಬಂದು ಇವೆಲ್ಲವುಗಳ ಸತ್ಯಾರ್ಥವನ್ನು ಕೇಳಿದೆನು. “ಆಗ ಅವನು ಅದನ್ನು ನನಗೆ ಹೇಳಿ ಇವುಗಳ ಅರ್ಥವನ್ನು ನನಗೆ ತಿಳಿಸಿದನು.
DAN 7:17 ‘ಈ ದೊಡ್ಡ ಮೃಗಗಳು ಭೂಮಿಯಿಂದ ಹುಟ್ಟುವ ನಾಲ್ಕು ಅರಸರು.
DAN 7:18 ಆದರೆ ಆ ಮಹೋನ್ನತನ ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಂಡು, ಅದನ್ನು ಎಂದಿಗೂ ಎಂದೆಂದಿಗೂ ವಶಪಡಿಸಿಕೊಳ್ಳುವರು.’
DAN 7:19 “ಆಮೇಲೆ ನಾಲ್ಕನೆಯ ಮೃಗವು ಎಲ್ಲದರಲ್ಲಿ ವ್ಯತ್ಯಾಸವಾಗಿಯೂ, ಅತಿ ಭಯಂಕರವಾಗಿಯೂ, ಕಬ್ಬಿಣದ ಹಲ್ಲುಗಳುಳ್ಳದ್ದಾಗಿಯೂ, ಕಂಚಿನ ಉಗುರುಗಳುಳ್ಳದ್ದಾಗಿಯೂ ತುಂಡುತುಂಡು ಮಾಡಿ, ತಿಂದು ಮಿಕ್ಕಿದ್ದನ್ನು ಕಾಲಿನ ಕೆಳಗೆ ಹಾಕಿ ತುಳಿಯುವಂಥದ್ದೂ ಆಗಿದೆ.
DAN 7:20 ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ, ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲಿಯೇ ಕಣ್ಣುಳ್ಳದ್ದಾಗಿ ಬಡಾಯಿ ಮಾತನಾಡಿದ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇದ್ದ ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನು ತಿಳಿಯಬೇಕೆಂದಿದ್ದೇನೆ.
DAN 7:21 ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧ ಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು.
DAN 7:22 ಪುರಾತನ ಮನುಷ್ಯನು ಬಂದು ಮಹೋನ್ನತನ ಪರಿಶುದ್ಧರಿಗೆ ನ್ಯಾಯತೀರ್ಪು ಕೊಡುವವರೆಗೂ, ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಳ್ಳುವ ಕಾಲದವರೆಗೂ ಅವರ ಮೇಲೆ ಜಯವನ್ನು ಹೊಂದಿತು.
DAN 7:23 “ಆಗ ಅವನು ನನಗೆ: ‘ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗುವುದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ, ಭೂಮಿಯನ್ನೆಲ್ಲಾ ತುಳಿದು ತುಂಡುತುಂಡು ಮಾಡುವಂಥಾದ್ದಾಗಿಯೂ ಇರುವುದು.
DAN 7:24 ಆ ಹತ್ತು ಕೊಂಬುಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸರು. ಅನಂತರ ಇನ್ನೊಬ್ಬ ಅರಸನು ಹುಟ್ಟುವನು. ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.
DAN 7:25 ಅವನು ಮಹೋನ್ನತ ದೇವರಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ, ಪರಿಶುದ್ಧರನ್ನು ಬಾಧಿಸಿ, ಕಾಲ ನಿಯಮಗಳನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸುವನು. ಪರಿಶುದ್ಧರು ಒಂದುಕಾಲ, ಎರಡುಕಾಲ, ಅರ್ಧಕಾಲದ ತನಕ ಅವರು ಅವನ ಕೈವಶವಾಗಿರುವರು.
DAN 7:26 “ ‘ಆದರೆ ನ್ಯಾಯ ಸಭೆಯು ಕುಳಿತು ಅವನ ಅಧಿಕಾರವನ್ನು ತೆಗೆದುಹಾಕಿ, ಕೊನೆಯವರೆಗೂ ಅದನ್ನು ಸಂಹರಿಸಿ ನಾಶಪಡಿಸುವುದು.
DAN 7:27 ರಾಜ್ಯವೂ, ದೊರೆತನವೂ, ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತೂ ಮಹೋನ್ನತನ ಪರಿಶುದ್ಧವಾದ ಜನರಿಗೆ ದೊರಕುವುದು. ಆತನ ರಾಜ್ಯವು ನಿತ್ಯವಾದ ರಾಜ್ಯ. ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವುವು ಮತ್ತು ವಿಧೇಯವಾಗಿರುವುವು.’
DAN 7:28 “ಇಷ್ಟರಲ್ಲಿ ಇದರ ಪ್ರಸ್ತಾಪವು ಮುಗಿಯಿತು. ದಾನಿಯೇಲನೆಂಬ ನನಗೆ ನನ್ನ ಆಲೋಚನೆಗಳು ಬಹಳವಾಗಿ ಕಳವಳಪಡಿಸಿದವು. ನನ್ನ ಮುಖವು ಕಳೆಗುಂದಿತು. ಆದರೂ ಈ ಸಂಗತಿಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡೆನು.”
DAN 8:1 ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿಯೂ, ಮೊದಲಿನ ದರ್ಶನದಂಥ ಇನ್ನೊಂದು ದರ್ಶನವೂ ದಾನಿಯೇಲನಾದ ನನಗೆ ಕಾಣಿಸಿತು.
DAN 8:2 ಈ ದರ್ಶನದಲ್ಲಿ ನಾನು ನೋಡಿದ್ದೇನೆಂದರೆ: ನಾನು ಏಲಾಮ್ ಸೀಮೆಯಲ್ಲಿರುವ ಶೂಷನಿನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ನಾನು ಊಲಾ ನದಿಯ ದಡದ ಬಳಿಯಲ್ಲಿ ನಿಂತಿರುವ ಹಾಗೆ ತೋರಿತು.
DAN 8:3 ಆಗ ನಾನು ಕಣ್ಣೆತ್ತಿ ನೋಡಿದಾಗ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ, ಇನ್ನೊಂದಕ್ಕಿಂತ ಒಂದು ಉದ್ದವಾಗಿದ್ದವು. ಆ ದೊಡ್ಡ ಕೊಂಬು ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.
DAN 8:4 ಆ ಟಗರು ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ ಕಾದಾಡುತ್ತಿರುವುದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವುದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವುದಕ್ಕೂ ಸಾಧ್ಯವಾಗುವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ, ತನ್ನನ್ನು ಹೆಚ್ಚಿಸಿಕೊಂಡಿತು.
DAN 8:5 ನಾನು ಇದರ ಬಗ್ಗೆ ಆಲೋಚಿಸಲಾಗಿ ಕೂಡಲೆ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದೆ ಭೂಮಂಡಲವನ್ನೆಲ್ಲಾ ದಾಟಿಕೊಂಡು ಬಂದಿತು. ಆ ಹೋತಕ್ಕೆ ಕಣ್ಣುಗಳ ಮಧ್ಯೆ ವಿಶೇಷವಾದ ಕೊಂಬು ಇತ್ತು.
DAN 8:6 ನಾನು ನದಿಯ ಹತ್ತಿರ ಕಂಡ ಆ ಎರಡು ಕೊಂಬಿನ ಟಗರಿನ ಬಳಿಗೆ ಬಂದು ಪರಾಕ್ರಮದಿಂದ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು.
DAN 8:7 ಅದು ಟಗರಿನ ಹತ್ತಿರ ಬರುವುದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು, ಅದರ ಎರಡು ಕೊಂಬುಗಳನ್ನು ಮುರಿದು ಬಿಟ್ಟಿತು. ಅದರ ಮುಂದೆ ನಿಲ್ಲುವುದಕ್ಕೆ ಟಗರಿಗೆ ಏನೂ ಶಕ್ತಿಯಿರಲಿಲ್ಲ. ಆದರೆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಹೋತದ ಹಿಡಿತದಿಂದ ಬಿಡಿಸುವವರು ಯಾರೂ ಇರಲಿಲ್ಲ.
DAN 8:8 ಆದ್ದರಿಂದ ಆ ಹೋತವು ಬಹಳವಾಗಿ ಬಲಗೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದುಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು, ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.
DAN 8:9 ಅವುಗಳ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ, ಪೂರ್ವದ ಕಡೆಗೂ, ರಮ್ಯ ದೇಶದ ಕಡೆಗೂ ಪ್ರಬಲವಾಯಿತು.
DAN 8:10 ಅದು ಆಕಾಶದ ಸೈನ್ಯದ ಎತ್ತರಕ್ಕೂ ಬೆಳೆದು, ಆ ಸೈನ್ಯದಲ್ಲಿಯೂ, ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ, ಅವುಗಳನ್ನು ತುಳಿದು ಹಾಕಿತು.
DAN 8:11 ಅದು ಯೆಹೋವ ದೇವರ ಸೈನ್ಯದ ಅಧಿಪತಿಗೆ ವಿರೋಧವಾಗಿ ಬಲಗೊಂಡು, ನಿತ್ಯ ಯಜ್ಞವನ್ನು ಯೆಹೋವ ದೇವರಿಗೆ ಸಲ್ಲದಂತೆ ಮಾಡಿ, ಅವನ ಪವಿತ್ರ ಸ್ಥಾನವನ್ನು ಕೆಡವಿ ಹಾಕಲಾಯಿತು.
DAN 8:12 ಪ್ರತಿದಿನ ಯಜ್ಞದ ಸಂಗಡ ಯೆಹೋವ ದೇವರ ಸೈನ್ಯವೂ ಸಹ ಅಪರಾಧದ ನಿಮಿತ್ತವಾಗಿ ಅದಕ್ಕೆ ಕೊಡಲಾಯಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ, ಇಷ್ಟಾರ್ಥವನ್ನು ಪೂರೈಸಿಕೊಂಡು ಅನುಕೂಲ ಪಡೆಯಿತು, ವೃದ್ಧಿಗೆ ಬಂದಿತು.
DAN 8:13 ಆಮೇಲೆ ಒಬ್ಬ ಪರಿಶುದ್ಧನು ಮಾತನಾಡುವುದನ್ನು ಕೇಳಿದೆನು. ಮಾತನಾಡಿದ ಆತನಿಗೆ ಮತ್ತೊಬ್ಬ ಪರಿಶುದ್ಧನು, “ನಿತ್ಯ ಯಜ್ಞವನ್ನು ನಿಲ್ಲಿಸುವುದೂ, ಹಾಳುಮಾಡುವ ಅಪರಾಧವನ್ನು ತಡೆಯುವುದೂ, ಪರಿಶುದ್ಧ ಸ್ಥಳವನ್ನೂ, ಯೆಹೋವ ದೇವರ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವ ಈ ದರ್ಶನ ನೆರವೇರಲು ಎಷ್ಟು ಕಾಲ ಬೇಕಾಗುವುದು?” ಎಂದು ಕೇಳಿದನು.
DAN 8:14 ಅವನು ನನಗೆ, “ಎರಡು ಸಾವಿರದ ಮುನ್ನೂರು ಸಾಯಂಕಾಲ ಹಾಗೂ ಪ್ರಾತಃಕಾಲದವರೆಗೂ ನಡೆಯುವುವು. ಅನಂತರ ಪರಿಶುದ್ಧ ಸ್ಥಳವು ಪುನಃ ನ್ಯಾಯಸ್ಥಾಪನೆಯಾಗುವುದು,” ಎಂದು ಹೇಳಿದನು.
DAN 8:15 ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ, ಅದರ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ, ಮನುಷ್ಯನ ರೂಪದಂತಿರುವ ಒಬ್ಬನು ನನ್ನ ಮುಂದೆ ನಿಂತಿದ್ದನು.
DAN 8:16 ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ, “ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು,” ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.
DAN 8:17 ಅದರಂತೆ ಅವನು ನನ್ನ ಬಳಿಗೆ ಬಂದನು. ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿ ಬಿದ್ದೆನು. ಆದರೆ ಅವನು ನನಗೆ, “ಮನುಷ್ಯಪುತ್ರನೇ, ಅಂತ್ಯಕಾಲದಲ್ಲಿ ನೆರವೇರುವ ದರ್ಶನವು ಎಂಬುದು ನಿನಗೆ ಮನದಟ್ಟಾಗಿರಲಿ,” ಎಂದನು.
DAN 8:18 ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ, ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢನಿದ್ರೆಯಲ್ಲಿ ಬಿದ್ದಿದ್ದೆನು. ಆದರೆ ಅವನು ನನ್ನನ್ನು ಮುಟ್ಟಿ, ಎದ್ದು ನಿಲ್ಲುವಂತೆ ಮಾಡಿದನು.
DAN 8:19 ಅವನು, “ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುತ್ತೇನೆ ಕೇಳು, ಆ ದರ್ಶನವು ನಿಯಮಿತ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು.
DAN 8:20 ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು, ಮೇದ್ಯ ಮತ್ತು ಪಾರಸಿಯ ರಾಜರು.
DAN 8:21 ಆ ಒರಟು ಹೋತವು ಗ್ರೀಕಿನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.
DAN 8:22 ಆ ಕೊಂಬು ಮುರಿದುಹೋದ ಮೇಲೆ, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದಂತೆಯೇ, ಆ ಜನಾಂಗದಿಂದ ನಾಲ್ಕು ರಾಜ್ಯಗಳು ಉದಯಿಸುವುವು. ಆದರೆ ಮೊದಲನೆಯ ಅರಸನಿಗೆ ಇದ್ದಷ್ಟು ಅಧಿಕಾರ ಅವರಿಗೆ ಇರುವುದಿಲ್ಲ.
DAN 8:23 “ಅವರ ರಾಜ್ಯದ ಕಡೆಯ ಕಾಲದಲ್ಲಿ ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ, ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.
DAN 8:24 ಅವನ ಶಕ್ತಿಯು ಬಲವಾಗಿರುವುದು. ಆದರೆ ಅದು ಸ್ವಂತ ಶಕ್ತಿಯಲ್ಲ. ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ಅಭಿವೃದ್ಧಿಯಾಗುವನು. ಅವನು ತನ್ನ ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲವಾದ, ಪರಿಶುದ್ಧ ಜನರನ್ನು ನಾಶಮಾಡುವನು.
DAN 8:25 ಅವನು ತನ್ನ ಶಕ್ತಿಯಿಂದಲೇ ತನ್ನ ಕಪಟತನವನ್ನು ಸಿದ್ಧಿಗೆ ತರುವನು. ಅವನು ಹೃದಯದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಸುರಕ್ಷಿತರಾಗಿದ್ದೇವೆಂದು ಹೇಳುವಾಗಲೇ ಅನೇಕರನ್ನು ನಾಶಮಾಡುವನು. ಅಲ್ಲದೆ ಅವನು ರಾಜಕುಮಾರರ ರಾಜಕುಮಾರನಿಗೆ ವಿರುದ್ಧವಾಗಿ ನಿಲ್ಲುವನು. ಆದರೂ ಮಾನವ ಶಕ್ತಿಯ ಬಳಕೆ ಇಲ್ಲದೆಯೂ ನಾಶವಾಗುವನು.
DAN 8:26 “ನಿಮಗೆ ನೀಡಲಾದ ಸಂಜೆ ಮತ್ತು ಮುಂಜಾನೆಗಳ ದರ್ಶನವು ಸತ್ಯವಾದದ್ದು. ಆದರೆ ಆ ದರ್ಶನವು ಗುಟ್ಟಾಗಿರಲಿ. ಏಕೆಂದರೆ ಅದು ಬಹು ದೂರದ ಭವಿಷ್ಯಕ್ಕೆ ಸಂಬಂಧಿಸಿದ್ದು.”
DAN 8:27 ದಾನಿಯೇಲನಾದ ನಾನು ಬಳಲಿ ಕೆಲವು ದಿನಗಳವರೆಗೂ ಅಸ್ವಸ್ಥನಾದೆನು. ಅನಂತರ ನಾನು ಎದ್ದು, ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು. ನಾನು ಆ ದರ್ಶನದ ಬಗ್ಗೆ ಬೆಚ್ಚಿಬೆರಗಾದೆನು. ಅದರ ಅರ್ಥವನ್ನೇ ಗ್ರಹಿಸಿಕೊಳ್ಳಲಾಗಲಿಲ್ಲ.
DAN 9:1 ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಆದ ದಾರ್ಯಾವೆಷನ ಆಳ್ವಿಕೆಯ ಪ್ರಥಮ ವರ್ಷದಲ್ಲಿ ಬಾಬಿಲೋನ್ ರಾಜ್ಯದ ಮೇಲೆ ಅಧಿಕಾರಿಯಾಗಿದ್ದಾಗ,
DAN 9:2 ದಾನಿಯೇಲನಾದ ನಾನು ಪವಿತ್ರ ಗ್ರಂಥಗಳನ್ನು ಪರೀಕ್ಷಿಸಿ, ಯೆಹೋವ ದೇವರ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ, ಯೆರೂಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣ ಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆನು.
DAN 9:3 ಆದ್ದರಿಂದ ನಾನು ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದುಕೊಂಡು, ಪ್ರಾರ್ಥನೆಗಳಿಂದ ಮತ್ತು ವಿಜ್ಞಾಪನೆಗಳಿಂದ ಕರ್ತರಾದ ದೇವರ ಕಡೆಗೆ ನನ್ನ ಮುಖವನ್ನು ತಿರುಗಿಸಿದೆನು.
DAN 9:4 ನಾನು ನನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥಿಸಿ, ಅರಿಕೆಮಾಡಿದೆನು: “ಕರ್ತನೇ, ಮಹೋನ್ನತ ಮತ್ತು ಅದ್ಭುತ ದೇವರೇ, ನಿಮ್ಮನ್ನು ಪ್ರೀತಿಮಾಡಿ, ನಿಮ್ಮ ಆಜ್ಞೆಗಳನ್ನು ಕೈಗೊಂಡು ನಡೆಯುವವರಿಗೆ ಒಡಂಬಡಿಕೆಯ ಪ್ರೀತಿಯನ್ನೂ ಇಟ್ಟು ನೆರವೇರಿಸುವವರೇ,
DAN 9:5 ನಾವು ಪಾಪಮಾಡಿದ್ದೇವೆ ಮತ್ತು ಅಕ್ರಮಗಳನ್ನು ಮಾಡಿದ್ದೇವೆ. ಕೆಟ್ಟವರಾಗಿ ನಡೆದಿದ್ದೇವೆ ಮತ್ತು ತಿರುಗಿಬಿದ್ದಿದ್ದೇವೆ. ನಿಮ್ಮ ಕಟ್ಟಳೆಗಳನ್ನು ಮತ್ತು ನ್ಯಾಯಗಳನ್ನು ತೊರೆದುಬಿಟ್ಟಿದ್ದೇವೆ.
DAN 9:6 ನಿಮ್ಮ ಹೆಸರಿನಲ್ಲಿ ನಮ್ಮ ಅರಸರಿಗೂ, ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ ದೇಶದ ಎಲ್ಲಾ ಜನರಿಗೂ ಮಾತನಾಡಿದ ನಿಮ್ಮ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡಲಿಲ್ಲ.
DAN 9:7 “ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ.
DAN 9:8 ಯೆಹೋವ ದೇವರೇ, ನಮ್ಮ ಅರಸರಿಗೂ ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ, ನಮಗೂ ನಾಚಿಕೆಯಾಗಿದೆ. ಏಕೆಂದರೆ ನಿಮಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ.
DAN 9:9 ನಾವು ಆತನಿಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದರೂ, ನಮ್ಮ ಕರ್ತದೇವರು ಕರುಣೆಯುಳ್ಳವರೂ ಕ್ಷಮಿಸುವವರೂ ಆಗಿದ್ದಾರೆ.
DAN 9:10 ನಾವು ನಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾಗಲಿಲ್ಲ, ಅವರು ತಮ್ಮ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ನೀಡಿದ ನಿಯಮಗಳನ್ನು ಪಾಲಿಸಲಿಲ್ಲ.
DAN 9:11 ಎಲ್ಲಾ ಇಸ್ರಾಯೇಲರು ನಿಮ್ಮ ನಿಯಮವನ್ನು ಮೀರಿ ನಿಮಗೆ ವಿಧೇಯರಾಗದೇ ತೊಲಗಿ ಹೋದರು. “ಆದ್ದರಿಂದ ಶಾಪವೂ, ದೇವರ ಸೇವಕನಾದ ಮೋಶೆಯು ನಿಯಮದಲ್ಲಿ ಬರೆದ ನ್ಯಾಯ ತೀರ್ಪುಗಳೂ ಅವರಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ, ನಮ್ಮ ಮೇಲೆ ಸುರಿಯಲಾಗಿದೆ.
DAN 9:12 ಅವರು ನಮಗೂ, ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾವು ಹೇಳಿದ ಮಾತುಗಳನ್ನು ನೆರವೇರಿಸಿ, ನಮ್ಮ ಮೇಲೆ ದೊಡ್ಡ ವಿನಾಶ ಬರುವ ಹಾಗೆ ಮಾಡಿದ್ದಾರೆ. ಯೆರೂಸಲೇಮಿನಲ್ಲಿ ನಡೆದ ಹಾಗೆ ಇಡೀ ಆಕಾಶದ ಕೆಳಗೆ ಎಲ್ಲೂ ನಡೆಯಲಿಲ್ಲ.
DAN 9:13 ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಈ ಎಲ್ಲಾ ವಿನಾಶ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿಮ್ಮ ಸತ್ಯವನ್ನು ತಿಳಿದುಕೊಳ್ಳುವಂತೆ, ನಮ್ಮ ದೇವರಾದ ಯೆಹೋವ ದೇವರ ದಯೆಯನ್ನು ಬೇಡಿಕೊಳ್ಳಲಿಲ್ಲ.
DAN 9:14 ನಮ್ಮ ದೇವರಾದ ಯೆಹೋವ ದೇವರು ತಾವು ಮಾಡುವ ಎಲ್ಲದರಲ್ಲಿಯೂ ನೀತಿವಂತರಾಗಿದ್ದುದರಿಂದ, ವಿನಾಶವನ್ನು ನಮ್ಮ ಮೇಲೆ ಬರಮಾಡಲು ಯೆಹೋವ ದೇವರು ಹಿಂಜರಿಯಲಿಲ್ಲ. ಆದರೂ ನಾವು ಅವರಿಗೆ ವಿಧೇಯರಾಗಲೇ ಇಲ್ಲ.
DAN 9:15 “ಈಗ ನಮ್ಮ ಕರ್ತದೇವರೇ, ನಿಮ್ಮ ಭುಜಬಲವನ್ನು ತೋರಿಸಿ, ನಿಮ್ಮ ಜನರನ್ನು ಈಜಿಪ್ಟ್ ದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರು ಪಡೆದುಕೊಂಡವರೇ, ನಾವು ಪಾಪಮಾಡಿದ್ದೇವೆ, ನಾವು ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
DAN 9:16 ಕರ್ತದೇವರೇ, ನಿಮ್ಮ ಎಲ್ಲಾ ನೀತಿಗಳ ಪ್ರಕಾರ ನಿಮ್ಮ ಕೋಪವನ್ನು, ನಿಮ್ಮ ಉಗ್ರತ್ವವನ್ನು ನಿಮ್ಮ ಪಟ್ಟಣವಾದ ಯೆರೂಸಲೇಮಿನಿಂದಲೂ ನಿಮ್ಮ ಪರಿಶುದ್ಧ ಪರ್ವತದಿಂದಲೂ ತಿರುಗಿಸಿಬಿಡಿರಿ. ನಮ್ಮ ಪಾಪಗಳ ನಿಮಿತ್ತದಿಂದಲೂ, ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮ್ ಮತ್ತು ನಿಮ್ಮ ಜನರು ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.
DAN 9:17 “ಈಗ, ನಮ್ಮ ದೇವರೇ, ಈ ನಿಮ್ಮ ಸೇವಕನ ಪ್ರಾರ್ಥನೆ ಮತ್ತು ವಿಜ್ಞಾಪನೆಗಳನ್ನು ಕೇಳಿರಿ. ಕರ್ತದೇವರೇ, ಹಾಳಾಗಿರುವ ನಿಮ್ಮ ಪರಿಶುದ್ಧ ಸ್ಥಳವನ್ನು ನಿಮ್ಮ ನಿಮಿತ್ತವಾಗಿ ಅನುಗ್ರಹದಿಂದ ನೋಡಿರಿ.
DAN 9:18 ನನ್ನ ದೇವರೇ, ನೀವು ಕಿವಿಗೊಟ್ಟು ಕೇಳಿರಿ. ನಿಮ್ಮ ಕಣ್ಣುಗಳನ್ನು ತೆರೆದು ನಮ್ಮ ನಾಶವನ್ನೂ, ನಿಮ್ಮ ಹೆಸರಿನಿಂದ ಕರೆಯಲಾಗುವ ಈ ಹಾಳಾಗಿರುವ ಪಟ್ಟಣವನ್ನೂ ನೋಡಿರಿ. ಏಕೆಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿಮ್ಮ ಮಹಾ ಕರುಣೆಗಾಗಿಯೇ ನಮ್ಮ ವಿಜ್ಞಾಪನೆಗಳನ್ನು ನಿಮ್ಮ ಮುಂದೆ ಅರ್ಪಿಸುತ್ತೇವೆ.
DAN 9:19 ಕರ್ತದೇವರೇ ಕೇಳಿರಿ! ಕರ್ತದೇವರೇ ಕ್ಷಮಿಸಿರಿ! ಕರ್ತದೇವರೇ ಲಾಲಿಸಿರಿ ಮತ್ತು ಕಾರ್ಯವನ್ನು ಸಾಧಿಸಿರಿ! ನನ್ನ ದೇವರೇ, ನಿಮ್ಮ ನಿಮಿತ್ತವಾಗಿ ತಡಮಾಡಬೇಡಿರಿ. ಏಕೆಂದರೆ ನಿಮ್ಮ ಪಟ್ಟಣವೂ ನಿಮ್ಮ ಜನರೂ ನಿಮ್ಮ ಹೆಸರನ್ನು ಧರಿಸಿದ್ದಾರೆ.”
DAN 9:20 ನಾನು ಮಾತಾಡುತ್ತಾ, ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ, ನನ್ನ ಜನರಾದ ಇಸ್ರಾಯೇಲರ ಪಾಪವನ್ನೂ ಅರಿಕೆಮಾಡುತ್ತಾ, ನನ್ನ ದೇವರಾದ ಯೆಹೋವ ದೇವರ ಮುಂದೆ ಅವರ ಪರಿಶುದ್ಧ ಪರ್ವತಕ್ಕೋಸ್ಕರವಾಗಿ, ವಿಜ್ಞಾಪಿಸುತ್ತಿರಲಾಗಿ,
DAN 9:21 ನಾನು ಇನ್ನೂ ಪ್ರಾರ್ಥಿಸುತ್ತಿದ್ದಾಗ, ನಾನು ಮೊದಲ ದರ್ಶನದಲ್ಲಿ ಕಂಡಿದ್ದ ಸುಮಾರು ಸಾಯಂಕಾಲದ ನೈವೇದ್ಯವನ್ನು ಅರ್ಪಿಸುವ ಹೊತ್ತಿನಲ್ಲಿ, ನನ್ನ ಬಳಿ ಗಬ್ರಿಯೇಲನು ಬೇಗನೆ ಹಾರಿ ಬಂದು,
DAN 9:22 ನನಗೆ, “ದಾನಿಯೇಲನೇ, ನಿನಗೆ ವಿವೇಕವನ್ನೂ, ಬುದ್ಧಿಯನ್ನೂ ಕೊಡುವುದಕ್ಕೆ ಈಗ ನಾನು ಬಂದಿದ್ದೇನೆ.
DAN 9:23 ನೀನು ವಿಜ್ಞಾಪನೆ ಮಾಡಿದ ಕೂಡಲೇ ಉತ್ತರ ಸಿಕ್ಕಿತು. ಅದನ್ನು ನಿನಗೆ ತಿಳಿಸುವುದಕ್ಕೆ ನಾನು ಬಂದಿದ್ದೇನೆ. ಏಕೆಂದರೆ ನೀನು ಅತಿ ಪ್ರಿಯನಾಗಿರುವೆ. ಆದ್ದರಿಂದ ವಿಷಯವನ್ನು ಗ್ರಹಿಸಿಕೊಂಡು ದರ್ಶನವನ್ನು ತಿಳಿದುಕೋ.
DAN 9:24 “ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.
DAN 9:25 “ಆದ್ದರಿಂದ ನೀನು ಅರಿತು ತಿಳಿಯಬೇಕಾದದ್ದು ಏನೆಂದರೆ, ಯೆರೂಸಲೇಮನ್ನು ತಿರುಗಿ ಕಟ್ಟಲು ಆಜ್ಞೆ ಹೊರಡುವ ದಿನದಿಂದ, ಆಳುವ ಒಬ್ಬ ಅಭಿಷಿಕ್ತರು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಿದ ಮೇಲೆ, ಅರವತ್ತೆರಡು ವಾರಗಳು ಇರುವುದು. ಕಷ್ಟಕಾಲದಲ್ಲಿ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಅದು ಕಟ್ಟಲಾಗುವುದು.
DAN 9:26 ಅರವತ್ತೆರಡು ವಾರಗಳಾದ ಮೇಲೆ ಆ ಅಭಿಷಿಕ್ತರನ್ನು ಕೊಂದುಹಾಕುವರು. ಅವರಿಗೆ ಏನೂ ಇರುವುದಿಲ್ಲ. ಆದರೆ ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ, ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವುದು. ಅಂತ್ಯದವರೆಗೂ ಯುದ್ಧವಾಗಿ ನಾಶ ಸಂಭವಿಸುವುದು.
DAN 9:27 ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಅರ್ಧದಲ್ಲಿ ಯಜ್ಞವನ್ನೂ, ಅರ್ಪಣೆಯನ್ನೂ ನಿಲ್ಲಿಸುವನು. ದೇವಾಲಯದಲ್ಲಿ ಹಾಳುಮಾಡುವ ಅಸಹ್ಯ ವಸ್ತುವನ್ನು ಅವನು ಸ್ಥಾಪಿಸುವನು. ಇದು ಅವನ ಮೇಲೆ ನಿರ್ಣಯವಾದದ್ದು, ಸುರಿಯುವ ತನಕ ಇರುವುದು,” ಎಂದು ಹೇಳಿದನು.
DAN 10:1 ಪಾರಸಿಯ ಅರಸ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಪ್ರಕಟಣೆಯಾಯಿತು. ಅದರ ಸಂದೇಶವು ಸತ್ಯವಾದದ್ದು. ಅದು ಮಹಾ ಯುದ್ಧ ವಿಷಯವಾಗಿದೆ. ಸಂದೇಶದ ಅರ್ಥವು ಅವನಿಗೆ ಒಂದು ದರ್ಶನದಲ್ಲಿ ಬಂದಿತು.
DAN 10:2 ಆ ಸಮಯದಲ್ಲಿ ದಾನಿಯೇಲನೆಂಬ ನಾನು, ಮೂರು ವಾರಗಳವರೆಗೂ ದುಃಖಪಡುತ್ತಿದ್ದೆನು.
DAN 10:3 ಆ ಮೂರು ವಾರಗಳು ಕಳೆಯುವವರೆಗೂ, ನಾನು ರುಚಿಕರವಾದ ರೊಟ್ಟಿಯನ್ನು ತಿನ್ನಲಿಲ್ಲ. ಮಾಂಸವನ್ನಾದರೂ, ದ್ರಾಕ್ಷಾರಸವನ್ನಾದರೂ ನನ್ನ ಬಾಯಿಗೆ ಮುಟ್ಟಿಸಲಿಲ್ಲ. ನಾನು ಎಣ್ಣೆಯನ್ನು ಹಚ್ಚಿಕೊಳ್ಳಲೇ ಇಲ್ಲ.
DAN 10:4 ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ, ನಾನು ಟೈಗ್ರಿಸ್ ಎಂಬ ಮಹಾನದಿಯ ದಡದ ಮೇಲೆ ಇರುವಾಗ,
DAN 10:5 ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು. ಆಗ, ನಾರುಮಡಿಯನ್ನು ಧರಿಸಿದ್ದ ಒಬ್ಬ ಮನುಷ್ಯನನ್ನು ಕಂಡೆನು. ಆತನ ನಡುವು ಊಫಜಿನ ಅತ್ಯುತ್ತಮ ಬಂಗಾರದಿಂದ ಬಿಗಿದಿತ್ತು.
DAN 10:6 ಆತನ ದೇಹವು ಪೀತರತ್ನದ ಹಾಗೆಯೂ, ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ, ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ; ಆತನ ಮಾತುಗಳ ಶಬ್ದವು, ಜನಸಮೂಹದ ಸಪ್ಪಳದ ಹಾಗೆಯೂ ಇದ್ದವು.
DAN 10:7 ದಾನಿಯೇಲನೆಂಬ ನಾನು ಒಬ್ಬನೇ ಆ ದರ್ಶನವನ್ನು ನೋಡಿದೆನು. ನನ್ನ ಸಂಗಡವಿದ್ದ ಜನರು ಆ ದರ್ಶನವನ್ನು ನೋಡಲಿಲ್ಲ. ಆದರೆ ಅವರು ಭಯಭ್ರಾಂತರಾಗಿ ಓಡಿಹೋಗಿ ಅಡಗಿಕೊಂಡರು.
DAN 10:8 ನಾನು ಒಬ್ಬನೇ ಉಳಿದು, ಈ ಅದ್ಭುತ ದರ್ಶನವನ್ನು ನೋಡಿದೆನು. ನನ್ನಲ್ಲಿ ತ್ರಾಣವು ಇರಲಿಲ್ಲ. ನನ್ನ ಮುಖವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು.
DAN 10:9 ಆದರೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು. ಆತನ ಮಾತುಗಳ ಧ್ವನಿಯನ್ನು ಕೇಳಿದಾಗ, ಮುಖ ಕೆಳಗೆಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆ ಇತ್ತು.
DAN 10:10 ಒಂದು ಕೈ ನನ್ನನ್ನು ಮುಟ್ಟಿ, ನನ್ನ ಮೊಣಕಾಲುಗಳೂ, ನನ್ನ ಅಂಗೈಗಳೂ ನಡುಗುವಂತೆ ಮಾಡಿತು.
DAN 10:11 ಆತನು ನನಗೆ, “ದಾನಿಯೇಲನೇ, ಅತಿ ಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ಏಕೆಂದರೆ ನಾನು ಈಗ ನಿನ್ನ ಬಳಿಗೆ ಕಳುಹಿಸಲಾಗಿದ್ದೇನೆ,” ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಮೇಲೆ, ನಾನು ನಡುಗುತ್ತಲೇ ನಿಂತೆನು.
DAN 10:12 ಆಗ ಅವನು ನನಗೆ, “ದಾನಿಯೇಲನೇ, ನೀನು ಭಯಪಡಬೇಡ. ಏಕೆಂದರೆ ನೀನು ತಿಳಿದುಕೊಳ್ಳುವುದಕ್ಕೂ, ನಿನ್ನ ದೇವರ ಮುಂದೆ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ಪ್ರಾರ್ಥನೆಯು ದೇವರಿಗೆ ಮುಟ್ಟಿತು. ಆ ನಿನ್ನ ಮಾತುಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ.
DAN 10:13 ಆದರೆ ಪಾರಸಿಯ ರಾಜ್ಯದ ರಾಜಪುತ್ರನು ಇಪ್ಪತ್ತೊಂದು ದಿನ ನನ್ನನ್ನು ಎದುರಿಸಿ ನಿಂತನು. ಆದರೆ ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು. ಏಕೆಂದರೆ ನಾನು ಆ ಪಾರಸಿಯ ಅರಸನಿಂದ ತಡೆಹಿಡಿಯಲಾಗಿದ್ದೆನು.
DAN 10:14 ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಸಂಭವಿಸುವುದು ಎಂಬುದನ್ನು ತಿಳಿಸುವುದಕ್ಕೋಸ್ಕರ ನಾನೀಗ ಬಂದಿದ್ದೇನೆ. ಏಕೆಂದರೆ ದರ್ಶನವು ಮುಂದೆ ಬರಲಿಕ್ಕಿರುವ ಸಮಯವನ್ನು ಕುರಿತಾಗಿರುತ್ತದೆ,” ಎಂದನು.
DAN 10:15 ಅವನು ನನಗೆ ಈ ಮಾತುಗಳನ್ನು ಹೇಳುತ್ತಿದ್ದಾಗ, ನಾನು ನನ್ನ ಮುಖವನ್ನು ನೆಲದ ಕಡೆಗೆ ತಿರುಗಿಸಿ ಸುಮ್ಮನಿದ್ದೆನು.
DAN 10:16 ಆಗ ಮಾನವನಂತೆ ಇರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ನಾನು ಬಾಯಿತೆರೆದು ಮಾತನಾಡಿ, ನನ್ನ ಮುಂದೆ ನಿಂತಿದ್ದವನಿಗೆ, “ನನ್ನ ಒಡೆಯನೇ, ಆ ದರ್ಶನದ ನಿಮಿತ್ತ, ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ, ನಾನು ನಿತ್ರಾಣನಾಗಿದ್ದೇನೆ.
DAN 10:17 ನನ್ನ ಒಡೆಯನ ದಾಸನಾದ ನನ್ನಂಥವನು ನನ್ನ ಒಡೆಯನಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ, ಉಸಿರಾಡಿಸಲೂ ಆಗದು.”
DAN 10:18 ಆಮೇಲೆ ಪುನಃ ಮನುಷ್ಯನಂತಿದ್ದ ಒಬ್ಬ ನನ್ನನ್ನು ಬಲಪಡಿಸಿ,
DAN 10:19 “ಅತಿ ಪ್ರಿಯನೇ, ಭಯಪಡಬೇಡ, ನಿನಗೆ ಸಮಾಧಾನವಾಗಲಿ, ಬಲವಾಗಿರು, ಈಗ ಬಲಶಾಲಿಯಾಗಿರು,” ಎಂದನು. ಅವನು ನನ್ನ ಸಂಗಡ ಮಾತನಾಡಿದಾಗ ನಾನು ಬಲವನ್ನು ಹೊಂದಿ, “ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ,” ಎಂದು ಹೇಳಿದೆನು.
DAN 10:20 ಅವನು, “ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ. ಈಗ ನಾನು ಪಾರಸಿಯದ ರಾಜಪುತ್ರನ ಸಂಗಡ ಯುದ್ಧಮಾಡಲು ಹಿಂದಿರುಗಬೇಕು. ನಾನು ಹೋದ ಮೇಲೆ, ಗ್ರೀಕಿನ ರಾಜಕುಮಾರನು ಬರುವನು.
DAN 10:21 ಆದರೆ ಸತ್ಯ ಗ್ರಂಥದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುತ್ತೇನೆ. ನಿಮ್ಮ ರಾಜಕುಮಾರನಾದ ಮೀಕಾಯೇಲನ ಹೊರತು ಮತ್ತೆ ಯಾರೂ ಅವರಿಗೆ ವಿರೋಧವಾಗಿ ನನಗೆ ಸಹಕಾರ ಕೊಡುವುದಿಲ್ಲ.”
DAN 11:1 ಮೇದ್ಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅವರಿಗೆ ಸಹಾಯಮಾಡಿ, ಅವನನ್ನು ರಕ್ಷಿಸಲು ನಾನು ನಿಂತುಕೊಂಡೆನು.
DAN 11:2 ನಾನು ಈಗ ಸತ್ಯವನ್ನು ತಿಳಿಸುತ್ತೇನೆ. ಪಾರಸಿಯ ದೇಶದಲ್ಲಿ ಇನ್ನೂ ಮೂರು ಅರಸರು ಏಳುವರು. ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು. ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸುವನು.
DAN 11:3 ಆಗ ಬಲವುಳ್ಳ ಒಬ್ಬ ಅರಸನು ಉದಯಿಸುವನು. ಅವನು ಮಹಾಅಧಿಕಾರದಿಂದ ಆಳುವನು ಮತ್ತು ತನ್ನ ಇಷ್ಟದ ಪ್ರಕಾರ ಮಾಡುವನು.
DAN 11:4 ಅವನು ಉದಯಿಸಿದ ನಂತರ, ಅವನ ರಾಜ್ಯ ಒಡೆದು ಆಕಾಶದ ನಾಲ್ಕು ದಿಕ್ಕುಗಳಿಗೂ ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಅದು ಇನ್ನು ಪ್ರಬಲವಾಗದು. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಿತ್ತುಕೊಂಡು ಇತರರಿಗೆ ನೀಡಲಾಗುವುದು.
DAN 11:5 ದಕ್ಷಿಣದ ಅರಸನು ಬಲಿಷ್ಠನಾಗುವನು. ಆದರೆ ಅವನ ಸೇನಾಪತಿಗಳಲ್ಲಿ ಒಬ್ಬನು ಅವನಿಗಿಂತ ಬಲಿಷ್ಠನಾಗುವನು ಮತ್ತು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವುದು.
DAN 11:6 ಕೆಲವು ವರ್ಷಗಳ ನಂತರ ಅವರಿಬ್ಬರು ಒಪ್ಪಂದ ಮಾಡಿಕೊಳ್ಳುವರು. ದಕ್ಷಿಣದ ಅರಸನ ಮಗಳು ಒಪ್ಪಂದ ಮಾಡಿಕೊಳ್ಳಲು ಉತ್ತರದ ಅರಸನ ಬಳಿಗೆ ಬರುವಳು. ಆದರೆ ಅವಳು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಿಲ್ಲ. ಅವನೂ, ಅವನ ಅಧಿಕಾರವೂ ನಿಲ್ಲುವುದಿಲ್ಲ. ಆ ದಿನಗಳಲ್ಲಿ ಅವಳೂ ಅವಳನ್ನು ಕರೆತಂದವರೂ ಮತ್ತು ಅವಳ ತಂದೆಯೂ ಅವಳಿಗೆ ಸಹಾಯ ಮಾಡಿದವರು ಯಾರೂ ಉಳಿಯುವುದಿಲ್ಲ.
DAN 11:7 ಅವಳ ವಂಶದಲ್ಲಿಯ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು, ಸೈನ್ಯದೊಂದಿಗೆ ಬಂದು, ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ, ಅವರ ವಿರುದ್ಧ ಹೋರಾಡಿ ಗೆಲ್ಲುವನು.
DAN 11:8 ಅವರ ದೇವರುಗಳನ್ನೂ, ಅವರ ವಿಗ್ರಹಗಳನ್ನೂ ಅವರ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನೂ ಅವನು ಸೂರೆಮಾಡಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಕೆಲವು ವರ್ಷಗಳವರೆಗೆ ಅವನು ಉತ್ತರದ ಅರಸನ ಮೇಲೆ ಬಿಟ್ಟುಬಿಡುವನು.
DAN 11:9 ಆಮೇಲೆ ಉತ್ತರದ ಅರಸನು, ದಕ್ಷಿಣದ ಅರಸನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗಿ ಹೋಗುವನು.
DAN 11:10 ಅವನ ಮಕ್ಕಳು ಯುದ್ಧಕ್ಕೆ ಸಿದ್ಧರಾಗಿ ದೊಡ್ಡ ಸೈನ್ಯ ಕೂಡಿಸುವರು. ಆ ಸೈನ್ಯವು ನಿಬಂಧಿಸಲಾಗದ ಪ್ರವಾಹದಂತೆ ಹರಿದುಬಂದು, ಯುದ್ಧವನ್ನು ಅವನ ಕೋಟೆಯವರೆಗೆ ನಡೆಸುವರು.
DAN 11:11 ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಮಹಾ ಸೈನ್ಯವನ್ನು ಕೂಡಿಸಿದನು. ಉತ್ತರದ ಅರಸನ ಸಂಗಡ ಯುದ್ಧಮಾಡುವನು. ಆದರೆ ಆ ಮಹಾ ಸೈನ್ಯವು ದಕ್ಷಿಣ ಅರಸನ ಕೈವಶವಾಗುವುದು.
DAN 11:12 ಆ ಮಹಾ ಸೈನ್ಯವನ್ನು ಅವನು ತೆಗೆದುಹಾಕಿದ ಮೇಲೆ, ಅವನ ಹೃದಯವು ಹೆಚ್ಚಳ ಪಡುವುದು. ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ, ಪ್ರಾಬಲ್ಯಕ್ಕೆ ಬರುವುದಿಲ್ಲ.
DAN 11:13 ಏಕೆಂದರೆ ಉತ್ತರದ ಅರಸನು ಪುನಃ ತಿರುಗಿಕೊಂಡು ಮೊದಲನೆಯದಕ್ಕಿಂತಲೂ ದೊಡ್ಡ ಸೈನ್ಯವನ್ನು ನಿಲ್ಲಿಸಿ, ಕೆಲವು ವರ್ಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ, ಬಹಳ ಆಯುಧಗಳ ಸಂಗಡವೂ ನಿಶ್ಚಯವಾಗಿ ಬರುವನು.
DAN 11:14 ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು. ನಿನ್ನ ಜನರಲ್ಲಿ ಹಿಂಸಾಕಾರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಿರುಗಿ ಬೀಳುವರು. ಆದರೆ ಸೋತುಹೋಗುವರು.
DAN 11:15 ಆಗ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ, ದಿಬ್ಬವನ್ನು ಕೆಡವಿ, ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವನು. ದಕ್ಷಿಣದ ಭುಜಬಲವಾದರೂ ಅವನು ಆಯ್ದುಕೊಂಡ ಜನರಾದರೂ ಎದುರಿಸಿ ನಿಲ್ಲುವುದಕ್ಕೆ ಅಶಕ್ತರಾಗುವರು.
DAN 11:16 ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು. ಯಾರೂ ಅವನ ಮುಂದೆ ನಿಲ್ಲಲಾರರು. ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದನ್ನು ನಾಶಮಾಡುವ ಅಧಿಕಾರ ಹೊಂದಿರುವನು.
DAN 11:17 ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ದಕ್ಷಿಣದ ರಾಜನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವನು. ಅವನ ರಾಜ್ಯವನ್ನು ಉರುಳಿಸಲು ಅವನಿಗೆ ಮಗಳನ್ನು ಕೊಡುವನು. ಆದರೆ ಅವನ ಯೋಜನೆಗಳು ಜಯಹೊಂದುವುದಿಲ್ಲ. ಇಲ್ಲವೆ ಅವನಿಗೆ ಸಹಾಯ ಮಾಡುವುದಿಲ್ಲ.
DAN 11:18 ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ, ಅನೇಕರನ್ನು ವಶಪಡಿಸಿಕೊಳ್ಳುವನು. ಆದರೆ ಒಬ್ಬ ಅಧಿಪತಿಯು ಅವನ ಅಹಂಕಾರವನ್ನು ಅಡಗಿಸಿಬಿಡುವನು. ಆ ಅಹಂಕಾರವನ್ನು ತನ್ನ ಮೇಲೆ ಹಾಕಿಕೊಳ್ಳದೆ, ಅವನ ಮೇಲೆ ತಿರುಗಿಸಿ ಬಿಡುವನು.
DAN 11:19 ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು. ಆದರೆ ಅವನು ಎಡವಿಬಿದ್ದು, ಕಾಣದೆ ಹೋಗುವನು.
DAN 11:20 ಅವನ ಉತ್ತರಾಧಿಕಾರಿಯು ಅರಸೊತ್ತಿಗೆಯ ಸೊಗಸನ್ನು ಕಾದುಕೊಳ್ಳುವುದಕ್ಕಾಗಿ ಸುಂಕ ವಸೂಲಿ ಮಾಡುವವನನ್ನು ಕಳುಹಿಸುವನು. ಆದರೂ ಕೆಲವೇ ವರ್ಷಗಳಲ್ಲಿ ಅವನು ನಾಶ ಹೊಂದುವನು. ಇದು ಕೋಪದಿಂದಾಗಲಿ ಇಲ್ಲವೆ ಯುದ್ಧದಿಂದಾಗಲಿ ಆಗುವುದಿಲ್ಲ.
DAN 11:21 ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು. ಅವನಿಗೆ ರಾಜಮರ್ಯಾದೆಯನ್ನು ಕೊಡುವುದಿಲ್ಲ. ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
DAN 11:22 ಪ್ರವಾಹದಂತಿರುವ ಆ ಸೈನ್ಯವೂ, ಒಡಂಬಡಿಕೆಯ ರಾಜಕುಮಾರನೂ ಅವನ ರಭಸಕ್ಕೆ ಸಿಕ್ಕಿ ಒಡೆದುಹೋಗಿ ನಾಶವಾಗುವರು.
DAN 11:23 ಅವನ ಸಂಗಡ ಒಪ್ಪಂದ ಮಾಡಿಕೊಂಡ ಮೇಲೆ ಕಪಟವಾಗಿ ನಡೆಯುವನು. ಕೆಲವು ಜನರ ಸಹಾಯದಿಂದ ಅಧಿಕಾರ ಪಡೆಯುವನು.
DAN 11:24 ನೆಮ್ಮದಿಯ ಕಾಲದಲ್ಲಿ ಸಂಸ್ಥಾನಗಳ ಫಲವತ್ತಾದ ಪ್ರದೇಶಗಳಲ್ಲಿ ನುಗ್ಗಿ, ತಂದೆ ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು. ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು, ತನ್ನನ್ನು ಅವರಿಗೆ ಹಂಚುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.
DAN 11:25 ಅವನು ದಕ್ಷಿಣದ ಅರಸನಿಗೆ ವಿರೋಧವಾಗಿ ತನ್ನ ಶಕ್ತಿಯಿಂದಲೂ ಧೈರ್ಯದಿಂದಲೂ ದೊಡ್ಡ ಸೈನ್ಯದ ಸಂಗಡ ಯುದ್ಧಕ್ಕೆ ಸನ್ನದ್ಧನಾಗುವನು, ಆದರೆ ನಿಲ್ಲಲಾರದೆ ಹೋಗುವನು. ಏಕೆಂದರೆ ಅವನಿಗೆ ವಿರೋಧವಾಗಿ ಕುಯುಕ್ತಿಗಳನ್ನು ಕಲ್ಪಿಸುವರು.
DAN 11:26 ಅವನ ರಾಜ ಭೋಜನದಲ್ಲಿ ಭಾಗವನ್ನು ತಿಂದವರೇ, ಅವನನ್ನು ನಾಶಮಾಡುವರು. ಅವನ ಸೈನ್ಯವು ತುಂಬಿ ತುಳುಕುವುದು ಮತ್ತು ಅನೇಕರು ಹತರಾಗುವರು.
DAN 11:27 ಈ ಇಬ್ಬರ ಅರಸನ ಹೃದಯಗಳು ಕೇಡನ್ನು ಮಾಡುವಂತವುಗಳಾಗಿರುವುವು. ಒಂದೇ ಮೇಜಿನಲ್ಲಿ ಕುಳಿತು ಒಬ್ಬರಿಗೊಬ್ಬರು ಸುಳ್ಳು ಹೇಳುವರು. ಆದರೆ ಅದು ಅನುಕೂಲವಾಗದು. ಏಕೆಂದರೆ ಅದು ಹೇಗಾದರೂ ನಿಶ್ಚಿತ ಕಾಲದಲ್ಲಿಯೇ ಅಂತ್ಯವಾಗುವುದು.
DAN 11:28 ಆಗ ಉತ್ತರದ ಅರಸನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂದಿರುಗುವನು, ಆದರೆ ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವುದು; ಅವನು ಇದಕ್ಕೆ ವಿರುದ್ಧವಾಗಿ ಕಾರ್ಯಸಾಧಿಸಿ, ಸ್ವಂತ ದೇಶಕ್ಕೆ ಹಿಂದಿರುಗುವನು.
DAN 11:29 ನೇಮಕವಾದ ಕಾಲದಲ್ಲಿಯೇ ಅವನು ಹಿಂದಿರುಗಿ ದಕ್ಷಿಣಕ್ಕೆ ಬರುವನು, ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವುದಿಲ್ಲ.
DAN 11:30 ಏಕೆಂದರೆ ಕಿತ್ತೀಮಿನ ಹಡಗುಗಳು ಅವನಿಗೆ ವಿರೋಧವಾಗಿ ಬರುವುವು. ಆದ್ದರಿಂದ ಅವನು ಎದೆಗುಂದಿ, ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿ ಕೋಪಿಸಿಕೊಳ್ಳುವನು. ಹಿಂದಿರುಗಿ ಬಂದು ಪರಿಶುದ್ಧ ಒಡಂಬಡಿಕೆಯನ್ನು ತೊರೆದವರಿಗೆ ದಯೆ ತೋರಿಸುವನು.
DAN 11:31 ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲಸುಮಾಡಿ, ನಿತ್ಯ ಯಜ್ಞವನ್ನು ನಿಲ್ಲಿಸುವುದು. ಹಾಳುಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವುದು.
DAN 11:32 ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆಯುವವರನ್ನು ನಯವಾದ ಮಾತುಗಳಿಂದ ಕೆಡಿಸುವನು, ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಎದುರಿಸುವರು.
DAN 11:33 ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದರೂ ಖಡ್ಗದಿಂದಲೂ ಬೆಂಕಿಯಿಂದಲೂ ಸೆರೆಯಿಂದಲೂ ಕೊಳ್ಳೆಯಿಂದಲೂ ಕೆಲಕಾಲ ಸಿಕ್ಕಿ ಬೀಳುವರು.
DAN 11:34 ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು, ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಸೇರಿಕೊಳ್ಳುವರು.
DAN 11:35 ಇದಲ್ಲದೆ ಅಂತ್ಯಕಾಲದವರೆಗೆ ಜ್ಞಾನಿಗಳನ್ನು ಶೋಧಿಸುವುದಕ್ಕೂ ಅದರಲ್ಲಿ ಅನೇಕರು ಬೀಳುವರು; ಏಕೆಂದರೆ ಇದು ನೇಮಕವಾದ ಸಮಯದಲ್ಲಿ ಬರುವುದು.
DAN 11:36 ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು. ತನ್ನನ್ನು ತಾನೇ ಹೆಚ್ಚಿಸಿಕೊಂಡು, ತನ್ನನ್ನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನನ್ನಾಗಿ ಮಾಡಿಕೊಂಡು, ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ, ರೋಷವು ತೀರುವವರೆಗೂ ವೃದ್ಧಿಯಾಗಿರುವನು. ಹೀಗೆ ನಿಶ್ಚಯವಾದದ್ದು ನೆರವೇರಲೇಬೇಕು.
DAN 11:37 ಅವನು ತನ್ನ ಪಿತೃಗಳ ದೇವರನ್ನಾಗಲೀ, ಸ್ತ್ರೀಯರಿಂದ ಅಪೇಕ್ಷಿಸಿದವರನ್ನಾಗಲೀ ಅವನು ಲಕ್ಷಿಸುವುದಿಲ್ಲ, ಯಾವ ದೇವರನ್ನೂ ಲಕ್ಷಿಸುವುದಿಲ್ಲ; ಆದರೆ ಅವನು ಎಲ್ಲವುಗಳಿಗಿಂತ ಹೆಚ್ಚಿ, ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
DAN 11:38 ಅವನು ಕುಲ ದೇವರಿಗೆ ಬದಲಾಗಿ, ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿ ಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
DAN 11:39 ಅವನು ಅನ್ಯ ದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ತನಗೆ ಮೆಚ್ಚುಗೆಯಾದವರನ್ನು ಹೆಚ್ಚಾಗಿ ಸತ್ಕರಿಸುವನು. ಅವರನ್ನು ಬಹುಜನರ ಮೇಲೆ ಅಧಿಕಾರಿಗಳನ್ನಾಗಿ ನೇಮಿಸುವನು. ಹಣಕ್ಕಾಗಿ ದೇಶವನ್ನೇ ಹಂಚಿಬಿಡುವನು.
DAN 11:40 ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂದಿಗೂ, ಸವಾರರೊಂದಿಗೂ, ಅನೇಕ ಹಡಗುಗಳೊಂದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದುಹೋಗುವನು.
DAN 11:41 ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳನ್ನು ನಾಶಮಾಡುವನು; ಆದರೆ ಎದೋಮು, ಮೋವಾಬು ಮತ್ತು ಅಮ್ಮೋನಿಯರಲ್ಲಿ ಮುಖ್ಯಸ್ಥರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.
DAN 11:42 ಅವನು ಇತರ ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಈಜಿಪ್ಟ್ ದೇಶವು ತಪ್ಪಿಸಿಕೊಳ್ಳದು.
DAN 11:43 ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ, ಈಜಿಪ್ಟಿನ ಎಲ್ಲಾ ಅಮೂಲ್ಯ ವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವುದು. ಲಿಬಿಯದವರೂ ಕೂಷ್ಯರೂ ಅವನಿಗೆ ಅಧೀನರಾಗುವರು.
DAN 11:44 ಆದರೆ ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವುವು. ಆದ್ದರಿಂದ ಅವನು ಮಹಾ ಉಗ್ರವಾಗಿ ಅನೇಕರನ್ನು ಸಂಹರಿಸುವುದಕ್ಕೂ, ನಿರ್ಮೂಲ ಮಾಡುವುದಕ್ಕೂ ಹೊರಡುವನು.
DAN 11:45 ಅವನು ತನ್ನ ರಾಜ ಗುಡಾರಗಳನ್ನು ಸಮುದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು. ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
DAN 12:1 “ಆ ಕಾಲದಲ್ಲಿ ನಿನ್ನ ಜನರನ್ನು ಕಾಪಾಡುವುದಕ್ಕಾಗಿ ಮಹಾರಾಜಕುಮಾರನಾದ ಮೀಕಾಯೇಲನು ಏಳುವನು. ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನವರೆಗೂ ಸಂಭವಿಸದಂತಹ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಎಂದರೆ ಜೀವ ಪುಸ್ತಕದಲ್ಲಿ ಯಾರ ಹೆಸರು ಬರೆಯಲಾಗಿದೆಯೋ, ಅವರೆಲ್ಲರೂ ಬಿಡುಗಡೆಯಾಗುವರು.
DAN 12:2 ಭೂಮಿಯ ಧೂಳಿನೊಳಗೆ ನಿದ್ರೆ ಮಾಡುವವರಲ್ಲಿ ಅನೇಕರು ಎಚ್ಚತ್ತು, ಕೆಲವರು ನಿತ್ಯಜೀವವನ್ನೂ ಮತ್ತು ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು.
DAN 12:3 ಜ್ಞಾನಿಗಳಾದವರು ಆಕಾಶದ ಕಾಂತಿಯ ಹಾಗೆಯೂ, ಅನೇಕರನ್ನು ನೀತಿಯ ಕಡೆಗೆ ತಿರುಗಿಸುವರು, ನಕ್ಷತ್ರಗಳ ಹಾಗೆ ಎಂದೆಂದಿಗೂ ಪ್ರಕಾಶಿಸುವರು, ನಿತ್ಯ ಅವಮಾನವನ್ನು ಅನುಭವಿಸುವರು.
DAN 12:4 ಆದರೆ ದಾನಿಯೇಲನೇ ನೀನು, ಅಂತ್ಯಕಾಲದವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆದಿರುವ ಆ ಗ್ರಂಥಕ್ಕೆ ಮುದ್ರೆ ಹಾಕು. ಅನೇಕರು ಅತ್ತಿತ್ತ ಓಡಾಡುವರು, ಜ್ಞಾನವು ಹೆಚ್ಚಾಗುವುದು,” ಎಂದು ಹೇಳಿದನು.
DAN 12:5 ಆಗ ದಾನಿಯೇಲನೆಂಬ ನಾನು ನೋಡಿದೆನು. ಅವರಿಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ, ಇನ್ನೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು.
DAN 12:6 ಅವರು ನದಿಯ ನೀರಿನ ಮೇಲೆ ನಿಂತು, ನಾರುಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು, “ಈ ಆಶ್ಚರ್ಯದ ಅಂತ್ಯವು ಎಷ್ಟರವರೆಗೆ ಇರುವುದು?” ಎಂದು ಕೇಳಿದನು.
DAN 12:7 ನದಿಯ ನೀರಿನ ಮೇಲೆ ನಿಂತು ನಾರುಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತರಾಗಿರುವವರ ಮೇಲೆ ಆಣೆಯಿಟ್ಟು, “ಅದು ಒಂದುಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು; ಕೊನೆಗೆ ಪರಿಶುದ್ಧರ ಬಲವನ್ನು ಮುರಿದ ಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.
DAN 12:8 ನಾನು ಅದನ್ನು ಕೇಳಿದೆನು, ಆದರೆ ಗ್ರಹಿಸಲಿಲ್ಲ. ಆಗ ನಾನು, “ನನ್ನ ಒಡೆಯನೇ, ಈ ಸಂಗತಿಗಳ ಅಂತ್ಯವೇನು?” ಎಂದು ಕೇಳಿದೆನು.
DAN 12:9 ಆಗ ಅವನು, “ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು, ಏಕೆಂದರೆ ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಿ, ಮುದ್ರಿತವಾಗಿವೆ.
DAN 12:10 ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ಆದರೆ ದುಷ್ಟರು ದುಷ್ಟರಾಗಿಯೇ ಮುಂದುವರಿಯುವರು. ಯಾವ ದುಷ್ಟನೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತರಾದವರು ಅರಿತುಕೊಳ್ಳುವರು.
DAN 12:11 “ಪ್ರತಿದಿನದ ಯಜ್ಞವು ಸಕಾಲಕ್ಕೆ ನಿಂತುಹೋಗುವುದು. ಆ ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ, 1,290 ದಿನಗಳು ಕಳೆಯಬೇಕು.
DAN 12:12 1,335 ದಿನಗಳು ಬರುವವರೆಗೆ ಕಾದಿರುವವನೇ ಭಾಗ್ಯವಂತನು.
DAN 12:13 “ನೀನು ಅಂತ್ಯದವರೆಗೂ ನಿನ್ನ ಮಾರ್ಗದಲ್ಲಿ ಹೋಗು. ನೀನು ವಿಶ್ರಮಿಸಿಕೊಳ್ಳುವೆ ಮತ್ತು ದಿನಗಳ ಅಂತ್ಯದಲ್ಲಿ ನಿನಗೆ ಪಾಲಾಗಿ ಇಟ್ಟಿರುವ ಬಾಧ್ಯತೆಯನ್ನು ಸ್ವೀಕರಿಸಲು ಎದ್ದು ಬರುವೆ,” ಎಂದು ಹೇಳಿದನು.
HOS 1:1 ಯೆಹೂದದ ಅರಸರಾದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗ ಹೋಶೇಯನಿಗೆ ಯೆಹೋವ ದೇವರ ವಾಕ್ಯವು ಬಂದಿತು.
HOS 1:2 ಯೆಹೋವ ದೇವರು ಹೋಶೇಯನೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಯೆಹೋವ ದೇವರು ಹೋಶೇಯನಿಗೆ, “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೋ ಮತ್ತು ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ ಈ ದೇಶವು ನನ್ನನ್ನು ತೊರೆದುಬಿಟ್ಟು, ವ್ಯಭಿಚಾರಿಣಿಯಾದ ಹೆಂಡತಿಯಂತೆ ಯೆಹೋವ ದೇವರಿಗೆ ದ್ರೋಹ ಬಗೆದಿದೆ,” ಎಂದು ಹೇಳಿದರು.
HOS 1:3 ಆಗ ಅವನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಬ್ಬ ಮಗನನ್ನು ಹೆತ್ತಳು.
HOS 1:4 ಆಗ ಯೆಹೋವ ದೇವರು ಹೋಶೇಯನಿಗೆ, “ಈ ಮಗುವಿಗೆ ಇಜ್ರೆಯೇಲ್ ಎಂದು ಹೆಸರಿಡು. ಏಕೆಂದರೆ ಶೀಘ್ರದಲ್ಲಿಯೇ ನಾನು ಇಜ್ರೆಯೇಲ್ ಕಣಿವೆಯಲ್ಲಿ ರಕ್ತವನ್ನು ಸುರಿಸಿದ ಯೇಹುವಿನ ಮನೆತನದವರ ಮೇಲೆ ಮುಯ್ಯಿತೀರಿಸಿಕೊಳ್ಳುವೆನು. ಇಸ್ರಾಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.
HOS 1:5 ಆ ದಿನದಲ್ಲಿ, ನಾನು ಇಸ್ರಾಯೇಲಿನ ಬಿಲ್ಲು ಶಕ್ತಿಯನ್ನು ಇಜ್ರೆಯೇಲ್ ಕಣಿವೆಯಲ್ಲಿ ಮುರಿದು ಹಾಕುವೆನು,” ಎಂದು ಹೇಳಿದರು.
HOS 1:6 ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಹೆತ್ತಳು. ಆಗ ಯೆಹೋವ ದೇವರು ಹೋಶೇಯನಿಗೆ, “ಅವಳನ್ನು ‘ಲೋರುಹಾಮಾ’ ಎಂಬ ಹೆಸರಿನಿಂದ ಕರೆ. ಏಕೆಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನದವರಿಗೆ ಪ್ರೀತಿ ತೋರಿಸುವುದೇ ಇಲ್ಲ, ಅವರನ್ನು ಯಾವ ರೀತಿಯೂ ಕ್ಷಮಿಸುವದಿಲ್ಲ.
HOS 1:7 ಆದರೆ ನಾನು ಯೆಹೂದದ ಮನೆತನದವರನ್ನು ಪ್ರೀತಿಸಿ ಅವರನ್ನು ಬಿಲ್ಲುಬಾಣ, ಖಡ್ಗ, ಕಾಳಗ, ಕುದುರೆ ರಾಹುತರು ಇವುಗಳಿಂದಲ್ಲ, ಅವರನ್ನು ಅವರ ದೇವರಾದ ನಾನೇ ಯೆಹೋವ ದೇವರೇ ರಕ್ಷಿಸುವೆನು,” ಎಂದು ಹೇಳಿದರು.
HOS 1:8 ಗೋಮೆರಳು ಲೋರುಹಾಮಾಳನ್ನು ಎದೆಹಾಲಿನ ಸೇವನೆಯಿಂದ ಬಿಡಿಸಿದ ಮೇಲೆ ಪುನಃ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
HOS 1:9 ಆಗ ಯೆಹೋವ ದೇವರು, “ ‘ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ. ಏಕೆಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವುದಿಲ್ಲ,’ ಎಂದು ಹೇಳಿದರು.
HOS 1:10 “ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.
HOS 1:11 ಆಗ ಯೆಹೂದದ ಜನರು ಮತ್ತು ಇಸ್ರಾಯೇಲ್ ಜನರು ಒಟ್ಟುಗೂಡಿಕೊಂಡು ತಮಗೆ ಒಬ್ಬ ನಾಯಕನನ್ನು ನೇಮಕ ಮಾಡಿಕೊಂಡು, ದೇಶದೊಳಗಿಂದ ಹೊರಗೆ ಬರುವರು. ಏಕೆಂದರೆ ಇಜ್ರೆಯೇಲಿನ ಆ ದಿನವು ಮಹಾದಿನವಾಗಿರುವುದು.
HOS 2:1 “ನಿನ್ನ ಸಹೋದರರಿಗೆ, ‘ನನ್ನ ಜನರೇ’ ಎಂದೂ ನಿಮ್ಮ ಸಹೋದರಿಯರಿಗೆ, ‘ನನ್ನ ಪ್ರಿಯರೇ’ ಎಂದೂ ಹೇಳಿರಿ.
HOS 2:2 “ನಿಮ್ಮ ತಾಯಿಯ ಸಂಗಡ ವಾದಮಾಡಿರಿ, ಅವಳೊಂದಿಗೆ ವಾದಮಾಡಿರಿ, ಏಕೆಂದರೆ ಅವಳು ನನ್ನ ಹೆಂಡತಿಯಲ್ಲ, ಮತ್ತು ನಾನು ಅವಳ ಗಂಡನಲ್ಲ. ಅವಳು ತನ್ನ ವ್ಯಭಿಚಾರದ ನೋಟವನ್ನು ಮತ್ತು ತನ್ನ ಸ್ತನಗಳ ಮಧ್ಯದಿಂದ ಅಪನಂಬಿಗಸ್ತಿಕೆಯನ್ನು ತ್ಯಜಿಸಲಿ.
HOS 2:3 ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ತೆಗೆದು, ಅವಳು ಹುಟ್ಟಿದ ದಿವಸದಲ್ಲಿದ್ದ ಹಾಗೆ ಅವಳನ್ನು ಬೆತ್ತಲೆ ಮಾಡುತ್ತೇನೆ. ಅವಳನ್ನು ಮರುಭೂಮಿಯಂತೆ ಮಾಡಿ, ಅವಳನ್ನು ಒಣಗಿದ ಭೂಮಿಯಂತೆ ಇಟ್ಟು, ದಾಹದಿಂದ ಅವಳನ್ನು ಕೊಲ್ಲುವೆನು.
HOS 2:4 ನಾನು ಅವಳ ಮಕ್ಕಳಿಗೂ ಸಹ ಪ್ರೀತಿ ತೋರಿಸುವುದಿಲ್ಲ. ಏಕೆಂದರೆ ಅವರು ವ್ಯಭಿಚಾರದ ಮಕ್ಕಳಾಗಿದ್ದಾರೆ.
HOS 2:5 ಅವರ ತಾಯಿ ವಿಶ್ವಾಸದ್ರೋಹಿ ಮತ್ತು ಅವಮಾನಕರವಾಗಿ ಅವರನ್ನು ಗರ್ಭಧರಿಸಿದ್ದಾರೆ. ಅವಳು, ‘ನನಗೆ ನನ್ನ ಅನ್ನಪಾನ, ನನ್ನ ಉಣ್ಣೆ ಮತ್ತು ನನ್ನ ನಾರಿನ ಉಡುಗೆ, ನನ್ನ ತೈಲ, ನನ್ನ ಪಾಯಸಪಾನಕಗಳನ್ನು ಕೊಡುವಂಥ ನನ್ನ ಪ್ರೇಮಿಗಳ ಹಿಂದೆ ಹೋಗುವೆನು,’ ಎಂದುಕೊಂಡಿದ್ದಾಳೆ.
HOS 2:6 ಆದ್ದರಿಂದ ನಾನು ಅವಳ ಮಾರ್ಗಕ್ಕೆ ಮುಳ್ಳುಗಳ ಬೇಲಿಹಾಕಿ ತಡೆಯುವೆನು. ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಅವಳ ಮುಂದೆ ಗೋಡೆಯನ್ನು ಕಟ್ಟುವೆನು.
HOS 2:7 ಅವಳು ತನ್ನ ಪ್ರೇಮಿಗಳನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವುದಿಲ್ಲ. ಹುಡುಕಿದರೂ ಅವರು ಸಿಕ್ಕುವುದಿಲ್ಲ. ಆಗ ಅವಳು ಹೀಗೆ ಎಂದುಕೊಳ್ಳುವಳು, ‘ನನ್ನ ಮೊದಲನೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು. ಏಕೆಂದರೆ ಆಗ ನನ್ನ ಸ್ಥಿತಿ ಪ್ರಸ್ತುತ ಸ್ಥಿತಿಗಿಂತ ಉತ್ತಮವಾಗಿತ್ತು.’
HOS 2:8 ಏಕೆಂದರೆ ಅವರು ಬಾಳನಿಗಾಗಿ ಉಪಯೋಗಿಸಿದ ಧಾನ್ಯ, ದ್ರಾಕ್ಷಾರಸ ಹಾಗೂ ಎಣ್ಣೆಯನ್ನು ನಾನೇ ಅವಳಿಗೆ ಕೊಟ್ಟು, ಬೆಳ್ಳಿಬಂಗಾರವನ್ನು ನಾನೇ ಧಾರಾಳವಾಗಿ ಹೆಚ್ಚಿಸಿದೆನೆಂದು ಅವಳು ತಿಳಿಯಲಿಲ್ಲ.
HOS 2:9 “ಆದ್ದರಿಂದ ನಾನು ತಿರುಗಿಕೊಂಡು, ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ, ನನ್ನ ದ್ರಾಕ್ಷಾರಸವನ್ನು ಅದರ ಸುಗ್ಗಿಯ ಸಮಯದಲ್ಲಿಯೂ ತೆಗೆದ ಹಾಗೆ, ಅವಳ ಬೆತ್ತಲೆತನವನ್ನು ಮುಚ್ಚವುದಕ್ಕಿದ್ದ ನನ್ನ ಉಣ್ಣೆಯನ್ನೂ, ನನ್ನ ನಾರುಬಟ್ಟೆಯನ್ನೂ ತೆಗೆದುಕೊಳ್ಳುವೆನು.
HOS 2:10 ಈಗ ಅವಳ ತುಚ್ಚತನವನ್ನು, ಅವಳ ಪ್ರೇಮಿಗಳ ಕಣ್ಣುಗಳ ಮುಂದೆ ಬಯಲು ಪಡಿಸುವೆನು. ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.
HOS 2:11 ನಾನು ಅವಳಿಗೆ ಉಲ್ಲಾಸಕರವಾದ ಅವಳ ಹಬ್ಬ, ಅವಳ ಅಮಾವಾಸ್ಯೆ, ಅವಳ ಸಬ್ಬತ್ ದಿನದ ಆಚರಣೆ, ಅವಳ ಸಭಾ ಸಮಾರಂಭ ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
HOS 2:12 ತನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು, ಅವಳು ಹೇಳಿದ ಅವಳ ದ್ರಾಕ್ಷಿಬಳ್ಳಿಗಳನ್ನು, ಅವಳ ಅಂಜೂರದ ಮರಗಳನ್ನು ನಾನು ಹಾಳು ಮಾಡಿ, ಅವುಗಳನ್ನು ನಾನು ಕಾಡನ್ನಾಗಿ ಮಾಡುವೆನು. ಕಾಡುಮೃಗಗಳು ಅವುಗಳನ್ನು ನುಂಗುವವು.
HOS 2:13 ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಅವಳ ಪ್ರೇಮಿಗಳ ಹಿಂದೆ ಹೋಗಿ, ಬಾಳ್ ದೇವತೆಗಳಿಗೆ ಧೂಪ ಸುಟ್ಟ ದಿವಸಗಳಿಗಾಗಿ ನಾನು ಅವಳನ್ನು ದಂಡಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
HOS 2:14 ಆದ್ದರಿಂದ ನಾನು ಅವಳನ್ನು ಮೋಹಿಸಿ, ಅವಳನ್ನು ಮರುಭೂಮಿಯೊಳಗೆ ಕರೆದುಕೊಂಡು ಬಂದು, ಅವಳ ಸಂಗಡ ಹಿತಕರವಾಗಿ ಮಾತನಾಡುವೆನು.
HOS 2:15 ಅವಳ ದ್ರಾಕ್ಷಿತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ಕಣಿವೆಯನ್ನೇ, ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಅಲ್ಲಿ ಅವಳು ತಾನು ಯೌವನದ ದಿವಸಗಳಲ್ಲಿಯೂ, ಈಜಿಪ್ಟ್ ದೇಶದೊಳಗಿಂದ ಹೊರಟು ಬಂದ ದಿವಸಗಳಲ್ಲಿಯೂ ಆದ ಹಾಗೆ ಆಡುವಳು.
HOS 2:16 ಯೆಹೋವ ದೇವರು ಹೀಗೆನ್ನುತ್ತಾರೆ, “ಆ ದಿವಸದಲ್ಲಿ,” “ನೀನು ನನ್ನನ್ನು ಇನ್ನು ಮೇಲೆ, ‘ನನ್ನ ಒಡೆಯ’ ಎಂದು ಕರೆಯದೆ, ‘ನನ್ನ ಪತಿ’ ಎಂದು ಕರೆಯುವೆ.
HOS 2:17 ನಾನು ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯಿಂದ ತೆಗೆದುಹಾಕುವೆನು. ಇನ್ನು ಮುಂದೆ ಅವರ ಹೆಸರನ್ನು ಕರೆಯಲಾಗುವುದಿಲ್ಲ.
HOS 2:18 ಆ ದಿವಸದಲ್ಲಿ, ಅವರಿಗೋಸ್ಕರ ಅಡವಿಯ ಮೃಗಗಳ, ಆಕಾಶದ ಪಕ್ಷಿಗಳ ಮತ್ತು ಭೂಮಿಯ ಕ್ರಿಮಿಗಳ ಸಂಗಡ ಒಡಂಬಡಿಕೆ ಮಾಡುವೆನು. ನಾನು ಬಿಲ್ಲನ್ನೂ, ಖಡ್ಗವನ್ನೂ ಯುದ್ಧವನ್ನೂ ದೇಶದೊಳಗಿಂದ ಮುರಿದುಹಾಕಿ, ಅವರೆಲ್ಲರೂ ಸುರಕ್ಷಿತರಾಗಿ ಮಲಗುವಂತೆ ಮಾಡುವೆನು.
HOS 2:19 ನಿನ್ನನ್ನು ನನಗೆ ಸದಾಕಾಲಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು. ನೀತಿಯಿಂದಲೂ, ನ್ಯಾಯದಿಂದಲೂ, ಪ್ರೀತಿಯಿಂದಲೂ, ಅನುಕಂಪದಿಂದಲೂ, ನಿನ್ನನ್ನು ನನಗೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು.
HOS 2:20 ನಾನು ನಿನ್ನನ್ನು ನಂಬಿಗಸ್ತಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು. ಆಗ ನೀನು ಯೆಹೋವ ದೇವರನ್ನು ತಿಳಿದುಕೊಳ್ಳುವೆ.
HOS 2:21 “ಆ ದಿವಸಗಳಲ್ಲಿ, ನಾನು ಕೇಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಆಕಾಶಗಳನ್ನು ಕೇಳುವೆನು. ಅವು ಭೂಮಿಯನ್ನು ಕೇಳುವುವು.
HOS 2:22 ಭೂಮಿಯು ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೇಳುವುವು. ಅವು ಇಜ್ರೆಯೇಲಿಗೆ ಒಲಿಯುವುವು.
HOS 2:23 ನಾನು ದೇಶದಲ್ಲಿ ಆಕೆಯನ್ನು ನನಗಾಗಿ ಬಿತ್ತಿಕೊಳ್ಳುವೆನು. ‘ನನ್ನ ಪ್ರಿಯರಲ್ಲ’ ಎಂದು ಕರೆದವರಿಗೆ, ನಾನು ನನ್ನ ಪ್ರೀತಿಯನ್ನು ತೋರಿಸುವೆನು. ನಾನು, ‘ನೀವು ನನ್ನ ಜನರಲ್ಲ’ ಎಂದು ಹೇಳಿದವರನ್ನು, ‘ನೀವು ನನ್ನ ಜನರು,’ ಎಂದು ಹೇಳುವೆನು. ಅವರು, ‘ನೀವು ನಮ್ಮ ದೇವರು’ ” ಎಂದು ಹೇಳುವರು.
HOS 3:1 ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು.
HOS 3:2 ಅಂತೆಯೇ ನಾನು ಅವಳನ್ನು ನನಗಾಗಿ ಹದಿನೈದು ಶೆಕೆಲ್ ಬೆಳ್ಳಿ ಮತ್ತು ಸುಮಾರು ಒಂದು ಹೋಮೆರ್ ಹಾಗೂ ಒಂದು ಲೆಥೆಕ ಜವೆಗೋಧಿಗೂ ಕೊಂಡುಕೊಂಡೆನು.
HOS 3:3 ನಾನು ಅವಳಿಗೆ, “ನನ್ನೊಂದಿಗೆ ಬಹಳ ದಿವಸಗಳು ನನಗಾಗಿ ಇರಬೇಕು. ನೀನು ವ್ಯಭಿಚಾರವನ್ನು ಮಾಡಬಾರದು. ನೀನು ಬೇರೆ ಪುರುಷನಿಗಾಗಿ ಇರಬಾರದು. ಆಗ ನಿನ್ನೊಂದಿಗೆ ಇರುವೆನು,” ಎಂದು ಹೇಳಿದೆನು.
HOS 3:4 ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು.
HOS 3:5 ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.
HOS 4:1 ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.
HOS 4:2 ಶಪಿಸುವದೂ, ಸುಳ್ಳು ಹೇಳುವುದೂ, ಕೊಲ್ಲುವುದು, ಕದಿಯುವುದೂ, ವ್ಯಭಿಚಾರ ಮಾಡುವುದೂ ಹೆಚ್ಚಾಗಿ ಬಿಟ್ಟಿವೆ. ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ದೇಶವೆಲ್ಲಾ ರಕ್ತಮಯವಾಗಿದೆ.
HOS 4:3 ಆದ್ದರಿಂದ ದೇಶವು ದುಃಖಪಡುತ್ತಿದೆ. ಅದರಲ್ಲಿ ವಾಸಿಸುವ ಪ್ರತಿಯೊಬ್ಬನು ಕುಗ್ಗಿಹೋಗಿದ್ದಾನೆ. ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ, ಸಮುದ್ರ ಮೀನುಗಳು ನಶಿಸಿ ಹೋಗುತ್ತಿವೆ.
HOS 4:4 “ಆದರೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವರನ್ನು ಖಂಡಿಸದಿರಲಿ. ಏಕೆಂದರೆ ನಿಮ್ಮ ಜನರೆಲ್ಲರೂ ಯಾಜಕನೊಂದಿಗೆ ವಾದಿಸುವವರಾಗಿದ್ದಾರೆ.
HOS 4:5 ನೀನು ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಬೀಳುವೆ. ಪ್ರವಾದಿಗಳು ನಿನ್ನ ಸಂಗಡ ಮುಗ್ಗರಿಸಿಬೀಳುವರು. ಆದ್ದರಿಂದ ನಾನು ನಿನ್ನ ತಾಯಿಯನ್ನು ನಾಶಮಾಡುವೆನು.
HOS 4:6 ನನ್ನ ಜನರು ಜ್ಞಾನಹೀನರಾಗಿ ಅಳಿದು ಹೋಗುತ್ತಿದ್ದಾರೆ. “ಏಕೆಂದರೆ ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ. ನಾನು ಸಹ ಯಾಜಕ ವರ್ಗದಿಂದ ನಿಮ್ಮನ್ನು ವರ್ಜಿಸಿ ಬಿಡುತ್ತೇನೆ. ಏಕೆಂದರೆ ನೀವು ದೇವರ ನಿಯಮವನ್ನು ಮರೆತುಬಿಟ್ಟಿದ್ದೀರಿ, ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
HOS 4:7 ಯಾಜಕರು ಹೆಚ್ಚಿದ ಹಾಗೆಲ್ಲಾ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ. ಆದ್ದರಿಂದ ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
HOS 4:8 ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ. ಅವರು ದುಷ್ಟತನದ ಮೇಲೆ ಅವರ ಮನಸ್ಸನ್ನು ಇಡುತ್ತಾರೆ.
HOS 4:9 ಯಾಜಕನು ಹೇಗೋ ಹಾಗೆಯೇ ಜನರು ಇರುವರು. ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವೆನು.
HOS 4:10 “ಏಕೆಂದರೆ ಅವರು ತಿಂದರೂ ಸಾಕಾಗುವುದಿಲ್ಲ. ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರನ್ನೇ ಬಿಟ್ಟುಬಿಟ್ಟಿದ್ದಾರೆ.
HOS 4:11 ಮದ್ಯಪಾನ, ದ್ರಾಕ್ಷಾರಸ ಇವು ಜನರನ್ನು ಜ್ಞಾನಹೀನರನ್ನಾಗಿ ಮಾಡುತ್ತವೆ.
HOS 4:12 ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.
HOS 4:13 ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸುತ್ತಾರೆ. ಗುಡ್ಡಗಳ ಮೇಲೆ ಏಲಾ, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ದಟ್ಟವಾಗಿರುವುದರಿಂದ ಧೂಪವನ್ನು ಸುಡುತ್ತಾರೆ. ಆದ್ದರಿಂದ ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವರು. ನಿಮ್ಮ ಸೊಸೆಯಂದಿರು ವ್ಯಭಿಚಾರಿಣಿಗಳಾಗುವರು.
HOS 4:14 “ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವಾಗಲೂ, ನಿಮ್ಮ ಸೊಸೆಯಂದಿರು ವ್ಯಭಿಚಾರ ಮಾಡುವಾಗಲೂ ನಾನು ಅವರನ್ನು ಶಿಕ್ಷಿಸುವುದಿಲ್ಲ. ಏಕೆಂದರೆ ಪುರುಷರು ಸ್ವತಃ ವೇಶ್ಯೆಯರೊಂದಿಗೆ ವಾಸಿಸುತ್ತಾರೆ ಮತ್ತು ದೇವಾಲಯದ ವೇಶ್ಯೆಯರೊಂದಿಗೆ ಬಲಿ ಅರ್ಪಿಸುತ್ತಾರೆ. ಆದ್ದರಿಂದ ವಿವೇಕವಿಲ್ಲದ ಜನರು ನಾಶವಾಗುತ್ತಾರೆ.
HOS 4:15 “ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ, ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. “ಗಿಲ್ಗಾಲಿಗೆ ಹೋಗದೆ, ಇಲ್ಲವೆ ಬೇತಾವೆನಿಗೆ ಏರದೇ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.
HOS 4:16 ಹಠಮಾರಿ ಹಸುವಿನ ಹಾಗೆ ಇಸ್ರಾಯೇಲು ಹಟಮಾರಿಯಾಗಿದೆ. ಈಗ ಯೆಹೋವ ದೇವರು ಹುಲ್ಲುಗಾವಲಲ್ಲಿರುವ ಕುರಿಮರಿಯ ಹಾಗೆ ಅವರನ್ನು ಹೇಗೆ ಮೇಯಿಸುವರು?
HOS 4:17 ಎಫ್ರಾಯೀಮನು ವಿಗ್ರಹಗಳಿಗೆ ಸೇರಿಕೊಂಡಿದ್ದಾನೆ. ಅವನನ್ನು ಅವನಷ್ಟಕ್ಕೆ ಬಿಟ್ಟುಬಿಡು.
HOS 4:18 ಅವರು ಮಿತಿಮೀರಿ ಕುಡಿಯುತ್ತಾರೆ. ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ. ಅವರನ್ನು ಆಳುವವರು ಅವಮಾನ ಕಾರ್ಯಗಳಲ್ಲಿ ಇಷ್ಟಪಡುತ್ತಾರೆ.
HOS 4:19 ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸಿದೆ. ಅವರು ತಮ್ಮ ಬಲಿಗಳಿಂದ ನಾಚಿಕೆಪಡುವರು.
HOS 5:1 “ಯಾಜಕರೇ, ಇದನ್ನು ನೀವು ಕೇಳಿರಿ; ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ.
HOS 5:2 ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ. ಆದರೂ ನಾನು ಅವರೆಲ್ಲರನ್ನು ಶಿಕ್ಷಿಸುವವನಾಗಿದ್ದೇನೆ.
HOS 5:3 ನಾನು ಎಫ್ರಾಯೀಮನ್ನು ಬಲ್ಲೆನು, ಇಸ್ರಾಯೇಲು ನನಗೆ ಮರೆಯಾದದ್ದಲ್ಲ. ಏಕೆಂದರೆ ಎಫ್ರಾಯೀಮೇ, ನೀನು ಈಗಲೇ ವ್ಯಭಿಚಾರ ಮಾಡಲು ತಿರುಗಿಕೊಂಡಿದ್ದೀ. ಇಸ್ರಾಯೇಲು ಸಹ ಅಪವಿತ್ರವಾಯಿತು.
HOS 5:4 “ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.
HOS 5:5 ಇಸ್ರಾಯೇಲಿನ ಗರ್ವವು ಅವರ ಮುಖದ ಮುಂದೆ ಸಾಕ್ಷಿಕೊಡುತ್ತದೆ. ಇಸ್ರಾಯೇಲು ಮತ್ತು ಎಫ್ರಾಯೀಮು ತಮ್ಮ ಪಾಪದಲ್ಲಿ ಎಡವಿ ಬೀಳುವವು. ಯೆಹೂದವು ಸಹ ಅವರೊಂದಿಗೆ ಬೀಳುವುದು.
HOS 5:6 ಅವರು ಯೆಹೋವ ದೇವರನ್ನು ಹುಡುಕುವುದಕ್ಕೆ ತಮ್ಮ ದನಕುರಿಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡಿದ್ದರಿಂದ, ಅವರು ಆತನನ್ನು ಕಾಣುವುದೇ ಇಲ್ಲ.
HOS 5:7 ಅವರು ಯೆಹೋವ ದೇವರಿಗೆ ಅಪನಂಬಿಗಸ್ತರಾಗಿದ್ದಾರೆ. ಅವರು ವ್ಯಭಿಚಾರದ ಮಕ್ಕಳನ್ನು ಪಡೆದಿದ್ದಾರೆ. ಅವರು ತಮ್ಮ ಅಮಾವಾಸ್ಯೆ ಹಬ್ಬಗಳನ್ನು ಆಚರಿಸಿದಾಗ, ಅವರ ಹೊಲಗಳು ನುಂಗಿಬಿಡಲಾಗುವವು.
HOS 5:8 “ಗಿಬೆಯದಲ್ಲಿ ತುತೂರಿಯನ್ನೂ ರಾಮದಲ್ಲಿ ಕೊಂಬನ್ನೂ ಊದಿರಿ. ಬೆನ್ಯಾಮೀನೇ, ನಿನ್ನ ಹಿಂದೆ ನೋಡು! ಬೇತಾವೆನಿನಲ್ಲಿ ಗಟ್ಟಿಯಾಗಿ ಕೂಗು.
HOS 5:9 ಎಫ್ರಾಯೀಮು ಗದರಿಸುವ ದಿವಸದಲ್ಲೇ ಹಾಳಾಗುವುದು. ಇಸ್ರಾಯೇಲಿನ ಗೋತ್ರಗಳಲ್ಲಿ ನಾನು ನಿಶ್ಚಯವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
HOS 5:10 ಯೆಹೂದದ ನಾಯಕರು ಮೇರೆಗಳನ್ನು ಸರಿಸುವವರ ಹಾಗೆ ಇದ್ದರು. ಅವರ ಮೇಲೆ, ನೀರಿನ ಪ್ರವಾಹದಂತೆ ನನ್ನ ಕೋಪವನ್ನು ಸುರಿಸುವೆನು.
HOS 5:11 ಎಫ್ರಾಯೀಮು, ವಿಗ್ರಹಗಳನ್ನು ಅನುಸರಿಸಲು ಮನಸ್ಸು ಮಾಡಿದ ಕಾರಣ, ಅವನು ನ್ಯಾಯತೀರ್ಪಿಗೆ ಗುರಿಯಾಗಿ, ಹಿಂಸೆಗೆ ಒಳಗಾದನು.
HOS 5:12 ನಾನು ಎಫ್ರಾಯೀಮಿಗೆ ನುಸಿಯ ಹಾಗೆಯೂ, ಯೆಹೂದದ ಮನೆತನದವರಿಗೆ ಕೊಳೆಯುವಿಕೆಯ ಹಾಗೆಯೂ ಇರುವೆನು.
HOS 5:13 “ಎಫ್ರಾಯೀಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ, ಎಫ್ರಾಯೀಮ್ ಅಸ್ಸೀರಿಯಕ್ಕೆ ತಿರುಗಿ, ಸಹಾಯಕ್ಕಾಗಿ ಮಹಾ ಅರಸನ ಬಳಿಗೆ ಕಳುಹಿಸಿತು. ಆದರೆ ನಿಮ್ಮನ್ನು ಗುಣಪಡಿಸಲು ಅವನು ಶಕ್ತನಲ್ಲ. ನಿಮ್ಮ ಗಾಯವನ್ನು ಗುಣಪಡಿಸಲಾರನು.
HOS 5:14 ಏಕೆಂದರೆ ನಾನು ಎಫ್ರಾಯೀಮಿಗೆ ಸಿಂಹದ ಹಾಗೆಯೂ, ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ನಾನೇ ಅವರನ್ನು ಸೀಳಿಬಿಟ್ಟು ಹೋಗುವೆನು. ನಾನು ಎತ್ತಿಕೊಂಡು ಹೋಗಲು, ಅವರನ್ನು ಯಾರೂ ಬಿಡಿಸಲಾರರು.
HOS 5:15 ಅಪರಾಧಗಳನ್ನು ಅರಿಕೆಮಾಡಿ, ನನ್ನ ಮುಖವನ್ನು ಹುಡುಕುವವರೆಗೂ, ನಾನು ತಿರುಗಿಕೊಂಡು ನನ್ನ ಗುಹೆಗೆ ಹೋಗುವೆನು. ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.”
HOS 6:1 ಬನ್ನಿರಿ, ನಾವು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳೋಣ. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ, ಅವರೇ ನಮ್ಮನ್ನು ಸ್ವಸ್ಥ ಮಾಡುವರು. ಅವರು ಹೊಡೆದಿದ್ದಾನೆ, ಅವರೇ ನಮ್ಮನ್ನು ಕಟ್ಟುವರು.
HOS 6:2 ಅವರು ಎರಡು ದಿವಸಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು. ಮೂರನೆಯ ದಿವಸದಲ್ಲಿ ಆತನೇ ನಮ್ಮನ್ನು ಪುನಃಸ್ಥಾಪಿಸುವರು. ನಾವು ಅವರ ದೃಷ್ಟಿಯಲ್ಲಿ ಜೀವಿಸುವೆವು.
HOS 6:3 ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.
HOS 6:4 ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ? ಯೆಹೂದವೇ, ನಿನಗೆ ನಾನು ಏನು ಮಾಡಲಿ? ನಿಮ್ಮ ಪ್ರೀತಿಯು ಹೊತ್ತಾರೆಯ ಮೇಘದ ಹಾಗೆಯೂ, ಮುಂಜಾನೆಯ ಮಂಜಿನ ಹಾಗೆಯೂ ಹೋಗಿಬಿಡುತ್ತದೆ.
HOS 6:5 ಆದ್ದರಿಂದ ನಾನು ನಿಮ್ಮ ಜನರನ್ನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು, ನನ್ನ ಬಾಯಿಮಾತುಗಳಿಂದ ಅವರನ್ನು ಸಂಹರಿಸಿದ್ದೇನೆ. ನನ್ನ ನ್ಯಾಯತೀರ್ಪುಗಳು ಸೂರ್ಯನ ಹಾಗೆ ಹೊರಟವು.
HOS 6:6 ಏಕೆಂದರೆ ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ. ದಹನಬಲಿಗಳಿಗಿಂತ ದೇವರ ಅಂಗೀಕಾರವನ್ನೇ ಅಪೇಕ್ಷಿಸುತ್ತೇನೆ.
HOS 6:7 ಅವರು ಆದಾಮನಂತೆ ಒಡಂಬಡಿಕೆಯನ್ನು ಮೀರಿದ್ದಾರೆ. ಅಲ್ಲಿ ಅವರು ನನಗೆ ವಿರುದ್ಧವಾಗಿ ಅಪನಂಬಿಗಸ್ತಿಕೆಯಿಂದ ನಡೆದುಕೊಂಡಿದ್ದಾರೆ.
HOS 6:8 ಗಿಲ್ಯಾದ್ ಕೆಟ್ಟ ಕೆಲಸ ಮಾಡುವವರ ಮತ್ತು ರಕ್ತದಿಂದ ಅಪವಿತ್ರಮಾಡಿದ ಪಟ್ಟಣವಾಗಿದೆ.
HOS 6:9 ದರೋಡೆಕೋರರು ಮನುಷ್ಯನಿಗೋಸ್ಕರ ಹೊಂಚುಹಾಕುವಂತೆ, ಯಾಜಕರ ಗುಂಪು ದಾರಿಹೋಕರಿಗಾಗಿ ಹೊಂಚುಹಾಕುತ್ತಾ ಶೆಕೆಮಿಗೆ ಹೋಗುವವರನ್ನು ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.
HOS 6:10 ಇಸ್ರಾಯೇಲಿನ ಮನೆತನದವರಲ್ಲಿ ಅತಿ ಭಯಂಕರವಾದ ಸಂಗತಿಯನ್ನು ನೋಡಿದೆನು. ಅಲ್ಲಿ ಎಫ್ರಾಯೀಮಿನ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಅಪವಿತ್ರವಾಗಿದೆ.
HOS 6:11 “ಯೆಹೂದವೇ, ನಿನಗೂ ಸಹ, ತಕ್ಕ ಸುಗ್ಗಿಯು ನೇಮಕವಾಗಿದೆ. “ಸೆರೆಯಾದ ನನ್ನ ಜನರಿಗೆ, ಪುನಃಸ್ಥಾಪನೆಯಾಗುವುದು.
HOS 7:1 ನಾನು ಇಸ್ರಾಯೇಲನ್ನು ಗುಣ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಪಾಪಗಳನ್ನು ಬಹಿರಂಗಪಡಿಸುತ್ತೇನೆ. ಮತ್ತು ಸಮಾರ್ಯದ ಕೆಟ್ಟತನವನ್ನು ಪ್ರಕಟಪಡಿಸುತ್ತೇನೆ. ಅವರು ಸುಳ್ಳನ್ನು ನಡೆಸುತ್ತಾರೆ. ಕಳ್ಳನು ಒಳಗೆ ಬರುತ್ತಾನೆ ಮತ್ತು ಕಳ್ಳರ ಗುಂಪು ಹೊರಗೆ ಸುಲಿದುಕೊಳ್ಳುತ್ತದೆ.
HOS 7:2 ಆದರೆ ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕ ಮಾಡುತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನೆಸಿಕೊಳ್ಳುವುದಿಲ್ಲ. ಈಗ ಅವರ ಪಾಪಗಳು ಅವರನ್ನು ಸುತ್ತಿಕೊಂಡಿವೆ. ಅವು ನನ್ನ ಮುಖದ ಮುಂದೆ ಇವೆ.
HOS 7:3 “ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ, ಅವರ ಸುಳ್ಳಿನಿಂದ ರಾಜಕುಮಾರನನ್ನೂ ಸಂತೋಷ ಪಡಿಸುತ್ತಾರೆ.
HOS 7:4 ಅವರೆಲ್ಲರು ವ್ಯಭಿಚಾರಿಗಳು, ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸುವ ಒಲೆಗೆ ಸಮಾನರಾಗಿದ್ದಾರೆ. ಅವನು ಹಿಟ್ಟು ನಾದಿದ ಮೇಲೆ, ಅದು ಹುಳಿಯಾಗುವ ತನಕ ಉರಿಸದೆ ಬಿಟ್ಟಿರುವ ಕೆಂಡಕ್ಕೆ ಸಮಾನರಾಗಿದ್ದಾರೆ.
HOS 7:5 ನಮ್ಮ ಅರಸನ ಹಬ್ಬದ ದಿವಸಗಳಲ್ಲಿ ರಾಜಕುಮಾರರು ದ್ರಾಕ್ಷಾರಸವನ್ನು ಕುಡಿದು ಮತ್ತರಾಗುತ್ತಾರೆ. ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
HOS 7:6 ಅವರು ಹೊಂಚುಹಾಕಿಕೊಂಡಿದ್ದಾಗ, ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ. ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ ಬೆಳಿಗ್ಗೆ ಅದು ಪ್ರಜ್ವಲಿಸುವ ಬೆಂಕಿಯ ಹಾಗೆ ಉರಿಯುತ್ತದೆ.
HOS 7:7 ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ. ಅವರು ತಮ್ಮ ನ್ಯಾಯಾಧಿಪತಿಗಳನ್ನು ನುಂಗಿಬಿಡುತ್ತಾರೆ. ಅವರ ಅರಸರೆಲ್ಲರು ಬಿದ್ದು ಹೋಗಿದ್ದಾರೆ. ಅವರಲ್ಲಿ ಒಬ್ಬನಾದರೂ ನನ್ನನ್ನು ಕರೆಯುವುದಿಲ್ಲ.
HOS 7:8 “ಎಫ್ರಾಯೀಮು ಜನಾಂಗಗಳೊಂದಿಗೆ ತನ್ನನ್ನು ಬೆರೆಸಿಕೊಂಡಿದೆ. ಎಫ್ರಾಯೀಮು ತಿರುವಿ ಹಾಕದ ರೊಟ್ಟಿಯಾಗಿದ್ದಾನೆ.
HOS 7:9 ವಿದೇಶಿಯರು ಅವನ ಶಕ್ತಿಯನ್ನು ಹೀರಿಬಿಟ್ಟಿದ್ದಾರೆ. ಅದು ಅವನಿಗೆ ಗೊತ್ತಿಲ್ಲ. ನರೆಕೂದಲು ಸಹ ಅವನ ಮೇಲೆ ಇದೆ. ಆದರೂ ಅವನು ತಿಳಿಯದೇ ಇದ್ದಾನೆ.
HOS 7:10 ಇಸ್ರಾಯೇಲಿನ ಗರ್ವವು ಅವನಿಗೆ ವಿರುದ್ಧವಾಗಿ ಸಾಕ್ಷಿಕೊಡುತ್ತದೆ. ಆದರೂ ಅವರು ತಮ್ಮ ಯೆಹೋವ ದೇವರ ಕಡೆಗೆ ತಿರುಗದೆ ಇದ್ದಾರೆ. ಆತನನ್ನು ಹುಡುಕದೇ ಇದ್ದಾರೆ.
HOS 7:11 “ಎಫ್ರಾಯೀಮು ಸಹ ಸುಲಭವಾಗಿ ಮೋಸಕ್ಕೆ ಒಳಗಾಗುವ ಪಾರಿವಾಳದ ಹಾಗಿದ್ದಾನೆ. ಈಗ ಅವರು ಈಜಿಪ್ಟನ್ನು ಕರೆಯುತ್ತಾರೆ. ಈಗ ಅವರು ಅಸ್ಸೀರಿಯದ ಆಶ್ರಯಕ್ಕೆ ಹೋಗುತ್ತಾರೆ.
HOS 7:12 ಅವರು ಹೋಗುವಾಗ, ನಾನು ಅವರ ಮೇಲೆ ನನ್ನ ಬಲೆಯನ್ನು ಹಾಸುವೆನು. ಆಕಾಶದ ಪಕ್ಷಿಗಳ ಹಾಗೆ, ಅವರನ್ನು ಕೆಳಗೆ ಇಳಿಸಿ, ಅವರು ಒಟ್ಟಿಗೆ ಸೇರುವುದನ್ನು ನಾನು ಕೇಳಿದಾಗ, ನಾನು ಅವುಗಳನ್ನು ಹಿಡಿಯುತ್ತೇನೆ.
HOS 7:13 ಅವರಿಗೆ ಕಷ್ಟ, ಏಕೆಂದರೆ ಅವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಅವರು ನಾಶವಾಗಲಿ! ಏಕೆಂದರೆ ಅವರು ನನಗೆ ವಿರುದ್ಧವಾಗಿ ದ್ರೋಹ ಮಾಡಿದ್ದಾರೆ. ನಾನು ಅವರಿಗೆ ವಿಮೋಚನೆ ಮಾಡಿದ್ದರೂ, ಅವರು ನನಗೆ ವಿರುದ್ಧವಾಗಿ ಸುಳ್ಳು ಹೇಳಿದ್ದಾರೆ.
HOS 7:14 ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ, ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ. ಧಾನ್ಯ ಮತ್ತು ದ್ರಾಕ್ಷಾರಸಗಳ ನಿಮಿತ್ತ ಅವರು ತಮ್ಮ ದೇವರುಗಳಿಗೆ ಮನವಿ ಮಾಡುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ, ಆದರೆ ಅವರು ನನ್ನಿಂದ ದೂರವಿರುತ್ತಾರೆ.
HOS 7:15 ನಾನು ಅವರ ತೋಳುಗಳನ್ನು ಬಂಧಿಸಿ ಬಲಪಡಿಸಿದ್ದೇನೆ. ಆದರೂ ಅವರು ನನಗೆ ವಿರುದ್ಧವಾಗಿ ಕೇಡು ಮಾಡಲು ಊಹಿಸಿಕೊಂಡಿದ್ದಾರೆ.
HOS 7:16 ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.
HOS 8:1 “ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ. ಅವರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ನ್ಯಾಯ ಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಶತ್ರುಗಳು ಹದ್ದಿನ ಹಾಗೆ ಯೆಹೋವ ದೇವರ ಆಲಯದ ಮೇಲೆ ಬರುವರು.
HOS 8:2 ಇಸ್ರಾಯೇಲಿನವರು, ‘ನನ್ನ ದೇವರೇ, ನಾವು ನಿಮ್ಮನ್ನು ತಿಳಿದಿದ್ದೇವೆ,’ ಎಂದು ನನಗೆ ಕೂಗುತ್ತಿದ್ದಾರೆ.
HOS 8:3 ಆದರೆ ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ. ಒಬ್ಬ ಶತ್ರುವು ಅವನನ್ನು ಹಿಂದಟ್ಟುವನು.
HOS 8:4 ಅವರು ಅರಸರನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ. ಅವರು ತಾವು ನಾಶವಾಗುವಂತೆ ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
HOS 8:5 ಸಮಾರ್ಯವೇ, ನಿನ್ನ ಬಸವ ವಿಗ್ರಹವನ್ನು ಬಿಸಾಡಿಬಿಡು. ನನ್ನ ಕೋಪವು ಅವರ ಮೇಲೆ ಉರಿಯುತ್ತದೆ. ಅವರು ಎಷ್ಟು ಕಾಲ ಶುದ್ಧತೆಗೆ ಅಸಮರ್ಥರಾಗಿರುತ್ತಾರೆ?
HOS 8:6 ಅವರು ಇಸ್ರಾಯೇಲಿನಿಂದ ಬಂದವರು. ಕಮ್ಮಾರನು ಈ ಬಸವ ವಿಗ್ರಹವನ್ನು ಮಾಡಿದನು. ಅದು ದೇವರಲ್ಲ, ಆದರೆ ಸಮಾರ್ಯದ ಬಸವನನ್ನು ಚೂರುಚೂರಾಗುವುದು.
HOS 8:7 “ಅವರು ಗಾಳಿಯನ್ನು ಬಿತ್ತಿದ್ದಾರೆ. ಬಿರುಗಾಳಿಯನ್ನು ಕೊಯ್ಯುತ್ತಾರೆ. ಇಸ್ರಾಯೇಲರ ಪೈರು ತೆನೆಗೆ ಬಾರದು. ಮೊಳಕೆಯು ಆಹಾರವನ್ನು ಕೊಡುವುದಿಲ್ಲ. ಒಂದು ವೇಳೆ ಅದು ಕೊಟ್ಟರೂ ವಿದೇಶಿಯರು ಅದನ್ನು ನುಂಗುತ್ತಾರೆ.
HOS 8:8 ಇಸ್ರಾಯೇಲನ್ನು ಕಬಳಿಸಲಾಗಿದೆ. ಅವರು ಜನಾಂಗಗಳಲ್ಲಿ ಬೇಡವಾದ ಪಾತ್ರೆಯ ಹಾಗೆ ಇದ್ದಾರೆ.
HOS 8:9 ಅವರು ಒಂಟಿಯಾದ ಕಾಡುಕತ್ತೆಯ ಹಾಗೆ ಅಸ್ಸೀರಿಯಗೆ ಹೋಗಿದ್ದಾರೆ. ಎಫ್ರಾಯೀಮು ಪ್ರೇಮಿಗಳಿಗೆ ತನ್ನನ್ನು ಮಾರಿಕೊಂಡಿದೆ.
HOS 8:10 ಎಫ್ರಾಯೀಮು ಜನಾಂಗಗಳಿಗೆ ತಮ್ಮನ್ನು ಮಾರಿಕೊಂಡಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿಸುವೆನು. ಅವರು ಪ್ರಬಲ ಅರಸನ ಹಿಂಸೆಯಿಂದಾಗಿ ಕಷ್ಟಪಡುವರು.
HOS 8:11 “ಎಫ್ರಾಯೀಮು ಪಾಪ ಪರಿಹಾರಕ್ಕಾಗಿ ಅನೇಕ ಬಲಿಪೀಠಗಳನ್ನು ಕಟ್ಟಿದ್ದರೂ, ಈ ಬಲಿಪೀಠಗಳೇ ಅವರ ಪಾಪಕ್ಕೆ ಕಾರಣವಾಗಿವೆ.
HOS 8:12 ನಾನು ನನ್ನ ನಿಯಮದ ಅನೇಕ ಸಂಗತಿಗಳನ್ನು ಅವನಿಗೆ ಬರೆದಿದ್ದೇನೆ. ಆದರೆ ಅವನು ಅವುಗಳನ್ನು ಅನ್ಯವಾದವುಗಳೆಂದು ಪರಿಗಣಿಸಿದನು.
HOS 8:13 ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ, ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ. ಆದರೆ ಯೆಹೋವ ದೇವರು ಅವುಗಳಿಗೆ ಮೆಚ್ಚುವುದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕಮಾಡಿಕೊಂಡು, ಅವರ ಪಾಪಗಳನ್ನು ಶಿಕ್ಷಿಸಿದರು. ಅವರು ಈಜಿಪ್ಟಿಗೆ ಹಿಂದಿರುಗುವರು.
HOS 8:14 ಇಸ್ರಾಯೇಲರು ತಮ್ಮ ಸೃಷ್ಟಿಕರ್ತನನ್ನು ಮರೆತುಬಿಟ್ಟು, ಅರಮನೆಗಳನ್ನು ಕಟ್ಟುತ್ತಾರೆ. ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚುಮಾಡಿಕೊಂಡಿದೆ. ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವರ ಕೋಟೆಗಳನ್ನು ನುಂಗಿಬಿಡುವುದು.”
HOS 9:1 ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ ಸಂತೋಷ ಪಡಬೇಡ. ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. ಎಲ್ಲಾ ಧಾನ್ಯದ ಕಣಗಳಲ್ಲಿ ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.
HOS 9:2 ಧಾನ್ಯ ಕಣವು ಮತ್ತು ದ್ರಾಕ್ಷಿಯ ತೊಟ್ಟಿಯೂ ಅವರನ್ನು ಪೋಷಿಸುವುದಿಲ್ಲ. ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವುವು.
HOS 9:3 ಅವರು ಯೆಹೋವ ದೇವರ ದೇಶದಲ್ಲಿ ನೆಲೆಸುವುದಿಲ್ಲ. ಆದರೆ ಎಫ್ರಾಯೀಮು ಈಜಿಪ್ಟಿಗೆ ಹಿಂದಿರುಗುವುದು. ಅವರು ಅಸ್ಸೀರಿಯದಲ್ಲಿ ಅಶುದ್ಧವಾದವುಗಳನ್ನು ತಿನ್ನುವರು.
HOS 9:4 ಅವರು ದ್ರಾಕ್ಷಾರಸವನ್ನು ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಿಲ್ಲ. ಅವರ ಬಲಿಗಳು ಆತನಿಗೆ ಮೆಚ್ಚಿಗೆಯಾಗಿರುವುದಿಲ್ಲ. ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿರುವುವು. ಅದನ್ನು ತಿನ್ನುವವರೆಲ್ಲರೂ ಅಪವಿತ್ರರಾಗುವರು. ಏಕೆಂದರೆ ಅದು ಅವರ ಹೊಟ್ಟೆ ತುಂಬುವುದಕ್ಕೆ ಮಾತ್ರ ಸರಿಯೇ ಹೊರತು, ಯೆಹೋವ ದೇವರ ಆಲಯಕ್ಕೆ ಸಲ್ಲುವುದಿಲ್ಲ.
HOS 9:5 ಪರಿಶುದ್ಧ ದಿವಸದಲ್ಲಿಯೂ, ಯೆಹೋವ ದೇವರ ಹಬ್ಬಗಳ ದಿವಸದಲ್ಲಿಯೂ ನೀನು ಏನು ಮಾಡುತ್ತೀ?
HOS 9:6 ಇಗೋ, ನಾಶನದಿಂದ ಅವರು ತಪ್ಪಿಸಿಕೊಂಡರೂ ಈಜಿಪ್ಟ್ ಅವರನ್ನು ಕೂಡಿಸುವುದು. ಮೋಫ್ ಪಟ್ಟಣವು ಅವರನ್ನು ಹೂಳುವುದು. ಅವರ ಬೆಳ್ಳಿಯ ಬೊಕ್ಕಸಗಳು ಮುಳ್ಳು ಪೊದೆಗಳ ಪಾಲಾಗುವುವು. ಮುಳ್ಳುಗಿಡಗಳು ಅವರ ಗುಡಾರಗಳನ್ನು ಆವರಿಸಿಕೊಂಡಿರುವುದು.
HOS 9:7 ದಂಡನೆಯ ದಿವಸಗಳು ಬಂದಿವೆ, ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ. ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ. ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ, ದ್ವೇಷವು ಹೆಚ್ಚಾಗಿರುವುದರಿಂದಲೂ, “ಪ್ರವಾದಿ ಮೂರ್ಖನೂ, ಪ್ರೇರಿತ ಮನುಷ್ಯನು ಹುಚ್ಚನೂ,” ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ.
HOS 9:8 ನನ್ನ ದೇವರೊಂದಿಗೆ ಪ್ರವಾದಿಯು ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ, ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ.
HOS 9:9 ಗಿಬೆಯದ ದಿವಸಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ. ಆದ್ದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕ ಮಾಡಿಕೊಳ್ಳುವನು. ಅವರ ಪಾಪಕ್ಕೆ ತನ್ನ ದಂಡನೆಯನ್ನು ವಿಧಿಸುವನು.
HOS 9:10 “ನಾನು ಮರುಭೂಮಿಯಲ್ಲಿ ದ್ರಾಕ್ಷಾಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು. ಆದರೆ ಅವರು ಬಾಳ್ ಪೆಯೋರನ ಹತ್ತಿರ ಬಂದು ನಾಚಿಕೆಯ ವಿಗ್ರಹಕ್ಕೆ ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ಪ್ರೀತಿಸಿದ ವಿಗ್ರಹಗಳ ಹಾಗೆ ಅಸಹ್ಯರಾದರು.
HOS 9:11 ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು. ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ.
HOS 9:12 ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ, ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು. ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ!
HOS 9:13 ಎಫ್ರಾಯೀಮ್ ಟೈರ್‌ನಂತಹ ಸುಂದರವಾದ ಸ್ಥಳದಲ್ಲಿ ನೆಡುವುದನ್ನು ನಾನು ಕಂಡೆನು. ಆದರೆ ಎಫ್ರಾಯೀಮ್ ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು.”
HOS 9:14 ಯೆಹೋವ ದೇವರೇ, ಅವರಿಗೆ ಕೊಡಿರಿ. ಅವರಿಗೆ ನೀವು ಏನು ಕೊಡುತ್ತೀರಿ? ಗರ್ಭ ಸ್ರಾವ, ಗರ್ಭವನ್ನು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡಿರಿ.
HOS 9:15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ. ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ, ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ. ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ.
HOS 9:16 ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ. ಅವರ ಬೇರು ಒಣಗಿಹೋಗಿದೆ, ಅವರು ಫಲವನ್ನು ಕೊಡುವುದಿಲ್ಲ, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.
HOS 9:17 ನನ್ನ ದೇವರು ಅವರನ್ನು ತಳ್ಳಿಬಿಡುವರು. ಏಕೆಂದರೆ ಅವರು ಆತನಿಗೆ ವಿಧೇಯರಾಗಲಿಲ್ಲ. ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
HOS 10:1 ಇಸ್ರಾಯೇಲು ಹರಡುವ ದ್ರಾಕ್ಷಿಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿಸುತ್ತಾನೆ. ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಅಭಿವೃದ್ಧಿಯ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿದ್ದಾನೆ.
HOS 10:2 ಅವರ ಹೃದಯವು ವಂಚಕವಾದದ್ದು. ಈಗ ಅವರು ಅಪರಾಧಗಳನ್ನು ಹೊರಬೇಕು. ಯೆಹೋವ ದೇವರು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವರು.
HOS 10:3 ಆಗ ಅವರು, “ನಮಗೆ ಅರಸನಿಲ್ಲ, ಏಕೆಂದರೆ ನಾವು ಯೆಹೋವ ದೇವರಲ್ಲಿ ಭಯಭಕ್ತಿ ಇಟ್ಟವರಲ್ಲ. ಅರಸನು ನಮಗಿದ್ದರೂ ಏನು ಮಾಡುವನು?” ಎಂದುಕೊಳ್ಳುತ್ತಾರೆ.
HOS 10:4 ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡುವುದಕ್ಕೆ ಸುಳ್ಳು ಪ್ರಮಾಣವನ್ನು ಮಾಡುತ್ತಾರೆ. ಆದ್ದರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
HOS 10:5 ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು.
HOS 10:6 ಅದು ಸಹ, ಮಹಾರಾಜನಿಗೆ ಕಾಣಿಕೆಯಾಗಿ ಅಸ್ಸೀರಿಯಕ್ಕೆ ಒಯ್ಯಲಾಗುವುದು. ಎಫ್ರಾಯೀಮು ನಾಚಿಕೆಯನ್ನು ಹೊಂದುವುದು. ಇಸ್ರಾಯೇಲ್ ಸಹ ತನ್ನ ಸಲಹೆಯ ಬಗ್ಗೆ ನಾಚಿಕೆಪಡುತ್ತದೆ.
HOS 10:7 ಸಮಾರ್ಯ ಹಾಗು ಅದರ ಅರಸನು ನೀರಿನ ಮೇಲಿನ ಕಡ್ಡಿಯ ಹಾಗೆ ಅಳಿದು ಹೋಗುವನು.
HOS 10:8 ಇಸ್ರಾಯೇಲಿನ ಪಾಪಕ್ಕೆ ಆಸ್ಪದವಾದ ಆವೆನಿನ ಉನ್ನತ ಪೂಜಾಸ್ಥಳಗಳು ಹಾಳಾಗಿ ಹೋಗುವುವು. ಮುಳ್ಳುಗಿಡಗಳೂ, ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವುವು. ಜನರು ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ! ಗುಡ್ಡಗಳಿಗೆ, ನಮ್ಮನ್ನು ಮುಚ್ಚಿಕೊಳ್ಳಿರಿ!” ಎನ್ನುವರು.
HOS 10:9 ಇಸ್ರಾಯೇಲೇ ನೀನು ಗಿಬೆಯದಲ್ಲಿದ್ದ ಕಾಲದಿಂದ ನನ್ನ ವಿರುದ್ಧ ಪಾಪ ಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬೆಯದಲ್ಲಿ ಕೆಟ್ಟದ್ದನ್ನು ಮಾಡುವ ಜನರು ಯುದ್ಧಕ್ಕೆ ತುತ್ತಾಗಲಿದ್ದಾರೆ.
HOS 10:10 ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು. ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿಯಾಗುವುದು, ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.
HOS 10:11 ಎಫ್ರಾಯೀಮು ಒಂದು ತರಬೇತಿ ಪಡೆದ ಕಡಸಾಗಿದೆ. ಅದು ತುಳಿಯುವುದನ್ನು ಇಷ್ಟಪಡುತ್ತದೆ. ಆದರೆ ನಾನು ಅದರ ಸುಂದರವಾದ ಕುತ್ತಿಗೆಯ ಮೇಲೆ ನೊಗವನ್ನು ಹೊರುತ್ತೇನೆ. ಎಫ್ರಾಯೀಮು ಸವಾರಿ ಮಾಡುವ ಹಾಗೆ ನಾನು ಮಾಡುವೆನು. ಯೆಹೂದ ಉಳುವನು. ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
HOS 10:12 ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ. ಪ್ರೀತಿಯ ಫಲವನ್ನು ಕೊಯ್ಯಿರಿ. ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ. ಏಕೆಂದರೆ ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವವರೆಗೂ ಯೆಹೋವ ದೇವರನ್ನು ಹುಡುಕುವ ಸಮಯ ಇದೇ.
HOS 10:13 ಆದರೆ ನೀವು ದುಷ್ಟತ್ವವನ್ನು ಬಿತ್ತಿ, ಅನ್ಯಾಯವನ್ನು ಕೊಯ್ದಿರಿ, ವಂಚನೆಯ ಫಲವನ್ನು ತಿಂದಿದ್ದೀರಿ. ಏಕೆಂದರೆ ನೀವು ನಿಮ್ಮ ಸ್ವಂತ ಬಲದಲ್ಲಿ ನಿಮ್ಮ ಶೂರರಲ್ಲಿಯೂ ಭರವಸೆಯಿಟ್ಟಿದ್ದೀರಿ.
HOS 10:14 ಆದ್ದರಿಂದ ನಿನ್ನ ಜನರಲ್ಲಿ ಗಲಭೆ ಉಂಟಾಗುವುದು. ಶಲ್ಮಾನ ರಾಜನು ಬೇತ್ ಅರ್ಬೇಲನ್ನು ಯುದ್ಧದ ದಿನದಲ್ಲಿ ನಾಶಮಾಡಿದ ಪ್ರಕಾರ, ನಿನ್ನ ಕೋಟೆಗಳೆಲ್ಲಾ ನಾಶವಾಗುವವು. ತಾಯಿ, ತನ್ನ ಮಕ್ಕಳ ಸಹಿತ ಬಂಡೆಗೆ ಅಪ್ಪಳಿಸಿದ
HOS 10:15 ಹಾಗೆಯೇ, ಬಹಳ ದುಷ್ಟತ್ವದ ನಿಮಿತ್ತ ಬೇತೇಲಿಗೆ ಸಂಭವಿಸುವುದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.
HOS 11:1 “ಇಸ್ರಾಯೇಲನು ಹುಡುಗನಾಗಿದ್ದಾಗ, ನಾನು ಅವನನ್ನು ಪ್ರೀತಿ ಮಾಡಿದೆನು ಮತ್ತು ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು.
HOS 11:2 ನಾನು ಇಸ್ರಾಯೇಲನ್ನು ಹೆಚ್ಚಾಗಿ ಕರೆದ ಹಾಗೆಯೇ, ನನ್ನಿಂದ ಅವರು ದೂರ ಹೊರಟು ಹೋದರು. ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು. ಕೆತ್ತಿದ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.
HOS 11:3 ನಾನು ಎಫ್ರಾಯೀಮಿನ ತೋಳುಗಳನ್ನು ಹಿಡಿದು ನಡೆಯುವುದನ್ನು ಕಲಿಸಿದೆನು. ಆದರೆ ನಾನು ಅವರನ್ನು ಸ್ವಸ್ಥ ಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.
HOS 11:4 ನಾನು ಅವರನ್ನು ಮನುಷ್ಯನ ಹಗ್ಗಗಳಿಂದಲೂ, ಪ್ರೀತಿಯ ಬಂಧನಗಳಿಂದಲೂ ಎಳೆದೆನು. ಅವರಿಗೆ ನಾನು ಚಿಕ್ಕ ಮಗುವನ್ನು ಕೆನ್ನೆಯವರೆಗೆ ಎತ್ತುವವರಂತೆ ಇದ್ದೆ, ಮತ್ತು ನಾನು ಅವರಿಗೆ ಬಾಗಿ ತಿನ್ನಿಸುತ್ತಿದ್ದೆ.
HOS 11:5 “ಅವರು ಮಾನಸಾಂತರಪಡಲು ನಿರಾಕರಿಸಿದ್ದರಿಂದ, ಪುನಃ ಈಜಿಪ್ಟಿಗೆ ಹಿಂದಿರುಗುವರು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವರು.
HOS 11:6 ಅವರ ಪಟ್ಟಣಗಳಲ್ಲಿ ಖಡ್ಗವು ಹೊಳೆಯುವುದು. ಅದು ಅವರ ಸುಳ್ಳು ಪ್ರವಾದಿಗಳನ್ನು ನುಂಗಿಹಾಕುತ್ತದೆ. ಮತ್ತು ಅವರ ಯೋಜನೆಗಳನ್ನು ಕೊನೆಗೊಳಿಸುತ್ತದೆ.
HOS 11:7 ನನ್ನ ಜನರು ನನ್ನ ಕಡೆಯಿಂದ ಹಿಂಜಾರಬೇಕೆಂದು ತೀರ್ಮಾನಿಸಿದ್ದಾರೆ. ಅವರು ನನ್ನನ್ನು ಸರ್ವೋನ್ನತ ದೇವರು ಎಂದು ಕರೆದರೂ ನಾನು ಅವರನ್ನು ಯಾವುದೇ ರೀತಿಯಲ್ಲಿ ಉನ್ನತೀಕರಿಸುವುದಿಲ್ಲ.
HOS 11:8 “ಎಫ್ರಾಯೀಮೇ, ನಿನ್ನನ್ನು ಹೇಗೆ ಬಿಟ್ಟುಬಿಡಲಿ? ಇಸ್ರಾಯೇಲೇ, ನಿನ್ನನ್ನು ಹೇಗೆ ಕೈಬಿಡಲಿ? ಅದ್ಮದ ಹಾಗೆ ನಿನ್ನನ್ನು ದುರ್ಗತಿಗೆ ಹೇಗೆ ಒಪ್ಪಿಸಲಿ? ಚೆಬೋಯಿಮನಂತೆ ನಿನ್ನನ್ನು ಹೇಗೆ ನಾಶಮಾಡಲಿ? ನನ್ನ ಹೃದಯವು ನನ್ನಲ್ಲಿ ಮಾರ್ಪಟ್ಟಿದೆ. ನನ್ನಲ್ಲಿ ಕರುಣೆ ಉಕ್ಕಿ ಬಂದಿದೆ.
HOS 11:9 ನನ್ನ ಕೋಪದ ಉರಿಯನ್ನು ನಾನು ತೀರಿಸುವುದಿಲ್ಲ. ನಾನು ಎಫ್ರಾಯೀಮನ್ನು ತಿರುಗಿ ನಾಶಮಾಡುವುದಿಲ್ಲ. ಏಕೆಂದರೆ ನಾನು ಮನುಷ್ಯನಲ್ಲ, ದೇವರೇ. ನಿನ್ನ ಮಧ್ಯದಲ್ಲಿ ಪರಿಶುದ್ಧನಾಗಿದ್ದೇನೆ. ನಾನು ಅವರ ಪಟ್ಟಣಗಳ ವಿರುದ್ಧ ಬರುವುದಿಲ್ಲ.
HOS 11:10 ಅವರು ಯೆಹೋವ ದೇವರ ಹಿಂದೆ ಹೋಗುವರು. ಅವರು ಸಿಂಹದ ಹಾಗೆ ಗರ್ಜಿಸುವರು. ಅವರು ಗರ್ಜಿಸುವಾಗ ಪಶ್ಚಿಮದಿಂದ ಮಕ್ಕಳು ನಡುಗುತ್ತಾ ಬರುವರು.
HOS 11:11 ಈಜಿಪ್ಟಿನಿಂದ ಪಕ್ಷಿಯಗಳಂತೆಯೂ ಅಸ್ಸೀರಿಯದಿಂದ ಪಾರಿವಾಳಗಳಂತೆಯೂ ಅವರು ಬರುವರು. ನಾನು ಅವರ ಮನೆಗಳಲ್ಲಿ ಇರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
HOS 11:12 ಎಫ್ರಾಯೀಮು ಸುಳ್ಳಿನಿಂದ ಮತ್ತು ಇಸ್ರಾಯೇಲಿನ ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ. ಯೆಹೂದ ಕೂಡ ಪರಿಶುದ್ಧರೂ ನಂಬಿಗಸ್ತರೂ ಆದ ದೇವರ ವಿರುದ್ಧ ಅಶಿಸ್ತಿನಿಂದ ಇದೆ.
HOS 12:1 ಎಫ್ರಾಯೀಮು ಗಾಳಿಯನ್ನು ತಿನ್ನುತ್ತದೆ. ಪೂರ್ವದ ಗಾಳಿಯ ಹಿಂದೆ ಹಿಂಬಾಲಿಸಿಕೊಂಡು ಹೋಗುತ್ತದೆ. ಅವನು ದಿನವೆಲ್ಲಾ ಸುಳ್ಳನ್ನೂ, ಹಿಂಸೆಯನ್ನೂ ಹೆಚ್ಚಿಸಿ, ಅಸ್ಸೀರಿಯರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಹೊತ್ತುಕೊಂಡು ಹೋಗುತ್ತಾನೆ.
HOS 12:2 ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.
HOS 12:3 ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು, ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.
HOS 12:4 ಯಾಕೋಬನು ದೇವದೂತನ ಸಂಗಡ ಹೋರಾಡಿ ಜಯಿಸಿದನು. ಅವನು ಅತ್ತು ಆತನ ಅನುಗ್ರಹಕ್ಕಾಗಿ ವಿಜ್ಞಾಪನೆಯನ್ನು ಸಲ್ಲಿಸಿದನು. ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು. ಅಲ್ಲಿ ಅವನು ಆತನೊಂದಿಗೆ ಮಾತನಾಡಿದನು.
HOS 12:5 ಅವರೇ ಸರ್ವಶಕ್ತರಾದ ಯೆಹೋವ ದೇವರು; ಅವರ ಪ್ರಸಿದ್ಧ ಹೆಸರು ಯೆಹೋವ ದೇವರು ಎಂಬುದೇ.
HOS 12:6 ಆದರೆ ನೀನು ನಿನ್ನ ದೇವರ ಕಡೆಗೆ ತಿರುಗಿಕೋ. ಪ್ರೀತಿಯನ್ನೂ, ನ್ಯಾಯವನ್ನೂ ಪಾಲಿಸು ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.
HOS 12:7 ಅವನು ವ್ಯಾಪಾರಿಯಾಗಿದ್ದು, ಅವನ ಕೈಯಲ್ಲಿ ಮೋಸದ ತಕ್ಕಡಿ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅವನ ದುರಾಶೆ.
HOS 12:8 ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ, “ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು. ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”
HOS 12:9 ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ, ನಿನ್ನ ದೇವರಾಗಿರುವ ಯೆಹೋವ ದೇವರಾದ ನಾನು, ಜಾತ್ರೆಯ ದಿನಗಳಲ್ಲಿ ನೀವು ವನವಾಸ ಮಾಡಿದಂತೆ, ನಿಮ್ಮನ್ನು ಪುನಃ ಗುಡಾರದ ವಾಸಕ್ಕೆ ಗುರಿಪಡಿಸುವೆನು.
HOS 12:10 ನಾನು ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮ್ಯಗಳನ್ನು ಜನರಿಗೆ ಹೇಳಿದ್ದೇನೆ.
HOS 12:11 ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ಅಲ್ಲಿನ ಜನರು ಅಯೋಗ್ಯರೇ? ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ? ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.
HOS 12:12 ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು. ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ, ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
HOS 12:13 ಪ್ರವಾದಿಯಿಂದ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಬರಮಾಡಿ, ಆ ಪ್ರವಾದಿಯಿಂದಲೇ ಆತನು ಅವರನ್ನು ಕಾಪಾಡಿದರು.
HOS 12:14 ಆದರೂ ಎಫ್ರಾಯೀಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದ್ದರಿಂದ ಯೆಹೋವ ದೇವರು ಅದರ ರಕ್ತಾಪರಾಧವನ್ನು ಅದರ ಮೇಲೆ ಬರಮಾಡುವರು. ಅವನ ನಿಂದೆಯನ್ನು ಯೆಹೋವ ದೇವರು ಅವನ ಮೇಲೆ ಬರಮಾಡುವರು.
HOS 13:1 “ಪೂರ್ವದಲ್ಲಿ ಎಫ್ರಾಯೀಮು ಮಾತನಾಡುವಾಗ, ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು. ಆದರೆ ಬಾಳನ ಆರಾಧನೆಯಲ್ಲಿ ಅವನು ಅಪರಾಧಿಯಾಗಿ ಸತ್ತನು.
HOS 13:2 ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ. ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ, ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅದೆಲ್ಲವೂ ಕಮ್ಮಾರರ ಕೈಕೆಲಸವೇ. ಅವರು ನರಬಲಿಯನ್ನು ಅರ್ಪಿಸುತ್ತಾರೆ, ಬಸವನ ವಿಗ್ರಹಕ್ಕೆ ಮುದ್ದಿಡುತ್ತಾರೆ,” ಎಂದು ಜನರು ಅವರ ಬಗ್ಗೆ ಹೇಳುತ್ತಾರೆ.
HOS 13:3 ಆದ್ದರಿಂದ ಅವರು ಪ್ರಾತಃಕಾಲದ ಮಂಜಿನ ಹಾಗೆಯೂ, ಬೇಗನೆ ಮಾಯವಾಗುವ ಇಬ್ಬನಿಯ ಹಾಗೆಯೂ, ಸುಳಿಗಾಳಿಯು ಕಣದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ, ಚಿಮಿಣಿಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
HOS 13:4 ಆದರೂ ನಾನು ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದ, ನಾನೇ ನಿನ್ನ ದೇವರಾಗಿರುವ ಯೆಹೋವನಾಗಿದ್ದೇನೆ. ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು. ಏಕೆಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
HOS 13:5 ನಾನು ನಿನ್ನನ್ನು ಮರುಭೂಮಿಯಲ್ಲಿಯೂ, ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
HOS 13:6 ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು. ಅವರು ತೃಪ್ತರಾದಾಗ, ಅಹಂಕಾರಿಗಳಾದರು, ಅನಂತರ ಅವರು ನನ್ನನ್ನು ಮರೆತುಬಿಟ್ಟರು.
HOS 13:7 ಆದ್ದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು. ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚುಹಾಕುವೆನು.
HOS 13:8 ನಾನು ಮರಿಯನ್ನು ಕಳೆದುಕೊಂಡ ಕರಡಿಯಂತೆ ಅವರನ್ನು ಎದುರುಗೊಳ್ಳುವೆನು. ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ನಾನು ಸಿಂಹದ ಹಾಗೆ ಅವರನ್ನು ನುಂಗುವೆನು. ಕಾಡುಮೃಗವು ಅವರನ್ನು ಸೀಳಿ ಹಾಕುವುದು.
HOS 13:9 “ಇಸ್ರಾಯೇಲೇ, ನೀನು ನಿನ್ನ ಬೆಂಬಲವಾದ ನನಗೆ ತಿರುಗಿಬಿದ್ದದರಿಂದ ನಾಶವಾಗಿದ್ದೀ.
HOS 13:10 ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜ್ಯವನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ. ಆ ನ್ಯಾಯಾಧಿಪತಿಗಳು ಎಲ್ಲಿ?
HOS 13:11 ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು ಮತ್ತು ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
HOS 13:12 ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ. ಅವನ ಪಾಪವು ದಾಖಲೆಯಾಗಿದೆ.
HOS 13:13 ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅವನು ಬಾರದೆ ಇದ್ದಾನೆ.
HOS 13:14 “ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು. ಮರಣದಿಂದ ಅವರನ್ನು ಬಿಡಿಸುವೆನು. ಮರಣವೇ ನಿನ್ನ ಉಪದ್ರವ ಎಲ್ಲಿ? ಪಾತಾಳವೇ ನಿನ್ನ ವಿನಾಶವೆಲ್ಲಿ? “ಅನುಕಂಪವು ನನ್ನಿಂದ ದೂರವಾಗಿದೆ.
HOS 13:15 ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವ ದೇವರು ಬೀಸಮಾಡುವ ಪೂರ್ವ ಗಾಳಿಯು ಬರಲು, ಅವನ ಬುಗ್ಗೆಯು ಬತ್ತುವುದು. ಅವನ ಒರತೆಯು ಒಣಗುವುದು. ಅವನ ಬೊಕ್ಕಸಗಳ ನಿಧಿಯನ್ನು ಶತ್ರುಗಳು ಸೂರೆಮಾಡುವರು.
HOS 13:16 ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ, ತನ್ನ ದೋಷಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು, ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”
HOS 14:1 ಇಸ್ರಾಯೇಲೇ, ನಿನ್ನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೋ. ಏಕೆಂದರೆ ನಿನ್ನ ಪಾಪಗಳೇ, ನಿನ್ನ ಬೀಳುವಿಕೆಗೆ ಕಾರಣ.
HOS 14:2 ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು, ಯೆಹೋವ ದೇವರ ಕಡೆಗೆ ತಿರುಗಿಕೊಂಡು, ಅವರಿಗೆ ಹೇಳಿರಿ: “ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ, ನಮ್ಮಲ್ಲಿ ಒಳ್ಳೆಯದನ್ನು ಸ್ವೀಕರಿಸಿರಿ. ಆಗ ನಮ್ಮ ಸ್ತೋತ್ರ ಬಲಿಯನ್ನು ನಿಮಗೆ ಅರ್ಪಿಸುವೆವು.
HOS 14:3 ಅಸ್ಸೀರಿಯ ನಮ್ಮನ್ನು ರಕ್ಷಿಸುವುದಿಲ್ಲ. ನಾವು ಕುದುರೆಗಳ ಮೇಲೆ ಸವಾರಿ ಮಾಡುವುದಿಲ್ಲ. ನಮ್ಮ ಕೈಗಳಿಂದ ಉಂಟು ಮಾಡಿದವುಗಳಿಗೆ, ‘ನೀವು ನಮ್ಮ ದೇವರುಗಳೇ,’ ಎಂದು ನಾವು ಇನ್ನು ಮುಂದೆ ಹೇಳುವುದೇ ಇಲ್ಲ. ಏಕೆಂದರೆ ನಿಮ್ಮಲ್ಲಿ ದಿಕ್ಕಿಲ್ಲದವರಿಗೆ ಅನುಕಂಪ ದೊರೆಯುತ್ತದೆ.”
HOS 14:4 “ನಾನು ಅವರ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಏಕೆಂದರೆ ನನ್ನ ಕೋಪವು ಅವರ ಕಡೆಯಿಂದ ತಿರುಗಿಕೊಂಡಿದೆ.
HOS 14:5 ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು. ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಆಳಕ್ಕೆ ಹರಡುವನು.
HOS 14:6 ಅವನ ಕೊಂಬೆಗಳು ಹರಡಿಕೊಂಡು, ಅವನ ಸೌಂದರ್ಯವು ಎಣ್ಣೆಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ದೇವದಾರಿನ ಹಾಗೆಯೂ ಇರುವುದು.
HOS 14:7 ಆತನ ನೆರಳಿನಲ್ಲಿ ಜನರು ವಾಸಿಸುವರು, ಧಾನ್ಯದ ಹಾಗೆ ಜೀವಿಸುವರು, ದ್ರಾಕ್ಷಿಬಳ್ಳಿಯ ಹಾಗೆ ಫಲಪ್ರದವಾಗುವರು. ಇಸ್ರಾಯೇಲಿನ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಇರುವುದು.
HOS 14:8 ಎಫ್ರಾಯೀಮೇ, ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನಿಗೆ ಉತ್ತರಿಸಿದ್ದೇನೆ. ನಾನು ಅವನ ಬಗ್ಗೆ ಕಾಳಜಿ ವಹಿಸುತ್ತೇನೆ. ನಾನು ಹಸಿರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಬರುವುದು.”
HOS 14:9 ಯಾರು ಬುದ್ಧಿವಂತರು? ಅವರು ಈ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿ. ಯಾರು ವಿವೇಚನೆಯುಳ್ಳವರು? ಅವರು ಇವುಗಳನ್ನು ತಿಳಿದುಕೊಳ್ಳಲಿ. ಏಕೆಂದರೆ, ಯೆಹೋವ ದೇವರ ಮಾರ್ಗಗಳು ನ್ಯಾಯವಾಗಿವೆ. ನೀತಿವಂತರು ಅದರಲ್ಲಿ ನಡೆಯುವರು. ಆದರೆ ಅಕ್ರಮಗಾರರು ಅವುಗಳಿಂದ ಎಡವಿಬೀಳುವರು.
JOE 1:1 ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು:
JOE 1:2 ಹಿರಿಯರೇ, ಇದನ್ನು ಕೇಳಿರಿ: ದೇಶದ ನಿವಾಸಿಗಳೇ, ಕಿವಿಗೊಡಿರಿ. ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?
JOE 1:3 ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ, ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ.
JOE 1:4 ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, ಕುದುರೆಮಿಡತೆ ತಿಂದುಬಿಟ್ಟಿತು. ಕುದುರೆಮಿಡತೆ ಬಿಟ್ಟಿದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು.
JOE 1:5 ಅಮಲೇರಿದವರೇ, ಎಚ್ಚೆತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ; ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ.
JOE 1:6 ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; ಅದರ ಕೋರೆಗಳು ಸಿಂಹದ ಹಲ್ಲುಗಳು, ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ.
JOE 1:7 ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ. ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ. ಅದರ ಕೊಂಬೆಗಳು ಬಿಳುಪಾದವು.
JOE 1:8 ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, ಕನ್ಯೆಯ ಹಾಗೆ ಪ್ರಲಾಪಿಸು.
JOE 1:9 ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ. ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ.
JOE 1:10 ಹೊಲವು ಹಾಳಾಗಿದೆ; ಭೂಮಿಯು ಒಣಗಿದೆ, ಧಾನ್ಯವು ನಾಶವಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ತೀರಿಹೋಗಿದೆ.
JOE 1:11 ರೈತರೇ, ರೋದಿಸಿರಿ, ತೋಟಗಾರರೇ, ಪರಿತಪಿಸಿರಿ; ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; ಏಕೆಂದರೆ ಹೊಲದ ಬೆಳೆ ನಾಶವಾಗಿದೆ.
JOE 1:12 ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿ ಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
JOE 1:13 ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. ಬಲಿಪೀಠದ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ.
JOE 1:14 ಪವಿತ್ರ ಉಪವಾಸವನ್ನು ಘೋಷಿಸಿರಿ. ಪವಿತ್ರ ಸಭೆಯನ್ನು ಕರೆಯಿರಿ. ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, ಯೆಹೋವ ದೇವರಿಗೆ ಮೊರೆಯಿಡಿರಿ.
JOE 1:15 ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.
JOE 1:16 ನಮ್ಮ ಕಣ್ಣೆದುರೇ ಆಹಾರವು ಹಾಳಾಯಿತಲ್ಲಾ. ಸಂತೋಷವೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ?
JOE 1:17 ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. ಉಗ್ರಾಣಗಳು ನಾಶವಾಗಿವೆ. ಕಣಜಗಳು ಕುಸಿದುಬಿದ್ದಿವೆ. ಏಕೆಂದರೆ ಧಾನ್ಯವು ಒಣಗಿದೆ.
JOE 1:18 ಪಶುಗಳು ನರಳುತ್ತವೆ. ದನದ ಹಿಂಡುಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ; ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ.
JOE 1:19 ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.
JOE 1:20 ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿ ಹೋಗಿವೆ. ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.
JOE 2:1 ನೀವು ಚೀಯೋನಿನಲ್ಲಿ ಕೊಂಬು ಊದಿರಿ. ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. ದೇಶದ ನಿವಾಸಿಗಳೆಲ್ಲರು ನಡುಗಲಿ. ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. ಅದು ಸಮೀಪವಾಗಿದೆ.
JOE 2:2 ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. ಅದು ಪ್ರಾಚೀನ ಕಾಲದಲ್ಲಿ ಮತ್ತು ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ.
JOE 2:3 ಅವುಗಳ ಮುಂದೆ ಬೆಂಕಿ ದಹಿಸುತ್ತದೆ. ಅವುಗಳ ಹಿಂದೆ ಜ್ವಾಲೆ ಧಗಧಗಿಸುತ್ತದೆ. ಅವುಗಳ ಮುಂದೆ ದೇಶವು ಏದೆನ್ ತೋಟದ ಹಾಗಿದೆ. ಅವುಗಳ ಹಿಂದೆ ಕಾಡು ಹಾಳಾಗಿದೆ. ಯಾವುದೂ ಅವುಗಳಿಂದ ತಪ್ಪಿಸಿಕೊಳ್ಳುವುದಿಲ್ಲ.
JOE 2:4 ಅವುಗಳ ಆಕಾರವು ಕುದುರೆಗಳ ಆಕಾರದ ಹಾಗಿದೆ. ಸವಾರರ ಹಾಗೆಯೇ ಓಡುತ್ತವೆ.
JOE 2:5 ರಥಗಳ ಶಬ್ದದಂತೆ ಅವು ಪರ್ವತಗಳ ತುದಿಗಳಲ್ಲಿ ಹಾರುತ್ತವೆ. ಸಿಡಿಯುವ ಬೆಂಕಿಯು ದಹಿಸುವ ಕೋಲಿನಂತೆ, ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
JOE 2:6 ಅವುಗಳ ಮುಂದೆ ಜನಾಂಗಗಳು ಬಹಳವಾಗಿ ನೊಂದುಕೊಳ್ಳುತ್ತವೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.
JOE 2:7 ಶೂರರ ಹಾಗೆ ಓಡುತ್ತವೆ. ಯುದ್ಧಶಾಲಿಗಳ ಹಾಗೆ ಗೋಡೆ ಏರುತ್ತವೆ. ಅವೆಲ್ಲಾ ಸಾಲಾಗಿ ಮುನ್ನಡೆಯುತ್ತವೆ. ತಮ್ಮ ಹಾದಿಗಳನ್ನು ಬದಲು ಮಾಡುವುದಿಲ್ಲ.
JOE 2:8 ಒಂದು ಇನ್ನೊಂದನ್ನು ನೂಕುವುದಿಲ್ಲ. ಅವುಗಳಲ್ಲಿ ಪ್ರತಿಯೊಂದು ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ.
JOE 2:9 ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತವೆ. ಗೋಡೆಯ ಮೇಲೆ ಓಡುತ್ತವೆ. ಅವು ಮನೆಗಳನ್ನು ಹತ್ತಿ, ಕಳ್ಳನ ಹಾಗೆ ಕಿಟಿಕಿಗಳಿಂದ ಪ್ರವೇಶಿಸುತ್ತವೆ.
JOE 2:10 ಅವುಗಳ ಮುಂದೆ ಭೂಮಿಯು ನಡುಗುತ್ತದೆ. ಆಕಾಶಗಳು ಅದರುತ್ತವೆ. ಸೂರ್ಯ ಚಂದ್ರರು ಕಪ್ಪಾಗುತ್ತವೆ. ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ.
JOE 2:11 ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?
JOE 2:12 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.”
JOE 2:13 ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. ಅವರು ದಯೆಯೂ ಕರುಣೆಯೂ, ದೀರ್ಘಶಾಂತಿಯೂ ಮಹಾ ಪ್ರೀತಿಯೂ ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ.
JOE 2:14 ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು?
JOE 2:15 ಚೀಯೋನಿನಲ್ಲಿ ಕೊಂಬು ಊದಿರಿ; ಪವಿತ್ರ ಉಪವಾಸವನ್ನು ಸಾರಿರಿ; ಪವಿತ್ರ ಸಭೆಯನ್ನು ಕರೆಯಿರಿ.
JOE 2:16 ಜನರನ್ನು ಕೂಡಿಸಿರಿ; ಸಭೆಯನ್ನು ಪವಿತ್ರಗೊಳಿಸಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳಗಿಂದಲೂ ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ.
JOE 2:17 ಯೆಹೋವ ದೇವರ ಸಮ್ಮುಖ ಸೇವಕರಾದ ಯಾಜಕರು, ಅಂಗಳಕ್ಕೂ, ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ, “ಯೆಹೋವ ದೇವರೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡಿರಿ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು?”
JOE 2:18 ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.
JOE 2:19 ಯೆಹೋವ ದೇವರು ತನ್ನ ಜನರಿಗೆ ಉತ್ತರಕೊಟ್ಟು, ನಾನು ನಿಮಗೆ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ನಿಮಗೆ ಸಾಕಾಗುವಷ್ಟು ಕಳುಹಿಸಿ, ನಿಮ್ಮನ್ನು ಇನ್ನು ಮೇಲೆ ಜನಾಂಗಗಳಲ್ಲಿ ನಿಂದಿತರಾಗಿ ಇಡುವುದಿಲ್ಲ.
JOE 2:20 “ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. ಅದರ ದುರ್ವಾಸನೆಯು ಏರುವುದು. ಅದು ಗಬ್ಬು ನಾರುವುದು.” ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ.
JOE 2:21 ಯಹೂದ ದೇಶವೇ, ಭಯಪಡಬೇಡ; ಉಲ್ಲಾಸಿಸಿ, ಸಂತೋಷವಾಗಿರು. ಏಕೆಂದರೆ, ಯೆಹೋವ ದೇವರು ಮಹತ್ತಾದವುಗಳನ್ನು ಮಾಡಿದ್ದಾರೆ.
JOE 2:22 ಕಾಡುಮೃಗಗಳೇ, ಭಯಪಡಬೇಡಿರಿ. ಏಕೆಂದರೆ, ಅಡವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ. ಮರಗಳು ತಮ್ಮ ಫಲವನ್ನು ಫಲಿಸುತ್ತವೆ. ಅಂಜೂರದ ಗಿಡವೂ ದ್ರಾಕ್ಷಿ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
JOE 2:23 ಚೀಯೋನಿನ ಜನರೇ, ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ ನಿಮಗೆ ಸುರಿಸುವರು.
JOE 2:24 ಕಣಗಳು ಧಾನ್ಯದಿಂದ ತುಂಬುವುವು. ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವುವು.
JOE 2:25 “ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು ನಿಮಗೆ ಪುನಃಸ್ಥಾಪಿಸಿ ಕೊಡುವೆನು.
JOE 2:26 ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು, ನಿಮ್ಮನ್ನು ಅದ್ಭುತವಾಗಿ ನಡೆಸಿದ ನಿಮ್ಮ ದೇವರಾದ ಯೆಹೋವ ದೇವರ ಹೆಸರನ್ನು ಸ್ತುತಿಸುವಿರಿ. ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
JOE 2:27 ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. ನಾನೇ ನಿಮ್ಮ ಯೆಹೋವ ದೇವರು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರು ಎಂದಿಗೂ ನಾಚಿಕೆಪಡರು.
JOE 2:28 “ಆಮೇಲೆ ನಾನು, ನನ್ನ ಆತ್ಮನನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. ನಿಮ್ಮ ಯುವಜನರಿಗೆ ದರ್ಶನಗಳಾಗುವವು.
JOE 2:29 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು.
JOE 2:30 ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
JOE 2:31 ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
JOE 2:32 ಯೆಹೋವ ದೇವರ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರಿಗೆ ಮುಕ್ತಿ ದೊರಕುವುದು. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು.
JOE 3:1 “ಆ ದಿವಸಗಳಲ್ಲಿಯೂ, ಆ ಸಮಯದಲ್ಲಿಯೂ ನಾನು ಯೆಹೂದ ಮತ್ತು ಯೆರೂಸಲೇಮಿನ ಸಿರಿಸಂಪತ್ತನ್ನು ಪುನಃ ಸ್ಥಾಪಿಸುವಾಗ,
JOE 3:2 ನಾನು ಎಲ್ಲಾ ಜನಾಂಗಗಳನ್ನು ಕೂಡಿಸುವೆನು. ಯೆಹೋಷಾಫಾಟನ ತಗ್ಗಿಗೆ ಅವರನ್ನು ತರುವೆನು. ಅಲ್ಲಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯವಾಗಿ ಅವರ ಸಂಗಡ ವ್ಯಾಜ್ಯವಾಡುವೆನು. ಅವರು ಅವರನ್ನು ಜನಾಂಗಗಳಲ್ಲಿ ಚದುರಿಸಿ, ನನ್ನ ದೇಶವನ್ನು ಹಂಚಿಕೊಂಡರು.
JOE 3:3 ನನ್ನ ಜನರಿಗೋಸ್ಕರ ಚೀಟುಹಾಕಿ, ಬಾಲಕರನ್ನು ವೇಶ್ಯಾ ವೃತ್ತಿಗೆ ಕೊಟ್ಟು, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕಾಗಿ ಮಾರಿದ್ದಾರೆ.
JOE 3:4 “ಟೈರೇ, ಸೀದೋನೇ, ಫಿಲಿಷ್ಟಿಯದ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರೋಧವಾಗಿ ನಿಮಗೆ ಏನು ಇದೆ? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ಮುಯ್ಯಿ ನನಗೆ ಸಲ್ಲಿಸಿದರೆ, ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
JOE 3:5 ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ, ನನ್ನ ಅತ್ಯುತ್ತಮ ಸಂಪತ್ತನ್ನೂ ನಿಮ್ಮ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿದ್ದಿರಿ.
JOE 3:6 ಯೆಹೂದದ ಹಾಗೂ ಯೆರೂಸಲೇಮಿನ ಜನರನ್ನು ಅವರ ಪ್ರಾಂತಗಳಿಂದ ದೂರ ಮಾಡುವುದಕ್ಕಾಗಿ ಗ್ರೀಕರಿಗೆ ಮಾರಿದ್ದೀರಿ.
JOE 3:7 “ಇಗೋ, ಎಲ್ಲಿ ಅವರನ್ನು ಮಾರಿದಿರೋ, ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ, ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿತೀರಿಸುವೆನು.
JOE 3:8 ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ.
JOE 3:9 ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧಕ್ಕೆ ಇದನ್ನು ಸಿದ್ಧಮಾಡಿರಿ; ಶೂರರನ್ನು ಎಬ್ಬಿಸಿರಿ; ಯುದ್ಧಭಟರೆಲ್ಲರು ಸಮೀಪಿಸಿ ಬರಲಿ.
JOE 3:10 ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ ಬಲಹೀನನು ಸಹ ನಾನು ಶಕ್ತಿವಂತನು ಎಂದು ಹೇಳಲಿ.
JOE 3:11 ಸುತ್ತಲಿನ ಎಲ್ಲಾ ರಾಷ್ಟ್ರಗಳೇ, ಸಭೆಯಾಗಿ ಕೂಡಿಕೊಳ್ಳಿರಿ. ಯೆಹೋವ ದೇವರೇ, ನಿನ್ನ ಶೂರರನ್ನು ಕೆಳಗೆ ಇಳಿಸಿರಿ.
JOE 3:12 ಜನಾಂಗಗಳು ಎಚ್ಚೆತ್ತು ಯೆಹೋಷಾಫಾಟನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ಜನಾಂಗಗಳಿಗೆ ನ್ಯಾಯತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು.
JOE 3:13 ಕುಡುಗೋಲನ್ನು ಹಾಕಿರಿ. ಏಕೆಂದರೆ ಬೆಳೆ ಪಕ್ವವಾಯಿತು. ಬಂದು ಇಳಿಯಿರಿ. ಏಕೆಂದರೆ ದ್ರಾಕ್ಷಿಯ ಆಲೆ ತುಂಬಿ ಇದೆ. ತೊಟ್ಟಿಗಳು ತುಳುಕುವಂತೆ ಅವರ ಕೆಟ್ಟತನವು ಬಹಳವಾಗಿದೆ.
JOE 3:14 ತೀರ್ಮಾನದ ಕಣಿವೆಯಲ್ಲಿ ಗುಂಪು ಗುಂಪುಗಳಾಗಿ ಜನರಿದ್ದಾರೆ! ಏಕೆಂದರೆ ಯೆಹೋವ ದೇವರ ದಿವಸವು ನಿರ್ಣಯದ ತಗ್ಗಿನಲ್ಲಿ ಸಮೀಪವಾಗಿದೆ.
JOE 3:15 ಸೂರ್ಯ, ಚಂದ್ರರು ಕಪ್ಪಾಗುವುವು. ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವುವು.
JOE 3:16 ಯೆಹೋವ ದೇವರು ಚೀಯೋನಿನೊಳಗಿಂದ ಗರ್ಜಿಸಿ, ಯೆರೂಸಲೇಮಿನೊಳಗಿಂದ ಗುಡುಗುವರು. ಆಕಾಶಗಳೂ ಭೂಮಿಯೂ ನಡುಗುವುವು. ಆದರೆ ಯೆಹೋವ ದೇವರು ತಮ್ಮ ಜನರಿಗೆ ಆಶ್ರಯವೂ, ಇಸ್ರಾಯೇಲರಿಗೆ ರಕ್ಷಣೆಯ ದುರ್ಗವೂ ಆಗಿರುವರು.
JOE 3:17 ಆಗ ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ವಾಸಿಸುವ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ ಎಂದು ನೀವು ತಿಳಿದುಕೊಳ್ಳುವಿರಿ. ಯೆರೂಸಲೇಮು ಪರಿಶುದ್ಧವಾಗಿರುವುದು. ವಿದೇಶಿಯರು ಅದನ್ನೆಂದಿಗೂ ಆಕ್ರಮಿಸರು.
JOE 3:18 ಆ ದಿವಸದಲ್ಲಿ ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವುವು. ಗುಡ್ಡಗಳು ಹಾಲಿನಿಂದ ಹರಿಯುವುವು. ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವುವು. ಯೆಹೋವ ದೇವರ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ಕಣಿವೆಗೆ ಜಲ ಕೊಡುವುದು.
JOE 3:19 ಈಜಿಪ್ಟ್ ಹಾಳಾಗುವುದು. ಎದೋಮು ಹಾಳಾದ ಮರುಭೂಮಿಯಾಗುವುದು. ಏಕೆಂದರೆ ಅವರು ಯೆಹೂದದ ಜನರನ್ನು ಬಲಾತ್ಕಾರ ಮಾಡಿ, ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿದರು.
JOE 3:20 ಯೆಹೂದವು ಎಂದೆಂದಿಗೂ ಜನಭರಿತವಾಗುವುದು. ಯೆರೂಸಲೇಮು ಸಹ ತಲತಲಾಂತರಕ್ಕೂ ನಿಲ್ಲುವುದು.
JOE 3:21 ನಾನು ಅವರ ಮುಗ್ಧ ರಕ್ತಕ್ಕೆ ಪ್ರತೀಕಾರ ತೀರಿಸದೆ ಬಿಡಬೇಕೇ? ಇಲ್ಲ, ನಾನು ಎಂದಿಗೂ ಬಿಡುವುದಿಲ್ಲ.
AMO 1:1 ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗ ಯಾರೊಬ್ಬಾಮನ ದಿವಸಗಳಲ್ಲಿಯೂ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ಕಂಡ ದರ್ಶನಗಳು.
AMO 1:2 ಆಮೋಸನು ಹೇಳಿದ್ದೇನೆಂದರೆ: “ಯೆಹೋವ ದೇವರು ಚೀಯೋನಿನಿಂದ ಗರ್ಜಿಸಿ, ಯೆರೂಸಲೇಮಿನಿಂದ ತಮ್ಮ ಧ್ವನಿ ಗೈಯುವರು. ಕುರುಬರ ಹುಲ್ಲುಗಾವಲುಗಳು ಬಾಡಿ ಹೋಗುತ್ತಿವೆ, ಕರ್ಮೆಲಿನ ತುದಿಯ ಗಿಡಗಳು ಒಣಗಿ ಹೋಗುತ್ತವೆ.”
AMO 1:3 ಯೆಹೋವ ದೇವರು ಹೀಗೆ ಹೇಳುತ್ತಾರೆ: ದಮಸ್ಕದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ, ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.
AMO 1:4 ಆದರೆ ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಬೆನ್ಹದದನ ಕೋಟೆಗಳನ್ನು ದಹಿಸಿಬಿಡುವುದು.
AMO 1:5 ನಾನು ದಮಸ್ಕದ ಹೆಬ್ಬಾಗಿಲನ್ನು ಸಹ ಮುರಿಯುವೆನು. ಆವೆನಿನ ಕಣಿವೆಯಿಂದ ನಿವಾಸಿಯನ್ನು ಮತ್ತು ಬೇತ್ ಏದೆನಿನ ಮನೆಯಿಂದ ರಾಜದಂಡ ಹಿಡಿಯುವವನನ್ನೂ ಕಡಿದುಬಿಡುವೆನು. ಅರಾಮ್ ಜನರು ಸೆರೆಯಾಗಿ ಕೀರಿಗೆ ಹೋಗುವರು, ಇದು ಯೆಹೋವ ದೇವರ ನುಡಿ.
AMO 1:6 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಗಾಜದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಎಲ್ಲಾ ಸಮುದಾಯಗಳನ್ನು ಸೆರೆಹಿಡಿದು ಎದೋಮಿಗೆ ಮಾರಿಬಿಟ್ಟರು.
AMO 1:7 ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವರ ಕೋಟೆಗಳನ್ನು ದಹಿಸಿಬಿಡುವುದು.
AMO 1:8 ಅಷ್ಡೋದಿನಿಂದ ನಿವಾಸಿಯನ್ನು ಮತ್ತು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು. ಫಿಲಿಷ್ಟಿಯರಲ್ಲಿ ಕೊನೆಯವರು ಸಾಯುವವರೆಗೂ ನಾನು ಎಕ್ರೋನಿನ ವಿರುದ್ಧ ನನ್ನ ಕೈಯನ್ನು ತಿರುಗಿಸುವೆನು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
AMO 1:9 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಟೈರ್ ಪಟ್ಟಣದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಸಹೋದರರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೆ ಸೆರೆಯಾಳುಗಳ ಸಂಪೂರ್ಣ ಸಮುದಾಯಗಳನ್ನು ಎದೋಮಿಗೆ ಮಾರಿಬಿಟ್ಟರು.
AMO 1:10 ಆದರೆ ನಾನು ಟೈರ್ ಪಟ್ಟಣದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅಲ್ಲಿಯ ಕೋಟೆಗಳನ್ನು ದಹಿಸಿಬಿಡುವುದು.”
AMO 1:11 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎದೋಮಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ತನ್ನ ಸಹೋದರನನ್ನು ಖಡ್ಗವನ್ನು ಹಿಂಬಾಲಿಸಿದನು. ಮತ್ತು ದೇಶದ ಸ್ತ್ರೀಯರನ್ನು ಕೊಂದುಹಾಕಿದನು. ಏಕೆಂದರೆ ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು. ಆತನು ರೌದ್ರವನ್ನು ನಿತ್ಯವಾಗಿ ಇಟ್ಟುಕೊಂಡನು.
AMO 1:12 ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಬೊಚ್ರದ ಕೋಟೆಗಳನ್ನು ದಹಿಸಿಬಿಡುವುದು.”
AMO 1:13 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅಮ್ಮೋನಿನ ಮಕ್ಕಳು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ತಮ್ಮ ಮೇರೆಯನ್ನು ವಿಸ್ತಾರ ಮಾಡುವುದಕ್ಕಾಗಿ, ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿಬಿಟ್ಟಿದ್ದಾರೆ.
AMO 1:14 ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಗಳನ್ನು ದಹಿಸಿಬಿಡುವುದು. ಆಗ ಯುದ್ಧಾರ್ಭಟವೂ, ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು.
AMO 1:15 ಅವರ ಅರಸನು ತನ್ನ ರಾಜ್ಯಾಧಿಕಾರರ ಸಂಗಡ ಸೆರೆಗೆ ಹೋಗುವನು” ಎಂದು ಯೆಹೋವ ದೇವರು ಹೇಳುತ್ತಾರೆ.
AMO 2:1 ಯೆಹೋವ ದೇವರು ಹೀಗೆ ಹೇಳುತ್ತಾನೆ: “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, ಸುಟ್ಟು ಸುಣ್ಣ ಮಾಡಿದ್ದಾನೆ.
AMO 2:2 ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ ಗಲಿಬಿಲಿಯಲ್ಲಿ ಸಾಯುವುದು.
AMO 2:3 ನಾನು ಅದರ ಮಧ್ಯದಿಂದ ನ್ಯಾಯಾಧಿಪತಿಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 2:4 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ.
AMO 2:5 ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.”
AMO 2:6 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ನಿರಪರಾಧಿಗಳನ್ನು ಬೆಳ್ಳಿಗೆ ಮತ್ತು ಬಡವರನ್ನು ಒಂದು ಜೋಡಿ ಕೆರಗಳಿಗೆ ಮಾರಿದರು.
AMO 2:7 ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ.
AMO 2:8 ಅವರು ಅಡವು ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ. ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿಯುತ್ತಾರೆ.
AMO 2:9 “ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, ಅಮೋರಿಯರನ್ನು ನಾನು ನಾಶ ಪಡಿಸಿದೆನು. ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, ಅವರನ್ನು ನಿರ್ಮೂಲ ಮಾಡುವೆನು.
AMO 2:10 ನಾನೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆತಂದೆನು. ಅಮೋರಿಯರ ದೇಶವನ್ನು ನಿಮಗೆ ಸೊತ್ತಾಗಿ ಕೊಡಲು, ನಿಮ್ಮನ್ನು ನಾಲ್ವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದೆನು.
AMO 2:11 “ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
AMO 2:12 “ಆದರೆ ನೀವು ನಾಜೀರರಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟಿರಿ. ಪ್ರವಾದಿಗಳಿಗೆ ಪ್ರವಾದಿಸಬೇಡಿರಿ ಎಂದು ಆಜ್ಞಾಪಿಸಿದಿರಿ.
AMO 2:13 “ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ, ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
AMO 2:14 ಆದ್ದರಿಂದ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
AMO 2:15 ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲನು. ಪಾದತ್ವರಿತನು ತಪ್ಪಿಸಿಕೊಳ್ಳನು. ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
AMO 2:16 ಶೂರರಲ್ಲಿ ಧೈರ್ಯ ಹೃದಯವುಳ್ಳವನು, ಆ ದಿನದಲ್ಲಿ ಬೆತ್ತಲೆಯಾಗಿ ಓಡಿಹೋಗುವನು,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 3:1 ಇಸ್ರಾಯೇಲರೇ, ಯೆಹೋವ ದೇವರು ನಿಮಗೆ ವಿರೋಧವಾಗಿ ಹೇಳುವ ವಾಕ್ಯವನ್ನು ಕೇಳಿರಿ. ನಾನು ಈಜಿಪ್ಟ್ ದೇಶದೊಳಗಿಂದ ಕರೆದುತಂದ ಸಮಸ್ತ ಕುಟುಂಬಕ್ಕೆ ಹೇಳುವುದೇನೆಂದರೆ:
AMO 3:2 “ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ. ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.”
AMO 3:3 ಒಪ್ಪಂದ ಮಾಡಿಕೊಳ್ಳದ ಹೊರತು, ಇಬ್ಬರು ಜೊತೆಯಾಗಿ ನಡೆಯಲು ಸಾಧ್ಯವೋ?
AMO 3:4 ಬೇಟೆ ಇಲ್ಲದಿದ್ದರೆ, ಅಡವಿಯಲ್ಲಿ ಸಿಂಹವು ಗರ್ಜಿಸುವುದೋ? ಏನಾದರೂ ಹಿಡಿಯದಿದ್ದರೆ, ಗುಹೆಯಲ್ಲಿರುವ ಎಳೆಯ ಸಿಂಹವು ಅರಚುವುದೋ?
AMO 3:5 ಬೋನು ಇಲ್ಲದಿದ್ದರೆ ಪಕ್ಷಿಯು ಭೂಮಿಯ ಮೇಲೆ ಉರುಲಿನಲ್ಲಿ ಬೀಳುವುದೇ? ಏನೂ ಸಿಕ್ಕಿಕೊಳ್ಳದಿದ್ದರೆ, ಅದನ್ನು ಭೂಮಿಯಿಂದ ಯಾರಾದರೂ ತೆಗೆಯುವರೇ?
AMO 3:6 ಪಟ್ಟಣದಲ್ಲಿ ಕಹಳೆಯನ್ನು ಊದಿದರೆ, ಜನರು ಹೆದರುವುದಿಲ್ಲವೇ? ಯೆಹೋವ ದೇವರಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೇ?
AMO 3:7 ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಗಳನ್ನು ತಿಳಿಸದೆ, ಸಾರ್ವಭೌಮ ಯೆಹೋವ ದೇವರು ಏನನ್ನೂ ಮಾಡುವುದಿಲ್ಲ.
AMO 3:8 ಸಿಂಹವು ಗರ್ಜಿಸಿದರೆ ಭಯಪಡದೆ ಇರುವವರು ಯಾರು? ಸಾರ್ವಭೌಮ ಯೆಹೋವ ದೇವರು ನುಡಿದಿದ್ದಾರೆ, ಅವರ ನುಡಿಯನ್ನು ಪ್ರವಾದಿಸದವರು ಯಾರು?
AMO 3:9 ಅಷ್ಡೋದಿನ ಕೋಟೆಗಳಲ್ಲಿ ಮತ್ತು ಈಜಿಪ್ಟ್ ದೇಶದ ಕೋಟೆಗಳಲ್ಲಿ ಹೀಗೆ ಸಾರಿ ಹೇಳಿರಿ: “ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು, ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ ಅದರೊಳಗಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.”
AMO 3:10 “ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ, ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 3:11 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ವಿರೋಧಿಯು ದೇಶದ ಸುತ್ತಲೂ ಇರುವನು. ನಿನ್ನ ಬಲವನ್ನು ತಗ್ಗಿಸುವನು. ನಿನ್ನ ಅರಮನೆಗಳು ಸೂರೆಯಾಗುವುವು.”
AMO 3:12 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹೇಗೆ ಕುರುಬನು ಸಿಂಹದ ಬಾಯಿಯಿಂದ ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ ಸಂರಕ್ಷಣೆ ಹೊಂದುತ್ತಾರೆ.”
AMO 3:13 ಸರ್ವಶಕ್ತ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: “ನೀವು ಕೇಳಿ, ಯಾಕೋಬಿನ ಮನೆತನದವರಿಗೆ ವಿರುದ್ಧವಾಗಿ ಸಾಕ್ಷಿ ಕೊಡಿರಿ.”
AMO 3:14 “ನಾನು ಇಸ್ರಾಯೇಲಿನ ಪಾಪಗಳನ್ನು ವಿಚಾರಿಸುವ ದಿವಸದಲ್ಲಿ, ಬೇತೇಲಿನ ಬಲಿಪೀಠಗಳನ್ನು ನಾಶಮಾಡುವೆನು. ಬಲಿಪೀಠದ ಕೊಂಬುಗಳು ಕಡಿಯಲಾಗಿ, ನೆಲಕ್ಕೆ ಉರುಳುವುವು.
AMO 3:15 ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತ ಮಂದಿರಗಳು ನಾಶವಾಗುವುವು. ದೊಡ್ಡ ಮನೆಗಳು ಕೊನೆಗಾಣುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:1 ಸಮಾರ್ಯ ಬೆಟ್ಟದಲ್ಲಿರುವ ಬಾಷಾನಿನ ಹಸುಗಳಂತಿರುವ ಮಹಿಳೆಯರೇ, ನೀವು ಬಡವರನ್ನು ಹಿಂಸಾಚಾರ ಮಾಡಿ, ದರಿದ್ರರನ್ನು ಜಜ್ಜಿ, ನಿಮ್ಮ ಪತಿಗಳಿಗೆ, “ಪಾನವನ್ನು ತರಿಸಿರಿ, ಕುಡಿಯೋಣ,” ಎಂದು ಹೇಳುವವರೇ, ಈ ವಾಕ್ಯವನ್ನು ಕೇಳಿರಿ.
AMO 4:2 “ದಿನಗಳು ಬರುವುವು. ಆಗ ನಿಮ್ಮನ್ನು ಕೊಂಡಿಗಳಿಂದ ಎಳೆದುಕೊಂಡು ಹೋಗುವರು. ನಿಮ್ಮಲ್ಲಿ ಅಳಿದುಳಿದವರನ್ನು ಗಾಳಕ್ಕೆ ಸಿಕ್ಕಿದ ಮೀನಿನಂತೆ ಸೆಳೆದೊಯ್ಯುವರು. ಎಂದು ಸಾರ್ವಭೌಮ ಯೆಹೋವ ದೇವರು ಇದನ್ನು ಆಣೆಯಿಟ್ಟು ನುಡಿದಿದ್ದಾರೆ.
AMO 4:3 ಗೋಡೆಯಲ್ಲಿಯ ಬಿರುಕುಗಳ ಮೂಲಕ ನೀವು ಹೊರಟು ಹೋಗುವಿರಿ. ನಿಮ್ಮನ್ನು ಹರ್ಮೋನಿನ ಕಡೆಗೆ ಎಸೆಯಲಾಗುತ್ತದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:4 “ಪಾಪ ಮಾಡಬೇಕಾದರೆ, ಬೇತೇಲಿಗೆ ಹೋಗಿ ಪಾಪ ಮಾಡಿರಿ. ಗಿಲ್ಗಾಲಿಗೆ ಹೋಗಿ ಯಥೇಚ್ಛವಾಗಿ ಪಾಪ ಮಾಡಿರಿ. ಪ್ರತಿದಿನವೂ ಪ್ರಾತಃಕಾಲದ ಬಲಿಗಳನ್ನು ಅರ್ಪಿಸಿರಿ. ಮೂರು ದಿನಗಳಿಗೊಮ್ಮೆ ದಶಮಾಂಶವನ್ನು ಸಲ್ಲಿಸಿರಿ.”
AMO 4:5 “ಹುಳಿಹಿಟ್ಟಿನ ರೊಟ್ಟಿಯನ್ನು ಹೋಮ ಮಾಡಿ, ಸ್ತೋತ್ರದ ಯಜ್ಞವನ್ನೂ ಅರ್ಪಿಸಿರಿ. ಕಾಣಿಕೆ ಕೊಟ್ಟದ್ದನ್ನು ಹೇಳಿಕೊಳ್ಳಿರಿ. ಇಸ್ರಾಯೇಲರೇ, ಹೀಗೆ ಮಾಡುವುದು ಇಷ್ಟವಾಗಿದೆ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
AMO 4:6 “ಪ್ರತಿಯೊಂದು ಪಟ್ಟಣದಲ್ಲಿ ಬರಿದಾದ ಹೊಟ್ಟೆಗಳನ್ನು ನಿಮಗೆ ಕೊಟ್ಟಿದ್ದೇನೆ. ಪ್ರತಿಯೊಂದು ಪಟ್ಟಣದಲ್ಲಿ ಆಹಾರದ ಕೊರತೆಯಿದೆ. ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:7 “ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ, ಮಳೆಯನ್ನು ನಾನು ನಿಮ್ಮಿಂದ ಹಿಂದೆಗೆದಿದ್ದೇನೆ. ಒಂದು ಪಟ್ಟಣದ ಮೇಲೆ ಮಳೆ ಸುರಿಸಿ, ಇನ್ನೊಂದು ಪಟ್ಟಣದ ಮೇಲೆ ಮಳೆ ಸುರಿಸಲಿಲ್ಲ. ಒಂದು ಹೊಲದ ಮೇಲೆ ಮಳೆ ಸುರಿಸಿ, ಇನ್ನೊಂದು ಹೊಲದ ಮೇಲೆ ಮಳೆ ಸುರಿಸಲಿಲ್ಲ ಮತ್ತು ಅದು ಒಣಗಿ ಹೋಯಿತು.
AMO 4:8 ಎರಡು ಅಥವಾ ಮೂರು ಪಟ್ಟಣದವರು ಕುಡಿಯುವ ನೀರಿಗಾಗಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ, ಅವರ ಬಾಯಾರಿಕೆ ತೀರಲಿಲ್ಲ. ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:9 “ಬಿಸಿಗಾಳಿಯನ್ನು ಕಳುಹಿಸಿ ನಿಮ್ಮ ಉದ್ಯಾನವನಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಒಣಗುವಂತೆ ಮಾಡಿದೆ. ನಿಮ್ಮ ಬೆಳೆ ರೋಗ ಮತ್ತು ಶಿಲೀಂಧ್ರವುಗಳಿಂದ ನಾಶವಾಯಿತು. ನಿಮ್ಮ ಅಂಜೂರದ ಗಿಡ ಮತ್ತು ಎಣ್ಣೆಮರಗಳನ್ನೂ ಮಿಡತೆಗಳು ತಿಂದು ಬಿಡುವಂತೆ ಮಾಡಿದೆ. ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ, ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:10 “ಹಿಂದೊಮ್ಮೆ ಈಜಿಪ್ಟಿಗೆ ನಾನು ಮಾಡಿದಂತೆ ನಿಮ್ಮನ್ನು ವ್ಯಾಧಿಯಿಂದ ಬಾಧಿಸಿದೆ. ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ, ನಿಮ್ಮ ಯೌವನಸ್ಥರನ್ನೂ ಖಡ್ಗದಿಂದ ಕೊಂದು ಹಾಕಿದ್ದೇನೆ. ನಿಮ್ಮ ಪಾಳೆಯಗಳ ದುರ್ವಾಸನೆಯು ನಿಮ್ಮ ಮೂಗು ಸಹಿಸದ ಹಾಗೆ ಮಾಡಿದ್ದೇನೆ. ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:11 “ಸೊದೋಮನ್ನೂ, ಗೊಮೋರವನ್ನೂ ಕೆಡವಿದ ಹಾಗೆ, ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ. ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವೂ ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 4:12 ಇಸ್ರಾಯೇಲೇ, ನಾನು ನಿನಗೆ ಹೀಗೆ ಮಾಡುತ್ತೇನೆ. ನಾನು ನಿನಗೆ ಹೀಗೆ ಮಾಡುವುದರಿಂದ, ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೋ.
AMO 4:13 ಬೆಟ್ಟಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ, ಭೂಮಿಯ ಉನ್ನತ ಸ್ಥಳಗಳನ್ನು ತುಳಿದುಬಿಡುವಾತನು, ಸರ್ವಶಕ್ತರಾದ ಯೆಹೋವ ದೇವರು ಇದೇ ಅವರ ಹೆಸರು.
AMO 5:1 ಇಸ್ರಾಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯ ವಾಕ್ಯವನ್ನು ಕೇಳಿರಿ:
AMO 5:2 “ಇಸ್ರಾಯೇಲ್ ಎಂಬ ಕನ್ಯೆಯು ಬಿದ್ದಿದ್ದಾಳೆ. ಇನ್ನು ಮೇಲೆ ಎದ್ದೇಳುವುದೇ ಇಲ್ಲ. ಅವಳು ದಿಕ್ಕಿಲ್ಲದೆ ತನ್ನ ಭೂಮಿಯ ಮೇಲೆ ಒರಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.”
AMO 5:3 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ, ಪಟ್ಟಣಕ್ಕೆ ಮರಳಿದವರು ನೂರೇ ಮಂದಿ. ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ, ಇಸ್ರಾಯೇಲಿಗೆ ಮರಳಿದವರು ಹತ್ತೇ ಮಂದಿ.”
AMO 5:4 ಯೆಹೋವ ದೇವರು ಇಸ್ರಾಯೇಲಿನ ಮನೆಯವರಿಗೆ ಹೀಗೆ ಹೇಳುತ್ತಾರೆ: “ನೀವು ನನ್ನನ್ನು ಹುಡುಕಿರಿ ಮತ್ತು ಬದುಕಿಕೊಳ್ಳಿರಿ.
AMO 5:5 ಆದರೆ ಬೇತೇಲನ್ನು ಹುಡುಕಬೇಡಿರಿ. ಗಿಲ್ಗಾಲಿಗೆ ಹೋಗಬೇಡಿರಿ. ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. ಏಕೆಂದರೆ ಗಿಲ್ಗಾಲು ಸೆರೆಗೆ ನಿಶ್ವಯವಾಗಿ ಹೋಗುವುದು, ಬೇತೇಲಿನ ಬಾಧೆಗಳು ಕೊನೆಗೊಳ್ಳುವುದಿಲ್ಲ.”
AMO 5:6 ನೀವು ಯೆಹೋವ ದೇವರನ್ನು ಹುಡುಕಿರಿ ಮತ್ತು ಬದುಕಿರಿ. ಇಲ್ಲದಿದ್ದರೆ, ಆತನು ಬೆಂಕಿಯಂತೆ ಯೋಸೇಫನ ಗೋತ್ರಗಳಲ್ಲಿ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
AMO 5:7 ನ್ಯಾಯವನ್ನು ಕಹಿಯಾಗಿ ತಿರುಗಿಸುವವರೇ, ನೀತಿಯನ್ನು ಭೂಮಿಯಲ್ಲಿ ಬಿಡುವವರೇ.
AMO 5:8 ವೃಷಭ ರಾಶಿಯನ್ನೂ, ಮೃಗಶಿರವನ್ನೂ ಉಂಟು ಮಾಡಿದವನನ್ನೂ ಕಾರ್ಗತ್ತಲನ್ನು ಉದಯಕ್ಕೆ ಬದಲಿಸಿ, ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲೆ ಮಾಡಿ, ಸಮುದ್ರದ ನೀರನ್ನು ಬರಮಾಡಿ, ಅವುಗಳನ್ನು ಭೂಮಿಯ ಮೇಲೆ ಸುರಿಸುವ ಯೆಹೋವ ದೇವರು ಎಂಬ ಹೆಸರುಳ್ಳವರನ್ನೇ ಹುಡುಕಿರಿ.
AMO 5:9 ಕಣ್ಣು ಮಿಟುಕಿಸುವುದರಲ್ಲಿ ಅವರು ಕೋಟೆಯನ್ನು ನಾಶಪಡಿಸುತ್ತಾರೆ ಮತ್ತು ಕೋಟೆಯ ನಗರವನ್ನು ವಿನಾಶಪಡಿಸುತ್ತಾರೆ.
AMO 5:10 ಸಭೆಯಲ್ಲಿ ದೋಷವನ್ನು ಎತ್ತಿ ತೋರಿಸುವವನನ್ನು ನೀವು ದ್ವೇಷಿಸುತ್ತೀರಿ. ನಿಮ್ಮ ವಿಷಯವಾಗಿ ಸತ್ಯವನ್ನು ಹೇಳುವವನನ್ನೇ ಹೀನೈಸುತ್ತೀರಿ.
AMO 5:11 ಆದಕಾರಣ ನೀವು ಬಡವನನ್ನು ತುಳಿದು ಅವರ ಧಾನ್ಯಕ್ಕೆ ತೆರಿಗೆ ವಿಧಿಸುತ್ತೀರಿ. ಆದ್ದರಿಂದ ನೀವು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಿ. ಆದರೆ ನೀವು ಅವುಗಳಲ್ಲಿ ವಾಸ ಮಾಡದೇ ಇರುವಿರಿ. ರಮ್ಯವಾದ ದ್ರಾಕ್ಷಿತೋಟಗಳನ್ನು ನೆಟ್ಟಿರಲ್ಲಾ, ಆದರೆ ಅವುಗಳ ದ್ರಾಕ್ಷಾರಸವನ್ನು ಕುಡಿಯಲಾರಿರಿ.
AMO 5:12 ಏಕೆಂದರೆ ನಿಮ್ಮ ಅನೇಕ ಅಪರಾಧಗಳನ್ನೂ, ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು. ಅವರು ನಿರಪರಾಧಿಯನ್ನು ಬಾಧೆಪಡಿಸಿ, ಲಂಚವನ್ನು ತೆಗೆದುಕೊಂಡರು ಮತ್ತು ಬಾಗಿಲ ಬಳಿಯಲ್ಲಿರುವ ಬಡವರ ನ್ಯಾಯವನ್ನು ತೀರಿಸದೇ ಕಳುಹಿಸಿಬಿಟ್ಟಿರಿ.
AMO 5:13 ಆದ್ದರಿಂದ ಆ ಕಾಲದಲ್ಲಿ ಬುದ್ಧಿವಂತನು ಮೌನವಾಗಿರುವನು, ಏಕೆಂದರೆ ಅದು ಕೆಟ್ಟ ಕಾಲವಾಗಿದೆ.
AMO 5:14 ನೀವು ಬದುಕುವ ಹಾಗೆ ಒಳ್ಳೆಯದನ್ನು ಹುಡುಕಿ, ಕೆಟ್ಟದ್ದನ್ನಲ್ಲ. ಆಗ ನೀವು ಹೇಳಿಕೊಳ್ಳುವಂತೆ ಸರ್ವಶಕ್ತರಾದ ಯೆಹೋವ ದೇವರು ನಿಮ್ಮ ಸಂಗಡ ಇರುವರು.
AMO 5:15 ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಬಾಗಿಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸರ್ವಶಕ್ತರಾದ ಯೆಹೋವ ದೇವರು ಯೋಸೇಫನ ಗೋತ್ರದಲ್ಲಿ ಉಳಿದವರಿಗೆ ಕನಿಕರಿಸಬಹುದು.
AMO 5:16 ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, ಗೋಳಾಡುವುದಕ್ಕೂ ಕರೆಯಲಾಗುವುದು.
AMO 5:17 ಎಲ್ಲಾ ದ್ರಾಕ್ಷಿ ತೋಟಗಳಲ್ಲೂ ಗೋಳಾಟವು ಇರುವುದು. ಏಕೆಂದರೆ ನಾನು ನಿನ್ನ ಮಧ್ಯೆ ಹಾದು ಹೋಗುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 5:18 ಯೆಹೋವ ದೇವರ ದಿನವನ್ನು ಅಪೇಕ್ಷಿಸುವವರೇ, ಅಯ್ಯೋ ನಿಮಗೆ ಕಷ್ಟ! ಆ ದಿನವನ್ನು ನೀವು ಅಪೇಕ್ಷಿಸುವುದೇಕೆ? ಯೆಹೋವ ದೇವರ ದಿವಸವು ನಿಮಗೆ ಬೆಳಕಲ್ಲ, ಕತ್ತಲೆಯೇ.
AMO 5:19 ಇದು ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ, ಕರಡಿಯನ್ನು ಎದುರುಗೊಂಡ ಹಾಗೆಯೂ, ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈಯನ್ನು ಒರಗಿಸಿದಾಗ, ಸರ್ಪವು ಕಚ್ಚಿದ ಹಾಗೆಯೂ ಇರುವುದು.
AMO 5:20 ಹೀಗೆ ಯೆಹೋವ ದೇವರ ದಿವಸವು ಬೆಳಕಲ್ಲ, ಕತ್ತಲೆಯೇ. ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲೆಯೇ.
AMO 5:21 ನಿಮ್ಮ ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ. ನಿಮ್ಮ ಸಭೆಗಳು ನನಗೆ ದುರ್ವಾಸನೆ ಇದ್ದಂತೆ.
AMO 5:22 ನೀವು ನನಗೆ ದಹನಬಲಿಗಳನ್ನೂ ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ, ನಾನು ಅವುಗಳನ್ನು ಅಂಗೀಕರಿಸುವುದಿಲ್ಲ. ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನೂ ನಾನು ಲಕ್ಷಿಸುವುದಿಲ್ಲ.
AMO 5:23 ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ. ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವುದಿಲ್ಲ.
AMO 5:24 ಆದರೆ ನ್ಯಾಯವು ನೀರಿನಂತೆಯೂ ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ.
AMO 5:25 ಇಸ್ರಾಯೇಲಿನ ಮನೆತನದವರೇ, ನೀವು ನನಗೆ ನಲವತ್ತು ವರ್ಷ ಮರುಭೂಮಿಯಲ್ಲಿ ಬಲಿಗಳನ್ನು, ಕಾಣಿಕೆಗಳನ್ನು ಅರ್ಪಿಸಿದಿರೋ?
AMO 5:26 ಆದರೆ ನೀವು ನಿಮಗೋಸ್ಕರ ಮಾಡಿಕೊಂಡ ಮೂರ್ತಿಗಳಾದ ಸಿಕ್ಕೊತ್ ಎಂಬ ನಿಮ್ಮ ರಾಜನನ್ನೂ ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನೂ ನೀವೇ ಹೊತ್ತುಕೊಂಡು ಹೋಗಬೇಕಾಗುವುದು.
AMO 5:27 ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ.
AMO 6:1 ಚೀಯೋನಿನಲ್ಲಿ ಹಾಯಾಗಿರುವವರಿಗೂ, ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ!
AMO 6:2 ಕಲ್ನೇ ಪಟ್ಟಣಕ್ಕೆ ಹೋಗಿ ನೋಡಿರಿ. ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ಹೋಗಿರಿ. ಅಲ್ಲಿಂದ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ನಿಮ್ಮ ಎರಡು ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ?
AMO 6:3 ನೀವು ಕೆಟ್ಟ ದಿವಸವನ್ನು ದೂರಮಾಡಿಕೊಂಡು, ಭಯಂಕರ ಆಳ್ವಿಕೆಯನ್ನು ಹತ್ತಿರ ಮಾಡಿಕೊಳ್ಳುತ್ತೀರಿ.
AMO 6:4 ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. ಮಂದೆಯೊಳಗಿಂದ ಕುರಿಮರಿಗಳನ್ನೂ ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ.
AMO 6:5 ವೀಣೆಯ ಸ್ವರಕ್ಕೆ ಹಾಡುತ್ತೀರಿ, ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ.
AMO 6:6 ನೀವು ತುಂಬಿದ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತೀರಿ, ಶ್ರೇಷ್ಠವಾದ ಎಣ್ಣೆಗಳಿಂದ ನಿಮ್ಮನ್ನು ಅಭಿಷೇಕಿಸಿಕೊಳ್ಳುತ್ತೀರಿ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನ ಪಡುವುದಿಲ್ಲ.
AMO 6:7 ಆದ್ದರಿಂದ ಸೆರೆಗೆ ಕರೆದೊಯ್ಯುವವರಲ್ಲಿ ನೀವು ಮೊದಲಿಗರಾಗಿರುವಿರಿ, ಭೋಗ ಮಾಡುವವರ ಹರ್ಷ ಧ್ವನಿಯು ಗತಿಸಿ ಹೋಗುವುದು.
AMO 6:8 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಸರ್ವಶಕ್ತ ದೇವರಾದ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟುಕೊಂಡಿದ್ದಾರೆ: ನಾನು ಯಾಕೋಬಿನ ಅಹಂಕಾರವನ್ನು ಅಸಹ್ಯಿಸಿಕೊಂಡು, ಅವನ ಅರಮನೆಗಳನ್ನು ಹಗೆಮಾಡುತ್ತೇನೆ. ಆದಕಾರಣ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ನಾನು ಒಪ್ಪಿಸಿ ಬಿಡುತ್ತೇನೆ.
AMO 6:9 ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ, ಅವರು ಸಾಯುವರು.
AMO 6:10 ಮತ್ತು ಸಂಬಂಧಿಯೊಬ್ಬರು ಮೃತ ದೇಹಗಳನ್ನು ಸುಡಲು ಆ ಮನೆಯಿಂದ ಹೊರತೆಗೆಯಲು ಬಂದಾಗ ಮತ್ತು ಅಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು, “ನಿಮ್ಮೊಂದಿಗೆ ಬೇರೆ ಯಾರಾದರೂ ಇದ್ದಾರೆಯೇ?” ಎಂದು ಕೇಳಲು ಅವನು ಇಲ್ಲ ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ನಾವು ಯೆಹೋವ ದೇವರ ಹೆಸರನ್ನು ತೆಗೆದುಕೊಳ್ಳಬಾರದು.”
AMO 6:11 ಏಕೆಂದರೆ, ಯೆಹೋವ ದೇವರು ಆಜ್ಞಾಪಿಸುತ್ತಾರೆ, ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
AMO 6:12 ಕುದುರೆಗಳು ಬಂಡೆಯ ಮೇಲೆ ಓಡುವುದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷವನ್ನಾಗಿ, ನೀತಿ ಫಲವನ್ನು ಕಹಿಯನ್ನಾಗಿ ಬದಲಾಯಿಸಿದ್ದೀರಿ.
AMO 6:13 ಏನೂ ಇಲ್ಲದಿದ್ದರಲ್ಲಿ ಸಂತೋಷ ಪಡುವವರೇ, ನೀವು ಹೆಚ್ಚಳ ಪಡುವುದು ಶೂನ್ಯವಾಗಿರುವುದರಲ್ಲಿಯೇ? “ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿಲ್ಲವೇ?” ಅಂದುಕೊಳ್ಳುತ್ತೀರಿ.
AMO 6:14 ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುವೆನು. ಲೆಬೊ ಹಮಾತಿನ ಪ್ರದೇಶದಿಂದ ಅರಾಬಾ ತಗ್ಗಿನ ನದಿಯವರೆಗೂ ನಿಮ್ಮನ್ನು ಹಿಂಸಿಸುವರು.
AMO 7:1 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಹಿಂಗಾರು ಮಳೆ ಬಿದ್ದು, ಪೈರು ಸೊಂಪಾಗುವುದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ, ಬೆಳೆಯು ವೃದ್ಧಿಯಾಗುತ್ತಿದ್ದಾಗ, ಇಗೋ ಯೆಹೋವ ದೇವರು, ಮಿಡತೆಗಳನ್ನು ಉಂಟುಮಾಡಿದರು.
AMO 7:2 ಅವು ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು, “ಸಾರ್ವಭೌಮ ಯೆಹೋವ ದೇವರೇ, ಲಾಲಿಸು, ನನ್ನನ್ನು ಮನ್ನಿಸು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ,” ಎಂದು ವಿಜ್ಞಾಪಿಸಿಕೊಂಡೆನು.
AMO 7:3 ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.
AMO 7:4 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಸಾರ್ವಭೌಮ ಯೆಹೋವ ದೇವರು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಕ್ಕೆ ಕರೆದರು. ಅದು ದೊಡ್ಡ ಅಗಾಧವನ್ನು ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
AMO 7:5 ಆಗ ನಾನು, “ಸಾರ್ವಭೌಮ ಯೆಹೋವ ದೇವರೇ, ನಿಲ್ಲಿಸಿಬಿಡಿರಿ,” ಎಂದು ಬೇಡಿಕೊಳ್ಳುತ್ತೇನೆ. “ಯಾಕೋಬನು ಹೇಗೆ ಬದುಕುಳಿಯುತ್ತಾನೆ? ಅವನು ತುಂಬಾ ಚಿಕ್ಕವನು,” ಎಂದು ಮೊರೆಯಿಟ್ಟೆನು.
AMO 7:6 ಆಗ ಸಾರ್ವಭೌಮ ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.
AMO 7:7 ಆತನು ನನಗೆ ಹೀಗೆ ತೋರಿಸಿದನು. ಯೆಹೋವ ದೇವರು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದರು. ಆತನ ಕೈಯಲ್ಲಿ ನೂಲುಗುಂಡು ಇತ್ತು.
AMO 7:8 ಯೆಹೋವ ದೇವರು ನನಗೆ, “ಆಮೋಸನೇ, ಏನನ್ನು ನೋಡುತ್ತಿರುವೆ?” ಎಂದು ಕೇಳಿದರು. ಆಗ ನಾನು, “ನೂಲುಗುಂಡು,” ಎಂದೆನು. ನಂತರ ಯೆಹೋವ ದೇವರು ಹೇಳಿದ್ದೇನೆಂದರೆ, “ನೋಡು, ನಾನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಮೇಲೆ ಅವರನ್ನು ದಾಟಿ ಹೋಗುವುದಿಲ್ಲ.
AMO 7:9 “ಇಸಾಕನ ಉನ್ನತ ಪೂಜಾಸ್ಥಳಗಳು ನಾಶವಾಗುವುವು. ಇಸ್ರಾಯೇಲಿನ ಪರಿಶುದ್ಧ ಸ್ಥಳಗಳು ಹಾಳಾಗುವುವು. ನಾನು ಖಡ್ಗದೊಂದಿಗೆ ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.”
AMO 7:10 ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ ಕಳುಹಿಸಿ ಹೇಳಿದ್ದೇನೆಂದರೆ: “ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು.
AMO 7:11 ಆಮೋಸನು ಹೇಳಿದ್ದೇನೆಂದರೆ: “ಯಾರೊಬ್ಬಾಮನು ಖಡ್ಗದಿಂದ ಸಾಯುವನೆಂದೂ ಇಸ್ರಾಯೇಲರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಕರೆದೊಯ್ಯುವರು.”
AMO 7:12 ಅನಂತರ ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ: “ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿ ದುಡಿದು ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.
AMO 7:13 ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ. ಏಕೆಂದರೆ ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ, ರಾಜ್ಯದ ಆಲಯವಾಗಿಯೂ ಇದೆ,” ಎಂದನು.
AMO 7:14 ಆಗ ಆಮೋಸನು ಅಮಚ್ಯನಿಗೆ ಉತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನೂ ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೆನು,” ಎಂದನು.
AMO 7:15 ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆಯಲ್ಲಿ, ಯೆಹೋವ ದೇವರು ನನ್ನನ್ನು ಕರೆದು ಹೇಳಿದ್ದೇನೆಂದರೆ: “ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದಿಸು.”
AMO 7:16 ಹೀಗಿರುವುದರಿಂದ ನೀನು ಈಗ ಯೆಹೋವ ದೇವರ ವಾಕ್ಯವನ್ನು ಕೇಳು: ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ, ಇಸಾಕನ ಮನೆತನಕ್ಕೆ ವಿರೋಧವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವೆಯಲ್ಲಾ.
AMO 7:17 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ: “ ‘ನಿನ್ನ ಹೆಂಡತಿ ಪಟ್ಟಣದಲ್ಲಿ ವ್ಯಭಿಚಾರಿಣಿಯಾಗುವಳು. ನಿನ್ನ ಪುತ್ರ ಪುತ್ರಿಯರೂ ಖಡ್ಗದಿಂದ ಬೀಳುವರು. ನಿನ್ನ ದೇಶವನ್ನು ಅಳೆಯಲಾಗುತ್ತದೆ ಮತ್ತು ವಿಭಾಗಿಸಲಾಗುತ್ತದೆ. ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಕರೆದೊಯ್ಯಲಾಗುವುದು.’ ”
AMO 8:1 ಸಾರ್ವಭೌಮ ಯೆಹೋವ ದೇವರು ನನಗೆ ಮಾಗಿದ ಹಣ್ಣುಗಳುಳ್ಳ ಬುಟ್ಟಿ ತೋರಿಸಿದರು.
AMO 8:2 ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು.
AMO 8:3 “ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!”
AMO 8:4 ಬಡವರನ್ನು ನುಂಗುವವರೇ, ನಾಡಿನ ಬಡವರನ್ನು ಮುಗಿಸಿಬಿಡಬೇಕೆಂದಿರುವವರೇ, ಇದನ್ನು ಕೇಳಿರಿ.
AMO 8:5 ನೀವು ಹೇಳುವುದೇನೆಂದರೆ, “ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಗೋಧಿಯನ್ನು ಮಾರುವ ಹಾಗೆ ಸಬ್ಬತ್ ದಿನವು ಯಾವಾಗ ಮುಗಿಯುವುದು? ಕೊಳಗವನ್ನು ಚಿಕ್ಕದಾಗಿಯೂ ತೊಲಗಳನ್ನು ದೊಡ್ಡದಾಗಿಯೂ, ಕಳ್ಳತಕ್ಕಡಿಗಳನ್ನು ಮೋಸಕ್ಕಾಗಿಯೂ ಮಾಡೋಣವೆಂದೂ,
AMO 8:6 ಬಡವರನ್ನು ಬೆಳ್ಳಿಗೂ ದರಿದ್ರರನ್ನು ಕೆರಗಳ ಜೋಡಿಗೂ ಕೊಂಡುಕೊಳ್ಳುವೆವು, ಹೌದು ಗೋಧಿಯ ಕಸವನ್ನು ಸಹ ಮಾರೋಣ.”
AMO 8:7 ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ.
AMO 8:8 “ಇದಕ್ಕಾಗಿ ದೇಶವು ನಡುಗುವುದಿಲ್ಲವೇ? ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವುದಿಲ್ಲವೇ? ದೇಶವೆಲ್ಲಾ ನೈಲ್ ನದಿಯ ಪ್ರವಾಹದಂತೆ ಉಬ್ಬಿ ಅಲ್ಲೊಲಕಲ್ಲೋಲವಾಗುವುದು, ಈಜಿಪ್ಟಿನ ನದಿಯಂತೆ ಇಳಿದುಹೋಗುವದು.
AMO 8:9 “ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ, “ಆ ದಿನದಲ್ಲಿ,” ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡುತ್ತೇನೆ.
AMO 8:10 ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.
AMO 8:11 ದಿನಗಳು ಬರುವುವು, ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ. ಯೆಹೋವ ದೇವರ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮವನ್ನೇ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ.
AMO 8:12 ಆಗ ಅವರು ಸಮುದ್ರದಿಂದ ಸಮುದ್ರಕ್ಕೂ, ಉತ್ತರದಿಂದ ಪೂರ್ವಕ್ಕೂ ಅಲೆದು ಯೆಹೋವ ದೇವರ ವಾಕ್ಯವನ್ನು ಹುಡುಕುವುದಕ್ಕೆ ಅತ್ತಿತ್ತ ಓಡಾಡಿ, ಅದನ್ನು ಕಾಣದೆ ಹೋಗುವರು.
AMO 8:13 “ಆ ದಿನದಲ್ಲಿ, “ಸೌಂದರ್ಯವತಿಯರಾದ ಕನ್ಯೆಯರು ಮತ್ತು ಯೌವನಸ್ಥರು ಸಹ ದಾಹದಿಂದ ಕುಗ್ಗಿ ಹೋಗುವರು.
AMO 8:14 ಅವರು ಸಮಾರ್ಯದ ಪಾಪದ ಮೇಲೆ ಆಣೆ ಇಟ್ಟುಕೊಂಡು, ದಾನೇ, ನಿನ್ನ ದೇವರ ಜೀವದಾಣೆ ಎಂದೂ, ಬೇರ್ಷೆಬದ ಮಾರ್ಗದ ಜೀವದಾಣೆ ಎಂದೂ ಹೇಳುವರು. ಅವರು ಬಿದ್ದು ಮತ್ತೆ ಮೇಲೆ ಏಳಲಾರರು.”
AMO 9:1 ಕರ್ತದೇವರು ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ನಾನು ಕಂಡೆನು. ಅವರು ಹೇಳಿದ್ದೇನೆಂದರೆ: “ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು, ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದುಬಿಡು. ಅವರಲ್ಲಿ ಉಳಿದವರನ್ನು ಖಡ್ಗದಿಂದ ಕೊಲ್ಲುವೆನು. ಅವರಲ್ಲಿ ಓಡಿಹೋಗುವವನು ಓಡಿಹೋಗಲಾಗುವುದಿಲ್ಲ.
AMO 9:2 ಅವರು ಪಾತಾಳದವರೆಗೂ ಅಗೆದುಕೊಂಡು ಹೋದರೂ, ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು. ಅವರು ಆಕಾಶಕ್ಕೆ ಏರಿಹೋದರೂ, ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.
AMO 9:3 ಅವರು ಕರ್ಮೆಲಿನ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ, ಅಲ್ಲಿಂದ ತೆಗೆಯುವೆನು. ಅವರು ನನ್ನ ದೃಷ್ಟಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಸರ್ಪಕ್ಕೆ ಅಪ್ಪಣೆಕೊಟ್ಟು, ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.
AMO 9:4 ಅವರು ತಮ್ಮ ಶತ್ರುಗಳ ಮುಂದೆ ಸೆರೆಗೆ ಹೋಗಿದ್ದರೂ, ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಕೊಲ್ಲುವುದು. “ಅವರ ಮೇಲಿಗಾಗಿ ಅಲ್ಲ, ಕೇಡಿಗಾಗಿ ಅವರ ಮೇಲೆ ನನ್ನ ದೃಷ್ಟಿಯಿಡುವೆನು.”
AMO 9:5 ಸೇನಾಧೀಶ್ವರ ಯೆಹೋವ ದೇವರಾದ ಕರ್ತರೇ, ನೀವು ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವುದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನೈಲ್ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಈಜಿಪ್ಟಿನ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವುದು.
AMO 9:6 ಆಕಾಶದಲ್ಲಿ ಉಪ್ಪರಿಗೆಗಳನ್ನು ಕಟ್ಟಿಕೊಂಡು, ಭೂಮಿಯ ಮೇಲೆ ತಮ್ಮ ತಂಡಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನು ಕರೆದು, ಅದನ್ನು ಭೂಮಿಯ ಮೇಲೆ ಹೊಯ್ಯುವಂತೆ ಮಾಡುವಾತರು ಅವರೇ. ಅವರ ಹೆಸರು ಯೆಹೋವ ದೇವರು.
AMO 9:7 “ಇಸ್ರಾಯೇಲರೇ, ನೀವು ನನಗೆ ಕೂಷ್ಯರ ಮಕ್ಕಳ ಹಾಗಲ್ಲವೇ? ನಾನು ನಿಮ್ಮನ್ನು ಈಜಿಪ್ಟಿನಿಂದಲೂ ಫಿಲಿಷ್ಟಿಯರನ್ನು ಕಫ್ತೋರಿನಿಂದಲೂ ಅರಾಮ್ಯರನ್ನು ಕೀರಿನಿಂದಲೂ ತರಲಿಲ್ಲವೇ?” ಎಂದು ಯೆಹೋವ ದೇವರು ಹೇಳುತ್ತಾರೆ.
AMO 9:8 “ಸಾರ್ವಭೌಮ ಯೆಹೋವ ದೇವರ ಕಣ್ಣುಗಳು ಪಾಪವುಳ್ಳ ರಾಜ್ಯದ ಮೇಲೆ ಇವೆ. ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. ಆದರೆ ಯಾಕೋಬಿನ ಮನೆತನದವರನ್ನು ನಾನು ನಿಜವಾಗಿ ನಾಶಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
AMO 9:9 ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ನಾನು ಇಸ್ರಾಯೇಲರನ್ನು ಎಲ್ಲಾ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ.
AMO 9:10 ಕೇಡು ನಮ್ಮನ್ನು ಹಿಂದಟ್ಟದು ಮತ್ತು ನಮ್ಮನ್ನು ತಡೆಯುವದೂ ಇಲ್ಲ, ಎನ್ನುವ ನನ್ನ ಜನರಲ್ಲಿರುವ ಪಾಪಿಗಳೆಲ್ಲರೂ ಖಡ್ಗದಿಂದ ಸಾಯುವರು.
AMO 9:11 ಆ ದಿನದಲ್ಲಿ, ಬಿದ್ದುಹೋದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಮುರಿದ ಗೋಡೆಗಳನ್ನು ಸರಿಪಡಿಸುತ್ತೇನೆ. ಮತ್ತು ಅದರ ಅವಶೇಷಗಳನ್ನು ಪುನಃಸ್ಥಾಪಿಸಿ ಮತ್ತು ಅದನ್ನು ಮೊದಲಿನಂತೆ ಪುನಃ ನಿರ್ಮಿಸುವೆನು.
AMO 9:12 ಆಗ ಅವರು ಎದೋಮಿನ ಮಿಕ್ಕ ಭಾಗವನ್ನೂ, ನನ್ನ ಹೆಸರಿನಿಂದ ಕರೆಯಲಾಗುವ ಎಲ್ಲಾ ಜನಾಂಗಗಳನ್ನೂ ಸ್ವಾಧೀನ ಮಾಡಿಕೊಳ್ಳುವೆನು, ಎಂಬುದಾಗಿ ಇದನ್ನು ಮಾಡುವವರಾದ ಯೆಹೋವ ದೇವರು ಹೇಳುತ್ತಾರೆ.
AMO 9:13 ಯೆಹೋವ ದೇವರು ಹೇಳುವುದೇನೆಂದರೆ: “ದಿನಗಳು ಬರುವುವು,” “ಆಗ ಉಳುವವನು ಕೊಯ್ಯುವವನನ್ನೂ, ದ್ರಾಕ್ಷಿ ಮಾರುವವನು ಬೀಜ ಹಾಕುವವನನ್ನೂ ಹಿಂದಟ್ಟುವರು. ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವುವು, ಗುಡ್ಡಗಳೆಲ್ಲಾ ಕರಗುವುವು.
AMO 9:14 ನನ್ನ ಜನರಾದ ಇಸ್ರಾಯೇಲರನ್ನು ಸೆರೆಯಿಂದ ತಿರುಗಿ ಬರಮಾಡುವೆನು. “ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು. ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ದ್ರಾಕ್ಷಾರಸವನ್ನು ಕುಡಿಯುವರು. ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.
AMO 9:15 ನಾನು ಇಸ್ರಾಯೇಲರನ್ನು ಅವರ ದೇಶದಲ್ಲಿ ನೆಡುವೆನು. ನಾನು ಅವರಿಗೆ ಕೊಟ್ಟಿರುವ ದೇಶದಿಂದ ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕರು,” ಎಂದು ನಿಮ್ಮ ದೇವರಾದ ಯೆಹೋವ ದೇವರು ಹೇಳುತ್ತಾರೆ.
OBA 1:1 ಓಬದ್ಯನ ದರ್ಶನವು. ಸಾರ್ವಭೌಮ ಯೆಹೋವ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾರೆ: ಯೆಹೋವ ದೇವರಿಂದ ಸುದ್ದಿಯನ್ನು ಕೇಳಿದ್ದೇವೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ: “ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ!”
OBA 1:2 “ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ.
OBA 1:3 ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ ಎಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ.
OBA 1:4 ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
OBA 1:5 “ನಿನ್ನಲ್ಲಿ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ?
OBA 1:6 ಆದರೆ ಏಸಾವಿನ ಆಸ್ತಿಯು ಸಂಪೂರ್ಣ ನಾಶವಾಗಿ ಅದರ ನಿಗೂಢ ನಿಕ್ಷೇಪಗಳು ಸೂರೆಯಾಗಿವೆ.
OBA 1:7 ನಿನ್ನ ಸಂಗಡ ಒಡಂಬಟ್ಟ ಮನುಷ್ಯರೆಲ್ಲರು ನಿನ್ನನ್ನು ಮೇರೆಯವರೆಗೂ ತಂದಿದ್ದಾರೆ. ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸಮಾಡಿ ನಿನ್ನ ಮೇಲೆ ಜಯ ಹೊಂದಿದ್ದಾರೆ. ನಿನ್ನ ರೊಟ್ಟಿಯನ್ನು ತಿನ್ನುವವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ. ಆದರೆ ನೀನು ಅದನ್ನು ತಿಳಿದುಕೊಳ್ಳಲಾರೆ.
OBA 1:8 “ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ?
OBA 1:9 ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ, ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು.
OBA 1:10 ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚುವುದು. ನೀನು ಎಂದೆಂದಿಗೂ ನಾಶವಾಗಿ ಹೋಗುವೆ.
OBA 1:11 ನೀನು ಪ್ರತ್ಯೇಕವಾಗಿ ಎದುರು ನಿಂತ ದಿವಸದಲ್ಲಿ ಪರರು ಅವನ ಸೊತ್ತನ್ನು ತೆಗೆದುಕೊಂಡು ಹೋದ ದಿವಸದಲ್ಲಿ ಪರಕೀಯರು ಅವನ ಬಾಗಿಲುಗಳಲ್ಲಿ ಪ್ರವೇಶಿಸಿ, ಯೆರೂಸಲೇಮಿನ ಸೊತ್ತಿಗಾಗಿ ಚೀಟು ಹಾಕಿದಾಗ ನೀನೂ ಅವರಲ್ಲಿ ಒಬ್ಬನ ಹಾಗಿದ್ದೆ.
OBA 1:12 ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಯೆಹೂದದ ಜನರು ನಾಶವಾದಾಗ ನೀನು ಸಂತೋಷಪಡಬಾರದಿತ್ತು. ಅವರ ಕಷ್ಟದ ದಿವಸದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;
OBA 1:13 ನನ್ನ ಜನರ ಆಪತ್ತಿನ ದಿವಸದಲ್ಲಿ ಅವರ ದ್ವಾರಗಳ ಮೂಲಕ ಪ್ರವೇಶಿಸಬಾರದಿತ್ತು. ಹೌದು, ನೀನು ಅವರ ಆಪತ್ತಿನ ದಿವಸದಲ್ಲಿ ಅವರನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಅವರ ಆಪತ್ತಿನ ದಿವಸದಲ್ಲಿ ಅವರ ಆಸ್ತಿಯ ಮೇಲೆ ಕೈ ಹಾಕಬಾರದಾಗಿತ್ತು.
OBA 1:14 ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು. ಕಷ್ಟದ ದಿವಸದಲ್ಲಿ ಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು.
OBA 1:15 “ಯೆಹೋವ ದೇವರ ದಿವಸವು ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ. ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು. ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು.
OBA 1:16 ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ, ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವುವು. ಹೌದು, ಕುಡಿದು ಎಂದೂ ಇಲ್ಲದವರ ಹಾಗೆ ಆಗುವುದು.
OBA 1:17 ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು. ಅದು ಪರಿಶುದ್ಧವಾಗಿರುವುದು. ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು.
OBA 1:18 ಯಾಕೋಬನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು. ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.” ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
OBA 1:19 ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರು ಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು. ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರು ಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು.
OBA 1:20 ಚಾರೆಪತಿನವರೆಗೂ ಇರುವ ಪ್ರದೇಶವನ್ನು ಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು. ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು.
OBA 1:21 ರಕ್ಷಕನು ಏಸಾವಿನ ಪರ್ವತವನ್ನು ಆಳಲು ಚೀಯೋನ್ ಪರ್ವತವನ್ನು ಏರುವನು. ಆಗ ರಾಜ್ಯವು ಯೆಹೋವ ದೇವರದಾಗಿರುವುದು.
JON 1:1 ಯೆಹೋವ ದೇವರ ವಾಕ್ಯವು ಅಮಿತ್ತೈಯನ ಮಗ ಯೋನನಿಗೆ ಬಂದಿತು:
JON 1:2 “ನೀನು ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಪ್ರಸಂಗಿಸು, ಏಕೆಂದರೆ ಅವರ ಕೆಟ್ಟತನವು ನನ್ನ ಮುಂದೆ ಏರಿ ಬಂದಿದೆ,” ಎಂಬುದು.
JON 1:3 ಆದರೆ ಯೋನನು ಯೆಹೋವ ದೇವರ ಸಮ್ಮುಖದಿಂದ ತಾರ್ಷೀಷಿಗೆ ಓಡಿಹೋಗುವುದಕ್ಕೆ ಎದ್ದು, ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು, ಪ್ರಯಾಣದ ದರವನ್ನು ಕೊಟ್ಟು, ಯೆಹೋವ ದೇವರ ಸಮ್ಮುಖದಿಂದ ತಪ್ಪಿಸಿಕೊಂಡು ಹೋಗಲು, ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ತಾರ್ಷೀಷಿಗೆ ಹೋಗುವುದಕ್ಕೆ ಅದನ್ನು ಹತ್ತಿದನು.
JON 1:4 ಆದರೆ ಯೆಹೋವ ದೇವರು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದರು. ಸಮುದ್ರದಲ್ಲಿ ಮಹಾ ಬಿರುಗಾಳಿ ಉಂಟಾಗಿ, ಹಡಗು ಒಡೆಯುವುದರಲ್ಲಿತ್ತು.
JON 1:5 ಆಗ ಹಡಗಿನವರು ಭಯಪಟ್ಟು ಒಬ್ಬೊಬ್ಬನು ತನ್ನ ತನ್ನ ದೇವರಿಗೆ ಕೂಗಿ, ಹಡಗನ್ನು ಹಗುರ ಮಾಡುವ ಹಾಗೆ ಅದರಲ್ಲಿದ್ದ ಸರಕುಗಳನ್ನು ಸಮುದ್ರದಲ್ಲಿ ಹಾಕಿಬಿಟ್ಟರು. ಆದರೆ ಯೋನನು ಹಡಗಿನ ಕೆಳಭಾಗಕ್ಕೆ ಇಳಿದು ಹೋಗಿ, ಮಲಗಿಕೊಂಡು ಗಾಢ ನಿದ್ರೆಯಲ್ಲಿದ್ದನು.
JON 1:6 ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು, “ನೀನು ನಿದ್ರೆ ಮಾಡುವುದೇಕೆ? ಎದ್ದು ನಿನ್ನ ದೇವರನ್ನು ಪ್ರಾರ್ಥಿಸು. ಒಂದು ವೇಳೆ ನಿನ್ನ ದೇವರು ನಮ್ಮ ಮೇಲೆ ಲಕ್ಷ್ಯವಿಟ್ಟು, ನಾವು ನಾಶವಾಗದಂತೆ ಕಾಪಾಡಿಯಾರು!” ಎಂದನು.
JON 1:7 ಆಗ ನಾವಿಕರು ಒಬ್ಬರಿಗೊಬ್ಬರು, “ಬನ್ನಿ, ಚೀಟುಗಳನ್ನು ಹಾಕೋಣ. ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ,” ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟುಗಳನ್ನು ಹಾಕಿದಾಗ, ಯೋನನ ಮೇಲೆ ಚೀಟು ಬಿತ್ತು.
JON 1:8 ಆಗ ಅವರು ಅವನಿಗೆ, “ನಮಗಾಗಿ ಈ ಕಷ್ಟವನ್ನೆಲ್ಲಾ ಉಂಟುಮಾಡಿದ್ದಕ್ಕೆ ಯಾರು ಜವಾಬ್ದಾರರೆಂದು ನಮಗೆ ತೋರಿಸು. ನಿನ್ನ ಕೆಲಸವೇನು? ಎಲ್ಲಿಂದ ಬಂದೆ? ನಿನ್ನ ದೇಶ ಯಾವುದು? ನೀನು ಯಾವ ಜನಾಂಗದವನು?” ಎಂದು ಪ್ರಶ್ನಿಸಿದರು.
JON 1:9 ಅವನು ಅವರಿಗೆ, “ನಾನು ಹಿಬ್ರಿಯನು. ಸಮುದ್ರವನ್ನೂ, ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರಲೋಕದ ದೇವರಾದ ಯೆಹೋವ ದೇವರಿಗೆ ನಾನು ಆರಾಧಿಸುವವನಾಗಿದ್ದೇನೆ,” ಎಂದು ಹೇಳಿದನು.
JON 1:10 ಆಗ ಆ ಮನುಷ್ಯರು ಬಹಳ ಭಯಪಟ್ಟು, “ನೀನು ಏನು ಮಾಡಿದ್ದೀ?” ಎಂದು ಅವನನ್ನು ಕೇಳಿದರು. ಏಕೆಂದರೆ ಯೆಹೋವ ದೇವರ ಸಮ್ಮುಖದಿಂದ ಅವನು ಓಡಿ ಹೋಗುತ್ತಿದ್ದಾನೆಂದು ಆ ಮನುಷ್ಯರಿಗೆ ತಿಳಿದಿತ್ತು. ಏಕೆಂದರೆ ಅವನೇ ಇದನ್ನು ಅವರಿಗೆ ಹೇಳಿದ್ದನು.
JON 1:11 ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ, “ಸಮುದ್ರ ಶಾಂತವಾಗಬೇಕಾದರೆ, ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.
JON 1:12 ಅವನು ಅವರಿಗೆ, “ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ಶಾಂತವಾಗುವುದು. ಏಕೆಂದರೆ ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ, ನಿಮ್ಮ ಮೇಲೆ ಬಂತೆಂದು ಬಲ್ಲೆನು,” ಎಂದನು.
JON 1:13 ಆದರೂ ಆ ಮನುಷ್ಯರು ದಡಕ್ಕೆ ತಿರುಗಿಕೊಳ್ಳುವ ಹಾಗೆ ಬಲವಾಗಿ ಹುಟ್ಟುಹಾಕಿದರು. ಆದರೆ ಅವರಿಂದಾಗದೆ ಹೋಯಿತು. ಏಕೆಂದರೆ ಸಮುದ್ರವು ಅವರಿಗೆ ಎದುರಾಗಿ, ಹೆಚ್ಚೆಚ್ಚಾಗಿ ತೆರೆಗಳಿಂದ ರೋಷಗೊಂಡಿತು.
JON 1:14 ಆಗ ಅವರು ಯೆಹೋವ ದೇವರಿಗೆ ಕೂಗಿ, “ಯೆಹೋವ ದೇವರೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ. ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡಿರಿ. ಯೆಹೋವ ದೇವರೇ, ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?” ಎಂದು ಹೇಳಿದರು.
JON 1:15 ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು. ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿಬಿಟ್ಟಿತು.
JON 1:16 ಆಗ ಆ ಜನರು, ಯೆಹೋವ ದೇವರಿಗೆ ಬಹಳವಾಗಿ ಭಯಪಟ್ಟು, ಅವರಿಗೆ ಬಲಿ ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು.
JON 1:17 ಆದರೆ ಯೆಹೋವ ದೇವರು ಯೋನನನ್ನು ನುಂಗುವಂತೆ ದೊಡ್ಡ ಮೀನನ್ನು ಸಿದ್ಧಮಾಡಿದ್ದರು. ಯೋನನು ಆ ಮೀನಿನ ಹೊಟ್ಟೆಯಲ್ಲಿ ಮೂರು ಹಗಲು ಮತ್ತು ಮೂರು ರಾತ್ರಿ ಇದ್ದನು.
JON 2:1 ಆಗ ಯೋನನು ಮೀನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.
JON 2:2 ಅವನು ಹೀಗೆ ಹೇಳಿದನು: “ನಾನು ನನ್ನ ವ್ಯಥೆಯಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟೆನು. ಅವರು ನನ್ನ ಕೂಗನ್ನು ಕೇಳಿದರು. ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ನಾನು ಕೂಗಿದೆನು, ಆಗ ನನ್ನ ಕರೆಯನ್ನು ನೀವು ಕೇಳಿದಿರಿ.
JON 2:3 ನನ್ನನ್ನು ನೀವು ಅಗಾಧದಲ್ಲಿಯೂ, ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿರಿ. ಪ್ರವಾಹಗಳು ನನ್ನನ್ನು ಸುತ್ತಿಕೊಂಡವು. ನಿಮ್ಮ ಎಲ್ಲಾ ಅಲೆಗಳೂ ನಿಮ್ಮ ತೆರೆಗಳೂ ನನ್ನ ಮೇಲೆ ದಾಟಿಹೋದವು.
JON 2:4 ಆಗ ನಾನು ಹೇಳಿದ್ದು, ‘ನಿಮ್ಮ ಕಣ್ಣುಗಳ ಎದುರಿನಿಂದ ಬಹಿಷ್ಕೃತನಾಗಿದ್ದೇನೆ. ಆದರೂ ನಾನು ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಪುನಃ ನೋಡುವೆನು.’
JON 2:5 ನನ್ನನ್ನು ಸುತ್ತುತ್ತಿದ್ದ ನೀರು, ನನ್ನನ್ನು ಭಯಪಡಿಸಿತು. ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು. ಜಂಬು ಹುಲ್ಲು ನನ್ನ ತಲೆಗೆ ಸುತ್ತಲಾಗಿತ್ತು.
JON 2:6 ಬೆಟ್ಟಗಳ ಅಡಿಗಳ ಪರ್ಯಂತರ ಇಳಿದು ಹೋದೆನು. ಕೆಳಗಿನ ಭೂಮಿಯು ನನ್ನನ್ನು ಶಾಶ್ವತವಾಗಿ ನಿರ್ಬಂಧಿಸಿತು. ಆದರೂ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನ ಪ್ರಾಣವನ್ನು ತಗ್ಗಿನಿಂದ ಮೇಲಕ್ಕೆ ಎಬ್ಬಿಸಿದ್ದೀರಿ.
JON 2:7 “ನನ್ನ ಪ್ರಾಣವು ನನ್ನಲ್ಲಿ ಕುಂದಿ ಹೋದಾಗ, ಯೆಹೋವ ದೇವರೇ ನಿಮ್ಮನ್ನು ಜ್ಞಾಪಕಮಾಡಿಕೊಂಡೆನು. ನನ್ನ ಪ್ರಾರ್ಥನೆಯು ನಿಮ್ಮ ಬಳಿಗೆ ನಿಮ್ಮ ಪರಿಶುದ್ಧ ಮಂದಿರದೊಳಗೆ ಬಂದಿತು.
JON 2:8 “ನಿರುಪಯೋಗ ಮೂರ್ತಿಗಳಿಗೆ ಅಂಟಿಕೊಳ್ಳುವವರು, ಅವರದಾಗುವ ದೇವರ ಪ್ರೀತಿಯನ್ನು ಕಳೆದುಕೊಳ್ಳುವರು.
JON 2:9 ಆದರೆ ನಾನು ಸ್ತೋತ್ರದ ಗೀತೆಯಿಂದ ನಿಮಗೆ ಬಲಿ ಅರ್ಪಿಸುವೆನು. ನಾನು ಮಾಡಿದ ಹರಕೆಯನ್ನು ತೀರಿಸುವೆನು. ಆಗ ನಾನು, ‘ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು,’ ಎಂದು ಹೇಳಿದನು.”
JON 2:10 ಆಗ ಯೆಹೋವ ದೇವರು ಮೀನಿಗೆ ಹೇಳಿದ್ದರಿಂದ, ಅದು ಯೋನನನ್ನು ಒಣಭೂಮಿಯ ಮೇಲೆ ಕಾರಿಬಿಟ್ಟಿತು.
JON 3:1 ಯೆಹೋವ ದೇವರ ವಾಕ್ಯವು ಎರಡನೆಯ ಸಾರಿ ಯೋನನಿಗೆ ಬಂದಿತು.
JON 3:2 “ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ, ನಾನು ನಿನಗೆ ಹೇಳಿದ ಸಂದೇಶವನ್ನು ಅದರ ನಿವಾಸಿಗಳಿಗೆ ಸಾರು,” ಎಂದು ಹೇಳಿದರು.
JON 3:3 ಹೀಗೆ ಯೋನನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ನಿನೆವೆಗೆ ಹೋದನು. ನಿನೆವೆಯು ಮೂರು ದಿವಸದ ಪ್ರಯಾಣದ ಮಹಾ ದೊಡ್ಡ ಪಟ್ಟಣವಾಗಿತ್ತು.
JON 3:4 ಆಗ ಯೋನನು ಒಂದು ದಿವಸದ ಪ್ರಯಾಣಮಾಡಿ, ಪಟ್ಟಣದಲ್ಲಿ ಪ್ರವೇಶಿಸಿ, “ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ನಾಶವಾಗುವುದು,” ಎಂದು ಕೂಗಿ ಹೇಳಿದನು.
JON 3:5 ನಿನೆವೆಯ ಮನುಷ್ಯರು, ದೇವರನ್ನು ನಂಬಿ, ಉಪವಾಸವನ್ನು ಸಾರಿ, ಅವರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನವರೆಗೂ ಗೋಣಿತಟ್ಟನ್ನು ಉಟ್ಟುಕೊಂಡರು.
JON 3:6 ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು.
JON 3:7 ಅವನು ನಿನೆವೆಯಲ್ಲಿ ಈ ಘೋಷಣೆಯನ್ನು ಮಾಡಿದನು: “ಅರಸನ ಮತ್ತು ಶ್ರೇಷ್ಠರ ತೀರ್ಪಿನ ಪ್ರಕಾರ: “ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನನ್ನೂ ರುಚಿ ನೋಡದಿರಲಿ, ಮೇಯದಿರಲಿ, ನೀರನ್ನು ಕುಡಿಯದಿರಲಿ.
JON 3:8 ಆದರೆ ಮನುಷ್ಯರೂ ಮೃಗಗಳೂ ಗೋಣಿತಟ್ಟು ಹಾಕಿಕೊಂಡು, ಜೋರಾದ ಧ್ವನಿಯಿಂದ ದೇವರಿಗೆ ಮೊರೆಯಿಡಲಿ. ಎಲ್ಲರೂ ತಮ್ಮ ತಮ್ಮ ದುರ್ಮಾರ್ಗಗಳನ್ನೂ, ತಮ್ಮ ತಮ್ಮ ಕೈಗಳಲ್ಲಿರುವ ಹಿಂಸಾಚಾರವನ್ನೂ ಬಿಟ್ಟು ತಿರುಗಲಿ.
JON 3:9 ಹೀಗೆ ಮಾಡಿದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ಅನುಕಂಪದಿಂದ ತಮ್ಮ ಉಗ್ರಕೋಪವನ್ನು ತಡೆದು, ನಾವು ನಾಶವಾಗದೆ ಉಳಿಸುವರೇನೋ, ಯಾರು ಬಲ್ಲರು?”
JON 3:10 ಆಗ ದೇವರು, ನಿನೆವೆಯವರು ತಮ್ಮ ದುರ್ಮಾರ್ಗವನ್ನು ಬಿಟ್ಟು ತಿರುಗಿಕೊಂಡರೆಂದು ಕಂಡು, ತಾವು ವಿಧಿಸುವುದಾಗಿ ನುಡಿದ ವಿನಾಶವನ್ನು ಅವರ ಮೇಲೆ ಬರಮಾಡದೆ, ಅವರನ್ನು ಕನಿಕರಿಸಿದರು.
JON 4:1 ಆದರೆ ಯೋನನು ತುಂಬಾ ಬೇಸರಗೊಂಡನು. ಅವನಿಗೆ ಬಹು ಕೋಪ ಬಂತು.
JON 4:2 ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ: “ಯೆಹೋವ ದೇವರೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನು ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು. ನೀವು ಕೃಪೆಯೂ ಅನುಕಂಪವೂ ಪ್ರೀತಿಯಲ್ಲಿ ಐಶ್ವರ್ಯವುಳ್ಳ ದೇವರೆಂದೂ ಕೇಡಿನ ವಿಷಯವಾಗಿ ಮನಮರುಗುವವರೆಂದೂ ನನಗೆ ತಿಳಿದಿತ್ತು.
JON 4:3 ಆದ್ದರಿಂದ ಯೆಹೋವ ದೇವರೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆಯಿರಿ, ಏಕೆಂದರೆ ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು.
JON 4:4 ಆದರೆ ಯೆಹೋವ ದೇವರು, “ನೀನು ಹೀಗೆ ಕೋಪ ಮಾಡಿಕೊಳ್ಳುವುದು ಸರಿಯೋ?” ಎಂದು ಯೋನನಿಗೆ ಹೇಳಿದರು.
JON 4:5 ಆಗ ಯೋನನು ಪಟ್ಟಣವನ್ನು ಬಿಟ್ಟು, ಪಟ್ಟಣದ ಪೂರ್ವದಿಕ್ಕಿನ ಕಡೆಯಲ್ಲಿ ಕುಳಿತುಕೊಂಡು, ಗುಡಿಸಲನ್ನು ಕಟ್ಟಿಕೊಂಡು, ಪಟ್ಟಣದಲ್ಲಿ ಏನಾಗುವುದೆಂದು ನೋಡುವವರೆಗೆ ಗುಡಿಸಲಿನ ನೆರಳಿನಲ್ಲಿ ಕುಳಿತುಕೊಂಡನು.
JON 4:6 ದೇವರಾದ ಯೆಹೋವ ದೇವರು ಒಂದು ಸೋರೆ ಬಳ್ಳಿಯನ್ನು ಹಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು, ಅವನ ತಲೆಗೆ ನೆರಳು ಕೊಟ್ಟು, ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದರು. ಯೋನನು ಆ ಸೋರೆ ಬಳ್ಳಿಯ ವಿಷಯವಾಗಿ ಬಹಳ ಸಂತೋಷಪಟ್ಟನು.
JON 4:7 ಮಾರನೆಯ ದಿವಸ ಉದಯವಾದಾಗ, ದೇವರು ಒಂದು ಹುಳುವನ್ನು ಸಿದ್ಧಮಾಡಿದರು. ಅದು ಸೋರೆ ಬಳ್ಳಿಯನ್ನು ಒಣಗುವ ಹಾಗೆ ಹೊಡೆಯಿತು.
JON 4:8 ಸೂರ್ಯೋದಯವಾದಾಗ ದೇವರು ಉಗ್ರವಾದ ಪೂರ್ವ ಗಾಳಿಯನ್ನು ಸಿದ್ಧಮಾಡಿದರು. ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ, ಅವನು ಮೂರ್ಛೆ ಹೋಗಿ, ಮರಣವನ್ನು ಕೇಳಿಕೊಂಡು, “ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು.
JON 4:9 ಆದರೆ ದೇವರು ಯೋನನಿಗೆ, “ನೀನು ಸೋರೆ ಬಳ್ಳಿಯನ್ನು ಕುರಿತು ಕೋಪ ಮಾಡುವುದು ಸರಿಯೋ?” ಎಂದರು. ಅವನು, “ನಾನು ಸಾಯುವಷ್ಟು ಕೋಪ ಮಾಡುವುದು ಒಳ್ಳೆಯದೇ,” ಎಂದನು.
JON 4:10 ಆದರೆ ಯೆಹೋವ ದೇವರು, “ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ, ಒಂದೇ ರಾತ್ರಿಯಲ್ಲಿ ನಾಶವಾದಂಥ ಸೋರೆ ಬಳ್ಳಿಗಾಗಿ ಚಿಂತಿಸಿದೆಯಲ್ಲಾ,
JON 4:11 ಹಾಗಾದರೆ ಎಡಬಲ ಕೈಗಳನ್ನು ತಿಳಿಯದವರಾದ ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು ಬಹಳ ಪಶುಪ್ರಾಣಿಗಳೂ ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆಯನ್ನು ನಾನು ಚಿಂತಿಸಬಾರದೋ?” ಎಂದರು.
MIC 1:1 ಯೆಹೂದದ ಅರಸರಾದ ಯೋತಾಮನ ಆಹಾಜನ, ಹಿಜ್ಕೀಯನ, ದಿವಸಗಳಲ್ಲಿ ಮೊರೇಷೆತಿನವನಾದ ಮೀಕನಿಗೆ ಬಂದ ಯೆಹೋವ ದೇವರ ವಾಕ್ಯವು. ಅವನು ಸಮಾರ್ಯ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡ ದರ್ಶನ.
MIC 1:2 ಎಲ್ಲಾ ಜನಗಳೇ ಕೇಳಿರಿ, ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ. ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವರು.
MIC 1:3 ಯೆಹೋವ ದೇವರು ತಮ್ಮ ವಾಸಸ್ಥಾನದಿಂದ ಇಳಿದು ಬರುತ್ತಾರೆ. ಅವರು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ಸಂಚರಿಸುತ್ತಾರೆ.
MIC 1:4 ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವುವು; ತಗ್ಗುಗಳು ಸೀಳುವುವು.
MIC 1:5 ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೇ ಇಸ್ರಾಯೇಲಿನ ಮನೆತನದವರ ಪಾಪದಿಂದಲೇ, ಯಾಕೋಬನ ಅಪರಾಧವೇನು? ಅದು ಸಮಾರ್ಯವಲ್ಲವೇ? ಯೆಹೂದದ ಉನ್ನತ ಪೂಜಾಸ್ಥಳ ಯಾವುದು? ಅದು ಯೆರೂಸಲೇಮು ಅಲ್ಲವೋ?
MIC 1:6 ಹೀಗಿರುವುದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬವನ್ನಾಗಿಯೂ ದ್ರಾಕ್ಷಿಬಳ್ಳಿ ನೆಡುವ ಸ್ಥಳವನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು, ಅದರ ಅಸ್ತಿವಾರಗಳನ್ನು ಹೊರಗೆಡಹುವೆನು.
MIC 1:7 ಅದರ ವಿಗ್ರಹಗಳೆಲ್ಲಾ ತುಂಡುಗಳಾಗುವಂತೆ ಮಾಡುವೆನು. ಅದರ ಆಲಯದ ಕಾಣಿಕೆಗಳೆಲ್ಲಾ ಬೆಂಕಿಯಿಂದ ಸುಟ್ಟುಹೋಗುವುದು. ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು. ಅದು ವೇಶ್ಯಾವೃತ್ತಿಯ ಕೂಲಿಯಿಂದ ಕೂಡಿಸಿಕೊಂಡವು. ವೇಶ್ಯಾವೃತ್ತಿಯ ಕೂಲಿಯನ್ನಾಗಿಯೇ ಅವುಗಳನ್ನು ಉಪಯೋಗಿಸಬೇಕಾಗುತ್ತದೆ.
MIC 1:8 ಆದ್ದರಿಂದ ನಾನು ಗೋಳಾಡಿ ಅರಚುವೆನು. ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು. ನರಿಗಳ ಹಾಗೆ ಕೂಗುವೆನು, ಉಷ್ಟ್ರಪಕ್ಷಿಯಂತೆ ನರಳುವೆನು.
MIC 1:9 ಸಮಾರ್ಯದ ಗಾಯವು ಗುಣವಾಗದಂಥದ್ದು, ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಿಲಿಗೂ ಯೆರೂಸಲೇಮಿನವರೆಗೂ ಅದು ತಲುಪಿತು.
MIC 1:10 ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಬೇತ್ ಒಫ್‌ರಾಹದಲ್ಲಿ ಧೂಳಿನಲ್ಲಿ ಹೊರಳಾಡು.
MIC 1:11 ಶಾಫೀರಿನ ನಿವಾಸಿಯೇ, ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ, ಚಾನಾನಿನಲ್ಲಿ ವಾಸಿಸುವವರು ಹೊರಗೆ ಬರುವುದಿಲ್ಲ, ಬೇತ್ ಎಚೆಲು ನರಳುತ್ತಿದೆ. ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ.
MIC 1:12 ಕೇಡು ಯೆಹೋವ ದೇವರಿಂದ ಇಳಿದು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು ವೇದನೆ ಪಡುತ್ತಾರೆ.
MIC 1:13 ಲಾಕೀಷಿನ ನಿವಾಸಿಗಳೇ, ಕುದುರೆಗಳನ್ನು ರಥಕ್ಕೆ ಕಟ್ಟಿರಿ, ಚೀಯೋನ್ ಮಗಳ ಪಾಪವು ನಿನ್ನಿಂದ ಪ್ರಾರಂಭವಾಯಿತು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿ ಬಂದವು.
MIC 1:14 ಹೀಗಿರುವುದರಿಂದ ಮೋರೆಶತ್ ಗತ್ ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ. ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು.
MIC 1:15 ಮಾರೇಷದ ನಿವಾಸಿಯೇ, ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು. ಇಸ್ರಾಯೇಲಿನ ಮಹಿಮೆಯಾದಾತನು ಅದುಲ್ಲಾಮಿನ ಮಟ್ಟಿಗೂ ಬರುವನು.
MIC 1:16 ನಿನ್ನ ಮುದ್ದುಮಕ್ಕಳಿಗೋಸ್ಕರ ತಲೆ ಬೋಳಿಸಿಕೊಂಡು ಕ್ಷೌರಮಾಡಿಸಿಕೋ. ನಿನ್ನ ಬೋಳುತನವನ್ನು ಹದ್ದಿನಂತೆ ಮಾಡಿಕೋ. ಏಕೆಂದರೆ ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗುವರು.
MIC 2:1 ಅಪರಾಧವನ್ನು ಯೋಚಿಸಿ ಅಪರಾಧವನ್ನು ಕಲ್ಪಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡೆಸುವವರಿಗೆ ಕಷ್ಟ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ. ಏಕೆಂದರೆ ಅದು ಅವರ ಕೈಶಕ್ತಿಯಲ್ಲಿದೆ.
MIC 2:2 ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತೆಗೆದುಕೊಳ್ಳುತ್ತಾರೆ. ಮನೆಗಳನ್ನೂ ಸಹ ತೆಗೆದುಕೊಳ್ಳುತ್ತಾರೆ. ಮನುಷ್ಯನಿಗೂ ಅವನ ಮನೆಗೂ ಇತರರಿಗೂ ಅವನ ಸ್ವಾಸ್ತ್ಯವನ್ನು ಕಸಿದುಕೊಳ್ಳುತ್ತಾರೆ.
MIC 2:3 ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ, “ಇಗೋ, ನಾನು ಈ ವಂಶಕ್ಕೆ ವಿರೋಧವಾಗಿ ನಾಶನವನ್ನು ಯೋಚಿಸುತ್ತೇನೆ. ಇದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ. ಅಹಂಕಾರವಾಗಿ ನಡೆಯದೆ ಇರುವಿರಿ. ಇದು ವಿಪತ್ತಿನ ಕಾಲವೇ,
MIC 2:4 ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು. ‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ. ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ. ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು. ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ” ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.
MIC 2:5 ಆದ್ದರಿಂದ ಚೀಟುಹಾಕಿ ದೇಶವನ್ನು ಹಂಚುವದಕ್ಕೆ ಯೆಹೋವ ದೇವರ ಸಭೆಯಲ್ಲಿ ನಿನಗೆ ಯಾರೂ ಇರುವುದಿಲ್ಲ.
MIC 2:6 “ಪ್ರವಾದಿಸಬೇಡ, ಈ ಸಂಗತಿಗಳ ಬಗ್ಗೆ ಪ್ರವಾದನೆ ಹೇಳಬೇಡ. ಅವಮಾನ ನಮ್ಮ ಮೇಲೆ ಬರುವುದೇ ಇಲ್ಲ,” ಎಂದು ಅವರ ಪ್ರವಾದಿಗಳು ಹೇಳುತ್ತಾರೆ.
MIC 2:7 ಯಾಕೋಬಿನ ಮನೆತನದವರೇ, “ಯೆಹೋವ ದೇವರ ಆತ್ಮವು ಕೋಪಗೊಂಡಿದೆಯೇ? ಅವರು ಇಂಥ ಕಾರ್ಯ ಮಾಡುವರೋ?” “ಯಥಾರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೆಯದನ್ನು ಮಾಡುವುದಿಲ್ಲವೋ?
MIC 2:8 ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ. ಯುದ್ಧದಿಂದ ತಿರುಗಿಕೊಂಡು ನಿರ್ಭಯವಾಗಿ ಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊಳ್ಳುತ್ತೀರಿ.
MIC 2:9 ನನ್ನ ಜನರ ಸ್ತ್ರೀಯರನ್ನು ಅವರ ರಮ್ಯವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ. ಅವರ ಮಕ್ಕಳಿಂದ ನನ್ನ ಆಶೀರ್ವಾದವನ್ನು ಎಂದೆಂದಿಗೂ ತೆಗೆದಿದ್ದೀರಿ.
MIC 2:10 ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿಯ ಸ್ಥಳವಲ್ಲ, ಏಕೆಂದರೆ ಇದಕ್ಕೆ ಹೊಲಸು ಅಂಟಿಕೊಂಡು, ಯಾವ ಸುಧಾರಣೆಗೂ ಒಳಗಾಗದಂತೆ ಹಾಳಾಗಿ ಹೋಗಿಬಿಟ್ಟಿದೆ.
MIC 2:11 ಒಬ್ಬ ಸುಳ್ಳುಗಾರನೂ ಮೋಸಗಾರನೂ ಬಂದು, ‘ನಿನಗೆ ದ್ರಾಕ್ಷಾರಸವೂ ಮದ್ಯಪಾನವೂ ಯಥೇಚ್ಛವಾಗಿ ದೊರೆಯುವುದೆಂದು ನಾನು ಪ್ರವಾದಿಸುವೆನು,’ ಎಂದು ಹೇಳಿದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.
MIC 2:12 “ಯಾಕೋಬೇ, ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು. ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು. ಬೊಚ್ರದ ಕುರಿಗಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆಯಂತೆಯೂ ಅವರನ್ನು ಒಟ್ಟಾಗಿ ಕೂಡಿಸುವೆನು. ಹುಲ್ಲುಗಾವಲಿನ ಕುರಿಮಂದೆಯಂತೆ, ಸ್ಥಳವು ಜನರಿಂದ ತುಂಬಿ ತುಳುಕುವುದು.
MIC 2:13 ಮಾರ್ಗ ತೆರೆಯುವಾತನು ಅವರ ಮುಂದೆ ಹೋಗುವನು. ಅವರು ಬಾಗಿಲು ತೆರೆದು ಹೊರಗೆ ಹೋಗುವರು. ಅವರ ಅರಸನು ಅವರ ಮುಂದೆ ಹಾದು ಹೋಗುತ್ತಾನೆ. ಯೆಹೋವ ದೇವರು ಅವರ ಮುಂದಾಳತ್ವವನ್ನು ವಹಿಸುವರು.”
MIC 3:1 ಆಗ ನಾನು, “ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ. ನೀವು ನ್ಯಾಯವನ್ನು ಪ್ರೀತಿಸಬಾರದೇ.
MIC 3:2 ಒಳ್ಳೆಯದನ್ನು ದ್ವೇಷಮಾಡಿ ಕೆಟ್ಟದ್ದನ್ನು ಪ್ರೀತಿ ಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ನನ್ನ ಜನರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತು ಕೊಳ್ಳುವವರೇ,
MIC 3:3 ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕುತ್ತಾರೆ. ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಮಡಕೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.”
MIC 3:4 ಆಗ ಅವರು ಯೆಹೋವ ದೇವರಿಗೆ ಮೊರೆಯಿಡುವರು; ಆದರೆ ಅವರು ಅವರಿಗೆ ಉತ್ತರ ಕೊಡುವುದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತಮ್ಮ ಮುಖವನ್ನು ಮರೆಮಾಡುವರು.
MIC 3:5 ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವ ಪ್ರವಾದಿಗಳಿಗೆ ತಿನ್ನಲು ಕೊಟ್ಟರೆ ‘ಸಮಾಧಾನವಾಗಲಿ’ ಎನ್ನುವರು. ಆದರೆ ಅವರಿಗೆ ತಿನ್ನಲು ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
MIC 3:6 ದರ್ಶನವಿಲ್ಲದೆ, ನಿಮಗೆ ರಾತ್ರಿಯಾಗುವುದು; ಶಕುನವಿಲ್ಲದೆ ನಿಮಗೆ ಕತ್ತಲಾಗುವುದು. ಪ್ರವಾದಿಗಳಿಗೆ ಸೂರ್ಯ ಮುಳುಗುವುದು. ಅವರ ಮೇಲೆ ಹಗಲು ಕತ್ತಲೆಯಾಗುವುದು.
MIC 3:7 ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ಅವಮಾನಗೊಳ್ಳುವರು. ದೇವರಿಂದ ಉತ್ತರವಿಲ್ಲದ ಕಾರಣ, ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿಕೊಳ್ಳುವರು.”
MIC 3:8 ಆದರೆ ನಿಶ್ಚಯವಾಗಿ ನಾನು ಯಾಕೋಬಿನ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವುದಕ್ಕೆ ಯೆಹೋವ ದೇವರ ಆತ್ಮದ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ.
MIC 3:9 ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾಧಿಪತಿಗಳೇ, ನ್ಯಾಯವನ್ನು ನಿಂದಿಸಿ ಸರಿಯಾದದ್ದನ್ನೆಲ್ಲಾ ಡೊಂಕುಮಾಡುವವರೇ,
MIC 3:10 ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ.
MIC 3:11 ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ. ಅದರ ಪ್ರವಾದಿಗಳು ಹಣಕ್ಕೆ ಶಕುನ ಹೇಳುತ್ತಾರೆ. ಆದರೂ ಯೆಹೋವ ದೇವರ ಮೇಲೆ ಆತುಕೊಂಡು, “ಯೆಹೋವ ದೇವರು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವುದಿಲ್ಲ,” ಎನ್ನುತ್ತಾರೆ.
MIC 3:12 ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನನ್ನು ಹೊಲದ ಹಾಗೆ ಉಳಲಾಗುವುದು. ಯೆರೂಸಲೇಮು ಹಾಳುದಿಬ್ಬಗಳಾಗುವುದು. ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.
MIC 4:1 ಅಂತ್ಯಕಾಲದಲ್ಲಿ, ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು, ಆಗ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
MIC 4:2 ಅನೇಕ ಜನಾಂಗಗಳು ಬಂದು ಹೀಗೆಂದು ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ಅವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು. ನಾವು ಅವರ ದಾರಿಗಳಲ್ಲಿ ನಡೆಯುವೆವು. ಚೀಯೋನಿನಿಂದ ದೇವರ ನಿಯಮವೂ ಯೆರೂಸಲೇಮಿನಿಂದ ದೇವರ ವಾಕ್ಯವೂ ಹೊರಡುವುವು.”
MIC 4:3 ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗಗಳಿಗೆ ತೀರ್ಪುಕೊಡುವನು. ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ. ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
MIC 4:4 ಆದರೆ ಒಬ್ಬಬ್ಬನು ತನ್ನ ತನ್ನ ದ್ರಾಕ್ಷಿಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕುಳಿತುಕೊಳ್ಳುವನು. ಭಯಪಡಿಸುವವನು ಯಾರೂ ಇರುವುದಿಲ್ಲ. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಇದನ್ನು ನುಡಿದಿದ್ದಾರೆ.
MIC 4:5 ಎಲ್ಲಾ ಜನಾಂಗಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆಯುವನು. ಆದರೆ ನಾವು ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು.
MIC 4:6 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಆ ದಿವಸದಲ್ಲಿ” ನಾನು ಕುಂಟಾದವರನ್ನು ಒಟ್ಟುಗೂಡಿಸುವೆನು. ನಾನು ತಳ್ಳಿಬಿಟ್ಟದ್ದನ್ನೂ ಕಷ್ಟಪಡಿಸಿದವರನ್ನೂ ಒಂದಾಗಿ ಸೇರಿಸುವೆನು.
MIC 4:7 “ಕುಂಟಾದದ್ದನ್ನು ಉಳಿದದ್ದನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾಗಿಯೂ ಮಾಡುವೆನು. ಯೆಹೋವ ದೇವರು ಇಂದಿನಿಂದ ಸದಾಕಾಲವೂ ಚೀಯೋನ್ ಪರ್ವತದಲ್ಲಿ ಅವರ ಮೇಲೆ ಆಳುವರು.
MIC 4:8 ಕುರಿಮಂದೆಯ ಬುರುಜೇ, ಚೀಯೋನ್ ಪುತ್ರಿಯ ದುರ್ಗವೇ, ಮೊದಲಿದ್ದ ರಾಜ್ಯಾಧಿಕಾರವೂ ನಿಮಗೆ ಲಭಿಸುವುದು. ಯೆರೂಸಲೇಮಿನ ಪುತ್ರಿಗೆ ರಾಜ್ಯತ್ವವೂ ಬರುವುದು.”
MIC 4:9 ಈಗ ಏಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಅಧಿಕಾರಿಯು ನಾಶವಾದನೋ? ಹೆರುವವಳಂತೆ ನಿನಗೆ ವೇದನೆ ಬಂದಿರುವುದೋ?
MIC 4:10 ಚೀಯೋನ್ ಪುತ್ರಿಯೇ ಹೆರುವವಳಂತೆ ವೇದನೆ ತಾಳಿಕೋ, ಏಕೆಂದರೆ ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬಿಲೋನಿಗೆ ಹೋಗುವೆ, ಅಲ್ಲಿ ನಿನಗೆ ಬಿಡುಗಡೆಯಾಗುವುದು. ಅಲ್ಲಿ ಯೆಹೋವ ದೇವರು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿಸುವರು.
MIC 4:11 ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ. ಅವರು, “ಯೆರೂಸಲೇಮನ್ನು ಕೆಡಿಸೋಣ. ಚೀಯೋನಿನ ನಾಶನವನ್ನು ಕಣ್ಣಾರೆ ನೋಡೋಣ,” ಎಂದು ಹೇಳುತ್ತಾರೆ.
MIC 4:12 ಆದರೆ ಯೆಹೋವ ದೇವರ ಯೋಚನೆಗಳು ಅವರಿಗೆ ತಿಳಿದಿಲ್ಲ. ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ. ಏಕೆಂದರೆ ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವರು.
MIC 4:13 ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.
MIC 5:1 ಬೇತ್ಲೆಹೇಮಿನಿಂದ ಒಬ್ಬ ಅಧಿಪತಿಯು ಸೈನ್ಯಗಳ ಪಟ್ಟಣವೇ, ಗುಂಪುಗಳಾಗಿ ಕೂಡಿಕೊಳ್ಳಿರಿ. ನಮ್ಮ ಮೇಲೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
MIC 5:2 ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.
MIC 5:3 ಆದ್ದರಿಂದ ಹೆರುವವಳು ಒಬ್ಬ ಮಗನನ್ನು ಹೆರುವ ಕಾಲದವರೆಗೂ ಇಸ್ರಾಯೇಲನ್ನು ಕೈಬಿಡಲಾಗುವುದು. ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲರ ಬಳಿಗೆ ಹಿಂದಿರುಗುವರು.
MIC 5:4 ಆತನು ಯೆಹೋವ ದೇವರ ಬಲದಲ್ಲಿಯೂ ತನ್ನ ದೇವರಾದ ಯೆಹೋವ ದೇವರ ಹೆಸರಿನ ಘನತೆಯಲ್ಲಿಯೂ ನಿಂತುಕೊಂಡು ತನ್ನ ಮಂದೆಯನ್ನು ಮೇಯಿಸುವನು. ಅವರು ನೆಲೆಯಾಗಿರುವರು, ಆತನ ಘನತೆಯು ಭೂಮಿಯ ಅಂತ್ಯಗಳ ಮಟ್ಟಿಗೂ ತಲುಪುವುದು.
MIC 5:5 ಆತನೇ ಅವರ ಸಮಾಧಾನವಾಗಿರುವನು. ಅಸ್ಸೀರಿಯದವನು ನಮ್ಮ ನಾಡಿಗೆ ಮುತ್ತಿಗೆ ಹಾಕುವಾಗ ನಮ್ಮ ಕೋಟೆಗಳ ಮೂಲಕ ಸೈನ್ಯವಾಗಿ ಹೋಗುವಾಗ ನಾವು ಅವನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಸೇನಾಪತಿಗಳನ್ನೂ ಎಬ್ಬಿಸುವೆವು.
MIC 5:6 ಅವರು ಅಸ್ಸೀರಿಯ ದೇಶವನ್ನು ಖಡ್ಗದಿಂದಲೂ ನಿಮ್ರೋದನ ದೇಶವನ್ನು ಹಿಡಿದ ಖಡ್ಗದಿಂದಲೂ ಆಳುವರು. ಅಸ್ಸೀರಿಯವು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರದೇಶವನ್ನು ಮುತ್ತಿಗೆ ಹಾಕಿ ಪ್ರಾಂತಗಳಲ್ಲಿ ನಡೆಯುವಾಗ ಆತನು ನಮ್ಮನ್ನು ತಪ್ಪಿಸುವನು.
MIC 5:7 ಇದಲ್ಲದೆ ಯಾಕೋಬನ ಶೇಷವು ಅನೇಕ ಜನಾಂಗಳ ಮಧ್ಯದಲ್ಲಿ ಯೆಹೋವ ದೇವರಿಂದ ಬಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವುದು. ಅದು ಮನುಷ್ಯರಿಗೋಸ್ಕರ ಆತುಕೊಳ್ಳುವುದಿಲ್ಲ, ಮನುಷ್ಯ ಮಕ್ಕಳಿಗಾಗಿ ಕಾದುಕೊಳ್ಳುವುದಿಲ್ಲ.
MIC 5:8 ಯಾಕೋಬನ ಜನಶೇಷವು ದೇಶದೇಶಗಳೊಳಗೆ ಅನೇಕ ಜನಾಂಗಗಳ ಮಧ್ಯದಲ್ಲಿ, ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವುದು. ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸಲಾರರು,
MIC 5:9 ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತವಾಗಿರುವುದು. ನಿನ್ನ ಶತ್ರುಗಳೆಲ್ಲರು ನಾಶಹೊಂದುವರು.
MIC 5:10 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ: “ಆ ದಿವಸದಲ್ಲಿ, ನಾನು ನಿನ್ನ ಮಧ್ಯದೊಳಗಿರುವ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.
MIC 5:11 ನಿನ್ನ ದೇಶದ ಪಟ್ಟಣಗಳನ್ನು ನಾಶಮಾಡಿಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
MIC 5:12 ನಿನ್ನ ಮಂತ್ರತಂತ್ರವನ್ನು ನಾಶಮಾಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರುವುದಿಲ್ಲ.
MIC 5:13 ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.
MIC 5:14 ನಿನ್ನ ಅಶೇರ ಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶಮಾಡುವೆನು.
MIC 5:15 ನನಗೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿಗೆ ಮುಯ್ಯಿತೀರಿಸುವೆನು.”
MIC 6:1 ಯೆಹೋವ ದೇವರು ಹೇಳುವುದನ್ನು ಈಗ ಕೇಳಿರಿ, ಎದ್ದೇಳು, ಬೆಟ್ಟಗಳ ಮುಂದೆ ವ್ಯಾಜ್ಯವಾಡು; ನೀನು ಹೇಳುವುದನ್ನು ಗುಡ್ಡಗಳು ಕೇಳಲಿ.
MIC 6:2 ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.
MIC 6:3 ನನ್ನ ಜನರೇ, ನಾನು ನಿಮಗೆ ಏನು ಮಾಡಿದ್ದೇನೆ? ನಾನು ನಿಮ್ಮ ಮೇಲೆ ಭಾರ ಹಾಕಿದ್ದೇನೋ? ನನಗೆ ಉತ್ತರಕೊಡಿರಿ.
MIC 6:4 ನಾನು ಈಜಿಪ್ಟ್ ದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸತ್ವದ ದೇಶದೊಳಗಿಂದ ನಿನ್ನನ್ನು ವಿಮೋಚಿಸಿ, ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
MIC 6:5 ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿದ್ದನ್ನೂ ಬೆಯೋರನ ಮಗ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲುಗೊಂಡು ಗಿಲ್ಗಾಲಿನ ವರೆಗೆ ಆದ ನಿಮ್ಮ ಪ್ರಯಾಣವನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ಆಗ ಯೆಹೋವ ದೇವರ ನೀತಿಯ ಕೃತ್ಯಗಳನ್ನು ತಿಳಿದುಕೊಳ್ಳುವಿರಿ.
MIC 6:6 ನಾನು ಯಾವುದರೊಂದಿಗೆ ಯೆಹೋವ ದೇವರ ಮುಂದೆ ಬಂದು, ಯಾವುದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಮತ್ತು ಒಂದು ವರ್ಷದ ಕರುಗಳ ಸಂಗಡ ಆತನ ಮುಂದೆ ಹೋಗಲೇ?
MIC 6:7 ಯೆಹೋವ ದೇವರು ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?
MIC 6:8 ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ. ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ?
MIC 6:9 ಕೇಳು! ಯೆಹೋವ ದೇವರು ಪಟ್ಟಣವನ್ನು ಕರೆಯುತ್ತಿದ್ದಾರೆ. ನಿಮ್ಮ ನಾಮಕ್ಕೆ ಭಯಪಡುವುದು ಜ್ಞಾನ. ಕೋಲು ಮತ್ತು ಅದನ್ನು ನೇಮಿಸಿದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಲಿಸಿರಿ.
MIC 6:10 ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?
MIC 6:11 ನಾನು ದುಷ್ಟತ್ವದ ತಕ್ಕಡಿಗಳುಳ್ಳವರನ್ನು ಮೋಸವಾದ ಕಲ್ಲುಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
MIC 6:12 ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
MIC 6:13 ಆದ್ದರಿಂದ ನಾನು ಸಹ ನಿನ್ನನ್ನು ಹೊಡೆದು ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
MIC 6:14 ನೀನು ಉಂಡರೂ ತೃಪ್ತಿಯಾಗದೆ ಇರುವೆ; ನಿನ್ನೊಳಗೆ ಹಸಿವೆಯು ಇರುವುದು; ನೀವು ಸಂಗ್ರಹಿಸುತ್ತೀರಿ ಆದರೆ ಏನನ್ನೂ ಉಳಿಸುವುದಿಲ್ಲ, ಏಕೆಂದರೆ ನೀವು ಉಳಿಸುವದನ್ನು ನಾನು ಕತ್ತಿಗೆ ಕೊಡುತ್ತೇನೆ.
MIC 6:15 ನೀನು ಬೀಜ ಬಿತ್ತಿ ಕೊಯ್ಯದೆ ಇರುವೆ; ಹಿಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವೆ; ದ್ರಾಕ್ಷಾರಸಮಾಡಿ ಕುಡಿಯದೆ ಇರುವೆ.
MIC 6:16 ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ. ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು. ಆದ್ದರಿಂದ ನೀವು ನನ್ನ ಜನರ ನಿಂದೆಯನ್ನು ಹೊರುವಿರಿ.
MIC 7:1 ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.
MIC 7:2 ನಿಷ್ಠಾವಂತರು ಭೂಮಿಯೊಳಗಿಂದ ನಾಶವಾಗಿದ್ದಾರೆ. ಮನುಷ್ಯರಲ್ಲಿ ಯಥಾರ್ಥನು ಒಬ್ಬನು ಉಳಿದಿಲ್ಲ; ಎಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾ, ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
MIC 7:3 ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವಂತೆ ಆಡಳಿತಗಾರರು ಉಡುಗೊರೆಗಳನ್ನು ಕೇಳುತ್ತಾರೆ. ನ್ಯಾಯಾಧಿಪತಿಗಳು ಲಂಚವನ್ನು ತೆಗೆದುಕೊಳ್ಳುತ್ತಾರೆ. ಶಕ್ತಿಶಾಲಿ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರೆಲ್ಲರೂ ಒಟ್ಟಾಗಿ ಒಳಸಂಚುಮಾಡುತ್ತಾರೆ.
MIC 7:4 ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ. ದೇವರು ನಿನ್ನನ್ನು ಭೇಟಿಮಾಡುವ ದಿನ ಬಂದಿದೆ, ನಿನ್ನ ಕಾವಲುಗಾರರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ. ಈಗ ನೀವು ಭಯಭೀತರಾಗುವ ಸಮಯ.
MIC 7:5 ನೆರೆಯವನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸೆ ಇಡಬೇಡಿರಿ; ನಿನ್ನ ಎದೆಯಲ್ಲಿ ಮಲಗುವವಳಿಗೆ ನಿನ್ನ ಬಾಯಿಯ ಬಾಗಿಲುಗಳನ್ನು ಕಾಯಿ.
MIC 7:6 ಏಕೆಂದರೆ ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ. ಮಗಳು ತನ್ನ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವಾಗಿ ಏಳುತ್ತಾರೆ. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.
MIC 7:7 ಆದರೆ ನಾನು ಯೆಹೋವ ದೇವರನ್ನು ಎದುರು ನೋಡುವೆನು. ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವರು.
MIC 7:8 ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.
MIC 7:9 ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಅವರು ನನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡೆಸುವ ತನಕ ಅವರ ಕೋಪವನ್ನು ತಾಳುವೆನು. ಆತನು ನನ್ನನ್ನು ಬೆಳಕಿಗೆ ತರುವನು. ಆತನ ನೀತಿಯನ್ನು ನೋಡುವೆನು.
MIC 7:10 ಆಗ ನನ್ನ ಶತ್ರು ಇದನ್ನು ನೋಡುವನು. ಅವನ ಮುಖವನ್ನು ಅವಮಾನದಿಂದ ಮುಚ್ಚಿಕೊಳ್ಳುವನು, “ನಿನ್ನ ಯೆಹೋವ ದೇವರು ಎಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು.
MIC 7:11 ನಿನ್ನ ಗೋಡೆಗಳು ಪುನಃ ಕಟ್ಟುವ ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.
MIC 7:12 ಆ ದಿವಸದಲ್ಲಿ ಅಸ್ಸೀರಿಯರಿಂದಲೂ ಈಜಿಪ್ಟ್ ಪಟ್ಟಣಗಳಿಂದಲೂ ಯೂಫ್ರೇಟೀಸ್ ನದಿಯವರೆಗೂ ಸಮುದ್ರದಿಂದ ಸಮುದ್ರದವರೆಗೂ ಬೆಟ್ಟದಿಂದ ಬೆಟ್ಟದವರೆಗೂ ಜನರೆಲ್ಲರು ನಿನ್ನ ಬಳಿಗೆ ಬರುವರು.
MIC 7:13 ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವುದು.
MIC 7:14 ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.
MIC 7:15 ನೀನು ಈಜಿಪ್ಟ್ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವರಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.
MIC 7:16 ಜನಾಂಗಗಳು ನೋಡಿ ನಾಚಿಕೊಳ್ಳುವರು ತಮ್ಮ ತಮ್ಮ ಶಕ್ತಿಗೆ ವಂಚಿತರಾಗಿ ನಾಚಿಕೆಪಡುವರು. ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು; ಅವರ ಕಿವಿಗಳು ಕಿವುಡಾಗಿ ಹೋಗುವುವು.
MIC 7:17 ಅವರು ಹಾವಿನಂತೆ, ನೆಲದ ಮೇಲೆ ತೆವಳುವ ಜೀವಿಗಳಂತೆ ಧೂಳನ್ನು ನೆಕ್ಕುತ್ತಾರೆ. ಅವರು ರಂಧ್ರಗಳಿಂದ ಹೊರಗೆ ಬರುವರು. ನಮ್ಮ ದೇವರಾದ ಯೆಹೋವ ದೇವರಿಗೆ ಅವರು ಹೆದರುವರು. ನಿನಗೆ ಭಯಪಡುವರು.
MIC 7:18 ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ, ನಿನ್ನ ಹಾಗೆ ಇರುವ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.
MIC 7:19 ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.
MIC 7:20 ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.
NAH 1:1 ನಿನೆವೆಯ ವಿಷಯವಾದ ಪ್ರವಾದನೆ: ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.
NAH 1:2 ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು. ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ. ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ. ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ.
NAH 1:3 ಯೆಹೋವ ದೇವರು ಕೋಪಗೊಳ್ಳುವುದರಲ್ಲಿ ಶಾಂತಿಸ್ವರೂಪರು. ಆದರೂ ಶಕ್ತಿಯಲ್ಲಿ ಮಹತ್ತಾದವರು. ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ಶಿಕ್ಷಿಸದೆ ಇರರು. ಯೆಹೋವ ದೇವರ ಮಾರ್ಗವು ಸುಳಿಗಾಳಿಯಲ್ಲಿಯೂ, ಬಿರುಗಾಳಿಯಲ್ಲಿಯೂ ಇದೆ. ಮೇಘಗಳು ಅವರ ಕಾಲುಗಳ ಧೂಳೇ.
NAH 1:4 ಅವರು ಸಮುದ್ರವನ್ನು ಗದರಿಸಿ, ಅದನ್ನು ಒಣಗುವಂತೆ ಮಾಡುತ್ತಾರೆ. ಸಕಲನದಿಗಳನ್ನು ಬತ್ತಿಸುತ್ತಾರೆ. ಬಾಷಾನು, ಕರ್ಮೆಲು ಬಾಡಿ ಹೋಗುತ್ತವೆ ಮತ್ತು ಲೆಬನೋನಿನ ಹೂವು ಬಾಡಿ ಹೋಗುತ್ತದೆ.
NAH 1:5 ಬೆಟ್ಟಗಳು ಅವರ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ, ಲೋಕವೂ, ಅದರ ನಿವಾಸಿಗಳೆಲ್ಲವೂ ಅವರ ಮುಂದೆ ನಡುಗುತ್ತವೆ.
NAH 1:6 ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು? ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು? ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ; ಬಂಡೆಗಳು ಆತನ ಮುಂದೆ ಕೆಡವಲಾಗಿವೆ.
NAH 1:7 ಯೆಹೋವ ದೇವರು ಒಳ್ಳೆಯವರು. ಇಕ್ಕಟ್ಟಿನ ದಿವಸದಲ್ಲಿ ಆಶ್ರಯದಾತರಾಗಿದ್ದಾರೆ. ತಮ್ಮಲ್ಲಿ ನಂಬಿಕೆ ಇಡುವವರನ್ನು ಅವರು ಪರಿಪಾಲಿಸುತ್ತಾರೆ.
NAH 1:8 ಆದರೆ ಮೇರೆ ಮೀರುವ ಪ್ರಳಯದಿಂದ ನಿನೆವೆಯನ್ನು ಮುಗಿಸಿಬಿಡುವರು. ಕತ್ತಲೆ ಅವರ ಶತ್ರಗಳನ್ನು ಹಿಂದಟ್ಟುವುದು.
NAH 1:9 ಯೆಹೋವ ದೇವರಿಗೆ ವಿರೋಧವಾಗಿ ಅವರು ಏನೇನು ಯೋಚಿಸಿರುವರೋ, ಅದನ್ನು ಅವರು ಅಂತ್ಯಗೊಳಿಸುವರು. ತೊಂದರೆಯು ಎರಡು ಸಾರಿ ಏಳದು.
NAH 1:10 ಅವರು ಮುಳ್ಳುಗಳಲ್ಲಿ ಸಿಕ್ಕಿಕೊಳ್ಳುವರು, ತಮ್ಮ ದ್ರಾಕ್ಷಾರಸದಿಂದ ಮತ್ತರಾಗುವರು. ಪೂರ್ಣವಾಗಿ ಒಣಗಿದ ಕೂಳೆಯಂತೆ ಅವರು ಸುಟ್ಟು ಹೋಗುವರು.
NAH 1:11 ನಿನೆವೆಯೇ ಯೆಹೋವ ದೇವರಿಗೆ ವಿರೋಧವಾಗಿ ದುರಾಲೋಚನೆ ಮಾಡಿ, ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.
NAH 1:12 ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರೊಂದಿಗೆ ಒಪ್ಪಂದ ಮಾಡಿಕೊಂಡವರಿದ್ದರೂ, ಅವರು ಬಹುಮಂದಿಯಾಗಿದ್ದರೂ ನಾಶಕ್ಕೆ ಒಳಗಾಗುವರು. ಯೆಹೂದವೇ, ನಾನು ನಿನ್ನನ್ನು ಕಷ್ಟಪಡಿಸಿದಾಗ್ಯೂ, ಇನ್ನು ಮೇಲೆ ಕಷ್ಟಪಡಿಸೆನು.
NAH 1:13 ನಾನು ಈಗ ನಿನ್ನ ಮೇಲಿನ ಅವರ ನೊಗವನ್ನು ಮುರಿದು, ನಿನ್ನ ಬಂಧನಗಳನ್ನು ಹರಿದುಬಿಡುವೆನು.
NAH 1:14 ನಿನೆವೆಯೇ, ನಿನ್ನ ವಿಷಯವಾಗಿ ಯೆಹೋವ ದೇವರು ಆಜ್ಞಾಪಿಸುವುದೇನೆಂದರೆ: ಹೆಸರೆತ್ತಲು ನಿನಗೆ ಸಂತಾನವಿಲ್ಲದಂತೆ ಮಾಡುವೆನು. ನಿನ್ನ ದೇವರ ಮಂದಿರದಲ್ಲಿರುವ ಕೆತ್ತಿದ ವಿಗ್ರಹವನ್ನೂ, ಎರಕ ಬೊಂಬೆಯನ್ನೂ ನಾಶಮಾಡುವೆನು. ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.
NAH 1:15 ಇಗೋ, ಪರ್ವತಗಳ ಮೇಲೆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, ನಿನ್ನ ಹರಕೆಗಳನ್ನು ಸಲ್ಲಿಸು. ಏಕೆಂದರೆ ಇನ್ನು ಮೇಲೆ ದುಷ್ಟರು ನಿನ್ನ ಮೇಲೆ ಮುತ್ತಿಗೆ ಹಾಕರು. ಅವರು ಸಂಪೂರ್ಣವಾಗಿ ನಾಶವಾಗುವರು.
NAH 2:1 ನಿನೆವೆಯೇ, ಮುತ್ತಿಗೆ ಹಾಕುವವನು ನಿನಗೆ ವಿರೋಧವಾಗಿ ಹೊರಟಿದ್ದಾನೆ, ಕೋಟೆಯನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ; ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿಮಾಡಿಕೋ.
NAH 2:2 ಯೆಹೋವ ದೇವರು ಯಾಕೋಬಿನ ಹೆಚ್ಚಳವನ್ನು ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ಪುನಃ ಸ್ಥಾಪಿಸುತ್ತಾರೆ. ನಾಶಕರು ಅವುಗಳನ್ನು ನಾಶಮಾಡಿದರೂ ಅವರ ದ್ರಾಕ್ಷಿಬಳ್ಳಿಗಳನ್ನು ಕೆಡಿಸಿದ್ದಾರೆ.
NAH 2:3 ಸೈನಿಕರ ಗುರಾಣಿಗಳು ಕೆಂಪಾಗಿವೆ; ಯುದ್ಧವೀರರು ರಕ್ತವರ್ಣದ ಬಟ್ಟೆ ಧರಿಸಿದ್ದಾರೆ; ಆತನು ಸಿದ್ಧಮಾಡುವ ದಿವಸದಲ್ಲಿ, ರಥಗಳ ಉಕ್ಕು ಥಳಥಳಿಸುವುದು, ತುರಾಯಿ ಮರದಿಂದ ಮಾಡಿದ ಈಟಿಗಳು ಝಳಪಿಸುವುವು;
NAH 2:4 ರಥಗಳು ಬೀದಿಗಳಲ್ಲಿ ಬಿರುಗಾಳಿಯಂತೆ ಓಡಾಡುತ್ತವೆ, ಅವು ಚೌಕಗಳಲ್ಲಿ ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನುಗ್ಗುತ್ತವೆ. ಅವು ಉರಿಯುವ ಪಂಜುಗಳಂತೆ ಕಾಣುತ್ತವೆ; ಅವರು ಮಿಂಚಿನಂತೆ ಸುತ್ತಾಡುತ್ತಾರೆ.
NAH 2:5 ನಿನೆವೆಯು ತನ್ನ ಸೇನಾಪತಿಗಳನ್ನು ಕರೆಕಳುಹಿಸಿದ್ದಾನೆ. ಅವರು ತಮ್ಮ ನಡೆಯಲ್ಲಿ ಎಡವುವರು. ಅವರು ಸುಣ್ಣದ ಗೋಡೆಯ ಬಳಿಗೆ ತ್ವರೆಯಾಗಿ ಬರುವರು. ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧ ಮಾಡಲಾಗಿದೆ.
NAH 2:6 ನದಿಗಳ ಬಾಗಿಲುಗಳು ತೆರೆಯಲಾಗಿವೆ; ಅರಮನೆ ಬಿದ್ದುಹೋಗುವುದು.
NAH 2:7 ನಿನೆವೆಯು ಸೆರೆಯಾಗಿ ಹೋಗಬೇಕೆಂಬ ಆಜ್ಞೆಯಾಗಿದೆ. ಅವಳ ದಾಸಿಯರು ಪಾರಿವಾಳಗಳಂತೆ ರೋದಿಸುವರು, ತಮ್ಮ ಎದೆಗಳನ್ನು ಬಡಿದುಕೊಳ್ಳುವರು.
NAH 2:8 ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು. ಅದರ ನೀರು ಹರಿದು ಖಾಲಿಯಾಗುತ್ತಲಿದೆ. “ನಿಲ್ಲಿರಿ! ನಿಲ್ಲಿರಿ!” ಎಂದು ಅವರು ಕೂಗಿದರೂ, ಒಬ್ಬನೂ ಹಿಂದಕ್ಕೆ ನೋಡುವುದಿಲ್ಲ.
NAH 2:9 ಬೆಳ್ಳಿಯನ್ನು ಸುಲಿದುಕೊಳ್ಳಿರಿ; ಬಂಗಾರವನ್ನು ಸುಲಿದುಕೊಳ್ಳಿರಿ. ಕೂಡಿಸಿಟ್ಟ ಧನಕ್ಕೂ, ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
NAH 2:10 ನಿನೆವೆ ಬರಿದಾಗಿದೆ, ಸುಲಿಗೆಯಾಗಿದೆ, ಹಾಳುಬಿದ್ದಿದೆ, ಹೃದಯಗಳು ಕರಗುತ್ತವೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲರ ಸೊಂಟಗಳಲ್ಲಿ ಸಂಕಟವಿದೆ; ಎಲ್ಲಾ ಮುಖಗಳು ಕಳೆಗುಂದುತ್ತವೆ.
NAH 2:11 ಸಿಂಹದ ಗವಿಯೂ, ಎಳೆಯ ಸಿಂಹಗಳು ಮೇಯುವ ಸ್ಥಳವೂ ಎಲ್ಲಿ? ಸಿಂಹವೂ, ಸಿಂಹಿಣಿಯೂ, ಸಿಂಹದ ಮರಿಗಳೂ ಭಯವಿಲ್ಲದೆ ನಡೆದಾಡುವ ಸ್ಥಳಗಳೆಲ್ಲಿ?
NAH 2:12 ಸಿಂಹವು, ತನ್ನ ಮರಿಗಳಿಗೆ, ಸಿಂಹಿಣಿಗಳಿಗೆ, ಕೊರಳು ಹಿಸುಕಿ ಕೊಂದ ಪ್ರಾಣಿಗಳಿಂದ ತನ್ನ ಗುಹೆಯನ್ನು ತುಂಬಿಸುತ್ತಿತ್ತು.
NAH 2:13 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ರಥಗಳನ್ನು ಹೊಗೆಯಾಗಲು ಸುಡುತ್ತೇನೆ. ಖಡ್ಗವು ನಿನ್ನ ಎಳೆಯ ಸಿಂಹಗಳನ್ನು ನುಂಗಿಬಿಡುವುದು. ನಿನಗೆ ಸಿಕ್ಕಿದ ಬೇಟೆಯನ್ನು ಭೂಮಿಯ ಮೇಲಿನಿಂದ ತೆಗೆದುಬಿಡುತ್ತೇನೆ. ನಿನ್ನ ರಾಯಭಾರಿಗಳ ಧ್ವನಿಯು ಇನ್ನು ಕೇಳಿಸದು.”
NAH 3:1 ರಕ್ತಮಯ ಪಟ್ಟಣಕ್ಕೆ ಕಷ್ಟ, ಅದೆಲ್ಲಾ ಸುಳ್ಳಿನಿಂದಲೂ, ಕಳ್ಳತನದಿಂದಲೂ ತುಂಬಿದೆ, ಕೊಳ್ಳೆಯನ್ನೂ ಬಿಡುವುದಿಲ್ಲ.
NAH 3:2 ಚಾವಟಿಗೆ, ಚಬುಕಿನ ಶಬ್ದವೂ, ಚಕ್ರಗಳ ಧಡಧಡನೆಯ ಶಬ್ದವೂ, ಕುದುರೆಗಳ ಕುಣಿದಾಟವೂ, ರಥಗಳ ಹಾರಾಟವೂ ಇದೆ.
NAH 3:3 ಸವಾರರು ಹತ್ತುತ್ತಾರೆ, ಈಟಿಗಳು ಥಳಥಳಿಸುತ್ತವೆ, ಖಡ್ಗಗಳು ಮಿಂಚುತ್ತವೆ, ಹತರಾದವರು ಬಹಳ; ಹೆಣಗಳ ರಾಶಿ; ಅಸಂಖ್ಯಾತ ಮೃತ ದೇಹಗಳು, ಶವಗಳ ಮೇಲೆ ತತ್ತರಿಸುತ್ತಿರುವ ಜನರು,
NAH 3:4 ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ?
NAH 3:5 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
NAH 3:6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, ನಿನ್ನನ್ನು ನೀಚಳನ್ನಾಗಿ ಮಾಡಿ, ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು.
NAH 3:7 ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.”
NAH 3:8 ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ ನೀನು ಒಳ್ಳೆಯವಳೋ? ಅವಳ ಸುತ್ತಲೂ ನೀರಿತ್ತು. ನದಿ ಅವಳ ರಕ್ಷಣೆ, ನೀರು ಅವಳ ಗೋಡೆ.
NAH 3:9 ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು.
NAH 3:10 ಆದರೆ ಅವಳು ಸೆರೆಯಾಗಿ ದೇಶಾಂತರಕ್ಕೆ ಹೋದಳು. ಅವಳ ಕೂಸುಗಳು ಸಹ ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು.
NAH 3:11 ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; ನೀನೂ ಸಹ ಶತ್ರುವಿನ ನಿಮಿತ್ತ ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ.
NAH 3:12 ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ ಅಂಜೂರದ ಗಿಡಗಳ ಹಾಗಿರುವುವು. ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು.
NAH 3:13 ಇಗೋ, ನಿನ್ನ ಸೈನ್ಯಗಳನ್ನು ನೋಡು. ಅವರೆಲ್ಲರೂ ಮಹಿಳೆಯರೇ. ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ.
NAH 3:14 ಮುತ್ತಿಗೆಗೋಸ್ಕರ ನೀರನ್ನು ಸೇದು; ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; ಮಣ್ಣನ್ನು ತುಳಿ; ಇಟ್ಟಿಗೆ ಅಚ್ಚನ್ನು ಹಿಡಿ.
NAH 3:15 ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; ಖಡ್ಗವು ನಿನ್ನನ್ನು ಕಡಿದುಬಿಡುವುದು; ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; ಬಹುಮಂದಿಯಾಗು, ಮಿಡತೆಗಳಂತೆ ಬಹುಮಂದಿಯಾಗು, ಗುಂಪು ಮಿಡತೆಗಳಂತೆ
NAH 3:16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. ಆದರೆ ಅವರು ಮಿಡತೆಗಳಂತೆ ದೇಶವನ್ನು ಸುಲಿದುಕೊಂಡು ಹಾರಿಹೋಗುವರು.
NAH 3:17 ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ.
NAH 3:18 ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. ಕೂಡಿಸುವವರು ಯಾರೂ ಇಲ್ಲದಂತೆ ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ.
NAH 3:19 ನಿನ್ನ ಗಾಯಕ್ಕೆ ಮದ್ದಿಲ್ಲ, ನಿನ್ನ ಗಾಯ ಪ್ರಾಣನಾಶಕ. ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ ನಿನ್ನ ಪತನಕ್ಕಾಗಿ ಕೈ ತಟ್ಟುವರು. ಏಕೆಂದರೆ ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರಿದ್ದಾರೆ?
HAB 1:1 ಪ್ರವಾದಿಯಾದ ಹಬಕ್ಕೂಕನು ಹೊಂದಿದ ಪ್ರವಾದನೆಯು:
HAB 1:2 ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು. ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ. “ಹಿಂಸೆಯಾಗುತ್ತಿದೆ,” ಎಂದು ಕೂಗುತ್ತಿದ್ದೇನೆ, ಆದರೂ ನೀವು ರಕ್ಷಿಸುವುದಿಲ್ಲ.
HAB 1:3 ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀರಿ? ತಪ್ಪನ್ನು ಏಕೆ ಸಹಿಸುತ್ತೀರಿ? ನಾಶವೂ ಹಿಂಸೆಯೂ ನನ್ನ ಮುಂದೆ ಇವೆ. ಹೋರಾಟವೂ ಒಡುಕೂ ಹೆಚ್ಚುತ್ತಲಿವೆ.
HAB 1:4 ಆದ್ದರಿಂದ ದೈವನಿಯಮವು ಪಕ್ಕಕ್ಕೆ ಇಡಲಾಗಿದೆ. ನ್ಯಾಯವು ಎಂದಿಗೂ ಸ್ಥಾಪಿತವಾಗುವುದಿಲ್ಲ. ಏಕೆಂದರೆ ದುಷ್ಟರು ನೀತಿವಂತರನ್ನು ಸುತ್ತಿಕೊಂಡಿದ್ದಾರೆ. ಆದ್ದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
HAB 1:5 “ಜನಾಂಗಗಳ ಕಡೆಗೆ ನೋಡಿ ಲಕ್ಷ್ಯಗೊಟ್ಟು ಬಹಳವಾಗಿ ಆಶ್ಚರ್ಯಪಡಿರಿ. ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ವಿವರಿಸಿ ಹೇಳಿದರೂ ನೀವದನ್ನು ನಂಬುವುದಿಲ್ಲ.
HAB 1:6 ನಾನು ಬಾಬಿಲೋನಿಯರನ್ನು ಎಬ್ಬಿಸುತ್ತೇನೆ. ಅವರು ಉಗ್ರ ಮತ್ತು ಸಾಹಸಿ ಜನರು. ತಮ್ಮದಲ್ಲದ ನಿವಾಸಗಳನ್ನು ವಶಮಾಡಿಕೊಳ್ಳುವುದಕ್ಕೆ ವಿಶಾಲವಾದ ದೇಶದಲ್ಲಿ ಹಾದುಹೋಗುವರು.
HAB 1:7 ಅವರು ಭಯಂಕರವಾದವರು ಮತ್ತು ಕ್ರೂರವಾದವರು. ಅವರು ತಮಗೆ ತಾವೇ ಕಾನೂನಾಗಿದ್ದಾರೆ. ತಮ್ಮನ್ನು ತಾವೇ ಗೌರವಿಸಿಕೊಳ್ಳುವವರೂ ಆಗಿದ್ದಾರೆ.
HAB 1:8 ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿಯೂ, ಸಂಜೆಯ ತೋಳಗಳಿಗಿಂತ ಚುರುಕಾಗಿಯೂ ಇವೆ. ಅವರ ಅಶ್ವಸೈನ್ಯ ಎರಗುವುದು. ಅವರ ಕುದುರೆ ಸವಾರರು ದೂರದಿಂದ ಬರುವರು; ನುಂಗುವುದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿ ಬರುವರು.
HAB 1:9 ಅವರೆಲ್ಲರು ಹಿಂಸಿಸುವುದಕ್ಕೆ ಬರುವರು; ಅವರ ಸಮೂಹ, ಮರುಭೂಮಿಯ ಗಾಳಿಯಂತೆಯೇ ಮುಂದೆ ಬರುವುದು; ಸೆರೆಯವರನ್ನು ಮರಳಿನ ಹಾಗೆ ಕೂಡಿಸುವರು.
HAB 1:10 ಅವರ ಅರಸನನ್ನು ಧಿಕ್ಕರಿಸುವರು; ಪ್ರಧಾನರು ಅವರನ್ನು ಪರಿಹಾಸ್ಯ ಮಾಡುವರು; ಕೋಟೆಗಳಿಗೆಲ್ಲಾ ಕುಚೋದ್ಯ ಮಾಡುವರು; ಮಣ್ಣಿನ ದಿನ್ನೆಗಳನ್ನು ಮಾಡಿ, ಅವುಗಳನ್ನು ಹಿಡಿಯುವರು.
HAB 1:11 ಬಿರುಗಾಳಿಯಂತೆ ಕೊಚ್ಚಿಕೊಳ್ಳುತ್ತಾ ಮುಂದೆ ಸಾಗುವರು. ಅಪರಾಧಿ ಜನರವರು. ಅವರ ಸ್ವಂತ ಬಲ, ಅವರ ದೇವರು.”
HAB 1:12 ಯೆಹೋವ ದೇವರೇ, ನೀವು ಅನಾದಿಕಾಲದಿಂದ ಬಂದವರಲ್ಲವೇ? ನನ್ನ ದೇವರೇ, ನನ್ನ ಪರಿಶುದ್ಧರೇ, ನೀನು ಎಂದಿಗೂ ಸಾಯುವುದಿಲ್ಲ. ಯೆಹೋವ ದೇವರೇ, ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ನೇಮಿಸಿದ್ದೀರಿ. ನನ್ನ ಬಂಡೆಯೇ, ನೀವು ಶಿಕ್ಷಿಸಲು ಅವರನ್ನು ನೇಮಕ ಮಾಡಿದ್ದೀರಿ.
HAB 1:13 ನೀನು ಕೆಟ್ಟದ್ದನ್ನು ನೋಡದ ಹಾಗೆ ಶುದ್ಧ ಕಣ್ಣುಗಳುಳ್ಳವರು. ನೀವು ಅನ್ಯಾಯವನ್ನು ದೃಷ್ಟಿಸಲಾರಿರಿ, ವಂಚಿಸುವವರನ್ನು ಏಕೆ ಸಹಿಸಿಕೊಳ್ಳುತ್ತೀರಿ? ದುಷ್ಟನು ತನಗಿಂತ ನೀತಿವಂತನನ್ನು ನುಂಗಿ ಬಿಡುವ ವೇಳೆಯಲ್ಲಿ ಏಕೆ ಸುಮ್ಮನಿರುತ್ತೀರಿ?
HAB 1:14 ಮನುಷ್ಯರನ್ನು ಸಮುದ್ರದ ಮೀನುಗಳಂತೆಯೂ, ಆಳುವವನಿಲ್ಲದ ಕ್ರಿಮಿಗಳಂತೆಯೂ ಮಾಡಿರುತ್ತೀರಿ.
HAB 1:15 ದುಷ್ಟ ವೈರಿಯು ಅವುಗಳನ್ನು ಗಾಳದಿಂದ ಎತ್ತಿ, ತನ್ನ ಬಲೆಯಿಂದ ಅವುಗಳನ್ನು ಹಿಡಿದು, ತನ್ನ ಜಾಲದಿಂದ ಅವುಗಳನ್ನು ಕೂಡಿಸಿಡುತ್ತಾನೆ. ಅವನು ಹಿಗ್ಗುತ್ತಾನೆ, ಸಂತೋಷಪಡುತ್ತಾನೆ.
HAB 1:16 ಆದ್ದರಿಂದ ತಮ್ಮ ಬಲೆಗೆ ಬಲಿ ಅರ್ಪಿಸಿ, ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ. ಏಕೆಂದರೆ ಇವುಗಳಿಂದ ಅವರ ಭೋಜನ ಪುಷ್ಟಿಯಾಗಿಯೂ, ಅವರ ಆಹಾರ ರುಚಿಯುಳ್ಳದ್ದಾಗಿಯೂ ಇದೆ.
HAB 1:17 ಹೀಗಿರುವುದರಿಂದ ನಿರಂತರವಾಗಿ ಅವರು ತಮ್ಮ ಬಲೆಯನ್ನು ಬರಿದುಮಾಡಿ, ಕರುಣೆ ಇಲ್ಲದೆ ಜನಾಂಗಗಳನ್ನು ನಾಶ ಮಾಡುತ್ತಾ ಅವನು ಹೋಗಬೇಕೇ?
HAB 2:1 ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲು ಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಯೆಹೋವ ದೇವರು ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರು ನೋಡುವೆನು.
HAB 2:2 ಆಗ ಯೆಹೋವ ದೇವರು ನನಗೆ ಉತ್ತರಕೊಟ್ಟರು. ಪ್ರಕಟನೆಯನ್ನು ಬರೆ. ಅದನ್ನು ಓದುವವನು ಶೀಘ್ರವಾಗಿ ಓದುವಂತೆ, ಅದನ್ನು ಹಲಗೆಗಳ ಮೇಲೆ ಕೆತ್ತು.
HAB 2:3 ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು. ಅದು ಅಂತ್ಯದ ಬಗ್ಗೆ ಮಾತಾಡುವುದು. ಅದು ಸುಳ್ಳಾಗದು. ಅದು ತಡವಾದರೂ, ಅದಕ್ಕೆ ಕಾದುಕೊಂಡಿರು. ಏಕೆಂದರೆ ಅದು ತಡಮಾಡದೆ ನಿಶ್ಚಯವಾಗಿ ಬರುವುದು.
HAB 2:4 ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ. ಆದರೆ ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.
HAB 2:5 ಇದಲ್ಲದೆ ದ್ರಾಕ್ಷಾರಸವು ಮೋಸಕರ. ಅವನು ಅಹಂಕಾರಿ, ಎಂದಿಗೂ ವಿಶ್ರಾಂತಿ ಹೊಂದನು. ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಾನೆ. ಮರಣದ ಹಾಗಿದ್ದಾನೆ, ತೃಪ್ತಿಯಾಗುವುದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನರನ್ನು ತನ್ನ ಸೆರೆಯಾಳುಗಳಾಗಿ ಮಾಡಿಕೊಳ್ಳುತ್ತಾನೆ.
HAB 2:6 ಅವರೆಲ್ಲರೂ ಅವನನ್ನು ಅಪಹಾಸ್ಯದ ಮಾತುಗಳಿಂದ ಅವಮಾನ ಮಾಡುವುದಿಲ್ಲವೋ? ಕದ್ದುಕೊಂಡ ವಸ್ತುಗಳನ್ನು ರಾಶಿಯಾಗಿ ಕೂಡಿಸಿಟ್ಟುಕೊಳ್ಳುವವನಿಗೆ ಅಕ್ರಮ ಮಾರ್ಗದಿಂದ ಐಶ್ವರ್ಯವಂತನಾಗಿರುವವನಿಗೆ ಕಷ್ಟ. ಇದೆಷ್ಟರವರೆಗೆ ಮುಂದುವರಿಯಬೇಕು?
HAB 2:7 ನಿನ್ನ ಸಾಲಗಾರರು ಕ್ಷಣಮಾತ್ರದಲ್ಲಿ ಏಳರೋ? ಅವರು ಎಚ್ಚರಗೊಂಡು ನಿನಗೆ ಬೆದರಿಕೆ ಹಾಕುವರೋ? ಆಗ ನೀನು ಅವರಿಗೆ ಸುಲಿಗೆಯಾಗುವೆ.
HAB 2:8 ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ, ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು. ಏಕೆಂದರೆ ನೀನು ಮಾನವರ ರಕ್ತ ಸುರಿಸಿದ್ದಿ. ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿ ಇರುವುದೆಲ್ಲವನ್ನು ನಾಶಮಾಡಿದ್ದೀ.
HAB 2:9 ಅನ್ಯಾಯದ ಲಾಭದಿಂದ ತನ್ನ ನಿವಾಸ ಕಟ್ಟಿಕೊಳ್ಳುವವನಿಗೂ, ತನ್ನ ಗೂಡನ್ನು ಉನ್ನತದಲ್ಲಿಡುವವನಿಗೂ, ನಾಶದ ಹಿಡಿತದಿಂದ ತಪ್ಪಿಸಿಕೊಳ್ಳಬಯಸುವವನಿಗೂ ಕಷ್ಟ!
HAB 2:10 ನೀನು ಬಹು ಜನಾಂಗಗಳನ್ನು ನಿರ್ಮೂಲ ಮಾಡಿದ್ದು, ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು. ನಿನಗೆ ನೀನೇ ಕೆಡುಕು ಮಾಡಿಕೊಂಡಿದ್ದೀ.
HAB 2:11 ಗೋಡೆಯೊಳಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
HAB 2:12 ಊರನ್ನು ನರಹತ್ಯದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯದಿಂದ ಸ್ಥಾಪಿಸುವವನಿಗೆ ಕಷ್ಟ!
HAB 2:13 ಜನರ ಶ್ರಮೆಯು ಬೆಂಕಿಗೆ ತುತ್ತಾಗುವುದು. ಜನಾಂಗಗಳು ವ್ಯರ್ಥವಾಗಿ ದಣಿದುಕೊಳ್ಳುತ್ತವೆ. ಇದು ಸೇನಾಧೀಶ್ವರ ಯೆಹೋವ ದೇವರ ಚಿತ್ತವಷ್ಟೆ.
HAB 2:14 ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ಮಹಿಮೆಯ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
HAB 2:15 ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ, ನಿನ್ನ ನೆರೆಯವರಿಗೆ ಕುಡಿಸಿ, ಅವರ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ಅಯ್ಯೋ, ನಿನ್ನ ಗತಿಯನ್ನು ಏನು ಹೇಳಲಿ!
HAB 2:16 ಮಹಿಮೆಯ ಬದಲಾಗಿ ನಾಚಿಕೆಯಿಂದ ನೀನು ತುಂಬಿರುವೆ. ಈಗ ನಿನ್ನ ಸರದಿ, ಕುಡಿದು ಬೆತ್ತಲೆಯಾಗು. ಯೆಹೋವ ದೇವರ ಬಲಗೈಯಲ್ಲಿನ ಪಾತ್ರೆ ನಿನ್ನ ಕಡೆಗೆ ತಿರುಗುವುದು. ನಿನ್ನ ಘನತೆಯನ್ನು ಅವಮಾನವು ಮುಚ್ಚುವುದು.
HAB 2:17 ಲೆಬನೋನಿನ ಮೇಲೆ ಮಾಡಿದ ಬಲಾತ್ಕಾರವು ನಿನ್ನನ್ನು ಚಕಿತಗೊಳಿಸುವುದು. ಮೃಗಗಳ ನಾಶವು ನಿನ್ನನ್ನು ಹೆದರಿಸುವುದು. ಏಕೆಂದರೆ ನೀನು ಮನುಷ್ಯರ ರಕ್ತ ಸುರಿಸಿದ್ದೀ; ನೀನು ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿರುವ ಎಲ್ಲವುಗಳನ್ನು ನಾಶಮಾಡಿದ್ದೀ.
HAB 2:18 “ಮನುಷ್ಯನು ಕೆತ್ತಿ ರೂಪಿಸಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ ಪ್ರತಿಮೆಯ ಬೆಲೆಯೇನು? ಅದನ್ನು ರೂಪಿಸಿದವನು, ತನ್ನ ಸ್ವಂತ ಸೃಷ್ಟಿಯನ್ನು ನಂಬುತ್ತಾನೆ. ಮಾತನಾಡದಂಥ ಮೂರ್ತಿಗಳನ್ನು ಅವನು ಮಾಡುತ್ತಾನೆ.
HAB 2:19 ಮರಕ್ಕೆ, ‘ಎಚ್ಚರವಾಗು!’ ಮೂಕವಾದ ಕಲ್ಲಿಗೆ, ‘ಎದ್ದೇಳು!’ ಎಂದು ಹೇಳುವವನಿಗೆ ಕಷ್ಟ! ಅದು ಮಾರ್ಗದರ್ಶನ ನೀಡುವುದೇ? ಅದು ಬಂಗಾರ, ಬೆಳ್ಳಿಯಿಂದ ಹೊದಿಸಿದ್ದಾರೆ. ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.”
HAB 2:20 ಆದರೆ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ. ಅವರ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
HAB 3:1 ಶಿಗ್ಯೋನೋತ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ.
HAB 3:2 ಯೆಹೋವ ದೇವರೇ, ನಿಮ್ಮ ಕೀರ್ತಿಯನ್ನು ನಾನು ಕೇಳಿದ್ದೇನೆ, ಯೆಹೋವ ದೇವರೇ, ನಿಮ್ಮ ಕಾರ್ಯಗಳಿಗಾಗಿ ನಿಮ್ಮ ಮುಂದೆ ಭಯಭಕ್ತಿಯಿಂದ ನಿಲ್ಲುತ್ತೇನೆ. ನಮ್ಮ ದಿನಗಳಲ್ಲಿ ಅವುಗಳನ್ನು ಪುನಃ ಮಾಡಿರಿ. ನಮ್ಮ ವರ್ಷಗಳ ಮಧ್ಯದಲ್ಲಿ ಅವುಗಳನ್ನು ತಿಳಿಸಿರಿ, ನೀನು ರೋಷಗೊಂಡಿದ್ದರೂ ಕರುಣೆಯನ್ನು ಜ್ಞಾಪಕಮಾಡಿಕೊಳ್ಳಿರಿ.
HAB 3:3 ದೇವರು, ತೇಮಾನಿನಿಂದಲೂ; ಪರಿಶುದ್ಧರು, ಪಾರಾನ್ ಪರ್ವತದಿಂದಲೂ ಬಂದರು. ಅವರ ಮಹಿಮೆ ಆಕಾಶಗಳನ್ನು ಮುಚ್ಚಿತು. ಅವರ ಸ್ತೋತ್ರವು ಭೂಮಿಯನ್ನು ತುಂಬಿಸಿತು.
HAB 3:4 ಅವರ ತೇಜಸ್ಸು ಸೂರ್ಯೋದಯದ ಹಾಗಿತ್ತು. ಕಿರಣಗಳು ಅವರ ಹಸ್ತಗಳಿಂದ ಮಿಂಚಿದವು. ಅದರಲ್ಲಿ ಅವರ ಬಲ ಅಡಗಿತ್ತು.
HAB 3:5 ಅವರ ಮುಂದೆ ವ್ಯಾಧಿಯು ಹೋಯಿತು. ವ್ಯಾಧಿಯು ಅವನ ಹೆಜ್ಜೆಗಳನ್ನು ಅನುಸರಿಸಿತು.
HAB 3:6 ಅವರು ನಿಂತುಕೊಂಡು ಭೂಮಿಯನ್ನು ನಡುಗಿಸಿದರು. ಅವರು ನೋಡಿ ಜನಾಂಗಗಳನ್ನು ನಡುಗುವಂತೆ ಮಾಡಿದರು. ಪುರಾತನ ಪರ್ವತಗಳು ಸೀಳಿಹೋದವು. ಹಳೆಯ ಕಾಲದ ಗುಡ್ಡಗಳು ಬಿದ್ದು ಹೋದವು. ಅವರ ಮಾರ್ಗಗಳು ನಿತ್ಯವಾದವುಗಳೇ.
HAB 3:7 ಕೂಷಾನಿನ ಡೇರೆಗಳು ಕಷ್ಟದಲ್ಲಿರುವುದನ್ನು ಕಂಡೆನು. ಮಿದ್ಯಾನಿನ ನಿವಾಸಗಳು ವೇದನೆಯಿಂದ ನಡುಗಿದವು.
HAB 3:8 ಯೆಹೋವ ದೇವರೇ, ನದಿಗಳ ಮೇಲೆ ರೌದ್ರಗೊಂಡಿರುವಿರೋ? ಪ್ರವಾಹಗಳ ಮೇಲೆ ನಿಮ್ಮ ಕೋಪವಿತ್ತೋ? ನೀವು ಕುದುರೆಗಳನ್ನು ಮತ್ತು ರಥಗಳನ್ನು ಮುನ್ನಡೆಸಿದಾಗ ವಿಜಯಕ್ಕೆ ನೀವು ಸಮುದ್ರದ ಮೇಲೆ ಕೋಪಗೊಂಡಿದ್ದೀರಾ?
HAB 3:9 ನಿನ್ನ ಬಿಲ್ಲನ್ನು ಹೊರ ತೆಗೆದಿ, ಅನೇಕ ಬಾಣಗಳಿಗಾಗಿ ಕರೆ ಕೊಟ್ಟಿದ್ದಿ, ಭೂಮಿಯನ್ನು ನದಿಗಳಿಂದ ಸೀಳಿಬಿಡುವೆ.
HAB 3:10 ಬೆಟ್ಟಗಳು ನಿನ್ನನ್ನು ಕಂಡು ನಡುಗಿದವು; ಜಲಪ್ರವಾಹವು ಹಾದುಹೋಯಿತು; ಸಾಗರವು ಗರ್ಜಿಸಿ; ತನ್ನ ತೆರೆಗಳನ್ನು ಮೇಲಕ್ಕೆ ಎತ್ತುತ್ತದೆ.
HAB 3:11 ನಿನ್ನ ಹಾರುವ ಬಾಣಗಳ ಬೆಳಗಿಗೂ, ನಿನ್ನ ಮಿಂಚುವ ಈಟಿಯ ಹೊಳಪಿಗೂ ಸೂರ್ಯ ಚಂದ್ರರು ಆಕಾಶದಲ್ಲಿ ಸ್ಥಿರವಾಗಿದ್ದಾರೆ.
HAB 3:12 ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ, ಕೋಪದಿಂದ ಜನಾಂಗಗಳನ್ನು ತುಳಿದು ಹಾಕಿದ್ದೀಯೆ.
HAB 3:13 ನಿನ್ನ ಜನರ ರಕ್ಷಣೆಗೋಸ್ಕರವೂ, ನಿನ್ನ ಅಭಿಷಿಕ್ತನ ರಕ್ಷಣೆಗೋಸ್ಕರವೂ ಹೊರಗೆ ಹೊರಟು ಬಂದಿ. ದುಷ್ಟ ದೇಶದ ನಾಯಕನನ್ನು ನೀನು ತುಳಿದುಬಿಟ್ಟಿ. ತಲೆಯಿಂದ ಪಾದದವರೆಗೆ ಅವನನ್ನು ಬೆತ್ತಲೆ ಮಾಡಿದಿ.
HAB 3:14 ನಮ್ಮನ್ನು ಚದುರಿಸಲು ಅವನ ಯುದ್ಧವೀರರು ಮುತ್ತಿಗೆ ಹಾಕಿದಾಗ, ಅವನ ಸ್ವಂತ ಭರ್ಜಿಯಿಂದಲೇ ಅವನ ತಲೆಯನ್ನು ತಿವಿದಿ. ಅವರು ಅಡಗಿಕೊಂಡಿರುವ ಬಡವರನ್ನು ನುಂಗಲು ಬಂದವರೋ ಎಂಬಂತೆ ಬಂದಿದ್ದರಲ್ಲವೇ?
HAB 3:15 ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ, ಮಹಾಜಲಗಳ ಸಮೂಹದಲ್ಲಿಯೂ ನಡೆದು ಹೋದೆ.
HAB 3:16 ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು.
HAB 3:17 ಅಂಜೂರದ ಗಿಡವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಫಲಿಸದಿದ್ದರೂ, ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗಳು ಆಹಾರ ಕೊಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
HAB 3:18 ನಾನು ಯೆಹೋವ ದೇವರಲ್ಲಿ ಉಲ್ಲಾಸಿಸುವೆನು. ನನ್ನ ರಕ್ಷಕರಾದ ದೇವರಲ್ಲಿ ಆನಂದಿಸುವೆನು.
HAB 3:19 ಸಾರ್ವಭೌಮ ಯೆಹೋವ ದೇವರು ನನ್ನ ಬಲವು. ಅವರು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ, ನನ್ನ, ಉನ್ನತ ಸ್ಥಳಗಳಲ್ಲಿ ನನ್ನನ್ನು ನಡೆಯುವಂತೆ ಮಾಡುತ್ತಾನೆ. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.
ZEP 1:1 ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ಕಾಲದಲ್ಲಿ ಕೂಷಿಯ ಮಗನೂ ಗೆದಲ್ಯನ ಮೊಮ್ಮಗನೂ ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವ ದೇವರು ದಯಪಾಲಿಸಿದ ವಾಕ್ಯ:
ZEP 1:2 ಯೆಹೋವ ದೇವರು ಹೇಳುವುದೇನೆಂದರೆ, “ನಾನು ದೇಶದೊಳಗಿಂದ ಎಲ್ಲವುಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.”
ZEP 1:3 “ಮನುಷ್ಯರನ್ನೂ ಮೃಗಗಳನ್ನೂ ನಾಶಮಾಡುವೆನು. ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ನಾಶಮಾಡುವೆನು.” “ಮನುಷ್ಯರನ್ನು ದೇಶದೊಳಗಿಂದ ಕಡಿದು ಬಿಡುವಾಗ ದುಷ್ಟರಿಗೆ ಉಳಿಯುವುದು ಕಸದರಾಶಿಯೇ,” ಎಂದು ಯೆಹೋವ ದೇವರು ಹೇಳುತ್ತಾರೆ.
ZEP 1:4 “ಯೆಹೂದದ ಮೇಲೆಯೂ ಯೆರೂಸಲೇಮಿನ ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚುವೆನು. ಈ ಸ್ಥಳದಲ್ಲಿ ಬಾಳನ ಪೂಜೆಗಳನ್ನು ಮತ್ತು ಉಳಿದಿರುವ ವಿಗ್ರಹಾರಾಧಕ ಯಾಜಕರ ಹೆಸರುಗಳನ್ನು ತೆಗೆದುಬಿಡುವೆನು.
ZEP 1:5 ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ
ZEP 1:6 ಯೆಹೋವ ದೇವರನ್ನು ಅನುಸರಿಸದೆ ಹಿಂತಿರುಗಿ ಹೋಗುವವರನ್ನು ಯೆಹೋವ ದೇವರನ್ನು ಹುಡುಕದೆಯೂ ವಿಚಾರಿಸದೆಯೂ ಇರುವವರನ್ನೂ ಕಡಿದುಬಿಡುವೆನು.”
ZEP 1:7 ಸಾರ್ವಭೌಮ ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಯೆಹೋವ ದೇವರ ದಿನವು ಸಮೀಪವಾಗಿದೆ. ಯೆಹೋವ ದೇವರು ಯಜ್ಞವನ್ನು ಸಿದ್ಧಮಾಡಿದ್ದಾರೆ. ಅವರು ಆಮಂತ್ರಿಸಿದವರನ್ನು ಅವರು ಪವಿತ್ರೀಕರಿಸಿದ್ದಾರೆ.
ZEP 1:8 ಯೆಹೋವ ದೇವರ ಯಜ್ಞದ ದಿನದಲ್ಲಿ ನಾನು ಪ್ರಧಾನರನ್ನು, ರಾಜಪುತ್ರರನ್ನು ಮತ್ತು ವಿದೇಶಿಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.
ZEP 1:9 ಆ ದಿನದಲ್ಲಿ ಹೊಸ್ತಿಲನ್ನು ದಾಟುವವರೆಲ್ಲರನ್ನೂ ತಮ್ಮ ದೇವರುಗಳ ಆಲಯಗಳನ್ನು ಹಿಂಸಾಚಾರದಿಂದಲೂ ಮೋಸದಿಂದಲೂ ತುಂಬಿಸುವವರನ್ನೂ ದಂಡಿಸುವೆನು.
ZEP 1:10 “ಆ ದಿನದಲ್ಲಿ, ಮೀನಿನ ಬಾಗಿಲಿನಿಂದ ಕೂಗಿನ ಶಬ್ದವೂ ಹೊಸ ಮನೆಯಿಂದ ಗೋಳಾಟವೂ ಗುಡ್ಡಗಳ ಕಡೆಯಿಂದ ಮುರಿಯುವ ಬಲವಾದ ಶಬ್ದವೂ ಕೇಳಿಬರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.
ZEP 1:11 ಮಾರುಕಟ್ಟೆಗಳ ಜಿಲ್ಲೆಯಲ್ಲಿ ವಾಸಿಸುವವರೇ, ಗೋಳಾಡಿರಿ. ಏಕೆಂದರೆ ವರ್ತಕರ ಜನರೆಲ್ಲಾ ಸಂಹಾರವಾದರು. ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.
ZEP 1:12 ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು. ‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡು ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನೂ ದಂಡಿಸುವೆನು.
ZEP 1:13 ಆದ್ದರಿಂದ ಅವರ ಸಂಪತ್ತು ಕೊಳ್ಳೆಯಾಗುವುದು, ಅವರ ಮನೆಗಳು ಹಾಳಾಗುವುವು. ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು. ದ್ರಾಕ್ಷಿತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.”
ZEP 1:14 ಯೆಹೋವ ದೇವರ ಮಹಾದಿವಸವು ಸಮೀಪವಾಗಿದೆ, ಬಹು ತ್ವರೆಯಾಗಿ ಬರುತ್ತಿದೆ. ಕೇಳಿರಿ. ಯೆಹೋವ ದೇವರ ದಿನದಂದು ಕೂಗು ಕಹಿಯಾಗಿರುವುದು. ಶೂರನು ಅಲ್ಲಿ ಬೊಬ್ಬೆ ಹಾಕುವನು.
ZEP 1:15 ಆ ದಿವಸವು ರೌದ್ರದ ದಿವಸವು, ಇಕ್ಕಟ್ಟು ಸಂಕಟಗಳ ದಿವಸವು, ಹಾಳುಪಾಳುಗಳ ದಿವಸವು, ಕತ್ತಲೆ ಮಬ್ಬುಗಳ ದಿವಸವು, ಕಾರ್ಮುಗಿಲ ಕಗ್ಗತ್ತಲ ದಿವಸವು,
ZEP 1:16 ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಆರ್ಭಟಗಳ ದಿವಸವು.
ZEP 1:17 “ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು. ಅವರು ಕುರುಡರ ಹಾಗೆ ತಡಕುವರು. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ. ಅವರ ರಕ್ತವು ಧೂಳಿನಂತೆಯೂ ಅವರ ಮಾಂಸವು ಗೊಬ್ಬರದಂತೆಯೂ ಸುರಿದಿರುವುದು.
ZEP 1:18 ಯೆಹೋವ ದೇವರ ರೌದ್ರದಿನದಂದು ಅವರ ಬೆಳ್ಳಿಯಾದರೂ ಅವರ ಬಂಗಾರವಾದರೂ ಅವರನ್ನು ರಕ್ಷಿಸಲಾರವು.” ಅವರ ಅಸೂಯೆಯ ಬೆಂಕಿಯು ದೇಶವನ್ನೆಲ್ಲಾ ನುಂಗುವುದು. ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾ ಬೇಗ ನಿರ್ಮೂಲ ಮಾಡಿಬಿಡುವರು.
ZEP 2:1 ನಾಚಿಕೆ ಇಲ್ಲದ ಜನಾಂಗದವರೇ, ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ,
ZEP 2:2 ತೀರ್ಪು ಕಾರ್ಯಗತಗೊಳ್ಳುವ ಮುಂಚೆ ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ ಯೆಹೋವ ದೇವರ ಉಗ್ರಕೋಪವು ನಿಮ್ಮ ಮೇಲೆ ಬರುವ ಮುಂಚೆ, ಯೆಹೋವ ದೇವರ ಕೋಪದ ದಿನವು ನಿಮ್ಮ ಮೇಲೆ ಬರುವ ಮುಂಚೆ,
ZEP 2:3 ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ ಯೆಹೋವ ದೇವರನ್ನು ಹುಡುಕಿರಿ. ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ. ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.
ZEP 2:4 ಗಾಜವು ಕೈಬಿಡಲಾಗುವುದು; ಅಷ್ಕೆಲೋನ್ ಹಾಳಾಗುವುದು; ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು, ಎಕ್ರೋನ್ ಕಿತ್ತೆಸೆಯಲಾಗುವುದು.
ZEP 2:5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ! ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ, “ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,” ಎಂದು ಅವರು ಹೇಳುತ್ತಾರೆ.
ZEP 2:6 ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.
ZEP 2:7 ಅದು ಯೆಹೂದದ ಮನೆತನದಲ್ಲಿ ಉಳಿದವರ ವಶವಾಗುವುದು. ಅದರ ಮೇಲೆ ಮೇಯಿಸುವರು. ಅಷ್ಕೆಲೋನಿನ ಮನೆತನಗಳಲ್ಲಿ ಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು. ಏಕೆಂದರೆ ಅವರ ದೇವರಾದ ಯೆಹೋವ ದೇವರು, ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು.
ZEP 2:8 “ಮೋವಾಬಿನ ನಿಂದೆಯನ್ನೂ ಅಮ್ಮೋನ್ಯರ ಬೈಗಳವನ್ನೂ ಅವರು ನನ್ನ ಜನರನ್ನೂ ನಿಂದಿಸಿ, ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.
ZEP 2:9 ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಜೀವದಾಣೆ,” “ನಿಶ್ಚಯವಾಗಿ ಮೋವಾಬು ಸೊದೋಮಿನ ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು. ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ ನಿತ್ಯವಾಗಿ ಹಾಳಾದ ಸ್ಥಳವಾಗುವರು. ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು. ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”
ZEP 2:10 ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನು ಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇ ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು.
ZEP 2:11 ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ, ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು. ಇತರ ಜನಾಂಗಗಳ ದ್ವೀಪಗಳವರೆಲ್ಲರು ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.
ZEP 2:12 ಕೂಷ್ ದೇಶದವರೇ, ನೀವೂ ಸಹ ನನ್ನ ಖಡ್ಗದಿಂದ ಹತರಾಗುವಿರಿ.
ZEP 2:13 ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ, ಅಸ್ಸೀರಿಯರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು.
ZEP 2:14 ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು, ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು, ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು, ದೇವದಾರು ಮರದ ತೊಲೆಗಳು ಕಳಚಿಬೀಳುವುವು.
ZEP 2:15 “ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,” ಎಂದು ತನ್ನೊಳಗೆ ಎಂದುಕೊಂಡಂಥ ಸುಭದ್ರ ನಿನೆವೆ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದರಲ್ಲಿ ಹಾದುಹೋಗುವವರೆಲ್ಲರೂ ನಿಂದಿಸಿ ಅಪಹಾಸ್ಯ ಮಾಡುವರು.
ZEP 3:1 ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಕಷ್ಟ!
ZEP 3:2 ಅವಳು ಯಾರಿಗೂ ವಿಧೇಯಳಾಗಲಿಲ್ಲ; ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ; ಯೆಹೋವ ದೇವರಲ್ಲಿ ಭರವಸೆ ಇಡಲಿಲ್ಲ; ತನ್ನ ದೇವರ ಸಮೀಪಕ್ಕೆ ಬರಲಿಲ್ಲ.
ZEP 3:3 ಅವಳ ಪ್ರಮುಖರು ಗರ್ಜಿಸುವ ಸಿಂಹಗಳು. ಅವಳ ನ್ಯಾಯಾಧಿಪತಿಗಳು ಸಂಜೆಯ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.
ZEP 3:4 ಅವಳ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರೂ ವಿಶ್ವಾಸದ್ರೋಹಿಗಳೂ ಆಗಿದ್ದಾರೆ. ಅವಳ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರಮಾಡುತ್ತಾರೆ, ದೈವನಿಯಮವನ್ನು ಭಂಗಪಡಿಸುತ್ತಾರೆ.
ZEP 3:5 ನೀತಿಯುಳ್ಳ ಯೆಹೋವ ದೇವರು ಅವಳ ಮಧ್ಯದಲ್ಲಿ ಇದ್ದಾರೆ. ಅವರು ಅನ್ಯಾಯ ಮಾಡುವುದಿಲ್ಲ; ಪ್ರತಿ ಬೆಳಿಗ್ಗೆ ತಮ್ಮ ನ್ಯಾಯತೀರ್ಪನ್ನು ಬೆಳಕಿಗೆ ತರುತ್ತಾರೆ; ಅವರು ತಪ್ಪುವವರಲ್ಲ. ಆದರೆ ಅನ್ಯಾಯವಂತನು ನಾಚಿಕೆಯನ್ನು ಅರಿಯನು.
ZEP 3:6 “ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ. ಅವುಗಳ ಗೋಪುರಗಳು ಹಾಳಾಗಿವೆ. ಅವುಗಳ ಬೀದಿಗಳನ್ನು ಯಾರೂ ಹಾದುಹೋಗದ ಹಾಗೆ ಹಾಳುಮಾಡಿದ್ದೆನೆ. ಅವುಗಳ ಪಟ್ಟಣಗಳು ನಾಶವಾದವು. ಹೀಗೆ ಅಲ್ಲಿ ಯಾವನೂ ಇರುವುದಿಲ್ಲ; ಯಾವ ಮನುಷ್ಯನೂ ಅಲ್ಲಿ ವಾಸಿಸುವುದೂ ಇಲ್ಲ.
ZEP 3:7 ‘ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವೆ,’ ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ನಾಶವಾಗುವುದಿಲ್ಲ. ಆದರೆ ಅವರು ಬೇಗನೆ ಎದ್ದು ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು.
ZEP 3:8 ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ: ನಾನು ಬೇಟೆ ಹಿಡಿಯಲಿಕ್ಕೆ ಏಳುವ ದಿವಸದವರೆಗೂ ನನಗೆ ಕಾದುಕೊಳ್ಳಿರಿ.” ಏಕೆಂದರೆ ಜನಾಂಗಗಳನ್ನು ಕೂಡಿಸುವುದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವುದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ನನ್ನ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವುದಕ್ಕೂ ತೀರ್ಮಾನಿಸಿಕೊಂಡಿದ್ದೇನೆ. ಏಕೆಂದರೆ ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸಲಾಗುವುದು.
ZEP 3:9 “ಆಗ ನಾನು ಜನರ ತುಟಿಗಳನ್ನು ಶುದ್ಧೀಕರಿಸುವೆನು. ಅವರೆಲ್ಲರೂ ಯೆಹೋವ ದೇವರ ಹೆಸರಿನಿಂದ ಮೊರೆಯಿಡುವರು. ಏಕಮನಸ್ಸಿನಿಂದ ಆತನಿಗೆ ಸೇವೆಮಾಡುವರು.
ZEP 3:10 ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿಹೋದ ನನ್ನ ಜನರೂ ನನಗೆ ಕಾಣಿಕೆಗಳನ್ನು ತರುವರು.
ZEP 3:11 ಆ ದಿವಸದಲ್ಲಿ ನೀನು ನನಗೆ ವಿರೋಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನಾಚಿಕೆಗೆ ಗುರಿಯಾಗುವುದಿಲ್ಲ; ಏಕೆಂದರೆ ಆಗ ಗರ್ವದಿಂದ ಹೊಗಳಿಕೊಳ್ಳುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕುವೆನು. ನನ್ನ ಪರಿಶುದ್ಧ ಪರ್ವತದಲ್ಲಿ ಇನ್ನು ಮೇಲೆ ನೀನು ಗರ್ವಪಡದೇ ಬಾಳುವೆ.
ZEP 3:12 ಆದರೆ ನಿನ್ನ ಮಧ್ಯದಲ್ಲಿ ಸೌಮ್ಯರನ್ನೂ ದೀನರನ್ನೂ ಉಳಿಸುವೆನು. ಇವರು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಡುವರು.
ZEP 3:13 ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯ ಮಾಡರು; ಸುಳ್ಳಾಡರು, ಅವರ ಬಾಯಲ್ಲಿ ಮೋಸವಿರದು. ಅವರು ಮಂದೆಯಂತೆ ಮೇದು ಮಲಗುವರು. ಅವರನ್ನು ಭಯಪಡಿಸುವವನು ಒಬ್ಬನೂ ಇರುವುದಿಲ್ಲ.”
ZEP 3:14 ಚೀಯೋನಿನ ಪುತ್ರಿಯೇ, ಹಾಡು. ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಪುತ್ರಿಯೇ, ಪೂರ್ಣಹೃದಯದಿಂದ ಸಂಭ್ರಮಿಸಿ ಉಲ್ಲಾಸಪಡು.
ZEP 3:15 ಯೆಹೋವ ದೇವರು ನಿನ್ನ ಶಿಕ್ಷೆಗಳನ್ನು ದೂರಮಾಡಿ ನಿನ್ನ ಶತ್ರುವನ್ನು ತೆಗೆದುಹಾಕಿದ್ದಾರೆ. ಇಸ್ರಾಯೇಲಿನ ಅರಸನಾದ ಯೆಹೋವ ದೇವರು ನಿನ್ನ ಮಧ್ಯದಲ್ಲಿ ಇದ್ದಾರೆ. ಇನ್ನು ಮೇಲೆ ನಿನಗೆ ಯಾವ ಕೇಡಿನ ಭಯವಿರುವುದಿಲ್ಲ.
ZEP 3:16 ಆ ದಿವಸದಲ್ಲಿ ಯೆರೂಸಲೇಮಿಗೆ ಹೀಗೆಂದು ಹೇಳುವರು, “ಚೀಯೋನೇ, ನೀನು ಭಯಪಡಬೇಡ; ನಿನ್ನ ಕೈಗಳು ಬಲಹೀನವಾಗದಿರಲಿ.
ZEP 3:17 ನಿನ್ನ ದೇವರಾದ ಯೆಹೋವ ದೇವರು ನಿನ್ನೊಂದಿಗಿದ್ದಾರೆ. ನಿನ್ನನ್ನು ರಕ್ಷಿಸಲು ಶಕ್ತರಾಗಿದ್ದಾರೆ. ನಿನ್ನಲ್ಲಿ ಬಹಳವಾಗಿ ಹರ್ಷಾನಂದಗೊಳ್ಳುವರು. ತಮ್ಮ ಪ್ರೀತಿಯ ನಿಮಿತ್ತ ಅವರು ಇನ್ನು ಮುಂದೆ ನಿನ್ನನ್ನು ಖಂಡಿಸುವುದಿಲ್ಲ, ಆದರೆ ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವರು.”
ZEP 3:18 “ನೇಮಕವಾದ ಹಬ್ಬಗಳ ನಷ್ಟಕ್ಕಾಗಿರುವ ನಿಮ್ಮ ದುಃಖವನ್ನು ನಿಮ್ಮಿಂದ ನಾನು ತೆಗೆದುಬಿಡುವೆನು. ಅವು ನಿನಗೆ ಭಾರವಾಗಿಯೂ ನಿಂದೆಯಾಗಿಯೂ ಇದ್ದವು.
ZEP 3:19 ಆ ಕಾಲದಲ್ಲಿ ನಿನ್ನನ್ನು ಪೀಡಿಸುವವರನ್ನೆಲ್ಲಾ ದಂಡಿಸುವೆನು, ಕುಂಟಾದದ್ದನ್ನು ರಕ್ಷಿಸಿ, ಚದರಿಹೋದವರನ್ನು ಕೂಡಿಸುವೆನು; ಅವರು ಅವಮಾನ ಹೊಂದಿದ ದೇಶಗಳಲ್ಲೆಲ್ಲಾ ಅವರಿಗೆ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.
ZEP 3:20 ಆ ಕಾಲದಲ್ಲಿ ನಾನು ನಿಮ್ಮನ್ನು ಒಟ್ಟುಗೂಡಿಸುವೆನು. ಆ ಸಮಯದಲ್ಲಿ ನಾನು ಮನೆಗೆ ನಿಮ್ಮನ್ನು ಕರೆದುಕೊಂಡು ಬರುವೆನು. ನಾನು ನಿಮ್ಮ ಸೌಭಾಗ್ಯವನ್ನು ನಿಮ್ಮ ಕಣ್ಣೆದುರಿಗೆ ಪುನಃಸ್ಥಾಪಿಸಿ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆಯನ್ನೂ ಉಂಟುಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
HAG 1:1 ಪಾರಸಿಯ ಅರಸ ದಾರ್ಯಾವೆಷನ ಆಳಿಕೆಯ ಎರಡನೆಯ ವರ್ಷದಲ್ಲಿ, ಆರನೇ ತಿಂಗಳಿನ ಮೊದಲನೇ ದಿವಸದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮುಖಾಂತರ, ಶೆಯಲ್ತಿಯೇಲನ ಮಗನು ಮತ್ತು ಯೆಹೂದದ ಅಧಿಪತಿ ಆದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗನು ಮತ್ತು ಮಹಾಯಾಜಕನಾದ ಯೆಹೋಶುವನಿಗೂ ಬಂದಿತು:
HAG 1:2 “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಯೆಹೋವ ದೇವರ ಆಲಯವನ್ನು ಕಟ್ಟುವ ಕಾಲವು ಇನ್ನೂ ಬಂದಿಲ್ಲ,’ ಎಂದು ಈ ಜನರು ಅಂದುಕೊಳ್ಳುತ್ತಾರೆ.”
HAG 1:3 ಆಗ ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಬಂದಿತು:
HAG 1:4 “ಈ ಆಲಯ ಹಾಳುಬಿದ್ದಿರುವಾಗ, ನೀವು, ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವುದಕ್ಕೆ ಇದು ನಿಮಗೆ ಕಾಲವೋ?”
HAG 1:5 ಈಗ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಾರ್ಗಗಳನ್ನು ಆಲೋಚಿಸಿ ನೋಡಿರಿ.
HAG 1:6 ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ಸುಗ್ಗಿ ಮಾಡಿದ್ದೀರಿ; ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿಯಾಗಲಿಲ್ಲ; ಬಟ್ಟೆಯನ್ನು ಧರಿಸುತ್ತೀರಿ, ಆದರೆ ಬೆಚ್ಚಗೆ ಆಗಲಿಲ್ಲ; ಸಂಬಳ ಸಂಪಾದಿಸುತ್ತೀರಿ, ಅದನ್ನು ತೂತುಗಳುಳ್ಳ ಚೀಲಗಳಲ್ಲಿ ಹಾಕಿಡುತ್ತೀರಿ.”
HAG 1:7 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ನಿಮ್ಮ ಮಾರ್ಗಗಳನ್ನು ಆಲೋಚಿಸಿ ನೋಡಿರಿ.
HAG 1:8 ಬೆಟ್ಟಕ್ಕೆ ಹೋಗಿ ಮರವನ್ನು ತಂದು, ಆಲಯವನ್ನು ಕಟ್ಟಿರಿ. ಆಗ ನಾನು ಅದಕ್ಕೆ ಮೆಚ್ಚಿ, ಮಹಿಮೆ ಹೊಂದುವೆನೆಂದು, ಯೆಹೋವ ದೇವರು ಹೇಳುತ್ತಾರೆ.
HAG 1:9 ಬಹಳ ಆಗಬೇಕೆಂದು ನೋಡಿಕೊಂಡಿರಿ. ಆದರೆ ಇದೋ ಕೊಂಚವು. ನೀವು ಇದನ್ನು ಮನೆಗೆ ತಂದಾಗ, ನಾನು ಅದರ ಮೇಲೆ ಊದಿ ಬಿಟ್ಟೆನು. ಏತಕ್ಕೆ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. ನನ್ನ ಆಲಯವು ಹಾಳುಬಿದ್ದಿರುವಾಗ, ನೀವು ನಿಮ್ಮ ನಿಮ್ಮ ಸ್ವಂತ ಮನೆಗಳ ಕಡೆಗೆ ಹೆಚ್ಚು ಗಮನ ಕೊಡುತ್ತೀರಿ.
HAG 1:10 ಆದ್ದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ.
HAG 1:11 ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆಯೂ ಎಣ್ಣೆಯ ಮೇಲೆಯೂ ಭೂಮಿಯ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಕೈಕಸುಬುಗಳ ಮೇಲೆಯೂ ಬರಗಾಲವನ್ನು ತಂದಿದ್ದೇನೆ.”
HAG 1:12 ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ ಯೆಹೋಚಾದಾಕನ ಮಗ ಮತ್ತು ಮಹಾಯಾಜಕ ಯೆಹೋಶುವನೂ ಜನರಲ್ಲಿ ಉಳಿದವರೆಲ್ಲರೂ ತಮ್ಮ ದೇವರಾದ ಯೆಹೋವ ದೇವರ ಮಾತನ್ನೂ ತಮ್ಮ ದೇವರಾದ ಯೆಹೋವ ದೇವರು ಕಳುಹಿಸಿದ ಪ್ರವಾದಿಯಾದ ಹಗ್ಗಾಯನ ಮಾತುಗಳನ್ನೂ ಕೇಳಿದರು. ಜನರು ಯೆಹೋವ ದೇವರಿಗೆ ಭಯಪಟ್ಟರು.
HAG 1:13 ಆಗ ಯೆಹೋವ ದೇವರ ಸೇವಕನಾದ ಹಗ್ಗಾಯನು, ಯೆಹೋವ ದೇವರ ಜನರಿಗೆ, “ನಾನು ನಿಮ್ಮ ಸಂಗಡ ಇದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ.
HAG 1:14 ಯೆಹೋವ ದೇವರು ಶೆಯಲ್ತಿಯೇಲನ ಮಗ ಮತ್ತು ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನ ಆತ್ಮವನ್ನೂ, ಯೆಹೋಚಾದಾಕನ ಮಗ ಮತ್ತು ಮಹಾಯಾಜಕ ಯೆಹೋಶುವನ ಆತ್ಮವನ್ನೂ, ಜನರಲ್ಲಿ ಉಳಿದವರೆಲ್ಲರ ಆತ್ಮವನ್ನೂ ಪ್ರೇರೇಪಿಸಿದರು. ಅವರು ಬಂದು ಅರಸನಾದ ದಾರ್ಯಾವೆಷನ ಆಳಿಕೆಯ ಎರಡನೇ ವರ್ಷದ, ಆರನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ ತಮ್ಮ ದೇವರಾದ ಸೇನಾಧೀಶ್ವರ ಯೆಹೋವ ದೇವರ ಆಲಯದ ಕೆಲಸ ಪ್ರಾರಂಭಿಸಿದರು. ಅರಸನಾದ ದಾರ್ಯಾವೆಷನ ಎರಡನೇ ವರ್ಷದಲ್ಲಿ,
HAG 2:1 ಏಳನೆಯ ತಿಂಗಳಿನ, ಇಪ್ಪತ್ತೊಂದನೆಯ ದಿವಸದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಬಂದಿತು:
HAG 2:2 “ಶೆಯಲ್ತಿಯೇಲನ ಮಗ ಮತ್ತು ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಇದನ್ನು ಹೇಳತಕ್ಕದ್ದು.
HAG 2:3 ಈ ಆಲಯದ ಅದರ ಪೂರ್ವದ ಮಹಿಮೆಯನ್ನು ನೋಡಿದವರೊಳಗೆ ಉಳಿದವನು ನಿಮ್ಮಲ್ಲಿ ಯಾರು ಇದ್ದಾರೆ? ಈಗ ಅದು ಹೇಗೆ ಕಾಣುತ್ತದೆ? ಇದು ನಿಮ್ಮ ದೃಷ್ಟಿಗೆ ಏನೂ ಇಲ್ಲದ ಹಾಗೆ ತೋರುತ್ತದಲ್ಲವೋ?
HAG 2:4 ಆದರೂ ಈಗ ಯೆಹೋವ ದೇವರು ಹೀಗೆ ಹೇಳಿದರು: ‘ಜೆರುಬ್ಬಾಬೆಲನೇ, ಬಲವಾಗಿರು. ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನೇ, ಬಲವಾಗಿರು. ದೇಶದ ಜನರೆಲ್ಲರೇ, ಬಲವಾಗಿರಿ,’ ಕೆಲಸಮಾಡಿರಿ. ‘ನಾನು ನಿಮ್ಮ ಸಂಗಡ ಇದ್ದೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
HAG 2:5 ನೀವು ಈಜಿಪ್ಟಿನೊಳಗಿನಿಂದ ಹೊರಗೆ ಬಂದಾಗ, ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ, ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿರುವುದು. ನೀವು ಭಯಪಡಬೇಡಿರಿ.
HAG 2:6 “ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸ್ವಲ್ಪ ಕಾಲದ ನಂತರ ಇನ್ನೊಂದು ಸಾರಿ ನಾನು ಆಕಾಶಗಳನ್ನು ಭೂಮಿಯನ್ನು, ಸಮುದ್ರವನ್ನು ಮತ್ತು ಒಣನೆಲವನ್ನು ಕದಲಿಸುತ್ತೇನೆ.
HAG 2:7 ಎಲ್ಲಾ ಜನಾಂಗಗಳನ್ನು ನಡುಗಿಸುವೆನು. ಎಲ್ಲಾ ಜನಾಂಗಗಳ ಇಷ್ಟ ವಸ್ತುಗಳು ಬಂದು ಒದಗಲು, ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
HAG 2:8 ‘ಬೆಳ್ಳಿ ನನ್ನದು, ಚಿನ್ನವು ನನ್ನದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
HAG 2:9 ‘ಈಗಿರುವ ಆಲಯದ ಮಹಿಮೆಯು, ಹಿಂದಿನ ಆಲಯದ ಮಹಿಮೆಗಿಂತ ವಿಶೇಷವಾಗಿರುವುದು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. ‘ನಾನೇ ಈ ಸ್ಥಳದಲ್ಲಿ ಸಮಾಧಾನ ಕೊಡುವೆನು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”
HAG 2:10 ದಾರ್ಯಾವೆಷನ ಎರಡನೆಯ ವರ್ಷದ, ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನಿಗೆ ಬಂದಿತು:
HAG 2:11 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮೋಶೆಯ ನಿಯಮದ ಪ್ರಕಾರವಾಗಿ ಯಾಜಕರಿಗೆ,
HAG 2:12 ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪ್ರತಿಷ್ಠಿಸಿದ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾದರೂ ಎಣ್ಣೆಯನ್ನಾದರೂ ಯಾವ ವಿಧವಾದ ಆಹಾರವನ್ನಾದರೂ ಮುಟ್ಟಿದರೆ, ಅದು ಪರಿಶುದ್ಧವಾಗುವುದೋ? ಕೇಳು,’ ” ಎಂದನು. ಹಗ್ಗಾಯನು ಹಾಗೆ ವಿಚಾರಿಸಲು, ಯಾಜಕರು, “ಇಲ್ಲ,” ಎಂದು ಉತ್ತರಕೊಟ್ಟರು.
HAG 2:13 ಆಗ ಹಗ್ಗಾಯನು, “ಹೆಣದಿಂದ ಅಶುದ್ಧವಾದವನು, ಇವುಗಳಲ್ಲಿ ಯಾವುದನ್ನಾದರೂ ಮುಟ್ಟಿದರೆ, ಅಶುದ್ಧವಾಗುವುದೋ?” ಎಂದನು. ಯಾಜಕರು ಉತ್ತರವಾಗಿ, “ಹೌದು, ಅಶುದ್ಧವಾಗುವುದು,” ಎಂದರು.
HAG 2:14 ಆಗ ಹಗ್ಗಾಯನು ಮುಂದುವರಿಸಿ ಹೇಳಿದ್ದೇನೆಂದರೆ, “ಈ ಜನರೂ, ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಅರ್ಪಿಸುವಂಥಾದ್ದು ಅಶುದ್ಧವೇ.
HAG 2:15 “ಈಗ ಚೆನ್ನಾಗಿ ಯೋಚಿಸಿಕೊಳ್ಳಿರಿ. ಯೆಹೋವ ದೇವರ ಆಲಯ ನಿವೇಶನದಲ್ಲಿ, ಕಲ್ಲಿನ ಮೇಲೆ ಕಲ್ಲು ಇಡುವ, ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.
HAG 2:16 ಆ ದಿನಗಳು ಇದ್ದದ್ದು ಮೊದಲುಗೊಂಡು, ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ, ಹತ್ತು ಸೇರು ಮಾತ್ರ ಸಿಕ್ಕುತ್ತಿತ್ತು. ಒಬ್ಬನು ಐವತ್ತು ಪಾತ್ರೆ ದ್ರಾಕ್ಷಾರಸವನ್ನು ತುಂಬಿಸುವುದಕ್ಕೆ ತೊಟ್ಟಿಗೆ ಬಂದಾಗ, ಇಪ್ಪತ್ತು ಮಾತ್ರ ದೊರೆಯುತ್ತಿತ್ತಷ್ಟೆ.
HAG 2:17 ನಾನು ನಿಮ್ಮ ಕೈ ದುಡಿತಗಳನ್ನೆಲ್ಲಾ ಬೂಜಿನಿಂದಲೂ ಉರಿಗಾಳಿಯಿಂದಲೂ ಕಲ್ಮಳೆಯಿಂದಲೂ ಹಾಳುಮಾಡಿದೆನು. ಆದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ.
HAG 2:18 ಚೆನ್ನಾಗಿ ನೆನಪಿಗೆ ತಂದುಕೊಳ್ಳಿರಿ. ಇಂದಿನಿಂದ ಇದಕ್ಕೆ ಮುಂಚೆ ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ, ಯೆಹೋವ ದೇವರ ಮಂದಿರದ ಅಸ್ತಿವಾರವು ಹಾಕಲಾದ ದಿನದಿಂದ ಸೂಕ್ಷ್ಮವಾಗಿ ಯೋಚಿಸಿಕೊಳ್ಳಿರಿ.
HAG 2:19 ಬೀಜವು ಇನ್ನು ಕಣಜದಲ್ಲಿ ಉಂಟೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಎಣ್ಣೆಮರಗಳು ಇನ್ನೂ ಫಲಿಸಲಿಲ್ಲವಲ್ಲಾ. “ಈ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು,” ಎಂದರು.
HAG 2:20 ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು, ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ, ಹಗ್ಗಾಯನಿಗೆ ಬಂದಿತು.
HAG 2:21 ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನೆಂದರೆ, “ನಾನು ಆಕಾಶಗಳನ್ನೂ, ಭೂಮಿಯನ್ನೂ ಕದಲಿಸುವೆನು.
HAG 2:22 ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು. ನಾನು ಇತರ ಜನಾಂಗಗಳ, ರಾಜ್ಯಗಳ ಬಲವನ್ನು ನಾಶಮಾಡುವೆನು. ರಥಗಳನ್ನೂ, ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು. ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಖಡ್ಗದಿಂದ ಬೀಳುವನು.
HAG 2:23 “ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಶೆಯಲ್ತಿಯೇಲನ ಮಗನಾದ ನನ್ನ ಸೇವಕ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ನಿನ್ನನ್ನು ಮುದ್ರೆಯ ಉಂಗುರದ ಹಾಗೆ ಇಡುವೆನು. ಏಕೆಂದರೆ ನಿನ್ನನ್ನು ನಾನೇ ಆಯ್ದುಕೊಂಡಿದ್ದೇನೆ,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”
ZEC 1:1 ಪರ್ಷಿಯಾದ ಅರಸ ದಾರ್ಯಾವೆಷನ ಎರಡನೆಯ ವರ್ಷ, ಎಂಟನೆಯ ತಿಂಗಳಿನಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು:
ZEC 1:2 “ಯೆಹೋವ ದೇವರು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿದ್ದಾರೆ.
ZEC 1:3 ಆದ್ದರಿಂದ ನೀನು ಅವರಿಗೆ ಹೇಳತಕ್ಕದ್ದೇನೆಂದರೆ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ಬಳಿಗೆ ತಿರುಗಿಕೊಳ್ಳಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆಗ, ‘ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
ZEC 1:4 ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ, ನಿಮ್ಮ ಕೆಟ್ಟ ಮಾರ್ಗಗಳನ್ನೂ, ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸರ್ವಶಕ್ತರಾದ ಯೆಹೋವ ದೇವರು ಪ್ರಕಟಿಸುತ್ತಾರೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ. ನನ್ನಲ್ಲಿ ಲಕ್ಷ್ಯವಿಡಲಿಲ್ಲ ಎಂದು ಯೆಹೋವ ದೇವರು ಹೇಳುತ್ತಾರೆ.
ZEC 1:5 ನಿಮ್ಮ ಪಿತೃಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ?
ZEC 1:6 ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿ, ನನ್ನ ವಾಕ್ಯಗಳೂ, ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿಲ್ಲವೋ? “ಆಗ ಅವರು ತಿರುಗಿಕೊಂಡು, ‘ಸೇನಾಧೀಶ್ವರ ಯೆಹೋವ ದೇವರು ನಮಗೆ ಮಾಡುವುದಕ್ಕೆ ಯೋಚಿಸಿದ ಹಾಗೆಯೇ, ನಮ್ಮ ಮಾರ್ಗಗಳ ಪ್ರಕಾರವಾಗಿಯೂ, ನಮ್ಮ ಕ್ರಿಯೆಗಳ ಪ್ರಕಾರವಾಗಿಯೂ ನಮಗೆ ಮಾಡಿದ್ದಾರೆ,’ ಎಂದು ಹೇಳಿದರು.”
ZEC 1:7 ದಾರ್ಯಾವೆಷನ ಎರಡನೆಯ ವರ್ಷದಲ್ಲಿ, ಹನ್ನೊಂದನೆಯ ತಿಂಗಳಾದ ಶೇಬಾಟ್ ಎಂಬ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು:
ZEC 1:8 ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬನು, ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಬಣ್ಣದ ಹಾಗು ಬಿಳಿಯ ಕುದುರೆಗಳು ಇದ್ದವು.
ZEC 1:9 ಆಗ ನಾನು, “ನನ್ನ ಒಡೆಯನೇ, ಇವೇನು?” ಎಂದೆನು. ಆಗ ನನ್ನ ಸಂಗಡ ಮಾತನಾಡಿದ ದೇವದೂತನು, “ಇವೇನೆಂದು ನಿನಗೆ ತೋರಿಸುತ್ತೇನೆ,” ಎಂದನು.
ZEC 1:10 ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು, “ಇವರು ಭೂಮಿಯ ಸುತ್ತಲೂ ನಡೆದಾಡುವುದಕ್ಕೆ ಯೆಹೋವ ದೇವರಿಂದ ಕಳುಹಿಸಲಾದವರು,” ಎಂದನು.
ZEC 1:11 ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಯೆಹೋವ ದೇವರ ದೂತನಿಗೆ, “ಭೂಮಿಯ ಸುತ್ತಲೂ ನಡೆದಾಡಿದ್ದೇವೆ. ಇಗೋ, ಭೂಮಿಯೆಲ್ಲಾ ನಿಶ್ಚಿಂತೆಯಿಂದ ಶಾಂತವಾಗಿದೆ,” ಎಂದನು.
ZEC 1:12 ಆಗ ಯೆಹೋವ ದೇವರ ದೂತನು ಉತ್ತರಕೊಟ್ಟು: “ಸರ್ವಶಕ್ತರಾದ ಯೆಹೋವ ದೇವರೇ, ನೀವು ಯೆರೂಸಲೇಮನ್ನೂ, ಯೆಹೂದದ ಪಟ್ಟಣಗಳನ್ನೂ ಎಷ್ಟರವರೆಗೆ ಕನಿಕರಿಸದೆ ಇರುವಿರಿ? ಅವುಗಳ ಮೇಲೆ ಈ ಎಪ್ಪತ್ತು ವರ್ಷಗಳು ಸಿಟ್ಟು ಮಾಡಿದ್ದೀರಲ್ಲವೋ?” ಎಂದನು.
ZEC 1:13 ಆಗ ಯೆಹೋವ ದೇವರು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೆಯ ಮಾತುಗಳಿಂದಲೂ, ಆದರಣೆಯ ಮಾತುಗಳಿಂದಲೂ ಉತ್ತರಕೊಟ್ಟರು.
ZEC 1:14 ನನ್ನ ಸಂಗಡ ಮಾತನಾಡಿದ ದೂತನು ನನಗೆ, “ಇದನ್ನು ಸಾರಿ ಹೇಳು: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯೆರೂಸಲೇಮಿಗಾಗಿಯೂ, ಚೀಯೋನಿಗಾಗಿಯೂ ಮಹಾ ರೋಷವುಳ್ಳವನಾಗಿದ್ದೇನೆ.
ZEC 1:15 ನಿಶ್ಚಿಂತೆಯುಳ್ಳವರಾಗಿರುವ ಇತರ ರಾಷ್ಟ್ರಗಳ ಮೇಲೆ ನಾನು ಬಹಳ ಕೋಪವಾಗಿದ್ದೇನೆ. ಆದರೆ ಯೆರೂಸಲೇಮಿನ ಮೇಲೆ ನಾನು ಸ್ವಲ್ಪ ಮಾತ್ರ ಸಿಟ್ಟುಗೊಂಡಿರಲು, ಅವರು ಸಂಕಟಕ್ಕೆ ಇನ್ನು ಹೆಚ್ಚು ಕೇಡು ಕೂಡಿಸಿದರು.
ZEC 1:16 “ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾನೆ: ‘ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ. ನನ್ನ ಆಲಯವು ಅದರಲ್ಲಿ ಕಟ್ಟಲಾಗುವುದು. ಯೆರೂಸಲೇಮಿನ ಮೇಲೆ ಅಳತೆಯ ನೂಲು ಚಾಚಲಾಗುವುದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
ZEC 1:17 “ಪುನಃ ನೀನು ಸಾರಿ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವುವು. ಯೆಹೋವ ದೇವರು ಚೀಯೋನನ್ನು ಆದರಿಸುವರು. ಯೆರೂಸಲೇಮನ್ನು ಆರಿಸಿಕೊಳ್ಳುವರು, ಎಂದು ಹೇಳಿದನು.”
ZEC 1:18 ನಾನು ನನ್ನ ಕಣ್ಣುಗಳನ್ನು ಎತ್ತಿದಾಗ, ನಾಲ್ಕು ಕೊಂಬುಗಳನ್ನು ನೋಡಿದೆನು.
ZEC 1:19 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು.
ZEC 1:20 ಆಗ ಯೆಹೋವ ದೇವರು ನನಗೆ ನಾಲ್ಕು ಕಮ್ಮಾರರನ್ನು ತೋರಿಸಿದರು.
ZEC 1:21 ನಾನು, “ಇವರು ಏನು ಮಾಡುವುದಕ್ಕೆ ಬರುತ್ತಾರೆ?” ಎಂದೆನು. ಅದಕ್ಕೆ ಅವರು, “ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಆದರೆ ಇವರು ಯೆಹೂದ ದೇಶವನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೇ ಚದರಿಸಿ, ಅದರ ಕೊಂಬುಗಳನ್ನು ಕೆಡವಿ ಹಾಕುವುದಕ್ಕೆ ಬಂದಿದ್ದಾರೆ,” ಎಂದು ಹೇಳಿದರು.
ZEC 2:1 ಆಗ ನಾನು ಕಣ್ಣೆತ್ತಿ ನೋಡಲು, ತನ್ನ ಕೈಯಲ್ಲಿ ಅಳೆಯುವ ನೂಲು ಉಳ್ಳ ಒಬ್ಬ ಮನುಷ್ಯನನ್ನು ಕಂಡೆನು.
ZEC 2:2 ಆಗ ನಾನು, “ನೀನು ಎಲ್ಲಿಗೆ ಹೋಗುತ್ತೀ?” ಎಂದೆನು. ಅದಕ್ಕೆ ಆತನು ನನಗೆ, “ಯೆರೂಸಲೇಮನ್ನು ಅಳತೆಮಾಡಿ, ಅದರ ಅಗಲವೆಷ್ಟು? ಅದರ ಉದ್ದವೆಷ್ಟು? ಎಂದು ನೋಡುವುದಕ್ಕೆ ಹೋಗುತ್ತೇನೆ,” ಎಂದನು.
ZEC 2:3 ನನ್ನ ಸಂಗಡ ಮಾತನಾಡಿದ ದೂತನು ಬರುತ್ತಿರಲು, ಇನ್ನೊಬ್ಬ ದೂತನು ಅವನನ್ನು ಎದುರುಗೊಂಡು,
ZEC 2:4 “ಓಡಿಹೋಗಿ ಈ ಯೌವನಸ್ಥನಿಗೆ, ‘ಯೆರೂಸಲೇಮು, ಅದರಲ್ಲಿರುವ ಮನುಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾಗಿರುವುದು. ಯೆರೂಸಲೇಮು ಗೋಡೆ ಇಲ್ಲದ ಊರುಗಳಂತೆ ಇರುವುದು.
ZEC 2:5 ನಾನೇ ಅದರ ಸುತ್ತಲೂ ಬೆಂಕಿಯ ಗೋಡೆಯಾಗಿಯೂ, ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನು ಎಂದು ಹೇಳು,’ ಎಂದನು,” ಎಂದು ಯೆಹೋವ ದೇವರು ಹೇಳುತ್ತಾರೆ.
ZEC 2:6 “ಎಲೈ, ನೀವು ಹೊರಗೆ ಬಂದು ಉತ್ತರ ದೇಶದಿಂದ ಓಡಿಹೋಗಿರಿ. ಏಕೆಂದರೆ ಆಕಾಶದ ನಾಲ್ಕು ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ZEC 2:7 “ಚೀಯೋನೇ, ಬನ್ನಿರಿ, ಬಾಬಿಲೋನಿನ ಪುತ್ರಿಯ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.”
ZEC 2:8 ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, “ನಿಮ್ಮನ್ನು ಸುಲಿದುಕೊಂಡ ಜನಾಂಗಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ. ಏಕೆಂದರೆ ನಿಮ್ಮನ್ನು ಮುಟ್ಟುವವನು ಯೆಹೋವ ದೇವರ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
ZEC 2:9 ನಾನು ನನ್ನ ಕೈಯನ್ನು ಅವರ ಮೇಲೆ ಎತ್ತುವೆನು. ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ಕಳುಹಿಸಿದರೆಂದು ನೀವು ತಿಳಿಯುವಿರಿ.
ZEC 2:10 “ಚೀಯೋನ್ ಪುತ್ರಿಯೇ, ಹಾಡಿ ಹರ್ಷಿಸು. ಏಕೆಂದರೆ, ನಾನು ಬರುವೆನು ಮತ್ತು ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ZEC 2:11 “ಆ ದಿವಸದಲ್ಲಿ ಅನೇಕ ಜನಾಂಗಗಳು ಯೆಹೋವ ದೇವರನ್ನು ಅಂಟಿಕೊಂಡು ನನ್ನ ಜನರಾಗುವರು, ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆಂದು ತಿಳಿದುಕೊಳ್ಳುವೆ.
ZEC 2:12 ಇದಲ್ಲದೆ ಯೆಹೋವ ದೇವರು ತಮ್ಮ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸೊತ್ತಾಗಿ ಹೊಂದುವರು. ಯೆರೂಸಲೇಮನ್ನು ತಿರುಗಿ ಆಯ್ದುಕೊಳ್ಳುವರು.
ZEC 2:13 ಎಲ್ಲಾ ಮನುಷ್ಯರೇ, ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಅವರು ತಮ್ಮ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾರೆ.”
ZEC 3:1 ಆತನು ನನಗೆ, ಯೆಹೋವ ದೇವರ ದೂತನ ಮುಂದೆ ನಿಂತಿರುವ ಮಹಾಯಾಜಕನಾದ ಯೆಹೋಶುವನನ್ನೂ, ಅವನ ಮೇಲೆ ದೂರು ಹೇಳುವುದಕ್ಕೆ ಅವನ ಬಲಗಡೆಯಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
ZEC 3:2 ಆಗ ಯೆಹೋವ ದೇವರ ದೂತನು ಸೈತಾನನಿಗೆ, “ಸೈತಾನನೇ, ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಯೆರೂಸಲೇಮನ್ನು ಆಯ್ದುಕೊಂಡ ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಅದು ಬೆಂಕಿಯೊಳಗಿಂದ ಎಳೆದ ಕೊಳ್ಳಿಯಾಗಿದೆಯಲ್ಲವೋ?” ಎಂದನು.
ZEC 3:3 ಯೆಹೋಶುವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವನಾಗಿ ದೇವದೂತನ ಮುಂದೆ ನಿಂತನು.
ZEC 3:4 ಆಗ ದೇವದೂತನು ತನ್ನ ಮುಂದೆ ನಿಂತವರಿಗೆ, “ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದುಹಾಕಿರಿ,” ಎಂದನು. ಅನಂತರ ಯೆಹೋಶುವನಿಗೆ, “ನಿನ್ನ ಪಾಪವನ್ನು ತೆಗೆದುಹಾಕಿದ್ದೇನೆ. ಬದಲಾಗಿ ಶ್ರೇಷ್ಠ ವಸ್ತ್ರಗಳನ್ನು ನಿನಗೆ ತೊಡಿಸುವೆನು,” ಎಂದನು.
ZEC 3:5 ಆಗ ನಾನು, “ಅವನ ತಲೆಯ ಮೇಲೆ ಶುದ್ಧ ಮುಂಡಾಸನ್ನು ಇಡಿರಿ,” ಎಂದೆನು. ಆಗ ಸೇವಕರು ಯೆಹೋಶುವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು, ಅವನಿಗೆ ವಸ್ತ್ರಗಳನ್ನು ಧರಿಸಿದರು. ಯೆಹೋವ ದೇವರ ದೂತನು ಪಕ್ಕದಲ್ಲಿ ನಿಂತಿದ್ದನು.
ZEC 3:6 ಆಗ ಯೆಹೋವ ದೇವರ ದೂತನು ಯೆಹೋಶುವನಿಗೆ ಸಾಕ್ಷಿ ಕೊಟ್ಟಿದ್ದೇನೆಂದರೆ,
ZEC 3:7 “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಗಳನ್ನು ಕೈಗೊಂಡರೆ, ಆಗ ನೀನು ನನ್ನ ಆಲಯಕ್ಕೂ ನ್ಯಾಯತೀರಿಸಿ, ನನ್ನ ಅಂಗಳಗಳನ್ನೂ ಕಾಯುವೆ. ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ಹಕ್ಕನ್ನು ನಿನಗೆ ಕೊಡುವೆನು.’
ZEC 3:8 “ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ. ಅವರು ಆಶ್ಚರ್ಯವನ್ನುಂಟುಮಾಡುವ ಮನುಷ್ಯರಾಗಿದ್ದಾರೆ. ನಾನು ‘ರೆಂಬೆ’ ಎಂಬ ನನ್ನ ಸೇವಕನನ್ನು ಬರಮಾಡುವೆನು ಎಂಬುದಕ್ಕೆ ಇವರೇ ಮುಂಗುರುತು.
ZEC 3:9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.
ZEC 3:10 “ ‘ಆ ದಿವಸದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷಿಬಳ್ಳಿಯ ಕೆಳಗೂ, ಅಂಜೂರದ ಮರದ ಕೆಳಗೂ ಕರೆಯುವಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.”
ZEC 4:1 ಆಗ ನನ್ನ ಸಂಗಡ ಮಾತನಾಡಿದ ದೇವದೂತನು ತಿರುಗಿಬಂದು,
ZEC 4:2 ನಿದ್ರೆ ಹತ್ತಿದವನಂತಿದ್ದ ನನ್ನನ್ನು ಎಬ್ಬಿಸಿದನು. ಅವನು ನನಗೆ, “ನೀನು ಏನು ನೋಡುತ್ತೀ?” ಎಂದು ಕೇಳಿದಾಗ ನಾನು, “ಏಳು ದೀಪಗಳುಳ್ಳ ಬಂಗಾರದ ದೀಪಸ್ತಂಭ ಒಂದನ್ನು ನೋಡುತ್ತಿದ್ದೇನೆ. ಅದರ ಮೇಲೆ ಎಣ್ಣೆಯ ಪಾತ್ರೆಗಳಿವೆ.
ZEC 4:3 ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳಿವೆ. ಅದರ ಬಳಿಯಲ್ಲಿ ಎರಡು ಹಿಪ್ಪೆಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ, ಪಾತ್ರೆಯ ಎಡಗಡೆಯಲ್ಲಿ ಒಂದೂ ಇದ್ದವು,” ಎಂದನು.
ZEC 4:4 ಹೀಗೆ ನಾನು ಉತ್ತರಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇವೇನು?” ಎಂದೆನು.
ZEC 4:5 ಆಗ ನನ್ನ ಸಂಗಡ ಮಾತನಾಡಿದ ದೂತನು ಉತ್ತರಕೊಟ್ಟು ನನಗೆ, “ಇವೇನೆಂದು ಗೊತ್ತಿಲ್ಲವೋ?” ಎಂದು ಕೇಳಿದನು. ನಾನು, “ಇಲ್ಲ, ನನ್ನ ಒಡೆಯನೇ,” ಎಂದೆನು.
ZEC 4:6 ಆಗ ಅವನು, “ಜೆರುಬ್ಬಾಬೆಲನಿಗೆ ಯೆಹೋವ ದೇವರ ವಾಕ್ಯವು ಇದೇ: ‘ಪರಾಕ್ರಮದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
ZEC 4:7 “ಪರಾಕ್ರಮದ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬಯಲಾಗುವೆ. ಅವನು ಕಲಶದ ಕಲ್ಲನ್ನು ಸ್ಥಾಪಿಸಿ, ‘ದೇವರು ಇದನ್ನು ಆಶೀರ್ವದಿಸಲಿ! ದೇವರು ಇದನ್ನು ಆಶೀರ್ವದಿಸಲಿ!’ ಎಂದು ಘೋಷಿಸುವನು.”
ZEC 4:8 ಇದಲ್ಲದೆ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
ZEC 4:9 “ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳೇ ಅದನ್ನು ಪೂರೈಸುವುವು. ಆಗ ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ತಿಳಿಯುವಿರಿ.
ZEC 4:10 “ಆ ಏಳು ದೀಪಗಳು ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಯೆಹೋವ ದೇವರ ಕಣ್ಣುಗಳು. ಜನರು ನೂಲುಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುವರು. ಹೀಗಿರುವುದರಿಂದ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?”
ZEC 4:11 ಆಗ ನಾನು ದೇವದೂತನಿಗೆ, “ದೀಪಸ್ತಂಭದ ಎಡಬಲಗಳಲ್ಲಿರುವ ಈ ಎರಡು ಓಲಿವ್ ಮರಗಳು ಏನು?” ಎಂದೆನು.
ZEC 4:12 ಪುನಃ ನಾನು ಅವನಿಗೆ, “ಎರಡು ಚಿನ್ನದ ನಾಳಗಳಿಂದ ಚಿನ್ನದ ಎಣ್ಣೆಯನ್ನು ತಮ್ಮೊಳಗಿಂದ ಸುರಿಸುವ, ಈ ಎರಡು ಹಿಪ್ಪೆಕೊಂಬೆಗಳು ಏನು?” ಎಂದೆನು.
ZEC 4:13 ಅವನು ನನಗೆ, “ಇವು ಏನೆಂದು ತಿಳಿಯುವುದಿಲ್ಲವೋ?” ಎಂದನು. ನಾನು, “ನನ್ನ ಒಡೆಯನೇ, ಇಲ್ಲ,” ಎಂದೆನು.
ZEC 4:14 ಆಗ ಅವನು, “ಇವು ಸಮಸ್ತ ಭೂಮಿಯ ಕರ್ತ ಆಗಿರುವವರ ಸನ್ನಿಧಿಸೇವೆ ಮಾಡಲು ಅಭಿಷೇಕ ಹೊಂದಿರುವ ಇಬ್ಬರು ಸೇವಕರನ್ನು ಸೂಚಿಸುತ್ತದೆ,” ಎಂದನು.
ZEC 5:1 ಆಗ ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಲು, ಹಾರುವ ಸುರುಳಿ ಕಾಣಿಸಿತು.
ZEC 5:2 ಆಗ ದೂತನು ನನಗೆ, “ಏನು ನೋಡುತ್ತೀ?” ಎಂದಾಗ, ನಾನು, “ಹಾರುವ ಸುರುಳಿಯನ್ನು ನೋಡುತ್ತಿದ್ದೇನೆ. ಅದರ ಉದ್ದವು ಒಂಬತ್ತು ಮೀಟರ್, ಅದರ ಅಗಲವು ನಾಲ್ಕುವರೆ ಮೀಟರ್ ಇದೆ,” ಎಂದೆನು.
ZEC 5:3 ಆಗ ದೂತನು ನನಗೆ, “ಭೂಮಿಯ ಮೇಲೆಲ್ಲಾ ಹರಡುವ ಶಾಪವು ಇದೇ. ಈ ದಿಕ್ಕಿನಲ್ಲಿ ಬರೆದಿರುವ ಪ್ರಕಾರ ಕಳ್ಳತನ ಮಾಡುವವರೆಲ್ಲರನ್ನು ತೆಗೆದುಹಾಕಲಾಗುವುದು. ಸುಳ್ಳಾಣೆ ಇಡುವವರೆಲ್ಲರನ್ನು ಆ ಕಡೆಯಲ್ಲಿ ಬರೆದಿರುವ ಪ್ರಕಾರ ತೆಗೆದುಹಾಕಲಾಗುವುದು.
ZEC 5:4 ‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”
ZEC 5:5 ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, “ನಿನ್ನ ಕಣ್ಣೆತ್ತಿ ಹೊರಡುವಂಥದ್ದು ಏನೆಂದು ನೋಡು,” ಎಂದು ನನಗೆ ಹೇಳಿದನು.
ZEC 5:6 ನಾನು, “ಇದೇನು?” ಎಂದು ಕೇಳಿದಾಗ, ಅವನು, “ಇದು ಅಳೆಯುವ ಬುಟ್ಟಿ,” ಎಂದನು. ಇದಲ್ಲದೆ ಅವನು, “ಇದೇ ಸಮಸ್ತ ಭೂಮಿಯಲ್ಲಿಯ ಜನರ ಅಧರ್ಮವು,” ಎಂದನು.
ZEC 5:7 ಸೀಸದ ಮುಚ್ಚಳವು ತೆಗೆಯಲಾಯಿತು. ಆ ಬುಟ್ಟಿಯಲ್ಲಿ ಒಬ್ಬ ಸ್ತ್ರೀ ಕುಳಿತುಕೊಂಡಿದ್ದಳು.
ZEC 5:8 ಆತನು, “ಇದು ದುಷ್ಟತ್ವವು,” ಎಂದು ಹೇಳಿ ಆಕೆಯನ್ನು ಬುಟ್ಟಿಯಲ್ಲಿ ಪುನಃ ಅದುಮಿ, ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.
ZEC 5:9 ಆಗ ನಾನು ಕಣ್ಣೆತ್ತಿ ನೋಡಿದಾಗ, ಇಬ್ಬರು ಸ್ತ್ರೀಯರು ಇದ್ದರು. ಅವರ ರೆಕ್ಕೆಗಳು ರಭಸವಾಗಿದ್ದವು. ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು. ಅವರು ಆಕಾಶ ಮತ್ತು ಭೂಮಿಯ ನಡುವೆ ಬುಟ್ಟಿಯನ್ನು ಎತ್ತಿದರು.
ZEC 5:10 ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, “ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?” ಎಂದೆನು.
ZEC 5:11 ದೂತನು ನನಗೆ, “ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿತವಾಗಿ, ತನ್ನ ಸ್ಥಾನದಲ್ಲಿ ಇರಿಸಲಾಗುವುದು,” ಎಂದನು.
ZEC 6:1 ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು.
ZEC 6:2 ಮೊದಲನೆಯ ರಥಕ್ಕೆ ಕೆಂಪು ಕುದುರೆಗಳಿದ್ದವು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು,
ZEC 6:3 ಮೂರನೆಯ ರಥಕ್ಕೆ ಬಿಳಿ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಕುದುರೆಗಳಿದ್ದವು. ಇವೆಲ್ಲವೂ ಬಲವಾದ ಕುದುರೆಗಳು.
ZEC 6:4 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇದೇನು?” ಎಂದೆನು.
ZEC 6:5 ದೂತನು ನನಗೆ, “ಇವು ಸ್ವರ್ಗದ ನಾಲ್ಕು ಆತ್ಮಗಳು. ಇವು ಇಡೀ ಜಗತ್ತಿನ ಕಡೆಗೆ ಯೆಹೋವ ದೇವರ ಮುಂದೆ ನಿಂತಲ್ಲಿಂದ ಹೊರಟಿವೆ.
ZEC 6:6 ಕಪ್ಪು ಕುದುರೆಗಳ ರಥ, ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳು ಪಶ್ಚಿಮಕ್ಕೆ ಹಿಂದೆ ಹೋಯಿತು. ಮಚ್ಚೆ ಮಚ್ಚೆಯ ಕುದುರೆಯ ರಥ ದಕ್ಷಿಣಕ್ಕೆ ಹೊರಟಿತು.”
ZEC 6:7 ಕೆಂಪು ಕುದುರೆಗಳ ರಥ ಹೊರಟು ಲೋಕದಲ್ಲಿ ಸಂಚಾರ ಮಾಡಲು ಹೋಗುವುದಕ್ಕೆ ನೋಡಿದವು. ಆಗ ಅವನು, “ಹೋಗಿ ಲೋಕದಲ್ಲಿ ಅತ್ತಿತ್ತ ನಡೆದಾಡುವುದಕ್ಕೆ ಇಲ್ಲಿಂದ ಹೋಗಿರಿ,” ಎಂದನು. ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
ZEC 6:8 ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.
ZEC 6:9 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
ZEC 6:10 “ಆ ಸೆರೆಯವರಿಂದ, ಅಂದರೆ ಬಾಬಿಲೋನಿನಿಂದ ಬಂದಿರುವ ಹೆಲ್ದಾಯನಿಂದಲೂ, ತೋಬೀಯನಿಂದಲೂ, ಯೆದಾಯನಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು, ಅದೇ ದಿವಸದಲ್ಲಿ ನೀನು ಜೆಫನ್ಯನ ಮಗ ಯೋಷೀಯನ ಮನೆಗೆ ಹೋಗು.
ZEC 6:11 ಅಲ್ಲಿ ಬೆಳ್ಳಿ, ಬಂಗಾರವನ್ನು ತೆಗೆದುಕೊಂಡು, ಕಿರೀಟಗಳನ್ನು ಮಾಡಿ, ಅವುಗಳನ್ನು ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನ ತಲೆಯ ಮೇಲೆ ಇಟ್ಟು,
ZEC 6:12 ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.
ZEC 6:13 ಅವನೇ ಯೆಹೋವ ದೇವರ ದೇವಾಲಯವನ್ನು ಕಟ್ಟಿದ ಮೇಲೆ, ರಾಜವೈಭವವನ್ನು ಧರಿಸಿ ಸಿಂಹಾಸನದ ಮೇಲೆ ಆಸೀನನಾಗಿ ಆಳುವನು. ಅವನ ಸಿಂಹಾಸನದಲ್ಲಿ ಒಬ್ಬ ಯಾಜಕನಾಗಿರುವನು. ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವುದು.
ZEC 6:14 ಆ ಕಿರೀಟಗಳು ಹೇಲೆಮ್, ತೋಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ ಇವರ ಜ್ಞಾಪಕಾರ್ಥವಾಗಿ ಯೆಹೋವ ದೇವರ ಆಲಯದಲ್ಲಿ ಇರುವುವು.
ZEC 6:15 ದೂರದಲ್ಲಿರುವವರು ಬಂದು ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಸಹಾಯ ಮಾಡುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ನೀವು ತಿಳಿಯುವಿರಿ. ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಜಾಗ್ರತೆಯಾಗಿ ಕಿವಿಗೊಟ್ಟರೆ, ಇದು ನೆರವೇರುವುದು.”
ZEC 7:1 ಅರಸನಾದ ದಾರ್ಯಾವೆಷನ ನಾಲ್ಕನೆಯ ವರ್ಷದಲ್ಲಿ ಒಂಬತ್ತನೆಯ ತಿಂಗಳಿನ ಅಂದರೆ ಕಿಸ್ಲೇವ್ ತಿಂಗಳಿನ ನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಬಂದಿತು.
ZEC 7:2 ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವರ ಮನುಷ್ಯರನ್ನೂ ಯೆಹೋವ ದೇವರ ಪ್ರಸನ್ನತೆಯನ್ನು ಕೋರಲು ದೇವಾಲಯಕ್ಕೆ ಕಳುಹಿಸಿದರು.
ZEC 7:3 ಆಗ ಸರ್ವಶಕ್ತರಾದ ಯೆಹೋವ ದೇವರ ಆಲಯದಲ್ಲಿದ್ದ ಯಾಜಕರ ಸಂಗಡ ಮತ್ತು ಪ್ರವಾದಿಗಳ ಸಂಗಡ ನಾನು ಮಾತನಾಡಿ, “ಇಷ್ಟು ವರ್ಷ ಮಾಡಿದ ಪ್ರಕಾರ, ಐದನೆಯ ತಿಂಗಳಿನಲ್ಲಿ ಉಪವಾಸವಿದ್ದು, ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.
ZEC 7:4 ಆಗ ಸರ್ವಶಕ್ತರಾದ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ,
ZEC 7:5 “ದೇಶದ ಜನರೆಲ್ಲರಿಗೂ, ಯಾಜಕರಿಗೂ ಹೀಗೆ ಹೇಳು: ‘ನೀವು ಈ ಎಪ್ಪತ್ತು ವರ್ಷಗಳು ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸ ಮಾಡಿ, ದುಃಖಿಸುತ್ತಿದ್ದಾಗ, ಆ ನಿಮ್ಮ ಉಪವಾಸವು ನಿಜವಾಗಿಯೂ ನನಗಾಗಿ ಮಾಡಿದ್ದೀರೋ?
ZEC 7:6 ನೀವು ಉಂಡು ಕುಡಿಯುತ್ತಿದ್ದಾಗ, ನಿಮಗಾಗಿಯೇ ಉಂಡು ಕುಡಿದಿರಲ್ಲಾ?
ZEC 7:7 ಯೆರೂಸಲೇಮು, ಅದರ ಸುತ್ತಲಿನ ಪಟ್ಟಣಗಳೂ ನಿವಾಸಿಗಳುಳ್ಳವುಗಳಾಗಿಯೂ, ಸುಖವಾಗಿಯೂ, ಸಮೃದ್ಧಿಯಾಗಿಯೂ ದಕ್ಷಿಣವೂ, ಪಶ್ಚಿಮ ನಿವಾಸಿಗಳುಳ್ಳವುಗಳಾಗಿಯೂ ಇದ್ದಾಗ, ಯೆಹೋವ ದೇವರು ಪೂರ್ವದ ಪ್ರವಾದಿಗಳ ಮೂಲಕ ಸಾರಿದ ಮಾತುಗಳು ಅವು ಅಲ್ಲವೋ?’ ಎಂಬುದು.”
ZEC 7:8 ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಪುನಃ ಬಂದು ಹೇಳಿದ್ದೇನೆಂದರೆ,
ZEC 7:9 “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಪ್ರೀತಿಯನ್ನೂ, ಕನಿಕರವನ್ನೂ ತೋರಿಸಿರಿ;
ZEC 7:10 ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ ” ಎಂಬುದು.
ZEC 7:11 “ಆದರೆ ಅವರು ಕೇಳುವುದಕ್ಕೆ ನಿರಾಕರಿಸಿದರು. ಅವರು ಬೆನ್ನನ್ನು ತಿರುಗಿಸಿ, ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದ ಮಾಡಿಕೊಂಡರು.
ZEC 7:12 ಅವರು ನಿಯಮವನ್ನೂ, ಸರ್ವಶಕ್ತದರಾದ ಯೆಹೋವ ದೇವರು ತಮ್ಮ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯಗಳನ್ನೂ ಕೇಳದ ಹಾಗೆ, ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಕಠಿಣಮಾಡಿಕೊಂಡರು. ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರ ಮಹಾಕೋಪಕ್ಕೆ ಗುರಿಯಾದರು.
ZEC 7:13 “ಆಗ, ‘ನಾನು ಕೂಗಲು, ಅವರು ಕೇಳದೆ ಇದ್ದ ಪ್ರಕಾರ, ಅವರು ಕೂಗಲು ನಾನು ಕೇಳದೆ ಇದ್ದೇನೆಂದು,’ ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
ZEC 7:14 ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರಗಾಳಿಯಿಂದ ಚದರಿಸಿ ಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು. ಹಾದು ಹೋಗುವವನೂ, ತಿರುಗಿಕೊಳ್ಳುವವನೂ ಇಲ್ಲದೆ ಹೋಯಿತು. ಏಕೆಂದರೆ ರಮ್ಯವಾದ ದೇಶವನ್ನು ಹಾಳುಮಾಡಿದರು.”
ZEC 8:1 ಯೆಹೋವ ದೇವರ ವಾಕ್ಯವು ನನಗೆ ಪುನಃ ಉಂಟಾಗಿ ಹೇಳಿದ್ದೇನೆಂದರೆ,
ZEC 8:2 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೇನೆ. ಅತಿ ಉಗ್ರದಿಂದ ಅವಳ ವಿಷಯದಲ್ಲಿ ರೋಷವುಳ್ಳವನಾಗಿದ್ದೇನೆ.”
ZEC 8:3 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಚೀಯೋನಿಗೆ ನಾನು ತಿರುಗಿಕೊಂಡು, ನಾನು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು. ಆಗ ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೇನಾಧೀಶ್ವರ ಯೆಹೋವ ದೇವರ ಪರ್ವತವು ಪರಿಶುದ್ಧ ಪರ್ವತವೆಂದೂ ಕರೆಯಿಸಿಕೊಳ್ಳುವುದು.”
ZEC 8:4 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ವೃದ್ಧರೂ, ಮುದುಕಿಯರೂ ವಾಸವಾಗಿರುವರು. ವೃದ್ದಾಪ್ಯದಿಂದ ಒಬ್ಬೊಬ್ಬರ ಕೈಯಲ್ಲಿ ಅವರವರ ಕೋಲು ಇರುವುದು.
ZEC 8:5 ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವುದು.”
ZEC 8:6 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇದು ಈ ದಿವಸಗಳಲ್ಲಿ ಉಳಿದ ಈ ಜನರ ದೃಷ್ಟಿಗೆ ಆಶ್ಚರ್ಯವಾಗಿ ತೋರಿದರೂ, ನನ್ನ ಕಣ್ಣುಗಳಿಗೆ ಸಹ ಆಶ್ಚರ್ಯವಾಗಿ ತೋರುವುದೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ZEC 8:7 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ನನ್ನ ಜನರನ್ನು ಪೂರ್ವದಿಕ್ಕಿನ ದೇಶದಿಂದಲೂ, ಪಶ್ಚಿಮ ದೇಶದಿಂದಲೂ ರಕ್ಷಿಸುವೆನು.
ZEC 8:8 ನಾನು ಅವರನ್ನು ತರುವೆನು. ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು. ನಾನು ಅವರಿಗೆ ನಂಬಿಗಸ್ತನೂ, ನೀತಿವಂತನೂ ಆದ ದೇವರಾಗಿರುವೆನು.”
ZEC 8:9 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ದೇವಾಲಯವನ್ನು ಕಟ್ಟುವ ಹಾಗೆ ಸೇನಾಧೀಶ್ವರ ಯೆಹೋವ ದೇವರ ಆಲಯದ ಅಸ್ತಿವಾರವು ಹಾಕಲಾದ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ.
ZEC 8:10 ಏಕೆಂದರೆ ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ದುಡಿತವಿರಲಿಲ್ಲ; ಇಲ್ಲವೆ ಹೋಗುವವನಿಗೂ, ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾಧಾನವಿರಲಿಲ್ಲ. ನಾನು ಪ್ರತಿಯೊಬ್ಬನನ್ನು ಅವರ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೇನೆ.
ZEC 8:11 ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ZEC 8:12 ಬೀಜವು ವೃದ್ಧಿಯಾಗುವುದು. ದ್ರಾಕ್ಷಿಬಳ್ಳಿ ತನ್ನ ಫಲವನ್ನು ಕೊಡುವುದು. ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವುದು. ಆಕಾಶಗಳು ತಮ್ಮ ಮಂಜನ್ನು ಕೊಡುವುವು. ಈ ಜನರಲ್ಲಿ ಉಳಿದವರು, ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳುವಂತೆ ಮಾಡುವೆನು.
ZEC 8:13 ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ, ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ, ಭಯಪಡಬೇಡಿರಿ, ನಿಮ್ಮ ಕೈಗಳು ಬಲವಾಗಿರಲಿ.
ZEC 8:14 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಪಿತೃಗಳು ನನಗೆ ಸಿಟ್ಟು ಎಬ್ಬಿಸಿದಾಗ ನಾನು ನಿಮ್ಮನ್ನು ಕರುಣಿಸದೆ, ವಿನಾಶವನ್ನು ಬರಮಾಡಲು ಯೋಚಿಸಿದೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ZEC 8:15 “ಆದರೆ ಈಗ ನಾನು ತಿರುಗಿ ಈ ದಿವಸಗಳಲ್ಲಿ ಪುನಃ ಯೆರೂಸಲೇಮಿಗೂ, ಯೆಹೂದದ ಮನೆತನದವರಿಗೂ ಒಳ್ಳೆಯದನ್ನು ಮಾಡಲು ಯೋಚಿಸಿದ್ದೇನೆ. ನೀವು ಭಯಪಡಬೇಡಿರಿ.
ZEC 8:16 ನೀವು ಮಾಡತಕ್ಕ ಕಾರ್ಯಗಳು ಇವೇ: ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಮಾತನಾಡಲಿ. ನಿಮ್ಮ ನ್ಯಾಯಾಲಯಗಳಲ್ಲಿ ಸತ್ಯವೂ ನ್ಯಾಯವೂ ಶಾಂತಿಯ ಸಾಧನವಾಗಿರಲಿ.
ZEC 8:17 ನಿಮ್ಮ ಹೃದಯಗಳಲ್ಲಿ ನೆರೆಯವನ ವಿರುದ್ಧವಾಗಿ ಕೇಡನ್ನು ಕಲ್ಪಿಸದಿರಿ. ಸುಳ್ಳು ಪ್ರಮಾಣವನ್ನು ಪ್ರೀತಿಸಬೇಡಿರಿ. ಏಕೆಂದರೆ ಇವುಗಳನ್ನೆಲ್ಲಾ ನಾನು ಹಗೆಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ZEC 8:18 ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದು ಹೇಳಿದ್ದೇನೆಂದರೆ,
ZEC 8:19 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾಲ್ಕನೆಯ, ಐದನೆಯ, ಏಳನೆಯ, ಹತ್ತನೆಯ ತಿಂಗಳಿನ ಉಪವಾಸವು ಯೆಹೂದದ ಮನೆತನದವರಿಗೆ ಸಂತೋಷಕರ, ಸಂಭ್ರಮ ಕಾಲವೂ, ಆನಂದಕರವಾದ ಹಬ್ಬಗಳೂ ಆಗುವುವು. ಆದರೆ ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.”
ZEC 8:20 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅನೇಕ ಜನರೂ, ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನೂ ಬರುವರು.
ZEC 8:21 ಒಂದು ಪಟ್ಟಣದ ನಿವಾಸಿಗಳು ಮತ್ತೊಂದಕ್ಕೆ ಹೋಗಿ, ‘ನಾವು ಯೆಹೋವ ದೇವರ ಮುಂದೆ ಬೇಡಿಕೊಳ್ಳುವುದಕ್ಕೂ, ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕುವುದಕ್ಕೂ ಬೇಗ ಹೋಗೋಣ. ನಾನು ಕೂಡ ಹೋಗುತ್ತೇನೆ,’ ಎಂದು ಹೇಳುವರು.
ZEC 8:22 ಅನೇಕ ಜನರೂ, ಬಲವಾದ ಜನಾಂಗಗಳೂ ಯೆರೂಸಲೇಮಿಗೆ ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕುವುದಕ್ಕೂ, ಯೆಹೋವ ದೇವರ ಮುಂದೆ ಬೇಡಿಕೊಳ್ಳುವುದಕ್ಕೂ ಬರುವುವು.”
ZEC 8:23 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಆ ದಿವಸಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು, ನಾವು ನಿಮ್ಮ ಸಂಗಡ ಬರುತ್ತೇವೆ, ಏಕೆಂದರೆ ನಿಮ್ಮ ಸಂಗಡ ದೇವರು ಇದ್ದಾರೆಂದು ಕೇಳಿದ್ದೇವೆ,” ಎಂದು ಹೇಳುವರು.
ZEC 9:1 ಒಂದು ಪ್ರವಾದನೆ: ಹದ್ರಾಕ್ ದೇಶದ ವಿಷಯವಾದ ಯೆಹೋವ ದೇವರ ವಾಕ್ಯ: ಅದು ದಮಸ್ಕದಲ್ಲಿ ತಂಗುವುದು. ಮನುಷ್ಯನ ಕಣ್ಣುಗಳು, ಇಸ್ರಾಯೇಲಿನ ಎಲ್ಲಾ ಗೋತ್ರಗಳು ಯೆಹೋವ ದೇವರ ಮೇಲೆ ಇರುವುವು.
ZEC 9:2 ಹಮಾತು, ಬಹಳ ಜ್ಞಾನವಿರುವ ಟೈರ್, ಸೀದೋನ್ ಸಹ ಅದರ ಮೇರೆಯಾಗಿದೆ.
ZEC 9:3 ಟೈರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು, ಬೆಳ್ಳಿಯನ್ನು ಧೂಳಿನಂತೆಯೂ, ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
ZEC 9:4 ಯೆಹೋವ ದೇವರು ಅದರ ಆಸ್ತಿಪಾಸ್ತಿಯನ್ನು ಕಿತ್ತುಹಾಕುವರು. ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು. ಅದು ಬೆಂಕಿಯಿಂದ ದಹಿಸಿಬಿಡುವುದು.
ZEC 9:5 ಅಷ್ಕೆಲೋನು ಕಂಡು ಭಯಪಡುವುದು, ಗಾಜವು ಸಹ ಅದನ್ನು ಕಂಡು ವೇದನೆ ಪಡುವುದು. ಎಕ್ರೋನಿಗೂ ಸಹ ಹೀಗೆ ಆಗುವುದು. ಏಕೆಂದರೆ ಅವಳ ನಿರೀಕ್ಷೆಯು ಬಾಡುವುದು. ಗಾಜದೊಳಗಿಂದ ಅರಸನು ನಾಶವಾಗುವನು. ಅಷ್ಕೆಲೋನು ನಿವಾಸ ಇಲ್ಲದೆ ಇರುವುದು.
ZEC 9:6 ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಿಸುವರು. ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು.
ZEC 9:7 ಅವರ ರಕ್ತವನ್ನು ಅವರ ಬಾಯೊಳಗಿಂದಲೂ, ಅವರು ಕಚ್ಚುವ ಅಸಹ್ಯ ಪದಾರ್ಥಗಳನ್ನು ನಾನು ತೆಗೆದುಹಾಕಿಬಿಡುವೆನು. ಅವರು ಸಹ ನಮ್ಮ ದೇವರಿಗಾಗಿ ಉಳಿಯುವರು. ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವರು. ಎಕ್ರೋನು ಯೆಬೂಸಿಯನ ಹಾಗೆ ಇರುವರು.
ZEC 9:8 ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ, ಸೈನ್ಯದ ನಿಮಿತ್ತವೂ ನನ್ನ ಆಲಯದ ಹತ್ತಿರ ಪಾಳೆಯ ಮಾಡುತ್ತೇನೆ. ಇನ್ನು ಮೇಲೆ ಉಪದ್ರವ ಕೊಡುವವನು, ಅವರ ಮೇಲೆ ಹಾದು ಹೋಗುವುದಿಲ್ಲ. ಏಕೆಂದರೆ ಈಗ ನನ್ನ ಕಣ್ಣುಗಳಿಂದ ನೋಡುತ್ತಿದ್ದೇನೆ.
ZEC 9:9 ಚೀಯೋನ್ ಪುತ್ರಿಯೇ, ಮಹಾ ಉಲ್ಲಾಸಪಡು. ಯೆರೂಸಲೇಮಿನ ಪುತ್ರಿಯೇ ಆರ್ಭಟಿಸು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ. ಆತನು ನೀತಿವಂತನಾಗಿಯೂ ಜಯಹೊಂದಿದವನಾಗಿಯೂ, ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾನೆ.
ZEC 9:10 ಎಫ್ರಾಯೀಮಿನೊಳಗಿಂದ ರಥಗಳನ್ನೂ ಯೆರೂಸಲೇಮಿನೊಳಗಿಂದ ಯುದ್ಧದ ಕುದುರೆಗಳನ್ನೂ ತೆಗೆದುಬಿಡುವೆನು. ಯುದ್ಧದ ಬಿಲ್ಲು ಸಹ ಮುರಿದು ಹಾಕಲಾಗುವುದು. ಇತರ ರಾಷ್ಟ್ರಗಳಿಗೆ ಸಮಾಧಾನಕರವಾಗಿರುವುದು. ಆತನ ದೊರೆತನವು ಸಮುದ್ರದಿಂದ ಸಮುದ್ರಕ್ಕೂ, ನದಿಯಿಂದ ಭೂಮಿಯ ಅಂತ್ಯಗಳವರೆಗೂ ಇರುವುದು.
ZEC 9:11 ನೀನು ನನ್ನೊಡನೆ ಒಡಂಬಡಿಕೆಯನ್ನು ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ ನಿನ್ನ ಸೆರೆಯವರನ್ನು ನೀರಿಲ್ಲದ ಬಾವಿಯೊಳಗಿಂದ ಬಿಡುಗಡೆಮಾಡುವೆನು.
ZEC 9:12 ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರುಗಿರಿ. ಎರಡರಷ್ಟು ಕೊಡುವೆನೆಂದು ನಿನಗೆ ಈ ಹೊತ್ತೇ ಪ್ರಕಟಿಸುತ್ತೇನೆ.
ZEC 9:13 ನಾನು ನನ್ನ ಬಿಲ್ಲನ್ನು ಬಗ್ಗಿಸುವಂತೆ ಯೆಹೂದವನ್ನು ಬಗ್ಗಿಸುತ್ತೇನೆ. ಎಫ್ರಾಯೀಮಿನಿಂದ ಅದನ್ನು ತುಂಬಿಸುತ್ತೇನೆ. ಚೀಯೋನೇ, ನಿನ್ನ ಪುತ್ರರನ್ನು ಗ್ರೀಕ್ ಪುತ್ರರ ವಿರೋಧವಾಗಿ ಎಬ್ಬಿಸಿ, ನಿನ್ನನ್ನು ಶೂರನ ಖಡ್ಗದಂತೆ ಮಾಡಿದ್ದೇನೆ.
ZEC 9:14 ಇದಲ್ಲದೆ ಯೆಹೋವ ದೇವರು ಅವರ ಮೇಲೆ ಕಾಣಿಸಿಕೊಳ್ಳುವರು. ಆತನ ಬಾಣಗಳು ಮಿಂಚಿನ ಹಾಗೆ ಹೊರಡುವುವು. ಸಾರ್ವಭೌಮ ಯೆಹೋವ ದೇವರು ತುತೂರಿಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗುವರು.
ZEC 9:15 ಸೇನಾಧೀಶ್ವರ ಯೆಹೋವ ದೇವರು ಅವರನ್ನು ಕಾಪಾಡುವರು. ಅವರು ನಾಶಮಾಡಿ, ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿಕೊಳ್ಳುವರು. ಕುಡಿದು, ದ್ರಾಕ್ಷಾರಸದಿಂದಾದ ಹಾಗೆ ತೂಗಾಡುವರು. ಅವರು ಬಲಿಪೀಠದ ಮೂಲೆಗಳಿಗೆ ಚಿಮುಕಿಸಲು ಬಳಸುವ ಪಾತ್ರೆಯ ಹಾಗೆಯೂ ತುಂಬಿರುವರು.
ZEC 9:16 ಅವರ ದೇವರಾದ ಯೆಹೋವ ದೇವರು ಆ ದಿವಸದಲ್ಲಿ, ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು, ಅವರು ಕಿರೀಟದ ರತ್ನಗಳಂತೆ ಆತನ ದೇಶದಲ್ಲಿ ಹೊಳೆಯುವರು.
ZEC 9:17 ಅವರ ಒಳ್ಳೆಯತನವು ಎಷ್ಟೋ ದೊಡ್ಡದು. ಅವರು ಸೌಂದರ್ಯವು ಎಷ್ಟು ಮಹತ್ತಾದದ್ದು! ಧಾನ್ಯವು ಯೌವನಸ್ಥರನ್ನೂ, ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವುವು.
ZEC 10:1 ಯೆಹೋವ ದೇವರಿಂದ ಹಿಂಗಾರು ಮಳೆಯ ಕಾಲದಲ್ಲಿ, ಮಳೆಯನ್ನು ಬೇಡಿಕೊಳ್ಳಿರಿ. ಹೀಗೆ ಯೆಹೋವ ದೇವರು ಮಿಂಚುವ ಮೋಡಗಳನ್ನು ಮಾಡಿ, ಅವರಿಗೆ ಸಮೃದ್ಧಿಯಾದ ಮಳೆಯನ್ನೂ, ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವರು.
ZEC 10:2 ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು. ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು. ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ. ವ್ಯರ್ಥವಾಗಿ ಆದರಿಸುತ್ತಾರೆ, ಆದ್ದರಿಂದ ಕುರಿಗಳಂತೆ ಚದರಿದ್ದಾರೆ, ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
ZEC 10:3 “ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯುತ್ತಿದೆ. ನಾಯಕರನ್ನು ದಂಡಿಸುವೆನು. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ತಮ್ಮ ಮಂದೆಯಾಗಿರುವ ಯೆಹೂದನ ಮನೆತನದವರನ್ನು ಪರಿಪಾಲಿಸಿ, ಅವರನ್ನು ಯುದ್ಧದಲ್ಲಿ ತಮ್ಮ ಘನವಾದ ಕುದುರೆಯ ಹಾಗೆ ಮಾಡಿದ್ದಾರೆ.
ZEC 10:4 ಆ ಕುಲದಿಂದಲೇ ಮೂಲೆಗಲ್ಲೂ, ಗುಡಾರದ ಮೊಳೆಯೂ, ಯುದ್ಧದ ಬಿಲ್ಲೂ, ಸಕಲ ಅಧಿಕಾರಿಗಳೂ ಕೂಡಿಕೊಂಡು ಹೊರಬರುವರು.
ZEC 10:5 ಅವರು ಯುದ್ಧದಲ್ಲಿ ಶತ್ರುವನ್ನು ಕೆಸರಿನ ಬೀದಿಗಳಲ್ಲಿ ತುಳಿಯುವ ಶೂರರ ಹಾಗಿರುವರು. ಯೆಹೋವ ದೇವರು ಅವರ ಸಂಗಡ ಇರುವುದರಿಂದ ಯುದ್ಧಮಾಡುವರು. ಕುದುರೆಗಳ ಮೇಲೆ ಸವಾರಿ ಮಾಡುವ ಶತ್ರುವನ್ನು ನಾಚಿಕೆ ಪಡಿಸುವರು.
ZEC 10:6 “ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು. ಅವರನ್ನು ಕನಿಕರಿಸುವುದರಿಂದ ಅವರನ್ನು ತಿರುಗಿ ಬರಮಾಡುವೆನು. ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು. ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು, ಅವರಿಗೆ ಉತ್ತರಕೊಡುವೆನು.
ZEC 10:7 ಎಫ್ರಾಯೀಮಿನವರು ಶೂರರಂತೆ ಇರುವರು. ಅವರ ಹೃದಯವು ದ್ರಾಕ್ಷಾರಸ ಕುಡಿದವರಂತೆ ಸಂತೋಷಪಡುವುದು. ಅವರ ಮಕ್ಕಳು ಇದನ್ನು ಕಂಡು ಸಂತೋಷಿಸುವರು. ಅವರ ಹೃದಯವು ಯೆಹೋವ ದೇವರಲ್ಲಿ ಆನಂದಿಸುವುದು.
ZEC 10:8 ನಾನು ಅವರಿಗೆ ಸಿಳ್ಳುಹಾಕಿ, ಅವರನ್ನು ಕೂಡಿಸುವೆನು. ನಿಶ್ಚಯವಾಗಿ ಅವರನ್ನು ವಿಮೋಚಿಸಿದ್ದೇನೆ. ಅವರು ಹಿಂದಿನಂತೆ ಮುಂದೆಯೂ ಸಮೃದ್ಧಿಯಾಗಿರುವರು.
ZEC 10:9 ನಾನು ಅವರನ್ನು ಜನಗಳಲ್ಲಿ ಚದುರಿಸಿದರೂ ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು.
ZEC 10:10 ಈಜಿಪ್ಟ್ ದೇಶದೊಳಗಿಂದ ಸಹ ಅವರನ್ನು ತಿರುಗಿ ತರುವೆನು. ಅಸ್ಸೀರಿಯದೊಳಗಿಂದ ಅವರನ್ನು ಕೂಡಿಸುವೆನು. ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು. ಅವರಿಗೆ ಸ್ಥಳ ಸಾಲದೆ ಇರುವುದು.
ZEC 10:11 ಅವರು ಕಷ್ಟವೆಂಬ ಕಡಲನ್ನು ದಾಟುವರು. ಸಮುದ್ರದಲ್ಲಿ ತೆರೆಗಳನ್ನು ಬಡಿಯುವರು. ನೈಲ್ ನದಿಯ ಅಗಾಧಗಳೆಲ್ಲಾ ಒಣಗುವುವು. ಅಸ್ಸೀರಿಯದ ಗರ್ವವು ತಗ್ಗಿಹೋಗುವುದು. ಈಜಿಪ್ಟಿನ ರಾಜದಂಡವು ಗತಿಸುವುದು.
ZEC 10:12 ಯೆಹೋವ ದೇವರಲ್ಲಿ ನಾನು ಅವರನ್ನು ಬಲಪಡಿಸುವೆನು. ದೇವರ ಹೆಸರಿನಲ್ಲಿ ಅವರು ಸುರಕ್ಷಿತರಾಗಿ ಬಾಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
ZEC 11:1 ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ, ನಿನ್ನ ಬಾಗಿಲುಗಳನ್ನು ತೆರೆ.
ZEC 11:2 ತುರಾಯಿ ಗಿಡವೇ, ಗೋಳಾಡು. ಏಕೆಂದರೆ ದೇವದಾರು ಬಿದ್ದುಹೋಯಿತು. ಭವ್ಯವಾದ ಮರಗಳು ಹಾಳಾದವು. ಬಾಷಾನಿನ ಅಲ್ಲೋನ್ ಮರಗಳೇ, ಗೋಳಾಡಿರಿ. ದಟ್ಟವಾದ ಅಡವಿಯು ಕಡಿಯಲಾಗಿದೆ.
ZEC 11:3 ಕುರುಬರ ಗೋಳಾಟವನ್ನು ಕೇಳಿರಿ, ಅವರ ಸೊಂಪಾದ ಹುಲ್ಲುಗಾವಲುಗಳು ಹಾಳಾಗಿವೆ ಪ್ರಾಯದ ಸಿಂಹಗಳು ಗರ್ಜಿಸುವ ಶಬ್ದ ಕೇಳಿಸುತ್ತಿದೆ, ಯೊರ್ದನಿನ ದಟ್ಟವಾದ ಪೊದೆಗಳು ನಾಶವಾಗಿವೆ.
ZEC 11:4 ನನ್ನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹತ್ಯೆಗಾಗಿ ಗುರುತಿಸಲಾಗಿರುವ ಮಂದೆಯನ್ನು ಮೇಯಿಸು.
ZEC 11:5 ಅವುಗಳನ್ನು ಕೊಂಡುಕೊಳ್ಳುವವರು, ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ. ಅವುಗಳನ್ನು ಮಾರುವವರು, ‘ನಾನು ಐಶ್ವರ್ಯವಂತನಾದೆನು, ಯೆಹೋವ ದೇವರಿಗೆ ಸ್ತೋತ್ರ,’ ಎಂದೆನ್ನುತ್ತಾರೆ. ಅವರ ಸ್ವಂತ ಕುರುಬರೂ ಅವುಗಳನ್ನು ಕನಿಕರಿಸುವುದಿಲ್ಲ.
ZEC 11:6 ಏಕೆಂದರೆ ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವುದೇ ಇಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೆ ನಾನು ಒಬ್ಬೊಬ್ಬನನ್ನು ಅವನವನ ನೆರೆಯವನ ಕೈಗೂ, ಅವನ ಅರಸನ ಕೈಗೂ ಒಪ್ಪಿಸುವೆನು. ಅವರು ದೇಶವನ್ನು ಧ್ವಂಸಮಾಡುವರು. ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವುದಿಲ್ಲ.”
ZEC 11:7 ಆಗ ಹತ್ಯೆಗಾಗಿ ಗುರುತಿಸಲಾಗಿರುವ ಮಂದೆಯನ್ನು, ವಿಶೇಷವಾಗಿ ಬಡವಾದ ಮಂದೆಯನ್ನು ಮೇಯಿಸಿದೆನು. ನಾನು ಎರಡು ಕೋಲುಗಳನ್ನು ತೆಗೆದುಕೊಂಡೆನು. ಒಂದಕ್ಕೆ “ಕೃಪೆ” ಎಂದೂ ಮತ್ತೊಂದಕ್ಕೆ “ಐಕ್ಯ” ಎಂದು ಹೆಸರಿಟ್ಟೆನು. ಹೀಗೆ ಮಂದೆಯನ್ನು ಮೇಯಿಸಿದೆನು.
ZEC 11:8 ಇದಲ್ಲದೆ, ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು. ಮಂದೆಯು ನನ್ನನ್ನು ಅಸಹ್ಯಪಡಿಸಿತು, ಮತ್ತು ಅವುಗಳಿಂದ ನನಗೆ ಬೇಸರವಾಯಿತು.
ZEC 11:9 ಆಗ ನಾನು, “ನಾನು ನಿಮ್ಮನ್ನು ಮೇಯಿಸುವುದಿಲ್ಲ, ಸಾಯುವಂಥದ್ದು ಸಾಯಲಿ, ಕೆಡುವಂಥದ್ದು ಕೆಡಲಿ, ಮಿಕ್ಕಾದವುಗಳು ಒಂದರ ಮಾಂಸವನ್ನು ಒಂದು ತಿನ್ನಲಿ,” ಎಂದು ಹೇಳಿದೆನು.
ZEC 11:10 ಆಗ “ಕೃಪೆ” ಎಂಬ ನನ್ನ ಕೋಲನ್ನು ತೆಗೆದುಕೊಂಡು ಅದನ್ನು ಮುರಿದುಬಿಟ್ಟೆನು. ಹೀಗೆ ಎಲ್ಲಾ ಜನಾಂಗಗಳ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ರದ್ದುಗೊಳಿಸಿದೆನು.
ZEC 11:11 ಅದೇ ದಿವಸದಲ್ಲಿ ಅದು ರದ್ದುಗೊಂಡಿತು. ಆಗ ನನ್ನನ್ನು ನೋಡಿಕೊಳ್ಳುತ್ತಿದ್ದ ಬಡ ಕುರಿ ಮಂದೆಯು, ಅದು ಯೆಹೋವ ದೇವರ ವಾಕ್ಯವೆಂದು ತಿಳಿದುಕೊಂಡಿತು.
ZEC 11:12 ನಾನು ಅವರಿಗೆ, “ಇದು ನಿಮ್ಮ ಕಣ್ಣುಗಳಲ್ಲಿ ಒಳ್ಳೆಯದಾಗಿ ತೋರಿದರೆ, ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ,” ಎಂದೆನು. ಆಗ ಅವರು ನನಗೆ ಸಂಬಳವಾಗಿ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
ZEC 11:13 ಆಗ ಯೆಹೋವ ದೇವರು ನನಗೆ, “ಅದನ್ನು ಕುಂಬಾರನಿಗೆ ಎಸೆ. ಅವರು ನನಗೆ ಕಟ್ಟಿದ ಬೆಲೆ ಸರಿಯಾಗಿದೆ,” ಎಂದನು. ಆಗ ನಾನು, ಆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, ಯೆಹೋವ ದೇವರ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಎಸೆದೆನು.
ZEC 11:14 ಆಗ ನನ್ನ ಎರಡನೆಯ ಕೋಲಾದ “ಐಕ್ಯ” ಎಂಬುದನ್ನು ಮುರಿದುಬಿಟ್ಟೆನು. ಹೀಗೆ ಯೆಹೂದಕ್ಕೂ, ಇಸ್ರಾಯೇಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.
ZEC 11:15 ಯೆಹೋವ ದೇವರು ನನಗೆ, “ಇನ್ನು ಬುದ್ಧಿಹೀನವಾದ ಕುರುಬನ ಆಯುಧಗಳನ್ನು ತೆಗೆದುಕೋ.
ZEC 11:16 ಏಕೆಂದರೆ ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು. ಅವನು ಕಳೆದುಹೋದ ಕುರಿಗಳ ಬಗ್ಗೆ ಕಾಳಜಿವಹಿಸುವುದಿಲ್ಲ ಮತ್ತು ಪ್ರಾಯದ ಕುರಿಗಳನ್ನು ಹುಡುಕುವುದಿಲ್ಲ, ಗಾಯಗೊಂಡದ್ದನ್ನು ಅವನು ಗುಣ ಮಾಡುವುದಿಲ್ಲ, ಇನ್ನೂ ಆರೋಗ್ಯದಿಂದಿರುವುದನ್ನು ಅವನು ಪೋಷಿಸುವುದಿಲ್ಲ. ಆದರೆ ಕೊಬ್ಬಿದವುಗಳ ಮಾಂಸವನ್ನು ತಿನ್ನುವನು. ಅವುಗಳ ಗೊರಸುಗಳನ್ನು ಮುರಿದು ಬಿಡುವನು.
ZEC 11:17 “ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಕಷ್ಟ! ಖಡ್ಗವು ಅವನ ತೋಳಿನ ಮೇಲೆಯೂ, ಅವನ ಬಲಗಣ್ಣಿನ ಮೇಲೆಯೂ ಇರುವುದು. ಅವನ ತೋಳು ಪೂರ್ತಿಯಾಗಿ ಒಣಗುವುದು. ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವುದು.”
ZEC 12:1 ಒಂದು ಪ್ರವಾದನೆ: ಇಸ್ರಾಯೇಲಿನ ವಿಷಯವಾಗಿ ಯೆಹೋವ ದೇವರ ವಾಕ್ಯ. ಆಕಾಶವನ್ನು ಹರಡಿಸುವಾತರೂ, ಭೂಮಿಯ ಅಸ್ತಿವಾರವನ್ನು ಹಾಕುವಾತರೂ, ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತರೂ ಆದ ಯೆಹೋವ ದೇವರು ಹೇಳುವುದೇನೆಂದರೆ,
ZEC 12:2 “ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ಅಮಲೇರಿಸಿ ಓಲಾಡಿಸುವ ಪಾತ್ರೆಯಾಗಿ ಮಾಡುತ್ತೇನೆ. ಯೆರೂಸಲೇಮಿಗೂ, ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವಾಗ
ZEC 12:3 ಆ ದಿವಸದಲ್ಲಿ, ಅವಳ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವಾಗ, ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಚಲಿಸಲಾಗದ ಕಲ್ಲಾಗಿ ಮಾಡುತ್ತೇನೆ. ಅದನ್ನು ತೆಗೆದುಹಾಕಲು ಪ್ರಯತ್ನಿಸುವವರೆಲ್ಲರು ತಮ್ಮನ್ನು ತಾವೇ ಗಾಯಗೊಳಿಸಿಕೊಳ್ಳುತ್ತಾರೆ.
ZEC 12:4 ಆ ದಿನದಲ್ಲಿ, ನಾನು ಅವರ ಕುದುರೆಗಳಿಗೆಲ್ಲಾ ತಬ್ಬಿಬ್ಬನ್ನು ಉಂಟುಮಾಡುವೆನು, ಅದರ ರಾಹುತರನ್ನು ಭ್ರಮೆಗೊಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. ಯೆಹೂದ ವಂಶವನ್ನು ಕಟಾಕ್ಷಿಸಿ ಜನಾಂಗಗಳ ಕುದುರೆಗಳನ್ನೆಲ್ಲಾ ಕುರುಡು ಮಾಡುವೆನು.
ZEC 12:5 ಆ ಯೆಹೂದದ ದೊರೆಗಳು ತಮ್ಮ ಹೃದಯದಲ್ಲಿ ಯೆರೂಸಲೇಮಿನ ನಿವಾಸಿಗಳ ಶಕ್ತಿ ಸಾಮರ್ಥ್ಯ, ತಮ್ಮ ಸೇನಾಧೀಶ್ವರ ಯೆಹೋವ ದೇವರಲ್ಲಿಯೇ ಎಂದುಕೊಳ್ಳುವರು.
ZEC 12:6 “ಆ ದಿವಸದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ, ಸಿವುಡುಗಳಲ್ಲಿರುವ ಬೆಂಕಿಯ ಪಂಜಿನ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ, ಎಡಗಡೆಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನೂ ನುಂಗಿಬಿಡುವರು. ಆದರೆ ಯೆರೂಸಲೇಮಿನವರು ತಿರುಗಿ ತನ್ನ ಸ್ಥಳದಲ್ಲಿ ಯೆರೂಸಲೇಮಿನಲ್ಲಿಯೇ ಸುರಕ್ಷಿತವಾಗಿ ವಾಸಿಸುವರು.
ZEC 12:7 “ಇದಲ್ಲದೆ ದಾವೀದನ ಮನೆಯ ಘನತೆಯೂ, ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ, ಯೆಹೋವ ದೇವರು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವರು.
ZEC 12:8 ಆ ದಿನದಲ್ಲಿ ಯೆಹೋವ ದೇವರು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವರು. ಆ ದಿವಸಗಳಲ್ಲಿ ಅವರಲ್ಲಿ ಅತ್ಯಂತ ಬಲಹೀನನು ದಾವೀದನಂತೆ ಬಲಾಢ್ಯನಾಗುವನು. ದಾವೀದನ ವಂಶವು ದೇವರ ಹಾಗೆಯೂ, ಮುಂದಾಳಾಗಿ ಯೆಹೋವ ದೇವರ ದೂತನ ಹಾಗೆಯೂ ಇರುವುದು.
ZEC 12:9 ಆ ದಿವಸದಲ್ಲಿ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶಮಾಡುವುದಕ್ಕೆ ನಾನು ಹುಡುಕುವೆನು.
ZEC 12:10 “ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನು ಮತ್ತು ಮೊರೆಯಿಡುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನು ಅವರು ದೃಷ್ಟಿಸಿನೋಡುವರು. ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ, ಆತನ ನಿಮಿತ್ತ ಗೋಳಾಡುವರು. ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆ ಪಡುವರು.
ZEC 12:11 ಆ ದಿವಸದಲ್ಲಿ ಯೆರೂಸಲೇಮಿನಲ್ಲಿ ದೊಡ್ಡ ಗೋಳಾಟವಿರುವುದು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೋನಿನ ಗೋಳಾಟದ ಹಾಗೆಯೇ.
ZEC 12:12 ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವುದು. ದಾವೀದನ ಮನೆಯ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ;
ZEC 12:13 ಲೇವಿಯರ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮೀಯನ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ.
ZEC 12:14 ಮತ್ತು ಉಳಿದ ಕುಲಗಳೆಲ್ಲಾ ಪ್ರತ್ಯೇಕವಾಗಿಯೂ, ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು.”
ZEC 13:1 “ಆ ದಿವಸದಲ್ಲಿ ದಾವೀದನ ಮನೆತನದವರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಅವರ ಪಾಪದಿಂದ ಮತ್ತು ಅಶುದ್ಧತೆಯಿಂದ ಶುದ್ಧೀಕರಿಸಲು ಒಂದು ಬುಗ್ಗೆಯು ತೆರೆಯಲಾಗುವುದು.
ZEC 13:2 “ಆ ದಿನದಲ್ಲಿ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು. ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಪ್ರವಾದಿಗಳನ್ನೂ, ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿಹೋಗುವಂತೆ ಮಾಡುವೆನು.
ZEC 13:3 ಯಾವನಾದರೂ ಇನ್ನು ಪ್ರವಾದಿಸಿದರೆ, ಅವನ ಹೆತ್ತವರಾದ ತಂದೆತಾಯಿಗಳು ಅವನಿಗೆ, ‘ನೀನು ಬದುಕಬಾರದು, ಏಕೆಂದರೆ ಯೆಹೋವ ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತೀ,’ ಎಂದು ಹೇಳುವರು. ಅವನು ಪ್ರವಾದಿಸುವಾಗ ಅವನ ತಂದೆತಾಯಿಗಳು ಅವನನ್ನು ಇರಿದುಬಿಡುವರು.
ZEC 13:4 “ಆ ದಿವಸದಲ್ಲಿ, ಪ್ರವಾದಿಗಳು ಪ್ರವಾದಿಸುವಾಗ, ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು. ಅವರು ಮೋಸಗೊಳಿಸಲು ಪ್ರವಾದಿಯ ಒರಟಾದ ವಸ್ತ್ರವನ್ನು ಧರಿಸುವುದಿಲ್ಲ.
ZEC 13:5 ಆದರೆ ಅವನು, ‘ನಾನು ಪ್ರವಾದಿಯಲ್ಲ, ನಾನು ಹೊಲದಲ್ಲಿ ವ್ಯವಸಾಯ ಮಾಡುವವನು, ಚಿಕ್ಕಂದಿನಿಂದ ನಾನು ಗುಲಾಮನಾಗಿದ್ದೇನೆ,’ ಎಂದು ಹೇಳುವನು.
ZEC 13:6 ಆಗ ಒಬ್ಬನು ಅವನಿಗೆ, ‘ನಿನ್ನ ಕೈಗಳಲ್ಲಿರುವ ಈ ಗಾಯಗಳು ಏನು?’ ಎಂದು ಕೇಳಿದರೆ, ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗುಂಟಾದ ಗಾಯಗಳೇ,’ ಅನ್ನುವನು.
ZEC 13:7 “ಖಡ್ಗವೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ ಎಚ್ಚರವಾಗು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಕುರುಬನನ್ನು ಹೊಡೆ, ಆಗ ಕುರಿಗಳು ಚದರಿಹೋಗುವುವು. ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
ZEC 13:8 ಯೆಹೋವ ದೇವರು ಹೀಗೆ ಹೇಳುತ್ತಾರೆ, ಸಮಸ್ತ ದೇಶದಲ್ಲಿ ಮೂರರಲ್ಲಿ ಎರಡು ಪಾಲು ಹತರಾಗಿ ನಾಶವಾಗುವರು. ಆದರೆ ಮೂರನೆಯ ಪಾಲು, ಅದರಲ್ಲಿ ಉಳಿಯುವರು.
ZEC 13:9 ಈ ಮೂರನೆಯ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ, ಬೆಳ್ಳಿಯನ್ನು ಶುದ್ಧ ಮಾಡುವಂತೆ ಶುದ್ಧಮಾಡುವೆನು. ಬಂಗಾರವನ್ನು ಶೋಧಿಸುವ ಪ್ರಕಾರ ಅವರನ್ನು ಶೋಧಿಸುವೆನು. ಅವರು ನನ್ನ ಹೆಸರನ್ನು ಕರೆಯುವರು. ನಾನು ಅವರಿಗೆ ಉತ್ತರಕೊಡುವೆನು. ನಾನು, ‘ಇವರು ನನ್ನ ಜನರೆಂದು ಹೇಳುವೆನು,’ ‘ಯೆಹೋವ ದೇವರು ನಮ್ಮ ದೇವರು’ ಎಂದು ಅವರು ಹೇಳುವರು,” ಎಂದು ಹೇಳುತ್ತೇನೆ.
ZEC 14:1 ಯೆಹೋವ ದೇವರ ದಿನವು ಬರುತ್ತದೆ. ಓ ಯೆರೂಸಲೇಮೇ, ಆ ದಿನದಲ್ಲಿ ನಿನ್ನ ಐಶ್ವರ್ಯವು ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ನಿನ್ನ ಗೋಡೆಗಳ ಮಧ್ಯದಲ್ಲಿ ಹಂಚಿಹೋಗುವುದು.
ZEC 14:2 ನಾನು ಜನಾಂಗಗಳನ್ನೆಲ್ಲಾ ಯೆರೂಸಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು. ಪಟ್ಟಣವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಲಾಗುವುದು. ಹೆಂಗಸರು ಅತ್ಯಾಚಾರಕ್ಕೆ ಒಳಗಾಗುವರು. ಪಟ್ಟಣದ ಅರ್ಧ ಜನರು ಸೆರೆಗೆ ಹೋಗುವರು. ಆದರೆ ಉಳಿದ ಜನರೆಲ್ಲರು ಪಟ್ಟಣದಲ್ಲೇ ಉಳಿಯುವರು.
ZEC 14:3 ಆಗ ಯೆಹೋವ ದೇವರು ಹೊರಟು, ಯುದ್ಧದ ದಿವಸದಲ್ಲಿ ಹೋರಾಟ ಮಾಡಿದ ಪ್ರಕಾರವೇ, ಆ ಜನಾಂಗಗಳ ಸಂಗಡ ಅವರು ಹೋರಾಟ ಮಾಡುವರು.
ZEC 14:4 ಆ ದಿವಸದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವದಿಕ್ಕಿನಲ್ಲಿರುವ ಓಲಿವ್ ಮರಗಳ ಗುಡ್ಡದ ಮೇಲೆ ನಿಲ್ಲುವುವು. ಆ ಗುಡ್ಡವು, ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವುದು. ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದುಕೊಳ್ಳುವುದು.
ZEC 14:5 ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗುವಿರಿ. ಏಕೆಂದರೆ ಬೆಟ್ಟಗಳ ತಗ್ಗು ಆಚೆಲಿನವರೆಗೂ ಮುಟ್ಟುವುದು. ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ, ನೀವು ಭೂಕಂಪಕ್ಕೆ ಓಡಿ ಹೋದ ಹಾಗೆ, ಓಡಿಹೋಗುವಿರಿ. ನನ್ನ ದೇವರಾದ ಯೆಹೋವ ದೇವರು ಬರುವರು. ನಿಮ್ಮ ಸಂಗಡ ಪರಿಶುದ್ಧರೆಲ್ಲರು ಸಹ ಬರುವರು.
ZEC 14:6 ಆ ದಿವಸದಲ್ಲಿ, ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
ZEC 14:7 ಆದರೆ ಅದು ಒಂದು ವಿಶಿಷ್ಟ ದಿವಸವಾಗಿರುವುದು. ಯೆಹೋವ ದೇವರಿಗೆ ಮಾತ್ರ ತಿಳಿದಿರುವ ಒಂದು ದಿನ ಇರುವುದು. ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಆದರೆ, ಸಾಯಂಕಾಲದ ಸಮಯದಲ್ಲಿ ಬೆಳಕು ಇರುವುದು.
ZEC 14:8 ಆ ದಿವಸದಲ್ಲಿ ಆಗುವುದೇನೆಂದರೆ: ಯೆರೂಸಲೇಮಿನೊಳಗಿಂದ ಜೀವವುಳ್ಳ ಪ್ರವಾಹವು ಹೊರಡುವುದು. ಅದರಲ್ಲಿ ಅರ್ಧಭಾಗವು ಪೂರ್ವದ ಉಪ್ಪು ಸಮುದ್ರಕ್ಕೆ ಮತ್ತು ಅರ್ಧಭಾಗವು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೆ ಹರಿಯುತ್ತದೆ. ಅದು ಬೇಸಿಗೆ ಕಾಲದಲ್ಲಿಯೂ, ಚಳಿಗಾಲದಲ್ಲಿಯೂ ಇರುವುದು.
ZEC 14:9 ಯೆಹೋವ ದೇವರು ಭೂಮಿಗೆಲ್ಲಾ ಅರಸನಾಗಿರುವರು. ಆ ದಿವಸದಲ್ಲಿ ಯೆಹೋವ ದೇವರು ಒಬ್ಬರೇ ಇರುವರು. ಆತನ ಹೆಸರು ಒಂದೇ ಹೆಸರಾಗಿರುವುದು.
ZEC 14:10 ಗೆಬ ಮೊದಲುಗೊಂಡು ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೂ ದೇಶವೆಲ್ಲಾ ಅರಾಬಾದ ಹಾಗೆ ಮಾರ್ಪಡುವುದು. ಯೆರೂಸಲೇಮ್ ತನ್ನ ಸ್ಥಳದಲ್ಲಿ ಬೆನ್ಯಾಮೀನನ ಬಾಗಿಲು ಮೊದಲುಗೊಂಡು, ಮೊದಲನೆಯ ಬಾಗಿಲಿನ ಸ್ಥಳದವರೆಗೂ, ಮೂಲೆ ಬಾಗಿಲಿನವರೆಗೂ, ಹನನೇಲನ ಗೋಪುರ ಮೊದಲುಗೊಂಡು ಅರಸನ ದ್ರಾಕ್ಷಿ ಆಲೆಗಳವರೆಗೂ ಎತ್ತರದಲ್ಲಿ ನಿವಾಸವಾಗುವುದು.
ZEC 14:11 ಅದರಲ್ಲಿ ಜನರು ವಾಸವಾಗಿರುವರು. ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು. ಆದರೆ ಯೆರೂಸಲೇಮು ಭದ್ರವಾಗಿರುವುದು.
ZEC 14:12 ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.
ZEC 14:13 ಆ ದಿವಸದಲ್ಲಿ, ಯೆಹೋವ ದೇವರಿಂದಾದ ದೊಡ್ಡ ಕೋಲಾಹಲದಿಂದ ಜನರು ಭಯಭೀತಿಗೆ ಒಳಗಾಗುವರು. ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಒಬ್ಬರ ಮೇಲೊಬ್ಬರು ಕೈಯೆತ್ತುವರು.
ZEC 14:14 ಯೆಹೂದವೂ ಸಹ ಯೆರೂಸಲೇಮಿನಲ್ಲಿ ಯುದ್ಧಮಾಡುವುದು. ಸುತ್ತಲಿರುವ ಎಲ್ಲಾ ಜನಾಂಗಗಳ ಸಂಪತ್ತು, ಚಿನ್ನ, ಬೆಳ್ಳಿ ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲಾಗುವುದು.
ZEC 14:15 ಆ ಗುಡಾರಗಳಲ್ಲಿರುವ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳಿಗೆ ಈ ವ್ಯಾಧಿಯೇ ತಗಲುವದು.
ZEC 14:16 ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗಗಳಲ್ಲಿ ಉಳಿದವರೆಲ್ಲಾ ವರ್ಷ ವರ್ಷಕ್ಕೆ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೂ ಹೋಗುವರು.
ZEC 14:17 ಭೂಮಿಯ ಜನಾಂಗಗಳಲ್ಲಿ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೆ ಯೆರೂಸಲೇಮಿಗೆ ಹೋಗದಿದ್ದರೆ, ಅವರ ಮೇಲೆ ಮಳೆ ಬರುವುದಿಲ್ಲ.
ZEC 14:18 ಈಜಿಪ್ಟಿನವರು ಹೋಗದಿದ್ದರೆ ಮತ್ತು ಹಬ್ಬವನ್ನು ಆಚರಿಸುವುದಕ್ಕೆ ಬರದಿದ್ದರೆ ಅವರಿಗೂ ಮಳೆ ಬರುವುದಿಲ್ಲ. ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಇತರ ಜನಾಂಗಗಳಿಗೆ ಯೆಹೋವ ದೇವರು ಬಾಧಿಸುವ ವ್ಯಾಧಿಯು ಅವರ ಮೇಲೆ ತಗಲುವುದು.
ZEC 14:19 ಇದೇ ಈಜಿಪ್ಟಿನ ದಂಡನೆಯೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವುದು.
ZEC 14:20 ಆ ದಿವಸದಲ್ಲಿ, ಕುದುರೆಗಳ ಘಂಟೆಗಳ ಮೇಲೆ ಯೆಹೋವ ದೇವರಿಗೆ ಪರಿಶುದ್ಧವು ಎಂದಿರುವುದು. ಯೆಹೋವ ದೇವರ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವುವು.
ZEC 14:21 ಯೆರೂಸಲೇಮಿನಲ್ಲಿಯೂ, ಯೆಹೂದದಲ್ಲಿಯೂ ಇರುವ ಪ್ರತಿಯೊಂದು ಪಾತ್ರೆಯು ಸೇನಾಧೀಶ್ವರ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳನ್ನು ತೆಗೆದುಕೊಂಡು ಅವುಗಳಲ್ಲಿ ಬೇಯಿಸುವರು. ಆ ದಿವಸದಲ್ಲಿ, ಕಾನಾನ್ಯನು ಸೇನಾಧೀಶ್ವರ ಯೆಹೋವ ದೇವರ ಆಲಯದಲ್ಲಿ ಇನ್ನು ಮೇಲೆ ಇರುವುದೇ ಇಲ್ಲ.
MAL 1:1 ಒಂದು ಪ್ರವಾದನೆ: ಇಸ್ರಾಯೇಲಿಗೆ ಮಲಾಕಿಯನ ಮುಖಾಂತರ ಬಂದ ಯೆಹೋವ ದೇವರ ವಾಕ್ಯ:
MAL 1:2 “ನಾನು ನಿಮ್ಮನ್ನು ಪ್ರೀತಿ ಮಾಡಿದೆನು” ಎಂದು ಯೆಹೋವ ದೇವರು ಹೇಳುತ್ತಾರೆ. “ನೀವಾದರೋ, ‘ಯಾವುದರಲ್ಲಿ ನೀವು ನಮ್ಮನ್ನು ಪ್ರೀತಿ ಮಾಡಿದ್ದೀರಿ?’ ಎಂದು ಕೇಳುತ್ತೀರಿ. “ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದರೂ ನಾನು ಯಾಕೋಬನನ್ನು ಪ್ರೀತಿ ಮಾಡಿದೆನು. ಎಂದು ಯೆಹೋವ ದೇವರು ಅನ್ನುತ್ತಾರೆ.
MAL 1:3 ಏಸಾವನನ್ನು ದ್ವೇಷ ಮಾಡಿದೆನು. ಅವನ ಬೆಟ್ಟಗಳನ್ನು ಹಾಳು ಮಾಡಿ, ಅವನ ಸೊತ್ತನ್ನು ಅಡವಿಯ ನರಿಗಳಿಗೆ ಕೊಟ್ಟೆನು.”
MAL 1:4 ಎದೋಮ್ಯರು, “ನಾವು ಬಡಕಲಾದೆವು, ಆದರೆ ನಾವು ಮತ್ತೆ ಹಾಳಾದ ಸ್ಥಳಗಳನ್ನು ಕಟ್ಟುವೆವು,” ಎಂದು ಹೇಳಬಹುದು. ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು. ಜನರು ಅವರನ್ನು ದುಷ್ಟತನದ ನಾಡೆಂದೂ, ಯೆಹೋವ ದೇವರು ಎಂದೆಂದಿಗೂ ಸಿಟ್ಟು ಮಾಡುವ ಜನವೆಂದೂ ಕರೆಯುವರು.
MAL 1:5 ನಿಮ್ಮ ಕಣ್ಣುಗಳಿಂದ ನೋಡಿ, ‘ಇಸ್ರಾಯೇಲಿನ ಮೇರೆ ಆಚೆಗೂ ಯೆಹೋವ ದೇವರು ಮಹೋನ್ನತರು!’ ಎಂದು ನೀವು ಹೇಳುವಿರಿ.”
MAL 1:6 “ಮಗನು ತಂದೆಯನ್ನೂ, ದಾಸನು ಯಜಮಾನನನ್ನೂ ಸನ್ಮಾನಿಸುತ್ತಾನೆ. ಹಾಗಾದರೆ ನಾನು ತಂದೆಯಾಗಿದ್ದರೆ ನನ್ನ ಸನ್ಮಾನವೆಲ್ಲಿ? ನಾನು ಯಜಮಾನನಾಗಿದ್ದರೆ ನನಗೆ ತೋರಿಸುವ ಭಯಭಕ್ತಿಯೆಲ್ಲಿ?” “ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರು ನೀವೇ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಆದರೆ ನೀವು, ‘ನಿಮ್ಮ ಹೆಸರನ್ನು ಯಾವುದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆ?’ ಎಂದು ಕೇಳುತ್ತೀರಿ.”
MAL 1:7 “ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸುತ್ತೀರಿ. “ ‘ಯಾವುದರಲ್ಲಿ ನಿಮ್ಮನ್ನು ನಾವು ಅಪವಿತ್ರ ಮಾಡಿದ್ದೇವೆ?’ ಎಂದು ಕೇಳುತ್ತೀರಿ.” ಯೆಹೋವ ದೇವರ ಮೇಜು ಹೀನವಾದದ್ದೆಂದು ನೀವು ಹೇಳುವುದರಿಂದಲೇ!
MAL 1:8 ಇದಲ್ಲದೆ, ಕುರುಡಾದ ಪಶುಗಳನ್ನು ಬಲಿಗಾಗಿ ಅರ್ಪಿಸಿದರೆ, ಅದು ದೋಷವಲ್ಲವೋ? ಕುಂಟಾದ ಮತ್ತು ರೋಗವುಳ್ಳ ಪಶುಗಳನ್ನು ಅರ್ಪಿಸಿದರೆ, ಅದು ಕೆಟ್ಟದ್ದಲ್ಲವೋ? “ಅದನ್ನು ನಿನ್ನ ರಾಜ್ಯಪಾಲನಿಗೆ ಅರ್ಪಿಸು, ಅವನು ನಿನ್ನನ್ನು ಮೆಚ್ಚುವನೋ? ನಿಮ್ಮನ್ನು ಸ್ವೀಕಾರ ಮಾಡುವನೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 1:9 “ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ. ನಿಮ್ಮ ಕೈಗಳಿಂದ ಅಂಥ ಅರ್ಪಣೆಯನ್ನು ಅವರು ಸ್ವೀಕರಿಸುವರೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 1:10 “ನನ್ನ ಬಲಿಪೀಠದ ಮೇಲೆ ವ್ಯರ್ಥವಾಗಿ ಬೆಂಕಿ ಹಚ್ಚುವುದಕ್ಕಿಂತ, ಬಾಗಿಲು ಮುಚ್ಚುವುದು ಒಳ್ಳೆಯದು. ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವುದಿಲ್ಲ.
MAL 1:11 ಸೂರ್ಯೋದಯವು ಮೊದಲುಗೊಂಡು ಅಸ್ತಮಾನದವರೆಗೂ, ನನ್ನ ಹೆಸರು ಎಲ್ಲಾ ಜನಾಂಗಗಳಲ್ಲಿ ಘನವಾಗಿರುವುದು. ಪ್ರತಿಯೊಂದು ಸ್ಥಳದಲ್ಲಿಯೂ ನನ್ನ ಹೆಸರಿಗೆ ಧೂಪವೂ, ಶುದ್ಧ ಕಾಣಿಕೆಯೂ ಅರ್ಪಿಸಲಾಗುವುದು. ಏಕೆಂದರೆ ನನ್ನ ಹೆಸರು ಇತರ ಜನಾಂಗಗಳಲ್ಲಿ ಘನವಾಗಿರುವುದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 1:12 “ಆದರೆ ನೀವು ಯೆಹೋವ ದೇವರ ಮೇಜು ಅಶುದ್ಧ, ‘ಅದರ ಫಲವೂ, ಅದರ ಆಹಾರವೂ ಅಸಹ್ಯ,’ ಎಂದು ಹೇಳಿ ಅದನ್ನು ಅಪವಿತ್ರ ಮಾಡಿದ್ದೀರಿ.
MAL 1:13 ಇದಲ್ಲದೆ ನೀವು, ‘ಎಂಥಾ ಭಾರ,’ ಎಂದು ಹೇಳಿ, ನೀವು ಅದನ್ನು ತಿರಸ್ಕಾರದಿಂದ ಊದಿಬಿಟ್ಟಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಗಾಯವಾದದ್ದನ್ನೂ, ಕುಂಟಾದ ರೋಗವುಳ್ಳ ಪಶುವನ್ನೂ ನನಗೆ ಬಲಿಯಾಗಿ ಅರ್ಪಿಸುತ್ತೀರಿ. ನಾನು ಇದನ್ನು ನಿಮ್ಮ ಕೈಯಿಂದ ಅಂಗೀಕರಿಸಬಹುದೋ?” ಎಂದು ಯೆಹೋವ ದೇವರು ಹೇಳುತ್ತಾರೆ.
MAL 1:14 “ಆದರೆ ತನ್ನ ಮಂದೆಯಲ್ಲಿ ದೋಷವಿಲ್ಲದ ಗಂಡು ಪಶು ಇರಲಾಗಿ ಅದನ್ನು ಅರ್ಪಿಸಲು ಪ್ರಮಾಣಮಾಡಿ, ಯೆಹೋವ ದೇವರಿಗೆ ದೋಷವುಳ್ಳದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ, ಏಕೆಂದರೆ ನಾನು ಮಹಾ ಅರಸನು, ನನ್ನ ಹೆಸರು ಇತರ ಜನಾಂಗಗಳಲ್ಲಿ ಭಯಭಕ್ತಿಯುಳ್ಳದ್ದಾಗಿರಬೇಕು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 2:1 “ಈಗ ಯಾಜಕರೇ, ಈ ಎಚ್ಚರಿಕೆ ನಿಮಗಾಗಿ ಇದೆ.
MAL 2:2 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ,” ನೀವು ಕಿವಿಗೊಡದೆ ನನ್ನ ಹೆಸರಿಗೆ ಮಹಿಮೆಯನ್ನು ಸಲ್ಲಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳದೆ ಹೋದರೆ, “ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು. ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು. ಹೌದು, ಅವುಗಳನ್ನು ಆಗಲೇ ಶಪಿಸಿದ್ದಾಯಿತು, ಏಕೆಂದರೆ ನೀವು ನನ್ನನ್ನು ಘನಪಡಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಲಿಲ್ಲ.
MAL 2:3 “ಇಗೋ, ನಾನು ನಿಮ್ಮ ಸಂತತಿಯನ್ನು ಗದರಿಸುವೆನು. ನಿಮ್ಮ ಮುಖಗಳ ಮೇಲೆ, ನಿಮ್ಮ ಹಬ್ಬ ಬಲಿಗಳ ಸಗಣಿ ಬಳಿಯುವೆನು. ಅದರೊಂದಿಗೆ ನೀವು ಒಯ್ಯಲಾಗುವಿರಿ.
MAL 2:4 ನಾನು ಲೇವಿಯೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಮುಂದುವರಿಯುತ್ತದೆ. ಈ ಎಚ್ಚರಿಕೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳಿದುಕೊಳ್ಳಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 2:5 “ನಮ್ಮ ಒಡಂಬಡಿಕೆಯು ಜೀವದ ಹಾಗೂ ಶಾಂತಿಯ ಒಡಂಬಡಿಕೆಯಾಗಿತ್ತು. ಅವುಗಳನ್ನು ನಾನೇ ಅವನಿಗೆ ಕೊಟ್ಟೆನು. ಅವನು ನನಗೆ ಭಯಪಟ್ಟು, ನನ್ನ ಹೆಸರನ್ನು ಘನಪಡಿಸಿದನು.
MAL 2:6 ಸತ್ಯ ಬೋಧನೆಯು ಅವನ ಬಾಯಲ್ಲಿ ಇತ್ತು. ಸುಳ್ಳು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ, ನ್ಯಾಯದಿಂದಲೂ ನನ್ನ ಸಂಗಡ ನಡೆದುಕೊಂಡು, ಅನೇಕರನ್ನು ಪಾಪದ ಕಡೆಯಿಂದ ತಿರುಗಿಸಿದನು.
MAL 2:7 “ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡ ತಕ್ಕದ್ದು. ದೈವ ಬೋಧನೆಯನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು, ಏಕೆಂದರೆ ಅವನು ಸೇನಾಧೀಶ್ವರ ಯೆಹೋವ ದೇವರ ದೂತನು.
MAL 2:8 ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ. ನಿಮ್ಮ ಉಪದೇಶದಿಂದ ಅನೇಕರನ್ನು ಎಡವುವಂತೆ ಮಾಡಿದ್ದೀರಿ. ಲೇವಿಯರೊಂದಿಗಿನ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 2:9 “ಆದ್ದರಿಂದ ನೀವು ನನ್ನ ಮಾರ್ಗಗಳನ್ನು ಕೈಗೊಳ್ಳದೆ, ನನ್ನ ನಿಯಮವನ್ನು ಬೋಧಿಸುವಾಗ ಮುಖದಾಕ್ಷಿಣ್ಯ ಮಾಡಿದ ಪ್ರಕಾರವೇ, ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆಯಾದವರನ್ನಾಗಿಯೂ, ನೀಚರನ್ನಾಗಿಯೂ ಮಾಡುವೆನು.”
MAL 2:10 ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬರೇ ದೇವರು ಸೃಷ್ಟಿಸಿದರಲ್ಲವೋ? ಏಕೆ ಪ್ರತಿಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಾಗಿ ನಡೆದು, ನಮ್ಮ ತಂದೆಗಳ ಒಡಂಬಡಿಕೆಯನ್ನು ಮುರಿಯುವುದೇಕೆ?
MAL 2:11 ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ. ಇಸ್ರಾಯೇಲಿನಲ್ಲಿಯೂ, ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ, ಏಕೆಂದರೆ ಯೆಹೂದವು ಯೆಹೋವ ದೇವರು ಪ್ರೀತಿಮಾಡಿದ ಪರಿಶುದ್ಧ ಆಲಯವನ್ನು ಅಪವಿತ್ರ ಮಾಡಿ, ಅನ್ಯದೇವತೆಗಳನ್ನು ಆರಾಧಿಸುವ ಮಹಿಳೆಯರನ್ನು ಮದುವೆ ಮಾಡಿಕೊಂಡಿದೆ.
MAL 2:12 ಇದನ್ನು ಮಾಡುವ ಮನುಷ್ಯನನ್ನು ಅವನು ಯಾರೇ ಆಗಲಿ, ಅವನು ಯೆಹೋವ ದೇವರಿಗೆ ಕಾಣಿಕೆ ಅರ್ಪಿಸಲು ತಂದರೂ ಸಹ, ಯಾಕೋಬನ ಗುಡಾರಗಳೊಳಗಿಂದ ಸೇನಾಧೀಶ್ವರ ಯೆಹೋವ ದೇವರು ತೆಗೆದು ಹಾಕಲಿ.
MAL 2:13 ನೀವು ಇನ್ನೊಂದನ್ನು ಮಾಡಿದ್ದೀರಿ. ಯೆಹೋವ ದೇವರ ಬಲಿಪೀಠಗಳನ್ನು ಕಣ್ಣೀರಿನಿಂದ ತುಂಬಿಸಿದ್ದೀರಿ. ಆದ್ದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷಿಸದೆ, ಅದನ್ನು ನಿಮ್ಮ ಕೈಯಿಂದ ಮೆಚ್ಚಿಕೆಯಾಗಿ ಅಂಗೀಕರಿಸುವುದಿಲ್ಲವಾದ್ದರಿಂದ ನೀವು ಅಳುತ್ತೀರಿ, ಗೋಳಾಡುತ್ತೀರಿ.
MAL 2:14 ಆದರೂ ಯೆಹೋವ ದೇವರು ನಿನಗೂ, ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿದ್ದರು. ಆದರೂ ನಿನ್ನ ಜೊತೆಯವಳೂ, ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದವಳಿಗೆ ನೀನು ಅಪನಂಬಿಗಸ್ತನಾಗಿದ್ದೀ.
MAL 2:15 ನಿನ್ನನ್ನು ಸೃಷ್ಟಿಸಿದವನು ಒಬ್ಬನೇ ಅಲ್ಲವೇ? ನೀವು ದೇಹ ಮತ್ತು ಆತ್ಮದಲ್ಲಿ ಅವರಿಗೆ ಸೇರಿದವರು. ಮತ್ತು ಒಬ್ಬರೇ ದೇವರಾಗಿರುವ ದೇವರು ಏನು ಹುಡುಕುತ್ತಾರೆ? ದೈವಿಕ ಸಂತಾನ. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಯೌವನದ ಹೆಂಡತಿಗೆ ವಿಶ್ವಾಸದ್ರೋಹ ಮಾಡಬೇಡಿ.
MAL 2:16 “ವಿವಾಹ ವಿಚ್ಛೇದನವನ್ನು ನಾನು ಹಗೆಮಾಡುತ್ತೇನೆ,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾನೆ. “ತನ್ನ ಹೆಂಡತಿಗೆ ನಂಬಿಕೆದ್ರೋಹ ಬಗೆದು, ದೌರ್ಜನ್ಯ ತೋರುವವನನ್ನು ನಾನು ಹಗೆಮಾಡುತ್ತೇನೆ,” ಎಂದು ಸರ್ವಶಕ್ತರಾದ ದೇವರು ಹೇಳುತ್ತಾರೆ. ಆದ್ದರಿಂದ ನೀವು ವಂಚನೆಯುಳ್ಳವರಾಗಿ ನಡೆಯದ ಹಾಗೆ ನಿಮ್ಮ ಆತ್ಮದಲ್ಲಿ ಎಚ್ಚರಿಕೆಯಾಗಿರಿ.
MAL 2:17 “ನಿಮ್ಮ ಮಾತುಗಳಿಂದ ಯೆಹೋವ ದೇವರಿಗೆ ಬೇಸರ ಮಾಡಿದ್ದೀರಿ. “ಆದರೂ, ನಾವು ಯಾವುದರಲ್ಲಿ ಆತನಿಗೆ ಬೇಸರ ಮಾಡಿದ್ದೇವೆ?” ಎಂದು ಕೇಳುತ್ತೀರಿ. “ಕೆಟ್ಟದ್ದನ್ನು ಮಾಡುವವರೆಲ್ಲರು, ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆ ಎಂದೂ, ನ್ಯಾಯದ ದೇವರು ಎಲ್ಲಿ? ಎಂದೂ ನೀವು ಹೇಳುವುದರಿಂದಲೇ.”
MAL 3:1 “ಇಗೋ, ನಾನು ನನ್ನ ದೂತನನ್ನು ಕಳುಹಿಸುತ್ತೇನೆ. ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು. ನೀವು ಹುಡುಕುವ ಕರ್ತರು ಫಕ್ಕನೆ ತಮ್ಮ ಆಲಯಕ್ಕೆ ಬರುವರು. ನೀವು ಇಷ್ಟಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:2 ಆದರೆ ಅವರ ಆಗಮನದ ದಿವಸದಲ್ಲಿ ಯಾರು ತಾಳುವರು? ಅವರು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಏಕೆಂದರೆ ಅವರು ಅಕ್ಕಸಾಲಿಗನ ಪರಿಶೋಧಿಸುವ ಬೆಂಕಿಯ ಹಾಗೆಯೂ, ಅಗಸನ ಸಾಬೂನಿನ ಹಾಗೆಯೂ ಇದ್ದಾರೆ.
MAL 3:3 ದೇವರು ಬೆಳ್ಳಿಯನ್ನು ಪರಿಶೋಧಿಸಿ ಶುದ್ಧೀಕರಿಸುವ ಅಕ್ಕಸಾಲಿಗನಂತೆ ಕುಳಿತುಕೊಂಡು ಲೇವಿಯರನ್ನು ಶುದ್ಧಮಾಡುವರು. ಬಂಗಾರದ ಹಾಗೆಯೂ, ಬೆಳ್ಳಿಯ ಹಾಗೆಯೂ ಶುದ್ಧಮಾಡುವರು. ಆಗ ಅವರು ಯೆಹೋವ ದೇವರಿಗೆ ನೀತಿಯ ಕಾಣಿಕೆಯನ್ನು ಅರ್ಪಿಸುವರು.
MAL 3:4 ಯೆಹೂದದ ಮತ್ತು ಯೆರೂಸಲೇಮಿನ ಕಾಣಿಕೆಯು ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಇದ್ದಂತೆ ಯೆಹೋವ ದೇವರಿಗೆ ಮೆಚ್ಚಿಕೆಯಾಗಿರುವುದು.
MAL 3:5 “ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:6 “ನಾನು ಯೆಹೋವ ದೇವರು. ನಾನು ಬದಲಾಗುವುದಿಲ್ಲ. ಆದ್ದರಿಂದ ನೀವು ಯಾಕೋಬಿನ ವಂಶಜರೇ, ನಾಶವಾಗುವುದಿಲ್ಲ.
MAL 3:7 ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಅನುಸರಿಸಲಿಲ್ಲ. ನನ್ನ ಬಳಿಗೆ ತಿರುಗಿಕೊಳ್ಳಿರಿ. ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಆದರೆ ನೀವು, ‘ಯಾವುದರಲ್ಲಿ ತಿರುಗಿಕೊಳ್ಳೋಣ?’ ಎಂದು ಹೇಳುತ್ತೀರಿ.
MAL 3:8 “ಮನುಷ್ಯನು ದೇವರಿಂದ ಕದ್ದುಕೊಳ್ಳಲು ಸಾಧ್ಯವೇ? ಆದರೂ ನೀವು ನನ್ನಿಂದ ಕಳ್ಳತನ ಮಾಡಿದ್ದೀರಿ. “ಆದರೆ ನೀವು, ‘ಯಾವುದರಲ್ಲಿ ನಿನ್ನದನ್ನು ಕಳ್ಳತನ ಮಾಡಿದ್ದೇವೆ?’ ಎಂದು ಕೇಳುತ್ತೀರಿ. “ದಶಮಭಾಗ ಮತ್ತು ಅರ್ಪಣೆಗಳಲ್ಲಿಯೇ!
MAL 3:9 ಇದರಿಂದ ಶಾಪವು ನಿಮಗಾಯಿತು, ಏಕೆಂದರೆ ನೀವು, ಈ ಸಮಸ್ತ ಜನಾಂಗವೇ ನನ್ನಲ್ಲಿ ಕಳ್ಳತನ ಮಾಡುತ್ತಿದ್ದಿರಿ.
MAL 3:10 ನನ್ನ ಆಲಯದಲ್ಲಿ ಆಹಾರ ಇರುವಂತೆ ಹತ್ತನೆಯ ಪಾಲುಗಳನ್ನೆಲ್ಲಾ ಬೊಕ್ಕಸಕ್ಕೆ ತನ್ನಿರಿ. ನಾನು ನಿಮಗೆ ಪರಲೋಕದ ಮಹಾದ್ವಾರಗಳನ್ನು ತೆರೆದು, ಸ್ಥಳ ಹಿಡಿಸಲಾರದಷ್ಟು ನಿಮಗೆ ಆಶೀರ್ವಾದವನ್ನು ಸುರಿಸದಿರುವೆನೋ, ಇಲ್ಲವೋ ಎಂಬುದನ್ನು ನೀವು ಈಗ ನನ್ನನ್ನು ಪರೀಕ್ಷಿಸಿ ನೋಡಿರಿ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:11 “ನಿಮ್ಮ ಬೆಳೆಯನ್ನು ತಿಂದು ಬಿಡದಂತೆ ಕ್ರಿಮಿಕೀಟಗಳನ್ನು ತಡೆಯುವೆನು. ನಿಮ್ಮ ದ್ರಾಕ್ಷಿ ತೋಟಗಳಲ್ಲಿಂದ ದ್ರಾಕ್ಷಿಹಣ್ಣುಗಳನ್ನು ಉದುರಿಸಿ ಬಿಡುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:12 “ಆಗ ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು. ಏಕೆಂದರೆ ನೀವು ರಮ್ಯವಾದ ದೇಶವಾಗುವಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:13 “ನೀವು ನನಗೆ ವಿರೋಧವಾಗಿ ಅಹಂಕಾರದಿಂದ ಮಾತುಗಳನ್ನಾಡಿದಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೂ ನೀವು, ‘ನಿನಗೆ ವಿರೋಧವಾಗಿ ನಾವು ಏನು ಮಾತಾಡಿದ್ದೇವೆ?’ ಎನ್ನುತ್ತೀರಿ.”
MAL 3:14 “ನೀವು, ‘ದೇವರನ್ನು ಸೇವಿಸುವುದು ವ್ಯರ್ಥ, ನಾವು ಆತನ ನಿಯಮಗಳನ್ನು ಕೈಗೊಂಡು ಸೇನಾಧೀಶ್ವರ ಯೆಹೋವ ದೇವರ ಮುಂದೆ ದುಃಖಪಡುವುದರಿಂದ ಏನು ಪ್ರಯೋಜನವೆಂದೂ,
MAL 3:15 ಈಗ ನಾವು ಗರ್ವಿಷ್ಠರನ್ನು ಭಾಗ್ಯವಂತರೆಂದನ್ನುತ್ತೇವೆ. ದುಷ್ಟರು ಅಭಿವೃದ್ಧಿಯಾಗುತ್ತಿದ್ದಾರೆ. ದೇವರಿಗೆ ಸವಾಲು ಹಾಕಿದವರು ತಪ್ಪಿಸಿಕೊಂಡಿದ್ದಾರೆ’ ಎಂದು ಹೇಳಿದ್ದೀರಿ.”
MAL 3:16 ಆಗ ಯೆಹೋವ ದೇವರಿಗೆ ಭಯಪಡುವವರು, ಒಬ್ಬರ ಸಂಗಡಲೊಬ್ಬರು ಮಾತಾಡಿಕೊಂಡರು. ಯೆಹೋವ ದೇವರು ಕಿವಿಗೊಟ್ಟು ಅದನ್ನು ಕೇಳಿದರು. ಇದಲ್ಲದೆ ಯೆಹೋವ ದೇವರಿಗೆ ಭಯಪಟ್ಟು, ಅವರ ನಾಮವನ್ನು ಗೌರವಿಸುವವರ ಬಗ್ಗೆ ಅವರು ತಮ್ಮ ಮುಂದೆ ಇದ್ದ ಜ್ಞಾಪಕ ಪುಸ್ತಕದಲ್ಲಿ ಬರೆಸಿದರು.
MAL 3:17 “ನಾನು ನನ್ನ ಅಮೂಲ್ಯ ಸೊತ್ತನ್ನು ಸೇರಿಸಿಕೊಳ್ಳುವ ಆ ದಿವಸದಲ್ಲಿ ಅವರು ನನ್ನವರಾಗಿರುವರು. ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ, ಅವರನ್ನು ಕನಿಕರಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 3:18 ಆಗ ನೀವು ನೀತಿವಂತನಿಗೂ, ದುಷ್ಟನಿಗೂ, ದೇವರ ಸೇವೆ ಮಾಡುವವನಿಗೂ, ಮಾಡದವನಿಗೂ ಇರುವ ವ್ಯತ್ಯಾಸವನ್ನು ಪುನಃ ನೋಡುವಿರಿ.
MAL 4:1 “ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 4:2 ಆದರೆ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೆ, ನೀತಿ ಸೂರ್ಯನು ತಮ್ಮ ಕಿರಣಗಳಿಂದ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು. ನೀವು ಹೊರಟು ಕೊಟ್ಟಿಗೆಯಿಂದ ಹೊರಬಂದ ಕರುಗಳ ಹಾಗೆ ಕುಣಿದಾಡುವಿರಿ.
MAL 4:3 ಆಗ ದುಷ್ಟರನ್ನು ತುಳಿದುಬಿಡುವಿರಿ. ಏಕೆಂದರೆ ನಾನು ಕಾರ್ಯಸಾಧಿಸುವ ದಿವಸದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
MAL 4:4 “ನನ್ನ ಸೇವಕನಾದ ಮೋಶೆಯ ನಿಯಮವನ್ನು ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ವಿಧಿ ನಿಯಮಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
MAL 4:5 “ಇಗೋ, ಯೆಹೋವ ದೇವರ ಮಹಾ ಭಯಂಕರವಾದ ದಿವಸವು ಬರುವುದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುವೆನು.
MAL 4:6 ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಯರ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಯರ ಕಡೆಗೂ ತಿರುಗಿಸುವನು.”
MAT 1:1 ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:
MAT 1:2 ಅಬ್ರಹಾಮನು ಇಸಾಕನ ತಂದೆ, ಇಸಾಕನು ಯಾಕೋಬನ ತಂದೆ, ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,
MAT 1:3 ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ, ಪೆರೆಸನು ಹೆಚ್ರೋನನ ತಂದೆ, ಹೆಚ್ರೋನನು ಅರಾಮನ ತಂದೆ,
MAT 1:4 ಅರಾಮನು ಅಮ್ಮೀನಾದಾಬನ ತಂದೆ, ಅಮ್ಮೀನಾದಾಬನು ನಹಶೋನನ ತಂದೆ, ನಹಶೋನನು ಸಲ್ಮೋನನ ತಂದೆ,
MAT 1:5 ಸಲ್ಮೋನನು ಬೋವಜನ ತಂದೆ, ಬೋವಜನ ತಾಯಿ ರಾಹಾಬಳು, ಬೋವಜನು ಓಬೇದನ ತಂದೆ, ಓಬೇದನ ತಾಯಿ ರೂತಳು, ಓಬೇದನು ಇಷಯನ ತಂದೆ,
MAT 1:6 ಇಷಯನು ರಾಜನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ, ಇವನ ತಾಯಿ ಊರೀಯನ ಹೆಂಡತಿಯಾಗಿದ್ದವಳು,
MAT 1:7 ಸೊಲೊಮೋನನು ರೆಹಬ್ಬಾಮನ ತಂದೆ, ರೆಹಬ್ಬಾಮನು ಅಬೀಯನ ತಂದೆ, ಅಬೀಯನು ಆಸನ ತಂದೆ,
MAT 1:8 ಆಸನು ಯೆಹೋಷಾಫಾಟನ ತಂದೆ, ಯೆಹೋಷಾಫಾಟನು ಯೆಹೋರಾಮನ ತಂದೆ, ಯೆಹೋರಾಮನು ಉಜ್ಜೀಯನ ತಂದೆ,
MAT 1:9 ಉಜ್ಜೀಯನು ಯೋತಾಮನ ತಂದೆ, ಯೋತಾಮನು ಆಹಾಜನ ತಂದೆ, ಆಹಾಜನು ಹಿಜ್ಕೀಯನ ತಂದೆ,
MAT 1:10 ಹಿಜ್ಕೀಯನು ಮನಸ್ಸೆಯ ತಂದೆ, ಮನಸ್ಸೆಯು ಆಮೋನನ ತಂದೆ, ಆಮೋನನು ಯೋಷೀಯನ ತಂದೆ,
MAT 1:11 ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
MAT 1:12 ಬಾಬಿಲೋನಿಗೆ ಸೆರೆಹೋದ ಮೇಲೆ: ಯೆಕೊನ್ಯನು ಶೆಯಲ್ತೀಯೇಲನನ್ನು ಪಡೆದನು, ಶೆಯಲ್ತೀಯೇಲನು ಜೆರುಬ್ಬಾಬೆಲನ ತಂದೆ,
MAT 1:13 ಜೆರುಬ್ಬಾಬೆಲನು ಅಬಿಹೂದನ ತಂದೆ, ಅಬಿಹೂದನು ಎಲಿಯಕೀಮನ ತಂದೆ, ಎಲಿಯಕೀಮನು ಅಜೋರನ ತಂದೆ,
MAT 1:14 ಅಜೋರನು ಸದೋಕನ ತಂದೆ, ಸದೋಕನು ಅಖೀಮನ ತಂದೆ, ಅಖೀಮನು ಎಲಿಹೂದನ ತಂದೆ,
MAT 1:15 ಎಲಿಹೂದನು ಎಲಿಯಾಜರನ ತಂದೆ, ಎಲಿಯಾಜರನು ಮತ್ತಾನನ ತಂದೆ, ಮತ್ತಾನನು ಯಾಕೋಬನ ತಂದೆ,
MAT 1:16 ಯಾಕೋಬನು ಯೋಸೇಫನ ತಂದೆ, ಯೋಸೇಫನು ಮರಿಯಳ ಪತಿ, ಮರಿಯಳು ಕ್ರಿಸ್ತ ಎಂದು ಕರೆಯಲಾದ, ಯೇಸುಸ್ವಾಮಿಯ ತಾಯಿ.
MAT 1:17 ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.
MAT 1:18 ಕ್ರಿಸ್ತ ಯೇಸುವಿನ ಜನನದ ವಿವರ: ಯೇಸುವಿನ ತಾಯಿ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದ್ದರು, ಆದರೆ ಅವರಿಬ್ಬರು ಕೂಡಿಬಾಳುವುದಕ್ಕಿಂತ ಮುಂಚೆಯೇ, ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದು ತಿಳಿದುಬಂತು.
MAT 1:19 ಯೋಸೇಫನು ನೀತಿವಂತನಾಗಿದ್ದರಿಂದ, ಆಕೆಯನ್ನು ಬಹಿರಂಗವಾಗಿ ಅವಮಾನ ಮಾಡುವುದಕ್ಕೆ ಮನಸ್ಸಿಲ್ಲದೆ, ಆಕೆಯನ್ನು ರಹಸ್ಯವಾಗಿ ಬಿಟ್ಟು ಬಿಡಬೇಕೆಂದಿದ್ದನು.
MAT 1:20 ಅವನು ಹೀಗೆ ಯೋಚಿಸುತ್ತಿದ್ದಾಗ, ಕರ್ತನ ದೂತನು ಕನಸಿನಲ್ಲಿ ಅವನಿಗೆ ಪ್ರತ್ಯಕ್ಷನಾಗಿ, “ದಾವೀದನ ವಂಶದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭವತಿಯಾಗಿರುವುದು ಪವಿತ್ರಾತ್ಮರಿಂದಲೇ.
MAT 1:21 ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.
MAT 1:22 ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು:
MAT 1:23 “ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.
MAT 1:24 ಯೋಸೇಫನು ನಿದ್ದೆಯಿಂದ ಎದ್ದ ಮೇಲೆ, ಕರ್ತನ ದೂತನು ಆಜ್ಞಾಪಿಸಿದಂತೆ ಮರಿಯಳನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.
MAT 1:25 ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.
MAT 2:1 ಹೆರೋದ ರಾಜನ ಕಾಲದಲ್ಲಿ, ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಜನಿಸಿದಾಗ, ಪೂರ್ವ ದೇಶದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು,
MAT 2:2 “ಯೆಹೂದ್ಯರ ಅರಸರಾಗಿ ಹುಟ್ಟಿದವರು ಎಲ್ಲಿ? ನಾವು ಅವರನ್ನು ಸೂಚಿಸುವ ನಕ್ಷತ್ರವನ್ನು ಪೂರ್ವದೇಶದಲ್ಲಿ ಕಂಡು ಅವರನ್ನು ಆರಾಧಿಸಲು ಬಂದಿದ್ದೇವೆ,” ಎಂದರು.
MAT 2:3 ಇದನ್ನು ಕೇಳಿ ಹೆರೋದ ರಾಜನು ಮತ್ತು ಯೆರೂಸಲೇಮಿನ ಜನರೆಲ್ಲರು ಕಳವಳಗೊಂಡರು.
MAT 2:4 ರಾಜನು ಯೆಹೂದ್ಯರ ಮುಖ್ಯಯಾಜಕರನ್ನೂ ನಿಯಮ ಬೋಧಕರನ್ನೂ ಕರೆದು, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ?” ಎಂದು ಅವರನ್ನು ವಿಚಾರಿಸಿದನು.
MAT 2:5 ಅದಕ್ಕೆ ಅವರು, “ಯೂದಾಯ ಪ್ರಾಂತದ ಬೇತ್ಲೆಹೇಮಿನಲ್ಲಿಯೇ,” ಏಕೆಂದರೆ, ಪ್ರವಾದಿಯು ಬರೆದಿರುವದು ಈ ರೀತಿಯಾಗಿದೆ:
MAT 2:6 “ ‘ಯೆಹೂದ ಪ್ರಾಂತದಲ್ಲಿರುವ ಬೇತ್ಲೆಹೇಮೇ, ಯೆಹೂದದ ಅಧಿಪತಿಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ. ಏಕೆಂದರೆ ನನ್ನ ಪ್ರಜೆಗಳಾದ ಇಸ್ರಾಯೇಲನ್ನು ಪರಿಪಾಲಿಸಲು ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಬರುವನು,’” ಎಂದು ಹೇಳಿದರು.
MAT 2:7 ಆಗ ಹೆರೋದನು ಆ ಜ್ಞಾನಿಗಳನ್ನು ರಹಸ್ಯವಾಗಿ ಕರೆದು, ಆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸೂಕ್ಷ್ಮವಾಗಿ ವಿಚಾರಿಸಿದನು.
MAT 2:8 “ನೀವು ಹೋಗಿ ಆ ಮಗುವಿನ ವಿಷಯ ಜಾಗರೂಕತೆಯಿಂದ ವಿಚಾರಿಸಿ. ಆ ಮಗು ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ಆಗ ನಾನೂ ಬಂದು ಅದನ್ನು ಆರಾಧಿಸುವೆನು,” ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.
MAT 2:9 ರಾಜನ ಮಾತನ್ನು ಕೇಳಿ ಅವರು ಹೊರಟಾಗ, ಪೂರ್ವದೇಶದಲ್ಲಿ ಅವರು ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು, ಅವರ ಮುಂದೆ ಮುಂದೆ ಸಾಗುತ್ತಾ, ಆ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತಿತು.
MAT 2:10 ಅವರು ನಕ್ಷತ್ರವನ್ನು ಕಂಡು, ಬಹಳವಾಗಿ ಸಂತೋಷಪಟ್ಟರು.
MAT 2:11 ಜ್ಞಾನಿಗಳು ಮನೆಯನ್ನು ಪ್ರವೇಶಿಸಿ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಮಗುವಿಗೆ ಅಡ್ಡಬಿದ್ದು ಆರಾಧಿಸಿದರು. ತಮ್ಮ ಬೊಕ್ಕಸಗಳನ್ನು ತೆರೆದು ಮಗುವಿಗೆ ಚಿನ್ನ, ಧೂಪ ಮತ್ತು ರಕ್ತಬೋಳಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು.
MAT 2:12 ಅನಂತರ ಅವರು ಕನಸಿನಲ್ಲಿ ಹೆರೋದನ ಬಳಿಗೆ ಹಿಂತಿರುಗಬಾರದೆಂಬ ಎಚ್ಚರಿಕೆಯನ್ನು ಹೊಂದಿದ್ದರಿಂದ, ಬೇರೆ ದಾರಿಯಿಂದ ತಮ್ಮ ದೇಶಕ್ಕೆ ಹೊರಟು ಹೋದರು.
MAT 2:13 ಆ ಜ್ಞಾನಿಗಳು ಹೊರಟುಹೋದ ಮೇಲೆ, ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಪ್ರತ್ಯಕ್ಷನಾಗಿ, “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ನಾನು ನಿನಗೆ ತಿಳಿಸುವವರೆಗೆ ಅಲ್ಲಿಯೇ ಇರು, ಏಕೆಂದರೆ ಹೆರೋದನು ಮಗುವನ್ನು ಹುಡುಕಿ ಕೊಲ್ಲಬೇಕೆಂದಿದ್ದಾನೆ,” ಎಂದನು.
MAT 2:14 ಆಗ ಯೋಸೇಫನು ಎದ್ದು, ಆ ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಅದೇ ರಾತ್ರಿ ಈಜಿಪ್ಟಿಗೆ ಹೊರಟುಹೋದನು.
MAT 2:15 ಹೀಗೆ ಹೆರೋದನು ಸಾಯುವವರೆಗೆ ಯೋಸೇಫನು ಅಲ್ಲೇ ಇದ್ದನು. ಕರ್ತನು ತನ್ನ ಪ್ರವಾದಿಯ ಮೂಲಕ: “ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು,” ಎಂದು ಹೇಳಿದ ಮಾತು ಇದರಿಂದ ನೆರವೇರಿತು.
MAT 2:16 ಜ್ಞಾನಿಗಳು ತನಗೆ ಮೋಸಮಾಡಿದರೆಂದು ತಿಳಿದ ಹೆರೋದನು ಬಹಳ ಕೋಪಗೊಂಡನು, ಜ್ಞಾನಿಗಳಿಂದ ಸೂಕ್ಷ್ಮವಾಗಿ ವಿಚಾರಿಸಿಕೊಂಡ ಪ್ರಕಾರವೇ, ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿದ್ದ ಎರಡು ವರ್ಷದೊಳಗಿನ ಎಲ್ಲಾ ಗಂಡು ಮಕ್ಕಳನ್ನು ಕೊಂದುಹಾಕಿಸಿದನು.
MAT 2:17 ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಮಾತು ನೆರವೇರಿತು:
MAT 2:18 “ರಾಮದಲ್ಲಿ ರೋದನೆಯು ಕೇಳಿಸಿತು, ಗೋಳಾಟವೂ ಮಹಾ ಪ್ರಲಾಪವೂ ಕೇಳಿಬಂತು. ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ, ಆದರಣೆ ಹೊಂದದೆ ಹೋಗಿದ್ದಾಳೆ. ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”
MAT 2:19 ಹೆರೋದನು ಸತ್ತಮೇಲೆ ಈಜಿಪ್ಟಿನಲ್ಲಿದ್ದ ಯೋಸೇಫನಿಗೆ ಕರ್ತನ ದೂತನು ಕನಸಿನಲ್ಲಿ ಕಾಣಿಸಿಕೊಂಡು,
MAT 2:20 “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹಿಂದಿರುಗು, ಮಗುವಿನ ಪ್ರಾಣ ತೆಗೆಯಬೇಕೆಂದಿದ್ದವರು ಸತ್ತುಹೋದರು,” ಎಂದು ಹೇಳಿದನು.
MAT 2:21 ಆಗ ಅವನು ಎದ್ದು ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.
MAT 2:22 ಆದರೆ ಹೆರೋದನ ಮಗ ಅರ್ಖೆಲಾಯನು, ತಂದೆಯ ಬದಲಾಗಿ ಯೂದಾಯ ಪ್ರಾಂತವನ್ನು ಆಳುತ್ತಿದ್ದಾನೆಂದು ಕೇಳಿ, ಅಲ್ಲಿಗೆ ಹೋಗಲು ಭಯಪಟ್ಟನು. ಆಗ ಕನಸಿನಲ್ಲಿ ಹೊಂದಿದ ಎಚ್ಚರಿಕೆಯ ಪ್ರಕಾರ ಯೋಸೇಫನು ಗಲಿಲಾಯ ಪ್ರಾಂತಕ್ಕೆ ಹೋದನು.
MAT 2:23 ಅಲ್ಲಿ ನಜರೇತ್ ಎಂಬ ಊರಲ್ಲಿ ವಾಸಮಾಡಿದನು. ಹೀಗೆ, “ನಜರಾಯನೆಂಬ ಹೆಸರು ಯೇಸುವಿಗೆ ಬರುವುದು,” ಎಂದು ಪ್ರವಾದಿಗಳು ಹೇಳಿದ ಮಾತು ನೆರವೇರಿತು.
MAT 3:1 ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು ಯೂದಾಯ ಪ್ರಾಂತದ ಅರಣ್ಯಕ್ಕೆ ಬಂದು,
MAT 3:2 “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಸಾರುತ್ತಿದ್ದನು.
MAT 3:3 “ ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವು,” ಎಂದು ಪ್ರವಾದಿಯಾದ ಯೆಶಾಯನ ಮೂಲಕ ಸೂಚಿತನಾದವನು ಇವನೇ.
MAT 3:4 ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಲಾಗಿತ್ತು. ಅವನು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
MAT 3:5 ಯೆರೂಸಲೇಮಿನಿಂದಲೂ ಯೂದಾಯ ಪ್ರಾಂತದ ಎಲ್ಲಾ ಸ್ಥಳಗಳಿಂದಲೂ ಯೊರ್ದನ್ ನದಿ ಸುತ್ತಲಿರುವ ಪ್ರದೇಶದಿಂದಲೂ ಜನರು ಅವನ ಬಳಿಗೆ ಬರುತ್ತಿದ್ದರು.
MAT 3:6 ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆಮಾಡುತ್ತಾ, ಅವನಿಂದ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
MAT 3:7 ಆದರೆ ಫರಿಸಾಯರು ಹಾಗೂ ಸದ್ದುಕಾಯರಲ್ಲಿ ಅನೇಕರು ದೀಕ್ಷಾಸ್ನಾನಕ್ಕಾಗಿ ಬರುವುದನ್ನು ಕಂಡು, ಯೋಹಾನನು ಅವರಿಗೆ: “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು?
MAT 3:8 ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ.
MAT 3:9 ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ.
MAT 3:10 ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು.
MAT 3:11 “ನಾನಂತೂ ದೇವರ ಕಡೆಗೆ ತಿರುಗಿಕೊಂಡಿದ್ದಕ್ಕಾಗಿ ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ. ಆದರೆ ನನ್ನ ಬಳಿಕ ಬರುವವರು ನನಗಿಂತಲೂ ಶಕ್ತರು, ಅವರ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ. ಅವರಾದರೋ ಪವಿತ್ರಾತ್ಮರಲ್ಲಿಯೂ ಅಗ್ನಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಕೊಡುವರು.
MAT 3:12 ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ ಶುದ್ಧಮಾಡಿ ಗೋಧಿಯನ್ನು ಕಣಜದಲ್ಲಿ ತುಂಬಿಕೊಂಡು, ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.
MAT 3:13 ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಪಡೆಯಲು ಗಲಿಲಾಯದಿಂದ ಯೊರ್ದನ್ ನದಿಗೆ ಬಂದರು.
MAT 3:14 ಆದರೆ ಯೋಹಾನನು ಅದಕ್ಕೆ ಅಡ್ಡಿ ಮಾಡುತ್ತಾ, “ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ, ನೀವು ನನ್ನ ಬಳಿಗೆ ಬರಬಹುದೇ?” ಎಂದು ಕೇಳಿದನು.
MAT 3:15 ಯೇಸು ಉತ್ತರವಾಗಿ, “ಸದ್ಯಕ್ಕೆ ಒಪ್ಪಿಕೋ, ಹೀಗೆ ನಾವು ಸಕಲ ನೀತಿಯನ್ನೂ ನೆರವೇರಿಸಬೇಕಾಗಿದೆ,” ಎಂದು ಹೇಳಿದಾಗ, ಯೋಹಾನನು ಒಪ್ಪಿಕೊಂಡನು.
MAT 3:16 ಯೇಸು ದೀಕ್ಷಾಸ್ನಾನ ಪಡೆದುಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಸ್ವರ್ಗವು ತೆರೆಯಿತು, ದೇವರ ಆತ್ಮ ಪಾರಿವಾಳದ ಹಾಗೆ ತಮ್ಮ ಮೇಲೆ ಇಳಿದು ಬರುವುದನ್ನು ಯೇಸು ಕಂಡರು.
MAT 3:17 ಸ್ವರ್ಗದೊಳಗಿಂದ, “ಈತನು ನನ್ನ ಪ್ರಿಯ ಮಗನು. ಈತನನ್ನು ನಾನು ಮೆಚ್ಚಿದ್ದೇನೆ,” ಎಂಬ ಧ್ವನಿ ಕೇಳಿಸಿತು.
MAT 4:1 ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
MAT 4:2 ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು.
MAT 4:3 ಆಗ ಶೋಧಕನು ಯೇಸುವಿನ ಬಳಿ ಬಂದು, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು,” ಎಂದನು.
MAT 4:4 ಅದಕ್ಕೆ ಯೇಸು, “ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’” ಎಂದರು.
MAT 4:5 ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ,
MAT 4:6 “ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ ‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು, ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
MAT 4:7 ಅದಕ್ಕೆ ಯೇಸು, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’ ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
MAT 4:8 ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ,
MAT 4:9 “ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು,” ಎಂದನು.
MAT 4:10 ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
MAT 4:11 ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು.
MAT 4:12 ಯೋಹಾನನು ಬಂಧಿತನಾದನೆಂದು ಕೇಳಿ, ಯೇಸು ಗಲಿಲಾಯಕ್ಕೆ ಹಿಂದಿರುಗಿದರು.
MAT 4:13 ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು.
MAT 4:14 ಹೀಗೆ ಪ್ರವಾದಿ ಯೆಶಾಯನ ಮುಖಾಂತರ ಹೇಳಿಸಿರುವ ಈ ಮಾತು ನೆರವೇರಿತು. ಅದೇನೆಂದರೆ:
MAT 4:15 “ಜೆಬುಲೂನ್ ನಾಡು ಮತ್ತು ನೆಫ್ತಲೀಮ್ ನಾಡು, ಯೊರ್ದನ್ ನದಿಯ ಆಚೆ ಸರೋವರದ ಕಡೆ, ಯೆಹೂದ್ಯರಲ್ಲದವರಿರುವ ಗಲಿಲಾಯ ನಾಡು,
MAT 4:16 ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಕು ಉದಯಿಸಿತು.”
MAT 4:17 ಅಂದಿನಿಂದ ಯೇಸು, “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಬೋಧಿಸತೊಡಗಿದರು.
MAT 4:18 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಪೇತ್ರ ಎನಿಸಿಕೊಂಡ ಸೀಮೋನನನ್ನೂ ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
MAT 4:19 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
MAT 4:20 ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
MAT 4:21 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು.
MAT 4:22 ಕೂಡಲೇ, ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
MAT 4:23 ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ, ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರಲ್ಲಿದ್ದ ಸಕಲ ವಿಧವಾದ ವ್ಯಾಧಿಗಳನ್ನೂ ಸಕಲ ವಿಧವಾದ ಬೇನೆಗಳನ್ನೂ ಗುಣಪಡಿಸುತ್ತಾ ಬಂದರು.
MAT 4:24 ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು.
MAT 4:25 ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಹಾಗೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಜನರು ದೊಡ್ಡ ಗುಂಪಾಗಿ ಯೇಸುವನ್ನು ಹಿಂಬಾಲಿಸಿದರು.
MAT 5:1 ಯೇಸು ಜನರ ಗುಂಪನ್ನು ಕಂಡು, ಒಂದು ಬೆಟ್ಟವನ್ನೇರಿ ಕುಳಿತುಕೊಂಡರು. ಶಿಷ್ಯರು ಅವರ ಬಳಿಗೆ ಬಂದರು.
MAT 5:2 ಮತ್ತು ಯೇಸು ಅವರಿಗೆ ಉಪದೇಶಿಸಲು ಪ್ರಾರಂಭಿಸಿದರು. ಅವರು ಹೀಗೆ ಹೇಳಿದರು:
MAT 5:3 “ಆತ್ಮದಲ್ಲಿ ಬಡವರಾಗಿರುವವರು ಧನ್ಯರು, ಪರಲೋಕ ರಾಜ್ಯವು ಅವರದು.
MAT 5:4 ದುಃಖಿಸುವವರು ಧನ್ಯರು, ಅವರು ಆದರಣೆ ಹೊಂದುವರು.
MAT 5:5 ಸಾತ್ವಿಕರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು.
MAT 5:6 ನೀತಿಗೋಸ್ಕರ ಹಸಿದು ಬಾಯಾರುವವರು ಧನ್ಯರು, ಅವರು ತೃಪ್ತಿಹೊಂದುವರು.
MAT 5:7 ಕರುಣೆಯುಳ್ಳವರು ಧನ್ಯರು, ಅವರು ಕರುಣೆ ಪಡೆಯುವರು.
MAT 5:8 ಹೃದಯದಲ್ಲಿ ಶುದ್ಧರಾಗಿರುವವರು ಧನ್ಯರು, ಅವರು ದೇವರನ್ನು ಕಾಣುವರು.
MAT 5:9 ಸಮಾಧಾನ ಪಡಿಸುವವರು ಧನ್ಯರು, ಅವರು ದೇವರ ಮಕ್ಕಳೆನಿಸಿಕೊಳ್ಳುವರು.
MAT 5:10 ನೀತಿಯ ನಿಮಿತ್ತವಾಗಿ ಹಿಂಸೆಗೊಳಗಾಗುವವರು ಧನ್ಯರು, ಪರಲೋಕ ರಾಜ್ಯವು ಅವರದು.
MAT 5:11 “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸಿಸಿ ನಿಮ್ಮ ಮೇಲೆ ಎಲ್ಲಾ ವಿಧವಾದ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.
MAT 5:12 ಸಂತೋಷಪಟ್ಟು ಆನಂದಿಸಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಅವರು ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಸಹ ಇದೇ ರೀತಿಯಲ್ಲಿ ಹಿಂಸೆಪಡಿಸಿದರು.
MAT 5:13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ, ಅದಕ್ಕೆ ಉಪ್ಪಿನ ರುಚಿ ಹೇಗೆ ಬಂದೀತು? ಅದು ಹೊರಗೆ ಹಾಕಿ ತುಳಿಯುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಕೆಲಸಕ್ಕೂ ಬರುವುದಿಲ್ಲ.
MAT 5:14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ; ಬೆಟ್ಟದ ಮೇಲಿರುವ ಊರು ಮರೆಯಾಗಿರಲಾರದು.
MAT 5:15 ದೀಪವನ್ನು ಹಚ್ಚಿ ಯಾರೂ ಅಳೆಯುವ ಪಾತ್ರೆಯೊಳಗೆ ಇಡುವುದಿಲ್ಲ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುತ್ತದೆ.
MAT 5:16 ಅದೇ ರೀತಿಯಲ್ಲಿ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಜನರು ನಿಮ್ಮ ಸತ್ಕ್ರಿಯೆಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು.
MAT 5:17 “ಮೋಶೆಯ ನಿಯಮವನ್ನಾಗಲಿ, ಪ್ರವಾದನೆಗಳನ್ನಾಗಲಿ ರದ್ದು ಮಾಡುವುದಕ್ಕೆ ನಾನು ಬಂದೆನೆಂದು ಭಾವಿಸಬೇಡಿರಿ; ನಾನು ಅವುಗಳನ್ನು ರದ್ದುಗೊಳಿಸಲು ಬರಲಿಲ್ಲ, ನೆರವೇರಿಸಲು ಬಂದಿದ್ದೇನೆ.
MAT 5:18 ಭೂಮಿ ಆಕಾಶಗಳು ಗತಿಸಿಹೋಗುವವು, ಆದರೆ ನಿಯಮವೆಲ್ಲಾ ನೆರವೇರುವ ತನಕ ಅದರಲ್ಲಿ ಒಂದು ಚಿಕ್ಕ ಅಕ್ಷರವಾದರೂ ಚಿಕ್ಕ ಚುಕ್ಕೆಯಾದರೂ ಅಳಿದುಹೋಗುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
MAT 5:19 ಆದ್ದರಿಂದ ಈ ಆಜ್ಞೆಗಳಲ್ಲಿ ಅತ್ಯಂತ ಚಿಕ್ಕದಾದ ಒಂದನ್ನು ಮೀರಿ, ಹಾಗೆಯೇ ಮೀರಲು ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಅತಿ ಚಿಕ್ಕವನೆಂದು ಎನಿಸಿಕೊಳ್ಳುವನು. ಆದರೆ ಈ ಆಜ್ಞೆಗಳನ್ನು ಪಾಲಿಸಿ ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಎನಿಸಿಕೊಳ್ಳುವನು.
MAT 5:20 ನಿಮ್ಮ ನೀತಿಯು ಫರಿಸಾಯರ ಮತ್ತು ನಿಯಮ ಬೋಧಕರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ, ನೀವು ಪರಲೋಕ ರಾಜ್ಯವನ್ನು ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
MAT 5:21 “ ‘ನರಹತ್ಯೆ ಮಾಡಬಾರದು, ಯಾವನಾದರೂ ನರಹತ್ಯೆ ಮಾಡಿದರೆ ಅವನು ನ್ಯಾಯತೀರ್ಪಿಗೆ ಗುರಿಯಾಗುವನು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ.
MAT 5:22 ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು.
MAT 5:23 “ಆದ್ದರಿಂದ, ನೀನು ನಿನ್ನ ಕಾಣಿಕೆಯನ್ನು ಸಮರ್ಪಿಸಲು ಬಲಿಪೀಠದ ಬಳಿಗೆ ತಂದಾಗ, ನಿನ್ನ ಸಹೋದರನಿಗೆ ಅಥವಾ ನಿನ್ನ ಸಹೋದರಿಗೆ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ,
MAT 5:24 ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆಯೇ ಬಿಟ್ಟು ಹೋಗಿ ಮೊದಲು ಸಹೋದರನೊಡನೆ ಅಥವಾ ಸಹೋದರಿಯೊಡನೆ ಸಂಧಾನಮಾಡಿಕೋ; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಸಮರ್ಪಿಸು.
MAT 5:25 “ನಿನ್ನ ಎದುರಾಳಿ ನಿನ್ನನ್ನು ನ್ಯಾಯಾಲಯಕ್ಕೂ, ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಿ ಸೆರೆಮನೆಗೆ ಹಾಕದಿರುವುದಕ್ಕೂ, ಎದುರಾಳಿಯ ಸಂಗಡ ದಾರಿಯಲ್ಲಿರುವಾಗಲೇ ಬೇಗ ಸಮಾಧಾನ ಮಾಡಿಕೋ.
MAT 5:26 ಇಲ್ಲದಿದ್ದರೆ, ನೀನು ಕೊನೆಯ ಪೈಸೆಯನ್ನಾದರೂ ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
MAT 5:27 “ ‘ವ್ಯಭಿಚಾರ ಮಾಡಬಾರದು,’ ಎಂದು ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ.
MAT 5:28 ಆದರೆ ಒಬ್ಬ ಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ಆಗಲೇ ತನ್ನ ಹೃದಯದಲ್ಲಿ ಆಕೆಯ ಸಂಗಡ ವ್ಯಭಿಚಾರ ಮಾಡಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
MAT 5:29 ಆದ್ದರಿಂದ ನಿನ್ನ ಬಲಗಣ್ಣು ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕಿತ್ತೆಸೆದುಬಿಡು. ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು.
MAT 5:30 ನಿನ್ನ ಬಲಗೈ ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕತ್ತರಿಸಿ ಬಿಸಾಡಿಬಿಡು; ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು.
MAT 5:31 “ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಡುವವನು ಆಕೆಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ,’ ಎಂದು ಹೇಳಿದೆಯಷ್ಟೆ.
MAT 5:32 ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ; ವಿವಾಹ ವಿಚ್ಛೇದನೆ ಹೊಂದಿದವಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ.
MAT 5:33 “ ‘ಇದಲ್ಲದೆ ನೀನು ಆಣೆಯಿಟ್ಟರೆ ಅದನ್ನು ಮೀರಬಾರದು, ಕರ್ತನಿಗೆ ಮಾಡಿದ ಆಣೆಗಳನ್ನು ನೆರವೇರಿಸಲೇಬೇಕು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿರುವುದನ್ನು ಕೇಳಿದ್ದೀರಿ.
MAT 5:34 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆಣೆಯಿಡಲೇ ಬೇಡಿರಿ. ಪರಲೋಕದ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಸಿಂಹಾಸನವು;
MAT 5:35 ಭೂಮಿಯ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಪಾದಪೀಠವು. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ಮಹಾರಾಜನ ಪಟ್ಟಣವಾಗಿದೆ.
MAT 5:36 ನಿನ್ನ ತಲೆಯ ಮೇಲೂ ಆಣೆಯಿಡುವುದು ಬೇಡ, ಏಕೆಂದರೆ ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ.
MAT 5:37 ಆದ್ದರಿಂದ ನಿಮ್ಮ ಮಾತು ಹೌದಾದರೆ ‘ಹೌದು’ ಇಲ್ಲವಾದರೆ ‘ಇಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಿನದು ಕೆಡುಕನಿಂದ ಬಂದದ್ದು.
MAT 5:38 “ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು,’ ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ.
MAT 5:39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಕೆಡುಕನನ್ನು ಎದುರಿಸಬೇಡಿರಿ. ಯಾವನಾದರೂ ನಿನ್ನ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸಿಕೊಡು.
MAT 5:40 ನಿನ್ನೊಡನೆ ವ್ಯಾಜ್ಯ ಮಾಡಿ ನಿನ್ನ ಅಂಗಿಯನ್ನು ನಿನ್ನಿಂದ ಕಿತ್ತುಕೊಳ್ಳುವವನಿಗೆ, ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು.
MAT 5:41 ಯಾವನಾದರೂ ನಿನ್ನನ್ನು ಒಂದು ಕಿಲೋಮೀಟರು ದೂರ ಬಾ ಎಂದು ಒತ್ತಾಯ ಮಾಡಿದರೆ, ಅವನೊಡನೆ ಎರಡು ಕಿಲೋಮೀಟರು ದೂರ ಹೋಗು;
MAT 5:42 ಕೇಳುವವನಿಗೆ ಕೊಡು, ನಿನ್ನಿಂದ ಸಾಲ ಕೇಳುವವನ ಕಡೆಯಿಂದ ಮುಖ ತಿರುಗಿಸಿಕೊಳ್ಳಬೇಡ.
MAT 5:43 “ ‘ನಿನ್ನ ನೆರೆಯವನನ್ನು ಪ್ರೀತಿಸಿ, ನಿನ್ನ ವೈರಿಯನ್ನು ದ್ವೇಷಿಸು,’ ಎಂದು ಹೇಳಿರುವುದನ್ನು ಕೇಳಿದ್ದೀರಿ.
MAT 5:44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸಿಸುವವರಿಗೋಸ್ಕರ ಪ್ರಾರ್ಥಿಸಿರಿ.
MAT 5:45 ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಅವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸುತ್ತಾರೆ.
MAT 5:46 ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಫಲ? ಸುಂಕದವರೂ ಹಾಗೆ ಮಾಡುವುದಿಲ್ಲವೇ?
MAT 5:47 ನಿಮ್ಮ ಸ್ವಂತದವರನ್ನು ಮಾತ್ರ ವಂದಿಸಿದರೆ ಹೆಚ್ಚೇನು ಮಾಡಿದ ಹಾಗಾಯಿತು? ಯೆಹೂದ್ಯರಲ್ಲದವರು ಸಹ ಹಾಗೆಯೇ ಮಾಡುತ್ತಾರಲ್ಲವೇ?
MAT 5:48 ಆದ್ದರಿಂದ, ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.
MAT 6:1 “ಜನರು ನೋಡಲಿ ಎಂದು ಅವರ ಮುಂದೆ, ನಿಮ್ಮ ದಾನಧರ್ಮಗಳನ್ನು ಮಾಡದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಕ್ಕುವುದಿಲ್ಲ.
MAT 6:2 “ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
MAT 6:3 ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ.
MAT 6:4 ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.
MAT 6:5 “ನೀವು ಪ್ರಾರ್ಥನೆ ಮಾಡುವಾಗ, ಕಪಟಿಗಳಂತೆ ಮಾಡಬೇಡಿರಿ. ಅವರು ಜನರಿಗೆ ಕಾಣುವಂತೆ ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
MAT 6:6 ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲ ಕೊಡುವರು.
MAT 6:7 ಆದರೆ ನೀವು ಪ್ರಾರ್ಥನೆ ಮಾಡುವಾಗ ಯೆಹೂದ್ಯರಲ್ಲದವರಂತೆ ವ್ಯರ್ಥವಾಗಿ ಹೇಳಿದ್ದನ್ನೇ ಪದೇಪದೇ ಹೇಳಬೇಡಿರಿ. ತಮ್ಮ ಅನೇಕ ಮಾತುಗಳ ದೆಸೆಯಿಂದ ತಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.
MAT 6:8 ನೀವು ಅವರಂತೆ ಇರಬೇಡಿರಿ, ಏಕೆಂದರೆ ನೀವು ಕೇಳುವುದಕ್ಕೆ ಮೊದಲೇ, ನಿಮ್ಮ ತಂದೆಗೆ ನಿಮ್ಮ ಅಗತ್ಯಗಳು ತಿಳಿದಿವೆ.
MAT 6:9 “ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ: “ ‘ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲಾಗಲಿ,
MAT 6:10 ನಿಮ್ಮ ರಾಜ್ಯವು ಬರಲಿ; ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.
MAT 6:11 ನಮ್ಮ ಅನುದಿನದ ಆಹಾರವನ್ನು ನಮಗೆ ಈ ದಿನವೂ ದಯಪಾಲಿಸಿರಿ.
MAT 6:12 ನಮಗೆ ಸಾಲಮಾಡಿದವರನ್ನು ನಾವು ಕ್ಷಮಿಸಿದಂತೆ, ನಮ್ಮ ಸಾಲಗಳನ್ನು ಕ್ಷಮಿಸಿರಿ.
MAT 6:13 ನಮ್ಮನ್ನು ಶೋಧನೆಗೆ ಸೇರಿಸದೆ, ಕೇಡಿನಿಂದ ತಪ್ಪಿಸಿರಿ. ಏಕೆಂದರೆ ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿಮ್ಮದೇ. ಆಮೆನ್.’
MAT 6:14 ನಿಮಗೆ ವಿರೋಧವಾಗಿ ತಪ್ಪುಮಾಡುವವರನ್ನು ನೀವು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮನ್ನು ಕ್ಷಮಿಸುವರು.
MAT 6:15 ಆದರೆ ನೀವು ಬೇರೆಯವರ ತಪ್ಪುಗಳನ್ನು ಕ್ಷಮಿಸದಿದ್ದರೆ, ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
MAT 6:16 “ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪಗೆ ಮಾಡಿಕೊಳ್ಳಬೇಡಿರಿ, ತಾವು ಉಪವಾಸ ಮಾಡುತ್ತಿದ್ದೇವೆಂದು ಜನರಿಗೆ ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಮುಖವನ್ನು ಬಾಡಿಸಿಕೊಂಡಿರುತ್ತಾರೆ. ಅವರು ತಮಗೆ ಬರತಕ್ಕ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
MAT 6:17 ಆದರೆ ನೀನು ಉಪವಾಸ ಮಾಡುವಾಗ, ತಲೆಗೆ ಎಣ್ಣೆ ಹಚ್ಚಿಕೊಂಡು, ಮುಖ ತೊಳೆದುಕೋ.
MAT 6:18 ಹೀಗೆ ಮಾಡಿದರೆ, ಕಾಣದಿರುವ ನಿನ್ನ ತಂದೆಯ ಹೊರತು ಬೇರೆ ಯಾರಿಗೂ ನೀನು ಉಪವಾಸದಿಂದಿರುವುದು ತಿಳಿಯುವುದಿಲ್ಲ ಮತ್ತು ಗುಟ್ಟಾಗಿ ಮಾಡುವುದನ್ನು ಕಾಣುವ ನಿನ್ನ ತಂದೆ, ನಿನಗೆ ಪ್ರತಿಫಲ ಕೊಡುವರು.
MAT 6:19 “ಭೂಲೋಕದಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿಯನ್ನು ಕೂಡಿಸಿಡಬೇಡಿರಿ, ಇಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದು ಇಲ್ಲವೆ ಕಳ್ಳರು ಕನ್ನಾಕೊರೆದು ಕದಿಯುವರು.
MAT 6:20 ಆದರೆ ಪರಲೋಕದಲ್ಲಿ ನಿಮಗಾಗಿ ನಿಕ್ಷೇಪವನ್ನು ಕೂಡಿಟ್ಟುಕೊಳ್ಳಿರಿ, ಅಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದಿಲ್ಲ. ಕಳ್ಳರು ಕನ್ನ ಕೊರೆದು ಕದಿಯುವುದಿಲ್ಲ.
MAT 6:21 ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು.
MAT 6:22 “ಕಣ್ಣು ದೇಹಕ್ಕೆ ದೀಪವಾಗಿದೆ. ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು.
MAT 6:23 ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವುದಾದರೆ ಅದು ಎಂತಹ ಕಾರ್ಗತ್ತಲಲ್ಲವೇ!
MAT 6:24 “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ.
MAT 6:25 “ಆದ್ದರಿಂದ ನಿಮ್ಮ ಜೀವನಕ್ಕಾಗಿ, ಏನು ಊಟಮಾಡಬೇಕು, ಏನು ಕುಡಿಯಬೇಕು ಅಥವಾ ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವೂ ವಸ್ತ್ರಕ್ಕಿಂತ ದೇಹವೂ ಮೇಲಾದದ್ದಲ್ಲವೇ?
MAT 6:26 ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದಿಲ್ಲ. ಆದರೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾರೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಲ್ಲವೇ?
MAT 6:27 ನೀವು ಚಿಂತಿಸುವುದರಿಂದ ನಿಮ್ಮ ಜೀವನಕ್ಕೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?
MAT 6:28 “ನೀವು ಉಡುಪಿನ ವಿಷಯ ಚಿಂತಿಸುವುದೇಕೆ? ಅಡವಿಯಲ್ಲಿ ಹೂವುಗಳು ಬೆಳೆಯುವುದನ್ನು ಗಮನಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ.
MAT 6:29 ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ.
MAT 6:30 ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೂ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ?
MAT 6:31 ಆದ್ದರಿಂದ, ‘ಏನು ಊಟಮಾಡಬೇಕು? ಏನು ಕುಡಿಯಬೇಕು ಮತ್ತು ಏನು ಧರಿಸಬೇಕು?’ ಎಂದು ಚಿಂತಿಸಬೇಡಿರಿ.
MAT 6:32 ಇವೆಲ್ಲವನ್ನು ದೇವರನ್ನು ಅರಿಯದವರು ಹುಡುಕುತ್ತಾರೆ. ಇವೆಲ್ಲಾ ನಿಮಗೆ ಅವಶ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಯು ತಿಳಿದಿದ್ದಾರೆ.
MAT 6:33 ನೀವು ಮೊದಲು ದೇವರ ರಾಜ್ಯವನ್ನೂ ಅದರ ನೀತಿಯನ್ನೂ ಹುಡುಕಿರಿ. ಆಗ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.
MAT 6:34 ಆದ್ದರಿಂದ, ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು, ಆ ದಿನದ ಪಾಡು ಆ ದಿನಕ್ಕೆ ಸಾಕು.
MAT 7:1 “ತೀರ್ಪುಮಾಡಬೇಡಿರಿ, ಆಗ ನಿಮಗೂ ಸಹ ತೀರ್ಪಾಗುವುದಿಲ್ಲ.
MAT 7:2 ನೀವು ಇತರರ ಬಗ್ಗೆ ಕೊಡುವ ತೀರ್ಪಿನ ಪ್ರಕಾರವೇ ನಿಮಗೂ ತೀರ್ಪಾಗುವುದು, ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು.
MAT 7:3 “ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ?
MAT 7:4 ನಿನ್ನ ಕಣ್ಣಿನಲ್ಲಿಯೇ ಮರದ ದಿಮ್ಮಿ ಇರುವಾಗ, ನಿನ್ನ ಸಹೋದರನಿಗೆ, ‘ನಾನು ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆದುಬಿಡುತ್ತೇನೆ,’ ಎಂದು ನೀನು ಹೇಳುವುದು ಹೇಗೆ?
MAT 7:5 ಕಪಟಿಯೇ, ಮೊದಲು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು. ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು, ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.
MAT 7:6 “ಪವಿತ್ರವಾದದ್ದನ್ನು ನಾಯಿಗಳಿಗೆ ಕೊಡಬೇಡಿರಿ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಚೆಲ್ಲಬೇಡಿರಿ. ಹಾಗೆ ಮಾಡಿದರೆ ಹಂದಿಗಳು ಮುತ್ತುಗಳನ್ನು ತಮ್ಮ ಕಾಲುಗಳಿಂದ ತುಳಿದು ಹಾಕಿಯಾವು. ನಾಯಿಗಳು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.
MAT 7:7 “ಬೇಡಿಕೊಳ್ಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.
MAT 7:8 ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.
MAT 7:9 “ನಿಮ್ಮಲ್ಲಿ ಯಾವನಾದರೂ ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಅವನಿಗೆ ಕಲ್ಲನ್ನು ಕೊಡುವನೇ?
MAT 7:10 ಇಲ್ಲವೆ ಮೀನನ್ನು ಕೇಳಿದರೆ ಅವನಿಗೆ ಹಾವನ್ನು ಕೊಡುವನೇ?
MAT 7:11 ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತಮ್ಮಲ್ಲಿ ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯವುಗಳನ್ನು ಕೊಡುವರಲ್ಲವೇ!
MAT 7:12 ಆದ್ದರಿಂದ, ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಬಯಸುತ್ತೀರೋ, ಅದರಂತೆಯೇ ನೀವು ಅವರಿಗೆ ಮಾಡಿರಿ; ಇದೇ ನಿಯಮ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶವು.
MAT 7:13 “ಇಕ್ಕಟ್ಟಾದ ಬಾಗಿಲಿನಿಂದ ಪ್ರವೇಶಿಸಿರಿ. ಏಕೆಂದರೆ ನಾಶಕ್ಕೆ ಒಯ್ಯುವ ಬಾಗಿಲು, ಅಗಲವೂ ಅದರ ಮಾರ್ಗವು ವಿಶಾಲವೂ ಆಗಿವೆ; ಅದರೊಳಗೆ ಪ್ರವೇಶಿಸುವವರು ಅನೇಕರು.
MAT 7:14 ಜೀವಕ್ಕೆ ಒಯ್ಯುವ ಬಾಗಿಲು ಇಕ್ಕಟ್ಟಾದದ್ದೂ ದಾರಿಯು ಕಷ್ಟಕರವಾದದ್ದೂ ಆಗಿದೆ; ಅದನ್ನು ಕಂಡು ಹಿಡಿಯುವವರು ಕೆಲವರು ಮಾತ್ರ.
MAT 7:15 “ಕುರಿಯ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆ. ಏಕೆಂದರೆ ಅವರು ಒಳಗೆ ಕ್ರೂರವಾದ ತೋಳಗಳಾಗಿದ್ದಾರೆ.
MAT 7:16 ಅವರವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಿಂದ ದ್ರಾಕ್ಷಿಯನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಕೀಳುವರೋ?
MAT 7:17 ಅದರಂತೆಯೇ, ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಆದರೆ ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ.
MAT 7:18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು, ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡಲಾರದು.
MAT 7:19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.
MAT 7:20 ಆದ್ದರಿಂದ ಅವರವರ ಫಲಗಳಿಂದಲೇ ನೀವು ಅವರನ್ನು ತಿಳಿದುಕೊಳ್ಳುವಿರಿ.
MAT 7:21 “ನನ್ನನ್ನು, ‘ಸ್ವಾಮೀ, ಸ್ವಾಮೀ,’ ಎಂದು ಹೇಳುವವರೆಲ್ಲರೂ ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ. ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಅದರಲ್ಲಿ ಪ್ರವೇಶಿಸುವನು.
MAT 7:22 ಆ ದಿನದಲ್ಲಿ, ‘ಕರ್ತದೇವರೇ, ಕರ್ತದೇವರೇ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು.
MAT 7:23 ಆಗ ನಾನು ಅವರಿಗೆ, ‘ನಿಮ್ಮನ್ನು ನಾನೆಂದೂ ಅರಿಯೆನು, ನಿಯಮ ಮೀರಿ ಬಾಳಿದವರೇ ನನ್ನಿಂದ ತೊಲಗಿಹೋಗಿರಿ!’ ಎಂದು ಹೇಳಿಬಿಡುವೆನು.
MAT 7:24 “ಆದ್ದರಿಂದ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವ ಪ್ರತಿಯೊಬ್ಬನೂ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಸಮಾನ.
MAT 7:25 ಮಳೆಯು ಸುರಿದು ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಆ ಮನೆ ಬೀಳಲಿಲ್ಲ. ಏಕೆಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಕಟ್ಟಲಾಗಿತ್ತು.
MAT 7:26 ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬನು ಅವುಗಳಂತೆ ನಡೆಯದೆ ಹೋದರೆ, ಅವನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಸಮಾನ.
MAT 7:27 ಮಳೆಯು ಸುರಿದು, ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆಗ ಆ ಮನೆ ಕುಸಿದು ಬಿತ್ತು. ಅದರ ಬೀಳುವಿಕೆಯು ಭಯಂಕರವಾಗಿತ್ತು,” ಎಂದರು.
MAT 7:28 ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಅವರ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು.
MAT 7:29 ಏಕೆಂದರೆ, ಯೇಸು ಅವರ ನಿಯಮ ಬೋಧಕರಂತೆ ಬೋಧಿಸದೆ, ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು.
MAT 8:1 ಯೇಸು ಪರ್ವತವನ್ನು ಇಳಿದು ಬಂದಾಗ, ಜನರು ದೊಡ್ಡ ಸಮೂಹವಾಗಿ ಅವರನ್ನು ಹಿಂಬಾಲಿಸಿದರು.
MAT 8:2 ಅಲ್ಲಿಗೆ ಕುಷ್ಠರೋಗಿಯಾಗಿದ್ದ ಒಬ್ಬನು ಬಂದು, ಯೇಸುವಿನ ಮುಂದೆ ಮೊಣಕಾಲೂರಿ, “ಕರ್ತನೇ, ನೀವು ಮನಸ್ಸು ಮಾಡಿದರೆ, ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದನು.
MAT 8:3 ಆಗ ಯೇಸು ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು. ತಕ್ಷಣವೇ ಅವನ ಕುಷ್ಠವು ಹೋಗಿ ಅವನು ಶುದ್ಧನಾದನು.
MAT 8:4 ಆಗ ಯೇಸು ಅವನಿಗೆ, “ನೋಡು ಇದನ್ನು ನೀನು ಯಾರಿಗೂ ಹೇಳಬೇಡ, ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಜನರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು,” ಎಂದು ಹೇಳಿದರು.
MAT 8:5 ಯೇಸು ಕಪೆರ್ನೌಮಿಗೆ ಪ್ರವೇಶಿಸಿದಾಗ, ಒಬ್ಬ ಶತಾಧಿಪತಿಯು ಅವರ ಬಳಿಗೆ ಬಂದು,
MAT 8:6 “ಸ್ವಾಮೀ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಘೋರವಾಗಿ ನರಳುತ್ತಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾನೆ,” ಎಂದು ಹೇಳಿಕೊಂಡನು.
MAT 8:7 ಯೇಸು ಅವನಿಗೆ, “ನಾನು ಬಂದು ಅವನನ್ನು ಸ್ವಸ್ಥಮಾಡುತ್ತೇನೆ,” ಎಂದರು.
MAT 8:8 ಅದಕ್ಕೆ ಶತಾಧಿಪತಿಯು, “ಸ್ವಾಮೀ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. ಆದರೆ, ನೀವು ಒಂದು ಮಾತು ಮಾತ್ರ ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.
MAT 8:9 ಏಕೆಂದರೆ ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು’ ಎಂದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ, ‘ಬಾ’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿದನು.
MAT 8:10 ಯೇಸು ಇದನ್ನು ಕೇಳಿ, ಆಶ್ಚರ್ಯಪಟ್ಟು ತಮ್ಮ ಹಿಂದೆ ಬರುತ್ತಿದ್ದವರಿಗೆ, “ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
MAT 8:11 ಅನೇಕರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು, ಪರಲೋಕ ರಾಜ್ಯದಲ್ಲಿ ಅಬ್ರಹಾಮ್, ಇಸಾಕ್, ಯಾಕೋಬರೊಂದಿಗೆ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.
MAT 8:12 ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ದಬ್ಬಲಾಗುವರು, ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಎಂದು ನಿಮಗೆ ಹೇಳುತ್ತೇನೆ,” ಎಂದರು.
MAT 8:13 ಅನಂತರ ಯೇಸು ಆ ಶತಾಧಿಪತಿಗೆ, “ಹೋಗು, ನೀನು ನಂಬಿದಂತೆಯೇ ನಿನಗಾಗಲಿ,” ಎಂದು ಹೇಳಿದರು. ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
MAT 8:14 ತರುವಾಯ ಯೇಸು ಪೇತ್ರನ ಮನೆಗೆ ಬಂದು, ಅವನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು.
MAT 8:15 ಯೇಸು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟುಹೋಯಿತು. ಆಕೆಯು ಎದ್ದು ಅವರನ್ನು ಉಪಚರಿಸಿದಳು.
MAT 8:16 ಸಂಜೆಯಾದಾಗ, ದೆವ್ವಹಿಡಿದ ಅನೇಕರನ್ನು ಜನರು ಯೇಸುವಿನ ಬಳಿಗೆ ಕರೆತಂದರು. ಯೇಸು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ, ಎಲ್ಲಾ ರೋಗಪೀಡಿತರನ್ನೂ ಸ್ವಸ್ಥಪಡಿಸಿದರು.
MAT 8:17 ಹೀಗೆ, “ಅವರು ತಾವೇ ನಮ್ಮ ಬಲಹೀನತೆಗಳನ್ನು ತೆಗೆದುಕೊಂಡು, ನಮ್ಮ ರೋಗಗಳನ್ನು ಹೊತ್ತುಕೊಂಡರು,” ಎಂದು ಯೆಶಾಯ ಪ್ರವಾದಿಯು ಹೇಳಿದ್ದು ನೆರವೇರಿತು.
MAT 8:18 ಯೇಸು ತಮ್ಮ ಸುತ್ತಲಿದ್ದ ಜನರ ದೊಡ್ಡ ಸಮೂಹವನ್ನು ಕಂಡು, ಆಚೆದಡಕ್ಕೆ ಹೋಗಲು ಅಪ್ಪಣೆಕೊಟ್ಟರು.
MAT 8:19 ಆಗ ಒಬ್ಬ ನಿಯಮ ಬೋಧಕ ಬಂದು ಯೇಸುವಿಗೆ, “ಬೋಧಕರೇ, ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು,” ಎಂದನು.
MAT 8:20 ಅದಕ್ಕೆ ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.
MAT 8:21 ಮತ್ತೊಬ್ಬ ಶಿಷ್ಯನು ಅವರಿಗೆ, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.
MAT 8:22 ಆದರೆ ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ,” ಎಂದು ಹೇಳಿದರು.
MAT 8:23 ಯೇಸುವು ದೋಣಿಯನ್ನು ಹತ್ತಲು, ಶಿಷ್ಯರು ಸಹ ಅವರ ಸಂಗಡ ಹೋದರು.
MAT 8:24 ಇದ್ದಕ್ಕಿದ್ದ ಹಾಗೆ, ಸರೋವರದಲ್ಲಿ ದೊಡ್ಡ ಬಿರುಗಾಳಿ ಎದ್ದ ಕಾರಣ ದೋಣಿಯು ಅಲೆಗಳಿಂದ ಮುಚ್ಚುತ್ತಿತ್ತು. ಆದರೆ ಯೇಸು ನಿದ್ರಿಸುತ್ತಿದ್ದರು.
MAT 8:25 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಕರ್ತನೇ, ಕಾಪಾಡು! ನಾವು ಮುಳುಗುತ್ತಿದ್ದೇವೆ!” ಎಂದರು.
MAT 8:26 ಆಗ ಯೇಸು ಅವರಿಗೆ, “ಅಲ್ಪವಿಶ್ವಾಸವುಳ್ಳವರೇ, ನೀವು ಏಕೆ ಭಯಪಡುತ್ತೀರಿ?” ಎಂದು ಹೇಳಿ, ಎದ್ದು ಬಿರುಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ಎಲ್ಲವೂ ಪ್ರಶಾಂತವಾಯಿತು.
MAT 8:27 ಆದರೆ ಶಿಷ್ಯರು ಆಶ್ಚರ್ಯದಿಂದ, “ಇವರು ಎಂಥಾ ಮನುಷ್ಯನಾಗಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದರು.
MAT 8:28 ಯೇಸು ಆಚೆಯ ಕಡೆಯಲ್ಲಿದ್ದ ಗದರೇನರ ಪ್ರಾಂತಕ್ಕೆ ಬಂದಾಗ, ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಬಂದು ಯೇಸುವಿಗೆ ಎದುರಾದರು. ಅವರು ಬಹು ಕ್ರೂರಿಗಳಾಗಿದ್ದುದರಿಂದ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ.
MAT 8:29 ಆಗ ಅವರು, “ದೇವಪುತ್ರನೇ, ನಮ್ಮ ಗೊಡವೆ ನಿಮಗೆ ಏಕೆ? ಸಮಯಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಇಲ್ಲಿಗೆ ಬಂದೆಯಾ?” ಎಂದು ಕೂಗಿ ಹೇಳಿದರು.
MAT 8:30 ಆಗ ಅವರಿಂದ ಸ್ವಲ್ಪ ದೂರದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.
MAT 8:31 “ನೀನು ನಮ್ಮನ್ನು ಹೊರಗೆ ಹಾಕುವುದಾದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು.
MAT 8:32 ಯೇಸು ಅವುಗಳಿಗೆ, “ಹೋಗಿರಿ,” ಎಂದರು. ಆಗ ಅವು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಗ ಆ ಹಿಂಡೆಲ್ಲಾ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಸತ್ತು ಹೋದವು.
MAT 8:33 ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ, ಪಟ್ಟಣದೊಳಕ್ಕೆ ಹೋಗಿ ದೆವ್ವ ಹಿಡಿದಿದ್ದವರಿಗೆ ಸಂಭವಿಸಿದ್ದನ್ನು ವರದಿಮಾಡಿದರು.
MAT 8:34 ಆಗ ಪಟ್ಟಣದವರೆಲ್ಲರೂ ಯೇಸುವನ್ನು ಕಾಣುವುದಕ್ಕೆ ಹೊರಗೆ ಬಂದರು. ಅವರು ಯೇಸುವನ್ನು ಕಂಡು, ತಮ್ಮ ಪ್ರಾಂತವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.
MAT 9:1 ಯೇಸು ದೋಣಿ ಹತ್ತಿ, ಸರೋವರವನ್ನು ದಾಟಿ ತಮ್ಮ ಸ್ವಂತ ಪಟ್ಟಣಕ್ಕೆ ಬಂದರು.
MAT 9:2 ಆಗ ಹಾಸಿಗೆಯ ಮೇಲೆ ಮಲಗಿದ್ದ, ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಯೇಸುವಿನ ಬಳಿಗೆ ತಂದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ಧೈರ್ಯವಾಗಿರು. ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
MAT 9:3 ಆಗ ನಿಯಮ ಬೋಧಕರಲ್ಲಿ ಕೆಲವರು, “ಈತನು ದೇವದೂಷಣೆ ಮಾಡುತ್ತಿದ್ದಾನೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
MAT 9:4 ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು, “ನೀವು ನಿಮ್ಮ ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸುವುದೇಕೆ?
MAT 9:5 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
MAT 9:6 ಆದರೆ ಮನುಷ್ಯಪುತ್ರನಾದ ನನಗೆ ಈ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
MAT 9:7 ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
MAT 9:8 ಜನರ ಗುಂಪು ಇದನ್ನು ಕಂಡು ಬೆರಗಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.
MAT 9:9 ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
MAT 9:10 ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ಅಪಖ್ಯಾತಿಯ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು.
MAT 9:11 ಫರಿಸಾಯರು ಇದನ್ನು ಕಂಡು, “ನಿಮ್ಮ ಬೋಧಕನು ಸುಂಕದವರ ಮತ್ತು ಅಪಖ್ಯಾತಿಯ ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
MAT 9:12 ಆದರೆ ಯೇಸು ಇದನ್ನು ಕೇಳಿ ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
MAT 9:13 ಆದರೆ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ,’ ಎಂಬುದರ ಅರ್ಥವನ್ನು ಕಲಿತುಕೊಳ್ಳಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು.
MAT 9:14 ಬಳಿಕ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವೂ, ಫರಿಸಾಯರೂ ಉಪವಾಸ ಮಾಡುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
MAT 9:15 ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ದುಃಖಪಡುವುದುಂಟೇ? ಆದರೆ ಮದುಮಗನು ಅಗಲಬೇಕಾಗುವ ದಿವಸಗಳು ಬರುತ್ತವೆ; ಆಗ ಅವರು ಉಪವಾಸ ಮಾಡುವರು.
MAT 9:16 “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಏಕೆಂದರೆ ಅದು ಆ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು.
MAT 9:17 ಅಂತೆಯೇ ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ಅವರು ಹಾಗೇನಾದರೂ ಮಾಡಿದರೆ ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ. ಆಗ ಅವೆರಡೂ ಉಳಿಯುತ್ತವೆ,” ಎಂದರು.
MAT 9:18 ಯೇಸು ಇದೆಲ್ಲವನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ, ಸಭಾಮಂದಿರದ ಒಬ್ಬ ಅಧಿಕಾರಿಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ನೀವು ಬಂದು ಆಕೆಯ ಮೇಲೆ ನಿಮ್ಮ ಕೈಯನ್ನಿಡಿರಿ; ಆಗ ಅವಳು ಬದುಕುವಳು,” ಎಂದು ಹೇಳಿದನು.
MAT 9:19 ಯೇಸು ಎದ್ದು ತಮ್ಮ ಶಿಷ್ಯರೊಂದಿಗೆ ಆ ಅಧಿಕಾರಿಯ ಹಿಂದೆ ಹೋದರು.
MAT 9:20 ಆಗ ಅಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂಬದಿಯಿಂದ ಬಂದು, ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿ,
MAT 9:21 “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದು ಆಕೆಯು ತನ್ನೊಳಗೆ ಹೇಳಿಕೊಂಡಳು.
MAT 9:22 ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ,” ಎಂದರು. ಆ ಗಳಿಗೆಯಲ್ಲೇ ಆ ಸ್ತ್ರೀಯು ಸ್ವಸ್ಥಳಾದಳು.
MAT 9:23 ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಗೆ ಬಂದು ಕೊಳಲೂದುವವರನ್ನೂ ಜನರ ಗೊಂದಲವನ್ನೂ ಕಂಡು,
MAT 9:24 ಅವರಿಗೆ, “ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು.
MAT 9:25 ಆದರೆ ಜನರನ್ನು ಹೊರಗೆ ಕಳುಹಿಸಿದ ಮೇಲೆ ಯೇಸು ಒಳಗೆ ಹೋಗಿ, ಬಾಲಕಿಯ ಕೈಯನ್ನು ಹಿಡಿದು ಎಬ್ಬಿಸಿದಾಗ ಬಾಲಕಿಯು ಎದ್ದಳು.
MAT 9:26 ಈ ಸಮಾಚಾರವು ನಾಡಿನಲ್ಲೆಲ್ಲಾ ಹರಡಿತು.
MAT 9:27 ಯೇಸು ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು,” ಎಂದು ಮೊರೆಯಿಡುತ್ತಾ ಯೇಸುವಿನ ಹಿಂದೆ ಹೋದರು.
MAT 9:28 ಯೇಸು ಮನೆಗೆ ಬಂದಾಗ, ಆ ಕುರುಡರು ಅವರ ಬಳಿಗೆ ಬಂದರು. ಆಗ ಯೇಸು ಅವರಿಗೆ, “ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ?” ಎಂದು ಕೇಳಿದರು. ಅದಕ್ಕವರು ಯೇಸುವಿಗೆ, “ಹೌದು ಕರ್ತನೆ,” ಎಂದರು.
MAT 9:29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗಾಗಲಿ,” ಎಂದು ಹೇಳಿದರು.
MAT 9:30 ಆಗ ಅವರಿಗೆ ದೃಷ್ಟಿ ಬಂದಿತು. ಯೇಸು ಅವರಿಗೆ, “ಇದು ಯಾರಿಗೂ ತಿಳಿಯಬಾರದು,” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದರು.
MAT 9:31 ಆದರೆ ಸ್ವಸ್ಥರಾದವರು ಹೊರಟುಹೋಗಿ, ಆ ನಾಡಿನಲ್ಲೆಲ್ಲಾ ಯೇಸುವಿನ ಕೀರ್ತಿಯನ್ನು ಹರಡಿದರು.
MAT 9:32 ಯೇಸು ಮತ್ತು ಶಿಷ್ಯರು ಹೊರಟು ಹೋಗುತ್ತಿದ್ದಾಗ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುವಿನ ಬಳಿಗೆ ತಂದರು.
MAT 9:33 ದೆವ್ವ ಬಿಡಿಸಿದ ಮೇಲೆ, ಆ ಮೂಕನು ಮಾತನಾಡಿದನು. ಜನರು ಆಶ್ಚರ್ಯಪಟ್ಟು, “ಇಂಥದ್ದನ್ನು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ,” ಎಂದು ಹೇಳಿದರು.
MAT 9:34 ಆದರೆ ಫರಿಸಾಯರು, “ದೆವ್ವಗಳ ಅಧಿಪತಿಯಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
MAT 9:35 ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಇದ್ದ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರ ಪ್ರತಿಯೊಂದು ವ್ಯಾಧಿಯನ್ನೂ ರೋಗವನ್ನೂ ಗುಣಪಡಿಸುತ್ತಾ ಸಂಚರಿಸಿದರು.
MAT 9:36 ಜನಸಮೂಹವೂ ಕುರುಬನಿಲ್ಲದ ಕುರಿಗಳಂತೆ ಅಲೆಯುವವರಾಗಿಯೂ ನಿಸ್ಸಹಾಯಕರಾಗಿಯೂ ಇರುವುದನ್ನು ಕಂಡು ಯೇಸು ಅವರ ಮೇಲೆ ಕನಿಕರಪಟ್ಟರು.
MAT 9:37 ಆಗ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಬಹಳವಾಗಿದೆ, ಕೆಲಸದವರೋ ಕೆಲವರು.
MAT 9:38 ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ,” ಎಂದರು.
MAT 10:1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಎಲ್ಲಾ ತರವಾದ ವ್ಯಾಧಿಯನ್ನೂ ರೋಗವನ್ನೂ ಸ್ವಸ್ಥಮಾಡುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
MAT 10:2 ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿದ್ದವು: ಮೊದಲನೆಯವನು, ಪೇತ್ರ ಎಂದು ಎನಿಸಿಕೊಂಡ ಸೀಮೋನ, ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನ;
MAT 10:3 ಫಿಲಿಪ್ಪ, ಬಾರ್ತೊಲೊಮಾಯ; ತೋಮ, ಸುಂಕದವನಾದ ಮತ್ತಾಯ; ಅಲ್ಫಾಯನ ಮಗ ಯಾಕೋಬ, ತದ್ದಾಯ;
MAT 10:4 ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.
MAT 10:5 ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟಿದ್ದೇನೆಂದರೆ: “ಯೆಹೂದ್ಯರಲ್ಲದವರ ಬಳಿಗೆ ಹೋಗಬೇಡಿರಿ, ಸಮಾರ್ಯರ ಊರನ್ನೂ ಪ್ರವೇಶಿಸಬೇಡಿರಿ.
MAT 10:6 ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.
MAT 10:7 ನೀವು ಹೋಗುತ್ತಾ, ‘ಪರಲೋಕ ರಾಜ್ಯವು ಸಮೀಪವಾಯಿತು,’ ಎಂದು ಸಾರಿ ಹೇಳಿರಿ.
MAT 10:8 ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.
MAT 10:9 “ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ.
MAT 10:10 ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು.
MAT 10:11 ನೀವು ಯಾವುದಾದರೂ ಒಂದು ಪಟ್ಟಣವನ್ನು, ಇಲ್ಲವೆ ಹಳ್ಳಿಯನ್ನು ಪ್ರವೇಶಿಸುವಾಗ, ಅದರಲ್ಲಿ ಯೋಗ್ಯ ವ್ಯಕ್ತಿ ಯಾರೆಂದು ವಿಚಾರಿಸಿರಿ, ಅಲ್ಲಿಂದ ಹೊರಡುವವರೆಗೆ ಅಲ್ಲಿಯೇ ತಂಗಿರಿ.
MAT 10:12 ನೀವು ಒಂದು ಮನೆಯೊಳಗೆ ಪ್ರವೇಶಿಸಿದಾಗ, ಆ ಮನೆಯವರನ್ನು ಹರಸಿರಿ.
MAT 10:13 ಆ ಮನೆಯು ಅಯೋಗ್ಯವಾಗಿದ್ದರೆ, ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.
MAT 10:14 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ, ನೀವು ಆ ಮನೆಯನ್ನು ಇಲ್ಲವೆ ಆ ಪಟ್ಟಣವನ್ನು ಬಿಟ್ಟು ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.
MAT 10:15 ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯು ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 10:16 “ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.
MAT 10:17 ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು.
MAT 10:18 ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರ ಮುಂದೆ ಒಯ್ಯುವರು. ಹೀಗೆ ಅವರಿಗೂ ಯೆಹೂದ್ಯರಲ್ಲದವರಿಗೂ ನೀವು ಸಾಕ್ಷಿಗಳಾಗುವಿರಿ.
MAT 10:19 ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು,
MAT 10:20 ಏಕೆಂದರೆ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮೊಳಗಿಂದ ಮಾತನಾಡುವರು.
MAT 10:21 “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
MAT 10:22 ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
MAT 10:23 ಒಂದು ಸ್ಥಳದಲ್ಲಿ ನಿಮಗೆ ಹಿಂಸೆಯಾದರೆ ಇನ್ನೊಂದು ಸ್ಥಳಕ್ಕೆ ಓಡಿಹೋಗಿರಿ. ಮನುಷ್ಯಪುತ್ರನು ಬರುವಷ್ಟರಲ್ಲಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 10:24 “ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ತನ್ನ ಯಜಮಾನನಿಗಿಂತ ಶ್ರೇಷ್ಠನಲ್ಲ.
MAT 10:25 ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!
MAT 10:26 “ಆದ್ದರಿಂದ ಅವರಿಗೆ ಹೆದರಬೇಡಿರಿ, ಪ್ರಕಟಗೊಳ್ಳದಂತೆ ಯಾವುದೂ ಮುಚ್ಚಿಡಲಾಗುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ.
MAT 10:27 ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ. ನೀವು ಕಿವಿಯಲ್ಲಿ ಕೇಳುವುದನ್ನು ಮಾಳಿಗೆಯ ಮೇಲೆ ಸಾರಿರಿ.
MAT 10:28 ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ.
MAT 10:29 ಒಂದು ರೂಪಾಯಿಗೆ ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ.
MAT 10:30 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
MAT 10:31 ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
MAT 10:32 “ಜನರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.
MAT 10:33 ಯಾವನಾದರೂ ಜನರ ಮುಂದೆ ನನ್ನನ್ನು ನಿರಾಕರಿಸಿದರೆ, ನಾನು ಸಹ ಅವನನ್ನು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಿರಾಕರಿಸುವೆನು.
MAT 10:34 “ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು.
MAT 10:35 ಹೇಗೆಂದರೆ, “ ‘ಮಗನಿಗೂ ಅವನ ತಂದೆಗೂ, ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವುದಕ್ಕೆ ನಾನು ಬಂದೆನು.
MAT 10:36 ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’
MAT 10:37 “ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
MAT 10:38 ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
MAT 10:39 ತನ್ನ ಪ್ರಾಣವನ್ನು ಕಂಡುಕೊಳ್ಳುವವನು ಅದನ್ನು ಕಳೆದುಕೊಳ್ಳುವನು. ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
MAT 10:40 “ನಿಮ್ಮನ್ನು ಸ್ವಾಗತಿಸುವವರು ನನ್ನನ್ನು ಸ್ವಾಗತಿಸುತ್ತಾರೆ. ನನ್ನನ್ನು ಸ್ವಾಗತಿಸಿದವರು, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವಾಗತಿಸುತ್ತಾರೆ.
MAT 10:41 ಪ್ರವಾದಿಯೆಂದು ಪ್ರವಾದಿಯನ್ನು ಸ್ವಾಗತಿಸುವವರು ಪ್ರವಾದಿಯ ಪ್ರತಿಫಲವನ್ನು ಪಡೆಯುವರು; ನೀತಿವಂತನೆಂದು ನೀತಿವಂತನನ್ನು ಸ್ವಾಗತಿಸುವವರು ನೀತಿವಂತನ ಪ್ರತಿಫಲವನ್ನು ಪಡೆಯುವರು.
MAT 10:42 ಯಾವನಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಕೇವಲ ಒಂದು ಲೋಟ ತಣ್ಣೀರನ್ನು ಕುಡಿಯುವುದಕ್ಕೆ ಕೊಡುವವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ಸತ್ಯವಾಗಿ ನಾನು ನಿಮಗೆ ಹೇಳುತ್ತೇನೆ.”
MAT 11:1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶ ಕೊಟ್ಟಾದ ಮೇಲೆ, ಗಲಿಲಾಯ ಪ್ರದೇಶದ ಪಟ್ಟಣಗಳಲ್ಲಿ ಬೋಧಿಸುವುದಕ್ಕೂ ಶುಭವರ್ತಮಾನವನ್ನು ಸಾರುವುದಕ್ಕೂ ಅಲ್ಲಿಂದ ಹೊರಟು ಹೋದರು.
MAT 11:2 ಆಗ ಸೆರೆಮನೆಯಲ್ಲಿ ಯೋಹಾನನು ಕ್ರಿಸ್ತನ ಕಾರ್ಯಗಳನ್ನು ಕೇಳಿ, ತನ್ನ ಶಿಷ್ಯರನ್ನು ಕಳುಹಿಸಿ ಯೇಸುವಿಗೆ,
MAT 11:3 “ಬರಬೇಕಾದ ಮೆಸ್ಸೀಯ ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ವಿಚಾರಿಸಿದನು.
MAT 11:4 ಯೇಸು, “ನೀವು ಕೇಳುವುದನ್ನೂ ಕಾಣುವುದನ್ನೂ ಯೋಹಾನನಿಗೆ ಹೋಗಿ ತಿಳಿಸಿರಿ;
MAT 11:5 ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.
MAT 11:6 ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
MAT 11:7 ಅವರು ಹೊರಟು ಹೋಗುತ್ತಿದ್ದಾಗ, ಯೇಸು ಯೋಹಾನನ ಕುರಿತಾಗಿ ಜನಸಮೂಹಕ್ಕೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?
MAT 11:8 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸುವವರು ರಾಜರ ಅರಮನೆಗಳಲ್ಲಿ ಇರುತ್ತಾರೆ.
MAT 11:9 ಆದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
MAT 11:10 ಯೋಹಾನನ ಕುರಿತು ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.’
MAT 11:11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಹುಟ್ಟಲಿಲ್ಲ; ಆದರೂ ಪರಲೋಕ ರಾಜ್ಯದಲ್ಲಿರುವ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ.
MAT 11:12 ಸ್ನಾನಿಕನಾದ ಯೋಹಾನನ ದಿನಗಳಿಂದ ಇದುವರೆಗೆ, ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಒಳಗಾಗಿದೆ, ಬಲಾತ್ಕಾರಿಗಳು ಅದನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ.
MAT 11:13 ಯೋಹಾನನ ಕಾಲದ ತನಕ ಮೋಶೆಯ ನಿಯಮ ಹಾಗು ಎಲ್ಲ ಪ್ರವಾದಿಗಳು ದೇವರ ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.
MAT 11:14 ನೀವು ಇದನ್ನು ಸ್ವೀಕರಿಸುವುದಕ್ಕೆ ಮನಸ್ಸಿದ್ದರೆ, ಬರತಕ್ಕ ಎಲೀಯನು ಈ ಯೋಹಾನನೇ.
MAT 11:15 ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
MAT 11:16 “ಆದರೆ ಈ ಸಂತತಿಯನ್ನು ನಾನು ಯಾವುದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ಇತರರನ್ನು ಕರೆಯುತ್ತಾ:
MAT 11:17 “ ‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ಶೋಕಗೀತೆ ಹಾಡಿದೆವು, ನೀವು ಗೋಳಾಡಲಿಲ್ಲ,’ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
MAT 11:18 “ಏಕೆಂದರೆ ಯೋಹಾನನು ಅನ್ನಪಾನಗಳನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಅವರು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದರು.
MAT 11:19 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು. ಅದಕ್ಕೆ ಅವರು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕೃತ್ಯಗಳಿಂದಲೇ ಸಮರ್ಥಿಸಲಾಗುತ್ತದೆ,” ಎಂದು ಹೇಳಿದರು.
MAT 11:20 ತರುವಾಯ ತಮ್ಮ ಹೆಚ್ಚಾದ ಮಹತ್ಕಾರ್ಯಗಳು ನಡೆದ ಪಟ್ಟಣಗಳು, ದೇವರ ಕಡೆಗೆ ತಿರುಗಿಕೊಳ್ಳದೆ ಇದ್ದುದರಿಂದ ಯೇಸು ಅವುಗಳನ್ನು ಗದರಿಸತೊಡಗಿ,
MAT 11:21 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.
MAT 11:22 ಆದರೂ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು.
MAT 11:23 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. ಏಕೆಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ, ಅದು ಇಂದಿನವರೆಗೂ ಉಳಿಯುತ್ತಿತ್ತು.
MAT 11:24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮ್ ಪಟ್ಟಣದ ಗತಿಯು ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
MAT 11:25 ಆ ಸಮಯದಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ.
MAT 11:26 ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.
MAT 11:27 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.
MAT 11:28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
MAT 11:29 ನಾನು ಸಾತ್ವಿಕನೂ ದೀನ ಹೃದಯದವನೂ ಆಗಿರುವುದರಿಂದ ನೀವು ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
MAT 11:30 ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ,” ಎಂದು ಹೇಳಿದರು.
MAT 12:1 ಯೇಸು ಒಂದು ಸಬ್ಬತ್ ದಿನ ಪೈರಿನ ಹೊಲವನ್ನು ಹಾದುಹೋಗುತ್ತಿದ್ದಾಗ, ಅವರ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
MAT 12:2 ಫರಿಸಾಯರು ಅದನ್ನು ಕಂಡು ಯೇಸುವಿಗೆ, “ಇಗೋ, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಮಾಡುತ್ತಿದ್ದಾರೆ,” ಎಂದರು.
MAT 12:3 ಅದಕ್ಕೆ ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
MAT 12:4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ತಾನಾಗಲಿ ತನ್ನ ಸಂಗಡಿಗರಾಗಲಿ, ತಿನ್ನುವುದಕ್ಕೆ ಧರ್ಮಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತಿನ್ನಲಿಲ್ಲವೇ?
MAT 12:5 ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಉಲ್ಲಂಘಿಸಿದರೂ ನಿರ್ದೋಷಿಗಳಾಗಿದ್ದಾರೆಂದು ನೀವು ನಿಯಮದಲ್ಲಿ ಓದಲಿಲ್ಲವೇ?
MAT 12:6 ದೇವಾಲಯಕ್ಕಿಂತಲೂ ದೊಡ್ಡವನು ಇಲ್ಲಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
MAT 12:7 ಆದರೆ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ, ನಿರಪರಾಧಿಗಳನ್ನು ಖಂಡಿಸುತ್ತಿರಲಿಲ್ಲ.
MAT 12:8 ಏಕೆಂದರೆ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದೇನೆ,” ಎಂದು ಹೇಳಿದರು.
MAT 12:9 ಯೇಸು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದರು.
MAT 12:10 ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.
MAT 12:11 ಅದಕ್ಕೆ ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ, ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
MAT 12:12 ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಮೌಲ್ಯವುಳ್ಳವನಾಗಿದ್ದಾನಲ್ಲವೇ? ಆದ್ದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯಸಮ್ಮತವಾಗಿದೆ!” ಎಂದು ಹೇಳಿದರು.
MAT 12:13 ಆಗ ಯೇಸು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದರು. ಅವನು ಕೈಚಾಚಿದಾಗ ಅದು ಸಂಪೂರ್ಣ ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು.
MAT 12:14 ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಆಲೋಚನೆಮಾಡಿದರು.
MAT 12:15 ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದರು. ದೊಡ್ಡ ಜನರ ಗುಂಪು ಅವರನ್ನು ಹಿಂಬಾಲಿಸಿತು. ಯೇಸು ಅವರಲ್ಲಿ ಅಸ್ವಸ್ಥರಾದವರನ್ನು ಗುಣಪಡಿಸಿದರು.
MAT 12:16 ಆದರೆ ಯೇಸು ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವರನ್ನು ಎಚ್ಚರಿಸಿದರು.
MAT 12:17 ಹೀಗೆ ದೇವರು ಪ್ರವಾದಿಯಾದ ಯೆಶಾಯನ ಮುಖಾಂತರ ಹೇಳಿದ ಮಾತು ನೆರವೇರಿತು. ಅದೇನೆಂದರೆ:
MAT 12:18 “ಈತನು ನಾನು ಆರಿಸಿಕೊಂಡ ನನ್ನ ದಾಸನು, ಈ ನನ್ನ ಪ್ರಿಯನಲ್ಲಿ ನನ್ನ ಪ್ರಾಣವು ಸಂಪೂರ್ಣ ಮೆಚ್ಚಿದೆ. ನಾನು ಈತನ ಮೇಲೆ ನನ್ನ ಆತ್ಮವನ್ನು ಇರಿಸುವೆನು, ಈತನು ಜನಾಂಗಗಳಿಗೆ ನ್ಯಾಯವನ್ನು ಸಾರುವನು.
MAT 12:19 ಈತನು ಜಗಳವಾಡುವವನಲ್ಲ, ಕೂಗಾಡುವವನಲ್ಲ; ಬೀದಿಗಳಲ್ಲಿ ಈತನ ಸ್ವರವನ್ನು ಯಾರೂ ಕೇಳಿಸಿಕೊಳ್ಳುವುದೂ ಇಲ್ಲ.
MAT 12:20 ಈತನು ನ್ಯಾಯವನ್ನು ಜಯಕ್ಕೆ ನಡೆಸುವವರೆಗೆ, ಜಜ್ಜಿದ ದಂಟನ್ನು ಮುರಿಯುವವನಲ್ಲ, ಆರಿ ಹೋಗುತ್ತಿರುವ ಬತ್ತಿಯನ್ನು ನಂದಿಸುವವನೂ ಅಲ್ಲ.
MAT 12:21 ಈತನ ಹೆಸರಿನಲ್ಲಿಯೇ ಯೆಹೂದ್ಯರಲ್ಲದವರು ನಿರೀಕ್ಷೆ ಇಡುವರು.”
MAT 12:22 ಆಗ ಕೆಲವರು ದೆವ್ವಹಿಡಿದ ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವರು ಅವನನ್ನು ಗುಣಪಡಿಸಿದ್ದರಿಂದ, ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ದೃಷ್ಟಿ ಹೊಂದಿದನು.
MAT 12:23 ಆಗ ಜನರೆಲ್ಲರೂ ವಿಸ್ಮಯಗೊಂಡವರಾಗಿ, “ದಾವೀದನ ಪುತ್ರನು ಈತನೇ ಅಲ್ಲವೇ?” ಎಂದರು.
MAT 12:24 ಆದರೆ ಫರಿಸಾಯರು ಇದನ್ನು ಕೇಳಿದಾಗ, “ಈತನು ದೆವ್ವಗಳನ್ನು ಓಡಿಸುತ್ತಿರುವುದು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದಲೇ,” ಎಂದರು.
MAT 12:25 ಯೇಸು ಅವರ ಆಲೋಚನೆಗಳನ್ನು ತಿಳಿದು ಅವರಿಗೆ, “ತನಗೆ ವಿರೋಧವಾಗಿ ವಿಭಜಿಸಿಕೊಳ್ಳುವ ಪ್ರತಿಯೊಂದು ರಾಜ್ಯವು ನಾಶವಾಗುವುದು ಮತ್ತು ತನಗೆ ವಿರೋಧವಾಗಿ ವಿಭಾಗವಾಗಿರುವ ಪ್ರತಿಯೊಂದು ಪಟ್ಟಣವಾಗಲಿ ಮನೆಯಾಗಲಿ ನಿಲ್ಲುವುದಿಲ್ಲ.
MAT 12:26 ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಓಡಿಸಿದರೆ, ಅವನು ತನಗೆ ವಿರೋಧವಾಗಿ ವಿಭಾಗವಾಗಿರುವನು. ಹಾಗಾದರೆ ಅವನ ರಾಜ್ಯವು ನಿಲ್ಲುವುದು ಹೇಗೆ?
MAT 12:27 ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಜನರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
MAT 12:28 ನಾನು ದೇವರ ಆತ್ಮನಿಂದ ದೆವ್ವಗಳನ್ನು ಓಡಿಸುವುದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
MAT 12:29 “ಇದಲ್ಲದೆ, ಯಾವನಾದರೂ ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ, ಅವನ ಮನೆಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸೂರೆ ಮಾಡಲಾದೀತೇ? ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
MAT 12:30 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
MAT 12:31 ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಕ್ಕೂ ದೂಷಣೆಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
MAT 12:32 ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ.
MAT 12:33 “ಮರವು ಒಳ್ಳೆಯದಾಗಿದ್ದರೆ, ಅದರ ಫಲವು ಒಳ್ಳೆಯದಾಗಿರುವುದು; ಮರವು ಕೆಟ್ಟದ್ದಾಗಿದ್ದರೆ, ಅದರ ಫಲವು ಕೆಟ್ಟದ್ದಾಗಿರುವುದು. ಏಕೆಂದರೆ ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು.
MAT 12:34 ಸರ್ಪಸಂತತಿಯವರೇ, ಕೆಟ್ಟವರಾಗಿರುವ ನೀವು ಒಳ್ಳೆಯದೇನನ್ನಾದರೂ ಮಾತನಾಡುವಿರೋ? ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
MAT 12:35 ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
MAT 12:36 ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
MAT 12:37 ನೀನು ನಿನ್ನ ಮಾತುಗಳಿಂದಲೇ ನೀತಿವಂತನೆಂದು ನಿರ್ಣಯಿಸಲಾಗುವುದು ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ನಿರ್ಣಯಿಸಲಾಗುವುದು,” ಎಂದು ಹೇಳಿದರು.
MAT 12:38 ಆಗ ನಿಯಮ ಬೋಧಕರೂ ಫರಿಸಾಯರೂ, “ಬೋಧಕರೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ಕಾಣಬೇಕೆಂದಿದ್ದೇವೆ,” ಎಂದು ಕೇಳಿದರು.
MAT 12:39 ಯೇಸು ಉತ್ತರವಾಗಿ ಅವರಿಗೆ, “ವ್ಯಭಿಚಾರದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ. ಪ್ರವಾದಿ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಈ ಸಂತತಿಗೆ ಕೊಡಲಾಗುವುದಿಲ್ಲ.
MAT 12:40 ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಪುತ್ರನಾದ ನಾನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭದಲ್ಲಿರುವೆನು.
MAT 12:41 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ನಿಂತು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ.
MAT 12:42 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
MAT 12:43 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ, ಅದು,
MAT 12:44 ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, ಆ ಮನೆಯು ಬರಿದಾಗಿಯೂ ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
MAT 12:45 ಆಗ ಅದು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುವವು. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. ಅದರಂತೆಯೇ ಈ ದುಷ್ಟ ಸಂತತಿಗೂ ಆಗುವುದು,” ಎಂದು ಹೇಳಿದರು.
MAT 12:46 ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
MAT 12:47 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
MAT 12:48 ಅದಕ್ಕೆ ಯೇಸು ತಮಗೆ ಹೇಳಿದವನಿಗೆ ಉತ್ತರವಾಗಿ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ,
MAT 12:49 ಶಿಷ್ಯರ ಕಡೆಗೆ ತಮ್ಮ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.
MAT 12:50 ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ,” ಎಂದು ಹೇಳಿದರು.
MAT 13:1 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟುಹೋಗಿ ಸರೋವರದ ಬಳಿಯಲ್ಲಿ ಕುಳಿತುಕೊಂಡರು.
MAT 13:2 ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು.
MAT 13:3 ಆಗ ಯೇಸು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದು: “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು;
MAT 13:4 ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು, ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
MAT 13:5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
MAT 13:6 ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
MAT 13:7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
MAT 13:8 ಆದರೆ ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು, ಒಂದು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲಕೊಟ್ಟವು.
MAT 13:9 ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.”
MAT 13:10 ತರುವಾಯ ಶಿಷ್ಯರು ಬಂದು ಯೇಸುವಿಗೆ, “ನೀವು ಸಾಮ್ಯಗಳಲ್ಲಿ ಅವರೊಡನೆ ಮಾತನಾಡುವುದೇಕೆ?” ಎಂದು ಕೇಳಿದರು.
MAT 13:11 ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ.
MAT 13:12 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.”
MAT 13:13 ಆದ್ದರಿಂದ, ನಾನು ಅವರೊಡನೆ ಸಾಮ್ಯಗಳಲ್ಲಿ ಮಾತನಾಡುತ್ತೇನೆ: “ಏಕೆಂದರೆ ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕೇಳಿದರೂ ತಿಳಿದುಕೊಳ್ಳುವುದಿಲ್ಲ; ಅವರು ಗ್ರಹಿಸುವುದೂ ಇಲ್ಲ.
MAT 13:14 ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.
MAT 13:15 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ. ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
MAT 13:16 ಆದರೆ ನಿಮ್ಮ ಕಣ್ಣುಗಳು ಕಾಣುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಧನ್ಯರು.
MAT 13:17 ನಾನು ಸತ್ಯವಾಗಿ ನಿಮಗೆ ಹೇಳುತ್ತೇನೆ, ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ.
MAT 13:18 “ಆದ್ದರಿಂದ ಬಿತ್ತುವವನ ಸಾಮ್ಯದ ಅರ್ಥವನ್ನು ನೀವು ಕೇಳಿರಿ:
MAT 13:19 ಯಾರಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ, ಕೆಡುಕನು ಬಂದು ಅವರ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ, ಇದೇ ದಾರಿಯ ಪಕ್ಕದಲ್ಲಿ ಬಿತ್ತಲಾಗಿರುವ ಬೀಜವಾಗಿರುವದು.
MAT 13:20 ಕಲ್ಲು ನೆಲದ ಮೇಲೆ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
MAT 13:21 ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
MAT 13:22 ಮುಳ್ಳುಗಿಡಗಳಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ.
MAT 13:23 ಆದರೆ ಒಳ್ಳೆಯ ಭೂಮಿಯಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿ ಅದನ್ನು ಗ್ರಹಿಸಿಕೊಳ್ಳುತ್ತಾರೆ. ಇವರು ಫಲ ಫಲಿಸುವವರಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾರೆ.”
MAT 13:24 ಯೇಸು ಮತ್ತೊಂದು ಸಾಮ್ಯವನ್ನು ಹೇಳಿದರು: “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
MAT 13:25 ಆದರೆ ಜನರು ನಿದ್ರಿಸುತ್ತಿರುವಾಗ, ಅವನ ವೈರಿಯು ಬಂದು ಗೋಧಿಯ ನಡುವೆ ಕಳೆಯನ್ನು ಬಿತ್ತಿ ಹೊರಟುಹೋದನು.
MAT 13:26 ಗೋಧಿಯು ಮೊಳೆತು ಬೆಳೆಯುತ್ತಿರುವಾಗ, ಕಳೆ ಸಹ ಕಾಣಿಸಿಕೊಂಡಿತು.
MAT 13:27 “ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು.
MAT 13:28 “ಯಜಮಾನನು ಅವರಿಗೆ, ‘ವೈರಿಯು ಇದನ್ನು ಮಾಡಿದ್ದಾನೆ,’ ಎಂದನು. “ಆಗ ಸೇವಕರು ಅವನಿಗೆ, ‘ನಾವು ಹೋಗಿ ಅವುಗಳನ್ನು ಕಿತ್ತುಹಾಕೋಣವೇ?’ ಎಂದು ಕೇಳಿದರು.
MAT 13:29 “ಆದರೆ ಯಜಮಾನನು, ‘ಬೇಡ, ನೀವು ಕಳೆಯನ್ನು ಕೀಳುವಾಗ, ಅವುಗಳೊಂದಿಗೆ ಗೋಧಿಯನ್ನೂ ಕಿತ್ತುಬಿಟ್ಟೀರಿ.
MAT 13:30 ಸುಗ್ಗಿಯ ಕಾಲದವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ. ಸುಗ್ಗಿಯ ಕಾಲದಲ್ಲಿ ನಾನು ಕೊಯ್ಯುವವರಿಗೆ: ಮೊದಲು ಕಳೆಯನ್ನು ಕೂಡಿಸಿ ಅವುಗಳನ್ನು ಸುಡುವುದಕ್ಕೆ ಬೇರೆ ಕಟ್ಟಿಡಿರಿ, ಗೋಧಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು,’ ಅಂದನು.”
MAT 13:31 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು, ಒಬ್ಬ ಮನುಷ್ಯನು ಸಾಸಿವೆ ಕಾಳನ್ನು ತೆಗೆದುಕೊಂಡುಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದಕ್ಕೆ ಹೋಲಿಕೆಯಾಗಿದೆ.
MAT 13:32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದ್ದರೂ ಅದು ಬೆಳೆದಾಗ, ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು, ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡುತ್ತವೆ.”
MAT 13:33 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು.”
MAT 13:34 ಯೇಸು ಇವೆಲ್ಲವನ್ನು ಜನಸಮೂಹದೊಂದಿಗೆ ಸಾಮ್ಯಗಳಲ್ಲಿಯೇ ಹೇಳಿದರು; ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ.
MAT 13:35 ಹೀಗೆ ಒಬ್ಬ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರಿತು: “ನಾನು ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು. ನಾನು ಲೋಕ ಪ್ರಾರಂಭದಿಂದ ಮರೆಯಾದವುಗಳನ್ನು ಪ್ರಕಟಪಡಿಸುವೆನು.”
MAT 13:36 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ಮನೆಯೊಳಕ್ಕೆ ಹೋದರು. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಹೊಲದಲ್ಲಿರುವ ಕಳೆಯ ಸಾಮ್ಯವನ್ನು ನಮಗೆ ವಿವರಿಸಿರಿ,” ಎಂದರು.
MAT 13:37 ಯೇಸು ಉತ್ತರವಾಗಿ ಅವರಿಗೆ, “ಒಳ್ಳೆಯ ಬೀಜ ಬಿತ್ತುವವನು ಮನುಷ್ಯಪುತ್ರನು.
MAT 13:38 ಹೊಲವು ಈ ಲೋಕ; ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳು; ಕಳೆಯು ಕೆಡುಕನ ಮಕ್ಕಳಾಗಿದ್ದಾರೆ.
MAT 13:39 ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ.
MAT 13:40 “ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು.
MAT 13:41 ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ,
MAT 13:42 ದೂತರು ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.
MAT 13:43 ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.
MAT 13:44 “ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ಕಂಡುಕೊಂಡು ಮುಚ್ಚಿಟ್ಟು, ಅದರ ಸಂತೋಷದ ನಿಮಿತ್ತ ಹೊರಟುಹೋಗಿ, ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
MAT 13:45 “ಪರಲೋಕ ರಾಜ್ಯವು ಒಳ್ಳೆಯ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
MAT 13:46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು, ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಳ್ಳುತ್ತಾನೆ.
MAT 13:47 “ಪರಲೋಕ ರಾಜ್ಯವು, ಸರೋವರದಲ್ಲಿ ಬೀಸಲಾಗಿ ಎಲ್ಲಾ ತರವಾದ ಮೀನುಗಳನ್ನು ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
MAT 13:48 ಬಲೆ ತುಂಬಿದಾಗ, ಬೆಸ್ತರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಬುಟ್ಟಿಗಳಲ್ಲಿ ತುಂಬಿಸಿ, ಕೆಟ್ಟವುಗಳನ್ನು ಹೊರಗೆ ಬಿಸಾಡುತ್ತಾರೆ.
MAT 13:49 ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ,
MAT 13:50 ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು,” ಎಂದು ಹೇಳಿದರು.
MAT 13:51 ಯೇಸು ಶಿಷ್ಯರಿಗೆ, “ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ?” ಎಂದು ಕೇಳಿದರು. ಅದಕ್ಕೆ, ಅವರು ಯೇಸುವಿಗೆ, “ಹೌದು,” ಎಂದು ಹೇಳಿದರು.
MAT 13:52 ಯೇಸು ಅವರಿಗೆ, “ಆದಕಾರಣ ಪರಲೋಕ ರಾಜ್ಯದ ಶಿಷ್ಯನಾಗಿರುವ ಪ್ರತಿಯೊಬ್ಬ ನಿಯಮ ಬೋಧಕನು, ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ,” ಎಂದರು.
MAT 13:53 ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟು ಹೋದರು.
MAT 13:54 ಯೇಸು ತಮ್ಮ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಅವರಿಗೆ ಬೋಧನೆ ಮಾಡಲು ಪ್ರಾರಂಭಿಸಲು, ಅವರು ವಿಸ್ಮಯಗೊಂಡು, “ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದವು?
MAT 13:55 ಈತನು ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ?
MAT 13:56 ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡರು.
MAT 13:57 ಅವರು ಯೇಸುವನ್ನು ತಾತ್ಸಾರ ಮಾಡಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.
MAT 13:58 ಯೇಸು ಅವರ ಅಪನಂಬಿಕೆಯ ದೆಸೆಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲ.
MAT 14:1 ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ,
MAT 14:2 ತನ್ನ ಸೇವಕರಿಗೆ, “ಈತನು ಸ್ನಾನಿಕನಾದ ಯೋಹಾನನೇ. ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ! ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಹೇಳಿದನು.
MAT 14:3 ಹೆರೋದನು ತನ್ನ ಸಹೋದರ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿ, ಯೋಹಾನನನ್ನು ಹಿಡಿಸಿ, ಕಟ್ಟಿ ಸೆರೆಯಲ್ಲಿ ಹಾಕಿಸಿದ್ದನು.
MAT 14:4 ಏಕೆಂದರೆ ಯೋಹಾನನು, “ನೀನು ಅವಳನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಅವನಿಗೆ ಹೇಳಿದ್ದನು.
MAT 14:5 ಹೆರೋದನು ಯೋಹಾನನನ್ನು ಕೊಲ್ಲಬೇಕೆಂದಿದ್ದರೂ ಜನಸಮೂಹಕ್ಕೆ ಭಯಪಟ್ಟನು. ಅವರು ಯೋಹಾನನನ್ನು ಪ್ರವಾದಿಯೆಂದು ಎಣಿಸಿದ್ದರು.
MAT 14:6 ಆದರೆ ಹೆರೋದನ ಹುಟ್ಟಿದ ದಿನವನ್ನು ಆಚರಿಸುವಾಗ, ಹೆರೋದ್ಯಳ ಮಗಳು ಅವರ ಮುಂದೆ ನರ್ತನ ಮಾಡಿ ಹೆರೋದನನ್ನು ಬಹಳ ಮೆಚ್ಚಿಸಿದಳು.
MAT 14:7 ಆದ್ದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅರಸನು ಆಣೆಯಿಟ್ಟು ಪ್ರಮಾಣ ಮಾಡಿದನು.
MAT 14:8 ಅವಳು ತನ್ನ ತಾಯಿಯ ಸಲಹೆ ಪಡೆದು, “ಸ್ನಾನಿಕನಾದ ಯೋಹಾನನ ತಲೆಯನ್ನು ಇಲ್ಲಿಯೇ ಒಂದು ತಟ್ಟೆಯಲ್ಲಿ ನನಗೆ ತರಿಸಿಕೊಡು,” ಎಂದು ಹೇಳಿದಳು.
MAT 14:9 ಆಗ ಅರಸನು ದುಃಖಪಟ್ಟರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.
MAT 14:10 ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿದ್ದ ಯೋಹಾನನ ತಲೆಯನ್ನು ಕಡಿಸಿದನು.
MAT 14:11 ಇದಲ್ಲದೆ ಅವನ ತಲೆಯನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.
MAT 14:12 ಬಳಿಕ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ತಿಳಿಸಿದರು.
MAT 14:13 ಯೇಸು ಆ ವಿಷಯವನ್ನು ಕೇಳಿದಾಗ ದೋಣಿಯನ್ನು ಹತ್ತಿ ಅಲ್ಲಿಂದ ಏಕಾಂತ ಸ್ಥಳಕ್ಕೆ ಹೊರಟರು. ಜನರು ಇದನ್ನು ಕೇಳಿ ಪಟ್ಟಣಗಳಿಂದ ಕಾಲು ನಡಿಗೆಯಲ್ಲಿ ಯೇಸುವನ್ನು ಹಿಂಬಾಲಿಸಿದರು.
MAT 14:14 ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು, ಅವರ ಮೇಲೆ ಕನಿಕರಪಟ್ಟು, ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದರು.
MAT 14:15 ಸಂಜೆಯಾದಾಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಸಮಯವು ದಾಟಿದೆ. ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು,” ಎಂದರು.
MAT 14:16 ಆದರೆ ಯೇಸುವು, “ಅವರು ಹೋಗಬೇಕಾಗಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದು ಹೇಳಿದರು.
MAT 14:17 ಅವರು ಯೇಸುವಿಗೆ, “ನಮ್ಮ ಹತ್ತಿರ ಐದು ರೊಟ್ಟಿ ಎರಡು ಮೀನುಗಳು ಮಾತ್ರ ಇವೆ,” ಎಂದು ಉತ್ತರಕೊಟ್ಟರು.
MAT 14:18 ಯೇಸು, “ಅವುಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿರಿ,” ಎಂದರು.
MAT 14:19 ಜನಸಮೂಹವು ಹುಲ್ಲಿನ ಮೇಲೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಕೊಟ್ಟು, ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
MAT 14:20 ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿ ತುಂಬಿದವು.
MAT 14:21 ಊಟಮಾಡಿದವರಲ್ಲಿ ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿ ಇದ್ದರು.
MAT 14:22 ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಆಚೆದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.
MAT 14:23 ಯೇಸು ಜನಸಮೂಹವನ್ನು ಕಳುಹಿಸಿದ ಮೇಲೆ, ಪ್ರಾರ್ಥನೆಮಾಡಲು ಏಕಾಂತವಾಗಿ ಬೆಟ್ಟಕ್ಕೆ ಹೋದರು. ಸಂಜೆಯಾದಾಗ ಯೇಸು ಒಬ್ಬರೇ ಅಲ್ಲಿ ಇದ್ದರು.
MAT 14:24 ಅಷ್ಟರಲ್ಲಿ ದೋಣಿಯು ತೀರದಿಂದ ಬಹುದೂರ ಹೋಗಿತ್ತು, ಎದುರುಗಾಳಿ ಬೀಸುತ್ತಿದ್ದದರಿಂದ ತೆರೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು.
MAT 14:25 ರಾತ್ರಿ ಮೂರು ಗಂಟೆಯಲ್ಲಿ ಯೇಸು ಸರೋವರದ ಮೇಲೆ, ನಡೆಯುತ್ತಾ ಶಿಷ್ಯರ ಬಳಿಗೆ ಬಂದರು.
MAT 14:26 ಯೇಸು ಸರೋವರದ ಮೇಲೆ ನಡೆಯುವುದನ್ನು ಶಿಷ್ಯರು ಕಂಡು ಕಳವಳಪಟ್ಟು, “ಅದು ಭೂತ,” ಎಂದು ಭೀತಿಯಿಂದ ಕೂಗಿಕೊಂಡರು.
MAT 14:27 ಯೇಸು ತಕ್ಷಣವೇ ಅವರಿಗೆ, “ಧೈರ್ಯವಾಗಿರಿ, ನಾನೇ, ಭಯಪಡಬೇಡಿರಿ,” ಎಂದರು.
MAT 14:28 ಆಗ ಪೇತ್ರನು ಯೇಸುವಿಗೆ, “ಸ್ವಾಮೀ, ನೀವೇ ಆಗಿದ್ದರೆ, ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರಲು ನನಗೆ ಅಪ್ಪಣೆಕೊಡಿರಿ,” ಎಂದನು.
MAT 14:29 ಅದಕ್ಕೆ ಯೇಸು, “ಬಾ,” ಎಂದರು. ಆಗ ಪೇತ್ರನು ದೋಣಿಯಿಂದ ಇಳಿದು, ಯೇಸುವಿನ ಬಳಿಗೆ ಹೋಗುವುದಕ್ಕಾಗಿ ನೀರಿನ ಮೇಲೆ ನಡೆದನು.
MAT 14:30 ಆದರೆ ಬಲವಾದ ಗಾಳಿಯನ್ನು ಕಂಡು, ಅವನು ಭಯಪಟ್ಟು ಮುಳುಗುತ್ತಾ, “ಸ್ವಾಮಿ, ನನ್ನನ್ನು ಕಾಪಾಡಿರಿ!” ಎಂದು ಕೂಗಿ ಹೇಳಿದನು.
MAT 14:31 ತಕ್ಷಣವೇ ಯೇಸು ತಮ್ಮ ಕೈಯನ್ನು ಚಾಚಿ ಪೇತ್ರನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ, ನೀನು ಏಕೆ ಸಂದೇಹಪಟ್ಟೆ?” ಎಂದರು.
MAT 14:32 ಅವರು ದೋಣಿ ಹತ್ತಿದಾಗ, ಗಾಳಿ ನಿಂತುಹೋಯಿತು.
MAT 14:33 ದೋಣಿಯಲ್ಲಿದ್ದವರು ಯೇಸುವಿನ ಬಳಿಗೆ ಬಂದು ಅವರನ್ನು ಆರಾಧಿಸಿ, “ನಿಜವಾಗಿಯೂ ನೀವು ದೇವಪುತ್ರ,” ಎಂದು ಹೇಳಿದರು.
MAT 14:34 ಅವರು ಸರೋವರವನ್ನು ದಾಟಿ, ಗೆನೆಜರೇತ್ ಊರಿಗೆ ಬಂದರು.
MAT 14:35 ಆಗ ಅಲ್ಲಿದ್ದ ಜನರು ಯೇಸುವಿನ ಗುರುತು ಹಿಡಿದು, ಸುತ್ತುಮುತ್ತಲಿನ ಊರುಗಳಿಗೆಲ್ಲಾ ಹೇಳಿ ಕಳುಹಿಸಿ, ರೋಗಿಗಳನ್ನೆಲ್ಲಾ ಯೇಸುವಿನ ಬಳಿಗೆ ತಂದರು.
MAT 14:36 ಅವರು ಯೇಸುವಿನ ಉಡುಪಿನ ಅಂಚನ್ನಾದರೂ ಸ್ಪರ್ಶಿಸಬೇಕೆಂದು ಅವರನ್ನು ಬೇಡಿಕೊಂಡರು. ಯೇಸುವನ್ನು ಮುಟ್ಟಿದವರೆಲ್ಲರೂ ಸ್ವಸ್ಥರಾದರು.
MAT 15:1 ಯೆರೂಸಲೇಮಿನಿಂದ ಫರಿಸಾಯರು ಮತ್ತು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದು,
MAT 15:2 “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಅವರು ಊಟಕ್ಕೆ ಮುಂಚೆ ತಮ್ಮ ಕೈಗಳನ್ನು ಏಕೆ ತೊಳೆದುಕೊಳ್ಳುವುದಿಲ್ಲ?” ಎಂದರು.
MAT 15:3 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ನೀವು ದೇವರ ಆಜ್ಞೆಯನ್ನು ಏಕೆ ಮೀರುತ್ತೀರಿ?
MAT 15:4 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಎಂದೂ ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ದೇವರು ಹೇಳಿದ್ದಾರೆ.
MAT 15:5 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
MAT 15:6 ‘ಅವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಗೌರವಿಸಬೇಕಾಗಿಲ್ಲ’ ಎಂದು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.
MAT 15:7 ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ:
MAT 15:8 “ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
MAT 15:9 ಅವರು ಮನುಷ್ಯರ ಆಜ್ಞೆಗಳನ್ನು ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುವುದು ವ್ಯರ್ಥ.’”
MAT 15:10 ಯೇಸು ಜನಸಮೂಹವನ್ನು ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ.
MAT 15:11 ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ, ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದೇ ಮನುಷ್ಯನನ್ನು ಅಶುದ್ಧ ಮಾಡುತ್ತದೆ,” ಎಂದು ಹೇಳಿದರು.
MAT 15:12 ತರುವಾಯ ಯೇಸುವಿನ ಶಿಷ್ಯರು ಬಂದು, “ಫರಿಸಾಯರು ನಿಮ್ಮ ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿಮಗೆ ತಿಳಿಯಿತೇ?” ಎಂದು ಕೇಳಿದರು.
MAT 15:13 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಪರಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವು ಬೇರುಸಹಿತವಾಗಿ ಕಿತ್ತುಹಾಕಲಾಗುವುದು.
MAT 15:14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.
MAT 15:15 ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸು,” ಎಂದನು.
MAT 15:16 ಅದಕ್ಕೆ ಯೇಸು, “ನೀವು ಸಹ ಇನ್ನೂ ಬುದ್ಧಿಯಿಲ್ಲದವರಾಗಿದ್ದೀರಾ?” ಎಂದು ಕೇಳಿ,
MAT 15:17 “ಬಾಯೊಳಕ್ಕೆ ಹೋಗಿ ಹೊಟ್ಟೆಯಲ್ಲಿ ಸೇರುವುದೆಲ್ಲವೂ ವಿಸರ್ಜಿತವಾಗುವುದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
MAT 15:18 ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವು ಹೃದಯದೊಳಗಿಂದ ಬಂದು ಮನುಷ್ಯನನ್ನು ಅಶುದ್ಧ ಮಾಡುತ್ತವೆ.
MAT 15:19 ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ.
MAT 15:20 ಇವುಗಳೇ ಮನುಷ್ಯನನ್ನು ಅಶುದ್ಧ ಮಾಡುತ್ತವೆ; ಆದರೆ ಕೈತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ,” ಎಂದರು.
MAT 15:21 ಯೇಸು ಅಲ್ಲಿಂದ ಹೊರಟು ಟೈರ್ ಸೀದೋನ್ ಪ್ರದೇಶಕ್ಕೆ ಬಂದರು.
MAT 15:22 ಆಗ, ಕಾನಾನ್ಯ ಸ್ತ್ರೀಯೊಬ್ಬಳು ಬಂದು ಅವರಿಗೆ, “ಸ್ವಾಮೀ, ದಾವೀದನ ಪುತ್ರನೇ, ನನ್ನನ್ನು ಕರುಣಿಸು. ನನ್ನ ಮಗಳು ದೆವ್ವದ ಕಾಟದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.
MAT 15:23 ಆದರೆ ಯೇಸು ಆಕೆಗೆ ಉತ್ತರ ಕೊಡಲಿಲ್ಲ. ಆಗ ಶಿಷ್ಯರು ಯೇಸುವಿನ ಬಳಿ ಬಂದು, “ಆಕೆಯನ್ನು ಕಳುಹಿಸಿಬಿಡು, ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ” ಎಂದು ಕೇಳಿಕೊಂಡರು.
MAT 15:24 ಯೇಸು ಉತ್ತರವಾಗಿ, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ನನ್ನನ್ನು ಕಳುಹಿಸಲಾಗಿದೆ,” ಎಂದರು.
MAT 15:25 ಆಕೆಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮೀ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡಳು.
MAT 15:26 ಆಗ ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದು ಹೇಳಿದರು.
MAT 15:27 ಆಗ ಆಕೆಯು, “ಸ್ವಾಮೀ, ಅದು ನಿಜವೇ, ಆದರೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ನಾಯಿಮರಿಗಳು ತಿನ್ನುತ್ತವಲ್ಲಾ,” ಎಂದಳು.
MAT 15:28 ಯೇಸು ಉತ್ತರವಾಗಿ ಆಕೆಗೆ, “ಅಮ್ಮಾ ನಿನ್ನ ನಂಬಿಕೆಯು ದೊಡ್ಡದು! ನೀನು ಇಷ್ಟಪಟ್ಟಂತೆಯೇ ನಿನಗಾಗಲಿ,” ಎಂದು ಹೇಳಿದರು. ಆಕೆಯ ಮಗಳು ಅದೇ ಗಳಿಗೆಯಲ್ಲಿ ಗುಣಹೊಂದಿದಳು.
MAT 15:29 ಯೇಸು ಅಲ್ಲಿಂದ ಹೊರಟು ಗಲಿಲಾಯ ಸರೋವರದ ಸಮೀಪಕ್ಕೆ ಬಂದು, ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡರು.
MAT 15:30 ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು, ಕುರುಡರನ್ನು, ಮೂಕರನ್ನು, ಊನವಾದವರನ್ನು ಮತ್ತು ಬೇರೆ ಅನೇಕ ರೋಗಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ಯೇಸುವಿನ ಪಾದದ ಬಳಿಯಲ್ಲಿ ಬಿಟ್ಟರು. ಯೇಸು ಅವರನ್ನೆಲ್ಲಾ ಸ್ವಸ್ಥಪಡಿಸಿದರು.
MAT 15:31 ಮೂಕರು ಮಾತನಾಡುವುದನ್ನೂ ಊನವಾದವರು ಸ್ವಸ್ಥರಾಗಿರುವುದನ್ನೂ ಕುಂಟರು ನಡೆದಾಡುವುದನ್ನೂ ಕುರುಡರು ಕಾಣುವುದನ್ನೂ ಜನಸಮೂಹದವರು ಕಂಡು ಆಶ್ಚರ್ಯಪಟ್ಟರು. ಅವರು ಇಸ್ರಾಯೇಲಿನ ದೇವರನ್ನು ಕೊಂಡಾಡಿದರು.
MAT 15:32 ಯೇಸು ತಮ್ಮ ಶಿಷ್ಯರನ್ನು ಕರೆದು, “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ, ದಾರಿಯಲ್ಲಿ ಅವರು ಬಳಲಿ ಹೋಗುವರು. ಇವರನ್ನು ಉಪವಾಸವಾಗಿ ಕಳುಹಿಸುವುದಕ್ಕೆ ನನಗೆ ಮನಸ್ಸಿಲ್ಲ,” ಎಂದರು.
MAT 15:33 ಅದಕ್ಕೆ ಶಿಷ್ಯರು, “ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿಂದ ರೊಟ್ಟಿ ಸಿಕ್ಕೀತು?” ಎಂದರು.
MAT 15:34 ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದರು. ಶಿಷ್ಯರು, “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದರು.
MAT 15:35 ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟರು.
MAT 15:36 ಅನಂತರ ಯೇಸು ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಡಲು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
MAT 15:37 ಅವರೆಲ್ಲರೂ ಊಟಮಾಡಿ ತೃಪ್ತರಾದರು. ಅನಂತರ ಶಿಷ್ಯರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.
MAT 15:38 ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರಿದ್ದರು.
MAT 15:39 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಊರಿಗೆ ಬಂದರು.
MAT 16:1 ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.
MAT 16:2 ಯೇಸು ಉತ್ತರವಾಗಿ ಅವರಿಗೆ, “ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ, ‘ಒಳ್ಳೆಯ ಹವಾಮಾನ ಇರುವುದು’ ಎಂದೂ
MAT 16:3 ಬೆಳಿಗ್ಗೆ ಆಕಾಶವು ಮೋಡ ಕವಿದು ಕೆಂಪಾಗಿದ್ದರೆ, ‘ಇಂದು ಬಿರುಗಾಳಿ ಇರುವುದು’ ಎಂದೂ ನೀವು ಹೇಳುತ್ತೀರಿ. ಆಕಾಶದಲ್ಲಾಗುವ ಸೂಚನೆಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಕಾಲದ ಸೂಚನೆಗಳನ್ನು ನೀವು ಗ್ರಹಿಸಲಾರಿರಿ.
MAT 16:4 ವ್ಯಭಿಚಾರಿಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ, ಆದರೆ ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಸಿಕ್ಕುವುದಿಲ್ಲ,” ಎಂದು ಹೇಳಿ, ಯೇಸು ಅವರನ್ನು ಬಿಟ್ಟು ಹೊರಟು ಹೋದರು.
MAT 16:5 ಶಿಷ್ಯರು ರೊಟ್ಟಿಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಆಚೆದಡಕ್ಕೆ ಬಂದಿದ್ದರು.
MAT 16:6 ಆಗ ಯೇಸು ಅವರಿಗೆ, “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ಬಗ್ಗೆ ಎಚ್ಚರಿಕೆ ವಹಿಸಿ ಜಾಗರೂಕರಾಗಿರಿ,” ಎಂದು ಹೇಳಿದರು.
MAT 16:7 ಅದಕ್ಕೆ ಅವರು ತಮ್ಮತಮ್ಮಲ್ಲಿಯೇ, “ನಾವು ರೊಟ್ಟಿ ತಂದಿಲ್ಲವೆಂದು ಹೀಗೆ ಹೇಳುತ್ತಾರೆ,” ಎಂದು ಮಾತನಾಡಿಕೊಂಡರು.
MAT 16:8 ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ಅಲ್ಪ ವಿಶ್ವಾಸದವರೇ, ನೀವು ರೊಟ್ಟಿ ಇಲ್ಲವೆಂದು ನಿಮ್ಮಲ್ಲಿ ಏಕೆ ಮಾತನಾಡಿಕೊಳ್ಳುತ್ತೀರಿ?
MAT 16:9 ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದಾಗ, ಎಷ್ಟು ಬುಟ್ಟಿಗಳನ್ನು ತುಂಬಿದಿರೆಂದು ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ?
MAT 16:10 ಇದಲ್ಲದೆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದಾಗ ಎಷ್ಟು ಬುಟ್ಟಿಗಳನ್ನು ತುಂಬಿದಿರಿ?
MAT 16:11 ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.
MAT 16:12 ಆಗ ಅವರು, ರೊಟ್ಟಿ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಯೇಸು ಹೇಳಿದ್ದನ್ನು ಗ್ರಹಿಸಿಕೊಂಡರು.
MAT 16:13 ಯೇಸು ಕೈಸರೈಯ ಫಿಲಿಪ್ಪಿ ಪ್ರಾಂತಗಳಿಗೆ ಬಂದಾಗ ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
MAT 16:14 ಅದಕ್ಕೆ ಅವರು, “ಕೆಲವರು ಸ್ನಾನಿಕನಾದ ಯೋಹಾನನು ಎಂದು ಹೇಳುತ್ತಾರೆ, ಇನ್ನು ಕೆಲವರು ಎಲೀಯನು ಎನ್ನುತ್ತಾರೆ, ಬೇರೆಯವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಾರೆ” ಎಂದರು.
MAT 16:15 ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು.
MAT 16:16 ಅದಕ್ಕೆ ಸೀಮೋನ ಪೇತ್ರನು ಉತ್ತರವಾಗಿ, “ನೀವು ಕ್ರಿಸ್ತ ಮತ್ತು ಜೀವಂತ ದೇವರ ಪುತ್ರರಾಗಿದ್ದೀರಿ,” ಎಂದು ಉತ್ತರಕೊಟ್ಟನು.
MAT 16:17 ಯೇಸು ಅವನಿಗೆ, “ಯೋನನ ಮಗ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದನ್ನು ಪ್ರಕಟಿಸಿದ್ದು ಮಾನವರಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನು ನಿನಗೆ ಪ್ರಕಟಿಸಿದರು.
MAT 16:18 ನಾನು ಸಹ ನಿನಗೆ ಹೇಳುವುದೇನಂದರೆ, ನೀನು ಪೇತ್ರನು. ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ದ್ವಾರಗಳು ಅದನ್ನು ಜಯಿಸಲಾರವು.
MAT 16:19 ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುವೆನು; ನೀನು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀಯೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀನು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು,” ಎಂದರು.
MAT 16:20 ತರುವಾಯ ಯೇಸು, ತಾನೇ ಕ್ರಿಸ್ತ ಎಂಬುದನ್ನು ಯಾರಿಗೂ ಹೇಳಬಾರದೆಂದು ತಮ್ಮ ಶಿಷ್ಯರಿಗೆ ಆಜ್ಞಾಪಿಸಿದರು.
MAT 16:21 ತಾವು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ಬಹು ಕಷ್ಟಗಳನ್ನು ಅನುಭವಿಸಿ ಕೊಲೆಗೀಡಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದು ಬರುವುದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತಮ್ಮ ಶಿಷ್ಯರಿಗೆ ತಿಳಿಸಲಾರಂಭಿಸಿದರು.
MAT 16:22 ಆಗ ಪೇತ್ರನು ಯೇಸುವಿನ ಕೈಹಿಡಿದು, “ಹಾಗೆ ಆಗಬಾರದು ಸ್ವಾಮೀ! ಅದು ನಿಮಗೆ ಎಂದಿಗೂ ಸಂಭವಿಸಬಾರದು!” ಎಂದು ಹೇಳಿ ಯೇಸುವನ್ನು ಗದರಿಸಲಾರಂಭಿಸಿದನು.
MAT 16:23 ಆಗ ಯೇಸು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನೀನು ನನಗೆ ಅಡ್ಡಿಯಾಗಿದ್ದೀ; ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು.
MAT 16:24 ತರುವಾಯ ಯೇಸು ತಮ್ಮ ಶಿಷ್ಯರಿಗೆ, “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ತಾವೇ ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
MAT 16:25 ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.
MAT 16:26 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು? ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?
MAT 16:27 ಮನುಷ್ಯಪುತ್ರನಾದ ನಾನು ನನ್ನ ತಂದೆಯ ಮಹಿಮೆಯಲ್ಲಿ ನನ್ನ ದೂತರೊಡನೆ ಬಂದಾಗ, ನಾನು ಪ್ರತಿಯೊಬ್ಬರಿಗೂ ಅವರವರ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವೆನು.
MAT 16:28 “ನಿಮಗೆ ನಿಜವಾಗಿ ಹೇಳುತ್ತೇನೆ: ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಪುತ್ರನಾದ ನಾನು ನನ್ನ ರಾಜ್ಯದಲ್ಲಿ ಬರುವುದನ್ನು ಕಾಣುವವರೆಗೆ ಮರಣವನ್ನು ಹೊಂದುವುದೇ ಇಲ್ಲ,” ಎಂದರು.
MAT 17:1 ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಅವನ ಸಹೋದರ ಯೋಹಾನನನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.
MAT 17:2 ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು. ಅವರ ಮುಖವು ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಬೆಳಗಿತು.
MAT 17:3 ಇದಲ್ಲದೆ ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
MAT 17:4 ಪೇತ್ರನು ಯೇಸುವಿಗೆ, “ಕರ್ತನೇ, ನಾವು ಇಲ್ಲಿಯೇ ಇರುವುದು ಒಳ್ಳೆಯದು. ನಿಮಗೆ ಮನಸ್ಸಿದ್ದರೆ ನಾನು ನಿಮಗೊಂದು, ಮೋಶೆಗೊಂದು, ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ಕಟ್ಟುವೆನು,” ಎಂದು ಹೇಳಿದನು.
MAT 17:5 ಪೇತ್ರನು ಇನ್ನೂ ಮಾತನಾಡುತ್ತಿರುವಾಗಲೇ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿಯಿತು. ಆಗ, “ಈತನು ಪ್ರಿಯನಾಗಿರುವ ನನ್ನ ಮಗನು. ಈತನನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ. ಈತನ ಮಾತನ್ನು ನೀವು ಕೇಳಿರಿ,” ಎಂದು ಮೇಘದೊಳಗಿಂದ ಒಂದು ಧ್ವನಿ ಕೇಳಿತು.
MAT 17:6 ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು.
MAT 17:7 ಆಗ ಯೇಸು ಬಂದು ಅವರನ್ನು ಮುಟ್ಟಿ, “ಏಳಿರಿ, ಹೆದರಬೇಡಿರಿ,” ಎಂದು ಹೇಳಿದರು.
MAT 17:8 ಅವರು ತಮ್ಮ ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
MAT 17:9 ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸತ್ತವರೊಳಗಿಂದ ಎದ್ದು ಬರುವವರೆಗೆ ಈ ದರ್ಶನವನ್ನು ಯಾರಿಗೂ ಹೇಳಬಾರದು,” ಎಂದು ಅವರಿಗೆ ಆಜ್ಞಾಪಿಸಿದರು.
MAT 17:10 ಆಗ ಯೇಸುವಿನ ಶಿಷ್ಯರು ಅವರಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು.
MAT 17:11 ಯೇಸು ಉತ್ತರವಾಗಿ ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವುಗಳನ್ನು ಪುನಃ ಸ್ಥಾಪಿಸುವುದು ನಿಜವೇ.
MAT 17:12 ಆದರೆ ಎಲೀಯನು ಆಗಲೇ ಬಂದಾಯಿತು; ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಪುತ್ರನಾದ ನಾನು ಸಹ ಅವರಿಂದ ಕಷ್ಟವನ್ನು ಅನುಭವಿಸುವೆನು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
MAT 17:13 ಸ್ನಾನಿಕ ಯೋಹಾನನ ವಿಷಯದಲ್ಲಿ ಯೇಸು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು.
MAT 17:14 ಅವರು ಜನಸಮೂಹದ ಬಳಿಗೆ ಬಂದಾಗ, ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ,
MAT 17:15 “ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು. ಏಕೆಂದರೆ ಅವನು ಮೂರ್ಛಾರೋಗದಿಂದ ಬಹಳವಾಗಿ ಕಷ್ಟಪಡುತ್ತಾನೆ. ಅನೇಕ ಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ.
MAT 17:16 ನಾನು ಅವನನ್ನು ನಿಮ್ಮ ಶಿಷ್ಯರ ಬಳಿಗೆ ಕರೆತಂದೆನು. ಆದರೆ ಅವರು ಅವನನ್ನು ಸ್ವಸ್ಥ ಮಾಡದೆ ಹೋದರು,” ಎಂದು ಹೇಳಿದನು.
MAT 17:17 ಆಗ ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.
MAT 17:18 ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಹುಡುಗನೊಳಗಿಂದ ಹೊರಟುಹೋಯಿತು. ಆಗ ಆ ಹುಡುಗನು ಅದೇ ಗಳಿಗೆಯಲ್ಲಿಯೇ ಗುಣಮುಖನಾದನು.
MAT 17:19 ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಓಡಿಸುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು.
MAT 17:20 ಯೇಸು ಅವರಿಗೆ, “ನಿಮ್ಮ ಅಪೂರ್ಣನಂಬಿಕೆಯೇ ಇದಕ್ಕೆ ಕಾರಣ. ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಆ ಸ್ಥಳಕ್ಕೆ ಹೋಗು’ ಎಂದು ಹೇಳಿದರೆ ಅದು ಹೋಗುವುದು. ಯಾವುದೂ ನಿಮಗೆ ಅಸಾಧ್ಯವಾಗಿರುವುದಿಲ್ಲ.
MAT 17:21 ಆದರೂ ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಈ ರೀತಿಯಾದ ದೆವ್ವ ಹೊರಟು ಹೋಗುವುದಿಲ್ಲ,” ಎಂದರು.
MAT 17:22 ಅವರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದಾಗ ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು.
MAT 17:23 ಅವರು ನನ್ನನ್ನು ಕೊಲ್ಲುವರು, ಆದರೆ ಮೂರನೆಯ ದಿನದಲ್ಲಿ ನಾನು ತಿರುಗಿ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು. ಅದಕ್ಕೆ ಶಿಷ್ಯರು ಬಹಳ ದುಃಖಪಟ್ಟರು.
MAT 17:24 ತರುವಾಯ ಯೇಸು ಕಪೆರ್ನೌಮಿಗೆ ಬಂದಾಗ, ದೇವಾಲಯದ ತೆರಿಗೆಗಾಗಿ ಎರಡು ಬೆಳ್ಳಿ ನಾಣ್ಯಗಳನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದರು. ಅವರು ಪೇತ್ರನಿಗೆ, “ನಿಮ್ಮ ಬೋಧಕನು ತೆರಿಗೆ ಕಟ್ಟುವುದಿಲ್ಲವೋ?” ಎಂದು ಕೇಳಿದರು.
MAT 17:25 ಅದಕ್ಕೆ ಪೇತ್ರನು, “ಹೌದು, ಕಟ್ಟುತ್ತಾರೆ,” ಎಂದನು. ಅವನು ಮನೆಯೊಳಕ್ಕೆ ಬಂದಾಗ ಯೇಸು ಮುಂದಾಗಿಯೇ ಅವನಿಗೆ, “ಸೀಮೋನನೇ ನಿನಗೆ ಹೇಗೆ ತೋರುತ್ತದೆ? ಭೂಲೋಕದ ರಾಜರು ಯಾರಿಂದ ಕಂದಾಯವನ್ನು ಇಲ್ಲವೆ ತೆರಿಗೆಯನ್ನು ವಸೂಲಿ ಮಾಡುತ್ತಾರೆ? ತಮ್ಮ ಪುತ್ರರಿಂದಲೋ ಇಲ್ಲವೆ ಪರರಿಂದಲೋ?” ಎಂದು ಕೇಳಿದರು.
MAT 17:26 “ಪರರಿಂದ,” ಎಂದು ಪೇತ್ರನು ಹೇಳಿದನು. ಯೇಸು ಅವನಿಗೆ, “ಹಾಗಾದರೆ ಪುತ್ರನು ಕಟ್ಟಬೇಕಾಗಿಲ್ಲ.
MAT 17:27 ಆದರೂ ನಾವು ಅವರನ್ನು ಅಭ್ಯಂತರಪಡಿಸದಂತೆ, ನೀನು ಸರೋವರಕ್ಕೆ ಹೋಗಿ ಗಾಳವನ್ನು ಹಾಕು. ಆಗ ಮೊದಲು ಬರುವ ಮೀನನ್ನು ಹಿಡಿ. ನೀನು ಅದರ ಬಾಯನ್ನು ತೆರೆದಾಗ ಅದರಲ್ಲಿ ನಾಲ್ಕು ಬೆಳ್ಳಿ ನಾಣ್ಯಗಳನ್ನು ಕಾಣುವೆ. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು,” ಎಂದು ಹೇಳಿದರು.
MAT 18:1 ಅದೇ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವನು ಯಾರು?” ಎಂದು ಕೇಳಿದರು.
MAT 18:2 ಆಗ ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಬಳಿಗೆ ಕರೆದು, ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ,
MAT 18:3 “ನೀವು ಪರಿವರ್ತನೆ ಹೊಂದಿ ಚಿಕ್ಕಮಕ್ಕಳಂತೆ ಆಗದಿದ್ದರೆ, ಪರಲೋಕ ರಾಜ್ಯದೊಳಗೆ ಪ್ರವೇಶಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 18:4 ಯಾರು ಈ ಚಿಕ್ಕಮಗುವಿನಂತೆ ತಮ್ಮನ್ನು ತಾವು ತಗ್ಗಿಸಿಕೊಳ್ಳುವರೋ ಅವರೇ ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವರಾಗಿರುವರು.
MAT 18:5 ಯಾರಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಂಡರೆ ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ.
MAT 18:6 “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದ ಆಳದಲ್ಲಿ ಮುಳುಗಿಸಿಡುವುದೇ ಲೇಸು, ಎಂದರು.
MAT 18:7 ಪಾಪಕ್ಕೆ ಕಾರಣವಾಗಿರುವ ಜಗತ್ತಿಗೆ ಕಷ್ಟ! ಇಂಥ ವಿಷಯಗಳು ಅನಿವಾರ್ಯ. ಆದರೆ ಪಾಪಕ್ಕೆ ಕಾರಣವಾಗಿರುವವರ ಗತಿಯನ್ನು ಏನೆಂದು ಹೇಳಲಿ!
MAT 18:8 ನಿಮ್ಮ ಕೈಯಾಗಲೀ ಕಾಲಾಗಲೀ ನಿಮ್ಮನ್ನು ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಇಲ್ಲವೆ ಎರಡು ಕಾಲುಳ್ಳವರಾಗಿ ನಿತ್ಯ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ಇಲ್ಲವೆ ಊನರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.
MAT 18:9 ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ನೀವು ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.
MAT 18:10 “ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ಹೀನೈಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿದ್ದಾರೆ.
MAT 18:11 ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
MAT 18:12 “ಆಗ ನಿಮಗೆ ಏನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳಿರಲಾಗಿ, ಅವುಗಳಲ್ಲಿ ಒಂದು ತಪ್ಪಿಸಿಕೊಂಡುಹೋದರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಬಿಟ್ಟು ಬೆಟ್ಟಗಳಿಗೆ ಹೋಗಿ, ತಪ್ಪಿಸಿಕೊಂಡದ್ದನ್ನು ಹುಡುಕುವುದಿಲ್ಲವೇ?
MAT 18:13 ಅವನು ಅದನ್ನು ಕಂಡರೆ, ತಪ್ಪಿಸಿಕೊಳ್ಳದ ತೊಂಬತ್ತೊಂಬತ್ತು ಕುರಿಗಳಿಗಿಂತ ಈ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
MAT 18:14 ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬರಾದರೂ ನಾಶವಾಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
MAT 18:15 “ನಿನ್ನ ಸಹೋದರ ಅಥವಾ ಸಹೋದರಿ ಪಾಪಮಾಡಿದರೆ, ನೀವಿಬ್ಬರೇ ಇರುವಾಗ ಹೋಗಿ ಅವರನ್ನು ಖಂಡಿಸು. ಅವರು ನಿನಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರ ಅಥವಾ ಸಹೋದರಿಯನ್ನು ಗೆದ್ದುಕೊಂಡಿರುವೆ.
MAT 18:16 ಆದರೆ ಅವರು ನಿನಗೆ ಕಿವಿಗೊಡದೆ ಹೋದರೆ, ನಿನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗು. ಹೀಗೆ, ‘ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪಿತವಾಗಲಿ.’
MAT 18:17 ಅವರು ಅವರಿಗೂ ಕಿವಿಗೊಡದೆ ಹೋದರೆ ಅದನ್ನು ಸಭೆಗೆ ತಿಳಿಸು. ಅವರು ಸಭೆಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
MAT 18:18 “ನೀವು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀರೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀವು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
MAT 18:19 “ಇನ್ನೂ ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದೇ ವಿಷಯಕ್ಕಾಗಿ ಭೂಮಿಯಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದು.
MAT 18:20 ಏಕೆಂದರೆ ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಎಲ್ಲಿ ಸೇರಿ ಬರುತ್ತಾರೋ ಅವರ ಮಧ್ಯದಲ್ಲಿ ನಾನು ಇದ್ದೇನೆ,” ಎಂದರು.
MAT 18:21 ತರುವಾಯ ಪೇತ್ರನು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ಸಹೋದರ ಅಥವಾ ಸಹೋದರಿ ನನಗೆ ವಿರೋಧವಾಗಿ ಪಾಪಮಾಡಿದರೆ ನಾನು ಎಷ್ಟು ಸಲ ಅವರನ್ನು ಕ್ಷಮಿಸಬೇಕು? ಏಳು ಸಲವೋ?” ಎಂದು ಕೇಳಿದನು.
MAT 18:22 ಅದಕ್ಕೆ ಯೇಸು, “ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿಮಗೆ ಹೇಳುತ್ತೇನೆ.
MAT 18:23 “ಆದ್ದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕ ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
MAT 18:24 ಅವನು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹತ್ತು ಕೋಟಿ ಚಿನ್ನದ ನಾಣ್ಯಗಳ ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.
MAT 18:25 ಆದರೆ ಕೊಡುವುದಕ್ಕೆ ಅವನಲ್ಲಿ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅರಸನು ಅಪ್ಪಣೆಕೊಟ್ಟನು.
MAT 18:26 “ಆಗ ಆ ಸೇವಕನು ಮೊಣಕಾಲೂರಿ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ನಿನ್ನ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಹೇಳಿದನು.
MAT 18:27 ಆಗ ಅರಸನು ಸೇವಕನ ಮೇಲೆ ಕನಿಕರಪಟ್ಟು, ಅವನನ್ನು ಬಿಡುಗಡೆ ಮಾಡಿ ಅವನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.
MAT 18:28 “ಆದರೆ ಅದೇ ಸೇವಕನು ಹೊರಗೆ ಹೋಗಿ, ತನಗೆ ಸುಮಾರು ನೂರು ಬೆಳ್ಳಿ ನಾಣ್ಯಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆಯ ಸೇವಕರಲ್ಲಿ ಒಬ್ಬನನ್ನು ಕಂಡು, ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು,’ ಎಂದನು.
MAT 18:29 “ಆಗ ಅವನ ಜೊತೆಯ ಸೇವಕನು ಮೊಣಕಾಲೂರಿ ಅವನಿಗೆ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅವನನ್ನು ಬೇಡಿಕೊಂಡನು.
MAT 18:30 “ಆದರೆ ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ, ತನ್ನ ಸಾಲವನ್ನು ತೀರಿಸುವವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
MAT 18:31 ಅವನ ಜೊತೆಯ ಸೇವಕರು ನಡೆದದ್ದನ್ನು ನೋಡಿ, ಬಹಳ ವ್ಯಥೆಪಟ್ಟು ಹೋಗಿ ತಮ್ಮ ಅರಸನಿಗೆ ನಡೆದದ್ದೆಲ್ಲವನ್ನು ವರದಿಮಾಡಿದರು.
MAT 18:32 “ಆಗ ಅರಸನು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ, ‘ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನ ಸಾಲವನ್ನೆಲ್ಲಾ ಮನ್ನಿಸಿದೆನು.
MAT 18:33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ,
MAT 18:34 ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅರಸನು ಅವನನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಸೆರೆಮನೆಯ ಅಧಿಕಾರಿಯ ವಶಕ್ಕೆ ಒಪ್ಪಿಸಿದನು.
MAT 18:35 “ಅದರಂತೆಯೇ ನಿಮ್ಮಲ್ಲಿ ಪ್ರತಿಯೊಬ್ಬರು ಹೃದಯಪೂರ್ವಕವಾಗಿ ತನ್ನ ಸಹೋದರನನ್ನು ಕ್ಷಮಿಸದೆ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ಸಹ ನಿಮಗೆ ಹಾಗೆಯೇ ಮಾಡುವರು,” ಎಂದರು.
MAT 19:1 ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಗಲಿಲಾಯದಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು.
MAT 19:2 ಜನರ ದೊಡ್ಡ ಸಮೂಹಗಳು ಅವರನ್ನು ಹಿಂಬಾಲಿಸಿದವು, ಯೇಸು ಅವರನ್ನು ಅಲ್ಲಿ ಸ್ವಸ್ಥಮಾಡಿದರು.
MAT 19:3 ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, “ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
MAT 19:4 ಯೇಸು ಉತ್ತರವಾಗಿ ಅವರಿಗೆ, “ಆದಿಯಿಂದಲೇ ಸೃಷ್ಟಿಕರ್ತ, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.
MAT 19:5 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ?
MAT 19:6 ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು,” ಎಂದು ಹೇಳಿದರು.
MAT 19:7 ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ಏಕೆ ಅಪ್ಪಣೆಕೊಟ್ಟನು?” ಎಂದು ಕೇಳಿದರು.
MAT 19:8 ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ.
MAT 19:9 ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ,” ಎಂದರು.
MAT 19:10 ಆಗ ಶಿಷ್ಯರು ಯೇಸುವಿಗೆ, “ಸತಿಪತಿಯರ ಸಂಬಂಧ ಹೀಗಿರುವುದಾದರೆ, ಮದುವೆ ಆಗದಿರುವುದೇ ಒಳ್ಳೆಯದು,” ಎಂದರು.
MAT 19:11 ಆದರೆ ಯೇಸು ಅವರಿಗೆ, “ಯಾರಿಗೆ ಇದು ಅನುಮತಿಸಲಾಗಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಸ್ವೀಕರಿಸಲಾರರು.
MAT 19:12 ತಮ್ಮ ತಾಯಿಯ ಗರ್ಭದಿಂದ ಹುಟ್ಟಿದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಕೆಲವರು ಮನುಷ್ಯರಿಂದ ಮಾಡಲಾದ ನಪುಂಸಕರು ಇದ್ದಾರೆ. ಇನ್ನು ಕೆಲವರು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರೂ ಇದ್ದಾರೆ. ಇದನ್ನು ಸ್ವೀಕರಿಸಬಲ್ಲವನು ಸ್ವೀಕರಿಸಲಿ,” ಎಂದರು.
MAT 19:13 ಯೇಸು ತಮ್ಮ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೆಲವು ಜನರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ತಂದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
MAT 19:14 ಆದರೆ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ಪರಲೋಕ ರಾಜ್ಯವು ಇಂಥವರದೇ,” ಎಂದರು.
MAT 19:15 ತರುವಾಯ ಯೇಸು ಮಕ್ಕಳ ಮೇಲೆ ತಮ್ಮ ಕೈಯಿಟ್ಟು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದರು.
MAT 19:16 ಆಗ ಒಬ್ಬನು ಬಂದು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
MAT 19:17 “ನೀನು ಒಳ್ಳೆಯದನ್ನು ಕುರಿತು ನನ್ನನ್ನು ಕೇಳುವುದೇಕೆ? ಒಬ್ಬಾತನೇ ಒಳ್ಳೆಯವನು. ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕಾದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆದುಕೋ,” ಎಂದು ಯೇಸು ಉತ್ತರಕೊಟ್ಟರು.
MAT 19:18 ಅವನು ಯೇಸುವಿಗೆ, “ಅವು ಯಾವುವು?” ಎಂದು ಕೇಳಿದನು. ಅದಕ್ಕೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು,
MAT 19:19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಹೇಳಿದರು.
MAT 19:20 ಆ ಯೌವನಸ್ಥನು ಯೇಸುವಿಗೆ, “ಇವೆಲ್ಲವನ್ನೂ ನಾನು ಕೈಗೊಂಡಿದ್ದೇನೆ, ಇನ್ನು ನನಗೇನು ಕಡಿಮೆಯಾಗಿದೆ?” ಎಂದು ಕೇಳಿದನು.
MAT 19:21 ಯೇಸು ಅವನಿಗೆ, “ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ, ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು; ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು.
MAT 19:22 ಆದರೆ ಆ ಯುವಕನು ಯೇಸು ಹೇಳಿದ್ದನ್ನು ಕೇಳಿ, ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
MAT 19:23 ಆಗ ಯೇಸು ತಮ್ಮ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 19:24 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ಪುನಃ ನಿಮಗೆ ಹೇಳುತ್ತೇನೆ,” ಎಂದರು.
MAT 19:25 ಇದನ್ನು ಕೇಳಿದಾಗ ಯೇಸುವಿನ ಶಿಷ್ಯರು ಅತ್ಯಂತ ವಿಸ್ಮಯಗೊಂಡು, “ಹಾಗಾದರೆ ಯಾರು ರಕ್ಷಣೆಹೊಂದುವರು?” ಎಂದು ಕೇಳಿದರು.
MAT 19:26 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.
MAT 19:27 ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ! ನಮಗೆ ಏನು ದೊರೆಯುವುದು?” ಎಂದು ಕೇಳಿದನು.
MAT 19:28 ಯೇಸು ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸಮಸ್ತವೂ ನವೀಕರಣವಾಗುವಾಗ, ಮನುಷ್ಯಪುತ್ರನಾದ ನಾನು ನನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಂಡಿರಲು, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯತೀರಿಸುವಿರಿ.
MAT 19:29 ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ, ನನ್ನ ಹೆಸರಿನ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಪಡೆದುಕೊಳ್ಳುವನು ಮತ್ತು ನಿತ್ಯಜೀವಕ್ಕೆ ಬಾಧ್ಯನಾಗುವನು.
MAT 19:30 ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.
MAT 20:1 “ಪರಲೋಕ ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯುವುದಕ್ಕಾಗಿ ಬೆಳಿಗ್ಗೆ ಹೊರಟ ಒಬ್ಬ ಯಜಮಾನನಿಗೆ ಹೋಲಿಸಲಾಗಿದೆ.
MAT 20:2 ಅವನು ದಿನಕ್ಕೆ ಒಂದು ಬೆಳ್ಳಿನಾಣ್ಯ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು.
MAT 20:3 “ಅವನು ಸುಮಾರು ಒಂಬತ್ತು ಗಂಟೆಗೆ ಹೊರಗೆ ಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು,
MAT 20:4 ಅವರಿಗೆ, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುತ್ತೇನೆ,’ ಎಂದು ಹೇಳಿದನು.
MAT 20:5 ಆಗ ಅವರು ಹೊರಟು ಹೋದರು. “ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು.
MAT 20:6 ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.
MAT 20:7 “ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು. “ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.
MAT 20:8 “ಸಂಜೆಯಾದಾಗ, ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು,’ ಎಂದು ಹೇಳಿದನು.
MAT 20:9 “ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
MAT 20:10 ಆಗ ಮೊದಲು ಬಂದವರು, ತಮಗೆ ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಲ್ಲಿ ಪ್ರತಿಯೊಬ್ಬನಿಗೂ ಅದೇ ರೀತಿಯಲ್ಲಿ ಒಂದೊಂದೇ ಬೆಳ್ಳಿನಾಣ್ಯ ಸಿಕ್ಕಿತು.
MAT 20:11 ಅವರು ಅದನ್ನು ತೆಗೆದುಕೊಂಡಾಗ, ಯಜಮಾನನ ವಿರೋಧವಾಗಿ ಗೊಣುಗುಟ್ಟುತ್ತಾ,
MAT 20:12 ‘ಕಡೆಯವರಾದ ಇವರು ಒಂದೇ ತಾಸು ಕೆಲಸಮಾಡಿದ್ದಾರೆ, ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸಮಾಡಿದ ನಮ್ಮನ್ನು ನೀನು ಇವರಿಗೆ ಸಮಮಾಡಿದ್ದಿ,’ ಎಂದರು.
MAT 20:13 “ಆದರೆ ಯಜಮಾನನು ಅವರಲ್ಲಿ ಒಬ್ಬನಿಗೆ ಉತ್ತರವಾಗಿ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ಒಂದು ಬೆಳ್ಳಿ ನಾಣ್ಯಕ್ಕೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ?
MAT 20:14 ನಿನ್ನ ಕೂಲಿ ತೆಗೆದುಕೊಂಡು ಹೋಗು. ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವುದು ನನ್ನ ಇಷ್ಟ.
MAT 20:15 ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.
MAT 20:16 “ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
MAT 20:17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ,
MAT 20:18 “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು.
MAT 20:19 ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು.
MAT 20:20 ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುವಿನ ಬಳಿಗೆ ಬಂದು, ಅವರ ಮುಂದೆ ಮೊಣಕಾಲೂರಿ ಬೇಡಿಕೊಂಡಳು.
MAT 20:21 ಯೇಸು, “ನಿನ್ನ ಬೇಡಿಕೆ ಏನು?” ಎಂದು ಕೇಳಿದರು. “ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಪುತ್ರರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು,” ಎಂದು ಬೇಡಿಕೊಂಡಳು.
MAT 20:22 ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು. ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
MAT 20:23 ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.
MAT 20:24 ಬೇರೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
MAT 20:25 ಆದರೆ ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು, “ಯೆಹೂದ್ಯರಲ್ಲದವರ ಅಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆಂದೂ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರವನ್ನು ನಡೆಸುತ್ತಾರೆಂದೂ ನಿಮಗೆ ತಿಳಿದಿದೆ.
MAT 20:26 ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.
MAT 20:27 ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ, ಅವನು ನಿಮ್ಮ ಆಳಾಗಿರಲಿ.
MAT 20:28 ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
MAT 20:29 ಯೇಸು ಮತ್ತು ಅವರ ಶಿಷ್ಯರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ, ಜನರು ದೊಡ್ಡ ಸಮೂಹವಾಗಿ ಯೇಸುವನ್ನು ಹಿಂಬಾಲಿಸಿದರು.
MAT 20:30 ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಯೇಸು ಹಾದು ಹೋಗುತ್ತಿದ್ದಾರೆಂದು ಕೇಳಿ, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಕೂಗಿ ಹೇಳಿದರು.
MAT 20:31 ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.
MAT 20:32 ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
MAT 20:33 ಅವರು ಯೇಸುವಿಗೆ, “ಕರ್ತದೇವರೇ, ನಮಗೆ ಕಣ್ಣು ಕಾಣುವಂತೆ ಮಾಡು,” ಎಂದರು.
MAT 20:34 ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.
MAT 21:1 ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಬೇತ್ಫಗೆ ಬಂದಾಗ, ಯೇಸು ಇಬ್ಬರು ಶಿಷ್ಯರನ್ನು ಕಳುಹಿಸಿ,
MAT 21:2 ಅವರಿಗೆ, “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ತಕ್ಷಣವೇ ಒಂದು ಕತ್ತೆಯು ತನ್ನ ಮರಿಯೊಂದಿಗೆ ಕಟ್ಟಿರುವುದನ್ನು ನೀವು ಕಾಣುವಿರಿ. ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ.
MAT 21:3 ಯಾವನಾದರೂ ನಿಮಗೆ ಏನಾದರೂ ಕೇಳಿದರೆ, ನೀವು ಅವನಿಗೆ, ‘ಇವು ಕರ್ತದೇವರಿಗೆ ಅವಶ್ಯವಾಗಿವೆ’ ಎಂದು ಹೇಳಿರಿ. ಆಗ ಅವನು ಅವುಗಳನ್ನು ಕೂಡಲೇ ಕಳುಹಿಸುವನು,” ಎಂದು ಹೇಳಿದರು.
MAT 21:4 ಇದೆಲ್ಲವೂ ಪವಿತ್ರ ವೇದದಲ್ಲಿ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಆಯಿತು. ಅದೇನೆಂದರೆ,
MAT 21:5 “ಚೀಯೋನಿನ ಪುತ್ರಿಗೆ ಹೇಳಿರಿ, ‘ಇಗೋ, ನಿನ್ನ ಅರಸನು, ಸಾತ್ವಿಕನಾಗಿ, ಕತ್ತೆಯನ್ನೂ, ಕತ್ತೆಯಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ.’ ”
MAT 21:6 ಆಗ ಶಿಷ್ಯರು ಹೊರಟುಹೋಗಿ ಯೇಸು ತಮಗೆ ಅಪ್ಪಣೆ ಕೊಟ್ಟಂತೆಯೇ ಮಾಡಿದರು.
MAT 21:7 ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದರು; ಯೇಸು ಅದರ ಮೇಲೆ ಕೂತುಕೊಂಡರು.
MAT 21:8 ಆಗ ಜನರ ದೊಡ್ಡ ಸಮೂಹವು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ಮರಗಳಿಂದ ಕೊಂಬೆಗಳನ್ನು ಕೊಯ್ದು ದಾರಿಯಲ್ಲಿ ಹರಡಿದರು.
MAT 21:9 ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು, “ದಾವೀದನ ಪುತ್ರನಿಗೆ ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!” “ಮಹೋನ್ನತದಲ್ಲಿ ಜಯ!” ಎಂದು ಘೋಷಿಸಿದರು.
MAT 21:10 ಯೆರೂಸಲೇಮಿಗೆ ಪ್ರವೇಶಿಸಿದಾಗ, ಪಟ್ಟಣದಲ್ಲಿ ಕೋಲಾಹಲವುಂಟಾಗಿ, “ಇವರು ಯಾರು?” ಎಂದು ಕೇಳಿದರು.
MAT 21:11 ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.
MAT 21:12 ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.
MAT 21:13 ಯೇಸು ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’ ಎಂದು ಬರೆದದೆ. ಆದರೆ ನೀವಾದರೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,” ಎಂದು ಹೇಳಿದರು.
MAT 21:14 ಆಗ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಅವರ ಬಳಿಗೆ ಬಂದರು. ಯೇಸು ಅವರನ್ನು ಸ್ವಸ್ಥಮಾಡಿದರು.
MAT 21:15 ಯೇಸು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯದಲ್ಲಿ, “ದಾವೀದನ ಪುತ್ರನಿಗೆ ಹೊಸನ್ನ,” ಎಂದು ಕೂಗುವುದನ್ನು ಮುಖ್ಯಯಾಜಕರೂ ನಿಯಮ ಬೋಧಕರೂ ಕಂಡು ಕೋಪಗೊಂಡರು.
MAT 21:16 “ಮಕ್ಕಳು ಹೇಳುವುದೇನೆಂದು ನಿನಗೆ ಕೇಳಿಸುತ್ತಿದೆಯೋ?” ಎಂದು ಯೇಸುವನ್ನು ಕೇಳಿದರು. ಯೇಸು, “ಹೌದು,” ಎಂದು ಉತ್ತರಿಸಿ ಅವರಿಗೆ, “ ‘ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ,’ ಎಂಬುದನ್ನು ಓದಲಿಲ್ಲವೋ?” ಎಂದರು.
MAT 21:17 ಯೇಸು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ, ಅಲ್ಲಿ ರಾತ್ರಿ ಉಳಿದುಕೊಂಡರು.
MAT 21:18 ಬೆಳಿಗ್ಗೆ ಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದಾಗ, ಯೇಸುವಿಗೆ ಹಸಿವಾಯಿತು.
MAT 21:19 ಯೇಸು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು, ಅದರ ಹತ್ತಿರಕ್ಕೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ. ಆಗ ಯೇಸು, ಆ ಮರಕ್ಕೆ, “ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ,” ಎಂದರು. ತಕ್ಷಣವೇ ಅಂಜೂರದ ಮರವು ಒಣಗಿ ಹೋಯಿತು.
MAT 21:20 ಶಿಷ್ಯರು ಅದನ್ನು ಕಂಡು ಆಶ್ಚರ್ಯದಿಂದ, “ಇಷ್ಟು ಬೇಗನೆ ಈ ಅಂಜೂರದ ಮರವು ಒಣಗಿಹೋಯಿತಲ್ಲಾ?” ಎಂದು ಕೇಳಿದರು.
MAT 21:21 ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು.
MAT 21:22 ನೀವು ನಂಬಿಕೆಯಿಂದ ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅವುಗಳನ್ನೆಲ್ಲಾ ಪಡೆಯುವಿರಿ,” ಎಂದರು.
MAT 21:23 ಅನಂತರ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿದ್ದಾಗ, ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿನ ಬಳಿಗೆ ಬಂದು, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.
MAT 21:24 ಅದಕ್ಕೆ ಯೇಸು, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಎಂದು ಹೇಳಿ,
MAT 21:25 ದೀಕ್ಷಾಸ್ನಾನ ಕೊಡುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ?” ಎಂದು ಕೇಳಿದ್ದಕ್ಕೆ, ಅವರು ತಮ್ಮತಮ್ಮೊಳಗೆ ತರ್ಕಿಸುತ್ತಾ, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
MAT 21:26 ‘ಮನುಷ್ಯರಿಂದ ಬಂತು,’ ಎಂದು ಹೇಳಿದರೆ ಜನರಿಗೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಗೌರವಿಸುತ್ತಾರೆ,” ಎಂದುಕೊಂಡರು.
MAT 21:27 ತರುವಾಯ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದರು. ಅದಕ್ಕೆ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
MAT 21:28 ಅನಂತರ ಯೇಸು, “ನಿಮಗೇನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷಿಯ ತೋಟದಲ್ಲಿ ಕೆಲಸ ಮಾಡು,’ ಎಂದು ಹೇಳಿದನು.
MAT 21:29 “ಮಗನು ಉತ್ತರವಾಗಿ, ‘ನಾನು ಹೋಗುವುದಿಲ್ಲ’ ಎಂದು ಹೇಳಿ, ಅನಂತರ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು.
MAT 21:30 “ಆಮೇಲೆ ತಂದೆ ಎರಡನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಉತ್ತರವಾಗಿ, ‘ಅಪ್ಪಾ, ನಾನು ಹೋಗುತ್ತೇನೆ,’ ಎಂದು ಹೇಳಿದರೂ ಹೋಗಲಿಲ್ಲ.
MAT 21:31 “ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ನಡೆದವನು?” ಎಂದು ಕೇಳಲು ಅವರು ಯೇಸುವಿಗೆ, “ಮೊದಲನೆಯವನೇ,” ಎಂದರು. ಆಗ ಯೇಸು ಅವರಿಗೆ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
MAT 21:32 ಏಕೆಂದರೆ ಯೋಹಾನನು ನೀತಿ ಮಾರ್ಗದೊಡನೆ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಅವನನ್ನು ನಂಬಿದರು. ನೀವು ಇದನ್ನು ಕಂಡ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.”
MAT 21:33 “ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಯಜಮಾನನು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿದನು. ಅದರೊಳಗೆ ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ಗೇಣಿಗೆ ಕೊಟ್ಟು ದೂರದೇಶಕ್ಕೆ ಹೋದನು.
MAT 21:34 ಫಲದ ಕಾಲ ಸಮೀಪಿಸಿದಾಗ, ತನ್ನ ಫಲಗಳನ್ನು ಪಡೆದುಕೊಳ್ಳುವುದಕ್ಕೆ ತನ್ನ ಸೇವಕರನ್ನು ಗೇಣಿಗೆದಾರರ ಬಳಿಗೆ ಕಳುಹಿಸಿದನು.
MAT 21:35 “ಆಗ ಗೇಣಿಗೆದಾರರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು, ಇನ್ನೊಬ್ಬನನ್ನು ಕೊಂದುಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು.
MAT 21:36 ಯಜಮಾನನು ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು. ಗೇಣಿಗೆದಾರರು ಅವರಿಗೂ ಹಾಗೆಯೇ ಮಾಡಿದರು.
MAT 21:37 ಕೊನೆಗೆ ಯಜಮಾನನು, ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು’ ಎಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.
MAT 21:38 “ಆದರೆ ಗೇಣಿಗೆದಾರರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಬನ್ನಿರಿ, ನಾವು ಇವನನ್ನು ಕೊಂದು ಇವನ ಆಸ್ತಿಯನ್ನು ಕಿತ್ತುಕೊಳ್ಳೋಣ,’ ಎಂದುಕೊಂಡು,
MAT 21:39 ಅವನನ್ನು ಹಿಡಿದು ದ್ರಾಕ್ಷಿಯ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದುಹಾಕಿದರು.
MAT 21:40 “ಹೀಗಿರುವುದರಿಂದ ದ್ರಾಕ್ಷಿತೋಟದ ಯಜಮಾನನೇ ಬಂದಾಗ, ಆ ಗೇಣಿಗೆದಾರರಿಗೆ ಏನು ಮಾಡುವನು?” ಎಂದು ಯೇಸು ಕೇಳಲು,
MAT 21:41 ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿಗೆ, “ಅವನು ಆ ದುಷ್ಟ ಮನುಷ್ಯರನ್ನು ಕ್ರೂರವಾಗಿ ಸಂಹರಿಸುವನು. ತಕ್ಕ ಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಗೇಣಿಗೆದಾರರಿಗೆ ತನ್ನ ದ್ರಾಕ್ಷಿತೋಟವನ್ನು ಗೇಣಿಗೆ ಕೊಡುವನು,” ಎಂದು ಹೇಳಿದರು.
MAT 21:42 ಯೇಸು ಅವರಿಗೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಇದು ಕರ್ತನಿಂದಲೇ ಆಯಿತು. ಇದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾಗಿ ತೋರುತ್ತದೆ,’ ಎಂಬುದನ್ನು ನೀವು ಪವಿತ್ರ ವೇದದಲ್ಲಿ ಎಂದೂ ಓದಲಿಲ್ಲವೇ?
MAT 21:43 “ಆದ್ದರಿಂದ, ದೇವರ ರಾಜ್ಯವು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನರಿಗೆ ಕೊಡಲಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ.
MAT 21:44 ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು, ಆದರೆ ಇದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
MAT 21:45 ಮುಖ್ಯಯಾಜಕರೂ ಫರಿಸಾಯರೂ ಯೇಸುವಿನ ಸಾಮ್ಯಗಳನ್ನು ಕೇಳಿದಾಗ, ತಮ್ಮ ವಿಷಯದಲ್ಲಿಯೇ ಅದನ್ನು ಹೇಳಿದರೆಂದು ಅರ್ಥಮಾಡಿಕೊಂಡರು.
MAT 21:46 ಅವರು ಯೇಸುವನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೂ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ನಂಬಿದ್ದರು.
MAT 22:1 ಯೇಸು ಪುನಃ ಸಾಮ್ಯಗಳ ಮೂಲಕ ಅವರ ಕೂಡ ಮಾತನಾಡುತ್ತಾ:
MAT 22:2 “ಪರಲೋಕ ರಾಜ್ಯವು ಮಗನ ಮದುವೆ ಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
MAT 22:3 ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಸೇವಕರನ್ನು ಕಳುಹಿಸಿದನು. ಆದರೆ ಅವರು ಬರಲು ಒಪ್ಪಲಿಲ್ಲ.
MAT 22:4 “ಅವನು ಪುನಃ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ, ‘ಇಗೋ ಔತಣವು ಸಿದ್ಧವಾಗಿದೆ. ಶ್ರೇಷ್ಠ ಔತಣ ಮಾಡಿಸಿದ್ದೇನೆ: ಎಲ್ಲವೂ ಸಿದ್ಧವಾಗಿವೆ. ಮದುವೆಗೆ ಬನ್ನಿರಿ ಎಂದು ಆಹ್ವಾನಿತರಿಗೆ ಹೇಳಿರಿ,’ ಎಂದನು.
MAT 22:5 “ಆದರೆ ಅವರು ಅದನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟು ಹೋದರು.
MAT 22:6 ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನಪಡಿಸಿ, ಅವರನ್ನು ಕೊಂದುಹಾಕಿದರು.
MAT 22:7 ಆದರೆ ಅರಸನು ಅದನ್ನು ಕೇಳಿ ಬಹುಕೋಪಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
MAT 22:8 “ತರುವಾಯ ಅವನು ತನ್ನ ಸೇವಕರಿಗೆ, ‘ಮದುವೆಯ ಔತಣ ಸಿದ್ಧವಾಗಿದೆ, ಆದರೆ ಆಹ್ವಾನಿತರು ಸಿದ್ಧರಾಗಿರಲಿಲ್ಲ.
MAT 22:9 ಆದ್ದರಿಂದ ನೀವು ಮುಖ್ಯ ಬೀದಿಗಳಿಗೆ ಹೊರಟುಹೋಗಿ ಅಲ್ಲಿ ಕಂಡವರನ್ನೆಲ್ಲಾ ಮದುವೆಗೆ ಆಹ್ವಾನಿಸಿರಿ,’ ಎಂದನು.
MAT 22:10 ಆಗ ಆ ಸೇವಕರು ಮುಖ್ಯ ಬೀದಿಗಳಿಗೆ ಹೋಗಿ ತಾವು ಕಂಡ ಕೆಟ್ಟವರನ್ನೂ ಒಳ್ಳೆಯವರನ್ನೂ ಕರೆತಂದರು. ಹೀಗೆ ಮದುವೆ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.
MAT 22:11 “ಅನಂತರ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದಾಗ, ಅಲ್ಲಿ ಮದುವೆಯ ವಸ್ತ್ರವಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಕಂಡನು.
MAT 22:12 ಅರಸನು ಆ ಮನುಷ್ಯನಿಗೆ, ‘ಸ್ನೇಹಿತನೇ, ಮದುವೆಯ ವಸ್ತ್ರವಿಲ್ಲದೆ ನೀನು ಒಳಗೆ ಹೇಗೆ ಬಂದೆ?’ ಎಂದು ಕೇಳಲು ಅವನು ಸುಮ್ಮನಿದ್ದನು.
MAT 22:13 “ಆಗ ಅರಸನು ಸೇವಕರಿಗೆ, ‘ಅವನ ಕೈಕಾಲುಗಳನ್ನು ಕಟ್ಟಿ ತೆಗೆದುಕೊಂಡು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಹಲ್ಲು ಕಡಿಯುತ್ತಾ ಗೋಳಾಡುತ್ತಿರಲಿ,’ ಎಂದು ಹೇಳಿದನು.
MAT 22:14 “ಹೀಗೆಯೇ ಆಹ್ವಾನಿತರಾದವರು ಅನೇಕರು, ಆದರೆ ಆಯ್ಕೆಯಾದವರು ಕೆಲವರು ಮಾತ್ರ,” ಎಂದನು.
MAT 22:15 ಆಗ ಫರಿಸಾಯರು ಹೊರಟುಹೋಗಿ ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು.
MAT 22:16 ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ.
MAT 22:17 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ? ನಿಮ್ಮ ಅಭಿಪ್ರಾಯವೇನು? ನಮಗೆ ಹೇಳು,” ಎಂದರು.
MAT 22:18 ಯೇಸು ಅವರ ಕುಯುಕ್ತಿಯನ್ನು ತಿಳಿದುಕೊಂಡು, “ಕಪಟಿಗಳೇ, ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ?
MAT 22:19 ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ,” ಎಂದರು. ಆಗ ಅವರು ಒಂದು ನಾಣ್ಯವನ್ನು ತಂದು ಕೊಟ್ಟರು.
MAT 22:20 ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಇದರ ಮೇಲಿರುವ ಲಿಪಿ ಯಾರದು?” ಎಂದು ಕೇಳಿದರು.
MAT 22:21 ಅದಕ್ಕೆ ಅವರು, “ಕೈಸರನದು,” ಎಂದರು. ಆಗ ಯೇಸು, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಕೊಡಿರಿ,” ಎಂದರು.
MAT 22:22 ಅವರು ಇದನ್ನು ಕೇಳಿ ಆಶ್ಚರ್ಯಪಟ್ಟು, ಯೇಸುವನ್ನು ಬಿಟ್ಟು ಹೊರಟು ಹೋದರು.
MAT 22:23 ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಯೇಸುವಿನ ಬಳಿಗೆ ಬಂದು,
MAT 22:24 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.
MAT 22:25 ಹೀಗಿರಲಾಗಿ ನಮ್ಮಲ್ಲಿ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಮಾಡಿಕೊಂಡು ಸತ್ತನು. ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು.
MAT 22:26 ಅದರಂತೆಯೇ ಎರಡನೆಯವನು ಮತ್ತು ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು.
MAT 22:27 ಕಡೆಯದಾಗಿ, ಆ ಸ್ತ್ರೀಯೂ ಸತ್ತಳು.
MAT 22:28 ಆದ್ದರಿಂದ, ಪುನರುತ್ಥಾನದ ಜೀವನದಲ್ಲಿ, ಆ ಏಳುಮಂದಿಯಲ್ಲಿ ಆಕೆ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದು ಕೇಳಿದರು.
MAT 22:29 ಅದಕ್ಕೆ ಯೇಸು ಉತ್ತರವಾಗಿ, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದೀರಿ.
MAT 22:30 ಏಕೆಂದರೆ ಪುನರುತ್ಥಾನದ ಜೀವನದಲ್ಲಿ ಅವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.
MAT 22:31 ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ,
MAT 22:32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’ ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ,” ಎಂದು ಹೇಳಿದರು.
MAT 22:33 ಜನಸಮೂಹದವರು ಇದನ್ನು ಕೇಳಿದಾಗ, ಯೇಸುವಿನ ಬೋಧನೆಗೆ ವಿಸ್ಮಯಗೊಂಡರು.
MAT 22:34 ಯೇಸು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿದಾಗ ಅವರು ಯೇಸುವಿನ ಬಳಿಗೆ ಬಂದರು.
MAT 22:35 ಅವರಲ್ಲಿ ಮೋಶೆಯ ನಿಯಮ ಬೋಧಕನಾಗಿದ್ದ ಒಬ್ಬನು, ಯೇಸುವನ್ನು ಪರೀಕ್ಷಿಸುವುದಕ್ಕಾಗಿ,
MAT 22:36 “ಬೋಧಕರೇ, ನಿಯಮದಲ್ಲಿ ಅತ್ಯಂತ ಮಹಾ ಆಜ್ಞೆ ಯಾವುದು?” ಎಂದು ಪ್ರಶ್ನಿಸಿದನು.
MAT 22:37 ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’
MAT 22:38 ಇದೇ ಅತ್ಯಂತ ಮಹಾ ಆಜ್ಞೆಯೂ ಮೊದಲನೆಯ ಆಜ್ಞೆಯೂ ಆಗಿದೆ.
MAT 22:39 ಇದರಂತೆಯೇ ಇರುವ ಎರಡನೆಯ ಆಜ್ಞೆಯು: ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.
MAT 22:40 ಇಡೀ ನಿಯಮವೂ ಪ್ರವಾದಿಗಳ ಗ್ರಂಥಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ,” ಎಂದರು.
MAT 22:41 ಫರಿಸಾಯರು ಕೂಡಿಬಂದಿದ್ದಾಗ ಯೇಸು ಅವರಿಗೆ,
MAT 22:42 “ಕ್ರಿಸ್ತನ ವಿಷಯವಾಗಿ ನಿಮ್ಮ ಅಭಿಪ್ರಾಯವೇನು? ಆತನು ಯಾರ ಪುತ್ರನು?” ಎಂದು ಕೇಳಿದ್ದಕ್ಕೆ ಅವರು ಯೇಸುವಿಗೆ, “ದಾವೀದನ ಪುತ್ರನು,” ಎಂದರು.
MAT 22:43 “ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು,
MAT 22:44 “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು,” ’ ಎಂದು ಹೇಳಿದನಲ್ಲವೇ?
MAT 22:45 ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವುದಾದರೆ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದನು.
MAT 22:46 ಅದಕ್ಕೆ ಯಾರೂ ಒಂದು ಮಾತನ್ನು ಸಹ ಯೇಸುವಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯ ಬರಲಿಲ್ಲ.
MAT 23:1 ಯೇಸು ಜನಸಮೂಹಕ್ಕೂ ತಮ್ಮ ಶಿಷ್ಯರಿಗೂ
MAT 23:2 ಹೇಳಿದ್ದೇನೆಂದರೆ: “ನಿಯಮ ಬೋಧಕರೂ ಫರಿಸಾಯರೂ ಮೋಶೆಯ ಆಸನದಲ್ಲಿ ಕುಳಿತಿದ್ದಾರೆ.
MAT 23:3 ಆದ್ದರಿಂದ ಅವರು ನಿಮಗೆ ಹೇಳುವುದನ್ನೆಲ್ಲಾ ಅನುಸರಿಸಿ ನಡೆಯಿರಿ. ಆದರೆ ಅವರ ನಡತೆಗಳ ಪ್ರಕಾರ ನೀವು ನಡೆಯಬೇಡಿರಿ. ಏಕೆಂದರೆ ಅವರು ಹೇಳಿದಂತೆ ಮಾಡುವುದಿಲ್ಲ.
MAT 23:4 ಹೊರುವುದಕ್ಕೆ ಭಾರವಾದ ಮತ್ತು ಹೊರಲಾಗದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಅವರು ಹೊರಿಸುತ್ತಾರೆ. ತಾವಾದರೋ ತಮ್ಮ ಬೆರಳಿನಿಂದಲೂ ಅವುಗಳನ್ನು ಮುಟ್ಟುವುದಿಲ್ಲ.
MAT 23:5 “ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡುತ್ತಾರೆ. ಅವರು ತಮ್ಮ ಬಾಹುಗಳ ಮೇಲೆ ದೇವರ ವಾಕ್ಯವುಳ್ಳ ಡಬ್ಬಿಗಳನ್ನು ಮತ್ತು ಹಣೆಯ ಮೇಲೆ ಅಗಲ ಪಟ್ಟಿಗಳನ್ನು ಮಾಡಿ ಉಡುಪುಗಳ ಅಂಚುಗಳನ್ನು ಉದ್ದಮಾಡುತ್ತಾರೆ.
MAT 23:6 ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ
MAT 23:7 ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಮತ್ತು ಜನರಿಂದ, ‘ಬೋಧಕರೇ,’ ಎಂದು ಕರೆಯಿಸಿಕೊಳ್ಳಲು ಅವರು ಇಚ್ಛಿಸುತ್ತಾರೆ.
MAT 23:8 “ಆದರೆ ನೀವು, ‘ಬೋಧಕರು,’ ಎಂದು ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ನಿಮಗಿರುವ ಬೋಧಕರು ಒಬ್ಬರೇ ನೀವೆಲ್ಲರೂ ಸಹೋದರರು.
MAT 23:9 ಭೂಮಿಯಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿರಿ, ಪರಲೋಕದಲ್ಲಿ ಇರುವವರೇ ನಿಮ್ಮ ತಂದೆ.
MAT 23:10 ಗುರುವೆಂದೂ ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ಗುರುವು.
MAT 23:11 ಆದರೆ ನಿಮ್ಮಲ್ಲಿ ಅತಿ ದೊಡ್ಡವನಾಗಿರುವವನು ನಿಮ್ಮ ಸೇವಕನಾಗಿರಬೇಕು.
MAT 23:12 ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವವರು ತಗ್ಗಿನ ಅನುಭವ ಹೊಂದುವರು. ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಉನ್ನತ ಅನುಭವ ಹೊಂದುವರು.
MAT 23:13 “ಆದರೆ ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಮನುಷ್ಯರ ಮುಂದೆ ಪರಲೋಕ ರಾಜ್ಯವನ್ನು ಮುಚ್ಚುತ್ತೀರಿ. ನೀವೂ ಪ್ರವೇಶಿಸುವುದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಬಿಡುವುದಿಲ್ಲ.
MAT 23:14 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ. ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ. ಆದ್ದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ.
MAT 23:15 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ ನಿಮಗೆ ಕಷ್ಟ! ಏಕೆಂದರೆ ಒಬ್ಬನನ್ನು ಮತಾಂತರ ಮಾಡುವುದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ. ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ.
MAT 23:16 “ಕುರುಡರಾದ ಮಾರ್ಗದರ್ಶಕರೇ! ನಿಮಗೆ ಕಷ್ಟ, ‘ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಎನ್ನುತ್ತೀರಿ. ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
MAT 23:17 ಮೂರ್ಖರೇ, ಕುರುಡರೇ, ಯಾವುದು ದೊಡ್ಡದು? ಚಿನ್ನವೋ ಚಿನ್ನವನ್ನು ಪಾವನ ಮಾಡುವ ದೇವಾಲಯವೋ?
MAT 23:18 ‘ಯಾರಾದರೂ ಬಲಿಪೀಠದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
MAT 23:19 ಕುರುಡರೇ, ಯಾವುದು ದೊಡ್ಡದು? ಕಾಣಿಕೆಯೋ ಕಾಣಿಕೆಯನ್ನು ಪಾವನ ಮಾಡುವ ಬಲಿಪೀಠವೋ?
MAT 23:20 ಆದ್ದರಿಂದ, ಬಲಿಪೀಠದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
MAT 23:21 ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿ ವಾಸಿಸುವ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
MAT 23:22 ಪರಲೋಕದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಆಸೀನರಾದ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
MAT 23:23 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪುದೀನ, ಸದಾಪು, ಜೀರಿಗೆಗಳ ದಶಮಭಾಗವನ್ನು ಸಲ್ಲಿಸುತ್ತೀರಿ. ಆದರೆ ನಿಯಮದ ನ್ಯಾಯನೀತಿ, ಕರುಣೆ, ನಂಬಿಕೆ ಎಂಬ ಈ ಪ್ರಮುಖವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗಳೊಂದಿಗೆ ಆ ಬೇರೆಯವುಗಳನ್ನು ಬಿಟ್ಟುಬಿಡದೆ ಮಾಡಬೇಕಾಗಿತ್ತು.
MAT 23:24 ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೆ ಸೋಸುತ್ತೀರಿ ಒಂಟೆ ನುಂಗುತ್ತೀರಿ.
MAT 23:25 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ.
MAT 23:26 ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
MAT 23:27 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ. ಆದರೆ ಒಳಗೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರುತ್ತವೆ.
MAT 23:28 ಅದರಂತೆಯೇ, ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ನೀವು ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.
MAT 23:29 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ.
MAT 23:30 ಆದರೆ, ‘ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಪಿತೃಗಳೊಂದಿಗೆ ಪಾಲುಗಾರರಾಗುತ್ತಿರಲಿಲ್ಲ’ ಎಂದು ಹೇಳುತ್ತೀರಿ.
MAT 23:31 ಆದ್ದರಿಂದ ನೀವು ಆ ಪ್ರವಾದಿಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.
MAT 23:32 ಹಾಗಾದರೆ ನಿಮ್ಮ ಪಿತೃಗಳ ಅಪರಾಧದ ಅಳತೆಯನ್ನು ನೀವೇ ಪೂರ್ಣಗೊಳಿಸಿರಿ.
MAT 23:33 “ಹಾವುಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆಯಿಂದ ಹೇಗೆ ತಪ್ಪಿಸಿಕೊಂಡೀರಿ?
MAT 23:34 ಆದ್ದರಿಂದ ನೋಡಿರಿ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ನಿಯಮ ಬೋಧಕರನ್ನೂ ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಏರಿಸುವಿರಿ. ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸುವಿರಿ.
MAT 23:35 ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲುಗೊಂಡು ದೇವಾಲಯಕ್ಕೂ ಬಲಿಪೀಠಕ್ಕೂ ನಡುವೆ ನೀವು ಕೊಂದುಹಾಕಿದ ಬರಕೀಯನ ಮಗ ಜಕರೀಯನ ರಕ್ತದವರೆಗೂ ಭೂಮಿಯಲ್ಲಿ ಸುರಿಸಲಾದ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವುದು.
MAT 23:36 ನಿಮಗೆ ನಿಜವಾಗಿ ಹೇಳುತ್ತೇನೆ: ಇವೆಲ್ಲವೂ ಈ ಸಂತತಿಯವರ ಮೇಲೆ ಬರುವವು.
MAT 23:37 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
MAT 23:38 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು.
MAT 23:39 ಏಕೆಂದರೆ, ‘ಕರ್ತನ ಹೆಸರಿನಲ್ಲಿ ಬರುವವರು ಧನ್ಯರು’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಎಂದರು.
MAT 24:1 ಯೇಸು ದೇವಾಲಯದಿಂದ ಹೊರಗೆ ಹೋದಾಗ ಅವರ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕಾಗಿ ಯೇಸುವಿನ ಬಳಿಗೆ ಬಂದರು.
MAT 24:2 ಆಗ ಯೇಸು ಅವರಿಗೆ, “ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
MAT 24:3 ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು.
MAT 24:4 ಆಗ ಯೇಸು ಉತ್ತರವಾಗಿ ಅವರಿಗೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
MAT 24:5 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
MAT 24:6 ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ, ಆದರೆ ನೀವು ಕಳವಳಗೊಳ್ಳದಂತೆ ನೋಡಿಕೊಳ್ಳಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.
MAT 24:7 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಅಲ್ಲಲ್ಲಿ ಬರಗಾಲಗಳು ಮತ್ತು ಭೂಕಂಪಗಳು ಸಂಭವಿಸುತ್ತವೆ.
MAT 24:8 ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.
MAT 24:9 “ಆಗ ಜನರು ನಿಮ್ಮನ್ನು ಹಿಂಸೆಪಡಿಸುವುದಕ್ಕಾಗಿ ಒಪ್ಪಿಸಿ ನಿಮ್ಮನ್ನು ಕೊಲ್ಲುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗದವರು ನಿಮ್ಮನ್ನು ದ್ವೇಷಮಾಡುವರು.
MAT 24:10 ಆಗ ಅನೇಕರು ವಿಶ್ವಾಸದಿಂದ ಬಿದ್ದವರಾಗಿ ಒಬ್ಬರಿಗೊಬ್ಬರು ದ್ರೋಹ ಬಗೆಯುವರು ಮತ್ತು ಒಬ್ಬರನ್ನೊಬ್ಬರು ದ್ವೇಷಿಸುವರು.
MAT 24:11 ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿಸುವರು.
MAT 24:12 ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗುವುದು.
MAT 24:13 ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
MAT 24:14 ಪರಲೋಕ ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಸರ್ವಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವದು, ತರುವಾಯ ಅಂತ್ಯ ಬರುವುದು.
MAT 24:15 “ಆದ್ದರಿಂದ ಪ್ರವಾದಿ ದಾನಿಯೇಲನಿಂದ ಹೇಳಿದ ಹಾಗೆ ‘ಅಸಹ್ಯ ವಸ್ತು’ ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ, ಓದುವವನು ತಿಳಿದುಕೊಳ್ಳಲಿ.
MAT 24:16 ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
MAT 24:17 ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವುದಕ್ಕೆ ಕೆಳಗೆ ಇಳಿಯದಿರಲಿ.
MAT 24:18 ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.
MAT 24:19 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!
MAT 24:20 ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಆಗದಂತೆ ಪ್ರಾರ್ಥಿಸಿರಿ.
MAT 24:21 ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.
MAT 24:22 “ಆ ದಿನಗಳನ್ನು ಕಡಿಮೆ ಮಾಡದಿದ್ದರೆ, ಒಬ್ಬನೂ ಉಳಿಯುವಂತಿಲ್ಲ. ಆದರೆ ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಲಾಗುವುದು.
MAT 24:23 ಆಗ ಯಾರಾದರೂ ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ! ಅಗೋ ಅಲ್ಲಿದ್ದಾನೆ!’ ಎಂದು ಹೇಳಿದರೆ ಅವನನ್ನು ನಂಬಬೇಡಿರಿ.
MAT 24:24 ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
MAT 24:25 ನೋಡಿರಿ, ಮುಂಚಿತವಾಗಿ ನಾನು ನಿಮಗೆ ಹೇಳಿದ್ದೇನೆ.
MAT 24:26 “ಅವರು ನಿಮಗೆ, ‘ನೋಡಿ, ಆತನು ಅರಣ್ಯದಲ್ಲಿದ್ದಾನೆ’ ಎಂದು ಹೇಳಿದರೆ ಹೋಗಬೇಡಿರಿ. ‘ನೋಡಿ, ಆತನು ಒಳ ಕೋಣೆಯಲ್ಲಿದ್ದಾನೆ,’ ಎಂದು ಹೇಳಿದರೂ ನಂಬಬೇಡಿರಿ.
MAT 24:27 ಏಕೆಂದರೆ ಮಿಂಚು ಪೂರ್ವದಿಂದ ಮಿನುಗಿ ಪಶ್ಚಿಮದವರೆಗೆ ಹೊಳೆಯುವಂತೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.
MAT 24:28 ಹೆಣ ಇದ್ದಲ್ಲಿಗೆ, ಹದ್ದುಗಳು ಬಂದು ಸೇರುತ್ತವೆ.
MAT 24:29 “ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ, “ ‘ಸೂರ್ಯನು ಕತ್ತಲಾಗುವನು; ಚಂದ್ರನು ಕಾಂತಿಹೀನನಾಗುವನು. ಆಕಾಶದಿಂದ ನಕ್ಷತ್ರಗಳು ಬೀಳುವವು; ಮತ್ತು ಆಕಾಶದ ಶಕ್ತಿಗಳು ಕದಲುವವು.’
MAT 24:30 “ಆಗ ಮನುಷ್ಯಪುತ್ರನಾದ ನನ್ನ ಸೂಚನೆಯು ಆಕಾಶದಲ್ಲಿ ಕಾಣುವುದು. ಭೂಮಿಯ ಎಲ್ಲಾ ಜನಾಂಗದವರು ಗೋಳಾಡುವರು. ಮನುಷ್ಯಪುತ್ರನಾದ ನಾನು ಆಕಾಶದ ಮೇಘಗಳಲ್ಲಿ, ಶಕ್ತಿಯಿಂದಲೂ ಮಹಾಪ್ರಭಾವದಿಂದಲೂ ಬರುವುದನ್ನು ಅವರು ಕಾಣುವರು.
MAT 24:31 ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು. ಆಗ ಅವರು ಆತನಿಂದ ಆಯ್ಕೆಯಾದವರನ್ನು ನಾಲ್ಕು ದಿಕ್ಕುಗಳಿಂದಲೂ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
MAT 24:32 “ಅಂಜೂರ ಮರದ ದೃಷ್ಟಾಂತದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
MAT 24:33 ಅದೇ ಪ್ರಕಾರ, ಇವೆಲ್ಲವೂ ಆಗುವುದನ್ನು ನೀವು ಕಾಣುವಾಗ, ಅಂತ್ಯವು ಬಾಗಿಲ ಹತ್ತಿರದಲ್ಲಿಯೇ ಇದೆ ಎಂದು ತಿಳಿದುಕೊಳ್ಳಿರಿ.
MAT 24:34 ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 24:35 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
MAT 24:36 “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಮನುಷ್ಯಪುತ್ರನಾದ ನನಗೂ ತಿಳಿಯದು.
MAT 24:37 ಆದರೆ ನೋಹನ ದಿವಸಗಳು ಇದ್ದಂತೆಯೇ, ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.
MAT 24:38 ಪ್ರಳಯವು ಬರುವುದಕ್ಕಿಂತ ಮುಂಚಿನ ಆ ದಿವಸಗಳಲ್ಲಿ, ನೋಹನು ನಾವೆಯಲ್ಲಿ ಸೇರಿದ ದಿವಸದವರೆಗೆ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು.
MAT 24:39 ಜಲಪ್ರಳಯವು ಬಂದು ಅವರನ್ನು ಕೊಚ್ಚಿಕೊಂಡು ಹೋಗುವವರೆಗೂ ಅವರಿಗೆ ಅದು ತಿಳಿದಿರಲಿಲ್ಲ. ಹಾಗೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.
MAT 24:40 ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.
MAT 24:41 ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಬೀಸುತ್ತಿರುವಾಗ, ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.
MAT 24:42 “ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರುತ್ತಾನೋ ನಿಮಗೇ ಗೊತ್ತಿಲ್ಲವಾದ್ದರಿಂದ ಎಚ್ಚರವಾಗಿರಿ.
MAT 24:43 ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕದಂತೆ ಕಾಯುತ್ತಿದ್ದನೆಂದು ನೀವು ತಿಳಿದುಕೊಳ್ಳಿರಿ.
MAT 24:44 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ.
MAT 24:45 “ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಸೇವಕನು ಯಾರು?
MAT 24:46 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು.
MAT 24:47 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAT 24:48 ಆದರೆ ದುಷ್ಟ ಸೇವಕನು ತನ್ನ ಹೃದಯದಲ್ಲಿ, ‘ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ,’ ಎಂದು ಹೇಳಿಕೊಂಡು
MAT 24:49 ತನ್ನ ಜೊತೆಯ ಸೇವಕರನ್ನು ಹೊಡೆಯುತ್ತಾ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸುವುದಾದರೆ,
MAT 24:50 ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು,
MAT 24:51 ಅವನನ್ನು ಕ್ರೂರವಾಗಿ ಹಿಂಸಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.
MAT 25:1 “ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು.
MAT 25:2 ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
MAT 25:3 ಬುದ್ಧಿಹೀನರು, ತಮ್ಮ ದೀಪಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
MAT 25:4 ಬುದ್ಧಿವಂತೆಯರೋ, ತಮ್ಮ ದೀಪಗಳೊಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
MAT 25:5 ಮದುಮಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸುತ್ತಾ ನಿದ್ರೆ ಹೋದರು.
MAT 25:6 “ಮಧ್ಯರಾತ್ರಿಯಲ್ಲಿ, ‘ನೋಡಿರಿ, ಮದುಮಗನು ಬರುತ್ತಿದ್ದಾನೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,’ ಎಂಬ ಕೂಗಾಯಿತು.
MAT 25:7 “ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು.
MAT 25:8 ಬುದ್ಧಿಹೀನರು ಬುದ್ಧಿವಂತೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿರಿ, ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ,’ ಎಂದರು.
MAT 25:9 “ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.
MAT 25:10 “ಅವರು ಕೊಂಡುಕೊಳ್ಳುವುದಕ್ಕೆ ಹೋದಾಗ, ಮದುಮಗನು ಬಂದನು. ಆಗ ಸಿದ್ಧವಾಗಿದ್ದವರು ಆತನೊಂದಿಗೆ ಮದುವೆಯ ಔತಣಕ್ಕೆ ಒಳಗೆ ಹೋದರು. ತರುವಾಯ ಬಾಗಿಲು ಮುಚ್ಚಲಾಯಿತು.
MAT 25:11 “ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದರು.
MAT 25:12 “ಆದರೆ ಆತನು ಉತ್ತರವಾಗಿ, ‘ನಾನು ನಿಮ್ಮನ್ನು ಅರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,’ ಎಂದನು.
MAT 25:13 “ಆದ್ದರಿಂದ ಎಚ್ಚರವಾಗಿರಿ, ಏಕೆಂದರೆ ಮನುಷ್ಯಪುತ್ರನಾದ ನನ್ನ ಬರುವ ದಿನವನ್ನಾಗಲಿ ಗಳಿಗೆಯನ್ನಾಗಲಿ ನೀವು ಅರಿಯದವರಾಗಿದ್ದೀರಿ, ಎಂದರು.
MAT 25:14 “ಪರಲೋಕ ರಾಜ್ಯವು ದೂರದೇಶಕ್ಕೆ ಪ್ರಯಾಣ ಮಾಡುವ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
MAT 25:15 ಅವನು ಒಬ್ಬನಿಗೆ ಐದು ಚಿನ್ನದ ನಾಣ್ಯಗಳನ್ನು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು; ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಕೂಡಲೇ ಪ್ರಯಾಣಮಾಡಿದನು.
MAT 25:16 ಐದು ಚಿನ್ನದ ನಾಣ್ಯಗಳನ್ನು ಹೊಂದಿದವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
MAT 25:17 ಅದೇ ಪ್ರಕಾರ, ಎರಡು ಚಿನ್ನದ ನಾಣ್ಯಗಳನ್ನು ಹೊಂದಿದವನು ಸಹ ಇನ್ನು ಬೇರೆ ಎರಡು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
MAT 25:18 ಆದರೆ ಒಂದು ಚಿನ್ನದ ನಾಣ್ಯವನ್ನು ಹೊಂದಿದವನು ಹೋಗಿ ಭೂಮಿಯನ್ನು ಅಗೆದು, ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
MAT 25:19 “ಬಹುಕಾಲವಾದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ಕೇಳಿದನು.
MAT 25:20 ಆಗ ಐದು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಬಂದು ಬೇರೆ ಐದು ಚಿನ್ನದ ನಾಣ್ಯಗಳನ್ನು ತಂದು, ‘ಒಡೆಯನೇ, ನೀನು ನನಗೆ ಐದು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಅವುಗಳಲ್ಲದೆ ಇನ್ನೂ ಬೇರೆ ಐದು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
MAT 25:21 “ಆಗ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
MAT 25:22 “ಎರಡು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಸಹ ಬಂದು, ‘ಒಡೆಯನೇ, ನೀನು ನನಗೆ ಎರಡು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಇನ್ನೂ ಎರಡು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
MAT 25:23 “ಆಗ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ, ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
MAT 25:24 “ಆಗ ಒಂದು ಚಿನ್ನದ ನಾಣ್ಯ ಹೊಂದಿದ್ದವನು ಬಂದು, ‘ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು.
MAT 25:25 ಆದ್ದರಿಂದ ನಾನು ಭಯಪಟ್ಟು ಹೋಗಿ ನಿನ್ನ ಚಿನ್ನದ ನಾಣ್ಯವನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ನೋಡು, ನೀನು ಕೊಟ್ಟಿದ್ದನ್ನು ನಿನಗೇ ಕೊಡುತ್ತೇನೆ,’ ಎಂದನು.
MAT 25:26 “ಅದಕ್ಕೆ ಅವನ ಯಜಮಾನನು ಉತ್ತರವಾಗಿ, ‘ಮೈಗಳ್ಳನಾದ ದುಷ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
MAT 25:27 ಹಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಕೊಡಬೇಕಾಗಿತ್ತು; ನಾನು ಬಂದಾಗ ಹಣವನ್ನು ಬಡ್ಡಿ ಸಮೇತವಾಗಿ ಪಡೆದುಕೊಳ್ಳುತ್ತಿದ್ದೆನು,’ ಎಂದು ಹೇಳಿ,
MAT 25:28 “ತನ್ನ ಸೇವಕರಿಗೆ, ‘ಅವನಿಂದ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳು ಇದ್ದವನಿಗೆ ಕೊಡಿರಿ.
MAT 25:29 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.
MAT 25:30 ನಿಷ್ಪ್ರಯೋಜಕನಾದ ಆ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು,’ ಎಂದನು.
MAT 25:31 “ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.
MAT 25:32 ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.
MAT 25:33 ನಾನು ಕುರಿಗಳನ್ನು ನನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವೆನು.
MAT 25:34 “ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ.
MAT 25:35 ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಟ್ಟಿರಿ.
MAT 25:36 ನಾನು ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿದಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನನ್ನು ಉಪಚರಿಸಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ,’ ಎಂದು ಹೇಳುವೆನು.
MAT 25:37 “ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು?
MAT 25:38 ನೀನು ಪರದೇಶಿಯಾಗಿರುವುದನ್ನು ನಾವು ಯಾವಾಗ ಕಂಡು ನಿನಗೆ ಆಶ್ರಯ ಕೊಟ್ಟೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
MAT 25:39 ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನ ಬಳಿಗೆ ಬಂದೆವು?’ ಎಂದು ಕೇಳುವರು.
MAT 25:40 “ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.
MAT 25:41 “ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.
MAT 25:42 ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.
MAT 25:43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.
MAT 25:44 “ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.
MAT 25:45 “ಆಗ ನಾನು ಅವರಿಗೆ ಉತ್ತರವಾಗಿ, ‘ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದ ಒಬ್ಬನಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡಲಿಲ್ಲ,’ ಎಂದು ಹೇಳುವೆನು.
MAT 25:46 “ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು,” ಎಂದು ಹೇಳುವೆನು.
MAT 26:1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತಮ್ಮ ಶಿಷ್ಯರಿಗೆ,
MAT 26:2 “ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಇರುವುದೆಂದು ನೀವು ಬಲ್ಲಿರಿ. ಆಗ ಮನುಷ್ಯಪುತ್ರನಾದ ನನ್ನನ್ನು ಶಿಲುಬೆಗೆ ಹಾಕಲು ಹಿಡಿದುಕೊಡುವರು,” ಎಂದರು.
MAT 26:3 ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು
MAT 26:4 ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
MAT 26:5 ಆದರೆ ಅವರು, “ಜನರಲ್ಲಿ ಗದ್ದಲವಾದೀತು, ಹಬ್ಬದಲ್ಲಿ ಬೇಡ,” ಎಂದರು.
MAT 26:6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದರು.
MAT 26:7 ಯೇಸು ಅಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯೊಂದಿಗೆ ಯೇಸುವಿನ ಬಳಿಗೆ ಬಂದು, ಅದನ್ನು ಅವರ ತಲೆಯ ಮೇಲೆ ಸುರಿದಳು.
MAT 26:8 ಯೇಸುವಿನ ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಏಕೆ ಈ ವ್ಯರ್ಥ ಖರ್ಚು?
MAT 26:9 ಈ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದರು.
MAT 26:10 ಯೇಸು ಅದನ್ನು ತಿಳಿದವರಾಗಿ ಅವರಿಗೆ, “ನೀವು ಏಕೆ ಈ ಸ್ತ್ರೀಗೆ ತೊಂದರೆಪಡಿಸುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.
MAT 26:11 ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವುದಿಲ್ಲ.
MAT 26:12 ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದರಿಂದ, ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.
MAT 26:13 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.
MAT 26:14 ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತ ಎಂಬುವನು ಮುಖ್ಯಯಾಜಕರ ಬಳಿಗೆ ಹೋಗಿ,
MAT 26:15 “ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ?” ಎಂದನು. ಆಗ ಅವರು ಅವನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಎಣಿಸಿ ಕೊಟ್ಟರು.
MAT 26:16 ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭವನ್ನು ಕಾಯುತ್ತಿದ್ದನು.
MAT 26:17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀವು ಪಸ್ಕದ ಊಟ ಮಾಡಲು ನಾವು ನಿಮಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ಬಯಸುತ್ತೀರಿ?” ಎಂದು ಕೇಳಿದರು.
MAT 26:18 ಅದಕ್ಕೆ ಯೇಸು, “ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ, ‘ನನ್ನ ಸಮಯವು ಸಮೀಪವಾಗಿದೆ. ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕರು ಕೇಳುತ್ತಾರೆ’ ಎಂಬುದಾಗಿ ಅವನಿಗೆ ಹೇಳಿರಿ,” ಎಂದರು.
MAT 26:19 ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಮಾಡಿದರು.
MAT 26:20 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡರು.
MAT 26:21 ಅವರು ಊಟಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು,” ಎಂದರು.
MAT 26:22 ಆಗ ಅವರು ದುಃಖಪಟ್ಟು, “ಕರ್ತನೇ, ಅವನು ನಾನಲ್ಲವಲ್ಲಾ?” ಎಂದು ಅವರಲ್ಲಿ ಪ್ರತಿಯೊಬ್ಬರೂ ಯೇಸುವನ್ನು ಕೇಳಲಾರಂಭಿಸಿದರು.
MAT 26:23 ಅದಕ್ಕೆ ಯೇಸು ಉತ್ತರವಾಗಿ, “ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನಗೆ ದ್ರೋಹ ಮಾಡುವನು.
MAT 26:24 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದರು.
MAT 26:25 ಆಗ ಯೇಸುವನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ಅವನು ನಾನಲ್ಲವಲ್ಲಾ?” ಎಂದನು. “ನೀನೇ ಹೇಳಿದ್ದೀ,” ಎಂದು ಯೇಸು ಉತ್ತರಕೊಟ್ಟರು.
MAT 26:26 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು ತಮ್ಮ ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ,” ಎಂದರು.
MAT 26:27 ಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟು, “ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ.
MAT 26:28 ಇದು ಬಹುಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.
MAT 26:29 ನಾನು ನಿಮಗೆ ಹೇಳುವುದೇನೆಂದರೆ, ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ಕುಡಿಯುವ ಆ ದಿನದವರೆಗೆ ನಾನು ಈ ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ,” ಎಂದರು.
MAT 26:30 ಬಳಿಕ ಅವರೆಲ್ಲರು ಒಂದು ಕೀರ್ತನೆ ಹಾಡಿ ಓಲಿವ್ ಗುಡ್ಡಕ್ಕೆ ಹೊರಟು ಹೋದರು.
MAT 26:31 ಆಗ ಯೇಸು ಅವರಿಗೆ, “ನೀವೆಲ್ಲರೂ ಈ ರಾತ್ರಿ ನನ್ನನ್ನು ಬಿಟ್ಟು ಓಡಿಹೋಗುವಿರಿ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ಏಕೆಂದರೆ ನಾನು ಕುರುಬನನ್ನು ಹೊಡೆಯುವೆನು, ಮಂದೆಯ ಕುರಿಗಳು ಚದರಿಹೋಗುವುವು,’
MAT 26:32 ಆದರೆ ನಾನು ಎದ್ದ ಮೇಲೆ, ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು,” ಎಂದು ಹೇಳಿದರು.
MAT 26:33 ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು.
MAT 26:34 ಯೇಸು ಅವನಿಗೆ, “ಈ ರಾತ್ರಿಯಲ್ಲಿ ಹುಂಜ ಕೂಗುವುದಕ್ಕಿಂತ ಮುಂಚೆ, ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
MAT 26:35 ಅದಕ್ಕೆ ಪೇತ್ರನು ಯೇಸುವಿಗೆ, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದನು. ಅದರಂತೆಯೇ ಉಳಿದ ಶಿಷ್ಯರೆಲ್ಲರೂ ಹೇಳಿದರು.
MAT 26:36 ತರುವಾಯ ಯೇಸು ತಮ್ಮ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ, “ನಾನು ಅಲ್ಲಿಗೆ ಹೋಗಿ ಪ್ರಾರ್ಥಿಸುವವರೆಗೆ ನೀವು ಇಲ್ಲೇ ಕುಳಿತುಕೊಳ್ಳಿರಿ,” ಎಂದರು.
MAT 26:37 ಯೇಸು ತಮ್ಮ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಪುತ್ರರನ್ನೂ ಕರೆದುಕೊಂಡು ಹೋಗಿ, ದುಃಖಿಸುವುದಕ್ಕೂ ಬಹು ವ್ಯಥೆಪಡುವುದಕ್ಕೂ ಆರಂಭಿಸಿದರು.
MAT 26:38 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.
MAT 26:39 ಆಮೇಲೆ ಯೇಸು ಸ್ವಲ್ಪ ಮುಂದಕ್ಕೆ ಹೋಗಿ, ಬೋರಲು ಬಿದ್ದು ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ. ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ,” ಎಂದರು.
MAT 26:40 ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಏನು, ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?
MAT 26:41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ, ಆದರೆ ಶರೀರವು ಬಲಹೀನವಾಗಿದೆ,” ಎಂದು ಹೇಳಿದರು.
MAT 26:42 ಯೇಸು ಎರಡನೆಯ ಸಾರಿ ಹೋಗಿ, ಪ್ರಾರ್ಥಿಸುತ್ತಾ, “ನನ್ನ ತಂದೆಯೇ ನಾನು ಕುಡಿಯದ ಹೊರತು ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ, ನಿನ್ನ ಚಿತ್ತವೇ ಆಗಲಿ,” ಎಂದರು.
MAT 26:43 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು.
MAT 26:44 ಯೇಸು ಅವರನ್ನು ಬಿಟ್ಟು ಹೊರಟುಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಪುನಃ ಹೇಳಿ ಪ್ರಾರ್ಥಿಸಿದರು.
MAT 26:45 ತರುವಾಯ ಯೇಸು ತಮ್ಮ ಶಿಷ್ಯರ ಬಳಿಗೆ ಬಂದು ಅವರಿಗೆ, “ಇನ್ನೂ ವಿಶ್ರಮಿಸುತ್ತಿದ್ದೀರಾ? ಇಗೋ, ಮನುಷ್ಯಪುತ್ರನಾದ ನಾನು ಪಾಪಿಗಳ ಕೈವಶವಾಗುವ ಸಮಯವು ಸಮೀಪಿಸಿದೆ.
MAT 26:46 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ,” ಎಂದು ಹೇಳಿದರು.
MAT 26:47 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಖಡ್ಗ ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗಿತ್ತು.
MAT 26:48 ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು; ಆತನನ್ನು ಹಿಡಿಯಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು.
MAT 26:49 ಯೂದನು ಬಂದ ಕೂಡಲೇ ನೇರವಾಗಿ ಯೇಸುವಿನ ಕಡೆಗೆ ಹೋಗಿ, “ಗುರುವೇ, ನಮಸ್ಕಾರ,” ಎಂದು ಹೇಳಿ ಅವರಿಗೆ ಮುದ್ದಿಟ್ಟನು.
MAT 26:50 ಅದಕ್ಕೆ ಯೇಸು ಅವನಿಗೆ, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸವನ್ನು ಮುಗಿಸು,” ಎಂದು ಹೇಳಿದರು. ಕೂಡಲೇ ಆ ಜನರು ಮುಂದೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.
MAT 26:51 ಆಗ, ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಖಡ್ಗವನ್ನು ಹಿರಿದು, ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
MAT 26:52 ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ತಿರುಗಿ ಅದರ ಒರೆಯಲ್ಲಿ ಹಾಕು. ಖಡ್ಗವನ್ನು ಹಿಡಿದವರೆಲ್ಲರೂ ಖಡ್ಗದಿಂದ ನಾಶವಾಗುವರು.
MAT 26:53 ನಾನು ಈಗ ನನ್ನ ತಂದೆಗೆ ಕೇಳಿಕೊಂಡರೆ ಅವರು ಈಗಲೇ ಹನ್ನೆರಡು ದಳಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡಲಾರರೆಂದು ನೀನು ನೆನಸುತ್ತೀಯಾ?
MAT 26:54 ಹಾಗಾದರೆ ಇವುಗಳು ಹೀಗೆಯೇ ಆಗಬೇಕೆಂಬ ಪವಿತ್ರ ವೇದದ ವಾಕ್ಯಗಳು ನೆರವೇರುವುದು ಹೇಗೆ?” ಎಂದರು.
MAT 26:55 ಅದೇ ಗಳಿಗೆಯಲ್ಲಿ ಯೇಸು ಜನಸಮೂಹಕ್ಕೆ, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬರುವಂತೆ ಖಡ್ಗಗಳೊಂದಿಗೆ ದೊಣ್ಣೆಗಳೊಂದಿಗೆ ನನ್ನನ್ನು ಹಿಡಿಯುವುದಕ್ಕಾಗಿ ಬಂದಿರಾ? ನಾನು ದಿನಾಲು ನಿಮ್ಮ ಸಂಗಡ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ.
MAT 26:56 ಆದರೆ ಪವಿತ್ರ ವೇದದ ಪ್ರವಾದನೆಗಳು ನೆರವೇರುವಂತೆ ಇದೆಲ್ಲಾ ಆಯಿತು,” ಎಂದು ಹೇಳಿದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.
MAT 26:57 ಯೇಸುವನ್ನು ಹಿಡಿದಿದ್ದವರು ಅವರನ್ನು ಮಹಾಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು. ಅಲ್ಲಿ ನಿಯಮ ಬೋಧಕರೂ ಹಿರಿಯರೂ ಕೂಡಿ ಬಂದಿದ್ದರು.
MAT 26:58 ಆದರೆ ಪೇತ್ರನು ಮಹಾಯಾಜಕನ ಅರಮನೆಗೆ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ, ಒಳಗೆ ಹೋಗಿ ಅಂತ್ಯವೇನಾಗುವುದೆಂದು ನೋಡಲು ಸೇವಕರೊಂದಿಗೆ ಕುಳಿತುಕೊಂಡನು.
MAT 26:59 ಆಗ ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಯೇಸುವನ್ನು ಕೊಲ್ಲಿಸಬೇಕೆಂದು ಸುಳ್ಳುಸಾಕ್ಷಿಗಾಗಿ ಹುಡುಕಿದರು.
MAT 26:60 ಬಹುಮಂದಿ ಸುಳ್ಳುಸಾಕ್ಷಿಗಳು ಬಂದರೂ ಅವರಿಗೆ ಸರಿಯಾದ ಸಾಕ್ಷ್ಯವು ದೊರೆಯಲಿಲ್ಲ. ಕಡೆಯಲ್ಲಿ ಇಬ್ಬರು ಸುಳ್ಳುಸಾಕ್ಷಿಗಳು ಬಂದು,
MAT 26:61 “ನಾನು ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಬಲ್ಲೆನೆಂದು ಈತನು ಹೇಳಿದನು,” ಎಂದರು.
MAT 26:62 ಮಹಾಯಾಜಕನು ಎದ್ದು ಯೇಸುವಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವುದು ಏನು?” ಎಂದು ಕೇಳಿದನು.
MAT 26:63 ಆದರೆ ಯೇಸು ಸುಮ್ಮನಿದ್ದರು. ಆಗ ಮಹಾಯಾಜಕನು ಉತ್ತರವಾಗಿ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ನಮಗೆ ಇದನ್ನು ಹೇಳು: ನೀನು ದೇವಪುತ್ರನಾದ ಕ್ರಿಸ್ತನೋ?” ಎಂದನು.
MAT 26:64 ಅದಕ್ಕೆ ಯೇಸು ಅವನಿಗೆ, “ನೀನೇ ಹೇಳಿದ್ದೀ; ಆದರೂ ಇನ್ನು ಮೇಲೆ ಮನುಷ್ಯಪುತ್ರನಾದ ನಾನು ಸರ್ವಶಕ್ತರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀವು ಕಾಣುವಿರಿ ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
MAT 26:65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈತನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಏತಕ್ಕೆ? ನೋಡಿ, ಈಗ ಈತನ ದೇವದೂಷಣೆಯನ್ನು ನೀವೇ ಕೇಳಿದ್ದೀರಲ್ಲಾ
MAT 26:66 ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಿದ್ದಕ್ಕೆ ಅವರು ಉತ್ತರವಾಗಿ, “ಈತನು ಮರಣಕ್ಕೆ ಪಾತ್ರನು,” ಎಂದರು.
MAT 26:67 ಆಮೇಲೆ ಅವರು ಯೇಸುವಿನ ಮುಖದ ಮೇಲೆ ಉಗುಳಿ ಅವರನ್ನು ಗುದ್ದಿದರು. ಬೇರೆ ಕೆಲವರು ಅವರ ಕೆನ್ನೆಗೆ ಹೊಡೆದು,
MAT 26:68 “ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು,” ಎಂದರು.
MAT 26:69 ಆಗ ಪೇತ್ರನು ಹೊರಾಂಗಣದಲ್ಲಿ ಕುಳಿತಿರಲು, ಒಬ್ಬ ದಾಸಿಯು ಅವನ ಬಳಿಗೆ ಬಂದು, “ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು,” ಎಂದಳು.
MAT 26:70 ಆದರೆ ಅವನು ಎಲ್ಲರ ಮುಂದೆ, “ನೀನು ಏನು ಹೇಳುತ್ತೀಯೋ ನನಗೆ ತಿಳಿಯದು,” ಎಂದು ನಿರಾಕರಿಸಿದನು.
MAT 26:71 ಅವನು ಮುಖ್ಯ ದ್ವಾರದೊಳಗೆ ಹೋದಾಗ, ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ, “ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.
MAT 26:72 ಆಗ ಅವನು ಆಣೆ ಮಾಡಿ, “ನಾನು ಆ ಮನುಷ್ಯನನ್ನು ಅರಿಯೆನು,” ಎಂದು ತಿರುಗಿ ನಿರಾಕರಿಸಿದನು.
MAT 26:73 ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು. ನಿಜವಾಗಿಯೂ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ,” ಎಂದರು.
MAT 26:74 ಅದಕ್ಕೆ ಅವನು, “ಆ ಮನುಷ್ಯನನ್ನು ನಾನು ಅರಿಯೆನು,” ಎಂದು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಪ್ರಾರಂಭಿಸಿದನು. ಕೂಡಲೇ ಹುಂಜ ಕೂಗಿತು.
MAT 26:75 ಆಗ ಪೇತ್ರನು, “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ,” ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
MAT 27:1 ಬೆಳಗಾದಾಗ, ಎಲ್ಲಾ ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವುದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
MAT 27:2 ಅವರು ಯೇಸುವನ್ನು ಕಟ್ಟಿ, ಕರೆದುಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದರು.
MAT 27:3 ಯೇಸುವಿಗೆ ದ್ರೋಹಮಾಡಿದ ಯೂದನು ಗುರುವಿಗೆ ಮರಣ ದಂಡನೆಯ ತೀರ್ಪಾದದ್ದನ್ನು ಕಂಡು ವಿಷಾದಿಸಿ, ಆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಮರಳಿ ತಂದನು.
MAT 27:4 ಅವನು, “ನಾನು ನಿರಪರಾಧಿಯ ರಕ್ತಕ್ಕೆ ದ್ರೋಹ ಬಗೆದು ಪಾಪಮಾಡಿದ್ದೇನೆ,” ಎಂದನು. ಅದಕ್ಕೆ ಅವರು, “ನಮಗೇನು? ನೀನೇ ಅದನ್ನು ನೋಡಿಕೋ,” ಎಂದರು.
MAT 27:5 ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ನೇಣು ಹಾಕಿಕೊಂಡನು.
MAT 27:6 ಆಗ ಮುಖ್ಯಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು, “ಇವುಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ನ್ಯಾಯವಲ್ಲ. ಅದು ರಕ್ತದ ಕ್ರಯವಾಗಿದೆ,” ಎಂದರು.
MAT 27:7 ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಳಿಡುವುದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.
MAT 27:8 ಈ ಕಾರಣದಿಂದ ಆ ಹೊಲವನ್ನು “ರಕ್ತದ ಹೊಲ” ಎಂದು ಈ ದಿನದವರೆಗೆ ಕರೆಯಲಾಗುತ್ತಿದೆ.
MAT 27:9 ಹೀಗೆ ಪ್ರವಾದಿ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ, “ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು,
MAT 27:10 ಕರ್ತನು ನನಗೆ ಆಜ್ಞಾಪಿಸಿದಂತೆ ಅವುಗಳನ್ನು, ‘ಕುಂಬಾರನ ಹೊಲ’ ಕೊಳ್ಳಲು ಕೊಟ್ಟರು,” ಎಂಬುದು.
MAT 27:11 ಯೇಸು ರಾಜ್ಯಪಾಲನ ಮುಂದೆ ನಿಂತಿದ್ದರು. ಆಗ ಅವನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, “ನೀನೇ ಹೇಳುತ್ತಿದ್ದಿ,” ಎಂದರು.
MAT 27:12 ಆಗ ಮುಖ್ಯಯಾಜಕರೂ ಹಿರಿಯರೂ ಯೇಸುವಿನ ಮೇಲೆ ದೂರು ಹೇಳುತ್ತಿದ್ದರೂ ಅವರು ಏನೂ ಉತ್ತರ ಕೊಡಲಿಲ್ಲ.
MAT 27:13 ಆಗ ಪಿಲಾತನು ಯೇಸುವಿಗೆ, “ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುತ್ತಿರುವುದು ನಿನಗೆ ಕೇಳಿಸುವುದಿಲ್ಲವೋ?” ಎಂದನು.
MAT 27:14 ಒಂದು ಮಾತಿಗಾದರೂ ಯೇಸು ಅವನಿಗೆ ಉತ್ತರ ಕೊಡದೆ ಇದ್ದುದರಿಂದ ರಾಜ್ಯಪಾಲನು ಅತ್ಯಾಶ್ಚರ್ಯಪಟ್ಟನು.
MAT 27:15 ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಕೊಡುವ ಪದ್ಧತಿಯಿತ್ತು.
MAT 27:16 ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧ ಸೆರೆಯಾಳು ಅವರಲ್ಲಿ ಇದ್ದನು.
MAT 27:17 ಜನಸಮೂಹ ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಿಮಗೆ ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.
MAT 27:18 ಯೇಸುವನ್ನು ಅವರು ಹೊಟ್ಟೆಕಿಚ್ಚಿನಿಂದ ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.
MAT 27:19 ಪಿಲಾತನು ನ್ಯಾಯಾಸನದ ಮೇಲೆ ಕೂತಿದ್ದಾಗ, ಅವನ ಹೆಂಡತಿಯು ಅವನಿಗೆ, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ. ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ,” ಎಂದು ಹೇಳಿ ಕಳುಹಿಸಿದಳು.
MAT 27:20 ಆದರೆ ಮುಖ್ಯಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸುವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹವನ್ನು ಒಡಂಬಡಿಸಿದರು.
MAT 27:21 ರಾಜ್ಯಪಾಲನು ಅವರಿಗೆ, “ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕೆನ್ನುತ್ತೀರಿ?” ಎಂದು ಕೇಳಲು ಅವರು, “ಬರಬ್ಬನನ್ನು,” ಎಂದರು.
MAT 27:22 ಪಿಲಾತನು ಅವರಿಗೆ, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಅವರೆಲ್ಲರೂ, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಹೇಳಿದರು.
MAT 27:23 ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
MAT 27:24 ಪಿಲಾತನು ತನ್ನ ಯತ್ನ ನಡೆಯಲಿಲ್ಲವೆಂದೂ ಅದಕ್ಕೆ ಬದಲಾಗಿ ಗದ್ದಲವೇ ಹೆಚ್ಚಾಗುತ್ತದೆಂದೂ ನೋಡಿ, ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು, “ಈ ನೀತಿವಂತನ ರಕ್ತದ ವಿಷಯದಲ್ಲಿ ನಾನು ನಿರಪರಾಧಿ, ಇದಕ್ಕೆ ನೀವೇ ಜವಾಬ್ದಾರಿ,” ಎಂದನು.
MAT 27:25 ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.
MAT 27:26 ಆಗ ಪಿಲಾತನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
MAT 27:27 ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜಭವನದೊಳಕ್ಕೆ ತೆಗೆದುಕೊಂಡುಹೋಗಿ ಸೈನ್ಯದ ಪೂರ್ಣತಂಡವನ್ನು ಯೇಸುವಿನ ಸುತ್ತಲೂ ಕೂಡಿಸಿದರು.
MAT 27:28 ಅವರು ಯೇಸುವಿನ ಬಟ್ಟೆಗಳನ್ನು ತೆಗೆದುಹಾಕಿ ಕಡುಗೆಂಪು ನಿಲುವಂಗಿಯನ್ನು ಅವರಿಗೆ ತೊಡಿಸಿದರು.
MAT 27:29 ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು, ಯೇಸುವಿನ ತಲೆಯ ಮೇಲಿಟ್ಟು, ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವನ್ನು ಹಾಸ್ಯಮಾಡಿದರು.
MAT 27:30 ಅವರು ಯೇಸುವಿನ ಮೇಲೆ ಉಗುಳಿ, ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು.
MAT 27:31 ಹೀಗೆ ಹಾಸ್ಯ ಮಾಡಿದ ಮೇಲೆ, ಆ ನಿಲುವಂಗಿಯನ್ನು ಯೇಸುವಿನಿಂದ ತೆಗೆದುಹಾಕಿ ಅವರ ವಸ್ತ್ರವನ್ನು ಹೊದಿಸಿ, ಯೇಸುವನ್ನು ಶಿಲುಬೆಗೆ ಹಾಕುವುದಕ್ಕಾಗಿ ನಡೆಸಿಕೊಂಡು ಹೋದರು.
MAT 27:32 ಅವರು ಹೊರಗೆ ಹೋಗುತ್ತಿರುವಾಗ, ಕುರೇನೆ ಗ್ರಾಮದ ಸೀಮೋನನೆಂಬ ಮನುಷ್ಯನನ್ನು ಕಂಡು, ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
MAT 27:33 ಆಮೇಲೆ ಅವರು “ಗೊಲ್ಗೊಥಾ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಬಂದರು. ಅದರ ಅರ್ಥ “ತಲೆಬುರುಡೆಯ ಸ್ಥಳ” ಎಂಬುದು.
MAT 27:34 ಆಗ ಅವರು ಯೇಸುವಿಗೆ ಕಹಿ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಯೇಸು ಅದನ್ನು ರುಚಿ ನೋಡಿ ಕುಡಿಯಲು ಇಷ್ಟಪಡಲಿಲ್ಲ.
MAT 27:35 ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ, ಅವರ ಬಟ್ಟೆಗಳಿಗಾಗಿ ಸೈನಿಕರು ಚೀಟುಹಾಕಿ ಹಂಚಿಕೊಂಡರು
MAT 27:36 ಮತ್ತು ಅವರು ಅಲ್ಲಿ ಕೆಳಗೆ ಕುಳಿತು ಕಾವಲು ಕಾಯುತ್ತಿದ್ದರು.
MAT 27:37 ಯೇಸುವಿನ ತಲೆಯ ಮೇಲ್ಭಾಗದಲ್ಲಿ ಅವರ ವಿರುದ್ಧ ದೋಷಾರೋಪಣೆಯನ್ನು ಬರೆದಿಟ್ಟರು. ಅದೇನೆಂದರೆ: ಈತನು ಯೆಹೂದ್ಯರ ಅರಸನಾದ ಯೇಸು.
MAT 27:38 ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
MAT 27:39 ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ,
MAT 27:40 “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ, ನೀನು ದೇವಪುತ್ರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ,” ಎಂದರು.
MAT 27:41 ಅದೇ ಮೇರೆಗೆ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವನ್ನು ಹಾಸ್ಯಮಾಡಿ,
MAT 27:42 “ಈತನು ಬೇರೆಯವರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು! ಈತನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗೆ ಇಳಿದು ಬರಲಿ. ಆಗ ನಾವು ಈತನನ್ನು ನಂಬುವೆವು.
MAT 27:43 ಈತನು ದೇವರಲ್ಲಿ ಭರವಸೆ ಇಟ್ಟಿದ್ದಾನೆ. ದೇವರಿಗೆ ಈತನಲ್ಲಿ ಇಷ್ಟವಿದ್ದರೆ, ದೇವರೇ ಈತನನ್ನು ಈಗ ಬಿಡಿಸಲಿ, ಏಕೆಂದರೆ ಈತನು, ‘ನಾನು ದೇವಪುತ್ರನು’ ಎಂದು ಹೇಳಿದ್ದಾನೆ,” ಎಂದರು.
MAT 27:44 ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು.
MAT 27:45 ಆಗ ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
MAT 27:46 ಸುಮಾರು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದರೆ, “ನನ್ನ ದೇವರೇ, ನನ್ನ ದೇವರೇ ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿ ಹೇಳಿದರು.
MAT 27:47 ಆಗ ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
MAT 27:48 ಕೂಡಲೇ ಅವರಲ್ಲಿ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯುವುದಕ್ಕೆ ಕೊಟ್ಟನು.
MAT 27:49 ಉಳಿದವರು, “ಇರಲಿ ಬಿಡು, ಎಲೀಯನು ಬಂದು ಈತನನ್ನು ರಕ್ಷಿಸುವನೇನೋ ನೋಡೋಣ,” ಎಂದರು.
MAT 27:50 ಯೇಸು ತಿರುಗಿ ಗಟ್ಟಿಯಾಗಿ ಕೂಗಿ, ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.
MAT 27:51 ಅದೇ ಸಮಯದಲ್ಲಿ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. ಭೂಮಿಯು ಕಂಪಿಸಿತು. ಬಂಡೆಗಳು ಸೀಳಿಹೋದವು.
MAT 27:52 ಇದಲ್ಲದೆ ಸಮಾಧಿಗಳು ತೆರೆದುಕೊಂಡವು. ಮರಣ ಹೊಂದಿದ ಅನೇಕ ಭಕ್ತರ ದೇಹಗಳು ಎದ್ದವು.
MAT 27:53 ಯೇಸು ಪುನರುತ್ಥಾನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪವಿತ್ರ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
MAT 27:54 ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಸಂಭವಿಸಿದ್ದೆಲ್ಲವನ್ನೂ ಕಂಡು ಬಹಳವಾಗಿ ಭಯಪಟ್ಟು, “ನಿಜವಾಗಿಯೂ ಈತನು ದೇವಪುತ್ರನಾಗಿದ್ದನು,” ಎಂದರು.
MAT 27:55 ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ, ಅವರಿಗೆ ಸೇವೆಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.
MAT 27:56 ಅವರಲ್ಲಿ ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಜೆಬೆದಾಯನ ಮಕ್ಕಳ ತಾಯಿ ಇದ್ದರು.
MAT 27:57 ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.
MAT 27:58 ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿಕೊಂಡನು. ಆಗ ಪಿಲಾತನು ದೇಹವನ್ನು ಅವನಿಗೆ ಒಪ್ಪಿಸುವಂತೆ ಅಪ್ಪಣೆಕೊಟ್ಟನು.
MAT 27:59 ಯೋಸೇಫನು ಆ ದೇಹವನ್ನು ತೆಗೆದುಕೊಂಡ ಮೇಲೆ, ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿ,
MAT 27:60 ಬಂಡೆಯಲ್ಲಿ ತಾನು ಕೊರೆದಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು, ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು.
MAT 27:61 ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.
MAT 27:62 ಮರುದಿನ, ಅಂದರೆ ಪಸ್ಕಹಬ್ಬದ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರು, ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು,
MAT 27:63 “ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿರುವಾಗ, ‘ಮೂರು ದಿನಗಳಾದ ಮೇಲೆ ನಾನು ತಿರುಗಿ ಏಳುವೆನು,’ ಎಂದು ಹೇಳಿದ್ದು ನಮಗೆ ನೆನಪಿದೆ.
MAT 27:64 ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ಆತನನ್ನು ಕದ್ದುಕೊಂಡು ಹೋಗಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿಯಾರು. ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು. ಆದಕಾರಣ ಮೂರನೆಯ ದಿನದವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆಕೊಡಬೇಕು,” ಎಂದರು.
MAT 27:65 ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲಾ, ಹೋಗಿ ನಿಮಗೆ ತಿಳಿದಮಟ್ಟಿಗೆ ಅದನ್ನು ಭದ್ರಪಡಿಸಿರಿ,” ಎಂದನು.
MAT 27:66 ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ, ಕಾವಲನ್ನು ಇಟ್ಟರು.
MAT 28:1 ಸಬ್ಬತ್ ಮುಗಿದ ಮೇಲೆ, ವಾರದ ಮೊದಲನೆಯ ದಿನ ಬೆಳಗಾಗುವಾಗ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
MAT 28:2 ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು.
MAT 28:3 ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು.
MAT 28:4 ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.
MAT 28:5 ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು.
MAT 28:6 ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ.
MAT 28:7 ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.
MAT 28:8 ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು.
MAT 28:9 ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು.
MAT 28:10 ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು.
MAT 28:11 ಅವರು ಹೋಗುತ್ತಿರುವಾಗ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಮುಖ್ಯಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.
MAT 28:12 ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು,
MAT 28:13 “ ‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ.
MAT 28:14 ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು.
MAT 28:15 ಹೀಗೆ ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಕಲಿಸಿದಂತೆ ವರದಿಮಾಡಿದರು. ಈ ಕಥೆಯು ಈ ದಿನದವರೆಗೂ ಯೆಹೂದ್ಯರಲ್ಲಿ ಹಬ್ಬಿದೆ.
MAT 28:16 ಆಗ ಹನ್ನೊಂದು ಮಂದಿ ಶಿಷ್ಯರು ಯೇಸು ತಮಗೆ ನೇಮಿಸಿದ ಗಲಿಲಾಯದಲ್ಲಿರುವ ಬೆಟ್ಟಕ್ಕೆ ಹೋದರು.
MAT 28:17 ಅವರು ಯೇಸುವನ್ನು ಕಂಡು ಆರಾಧಿಸಿದರು. ಆದರೆ ಕೆಲವರು ಸಂದೇಹ ಪಟ್ಟರು.
MAT 28:18 ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ.
MAT 28:19 ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,
MAT 28:20 ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.
MAR 1:1 ದೇವಪುತ್ರರಾದ ಯೇಸುಕ್ರಿಸ್ತರ ಸುವಾರ್ತೆಯ ಆರಂಭ.
MAR 1:2 ಪ್ರವಾದಿ ಯೆಶಾಯನ ಗ್ರಂಥದಲ್ಲಿ: “ಇಗೋ, ನಿನ್ನ ಮುಂದೆ ನಾನು ನನ್ನ ದೂತನನ್ನು ಕಳುಹಿಸುತ್ತೇನೆ, ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”
MAR 1:3 “ ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವವನ ಸ್ವರವದೆ.”
MAR 1:4 ಎಂದು ಬರೆದಿಟ್ಟ ಪ್ರಕಾರ, ಸ್ನಾನಿಕನಾದ ಯೋಹಾನನು ಅರಣ್ಯದಲ್ಲಿ ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು, ಸಾರುತ್ತಾ ಬಂದನು.
MAR 1:5 ಯೂದಾಯ ಪ್ರಾಂತದ ಎಲ್ಲಾ ಹಳ್ಳಿಗಳಿಂದ ಮತ್ತು ಯೆರೂಸಲೇಮ್ ನಗರದಿಂದ ಎಲ್ಲಾ ಜನರು ಅವನ ಬಳಿಗೆ ಬರುತ್ತಿದ್ದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡುತ್ತಾ, ಅವನಿಂದ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
MAR 1:6 ಯೋಹಾನನು ಒಂಟೆಯ ಕೂದಲಿನ ಉಡುಪನ್ನು ಧರಿಸಿ, ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
MAR 1:7 ಅವನು, “ನನಗಿಂತ ಶಕ್ತರೊಬ್ಬರು ನನ್ನ ನಂತರ ಬರುತ್ತಾರೆ, ಅವರ ಪಾದರಕ್ಷೆಗಳ ಪಟ್ಟಿಗಳನ್ನು ದಾಸನಂತೆ ಬಾಗಿ ಬಿಚ್ಚುವುದಕ್ಕೂ ನಾನು ಅರ್ಹನಲ್ಲ.
MAR 1:8 ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಅವರು ನಿಮಗೆ ಪವಿತ್ರಾತ್ಮರಲ್ಲಿಯೇ ದೀಕ್ಷಾಸ್ನಾನ ಮಾಡಿಸುವರು,” ಎಂದು ಘೋಷಿಸುತ್ತಿದ್ದನು.
MAR 1:9 ಹೀಗಿರುವಲ್ಲಿ, ಒಂದು ದಿನ ಯೇಸು ಗಲಿಲಾಯ ಪ್ರಾಂತದ ನಜರೇತ್ ಎಂಬ ಪಟ್ಟಣದಿಂದ ಬಂದು, ಯೊರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು.
MAR 1:10 ಯೇಸು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಆಕಾಶವು ತೆರೆದು, ಪವಿತ್ರಾತ್ಮರು ಪಾರಿವಾಳದಂತೆ ತಮ್ಮ ಮೇಲೆ ಇಳಿದು ಬರುವುದನ್ನು ಕಂಡರು.
MAR 1:11 ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು.
MAR 1:12 ಕೂಡಲೇ ಪವಿತ್ರಾತ್ಮ ದೇವರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
MAR 1:13 ಯೇಸು ಅಲ್ಲಿ ನಲವತ್ತು ದಿನಗಳು, ಸೈತಾನನಿಂದ ಶೋಧನೆಗೆ ಒಳಗಾದರು. ಕಾಡುಮೃಗಗಳೊಡನೆ ಅರಣ್ಯದಲ್ಲಿ ಇದ್ದು, ದೇವದೂತರಿಂದ ಉಪಚಾರ ಪಡೆದರು.
MAR 1:14 ಯೋಹಾನನು ಬಂಧಿತನಾಗಿ ಸೆರೆಯಾದ ತರುವಾಯ, ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಸಾರಿದರು:
MAR 1:15 “ಕಾಲವು ಪರಿಪೂರ್ಣವಾಗಿದೆ, ದೇವರ ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ,” ಎಂದು ಹೇಳಿದರು.
MAR 1:16 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಸೀಮೋನನು ಮತ್ತು ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
MAR 1:17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
MAR 1:18 ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
MAR 1:19 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಕಂಡರು. ಅವರು ತಮ್ಮ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು.
MAR 1:20 ಕೂಡಲೇ ಯೇಸು ಅವರನ್ನು ಕರೆಯಲು, ಅವರು ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
MAR 1:21 ಅವರು ಕಪೆರ್ನೌಮಿಗೆ ಹೋದರು, ಕೂಡಲೇ ಸಬ್ಬತ್ ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು.
MAR 1:22 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಯೇಸು ನಿಯಮ ಬೋಧಕರಂತೆ ಬೋಧಿಸದೆ, ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು.
MAR 1:23 ಆ ಸಮಯದಲ್ಲಿ ಸಭಾಮಂದಿರದೊಳಗೆ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.
MAR 1:24 ಅವನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀವು ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರುವೆಯೋ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರಿಂದ ಬಂದ ಪರಿಶುದ್ಧರು,” ಎಂದು ಕೂಗಿ ಹೇಳಿದನು.
MAR 1:25 ಆಗ ಯೇಸು, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದು ಗದರಿಸಿದರು.
MAR 1:26 ಅಶುದ್ಧಾತ್ಮವು ಅವನನ್ನು ಉಗ್ರವಾಗಿ ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂತು.
MAR 1:27 ಜನರೆಲ್ಲರು ಇದನ್ನು ಕಂಡು ವಿಸ್ಮಯಗೊಂಡು, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ಅಶುದ್ಧಾತ್ಮಗಳಿಗೆ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
MAR 1:28 ಕೂಡಲೇ ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿನ ಪ್ರಾಂತದಲ್ಲೆಲ್ಲಾ ಹಬ್ಬಿತು.
MAR 1:29 ಅವರು ಸಭಾಮಂದಿರವನ್ನು ಬಿಟ್ಟ ಕೂಡಲೇ, ಯಾಕೋಬ ಯೋಹಾನರೊಡನೆ ಸೀಮೋನ ಅಂದ್ರೆಯರ ಮನೆಗೆ ಹೋದರು.
MAR 1:30 ಅಲ್ಲಿ ಸೀಮೋನನ ಅತ್ತೆಯು ಜ್ವರದಿಂದ ಮಲಗಿದ್ದಳು. ಕೂಡಲೇ ಅವರು ಆಕೆಯ ವಿಷಯವಾಗಿ ಯೇಸುವಿಗೆ ತಿಳಿಸಿದರು.
MAR 1:31 ಯೇಸು ಆಕೆಯ ಬಳಿಗೆ ಬಂದು, ಕೈಹಿಡಿದು ಎಬ್ಬಿಸಿದರು. ಜ್ವರವು ಆಕೆಯನ್ನು ಬಿಟ್ಟುಹೋಯಿತು ಮತ್ತು ಆಕೆಯು ಅವರಿಗೆ ಉಪಚರಿಸಿದಳು.
MAR 1:32 ಆ ಸಂಜೆ ಸೂರ್ಯಾಸ್ತವಾದ ಮೇಲೆ ಜನರು ಅಸ್ವಸ್ಥರಾದವರನ್ನು ಮತ್ತು ದೆವ್ವಪೀಡಿತರನ್ನು ಯೇಸುವಿನ ಬಳಿಗೆ ಕರೆತಂದರು.
MAR 1:33 ಇಡೀ ಊರಿನವರು ಕೂಡಿ ಆ ಮನೆಯ ಬಾಗಿಲಿನ ಬಳಿ ಬಂದರು.
MAR 1:34 ಯೇಸು ವಿವಿಧ ರೋಗಗಳಿಗೆ ಒಳಗಾದ ಅನೇಕರನ್ನು ಸ್ವಸ್ಥಪಡಿಸಿ, ಅನೇಕ ದೆವ್ವಗಳನ್ನು ಓಡಿಸಿದರು. ಆದರೆ ತಾನು ಯಾರೆಂದು ಆ ದೆವ್ವಗಳಿಗೆ ತಿಳಿದಿದ್ದರಿಂದ ಯೇಸು ಅವುಗಳಿಗೆ ಮಾತನಾಡಲು ಅನುಮತಿಸಲಿಲ್ಲ.
MAR 1:35 ಬೆಳಗಾಗುವ ಮೊದಲೇ, ಇನ್ನೂ ಕತ್ತಲಿರುವಾಗ, ಯೇಸು ಎದ್ದು ಏಕಾಂತ ಸ್ಥಳಕ್ಕೆ ಹೊರಟುಹೋಗಿ, ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
MAR 1:36 ಆಗ ಸೀಮೋನನು ಮತ್ತು ಅವನ ಸಂಗಡಿಗರು ಯೇಸುವನ್ನು ಹುಡುಕಿಕೊಂಡು ಹೋದರು.
MAR 1:37 ಯೇಸುವನ್ನು ಕಂಡ ಮೇಲೆ, “ಎಲ್ಲರೂ ನಿಮ್ಮನ್ನು ಎದುರು ನೋಡುತ್ತಿದ್ದಾರೆ,” ಎಂದು ಹೇಳಿದರು.
MAR 1:38 ಯೇಸು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ. ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು. ನಾನು ಬಂದಿರುವುದು ಇದಕ್ಕಾಗಿಯೇ,” ಎಂದು ಹೇಳಿದರು.
MAR 1:39 ಆದ್ದರಿಂದ ಯೇಸು ಗಲಿಲಾಯ ಪ್ರಾಂತವನ್ನೆಲ್ಲಾ ಸಂಚರಿಸಿ, ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೆವ್ವಗಳನ್ನು ಓಡಿಸುತ್ತಾ ಇದ್ದರು.
MAR 1:40 ಕುಷ್ಠರೋಗಿಯಾಗಿದ್ದ ಒಬ್ಬನು ಯೇಸುವಿನ ಬಳಿಗೆ ಬಂದು, ಮೊಣಕಾಲೂರಿ, “ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
MAR 1:41 ಯೇಸು ಕನಿಕರಪಟ್ಟು, ತಮ್ಮ ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು.
MAR 1:42 ತಕ್ಷಣವೇ ಕುಷ್ಠರೋಗವು ಹೋಗಿ ಅವನು ಶುದ್ಧನಾದನು.
MAR 1:43 ಯೇಸು ಅವನಿಗೆ, “ನೋಡು, ಇದನ್ನು ಯಾರಿಗೂ ಹೇಳಬೇಡ. ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ, ಮೋಶೆಯು ಆಜ್ಞಾಪಿಸಿದ್ದನ್ನು ಶುದ್ಧತ್ವಕ್ಕಾಗಿ ಸಮರ್ಪಿಸು ಇದು ಅವರಿಗೆ ಸಾಕ್ಷಿಯಾಗಿರಲಿ,” ಎಂದು ಅವನಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿ, ಕೂಡಲೇ ಅವನನ್ನು ಕಳುಹಿಸಿಬಿಟ್ಟರು.
MAR 1:45 ಆದರೆ ಅವನು ಹೋಗಿ ಈ ವಿಷಯವನ್ನು ಎಲ್ಲಾ ಕಡೆಗಳಲ್ಲಿ ಹಬ್ಬಿಸಿದನು. ಇದರ ಪರಿಣಾಮವಾಗಿ ಯೇಸು ಯಾವ ಊರೊಳಗೂ ಬಹಿರಂಗವಾಗಿ ಪ್ರವೇಶಿಸಲಾಗದೆ, ನಿರ್ಜನ ಪ್ರದೇಶಗಳಲ್ಲಿರುತ್ತಿದ್ದರು. ಆದರೂ ಜನರು ಎಲ್ಲಾ ಕಡೆಗಳಿಂದ ಯೇಸುವಿನ ಬಳಿಗೆ ಬರುತ್ತಿದ್ದರು.
MAR 2:1 ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂದಿರುಗಿದಾಗ, ಅವರು ಮನೆಗೆ ಬಂದಿದ್ದಾರೆಂಬ ವಾರ್ತೆಯು ಜನರಲ್ಲಿ ಹಬ್ಬಿತು.
MAR 2:2 ಜನರು ಗುಂಪಾಗಿ ಕೂಡಿಬಂದದ್ದರಿಂದ ಮನೆಯೊಳಗಾಗಲಿ ಬಾಗಿಲ ಬಳಿಯಲ್ಲಾಗಲಿ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದರು.
MAR 2:3 ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಅಲ್ಲಿಗೆ ಬಂದರು.
MAR 2:4 ಜನರ ಗುಂಪಿನ ನಿಮಿತ್ತ ಅವನನ್ನು ಯೇಸುವಿನ ಬಳಿಗೆ ತರಲು ಸಾಧ್ಯವಾಗದೆ ಹೋಯಿತು. ಆದ್ದರಿಂದ ಅವರು ಯೇಸು ಇದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಒಡೆದು ತೆರೆದು, ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.
MAR 2:5 ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
MAR 2:6 ಅಲ್ಲಿ ಕುಳಿತಿದ್ದ ಕೆಲವು ನಿಯಮ ಬೋಧಕರು,
MAR 2:7 “ಈತನು ಏಕೆ ಹೀಗೆ ಮಾತನಾಡುತ್ತಾನೆ? ಈತನು ದೇವದೂಷಣೆ ಮಾಡುತ್ತಿದ್ದಾನೆ! ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮೊಳಗೇ ಆಲೋಚಿಸಿಕೊಳ್ಳುತ್ತಿದ್ದರು.
MAR 2:8 ಯೇಸು ಅವರು ಯೋಚಿಸುತ್ತಿರುವುದನ್ನು ಕೂಡಲೇ ತಮ್ಮ ಆತ್ಮದಲ್ಲಿ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುವುದೇಕೆ?
MAR 2:9 ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ,’ ಎಂದು ಹೇಳುವುದೋ?
MAR 2:10 ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ,
MAR 2:11 “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
MAR 2:12 ಕೂಡಲೇ ಅವನು ಎದ್ದು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಆಗ ಎಲ್ಲರು ವಿಸ್ಮಯಗೊಂಡು, “ಇಂಥದ್ದನ್ನು ನಾವು ಹಿಂದೆಂದೂ ಕಂಡಿರಲಿಲ್ಲ!” ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
MAR 2:13 ಯೇಸು ಪುನಃ ಸರೋವರದ ತೀರಕ್ಕೆ ಹೋದರು. ಜನರೆಲ್ಲರೂ ಯೇಸುವಿನ ಬಳಿಗೆ ಬಂದರು. ಯೇಸು ಅವರಿಗೆ ಉಪದೇಶಿಸಿದರು.
MAR 2:14 ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದ ಕಟ್ಟೆಯಲ್ಲಿ ಕುಳಿತಿದ್ದ ಅಲ್ಫಾಯನ ಮಗ ಲೇವಿಯನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
MAR 2:15 ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ತಿರಸ್ಕಾರ ಹೊಂದಿದ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. ಬಹುಜನರು ಅವರನ್ನು ಹಿಂಬಾಲಿಸುತ್ತಿದ್ದರು.
MAR 2:16 ಫರಿಸಾಯರಾದ ನಿಯಮ ಬೋಧಕರು ಪಾಪಿಗಳ ಮತ್ತು ಸುಂಕದವರ ಸಂಗಡ ಯೇಸು ಊಟಮಾಡುವುದನ್ನು ಕಂಡು, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
MAR 2:17 ಯೇಸು ಇದನ್ನು ಕೇಳಿಸಿಕೊಂಡು ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ, ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು.
MAR 2:18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸಮಾಡುತ್ತಿದ್ದರು. ಆಗ ಕೆಲವರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
MAR 2:19 ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ಹೇಗೆ ಉಪವಾಸ ಮಾಡುವರು? ಮದುಮಗನು ಅವರ ಸಂಗಡ ಇರುವವರೆಗೆ ಅವರು ಉಪವಾಸ ಮಾಡಲಾಗದು.
MAR 2:20 ಆದರೆ ಮದುಮಗನು ಅವರಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆಗ ಅವರು ಉಪವಾಸ ಮಾಡುವರು.
MAR 2:21 “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಹಚ್ಚಿದರೆ, ಆ ತೇಪೆಯು ಬಟ್ಟೆಯನ್ನು ಹಿಂಜಿ ಹರಕನ್ನು ಇನ್ನೂ ದೊಡ್ಡದು ಮಾಡುತ್ತದೆ.
MAR 2:22 ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ,” ಎಂದು ಹೇಳಿದರು.
MAR 2:23 ಒಂದು ಸಬ್ಬತ್ ದಿನದಂದು ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಯೇಸುವಿನ ಶಿಷ್ಯರು ನಡೆಯುತ್ತಾ ಹೋಗುವಾಗ ತೆನೆಗಳನ್ನು ಮುರಿದುಕೊಂಡರು.
MAR 2:24 ಆಗ ಫರಿಸಾಯರು ಯೇಸುವಿಗೆ, “ಇಲ್ಲಿ ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಏಕೆ ಮಾಡುತ್ತಾರೆ?” ಎಂದು ಹೇಳಿದರು.
MAR 2:25 ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗಲೂ ಅವಶ್ಯಕತೆಯಲ್ಲಿದ್ದಾಗಲೂ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೋ?
MAR 2:26 ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ, ದೇವರ ಆಲಯದೊಳಗೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ನಿಯಮ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನು,” ಎಂದರು.
MAR 2:27 ಅನಂತರ ಯೇಸು ಅವರಿಗೆ, “ಮನುಷ್ಯನು ಸಬ್ಬತ್ ದಿನಕ್ಕಾಗಲಿ ಅಲ್ಲ, ಸಬ್ಬತ್ ದಿನವು ಮನುಷ್ಯನಿಗಾಗಿ ಮಾಡಲಾಯಿತು.
MAR 2:28 ಆದ್ದರಿಂದ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದೇನೆ,” ಎಂದು ಹೇಳಿದರು.
MAR 3:1 ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು.
MAR 3:2 ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು.
MAR 3:3 ಯೇಸು ಕೈಬತ್ತಿದವನಿಗೆ, “ಎದ್ದು ಮುಂದೆ ಬಾ,” ಎಂದರು.
MAR 3:4 ಆಗ ಯೇಸು ಅವರನ್ನು, “ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ನಿಯಮಕ್ಕೆ ಸಮ್ಮತವೋ ಅಥವಾ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?” ಎಂದು ಕೇಳಿದರು. ಅದಕ್ಕೆ ಅವರು ಸುಮ್ಮನಿದ್ದರು.
MAR 3:5 ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.
MAR 3:6 ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಕೂಡಲೇ ಹೆರೋದ್ಯರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಒಳಸಂಚು ಮಾಡಿದರು.
MAR 3:7 ಯೇಸು ತಮ್ಮ ಶಿಷ್ಯರೊಂದಿಗೆ ಸರೋವರದ ಬಳಿಗೆ ಹೊರಟು ಹೋದರು. ಗಲಿಲಾಯದಿಂದ ಬಂದ ಒಂದು ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.
MAR 3:8 ಯೇಸು ಮಾಡುತ್ತಿದ್ದ ಎಲ್ಲವನ್ನು ಕೇಳಿ, ಬಹುಜನರು ಯೂದಾಯದಿಂದಲೂ ಯೆರೂಸಲೇಮ್ ನಗರದಿಂದಲೂ ಇದುಮಾಯದಿಂದಲೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಟೈರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಯೇಸುವಿನ ಬಳಿಗೆ ಬಂದರು.
MAR 3:9 ಜನರ ಗುಂಪು ಹೆಚ್ಚಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಡಲು ತಮ್ಮ ಶಿಷ್ಯರಿಗೆ ಹೇಳಿದರು.
MAR 3:10 ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ನುಗ್ಗುತ್ತಿದ್ದರು.
MAR 3:11 ದುರಾತ್ಮಗಳು ಯೇಸುವನ್ನು ಕಂಡಾಗಲೆಲ್ಲಾ ಅವರ ಮುಂದೆ ಬಿದ್ದು, “ನೀವು ದೇವರ ಪುತ್ರ,” ಎಂದು ಕಿರುಚಿದವು.
MAR 3:12 ಆದರೆ ಯೇಸು, ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡಿದರು.
MAR 3:13 ಯೇಸು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಕರೆದರು. ಅವರು ಯೇಸುವಿನ ಬಳಿಗೆ ಬಂದರು.
MAR 3:14 ಯೇಸು ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರಲು ಮತ್ತು ಅವರನ್ನು ಉಪದೇಶಮಾಡಲು ನೇಮಿಸಿ, ಅವರಿಗೆ “ಅಪೊಸ್ತಲರು” ಎಂದು ಕರೆದರು.
MAR 3:15 ಅವರಿಗೆ ದೆವ್ವಗಳನ್ನು ಓಡಿಸುವ ಅಧಿಕಾರ ಕೊಟ್ಟರು.
MAR 3:16 ಯೇಸು ನೇಮಿಸಿದ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಇಂತಿವೆ: ಸೀಮೋನನಿಗೆ ಯೇಸು “ಪೇತ್ರ” ಎಂಬ ಹೆಸರನ್ನು ಕೊಟ್ಟರು.
MAR 3:17 ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.
MAR 3:18 ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನನು.
MAR 3:19 ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.
MAR 3:20 ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ.
MAR 3:21 ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.
MAR 3:22 ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, “ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
MAR 3:23 ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: “ಸೈತಾನನು ಸೈತಾನನನ್ನು ಓಡಿಸುವುದು ಹೇಗೆ?
MAR 3:24 ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ.
MAR 3:25 ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ.
MAR 3:26 ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು.
MAR 3:27 ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
MAR 3:28 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು.
MAR 3:29 ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.
MAR 3:30 “ಆತನಲ್ಲಿ ಅಶುದ್ಧಾತ್ಮವಿದೆ,” ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.
MAR 3:31 ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು.
MAR 3:32 ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.
MAR 3:33 ಅದಕ್ಕೆ ಯೇಸು, “ನನ್ನ ತಾಯಿ ಮತ್ತು ಸಹೋದರರು ಯಾರು?” ಎಂದು ಕೇಳಿದರು.
MAR 3:34 ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು!
MAR 3:35 ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.
MAR 4:1 ಯೇಸು ಮತ್ತೊಮ್ಮೆ ಗಲಿಲಾಯ ಸರೋವರದ ತೀರದಲ್ಲಿ ಬೋಧಿಸಲಾರಂಭಿಸಿದರು. ಜನರು ಗುಂಪುಗುಂಪಾಗಿ ಯೇಸುವಿನ ಸುತ್ತಲೂ ನೆರೆದು ಬಂದದ್ದರಿಂದ ಯೇಸು ಸರೋವರದಲ್ಲಿದ್ದ ದೋಣಿಯನ್ನು ಹತ್ತಿ ಕುಳಿತುಕೊಂಡರು. ಜನರು ದಡದಲ್ಲಿ ಸುತ್ತಲೂ ನಿಂತಿದ್ದರು.
MAR 4:2 ಯೇಸು ಸಾಮ್ಯಗಳ ಮೂಲಕ ಅನೇಕ ಸಂಗತಿಗಳನ್ನು ಅವರಿಗೆ ಬೋಧಿಸಿ ಹೇಳಿದ್ದೇನೆಂದರೆ:
MAR 4:3 “ಕೇಳಿರಿ! ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು.
MAR 4:4 ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು. ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
MAR 4:5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
MAR 4:6 ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
MAR 4:7 ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಆ ಎಳೆಯ ಸಸಿಗಳನ್ನು ಅಡಗಿಸಿಬಿಟ್ಟಿದ್ದರಿಂದ ಅವು ಫಲ ಕೊಡಲಿಲ್ಲ.
MAR 4:8 ಇನ್ನು ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಬೆಳೆದು ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಟ್ಟವು.”
MAR 4:9 ಅನಂತರ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ,” ಎಂದು ಹೇಳಿದರು.
MAR 4:10 ಯೇಸು ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರು ಮತ್ತು ಯೇಸುವಿನ ಸುತ್ತಲಿದ್ದವರು ಬಂದು ಆ ಸಾಮ್ಯಗಳ ವಿಷಯವಾಗಿ ಕೇಳಿದರು.
MAR 4:11 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯವನ್ನು ತಿಳಿದುಕೊಳ್ಳುವ ಜ್ಞಾನ ನಿಮಗೆ ಕೊಡಲಾಗಿದೆ. ಆದರೆ ಹೊರಗಿನವರಿಗೆ ಎಲ್ಲವೂ ಸಾಮ್ಯದ ರೂಪದಲ್ಲಿ ಹೇಳಲಾಗಿದೆ.
MAR 4:12 ಈ ಕಾರಣದಿಂದ, “ ‘ಅವರು ಕಣ್ಣಿದ್ದರೂ ಕಾಣುವುದಿಲ್ಲ. ಕೇಳಿಸಿಕೊಳ್ಳುತ್ತಿದ್ದರೂ ಗ್ರಹಿಸುವುದಿಲ್ಲ. ಹಾಗೆ ಮಾಡುವುದಾದರೆ, ಅವರು ದೇವರ ಕಡೆಗೆ ತಿರುಗಿಕೊಂಡು ಕ್ಷಮೆಹೊಂದುತ್ತಿದ್ದರು!’” ಎಂದರು.
MAR 4:13 ಅನಂತರ ಯೇಸು ಅವರಿಗೆ, “ನಿಮಗೆ ಈ ಸಾಮ್ಯ ಅರ್ಥವಾಗಲಿಲ್ಲವೇ? ಹಾಗಾದರೆ ನೀವು ಬೇರೆ ಸಾಮ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?
MAR 4:14 ರೈತನು ‘ವಾಕ್ಯ’ ಎಂಬ ಬೀಜ ಬಿತ್ತುತ್ತಾನೆ.
MAR 4:15 ಕೆಲವರು ದಾರಿಯ ಪಕ್ಕದಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯ ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ದೇವರ ವಾಕ್ಯವನ್ನು ತೆಗೆದುಬಿಡುತ್ತಾನೆ.
MAR 4:16 ಇನ್ನೂ ಕೆಲವರು ಕಲ್ಲು ನೆಲದ ಮೇಲೆ ಬಿದ್ದ ಬೀಜದಂತಿರುವರು. ಅವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
MAR 4:17 ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
MAR 4:18 ಮತ್ತೆ ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯವನ್ನು ಕೇಳುತ್ತಾರೆ.
MAR 4:19 ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ಇನ್ನಿತರ ಅಭಿಲಾಷೆಗಳು ಸೇರಿ ದೇವರ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ.
MAR 4:20 ಇನ್ನೂ ಕೆಲವರು ಒಳ್ಳೆಯ ಭೂಮಿಯಲ್ಲಿ ಬಿದ್ದ ಬೀಜದಂತಿದ್ದು, ವಾಕ್ಯವನ್ನು ಕೇಳಿ ಅಂಗೀಕರಿಸಿ, ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಡುತ್ತಾರೆ,” ಎಂದರು.
MAR 4:21 ಯೇಸು ಅವರಿಗೆ, “ಯಾರಾದರೂ ದೀಪವನ್ನು ತಂದು ಬೋಗುಣಿಯೊಳಗೆ ಅಥವಾ ಮಂಚದ ಕೆಳಗೆ ಇಡುತ್ತಾರೋ? ಅದರ ಬದಲು ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.
MAR 4:22 ಮರೆಯಾಗಿರುವ ಯಾವುದೂ ವ್ಯಕ್ತವಾಗದೇ ಇರುವುದಿಲ್ಲ. ರಹಸ್ಯಗಳು ಬಹಿರಂಗವಾಗದೆ ಇರುವುದಿಲ್ಲ.
MAR 4:23 ಕಿವಿಯುಳ್ಳವರು ಕೇಳಲಿ.”
MAR 4:24 ಮತ್ತು ಯೇಸು ಅವರಿಗೆ, “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು; ಇನ್ನೂ ಹೆಚ್ಚಾಗಿ ಸೇರಿಸಿಕೊಡಲಾಗುವುದು.
MAR 4:25 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದರು.
MAR 4:26 ಯೇಸು, “ದೇವರ ರಾಜ್ಯವು ಹೀಗಿದೆ: ಒಬ್ಬನು ತನ್ನ ಹೊಲದಲ್ಲಿ ಬೀಜವನ್ನು ಬಿತ್ತಿದನು.
MAR 4:27 ರಾತ್ರಿ ಅವನು ಮಲಗಿದ್ದರೂ ಹಗಲು ಎದ್ದಿದ್ದರೂ ಆ ಬೀಜವು ಅವನಿಗೆ ತಿಳಿಯದ ರೀತಿಯಲ್ಲಿ ಅಂಕುರಿಸಿ ಬೆಳೆಯುತ್ತದೆ.
MAR 4:28 ಭೂಮಿಯು ಮೊದಲು ಸಸಿಯನ್ನು ಆಮೇಲೆ ಹೊಡೆಯನ್ನು ಅನಂತರ ತೆನೆಯ ತುಂಬಾ ಕಾಳನ್ನು ತನ್ನಷ್ಟಕ್ಕೆ ತಾನೇ ಬೆಳೆಸುತ್ತದೆ.
MAR 4:29 ಬೆಳೆಯು ಮಾಗಿದ ಕೂಡಲೇ, ಅವನು ಕುಡುಗೋಲನ್ನು ಉಪಯೋಗಿಸುತ್ತಾನೆ. ಏಕೆಂದರೆ ಸುಗ್ಗಿಯು ಬಂದಿದೆ,” ಎಂದರು.
MAR 4:30 ಯೇಸು ಮುಂದುವರಿಸಿ, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ ಅಥವಾ ಅದನ್ನು ವಿವರಿಸಲು ಯಾವ ಸಾಮ್ಯವನ್ನು ಉಪಯೋಗಿಸೋಣ?
MAR 4:31 ಅದು ಭೂಮಿಯ ಎಲ್ಲಾ ಬೀಜಗಳಿಗಿಂತ ಅತಿ ಚಿಕ್ಕದಾದ ಸಾಸಿವೆ ಕಾಳಿನಂತಿದೆ.
MAR 4:32 ಅದನ್ನು ಬಿತ್ತಿದ ಮೇಲೆ, ಅದು ಬೆಳೆದು ತೋಟದ ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡ ರೆಂಬೆಗಳುಳ್ಳ ಮರವಾಗಿ ಬೆಳೆಯುತ್ತದೆ. ಆಕಾಶದ ಪಕ್ಷಿಗಳು ಬಂದು ಅದರ ನೆರಳಿನಲ್ಲಿ ಗೂಡು ಕಟ್ಟಿ ವಾಸಿಸುತ್ತವೆ,” ಎಂದು ಹೇಳಿದರು.
MAR 4:33 ಈ ರೀತಿಯ ಅನೇಕ ಸಾಮ್ಯಗಳಿಂದ ಅವರ ಗ್ರಹಿಕೆಗೆ ತಕ್ಕ ಹಾಗೆ ಯೇಸು ಅವರಿಗೆ ವಾಕ್ಯವನ್ನು ಉಪದೇಶಿಸುತ್ತಿದ್ದರು.
MAR 4:34 ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ. ಆದರೆ ಯೇಸು ತಮ್ಮ ಶಿಷ್ಯರೊಡನೆ ಏಕಾಂತವಾಗಿದ್ದಾಗ ಮಾತ್ರ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
MAR 4:35 ಆ ದಿನ ಸಂಜೆಯಾದಾಗ ಯೇಸು ತಮ್ಮ ಶಿಷ್ಯರಿಗೆ, “ನಾವು ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು.
MAR 4:36 ಅವರು ಜನರ ಗುಂಪನ್ನು ಬಿಟ್ಟು, ಯೇಸುವನ್ನು ಇದ್ದ ಹಾಗೆಯೇ ದೋಣಿಯಲ್ಲಿ ಕರೆದುಕೊಂಡು ಹೋದರು. ಯೇಸುವಿನ ಸಂಗಡ ಬೇರೆ ದೋಣಿಗಳೂ ಇದ್ದವು.
MAR 4:37 ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿಯು ರಭಸವಾಗಿ ಬೀಸಿದ್ದರಿಂದ ಅಲೆಗಳು ದೋಣಿಗೆ ಅಪ್ಪಳಿಸಿದವು. ಆಗ ದೋಣಿಯೊಳಗೆ ನೀರು ನುಗ್ಗಿ ಅದು ಮುಳುಗಿ ಹೋಗುವುದರಲ್ಲಿತ್ತು.
MAR 4:38 ಯೇಸು ದೋಣಿಯ ಹಿಂಭಾಗದಲ್ಲಿ ದಿಂಬಿನ ಮೇಲೆ ಒರಗಿ ನಿದ್ದೆಮಾಡುತ್ತಿದ್ದರು. ಶಿಷ್ಯರು ಯೇಸುವನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿ ಸಾಯುತ್ತಿದ್ದೇವೆ. ನಿಮಗೆ ಚಿಂತೆಯಿಲ್ಲವೇ?” ಎಂದು ಕೇಳಿದರು.
MAR 4:39 ಯೇಸು ಎದ್ದು ಬಿರುಗಾಳಿಯನ್ನು ಗದರಿಸಿದರು ಮತ್ತು ಅಲೆಗಳಿಗೆ, “ಸುಮ್ಮನಿರು, ಶಾಂತವಾಗು!” ಎಂದು ಆಜ್ಞಾಪಿಸಿದರು. ಆಗ ಬಿರುಗಾಳಿಯು ನಿಂತು ಹೋಗಿ ಎಲ್ಲವೂ ಪ್ರಶಾಂತವಾಯಿತು.
MAR 4:40 ಯೇಸು ತಮ್ಮ ಶಿಷ್ಯರಿಗೆ, “ನೀವು ಏಕೆ ಭಯಪಡುತ್ತೀರಿ? ನಿಮಗೆ ಇನ್ನೂ ನಂಬಿಕೆಯಿಲ್ಲವೇ?” ಎಂದರು.
MAR 4:41 ಶಿಷ್ಯರು ಭಯಭೀತರಾಗಿ, “ಇವರು ಯಾರಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
MAR 5:1 ಅವರೆಲ್ಲರು ಸರೋವರದ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತವನ್ನು ಸೇರಿದರು.
MAR 5:2 ಯೇಸು ದೋಣಿಯಿಂದ ಇಳಿದುಬರುವಾಗ, ಅಶುದ್ಧಾತ್ಮವುಳ್ಳ ಒಬ್ಬನು ಸಮಾಧಿಯ ಗುಹೆಯೊಳಗಿಂದ ಹೊರಬಂದು ಅವರನ್ನು ಸಂಧಿಸಿದನು.
MAR 5:3 ಅವನು ಸಮಾಧಿಯ ಗುಹೆಗಳ ನಡುವೆ ವಾಸಿಸುತ್ತಿದ್ದನು ಮತ್ತು ಯಾರಿಗೂ ಅವನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಸರಪಣಿಯಿಂದಲೂ ಅವನನ್ನು ಕಟ್ಟಿ ಹಾಕಲು ಆಗುತ್ತಿರಲಿಲ್ಲ.
MAR 5:4 ಅನೇಕ ಸಾರಿ ಅವನ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದ್ದರೂ ಅವನು ಅವುಗಳನ್ನು ಕಿತ್ತೆಸೆದು, ಬೇಡಿಗಳನ್ನು ತುಂಡುತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಯಲ್ಲಿಡುವಷ್ಟು ಬಲ ಯಾರಿಗೂ ಇರಲಿಲ್ಲ.
MAR 5:5 ಅವನು ಹಗಲಿರುಳು ಸಮಾಧಿಯ ಗುಹೆಗಳಲ್ಲಿಯೂ ಗುಡ್ಡಗಳಲ್ಲಿಯೂ ಇರುವವನಾಗಿ ಅರಚುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಿದ್ದನು.
MAR 5:6 ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು, ಅವರ ಮುಂದೆ ಮೊಣಕಾಲೂರಿ,
MAR 5:7 ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತ ದೇವಪುತ್ರನೇ, ನನ್ನ ಗೊಡವೆ ನಿಮಗೆ ಏಕೆ? ದೇವರಾಣೆ, ನನ್ನನ್ನು ಪೀಡಿಸಬೇಡಿರಿ!” ಎಂದು ಅರಚಿದನು.
MAR 5:8 ಏಕೆಂದರೆ ಯೇಸು ಅವನಿಗೆ, “ಅಶುದ್ಧಾತ್ಮವೇ ಅವನನ್ನು ಬಿಟ್ಟು ಹೊರಗೆ ಬಾ!” ಎಂದು ಹೇಳಿದ್ದರು.
MAR 5:9 ಅನಂತರ, ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದಾಗ, “ನನ್ನ ಹೆಸರು ಸೇನೆ, ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದು ಹೇಳಿದನು.
MAR 5:10 ಅವುಗಳನ್ನು ಆ ಪ್ರಾಂತದಿಂದ ಹೊರಗಟ್ಟಬಾರದೆಂದು ಅವನು ಯೇಸುವನ್ನು ಬಹಳವಾಗಿ ಬೇಡಿಕೊಂಡನು.
MAR 5:11 ಹತ್ತಿರದಲ್ಲಿದ್ದ ಗುಡ್ಡದ ಸಮೀಪದಲ್ಲಿ ಹಂದಿಗಳ ಒಂದು ದೊಡ್ಡ ಹಿಂಡು ಮೇಯುತ್ತಿತ್ತು.
MAR 5:12 “ನಾವು ಆ ಹಂದಿಗಳ ಹಿಂಡಿನೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಅವುಗಳೊಳಗೆ ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು.
MAR 5:13 ಯೇಸು ಅವುಗಳಿಗೆ ಅಪ್ಪಣೆಕೊಡಲು, ಆ ಅಶುದ್ಧಾತ್ಮಗಳು ಅವನಿಂದ ಹೊರಗೆ ಬಂದು ಹಂದಿಗಳೊಳಗೆ ಸೇರಿದವು. ಸುಮಾರು ಎರಡು ಸಾವಿರ ಹಂದಿಗಳಿದ್ದ ಆ ಹಿಂಡು ಓಡಿ ಕಡಿದಾದ ಬದಿಯಿಂದ ಸರೋವರದೊಳಗೆ ಬಿದ್ದು ಮುಳುಗಿ ಸತ್ತು ಹೋದವು.
MAR 5:14 ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ನಡೆದ ಸಂಗತಿಯನ್ನು ತಿಳಿಸಿದರು ಮತ್ತು ನಡೆದದ್ದನ್ನು ಕಾಣಲು ಜನರು ಬಂದರು.
MAR 5:15 ಅವರು ಯೇಸುವಿನ ಬಳಿಗೆ ಬಂದಾಗ, ದೆವ್ವಗಳ ಸೇನೆಯಿಂದ ಪೀಡಿತನಾಗಿದ್ದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಭಯಪಟ್ಟರು.
MAR 5:16 ನಡೆದದ್ದನ್ನು ಕಂಡವರು, ದೆವ್ವಪೀಡಿತನಾಗಿದ್ದವನಿಗೆ ಏನಾಯಿತೆಂಬುದನ್ನು ಮತ್ತು ಹಂದಿಗಳಿಗಾದ ಗತಿಯನ್ನು ಜನರಿಗೆ ತಿಳಿಸಿದರು.
MAR 5:17 ಆಗ ಅವರು ಯೇಸುವಿಗೆ, ತಮ್ಮ ಪ್ರಾಂತವನ್ನು ಬಿಟ್ಟು ಹೊರಟುಹೋಗಬೇಕೆಂದು ಕೇಳಿಕೊಂಡರು.
MAR 5:18 ಯೇಸು ದೋಣಿಯನ್ನು ಹತ್ತುತ್ತಿದ್ದಾಗ, ದೆವ್ವಪೀಡಿತನಾಗಿದ್ದವನು ತನ್ನನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬೇಡಿಕೊಂಡನು.
MAR 5:19 ಯೇಸು ಅದಕ್ಕೊಪ್ಪದೆ ಅವನಿಗೆ, “ನೀನು ಮನೆಗೆ ಹೋಗಿ ನಿನ್ನ ಜನರಿಗೆ ಕರ್ತದೇವರು ನಿನಗೆ ಮಾಡಿರುವ ಮಹಾಕಾರ್ಯಗಳನ್ನು ಮತ್ತು ನಿನ್ನನ್ನು ಹೇಗೆ ಕರುಣಿಸಿದ್ದಾರೆ ಎಂಬುದನ್ನು ತಿಳಿಸು,” ಎಂದರು.
MAR 5:20 ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ದೆಕಪೊಲಿಯಲ್ಲಿ ಸಾರಲಾರಂಭಿಸಿದನು ಮತ್ತು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
MAR 5:21 ಯೇಸು ಪುನಃ ದೋಣಿಯಲ್ಲಿ ಆಚೆಯ ದಡವನ್ನು ಮುಟ್ಟಿದಾಗ, ಜನರು ದೊಡ್ಡ ಗುಂಪಾಗಿ ಅವರ ಸುತ್ತಲೂ ಸೇರಿ ಬಂದರು.
MAR 5:22 ಯೇಸು ಸರೋವರದ ದಡದಲ್ಲಿದ್ದಾಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನು ಅಲ್ಲಿಗೆ ಬಂದು ಯೇಸುವನ್ನು ಕಂಡು ಅವರ ಪಾದಕ್ಕೆ ಬಿದ್ದು,
MAR 5:23 “ನನ್ನ ಚಿಕ್ಕ ಮಗಳು ಸಾಯುತ್ತಿದ್ದಾಳೆ. ಅವಳು ಗುಣಹೊಂದಿ ಬದುಕುವಂತೆ ದಯಮಾಡಿ ಬಂದು ಅವಳ ಮೇಲೆ ನಿಮ್ಮ ಕೈಗಳನ್ನಿಡಬೇಕು,” ಎಂದು ಬಹಳವಾಗಿ ಬೇಡಿಕೊಂಡನು.
MAR 5:24 ಆಗ ಯೇಸು ಅವನೊಂದಿಗೆ ಹೋದರು. ಜನರು ದೊಡ್ಡ ಗುಂಪಾಗಿ ಯೇಸುವನ್ನು ನೂಕುತ್ತಾ ಹಿಂಬಾಲಿಸಿದರು.
MAR 5:25 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು.
MAR 5:26 ಆಕೆ ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಶ್ರಮಪಟ್ಟು, ತನಗಿದ್ದದ್ದೆಲ್ಲವನ್ನು ಖರ್ಚು ಮಾಡಿದ್ದರೂ ಸ್ವಲ್ಪವೂ ಪ್ರಯೋಜನವಾಗದೆ ಆ ರೋಗವು ಇನ್ನೂ ಹೆಚ್ಚಾಗುತ್ತಾ ಬಂತು.
MAR 5:27 ಆಕೆ ಯೇಸುವಿನ ವಿಷಯವಾಗಿ ಕೇಳಿ, ಜನರ ಗುಂಪಿನಲ್ಲಿ ಅವರ ಹಿಂದೆ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು.
MAR 5:28 ಏಕೆಂದರೆ, “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದುಕೊಂಡಿದ್ದಳು.
MAR 5:29 ಕೂಡಲೇ ಆಕೆಯ ರಕ್ತಸ್ರಾವವು ನಿಂತಿತು ಮತ್ತು ರೋಗಬಾಧೆಯಿಂದ ತಾನು ಗುಣಹೊಂದಿದಳೆಂದು ಆಕೆಗೆ ತಿಳಿಯಿತು.
MAR 5:30 ಕೂಡಲೇ ಗುಣಪಡಿಸುವ ಶಕ್ತಿಯು ತನ್ನಿಂದ ಹೊರಟಿತೆಂದು ಯೇಸು ತಿಳಿದು, ಜನರ ನಡುವೆ ಸುತ್ತಲೂ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದರು.
MAR 5:31 ಯೇಸುವಿನ ಶಿಷ್ಯರು ಅವರಿಗೆ, “ಇಷ್ಟು ದೊಡ್ಡ ಗುಂಪು ನಿಮ್ಮ ಸುತ್ತಲೂ ನೂಕುತ್ತಿರುವುದನ್ನು ನೀವೇ ಕಾಣುತ್ತಿರುವಲ್ಲಿ, ‘ನನ್ನನ್ನು ಮುಟ್ಟಿದವರು ಯಾರು,’ ಎಂದು ಕೇಳುತ್ತೀರಲ್ಲಾ?” ಎಂದರು.
MAR 5:32 ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರು ಎಂದು ಕಾಣಲು ಸುತ್ತಲೂ ನೋಡಲಾರಂಭಿಸಿದರು.
MAR 5:33 ಆಗ ಆ ಸ್ತ್ರೀ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಭಯದಿಂದ ನಡುಗುತ್ತಾ ನಡೆದ ಎಲ್ಲಾ ನಿಜಸಂಗತಿಯನ್ನು ತಿಳಿಸಿದಳು.
MAR 5:34 ಯೇಸು ಆ ಸ್ತ್ರೀಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು, ನಿನ್ನ ಬಾಧೆಯಿಂದ ನೀನು ಮುಕ್ತಳಾಗಿರುವೆ,” ಎಂದು ಹೇಳಿದರು.
MAR 5:35 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಕೆಲವರು ಬಂದು, “ನಿನ್ನ ಮಗಳು ತೀರಿಹೋದಳು. ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದರು.
MAR 5:36 ಆದರೆ ಯೇಸು ಅವರು ಹೇಳಿದ ಮಾತನ್ನು ಲಕ್ಷ್ಯಮಾಡದೆ, ಆ ಸಭಾಮಂದಿರದ ಅಧಿಕಾರಿಗೆ, “ಭಯಪಡಬೇಡ ನಂಬಿಕೆ ಮಾತ್ರ ಇರಲಿ,” ಎಂದರು.
MAR 5:37 ಯೇಸು ತಮ್ಮ ಸಂಗಡ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಹೊರತು ಬೇರೆ ಯಾರನ್ನೂ ಬರುವುದಕ್ಕೆ ಅನುಮತಿಸಲಿಲ್ಲ.
MAR 5:38 ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ, ಯೇಸು ಜನರು ಬಹಳವಾಗಿ ಗೋಳಾಡುವುದನ್ನೂ ಪ್ರಲಾಪಿಸುವುದನ್ನೂ ಕಂಡರು.
MAR 5:39 ಯೇಸು ಮನೆಯೊಳಗೆ ಹೋಗಿ, “ನೀವು ಗೋಳಾಡಿ ಅಳುವುದೇಕೆ? ಮಗು ಸತ್ತಿಲ್ಲ, ಅವಳು ನಿದ್ದೆ ಮಾಡುತ್ತಿದ್ದಾಳೆ,” ಎಂದರು.
MAR 5:40 ಆದರೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದರು. ಯೇಸು ಅವರನ್ನೆಲ್ಲಾ ಹೊರಗೆ ಹಾಕಿ, ಆ ಹುಡುಗಿಯ ತಂದೆತಾಯಿ ಮತ್ತು ತನ್ನೊಂದಿಗಿದ್ದ ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಹುಡುಗಿಯನ್ನಿಟ್ಟಿದ್ದ ಕೋಣೆಗೆ ಹೋದರು.
MAR 5:41 ಯೇಸು ಆಕೆಯ ಕೈಹಿಡಿದು, “ತಲಿಥಾ ಕೂಮ್!” ಎಂದರು. ಅರಮೀಯ ಭಾಷೆಯಲ್ಲಿ ಇದರ ಅರ್ಥ, “ಚಿಕ್ಕ ಹುಡುಗಿಯೇ! ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂಬುದು.
MAR 5:42 ಕೂಡಲೇ ಆ ಹುಡುಗಿ ಎದ್ದು ನಡೆದಾಡಿದಳು. ಆಕೆಗೆ ಹನ್ನೆರಡು ವಯಸ್ಸಾಗಿತ್ತು. ಎಲ್ಲರೂ ಬಹಳ ಆಶ್ಚರ್ಯಪಟ್ಟರು.
MAR 5:43 ಯೇಸು ಅವರಿಗೆ ನಡೆದದ್ದನ್ನು ಯಾರಿಗೂ ತಿಳಿಸಬಾರದು ಎಂದು ಬಹು ಖಂಡಿತವಾಗಿ ಹೇಳಿ ಹುಡುಗಿಗೆ ತಿನ್ನಲು ಏನಾದರೂ ಕೊಡಬೇಕೆಂದು ಹೇಳಿದರು.
MAR 6:1 ಯೇಸು ಅಲ್ಲಿಂದ ಹೊರಟು ಶಿಷ್ಯರೊಡನೆ ತಮ್ಮ ಸ್ವಂತ ಊರಿಗೆ ಬಂದರು.
MAR 6:2 ಸಬ್ಬತ್ ದಿನ ಬಂದಾಗ, ಯೇಸು ಸಭಾಮಂದಿರದಲ್ಲಿ ಬೋಧಿಸಲಾರಂಭಿಸಿದರು. ಅದನ್ನು ಕೇಳಿದ ಅನೇಕರು ವಿಸ್ಮಯಗೊಂಡು, “ಈತನು ಇವೆಲ್ಲವನ್ನು ಎಲ್ಲಿಂದ ಪಡೆದಿದ್ದಾನೆ? ಈತನ ಕೈಗಳಿಂದ ಇಂಥ ಅದ್ಭುತಕಾರ್ಯಗಳನ್ನು ಮಾಡುವ ಜ್ಞಾನವು ಈತನಿಗೆ ಎಲ್ಲಿಂದ ಬಂತು?
MAR 6:3 ಈತನು ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ ಮತ್ತು ಸೀಮೋನರ ಅಣ್ಣನಲ್ಲವೇ? ಈತನ ತಂಗಿಯರು ನಮ್ಮಲ್ಲಿ ಇದ್ದಾರಲ್ಲವೇ?” ಎಂದು ಹೇಳಿ, ಯೇಸುವಿನ ವಿಷಯವಾಗಿ ಬೇಸರಗೊಂಡರು.
MAR 6:4 ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ, ತನ್ನ ಸಂಬಂಧಿಕರ ನಡುವೆ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.
MAR 6:5 ಅಲ್ಲಿ ಯೇಸು ಕೆಲವು ರೋಗಿಗಳ ಮೇಲೆ ಕೈಗಳನ್ನಿಟ್ಟು ಅವರನ್ನು ಗುಣಪಡಿಸಿದ್ದಲ್ಲದೆ ಬೇರೆ ಯಾವ ಅದ್ಭುತಗಳನ್ನೂ ಮಾಡಲಿಲ್ಲ.
MAR 6:6 ಯೇಸು ಅವರ ಅಪನಂಬಿಕೆಯನ್ನು ಕಂಡು ಆಶ್ಚರ್ಯಪಟ್ಟರು. ಆಮೇಲೆ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದರು.
MAR 6:7 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಕರೆದು, ಅವರಿಗೆ ಅಶುದ್ಧಾತ್ಮಗಳನ್ನು ಹೊರಗಟ್ಟುವ ಅಧಿಕಾರವನ್ನು ಕೊಟ್ಟು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು.
MAR 6:8 ಯೇಸು ಅವರಿಗೆ, “ಪ್ರಯಾಣಕ್ಕಾಗಿ ಕೇವಲ ಕೋಲು ಒಂದನ್ನು ಬಿಟ್ಟು, ರೊಟ್ಟಿ, ಚೀಲ ಅಥವಾ ಜೇಬಿನಲ್ಲಿ ಹಣವನ್ನು ತೆಗೆದುಕೊಳ್ಳಬೇಡಿರಿ.
MAR 6:9 ಪಾದರಕ್ಷೆಗಳನ್ನು ಮೆಟ್ಟಿಕೊಳ್ಳಿರಿ. ಆದರೆ ಹೆಚ್ಚು ಅಂಗಿಗಳನ್ನು ತೆಗೆದುಕೊಳ್ಳಬೇಡಿರಿ,” ಎಂದು ಆಜ್ಞಾಪಿಸಿದರು.
MAR 6:10 ಇದಲ್ಲದೆ ಯೇಸು ಅವರಿಗೆ, “ನೀವು ಯಾವುದಾದರೊಂದು ಮನೆಗೆ ಹೋದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.
MAR 6:11 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಅಥವಾ ನಿಮ್ಮ ಮಾತುಗಳನ್ನು ಕೇಳದಿದ್ದರೆ, ನೀವು ಹೊರಡುತ್ತಿರುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು.
MAR 6:12 ಶಿಷ್ಯರು ಹೊರಟುಹೋಗಿ ಜನರಿಗೆ ದೇವರ ಕಡೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳಿದರು.
MAR 6:13 ಅವರು ಅನೇಕರಿಂದ ದೆವ್ವಗಳನ್ನೋಡಿಸಿ, ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಅವರನ್ನು ಗುಣಪಡಿಸಿದರು.
MAR 6:14 ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿದ್ದರಿಂದ ಅರಸನಾದ ಹೆರೋದನಿಗೆ ಈ ವಿಷಯ ತಿಳಿಯಿತು. “ಈತನು ಸ್ನಾನಿಕನಾದ ಯೋಹಾನನೇ, ಸತ್ತವರೊಳಗಿಂದ ಅವನು ತಿರುಗಿ ಬದುಕಿ ಬಂದಿದ್ದಾನೆ. ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಕೆಲವರು ಹೇಳುತ್ತಿದ್ದರು.
MAR 6:15 ಇನ್ನು ಕೆಲವರು, “ಈತನು ಎಲೀಯನು,” ಎಂದರು. ಮತ್ತೆ ಕೆಲವರು, “ಈತನು ಹಿಂದಿನ ಕಾಲದ ಪ್ರವಾದಿಗಳಂತೆ ಒಬ್ಬ ಪ್ರವಾದಿಯಾಗಿರಬೇಕು,” ಎಂದರು.
MAR 6:16 ಆದರೆ ಹೆರೋದನು ಇದನ್ನು ಕೇಳಿ, “ನಾನು ಶಿರಚ್ಛೇದನ ಮಾಡಿದ ಯೋಹಾನನೇ, ತಿರುಗಿ ಜೀವಂತವಾಗಿ ಬಂದಿದ್ದಾನೆ,” ಎಂದು ಹೇಳಿದನು.
MAR 6:17 ಏಕೆಂದರೆ, ಯೋಹಾನನನ್ನು ಬಂಧಿಸಿ ಸೆರೆಮನೆಗೆ ಹಾಕಬೇಕೆಂದು ಹೆರೋದನು ತಾನೇ ಕಳುಹಿಸಿದ್ದನು. ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆ ಮಾಡಿಕೊಂಡದ್ದರಿಂದ ಅವನು ಹೀಗೆ ಮಾಡಿದ್ದನು.
MAR 6:18 ಏಕೆಂದರೆ ಯೋಹಾನನು ಹೆರೋದನಿಗೆ, “ನೀನು ನಿನ್ನ ಸಹೋದರನ ಹೆಂಡತಿಯನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಹೇಳುತ್ತಿದ್ದನು.
MAR 6:19 ಇದರಿಂದ ಹೆರೋದ್ಯಳು ಯೋಹಾನನ ಮೇಲೆ ಹಗೆಯಿಟ್ಟುಕೊಂಡು, ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ.
MAR 6:20 ಏಕೆಂದರೆ, ಯೋಹಾನನು ನೀತಿವಂತನು ಮತ್ತು ಪವಿತ್ರ ಮನುಷ್ಯನು ಎಂದು ತಿಳಿದು ಹೆರೋದನು ಭಯಪಟ್ಟು ಅವನನ್ನು ಸುರಕ್ಷಿತವಾಗಿಟ್ಟಿದ್ದನು. ಯೋಹಾನನು ಹೇಳಿದ್ದನ್ನು ಹೆರೋದನು ಕೇಳಿದಾಗಲೆಲ್ಲಾ ಅವನಿಗೆ ಗಲಿಬಿಲಿಯಾಗುತ್ತಿತ್ತು. ಆದರೂ ಅವನ ಮಾತನ್ನು ಕೇಳಲು ಇಷ್ಟಪಡುತ್ತಿದ್ದನು.
MAR 6:21 ಕೊನೆಗೆ ಅನುಕೂಲವಾದ ಸಮಯ ಸಿಕ್ಕಿತು. ತನ್ನ ಜನ್ಮ ದಿನದಂದು ಹೆರೋದನು ತನ್ನ ಉನ್ನತ ಅಧಿಕಾರಿಗಳಿಗೆ, ಸೇನಾಧಿಪತಿಗಳಿಗೆ ಹಾಗೂ ಗಲಿಲಾಯದ ಪ್ರಮುಖರಿಗೆ ಔತಣವನ್ನು ಏರ್ಪಡಿಸಿದನು.
MAR 6:22 ಹೆರೋದ್ಯಳ ಮಗಳು ಒಳಗೆ ಬಂದು ನೃತ್ಯ ಮಾಡಿ, ಹೆರೋದನನ್ನೂ ಊಟಕ್ಕೆ ಬಂದ ಅವನ ಅತಿಥಿಗಳನ್ನೂ ಸಂತೋಷಪಡಿಸಿದಳು. ರಾಜನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳು, ನಾನು ಕೊಡುತ್ತೇನೆ,” ಎಂದು ಹೇಳಿ,
MAR 6:23 “ನೀನೇನು ಕೇಳಿದರೂ ಕೊಡುತ್ತೇನೆ, ನನ್ನ ರಾಜ್ಯದಲ್ಲಿ ಅರ್ಧದಷ್ಟು ಕೇಳಿಕೊಂಡರೂ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.
MAR 6:24 ಆಕೆ ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನನ್ನು ಕೇಳಲಿ?” ಎಂದು ಕೇಳಲು, ಆಕೆಯು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳು,” ಎಂದು ಉತ್ತರಕೊಟ್ಟಳು.
MAR 6:25 ಕೂಡಲೇ ಆ ಹುಡುಗಿ ಅವಸರವಾಗಿ ರಾಜನ ಮುಂದೆ ಬಂದು, “ನನಗೆ ಈಗಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿ ಕೊಡಬೇಕು,” ಎಂದು ಕೇಳಿಕೊಂಡಳು.
MAR 6:26 ಇದರಿಂದ ಅರಸನಿಗೆ ಬಹಳ ದುಃಖವಾದರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.
MAR 6:27 ಕೂಡಲೇ ಅರಸನು ಯೋಹಾನನ ತಲೆಯನ್ನು ತರಬೇಕೆಂದು ಒಬ್ಬ ಕಾವಲುಗಾರನಿಗೆ ಅಪ್ಪಣೆಕೊಟ್ಟು ಕಳುಹಿಸಿದನು. ಅವನು ಹೋಗಿ ಸೆರೆಮನೆಯಲ್ಲಿದ್ದ ಯೋಹಾನನ ಶಿರಚ್ಛೇದನ ಮಾಡಿದನು.
MAR 6:28 ಅವನ ತಲೆಯನ್ನು ತಟ್ಟೆಯಲ್ಲಿಟ್ಟುಕೊಂಡು ಬಂದು ಅದನ್ನು ಆ ಹುಡುಗಿಗೆ ಕೊಟ್ಟನು. ಆಕೆಯು ಅದನ್ನು ತನ್ನ ತಾಯಿಗೆ ಕೊಟ್ಟಳು.
MAR 6:29 ಇದನ್ನು ಕೇಳಿ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಯಲ್ಲಿ ಇಟ್ಟರು.
MAR 6:30 ಅಪೊಸ್ತಲರು ಹಿಂದಿರುಗಿ ಯೇಸುವಿನ ಬಳಿಗೆ ಬಂದು ತಾವು ಮಾಡಿದ್ದನ್ನೂ ಬೋಧಿಸಿದ ಎಲ್ಲವನ್ನೂ ಕುರಿತು ಅವರಿಗೆ ವರದಿಮಾಡಿದರು.
MAR 6:31 ಬಹಳ ಜನರು ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. ಯೇಸು ಅವರಿಗೆ, “ನೀವು ಏಕಾಂತವಾದ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ,” ಎಂದು ಹೇಳಿದರು.
MAR 6:32 ಆಗ ಅವರು ದೋಣಿಯಲ್ಲಿ ಏಕಾಂತ ಸ್ಥಳಕ್ಕೆ ಹೋದರು.
MAR 6:33 ಆದರೆ ಅವರು ಹೋಗುವುದನ್ನು ಕಂಡ ಅನೇಕರು ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದ್ದರು.
MAR 6:34 ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು ಅವರ ಮೇಲೆ ಕನಿಕರಪಟ್ಟರು. ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದರು.
MAR 6:35 ಅಷ್ಟರೊಳಗೆ ಸಂಜೆಯಾಯಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಲೇ ಹೊತ್ತು ಮೀರಿದೆ,
MAR 6:36 ಈ ಜನರು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ತಿನ್ನುವುದಕ್ಕಾಗಿ ಏನಾದರೂ ಕೊಂಡುಕೊಳ್ಳುವಂತೆ ಇವರನ್ನು ಕಳುಹಿಸಿಬಿಡು,” ಎಂದು ಹೇಳಿದರು.
MAR 6:37 ಆದರೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಶಿಷ್ಯರು, “ನಾವು ಹೋಗಿ ಅವರಿಗೆ ಊಟಕ್ಕಾಗಿ ಆರು ತಿಂಗಳ ಸಂಬಳದಷ್ಟು ಖರ್ಚುಮಾಡಿ, ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದು ಕೇಳಿದರು.
MAR 6:38 ಯೇಸು ಅವರಿಗೆ, “ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ,” ಎಂದು ಕೇಳಿದರು. ಅವರು ವಿಚಾರಿಸಿ, “ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ,” ಎಂದು ಉತ್ತರಕೊಟ್ಟರು.
MAR 6:39 ಆಮೇಲೆ ಯೇಸು ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳುವಂತೆ ಜನರಿಗೆ ಆಜ್ಞಾಪಿಸಿದರು.
MAR 6:40 ಅವರು ನೂರರಂತೆ, ಐವತ್ತರಂತೆ ಸಾಲಾಗಿ ಕುಳಿತರು.
MAR 6:41 ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. ಅದರಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚಿಸಿದರು.
MAR 6:42 ಅವರೆಲ್ಲರೂ ತಿಂದು ತೃಪ್ತರಾದರು.
MAR 6:43 ಶಿಷ್ಯರು ಉಳಿದ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿ ತುಂಬಿದವು.
MAR 6:44 ಊಟಮಾಡಿದವರಲ್ಲಿ ಐದು ಸಾವಿರ ಮಂದಿ ಗಂಡಸರಿದ್ದರು.
MAR 6:45 ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಬೇತ್ಸಾಯಿದಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.
MAR 6:46 ಯೇಸು ಜನಸಮೂಹವನ್ನು ಕಳುಹಿಸಿದ ಮೇಲೆ ಪ್ರಾರ್ಥನೆಮಾಡಲು ಬೆಟ್ಟಕ್ಕೆ ಹೋದರು.
MAR 6:47 ಸಂಜೆಯಾದಾಗ, ದೋಣಿಯು ಸರೋವರದ ಮಧ್ಯದಲ್ಲಿತ್ತು. ಯೇಸು ದಡದಲ್ಲಿ ಒಬ್ಬರೇ ಇದ್ದರು.
MAR 6:48 ಎದುರುಗಾಳಿ ಬಲವಾಗಿ ಬೀಸುತ್ತಿದ್ದುದರಿಂದ ಶಿಷ್ಯರು ದೋಣಿಯನ್ನು ನಿಯಂತ್ರಿಸಲು ದಣಿದು ಹೋದದ್ದನ್ನು ಯೇಸು ಕಂಡು, ಮುಂಜಾನೆ ಸುಮಾರು ಮೂರು ಗಂಟೆಯಲ್ಲಿ ಅವರ ಬಳಿಗೆ ಸರೋವರದ ಮೇಲೆ ನಡೆಯುತ್ತಾ ಬಂದರು. ಯೇಸು ಅವರನ್ನು ದಾಟಿ ಹೋಗುವುದರಲ್ಲಿದ್ದರು.
MAR 6:49 ಆದರೆ ಯೇಸು ಸರೋವರದ ಮೇಲೆ ನಡೆಯುವುದನ್ನು ಕಂಡಾಗ, ಅವರು ಯೇಸುವನ್ನು ಭೂತವೆಂದು ಭಾವಿಸಿ, ಕಿರುಚಿದರು.
MAR 6:50 ಅವರೆಲ್ಲರೂ ಯೇಸುವನ್ನು ಕಂಡು ದಿಗಿಲುಗೊಂಡಿದ್ದರು. ಕೂಡಲೇ ಯೇಸು ಅವರಿಗೆ, “ಧೈರ್ಯವಾಗಿರಿ, ನಾನೇ! ಭಯಪಡಬೇಡಿರಿ,” ಎಂದರು.
MAR 6:51 ಆಮೇಲೆ ಯೇಸು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಗಾಳಿ ನಿಂತುಹೋಯಿತು. ಅವರು ಬಹು ಆಶ್ಚರ್ಯಗೊಂಡರು.
MAR 6:52 ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿಲ್ಲವಾದ್ದರಿಂದ ಆಶ್ಚರ್ಯಚಕಿತರಾದರು. ಏಕೆಂದರೆ ಅವರ ಹೃದಯ ಕಠಿಣವಾಗಿತ್ತು.
MAR 6:53 ಅವರು ಸರೋವರವನ್ನು ದಾಟಿ, ಗೆನೆಜರೇತ್ ಸೀಮೆಯ ದಡ ಸೇರಿದರು.
MAR 6:54 ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದರು.
MAR 6:55 ಅವರು ಆ ಪ್ರದೇಶದಲ್ಲೆಲ್ಲಾ ಓಡಾಡಿ, ಕಾಯಿಲೆಯಾಗಿದ್ದವರನ್ನು ಚಾಪೆಗಳ ಮೇಲೆ ಹಾಕಿಕೊಂಡು ಯೇಸು ಎಲ್ಲಿದ್ದಾರೆಂದು ಕೇಳಿದರೋ ಅಲ್ಲಿಗೆ ಬರಲಾರಂಭಿಸಿದರು.
MAR 6:56 ಯೇಸು ಹಳ್ಳಿ, ಪಟ್ಟಣ ಊರುಗಳಲ್ಲಿ ಎಲ್ಲೆಲ್ಲಿ ಹೋದರೋ ಅಲ್ಲಿ ಜನರು ರೋಗಿಗಳನ್ನು ತಂದು ಪೇಟೆಗಳಲ್ಲಿ ಇಟ್ಟು, ಯೇಸುವಿನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಅವರನ್ನು ಬೇಡಿಕೊಂಡರು. ಯೇಸುವನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.
MAR 7:1 ಯೆರೂಸಲೇಮಿನಿಂದ ಫರಿಸಾಯರು ಮತ್ತು ಕೆಲವು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದರು.
MAR 7:2 ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಅಂದರೆ ಆಚಾರ ಪದ್ಧತಿಯಂತೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು.
MAR 7:3 ಫರಿಸಾಯರು ಮತ್ತು ಎಲ್ಲಾ ಯೆಹೂದ್ಯರು ಆಚಾರ ಪದ್ಧತಿಯಂತೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯದೆ ಊಟಮಾಡುವುದಿಲ್ಲ. ಹೀಗೆ ಅವರ ಪೂರ್ವಿಕರಿಂದ ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದರು.
MAR 7:4 ಪೇಟೆಗೆ ಹೋಗಿ ಬಂದರೆ ಅವರು ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ. ಮಾತ್ರವಲ್ಲದೆ ಲೋಟ, ಚೆಂಬು ಮತ್ತು ತಪ್ಪಲೆಗಳನ್ನು ಬೆಳಗಿ ತೊಳೆಯುವುದು ಮುಂತಾದ ಅನೇಕ ಶುದ್ಧಾಚಾರಗಳನ್ನು ಅವರು ಪಾಲಿಸುತ್ತಿದ್ದರು.
MAR 7:5 ಆದ್ದರಿಂದ ಫರಿಸಾಯರು ಮತ್ತು ನಿಯಮ ಬೋಧಕರು, “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯದ ಪ್ರಕಾರ ಏಕೆ ನಡೆಯುವುದಿಲ್ಲ? ಅವರು ಮೈಲಿಗೆಯಾದ ಕೈಗಳಿಂದ ಊಟಮಾಡುತ್ತಾರಲ್ಲಾ?” ಎಂದು ಯೇಸುವನ್ನು ಕೇಳಿದರು.
MAR 7:6 ಅದಕ್ಕೆ ಯೇಸು, “ಕಪಟಿಗಳೇ, ಯೆಶಾಯನು ನಿಮ್ಮ ವಿಷಯವಾಗಿ ಸರಿಯಾಗಿ ಪ್ರವಾದಿಸಿದ್ದಾನೆ,” ಅವನು ಬರೆದಿರುವಂತೆ: “ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
MAR 7:7 ಮನುಷ್ಯರ ಆಜ್ಞೆಗಳನ್ನೇ ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ.’
MAR 7:8 ನೀವು ದೇವರ ಆಜ್ಞೆಯನ್ನು ತೊರೆದು, ಮನುಷ್ಯರ ಸಂಪ್ರದಾಯಗಳನ್ನು ಹಿಡಿದುಕೊಂಡಿದ್ದೀರಿ,” ಎಂದರು.
MAR 7:9 ಯೇಸು ಇನ್ನೂ ಅವರಿಗೆ, “ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ.
MAR 7:10 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಮತ್ತು ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ಮೋಶೆ ಹೇಳಿದ್ದಾನೆ.
MAR 7:11 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
MAR 7:12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ.
MAR 7:13 ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ,” ಎಂದು ಹೇಳಿದರು.
MAR 7:14 ಯೇಸು ಜನಸಮೂಹವನ್ನು ಪುನಃ ತಮ್ಮ ಬಳಿಗೆ ಕರೆದು, “ಎಲ್ಲರೂ ನನ್ನ ಮಾತುಗಳನ್ನು ಕೇಳಿರಿ, ಅರ್ಥಮಾಡಿಕೊಳ್ಳಿರಿ.
MAR 7:15 ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ.
MAR 7:16 ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ,” ಎಂದು ಹೇಳಿದರು.
MAR 7:17 ಆಮೇಲೆ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಪ್ರವೇಶಿಸಿದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, ಆ ಸಾಮ್ಯದ ವಿಷಯವಾಗಿ ಪ್ರಶ್ನಿಸಿದರು.
MAR 7:18 ಯೇಸು ಅವರಿಗೆ, “ನೀವೂ ಇಷ್ಟು ಬುದ್ಧಿಹೀನರೋ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದ್ದು ಅವನನ್ನು ಅಶುದ್ಧ ಮಾಡುವುದಿಲ್ಲವೆಂಬುದು ನಿಮಗೆ ತಿಳಿಯದೋ?
MAR 7:19 ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು.
MAR 7:20 ಯೇಸು ಮುಂದುವರಿದು, “ಆದರೆ ಮನುಷ್ಯನೊಳಗಿಂದ ಹೊರಡುವಂಥದ್ದು ಅವನನ್ನು ಅಶುದ್ಧ ಮಾಡುತ್ತವೆ.
MAR 7:21 ಮನುಷ್ಯನ ಹೃದಯದೊಳಗಿಂದ ಜಾರತ್ವ, ಕಳ್ಳತನ, ಕೊಲೆ,
MAR 7:22 ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ.
MAR 7:23 ಈ ಎಲ್ಲಾ ಕೇಡುಗಳು ಮನುಷ್ಯನ ಒಳಗಿಂದ ಹೊರಟು ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.
MAR 7:24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶಕ್ಕೆ ಹೋದರು. ಯೇಸು ಒಂದು ಮನೆಯೊಳಗೆ ಹೋದಾಗ, ಅದು ಯಾರಿಗೂ ತಿಳಿಯಬಾರದೆಂದು ಬಯಸಿದರು. ಆದರೂ ಅವರು ಗುಟ್ಟಾಗಿರಲು ಸಾಧ್ಯವಾಗಲಿಲ್ಲ.
MAR 7:25 ಹೀಗೆ ಯೇಸುವಿನ ವಿಷಯ ತಿಳಿದ ಕೂಡಲೇ, ಅಶುದ್ಧಾತ್ಮಪೀಡಿತಳಾಗಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಬಂದು ಅವರ ಪಾದಕ್ಕೆ ಬಿದ್ದಳು.
MAR 7:26 ಆಕೆ, ಸಿರಿಯದ ಫೊಯಿನಿಕೆಯಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಓಡಿಸಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು.
MAR 7:27 ಯೇಸು ಆಕೆಗೆ, “ಮೊದಲು ಮಕ್ಕಳು ತಮಗೆ ಬೇಕಾದದ್ದನ್ನು ತಿಂದು ತೃಪ್ತಿಗೊಳ್ಳಲಿ, ಏಕೆಂದರೆ ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದರು.
MAR 7:28 ಅದಕ್ಕೆ ಆಕೆಯು ಯೇಸುವಿಗೆ, “ಹೌದು ಸ್ವಾಮೀ, ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಮಕ್ಕಳ ಕೈಯಿಂದ ಕೆಳಗೆ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ?” ಎಂದು ಉತ್ತರಕೊಟ್ಟಳು.
MAR 7:29 ಆಗ ಯೇಸು ಆಕೆಗೆ, “ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ಮನೆಗೆ ಹಿಂದಿರುಗು, ದೆವ್ವವು ನಿನ್ನ ಮಗಳನ್ನು ಬಿಟ್ಟುಹೋಗಿದೆ,” ಎಂದರು.
MAR 7:30 ಆಕೆ ಮನೆಗೆ ಹೋದಾಗ, ದೆವ್ವ ಅವಳ ಮಗಳನ್ನು ಬಿಟ್ಟುಹೋಗಿತ್ತು ಮತ್ತು ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಳು.
MAR 7:31 ಆಮೇಲೆ ಯೇಸು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶದಿಂದ ಹೊರಟು ಸೀದೋನಿನ ಮಾರ್ಗವಾಗಿ ಗಲಿಲಾಯ ಸರೋವರ ತೀರವನ್ನು ಹಾದು ದೆಕಪೊಲಿ ಪ್ರದೇಶಕ್ಕೆ ಬಂದರು.
MAR 7:32 ಅಲ್ಲಿ ಕೆಲವರು ಮಾತನಾಡಲಾಗದ ಒಬ್ಬ ಕಿವುಡನನ್ನು ಕರೆದುಕೊಂಡು ಬಂದು ಅವನ ಮೇಲೆ ಕೈಯಿಡಬೇಕೆಂದು ಯೇಸುವನ್ನು ಬೇಡಿಕೊಂಡರು.
MAR 7:33 ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಯೊಳಗಿಟ್ಟು ಅನಂತರ ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದರು.
MAR 7:34 ಯೇಸು ಸ್ವರ್ಗದ ಕಡೆಗೆ ನೋಡಿ, ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ “ಎಪ್ಫಥಾ!” ಎಂದರು. “ತೆರೆಯಲಿ!” ಎಂಬುದು ಅದರ ಅರಮೀಯ ಅರ್ಥ.
MAR 7:35 ಕೂಡಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು. ಅವನು ಸ್ಪಷ್ಟವಾಗಿ ಮಾತನಾಡಲಾರಂಭಿಸಿದನು.
MAR 7:36 ಯಾವ ಮನುಷ್ಯನಿಗೂ ಇದನ್ನು ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟೂ ಹೆಚ್ಚಾಗಿ ಪ್ರಚಾರಮಾಡಿದರು.
MAR 7:37 ಜನರು ಅತ್ಯಂತ ಆಶ್ಚರ್ಯಪಟ್ಟು, “ಯೇಸು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ. ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರೆ,” ಎಂದುಕೊಳ್ಳುತ್ತಿದ್ದರು.
MAR 8:1 ಆ ದಿವಸಗಳಲ್ಲಿ ದೊಡ್ಡ ಜನಸಮೂಹ ಕೂಡಿಬಂದಿತು. ಅವರಿಗೆ ಊಟಕ್ಕೆ ಏನೂ ಇಲ್ಲದ್ದರಿಂದ ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು,
MAR 8:2 “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ.
MAR 8:3 ನಾನು ಇವರನ್ನು ಹಸಿವೆಯಿಂದ ತಮ್ಮ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರೆ,” ಎಂದರು.
MAR 8:4 ಅದಕ್ಕೆ ಶಿಷ್ಯರು ಯೇಸುವಿಗೆ, “ಈ ನಿರ್ಜನ ಪ್ರದೇಶದಲ್ಲಿ ಈ ಜನರನ್ನು ತೃಪ್ತಿಪಡಿಸಲು ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತರುವುದು?” ಎಂದರು.
MAR 8:5 ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಶಿಷ್ಯರು, “ಏಳು ರೊಟ್ಟಿಗಳಿವೆ,” ಎಂದರು.
MAR 8:6 ಆಗ ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ಮುರಿದು ಜನಸಮೂಹಕ್ಕೆ ಹಂಚಲು ತಮ್ಮ ಶಿಷ್ಯರಿಗೆ ಕೊಟ್ಟರು. ಅವರು ಜನಸಮೂಹಕ್ಕೆ ಹಂಚಿದರು.
MAR 8:7 ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚುವಂತೆ ಆಜ್ಞಾಪಿಸಿದರು.
MAR 8:8 ಜನರು ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಿದಾಗ ಏಳು ಬುಟ್ಟಿಗಳು ತುಂಬಿದವು.
MAR 8:9 ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ. ಯೇಸು ಅವರನ್ನು ಕಳುಹಿಸಿದ ನಂತರ,
MAR 8:10 ತಮ್ಮ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
MAR 8:11 ಫರಿಸಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ಮಾಡಬೇಕೆಂದು ಕೇಳಿ, ಅವರೊಂದಿಗೆ ತರ್ಕಿಸುವುದಕ್ಕೆ ಆರಂಭಿಸಿದರು.
MAR 8:12 ಯೇಸು ತಮ್ಮ ಆತ್ಮದಲ್ಲಿ ನೊಂದುಕೊಂಡು, “ಈ ಸಂತತಿಯು ಸೂಚಕಕಾರ್ಯವನ್ನು ಹುಡುಕುವುದು ಏಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲಾಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
MAR 8:13 ಯೇಸು ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೆದಡಕ್ಕೆ ಹೊರಟು ಹೋದರು.
MAR 8:14 ಶಿಷ್ಯರು ರೊಟ್ಟಿಬುತ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮರೆತಿದ್ದರು. ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದೇ ಒಂದು ರೊಟ್ಟಿ ಇತ್ತು.
MAR 8:15 ಯೇಸು ಅವರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದಿರಿ,” ಎಂದು ಖಂಡಿತವಾಗಿ ಹೇಳಿದರು.
MAR 8:16 ಅವರು ತಮ್ಮೊಳಗೆ, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು,” ಎಂದು ಚರ್ಚಿಸಿಕೊಂಡರು.
MAR 8:17 ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಏಕೆ ಚರ್ಚಿಸಿಕೊಳ್ಳುತ್ತೀರಿ? ನೀವು ಇನ್ನೂ ಕಾಣದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣ ಮಾಡಿಕೊಂಡಿದ್ದೀರೋ?
MAR 8:18 ಕಣ್ಣುಗಳಿದ್ದೂ ನೀವು ಕಾಣುವುದಿಲ್ಲವೋ? ಕಿವಿಗಳಿದ್ದೂ ನೀವು ಕೇಳುವುದಿಲ್ಲವೋ?
MAR 8:19 ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಕೂಡಿಸಿದಿರಿ ಎಂದು ನಿಮಗೆ ನೆನಪಿಲ್ಲವೇ?” ಎಂದು ಕೇಳಲು ಅವರು ಯೇಸುವಿಗೆ, “ಹನ್ನೆರಡು ಬುಟ್ಟಿಗಳು,” ಎಂದರು.
MAR 8:20 “ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ತುಂಡುಗಳನ್ನು ಕೂಡಿಸಿದಿರಿ?” ಎಂದು ಕೇಳಲು ಅವರು, “ಏಳು ಬುಟ್ಟಿಗಳು,” ಎಂದರು.
MAR 8:21 ಯೇಸು ಅವರಿಗೆ, “ಹಾಗಾದರೆ ನೀವು ಇನ್ನೂ ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.
MAR 8:22 ಯೇಸು ಬೇತ್ಸಾಯಿದಕ್ಕೆ ಬಂದಾಗ, ಕೆಲವರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು.
MAR 8:23 ಯೇಸು ಆ ಕುರುಡನ ಕೈಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ, ಅವನ ಕಣ್ಣುಗಳ ಮೇಲೆ ಉಗುಳಿ ಅವನ ಮೇಲೆ ತಮ್ಮ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತದೋ?” ಎಂದು ಅವನನ್ನು ಕೇಳಿದರು.
MAR 8:24 ಅವನು ಮೇಲಕ್ಕೆ ನೋಡಿ, “ಮನುಷ್ಯರು ಮರಗಳ ಹಾಗೆ ಕಾಣುತ್ತಿದ್ದಾರೆ. ಆದರೂ ಅವರು ನಡೆದಾಡುವುದನ್ನು ನೋಡುತ್ತಿದ್ದೇನೆ,” ಎಂದನು.
MAR 8:25 ತರುವಾಯ ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತಮ್ಮ ಕೈಗಳನ್ನಿಟ್ಟರು. ಆಗ ಅವನು ಗುಣಹೊಂದಿದವನಾಗಿ ಎಲ್ಲವನ್ನೂ ಬಹುಸ್ಪಷ್ಟವಾಗಿ ಕಂಡನು.
MAR 8:26 ಯೇಸು ಅವನಿಗೆ, “ನೀನು ಊರೊಳಕ್ಕೆ ಹೋಗಬೇಡ,” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿಬಿಟ್ಟರು.
MAR 8:27 ಯೇಸುವೂ ಅವರ ಶಿಷ್ಯರೂ ಕೈಸರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಯೇಸು ದಾರಿಯಲ್ಲಿ ತಮ್ಮ ಶಿಷ್ಯರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
MAR 8:28 ಅವರು, “ಕೆಲವರು ಸ್ನಾನಿಕನಾದ ಯೋಹಾನನು, ಮತ್ತೆ ಕೆಲವರು ಎಲೀಯನು, ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಎನ್ನುತ್ತಾರೆ,” ಎಂದು ಹೇಳಿದರು.
MAR 8:29 ಅದಕ್ಕೆ ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಲು, ಪೇತ್ರನು ಯೇಸುವಿಗೆ, “ನೀನು ಕ್ರಿಸ್ತನೇ,” ಎಂದನು.
MAR 8:30 ತಮ್ಮ ವಿಷಯವಾಗಿ ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು.
MAR 8:31 ಮನುಷ್ಯಪುತ್ರನಾದ ನಾನು ಅನೇಕ ಬಾಧೆಗಳನ್ನು ಅನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ ಕೊಲೆಗೆ ಗುರಿಯಾಗಿ ಮೂರು ದಿವಸಗಳಾದ ಮೇಲೆ ಜೀವಂತವಾಗಿ ಎದ್ದು ಬರುವುದು ಅವಶ್ಯ ಎಂದು ಅವರಿಗೆ ಬೋಧಿಸಲಾರಂಭಿಸಿದರು.
MAR 8:32 ಯೇಸು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು ಯೇಸುವನ್ನು ಗದರಿಸಲಾರಂಭಿಸಿದನು.
MAR 8:33 ಆದರೆ ಯೇಸು ತಿರುಗಿ ತಮ್ಮ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದು ಹೇಳಿದರು.
MAR 8:34 ಯೇಸು ಜನರನ್ನೂ ಶಿಷ್ಯರನ್ನೂ ತಮ್ಮ ಬಳಿಗೆ ಕರೆದು ಅವರಿಗೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
MAR 8:35 ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವರು ಅದನ್ನು ಕಳೆದುಕೊಳ್ಳುವರು. ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಉಳಿಸಿಕೊಳ್ಳುವರು.
MAR 8:36 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು?
MAR 8:37 ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?
MAR 8:38 ಯಾರಾದರೂ ವ್ಯಭಿಚಾರದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯವಾಗಿ ನಾಚಿಕೊಳ್ಳುವರೋ ಅವರ ವಿಷಯದಲ್ಲಿ ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿಕೊಳ್ಳುವೆನು,” ಎಂದು ಹೇಳಿದರು.
MAR 9:1 ಅನಂತರ ಯೇಸು ಅವರಿಗೆ, “ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವು ಶಕ್ತಿಯೊಂದಿಗೆ ಬರುವುದನ್ನು ಕಾಣುವವರೆಗೆ ಮರಣದ ಅನುಭವ ಹೊಂದುವುದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
MAR 9:2 ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಯೋಹಾನನನ್ನೂ ತಮ್ಮೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದರು. ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು.
MAR 9:3 ಯೇಸುವಿನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷ್ಟು ಉಜ್ವಲವಾಗಿ ಹೊಳೆಯುತ್ತಿತ್ತು.
MAR 9:4 ಆಗ ಅಲ್ಲಿ ಎಲೀಯನು ಮತ್ತು ಮೋಶೆಯು ಯೇಸುವಿನೊಂದಿಗೆ ಮಾತನಾಡುತ್ತಿರುವುದನ್ನು ಅವರು ಕಂಡರು.
MAR 9:5 ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ನಾವು ಕಟ್ಟುವೆವು,” ಎಂದು ಹೇಳಿದನು.
MAR 9:6 ತಾನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ. ಏಕೆಂದರೆ ಅವರು ಬಹಳವಾಗಿ ಹೆದರಿದ್ದರು.
MAR 9:7 ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು. ಮೋಡದೊಳಗಿಂದ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂಬ ಧ್ವನಿಯು ಬಂದಿತು.
MAR 9:8 ಕೂಡಲೇ ಅವರು ಸುತ್ತಲೂ ನೋಡಲಾಗಿ ತಮ್ಮೊಂದಿಗೆ ಯೇಸುವನ್ನೇ ಹೊರತು ಇನ್ನಾರನ್ನೂ ಕಾಣಲಿಲ್ಲ.
MAR 9:9 ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಮನುಷ್ಯಪುತ್ರರಾದ ತಾವು ಸತ್ತವರೊಳಗಿಂದ ಎದ್ದು ಬರುವವರೆಗೆ ಅವರು ಕಂಡದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಆಜ್ಞಾಪಿಸಿದರು.
MAR 9:10 “ಸತ್ತವರೊಳಗಿಂದ ಎದ್ದು ಬರುವುದೆಂದರೆ ಏನು?” ಅವರು ಒಬ್ಬರಿಗೊಬ್ಬರು ಆ ಮಾತನ್ನು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು.
MAR 9:11 ಇದಲ್ಲದೆ ಅವರು ಯೇಸುವಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು.
MAR 9:12 ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನೂ ಸರಿಪಡಿಸುತ್ತಾನೆಂಬ ಮಾತು ನಿಜವೇ. ಆದರೆ ಮನುಷ್ಯಪುತ್ರನಾದ ನಾನು ಬಹಳ ಯಾತನೆಗಳನ್ನು ಅನುಭವಿಸಿ ತಿರಸ್ಕರಿಸಲಾಗಬೇಕೆಂದು ನನ್ನ ವಿಷಯವಾಗಿ ಬರೆದಿರುವುದು ಹೇಗೆ?
MAR 9:13 ಆದರೆ, ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
MAR 9:14 ಯೇಸು ತಮ್ಮ ಶಿಷ್ಯರ ಬಳಿಗೆ ಬಂದಾಗ, ಅವರ ಸುತ್ತಲು ದೊಡ್ಡ ಸಮೂಹವನ್ನೂ ನಿಯಮ ಬೋಧಕರು ಅವರೊಂದಿಗೆ ತರ್ಕಿಸುತ್ತಿರುವುದನ್ನೂ ಕಂಡರು.
MAR 9:15 ಜನರೆಲ್ಲರೂ ಯೇಸುವನ್ನು ಕಂಡಕೂಡಲೇ, ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಯೇಸುವನ್ನು ವಂದಿಸಿದರು.
MAR 9:16 ಆಗ ಯೇಸು ಅವರಿಗೆ, “ಅವರೊಂದಿಗೆ ನೀವು ಏನು ತರ್ಕಮಾಡುತ್ತಿದ್ದಿರಿ?” ಎಂದು ಕೇಳಿದರು.
MAR 9:17 ಸಮೂಹದಲ್ಲಿದ್ದ ಒಬ್ಬನು, “ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು.
MAR 9:18 ಅಶುದ್ಧಾತ್ಮವು ಅವನನ್ನು ಹಿಡಿದುಕೊಂಡಾಗಲೆಲ್ಲಾ ಅವನನ್ನು ಒದ್ದಾಡಿಸುತ್ತದೆ. ಅವನು ನೊರೆ ಕಾರುತ್ತಾ ತನ್ನ ಹಲ್ಲು ಕಡಿದು ಸೆಟೆದುಕೊಂಡು ಬೀಳುತ್ತಾನೆ. ಅದನ್ನು ಬಿಡಿಸಬೇಕೆಂದು ನಾನು ನಿನ್ನ ಶಿಷ್ಯರಿಗೆ ಹೇಳಿದೆನು. ಆದರೆ ಅದು ಅವರಿಂದ ಆಗಲಿಲ್ಲ,” ಎಂದು ಹೇಳಿದನು.
MAR 9:19 ಆಗ ಯೇಸು ಅವರಿಗೆ, “ವಿಶ್ವಾಸವಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.
MAR 9:20 ಅವರು ಅವನನ್ನು ಯೇಸುವಿನ ಬಳಿಗೆ ತಂದರು. ಯೇಸುವನ್ನು ನೋಡಿದ ತಕ್ಷಣವೇ ಆ ದೆವ್ವವು ಆ ಬಾಲಕನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಕಾರುತ್ತಾ ಹೊರಳಾಡಿದನು.
MAR 9:21 ಯೇಸು ಅವನ ತಂದೆಗೆ, “ಇದು ಇವನನ್ನು ಹಿಡಿದು ಎಷ್ಟು ಕಾಲವಾಯಿತು?” ಎಂದು ಕೇಳಲು, ಅವನು, “ಬಾಲ್ಯದಿಂದಲೇ ಹೀಗಿದೆ.
MAR 9:22 ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು,” ಎಂದನು.
MAR 9:23 ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.
MAR 9:24 ತಕ್ಷಣವೇ ಬಾಲಕನ ತಂದೆಯು, “ನಾನು ನಂಬುತ್ತೇನೆ. ನನಗೆ ಅಪನಂಬಿಕೆಯಿದೆ ನನಗೆ ಸಹಾಯಮಾಡು,” ಎಂದು ಮೊರೆಯಿಟ್ಟನು.
MAR 9:25 ಜನರು ಕೂಡಿಕೊಂಡು ಓಡಿಬರುವುದನ್ನು ಯೇಸು ಕಂಡು, ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ, “ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ, ಇನ್ನೆಂದಿಗೂ ಅವನೊಳಗೆ ಸೇರಬಾರದೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.
MAR 9:26 ಆಗ ಅಶುದ್ಧಾತ್ಮವು ಕೂಗಿ ಬಾಲಕನನ್ನು ಕ್ರೂರವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂದಿತು. ಅವನು ಸತ್ತವನ ಹಾಗೆ ಬಿದ್ದಿದ್ದರಿಂದ ಅನೇಕರು, “ಅವನು ಸತ್ತಿದ್ದಾನೆ,” ಎಂದರು.
MAR 9:27 ಆದರೆ ಯೇಸು ಕೈಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದು ನಿಂತನು.
MAR 9:28 ಯೇಸು ಮನೆಯೊಳಕ್ಕೆ ಬಂದಾಗ, ಅವರ ಶಿಷ್ಯರು ಅವರಿಗೆ ಪ್ರತ್ಯೇಕವಾಗಿ, “ಆ ಅಶುದ್ಧಾತ್ಮವನ್ನು ಹೊರಗೆ ಹಾಕುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು.
MAR 9:29 ಯೇಸು ಅವರಿಗೆ, “ಈ ತರವಾದದ್ದು ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಹೋಗಲಾರದು,” ಎಂದರು.
MAR 9:30 ಅವರು ಅಲ್ಲಿಂದ ಹೊರಟು ಗಲಿಲಾಯದ ಮಾರ್ಗವಾಗಿ ಹಾದುಹೋದರು. ತಾವು ಎಲ್ಲಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ಯೇಸು ಅಪೇಕ್ಷಿಸಿದರು.
MAR 9:31 ಏಕೆಂದರೆ ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು. ಅವರು ನನ್ನನ್ನು ಕೊಲ್ಲುವರು. ನನ್ನನ್ನು ಕೊಂದ ತರುವಾಯ ಮೂರನೆಯ ದಿನದಲ್ಲಿ ನಾನು ಜೀವಂತವಾಗಿ ಏಳುವೆನು,” ಎಂದು ಬೋಧಿಸುತ್ತಿದ್ದರು.
MAR 9:32 ಆದರೆ ಅವರಲ್ಲಿ ಆ ಮಾತನ್ನು ಯಾರೂ ಗ್ರಹಿಸಲಿಲ್ಲ. ಯೇಸುವನ್ನು ಕೇಳುವುದಕ್ಕೂ ಭಯಪಟ್ಟರು.
MAR 9:33 ಅವರು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ, ಯೇಸು ಅವರಿಗೆ, “ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ?” ಎಂದು ಕೇಳಿದರು.
MAR 9:34 ಆದರೆ ಅವರು ಸುಮ್ಮನಿದ್ದರು. ಏಕೆಂದರೆ ಅವರು ತಮ್ಮೊಳಗೆ ಯಾವನು ಅತಿ ದೊಡ್ಡವನು ಎಂದು ದಾರಿಯಲ್ಲಿ ವಾಗ್ವಾದ ಮಾಡಿದ್ದರು.
MAR 9:35 ಆಗ ಯೇಸು ಕುಳಿತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ, “ಯಾವನಾದರೂ ಮೊದಲಿನವನಾಗಬೇಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು,” ಎಂದರು.
MAR 9:36 ಯೇಸು ಒಂದು ಮಗುವನ್ನು ತೆಗೆದುಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, ತಮ್ಮ ಕೈಗಳಲ್ಲಿ ಅದನ್ನು ಎತ್ತಿಕೊಂಡು ಅವರಿಗೆ,
MAR 9:37 “ಯಾವನಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿದರೆ, ಅವನು ನನ್ನನ್ನು ಸ್ವೀಕರಿಸುತ್ತಾನೆ. ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ,” ಎಂದರು.
MAR 9:38 ಆಗ ಯೋಹಾನನು, “ಬೋಧಕರೇ, ನಮ್ಮನ್ನು ಹಿಂಬಾಲಿಸದ ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವ ಓಡಿಸುವುದನ್ನು ನಾವು ಕಂಡೆವು. ಅವನು ನಮ್ಮವನು ಅಲ್ಲದ್ದರಿಂದ ನಾವು ಅವನನ್ನು ತಡೆದೆವು,” ಎಂದು ಹೇಳಿದನು.
MAR 9:39 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ; ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿದವನು, ನನ್ನ ವಿಷಯದಲ್ಲಿ ಕೆಟ್ಟದ್ದನ್ನು ಮಾತನಾಡಲಾರನು.
MAR 9:40 ನಮಗೆ ವಿರೋಧಿಯಾಗಿರದವನು ನಮ್ಮ ಪಕ್ಷದವನಾಗಿದ್ದಾನೆ.
MAR 9:41 ಇದಲ್ಲದೆ ನೀವು ಕ್ರಿಸ್ತನಲ್ಲಿ ಸೇರಿದವರಾದ್ದರಿಂದ ಯಾರಾದರೂ ನನ್ನ ಹೆಸರಿನಲ್ಲೆ ನಿಮಗೆ ಒಂದು ಲೋಟ ನೀರನ್ನು ಕೊಟ್ಟರೂ ಅವರು ತಮ್ಮ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
MAR 9:42 “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವರಿಗೆ ಲೇಸು.
MAR 9:43 ನಿಮ್ಮ ಕೈ ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಎಂದಿಗೂ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅಂಗಹೀನರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು.
MAR 9:44 ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’
MAR 9:45 ನಿಮ್ಮ ಕಾಲು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ನೀವು ಎರಡು ಕಾಲುಳ್ಳವರಾಗಿ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು.
MAR 9:46 ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’
MAR 9:47 ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ದೇವರ ರಾಜ್ಯದಲ್ಲಿ ಸೇರುವುದು ನಿಮಗೆ ಲೇಸು.
MAR 9:48 ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ, ಮತ್ತು ಬೆಂಕಿಯು ಆರುವುದಿಲ್ಲ.’
MAR 9:49 ಉಪ್ಪನ್ನು ಪರೀಕ್ಷಿಸುವಂತೆ ಪ್ರತಿಯೊಬ್ಬರು ಬೆಂಕಿಯ ಮೂಲಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ.
MAR 9:50 “ಉಪ್ಪು ಒಳ್ಳೆಯದು. ಆದರೆ ಉಪ್ಪೇ ಸಪ್ಪಗಾದರೆ, ಇನ್ನಾವುದರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರುವಂತೆ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ,” ಎಂದರು.
MAR 10:1 ಯೇಸು ಅಲ್ಲಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಜನರು ತಿರುಗಿ ಅವರ ಬಳಿಗೆ ಬರಲು, ಯೇಸು ತಮ್ಮ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದರು.
MAR 10:2 ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಪರೀಕ್ಷಿಸುವುದಕ್ಕಾಗಿ ಯೇಸುವಿಗೆ, “ಒಬ್ಬ ಪುರುಷನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
MAR 10:3 ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮಗೆ ಏನು ಅಪ್ಪಣೆಕೊಟ್ಟನು?” ಎಂದು ಕೇಳಿದರು.
MAR 10:4 ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅನುಮತಿ ಕೊಟ್ಟನು,” ಎಂದರು.
MAR 10:5 ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು.
MAR 10:6 ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.’
MAR 10:7 ‘ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
MAR 10:8 ಅವರಿಬ್ಬರೂ ಒಂದೇ ಶರೀರವಾಗಿರುವರು.’ ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.
MAR 10:9 ಆದಕಾರಣ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು,” ಎಂದರು.
MAR 10:10 ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಯೇಸುವಿಗೆ ತಿರುಗಿ ಕೇಳಿದರು.
MAR 10:11 ಅದಕ್ಕೆ ಯೇಸು ಅವರಿಗೆ, “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾದರೆ, ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿದ್ದಾನೆ.
MAR 10:12 ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ, ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ,” ಎಂದರು.
MAR 10:13 ಕೆಲವರು ತಮ್ಮ ಚಿಕ್ಕಮಕ್ಕಳನ್ನು ಯೇಸು ಮುಟ್ಟಬೇಕೆಂದು ಅವರ ಬಳಿಗೆ ತಂದರು. ಆದರೆ ಶಿಷ್ಯರು ಜನರನ್ನು ಗದರಿಸಿದರು.
MAR 10:14 ಯೇಸು ಅದನ್ನು ಕಂಡಾಗ ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.
MAR 10:15 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.
MAR 10:16 ಇದಲ್ಲದೆ ಯೇಸು ಆ ಮಕ್ಕಳನ್ನು ಎತ್ತಿಕೊಂಡು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದರು.
MAR 10:17 ಯೇಸು ಅಲ್ಲಿಂದ ಹೋಗುತ್ತಿದ್ದಾಗ ಒಬ್ಬನು ಓಡುತ್ತಾ ಬಂದು ಅವರ ಮುಂದೆ ಮೊಣಕಾಲೂರಿ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಯೇಸುವನ್ನು ಕೇಳಿದನು.
MAR 10:18 ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬನೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.
MAR 10:19 ‘ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
MAR 10:20 ಅವನು, “ಬೋಧಕರೇ, ನಾನು ಇವೆಲ್ಲವನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ,” ಎಂದು ಹೇಳಿದನು.
MAR 10:21 ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
MAR 10:22 ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
MAR 10:23 ಯೇಸು ಸುತ್ತಲೂ ನೋಡಿ ತಮ್ಮ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!” ಎಂದರು.
MAR 10:24 ಶಿಷ್ಯರು ಯೇಸುವಿನ ಮಾತುಗಳಿಗೆ ಬೆರಗಾದರು. ಆದರೆ ಯೇಸು ತಿರುಗಿ ಅವರಿಗೆ, “ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ.
MAR 10:25 ಒಬ್ಬ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
MAR 10:26 ಅದಕ್ಕೆ ಶಿಷ್ಯರು ಅತ್ಯಂತ ಆಶ್ಚರ್ಯಪಟ್ಟು ತಮ್ಮೊಳಗೆ, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದುಕೊಂಡರು.
MAR 10:27 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗೆ ಅಲ್ಲ, ದೇವರಿಗೆ ಎಲ್ಲವೂ ಸಾಧ್ಯ,” ಎಂದರು.
MAR 10:28 ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ,” ಎಂದು ಹೇಳಲಾರಂಭಿಸಿದನು.
MAR 10:29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಯಾರಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ ಬಿಟ್ಟುಬಿಟ್ಟರೆ,
MAR 10:30 ಅವರು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿರನ್ನೂ ಮಕ್ಕಳನ್ನೂ ಹೊಲವನ್ನೂ ನೂರರಷ್ಟು ಪಡೆಯುವುದಲ್ಲದೆ ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವರು.
MAR 10:31 ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲಿನವರಾಗುವರು,” ಎಂದರು.
MAR 10:32 ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಯೇಸು ಅವರ ಮುಂದಾಗಿ ಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಯೇಸುವಿನ ಹಿಂದೆ ಬರುತ್ತಿದ್ದವರು ಭಯಪಟ್ಟರು. ಯೇಸು ತಮ್ಮ ಹನ್ನೆರಡು ಮಂದಿಯನ್ನು ತಿರುಗಿ ಕರೆದು ತನಗೆ ಸಂಭವಿಸುವ ಸಂಗತಿಗಳನ್ನು ಅವರಿಗೆ ಹೇಳಲಾರಂಭಿಸಿದರು:
MAR 10:33 “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸಿ ನನ್ನನ್ನು ಯೆಹೂದ್ಯರಲ್ಲದವರಿಗೆ ಒಪ್ಪಿಸುವರು.
MAR 10:34 ಇವರು ನನ್ನನ್ನು ಹಾಸ್ಯಮಾಡಿ, ನನ್ನ ಮೇಲೆ ಉಗುಳಿ, ಕೊರಡೆಯಿಂದ ಹೊಡೆದು ನನ್ನನ್ನು ಕೊಂದುಹಾಕುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದರು.
MAR 10:35 ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಬೋಧಕರೇ, ನಾವು ಕೇಳುವುದನ್ನು ನೀವು ನಮಗೋಸ್ಕರ ಮಾಡಬೇಕು,” ಎಂದರು.
MAR 10:36 ಅದಕ್ಕೆ ಯೇಸು ಅವರಿಗೆ, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
MAR 10:37 ಅವರು ಯೇಸುವಿಗೆ, “ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು,” ಎಂದರು.
MAR 10:38 ಯೇಸು ಅವರಿಗೆ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ನೀವೂ ಕುಡಿಯುವಿರೋ? ನಾನು ಪಡೆಯಲಿರುವ ದೀಕ್ಷಾಸ್ನಾನವನ್ನು ನೀವೂ ಪಡೆಯುವಿರೋ?” ಎಂದರು.
MAR 10:39 ಅದಕ್ಕೆ ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು. ಆಗ ಯೇಸು ಅವರಿಗೆ, “ನಾನು ಕುಡಿಯುವ ಪಾತ್ರೆಯಿಂದ ನೀವು ಕುಡಿಯುವಿರಿ. ನಾನು ಹೊಂದುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ.
MAR 10:40 ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದರು.
MAR 10:41 ಆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು.
MAR 10:42 ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು ಅವರಿಗೆ, “ಆಳುವವರು ಎಂದೆನಿಸಿಕೊಂಡವರು ಯೆಹೂದ್ಯರಲ್ಲದವರ ಮೇಲೆ ದೊರೆತನ ಮಾಡುತ್ತಾರೆ. ಅವರಲ್ಲಿ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ.
MAR 10:43 ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.
MAR 10:44 ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ ಎಲ್ಲರಿಗೂ ದಾಸನಾಗಿರಲಿ.
MAR 10:45 ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
MAR 10:46 ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸು ತಮ್ಮ ಶಿಷ್ಯರೊಡನೆಯೂ ಅಸಂಖ್ಯಾತ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗ ಕುರುಡ ಬಾರ್ತಿಮಾಯನು ದಾರಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.
MAR 10:47 ನಜರೇತಿನ ಯೇಸು ಬರುತ್ತಿದ್ದಾರೆ ಎಂದು ಅವನು ಕೇಳಿದಾಗ, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಕೂಗಿಕೊಳ್ಳಲಾರಂಭಿಸಿದನು.
MAR 10:48 ಸುಮ್ಮನಿರುವಂತೆ ಅನೇಕರು ಅವನಿಗೆ ಒತ್ತಾಯಪಡಿಸಿ ಹೇಳಿದರು. ಆದರೆ ಅವನು ಇನ್ನೂ ಗಟ್ಟಿಯಾಗಿ, “ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಇನ್ನಷ್ಟು ಕೂಗಿದನು.
MAR 10:49 ಯೇಸು ನಿಂತು, ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು, ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಅವನಿಗೆ ಹೇಳಿದರು.
MAR 10:50 ಅವನು ತನ್ನ ಮೇಲಂಗಿಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.
MAR 10:51 ಯೇಸು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ?” ಎಂದು ಕೇಳಲು, ಆ ಕುರುಡನು ಯೇಸುವಿಗೆ, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡಬೇಕು,” ಎಂದನು.
MAR 10:52 ಅದಕ್ಕೆ ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. ಕೂಡಲೇ ಅವನು ತನ್ನ ದೃಷ್ಟಿಯನ್ನು ಪಡೆದು, ದಾರಿಯಲ್ಲಿ ಯೇಸುವನ್ನು ಹಿಂಬಾಲಿಸಿದನು.
MAR 11:1 ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ,
MAR 11:2 “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ನೀವು ಅದರೊಳಗೆ ಪ್ರವೇಶಿಸಿದ ಕೂಡಲೇ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
MAR 11:3 ಯಾವನಾದರೂ ನಿಮಗೆ, ‘ಏಕೆ ಹೀಗೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತದೇವರಿಗೆ ಅವಶ್ಯವಾಗಿದೆ, ಆತನು ಕೂಡಲೇ ಇದನ್ನು ಹಿಂದಕ್ಕೆ ಕಳುಹಿಸುವನು,’ ” ಎಂದು ಹೇಳಿರಿ ಎಂದರು.
MAR 11:4 ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ,
MAR 11:5 ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು.
MAR 11:6 ಅದಕ್ಕೆ ಅವರು ಯೇಸು ತಮಗೆ ಹೇಳಿದ ಪ್ರಕಾರ ಉತ್ತರ ಕೊಡಲು, ಅವರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟರು.
MAR 11:7 ಶಿಷ್ಯರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದಾಗ ಯೇಸು ಅದರ ಮೇಲೆ ಕುಳಿತುಕೊಂಡರು.
MAR 11:8 ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ತೋಟಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
MAR 11:9 ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ, “ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”
MAR 11:10 “ಬರಲಿರುವ ನಮ್ಮ ತಂದೆಯಾದ ದಾವೀದನ ರಾಜ್ಯವು ಆಶೀರ್ವಾದ ಹೊಂದಲಿ!” “ಉನ್ನತದಲ್ಲಿ ಹೊಸನ್ನ!” ಎಂದು ಹೇಳಿದರು.
MAR 11:11 ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಸುತ್ತಲಿದ್ದ ಎಲ್ಲವುಗಳನ್ನು ನೋಡಿದರು. ಆಗ ಸಂಜೆಯಾಗಿದ್ದುದರಿಂದ ಯೇಸು ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದರು.
MAR 11:12 ಮರುದಿನ ಅವರು ಬೇಥಾನ್ಯದಿಂದ ಬರುತ್ತಿರುವಾಗ ಯೇಸುವಿಗೆ ಹಸಿವಾಯಿತು.
MAR 11:13 ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
MAR 11:14 ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು.
MAR 11:15 ತರುವಾಯ ಅವರು ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ, ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.
MAR 11:16 ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು.
MAR 11:17 ಯೇಸು ಅವರಿಗೆ ಬೋಧಿಸುತ್ತಾ, “ನನ್ನ ಮನೆಯು ಎಲ್ಲಾ ಜನಾಂಗಗಳಿಗೂ ‘ಪ್ರಾರ್ಥನೆಯ ಮನೆ’ ಎಂದು ಕರೆಯಿಸಿಕೊಳ್ಳುವುದೆಂದು ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,” ಎಂದು ಹೇಳಿದರು.
MAR 11:18 ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.
MAR 11:19 ಸಂಜೆಯಾದಾಗ ಯೇಸು ಮತ್ತು ಅವರ ಶಿಷ್ಯರು ಪಟ್ಟಣದ ಹೊರಗೆ ಹೋದರು.
MAR 11:20 ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು.
MAR 11:21 ಆಗ ಪೇತ್ರನು ಜ್ಞಾಪಕಮಾಡಿಕೊಂಡು ಯೇಸುವಿಗೆ, “ಗುರುವೇ, ಇಗೋ! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ!” ಎಂದು ಹೇಳಿದನು.
MAR 11:22 ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.
MAR 11:23 ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು.
MAR 11:24 ಆದಕಾರಣ, ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಎಲ್ಲವೂ ನಿಮಗೆ ಸಿಕ್ಕಿವೆಯೆಂದು ನಂಬಿರಿ. ಅವು ನಿಮಗೆ ಲಭಿಸುವವು.
MAR 11:25 ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು.
MAR 11:26 ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
MAR 11:27 ಯೇಸು ಮತ್ತು ಶಿಷ್ಯರು ಪುನಃ ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿರುವಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವಿನ ಬಳಿಗೆ ಬಂದು
MAR 11:28 ಯೇಸುವಿಗೆ, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕೇಳಿದರು.
MAR 11:29 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
MAR 11:30 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.
MAR 11:31 ಆಗ ಅವರು, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
MAR 11:32 ಆದರೆ ನಾವು, ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ, ನಮಗೆ ಜನರ ಭಯವಿದೆ. ಏಕೆಂದರೆ ಯೋಹಾನನು ನಿಜವಾಗಿಯೂ ಪ್ರವಾದಿ ಎಂದು ಎಲ್ಲರೂ ಎಣಿಸಿಕೊಂಡಿರುವರು,” ಎಂದು ತಮ್ಮಲ್ಲಿ ಚರ್ಚಿಸಿಕೊಂಡರು.
MAR 11:33 ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದು ಅವರಿಗೆ ಉತ್ತರಕೊಟ್ಟರು.
MAR 12:1 ಯೇಸು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದರು: “ಒಬ್ಬಾನೊಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿದನು. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ವಹಿಸಿಬಿಟ್ಟು ದೂರದೇಶಕ್ಕೆ ಹೊರಟುಹೋದನು.
MAR 12:2 ಫಲದ ಕಾಲ ಬಂದಾಗ ಅವನು ದ್ರಾಕ್ಷಿತೋಟದ ಫಲವನ್ನು ರೈತರಿಂದ ಪಡೆಯುವುದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕನನ್ನು ಕಳುಹಿಸಿದನು.
MAR 12:3 ಆದರೆ ಅವರು ಅವನನ್ನು ಹಿಡಿದು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
MAR 12:4 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ತಲೆಯನ್ನು ಗಾಯಗೊಳಿಸಿ ಅವಮಾನ ಮಾಡಿ ಕಳುಹಿಸಿಬಿಟ್ಟರು.
MAR 12:5 ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು. ಯಜಮಾನನು ಬೇರೆ ಕೆಲವರನ್ನು ಕಳುಹಿಸಿದಾಗ ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
MAR 12:6 “ಕಡೆಯದಾಗಿ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನಿದ್ದನು. ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು,’ ಎಂದು ಭಾವಿಸಿ, ಅವನನ್ನು ಅವರ ಬಳಿಗೆ ಕಳುಹಿಸಿದನು.
MAR 12:7 “ಆದರೆ ಆ ರೈತರು, ‘ಇವನೇ ಬಾಧ್ಯಸ್ಥನು, ಬನ್ನಿರಿ, ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡರು.
MAR 12:8 ಅವರು ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷಿತೋಟದ ಹೊರಗೆ ಬಿಸಾಡಿದರು.
MAR 12:9 “ಹಾಗಾದರೆ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? ಅವನು ಬಂದು ಆ ರೈತರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಕೊಡುವನು.
MAR 12:10 ಈ ಪವಿತ್ರ ವಾಕ್ಯವನ್ನು ನೀವು ಓದಲಿಲ್ಲವೋ: “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
MAR 12:11 ಇದು ಕರ್ತನಿಂದಲೇ ಆಯಿತು. ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ,’” ಎಂದು ಹೇಳಿದರು.
MAR 12:12 ಆಗ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ತಮ್ಮ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದರೆಂದು ತಿಳಿದು ಯೇಸುವನ್ನು ಹಿಡಿಯುವುದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿ, ಯೇಸುವನ್ನು ಬಿಟ್ಟು ಹೊರಟು ಹೋದರು.
MAR 12:13 ಆಮೇಲೆ ಅವರು ಯೇಸುವನ್ನು ಅವರ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಅವರ ಬಳಿಗೆ ಕಳುಹಿಸಿದರು.
MAR 12:14 ಅವರು ಬಂದು ಯೇಸುವಿಗೆ, “ಬೋಧಕರೇ, ನೀವು ಸತ್ಯವಂತರು ಮತ್ತು ಯಾವ ಮನುಷ್ಯನನ್ನೂ ಲಕ್ಷಿಸದವರೂ ನೀವು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀರಿ ಎಂದೂ ನಾವು ಬಲ್ಲೆವು. ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಇಲ್ಲವೋ?
MAR 12:15 ನಾವು ಕೊಡಬೇಕೋ? ಕೊಡಬಾರದೋ?” ಎಂದು ಕೇಳಿದರು. ಆದರೆ ಯೇಸು ಅವರ ಕಪಟವನ್ನು ತಿಳಿದು ಅವರಿಗೆ, “ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ? ಒಂದು ಬೆಳ್ಳಿ ನಾಣ್ಯವನ್ನು ತಂದು ನನಗೆ ತೋರಿಸಿರಿ,” ಎಂದು ಹೇಳಿದರು.
MAR 12:16 ಅವರು ಅದನ್ನು ತಂದಾಗ ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಮೆಲ್ಬರಹವು ಯಾರದು?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು,” ಎಂದು ಉತ್ತರಕೊಟ್ಟರು.
MAR 12:17 ಆಗ ಯೇಸು ಉತ್ತರವಾಗಿ ಅವರಿಗೆ, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಹೇಳಿದರು. ಇದಕ್ಕೆ ಅವರು ಯೇಸುವಿನ ವಿಷಯವಾಗಿ ಆಶ್ಚರ್ಯಪಟ್ಟರು.
MAR 12:18 ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಯೇಸುವಿನ ಬಳಿಗೆ ಬಂದು,
MAR 12:19 “ಬೋಧಕರೇ, ‘ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ವಿಧವೆಯನ್ನು ಬಿಟ್ಟು ಸತ್ತರೆ, ಅವನ ಸಹೋದರನು ಅವನ ಹೆಂಡತಿಯನ್ನು ತೆಗೆದುಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆಯು ನಮಗೆ ಬರೆದಿರುತ್ತಾನಷ್ಟೆ.
MAR 12:20 ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
MAR 12:21 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. ಅದರಂತೆಯೇ ಮೂರನೆಯವನೂ ಆದನು.
MAR 12:22 ಹೀಗೆ ಏಳುಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವರಾಗಿ ಮೃತರಾದರು. ಕೊನೆಯಲ್ಲಿ ಆ ಸ್ತ್ರೀಯೂ ಸಹ ಮರಣಹೊಂದಿದಳು.
MAR 12:23 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ,” ಎಂದು ಪ್ರಶ್ನಿಸಿದರು.
MAR 12:24 ಅದಕ್ಕೆ ಯೇಸು, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ?
MAR 12:25 ಅವರು ಸತ್ತವರೊಳಗಿಂದ ಜೀವಂತವಾಗಿ ಎದ್ದ ಮೇಲೆ, ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.
MAR 12:26 ಸತ್ತವರು ಎದ್ದು ಬರುವುದರ ವಿಷಯವಾಗಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ’ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದರೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?
MAR 12:27 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ, ಆದ್ದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪುಮಾಡುತ್ತೀರಿ,” ಎಂದು ಹೇಳಿದರು.
MAR 12:28 ನಿಯಮ ಬೋಧಕರಲ್ಲಿ ಒಬ್ಬನು ಬಂದು ಅವರು ಕೂಡಿಕೊಂಡು ತರ್ಕಿಸುತ್ತಿರುವುದನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಅವರಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದು?” ಎಂದು ಕೇಳಿದನು.
MAR 12:29 ಯೇಸು ಉತ್ತರವಾಗಿ ಅವನಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು, ‘ಇಸ್ರಾಯೇಲೇ, ಕೇಳು: ನಮ್ಮ ದೇವರಾದ ಕರ್ತ ಒಬ್ಬರೇ ಕರ್ತನಾಗಿದ್ದಾರೆ.
MAR 12:30 ನೀನು ನಿನ್ನ ದೇವರನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು?’
MAR 12:31 ‘ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,’ ಎಂಬುದು ಅದರಂತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ ಹೆಚ್ಚಿನ ಆಜ್ಞೆಯು ಮತ್ತೊಂದಿಲ್ಲ,” ಎಂದು ಹೇಳಿದರು.
MAR 12:32 ಅದಕ್ಕೆ ಆ ನಿಯಮ ಬೋಧಕನು ಯೇಸುವಿಗೆ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ನೀವು ಹೇಳಿದ್ದು ಸತ್ಯವೇ; ಏಕೆಂದರೆ ದೇವರು ಒಬ್ಬರೇ, ಅವರ ಹೊರತು ಬೇರೊಬ್ಬರು ಇಲ್ಲ.
MAR 12:33 ಅವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ಪ್ರೀತಿಸಿ, ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಗಳಿಗಿಂತಲೂ ಹೆಚ್ಚಿನದಾಗಿದೆ,” ಎಂದನು.
MAR 12:34 ಅವನು ವಿವೇಕದಿಂದ ಉತ್ತರ ಕೊಟ್ಟದ್ದನ್ನು ಯೇಸು ಕಂಡು ಅವನಿಗೆ, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ,” ಎಂದರು. ಅಂದಿನಿಂದ ಯೇಸುವನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
MAR 12:35 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ, “ಕ್ರಿಸ್ತನು ದಾವೀದನ ಪುತ್ರನು ಎಂದು ನಿಯಮ ಬೋಧಕರು ಹೇಳುತ್ತಿರುವುದು ಹೇಗೆ?
MAR 12:36 ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ: “ ‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.” ’
MAR 12:37 ಆದ್ದರಿಂದ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವಾಗ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು. ಜನಸಮೂಹವು ಸಂತೋಷದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು.
MAR 12:38 ಯೇಸು ಬೋಧನೆಮಾಡುತ್ತಾ, “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ
MAR 12:39 ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಇಷ್ಟಪಡುತ್ತಾರೆ.
MAR 12:40 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ, ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
MAR 12:41 ಯೇಸು ಕಾಣಿಕೆ ಪೆಟ್ಟಿಗೆಯ ಎದುರಾಗಿ ಕುಳಿತುಕೊಂಡು ಜನರು ಹೇಗೆ ಅದರಲ್ಲಿ ಹಣ ಹಾಕುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದರು. ಅನೇಕ ಐಶ್ವರ್ಯವಂತರು ಹೆಚ್ಚು ಹಣ ಹಾಕಿದರು.
MAR 12:42 ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.
MAR 12:43 ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAR 12:44 ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದುದನ್ನು ಹಾಕಿದ್ದಾಳೆ,” ಎಂದರು.
MAR 13:1 ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು.
MAR 13:2 ಯೇಸು ಅವನಿಗೆ ಉತ್ತರವಾಗಿ, “ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು,” ಎಂದರು.
MAR 13:3 ಯೇಸು ಓಲಿವ್ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ ಇವರು ಪ್ರತ್ಯೇಕವಾಗಿ ಯೇಸುವಿಗೆ,
MAR 13:4 “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವೂ ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು,” ಎಂದು ಕೇಳಿದರು.
MAR 13:5 ಯೇಸು ಅವರಿಗೆ ಹೀಗೆಂದನು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
MAR 13:6 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
MAR 13:7 ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.
MAR 13:8 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ.
MAR 13:9 “ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ನನ್ನ ನಿಮಿತ್ತವಾಗಿ ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಿಸುವರು. ಹೀಗೆ ಇದು ಅವರಿಗೆ ಸಾಕ್ಷಿಯಾಗಿರುವುದು.
MAR 13:10 ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರುವುದು ಅಗತ್ಯವಾಗಿದೆ.
MAR 13:11 ಅವರು ನಿಮ್ಮನ್ನು ಬಂಧಿಸಿ ಒಪ್ಪಿಸುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿಯೇ ಚಿಂತಿಸಬೇಡಿರಿ. ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಯಾವುದು ಕೊಡಲಾಗುವುದೋ ಅದನ್ನೇ ಮಾತನಾಡಿರಿ. ಏಕೆಂದರೆ ಮಾತನಾಡುವವರು ನೀವಲ್ಲ, ಪವಿತ್ರಾತ್ಮನೇ.
MAR 13:12 “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
MAR 13:13 ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
MAR 13:14 “ಆದರೆ ‘ಅಸಹ್ಯ ವಸ್ತು’ ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ ಓದುವವನು ತಿಳಿದುಕೊಳ್ಳಲಿ. ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
MAR 13:15 ಮಾಳಿಗೆಯ ಮೇಲಿದ್ದವರು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ತಮ್ಮ ಮನೆಯೊಳಗೆ ಪ್ರವೇಶಿಸಿ ಅದರೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
MAR 13:16 ಹೊಲದಲ್ಲಿರುವವರು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.
MAR 13:17 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!
MAR 13:18 ಈ ಸಂಕಟ ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
MAR 13:19 ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.
MAR 13:20 “ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ.
MAR 13:21 ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಆತನು ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿರಿ.
MAR 13:22 ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು, ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
MAR 13:23 ಆದರೆ ನೀವು ಜಾಗರೂಕರಾಗಿರಿ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೆ ಹೇಳಿದ್ದೇನೆ.
MAR 13:24 “ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ, “ ‘ಸೂರ್ಯನಿಗೆ ಕತ್ತಲು ಮುಸುಕುವುದು; ಚಂದ್ರನು ಕಾಂತಿಹೀನನಾಗುವನು.
MAR 13:25 ಆಕಾಶದಿಂದ ನಕ್ಷತ್ರಗಳು ಬೀಳುವವು ಮತ್ತು ಆಕಾಶದ ಶಕ್ತಿಗಳು ಕದಲುವವು.’
MAR 13:26 “ಆಗ ಮನುಷ್ಯಪುತ್ರನಾದ ನಾನು ಬಹು ಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ಕಾಣುವರು.
MAR 13:27 ನಾನು ನನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾನು ಆರಿಸಿಕೊಂಡವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವೆನು.
MAR 13:28 “ಅಂಜೂರದ ಮರದ ಸಾಮ್ಯದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
MAR 13:29 ಅದೇ ಪ್ರಕಾರ ಇವೆಲ್ಲವೂ ಸಂಭವಿಸುವುದನ್ನು ನೀವು ಕಾಣುವಾಗ, ಮನುಷ್ಯಪುತ್ರನಾದ ನಾನು ಬಾಗಿಲ ಹತ್ತಿರದಲ್ಲಿಯೇ ಇದ್ದೇನೆ ಎಂದು ತಿಳಿದುಕೊಳ್ಳಿರಿ.
MAR 13:30 ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
MAR 13:31 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
MAR 13:32 “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಪುತ್ರನಿಗಾಗಲಿ ತಿಳಿಯದು.
MAR 13:33 ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. ಏಕೆಂದರೆ ಆ ಕಾಲವು ಬರುವುದು ಯಾವಾಗ ಎಂದು ನಿಮಗೆ ತಿಳಿಯದು.
MAR 13:34 ಅದು ಒಬ್ಬ ಮನುಷ್ಯನು ದೂರ ಪ್ರಯಾಣಕ್ಕಾಗಿ ತನ್ನ ಮನೆಯನ್ನು ಬಿಟ್ಟು, ತನ್ನ ಸೇವಕರಿಗೆ ಅಧಿಕಾರವನ್ನೂ ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಿಲು ಕಾಯುವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ.
MAR 13:35 “ಆದ್ದರಿಂದ ಜಾಗರೂಕರಾಗಿರಿ. ಮನೆಯಜಮಾನನು ಸಂಜೆಯಲ್ಲಿಯೋ ಮಧ್ಯರಾತ್ರಿಯಲ್ಲಿಯೋ ಹುಂಜ ಕೂಗುವಾಗಲೋ ಬೆಳಕಾಗುವಾಗಲೋ, ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
MAR 13:36 ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು.
MAR 13:37 ನಿಮಗೆ ಹೇಳುವುದನ್ನು ನಾನು ಎಲ್ಲರಿಗೂ ಹೇಳುತ್ತೇನೆ: ‘ಎಚ್ಚರವಾಗಿರಿ,’ ” ಎಂದರು.
MAR 14:1 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿವಸಗಳಿದ್ದಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಉಪಾಯದಿಂದ ಯೇಸುವನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಮಾರ್ಗ ಹುಡುಕುತ್ತಿದ್ದರು.
MAR 14:2 ಆದರೆ ಅವರು, “ಜನರು ದಂಗೆ ಎದ್ದಾರು, ಹಬ್ಬದಲ್ಲಿ ಬೇಡ,” ಎಂದು ಮಾತನಾಡಿಕೊಂಡರು.
MAR 14:3 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಬಂದು, ಅದನ್ನು ಒಡೆದು, ಯೇಸುವಿನ ತಲೆಯ ಮೇಲೆ ಸುರಿಸಿದಳು.
MAR 14:4 ಅಲ್ಲಿದ್ದ ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥ ಮಾಡಿದ್ದೇಕೆ?
MAR 14:5 ಇದನ್ನು ಮುನ್ನೂರು ಬೆಳ್ಳಿ ನಾಣ್ಯಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಆಕೆಯನ್ನು ನಿಂದಿಸಿದರು.
MAR 14:6 ಆದರೆ ಯೇಸು, “ಈಕೆಯನ್ನು ಬಿಟ್ಟುಬಿಡಿರಿ, ಈಕೆಗೆ ಏಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ.
MAR 14:7 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸಿದ್ದರೆ, ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.
MAR 14:8 ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ನನ್ನ ಶವಸಂಸ್ಕಾರಕ್ಕಾಗಿ ಮುಂಚಿತವಾಗಿ ನನ್ನ ದೇಹವನ್ನು ಅಭಿಷೇಕಿಸಿದ್ದಾಳೆ.
MAR 14:9 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.
MAR 14:10 ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಮುಖ್ಯಯಾಜಕರಿಗೆ ಹಿಡಿದುಕೊಡಲು ಅವರ ಬಳಿಗೆ ಹೋದನು.
MAR 14:11 ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುವುದಾಗಿ ಮಾತುಕೊಟ್ಟರು. ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭ ಹುಡುಕುತ್ತಿದ್ದನು.
MAR 14:12 ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಯನ್ನು ವಧಿಸುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀವು ಪಸ್ಕದ ಊಟ ಮಾಡಲು ನಾವು ಎಲ್ಲಿಗೆ ಹೋಗಿ ಅದನ್ನು ಸಿದ್ಧಪಡಿಸೋಣ?” ಎಂದು ಕೇಳಿದರು.
MAR 14:13 ಆಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ, “ನೀವು ಪಟ್ಟಣದೊಳಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು. ಅವನನ್ನು ಹಿಂಬಾಲಿಸಿರಿ.
MAR 14:14 ಅವನು ಯಾವ ಮನೆಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, ‘ನಾನು ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ,’ ಎಂದು ಹೇಳಿರಿ.
MAR 14:15 ಅವನು ಸಜ್ಜುಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನಮಗೆ ಸಿದ್ಧಮಾಡಿರಿ,” ಎಂದರು.
MAR 14:16 ಅವರ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಯೇಸು ತಮಗೆ ಹೇಳಿದಂತೆಯೇ ಕಂಡು ಪಸ್ಕವನ್ನು ಸಿದ್ಧಮಾಡಿದರು.
MAR 14:17 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದರು.
MAR 14:18 ಅವರು ಕುಳಿತುಕೊಂಡು ಊಟಮಾಡುತ್ತಿದ್ದಾಗ ಯೇಸು, “ನನ್ನೊಂದಿಗೆ ಊಟಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
MAR 14:19 ಆಗ ಅವರು ದುಃಖಿಸಲಾರಂಭಿಸಿ ಒಬ್ಬೊಬ್ಬರಾಗಿ ಯೇಸುವಿಗೆ, “ಅವನು ನಾನಲ್ಲವಲ್ಲಾ?” ಎಂದು ಕೇಳಿದರು.
MAR 14:20 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ಎಂದರೆ, ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದುವವನೇ.
MAR 14:21 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೇ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದು ಹೇಳಿದರು.
MAR 14:22 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು, ಅವರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ಇದು ನನ್ನ ದೇಹ,” ಎಂದರು.
MAR 14:23 ತರುವಾಯ ಯೇಸು ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟರು. ಅವರೆಲ್ಲರೂ ಅದರಲ್ಲಿ ಕುಡಿದರು.
MAR 14:24 ಯೇಸು ಅವರಿಗೆ, “ಇದು ಬಹುಜನರಿಗೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.
MAR 14:25 ನಾನು ದೇವರ ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ ಆ ದಿನದವರೆಗೆ ಇನ್ನು ಮೇಲೆ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದು ಹೇಳಿದರು.
MAR 14:26 ಬಳಿಕ ಅವರೆಲ್ಲರು ಒಂದು ಕೀರ್ತನೆ ಹಾಡಿ ಓಲಿವ್ ಗುಡ್ಡಕ್ಕೆ ಹೊರಟು ಹೋದರು.
MAR 14:27 ಆಗ ಯೇಸು, “ನೀವೆಲ್ಲರೂ ಓಡಿಹೋಗುವಿರಿ. ಏಕೆಂದರೆ ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ನಾನು ಕುರುಬನನ್ನು ಹೊಡೆಯುವೆನು, ಕುರಿಗಳು ಚದರಿಹೋಗುವುವು.’
MAR 14:28 ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು,” ಎಂದು ಹೇಳಿದರು.
MAR 14:29 ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದು ಹೇಳಿದನು.
MAR 14:30 ಆದರೆ ಯೇಸು ಅವನಿಗೆ, “ಈ ದಿವಸ, ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ,” ಎಂದರು.
MAR 14:31 ಅದಕ್ಕೆ ಪೇತ್ರನು, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.
MAR 14:32 ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ಯೇಸು ತಮ್ಮ ಶಿಷ್ಯರಿಗೆ, “ನಾನು ಪ್ರಾರ್ಥನೆಮಾಡಿ ಬರುವವರೆಗೆ ನೀವು ಇಲ್ಲಿ ಕುಳಿತುಕೊಂಡಿರಿ,” ಎಂದರು.
MAR 14:33 ಯೇಸು ಪೇತ್ರ, ಯಾಕೋಬ, ಯೋಹಾನರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ, ಬಹು ಬೆರಗಾಗಿ ವ್ಯಥೆಗೊಳ್ಳಲಾರಂಭಿಸಿ,
MAR 14:34 “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರಿ,” ಎಂದರು.
MAR 14:35 ಯೇಸು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿ ಹೋಗುವಂತೆ ಪ್ರಾರ್ಥಿಸಿ,
MAR 14:36 “ಅಪ್ಪಾ, ತಂದೆಯೇ, ಎಲ್ಲವೂ ನಿಮಗೆ ಸಾಧ್ಯ, ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು. ಆದರೂ ನನ್ನ ಚಿತ್ತದಂತಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು.
MAR 14:37 ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರೆ ಮಾಡುತ್ತೀಯಾ? ಒಂದು ಘಂಟೆಯಾದರೂ ಎಚ್ಚರವಾಗಿರಲಾರೆಯಾ?
MAR 14:38 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ,” ಎಂದು ಹೇಳಿದರು.
MAR 14:39 ಯೇಸು ತಿರುಗಿ ಹೊರಟುಹೋಗಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು.
MAR 14:40 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.
MAR 14:41 ಯೇಸು ಮೂರನೆಯ ಸಾರಿ ಬಂದು ಅವರಿಗೆ, “ಇನ್ನೂ ವಿಶ್ರಮಿಸುತ್ತಿದ್ದೀರಾ? ಸಾಕು! ಸಮಯವು ಸಮೀಪಿಸಿದೆ; ಮನುಷ್ಯಪುತ್ರನಾದ ನಾನು ಪಾಪಿಗಳ ಕೈವಶವಾಗಲಿದ್ದೇನೆ.
MAR 14:42 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ,” ಎಂದು ಹೇಳಿದರು.
MAR 14:43 ಯೇಸು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ, ನಿಯಮ ಬೋಧಕರ ಮತ್ತು ಹಿರಿಯರ ಕಡೆಯಿಂದ ಬಂದಿದ್ದ ಜನರ ಸಮೂಹವು ಖಡ್ಗ ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗಿತ್ತು.
MAR 14:44 ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು, ಆತನನ್ನು ಹಿಡಿದು, ಭದ್ರವಾಗಿ ತೆಗೆದುಕೊಂಡು ಹೋಗಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು.
MAR 14:45 ಯೂದನು ಬಂದ ಕೂಡಲೇ ನೇರವಾಗಿ ಯೇಸುವಿನ ಕಡೆಗೆ ಹೋಗಿ, “ಗುರುವೇ,” ಎಂದು ಹೇಳಿ ಅವರಿಗೆ ಮುದ್ದಿಟ್ಟನು.
MAR 14:46 ಅವರು ಯೇಸುವಿನ ಮೇಲೆ ಕೈಹಾಕಿ ಅವರನ್ನು ಬಂಧಿಸಿದರು.
MAR 14:47 ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ಖಡ್ಗವನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
MAR 14:48 ಯೇಸು ಅವರಿಗೆ, “ಖಡ್ಗಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬರುವಂತೆ ನನ್ನನ್ನು ಹಿಡಿಯುವುದಕ್ಕಾಗಿ ಬಂದಿರಾ?
MAR 14:49 ನಾನು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಾ ನಿಮ್ಮ ಸಂಗಡ ಇದ್ದೆನು. ಆಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಪವಿತ್ರ ವೇದಗಳಲ್ಲಿ ಬರೆದಿದ್ದು ನೆರವೇರಲೇಬೇಕು,” ಎಂದರು.
MAR 14:50 ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.
MAR 14:51 ಅಲ್ಲಿ ಮೈಮೇಲೆ ದುಪ್ಪಟಿಯನ್ನು ಸುತ್ತಿಕೊಂಡ ಯುವಕನೊಬ್ಬನು ಯೇಸುವನ್ನು ಹಿಂಬಾಲಿಸುತ್ತಿದ್ದನು. ಜನರ ಗುಂಪು ಅವನನ್ನು ಹಿಡಿಯಲು,
MAR 14:52 ಅವನು ಆ ದುಪ್ಪಟಿಯನ್ನು ಬಿಟ್ಟು, ಬರೀ ಮೈಯಲ್ಲಿ ಓಡಿಹೋದನು.
MAR 14:53 ಅವರು ಯೇಸುವನ್ನು ಮಹಾಯಾಜಕನ ಬಳಿಗೆ ತೆಗೆದುಕೊಂಡು ಹೋದರು. ಯೇಸುವಿನ ಸಂಗಡ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರೂ ಅವನ ಬಳಿಗೆ ಸಭೆ ಕೂಡಿಬಂದರು.
MAR 14:54 ಪೇತ್ರನು ಮಹಾಯಾಜಕನ ಅಂಗಳದವರೆಗೂ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿದ್ದನು.
MAR 14:55 ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಅವರ ವಿರೋಧವಾಗಿ ಸಾಕ್ಷಿಯನ್ನು ಹುಡುಕಿದರು. ಆದರೆ ಒಂದು ಸಾಕ್ಷಿಯೂ ಸಿಗಲಿಲ್ಲ.
MAR 14:56 ಅನೇಕರು ಯೇಸುವಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿಯು ಒಂದಕ್ಕೊಂದು ಒಪ್ಪಲಿಲ್ಲ.
MAR 14:57 ತರುವಾಯ ಕೆಲವರು ಎದ್ದು ಯೇಸುವಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತಾ,
MAR 14:58 “ ‘ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು,’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ,” ಎಂದರು.
MAR 14:59 ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.
MAR 14:60 ಆಗ ಮಹಾಯಾಜಕನು ಎದ್ದು ಮುಂದೆ ನಿಂತು ಯೇಸುವಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು?” ಎಂದು ಕೇಳಿದನು.
MAR 14:61 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದರು. ತಿರುಗಿ ಮಹಾಯಾಜಕನು, “ನೀನು ಭಾಗ್ಯವಂತನ ದೇವರ ಪುತ್ರನಾಗಿರುವ ಕ್ರಿಸ್ತನೋ?” ಎಂದು ಯೇಸುವನ್ನು ಕೇಳಿದನು.
MAR 14:62 ಅದಕ್ಕೆ ಯೇಸು, “ಹೌದು ನಾನೇ, ಇದಲ್ಲದೆ ಮನುಷ್ಯಪುತ್ರನಾದ ನಾನು ಸರ್ವಶಕ್ತರ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ಕಾಣುವಿರಿ,” ಎಂದರು.
MAR 14:63 ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನು ನಮಗೆ ಸಾಕ್ಷಿಗಳ ಅವಶ್ಯಕತೆ ಏತಕ್ಕೆ?
MAR 14:64 ನೀವು ದೇವದೂಷಣೆಯನ್ನು ಕೇಳಿದ್ದೀರಲ್ಲಾ ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, “ಈತನಿಗೆ ಮರಣದಂಡನೆ ಆಗಬೇಕು,” ಎಂದು ತೀರ್ಪುಕೊಟ್ಟರು.
MAR 14:65 ತರುವಾಯ ಕೆಲವರು ಯೇಸುವಿನ ಮೇಲೆ ಉಗುಳಿ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಗುದ್ದುವುದಕ್ಕೆ ಆರಂಭಿಸಿ ಯೇಸುವಿಗೆ, “ಪ್ರವಾದನೆ ಹೇಳು,” ಎಂದರು. ಕಾವಲಾಳುಗಳು ಯೇಸುವನ್ನು ಹಿಡಿದುಕೊಂಡುಹೋಗಿ ಅವರನ್ನು ಹೊಡೆದರು.
MAR 14:66 ಪೇತ್ರನು ಅಂಗಳದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
MAR 14:67 ಪೇತ್ರನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.
MAR 14:68 ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ ಅರ್ಥವಾಗುತ್ತಲೂ ಇಲ್ಲ,” ಎಂದು ಹೇಳಿ ಹೊರಗೆ ಮುಖ್ಯ ದ್ವಾರದೊಳಗೆ ಹೋದನು. ಆಗ ಹುಂಜವು ಕೂಗಿತು.
MAR 14:69 ಆ ದಾಸಿಯು ಅವನನ್ನು ತಿರುಗಿ ಕಂಡು ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು,” ಎಂದು ಹೇಳಲಾರಂಭಿಸಿದಳು.
MAR 14:70 ಆಗ ಪೇತ್ರನು ಅದನ್ನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರುಗಿ ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು, ನೀನು ಗಲಿಲಾಯದವನೇ,” ಎಂದರು.
MAR 14:71 ಅವನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿ, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ,” ಎಂದನು.
MAR 14:72 ಕೂಡಲೇ ಎರಡನೆಯ ಸಾರಿ ಹುಂಜ ಕೂಗಿತು. ಹೀಗೆ, “ಎರಡು ಸಾರಿ ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವೆ,” ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ವ್ಯಥೆಪಟ್ಟು ಅತ್ತನು.
MAR 15:1 ಬೆಳಗಾದ ಕೂಡಲೇ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರ ಮತ್ತು ಆಲೋಚನಾ ಸಭೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಯೇಸುವಿಗೆ ಬೇಡಿಹಾಕಿಸಿ ಪಿಲಾತನಿಗೆ ಒಪ್ಪಿಸಿದರು.
MAR 15:2 ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಲು, “ನೀನೇ ಅದನ್ನು ಹೇಳಿದ್ದೀ” ಎಂದು ಯೇಸು ಉತ್ತರಿಸಿದರು.
MAR 15:3 ಇದಲ್ಲದೆ ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ದೂರುಗಳನ್ನು ಹೇಳಿದರು.
MAR 15:4 ಆದರೆ ಪಿಲಾತನು ತಿರುಗಿ ಯೇಸುವಿಗೆ, “ನೀನು ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು,” ಎಂದು ಕೇಳಿದನು.
MAR 15:5 ಆದರೂ ಯೇಸು ಉತ್ತರ ಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
MAR 15:6 ಹಬ್ಬದಲ್ಲಿ ಜನರು ಕೋರಿದ ಒಬ್ಬ ಸೆರೆಯಾಳನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
MAR 15:7 ದಂಗೆ ಮಾಡಿದವರೊಂದಿಗೆ ಬಂಧಿಸಲಾದ ಆ ದಂಗೆಯಲ್ಲಿ ಕೊಲೆಮಾಡಿದ ಬರಬ್ಬನೆಂಬ ಹೆಸರುಳ್ಳವನೊಬ್ಬನು ಸೆರೆಯಲ್ಲಿ ಇದ್ದನು.
MAR 15:8 ಜನಸಮೂಹವು ಪಿಲಾತನು ತಮಗೆ ಯಾವಾಗಲೂ ಮಾಡುತ್ತಿದ್ದ ಪ್ರಕಾರ ಮಾಡಬೇಕೆಂದು ಅವನನ್ನು ಬೇಡಿಕೊಳ್ಳಲಾರಂಭಿಸಿದರು.
MAR 15:9 ಪಿಲಾತನು ಅವರಿಗೆ, “ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ?” ಎಂದು ಕೇಳಿದನು.
MAR 15:10 ಮುಖ್ಯಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.
MAR 15:11 ಆದರೆ ಮುಖ್ಯಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಜನರನ್ನು ಪ್ರೇರೇಪಿಸಿದರು.
MAR 15:12 ಪಿಲಾತನು ಅವರಿಗೆ, “ಹಾಗಾದರೆ ನೀವು ಯೆಹೂದ್ಯರ ಅರಸನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕೆನ್ನುತ್ತೀರಿ?” ಎಂದು ಕೇಳಿದನು.
MAR 15:13 ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತೆ ಕೂಗಿಕೊಂಡರು.
MAR 15:14 ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
MAR 15:15 ಪಿಲಾತನು ಜನರನ್ನು ಮೆಚ್ಚಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
MAR 15:16 ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ತೆಗೆದುಕೊಂಡು ಬಂದು ತಮ್ಮ ದಳದವರನ್ನೆಲ್ಲಾ ಒಟ್ಟಾಗಿ ಕರೆದರು.
MAR 15:17 ಅವರು ಯೇಸುವಿಗೆ ಕಡುಗೆಂಪು ಬಣ್ಣದ ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲೆ ಇಟ್ಟರು.
MAR 15:18 ತರುವಾಯ ಅವರು, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ,” ಎಂದರು.
MAR 15:19 ಅವರು ಬೆತ್ತದಿಂದ ಯೇಸುವಿನ ತಲೆಯ ಮೇಲೆ ಹೊಡೆದು, ಅವರ ಮೇಲೆ ಉಗುಳಿ ಮೊಣಕಾಲೂರಿ ಅವರಿಗೆ ನಮಸ್ಕರಿಸಿದರು.
MAR 15:20 ಹೀಗೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದ ಮೇಲೆ ಕಡುಗೆಂಪು ಬಣ್ಣದ ಬಟ್ಟೆಯನ್ನು ಅವರಿಂದ ತೆಗೆದುಹಾಕಿ ಅವರ ಸ್ವಂತ ಬಟ್ಟೆಗಳನ್ನು ಅವರಿಗೆ ಉಡಿಸಿ ಶಿಲುಬೆಗೆ ಹಾಕುವುದಕ್ಕಾಗಿ ತೆಗೆದುಕೊಂಡು ಹೋದರು.
MAR 15:21 ಅಲೆಕ್ಸಾಂದ್ರ ಮತ್ತು ರೂಫ ಎಂಬುವರ ತಂದೆಯಾದ ಕುರೇನೆದ ಸೀಮೋನನು ಗ್ರಾಮದಿಂದ ಹಾದು ಹೋಗುತ್ತಿರುವಾಗ, ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
MAR 15:22 ತರುವಾಯ “ತಲೆಬುರುಡೆಯ ಸ್ಥಳ” ಎಂದು ಅರ್ಥವಿದ್ದ “ಗೊಲ್ಗೊಥಾ” ಎಂಬ ಸ್ಥಳಕ್ಕೆ ಅವರು ಯೇಸುವನ್ನು ತೆಗೆದುಕೊಂಡು ಬಂದರು.
MAR 15:23 ಆಗ ಅವರು ಯೇಸುವಿಗೆ ರಕ್ತಬೋಳ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ತೆಗೆದುಕೊಳ್ಳಲಿಲ್ಲ.
MAR 15:24 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ಬಟ್ಟೆಗಳನ್ನು ಪಾಲುಮಾಡಿಕೊಂಡರು. ಯಾರಿಗೆ ಯಾವುದು ಬರುವುದೋ ಎಂದು ಚೀಟುಹಾಕಿದರು.
MAR 15:25 ಯೇಸುವನ್ನು ಶಿಲುಬೆಗೆ ಹಾಕಿದಾಗ ಮುಂಜಾನೆ ಒಂಬತ್ತು ಗಂಟೆಯಾಗಿತ್ತು.
MAR 15:26 ಯೇಸುವಿನ ಮೇಲೆ ಹೊರಿಸಿದ ದೋಷಾರೋಪಣೆ ಹೀಗೆ ಬರೆದಿತ್ತು: ಈತನು ಯೆಹೂದ್ಯರ ಅರಸನು.
MAR 15:27 ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು, ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
MAR 15:28 ಹೀಗೆ, “ಆತನನ್ನು ಅಪರಾಧಿಗಳೊಂದಿಗೆ ಸೇರಿಸಿದರು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು.
MAR 15:29 ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ, “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ,
MAR 15:30 ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದು ಬಾ,” ಎಂದು ಯೇಸುವನ್ನು ಅಪಹಾಸ್ಯ ಮಾಡಿದರು.
MAR 15:31 ಅದೇ ಪ್ರಕಾರ ಮುಖ್ಯಯಾಜಕರು ನಿಯಮ ಬೋಧಕರೂ ಯೇಸುವನ್ನು ಅಪಹಾಸ್ಯಮಾಡಿ, “ಈತನು ಇತರರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು!
MAR 15:32 ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ಕಂಡು ನಂಬುತ್ತೇವೆ,” ಎಂದು ತಮ್ಮಲ್ಲಿ ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಗಿದ್ದವರೂ ಅವರನ್ನು ನಿಂದಿಸಿದರು.
MAR 15:33 ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
MAR 15:34 ಮೂರು ಗಂಟೆಯ ಸಮಯದಲ್ಲಿ ಯೇಸು, “ಎಲೋಹಿ, ಎಲೋಹಿ, ಲಮಾ ಸಬಕ್ತಾನೀ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದರು.
MAR 15:35 ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇಗೋ, ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
MAR 15:36 ಆಗ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯಲು ಕೊಟ್ಟು, “ಬಿಡಿರಿ, ಈತನನ್ನು ಕೆಳಗೆ ಇಳಿಸುವುದಕ್ಕೆ ಎಲೀಯನು ಬರುವನೋ ನೋಡೋಣ,” ಎಂದನು.
MAR 15:37 ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟರು.
MAR 15:38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು.
MAR 15:39 ಯೇಸು ಹೀಗೆ ಕೂಗಿ ಪ್ರಾಣಬಿಟ್ಟಿದ್ದನ್ನು ಅವರ ಎದುರಿಗೆ ನಿಂತಿದ್ದ ಶತಾಧಿಪತಿಯು ಕಂಡು, “ನಿಜವಾಗಿಯೂ ಈ ಮನುಷ್ಯನು ದೇವಪುತ್ರ,” ಎಂದನು.
MAR 15:40 ಅಲ್ಲಿ ಸ್ತ್ರೀಯರು ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿ ಮರಿಯಳು, ಸಲೋಮೆಯು ಇದ್ದರು.
MAR 15:41 ಯೇಸು ಗಲಿಲಾಯದಲ್ಲಿದ್ದಾಗ ಈ ಸ್ತ್ರೀಯರು ಅವರನ್ನು ಹಿಂಬಾಲಿಸಿ, ಉಪಚರಿಸಿದರು. ಯೇಸುವಿನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಅನೇಕ ಸ್ತ್ರೀಯರೂ ಅಲ್ಲಿದ್ದರು.
MAR 15:42 ಸಂಜೆ ಸಮೀಪಿಸುತ್ತಿದ್ದಾಗ, ಅದು ಸಬ್ಬತ್ ದಿನದ ಸಿದ್ಧತೆಯ ಹಿಂದಿನ ದಿವಸವಾಗಿತ್ತು.
MAR 15:43 ಗೌರವವುಳ್ಳವನೂ ಆಲೋಚನಾಸಭೆಯ ಸದಸ್ಯನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು.
MAR 15:44 ಯೇಸು ಅಷ್ಟು ಬೇಗ ಮರಣಹೊಂದಿದ್ದಾರೆಂದು ತಿಳಿದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು, “ಯೇಸು ಆಗಲೇ ಮೃತನಾದನೋ?” ಎಂದು ವಿಚಾರಿಸಿ
MAR 15:45 ತಿಳಿದುಕೊಂಡ ಮೇಲೆ ಪಾರ್ಥಿವ ಶರೀರವನ್ನು ಯೋಸೇಫನಿಗೆ ಒಪ್ಪಿಸಿದನು.
MAR 15:46 ಅವನು ಶುಭ್ರವಾದ ನಾರುಬಟ್ಟೆಯನ್ನು ಕೊಂಡುಕೊಂಡು ಬಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ಆ ನಾರುಬಟ್ಟೆಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಯೇಸುವಿನ ಸಮಾಧಿಯ ದ್ವಾರಕ್ಕೆ ಒಂದು ಬಂಡೆಯನ್ನು ಉರುಳಿಸಿದನು.
MAR 15:47 ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿಯಾದ ಮರಿಯಳು ಯೇಸುವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
MAR 16:1 ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡುಕೊಂಡು ಬಂದರು.
MAR 16:2 ವಾರದ ಮೊದಲನೆಯ ದಿನ ಮುಂಜಾನೆ ಸೂರ್ಯೋದಯವಾಗಲು ಅವರು ಸಮಾಧಿಯ ಬಳಿಗೆ ಬರುವಾಗ,
MAR 16:3 “ಸಮಾಧಿಯ ದ್ವಾರದಿಂದ ಆ ಬಂಡೆಯನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
MAR 16:4 ಏಕೆಂದರೆ ಆ ಬಂಡೆ ಬಹಳ ದೊಡ್ಡದಾಗಿತ್ತು. ಆದರೆ ಅವರು ಮತ್ತೆ ಕಂಡಾಗ ಆ ಬಂಡೆ ಉರುಳಿಸಲಾಗಿತ್ತು.
MAR 16:5 ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದಾಗ, ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯುವಕನು ಬಲಗಡೆಯಲ್ಲಿ ಕುಳಿತಿರುವುದನ್ನು ಕಂಡು ಭಯಭ್ರಾಂತರಾದರು.
MAR 16:6 ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲಾದ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರೊ? ಅವರು ಜೀವಿತರಾಗಿ ಎದ್ದಿದ್ದಾರೆ! ಇಲ್ಲಿ ಇಲ್ಲ; ಅವರನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ.
MAR 16:7 ಆದರೆ ನೀವು ಹೊರಟುಹೋಗಿ ಯೇಸು ನಿಮಗೆ ಹೇಳಿದಂತೆ, ‘ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ, ಅಲ್ಲಿ ನೀವು ಯೇಸುವನ್ನು ಕಾಣುವಿರಿ’ ಎಂದು ಅವರ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ,” ಎಂದನು.
MAR 16:8 ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ ಸಮಾಧಿಯ ಬಳಿಯಿಂದ ಓಡಿಹೋದರು. ಅವರು ಹೆದರಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.
MAR 16:9 ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದ ಮೇಲೆ ತಾವು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಅವರು ಮೊದಲು ಕಾಣಿಸಿಕೊಂಡರು.
MAR 16:10 ಯೇಸುವಿನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಯೇಸುವಿನ ಬಗ್ಗೆ ಹೇಳಿದಳು.
MAR 16:11 ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ, ಶಿಷ್ಯರು ನಂಬಲಿಲ್ಲ.
MAR 16:12 ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಯೇಸು ಅವರಿಗೆ ಬೇರೊಂದು ರೀತಿಯಲ್ಲಿ ಕಾಣಿಸಿಕೊಂಡರು.
MAR 16:13 ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಇವರನ್ನೂ ಅವರು ನಂಬಲಿಲ್ಲ.
MAR 16:14 ತರುವಾಯ ಊಟಕ್ಕೆ ಕುಳಿತಿದ್ದ ಹನ್ನೊಂದು ಮಂದಿಗೆ ಯೇಸು ಕಾಣಿಸಿಕೊಂಡರು. ತಾವು ಜೀವಿತರಾಗಿ ಎದ್ದು ಬಂದ ಮೇಲೆ ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅಪನಂಬಿಕೆಯನ್ನೂ ಹೃದಯದ ಕಾಠಿಣ್ಯವನ್ನೂ ಯೇಸು ಗದರಿಸಿದರು.
MAR 16:15 ಯೇಸು ಅವರಿಗೆ, “ನೀವು ಜಗತ್ತಿನ ಎಲ್ಲಾ ಕಡೆಗಳಿಗೆ ಹೋಗಿ ಸರ್ವಸೃಷ್ಟಿಗೂ ಸುವಾರ್ತೆಯನ್ನು ಸಾರಿರಿ.
MAR 16:16 ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
MAR 16:17 ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವುವು: ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವರು, ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು.
MAR 16:18 ಅವರು ಸರ್ಪಗಳನ್ನು ಎತ್ತುವರು ಮತ್ತು ಮಾರಣಾಂತಿಕವಾದ ಯಾವುದನ್ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಅವರು ರೋಗಿಗಳ ಮೇಲೆ ಕೈಗಳನ್ನಿಟ್ಟಾಗ ರೋಗಿಗಳು ಸ್ವಸ್ಥರಾಗುವರು,” ಎಂದು ಹೇಳಿದರು.
MAR 16:19 ಕರ್ತ ಯೇಸು ಅವರೊಂದಿಗೆ ಮಾತನಾಡಿದ ನಂತರ, ಅವರು ಪರಲೋಕಕ್ಕೆ ಏರಿ ದೇವರ ಬಲಪಾರ್ಶ್ವದಲ್ಲಿ ಕುಳಿತುಕೊಂಡರು.
MAR 16:20 ಶಿಷ್ಯರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು. ಕರ್ತನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ, ಸೂಚಕಕಾರ್ಯಗಳಿಂದ ತಮ್ಮ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದರು.
LUK 1:1 ಸನ್ಮಾನ್ಯ ಥೆಯೊಫಿಲರೇ, ನಮ್ಮ ಮಧ್ಯದಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಬರೆದಿಡಲು ಅನೇಕರು ಪ್ರಯತ್ನಿಸಿದ್ದಾರೆ.
LUK 1:2 ಮೊದಲಿನಿಂದ ಕಣ್ಣಾರೆ ಕಂಡವರೂ ದೇವರ ವಾಕ್ಯದ ಸೇವಕರೂ ನಮಗೆ ಕೊಟ್ಟಿರುವ ರೀತಿಯಲ್ಲಿಯೇ ಬರೆದಿದ್ದಾರೆ.
LUK 1:3 ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.
LUK 1:4 ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು.
LUK 1:5 ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ, ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಹೆಂಡತಿಯ ಹೆಸರು ಎಲಿಸಬೇತ್. ಇವಳು ಆರೋನನ ವಂಶದವಳು.
LUK 1:6 ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು.
LUK 1:7 ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ, ಇದಲ್ಲದೆ ಅವರಿಬ್ಬರೂ ಬಹಳ ವಯಸ್ಸಾದವರಾಗಿದ್ದರು.
LUK 1:8 ಹೀಗಿರಲಾಗಿ ಜಕರೀಯನು ತನ್ನ ವರ್ಗದ ಸರದಿಯ ಪ್ರಕಾರ ದೇವರ ಮುಂದೆ ಯಾಜಕ ಸೇವೆಯನ್ನು ಮಾಡುತ್ತಿದ್ದಾಗ,
LUK 1:9 ಯಾಜಕೋದ್ಯೋಗದ ಪದ್ಧತಿಯಂತೆ, ಅವನು ಕರ್ತದೇವರ ಆಲಯವನ್ನು ಪ್ರವೇಶಿಸಿ ಧೂಪವನ್ನು ಅರ್ಪಿಸುವದಕ್ಕೆ ಚೀಟು ಹಾಕಿದಾಗ, ಅದು ಅವನ ಪಾಲಿಗೆ ಬಿದ್ದಿತು.
LUK 1:10 ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು.
LUK 1:11 ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ, ಕರ್ತದೇವರ ದೂತನು ಅವನಿಗೆ ಕಾಣಿಸಿಕೊಂಡನು.
LUK 1:12 ಜಕರೀಯನು ದೂತನನ್ನು ಕಂಡು, ಚಕಿತಗೊಂಡು ಭಯಭ್ರಾಂತನಾದನು.
LUK 1:13 ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’ ಎಂದು ಹೆಸರನ್ನಿಡಬೇಕು.
LUK 1:14 ಅನೇಕರು ಅವನ ಜನನಕ್ಕೆ ಸಂತೋಷಪಡುವರು, ನಿನಗೆ ಆನಂದವೂ ಉಲ್ಲಾಸವೂ ಆಗುವುದು,
LUK 1:15 ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು.
LUK 1:16 ಅವನು ಇಸ್ರಾಯೇಲರಲ್ಲಿ ಅನೇಕರನ್ನು ಅವರ ಕರ್ತದೇವರ ಕಡೆಗೆ ತಿರುಗಿಸುವನು.
LUK 1:17 ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು.
LUK 1:18 ಜಕರೀಯನು ಆ ದೇವದೂತನಿಗೆ, “ಇದನ್ನು ನಾನು ಯಾವುದರಿಂದ ತಿಳಿದುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯ ಮೀರಿದವಳು,” ಎಂದನು.
LUK 1:19 ಅದಕ್ಕೆ ಆ ದೂತನು ಉತ್ತರವಾಗಿ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು. ನಿನ್ನ ಸಂಗಡ ಮಾತನಾಡುವುದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾರೆ.
LUK 1:20 ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು.
LUK 1:21 ಆಗ, ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
LUK 1:22 ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು.
LUK 1:23 ತನ್ನ ಸೇವೆಯ ದಿನಗಳು ಮುಗಿದ ನಂತರ, ಜಕರೀಯನು ತನ್ನ ಮನೆಗೆ ಹೊರಟುಹೋದನು.
LUK 1:24 ಕೆಲವು ದಿನಗಳಾದ ಮೇಲೆ, ಅವನ ಹೆಂಡತಿ ಎಲಿಸಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು.
LUK 1:25 ಅವಳು, “ಜನರಲ್ಲಿ ನನಗಿದ್ದ ಅವಮಾನವನ್ನು ತೆಗೆದುಹಾಕುವುದಕ್ಕಾಗಿ ಕರ್ತದೇವರು ನನ್ನ ಮೇಲೆ ದಯೆತೋರಿಸಿ ಈ ದಿನಗಳಲ್ಲಿ ನನಗೆ ಹೀಗೆ ಮಾಡಿದ್ದಾರೆ,” ಎಂದು ಹೇಳಿದಳು.
LUK 1:26 ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು,
LUK 1:27 ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು.
LUK 1:28 ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು.
LUK 1:29 ಮರಿಯಳು ದೇವದೂತನ ಮಾತಿಗೆ ಬಹಳವಾಗಿ ಕಳವಳಗೊಂಡು, “ಇದು ಎಂಥಾ ಶುಭಾಶಯ?” ಎಂದು ತನ್ನ ಮನದಲ್ಲಿ ಯೋಚಿಸತೊಡಗಿದಳು.
LUK 1:30 ಆ ದೇವದೂತನು ಆಕೆಗೆ, “ಮರಿಯಳೇ, ಹೆದರಬೇಡ. ನೀನು ದೇವರ ದಯೆಯನ್ನು ಹೊಂದಿರುವಿ.
LUK 1:31 ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವೆ, ಅವರಿಗೆ ‘ಯೇಸು’ ಎಂದು ಹೆಸರಿಡಬೇಕು.
LUK 1:32 ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.
LUK 1:33 ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು.
LUK 1:34 ಮರಿಯಳು ಆ ದೇವದೂತನಿಗೆ, “ಇದು ಹೇಗಾಗುವುದು, ನಾನು ಕನ್ಯೆ?” ಎಂದಳು.
LUK 1:35 ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು.
LUK 1:36 ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.
LUK 1:37 ದೇವರಿಂದ ಬರುವ ಯಾವ ತಕ್ಕ ಮಾತು ಎಂದಿಗೂ ಅಸಾಧ್ಯವಾಗಿರುವುದಿಲ್ಲ,” ಎಂದು ಹೇಳಿದನು.
LUK 1:38 ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು.
LUK 1:39 ಆ ಕಾಲದಲ್ಲಿ ಮರಿಯಳು ಬೆಟ್ಟದ ಸೀಮೆಯ ಯೆಹೂದದಲ್ಲಿರುವ ಒಂದು ಊರಿಗೆ ಅವಸರವಾಗಿ ಹೊರಡಲು ಸಿದ್ಧಳಾದಳು.
LUK 1:40 ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ, ಎಲಿಸಬೇತಳನ್ನು ವಂದಿಸಿದಳು.
LUK 1:41 ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ
LUK 1:42 ಮಹಾಧ್ವನಿಯಿಂದ: “ಸ್ತ್ರೀಯರಲ್ಲಿ ನೀನು ಧನ್ಯಳೇ, ನಿನ್ನಲ್ಲಿ ಹುಟ್ಟುವ ಶಿಶುವೂ ಆಶೀರ್ವಾದ ಹೊಂದಿದ್ದು!
LUK 1:43 ನನ್ನ ಕರ್ತದೇವರ ತಾಯಿಯು, ನನ್ನ ಬಳಿಗೆ ಬರುವಷ್ಟು ನಾನು ದಯೆ ಹೊಂದಿದ್ದು ಏಕೆ?
LUK 1:44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.
LUK 1:45 ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು.
LUK 1:46 ಆಗ ಮರಿಯಳು ಹೀಗೆ ಹೇಳಿದ್ದು: “ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ,
LUK 1:47 ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.
LUK 1:48 ದೇವರು ತಮ್ಮ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,
LUK 1:49 ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ, ಅವರ ಹೆಸರು ಪವಿತ್ರವಾದದ್ದು.
LUK 1:50 ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.
LUK 1:51 ದೇವರು ತಮ್ಮ ಭುಜಪರಾಕ್ರಮವನ್ನು ಮಾಡಿ; ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾದವರನ್ನು ಚದರಿಸಿಬಿಟ್ಟಿದ್ದಾರೆ.
LUK 1:52 ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, ದೀನರನ್ನು ಮೇಲಕ್ಕೆ ಎತ್ತಿದ್ದಾರೆ.
LUK 1:53 ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ.
LUK 1:54 ನಮ್ಮ ಪಿತೃಗಳಾದ ಅಬ್ರಹಾಮನಿಗೂ ಅವನ ಸಂತತಿಗೂ ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.”
LUK 1:56 ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಜೊತೆಯಲ್ಲಿದ್ದು, ಅನಂತರ ತನ್ನ ಮನೆಗೆ ಹಿಂತಿರುಗಿ ಹೋದಳು.
LUK 1:57 ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು.
LUK 1:58 ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು.
LUK 1:59 ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು.
LUK 1:60 ಆದರೆ ಅದಕ್ಕೆ ಶಿಶುವಿನ ತಾಯಿಯು ಉತ್ತರವಾಗಿ, “ಹಾಗಲ್ಲ! ಅವನಿಗೆ ‘ಯೋಹಾನ’ ಎಂದು ಹೆಸರಿಡಬೇಕು,” ಎಂದಳು.
LUK 1:61 ಬಂದಿದ್ದವರು ಆಕೆಗೆ, “ನಿನ್ನ ಬಂಧುಬಳಗದವರಲ್ಲಿ ಆ ಹೆಸರಿನವರು ಒಬ್ಬರೂ ಇಲ್ಲವಲ್ಲಾ,” ಎಂದರು.
LUK 1:62 ಶಿಶುವನ್ನು ಯಾವ ಹೆಸರಿನಿಂದ ಕರೆಯಬೇಕೆಂದು, ಅವನ ತಂದೆಗೆ ಅವರು ಸನ್ನೆಮಾಡಿದರು.
LUK 1:63 ಆಗ ಜಕರೀಯನು ಒಂದು ಬರೆಯುವ ಹಲಗೆಯನ್ನು ಕೇಳಿ, “ಶಿಶುವಿನ ಹೆಸರು ಯೋಹಾನ,” ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
LUK 1:64 ಕೂಡಲೇ ಜಕರೀಯನಿಗೆ ಮಾತು ಬಂತು, ಅವನ ನಾಲಿಗೆಯು ಸಡಿಲವಾಯಿತು, ಅವನು ಮಾತನಾಡಿ, ದೇವರನ್ನು ಕೊಂಡಾಡಿದನು.
LUK 1:65 ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು.
LUK 1:66 ಕೇಳಿದವರೆಲ್ಲರೂ ವಿಸ್ಮಯಗೊಂಡು, “ಈ ಮಗುವು ಎಂಥವನಾಗುವನೋ?” ಎಂದು ತಮ್ಮ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡರು. ಕರ್ತದೇವರ ಹಸ್ತವು ಈ ಮಗುವಿನ ಮೇಲೆ ಇತ್ತು.
LUK 1:67 ಆಗ ಮಗುವಿನ ತಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
LUK 1:68 “ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ.
LUK 1:69 ಪುರಾತನದಿಂದ ಅವರು ತಮ್ಮ ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, ನಮಗಾಗಿ ಬಲವಾದ ರಕ್ಷಣೆಯ ಕರ್ತದೇವರನ್ನು ಎಬ್ಬಿಸಿದ್ದಾರೆ.
LUK 1:71 ಇದನ್ನು, ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ
LUK 1:72 ನಮ್ಮ ಪಿತೃಗಳಿಗೆ ಕರುಣೆ ತೋರಿಸುವಂತೆಯೂ ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆಯೂ ತಮ್ಮ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡವನಾಗಿಯೂ
LUK 1:74 ನಾವು ನಮ್ಮ ಶತ್ರುಗಳ ಕೈಯಿಂದ ಬಿಡುಗಡೆಹೊಂದಿ ನಿರ್ಭಯವುಳ್ಳವರಾಗಿಯೂ
LUK 1:75 ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ದೇವರ ಮುಂದೆ ಪವಿತ್ರತೆಯಿಂದಲೂ ನೀತಿಯಿಂದಲೂ ಅವರನ್ನೇ ಸೇವಿಸುವವರಾಗುವಂತೆಯೂ ಈ ಪ್ರಕಾರ ಮಾಡಿದ್ದಾರೆ.
LUK 1:76 “ನನ್ನ ಮಗುವೇ, ನೀನಾದರೋ ಮಹೋನ್ನತರ ಪ್ರವಾದಿ ಎಂದು ಎನಿಸಿಕೊಳ್ಳುವೆ. ಯಾಕೆಂದರೆ, ನೀನು ಕರ್ತದೇವರ ಮಾರ್ಗಗಳನ್ನು ಸಿದ್ಧಮಾಡುವುದಕ್ಕೆ, ಅವರ ಮುಂದೆ ಹೋಗುವೆ.
LUK 1:77 ನೀನು ಜನರ ಪಾಪಕ್ಷಮಾಪಣೆಯ ಮೂಲಕ ರಕ್ಷಣೆ ಹೊಂದುವ ತಿಳುವಳಿಕೆಯನ್ನು ಕೊಡುವೆ,
LUK 1:78 ನಮ್ಮ ದೇವರ ಮಮತೆಯ ಕರುಣೆಯಿಂದಲೇ, ಸ್ವರ್ಗದಿಂದ ನಮಗೆ ಅರುಣೋದಯವು ಉಂಟಾಗಿ
LUK 1:79 ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ವಾಸಿಸುವವರಿಗೆ ಪ್ರಕಾಶಿಸಿ, ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವಂತೆ ಮಾಡುವೆ.”
LUK 1:80 ಆ ಶಿಶುವಾದ ಯೋಹಾನನು ಬೆಳೆದು, ಆತ್ಮದಲ್ಲಿ ಬಲಗೊಂಡು; ತನ್ನನ್ನು ಇಸ್ರಾಯೇಲರಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
LUK 2:1 ಆ ದಿನಗಳಲ್ಲಿ ಇಡೀ ರೋಮನ್ ರಾಜ್ಯದಲ್ಲಿ ಜನಗಣತಿಯಾಗಬೇಕೆಂದು ಕೈಸರ್ ಔಗುಸ್ತನಿಂದ ಶಾಸನವು ಹೊರಟಿತು.
LUK 2:2 ಕುರೇನ್ಯನು ಸಿರಿಯ ಪ್ರಾಂತಕ್ಕೆ ಅಧಿಪತಿಯಾಗಿದ್ದಾಗ, ಈ ಜನಗಣತಿಯು ಮೊದಲನೆಯ ಸಾರಿ ನಡೆಯಿತು.
LUK 2:3 ಆಗ ಎಲ್ಲರೂ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಗಳಿಗೆ ಹೋದರು.
LUK 2:4 ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು.
LUK 2:5 ಅವನು ತನಗೆ ನಿಶ್ಚಯಿಸಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಜನಗಣತಿಯ ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ಹೋದನು.
LUK 2:6 ಅವರು ಬೇತ್ಲೆಹೇಮಿನಲ್ಲಿ ಇದ್ದಾಗ, ಆಕೆಗೆ ಹೆರಿಗೆಯ ಕಾಲ ಸಮೀಪಿಸಿತು.
LUK 2:7 ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು.
LUK 2:8 ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು, ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು.
LUK 2:9 ಆಗ ಕರ್ತದೇವರ ದೂತನು ಅವರಿಗೆ ಪ್ರತ್ಯಕ್ಷನಾದನು. ಕರ್ತದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿತು, ಅವರು ಬಹಳವಾಗಿ ಹೆದರಿದರು.
LUK 2:10 ಆ ದೂತನು ಅವರಿಗೆ, “ಹೆದರಬೇಡಿರಿ. ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಶುಭಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ.
LUK 2:11 ಅದೇನೆಂದರೆ, ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕರು ಹುಟ್ಟಿದ್ದಾರೆ. ಅವರು ಯಾರೆಂದರೆ ಕರ್ತದೇವರು ಆಗಿರುವ ಕ್ರಿಸ್ತ.
LUK 2:12 ಅಲ್ಲಿ ಬಟ್ಟೆಯಿಂದ ಸುತ್ತಿರುವ ಶಿಶುವು ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ಇದೇ ನಿಮಗೆ ಗುರುತು,” ಎಂದು ಹೇಳಿದನು.
LUK 2:13 ತಕ್ಷಣವೇ ಆ ದೂತನ ಸಂಗಡ ಇದ್ದ ಪರಲೋಕ ಸೈನ್ಯದ ಸಮೂಹವು ದೇವರನ್ನು ಕೊಂಡಾಡುತ್ತಾ ಹೀಗೆ ಹೇಳಿದರು:
LUK 2:14 “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರ ಮೆಚ್ಚುಗೆ, ಮಾನವರಿಗೆ ಸಮಾಧಾನ.”
LUK 2:15 ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು, “ದೇವರು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
LUK 2:16 ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಕೊಟ್ಟಿಗೆಯಲ್ಲಿ ಮಲಗಿದ್ದ ಶಿಶುವನ್ನು ಕಂಡರು.
LUK 2:17 ಅನಂತರ, ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ದೇವದೂತನ ಮಾತನ್ನು ಪ್ರಕಟಮಾಡಿದರು.
LUK 2:18 ಕುರುಬರು ಹೇಳಿದ ವಿಷಯಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
LUK 2:19 ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.
LUK 2:20 ತಮಗೆ ತಿಳಿಸಿದ ಪ್ರಕಾರವೇ ಕುರುಬರು ತಾವು ಕೇಳಿ, ಕಂಡ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ, ಕೊಂಡಾಡುತ್ತಾ ಹಿಂದಿರುಗಿ ಹೋದರು.
LUK 2:21 ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು.
LUK 2:22 ಮೋಶೆಯ ನಿಯಮದ ಪ್ರಕಾರ ಮರಿಯಳಿಗೆ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ, ಯೋಸೇಫನು ಮತ್ತು ಮರಿಯಳು ಶಿಶುವನ್ನು ಕರ್ತದೇವರಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತಂದರು.
LUK 2:23 ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, “ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,”
LUK 2:24 ಎಂತಲೂ, “ಒಂದು ಜೊತೆ ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿ ಅರ್ಪಿಸಬೇಕು,” ಎಂತಲೂ ಕರ್ತದೇವರ ನಿಯಮದಲ್ಲಿ ಹೇಳಿರುವ ಪ್ರಕಾರ ಅವರು ಸಮರ್ಪಿಸಿದರು.
LUK 2:25 ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು.
LUK 2:26 ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು.
LUK 2:27 ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು.
LUK 2:28 ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:
LUK 2:29 “ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ, ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ.
LUK 2:30 ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು,
LUK 2:31 ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ:
LUK 2:32 ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.”
LUK 2:33 ಶಿಶುವಿನ ವಿಷಯವಾಗಿ ಸಿಮೆಯೋನನು ಹೇಳಿದ ಮಾತುಗಳಿಗೆ ಶಿಶುವಿನ ತಂದೆತಾಯಿಗಳು ಆಶ್ಚರ್ಯಪಟ್ಟರು.
LUK 2:34 ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, “ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು.
LUK 2:35 ಹೀಗೆ ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು. ನಿನ್ನ ಸ್ವಂತ ಪ್ರಾಣವನ್ನು ಸಹ ಖಡ್ಗವು ತಿವಿಯುವುದು” ಎಂದನು.
LUK 2:36 ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು.
LUK 2:37 ಅವಳು ಎಂಬತ್ತನಾಲ್ಕು ವರ್ಷ ವಿಧವೆಯಾಗಿದ್ದು, ದೇವಾಲಯವನ್ನು ಬಿಟ್ಟುಹೋಗದೆ ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ರಾತ್ರಿ ಹಗಲೂ ಆರಾಧನೆ ಮಾಡುತ್ತಿದ್ದಳು.
LUK 2:38 ಆ ಸಂದರ್ಭದಲ್ಲಿ ಅನ್ನಳು ಬಂದು, ದೇವರನ್ನು ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಶಿಶುವಿನ ವಿಷಯವಾಗಿ ಮಾತನಾಡಿದಳು.
LUK 2:39 ಯೋಸೇಫನೂ ಮರಿಯಳೂ ಕರ್ತದೇವರ ನಿಯಮದ ಪ್ರಕಾರ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ, ತಮ್ಮ ಊರಾಗಿದ್ದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
LUK 2:40 ಆ ಶಿಶುವು ಬೆಳೆದು ಬಲಗೊಂಡು; ಜ್ಞಾನದಲ್ಲಿ ವೃದ್ಧಿಯಾಯಿತು ಮತ್ತು ದೇವರ ಕೃಪೆಯು ಶಿಶುವಿನ ಮೇಲೆ ಇತ್ತು.
LUK 2:41 ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು.
LUK 2:42 ಯೇಸುವಿಗೆ ಹನ್ನೆರಡು ವರ್ಷವಾದಾಗ, ಪದ್ಧತಿಯ ಪ್ರಕಾರ ಅವರು ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋದರು.
LUK 2:43 ಅವರು ಆ ಹಬ್ಬವನ್ನು ಮುಗಿಸಿಕೊಂಡು ಹಿಂದಿರುಗಿ ಬರುವಾಗ ಬಾಲಕ ಯೇಸು ಯೆರೂಸಲೇಮಿನಲ್ಲಿಯೇ ಉಳಿದದ್ದು, ತಂದೆತಾಯಿಗಳಿಗೆ ತಿಳಿದಿರಲಿಲ್ಲ.
LUK 2:44 ಯೇಸು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ, ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿಚಿತರಲ್ಲಿಯೂ ಬಾಲಕ ಯೇಸುವನ್ನು ಹುಡುಕಿದರು.
LUK 2:45 ಆದರೆ ಅವರು ಯೇಸುವನ್ನು ಕಂಡುಕೊಳ್ಳದೆ ಹೋದುದರಿಂದ, ಅವರನ್ನು ಹುಡುಕುತ್ತಾ ಪುನಃ ಯೆರೂಸಲೇಮಿಗೆ ಹಿಂತಿರುಗಿ ಬಂದರು.
LUK 2:46 ಮೂರು ದಿವಸಗಳಾದ ಮೇಲೆ ಯೇಸುವನ್ನು ದೇವಾಲಯದಲ್ಲಿ ಕಂಡರು. ಬೋಧಕರ ನಡುವೆ ಕೂತುಕೊಂಡು, ಬಾಲಕ ಯೇಸು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಇರುವುದನ್ನು ಅವರು ಕಂಡರು.
LUK 2:47 ಯೇಸು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಅವರ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾದರು.
LUK 2:48 ತಂದೆತಾಯಿಗಳು ಯೇಸುವನ್ನು ಕಂಡಾಗ ಆಶ್ಚರ್ಯಪಟ್ಟರು. ಆತನ ತಾಯಿಯು, “ಮಗು, ನೀನು ನಮಗೆ ಹೀಗೇಕೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಗೊಂಡು ನಿನ್ನನ್ನು ಹುಡುಕಿದೆವು,” ಎಂದಳು.
LUK 2:49 ಯೇಸು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದರು.
LUK 2:50 ಆದರೆ ಯೇಸು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ.
LUK 2:51 ಬಳಿಕ ಯೇಸು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನರಾಗಿದ್ದರು. ಆದರೆ ಯೇಸುವಿನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
LUK 2:52 ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದು, ದೇವರ ಮೆಚ್ಚುಗೆ ಮತ್ತು ಮನುಷ್ಯರ ಮೆಚ್ಚುಗೆ ಹೆಚ್ಚಾಗಿ ಅವರಿಗೆ ದೊರೆಯಿತು.
LUK 3:1 ಕೈಸರ್ ತಿಬೇರಿಯನ ಆಳ್ವಿಕೆಯ ಕಾಲದ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಚತುರಾಧಿಪತಿಯೂ ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನಿತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾಧಿಪತಿಯೂ ಆಗಿದ್ದಾಗ,
LUK 3:2 ಅನ್ನನು ಮತ್ತು ಕಾಯಫನು ಮಹಾಯಾಜಕರು ಆಗಿದ್ದ ಸಮಯದಲ್ಲಿ, ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ ದೇವರ ವಾಕ್ಯವುಂಟಾಯಿತು.
LUK 3:3 ಅವನು ಯೊರ್ದನ್ ನದಿಯ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು, ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಪಡೆಯುವದರ ಕುರಿತು ಸಾರಿ ಹೇಳಿದನು.
LUK 3:4 ಇದರ ಬಗ್ಗೆ ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿ ಹೀಗೆಂದು ಬರೆದಿದೆ: “ಅರಣ್ಯದಲ್ಲಿ ಕೂಗುವವನ ಸ್ವರವು, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ.
LUK 3:5 ಪ್ರತಿಯೊಂದು ಹಳ್ಳಕೊಳ್ಳಗಳೂ ಭರ್ತಿಯಾಗಬೇಕು, ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು; ಡೊಂಕಾದ ರಸ್ತೆಗಳು ನೆಟ್ಟಗಾಗಬೇಕು, ಮತ್ತು ಕೊರಕಲಾದ ದಾರಿಗಳು ಸರಾಗವಾಗಬೇಕು;
LUK 3:6 ಮಾನವರೆಲ್ಲರೂ ದೇವರ ರಕ್ಷಣೆಯನ್ನು ಕಾಣುವರು.’ ”
LUK 3:7 ಆಗ ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ, ಯೋಹಾನನು, “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು?
LUK 3:8 ಹಾಗಾದರೆ ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ.
LUK 3:9 ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು,” ಎಂದು ಹೇಳಿದನು.
LUK 3:10 ಆಗ ಜನರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಿದರು.
LUK 3:11 ಅದಕ್ಕೆ ಯೋಹಾನನು ಉತ್ತರವಾಗಿ, “ಎರಡು ಅಂಗಿಗಳಿದ್ದರೆ ಇಲ್ಲದವನಿಗೆ ಒಂದನ್ನು ಕೊಡಲಿ, ಆಹಾರವುಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಹೇಳಿದನು.
LUK 3:12 ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದರು.
LUK 3:13 ಅದಕ್ಕೆ ಯೋಹಾನನು ಅವರಿಗೆ, “ನಿಮಗೆ ಆಜ್ಞಾಪಿಸಿದ್ದಕ್ಕಿಂತ ಹೆಚ್ಚೇನೂ ವಸೂಲಿ ಮಾಡಬೇಡಿರಿ,” ಎಂದನು.
LUK 3:14 ಅದರಂತೆಯೇ ಸೈನಿಕರು, “ನಾವೇನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೋಹಾನನು, “ಯಾರನ್ನೂ ಬೆದರಿಸಿ ಹಣ ತೆಗೆದುಕೊಳ್ಳಬೇಡಿರಿ. ಯಾರ ಮೇಲೆಯೂ ಸುಳ್ಳು ದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ,” ಎಂದು ಹೇಳಿದನು.
LUK 3:15 ಆಗ ಜನರು ಕ್ರಿಸ್ತನಿಗಾಗಿ ಎದುರುನೋಡುತ್ತಾ ಇದ್ದದ್ದರಿಂದ, ಯೋಹಾನನೇ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು.
LUK 3:16 ಯೋಹಾನನು ಉತ್ತರವಾಗಿ ಅವರೆಲ್ಲರಿಗೆ: “ನಾನಂತೂ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತ ಶಕ್ತರೊಬ್ಬರು ಬರುತ್ತಾರೆ, ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವ ಗುಲಾಮನಾಗಿರುವುದಕ್ಕೂ ನಾನು ಯೋಗ್ಯನಲ್ಲ. ಅವರು ಪವಿತ್ರಾತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ದೀಕ್ಷಾಸ್ನಾನ ಮಾಡಿಸುವರು.
LUK 3:17 ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣವನ್ನು ಶುದ್ಧಮಾಡಿ ಗೋಧಿಯನ್ನು ತಮ್ಮ ಕಣಜದಲ್ಲಿ ಕೂಡಿಸುವರು. ಆದರೆ ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.
LUK 3:18 ಯೋಹಾನನು ಇನ್ನೂ ಅನೇಕ ರೀತಿಗಳಿಂದ ಜನರನ್ನು ಎಚ್ಚರಿಸಿ ಅವರಿಗೆ ಸುವಾರ್ತೆಯನ್ನು ಸಾರುತ್ತಿದ್ದನು.
LUK 3:19 ಚತುರಾಧಿಪತಿಯಾದ ಹೆರೋದನು, ತನ್ನ ಸಹೋದರ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಇಟ್ಟುಕೊಂಡಿದ್ದನು ಮತ್ತು ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿ ಯೋಹಾನನು ಅವನನ್ನು ಬಹಿರಂಗವಾಗಿ ಗದರಿಸಿದ್ದರಿಂದ,
LUK 3:20 ಹೆರೋದನು ಯೋಹಾನನನ್ನು ಸೆರೆಯಲ್ಲಿ ಬಂಧಿಸಿ, ತನ್ನ ಎಲ್ಲಾ ದುಷ್ಕೃತ್ಯಗಳೊಂದಿಗೆ ಮತ್ತೊಂದನ್ನು ಕೂಡಿಸಿದ್ದನು.
LUK 3:21 ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು, ಆಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥಿಸುತ್ತಿರುವಲ್ಲಿ, ಸ್ವರ್ಗವು ತೆರೆಯಿತು.
LUK 3:22 ಆಗ ಪವಿತ್ರಾತ್ಮರು ದೇಹಾಕಾರವಾಗಿ ಪಾರಿವಾಳದಂತೆ ಯೇಸುವಿನ ಮೇಲೆ ಇಳಿದರು. ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು.
LUK 3:23 ಯೇಸು ಸೇವೆಯನ್ನು ಪ್ರಾರಂಭಿಸಿದಾಗ ಹೆಚ್ಚು ಕಡಿಮೆ ಮೂವತ್ತು ವರ್ಷದವರಾಗಿದ್ದರು. ಯೇಸು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು, ಹೇಲೀಯ ಮಗನು,
LUK 3:24 ಹೇಲೀಯನು ಮತ್ಥಾತನ ಮಗನು, ಮತ್ಥಾತನನು ಲೇವಿಯ ಮಗನು, ಲೇವಿಯನು ಮೆಲ್ಖಿಯ ಮಗನು, ಮೆಲ್ಖಿಯನು ಯನ್ನಾಯನ ಮಗನು, ಯನ್ನಾಯನು ಯೋಸೇಫನ ಮಗನು,
LUK 3:25 ಯೋಸೇಫನು ಮತ್ತಥೀಯನ ಮಗನು, ಮತ್ತಥೀಯನು ಆಮೋಸನ ಮಗನು, ಆಮೋಸನು ನಹೂಮನ ಮಗನು, ನಹೂಮನು ಎಸ್ಲಿಯ ಮಗನು, ಎಸ್ಲಿಯನು ನಗ್ಗಾಯನ ಮಗನು,
LUK 3:26 ನಗ್ಗಾಯನು ಮಹಾಥನ ಮಗನು, ಮಹಾಥನು ಮತ್ತಥೀಯನ ಮಗನು, ಮತ್ತಥೀಯನು ಶಿಮೀಯಿನ ಮಗನು, ಶಿಮೀಯಿನು ಯೊಸೇಖನ ಮಗನು, ಯೊಸೇಖನು ಯೋದನ ಮಗನು,
LUK 3:27 ಯೋದನು ಯೋಹಾನನ ಮಗನು, ಯೋಹಾನನು ರೇಸನ ಮಗನು, ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಶೆಯಲ್ತೀಯೇಲನ ಮಗನು, ಶೆಯಲ್ತಿಯೇಲನು ನೇರಿಯನ ಮಗನು,
LUK 3:28 ನೇರಿಯನು ಮೆಲ್ಖಿಯನ ಮಗನು, ಮೆಲ್ಖಿಯನು ಅದ್ದಿಯನ ಮಗನು, ಅದ್ದಿಯನು ಕೋಸಾಮನ ಮಗನು, ಕೋಸಾಮನು ಎಲ್ಮದಾಮನ ಮಗನು, ಎಲ್ಮದಾಮನು ಏರನ ಮಗನು,
LUK 3:29 ಏರನು ಯೆಹೋಷುವನ ಮಗನು, ಯೆಹೋಷುವನು ಎಲೀಯೆಜೆರನ ಮಗನು, ಎಲಿಯೇಜರನು ಯೋರೈಮನ ಮಗನು, ಯೋರೈಮನು ಮತ್ಥಾತನ ಮಗನು, ಮತ್ಥಾತನು ಲೇವಿಯನ ಮಗನು,
LUK 3:30 ಲೇವಿಯನು ಸಿಮಿಯೋನನ ಮಗನು, ಸಿಮಿಯೋನನು ಯೂದನ ಮಗನು, ಯೂದನು ಯೋಸೇಫನ ಮಗನು, ಯೋಸೇಫನು ಯೋನಾಮನ ಮಗನು, ಯೋನಾಮನು ಎಲಿಯಕೀಮನ ಮಗನು,
LUK 3:31 ಎಲಿಯಕೀಮನು ಮೆಲೆಯಾನ ಮಗನು, ಮೆಲೆಯಾನು ಮೆನ್ನನ ಮಗನು, ಮೆನ್ನನು ಮತ್ತಾಥನ ಮಗನು, ಮತ್ತಾಥನು ನಾತಾನನ ಮಗನು, ನಾತಾನನು ದಾವೀದನ ಮಗನು,
LUK 3:32 ದಾವೀದನು ಇಷಯನ ಮಗನು, ಇಷಯನು ಓಬೇದನ ಮಗನು, ಓಬೇದನು ಬೋವಜನ ಮಗನು, ಬೋವಜನು ಸಲ್ಮೋನನ ಮಗನು, ಸಲ್ಮೋನನು ನಹಶೋನನ ಮಗನು,
LUK 3:33 ನಹಶೋನನು ಅಮ್ಮೀನಾದಾಬನ ಮಗನು, ಅಮ್ಮೀನಾದಾಬನು ಆರ್ನೈಯನ ಮಗನು, ಆರ್ನೈಯನು ಹೆಚ್ರೋನನ ಮಗನು, ಹೆಚ್ರೋನನು ಪೆರೆಸನ ಮಗನು, ಪೆರೆಸನು ಯೂದನ ಮಗನು,
LUK 3:34 ಯೂದನು ಯಾಕೋಬನ ಮಗನು, ಯಾಕೋಬನು ಇಸಾಕನ ಮಗನು, ಇಸಾಕನು ಅಬ್ರಹಾಮನ ಮಗನು, ಅಬ್ರಹಾಮನು ತೇರನ ಮಗನು, ತೇರನು ನಹೋರನ ಮಗನು,
LUK 3:35 ನಹೋರನು ಸೆರೂಗನ ಮಗನು, ಸೆರೂಗನು ರೆಗೂವನ ಮಗನು, ರೆಗೂವನು ಪೆಲೆಗನ ಮಗನು, ಪೆಲೆಗನು ಹೆಬೆರನ ಮಗನು, ಹೆಬೆರನು ಶೆಲಹ ಮಗನು,
LUK 3:36 ಶೆಲಹ ಕಯಿನಾನನ ಮಗನು, ಕಯಿನಾನನು ಅರ್ಫಕ್ಷಾದನ ಮಗನು, ಅರ್ಫಕ್ಷಾದನು ಶೇಮನ ಮಗನು, ಶೇಮನು ನೋಹನ ಮಗನು, ನೋಹನು ಲಾಮೆಕನ ಮಗನು,
LUK 3:37 ಲಾಮೆಕನು ಮತೂಷಲನ ಮಗನು, ಮತೂಷಲನು ಹನೋಕನ ಮಗನು, ಹನೋಕನು ಯೆರೆದನ ಮಗನು, ಯೆರೆದನು ಮಹಲಲೇಲನ ಮಗನು, ಮಹಲಲೇಲನು ಕಯಿನಾನನ ಮಗನು,
LUK 3:38 ಕಯಿನಾನನು ಎನೋಷನ ಮಗನು, ಎನೋಷನು ಸೇಥನ ಮಗನು, ಸೇತನು ಆದಾಮನ ಮಗನು, ಆದಾಮನು ದೇವರ ಮಗನು.
LUK 4:1 ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ,
LUK 4:2 ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು.
LUK 4:3 ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು.
LUK 4:4 ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “ ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
LUK 4:5 ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು.
LUK 4:6 ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು.
LUK 4:7 ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು.
LUK 4:8 ಯೇಸು ಅವನಿಗೆ ಉತ್ತರವಾಗಿ, “ ‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
LUK 4:9 ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು,
LUK 4:10 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: “ ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತಮ್ಮ ದೂತರಿಗೆ ಆಜ್ಞಾಪಿಸುವರು
LUK 4:11 ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
LUK 4:12 ಅದಕ್ಕೆ ಯೇಸು ಅವನಿಗೆ, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,” ಎಂದು ಉತ್ತರಕೊಟ್ಟರು.
LUK 4:13 ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು.
LUK 4:14 ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು.
LUK 4:15 ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು.
LUK 4:16 ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು.
LUK 4:17 ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು:
LUK 4:18 “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ,
LUK 4:19 ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.”
LUK 4:20 ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು.
LUK 4:21 ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು.
LUK 4:22 ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.
LUK 4:23 ಯೇಸು ಅವರಿಗೆ, “ ‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು.
LUK 4:24 ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ.
LUK 4:25 ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು.
LUK 4:26 ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು.
LUK 4:27 ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,” ಎಂದರು.
LUK 4:28 ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು.
LUK 4:29 ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು.
LUK 4:30 ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು.
LUK 4:31 ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು.
LUK 4:32 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
LUK 4:33 ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ,
LUK 4:34 “ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು.
LUK 4:35 ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು.
LUK 4:36 ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
LUK 4:37 ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು.
LUK 4:38 ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು.
LUK 4:39 ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು.
LUK 4:40 ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು.
LUK 4:41 ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.
LUK 4:42 ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು.
LUK 4:43 ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು.
LUK 4:44 ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು.
LUK 5:1 ಒಂದು ದಿನ ಯೇಸು ಗೆನೆಜರೇತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು.
LUK 5:2 ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
LUK 5:3 ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.
LUK 5:4 ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ,” ಎಂದರು.
LUK 5:5 ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ,” ಎಂದು ಹೇಳಿದನು.
LUK 5:6 ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು.
LUK 5:7 ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.
LUK 5:8 ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ,” ಎಂದನು.
LUK 5:9 ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
LUK 5:10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,” ಎಂದರು.
LUK 5:11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು.
LUK 5:12 ಯೇಸು ಒಂದು ಪಟ್ಟಣದಲ್ಲಿದ್ದಾಗ, ಮೈಯೆಲ್ಲಾ ಕುಷ್ಠರೋಗವಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡಬಿದ್ದು ಅವರಿಗೆ, “ಸ್ವಾಮಿ, ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
LUK 5:13 ಯೇಸು ತಮ್ಮ ಕೈಚಾಚಿ ಅವನನ್ನು ಮುಟ್ಟಿ ಅವನಿಗೆ, “ನನಗೆ ಮನಸ್ಸಿದೆ, ನೀನು ಶುದ್ಧನಾಗು!” ಎಂದು ಹೇಳಿದರು. ಕೂಡಲೇ ಆ ಕುಷ್ಠವು ಅವನನ್ನು ಬಿಟ್ಟುಹೋಯಿತು.
LUK 5:14 ಆಗ ಯೇಸು ಅವನಿಗೆ, “ಇದನ್ನು ನೀನು ಯಾರಿಗೂ ಹೇಳಬೇಡ, ಆದರೆ ನೀನು ಗುಣಹೊಂದಿದ್ದಕ್ಕೆ ಜನರಿಗೆ ಸಾಕ್ಷಿಯಾಗಿರುವಂತೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆ ಅಪ್ಪಣೆ ಕೊಟ್ಟಂತೆ ಅರ್ಪಿಸು,” ಎಂದು ಆಜ್ಞಾಪಿಸಿದರು.
LUK 5:15 ಆದರೂ ಯೇಸುವಿನ ವಿಷಯವು, ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ಅವರಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ದೊಡ್ಡ ಸಮೂಹಗಳು ಕೂಡಿ ಬಂದವು.
LUK 5:16 ಆದರೆ ಯೇಸು ತಮ್ಮನ್ನು ಪ್ರತ್ಯೇಕಿಸಿಕೊಂಡು ಎಂದಿನಂತೆ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು.
LUK 5:17 ಒಂದು ದಿನ ಯೇಸು ಬೋಧಿಸುತ್ತಿದ್ದಾಗ, ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನಿಯಮ ಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು. ಯೇಸುವಿನಲ್ಲಿ ಸ್ವಸ್ಥಮಾಡುವುದಕ್ಕಾಗಿ ದೇವರ ಶಕ್ತಿಯು ಇತ್ತು.
LUK 5:18 ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಬಂದು, ಒಳಗೆ ಯೇಸುವಿನ ಎದುರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದರು.
LUK 5:19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು.
LUK 5:20 ಯೇಸು ಅವರ ವಿಶ್ವಾಸವನ್ನು ಕಂಡು ಅವನಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದು ಹೇಳಿದರು.
LUK 5:21 ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು.
LUK 5:22 ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೇನು?
LUK 5:23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
LUK 5:24 ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
LUK 5:25 ಕೂಡಲೇ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದನು.
LUK 5:26 ಅಲ್ಲಿದ್ದವರೆಲ್ಲರೂ ವಿಸ್ಮಯಗೊಂಡು ದೇವರನ್ನು ಸ್ತುತಿಸಿದರು. ಅವರು ಭಯಭಕ್ತಿಯಿಂದ ಕೂಡಿದವರಾಗಿ, “ನಾವು ಈ ದಿನ ಅಪೂರ್ವವಾದ ಕಾರ್ಯಗಳನ್ನು ಕಂಡೆವು,” ಎಂದರು.
LUK 5:27 ಇವುಗಳಾದ ಮೇಲೆ, ಯೇಸು ಹೊರಟುಹೋಗಿ ತೆರಿಗೆಯ ಕಛೇರಿಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರುಳ್ಳ ಒಬ್ಬ ಸುಂಕದವನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.
LUK 5:28 ಲೇವಿ ಎಲ್ಲವನ್ನು ಬಿಟ್ಟು ಎದ್ದು ಯೇಸುವನ್ನು ಹಿಂಬಾಲಿಸಿದನು.
LUK 5:29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಯೇಸುವಿಗೆ ದೊಡ್ಡ ಔತಣವನ್ನು ಮಾಡಿಸಲು, ಬಹಳ ಜನ ಸುಂಕದವರು ಮತ್ತು ಇತರರು ಯೇಸುವಿನೊಂದಿಗೆ ಊಟಮಾಡುತ್ತಿದ್ದರು.
LUK 5:30 ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು.
LUK 5:31 ಅದಕ್ಕೆ ಯೇಸು, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
LUK 5:32 ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನೇ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕರೆಯಲು ಬಂದೆನು,” ಎಂದರು.
LUK 5:33 ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು.
LUK 5:34 ಅದಕ್ಕೆ ಯೇಸು, “ಮದುಮಗನು ಮದುವೆ ಅತಿಥಿಗಳ ಸಂಗಡವಿರುವಾಗ ಅವರನ್ನು ಉಪವಾಸವಿರಿಸಲಾದೀತೆ?
LUK 5:35 ಆದರೆ ಮದುಮಗನನ್ನು ಅವರಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವುವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು,” ಎಂದು ಹೇಳಿದರು.
LUK 5:36 ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಹರಿದು ತೇಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸದು ಹರಿದು ಹೋಗುವುದು. ಹೊಸದರಿಂದ ಕತ್ತರಿಸಿದ ತುಂಡು ಹಳೆಯದರೊಂದಿಗೆ ಹೊಂದಿಕೆಯಾಗುವುದಿಲ್ಲ.
LUK 5:37 ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಒಡೆದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ.
LUK 5:38 ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು.
LUK 5:39 ಯಾರೂ ಹಳೆಯ ದ್ರಾಕ್ಷಾರಸವನ್ನು ಕುಡಿದ ಮೇಲೆ ಹೊಸದನ್ನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು, ‘ಹಳೆಯದೇ ಉತ್ತಮವಾದದ್ದು,’ ಎನ್ನುವರು,” ಎಂದರು.
LUK 6:1 ಒಂದು ಯೆಹೂದ್ಯರ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಆಗ ಅವರ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಕಿಕೊಂಡು ಅದರ ಕಾಳುಗಳನ್ನು ತಿನ್ನುತ್ತಿದ್ದರು.
LUK 6:2 ಫರಿಸಾಯರಲ್ಲಿ ಕೆಲವರು ಅವರಿಗೆ, “ಸಬ್ಬತ್ ದಿನದಲ್ಲಿ ಮೋಶೆಯ ನಿಯಮಕ್ಕೆ ವಿರುದ್ಧವಾಗಿರುವದನ್ನು ನೀವು ಏಕೆ ಮಾಡುತ್ತೀರಿ?” ಎಂದರು.
LUK 6:3 ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
LUK 6:4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ಮೋಶೆ ನಿಯಮಕ್ಕೆ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನಲ್ಲವೇ” ಎಂದರು.
LUK 6:5 ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸಬ್ಬತ್ತಿಗೂ ಕರ್ತ ದೇವರಾಗಿದ್ದೇನೆ,” ಎಂದರು.
LUK 6:6 ಇನ್ನೊಂದು ಸಬ್ಬತ್ ದಿನದಲ್ಲಿ ಯೇಸು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿದರು, ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು.
LUK 6:7 ಆಗ ಫರಿಸಾಯರೂ ನಿಯಮ ಬೋಧಕರೂ ಯೇಸುವಿಗೆ ವಿರೋಧವಾಗಿ ತಪ್ಪು ಕಂಡು ಹಿಡಿಯಬೇಕೆಂದು, ಅವರು ಆ ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಗಮನಿಸಿ ನೋಡುತ್ತಿದ್ದರು.
LUK 6:8 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈಬತ್ತಿದವನಿಗೆ, “ನೀನು ಎದ್ದು ಬಂದು ನಡುವೆ ನಿಂತುಕೋ,” ಎಂದಾಗ ಅವನು ಎದ್ದು ನಿಂತುಕೊಂಡನು.
LUK 6:9 ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು.
LUK 6:10 ಯೇಸು ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದರು. ಅವನು ಹಾಗೆಯೇ ಮಾಡಿದನು. ಆಗ ಅವನ ಕೈ ಸಂಪೂರ್ಣವಾಗಿ ಗುಣವಾಯಿತು.
LUK 6:11 ಆದರೆ ಫರಿಸಾಯರೂ ನಿಯಮ ಬೋಧಕರೂ ತುಂಬಾ ಕೋಪಗೊಂಡು ಯೇಸುವಿಗೆ ಏನಾದರೂ ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
LUK 6:12 ಆ ದಿನಗಳಲ್ಲಿ ಯೇಸು ಪ್ರಾರ್ಥಿಸುವುದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ, ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದರು.
LUK 6:13 ಬೆಳಗಾದ ಮೇಲೆ, ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟರು.
LUK 6:14 ಅವರು ಯಾರೆಂದರೆ: ಪೇತ್ರನೆಂದು ಹೆಸರು ಹೊಂದಿದ ಸೀಮೋನ, ಅವನ ಸಹೋದರ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,
LUK 6:15 ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಎಂದು ಅನ್ನಿಸಿಕೊಂಡ ಸೀಮೋನ,
LUK 6:16 ಯಾಕೋಬನ ಮಗ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ.
LUK 6:17 ಯೇಸು ಅವರೊಂದಿಗೆ ಕೆಳಗಿಳಿದು ಸಮತಟ್ಟಾದ ಭೂಮಿಯ ಮೇಲೆ ನಿಂತಿದ್ದಾಗ, ಅವರ ಶಿಷ್ಯರ ಗುಂಪು ಅಲ್ಲದೆ ಯೂದಾಯದಿಂದಲೂ ಯೆರೂಸಲೇಮಿನಿಂದಲೂ ಟೈರ್, ಸೀದೋನ್ ಪಟ್ಟಣಗಳಿರುವ ಸಮುದ್ರ ತೀರದಿಂದಲೂ
LUK 6:18 ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳಿಂದ ಸ್ವಸ್ಥರಾಗುವುದಕ್ಕೂ ಜನರು ದೊಡ್ಡ ಸಮೂಹವಾಗಿ ಬಂದರು. ದುರಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು,
LUK 6:19 ಆಗ ಸಮೂಹದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು, ಏಕೆಂದರೆ ಅವರಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥಮಾಡುತ್ತಿತ್ತು.
LUK 6:20 ಯೇಸು ತಮ್ಮ ಶಿಷ್ಯರನ್ನು ನೋಡಿ, ಹೇಳಿದ್ದೇನೆಂದರೆ: “ಬಡವರಾದ ನೀವು ಧನ್ಯರು, ದೇವರ ರಾಜ್ಯವು ನಿಮ್ಮದೇ.
LUK 6:21 ಈಗ ಹಸಿದವರಾದ ನೀವು ಧನ್ಯರು, ನೀವು ತೃಪ್ತಿಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು, ನೀವು ನಗುವಿರಿ.
LUK 6:22 ಮನುಷ್ಯಪುತ್ರನಾದ ನನ್ನ ನಿಮಿತ್ತ ಜನರು ನಿಮ್ಮನ್ನು ದ್ವೇಷಮಾಡಿ, ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದೆಂದು ತಿರಸ್ಕರಿಸಿದರೆ ನೀವು ಧನ್ಯರು.
LUK 6:23 “ಆ ದಿನದಲ್ಲಿ ನೀವು ಸಂತೋಷಪಡಿರಿ, ಉಲ್ಲಾಸದಿಂದ ಕುಣಿದಾಡಿರಿ. ಇಗೋ, ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಈ ಜನರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.
LUK 6:24 “ಆದರೆ ಐಶ್ವರ್ಯವಂತರೇ, ನಿಮಗೆ ಕಷ್ಟ, ಏಕೆಂದರೆ ನೀವು ನಿಮ್ಮ ನೆಮ್ಮದಿಯನ್ನು ಹೊಂದಿದ್ದೀರಿ.
LUK 6:25 ಈಗ ತಿಂದು ತೃಪ್ತಿಯಿಂದಿರುವವರೇ, ನಿಮಗೆ ಕಷ್ಟ, ಏಕೆಂದರೆ ನಿಮಗೆ ಹಸಿವೆಯಾಗುವುದು. ಈಗ ನಗುವವರೇ ನಿಮಗೆ ಕಷ್ಟ, ಏಕೆಂದರೆ ನೀವು ದುಃಖಿಸಿ ಗೋಳಾಡುವಿರಿ.
LUK 6:26 ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೆಯದಾಗಿ ಮಾತನಾಡಿದರೆ ನಿಮಗೆ ಕಷ್ಟ, ಇವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.
LUK 6:27 “ನನ್ನನ್ನು ಆಲಿಸುತ್ತಿರುವವರೆ ನನ್ನ ಮಾತನ್ನು ಕೇಳಿರಿ: ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಮಾಡುವವರಿಗೆ ಒಳ್ಳೆಯದನ್ನು ಮಾಡಿರಿ,
LUK 6:28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.
LUK 6:29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು.
LUK 6:30 ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ.
LUK 6:31 ಇತರರು ನಿಮಗೆ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ.
LUK 6:32 “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ನಿಮಗೇನು ದೊಡ್ಡಸ್ತಿಕೆ ಬಂದೀತು? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುತ್ತಾರೆ.
LUK 6:33 ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ.
LUK 6:34 ಯಾರಿಂದ ತಿರುಗಿ ಪಡೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೀರೋ ಅಂಥವರಿಗೆ ಸಾಲಕೊಟ್ಟರೆ, ಅದರಿಂದ ನಿಮಗೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟದ್ದನ್ನು ತಿರುಗಿ ಪಡೆಯುವಂತೆ, ಪಾಪಿಗಳಿಗೆ ಸಾಲ ಕೊಡುತ್ತಾರೆ.
LUK 6:35 ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ.
LUK 6:36 ನಿಮ್ಮ ತಂದೆಯು ಕರುಣೆಯುಳ್ಳವರಾಗಿರುವ ಪ್ರಕಾರ, ನೀವೂ ಕರುಣೆಯುಳ್ಳವರಾಗಿರಿ.
LUK 6:37 “ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಇತರರನ್ನು ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಕ್ಷಮಿಸಿರಿ, ಆಗ ನಿಮ್ಮನ್ನೂ ಕ್ಷಮಿಸುವರು.
LUK 6:38 ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು,” ಎಂದರು.
LUK 6:39 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದು: “ಕುರುಡನು ಕುರುಡನಿಗೆ ದಾರಿತೋರಿಸಬಲ್ಲನೋ? ಅವರಿಬ್ಬರೂ ಹಳ್ಳಕ್ಕೆ ಬೀಳುವರಲ್ಲವೇ?
LUK 6:40 ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ, ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನಷ್ಟೇ.
LUK 6:41 “ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ?
LUK 6:42 ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ತೆಗೆಯದೆ ನಿನ್ನ ಸಹೋದರನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು, ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.
LUK 6:43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಇಲ್ಲವೆ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
LUK 6:44 ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವುದು. ಏಕೆಂದರೆ ಮನುಷ್ಯರು ಮುಳ್ಳುಗಿಡಗಳಲ್ಲಿ ಅಂಜೂರಗಳನ್ನು ಕೀಳುವುದಿಲ್ಲ, ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿಗಳನ್ನು ಕೊಯ್ಯುವುದಿಲ್ಲ.
LUK 6:45 ಒಳ್ಳೆಯವನು ತನ್ನ ಹೃದಯದ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಆದರೆ ಕೆಟ್ಟವನು ತನ್ನ ಹೃದಯದ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
LUK 6:46 “ನನ್ನನ್ನು ನೀವು, ‘ಕರ್ತದೇವರೇ, ಕರ್ತದೇವರೇ,’ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವುದು ಏಕೆ?
LUK 6:47 ಯಾರು ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ ಅದರಂತೆ ನಡೆಯುತ್ತಾರೋ, ಅಂಥವರು ಯಾರಿಗೆ ಸಮಾನರಾಗಿದ್ದಾರೆಂದು ನಾನು ನಿಮಗೆ ತೋರಿಸುತ್ತೇನೆ.
LUK 6:48 ಅವರು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ, ಮನೆ ಕಟ್ಟಿದವರಿಗೆ ಸಮಾನರಾಗಿದ್ದಾರೆ. ಪ್ರಳಯವು ಎದ್ದು, ಪ್ರವಾಹವು ಆ ಮನೆಗೆ ರಭಸವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು, ಏಕೆಂದರೆ ಅದು ಬಲವಾಗಿ ಕಟ್ಟಲಾಗಿತ್ತು.
LUK 6:49 ಆದರೆ ನನ್ನ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದೆ ಇರುವವರು, ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೆ ಕಟ್ಟಿದವರಿಗೆ ಹೋಲಿಕೆಯಾಗಿದ್ದಾರೆ. ಪ್ರವಾಹವು ಆ ಮನೆಗೆ ಅಪ್ಪಳಿಸಿದಾಗ, ಕೂಡಲೇ ಅದು ಕುಸಿದು ಬಿತ್ತು. ಹೀಗೆ ಆ ಮನೆಯು ಸರ್ವನಾಶವಾಯಿತು.”
LUK 7:1 ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು.
LUK 7:2 ಆಗ ಒಬ್ಬ ಶತಾಧಿಪತಿಗೆ, ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು.
LUK 7:3 ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು.
LUK 7:4 ಅವರು ಯೇಸುವಿನ ಬಳಿಗೆ ಬಂದು ಅವರಿಗೆ, “ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು,
LUK 7:5 ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ,” ಎಂದು ಆಸಕ್ತಿಯಿಂದ ಬೇಡಿಕೊಂಡರು.
LUK 7:6 ಯೇಸು ಅವರೊಂದಿಗೆ ಹೋದರು. ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, “ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ.
LUK 7:7 ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.
LUK 7:8 ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು.
LUK 7:9 ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, “ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ,” ಎಂದರು.
LUK 7:10 ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.
LUK 7:11 ಇದಾದ ಮೇಲೆ, ಯೇಸು ನಾಯಿನ್ ಎಂಬ ಪಟ್ಟಣಕ್ಕೆ ಹೋದರು. ಆಗ ಅವರ ಶಿಷ್ಯರೂ ಜನರ ದೊಡ್ಡ ಗುಂಪೂ ಅವರ ಸಂಗಡ ಹೋದರು.
LUK 7:12 ಯೇಸು ಪಟ್ಟಣ ದ್ವಾರದ ಸಮೀಪಕ್ಕೆ ಬಂದಾಗ, ಸತ್ತು ಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೋಗುತ್ತಿದ್ದರು, ಅವನು ತನ್ನ ತಾಯಿಗೆ ಒಬ್ಬನೇ ಮಗನು, ಆಕೆಯು ವಿಧವೆಯಾಗಿದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
LUK 7:13 ಕರ್ತದೇವರು ಆಕೆಯನ್ನು ಕಂಡು, ಆಕೆಯ ಮೇಲೆ ಕನಿಕರಪಟ್ಟು, “ಅಳಬೇಡ” ಎಂದರು.
LUK 7:14 ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು.
LUK 7:15 ಆಗ ಸತ್ತವನು ಎದ್ದು ಕುಳಿತುಕೊಂಡು ಮಾತನಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು.
LUK 7:16 ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು.
LUK 7:17 ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು.
LUK 7:18 ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು,
LUK 7:19 ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದ ಕ್ರಿಸ್ತನು ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ಕರ್ತದೇವರನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
LUK 7:20 ಅವರು ಯೇಸುವಿನ ಬಳಿಗೆ ಬಂದು, “ ‘ಬರಬೇಕಾದವರು ನೀವೋ? ಇಲ್ಲವೆ ನಾವು ಬೇರೊಬ್ಬರಿಗಾಗಿ ಎದುರು ನೋಡಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕ ಯೋಹಾನನು ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳಿದರು.
LUK 7:21 ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು.
LUK 7:22 ತರುವಾಯ ಯೇಸು ಅವರಿಗೆ, “ನೀವು ಕಂಡು ಕೇಳಿದವುಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.
LUK 7:23 ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
LUK 7:24 ಯೋಹಾನನ ಶಿಷ್ಯರು ಹೊರಟುಹೋದ ಮೇಲೆ, ಯೇಸು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?
LUK 7:25 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ.
LUK 7:26 ಹಾಗಾದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
LUK 7:27 ಯಾರ ವಿಷಯವಾಗಿ ಪವಿತ್ರ ವೇದದಲ್ಲಿ ಬರೆದಿತ್ತೋ ಅವನೇ ಇವನು: “ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ,’
LUK 7:28 ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ,” ಎಂದರು.
LUK 7:29 ಯೋಹಾನನಿಂದ ಉಪದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಸಹ, ಯೇಸುವಿನ ಮಾತುಗಳನ್ನು ಕೇಳಿದಾಗ, ದೇವರ ಮಾರ್ಗವು ಸರಿಯಾಗಿದೆಯೆಂದು ಒಪ್ಪಿಕೊಂಡರು, ಏಕೆಂದರೆ ಅವರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು.
LUK 7:30 ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
LUK 7:31 ಅನಂತರ ಯೇಸು ಜನರಿಗೆ, “ಈ ಕಾಲದ ಜನರನ್ನು, ನಾನು ಯಾವುದಕ್ಕೆ ಹೋಲಿಸಲಿ? ಅವರು ಯಾವುದಕ್ಕೆ ಹೋಲಿಕೆಯಾಗಿದ್ದಾರೆ?
LUK 7:32 ಅವರು ಸಂತೆಯಲ್ಲಿ ಕುಳಿತುಕೊಂಡು ಒಬ್ಬರನ್ನೊಬ್ಬರು ಕರೆಯುತ್ತಾ: “ ‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ, ನಾವು ನಿಮಗಾಗಿ ಶೋಕಗೀತೆ ಹಾಡಿದೆವು, ನೀವು ಅಳಲಿಲ್ಲ,’ ಎಂದು ಹೇಳುವ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ.
LUK 7:33 “ಸ್ನಾನಿಕ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು, ಅದಕ್ಕೆ ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎನ್ನುತ್ತೀರಿ.
LUK 7:34 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ.
LUK 7:35 ಆದರೆ ಜ್ಞಾನವನ್ನು ಅನ್ವಯಿಸಿಕೊಳ್ಳುವಾಗಲೇ ಜ್ಞಾನದ ಗುಣಲಕ್ಷಣಗಳು ಸ್ಪಷ್ಟವಾಗಿರುವುದು,” ಎಂದರು.
LUK 7:36 ಆಗ ಫರಿಸಾಯರಲ್ಲಿ ಒಬ್ಬನು ಯೇಸು ತನ್ನೊಂದಿಗೆ ಊಟ ಮಾಡಬೇಕೆಂದು ಅಪೇಕ್ಷಿಸಿದನು, ಆಗ ಯೇಸು ಆ ಫರಿಸಾಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು.
LUK 7:37 ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು,
LUK 7:38 ಅವರ ಪಾದಗಳ ಬಳಿಯಲ್ಲಿ ನಿಂತು, ಅಳುತ್ತಾ ಅವರ ಪಾದಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ, ತನ್ನ ತಲೆಕೂದಲಿನಿಂದ ಒರೆಸಿ, ಅವರ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
LUK 7:39 ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.
LUK 7:40 ಆಗ ಯೇಸು ಅವನಿಗೆ, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ವಿಷಯವಿದೆ,” ಎಂದರು. ಸೀಮೋನನು ಯೇಸುವಿಗೆ, “ಗುರುವೇ, ಹೇಳಿ” ಎಂದನು.
LUK 7:41 ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ, ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು.
LUK 7:42 ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು.
LUK 7:43 ಅದಕ್ಕೆ ಸೀಮೋನನು ಉತ್ತರವಾಗಿ, “ಯಾರಿಗೆ ಅವನು ಹೆಚ್ಚಾಗಿ ರದ್ದು ಮಾಡಿದನೋ ಅವನೇ ಎಂದು ತೋರುತ್ತದೆ,” ಎಂದನು. ಆಗ ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪು ಮಾಡಿದೆ,” ಎಂದರು.
LUK 7:44 ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ.
LUK 7:45 ನೀನು ನನಗೆ ಮುದ್ದು ಕೊಡಲಿಲ್ಲ. ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವುದನ್ನು ಬಿಡಲಿಲ್ಲ.
LUK 7:46 ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ, ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದ್ದಾಳೆ.
LUK 7:47 ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
LUK 7:48 ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
LUK 7:49 ಯೇಸುವಿನ ಸಂಗಡ ಊಟಕ್ಕೆ ಕುಳಿತವರು, “ಪಾಪಗಳನ್ನು ಸಹ ಕ್ಷಮಿಸುವುದಕ್ಕೆ ಈತನು ಯಾರು?” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳಲಾರಂಭಿಸಿದರು.
LUK 7:50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು.
LUK 8:1 ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು.
LUK 8:2 ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು,
LUK 8:3 ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.
LUK 8:4 ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು.
LUK 8:5 “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು.
LUK 8:6 ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು.
LUK 8:7 ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
LUK 8:8 ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.” ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು.
LUK 8:9 ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು.
LUK 8:10 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ, “ ‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ; ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’
LUK 8:11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.
LUK 8:12 ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ.
LUK 8:13 ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು.
LUK 8:14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು.
LUK 8:15 ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.
LUK 8:16 “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ, ಇಲ್ಲವೆ ಮಂಚದ ಕೆಳಗೆ ಇಡುವುದಿಲ್ಲ. ಆದರೆ ಮನೆಯೊಳಗೆ ಪ್ರವೇಶಿಸುವವರು ಬೆಳಕನ್ನು ಕಾಣುವಂತೆ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
LUK 8:17 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ಬೆಳಕಿಗೆ ಬಾರದೆ ಇರುವ ರಹಸ್ಯವು ಯಾವುದೂ ಇಲ್ಲ.
LUK 8:18 ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು.
LUK 8:19 ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು.
LUK 8:20 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮನ್ನು ಕಾಣಬೇಕೆಂದು, ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
LUK 8:21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು.
LUK 8:22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು.
LUK 8:23 ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.
LUK 8:24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು. ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು.
LUK 8:25 ಆಗ ಯೇಸು ತಮ್ಮ ಶಿಷ್ಯರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದರು. ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, “ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
LUK 8:26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು.
LUK 8:27 ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು.
LUK 8:28 ಅವನು ಯೇಸುವನ್ನು ಕಂಡಾಗ, ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಮಹೋನ್ನತ ದೇವಪುತ್ರರೇ, ನನ್ನ ಗೊಡವೆ ನಿಮಗೆ ಏಕೆ? ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು.
LUK 8:29 ಏಕೆಂದರೆ, ದೆವ್ವಕ್ಕೆ ಅವನಿಂದ ಹೊರಗೆ ಬರಬೇಕೆಂದು ಯೇಸು ಅಪ್ಪಣೆ ಕೊಟ್ಟಿದ್ದರು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿದ್ದುದರಿಂದ, ಅವನು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿತನಾದರೂ ಅವನು ಆ ಬಂಧನಗಳನ್ನು ಮುರಿದು ಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಏಕಾಂತ ಸ್ಥಳಕ್ಕೆ ಓಡಿಸಿಕೊಂಡು ಹೋಗುತ್ತಿತ್ತು.
LUK 8:30 ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು. ಅದಕ್ಕವನು, “ಸೇನೆ,” ಎಂದನು. ಏಕೆಂದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು.
LUK 8:31 ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು.
LUK 8:32 ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು.
LUK 8:33 ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು.
LUK 8:34 ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು,
LUK 8:35 ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು.
LUK 8:36 ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು.
LUK 8:37 ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು.
LUK 8:38 ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ,
LUK 8:39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.
LUK 8:40 ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು.
LUK 8:41 ಆಗ ಸಭಾಮಂದಿರದ ಅಧಿಕಾರಿಯಾಗಿದ್ದ, ಯಾಯೀರನೆಂಬವನು ಬಂದು ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು, ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು
LUK 8:42 ಏಕೆಂದರೆ ಸುಮಾರು ಹನ್ನೆರಡು ವರ್ಷದ, ಅವನ ಒಬ್ಬಳೇ ಮಗಳು, ಸಾಯುವ ಹಾಗಿದ್ದಳು. ಯೇಸು ದಾರಿಯಲ್ಲಿ ಹೋಗುತ್ತಿದ್ದಾಗ, ಜನರು ಅವರನ್ನು ನೂಕಾಡುತ್ತಿದ್ದರು.
LUK 8:43 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. ಅವಳು ತನ್ನ ಆಸ್ತಿಯನ್ನೆಲ್ಲಾ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
LUK 8:44 ಅವಳು ಯೇಸುವಿನ ಹಿಂದೆ ಬಂದು ಅವರ ಉಡುಪಿನ ಅಂಚನ್ನು ಮುಟ್ಟಿದಳು, ಕೂಡಲೇ ಆಕೆಯ ರಕ್ತಸ್ರಾವವು ನಿಂತುಹೋಯಿತು.
LUK 8:45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು. ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು.
LUK 8:46 ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು.
LUK 8:47 ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು.
LUK 8:48 ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.
LUK 8:49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.
LUK 8:50 ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು.
LUK 8:51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ.
LUK 8:52 ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು.
LUK 8:53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು.
LUK 8:54 ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು.
LUK 8:55 ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು.
LUK 8:56 ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು.
LUK 9:1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ಎಲ್ಲಾ ದೆವ್ವಗಳನ್ನು ಓಡಿಸುವುದಕ್ಕೂ ರೋಗಗಳನ್ನು ಸ್ವಸ್ಥಮಾಡುವುದಕ್ಕೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು,
LUK 9:2 ಶಿಷ್ಯರು ದೇವರ ರಾಜ್ಯವನ್ನು ಸಾರುವುದಕ್ಕೂ ರೋಗಿಗಳನ್ನು ಸ್ವಸ್ಥಮಾಡುವುದಕ್ಕೂ ಯೇಸು ಅವರನ್ನು ಕಳುಹಿಸಿಕೊಟ್ಟರು.
LUK 9:3 ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.
LUK 9:4 ನೀವು ಯಾವುದಾದರೂ ಮನೆಯನ್ನು ಪ್ರವೇಶಿಸಿದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.
LUK 9:5 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ, ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ,” ಎಂದರು.
LUK 9:6 ಶಿಷ್ಯರು ಪ್ರತಿಯೊಂದು ಹಳ್ಳಿಗೆ ಹೋಗುತ್ತಾ, ಸುವಾರ್ತೆಯನ್ನು ಸಾರುತ್ತಾ, ಎಲ್ಲಾ ಕಡೆಗಳಲ್ಲಿ ರೋಗಿಗಳನ್ನು ಸ್ವಸ್ಥಮಾಡುತ್ತಾ ಹೋದರು.
LUK 9:7 ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಏಕೆಂದರೆ ಯೋಹಾನನು ಸತ್ತವರೊಳಗಿಂದ ಎದ್ದಿದ್ದಾನೆಂದು ಕೆಲವರು ಹೇಳುತ್ತಿದ್ದರು.
LUK 9:8 ಕೆಲವರು ಎಲೀಯನು ಪ್ರತ್ಯಕ್ಷನಾಗಿದ್ದಾನೆಂದೂ ಇನ್ನೂ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದಿದ್ದಾನೆಂದೂ ಹೇಳುತ್ತಿದ್ದರು.
LUK 9:9 ಆದರೆ ಹೆರೋದನು, “ನಾನು ಯೋಹಾನನನ್ನು ಶಿರಚ್ಛೇದನ ಮಾಡಿದೆ, ನಾನು ಯಾರನ್ನು ಕುರಿತು, ಈ ವಿಷಯಗಳನ್ನು ಕೇಳುತ್ತಿರುವೆ, ಈತನು ಯಾರು?” ಎಂದು ಹೇಳಿ ಅವನು ಯೇಸುವನ್ನು ಕಾಣಲು ಪ್ರಯತ್ನಿಸಿದನು.
LUK 9:10 ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.
LUK 9:11 ಆದರೆ ಜನರು ಅದನ್ನು ತಿಳಿದು ಯೇಸುವನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವೀಕರಿಸಿ, ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥಮಾಡಿದರು.
LUK 9:12 ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ,” ಎಂದರು.
LUK 9:13 ಆದರೆ ಯೇಸು ಅವರಿಗೆ, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಅದಕ್ಕೆ ಅವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನುಗಳಿಗಿಂತ ಹೆಚ್ಚೇನು ಇಲ್ಲ. ನಾವು ಹೋಗಿ ಈ ಜನರಿಗೆ ಬೇಕಾಗುವಷ್ಟು ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದರು.
LUK 9:14 ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು. ಆಗ ಯೇಸು ತಮ್ಮ ಶಿಷ್ಯರಿಗೆ, “ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ,” ಎಂದರು.
LUK 9:15 ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು.
LUK 9:16 ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು.
LUK 9:17 ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು.
LUK 9:18 ಯೇಸು ಏಕಾಂತವಾಗಿ ಪ್ರಾರ್ಥಿಸುತ್ತಿದ್ದಾಗ ಅವರ ಶಿಷ್ಯರು ಅವರೊಂದಿಗೆ ಇದ್ದರು, ಆಗ ಯೇಸು ಅವರಿಗೆ, “ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಕೇಳಿದರು.
LUK 9:19 ಅವರು ಉತ್ತರವಾಗಿ, “ಸ್ನಾನಿಕನಾದ ಯೋಹಾನನು ಎನ್ನುತ್ತಾರೆ. ಆದರೆ ಕೆಲವರು ಎಲೀಯನು. ಬೇರೆ ಕೆಲವರು ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಪುನಃ ಜೀವಂತನಾಗಿದ್ದಾನೆ ಎನ್ನುತ್ತಾರೆ,” ಎಂದು ಹೇಳಿದರು.
LUK 9:20 ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು. ಆಗ ಪೇತ್ರನು, “ನೀವು ದೇವರು ಕಳುಹಿಸಿಕೊಟ್ಟ ಕ್ರಿಸ್ತನು,” ಎಂದು ಹೇಳಿದನು.
LUK 9:21 ಯೇಸು ಈ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದರು.
LUK 9:22 ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು.
LUK 9:23 ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
LUK 9:24 ಯಾರಾದರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು, ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.
LUK 9:25 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ತನ್ನನ್ನು ತಾನೇ ಹಾಳು ಮಾಡಿಕೊಂಡರೆ, ಇಲ್ಲವೆ ನಷ್ಟಪಡಿಸಿಕೊಂಡರೆ, ಆ ವ್ಯಕ್ತಿಗೆ ಪ್ರಯೋಜನವೇನು?
LUK 9:26 ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು.
LUK 9:27 “ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವನ್ನು ಕಾಣುವತನಕ ಮರಣವನ್ನು ಹೊಂದುವುದೇ ಇಲ್ಲ,” ಎಂದರು.
LUK 9:28 ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು.
LUK 9:29 ಯೇಸು ಪ್ರಾರ್ಥನೆ ಮಾಡುತ್ತಿದ್ದಾಗ, ಅವರ ಮುಖಭಾವವು ಬದಲಾಯಿತು ಮತ್ತು ಅವರ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು.
LUK 9:30 ಮೋಶೆ ಮತ್ತು ಎಲೀಯನು ಎಂಬ ಇಬ್ಬರು ಪುರುಷರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
LUK 9:31 ಇವರು ಮಹಿಮೆಯಲ್ಲಿ ಕಾಣಿಸಿಕೊಂಡು, ಯೇಸು ಯೆರೂಸಲೇಮಿನಲ್ಲಿ ಪೂರೈಸುವುದಕ್ಕಿದ್ದ ಅವರ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
LUK 9:32 ಆದರೆ ಪೇತ್ರನು ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು, ಅವರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರ ಕೂಡ ನಿಂತಿದ್ದ ಇಬ್ಬರು ಪುರುಷರನ್ನೂ ಕಂಡರು.
LUK 9:33 ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.
LUK 9:34 ಹೀಗೆ ಪೇತ್ರನು ಮಾತನಾಡುತ್ತಿದ್ದಾಗಲೇ, ಮೇಘವು ಬಂದು ಅವರನ್ನು ಕವಿದುಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇಶಿಸುತ್ತಿದ್ದಾಗ ಶಿಷ್ಯರು ಭಯಪಟ್ಟರು.
LUK 9:35 ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು.
LUK 9:36 ಧ್ವನಿಯಾದ ನಂತರ, ಅವರು ಯೇಸುವನ್ನು ಮಾತ್ರ ಕಂಡರು. ಅವರು ಕಂಡವುಗಳನ್ನು ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
LUK 9:37 ಮರುದಿನ, ಅವರು ಬೆಟ್ಟದಿಂದ ಕೆಳಗಿಳಿದು ಬಂದಾಗ, ಬಹಳ ಜನರು ಯೇಸುವನ್ನು ಸಂಧಿಸಿದರು.
LUK 9:38 ಆಗ ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ, “ಬೋಧಕರೇ, ನನ್ನ ಮಗನ ಮೇಲೆ ದೃಷ್ಟಿಯಿಡಿರಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಏಕೆಂದರೆ ಅವನು ನನಗೆ ಒಬ್ಬನೇ ಮಗನು.
LUK 9:39 ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಬಾಯಲ್ಲಿ ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವುದಲ್ಲದೆ ಜಜ್ಜುತ್ತದೆ. ಅದು ಅವನನ್ನು ಬಿಟ್ಟು ಹೋಗುವುದು ಕಷ್ಟ.
LUK 9:40 ಅದನ್ನು ಓಡಿಸುವಂತೆ, ನಾನು ನಿಮ್ಮ ಶಿಷ್ಯರನ್ನು ಬೇಡಿಕೊಂಡೆನು, ಆದರೆ ಅದು ಅವರಿಂದ ಆಗಲಿಲ್ಲ,” ಎಂದನು.
LUK 9:41 ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಿಮ್ಮನ್ನು ಸಹಿಸಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದರು.
LUK 9:42 ಅವನು ಇನ್ನೂ ಬರುತ್ತಿದ್ದಾಗಲೇ, ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ದೆವ್ವವನ್ನು ಗದರಿಸಿ ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಪುನಃ ಒಪ್ಪಿಸಿದರು.
LUK 9:43 ಆಗ ಜನರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು. ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ, ಯೇಸು ತಮ್ಮ ಶಿಷ್ಯರಿಗೆ,
LUK 9:44 “ಈ ಮಾತುಗಳನ್ನು ಆಳವಾಗಿ ಗ್ರಹಿಸಿಕೊಳ್ಳಿರಿ: ಏಕೆಂದರೆ ಮನುಷ್ಯಪುತ್ರನಾದ ನಾನು ಮನುಷ್ಯರ ಕೈವಶವಾಗುವೆನು,” ಎಂದು ಹೇಳಿದರು.
LUK 9:45 ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು.
LUK 9:46 ತಮ್ಮಲ್ಲಿ ಯಾವನು ಎಲ್ಲರಿಗಿಂತ ದೊಡ್ಡವನು ಎಂಬ ತರ್ಕವು ಶಿಷ್ಯರೊಳಗೆ ಎದ್ದಿತು.
LUK 9:47 ಯೇಸು, ಅವರ ಮನದ ಆಲೋಚನೆಯನ್ನು ತಿಳಿದವರಾಗಿ, ಒಂದು ಮಗುವನ್ನು ತಮ್ಮ ಬಳಿಯಲ್ಲಿ ನಿಲ್ಲಿಸಿ,
LUK 9:48 “ಯಾರು ಈ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳುತ್ತಾರೋ ಅವರು ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ; ಯಾರು ನನ್ನನ್ನು ಸ್ವೀಕರಿಸಿಕೊಳ್ಳುತ್ತಾರೋ ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುತ್ತಾರೆ. ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡವನಾಗಿರುವನು,” ಎಂದರು.
LUK 9:49 ಯೋಹಾನನು, “ಬೋಧಕರೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವುದನ್ನು ನಾವು ಕಂಡು ಅವನಿಗೆ ಅಡ್ಡಿಮಾಡಿದೆವು, ಏಕೆಂದರೆ ಅವನು ನಮ್ಮೊಂದಿಗೆ ಸೇರಿದವನಲ್ಲ,” ಎಂದನು.
LUK 9:50 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು.
LUK 9:51 ಯೇಸು ತಾವು ಸ್ವರ್ಗಕ್ಕೆ ಏರಿಹೋಗುವ ಕಾಲ ಬಂದಾಗ, ಯೆರೂಸಲೇಮಿಗೆ ಹೋಗುವುದಕ್ಕಾಗಿ ತಮ್ಮ ಮನಸ್ಸನ್ನು ದೃಢಮಾಡಿಕೊಂಡು
LUK 9:52 ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.
LUK 9:53 ಆದರೆ ಸಮಾರ್ಯದವರು ಯೇಸುವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಯೇಸು ಯೆರೂಸಲೇಮಿಗೆ ಹೋಗುವವರಾಗಿದ್ದರು.
LUK 9:54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನರು ಇದನ್ನು ಕಂಡು, “ಕರ್ತದೇವರೇ, ಎಲೀಯನು ಮಾಡಿದ ಪ್ರಕಾರ ಇವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿಮಗೆ ಒಪ್ಪಿಗೆ ಇದೆಯೋ?” ಎಂದು ಕೇಳಿದರು.
LUK 9:55 ಆದರೆ ಯೇಸು ಅವರ ಕಡೆ ತಿರುಗಿ ಅವರನ್ನು ಗದರಿಸಿ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.
LUK 9:56 ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.
LUK 9:57 ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು” ಎಂದನು.
LUK 9:58 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.
LUK 9:59 ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು,” ಎಂದರು. ಆದರೆ ಅವನು, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.
LUK 9:60 ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು.
LUK 9:61 ಇದಲ್ಲದೆ ಮತ್ತೊಬ್ಬನು ಸಹ, “ಕರ್ತದೇವರೇ, ನಾನು ನಿಮ್ಮನ್ನು ಹಿಂಬಾಲಿಸುವೆನು, ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರನ್ನು ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡಿ,” ಎಂದನು.
LUK 9:62 ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು.
LUK 10:1 ಇವುಗಳಾದ ಮೇಲೆ ಕರ್ತದೇವರು ಬೇರೆ ಎಪ್ಪತ್ತೆರಡು ಮಂದಿಯನ್ನು ಸಹ ನೇಮಿಸಿ ತಾವೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತಮಗೆ ಮುಂದಾಗಿ ಕಳುಹಿಸಿದರು.
LUK 10:2 ಯೇಸು ಅವರಿಗೆ, “ಬೆಳೆಯೋ ಬಹಳವಾಗಿದೆ, ಕೆಲಸದವರೋ ಕೆಲವರು. ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ.
LUK 10:3 ಹೋಗಿರಿ! ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ.
LUK 10:4 ಹಣದ ಚೀಲವನ್ನಾಗಲಿ, ಪ್ರಯಾಣದ ಚೀಲವನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರನ್ನೂ ಕುಶಲ ವಿಚಾರ ಮಾಡಿಕೊಂಡಿರಬೇಡಿರಿ.
LUK 10:5 “ನೀವು ಯಾವ ಮನೆಯನ್ನಾದರೂ ಪ್ರವೇಶಿಸುವಾಗ ಮೊದಲು, ‘ಈ ಮನೆಗೆ ಸಮಾಧಾನವಾಗಲಿ,’ ಎಂದು ಹೇಳಿರಿ.
LUK 10:6 ಅಲ್ಲಿ ಸಮಾಧಾನದ ಮನುಷ್ಯನು ಇದ್ದರೆ, ನಿಮ್ಮ ಸಮಾಧಾನವು ಅವನ ಮೇಲೆ ಇರುವುದು; ಇಲ್ಲದಿದ್ದರೆ, ಅದು ನಿಮಗೇ ಹಿಂದಿರುಗುವುದು.
LUK 10:7 ಮನೆಯಿಂದ ಮನೆಗೆ ಹೋಗದೆ, ಅದೇ ಮನೆಯಲ್ಲಿದ್ದು, ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ. ಕೆಲಸದವನು ತನ್ನ ಕೂಲಿಗೆ ಯೋಗ್ಯನು.
LUK 10:8 “ಯಾವುದಾದರೂ ಒಂದು ಪಟ್ಟಣದೊಳಗೆ ನೀವು ಪ್ರವೇಶಿಸುವಾಗ, ಅವರು ನಿಮ್ಮನ್ನು ಸೇರಿಸಿಕೊಂಡರೆ ಅವರು ನೀಡಿದ್ದನ್ನು ತಿನ್ನಿರಿ.
LUK 10:9 ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿ, ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ,’ ಎಂದು ಹೇಳಿರಿ.
LUK 10:10 ಆದರೆ ನೀವು ಪ್ರವೇಶಿಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ, ನೀವು ಅದರ ಬೀದಿಗಳಲ್ಲಿ ಹೋಗಿ,
LUK 10:11 ‘ನಮ್ಮ ಪಾದಗಳಿಗೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ. ಆದರೂ ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ,’ ಎಂದು ಹೇಳಿರಿ.
LUK 10:12 ಆದರೆ ನ್ಯಾಯತೀರ್ಪಿನ ದಿನ, ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿ ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ.
LUK 10:13 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಅದ್ಭುತಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.
LUK 10:14 ಆದರೆ ನ್ಯಾಯತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು.
LUK 10:15 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ.
LUK 10:16 “ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು.
LUK 10:17 ಆ ಎಪ್ಪತ್ತೆರಡು ಮಂದಿ ಸಂತೋಷದಿಂದ ಹಿಂತಿರುಗಿ, “ಕರ್ತದೇವರೇ, ನಿಮ್ಮ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು,” ಎಂದರು.
LUK 10:18 ಯೇಸು ಅವರಿಗೆ, “ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವುದನ್ನು ನಾನು ಕಂಡೆನು.
LUK 10:19 ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವುದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು.
LUK 10:20 ಹೀಗಿದ್ದರೂ, ದೆವ್ವಗಳು ನಿಮಗೆ ಅಧೀನವಾಗಿವೆ ಎಂದು ಸಂತೋಷ ಪಡಬೇಡಿರಿ, ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಲಿಖಿತವಾಗಿವೆ ಎಂದು ಸಂತೋಷಿಸಿರಿ,” ಎಂದರು.
LUK 10:21 ಆ ಸಮಯದಲ್ಲಿ ಯೇಸು, ಪವಿತ್ರಾತ್ಮರ ಮುಖಾಂತರ ಆನಂದಗೊಂಡು, “ತಂದೆಯೇ, ಪರಲೋಕ, ಭೂಲೋಕಗಳ ಒಡೆಯರೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.
LUK 10:22 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾರೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು,” ಎಂದರು.
LUK 10:23 ಯೇಸು ತಮ್ಮ ಶಿಷ್ಯರ ಕಡೆಗೆ ತಿರುಗಿಕೊಂಡು, “ನೀವು ಕಾಣುತ್ತಿರುವುದನ್ನೆಲ್ಲಾ ಕಾಣುವ ಕಣ್ಣುಗಳು ಭಾಗ್ಯವುಳ್ಳವು.
LUK 10:24 ಏಕೆಂದರೆ ಅನೇಕ ಪ್ರವಾದಿಗಳು ಮತ್ತು ಅರಸರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
LUK 10:25 ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
LUK 10:26 ಯೇಸು ಅವನಿಗೆ, “ಮೋಶೆಯ ನಿಯಮದಲ್ಲಿ ಏನು ಬರೆದಿದೆ? ನೀನು ಅದನ್ನು ಹೇಗೆ ಓದುತ್ತೀ?” ಎಂದು ಕೇಳಿದರು.
LUK 10:27 ಅದಕ್ಕೆ ಅವನು ಉತ್ತರವಾಗಿ, “ ‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’ ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’” ಎಂದನು.
LUK 10:28 ಆಗ ಯೇಸು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟೆ, ಅದರಂತೆಯೇ ಮಾಡು, ಆಗ ನೀನು ಬದುಕುವೆ,” ಎಂದರು.
LUK 10:29 ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು.
LUK 10:30 ಆಗ ಯೇಸು: “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನ ವಸ್ತ್ರಗಳನ್ನು ಕಿತ್ತುಕೊಂಡು, ಅವನನ್ನು ಗಾಯಮಾಡಿ, ಅರೆಜೀವ ಮಾಡಿಬಿಟ್ಟು ಹೊರಟು ಹೋದರು.
LUK 10:31 ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.
LUK 10:32 ಅದೇ ಪ್ರಕಾರ ಒಬ್ಬ ಲೇವಿಯೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.
LUK 10:33 ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು,
LUK 10:34 ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು.
LUK 10:35 ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು.
LUK 10:36 “ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಕೇಳಿದರು.
LUK 10:37 ಅದಕ್ಕೆ ನಿಯಮ ಪಂಡಿತನು, “ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು,” ಎಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆಯೇ ಮಾಡು,” ಎಂದು ಹೇಳಿದರು.
LUK 10:38 ಯೇಸು ಮತ್ತು ಅವರ ಶಿಷ್ಯರು ಸಂಚಾರಮಾಡುತ್ತಾ, ಒಂದು ಹಳ್ಳಿಗೆ ಬಂದರು, ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವರನ್ನು ತನ್ನ ಮನೆಯೊಳಗೆ ಸ್ವೀಕರಿಸಿಕೊಂಡಳು.
LUK 10:39 ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು, ಆಕೆಯು ಕರ್ತದೇವರ ಪಾದಗಳ ಬಳಿಯಲ್ಲಿ ಕುಳಿತು ಅವರ ವಾಕ್ಯವನ್ನು ಕೇಳುತ್ತಿದ್ದಳು.
LUK 10:40 ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಅವರ ಬಳಿಗೆ ಬಂದು, “ಕರ್ತದೇವರೇ, ಕೆಲಸ ಮಾಡುವುದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವುದು ನಿಮಗೆ ಚಿಂತೆಯಿಲ್ಲವೋ? ನನಗೆ ಸಹಾಯಮಾಡುವುದಕ್ಕಾಗಿ ಅವಳಿಗೆ ಹೇಳಿರಿ!” ಎಂದಳು.
LUK 10:41 ಅದಕ್ಕೆ ಕರ್ತದೇವರು ಪ್ರತ್ಯುತ್ತರವಾಗಿ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ,
LUK 10:42 ಆದರೆ ಬೇಕಾದದ್ದು ಕೆಲವೇ, ಅವಶ್ಯವಾಗಿರುವುದು. ಮರಿಯಳು ಆ ಉತ್ತಮ ಭಾಗವನ್ನೇ ಆರಿಸಿಕೊಂಡಿದ್ದಾಳೆ ಅದು ಆಕೆಯಿಂದ ಯಾರೂ ತೆಗೆಯಲಾಗುವುದಿಲ್ಲ,” ಎಂದು ಹೇಳಿದರು.
LUK 11:1 ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದ ಮೇಲೆ, ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ, “ಕರ್ತದೇವರೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆಮಾಡುವುದಕ್ಕೆ ಕಲಿಸಿರಿ,” ಎಂದು ಕೇಳಿದನು.
LUK 11:2 ಯೇಸು ಅವರಿಗೆ, “ನೀವು ಪ್ರಾರ್ಥನೆ ಮಾಡುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಕೆಯಾಗಿರಲಿ, ನಿಮ್ಮ ರಾಜ್ಯವು ಬರಲಿ. ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.
LUK 11:3 ನಮ್ಮ ಅನುದಿನದ ಆಹಾರವನ್ನು ನಮಗೆ ಪ್ರತಿದಿನವೂ ದಯಪಾಲಿಸಿರಿ.
LUK 11:4 ನಮಗೆ ಪಾಪಮಾಡಿದವರನ್ನು, ನಾವು ಕ್ಷಮಿಸಿದಂತೆಯೇ ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸಿ.”
LUK 11:5 ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ, ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ, ‘ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಸಾಲವಾಗಿ ಕೊಡು;
LUK 11:6 ಏಕೆಂದರೆ ನನ್ನ ಒಬ್ಬ ಸ್ನೇಹಿತನು ಪ್ರಯಾಣಮಾಡಿ ನನ್ನ ಬಳಿಗೆ ಬಂದಿದ್ದಾನೆ, ಅವನಿಗೆ ಬಡಿಸುವುದಕ್ಕೆ ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು
LUK 11:7 ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು.
LUK 11:8 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು.
LUK 11:9 “ಕೇಳಿಕೊಳ್ಳಿರಿ ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು.
LUK 11:10 ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.
LUK 11:11 “ನಿಮ್ಮಲ್ಲಿ ತಂದೆಯಾಗಿರುವಾತನು, ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಮಗನಿಗೆ ಕಲ್ಲನ್ನು ಕೊಡುವನೇ, ಮೀನನ್ನು ಕೇಳಿದರೆ, ಮೀನಿಗೆ ಬದಲಾಗಿ ಹಾವನ್ನು ಕೊಡುವನೇ?
LUK 11:12 ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ?
LUK 11:13 ಹಾಗಾದರೆ ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತಮ್ಮನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮರನ್ನು ದಯಪಾಲಿಸುವರಲ್ಲವೇ!” ಎಂದು ನಾನು ನಿಮಗೆ ಹೇಳುತ್ತೇನೆ ಎಂದರು.
LUK 11:14 ಯೇಸು ಒಂದು ಮೂಕದೆವ್ವವನ್ನು ಹೊರಗೆ ಓಡಿಸುತ್ತಿದ್ದರು. ಆ ದೆವ್ವವು ಹೊರಟುಹೋದ ಮೇಲೆ, ಆ ಮೂಕನು ಮಾತನಾಡಿದನು. ಅದಕ್ಕೆ ಜನರು ಆಶ್ಚರ್ಯಪಟ್ಟರು.
LUK 11:15 ಆದರೆ ಅವರಲ್ಲಿ ಕೆಲವರು, “ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
LUK 11:16 ಇನ್ನು ಕೆಲವರು ಯೇಸುವನ್ನು ಪರೀಕ್ಷಿಸುವವರಾಗಿ ಪರಲೋಕದಿಂದ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.
LUK 11:17 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು: “ತನಗೆ ತಾನೇ ವಿರೋಧವಾಗಿ ವಿಭಾಗಗೊಂಡರೆ ಪ್ರತಿಯೊಂದು ರಾಜ್ಯವು ನಾಶವಾಗುವುದು, ಒಂದು ಮನೆಯು ತನಗೆ ತಾನೇ ವಿರೋಧವಾಗಿ ವಿಭಾಗವಾದರೆ, ಅದು ಬಿದ್ದುಹೋಗುವುದು.
LUK 11:18 ಸೈತಾನನು ಸಹ ತನಗೆ ತಾನೇ ವಿರೋಧವಾಗಿ ತನ್ನಲ್ಲಿ ವಿಭಾಗವಾದರೆ, ಅವನ ರಾಜ್ಯವು ನಿಲ್ಲುವುದು ಹೇಗೆ? ಏಕೆಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.
LUK 11:19 ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
LUK 11:20 ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
LUK 11:21 “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು.
LUK 11:22 ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು.
LUK 11:23 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
LUK 11:24 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ, ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ ಅದು, ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು,
LUK 11:25 ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
LUK 11:26 ಆ ಅಶುದ್ಧಾತ್ಮವು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುತ್ತವೆ. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು,” ಎಂದರು.
LUK 11:27 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನೆತ್ತಿ ಅವರಿಗೆ, “ನಿಮ್ಮನ್ನು ಗರ್ಭದಲ್ಲಿ ಹೊತ್ತು, ನಿಮಗೆ ಹಾಲುಣಿಸಿದ ತಾಯಿ ಧನ್ಯಳು,” ಎಂದು ಹೇಳಿದಳು.
LUK 11:28 ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು.
LUK 11:29 ಜನರು ಗುಂಪುಗುಂಪಾಗಿ ಕೂಡಿಬಂದಿದ್ದಾಗ, ಯೇಸು, “ಇದು ದುಷ್ಟ ಸಂತತಿಯು. ಇದು ಸೂಚಕಕಾರ್ಯವನ್ನು ಹುಡುಕುತ್ತದೆ, ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ದೊರಕದು.
LUK 11:30 ಏಕೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಸೂಚನೆಯಾಗಿದ್ದಂತೆಯೇ, ಮನುಷ್ಯಪುತ್ರನಾದ ನಾನೇ ಈ ಸಂತತಿಗೆ ಸೂಚನೆಯಾಗಿರುವೆನು.
LUK 11:31 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
LUK 11:32 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ,” ಎಂದು ಹೇಳಿದರು.
LUK 11:33 “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
LUK 11:34 ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ಆದ್ದರಿಂದ ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವು ಸಹ ಕತ್ತಲೆಯಾಗಿರುವುದು.
LUK 11:35 ಆದ್ದರಿಂದ, ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ.
LUK 11:36 ದೇಹದ ಯಾವುದೊಂದು ಭಾಗದಲ್ಲಿಯೂ ಕತ್ತಲೆಯಾಗಿರದೆ, ನಿನ್ನ ದೇಹವೆಲ್ಲವೂ ಪೂರ್ಣವಾಗಿ ಬೆಳಕಾಗಿರುವುದಾದರೆ, ಪ್ರಕಾಶಮಾನವಾದ ದೀಪವು ನಿನಗೆ ಬೆಳಕುಕೊಡುವಂತೆ ಸಮಸ್ತವೂ ಬೆಳಕಾಗಿರುವುದು,” ಎಂದು ಹೇಳಿದರು.
LUK 11:37 ಯೇಸು ಮಾತನಾಡುವುದನ್ನು ಮುಗಿಸಿದಾಗ, ಒಬ್ಬ ಫರಿಸಾಯನು ತನ್ನೊಂದಿಗೆ ಊಟ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು, ಆಗ ಅವರು ಒಳಗೆ ಹೋಗಿ ಊಟಕ್ಕೆ ಕೂತುಕೊಂಡರು.
LUK 11:38 ಆದರೆ ಊಟಕ್ಕೆ ಮೊದಲು ಯೇಸು ಕೈತೊಳೆಯದೆ ಇರುವುದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು.
LUK 11:39 ಆಗ ಕರ್ತದೇವರು ಅವನಿಗೆ, “ಫರಿಸಾಯರಾದ ನೀವು, ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ.
LUK 11:40 ಮೂರ್ಖರೇ! ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ?
LUK 11:41 ನೀವು ನಿಮ್ಮೊಳಗೆ ಅಂಟಿಕೊಂಡಿರುವವುಗಳನ್ನು ಬಡವರಿಗೆ ದಾನ ಮಾಡಿಬಿಡಿರಿ, ಆಗ ನಿಮಗೆ ಎಲ್ಲವೂ ಶುದ್ಧವಾಗಿರುವುವು.
LUK 11:42 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಪುದೀನ, ಸದಾಪು ಮತ್ತು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು, ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಅವುಗಳನ್ನು ಮಾಡಿದ ನೀವು ಇವುಗಳನ್ನೂ ಅವಶ್ಯವಾಗಿ ಮಾಡಬೇಕಾಗಿತ್ತು.
LUK 11:43 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ.
LUK 11:44 “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು.
LUK 11:45 ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು.
LUK 11:46 ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ.
LUK 11:47 “ನಿಮಗೆ ಕಷ್ಟ, ಏಕೆಂದರೆ ನಿಮ್ಮ ಪಿತೃಗಳು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.
LUK 11:48 ಇದರಿಂದ ನಿಜವಾಗಿಯೂ ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಒಪ್ಪಿಕೊಳ್ಳುವಂತೆ ಸಾಕ್ಷಿಕರಿಸುತ್ತೀರಿ; ಏಕೆಂದರೆ ಅವರು ನಿಜವಾಗಿಯೂ ಪ್ರವಾದಿಗಳನ್ನು ಕೊಂದರು, ನೀವೋ ಅವರ ಸಮಾಧಿಗಳನ್ನು ಕಟ್ಟುತ್ತೀರಿ.
LUK 11:49 ಈ ಕಾರಣದಿಂದ, ದೇವರ ಜ್ಞಾನವು ಸಹ ಹೇಳಿರುವುದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸೆಪಡಿಸುವರು.’
LUK 11:50 ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು,
LUK 11:51 ಹೇಬೆಲನ ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
LUK 11:52 “ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು.
LUK 11:53 ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ, ನಿಯಮ ಬೋಧಕರೂ ಫರಿಸಾಯರೂ ಕೋಪಾವೇಶವುಳ್ಳವರಾಗಿ, ಯೇಸು ಇನ್ನೂ ಹೆಚ್ಚು ವಿಷಯಗಳನ್ನು ಮಾತನಾಡುವಂತೆ ಅವರನ್ನು ಕೆಣಕಿದರು,
LUK 11:54 ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.
LUK 12:1 ಅಷ್ಟರಲ್ಲಿ, ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿದಾಡುವಷ್ಟು ಕಿಕ್ಕಿರಿದು ಬಂದಿರಲಾಗಿ, ಯೇಸು ಮೊದಲು ತಮ್ಮ ಶಿಷ್ಯರಿಗೆ ಹೀಗೆಂದು ಮಾತನಾಡಲಾರಂಭಿಸಿದರು, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ, ಕಪಟತನದ ಬಗ್ಗೆ ನೀವು ಎಚ್ಚರವಾಗಿರಿ.
LUK 12:2 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ.
LUK 12:3 ಆದ್ದರಿಂದ ನೀವು ಕತ್ತಲೆಯಲ್ಲಿ ಯಾವುದನ್ನು ಹೇಳಿದ್ದೀರೋ ಅದು ಬೆಳಕಿನಲ್ಲಿ ಕೇಳಲಾಗುವುದು, ಕೋಣೆಗಳೊಳಗೆ ನೀವು ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು.
LUK 12:4 “ನನ್ನ ಸ್ನೇಹಿತರೇ, ದೇಹವನ್ನು ಕೊಂದು, ಅದಕ್ಕಿಂತ ಹೆಚ್ಚೇನೂ ಮಾಡಲಾರದವರಿಗೆ ಹೆದರಬೇಡಿರಿ ಎಂದು ನಿಮಗೆ ಹೇಳುತ್ತೇನೆ.
LUK 12:5 ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
LUK 12:6 ಎರಡು ರೂಪಾಯಿಗಳಿಗೆ ಐದು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.
LUK 12:7 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
LUK 12:8 “ಆದರೆ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರನ್ನು, ಮನುಷ್ಯಪುತ್ರನಾದ ನಾನು ಸಹ ದೇವದೂತರ ಮುಂದೆ ನನ್ನವರೆಂದು ಒಪ್ಪಿಕೊಳ್ಳುವೆನು.
LUK 12:9 ಆದರೆ ಯಾರು ಜನರ ಮುಂದೆ ನನ್ನನ್ನು ಅಲ್ಲಗಳೆಯುವರೋ ಅವರನ್ನು ದೇವದೂತರ ಮುಂದೆ ನಾನು ಅಲ್ಲಗಳೆಯುವೆನು.
LUK 12:10 ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
LUK 12:11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ಆಳುವವರ ಮುಂದೆಯೂ ಅಧಿಕಾರಿಗಳ ಮುಂದೆಯೂ ತಂದಾಗ ಹೇಗೆ ಇಲ್ಲವೆ ಯಾವುದನ್ನು ಕುರಿತು ಉತ್ತರಕೊಡಬೇಕೆಂದು, ಇಲ್ಲವೆ ಏನು ಹೇಳಬೇಕೆಂದು ಚಿಂತಿಸಬೇಡಿರಿ,
LUK 12:12 ಆ ಸಮಯದಲ್ಲಿ ನೀವು ಹೇಳಬೇಕಾದದ್ದನ್ನು ಪವಿತ್ರಾತ್ಮರು ನಿಮಗೆ ಕಲಿಸಿಕೊಡುವರು.”
LUK 12:13 ಗುಂಪಿನಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕರೇ, ಆಸ್ತಿಯನ್ನು ಭಾಗಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳಿ,” ಎಂದನು.
LUK 12:14 ಯೇಸು, “ಸ್ನೇಹಿತನೇ, ನಿಮ್ಮ ಮೇಲೆ ನ್ಯಾಯಾಧಿಪತಿಯಾಗಿ ಇಲ್ಲವೆ ನಿಮಗೆ ಭಾಗಮಾಡಿಕೊಡುವುದಕ್ಕೆ ನನ್ನನ್ನು ನೇಮಿಸಿದವರು ಯಾರು?” ಎಂದು ಹೇಳಿದರು.
LUK 12:15 ಅನಂತರ ಯೇಸು ಜನರಿಗೆ, “ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ,” ಎಂದರು.
LUK 12:16 ಅನಂತರ ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಒಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆ ಕೊಟ್ಟಿತು.
LUK 12:17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನಗಿರುವ ಬೆಳೆಯನ್ನು ಇಡುವುದಕ್ಕೆ ನನಗೆ ಸ್ಥಳವಿಲ್ಲ,’ ಎಂದು ಆಲೋಚಿಸಿ ಹೀಗೆಂದುಕೊಂಡನು,
LUK 12:18 “ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ.
LUK 12:19 ಅಲ್ಲದೆ, ನಾನು ನನ್ನ ಪ್ರಾಣಕ್ಕೆ, “ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ,” ’ ಎಂದುಕೊಂಡನು.
LUK 12:20 “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ! ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ತೆಗೆದುಕೊಳ್ಳಲಾಗುವುದು. ಆಗ ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದು ಹೇಳಿದರು.
LUK 12:21 “ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತ ಆಗದಿರುವವನು ಇವನಂತೆಯೇ ಇರುವನು,” ಎಂದರು.
LUK 12:22 ಯೇಸು ತಮ್ಮ ಶಿಷ್ಯರಿಗೆ: “ಆದಕಾರಣ, ನೀವು ನಿಮ್ಮ ಜೀವನಕ್ಕಾಗಿ ಏನು ಊಟಮಾಡಬೇಕು; ಮತ್ತು ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
LUK 12:23 ಊಟಕ್ಕಿಂತ ಜೀವನವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು.
LUK 12:24 ಕಾಗೆಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವಾಗಲಿ ಕಣಜವಾಗಲಿ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ನೀವು ಪಕ್ಷಿಗಳಿಗಿಂತ ಎಷ್ಟೋ ಮೌಲ್ಯವುಳ್ಳವರಾಗಿದ್ದೀರಲ್ಲಾ!
LUK 12:25 ನಿಮ್ಮಲ್ಲಿ ಯಾರಾದರೂ ಚಿಂತೆ ಮಾಡುವುದರಿಂದ ತಮ್ಮ ಜೀವನಾವಧಿಗೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?
LUK 12:26 ಅತ್ಯಲ್ಪವಾಗಿರುವುದನ್ನು ನೀವು ಮಾಡಲಾರದವರಾಗಿದ್ದರೆ, ಇತರ ವಿಷಯಗಳಿಗಾಗಿ ನೀವು ಚಿಂತೆ ಮಾಡುವುದೇನು?
LUK 12:27 “ಅಡವಿಯ ಹೂವುಗಳು ಹೇಗೆ ಬೆಳೆಯುತ್ತವೆಂದು ಯೋಚಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ.
LUK 12:28 ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ?
LUK 12:29 ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಡಬೇಡಿರಿ; ಚಿಂತೆಯೂ ಮಾಡಬೇಡಿರಿ.
LUK 12:30 ದೇವರನ್ನು ಅರಿಯದವರು ಇವೆಲ್ಲವುಗಳಿಗಾಗಿ ಬೆನ್ನಟ್ಟುತ್ತಾರೆ, ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ತಿಳಿದಿದ್ದಾರೆ.
LUK 12:31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ, ಆಗ ಇವೆಲ್ಲವನ್ನು ದೇವರು ನಿಮಗೆ ಕೊಡುವರು.
LUK 12:32 “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮ್ಮ ತಂದೆಯು ತಮ್ಮ ರಾಜ್ಯವನ್ನು ನಿಮಗೆ ಕೊಡುವುದಕ್ಕೆ ಮೆಚ್ಚಿದ್ದಾರೆ.
LUK 12:33 ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಕೊಡಿರಿ. ನಿಮಗೋಸ್ಕರ ನಾಶವಾಗದ ಹಣದ ಚೀಲಗಳನ್ನೂ, ಕ್ಷಯವಾಗದ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ, ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದಿಲ್ಲ. ನುಸಿಹಿಡಿದು ಕೆಟ್ಟುಹೋಗುವುದಿಲ್ಲ.
LUK 12:34 ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು,” ಎಂದು ಹೇಳಿದರು.
LUK 12:35 “ನೀವು ವಸ್ತ್ರ ಧರಿಸಿ ಸೇವೆಗೆ ಸಿದ್ಧರಾಗಿರಿ. ನಿಮ್ಮ ದೀಪಗಳು ಉರಿಯುತ್ತಿರಲಿ,
LUK 12:36 ನೀವಂತೂ ಮದುವೆಯ ಔತಣದಿಂದ ಹಿಂದಿರುಗುವ ತಮ್ಮ ಯಜಮಾನನಿಗಾಗಿ ಕಾಯುತ್ತಿದ್ದು, ಅವನು ಬಂದು ಬಾಗಿಲನ್ನು ತಟ್ಟಿದ ತಕ್ಷಣವೇ ಅವನಿಗಾಗಿ ತೆರೆಯುವ ಸೇವಕರಂತೆ ಇರಿ.
LUK 12:37 ಯಜಮಾನನು ಬಂದಾಗ ಯಾರು ಎಚ್ಚರವಾಗಿರುವುದನ್ನು ಅವನು ಕಾಣುವನೋ ಆ ಸೇವಕರು ಧನ್ಯರು. ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿ ನಿಂತು ಅವರನ್ನು ಊಟಕ್ಕೆ ಕೂರಿಸಿ, ಅವರಿಗೆ ತಾನೇ ಸೇವೆಮಾಡುವನು.
LUK 12:38 ಯಜಮಾನನು ನಡು ರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಬಂದು, ಸೇವಕರು ಇನ್ನೂ ಎಚ್ಚರದಿಂದಿರುವುದನ್ನು ಕಂಡರೆ ಆ ಸೇವಕರು ಧನ್ಯರು.
LUK 12:39 ಆದರೆ, ಕಳ್ಳನು ಯಾವ ಸಮಯದಲ್ಲಿ ಬರುವನೆಂಬುದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಯನ್ನು ಪ್ರವೇಶಿಸಲು ಕನ್ನಾಹಾಕಲು ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ.
LUK 12:40 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ,” ಎಂದು ಹೇಳಿದರು.
LUK 12:41 ಪೇತ್ರನು ಯೇಸುವಿಗೆ, “ಕರ್ತದೇವರೇ, ನೀವು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀರೋ ಅಥವಾ ಎಲ್ಲರಿಗೋ?” ಎಂದು ಕೇಳಿದನು.
LUK 12:42 ಕರ್ತದೇವರು ಹೇಳಿದ್ದೇನೆಂದರೆ, “ತಕ್ಕ ಕಾಲದಲ್ಲಿ ತನ್ನ ಸೇವಕರಿಗೆ ಅವರ ಪಾಲಿನ ಆಹಾರವನ್ನು ಕೊಡುವುದಕ್ಕಾಗಿ, ಅವರ ಯಜಮಾನನು ತನ್ನ ಮನೆಯ ಮೇಲೆ ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಆಡಳಿತಗಾರನು ಯಾರು?
LUK 12:43 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು.
LUK 12:44 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
LUK 12:45 ಆದರೆ ಆ ಸೇವಕನು, ‘ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ,’ ಎಂದು ತನ್ನ ಹೃದಯದಲ್ಲಿ ಭಾವಿಸಿಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆದು, ತಿಂದು ಕುಡಿದು ಮತ್ತನಾಗುವುದಕ್ಕೆ ಆರಂಭಿಸಿದರೆ,
LUK 12:46 ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು, ಅವನನ್ನು ಕಠಿಣವಾಗಿ ಹೊಡಿಸಿ ಅವಿಶ್ವಾಸಿಗಳಿಗೆ ಆಗ ಸಿಕ್ಕುವ ಪಾಲನ್ನು ಅವನಿಗೆ ನೇಮಿಸುವನು.
LUK 12:47 “ತನ್ನ ಯಜಮಾನನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ, ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳಿಗೆ ಗುರಿಯಾಗುವನು.
LUK 12:48 ದಂಡನೆಗೆ ಯೋಗ್ಯವಾದದ್ದನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳಿಗೆ ಗುರಿಯಾಗುವನು. ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು.”
LUK 12:49 “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವುದಕ್ಕಾಗಿ ಬಂದೆನು, ಅದು ಈಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ!
LUK 12:50 ಆದರೆ ನಾನು ಪಡೆಯಲಿರುವ ಒಂದು ದೀಕ್ಷಾಸ್ನಾನ ಉಂಟು, ಅದು ನೆರವೇರುವ ತನಕ ನಾನು ಎಷ್ಟೋ ಇಕ್ಕಟ್ಟಿನಲ್ಲಿದ್ದೇನೆ!
LUK 12:51 ನಾನು ಭೂಮಿಯ ಮೇಲೆ ಸಮಾಧಾನವನ್ನು ತರುವುದಕ್ಕಾಗಿ ಬಂದಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ, ಭಿನ್ನಭೇದಗಳನ್ನು ಉಂಟುಮಾಡುವುದಕ್ಕೆ ಬಂದಿದ್ದೇನೆಂದು, ನಿಮಗೆ ಹೇಳುತ್ತೇನೆ.
LUK 12:52 ಹೇಗೆಂದರೆ ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯಲ್ಲಿ ಇಬ್ಬರಿಗೆ ವಿರೋಧವಾಗಿ ಮೂವರೂ ಮೂವರಿಗೆ ವಿರೋಧವಾಗಿ ಇಬ್ಬರೂ ವಿಭಾಗವಾಗುವರು.
LUK 12:53 ತಂದೆಗೆ ವಿರೋಧವಾಗಿ ಮಗನು, ಮಗನಿಗೆ ವಿರೋಧವಾಗಿ ತಂದೆಯು, ತಾಯಿಗೆ ವಿರೋಧವಾಗಿ ಮಗಳು, ಮಗಳಿಗೆ ವಿರೋಧವಾಗಿ ತಾಯಿಯು, ಅತ್ತೆಗೆ ವಿರೋಧವಾಗಿ ಸೊಸೆಯು, ಸೊಸೆಗೆ ವಿರೋಧವಾಗಿ ಅತ್ತೆಯು ವಿಭಾಗವಾಗುವರು.”
LUK 12:54 ಯೇಸು ಜನಸಮೂಹಕ್ಕೆ ಹೇಳಿದ್ದೇನೆಂದರೆ: “ನೀವು ಪಶ್ಚಿಮದ ಕಡೆಯಿಂದ ಏಳುವ ಮೋಡವನ್ನು ನೋಡಿ, ‘ಮಳೆ ಬರುತ್ತದೆ ಎನ್ನುತ್ತೀರಿ,’ ಹಾಗೆಯೇ ಆಗುವುದು.
LUK 12:55 ದಕ್ಷಿಣ ದಿಕ್ಕಿನ ಗಾಳಿ ಬೀಸುವುದನ್ನು ನೀವು ನೋಡಿ, ‘ಸೆಕೆಯಾಗುತ್ತದೆ,’ ಎನ್ನುತ್ತೀರಿ, ಅದು ಹಾಗೆ ಆಗುತ್ತದೆ.
LUK 12:56 ಕಪಟಿಗಳೇ! ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಈ ಕಾಲವನ್ನು ನೀವು ವಿವೇಚಿಸದಿರುವುದು ಹೇಗೆ?
LUK 12:57 “ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಏಕೆ ನಿರ್ಣಯಿಸಿಕೊಳ್ಳುವುದಿಲ್ಲ?
LUK 12:58 ನೀನು ನಿನ್ನ ವಿರೋಧಿಯ ಸಂಗಡ ನ್ಯಾಯಾಧಿಪತಿಯ ಎದುರಿಗೆ ಹೋಗುವಾಗ, ಮಾರ್ಗದಲ್ಲಿಯೇ ಅವನಿಂದ ವ್ಯಾಜ್ಯ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡು, ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆಯಬಹುದು, ಆಗ ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆಯ ಅಧಿಕಾರಿಗೆ ಒಪ್ಪಿಸಬಹುದು ಮತ್ತು ಅಧಿಕಾರಿಯು ನಿನ್ನನ್ನು ಸೆರೆಯಲ್ಲಿ ಹಾಕಬಹುದು.
LUK 12:59 ನೀನು ಕೊನೆಯ ರೂಪಾಯಿಯನ್ನು ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು, ನಾನು ನಿನಗೆ ಹೇಳುತ್ತೇನೆ,” ಎಂದರು.
LUK 13:1 ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು.
LUK 13:2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?
LUK 13:3 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ.
LUK 13:4 ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ?
LUK 13:5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.
LUK 13:6 ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ.
LUK 13:7 ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.
LUK 13:8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.
LUK 13:9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’ ”
LUK 13:10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು,
LUK 13:11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
LUK 13:12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ,
LUK 13:13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
LUK 13:14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.
LUK 13:15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ?
LUK 13:16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.
LUK 13:17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.
LUK 13:18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ?
LUK 13:19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.
LUK 13:20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?
LUK 13:21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
LUK 13:22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು.
LUK 13:23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,
LUK 13:24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
LUK 13:25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.
LUK 13:26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.
LUK 13:27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.
LUK 13:28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
LUK 13:29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.
LUK 13:30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
LUK 13:31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.
LUK 13:32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
LUK 13:33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!
LUK 13:34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
LUK 13:35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
LUK 14:1 ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು.
LUK 14:2 ಅಲ್ಲಿ ದೇಹದಲ್ಲಿ ಅಸಾಧಾರಣವಾಗಿ ನೀರು ತುಂಬಿದ್ದ ರೋಗಿಯೊಬ್ಬನು ಯೇಸುವಿನ ಮುಂದೆ ಇದ್ದನು.
LUK 14:3 ಆಗ ಯೇಸು ನಿಯಮ ಪಂಡಿತರಿಗೂ ಫರಿಸಾಯರಿಗೂ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಮೋಶೆಯ ನಿಯಮದ ಪ್ರಕಾರವೋ?” ಎಂದು ಕೇಳಿದರು.
LUK 14:4 ಆದರೆ ಅವರು ಮೌನವಾಗಿಯೇ ಇದ್ದರು. ಆಗ ಯೇಸು, ಆ ರೋಗಿಯನ್ನು ಸ್ವಸ್ಥಮಾಡಿ ಕಳುಹಿಸಿಬಿಟ್ಟರು.
LUK 14:5 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬರ ಮಗುವಾಗಲಿ, ಎತ್ತಾಗಲಿ ಒಂದು ಬಾವಿಯಲ್ಲಿ ಬಿದ್ದರೆ, ಅದನ್ನು ತಕ್ಷಣವೇ ಸಬ್ಬತ್ ದಿನದಲ್ಲಿ ಮೇಲಕ್ಕೆ ಎಳೆಯುವುದಿಲ್ಲವೇ?” ಎಂದು ಕೇಳಿದರು.
LUK 14:6 ಅದಕ್ಕೆ ಅವರು ಉತ್ತರ ಕೊಡಲಾರದೆ ಇದ್ದರು.
LUK 14:7 ಊಟಕ್ಕೆ ಆಹ್ವಾನಿತರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಯೇಸು ಗುರುತಿಸಿ, ಅವರಿಗೆ ಒಂದು ಸಾಮ್ಯವನ್ನು ಹೇಳಿದರು:
LUK 14:8 “ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು.
LUK 14:9 ಆಗ, ನಿನ್ನನ್ನು ಮತ್ತು ಅವನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಈ ಮನುಷ್ಯನಿಗೆ ಸ್ಥಳಕೊಡು,’ ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು.
LUK 14:10 ಆದರೆ ನಿನ್ನನ್ನು ಆಹ್ವಾನಿಸಿದಾಗ, ಹೋಗಿ ಕಡೇ ಸ್ಥಳದಲ್ಲಿ ಕುಳಿತುಕೋ, ಆಗ ನಿನ್ನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಸ್ನೇಹಿತನೇ, ಉತ್ತಮ ಸ್ಥಳಕ್ಕೆ ಬಾ,’ ಎಂದು ಹೇಳುವಾಗ ನಿನ್ನ ಜೊತೆಯಲ್ಲಿ ಊಟಕ್ಕೆ ಕುಳಿತವರೆಲ್ಲರ ಮುಂದೆ ನಿನಗೆ ಗೌರವವಿರುವುದು.
LUK 14:11 ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
LUK 14:12 ಯೇಸು ತಮ್ಮನ್ನು ಆಹ್ವಾನಿಸಿದವನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಿದ್ಧಪಡಿಸಿದಾಗ, ನಿನ್ನ ಸ್ನೇಹಿತರನ್ನಾಗಲಿ ನಿನ್ನ ಸಹೋದರ ಸಹೋದರಿಯನ್ನಾಗಲಿ, ನಿನ್ನ ಬಂಧುಗಳನ್ನಾಗಲಿ, ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ, ಏಕೆಂದರೆ ಅವರೂ ಪ್ರತಿಯಾಗಿ ನಿನ್ನನ್ನೂ ಆಹ್ವಾನಿಸಬಹುದು ಮತ್ತು ನಿನಗೆ ಪ್ರತ್ಯುಪಕಾರವಾದೀತು.
LUK 14:13 ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು.
LUK 14:14 ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವುದಕ್ಕೆ ಆಗದಿರುವುದರಿಂದ, ನೀನು ಧನ್ಯನಾಗುವೆ. ಏಕೆಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವುದು.”
LUK 14:15 ಯೇಸುವಿನ ಸಂಗಡ ಔತಣಕ್ಕೆ ಕುಳಿತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಅವರಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು,” ಎಂದು ಹೇಳಿದನು.
LUK 14:16 ಯೇಸು ಅವನಿಗೆ ಹೀಗೆ ಹೇಳಿದರು: “ಒಬ್ಬ ಮನುಷ್ಯನು ಒಂದು ದೊಡ್ಡ ಔತಣ ಮಾಡಿಸಿ ಅನೇಕರನ್ನು ಆಹ್ವಾನಿಸಿದನು.
LUK 14:17 ಊಟಕ್ಕೆ ಸಮಯವಾದಾಗ ಆಹ್ವಾನಿತರಿಗೆ ಅವನು, ‘ಎಲ್ಲವೂ ಸಿದ್ಧವಾಗಿದೆ ಬನ್ನಿರಿ,’ ಎಂದು ಹೇಳಲು ತನ್ನ ಸೇವಕನನ್ನು ಕಳುಹಿಸಿದನು.
LUK 14:18 “ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು.
LUK 14:19 “ಇನ್ನೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು,’ ಎಂದನು.
LUK 14:20 “ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.
LUK 14:21 “ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು.
LUK 14:22 “ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು.
LUK 14:23 “ಆಗ ಯಜಮಾನನು ಸೇವಕನಿಗೆ, ‘ನೀನು ಬೀದಿಗಳಿಗೂ ಓಣಿಗಳಿಗೂ ಹೊರಟುಹೋಗಿ ನನ್ನ ಮನೆ ತುಂಬುವಂತೆ, ಇಲ್ಲಿ ಬರುವುದಕ್ಕೆ ಕಂಡವರನ್ನು ಬಲವಂತಮಾಡು.
LUK 14:24 ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’ ”
LUK 14:25 ದೊಡ್ಡ ಜನಸಮೂಹವು ಯೇಸುವಿನ ಸಂಗಡ ಹೋಗುತ್ತಿರಲು, ಯೇಸು ತಿರುಗಿಕೊಂಡು ಅವರನ್ನು ನೋಡಿ ಹೇಳಿದ್ದೇನೆಂದರೆ:
LUK 14:26 “ಯಾರಾದರೂ ನನ್ನ ಬಳಿಗೆ ಬಂದು ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ತಮ್ಮ ಸ್ವಂತ ಪ್ರಾಣವನ್ನು ಸಹ ದ್ವೇಷಿಸದಿದ್ದರೆ ಅವರು ನನ್ನ ಶಿಷ್ಯರಾಗಲಾರರು.
LUK 14:27 ಯಾರಾದರೂ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವರು ನನ್ನ ಶಿಷ್ಯರಾಗಲಾರರು.
LUK 14:28 “ನಿಮ್ಮಲ್ಲಿ ಒಬ್ಬರು ಗೋಪುರವನ್ನು ಕಟ್ಟಲು ಇಚ್ಛಿಸಿದರೆ. ನೀವು ಮೊದಲು ಕುಳಿತು ಅದನ್ನು ಪೂರೈಸುವುದಕ್ಕೆ ಬೇಕಾದ ಖರ್ಚು ಇದೆಯೋ ಎಂದು ಲೆಕ್ಕ ಮಾಡುವುದಿಲ್ಲವೋ?
LUK 14:29 ಒಂದು ವೇಳೆ ಹಾಗೆ ಲೆಕ್ಕಮಾಡದೆ ನೀವು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ, ಅದನ್ನು ಪೂರೈಸದಿದ್ದರೆ, ನಿಮ್ಮನ್ನು ನೋಡುವವರೆಲ್ಲರೂ, ‘ಈ ವ್ಯಕ್ತಿ ಕಟ್ಟಲಾರಂಭಿಸಿದ, ಮುಗಿಸಲು ಇವನಿಗೆ ಆಗಲಿಲ್ಲ,’ ಎಂದು ಹೇಳಿ ಹಾಸ್ಯಮಾಡುವರು.
LUK 14:31 “ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ?
LUK 14:32 ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ?
LUK 14:33 ಆದ್ದರಿಂದ ನಿಮ್ಮಲ್ಲಿ ಯಾರಾದರೂ ತಮಗಿರುವುದನ್ನೆಲ್ಲಾ ಬಿಟ್ಟುಬಿಡದಿದ್ದರೆ, ಅವರು ನನ್ನ ಶಿಷ್ಯರಾಗಲಾರರು.
LUK 14:34 “ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು?
LUK 14:35 ಅದು ಭೂಮಿಗಾದರೂ ಗೊಬ್ಬರಕ್ಕಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. “ಕೇಳುವುದಕ್ಕೆ ಕಿವಿಯುಳ್ಳವರು, ಕೇಳಲಿ.”
LUK 15:1 ಅನೇಕ ಸುಂಕದವರೂ ಪಾಪಿಗಳೆನ್ನಿಸಿಕೊಂಡವರೂ ಯೇಸುವಿನ ಉಪದೇಶವನ್ನು ಕೇಳಲು ಅವರ ಸಮೀಪಕ್ಕೆ ಬಂದರು.
LUK 15:2 ಫರಿಸಾಯರು ಮತ್ತು ನಿಯಮ ಬೋಧಕರು, “ಈತನು ಪಾಪಿಗಳನ್ನು ಸ್ವೀಕರಿಸಿ ಅವರೊಂದಿಗೆ ಊಟಮಾಡುತ್ತಾನೆ,” ಎಂದು ಗೊಣಗುಟ್ಟಿದರು.
LUK 15:3 ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದರು:
LUK 15:4 “ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದುಕೊಂಡರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲಿ ಬಿಟ್ಟು ಕಳೆದುಹೋದ ಆ ಒಂದು ಕುರಿ ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದಿರುವನೇ?
LUK 15:5 ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು,
LUK 15:6 ಅವನು ಮನೆಗೆ ಬಂದು, ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು ಅವರಿಗೆ, ‘ನನ್ನ ಸಂಗಡ ಸಂತೋಷಪಡಿರಿ; ಕಳೆದುಹೋದ ಕುರಿ ನನಗೆ ಸಿಕ್ಕಿತು ಎನ್ನುವನು.’
LUK 15:7 ಅದರಂತೆಯೇ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಲು ಅವಶ್ಯವಿಲ್ಲದ ತೊಂಬತ್ತೊಂಬತ್ತು ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಬಹಳ ಸಂತೋಷ ಉಂಟಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ.
LUK 15:8 “ಒಬ್ಬ ಸ್ತ್ರೀಯು ತನ್ನ ಬಳಿ ಹತ್ತು ಬೆಳ್ಳಿಯ ನಾಣ್ಯವಿರಲಾಗಿ, ಒಂದು ನಾಣ್ಯವನ್ನು ಕಳೆದುಕೊಂಡರೆ, ಅವಳು ದೀಪಹಚ್ಚಿ ಮನೆಯನ್ನು ಗುಡಿಸಿ, ಅದು ಸಿಕ್ಕುವವರೆಗೆ ಜಾಗ್ರತೆಯಿಂದ ಹುಡುಕುವುದಿಲ್ಲವೇ?
LUK 15:9 ಅವಳು ಅದನ್ನು ಕಂಡುಕೊಂಡ ಮೇಲೆ, ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ಅವರಿಗೆ, ‘ಕಳೆದುಹೋದ ನಾಣ್ಯವು ಸಿಕ್ಕಿತು; ನನ್ನ ಸಂಗಡ ಸಂತೋಷಪಡಿರಿ,’ ಎನ್ನುವಳು.
LUK 15:10 ಅದೇ ಪ್ರಕಾರ, ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
LUK 15:11 ಇನ್ನೂ ಯೇಸು ಹೇಳಿದ್ದು: “ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು.
LUK 15:12 ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು.
LUK 15:13 “ಕೆಲವೇ ದಿನಗಳಲ್ಲಿ, ಕಿರಿಯ ಮಗನು ಎಲ್ಲವನ್ನೂ ಕೂಡಿಸಿಕೊಂಡು, ದೂರದೇಶಕ್ಕೆ ಪ್ರಯಾಣಮಾಡಿ, ಅಲ್ಲಿ ದುಂದು ವೆಚ್ಚದ ಜೀವನ ಮಾಡಿ ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡನು.
LUK 15:14 ಅವನು ಎಲ್ಲವನ್ನೂ ಹಾಳುಮಾಡಿದ ಮೇಲೆ, ಆ ದೇಶದಾದ್ಯಂತ ಘೋರವಾದ ಕ್ಷಾಮವು ಬಂದು, ಕೊರತೆಪಡಲಾರಂಭಿಸಿದನು.
LUK 15:15 ಆಗ ಅವನು ಹೋಗಿ ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿಕೊಂಡನು, ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.
LUK 15:16 ಅವನು ಹಂದಿಗಳು ತಿನ್ನುತ್ತಿದ್ದ ಸಿಪ್ಪೆಗಳಿಂದಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ಆಶೆಪಟ್ಟನು, ಆದರೆ ಅದನ್ನು ಸಹ ಅವನಿಗೆ ಯಾರೂ ಕೊಡಲಿಲ್ಲ.
LUK 15:17 “ಆಗ ಅವನಿಗೆ ಬುದ್ಧಿ ಬಂದು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿಯೂ ಉಳಿಯುವಷ್ಟು ಆಹಾರವಿದೆಯಲ್ಲಾ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ!
LUK 15:18 ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ, ಆತನಿಗೆ: ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿಮಗೆ ವಿರೋಧವಾಗಿಯೂ ನಾನು ಪಾಪಮಾಡಿದ್ದೇನೆ.
LUK 15:19 ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಸಿಕೊಳ್ಳುವುದಕ್ಕೆ ಯೋಗ್ಯನಲ್ಲ; ನನ್ನನ್ನು ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎನ್ನುವೆನು,’ ಎಂದುಕೊಂಡು,
LUK 15:20 ಎದ್ದು ತನ್ನ ತಂದೆಯ ಬಳಿಗೆ ಹೋದನು. “ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.
LUK 15:21 “ಆದರೂ ಮಗನು ತಂದೆಗೆ, ‘ಅಪ್ಪಾ, ನಾನು ಪರಲೋಕಕ್ಕೆ ವಿರೋಧವಾಗಿಯೂ ನಿಮ್ಮ ಮುಂದೆಯೂ ಪಾಪಮಾಡಿದ್ದೇನೆ. ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಯಿಸಿಕೊಳ್ಳಲು ಯೋಗ್ಯನಲ್ಲ,’ ಎಂದನು.
LUK 15:22 “ಆದರೆ ತಂದೆಯು ತನ್ನ ಸೇವಕರಿಗೆ, ‘ಶ್ರೇಷ್ಠವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಪಾದಗಳಿಗೆ ಪಾದರಕ್ಷೆಗಳನ್ನೂ ಮೆಟ್ಟಿಸಿರಿ.
LUK 15:23 ಇದಲ್ಲದೆ ವಿಶೇಷ ಆಹಾರವನ್ನು ತಂದು ಕೊಯ್ದು ವಿಶೇಷ ಔತಣವನ್ನು ಬೇಗ ಸಿದ್ಧಮಾಡಿರಿ. ನಾವು ಉಂಡು ಸಂತೋಷಪಡೋಣ.
LUK 15:24 ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು.
LUK 15:25 “ಆಗ, ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿದ್ದಾಗ, ನರ್ತನವನ್ನೂ ವಾದ್ಯವನ್ನೂ ಕೇಳಿ,
LUK 15:26 ಸೇವಕರಲ್ಲಿ ಒಬ್ಬನನ್ನು ಕರೆದು, ‘ಇವುಗಳು ಏನು?’ ಎಂದು ಕೇಳಿದನು.
LUK 15:27 ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ, ನಿನ್ನ ತಂದೆಯು ಅವನು ಸುರಕ್ಷಿತವಾಗಿ ಮತ್ತು ಸೌಖ್ಯವಾಗಿ ಹಿಂದಿರುಗಿದ್ದರಿಂದ, ವಿಶೇಷ ಔತಣವನ್ನು ಮಾಡಿಸಿದ್ದಾನೆ,’ ಎಂದನು.
LUK 15:28 “ಅದಕ್ಕೆ ಹಿರಿಯ ಮಗನು ಕೋಪಗೊಂಡು ಒಳಗೆ ಹೋಗಲು ಇಷ್ಟಪಡಲಿಲ್ಲ. ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು.
LUK 15:29 ಆದರೆ ಅವನು ಉತ್ತರವಾಗಿ ತನ್ನ ತಂದೆಗೆ, ‘ಎಷ್ಟೋ ವರ್ಷಗಳಿಂದ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ. ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರೊಂದಿಗೆ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಮೇಕೆಯ ಮರಿಯನ್ನಾದರೂ ಕೊಡಲಿಲ್ಲ.
LUK 15:30 ಆದರೆ ನಿನ್ನ ಆಸ್ತಿಯನ್ನು ವೇಶ್ಯೆಯರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ, ವಿಶೇಷ ಔತಣವನ್ನೇ ಮಾಡಿಸಿದ್ದೀಯಲ್ಲಾ!’ ಎಂದನು.
LUK 15:31 “ಆಗ ತಂದೆ, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ನನಗಿರುವುದೆಲ್ಲವೂ ನಿನ್ನದೇ.
LUK 15:32 ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ”
LUK 16:1 ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದು: “ಒಬ್ಬ ಐಶ್ವರ್ಯವಂತನಿದ್ದನು, ಅವನಿಗಿದ್ದ ಒಬ್ಬ ನಿರ್ವಾಹಕನು ಅವನ ಸರಕುಗಳನ್ನು ಹಾಳು ಮಾಡುತ್ತಿದ್ದಾನೆಂದು ಅವನಿಗೆ ಯಾರೋ ದೂರು ಹೇಳಿದರು.
LUK 16:2 ಆಗ ಐಶ್ವರ್ಯವಂತನು ಆ ನಿರ್ವಾಹಕನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವುದು? ನಿನ್ನ ಲೆಕ್ಕವನ್ನು ಒಪ್ಪಿಸು. ನೀನು ಇನ್ನು ಮೇಲೆ ನಿರ್ವಾಹಕನಾಗಿರಲು ಆಗಲ್ಲ,’ ಎಂದನು.
LUK 16:3 “ಆಗ ಆ ನಿರ್ವಾಹಕನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ. ಅಗೆಯಲು ನನಗೆ ಶಕ್ತಿಯಿಲ್ಲ, ಭಿಕ್ಷೆ ಬೇಡಲು ನನಗೆ ನಾಚಿಕೆ.
LUK 16:4 ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ, ನಾನು ಏನು ಮಾಡಬೇಕಾದದ್ದು ಗೊತ್ತಾಯಿತು’ ಎಂದುಕೊಂಡನು.
LUK 16:5 “ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲವೆಷ್ಟು?’ ಎಂದು ಕೇಳಲು,
LUK 16:6 “ ‘ಅವನು, 3,000 ಲೀಟರ್ ಎಣ್ಣೆ,’ ಎಂದನು. “ಆಗ ನಿರ್ವಾಹಕನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೋ, ಬೇಗ ಕುಳಿತುಕೊಂಡು 1,500 ಲೀಟರ್ ಎಂದು ಬರೆ,’ ಎಂದು ಹೇಳಿದನು.
LUK 16:7 “ಬಳಿಕ ಅವನು ಮತ್ತೊಬ್ಬನಿಗೆ, ‘ನೀನೆಷ್ಟು ಸಾಲ ತೀರಿಸಬೇಕು,’ ಎಂದು ಕೇಳಲು, “30 ‘ಟನ್ ಗೋಧಿ,’ ಎಂದನು. “ಆಗ ಅವನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೊಂಡು 24 ಟನ್ ಎಂದು ಬರೆ,’ ಎಂದನು.
LUK 16:8 “ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ.
LUK 16:9 ನಾನು ನಿಮಗೆ ಹೇಳುವುದೇನೆಂದರೆ, ಲೌಕಿಕ ಸಂಪತ್ತಿನಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಅದು ನಿಮ್ಮನ್ನು ಬಿಟ್ಟುಹೋದಾಗ ನಿಮ್ಮನ್ನು ನಿತ್ಯ ನಿವಾಸಗಳಲ್ಲಿ ಸೇರಿಸಿಕೊಳ್ಳುವರು.
LUK 16:10 “ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ನಂಬಿಗಸ್ತರಾಗಿರುವರು ಮತ್ತು ಸ್ವಲ್ಪವಾದದ್ದರಲ್ಲಿ ಅಪನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ಅಪನಂಬಿಗಸ್ತರಾಗಿರುವರು.
LUK 16:11 ಆದ್ದರಿಂದ ಲೌಕಿಕ ಸಂಪತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ, ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು?
LUK 16:12 ಮತ್ತೊಬ್ಬರಿಗೆ ಸೇರಿದ ವಸ್ತುಗಳಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ ನಿಮ್ಮ ಪಾಲನ್ನು ನಿಮಗೆ ಯಾರು ಒಪ್ಪಿಸುವರು?
LUK 16:13 “ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು.
LUK 16:14 ಆಗ ಹಣದಾಶೆಯಿಂದ ಕೂಡಿದ ಫರಿಸಾಯರು, ಇವುಗಳನ್ನು ಕೇಳಿ ಯೇಸುವನ್ನು ಪರಿಹಾಸ್ಯ ಮಾಡಿದರು.
LUK 16:15 ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.
LUK 16:16 “ಮೋಶೆಯ ನಿಯಮವೂ ಪ್ರವಾದನೆಗಳೂ ಯೋಹಾನನವರೆಗೆ ಇದ್ದವು. ಅಂದಿನಿಂದ, ದೇವರ ರಾಜ್ಯವು ಸಾರಲಾಗಿದೆ. ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಿದ್ದಾನೆ.
LUK 16:17 ನಿಯಮದ ಒಂದು ಚುಕ್ಕೆಯು ಬಿದ್ದುಹೋಗುವುದಕ್ಕಿಂತ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.
LUK 16:18 “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.”
LUK 16:19 ಅನಂತರ ಯೇಸು ಹೀಗೆ ಒಂದು ಸಾಮ್ಯ ಹೇಳಿದರು, “ಬಹು ಬೆಲೆಬಾಳುವ ಹಾಗೂ ನಯವಾದ ನಾರುಮಡಿ ವಸ್ತ್ರಗಳನ್ನೂ ಧರಿಸಿಕೊಂಡು ಪ್ರತಿದಿನವೂ ಭೋಗಗಳಲ್ಲಿಯೂ ಆಡಂಭರದಲ್ಲಿಯೂ ಬಾಳುತ್ತಿದ್ದ ಒಬ್ಬ ಧನವಂತನಿದ್ದನು.
LUK 16:20 ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು.
LUK 16:21 ಧನವಂತನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುವುದಕ್ಕೆ ಆ ಲಾಜರನು ಹಂಬಲಿಸುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
LUK 16:22 “ಒಂದು ದಿನ ಆ ಭಿಕ್ಷುಕನು ಸತ್ತುಹೋದನು. ದೇವದೂತರು ಅವನನ್ನು ಅಬ್ರಹಾಮನ ಬಳಿಗೆ ತೆಗೆದುಕೊಂಡು ಹೋದರು. ಧನವಂತನು ಸಹ ಸತ್ತುಹೋದನು. ಅವನಿಗೆ ಶವಸಂಸ್ಕಾರವಾಯಿತು.
LUK 16:23 ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು.
LUK 16:24 ಆಗ ಧನವಂತನು, ‘ತಂದೆಯೇ ಅಬ್ರಹಾಮನೇ, ನನ್ನನ್ನು ಕರುಣಿಸು. ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ, ನನ್ನ ನಾಲಿಗೆಯನ್ನು ತಣ್ಣಗೆ ಮಾಡಲು ಅವನನ್ನು ಕಳುಹಿಸು, ಈ ಅಗ್ನಿಜ್ವಾಲೆಯಲ್ಲಿ ಯಾತನೆಪಡುತ್ತಿದ್ದೇನೆ,’ ಎಂದು ಕೂಗಿ ಹೇಳಿದನು.
LUK 16:25 “ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ.
LUK 16:26 ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು.
LUK 16:27 “ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ.
LUK 16:28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರೂ ಈ ಯಾತನೆಯ ಸ್ಥಳಕ್ಕೆ ಬಾರದ ಹಾಗೆ ಲಾಜರನು ಅವರನ್ನು ಎಚ್ಚರಿಸಲಿ,’ ಎಂದನು.
LUK 16:29 “ಅದಕ್ಕೆ ಅಬ್ರಹಾಮನು ಅವನಿಗೆ, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅದರಲ್ಲಿರುವುದಕ್ಕೆ ಅವರು ಕಿವಿಗೊಡಲಿ,’ ಎಂದನು.
LUK 16:30 “ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು.
LUK 16:31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು.”
LUK 17:1 ಯೇಸು ತಮ್ಮ ಶಿಷ್ಯರಿಗೆ: “ಜನರಿಗೆ ಪಾಪದ ಶೋಧನೆಗಳು ಬಂದೇ ಬರುತ್ತವೆ, ಆದರೆ ಅವು ಯಾರಿಂದ ಬರುತ್ತವೋ ಅವರಿಗೆ ಕಷ್ಟ.
LUK 17:2 ಅಂಥವರು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ನಡೆಸುವುದಕ್ಕಿಂತ ಅವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದೊಳಗೆ ಬಿಸಾಡುವುದು ಉತ್ತಮವಾಗಿರುವುದು.
LUK 17:3 ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ. “ನಿನ್ನ ಸಹೋದರನು ಅಥವಾ ಸಹೋದರಿ ನಿನಗೆ ವಿರೋಧವಾಗಿ ಪಾಪಮಾಡಿದರೆ, ಅವರನ್ನು ಗದರಿಸು; ಅವರು ಪಶ್ಚಾತ್ತಾಪಪಟ್ಟರೆ, ಅವರನ್ನು ಕ್ಷಮಿಸು.
LUK 17:4 ಅವರು ಒಂದು ದಿನದಲ್ಲಿ ಏಳು ಸಾರಿ ಪಾಪಮಾಡಿ, ಏಳು ಸಾರಿಯೂ ನಿನ್ನ ಬಳಿಗೆ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ,’ ಎಂದು ಹೇಳಿದರೆ ನೀನು ಅವರನ್ನು ಕ್ಷಮಿಸಬೇಕು,” ಎಂದರು.
LUK 17:5 ಆಗ ಅಪೊಸ್ತಲರು ಕರ್ತದೇವರಿಗೆ, “ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದರು.
LUK 17:6 ಅದಕ್ಕೆ ಯೇಸು, “ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ,’ ಎಂದು ಹೇಳುವುದಾದರೆ ಅದು ನಿಮಗೆ ವಿಧೇಯವಾಗುವುದು.
LUK 17:7 “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಕೆಲಸದವನಿರಲಾಗಿ, ಅವನು ಹೊಲದ ಕೆಲಸ ಅಥವಾ ಕುರಿ ಮೇಯಿಸಿ ಮನೆಗೆ ಬಂದ ಕೂಡಲೇ ಯಜಮಾನನು ಕೆಲಸದವನಿಗೆ, ‘ಬಾ ಊಟಕ್ಕೆ ಕುಳಿತುಕೋ,’ ಎಂದು ಹೇಳುವುದುಂಟೇ?
LUK 17:8 ಹಾಗೆ ಹೇಳದೆ, ‘ನೀನು ಊಟ ತಯಾರುಮಾಡಿ, ನೀನೂ ಸಿದ್ಧವಾಗಿ, ನಾನು ತಿಂದು ಕುಡಿಯುವ ತನಕ ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು,’ ಎಂದು ಅವನಿಗೆ ಹೇಳುವಿರಲ್ಲವೇ?
LUK 17:9 ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಕೆಲಸದವನು ಮಾಡಿದ್ದಕ್ಕೆ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವನೋ?
LUK 17:10 ಅದೇ ರೀತಿಯಾಗಿ, ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ, ‘ನಾವು ಅಯೋಗ್ಯರಾದ ಆಳುಗಳಷ್ಟೇ, ನಾವು ಮಾಡಬೇಕಾದ ಕರ್ತವ್ಯವನ್ನೇ ಮಾಡಿದ್ದೇವೆ ಎಂದು ನೀವು ಹೇಳಿರಿ,’ ” ಎಂದು ಹೇಳಿದರು.
LUK 17:11 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ, ಸಮಾರ್ಯ ಮತ್ತು ಗಲಿಲಾಯ ಪ್ರಾಂತಗಳ ಮಧ್ಯದಲ್ಲಿದ್ದ ಹಳ್ಳಿಯ ಮಾರ್ಗವಾಗಿ ಪ್ರಯಾಣಮಾಡಿದರು.
LUK 17:12 ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಮಂದಿ ಕುಷ್ಠರೋಗಿಗಳು ಯೇಸುವಿನ ಕಡೆಗೆ ಬಂದು ದೂರದಲ್ಲಿ ನಿಂತುಕೊಂಡು,
LUK 17:13 “ಯೇಸುವೇ, ಗುರುವೇ, ನಮ್ಮನ್ನು ಕರುಣಿಸು!” ಎಂದು ತಮ್ಮ ಧ್ವನಿಯೆತ್ತಿ ಕೂಗಿದರು.
LUK 17:14 ಯೇಸು ಅವರನ್ನು ನೋಡಿ, “ಹೋಗಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿರಿ,” ಎಂದರು. ಅವರು ಹೋಗುತ್ತಿರುವಾಗಲೇ ಸ್ವಸ್ಥರಾದರು.
LUK 17:15 ಅವರಲ್ಲಿ ಒಬ್ಬನು, ತಾನು ಸ್ವಸ್ಥವಾದದ್ದನ್ನು ಕಂಡು, ಮಹಾಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು,
LUK 17:16 ಯೇಸುವಿನ ಪಾದಕ್ಕೆ ಅಡ್ಡಬಿದ್ದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಅವನೋ ಸಮಾರ್ಯದವನಾಗಿದ್ದನು.
LUK 17:17 ಯೇಸು ಅವನಿಗೆ, “ಆ ಎಲ್ಲಾ ಹತ್ತು ಮಂದಿ ಸ್ವಸ್ಥರಾದರಲ್ಲವೆ? ಉಳಿದ ಒಂಬತ್ತು ಮಂದಿ ಎಲ್ಲಿ?
LUK 17:18 ದೇವರನ್ನು ಮಹಿಮೆಪಡಿಸುವುದಕ್ಕೆ ಈ ವಿದೇಶಿಯೇ ಹೊರತು ಯಾರೂ ಹಿಂದಿರುಗಲಿಲ್ಲವೇ?”
LUK 17:19 ಎಂದು ಹೇಳಿ ಅವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
LUK 17:20 ಒಂದು ದಿನ, ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಯೇಸುವನ್ನು ಕೇಳಲು, ಅವರಿಗೆ ಉತ್ತರವಾಗಿ ಯೇಸು, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವುದಿಲ್ಲ,
LUK 17:21 ‘ಇಗೋ ಇಲ್ಲಿದೆ,’ ಇಲ್ಲವೆ ‘ಅಗೋ ಅಲ್ಲಿದೆ,’ ಎಂದು ಹೇಳುವುದಕ್ಕಾಗುವುದಿಲ್ಲ ಏಕೆಂದರೆ ದೇವರ ರಾಜ್ಯವು ನಿಮ್ಮ ನಡುವೆ ಇದೆ,” ಎಂದರು.
LUK 17:22 ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿ ಒಂದನ್ನು ಕಾಣಬೇಕೆಂದು ನೀವು ಬಯಸುವ ಕಾಲ ಬರುತ್ತದೆ, ಆದರೂ ನೀವು ಅದನ್ನು ಕಾಣುವುದಿಲ್ಲ.
LUK 17:23 ಜನರು ನಿಮಗೆ, ‘ಇಲ್ಲಿ ಇದ್ದಾನೆ!’ ಇಲ್ಲವೆ, ‘ಅಲ್ಲಿ ಇದ್ದಾನೆ’ ಎಂದು ಹೇಳಿದರೆ ಅವರ ಹಿಂದೆ ಓಡಬೇಡಿರಿ.
LUK 17:24 ಏಕೆಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಪುತ್ರನಾದ ನಾನು ಬರುವ ದಿನದಲ್ಲಿ ಕಾಣಿಸಿಕೊಳ್ಳುವೆನು.
LUK 17:25 ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ.
LUK 17:26 “ನೋಹನ ದಿವಸಗಳು ಇದ್ದಂತೆಯೇ, ಅದೇ ರೀತಿಯಲ್ಲಿ ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿಯೂ ಇರುವುದು.
LUK 17:27 ನೋಹನು ನಾವೆಯಲ್ಲಿ ಸೇರಿದ ದಿನದವರೆಗೂ ಅವರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ನಾವೆಯ ಹೊರಗಡೆ ಇದ್ದವರೆಲ್ಲರನ್ನು ನಾಶಮಾಡಿತು.
LUK 17:28 “ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಜನರೆಲ್ಲರೂ ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
LUK 17:29 ಆದರೆ ಲೋಟನು ಸೊದೋಮಿನಿಂದ ತೆರಳಿದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಮಾಡಿತು.
LUK 17:30 “ಮನುಷ್ಯಪುತ್ರನಾದ ನನ್ನ ಪ್ರತ್ಯಕ್ಷತೆಯ ದಿನದಲ್ಲಿಯೂ ಹಾಗೆ ಇರುವುದು.
LUK 17:31 ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು, ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬರಬಾರದು. ಹಾಗೆಯೇ, ಹೊಲದಲ್ಲಿದ್ದವನು ಹಿಂದಿರುಗಿ ಬರಬಾರದು.
LUK 17:32 ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ!
LUK 17:33 ಯಾರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವರೋ ಅವರು ಅದನ್ನು ಕಳೆದುಕೊಳ್ಳುವರು ಮತ್ತು ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಕಾಪಾಡಿಕೊಳ್ಳುವರು.
LUK 17:34 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.
LUK 17:35 ಇಬ್ಬರು ಹೆಂಗಸರು ಜೊತೆಯಾಗಿ ಕಾಳುಬೀಸುತ್ತಿರುವರು; ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.
LUK 17:36 ಇಬ್ಬರು ಹೊಲದಲ್ಲಿರುವರು. ಒಬ್ಬರನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬರನ್ನು ಬಿಡಲಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
LUK 17:37 ಅವರು ಯೇಸುವಿಗೆ, “ಕರ್ತದೇವರೇ, ಇದು ಎಲ್ಲಿ ನಡೆಯುವುದು?” ಎಂದು ಕೇಳಲು ಯೇಸು ಅವರಿಗೆ, “ಹೆಣ ಎಲ್ಲಿದೆಯೋ, ಅಲ್ಲಿ ಹದ್ದುಗಳು ಬಂದು ಸೇರುತ್ತವೆ,” ಎಂದರು.
LUK 18:1 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು.
LUK 18:2 “ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
LUK 18:3 ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು.
LUK 18:4 “ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ,
LUK 18:5 ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’ ” ಎಂದುಕೊಂಡನು.
LUK 18:6 ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ.
LUK 18:7 ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ?
LUK 18:8 ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು.
LUK 18:9 ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು:
LUK 18:10 “ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು.
LUK 18:11 ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ.
LUK 18:12 ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.
LUK 18:13 “ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.
LUK 18:14 “ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
LUK 18:15 ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು.
LUK 18:16 ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.
LUK 18:17 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.
LUK 18:18 ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
LUK 18:19 ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.
LUK 18:20 ‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
LUK 18:21 ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು.
LUK 18:22 ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
LUK 18:23 ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು.
LUK 18:24 ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!
LUK 18:25 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
LUK 18:26 ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.
LUK 18:27 ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು.
LUK 18:28 ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.
LUK 18:29 ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು,
LUK 18:30 ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು.
LUK 18:31 ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು.
LUK 18:32 ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು.
LUK 18:33 ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.
LUK 18:34 ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ.
LUK 18:35 ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.
LUK 18:36 ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು.
LUK 18:37 “ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.
LUK 18:38 ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.
LUK 18:39 ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
LUK 18:40 ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ,
LUK 18:41 “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು. ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು.
LUK 18:42 ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
LUK 18:43 ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು.
LUK 19:1 ಯೇಸು ಯೆರಿಕೋ ಪಟ್ಟಣವನ್ನು ಪ್ರವೇಶಿಸಿ ಅಲ್ಲಿಂದ ಪ್ರಯಾಣ ಮಾಡುತ್ತಿದ್ದರು.
LUK 19:2 ಅಲ್ಲಿ ಜಕ್ಕಾಯ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದವರಲ್ಲಿ ಮುಖಂಡನೂ ಐಶ್ವರ್ಯವಂತನೂ ಆಗಿದ್ದನು.
LUK 19:3 ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು.
LUK 19:4 ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.
LUK 19:5 ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು.
LUK 19:6 ಜಕ್ಕಾಯನು ತಕ್ಷಣವೇ ಇಳಿದುಬಂದು ಅವರನ್ನು ಸಂತೋಷದಿಂದ ಬರಮಾಡಿಕೊಂಡನು.
LUK 19:7 ಇದನ್ನು ಕಂಡವರೆಲ್ಲರೂ, “ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ,” ಎಂದು ಗೊಣಗುಟ್ಟಿದರು.
LUK 19:8 ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
LUK 19:9 ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ?
LUK 19:10 ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
LUK 19:11 ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ, ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದುದರಿಂದಲೂ ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವುದೆಂದು ಅವರು ಭಾವಿಸಿದ್ದರಿಂದ
LUK 19:12 ಯೇಸು ಇನ್ನೊಂದು ಸಾಮ್ಯವನ್ನು ಹೇಳಿದರು: “ಘನವಂತನಾಗಿದ್ದ ಒಬ್ಬನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರುಗಿ ಬರುವುದಕ್ಕಾಗಿ ದೂರದೇಶಕ್ಕೆ ಹೊರಟುಹೋದನು.
LUK 19:13 ಆ ವ್ಯಕ್ತಿ ತನ್ನ ಹತ್ತು ಕೆಲಸಗಾರರನ್ನು ಕರೆದು, ಅವರಿಗೆ ಹತ್ತು ನಾಣ್ಯಗಳನ್ನು ಒಪ್ಪಿಸಿ, ‘ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರಿ,’ ಎಂದು ಹೇಳಿದನು.
LUK 19:14 “ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು.
LUK 19:15 “ಆದರೂ ಅವನು ತನ್ನ ರಾಜ್ಯವನ್ನು ಪಡೆದು ಹಿಂದಿರುಗಿದಾಗ, ವ್ಯಾಪಾರದಿಂದ ಇನ್ನೂ ಎಷ್ಟು ಲಾಭಗಳಿಸಿದರೆಂದು ತಿಳಿದುಕೊಳ್ಳುವಂತೆ, ತಾನು ಹಣ ಕೊಟ್ಟ ಆ ಕೆಲಸಗಾರರನ್ನು ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದನು.
LUK 19:16 “ಆಗ ಮೊದಲನೆಯವನು ಬಂದು, ‘ಸ್ವಾಮಿ, ನಿಮ್ಮ ಒಂದು ನಾಣ್ಯದಿಂದ ಇನ್ನೂ ಹತ್ತು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
LUK 19:17 “ಅದಕ್ಕೆ ಅವನು, ‘ಚೆನ್ನಾಗಿ ಮಾಡಿದಿ, ಒಳ್ಳೆಯ ಸೇವಕನೇ. ನೀನು ಅತ್ಯಂತ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ, ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು,’ ಎಂದನು.
LUK 19:18 “ಎರಡನೆಯವನು ಬಂದು, ‘ಸ್ವಾಮಿ, ನಿನ್ನ ಒಂದು ನಾಣ್ಯದಿಂದ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
LUK 19:19 “ಅದಕ್ಕೆ ಅವನು, ‘ನೀನು ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು,’ ಎಂದು ಅವನಿಗೆ ಹೇಳಿದನು.
LUK 19:20 “ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ.
LUK 19:21 ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು.
LUK 19:22 “ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
LUK 19:23 ಹಾಗಿದ್ದರೆ ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಏಕೆ ಹಾಕಲಿಲ್ಲ, ನಾನು ಹಿಂದಿರುಗಿದಾಗ ಹಣವನ್ನು ಬಡ್ಡಿ ಸಮೇತವಾಗಿ ತೆಗೆದುಕೊಳ್ಳುತ್ತಿದ್ದೆನು,’ ಎಂದು ಹೇಳಿದನು.
LUK 19:24 “ಯಜಮಾನನು ಹತ್ತಿರ ನಿಂತಿದ್ದವರಿಗೆ, ‘ಇವನಿಂದ ಆ ನಾಣ್ಯವನ್ನು ತೆಗೆದುಕೊಂಡು ಹತ್ತು ನಾಣ್ಯಗಳಿದ್ದವನಿಗೆ ಕೊಡಿರಿ,’ ಎಂದನು.
LUK 19:25 “ಆಗ ಅವರು, ‘ಸ್ವಾಮಿ, ಅವನಿಗೆ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ!’ ಎಂದರು.
LUK 19:26 “ಆಗ ಯಜಮಾನನು, ‘ಇದ್ದ ಪ್ರತಿಯೊಬ್ಬರಿಗೆ ಕೊಡಲಾಗುವುದು ಮತ್ತು ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ಕಸಿದುಕೊಳ್ಳಲಾಗುವುದು.
LUK 19:27 ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.”
LUK 19:28 ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು.
LUK 19:29 ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು,
LUK 19:30 “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
LUK 19:31 ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು.
LUK 19:32 ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು.
LUK 19:33 ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, “ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಕೇಳಿದ್ದಕ್ಕೆ,
LUK 19:34 ಅವರು, “ಇದು ಕರ್ತದೇವರಿಗೆ ಬೇಕಾಗಿದೆ,” ಎಂದರು.
LUK 19:35 ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು.
LUK 19:36 ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
LUK 19:37 ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:
LUK 19:38 “ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!” “ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!”
LUK 19:39 ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, “ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!” ಎಂದರು.
LUK 19:40 ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
LUK 19:41 ತರುವಾಯ ಯೇಸು ಯೆರೂಸಲೇಮ ಪಟ್ಟಣವನ್ನೂ ಅದರ ಸ್ಥಿತಿಯನ್ನೂ ಕಂಡು, ಅದರ ಸಲುವಾಗಿ ಅತ್ತು,
LUK 19:42 “ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.
LUK 19:43 ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು.
LUK 19:44 ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು.
LUK 19:45 ಅನಂತರ ಯೇಸು ದೇವಾಲಯದ ಅಂಗಳದೊಳಗೆ ಹೋಗಿ, ಅದರಲ್ಲಿ ವ್ಯಾಪಾರಮಾಡುವವರನ್ನು ಹೊರಗೆ ಹಾಕುವುದಕ್ಕೆ ಪ್ರಾರಂಭಿಸಿ,
LUK 19:46 ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’ ಎಂದು ಬರೆದದೆ. ನೀವೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,” ಎಂದರು.
LUK 19:47 ಯೇಸು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ ಮುಖ್ಯಯಾಜಕರೂ ನಿಯಮ ಬೋಧಕರೂ ಜನರ ಪ್ರಮುಖರೂ ಯೇಸುವನ್ನು ಕೊಲ್ಲುವುದಕ್ಕೆ ಹವಣಿಸುತ್ತಿದ್ದರು.
LUK 19:48 ಜನರೆಲ್ಲರೂ ಯೇಸು ಹೇಳುವ ಒಂದೊಂದು ಮಾತಿಗೂ ಬಹಳ ಲಕ್ಷ್ಯಕೊಟ್ಟು ಯೇಸುವಿನ ಉಪದೇಶವನ್ನು ಕೇಳುತ್ತಿದ್ದುದರಿಂದ, ಅವರಿಗೆ ಏನು ಮಾಡಬೇಕೋ ತೋಚಲಿಲ್ಲ.
LUK 20:1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು
LUK 20:2 ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು.
LUK 20:3 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ.
LUK 20:4 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು.
LUK 20:5 ಆಗ ಅವರು ತಮ್ಮೊಳಗೆ, “ ‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
LUK 20:6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ,
LUK 20:7 “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು.
LUK 20:8 ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
LUK 20:9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು.
LUK 20:10 ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
LUK 20:11 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
LUK 20:12 ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು.
LUK 20:13 “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು.
LUK 20:14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
LUK 20:15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು?
LUK 20:16 ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು.
LUK 20:17 ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು?
LUK 20:18 ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
LUK 20:19 ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು.
LUK 20:20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.
LUK 20:21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು.
LUK 20:22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು.
LUK 20:23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ,
LUK 20:24 “ಒಂದು ಬೆಳ್ಳಿ ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, “ಕೈಸರನದು,” ಎಂದರು.
LUK 20:25 ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು.
LUK 20:26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು.
LUK 20:27 ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ,
LUK 20:28 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ.
LUK 20:29 ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
LUK 20:30 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು.
LUK 20:31 ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು.
LUK 20:32 ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು.
LUK 20:33 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು.
LUK 20:34 ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ.
LUK 20:35 ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ.
LUK 20:36 ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ.
LUK 20:37 ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ.
LUK 20:38 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು.
LUK 20:39 ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು.
LUK 20:40 ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ.
LUK 20:41 ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ?
LUK 20:42 ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
LUK 20:43 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.” ’
LUK 20:44 ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು.
LUK 20:45 ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ,
LUK 20:46 “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ;
LUK 20:47 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
LUK 21:1 ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು.
LUK 21:2 ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಪೆಟ್ಟಿಗೆಯಲ್ಲಿ ಹಾಕುವುದನ್ನು ಯೇಸು ಕಂಡರು.
LUK 21:3 ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ.
LUK 21:4 ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು.
LUK 21:5 ತರುವಾಯ ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಅದು ಸುಂದರವಾದ ಕಲ್ಲುಗಳಿಂದಲೂ ದೇವರಿಗೆ ಪ್ರತಿಷ್ಠೆಯ ಕೊಡುಗೆಗಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡುತ್ತಿದ್ದರು.
LUK 21:6 ಆದರೆ ಯೇಸು, “ನೀವು ಕಾಣುತ್ತಿರುವ ಇವೆಲ್ಲವೂ ಕೆಡವಿಹಾಕಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯದ ಕಾಲ ಬರುವುದು,” ಎಂದರು.
LUK 21:7 ಆಗ ಅವರು ಯೇಸುವಿಗೆ, “ಬೋಧಕರೇ, ಇವುಗಳು ಯಾವಾಗ ಆಗುವುವು? ಇವುಗಳು ಸಂಭವಿಸುವುದಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಕೇಳಿದರು.
LUK 21:8 ಅದಕ್ಕೆ ಯೇಸು, “ನೀವು ಮೋಸಹೋಗದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಅವರು,’ ಎಂದೂ ‘ಸಮಯ ಸಮೀಪಿಸಿದೆ,’ ಎಂದೂ ಹಕ್ಕು ಸಾಧಿಸುವರು. ನೀವು ಅವರನ್ನು ಹಿಂಬಾಲಿಸಬೇಡಿರಿ.
LUK 21:9 ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಕೂಡಲೇ ಅಂತ್ಯ ಬರುವುದಿಲ್ಲ,” ಎಂದರು.
LUK 21:10 ಯೇಸು ಅವರಿಗೆ, “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.
LUK 21:11 ವಿವಿಧ ಕಡೆಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವುವು. ಭಯ ಹುಟ್ಟಿಸುವ ಘಟನೆಗಳೂ ಆಕಾಶದಿಂದ ಮಹಾಸೂಚನೆಗಳೂ ಆಗುವುವು.
LUK 21:12 “ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು, ಹಿಂಸಿಸಿ ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ, ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.
LUK 21:13 ಇದು ಸಾಕ್ಷಿ ನೀಡಲು ನಿಮಗೆ ಸದಾವಕಾಶವಾಗಿರುತ್ತದೆ.
LUK 21:14 ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.
LUK 21:15 ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು.
LUK 21:16 ತಂದೆತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿತರೂ ನಿಮ್ಮನ್ನು ಹಿಡಿದುಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು.
LUK 21:17 ಇದಲ್ಲದೆ ನನ್ನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
LUK 21:18 ಆದರೆ ನಿಮ್ಮ ತಲೆ ಕೂದಲೊಂದಾದರೂ ನಾಶವಾಗುವುದಿಲ್ಲ.
LUK 21:19 ನೀವು ನಿಮ್ಮ ಸಹನೆಯಿಂದ, ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವಿರಿ.
LUK 21:20 “ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲವು ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ.
LUK 21:21 ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ; ಪಟ್ಟಣದ ಮಧ್ಯದಲ್ಲಿರುವವರು ಹೊರಟು ಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಪಟ್ಟಣಕ್ಕೆ ಪ್ರವೇಶಿಸದೆ ಇರಲಿ.
LUK 21:22 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ.
LUK 21:23 ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು.
LUK 21:24 ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು.
LUK 21:25 “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು.
LUK 21:26 ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು.
LUK 21:27 ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು.
LUK 21:28 ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು.
LUK 21:29 ಯೇಸು ಶಿಷ್ಯರಿಗೆ ಈ ಸಾಮ್ಯವನ್ನು ಹೇಳಿದರು: “ಅಂಜೂರದ ಮರವನ್ನು ಮತ್ತು ಇತರ ಮರಗಳನ್ನು ಗಮನಿಸಿರಿ.
LUK 21:30 ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ.
LUK 21:31 ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ.
LUK 21:32 “ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
LUK 21:33 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
LUK 21:34 “ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ.
LUK 21:35 ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಬರುವುದು.
LUK 21:36 ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ, ನೀವು ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯರೆಂದು ಎಣಿಸಿಕೊಳ್ಳುವಂತೆಯೂ ಮನುಷ್ಯಪುತ್ರನಾದ ನನ್ನ ಮುಂದೆ ನಿಂತುಕೊಳ್ಳುವಂತೆಯೂ ಯಾವಾಗಲೂ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ,” ಎಂದರು.
LUK 21:37 ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು.
LUK 21:38 ಜನರೆಲ್ಲರೂ ಬೆಳಗಿನ ಜಾವದಲ್ಲಿ ಎದ್ದು ಯೇಸುವಿನ ಉಪದೇಶವನ್ನು ಕೇಳುವುದಕ್ಕಾಗಿ ದೇವಾಲಯಕ್ಕೆ ಬರುತ್ತಿದ್ದರು.
LUK 22:1 ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಸಮೀಪವಾಗಿತ್ತು.
LUK 22:2 ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು.
LUK 22:3 ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು.
LUK 22:4 ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು.
LUK 22:5 ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು.
LUK 22:6 ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು.
LUK 22:7 ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು.
LUK 22:8 ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.
LUK 22:9 ಅವರು ಯೇಸುವಿಗೆ, “ನಾವು ಎಲ್ಲಿ ಸಿದ್ಧಮಾಡಬೇಕು?” ಎಂದರು.
LUK 22:10 ಆಗ ಯೇಸು ಅವರಿಗೆ, “ನೀವು ಪಟ್ಟಣವನ್ನು ಪ್ರವೇಶಿಸಿದಾಗ, ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡಿರುವ ಒಬ್ಬನು ನಿಮ್ಮನ್ನು ಸಂಧಿಸುವನು. ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.
LUK 22:11 ನೀವು ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ’ ಎಂದು ಹೇಳಿರಿ.
LUK 22:12 ಅವನು ಕ್ರಮಪಡಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿಯೇ ಪಸ್ಕಭೋಜನ ಸಿದ್ಧಪಡಿಸಿರಿ,” ಎಂದರು.
LUK 22:13 ಅವರು ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡು, ಪಸ್ಕವನ್ನು ಸಿದ್ಧಮಾಡಿದರು.
LUK 22:14 ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು.
LUK 22:15 ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.
LUK 22:16 ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕಭೋಜನ ಮಾಡುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
LUK 22:17 ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, “ಇದನ್ನು ತೆಗೆದುಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ.
LUK 22:18 ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು.
LUK 22:19 ಆಮೇಲೆ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
LUK 22:20 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.
LUK 22:21 ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ.
LUK 22:22 ನೇಮಕವಾದ ಪ್ರಕಾರ ಮನುಷ್ಯಪುತ್ರನಾದ ನಾನು ಹೊರಟುಹೋಗುತ್ತೇನೆ; ಆದರೆ ನನಗೆ ದ್ರೋಹಬಗೆಯುವವನಿಗೋ ಎಷ್ಟೋ ಕಷ್ಟ!” ಎಂದು ಹೇಳಿದರು.
LUK 22:23 ಆಗ ಇದನ್ನು ದ್ರೋಹಬಗೆಯುವವನು ಯಾವನು ಎಂದು ಶಿಷ್ಯರು ತಮ್ಮೊಳಗೆ ಪ್ರಶ್ನೆ ಮಾಡಲಾರಂಭಿಸಿದರು.
LUK 22:24 ಇದಲ್ಲದೆ ತಮ್ಮೊಳಗೆ ಯಾರು ಅತಿ ದೊಡ್ಡವನೆಂಬುದಾಗಿ ಶಿಷ್ಯರಲ್ಲಿ ವಿವಾದವು ಪ್ರಾರಂಭವಾಯಿತು.
LUK 22:25 ಆಗ ಯೇಸು ಅವರಿಗೆ, “ಯೆಹೂದ್ಯರಲ್ಲದವರ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ; ಅವರ ಮೇಲೆ ಅಧಿಕಾರವನ್ನು ನಡೆಸುವವರು ಉಪಕಾರಿಗಳು ಎಂದು ಎಣಿಸಿಕೊಳ್ಳುತ್ತಾರೆ.
LUK 22:26 ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ.
LUK 22:27 ಯಾರು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆ ಮಾಡುವವನೋ? ಊಟಕ್ಕೆ ಕುಳಿತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ.
LUK 22:28 ನೀವೇ, ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ನಿಂತವರು.
LUK 22:29 ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ.
LUK 22:30 ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
LUK 22:31 “ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ.
LUK 22:32 ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು.
LUK 22:33 ಆದರೆ ಅವನು ಯೇಸುವಿಗೆ, “ಕರ್ತದೇವರೇ, ನಾನು ನಿಮ್ಮ ಜೊತೆಯಲ್ಲಿ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.
LUK 22:34 ಆಗ ಯೇಸು, “ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ, ಈ ದಿವಸ ಹುಂಜ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ,” ಎಂದರು.
LUK 22:35 ನಂತರ ಯೇಸು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಪ್ರಯಾಣದ ಚೀಲ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದಾಗ ನೀವು ಏನಾದರೂ ಕೊರತೆಪಟ್ಟಿರೋ?” ಎಂದು ಕೇಳಲು, ಶಿಷ್ಯರು, “ಏನೂ ಇಲ್ಲ,” ಎಂದರು.
LUK 22:36 ಆಗ ಯೇಸು ಅವರಿಗೆ, “ಆದರೆ ಈಗ ಹಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಅದರಂತೆಯೇ ಪ್ರಯಾಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಖಡ್ಗಯಿಲ್ಲದವನು ತನ್ನ ಬಟ್ಟೆಯನ್ನು ಮಾರಿ ಅದನ್ನು ಕೊಂಡುಕೊಳ್ಳಲಿ.
LUK 22:37 ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’ ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು.
LUK 22:38 ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು. ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು.
LUK 22:39 ಯೇಸು ಹೊರಗೆ ಬಂದು ತಮ್ಮ ವಾಡಿಕೆಯಂತೆ ಓಲಿವ್ ಗುಡ್ಡಕ್ಕೆ ಹೋದರು. ಯೇಸುವಿನ ಶಿಷ್ಯರೂ ಅವರನ್ನು ಹಿಂಬಾಲಿಸಿದರು.
LUK 22:40 ಯೇಸು ಆ ಸ್ಥಳದಲ್ಲಿದ್ದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ,” ಎಂದರು.
LUK 22:41 ಯೇಸು ಅವರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣಕಾಲೂರಿ,
LUK 22:42 “ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ,” ಎಂದು ಪ್ರಾರ್ಥಿಸಿದರು.
LUK 22:43 ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು.
LUK 22:44 ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು.
LUK 22:45 ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ,
LUK 22:46 “ನೀವು ನಿದ್ರೆ ಮಾಡುವುದು ಏಕೆ? ಶೋಧನೆಗೆ ಒಳಗಾಗದಂತೆ ಎದ್ದು ಪ್ರಾರ್ಥಿಸಿರಿ,” ಎಂದರು.
LUK 22:47 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನು ಅವರಿಗೆ ಮುಂದಾಳಾಗಿ ಬಂದು, ಮುದ್ದಿಡುವುದಕ್ಕಾಗಿ ಯೇಸುವನ್ನು ಸಮೀಪಿಸಿದನು.
LUK 22:48 ಆಗ ಯೇಸು ಅವನಿಗೆ, “ಯೂದಾ, ಮುದ್ದಿನಿಂದ ಮನುಷ್ಯಪುತ್ರನಾದ ನನಗೆ ದ್ರೋಹಮಾಡುತ್ತೀಯೋ?” ಎಂದರು.
LUK 22:49 ಯೇಸುವಿನ ಸುತ್ತಲಿದ್ದ ಶಿಷ್ಯರು ಮುಂದೆ ಸಂಭವಿಸುವುದನ್ನು ಅರಿತು ಯೇಸುವಿಗೆ, “ಕರ್ತದೇವರೇ, ನಾವು ಖಡ್ಗದಿಂದ ಹೊಡೆಯೋಣವೋ?” ಎಂದು ಕೇಳಿದರು.
LUK 22:50 ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು.
LUK 22:51 ಆದರೆ ಯೇಸು, “ಸಾಕು ಇಂಥದ್ದು ಬೇಡ!” ಎಂದು ಹೇಳಿ, ಅವನ ಕಿವಿಯನ್ನು ಮುಟ್ಟಿ ಸ್ವಸ್ಥಮಾಡಿದರು.
LUK 22:52 ಆಗ ಯೇಸು ತಮ್ಮ ಬಳಿಗೆ ಬಂದಿದ್ದ ಮುಖ್ಯಯಾಜಕರಿಗೂ ದೇವಾಲಯದ ಕಾವಲಾಧಿಕಾರಿಗಳಿಗೂ ಹಿರಿಯರಿಗೂ, “ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬಂದ ಹಾಗೆ ಖಡ್ಗಗಳಿಂದಲೂ ದೊಣ್ಣೆಗಳಿಂದಲೂ ನೀವು ಹೊರಟು ಬಂದಿರುವಿರೋ?
LUK 22:53 ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು.
LUK 22:54 ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು.
LUK 22:55 ಅವರು ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ, ಅದರ ಸುತ್ತಲೂ ಒಟ್ಟಾಗಿ ಕುಳಿತುಕೊಂಡಾಗ ಪೇತ್ರನೂ ಅವರ ಸಂಗಡ ಸೇರಿ ಕುಳಿತುಕೊಂಡನು.
LUK 22:56 ಆದರೆ ಒಬ್ಬ ದಾಸಿಯು ಬೆಂಕಿಯ ಬಳಿಯಲ್ಲಿ ಕುಳಿತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ, “ಈ ಮನುಷ್ಯನು ಸಹ ಯೇಸುವಿನ ಸಂಗಡ ಇದ್ದವನು,” ಎಂದಳು.
LUK 22:57 ಆದರೆ ಪೇತ್ರನು ಅಲ್ಲಗಳೆದು, “ಅಮ್ಮಾ, ನಾನು ಯೇಸುವನ್ನು ಅರಿಯೆನು,” ಎಂದನು.
LUK 22:58 ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು, “ಇಲ್ಲಪ್ಪ, ನಾನಲ್ಲ,” ಎಂದನು.
LUK 22:59 ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು.
LUK 22:60 ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು.
LUK 22:61 ಆಗ ಕರ್ತದೇವರು ಹಿಂದಿರುಗಿ ಪೇತ್ರನ ಕಡೆಗೆ ದಿಟ್ಟಿಸಿ ನೋಡಿದರು. “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ,” ಎಂದು ಕರ್ತದೇವರು ತನಗೆ ಹೇಳಿದ್ದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು
LUK 22:62 ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
LUK 22:63 ಯೇಸುವನ್ನು ಕಾಯುತ್ತಿದ್ದ ಜನರು, ಹಾಸ್ಯಮಾಡಿ ಅವರನ್ನು ಹೊಡೆದರು.
LUK 22:64 ಇದಲ್ಲದೆ ಅವರು ಯೇಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಅವರ ಮುಖದ ಮೇಲೆ ಹೊಡೆದು ಯೇಸುವಿಗೆ, “ನಿನ್ನನ್ನು ಹೊಡೆದವರು ಯಾರು? ಪ್ರವಾದನೆ ಹೇಳು,” ಎಂದರು.
LUK 22:65 ಅವರು ಯೇಸುವಿಗೆ ವಿರೋಧವಾಗಿ ಅನೇಕ ದೂಷಣೆಯ ಮಾತುಗಳನ್ನಾಡಿದರು.
LUK 22:66 ಬೆಳಗಾದ ಕೂಡಲೇ ಜನರ ಹಿರಿಯರೂ ಮುಖ್ಯಯಾಜಕರೂ ನಿಯಮ ಬೋಧಕರೂ ಒಟ್ಟಾಗಿ ಬಂದು ಯೇಸುವನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ,
LUK 22:67 “ನೀನು ಆ ಕ್ರಿಸ್ತನೋ? ನಮಗೆ ಹೇಳು,” ಎಂದರು. ಯೇಸು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ನಂಬುವುದಿಲ್ಲ.
LUK 22:68 ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರ ಕೊಡುವುದಿಲ್ಲ.
LUK 22:69 ಆದರೆ ಇಂದಿನಿಂದ ಮನುಷ್ಯಪುತ್ರನಾದ ನಾನು ಸರ್ವಶಕ್ತರಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡಿರುವೆನು,” ಎಂದರು.
LUK 22:70 ಆಗ ಅವರೆಲ್ಲರೂ, “ಹಾಗಾದರೆ ನೀನು ದೇವರ ಪುತ್ರನೋ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಉತ್ತರಕೊಟ್ಟರು.
LUK 22:71 ಆಗ ಅವರು, “ನಮಗೆ ಇನ್ನೇನು ಸಾಕ್ಷಿ ಬೇಕು? ನಾವೇ ಈತನ ಬಾಯಿಂದ ಕೇಳಿದ್ದೇವಲ್ಲಾ?” ಎಂದರು.
LUK 23:1 ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು.
LUK 23:2 ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.
LUK 23:3 ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು.
LUK 23:4 ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು.
LUK 23:5 ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು.
LUK 23:6 ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು.
LUK 23:7 ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು.
LUK 23:8 ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು.
LUK 23:9 ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ.
LUK 23:10 ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು.
LUK 23:11 ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು.
LUK 23:12 ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು.
LUK 23:13 ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ,
LUK 23:14 “ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ.
LUK 23:15 ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
LUK 23:16 ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
LUK 23:17 ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.
LUK 23:18 ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು.
LUK 23:19 ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.
LUK 23:20 ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು.
LUK 23:21 ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.
LUK 23:22 ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
LUK 23:23 ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು.
LUK 23:24 ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು.
LUK 23:25 ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.
LUK 23:26 ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.
LUK 23:27 ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.
LUK 23:28 ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ.
LUK 23:29 ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ.
LUK 23:30 ಆಗ ಅವರು, “ ‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!” ’ ಎಂದು ಹೇಳಲಾರಂಭಿಸುವರು.
LUK 23:31 ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು.
LUK 23:32 ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು.
LUK 23:33 ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
LUK 23:34 ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.
LUK 23:35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
LUK 23:36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು,
LUK 23:37 “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು.
LUK 23:38 ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು: ಈತನು ಯೆಹೂದ್ಯರ ಅರಸನು.
LUK 23:39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು.
LUK 23:40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ?
LUK 23:41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.
LUK 23:42 ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು.
LUK 23:43 ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
LUK 23:44 ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
LUK 23:45 ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು.
LUK 23:46 ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
LUK 23:47 ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
LUK 23:48 ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು.
LUK 23:49 ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
LUK 23:50 ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.
LUK 23:51 ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು.
LUK 23:52 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು.
LUK 23:53 ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ.
LUK 23:54 ಅಂದು ಸಿದ್ಧತೆಯ ದಿನವಾಗಿತ್ತು. ಸಬ್ಬತ್ ದಿನ ಪ್ರಾರಂಭವಾಗಲಿತ್ತು.
LUK 23:55 ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು.
LUK 23:56 ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.
LUK 24:1 ವಾರದ ಮೊದಲನೆಯ ದಿನದ, ಬೆಳಗಿನ ಜಾವದಲ್ಲಿ, ಆ ಸ್ತ್ರೀಯರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಹೋದರು.
LUK 24:2 ಆಗ ಸಮಾಧಿಯಿಂದ ಬಂಡೆ ಉರುಳಿಸಲಾಗಿದ್ದನ್ನು ಅವರು ಕಂಡರು,
LUK 24:3 ಅವರು ಅದರ ಒಳಗೆ ಪ್ರವೇಶಿಸಿದಾಗ, ಅಲ್ಲಿ ಕರ್ತದೇವರು ಯೇಸುವಿನ ದೇಹವನ್ನು ಕಾಣಲಿಲ್ಲ.
LUK 24:4 ಅವರು ಬಹಳವಾಗಿ ಗಲಿಬಿಲಿಗೊಂಡರು. ಆಗ ಮಿಂಚಿನಂತೆ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿ ನಿಂತಿದ್ದರು.
LUK 24:5 ಆ ಸ್ತ್ರೀಯರು ಭಯಪಟ್ಟು ತಮ್ಮ ದೃಷ್ಟಿಯನ್ನು ನೆಲದ ಕಡೆಗೆ ನಾಟಿರಲು, ಆ ಪುರುಷರು ಅವರಿಗೆ, “ಜೀವಿಸುವವರನ್ನು ಸತ್ತವರೊಳಗೆ ನೀವು ಏಕೆ ಹುಡುಕುತ್ತೀರಿ?
LUK 24:6 ಅವರು ಇಲ್ಲಿಲ್ಲ; ಜೀವಂತರಾಗಿ ಎದ್ದಿದ್ದಾರೆ! ಅವರು ಇನ್ನೂ ಗಲಿಲಾಯದಲ್ಲಿದ್ದಾಗಲೇ:
LUK 24:7 ‘ಮನುಷ್ಯಪುತ್ರನಾದ ನಾನು ಪಾಪಿಷ್ಠರ ಕೈಗೆ ಒಪ್ಪಿಸಿದವನಾಗಿ, ಶಿಲುಬೆಗೆ ಹಾಕಲಾಗಿ ಮೂರನೆಯ ದಿನದಲ್ಲಿ ತಿರುಗಿ ಜೀವಂತನಾಗಿ ಏಳುವೆನು,’ ಎಂದು ನಿಮಗೆ ಹೇಳಿದ್ದನ್ನು ನೀವು ನೆನಪುಮಾಡಿಕೊಳ್ಳಿರಿ,” ಎಂದರು.
LUK 24:8 ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ನೆನಪು ಮಾಡಿಕೊಂಡರು.
LUK 24:9 ಸಮಾಧಿಯಿಂದ ಆ ಸ್ತ್ರೀಯರು ಹಿಂತಿರುಗಿ ಹೋಗಿ, ಆ ಹನ್ನೊಂದು ಮಂದಿಗೂ ಉಳಿದವರೆಲ್ಲರಿಗೂ ಈ ಎಲ್ಲಾ ವಿಷಯಗಳನ್ನು ತಿಳಿಸಿದರು.
LUK 24:10 ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿ ಮರಿಯಳು ಮತ್ತು ಅವರೊಂದಿಗಿದ್ದ ಬೇರೆ ಸ್ತ್ರೀಯರು ಅಪೊಸ್ತಲರಿಗೆ ಈ ವಿಷಯಗಳನ್ನು ಹೇಳಿದರು.
LUK 24:11 ಅವರಿಗಾದರೋ ಈ ಸ್ತ್ರೀಯರು ಹೇಳಿದ್ದು ಕಟ್ಟು ಕಥೆಗಳಂತೆ ಕಂಡವು, ಅವರು ಅವುಗಳನ್ನು ನಂಬಲಿಲ್ಲ.
LUK 24:12 ಆಗ ಪೇತ್ರನು ಎದ್ದು, ಸಮಾಧಿ ಬಳಿಗೆ ಓಡಿಹೋಗಿ, ಅದರೊಳಗೆ ಬಗ್ಗಿ ನೋಡಿದಾಗ, ಅಲ್ಲಿ ನಾರುಬಟ್ಟೆಗಳು ಮಾತ್ರ ಬಿದ್ದಿರುವುದನ್ನು ಕಂಡು ನಡೆದ ಸಂಭವಕ್ಕಾಗಿ ತನ್ನೊಳಗೆ ಆಶ್ಚರ್ಯಪಡುತ್ತಾ ಹೊರಟುಹೋದನು.
LUK 24:13 ಅದೇ ದಿನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದರು.
LUK 24:14 ಅವರು ನಡೆದ ಈ ಎಲ್ಲಾ ಸಂಭವಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು.
LUK 24:15 ಅವರು ಮಾತನಾಡಿಕೊಂಡು ಚರ್ಚಿಸುತ್ತಾ ಹೋಗಲು, ಯೇಸು ತಾವೇ ಅವರನ್ನು ಸಮೀಪಿಸಿ ಅವರ ಜೊತೆಯಲ್ಲಿ ಹೋದರು;
LUK 24:16 ಆದರೆ ಅವರಿಗೆ ತಿಳಿಯದ ಹಾಗೆ ಕಣ್ಣಿಗೆ ಮರೆಯಾಗಿದ್ದರಿಂದ ಅವರು ಯೇಸುವಿನ ಗುರುತು ಹಿಡಿಯಲಿಲ್ಲ.
LUK 24:17 ಆಗ ಯೇಸು ಅವರಿಗೆ, “ನೀವು ದಾರಿಯಲ್ಲಿ ಒಬ್ಬರಿಗೊಬ್ಬರು ಚರ್ಚೆಮಾಡಿಕೊಂಡು ಹೋಗುತ್ತಿದ್ದೀರಲ್ಲಾ ಏನು ವಿಷಯ?” ಎಂದು ಕೇಳಿದರು. ಅವರು ತಕ್ಷಣವೇ ನಿಂತರು, ಅವರ ಮುಖ ದುಖಃಭರಿತವಾಗಿತ್ತು.
LUK 24:18 ಆಗ ಅವರಲ್ಲಿ ಒಬ್ಬನಾದ, ಕ್ಲೆಯೊಫ ಎಂಬುವನು ಯೇಸುವಿಗೆ, “ಇತ್ತೀಚೆಗೆ ಯೆರೂಸಲೇಮಿನೊಳಗೆ ನಡೆದಿರುವ ಘಟನೆಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನೇ ಆಗಿದ್ದೀಯಾ?” ಎಂದು ಕೇಳಿದನು.
LUK 24:19 ಅದಕ್ಕೆ ಯೇಸು ಅವರಿಗೆ, “ಯಾವ ಘಟನೆ?” ಎಂದು ಕೇಳಲು, ಅವರು ಯೇಸುವಿಗೆ, “ನಜರೇತಿನ ಯೇಸುವಿನ ವಿಷಯಗಳೇ, ಅವರು ಕೃತ್ಯಗಳಲ್ಲಿಯೂ ಮಾತುಗಳಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಜನರೆಲ್ಲರ ದೃಷ್ಟಿಯಲ್ಲಿಯೂ ಬಹುಶಕ್ತಿವಂತರಾಗಿದ್ದ ಪ್ರವಾದಿಯಾಗಿದ್ದರು.
LUK 24:20 ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಯೇಸುವನ್ನು ಮರಣದಂಡನೆಗೆ ಒಪ್ಪಿಸಿಕೊಟ್ಟು, ಅವರನ್ನು ಶಿಲುಬೆಗೆ ಹಾಕಿದರು.
LUK 24:21 ಆದರೆ ಇಸ್ರಾಯೇಲರನ್ನು ವಿಮೋಚಿಸುವವರು ಆ ಯೇಸುವೇ ಎಂದು ನಾವು ನಂಬಿಕೊಂಡಿದ್ದೆವು. ಇದಲ್ಲದೆ ಈ ಘಟನೆಗಳು ನಡೆದು ಇದು ಮೂರನೆಯ ದಿನವಾಗಿದೆ.
LUK 24:22 ನಮ್ಮವರಲ್ಲಿ, ಕೆಲವು ಸ್ತ್ರೀಯರು ಇಂದು ಬೆಳಗಿನ ಜಾವದಲ್ಲಿ ಸಮಾಧಿಗೆ ಹೋಗಿದ್ದರು.
LUK 24:23 ಅಲ್ಲಿ ಅವರು ಯೇಸುವಿನ ದೇಹವನ್ನು ಕಾಣದೆ ಬಂದು, ಯೇಸು ಜೀವದಿಂದ ಎದ್ದಿದ್ದಾರೆ, ಎಂದು ಹೇಳಿದ ದೇವದೂತರನ್ನೂ ಕಂಡಿದ್ದ ದೃಶ್ಯವನ್ನೂ ನಮಗೆ ಹೇಳಿದರು.
LUK 24:24 ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ, ಆ ಸ್ತ್ರೀಯರು ಹೇಳಿದ್ದನ್ನೇ ಕಂಡರು. ಆದರೆ ಅವರು ಯೇಸುವನ್ನು ಮಾತ್ರ ಕಾಣಲಿಲ್ಲ,” ಎಂದರು.
LUK 24:25 ಆಗ ಯೇಸು ಅವರಿಗೆ, “ಎಂಥ ಬುದ್ಧಿಹೀನರು ನೀವು, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವುದರಲ್ಲಿ ಮಂದ ಹೃದಯದವರೇ!
LUK 24:26 ಶ್ರಮೆಗಳನ್ನು ಅನುಭವಿಸಿದ ಮೇಲೆ ಕ್ರಿಸ್ತನು ಮಹಿಮೆಯಲ್ಲಿ ಪ್ರವೇಶಿಸುವುದು ಅಗತ್ಯವಾಗಿತ್ತಲ್ಲವೇ?” ಎಂದು ಹೇಳಿ,
LUK 24:27 ಮೋಶೆಯ ಮತ್ತು ಎಲ್ಲಾ ಪ್ರವಾದಿಗಳಿಂದ ಆರಂಭಿಸಿ, ಪವಿತ್ರ ವೇದಗಳಲ್ಲಿ ತನ್ನ ವಿಷಯವಾಗಿ ಬರೆದವುಗಳನ್ನು ಯೇಸು ಅವರಿಗೆ ವಿವರಿಸಿದರು.
LUK 24:28 ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸಮೀಪಿಸುತ್ತಿದ್ದಾಗ, ಯೇಸು ಮುಂದೆ ಹೋಗುವವರಂತೆ ವರ್ತಿಸಿದರು.
LUK 24:29 ಆದರೆ ಅವರು ಯೇಸುವಿಗೆ, “ನಮ್ಮೊಂದಿಗೆ ಇರು, ಈಗ ಸಂಜೆಯಾಯಿತು. ಕತ್ತಲಾಯಿತು,” ಎಂದು ಹೇಳಿ, ಆತನನ್ನು ಬಲವಂತ ಮಾಡಿದರು. ಆಗ ಯೇಸು ಅವರೊಂದಿಗೆ ಇರುವುದಕ್ಕಾಗಿ ಹೋದರು.
LUK 24:30 ಯೇಸು ಆ ಇಬ್ಬರು ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡಿರಲು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ, ಮುರಿದು ಅವರಿಗೆ ಕೊಟ್ಟರು.
LUK 24:31 ಆಗ ಅವರ ಕಣ್ಣುಗಳು ತೆರೆದವು. ಅವರು ಯೇಸುವಿನ ಗುರುತು ಹಿಡಿದರು ಮತ್ತು ಯೇಸು ಅವರ ದೃಷ್ಟಿಗೆ ಅದೃಶ್ಯರಾದರು.
LUK 24:32 ಅವರು ಒಬ್ಬರಿಗೊಬ್ಬರು, “ಅವರು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ, ಪವಿತ್ರ ವೇದವನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ಬೆಂಕಿಯಂತೆ ದಹಿಸಿತಲ್ಲವೇ?” ಎಂದುಕೊಂಡರು.
LUK 24:33 ಆ ಇಬ್ಬರು ಶಿಷ್ಯರು ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರೊಂದಿಗಿದ್ದವರೂ ಒಟ್ಟಾಗಿ ಕೂಡಿಕೊಂಡಿರುವುದನ್ನು ಕಂಡರು.
LUK 24:34 ಅಲ್ಲಿದ್ದವರು, “ಇದು ನಿಜವೇ! ಕರ್ತದೇವರು ಜೀವಂತರಾಗಿ ಎದ್ದಿದ್ದಾರೆ ಮತ್ತು ಸೀಮೋನನಿಗೆ ಕಾಣಿಸಿಕೊಂಡಿದ್ದಾರೆ,” ಎಂದು ಹೇಳಿದರು.
LUK 24:35 ಆಗ ಆ ಇಬ್ಬರು ಶಿಷ್ಯರು ದಾರಿಯಲ್ಲಿ ನಡೆದವುಗಳನ್ನೂ ರೊಟ್ಟಿ ಮುರಿಯುವುದರಲ್ಲಿ ಅವರು ಹೇಗೆ ಯೇಸುವಿನ ಗುರುತು ಹಿಡಿದರೆಂದೂ ವಿವರಿಸಿದರು.
LUK 24:36 ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗ, ಯೇಸು ತಾವೇ ಅವರ ನಡುವೆ ನಿಂತು ಅವರಿಗೆ, “ನಿಮಗೆ ಸಮಾಧಾನವಾಗಲಿ,” ಎಂದರು.
LUK 24:37 ಅವರು ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿ, ದಿಗಿಲುಬಿದ್ದು ಭಯಹಿಡಿದವರಾದರು.
LUK 24:38 ಆದರೆ ಯೇಸು ಅವರಿಗೆ, “ಏಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಸಂಶಯಗಳು ಹುಟ್ಟುವುದು ಏಕೆ?
LUK 24:39 ನನ್ನ ಕೈಗಳನ್ನು ಮತ್ತು ನನ್ನ ಕಾಲುಗಳನ್ನು ನೋಡಿರಿ. ನಾನೇ ಆತನು! ನನ್ನನ್ನು ಮುಟ್ಟಿ ನೋಡಿರಿ; ನೀವು ಕಾಣುವಂತೆ ನನಗಿರುವ ಮಾಂಸ ಮತ್ತು ಎಲುಬುಗಳು ಭೂತಕ್ಕೆ ಇಲ್ಲ,” ಎಂದರು.
LUK 24:40 ಹೀಗೆ ಯೇಸು ಮಾತನಾಡಿದ ಮೇಲೆ, ತನ್ನ ಕೈಗಳನ್ನು ತನ್ನ ಕಾಲುಗಳನ್ನು ಅವರಿಗೆ ತೋರಿಸಿದರು.
LUK 24:41 ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರುವಾಗ ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದರು.
LUK 24:42 ಅವರು ಯೇಸುವಿಗೆ ಒಂದು ತುಂಡು ಸುಟ್ಟ ಮೀನನ್ನು ಕೊಟ್ಟರು.
LUK 24:43 ಯೇಸು ತೆಗೆದುಕೊಂಡು ಅವರ ಮುಂದೆ ತಿಂದರು.
LUK 24:44 ಯೇಸು ಶಿಷ್ಯರಿಗೆ, “ಮೋಶೆಯ ನಿಯಮದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆದಿರುವುದೆಲ್ಲವೂ ನೆರವೇರುವುದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ನಿಮಗೆ ಹೇಳಿದ್ದೇನೆ,” ಎಂದರು.
LUK 24:45 ತರುವಾಯ ಅವರು ಪವಿತ್ರ ವೇದಗಳನ್ನು ಅರ್ಥಮಾಡಿಕೊಳ್ಳುವಂತೆ ಯೇಸು ಅವರ ಬುದ್ಧಿಯನ್ನು ತೆರೆದರು.
LUK 24:46 ಯೇಸು ಅವರಿಗೆ, “ಕ್ರಿಸ್ತನು ಹೀಗೆ ಬಾಧೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವುದು ಅಗತ್ಯವಾಗಿತ್ತೆಂತಲೂ
LUK 24:47 ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ.
LUK 24:48 ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾಗಿದ್ದೀರಿ.
LUK 24:49 ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮಗೆ ಕಳುಹಿಸುವೆನು; ಆದರೆ ನೀವು ಪರಲೋಕದ ಶಕ್ತಿಯನ್ನು ಹೊದಿಸುವ ತನಕ, ಈ ಪಟ್ಟಣದಲ್ಲಿಯೇ ಕಾದುಕೊಂಡಿರಿ,” ಎಂದರು.
LUK 24:50 ಯೇಸು ಶಿಷ್ಯರನ್ನು ಬೇಥಾನ್ಯದವರೆಗೆ ಕರೆದುಕೊಂಡು ಹೋಗಿ, ತಮ್ಮ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದರು.
LUK 24:51 ಯೇಸು ಅವರನ್ನು ಆಶೀರ್ವದಿಸುತ್ತಿರುವಾಗಲೇ ಅವರನ್ನು ಬಿಟ್ಟು ಮೇಲೆ ಪರಲೋಕಕ್ಕೆ ಏರಿದರು.
LUK 24:52 ಆಗ ಶಿಷ್ಯರು ಯೇಸುವನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂದಿರುಗಿದರು.
LUK 24:53 ಅವರು ಯಾವಾಗಲೂ ದೇವಾಲಯದಲ್ಲಿ, ದೇವರನ್ನು ಸ್ತುತಿಸುತ್ತಾ ಇದ್ದರು.
JOH 1:1 ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು.
JOH 1:2 ಆ ವಾಕ್ಯವೆಂಬುವವರು ಆದಿಯಲ್ಲಿ ದೇವರ ಬಳಿಯಲ್ಲಿದ್ದರು.
JOH 1:3 ಆ ವಾಕ್ಯವೆಂಬುವವರ ಮೂಲಕವಾಗಿಯೇ ಸಮಸ್ತವೂ ಸೃಷ್ಟಿಯಾಯಿತು. ಸೃಷ್ಟಿಯಾದವುಗಳಲ್ಲಿ ಯಾವುದೂ ಅವರಿಲ್ಲದೆ ಸೃಷ್ಟಿಯಾಗಲಿಲ್ಲ.
JOH 1:4 ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು.
JOH 1:5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲೆಯು ಆ ಬೆಳಕನ್ನು ಅಡಗಿಸಲಿಲ್ಲ.
JOH 1:6 ದೇವರು ಕಳುಹಿಸಿದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಹಾನನು.
JOH 1:7 ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು.
JOH 1:8 ಅವನೇ ಆ ಬೆಳಕಾಗಿರಲಿಲ್ಲ. ಆ ಬೆಳಕಿನ ವಿಷಯದಲ್ಲಿ ಸಾಕ್ಷಿಯಾಗಿ ಬಂದನಷ್ಟೇ.
JOH 1:9 ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು.
JOH 1:10 ಆ ವಾಕ್ಯವೆಂಬುವವರು ಲೋಕದಲ್ಲಿದ್ದರು ಮತ್ತು ಲೋಕವು ಅವರ ಮೂಲಕ ಉಂಟಾಯಿತು. ಆದರೂ ಲೋಕವು ಅವರ ಗುರುತು ಹಿಡಿಯಲಿಲ್ಲ.
JOH 1:11 ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ.
JOH 1:12 ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು.
JOH 1:13 ಇವರು ರಕ್ತಸಂಬಂಧದಿಂದಾಗಲಿ, ದೈಹಿಕ ಇಚ್ಛೆಯಿಂದಾಗಲಿ, ಪುರುಷನ ಇಚ್ಛೆಯಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
JOH 1:14 ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.
JOH 1:15 “ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ,” ಎಂದು ಘೋಷಿಸಿದನು.
JOH 1:16 ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು.
JOH 1:17 ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.
JOH 1:18 ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.
JOH 1:19 ಯೆರೂಸಲೇಮಿನ ಯೆಹೂದ್ಯ ನಾಯಕರು, ಯಾಜಕರನ್ನು ಮತ್ತು ಲೇವಿಯರನ್ನು ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದರು.
JOH 1:20 ಅದಕ್ಕೆ ಯೋಹಾನನು, “ನಾನು ಕ್ರಿಸ್ತನಲ್ಲ” ಎಂದು ಅರಿಕೆಮಾಡಿ ಸಾಕ್ಷಿಕೊಟ್ಟನು.
JOH 1:21 ಅದಕ್ಕೆ ಅವರು, “ಹಾಗಾದರೆ ನೀನು ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ.” “ನೀನು ಆ ಪ್ರವಾದಿಯೋ?” ಎಂದು ಕೇಳಿದರು. ಅದಕ್ಕೆ ಅವನು, “ಅಲ್ಲ” ಎಂದನು.
JOH 1:22 ಅವರು, “ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡುವಂತೆ ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
JOH 1:23 ಅದಕ್ಕೆ ಯೋಹಾನನು, “ಪ್ರವಾದಿ ಯೆಶಾಯನು ಹೇಳಿದಂತೆ, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವೇ ನಾನು,” ಎಂದು ಹೇಳಿದನು.
JOH 1:24 ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದರು.
JOH 1:25 ಅವರು ಯೋಹಾನನಿಗೆ, “ನೀನು ಕ್ರಿಸ್ತ ಇಲ್ಲವೆ ಎಲೀಯನಾಗಲಿ, ಆ ಪ್ರವಾದಿಯಾಗಲಿ ಆಗಿರದಿದ್ದರೆ ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
JOH 1:26 ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.
JOH 1:27 ಅವರೇ ನನ್ನ ಬಳಿಕ ಬರುವವರು. ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
JOH 1:28 ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಕಡೆಯಲ್ಲಿರುವ ಬೇಥಾನ್ಯದಲ್ಲಿ ನಡೆಯಿತು.
JOH 1:29 ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ,
JOH 1:30 ‘ನನ್ನ ತರುವಾಯ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದವರು ಇವರೇ.
JOH 1:31 ನನಗೂ ಇವರ ಗುರುತಿರಲಿಲ್ಲ. ಆದರೆ ಇವರನ್ನು ಇಸ್ರಾಯೇಲರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಬಂದೆನು,” ಎಂದು ಹೇಳಿದನು.
JOH 1:32 ಯೋಹಾನನು ಸಾಕ್ಷಿಕೊಟ್ಟು, “ಪವಿತ್ರಾತ್ಮರು ಪರಲೋಕದಿಂದ ಪಾರಿವಾಳದಂತೆ ಇಳಿದುಬಂದು ಯೇಸುವಿನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
JOH 1:33 ನನಗೂ ಅವರ ಗುರುತಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಲು ನನ್ನನ್ನು ಕಳುಹಿಸಿದವರು, ‘ಯಾರ ಮೇಲೆ ಪವಿತ್ರಾತ್ಮರು ಇಳಿದುಬಂದು ನೆಲೆಸುವುದನ್ನು ನೀನು ನೋಡುವಿಯೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಮಾಡಿಸುವವರು,’ ಎಂದು ತಿಳಿಸಿದರು.
JOH 1:34 ಈಗ ನಾನು ಕಂಡು, ಇವರೇ ದೇವರ ಪುತ್ರರು ಎಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು.
JOH 1:35 ಮರುದಿನ ಯೋಹಾನನು ಪುನಃ ತನ್ನ ಶಿಷ್ಯರಲ್ಲಿ ಇಬ್ಬರೊಂದಿಗೆ ನಿಂತುಕೊಂಡಿದ್ದನು.
JOH 1:36 ಆಗ ಯೇಸು ಹೋಗುತ್ತಿರುವುದನ್ನು ಕಂಡು ಅವನು, “ಇಗೋ, ದೇವರ ಕುರಿಮರಿ,” ಎಂದು ಹೇಳಿದನು.
JOH 1:37 ಆ ಇಬ್ಬರು ಶಿಷ್ಯರು ಅವನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.
JOH 1:38 ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು, ಅವರು, “ಬೋಧಕರೇ, ನೀವು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
JOH 1:39 ಯೇಸು ಅವರಿಗೆ, “ಬಂದು ನೋಡಿರಿ,” ಎಂದು ಹೇಳಲು, ಅವರು ಹೋಗಿ ಯೇಸು ವಾಸಿಸುತ್ತಿದ್ದ ಸ್ಥಳವನ್ನು ಕಂಡು ಆ ದಿವಸ ಅವರ ಸಂಗಡ ಇದ್ದರು. ಆಗ ಸಂಜೆ ಸುಮಾರು ನಾಲ್ಕು ಗಂಟೆಯಾಗಿತ್ತು.
JOH 1:40 ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್ ಪೇತ್ರನ ಸಹೋದರ ಅಂದ್ರೆಯನು ಒಬ್ಬನಾಗಿದ್ದನು.
JOH 1:41 ಅಂದ್ರೆಯನು ಮೊದಲು ತನ್ನ ಸಹೋದರ ಸೀಮೋನನನ್ನು ಕಂಡು, “ನಾವು ಮೆಸ್ಸೀಯ ಆಗಿರುವವರನ್ನು ಕಂಡೆವು,” ಎಂದು ಹೇಳಿ,
JOH 1:42 ಅವನನ್ನು ಯೇಸುವಿನ ಬಳಿಗೆ ಕರೆತಂದನು. “ಮೆಸ್ಸೀಯ” ಎಂದರೆ ಕ್ರಿಸ್ತ ಎಂದು ಅರ್ಥ. ಯೇಸು ಅವನನ್ನು ನೋಡಿ, “ನೀನು ಯೋಹಾನನ ಮಗ ಸೀಮೋನನು. ನಿನ್ನನ್ನು ‘ಕೇಫ’ ಎಂದು ಕರೆಯುವರು,” ಎಂದು ಹೇಳಿದರು. “ಕೇಫ” ಎಂದರೆ ಪೇತ್ರ ಇಲ್ಲವೆ ಬಂಡೆ ಎಂದರ್ಥ.
JOH 1:43 ಯೇಸು ಮರುದಿನ ಗಲಿಲಾಯಕ್ಕೆ ಹೋಗಬೇಕೆಂದಿದ್ದಾಗ, ಅವರು ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದರು.
JOH 1:44 ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿದಕ್ಕೆ ಸೇರಿದವನು.
JOH 1:45 ಫಿಲಿಪ್ಪನು ನತಾನಯೇಲನನ್ನು ಕಂಡು, “ಮೋಶೆಯ ನಿಯಮದಲ್ಲಿ ಸೂಚಿಸಿದವರೂ ಪ್ರವಾದಿಗಳೂ ಯಾರನ್ನು ಕುರಿತು ಬರೆದಿದ್ದಾರೋ ಅವರು ನಮಗೆ ಸಿಕ್ಕಿದ್ದಾರೆ. ಅವರೇ ಯೋಸೇಫನ ಪುತ್ರರಾಗಿರುವ ನಜರೇತಿನ ಯೇಸು,” ಎಂದನು.
JOH 1:46 “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ನತಾನಯೇಲನು ಕೇಳಲು, “ಬಂದು ನೋಡು,” ಎಂದು ಫಿಲಿಪ್ಪನು ಹೇಳಿದನು.
JOH 1:47 ನತಾನಯೇಲನು ತಮ್ಮ ಬಳಿಗೆ ಬರುವುದನ್ನು ಯೇಸು ಕಂಡು ಅವನ ವಿಷಯವಾಗಿ, “ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ,” ಎಂದು ಹೇಳಿದರು.
JOH 1:48 ಅದಕ್ಕೆ ನತಾನಯೇಲನು, “ನೀವು ನನ್ನನ್ನು ಹೇಗೆ ಬಲ್ಲಿರಿ?” ಎಂದು ಕೇಳಲು, ಯೇಸು ಅವನಿಗೆ, “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮುಂಚೆಯೇ ನೀನು ಅಂಜೂರದ ಮರದ ಕೆಳಗಿರುವುದನ್ನು ನಾನು ಕಂಡೆನು,” ಎಂದು ಉತ್ತರಿಸಿದರು.
JOH 1:49 ಅದಕ್ಕೆ ನತಾನಯೇಲನು, “ಗುರುವೇ, ನೀವು ದೇವಪುತ್ರ; ಇಸ್ರಾಯೇಲಿನ ಅರಸ ನೀವೇ,” ಎಂದನು.
JOH 1:50 ಯೇಸು ಅವನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ಕಂಡಿದ್ದೆ ಎಂದು ನಾನು ಹೇಳಿದ್ದಕ್ಕೆ ನೀನು ನಂಬುತ್ತೀಯೋ? ನೀನು ಇವುಗಳಿಗಿಂತಲೂ ಮಹಾಕಾರ್ಯಗಳನ್ನು ಕಾಣುವೆ,” ಎಂದು ಉತ್ತರಿಸಿದರು.
JOH 1:51 ಯೇಸು ಅವನಿಗೆ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಪರಲೋಕವು ತೆರೆದಿರುವುದನ್ನೂ ದೇವದೂತರು ಮನುಷ್ಯಪುತ್ರನಾದ ನನ್ನ ಮುಖಾಂತರ ಇಳಿಯುತ್ತಾ ಏರುತ್ತಾ ಇರುವುದನ್ನೂ ಕಾಣುವಿರಿ,” ಎಂದು ಹೇಳಿದರು.
JOH 2:1 ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.
JOH 2:2 ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು.
JOH 2:3 ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ತಿಳಿಸಿದಳು.
JOH 2:4 ಯೇಸು ಆಕೆಗೆ, “ಅಮ್ಮಾ, ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ,” ಎಂದು ಹೇಳಿದರು.
JOH 2:5 ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.
JOH 2:6 ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.
JOH 2:7 ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
JOH 2:8 ಅನಂತರ ಯೇಸು ಅವರಿಗೆ, “ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ,” ಎಂದರು. ಸೇವಕರು ತೆಗೆದುಕೊಂಡು ಹೋದರು.
JOH 2:9 ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು,
JOH 2:10 “ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ,” ಎಂದನು.
JOH 2:11 ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.
JOH 2:12 ಇದಾದ ಮೇಲೆ ಯೇಸು ತಮ್ಮ ತಾಯಿ, ಸಹೋದರರು ಮತ್ತು ಶಿಷ್ಯರೊಡನೆ ಕಪೆರ್ನೌಮಿಗೆ ಹೋದರು. ಅಲ್ಲಿ ಅವರು ಕೆಲವು ದಿವಸ ಇದ್ದರು.
JOH 2:13 ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋದರು.
JOH 2:14 ಅವರು ದೇವಾಲಯದ ಅಂಗಳದಲ್ಲಿ ದನ, ಕುರಿ ಹಾಗೂ ಪಾರಿವಾಳಗಳನ್ನು ಮಾರುವವರೂ ಹಣ ಬದಲಾಯಿಸುವವರೂ ಕುಳಿತಿರುವುದನ್ನು ಕಂಡರು.
JOH 2:15 ಯೇಸು ಹಗ್ಗಗಳಿಂದ ಕೊರಡೆ ಮಾಡಿ ಕುರಿ, ದನ ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ, ಹಣ ಬದಲಾಯಿಸುವವರ ನಾಣ್ಯಗಳನ್ನು ಮತ್ತು ಮೇಜುಗಳನ್ನು ಕೆಡವಿದರು.
JOH 2:16 ಯೇಸು ಪಾರಿವಾಳ ಮಾರುವವರಿಗೆ, “ಇವುಗಳನ್ನು ತೆಗೆದುಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯನ್ನಾಗಿ ಮಾಡಬೇಡಿರಿ,” ಎಂದರು.
JOH 2:17 ಯೇಸುವಿನ ಶಿಷ್ಯರು, “ನಿನ್ನ ಆಲಯದ ಮೇಲಿನ ಆಸಕ್ತಿಯು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,” ಎಂದು ಪವಿತ್ರ ವೇದದಲ್ಲಿ ಬರೆದಿರುವುದನ್ನು ಜ್ಞಾಪಕಮಾಡಿಕೊಂಡರು.
JOH 2:18 ಆಗ ಯೆಹೂದ್ಯರು ಯೇಸುವಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.
JOH 2:19 ಅದಕ್ಕೆ ಯೇಸು ಅವರಿಗೆ, “ಈ ದೇವಾಲಯವನ್ನು ಕೆಡವಿರಿ. ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
JOH 2:20 ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು.
JOH 2:21 ಆದರೆ ಯೇಸು ತಮ್ಮ ದೇಹವೆಂಬ ಆಲಯವನ್ನು ಕುರಿತು ಹೇಳಿದ್ದರು.
JOH 2:22 ಆದ್ದರಿಂದ ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದಾಗ, ಅವರ ಶಿಷ್ಯರು ಅವರು ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಪವಿತ್ರ ವೇದವನ್ನೂ ಯೇಸು ತಮಗೆ ಹೇಳಿದ ಮಾತನ್ನೂ ನಂಬಿದರು.
JOH 2:23 ಯೇಸು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ಅನೇಕರು ಕಂಡು ಅವರ ಹೆಸರಿನಲ್ಲಿ ನಂಬಿಕೆ ಇಟ್ಟರು.
JOH 2:24 ಆದರೆ ಯೇಸು ಎಲ್ಲರನ್ನೂ ಅರಿತವರಾದ್ದರಿಂದ ತಮ್ಮನ್ನು ಒಪ್ಪಿಸಿಕೊಡಲಿಲ್ಲ.
JOH 2:25 ಯೇಸು ಮನುಷ್ಯರ ಅಂತರಂಗವನ್ನು ತಿಳಿದವರಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಅವರಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.
JOH 3:1 ಯೆಹೂದ್ಯರ ಆಡಳಿತ ಮಂಡಳಿಯ ಸದಸ್ಯನೂ ಫರಿಸಾಯನೂ ಆದ ನಿಕೊದೇಮನೆಂಬ ಮನುಷ್ಯನಿದ್ದನು.
JOH 3:2 ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.
JOH 3:3 ಯೇಸು ಅವನಿಗೆ, “ಒಬ್ಬನು ಮತ್ತೊಮ್ಮೆ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ.”
JOH 3:4 ನಿಕೊದೇಮನು ಯೇಸುವಿಗೆ, “ಒಬ್ಬನು ವಯಸ್ಸಾದ ಮೇಲೆ ಮತ್ತೆ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಾದೀತೇ?” ಎಂದು ಕೇಳಿದನು.
JOH 3:5 ಯೇಸು ಅವನಿಗೆ, “ಯಾರು ನೀರಿನಿಂದಲೂ ಆತ್ಮದಿಂದಲೂ ಹುಟ್ಟುವದಿಲ್ಲವೋ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ.
JOH 3:6 ಮಾಂಸದಿಂದ ಹುಟ್ಟಿದ್ದು ಮಾಂಸವೇ, ದೇವರಾತ್ಮದಿಂದ ಹುಟ್ಟಿದವರು ಆತ್ಮವೇ.
JOH 3:7 ‘ನೀವು ಮತ್ತೆ ಹುಟ್ಟಬೇಕಾಗಿದೆ,’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.
JOH 3:8 ಗಾಳಿಯು ಅದರ ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಅದರಂತೆಯೇ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬರೂ ಹೀಗೇ ಇದ್ದಾರೆ,” ಎಂದು ಉತ್ತರಕೊಟ್ಟರು.
JOH 3:9 ನಿಕೊದೇಮನು ಯೇಸುವಿಗೆ, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
JOH 3:10 ಯೇಸು ಅವನಿಗೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಇವುಗಳು ತಿಳಿಯುವುದಿಲ್ಲವೋ?
JOH 3:11 ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ಕಂಡಿದ್ದಕ್ಕೆ ಸಾಕ್ಷಿ ನೀಡುತ್ತೇವೆ. ನೀವಾದರೋ ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ.
JOH 3:12 ನಾನು ಭೂಲೋಕದ ಕಾರ್ಯಗಳನ್ನು ನಿಮಗೆ ಹೇಳುವಾಗಲೇ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ?
JOH 3:13 ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.
JOH 3:14 ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಮೇಲೆ ಎತ್ತಿದ ಹಾಗೆಯೇ ಮನುಷ್ಯಪುತ್ರನಾದ ನನ್ನನ್ನು ಸಹ ಮೇಲಕ್ಕೆ ಏರಿಸಬೇಕು.
JOH 3:15 ಹೀಗೆ ಮನುಷ್ಯಪುತ್ರನಾದ ನನ್ನನ್ನು ನಂಬುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವರು.”
JOH 3:16 ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕೊಟ್ಟರು. ಅದಕ್ಕಾಗಿಯೇ ಅವರನ್ನು ನಂಬುವ ಪ್ರತಿಯೊಬ್ಬರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು.
JOH 3:17 ದೇವರು ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ತಮ್ಮ ಪುತ್ರನ ಮುಖಾಂತರ ಲೋಕದ ಜನರನ್ನು ರಕ್ಷಿಸುವುದಕ್ಕಾಗಿಯೇ ಅವರನ್ನು ಲೋಕಕ್ಕೆ ಕಳುಹಿಸಿದರು.
JOH 3:18 ಮಗನನ್ನು ನಂಬುವವನಿಗೆ ತೀರ್ಪು ಆಗುವುದಿಲ್ಲ. ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ ಅವನು ದೇವರ ಒಬ್ಬನೇ ಪುತ್ರನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.
JOH 3:19 ಆ ತೀರ್ಪು ಏನೆಂದರೆ: ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.
JOH 3:20 ಕೇಡನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆ ಮತ್ತು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವರು ಮಾಡಿರುವ ಕೆಟ್ಟ ಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ.
JOH 3:21 ಆದರೆ ಸತ್ಯವನ್ನು ಅನುಸರಿಸುವವರು ನಡೆದಿರುವ ತಮ್ಮ ಕೃತ್ಯಗಳು ದೇವರಿಂದ ಆದವುಗಳೆಂದು ಪ್ರಕಟಿಸುವಂತೆ ಬೆಳಕಿಗೆ ಬರುತ್ತಾರೆ.
JOH 3:22 ಇವುಗಳಾದ ಮೇಲೆ ಯೇಸುವೂ ಅವರ ಶಿಷ್ಯರೂ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಯೇಸು ಅವರೊಂದಿಗೆ ಇದ್ದು ದೀಕ್ಷಾಸ್ನಾನ ಮಾಡಿಸುತ್ತಿದ್ದರು.
JOH 3:23 ಇದಲ್ಲದೆ ಯೋಹಾನನು ಸಹ ಸಲೀಮ್ ಎಂಬ ಊರಿನ ಸಮೀಪದಲ್ಲಿದ್ದ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಏಕೆಂದರೆ ಅಲ್ಲಿ ಬಹಳ ನೀರು ಇತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
JOH 3:24 ಆಗ ಯೋಹಾನನು ಇನ್ನೂ ಸೆರೆಯಲ್ಲಿ ಬಂಧಿತನಾಗಿರಲಿಲ್ಲ.
JOH 3:25 ಯೋಹಾನನ ಶಿಷ್ಯರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಿವಾದ ಉಂಟಾಯಿತು.
JOH 3:26 ಅವರು ಯೋಹಾನನ ಬಳಿಗೆ ಬಂದು ಅವನಿಗೆ, “ಗುರುವೇ, ಯೊರ್ದನ್ ನದಿಯ ಆಚೆದಡದಲ್ಲಿ ನಿನ್ನೊಡನೆ ಇದ್ದ ಒಬ್ಬರ ಬಗ್ಗೆ ನೀನು ಸಾಕ್ಷಿ ಕೊಟ್ಟೆಯಲ್ಲಾ. ಇಗೋ, ಅವರು ದೀಕ್ಷಾಸ್ನಾನ ಮಾಡಿಸುತ್ತಿದ್ದಾರೆ ಮತ್ತು ಎಲ್ಲರೂ ಅವರ ಬಳಿಗೆ ಹೋಗುತ್ತಿದ್ದಾರೆ,” ಎಂದರು.
JOH 3:27 ಅದಕ್ಕೆ ಯೋಹಾನನು, “ಪರಲೋಕದಿಂದ ಒಬ್ಬ ಮನುಷ್ಯನಿಗೆ ದಯಪಾಲಿಸದ ಹೊರತು ಅವನು ಯಾವುದನ್ನೂ ಹೊಂದಲಾರನು.
JOH 3:28 ‘ನಾನು ಕ್ರಿಸ್ತನಲ್ಲ, ಆದರೆ ಅವರ ಮುಂದೂತನೆಂದು,’ ಹೇಳಿದ್ದಕ್ಕೆ ನೀವೇ ಸಾಕ್ಷಿ.
JOH 3:29 ಮದುಮಗಳು ಮದುಮಗನಿಗೆ ಸೇರಿದವಳು. ಆದರೂ ಮದುಮಗನ ಸ್ನೇಹಿತನು ನಿಂತುಕೊಂಡು ಆತನ ಮಾತಿಗೆ ಕಿವಿಗೊಟ್ಟು, ಮದುಮಗನ ಸ್ವರ ಕೇಳಿ ಸಂತೋಷಪಡುತ್ತಾನೆ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು.
JOH 3:30 ಆತನು ಹೆಚ್ಚಾಗಬೇಕು ನಾನು ಕಡಿಮೆಯಾಗಬೇಕು.
JOH 3:31 “ಮೇಲಿನಿಂದ ಬರುವವರೇ ಎಲ್ಲರಿಗಿಂತಲೂ ಮೇಲಾದವರು, ಭೂಲೋಕದವನಾದರೋ ಭೂಮಿಗೆ ಸೇರಿದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವವರು ಎಲ್ಲವುಗಳಿಗಿಂತಲೂ ಮೇಲಾದವರು.
JOH 3:32 ಅವರು ಯಾವುದನ್ನು ಕಂಡು ಕೇಳಿದರೋ ಅದಕ್ಕೆ ಸಾಕ್ಷಿಕೊಡುತ್ತಾರೆ. ಆದರೆ ಅವರ ಸಾಕ್ಷಿಯನ್ನು ಯಾರೂ ಸ್ವೀಕರಿಸುವುದಿಲ್ಲ.
JOH 3:33 ಅವರ ಸಾಕ್ಷಿಯನ್ನು ಸ್ವೀಕರಿಸಿದವರು ದೇವರು ಸತ್ಯವಂತರೆಂದು ಮುದ್ರೆ ಹಾಕಿದ್ದಾರೆ.
JOH 3:34 ದೇವರು ಕಳುಹಿಸಿದವರಾದರೋ ದೇವರ ಮಾತುಗಳನ್ನೇ ಆಡುತ್ತಾರೆ. ಏಕೆಂದರೆ ದೇವರು ಅವರಿಗೆ ಆತ್ಮವನ್ನು ಮಿತಿಯಿಲ್ಲದೆ ಕೊಟ್ಟಿದ್ದಾರೆ.
JOH 3:35 ತಂದೆಯು ಪುತ್ರನನ್ನು ಪ್ರೀತಿಸಿ ಎಲ್ಲವನ್ನೂ ಅವರ ಕೈಯಲ್ಲಿ ಕೊಟ್ಟಿದ್ದಾರೆ.
JOH 3:36 ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು.
JOH 4:1 ಫರಿಸಾಯರಲ್ಲಿ ಯೋಹಾನನಿಗಿಂತಲೂ ಯೇಸು ಹೆಚ್ಚಿನ ಶಿಷ್ಯರನ್ನು ಹೊಂದಿದ್ದಾರೆ ಮತ್ತು ದೀಕ್ಷಾಸ್ನಾನ ಮಾಡಿಸುತ್ತಾರೆ ಎಂಬುವುದನ್ನು ಫರಿಸಾಯರು ಕೇಳಿಸಿಕೊಂಡರು.
JOH 4:2 ಆದರೆ ಯೇಸು ತಾವೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಅವರ ಶಿಷ್ಯರು ಮಾಡಿಸುತ್ತಿದ್ದರು.
JOH 4:3 ಫರಿಸಾಯರು ಕೇಳಿಸಿಕೊಂಡದ್ದನ್ನು ಯೇಸು ತಿಳಿದಾಗ, ಯೇಸು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತಿರುಗಿ ಹೊರಟು ಹೋದರು.
JOH 4:4 ಯೇಸು ಸಮಾರ್ಯದ ಮಾರ್ಗವಾಗಿ ಹೋಗಬೇಕಾಗಿತ್ತು.
JOH 4:5 ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿರುವ ಸುಖರೆಂಬ ಸಮಾರ್ಯದ ಪಟ್ಟಣಕ್ಕೆ ಯೇಸು ಬಂದರು.
JOH 4:6 ಅಲ್ಲಿ ಯಾಕೋಬನ ಬಾವಿ ಇತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡವರಾಗಿ ಆ ಬಾವಿಯ ಬಳಿಯಲ್ಲಿ ಕುಳಿತುಕೊಂಡರು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
JOH 4:7 ಆಗ ಸಮಾರ್ಯದವಳಾದ ಒಬ್ಬ ಸ್ತ್ರೀಯು ನೀರು ಸೇದುವುದಕ್ಕಾಗಿ ಬಂದಳು. ಯೇಸು ಆಕೆಗೆ, “ನನಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು.
JOH 4:8 ಯೇಸುವಿನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳಲು ಪಟ್ಟಣದೊಳಕ್ಕೆ ಹೋಗಿದ್ದರು.
JOH 4:9 ಆದ್ದರಿಂದ ಆ ಸಮಾರ್ಯ ಸ್ತ್ರೀಯು ಯೇಸುವಿಗೆ, “ನೀನು ಯೆಹೂದ್ಯನಾಗಿದ್ದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದು ಹೇಗೆ,” ಎಂದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಒಡನಾಟ ಇರಲಿಲ್ಲ.
JOH 4:10 ಯೇಸು ಆಕೆಗೆ, “ದೇವರ ವರವನ್ನೂ, ‘ಕುಡಿಯುವುದಕ್ಕೆ ನೀರು ಕೊಡು,’ ಎಂದು ಕೇಳುವ ನಾನು ಯಾರೆಂಬುದನ್ನೂ ನೀನು ತಿಳಿದಿದ್ದರೆ ನೀನೇ ನನ್ನಿಂದ ನೀರನ್ನು ಕೇಳುತ್ತಿದ್ದೆ. ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆನು,” ಎಂದು ಹೇಳಿದರು.
JOH 4:11 ಅದಕ್ಕೆ ಆ ಸ್ತ್ರೀಯು, “ಅಯ್ಯಾ, ನೀರು ಸೇದುವುದಕ್ಕೆ ನಿಮ್ಮ ಹತ್ತಿರ ಏನೂ ಇಲ್ಲವಲ್ಲಾ, ಬಾವಿಯೋ ಆಳವಾಗಿದೆ. ಹೀಗಿರುವಲ್ಲಿ ಜೀವಜಲವು ನಿನಗೆ ಎಲ್ಲಿಂದ ಬಂದೀತು?
JOH 4:12 ಯಾಕೋಬನ ಮಕ್ಕಳು ಮತ್ತು ಪಶುಗಳು ಈ ಬಾವಿಯ ನೀರನ್ನು ಕುಡಿದರು. ಅದನ್ನು ನಮಗೆ ಕೊಟ್ಟ ನಮ್ಮ ತಂದೆ ಯಾಕೋಬನಿಗಿಂತ ನೀನು ದೊಡ್ಡವನೋ?” ಎಂದಳು.
JOH 4:13 ಯೇಸು ಆಕೆಗೆ, “ಈ ನೀರನ್ನು ಕುಡಿಯುವ ಪ್ರತಿಯೊಬ್ಬರಿಗೆ ಪುನಃ ದಾಹವಾಗುವುದು.
JOH 4:14 ಆದರೆ ನಾನು ಕೊಡುವ ನೀರನ್ನು ಕುಡಿಯುವವರಿಗೆ ಎಂದೆಂದಿಗೂ ದಾಹವಾಗದು. ನಾನು ಅವರಿಗೆ ಕೊಡುವ ನೀರು ಅವರಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬುಗ್ಗೆಯಾಗಿರುವುದು,” ಎಂದರು.
JOH 4:15 ಅದಕ್ಕೆ ಆ ಸ್ತ್ರೀಯು, “ಅಯ್ಯಾ, ಆ ನೀರನ್ನೇ ನನಗೆ ಕೊಡು. ಆಗ ನನಗೆ ದಾಹವಾಗುವುದಿಲ್ಲ. ಇನ್ನು ಮುಂದೆ ನಾನು ನೀರು ಸೇದುವುದಕ್ಕೆ ಇಲ್ಲಿಗೆ ಬರುವ ಅವಶ್ಯವಿರುವುದಿಲ್ಲ,” ಎಂದಳು.
JOH 4:16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದರು.
JOH 4:17 ಅದಕ್ಕೆ ಆ ಸ್ತ್ರೀಯು, “ನನಗೆ ಗಂಡನಿಲ್ಲ,” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲ, ಎಂದು ನೀನು ಹೇಳಿದ್ದು ಸರಿಯೇ.
JOH 4:18 ನಿನಗೆ ಐದು ಮಂದಿ ಗಂಡಂದಿರು ಇದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು.
JOH 4:19 ಆಗ ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ನೀವು ಒಬ್ಬ ಪ್ರವಾದಿಯೆಂದು ನನಗೆ ಕಾಣುತ್ತದೆ.
JOH 4:20 ನಮ್ಮ ಪಿತೃಗಳು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸಿದರು. ಆದರೆ, ‘ಆರಾಧಿಸತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ’ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ,” ಎಂದಳು.
JOH 4:21 ಯೇಸು ಆಕೆಗೆ, “ಅಮ್ಮಾ, ನನ್ನನ್ನು ನಂಬು, ಈ ಬೆಟ್ಟದಲ್ಲಿಯಾಗಲಿ ಯೆರೂಸಲೇಮಿನಲ್ಲಾಗಲಿ ನೀವು ತಂದೆಯನ್ನು ಆರಾಧಿಸದೆ ಇರುವ ಕಾಲ ಬರುತ್ತದೆ.
JOH 4:22 ನೀವು ಸಮಾರ್ಯದವರು ಅರಿಯದೆ ಇರುವುದನ್ನು ಆರಾಧಿಸುತ್ತೀರಿ. ನಾವು ಅರಿತಿರುವುದನ್ನೇ ಆರಾಧಿಸುವವರು. ಏಕೆಂದರೆ ರಕ್ಷಣೆಯು ಯೆಹೂದ್ಯರಿಂದಲೇ.
JOH 4:23 ಆದರೆ ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ಏಕೆಂದರೆ ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾರೆ.
JOH 4:24 ದೇವರು ಆತ್ಮರಾಗಿದ್ದಾರೆ. ಅವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು,” ಎಂದರು.
JOH 4:25 ಆ ಸ್ತ್ರೀಯು ಯೇಸುವಿಗೆ, “ಕ್ರಿಸ್ತ ಎಂದು ಕರೆಯಲಾಗುವ ಮೆಸ್ಸೀಯ ಬರುತ್ತಾರೆಂದು ನಾನು ಬಲ್ಲೆನು. ಅವರು ಬಂದಾಗ ನಮಗೆ ಎಲ್ಲವನ್ನೂ ತಿಳಿಸುವರು,” ಎಂದಳು.
JOH 4:26 ಯೇಸು ಆಕೆಗೆ, “ನಿನ್ನೊಂದಿಗೆ ಮಾತನಾಡುವ ನಾನೇ ಆತನು!” ಎಂದರು.
JOH 4:27 ಅಷ್ಟರೊಳಗೆ ಅವರ ಶಿಷ್ಯರು ಬಂದು ಯೇಸು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿಮಗೆ ಏನು ಬೇಕು? ಆಕೆಯೊಂದಿಗೆ ಏಕೆ ಮಾತನಾಡುತ್ತಿರುವಿರಿ?” ಎಂದು ಒಬ್ಬನಾದರೂ ಕೇಳಲಿಲ್ಲ.
JOH 4:28 ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲಿಯೇ ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ,
JOH 4:29 “ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ವ್ಯಕ್ತಿಯನ್ನು ಕಾಣಿರಿ, ಬರತಕ್ಕ ಕ್ರಿಸ್ತ ಇವರೇ ಆಗಿರಬಹುದು?” ಎಂದಳು.
JOH 4:30 ಆಗ ಅವರು ಪಟ್ಟಣದಿಂದ ಯೇಸುವಿನ ಬಳಿಗೆ ಬಂದರು.
JOH 4:31 ಆ ಸಮಯದಲ್ಲಿ ಶಿಷ್ಯರು, “ಗುರುವೇ ಊಟಮಾಡಿರಿ,” ಎಂದು ಯೇಸುವನ್ನು ಕೇಳಿಕೊಂಡರು.
JOH 4:32 ಆದರೆ ಯೇಸು ಅವರಿಗೆ, “ನಿಮಗೆ ತಿಳಿಯದಿರುವ ಆಹಾರವು ನನ್ನಲ್ಲಿದೆ,” ಎಂದರು.
JOH 4:33 ಶಿಷ್ಯರು, “ಯಾರಾದರೂ ಅವರಿಗೆ ಏನಾದರೂ ತಿನ್ನುವುದಕ್ಕೆ ತಂದು ಕೊಟ್ಟರೋ?” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
JOH 4:34 ಯೇಸು ಅವರಿಗೆ, “ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಿ ಅವರ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.
JOH 4:35 ನೀವು, ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುತ್ತದೆ’ ಎಂದು ಹೇಳುವುದಿಲ್ಲವೇ? ಮತ್ತು ಇಗೋ, ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ. ಏಕೆಂದರೆ ಅವು ಈಗಾಗಲೇ ಸುಗ್ಗಿಗೆ ಸಿದ್ಧವಾಗಿವೆ.
JOH 4:36 ಕೊಯ್ಯುವವನು ಕೂಲಿಯನ್ನು ಪಡೆದು ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳುತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಿಸುವರು.
JOH 4:37 ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು,’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ.
JOH 4:38 ನೀವು ಪ್ರಯಾಸ ಪಡದಂಥದ್ದನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಇತರರು ಪ್ರಯಾಸಪಟ್ಟರು. ನೀವು ಅವರ ಪ್ರಯಾಸದ ಫಲವನ್ನು ಪಡೆದಿದ್ದೀರಿ,” ಎಂದರು.
JOH 4:39 ಆಗ, “ನಾನು ಮಾಡಿದ್ದೆಲ್ಲವನ್ನು ಆತನು ನನಗೆ ತಿಳಿಸಿದನು” ಎಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿನಿಂದ ಆ ಪಟ್ಟಣದ ಅನೇಕ ಸಮಾರ್ಯದವರು ಯೇಸುವಿನಲ್ಲಿ ನಂಬಿಕೆ ಇಟ್ಟರು.
JOH 4:40 ಆ ಸಮಾರ್ಯದವರು ಯೇಸುವಿನ ಬಳಿಗೆ ಬಂದು ತಮ್ಮೊಂದಿಗೆ ಇರಬೇಕೆಂದು ಅವರನ್ನು ಬೇಡಿಕೊಂಡರು. ಹೀಗೆ ಯೇಸು ಎರಡು ದಿವಸ ಅಲ್ಲಿಯೇ ಉಳಿದರು.
JOH 4:41 ಇನ್ನೂ ಹೆಚ್ಚು ಜನರು ಯೇಸುವಿನ ವಾಕ್ಯದ ದೆಸೆಯಿಂದ ನಂಬಿದರು.
JOH 4:42 ಜನರು ಆ ಸ್ತ್ರೀಗೆ, “ನಾವು ಇನ್ನು ಮುಂದೆ ನಂಬುವುದು ನಿನ್ನ ಮಾತಿನಿಂದಲ್ಲ. ಏಕೆಂದರೆ ನಾವೇ ಸ್ವತಃ ಕೇಳಿದ್ದೇವೆ. ಈತನು ನಿಜವಾಗಿಯೂ ಲೋಕ ರಕ್ಷಕನೆಂದು ತಿಳಿದಿದ್ದೇವೆ,” ಎಂದರು.
JOH 4:43 ಎರಡು ದಿವಸಗಳಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದರು.
JOH 4:44 ಪ್ರವಾದಿಗೆ ತನ್ನ ಸ್ವದೇಶದಲ್ಲಿ ಮರ್ಯಾದೆ ಇಲ್ಲವೆಂದು ಯೇಸು ತಾವೇ ಹೇಳಿದ್ದರು.
JOH 4:45 ಯೇಸು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಅವರನ್ನು ಸ್ವಾಗತಿಸಿದರು. ಪಸ್ಕಹಬ್ಬದ ಸಮಯದಲ್ಲಿ ಯೇಸು ಯೆರೂಸಲೇಮಿನಲ್ಲಿ ಮಾಡಿದವುಗಳನ್ನೆಲ್ಲಾ ಕಂಡಿದ್ದರು.
JOH 4:46 ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ತಿರುಗಿ ಬಂದರು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು.
JOH 4:47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಅವನು ಕೇಳಿದಾಗ ಅವರ ಬಳಿಗೆ ಹೋಗಿ, ಯೇಸು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಬೇಡಿಕೊಂಡನು. ಏಕೆಂದರೆ ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.
JOH 4:48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕಾಣದ ಹೊರತು ನಂಬುವುದೇ ಇಲ್ಲ,” ಎಂದರು.
JOH 4:49 ಆಗ ಆ ಅಧಿಕಾರಿಯು ಯೇಸುವಿಗೆ, “ಅಯ್ಯಾ, ನನ್ನ ಮಗನು ಸಾಯುವ ಮೊದಲೇ ಬನ್ನಿರಿ,” ಎಂದನು.
JOH 4:50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು,” ಎಂದರು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು.
JOH 4:51 ಹೀಗೆ ಅವನು ಇಳಿದು ಹೋಗುತ್ತಿರುವಾಗಲೇ ಸೇವಕರು ಅವನನ್ನು ಸಂಧಿಸಿ, ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.
JOH 4:52 ಅವನು, “ಯಾವ ಸಮಯದಲ್ಲಿ ಮಗನು ಚೇತರಿಸಿಕೊಂಡನು?” ಎಂದು ಅವರನ್ನು ವಿಚಾರಿಸಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಜ್ವರವು ಬಿಟ್ಟಿತು,” ಎಂದು ಸೇವಕರು ಅವನಿಗೆ ಹೇಳಿದರು.
JOH 4:53 ಹೀಗೆ, “ನಿನ್ನ ಮಗನು ಬದುಕುವನು” ಎಂದು ಯೇಸು ತನಗೆ ಹೇಳಿದ ಸಮಯದಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು, ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
JOH 4:54 ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.
JOH 5:1 ಇದಾದ ಮೇಲೆ ಯೆಹೂದ್ಯರ ಹಬ್ಬವೊಂದು ಬಂತು. ಆದ್ದರಿಂದ, ಯೇಸು ಯೆರೂಸಲೇಮಿಗೆ ಹೋದರು.
JOH 5:2 ಯೆರೂಸಲೇಮಿನಲ್ಲಿ “ಕುರಿಬಾಗಿಲು” ಎಂಬ ಸ್ಥಳದ ಬಳಿ ಒಂದು ಕೊಳವಿದೆ. ಇದನ್ನು ಹೀಬ್ರೂ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. ಅದಕ್ಕೆ ಐದು ಮಂಟಪಗಳಿದ್ದವು.
JOH 5:3 ಅವುಗಳಲ್ಲಿ ಅಸ್ವಸ್ಥರೂ ಕುರುಡರೂ ಕುಂಟರೂ ಪಾರ್ಶ್ವವಾಯು ಪೀಡಿತರೂ ಆಗಿದ್ದವರ ದೊಡ್ಡ ಸಮೂಹವೇ ಬಿದ್ದುಕೊಂಡು, ನೀರು ಉಕ್ಕುವುದನ್ನೇ ಕಾದು ನೋಡುತ್ತಿದ್ದರು.
JOH 5:4 ಏಕೆಂದರೆ ಕೆಲವೊಮ್ಮೆ ದೇವದೂತನು ಇಳಿದುಬಂದು ನೀರನ್ನು ಕಲಕುತ್ತಿದ್ದನು. ನೀರು ಕಲಕಿದೊಡನೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಅದು ಗುಣವಾಗುತ್ತಿತ್ತು.
JOH 5:5 ಆಗ ಮೂವತ್ತೆಂಟು ವರ್ಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು.
JOH 5:6 ಅವನು ಬಿದ್ದುಕೊಂಡಿರುವುದನ್ನು ಯೇಸು ಕಂಡು ಅವನು ಈಗಾಗಲೇ ಬಹುಕಾಲದಿಂದ ಆ ಸ್ಥಿತಿಯಲ್ಲಿದ್ದಾನೆಂದು ತಿಳಿದು ಅವನಿಗೆ, “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದರು.
JOH 5:7 ಅದಕ್ಕೆ ಆ ರೋಗಿಯು ಯೇಸುವಿಗೆ, “ಸ್ವಾಮಿ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ನನಗೆ ಯಾರೂ ಇಲ್ಲ. ಆದರೆ ನಾನು ಹೋಗುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಹೋಗುತ್ತಾನೆ,” ಎಂದನು.
JOH 5:8 ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ,” ಎಂದರು.
JOH 5:9 ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಆ ದಿನವು ಸಬ್ಬತ್ ದಿನವಾಗಿತ್ತು.
JOH 5:10 ಆದ್ದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ, “ಇದು ಸಬ್ಬತ್ ದಿನ ನೀನು ಹಾಸಿಗೆಯನ್ನು ಹೊತ್ತುಕೊಂಡು ನಡೆಯುವುದಕ್ಕೆ ನಿಷೇಧವಿದೆ,” ಎಂದರು.
JOH 5:11 ಆದರೆ ಅವನು ಅವರಿಗೆ, “ನನ್ನನ್ನು ಸ್ವಸ್ಥಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದ್ದಾರೆ,” ಎಂದನು.
JOH 5:12 ಅದಕ್ಕೆ ಯೆಹೂದ್ಯರು ಅವನಿಗೆ, “ ‘ಅದನ್ನು ಎತ್ತಿಕೊಂಡು ನಡೆ,’ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು.
JOH 5:13 ಆದರೆ ಆ ವ್ಯಕ್ತಿ ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ. ಏಕೆಂದರೆ ಆ ಸ್ಥಳದಲ್ಲಿ ಜನಸಮೂಹವು ಇದ್ದುದರಿಂದ ಯೇಸು ಅಲ್ಲಿಂದ ಮರೆಯಾಗಿಬಿಟ್ಟಿದ್ದರು.
JOH 5:14 ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ಇಗೋ, ನೀನು ಸ್ವಸ್ಥನಾಗಿರುವೆ, ಹೆಚ್ಚಿನ ಕೇಡು ಬಾರದಂತೆ ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.
JOH 5:15 ಆಗ ಅವನು ಹೊರಟುಹೋಗಿ ತನ್ನನ್ನು ಸ್ವಸ್ಥಪಡಿಸಿದವರು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.
JOH 5:16 ಯೇಸು ಇವುಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು.
JOH 5:17 ಯೇಸು ಅವರಿಗೆ, “ನನ್ನ ತಂದೆ ಯಾವಾಗಲೂ ಕೆಲಸ ಮಾಡುತ್ತಾರೆ. ನಾನೂ ಕೆಲಸ ಮಾಡುತ್ತೇನೆ,” ಎಂದರು.
JOH 5:18 ಯೇಸು ಸಬ್ಬತ್ ದಿನವನ್ನು ಮುರಿದದ್ದು ಅಲ್ಲದೆ ದೇವರನ್ನು ತಮ್ಮ ಸ್ವಂತ ತಂದೆ ಎಂದು ಹೇಳಿ ತಮ್ಮನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಯೇಸುವನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಮಾಡಿದರು.
JOH 5:19 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಪುತ್ರನು ಮಾಡುತ್ತಾನೆ ಹೊರತು ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ತಂದೆ ಯಾವುದನ್ನೆಲ್ಲಾ ಮಾಡುವರೋ ಹಾಗೆಯೇ ಪುತ್ರನೂ ಮಾಡುವನು.
JOH 5:20 ತಂದೆ ಪುತ್ರನನ್ನು ಪ್ರೀತಿಸಿ ತಾನು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ನೀವು ಆಶ್ಚರ್ಯಪಡುವಂತೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಪುತ್ರನಿಗೆ ತೋರಿಸುವರು.
JOH 5:21 ತಂದೆ ಸತ್ತವರನ್ನು ಎಬ್ಬಿಸಿ ಬದುಕಿಸುವಂತೆಯೇ ಪುತ್ರನೂ ತನಗಿಷ್ಟ ಬಂದವರನ್ನು ಬದುಕಿಸುತ್ತಾರೆ.
JOH 5:22 ತಂದೆ ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತೀರ್ಪು ಮಾಡುವುದನ್ನೆಲ್ಲಾ ಪುತ್ರನಿಗೆ ಒಪ್ಪಿಸಿದ್ದಾರೆ.
JOH 5:23 ಎಲ್ಲರೂ ತಂದೆಯನ್ನು ಸನ್ಮಾನಿಸುವಂತೆಯೇ ಪುತ್ರನನ್ನೂ ಸನ್ಮಾನಿಸಬೇಕು. ಪುತ್ರನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿದ ತಂದೆಯನ್ನೂ ಸನ್ಮಾನಿಸುವುದಿಲ್ಲ.
JOH 5:24 “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದ ತಂದೆಯನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. ಅವರು ನ್ಯಾಯತೀರ್ಪಿಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವವನ್ನು ಹೊಂದಿದ್ದಾರೆ.
JOH 5:25 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಪುತ್ರನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಈಗಾಗಲೇ ಬಂದಿದೆ. ಈ ಸ್ವರವನ್ನು ಕೇಳುವವರು ಬದುಕುವರು.
JOH 5:26 ತಂದೆಯು ಸ್ವತಃ ಜೀವವುಳ್ಳವರಾಗಿರುವಂತೆಯೇ ಪುತ್ರನೂ ಸಹ ಸ್ವತಃ ಜೀವವುಳ್ಳವನಾಗಿರುವಂತೆ ಅನುಗ್ರಹ ಮಾಡಿದ್ದಾರೆ.
JOH 5:27 ನಾನು ಮನುಷ್ಯಪುತ್ರನಾಗಿರುವುದರಿಂದ ನ್ಯಾಯತೀರಿಸುವ ಅಧಿಕಾರವನ್ನು ತಂದೆ ನನಗೆ ಕೊಟ್ಟಿದ್ದಾರೆ.
JOH 5:28 “ಇದಕ್ಕೆ ಆಶ್ಚರ್ಯಪಡಬೇಡಿರಿ, ಆಗ ಸಮಾಧಿಗಳಲ್ಲಿ ಇರುವವರೆಲ್ಲರೂ ನನ್ನ ಸ್ವರವನ್ನು ಕೇಳಿ ಹೊರಗೆ ಬರುವ ಒಂದುಕಾಲ ಬರುತ್ತದೆ.
JOH 5:29 ಒಳ್ಳೆಯದನ್ನು ಮಾಡಿದವರು ಜೀವಕ್ಕಾಗಿ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ನ್ಯಾಯತೀರ್ಪಿಗಾಗಿ ಪುನರುತ್ಥಾನವನ್ನೂ ಹೊಂದುವರು.
JOH 5:30 ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು. ನಾನು ಕೇಳಿರುವಂತೆಯೇ ತೀರ್ಪು ಮಾಡುತ್ತೇನೆ. ನನ್ನ ತೀರ್ಪು ನ್ಯಾಯವಾದದ್ದು. ಏಕೆಂದರೆ ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ನೆರವೇರಿಸಲು ಅಪೇಕ್ಷಿಸುತ್ತೇನೆ.
JOH 5:31 “ನನ್ನನ್ನು ಕುರಿತು ನಾನೇ ಸಾಕ್ಷಿಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ.
JOH 5:32 ನನ್ನನ್ನು ಕುರಿತು ಸಾಕ್ಷಿಕೊಡುವವರು ಬೇರೊಬ್ಬರಿದ್ದಾರೆ. ಅವರು ನನ್ನ ವಿಷಯದಲ್ಲಿ ಕೊಡುವ ಸಾಕ್ಷಿಯೇ ಸತ್ಯವಾದುದೆಂದು ನಾನು ಬಲ್ಲೆನು.
JOH 5:33 “ನೀವು ಯೋಹಾನನ ಬಳಿಗೆ ದೂತರನ್ನು ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು.
JOH 5:34 ನಾನಾದರೋ ಮಾನವರ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವುಗಳನ್ನು ಹೇಳುತ್ತೇನೆ.
JOH 5:35 ಯೋಹಾನನು ಉರಿದು ಪ್ರಕಾಶಿಸುವ ದೀಪವಾಗಿದ್ದನು. ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಅತ್ಯಾನಂದಪಡಲು ನೀವು ಇಚ್ಚಿಸಿದಿರಿ.
JOH 5:36 “ಆದರೆ ನನಗೆ ಯೋಹಾನನಿಗಿಂತಲೂ ಮಹಾ ಸಾಕ್ಷಿ ಉಂಟು. ಹೇಗೆಂದರೆ, ತಂದೆ ನನಗೆ ಮಾಡಿ ಮುಗಿಸಲು ಕೊಟ್ಟ ಕೆಲಸಗಳು, ಅಂದರೆ, ನಾನು ಮಾಡುತ್ತಿರುವ ಈ ಕೆಲಸಗಳೇ, ತಂದೆ ನನ್ನನ್ನು ಕಳಿಹಿಸಿದ್ದಾರೆಂದು ನನ್ನನ್ನು ಕುರಿತು ಸಾಕ್ಷಿ ಕೊಡುತ್ತವೆ.
JOH 5:37 ನನ್ನನ್ನು ಕಳುಹಿಸಿದ ತಂದೆ ತಾವೇ ನನ್ನನ್ನು ಕುರಿತು ಸಾಕ್ಷಿ ಹೇಳಿದ್ದಾರೆ. ನೀವು ಎಂದೂ ಅವರ ಸ್ವರವನ್ನು ಕೇಳಲಿಲ್ಲ, ಅವರ ರೂಪವನ್ನು ಕಾಣಲಿಲ್ಲ.
JOH 5:38 ಅವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವರು ಕಳುಹಿಸಿದವನನ್ನು ನೀವು ನಂಬುವುದಿಲ್ಲ.
JOH 5:39 ನೀವು ಪವಿತ್ರ ವೇದದಲ್ಲಿ ನಿತ್ಯಜೀವ ದೊರೆಯುತ್ತದೆ ಎಂದು ನೆನಸಿ, ಅವುಗಳನ್ನು ಪರಿಶೋಧಿಸುತ್ತೀದ್ದಿರಿ. ಆ ಪವಿತ್ರ ವೇದವೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತದೆ.
JOH 5:40 ಆದರೂ ನೀವು ಜೀವವನ್ನು ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಇಷ್ಟವಿಲ್ಲ.
JOH 5:41 “ನಾನು ಮನುಷ್ಯರಿಂದ ಮಹಿಮೆಯನ್ನು ಸ್ವೀಕರಿಸುವುದಿಲ್ಲ.
JOH 5:42 ಆದರೆ ನಿಮ್ಮನ್ನು ಬಲ್ಲೆನು. ನಿಮ್ಮ ಹೃದಯದಲ್ಲಿ ದೇವರ ಪ್ರೀತಿ ಇಲ್ಲ.
JOH 5:43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನೀವು ನನ್ನನ್ನು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅಂಥವನನ್ನು ಸ್ವೀಕರಿಸುತ್ತೀರಿ.
JOH 5:44 ಒಬ್ಬರೇ ದೇವರಿಂದ ಬರುವ ಮಹಿಮೆಯನ್ನು ಹುಡುಕದೆ ಒಬ್ಬರಿಂದೊಬ್ಬರಿಗೆ ಬರುವ ಮಹಿಮೆಯನ್ನು ಸ್ವೀಕರಿಸುವ ನಿಮಗೆ ನಂಬಲು ಹೇಗೆ ಸಾಧ್ಯ?
JOH 5:45 “ತಂದೆಯ ಮುಂದೆ ನಿಮ್ಮ ಮೇಲೆ ನಾನು ದೂರು ಹೇಳುತ್ತಿರುವೆನೆಂದು ನೀವು ನೆನಸಬೇಡಿರಿ. ನಿಮ್ಮ ಮೇಲೆ ದೂರು ಹೇಳುವವನು ಒಬ್ಬನಿದ್ದಾನೆ; ನೀವು ನಿರೀಕ್ಷೆಯಿಟ್ಟಿರುವ ಮೋಶೆಯೇ.
JOH 5:46 ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ. ಏಕೆಂದರೆ ಅವನು ನನ್ನನ್ನು ಕುರಿತು ಬರೆದಿದ್ದಾನೆ.
JOH 5:47 ಅವನು ಪವಿತ್ರ ವೇದಗಳಲ್ಲಿ ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬುವಿರಿ?” ಎಂದರು.
JOH 6:1 ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು.
JOH 6:2 ಯೇಸು ರೋಗಿಗಳಲ್ಲಿ ನಡೆಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಜನರ ದೊಡ್ಡ ಗುಂಪು ಯೇಸುವನ್ನು ಹಿಂಬಾಲಿಸಿತು.
JOH 6:3 ಯೇಸು ಬೆಟ್ಟವನ್ನೇರಿ ಅಲ್ಲಿ ತಮ್ಮ ಶಿಷ್ಯರೊಂದಿಗೆ ಕುಳಿತುಕೊಂಡರು.
JOH 6:4 ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು.
JOH 6:5 ಯೇಸು ಕಣ್ಣೆತ್ತಿ ನೋಡಿ ಮತ್ತು ಜನರ ದೊಡ್ಡ ಗುಂಪು ಅವರ ಕಡೆಗೆ ಬರುವುದನ್ನು ಕಂಡು ಫಿಲಿಪ್ಪನಿಗೆ, “ಇವರು ಊಟ ಮಾಡಲು ನಾವು ರೊಟ್ಟಿಯನ್ನು ಎಲ್ಲಿಂದ ಕೊಂಡುಕೊಳ್ಳೋಣ?” ಎಂದರು.
JOH 6:6 ಅವನನ್ನು ಪರೀಕ್ಷಿಸುವುದಕ್ಕಾಗಿ ಯೇಸು ಇದನ್ನು ಹೇಳಿದರು. ಏಕೆಂದರೆ ತಾನು ಮಾಡಲಿರುವುದು ಏನೆಂದು ಯೇಸುವಿಗೆ ತಿಳಿದಿತ್ತು.
JOH 6:7 ಫಿಲಿಪ್ಪನು ಯೇಸುವಿಗೆ, “ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಆರು ತಿಂಗಳ ಕೂಲಿಯಷ್ಟು ರೊಟ್ಟಿಗಳೂ ಅವರಿಗೆ ಸಾಲುವುದಿಲ್ಲ,” ಎಂದನು.
JOH 6:8 ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು
JOH 6:9 ಯೇಸುವಿಗೆ, “ಇಲ್ಲಿ ಒಬ್ಬ ಹುಡುಗನ ಬಳಿ ಐದು ಜವೆಗೋಧಿಯ ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಅಷ್ಟೊಂದು ಜನರಿಗೆ ಇವು ಹೇಗೆ ಸಾಕಾಗುತ್ತವೆ?” ಎಂದನು.
JOH 6:10 ಯೇಸು, “ಜನರನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿರಿ,” ಎಂದರು. ಆ ಸ್ಥಳದಲ್ಲಿ ಬಹಳ ಹುಲ್ಲು ಇದ್ದುದರಿಂದ ಜನರೆಲ್ಲರೂ ಕುಳಿತುಕೊಂಡರು, ಗಂಡಸರೇ ಐದು ಸಾವಿರ ಮಂದಿ ಇದ್ದರು.
JOH 6:11 ಆಮೇಲೆ ಯೇಸು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಬೇಕಾದಷ್ಟು ಹಂಚಿದರು. ಅದೇ ರೀತಿಯಲ್ಲಿ ಮೀನುಗಳನ್ನು ಅವರಿಗೆ ಹಂಚಿದರು.
JOH 6:12 ಅವರೆಲ್ಲರೂ ತಿಂದು ತೃಪ್ತಿಯಾದ ಮೇಲೆ ಯೇಸು ತಮ್ಮ ಶಿಷ್ಯರಿಗೆ, “ಏನೂ ನಷ್ಟವಾಗದಂತೆ ಉಳಿದ ತುಂಡುಗಳನ್ನು ಕೂಡಿಸಿರಿ,” ಎಂದರು.
JOH 6:13 ಅದರಂತೆ ಅವರು ಐದು ಜವೆಗೋಧಿಯ ರೊಟ್ಟಿಗಳಲ್ಲಿ ತಿಂದವರಿಂದ ಉಳಿದ ತುಂಡುಗಳನ್ನು ಕೂಡಿಸಿ, ಹನ್ನೆರಡು ಬುಟ್ಟಿಗಳಲ್ಲಿ ತುಂಬಿದರು.
JOH 6:14 ಆ ಜನರು ಯೇಸು ಮಾಡಿದ ಸೂಚಕಕಾರ್ಯವನ್ನು ಕಂಡು, “ಸತ್ಯವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಇವರೇ,” ಎಂದರು.
JOH 6:15 ಅವರು ಬಂದು ತನ್ನನ್ನು ಹಿಡಿದುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ಯೇಸು ತಿಳಿದು ತಾವೊಬ್ಬರೇ ಪುನಃ ಬೆಟ್ಟದ ಕಡೆಗೆ ಹೋದರು.
JOH 6:16 ಸಂಜೆಯಾದಾಗ ಯೇಸುವಿನ ಶಿಷ್ಯರು ಸರೋವರಕ್ಕೆ ಹೋಗಿ,
JOH 6:17 ದೋಣಿಯನ್ನು ಹತ್ತಿ ಸರೋವರ ಮಾರ್ಗವಾಗಿ ಕಪೆರ್ನೌಮಿಗೆ ಸಾಗಿದರು. ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ.
JOH 6:18 ಆಗ ರಭಸವಾದ ಗಾಳಿಯು ಬೀಸಿದ್ದರಿಂದ ಸರೋವರವು ಅಲ್ಲೋಲಕಲ್ಲೋಲವಾಯಿತು.
JOH 6:19 ಅವರು ದೋಣಿಯನ್ನು ನಡೆಸುತ್ತಾ ಸುಮಾರು ಐದಾರು ಕಿಲೋಮೀಟರಿನಷ್ಟು ದೂರ ಹೋದ ಮೇಲೆ ಯೇಸು ಸರೋವರದ ಮೇಲೆ ನಡೆದು ದೋಣಿಯ ಕಡೆಗೆ ಸಮೀಪಿಸುತ್ತಿರುವುದನ್ನು ಅವರು ಕಂಡು, ಭಯಪಟ್ಟರು.
JOH 6:20 ಆದರೆ ಯೇಸು ಅವರಿಗೆ, “ನಾನೇ, ಭಯಪಡಬೇಡಿರಿ,” ಎಂದರು.
JOH 6:21 ಆಗ ಶಿಷ್ಯರು ಯೇಸುವನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲಿ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಸೇರಿತು.
JOH 6:22 ಮರುದಿನ ಅಲ್ಲಿ ಒಂದೇ ದೋಣಿಯ ಹೊರತು ಬೇರೆ ಇರಲಿಲ್ಲವೆಂದೂ ಯೇಸುವಿನ ಶಿಷ್ಯರು ಮಾತ್ರ ಆ ದೋಣಿಯಲ್ಲಿ ಹೋದರೆಂದೂ ಯೇಸು ತಮ್ಮ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಸರೋವರದ ಆಚೆಯಲ್ಲಿ ನಿಂತಿದ್ದ ಜನರು ಅರಿತುಕೊಂಡರು.
JOH 6:23 ಬೇರೆ ದೋಣಿಗಳು ತಿಬೇರಿಯದಿಂದ ಹೊರಟು, ಕರ್ತ ಯೇಸು ಕೃತಜ್ಞತೆ ಸಲ್ಲಿಸಿ ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು.
JOH 6:24 ಆಗ ಯೇಸು ಮತ್ತು ಅವರ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ನೋಡಿ, ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.
JOH 6:25 ಜನರು ಯೇಸುವನ್ನು ಸರೋವರದ ಆಚೆ ಕಡೆಯಲ್ಲಿ ಕಂಡು ಅವರಿಗೆ, “ಗುರುವೇ, ನೀವು ಇಲ್ಲಿಗೆ ಬಂದದ್ದು ಯಾವಾಗ?” ಎಂದರು.
JOH 6:26 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.
JOH 6:27 ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು.
JOH 6:28 ಆಗ ಅವರು ಯೇಸುವಿಗೆ, “ನಾವು ದೇವರ ಕಾರ್ಯವನ್ನು ಮಾಡಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ್ದಕ್ಕೆ,
JOH 6:29 ಯೇಸು ಅವರಿಗೆ, “ದೇವರು ಕಳುಹಿಸಿದ ನನ್ನನ್ನು ನೀವು ನಂಬುವುದೇ ದೇವರು ಮೆಚ್ಚುವ ಕಾರ್ಯ,” ಎಂದರು.
JOH 6:30 ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ನಾವು ನೋಡಿ ನಿಮ್ಮನ್ನು ನಂಬುವಂತೆ ಯಾವ ಸೂಚಕಕಾರ್ಯವನ್ನು ಮಾಡುತ್ತೀರಿ?
JOH 6:31 ‘ಅವರಿಗೆ ಪರಲೋಕದಿಂದ ರೊಟ್ಟಿ ಕೊಡಲಾಯಿತು’ ಎಂದು ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅರಣ್ಯದಲ್ಲಿ ಮನ್ನಾ ಎಂಬ ಆಹಾರವನ್ನು ತಿಂದರು,” ಎಂದು ಕೇಳಿದರು.
JOH 6:32 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮಗೆ ಪರಲೋಕದಿಂದ ರೊಟ್ಟಿಯನ್ನು ಮೋಶೆ ಕೊಡಲಿಲ್ಲ. ನನ್ನ ತಂದೆಯೇ ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದಲೇ ಕೊಡುತ್ತಾರೆ.
JOH 6:33 ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವ ದೇವರ ರೊಟ್ಟಿಯು ನಾನೇ,” ಎಂದರು.
JOH 6:34 ಅದಕ್ಕವರು ಯೇಸುವಿಗೆ, “ಸ್ವಾಮೀ, ಈ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡು,” ಎಂದರು.
JOH 6:35 ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ.
JOH 6:36 ಆದರೆ, ‘ನೀವು ನನ್ನನ್ನು ಕಂಡಿದ್ದರೂ ನಂಬಲಿಲ್ಲ,’ ಎಂದು ನಾನು ನಿಮಗೆ ಹೇಳಿದೆನು.
JOH 6:37 ತಂದೆಯು ನನಗೆಂದು ಕೊಟ್ಟಿರುವ ಪ್ರತಿಯೊಬ್ಬರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವರನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.
JOH 6:38 ನಾನು ನನ್ನ ಚಿತ್ತವನ್ನು ಮಾಡುವುದಕ್ಕಲ್ಲ. ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ಮಾಡುವುದಕ್ಕೆ ಪರಲೋಕದಿಂದ ಬಂದೆನು.
JOH 6:39 ನನ್ನನ್ನು ಕಳುಹಿಸಿಕೊಟ್ಟ ತಂದೆಯ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಕಡೆಯ ದಿನದಲ್ಲಿ ಅವರನ್ನು ಎಬ್ಬಿಸುವುದೇ.
JOH 6:40 ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು.
JOH 6:41 “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ,” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಯೇಸುವಿನ ವಿಷಯವಾಗಿ ಗೊಣಗುಟ್ಟಿ,
JOH 6:42 “ಈತನು ಯೋಸೇಫನ ಪುತ್ರ ಯೇಸು ಅಲ್ಲವೇ? ಈತನ ತಂದೆತಾಯಿ ನಮಗೆ ಗೊತ್ತಿಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಬಂದೆನು,’ ಎಂದು ಈತನು ಹೇಳುವುದು ಹೇಗೆ?” ಎಂದರು.
JOH 6:43 ಯೇಸು ಅವರಿಗೆ, “ನಿಮ್ಮನಿಮ್ಮೊಳಗೆ ಗೊಣಗುಟ್ಟಬೇಡಿರಿ.
JOH 6:44 ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.
JOH 6:45 ‘ಅವರೆಲ್ಲರೂ ದೇವರಿಂದಲೇ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ.
JOH 6:46 ದೇವರಿಂದ ಬಂದಿರುವ ನಾನೇ ತಂದೆಯನ್ನು ನೋಡಿದ್ದೇನೆ, ಬೇರೆ ಯಾರೂ ತಂದೆಯನ್ನು ನೋಡಲಿಲ್ಲ.
JOH 6:47 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ.
JOH 6:48 ನಾನೇ ಜೀವದ ರೊಟ್ಟಿ.
JOH 6:49 ನಿಮ್ಮ ಪಿತೃಗಳು ಅರಣ್ಯದಲ್ಲಿ ‘ಮನ್ನಾ’ ತಿಂದರೂ ಸತ್ತುಹೋದರು.
JOH 6:50 ಯಾರು ತಿಂದರೂ ಸಾಯದೇ ಇರುವಂತೆ ಪರಲೋಕದಿಂದ ಇಳಿದು ಬಂದ ಜೀವದ ರೊಟ್ಟಿ ಇದೇ.
JOH 6:51 ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು.
JOH 6:52 ಆದ್ದರಿಂದ ಯೆಹೂದ್ಯರು ಒಬ್ಬರಿಗೊಬ್ಬರು ಚರ್ಚೆಮಾಡುತ್ತಾ, “ಈ ಮನುಷ್ಯನು ತನ್ನ ಮಾಂಸವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೆ?” ಎಂದರು.
JOH 6:53 ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಪುತ್ರನಾದ ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ಜೀವವಿರುವುದಿಲ್ಲ.
JOH 6:54 ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.
JOH 6:55 ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.
JOH 6:56 ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನನ್ನಲ್ಲಿ ನೆಲೆಸಿರುತ್ತಾರೆ. ನಾನು ಅವರಲ್ಲಿ ನೆಲೆಸಿರುತ್ತೇನೆ.
JOH 6:57 ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿದ್ದಾರೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುವಂತೆಯೇ ನನ್ನನ್ನು ತಿನ್ನುವವರು ನನ್ನ ನಿಮಿತ್ತವಾಗಿಯೇ ಜೀವಿಸುವರು.
JOH 6:58 ಪರಲೋಕದಿಂದ ಬಂದ ರೊಟ್ಟಿಯು ಇದೇ. ನಿಮ್ಮ ಪಿತೃಗಳು ‘ಮನ್ನಾ’ ತಿಂದರೂ ಸತ್ತರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವರು ಸದಾಕಾಲಕ್ಕೂ ಜೀವಿಸುವರು,” ಎಂದರು.
JOH 6:59 ಕಪೆರ್ನೌಮಿನ ಸಭಾಮಂದಿರದಲ್ಲಿ ಬೋಧಿಸುತ್ತಿರುವಾಗ ಯೇಸು ಈ ಮಾತುಗಳನ್ನು ಹೇಳಿದರು.
JOH 6:60 ಯೇಸುವಿನ ಶಿಷ್ಯರಲ್ಲಿ ಅನೇಕರು ಈ ಮಾತುಗಳನ್ನು ಕೇಳಿ, “ಇದು ಕಠಿಣವಾದ ಮಾತು. ಇದನ್ನು ಯಾರು ಪಾಲಿಸುವರು?” ಎಂದರು.
JOH 6:61 ತಮ್ಮ ಶಿಷ್ಯರು ಇದನ್ನು ಕುರಿತು ಗೊಣಗುಟ್ಟುತ್ತಾರೆಂದು ಯೇಸು ತಮ್ಮಲ್ಲಿ ತಿಳಿದುಕೊಂಡು ಅವರಿಗೆ, “ಇದು ನಿಮಗೆ ಬೇಸರವಾಯಿತೋ?
JOH 6:62 ಹಾಗಾದರೆ ಮನುಷ್ಯಪುತ್ರನಾದ ನಾನು ಮೊದಲಿದ್ದ ಕಡೆಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ?
JOH 6:63 ಬದುಕಿಸುವುದು ದೇವರ ಆತ್ಮವೇ, ನರಮಾಂಸವಾದರೋ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ನುಡಿದ ಮಾತುಗಳೇ ದೇವರಾತ್ಮವೂ ಜೀವವೂ ಆಗಿರುತ್ತವೆ.
JOH 6:64 ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ,” ಎಂದರು. ನಂಬದವರು ಯಾರೆಂದೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸು ಮೊದಲಿನಿಂದಲೂ ತಿಳಿದಿದ್ದರು.
JOH 6:65 ಯೇಸು ಮುಂದುವರಿಸಿ ಹೇಳಿದ್ದೇನೆಂದರೆ, “ಯಾರನ್ನಾದರೂ ನನ್ನ ತಂದೆಯು ನನಗೆ ಕೊಟ್ಟರಷ್ಟೇ ಅವರು ನನ್ನ ಬಳಿಗೆ ಬರಲು ಸಾಧ್ಯ, ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ.”
JOH 6:66 ಅಂದಿನಿಂದ ಯೇಸುವಿನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟು ಹೋದರು ಮತ್ತು ಯೇಸುವಿನ ಸಂಗಡ ಸಂಚಾರ ಮಾಡಲಿಲ್ಲ.
JOH 6:67 ಆದಕಾರಣ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಲು,
JOH 6:68 ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ.
JOH 6:69 ನೀವು ದೇವರ ಪರಿಶುದ್ಧರು ಎಂದು ನಾವು ನಂಬಿ ತಿಳಿದಿದ್ದೇವೆ,” ಎಂದನು.
JOH 6:70 ಅದಕ್ಕೆ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೇ? ಆದರೆ ನಿಮ್ಮಲ್ಲಿಯೂ ಒಬ್ಬನು ಪಿಶಾಚನಾಗಿದ್ದಾನೆ,” ಎಂದರು.
JOH 6:71 ಸೀಮೋನನ ಮಗ ಇಸ್ಕರಿಯೋತ ಯೂದನ ವಿಷಯವಾಗಿ ಯೇಸು ಹೀಗೆ ಹೇಳಿದರು. ಏಕೆಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದು ಕೊಡುವುದಕ್ಕಿದ್ದನು.
JOH 7:1 ಇವುಗಳಾದ ಮೇಲೆ ಯೇಸು ಗಲಿಲಾಯದ ಪ್ರಾಂತದಲ್ಲಿ ಸಂಚಾರ ಮಾಡಿದರು. ಯೆಹೂದ್ಯರು ಯೇಸುವನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದುದರಿಂದ ಯೂದಾಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ.
JOH 7:2 ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.
JOH 7:3 ಆದ್ದರಿಂದ ಯೇಸುವಿನ ಸಹೋದರರು, “ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು.
JOH 7:4 ಏಕೆಂದರೆ ಪ್ರಖ್ಯಾತನಾಗಲು ಬಯಸುವ ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದಾದರೆ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ,” ಎಂದು ಯೇಸುವಿಗೆ ಹೇಳಿದರು.
JOH 7:5 ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ.
JOH 7:6 ಅದಕ್ಕೆ ಯೇಸು ಅವರಿಗೆ, “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.
JOH 7:7 ಲೋಕವು ನಿಮ್ಮನ್ನು ದ್ವೇಷಿಸಲಾರದು. ಲೋಕದ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯದಲ್ಲಿ ನಾನು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.
JOH 7:8 ನೀವು ಈ ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ಏಕೆಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ,” ಎಂದರು.
JOH 7:9 ಯೇಸು ಈ ಮಾತುಗಳನ್ನು ಅವರಿಗೆ ಹೇಳಿದ ಮೇಲೆ ಗಲಿಲಾಯದಲ್ಲಿಯೇ ಉಳಿದರು.
JOH 7:10 ಆದರೆ ಯೇಸುವಿನ ಸಹೋದರರು ಹಬ್ಬಕ್ಕೆ ಹೋದರು. ಯೇಸು ಸಹ ಬಹಿರಂಗವಾಗಿ ಹೋಗದೆ ರಹಸ್ಯವಾಗಿ ಅಲ್ಲಿಗೆ ಹೋದರು.
JOH 7:11 ಯೆಹೂದ್ಯರು ಆ ಹಬ್ಬದಲ್ಲಿ, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.
JOH 7:12 ಜನರ ಗುಂಪುಗಳಲ್ಲಿ ಯೇಸುವಿನ ವಿಷಯವಾಗಿ ಬಹಳ ಗೊಣಗುಟ್ಟುವಿಕೆ ಇತ್ತು. ಏಕೆಂದರೆ ಕೆಲವರು, “ಆತ ಒಳ್ಳೆಯ ಮನುಷ್ಯ,” ಎಂದರು. ಬೇರೆ ಕೆಲವರು, “ಇಲ್ಲ ಆತ ಜನರಿಗೆ ಮೋಸಮಾಡುತ್ತಾನೆ,” ಎಂದರು.
JOH 7:13 ಆದರೂ ಯೆಹೂದ್ಯರ ಭಯದ ನಿಮಿತ್ತ ಯೇಸುವಿನ ವಿಷಯದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲಿಲ್ಲ.
JOH 7:14 ಯೇಸು ಆ ಹಬ್ಬದ ಮಧ್ಯದಲ್ಲಿ ದೇವಾಲಯಕ್ಕೆ ಹೋಗಿ ಬೋಧಿಸಿದರು.
JOH 7:15 ಯೆಹೂದ್ಯರು ಆಶ್ಚರ್ಯಪಟ್ಟು, “ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಷ್ಟೆಲ್ಲಾ ಜ್ಞಾನ ತಿಳಿದಿರುವುದು ಹೇಗೆ?” ಎಂದರು.
JOH 7:16 ಅದಕ್ಕೆ ಯೇಸು ಅವರಿಗೆ, “ನನ್ನ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.
JOH 7:17 ಯಾರಾದರೂ ದೇವರ ಚಿತ್ತವನ್ನು ಮಾಡಬಯಸುವುದಾದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಮಾತನಾಡುತ್ತೇನೋ ಎಂಬುದು ಅವರಿಗೆ ತಿಳಿಯುವುದು.
JOH 7:18 ತಮ್ಮಷ್ಟಕ್ಕೆ ತಾವೇ ಮಾತನಾಡುವವರು ತಮ್ಮ ಸ್ವಂತ ಮಹಿಮೆಯನ್ನು ಹುಡುಕುತ್ತಾರೆ. ಆದರೆ ತನ್ನನ್ನು ಕಳುಹಿಸಿದ ತಂದೆಯ ಮಹಿಮೆಯನ್ನು ಹುಡುಕುವ ಮನುಷ್ಯನು ಸತ್ಯವಂತನು; ಆತನಲ್ಲಿ ಅನೀತಿಯಿಲ್ಲ.
JOH 7:19 ಮೋಶೆಯು ನಿಮಗೆ ನಿಯಮವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಯಾರೂ ಆ ನಿಯಮದಂತೆ ನಡೆಯುವುದಿಲ್ಲ. ನೀವು ನನ್ನನ್ನು ಕೊಲ್ಲಲು ಹುಡುಕುವುದೇಕೆ?” ಎಂದು ಕೇಳಿದರು.
JOH 7:20 ಅದಕ್ಕೆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಹುಡುಕುವವರು ಯಾರು?” ಎಂದರು.
JOH 7:21 ಯೇಸು ಅವರಿಗೆ, “ನಾನು ಒಂದು ಕ್ರಿಯೆಯನ್ನು ಮಾಡಿದೆನು. ಅದಕ್ಕೆ ನೀವೆಲ್ಲರೂ ಆಶ್ವರ್ಯಪಡುತ್ತೀರಿ.
JOH 7:22 ಮೋಶೆ ನಿಮಗೆ ಸುನ್ನತಿಯನ್ನು ಇದಕ್ಕಾಗಿಯೇ ಕೊಟ್ಟನು. ಅದು ಮೋಶೆಯಿಂದಾಗಿರದೆ ನಿಮ್ಮ ಪಿತೃಗಳಿಂದಾದದ್ದು. ಆದರೆ ನೀವು ಸಬ್ಬತ್ ದಿನದಲ್ಲಿಯೂ ಸುನ್ನತಿ ಮಾಡುತ್ತೀರಿ.
JOH 7:23 ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿಯನ್ನು ಮಾಡುವುದಾದರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್ ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ?
JOH 7:24 ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ಆದರೆ ನೀತಿಯ ತೀರ್ಪನ್ನು ಮಾಡಿರಿ,” ಎಂದರು.
JOH 7:25 ಆಮೇಲೆ ಯೆರೂಸಲೇಮಿನ ಕೆಲವರು, “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ?
JOH 7:26 ಇಗೋ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೆ ಅವರು ಈತನಿಗೆ ಏನೂ ಹೇಳುವುದಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತ ಎಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ?
JOH 7:27 ಆದರೆ ಈತನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು. ಆದರೂ ಕ್ರಿಸ್ತನು ಬಂದಾಗ ಆತನು ಎಲ್ಲಿಂದ ಬಂದವನೆಂದು ಯಾರಿಗೂ ತಿಳಿಯದು,” ಎಂದರು.
JOH 7:28 ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ. ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ತಂದೆಯನ್ನು ನೀವು ಅರಿತವರಲ್ಲ.
JOH 7:29 ನಾನಾದರೋ ಅವರನ್ನು ಅರಿತಿದ್ದೇನೆ. ಏಕೆಂದರೆ ನಾನು ಅವರ ಕಡೆಯಿಂದ ಬಂದವನು. ಅವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ,” ಎಂದು ಗಟ್ಟಿಯಾಗಿ ಕೂಗಿ ಹೇಳಿದರು.
JOH 7:30 ಆಗ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಸಮಯ ಇನ್ನೂ ಬಾರದೆ ಇದ್ದುದರಿಂದ ಅವರ ಮೇಲೆ ಯಾರೂ ಕೈಹಾಕಲಿಲ್ಲ.
JOH 7:31 ಜನರಲ್ಲಿ ಅನೇಕರು ಯೇಸುವನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೋ?” ಎಂದರು.
JOH 7:32 ಯೇಸುವಿನ ವಿಷಯವಾಗಿ ಜನರು ತಮ್ಮತಮ್ಮೊಳಗೆ ಮಾತನಾಡುವುದನ್ನು ಫರಿಸಾಯರು ಕೇಳಿದರು. ಫರಿಸಾಯರು ಮತ್ತು ಮುಖ್ಯಯಾಜಕರು ಯೇಸುವನ್ನು ಬಂಧಿಸಲು ಕಾವಲುಗಾರರನ್ನು ಕಳುಹಿಸಿದರು.
JOH 7:33 ಯೇಸು ಅವರಿಗೆ, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಅನಂತರ ನನ್ನನ್ನು ಕಳುಹಿಸಿದ ತಂದೆಯ ಬಳಿಗೆ ಹೋಗುತ್ತೇನೆ.
JOH 7:34 ನೀವು ನನ್ನನ್ನು ಹುಡುಕುವಿರಿ. ಆದರೆ ನನ್ನನ್ನು ಕಾಣುವುದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ,” ಎಂದರು.
JOH 7:35 ಆಗ ಯೆಹೂದಿ ನಾಯಕರು, “ನಾವು ಈತನನ್ನು ಕಾಣದ ಹಾಗೆ ಈತ ಎಲ್ಲಿಗೆ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿ ಹೋದವರ ಬಳಿಗೆ ಹೋಗಿ ಗ್ರೀಕರಿಗೆ ಬೋಧಿಸುವನೋ?
JOH 7:36 ಈತನು, ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ,’ ಎಂದು ಹೇಳಿದ ಮಾತು ಏನಾಗಿರಬಹುದು?” ಎಂದು ತಮ್ಮೊಳಗೆ ಮಾತನಾಡಿಕೊಂಡರು.
JOH 7:37 ಹಬ್ಬದ ಆ ಮಹಾದಿವಸವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು, “ಯಾರಿಗಾದರೂ ಬಾಯಾರಿಕೆಯಾಗಿದ್ದರೆ ಅವರು ನನ್ನ ಬಳಿಗೆ ಬಂದು ಕುಡಿಯಲಿ.
JOH 7:38 ಪವಿತ್ರ ವೇದವು ಹೇಳಿದ ಪ್ರಕಾರ ನನ್ನಲ್ಲಿ ನಂಬಿಕೆಯಿಡುವವರ ಅಂತರಂಗದಿಂದ ಜೀವಜಲದ ಹೊಳೆಗಳು ಹರಿಯುವವು,” ಎಂದು ಕೂಗಿ ಹೇಳಿದರು.
JOH 7:39 ಆದರೆ ಯೇಸು ತಮ್ಮಲ್ಲಿ ನಂಬಿಕೆಯಿಡುವವರು ಹೊಂದಲಿರುವ ಪವಿತ್ರಾತ್ಮರನ್ನು ಕುರಿತು ಹೀಗೆ ಹೇಳಿದರು. ಯೇಸು ಇನ್ನೂ ಮಹಿಮೆ ಹೊಂದಿರಲಿಲ್ಲ. ಈ ಕಾರಣದಿಂದ ಪವಿತ್ರ ಆತ್ಮ ಇನ್ನೂ ಬಂದಿರಲಿಲ್ಲ.
JOH 7:40 ಆದ್ದರಿಂದ ಜನರಲ್ಲಿ ಕೆಲವರು ಈ ಮಾತನ್ನು ಕೇಳಿದಾಗ, “ಈತನು ನಿಜವಾಗಿಯೂ ಪ್ರವಾದಿಯಾಗಿದ್ದಾನೆ,” ಎಂದರು.
JOH 7:41 ಬೇರೆಯವರು, “ಈತನೇ ಕ್ರಿಸ್ತನು,” ಎಂದರು. ಆದರೆ ಇನ್ನೂ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದು ಹೇಗೆ?
JOH 7:42 ‘ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತ್ಲೆಹೇಮೆಂಬ ಊರಿನಿಂದಲೂ ಬರುವನು,’ ಎಂದು ಪವಿತ್ರ ವೇದವು ಹೇಳುತ್ತದಲ್ಲವೇ?” ಎಂದರು.
JOH 7:43 ಹೀಗೆ ಯೇಸುವಿನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು.
JOH 7:44 ಅವರಲ್ಲಿ ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಯಾರೂ ಯೇಸುವಿನ ಮೇಲೆ ಕೈಹಾಕಲಿಲ್ಲ.
JOH 7:45 ಬಳಿಕ ಕಾವಲುಗಾರರು, ಮುಖ್ಯಯಾಜಕರ ಹಾಗೂ ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಹಿಡಿದು ತರಲಿಲ್ಲ?” ಎಂದು ಕೇಳಿದರು.
JOH 7:46 ಅದಕ್ಕೆ ಕಾವಲುಗಾರರು, “ಯಾವ ಮನುಷ್ಯನೂ ಎಂದೂ ಈತನು ಮಾತನಾಡುವಂತೆ ಮಾತನಾಡಿದ್ದಿಲ್ಲ,” ಎಂದರು.
JOH 7:47 ಆಗ ಫರಿಸಾಯರು ಅವರಿಗೆ, “ನೀವು ಸಹ ಮರುಳಾದೀರಾ?
JOH 7:48 ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಯೇಸುವನ್ನು ನಂಬಿದ್ದುಂಟೇ?
JOH 7:49 ಆದರೆ ಮೋಶೆಯ ನಿಯಮವನ್ನು ಅರಿಯದ ಈ ಜನರು ಶಾಪಗ್ರಸ್ತರೇ,” ಎಂದು ಹೇಳಿದರು.
JOH 7:50 ಯೇಸುವಿನ ಬಳಿಗೆ ಒಮ್ಮೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು. ಅವನು ಅವರಿಗೆ,
JOH 7:51 “ಒಬ್ಬ ಮನುಷ್ಯನನ್ನು ಮೊದಲು ವಿಚಾರಿಸಿ, ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ನಮ್ಮ ನಿಯಮವು ಅವನಿಗೆ ತೀರ್ಪುಮಾಡುವುದುಂಟೇ?” ಎಂದನು.
JOH 7:52 ಅವರು ಅವನಿಗೆ, “ನೀನು ಸಹ ಗಲಿಲಾಯದವನೋ? ಗಲಿಲಾಯದಿಂದ ಒಬ್ಬ ಪ್ರವಾದಿಯೂ ಏಳುವುದಿಲ್ಲ, ನೀನೇ ಪರಿಶೋಧಿಸಿ ನೋಡು,” ಎಂದರು.
JOH 7:53 ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.
JOH 8:1 ಯೇಸುವಾದರೋ ಓಲಿವ್ ಮರಗಳ ಗುಡ್ಡಕ್ಕೆ ಹೋದರು.
JOH 8:2 ಬೆಳಿಗ್ಗೆ ಯೇಸು ತಿರುಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಅವರ ಬಳಿಗೆ ಬಂದರು. ಯೇಸು ಕುಳಿತುಕೊಂಡು ಅವರಿಗೆ ಬೋಧಿಸಿದರು.
JOH 8:3 ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಸ್ತ್ರೀಯನ್ನು ನಿಯಮ ಬೋಧಕರು ಮತ್ತು ಫರಿಸಾಯರು ಹಿಡಿದು ಯೇಸುವಿನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿದರು.
JOH 8:4 ಅವರು ಯೇಸುವಿಗೆ, “ಬೋಧಕರೇ, ಈ ಸ್ತ್ರೀ ವ್ಯಭಿಚಾರ ಮಾಡುವಾಗಲೇ ಸಿಕ್ಕಿಬಿದ್ದಳು.
JOH 8:5 ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ನಿಯಮದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಆದ್ದರಿಂದ ನೀವು ಏನು ಹೇಳುತ್ತೀರಿ?” ಎಂದು ಕೇಳಿದರು.
JOH 8:6 ಅವರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ತಪ್ಪು ಹೊರಿಸಬೇಕೆಂದೇ ಹೀಗೆ ಕೇಳಿದರು. ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದರು.
JOH 8:7 ಅವರು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿರಲು ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಇವಳ ಮೇಲೆ ಕಲ್ಲು ಎಸೆಯಲಿ,” ಎಂದು ಅವರಿಗೆ ಹೇಳಿದರು.
JOH 8:8 ತಿರುಗಿ ಯೇಸು ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು.
JOH 8:9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬರೇ ಉಳಿದರು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.
JOH 8:10 ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಅಮ್ಮಾ ಅವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೋ?” ಎಂದರು.
JOH 8:11 ಅದಕ್ಕೆ ಆಕೆಯು, “ಸ್ವಾಮಿ, ಯಾರೂ ಶಿಕ್ಷೆ ವಿಧಿಸಲಿಲ್ಲ,” ಎಂದಳು. ಯೇಸು ಆಕೆಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.
JOH 8:12 ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ. ಅವರು ಜೀವದ ಬೆಳಕನ್ನು ಹೊಂದಿರುವರು,” ಎಂದು ಹೇಳಿದರು.
JOH 8:13 ಫರಿಸಾಯರು ಯೇಸುವಿಗೆ, “ನಿನ್ನ ವಿಷಯವಾಗಿ ನೀನೇ ಸಾಕ್ಷಿ ನೀಡುತ್ತಿರುವೆ, ನಿನ್ನ ಸಾಕ್ಷಿಯು ಸತ್ಯವಾದುದ್ದಲ್ಲ,” ಎಂದು ಹೇಳಿದರು.
JOH 8:14 ಯೇಸು ಅವರಿಗೆ, “ನಾನೇ ನನ್ನ ವಿಷಯವಾಗಿ ನಾನು ಸಾಕ್ಷಿ ನೀಡಿದರೂ ನನ್ನ ಸಾಕ್ಷಿ ಸತ್ಯವಾದದ್ದು. ಏಕೆಂದರೆ ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆಂದು ನನಗೆ ತಿಳಿದಿದೆ. ಆದರೆ ನಾನು ಎಲ್ಲಿಂದ ಬಂದೆ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನಿಮಗೆ ತಿಳಿಯದು.
JOH 8:15 ನೀವು ಮಾನವ ರೀತಿಯಲ್ಲಿ ತೀರ್ಪು ಮಾಡುತ್ತೀರಿ. ನಾನು ಯಾರಿಗೂ ತೀರ್ಪು ಮಾಡುವುದಿಲ್ಲ.
JOH 8:16 ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಂಟಿಗನಲ್ಲ. ನಾನೂ ನನ್ನನ್ನು ಕಳುಹಿಸಿದ ತಂದೆಯೂ ಇದ್ದೇವೆ.
JOH 8:17 ‘ಇಬ್ಬರ ಸಾಕ್ಷಿಯು ಸತ್ಯವಾದದ್ದು’ ಎಂದು ನಿಮ್ಮ ನಿಯಮದಲ್ಲಿಯೇ ಬರೆದಿದೆ.
JOH 8:18 ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾರೆ,” ಎಂದರು.
JOH 8:19 ಆಗ ಅವರು, “ನಿನ್ನ ತಂದೆ ಎಲ್ಲಿ?” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ನನ್ನನ್ನಾಗಲಿ ನನ್ನ ತಂದೆಯನ್ನಾಗಲಿ ತಿಳಿದಿಲ್ಲ, ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿಯುತ್ತಿದ್ದೀರಿ,” ಎಂದು ಉತ್ತರಕೊಟ್ಟರು.
JOH 8:20 ಯೇಸು ದೇವಾಲಯದ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಸ್ಥಳದಲ್ಲಿ ಬೋಧಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದರು. ಆದರೆ ಯೇಸುವಿನ ಸಮಯ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.
JOH 8:21 ಯೇಸು ತಿರುಗಿ ಅವರಿಗೆ, “ನಾನು ಹೊರಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ ಮತ್ತು ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು.
JOH 8:22 ಅದಕ್ಕೆ ಯೆಹೂದ್ಯರು, “ಈತನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದಾನೋ? ಏಕೆಂದರೆ, ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ,’ ಎಂದು ಹೇಳುತ್ತಾನಲ್ಲಾ?” ಎಂದರು.
JOH 8:23 ಯೇಸು ಅವರಿಗೆ, “ನೀವು ಕೆಳಗಿನವರು, ನಾನು ಮೇಲಿನವನು. ನೀವು ಈ ಲೋಕದವರು, ನಾನು ಈ ಲೋಕದವನಲ್ಲ.
JOH 8:24 ಆದ್ದರಿಂದ, ‘ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ,’ ಎಂದು ನಾನು ನಿಮಗೆ ಹೇಳಿದೆನು. ಏಕೆಂದರೆ ನೀವು ನನ್ನನ್ನು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ,” ಎಂದು ಹೇಳಿದರು.
JOH 8:25 ಅವರು ಯೇಸುವಿಗೆ, “ನೀನು ಯಾರು?” ಎಂದರು. ಅದಕ್ಕೆ ಯೇಸು ಅವರಿಗೆ, “ಮೊದಲಿನಿಂದ ನಾನು ನಿಮಗೆ ಹೇಳಿದಂತವನೇ.
JOH 8:26 ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ ತೀರ್ಪುಮಾಡುವುದಕ್ಕೂ ನನಗೆ ಅನೇಕ ವಿಷಯಗಳಿವೆ. ಆದರೆ ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ನಾನು ಅವರಿಂದ ಕೇಳಿದವುಗಳನ್ನು ಮಾತ್ರವೇ ಲೋಕಕ್ಕೆ ಹೇಳುತ್ತೇನೆ,” ಎಂದರು.
JOH 8:27 ಯೇಸು ತಂದೆಯ ವಿಷಯವಾಗಿ ಅವರೊಂದಿಗೆ ಮಾತನಾಡಿದರೆಂದು ಅವರು ತಿಳಿಯಲಿಲ್ಲ.
JOH 8:28 ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ನೀವು ಮೇಲಕ್ಕೇರಿಸಿದಾಗ ‘ನಾನೇ ಆತನು’ ಎಂದು ನಿಮಗೆ ತಿಳಿಯುವುದು. ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ಬೋಧಿಸಿದಂತೆ ನಾನು ಈ ಸಂಗತಿಗಳನ್ನು ಮಾತನಾಡುತ್ತೇನೆ ಎಂದೂ ನೀವು ತಿಳಿದುಕೊಳ್ಳುವಿರಿ.
JOH 8:29 ನನ್ನನ್ನು ಕಳುಹಿಸಿದ ತಂದೆ ನನ್ನ ಸಂಗಡ ಇದ್ದಾರೆ. ಅವರು ನನ್ನನ್ನು ಒಬ್ಬಂಟಿಗನನ್ನಾಗಿ ಬಿಡಲಿಲ್ಲ, ಏಕೆಂದರೆ ಅವರಿಗೆ ಮೆಚ್ಚಿದವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ,” ಎಂದರು.
JOH 8:30 ಯೇಸು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಅವರಲ್ಲಿ ನಂಬಿಕೆಯಿಟ್ಟರು.
JOH 8:31 ಯೇಸು ತಮ್ಮನ್ನು ನಂಬಿದ್ದ ಯೆಹೂದ್ಯರಿಗೆ ಹೇಳಿದ್ದೇನೆಂದರೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾಗಿಯೂ ನೀವು ನನ್ನ ಶಿಷ್ಯರಾಗುವಿರಿ.
JOH 8:32 ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಸತ್ಯವು ನಿಮ್ಮನ್ನು ಸ್ವತಂತ್ರರಾಗಿ ಮಾಡುವುದು,” ಎಂದು ಹೇಳಿದರು.
JOH 8:33 ಅದಕ್ಕೆ ಅವರು ಯೇಸುವಿಗೆ, “ನಾವು ಅಬ್ರಹಾಮನ ಸಂತತಿಯವರು, ನಾವು ಯಾರಿಗೂ ಎಂದೂ ಗುಲಾಮರಾಗಿರಲಿಲ್ಲ. ನೀವು ಸ್ವತಂತ್ರರಾಗುವಿರಿ ಎಂದು ನೀನು ಹೇಳುವುದು ಹೇಗೆ?” ಎಂದು ಕೇಳಿದರು.
JOH 8:34 ಅದಕ್ಕೆ ಯೇಸು ಉತ್ತರವಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರು ಪಾಪಕ್ಕೆ ಗುಲಾಮರಾಗಿದ್ದಾರೆ.
JOH 8:35 ಗುಲಾಮರು ಕುಟುಂಬದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಪುತ್ರನು ಶಾಶ್ವತವಾಗಿ ಇರುತ್ತಾನೆ.
JOH 8:36 ಆದ್ದರಿಂದ ದೇವಪುತ್ರನು ನಿಮ್ಮನ್ನು ಬಿಡುಗಡೆ ಮಾಡಿದರೆ, ನಿಜವಾಗಿ ನೀವು ಬಿಡುಗಡೆಯಾಗುವಿರಿ.
JOH 8:37 ನೀವು ಅಬ್ರಹಾಮನ ಸಂತತಿಯವರೆಂದು ನಾನು ಬಲ್ಲೆನು. ಆದರೆ ನಿಮ್ಮಲ್ಲಿ ನನ್ನ ವಾಕ್ಯಕ್ಕೆ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲಲು ಹುಡುಕುತ್ತೀರಿ.
JOH 8:38 ನಾನು ತಂದೆಯ ಬಳಿಯಲ್ಲಿ ಕಂಡದ್ದನ್ನೇ ಮಾತನಾಡುತ್ತೇನೆ. ನೀವಾದರೋ ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುತ್ತೀರಿ,” ಎಂದರು.
JOH 8:39 ಯೆಹೂದ್ಯರು ಯೇಸುವಿಗೆ, “ಅಬ್ರಹಾಮನು ನಮ್ಮ ತಂದೆ,” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನು ಮಾಡಿದ ಕ್ರಿಯೆಗಳನ್ನೇ ಮಾಡುತ್ತಿದ್ದಿರಿ.
JOH 8:40 ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲಲು ಪ್ರಯತ್ನಿಸುತ್ತೀರಿ. ಇಂತಹ ಕ್ರಿಯೆಗಳನ್ನು ಅಬ್ರಹಾಮನು ಮಾಡಲಿಲ್ಲ.
JOH 8:41 ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ,” ಎಂದರು. ಅದಕ್ಕವರು, “ನಾವು ಅನೈತಿಕತೆಯಿಂದ ಹುಟ್ಟಿದವರಲ್ಲ. ನಮಗೆ ದೇವರೇ ತಂದೆ,” ಎಂದು ಪ್ರತಿಭಟಿಸಿದರು.
JOH 8:42 ಯೇಸು ಅವರಿಗೆ, “ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ಏಕೆಂದರೆ ನಾನು ದೇವರಿಂದ ಹೊರಟು ಬಂದಿದ್ದೇನೆ. ನಾನು ನನ್ನಷ್ಟಕ್ಕೆ ಬರಲಿಲ್ಲ. ಆದರೆ ದೇವರೇ ನನ್ನನ್ನು ಕಳುಹಿಸಿದ್ದು.
JOH 8:43 ನೀವು ನನ್ನ ಮಾತನ್ನು ಅರ್ಥಮಾಡಿಕೊಳ್ಳದಿರುವುದು ಯಾಕೆ? ನಾನು ಹೇಳುವುದನ್ನು ನೀವು ಕೇಳದೇ ಇರುವುದೇ ಇದಕ್ಕೆ ಕಾರಣ.
JOH 8:44 ನೀವು ನಿಮ್ಮ ತಂದೆಯಾದ ಪಿಶಾಚನಿಗೆ ಸೇರಿದವರಾಗಿದ್ದೀರಿ. ನಿಮ್ಮ ತಂದೆಯ ಆಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಾನುಸಾರವಾಗಿ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿನ ತಂದೆಯೂ ಆಗಿದ್ದಾನೆ.
JOH 8:45 ಆದರೆ ನಾನು ಸತ್ಯವನ್ನು ಹೇಳುವವನಾದ್ದರಿಂದ ನೀವು ನನ್ನನ್ನು ನಂಬುವುದಿಲ್ಲ.
JOH 8:46 ನನ್ನಲ್ಲಿ ಪಾಪವಿದೆಯೆಂದು ರುಜುವಾತು ಪಡಿಸುವವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಹೇಳುವುದಾದರೆ ನೀವು ನನ್ನನ್ನು ಏಕೆ ನಂಬುವುದಿಲ್ಲ?
JOH 8:47 ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲ. ಆದ್ದರಿಂದ ನೀವು ಕಿವಿಗೊಡುವುದಿಲ್ಲ,” ಎಂದು ಹೇಳಿದರು.
JOH 8:48 ಅದಕ್ಕೆ ಯೆಹೂದಿ ನಾಯಕರು ಯೇಸುವಿಗೆ, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವ ಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೇ?” ಎಂದು ಕೇಳಿದರು.
JOH 8:49 ಅದಕ್ಕೆ ಯೇಸು, “ನನಗೆ ದೆವ್ವ ಹಿಡಿದಿಲ್ಲ. ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ. ನೀವು ನನ್ನನ್ನು ಅವಮಾನಪಡಿಸುತ್ತೀರಿ.
JOH 8:50 ನಾನು ನನ್ನ ಮಹಿಮೆಯನ್ನು ಹುಡುಕುವುದಿಲ್ಲ. ನನಗೆ ಮಹಿಮೆಯನ್ನು ಹುಡುಕುವವರು ಒಬ್ಬರಿದ್ದಾರೆ ಅವರೇ ನ್ಯಾಯತೀರಿಸುವವರು.
JOH 8:51 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾರು ನನ್ನ ಮಾತನ್ನು ಪಾಲಿಸುತ್ತಾರೋ ಅವರು ಎಂದೆಂದಿಗೂ ಮರಣವನ್ನು ಕಾಣುವುದಿಲ್ಲ,” ಎಂದರು.
JOH 8:52 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ದೆವ್ವ ಹಿಡಿದಿದೆ ಎಂದು ನಮಗೆ ಈಗ ತಿಳಿಯಿತು. ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು. ಆದರೆ, ‘ಯಾರಾದರೂ ನನ್ನ ಮಾತನ್ನು ಪಾಲಿಸಿದರೆ ಅವರು ಎಂದೆಂದಿಗೂ ಮರಣ ಹೊಂದುವುದಿಲ್ಲ,’ ಎಂದು ನೀನು ಹೇಳುತ್ತೀಯಲ್ಲಾ?
JOH 8:53 ಸತ್ತು ಹೋದ ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು. ನೀನು ನಿನ್ನನ್ನು ಯಾರನ್ನಾಗಿ ಮಾಡಿಕೊಂಡಿರುವೆ?” ಎಂದು ಕೇಳಿದರು.
JOH 8:54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನೀವು ಯಾರನ್ನು, ‘ಅವರೇ ನಮ್ಮ ದೇವರು’ ಎಂದು ಹೇಳುತ್ತೀರೋ ಆ ನನ್ನ ತಂದೆಯೇ ನನ್ನನ್ನು ಮಹಿಮೆ ಪಡಿಸುವವರು.
JOH 8:55 ನೀವು ಅವರನ್ನು ಅರಿತುಕೊಂಡಿಲ್ಲ; ಆದರೆ ನಾನು ಅವರನ್ನು ಅರಿತಿದ್ದೇನೆ. ನಾನು ಅವರನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗುವೆನು. ಆದರೆ ನಾನು ಅವರನ್ನು ಅರಿತಿದ್ದೇನೆ. ಅವರ ಮಾತನ್ನು ಪಾಲಿಸುತ್ತೇನೆ.
JOH 8:56 ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ಕಾಣುವನೆಂದು ಆನಂದಿಸಿದನು ಮತ್ತು ಅದನ್ನು ಕಂಡು ಉಲ್ಲಾಸಪಟ್ಟನು,” ಎಂದು ಹೇಳಿದರು.
JOH 8:57 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ಇನ್ನೂ ಐವತ್ತು ವರ್ಷವಾಗಿಲ್ಲ, ನೀನು ಅಬ್ರಹಾಮನನ್ನು ಕಂಡಿದ್ದೀಯಾ?” ಎಂದರು.
JOH 8:58 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಇದ್ದೇನೆ,” ಎಂದರು.
JOH 8:59 ಆಗ ಅವರು ಯೇಸುವಿನ ಮೇಲೆ ಎಸೆಯಲು ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದೊಳಗಿಂದ ಹೊರಟು ಹೋದರು.
JOH 9:1 ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು.
JOH 9:2 ಯೇಸುವಿನ ಶಿಷ್ಯರು, “ಬೋಧಕರೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಈ ಮನುಷ್ಯನ ಪಾಪದಿಂದಲೋ ಇವನ ತಂದೆತಾಯಿಗಳ ಪಾಪದಿಂದಲೋ?” ಎಂದು ಅವರನ್ನು ಕೇಳಿದರು.
JOH 9:3 ಯೇಸು, “ಈ ಮನುಷ್ಯನಾಗಲಿ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಯಿತು.
JOH 9:4 ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು.
JOH 9:5 ನಾನು ಈ ಲೋಕದಲ್ಲಿರುವಾಗ ಲೋಕದ ಬೆಳಕಾಗಿದ್ದೇನೆ,” ಎಂದರು.
JOH 9:6 ಯೇಸು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಮಣ್ಣಿನ ಲೇಪಮಾಡಿ ಆ ಲೇಪವನ್ನು ಅವನ ಕಣ್ಣುಗಳಿಗೆ ಹಚ್ಚಿದರು.
JOH 9:7 ಅವನಿಗೆ, “ಹೋಗು, ಸಿಲೋವ ಕೊಳದಲ್ಲಿ ತೊಳೆದುಕೋ,” ಎಂದರು. ಸಿಲೋವ ಎಂದರೆ, “ಕಳುಹಿಸಲಾದವನು” ಎಂದರ್ಥ. ಕುರುಡನು ಹೋಗಿ ಕಣ್ಣು ತೊಳೆದುಕೊಂಡು ದೃಷ್ಟಿಹೊಂದಿದವನಾಗಿ ಬಂದನು.
JOH 9:8 ಆಗ ನೆರೆಯವರು ಮತ್ತು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ಕಂಡವರು, “ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೇ?” ಎಂದರು.
JOH 9:9 ಕೆಲವರು, “ಹೌದು, ಇವನೇ,” ಎಂದರು. ಇನ್ನೂ ಬೇರೆಯವರು, “ಇಲ್ಲಾ, ಇವನು ಅವನ ಹಾಗೆ ಇದ್ದಾನೆ,” ಎಂದರು. ಅವನಾದರೋ, “ನಾನೇ ಅವನು,” ಎಂದು ಹೇಳಿದನು.
JOH 9:10 ಕೆಲವರು ಅವನಿಗೆ, “ಹಾಗಾದರೆ ನಿನಗೆ ದೃಷ್ಟಿ ಹೇಗೆ ಬಂತು?” ಎಂದು ಕೇಳಲು,
JOH 9:11 ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ,’ ಎಂದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು, ನನಗೆ ದೃಷ್ಟಿ ಬಂತು,” ಎಂದನು.
JOH 9:12 ಅವರು ಅವನಿಗೆ, “ಆತನು ಎಲ್ಲಿದ್ದಾನೆ?” ಎಂದು ಕೇಳಲು, ಅವನು, “ನನಗೆ ಗೊತ್ತಿಲ್ಲ,” ಎಂದನು.
JOH 9:13 ಜನರು ಮೊದಲು ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
JOH 9:14 ಯೇಸು ಮಣ್ಣಿನ ಲೇಪಮಾಡಿ ಅವನಿಗೆ ದೃಷ್ಟಿಕೊಟ್ಟ ದಿನವು ಯೆಹೂದ್ಯರ ಸಬ್ಬತ್ ದಿನವಾಗಿತ್ತು.
JOH 9:15 ಆದ್ದರಿಂದ ಫರಿಸಾಯರು ಅವನಿಗೆ, ಹೇಗೆ ದೃಷ್ಟಿ ಬಂತು ಎಂದು ತಿರುಗಿ ಅವನನ್ನು ಕೇಳಲು, ಅವನು ಅವರಿಗೆ, “ಯೇಸು ಮಣ್ಣಿನ ಲೇಪವನ್ನು ನನ್ನ ಕಣ್ಣುಗಳ ಮೇಲಿಡಲು ನಾನು ತೊಳೆದುಕೊಂಡೆನು. ಈಗ ನೋಡುತ್ತೇನೆ,” ಎಂದನು.
JOH 9:16 ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ. ಏಕೆಂದರೆ ಆತನು ಯೆಹೂದ್ಯರ ಸಬ್ಬತ್ ದಿನವನ್ನು ಕೈಗೊಳ್ಳುವುದಿಲ್ಲ,” ಎಂದರು. ಬೇರೆ ಕೆಲವರು, “ಹಾಗಾದರೆ ಪಾಪಿಯಾದ ಮನುಷ್ಯನು ಇಂಥ ಸೂಚಕಕಾರ್ಯಗಳನ್ನು ಮಾಡುವುದು ಹೇಗೆ?” ಎಂದರು. ಹೀಗೆ ಅವರಲ್ಲಿ ಭೇದ ಉಂಟಾಯಿತು.
JOH 9:17 ಅವರು ತಿರುಗಿ, “ಆತನು ನಿನಗೆ ದೃಷ್ಟಿಕೊಟ್ಟದ್ದರಿಂದ ಆತನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದಾಗ, ಅವನು, “ಅವರು ಒಬ್ಬ ಪ್ರವಾದಿ,” ಎಂದನು.
JOH 9:18 ದೃಷ್ಟಿಹೊಂದಿದವನ ತಂದೆತಾಯಿಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ, ಅವನು ಕುರುಡನಾಗಿದ್ದು ದೃಷ್ಟಿಹೊಂದಿದನೆಂದು ನಂಬಲಿಲ್ಲ.
JOH 9:19 ಅವರು, “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಕಣ್ಣು ಕಾಣುವುದು ಹೇಗೆ?” ಎಂದು ಅವರನ್ನು ಕೇಳಿದರು.
JOH 9:20 ಅವನ ತಂದೆತಾಯಿಗಳು ಅವರಿಗೆ, “ಇವನು ನಮ್ಮ ಮಗನೆಂದೂ ಇವನು ಕುರುಡನಾಗಿ ಹುಟ್ಟಿದನೆಂದೂ ನಾವು ಬಲ್ಲೆವು.
JOH 9:21 ಆದರೆ ಇವನಿಗೆ ಈಗ ಕಣ್ಣು ಕಾಣುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೆಂದೂ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ; ಇವನು ಪ್ರಾಯದವನಾಗಿದ್ದಾನೆ. ಇವನೇ ತನ್ನ ವಿಷಯವಾಗಿ ಮಾತನಾಡುವನು,” ಎಂದು ಹೇಳಿದರು.
JOH 9:22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಭಯಪಟ್ಟಿದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ, ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯ ನಾಯಕರು ಈ ಮೊದಲೇ ಗೊತ್ತುಮಾಡಿದ್ದರು.
JOH 9:23 ಆದ್ದರಿಂದ ಅವನ ತಂದೆತಾಯಿಗಳು, “ಇವನು ಪ್ರಾಯದವನಾಗಿದ್ದಾನೆ, ಇವನನ್ನೇ ಕೇಳಿ,” ಎಂದು ಹೇಳಿದರು.
JOH 9:24 ಅವರು ಕುರುಡನಾಗಿದ್ದವನನ್ನು ಮತ್ತೊಮ್ಮೆ ಕರೆದು ಅವನಿಗೆ, “ದೇವರಿಗೆ ಮಹಿಮೆಯನ್ನು ಸಲ್ಲಿಸು, ಆ ಮನುಷ್ಯ ಪಾಪಿ ಎಂದು ನಾವು ಬಲ್ಲೆವು,” ಎಂದರು.
JOH 9:25 ಅದಕ್ಕೆ ಅವನು, “ಅವರು ಪಾಪಿಯೋ ಏನೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆ, ನಾನು ಕುರುಡನಾಗಿದ್ದೆನು; ಈಗ ನನಗೆ ಕಾಣುತ್ತದೆ,” ಎಂದು ಉತ್ತರಕೊಟ್ಟನು.
JOH 9:26 ಆದ್ದರಿಂದ ಅವರು ಅವನಿಗೆ, “ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
JOH 9:27 ಅವನು ಉತ್ತರವಾಗಿ, “ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ. ಆದರೆ ನೀವು ಕೇಳಲಿಲ್ಲ, ನೀವು ತಿರುಗಿ ಏಕೆ ಕೇಳುತ್ತೀರಿ? ನೀವು ಸಹ ಅವರ ಶಿಷ್ಯರಾಗುವುದಕ್ಕೆ ಬಯಸುತ್ತೀರೋ?” ಎಂದನು.
JOH 9:28 ಆಗ ಅವರು ಅವನನ್ನು ದೂಷಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
JOH 9:29 ಮೋಶೆಯ ಮೂಲಕ ದೇವರು ಮಾತನಾಡಿದನೆಂದು ನಾವು ಬಲ್ಲೆವು. ಆದರೆ ಈತನು ಎಲ್ಲಿಂದ ಬಂದನೋ ನಮಗೆ ಗೊತ್ತಿಲ್ಲ,” ಎಂದರು.
JOH 9:30 ಅದಕ್ಕೆ ಅವನು ಅವರಿಗೆ, “ಏನಾಶ್ಚರ್ಯ! ಅವರು ನನ್ನ ಕಣ್ಣುಗಳನ್ನು ತೆರೆದರೂ ಅವರು ಎಲ್ಲಿಂದ ಬಂದವನೆಂದು ನಿಮಗೆ ತಿಳಿಯದೆ ಇರುವುದು.
JOH 9:31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲ; ಆದರೆ ಯಾರು ದೇವರಿಗೆ ಭಯಪಡುವವರಾಗಿದ್ದು ಅವರ ಚಿತ್ತದಂತೆ ನಡೆಯುತ್ತಾರೋ, ಅಂಥವರಿಗೆ ಕಿವಿಗೊಡುತ್ತಾರೆಂದು ನಾವು ಬಲ್ಲೆವು.
JOH 9:32 ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ.
JOH 9:33 ಅವರು ದೇವರಿಂದ ಬಂದವರಲ್ಲದಿದ್ದರೆ ಅವರಿಂದ ಏನೂ ಮಾಡಲಾಗುತ್ತಿರಲಿಲ್ಲ,” ಎಂದನು.
JOH 9:34 ಅದಕ್ಕೆ ಅವರು, “ನೀನು ಪಾಪದಲ್ಲಿಯೇ ಪೂರ್ಣವಾಗಿ ಹುಟ್ಟಿದವನು. ನೀನು ನಮಗೆ ಬೋಧಿಸುತ್ತೀಯಾ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
JOH 9:35 ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು.
JOH 9:36 ಅದಕ್ಕೆ ಅವನು, “ಸ್ವಾಮೀ, ನಾನು ಅವರನ್ನು ನಂಬುವಂತೆ ಅವರು ಯಾರೆಂದು ತಿಳಿಸಿರಿ,” ಎಂದನು.
JOH 9:37 ಯೇಸು ಅವನಿಗೆ, “ನೀನು ಆತನನ್ನು ಕಂಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು,” ಎಂದು ಹೇಳಿದರು.
JOH 9:38 ಆಗ ಅವನು, “ಸ್ವಾಮೀ, ನಾನು ನಂಬುತ್ತೇನೆ,” ಎಂದು ಹೇಳಿ ಯೇಸುವಿಗೆ ಅಡ್ಡಬಿದ್ದನು.
JOH 9:39 ಯೇಸು, “ಕುರುಡರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನಾನು ನ್ಯಾಯತೀರ್ಪು ಮಾಡುವುದಕ್ಕಾಗಿ ಈ ಲೋಕಕ್ಕೆ ಬಂದಿದ್ದೇನೆ,” ಎಂದರು.
JOH 9:40 ಯೇಸುವಿನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತುಗಳನ್ನು ಕೇಳಿ, “ನಾವು ಸಹ ಕುರುಡರೋ?” ಎಂದು ಯೇಸುವನ್ನು ಪ್ರಶ್ನಿಸಿದರು.
JOH 9:41 ಅದಕ್ಕೆ ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ, ‘ನಮಗೆ ಕಾಣುತ್ತದೆ,’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪವು ನಿಮಗೆ ಉಳಿದಿದೆ,” ಎಂದರು.
JOH 10:1 “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಬಾಗಿಲಿನಿಂದ ಕುರಿಹಟ್ಟಿಯೊಳಗೆ ಬಾರದೆ ಬೇರೆ ಎಲ್ಲಿಂದಾದರೂ ಒಳಗೆ ಬರುವವನು ಕಳ್ಳನೂ ದರೋಡೆಕೋರನೂ ಆಗಿದ್ದಾನೆ.
JOH 10:2 ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.
JOH 10:3 ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
JOH 10:4 ಅವನು ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
JOH 10:5 ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವವು. ಏಕೆಂದರೆ ಅವು ಅಪರಿಚಿತನ ಸ್ವರವನ್ನು ಗುರುತಿಸುವುದಿಲ್ಲ,” ಎಂದರು.
JOH 10:6 ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದರು. ಆದರೂ ಯೇಸು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಫರಿಸಾಯರು ಗ್ರಹಿಸಲಿಲ್ಲ.
JOH 10:7 ಯೇಸು ತಿರುಗಿ ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ.
JOH 10:8 ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ ದರೋಡೆಕೋರರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
JOH 10:9 ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು.
JOH 10:10 ಕಳ್ಳನು ಕದಿಯಲು, ಕೊಯ್ಯಲು ಮತ್ತು ನಾಶಮಾಡಲು ಮಾತ್ರ ಬರುತ್ತಾನೆ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
JOH 10:11 “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
JOH 10:12 ಕೂಲಿಯಾಳು ಕುರಿಗಳ ಕುರುಬನಲ್ಲ; ಅವನು ತೋಳ ಬರುವುದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಹಿಂಡನ್ನು ಚದರಿಸುತ್ತದೆ.
JOH 10:13 ಅವನು ಕೇವಲ ಕೂಲಿಯಾಳು ಆಗಿರುವುದರಿಂದ ಅವನಿಗೆ ಕುರಿಗಳ ಚಿಂತೆಯಿಲ್ಲ.
JOH 10:14 “ನಾನೇ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ನನ್ನ ಕುರಿಗಳು ನನ್ನನ್ನು ತಿಳಿದಿವೆ.
JOH 10:15 ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
JOH 10:16 ಈ ಹಿಂಡಿಗೆ ಸೇರದ ಬೇರೆ ಕುರಿಗಳು ನನಗಿವೆ. ಅವುಗಳನ್ನೂ ಸಹ ನಾನು ತರಬೇಕಾಗಿದೆ. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಹಿಂಡೂ ಒಬ್ಬನೇ ಕುರುಬನೂ ಆಗಿರುವುದು.
JOH 10:17 ಮರಳಿ ಪಡೆಯುವಂತೆ ನನ್ನ ಪ್ರಾಣವನ್ನು ನಾನು ಕೊಡುವುದರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾರೆ.
JOH 10:18 ಯಾರೂ ನನ್ನ ಪ್ರಾಣವನ್ನು ನನ್ನಿಂದ ತೆಗೆಯುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುವೆನು. ನಾನು ಅದನ್ನು ಕೊಡುವುದಕ್ಕೆ ನನಗೆ ಅಧಿಕಾರವಿದೆ. ಅದನ್ನು ಪುನಃ ತೆಗೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಪಡೆದಿದ್ದೇನೆ,” ಎಂದರು.
JOH 10:19 ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಮತ್ತೆ ಭೇದ ಉಂಟಾಯಿತು.
JOH 10:20 ಅವರಲ್ಲಿ ಅನೇಕರು, “ಆತನಿಗೆ ದೆವ್ವ ಹಿಡಿದಿದೆ. ಆತನು ಹುಚ್ಚನಾಗಿದ್ದಾನೆ, ನೀವು ಏಕೆ ಆತನಿಗೆ ಕಿವಿಗೊಡುತ್ತೀರಿ?” ಎಂದರು.
JOH 10:21 ಇನ್ನು ಕೆಲವರು, “ಇವು ದೆವ್ವ ಹಿಡಿದವನ ಮಾತುಗಳಲ್ಲ. ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
JOH 10:22 ಆಗ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವಿತ್ತು. ಅದು ಚಳಿಗಾಲವಾಗಿತ್ತು.
JOH 10:23 ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು.
JOH 10:24 ಆಗ ಯೆಹೂದ್ಯರು ಯೇಸುವನ್ನು ಸುತ್ತುವರೆದು, “ಇನ್ನೆಷ್ಟು ಕಾಲ ನಮ್ಮನ್ನು ಸಂಶಯದಲ್ಲಿರಿಸುವೆ? ನೀನು ಕ್ರಿಸ್ತನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು.
JOH 10:25 ಯೇಸು ಅವರಿಗೆ, “ನಾನು ನಿಮಗೆ ಹೇಳಿದೆನು. ಆದರೆ ನೀವು ನಂಬುತ್ತಾ ಇಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
JOH 10:26 ನೀವು ನನ್ನ ಕುರಿಗಳಲ್ಲ, ಆದ್ದರಿಂದಲೇ ನೀವು ನಂಬುವುದಿಲ್ಲ.
JOH 10:27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
JOH 10:28 ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
JOH 10:29 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆ ಎಲ್ಲರಿಗಿಂತಲೂ ಮಹೋನ್ನತರು. ನನ್ನ ತಂದೆಯ ಕೈಯಿಂದ ಅವುಗಳನ್ನು ಯಾರೂ ಕಸಿದುಕೊಳ್ಳಲಾರರು.
JOH 10:30 ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ,” ಎಂದು ಉತ್ತರಕೊಟ್ಟರು.
JOH 10:31 ಆಗ ಯೆಹೂದಿ ನಾಯಕರು ಪುನಃ ಯೇಸುವಿನ ಮೇಲೆ ಕಲ್ಲೆಸೆಯಲು ಕಲ್ಲುಗಳನ್ನು ಎತ್ತಿಕೊಂಡರು.
JOH 10:32 ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕಾರ್ಯಕ್ಕಾಗಿ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದರು.
JOH 10:33 ಅದಕ್ಕೆ ಯೆಹೂದ್ಯರು ಯೇಸುವಿಗೆ, “ಒಳ್ಳೆಯ ಕಾರ್ಯಗಳಿಗಾಗಿಯಲ್ಲ. ನೀನು ಮನುಷ್ಯನಾಗಿದ್ದು ನಿನ್ನನ್ನೇ ದೇವರನ್ನಾಗಿ ಮಾಡಿಕೊಂಡದ್ದಕ್ಕೂ ದೇವದೂಷಣೆ ಮಾಡುತ್ತಿರುವದಕ್ಕೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ,” ಎಂದು ಉತ್ತರಕೊಟ್ಟರು.
JOH 10:34 ಅದಕ್ಕೆ ಯೇಸು, “ ‘ನೀವು ದೇವರುಗಳು,’ ಎಂದು ದೇವರೇ ಹೇಳಿರುವುದಾಗಿ ನಿಮ್ಮ ನಿಯಮದಲ್ಲಿ ಬರೆದಿಲ್ಲವೋ?
JOH 10:35 ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಆತನು ಕರೆದಿರುವುದಾದರೆ, ಪವಿತ್ರ ವೇದವು ಸುಳ್ಳಾಗಲಾರದು.
JOH 10:36 ಹೀಗಿರುವಾಗ ತಂದೆಯು ಪ್ರತಿಷ್ಠಿಸಿ ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಿರುವ ನಾನು, ‘ದೇವರ ಪುತ್ರನಾಗಿದ್ದೇನೆ,’ ಎಂದು ಹೇಳಿದ್ದಕ್ಕೆ, ‘ನೀನು ದೇವದೂಷಣೆ ಮಾಡುತ್ತೀ,’ ಎಂದು ನೀವು ನನಗೆ ಹೇಳುತ್ತೀರಲ್ಲಾ?
JOH 10:37 ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ.
JOH 10:38 ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದಿದ್ದರೂ ಈ ಕಾರ್ಯಗಳನ್ನಾದರೂ ನಂಬಿರಿ. ಆಗ ತಂದೆಯು ನನ್ನಲ್ಲಿಯೂ ನಾನು ತಂದೆಯಲ್ಲಿಯೂ ಇರುವುದು ನಿಮಗೆ ಗೊತ್ತಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
JOH 10:39 ತಿರುಗಿ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡು ಹೋದರು.
JOH 10:40 ಆಮೇಲೆ ಯೇಸು ಯೊರ್ದನ್ ನದಿಯನ್ನು ದಾಟಿ ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಬಂದು, ಅಲ್ಲಿಯೇ ವಾಸಮಾಡಿದರು.
JOH 10:41 ಆಗ ಅನೇಕರು ಯೇಸುವಿನ ಬಳಿಗೆ ಬಂದು, “ಯೋಹಾನನು ಯಾವುದೇ ಸೂಚಕಕಾರ್ಯವನ್ನು ಮಾಡಲಿಲ್ಲ. ಆದರೆ ಇವರ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ಸತ್ಯವಾಗಿದೆ,” ಎಂದರು.
JOH 10:42 ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.
JOH 11:1 ಮರಿಯಳ ಮತ್ತು ಆಕೆಯ ಸಹೋದರಿಯಾದ ಮಾರ್ಥಳ ಊರಾದ ಬೇಥಾನ್ಯದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.
JOH 11:2 ಯೇಸುಸ್ವಾಮಿಯ ಪಾದಗಳಿಗೆ ತೈಲವನ್ನು ಹಚ್ಚಿ ತನ್ನ ತಲೆಕೂದಲಿನಿಂದ ಅವರ ಪಾದಗಳನ್ನು ಒರಸಿದ ಮರಿಯಳ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.
JOH 11:3 ಆದ್ದರಿಂದ ಅವನ ಸಹೋದರಿಯರು, “ಸ್ವಾಮೀ, ಇಗೋ, ನೀವು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ,” ಎಂದು ಯೇಸುವಿಗೆ ಹೇಳಿ ಕಳುಹಿಸಿದರು.
JOH 11:4 ಯೇಸು ಅದನ್ನು ಕೇಳಿ, “ಈ ಕಾಯಿಲೆಯು ಮರಣಕ್ಕಾಗಿಯಲ್ಲ. ದೇವರ ಮಹಿಮೆಗಾಗಿಯೇ ಬಂದದ್ದು. ಇದರಿಂದ ದೇವರ ಪುತ್ರನಿಗೆ ಮಹಿಮೆಯಾಗುವುದು,” ಎಂದು ಹೇಳಿದರು.
JOH 11:5 ಮಾರ್ಥಳನ್ನು ಅವಳ ಸಹೋದರಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದರು.
JOH 11:6 ಅವನು ಅಸ್ವಸ್ಥನಾಗಿದ್ದಾನೆಂದು ಯೇಸು ಕೇಳಿದ ಮೇಲೆಯೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡರು.
JOH 11:7 ತರುವಾಯ ಯೇಸು ತಮ್ಮ ಶಿಷ್ಯರಿಗೆ, “ನಾವು ತಿರುಗಿ ಯೂದಾಯಕ್ಕೆ ಹೋಗೋಣ,” ಎಂದರು.
JOH 11:8 ಯೇಸುವಿನ ಶಿಷ್ಯರು ಅವರಿಗೆ, “ಬೋಧಕರೇ, ಈಗ ಯೆಹೂದ್ಯರು ನಿಮ್ಮ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ. ತಿರುಗಿ ನೀವು ಅಲ್ಲಿಗೆ ಹೋಗಬೇಕೆಂದಿರುವಿರಾ?” ಎಂದರು.
JOH 11:9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾರಾದರೂ ಹಗಲಿನಲ್ಲಿ ನಡೆದರೆ ಎಡವುದಿಲ್ಲ ಏಕೆಂದರೆ ಈ ಲೋಕದ ಬೆಳಕು ಅವರಿಗೆ ಕಾಣಿಸುತ್ತದೆ.
JOH 11:10 ಯಾರಾದರೂ ರಾತ್ರಿಯಲ್ಲಿ ನಡೆದರೆ ತಮ್ಮಲ್ಲಿ ಬೆಳಕಿಲ್ಲದಿರುವುದರಿಂದ ಅವರು ಎಡವುತ್ತಾರೆ,” ಎಂದು ಉತ್ತರಕೊಟ್ಟರು.
JOH 11:11 ಇದನ್ನು ಹೇಳಿದ ತರುವಾಯ ಯೇಸು ಅವರಿಗೆ, “ನಮ್ಮ ಸ್ನೇಹಿತ ಲಾಜರನು ನಿದ್ರೆ ಮಾಡುತ್ತಿದ್ದಾನೆ. ಆದರೆ ನಾನು ಹೋಗಿ ಅವನನ್ನು ಎಬ್ಬಿಸಬೇಕು,” ಎಂದರು.
JOH 11:12 ಯೇಸುವಿನ ಶಿಷ್ಯರು, “ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು,” ಎಂದರು.
JOH 11:13 ಯೇಸು ಅವನ ಮರಣವನ್ನು ಕುರಿತು ಹೇಳಿದ್ದರು. ಆದರೆ ಶಿಷ್ಯರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಯೇಸು ಹೇಳಿದರೆಂದು ಯೋಚಿಸಿದರು.
JOH 11:14 ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತುಹೋಗಿದ್ದಾನೆ.
JOH 11:15 ಆದರೆ ನಾನು ಅಲ್ಲಿ ಇಲ್ಲದೆ ಹೋದದ್ದು ನಿಮ್ಮ ನಿಮಿತ್ತವಾಗಿ ಸಂತೋಷಪಡುತ್ತೇನೆ, ಯಾಕೆಂದರೆ ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಆದರೆ ಅವನ ಬಳಿಗೆ ಹೋಗೋಣ,” ಎಂದು ಹೇಳಿದರು.
JOH 11:16 ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಗುರುವಿನೊಂದಿಗೆ ಸಾಯುವುದಕ್ಕೆ ಹೋಗೋಣ,” ಎಂದನು.
JOH 11:17 ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದವೆಂದು ತಿಳಿಯಿತು.
JOH 11:18 ಬೇಥಾನ್ಯವು ಯೆರೂಸಲೇಮಿನಿಂದ ಸುಮಾರು ಮೂರು ಕಿಲೋಮೀಟರಿನಷ್ಟು ದೂರವಿತ್ತು.
JOH 11:19 ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯವಾಗಿ ಸಂತೈಸುವುದಕ್ಕೆ ಬಂದಿದ್ದರು.
JOH 11:20 ಯೇಸು ಬರುತ್ತಿದ್ದಾರೆಂದು ಮಾರ್ಥಳು ಕೇಳಿದಾಗ ಅವರನ್ನು ಎದುರುಗೊಳ್ಳಲು ಹೋದಳು. ಆದರೆ ಮರಿಯಳು ಮನೆಯಲ್ಲಿಯೇ ಕುಳಿತುಕೊಂಡಿದ್ದಳು.
JOH 11:21 ಆಗ ಮಾರ್ಥಳು ಯೇಸುವಿಗೆ, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ.
JOH 11:22 ಆದರೆ ಈಗಲೂ ನೀವು ದೇವರನ್ನು ಏನು ಕೇಳಿಕೊಂಡರೂ ದೇವರು ಅದನ್ನು ನಿಮಗೆ ಕೊಡುವರೆಂದು ನಾನು ಬಲ್ಲೆನು,” ಎಂದಳು.
JOH 11:23 ಯೇಸು ಆಕೆಗೆ, “ನಿನ್ನ ಸಹೋದರನು ಪುನಃ ಜೀವಂತನಾಗಿ ಎದ್ದೇಳುವನು,” ಎಂದು ಹೇಳಿದರು.
JOH 11:24 ಮಾರ್ಥಳು ಯೇಸುವಿಗೆ, “ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನು ಪುನಃ ಎದ್ದು ಬರುವನೆಂದು ನಾನು ಬಲ್ಲೆನು,” ಎಂದು ಹೇಳಿದಳು.
JOH 11:25 ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು.
JOH 11:26 ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ,
JOH 11:27 ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು.
JOH 11:28 ಇದನ್ನು ಹೇಳಿ ಆಕೆಯು ಹೊರಟುಹೋಗಿ ತನ್ನ ಸಹೋದರಿ ಮರಿಯಳನ್ನು ರಹಸ್ಯವಾಗಿ ಕರೆದು, “ಬೋಧಕರು ಇಲ್ಲಿದ್ದಾರೆ, ನಿನ್ನನ್ನು ಕರೆಯುತ್ತಾರೆ,” ಎಂದಳು.
JOH 11:29 ಆಕೆಯು ಇದನ್ನು ಕೇಳಿದಾಗ ತಟ್ಟನೆ ಎದ್ದು ಯೇಸುವಿನ ಬಳಿಗೆ ಹೋದಳು.
JOH 11:30 ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಅವರನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದರು.
JOH 11:31 ಮರಿಯಳೊಂದಿಗೆ ಮನೆಯಲ್ಲಿ ಆಕೆಯ ಜೊತೆಗಿದ್ದು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುತ್ತಿರುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಹಿಂಬಾಲಿಸಿದರು.
JOH 11:32 ಯೇಸು ಇದ್ದ ಸ್ಥಳಕ್ಕೆ ಮರಿಯಳೂ ಬಂದು ಅವರನ್ನು ಕಂಡು ಅವರ ಪಾದಗಳಿಗೆ ಬಿದ್ದು, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದು ಹೇಳಿದಳು.
JOH 11:33 ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಅಳುವುದನ್ನು ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ಕಳವಳಗೊಂಡವರಾಗಿ,
JOH 11:34 “ಅವನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು ಯೇಸುವಿಗೆ, “ಸ್ವಾಮೀ, ಬಂದು ನೋಡಿರಿ,” ಎಂದರು.
JOH 11:35 ಯೇಸು ಕಣ್ಣೀರಿಟ್ಟರು.
JOH 11:36 ಆಗ ಯೆಹೂದ್ಯರು, “ನೋಡಿರಿ, ಈತನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ,” ಎಂದರು.
JOH 11:37 ಅವರಲ್ಲಿ ಕೆಲವರು, “ಆ ಕುರುಡನ ಕಣ್ಣುಗಳನ್ನು ತೆರೆದ ಈತನು ಲಾಜರನನ್ನೂ ಸಾಯದಂತೆ ಮಾಡಬಾರದಿತ್ತೆ?” ಎಂದರು.
JOH 11:38 ಯೇಸು ತಿರುಗಿ ತಮ್ಮಲ್ಲಿ ನೊಂದುಕೊಳ್ಳುತ್ತಾ ಸಮಾಧಿಗೆ ಬಂದರು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಬಾಗಿಲಿಗೆ ಮುಚ್ಚಲಾಗಿತ್ತು.
JOH 11:39 ಯೇಸು, “ಆ ಕಲ್ಲನ್ನು ತೆಗೆದುಹಾಕಿರಿ,” ಎಂದರು. ಅದಕ್ಕೆ ಸತ್ತವನ ಸಹೋದರಿ ಮಾರ್ಥಳು ಯೇಸುವಿಗೆ, “ಸ್ವಾಮೀ, ಈಗ ದುರ್ವಾಸನೆ ಇರುವುದು. ಅವನು ಸತ್ತು ನಾಲ್ಕು ದಿನಗಳಾಗಿವೆ,” ಎಂದಳು.
JOH 11:40 ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದರು.
JOH 11:41 ಆಗ ಕೆಲವರು ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲೆ ನೋಡಿ, “ತಂದೆಯೇ, ನೀವು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
JOH 11:42 ನೀವು ನನಗೆ ಯಾವಾಗಲೂ ಕಿವಿಗೊಡುತ್ತೀರಿ ಎಂದು ನಾನು ಬಲ್ಲೆನು. ಆದರೆ ನನ್ನ ಸುತ್ತಲೂ ನಿಂತಿರುವ ಈ ಜನರು, ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ನಂಬುವಂತೆ ನಾನು ಇದನ್ನು ಹೇಳಿದೆನು,” ಎಂದರು.
JOH 11:43 ಯೇಸು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ,” ಎಂದು ಗಟ್ಟಿಯಾದ ಸ್ವರದಿಂದ ಕೂಗಿದರು.
JOH 11:44 ಆಗ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಕಟ್ಟಿದ್ದವು, ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅಲ್ಲಿದ್ದವರಿಗೆ, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಹೇಳಿದರು.
JOH 11:45 ಆದ್ದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯಗಳನ್ನು ಕಂಡು ಅವರಲ್ಲಿ ನಂಬಿಕೆಯಿಟ್ಟರು.
JOH 11:46 ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕೃತ್ಯಗಳನ್ನು ಅವರಿಗೆ ಹೇಳಿದರು.
JOH 11:47 ಆಗ ಮುಖ್ಯಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ, “ಈತನು ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?
JOH 11:48 ನಾವು ಈತನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಆತನನ್ನೇ ನಂಬುವರು. ರೋಮನ್ನರು ಬಂದು ನಮ್ಮ ದೇವಾಲಯವನ್ನೂ ರಾಷ್ಟ್ರವನ್ನೂ ನಾಶಮಾಡುವರು,” ಎಂದರು.
JOH 11:49 ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ.
JOH 11:50 ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಎಣಿಸುವುದೇ ಇಲ್ಲ,” ಎಂದನು.
JOH 11:51 ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ ಯೇಸು ಆ ರಾಷ್ಟ್ರಕ್ಕಾಗಿ ಮಾತ್ರವಲ್ಲದೆ
JOH 11:52 ಚದುರಿರುವ ದೇವರ ಮಕ್ಕಳನ್ನು ಒಂದಾಗಿ ಕೂಡಿಸುವುದಕ್ಕಾಗಿಯೂ ಯೇಸು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
JOH 11:53 ಅವರು ಆ ದಿನದಿಂದ ಯೇಸುವನ್ನು ಕೊಲ್ಲಬೇಕೆಂಬ ಒಳಸಂಚು ಮಾಡಿಕೊಂಡರು.
JOH 11:54 ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು.
JOH 11:55 ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
JOH 11:56 ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುತ್ತಾನೋ ಇಲ್ಲವೋ? ನಿಮಗೆ ಹೇಗೆ ಕಾಣುತ್ತದೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
JOH 11:57 ಆಗ ಮುಖ್ಯಯಾಜಕರೂ ಫರಿಸಾಯರೂ ಯೇಸುವನ್ನು ಬಂಧಿಸುವಂತೆ ಆತನ ಸುಳಿವು ಯಾರಿಗಾದರೂ ತಿಳಿದಿದ್ದರೆ ಅವರು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.
JOH 12:1 ಪಸ್ಕಹಬ್ಬಕ್ಕೆ ಆರು ದಿನಗಳ ಮುಂಚೆ ಯೇಸು ಬೇಥಾನ್ಯಕ್ಕೆ ಬಂದರು. ಅಲ್ಲಿಯೇ ಯೇಸು ಮರಣದಿಂದ ಎಬ್ಬಿಸಿದ ಲಾಜರನು ಇದ್ದನು.
JOH 12:2 ಅಲ್ಲಿ ಅವರು ಯೇಸುವಿಗಾಗಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟಕ್ಕೆ ಕುಳಿತವರಲ್ಲಿ ಲಾಜರನೂ ಒಬ್ಬನಾಗಿದ್ದನು.
JOH 12:3 ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ತೈಲವನ್ನು ಸುಮಾರು ಅರ್ಧ ಲೀಟರಿನಷ್ಟು ತಂದು ಯೇಸುವಿನ ಪಾದಕ್ಕೆ ಸುರಿದು ತನ್ನ ತಲೆಯ ಕೂದಲಿನಿಂದ ಅವರ ಪಾದಗಳನ್ನು ಒರೆಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು.
JOH 12:4 ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದ ಹಾಗೂ ಅವರನ್ನು ಹಿಡಿದುಕೊಡುವುದಕ್ಕಿದ್ದ ಯೂದ ಇಸ್ಕರಿಯೋತನು,
JOH 12:5 “ಈ ತೈಲವನ್ನು ಏಕೆ ಮುನ್ನೂರು ಬೆಳ್ಳಿ ನಾಣ್ಯಗಳನ್ನು ಮಾರಿ ಬಡವರಿಗೆ ಕೊಡಲಿಲ್ಲ?” ಎಂದನು.
JOH 12:6 ಅವನು ಬಡವರ ಹಿತಚಿಂತನೆಯಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು, ಹಣದ ಚೀಲವನ್ನು ಇಟ್ಟುಕೊಂಡು ಅದರಲ್ಲಿ ಹಾಕಿದ್ದನ್ನು ಕದ್ದುಕೊಳ್ಳುತ್ತಿದ್ದನು. ಆದ್ದರಿಂದಲೇ ಇದನ್ನು ಹೇಳಿದನು.
JOH 12:7 ಆಗ ಯೇಸು, “ಮರಿಯಳನ್ನು ಬಿಟ್ಟುಬಿಡಿರಿ, ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಳ್ಳಲಿ.
JOH 12:8 ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ,” ಎಂದರು.
JOH 12:9 ಯೇಸು ಅಲ್ಲಿರುವುದನ್ನು ಯೆಹೂದ್ಯರ ದೊಡ್ಡ ಗುಂಪು ತಿಳಿದು, ಅವರನ್ನು ಮಾತ್ರವಲ್ಲ, ಯೇಸು ಮರಣದಿಂದ ಎಬ್ಬಿಸಿದ ಲಾಜರನನ್ನೂ ಕಾಣಲು ಬಂದಿದ್ದರು.
JOH 12:10 ಮುಖ್ಯಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚಿಸಿದರು.
JOH 12:11 ಏಕೆಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಡೆಗೆ ಹೋಗಿ ನಂಬಿಕೆ ಇಟ್ಟಿದ್ದರು.
JOH 12:12 ಮರುದಿನ ಹಬ್ಬಕ್ಕೆ ಬಂದ ದೊಡ್ಡ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿ,
JOH 12:13 ಖರ್ಜೂರದ ಗರಿಗಳನ್ನು ತೆಗೆದುಕೊಂಡು ಅವರನ್ನು ಎದುರುಗೊಳ್ಳಲು ಹೊರಗೆ ಬಂದು, “ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!” “ಇಸ್ರಾಯೇಲಿನ ಅರಸನಿಗೆ ಶುಭವಾಗಲಿ!” ಎಂದು ಕೂಗಿದರು.
JOH 12:14 ಯೇಸು ಕತ್ತೆಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡರು. ಪವಿತ್ರ ವೇದದಲ್ಲಿ ಬರೆದಿರುವಂತೆ:
JOH 12:15 “ಚೀಯೋನ್ ಪುತ್ರಿಯೇ, ಭಯಪಡಬೇಡ, ಇಗೋ, ನಿನ್ನ ಅರಸ ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾರೆ,” ಎಂಬ ಮಾತು ನೆರವೇರಿತು.
JOH 12:16 ಇವುಗಳನ್ನು ಯೇಸುವಿನ ಶಿಷ್ಯರು ಮೊದಲು ತಿಳಿದಿರಲಿಲ್ಲ. ಆದರೆ ಯೇಸು ಮಹಿಮೆ ಹೊಂದಿದಾಗ ಪವಿತ್ರ ವೇದದಲ್ಲಿ ಅವರ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಜನರು ಅವರಿಗೆ ಮಾಡಿದರೆಂದು ಗ್ರಹಿಸಿದರು.
JOH 12:17 ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು.
JOH 12:18 ಯೇಸು ಈ ಸೂಚಕಕಾರ್ಯವನ್ನು ಮಾಡಿದರೆಂದು ಅನೇಕ ಜನರು ಕೇಳಿದ್ದರಿಂದ ಅವರು ಸಹ ಯೇಸುವನ್ನು ಸಂಧಿಸಲು ಬಂದರು.
JOH 12:19 ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!” ಎಂದು ಮಾತನಾಡಿಕೊಂಡರು.
JOH 12:20 ಹಬ್ಬದ ಆರಾಧನೆಗೆ ಗ್ರೀಕರಲ್ಲಿ ಕೆಲವರು ಬಂದಿದ್ದರು.
JOH 12:21 ಇವರು ಗಲಿಲಾಯದ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದರು.
JOH 12:22 ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನೂ ಫಿಲಿಪ್ಪನೂ ಬಂದು ಯೇಸುವಿಗೆ ತಿಳಿಸಿದರು.
JOH 12:23 ಯೇಸು ಅವರಿಗೆ, “ಮನುಷ್ಯಪುತ್ರನು ಮಹಿಮೆಪಡುವ ಸಮಯ ಬಂದಿದೆ.
JOH 12:24 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು, ಆದರೆ ಅದು ಸತ್ತರೆ ಬಹಳ ಫಲಕೊಡುವುದು.
JOH 12:25 ತಮ್ಮ ಪ್ರಾಣವನ್ನು ಪ್ರೀತಿಸುವವರು ಅದನ್ನು ಕಳೆದುಕೊಳ್ಳುವರು. ಈ ಲೋಕದಲ್ಲಿ ತಮ್ಮ ಪ್ರಾಣವನ್ನು ದ್ವೇಷಿಸುವವರು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವರು.
JOH 12:26 ನನ್ನ ಸೇವೆ ಮಾಡಬೇಕೆಂದಿರುವವರು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕರೂ ಇರುವರು. ನನ್ನ ಸೇವೆ ಮಾಡುವವರನ್ನು ನನ್ನ ತಂದೆಯು ಸನ್ಮಾನಿಸುವರು.
JOH 12:27 “ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸಿರಿ’ ಎಂದು ಹೇಳಲೋ? ಇಲ್ಲ. ನಾನು ಈ ಗಳಿಗೆಗಾಗಿಯೇ ಬಂದಿದ್ದೇನಲ್ಲಾ?
JOH 12:28 ತಂದೆಯೇ, ನಿಮ್ಮ ಹೆಸರನ್ನು ಮಹಿಮೆ ಪಡಿಸಿಕೊಳ್ಳಿರಿ,” ಎಂದರು. ಆಗ, “ಹೌದು, ನಾನು ಮಹಿಮೆಪಡಿಸಿದ್ದೇನೆ, ಪುನಃ ಮಹಿಮೆ ಪಡಿಸುವೆನು,” ಎಂಬ ಸ್ವರವು ಪರಲೋಕದಿಂದ ಕೇಳಿಸಿತು.
JOH 12:29 ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ, “ಗುಡುಗಿತು,” ಎಂದರು. ಬೇರೆಯವರು, “ದೇವದೂತನೊಬ್ಬನು ಈತನ ಸಂಗಡ ಮಾತನಾಡಿದನು,” ಎಂದರು.
JOH 12:30 ಯೇಸು, “ಈ ಸ್ವರವು ನನಗಾಗಿ ಅಲ್ಲ, ನಿಮಗಾಗಿಯೇ ಬಂದಿದೆ.
JOH 12:31 ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಇಹಲೋಕದ ಅಧಿಪತಿಯನ್ನು ಈಗ ಹೊರಗೆ ಹಾಕಲಾಗುವುದು.
JOH 12:32 ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುತ್ತೇನೆ,” ಎಂದರು.
JOH 12:33 ತಾವು ಎಂಥಾ ಮರಣದಿಂದ ಸಾಯಬೇಕಾಗಿದೆ ಎಂದು ಸೂಚಿಸಿ ಇದನ್ನು ಹೇಳಿದರು.
JOH 12:34 ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು.
JOH 12:35 ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮ ನಡುವೆ ಇರುತ್ತದೆ. ಕತ್ತಲು ನಿಮ್ಮನ್ನು ಕವಿಯುವುದಕ್ಕೆ ಮುಂಚೆ, ನಿಮಗೆ ಬೆಳಕಿರುವಾಗಲೇ ನಡೆಯಿರಿ. ಕತ್ತಲಿನಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯದು.
JOH 12:36 ನೀವು ಬೆಳಕಿನ ಪುತ್ರರಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ,” ಎಂದರು. ಯೇಸು ಇವುಗಳನ್ನು ಹೇಳಿ, ಅವರಿಂದ ಹೊರಟುಹೋಗಿ ಅಡಗಿಕೊಂಡರು.
JOH 12:37 ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಜನರು ಅವರನ್ನು ನಂಬಲಿಲ್ಲ.
JOH 12:38 ಇದರಿಂದ, “ಸ್ವಾಮೀ, ನಮ್ಮ ಸುದ್ದಿಯನ್ನು ಯಾರು ನಂಬಿದರು? ಕರ್ತ ಆಗಿರುವವರ ಬಾಹುವು ಯಾರಿಗೆ ಪ್ರಕಟವಾಯಿತು?” ಎಂದು ಪ್ರವಾದಿ ಯೆಶಾಯನು ನುಡಿದದ್ದು ನೆರವೇರಿತು.
JOH 12:39 ಅವರು ನಂಬಲಾರದೆ ಹೋದದ್ದರಿಂದ ಯೆಶಾಯನು ಮತ್ತೊಂದು ಕಡೆ ಹೇಳಿದ್ದೇನೆಂದರೆ:
JOH 12:40 “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ದೇವರು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣ ಮಾಡಿದರು.”
JOH 12:41 ಯೆಶಾಯನು ಯೇಸುವಿನ ಮಹಿಮೆಯನ್ನು ಕಂಡಿದ್ದರಿಂದ ಅವರ ವಿಷಯವಾಗಿ ಇವುಗಳನ್ನು ಹೇಳಿದನು.
JOH 12:42 ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ.
JOH 12:43 ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
JOH 12:44 ಯೇಸು, ಕೂಗಿ ಹೇಳಿದ್ದೇನೆಂದರೆ, “ನನ್ನನ್ನು ನಂಬುವವರು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯಲ್ಲಿಯೇ ವಿಶ್ವಾಸವಿಡುತ್ತಾರೆ.
JOH 12:45 ನನ್ನನ್ನು ನೋಡುವವರು ನನ್ನನ್ನು ಕಳುಹಿಸಿದ ತಂದೆಯನ್ನೇ ಕಾಣುತ್ತಾರೆ.
JOH 12:46 ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.
JOH 12:47 “ಯಾರು ನನ್ನ ಮಾತುಗಳನ್ನು ಕೇಳಿಯೂ ಅವುಗಳನ್ನು ಕೈಕೊಂಡು ನಡೆಯದೆ ಹೋದರೆ ನಾನು ಅವರಿಗೆ ಈಗ ತೀರ್ಪು ಮಾಡುವುದಿಲ್ಲ. ಏಕೆಂದರೆ ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವುದಕ್ಕಾಗಿಯೇ ನಾನು ಬಂದಿದ್ದೇನೆ.
JOH 12:48 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದವರಿಗೆ ತೀರ್ಪು ಮಾಡುವಂಥದ್ದು ಒಂದು ಇದೆ. ಅದು ನಾನು ಮಾತನಾಡಿದ ವಾಕ್ಯವೇ, ಅದೇ ಕಡೇ ದಿನದಲ್ಲಿ ಅವರಿಗೆ ತೀರ್ಪು ಮಾಡುವುದು.
JOH 12:49 ಏಕೆಂದರೆ ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ. ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕು ಎಂದು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞೆ ಕೊಟ್ಟಿದ್ದಾರೆ.
JOH 12:50 ಅವರ ಆಜ್ಞೆಯು ನಿತ್ಯಜೀವಕ್ಕೆ ಮಾರ್ಗವಾಗಿದೆ ಎಂದು ನಾನು ಬಲ್ಲೆನು. ಆದ್ದರಿಂದ, ತಂದೆಯು ನನಗೆ ಹೇಳಿದಂತೆಯೇ ಮಾತನಾಡುತ್ತೇನೆ,” ಎಂದು ಹೇಳಿದರು.
JOH 13:1 ಅಂದು ಪಸ್ಕಹಬ್ಬದ ಹಿಂದಿನ ದಿನವಾಗಿತ್ತು. ಯೇಸು ತಾವು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಸಮಯ ಬಂತೆಂದು ತಿಳಿದು, ಈ ಲೋಕದಲ್ಲಿದ್ದ ತಮ್ಮವರನ್ನು ಪ್ರೀತಿಸುತ್ತಿದ್ದ ಆ ಪ್ರೀತಿಯ ಪರಿಪೂರ್ಣತೆಯನ್ನು ಈಗ ತೋರಿಸಲಿದ್ದರು.
JOH 13:2 ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.
JOH 13:3 ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾರೆಂದೂ ತಾನು ದೇವರ ಬಳಿಯಿಂದ ಬಂದು ಮರಳಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.
JOH 13:4 ಯೇಸು ಊಟದಿಂದೆದ್ದು ತಮ್ಮ ಮೇಲು ಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ತೆಗೆದುಕೊಂಡು ಸೊಂಟಕ್ಕೆ ಕಟ್ಟಿಕೊಂಡರು.
JOH 13:5 ಅನಂತರ ಅವರು ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುವುದಕ್ಕೂ ತಾವು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರೆಸುವುದಕ್ಕೂ ಪ್ರಾರಂಭಿಸಿದರು.
JOH 13:6 ಯೇಸು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಯೇಸುವಿಗೆ, “ಸ್ವಾಮೀ, ನೀವು ನನ್ನ ಪಾದಗಳನ್ನು ತೊಳೆಯುತ್ತೀರೋ?” ಎಂದು ಕೇಳಿದನು.
JOH 13:7 ಯೇಸು ಅವನಿಗೆ, “ನಾನು ಮಾಡುವುದು ಏನೆಂದು ಈಗ ನಿನಗೆ ಅರ್ಥವಾಗುವುದಿಲ್ಲ. ಆದರೆ ಇನ್ನು ಮುಂದೆ ನಿನಗೆ ಅರ್ಥವಾಗುವುದು,” ಎಂದರು.
JOH 13:8 ಪೇತ್ರನು ಯೇಸುವಿಗೆ, “ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು,” ಎಂದನು. ಯೇಸು ಅವನಿಗೆ, “ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ,” ಎಂದು ಹೇಳಿದರು.
JOH 13:9 ಅದಕ್ಕೆ ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನನ್ನ ಪಾದಗಳನ್ನು ಮಾತ್ರವಲ್ಲದೆ, ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ,” ಎಂದನು.
JOH 13:10 ಯೇಸು ಅವನಿಗೆ, “ಸ್ನಾನಮಾಡಿಕೊಂಡವರು ತಮ್ಮ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು. ಅವರು ಸಂಪೂರ್ಣವಾಗಿ ಶುದ್ಧರಾಗಿದ್ದಾರೆ. ನೀವು ಸಹ ಶುದ್ಧರಾಗಿದ್ದೀರಿ. ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದರು.
JOH 13:11 ತನ್ನನ್ನು ಹಿಡಿದುಕೊಡುವವನು ಯಾರೆಂದು ಯೇಸು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
JOH 13:12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತಮ್ಮ ಮೇಲು ಹೊದಿಕೆಯನ್ನು ಧರಿಸಿ, ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೋ?
JOH 13:13 ನೀವು ನನ್ನನ್ನು ‘ಬೋಧಕರೇ’ ಮತ್ತು ‘ಕರ್ತಾ’ ಎಂದು ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.
JOH 13:14 ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.
JOH 13:15 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ಕೊಟ್ಟಿದ್ದೇನೆ.
JOH 13:16 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತನ್ನ ಧಣಿಗಿಂತ ಆಳು ದೊಡ್ಡವನಲ್ಲ, ಹಾಗೆಯೇ ಕಳುಹಿಸಲಾದವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
JOH 13:17 ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
JOH 13:18 “ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡುತ್ತಿಲ್ಲ. ನಾನು ಆರಿಸಿಕೊಂಡವರನ್ನು ನಾನು ಬಲ್ಲೆನು. ಆದರೆ ‘ನನ್ನ ಸಂಗಡ ರೊಟ್ಟಿಯನ್ನು ತಿಂದವನೇ, ನನಗೆ ದ್ರೋಹ ಬಗೆದನು,’ ಎಂಬ ಪವಿತ್ರ ವಾಕ್ಯವು ನೆರವೇರಬೇಕಾಗಿದೆ.
JOH 13:19 “ಅದು ಆಗುವುದು, ‘ನಾನೇ ಆತನು’ ಎಂದು ನೀವು ನಂಬುವಂತೆ ಅದು ಸಂಭವಿಸುವುದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತಿದ್ದೇನೆ.
JOH 13:20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ.”
JOH 13:21 ಯೇಸು ಇವುಗಳನ್ನು ಹೇಳುತ್ತಾ ಆತ್ಮದಲ್ಲಿ ನೊಂದುಕೊಂಡವರಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು,” ಎಂದು ಸ್ವಷ್ಟವಾಗಿ ಹೇಳಿದರು.
JOH 13:22 ಆಗ ಶಿಷ್ಯರು ಗಲಿಬಿಲಿಗೊಂಡು, “ಯೇಸು ಯಾರನ್ನು ಕುರಿತು ಹೇಳಿದರು?” ಎಂದು ಒಬ್ಬರನ್ನೊಬ್ಬರು ನೋಡುವವರಾದರು.
JOH 13:23 ಶಿಷ್ಯರಲ್ಲಿ ಯೇಸು ಪ್ರೀತಿಸಿದ ಒಬ್ಬನು ಅವರ ಎದೆಗೆ ಒರಗಿಕೊಂಡಿದ್ದನು.
JOH 13:24 ಸೀಮೋನ ಪೇತ್ರನು ಅವನಿಗೆ ಸನ್ನೆಮಾಡಿ, “ಅವರು ಯಾರ ವಿಷಯವಾಗಿ ಮಾತನಾಡಿದರು ಕೇಳು,” ಎಂದು ಹೇಳಿದನು.
JOH 13:25 ಅವನು ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಸ್ವಾಮೀ, ಅವನು ಯಾರು?” ಎಂದು ಯೇಸುವನ್ನು ಕೇಳಿದನು.
JOH 13:26 ಅದಕ್ಕೆ ಯೇಸು, “ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ,” ಎಂದರು. ತರುವಾಯ, ಆ ರೊಟ್ಟಿಯ ತುಂಡನ್ನು ಅದ್ದಿ ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟರು.
JOH 13:27 ಅವನು ರೊಟ್ಟಿಯ ತುಂಡನ್ನು ತೆಗೆದುಕೊಂಡು ತಿಂದನು. ಅನಂತರ ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೆ ಮಾಡು,” ಎಂದು ಹೇಳಿದರು.
JOH 13:28 ಆದರೆ ಯೇಸು ಅವನಿಗೆ ಇದನ್ನು ಏಕೆ ಹೇಳಿದರೆಂದು ಕುಳಿತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ.
JOH 13:29 ಏಕೆಂದರೆ ಯೂದನು ಹಣದ ಚೀಲವನ್ನು ಇಟ್ಟುಕೊಂಡಿದ್ದರಿಂದ ಯೇಸು ಅವನಿಗೆ, ಹಬ್ಬಕ್ಕೆ ನಮಗೆ ಅವಶ್ಯವಾದವುಗಳನ್ನು ಕೊಂಡುಕೋ, ಎಂದೋ ಬಡವರಿಗೆ ಏನಾದರೂ ಕೊಡು ಎಂದೋ ಯೇಸು ಅವನಿಗೆ ಹೇಳಿದರೆಂದು ಅವರಲ್ಲಿ ಕೆಲವರು ಭಾವಿಸಿದರು.
JOH 13:30 ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
JOH 13:31 ಅವನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಪುತ್ರನಾದ ನಾನು ಮಹಿಮೆ ಹೊಂದಲಿದ್ದೇನೆ. ದೇವರೂ ನನ್ನಲ್ಲಿ ಮಹಿಮೆ ಹೊಂದುವರು.
JOH 13:32 ದೇವರು ಮನುಷ್ಯಪುತ್ರನಾದ ನನ್ನಲ್ಲಿ ಮಹಿಮೆ ಪಟ್ಟರೆ, ದೇವರು ಸಹ ಮನುಷ್ಯಪುತ್ರನಾದ ನನ್ನನ್ನು ತಮ್ಮಲ್ಲಿ ಮಹಿಮೆಪಡಿಸುವರು ಮತ್ತು ತಕ್ಷಣವೇ ಮಹಿಮೆಪಡಿಸುವರು.
JOH 13:33 “ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮೊಡನೆ ಇರುತ್ತೇನೆ. ‘ನೀವು ನನ್ನನ್ನು ಹುಡುಕುವಿರಿ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದಿ ನಾಯಕರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
JOH 13:34 “ನಾನು ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
JOH 13:35 ನಿಮಗೆ ಪರಸ್ಪರ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು,” ಎಂದು ಹೇಳಿದರು.
JOH 13:36 ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದ್ದಕ್ಕೆ, ಯೇಸು ಅವನಿಗೆ, “ನಾನು ಹೋಗುವ ಕಡೆಗೆ ಈಗ ನೀನು ನನ್ನನ್ನು ಹಿಂಬಾಲಿಸಲಾರೆ, ನಂತರ ಹಿಂಬಾಲಿಸುವೆ,” ಎಂದರು.
JOH 13:37 ಪೇತ್ರನು ಯೇಸುವಿಗೆ, “ಕರ್ತದೇವರೇ, ನಾನು ಈಗ ನಿಮ್ಮನ್ನು ಏಕೆ ಹಿಂಬಾಲಿಸಲಾರೆನು? ನಿಮಗಾಗಿ ನನ್ನ ಪ್ರಾಣವನ್ನೇ ಕೊಡುವೆನು,” ಎಂದನು.
JOH 13:38 ಯೇಸು ಅವನಿಗೆ, “ನೀನು ನನಗಾಗಿ ನಿನ್ನ ಪ್ರಾಣವನ್ನೇ ಕೊಡುವೆಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಹುಂಜ ಕೂಗುವುದೇ ಇಲ್ಲ,” ಎಂದರು.
JOH 14:1 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.
JOH 14:2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ. ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ.
JOH 14:3 ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಮಾಡಿದ ಮೇಲೆ ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಆಗ ನಾನಿರುವಲ್ಲಿ ನೀವು ಸಹ ಇರುವಿರಿ.
JOH 14:4 ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ,” ಎಂದರು.
JOH 14:5 ಆಗ ತೋಮನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರೋ ನಮಗೆ ತಿಳಿಯದು. ಆದ್ದರಿಂದ ನಮಗೆ ಮಾರ್ಗವು ಹೇಗೆ ತಿಳಿದೀತು?” ಎಂದನು.
JOH 14:6 ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರರು.
JOH 14:7 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿಯುತ್ತಿದ್ದೀರಿ. ಈಗಿನಿಂದ ನೀವು ತಂದೆಯನ್ನು ತಿಳಿದಿದ್ದೀರಿ ಮತ್ತು ಅವರನ್ನು ಕಂಡಿದ್ದೀರಿ,” ಎಂದು ಹೇಳಿದರು.
JOH 14:8 ಅದಕ್ಕೆ ಫಿಲಿಪ್ಪನು, “ಸ್ವಾಮೀ, ತಂದೆಯನ್ನು ನಮಗೆ ತೋರಿಸಿರಿ, ನಮಗೆ ಅಷ್ಟೇ ಸಾಕು,” ಎಂದನು.
JOH 14:9 ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟುಕಾಲ ನಿಮ್ಮೊಂದಿಗೆ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ಹಾಗಾದರೆ, ‘ತಂದೆಯನ್ನು ನಮಗೆ ತೋರಿಸಿರಿ’ ಎಂದು ನೀನು ಕೇಳುವುದು ಹೇಗೆ?
JOH 14:10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾರೆ ಎಂದು ನೀನು ನಂಬುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನಲ್ಲಿರುವ ತಂದೆಯೇ ತಮ್ಮ ಕ್ರಿಯೆಗಳನ್ನು ಮಾಡುತ್ತಾರೆ.
JOH 14:11 ನಾನು ತಂದೆಯಲ್ಲಿಯೂ ತಂದೆಯು ನನ್ನಲ್ಲಿಯೂ ಇದ್ದಾರೆಂದು ಹೇಳುವಾಗ ನೀವು ನನ್ನನ್ನು ನಂಬಿರಿ, ಇಲ್ಲದಿದ್ದರೆ ಆ ಕ್ರಿಯೆಗಳನ್ನಾದರೂ ನೀವು ನಂಬಿರಿ.
JOH 14:12 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಾನು ಮಾಡುವ ಕ್ರಿಯೆಗಳನ್ನು ತಾವು ಸಹ ಮಾಡುವರು. ಇವುಗಳಿಗಿಂತ ಮಹತ್ತಾದವುಗಳನ್ನು ಅವರು ಮಾಡುವರು. ಏಕೆಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.
JOH 14:13 ನನ್ನ ಹೆಸರಿನಲ್ಲಿ ನೀವು ಏನೇನು ಕೇಳಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ತಂದೆಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು.
JOH 14:14 ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.
JOH 14:15 “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಅನುಸರಿಸುವಿರಿ.
JOH 14:16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ತಂದೆ ನಿಮಗೆ ಬೇರೊಬ್ಬ ಸಹಾಯಕರನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕೊಡುವರು.
JOH 14:17 ಅವರೇ ಸತ್ಯದ ಆತ್ಮರಾಗಿದ್ದಾರೆ. ಲೋಕವು ಅವರನ್ನು ನೋಡದೆಯೂ ತಿಳಿಯದೆಯೂ ಇರುವುದರಿಂದ ಸತ್ಯದ ಆತ್ಮರಾಗಿರುವ ಅವರನ್ನು ಸ್ವೀಕರಿಸಲಾರದು. ನೀವು ಅವರನ್ನು ಬಲ್ಲಿರಿ. ಏಕೆಂದರೆ ಅವರು ನಿಮ್ಮೊಂದಿಗಿರುವರು ಮತ್ತು ನಿಮ್ಮೊಳಗೂ ನೆಲೆಸಿರುವರು.
JOH 14:18 ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ. ನಿಮ್ಮ ಬಳಿಗೆ ನಾನು ಬರುತ್ತೇನೆ.
JOH 14:19 ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ಕಾಣುವುದಿಲ್ಲ. ಆದರೆ ನೀವು ನನ್ನನ್ನು ಕಾಣುವಿರಿ. ಏಕೆಂದರೆ ನಾನು ಜೀವಿಸುವುದರಿಂದ ನೀವು ಸಹ ಜೀವಿಸುವಿರಿ.
JOH 14:20 ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.
JOH 14:21 ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಗೊಳ್ಳುವವರೇ ನನ್ನನ್ನು ಪ್ರೀತಿಸುವವರು. ನನ್ನನ್ನು ಪ್ರೀತಿಸುವವನು ತನ್ನ ತಂದೆಗೆ ಪ್ರಿಯನಾಗಿರುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಿಸಿಕೊಳ್ಳುವೆನು,” ಎಂದು ಹೇಳಿದರು.
JOH 14:22 ಇಸ್ಕರಿಯೋತ ಅಲ್ಲದ ಮತ್ತೊಬ್ಬ ಯೂದನು, “ಸ್ವಾಮೀ, ನೀವು ಲೋಕಕ್ಕೆ ಪ್ರಕಟವಾಗದೆ ನಮಗೆ ಮಾತ್ರ ಪ್ರಕಟವಾಗುವುದು ಏಕೆ?” ಎಂದು ಕೇಳಿದನು.
JOH 14:23 ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ವಾಕ್ಯವನ್ನು ಕೈಗೊಳ್ಳುವನು. ನನ್ನ ತಂದೆಯು ಅವನನ್ನು ಪ್ರೀತಿಸುವರು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಿವಾಸಮಾಡಿಕೊಳ್ಳುವೆವು.
JOH 14:24 ನನ್ನನ್ನು ಪ್ರೀತಿಸದವನು ನನ್ನ ವಾಕ್ಯಗಳನ್ನು ಕೈಗೊಳ್ಳುವುದಿಲ್ಲ. ನೀವು ಕೇಳಿದ ವಾಕ್ಯವು ನನ್ನ ವಾಕ್ಯಗಳಲ್ಲ. ಅವು ನನ್ನನ್ನು ಕಳುಹಿಸಿದ ನನ್ನ ತಂದೆಯ ವಾಕ್ಯಗಳಾಗಿವೆ.
JOH 14:25 “ನಾನು ಇನ್ನೂ ನಿಮ್ಮೊಡನೆ ಇರುವಾಗಲೇ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ.
JOH 14:26 ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಸಹಾಯಕ ‘ಪವಿತ್ರಾತ್ಮರು’ ಎಲ್ಲವನ್ನೂ ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.
JOH 14:27 ನಾನು ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ. ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಅಂಜದಿರಲಿ.
JOH 14:28 “ ‘ನಾನು ಹೋಗಿ ತಿರುಗಿ ನಿಮ್ಮ ಬಳಿಗೆ ಬರುತ್ತೇನೆ,’ ಎಂದು ನಾನು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷ ಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವರು.
JOH 14:29 ಅದು ನಡೆಯುವಾಗ ನೀವು ನಂಬುವಂತೆ ಇದೆಲ್ಲಾ ನಡೆಯುವುದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.
JOH 14:30 ಇನ್ನು ಮೇಲೆ ನಾನು ನಿಮ್ಮೊಂದಿಗೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆ ಇಹಲೋಕದ ಅಧಿಪತಿಯು ಬರಲಿದ್ದಾನೆ. ನನ್ನಲ್ಲಿ ಅವನಿಗೆ ಸೇರಿದ್ದು ಒಂದೂ ಇರುವುದಿಲ್ಲ.
JOH 14:31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕವು ತಿಳಿಯುವಂತೆ ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. “ಏಳಿರಿ, ನಾವು ಇಲ್ಲಿಂದ ಹೋಗೋಣ,” ಎಂದರು.
JOH 15:1 “ನಾನೇ ನಿಜವಾದ ದ್ರಾಕ್ಷಿಯ ಬಳ್ಳಿ, ನನ್ನ ತಂದೆಯೇ ತೋಟಗಾರರು.
JOH 15:2 ನನ್ನಲ್ಲಿದ್ದು ಫಲವನ್ನು ಕೊಡದ ಪ್ರತಿಯೊಂದು ಕವಲುಬಳ್ಳಿಯನ್ನು ತಂದೆ ಮೇಲಕ್ಕೆ ಎತ್ತಿಡುವರು. ಆದರೆ ಫಲಕೊಡುವ ಪ್ರತಿಯೊಂದು ಕವಲುಬಳ್ಳಿಯು ಹೆಚ್ಚು ಫಲಕೊಡುವಂತೆ ಅದನ್ನು ಕತ್ತರಿಸಿ ಶುದ್ಧ ಮಾಡುತ್ತಾರೆ.
JOH 15:3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ.
JOH 15:4 ನಾನು ನಿಮ್ಮಲ್ಲಿ ನೆಲೆಗೊಂಡಿರುವ ಹಾಗೇ ನನ್ನಲ್ಲಿ ನೆಲೆಗೊಂಡಿರಿ. ಕವಲುಬಳ್ಳಿಯು ದ್ರಾಕ್ಷಿಯ ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
JOH 15:5 “ನಾನೇ ದ್ರಾಕ್ಷಿಯ ಬಳ್ಳಿ, ನೀವು ಕವಲುಬಳ್ಳಿಗಳು. ನೀವು ನನ್ನಲ್ಲಿ ಮತ್ತು ನಾನು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಬಹಳ ಫಲಕೊಡುವಿರಿ. ಏಕೆಂದರೆ ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.
JOH 15:6 ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ನೀವು ಎಸೆಯಲಾದ ಕವಲುಬಳ್ಳಿಯಂತೆ ಒಣಗಿ ಹೋಗುವಿರಿ. ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು ಮತ್ತು ಅವುಗಳನ್ನು ಸುಟ್ಟುಹಾಕಲಾಗುವುದು.
JOH 15:7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಬಯಸುವ ಯಾವುದನ್ನಾದರೂ ಬೇಡಿಕೊಳ್ಳಿರಿ. ಅದು ನಿಮ್ಮದಾಗುವುದು.
JOH 15:8 ನೀವು ಬಹಳ ಫಲಕೊಡುವುದರಿಂದಲೇ ನನ್ನ ಶಿಷ್ಯರಾಗಿರುವಿರಿ, ಇದರಿಂದ ನನ್ನ ತಂದೆಗೆ ಮಹಿಮೆಯಾಗುವುದು.
JOH 15:9 “ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ಈಗ ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.
JOH 15:10 ನಾನು ನನ್ನ ತಂದೆಯ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನೆಲೆಗೊಂಡಿರುವಂತೆಯೇ ನೀವು ನನ್ನ ಆಜ್ಞೆಗಳನ್ನು ಪಾಲಿಸಿ ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಳ್ಳುವಿರಿ.
JOH 15:11 ನನ್ನ ಆನಂದವು ನಿಮ್ಮಲ್ಲಿ ಇರುವಂತೆಯೂ ಆ ನಿಮ್ಮ ಆನಂದವು ಪರಿಪೂರ್ಣವಾಗುವಂತೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.
JOH 15:12 ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದು ನನ್ನ ಆಜ್ಞೆಯಾಗಿದೆ.
JOH 15:13 ಒಬ್ಬನು ತನ್ನ ಸ್ನೇಹಿತರಿಗಾಗಿ ತನ್ನ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಹತ್ತಾದದ್ದು ಯಾರಲ್ಲೂ ಇಲ್ಲ.
JOH 15:14 ನಾನು ನಿಮಗೆ ಆಜ್ಞಾಪಿಸಿದ್ದನ್ನು ಪಾಲಿಸಿದರೆ ನೀವು ನನ್ನ ಸ್ನೇಹಿತರು.
JOH 15:15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ. ಏಕೆಂದರೆ ತನ್ನ ಧಣಿಯು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.
JOH 15:16 ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.
JOH 15:17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ.
JOH 15:18 “ಲೋಕವು ನಿಮ್ಮನ್ನು ದ್ವೇಷಿಸಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಿಸಿತು ಎಂದು ನೀವು ತಿಳಿಯಿರಿ.
JOH 15:19 ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದವರಲ್ಲದೆ ಇರುವುದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.
JOH 15:20 ‘ಧಣಿಗಿಂತ ಆಳು ದೊಡ್ಡವನಲ್ಲ,’ ಎಂದು ನಾನು ನಿಮಗೆ ಹೇಳಿದ ಮಾತನ್ನು ನೆನಪಿಗೆ ತಂದುಕೊಳ್ಳಿರಿ. ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಅನುಸರಿಸಿದರೆ ನಿಮ್ಮ ಮಾತನ್ನು ಸಹ ಅನುಸರಿಸುವರು.
JOH 15:21 ಆದರೆ ಅವರು ನನ್ನನ್ನು ಕಳುಹಿಸಿದ ತಂದೆಯನ್ನು ತಿಳಿಯದಿರುವುದರಿಂದಲೇ ನನ್ನ ಹೆಸರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು.
JOH 15:22 ನಾನು ಬಂದು ಅವರೊಂದಿಗೆ ಮಾತನಾಡದಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರ ಪಾಪದ ವಿಷಯವಾಗಿ ಅವರಿಗೆ ನೆಪವಿಲ್ಲ.
JOH 15:23 ನನ್ನನ್ನು ದ್ವೇಷಿಸುವವರು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾರೆ.
JOH 15:24 ಬೇರೆ ಯಾರೂ ಮಾಡದ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆ ಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಕ್ರಿಯೆಗಳನ್ನು ಕಂಡೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಮಾಡಿದ್ದಾರೆ.
JOH 15:25 ಆದರೆ, ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಮಾಡಿದರು,’ ಎಂದು ಅವರ ನಿಯಮದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
JOH 15:26 “ಆದರೂ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆ ಸಹಾಯಕರೊಬ್ಬರು ನಿಮ್ಮ ಬಳಿಗೆ ಬರುವರು. ಆಗ ತಂದೆಯಿಂದ ಬರುವ ಆ ಸತ್ಯದ ಆತ್ಮವಾಗಿರುವವರೇ ನನ್ನ ವಿಷಯವಾಗಿ ಸಾಕ್ಷಿಕೊಡುವರು.
JOH 15:27 ನೀವು ಪ್ರಾರಂಭದಿಂದಲೂ ನನ್ನ ಸಂಗಡ ಇದ್ದುದರಿಂದ ನೀವು ಸಹ ನನಗೆ ಸಾಕ್ಷಿಗಳಾಗಿದ್ದೀರಿ.
JOH 16:1 “ನೀವು ನಂಬಿಕೆಯಲ್ಲಿ ಎಡವಿಬಿದ್ದು ಹೋಗಬಾರದೆಂದು ನಾನು ಇವುಗಳನ್ನು ಹೇಳಿದ್ದೇನೆ.
JOH 16:2 ಜನರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು. ಆದರೆ ನಿಮ್ಮನ್ನು ಕೊಲ್ಲುವವರು ದೇವರಿಗೆ ಸೇವೆ ಸಲ್ಲಿಸುತ್ತಾರೆಂದು ಭಾವಿಸುವ ಸಮಯ ಬರುತ್ತದೆ.
JOH 16:3 ಅವರು ತಂದೆಯನ್ನಾಗಲಿ ನನ್ನನ್ನಾಗಲಿ ತಿಳಿಯದ ಕಾರಣ ಇವೆಲ್ಲವುಗಳನ್ನು ಮಾಡುವರು.
JOH 16:4 ಆದರೆ ಅವರ ಸಮಯ ಬಂದಾಗ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆಂದು ನೀವು ಜ್ಞಾಪಕ ಮಾಡಿಕೊಳ್ಳುವಂತೆ ಮುಂಚಿತವಾಗಿಯೇ ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಇವುಗಳನ್ನು ಪ್ರಾರಂಭದಲ್ಲೇ ನಿಮಗೆ ಹೇಳಲಿಲ್ಲ.
JOH 16:5 ಈಗ ನನ್ನನ್ನು ಕಳುಹಿಸಿದ ತಂದೆಯ ಬಳಿಗೆ ನಾನು ಹೋಗುತ್ತೇನೆ. ನಿಮ್ಮಲ್ಲಿ ಯಾರೂ, ‘ನೀವು ಎಲ್ಲಿಗೆ ಹೋಗುತ್ತೀರಿ?’ ಎಂದು ನನ್ನನ್ನು ಕೇಳಲಿಲ್ಲ.
JOH 16:6 ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ.
JOH 16:7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ ಸಹಾಯಕರು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಅವರನ್ನು ನಿಮ್ಮ ಬಳಿಗೆ ಕಳುಹಿಸುವೆನು.
JOH 16:8 ಆ ಸಹಾಯಕರು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ವಿಷಯಗಳಲ್ಲಿ ಲೋಕದವರಿಗೆ ಮನವರಿಕೆಯನ್ನು ಮಾಡುವರು.
JOH 16:9 ಜನರು ನನ್ನನ್ನು ನಂಬದೆ ಇರುವ ಕಾರಣದಿಂದ, ಪಾಪದ ವಿಷಯವಾಗಿಯೂ
JOH 16:10 ನಾನು ನನ್ನ ತಂದೆಯ ಬಳಿಗೆ ಹೋಗುವುದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣದಿಂದ, ನೀತಿಯ ವಿಷಯವಾಗಿಯೂ
JOH 16:11 ಇಹಲೋಕಾಧಿಪತಿಗೆ ನ್ಯಾಯತೀರ್ಪಾದ ಕಾರಣದಿಂದ ನ್ಯಾಯತೀರ್ಪಿನ ವಿಷಯವಾಗಿಯೂ ಮನವರಿಕೆ ಮಾಡುವರು.
JOH 16:12 “ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ. ಆದರೆ ನೀವು ಈಗ ಅವುಗಳನ್ನು ತಾಳಿಕೊಳ್ಳಲಾರಿರಿ.
JOH 16:13 ಆದರೆ ಸತ್ಯದ ಆತ್ಮ ಬಂದಾಗ ಅವರು ನಿಮ್ಮನ್ನು ಎಲ್ಲಾ ಸತ್ಯದೊಳಗೆ ನಡೆಸುವರು. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡದೆ ತಾವು ಕೇಳಿದವುಗಳನ್ನೇ ಮಾತನಾಡುವರು. ಮುಂದೆ ನಡೆಯಲಿರುವ ವಿಷಯಗಳನ್ನು ಅವರು ನಿಮಗೆ ಪ್ರಕಟಿಸುವರು.
JOH 16:14 ಅವರು ನನ್ನನ್ನು ಮಹಿಮೆಪಡಿಸುವರು. ಏಕೆಂದರೆ ಅವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು.
JOH 16:15 ತಂದೆಗೆ ಇರುವುದೆಲ್ಲವೂ ನನ್ನದೆ. ಆದ್ದರಿಂದಲೇ, ‘ಪವಿತ್ರಾತ್ಮ ದೇವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು,’ ಎಂದು ನಾನು ಹೇಳಿದೆನು.”
JOH 16:16 “ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ,” ಎಂದರು.
JOH 16:17 ಆಗ ಅವರ ಶಿಷ್ಯರಲ್ಲಿ ಕೆಲವರು, “ಇವರು ನಮಗೆ ಹೇಳುವುದೇನು? ‘ಸ್ವಲ್ಪಕಾಲ ನೀವು ನನ್ನನ್ನು ಕಾಣುವುದಿಲ್ಲ ಮತ್ತು ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ,’ ಎನ್ನುತ್ತಾರಲ್ಲಾ?
JOH 16:18 ಇವರು ಹೇಳುವುದರ ಅರ್ಥವೇನು? ‘ಸ್ವಲ್ಪಕಾಲ’ ಎಂದು ಹೇಳುತ್ತಾರಲ್ಲ? ಇವರು ಏನು ಮಾತನಾಡುತ್ತಾರೋ ನಮಗೆ ತಿಳಿಯದು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
JOH 16:19 ಶಿಷ್ಯರು ತಮ್ಮ ಬಗ್ಗೆ ಪ್ರಶ್ನಿಸಬಯಸುತ್ತಿದ್ದಾರೆಂದು ತಿಳಿದು ಯೇಸು, “ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ಕಾಣುವುದಿಲ್ಲ, ‘ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಎಂದು ನಾನು ನಿಮಗೆ ಹೇಳಿದ್ದರ ಕುರಿತಾಗಿ ನೀವು ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತೀರೋ?’
JOH 16:20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅತ್ತು ಗೋಳಾಡುವಿರಿ. ಆದರೆ ಲೋಕವು ಸಂತೋಷಿಸುವುದು; ನೀವು ದುಃಖಿಸುವಿರಿ ಆದರೆ ನಿಮ್ಮ ದುಃಖವು ಆನಂದವಾಗಿ ಮಾರ್ಪಡುವುದು.
JOH 16:21 ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.
JOH 16:22 ಈಗ ನಿಮಗೆ ನಿಜವಾಗಿಯೂ ದುಃಖವಿದೆ. ಆದರೆ ನಾನು ನಿಮ್ಮನ್ನು ತಿರುಗಿ ಕಾಣುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವುದು. ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವುದಿಲ್ಲ.
JOH 16:23 ಆ ದಿನದಲ್ಲಿ ನೀವು ನನ್ನನ್ನು ಏನೂ ಪ್ರಶ್ನಿಸುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.
JOH 16:24 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ನೀವು ಪಡೆದುಕೊಳ್ಳುವಿರಿ. ಆಗ ನಿಮ್ಮ ಆನಂದವು ಪರಿಪೂರ್ಣವಾಗಿರುವುದು.
JOH 16:25 “ಇವುಗಳನ್ನು ನಾನು ಸೂಚಕವಾಗಿ ನಿಮ್ಮೊಡನೆ ಮಾತನಾಡಿದ್ದೇನೆ. ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯವಾಗಿ ನಿಮಗೆ ಸ್ಪಷ್ಟವಾಗಿ ಪ್ರಕಟಿಸುವ ಗಳಿಗೆಯು ಬರುತ್ತದೆ.
JOH 16:26 ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ. ನಿಮ್ಮ ವಿಷಯವಾಗಿ ತಂದೆಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ.
JOH 16:27 ಏಕೆಂದರೆ ನೀವು ನನ್ನನ್ನು ಪ್ರೀತಿಸಿ ನಾನು ದೇವರಿಂದ ಹೊರಟು ಬಂದವನೆಂದು ನಂಬಿದ್ದರಿಂದ ತಂದೆಯು ತಾವೇ ನಿಮ್ಮನ್ನು ಪ್ರೀತಿಸುತ್ತಾರೆ.
JOH 16:28 ನಾನು ತಂದೆಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ತಿರುಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ,” ಎಂದರು.
JOH 16:29 ಆಗ ಶಿಷ್ಯರು ಯೇಸುವಿಗೆ, “ಇಗೋ, ಈಗ ನೀವು ಸಾಮ್ಯಗಳಿಂದ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.
JOH 16:30 ನೀವು ಎಲ್ಲಾ ತಿಳಿದವರೆಂದೂ ಯಾರೂ ನಿಮ್ಮನ್ನು ಪ್ರಶ್ನಿಸುವುದು ಅಗತ್ಯವಿಲ್ಲವೆಂದು ಈಗ ನಮಗೆ ತಿಳಿಯಿತು. ಆದ್ದರಿಂದ ನೀವು ದೇವರಿಂದ ಹೊರಟು ಬಂದವರೆಂದು ನಾವು ನಂಬುತ್ತೇವೆ,” ಎಂದರು.
JOH 16:31 ಅದಕ್ಕೆ ಯೇಸು ಅವರಿಗೆ, “ಈಗ ನೀವು ನಂಬುತ್ತೀರೋ?”
JOH 16:32 ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ನಿಮ್ಮ ಮನೆಗೆ ಚದುರಿಹೋಗಿ ನನ್ನನ್ನು ಒಬ್ಬಂಟಿಗನನ್ನಾಗಿ ಬಿಡುವ ಗಳಿಗೆ ಬರುತ್ತದೆ. ಹೌದು, ಈಗಲೇ ಬಂದಿದೆ. ಆದರೂ ನಾನು ಒಬ್ಬಂಟಿಗನಲ್ಲ. ಏಕೆಂದರೆ ತಂದೆ ನನ್ನ ಸಂಗಡ ಇದ್ದಾರೆ.
JOH 16:33 “ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.
JOH 17:1 ಯೇಸು ಇಷ್ಟೆಲ್ಲಾ ಮಾತನಾಡಿ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ, “ತಂದೆಯೇ, ಸಮಯ ಬಂದಿದೆ. ನಿಮ್ಮ ಪುತ್ರನು ನಿಮ್ಮನ್ನು ಮಹಿಮೆಪಡಿಸುವುದಕ್ಕಾಗುವಂತೆ ಆತನನ್ನು ಮಹಿಮೆಪಡಿಸಿರಿ.
JOH 17:2 ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ.
JOH 17:3 ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವ.
JOH 17:4 ಮಾಡಬೇಕೆಂದು ನೀವು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಮಿಯ ಮೇಲೆ ನಾನು ನಿಮ್ಮನ್ನು ಮಹಿಮೆಪಡಿಸಿದ್ದೇನೆ.
JOH 17:5 ತಂದೆಯೇ, ಲೋಕವು ಉಂಟಾಗುವದಕ್ಕಿಂತ ಮುಂಚೆ ನಿಮ್ಮೊಡನೆ ನನಗಿದ್ದ ಮಹಿಮೆಯಿಂದ ಈಗ ನೀವು ನನ್ನನ್ನು ಮಹಿಮೆಪಡಿಸಿರಿ.
JOH 17:6 “ಲೋಕದೊಳಗಿಂದ ನೀವು ನನಗೆ ಕೊಟ್ಟ ಈ ನನ್ನ ಶಿಷ್ಯರಿಗೆ ನಾನು ನಿಮ್ಮ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ನೀವು ಇವರನ್ನು ನನಗೆ ಕೊಟ್ಟಿದ್ದೀರಿ. ಇವರು ನಿಮ್ಮ ವಾಕ್ಯವನ್ನು ಕೈಗೊಂಡಿದ್ದಾರೆ.
JOH 17:7 ನೀವು ನನಗೆ ಕೊಟ್ಟಿದ್ದೆಲ್ಲವೂ ನಿಮ್ಮಿಂದಲೇ ಬಂದಿವೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ.
JOH 17:8 ಏಕೆಂದರೆ ನೀವು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ, ಇವರು ಅಂಗೀಕರಿಸಿದ್ದಾರೆ ಮತ್ತು ನಾನು ನಿಮ್ಮ ಬಳಿಯಿಂದ ಬಂದವನೆಂದು ಇವರು ನಿಶ್ಚಯವಾಗಿ ತಿಳಿದು, ನೀವೇ ನನ್ನನ್ನು ಕಳುಹಿಸಿದ್ದೀರಿ, ಎಂದು ನಂಬಿದ್ದಾರೆ.
JOH 17:9 ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ನೀವು ನನಗೆ ಕೊಟ್ಟವರಿಗಾಗಿಯೇ ಹೊರತು ನಾನು ಲೋಕಕ್ಕಾಗಿ ಬೇಡಿಕೊಳ್ಳುವುದಿಲ್ಲ. ಏಕೆಂದರೆ ಇವರು ನಿಮ್ಮವರು.
JOH 17:10 ನನ್ನದೆಲ್ಲವೂ ನಿಮ್ಮದೇ. ನಿಮ್ಮದೆಲ್ಲವೂ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.
JOH 17:11 ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತೇನೆ. ಪರಿಶುದ್ಧ ತಂದೆಯೇ, ನಾವು ಒಂದಾಗಿರುವಂತೆಯೇ ಇವರೂ ಒಂದಾಗಿರಬೇಕೆಂದು ನೀವು ನನಗೆ ಕೊಟ್ಟ ನಿಮ್ಮ ಹೆಸರಿನ ಶಕ್ತಿಯಿಂದ ಇವರನ್ನು ಕಾಪಾಡಿರಿ.
JOH 17:12 ನಾನು ಇವರೊಡನೆ ಇದ್ದಾಗ ನೀವು ನನಗೆ ಕೊಟ್ಟ ನಿಮ್ಮ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಪವಿತ್ರ ವಾಕ್ಯವು ನೆರವೇರುವಂತೆ ಆ ನಾಶದ ಮಗನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ.
JOH 17:13 “ಈಗ ನಾನು ನಿಮ್ಮ ಬಳಿಗೆ ಬರುತ್ತೇನೆ. ನನ್ನ ಆನಂದವು ಅವರಲ್ಲಿ ಪರಿಪೂರ್ಣವಾಗುವಂತೆ ನಾನು ಲೋಕದಲ್ಲಿ ಇದ್ದು ಇವೆಲ್ಲವನ್ನು ಮಾತನಾಡುತ್ತೇನೆ.
JOH 17:14 ನಾನು ನಿಮ್ಮ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ. ಇವರು ನನ್ನಂತೆ ಲೋಕದವರಲ್ಲದ ಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ.
JOH 17:15 ನೀವು ಇವರನ್ನು ಲೋಕದಿಂದ ತೆಗೆಯಬೇಕೆಂದು ಬೇಡಿಕೊಳ್ಳದೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ.
JOH 17:16 ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ.
JOH 17:17 ನೀವು ಸತ್ಯದಿಂದ ಇವರನ್ನು ಸಮರ್ಪಿಸಿರಿ. ನಿಮ್ಮ ವಾಕ್ಯವೇ ಸತ್ಯವು.
JOH 17:18 ನೀವು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ.
JOH 17:19 ಇವರು ನಿಜವಾಗಿಯೂ ಸಮರ್ಪಿತರಾಗಬೇಕೆಂದು ನನ್ನನ್ನು ನಾನೇ ಇವರಿಗೋಸ್ಕರ ಸಮರ್ಪಿಸಿಕೊಳ್ಳುತ್ತೇನೆ.
JOH 17:20 “ಆದರೆ ಇವರಿಗಾಗಿ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನಲ್ಲಿ ನಂಬುವವರಿಗಾಗಿಯೂ ಬೇಡಿಕೊಳ್ಳುತ್ತೇನೆ.
JOH 17:21 ತಂದೆಯೇ, ನೀವು ನನ್ನನ್ನು ಕಳುಹಿಸಿದ್ದೀರಿ ಎಂದು ಲೋಕವು ನಂಬುವುದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವ ಹಾಗೆಯೇ ಅವರು ಸಹ ನಮ್ಮಲ್ಲಿ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ.
JOH 17:22 ನಾವು ಒಂದಾಗಿರುವ ಹಾಗೆಯೇ ಇವರೂ ಒಂದಾಗಿರುವಂತೆ ನೀವು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.
JOH 17:23 ಹೀಗೆ ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣವಾಗಿರಲಿ. ಆಗ ನೀವು ನನ್ನನ್ನು ಕಳುಹಿಸಿದ್ದೀರಿ ಎಂದೂ ನನ್ನನ್ನು ಪ್ರೀತಿಸಿದಂತೆ ಇವರನ್ನು ನೀವು ಪ್ರೀತಿಸಿದ್ದೀರಿ ಎಂದೂ ಲೋಕವು ತಿಳಿದುಕೊಳ್ಳುವುದು.
JOH 17:24 “ತಂದೆಯೇ, ನೀವು ನನಗೆ ಕೊಟ್ಟವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು ಜಗದುತ್ಪತ್ತಿಗೆ ಮುಂಚೆ ನೀವು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ಕಾಣಬೇಕೆಂದು ನಾನು ಅಪೇಕ್ಷಿಸುತ್ತೇನೆ.
JOH 17:25 “ನೀತಿಯುಳ್ಳ ತಂದೆಯೇ, ಲೋಕವು ನಿಜವಾಗಿಯೂ ನಿಮ್ಮನ್ನು ತಿಳಿಯಲಿಲ್ಲ. ಆದರೆ ನಾನು ನಿಮ್ಮನ್ನು ತಿಳಿದಿದ್ದೇನೆ ಮತ್ತು ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ಇವರು ತಿಳಿದಿದ್ದಾರೆ.
JOH 17:26 ನೀವು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿಮ್ಮ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು,” ಎಂದರು.
JOH 18:1 ಯೇಸು ಪ್ರಾರ್ಥನೆಯನ್ನು ಮುಗಿಸಿದ ಮೇಲೆ ತಮ್ಮ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದರು. ಮತ್ತೊಂದು ಕಡೆ ಇರುವ ತೋಟದೊಳಗೆ ಯೇಸು ಮತ್ತು ಅವರ ಶಿಷ್ಯರು ಪ್ರವೇಶಿಸಿದರು.
JOH 18:2 ಅವರನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು. ಏಕೆಂದರೆ ಅನೇಕ ಸಾರಿ ಯೇಸು ತಮ್ಮ ಶಿಷ್ಯರೊಂದಿಗೆ ಅಲ್ಲಿ ಸೇರುತ್ತಿದ್ದರು.
JOH 18:3 ಯೂದನು ಸೈನಿಕರ ತಂಡವನ್ನೂ ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಕಾವಲಾಳುಗಳನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಸೈನಿಕರು ಮತ್ತು ಕಾವಲಾಳುಗಳು ದೀಪಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದರು.
JOH 18:4 ಆಗ ಯೇಸು ತಮಗೆ ಸಂಭವಿಸುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು,
JOH 18:5 ಅವರು ಯೇಸುವಿಗೆ, “ನಜರೇತಿನ ಯೇಸುವನ್ನು,” ಎಂದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು,” ಎಂದರು. ಅವರನ್ನು ಹಿಡಿದುಕೊಡಲಿದ್ದ ಯೂದನು ಸಹ ಅವರೊಂದಿಗೆ ನಿಂತಿದ್ದನು.
JOH 18:6 ಯೇಸು ಅವರಿಗೆ, “ನಾನೇ ಆತನು,” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
JOH 18:7 ಆಗ ಯೇಸು ಅವರಿಗೆ ತಿರುಗಿ, “ನೀವು, ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು,” ಎಂದರು.
JOH 18:8 ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ, ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಬಿಟ್ಟುಬಿಡಿರಿ,” ಎಂದರು.
JOH 18:9 ಹೀಗೆ, “ನೀನು ನನಗೆ ಕೊಟ್ಟವರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ,” ಎಂದು ತಾವೇ ಹೇಳಿದ ಮಾತು ನೆರವೇರಿತು.
JOH 18:10 ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ತೆಗೆದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಸೇವಕನ ಹೆಸರು ಮಲ್ಕ.
JOH 18:11 ಆಗ ಯೇಸು ಪೇತ್ರನಿಗೆ, “ನಿನ್ನ ಕತ್ತಿಯನ್ನು ಒರೆಯಲ್ಲಿ ಹಾಕು! ನನ್ನ ತಂದೆಯು ನನಗೆ ಕೊಟ್ಟ ಪಾತ್ರೆಯಿಂದ ನಾನು ಕುಡಿಯಬಾರದೋ?” ಎಂದು ಹೇಳಿದರು.
JOH 18:12 ತರುವಾಯ ಸೈನಿಕರೂ ಸೈನ್ಯಾಧಿಕಾರಿಯೂ ಯೆಹೂದ್ಯರ ಕಾವಲಾಳುಗಳೂ ಯೇಸುವನ್ನು ಹಿಡಿದು ಕಟ್ಟಿದರು.
JOH 18:13 ಅವರನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.
JOH 18:14 “ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ,” ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟ ಕಾಯಫನು ಇವನೇ.
JOH 18:15 ಸೀಮೋನ ಪೇತ್ರನು ಮತ್ತು ಇನ್ನೊಬ್ಬ ಶಿಷ್ಯನು ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದುದರಿಂದ ಯೇಸುವಿನ ಸಂಗಡ ಮಹಾಯಾಜಕನ ಅಂಗಳದೊಳಗೆ ಹೋದನು.
JOH 18:16 ಆದರೆ ಪೇತ್ರನು ಬಾಗಿಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು. ಮಹಾಯಾಜಕನಿಗೆ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.
JOH 18:17 ಆಗ ದ್ವಾರಪಾಲಕಿಯು ಪೇತ್ರನಿಗೆ, “ನೀನು ಸಹ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅದಕ್ಕವನು, “ನಾನಲ್ಲ,” ಎಂದನು.
JOH 18:18 ಆಗ ಚಳಿಯಿದ್ದುದರಿಂದ ಸೇವಕರೂ ಕಾವಲುಗಾರರೂ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರೊಂದಿಗೆ ನಿಂತು ಚಳಿ ಕಾಯಿಸಿಕೊಳ್ಳುತ್ತಿದ್ದನು.
JOH 18:19 ಆಗ ಮಹಾಯಾಜಕನು ಯೇಸುವನ್ನು ಅವರ ಶಿಷ್ಯರ ವಿಷಯವಾಗಿಯೂ ಅವರ ಬೋಧನೆಯ ವಿಷಯವಾಗಿಯೂ ಪ್ರಶ್ನಿಸಿದನು.
JOH 18:20 ಯೇಸು ಅವನಿಗೆ, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿಬರುವ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸುತ್ತಿದ್ದೆನು. ನಾನು ಮುಚ್ಚುಮರೆಯಾಗಿ ಏನೂ ಮಾತನಾಡಲಿಲ್ಲ.
JOH 18:21 ನೀನು ನನ್ನನ್ನು ಪ್ರಶ್ನಿಸುವುದೇಕೆ? ನಾನು ಅವರಿಗೆ ಏನು ಮಾತನಾಡಿದ್ದೇನೆಂದು ಕೇಳಿದವರನ್ನೇ ಪ್ರಶ್ನಿಸು, ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ,” ಎಂದರು.
JOH 18:22 ಯೇಸು ಇವುಗಳನ್ನು ಹೇಳಿದಾಗ, ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.
JOH 18:23 ಯೇಸು ಅವನಿಗೆ, “ನಾನು ಕೆಟ್ಟದ್ದನ್ನು ಮಾತನಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೆಯದನ್ನು ಮಾತನಾಡಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದರು.
JOH 18:24 ಆಗ ಅನ್ನನು ಯೇಸುವನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
JOH 18:25 ಇತ್ತ ಸೀಮೋನ ಪೇತ್ರನು ಚಳಿಕಾಯಿಸಿಕೊಳ್ಳುತ್ತಾ ನಿಂತಿರುವಾಗ, ಒಬ್ಬನು ಅವನಿಗೆ, “ನೀನು ಸಹ ಆತನ ಶಿಷ್ಯನಲ್ಲವೇ?” ಎಂದು ಕೇಳಿದರು. ಅದಕ್ಕೆ ಅವನು ಅದನ್ನು ನಿರಾಕರಿಸಿ, “ನಾನಲ್ಲ,” ಎಂದನು.
JOH 18:26 ಮಹಾಯಾಜಕನ ಸೇವಕರಲ್ಲಿ ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ಕಾಣಲಿಲ್ಲವೋ?” ಎಂದು ಕೇಳಿದ್ದಕ್ಕೆ,
JOH 18:27 ಪೇತ್ರನು ತಿರುಗಿ ನಿರಾಕರಿಸಿದನು. ಆಗ ಕೂಡಲೇ ಹುಂಜ ಕೂಗತೊಡಗಿತು.
JOH 18:28 ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ರೋಮನ್ ರಾಜ್ಯಪಾಲನ ನಿವಾಸಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಅಶುದ್ಧವಾಗದಂತೆ ಪಸ್ಕದ ಊಟಮಾಡುವುದಕ್ಕೆ ಅಡ್ಡಿಯಾದೀತೆಂದು ಅವರು ರಾಜ್ಯಪಾಲನ ನಿವಾಸದ ಒಳಗೆ ಹೋಗಲಿಲ್ಲ.
JOH 18:29 ಆಗ ಪಿಲಾತನೇ ಹೊರಗೆ ಅವರ ಬಳಿಗೆ ಬಂದು, “ನೀವು ಈತನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದ್ದಕ್ಕೆ,
JOH 18:30 ಯೆಹೂದಿ ನಾಯಕರು, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ್ಲ,” ಎಂದು ಹೇಳಿದರು.
JOH 18:31 ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ನಿಮ್ಮ ನಿಯಮದ ಪ್ರಕಾರ ಆತನಿಗೆ ತೀರ್ಪು ಮಾಡಿರಿ,” ಎಂದನು. ಅದಕ್ಕೆ ಯೆಹೂದ್ಯರು ಅವನಿಗೆ, “ಮರಣದಂಡನೆ ವಿಧಿಸುವ ಅಧಿಕಾರ ನಮಗೆ ಇಲ್ಲ,” ಎಂದು ಹೇಳಿದರು.
JOH 18:32 ಹೀಗೆ ಯೇಸು ತಾನು ಎಂಥಾ ಮರಣದಿಂದ ಸಾಯಲಿದ್ದೇನೆಂಬುದನ್ನು ಸೂಚಿಸಿ ಹೇಳಿದ ಮಾತು ನೆರವೇರಿತು.
JOH 18:33 ಆದ್ದರಿಂದ ಪಿಲಾತನು ತಿರುಗಿ ತನ್ನ ನಿವಾಸದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಅವರಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
JOH 18:34 ಅದಕ್ಕೆ ಯೇಸು ಅವನಿಗೆ, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ ಇಲ್ಲವೆ ಬೇರೆಯವರು ನನ್ನನ್ನು ಕುರಿತು ನಿನಗೆ ಹೇಳಿದ್ದಾರೋ?” ಎಂದರು.
JOH 18:35 ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಜನಾಂಗವೂ ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದನು.
JOH 18:36 ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನನ್ನು ಯೆಹೂದ್ಯರಿಗೆ ಒಪ್ಪಿಸದಂತೆ ನನ್ನ ಸೇವಕರು ಹೋರಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ,” ಎಂದು ಉತ್ತರಕೊಟ್ಟರು.
JOH 18:37 ಪಿಲಾತನು ಯೇಸುವಿಗೆ, “ನೀನು ಅರಸನೋ?” ಎಂದು ಕೇಳಲು, ಯೇಸು, “ನಾನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿ, ಇದಕ್ಕಾಗಿಯೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸೇರಿದ ಎಲ್ಲರೂ ನನ್ನ ಸ್ವರವನ್ನು ಕೇಳುತ್ತಾರೆ,” ಎಂದರು.
JOH 18:38 ಪಿಲಾತನು ಯೇಸುವಿಗೆ, “ಸತ್ಯ ಎಂದರೇನು?” ಎಂದನು. ಅವನು ಇದನ್ನು ಕೇಳಿದ ಮೇಲೆ ತಿರುಗಿ ಯೆಹೂದ್ಯರ ಬಳಿಗೆ ಹೋಗಿ ಅವರಿಗೆ, “ನಾನು ಈತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.
JOH 18:39 ಆದರೆ ಪಸ್ಕಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿಯಿದೆಯಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವುದು ನಿಮಗೆ ಇಷ್ಟವೋ?” ಎಂದು ಕೇಳಿದನು.
JOH 18:40 ಅದಕ್ಕೆ ಅವರೆಲ್ಲರೂ ತಿರುಗಿ, “ಇವನು ಬೇಡ, ನಮಗೆ ಬರಬ್ಬನನ್ನು ಬಿಟ್ಟುಕೊಡು,” ಎಂದು ಕೂಗಿಕೊಂಡರು. ಆ ಬರಬ್ಬನು ದರೋಡೆಕೋರನಾಗಿದ್ದನು.
JOH 19:1 ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಕೊರಡೆಯಿಂದ ಹೊಡೆಸಿದನು.
JOH 19:2 ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲಿಟ್ಟು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ತೊಡಿಸಿ,
JOH 19:3 “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವಿನ ಕೆನ್ನೆಗೆ ಹೊಡೆದರು.
JOH 19:4 ಆಗ ಪಿಲಾತನು ತಿರುಗಿ ಹೊರಗೆ ಹೋಗಿ ಯೆಹೂದ್ಯರ ಗುಂಪಿಗೆ, “ಇಗೋ, ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲವೆಂದು ನೀವು ತಿಳಿದುಕೊಳ್ಳುವಂತೆ ಆತನನ್ನು ನಿಮ್ಮ ಬಳಿಗೆ ತರುತ್ತೇನೆ,” ಎಂದನು.
JOH 19:5 ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವರಾಗಿ ಹೊರಗೆ ಬಂದರು. ಪಿಲಾತನು ಅವರಿಗೆ, “ಇಗೋ, ಆ ಮನುಷ್ಯನು ಇವನೇ!” ಎಂದನು.
JOH 19:6 ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ನೋಡಿದಾಗ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು!” ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ಶಿಲುಬೆಗೆ ಹಾಕಿರಿ. ಏಕೆಂದರೆ ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ,” ಎಂದನು.
JOH 19:7 ಯೆಹೂದ್ಯ ನಾಯಕರು ಅವನಿಗೆ, “ನಮಗೆ ಒಂದು ನಿಯಮವಿದೆ, ಆ ನಿಯಮದ ಪ್ರಕಾರ ಅವನು ಸಾಯಲೇಬೇಕು. ಏಕೆಂದರೆ ಅವನು ತನ್ನನ್ನು ದೇವರ ಪುತ್ರನನ್ನಾಗಿ ಮಾಡಿಕೊಂಡಿದ್ದಾನೆ,” ಎಂದರು.
JOH 19:8 ಪಿಲಾತನು ಈ ಮಾತನ್ನು ಕೇಳಿದಾಗ ಬಹಳವಾಗಿ ಭಯಪಟ್ಟನು.
JOH 19:9 ತಿರುಗಿ ತನ್ನ ನಿವಾಸದೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರ ಕೊಡಲಿಲ್ಲ.
JOH 19:10 ಆಗ ಪಿಲಾತನು ಯೇಸುವಿಗೆ, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವುದಕ್ಕೂ ನಿನ್ನನ್ನು ಶಿಲುಬೆಗೆ ಹಾಕಿಸುವುದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯದೋ?” ಎಂದು ಕೇಳಿದನು.
JOH 19:11 ಅದಕ್ಕೆ ಯೇಸು, “ಪರಲೋಕದಿಂದ ನಿನಗೆ ಕೊಟ್ಟ ಹೊರತು ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ,” ಎಂದು ಉತ್ತರಕೊಟ್ಟರು.
JOH 19:12 ಇದನ್ನು ಕೇಳಿದಾಗಿಂದ ಪಿಲಾತನು ಯೇಸುವನ್ನು ಬಿಡಿಸಲು ಪ್ರಯತ್ನಿಸಿದನು. ಆದರೆ ಯೆಹೂದ್ಯ ನಾಯಕರು, “ನೀನು ಈ ಮನುಷ್ಯನನ್ನು ಬಿಡುಗಡೆ ಮಾಡಿದರೆ, ನೀನು ಕೈಸರನ ಮಿತ್ರನಲ್ಲ. ತನ್ನನ್ನು ತಾನೇ ಅರಸನನ್ನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧವಾಗಿ ಮಾತನಾಡುವವನಾಗಿದ್ದಾನೆ,” ಎಂದು ಕೂಗಿ ಹೇಳಿದರು.
JOH 19:13 ಪಿಲಾತನು ಆ ಮಾತುಗಳನ್ನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದನು. ಹೀಬ್ರೂ ಭಾಷೆಯಲ್ಲಿ “ಗಬ್ಬಥಾ” ಎಂದು ಕರೆಯಲಾದ “ಕಲ್ಲು ಹಾಸಿದ ಕಟ್ಟೆ” ಎಂಬ ಕಟ್ಟೆಯ ಮೇಲಿದ್ದ ನ್ಯಾಯಾಸನದ ಮೇಲೆ ಕುಳಿತುಕೊಂಡನು.
JOH 19:14 ಅದು ಪಸ್ಕಹಬ್ಬಕ್ಕೆ ಸಿದ್ಧಮಾಡುವ ದಿನದ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು,” ಎಂದನು.
JOH 19:15 ಆದರೆ ಅವರು, “ಆತನನ್ನು ಕೊಲ್ಲಿಸು ಕೊಲ್ಲಿಸು! ಆತನನ್ನು ಶಿಲುಬೆಗೆ ಹಾಕು!” ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಬೇಕೆ?” ಎಂದು ಕೇಳಿದನು. ಆಗ ಮುಖ್ಯಯಾಜಕರು, “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ,” ಎಂದು ಉತ್ತರಕೊಟ್ಟರು.
JOH 19:16 ಆಗ ಪಿಲಾತನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕಾಗಿ ಅವರಿಗೆ ಒಪ್ಪಿಸಿದನು. ಅವರು ಯೇಸುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋದರು.
JOH 19:17 ಯೇಸು ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು “ತಲೆಬುರುಡೆಯ ಸ್ಥಳ” ಎಂಬ ಸ್ಥಳಕ್ಕೆ ಹೋದರು. ಅದು ಅರಮಾಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಅರ್ಥ.
JOH 19:18 ಅಲ್ಲಿ ಯೇಸುವನ್ನೂ ಅವರ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಗೂ ಮತ್ತೊಬ್ಬನನ್ನು ಅವರ ಎಡಗಡೆಗೂ ಇಟ್ಟರು.
JOH 19:19 ಪಿಲಾತನು ಒಂದು ಫಲಕದ ಮೇಲೆ ಶಿರೋನಾಮವನ್ನು ಬರೆಸಿ, ಅದನ್ನು ಶಿಲುಬೆಯ ಮೇಲಿಟ್ಟಿದ್ದನು. ಅದೇನಂದರೆ: ಯೆಹೂದ್ಯರ ಅರಸನಾದ ನಜರೇತಿನ ಯೇಸು.
JOH 19:20 ಈ ಫಲಕವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಗೇರಿಸಿದ ಆ ಸ್ಥಳವು ಪಟ್ಟಣಕ್ಕೆ ಸಮೀಪವಾಗಿತ್ತು. ಇದು ಹೀಬ್ರೂ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.
JOH 19:21 ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “ಯೆಹೂದ್ಯರ ಅರಸನೆಂದು ಬರೆಯಬೇಡ, ‘ತಾನು ಯೆಹೂದ್ಯರ ಅರಸನು ಎಂದು ಹೇಳಿಕೊಂಡವನು’ ಎಂದು ಬರೆ,” ಎಂದರು.
JOH 19:22 ಪಿಲಾತನು, “ನಾನು ಬರೆದದ್ದು ಬರೆದಾಯಿತು,” ಎಂದು ಉತ್ತರಕೊಟ್ಟನು.
JOH 19:23 ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ವಸ್ತ್ರಗಳನ್ನು ತೆಗೆದು ಪ್ರತಿಯೊಬ್ಬ ಸೈನಿಕನಿಗೆ ಒಂದೊಂದು ಭಾಗದಂತೆ ನಾಲ್ಕು ಭಾಗಗಳನ್ನಾಗಿ ಹಂಚಿಕೊಂಡರು. ಅವರ ಒಳ ಅಂಗಿಯನ್ನು ಸಹ ತೆಗೆದುಕೊಂಡರು. ಆ ಒಳ ಅಂಗಿಯು ಹೊಲಿಗೆ ಇಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
JOH 19:24 ಆದ್ದರಿಂದ ಅವರು, “ನಾವು ಅದನ್ನು ಹರಿಯುವುದು ಬೇಡ. ಆದರೆ ಅದು ಯಾರಿಗಾಗುವುದೋ ಎಂದು ನೋಡುವುದಕ್ಕಾಗಿ ಚೀಟು ಹಾಕಿಕೊಳ್ಳೋಣ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಹೀಗೆ, “ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲುಮಾಡಿಕೊಂಡರು. ನನ್ನ ಒಳ ಅಂಗಿಗಾಗಿ ಚೀಟುಹಾಕಿದರು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರುವಂತೆ, ಸೈನಿಕರು ಚೀಟುಹಾಕಿ ಪಾಲುಮಾಡಿಕೊಂಡರು.
JOH 19:25 ಯೇಸುವಿನ ಶಿಲುಬೆಯ ಬಳಿಯಲ್ಲಿ ಅವರ ತಾಯಿಯೂ ಅವರ ತಾಯಿಯ ಸಹೋದರಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.
JOH 19:26 ಯೇಸು ತಮ್ಮ ತಾಯಿಯೂ ತಾವು ಪ್ರೀತಿಸಿದ ಶಿಷ್ಯನೂ ಹತ್ತಿರದಲ್ಲಿ ನಿಂತಿರುವುದನ್ನು ಕಂಡು ತಮ್ಮ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು,” ಎಂದರು.
JOH 19:27 ಆಮೇಲೆ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿಯು,” ಎಂದರು. ಆ ಸಮಯದಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಇರಿಸಿಕೊಂಡನು.
JOH 19:28 ಇದಾದ ಮೇಲೆ ಯೇಸು ಈಗ ಎಲ್ಲವೂ ಪೂರ್ತಿಯಾಗಿದೆಯೆಂದು ತಿಳಿದು, ಪವಿತ್ರ ವೇದದ ವಾಕ್ಯವು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದರು.
JOH 19:29 ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಹೀರುವ ಪದಾರ್ಥವನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಯೇಸುವಿನ ಬಾಯಿಗೆ ಇಟ್ಟರು.
JOH 19:30 ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.
JOH 19:31 ಅದು ಪಸ್ಕಹಬ್ಬದ ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷ ಸಬ್ಬತ್ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯ ನಾಯಕರು ಪಿಲಾತನನ್ನು ಕೇಳಿಕೊಂಡರು.
JOH 19:32 ಅದರಂತೆ ಸೈನಿಕರು ಬಂದು ಯೇಸುವಿನ ಜೊತೆಯಲ್ಲಿ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು.
JOH 19:33 ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಯೇಸು ಆಗಲೇ ಸತ್ತಿರುವುದನ್ನು ಕಂಡು ಅವರ ಕಾಲುಗಳನ್ನು ಮುರಿಯಲಿಲ್ಲ.
JOH 19:34 ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಯೇಸುವಿನ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಹೊರಗೆ ಬಂದವು.
JOH 19:35 ಇದನ್ನು ಕಣ್ಣಾರೆ ಕಂಡವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವಾದದ್ದು, ನೀವು ಸಹ ನಂಬುವಂತೆ ತಾನು ಹೇಳಿರುವುದು ಸತ್ಯವೆಂದು ಅವನು ಬಲ್ಲನು.
JOH 19:36 ಏಕೆಂದರೆ, “ಯೇಸುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರುವಂತೆಯೇ ಇವೆಲ್ಲಾ ಸಂಭವಿಸಿದವು.
JOH 19:37 ಮತ್ತೊಂದು ಪವಿತ್ರ ವೇದದ ವಾಕ್ಯವು, “ತಾವು ಇರಿದವನನ್ನು ಅವರು ನೋಡುವರು,” ಎಂದು ಹೇಳುತ್ತದೆ.
JOH 19:38 ತರುವಾಯ ಯೆಹೂದ್ಯರ ಭಯದ ನಿಮಿತ್ತದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.
JOH 19:39 ಇದಲ್ಲದೆ ಮೊದಲು ಒಂದು ಸಾರಿ ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ, ಅಗರುಗಳನ್ನು, ಸುಗಂಧದ್ರವ್ಯ ಬೆರೆಸಿದ ಮಿಶ್ರಣವನ್ನು, ಮೂವತ್ತು ಕಿಲೋಗ್ರಾಮಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
JOH 19:40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಳುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರುಬಟ್ಟೆಗಳಲ್ಲಿ ಸುತ್ತಿದರು.
JOH 19:41 ಯೇಸು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಯಾರನ್ನೂ ಇಡದೆ ಇದ್ದ ಒಂದು ಹೊಸ ಸಮಾಧಿಯಿತ್ತು.
JOH 19:42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದಲೂ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವನ್ನು ಅಲ್ಲಿಯೇ ಸಮಾಧಿಮಾಡಿದರು.
JOH 20:1 ವಾರದ ಮೊದಲನೆಯ ದಿನದಲ್ಲಿ ಮುಂಜಾನೆ ಇನ್ನೂ ಕತ್ತಲಿರುವಾಗಲೇ ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಬಂಡೆ ತೆಗೆದು ಹಾಕಿರುವುದನ್ನು ಕಂಡಳು.
JOH 20:2 ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ, ಅವರು ಕರ್ತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ,” ಎಂದು ಹೇಳಿದಳು.
JOH 20:3 ಆಗ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
JOH 20:4 ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು.
JOH 20:5 ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಪ್ರವೇಶಿಸಲಿಲ್ಲ.
JOH 20:6 ಆಗ ಸೀಮೋನ ಪೇತ್ರನು ಸಹ ಅವನ ಹಿಂದೆ ಬಂದು ನೇರವಾಗಿ ಸಮಾಧಿಯೊಳಕ್ಕೆ ಪ್ರವೇಶಿಸಿ, ನಾರುಬಟ್ಟೆಗಳು ಬಿದ್ದಿರುವುದನ್ನೂ
JOH 20:7 ಯೇಸುವಿನ ತಲೆಗೆ ಸುತ್ತಿದ ವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.
JOH 20:8 ಆಗ ಮೊದಲು ಸಮಾಧಿಗೆ ಬಂದಿದ್ದ ಆ ಇನ್ನೊಬ್ಬ ಶಿಷ್ಯನು ಸಹ ಪ್ರವೇಶಿಸಿ, ಕಂಡು ನಂಬಿದನು.
JOH 20:9 ಯೇಸು ಸತ್ತವರೊಳಗಿಂದ ಪುನಃ ಎದ್ದು ಬರಬೇಕು ಎಂಬ ಪವಿತ್ರ ವೇದದ ವಾಕ್ಯವು ಅವರಿಗೆ ಇನ್ನೂ ತಿಳಿದಿರಲಿಲ್ಲ.
JOH 20:10 ತರುವಾಯ ಆ ಶಿಷ್ಯರು ಉಳಿದವರ ಬಳಿಗೆ ಹೊರಟು ಹೋದರು.
JOH 20:11 ಆದರೆ ಮರಿಯಳು ಸಮಾಧಿಯ ಹೊರಗೆ ಅಳುತ್ತಾ ನಿಂತಿದ್ದಳು. ಆಕೆಯು ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ,
JOH 20:12 ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೂತರು, ಒಬ್ಬನು ಯೇಸುವಿನ ತಲೆಯ ಕಡೆಗೂ ಮತ್ತೊಬ್ಬನು ಅವರ ಪಾದಗಳಿದ್ದ ಕಡೆಗೂ ಕುಳಿತಿರುವುದನ್ನು ಕಂಡಳು.
JOH 20:13 ಅವರು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು ಅವರಿಗೆ, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಕರ್ತನನ್ನು ಅವರು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ,” ಎಂದಳು.
JOH 20:14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು. ಆದರೆ ಅವರು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.
JOH 20:15 ಯೇಸು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ? ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಲು, ಆಕೆಯು ಅವರು ತೋಟಗಾರನೆಂದು ನೆನಸಿ ಅವರಿಗೆ, “ಅಯ್ಯಾ, ನೀನು ಅವರನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಅವರನ್ನು ತೆಗೆದುಕೊಂಡು ಹೋಗುತ್ತೇನೆ,” ಎಂದಳು.
JOH 20:16 ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ತಿರುಗಿಕೊಂಡು ಹೀಬ್ರೂ ಭಾಷೆಯಲ್ಲಿ ಅವರಿಗೆ, “ರಬ್ಬೂನಿ!” ಎಂದಳು. ಹಾಗೆಂದರೆ “ಬೋಧಕನೇ” ಎಂದರ್ಥ.
JOH 20:17 ಯೇಸು ಆಕೆಗೆ, “ನನ್ನನ್ನು ಹಿಡಿಯಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಹೋಗಲಿಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವ ತಂದೆಯ ಬಳಿಗೆ ನಾನು ಹೋಗುತ್ತೇನೆ’ ಎಂದು ತಿಳಿಸು,” ಎಂದರು.
JOH 20:18 ಆಗ ಮಗ್ದಲದ ಮರಿಯಳು ಬಂದು, “ನಾನು ಕರ್ತನನ್ನು ಕಂಡಿದ್ದೇನೆ,” ಎಂದು ಹೇಳಿ, ಅವರು ತನಗೆ ಈ ಸಂಗತಿಗಳನ್ನು ಹೇಳಿದರೆಂದು ಶಿಷ್ಯರಿಗೆ ತಿಳಿಸಿದಳು.
JOH 20:19 ಅದೇ ಭಾನುವಾರದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿದ್ದ ಮನೆಯ ಬಾಗಿಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದು ಅವರಿಗೆ ಹೇಳಿದರು.
JOH 20:20 ಇದನ್ನು ಹೇಳಿದ ಮೇಲೆ ತಮ್ಮ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದರು. ಆಗ ಶಿಷ್ಯರು ಕರ್ತನನ್ನು ಕಂಡು ಸಂತೋಷಪಟ್ಟರು.
JOH 20:21 ಯೇಸು ತಿರುಗಿ ಅವರಿಗೆ, “ನಿಮಗೆ ಸಮಾಧಾನವಾಗಲಿ, ತಂದೆಯು ನನ್ನನ್ನು ಕಳುಹಿಸಿದಂತೆಯೇ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ,” ಎಂದರು.
JOH 20:22 ಯೇಸು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮರನ್ನು ಪಡೆದುಕೊಳ್ಳಿರಿ.
JOH 20:23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲಾಗುವುದು ಮತ್ತು ಯಾರ ಪಾಪಗಳನ್ನು ನೀವು ಉಳಿಸುತ್ತೀರೋ ಅವು ಅವರಿಗೆ ಉಳಿಸಲಾಗುವುದು,” ಎಂದು ಹೇಳಿದರು.
JOH 20:24 ಆದರೆ ಯೇಸು ಬಂದಾಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮನು ಎನಿಸಿಕೊಂಡ ತೋಮನು ಅವರ ಸಂಗಡ ಇರಲಿಲ್ಲ.
JOH 20:25 ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ಕಂಡಿದ್ದೇವೆ,” ಎಂದು ಹೇಳಿದರು. ಆದರೆ ಅವನು ಅವರಿಗೆ, “ನಾನು ಅವರ ಕೈಗಳಲ್ಲಿ ಮೊಳೆಗಳ ಗುರುತನ್ನು ಕಂಡು, ಅದರಲ್ಲಿ ನನ್ನ ಬೆರಳನ್ನು ಇಟ್ಟು ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದ ಹೊರತು ನಂಬುವುದೇ ಇಲ್ಲ,” ಎಂದು ಹೇಳಿದನು.
JOH 20:26 ಎಂಟು ದಿವಸಗಳಾದ ಮೇಲೆ ಯೇಸುವಿನ ಶಿಷ್ಯರು ಪುನಃ ಮನೆಯ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಿಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದರು.
JOH 20:27 ಆಮೇಲೆ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿ ಇಡು. ನನ್ನ ಕೈಗಳನ್ನು ನೋಡು, ನಿನ್ನ ಕೈಚಾಚಿ ನನ್ನ ಪಕ್ಕೆಯಲ್ಲಿ ಇಡು. ನಂಬದವನಾಗಿರಬೇಡ, ನಂಬುವವನಾಗಿರು,” ಎಂದರು.
JOH 20:28 ಆಗ ತೋಮನು, “ನನ್ನ ಕರ್ತ, ನನ್ನ ದೇವರೇ!” ಎಂದನು.
JOH 20:29 ಯೇಸು ಅವನಿಗೆ, “ನೀನು ನನ್ನನ್ನು ಕಂಡಿದ್ದರಿಂದ ನಂಬಿದ್ದೀಯಾ? ಕಾಣದೆ ನಂಬಿದವರು ಧನ್ಯರು,” ಎಂದರು.
JOH 20:30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ಶಿಷ್ಯರ ಮುಂದೆ ಮಾಡಿದರು. ಅವುಗಳು ಈ ಪುಸ್ತಕದಲ್ಲಿ ಬರೆದಿಲ್ಲ.
JOH 20:31 ಆದರೆ ಯೇಸುವೇ ದೇವಪುತ್ರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಅವರ ಹೆಸರಿನ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲಾಗಿದೆ.
JOH 21:1 ಇವುಗಳಾದ ಮೇಲೆ ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಶಿಷ್ಯರಿಗೆ ತಮ್ಮನ್ನು ಪುನಃ ತೋರಿಸಿಕೊಂಡರು. ಅವರು ಈ ರೀತಿಯಾಗಿ ಕಾಣಿಸಿಕೊಂಡರು:
JOH 21:2 ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಅವರ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು.
JOH 21:3 ಆಗ ಸೀಮೋನ ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದು ಹೇಳಲು ಅವರು ಅವನಿಗೆ, “ನಾವು ಸಹ ನಿನ್ನ ಸಂಗಡ ಬರುತ್ತೇವೆ,” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ.
JOH 21:4 ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರೇ ಯೇಸು ಎಂದು ಶಿಷ್ಯರಿಗೆ ತಿಳಿಯಲಿಲ್ಲ.
JOH 21:5 ಆಗ ಯೇಸು ಅವರಿಗೆ, “ಮಕ್ಕಳೇ, ನಿಮ್ಮ ಬಳಿಯಲ್ಲಿ ಮೀನುಗಳಿವೆಯೋ?” ಎಂದು ಕೇಳಲು, ಅವರು ಯೇಸುವಿಗೆ, “ಇಲ್ಲ,” ಎಂದು ಉತ್ತರಕೊಟ್ಟರು.
JOH 21:6 ಯೇಸು ಶಿಷ್ಯರಿಗೆ, “ದೋಣಿಯ ಬಲಗಡೆಯಲ್ಲಿ ಬಲೆ ಬೀಸಿರಿ; ನಿಮಗೆ ಮೀನು ಸಿಗುತ್ತವೆ,” ಎಂದರು. ಅವರು ಬಲೆ ಬೀಸಿದಾಗ ಮೀನುಗಳ ರಾಶಿ ಬಲೆಗೆ ಬಿದ್ದದರ ದೆಸೆಯಿಂದ ಅವರಿಗೆ ಎಳೆಯುವುದಕ್ಕೆ ಆಗದೆ ಹೋಯಿತು.
JOH 21:7 ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ,” ಎಂದನು. ಅದನ್ನು ಕೇಳಿ ಸೀಮೋನ ಪೇತ್ರನು ತಾನು ತೆಗೆದುಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು.
JOH 21:8 ಉಳಿದ ಶಿಷ್ಯರು ಮೀನುಗಳಿದ್ದ ಬಲೆಯನ್ನು ಎಳೆಯುತ್ತಾ ಆ ದೋಣಿಯಲ್ಲಿ ಬಂದರು. ಏಕೆಂದರೆ ಅವರು ದಡದಿಂದ ಹೆಚ್ಚು ದೂರವಿರಲಿಲ್ಲ. ಸುಮಾರು ತೊಂಬತ್ತು ಮೀಟರ್ ದೂರವಿತ್ತು.
JOH 21:9 ಅವರು ದಡವನ್ನು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿಯನ್ನೂ ಕಂಡರು.
JOH 21:10 ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ,” ಎಂದರು.
JOH 21:11 ಸೀಮೋನ ಪೇತ್ರನು ಹೋಗಿ ನೂರೈವತ್ತಮೂರು ದೊಡ್ಡ ಮೀನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ.
JOH 21:12 ಯೇಸು ಅವರಿಗೆ, “ಬಂದು ಉಪಹಾರ ಮಾಡಿರಿ,” ಎಂದರು; ಅವರು ಸ್ವಾಮಿಯವರೆಂದು ತಿಳಿದಿದ್ದರಿಂದ, “ನೀನು ಯಾರು?” ಎಂದು ಅವರನ್ನು ಕೇಳಲು ಶಿಷ್ಯರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ.
JOH 21:13 ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು. ಹಾಗೆಯೇ ಮೀನನ್ನೂ ಕೊಟ್ಟರು.
JOH 21:14 ಯೇಸು ಸತ್ತವರೊಳಗಿಂದ ಎದ್ದ ಮೇಲೆ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
JOH 21:15 ಅವರು ಉಪಹಾರ ಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ, “ಯೋಹಾನನ ಮಗ ಸೀಮೋನನೇ, ನೀನು ಇವರಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಯೇಸುವಿಗೆ, “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ,” ಎಂದನು. ಅದಕ್ಕೆ ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು,” ಎಂದು ಹೇಳಿದರು.
JOH 21:16 ಯೇಸು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಪೇತ್ರನು ಯೇಸುವಿಗೆ, “ಹೌದು ಕರ್ತನೇ, ನಾನು ನಿಮ್ಮ ಮೇಲೆ ಮಮತೆ ಇಟ್ಟಿದ್ದೇನೆಂದು ನೀವೇ ಬಲ್ಲಿರಿ,” ಎಂದನು. ಅದಕ್ಕೆ ಯೇಸು ಅವನಿಗೆ, “ನನ್ನ ಕುರಿಗಳನ್ನು ರಕ್ಷಿಸು,” ಎಂದು ಹೇಳಿದರು.
JOH 21:17 ಯೇಸು ಮೂರನೆಯ ಸಾರಿ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ಕೇಳಿದರು. ಯೇಸು ಮೂರನೆಯ ಸಾರಿ, “ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿಮಗೆ ಎಲ್ಲವೂ ತಿಳಿದಿದೆ. ನಾನು ನಿಮ್ಮ ಮೇಲೆ ಎಷ್ಟು ಮಮತೆ ಇಟ್ಟಿದ್ದೇನೆಂದು ನಿಮಗೆ ತಿಳಿದಿದೆ,” ಎಂದನು. ಆಗ ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು,” ಎಂದರು.
JOH 21:18 ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, “ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟ ಬಂದ ಕಡೆಗೆ ತಿರುಗಾಡುತ್ತಿದ್ದೆ. ಆದರೆ ನೀನು ವೃದ್ಧನಾದಾಗ ನಿನ್ನ ಕೈಗಳನ್ನು ಚಾಚುವೆ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು,” ಎಂದರು.
JOH 21:19 ಅವನು ಎಂಥ ಮರಣದಿಂದ ದೇವರನ್ನು ಮಹಿಮೆ ಪಡಿಸುವನು ಎಂಬುದನ್ನು ಸೂಚಿಸಿ ಯೇಸು ಇದನ್ನು ಹೇಳಿದರು. ಅವರು ಇದನ್ನು ಹೇಳಿ ಪೇತ್ರನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.
JOH 21:20 ಪೇತ್ರನು ತಿರುಗಿ ಕಂಡಾಗ ಯೇಸುವನ್ನು ಪ್ರೀತಿಸಿದಂಥ ಶಿಷ್ಯನು ಅವರ ಹಿಂದೆ ಬರುವುದನ್ನು ಕಂಡನು. ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದಂಥವನು ಇವನೇ.
JOH 21:21 ಇವನನ್ನು ಪೇತ್ರನು ಕಂಡು ಯೇಸುವಿಗೆ, “ಕರ್ತನೇ, ಇವನ ವಿಷಯವೇನು?” ಎಂದನು.
JOH 21:22 ಯೇಸು ಅವನಿಗೆ, “ನಾನು ಬರುವ ತನಕ ಅವನು ಉಳಿದಿರಬೇಕೆಂಬುದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾಲಿಸು,” ಎಂದರು.
JOH 21:23 ಆದ್ದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೂ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂಬುದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದರು.
JOH 21:24 ಇವುಗಳ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಅವನೇ, ಅವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.
JOH 21:25 ಇದಲ್ಲದೆ ಯೇಸು ಮಾಡಿದ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನು ಒಂದೊಂದಾಗಿ ಬರೆಯುವುದಾದರೆ, ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಸಾಕಾಗುವುದಿಲ್ಲ ಎಂದು ನಾನು ನೆನಸುತ್ತೇನೆ.
ACT 1:1 ಥೆಯೊಫಿಲನೇ, ನಾನು ನಿನಗೆ ನನ್ನ ಮೊದಲನೆಯ ಗ್ರಂಥದಲ್ಲಿ ಯೇಸು ಮಾಡುವುದಕ್ಕೂ ಬೋಧಿಸುವುದಕ್ಕೂ ಪ್ರಾರಂಭಿಸಿದ್ದೆಲ್ಲವನ್ನೂ ಕುರಿತು ನಿಮಗೆ ಬರೆದಿದ್ದೇನೆ.
ACT 1:2 ಅಂದರೆ, ಯೇಸು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮ ದೇವರ ಮುಖಾಂತರ ಆಜ್ಞಾಪಿಸಿದ ದಿನ ಮೊದಲುಗೊಂಡು ಸ್ವರ್ಗಕ್ಕೆ ಏರಿಹೋಗುವ ದಿನದವರೆಗೆ ಮಾಡಿದ್ದೆಲ್ಲವನ್ನೂ ಬರೆದಿದ್ದೇನೆ.
ACT 1:3 ಯೇಸು ಬಾಧೆಪಟ್ಟು ಸತ್ತ ನಂತರ, ಅಪೊಸ್ತಲರಿಗೆ ಪ್ರತ್ಯಕ್ಷರಾಗುತ್ತಾ ತಾವು ಜೀವಂತವಾಗಿರುವುದನ್ನು ಅನೇಕ ನಿಶ್ಚಿತ ರುಜುವಾತುಗಳಿಂದ ತೋರಿಸಿಕೊಟ್ಟರು ಮತ್ತು ನಲವತ್ತು ದಿನಗಳ ಅವಧಿಯಲ್ಲಿ ಯೇಸು ಅವರಿಗೆ ಕಾಣಿಸಿಕೊಂಡು ದೇವರ ರಾಜ್ಯವನ್ನು ಕುರಿತು ತಿಳಿಸಿದರು.
ACT 1:4 ಒಮ್ಮೆ ಯೇಸು ಶಿಷ್ಯರೊಂದಿಗೆ ಊಟಮಾಡುತ್ತಿದ್ದಾಗ ಶಿಷ್ಯರಿಗೆ, “ನೀವು ಯೆರೂಸಲೇಮನ್ನು ಬಿಟ್ಟು ಹೋಗಬೇಡಿರಿ, ನಾನು ನಿಮಗೆ ತಿಳಿಸಿದಂತೆ ನನ್ನ ತಂದೆ ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ.
ACT 1:5 ಏಕೆಂದರೆ ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದನು. ಆದರೆ ಇನ್ನು ಕೆಲವೇ ದಿನಗಳಲ್ಲಿ ಪವಿತ್ರಾತ್ಮ ದೇವರಿಂದ ನೀವು ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
ACT 1:6 ಶಿಷ್ಯರು ಯೇಸುವಿನ ಸಂಗಡ ಇದ್ದಾಗ, “ಸ್ವಾಮೀ, ಇಸ್ರಾಯೇಲರ ರಾಜ್ಯವನ್ನು ಈ ಕಾಲದಲ್ಲಿ ಪುನಃ ಸ್ಥಾಪಿಸುವಿಯೋ?” ಎಂದು ಪ್ರಶ್ನೆ ಮಾಡಿದರು.
ACT 1:7 ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ.
ACT 1:8 ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
ACT 1:9 ಇದನ್ನು ಹೇಳಿದ ತರುವಾಯ, ಯೇಸು ಅವರ ಕಣ್ಣೆದುರಿನಲ್ಲಿಯೇ ಸ್ವರ್ಗಕ್ಕೆ ಏರಿಹೋದರು. ಮೋಡವು ಯೇಸುವನ್ನು ಅವರ ಕಣ್ಣಿಗೆ ಮರೆಮಾಡಿತು.
ACT 1:10 ಯೇಸು ಮೇಲಕ್ಕೆ ಹೋಗುತ್ತಿರಲು ಶಿಷ್ಯರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರುವಾಗ, ಬಿಳಿವಸ್ತ್ರ ಧರಿಸಿದ್ದ ಇಬ್ಬರು ಪುರುಷರು ಅವರ ಪಕ್ಕದಲ್ಲಿ ನಿಂತುಕೊಂಡು,
ACT 1:11 “ಗಲಿಲಾಯದವರೇ, ಆಕಾಶವನ್ನೇ ನೋಡುತ್ತಾ ಇಲ್ಲಿ ಏಕೆ ನಿಂತಿರುವಿರಿ? ನಿಮ್ಮ ಬಳಿಯಿಂದ ಪರಲೋಕಕ್ಕೆ ಏರಿಹೋದ ಈ ಯೇಸುವು ಪರಲೋಕಕ್ಕೆ ಹೋಗುವುದನ್ನು ನೀವು ನೋಡಿದ ರೀತಿಯಲ್ಲಿಯೇ ಹಿಂದಿರುಗಿ ಬರುವರು,” ಎಂದು ಹೇಳಿದರು.
ACT 1:12 ಅನಂತರ ಅಪೊಸ್ತಲರು ಯೆರೂಸಲೇಮಿಗೆ ಸಮೀಪದಲ್ಲಿದ್ದ ಓಲಿವ್ ಗುಡ್ಡದಿಂದ ಇಳಿದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅದು ಸಬ್ಬತ್ ದಿನದಲ್ಲಿ ಪ್ರಯಾಣ ಮಾಡುವಷ್ಟು ದೂರದಲ್ಲಿತ್ತು.
ACT 1:13 ಅವರು ಹಿಂದಿರುಗಿದಾಗ, ತಾವು ವಾಸಿಸುತ್ತಿದ್ದ ಮಾಳಿಗೆ ಮೇಲಿನ ಕೋಣೆಯೊಳಗೆ ಹೋದರು. ಅವರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ; ಫಿಲಿಪ್ಪ, ತೋಮ; ಬಾರ್ತೊಲೊಮಾಯ ಮತ್ತಾಯ; ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಸೀಮೋನ ಮತ್ತು ಯಾಕೋಬನ ಮಗ ಯೂದ.
ACT 1:14 ಅಲ್ಲಿ ಕೆಲವು ಮಹಿಳೆಯರು, ಯೇಸುವಿನ ತಾಯಿ ಮರಿಯಳು, ಯೇಸುವಿನ ಸಹೋದರರು, ಇವರೆಲ್ಲರು ನಿತ್ಯವೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿ ಸೇರುತ್ತಿದ್ದರು.
ACT 1:15 ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಸೇರಿದ್ದರು. ಅವರ ನಡುವೆ ಪೇತ್ರನು ಎದ್ದು ನಿಂತು, ಹೀಗೆಂದನು:
ACT 1:16 “ಸಹೋದರ ಸಹೋದರಿಯರೇ, ಬಹಳ ದಿನಗಳ ಹಿಂದೆ ದಾವೀದನ ಮುಖಾಂತರ ಪವಿತ್ರಾತ್ಮರು ಮುಂತಿಳಿಸಿದ ದೇವರ ವಾಕ್ಯ ಯೂದನ ವಿಷಯವಾಗಿ ನೆರವೇರಬೇಕಾಗಿತ್ತು. ಯೂದನು ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಕನಾಗಿದ್ದನು.
ACT 1:17 ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದು ಈ ಸೇವೆಯಲ್ಲಿ ಪಾಲುಗಾರನಾಗಿದ್ದನು.”
ACT 1:18 ಯೂದನು, ದ್ರೋಹ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡನು; ಅಲ್ಲಿಯೇ ಅವನು ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತನು.
ACT 1:19 ಯೆರೂಸಲೇಮಿನಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ತಿಳಿಯಿತು, ಹೀಗೆ ಆ ಹೊಲವನ್ನು ಅವರು ತಮ್ಮ ಭಾಷೆಯಲ್ಲಿ “ಅಕೆಲ್ದಮಾ” ಎಂದು ಕರೆದರು. “ರಕ್ತದ ಹೊಲ” ಎಂದು ಅದರ ಅರ್ಥ.
ACT 1:20 ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ ‘ಅವನ ವಾಸಸ್ಥಾನವು ಹಾಳಾಗಲಿ, ಅದರಲ್ಲಿ ಯಾರೂ ವಾಸಿಸದಿರಲಿ,’ ಮತ್ತು, “ ‘ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ,’
ACT 1:21 ಆದ್ದರಿಂದ, ಕರ್ತ ಆಗಿರುವ ಯೇಸು ನಮ್ಮೊಂದಿಗೆ ಇದ್ದ ಕಾಲವೆಲ್ಲಾ ನಮ್ಮ ಜೊತೆಯಲ್ಲಿರುವ ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಎಲ್ಲಾ ಸೇವಾ ಸಂಚಾರದಲ್ಲಿಯೂ ನಮ್ಮೊಂದಿಗೆ ಇದ್ದವನಾಗಿರಬೇಕು,
ACT 1:22 ಅಂದರೆ, ಯೋಹಾನನಿಂದ ದೀಕ್ಷಾಸ್ನಾನ ಪಡೆದ ದಿನದಿಂದ, ಯೇಸು ಸ್ವರ್ಗಕ್ಕೆ ಏರಿಹೋದ ಕಾಲದವರೆಗೆ ನಮ್ಮ ಸಂಗಡ ಇದ್ದವನಾಗಿರಬೇಕು.” ಅವನು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಂದಿಗೆ ಸಾಕ್ಷಿಯಾಗಿರಬೇಕು.
ACT 1:23 ಆಗ ಅವರು ಇಬ್ಬರು ಪುರುಷರ ಹೆಸರುಗಳನ್ನು ಸೂಚಿಸಿದರು: ಬಾರ್ಸಬ ಎಂಬ ಹೆಸರಿನ ಯೋಸೇಫ, ಇವನನ್ನು ಯೂಸ್ತ ಎಂಬುದಾಗಿಯೂ ಕರೆಯುತ್ತಿದ್ದರು ಮತ್ತು ಇನ್ನೊಬ್ಬನು ಮತ್ತೀಯ ಎಂಬುವನು.
ACT 1:24 ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,
ACT 1:25 ಈ ಅಪೊಸ್ತಲರ ಸೇವೆಯನ್ನು ವಹಿಸಿಕೊಳ್ಳುವುದಕ್ಕಾಗಿ, ನೀವು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಂಡಿರುವಿರಿ ಎಂಬುದನ್ನು ನಮಗೆ ತೋರಿಸಿರಿ,” ಎಂದು ಪ್ರಾರ್ಥನೆ ಮಾಡಿದರು.
ACT 1:26 ಅನಂತರ ಅವರು ಚೀಟು ಹಾಕಲು, ಅದು ಮತ್ತೀಯನ ಪಾಲಿಗೆ ಬಂದಿತು; ಆದ್ದರಿಂದ ಅವನು ಹನ್ನೊಂದು ಜನ ಅಪೊಸ್ತಲರೊಂದಿಗೆ ಸೇರಿದನು.
ACT 2:1 ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು.
ACT 2:2 ಆಗ ಬೀಸುತ್ತಿರುವ ಬಿರುಗಾಳಿಯ ರಭಸವಾದ ಶಬ್ದವು ಫಕ್ಕನೆ ಪರಲೋಕದಿಂದ ಬಂದು ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
ACT 2:3 ಅಗ್ನಿ ಜ್ವಾಲೆಗಳು ಬೆಂಕಿಯ ನಾಲಿಗೆಗಳಂತೆ ವಿಂಗಡವಾಗಿ ಬಂದು ಪ್ರತಿಯೊಬ್ಬರ ಮೇಲೆ ಇಳಿಯುವುದನ್ನು ಅವರು ಕಂಡರು.
ACT 2:4 ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.
ACT 2:5 ಆಗ ಜಗತ್ತಿನ ಪ್ರತಿಯೊಂದು ದೇಶದಿಂದಲೂ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿದ್ದರು.
ACT 2:6 ಈ ಶಬ್ದ ಕೇಳಿದಾಗ, ಜನರ ಗುಂಪೊಂದು ಕೂಡಿಬಂದಿತು. ಬಂದವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿಯೇ ಆ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿ, ಆಶ್ಚರ್ಯಗೊಂಡರು.
ACT 2:7 ಅವರು ಅತ್ಯಾಶ್ಚರ್ಯವುಳ್ಳವರಾಗಿ, “ಇಲ್ಲಿ ಮಾತನಾಡುತ್ತಿರುವವರೆಲ್ಲರೂ ಗಲಿಲಾಯದವರಲ್ಲವೇ?
ACT 2:8 ನಾವೆಲ್ಲರೂ ನಮ್ಮ ನಮ್ಮ ಮಾತೃಭಾಷೆಗಳಲ್ಲಿಯೇ ಇವರು ಮಾತಾಡುತ್ತಿರುವುದನ್ನು ಕೇಳುತ್ತಿರುವುದು ಹೇಗೆ?
ACT 2:9 ಪಾರ್ಥಿಯರು, ಮೇದ್ಯರು ಹಾಗೂ ಏಲಾಮ್ಯರು, ಮೆಸೊಪೊಟೇಮಿಯ, ಯೂದಾಯ, ಕಪ್ಪದೋಕ್ಯ, ಪೊಂತ, ಏಷ್ಯಾ,
ACT 2:10 ಫ್ರುಗ್ಯ ಮತ್ತು ಪಂಫುಲ್ಯ, ಈಜಿಪ್ಟ್ ಹಾಗೂ ಕುರೇನೆದ ಹತ್ತಿರದ ಲಿಬ್ಯದ ಭಾಗಗಳ ನಿವಾಸಿಗಳು; ರೋಮ್ ಪಟ್ಟಣದಿಂದ ಬಂದ ಸಂದರ್ಶಕರು ಇಲ್ಲಿ ಬಂದಿದ್ದಾರೆ.
ACT 2:11 ಇವರಲ್ಲದೆ, ಯೆಹೂದ್ಯರು ಮತ್ತು ಯೆಹೂದಿ ವಿಶ್ವಾಸಕ್ಕೆ ಬಂದಿದ್ದವರೂ ಇಲ್ಲಿದ್ದಾರೆ. ಅವರೊಂದಿಗೆ ಕ್ರೇತದವರು ಹಾಗೂ ಅರಬೀಯರು ನಮ್ಮ ಭಾಷೆಗಳಲ್ಲಿಯೇ ದೇವರ ಮಹತ್ಕಾರ್ಯಗಳನ್ನು ಹೇಳುತ್ತಿರುವದನ್ನು ಕೇಳುತ್ತಿದ್ದೇವಲ್ಲಾ!” ಎಂದು ಹೇಳಿದರು.
ACT 2:12 ಅವರು ಆಶ್ಚರ್ಯದಿಂದಲೂ ಗಲಿಬಿಲಿಗೊಂಡವರಾಗಿಯೂ, “ಇದರ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಪ್ರಶ್ನೆಮಾಡಿಕೊಂಡರು.
ACT 2:13 ಆದರೆ, ಅವರಲ್ಲಿ ಕೆಲವರು, ಅವರ ಬಗ್ಗೆ ಹಾಸ್ಯಮಾಡುತ್ತಾ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದರು.
ACT 2:14 ಆಗ ಹನ್ನೊಂದು ಜನರೊಂದಿಗೆ ಪೇತ್ರನು ಎದ್ದು ನಿಂತುಕೊಂಡು, ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದೇನೆಂದರೆ: “ಯೆಹೂದ್ಯರೇ, ಯೆರೂಸಲೇಮಿನ ಸರ್ವನಿವಾಸಿಗಳೇ, ಇದರ ಬಗ್ಗೆ ನಾನು ವಿವರಿಸುತ್ತೇನೆ, ಕೇಳಿರಿ. ನಾನು ಹೇಳುವುದನ್ನು ಜಾಗರೂಕತೆಯಿಂದ ಆಲಿಸಿರಿ.
ACT 2:15 ನೀವು ಊಹಿಸಿದಂತೆ, ಈ ಜನರು ಕುಡಿದು ಮತ್ತರಾಗಿಲ್ಲ. ಈಗ ಸಮಯ ಬೆಳಿಗ್ಗೆ ಒಂಬತ್ತು ಗಂಟೆ!
ACT 2:16 ಇದು ಪ್ರವಾದಿ ಯೋವೇಲನ ಪ್ರವಾದನೆಯ ನೆರವೇರುವಿಕೆಯಾಗಿದೆ:
ACT 2:17 “ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು, ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು, ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು.
ACT 2:18 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.
ACT 2:19 ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
ACT 2:20 ಕರ್ತದೇವರ ಮಹಿಮೆಯುಳ್ಳ ಮಹಾದಿನವೂ ಬರುವುದಕ್ಕೆ ಮೊದಲು ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
ACT 2:21 ಆಗ ಕರ್ತದೇವರ ಹೆಸರನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ ಆಗುವುದು.’
ACT 2:22 “ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.
ACT 2:23 ದೇವರು ತಾವು ಮುಂಚಿತವಾಗಿ ನಿರ್ಣಯಿಸಿದ ಪ್ರಕಾರವೂ ತಾವು ಮೊದಲೇ ತಿಳಿದಿರುವಂತೆ ದೇವರು ಯೇಸುವನ್ನು ತಾವಾಗಿಯೇ ನಿಮಗೆ ಒಪ್ಪಿಸಿಕೊಟ್ಟರು. ನೀವಾದರೋ ದುಷ್ಟರ ಸಹಾಯದಿಂದ ಯೇಸುವನ್ನು ಶಿಲುಬೆಗೆ ಹಾಕಿ ಕೊಲೆಮಾಡಿದಿರಿ.
ACT 2:24 ಆದರೆ ದೇವರು ಯೇಸುವನ್ನು ಮರಣ ವೇದನೆಯಿಂದ ಬಿಡಿಸಿ ಜೀವಂತವಾಗಿ ಎಬ್ಬಿಸಿದರು. ಏಕೆಂದರೆ ಯೇಸುವನ್ನು ಹಿಡಿದಿಟ್ಟುಕೊಂಡಿರಲು ಮರಣಕ್ಕೆ ಸಾಧ್ಯವಾಗಲಿಲ್ಲ.
ACT 2:25 ದಾವೀದನು ಯೇಸುಸ್ವಾಮಿಯವರ ಬಗ್ಗೆ ಹೀಗೆ ಹೇಳಿದ್ದಾನೆ: “ ‘ನಾನು ಕರ್ತದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ನಾನು ಕದಲದಂತೆ ಕರ್ತದೇವರು ನನ್ನ ಬಲಗಡೆಯಲ್ಲಿದ್ದಾರೆ.
ACT 2:26 ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ನಿರೀಕ್ಷೆಯಿಂದ ನೆಲೆಯಾಗಿರುವುದು.
ACT 2:27 ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ, ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.
ACT 2:28 ನೀವು ನನಗೆ ಜೀವಮಾರ್ಗಗಳನ್ನು ತಿಳಿಯಪಡಿಸಿರುವಿರಿ; ನಿಮ್ಮ ಸನ್ನಿಧಿಯಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿರಿ.’
ACT 2:29 “ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.
ACT 2:30 ಆದರೆ ಪ್ರವಾದಿಯಾಗಿದ್ದ ದಾವೀದನ ಸಂತತಿಯವರಲ್ಲಿ ಒಬ್ಬರನ್ನು ಅವನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು, ಎಂದು ಆಣೆಯಿಟ್ಟು ದೇವರು ವಾಗ್ದಾನ ಮಾಡಿದ್ದನ್ನು ದಾವೀದನು ತಿಳಿದಿದ್ದನು.
ACT 2:31 ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’
ACT 2:32 ದೇವರು ಈ ಯೇಸುವನ್ನೇ ಮರಣದಿಂದ ಎಬ್ಬಿಸಿದರು. ಇದಕ್ಕೆ ನಾವೆಲ್ಲರೂ ಸಾಕ್ಷಿಗಳು.
ACT 2:33 ಆದ್ದರಿಂದ ಯೇಸು ದೇವರ ಬಲಗಡೆಗೆ ಏರಿಹೋಗಿ ವಾಗ್ದಾನಮಾಡಿದ ಪವಿತ್ರಾತ್ಮ ದೇವರನ್ನು ತಂದೆಯಿಂದ ಪಡೆದುಕೊಂಡರು. ಈಗ ನೀವು ಕಂಡು ಕೇಳಿರುವ ಆ ಪವಿತ್ರಾತ್ಮ ವರವನ್ನು ಯೇಸುವೇ ಇವರ ಮೇಲೆ ಸುರಿಸಿದ್ದಾರೆ.
ACT 2:34 ದಾವೀದನು ಪರಲೋಕಕ್ಕೆ ಏರಿಹೋಗಲಿಲ್ಲವಾದರೂ ಹೀಗೆ ಹೇಳಿದ್ದಾನೆ: “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
ACT 2:35 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.” ’
ACT 2:36 “ಆದ್ದರಿಂದ ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಕರ್ತ ಹಾಗೂ ಕ್ರಿಸ್ತ ಆಗಿಯೂ ಮಾಡಿದ್ದಾರೆ ಎಂಬುದು ಎಲ್ಲಾ ಇಸ್ರಾಯೇಲ್ ಮನೆತನದವರಿಗೆ ಸ್ಪಷ್ಟವಾಗಿ ತಿಳಿದಿರಲಿ,” ಎಂದನು.
ACT 2:37 ಜನರು ಇದನ್ನು ಕೇಳಿದಾಗ ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ, “ಸಹೋದರರೇ, ನಾವೇನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು.
ACT 2:38 ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. ಆಗ ನೀವು ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಿರಿ.
ACT 2:39 ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರ ಇರುವ ಎಲ್ಲರಿಗೂ ನಮ್ಮ ಕರ್ತದೇವರು ತಮ್ಮ ಕಡೆಗೆ ಕರೆಯುವ ಎಲ್ಲರಿಗಾಗಿಯೂ ಇರುವುದು,” ಎಂದನು.
ACT 2:40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, ಸಾಕ್ಷಿ ನುಡಿದು, “ಈ ಕೆಟ್ಟ ಸಂತತಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ,” ಎಂದು ಹೇಳಿದನು.
ACT 2:41 ಪೇತ್ರನ ಸಂದೇಶವನ್ನು ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿದರು.
ACT 2:42 ಅವರೆಲ್ಲರು ಅಪೊಸ್ತಲರ ಬೋಧನೆಯಲ್ಲಿ, ಅನ್ಯೋನ್ಯತೆಯಲ್ಲಿ, ರೊಟ್ಟಿ ಮುರಿಯುವುದರಲ್ಲಿ, ಪ್ರಾರ್ಥನೆ ಮಾಡುವುದರಲ್ಲಿ ತಮ್ಮನ್ನು ಸಮರ್ಪಿಸಿಕೊಂಡು,
ACT 2:43 ಪ್ರತಿಯೊಬ್ಬರೂ ಭಯಭಕ್ತಿಉಳ್ಳವರಾಗಿದ್ದರು. ಅಪೊಸ್ತಲರು ಅನೇಕ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದರು.
ACT 2:44 ವಿಶ್ವಾಸಿಗಳೆಲ್ಲರೂ ಒಟ್ಟಾಗಿದ್ದು, ತಮ್ಮಲ್ಲಿರುವ ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.
ACT 2:45 ಅವರು ಆಸ್ತಿಪಾಸ್ತಿಯನ್ನು ಮಾರಿ ಅವರವರ ಅವಶ್ಯಕತೆಗೆ ಅನುಸಾರವಾಗಿ ಎಲ್ಲರಿಗೂ ಹಂಚುತ್ತಿದ್ದರು.
ACT 2:46 ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.
ACT 2:47 ಅವರು ದೇವರಿಗೆ ಸ್ತೋತ್ರ ಮಾಡುತ್ತಾ, ಜನರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಕ್ಷಣೆ ಹೊಂದಿದವರನ್ನು ಕರ್ತ ಯೇಸುವು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಿದ್ದರು.
ACT 3:1 ಒಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಾರ್ಥನೆಯ ಸಮಯದಲ್ಲಿ ಪೇತ್ರ ಹಾಗೂ ಯೋಹಾನನು ದೇವಾಲಯಕ್ಕೆ ಹೋದರು.
ACT 3:2 ದೇವಾಲಯದೊಳಗೆ ಹೋಗುವವರಿಂದ ಭಿಕ್ಷೆ ಬೇಡಲು ಪ್ರತಿದಿನ “ಸುಂದರದ್ವಾರ” ಎಂದು ಕರೆಯಲಾಗುತ್ತಿದ್ದ ದೇವಾಲಯದ ದ್ವಾರದ ಬಳಿಯಲ್ಲಿ ಹುಟ್ಟುಕುಂಟನೊಬ್ಬನನ್ನು ಕೆಲವರು ಹೊತ್ತುಕೊಂಡು ಬಂದು ಬಿಡುತ್ತಿದ್ದರು.
ACT 3:3 ಅವನು ಪೇತ್ರ, ಯೋಹಾನರು ದೇವಾಲಯದೊಳಗೆ ಪ್ರವೇಶಿಸುತ್ತಿರುವುದನ್ನು ಕಂಡು, ಭಿಕ್ಷೆ ಬೇಡಿದನು.
ACT 3:4 ಪೇತ್ರ ಯೋಹಾನರಿಬ್ಬರೂ ಭಿಕ್ಷುಕನನ್ನು ನೇರವಾಗಿ ದೃಷ್ಟಿಸಿ ನೋಡಿದರು. ಪೇತ್ರನು ಭಿಕ್ಷುಕನಿಗೆ, “ನಮ್ಮನ್ನು ನೋಡು!” ಎಂದು ಹೇಳಿದನು.
ACT 3:5 ಅವರಿಂದ ಏನಾದರೂ ದೊರೆಯುವುದೆಂದು ನಿರೀಕ್ಷಿಸಿ ಅವನು ಅವರ ಕಡೆಗೆ ಲಕ್ಷ್ಯವಿಟ್ಟು ನೋಡಿದನು.
ACT 3:6 ಆಗ ಪೇತ್ರನು, “ಬೆಳ್ಳಿಬಂಗಾರ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಲ್ಲಿ, ಎದ್ದು ನಡೆ,” ಎಂದು ಹೇಳಿ,
ACT 3:7 ಬಲಗೈ ಹಿಡಿದೆಬ್ಬಿಸಿದಾಗ ಕೂಡಲೇ ಆ ಮನುಷ್ಯನ ಪಾದ ಮತ್ತು ಹರಡುಗಳು ಬಲಗೊಂಡವು.
ACT 3:8 ಅವನು ಜಿಗಿದು ನಿಂತು ನಡೆದಾಡಲು ಪ್ರಾರಂಭಿಸಿದನು. ಆಮೇಲೆ ನಡೆಯುತ್ತಾ, ಕುಣಿಯುತ್ತಾ, ದೇವರ ಸ್ತೋತ್ರ ಮಾಡುತ್ತಾ, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.
ACT 3:9 ಅವನು ನಡೆಯುವುದನ್ನೂ ದೇವರ ಸ್ತೋತ್ರ ಮಾಡುತ್ತಿರುವುದನ್ನೂ ಜನರೆಲ್ಲರೂ ಕಂಡರು.
ACT 3:10 ಅವನು ದೇವಾಲಯದ “ಸುಂದರದ್ವಾರದ” ಬಳಿಯಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಮನುಷ್ಯನೇ ಎಂದು ಗುರುತಿಸಿದರು. ಅವನಿಗೆ ಸಂಭವಿಸಿದ್ದರ ಬಗ್ಗೆ ಅವರು ವಿಸ್ಮಯಗೊಂಡು ಬೆರಗಾದರು.
ACT 3:11 ಭಿಕ್ಷುಕನು ಇನ್ನೂ ಪೇತ್ರ ಯೋಹಾನರೊಂದಿಗೆ ಇದ್ದಾಗ, ಆಶ್ಚರ್ಯಚಕಿತರಾದ ಜನರೆಲ್ಲರು ಅವರಿದ್ದ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಓಡಿ ಬಂದರು.
ACT 3:12 ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ?
ACT 3:13 ಅಬ್ರಹಾಮನ, ಇಸಾಕನ, ಯಾಕೋಬನ ದೇವರು, ನಮ್ಮ ಪಿತೃಗಳ ದೇವರು, ತಮ್ಮ ಸೇವಕರಾದ ಯೇಸುವನ್ನು ಮಹಿಮೆಪಡಿಸಿದ್ದಾರೆ. ಅವರನ್ನು ಬಿಡಿಸಬೇಕೆಂದು ಪಿಲಾತನು ನಿರ್ಣಯಿಸಿಕೊಂಡಿದ್ದರೂ ನೀವು ಯೇಸುವನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಟ್ಟು ಪಿಲಾತನ ಮುಂದೆ ಅವರನ್ನು ನಿರಾಕರಿಸಿದಿರಿ.
ACT 3:14 ಆದರೆ ನೀವು ಪವಿತ್ರರೂ ನೀತಿವಂತರೂ ಆಗಿರುವ ಯೇಸುವನ್ನು ನಿರಾಕರಿಸಿ ಆ ಕೊಲೆಗಾರನನ್ನು ನಿಮಗೆ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿರಿ.
ACT 3:15 ಜೀವದ ಒಡೆಯನನ್ನು ನೀವು ಕೊಂದಿರಿ. ದೇವರಾದರೋ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು. ಇದಕ್ಕೆ ನಾವೇ ಸಾಕ್ಷಿಗಳು.
ACT 3:16 ಯೇಸುವಿನ ನಾಮದಲ್ಲಿಟ್ಟ ವಿಶ್ವಾಸದಿಂದಲೇ ನೀವು ಕಂಡು ತಿಳಿದಿರುವ ಈ ಮನುಷ್ಯನು ಬಲಹೊಂದಿದ್ದಾನೆ. ಯೇಸುವಿನ ನಾಮವೂ ಅವರ ಮೂಲಕವಾಗಿ ಬರುವ ನಂಬಿಕೆಯೂ ಇವನಿಗೆ ಸಂಪೂರ್ಣ ಸ್ವಸ್ಥತೆಯನ್ನು ತಂದುಕೊಟ್ಟಿದೆ. ನೀವೆಲ್ಲರೂ ಇದನ್ನು ನೋಡಿದ್ದೀರಿ.
ACT 3:17 “ಈಗ, ಪ್ರಿಯರೇ, ನೀವು ಅಜ್ಞಾನದಿಂದ ಹಾಗೆ ವರ್ತಿಸಿದಿರೆಂದು ನನಗೆ ಗೊತ್ತು. ಹಾಗೆಯೇ ನಿಮ್ಮ ನಾಯಕರೂ ಮಾಡಿದರು.
ACT 3:18 ಆದರೆ ತಮ್ಮ ಕ್ರಿಸ್ತ ಯೇಸು ಹಿಂಸೆಗೊಳಗಾಗಬೇಕೆಂದು, ಎಲ್ಲಾ ಪ್ರವಾದಿಗಳ ಬಾಯಿಯ ಮುಖಾಂತರ ದೇವರು ಮುಂತಿಳಿಸಿದ್ದನ್ನು ಈ ರೀತಿ ನೆರವೇರಿಸಿದರು.
ACT 3:19 ಆದ್ದರಿಂದ ನಿಮ್ಮ ಪಾಪಗಳು ತೊಳೆದುಹೋಗುವಂತೆ ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಿರಿ. ಆಗ ನಿಮ್ಮ ಪಾಪಗಳು ಪರಿಹಾರವಾಗಿ ಕರ್ತ ದೇವರಿಂದ ವಿಶ್ರಾಂತಿಯ ಕಾಲಗಳು ನಿಮಗೆ ಒದಗಿ ಬರುವವು.
ACT 3:20 ದೇವರು ನಿಮಗೋಸ್ಕರ ನೇಮಕವಾಗಿರುವ ಕ್ರಿಸ್ತ ಯೇಸುವನ್ನು ಕಳುಹಿಸಿಕೊಡುವರು.
ACT 3:21 ದೇವರು ತಮ್ಮ ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲದ ಹಿಂದೆಯೇ ವಾಗ್ದಾನಮಾಡಿದ ಪ್ರಕಾರ, ಅವರು ಸಮಸ್ತವನ್ನು ಪುನಃಸ್ಥಾಪಿಸಿದರು. ಆ ಕಾಲ ಬರುವವರೆಗೆ ಕ್ರಿಸ್ತ ಯೇಸು ಪರಲೋಕದಲ್ಲಿಯೇ ಇರುವರು.
ACT 3:22 ಮೋಶೆಯು ಹೇಳಿದ್ದೇನೆಂದರೆ: ‘ನಿಮ್ಮ ಕರ್ತದೇವರು ನಿಮ್ಮ ಸ್ವಂತ ಸಹೋದರರೊಳಗಿಂದ ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗಾಗಿ ಎಬ್ಬಿಸುವರು. ಅವರು ನಿಮಗೆ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗಿರಬೇಕು.
ACT 3:23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ತನ್ನ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.’
ACT 3:24 “ಸಮುಯೇಲನು ಮೊದಲುಗೊಂಡು, ಮಾತನಾಡಿದ ಎಲ್ಲಾ ಪ್ರವಾದಿಗಳು ಕ್ರಮವಾಗಿ ಈ ದಿನಗಳನ್ನು ಕುರಿತು ಮುಂತಿಳಿಸಿದ್ದಾರೆ.
ACT 3:25 ನೀವು ಪ್ರವಾದಿಗಳ ಮತ್ತು ನಿಮ್ಮ ಪಿತೃಗಳೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಯ ಮಕ್ಕಳಾಗಿದ್ದೀರಿ. ಏಕೆಂದರೆ ದೇವರು, ‘ನಿನ್ನ ಸಂತತಿಯ ಮುಖಾಂತರವಾಗಿ ಭೂಲೋಕದ ಎಲ್ಲಾ ಕುಟುಂಬಗಳಿಗೆ ಆಶೀರ್ವಾದವುಂಟಾಗುವುದು,’ ಎಂದು ಅಬ್ರಹಾಮನಿಗೆ ಹೇಳಿದರು.
ACT 3:26 ದೇವರು ತಮ್ಮ ಸೇವಕರಾದ ಯೇಸುವನ್ನು ಜೀವಂತವಾಗಿ ಎಬ್ಬಿಸಿದಾಗ, ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ದುರ್ಮಾರ್ಗಗಳಿಂದ ತಿರುಗಿಸಿ ನಿಮ್ಮನ್ನು ಮೊಟ್ಟಮೊದಲು ಆಶೀರ್ವದಿಸಲು ಯೇಸುವನ್ನು ನಿಮ್ಮ ಬಳಿಗೆ ಕಳುಹಿಸಿದರು.”
ACT 4:1 ಪೇತ್ರ ಮತ್ತು ಯೋಹಾನರು ಜನರೊಂದಿಗೆ ಮಾತನಾಡುತ್ತಿದ್ದಾಗಲೇ, ಯಾಜಕರೂ ದೇವಾಲಯದ ದಳಪತಿಯೂ ಸದ್ದುಕಾಯರೂ ಅವರ ಬಳಿಗೆ ಬಂದರು.
ACT 4:2 ಯೇಸುವಿನಲ್ಲಿ ಸತ್ತವರಿಗೆ ಪುನರುತ್ಥಾನ ಉಂಟು ಎಂದು ಅಪೊಸ್ತಲರು ಜನರಿಗೆ ಬೋಧಿಸುತ್ತಿದ್ದರಿಂದ ಅವರು ಬಹಳ ಬೇಸರಗೊಂಡರು.
ACT 4:3 ಅವರು ಪೇತ್ರ ಯೋಹಾನರನ್ನು ಬಂಧಿಸಿ, ಸಂಜೆಯಾದ್ದರಿಂದ ಮರುದಿನದವರೆಗೆ ಅವರನ್ನು ಸೆರೆಮನೆಯಲ್ಲಿ ಹಾಕಿದರು.
ACT 4:4 ಆದರೆ ಸಂದೇಶವನ್ನು ಕೇಳಿದವರಲ್ಲಿ ಅನೇಕರು ನಂಬಿದರು. ಅವರ ಸಂಖ್ಯೆ ಸುಮಾರು ಐದು ಸಾವಿರಕ್ಕೇರಿತು.
ACT 4:5 ಮರುದಿನ ಅಧಿಕಾರಿಗಳು, ಹಿರಿಯರು, ನಿಯಮ ಬೋಧಕರು ಯೆರೂಸಲೇಮಿನಲ್ಲಿ ಸಭೆ ಸೇರಿದರು.
ACT 4:6 ಮಹಾಯಾಜಕ ಅನ್ನನೂ ಹಾಗೂ ಮಹಾಯಾಜಕನ ಕುಟುಂಬದವರು ಕಾಯಫ, ಯೋಹಾನ ಮತ್ತು ಅಲೆಕ್ಸಾಂದ್ರ ಅಲ್ಲಿದ್ದರು.
ACT 4:7 ಅವರು ಪೇತ್ರ ಯೋಹಾನರನ್ನು ತಮ್ಮೆದುರಿನಲ್ಲಿ ನಿಲ್ಲಿಸಿ ಅವರಿಗೆ, “ಯಾವ ಶಕ್ತಿಯಿಂದ ಇಲ್ಲವೆ, ಯಾವ ಹೆಸರಿನಿಂದ ನೀವಿದನ್ನು ಮಾಡಿದಿರಿ?” ಎಂದು ಪ್ರಶ್ನಿಸಿದರು.
ACT 4:8 ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ, “ಜನರ ಅಧಿಕಾರಿಗಳೇ, ಜನರ ಹಿರಿಯರೇ!
ACT 4:9 ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದದ್ದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ.
ACT 4:10 ನಿಮಗೂ ಎಲ್ಲಾ ಇಸ್ರಾಯೇಲ್ ಜನರಿಗೂ ಇದು ತಿಳಿದಿರಲಿ: ನೀವು ಯೇಸುವನ್ನು ಶಿಲುಬೆಗೆ ಹಾಕಿದಿರಿ. ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಿಂದಲೇ ಈ ಮನುಷ್ಯನು ಪೂರ್ಣ ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುವನು.
ACT 4:11 ಪವಿತ್ರ ವೇದದಲ್ಲಿ, “ ‘ಮನೆ ಕಟ್ಟುವವರಾದ ನೀವು ತಿರಸ್ಕರಿಸಿದ ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಬರೆದಿರುವುದು ಈ ಯೇಸುವಿನ ಬಗ್ಗೆಯೇ.
ACT 4:12 ಯೇಸು ಅಲ್ಲದೆ ಬೇರೆ ಯಾರಿಂದಲೂ ರಕ್ಷಣೆಯು ಇಲ್ಲ, ಏಕೆಂದರೆ ಆಕಾಶದ ಕೆಳಗೆ ಮನುಷ್ಯರೊಳಗೆ ಆ ಹೆಸರಲ್ಲದೇ ಬೇರೆ ಯಾವ ಹೆಸರಿನಿಂದಲೂ ರಕ್ಷಣೆಯಾಗುವುದಿಲ್ಲ,” ಎಂದನು.
ACT 4:13 ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.
ACT 4:14 ಆದರೆ ಗುಣಹೊಂದಿದ ಮನುಷ್ಯನು ಅವರೊಂದಿಗೆ ನಿಂತುಕೊಂಡಿದ್ದನ್ನು ಅವರು ಕಂಡಾಗ ಇವರಿಗೆ ವಿರೋಧವಾಗಿ, ಏನನ್ನೂ ಹೇಳಲು ಸಾಧ್ಯವಾಗಲಿಲ್ಲ.
ACT 4:15 ಆದ್ದರಿಂದ ಇವರನ್ನು ನ್ಯಾಯಸಭೆಯಿಂದ ಹೊರಗೆ ಹೋಗುವಂತೆ ಆಜ್ಞಾಪಿಸಿ ಒಬ್ಬರೊಂದಿಗೊಬ್ಬರು ಚರ್ಚೆಮಾಡಿ,
ACT 4:16 “ಈ ಮನುಷ್ಯರನ್ನು ನಾವು ಏನು ಮಾಡೋಣ? ಯೆರೂಸಲೇಮಿನ ಪ್ರತಿಯೊಬ್ಬ ನಿವಾಸಿಯೂ ಇವರು ಗಮನಾರ್ಹವಾದ ಅದ್ಭುತವನ್ನು ಮಾಡಿದ್ದಾರೆಂಬುದನ್ನು ತಿಳಿದಿದ್ದಾರೆ. ಇದನ್ನು ನಾವೂ ಅಲ್ಲಗಳೆಯುವುದಕ್ಕಾಗುವುದಿಲ್ಲ.
ACT 4:17 ಆದರೆ ಈ ವಿಷಯ ಜನರಲ್ಲಿ ಹೆಚ್ಚು ಪ್ರಸಾರವಾಗದಂತೆ ನಿಲ್ಲಿಸಲು, ಇವರು ಈ ನಾಮದಲ್ಲಿ ಇನ್ನೆಂದೂ ಯಾರೊಂದಿಗೂ ಮಾತನಾಡಬಾರದೆಂದು ಇವರಿಗೆ ಎಚ್ಚರಿಕೆ ಕೊಡೋಣ,” ಎಂದು ಯೋಚಿಸಿದರು.
ACT 4:18 ಅವರು ಶಿಷ್ಯರನ್ನು ಸಭೆಯಲ್ಲಿ ಕರೆದು, “ಯೇಸುವಿನ ಹೆಸರಿನಲ್ಲಿ ಮಾತನಾಡಲೂಬಾರದು, ಬೋಧಿಸಲೂಬಾರದು,” ಎಂದು ಆಜ್ಞಾಪಿಸಿದರು.
ACT 4:19 ಆದರೆ ಪೇತ್ರ ಮತ್ತು ಯೋಹಾನರು, “ದೇವರಿಗಿಂತ ಹೆಚ್ಚಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ಸರಿಯಾದದ್ದೋ? ಎಂಬುದರ ಬಗ್ಗೆ ನೀವೇ ತೀರ್ಮಾನ ಮಾಡಿಕೊಳ್ಳಿರಿ.
ACT 4:20 ಏಕೆಂದರೆ ಕಂಡಿದ್ದನ್ನೂ ಕೇಳಿದ್ದನ್ನೂ ಕುರಿತು ನಾವು ಮಾತನಾಡದೆ ಇರಲಾರೆವು,” ಎಂದು ಉತ್ತರಕೊಟ್ಟರು.
ACT 4:21 ಅನಂತರ ನ್ಯಾಯಸಭೆಯವರು ಅವರನ್ನು ಬೆದರಿಸಿ ಕಳುಹಿಸಿಬಿಟ್ಟರು. ಅಲ್ಲಿ ಸಂಭವಿಸಿದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಾ ಇದ್ದುದರಿಂದ, ಪೇತ್ರ ಯೋಹಾನರನ್ನು ಹೇಗೆ ದಂಡಿಸಬೇಕೆಂಬುದನ್ನು ಅವರು ನಿರ್ಣಯಿಸಲಾರದೆ ಹೋದರು.
ACT 4:22 ಅದ್ಭುತ ರೀತಿಯಲ್ಲಿ ಸ್ವಸ್ಥತೆ ಹೊಂದಿದ ಆ ಮನುಷ್ಯನು ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷ ವಯಸ್ಸಿನವನಾಗಿದ್ದನು.
ACT 4:23 ಬಿಡುಗಡೆ ಹೊಂದಿದ, ಪೇತ್ರ ಮತ್ತು ಯೋಹಾನರು ವಿಶ್ವಾಸಿಗಳ ಬಳಿಗೆ ಹೋಗಿ, ತಮಗೆ ಮುಖ್ಯಯಾಜಕರೂ ಹಿರಿಯರೂ ಹೇಳಿದ್ದೆಲ್ಲವನ್ನೂ ವರದಿಮಾಡಿದರು.
ACT 4:24 ಇದನ್ನು ಕೇಳಿ ಅವರೆಲ್ಲರೂ ಒಟ್ಟಾಗಿ ಸ್ವರವೆತ್ತಿ ದೇವರಿಗೆ ಪ್ರಾರ್ಥನೆ ಮಾಡಿದರು: “ಕರ್ತದೇವರೇ, ನೀನು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿರುವಿರಿ.
ACT 4:25 ಪವಿತ್ರಾತ್ಮ ದೇವರ ಮೂಲಕ ನಿಮ್ಮ ಸೇವಕನೂ ನಮ್ಮ ಪಿತೃವೂ ಆದ ದಾವೀದನ ಮುಖಾಂತರ ನೀವು ಮಾತನಾಡಿ: “ ‘ರಾಷ್ಟ್ರಗಳು ರೋಷಗೊಳ್ಳುವುದೇಕೆ? ಜನರು ವ್ಯರ್ಥವಾಗಿ ಕಲ್ಪಿಸಿಕೊಂಡದ್ದೇಕೆ?
ACT 4:26 ಕರ್ತ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ ಭೂಲೋಕದ ಅರಸರೂ ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.’
ACT 4:27 ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕ ಯೇಸುವಿನ ವಿರೋಧವಾಗಿ ದುರಾಲೋಚನೆ ಮಾಡಲು ಹೆರೋದನು ಮತ್ತು ಪೊಂತ್ಯ ಪಿಲಾತನು, ಯೆಹೂದ್ಯರಲ್ಲದವರೊಂದಿಗೂ ಇಸ್ರಾಯೇಲರೊಂದಿಗೂ ಈ ಪಟ್ಟಣದಲ್ಲೇ ಸೇರಿ ಬಂದಿದ್ದರು.
ACT 4:28 ನಿಮ್ಮ ಶಕ್ತಿಯೂ ಚಿತ್ತವೂ ಮುಂಚಿತವಾಗಿಯೇ ಏನಾಗಬೇಕೆಂದು ನಿರ್ಣಯಿಸಿದ್ದನ್ನೇ ಅವರು ಮಾಡಿದರು.
ACT 4:29 ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ.
ACT 4:30 ನಿಮ್ಮ ಪವಿತ್ರ ಸೇವಕ ಯೇಸುವಿನ ನಾಮದ ಮೂಲಕವಾಗಿ ಗುಣಪಡಿಸಲು, ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಾಡಲು ದೇವರೇ, ನಿಮ್ಮ ಹಸ್ತವನ್ನು ಚಾಚಿರಿ.”
ACT 4:31 ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.
ACT 4:32 ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು. ಯಾವನೂ ತನ್ನ ಆಸ್ತಿಯನ್ನು ತನ್ನದೇ ಎಂದು ಹಕ್ಕು ಸಾಧಿಸಲಿಲ್ಲ. ಆದರೆ ಅವರೆಲ್ಲರೂ ತಮಗಿದ್ದ ಎಲ್ಲವನ್ನು ಹಂಚಿಕೊಂಡರು.
ACT 4:33 ಮಹಾಶಕ್ತಿಯಿಂದ ಅಪೊಸ್ತಲರು ಕರ್ತ ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಕೊಟ್ಟರು. ಅವರೆಲ್ಲರ ಮೇಲೆ ದೇವರ ಮಹಾಕೃಪೆಯಿತ್ತು.
ACT 4:34 ಅವರಲ್ಲಿ ಕೊರತೆಯಿದ್ದವರು ಇರಲಿಲ್ಲ. ಏಕೆಂದರೆ ಹೊಲಗದ್ದೆಯಿದ್ದವರೂ ಮನೆಗಳಿದ್ದವರೆಲ್ಲರೂ ಅವುಗಳನ್ನು ಮಾರಿ ಹಣವನ್ನು ತಂದು,
ACT 4:35 ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು. ಅಪೊಸ್ತಲರು ಅದನ್ನು ಅಗತ್ಯವಿದ್ದವರಿಗೆ ತಕ್ಕಂತೆ ಹಂಚುತ್ತಿದ್ದರು.
ACT 4:36 ಸೈಪ್ರಸ್ ಎಂಬಲ್ಲಿ ಹುಟ್ಟಿದ ಒಬ್ಬ ಲೇವಿಯನು ಇದ್ದನು, ಅವನ ಹೆಸರು ಯೋಸೇಫ, ಅಪೊಸ್ತಲರು ಅವನನ್ನು “ಬಾರ್ನಬ” ಎಂದು ಕರೆದರು. ಬಾರ್ನಬ ಅಂದರೆ “ಆದರಣೆಯ ಪುತ್ರನು” ಎಂದು ಅರ್ಥ.
ACT 4:37 ಅವನು ತನ್ನ ಸ್ವಂತ ಹೊಲವನ್ನು ಮಾರಿ, ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.
ACT 5:1 ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಆಸ್ತಿಯ ಒಂದು ಭಾಗವನ್ನು ಮಾರಿದನು.
ACT 5:2 ತನ್ನ ಹೆಂಡತಿಯ ಪೂರ್ಣ ತಿಳುವಳಿಕೆಯಿಂದ, ಬಂದ ಹಣದಲ್ಲಿ ಒಂದು ಭಾಗವನ್ನು ತನಗಾಗಿ ಇಟ್ಟುಕೊಂಡು, ಉಳಿದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟನು.
ACT 5:3 ಆದರೆ ಪೇತ್ರನು, “ಅನನೀಯಾ, ಪವಿತ್ರಾತ್ಮ ದೇವರಿಗೆ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿದ್ದು ಏಕೆ? ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಇಟ್ಟುಕೊಂಡದ್ದೇಕೆ?
ACT 5:4 ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ,” ಎಂದು ನುಡಿದನು.
ACT 5:5 ಇದನ್ನು ಅನನೀಯನು ಕೇಳಿಸಿಕೊಂಡಾಗ, ಕೆಳಗೆ ಬಿದ್ದು ಸತ್ತುಹೋದನು. ನಡೆದ ಸಂಗತಿಯನ್ನು ಕೇಳಿದವರೆಲ್ಲರಿಗೂ ಮಹಾ ಭಯವು ಉಂಟಾಯಿತು.
ACT 5:6 ಆಗ ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ, ಹೊತ್ತುಕೊಂಡು ಹೋಗಿ ಹೂಣಿಟ್ಟರು.
ACT 5:7 ಏನು ಸಂಭವಿಸಿತೆಂಬುದನ್ನು ತಿಳಿಯದೆ, ಸುಮಾರು ಮೂರು ತಾಸುಗಳ ನಂತರ ಅವನ ಹೆಂಡತಿ ಒಳಗೆ ಪ್ರವೇಶಿಸಿದಳು.
ACT 5:8 ಆಗ ಪೇತ್ರನು, “ನನಗೆ ಹೇಳು ನೀನು ಮತ್ತು ನಿನ್ನ ಗಂಡ ಅನನೀಯನು ಆಸ್ತಿಯನ್ನು ಮಾರಿದ್ದರಿಂದ ಬಂದ ಹಣ ಇಷ್ಟೆಯೋ?” ಎಂದು ಆಕೆಯನ್ನು ಕೇಳಲು, “ಹೌದು, ಅಷ್ಟೇ ಕ್ರಯ ಬಂದಿತು,” ಎಂದಳು.
ACT 5:9 “ನೀವಿಬ್ಬರೂ ಕರ್ತದೇವರ ಆತ್ಮವನ್ನು ಪರೀಕ್ಷಿಸಲು ಒಪ್ಪಿಕೊಂಡದ್ದೇಕೆ? ಇಗೋ! ನಿನ್ನ ಗಂಡನ ಶವವನ್ನು ಹೂಣಿಟ್ಟು ಬಂದವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದು ಆಕೆಗೆ ಪೇತ್ರನು ಹೇಳಿದನು.
ACT 5:10 ಆ ಕ್ಷಣದಲ್ಲಿಯೇ ಆಕೆ ಅವನ ಪಾದಗಳ ಬಳಿಯಲ್ಲಿ ಬಿದ್ದು ಸತ್ತುಹೋದಳು. ಆಗ ಯುವಕರು ಒಳಗೆ ಬಂದು ಆಕೆ ಸತ್ತು ಹೋಗಿರುವುದನ್ನು ಕಂಡು, ಆಕೆಯ ಶವವನ್ನು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿಯೇ ಸಮಾಧಿಮಾಡಿದರು.
ACT 5:11 ಇಡೀ ಸಭೆಗೂ ಈ ಘಟನೆಗಳ ಬಗ್ಗೆ ಕೇಳಿದವರಿಗೂ ಮಹಾ ಭಯವು ಉಂಟಾಯಿತು.
ACT 5:12 ಜನರ ಮಧ್ಯದಲ್ಲಿ ಅಪೊಸ್ತಲರಿಂದ ಅನೇಕ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ನಡೆದವು. ಅವರೆಲ್ಲರೂ ಒಂದೇ ಮನಸ್ಸುಳ್ಳವರಾಗಿ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಸೇರುತ್ತಿದ್ದರು.
ACT 5:13 ಅವರೆಲ್ಲರೂ ಜನರಿಂದ ಬಹಳ ಗೌರವಕ್ಕೆ ಪಾತ್ರರಾಗಿದ್ದರೂ ಬೇರೆಯವರು ಅವರ ಜೊತೆ ಸೇರಲು ಧೈರ್ಯಗೊಳ್ಳಲಿಲ್ಲ.
ACT 5:14 ಆದರೂ ಹೆಚ್ಚು ಜನ ಪುರುಷರೂ ಸ್ತ್ರೀಯರೂ ಕರ್ತ ದೇವರಲ್ಲಿ ವಿಶ್ವಾಸವನ್ನಿಟ್ಟು ಅವರ ಜೊತೆ ಸೇರಿಕೊಂಡರು. ಅವರು ವಿಶ್ವಾಸಿಗಳ ಸಂಖ್ಯೆಯಲ್ಲಿ ಸೇರಿದರು.
ACT 5:15 ಇದರ ಪರಿಣಾಮವಾಗಿ, ಪೇತ್ರನು ಬೀದಿಗಳಲ್ಲಿ ಹಾದುಹೋಗುತ್ತಿದ್ದಾಗ ಅವನ ನೆರಳು ಕೆಲವರ ಮೇಲಾದರೂ ಬೀಳಲೆಂದು ಜನರು ತಮ್ಮಲ್ಲಿ ಅಸ್ವಸ್ಥತೆಯಿದ್ದವರನ್ನು ಹಾಸಿಗೆ ಮತ್ತು ಡೋಲಿಗಳ ಸಮೇತ ತಂದು ಬೀದಿಗಳಲ್ಲಿ ಮಲಗಿಸುತ್ತಿದ್ದರು.
ACT 5:16 ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳಿಂದ ಜನರ ಗುಂಪುಗಳು ತಮ್ಮಲ್ಲಿ ಅಸ್ವಸ್ಥರಾದವರನ್ನೂ ಅಶುದ್ಧಾತ್ಮ ಪೀಡಿತರನ್ನೂ ಕರೆದುಕೊಂಡು ಬರುತ್ತಿದ್ದರು. ಬಂದವರೆಲ್ಲರೂ ಸ್ವಸ್ಥರಾಗುತ್ತಿದ್ದರು.
ACT 5:17 ಹೀಗಿರಲು ಮಹಾಯಾಜಕನೂ ಅವನ ಬಳಿಯಲ್ಲಿದ್ದ ಸದ್ದುಕಾಯರೆಲ್ಲರೂ ಬಹಳ ಅಸೂಯೆಪಟ್ಟರು.
ACT 5:18 ಅವರು ಅಪೊಸ್ತಲರನ್ನು ಬಂಧಿಸಿ ಸಾರ್ವಜನಿಕ ಸೆರೆಮನೆಯಲ್ಲಿ ಹಾಕಿಸಿದರು.
ACT 5:19 ಆದರೆ ರಾತ್ರಿಯಲ್ಲಿ ಕರ್ತದೇವರ ದೂತನೊಬ್ಬನು ಸೆರೆಮೆನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಗೆ ನಡೆಸಿಕೊಂಡು ಬಂದು,
ACT 5:20 “ಹೋಗಿರಿ, ದೇವಾಲಯದ ಅಂಗಳದಲ್ಲಿ ನಿಂತುಕೊಂಡು, ಈ ಜೀವವಾಕ್ಯಗಳನ್ನೆಲ್ಲಾ ಜನರಿಗೆ ಬೋಧಿಸಿರಿ,” ಎಂದು ಹೇಳಿದನು.
ACT 5:21 ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು. ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು.
ACT 5:22 ಆದರೆ ಅಧಿಕಾರಿಗಳು ಸೆರೆಮನೆಗೆ ಬಂದಾಗ, ಅಪೊಸ್ತಲರು ಸೆರೆಮನೆಯಲ್ಲಿ ಇರಲಿಲ್ಲ. ಇವರು ಹಿಂತಿರುಗಿ ಹೋಗಿ,
ACT 5:23 “ಸೆರೆಮನೆಯ ಬಾಗಿಲುಗಳು ಭದ್ರಪಡಿಸಿರುವುದನ್ನೂ ದ್ವಾರಗಳ ಬಳಿ ಕಾವಲುಗಾರರು ನಿಂತಿರುವುದನ್ನೂ ಕಂಡೆವು. ಆದರೆ ದ್ವಾರಗಳನ್ನು ನಾವು ತೆರೆದಾಗ ಒಳಗೆ ಯಾರೂ ಇರಲಿಲ್ಲ,” ಎಂದು ವರದಿಮಾಡಿದರು.
ACT 5:24 ಈ ವರದಿಯನ್ನು ಕೇಳಿದಾಗ, ದೇವಾಲಯದ ಕಾವಲುಗಾರರ ದಳಪತಿಯೂ ಮುಖ್ಯಯಾಜಕರೂ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು.
ACT 5:25 ಆಗ ಯಾರೋ ಒಬ್ಬನು ಬಂದು, “ನೋಡಿರಿ! ನೀವು ಸೆರೆಮನೆಯಲ್ಲಿ ಬಂಧಿಸಿಟ್ಟಿದ್ದ ಆ ಪುರುಷರು ದೇವಾಲಯದ ಅಂಗಳದಲ್ಲಿ ನಿಂತುಕೊಂಡು ಜನರಿಗೆ ಬೋಧಿಸುತ್ತಿದ್ದಾರೆ,” ಎಂದು ವರದಿ ಮಾಡಿದನು.
ACT 5:26 ಆಗ ದಳಪತಿಯು ತನ್ನ ಅಧಿಕಾರಿಗಳೊಂದಿಗೆ ಹೋಗಿ ಅಪೊಸ್ತಲರನ್ನು ಕರೆದುಕೊಂಡು ಬಂದನು. ಜನರು ತಮಗೆ ಕಲ್ಲೆಸೆದಾರೆಂಬ ಭಯ ಅವರಿಗಿದ್ದುದರಿಂದ ಅಪೊಸ್ತಲರನ್ನು ಬಲವಂತಮಾಡದೆ ಕರೆದುಕೊಂಡು ಬಂದನು.
ACT 5:27 ಅಪೊಸ್ತಲರನ್ನು ಕರೆತಂದು, ಮಹಾಯಾಜಕನು ಪ್ರಶ್ನಿಸಲೆಂದು ಅವರನ್ನು ನ್ಯಾಯಸಭೆಯ ಎದುರಿನಲ್ಲಿ ನಿಲ್ಲಿಸಿದರು.
ACT 5:28 ಅವನು, “ಈ ಹೆಸರಿನಲ್ಲಿ ಉಪದೇಶ ಮಾಡಬಾರದೆಂದು ನಾವು ನಿಮಗೆ ಕಟ್ಟುನಿಟ್ಟಾಗಿ ಅಪ್ಪಣೆಕೊಟ್ಟೆವು. ಇಗೋ ನೀವಾದರೋ ನಿಮ್ಮ ಬೋಧನೆಯಿಂದ ಇಡೀ ಯೆರೂಸಲೇಮನ್ನು ತುಂಬಿಸಿರುವಿರಿ. ಅಲ್ಲದೆ ಈ ಮನುಷ್ಯನನ್ನು ಕೊಂದು ರಕ್ತ ಸುರಿಸಿದ ಅಪರಾಧಕ್ಕೆ ನಮ್ಮನ್ನು ನೀವು ಹೊಣೆಮಾಡಲು ಉದ್ದೇಶಿಸಿದ್ದೀರಿ,” ಎಂದು ಹೇಳಿದನು.
ACT 5:29 ಪೇತ್ರ ಮತ್ತು ಇತರ ಅಪೊಸ್ತಲರು ಉತ್ತರವಾಗಿ, “ನಾವು ಮನುಷ್ಯರಿಗೆ ವಿಧೇಯರಾಗಿರುವುದಕ್ಕಿಂತ ದೇವರಿಗೆ ವಿಧೇಯರಾಗಿರಬೇಕಲ್ಲ!
ACT 5:30 ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.
ACT 5:31 ಯೇಸು ಇಸ್ರಾಯೇಲಿಗೆ ಪಶ್ಚಾತ್ತಾಪವನ್ನೂ ಪಾಪಗಳ ಕ್ಷಮಾಪಣೆಯನ್ನೂ ಕೊಡಲು ಸಾಧ್ಯವಾಗುವಂತೆ ದೇವರು ಯೇಸುವನ್ನು ತಮ್ಮ ಬಲಗಡೆಯಲ್ಲಿ ಅಧಿಪತಿಯನ್ನಾಗಿಯೂ ರಕ್ಷಕನನ್ನಾಗಿಯೂ ಉನ್ನತಿಗೇರಿಸಿದ್ದಾರೆ.
ACT 5:32 ಈ ಸಂಗತಿಗಳಿಗೆ ನಾವೇ ಸಾಕ್ಷಿಗಳು; ತನಗೆ ವಿಧೇಯರಾಗಿರುವವರಿಗೆ ದೇವರು ದಯಪಾಲಿಸಿದ ಪವಿತ್ರಾತ್ಮ ದೇವರು ಸಾಕ್ಷಿ,” ಎಂದರು.
ACT 5:33 ಅವರು ಇದನ್ನು ಕೇಳಿದಾಗ ಬಹುಕೋಪಗೊಂಡು ಅವರನ್ನು ಕೊಲ್ಲಬೇಕೆಂದಿದ್ದರು.
ACT 5:34 ಆದರೆ ಗಮಲಿಯೇಲ್ ಎಂಬ ಹೆಸರಿನ ಒಬ್ಬ ಫರಿಸಾಯನಿದ್ದನು. ಅವನು ನಿಯಮ ಬೋಧಕನೂ ಎಲ್ಲಾ ಜನರ ಗೌರವಕ್ಕೆ ಪಾತ್ರನೂ ಆಗಿದ್ದನು. ಅವನು ನ್ಯಾಯಸಭೆಯಲ್ಲಿ ಎದ್ದು ನಿಂತುಕೊಂಡು, ಸ್ವಲ್ಪ ಸಮಯ ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಆಜ್ಞಾಪಿಸಿದನು.
ACT 5:35 ಗಮಲಿಯೇಲನು ಸಭೆಯನ್ನುದ್ದೇಶಿಸಿ, “ಇಸ್ರಾಯೇಲರೇ, ಈ ಜನರ ವಿರುದ್ಧ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರಿ.
ACT 5:36 ಕೆಲವು ದಿನಗಳ ಹಿಂದೆ ಥೈದನೆಂಬವನು ಕಾಣಿಸಿಕೊಂಡು, ತಾನು ಒಬ್ಬ ಗಣ್ಯವ್ಯಕ್ತಿಯೆಂದು ಹೇಳಿಕೊಳ್ಳುತ್ತಾ ಬಂದನು. ಸುಮಾರು ನಾಲ್ಕುನೂರು ಜನರು ಅವನ ಹಿಂಬಾಲಕರಾದರು. ಅವನು ಕೊಲೆಗೀಡಾದನು. ಅವನಿಗೆ ವಿಧೇಯರಾದವರೆಲ್ಲರೂ ಚದರಿಹೋಗಿ ಇಲ್ಲದಂತಾದರು.
ACT 5:37 ಅವನ ನಂತರ ಗಲಿಲಾಯದ ಯೂದ ಎಂಬುವವನು ಜನಗಣತಿಯ ದಿನಗಳಲ್ಲಿ ಕಾಣಿಸಿಕೊಂಡು, ಜನರ ಗುಂಪನ್ನು ತಿರುಗಿಬೀಳಲು ನಡೆಸಿದನು. ಅವನು ಸಹ ನಾಶವಾದನು. ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು.
ACT 5:38 ಆದ್ದರಿಂದ, ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ! ಅವರನ್ನು ಬಿಟ್ಟುಬಿಡಿರಿ! ಏಕೆಂದರೆ ಅವರ ಉದ್ದೇಶ ಅಥವಾ ಕಾರ್ಯವು ಮನುಷ್ಯರಿಂದ ಬಂದದ್ದಾಗಿದ್ದರೆ, ಅದೇ ವ್ಯರ್ಥವಾಗುವುದು.
ACT 5:39 ಒಂದು ವೇಳೆ ಇದು ದೇವರಿಂದ ಬಂದದ್ದಾಗಿದ್ದರೆ, ಅವರನ್ನು ನಿಲ್ಲಿಸಲು ನಿಮ್ಮಿಂದಾಗದು. ಹಾಗೆ ಮಾಡಲು ಪ್ರಯತ್ನಿಸಿದರೆ ನೀವು ದೇವರಿಗೆ ವಿರೋಧವಾಗಿ ಹೋರಾಡುವವರಾಗಿ ಕಂಡು ಬರುವಿರಿ,” ಎಂದು ಹೇಳಿದನು.
ACT 5:40 ಅವರು ಗಮಲಿಯೇಲನ ಸಲಹೆಯನ್ನು ಒಪ್ಪಿದರು. ಅವರು ಅಪೊಸ್ತಲರನ್ನು ಕರೆಯಿರಿ ಅವರನ್ನು ಛಡಿಗಳಿಂದ ಹೊಡೆಸಿ, ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಆಜ್ಞಾಪಿಸಿ ಬಿಡುಗಡೆ ಮಾಡಿದರು.
ACT 5:41 ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.
ACT 5:42 ದಿನದಿನವೂ ಅವರು ದೇವಾಲಯಗಳಲ್ಲಿ ಮತ್ತು ಮನೆಯಿಂದ ಮನೆಗೆ ಹೋಗಿ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದನ್ನೂ ಬೋಧಿಸುವುದನ್ನೂ ನಿಲ್ಲಿಸಲೇ ಇಲ್ಲ.
ACT 6:1 ಆ ದಿನಗಳಲ್ಲಿ ಶಿಷ್ಯರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಅವರಲ್ಲಿ ಗ್ರೀಕ್ ಮಾತನಾಡುವ ಯೆಹೂದ್ಯರು, ಹೀಬ್ರೂ ಭಾಷೆ ಮಾತನಾಡುವ ಯೆಹೂದ್ಯರ ವಿರೋಧವಾಗಿ ಗೊಣಗುಟ್ಟುತ್ತಿದ್ದರು. ಏಕೆಂದರೆ, “ಅನುದಿನದ ಉಪಚಾರದಲ್ಲಿ ಅವರು ತಮ್ಮ ವಿಧವೆಯರನ್ನು ಅಲಕ್ಷ್ಯಮಾಡುತ್ತಿದ್ದಾರೆ,” ಎಂದರು.
ACT 6:2 ಆದ್ದರಿಂದ ಆ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನು ಸೇರಿಸಿ, “ನಾವು ದೇವರ ವಾಕ್ಯ ಬೋಧಿಸುವ ಸೇವೆಯನ್ನು ಕಡೆಗಣಿಸಿ, ಆಹಾರ ವಿತರಣೆಗಾಗಿ ಸಮಯ ಕಳೆಯುತ್ತಿರುವುದು ಸರಿಯಲ್ಲ.
ACT 6:3 ಸಹೋದರರೇ, ನಿಮ್ಮಲ್ಲಿ ಪವಿತ್ರಾತ್ಮಭರಿತರೂ ಜ್ಞಾನವಂತರೂ ಎಂದು ಸಾಕ್ಷಿ ಹೊಂದಿರುವ ಏಳು ಜನರನ್ನು ಆಯ್ಕೆ ಮಾಡಿರಿ. ನಾವು ಅವರನ್ನು ಈ ಕಾರ್ಯಕ್ಕಾಗಿ ನೇಮಿಸುವೆವು.
ACT 6:4 ನಾವಾದರೋ ಪ್ರಾರ್ಥನೆ ಮಾಡುವುದರಲ್ಲಿಯೂ ದೇವರ ವಾಕ್ಯ ಬೋಧಿಸುವುದರಲ್ಲಿಯೂ ನಿರತರಾಗಿರುವೆವು,” ಎಂದು ಹೇಳಿದರು.
ACT 6:5 ಈ ಮಾತು ಇಡೀ ಸಮೂಹಕ್ಕೆ ಮೆಚ್ಚುಗೆಯಾಯಿತು. ಅವರು ಪೂರ್ಣನಂಬಿಕೆಯುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೆಫನನ್ನು ಆರಿಸಿಕೊಂಡರು; ಅಲ್ಲದೆ ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮಾರ್ಗ ಅನುಸರಿಸುತ್ತಿದ್ದ ಅಂತಿಯೋಕ್ಯದ ನಿಕೊಲಾಯನನ್ನು ಆಯ್ಕೆಮಾಡಿದರು.
ACT 6:6 ಇವರನ್ನು ಅಪೊಸ್ತಲರ ಮುಂದೆ ತಂದು ನಿಲ್ಲಿಸಿದರು. ಅವರು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಹಸ್ತಗಳನ್ನಿಟ್ಟು ನೇಮಿಸಿದರು.
ACT 6:7 ದೇವರ ವಾಕ್ಯವು ಅಭಿವೃದ್ಧಿಯಾಗುತ್ತಾ ಬಂತು. ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚಿತು. ಯಾಜಕರಲ್ಲಿಯೂ ಅನೇಕ ಜನರು ನಂಬಿಕೆಗೆ ವಿಧೇಯರಾದರು.
ACT 6:8 ದೇವರ ಕೃಪೆಯಿಂದಲೂ ಶಕ್ತಿಯಿಂದಲೂ ತುಂಬಿದ್ದ ಸ್ತೆಫನನಿಂದ ಜನರಲ್ಲಿ ಮಹಾ ಅದ್ಭುತಗಳೂ ಸೂಚಕಕಾರ್ಯಗಳೂ ನಡೆದವು.
ACT 6:9 ಆದರೆ, “ಬಿಡುಗಡೆ ಹೊಂದಿದವರು” ಎಂಬ ಯೆಹೂದ್ಯ ಸಭಾಮಂದಿರಕ್ಕೆ ಸೇರಿದವರಿಂದ ವಿರೋಧ ಉಂಟಾಯಿತು. ಅವರು ಕುರೇನ್ಯ ಅಲೆಕ್ಸಾಂದ್ರಿಯ ಕಿಲಿಕ್ಯ ಮತ್ತು ಏಷ್ಯಾ ಪ್ರಾಂತಗಳಿಂದ ಬಂದ ಯೆಹೂದ್ಯರಾಗಿದ್ದರು. ಅವರು ಸ್ತೆಫನನೊಂದಿಗೆ ತರ್ಕಿಸುವುದಕ್ಕೆ ಪ್ರಾರಂಭಿಸಿದರು.
ACT 6:10 ಆದರೆ ಅವನು ಜ್ಞಾನದಿಂದಲೂ ಪವಿತ್ರಾತ್ಮ ದೇವರಿಂದಲೂ ಮಾತನಾಡಿದ್ದರಿಂದ ಅವರಿಗೆ ಅವನನ್ನು ಎದುರಿಸಲು ಸಾಧ್ಯವಾಗಲಿಲ್ಲ.
ACT 6:11 ಆಗ ಅವರು, “ಇವನು ಮೋಶೆಗೂ ದೇವರಿಗೂ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುವುದನ್ನು ನಾವು ಕೇಳಿದ್ದೇವೆ,” ಎಂದು ಕೆಲವರಿಗೆ ಲಂಚಕೊಟ್ಟು ಹೇಳುವಂತೆ ರಹಸ್ಯವಾಗಿ ಮನವೊಲಿಸಿದರು.
ACT 6:12 ಹೀಗೆ ಅವರು ಜನರನ್ನೂ ಹಿರಿಯರನ್ನೂ ನಿಯಮ ಬೋಧಕರನ್ನೂ ಪ್ರಚೋದಿಸಿ ಸ್ತೆಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ತಂದು ನಿಲ್ಲಿಸಿದರು.
ACT 6:13 ಸುಳ್ಳುಸಾಕ್ಷಿಗಳನ್ನು ಹಾಜರುಪಡಿಸಿ, “ಈ ಮನುಷ್ಯನು ಈ ಪವಿತ್ರಸ್ಥಳಕ್ಕೂ ಮೋಶೆಯ ನಿಯಮಕ್ಕೂ ವಿರೋಧವಾಗಿ ಮಾತನಾಡುತ್ತಲೇ ಇದ್ದಾನೆ.
ACT 6:14 ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿಬಿಡುತ್ತಾರೆಂದೂ ನಮಗೆ ಒಪ್ಪಿಸಿದ ಮೋಶೆಯ ಪದ್ಧತಿಗಳನ್ನು ಬದಲಾಯಿಸುತ್ತಾರೆಂದೂ ಇವನು ಹೇಳುವುದನ್ನು ನಾವು ಕೇಳಿದ್ದೇವೆ,” ಎಂದು ಅವನ ವಿರುದ್ಧ ಸಾಕ್ಷಿ ಹೇಳಿಸಿದರು.
ACT 6:15 ನ್ಯಾಯಸಭೆಯಲ್ಲಿ ಕುಳಿತುಕೊಂಡಿದ್ದವರೆಲ್ಲರೂ ಸ್ತೆಫನನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವನ ಮುಖವು ದೇವದೂತನ ಮುಖದಂತೆ ಕಾಣಿಸುತ್ತಿತ್ತು.
ACT 7:1 ಆಗ ಮಹಾಯಾಜಕನು, “ಈ ಸಂಗತಿಗಳು ನಿಜವೋ?” ಎಂದು ಸ್ತೆಫನನನ್ನು ಪ್ರಶ್ನಿಸಿದನು.
ACT 7:2 ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು,
ACT 7:3 ‘ನಿನ್ನ ಸ್ವದೇಶವನ್ನು ಬಂಧುಗಳನ್ನು ಬಿಟ್ಟು, ನಾನು ನಿನಗೆ ತೋರಿಸುವ ನಾಡಿಗೆ ಹೋಗು,’ ಎಂದು ಹೇಳಿದರು.
ACT 7:4 “ಅದರಂತೆ ಅಬ್ರಹಾಮನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ಬಂದು ನೆಲೆಸಿದನು. ಅವನ ತಂದೆಯ ಮರಣದ ನಂತರ ನೀವು ಈಗ ವಾಸಿಸುತ್ತಿರುವ ಈ ನಾಡಿಗೆ ದೇವರು ಅವನನ್ನು ಬರಮಾಡಿದರು.
ACT 7:5 ದೇವರು ಅವನಿಗೆ ಇಲ್ಲಿ ಕಾಲಿಡುವಷ್ಟು ಸ್ಥಳವನ್ನಾಗಲಿ, ಯಾವುದೇ ಬಾಧ್ಯಸ್ತಿಕೆಯನ್ನಾಗಲಿ ಕೊಡಲಿಲ್ಲ. ಆದರೆ ಅಬ್ರಹಾಮನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ಅವನೂ ಅವನ ನಂತರ ಅವನ ಸಂತತಿಯವರೂ ದೇಶವನ್ನು ಹೊಂದುವರೆಂದು ದೇವರು ಅವನಿಗೆ ವಾಗ್ದಾನ ಮಾಡಿದರು.
ACT 7:6 ಇದಲ್ಲದೆ ದೇವರು ಅಬ್ರಹಾಮನೊಂದಿಗೆ ಮಾತನಾಡಿ, ‘ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು. ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು.
ACT 7:7 ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ಅನಂತರ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು,’ ಎಂದು ದೇವರು ಹೇಳಿದರು.
ACT 7:8 ಆಮೇಲೆ ದೇವರು ಅಬ್ರಹಾಮನಿಗೆ ಸುನ್ನತಿಯ ಒಡಂಬಡಿಕೆಯನ್ನೂ ಕೊಟ್ಟರು. ಅಬ್ರಹಾಮನಿಗೆ ಇಸಾಕನು ಜನಿಸಿದನು. ಇಸಾಕನು ಜನಿಸಿದ ಎಂಟನೆಯ ದಿನ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿಸಿದನು. ಅನಂತರ ಇಸಾಕನಿಗೆ ಯಾಕೋಬನು ಜನಿಸಿದನು. ಯಾಕೋಬನು ನಮ್ಮ ಹನ್ನೆರಡು ಮಂದಿ ಪಿತೃಗಳಿಗೆ ತಂದೆಯಾದನು.
ACT 7:9 “ಈ ಪಿತೃಗಳು ಯೋಸೇಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗಿದ್ದು,
ACT 7:10 ಅವನನ್ನು ಎಲ್ಲಾ ಸಂಕಟಗಳಿಂದ ಬಿಡಿಸಿದರು. ದೇವರು ಯೋಸೇಫನಿಗೆ ಜ್ಞಾನವನ್ನು ಕೊಟ್ಟು ಈಜಿಪ್ಟಿನ ಅರಸನಾದ ಫರೋಹನ ಮೆಚ್ಚುಗೆಗೆ ಪಾತ್ರನಾಗುವಂತೆ ಮಾಡಿದರು. ಹೀಗೆ ಯೋಸೇಫನನ್ನು ಈಜಿಪ್ಟ್ ದೇಶದ ಮೇಲೆಯೂ ತನ್ನ ಅರಮನೆಯ ಮೇಲೆಯೂ ಅಧಿಕಾರಿಯನ್ನಾಗಿ ಫರೋಹನು ನೇಮಿಸಿದನು.
ACT 7:11 “ಆ ಕಾಲದಲ್ಲಿ ಈಜಿಪ್ಟ್ ಮತ್ತು ಕಾನಾನ್ ದೇಶಗಳ ಎಲ್ಲಾ ಕಡೆಗಳಲ್ಲಿಯೂ ಕ್ಷಾಮ ಬಂದು ಜನರು ಬಹಳ ಬಾಧೆಪಟ್ಟರು, ನಮ್ಮ ಪಿತೃಗಳಿಗೆ ಆಹಾರ ದೊರೆಯದೇ ಹೋಯಿತು.
ACT 7:12 ಈಜಿಪ್ಟಿನಲ್ಲಿ ದವಸಧಾನ್ಯ ದೊರೆಯುವುದೆಂದು ಯಾಕೋಬನಿಗೆ ತಿಳಿದುಬಂದಾಗ, ಅವನು ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು.
ACT 7:13 ಅವರು ಎರಡನೆಯ ಸಾರಿ ಅಲ್ಲಿಗೆ ಹೋದಾಗ, ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದನು. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ಗೊತ್ತಾಯಿತು.
ACT 7:14 ಇದಾದನಂತರ, ಯೋಸೇಫನು ತನ್ನ ತಂದೆ ಯಾಕೋಬನನ್ನು ಅವನ ಕುಟುಂಬದವರೆಲ್ಲರನ್ನೂ, ಒಟ್ಟು ಎಪ್ಪತ್ತೈದು ಜನರನ್ನು ಕರೆಕಳುಹಿಸಿದನು.
ACT 7:15 ಆಗ ಯಾಕೋಬನು ಈಜಿಪ್ಟಿಗೆ ಹೋದನು, ಅಲ್ಲಿಯೇ ಅವನೂ ನಮ್ಮ ಪಿತೃಗಳೂ ಮೃತರಾದರು.
ACT 7:16 ಅವರ ಮೃತಶರೀರವನ್ನು ಶೇಕೆಮಿಗೆ ತಂದರು. ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಕ್ರಯಕೊಟ್ಟು ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಟ್ಟರು.
ACT 7:17 “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರುವ ಕಾಲವು ಹತ್ತಿರ ಬಂದಾಗ, ಈಜಿಪ್ಟಿನಲ್ಲಿ ನಮ್ಮ ಜನರ ಸಂಖ್ಯೆ ಬಹಳ ಹೆಚ್ಚಾಯಿತು.
ACT 7:18 ಆಗ, ‘ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.’
ACT 7:19 ಆ ಅರಸನು ನಮ್ಮ ಜನರೊಂದಿಗೆ ಕುಯುಕ್ತಿಯಿಂದ ವರ್ತಿಸುತ್ತಾ, ಅವರ ಕೂಸುಗಳು ಸಾಯುವಂತೆ ಬಿಸಾಡಿಬಿಡಬೇಕೆಂದು, ನಮ್ಮ ಪಿತೃಗಳನ್ನು ಕಠಿಣವಾಗಿ ಹಿಂಸಿಸಿದನು.
ACT 7:20 “ಆ ಸಮಯದಲ್ಲಿಯೇ ಮೋಶೆ ಜನಿಸಿದನು. ಅವನು ದೇವರ ದೃಷ್ಟಿಯಲ್ಲಿ ಸುಂದರನಾಗಿದ್ದನು. ಮೂರು ತಿಂಗಳುಗಳ ಕಾಲ ಅವನು ತನ್ನ ತಂದೆಯ ಮನೆಯಲ್ಲೇ ಬೆಳೆದನು.
ACT 7:21 ಆಮೇಲೆ ಅವನನ್ನು ಮನೆಯಿಂದ ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ತೆಗೆದುಕೊಂಡು ತನ್ನ ಸ್ವಂತ ಮಗನಂತೆ ಬೆಳೆಸಿದಳು.
ACT 7:22 ಮೋಶೆಯು ಈಜಿಪ್ಟಿನವರ ಸಕಲ ವಿದ್ಯೆಗಳಲ್ಲಿ ತರಬೇತಿ ಹೊಂದಿ, ಮಾತಿನಲ್ಲಿಯೂ ಕೃತ್ಯದಲ್ಲಿಯೂ ಸಮರ್ಥನಾದನು.
ACT 7:23 “ಮೋಶೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಬಂಧುಗಳಾದ ಇಸ್ರಾಯೇಲ್ ಪುತ್ರರನ್ನು ಸಂದರ್ಶಿಸಬೇಕೆಂದು ತೀರ್ಮಾನಿಸಿದನು.
ACT 7:24 ತನ್ನ ಬಂಧುಗಳಲ್ಲಿ ಒಬ್ಬನನ್ನು ಈಜಿಪ್ಟಿನವನೊಬ್ಬನು ಹೊಡೆಯುತ್ತಿರುವುದನ್ನು ಕಂಡು, ಮೋಶೆ ಆ ಈಜಿಪ್ಟಿನವನನ್ನು ಕೊಂದುಹಾಕಿ ಸೇಡು ತೀರಿಸಿದನು.
ACT 7:25 ದೇವರು ಸ್ವಜನರಿಗೆ ತನ್ನ ಮೂಲಕವಾಗಿ ಬಿಡುಗಡೆಯನ್ನು ಕೊಡುವನೆಂದು ಅವರು ಅರ್ಥ ಮಾಡಿಕೊಳ್ಳುವರೆಂದು ಮೋಶೆ ಭಾವಿಸಿದ್ದನು. ಸ್ವಜನರೋ, ಇದನ್ನು ಅರ್ಥಮಾಡಿಕೊಳ್ಳಲಿಲ್ಲ.
ACT 7:26 ಮರುದಿನ ಇಬ್ಬರು ಇಸ್ರಾಯೇಲರು ಜಗಳವಾಡುತ್ತಿರುವುದನ್ನು ಮೋಶೆ ಕಂಡು, ‘ಗೆಳೆಯರೇ, ನೀವು ಸಹೋದರರಲ್ಲವೇ; ಒಬ್ಬರಿಗೊಬ್ಬರು ಏಕೆ ಜಗಳಮಾಡುತ್ತಿದ್ದೀರಿ?’ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.
ACT 7:27 “ಆದರೆ ಹೊಡೆಯುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?
ACT 7:28 ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಕೇಳಿದನು.
ACT 7:29 ಮೋಶೆ ಇದನ್ನು ಕೇಳಿ, ಮಿದ್ಯಾನಿಗೆ ಓಡಿಹೋದನು. ಅಲ್ಲಿ ಪರದೇಶದವನಂತೆ ಬದುಕಿ, ಇಬ್ಬರು ಗಂಡು ಮಕ್ಕಳನ್ನು ಪಡೆದನು.
ACT 7:30 “ನಲವತ್ತು ವರ್ಷಗಳು ಗತಿಸಿದ ತರುವಾಯ ಸೀನಾಯಿ ಪರ್ವತದ ಮರುಭೂಮಿಯಲ್ಲಿ ಉರಿಯುವ ಪೊದೆಯಲ್ಲಿ ದೇವದೂತನೊಬ್ಬನು ಮೋಶೆಗೆ ದರ್ಶನ ಕೊಟ್ಟನು.
ACT 7:31 ಇದನ್ನು ಮೋಶೆ ಕಂಡಾಗ ಆ ನೋಟಕ್ಕೆ ಅತ್ಯಾಶ್ಚರ್ಯಪಟ್ಟನು. ಅದನ್ನು ಸಮೀಪದಿಂದ ನೋಡಲು ಹೊರಟಾಗ, ಕರ್ತದೇವರ ಧ್ವನಿಯನ್ನು ಅವನು ಕೇಳಿಸಿಕೊಂಡನು.
ACT 7:32 ‘ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ, ಇಸಾಕನ, ಯಾಕೋಬನ ದೇವರು,’ ಎಂಬ ವಾಣಿಯನ್ನು ಕೇಳಿಸಿಕೊಂಡ ಮೋಶೆ ಭಯದಿಂದ ನಡುಗುತ್ತಾ ನೇರವಾಗಿ ದೃಷ್ಟಿಸಲು ಧೈರ್ಯಗೊಳ್ಳಲಿಲ್ಲ.
ACT 7:33 “ಆಗ ಕರ್ತದೇವರು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ.
ACT 7:34 ಈಜಿಪ್ಟಿನಲ್ಲಿ ನನ್ನ ಜನರ ದುರವಸ್ಥೆಯನ್ನು ನಾನು ಕಂಡಿದ್ದೇನೆ. ಅವರ ನರಳಾಟವನ್ನು ಕೇಳಿಸಿಕೊಂಡಿದ್ದೇನೆ. ಅವರನ್ನು ಬಿಡುಗಡೆ ಮಾಡಲು ನಾನಿಳಿದು ಬಂದಿದ್ದೇನೆ. ಇಲ್ಲಿ ಬಾ, ನಾನು ನಿನ್ನನ್ನು ಹಿಂದಿರುಗಿ ಈಜಿಪ್ಟಿಗೆ ಕಳುಹಿಸುತ್ತೇನೆ,’ ಎಂದರು.
ACT 7:35 “ ‘ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?’ ಎಂಬ ಮಾತುಗಳಿಂದ ಇಸ್ರಾಯೇಲರು ತಿರಸ್ಕರಿಸಿದಂಥ ಆ ಮೋಶೆಯೇ ಇವನು. ಉರಿಯುವ ಪೊದೆಯಲ್ಲಿ ದರ್ಶನ ಕೊಟ್ಟು ದೇವದೂತನ ಮುಖಾಂತರವಾಗಿ ದೇವರೇ ಇವನನ್ನು ಅವರ ಅಧಿಕಾರಿಯನ್ನಾಗಿಯೂ ವಿಮೋಚಕನ್ನಾಗಿಯೂ ಕಳುಹಿಸಿದರು.
ACT 7:36 ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.
ACT 7:37 “ ‘ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ಸ್ವಂತ ಜನರೊಳಗಿಂದಲೇ ದೇವರು ನಿಮಗೆ ಕಳುಹಿಸುವರು,’ ಎಂದು ಇಸ್ರಾಯೇಲರಿಗೆ ಹೇಳಿದವನು ಈ ಮೋಶೆಯೇ.
ACT 7:38 ಇವನು ಇಸ್ರಾಯೇಲರು ಅರಣ್ಯದಲ್ಲಿ ದೊಡ್ಡಗುಂಪಾಗಿದ್ದಾಗ ಅವರ ಮಧ್ಯದಲ್ಲಿದ್ದವನು. ಸೀನಾಯಿ ಬೆಟ್ಟದ ಮೇಲೆ ಅವನೊಂದಿಗೆ ಮಾತನಾಡಿದ ದೇವದೂತನೊಂದಿಗಿದ್ದವನು. ಇವನು ನಮ್ಮ ಪಿತೃಗಳೊಂದಿಗೂ ಮಧ್ಯಸ್ಥನಾಗಿ ಇದ್ದವನು. ನಮಗೆ ಕೊಡುವುದಕ್ಕಾಗಿ ಜೀವ ವಾಕ್ಯಗಳನ್ನು ಸ್ವೀಕರಿಸಿದವನು ಈ ಮೋಶೆಯೇ.
ACT 7:39 “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಅವರು ಅವನನ್ನು ತಿರಸ್ಕರಿಸಿ, ತಮ್ಮ ಹೃದಯಗಳಲ್ಲಿ ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದಿದ್ದರು.
ACT 7:40 ಅವರು ಆರೋನನಿಗೆ, ‘ನಮಗೆ ಮುಂದಾಗಿ ಹೋಗುವುದಕ್ಕಾಗಿ ನಮಗೆ ದೇವರುಗಳನ್ನು ಮಾಡಿಕೊಡು, ನಮ್ಮನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು,’ ಎಂದರು.
ACT 7:41 ಆ ಸಮಯದಲ್ಲಿ ಅವರು ಕರುವಿನ ರೂಪದಲ್ಲಿ ಒಂದು ವಿಗ್ರಹ ಮಾಡಿಕೊಂಡರು. ಅದರ ಮುಂದೆ ತಮ್ಮ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಲ್ಲಿ ಹರ್ಷಗೊಂಡರು.
ACT 7:42 ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ: “ ‘ಇಸ್ರಾಯೇಲಿನ ಮನೆತನದವರೇ, ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.
ACT 7:43 ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರವನ್ನೂ ನೀವು ನಿರ್ಮಿಸಿಕೊಂಡ ವಿಗ್ರಹಗಳನ್ನೂ ಪೂಜಿಸಿದಿರಿ. ಆದ್ದರಿಂದ ಬಾಬಿಲೋನಿನ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ,’ ಎಂದು ಬರೆದಿರುವ ಪ್ರಕಾರ ಇದು ನೆರವೇರಿತು.
ACT 7:44 “ಅರಣ್ಯದಲ್ಲಿ ದೇವದರ್ಶನ ಗುಡಾರ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ದೇವರು ಮೋಶೆಗೆ ಆಜ್ಞಾಪಿಸಿದಂತೆ, ಅವನಿಗೆ ತೋರಿಸಿದ ಮಾದರಿಯಂತೆ ಅದನ್ನು ರೂಪಿಸಲಾಗಿತ್ತು.
ACT 7:45 ನಮ್ಮ ಪಿತೃಗಳು ದೇವದರ್ಶನ ಗುಡಾರವನ್ನು ಪಡೆದುಕೊಂಡು, ಯೆಹೋಶುವನ ನಾಯಕತ್ವದ ಕೆಳಗೆ ದೇವರು ಅವರೆದುರಿನಲ್ಲಿ ಹೊರದೊಬ್ಬಿದ ದೇಶಗಳ ನಾಡನ್ನು ವಶಪಡಿಸಿಕೊಂಡಾಗ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದರು. ದಾವೀದನ ಕಾಲದವರೆಗೂ ಆ ಗುಡಾರವು ಅಲ್ಲಿಯೇ ಇತ್ತು.
ACT 7:46 ದಾವೀದನು ದೇವರ ದಯೆಯನ್ನು ಹೊಂದಿದವನಾಗಿ ಯಾಕೋಬನ ದೇವರಿಗೆ ದೇವಾಲಯ ಕಟ್ಟಲು ತನಗೆ ಅಪ್ಪಣೆಯಾಗಬೇಕೆಂದು ದೇವರಿಗೆ ಕೇಳಿಕೊಂಡನು.
ACT 7:47 ಆದರೆ ದೇವರಿಗಾಗಿ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
ACT 7:48 “ಹೀಗಿದ್ದರೂ ಮಹೋನ್ನತ ದೇವರು ಮಾನವರು ನಿರ್ಮಿಸಿದ ಆಲಯಗಳಲ್ಲಿ ವಾಸಮಾಡುವುದಿಲ್ಲ. ಪ್ರವಾದಿಯು ಹೇಳಿದಂತೆ:
ACT 7:49 “ ‘ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ. ನೀವು ನನಗಾಗಿ ಎಂಥಾ ಆಲಯವನ್ನು ಕಟ್ಟುವಿರಿ? ಎಲ್ಲಿ ನನ್ನ ವಿಶ್ರಾಂತಿಯ ಸ್ಥಳ?
ACT 7:50 ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯಿಂದ ಅಲ್ಲವೇ?’ ಎಂದು ಕರ್ತದೇವರು ಪ್ರಶ್ನಿಸುತ್ತಾರೆ.
ACT 7:51 “ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ!
ACT 7:52 ನಿಮ್ಮ ಪಿತೃಗಳು ಹಿಂಸೆಪಡಿಸದೆ ಇದ್ದ ಪ್ರವಾದಿ ಒಬ್ಬನಾದರೂ ಇರುವನೇ? ನೀತಿವಂತರಾಗಿರುವ ಒಬ್ಬರು ಬರಲಿದ್ದಾರೆಂದು ಮುಂತಿಳಿಸಿದವರನ್ನು ಸಹ ಅವರು ಕೊಂದುಹಾಕಿದರು. ಈಗ ನೀವೇ ಅವರನ್ನು ಹಿಡಿದುಕೊಟ್ಟು ಕೊಲೆಮಾಡಿದ್ದೀರಿ.
ACT 7:53 ದೇವದೂತರ ಮುಖಾಂತರವಾಗಿ ಜಾರಿಗೆ ಬಂದ ಮೋಶೆಯ ನಿಯಮವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ,” ಎಂದು ಹೇಳಿದನು.
ACT 7:54 ಈ ಮಾತುಗಳನ್ನು ಕೇಳಿದಾಗ ಅವರು ರೋಷವುಳ್ಳವರಾಗಿ, ಅವನ ಕಡೆಗೆ ನೋಡಿ, ತಮ್ಮ ಹಲ್ಲುಗಳನ್ನು ಕಡಿದರು.
ACT 7:55 ಆದರೆ ಪವಿತ್ರಾತ್ಮಭರಿತನಾದ ಸ್ತೆಫನನು ಪರಲೋಕದ ಕಡೆಗೆ ನೋಡಿ, ದೇವರ ಮಹಿಮೆಯನ್ನೂ ದೇವರ ಬಲಗಡೆಯಲ್ಲಿ ಯೇಸು ನಿಂತುಕೊಂಡಿರುವುದನ್ನೂ ಕಂಡನು.
ACT 7:56 “ನೋಡಿರಿ, ಪರಲೋಕ ತೆರೆದಿರುವುದನ್ನೂ ಮನುಷ್ಯಪುತ್ರ ಆಗಿರುವ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ಕಾಣುತ್ತಿದ್ದೇನೆ,” ಎಂದನು.
ACT 7:57 ಈ ಮಾತಿಗೆ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು, ಆರ್ಭಟಿಸುತ್ತಾ, ಅವನ ಕಡೆಗೆ ಓಡಿಹೋಗಿ ಅವನನ್ನು ಹೊಡೆದರು.
ACT 7:58 ಅವನನ್ನು ಪಟ್ಟಣದ ಹೊರಗೆ ಎಳೆದುಕೊಂಡು ಹೋಗಿ ಅವನ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಾಕ್ಷಿಗಳು ತಮ್ಮ ಬಟ್ಟೆಗಳನ್ನು ಸೌಲ ಎಂಬ ಹೆಸರಿನ ಒಬ್ಬ ಯುವಕನ ಪಾದಗಳ ಬಳಿಯಲ್ಲಿಟ್ಟಿದ್ದರು.
ACT 7:59 ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು.
ACT 7:60 ಅನಂತರ ಮೊಣಕಾಲೂರಿ, “ಕರ್ತ ಯೇಸುವೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ,” ಎಂದು ಗಟ್ಟಿಯಾಗಿ ಕೂಗಿದನು. ಇದನ್ನು ಹೇಳಿದ ಮೇಲೆ, ಪ್ರಾಣಬಿಟ್ಟನು.
ACT 8:1 ಸೌಲನು ಸ್ತೆಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಯೆರೂಸಲೇಮಿನ ಸಭೆಗೆ ವಿರೋಧವಾಗಿ ಮಹಾಹಿಂಸೆ ಪ್ರಾರಂಭವಾಯಿತು, ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಯೂದಾಯ ಮತ್ತು ಸಮಾರ್ಯ ಪ್ರಾಂತಗಳಿಗೆ ಚದರಿಹೋದರು.
ACT 8:2 ದೇವಭಕ್ತರು ಸ್ತೆಫನನ ಶವಸಂಸ್ಕಾರ ಮಾಡಿ, ಅವನಿಗಾಗಿ ಬಹಳ ಗೋಳಾಡಿದರು.
ACT 8:3 ಆದರೆ ಸೌಲನು ಸಭೆಯನ್ನು ಹಾಳುಮಾಡಲು ಪ್ರಾರಂಭಿಸಿದನು. ಅವನು ಮನೆಮನೆಗಳಿಗೆ ಹೋಗಿ ಸ್ತ್ರೀಪುರುಷರನ್ನು ಹೊರಗೆಳೆದು ಅವರನ್ನು ಸೆರೆಮನೆಯಲ್ಲಿ ಹಾಕಿಸಿದನು.
ACT 8:4 ಚದರಿಹೋದವರು ತಾವು ಹೋದಲ್ಲೆಲ್ಲಾ ವಾಕ್ಯವನ್ನು ಬೋಧಿಸಿದರು.
ACT 8:5 ಫಿಲಿಪ್ಪನು ಸಮಾರ್ಯದ ಒಂದು ಪಟ್ಟಣಕ್ಕೆ ಹೋಗಿ ಅಲ್ಲಿ ಕ್ರಿಸ್ತ ಯೇಸುವಿನ ಸಂದೇಶ ಸಾರಿದನು.
ACT 8:6 ಜನಸಮೂಹವು ಫಿಲಿಪ್ಪನ ಬೋಧನೆ ಕೇಳಿ, ಅವನು ಮಾಡಿದ ಸೂಚಕಕಾರ್ಯಗಳನ್ನು ಕಂಡು, ಅವನು ಹೇಳಿದ್ದಕ್ಕೆಲ್ಲಾ ಮನಸ್ಸು ಕೊಟ್ಟರು.
ACT 8:7 ಅನೇಕರಿಂದ ಅಶುದ್ಧಾತ್ಮಗಳು ಆರ್ಭಟಿಸುತ್ತಾ ಹೊರಗೋಡಿದವು. ಮಾತ್ರವಲ್ಲದೇ ಅನೇಕ ಪಾರ್ಶ್ವವಾಯು ಪೀಡಿತರು, ಅಂಗವಿಕಲರು ಸ್ವಸ್ಥರಾದರು.
ACT 8:8 ಇದರಿಂದ ಆ ಪಟ್ಟಣದಲ್ಲಿ ಮಹಾ ಸಂತೋಷವಾಯಿತು.
ACT 8:9 ಆ ಪಟ್ಟಣದಲ್ಲಿ ಕೆಲ ಸಮಯದಿಂದ ಸೀಮೋನ ಎಂಬ ಹೆಸರಿನ ಒಬ್ಬನು ಮಂತ್ರ ವಿದ್ಯೆ ಉಪಯೋಗಿಸಿ ಸಮಾರ್ಯದ ಜನರನ್ನು ಆಶ್ಚರ್ಯಗೊಳಿಸಿದ್ದನು. ತಾನೊಬ್ಬ ಮಹಾವ್ಯಕ್ತಿ ಎಂದು ಕೊಚ್ಚಿಕೊಳ್ಳುತ್ತಿದ್ದನು,
ACT 8:10 ಆ ಪಟ್ಟಣದಲ್ಲಿಯ ಹಿರಿಯರು, ಕಿರಿಯರು ಎಲ್ಲರೂ ಅವನನ್ನು ಗೌರವಿಸಿ, “ಈ ಮನುಷ್ಯನು ಮಹಾಶಕ್ತಿ ಎನಿಸಿಕೊಂಡ ದೇವರ ಶಕ್ತಿ” ಎಂದು ಹೇಳುತ್ತಿದ್ದರು.
ACT 8:11 ಸೀಮೋನನು ತನ್ನ ಮಂತ್ರಶಕ್ತಿಯಿಂದ ಅವರನ್ನು ಆಶ್ಚರ್ಯಗೊಳಿಸಿದ್ದರಿಂದ ಅವರು ಅವನನ್ನು ಹಿಂಬಾಲಿಸುತ್ತಿದ್ದರು.
ACT 8:12 ಆದರೆ ಫಿಲಿಪ್ಪನು ದೇವರ ರಾಜ್ಯದ ಶುಭವರ್ತಮಾನವನ್ನೂ ಕ್ರಿಸ್ತ ಯೇಸುವಿನ ಹೆಸರನ್ನೂ ಪ್ರಕಟಿಸಿದಾಗ ಅಲ್ಲಿಯ ಸ್ತ್ರೀ ಪುರುಷರು ಅದನ್ನು ನಂಬಿ ದೀಕ್ಷಾಸ್ನಾನವನ್ನು ಹೊಂದಿದರು.
ACT 8:13 ಸೀಮೋನನು ಸಹ ವಿಶ್ವಾಸವಿಟ್ಟು, ದೀಕ್ಷಾಸ್ನಾನ ಹೊಂದಿದನು. ಫಿಲಿಪ್ಪ ಮಾಡಿದ ಮಹಾಸೂಚಕಕಾರ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡು, ಬೆರಗಾಗಿ ಅವನು ಹೋದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದನು.
ACT 8:14 ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದರು ಎಂಬ ಸಮಾಚಾರ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ತಲುಪಿದ್ದರಿಂದ, ಅವರ ಬಳಿಗೆ ಪೇತ್ರ ಮತ್ತು ಯೋಹಾನರನ್ನು ಕಳುಹಿಸಿದರು.
ACT 8:15 ಇವರು ತಲುಪಿದಾಗ, ಅಲ್ಲಿಯವರು ಪವಿತ್ರಾತ್ಮ ದೇವರನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಾರ್ಥನೆ ಮಾಡಿದರು.
ACT 8:16 ಏಕೆಂದರೆ ಅವರಲ್ಲಿ ಯಾರ ಮೇಲೆಯೂ ಪವಿತ್ರಾತ್ಮ ಬಂದಿರಲಿಲ್ಲ, ಅವರು ಕರ್ತ ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಹೊಂದಿದ್ದರಷ್ಟೇ.
ACT 8:17 ಆಗ ಪೇತ್ರ ಮತ್ತು ಯೋಹಾನರು ಅವರ ಮೇಲೆ ತಮ್ಮ ಕೈಗಳನ್ನಿಡಲು, ಅವರು ಪವಿತ್ರಾತ್ಮ ವರವನ್ನು ಹೊಂದಿದರು.
ACT 8:18 ಅಪೊಸ್ತಲರು ತಮ್ಮ ಕೈಗಳನ್ನಿಡಲು ಪವಿತ್ರಾತ್ಮ ದೊರೆತದ್ದನ್ನು ಕಂಡ ಸೀಮೋನನು, ಅವರಿಗೆ ಹಣವನ್ನು ಕೊಟ್ಟು,
ACT 8:19 “ನಾನು ಯಾರ ಮೇಲೆ ಕೈಗಳನ್ನಿಡುವೆನೋ ಅವರೂ ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಂತೆ ಈ ಶಕ್ತಿಯನ್ನು ಕೊಡಬೇಕು,” ಎಂದು ಕೇಳಿದನು.
ACT 8:20 ಅದಕ್ಕೆ ಪೇತ್ರನು, “ದೇವರ ವರವನ್ನು ಹಣಕೊಟ್ಟು ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದರಿಂದ ನೀನು ನಿನ್ನ ಹಣದೊಂದಿಗೆ ನಾಶವಾಗಿಹೋಗು!
ACT 8:21 ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲವಾದ್ದರಿಂದ ಈ ಸೇವೆಯಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ.
ACT 8:22 ಈ ದುಷ್ಟತನಕ್ಕಾಗಿ ಪಶ್ಚಾತ್ತಾಪಪಟ್ಟು ಕರ್ತ ಯೇಸುವನ್ನು ಬೇಡಿಕೋ, ಒಂದು ವೇಳೆ ಅವರು ನಿನ್ನ ಹೃದಯದಲ್ಲಿದ್ದ ಈ ವಿಚಾರವನ್ನು ಕ್ಷಮಿಸಬಹುದು.
ACT 8:23 ನೀನು ಕಹಿತನದಿಂದ ತುಂಬಿರುವೆ; ಪಾಪ ಬಂಧನದಲ್ಲಿರುವೆ ಎಂದು ಕಾಣುತ್ತಿದ್ದೇನೆ,” ಎಂದನು.
ACT 8:24 ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.
ACT 8:25 ಪೇತ್ರ ಯೋಹಾನರು ಕರ್ತದೇವರ ವಾಕ್ಯದ ಸಾಕ್ಷಿ ಹೇಳಿ ಬೋಧನೆ ಮಾಡಿದ ತರುವಾಯ ಸಮಾರ್ಯದ ಅನೇಕ ಗ್ರಾಮಗಳಲ್ಲಿ ಸುವಾರ್ತೆ ಸಾರಿ, ಯೆರೂಸಲೇಮಿಗೆ ಹಿಂದಿರುಗಿದರು.
ACT 8:26 ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.
ACT 8:27 ಅದರಂತೆ ಅವನು ಹೋಗುತ್ತಿದ್ದಾಗ, ಮಾರ್ಗದಲ್ಲಿ ಐಥಿಯೋಪ್ಯದ ರಾಣಿ ಕಂದಾಕೆಯ ಹಣಕಾಸಿನ ಮುಖ್ಯ ಅಧಿಕಾರಿಯಾಗಿದ್ದ ಕಂಚುಕಿಯನ್ನು ಭೇಟಿಯಾದನು. ಈ ಮನುಷ್ಯನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿದ್ದನು.
ACT 8:28 ಈಗ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
ACT 8:29 ಆಗ, “ನೀನು ಹೋಗಿ ಆ ರಥದ ಜೊತೆಯಲ್ಲಿಯೇ ನಡೆ,” ಎಂದು ಪವಿತ್ರಾತ್ಮರು ಫಿಲಿಪ್ಪನಿಗೆ ಹೇಳಿದರು.
ACT 8:30 ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?” ಎಂದು ಫಿಲಿಪ್ಪನು ಪ್ರಶ್ನಿಸಿದನು.
ACT 8:31 ಅವನು, “ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.
ACT 8:32 ಕಂಚುಕಿ ಈ ವಾಕ್ಯಭಾಗವನ್ನು ಓದುತ್ತಿದ್ದನು: “ವಧಿಸಲಿಕ್ಕೆ ಒಯ್ದ ಕುರಿಯಂತೆ ಅವರನ್ನು ಕರೆದುಕೊಂಡು ಹೋದರು. ಉಣ್ಣೆ ಕತ್ತರಿಸುವವರ ಮುಂದೆ ಇರುವ ಕುರಿಮರಿಯಂತೆ ಅವರು ಮೌನವಾಗಿದ್ದರು. ಇನ್ನು ಅವರು ತಮ್ಮ ಬಾಯಿ ತೆರೆಯಲೇ ಇಲ್ಲ.
ACT 8:33 ಅವರ ಅವಮಾನದಲ್ಲಿ ನ್ಯಾಯವು ಅವರಿಂದ ತೆಗೆಯಲಾಯಿತು. ಭೂಮಿಯಿಂದ ಆತನ ಜೀವವನ್ನು ತೆಗೆದೇಬಿಟ್ಟರಲ್ಲವೇ, ಆತನ ಸಂತತಿಯವರ ಬಗ್ಗೆ ಮಾತನಾಡಬಲ್ಲವರು ಯಾರು?”
ACT 8:34 ನಂತರ ಕಂಚುಕಿಯು, “ಪ್ರವಾದಿ ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದಾನೆ, ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ? ನನಗೆ ಹೇಳು,” ಎಂದು ಫಿಲಿಪ್ಪನನ್ನು ಕೇಳಿದನು.
ACT 8:35 ಪವಿತ್ರ ವೇದದ ಆ ಭಾಗದಿಂದಲೇ ಪ್ರಾರಂಭಿಸಿ ಫಿಲಿಪ್ಪನು ಅವನಿಗೆ ಯೇಸುವಿನ ಕುರಿತಾದ ಶುಭವಾರ್ತೆಯನ್ನು ತಿಳಿಸಿದನು.
ACT 8:36 ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, “ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?” ಎಂದನು.
ACT 8:37 “ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು,” ಎಂದು ಫಿಲಿಪ್ಪನು ಹೇಳಿದನು. “ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ,” ಎಂದು ಕಂಚುಕಿಯು ಪ್ರಕಟಿಸಿದನು.
ACT 8:38 ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
ACT 8:39 ಅವರು ನೀರಿನಿಂದ ಹೊರಗೆ ಬಂದಾಗ, ತಕ್ಷಣವೇ ಕರ್ತದೇವರ ಆತ್ಮರು ಫಿಲಿಪ್ಪನನ್ನು ತೆಗೆದುಕೊಂಡು ಹೋದರು. ಆಮೇಲೆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಕಂಚುಕಿಯು ಸಂತೋಷಪಡುತ್ತಾ ತನ್ನ ಮಾರ್ಗದಲ್ಲಿ ಹೊರಟುಹೋದನು.
ACT 8:40 ಫಿಲಿಪ್ಪನು, ಅಜೋತಿನಲ್ಲಿ ಕಾಣಿಸಿಕೊಂಡು, ಕೈಸರೈಯ ತಲುಪುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಪ್ರಯಾಣಮಾಡಿದನು.
ACT 9:1 ಇಷ್ಟರಲ್ಲಿ, ಸೌಲನು ಕರ್ತ ಯೇಸುವಿನ ಶಿಷ್ಯರನ್ನು ಕೊಲೆಮಾಡುವ ಬೆದರಿಕೆಯನ್ನು ಹಾಕುತ್ತಲೇ ಇನ್ನೂ ಮುಂದುವರೆದನು. ಮಹಾಯಾಜಕನ ಬಳಿಗೆ ಹೋಗಿ,
ACT 9:2 ಈ ಮಾರ್ಗಕ್ಕೆ ಸಂಬಂಧಪಟ್ಟ ಪುರುಷರಾಗಲಿ ಸ್ತ್ರೀಯರಾಗಲಿ ದಮಸ್ಕದಲ್ಲಿದ್ದರೆ ಅವರನ್ನು ತಾನು ಬಂಧಿಸಿ ಯೆರೂಸಲೇಮಿಗೆ ತರಲಿಕ್ಕಾಗುವಂತೆ ದಮಸ್ಕದಲ್ಲಿಯ ಸಭಾಮಂದಿರಗಳಿಗೆ ಕೊಡಲು ಮಹಾಯಾಜಕನಿಂದ ಪತ್ರ ಪಡೆದುಕೊಂಡನು.
ACT 9:3 ಸೌಲನು ಪ್ರಯಾಣ ಮಾಡುತ್ತಾ ದಮಸ್ಕಕ್ಕೆ ಸಮೀಪ ಬಂದಾಗ, ಫಕ್ಕನೆ ಪರಲೋಕದಿಂದ ಒಂದು ಬೆಳಕು ಅವನ ಸುತ್ತಲೂ ಹೊಳೆಯಿತು.
ACT 9:4 ಅವನು ನೆಲದ ಮೇಲೆ ಬೀಳಲು, “ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿಸಿಕೊಂಡನು.
ACT 9:5 “ಸ್ವಾಮಿ, ತಾವು ಯಾರು?” ಎಂದು ಸೌಲನು ಪ್ರಶ್ನಿಸಲು, “ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು.
ACT 9:6 ಎದ್ದೇಳು ಪಟ್ಟಣದೊಳಗೆ ಹೋಗು, ನೀನು ಏನು ಮಾಡಬೇಕು ಎಂಬುದನ್ನು ಅಲ್ಲಿ ನಿನಗೆ ತಿಳಿಸಲಾಗುವುದು,” ಎಂದು ಕರ್ತ ಯೇಸು ಹೇಳಿದರು.
ACT 9:7 ಸೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು ಮೂಕರಂತೆ ನಿಂತುಕೊಂಡರು. ಅವರಿಗೆ ಧ್ವನಿ ಕೇಳಿಸಿತೇ ಹೊರತು ಯಾರೂ ಕಾಣಲಿಲ್ಲ.
ACT 9:8 ಸೌಲನು ನೆಲದಿಂದ ಎದ್ದ ಮೇಲೆ ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಅವರು ಅವನ ಕೈಹಿಡಿದು ದಮಸ್ಕದೊಳಗೆ ಕರೆದುಕೊಂಡು ಹೋದರು.
ACT 9:9 ಮೂರು ದಿನ ಅವನು ಕುರುಡನಾಗಿದ್ದನು. ಅವನು ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ.
ACT 9:10 ದಮಸ್ಕದಲ್ಲಿ ಅನನೀಯ ಎಂಬ ಹೆಸರಿನ ಶಿಷ್ಯನಿದ್ದನು. ದರ್ಶನದಲ್ಲಿ ಕರ್ತ ಯೇಸುವು ಅವನನ್ನು, “ಅನನೀಯಾ!” ಎಂದು ಕರೆದರು. “ಇಗೋ, ಇದ್ದೇನೆ ಸ್ವಾಮಿ,” ಎಂದು ಅವನು ಉತ್ತರಕೊಟ್ಟನು.
ACT 9:11 ಕರ್ತ ಯೇಸುವು ಅವನಿಗೆ, “ನೀನೆದ್ದು ‘ನೇರ ಬೀದಿ’ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬುವನನ್ನು ವಿಚಾರಿಸು. ಅವನು ಪ್ರಾರ್ಥನೆ ಮಾಡುತ್ತಿದ್ದಾನೆ.
ACT 9:12 ತನ್ನ ದೃಷ್ಟಿ ಪುನಃ ಬರುವಂತೆ ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ಬಂದು ತನ್ನ ಮೇಲೆ ಕೈಗಳನ್ನಿಡುವುದನ್ನು ಅವನು ದರ್ಶನದಲ್ಲಿ ಕಂಡಿದ್ದಾನೆ,” ಎಂದು ಹೇಳಿದರು.
ACT 9:13 ಆಗ ಅನನೀಯನು, “ಸ್ವಾಮಿ, ಈ ಮನುಷ್ಯನ ಬಗ್ಗೆ ಬಹಳ ಕೇಳಿದ್ದೇನೆ. ಯೆರೂಸಲೇಮಿನಲ್ಲಿ ನಿಮ್ಮ ಭಕ್ತರಿಗೆ ಬಹಳ ಕೇಡು ಮಾಡಿದ್ದಾನೆ.
ACT 9:14 ಇಲ್ಲಿ ನಿಮ್ಮ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕನಿಂದ ಅಧಿಕಾರದ ಪತ್ರ ಪಡೆದು ಬಂದಿದ್ದಾನೆ,” ಎಂದು ಉತ್ತರಕೊಟ್ಟನು.
ACT 9:15 ಆದರೆ ಕರ್ತ ಯೇಸುವು ಅವನಿಗೆ, “ಹೋಗು! ಯೆಹೂದ್ಯರಲ್ಲದವರಿಗೂ ಅವರ ಅರಸುಗಳಿಗೂ ಇಸ್ರಾಯೇಲ್ ದೇಶಕ್ಕೂ ನನ್ನ ಹೆಸರನ್ನು ಪ್ರಸಿದ್ಧಿಪಡಿಸಲು ಅವನು ನಾನು ಆಯ್ದುಕೊಂಡ ಸಾಧನವಾಗಿದ್ದಾನೆ.
ACT 9:16 ನನ್ನ ಹೆಸರಿನ ನಿಮಿತ್ತವಾಗಿ ಅವನು ಎಷ್ಟು ಕಷ್ಟಪಡಬೇಕೆಂಬುದನ್ನು ನಾನು ಅವನಿಗೆ ತೋರಿಸುವೆನು,” ಎಂದು ಹೇಳಿದರು.
ACT 9:17 ಆಮೇಲೆ ಅನನೀಯನು ಆ ಮನೆಗೆ ಹೋಗಿ ಒಳಗೆ ಪ್ರವೇಶಿಸಿದನು. ತನ್ನ ಕೈಗಳನ್ನು ಸೌಲನ ಮೇಲಿಟ್ಟು, “ಸಹೋದರ ಸೌಲನೇ, ನೀನು ಇಲ್ಲಿಗೆ ಬರುತ್ತಿದ್ದಾಗ ದಾರಿಯಲ್ಲಿ ನಿನಗೆ ದರ್ಶನಕೊಟ್ಟ ಕರ್ತ ಯೇಸು, ನಿನಗೆ ಪುನಃ ದೃಷ್ಟಿ ಬರುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದು ಹೇಳಲು,
ACT 9:18 ತಕ್ಷಣವೇ, ಸೌಲನ ಕಣ್ಣುಗಳಿಂದ ಪರೆ ಕಳಚಿದಂತಾಗಿ ಅವನಿಗೆ ಪುನಃ ದೃಷ್ಟಿ ಬಂದಿತು. ಅವನು ಎದ್ದು ದೀಕ್ಷಾಸ್ನಾನವನ್ನು ಪಡೆದುಕೊಂಡನು.
ACT 9:19 ತರುವಾಯ ಊಟಮಾಡಿ ಚೇತರಿಸಿಕೊಂಡನು. ಆಗ ಅವನು ಎದ್ದು ನಿಲ್ಲಲು ಶಕ್ತನಾದನು. ದಮಸ್ಕದಲ್ಲಿ ಶಿಷ್ಯರೊಂದಿಗೆ ಸೌಲನು ಹಲವಾರು ದಿನಗಳನ್ನು ಕಳೆದನು.
ACT 9:20 ತಡಮಾಡದೆ, ಯೇಸುವೇ “ದೇವಪುತ್ರ” ಎಂದು ಸಭಾಮಂದಿರಗಳಲ್ಲಿ ಸಾರಲು ಪ್ರಾರಂಭಿಸಿದನು.
ACT 9:21 ಅವನ ಮಾತುಗಳನ್ನು ಕೇಳಿದವರಿಗೆ ಅತ್ಯಾಶ್ಚರ್ಯವಾಯಿತು. ಅವರು, “ಈ ಹೆಸರನ್ನು ಹೇಳುವವರೆಲ್ಲರಿಗೆ ಯೆರೂಸಲೇಮಿನಲ್ಲಿ ತೊಂದರೆಕೊಟ್ಟು ಗೊಂದಲವೆಬ್ಬಿಸಿದವನು ಇವನೇ ಅಲ್ಲವೇ? ಅಂಥವರನ್ನು ಸೆರೆಹಿಡಿದು ಮುಖ್ಯಯಾಜಕರ ಬಳಿಗೆ ಎಳೆದೊಯ್ಯಲು ಇಲ್ಲಿಗೆ ಬಂದವನಲ್ಲವೇ?” ಎಂದು ಪ್ರಶ್ನಿಸಿಕೊಂಡರು.
ACT 9:22 ಆದರೂ ಸೌಲನು ಹೆಚ್ಚೆಚ್ಚು ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತ ಆಗಿದ್ದಾರೆಂದು ರುಜುವಾತುಪಡಿಸುತ್ತಾ ದಮಸ್ಕದ ನಿವಾಸಿಗಳಾದ ಯೆಹೂದ್ಯರನ್ನು ಗಲಿಬಿಲಿಗೆ ಒಳಪಡಿಸಿದನು.
ACT 9:23 ಅನೇಕ ದಿನಗಳ ತರುವಾಯ, ಸೌಲನನ್ನು ಕೊಲ್ಲಲು ಯೆಹೂದ್ಯರು ರಹಸ್ಯವಾಗಿ ಯೋಚಿಸಿದರು.
ACT 9:24 ಆದರೆ ಅವರ ಯೋಚನೆ ಸೌಲನಿಗೆ ತಿಳಿಯಿತು. ಅವರು ಅವನನ್ನು ಕೊಲ್ಲುವುದಕ್ಕಾಗಿ ಹಗಲಿರುಳು ಪಟ್ಟಣದ ದ್ವಾರಗಳ ಬಳಿಯಲ್ಲಿ ಹೊಂಚುಹಾಕುತ್ತಿದ್ದರು.
ACT 9:25 ಆದರೆ ಸೌಲನ ಅನುಯಾಯಿಗಳು ರಾತ್ರಿಯಲ್ಲಿ ಅವನನ್ನು ಕರೆದುಕೊಂಡು ಹೋಗಿ, ಬುಟ್ಟಿಯಲ್ಲಿ ಕುಳ್ಳಿರಿಸಿ, ಗೋಡೆಯ ಕಿಟಿಕಿಯ ಮುಖಾಂತರ ಹೊರಗೆ ಕೆಳಗಿಳಿಸಿದರು.
ACT 9:26 ಸೌಲನು ಯೆರೂಸಲೇಮಿಗೆ ಬಂದು, ಶಿಷ್ಯರ ಜೊತೆಯಲ್ಲಿರಲು ಪ್ರಯತ್ನಿಸಿದನು. ಆದರೆ ಅವನು ನಿಜವಾಗಿಯೂ ಶಿಷ್ಯನೆಂದು ನಂಬದೆ ಅವರು ಅವನಿಗೆ ಭಯಪಟ್ಟಿದ್ದರು.
ACT 9:27 ಬಾರ್ನಬನು ಅವನನ್ನು ಕರೆದುಕೊಂಡು ಅಪೊಸ್ತಲರ ಬಳಿಗೆ ಬಂದನು. ಸೌಲನು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ಕರ್ತ ಯೇಸು ದರ್ಶನವಾದದ್ದನ್ನೂ ಕರ್ತ ಯೇಸು ಅವನೊಂದಿಗೆ ಮಾತನಾಡಿದ್ದನ್ನೂ ಯಾವ ಭಯವಿಲ್ಲದೆ ದಮಸ್ಕದಲ್ಲಿ ಯೇಸುವಿನ ಹೆಸರಿನಲ್ಲಿ ಅವನು ಬೋಧಿಸಿದ್ದನ್ನೂ ಬಾರ್ನಬನು ತಿಳಿಸಿದನು.
ACT 9:28 ಹೀಗೆ ಸೌಲನು ಅಪೊಸ್ತಲರೊಂದಿಗೆ ಇದ್ದು ಯೆರೂಸಲೇಮಿನಲ್ಲಿ ಆತಂಕವಿಲ್ಲದೆ ತಿರುಗಾಡಿ ಕರ್ತ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿದನು.
ACT 9:29 ಗ್ರೀಕ್ ಮಾತನಾಡುವ ಯೆಹೂದ್ಯರೊಂದಿಗೆ ಅವನು ಮಾತನಾಡಿ ಚರ್ಚೆಮಾಡಿದಾಗ, ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು.
ACT 9:30 ಸಹೋದರರಿಗೆ ಈ ಸುದ್ದಿ ತಿಳಿದಾಗ, ಅವರು ಸೌಲನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
ACT 9:31 ಆ ಸಮಯದಲ್ಲಿ ಯೂದಾಯ, ಗಲಿಲಾಯ, ಸಮಾರ್ಯದಲ್ಲೆಲ್ಲಾ ಇದ್ದ ಸಭೆಯು ಸಮಾಧಾನ ಹೊಂದಿತು. ಸಭೆ ಬಲಗೊಂಡು ಪವಿತ್ರಾತ್ಮರಿಂದ ಧೈರ್ಯಹೊಂದಿ ಸಂಖ್ಯೆಯಲ್ಲಿ ವೃದ್ಧಿಸುತ್ತಾ, ಕರ್ತ ಯೇಸುವಿನ ಭಯದಲ್ಲಿ ಮುನ್ನಡೆಯಿತು.
ACT 9:32 ಪೇತ್ರನು ಬೇರೆ ಬೇರೆ ಕಡೆಗಳಲ್ಲಿ ಪ್ರಯಾಣಮಾಡಿದ ತರುವಾಯ ಲುದ್ದದಲ್ಲಿಯ ದೇವಭಕ್ತರನ್ನು ಸಂದರ್ಶಿಸಲು ಹೋದನು.
ACT 9:33 ಅಲ್ಲಿ ಐನೇಯ ಎಂಬ ಹೆಸರಿನ ಒಬ್ಬಾತನನ್ನು ಸಂದರ್ಶಿಸಿದನು. ಅವನು ಪಾರ್ಶ್ವವಾಯು ರೋಗ ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದನು.
ACT 9:34 ಪೇತ್ರನು ಅವನಿಗೆ, “ಐನೇಯ, ಕ್ರಿಸ್ತ ಯೇಸುವು ನಿನ್ನನ್ನು ಗುಣಪಡಿಸುತ್ತಾರೆ. ಏಳು, ನಿನ್ನ ಹಾಸಿಗೆಯನ್ನು ಸುತ್ತಿಡು,” ಎಂದು ಹೇಳಲು, ತಕ್ಷಣವೇ ಐನೇಯ ಮೇಲಕ್ಕೆದ್ದನು.
ACT 9:35 ಲುದ್ದ ಹಾಗೂ ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಕರ್ತ ಯೇಸುವಿನ ಕಡೆಗೆ ತಿರುಗಿಕೊಂಡರು.
ACT 9:36 ಯೊಪ್ಪ ಎಂಬಲ್ಲಿ ತಬಿಥಾ ಎಂಬ ಹೆಸರಿನ ದೇವಭಕ್ತೆ ಇದ್ದಳು. ಈ ಹೆಸರಿನ ಗ್ರೀಕ್ ಭಾಷಾಂತರ “ದೊರ್ಕ” ಎಂದಾಗುತ್ತದೆ. ಆಕೆ ಬಡವರಿಗೆ ಸಹಾಯ ಮಾಡುತ್ತಾ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಿದ್ದಳು.
ACT 9:37 ಆ ಸಮಯದಲ್ಲಿ ಆಕೆ ಅಸ್ವಸ್ಥಳಾಗಿ ಸತ್ತುಹೋದಳು. ಆಕೆಯ ಶವಕ್ಕೆ ಸ್ನಾನಮಾಡಿಸಿ, ಅದನ್ನು ಮೇಲೆ ಮಾಳಿಗೆಯ ಕೋಣೆಯಲ್ಲಿ ಇಟ್ಟರು.
ACT 9:38 ಲುದ್ದ ಊರು ಯೊಪ್ಪ ಊರಿಗೆ ಸಮೀಪದಲ್ಲಿತ್ತು. ಪೇತ್ರನು ಲುದ್ದದಲ್ಲಿರುವುದು ದೇವ ಭಕ್ತರಿಗೆ ತಿಳಿಯಲು ಅವರು, “ಕೂಡಲೇ ಬರಬೇಕು,” ಎಂದು ಹೇಳಿ ಅವನನ್ನು ಕರೆದುಕೊಂಡು ಬರಲು ಇಬ್ಬರನ್ನು ಕಳುಹಿಸಿದರು.
ACT 9:39 ಅವರೊಂದಿಗೆ ಪೇತ್ರನು ಹೊರಟನು. ಅವನು ಬಂದಾಗ ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ವಿಧವೆಯರು ಅವನ ಸುತ್ತಲೂ ನಿಂತುಕೊಂಡು ದೊರ್ಕಳು ಜೀವದಿಂದ ಇದ್ದಾಗ ಆಕೆ ಸಿದ್ಧಪಡಿಸಿದ ನಿಲುವಂಗಿಗಳನ್ನು ಇತರ ಬಟ್ಟೆಗಳನ್ನು ಅವನಿಗೆ ತೋರಿಸುತ್ತಾ ಕಣ್ಣೀರಿಟ್ಟರು.
ACT 9:40 ಪೇತ್ರನು ಅವರೆಲ್ಲರನ್ನು ಕೋಣೆಯಿಂದ ಹೊರಗೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಮೃತ ಸ್ತ್ರೀಯ ಕಡೆಗೆ ತಿರುಗಿಕೊಂಡು, “ತಬಿಥಾ, ಏಳು,” ಎಂದು ಹೇಳಿದನು. ಆಕೆ ತನ್ನ ಕಣ್ಣು ತೆರೆದು ಪೇತ್ರನನ್ನು ಕಂಡು ಎದ್ದು ಕುಳಿತುಕೊಂಡಳು.
ACT 9:41 ಪೇತ್ರನು ಆಕೆಯ ಕೈಯನ್ನು ಹಿಡಿದು ಆಕೆ ಎದ್ದು ನಿಂತುಕೊಳ್ಳುವಂತೆ ಮಾಡಿದನು. ಅನಂತರ ದೇವಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ಆಕೆಯನ್ನು ಅವರಿಗೆ ಒಪ್ಪಿಸಿಕೊಟ್ಟನು.
ACT 9:42 ಈ ವಿಷಯ ಯೊಪ್ಪದಲ್ಲಿದ್ದವರೆಲ್ಲರಿಗೂ ತಿಳಿಯಿತು. ಕರ್ತ ಯೇಸುವಿನಲ್ಲಿ ಅನೇಕರು ವಿಶ್ವಾಸವನ್ನಿಟ್ಟರು.
ACT 9:43 ಪೇತ್ರನು ಯೊಪ್ಪದಲ್ಲಿ ಸೀಮೋನ ಎಂಬ ಹೆಸರಿನ ಚರ್ಮಕಾರನೊಂದಿಗೆ ಕೆಲವು ದಿನ ಇದ್ದನು.
ACT 10:1 ಕೈಸರೈಯದಲ್ಲಿ ಕೊರ್ನೇಲ್ಯ ಎಂಬುವನಿದ್ದನು. “ಇಟಲಿಯ ದಳ” ಎಂದು ಹೆಸರಿನ ದಳಕ್ಕೆ ಅವನು ಶತಾಧಿಪತಿ.
ACT 10:2 ಅವನೂ ಅವನ ಕುಟುಂಬದವರು ಭಕ್ತಿವಂತರೂ ದೇವರಿಗೆ ಭಯಪಡುವವರೂ ಆಗಿದ್ದರು. ಅವನು ಕೊರತೆಯಲ್ಲಿರುವವರಿಗೆ ಧಾರಾಳವಾಗಿ ಕೊಡುತ್ತಿದ್ದನು. ಅವನು ಅನುದಿನವೂ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದನು.
ACT 10:3 ಒಂದು ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ ಅವನಿಗೆ ಒಂದು ದರ್ಶನವಾಯಿತು. ತನ್ನ ಬಳಿಗೆ ಒಬ್ಬ ದೇವದೂತನು ಬಂದು, “ಕೊರ್ನೇಲ್ಯನೇ!” ಎಂದು ಕರೆಯುವ ದೇವದೂತನನ್ನು ಸ್ಪಷ್ಟವಾಗಿ ಕಂಡನು.
ACT 10:4 ಕೊರ್ನೇಲ್ಯನು ಭಯದಿಂದ ದೇವದೂತನನ್ನೇ ದೃಷ್ಟಿಸಿ ನೋಡಿ, “ಏನು ಸ್ವಾಮೀ?” ಎಂದು ಕೇಳಲು, “ನಿನ್ನ ಪ್ರಾರ್ಥನೆಗಳು, ಬಡವರಿಗೆ ನೀನು ಕೊಟ್ಟ ದಾನಗಳು ದೇವರ ಸನ್ನಿಧಿಗೆ ಜ್ಞಾಪಕಾರ್ಥ ಅರ್ಪಣೆಗಳಾಗಿ ಬಂದಿವೆ.
ACT 10:5 ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಇಲ್ಲಿಗೆ ಕರೆದುಕೊಂಡು ಬರಲು ಹೇಳು.
ACT 10:6 ಚರ್ಮಕಾರನಾದ ಸೀಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದಾನೆ. ಆ ಮನೆ ಸಮುದ್ರ ತೀರದಲ್ಲಿದೆ,” ಎಂದು ದೇವದೂತನು ಹೇಳಿದನು.
ACT 10:7 ತನ್ನೊಂದಿಗೆ ಮಾತನಾಡಿದ ದೇವದೂತನು ಅದೃಶ್ಯವಾದ ಮೇಲೆ ಕೊರ್ನೇಲ್ಯನು ತನ್ನ ಇಬ್ಬರು ಸೇವಕರನ್ನು ಮತ್ತು ತನ್ನ ಪರಿಚಾರಕರಲ್ಲಿ ಭಕ್ತಿವಂತನಾದ ಒಬ್ಬ ಸಿಪಾಯಿಯನ್ನು ಕರೆದು,
ACT 10:8 ಸಂಭವಿಸಿದ್ದೆಲ್ಲವನ್ನು ಅವರಿಗೆ ವಿವರಿಸಿ, ಅವರನ್ನು ಯೊಪ್ಪಕ್ಕೆ ಕಳುಹಿಸಿದನು.
ACT 10:9 ಮಾರನೆಯ ದಿನ ಅವರು ಪ್ರಯಾಣಮಾಡಿ ಮಧ್ಯಾಹ್ನದ ಸಮಯ ಯೊಪ್ಪ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆಗತಾನೇ ಪೇತ್ರನು ಪ್ರಾರ್ಥಿಸಲು ಮಾಳಿಗೆಯ ಮೇಲಕ್ಕೆ ಹೋದನು.
ACT 10:10 ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕೆನಿಸಿತು. ಊಟ ಸಿದ್ಧತೆಯಾಗುತ್ತಿದ್ದಾಗ ಅವನು ಧ್ಯಾನ ಪರವಶನಾದನು.
ACT 10:11 ಪರಲೋಕವು ತೆರೆಯಲಾಗಿ ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವದನ್ನು ಕಂಡನು.
ACT 10:12 ಎಲ್ಲಾ ಜಾತಿಯ ನಾಲ್ಕು ಕಾಲಿನ ಪ್ರಾಣಿಗಳು, ಭೂಮಿಯ ಮೇಲೆ ಹರಿದಾಡುವ ಸರೀಸೃಪಗಳು, ಹಾರಾಡುವ ಪಕ್ಷಿಗಳು ಅದರಲ್ಲಿದ್ದವು.
ACT 10:13 ಆಗ, “ಪೇತ್ರನೇ, ಎದ್ದೇಳು, ಕೊಂದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.
ACT 10:14 ಆದರೆ ಪೇತ್ರನು, “ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,” ಎಂದನು.
ACT 10:15 ವಾಣಿಯು ಎರಡನೆಯ ಬಾರಿಗೆ, “ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.
ACT 10:16 ಹೀಗೆ ಮೂರು ಸಾರಿ ನಡೆದಮೇಲೆ, ಕೂಡಲೇ ಆ ಜೋಳಿಗೆಯನ್ನು ಪರಲೋಕಕ್ಕೆ ಎತ್ತಿಕೊಳ್ಳಲಾಯಿತು.
ACT 10:17 ಈ ದರ್ಶನದ ಅರ್ಥವೇನೆಂದು ಪೇತ್ರನು ಯೋಚಿಸುತ್ತಿರಲು, ಇಗೋ, ಕೊರ್ನೇಲ್ಯನು ಕಳುಹಿಸಿದ ಜನರು ಸೀಮೋನನ ಮನೆಯನ್ನು ಕಂಡುಕೊಂಡು ಅಲ್ಲಿ ದ್ವಾರದ ಬಳಿಯಲ್ಲಿ ನಿಂತಿದ್ದರು.
ACT 10:18 ಅವರು ಪೇತ್ರನು ಎಂದು ಕರೆಯಲಾಗುವ ಸೀಮೋನ ಅಲ್ಲಿ ಇಳಿದುಕೊಂಡಿರುವನೋ ಎಂದು ವಿಚಾರಿಸಿದರು.
ACT 10:19 ಪೇತ್ರನು ಇನ್ನೂ ಆ ದರ್ಶನದ ಬಗ್ಗೆ ಯೋಚಿಸುತ್ತಿರಲು, ಪವಿತ್ರಾತ್ಮ ದೇವರು ಅವನಿಗೆ, “ಸೀಮೋನನೇ ಇಗೋ, ಮೂವರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ.
ACT 10:20 ಎದ್ದೇಳು, ಕೆಳಗಿಳಿದು ಹೋಗು. ಅವರ ಜೊತೆಯಲ್ಲಿ ಹೋಗಲು ಹಿಂಜರಿಯಬೇಡ, ನಾನೇ ಅವರನ್ನು ಕಳುಹಿಸಿರುವೆ,” ಎಂದರು.
ACT 10:21 ಪೇತ್ರನು ಕೆಳಗಿಳಿದು ಹೋಗಿ, ಅವರಿಗೆ, “ನೀವು ಹುಡುಕುತ್ತಿರುವವನು ನಾನೇ. ನೀವು ಬಂದಿರುವ ಕಾರಣವೇನು?” ಎಂದು ಕೇಳಿದನು.
ACT 10:22 ಅವರು, “ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನು, ದೇವರಿಗೆ ಭಯಪಡುವವನು, ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನೀನು ಹೇಳುವಂಥದ್ದನ್ನು ಕೇಳಲಿಕ್ಕಾಗಿ ನಿನ್ನನ್ನು ಅಲ್ಲಿಗೆ ಕರೆಯಿಸಬೇಕೆಂದು ಒಬ್ಬ ಪರಿಶುದ್ಧ ದೇವದೂತನಿಂದ ಆದೇಶಪಡೆದಿದ್ದಾನೆ,” ಎಂದರು.
ACT 10:23 ಪೇತ್ರನು ಅವರನ್ನು ತನ್ನ ಅತಿಥಿಗಳಾಗಿರಲು ಮನೆಯೊಳಗೆ ಕರೆದನು. ಮರುದಿನ ಪೇತ್ರನು ಅವರೊಂದಿಗೆ ಪ್ರಯಾಣ ಬೆಳೆಸಿದನು. ಯೊಪ್ಪದಲ್ಲಿಯ ಕೆಲವು ಸಹೋದರರು ಅವನೊಂದಿಗೆ ಹೊರಟರು.
ACT 10:24 ಮರುದಿನ ಅವನು ಕೈಸರೈಯವನ್ನು ತಲುಪಿದನು ಮತ್ತು ಕೊರ್ನೇಲ್ಯನು ಅವರಿಗಾಗಿ ಕಾಯುತ್ತಿದ್ದನು. ತನ್ನ ಬಂಧುಗಳನ್ನು ಹತ್ತಿರದ ಸ್ನೇಹಿತರನ್ನು ಕರೆಯಿಸಿದ್ದನು.
ACT 10:25 ಆಗ ಪೇತ್ರನು ಮನೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಮುಂದೆ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಮಾಡಿದನು.
ACT 10:26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದೇಳು, ನಾನೂ ಒಬ್ಬ ಮನುಷ್ಯನೇ,” ಎಂದು ಹೇಳಿದನು.
ACT 10:27 ಅವನೊಂದಿಗೆ ಮಾತನಾಡುತ್ತಾ ಪೇತ್ರನು ಮನೆಯೊಳಗೆ ಹೋಗಿ ಅಲ್ಲಿ ಜನರ ದೊಡ್ಡ ಗುಂಪೇ ಇರುವುದನ್ನು ಕಂಡನು.
ACT 10:28 ಪೇತ್ರನು ಅವರಿಗೆ: “ಯೆಹೂದ್ಯನು ಯೆಹೂದ್ಯರಲ್ಲದವರೊಂದಿಗೆ ಸೇರಿ, ಅವರನ್ನು ಭೇಟಿ ಮಾಡುವುದಾಗಲಿ ನಮ್ಮ ಯೆಹೂದಿ ನಿಯಮಕ್ಕೆ ವಿರೋಧವಾದದ್ದು ಎಂದು ನಿಮಗೆಲ್ಲರಿರೂ ತಿಳಿದೇ ಇದೆ. ಆದರೆ ಯಾವ ಮನುಷ್ಯನನ್ನೂ ಅಶುದ್ಧನು ಇಲ್ಲವೆ ನಿಷಿದ್ಧವಾದವನು ಎಂದು ಕರೆಯಬಾರದು ಎಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ.
ACT 10:29 ಆದ್ದರಿಂದ ನನ್ನನ್ನು ಕರೆಕಳುಹಿಸಿದಾಗ ಯಾವ ಆಕ್ಷೇಪಣೆ ಮಾಡದೆ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಕರೆಕಳುಹಿಸಿದ ಕಾರಣವನ್ನು ಈಗ ನಾನು ತಿಳಿಯಬಹುದೋ?” ಎಂದನು.
ACT 10:30 ಆಗ ಕೊರ್ನೇಲ್ಯನು, “ನಾಲ್ಕು ದಿನಗಳ ಹಿಂದೆ ಈ ಸಮಯದಲ್ಲಿ ಅಂದರೆ, ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ ಮಾಡುತ್ತಿದ್ದೆನು. ಆಗ ಫಕ್ಕನೆ ಹೊಳೆಯುತ್ತಿರುವ ವಸ್ತ್ರ ಧರಿಸಿದ್ದ ಒಬ್ಬನು ನನ್ನೆದುರು ಬಂದು ನಿಂತುಕೊಂಡನು.
ACT 10:31 ಅವನು ನನಗೆ, ‘ಕೊರ್ನೇಲ್ಯನೇ, ದೇವರು ನಿನ್ನ ಪ್ರಾರ್ಥನೆ ಕೇಳಿದ್ದಾರೆ. ಬಡವರಿಗೆ ಕೊಟ್ಟ ನಿನ್ನ ದಾನಗಳನ್ನು ಜ್ಞಾಪಿಸಿಕೊಂಡಿದ್ದಾರೆ.
ACT 10:32 ಪೇತ್ರನೆಂದು ಹೆಸರಿನ ಸೀಮೋನನನ್ನು ಕರೆದುಕೊಂಡು ಬರಲು ಯೊಪ್ಪಕ್ಕೆ ಕೆಲವರನ್ನು ಕಳುಹಿಸು. ಪೇತ್ರನು ಸಮುದ್ರ ತೀರದಲ್ಲಿರುವ ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇಳಿದುಕೊಂಡಿದ್ದಾನೆ,’ ಎಂದು ಹೇಳಿದನು.
ACT 10:33 ಆದ್ದರಿಂದ ನಾನು ನಿನ್ನನ್ನು ಕೂಡಲೇ ಕರೆದುಕೊಂಡು ಬರಲು ಕೆಲವರನ್ನು ಕಳುಹಿಸಿದೆ. ನೀನು ಬಂದಿರುವುದು ಒಳ್ಳೆಯದೇ ಆಯಿತು. ಕರ್ತ ಯೇಸು ನಮಗೆ ಏನು ಹೇಳಬೇಕೆಂದು ನಿನಗೆ ಆಜ್ಞಾಪಿಸಿರುವರೋ ಅದೆಲ್ಲವನ್ನು ಕೇಳಲು ಈಗ ನಾವು ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.
ACT 10:34 ಆಗ ಪೇತ್ರನು ಮಾತನಾಡಲು ಪ್ರಾರಂಭಿಸಿ: “ದೇವರು ಪಕ್ಷಪಾತಿಯಲ್ಲವೆಂದು ಈಗ ನನಗೆ ಮನದಟ್ಟಾಗಿದೆ.
ACT 10:35 ದೇವರು ಪ್ರತಿಯೊಂದು ದೇಶದಲ್ಲಿಯೂ ತಮಗೆ ಭಯಪಡುವ ಮತ್ತು ಸರಿಯಾದದ್ದನ್ನು ಮಾಡುವ ಜನರನ್ನು ಸ್ವೀಕರಿಸುತ್ತಾರೆ.
ACT 10:36 ಸರ್ವಸೃಷ್ಟಿಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಸಮಾಧಾನದ ಶುಭಸಮಾಚಾರ ಹೇಳುತ್ತಾ, ಇಸ್ರಾಯೇಲ್ ಜನರಿಗೆ ದೇವರು ಕಳುಹಿಸಿದ ವಾಕ್ಯವನ್ನು ನೀವು ತಿಳಿದಿದ್ದೀರಿ.
ACT 10:37 ಯೋಹಾನನು ದೀಕ್ಷಾಸ್ನಾನದ ಬಗ್ಗೆ ಬೋಧಿಸಿದ ನಂತರ ಗಲಿಲಾಯದಲ್ಲಿ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಏನು ಸಂಭವಿಸಿತೆಂಬುದನ್ನೂ ನೀವು ತಿಳಿದಿದ್ದೀರಿ.
ACT 10:38 ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮರಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದ್ದರು. ಮಾತ್ರವಲ್ಲದೆ, ದೇವರು ಯೇಸುವಿನೊಡನೆ ಇದ್ದುದರಿಂದ, ಅವರು ಬೇರೆ ಬೇರೆ ಕಡೆಗಳಿಗೆ ಹೋಗಿ ಒಳಿತನ್ನು ಮಾಡಿ, ಪಿಶಾಚನಿಂದ ಪೀಡಿತರಾದವರನ್ನು ಗುಣಪಡಿಸುತ್ತಾ ಸಂಚರಿಸಿದ್ದನ್ನು ನೀವು ಬಲ್ಲಿರಿ.
ACT 10:39 “ಯೆಹೂದ್ಯರ ನಾಡಿನಲ್ಲಿ ಮತ್ತು ಯೆರೂಸಲೇಮ ಪಟ್ಟಣದಲ್ಲಿಯೂ ಯೇಸು ಮಾಡಿದ ಪ್ರತಿಯೊಂದಕ್ಕೂ ನಾವು ಸಾಕ್ಷಿಗಳು. ಮರದ ಕಂಬಕ್ಕೆ ತೂಗುಹಾಕಿ ಯೇಸುವನ್ನು ನಾಯಕರು ಕೊಂದುಹಾಕಿದರು,
ACT 10:40 ಆದರೆ ಮೂರನೆಯ ದಿನದಲ್ಲಿ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಏಳುವಂತೆ ಮತ್ತು ಕಾಣಿಸಿಕೊಳ್ಳುವಂತೆ ಮಾಡಿದರು.
ACT 10:41 ಯೇಸುವನ್ನು ಎಲ್ಲರೂ ನೋಡಲಿಲ್ಲ. ಆದರೆ ದೇವರು ಮೊದಲೇ ನೇಮಿಸಿಕೊಂಡ ಸಾಕ್ಷಿಗಳಾಗಿರುವ ನಮಗೆ ಕಾಣಿಸಿಕೊಂಡರು. ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದು ಬಂದ ತರುವಾಯ ಅವರೊಡನೆ ಊಟ, ಪಾನಮಾಡಿದ ನಮಗೆ ಕಾಣಿಸಿಕೊಂಡರು.
ACT 10:42 ಜೀವಿಸುವವರಿಗೂ ಸತ್ತವರಿಗೂ ನ್ಯಾಯಾಧೀಶರಾಗಿ ದೇವರಿಂದ ನೇಮಕವಾದವರು ಯೇಸುವೇ ಎಂದು ನಾವು ಜನರಿಗೆ ಬೋಧಿಸಿ ಸಾಕ್ಷಿ ಕೊಡಬೇಕೆಂದೂ ಕ್ರಿಸ್ತ ಯೇಸು ನಮಗೆ ಆಜ್ಞಾಪಿಸಿದ್ದಾರೆ.
ACT 10:43 ಯೇಸುವಿನಲ್ಲಿ ನಂಬಿಕೆಯನ್ನಿಡುವ ಪ್ರತಿಯೊಬ್ಬನು ಅವರ ಹೆಸರಿನ ಮುಖಾಂತರ ಪಾಪಗಳ ಕ್ಷಮಾಪಣೆ ಹೊಂದುವನು ಎಂದು ಅವರ ಬಗ್ಗೆ ಎಲ್ಲಾ ಪ್ರವಾದಿಗಳು ಸಾಕ್ಷಿಕೊಟ್ಟಿದ್ದಾರೆ,” ಎಂದನು.
ACT 10:44 ಪೇತ್ರನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ, ಆ ಸಂದೇಶವನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮ ದೇವರು ಇಳಿದು ಬಂದರು.
ACT 10:45 ಯೆಹೂದ್ಯರಲ್ಲದವರ ಮೇಲೆಯೂ ಪವಿತ್ರಾತ್ಮ ದೇವರು ವರವನ್ನು ಸುರಿಸಿದ್ದಕ್ಕೆ ಪೇತ್ರನೊಂದಿಗೆ ಸುನ್ನತಿಯಾದ ವಿಶ್ವಾಸಿಗಳು ಅತ್ಯಾಶ್ಚರ್ಯಪಟ್ಟರು.
ACT 10:46 ಏಕೆಂದರೆ ಅವರು ಅನ್ಯಭಾಷೆಗಳಲ್ಲಿ ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಿದ್ದುದನ್ನು ಅವರು ಕೇಳಿಸಿಕೊಂಡರು, ಆಗ ಪೇತ್ರನು,
ACT 10:47 “ನೀರಿನಿಂದ ದೀಕ್ಷಾಸ್ನಾನವನ್ನು ಹೊಂದದಂತೆ ಯಾರಾದರೂ ಅಡ್ಡಿಮಾಡುವವರಿದ್ದಾರೋ? ನಾವು ಹೊಂದಿದಂತೆಯೇ ಇವರು ಸಹ ಪವಿತ್ರಾತ್ಮ ದೇವರನ್ನು ಹೊಂದಿಕೊಂಡಿದ್ದಾರಲ್ಲಾ?” ಎಂದು ಹೇಳಿದನು.
ACT 10:48 ಆಗ ಅವರು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದುವಂತೆ ಆಜ್ಞಾಪಿಸಿದನು. ಅನಂತರ ಕೆಲವು ದಿನ ಅಲ್ಲಿಯೇ ಇರಬೇಕೆಂದು ಅವರು ಪೇತ್ರನನ್ನು ಕೇಳಿಕೊಂಡರು.
ACT 11:1 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿದರೆಂಬ ವಾರ್ತೆಯನ್ನು ಅಪೊಸ್ತಲರೂ ಯೂದಾಯದಲ್ಲೆಲ್ಲಾ ಇದ್ದ ಸಹೋದರರೂ ಕೇಳಿದರು.
ACT 11:2 ಆದ್ದರಿಂದ ಪೇತ್ರನು ಯೆರೂಸಲೇಮಿಗೆ ಹೋದಾಗ ಸುನ್ನತಿಯಾದವರು ಅವನೊಂದಿಗೆ ವಾಗ್ವಾದಮಾಡಿ,
ACT 11:3 “ಸುನ್ನತಿ ಇಲ್ಲದವರ ಮನೆಯೊಳಗೆ ಹೋಗಿ ಅವರೊಂದಿಗೆ ಊಟಮಾಡಿದೆ,” ಎಂದರು.
ACT 11:4 ಆಗ ಸಂಭವಿಸಿದ್ದೆಲ್ಲವನ್ನು ಪೇತ್ರನು ಕ್ರಮವಾಗಿ ವಿವರಿಸಿ:
ACT 11:5 “ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆನು. ಆಗ ನಾನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡೆನು. ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಪರಲೋಕದಿಂದ ಕೆಳಗೆ ಇಳಿದು ನಾನಿದ್ದಲ್ಲಿಗೆ ಬರುವುದನ್ನು ಕಂಡೆನು.
ACT 11:6 ನಾನು ಅದರೊಳಗೆ ನೋಡಲು ಅದರಲ್ಲಿ ಭೂಲೋಕದ ಮೇಲೆ ತಿರುಗಾಡುವ ಪ್ರಾಣಿಗಳೂ ಕಾಡು ಮೃಗಗಳೂ ಕ್ರಿಮಿಕೀಟಗಳೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಇದ್ದುದನ್ನು ಕಂಡೆನು.
ACT 11:7 ಮಾತ್ರವಲ್ಲದೆ, ‘ಪೇತ್ರನೇ ಎದ್ದೇಳು, ಕೊಂದು ತಿನ್ನು,’ ಎಂದು ನನಗೆ ಹೇಳುವ ಒಂದು ವಾಣಿಯನ್ನು ಕೇಳಿಸಿಕೊಂಡೆನು.
ACT 11:8 “ಅದಕ್ಕೆ ನಾನು, ‘ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,’ ಎಂದು ಉತ್ತರಕೊಟ್ಟೆನು.
ACT 11:9 “ಆಗ ಪರಲೋಕದ ಆ ವಾಣಿಯು, ‘ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,’ ಎಂದು ಎರಡನೆಯ ಸಾರಿ ನನಗೆ ಹೇಳಿತು.
ACT 11:10 ಹೀಗೆ ಮೂರು ಬಾರಿಯಾದ ತರುವಾಯ ಅವೆಲ್ಲವನ್ನೂ ಪರಲೋಕಕ್ಕೆ ಹಿಂದಿರುಗಿ ತೆಗೆದುಕೊಳ್ಳಲಾಯಿತು.
ACT 11:11 “ಆ ಸಮಯಕ್ಕೆ ಸರಿಯಾಗಿ ಕೈಸರೈಯದಿಂದ ನನ್ನ ಬಳಿಗೆ ಕಳುಹಿಸಲಾದ ಮೂರು ಜನರು ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಬಂದು ನಿಂತರು.
ACT 11:12 ಏನೂ ಸಂಶಯಪಡದೇ ಅವರ ಜೊತೆಯಲ್ಲಿ ಹೋಗಬೇಕೆಂದು ಪವಿತ್ರಾತ್ಮ ದೇವರು ನನಗೆ ಅಪ್ಪಣೆಕೊಟ್ಟರು. ಇದಲ್ಲದೆ ಈ ಆರು ಜನ ಸಹೋದರರೂ ನನ್ನೊಂದಿಗೆ ಹೊರಟರು. ನಾವು ಆ ಮನುಷ್ಯನ ಮನೆಯೊಳಗೆ ಪ್ರವೇಶಿಸಿದೆವು.
ACT 11:13 ತನ್ನ ಮನೆಯಲ್ಲಿ ಒಬ್ಬ ದೇವದೂತನು ಪ್ರತ್ಯಕ್ಷನಾಗಿ, ‘ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಯೊಪ್ಪದಿಂದ ಕರೆಕಳುಹಿಸು.
ACT 11:14 ಅವನು ಕೊಡುವ ವಾಕ್ಯದ ಮೂಲಕ ನೀನೂ ನಿನ್ನ ಮನೆಯಲ್ಲಿರುವವರೆಲ್ಲರೂ ರಕ್ಷಣೆ ಹೊಂದುವಿರಿ,’ ಎಂದು ಹೇಳಿದ್ದನ್ನು ಅವನು ನಮಗೆ ವಿವರಿಸಿದನು.
ACT 11:15 “ನಾನು ಮಾತನಾಡಲು ಪ್ರಾರಂಭ ಮಾಡಿದಾಗ, ಪವಿತ್ರಾತ್ಮ ದೇವರು ಮೊದಲು ನಮ್ಮ ಮೇಲೆ ಇಳಿದಂತೆಯೇ ಅವರ ಮೇಲೆಯೂ ಇಳಿದು ಬಂದರು.
ACT 11:16 ‘ಯೋಹಾನನು ನೀರಿನಿಂದ ದೀಕ್ಷಾಸ್ನಾನ ಮಾಡಿಸಿದ್ದಾನೆ. ನೀವಾದರೋ ಪವಿತ್ರಾತ್ಮ ದೇವರಿಂದ ದೀಕ್ಷಾಸ್ನಾನ ಹೊಂದುವಿರಿ,’ ಎಂದು ಕರ್ತ ಯೇಸುವು ಹೇಳಿದ ಮಾತುಗಳನ್ನು ನಾನು ಆಗ ಜ್ಞಾಪಿಸಿಕೊಂಡೆನು.
ACT 11:17 ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಂಬಿಕೆಯನ್ನಿಟ್ಟ ನಮಗೆ ಕೊಟ್ಟ ಪವಿತ್ರಾತ್ಮ ವರವನ್ನೇ ದೇವರು ಅವರಿಗೂ ಕೊಟ್ಟಿರಲು, ದೇವರಿಗೆ ಅಡ್ಡಿಮಾಡಲು ನಾನು ಯಾರು?” ಎಂದನು.
ACT 11:18 ಯೆಹೂದಿ ವಿಶ್ವಾಸಿಗಳು ಇದನ್ನು ಕೇಳಿದಾಗ, ಅವರಿಗೆ ಯಾವ ಆಕ್ಷೇಪಣೆಯೂ ಇರಲಿಲ್ಲ. ಹಾಗಾದರೆ ದೇವರು, “ಯೆಹೂದ್ಯರಲ್ಲದವರಿಗೂ ಸಹ ಜೀವಕ್ಕಾಗಿ ಪಶ್ಚಾತ್ತಾಪವನ್ನು ಕೊಟ್ಟಿದ್ದಾರೆ,” ಎಂದು ಹೇಳಿ ದೇವರನ್ನು ಕೊಂಡಾಡಿದರು.
ACT 11:19 ಸ್ತೆಫನನ ಮರಣದ ನಂತರ ಸಂಭವಿಸಿದ ಹಿಂಸೆಯ ನಿಮಿತ್ತ ಚದರಿಹೋದವರು ಫೊಯಿನಿಕೆ, ಸೈಪ್ರಸ್ ಮತ್ತು ಅಂತಿಯೋಕ್ಯದವರೆಗೆ ಪ್ರಯಾಣಮಾಡಿದರು. ಹೀಗೆ ಅವರು ಯೆಹೂದ್ಯರಿಗೆ ಮಾತ್ರವೇ ವಾಕ್ಯವನ್ನು ಸಾರಿದರು.
ACT 11:20 ಆದರೆ ಅವರಲ್ಲಿ, ಕೆಲವರು ಅಂದರೆ ಸೈಪ್ರಸ್ ಮತ್ತು ಕುರೇನೆದ ಪುರುಷರು ಅಂತಿಯೋಕ್ಯಕ್ಕೆ ಹೋಗಿ ಗ್ರೀಕರಿಗೂ ಕರ್ತ ಯೇಸುವಿನ ಶುಭಸಮಾಚಾರ ಸಾರಲು ಪ್ರಾರಂಭಿಸಿದರು.
ACT 11:21 ಕರ್ತ ಯೇಸುವಿನ ಹಸ್ತವು ಅವರೊಂದಿಗಿತ್ತು ಬಹಳಷ್ಟು ಜನರು ನಂಬಿ ಕರ್ತ ಯೇಸುವಿನ ಕಡೆಗೆ ತಿರುಗಿಕೊಂಡರು.
ACT 11:22 ಈ ಸಮಾಚಾರ ಯೆರೂಸಲೇಮಿನ ಸಭೆಯವರಿಗೆ ತಿಳಿಯಿತು. ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿಕೊಟ್ಟರು.
ACT 11:23 ಅವನು ಅಲ್ಲಿಗೆ ಬಂದು ದೇವರ ಕೃಪೆಯನ್ನು ಕಂಡು ಹರ್ಷಭರಿತನಾಗಿ, ಅವರೆಲ್ಲರೂ ಕರ್ತನಿಗೆ ಹೃದಯಪೂರ್ವಕವಾಗಿ ಭಯಭಕ್ತಿ ಉಳ್ಳವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸಿದನು.
ACT 11:24 ಬಾರ್ನಬನು ಸತ್ಪುರುಷನೂ ಪವಿತ್ರಾತ್ಮಭರಿತನೂ ಪೂರ್ಣನಂಬಿಕೆಯುಳ್ಳವನೂ ಆಗಿದ್ದನು. ಅಲ್ಲಿ ಅನೇಕರು ಕರ್ತ ಯೇಸುವಿನ ಕಡೆಗೆ ಬಂದರು.
ACT 11:25 ಅನಂತರ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋದನು.
ACT 11:26 ಅಲ್ಲಿ ಸೌಲನನ್ನು ಭೇಟಿಯಾಗಿ, ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅನಂತರ ಇಡೀ ಒಂದು ವರ್ಷಕಾಲ ಬಾರ್ನಬನು, ಸೌಲನು ಅಲ್ಲಿ ಸಭೆಯವರೊಂದಿಗೆ ಇದ್ದುಕೊಂಡು ಬಹಳ ಜನರಿಗೆ ಬೋಧನೆ ಮಾಡಿದರು. ಶಿಷ್ಯರಿಗೆ ಪ್ರಥಮ ಬಾರಿ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲಿಯೇ.
ACT 11:27 ಈ ಸಮಯದಲ್ಲಿ ಯೆರೂಸಲೇಮಿನಿಂದ ಕೆಲವು ಪ್ರವಾದಿಗಳು ಅಂತಿಯೋಕ್ಯಕ್ಕೆ ಬಂದರು.
ACT 11:28 ಅವರಲ್ಲೊಬ್ಬ ಅಗಬ ಎಂಬವನು ಪವಿತ್ರಾತ್ಮ ಪ್ರೇರಿತನಾಗಿ ಎದ್ದು ನಿಂತುಕೊಂಡು ಲೋಕಕ್ಕೆಲ್ಲಾ ಭೀಕರ ಕ್ಷಾಮ ಬರುವುದೆಂದು ತಿಳಿಸಿದನು. ಇದು ಕ್ಲೌದ್ಯನ ಆಳ್ವಿಕೆಯಲ್ಲಿ ಸಂಭವಿಸಿತು.
ACT 11:29 ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ಸಹಾಯ ಒದಗಿಸಲು ಅನುಕೂಲಸ್ಥರಾದ ಶಿಷ್ಯರು ತಮ್ಮ ಶಕ್ತ್ಯಾನುಸಾರ ಕೊಡಲು ನಿರ್ಧರಿಸಿದರು.
ACT 11:30 ಇದಕ್ಕನುಗುಣವಾಗಿ ಬಾರ್ನಬ ಮತ್ತು ಸೌಲರ ಮುಖಾಂತರ ಹಿರಿಯರಿಗೆ ತಮ್ಮ ದೇಣಿಗೆಗಳನ್ನು ಕಳುಹಿಸಿದರು.
ACT 12:1 ಆ ದಿನಗಳಲ್ಲಿ ಅರಸನಾದ ಹೆರೋದನು ದೇವರ ಸಭೆಯ ಸದಸ್ಯರನ್ನು ಹಿಂಸಿಸುವ ಉದ್ದೇಶದಿಂದ ಕೆಲವರನ್ನು ಬಂಧಿಸಿದನು.
ACT 12:2 ಯೋಹಾನನ ಸಹೋದರ ಯಾಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
ACT 12:3 ಇದರಿಂದ ಯೆಹೂದ್ಯರಿಗೆ ಮೆಚ್ಚಿಕೆಯಾಯಿತೆಂದು ತಿಳಿದಾಗ, ಅವನು ಪೇತ್ರನನ್ನು ಬಂಧಿಸಿದನು. ಇದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸಮಯದಲ್ಲಿ ನಡೆಯಿತು.
ACT 12:4 ಪೇತ್ರನನ್ನು ಬಂಧಿಸಿದ ನಂತರ ಅವನನ್ನು ಸೆರೆಮನೆಯಲ್ಲಿ ಹಾಕಿದನು. ಪೇತ್ರನನ್ನು ಕಾಯಲು ನಾಲ್ಕು ದಳಗಳನ್ನು ನೇಮಿಸಿದನು. ಒಂದೊಂದು ದಳದಲ್ಲಿಯೂ ನಾಲ್ಕು ಸಿಪಾಯಿಗಳಿದ್ದರು. ಪಸ್ಕಹಬ್ಬ ಮುಗಿದ ತರುವಾಯ ಪೇತ್ರನನ್ನು ಬಹಿರಂಗ ವಿಚಾರಣೆಗೆ ತರಬೇಕೆಂದು ಉದ್ದೇಶಿಸಿದ್ದನು.
ACT 12:5 ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.
ACT 12:6 ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.
ACT 12:7 ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.
ACT 12:8 “ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ,” ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. “ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು,” ಎಂದು ದೇವದೂತನು ಹೇಳಿದನು.
ACT 12:9 ಪೇತ್ರನು ಸೆರೆಮನೆಯಿಂದ ಹೊರಗೆ ಅವನನ್ನು ಹಿಂಬಾಲಿಸಿ ಹೊರಟನು. ದೇವದೂತನು ಮಾಡುತ್ತಿರುವುದು ನಿಜವಾಗಿಯೂ ನಡೆಯುತ್ತಿದೆ ಎಂಬುದು ಅವನಿಗೆ ತಿಳಿಯಲಿಲ್ಲ. ತಾನು ದರ್ಶನ ಕಾಣುತ್ತಿರುವೆನೋ ಎಂದು ಭಾವಿಸಿದನು.
ACT 12:10 ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು.
ACT 12:11 ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು.
ACT 12:12 ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
ACT 12:13 ಪೇತ್ರನು ಬಾಗಿಲನ್ನು ತಟ್ಟಿದಾಗ, ರೋದೆ ಎಂಬ ಸೇವಕಿ ಬಾಗಿಲು ತೆರೆಯಲು ಬಾಗಿಲ ಬಳಿಗೆ ಬಂದಳು.
ACT 12:14 ಪೇತ್ರನ ಧ್ವನಿಯನ್ನು ಗುರುತಿಸಿ ಸಂತೋಷದಿಂದ ಕೂಡಿದವಳಾಗಿ ಬಾಗಿಲು ತೆರೆಯದೆ ಹಿಂದೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿಯಲ್ಲಿದ್ದಾನೆ!” ಎಂದು ತಿಳಿಸಿದಳು.
ACT 12:15 ಆದರೆ ಅವರು, “ನಿನಗೆ ಹುಚ್ಚುಹಿಡಿದಿದೆ,” ಎಂದರು. ತಾನು ಹೇಳುವುದು ನಿಜ ಎಂದು ಆಕೆ ಒತ್ತಿ ಹೇಳುತ್ತಿರಲು ಅವರು, “ಅದು ಅವನ ದೂತನೇ ಆಗಿರಬೇಕು,” ಎಂದರು.
ACT 12:16 ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಹೋಗಿ ಬಾಗಿಲು ತೆರೆಯಲು ಅವನನ್ನು ಕಂಡು ಅತ್ಯಾಶ್ಚರ್ಯಗೊಂಡರು.
ACT 12:17 ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
ACT 12:18 ಬೆಳಗಾದ ಮೇಲೆ ಪೇತ್ರನಿಗೆ ಏನಾಯಿತೆಂದು ಸೈನಿಕರ ನಡುವೆ ಬಹಳಷ್ಟು ಗೊಂದಲವಿತ್ತು.
ACT 12:19 ಹೆರೋದನು ಅವನನ್ನು ಹುಡುಕಿ ಕಾಣದೆ ಹೋದದ್ದರಿಂದ ಕಾವಲುಗಾರರನ್ನು ವಿಚಾರಿಸಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಅನಂತರ ಹೆರೋದನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಸ್ವಲ್ಪ ಸಮಯ ಇದ್ದನು.
ACT 12:20 ಅವನು ಟೈರ್ ಮತ್ತು ಸೀದೋನಿನ ಜನರೊಂದಿಗೆ ಬಹು ಕೋಪವುಳ್ಳವನಾಗಿದ್ದನು. ಈಗ ಅವರೆಲ್ಲರೂ ಒಂದಾಗಿ ಅವನ ಬಳಿ ಬಂದು ಅರಸನ ನಂಬಿಗಸ್ತ ಸೇವಕನಾದ ಬ್ಲಾಸ್ತ ಎಂಬುವನ ಬೆಂಬಲವನ್ನು ಪಡೆದುಕೊಂಡು, ಸಂಧಾನ ಮಾಡಿಕೊಳ್ಳಲು ಅರಸನನ್ನು ಕೇಳಿಕೊಂಡರು. ಏಕೆಂದರೆ ಅವರ ಆಹಾರ ಧಾನ್ಯಗಳು ಅರಸನ ಸೀಮೆಯಿಂದ ಬರುತ್ತಿದ್ದವು.
ACT 12:21 ನೇಮಕವಾದ ದಿನ ಹೆರೋದನು ತನ್ನ ರಾಜವಸ್ತ್ರಗಳನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡು ಜನರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಿದನು.
ACT 12:22 “ಇದು ಮಾನವ ಧ್ವನಿಯಲ್ಲ ದೇವರದೇ!” ಎಂದು ಜನರು ಆರ್ಭಟಿಸಿದರು.
ACT 12:23 ಹೆರೋದನು ದೇವರಿಗೆ ಸಲ್ಲಿಸಬೇಕಾದ ಮಹಿಮೆ ಸಲ್ಲಿಸದೇ ಹೋದದ್ದರಿಂದ ಕೂಡಲೇ ಒಬ್ಬ ದೇವದೂತನು ಅವನನ್ನು ಹೊಡೆಯಲು ಅವನು ಹುಳ ಬಿದ್ದು ಸತ್ತುಹೋದನು.
ACT 12:24 ದೇವರ ವಾಕ್ಯವಾದರೋ ವೃದ್ಧಿಯಾಗುತ್ತಾ ಪ್ರಸಾರಗೊಂಡಿತು.
ACT 12:25 ಬಾರ್ನಬ ಮತ್ತು ಸೌಲನು ತಮ್ಮ ಸೇವಾಕಾರ್ಯವನ್ನು ಮುಗಿಸಿ, ಮಾರ್ಕ ಎಂದು ಕರೆಯಲಾಗುತ್ತಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಯೆರೂಸಲೇಮಿನಿಂದ ಹೊರಟು ಹೋದರು.
ACT 13:1 ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ.
ACT 13:2 ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.
ACT 13:3 ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ, ಅವರಿಬ್ಬರ ಮೇಲೆ ಕೈಗಳನ್ನಿಟ್ಟು ಕಳುಹಿಸಿಬಿಟ್ಟರು.
ACT 13:4 ಪವಿತ್ರಾತ್ಮ ದೇವರಿಂದ ಕಳುಹಿಸಲಾದ ಅವರಿಬ್ಬರೂ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ನೌಕೆಯಲ್ಲಿ ಪ್ರಯಾಣಮಾಡಿ ಸೈಪ್ರಸಿಗೆ ತಲುಪಿದರು.
ACT 13:5 ಸಲಮೀಸಿಗೆ ಬಂದು, ಅಲ್ಲಿಯ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೋಹಾನನು ಸಹ ಅವರೊಂದಿಗಿದ್ದು ಅವರಿಗೆ ಸಹಾಯಕನಾಗಿದ್ದನು.
ACT 13:6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.
ACT 13:7 ಅವನು ರಾಜ್ಯಪಾಲ ಸೆರ್ಗ್ಯಪೌಲನ ಜೊತೆಗಿದ್ದನು. ಈ ರಾಜ್ಯಪಾಲನು ಬುದ್ಧಿವಂತನಾಗಿದ್ದನು. ಇವನು ದೇವರ ವಾಕ್ಯವನ್ನು ಕೇಳುವ ಉದ್ದೇಶದಿಂದ ಬಾರ್ನಬ ಮತ್ತು ಸೌಲರನ್ನು ಕರೆಕಳುಹಿಸಿದನು.
ACT 13:8 ಆದರೆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ರಾಜ್ಯಪಾಲನು ವಿಶ್ವಾಸಿಯಾಗದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಎಲುಮ ಎಂಬ ಹೆಸರಿಗೆ ಮಂತ್ರವಾದಿ ಎಂಬುದೇ ಅರ್ಥ.
ACT 13:9 ಆಗ ಪೌಲನೆಂದೂ ಕರೆಯಲಾಗುತ್ತಿದ್ದ ಸೌಲನು, ಪವಿತ್ರಾತ್ಮಭರಿತನಾಗಿ, ಎಲುಮನನ್ನು ನೇರವಾಗಿ ದೃಷ್ಟಿಸಿ,
ACT 13:10 “ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?
ACT 13:11 ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.
ACT 13:12 ಸಂಭವಿಸಿದ್ದೆಲ್ಲವನ್ನೂ ರಾಜ್ಯಪಾಲನು ಕಂಡು, ಕರ್ತ ಯೇಸುವಿನ ವಿಷಯವಾಗಿದ್ದ ಬೋಧನೆಯ ಬಗ್ಗೆ ಆಶ್ಚರ್ಯಪಟ್ಟು ವಿಶ್ವಾಸವನ್ನಿಟ್ಟನು.
ACT 13:13 ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.
ACT 13:14 ಉಳಿದವರು ಪೆರ್ಗೆದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಹೋದರು. ಸಬ್ಬತ್ ದಿನ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
ACT 13:15 ನಿಯಮ ಮತ್ತು ಪ್ರವಾದಿಗಳ ಗ್ರಂಥವು ಪಾರಾಯಣವಾದ ತರುವಾಯ, ಸಭಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಪ್ರೋತ್ಸಾಹ ಕೊಡುವ ಸಂದೇಶ ನಿಮ್ಮಲ್ಲಿದ್ದರೆ, ಮಾತನಾಡಿರಿ,” ಎಂದು ಕೇಳಿಕೊಂಡರು.
ACT 13:16 ಪೌಲನು ಎದ್ದು ನಿಂತು, ಕೈಸನ್ನೆ ಮಾಡಿ ಹೀಗೆ ಹೇಳಿದನು: “ಇಸ್ರಾಯೇಲ್ ಜನರೇ, ದೇವರಲ್ಲಿ ಭಯಭಕ್ತಿಯುಳ್ಳವರೇ, ಕೇಳಿರಿ!
ACT 13:17 ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆಯ್ದುಕೊಂಡರು; ಈಜಿಪ್ಟಿನಲ್ಲಿ ನಮ್ಮ ಜನರು ವಾಸಿಸುತ್ತಿದ್ದಾಗ; ಅವರನ್ನು ಪ್ರಬಲರನ್ನಾಗಿ ಮಾಡಿ ತಮ್ಮ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಅವರನ್ನು ಬಿಡಿಸಿ ಕರೆತಂದರು;
ACT 13:18 ಅರಣ್ಯದಲ್ಲಿ ಸುಮಾರು ನಲವತ್ತು ವರ್ಷ ಅವರ ನಡತೆಯನ್ನು ಸಹಿಸಿಕೊಂಡರು.
ACT 13:19 ಕಾನಾನ್ ದೇಶದಲ್ಲಿದ್ದ ಏಳು ರಾಜ್ಯಗಳನ್ನು ಜಯಿಸಿ, ಅವರ ದೇಶವನ್ನು ತಮ್ಮ ಜನರಿಗೆ ಬಾಧ್ಯವಾಗಿ ದಯಪಾಲಿಸಿದರು.
ACT 13:20 ಇದಕ್ಕೆ ನಾನೂರ ಐವತ್ತು ವರ್ಷಗಳ ಕಾಲ ಹಿಡಿಯಿತು. “ಇದಾದನಂತರ, ದೇವರು ಅವರಿಗೆ ಪ್ರವಾದಿ ಸಮುಯೇಲನ ಸಮಯದವರೆಗೆ ನ್ಯಾಯಸ್ಥಾಪಕರನ್ನು ದಯಪಾಲಿಸಿದರು.
ACT 13:21 ಅನಂತರ ಜನರು ಒಬ್ಬ ಅರಸನು ತಮಗೆ ಬೇಕೆಂದು ಕೇಳಿಕೊಳ್ಳಲು, ದೇವರು ಬೆನ್ಯಾಮೀನ್ ಗೋತ್ರದ ಕೀಷನ ಮಗ ಸೌಲನನ್ನು ಅವರಿಗೆ ಕೊಟ್ಟರು. ಇವನು ನಲವತ್ತು ವರ್ಷ ಆಳ್ವಿಕೆ ಮಾಡಿದನು.
ACT 13:22 ದೇವರು ಸೌಲನನ್ನು ಅರಸುತನದಿಂದ ತೆಗೆದುಹಾಕಿ, ದೇವರು ದಾವೀದನನ್ನು ಅವರ ಅರಸನನ್ನಾಗಿ ಎಬ್ಬಿಸಿದರು. ಇವನನ್ನು ಕುರಿತು, ‘ಇಷಯನ ಮಗ ದಾವೀದನು ನನಗೆ ಸಿಕ್ಕಿದನು. ನನ್ನ ಹೃದಯಕ್ಕೆ ತಕ್ಕಂಥ ಮನುಷ್ಯನು; ಇವನು ನಾನು ಅಪೇಕ್ಷಿಸುವುದೆಲ್ಲವನ್ನೂ ಮಾಡುವನು,’ ಎಂದು ದೇವರು ತಾವೇ ಸಾಕ್ಷಿಕೊಟ್ಟರು.
ACT 13:23 “ಈ ದಾವೀದನ ಸಂತತಿಯಲ್ಲಿಯೇ ದೇವರು ಇಸ್ರಾಯೇಲಿಗೆ ತನ್ನ ವಾಗ್ದಾನದಂತೆ ರಕ್ಷಕ ಯೇಸುವನ್ನು ತಂದರು.
ACT 13:24 ಯೇಸು ಬರುವ ಮೊದಲು, ಸ್ನಾನಿಕ ಯೋಹಾನನು ಎಲ್ಲಾ ಇಸ್ರಾಯೇಲರಿಗೆ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನದ ಬಗ್ಗೆ ಸಾರಿದನು.
ACT 13:25 ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ, ‘ನನ್ನನ್ನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ಅವರು ನಾನಲ್ಲ, ಇಗೋ, ಅವರು ನನ್ನ ನಂತರ ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
ACT 13:26 “ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.
ACT 13:27 ಯೆರೂಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಯೇಸುವನ್ನು ಯಾರೆಂದು ಗುರುತಿಸಿಲಿಲ್ಲ. ಆದರೂ ಅವರು ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ವಾಕ್ಯಗಳನ್ನೂ ಗ್ರಹಿಸಲಿಲ್ಲ. ಅವರು ಯೇಸುವನ್ನು ಅಪರಾಧಿಯೆಂದು ತೀರ್ಪು ಮಾಡಿ, ಪ್ರವಾದಿಗಳ ವಾಕ್ಯಗಳನ್ನು ನೆರವೇರಿಸಿದರು.
ACT 13:28 ಮರಣದಂಡನೆ ವಿಧಿಸಲು ಯಾವುದೇ ಕಾರಣ ಸಿಗದಿದ್ದರೂ ಯೇಸುವನ್ನು ಕೊಲ್ಲಬೇಕೆಂದು ಪಿಲಾತನನ್ನು ಕೇಳಿಕೊಂಡರು.
ACT 13:29 ಪವಿತ್ರ ವೇದದಲ್ಲಿ ಯೇಸುವನ್ನು ಕುರಿತು ಬರೆದಿರುವ ಪ್ರಕಾರ ನೆರವೇರಿದ ನಂತರ, ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು.
ACT 13:30 ಆದರೆ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದರು.
ACT 13:31 ಯೇಸುವಿನೊಡನೆ ಗಲಿಲಾಯದಿಂದ ಯೆರೂಸಲೇಮಿನವರೆಗೆ ಮುಂಚೆ ಬಂದಿದ್ದವರಿಗೆ ಯೇಸು ಅನೇಕ ದಿನಗಳವರೆಗೆ ಕಾಣಿಸಿಕೊಂಡರು. ಈಗ ಅವರೇ ನಮ್ಮ ಜನರಿಗೆ ಯೇಸುವಿನ ಸಾಕ್ಷಿಗಳಾಗಿದ್ದಾರೆ.
ACT 13:32 “ನಾವು ನಿಮಗೆ, ದೇವರು ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ್ದನ್ನು ಶುಭವರ್ತಮಾನವನ್ನಾಗಿ ಹೇಳುತ್ತಿದ್ದೇವೆ.
ACT 13:33 ದೇವರು ಯೇಸುವನ್ನು ಎಬ್ಬಿಸುವುದರ ಮೂಲಕ ಅವರ ಸಂತತಿಯಾದ ನಮಗಿಂದು ಆ ವಾಗ್ದಾನವನ್ನು ನೆರವೇರಿಸಿದ್ದಾರೆ; ಮಾತ್ರವಲ್ಲದೆ ಎರಡನೆಯ ಕೀರ್ತನೆಯಲ್ಲಿ ಹೀಗೆ ಬರೆಯಲಾಗಿದೆ: “ ‘ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ.’
ACT 13:34 ಹೀಗೆ ಯೇಸುವನ್ನು ಸಮಾಧಿಯಲ್ಲಿ ಕೊಳೆಯಲು ಬಿಡದೇ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದ ಸತ್ಯವು ಈ ಮಾತುಗಳಲ್ಲಿ ಬಂದಿದೆ: “ ‘ನಾನು ದಾವೀದನಿಗೆ ವಾಗ್ದಾನ ಮಾಡಿದ ಪವಿತ್ರ ಹಾಗೂ ನಿಶ್ಚಯವಾದ ಆಶೀರ್ವಾದಗಳನ್ನು ನಿಮಗೆ ಕೊಡುವೆನು’
ACT 13:35 ಇನ್ನೊಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ: “ ‘ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.’
ACT 13:36 “ದಾವೀದನು ತನ್ನ ಜೀವಮಾನದಲ್ಲಿ ದೇವರ ಉದ್ದೇಶಕ್ಕೆ ಅನುಗುಣವಾಗಿ ಸೇವೆಮಾಡಿ ಮರಣಹೊಂದಿದನು. ಅವನ ಪಿತೃಗಳೊಂದಿಗೆ ಅವನನ್ನು ಸೇರಿಸಿದರು. ಅವನ ದೇಹ ಕೊಳೆತುಹೋಯಿತು.
ACT 13:37 ಆದರೆ ದೇವರು ಮರಣದಿಂದ ಎಬ್ಬಿಸಿದ ಈ ಯೇಸು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.
ACT 13:38 “ಆದ್ದರಿಂದ, ನನ್ನ ಸಹೋದರರೇ, ಯೇಸುವಿನ ಮೂಲಕವೇ ಪಾಪಕ್ಷಮಾಪಣೆ ಸಾಧ್ಯವೆಂದು ನಿಮಗೆ ಸಾರಲಾಗುತ್ತಿದೆಯೆಂದು ನೀವು ತಿಳಿಯಬೇಕೆಂಬುದೇ ನನ್ನ ಅಪೇಕ್ಷೆ.
ACT 13:39 ಮೋಶೆಯ ನಿಯಮದ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲಾಗದ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ, ಯೇಸುವನ್ನು ನಂಬುವ ಪ್ರತಿಯೊಬ್ಬರೂ ಯೇಸುವಿನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರಾಗುವರು.
ACT 13:40 ಆದ್ದರಿಂದ ಪ್ರವಾದಿಗಳು ಹೇಳಿದ ಮಾತುಗಳು ನಿಮ್ಮಲ್ಲಿ ನಡೆಯದಂತೆ ಜಾಗರೂಕರಾಗಿರಿ:
ACT 13:41 “ ‘ತಿರಸ್ಕಾರ ಮಾಡುವವರೇ, ಗಮನಿಸಿರಿ, ಆಶ್ಚರ್ಯಪಟ್ಟು, ಚದುರಿ ಹೋಗಿರಿ, ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ಯಾರಾದರೂ ವಿವರಿಸಿ ಹೇಳಿದರೂ ನೀವದನ್ನು ಎಂದಿಗೂ ನಂಬುವುದೇ ಇಲ್ಲ,’” ಎಂದು ಹೇಳಿದನು.
ACT 13:42 ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟು ಹೊರಡುವಾಗ, “ಬರುವ ಸಬ್ಬತ್ ದಿನವೂ ಬಂದು ಇದೇ ವಿಷಯಗಳನ್ನು ಕುರಿತು ಮಾತನಾಡಿರಿ,” ಎಂದು ಜನರು ಅವರನ್ನು ಕೇಳಿಕೊಂಡರು.
ACT 13:43 ಸಭೆಯು ಮುಗಿದ ತರುವಾಯ ಅನೇಕ ಯೆಹೂದ್ಯರೂ ದೇವಭಕ್ತಿವುಳ್ಳ ಯೆಹೂದಿ ಮಾರ್ಗದ ವಿಶ್ವಾಸಿಗಳು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಪೌಲ ಬಾರ್ನಬರು ತಮ್ಮೊಂದಿಗೆ ಬಂದವರ ಜೊತೆ ಮಾತನಾಡಿ ದೇವರ ಕೃಪೆಯಲ್ಲಿ ಮುಂದುವರಿಯಲು ಅವರನ್ನು ಒಡಂಬಡಿಸಿದರು.
ACT 13:44 ಮುಂದಿನ ಸಬ್ಬತ್ ದಿನ ಕರ್ತದೇವರ ವಾಕ್ಯ ಕೇಳಲು ನಗರದ ಜನರೆಲ್ಲರೂ ಹೆಚ್ಚಾಗಿ ಕೂಡಿಬಂದರು.
ACT 13:45 ಜನಸಮೂಹಗಳನ್ನು ಯೆಹೂದ್ಯರು ಕಂಡಾಗ ಅಸೂಯೆಗೊಂಡು ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.
ACT 13:46 ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ.
ACT 13:47 ಕರ್ತದೇವರು ನಮಗೆ ಆಜ್ಞಾಪಿಸಿದ್ದು ಇಂತಿದೆ: “ ‘ಭೂಲೋಕದ ಕಟ್ಟಕಡೆಯವರೆಗೆ ನೀನು ರಕ್ಷಣೆಯನ್ನು ತರುವಂತೆ ನಾನು ಯೆಹೂದ್ಯರಲ್ಲದವರಿಗೆ ನಿನ್ನನ್ನು ಬೆಳಕನ್ನಾಗಿ ನೇಮಿಸಿರುವೆನು.’ ”
ACT 13:48 ಯೆಹೂದ್ಯರಲ್ಲದವರು ಇದನ್ನು ಕೇಳಿದಾಗ, ಬಹಳ ಹರ್ಷಗೊಂಡು ಕರ್ತದೇವರ ವಾಕ್ಯವನ್ನು ಘನಪಡಿಸಿದರು. ನಿತ್ಯಜೀವಕ್ಕೆ ನೇಮಕರಾದ ಎಲ್ಲರೂ ವಿಶ್ವಾಸವನ್ನಿಟ್ಟರು.
ACT 13:49 ಆ ಪ್ರದೇಶದಲ್ಲೆಲ್ಲಾ ಕರ್ತದೇವರ ವಾಕ್ಯವು ಪ್ರಸಾರವಾಗುತ್ತಾ ಬಂತು.
ACT 13:50 ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.
ACT 13:51 ಆಗ ಅವರಿಗೆ ವಿರೋಧವಾಗಿ ಪೌಲ, ಬಾರ್ನಬರು ತಮ್ಮ ಪಾದದ ಧೂಳನ್ನು ಝಾಡಿಸಿ ಇಕೋನ್ಯಕ್ಕೆ ಹೊರಟು ಹೋದರು.
ACT 13:52 ಶಿಷ್ಯರು ಬಹಳ ಸಂತೋಷದಿಂದಲೂ ಪವಿತ್ರಾತ್ಮ ದೇವರಿಂದಲೂ ತುಂಬಿದವರಾದರು.
ACT 14:1 ಇಕೋನ್ಯದಲ್ಲಿಯೂ ಪೌಲ ಮತ್ತು ಬಾರ್ನಬರು ವಾಡಿಕೆಯಂತೆ ಯೆಹೂದ್ಯರ ಸಭಾಮಂದಿರಕ್ಕೆ ಹೋದರು. ಅವರು ಅಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದ್ದರಿಂದ ಬಹು ಸಂಖ್ಯೆಯಲ್ಲಿ ಯೆಹೂದ್ಯರೂ ಗ್ರೀಕರೂ ವಿಶ್ವಾಸವನ್ನಿಟ್ಟರು.
ACT 14:2 ಆದರೆ ನಂಬಲು ನಿರಾಕರಿಸಿದ ಯೆಹೂದ್ಯರು ಯೆಹೂದ್ಯರಲ್ಲದವರ ಮನಸ್ಸನ್ನು ಕೆಡಿಸಿ, ಸಹೋದರರ ಮೇಲೆ ವಿರೋಧ ಭಾವನೆ ಹುಟ್ಟಿಸಿದರು.
ACT 14:3 ಆದ್ದರಿಂದ ಪೌಲ ಬಾರ್ನಬರು ಅಲ್ಲಿ ಬಹಳ ಸಮಯವಿದ್ದು ಕರ್ತ ಯೇಸುವಿನ ವಿಷಯದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು. ಆದ್ದರಿಂದ ಕರ್ತ ಯೇಸು ಅವರ ಕೈಗಳಿಂದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುವ ಶಕ್ತಿಯನ್ನು ಕೊಟ್ಟು ತಮ್ಮ ಕೃಪಾವಾಕ್ಯವನ್ನು ಖಚಿತಪಡಿಸಿದರು.
ACT 14:4 ಆದರೆ ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯಗಳಾದವು. ಕೆಲವರು ಯೆಹೂದ್ಯರ ಪರವಾದರು, ಇನ್ನೂ ಕೆಲವರು ಅಪೊಸ್ತಲರ ಪರವಾದರು.
ACT 14:5 ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ನಾಯಕರನ್ನು ಕೂಡಿಕೊಂಡು ಪೌಲ, ಬಾರ್ನಬರನ್ನು ಅವಮಾನ ಮಾಡಿ ಅವರ ಮೇಲೆ ಕಲ್ಲೆಸೆಯಬೇಕೆಂದು ನುಗ್ಗಿದಾಗ,
ACT 14:6 ಈ ವಿಷಯ ಅಪೊಸ್ತಲರಿಗೆ ತಿಳಿಯಲು ಅವರು ಅಲ್ಲಿಂದ ಪಲಾಯನ ಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆ ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಿಗೆ ಓಡಿಹೋದರು.
ACT 14:7 ಹೀಗೆ ಅವರು ಅಲ್ಲೆಲ್ಲಾ ಸುವಾರ್ತೆ ಸಾರಿದರು.
ACT 14:8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದನು. ಅವನು ಹುಟ್ಟು ಕುಂಟನಾಗಿದ್ದುದರಿಂದ ಅವನೆಂದೂ ನಡೆದಾಡಿರಲಿಲ್ಲ.
ACT 14:9 ಪೌಲನು ಮಾತನಾಡುತ್ತಿರುವುದನ್ನು ಅವನು ಆಲಿಸುತ್ತಿದ್ದನು. ಪೌಲನು ನೇರವಾಗಿ ಅವನನ್ನೇ ದೃಷ್ಟಿಸಿ ನೋಡಿ, ತಾನು ಗುಣಹೊಂದಲು ಅವನಲ್ಲಿ ವಿಶ್ವಾಸವಿದೆಯೆಂದು ಕಂಡು,
ACT 14:10 “ಎದ್ದೇಳು, ಕಾಲೂರಿ ನಿಲ್ಲು!” ಎಂದು ದೊಡ್ಡ ಧ್ವನಿಯಿಂದ ಹೇಳಿದನು. ಆ ಮನುಷ್ಯನು ಜಿಗಿದು ನಿಂತು, ನಡೆದಾಡಲು ಪ್ರಾರಂಭಿಸಿದನು.
ACT 14:11 ಪೌಲನು ಮಾಡಿದ್ದನ್ನು ಜನರು ಕಂಡಾಗ, ಲುಕವೋನಿಯ ಭಾಷೆಯಲ್ಲಿ, “ಮಾನವ ರೂಪದಲ್ಲಿ ದೇವರುಗಳು ಬಂದಿದ್ದಾರೆ!” ಎಂದು ಘೋಷಿಸಿದರು.
ACT 14:12 ಅವರು ಬಾರ್ನಬನನ್ನು “ಜೆಯುಸ್” ದೇವರು ಎಂದೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು “ಹೆರ್ಮೆ” ದೇವರು ಎಂದೂ ಕರೆದರು.
ACT 14:13 ಪಟ್ಟಣದ ಹೊರಗೆ ಸಮೀಪದಲ್ಲಿದ್ದ ಜೆಯುಸ್ ದೇವರ ಗುಡಿಯ ಪೂಜಾರಿಯು, ಪಟ್ಟಣದ ದ್ವಾರಗಳ ಬಳಿಗೆ ಹೋರಿಗಳನ್ನೂ ಹೂಮಾಲೆಗಳನ್ನೂ ತೆಗೆದುಕೊಂಡು ಬರಲು, ಅವರಿಗಾಗಿ ಯಜ್ಞಗಳನ್ನು ಅರ್ಪಿಸಲು ಜನರು ಅಪೇಕ್ಷಿಸಿದರು.
ACT 14:14 ಆದರೆ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ಇದನ್ನು ಕೇಳಿದಾಗ, ತಮ್ಮ ಬಟ್ಟೆಗಳನ್ನು ಹರಿದುಕೊಂಡು ಜನಸಮೂಹದ ಕಡೆಗೆ ಓಡಿಬಂದು ಕೂಗಿ ಹೇಳಿದ್ದೇನೆಂದರೆ:
ACT 14:15 “ಪ್ರಿಯ ಜನರೇ, ನೀವಿದನ್ನು ಏಕೆ ಮಾಡುತ್ತಿರುವಿರಿ? ನಾವೂ ನಿಮ್ಮ ಹಾಗೆಯೇ ಮಾನವರು. ಇಂಥಾ ವ್ಯರ್ಥವಾದ ಸಂಗತಿಗಳನ್ನು ಬಿಟ್ಟು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದ ಜೀವಿಸುವ ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನಿಮಗೆ ಸುವಾರ್ತೆಯನ್ನು ಸಾರುತ್ತಿದ್ದೇವೆ.
ACT 14:16 ದೇವರು ಹಿಂದಿನ ಕಾಲದಲ್ಲಿ, ಆಯಾ ದೇಶಗಳು ತಮ್ಮ ತಮ್ಮ ಮಾರ್ಗಗಳಲ್ಲಿಯೇ ನಡೆಯುವಂತೆ ಬಿಟ್ಟುಬಿಟ್ಟರು.
ACT 14:17 ಆದರೂ ದೇವರು ತಮ್ಮ ಬಗ್ಗೆ ಸಾಕ್ಷಿಕೊಡದೆ ಇರಲಿಲ್ಲ. ಆಕಾಶದಿಂದ ಮಳೆಯನ್ನೂ ಸಕಾಲದಲ್ಲಿ ಬೆಳೆಯನ್ನೂ ನಿಮಗೆ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೆಯದನ್ನು ಮಾಡುತ್ತಾ ಬಂದವರು ದೇವರೇ.”
ACT 14:18 ಹೀಗೆ ಹೇಳಿದರೂ ಆ ಜನಸಮೂಹ ಅವರಿಗೆ ಬಲಿಯರ್ಪಿಸುವುದನ್ನು ತಡೆಯಲು ಕಷ್ಟವಾಯಿತು.
ACT 14:19 ಅದೇ ಸಮಯದಲ್ಲಿ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಕೆಲವು ಜನ ಯೆಹೂದ್ಯರು ಬಂದು ಜನಸಮೂಹವನ್ನು ತಮ್ಮ ಕಡೆಗೆ ಒಲಿಸಿಕೊಂಡು, ಪೌಲನ ಮೇಲೆ ಕಲ್ಲೆಸೆಯಲು, ಅವನು ಸತ್ತನೆಂದು ಭಾವಿಸಿ ಅವನನ್ನು ಊರ ಹೊರಗೆ ಎಳೆದು ಹಾಕಿದರು.
ACT 14:20 ಆದರೆ ಶಿಷ್ಯರು ಬಂದು ಪೌಲನ ಸುತ್ತಲೂ ನಿಂತುಕೊಳ್ಳಲು ಅವನು ಎದ್ದು ಪಟ್ಟಣಕ್ಕೆ ಹಿಂದಿರುಗಿ ಹೋದನು. ಮರುದಿನ ಅವನೂ ಬಾರ್ನಬನೂ ದೆರ್ಬೆಗೆ ಹೊರಟು ಹೋದರು.
ACT 14:21 ಆ ಪಟ್ಟಣದಲ್ಲಿ ಪೌಲ, ಬಾರ್ನಬರು ಸುವಾರ್ತೆಯನ್ನು ಸಾರಿದರು. ಬಹುಜನರನ್ನು ಶಿಷ್ಯರನ್ನಾಗಿ ಮಾಡಿದರು. ಅನಂತರ ಅವರು ಲುಸ್ತ್ರ, ಇಕೋನ್ಯ ಮತ್ತು ಅಂತಿಯೋಕ್ಯಗಳಿಗೆ ಹಿಂದಿರುಗಿದರು.
ACT 14:22 ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.
ACT 14:23 ಪ್ರತಿಯೊಂದು ಸಭೆಯಲ್ಲಿ ಪೌಲ, ಬಾರ್ನಬರು ಸಭಾ ಹಿರಿಯರನ್ನು ನೇಮಿಸಿ, ಉಪವಾಸ ಪ್ರಾರ್ಥನೆಯನ್ನು ಮಾಡಿ ಅವರು ನಂಬಿದ್ದ ಕರ್ತ ಯೇಸುವಿಗೆ ಅವರನ್ನು ಒಪ್ಪಿಸಿಕೊಟ್ಟರು.
ACT 14:24 ತರುವಾಯ ಪಿಸಿದ್ಯವನ್ನು ದಾಟಿಕೊಂಡು, ಪಂಫುಲ್ಯದೊಳಗೆ ಬಂದರು,
ACT 14:25 ಪೆರ್ಗೆಯಲ್ಲಿ ದೇವರ ವಾಕ್ಯವನ್ನು ಸಾರಿ, ಅಲ್ಲಿಂದ ಅತ್ತಾಲಿಯ ಎಂಬಲ್ಲಿಗೆ ಹೋದರು.
ACT 14:26 ಅತ್ತಾಲಿಯದಿಂದ ನೌಕೆಯಲ್ಲಿ ಪ್ರಯಾಣಮಾಡಿ ಅಂತಿಯೋಕ್ಯಕ್ಕೆ ಬಂದರು. ಅವರು ಪೂರೈಸಿದ ಸೇವೆಗಾಗಿ ದೇವರ ಕೃಪೆಗೆ ತಮ್ಮನ್ನು ಸಮರ್ಪಿಸಿಕೊಂಡದ್ದು ಈ ಪಟ್ಟಣದಿಂದಲೇ.
ACT 14:27 ಇಲ್ಲಿಗೆ ತಲುಪಿದಾಗ, ಅವರು ಸಭೆಯನ್ನು ಒಟ್ಟುಕೂಡಿಸಿದರು. ದೇವರು ಅವರಿಗೆ ತಮ್ಮ ಮುಖಾಂತರವಾಗಿ ಮಾಡಿದ್ದನ್ನೂ ಯೆಹೂದ್ಯರಲ್ಲದವರಿಗೂ ದೇವರು ವಿಶ್ವಾಸದ ದ್ವಾರವನ್ನು ತೆರೆದಿರುವುದನ್ನೂ ವರದಿಮಾಡಿದರು.
ACT 14:28 ಅವರು ಅಲ್ಲಿಯೇ ಶಿಷ್ಯರೊಂದಿಗೆ ಬಹುಕಾಲ ತಂಗಿದ್ದರು.
ACT 15:1 ಕೆಲವು ಜನರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು ಅಲ್ಲಿಯ ಸಹೋದರರಿಗೆ, “ಮೋಶೆ ಬೋಧಿಸಿದ ಪದ್ಧತಿಯಂತೆ ನೀವು ಸುನ್ನತಿ ಹೊಂದದಿದ್ದರೆ ನೀವು ರಕ್ಷಣೆ ಹೊಂದಲಾರಿರಿ,” ಎಂದು ಬೋಧಿಸತೊಡಗಿದರು.
ACT 15:2 ಇದರಿಂದ ಪೌಲ, ಬಾರ್ನಬರು ಅವರೊಂದಿಗೆ ಭಿನ್ನಾಭಿಪ್ರಾಯವುಳ್ಳವರಾಗಿ ತೀವ್ರ ವಿವಾದವುಂಟಾಯಿತು. ಈ ಪ್ರಶ್ನೆಯ ವಿಷಯದಲ್ಲಿ ಅಪೊಸ್ತಲರನ್ನೂ ಹಿರಿಯರನ್ನೂ ಭೇಟಿಯಾಗಲು, ತಮ್ಮಲ್ಲಿ ಬೇರೆ ಕೆಲವರು ಪೌಲ, ಬಾರ್ನಬರೊಂದಿಗೆ ಯೆರೂಸಲೇಮಿಗೆ ಹೋಗಬೇಕೆಂದು ನಿರ್ಣಯಿಸಲಾಯಿತು.
ACT 15:3 ಆದ್ದರಿಂದ ಸಭೆಯವರು ಅವರನ್ನು ಸಾಗಕಳುಹಿಸಲು, ಅವರು ಫೊಯಿನಿಕೆಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣ ಮಾಡುವಾಗ, ಯೆಹೂದ್ಯರಲ್ಲದವರ ಪರಿವರ್ತನೆಯನ್ನು ವಿವರವಾಗಿ ಅಲ್ಲಿಯವರೆಗೆ ತಿಳಿಸುತ್ತಾ ಸಹೋದರರೆಲ್ಲರಿಗೂ ಮಹಾಸಂತೋಷವನ್ನುಂಟುಮಾಡಿದರು.
ACT 15:4 ಅವರು ಯೆರೂಸಲೇಮನ್ನು ತಲುಪಿದಾಗ, ಸಭೆಯವರು, ಅಪೊಸ್ತಲರು ಹಾಗೂ ಹಿರಿಯರು ಅವರನ್ನು ಸ್ವಾಗತಿಸಿದರು. ದೇವರು ತಮ್ಮ ಮುಖಾಂತರವಾಗಿ ಮಾಡಿದ್ದನ್ನು ಅವರು ತಿಳಿಸಿದರು.
ACT 15:5 ಆದರೆ ಫರಿಸಾಯರ ಪಂಗಡಕ್ಕೆ ಸೇರಿದ ಕೆಲವು ವಿಶ್ವಾಸಿಗಳು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದವರು ಸುನ್ನತಿ ಹೊಂದಬೇಕು ಮತ್ತು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು,” ಎಂದರು.
ACT 15:6 ಅಪೊಸ್ತಲರು ಮತ್ತು ಹಿರಿಯರು ಈ ವಿಷಯದ ಕುರಿತಾಗಿ ವಿಚಾರಿಸಲು ಸಭೆ ಸೇರಿದರು.
ACT 15:7 ಬಹಳ ಚರ್ಚೆಯಾಗುತ್ತಿರುವಾಗ ಪೇತ್ರನು ಎದ್ದು ನಿಂತು ಅವರಿಗೆ, “ಸಹೋದರರೇ, ಯೆಹೂದ್ಯರಲ್ಲದವರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂಬ ಉದ್ದೇಶದಿಂದ ನಿಮ್ಮೊಳಗಿಂದ ನನ್ನನ್ನು ದೇವರು ಬಹು ದಿನಗಳ ಹಿಂದೆ ಆಯ್ದುಕೊಂಡರೆಂಬುದು ನಿಮಗೆ ತಿಳಿದೇ ಇದೆ.
ACT 15:8 ಹೃದಯವನ್ನು ಬಲ್ಲ ದೇವರು, ನಮಗೆ ಪವಿತ್ರಾತ್ಮ ದೇವರನ್ನು ಕೊಟ್ಟಂತೆಯೇ ಯಹೂದ್ಯರಲ್ಲದವರಿಗೂ ದಯಪಾಲಿಸಿ, ಅವರ ಬಗ್ಗೆ ಸಾಕ್ಷಿಕೊಟ್ಟರು.
ACT 15:9 ದೇವರು ಅವರಿಗೂ ನಮಗೂ ಮಧ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೆ, ವಿಶ್ವಾಸದ ಮೂಲಕ ಅವರ ಹೃದಯಗಳನ್ನು ಶುದ್ಧೀಕರಿಸಿದರು.
ACT 15:10 ಆದ್ದರಿಂದ ನಾವಾಗಲಿ, ನಮ್ಮ ಪಿತೃಗಳಾಗಲಿ, ಹೊರಲಾರದ ನೊಗವನ್ನು ಯೆಹೂದ್ಯರಲ್ಲದ ಶಿಷ್ಯರ ಹೆಗಲ ಮೇಲೆ ಹಾಕಿ, ಈಗ ಏಕೆ ದೇವರನ್ನು ಪರೀಕ್ಷಿಸಲು ಪ್ರಯತ್ನಿಸುತ್ತೀರಿ?
ACT 15:11 ಆದರೆ ನಾವು ರಕ್ಷಣೆ ಹೊಂದಿದ್ದು ನಮ್ಮ ಕರ್ತ ಯೇಸುವಿನ ಕೃಪೆಯಿಂದಲೇ, ಹಾಗೆಯೇ ಅವರೂ ಹೊಂದುವರು ಎಂಬುದು ನಮ್ಮ ನಂಬಿಕೆ,” ಎಂದನು.
ACT 15:12 ಇದಕ್ಕೆ ಜನರು ಮೌನವಾಗಿದ್ದು, ಯೆಹೂದ್ಯರಲ್ಲದವರ ಮಧ್ಯದಲ್ಲಿ ದೇವರು ತಮ್ಮ ಮೂಲಕ ಮಾಡಿದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಕುರಿತು ಬಾರ್ನಬ ಮತ್ತು ಪೌಲ ಹೇಳುವುದನ್ನು ಕೇಳಿಸಿಕೊಂಡರು.
ACT 15:13 ಅವರು ಹೇಳಿ ಮುಗಿಸಿದಾಗ, ಯಾಕೋಬನು ಮಾತನಾಡಿ, “ಸಹೋದರರೇ, ನನ್ನ ಮಾತುಗಳನ್ನು ಆಲಿಸಿರಿ,
ACT 15:14 ದೇವರು ಯೆಹೂದ್ಯರಲ್ಲದವರೊಳಗಿಂದ ತಮ್ಮ ಹೆಸರಿಗಾಗಿ ಜನರನ್ನು ಆರಿಸಿಕೊಳ್ಳಲು ಹೇಗೆ ದಯೆತೋರಿಸಿದರೆಂದು ಸೀಮೋನನು ಈಗಾಗಲೇ ನಮಗೆ ವಿವರಿಸಿದ್ದಾನೆ.
ACT 15:15 ಪ್ರವಾದಿಗಳು ಬರೆದಿರುವ ಮಾತುಗಳು ಇದಕ್ಕೆ ಸರಿಹೊಂದುತ್ತವೆ:
ACT 15:16 “ ‘ಇದಾದನಂತರ ನಾನು ಮರಳಿ ಬರುವೆನು. ಬಿದ್ದುಹೋದ ದಾವೀದನ ಗುಡಾರವನ್ನು ಕಟ್ಟುವೆನು. ಪಾಳುಬಿದ್ದದ್ದನ್ನು ಜೀರ್ಣೋದ್ಧಾರ ಮಾಡಿ, ಅದನ್ನು ಪುನರುಜ್ಜೀವನಗೊಳಿಸುವೆನು.
ACT 15:17 ಆಗ ಉಳಿದಿರುವ ಜನರಲ್ಲಿ ಯೆಹೂದ್ಯರಲ್ಲದವರೂ ನನ್ನ ಹೆಸರೆತ್ತಿ ಕರೆಯುವವರೂ ಸಹ ಕರ್ತದೇವರನ್ನು ಹುಡುಕುವರು,’
ACT 15:18 ಎಂದು ನಿತ್ಯತ್ವವನ್ನು ತಿಳಿದಿರುವವರೂ ಇವುಗಳನ್ನೆಲ್ಲಾ ಮಾಡುವವರೂ ಆಗಿರುವ ದೇವರು ಹೇಳುತ್ತಾರೆ.
ACT 15:19 “ಆದ್ದರಿಂದ, ದೇವರ ಕಡೆಗೆ ತಿರುಗುತ್ತಿರುವ ಯೆಹೂದ್ಯರಲ್ಲದವರಿಗೆ ನಾವು ತೊಂದರೆ ಮಾಡಬಾರದು ಎಂಬುದೇ ನನ್ನ ತೀರ್ಮಾನ.
ACT 15:20 ಅದರ ಬದಲಾಗಿ ನಾವು ಅವರಿಗೆ, ದೇವರಲ್ಲದವುಗಳಿಂದ ಮಲಿನವಾದ ಆಹಾರದಿಂದಲೂ ಅನೈತಿಕತೆಯಿಂದಲೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ರಕ್ತದಿಂದಲೂ ದೂರವಿರಬೇಕು.
ACT 15:21 ಏಕೆಂದರೆ ಆರಂಭ ಕಾಲದಿಂದಲೂ ಪ್ರತಿಯೊಂದು ಪಟ್ಟಣದಲ್ಲಿ ಮೋಶೆಯ ಗ್ರಂಥವನ್ನು ಬೋಧಿಸಲಾಗುತ್ತದೆ ಹಾಗೂ ಪ್ರತಿ ಸಬ್ಬತ್ ದಿನ ಸಭಾಮಂದಿರಗಳಲ್ಲಿ ಓದಲಾಗುತ್ತದೆ,” ಎಂದು ಹೇಳಿದನು.
ACT 15:22 ಆಗ ಅಪೊಸ್ತಲರು ಮತ್ತು ಹಿರಿಯರು ಇಡೀ ಸಭೆಯ ಸಮ್ಮತಿ ಪಡೆದು, ಸಹೋದರರಲ್ಲಿ ನಾಯಕರಾಗಿದ್ದ ಬಾರ್ಸಬನೆಂದು ಕರೆಯಲಾದ ಯೂದ ಮತ್ತು ಸೀಲ ಎಂಬಿಬ್ಬರನ್ನು ಆಯ್ದುಕೊಂಡರು. ಅವರನ್ನು ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಲು ನಿರ್ಧರಿಸಿದರು.
ACT 15:23 ಅವರ ಕೈಯಿಂದ ಬರೆದು ಕೊಟ್ಟದ್ದೇನೆಂದರೆ: ಅಪೊಸ್ತಲರು ಹಾಗೂ ಹಿರಿಯ ಸಹೋದರರು, ಅಂತಿಯೋಕ್ಯ, ಸಿರಿಯ ಮತ್ತು ಕಿಲಿಕ್ಯದಲ್ಲಿ ವಾಸಿಸುವ ಯೆಹೂದ್ಯರಲ್ಲದವರೊಳಗಿನ ಸಹೋದರರಿಗೆ: ವಂದನೆಗಳು.
ACT 15:24 ನಮ್ಮಿಂದ ಕೆಲವರು ನಮ್ಮ ಅಪ್ಪಣೆಯಿಲ್ಲದೆ ತಮ್ಮ ಮಾತುಗಳಿಂದ ನಿಮ್ಮ ಮನಸ್ಸಿಗೆ ತೊಂದರೆ ಕೊಟ್ಟರೆಂದು ನಾವು ಕೇಳಿದೆವು.
ACT 15:25 ಆದ್ದರಿಂದ ಕೆಲವರನ್ನು ಆಯ್ದುಕೊಂಡು ಅವರನ್ನು ನಮ್ಮ ಪ್ರಿಯರಾದ ಬಾರ್ನಬ ಮತ್ತು ಪೌಲರೊಂದಿಗೆ ನಿಮ್ಮ ಬಳಿಗೆ ಕಳುಹಿಸುವುದು ಯುಕ್ತವೆಂದು ಒಂದೇ ಮನಸ್ಸಾಗಿರುವ ನಮಗೆ ತೋಚಿತು.
ACT 15:26 ಅವರು ನಮ್ಮ ಕರ್ತ ಕ್ರಿಸ್ತ ಯೇಸುವಿನ ಹೆಸರಿನ ಪರವಾಗಿ ತಮ್ಮ ಪ್ರಾಣಗಳನ್ನೇ ಬಿಟ್ಟು ಕೊಡುವವರಾಗಿದ್ದಾರೆ.
ACT 15:27 ಆದ್ದರಿಂದ ನಾವು ಈ ಸಂಗತಿಗಳನ್ನು ಬಾಯಿಮಾತುಗಳಿಂದ ಪ್ರಕಟಿಸುವುದಕ್ಕಾಗಿ ಯೂದ ಮತ್ತು ಸೀಲರನ್ನು ಕಳುಹಿಸುತ್ತಿದ್ದೇವೆ.
ACT 15:28 ಈ ಅಗತ್ಯವಾದವುಗಳನ್ನು ಬಿಟ್ಟು ಬೇರೆಯವುಗಳನ್ನು ನಿಮ್ಮ ಮೇಲೆ ಹೊರೆಯಾಗಿ ಹಾಕಬಾರದೆಂಬುದು, ಪವಿತ್ರಾತ್ಮರಿಗೂ ನಮಗೂ ಒಳ್ಳೆಯದೆಂದು ತೋಚಿತು.
ACT 15:29 ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕು. ಇವುಗಳಿಂದ ನಿಮ್ಮನ್ನು ಕಾಪಾಡಿಕೊಳ್ಳುವುದರಿಂದ ನಿಮಗೆ ಒಳಿತಾಗುವುದು. ನಿಮಗೆ ಶುಭವಾಗಲಿ.
ACT 15:30 ಅವರು ಹೊರಟುಹೋಗಿ ಅಂತಿಯೋಕ್ಯವನ್ನು ತಲುಪಿದರು. ಅಲ್ಲಿ ದೇವಸಭೆಯನ್ನು ಕೂಡಿಸಿ ಆ ಪತ್ರವನ್ನು ಕೊಟ್ಟರು.
ACT 15:31 ಸಭೆಯವರು ಅದನ್ನು ಓದಿ ಅದರಲ್ಲಿದ್ದ ಆದರಣೆ ಮಾತುಗಳಿಗಾಗಿ ಸಂತೋಷಪಟ್ಟರು.
ACT 15:32 ಯೂದ ಮತ್ತು ಸೀಲರು ಸ್ವತಃ ಪ್ರವಾದಿಗಳಾಗಿದ್ದುದರಿಂದ ಅಲ್ಲಿದ್ದ ವಿಶ್ವಾಸಿಗಳನ್ನು ಅನೇಕ ಬುದ್ಧಿವಾದಗಳಿಂದ ಬಲಪಡಿಸಿದರು.
ACT 15:33 ಅವರು ಕೆಲವು ದಿನಗಳು ಇದ್ದ ನಂತರ ಅಲ್ಲಿಯ ವಿಶ್ವಾಸಿಗಳನ್ನು ಬೀಳ್ಕೊಟ್ಟು ತಮ್ಮನ್ನು ಕಳುಹಿಸಿಕೊಟ್ಟವರ ಬಳಿಗೆ ಹಿಂದಿರುಗಿದರು.
ACT 15:34 ಸೀಲನು ಅಲ್ಲಿಯೇ ಇರಲು ತೀರ್ಮಾನಿಸಿದನು.
ACT 15:35 ಆದರೆ ಪೌಲನು ಮತ್ತು ಬಾರ್ನಬರು ಅಂತಿಯೋಕ್ಯದಲ್ಲಿಯೇ ಉಳಿದುಕೊಂಡು ಅನೇಕರಿಗೆ ಕರ್ತ ಯೇಸುವಿನ ವಾಕ್ಯವನ್ನು ಬೋಧಿಸುತ್ತಾ ಸುವಾರ್ತೆ ಸಾರಿದರು.
ACT 15:36 ಕೆಲವು ದಿನಗಳ ನಂತರ ಪೌಲನು ಬಾರ್ನಬನಿಗೆ, “ನಾವು ಕರ್ತ ಯೇಸುವಿನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ಹೋಗಿ ಅಲ್ಲಿದ್ದ ವಿಶ್ವಾಸಿಗಳನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ,” ಎಂದು ಹೇಳಿದನು.
ACT 15:37 ಬಾರ್ನಬನು ಮಾರ್ಕ ಎಂಬ ಹೆಸರಿನ ಯೋಹಾನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬಯಸಿದನು,
ACT 15:38 ಆದರೆ ಪಂಫುಲ್ಯದಲ್ಲಿ ತಮ್ಮನ್ನು ಬಿಟ್ಟು ತಮ್ಮೊಂದಿಗೆ ಸೇವೆಗೆ ಸಹಕರಿಸದೆ ಹೋದ ಮಾರ್ಕನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ಪೌಲನು ಭಾವಿಸಿದನು.
ACT 15:39 ಇದರಿಂದ ಅವರಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾಗಿ ಹೋಗಬೇಕಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸೈಪ್ರಸ್ ದ್ವೀಪಕ್ಕೆ ಪ್ರಯಾಣಮಾಡಿದನು,
ACT 15:40 ಆದರೆ ಪೌಲನು ಸೀಲನನ್ನು ಆರಿಸಿಕೊಂಡು ಹೋದನು. ವಿಶ್ವಾಸಿಗಳಿಂದ ಅವನನ್ನು ಕರ್ತ ಯೇಸುವಿನ ಕೃಪೆಗೆ ಒಪ್ಪಿಸಿ, ಕಳುಹಿಸಿಕೊಟ್ಟುರು.
ACT 15:41 ಪೌಲನು ಸಿರಿಯ ಮತ್ತು ಕಿಲಿಕ್ಯ ಸೀಮೆಗಳನ್ನು ಹಾದುಹೋಗುತ್ತಾ, ಅಲ್ಲಿದ್ದ ಸಭೆಗಳ ನಂಬಿಕೆಯನ್ನು ಬಲಪಡಿಸಿದನು.
ACT 16:1 ಪೌಲನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಅಲ್ಲಿ, ತಿಮೊಥೆಯನೆಂಬ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನ ತಾಯಿ ವಿಶ್ವಾಸಿಯಾಗಿದ್ದ ಯೆಹೂದ್ಯ ಸ್ತ್ರೀ. ಆದರೆ ಅವನ ತಂದೆ ಒಬ್ಬ ಗ್ರೀಕನಾಗಿದ್ದನು.
ACT 16:2 ಲುಸ್ತ್ರ ಹಾಗೂ ಇಕೋನ್ಯಗಳಲ್ಲಿದ್ದ ಸಹೋದರರು ತಿಮೊಥೆಯನ ಬಗ್ಗೆ ಒಳ್ಳೆಯ ಸಾಕ್ಷಿ ಹೇಳುತ್ತಿದ್ದರು.
ACT 16:3 ತಿಮೊಥೆಯನನ್ನು ಪೌಲನು ತನ್ನೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಬೇಕೆಂದು ಅಪೇಕ್ಷಿಸಿ, ಆ ಪ್ರದೇಶದಲ್ಲಿ ನೆಲೆಸಿದ ಯೆಹೂದ್ಯರ ನಿಮಿತ್ತ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು. ಏಕೆಂದರೆ ಅವನ ತಂದೆ ಗ್ರೀಕನು ಎಂಬುದನ್ನು ಅವರೆಲ್ಲರೂ ತಿಳಿದಿದ್ದರು.
ACT 16:4 ಅವರು ಪಟ್ಟಣಗಳಲ್ಲಿ ಪ್ರಯಾಣಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು, ಹಿರಿಯರು ತೆಗೆದುಕೊಂಡ ತೀರ್ಮಾನಗಳನ್ನು ಜನರು ಅನುಸರಿಸಿ ನಡೆಯುವಂತೆ ಅವರಿಗೆ ಬೋಧಿಸಿದರು.
ACT 16:5 ಹೀಗೆ ಸಭೆಗಳು ವಿಶ್ವಾಸದಲ್ಲಿ ಬಲಗೊಂಡು ಸಂಖ್ಯೆಯಲ್ಲಿ ಅನುದಿನ ಹೆಚ್ಚುತ್ತಾ ಬಂದವು.
ACT 16:6 ಏಷ್ಯಾ ಪ್ರಾಂತದಲ್ಲಿ ಸುವಾರ್ತೆ ಸಾರಬಾರದೆಂದು ಪವಿತ್ರಾತ್ಮ ತಡೆದದ್ದರಿಂದ ಪೌಲ ಮತ್ತು ಅವನ ಜೊತೆಯವರು ಫ್ರುಗ್ಯ ಹಾಗೂ ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.
ACT 16:7 ಮೂಸ್ಯದ ಸೀಮೆಯನ್ನು ತಲುಪಿದಾಗ ಬಿಥೂನ್ಯವನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಅನುಮತಿಸಲಿಲ್ಲ.
ACT 16:8 ಆದ್ದರಿಂದ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
ACT 16:9 ಆ ರಾತ್ರಿಯಲ್ಲಿ ಪೌಲನಿಗೆ ಒಂದು ದರ್ಶನವಾಯಿತು. ಅದರಲ್ಲಿ ಮಕೆದೋನ್ಯದವನೊಬ್ಬನು ನಿಂತುಕೊಂಡು, “ಮಕೆದೋನ್ಯ ದಾಟಿ ಬಂದು ನಮಗೆ ಸಹಾಯಮಾಡು,” ಎಂದು ಅವನನ್ನು ಬೇಡಿಕೊಂಡನು.
ACT 16:10 ಪೌಲನಿಗೆ ಈ ದರ್ಶನವಾದಾಗ ಆ ಜನರಿಗೆ ಸುವಾರ್ತೆ ಸಾರಲು ದೇವರು ನಮ್ಮನ್ನು ಕರೆಯುತ್ತಿದ್ದಾರೆಂದು ತಿಳಿದುಕೊಂಡು ಕೂಡಲೇ ಮಕೆದೋನ್ಯಕ್ಕೆ ಹೊರಡಲು ಸಿದ್ಧರಾದೆವು.
ACT 16:11 ನಾವು ನೌಕೆ ಹತ್ತಿ ತ್ರೋವದಿಂದ ನೇರವಾಗಿ ಸಮೊಥ್ರಾಕೆಗೆ ಹೊರಟೆವು. ಮರುದಿನ ನೆಯಾಪೊಲಿಗೆ ತಲುಪಿದೆವು.
ACT 16:12 ಅಲ್ಲಿಂದ ಮಕೆದೋನ್ಯ ಪ್ರಾಂತದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ಪ್ರವಾಸ ಸ್ಥಳವಾಗಿತ್ತು. ನಾವು ಆ ಪಟ್ಟಣದಲ್ಲಿ ಕೆಲವು ದಿನ ಉಳಿದುಕೊಂಡೆವು.
ACT 16:13 ಪ್ರಾರ್ಥನೆಯ ಸ್ಥಳ ಸಿಕ್ಕಬಹುದೆಂದು ಭಾವಿಸಿ ಸಬ್ಬತ್ ದಿನದಂದು ಪಟ್ಟಣದ ದ್ವಾರದ ಹೊರಗಿದ್ದ ನದಿತೀರಕ್ಕೆ ಹೋದೆವು. ಅಲ್ಲಿ ಕುಳಿತುಕೊಂಡು ಕೂಡಿಬಂದಿದ್ದ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸಿದೆವು.
ACT 16:14 ಅವರಲ್ಲಿ ಒಬ್ಬ ಮಹಿಳೆಯ ಹೆಸರು ಲುದ್ಯ ಎಂದಿತ್ತು. ಆಕೆ ಥುವತೈರ ಊರಿನವಳೂ ಕೆನ್ನೀಲಿ ಬಣ್ಣದ ಬಟ್ಟೆಗಳ ವ್ಯಾಪಾರಿಯೂ ದೇವರನ್ನು ಆರಾಧಿಸುವವಳೂ ಆಗಿದ್ದಳು. ಪೌಲನು ಹೇಳಿದ್ದನ್ನು ಲಕ್ಷ್ಯಕೊಡುವಂತೆ ಕರ್ತ ಯೇಸು ಆಕೆಯ ಹೃದಯವನ್ನು ತೆರೆದರು.
ACT 16:15 ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಹೊಂದಿದಾಗ, “ನಾನು ಕರ್ತ ಯೇಸುವಿಗೆ ನಂಬಿಗಸ್ತಳೆಂದು ನೀವು ತೀರ್ಮಾನಿಸಿಕೊಂಡರೆ, ಬಂದು ನನ್ನ ಮನೆಯಲ್ಲಿ ತಂಗಿರಿ,” ಎಂದು ನಮ್ಮನ್ನು ಒತ್ತಾಯ ಮಾಡಿದಳು.
ACT 16:16 ಒಂದು ದಿನ ನಾವು ಪ್ರಾರ್ಥನೆಯ ಸ್ಥಳಕ್ಕೆ ಹೋಗುತ್ತಿದ್ದೆವು, ಆಗ ಭವಿಷ್ಯ ಹೇಳುವ ದುರಾತ್ಮವುಳ್ಳ ದಾಸಿಯೊಬ್ಬಳು ನಮ್ಮನ್ನು ಭೇಟಿಯಾದಳು. ಭವಿಷ್ಯ ಹೇಳುವುದರಿಂದ ಆಕೆ ತನ್ನ ಯಜಮಾನನಿಗೆ ಬಹಳ ಹಣ ಸಂಪಾದಿಸುತ್ತಿದ್ದಳು.
ACT 16:17 ಅವಳು, “ಈ ಮನುಷ್ಯರು ಮಹೋನ್ನತ ದೇವರ ದಾಸರು. ರಕ್ಷಣೆಯ ಮಾರ್ಗವನ್ನು ನಿಮಗೆ ಸಾರುತ್ತಾರೆ,” ಎಂದು ಗಟ್ಟಿಯಾಗಿ ಕೂಗುತ್ತಾ ಪೌಲನ ಮತ್ತು ನಮ್ಮ ಹಿಂದೆಯೇ ಬಂದಳು.
ACT 16:18 ಹೀಗೆ ಬಹಳ ದಿನ ಮಾಡುತ್ತಲೇ ಇದ್ದಳು. ಆದರೆ ಪೌಲನು ಬಹು ಬೇಸರಗೊಂಡು ಹಿಂದಿರುಗಿ ಆ ದುರಾತ್ಮಕ್ಕೆ, “ಇವಳನ್ನು ಈಗಲೇ ಬಿಟ್ಟು ಹೊರಗೆ ಬರಬೇಕೆಂದು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ,” ಎಂದು ಹೇಳಲು, ಅದೇ ಗಳಿಗೆಯಲ್ಲಿ ಆ ದುರಾತ್ಮವು ಆಕೆಯನ್ನು ಬಿಟ್ಟುಹೋಯಿತು.
ACT 16:19 ಅವಳ ಯಜಮಾನರು ತಾವು ಹಣ ಸಂಪಾದಿಸುವ ನಿರೀಕ್ಷೆಯೇ ಹೋಯಿತೆಂದು ತಿಳಿದು, ಪೌಲ ಸೀಲರನ್ನು ಹಿಡಿದು ಸಂತೆಸ್ಥಳದಲ್ಲಿದ್ದ ಅಧಿಕಾರಿಗಳ ಮುಂದೆ ವಿಚಾರಣೆಗಾಗಿ ಎಳೆದುಕೊಂಡು ಹೋದರು.
ACT 16:20 ಅವರನ್ನು ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಯೆಹೂದ್ಯರಾಗಿರುವ ಇವರು, ನಮ್ಮ ಪಟ್ಟಣದಲ್ಲಿ ಬಹು ಗಲಿಬಿಲಿ ಮಾಡುತ್ತಿದ್ದಾರೆ.
ACT 16:21 ರೋಮನವರಾದ ನಾವು ಸ್ವೀಕರಿಸಲೂ ಇಲ್ಲವೆ ಅನುಸರಿಸಲೂ ಆಗದಂಥಾ ಆಚಾರಗಳನ್ನು ಪ್ರಕಟಿಸುತ್ತಿದ್ದಾರೆ,” ಎಂದರು.
ACT 16:22 ಪೌಲ, ಸೀಲರಿಗೆ ವಿರೋಧವಾಗಿ ಜನಸಮೂಹವೆಲ್ಲಾ ಕೂಡಿಕೊಂಡಿತು. ನ್ಯಾಯಾಧಿಪತಿಗಳು ಪೌಲ, ಸೀಲರ ಬಟ್ಟೆಗಳನ್ನು ಕಿತ್ತುಹಾಕಿಸಿ ಛಡಿಗಳಿಂದ ಹೊಡೆಯಬೇಕೆಂದು ಆಜ್ಞಾಪಿಸಿದರು.
ACT 16:23 ಅವರನ್ನು ಛಡಿ ಏಟುಗಳಿಂದ ಬಹಳವಾಗಿ ಥಳಿಸಿ ಸೆರೆಮನೆಗೆ ಹಾಕಲಾಯಿತು. ಅವರನ್ನು ಜಾಗರೂಕತೆಯಿಂದ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಆಜ್ಞಾಪಿಸಲಾಯಿತು.
ACT 16:24 ಇಂಥಾ ಆಜ್ಞೆಯನ್ನು ಪಡೆದು, ಅವನು ಸೆರೆಮನೆಯ ಒಳಕೋಣೆಯಲ್ಲಿ ಅವರನ್ನು ಹಾಕಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಂಧಿಸಿದರು.
ACT 16:25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ, ಸೀಲರು ಪ್ರಾರ್ಥನೆ ಮಾಡುವವರಾಗಿ ಸ್ತುತಿಗೀತೆಯಿಂದ ದೇವರಿಗೆ ಸ್ತೋತ್ರ ಮಾಡುತ್ತಿದ್ದರು. ಸೆರೆಮನೆಯಲ್ಲಿ ಇತರ ಕೈದಿಗಳು ಅದನ್ನು ಆಲಿಸುತ್ತಿದ್ದರು.
ACT 16:26 ಆಗ ತಕ್ಷಣವೇ ಭೀಕರವಾದ ಭೂಕಂಪವಾಗಿ ಸೆರೆಮನೆಯ ಅಸ್ತಿವಾರವು ಕದಲಿತು. ಕೂಡಲೇ ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದವು. ಎಲ್ಲರನ್ನು ಬಂಧಿಸಿದ್ದ ಸರಪಣಿಗಳು ಸಡಿಲಗೊಂಡವು.
ACT 16:27 ಸೆರೆಮನೆಯ ಅಧಿಕಾರಿ ಎಚ್ಚತ್ತುಕೊಂಡು, ಸೆರೆಮನೆಯ ಬಾಗಿಲುಗಳು ತೆರೆದಿರುವುದನ್ನು ಕಂಡು, ಸೆರೆಯಾಳುಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿ, ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು.
ACT 16:28 ಆದರೆ ಪೌಲನು, “ನೀನು ಹಾನಿ ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲಿಯೇ ಇದ್ದೇವೆ,” ಎಂದು ಗಟ್ಟಿಯಾಗಿ ಕೂಗಿದನು.
ACT 16:29 ಅವನು ದೀಪ ತರಬೇಕೆಂದು ಹೇಳಿ ಓಡಿಹೋಗಿ ಭಯದಿಂದ ನಡುಗುತ್ತಾ ಪೌಲ, ಸೀಲರ ಮುಂದೆ ಅಡ್ಡಬಿದ್ದನು.
ACT 16:30 ಆಮೇಲೆ ಅವರನ್ನು ಹೊರಗೆ ಕರೆದುಕೊಂಡು ಬಂದು, “ಮಹನೀಯರೇ, ನಾನು ರಕ್ಷಣೆ ಹೊಂದಲು ಏನು ಮಾಡಬೇಕು?” ಎಂದನು.
ACT 16:31 “ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಡು. ನೀನು ರಕ್ಷಣೆ ಹೊಂದುವೆ, ನಿನ್ನ ಮನೆಯವರೂ ರಕ್ಷಣೆಹೊಂದುವರು,” ಎಂದರು.
ACT 16:32 ಆಮೇಲೆ ಅವರು ಅವನಿಗೂ ಅವನ ಮನೆಯವರೆಲ್ಲರಿಗೂ ಕರ್ತ ಯೇಸುವಿನ ಸುವಾರ್ತೆಯನ್ನು ತಿಳಿಸಿದರು.
ACT 16:33 ಆ ಅಧಿಕಾರಿ, ರಾತ್ರಿಯ ಅದೇ ಗಳಿಗೆಯಲ್ಲಿ ಪೌಲ, ಸೀಲರನ್ನು ಕರೆದುಕೊಂಡು ಹೋಗಿ, ಅವರ ಗಾಯಗಳನ್ನು ತೊಳೆದನು. ಆಮೇಲೆ ಅವನೂ ಅವನ ಮನೆಯವರೆಲ್ಲರೂ ದೀಕ್ಷಾಸ್ನಾನವನ್ನು ಹೊಂದಿದರು.
ACT 16:34 ಸೆರೆಮನೆಯ ಅಧಿಕಾರಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅವರಿಗೆ ಊಟಬಡಿಸಿದನು ಮತ್ತು ಅವನೂ ತನ್ನ ಮನೆಯವರೆಲ್ಲರೂ ದೇವರಲ್ಲಿ ವಿಶ್ವಾಸವಿಟ್ಟಿದ್ದಕ್ಕಾಗಿ ಉಲ್ಲಾಸಗೊಂಡನು.
ACT 16:35 ಬೆಳಗಾದ ತರುವಾಯ ನ್ಯಾಯಾಧಿಪತಿಗಳು ತಮ್ಮ ಅಧಿಕಾರಿಗಳನ್ನು ಸೆರೆಮನೆಯ ಅಧಿಕಾರಿಯ ಬಳಿಗೆ ಕಳುಹಿಸಿ, “ಆ ಮನುಷ್ಯರನ್ನು ಬಿಡುಗಡೆಮಾಡು,” ಎಂದು ತಿಳಿಸಿದರು.
ACT 16:36 ಸೆರೆಮನೆಯ ಅಧಿಕಾರಿ ಪೌಲನಿಗೆ, “ನಿನ್ನನ್ನು ಸೀಲನನ್ನು ಬಿಟ್ಟುಬಿಡಲು ನ್ಯಾಯಾಧಿಪತಿಗಳು ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಬಹುದು,” ಎಂದು ಪ್ರಕಟಿಸಿದನು.
ACT 16:37 ಆದರೆ ಪೌಲನು ಅಧಿಕಾರಿಗಳಿಗೆ, “ನಾವು ರೋಮ್ ಪೌರರಾಗಿದ್ದು ಯಾವ ನ್ಯಾಯವಿಚಾರಣೆ ಮಾಡದೇ ಬಹಿರಂಗವಾಗಿ ನಮ್ಮನ್ನು ಛಡಿಯಿಂದ ಹೊಡೆಸಿ, ನಮ್ಮನ್ನು ಸೆರೆಮನೆಗೆ ತಳ್ಳಿದ್ದಾರೆ. ಈಗ ರಹಸ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೋ? ಇಲ್ಲ, ಅವರು ತಾವೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಲಿ,” ಎಂದನು.
ACT 16:38 ಅಧಿಕಾರಿಗಳು ಹೋಗಿ ಇದನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಪೌಲ, ಸೀಲರು ರೋಮ್ ಪೌರರೆಂದು ಕೇಳಿ ಅವರು ಗಾಬರಿಗೊಂಡರು.
ACT 16:39 ಆದುದರಿಂದ ನ್ಯಾಯಾಧಿಪತಿಗಳು ಬಂದು ಶಾಂತಪಡಿಸಿ ಸೆರೆಮನೆಯಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.
ACT 16:40 ಪೌಲ, ಸೀಲರು ಸೆರೆಮನೆಯಿಂದ ಹೊರಗೆ ಬಂದ ಮೇಲೆ ಲುದ್ಯಳ ಮನೆಗೆ ಹೋಗಿ, ಅಲ್ಲಿ ಸಹೋದರರನ್ನು ಭೇಟಿಯಾಗಿ ಅವರನ್ನು ಪ್ರೋತ್ಸಾಹಿಸಿ, ಅಲ್ಲಿಂದ ಹೊರಟು ಹೋದರು.
ACT 17:1 ಅವರು ಅಂಫಿಪೊಲಿ ಮತ್ತು ಅಪೊಲೋನ್ಯ ಮಾರ್ಗವಾಗಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು.
ACT 17:2 ಪೌಲನು ತನ್ನ ವಾಡಿಕೆಯಂತೆ ಮೂರು ಸಬ್ಬತ್ ದಿನಗಳಂದು ಅವರ ಬಳಿ ಹೋಗಿ, ಅವರಲ್ಲಿ ಪವಿತ್ರ ವೇದಗಳ ಬಗ್ಗೆ ವಾದಿಸಿ,
ACT 17:3 ಕ್ರಿಸ್ತ ಯೇಸು ಯಾತನೆಯನ್ನು ಅನುಭವಿಸಿ, ಸತ್ತವರೊಳಗಿಂದ ಜೀವಂತವಾಗಿ ಎದ್ದು ಬರಬೇಕಾಗಿತ್ತೆಂಬುದನ್ನು ವಿವರಿಸಿ, “ನಾನು ನಿಮಗೆ ಪ್ರಕಟಿಸುತ್ತಿರುವ ಯೇಸುವೇ ಆ ಕ್ರಿಸ್ತ,” ಎಂದು ಅವನು ಅವರ ಮುಂದೆ ಬಹಿರಂಗಪಡಿಸಿದನು.
ACT 17:4 ಅವರಲ್ಲಿ ಕೆಲವರು ದೇವಭಕ್ತಿಯುಳ್ಳ ಗ್ರೀಕರೂ ಪ್ರಮುಖರಾಗಿದ್ದ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಒಡಂಬಟ್ಟವರಾಗಿ ಪೌಲ, ಸೀಲರನ್ನು ಸೇರಿಕೊಂಡರು.
ACT 17:5 ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಬೀದಿಗಳಲ್ಲಿ ತಿರುಗಾಡುವ ಕೆಲವು ದುಷ್ಟವ್ಯಕ್ತಿಗಳನ್ನು ಕೂಡಿಸಿ ಪಟ್ಟಣದಲ್ಲಿ ಗಲಭೆ ಎಬ್ಬಿಸಿದರು. ಜನಸಮೂಹದ ಮುಂದೆ ಪೌಲ, ಸೀಲರನ್ನು ಎಳೆದು ತರುವಂತೆ ಅವರನ್ನು ಹುಡುಕುತ್ತಾ ಯಾಸೋನ ಎಂಬುವನ ಮನೆಯನ್ನು ಮುತ್ತಿದರು.
ACT 17:6 ಆದರೆ ಅಲ್ಲಿ ಅವರಿಲ್ಲದಿರುವುದನ್ನು ಕಂಡು ಅವರು ಯಾಸೋನನನ್ನೂ ಕೆಲವು ಸಹೋದರರನ್ನೂ ಎಳೆದುಕೊಂಡು ಬಂದು ಪಟ್ಟಣದ ಅಧಿಕಾರಿಗಳ ಮುಂದೆ ನಿಲ್ಲಿಸಿ, “ಲೋಕವನ್ನು ತಲೆಕೆಳಗೆ ಮಾಡಿರುವ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.
ACT 17:7 ಯಾಸೋನನು ಅವರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡಿದ್ದಾನೆ. ಅವರು ಯೇಸು ಎಂಬ ಬೇರೊಬ್ಬ ಅರಸನಿದ್ದಾನೆ ಎಂದು ಹೇಳುತ್ತಾ ಕೈಸರನ ವಿರುದ್ಧವಾಗಿ ನಡೆಯುತ್ತಾರೆ,” ಎಂದು ಗಟ್ಟಿಯಾಗಿ ಕೂಗಿದರು.
ACT 17:8 ಇದನ್ನು ಕೇಳಿದ ಜನರೂ ಪಟ್ಟಣದ ಅಧಿಕಾರಿಗಳೂ ಕಳವಳಗೊಂಡರು.
ACT 17:9 ಆಮೇಲೆ ಯಾಸೋನನಿಂದಲೂ ಮತ್ತಿತರರಿಂದಲೂ ಜಾಮೀನು ಪಡೆದು ಅವರನ್ನು ಬಿಡುಗಡೆ ಮಾಡಿದರು.
ACT 17:10 ರಾತ್ರಿಯಾದ ಕೂಡಲೇ, ಸಹೋದರರು ಪೌಲ, ಸೀಲರನ್ನು ಬೆರೋಯಕ್ಕೆ ಕಳುಹಿಸಿದರು. ಅಲ್ಲಿಗೆ ಅವರು ತಲುಪಿದಾಗ ಅಲ್ಲಿಯೂ ಯೆಹೂದ್ಯರ ಸಭಾಮಂದಿರಕ್ಕೆ ಹೋದರು.
ACT 17:11 ಬೆರೋಯದಲ್ಲಿದ್ದವರು ಥೆಸಲೋನಿಕದವರಿಗಿಂತ ಹೆಚ್ಚು ಸದ್ಗುಣವುಳ್ಳವರು; ಅವರು ವಾಕ್ಯವನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ, ಇವರು ಹೇಳಿದ್ದು ಸರಿಯಾದದ್ದೋ ಏನೋ ಎಂದು ಅವರು ಪ್ರತಿದಿನವೂ ಪವಿತ್ರ ವೇದಗಳನ್ನು ಪರೀಕ್ಷಿಸುತ್ತಿದ್ದರು.
ACT 17:12 ಆದ್ದರಿಂದ ಅವರಲ್ಲಿ ಅನೇಕರು ವಿಶ್ವಾಸ ಹೊಂದಿದರು. ಅನೇಕ ಗ್ರೀಕ್ ಪುರುಷರೂ ಪ್ರಮುಖ ಸ್ತ್ರೀಯರೂ ವಿಶ್ವಾಸವನ್ನಿಟ್ಟರು.
ACT 17:13 ಆದರೆ ಪೌಲನು ದೇವರ ವಾಕ್ಯವನ್ನು ಬೆರೋಯದಲ್ಲಿ ಬೋಧಿಸುತ್ತಿದ್ದಾನೆಂಬುದು ಥೆಸಲೋನಿಕದಲ್ಲಿದ್ದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು, ಜನಸಮೂಹವನ್ನು ಪ್ರಚೋದಿಸಿ ಗಲಭೆ ಎಬ್ಬಿಸಿದರು.
ACT 17:14 ಆದ್ದರಿಂದ ಸಹೋದರರು ಕೂಡಲೇ ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೆ ಬೆರೋಯದಲ್ಲಿಯೇ ಉಳಿದುಕೊಂಡರು.
ACT 17:15 ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.
ACT 17:16 ಪೌಲನು ಅವರಿಗಾಗಿ ಕಾಯುತ್ತಾ ಅಥೇನೆಯಲ್ಲಿ ಇದ್ದಾಗ, ಆ ಪಟ್ಟಣವು ವಿಗ್ರಹಗಳಿಂದ ತುಂಬಿಕೊಂಡಿದ್ದನ್ನು ಕಂಡು, ಅವನ ಆತ್ಮವು ಅವನೊಳಗೆ ಕುದಿಯಿತು.
ACT 17:17 ಆದ್ದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವಭಕ್ತಿಯುಳ್ಳ ಗ್ರೀಕರೊಂದಿಗೂ ಅಲ್ಲದೆ ಬಹಿರಂಗ ಸಂತೆಪೇಟೆ ಸ್ಥಳದಲ್ಲಿ ದಿನದಿನವೂ ಬರುತ್ತಿದ್ದ ಜನರೊಂದಿಗೂ ಚರ್ಚೆ ಮಾಡುತ್ತಿದ್ದನು.
ACT 17:18 ಆದರೆ ಎಪಿಕೂರಿಯರು ಹಾಗೂ ಸ್ತೋಯಿಕರು ಎಂಬ ತತ್ವಜ್ಞಾನಿಗಳಲ್ಲಿ ಸಹ ಕೆಲವರು ಅವನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿ, “ಈ ಬಾಯಿಬಡುಕ ಏನು ಹೇಳಬೇಕೆಂದಿದ್ದಾನೆ?” ಎಂದರು. ಇನ್ನೂ ಕೆಲವರು, “ಅವನು ವಿದೇಶದ ದೇವರುಗಳ ಬಗ್ಗೆ ಪ್ರಸ್ತಾಪಿಸುವಂತೆ ತೋರುತ್ತದೆ,” ಎಂದರು. ಏಕೆಂದರೆ ಅವನು ಯೇಸುವನ್ನು ಮತ್ತು ಪುನರುತ್ಥಾನವನ್ನು ಕುರಿತ ಸುವಾರ್ತೆ ಸಾರುತ್ತಿದ್ದನು.
ACT 17:19 ಆಗ ಅವರು ಪೌಲನನ್ನು ಕರೆದುಕೊಂಡು ಅರಿಯೊಪಾಗ ಎಂಬ ಸ್ಥಳಕ್ಕೆ ಬಂದು, “ನೀನು ಹೇಳುತ್ತಿರುವ ಈ ಹೊಸ ಉಪದೇಶ ಏನೆಂಬುದನ್ನು ನಾವು ತಿಳಿದುಕೊಳ್ಳಬಹುದೋ?
ACT 17:20 ನೀನು ಕೆಲವು ವಿಚಿತ್ರವಾದ ವಿಚಾರಗಳನ್ನು ನಮಗೆ ಹೇಳುತ್ತಿರುವೆ. ಆದ್ದರಿಂದ ಅವುಗಳ ಅರ್ಥವನ್ನು ತಿಳಿಯಬಯಸುತ್ತೇವೆ,” ಎಂದರು.
ACT 17:21 ಅಲ್ಲಿ ನೆಲೆಸಿದ್ದ ಅಥೇನೆಯ ನಿವಾಸಿಗಳೂ ವಿದೇಶಿಯರೂ ಹೊಸ ಹೊಸ ವಿಷಯಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಹೊರತು ಇತರ ವಿಷಯಗಳಲ್ಲಿ ಸಮಯ ಕಳೆಯುತ್ತಿರಲಿಲ್ಲ.
ACT 17:22 ಅರಿಯೊಪಾಗದ ಗುಂಪಿನ ಮುಂದೆ ನಿಂತು ಪೌಲನು ಹೀಗೆಂದನು: “ಅಥೇನೆಯ ಜನರೇ! ನೀವು ಪ್ರತಿಯೊಂದರಲ್ಲಿಯೂ ಹೇಗೆ ಬಹು ಧಾರ್ಮಿಕರಾಗಿದ್ದೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
ACT 17:23 ನಾನು ಸುತ್ತಮುತ್ತಲೂ ತಿರುಗಾಡುತ್ತಾ, ನಿಮ್ಮ ಆರಾಧನಾ ವಿಗ್ರಹಗಳನ್ನು ಲಕ್ಷ್ಯವಿಟ್ಟು ಗಮನಿಸಿದಾಗ, ‘ತಿಳಿಯದ ದೇವರಿಗೆ’ ಎಂಬ ಬರಹವಿದ್ದ ಬಲಿಪೀಠವನ್ನು ನೋಡಿದೆನು. ಆದ್ದರಿಂದ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿರುವಿರೋ ಅದನ್ನೇ ನಾನು ನಿಮಗೆ ಪ್ರಕಟಿಸುತ್ತೇನೆ.
ACT 17:24 “ಜಗತ್ತನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಲೋಕಗಳ ಅಧಿಪತಿಯಾಗಿದ್ದಾರೆ. ಅವರು ಕೈಗಳಿಂದ ಕಟ್ಟಿದ ದೇವಾಲಯಗಳಲ್ಲಿ ವಾಸಿಸುವವರಲ್ಲ.
ACT 17:25 ದೇವರಿಗೆ ಏನಾದರೂ ಅವಶ್ಯಕತೆಯಿರುವಂತೆ ಮಾನವ ಹಸ್ತಗಳ ಸೇವೆಯು ಅಗತ್ಯವಿರುವುದಿಲ್ಲ. ದೇವರೇ ಎಲ್ಲರಿಗೂ ಜೀವವನ್ನೂ ಉಸಿರನ್ನೂ ಪ್ರತಿಯೊಂದನ್ನೂ ದಯಪಾಲಿಸಿರುವುದರಿಂದ,
ACT 17:26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.
ACT 17:27 ದೇವರು ನಮ್ಮಲ್ಲಿ ಯಾರಿಂದಲೂ ದೂರವಾಗಿಲ್ಲವಾದರೂ ದೇವರನ್ನು ನಾವು ಅಪೇಕ್ಷಿಸುವಂತೆ ನಾವು ದೇವರನ್ನು ಹುಡುಕಿ ಕಂಡುಕೊಳ್ಳುವಂತೆ ಹೀಗೆ ಮಾಡಿದರು.
ACT 17:28 ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ದೇವರಲ್ಲಿಯೇ.’ ನಿಮ್ಮ ಕವಿಗಳಲ್ಲಿ ಕೆಲವರು ಹೇಳಿರುವಂತೆ, ‘ನಾವು ನಿಜಕ್ಕೂ ದೇವರ ಮಕ್ಕಳೇ ಆಗಿದ್ದೇವೆ.’
ACT 17:29 “ನಾವು ದೇವರ ಮಕ್ಕಳಾಗಿರುವುದರಿಂದ, ಮಾನವ ಕಲ್ಪನೆ, ಕುಶಲತೆಯಿಂದ ರೂಪಿಸಿದ ಬೆಳ್ಳಿ, ಬಂಗಾರ, ಶಿಲೆಯ ಮೂರ್ತಿಯಂತೆ ದೇವರು ಇದ್ದಾರೆಂದು ನಾವು ಭಾವಿಸಬಾರದು.
ACT 17:30 ಇಂಥಾ ಅಜ್ಞಾನ ಕಾಲವನ್ನು ಹಿಂದಿನ ಕಾಲದಲ್ಲಿ ದೇವರು ತಮ್ಮ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲಾ ಕಡೆಗಳಲ್ಲಿರುವ ಸರ್ವಮಾನವರೂ ಪಶ್ಚಾತ್ತಾಪ ಪಡಬೇಕೆಂದು ದೇವರು ಆಜ್ಞಾಪಿಸುತ್ತಾರೆ.
ACT 17:31 ಏಕೆಂದರೆ ದೇವರು ನೇಮಿಸಿದ ಒಬ್ಬರ ಮುಖಾಂತರ ಇಡೀ ಜಗತ್ತಿಗೆ ನೀತಿಗನುಸಾರವಾಗಿ ನ್ಯಾಯತೀರ್ಪು ಮಾಡುವ ಒಂದು ದಿನವನ್ನು ನೇಮಕ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಖಚಿತ ಪಡಿಸಲೆಂದೇ ಆ ಒಬ್ಬರನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.”
ACT 17:32 ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ, ಅವರಲ್ಲಿ ಕೆಲವರು ಪರಿಹಾಸ್ಯ ಮಾಡಿದರು. ಇತರರು, “ನಾವು ಇನ್ನೊಮ್ಮೆ ಈ ವಿಷಯದ ಮೇಲೆ ನೀನು ಮಾತನಾಡುವುದನ್ನು ಕೇಳುತ್ತೇವೆ,” ಎಂದರು.
ACT 17:33 ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.
ACT 17:34 ಆದರೆ ಕೆಲವರು ಪೌಲನನ್ನು ಅಂಟಿಕೊಂಡು ದೇವರಲ್ಲಿ ವಿಶ್ವಾಸವನ್ನಿಟ್ಟರು. ಅವರಲ್ಲಿ ಅರಿಯೊಪಾಗದ ದಿಯೊನುಸ್ಯನು ಮತ್ತು ದಾಮರಿ ಎಂಬ ಹೆಸರಿನ ಒಬ್ಬ ಮಹಿಳೆ ಹಾಗೂ ಇನ್ನಿತರರೂ ಇದ್ದರು.
ACT 18:1 ಇದಾದನಂತರ, ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು.
ACT 18:2 ಅಲ್ಲಿ ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅವನು ಪೊಂತ ಎಂಬ ಊರಿನ ನಿವಾಸಿ. ಎಲ್ಲಾ ಯೆಹೂದ್ಯರು ರೋಮ್ ಪಟ್ಟಣ ಬಿಟ್ಟು ಹೊರಟುಹೋಗಬೇಕೆಂದು ಚಕ್ರವರ್ತಿ ಕ್ಲೌದ್ಯನು ಆಜ್ಞೆ ಹೊರಡಿಸಿದ್ದರಿಂದ, ಅವನು ತನ್ನ ಹೆಂಡತಿ ಪ್ರಿಸ್ಕಿಲ್ಲಳೊಂದಿಗೆ ಇತ್ತೀಚೆಗೆ ಇಟಲಿಯನ್ನು ಬಿಟ್ಟು ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು.
ACT 18:3 ಅವರು ತನ್ನಂತೆಯೇ ಗುಡಾರಮಾಡುವ ಕೆಲಸದವರಾದ್ದರಿಂದ ಪೌಲನು ಅವರೊಂದಿಗಿದ್ದು ಅವರೊಂದಿಗೆ ಗುಡಾರ ಕೆಲಸ ಮಾಡುತ್ತಿದ್ದನು.
ACT 18:4 ಪ್ರತಿ ಸಬ್ಬತ್ ದಿನ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರನ್ನೂ ಗ್ರೀಕರನ್ನೂ ವಿಶ್ವಾಸಿಗಳನ್ನಾಗಿಸಲು ಪ್ರೇರೇಪಿಸುತ್ತಿದ್ದನು.
ACT 18:5 ಮಕೆದೋನ್ಯದಿಂದ ಸೀಲ ಮತ್ತು ತಿಮೊಥೆ ಬಂದ ತರುವಾಯ, ಪೌಲನು ವಾಕ್ಯವನ್ನು ಬೋಧಿಸುವುದರಲ್ಲಿಯೇ ಸಮರ್ಪಿಸಿಕೊಂಡವನಾಗಿ ಯೇಸುವೇ ಕ್ರಿಸ್ತ ಎಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಕೊಟ್ಟನು.
ACT 18:6 ಆದರೆ ಯೆಹೂದ್ಯರು ಪೌಲನನ್ನು ವಿರೋಧಿಸಿ ದೂಷಿಸಿದಾಗ, ಅವನು ಅವರನ್ನು ಪ್ರತಿಭಟಿಸುವಂತೆ ತನ್ನ ಬಟ್ಟೆಗಳನ್ನು ಝಾಡಿಸಿ, “ನಿಮ್ಮ ರಕ್ತವು ನಿಮ್ಮ ತಲೆಯ ಮೇಲೆ ಇರಲಿ. ನಿಮ್ಮ ವಿನಾಶಕ್ಕೆ ನೀವೇ ಹೊಣೆ. ಅದಕ್ಕೆ ನಾನು ಜವಾಬ್ದಾರನಲ್ಲ, ಇಂದಿನಿಂದ ನಾನು ಶುದ್ಧಮನಸ್ಸುಳ್ಳವನಾಗಿ ಯೆಹೂದ್ಯರಲ್ಲದವರ ಬಳಿಗೆ ಹೋಗುತ್ತೇನೆ,” ಎಂದನು.
ACT 18:7 ಆಮೇಲೆ ಪೌಲನು ಸಭಾಮಂದಿರವನ್ನು ಬಿಟ್ಟು ಹೊರಗೆ ಬಂದು ಪಕ್ಕದಲ್ಲಿಯೇ ಇದ್ದ ದೇವಭಕ್ತನಾದ ತೀತಯುಸ್ತ ಎಂಬುವನ ಮನೆಗೆ ಹೋದನು.
ACT 18:8 ಸಭಾಮಂದಿರದ ನಾಯಕ ಕ್ರಿಸ್ಪ ಎಂಬುವನು ತನ್ನ ಮನೆಯವರೆಲ್ಲರೊಂದಿಗೆ ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಟ್ಟನು. ಪೌಲನ ಬೋಧನೆ ಕೇಳಿದ ಕೊರಿಂಥದವರಲ್ಲಿ ಇನ್ನೂ ಅನೇಕರು ವಿಶ್ವಾಸವನ್ನಿಟ್ಟು ದೀಕ್ಷಾಸ್ನಾನ ಪಡೆದುಕೊಂಡರು.
ACT 18:9 ಒಂದು ರಾತ್ರಿ ಕರ್ತ ಯೇಸು ದರ್ಶನದಲ್ಲಿ ಪೌಲನೊಂದಿಗೆ ಮಾತನಾಡಿ: “ಭಯಪಡಬೇಡ, ಮಾತನಾಡುತ್ತಲೇ ಇರು, ಸುಮ್ಮನಿರಬೇಡ.
ACT 18:10 ನಾನೇ ನಿನ್ನೊಂದಿಗಿದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ನಿನಗೆ ಕೇಡನ್ನುಂಟುಮಾಡುವುದಿಲ್ಲ. ಏಕೆಂದರೆ ನನಗಾಗಿ ಈ ಪಟ್ಟಣದಲ್ಲಿ ಅನೇಕ ಜನರಿದ್ದಾರೆ,” ಎಂದರು.
ACT 18:11 ಆದ್ದರಿಂದ ಪೌಲನು ಅಲ್ಲಿ ಒಂದೂವರೆ ವರ್ಷವಿದ್ದು ಅವರಿಗೆ ದೇವರ ವಾಕ್ಯವನ್ನು ಬೋಧಿಸಿದನು.
ACT 18:12 ಗಲ್ಲಿಯೋನ ಎಂಬುವನು ಅಖಾಯದ ರಾಜ್ಯಪಾಲನಾಗಿದ್ದನು. ಯೆಹೂದ್ಯರು ಒಟ್ಟುಗೂಡಿ ಪೌಲನನ್ನು ವಿರೋಧಿಸಿ, ಅವನನ್ನು ನ್ಯಾಯಸ್ಥಾನಕ್ಕೆ ಕರೆದುಕೊಂಡು ಬಂದು,
ACT 18:13 “ಮೋಶೆಯ ನಿಯಮಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಈ ಮನುಷ್ಯನು ಜನರನ್ನು ಪ್ರೇರೇಪಿಸುತ್ತಿದ್ದಾನೆ,” ಎಂದು ದೂರು ಹೇಳಿದರು.
ACT 18:14 ಪೌಲನು ಮಾತನಾಡಬೇಕೆಂದಿದ್ದಾಗ, ಗಲ್ಲಿಯೋನನು ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧ ಇಲ್ಲವೆ ದುಷ್ಕಾರ್ಯದ ಬಗ್ಗೆ ನಿಮಗೇನಾದರು ಹೇಳುವುದು ಇದ್ದರೆ, ಅದನ್ನು ಸಹನೆಯಿಂದ ಕೇಳುವುದು ನನಗೆ ಯೋಗ್ಯವಾದದ್ದು.
ACT 18:15 ಆದರೆ ವಾಕ್ಯ, ಹೆಸರುಗಳ ಮತ್ತು ನಿಮ್ಮ ನಿಯಮದ ವಿಷಯವಾಗಿರುವ ಪ್ರಶ್ನೆಗಳಾಗಿದ್ದರೆ, ಈ ಸಂಗತಿಯನ್ನು ನೀವೇ ಬಗೆಹರಿಸಿಕೊಳ್ಳಿ, ಅಂಥ ವಿಷಯಗಳಿಗೆ ನಾನು ನ್ಯಾಯಾಧೀಶನಾಗಿರಲಾರೆ,” ಎಂದನು.
ACT 18:16 ಹೀಗೆ ಅವನು ಅವರನ್ನು ನ್ಯಾಯಸ್ಥಾನದಿಂದ ಹೊರಗೆ ಕಳುಹಿಸಿಬಿಟ್ಟನು.
ACT 18:17 ಆದರೆ ಅವರು ಸಭಾಮಂದಿರದ ಅಧಿಕಾರಿ ಸೋಸ್ಥೆನನನ್ನು ಹಿಡಿದು ನ್ಯಾಯಸ್ಥಾನದ ಎದುರಿನಲ್ಲಿಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷಿಸಲಿಲ್ಲ.
ACT 18:18 ಇನ್ನು ಕೆಲವು ದಿನ ಪೌಲನು ಅಲ್ಲಿಯೇ ಉಳಿದುಕೊಂಡನು. ಅನಂತರ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ಕೆಂಖ್ರೆಯ ಎಂಬ ಸ್ಥಳದಲ್ಲಿ ತಲೆ ಕೂದಲನ್ನು ಕ್ಷೌರಮಾಡಿಸಿಕೊಂಡು ತಾನು ಹೊತ್ತ ಹರಕೆ ಪೂರೈಸಿದ ಮೇಲೆ ಸಿರಿಯಕ್ಕೆ ನೌಕೆ ಪ್ರಯಾಣಮಾಡಿದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನ ಜೊತೆಯಲ್ಲಿ ಹೊರಟರು.
ACT 18:19 ಎಫೆಸಕ್ಕೆ ತಲುಪಿದಾಗ, ಪೌಲನು ಅವರನ್ನು ಅಲ್ಲಿಯೇ ಬಿಟ್ಟು ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚೆ ನಡೆಸಿದನು.
ACT 18:20 ಹೆಚ್ಚು ಸಮಯ ತಮ್ಮೊಂದಿಗಿರಬೇಕೆಂದು ಅವರು ಕೇಳಿದಾಗ, ಪೌಲನು ಅದಕ್ಕೆ ಸಮ್ಮತಿಸಲಿಲ್ಲ.
ACT 18:21 ಆದರೆ ಅವನು ಅಲ್ಲಿಂದ ಹೊರಟು ಹೋಗಲಿಕ್ಕಿದ್ದಾಗ, “ದೇವರ ಚಿತ್ತವಾದರೆ, ನಾನು ಹಿಂದಿರುಗಿ ಬರುವೆ,” ಎಂದನು. ಆಮೇಲೆ ಎಫೆಸದಿಂದ ನೌಕೆಯಲ್ಲಿ ಪ್ರಯಾಣಮಾಡಿದನು.
ACT 18:22 ಅನಂತರ ಅವನು ಕೈಸರೈಯವನ್ನು ಸೇರಿದಾಗ, ಅಲ್ಲಿದ್ದ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಹೊರಟುಹೋದನು.
ACT 18:23 ಅಲ್ಲಿ ಸ್ವಲ್ಪ ಸಮಯ ಕಳೆದನಂತರ ಅವನು ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಮತ್ತು ಫ್ರುಗ್ಯ ಪ್ರದೇಶದಲ್ಲೆಲ್ಲಾ ಸಂಚರಿಸುತ್ತಾ ಶಿಷ್ಯರಲ್ಲಿ ವಿಶ್ವಾಸವನ್ನು ಬಲಪಡಿಸಿದನು.
ACT 18:24 ಅಲೆಕ್ಸಾಂದ್ರಿಯ ನಿವಾಸಿ ಅಪೊಲ್ಲೋಸ ಎಂಬ ಹೆಸರಿನ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನು ವಾಕ್ಚಾತುರ್ಯವುಳ್ಳವನೂ ಪವಿತ್ರ ವೇದದಲ್ಲಿ ಪ್ರವೀಣನೂ ಆಗಿದ್ದನು.
ACT 18:25 ಇವನು ಕರ್ತ ಯೇಸುವಿನ ಮಾರ್ಗದ ಬಗ್ಗೆ ಉಪದೇಶ ಹೊಂದಿದ್ದನು. ಯೋಹಾನನ ದೀಕ್ಷಾಸ್ನಾನವನ್ನು ಮಾತ್ರವೇ ತಿಳಿದವನಾಗಿದ್ದನು. ಇವನು ಆತ್ಮದಲ್ಲಿ ಉತ್ಸಾಹಭರಿತನಾಗಿ ಯೇಸುವಿನ ವಿಷಯದಲ್ಲಿ ಧೈರ್ಯವಾಗಿ ಬೋಧಿಸುತ್ತಿದ್ದನು.
ACT 18:26 ಇವನು ಸಭಾಮಂದಿರದಲ್ಲಿ ಧೈರ್ಯದಿಂದ ಬೋಧಿಸಲು ಪ್ರಾರಂಭಿಸಿದನು. ಆಗ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನು ಮಾತನಾಡುವುದನ್ನು ಕೇಳಿ, ಅವನನ್ನು ತಮ್ಮ ಮನೆಗೆ ಆಮಂತ್ರಿಸಿದರು. ಅವರು ದೇವರ ಮಾರ್ಗವನ್ನು ಇನ್ನೂ ಹೆಚ್ಚಾದ ರೀತಿಯಲ್ಲಿ ಅಪೊಲ್ಲೋಸನಿಗೆ ವಿವರಿಸಿ ಹೇಳಿದರು.
ACT 18:27 ಅಪೊಲ್ಲೋಸನು ಅಖಾಯಕ್ಕೆ ಹೋಗಲು ಬಯಸಿದಾಗ, ಸಹೋದರರು ಅವನನ್ನು ಪ್ರೋತ್ಸಾಹಿಸಿ, ಅವನನ್ನು ಸ್ವೀಕರಿಸುವಂತೆ ಅಲ್ಲಿಯ ಶಿಷ್ಯರಿಗೆ ಪತ್ರವನ್ನು ಬರೆದುಕೊಟ್ಟರು. ಅವನು ಅಲ್ಲಿಗೆ ತಲುಪಿದಾಗ ದೇವರ ಕೃಪೆಯಿಂದ ವಿಶ್ವಾಸವಿಟ್ಟವರಿಗೆ ಅವನು ಬಹಳ ಸಹಾಯಮಾಡಿದನು.
ACT 18:28 ಯೇಸುವೇ ಬರತಕ್ಕ ಕ್ರಿಸ್ತ ಆಗಿದ್ದಾರೆ ಎಂದು ಪವಿತ್ರ ವೇದಗಳಿಂದ ಸಿದ್ಧಾಂತಪಡಿಸಿ ತೋರಿಸುತ್ತಾ ಅಲ್ಲಿಯ ಯೆಹೂದ್ಯರೊಂದಿಗೆ ಬಹಿರಂಗವಾಗಿ ಚರ್ಚೆ ಮಾಡಿದನು.
ACT 19:1 ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗಲೇ, ಕಾಲ್ನಡಿಗೆಯಾಗಿ ಪೌಲನು ಪ್ರಯಾಣಮಾಡಿ ಎಫೆಸ ಪಟ್ಟಣಕ್ಕೆ ಬಂದನು. ಅಲ್ಲಿ ಕೆಲವು ಶಿಷ್ಯರನ್ನು ಕಂಡು,
ACT 19:2 “ನೀವು ವಿಶ್ವಾಸವನ್ನಿಟ್ಟಾಗ ಪವಿತ್ರಾತ್ಮರನ್ನು ಪಡೆದುಕೊಂಡಿರೋ?” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವರು, “ಇಲ್ಲ, ಪವಿತ್ರಾತ್ಮ ಇದ್ದಾರೆಂಬುದನ್ನು ನಾವು ಕೇಳಿಯೇ ಇಲ್ಲ,” ಎಂದರು.
ACT 19:3 “ಹಾಗಾದರೆ ನೀವು ಯಾವ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದೀರಿ?” ಎಂದು ಪೌಲನು ಕೇಳಿದಾಗ ಅವರು, “ಯೋಹಾನನ ದೀಕ್ಷಾಸ್ನಾನವನ್ನು,” ಎಂದರು.
ACT 19:4 ಅದಕ್ಕೆ ಪೌಲನು, “ಯೋಹಾನನ ದೀಕ್ಷಾಸ್ನಾನವು ಪಶ್ಚಾತ್ತಾಪದ ದೀಕ್ಷಾಸ್ನಾನವಾಗಿತ್ತು. ತನ್ನ ನಂತರ ಬರಲಿರುವ ಯೇಸುವಿನಲ್ಲಿ ವಿಶ್ವಾಸವನ್ನಿಡಬೇಕೆಂದು ಯೋಹಾನನು ಜನರಿಗೆ ಹೇಳಿದನು,” ಎಂದನು.
ACT 19:5 ಇದನ್ನು ಕೇಳಿದ ನಂತರ ಅವರು ಕರ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು.
ACT 19:6 ಪೌಲನು ಅವರ ಮೇಲೆ ತನ್ನ ಕೈಗಳನ್ನಿಡಲು, ಅವರ ಮೇಲೆ ಪವಿತ್ರಾತ್ಮ ಬಂದರು. ಆಗ ಅವರು ಅನ್ಯಭಾಷೆಗಳಲ್ಲಿ ಮಾತನಾಡಿದರು ಹಾಗೂ ಪ್ರವಾದಿಸಿದರು.
ACT 19:7 ಅವರು ಸುಮಾರು ಹನ್ನೆರಡು ಜನ ಪುರುಷರಿದ್ದರು.
ACT 19:8 ಪೌಲನು ಸಭಾಮಂದಿರದೊಳಗೆ ಪ್ರವೇಶಿಸಿದನು. ಅಲ್ಲಿ ಮೂರು ತಿಂಗಳುಗಳ ಕಾಲ, ಧೈರ್ಯವಾಗಿ ಬೋಧನೆ ಮಾಡಿದನು. ದೇವರ ರಾಜ್ಯದ ಬಗ್ಗೆ ಅವರೊಡನೆ ಮನವೊಲಿಸುವಂತೆ ಚರ್ಚಿಸಿದನು.
ACT 19:9 ಆದರೆ ಅವರಲ್ಲಿ ಕೆಲವರು ಕಠಿಣ ಹೃದಯದವರಾಗಿ; ಒಡಂಬಡದೆ ಈ ಮಾರ್ಗವನ್ನು ಬಹಿರಂಗವಾಗಿ ದೂಷಿಸಿದರು. ಆದ್ದರಿಂದ ಪೌಲನು ಅವರನ್ನು ಬಿಟ್ಟು, ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಅನುದಿನವೂ ತುರನ್ನನ ತರ್ಕಶಾಲೆಯಲ್ಲಿ ಅವರೊಂದಿಗೆ ಚರ್ಚಿಸುತ್ತಾ ಬಂದನು.
ACT 19:10 ಇದು ಎರಡು ವರ್ಷಗಳ ಕಾಲ ಮುಂದುವರಿಯಿತು. ಇದರಿಂದ ಏಷ್ಯಾ ಪ್ರಾಂತದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ ಗ್ರೀಕರೂ ಕರ್ತ ಯೇಸುವಿನ ವಾಕ್ಯವನ್ನು ಕೇಳಿದರು.
ACT 19:11 ದೇವರು ಪೌಲನ ಮುಖಾಂತರ ಅಸಾಧಾರಣ ಅದ್ಭುತಗಳನ್ನು ಮಾಡುತ್ತಿದ್ದರು.
ACT 19:12 ಹೀಗೆ ಪೌಲನನ್ನು ಮುಟ್ಟಿದ ಕೈವಸ್ತ್ರಗಳನ್ನೂ ಉಡುಪುಗಳನ್ನೂ ತೆಗೆದುಕೊಂಡುಹೋಗಿ ರೋಗಿಗಳಿಗೆ ಮುಟ್ಟಿಸಿದಾಗ ಅವರು ರೋಗಗಳಿಂದ ವಾಸಿಯಾಗುತ್ತಿದ್ದರು ಹಾಗೂ ಅವರಲ್ಲಿಯ ದುರಾತ್ಮಗಳು ಬಿಟ್ಟು ಹೋಗುತ್ತಿದ್ದವು.
ACT 19:13 ಕೆಲವು ಯೆಹೂದ್ಯರು ದುರಾತ್ಮಗಳನ್ನು ಬಿಡಿಸಲು ಪ್ರಯತ್ನಿಸಿ, “ಪೌಲನು ಸಾರುತ್ತಿರುವ ಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಆಜ್ಞಾಪಿಸುತ್ತೇನೆ,” ಎಂದು ಅವರು ಕರ್ತ ಯೇಸುವಿನ ಹೆಸರನ್ನು ಬಳಸಲು ಪ್ರಯತ್ನಿಸಿದರು.
ACT 19:14 ಯೆಹೂದ್ಯ ಮುಖ್ಯಯಾಜಕ ಸ್ಕೇವ ಎಂಬುವನ ಏಳು ಜನ ಗಂಡು ಮಕ್ಕಳು ಈ ರೀತಿ ಮಾಡುತ್ತಿದ್ದರು.
ACT 19:15 ದುರಾತ್ಮವು ಅವರಿಗೆ ಉತ್ತರವಾಗಿ, “ಯೇಸುವನ್ನು ನಾನು ಬಲ್ಲೆ, ಪೌಲನೂ ನನಗೆ ಗೊತ್ತು, ಆದರೆ ನೀವು ಯಾರು?” ಎಂದು ಕೇಳಿ,
ACT 19:16 ದುರಾತ್ಮ ಪೀಡಿತ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅವರೆಲ್ಲರಿಗಿಂತಲೂ ಹೆಚ್ಚು ಬಲಗೊಂಡು ಅವರನ್ನು ಬಡಿದು ಗಾಯಗೊಳಿಸಲು, ಅವರು ನಗ್ನರಾಗಿಯೇ ಮನೆಬಿಟ್ಟು ಹೊರಗೆ ಓಡಿಹೋದರು.
ACT 19:17 ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಗೂ ಗ್ರೀಕರಿಗೂ ಈ ವಿಷಯ ತಿಳಿದಾಗ, ಅವರೆಲ್ಲರೂ ಬಹಳ ಭಯಗೊಂಡರು. ಹೀಗೆ ಕರ್ತ ಯೇಸುವಿನ ಹೆಸರಿಗೆ ಅತ್ಯಂತ ಮಹಿಮೆಯಾಯಿತು.
ACT 19:18 ವಿಶ್ವಾಸವಿಟ್ಟವರಲ್ಲಿ ಅನೇಕರು ಅಲ್ಲಿಗೆ ಬಂದು ತಮ್ಮ ಕೃತ್ಯಗಳನ್ನು ಅರಿಕೆಮಾಡಿದರು.
ACT 19:19 ಮಾಟಮಂತ್ರ ಮಾಡುತ್ತಿದ್ದವರು ತಮ್ಮ ಗ್ರಂಥಗಳನ್ನು ತೆಗೆದುಕೊಂಡು ಬಂದು ಎಲ್ಲರ ಮುಂದೆ ಸುಟ್ಟು ಹಾಕಿದರು. ಅವುಗಳ ಒಟ್ಟು ಮೌಲ್ಯ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.
ACT 19:20 ಹೀಗೆ ಕರ್ತ ಯೇಸುವಿನ ವಾಕ್ಯವು ವಿಸ್ತಾರವಾಗಿ ಹರಡುತ್ತಾ ಪ್ರಬಲವಾಯಿತು.
ACT 19:21 ಇದೆಲ್ಲ ಸಂಭವಿಸಿದ ನಂತರ ಮಕೆದೋನ್ಯ ಮತ್ತು ಅಖಾಯ ಮಾರ್ಗವಾಗಿ ಯೆರೂಸಲೇಮಿಗೆ ಹೋಗಲು ಪೌಲನು ಮನಸ್ಸಿನಲ್ಲಿ ನಿರ್ಧರಿಸಿದನು. ಅವನು, “ಅಲ್ಲಿಗೆ ಹೋದ ನಂತರ ನಾನು ರೋಮ್ ಪಟ್ಟಣವನ್ನು ಸಂದರ್ಶಿಸಬೇಕು,” ಎಂದನು.
ACT 19:22 ತನ್ನ ಇಬ್ಬರು ಸಹಾಯಕರಾದ ತಿಮೊಥೆ ಮತ್ತು ಎರಸ್ತನನ್ನು ಮಕೆದೋನ್ಯಕ್ಕೆ ಕಳುಹಿಸಿ ತಾನು ಇನ್ನೂ ಸ್ವಲ್ಪಕಾಲ ಏಷ್ಯಾ ಪ್ರಾಂತದಲ್ಲಿ ಇದ್ದನು.
ACT 19:23 ಕ್ರಿಸ್ತ ಯೇಸುವಿನ ಮಾರ್ಗದ ವಿಷಯವಾಗಿ ಆ ಸಮಯದಲ್ಲಿ ದೊಡ್ಡ ಗಲಭೆ ಉಂಟಾಯಿತು.
ACT 19:24 ಏಕೆಂದರೆ ದೇಮೇತ್ರಿಯ ಎಂಬ ಒಬ್ಬ ಅಕ್ಕಸಾಲಿಗನು ಅರ್ತೆಮೀ ದೇವಿಯ ಬೆಳ್ಳಿಯ ಮೂರ್ತಿಗಳನ್ನು ಮಾಡುವವನಾಗಿದ್ದು, ಆ ಶಿಲ್ಪಿಗಳ ಹಣ ಸಂಪಾದನೆಗೆ ಬಹಳ ವ್ಯಾಪಾರವನ್ನು ಒದಗಿಸುತ್ತಿದ್ದನು.
ACT 19:25 ಅವನು ಶಿಲ್ಪಿಗಳನ್ನೂ ಆ ಕಸುಬಿಗೆ ಸಂಬಂಧಪಟ್ಟ ವ್ಯಾಪಾರಿಗಳನ್ನೂ ಒಟ್ಟಿಗೆ ಕೂಡಿಸಿ ಅವರಿಗೆ, “ಜನರೇ, ಈ ವೃತ್ತಿಯಿಂದ ನಮಗೆ ಉತ್ತಮ ಆದಾಯ ಬರುತ್ತಿದೆಯೆಂಬುದನ್ನು ನೀವು ತಿಳಿದಿರುವಿರಿ.
ACT 19:26 ಪೌಲನೆಂಬ ಈ ಮನುಷ್ಯನು ಎಫೆಸದಲ್ಲಿಯೂ ಇಡೀ ಏಷ್ಯಾ ಪ್ರಾಂತದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮನವೊಲಿಸಿ, ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲ ಎಂದು ಹೇಳಿ, ಅವರನ್ನು ಮಾರ್ಪಡಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ಕೇಳಿದ್ದೀರಿ ಹಾಗೂ ಕಂಡಿದ್ದೀರಿ.
ACT 19:27 ಇದರಿಂದ ಈಗ ನಮ್ಮ ವೃತ್ತಿಗೆ ಅಪಾಯ ಬಂದಿರುವುದಲ್ಲದೆ ಅರ್ತೆಮೀ ಮಹಾದೇವಿಯ ಗುಡಿಯ ಬಗ್ಗೆಯೂ ಯೋಚಿಸಬೇಕು. ಏಕೆಂದರೆ ಏಷ್ಯಾದಲ್ಲಿಯೂ ಇಡೀ ಜಗತ್ತಿನಲ್ಲೆಲ್ಲಾ ಪೂಜಿಸುತ್ತಿರುವ ದೇವಿಯ ಮಹತ್ವವು ಸಹ ಕುಂದಿಹೋಗುವಂತಿದೆ,” ಎಂದನು.
ACT 19:28 ಈ ಮಾತುಗಳನ್ನು ಕೇಳಿ ಅವರು ಉಗ್ರರಾಗಿ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ!” ಎಂದು ಆರ್ಭಟಿಸಿದರು.
ACT 19:29 ಕೂಡಲೇ ಇಡೀ ಪಟ್ಟಣದಲ್ಲೆಲ್ಲಾ ಕೋಲಾಹಲ ಉಂಟಾಯಿತು. ಜನರು ಗುಂಪಾಗಿ ಕೂಡಿಕೊಂಡು ಬಂದು ಮಕೆದೋನ್ಯದಿಂದ ಪೌಲನೊಂದಿಗೆ ಪ್ರಯಾಣಮಾಡಿ ಬಂದ, ಗಾಯ ಮತ್ತು ಅರಿಸ್ತಾರ್ಕರನ್ನು ಬಂಧಿಸಿ ಕ್ರೀಡಾಂಗಣದೊಳಗೆ ಎಳೆದುಕೊಂಡು ಬಂದರು.
ACT 19:30 ಪೌಲನು ಜನರೆದುರಿಗೆ ಬರಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
ACT 19:31 ಪೌಲನ ಸ್ನೇಹಿತರಾಗಿದ್ದ ಏಷ್ಯಾ ಸೀಮೆಯ ಕೆಲವು ಅಧಿಕಾರಿಗಳೂ ಈ ಕ್ರೀಡಾಂಗಣದೊಳಗೆ ಹೋಗುವ ಸಾಹಸ ಮಾಡಬಾರದೆಂದು ವಿನಂತಿಸಿ ಅವನಿಗೆ ಸಂದೇಶ ಕಳುಹಿಸಿದರು.
ACT 19:32 ಜನಸಮೂಹ ಗಲಿಬಿಲಿಗೊಂಡಿತ್ತು. ಕೆಲವರು ಒಂದು ರೀತಿಯಾಗಿಯೂ ಇನ್ನು ಕೆಲವರು ಬೇರೊಂದು ವಿಧವಾಗಿಯೂ ಕೂಗುತ್ತಿದ್ದರು. ಬಹು ಪಾಲು ಜನರಿಗೆ ತಾವೇಕೆ ಅಲ್ಲಿಗೆ ಬಂದಿದ್ದೇವೆಂಬುದರ ಬಗ್ಗೆ ತಿಳಿದಿರಲೇ ಇಲ್ಲ.
ACT 19:33 ಆದರೆ ಯೆಹೂದ್ಯರು ಅಲೆಕ್ಸಾಂದ್ರ ಎಂಬುವನನ್ನು ಮುಂದಕ್ಕೆ ತಳ್ಳಿದರು. ಜನಸಮೂಹದಲ್ಲಿದ್ದ ಕೆಲವರು ಅವನಿಗೆ ವಿಷಯ ತಿಳಿಸಿದರು. ಆಗ ಅಲೆಕ್ಸಾಂದ್ರನು, ಜನರ ಎದುರಿನಲ್ಲಿ ವಾದಿಸಲಿಕ್ಕಾಗುವಂತೆ ಕೈಸನ್ನೆ ಮಾಡಿದನು.
ACT 19:34 ಆದರೆ ಅವನು ಯೆಹೂದ್ಯನೆಂದು ಜನರು ತಿಳಿದಾಗ, “ಎಫೆಸದ ಅರ್ತೆಮೀ ದೇವಿ ಮಹಾದೇವಿ!” ಎಂದು ಒಕ್ಕೊರಲಿನಿಂದ ಎರಡು ತಾಸುಗಳವರೆಗೆ ಆರ್ಭಟಿಸುತ್ತಲೇ ಇದ್ದರು.
ACT 19:35 ನಗರದ ಗುಮಾಸ್ತ ಜನಸಮೂಹವನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಮಹಾ ಅರ್ತೆಮೀ ದೇವಿಯ ಮಂದಿರ ಹಾಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಯನ್ನು ಎಫೆಸ ಪಟ್ಟಣವು ಕಾಪಾಡುತ್ತಿದೆ ಎಂಬುದನ್ನು ತಿಳಿಯದಿರುವ ಮನುಷ್ಯನು ಇದ್ದಾನೆಯೇ?
ACT 19:36 ಈ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ನೀವು ಸುಮ್ಮನಿರಬೇಕು. ಅವಸರದಿಂದ ಏನನ್ನೂ ಮಾಡಲು ಹೋಗಬಾರದು.
ACT 19:37 ನೀವು ತಂದಿರುವ ಈ ಜನರು ನಮ್ಮ ಗುಡಿ ಕಳ್ಳರಲ್ಲ; ನಮ್ಮ ದೇವತೆಯ ದೂಷಕರೂ ಅಲ್ಲ.
ACT 19:38 ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಸಹ ಶಿಲ್ಪಿಗಳಿಗೂ ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆಪಾದನೆಗಳಿದ್ದರೆ ಅವರಿಗಾಗಿ ನ್ಯಾಯಾಲಯಗಳು ತೆರೆದಿವೆ. ರಾಜ್ಯಪಾಲರು ಇದ್ದಾರೆ; ಅವರ ಮುಂದೆ ದೂರುಗಳನ್ನು ಸಲ್ಲಿಸಲಿ.
ACT 19:39 ಆದರೆ ನೀವು ಇದಕ್ಕಿಂತ ಹೆಚ್ಚಾಗಿ ಬೇರೆ ಏನನ್ನಾದರೂ ತರುವುದಾದರೆ ಅದು ಕಾನೂನುಬದ್ಧ ಸಭೆಯಲ್ಲಿ ತೀರ್ಮಾನವಾಗಬೇಕು.
ACT 19:40 ಈಗ ಇದ್ದ ಪರಿಸ್ಥಿತಿಯಲ್ಲಿ ಇಂದಿನ ಘಟನೆಯಿಂದ ನಾವು ದಂಗೆಯೆದ್ದಿದ್ದೇವೆ ಎಂಬ ಅಪರಾಧ ನಮ್ಮ ಮೇಲೆ ಬರುವ ಆಸ್ಪದವಿದೆ. ಈ ಗಲಭೆಗೆ ಕಾರಣವೇನೆಂದು ವಿವರಿಸಲು ನಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಕಾರಣವಿಲ್ಲದೇ ಎದ್ದ ದಂಗೆ,” ಎಂದನು.
ACT 19:41 ಇದನ್ನು ಹೇಳಿ ಅವನು ಜನಸಮೂಹವನ್ನು ಚದರಿಸಿಬಿಟ್ಟನು.
ACT 20:1 ಗಲಭೆಯು ಶಾಂತಗೊಂಡ ನಂತರ ಪೌಲನು ಶಿಷ್ಯರನ್ನು ಕರೆಕಳುಹಿಸಿ ಅವರಿಗೆ ಧೈರ್ಯ ಹೇಳಿ, ಅವರನ್ನು ಬೀಳ್ಕೊಟ್ಟು ಮಕೆದೋನ್ಯಕ್ಕೆ ಪ್ರಯಾಣಮಾಡಿದನು.
ACT 20:2 ಆ ಪ್ರದೇಶದಲ್ಲೆಲ್ಲಾ ಜನರಿಗೆ ಅನೇಕ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಾ ಪ್ರಯಾಣಮಾಡಿ ಗ್ರೀಸ್ ತಲುಪಿದನು.
ACT 20:3 ಇಲ್ಲಿ ಮೂರು ತಿಂಗಳುಗಳ ಕಾಲ ಇದ್ದ ಮೇಲೆ, ಅವನು ಸಿರಿಯಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ವಿರೋಧವಾಗಿ ಯೆಹೂದ್ಯರು ಒಳಸಂಚು ಮಾಡಿದ್ದು ಅವನಿಗೆ ತಿಳಿದು ಬಂದದ್ದರಿಂದ ಮಕೆದೋನ್ಯ ಮಾರ್ಗವಾಗಿ ಹಿಂತಿರುಗಿ ಹೋಗಲು ನಿರ್ಣಯಿಸಿದನು.
ACT 20:4 ಬೆರೋಯದ ಪುರ್ರನ ಮಗ ಸೋಪತ್ರನು, ಥೆಸಲೋನಿಕದ ಅರಿಸ್ತಾರ್ಕ ಮತ್ತು ಸೆಕುಂದ, ದೆರ್ಬೆಯ ಗಾಯ, ತಿಮೊಥೆ ಅಲ್ಲದೆ ಏಷ್ಯಾ ಪ್ರಾಂತದ ತುಖಿಕ ಹಾಗೂ ತ್ರೊಫಿಮ ಅವನೊಂದಿಗೆ ಹೋದರು.
ACT 20:5 ಇವರೆಲ್ಲರೂ ಮುಂಚಿತವಾಗಿ ಹೋಗಿ ತ್ರೋವದಲ್ಲಿ ನಮಗಾಗಿ ಕಾದಿದ್ದರು.
ACT 20:6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರ ನಾವು ಫಿಲಿಪ್ಪಿಯಿಂದ ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ, ಐದು ದಿನಗಳ ತರುವಾಯ ತ್ರೋವದಲ್ಲಿದ್ದ ಇತರರೊಂದಿಗೆ ಸೇರಿ, ಅಲ್ಲಿ ಏಳು ದಿನ ಇದ್ದೆವು.
ACT 20:7 ವಾರದ ಮೊದಲನೆಯ ದಿನ ನಾವು ರೊಟ್ಟಿ ಮುರಿಯಲು ಒಂದಾಗಿ ಕೂಡಿಬಂದೆವು. ಪೌಲನು ಅಲ್ಲಿ ಬೋಧನೆ ಮಾಡಿದನು. ಮರುದಿನ ಅವನು ಹೊರಡಬೇಕಾದ್ದರಿಂದ ಮಧ್ಯರಾತ್ರಿಯವರೆಗೆ ಮಾತನಾಡುತ್ತಲೇ ಇದ್ದನು.
ACT 20:8 ನಾವು ಸಭೆ ಸೇರಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳು ಉರಿಯುತ್ತಿದ್ದವು.
ACT 20:9 ಒಂದು ಕಿಟಿಕಿಯಲ್ಲಿ ಯೂತಿಖ ಎಂಬ ಹೆಸರಿನ ಒಬ್ಬ ಯುವಕನು ಕುಳಿತುಕೊಂಡಿದ್ದನು. ಪೌಲನು ಬಹಳ ಹೊತ್ತು ಬೋಧಿಸುತ್ತಲೇ ಇದ್ದುದರಿಂದ ಅವನಿಗೆ ಗಾಢನಿದ್ರೆ ಹತ್ತಿತು. ನಿದ್ರಿಸುತ್ತಿದ್ದ ಅವನು ಮೂರನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದನು. ಅವನನ್ನು ಎತ್ತಿಕೊಂಡಾಗ ಅವನು ಸತ್ತೇ ಹೋಗಿದ್ದನು.
ACT 20:10 ಆದರೆ ಪೌಲನು ಕೆಳಗೆ ಹೋಗಿ, ಆ ಯುವಕನನ್ನು ತಬ್ಬಿಕೊಂಡು, “ಗಾಬರಿಗೊಳ್ಳಬೇಡಿ, ಅವನ ಜೀವ ಅವನಲ್ಲಿದೆ,” ಎಂದನು.
ACT 20:11 ಅನಂತರ ಪೌಲನು ಮೇಲಂತಸ್ತಿಗೆ ಹೋಗಿ ವಿಶ್ವಾಸಿಗಳೊಂದಿಗೆ ರೊಟ್ಟಿ ಮುರಿದು ಊಟಮಾಡಿ, ಬೆಳಗಾಗುವವರೆಗೆ ಅವರೊಡನೆ ಮಾತನಾಡಿ, ಅಲ್ಲಿಂದ ಹೊರಟನು.
ACT 20:12 ಜೀವ ಹೊಂದಿದ ಆ ಯುವಕನನ್ನು ಜನರು ಮನೆಗೆ ಕರೆದುಕೊಂಡು ಹೋದರು. ಅವರಿಗೆ ಅಪಾರ ಸಾಂತ್ವನ ದೊರೆಯಿತು.
ACT 20:13 ಮೊದಲು ನಾವು ನೌಕೆ ಇದ್ದ ಸ್ಥಳಕ್ಕೆ ಹೋಗಿ ಅಸ್ಸೊಸಿ ಎಂಬಲ್ಲಿಗೆ ಸಮುದ್ರ ಪ್ರಯಾಣಮಾಡಿದೆವು. ಅಲ್ಲಿ ಪೌಲನು ಬಂದು ನಮ್ಮೊಂದಿಗೆ ನೌಕೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ಕಾಲ್ನಡಿಗೆಯಾಗಿ ಹೋಗಬೇಕಾದ್ದರಿಂದ ಅವನು ಈ ಏರ್ಪಾಡು ಮಾಡಿದನು.
ACT 20:14 ಅಸ್ಸೊಸಿನಲ್ಲಿ ಪೌಲನು ನಮ್ಮನ್ನು ಭೇಟಿಯಾದಾಗ, ಅವನನ್ನು ಕರೆದುಕೊಂಡು ಮಿತಿಲೇನೆಗೆ ಹೋದೆವು.
ACT 20:15 ನಾವು ಮರುದಿನ ಅಲ್ಲಿಂದ ಪ್ರಯಾಣ ಮುಂದುವರೆಸಿ ಖೀಯೊಸ್ ದ್ವೀಪವನ್ನು ಸಮೀಪಿಸಿದೆವು. ಮರುದಿನ ಸಾಮೊಸನ್ನು ತಲುಪಿದೆವು. ಅನಂತರ ಮಾರನೆಯ ದಿನ ಮಿಲೇತನ್ನು ಸೇರಿದೆವು.
ACT 20:16 ಸಾಧ್ಯವಾದರೆ, ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬಕ್ಕೆ ಯೆರೂಸಲೇಮನ್ನು ತಲುಪಬೇಕೆಂಬ ಅವಸರ ಪೌಲನಿಗಿದ್ದುದ್ದರಿಂದ, ಏಷ್ಯಾ ಪ್ರಾಂತದಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ ಎಫೆಸವನ್ನು ದಾಟಿ ಹೋಗಬೇಕೆಂದು ನಿರ್ಧರಿಸಿದ್ದನು.
ACT 20:17 ಮಿಲೇತದಿಂದ, ಪೌಲನು ಎಫೆಸಕ್ಕೆ ಸಂದೇಶ ಕಳುಹಿಸಿ, ಅಲ್ಲಿಯ ಸಭೆಯ ಹಿರಿಯರು ಬರಬೇಕೆಂದು ತಿಳಿಸಿದನು.
ACT 20:18 ಅವರು ಬಂದ ಮೇಲೆ, ಪೌಲನು ಅವರಿಗೆ ಹೀಗೆಂದನು: “ನಾನು ಏಷ್ಯಾ ಪ್ರಾಂತಕ್ಕೆ ಬಂದ ಪ್ರಥಮ ದಿನದಿಂದ ನಿಮ್ಮೊಂದಿಗಿದ್ದು ಪೂರ್ತಿ ಸಮಯ ಹೇಗೆ ಕಳೆದನೆಂಬುದನ್ನು ನೀವು ಅರಿತಿದ್ದೀರಿ.
ACT 20:19 ಯೆಹೂದ್ಯರ ಒಳಸಂಚುಗಳಿಂದ ನಾನು ಕಠಿಣ ಪರೀಕ್ಷೆಗಳಿಗೆ ಒಳಗಾಗಿದ್ದರೂ ಬಹಳ ದೀನತೆಯಿಂದಲೂ ಕಣ್ಣೀರಿನಿಂದಲೂ ಕರ್ತ ಯೇಸುವಿನ ಸೇವೆ ಮಾಡಿದೆನು.
ACT 20:20 ನಿಮಗೆ ಹಿತಕರವಾದುದ್ದೆಲ್ಲವನ್ನೂ ಬೋಧಿಸಲು ನಾನು ಹಿಂಜರಿಯಲಿಲ್ಲ. ಬಹಿರಂಗದಲ್ಲಿಯೂ ಮನೆಮನೆಗಳಲ್ಲಿಯೂ ನಾನು ನಿಮಗೆ ಬೋಧಿಸಿದ್ದೇನೆ.
ACT 20:21 ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ನಮ್ಮ ಕರ್ತ ಯೇಸುವಿನಲ್ಲಿ ವಿಶ್ವಾಸವಿಡಬೇಕೆಂದು ಯೆಹೂದ್ಯರಿಗೂ ಗ್ರೀಕರಿಗೂ ಖಚಿತವಾಗಿ ಸಾಕ್ಷಿ ಹೇಳಿದ್ದೇನೆ.
ACT 20:22 “ಈಗಲಾದರೋ, ನಾನು ಪವಿತ್ರಾತ್ಮ ಪ್ರೇರಿತನಾಗಿ ಯೆರೂಸಲೇಮಿನಲ್ಲಿ ನನಗೇನಾಗುವುದೋ ಎಂಬುದನ್ನು ತಿಳಿಯದೆ, ಅಲ್ಲಿಗೆ ಹೋಗುತ್ತಿದ್ದೇನೆ.
ACT 20:23 ಪ್ರತಿಯೊಂದು ಪಟ್ಟಣದಲ್ಲಿ ಸೆರೆಮನೆಯೂ ಬಾಧೆಯೂ ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ದೇವರು ಎಚ್ಚರಿಸಿದ್ದಾರೆ.
ACT 20:24 ಆದರೂ ನನ್ನ ಪ್ರಾಣ ನನಗೆ ಅಮೂಲ್ಯವೆಂದು ನಾನು ಎಣಿಸುವುದಿಲ್ಲ. ಕರ್ತ ಯೇಸು ನನಗೆ ಕೊಟ್ಟ, ದೇವರ ಕೃಪೆಯ ಸುವಾರ್ತೆಗೆ ಸಾಕ್ಷಿ ಕೊಡುವ ಸೇವೆಯ ಓಟವನ್ನು ಓಡಿ ಮುಗಿಸುವುದೇ ನನ್ನ ಬಾಳಿನ ಒಂದೇ ಗುರಿಯಾಗಿದೆ.
ACT 20:25 “ನಿಮ್ಮ ಮಧ್ಯದಲ್ಲಿ ನಾನು ದೇವರ ರಾಜ್ಯದ ಬಗ್ಗೆ ಬೋಧಿಸುತ್ತಾ ಇದ್ದೆನು. ನಿಮ್ಮಲ್ಲಿ ಯಾರೂ ನನ್ನ ಮುಖವನ್ನು ಇನ್ನೊಮ್ಮೆ ಕಾಣಲಾರಿರಿ ಎಂದು ನಾನು ಬಲ್ಲೆನು.
ACT 20:26 ಆದಕಾರಣ ನಾನು ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತನಾಗಿದ್ದೇನೆ ಎಂದು ಈ ದಿನ ಸಾಕ್ಷಿಕೊಡುತ್ತೇನೆ.
ACT 20:27 ಏಕೆಂದರೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ಬೋಧಿಸುವುದರಲ್ಲಿ ನಾನು ಹಿಂಜರಿಯಲಿಲ್ಲ.
ACT 20:28 ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ.
ACT 20:29 ನಾನು ಹೋದ ನಂತರ ಕ್ರೂರ ತೋಳಗಳು ನಿಮ್ಮ ಮಧ್ಯದಲ್ಲಿ ಪ್ರವೇಶಿಸಿ ಮಂದೆಯನ್ನು ಹಾಳುಮಾಡದೆ ಬಿಡುವುದಿಲ್ಲ ಎಂದು ಬಲ್ಲೆನು.
ACT 20:30 ನಿಮ್ಮೊಳಗಿಂದಲೂ ಜನರು ಎದ್ದು ವಕ್ರಮಾತುಗಳನ್ನಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.
ACT 20:31 ಆದ್ದರಿಂದ ನಾನು ಮೂರು ವರ್ಷಗಳ ಕಾಲ ಹಗಲುರಾತ್ರಿ ಕಣ್ಣೀರಿಡುತ್ತಾ ಎಡಬಿಡದೆ ನಿಮ್ಮನ್ನು ಎಚ್ಚರಿಸುತ್ತಾ ಇದ್ದೇನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು ಎಚ್ಚರವಾಗಿರಿ.
ACT 20:32 “ಆದಕಾರಣ ನಾನು ದೇವರಿಗೂ ಅವರ ಕೃಪಾವಾಕ್ಯಕ್ಕೂ ಈಗ ನಿಮ್ಮನ್ನು ಒಪ್ಪಿಸಿಕೊಡುತ್ತೇನೆ. ಆ ವಾಕ್ಯವು ನಿಮ್ಮಲ್ಲಿ ಭಕ್ತಿವೃದ್ಧಿ ಮಾಡಿ, ಪವಿತ್ರರಾದವರೆಲ್ಲರಲ್ಲಿ ನಿಮಗೆ ಬಾಧ್ಯತೆಯನ್ನು ಕೊಡಲು ಸಾಮರ್ಥ್ಯವುಳ್ಳದ್ದು.
ACT 20:33 ನಾನು ಯಾರ ಬೆಳ್ಳಿ ಬಂಗಾರಕ್ಕಾಗಲಿ, ಬಟ್ಟೆಗಾಗಲಿ ಆಶೆಪಡಲಿಲ್ಲ.
ACT 20:34 ನನ್ನ ಹಸ್ತಗಳೇ ನನ್ನ ಅಗತ್ಯಗಳನ್ನೂ ನನ್ನೊಂದಿಗಿದ್ದವರ ಅಗತ್ಯಗಳನ್ನೂ ಪೂರೈಸಿದವೆಂಬುದನ್ನು ನೀವು ಬಲ್ಲವರಾಗಿದ್ದೀರಿ.
ACT 20:35 ಈ ರೀತಿಯ ಪರಿಶ್ರಮದ ದುಡಿಮೆಯಿಂದ ನಾವು ಬಲಹೀನರಿಗೆ ಸಹಾಯ ಮಾಡಬೇಕೆಂಬುದನ್ನು ನನ್ನ ಮಾದರಿಯಿಂದ ನಿಮಗೆ ತೋರಿಸಿಕೊಟ್ಟೆನು. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಆಶೀರ್ವಾದ,’ ಎಂದು ಕರ್ತ ಆಗಿರುವ ಯೇಸುವೇ ಹೇಳಿದ ಮಾತುಗಳನ್ನು ನಿಮಗೆ ಜ್ಞಾಪಕಪಡಿಸುತ್ತೇನೆ,” ಎಂದನು.
ACT 20:36 ಇದನ್ನು ಹೇಳಿದ ತರುವಾಯ ಅವನು ಎಲ್ಲರೊಂದಿಗೆ ಮೊಣಕಾಲೂರಿ ಪ್ರಾರ್ಥನೆಮಾಡಿದನು.
ACT 20:37 ಅವರೆಲ್ಲರೂ ಪೌಲನ ಕೊರಳನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾ ಅವನಿಗೆ ಮುದ್ದಿಟ್ಟರು.
ACT 20:38 “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ,” ಎಂದು ಅವನು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ದುಃಖಗೊಂಡು, ಅವನೊಂದಿಗೆ ನೌಕೆಯವರೆಗೆ ಹೋದರು.
ACT 21:1 ನಾವು ಅವರನ್ನು ಅಗಲಿದ ನಂತರ, ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ಎಂಬಲ್ಲಿಗೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.
ACT 21:2 ಅಲ್ಲಿ ಫೊಯಿನಿಕೆಗೆ ಹೋಗುವ ನೌಕೆಯನ್ನು ಕಂಡು, ಅದನ್ನೇರಿ ಪ್ರಯಾಣ ಮುಂದುವರಿಸಿದೆವು.
ACT 21:3 ಸೈಪ್ರಸ್ ಹತ್ತಿರ ಬಂದು ಅದರ ದಕ್ಷಿಣಕ್ಕೆ ಪ್ರಯಾಣಮಾಡಿ ಸಿರಿಯಕ್ಕೆ ಹೋದೆವು. ನಮ್ಮ ನೌಕೆಯಲ್ಲಿದ್ದ ಸರಕುಗಳನ್ನು ಇಳಿಸಬೇಕಾಗಿದ್ದ ಟೈರ್ ಎಂಬಲ್ಲಿ ಬಂದು ಇಳಿದೆವು.
ACT 21:4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು.
ACT 21:5 ಆದರೆ ನಮ್ಮ ಸಮಯ ಮುಗಿದಾಗ, ನಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದಿದ್ದೆವು. ಶಿಷ್ಯರೆಲ್ಲರೂ ಅವರ ಮಡದಿ ಮಕ್ಕಳೂ ಪಟ್ಟಣದ ಹೊರಗಿನವರೆಗೆ ನಮ್ಮೊಂದಿಗೆ ಬಂದರು. ಸಮುದ್ರ ತೀರದಲ್ಲಿ ನಾವು ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
ACT 21:6 ಪರಸ್ಪರ ಬೀಳ್ಕೊಡುಗೆಯಾದ ನಂತರ, ನಾವು ನೌಕೆಯನ್ನೇರಿದೆವು. ಅವರು ತಮ್ಮ ಮನೆಗೆ ಹೊರಟು ಹೋದರು.
ACT 21:7 ಟೈರ್ ಪಟ್ಟಣದಿಂದ ನಮ್ಮ ಪ್ರಯಾಣ ಮುಂದುವರಿಸಿ ಪ್ತೊಲೆಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿಯ ಸಹೋದರರನ್ನು ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು.
ACT 21:8 ಮರುದಿನ ಹೊರಟು ಕೈಸರೈಯ ಪಟ್ಟಣವನ್ನು ತಲುಪಿದೆವು. ಅಲ್ಲಿ ಏಳು ಜನರಲ್ಲಿ ಒಬ್ಬನಾದ, ಫಿಲಿಪ್ಪನೆಂಬ ಸುವಾರ್ತಿಕನ ಮನೆಯಲ್ಲಿ ತಂಗಿದೆವು.
ACT 21:9 ಅವನಿಗೆ ಅವಿವಾಹಿತರಾದ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಪ್ರವಾದಿಸುವವರಾಗಿದ್ದರು.
ACT 21:10 ನಾವು ಅಲ್ಲಿ ಕೆಲವು ದಿನ ಇದ್ದ ತರುವಾಯ, ಅಗಬ ಎಂಬ ಹೆಸರಿನ ಪ್ರವಾದಿ ಯೂದಾಯದಿಂದ ಬಂದನು.
ACT 21:11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳಿಗೆ ಅದನ್ನು ಕಟ್ಟಿಕೊಂಡು, “ಪವಿತ್ರಾತ್ಮರು ಇಂತೆನ್ನುತ್ತಾರೆ, ‘ಈ ನಡುಪಟ್ಟಿ ಯಾರದೋ ಆ ಮನುಷ್ಯನನ್ನು ಯೆರೂಸಲೇಮಿನ ಯೆಹೂದ್ಯರು ಈ ರೀತಿಯಲ್ಲಿ ಬಂಧಿಸಿ, ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು,’ ” ಎಂದನು.
ACT 21:12 ಇದನ್ನು ನಾವು ಕೇಳಿದಾಗ, ನಾವೂ ಅಲ್ಲಿಯ ಜನರೂ ಯೆರೂಸಲೇಮಿಗೆ ಹೋಗಬಾರದೆಂದು ಪೌಲನನ್ನು ಬೇಡಿಕೊಂಡೆವು.
ACT 21:13 ಆಗ ಪೌಲನು, “ನೀವೇಕೆ ಅತ್ತು ನನ್ನ ಹೃದಯ ಒಡೆಯುತ್ತೀರಿ? ಬಂಧಿತನಾಗಲಷ್ಟೇ ಅಲ್ಲ, ನಮ್ಮ ಕರ್ತ ಯೇಸುವಿನ ಹೆಸರಿನ ನಿಮಿತ್ತ ಯೆರೂಸಲೇಮಿನಲ್ಲಿ ನಾನು ಸಾಯಲಿಕ್ಕೂ ಸಿದ್ಧನಾಗಿದ್ದೇನೆ,” ಎಂದನು.
ACT 21:14 ಪೌಲನು ಸಮ್ಮತಿಸದೆ ಇದ್ದ ಕಾರಣ, “ಕರ್ತ ಯೇಸುವಿನ ಚಿತ್ತ ನೆರವೇರಲಿ,” ಎಂದು ಹೇಳಿ ನಾವು ಸುಮ್ಮನಾದೆವು.
ACT 21:15 ಇದಾದನಂತರ ನಾವು ಸಿದ್ಧರಾಗಿ ಯೆರೂಸಲೇಮಿಗೆ ಹೋದೆವು.
ACT 21:16 ಕೈಸರೈಯದಿಂದ ಕೆಲವು ಶಿಷ್ಯರು ನಮ್ಮೊಂದಿಗೆ ಬಂದು, ಮ್ನಾಸೋನ ಎಂಬುವನ ಮನೆಗೆ ನಾವು ಇಳಿದುಕೊಳ್ಳುವಂತೆ ಕರೆದುಕೊಂಡು ಹೋದರು. ಅವನು ಸೈಪ್ರಸ್ ದಿಂದ ಬಂದ ಪ್ರಥಮ ಶಿಷ್ಯರಲ್ಲಿ ಒಬ್ಬನಾಗಿದ್ದನು.
ACT 21:17 ನಾವು ಯೆರೂಸಲೇಮನ್ನು ತಲುಪಿದಾಗ, ಸಹೋದರರು ನಮ್ಮನ್ನು ಸಂತೋಷದಿಂದ ಸ್ವೀಕರಿಸಿದರು.
ACT 21:18 ಮರುದಿನ ನಾವೆಲ್ಲರೂ ಪೌಲನೊಂದಿಗೆ ಯಾಕೋಬನನ್ನು ನೋಡಲು ಹೋದೆವು. ಅಲ್ಲಿ ಎಲ್ಲಾ ಸಭೆಹಿರಿಯರೂ ಇದ್ದರು.
ACT 21:19 ಪೌಲನು ಅವರನ್ನು ವಂದಿಸಿ, ತನ್ನ ಸೇವೆಯ ಮೂಲಕ ದೇವರು ಯೆಹೂದ್ಯರಲ್ಲದವರ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ವಿವರಿಸಿದನು.
ACT 21:20 ಅವರು ಅದನ್ನು ಕೇಳಿ, ದೇವರನ್ನು ಕೊಂಡಾಡಿದರು. ಅನಂತರ ಪೌಲನಿಗೆ, “ಸಹೋದರನೇ, ಸಾವಿರಾರು ಜನ ಯೆಹೂದ್ಯರು ನಂಬಿರುವುದನ್ನು ಕಾಣುತ್ತೀಯಲ್ಲಾ, ಅವರೆಲ್ಲರೂ ಮೋಶೆಯ ನಿಯಮದ ಅಭಿಮಾನಿಗಳಾಗಿದ್ದರು.
ACT 21:21 ನೀನು ಯೆಹೂದ್ಯರಲ್ಲದವರ ಮಧ್ಯದಲ್ಲಿ ವಾಸಿಸುತ್ತಿರುವ ಯೆಹೂದ್ಯರಿಗೆ, ‘ನೀವು ಮೋಶೆಯ ನಿಯಮವನ್ನು ಅನುಸರಿಸಬೇಡಿರಿ, ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಬೇಡಿರಿ,’ ಎಂದು ಬೋಧಿಸುವುದಾಗಿ ನಿನ್ನ ವಿಷಯದಲ್ಲಿ ಅವರಿಗೆ ತಿಳಿದು ಬಂದಿದೆ.
ACT 21:22 ಹೀಗಿರುವಲ್ಲಿ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರುವ ವಿಷಯವೂ ಅವರಿಗೆ ಗೊತ್ತಾಗುವುದು.
ACT 21:23 ಆದ್ದರಿಂದ ನಾವು ನಿನಗೆ ಹೇಳುವಂತೆ ಮಾಡು, ಹರಕೆ ಹೊತ್ತ ನಾಲ್ವರು ನಮ್ಮಲ್ಲಿ ಇದ್ದಾರೆ.
ACT 21:24 ನೀನು ಇವರನ್ನು ಕರೆದುಕೊಂಡು ಹೋಗಿ, ಅವರೊಂದಿಗೆ ನಿನ್ನನ್ನು ಶುದ್ಧಿಮಾಡಿಕೊಂಡು, ಅವರು ತಮ್ಮ ಕ್ಷೌರ ಮಾಡಿಸಿಕೊಳ್ಳುವ ಖರ್ಚನ್ನು ನೀನೇ ಪೂರೈಸು. ಆಗ ನಿನ್ನ ವಿಷಯದಲ್ಲಿ ಕೇಳಿರುವ ಸಂಗತಿಗಳು ನಿಜವಲ್ಲ ಮತ್ತು ನೀನು ಮೋಶೆಯ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತೀ ಎಂದು ಎಲ್ಲರಿಗೂ ತಿಳಿದುಬರುವುದು.
ACT 21:25 ಯೆಹೂದ್ಯರಲ್ಲದವರಿಂದ ಬಂದ ವಿಶ್ವಾಸಿಗಳಿಗಾದರೋ, ಅವರು ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕೆಂದು ನಾವು ಬರೆದ ನಮ್ಮ ತೀರ್ಮಾನವನ್ನು ತಿಳಿಸಿದ್ದೇವೆ,” ಎಂದರು.
ACT 21:26 ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು.
ACT 21:27 ಏಳು ದಿನಗಳ ಅವಧಿ ಮುಗಿಯುತ್ತಿದ್ದಾಗ, ಏಷ್ಯಾ ಪ್ರಾಂತದ ಕೆಲವು ಯೆಹೂದ್ಯ ಜನರು ದೇವಾಲಯದಲ್ಲಿ ಪೌಲನನ್ನು ಕಂಡರು. ಅವರು ಇಡೀ ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು.
ACT 21:28 “ಇಸ್ರಾಯೇಲರೇ, ನಮಗೆ ಸಹಾಯಮಾಡಿರಿ! ನಮ್ಮ ಜನರಿಗೂ ನಮ್ಮ ನಿಯಮಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲಾ ಜನರಿಗೆ ಬೋಧಿಸುತ್ತಿರುವ ಮನುಷ್ಯನು ಇವನೇ. ಅಷ್ಟೇ ಅಲ್ಲ, ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿ ಹೇಳಿದರು.
ACT 21:29 ಅವರು ಮೊದಲು ಪಟ್ಟಣದಲ್ಲಿ ಪೌಲನೊಂದಿಗೆ ಎಫೆಸದ ತ್ರೊಫಿಮ ಎಂಬವನು ಇದ್ದುದನ್ನು ಕಂಡಿದ್ದರಿಂದ, ಪೌಲನು ಈಗ ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.
ACT 21:30 ಇಡೀ ಪಟ್ಟಣದಲ್ಲೇ ಕೋಲಾಹಲವೆದ್ದಿತು. ಜನರು ಎಲ್ಲಾ ದಿಕ್ಕುಗಳಿಂದ ಓಡೋಡುತ್ತಾ ಬಂದು. ಪೌಲನನ್ನು ಹಿಡಿದುಕೊಂಡು ದೇವಾಲಯದೊಳಗಿಂದ ಹೊರಗೆಳೆದುಕೊಂಡು ಹೋದರು. ಕೂಡಲೇ ದ್ವಾರಗಳನ್ನು ಮುಚ್ಚಿಬಿಟ್ಟರು.
ACT 21:31 ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಗ, ಯೆರೂಸಲೇಮ ಪಟ್ಟಣದಲ್ಲೆಲ್ಲಾ ಗೊಂದಲವೆದ್ದಿದೆ ಎಂಬ ಸುದ್ದಿ ಅಲ್ಲಿದ್ದ ರೋಮ್ ಸಹಸ್ರಾಧಿಪತಿಗೆ ತಲುಪಿತು.
ACT 21:32 ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಜನಸಮೂಹದ ಬಳಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಅವನ ಸೈನಿಕರನ್ನೂ ಕಂಡಾಗ ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.
ACT 21:33 ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.
ACT 21:34 ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು.
ACT 21:35 ಪೌಲನನ್ನು ಮೆಟ್ಟಲುಗಳವರೆಗೆ ತೆಗೆದುಕೊಂಡು ಹೋದಾಗ ಜನರ ರೋಷ ಇನ್ನೂ ಬಲವಾದುದ್ದರಿಂದ ಸೈನಿಕರು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು.
ACT 21:36 ಏಕೆಂದರೆ ಮುನ್ನುಗ್ಗುತ್ತಿದ್ದ ಜನರ ಗುಂಪು, “ಅವನನ್ನು ಕೊಲ್ಲಿರಿ!” ಎಂದು ಆರ್ಭಟಿಸುತ್ತಿತ್ತು.
ACT 21:37 ಸೈನಿಕರು ಪೌಲನನ್ನು ಅವರ ಪಾಳ್ಯದೊಳಗೆ ಒಯ್ಯುತ್ತಿದ್ದಾಗ, ಅವನು ಸಹಸ್ರಾಧಿಪತಿಗೆ, “ನಾನು ನಿನ್ನೊಡನೆ ಸ್ವಲ್ಪ ಮಾತನಾಡುವುದಕ್ಕೆ ಅಪ್ಪಣೆಯಾದೀತೇ?” ಎಂದು ಕೇಳಲು, ಅದಕ್ಕೆ ಅವನು, “ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯೋ?”
ACT 21:38 “ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು.
ACT 21:39 ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು.
ACT 21:40 ಸಹಸ್ರಾಧಿಪತಿಯ ಅಪ್ಪಣೆ ಪಡೆದುಕೊಂಡು, ಪೌಲನು ಮೆಟ್ಟಲುಗಳ ಮೇಲೆ ನಿಂತುಕೊಂಡು ಜನಸಮೂಹಕ್ಕೆ ಸುಮ್ಮನಿರುವಂತೆ ಸನ್ನೆಮಾಡಲು, ಅವರು ಬಹು ನಿಶ್ಶಬ್ದರಾದಾಗ ಅವನು ಹೀಬ್ರೂ ಭಾಷೆಯಲ್ಲಿ ಅವರಿಗೆ ಹೀಗೆಂದನು:
ACT 22:1 “ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದಕ್ಕೆ ಕಿವಿಗೊಡಿರಿ,” ಎಂದು ಪ್ರಾರಂಭಿಸಿದನು.
ACT 22:2 ಅವನು ತಮ್ಮೊಂದಿಗೆ ಹೀಬ್ರೂ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದಾಗ ಅವರು ಮತ್ತಷ್ಟು ನಿಶ್ಶಬ್ದರಾದರು. ಆಗ ಪೌಲನು:
ACT 22:3 “ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.
ACT 22:4 ಈ ಮಾರ್ಗದವರನ್ನು ಸಾಯುವಷ್ಟು ಹಿಂಸಿಸಿದೆನು. ಸ್ತ್ರೀಪುರುಷರೆನ್ನದೆ ಅವರನ್ನು ಬಂಧಿಸಿ ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದೆನು,
ACT 22:5 ಮಹಾಯಾಜಕನೂ ಹಿರಿಸಭೆಯವರೆಲ್ಲರೂ ಇದಕ್ಕೆ ಸಾಕ್ಷಿ. ಅವರಿಂದಲೇ ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ದಂಡಿಸುವುದಕ್ಕಾಗಿಯೂ ಸೆರೆಹಿಡಿದು ಯೆರೂಸಲೇಮಿಗೆ ತರುವುದಕ್ಕಾಗಿಯೂ ದಮಸ್ಕಕ್ಕೆ ಪ್ರಯಾಣಮಾಡಿದೆನು.
ACT 22:6 “ಸುಮಾರು ಮಧ್ಯಾಹ್ನದ ಸಮಯಕ್ಕೆ ನಾನು ದಮಸ್ಕದ ಹತ್ತಿರದಲ್ಲಿದ್ದೆನು. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕು ನನ್ನ ಸುತ್ತಲೂ ಹೊಳೆಯಿತು.
ACT 22:7 ನಾನು ನೆಲದ ಮೇಲೆ ಬಿದ್ದೆನು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?’ ಎಂದು ಒಂದು ಸ್ವರವು ನನಗೆ ಹೇಳುವುದನ್ನು ಕೇಳಿಸಿಕೊಂಡೆನು.
ACT 22:8 “ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು, “ ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದು ಅವರು ನನಗೆ ಹೇಳಿದರು.
ACT 22:9 ನನ್ನ ಜೊತೆಯಲ್ಲಿದ್ದವರು ಬೆಳಕನ್ನು ಕಂಡರು. ಆದರೆ ನನ್ನ ಕೂಡ ಮಾತನಾಡುತ್ತಿದ್ದ ಸ್ವರವು ಅವರಿಗೆ ಕೇಳಿಸಲಿಲ್ಲ.
ACT 22:10 “ಆಗ ನಾನು, ‘ಸ್ವಾಮಿ, ನಾನೇನು ಮಾಡಬೇಕು?’ ಎಂದು ಕೇಳಲು, “ ‘ಎದ್ದೇಳು, ದಮಸ್ಕದೊಳಗೆ ಹೋಗು, ನೀನು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ನಿನಗೆ ಅಲ್ಲಿ ಹೇಳಲಾಗುವುದು,’ ಎಂದು ಕರ್ತ ಯೇಸು ನನಗೆ ಹೇಳಿದರು.
ACT 22:11 ಆ ಬೆಳಕಿನ ಉಜ್ವಲ ಪ್ರಕಾಶದ ನಿಮಿತ್ತ ನನ್ನ ಕಣ್ಣು ಕುರುಡಾಗಿದ್ದರಿಂದ ನನ್ನ ಜೊತೆಯಲ್ಲಿದ್ದವರು ನನ್ನ ಕೈಹಿಡಿದು ದಮಸ್ಕದೊಳಗೆ ನಡೆಸಿಕೊಂಡು ಹೋದರು.
ACT 22:12 “ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು.
ACT 22:13 ಅವನು ನನ್ನ ಬಳಿ ನಿಂತುಕೊಂಡು, ‘ಸಹೋದರ ಸೌಲನೇ, ನೀನು ದೃಷ್ಟಿಯನ್ನು ಪಡೆದುಕೋ,’ ಎಂದನು. ಆ ಗಳಿಗೆಯಲ್ಲಿಯೇ ನಾನು ದೃಷ್ಟಿಯನ್ನು ಪಡೆದು ಅವನನ್ನು ಕಂಡೆನು.
ACT 22:14 “ಆಗ ಅವನು, ‘ನಮ್ಮ ಪಿತೃಗಳ ದೇವರು ತಮ್ಮ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕಾಗಿಯೂ ನೀತಿವಂತ ಆಗಿರುವ ಒಬ್ಬರನ್ನು ಕಾಣುವುದಕ್ಕಾಗಿಯೂ ಅವರ ಬಾಯಿಂದ ಒಂದು ಮಾತನ್ನು ಕೇಳುವುದಕ್ಕಾಗಿಯೂ ನಿನ್ನನ್ನು ಮುಂದಾಗಿಯೇ ನೇಮಿಸಿದ್ದಾರೆ.
ACT 22:15 ಏಕೆಂದರೆ ನೀನು ಕಂಡದ್ದಕ್ಕೂ ಕೇಳಿದ್ದಕ್ಕೂ ಎಲ್ಲಾ ಜನರಿಗೆ ಅವರ ಸಾಕ್ಷಿಯಾಗಿರುವೆ.
ACT 22:16 ಈಗ ನೀನು ತಡಮಾಡುವುದೇಕೆ? ಎದ್ದೇಳು, ಅವರ ಹೆಸರನ್ನು ಕರೆದು, ದೀಕ್ಷಾಸ್ನಾನವನ್ನು ಹೊಂದಿ ನಿನ್ನ ಪಾಪಗಳನ್ನು ತೊಳೆದುಕೋ,’ ಎಂದನು.
ACT 22:17 “ನಾನು ಯೆರೂಸಲೇಮಿಗೆ ಹಿಂದಿರುಗಿ ಬಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಆತ್ಮಪರವಶನಾದೆನು.
ACT 22:18 ಆಗ ಕರ್ತ ಯೇಸು ನನ್ನೊಂದಿಗೆ ಮಾತನಾಡುತ್ತಿರುವುದನ್ನು ಕಂಡೆನು. ಅವರು, ‘ತಡಮಾಡದೆ! ತಕ್ಷಣವೇ ಯೆರೂಸಲೇಮನ್ನು ಬಿಟ್ಟು ಹೊರಟು ಹೋಗು, ಏಕೆಂದರೆ ನೀನು ನನ್ನನ್ನು ಕುರಿತು ಹೇಳುವ ಸಾಕ್ಷಿಯನ್ನು ಅವರು ಸ್ವೀಕರಿಸುವುದಿಲ್ಲ,’ ಎಂದರು.
ACT 22:19 “ಅದಕ್ಕೆ ನಾನು, ‘ಸ್ವಾಮಿ, ಎಲ್ಲಾ ಸಭಾಮಂದಿರಗಳಲ್ಲಿಯೂ ನಿಮ್ಮಲ್ಲಿ ನಂಬಿಕೆಯಿಟ್ಟವರನ್ನು ಬಂಧಿಸಿ, ಹೊಡೆದು ಸೆರೆಮನೆಗೆ ಹಾಕಿಸುತ್ತಿದ್ದೇನೆಂದು ಈ ಜನರು ಬಲ್ಲರು.
ACT 22:20 ನಿಮ್ಮ ಸಾಕ್ಷಿಯಾದ ಸ್ತೆಫನನ ರಕ್ತ ಸುರಿಸಿದಾಗ ಅದಕ್ಕೆ ನಾನೂ ಸಮ್ಮತಿ ಕೊಟ್ಟು ಅವನನ್ನು ಕೊಲ್ಲುವವರ ಬಟ್ಟೆಗಳನ್ನು ಕಾಯುತ್ತಾ ನಿಂತಿದ್ದೆನು,’ ಎಂದೆನು.
ACT 22:21 “ಆಗ ಕರ್ತ ಯೇಸುವು, ‘ಹೋಗು, ನಾನು ಯೆಹೂದ್ಯರಲ್ಲದವರ ಬಳಿಗೆ ನಿನ್ನನ್ನು ದೂರಪ್ರದೇಶಗಳಿಗೆ ಕಳುಹಿಸುವೆನು,’ ಎಂದು ನನಗೆ ಹೇಳಿದರು.”
ACT 22:22 ಇದನ್ನು ಹೇಳುವವರೆಗೆ ಜನರು ಪೌಲನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅನಂತರ ಅವರು ತಮ್ಮ ಸ್ವರವೆತ್ತಿ, “ಇಂಥವನನ್ನು ಭೂಲೋಕದಿಂದ ತೊಲಗಿಸಿರಿ! ಇವನು ಜೀವಿಸುವುದಕ್ಕೆ ಯೋಗ್ಯನಲ್ಲ!” ಎಂದು ಕೂಗಿದರು.
ACT 22:23 ಅವರು ಅರಚುತ್ತ ತಮ್ಮ ಮೇಲಂಗಿಗಳನ್ನು ಹರಿಯುತ್ತ ಗಾಳಿಯಲ್ಲಿ ಮಣ್ಣು ತೂರುತ್ತಿರಲು,
ACT 22:24 ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು.
ACT 22:25 ಆದರೆ ಅವರು ಅವನನ್ನು ಹೊಡೆಯುವುದಕ್ಕೆ ಬಾರುಕೋಲನ್ನು ಚಾಚಿದಾಗ ಪೌಲನು ಅಲ್ಲಿ ನಿಂತಿದ್ದ ಶತಾಧಿಪತಿಗೆ, “ಅಪರಾಧಿಯೆಂದು ಸಿದ್ಧವಾಗುವ ಮೊದಲೇ ರೋಮ್ ಪೌರನನ್ನು ಕೊರಡೆಗಳಿಂದ ಹೊಡೆಯುವುದು ನ್ಯಾಯವಾದದ್ದೋ?” ಎಂದು ಕೇಳಿದನು.
ACT 22:26 ಶತಾಧಿಪತಿ ಈ ಮಾತುಗಳನ್ನು ಕೇಳಿದಾಗ, ಸಹಸ್ರಾಧಿಪತಿಯ ಬಳಿಗೆ ಹೋಗಿ ಇದನ್ನು ವರದಿ ಮಾಡಿ, “ಇವನು ರೋಮ್ ಪೌರನು. ಈಗ ನೀನೇನು ಮಾಡಬೇಕೆಂದಿದ್ದೀ?” ಎಂದು ಅವನನ್ನು ಪ್ರಶ್ನಿಸಿದನು.
ACT 22:27 ಸಹಸ್ರಾಧಿಪತಿಯು ಪೌಲನ ಬಳಿಗೆ ಹೋಗಿ, “ನೀನು ರೋಮ್ ಪೌರನೋ, ಹೇಳು?” ಎಂದು ಕೇಳಿದ್ದಕ್ಕೆ, ಅವನು, “ಹೌದು,” ಎಂದನು.
ACT 22:28 “ನಾನು ಈ ಪೌರತ್ವ ಪಡೆಯಬೇಕಾದರೆ ಅದಕ್ಕೆ ನಾನು ಬಹಳ ಹಣ ಕೊಡಬೇಕಾಯಿತು,” ಎಂದು ಸಹಸ್ರಾಧಿಪತಿಯು ಹೇಳಲು, ಪೌಲನು, “ಆದರೆ ನಾನು ಹುಟ್ಟಿದ ದಿನದಿಂದಲೇ ರೋಮಿನ ಪೌರನಾಗಿದ್ದೇನೆ,” ಎಂದನು.
ACT 22:29 ಪೌಲನನ್ನು ಪ್ರಶ್ನಿಸಲು ಬಂದವರು ತಕ್ಷಣವೇ ಬಿಟ್ಟುಹೋದರು. ಮಾತ್ರವಲ್ಲದೆ ಪೌಲನು ರೋಮ್ ಪೌರನೆಂದು ಗ್ರಹಿಸಿದ ಅವನನ್ನು ಬೇಡಿಗಳಿಂದ ಬಂಧಿಸಿದ್ದರಿಂದ ಸಹಸ್ರಾಧಿಪತಿಯೂ ಭಯಪಟ್ಟನು.
ACT 22:30 ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.
ACT 23:1 ಪೌಲನು ನ್ಯಾಯಸಭೆಯ ಸದಸ್ಯರನ್ನು ದಿಟ್ಟಿಸಿ ನೋಡಿ, “ನನ್ನ ಸಹೋದರರೇ, ಇಂದಿನವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ನಾನು ದೇವರ ಮುಂದೆ ನಡೆದುಕೊಂಡಿದ್ದೇನೆ,” ಎಂದನು.
ACT 23:2 ಅದಕ್ಕೆ ಮಹಾಯಾಜಕ ಅನನೀಯನು ಪೌಲನ ಬಳಿ ನಿಂತಿದ್ದವರಿಗೆ ಅವನ ಬಾಯಮೇಲೆ ಹೊಡೆಯಬೇಕೆಂದು ಆಜ್ಞಾಪಿಸಿದನು.
ACT 23:3 ಆಗ ಪೌಲನು ಅವನಿಗೆ, “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವರು. ಮೋಶೆಯ ನಿಯಮದ ಪ್ರಕಾರ ನನ್ನ ನ್ಯಾಯವಿಚಾರಣೆ ಮಾಡಲು ನೀನು ಕುಳಿತುಕೊಂಡು, ನಿಯಮಕ್ಕೆ ವಿರುದ್ಧವಾಗಿ ನನ್ನನ್ನು ಹೊಡೆಯಬೇಕೆಂದು ಆಜ್ಞಾಪಿಸುತ್ತೀಯೋ?” ಎಂದನು.
ACT 23:4 ಪೌಲನ ಹತ್ತಿರ ನಿಂತಿದ್ದವರು, “ದೇವರು ನೇಮಿಸಿದ ಮಹಾಯಾಜಕನನ್ನು ನಿಂದಿಸುತ್ತಿದ್ದೀಯಾ?” ಎಂದು ಹೇಳಲು,
ACT 23:5 “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿಯಲಿಲ್ಲ. ಏಕೆಂದರೆ, ‘ನಿನ್ನ ಜನರ ಅಧಿಪತಿಯ ಕುರಿತಾಗಿ ಕೆಟ್ಟದ್ದನ್ನು ಮಾತನಾಡಬಾರದು’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದು ಪೌಲನು ಹೇಳಿದನು.
ACT 23:6 ಅಲ್ಲಿ ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯರು, ಇನ್ನು ಕೆಲವರು ಫರಿಸಾಯರು ಎಂಬುದನ್ನು ಪೌಲನು ತಿಳಿದುಕೊಂಡು ನ್ಯಾಯಸಭೆಯಲ್ಲಿ, “ನನ್ನ ಸಹೋದರರೇ, ನಾನು ಫರಿಸಾಯನು, ಫರಿಸಾಯನ ಮಗನು. ಸತ್ತವರ ಪುನರುತ್ಥಾನದ ನಿರೀಕ್ಷೆಯ ವಿಷಯದಲ್ಲಿ ನಾನು ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಕೂಗಿ ಹೇಳಿದನು.
ACT 23:7 ಪೌಲನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದ ಉಂಟಾಯಿತು. ಇದರಿಂದ ಸಮೂಹವು ವಿಭಾಗವಾಯಿತು.
ACT 23:8 ಏಕೆಂದರೆ ಸದ್ದುಕಾಯರು ಪುನರುತ್ಥಾನ ಇಲ್ಲವೆಂದೂ ದೇವದೂತರಾಗಲಿ, ಆತ್ಮಗಳಾಗಲಿ ಇಲ್ಲವೆಂದೂ ಹೇಳುತ್ತಿದ್ದರು. ಫರಿಸಾಯರು ಇವೆರಡನ್ನೂ ಒಪ್ಪಿಕೊಳ್ಳುತ್ತಿದ್ದರು.
ACT 23:9 ಆಗ ದೊಡ್ಡ ಗಲಭೆಯೇ ಉಂಟಾಯಿತು. ಫರಿಸಾಯರ ಪಕ್ಷದ ನಿಯಮ ಬೋಧಕರಲ್ಲಿ ಕೆಲವರು ಎದ್ದು, “ನಾವು ಈ ಮನುಷ್ಯನಲ್ಲಿ ಯಾವುದೇ ತಪ್ಪನ್ನು ಕಾಣುವುದಿಲ್ಲ. ಆತ್ಮವಾಗಲಿ, ದೇವದೂತನಾಗಲಿ ಇವನೊಂದಿಗೆ ಮಾತನಾಡಿರಬಹುದು,” ಎಂದು ವಾದಿಸಿದರು.
ACT 23:10 ಜನಸಮೂಹವು ಪೌಲನನ್ನು ಎಳೆದು ತುಂಡುತುಂಡಾಗಿ ಮಾಡುವರೇನೋ ಎಂದು ಸಹಸ್ರಾಧಿಪತಿಗೆ ಬಹಳ ಭಯವಾಯಿತು. ಸೈನಿಕರ ಗುಂಪುಗಳು ಕೆಳಗಿಳಿದು ಹೋಗಿ ಬಲಪ್ರಯೋಗದಿಂದ ಪೌಲನನ್ನು ಎತ್ತಿಕೊಂಡು ಸೈನಿಕ ಪಾಳ್ಯದೊಳಗೆ ಬರಬೇಕೆಂದು ಅವನು ಸೈನಿಕರಿಗೆ ಆಜ್ಞಾಪಿಸಿದನು.
ACT 23:11 ಮರುದಿನ ರಾತ್ರಿ ಕರ್ತ ಯೇಸು ಪೌಲನ ಬಳಿಯಲ್ಲಿ ನಿಂತುಕೊಂಡು, “ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ವಿಷಯದಲ್ಲಿ ಸಾಕ್ಷಿ ಕೊಟ್ಟಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡತಕ್ಕದ್ದು,” ಎಂದರು.
ACT 23:12 ಮರುದಿನ ಯೆಹೂದ್ಯರು ರಹಸ್ಯವಾಗಿ ಕೂಡಿಬಂದು, ಪೌಲನನ್ನು ತಾವು ಕೊಲ್ಲುವವರೆಗೆ ಅನ್ನಪಾನ ಸ್ವೀಕರಿಸುವುದಿಲ್ಲವೆಂದು ಶಪಥಮಾಡಿಕೊಂಡರು.
ACT 23:13 ಈ ಒಳಸಂಚಿನಲ್ಲಿ ನಾಲ್ವತ್ತಕ್ಕಿಂತಲೂ ಹೆಚ್ಚು ಜನ ಪುರುಷರಿದ್ದರು.
ACT 23:14 ಅವರು ಮುಖ್ಯಯಾಜಕರ ಹಾಗೂ ಹಿರಿಯರ ಬಳಿಗೆ ಹೋಗಿ, “ಪೌಲನನ್ನು ಕೊಲ್ಲುವವರೆಗೆ ನಾವು ಊಟಮಾಡುವುದಿಲ್ಲ ಎಂದು ಗಂಭೀರ ಶಪಥಮಾಡಿದ್ದೇವೆ.
ACT 23:15 ಆದ್ದರಿಂದ ಈಗ ವಿಚಾರಣೆಯ ಬಗ್ಗೆ ಹೆಚ್ಚಿನ ನಿರ್ದಿಷ್ಟವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ನೆಪದಿಂದ ಪೌಲನನ್ನು ನಿಮ್ಮ ಮುಂದೆ ತರುವಂತೆ ನೀವೂ ನ್ಯಾಯಸಭೆಯೂ ಸಹಸ್ರಾಧಿಪತಿಯನ್ನು ಬೇಡಿಕೊಳ್ಳಿರಿ. ಇಲ್ಲಿಗೆ ಬರುವ ಮೊದಲೇ ಪೌಲನನ್ನು ನಾವು ಕೊಂದುಬಿಡುತ್ತೇವೆ,” ಎಂದರು.
ACT 23:16 ಈ ಒಳಸಂಚು ಪೌಲನ ಸಹೋದರಿಯ ಮಗನಿಗೆ ತಿಳಿಯಲು ಅವನು ಸೈನಿಕ ಪಾಳ್ಯದೊಳಗೆ ಹೋಗಿ ಪೌಲನಿಗೆ ತಿಳಿಸಿದನು.
ACT 23:17 ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು, “ಈ ಯುವಕನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿರಿ. ಏಕೆಂದರೆ ಇವನಿಗೆ ತಿಳಿಸಲು ಏನೋ ವಿಷಯವಿದೆಯಂತೆ,” ಎಂದನು.
ACT 23:18 ಅದರಂತೆ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ನಿಮಗೆ ತಿಳಿಸತಕ್ಕ ವಿಷಯವಿದೆಯೆಂದು ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯುವಕನನ್ನು ನಿಮ್ಮ ಬಳಿ ತರುವಂತೆ ಬೇಡಿಕೊಂಡಿದ್ದಾನೆ,” ಎಂದನು.
ACT 23:19 ಸಹಸ್ರಾಧಿಪತಿಯು ಯುವಕನ ಕೈಹಿಡಿದು ಏಕಾಂತವಾಗಿ ಪಕ್ಕಕ್ಕೆ ಕರೆದು, “ನೀನು ನನಗೆ ಹೇಳಬೇಕಾದದ್ದು ಏನು?” ಎಂದನು.
ACT 23:20 ಆ ಯುವಕನು, “ಪೌಲನ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆಯುವ ಅಪೇಕ್ಷೆಯ ನೆಪದಲ್ಲಿ ಅವನನ್ನು ನ್ಯಾಯಸಭೆಯ ಮುಂದೆ ಕರೆತರುವಂತೆ ನಿಮ್ಮನ್ನು ಕೇಳಿಕೊಳ್ಳಲು ಯೆಹೂದ್ಯರು ತೀರ್ಮಾನಿಸಿಕೊಂಡಿದ್ದಾರೆ.
ACT 23:21 ನೀವು ಅವರ ಮಾತಿಗೆ ಒಪ್ಪಿಕೊಳ್ಳಬೇಡಿ, ಏಕೆಂದರೆ ನಾಲ್ವತ್ತಕ್ಕಿಂತಲೂ ಹೆಚ್ಚು ಜನರು ಅವನಿಗಾಗಿ ಹೊಂಚುಹಾಕಿದ್ದಾರೆ. ಅವನನ್ನು ಕೊಲ್ಲುವವರೆಗೆ ಊಟಮಾಡುವುದಿಲ್ಲ, ಪಾನ ಮಾಡುವುದಿಲ್ಲ, ಎಂದು ಅವರು ಶಪಥ ಮಾಡಿದ್ದಾರೆ. ಅವರ ಬೇಡಿಕೆಗೆ ನಿಮ್ಮ ಒಪ್ಪಿಗೆಯನ್ನೇ ಈಗ ಅವರು ಎದುರುನೋಡುತ್ತಾ ಇದ್ದಾರೆ,” ಎಂದು ಹೇಳಿದನು.
ACT 23:22 “ಈ ವಿಷಯವನ್ನು ನನಗೆ ವರದಿ ಮಾಡಿದ್ದನ್ನು ಯಾರಿಗೂ ಹೇಳಬೇಡ,” ಎಂದು ಆ ಯುವಕನಿಗೆ ಎಚ್ಚರಿಕೆಯನ್ನು ನೀಡಿ ಅವನನ್ನು ಸಹಸ್ರಾಧಿಪತಿ ಕಳುಹಿಸಿಕೊಟ್ಟನು.
ACT 23:23 ಆಮೇಲೆ ಸಹಸ್ರಾಧಿಪತಿಯು ತನ್ನ ಇಬ್ಬರು ಶತಾಧಿಪತಿಗಳನ್ನು ಕರೆದು, “ಈ ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲು ಇನ್ನೂರು ಜನ ಸೈನಿಕರನ್ನೂ ಎಪ್ಪತ್ತು ಕುದುರೆ ಸವಾರರನ್ನೂ ಇನ್ನೂರು ಜನ ಭರ್ಜಿಧರಿಸಿದವರನ್ನೂ ಸಿದ್ಧಗೊಳಿಸಿರಿ.
ACT 23:24 ಕುದುರೆಗಳನ್ನು ಸಿದ್ಧಮಾಡಿ ಪೌಲನನ್ನು ಹತ್ತಿಸಿ ಅವನು ಸುರಕ್ಷಿತವಾಗಿ ರಾಜ್ಯಪಾಲ ಫೇಲಿಕ್ಸನ ಬಳಿಗೆ ತಲುಪುವಂತೆ ವ್ಯವಸ್ಥೆಮಾಡಿರಿ,” ಎಂದು ಆಜ್ಞಾಪಿಸಿದನು.
ACT 23:25 ಅವರಿಗೆ ಒಂದು ಪತ್ರವನ್ನು ಹೀಗೆ ಬರೆದುಕೊಟ್ಟನು:
ACT 23:26 ಮಹಾಪ್ರಭುಗಳಾದ ರಾಜ್ಯಪಾಲ ಫೇಲಿಕ್ಸ್, ಅವರಿಗೆ ಕ್ಲೌದ್ಯ ಲೂಸ್ಯನು, ಮಾಡುವ ವಂದನೆಗಳು.
ACT 23:27 ಈ ಪೌಲನನ್ನು ಯೆಹೂದ್ಯರು ಬಂಧಿಸಿ, ಇವನನ್ನು ಕೊಲ್ಲಬೇಕೆಂದಿದ್ದರು. ಆದರೆ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಬಿಡಿಸಿದೆನು. ಇವನು ರೋಮ್ ಪೌರ ಎಂದು ನನಗೆ ಗೊತ್ತಾಯಿತು.
ACT 23:28 ಅವರು ಏಕೆ ಪೌಲನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಪೇಕ್ಷಿಸಿ ಇವನನ್ನು ಅವರ ನ್ಯಾಯಸಭೆಯ ಮುಂದೆ ಕರೆದುಕೊಂಡು ಹೋದೆನು.
ACT 23:29 ಇವನ ಮೇಲಿನ ದೋಷಾರೋಪಣೆ ಅವರ ನಿಯಮದ ಪ್ರಶ್ನೆಗಳಿಗೆ ಸಂಬಂಧಪಟ್ಟದ್ದು. ಇವನಲ್ಲಿ ಮರಣದಂಡನೆಗಾಗಲಿ, ಸೆರೆಮನೆಗಾಗಲಿ ಯೋಗ್ಯವಾದ ಯಾವ ಅಪರಾಧಗಳೂ ಇಲ್ಲವೆಂದು ನಾನು ಕಂಡುಕೊಂಡಿದ್ದೇನೆ.
ACT 23:30 ಆದರೂ ಪೌಲನ ವಿರೋಧವಾಗಿ ಒಂದು ಒಳಸಂಚು ನಡೆದಿದೆ ಎಂದು ನನಗೆ ರಹಸ್ಯ ಸುದ್ದಿ ಬಂದದ್ದರಿಂದ, ಕೂಡಲೇ ಇವನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಇವನಿಗೆ ವಿರೋಧವಾದ ಆರೋಪಣೆಯನ್ನು ನಿಮಗೆ ಸಲ್ಲಿಸಬೇಕೆಂದು ಇವನ ವಿರೋಧಿಗಳಿಗೆ ಅಪ್ಪಣೆ ಕೊಟ್ಟಿದ್ದೇನೆ.
ACT 23:31 ಸೈನಿಕರು ಈ ಆಜ್ಞೆಯಂತೆ, ರಾತ್ರಿಯಲ್ಲಿ ಪೌಲನನ್ನು ತಮ್ಮೊಂದಿಗೆ ಕರೆದುಕೊಂಡು ಅಂತಿಪತ್ರಿ ಎಂಬ ಊರಿನವರೆಗೆ ಹೋದರು.
ACT 23:32 ಮರುದಿನ ಪೌಲನೊಂದಿಗೆ ಮುಂದೆ ಹೋಗಲು ಕುದುರೆಸವಾರರನ್ನು ಬಿಟ್ಟು, ಸೈನಿಕರು ಅವರ ಪಾಳ್ಯಕ್ಕೆ ಹಿಂದಿರುಗಿದರು.
ACT 23:33 ಅವರು ಕೈಸರೈಯವನ್ನು ತಲುಪಿ ರಾಜ್ಯಪಾಲನಿಗೆ ಪತ್ರವನ್ನು ಕೊಟ್ಟು ಪೌಲನನ್ನು ಅವನಿಗೆ ಒಪ್ಪಿಸಿದರು.
ACT 23:34 ರಾಜ್ಯಪಾಲನು ಪತ್ರವನ್ನು ಓದಿ, ಪೌಲನು ಯಾವ ಪ್ರಾಂತದವನೆಂದು ಪ್ರಶ್ನಿಸಿ, ಅವನು ಕಿಲಿಕ್ಯದವನೆಂದು ತಿಳಿದುಕೊಂಡು,
ACT 23:35 “ನಿನ್ನ ಮೇಲೆ ಆರೋಪ ಹೊರಿಸಿದವರು ಇಲ್ಲಿಗೆ ಬಂದು ತಲುಪಿದ ತರುವಾಯ ನಿನ್ನ ವಿಚಾರಣೆ ಮಾಡುತ್ತೇನೆ,” ಎಂದು ಹೇಳಿ, ಪೌಲನನ್ನು ಹೆರೋದನ ಅರಮನೆಯಲ್ಲಿ ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದನು.
ACT 24:1 ಐದು ದಿನಗಳ ನಂತರ ಮಹಾಯಾಜಕ ಅನನೀಯನು ಕೆಲವು ಹಿರಿಯರೊಂದಿಗೆ ಕೈಸರೈಯಕ್ಕೆ ಬಂದನು. ತನ್ನೊಂದಿಗೆ ಟೆರ್ಟುಲಸ್ ಎಂಬ ವಕೀಲನನ್ನು ಕರೆದುಕೊಂಡು ಬಂದು, ರಾಜ್ಯಪಾಲನಿಗೆ ಪೌಲನ ವಿರೋಧವಾಗಿ ದೂರುಗಳನ್ನಿಟ್ಟರು.
ACT 24:2 ಪೌಲನನ್ನು ಒಳಗೆ ಕರೆದುಕೊಂಡು ಬಂದಾಗ, ಟೆರ್ಟುಲಸನು ಫೇಲಿಕ್ಸನ ಮುಂದೆ ತಪ್ಪು ಹೊರಿಸಲು ಪ್ರಾರಂಭಿಸಿ, “ಸನ್ಮಾನಿತ ಫೇಲಿಕ್ಸರೇ, ನಿಮ್ಮ ಮೂಲಕ ಬಹಳ ದಿನಗಳಿಂದ ಶಾಂತಿಯನ್ನು ಅನುಭವಿಸುತ್ತಿದ್ದೇವೆ. ನಿಮ್ಮ ಮುಂದಾಲೋಚನೆಯಿಂದ ದೇಶಗಳಿಗೆ ಅನೇಕ ಸುಧಾರಣೆಗಳನ್ನು ತಂದಿರುವಿರಿ.
ACT 24:3 ಎಲ್ಲಾ ಕಡೆಗಳಲ್ಲಿಯೂ ಎಲ್ಲಾ ವಿಧದಲ್ಲಿಯೂ ಬಹು ಕೃತಜ್ಞತೆಯಿಂದ ಇದನ್ನು ಸ್ವಾಗತಿಸುತ್ತೇವೆ.
ACT 24:4 ಆದರೆ ನಿಮಗೆ ಹೆಚ್ಚು ತೊಂದರೆಕೊಟ್ಟು ಬೇಸರಪಡಿಸದೇ ನಾನು ಸಂಕ್ಷೇಪವಾಗಿ ಹೇಳುವ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
ACT 24:5 “ಜಗತ್ತಿನಲ್ಲಿ ಇರುವ ಯೆಹೂದ್ಯರ ಮಧ್ಯದಲ್ಲಿ ದಂಗೆಯೆಬ್ಬಿಸಿ ಪೌಲನೆಂಬ ಈ ಮನುಷ್ಯನು ತೊಂದರೆ ಕೊಡುವವನಾಗಿದ್ದಾನೆಂತಲೂ ನಜರೇತಿನವರ ಪಂಗಡಕ್ಕೆ ಇವನು ನಾಯಕನೆಂದೂ ನಾವು ಕಂಡೆವು.
ACT 24:6 ಇವನು ದೇವಾಲಯವನ್ನು ಭ್ರಷ್ಟಮಾಡಲು ಪ್ರಯತ್ನಿಸಿದ್ದರಿಂದ ನಾವು ಇವನನ್ನು ಬಂಧಿಸಿದೆವು.
ACT 24:7 ಆದರೆ ಸಹಸ್ರಾಧಿಪತಿ ಲೂಸ್ಯನು ಮಧ್ಯೆಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡು ಹೋದನು.
ACT 24:8 ನೀವೇ ಪೌಲನನ್ನು ವಿಚಾರಣೆ ಮಾಡುವುದರ ಮೂಲಕ ನಾವು ಇವನಿಗೆ ವಿರೋಧವಾಗಿ ತಂದಿರುವ ದೂರುಗಳೆಲ್ಲವೂ ಸತ್ಯವೆಂದು ನಿಮಗೇ ಗೊತ್ತಾಗುವುದು.”
ACT 24:9 ಆಗ ಈ ಸಂಗತಿಗಳು ಸತ್ಯವಾದವುಗಳೆಂದು ಯೆಹೂದ್ಯರು ಸಹ ಸೇರಿಕೊಂಡು ವಕೀಲನಿಗೆ ದೋಷಾರೋಪಣೆ ಮಾಡಿದರು.
ACT 24:10 ರಾಜ್ಯಪಾಲನು ಪೌಲನಿಗೆ ಮಾತನಾಡಬೇಕೆಂದು ಸನ್ನೆಮಾಡಿದಾಗ, ಪೌಲನು ಕೊಟ್ಟ ಉತ್ತರವಿದು: “ಅನೇಕ ವರ್ಷಗಳಿಂದ ತಾವು ಈ ದೇಶದ ಮೇಲೆ ನ್ಯಾಯಾಧೀಶರಾಗಿರುವುದನ್ನು ನಾನು ಬಲ್ಲೆ. ಆದ್ದರಿಂದ ನಾನು ಸಂತೋಷದಿಂದ ನನ್ನ ಪ್ರತಿವಾದವನ್ನು ತಮ್ಮ ಮುಂದಿಡುತ್ತೇನೆ.
ACT 24:11 ದೇವರ ಆರಾಧನೆ ಮಾಡಲು ಯೆರೂಸಲೇಮಿಗೆ ಹೋಗಿ ಇನ್ನೂ ಹನ್ನೆರಡು ದಿನಗಳು ಮಾತ್ರವಾಯಿತು. ಇದನ್ನು ತಾವು ವಿಚಾರಿಸಿ ತಿಳಿದುಕೊಳ್ಳಬಹುದು.
ACT 24:12 ದೇವಾಲಯದಲ್ಲಾಗಲಿ, ಸಭಾಮಂದಿರದಲ್ಲಾಗಲಿ, ಪಟ್ಟಣದ ಯಾವುದೇ ಸ್ಥಳದಲ್ಲಾಗಲಿ ನಾನು ವಾಗ್ವಾದ ಮಾಡುತ್ತಿದ್ದುದ್ದನ್ನು ಅಥವಾ ಜನರ ಗುಂಪನ್ನು ಕೂಡಿಸುವುದನ್ನು ಇವರು ಕಂಡಿಲ್ಲ.
ACT 24:13 ಈಗ ಅವರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳನ್ನು ನಿಮ್ಮ ಮುಂದೆ ಅವರು ರುಜುಮಾಡಿ ತೋರಿಸಲಾರರು.
ACT 24:14 ಆದರೂ ಅವರು ಒಂದು ಪಂಗಡ ಎಂದು ಕರೆಯುವ ಮಾರ್ಗದ ಅನುಯಾಯಿಯಾಗಿ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮೋಶೆಯ ನಿಯಮ ಒಪ್ಪಿಕೊಳ್ಳುವಂಥದೆಲ್ಲವನ್ನೂ ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವುದೆಲ್ಲವನ್ನೂ ನಾನು ನಂಬುತ್ತೇನೆ.
ACT 24:15 ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಿದೆಯೆಂದು ಈ ಜನರು ಎದುರುನೋಡುವಂತೆಯೇ ದೇವರಲ್ಲಿ ನನಗೂ ನಿರೀಕ್ಷೆಯಿದೆ.
ACT 24:16 ಆದ್ದರಿಂದ ದೇವರ ಮುಂದೆಯೂ ಜನರ ಮುಂದೆಯೂ ನನ್ನ ಮನಸ್ಸಾಕ್ಷಿಯನ್ನು ಯಾವಾಗಲೂ ಶುದ್ಧವಾಗಿಟ್ಟುಕೊಂಡಿರಲು ಪರಿಶ್ರಮಿಸುತ್ತಿದ್ದೇನೆ.
ACT 24:17 “ಅನೇಕ ವರ್ಷಗಳ ನಂತರ ದಾನಧರ್ಮಗಳನ್ನೂ ಕಾಣಿಕೆಗಳನ್ನೂ ನನ್ನ ಸ್ವದೇಶದವರಿಗೆ ಕೊಡಲು ಬಂದೆನು.
ACT 24:18 ನಾನು ಇದನ್ನು ಮಾಡುತ್ತಾ ದೇವಾಲಯದಲ್ಲಿದ್ದಾಗ ನಾನು ಶುದ್ಧಾಚಾರ ಮಾಡುತ್ತಿರುವುದನ್ನು ಇವರು ಕಂಡರು. ನನ್ನೊಂದಿಗೆ ಜನರ ಗುಂಪು ಇರಲಿಲ್ಲ. ನಾನು ಗೊಂದಲವನ್ನೆಬ್ಬಿಸಲಿಲ್ಲ.
ACT 24:19 ಆದರೆ ಏಷ್ಯಾ ಪ್ರಾಂತದ ಕೆಲವು ಜನ ಯೆಹೂದ್ಯರು ಅಲ್ಲಿಗೆ ಬಂದಿದ್ದರು. ಅವರಿಗೆ ನನ್ನ ಮೇಲೆ ಏನಾದರೂ ವಿರೋಧವಿದ್ದರೆ, ಅವರು ನಿಮ್ಮ ಸನ್ನಿಧಿಯಲ್ಲಿ ಈಗ ಬಂದು ನನ್ನ ಮೇಲೆ ಅಪರಾಧ ಹೊರಿಸಲಿ.
ACT 24:20 ಇಲ್ಲವೆ ಇಲ್ಲಿಗೆ ಈಗ ಬಂದವರು ನಾನು ನ್ಯಾಯಸಭೆಯ ಮುಂದೆ ನಿಂತಾಗ ನನ್ನಲ್ಲಿ ಯಾವ ಅಪರಾಧವನ್ನು ಕಂಡರು ಎಂಬುದನ್ನು ಹೇಳಲಿ.
ACT 24:21 ‘ಇಂದು ನಾನು ನಿಮ್ಮ ಮುಂದೆ ನ್ಯಾಯವಿಚಾರಣೆಗೆ ನಿಂತಿರುವುದು ಸತ್ತವರ ಪುನರುತ್ಥಾನಕ್ಕೆ ಸಂಬಂಧಿಸಿದ್ದು,’ ಎಂದು ಅವರ ಮಧ್ಯದಲ್ಲಿ ನಿಂತು ಕೂಗಿದ್ದನ್ನು ಬಿಟ್ಟರೆ ಬೇರೆ ಏನನ್ನೂ ಇವರು ಹೇಳಲಾರರು,” ಎಂದನು.
ACT 24:22 ಈ ಮಾರ್ಗದ ವಿಷಯದ ಬಗ್ಗೆ ಬಹು ಸೂಕ್ಷ್ಮವಾಗಿ ತಿಳಿದುಕೊಂಡಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದಕ್ಕೆ ಹಾಕಿದನು. ಅನಂತರ ಅವನು, “ಸಹಸ್ರಾಧಿಪತಿ ಲೂಸ್ಯನು ಬಂದ ಮೇಲೆ ನಿನ್ನ ಈ ವ್ಯಾಜ್ಯ ತೀರ್ಮಾನಿಸುತ್ತೇನೆ,” ಎಂದು ಹೇಳಿದನು.
ACT 24:23 ಪೌಲನನ್ನು ಕಾವಲಿನಲ್ಲಿಡಬೇಕೆಂತಲೂ ಅವನ ಸ್ನೇಹಿತರು ಅವನನ್ನು ಸಂದರ್ಶಿಸಲು ಅಡ್ಡಿಮಾಡಬಾರದೆಂತಲೂ ಶತಾಧಿಪತಿಗೆ ಆಜ್ಞೆಕೊಟ್ಟನು.
ACT 24:24 ಕೆಲವು ದಿನಗಳಾದ ತರುವಾಯ ಫೇಲಿಕ್ಸನು ಯೆಹೂದ್ಯಳಾದ ತನ್ನ ಪತ್ನಿ ದ್ರೂಸಿಲ್ಲಳೊಂದಿಗೆ ಬಂದನು. ಪೌಲನನ್ನು ಕರೆಕಳುಹಿಸಿ ಅವನು ಕ್ರಿಸ್ತ ಯೇಸುವಿನಲ್ಲಿ ನಂಬುವ ವಿಷಯವಾಗಿ ಮಾತನಾಡುವುದನ್ನು ಕೇಳಿದನು.
ACT 24:25 ನೀತಿ, ದಮೆ, ಬರಲಿಕ್ಕಿರುವ ನ್ಯಾಯವಿಚಾರಣೆಯ ಬಗ್ಗೆ ಪೌಲನು ವಿವರಿಸಿದಾಗ, ಫೇಲಿಕ್ಸ್ ಹೆದರಿಕೊಂಡವನಾಗಿ, “ಈಗ ಇಷ್ಟೇ ಸಾಕು! ಸದ್ಯಕ್ಕೆ ನೀನು ಹೋಗಬಹುದು. ಅನಂತರ ನಾನು ಸಮಯ ಸಿಕ್ಕಿದಾಗ ನಿನ್ನನ್ನು ಪುನಃ ಕರೆಯಿಸುತ್ತೇನೆ,” ಎಂದನು.
ACT 24:26 ಅದೇ ಸಮಯದಲ್ಲಿ ಅವನು ಪೌಲನು ತನಗೇನಾದರು ಹಣ ಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ ಅವನೊಂದಿಗೆ ಮಾತನಾಡುತ್ತಿದ್ದನು.
ACT 24:27 ಎರಡು ವರ್ಷಗಳು ಕಳೆದವು. ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ಎಂಬುವನು ರಾಜ್ಯಪಾಲನಾಗಿ ಬಂದನು. ಫೇಲಿಕ್ಸನು ಯೆಹೂದ್ಯರಿಗೆ ಮೆಚ್ಚುಗೆಯನ್ನು ಗಳಿಸಬಯಸಿದವನಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.
ACT 25:1 ಫೆಸ್ತನು ಅಧಿಕಾರವಹಿಸಿಕೊಂಡು ಮೂರು ದಿನಗಳ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
ACT 25:2 ಅಲ್ಲಿ ಮುಖ್ಯಯಾಜಕರು ಹಾಗೂ ಯೆಹೂದ್ಯ ನಾಯಕರು ಅವರ ಮುಂದೆ ಬಂದು ಪೌಲನಿಗೆ ವಿರೋಧವಾಗಿ ಆರೋಪ ಮಾಡಿದರು.
ACT 25:3 ತಮಗೆ ದಯೆತೋರಿ ಪೌಲನನ್ನು ಕೂಡಲೇ ಯೆರೂಸಲೇಮಿಗೆ ವರ್ಗಾಯಿಸಬೇಕೆಂದು ಫೆಸ್ತನನ್ನು ಬೇಡಿಕೊಂಡರು. ಏಕೆಂದರೆ ಪೌಲನು ಹಿಂದಿರುಗುವಾಗ ಮಾರ್ಗದಲ್ಲೇ ಅವನನ್ನು ಕೊಲ್ಲಬೇಕೆಂದು ಹೊಂಚುಹಾಕಿಕೊಂಡಿದ್ದರು.
ACT 25:4 ಆದ್ದರಿಂದ ಫೆಸ್ತನು ಉತ್ತರವಾಗಿ, “ಪೌಲನು ಕೈಸರೈಯದಲ್ಲಿ ಕಾವಲೊಳಗಿದ್ದಾನೆ. ನಾನೇ ಅಲ್ಲಿಗೆ ಬೇಗ ಹೊಗಬೇಕೆಂದಿದ್ದೇನೆ.
ACT 25:5 ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು.
ACT 25:6 ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು.
ACT 25:7 ಪೌಲನು ಅಲ್ಲಿಗೆ ಬಂದಾಗ, ಯೆರೂಸಲೇಮಿನಿಂದ ಬಂದ ಯೆಹೂದ್ಯರು ಅವನ ಸುತ್ತಲೂ ಎದ್ದು ನಿಂತು, ಅನೇಕ ತೀವ್ರ ಆಪಾದನೆಗಳನ್ನು ಅವನ ವಿರುದ್ಧ ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
ACT 25:8 ಆಗ ಪೌಲನು ತನ್ನ ಪ್ರತಿವಾದವನ್ನು ಮುಂದಿಟ್ಟು: “ನಾನು ಯೆಹೂದ್ಯರ ನಿಯಮಕ್ಕೆ ವಿರೋಧವಾಗಲಿ, ದೇವಾಲಯಕ್ಕೆ ವಿರೋಧವಾಗಲಿ, ಕೈಸರನ ವಿರೋಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ,” ಎಂದನು.
ACT 25:9 ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಲು ಬಯಸಿ ಪೌಲನಿಗೆ, “ನೀನು ಯೆರೂಸಲೇಮಿಗೆ ಹೋಗಿ, ಅಲ್ಲಿ ನನ್ನೆದುರಿನಲ್ಲಿ ಈ ದೂರುಗಳ ನ್ಯಾಯವಿಚಾರಣೆಗಾಗಿ ಒಪ್ಪಿಕೊಳ್ಳುವಿಯೋ?” ಎಂದು ಕೇಳಿದನು.
ACT 25:10 ಅದಕ್ಕೆ ಪೌಲನು, “ಈಗ ನಾನು ಕೈಸರನ ನ್ಯಾಯಾಲಯದ ಎದುರಿನಲ್ಲಿ ನಿಂತುಕೊಂಡಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ನೀವೇ ಚೆನ್ನಾಗಿ ತಿಳಿದುಕೊಂಡಿರುವಂತೆ ನಾನು ಯೆಹೂದ್ಯರಿಗೆ ವಿರೋಧವಾಗಿ ಯಾವ ತಪ್ಪನ್ನೂ ಮಾಡಿಲ್ಲ.
ACT 25:11 ಆದರೂ ಮರಣಶಿಕ್ಷೆಗೆ ಯೋಗ್ಯವಾದದ್ದೇನಾದರೂ ಮಾಡಿದ ಅಪರಾಧಿ ನಾನಾಗಿದ್ದರೆ, ಸಾಯಲಿಕ್ಕೂ ನಾನು ಹಿಂಜರಿಯುವುದಿಲ್ಲ. ಆದರೆ ಯೆಹೂದ್ಯರು ನನ್ನ ವಿರೋಧವಾಗಿ ತಂದಿರುವ ಆಪಾದನೆಗಳು ಸುಳ್ಳಾದವುಗಳಾದದ್ದರಿಂದ, ನನ್ನನ್ನು ಅವರಿಗೆ ಒಪ್ಪಿಸಲು ಯಾರಿಗೂ ಅಧಿಕಾರವಿಲ್ಲ. ನಾನು ನೇರವಾಗಿ ಕೈಸರನಿಗೇ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು.
ACT 25:12 ಆಗ ಫೆಸ್ತನು ತನ್ನ ನ್ಯಾಯಸಭೆಯೊಂದಿಗೆ ಸಮಾಲೋಚನೆ ಮಾಡಿ, “ನೀನು ಕೈಸರನಿಗೆ ಮನವಿ ಮಾಡಿಕೊಂಡಿರುವೆ, ಕೈಸರನ ಬಳಿಗೇ ಹೋಗು!” ಎಂದು ಉತ್ತರಿಸಿದನು.
ACT 25:13 ಕೆಲವು ದಿನಗಳ ನಂತರ ಫೆಸ್ತನನ್ನು ಅಭಿನಂದಿಸಲು ರಾಜ ಅಗ್ರಿಪ್ಪನು ಬೆರ್ನಿಕೆಯಳೊಂದಿಗೆ ಕೈಸರೈಯಕ್ಕೆ ಬಂದನು.
ACT 25:14 ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ.
ACT 25:15 ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು.
ACT 25:16 “ಆಪಾದಿತನು ಆಪಾದನೆ ಹೊರಿಸುವವರ ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಹೊರಿಸಲಾದ ಆಪಾದನೆಗಳಿಗೆ ಪ್ರತಿವಾದ ಮಾಡಿಕೊಳ್ಳುವ ಮೊದಲು ಯಾವ ಮನುಷ್ಯನನ್ನೂ ಒಪ್ಪಿಸಿಕೊಡುವುದು ರೋಮ್ ಪದ್ಧತಿಯಲ್ಲ ಎಂದು ನಾನು ಅವರಿಗೆ ಹೇಳಿದೆನು.
ACT 25:17 ಅವರು ನನ್ನೊಂದಿಗೆ ಇಲ್ಲಿಗೆ ಬಂದದ್ದರಿಂದ ನ್ಯಾಯವಿಚಾರಣೆಯನ್ನು ತಡಮಾಡದೆ ಪ್ರಾರಂಭಿಸಿದೆ. ಮರುದಿನ ನ್ಯಾಯವಿಚಾರಣೆ ನಡೆಸಿ ಪೌಲನೆಂಬ ಆ ಮನುಷ್ಯನನ್ನು ತರಬೇಕೆಂದು ಆಜ್ಞಾಪಿಸಿದೆ.
ACT 25:18 ಅವನ ಮೇಲೆ ಆಪಾದನೆ ಹೊರಿಸುವವರು ಮಾತನಾಡಲು ಎದ್ದು ನಿಂತಾಗ, ನಾನು ಭಾವಿಸಿದ ಯಾವುದೇ ಅಪರಾಧವನ್ನು ಅವರು ಅವನ ಮೇಲೆ ಹೊರಿಸಲಿಲ್ಲ.
ACT 25:19 ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು.
ACT 25:20 ನಾನು ಅಂಥಾ ವಿಚಾರಗಳ ಬಗ್ಗೆ ಅವನು ಯೆರೂಸಲೇಮಿಗೆ ಹೋಗಿ ಈ ಆಪಾದನೆಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಮನಸ್ಸಿದೆಯೋ ಎಂದು ಅವನನ್ನು ಕೇಳಿದೆನು.
ACT 25:21 ಆದರೆ ಪೌಲನು ತನ್ನ ಬೇಡಿಕೆಯನ್ನು ನೇರವಾಗಿ ಕೈಸರನ ಬಳಿಗೆ ಕಳುಹಿಸುವವರೆಗೆ ಅವನನ್ನು ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದ್ದೇನೆ,” ಎಂದು ಫೆಸ್ತನು ಹೇಳಿದನು.
ACT 25:22 ಆಗ ಅಗ್ರಿಪ್ಪ ರಾಜನು, “ಈ ಮನುಷ್ಯನು ಹೇಳುವುದನ್ನು ನಾನೂ ಕೇಳಬೇಕೆಂದಿದ್ದೇನೆ,” ಎಂದು ಫೆಸ್ತನಿಗೆ ಹೇಳಿದನು. “ನಾಳೆಯೇ ಪೌಲನ ಬೇಡಿಕೆಯನ್ನು ಕೇಳುವಿರಿ,” ಎಂದು ಫೆಸ್ತನು ಉತ್ತರಕೊಟ್ಟನು.
ACT 25:23 ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು.
ACT 25:24 ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ನಮ್ಮ ಸಂಗಡ ಇಲ್ಲಿ ಸೇರಿ ಬಂದಿರುವವರೇ, ನೀವು ಕಾಣುತ್ತಿರುವ ಈ ಮನುಷ್ಯನು ಜೀವದಿಂದ ಉಳಿಯಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯೆಹೂದ್ಯರೆಲ್ಲರೂ ನನ್ನನ್ನು ಬೇಡಿಕೊಂಡಿದ್ದಾರೆ.
ACT 25:25 ಇವನು ಮರಣದಂಡನೆಗೆ ಯೋಗ್ಯವಾದ ಯಾವುದೇ ಅಪರಾಧ ಮಾಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದರೆ ಇವನು ನೇರವಾಗಿ ಚಕ್ರವರ್ತಿಗೇ ತನ್ನ ಬೇಡಿಕೆ ಸಲ್ಲಿಸಿದ್ದರಿಂದ ಇವನನ್ನು ರೋಮ್ ನಗರಕ್ಕೆ ಕಳುಹಿಸಲು ತೀರ್ಮಾನಿಸಿದ್ದೇನೆ.
ACT 25:26 ಆದರೂ ಇವನ ಬಗ್ಗೆ ಖಚಿತವಾಗಿ ತಮಗೆ ಬರೆಯಲು ನನಗೇನು ಇಲ್ಲದಿರುವುದರಿಂದ, ಅಗ್ರಿಪ್ಪ ರಾಜನೇ, ಇವನನ್ನು ತಮ್ಮ ಮುಂದೆ ತಂದಿದ್ದೇನೆ. ಹೀಗೆ ಈ ವಿಚಾರಣೆಯ ಮೂಲಕ ಬರೆಯಲು ನನಗೇನಾದರೂ ಸಿಕ್ಕಬಹುದು.
ACT 25:27 ಏಕೆಂದರೆ ನಿಶ್ಚಿತವಾದ ಅಪರಾಧಗಳನ್ನು ಸೂಚಿಸದೆ ಒಬ್ಬ ಸೆರೆಯಾಳನ್ನು ಕಳುಹಿಸುವುದು ಸರಿಯಲ್ಲ ಎಂದು ನನಗನಿಸುತ್ತದೆ,” ಎಂದನು.
ACT 26:1 ಆಗ ಅಗ್ರಿಪ್ಪನು, “ನಿನ್ನ ಪರವಾಗಿ ಮಾತನಾಡಲು ನಿನಗೆ ಅಪ್ಪಣೆಯಿದೆ,” ಎಂದು ಪೌಲನಿಗೆ ಹೇಳಿದನು. ಆಗ ಪೌಲನು ಕೈಯೆತ್ತಿ ಹೀಗೆ ಪ್ರತಿವಾದಿಸತೊಡಗಿದನು:
ACT 26:2 “ಅಗ್ರಿಪ್ಪ ರಾಜರೇ, ಯೆಹೂದ್ಯರು ಮಾಡಿದ ಎಲ್ಲಾ ಆಪಾದನೆಗಳಿಗೆ ವಿರುದ್ಧವಾಗಿ ಇಂದು ನನ್ನ ಪ್ರತಿವಾದ ಮಾಡಲು ತಮ್ಮ ಎದುರಿನಲ್ಲಿರುವುದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ.
ACT 26:3 ಯೆಹೂದ್ಯರ ಎಲ್ಲಾ ಆಚಾರ ವಿಚಾರಗಳನ್ನು, ವಾದವಿವಾದಗಳನ್ನು ತಾವು ಚೆನ್ನಾಗಿ ತಿಳಿದಿದ್ದೀರಿ. ಆದ್ದರಿಂದ, ತಾವು ತಾಳ್ಮೆಯಿಂದ ಆಲಿಸಬೇಕೆಂದು ಕೇಳಿಕೊಳ್ಳುತ್ತೇನೆ.
ACT 26:4 “ನಾನು ಬಾಲಕನಾಗಿದ್ದಾಗಿನಿಂದ, ನನ್ನ ಪಟ್ಟಣದಲ್ಲಿಯೂ ಅನಂತರ ಯೆರೂಸಲೇಮಿನಲ್ಲಿಯೂ ನಾನು ಜೀವನ ಮಾಡಿದ ರೀತಿಯನ್ನು ಯೆಹೂದ್ಯರೆಲ್ಲರೂ ಬಲ್ಲವರಾಗಿದ್ದಾರೆ.
ACT 26:5 ಅವರು ನಮ್ಮ ವಿಶ್ವಾಸದ ಅತಿ ಕಟ್ಟುನಿಟ್ಟಾದ ಪಂಗಡಕ್ಕೆ ತಕ್ಕಂತೆ ನಾನು ಫರಿಸಾಯನಾಗಿ ಜೀವಿಸಿದೆನೆಂಬುದಾಗಿ ತಿಳಿದವರಾಗಿದ್ದಾರೆ. ಸಾಕ್ಷಿ ಹೇಳುವುದಕ್ಕೆ, ಅವರಿಗೆ ಮನಸ್ಸಿದ್ದರೆ ಹೇಳಬಹುದು.
ACT 26:6 ಈಗ ನಾನು ನನ್ನ ಪಿತೃಗಳಿಗೆ ದೇವರು ವಾಗ್ದಾನ ಮಾಡಿದ್ದರಲ್ಲಿ ನಿರೀಕ್ಷೆಯಿಟ್ಟಿದ್ದರಿಂದ ಇಂದು ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ.
ACT 26:7 ರಾಜರೇ, ನಮ್ಮ ಹನ್ನೆರಡು ಗೋತ್ರಗಳವರು ಅತ್ಯಾಸಕ್ತಿಯಿಂದ ಹಗಲಿರುಳು ದೇವರ ಸೇವೆಮಾಡುತ್ತಾ, ಆ ವಾಗ್ದಾನವು ನೆರವೇರುವುದೆಂದು ನಿರೀಕ್ಷಿಸುತ್ತಾ ಇದ್ದಾರೆ. ರಾಜರೇ, ಈ ನಿರೀಕ್ಷೆಯ ನಿಮಿತ್ತವಾಗಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ.
ACT 26:8 ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾರೆಂಬುದನ್ನು ನಂಬಲು ಅಸಾಧ್ಯವೆಂದು ನೀವು ಪರಿಗಣಿಸುವುದು ಏಕೆ?
ACT 26:9 “ನಜರೇತಿನ ಯೇಸುವಿನ ಹೆಸರನ್ನು ವಿರೋಧಿಸಲು ಅನೇಕ ಸಂಗತಿಗಳನ್ನು ಮಾಡಬೇಕೆಂದು ನಾನು ಸಹ ಒಮ್ಮೆ ಯೋಚಿಸಿಕೊಂಡಿದ್ದೆನು.
ACT 26:10 ಹಾಗೆಯೇ ನಾನು ಯೆರೂಸಲೇಮಿನಲ್ಲಿ ಮಾಡಿದೆನು. ಮುಖ್ಯಯಾಜಕರ ಅಧಿಕಾರ ಪಡೆದು ಅನೇಕ ಭಕ್ತರನ್ನು ಸೆರೆಮನೆಗೆ ಹಾಕಿಸಿದೆನು. ಅವರನ್ನು ಮರಣದಂಡನೆಗೆ ಒಪ್ಪಿಸುವಾಗ, ಅವರಿಗೆ ವಿರುದ್ಧವಾಗಿ ಮತ ಚಲಾಯಿಸಿದೆನು.
ACT 26:11 ಅನೇಕ ಸಲ ಅವರನ್ನು ದಂಡಿಸಲು ನಾನು ಒಂದು ಸಭಾಮಂದಿರದಿಂದ ಇನ್ನೊಂದು ಸಭಾಮಂದಿರಕ್ಕೆ ಹೋಗಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆ. ಇದಲ್ಲದೆ ಅವರ ಮೇಲೆ ಬಹು ಕೋಪಗೊಂಡವನಾಗಿ ನಾನು ಅವರನ್ನು ಹಿಂಸಿಸಲು ವಿದೇಶಿ ಪಟ್ಟಣಗಳಿಗೂ ಹೋದೆನು.
ACT 26:12 “ಹೀಗೆ ನಾನು ಮುಖ್ಯಯಾಜಕರ ಅಧಿಕಾರ, ಅಪ್ಪಣೆಗಳೊಂದಿಗೆ ದಮಸ್ಕಕ್ಕೆ ಪ್ರಯಾಣ ಹೋಗುತ್ತಿದ್ದೆನು.
ACT 26:13 ಆಗ ರಾಜರೇ, ಮಧ್ಯಾಹ್ನದ ಸಮಯದಲ್ಲಿ, ಮಾರ್ಗ ಮಧ್ಯದಲ್ಲಿ ನಾನು, ಆಕಾಶದಿಂದ ಸೂರ್ಯನ ಪ್ರಕಾಶಕ್ಕಿಂತಲೂ ಹೆಚ್ಚಾಗಿ ಹೊಳೆಯುವ ಒಂದು ಬೆಳಕನ್ನು ಕಂಡೆನು. ಅದು ನನ್ನ ಸುತ್ತಲೂ ನನ್ನ ಸಂಗಡಿಗರ ಸುತ್ತಲೂ ಪ್ರಕಾಶಿಸಿತು.
ACT 26:14 ನಾವೆಲ್ಲರೂ ನೆಲದ ಮೇಲೆ ಬಿದ್ದೆವು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿ,’ ಎಂದು ಹೀಬ್ರೂ ಭಾಷೆಯಲ್ಲಿ ಹೇಳುವ ವಾಣಿಯನ್ನು ಕೇಳಿದೆನು.
ACT 26:15 “ಆಗ ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು, “ಕರ್ತದೇವರು, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು.
ACT 26:16 ನೀನು ಎದ್ದು ನಿಂತುಕೋ, ನೀನು ಕಂಡಿದ್ದವುಗಳಿಗಾಗಿಯೂ ನಾನು ನಿನಗೆ ತೋರಿಸುವಂಥವುಗಳಿಗಾಗಿಯೂ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ನೇಮಿಸಲು ನಾನು ನಿನಗೆ ಕಾಣಿಸಿಕೊಂಡಿದ್ದೇನೆ.
ACT 26:17 ನಾನು ನಿನ್ನ ಸ್ವಂತ ಜನರಿಂದಲೂ ಯೆಹೂದ್ಯರಲ್ಲದವರಿಂದಲೂ ನಿನ್ನನ್ನು ಕಾಪಾಡುವೆನು.
ACT 26:18 ನೀನು ಅವರ ಕಣ್ಣುಗಳನ್ನು ತೆರೆದು, ಅವರನ್ನು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಸಿ ಪಾಪಕ್ಷಮಾಪಣೆಯನ್ನು ಪಡೆಯುವಂತೆ ಮಾಡಿ, ನನ್ನಲ್ಲಿ ವಿಶ್ವಾಸವಿದ್ದು ಶುದ್ಧೀಕರಣ ಹೊಂದಿದವರ ಮಧ್ಯದಲ್ಲಿ ಹಕ್ಕುಬಾಧ್ಯತೆಯನ್ನು ಪಡೆಯುವಂತೆ ಮಾಡಬೇಕೆಂದು ನಿನ್ನನ್ನು ಕಳುಹಿಸುತ್ತಿದ್ದೇನೆ,’ ಎಂದರು.
ACT 26:19 “ಆದ್ದರಿಂದ ಅಗ್ರಿಪ್ಪ ರಾಜರೇ, ಆ ಪರಲೋಕದ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ.
ACT 26:20 ಆದರೆ ಮೊದಲು ದಮಸ್ಕದಲ್ಲಿದ್ದವರಿಗೂ ಆಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಗಳಲ್ಲಿ ಇದ್ದವರಿಗೂ ಯೆಹೂದ್ಯರಲ್ಲದವರಿಗೂ ನಾನು ಬೋಧಿಸಿದೆನು. ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು, ಪಶ್ಚಾತ್ತಾಪಕ್ಕೆ ಯೋಗ್ಯ ಕೃತ್ಯಗಳನ್ನು ನಡೆಸಬೇಕೆಂದು ನಾನು ಘೋಷಿಸಿದೆನು.
ACT 26:21 ಈ ಕಾರಣದಿಂದಲೇ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು.
ACT 26:22 ಆದರೆ ನಾನು ಇಂದಿನವರೆಗೂ ದೇವರಿಂದ ಸಹಾಯವನ್ನು ಪಡೆದಿರುತ್ತೇನೆ. ಹೀಗೆ ನಾನು ಇಲ್ಲಿ ನಿಂತುಕೊಂಡು ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿ ಕೊಡುತ್ತಿದ್ದೇನೆ. ಪ್ರವಾದಿಗಳೂ ಮೋಶೆಯೂ ಮುಂದೆ ಏನು ಸಂಭವಿಸುತ್ತದೆಯೆಂದು ಹೇಳಿದ್ದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಹೇಳಲಿಲ್ಲ.
ACT 26:23 ಕ್ರಿಸ್ತ ಯೇಸು ಶ್ರಮೆಹೊಂದಿ, ಸತ್ತವರೊಳಗಿಂದ ಜೀವಂತರಾಗಿ ಮೊದಲು ಎದ್ದು ತಮ್ಮ ಜನರಿಗೂ ಯೆಹೂದ್ಯರಲ್ಲದವರಿಗೂ ಬೆಳಕಿನ ಸಂದೇಶವನ್ನು ತರುವರು ಎಂದು ಪ್ರವಾದಿಗಳು ಮತ್ತು ಮೋಶೆಯು ಹೇಳಿದ್ದಾರೆ,” ಎಂದನು.
ACT 26:24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಧ್ಯೆ ಬಾಯಿ ಹಾಕಿ, “ಪೌಲನೇ, ನಿನಗೆ ಹುಚ್ಚುಹಿಡಿದಿದೆ! ನಿನ್ನ ಅಧಿಕಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ,” ಎಂದು ಗಟ್ಟಿಯಾಗಿ ಕೂಗಿದನು.
ACT 26:25 ಆದರೆ ಪೌಲನು, “ಬಹು ಗೌರವವುಳ್ಳ ಫೆಸ್ತರೇ, ನಾನು ಹುಚ್ಚನಲ್ಲ, ಆದರೆ ನಾನು ಸತ್ಯವನ್ನೇ ಸ್ವಸ್ಥಬುದ್ಧಿಯಿಂದ ಮಾತನಾಡುತ್ತಿರುವೆನು.
ACT 26:26 ಏಕೆಂದರೆ ರಾಜರಿಗೆ ಈ ಎಲ್ಲಾ ಸಂಗತಿಗಳ ಪರಿಚಯವಿದೆ. ರಾಜರೊಂದಿಗೆ ನಾನು ಸಹ ಭರವಸೆಯಿಂದ ಮಾತನಾಡುತ್ತಿರುವೆನು. ಇವುಗಳಲ್ಲಿ ಯಾವುದೂ ರಾಜರ ಗಮನಕ್ಕೆ ಬಾರದೆ ಹೋಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಏಕೆಂದರೆ ಇದು ಮೂಲೆಯಲ್ಲಿ ನಡೆದ ಸಂಗತಿಯಲ್ಲ.
ACT 26:27 ಅಗ್ರಿಪ್ಪ ರಾಜರೇ, ನೀವು ಪ್ರವಾದಿಗಳನ್ನು ನಂಬುತ್ತೀರೋ? ನೀವು ನಂಬುತ್ತೀರೆಂದು ನಾನು ಬಲ್ಲೆ,” ಎಂದನು.
ACT 26:28 ಆಗ ಅಗ್ರಿಪ್ಪನು ಪೌಲನಿಗೆ, “ಅಲ್ಪ ಸಮಯದಲ್ಲಿಯೇ ನನ್ನನ್ನು ಕ್ರಿಸ್ತ ವಿಶ್ವಾಸಿಯನ್ನಾಗಿ ಮಾಡಬೇಕೆಂದಿದ್ದೀಯಾ?” ಎಂದನು.
ACT 26:29 ಪೌಲನು, “ಅಲ್ಪ ಕಾಲದಲ್ಲಾಗಲಿ, ದೀರ್ಘಕಾಲದಲ್ಲಾಗಲಿ ನೀವಷ್ಟೇ ಅಲ್ಲ, ನನ್ನ ಮಾತುಗಳನ್ನು ಇಂದು ಆಲಿಸುತ್ತಿರುವ ಪ್ರತಿಯೊಬ್ಬರೂ ಈ ಬೇಡಿಗಳನ್ನು ಹೊರತು ನನ್ನಂತೆಯೇ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ,” ಎಂದನು.
ACT 26:30 ರಾಜನು ಎದ್ದೇಳಲು ಅವನೊಂದಿಗೆ ರಾಜ್ಯಪಾಲನೂ ಬೆರ್ನಿಕೆಯೂ ಅವರೊಂದಿಗೆ ಕುಳಿತಿದ್ದವರೆಲ್ಲರೂ ಎದ್ದರು.
ACT 26:31 ಅವರು ಅಲ್ಲಿಂದ ಹೊರಗೆ ಬಂದು, ಒಬ್ಬರೊಂದಿಗೊಬ್ಬರು ಮಾತನಾಡುತ್ತಾ, “ಮರಣದಂಡನೆಗಾಗಲಿ, ಸೆರೆಮನೆ ವಾಸಕ್ಕಾಗಲಿ ಯೋಗ್ಯವಾದ ಏನನ್ನೂ ಈ ಮನುಷ್ಯನು ಮಾಡಿಲ್ಲ,” ಎಂದರು.
ACT 26:32 ಆಗ ಅಗ್ರಿಪ್ಪನು ಫೆಸ್ತನಿಗೆ, “ಪೌಲನು ನೇರವಾಗಿ ಕೈಸರನಿಗೆ ಬೇಡಿಕೆ ಸಲ್ಲಿಸದಿದ್ದರೆ ಇವನನ್ನು ಬಿಡುಗಡೆ ಮಾಡಬಹುದಾಗಿತ್ತು,” ಎಂದನು.
ACT 27:1 ನಾವು ಇಟಲಿಗೆ ಸಮುದ್ರ ಪ್ರಯಾಣ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಇತರ ಕೈದಿಗಳನ್ನೂ ಯೂಲ್ಯನೆಂಬ ಹೆಸರಿನ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. ಅವನು ಚಕ್ರವರ್ತಿಯ ದಳಕ್ಕೆ ಸೇರಿದವನು.
ACT 27:2 ಆಗ ಅದ್ರಮಿತ್ತಿಯದಿಂದ ಬಂದು ಏಷ್ಯಾ ಪ್ರಾಂತದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ನೌಕೆಯನ್ನೇರಿ ನಾವು ಪ್ರಯಾಣ ಪ್ರಾರಂಭಿಸಿದೆವು. ಥೆಸಲೋನಿಕದಿಂದ ಬಂದ ಮಕೆದೋನ್ಯದ ಅರಿಸ್ತಾರ್ಕನು ನಮ್ಮೊಂದಿಗಿದ್ದನು.
ACT 27:3 ಮರುದಿನ ನಾವು ಸೀದೋನಿಗೆ ತಲುಪಿದೆವು. ಪೌಲನಿಗೆ ಯೂಲ್ಯನು ದಯೆತೋರಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗುವುದಕ್ಕೂ ಅವರಿಂದ ಉಪಚಾರವನ್ನು ಹೊಂದುವುದಕ್ಕೂ ಅನುಮತಿಸಿದನು.
ACT 27:4 ಅಲ್ಲಿಂದ ಹೊರಟು, ಎದುರುಗಾಳಿ ಬೀಸುತ್ತಿದ್ದದರಿಂದ ನಾವು ಸಮುದ್ರ ಪ್ರಯಾಣಮಾಡಿ ಸೈಪ್ರಸ್ ದ್ವೀಪ ಸಮೀಪವಾಗಿ,
ACT 27:5 ಕಿಲಿಕ್ಯಯ ಹಾಗೂ ಪಂಫುಲ್ಯ ಪ್ರಾಂತ ತೀರಗಳ ಎದುರಾಗಿರುವ ಸಮುದ್ರವನ್ನು ದಾಟಿ, ಲುಕೀಯ ಪ್ರಾಂತದ ಮುರ ಪಟ್ಟಣ ಎಂಬಲ್ಲಿಗೆ ತಲುಪಿದೆವು.
ACT 27:6 ಅಲ್ಲಿ ಇಟಲಿಗೆ ಪ್ರಯಾಣಮಾಡುತ್ತಿದ್ದ ಅಲೆಕ್ಸಾಂದ್ರಿಯದ ನೌಕೆಯನ್ನು ಶತಾಧಿಪತಿಯು ಕಂಡು ನಮ್ಮನ್ನು ಆ ನೌಕೆಯಲ್ಲಿ ಹತ್ತಿಸಿದನು.
ACT 27:7 ಅನೇಕ ದಿನಗಳವರೆಗೆ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಕ್ನೀದ ಪಟ್ಟಣ ಎಂಬಲ್ಲಿಗೆ ತಲುಪುವವರೆಗೆ ಬಹಳ ಪ್ರಯಾಸ ಪಡಬೇಕಾಯಿತು. ಎದುರುಗಾಳಿಯು ಅಡ್ಡಿಯಾದದ್ದರಿಂದ, ಸಲ್ಮೋನೆ ಭೂಶಿರವನ್ನು ದಾಟಿ, ಅದರ ಎದುರಾಗಿರುವ ಕ್ರೇತದ್ವೀಪವನ್ನು ತಲುಪಿದೆವು.
ACT 27:8 ಆ ದ್ವೀಪದ ಕರಾವಳಿಯಲ್ಲಿಯೇ ಕಷ್ಟದಿಂದ ಮುಂದೆ ಸಾಗುತ್ತಾ, “ಚಂದರೇವುಗಳು” ಎಂದು ಕರೆಯಲಾಗುವ ಸ್ಥಳಕ್ಕೆ ಬಂದೆವು. ಅದು ಲಸಾಯ ಪಟ್ಟಣಕ್ಕೆ ಸಮೀಪದಲ್ಲಿತ್ತು.
ACT 27:9 ಬಹಳ ಸಮಯ ಕಳೆದುಹೋಯಿತು. ದೋಷಪರಿಹಾರದ ದಿನವು ಸಹ ಮುಗಿದು ಹೋಯಿತು. ಈ ಸಂದರ್ಭದಲ್ಲಿ ಸಮುದ್ರ ಪ್ರಯಾಣ ಅಪಾಯಕರವಾಗಿದ್ದುದರಿಂದ ಪೌಲನು,
ACT 27:10 “ಸಹೋದರರೇ, ನಮ್ಮ ಸಮುದ್ರ ಪ್ರಯಾಣವು ಅಪಾಯಕಾರಿಯಾಗಿರುವಂತೆ ತೋರುತ್ತದೆ. ಇದರಿಂದ ನಮ್ಮ ನೌಕೆಗೂ ಸರಕಿಗೂ ಅಷ್ಟೇ ಅಲ್ಲ, ನಮ್ಮ ಪ್ರಾಣಗಳಿಗೂ ದೊಡ್ಡ ಹಾನಿ ಬರುವ ಸಂಭವವಿದೆ,” ಎಂದು ಎಚ್ಚರಿಸಿದನು.
ACT 27:11 ಆದರೆ ಶತಾಧಿಪತಿಯು ಪೌಲನು ಹೇಳಿದ್ದಕ್ಕೆ ಕಿವಿಗೊಡದೆ ನೌಕೆಯ ನಾವಿಕನು ಹಾಗೂ ಯಜಮಾನನು ಹೇಳಿದ ಮಾತುಗಳಿಗೆ ಕಿವಿಗೊಟ್ಟನು.
ACT 27:12 ಆದರೆ ಚಳಿಗಾಲ ಕಳೆಯಲು ಆ ಬಂದರು ಅನುಕೂಲವಾಗಿರಲಿಲ್ಲ. ಆದ್ದರಿಂದ ಹೆಚ್ಚು ಮಂದಿ ಪ್ರಯಾಣ ಮುಂದುವರಿಸಬೇಕೆಂದು ತೀರ್ಮಾನಿಸಿದರು. ಸಾಧ್ಯವಾದರೆ ಫೊಯಿನಿಕ್ಸನ್ನು ತಲುಪಿ ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂಬುದು ಅವರ ಯೋಚನೆಯಾಗಿತ್ತು. ಫೊಯಿನಿಕ್ಸ, ಕ್ರೇತದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿತ್ತು.
ACT 27:13 ದಕ್ಷಿಣ ಸುಳಿಗಾಳಿ ಬೀಸಲು ಪ್ರಾರಂಭಿಸಿದಾಗ, ಅವರು ತಾವು ಬಯಸಿದ್ದು ದೊರೆಯಿತೆಂದು ಭಾವಿಸಿದರು; ಆದ್ದರಿಂದ ಅವರು ಲಂಗರು ಎತ್ತಿಕಟ್ಟಿ ಕ್ರೇತದ್ವೀಪದ ತೀರದ ಸಮೀಪವಾಗಿಯೇ ಸಮುದ್ರ ಪ್ರಯಾಣ ಬೆಳೆಸಿದರು.
ACT 27:14 ಆದರೆ ಸ್ವಲ್ಪ ಸಮಯದಲ್ಲಿಯೇ “ಈಶಾನ್ಯ ಮಾರುತ” ಎಂಬ ಪ್ರಚಂಡ ಗಾಳಿ ದ್ವೀಪದ ಕಡೆಯಿಂದ ಬೀಸತೊಡಗಿತು.
ACT 27:15 ನೌಕೆ ಬಿರುಗಾಳಿಗೆ ಸಿಕ್ಕಿಕೊಂಡು ಮುಂದೆ ಹೋಗಲಾರದೆ ಇರಲು, ಗಾಳಿ ಬೀಸಿದ ಕಡೆಗೆ ನೂಕಿಸಿಕೊಂಡು ಹೋದೆವು.
ACT 27:16 ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹೋಗುತ್ತಿದ್ದಾಗ, ಜೀವರಕ್ಷಕ ದೋಣಿಯನ್ನು ಸರಿಪಡಿಸಿಕೊಂಡು ಹೋಗುವುದು ನಮಗೆ ಕಷ್ಟಕರವಾಯಿತು.
ACT 27:17 ನೌಕೆಯವರು ಅದನ್ನು ಮೇಲಕ್ಕೆಳೆದು ಹಗ್ಗಗಳಿಂದ ನೌಕೆಯ ಕೆಳಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಸುರ್ತಿಸ್ ಎಂಬ ಉಸುಬಿನಲ್ಲಿ ನೌಕೆ ಸಿಕ್ಕಿಕೊಳ್ಳಬಹುದೆಂಬ ಭಯದಿಂದ ಅವರು ನೌಕೆಯ ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಗೆ ನೌಕೆ ತೇಲುವಂತೆ ಬಿಟ್ಟರು.
ACT 27:18 ಚಂಡಮಾರುತದಿಂದ ನಾವು ಬಹಳ ಹೊಯ್ದಾಡಿದ್ದರಿಂದ ಮರುದಿನ ಅವರು ಸರಕುಗಳನ್ನು ನೌಕೆಯಿಂದ ಹೊರಗೆ ಎಸೆಯಲು ಪ್ರಾರಂಭಿಸಿದರು.
ACT 27:19 ಮೂರನೆಯ ದಿನ ನೌಕೆಯ ಅಡ್ಡ ಮರವನ್ನು ತಮ್ಮ ಕೈಗಳಿಂದಲೇ ಎತ್ತಿ ಹೊರಗೆ ಎಸೆದರು.
ACT 27:20 ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ, ನಕ್ಷತ್ರಗಳನ್ನಾಗಲಿ ಕಾಣದೆ ಚಂಡಮಾರುತ ಬೀಸುತ್ತಲೇ ಇದ್ದುದರಿಂದ ನಾವು ತಪ್ಪಿಸಿಕೊಳ್ಳುವ ಎಲ್ಲಾ ನಿರೀಕ್ಷೆಯನ್ನು ಕಳೆದುಕೊಂಡೆವು.
ACT 27:21 ಬಹಳ ದಿನಗಳವರೆಗೆ ಜನರು ಊಟ ಮಾಡದೇ ಇದ್ದಾಗ, ಪೌಲನು ಅವರ ಮುಂದೆ ಎದ್ದು ನಿಂತುಕೊಂಡು ಹೀಗೆ ಹೇಳಿದನು: “ಸ್ನೇಹಿತರೇ, ನೀವು ಕ್ರೇತದಿಂದ ಮುಂದೆ ಪ್ರಯಾಣ ಮಾಡಬಾರದೆಂದು ಹೇಳಿದ ನನ್ನ ಮಾತಿಗೆ ವಿಧೇಯರಾಗಿದ್ದರೆ ಈ ಕಷ್ಟನಷ್ಟವನ್ನು ತಡೆಯಬಹುದಿತ್ತು.
ACT 27:22 ಈಗಲಾದರೂ ನೀವು ಧೈರ್ಯ ಕಳೆದುಕೊಳ್ಳಬೇಡಿರಿ ಎಂದು ನಿಮಗೆ ಸಲಹೆ ಕೊಡುತ್ತೇನೆ. ನಿಮ್ಮಲ್ಲಿ ಯಾರಿಗೂ ಪ್ರಾಣ ಹಾನಿಯಾಗುವುದಿಲ್ಲ. ನೌಕೆ ಮಾತ್ರವೇ ನಾಶವಾಗಿ ಹೋಗುವುದು.
ACT 27:23 ನಾನು ಯಾವ ದೇವರಿಗೆ ಸೇರಿದ್ದೇನೋ ಮತ್ತು ಯಾರನ್ನು ಸೇವೆ ಮಾಡುತ್ತಿದ್ದೇನೋ ಆ ದೇವರ ದೂತನೊಬ್ಬನು ನಿನ್ನೆ ರಾತ್ರಿ ನನ್ನ ಬಳಿ ನಿಂತುಕೊಂಡು,
ACT 27:24 ‘ಪೌಲನೇ, ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು. ಇಗೋ, ದೇವರು ನಿನ್ನೊಂದಿಗೆ ಪ್ರಯಾಣ ಮಾಡುತ್ತಿರುವವರ ಪ್ರಾಣಗಳನ್ನು ನಿನಗೆ ಉಳಿಸಿಕೊಟ್ಟಿದ್ದಾರೆ,’ ಎಂದನು.
ACT 27:25 ಆದ್ದರಿಂದ ಗೆಳೆಯರೇ, ಧೈರ್ಯಗೊಳ್ಳಿರಿ, ನನಗೆ ಹೇಳಿದಂತೆಯೇ ಸಂಭವಿಸುವುದೆಂದು ನಾನು ದೇವರನ್ನು ನಂಬುತ್ತೇನೆ.
ACT 27:26 ಆದರೆ ನಾವು ಯಾವುದೋ ಒಂದು ದ್ವೀಪದ ದಡದಲ್ಲಿ ಅಪ್ಪಳಿಸುತ್ತೇವೆ,” ಎಂದನು.
ACT 27:27 ಹದಿನಾಲ್ಕನೇ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಬಿರುಗಾಳಿಯು ನಮ್ಮನ್ನು ಹೊಯ್ದಾಡಿಸುತ್ತಿದ್ದಾಗ, ಸುಮಾರು ಮಧ್ಯರಾತ್ರಿಯಲ್ಲಿ ನಾವು ನೆಲವನ್ನು ತಲುಪುತ್ತಿದ್ದೇವೆಂದು ನಾವಿಕರು ಭಾವಿಸಿ,
ACT 27:28 ನೀರಿನ ಆಳವನ್ನು ಪರೀಕ್ಷಿಸಿದಾಗ, ಅದು ನೂರಿಪ್ಪತ್ತು ಅಡಿ ಆಳವೆಂದು ಕಂಡುಕೊಂಡರು. ಸ್ವಲ್ಪ ಸಮಯದ ತರುವಾಯ ಆಳ ನೋಡಿದಾಗ, ಅದು ತೊಂಬತ್ತು ಅಡಿಯಿತ್ತು.
ACT 27:29 ನಾವು ಬಂಡೆಗಳಿಗೆ ಅಪ್ಪಳಿಸಬಹುದೆಂಬ ಭಯದಿಂದ, ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ, ಬೆಳಗಾಗಲೆಂದು ಹಾರೈಸುತ್ತಿದ್ದೆವು.
ACT 27:30 ನೌಕೆಯಿಂದ ತಪ್ಪಿಸಿಕೊಂಡು ಹೋಗಲು ನಾವಿಕರು ನೌಕೆಯ ಮುಂಭಾಗದಲ್ಲಿದ್ದ ಲಂಗರುಗಳನ್ನು ಕೆಳಗಿಳಿಸುವ ನೆಪದಿಂದ ದೋಣಿಯನ್ನು ಸಮುದ್ರದಲ್ಲಿ ಇಳಿಸಿದರು.
ACT 27:31 ಆಗ ಪೌಲನು ಶತಾಧಿಪತಿಗೂ ಸೈನಿಕರಿಗೂ, “ಈ ಜನರು ನೌಕೆಯಲ್ಲಿ ಉಳಿದುಕೊಳ್ಳದಿದ್ದರೆ ನೀವು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ,” ಎಂದನು.
ACT 27:32 ಆದ್ದರಿಂದ ಸೈನಿಕರು ದೋಣಿಗೆ ಕಟ್ಟಿದ್ದ ಹಗ್ಗಗಳನ್ನು ಕಡಿದುಹಾಕಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.
ACT 27:33 ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರೂ ಏನನ್ನಾದರೂ ತಿನ್ನಬೇಕೆಂದು ಒತ್ತಾಯ ಮಾಡಿ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಕಾದುಕೊಂಡವರಾಗಿ ಊಟವನ್ನೇ ಮಾಡಿಲ್ಲ.
ACT 27:34 ಆದ್ದರಿಂದ ಊಟಮಾಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿಯೇ. ನೀವು ಜೀವದಿಂದ ಉಳಿಯಬೇಕು. ಏಕೆಂದರೆ ನಿಮ್ಮ ತಲೆಕೂದಲು ಒಂದಾದರೂ ನಾಶವಾಗುವುದಿಲ್ಲ,” ಎಂದನು.
ACT 27:35 ಹೀಗೆ ಹೇಳಿದ ನಂತರ ಅವನು ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಎದುರಿನಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಅದನ್ನು ಮುರಿದು ತಿನ್ನಲು ಪ್ರಾರಂಭಿಸಿದನು.
ACT 27:36 ಅವರೆಲ್ಲರೂ ಧೈರ್ಯಹೊಂದಿ ಊಟಮಾಡಿದರು.
ACT 27:37 ಅಲ್ಲಿ ನೌಕೆಯಲ್ಲಿ ನಾವೆಲ್ಲಾ ಒಟ್ಟು ಇನ್ನೂರ ಎಪ್ಪತ್ತಾರು ಜನರಿದ್ದೆವು.
ACT 27:38 ಎಲ್ಲರೂ ಸಾಕಷ್ಟು ಊಟಮಾಡಿದ ಮೇಲೆ ಗೋಧಿಯನ್ನು ಸಮುದ್ರದಲ್ಲಿ ಎಸೆದು ನೌಕೆಯ ಭಾರವನ್ನು ಹಗುರಗೊಳಿಸಿದರು.
ACT 27:39 ಬೆಳಗಾದ ಮೇಲೆ ನೆಲವನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ದಡವನ್ನು ಕಂಡು ಸಾಧ್ಯವಾದರೆ ಅಲ್ಲಿ ನೌಕೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು.
ACT 27:40 ಲಂಗರುಗಳನ್ನು ಸಡಿಲಗೊಳಿಸಿ ಅವುಗಳನ್ನು ಸಮುದ್ರದಲ್ಲಿ ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದರು. ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ನೌಕೆ ದಡದ ಕಡೆಗೆ ಚಲಿಸುವಂತೆ ಮಾಡಿದರು.
ACT 27:41 ಆದರೆ ನೌಕೆ ಮಧ್ಯದಲ್ಲಿ ಮರುಳು ದಿಬ್ಬಕ್ಕೆ ಅಪ್ಪಳಿಸಿ ಮುಳುಗಲಿಕ್ಕೆ ಪ್ರಾರಂಭಿಸಿತು. ನೌಕೆಯ ಮುಂಭಾಗ ಮರಳಲ್ಲಿ ಸಿಕ್ಕಿ ಅಲ್ಲಾಡದೇ ನಿಂತಿತು; ಹಿಂಭಾಗ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಮುರಿದುಹೋಯಿತು.
ACT 27:42 ಆಗ ಕೈದಿಗಳು ಈಜಿಕೊಂಡು ತಪ್ಪಿಸಿಕೊಳ್ಳದಂತೆ ಸೈನಿಕರು ಅವರನ್ನು ಕೊಲ್ಲಲು ಯೋಚನೆ ಮಾಡಿದರು.
ACT 27:43 ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಬಯಸಿ, ಸೈನಿಕರು ಹಾಗೆ ಮಾಡದಂತೆ ನೋಡಿಕೊಂಡು, ಈಜಲು ಬಲ್ಲವರು ಮೊದಲು ಸಮುದ್ರದಲ್ಲಿ ಜಿಗಿದು ಭೂಮಿಯನ್ನು ತಲುಪಬೇಕೆಂದು ಆಜ್ಞಾಪಿಸಿದನು.
ACT 27:44 ಕೆಲವರು ಹಲಗೆಗಳ ಮೇಲೆ ಮತ್ತು ಕೆಲವರು ನೌಕೆಯ ತುಂಡುಗಳ ಸಹಾಯದಿಂದ ದಡ ಸೇರಬೇಕೆಂದು ಆಜ್ಞಾಪಿಸಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದರು.
ACT 28:1 ನಾವು ಸುರಕ್ಷಿತವಾಗಿ ದಡ ಸೇರಿದ ಮೇಲೆ, ಆ ದ್ವೀಪವು ಮಾಲ್ಟ ದ್ವೀಪವೆಂದು ಕಂಡುಕೊಂಡೆವು.
ACT 28:2 ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.
ACT 28:3 ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
ACT 28:4 ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ACT 28:5 ಆದರೆ ಪೌಲನು ಸರ್ಪವನ್ನು ಬೆಂಕಿಯೊಳಗೆ ಝಾಡಿಸಿ ಬಿಟ್ಟನು. ಅವನಿಗೆ ಯಾವ ಕೇಡೂ ಆಗಲಿಲ್ಲ.
ACT 28:6 ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.
ACT 28:7 ದ್ವೀಪದ ಮುಖ್ಯ ಅಧಿಕಾರಿ ಪೊಪ್ಲಿಯನೆಂಬುವನಿಗೆ ಸೇರಿದ ಹೊಲವು ಸಮೀಪದಲ್ಲಿಯೇ ಇತ್ತು. ಅವನು ನಮ್ಮನ್ನು ತನ್ನ ಮನೆಗೆ ಆಮಂತ್ರಿಸಿ ಮೂರು ದಿನ ನಮ್ಮನ್ನು ಉಪಚರಿಸಿದನು.
ACT 28:8 ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು.
ACT 28:9 ಹೀಗಾದ ತರುವಾಯ ಆ ದ್ವೀಪದಲ್ಲಿಯೇ ಉಳಿದ ರೋಗಿಗಳು ಸಹ ಬಂದು ಗುಣಹೊಂದಿದರು.
ACT 28:10 ಅವರು ಅನೇಕ ವಿಧವಾಗಿ ನಮ್ಮನ್ನು ಗೌರವಿಸಿದರು. ನಾವು ಪ್ರಯಾಣಕ್ಕೆ ಸಿದ್ಧರಾದಾಗ ನಮಗೆ ಅಗತ್ಯವಿದ್ದವುಗಳನ್ನೆಲ್ಲಾ ತಂದು ಒದಗಿಸಿಕೊಟ್ಟರು.
ACT 28:11 ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.
ACT 28:12 ಸುರಕೂಸ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ಮೂರು ದಿನ ಇದ್ದೆವು.
ACT 28:13 ಅಲ್ಲಿಂದ ಸಮುದ್ರ ಪ್ರಯಾಣ ಮುಂದುವರಿಸಿ ರೇಗಿಯ ಪಟ್ಟಣಕ್ಕೆ ಬಂದೆವು. ಮರುದಿನ ದಕ್ಷಿಣ ಗಾಳಿ ಬೀಸುತ್ತಿದ್ದುದರಿಂದ ಎರಡನೆಯ ದಿನ ಪೊತಿಯೋಲ ರೇವನ್ನು ತಲುಪಿದೆವು.
ACT 28:14 ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು.
ACT 28:15 ಅಲ್ಲಿದ್ದ ಸಹೋದರರು ನಾವು ಬರುತ್ತೇವೆಂಬ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ಅಪ್ಪಿಯ ಪೇಟೆಗೂ ತ್ರಿಛತ್ರದ ಬಳಿಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತುತಿ ಮಾಡಿ ಧೈರ್ಯ ತಂದುಕೊಂಡನು.
ACT 28:16 ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.
ACT 28:17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು.
ACT 28:18 ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು.
ACT 28:19 ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.
ACT 28:20 ಈ ಕಾರಣದಿಂದಲೇ ನಾನು ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
ACT 28:21 ಅದಕ್ಕೆ ಅವರು, “ನಿನ್ನ ವಿಷಯದಲ್ಲಿ ಯೂದಾಯದಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರಲ್ಲಿ ಯಾರೂ ನಿನ್ನ ವಿಷಯದಲ್ಲಿ ಏನನ್ನೂ ವರದಿ ಮಾಡಿಲ್ಲ. ನಿನ್ನ ಬಗ್ಗೆ ಯಾವ ಕೆಟ್ಟದ್ದನ್ನೂ ಹೇಳಿಲ್ಲ.
ACT 28:22 ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.
ACT 28:23 ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು.
ACT 28:24 ಕೆಲವರಿಗೆ ಅವನು ಹೇಳಿದ್ದರ ಬಗ್ಗೆ ಮನದಟ್ಟಾಯಿತು.
ACT 28:25 ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:
ACT 28:26 “ ‘ಈ ಜನರ ಬಳಿಗೆ ಹೋಗಿ ಹೇಳು, “ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.”
ACT 28:27 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿಸಿಕೊಂಡು, ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
ACT 28:28 “ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು.
ACT 28:29 ಪೌಲನು ಇದನ್ನು ಹೇಳಿದ ತರುವಾಯ ಯೆಹೂದ್ಯರು ತಮ್ಮತಮ್ಮಲ್ಲಿಯೇ ಕಟುವಾಗಿ ಚರ್ಚಿಸಿಕೊಳ್ಳುತ್ತಾ ಹೊರಟು ಹೋದರು.
ACT 28:30 ಪೌಲನು ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಎರಡು ವರ್ಷಗಳ ಕಾಲವಿದ್ದು ತನ್ನ ಬಳಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದನು.
ACT 28:31 ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.
ROM 1:1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ.
ROM 1:2 ದೇವರು ಮುಂಚಿತವಾಗಿ ಪವಿತ್ರ ವೇದಗಳಲ್ಲಿ ತಮ್ಮ ಪ್ರವಾದಿಗಳ ಮೂಲಕ ವಾಗ್ದಾನಮಾಡಿದ,
ROM 1:3 ಈ ಸುವಾರ್ತೆಯು ದೇವಪುತ್ರನ ವಿಷಯವಾದದ್ದು. ಯೇಸು ಮನುಷ್ಯತ್ವದ ಪ್ರಕಾರ ದಾವೀದನ ಸಂತಾನದವರೂ
ROM 1:4 ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ.
ROM 1:5 ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು.
ROM 1:6 ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ.
ROM 1:7 ರೋಮ್ ನಗರದಲ್ಲಿ ದೇವರಿಗೆ ಪ್ರಿಯರೂ ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲಾದವರೂ ಆಗಿರುವವರೆಲ್ಲರಿಗೂ: ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ಕೃಪೆಯೂ ಶಾಂತಿಯೂ ಆಗಲಿ.
ROM 1:8 ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ROM 1:9 ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.
ROM 1:10 ನಾನು ಪ್ರಾರ್ಥನೆ ಮಾಡುವಾಗಲೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತಾ ಇನ್ನು ಮೇಲಾದರೂ ನಿಮ್ಮ ಬಳಿಗೆ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಯಾವ ರೀತಿಯಲ್ಲಾದರೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ.
ROM 1:11 ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.
ROM 1:12 ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.
ROM 1:13 ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.
ROM 1:14 ಗ್ರೀಕರಿಗೂ ಗ್ರೀಕರಲ್ಲದವರಿಗೂ ಜ್ಞಾನಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ.
ROM 1:15 ಹೀಗಿರುವುದರಿಂದ ರೋಮ್ ನಗರದಲ್ಲಿರುವ ನಿಮಗೂ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನು ಉತ್ಸುಕನಾಗಿದ್ದೇನೆ.
ROM 1:16 ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.
ROM 1:17 ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,” ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು.
ROM 1:18 ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.
ROM 1:19 ದೇವರ ವಿಷಯವಾಗಿ ತಿಳಿಯಬಹುದಾದದ್ದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಅದನ್ನು ಅವರಿಗೆ ದೇವರೇ ಪ್ರಕಟಿಸಿದರು.
ROM 1:20 ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ.
ROM 1:21 ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು.
ROM 1:22 ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ.
ROM 1:23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.
ROM 1:24 ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು.
ROM 1:25 ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್.
ROM 1:26 ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು.
ROM 1:27 ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು.
ROM 1:28 ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.
ROM 1:29 ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು.
ROM 1:30 ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ
ROM 1:31 ವಿವೇಚನೆಯಿಲ್ಲದವರೂ ನಂಬಿಕೆಯಿಲ್ಲದವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು.
ROM 1:32 ಇಂಥವುಗಳನ್ನು ನಡೆಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೈವವಿಧಿಯನ್ನು ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಹಾಗೆ ಮಾಡುವವರನ್ನು ಮೆಚ್ಚುತ್ತಾರೆ.
ROM 2:1 ಆದ್ದರಿಂದ, ಯಾವ ಕಾರಣಕ್ಕಾಗಿ ನೀನು ಇತರರಿಗೆ ತೀರ್ಪು ಮಾಡುತ್ತಿರುವೆಯೋ ಅದನ್ನೇ ನೀನೂ ಮಾಡುತ್ತಿರುವುದರಿಂದ ನಿನ್ನನ್ನು ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಇತರರ ಮೇಲೆ ತೀರ್ಪುಮಾಡುವ ನಿನಗೆ ಹೇಳುವುದಕ್ಕೆ ನೆಪವಿಲ್ಲ.
ROM 2:2 ಆದರೆ ಅಂಥಾ ಅಪರಾಧಗಳನ್ನು ಮಾಡುವವರ ವಿಷಯದಲ್ಲಿ ದೇವರು ಮಾಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
ROM 2:3 ಮನುಷ್ಯನೇ, ಅಂಥವುಗಳನ್ನು ನಡೆಸುವವರ ಮೇಲೆ ತೀರ್ಪುಮಾಡುತ್ತಿರುವ ನೀನು ದೇವರ ತೀರ್ಪಿನಿಂದ ತಪ್ಪಿಸಿಕೊಂಡೇನೆಂದು ನೆನಸುತ್ತೀಯೋ?
ROM 2:4 ದೇವರ ದಯೆ, ಐಶ್ವರ್ಯ, ಸಹನೆ ಮತ್ತು ದೀರ್ಘಶಾಂತಿ ಇವುಗಳನ್ನು ತಾತ್ಸಾರ ಮಾಡುತ್ತೀಯೋ? ದೇವರ ಒಳ್ಳೆಯತನವು ನಿನ್ನನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆಂಬುದು ನಿನಗೆ ತಿಳಿಯದೋ?
ROM 2:5 ನೀನು ನಿನ್ನ ಕಠಿಣವಾದ ಮತ್ತು ಪಶ್ಚಾತ್ತಾಪ ಪಡದ ಹೃದಯದಿಂದ, ನಿನಗೋಸ್ಕರ ದೇವರ ನೀತಿಯುಳ್ಳ ತೀರ್ಪು ಪ್ರಕಟವಾಗುವ ಕೋಪದ ದಿನಕ್ಕಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಿದ್ದಿ.
ROM 2:6 ದೇವರು, “ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲ ಕೊಡುವರು.”
ROM 2:7 ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು.
ROM 2:8 ಯಾರು ಸ್ವಾರ್ಥಿಗಳಾಗಿದ್ದು ಸತ್ಯವನ್ನು ಅನುಸರಿಸದೆ ಅನೀತಿಯನ್ನು ಅನುಸರಿಸುತ್ತಾರೋ ಅವರ ವಿರುದ್ಧ ದೇವರಿಗೆ ಕೋಪವೂ ಆಕ್ರೋಶವೂ ಬರುತ್ತವೆ.
ROM 2:9 ಕೆಟ್ಟದ್ದನ್ನು ನಡೆಸುವ ಪ್ರತಿ ಮನುಷ್ಯನಿಗೆ ಕಷ್ಟವೂ ಸಂಕಟವೂ ಬರುತ್ತವೆ, ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ.
ROM 2:10 ಆದರೆ ಒಳ್ಳೆಯದನ್ನು ನಡೆಸುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಸಮಾಧಾನವೂ ಉಂಟಾಗುತ್ತವೆ. ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ.
ROM 2:11 ದೇವರಲ್ಲಿ ಪಕ್ಷಪಾತವಿಲ್ಲ.
ROM 2:12 ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು.
ROM 2:13 ಯಾರೂ ನಿಯಮವನ್ನು ಕೇಳಿದ ಮಾತ್ರಕ್ಕೆ ದೇವರ ಮುಂದೆ ನೀತಿವಂತರಾಗುವುದಿಲ್ಲ. ಆದರೆ ನಿಯಮಕ್ಕೆ ವಿಧೇಯರಾಗುವವರೇ ನೀತಿವಂತರಾಗುವರು.
ROM 2:14 ನಿಯಮವಿಲ್ಲದ ಯೆಹೂದ್ಯರಲ್ಲದವರು ಸ್ವಾಭಾವಿಕವಾಗಿ ನಿಯಮದಲ್ಲಿ ಹೇಳಿದಂತೆ ನಡೆಯುವಾಗ ಅವರಿಗೆ ನಿಯಮವಿಲ್ಲದಿದ್ದರೂ ಅವರ ಅಂತರಂಗವೇ ನಿಯಮವಾಗಿದೆ.
ROM 2:15 ಅವರು ತಮ್ಮ ನಡತೆಯಿಂದಲೇ ನಿಯಮವು ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಾಕ್ಷಿಕೊಡುತ್ತದೆ. ಅವರ ಯೋಚನೆಗಳು ಒಂದಕ್ಕೊಂದು ಇದು ತಪ್ಪು ಅಥವಾ ತಪ್ಪಲ್ಲ ಎಂಬುದನ್ನು ಸೂಚಿಸುತ್ತವೆ.
ROM 2:16 ನಾನು ಸಾರುವ ಸುವಾರ್ತೆಯ ಪ್ರಕಾರ ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ವಿಚಾರಿಸುವ ದಿನದಲ್ಲಿ ಇವೆಲ್ಲಾ ಸಂಭವಿಸುವುದು.
ROM 2:17 ಆದರೆ, ನೀನು ಯೆಹೂದ್ಯನೆನಿಸಿಕೊಂಡವನೂ ನಿಯಮದಲ್ಲಿ ಭರವಸೆಯಿಟ್ಟವನೂ ದೇವರಿಗೆ ಸೇರಿದವನೂ
ROM 2:18 ದೇವರ ಚಿತ್ತವನ್ನು ಬಲ್ಲವನೂ ನಿಯಮದಿಂದ ಉಪದೇಶವನ್ನು ಹೊಂದಿ ಯಾವುದು ಉತ್ತಮವಾದದ್ದೆಂದು ಅನುಮೋದಿಸುವವನೂ ಆಗಿದ್ದೀ.
ROM 2:19 ನಿನಗೆ ನಿಯಮದ ಜ್ಞಾನ ಮತ್ತು ಸತ್ಯವು ಇರುವುದರಿಂದ ನೀನು ಕುರುಡರಿಗೆ ಮಾರ್ಗದರ್ಶಿಯೂ ಕತ್ತಲೆಯಲ್ಲಿರುವವರಿಗೆ ಬೆಳಕೂ
ROM 2:20 ತಿಳುವಳಿಕೆಯಿಲ್ಲದವರಿಗೆ ಶಿಕ್ಷಕನೂ ಬಾಲಕರಿಗೆ ಉಪಾಧ್ಯಾಯನೂ ಆಗಿದ್ದೀಯೆಂದು ಧೈರ್ಯವಾಗಿದ್ದೀಯಲ್ಲಾ?
ROM 2:21 ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೋ. ಕದಿಯಬಾರದೆಂದು ಸಾರುವ ನೀನು ಕದಿಯುತ್ತೀಯೋ?
ROM 2:22 ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳಲ್ಲಿ ಅಸಹ್ಯಪಡುವ ನೀನು ದೇವಾಲಯಗಳನ್ನು ದೋಚುತ್ತೀಯೋ?
ROM 2:23 ನಿಯಮದ ಬಗ್ಗೆ ಹೆಚ್ಚಳ ಪಡುವ ನೀನು ನಿಯಮವನ್ನು ಮೀರಿ ನಡೆದು ದೇವರನ್ನು ಅವಮಾನ ಪಡಿಸುತ್ತೀಯೋ?
ROM 2:24 ಪವಿತ್ರ ವೇದದಲ್ಲಿ ಬರೆದಿರುವಂತೆ, “ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದವರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆ.”
ROM 2:25 ನೀನು ನಿಯಮವನ್ನು ಕೈಕೊಳ್ಳುವವನಾದರೆ, ಸುನ್ನತಿ ಪ್ರಯೋಜನಕರವಾಗಿರುವುದು. ಆದರೆ ನೀನು ನಿಯಮವನ್ನು ಮೀರಿ ನಡೆಯುವವನಾದರೆ, ನಿನಗೆ ಸುನ್ನತಿಯಾಗಿದ್ದರೂ ಇಲ್ಲದಂತಾಗಿರುವುದು.
ROM 2:26 ಸುನ್ನತಿಯಿಲ್ಲದವನು ನಿಯಮಗಳನ್ನು ಕೈಗೊಳ್ಳುವವರೆಗೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸುವುದಿಲ್ಲವೇ?
ROM 2:27 ಅವನು ಶಾರೀರಿಕವಾಗಿ ಸುನ್ನತಿಯಿಲ್ಲದವನಾಗಿದ್ದರೂ ನಿಯಮವನ್ನು ಅನುಸರಿಸುವುದರಿಂದ ಲಿಖಿತ ನಿಯಮವೂ ಸುನ್ನತಿಯೂ ಇದ್ದು ನಿಯಮವನ್ನು ಮೀರಿ ನಡೆಯುವ ನಿನ್ನನ್ನು ದೋಷಿಯೆಂದು ತೀರ್ಪು ಮಾಡುವನಲ್ಲವೇ?
ROM 2:28 ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
ROM 2:29 ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ.
ROM 3:1 ಹಾಗಾದರೆ ಯೆಹೂದ್ಯರಾಗಿರುವುದರಿಂದ ಪ್ರಯೋಜನವೇನು? ಅಥವಾ ಸುನ್ನತಿಯಿಂದ ಲಾಭವೇನು?
ROM 3:2 ಎಲ್ಲಾ ವಿಷಯಗಳಲ್ಲಿಯೂ ಬಹಳ ಪ್ರಯೋಜನವಿದೆ. ಮೊದಲನೆಯದಾಗಿ ದೇವರ ವಾಕ್ಯಗಳು ಯೆಹೂದ್ಯರ ವಶಕ್ಕೆ ಒಪ್ಪಿಸಲಾಗಿವೆ.
ROM 3:3 ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರ ಅಪನಂಬಿಕೆಯು ದೇವರ ಪ್ರಾಮಾಣಿಕತೆಯನ್ನು ರದ್ದುಗೊಳಿಸುವುದೇ?
ROM 3:4 ಎಂದಿಗೂ ಹಾಗೆ ಆಗದಿರಲಿ. ಆದರೆ ಪ್ರತಿ ಮನುಷ್ಯನು ಸುಳ್ಳುಗಾರನಾದರೂ ದೇವರು ಸತ್ಯವಂತರೇ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ನೀನು ನಿನ್ನ ಮಾತುಗಳಲ್ಲಿಯೇ ನೀತಿವಂತನೆಂದು ನಿರ್ಣಯಿಸಲಾಗುವೆ. ನಿನ್ನ ಮೇಲೆ ತೀರ್ಪು ಮಾಡುವಾಗ ನೀನು ಜಯಿಸಬೇಕು.”
ROM 3:5 ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ.
ROM 3:6 ಎಂದಿಗೂ ಹಾಗೆ ಆಗದಿರಲಿ. ದೇವರು ಅನ್ಯಾಯಗಾರರಾಗಿದ್ದರೆ ಲೋಕಕ್ಕೆ ನ್ಯಾಯತೀರಿಸುವುದು ಹೇಗೆ?
ROM 3:7 “ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೊಂಡು ಅವರ ಮಹಿಮೆಯನ್ನು ಹೆಚ್ಚಿಸುವುದಾದರೆ ನನಗೆ ಪಾಪಿಯೆಂದು ಇನ್ನು ತೀರ್ಪಾಗುವುದು ಏಕೆ?”
ROM 3:8 “ಒಳ್ಳೆಯದಾಗುವಂತೆ ಕೆಟ್ಟದ್ದನ್ನು ಮಾಡೋಣ,” ಎಂದು ನಾವು ಹೇಳುತ್ತಿರುವುದಾಗಿ, ಕೆಲವರು ನಮ್ಮ ಬಗ್ಗೆ ದೂಷಿಸಿ ಹೇಳುವ ಪ್ರಕಾರ ನಾವೇಕೆ ಹೇಳಬಾರದು? ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯವೇ!
ROM 3:9 ಹಾಗಾದರೆ ಏನು? ಯೆಹೂದ್ಯರಾದ ನಾವು ಯೆಹೂದ್ಯರಲ್ಲದವರಿಗಿಂತಲೂ ಶ್ರೇಷ್ಠರೋ? ಎಂದಿಗೂ ಇಲ್ಲವಲ್ಲ. ಯೆಹೂದ್ಯರಾಗಲಿ, ಯೆಹೂದ್ಯರಲ್ಲದವರಾಗಲಿ ಎಲ್ಲರೂ ಪಾಪದ ಶಕ್ತಿಗೆ ಒಳಗಾದವರೆಂದು ನಾವು ಈಗಾಗಲೇ ತೋರಿಸಿದ್ದೇವೆ.
ROM 3:10 ಪವಿತ್ರ ವೇದಗಳಲ್ಲಿ ಬರೆದಿರುವಂತೆ: “ನೀತಿವಂತನು ಇಲ್ಲ, ಒಬ್ಬನೂ ಇಲ್ಲ.
ROM 3:11 ಅರ್ಥಮಾಡಿಕೊಳ್ಳುವವನು ಒಬ್ಬನೂ ಇಲ್ಲ. ದೇವರನ್ನು ಹುಡುಕುವವನು ಒಬ್ಬನೂ ಇಲ್ಲ.
ROM 3:12 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಲಸಕ್ಕೆ ಬಾರದವರಾಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ ಒಬ್ಬನಾದರೂ ಇಲ್ಲ.”
ROM 3:13 “ಅವರ ಗಂಟಲುಗಳು ತೆರೆದ ಸಮಾಧಿಗಳು. ಅವರ ನಾಲಿಗೆಯು ವಂಚನೆಯನ್ನು ನುಡಿಯುತ್ತದೆ.” “ಅವರ ತುಟಿಗಳಲ್ಲಿ ಹಾವಿನ ವಿಷವಿದೆ.”
ROM 3:14 “ಅವರ ಬಾಯಿ ಶಾಪದಿಂದಲೂ ಕಹಿಯಿಂದಲೂ ತುಂಬಿರುತ್ತವೆ.”
ROM 3:15 “ಅವರ ಕಾಲುಗಳು ರಕ್ತಪಾತಕ್ಕೆ ಆತುರಗೊಂಡಿವೆ.
ROM 3:16 ನಾಶ, ಸಂಕಟಗಳು ಅವರ ಮಾರ್ಗಗಳಲ್ಲಿ ಹಿಂಬಾಲಿಸುತ್ತವೆ.
ROM 3:17 ಸಮಾಧಾನದ ಮಾರ್ಗವನ್ನೇ ಅವರು ಅರಿಯರು.”
ROM 3:18 “ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.”
ROM 3:19 ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.
ROM 3:20 ಆದ್ದರಿಂದ ಯಾರೂ ದೇವರ ದೃಷ್ಟಿಯಲ್ಲಿ ನಿಯಮದ ಕೃತ್ಯಗಳಿಂದ ನೀತಿವಂತರೆಂದು ನಿರ್ಣಯಿಸಲಾಗುವುದಿಲ್ಲ. ನಿಯಮದಿಂದ ಪಾಪದ ಪ್ರಜ್ಞೆ ಉಂಟಾಗುತ್ತದಷ್ಟೆ.
ROM 3:21 ಆದರೆ ಈಗ ನಿಯಮವಿಲ್ಲದೆ ದೇವರ ನೀತಿಯು ಪ್ರಕಟವಾಗಿದೆ. ಅದಕ್ಕೆ ನಿಯಮವೂ ಪ್ರವಾದಿಗಳೂ ಸಾಕ್ಷಿಕೊಡುತ್ತಾರೆ.
ROM 3:22 ದೇವರ ನೀತಿಯು ನಂಬುವವರೆಲ್ಲರಿಗೆ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಡುವುದರ ಮೂಲಕ ಲಭಿಸುತ್ತದೆ. ಇಲ್ಲಿ ಯಾವ ಭೇದವೂ ಇರುವುದಿಲ್ಲ.
ROM 3:23 ಏಕೆಂದರೆ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.
ROM 3:24 ಆದರೆ ಕ್ರಿಸ್ತ ಯೇಸುವಿನಲ್ಲಿ ಬಂದ ವಿಮೋಚನೆಯ ಮೂಲಕ ಅವರು ದೇವರ ಕೃಪೆಯಿಂದ ಉಚಿತವಾಗಿ ನೀತಿವಂತರೆಂದು ನಿರ್ಣಯ ಹೊಂದುತ್ತಾರೆ.
ROM 3:25 ಇದನ್ನು ನಂಬಿಕೆಯಿಂದ ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೊರಕುವಂತೆ ದೇವರು ಕ್ರಿಸ್ತ ಯೇಸುವನ್ನು ನಮಗಾಗಿ ಪ್ರಾಯಶ್ಚಿತ್ತ ಬಲಿಯಾಗಿ ಒಪ್ಪಿಸಿದರು. ದೇವರು ಹಿಂದಿನ ಕಾಲದಲ್ಲಿ ಜನರು ಮಾಡಿರುವ ಪಾಪಗಳನ್ನು ದಂಡಿಸದೆ ತಮ್ಮ ನೀತಿಯನ್ನು ತೋರಿಸಿಕೊಡುವುದಕ್ಕಾಗಿಯೂ
ROM 3:26 ಈಗಿನ ಕಾಲದಲ್ಲಿ ದೇವರು ತಮ್ಮ ನೀತಿಯನ್ನು ತೋರ್ಪಡಿಸಲೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕಾಗಿಯೂ ದೀರ್ಘಶಾಂತರಾಗಿದ್ದಾರೆ.
ROM 3:27 ಹಾಗಾದರೆ, ನಾವು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವೆಲ್ಲಿ? ಆಸ್ಪದವೇ ಇಲ್ಲ. ನೀತಿವಂತರೆಂಬ ನಿರ್ಣಯ ನಿಯಮದಿಂದಲೋ? ಕ್ರಿಯೆಗಳಿಂದಲೋ? ಇಲ್ಲ, ಅದು ಇಲ್ಲದೆ ಹೋಯಿತು. ಅದು ನಂಬಿಕೆಯ ನಿಯಮದಿಂದಲೇ.
ROM 3:28 ಏಕೆಂದರೆ ನಿಯಮವನ್ನು ಕೈಕೊಳ್ಳುವುದರಿಂದಲೇ. ನಂಬಿಕೆಯಿಂದಲೇ ಒಬ್ಬ ಮನುಷ್ಯನು ನೀತಿವಂತನೆಂದು ನಿರ್ಣಯ ಹೊಂದುತ್ತಾನೆಂದು ಎಣಿಸುತ್ತೇವೆ.
ROM 3:29 ದೇವರು ಯೆಹೂದ್ಯರಿಗೆ ಮಾತ್ರ ದೇವರೋ? ದೇವರು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿರುವುದಿಲ್ಲವೋ? ಹೌದು, ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾರೆ.
ROM 3:30 ಸುನ್ನತಿಯವರಿಗೂ ಸುನ್ನತಿಯಿಲ್ಲದವರಿಗೂ ಒಂದೇ ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ.
ROM 3:31 ಹಾಗಾದರೆ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ. ಹಾಗಾದರೆ, ನಾವು ನಂಬಿಕೆಯ ಮೂಲಕ ನಿಯಮವನ್ನು ನಿರರ್ಥಕಗೊಳಿಸುತ್ತೇವೋ? ಎಂದಿಗೂ ಇಲ್ಲ. ನಾವು ನಿಯಮವನ್ನು ಸ್ಥಿರಪಡಿಸುತ್ತೇವಷ್ಟೇ.
ROM 4:1 ಹಾಗಾದರೆ ವಂಶಾನುಕ್ರಮವಾಗಿ ನಮ್ಮ ಮೂಲ ಪಿತೃವಾಗಿರುವ ಅಬ್ರಹಾಮನು, ಈ ವಿಷಯದಲ್ಲಿ ಏನು ಕಂಡುಕೊಂಡನೆಂದು ಹೇಳಬೇಕು?
ROM 4:2 ಅಬ್ರಹಾಮನು ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯ ಹೊಂದಿದವನಾಗಿದ್ದರೆ, ದೇವರ ಮುಂದೆ ಹೊಗಳಿಸಿಕೊಳ್ಳಲು ಅವನಿಗೆ ಆಸ್ಪದ ಇರುವುದಿಲ್ಲ.
ROM 4:3 ಏಕೆಂದರೆ ಪವಿತ್ರ ವೇದವು: “ಅಬ್ರಹಾಮನು ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂದು ಹೇಳುತ್ತದೆ.
ROM 4:4 ಕೆಲಸ ಮಾಡಿದವನಿಗೆ ದೊರೆಯುವ ಕೂಲಿಯು, ಉಚಿತ ದಾನವಲ್ಲ ಅದು ಅವನ ದುಡಿದ ಸಂಪಾದನೆ.
ROM 4:5 ಆದರೆ ಯಾರು ಕೃತ್ಯಗಳನ್ನು ಮಾಡದೆ, ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವ ದೇವರಲ್ಲಿ ನಂಬಿಕೆ ಇಡುತ್ತಾರೋ ಅವರ ನಂಬಿಕೆಯೇ ನೀತಿ ಎಂದು ಎಣಿಸಲಾಗುವುದು.
ROM 4:6 ದೇವರು ಯಾರನ್ನು ಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾರೋ ಅವನೇ ಧನ್ಯನು. ಇದರ ಬಗ್ಗೆ ದಾವೀದನು ಹೀಗೆ ಹೇಳುತ್ತಾನೆ:
ROM 4:7 “ಯಾರ ಅಪರಾಧಗಳು ಕ್ಷಮಿಸಲಾಗಿವೆಯೋ, ಯಾರ ಪಾಪಗಳು ಮುಚ್ಚಲಾಗಿವೆಯೋ ಅವರೇ ಧನ್ಯರು.
ROM 4:8 ಯಾರ ಪಾಪಗಳನ್ನು ಕರ್ತನು ಅವರ ಲೆಕ್ಕಕ್ಕೆ ಎಣಿಸುವುದಿಲ್ಲವೋ, ಆ ಮನುಷ್ಯನು ಧನ್ಯನು.”
ROM 4:9 ಈ ಧನ್ಯತೆಯು ಕೇವಲ ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೂ ಇರುತ್ತದೆಯೋ? ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿ ಎಂದು ಎಣಿಸಲಾಗಿತೆಂದು ಹೇಳುತ್ತೇವಲ್ಲಾ.
ROM 4:10 ಅದು ಯಾವಾಗ ಎಣಿಸಲಾಯಿತು? ಅವನಿಗೆ ಸುನ್ನತಿ ಆದ ಬಳಿಕವೋ? ಅಥವಾ ಸುನ್ನತಿಯಾಗುವುದಕ್ಕೆ ಮೊದಲೋ? ಅದು ನಂತರವಲ್ಲ, ಮೊದಲೇ!
ROM 4:11 ಹೌದು, ಸುನ್ನತಿಯಾಗುವ ಮೊದಲೇ ಅಬ್ರಹಾಮನಿಗಿದ್ದ ನಂಬಿಕೆಯಿಂದ ಅವನು ನೀತಿಯ ಮುದ್ರೆಯನ್ನು ಹೊಂದಿದನು. ಹೀಗಿರುವಲ್ಲಿ, ಸುನ್ನತಿಯಿಲ್ಲದೆ ನಂಬುವವರೆಲ್ಲರಿಗೂ ಅಬ್ರಹಾಮನು ತಂದೆಯಾಗಿರುತ್ತಾನೆ. ಹೀಗೆ ಅವರಿಗೆ ನೀತಿಯು ಎಣಿಕೆಯಾಗುವುದು.
ROM 4:12 ನಮ್ಮ ಪಿತೃವಾದ ಅಬ್ರಹಾಮನು ಸುನ್ನತಿ ಹೊಂದಿದವರಿಗೆ ಮಾತ್ರವೇ ತಂದೆಯಾಗಿರದೆ ಅವನಿಗೆ ಸುನ್ನತಿ ಆಗುವ ಮೊದಲು ಇದ್ದ ನಂಬಿಕೆಯ ಹೆಜ್ಜೆಯಲ್ಲಿ ನಡೆಯುವವರಿಗೂ ತಂದೆಯಾಗಿರುತ್ತಾನೆ.
ROM 4:13 ಅಬ್ರಹಾಮನು ಮತ್ತು ಅವನ ಸಂತತಿಯವರು ಜಗತ್ತಿಗೇ ಹಕ್ಕುದಾರರಾಗುವರೆಂಬ ವಾಗ್ದಾನವು ನಿಯಮದಿಂದ ಆದದ್ದಲ್ಲ. ನಂಬಿಕೆಯಿಂದುಂಟಾದ ನೀತಿಯ ಮೂಲಕವೇ ಬರುವಂಥದ್ದಾಗಿದೆ.
ROM 4:14 ನಿಯಮಕ್ಕೆ ಒಳಗಾಗುವವರೇ ಬಾಧ್ಯರಾದರೆ, ನಂಬಿಕೆಗೆ ಬೆಲೆಯಿಲ್ಲದಂತಾಯಿತು. ವಾಗ್ದಾನವೂ ನಿರರ್ಥಕ.
ROM 4:15 ನಿಯಮವು ದೇವರ ಕೋಪವನ್ನು ತರುತ್ತದೆ. ಎಲ್ಲಿ ನಿಯಮವು ಇರುವುದಿಲ್ಲವೋ ಅಲ್ಲಿ ಅದರ ಉಲ್ಲಂಘನೆಯೂ ಇರುವುದಿಲ್ಲ.
ROM 4:16 ಆದ್ದರಿಂದ ಆ ಬಾಧ್ಯತೆಯು ಕೃಪೆಯಿಂದಲೇ, ನಂಬಿಕೆಯ ಮೂಲಕ ದೊರಕುತ್ತದೆ. ಈ ವಾಗ್ದಾನವು ನಿಯಮದ ಸಂತತಿಯವರಿಗೆ ಮಾತ್ರವಲ್ಲ ಅಬ್ರಹಾಮನಲ್ಲಿ ಇದ್ದ ನಂಬಿಕೆ ಇರುವವರ ಸಂತತಿಯವರೆಲ್ಲರಿಗೂ ಶಾಶ್ವತವಾಗಿ ದೊರಕುವುದು. ಏಕೆಂದರೆ ಅವನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ.
ROM 4:17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಒಬ್ಬ ತಂದೆಯನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರ ವೇದದಲ್ಲಿ ಲಿಖಿತವಾಗಿದೆ. ದೇವರು ಸತ್ತವರಿಗೆ ಜೀವಕೊಡುವವರೂ ಇಲ್ಲದವುಗಳನ್ನು ಇರುವವುಗಳೋ ಎಂಬಂತೆ ಕರೆಯುವವರೂ ಆಗಿರುತ್ತಾರೆಂದು ಅಬ್ರಹಾಮನು ದೇವರ ಸನ್ನಿಧಿಯಲ್ಲಿ ನಂಬಿದನು.
ROM 4:18 ಅವನು ತನಗೆ ದೇವರಿಂದ ಹೇಳಲಾದ ನಿರೀಕ್ಷೆಗೆ ಯಾವ ಆಸ್ಪದವು ಇಲ್ಲದಿರುವಾಗಲೂ ನಿರೀಕ್ಷೆಯಿಂದ ನಂಬಿ, “ನಿನ್ನ ಸಂತಾನವು ನಕ್ಷತ್ರಗಳಷ್ಟು ಇರುವುದು,” ಎಂಬ ಹೇಳಿಕೆಯಂತೆ ಅವನು ಅನೇಕ ಜನಾಂಗಗಳಿಗೆ ತಂದೆಯಾದನು.
ROM 4:19 ಅವನು ಆಗಲೇ ಸುಮಾರು ನೂರು ವರ್ಷದವನಾಗಿದ್ದು, ತನ್ನ ದೇಹವು ದುರ್ಬಲವಾಗಿದ್ದರೂ ಹೆಂಡತಿಯಾದ ಸಾರಳಿಗೆ ಗರ್ಭಧರಿಸುವ ಕಾಲ ಮುಗಿದು ಹೋಗಿದ್ದರೂ ನಂಬಿಕೆಯಲ್ಲಿ ಬಲಹೀನನಾಗಲಿಲ್ಲ.
ROM 4:20 ಅವನು ದೇವರು ಮಾಡಿದ ವಾಗ್ದಾನಕ್ಕೆ ವಿರುದ್ಧ ಅಪನಂಬಿಕೆಯಿಂದ ಚಂಚಲಚಿತ್ತನಾಗದೆ, ನಂಬಿಕೆಯಿಂದ ಶಕ್ತಿವಂತನಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಿದನು.
ROM 4:21 ಅವನು ವಾಗ್ದಾನವನ್ನು ನೆರವೇರಿಸಲು ದೇವರು ಶಕ್ತರಾಗಿದ್ದಾರೆಂದು ಪೂರ್ಣ ದೃಢತೆಯುಳ್ಳವನಾದನು.
ROM 4:22 ಆದ್ದರಿಂದ, “ಅದು ಅವನ ಪಾಲಿಗೆ ನೀತಿ ಎಂಬುದಾಗಿ ಎಣಿಸಲಾಯಿತು.”
ROM 4:23 ಹೀಗೆ, “ಅವನ ಪಾಲಿಗೆ ನೀತಿ ಎಂದು ಎಣಿಸಲಾಯಿತು,” ಎಂದು ಬರೆದ ಮಾತು ಅವನಿಗೋಸ್ಕರ ಮಾತ್ರವೇ ಆಗಿರದೆ,
ROM 4:24 ನಮಗೋಸ್ಕರವೂ ಅಂದರೆ, ನಮ್ಮ ಕರ್ತ ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿರುವ ದೇವರನ್ನು ನಂಬುವ ನಮ್ಮ ಪಾಲಿಗೂ ನೀತಿಯೆಂದು ಎಣಿಸಲಾಗುವುದು.
ROM 4:25 ನಮ್ಮ ಪಾಪಗಳ ನಿಮಿತ್ತವಾಗಿ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು ಮತ್ತು ನಮ್ಮನ್ನು ನೀತಿವಂತರನ್ನಾಗಿ ನಿರ್ಣಯಿಸಲು, ಜೀವದಿಂದ ಎಬ್ಬಿಸಲಾಯಿತು.
ROM 5:1 ಹೀಗಿರುವುದರಿಂದ, ವಿಶ್ವಾಸದ ಮೂಲಕ ನೀತಿವಂತರೆಂಬ ನಿರ್ಣಯ ಹೊಂದಿದ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿರುತ್ತದೆ.
ROM 5:2 ಯೇಸುವಿನ ಮೂಲಕವೇ ನಾವು ಈಗ ಈ ಕೃಪೆಯಲ್ಲಿ ವಿಶ್ವಾಸದಿಂದ ಪ್ರವೇಶಮಾಡಿದ್ದೇವೆ. ಈ ಕೃಪೆಯಲ್ಲಿಯೇ ಈಗ ನಿಂತಿದ್ದೇವೆ. ನಾವು ದೇವರ ಮಹಿಮೆಯಲ್ಲಿ ಪಾಲುಗೊಳ್ಳುತ್ತೆವೆಂಬ ನಿರೀಕ್ಷೆಯಲ್ಲಿ ಆನಂದಪಡುತ್ತೇವೆ.
ROM 5:3 ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ
ROM 5:4 ತಾಳ್ಮೆಯು ಸದ್ಗುಣವನ್ನೂ ಸದ್ಗುಣವು ನಿರೀಕ್ಷೆಯನ್ನೂ ಉಂಟು ಮಾಡುತ್ತದೆಂದು ಬಲ್ಲೆವು.
ROM 5:5 ಈ ನಿರೀಕ್ಷೆಯು ನಮ್ಮನ್ನು ನಿರಾಶೆ ಪಡಿಸುವುದಿಲ್ಲ. ಏಕೆಂದರೆ ದೇವರು ನಮಗೆ ಅನುಗ್ರಹಿಸಿರುವ ಪವಿತ್ರಾತ್ಮ ಮೂಲಕ ನಮ್ಮ ಹೃದಯಗಳಲ್ಲಿ ತಮ್ಮ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾರೆ.
ROM 5:6 ನಾವು ಇನ್ನೂ ಬಲಹೀನರಾಗಿದ್ದಾಗಲೇ, ಸೂಕ್ತ ಸಮಯದಲ್ಲಿ ಕ್ರಿಸ್ತ ಯೇಸು ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟರು.
ROM 5:7 ನೀತಿವಂತನಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ಒಬ್ಬ ಸತ್ಪುರುಷನಿಗಾಗಿ ಯಾರಾದರೂ ಪ್ರಾಣಕೊಡುವುದಕ್ಕೆ ಧೈರ್ಯ ಮಾಡಬಹುದು.
ROM 5:8 ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
ROM 5:9 ಈಗ ನಾವು ಕ್ರಿಸ್ತ ಯೇಸುವಿನ ರಕ್ತದಿಂದ ನೀತಿವಂತರೆಂದು ನಿರ್ಣಯ ಹೊಂದಿರುವುದರಿಂದ, ಕ್ರಿಸ್ತ ಯೇಸುವಿನ ಮೂಲಕವಾಗಿಯೇ ದೇವರ ಕೋಪದಿಂದ ರಕ್ಷಿಸಲಾಗುವುದು ಇನ್ನೂ ಖಂಡಿತವಲ್ಲವೆ?
ROM 5:10 ನಾವು ದೇವರ ಶತ್ರುಗಳಾಗಿದ್ದಾಗಲೇ ಅವರು ನಮ್ಮನ್ನು ತಮ್ಮ ಪುತ್ರನ ಮರಣದ ಮೂಲಕ ಸಂಧಾನ ಮಾಡಿಕೊಂಡಿರುವುದಾದರೆ, ಕ್ರಿಸ್ತ ಯೇಸುವಿನ ಜೀವದ ಮೂಲಕ ಎಷ್ಟೋ ಹೆಚ್ಚಾಗಿ ನಾವು ರಕ್ಷಿಸುವುದು ಇನ್ನೂ ಖಚಿತವಲ್ಲವೆ?
ROM 5:11 ಇಷ್ಟು ಮಾತ್ರವೇ ಅಲ್ಲ, ಈಗ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಾವು ದೇವರೊಂದಿಗೆ ಮಿತ್ರರಾಗಿ, ಯೇಸುವಿನ ಮೂಲಕವೇ ದೇವರಲ್ಲಿ ಉಲ್ಲಾಸ ಪಡುತ್ತೇವೆ.
ROM 5:12 ಆದ್ದರಿಂದ, ಒಬ್ಬ ಮನುಷ್ಯನ ಮೂಲಕ ಪಾಪವೂ ಪಾಪದ ಮೂಲಕ ಮರಣವೂ ಲೋಕದೊಳಗೆ ಪ್ರವೇಶಿಸಿದ ಹಾಗೆಯೇ ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.
ROM 5:13 ನಿಯಮವು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿ ಇತ್ತು. ಆದರೆ ನಿಯಮವು ಇಲ್ಲದಿದ್ದಾಗ ಪಾಪವು ಲೆಕ್ಕಕ್ಕೆ ಬರುವುದಿಲ್ಲ.
ROM 5:14 ಆದರೂ ಮರಣವು ಆದಾಮನಿಂದ ಮೋಶೆಯವರೆಗೂ ದೊರೆತನ ಮಾಡುತ್ತಿತ್ತು. ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾಗಿ ಪಾಪಮಾಡಿದವರ ಮೇಲೆಯೂ ಅದು ದೊರೆತನ ಮಾಡುತ್ತಿತ್ತು. ಆದಾಮನು ಮುಂದೆ ಬರಲಿಕ್ಕಿದ್ದ ಒಬ್ಬಾತನಿಗೆ ಸಂಕೇತವಾಗಿದ್ದಾನೆ.
ROM 5:15 ಆದರೆ ಆ ಅಪರಾಧಕ್ಕೂ ದೇವರ ವರಕ್ಕೂ ಬಹಳ ವ್ಯತ್ಯಾಸವಿದೆ. ಹೇಗೆಂದರೆ, ಆದಾಮನ ಅಪರಾಧದಿಂದ ಎಲ್ಲ ಮನುಷ್ಯರೂ ಸತ್ತರು. ಕ್ರಿಸ್ತ ಯೇಸುವೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದ ಸಿಕ್ಕುವ ದೇವರ ಕೃಪೆಯ ವರವು ಅನೇಕರಿಗೆ ಇನ್ನೂ ಹೆಚ್ಚಾಗಿ ಸಿಕ್ಕುವುದು ನಿಶ್ಚಯವಲ್ಲವೇ?
ROM 5:16 ಇದಲ್ಲದೆ ಪಾಪಮಾಡಿದ ಒಬ್ಬನಿಂದಲೇ ದುಷ್ಪಲ ಬಂದಂತೆ ಈ ವರವು ಬರಲಿಲ್ಲ. ಹೇಗೆಂದರೆ, ಒಬ್ಬನೇ ಮನುಷ್ಯನ ಪಾಪದ ದೆಸೆಯಿಂದ ಸಾಯಬೇಕೆಂಬ ದಂಡನಾತೀರ್ಪು ಉಂಟಾಯಿತು. ಆದರೆ ದೇವರ ಕೃಪೆಯು ಅನೇಕರ ಅಪರಾಧಗಳಿಂದ ಅವರನ್ನು ನೀತಿವಂತರೆಂದು ನಿರ್ಣಯಿಸುವುದಾಗಿದೆ.
ROM 5:17 ಒಬ್ಬ ಮನುಷ್ಯನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ಮುಖಾಂತರ ಮರಣವು ಆಳುವುದಾದರೆ, ದೇವರ ಧಾರಾಳವಾದ ಕೃಪೆಯನ್ನೂ ನೀತಿಯ ವರವನ್ನೂ ಹೊಂದಿದವರಾಗಿ ಕ್ರಿಸ್ತ ಯೇಸುವೆಂಬ ಒಬ್ಬಾತನ ಮೂಲಕ ಜೀವದಲ್ಲಿ ಆಳುವುದು ಇನ್ನೂ ಹೆಚ್ಚಾದದ್ದಲ್ಲವೆ!
ROM 5:18 ಹೀಗೆ, ಒಂದು ಅಪರಾಧದ ನಿಮಿತ್ತ ಎಲ್ಲಾ ಜನರ ಮೇಲೆ ದಂಡನಾತೀರ್ಪು ಬಂದಂತೆಯೇ ಒಂದು ನೀತಿಯ ಕೃತ್ಯದಿಂದ ಎಲ್ಲಾ ಜನರಿಗೂ ಜೀವವನ್ನುಂಟು ಮಾಡುವ ನೀತಿಕರಣವು ಉಂಟಾಯಿತು.
ROM 5:19 ಒಬ್ಬ ಮನುಷ್ಯನ ಅವಿಧೇಯತೆಯಿಂದಾಗಿ ಅನೇಕರು, ಪಾಪಿಗಳು ಆದಂತೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದಾಗಿ ಅನೇಕರು ನೀತಿವಂತರಾಗುವರು.
ROM 5:20 ಅಪರಾಧವು ಹೆಚ್ಚುವಂತೆ ನಿಯಮವು ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗ, ಕೃಪೆಯು ಇನ್ನೂ ಹೆಚ್ಚಾಯಿತು.
ROM 5:21 ಹೀಗೆ ಪಾಪವು ಮರಣದ ಮೂಲಕ ಆಳಿದಂತೆಯೇ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಿತ್ಯಜೀವವನ್ನುಂಟು ಮಾಡಲು ಕೃಪೆಯು ನೀತಿಯ ಮೂಲಕ ಆಳುವುದು.
ROM 6:1 ಹಾಗಾದರೆ ನಾವು ಏನು ಹೇಳೋಣ? ಕೃಪೆಯು ಹೆಚ್ಚಾಗಲಿ ಎಂದು ನಾವು ಪಾಪದಲ್ಲಿ ಮುಂದುವರಿಯೋಣವೆ?
ROM 6:2 ಎಂದಿಗೂ ಹಾಗಾಗದಿರಲಿ! ನಾವು ಪಾಪದ ಪಾಲಿಗೆ ಸತ್ತೆವು, ನಾವು ಇನ್ನೂ ಪಾಪದಲ್ಲಿ ಜೀವಿಸುವುದು ಹೇಗೆ?
ROM 6:3 ಅಥವಾ ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ನಾವು ಅವರ ಮರಣದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುತ್ತೇವೆಂಬುದು ನಿಮಗೆ ತಿಳಿಯದೋ?
ROM 6:4 ಹೀಗಿರುವಲ್ಲಿ ಯೇಸುವಿರೊಂದಿಗೆ ದೀಕ್ಷಾಸ್ನಾನದ ಮೂಲಕ ಅವರ ಮರಣದಲ್ಲಿ ಹೂಣಲಾದೆವು. ಆದ್ದರಿಂದ ತಂದೆಯ ಮಹಿಮೆಯ ಮೂಲಕ ಕ್ರಿಸ್ತ ಯೇಸು ಸತ್ತವರೊಳಗಿಂದ ಎಬ್ಬಿಸಲಾದಂತೆಯೇ ನಾವು ಹೊಸ ಜೀವವನ್ನು ಜೀವಿಸಬೇಕು.
ROM 6:5 ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು.
ROM 6:6 ನಮ್ಮ ಪಾಪದ ಶರೀರವು ನಾಶವಾಗಿ ನಾವು ಇನ್ನು ಮುಂದೆ ಎಂದಿಗೂ ಪಾಪಕ್ಕೆ ಗುಲಾಮರಾಗದಂತೆ, ನಮ್ಮ ಹಳೆಯ ಮನುಷ್ಯ ಸ್ವಭಾವ ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಯಿತು ಎಂದು ನಾವು ಬಲ್ಲೆವು.
ROM 6:7 ಮರಣ ಹೊಂದಿರುವ ಯಾರೇ ಆದರೂ ಪಾಪದಿಂದ ಮುಕ್ತರಾಗಿರುತ್ತಾರೆ.
ROM 6:8 ನಾವು ಈಗ ಕ್ರಿಸ್ತ ಯೇಸುವಿನೊಂದಿಗೆ ಸತ್ತಿರುವುದಾದರೆ, ಅವರೊಂದಿಗೆ ಬದುಕುವೆವು ಎಂದು ನಂಬುತ್ತೇವೆ.
ROM 6:9 ಕ್ರಿಸ್ತ ಯೇಸು ಮರಣದಿಂದ ಜೀವಿತರಾಗಿ ಎದ್ದು ಬಂದದ್ದರಿಂದ ಅವರು ಪುನಃ ಸಾಯಲಾರರೆಂದು ಬಲ್ಲೆವು. ಇನ್ನು ಮುಂದೆ ಅವರ ಮೇಲೆ ಮರಣಕ್ಕೆ ಅಧಿಕಾರವಿಲ್ಲ.
ROM 6:10 ಕ್ರಿಸ್ತ ಯೇಸು ಪಾಪದ ಪಾಲಿಗೆ ಸತ್ತದ್ದೂ ಒಂದೇ ಸಾರಿಯಾಗಿರುತ್ತದೆ. ಆದರೆ, ಅವರು ಜೀವಿಸುವ ಜೀವಿತವು ದೇವರಿಗಾಗಿಯೇ.
ROM 6:11 ಅದೇ ರೀತಿಯಲ್ಲಿ, ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ಕ್ರಿಸ್ತ ಯೇಸುವಿನಲ್ಲಿ ದೇವರಿಗಾಗಿ ಜೀವಿಸುವವರೆಂದೂ ಎಣಿಸಿಕೊಳ್ಳಿರಿ.
ROM 6:12 ಆದ್ದರಿಂದ ನೀವು ದೇಹದ ಆಶೆಗಳಿಗೆ ಒಳಗಾಗದಂತೆ ನಿಮ್ಮ ನಶ್ವರ ದೇಹಗಳಲ್ಲಿ ಪಾಪವು ಅಧಿಕಾರ ನಡೆಸಲು ಬಿಡಬೇಡಿರಿ.
ROM 6:13 ನಿಮ್ಮ ದೇಹದ ಅವಯವಗಳನ್ನು ಅನೀತಿಯನ್ನು ನಡೆಸುವ ಸಾಧನಗಳಾಗುವಂತೆ ಪಾಪಕ್ಕೆ ಒಪ್ಪಿಸಬೇಡಿರಿ. ಆದರೆ ಅದರ ಬದಲಾಗಿ ಮರಣದಿಂದ ಜೀವಕ್ಕೆ ಬಂದವರಂತೆ ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಿರಿ. ನಿಮ್ಮ ದೇಹದ ಅವಯವಗಳನ್ನು ನೀತಿಯ ಸಾಧನಗಳಾಗಿರುವುದಕ್ಕಾಗಿ ದೇವರಿಗೆ ಸಮರ್ಪಿಸಿರಿ.
ROM 6:14 ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ಏಕೆಂದರೆ ನೀವು ನಿಯಮಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
ROM 6:15 ಹಾಗಾದರೆ ಏನು? ನಾವು ನಿಯಮಕ್ಕೆ ಅಧೀನರಾಗಿರದೆ ಕೃಪೆಗೆ ಅಧೀನರಾಗಿರುತ್ತೇವೆಂದು ಪಾಪ ಮಾಡಬಹುದೋ? ಎಂದಿಗೂ ಇಲ್ಲ!
ROM 6:16 ನೀವು ಯಾರಾದರೊಬ್ಬರಿಗೆ ವಿಧೇಯರಾಗಿರುವುದಕ್ಕಾಗಿ ಗುಲಾಮರಾಗಿ ನಿಮ್ಮನ್ನು ಒಪ್ಪಿಸಿಕೊಟ್ಟಾಗ, ನೀವು ಅವನಿಗೆ ವಿಧೇಯರಾದ ಗುಲಾಮರಾಗುತ್ತೀರಿ ಎಂಬುದು ನಿಮಗೆ ತಿಳಿಯದೋ? ಮರಣಕ್ಕೆ ನಡೆಸುವ ಪಾಪಕ್ಕೆ ನೀವು ಗುಲಾಮರಾಗಿರಬಹುದು ಇಲ್ಲವೆ ನೀತಿಗೆ ನಡೆಸುವ ವಿಧೇಯತೆಗೆ ಒಳಪಟ್ಟಿರಬಹುದು.
ROM 6:17 ಆದರೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಒಪ್ಪಿಸಿದ ಬೋಧನೆಗೆ ಹೃದಯದಿಂದ ವಿಧೇಯರಾದುದ್ದಕ್ಕಾಗಿ, ದೇವರಿಗೆ ಸ್ತೋತ್ರವಾಗಲಿ.
ROM 6:18 ಪಾಪದಿಂದ ಬಿಡುಗಡೆಹೊಂದಿ ನೀತಿಗೆ ಗುಲಾಮರಾಗಿದ್ದೀರಿ.
ROM 6:19 ನೀವು ಶರೀರಭಾವದಲ್ಲಿ ಬಲಹೀನರಾಗಿರುವುದರಿಂದ ನಾನು ಮಾನವ ಮಾತುಗಳಲ್ಲಿ ಇದನ್ನು ಹೇಳುತ್ತಿದ್ದೇನೆ. ನಿಮ್ಮ ದೇಹದ ಅವಯವಗಳನ್ನು ಅಶುದ್ಧತೆಗೂ ಅಧರ್ಮಕ್ಕೂ ದಾಸತ್ವದಲ್ಲಿ ಒಪ್ಪಿಸಿ ಕೊಡುತ್ತಿದ್ದಂತೆಯೇ ನೀವು ಈಗ ಅವುಗಳನ್ನು ಪರಿಶುದ್ಧತೆಗೆ ನಡೆಸುವ ನೀತಿಗೆ ಗುಲಾಮರಾಗಿ ಒಪ್ಪಿಸಿರಿ.
ROM 6:20 ನೀವು ಪಾಪಕ್ಕೆ ಗುಲಾಮರಾಗಿದ್ದಾಗ ನೀತಿಗೆ ಅಧೀನರಾಗಿರಲಿಲ್ಲ.
ROM 6:21 ಆದ್ದರಿಂದ ಈಗ ನೀವು ನಾಚಿಕೆ ಪಟ್ಟುಕೊಳ್ಳುತ್ತಿರುವ ಸಂಗತಿಗಳಿಂದ ನಿಮಗಾದ ಲಾಭವೇನು? ಅವು ಮರಣದಲ್ಲಿ ಸಮಾಪ್ತವಾಗುತ್ತವೆ!
ROM 6:22 ಆದರೆ ಈಗ ನೀವು ಪಾಪದಿಂದ ಬಿಡುಗಡೆ ಹೊಂದಿದವರಾಗಿ ದೇವರಿಗೆ ಗುಲಾಮರಾಗಿರುವುದರಿಂದ, ಪವಿತ್ರವಾಗಿರುವುದೇ ನಿಮಗೆ ದೊರಕುವ ಫಲವು. ಕಡೆಗೆ ದೊರೆಯುವಂಥದು ನಿತ್ಯಜೀವವಾಗಿರುತ್ತದೆ.
ROM 6:23 ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ.
ROM 7:1 ಪ್ರಿಯರೇ, ನಿಯಮವನ್ನು ತಿಳಿದವರಿಗೆ ನಾನು ಹೇಳುವುದೇನೆಂದರೆ, ಒಬ್ಬ ಮನುಷ್ಯನು ಜೀವದಿಂದಿರುವ ತನಕ ಮಾತ್ರ ನಿಯಮಕ್ಕೆ ಅವನ ಮೇಲೆ ಅಧಿಕಾರ ಇರುತ್ತದೆಂದು ನೀವು ಬಲ್ಲಿರಿ.
ROM 7:2 ಒಬ್ಬ ಮದುವೆಯಾದ ಹೆಣ್ಣು ಮಗಳು ಕಾನೂನಿಗನುಸಾರವಾಗಿ ಅವಳ ಪತಿಯು ಜೀವದಿಂದಿರುವ ತನಕ ಮಾತ್ರ ಅವನಿಗೆ ಬದ್ಧಳಾಗಿರುತ್ತಾಳೆ. ಆದರೆ ಪತಿಯು ಸತ್ತರೆ ಆಕೆಯು ಮದುವೆಯ ಕಾನೂನಿನಿಂದ ಬಿಡುಗಡೆ ಹೊಂದಿದವಳಾಗಿರುತ್ತಾಳೆ.
ROM 7:3 ಹೀಗಿರುವಾಗ, ಅವಳ ಪತಿಯು ಜೀವಂತನಾಗಿರುವಾಗ ಆಕೆಯು ಇನ್ನೊಬ್ಬನನ್ನು ಮದುವೆಯಾದರೆ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವಳು. ಆದರೆ ಪತಿಯು ಸತ್ತರೆ, ಆಕೆಯು ಬೇರೊಬ್ಬನನ್ನು ಮದುವೆಯಾದರೂ ಆ ಕಾನೂನಿನಿಂದ ಅವಳು ಬಿಡುಗಡೆ ಆಗಿರಲಾಗಿ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವುದಿಲ್ಲ.
ROM 7:4 ಆದ್ದರಿಂದ, ನನ್ನ ಪ್ರಿಯರೇ, ನೀವು ದೇವರಿಗೆ ಫಲಕೊಡುವವರಾಗಬೇಕೆಂದು ಸತ್ತವರೊಳಗಿಂದ ಎದ್ದುಬಂದಾತನಿಗೆ ಸೇರಿದವರಾಗಲು ಕ್ರಿಸ್ತ ಯೇಸುವಿನ ದೇಹದ ಮೂಲಕ ನಿಯಮದ ಪಾಲಿಗೆ ಸತ್ತಿರಿ.
ROM 7:5 ಮಾಂಸಭಾವಕ್ಕನುಸಾರವಾಗಿ ನಾವು ಜೀವಿಸುತ್ತಿದ್ದಾಗ, ನಿಯಮದಿಂದ ಉತ್ತೇಜನಗೊಂಡ ಪಾಪದ ದುರಾಶೆಗಳು ನಮ್ಮ ದೇಹದಲ್ಲಿ ಕಾರ್ಯ ನಡೆಸುತ್ತಿದ್ದವು. ಆದ್ದರಿಂದ ನಾವು ಮರಣಕ್ಕೆ ಫಲಗಳನ್ನು ಹುಟ್ಟಿಸುತ್ತಿದ್ದೆವು.
ROM 7:6 ಈಗಲಾದರೋ ಒಂದು ಕಾಲದಲ್ಲಿ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೋ ಅದಕ್ಕೆ ಸತ್ತವರಾಗಿದ್ದು ನಿಯಮದಿಂದ ಬಿಡುಗಡೆ ಹೊಂದಿದವರಾಗಿರುತ್ತೇವೆ. ಹೀಗೆ ನಾವು ಲಿಖಿತವಾದ ಹಳೆಯ ನಿಯಮದಂತೆ ನಡೆಯದೆ ಆತ್ಮದಿಂದ ನವಜೀವನದಲ್ಲಿ ನಡೆಯುವರಾಗಿದ್ದೇವೆ.
ROM 7:7 ಹಾಗಾದರೆ ನಾವು ಏನು ಹೇಳೋಣ? ನಿಯಮವೇ ಪಾಪವಾಗಿದೆಯೋ? ಎಂದಿಗೂ ಇಲ್ಲ. ಆದರೂ ನಿಯಮವನ್ನು ಬಿಟ್ಟು ಬೇರಾವುದರ ಮೂಲಕವೂ ಪಾಪವೆಂದರೆ ಏನೆಂದು ನನಗೆ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ನಿಯಮವು, “ದುರಾಶೆ ಪಡಬೇಡ,” ಎಂದು ಹೇಳದೆ ಇರುತ್ತಿದ್ದರೆ ದುರಾಶೆ ಎಂದರೆ ಏನೆಂದು ನಾನು ತಿಳಿಯಲು ಸಾಧ್ಯವಿರಲಿಲ್ಲ.
ROM 7:8 ಆದರೆ ಪಾಪವು, ಆ ಆಜ್ಞೆಯಿಂದ ಅನುಕೂಲ ಹೊಂದಿ ನನ್ನಲ್ಲಿ ಎಲ್ಲಾ ವಿಧದ ಆಶೆಗಳನ್ನು ಉಂಟುಮಾಡಿತು. ಏಕೆಂದರೆ ನಿಯಮವಿಲ್ಲದೆ ಪಾಪವು ಸತ್ತದ್ದಾಗಿರುತ್ತದೆ.
ROM 7:9 ಒಮ್ಮೆ ನಾನು ನಿಯಮವಿಲ್ಲದೆ ಜೀವಿಸುತ್ತಿದ್ದೆನು. ಆದರೆ ಯಾವಾಗ ಆಜ್ಞೆಯು ಬಂದಿತೋ ಆಗ ಪಾಪವು ಜೀವಂತವಾಯಿತು, ನಾನು ಸತ್ತವನಾದೆನು.
ROM 7:10 ಜೀವವನ್ನು ತರಲಿಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣವನ್ನು ಉಂಟುಮಾಡುವುದಾಯಿತು ಎಂದು ಕಂಡುಕೊಂಡೆನು.
ROM 7:11 ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ, ಅದೇ ನನ್ನನ್ನು ಮರಣಕ್ಕೆ ಒಳಪಡಿಸಿತು.
ROM 7:12 ಹೀಗಿರಲಾಗಿ, ನಿಯಮವು ಪವಿತ್ರವಾದದ್ದು. ಆಜ್ಞೆಯು ಪವಿತ್ರವೂ ನ್ಯಾಯವೂ ಒಳ್ಳೆಯದೂ ಆಗಿರುತ್ತದೆ.
ROM 7:13 ಹಾಗಾದರೆ ಒಳ್ಳೆಯದಾಗಿರುವ ನಿಯಮವೇ ನನಗೆ ಮರಣಕ್ಕೆ ಕಾರಣವಾಯಿತೋ? ಎಂದಿಗೂ ಇಲ್ಲ! ಆದರೂ ಪಾಪವು ಪಾಪವೇ ಎಂದು ಕಾಣುವಂತೆ ಒಳ್ಳೆಯದಾಗಿರುವ ನಿಯಮದ ಮೂಲಕವೇ ಪಾಪವು ನನ್ನಲ್ಲಿ ಮರಣವು ಉಂಟಾಗುವಂತೆ ಮಾಡಿತು. ಈ ರೀತಿಯಾಗಿ ಆಜ್ಞೆಯ ಮೂಲಕ ಪಾಪವು ಘೋರವಾದದ್ದೇ ಎಂದು ಕಂಡುಬರಲು ಸಾಧ್ಯವಾಯಿತು.
ROM 7:14 ನಿಯಮವು ಆತ್ಮಿಕವಾದದ್ದೆಂದು ಬಲ್ಲೆವು. ಆದರೆ ನರಮಾನವನಾದ ನಾನು ಪಾಪಕ್ಕೆ ಗುಲಾಮನಂತೆ ಮಾರಿಕೊಂಡವನಾಗಿದ್ದೇನೆ.
ROM 7:15 ನಾನು ಏನು ಮಾಡುತ್ತೇನೆ ಎಂಬುದನ್ನು ತಿಳಿಯದವನಾಗಿದ್ದೇನೆ. ಏಕೆಂದರೆ ನಾನು ಮಾಡಬೇಕೆಂದು ಬಯಸುವುದನ್ನು ಮಾಡದೆ, ಯಾವುದನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ.
ROM 7:16 ನಾನು ಮಾಡಲು ಬಯಸದಿರುವುದನ್ನು ಮಾಡುವುದಾದರೆ, ನಿಯಮವು ಒಳ್ಳೆಯದೆಂದು ಒಪ್ಪುತ್ತೇನೆ.
ROM 7:17 ಹೀಗಿರಲಾಗಿ ನಾನು ಬಯಸದಿರುವುದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಸಿರುವ ಪಾಪವೇ ಅದನ್ನು ಮಾಡುತ್ತದೆ.
ROM 7:18 ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲ ಎಂದು ಬಲ್ಲೆನು. ಏಕೆಂದರೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸೇನೋ ನನ್ನಲ್ಲಿ ಇದೆ, ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು.
ROM 7:19 ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಮಾಡಲು ಬಯಸದೆ ಇರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ.
ROM 7:20 ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡುತ್ತಿರುವುದಾದರೆ ಅದನ್ನು ಮಾಡಿದವನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತಿದೆ.
ROM 7:21 ಒಳ್ಳೆಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ.
ROM 7:22 ಏಕೆಂದರೆ ನಾನು ಹೃದಯಪೂರ್ವಕವಾಗಿ ದೇವರ ನಿಯಮದಲ್ಲಿ ಹರ್ಷಗೊಳ್ಳುವವನಾಗಿದ್ದೇನೆ.
ROM 7:23 ಆದರೆ ನನ್ನ ಅವಯವಗಳಲ್ಲಿ ಬೇರೊಂದು ನಿಯಮವನ್ನು ಕಾಣುತ್ತಿದ್ದೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಹೋರಾಡುತ್ತಾ ನನ್ನ ಅವಯವಗಳಲ್ಲಿ ಸೇರಿಕೊಂಡಿರುವ ಪಾಪದ ನಿಯಮಕ್ಕೆ ಸೆರೆಯವನನ್ನಾಗಿ ಮಾಡುತ್ತಿದೆ.
ROM 7:24 ನಾನು ಎಂಥಾ ದುರವಸ್ಥೆಯುಳ್ಳ ಮನುಷ್ಯನು! ನನ್ನನ್ನು ಈ ಮರಣಕರವಾದ ದೇಹದಿಂದ ಯಾರು ಬಿಡಿಸಬಲ್ಲರು?
ROM 7:25 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ದೇವರಿಗೆ ಸ್ತೋತ್ರ! ಏಕೆಂದರೆ ನನ್ನಷ್ಟಕ್ಕೆ ನಾನೇ ನನ್ನ ಮನಸ್ಸಿನಲ್ಲಿ ದೇವರ ನಿಯಮಕ್ಕೆ ಗುಲಾಮನಾಗಿಯೂ ನನ್ನ ಮಾಂಸಭಾವದ ದೇಹದಲ್ಲಿ ಪಾಪದ ನಿಯಮಕ್ಕೆ ಗುಲಾಮನಾಗಿಯೂ ಇದ್ದೇನೆ.
ROM 8:1 ಆದ್ದರಿಂದ, ಈಗ ಕ್ರಿಸ್ತ ಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ.
ROM 8:2 ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಪವಿತ್ರಾತ್ಮರ ಜೀವದ ನಿಯಮವು ನಿನ್ನನ್ನು ಪಾಪದ ನಿಯಮದಿಂದಲೂ ಮರಣದ ನಿಯಮದಿಂದಲೂ ಬಿಡುಗಡೆ ಮಾಡಿದೆ.
ROM 8:3 ನಿಯಮವು ನಮ್ಮ ಮಾಂಸಭಾವದ ಬಲಹೀನತೆಯಿಂದ ಯಾವುದನ್ನು ಮಾಡಲಿಕ್ಕೆ ಸಾಧ್ಯವಾಗದೆ ಹೋಯಿತೋ ಅದನ್ನು ದೇವರೇ ಮಾಡಿದರು. ಪಾಪ ಪರಿಹಾರಕ್ಕಾಗಿ ದೇವರು ತಮ್ಮ ಸ್ವಂತ ಪುತ್ರನನ್ನು ಪಾಪಮಯವಾದ ನರಮಾಂಸದ ರೂಪದಲ್ಲಿ ಕಳುಹಿಸಿಕೊಟ್ಟರು. ಆ ನರಮಾಂಸದಲ್ಲಿಯೇ ಪಾಪಕ್ಕೆ ದಂಡನಾತೀರ್ಪು ಮಾಡಿ ಸಾಧ್ಯಗೊಳಿಸಿದರು.
ROM 8:4 ಹೀಗೆ ನಾವು ಮಾಂಸಭಾವದವರಾಗಿ ಬಾಳದೆ ಪವಿತ್ರಾತ್ಮರಿಗನುಸಾರವಾಗಿ ಬಾಳುವ ನಮ್ಮಲ್ಲಿ ನಿಯಮದ ಅಗತ್ಯವು ನೆರವೇರುವುದಕ್ಕೆ ಆಸ್ಪದವಾಯಿತು.
ROM 8:5 ಮಾಂಸಭಾವದವರಾಗಿ ಬಾಳುವವರ ಮನಸ್ಸು ಅದಕ್ಕೆ ಸಂಬಂಧಪಟ್ಟವುಗಳ ಮೇಲಿರುತ್ತದೆ. ಆದರೆ ಪವಿತ್ರಾತ್ಮ ದೇವರಿಗೆ ಅನುಸಾರವಾಗಿ ಬಾಳುವವರ ಮನಸ್ಸು ಪವಿತ್ರಾತ್ಮ ದೇವರಿಗೆ ಸಂಬಂಧಪಟ್ಟವುಗಳ ಮೇಲಿರುತ್ತದೆ.
ROM 8:6 ಮಾಂಸಭಾವದ ಮನಸ್ಸು ಮರಣಕರವಾದದ್ದು, ಪವಿತ್ರಾತ್ಮ ದೇವರ ಮೇಲೆ ಮನಸ್ಸಿಡುವುದು ಜೀವವೂ ಸಮಾಧಾನವೂ ಆಗಿರುತ್ತದೆ.
ROM 8:7 ಮಾಂಸಭಾವದ ಮನಸ್ಸು ದೇವರಿಗೆ ಶತ್ರುವಾಗಿರುತ್ತದೆ. ಏಕೆಂದರೆ, ಅದು ದೇವರ ನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ.
ROM 8:8 ಮಾಂಸಭಾವಕ್ಕೆ ಒಳಗಾದವರು ದೇವರನ್ನು ಮೆಚ್ಚಿಸಲಾರರು.
ROM 8:9 ಆದರೆ ದೇವರ ಆತ್ಮವು ನಿಮ್ಮಲ್ಲಿ ಇರುವುದು ನಿಜವಾಗಿದ್ದರೆ ನೀವು ಮಾಂಸಭಾವಾಧೀನರಾಗಿರದೆ ದೇವರ ಆತ್ಮನಿಗೆ ಅಧೀನರಾಗಿದ್ದೀರಿ. ಕ್ರಿಸ್ತ ಯೇಸುವಿನ ಆತ್ಮ ಇಲ್ಲದವನು ಕ್ರಿಸ್ತ ಯೇಸುವಿಗೆ ಸೇರಿದವನಲ್ಲ.
ROM 8:10 ಆದರೆ ಕ್ರಿಸ್ತ ಯೇಸು ನಿಮ್ಮಲ್ಲಿ ಇರುವುದಾದರೆ, ನಿಮ್ಮ ಶರೀರವು ಪಾಪದ ನಿಮಿತ್ತ ಸತ್ತಿದ್ದರೂ ನಿಮ್ಮ ಆತ್ಮವು ನೀತಿಯ ನಿಮಿತ್ತ ಜೀವಿಸುತ್ತದೆ.
ROM 8:11 ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮವು ನಿಮ್ಮಲ್ಲಿ ವಾಸಮಾಡುತ್ತಿರುವುದಾದರೆ, ಕ್ರಿಸ್ತ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ವಾಸಿಸುವ ಪವಿತ್ರಾತ್ಮ ದೇವರ ಮೂಲಕವೇ ನಿಮ್ಮ ಸಾಯುತ್ತಿರುವ ದೇಹಗಳಿಗೂ ಜೀವವನ್ನು ಕೊಡುವರು.
ROM 8:12 ಆದ್ದರಿಂದ, ಪ್ರಿಯರೇ, ನಾವು ಮಾಂಸಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬದುಕಲು ಋಣಸ್ಥರಲ್ಲ.
ROM 8:13 ಏಕೆಂದರೆ, ನೀವು ಮಾಂಸಭಾವಕ್ಕೆ ಅನುಸಾರವಾಗಿ ಜೀವಿಸಿದರೆ, ಸಾಯುವಿರಿ. ಆದರೆ ಪವಿತ್ರಾತ್ಮ ದೇವರಿಂದ ದೈಹಿಕ ದುರಭ್ಯಾಸಗಳನ್ನು ಸಾಯಿಸಿದರೆ, ನೀವು ಬದುಕುವಿರಿ.
ROM 8:14 ಯಾರು ದೇವರ ಆತ್ಮರಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಪುತ್ರರಾಗಿರುತ್ತಾರೆ.
ROM 8:15 ನಿಮ್ಮನ್ನು ಪುನಃ ಭಯಕ್ಕೆ ದಾಸರನ್ನಾಗಿ ಮಾಡುವ ಆತ್ಮನನ್ನು ನಾವು ಹೊಂದದೆ, ಪುತ್ರತ್ವದ ಪವಿತ್ರಾತ್ಮನನ್ನೇ ಹೊಂದಿದವರಾಗಿ ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುತ್ತೇವೆ.
ROM 8:16 ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರ ಆತ್ಮರು ನಮ್ಮ ಆತ್ಮದೊಂದಿಗೆ ಸಾಕ್ಷಿಕೊಡುತ್ತಾರೆ.
ROM 8:17 ನಾವು ಈಗ ಮಕ್ಕಳಾಗಿರುವುದಾದರೆ, ಬಾಧ್ಯರಾಗಿರುತ್ತೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತ ಯೇಸುವಿನೊಂದಿಗೆ ಸಹಬಾಧ್ಯರಾಗಿದ್ದೇವೆ. ನಾವು ಕ್ರಿಸ್ತ ಯೇಸುವಿನ ಶ್ರಮೆಗಳಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದರೆ, ಅವರ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ROM 8:18 ನಮಗೆ ಮುಂದೆ ಪ್ರಕಟವಾಗಲಿರುವ ಮಹಿಮೆಯೊಂದಿಗೆ ಹೋಲಿಸುವಾಗ ಈಗಿನ ಸಂಕಟಗಳು ಅಲ್ಪವೆಂದು ನಾನು ಎಣಿಸುತ್ತೇನೆ.
ROM 8:19 ದೇವರ ಮಕ್ಕಳ ಪ್ರತ್ಯಕ್ಷತೆಯನ್ನು ಸೃಷ್ಟಿಯು ಆತುರದಿಂದ ಎದುರು ನೋಡುತ್ತಿದೆ.
ROM 8:20 ಸೃಷ್ಟಿಯು ನಾಶಕ್ಕೆ ಒಳಗಾಯಿತು. ಆದರೆ ಸ್ವಂತ ಇಚ್ಛೆಯಿಂದಲ್ಲ. ಅದನ್ನು ನಿರೀಕ್ಷೆಯಿಂದ ಒಳಪಡಿಸಿದ ದೇವರಿಂದಲೇ ಆಯಿತು. ಆದರೂ ಸೃಷ್ಟಿಗೂ ನಿರೀಕ್ಷೆಯಿದೆ.
ROM 8:21 ಈ ಸೃಷ್ಟಿಯು ಕೂಡ ನಾಶದ ಬಂಧನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ.
ROM 8:22 ಈವರೆಗೂ ಸೃಷ್ಟಿಯೆಲ್ಲ ಪ್ರಸವ ವೇದನೆಯಂಥ ನೋವಿನಿಂದ ನರಳುತ್ತಿದೆ ಎಂದು ನಾವು ಬಲ್ಲೆವು.
ROM 8:23 ಅಷ್ಟೇ ಅಲ್ಲದೆ, ಪವಿತ್ರಾತ್ಮ ದೇವರ ಪ್ರಥಮ ಫಲವನ್ನು ಹೊಂದಿದವರಾಗಿರುವ ನಾವು ಕೂಡ, ಮಕ್ಕಳ ಪದವಿಯನ್ನು ಪಡೆಯುವುದಕ್ಕಾಗಿ ನಮ್ಮ ದೇಹಗಳ ಬಿಡುಗಡೆಗಾಗಿ ಎದುರುನೋಡುತ್ತಾ ಆತುರದಿಂದ ನರಳುತ್ತಾ ಇದ್ದೇವೆ.
ROM 8:24 ಈ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ಆದರೆ ಕಣ್ಣಿಗೆ ಕಾಣುವ ನಿರೀಕ್ಷೆಯು ನಿರೀಕ್ಷೆಯೇ ಅಲ್ಲ. ಕಾಣುತ್ತಿರುವುದನ್ನು ಯಾರಾದರೂ ನಿರೀಕ್ಷಿಸುವರೋ?
ROM 8:25 ಆದರೆ ನಾವು ಇನ್ನು ಕಾಣದಿರುವಂಥದ್ದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
ROM 8:26 ಅದೇ ರೀತಿಯಲ್ಲಿ ಪವಿತ್ರಾತ್ಮರು ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡುತ್ತಾರೆ. ಯಾವುದಕ್ಕಾಗಿ ಹೇಗೆ ಪ್ರಾರ್ಥಿಸಬೇಕೆಂದು ನಾವು ತಿಳಿಯದವರಾಗಿದ್ದೇವೆ. ಆದರೆ ಪವಿತ್ರಾತ್ಮರು ತಾವೇ ಮಾತುಗಳಿಂದ ವ್ಯಕ್ತಪಡಿಸಲು ಸಾಧ್ಯವಾಗದ ನರಳಾಟದೊಂದಿಗೆ ನಮಗೋಸ್ಕರ ಪ್ರಾರ್ಥಿಸುವವರಾಗಿದ್ದಾರೆ.
ROM 8:27 ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರು ಪವಿತ್ರಾತ್ಮರ ಮನಸ್ಸನ್ನು ಬಲ್ಲವರಾಗಿದ್ದಾರೆ. ಏಕೆಂದರೆ ಪವಿತ್ರಾತ್ಮರು ದೇವಜನರಿಗಾಗಿ ದೇವರ ಚಿತ್ತದ ಪ್ರಕಾರ ವಿಜ್ಞಾಪಿಸುತ್ತಾರೆ.
ROM 8:28 ದೇವರನ್ನು ಪ್ರೀತಿಸಿ ದೇವರ ಉದ್ದೇಶಕ್ಕೆ ಅನುಸಾರವಾಗಿ ಕರೆಹೊಂದಿದವರಿಗೆ ಸಕಲವನ್ನು ಒಳ್ಳೆಯದಕ್ಕಾಗಿಯೇ ದೇವರು ಮಾಡುವರು, ಎಂದು ನಮಗೆ ಗೊತ್ತಿದೆ.
ROM 8:29 ಅನೇಕ ಸಹೋದರರ ಮಧ್ಯೆ ಜ್ಯೇಷ್ಠಪುತ್ರನೆನಿಸುವಂತೆ ದೇವರು ಯಾರನ್ನು ಮೊದಲು ತಿಳಿದುಕೊಂಡರೋ ಅವರನ್ನು ತಮ್ಮ ಪುತ್ರನ ಹೋಲಿಕೆಗೆ ಸಮಾನರಾಗುವಂತೆ ಮುಂದಾಗಿ ನೇಮಿಸಿದರು.
ROM 8:30 ಆದರೆ ದೇವರು ಯಾರನ್ನು ಮುಂದಾಗಿ ನೇಮಿಸಿದರೋ, ಅವರನ್ನು ಕರೆದರು; ಯಾರನ್ನು ಕರೆದರೋ, ಅವರನ್ನು ನೀತಿವಂತರೆಂದು ನಿರ್ಣಯಿಸಿದರು; ಯಾರನ್ನು ನೀತಿವಂತರೆಂದು ನಿರ್ಣಯಿಸಿದರೋ ಅವರನ್ನು ಮಹಿಮೆಪಡಿಸಿದರು.
ROM 8:31 ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು?
ROM 8:32 ದೇವರು ತಮ್ಮ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೋಸ್ಕರ ಕ್ರಿಸ್ತ ಯೇಸುವನ್ನು ಕೊಟ್ಟ ಮೇಲೆ ನಮಗೆ ಉದಾರವಾಗಿ ಅವರೊಂದಿಗೆ ಎಲ್ಲವನ್ನು ಸಹ ಕೊಡದೆ ಇರುವರೇ?
ROM 8:33 ದೇವರು ತಾವೇ ಆರಿಸಿಕೊಂಡವರ ಮೇಲೆ ದೋಷಾರೋಪಣೆ ಮಾಡುವವರಾರು? ದೇವರೇ ನೀತಿವಂತರೆಂದು ನಿರ್ಣಯ ಮಾಡುವವರಾಗಿರುತ್ತಾರೆ.
ROM 8:34 ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ, ಜೀವಿತರಾಗಿ ಎದ್ದು ದೇವರ ಬಲಗಡೆಯಲ್ಲಿ ಇದ್ದಾರೆ ಮತ್ತು ಅವರೇ ನಮಗೋಸ್ಕರ ವಿಜ್ಞಾಪಿಸುವವರಾಗಿರುತ್ತಾರೆ.
ROM 8:35 ಕ್ರಿಸ್ತ ಯೇಸುವಿನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಇಕ್ಕಟ್ಟೋ ಹಿಂಸೆಯೋ ಆಹಾರವಿಲ್ಲದಿರುವುದೋ ಬಟ್ಟೆ ಇಲ್ಲದಿರುವುದೋ ಅಪಾಯವೋ ಖಡ್ಗವೋ? ಇವೆಲ್ಲವೂ ನಮ್ಮನ್ನು ಅಗಲಿಸಲಾರವು.
ROM 8:36 ಇವು ಪವಿತ್ರ ವೇದದಲ್ಲಿ ಬರೆದಿರುವಂತೆ ಇವೆ: “ನಿನಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ; ವಧಿಸಲಿಕ್ಕಾಗಿರುವ ಕುರಿಗಳಂತೆ ನಾವು ಭಾವಿಸಿರುತ್ತೇವೆ.”
ROM 8:37 ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ.
ROM 8:38 ಏಕೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ವರ್ತಮಾನಕಾಲದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ, ಯಾವುದೇ ಶಕ್ತಿಯಾಗಲಿ,
ROM 8:39 ಎತ್ತರವಾಗಲಿ, ಆಳವಾಗಲಿ ಅಥವಾ ಸೃಷ್ಟಿಯಲ್ಲಿರುವ ಬೇರೆ ಯಾವುದೇ ಆಗಲಿ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾಗದೆಂದು ನಮಗೆ ದೃಢ ನಿಶ್ಚಯವಿದೆ.
ROM 9:1 ನಾನು ಕ್ರಿಸ್ತ ಯೇಸುವಿನಲ್ಲಿ ಸತ್ಯವನ್ನು ಮಾತನಾಡುತ್ತೇನೆ. ನಾನು ಸುಳ್ಳು ಹೇಳುತ್ತಾ ಇಲ್ಲ. ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮ ದೇವರ ಮೂಲಕ ಖಚಿತ ಪಡಿಸುತ್ತದೆ.
ROM 9:2 ನನ್ನ ಹೃದಯದಲ್ಲಿ ಮಹಾದುಖಃವೂ ಎಡೆಬಿಡದ ವೇದನೆಯೂ ತೀರದವೇದನೆಯೂ ಇದೆ.
ROM 9:3 ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ.
ROM 9:4 ಇಸ್ರಾಯೇಲರಾದ ಅವರಿಗೆ ಸ್ವೀಕಾರವೂ ದೇವರ ಮಹಿಮೆಯೂ ಒಡಂಬಡಿಕೆಗಳೂ ನಿಯಮ ಕೊಡೋಣವೂ ದೇವಾಲಯದ ಸೇವೆಯೂ ಹಾಗೂ ವಾಗ್ದಾನಗಳೂ ಒಪ್ಪಿಸಲಾಗಿವೆ.
ROM 9:5 ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್.
ROM 9:6 ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.
ROM 9:7 ಅಥವಾ ಅಬ್ರಹಾಮನ ಸಂತತಿಯವರೆಲ್ಲ ಅವನ ಮಕ್ಕಳಲ್ಲ. ಆದರೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ಹೇಳಲಾಗಿದೆ.
ROM 9:8 ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು.
ROM 9:9 ಏಕೆಂದರೆ, “ನೇಮಕವಾದ ಕಾಲದಲ್ಲಿ ನಾನು ತಿರುಗಿ ಬಂದಾಗ ಸಾರಳಿಗೆ ಒಬ್ಬ ಮಗನಿರುವನು,” ಅದು ವಾಗ್ದಾನದ ಮಾತಾಗಿತ್ತು.
ROM 9:10 ಇದು ಮಾತ್ರವಲ್ಲದೆ, ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನ ಮೂಲಕ ಅವಳಿಜವಳಿ ಮಕ್ಕಳನ್ನು ಪಡೆದಳು.
ROM 9:11 ಹೀಗೆ, ಆ ಮಕ್ಕಳು ಹುಟ್ಟುವುದಕ್ಕೆ ಮುಂಚೆ, ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುವುದಕ್ಕೆ ಮುಂಚೆಯೇ, ದೇವರ ಆಯ್ಕೆಯ ಉದ್ದೇಶವು ಕೃತ್ಯಗಳಿಗೆ ಅನುಸಾರವಲ್ಲವೆಂಬುದು ಸ್ಥಿರವಾಯಿತು.
ROM 9:12 ಆದರೆ ಅದು ಕರೆಯುವಾತನಿಂದಲೇ, “ಹಿರಿಯನು ಕಿರಿಯವನಿಗೆ ಸೇವೆಮಾಡುವನು,” ಎಂದು ರೆಬೆಕ್ಕಳಿಗೆ ಹೇಳಲಾಗಿತ್ತು.
ROM 9:13 ಇದಕ್ಕನುಸಾರವಾಗಿ, “ಯಾಕೋಬನನ್ನು ನಾನು ಪ್ರೀತಿಸಿದೆನು, ಆದರೆ ಏಸಾವನನ್ನು ಹಗೆ ಮಾಡಿದೆನು,” ಎಂದು ಬರೆದಿರುತ್ತದೆ.
ROM 9:14 ಹಾಗಾದರೆ ನಾವು ಏನು ಹೇಳೋಣ? ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ.
ROM 9:15 ದೇವರು ಮೋಶೆಗೆ ಹೇಳಿದ್ದೇನೆಂದರೆ, “ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.”
ROM 9:16 ಆದ್ದರಿಂದ ದೇವರ ಆಯ್ಕೆಯು ಮನುಷ್ಯನ ಬಯಕೆ ಅಥವಾ ಪ್ರಯತ್ನದಿಂದಾಗಿರದೆ, ದೇವರ ಕರುಣೆಯಿಂದಲೇ ಆಗಿದೆ.
ROM 9:17 ಏಕೆಂದರೆ, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು,” ಎಂದು ಪವಿತ್ರ ವೇದದಲ್ಲಿ ದೇವರು ಫರೋಹನಿಗೆ ಹೇಳುತ್ತಾರೆ.
ROM 9:18 ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ.
ROM 9:19 ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ.
ROM 9:20 ಎಲೈ, ಮನುಷ್ಯನೇ, ದೇವರಿಗೆ ಎದುರಾಗಿ ಮಾತನಾಡಲು ನೀನು ಯಾರು? “ರೂಪಿಸಿರುವುದು ರೂಪಿಸಿದವನಿಗೆ, ‘ಏಕೆ ನನ್ನನ್ನು ಹೀಗೆ ರೂಪಿಸಿದೆ?’ ” ಎಂದು ಪ್ರಶ್ನಿಸಬಹುದೋ?
ROM 9:21 ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?
ROM 9:22 ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು?
ROM 9:23 ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು.
ROM 9:24 ಇದಕ್ಕಾಗಿಯೇ ದೇವರು ಯೆಹೂದ್ಯರನ್ನು ಮಾತ್ರವೇ ಕರೆಯದೆ ಯೆಹೂದ್ಯರಲ್ಲದವರನ್ನು ಸಹ ಕರೆದಿದ್ದಾರಲ್ಲಾ?
ROM 9:25 ಹೋಶೇಯನ ಪ್ರವಾದನೆಯಲ್ಲಿ ದೇವರು, “ನನ್ನ ಜನರಲ್ಲದವರನ್ನು ‘ನನ್ನ ಜನರು,’ ಎಂದು ಕರೆಯುವರು. ನಾನು ಪ್ರೀತಿಸದವರನ್ನು ನನ್ನ ‘ಪ್ರಿಯರು’ ಎಂದೂ ಹೇಳುವರು.”
ROM 9:26 ಮತ್ತು, “ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ, ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,” ಎಂದು ದೇವರು ಹೇಳುತ್ತಾರೆ.
ROM 9:27 ಇದಲ್ಲದೆ ಯೆಶಾಯನು ಇಸ್ರಾಯೇಲರನ್ನು ಕುರಿತು ಕೂಗಿ ಹೇಳುವುದೇನೆಂದರೆ, “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಣೆಹೊಂದುವರು.
ROM 9:28 ಏಕೆಂದರೆ ಕರ್ತನು ತಮ್ಮ ವಾಕ್ಯವನ್ನು ಭೂಮಿಯ ಮೇಲೆ ಅಂತಿಮವಾಗಿಯೂ ತ್ವರಿತವಾಗಿಯೂ ನೆರವೇರಿಸುವರು.”
ROM 9:29 ಯೆಶಾಯನು ಈ ಹಿಂದೆ, “ಸೇನಾಧೀಶ್ವರರಾದ ದೇವರು ನಮಗೆ ಸಂತತಿಯನ್ನು ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರದ ಹಾಗೆ ಇರುತ್ತಿದ್ದೆವು.” ಎಂದು ಹೇಳಿದ್ದಾನೆ.
ROM 9:30 ಹಾಗಾದರೆ ನಾವು ಏನು ಹೇಳೋಣ? ನೀತಿಯನ್ನು ಅನುಸರಿಸದ ಯೆಹೂದ್ಯರಲ್ಲದವರು ನಂಬಿಕೆಯ ಮೂಲಕ ದೊರಕುವ ನೀತಿಯನ್ನು ಪಡೆದರು.
ROM 9:31 ಆದರೆ ನೀತಿಯ ನಿಯಮವನ್ನು ಅನುಸರಿಸಿದ ಇಸ್ರಾಯೇಲರಾದರೋ ಆ ನೀತಿಯ ಮಾರ್ಗವನ್ನು ಪಡೆಯಲಿಲ್ಲ.
ROM 9:32 ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು.
ROM 9:33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”
ROM 10:1 ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ.
ROM 10:2 ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ಆಸಕ್ತಿಯು ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ.
ROM 10:3 ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.
ROM 10:4 ಕ್ರಿಸ್ತ ಯೇಸುವನ್ನು ನಂಬುವ ಪ್ರತಿಯೊಬ್ಬರಿಗೂ ನೀತಿಯು ದೊರಕುವಂತೆ ಕ್ರಿಸ್ತ ಯೇಸು ಮೋಶೆಯ ನಿಯಮದ ಅಂತ್ಯವಾಗಿರುತ್ತಾರೆ.
ROM 10:5 ನಿಯಮದಿಂದ ಬರುವ ನೀತಿಯ ಬಗ್ಗೆ ಮೋಶೆಯು ಬರೆದಿರುವುದು ಏನೆಂದರೆ: “ನಿಯಮದಲ್ಲಿ ಬರೆದಿರುವ ಎಲ್ಲವನ್ನೂ ಮಾಡುವವರೇ ಬಾಳುವವರು,” ಎಂಬುದಾಗಿ ಬರೆದನು.
ROM 10:6 ಆದರೆ ವಿಶ್ವಾಸದಿಂದ ಬರುವ ನೀತಿಯ ಬಗ್ಗೆ ಮೋಶೆಯು ಹೇಳುವುದೇನೆಂದರೆ: “ ‘ಕ್ರಿಸ್ತನನ್ನು ಕೆಳಗೆ ತರಲು ಪರಲೋಕಕ್ಕೆ ಯಾರು ಏರಿ ಹೋಗುವರು?’
ROM 10:7 ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.”
ROM 10:8 ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.” ಅದೇ ನಾವು ಸಾರುವ ವಿಶ್ವಾಸದ ವಾಕ್ಯ.
ROM 10:9 ನೀನು, “ಯೇಸುವೇ ಕರ್ತ,” ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ.
ROM 10:10 ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ.
ROM 10:11 ಪವಿತ್ರ ವೇದದಲ್ಲಿ ಹೇಳಿರುವಂತೆ, “ಅವರ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದೇ ಇಲ್ಲ.”
ROM 10:12 ಈ ವಿಷಯದಲ್ಲಿ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಕರ್ತ ಆಗಿರುವ ಒಬ್ಬರೇ ಕರ್ತ; ಅವರು ತಮ್ಮನ್ನು ಕರೆಯುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುತ್ತಾರೆ.
ROM 10:13 ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”
ROM 10:14 ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ?
ROM 10:15 ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, “ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!” ಎಂದು ಬರೆಯಲಾಗಿದೆ.
ROM 10:16 ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?” ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ.
ROM 10:17 ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ.
ROM 10:18 ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”
ROM 10:19 ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು, “ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,” ಎಂದು ಹೇಳುತ್ತಾನೆ.
ROM 10:20 ಆದರೆ ಯೆಶಾಯನು ಬಹು ಧೈರ್ಯವಾಗಿ, “ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.
ROM 10:21 ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,” ಎಂದು ಹೇಳುತ್ತಾನೆ.
ROM 11:1 ಹಾಗಾದರೆ, ದೇವರು ತಮ್ಮ ಜನರನ್ನು ತ್ಯಜಿಸಿಬಿಟ್ಟಿದ್ದಾರೋ ಎಂದು ಕೇಳುತ್ತೇನೆ? ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲನೂ ಅಬ್ರಹಾಮನ ವಂಶದವನೂ ಬೆನ್ಯಾಮೀನನ ಕುಲದವನೂ ಆಗಿದ್ದೇನೆ.
ROM 11:2 ದೇವರು ತಾವು ಮುಂದಾಗಿ ತಿಳಿದುಕೊಂಡ ತಮ್ಮ ಜನರನ್ನು ತ್ಯಜಿಸಲಿಲ್ಲ. ದೇವರ ವಾಕ್ಯವು ಎಲೀಯನನ್ನು ಕುರಿತು ಏನು ಹೇಳುತ್ತದೆಂದು ನಿಮಗೆ ಗೊತ್ತಿಲ್ಲವೋ?
ROM 11:3 “ಕರ್ತಾ, ಅವರು ನಿಮ್ಮ ಪ್ರವಾದಿಗಳನ್ನು ಕೊಂದಿದ್ದಾರೆ. ನಿಮ್ಮ ಬಲಿಪೀಠವನ್ನು ಒಡೆದುಹಾಕಿದ್ದಾರೆ, ನಾನು ಒಬ್ಬನೇ ಉಳಿದಿದ್ದೇನೆ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ,” ಎಂದು ಇಸ್ರಾಯೇಲರಿಗೆ ವಿರೋಧವಾಗಿ ದೇವರಲ್ಲಿ ವಿಜ್ಞಾಪನೆ ಮಾಡಿಕೊಂಡನು.
ROM 11:4 ಅದಕ್ಕೆ ದೇವರು ಅವನಿಗೆ ಕೊಟ್ಟ ಉತ್ತರವೇನಾಗಿತ್ತು? “ಬಾಳನಿಗೆ ಅಡ್ಡಬೀಳದ ಏಳು ಸಾವಿರ ಮಂದಿಯನ್ನು ನನಗೋಸ್ಕರ ಉಳಿಸಿದ್ದೇನೆ,” ಎಂದಲ್ಲವೇ?
ROM 11:5 ಅದೇ ರೀತಿಯಲ್ಲಿ, ಈ ಕಾಲದಲ್ಲಿಯೂ ಕೃಪೆಯಿಂದ ಆಯ್ಕೆಯಾದ ಇಸ್ರಾಯೇಲರಲ್ಲಿ ಕೆಲವರು ಉಳಿದಿದ್ದಾರೆ.
ROM 11:6 ಆ ಆಯ್ಕೆಯು ಕ್ರಿಯೆಗಳ ಆಧಾರದಿಂದಲ್ಲ, ಕೃಪೆಯಿಂದಲೇ ಆಗಿರುತ್ತದೆ. ಕ್ರಿಯೆಗಳಿಂದ ಅದು ಆಗಿದ್ದರೆ ಇನ್ನೆಂದಿಗೂ ಕೃಪೆಯಾಗಲಾರದು.
ROM 11:7 ಹಾಗಾದರೆ ಏನು? ಇಸ್ರಾಯೇಲ್ ಹುಡುಕಿದ್ದನ್ನು ಹೊಂದಲಿಲ್ಲ. ಆದರೆ ಅವರಲ್ಲಿ ಆಯ್ಕೆಯಾದವರು ಹೊಂದಿದರು, ಮಿಕ್ಕವರು ಕಠಿಣ ಹೃದಯಿಗಳಾದರು.
ROM 11:8 ಪವಿತ್ರ ವೇದದಲ್ಲಿ ಬರೆದಿರುವಂತೆ, “ದೇವರು ಅವರಿಗೆ ಜಡಸ್ವಭಾವದ ಆತ್ಮವನ್ನು, ಕಾಣಲಾರದ ಕಣ್ಣನ್ನು ಮತ್ತು ಕೇಳಲಾರದ ಕಿವಿಯನ್ನು ಕೊಟ್ಟರು, ಅದು ಇಂದಿನವರೆಗೂ ಹಾಗೆಯೇ ಇದೆ.”
ROM 11:9 ದಾವೀದನು, “ಅವರ ಊಟವೇ ಅವರಿಗೆ ಉರುಲೂ ಬೋನೂ ಆಗಲಿ. ಅದು ಅಡೆತಡೆಯೂ ಪ್ರತಿಕಾರವೂ ಆಗಲಿ.
ROM 11:10 ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ,” ಎಂದು ಹೇಳುತ್ತಾನೆ.
ROM 11:11 ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು.
ROM 11:12 ಆದರೆ ಅವರ ಅಪರಾಧವು ಜಗತ್ತಿಗೆ ಐಶ್ವರ್ಯವನ್ನು ಉಂಟುಮಾಡಿತು. ಅವರ ನಷ್ಟವೇ ಯೆಹೂದ್ಯರಲ್ಲದವರಿಗೆ ಐಶ್ವರ್ಯವನ್ನು ಉಂಟುಮಾಡುವುದಾದರೆ, ಅವರ ಪರಿಪೂರ್ಣತೆಯು ಇನ್ನೂ ಎಷ್ಟೋ ಹೆಚ್ಚಾದ ಐಶ್ವರ್ಯವನ್ನು ಉಂಟುಮಾಡಬಹುದಲ್ಲವೇ!
ROM 11:13 ಯೆಹೂದ್ಯರಲ್ಲದವರಾಗಿರುವ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಾನು ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿರುವಷ್ಟರ ಮಟ್ಟಿಗೆ ನನ್ನ ಸೇವೆಯನ್ನು ಪ್ರಭಾವಗೊಳಿಸುತ್ತೇನೆ.
ROM 11:14 ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು.
ROM 11:15 ಏಕೆಂದರೆ ಇಸ್ರಾಯೇಲರನ್ನು ತ್ಯಜಿಸುವುದರಿಂದ ಜಗತ್ತು ದೇವರೊಡನೆ ಸಂಧಾನವಾಗುವುದಾದರೆ, ಅವರನ್ನು ಸ್ವೀಕರಿಸುವುದು, ಸತ್ತವರು ಜೀವಿತರಾಗಿ ಎದ್ದು ಬಂದಂತಾಗಿರುವುದಲ್ಲವೇ?
ROM 11:16 ಪ್ರಥಮಫಲವಾಗಿ ಹಿಟ್ಟಿನಲ್ಲಿ ದೇವರಿಗೆ ಭಾಗವನ್ನು ಸಮರ್ಪಿಸಿದ್ದು ಪವಿತ್ರವಾಗಿದ್ದರೆ, ಹಿಟ್ಟೆಲ್ಲಾ ಪವಿತ್ರವಾಗಿರುತ್ತದೆ. ಬೇರು ಪವಿತ್ರವಾಗಿದ್ದರೆ, ಕೊಂಬೆಗಳೂ ಪವಿತ್ರವಾಗಿರುತ್ತವೆ?
ROM 11:17 ಕೆಲವು ಕೊಂಬೆಗಳು ಮುರಿದುಹೋಗಿರುವುದಾದರೆ, ಕಾಡು ಓಲಿವ್ ಮರದಂತಿರುವ ನೀನು ಅವುಗಳ ನಡುವೆ ಕಸಿಮಾಡಿ ಉತ್ತಮ ಓಲಿವ್ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರಲಾಗಿ,
ROM 11:18 ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ. ಹೆಚ್ಚಿಸಿಕೊಂಡರೆ, ನೀನು ಆ ಬೇರಿನ ಆಧಾರವಲ್ಲ. ಆ ಬೇರೇ ನಿನಗೆ ಆಧಾರವಾಗಿದೆ.
ROM 11:19 ಹಾಗಾದರೆ ನೀನು, “ನಾನು ಕಸಿಕಟ್ಟಿಸಿಕೊಳ್ಳಬೇಕೆಂದು ಆ ಕೊಂಬೆಗಳನ್ನು ಮುರಿದು ಹಾಕಲಾಯಿತು,” ಎಂದು ನೀನು ಹೇಳಬಹುದು.
ROM 11:20 ಅದು ನಿಜವೆ, ಆದರೆ ಅವರ ಅವಿಶ್ವಾಸದಿಂದಲೇ ಅವರನ್ನು ಮುರಿದು ಹಾಕಲಾಯಿತು. ನೀನಾದರೋ ವಿಶ್ವಾಸದಿಂದಲೇ ಇನ್ನೂ ನಿಂತಿರುವೆ. ಗರ್ವಪಡದೆ ಭಯದಿಂದಿರು.
ROM 11:21 ಏಕೆಂದರೆ ದೇವರು ಹುಟ್ಟು ಕೊಂಬೆಗಳನ್ನು ಉಳಿಸದಿದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ.
ROM 11:22 ಆದ್ದರಿಂದ, ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು. ಬಿದ್ದವರ ಕಡೆಗೆ ಅವರ ಕಾಠಿಣ್ಯವಿದೆ, ನೀನು ದೇವರ ದಯೆಯಲ್ಲಿಯೇ ಮುಂದುವರಿಯುವುದಾದರೆ ನಿನ್ನ ಮೇಲೆ ದೇವರ ದಯೆಯಿರುವುದು. ಇಲ್ಲದೆ ಹೋದರೆ, ನೀನು ಕೂಡ ಕಡಿದುಹಾಕಲಾಗುವೆ.
ROM 11:23 ಇಸ್ರಾಯೇಲರು ಕೂಡ ಇನ್ನೂ ಅವಿಶ್ವಾಸದಲ್ಲಿ ಮುಂದುವರಿಯದಿದ್ದರೆ, ಕಸಿಕಟ್ಟಲಾಗುವರು, ಏಕೆಂದರೆ ಅವರನ್ನು ಪುನಃ ಕಸಿಕಟ್ಟಲು ದೇವರು ಶಕ್ತರಾಗಿರುತ್ತಾರೆ.
ROM 11:24 ಎಷ್ಟಾದರೂ ಕಾಡು ಓಲಿವ್ ಮರದಿಂದ ನೀನು ಕಡಿದುಹಾಕಲಾದ ಕೊಂಬೆ. ನೀನು ನೆಟ್ಟು ಬೆಳೆಸಿರುವ ಉತ್ತಮ ಓಲಿವ್ ಮರಕ್ಕೆ ಅಸ್ವಾಭಾವಿಕವಾಗಿ ಕಸಿಮಾಡುವುದಾದರೆ ಸ್ವಾಭಾವಿಕವಾಗಿರುವ ಈ ಕೊಂಬೆಗಳನ್ನು ಎಷ್ಟೋ ಹೆಚ್ಚಾಗಿ ಓಲಿವ್ ಮರಕ್ಕೆ ಅದೇ ಕಸಿಕಟ್ಟುವುದು ಸುಲಭವಲ್ಲವೇ?
ROM 11:25 ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು.
ROM 11:26 ಹೀಗೆ ಪವಿತ್ರ ವೇದದಲ್ಲಿ ಬರೆದಿರುವಂತೆ, ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು: “ವಿಮೋಚಿಸುವವರು ಒಬ್ಬರು ಚೀಯೋನಿನಿಂದ ಬರುತ್ತಾರೆ, ಅವರು ಯಾಕೋಬನ ಸಂತತಿಯಲ್ಲಿ ದೇವರನ್ನು ಅಲ್ಲಗಳೆಯುವ ಸ್ವಭಾವನ್ನು ತಾವೇ ತೆಗೆದುಹಾಕುವರು.
ROM 11:27 ನಾನು ಅವರ ಪಾಪಗಳನ್ನು ತೆಗೆದುಹಾಕುವಾಗ, ಅವರೊಂದಿಗೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ ಎಂದು ತಿಳಿದುಕೊಳ್ಳುವೆನು,” ಎಂಬುದೇ.
ROM 11:28 ಸುವಾರ್ತೆಯ ಪ್ರಕಾರ ಇಸ್ರಾಯೇಲರು ಈಗ ನಿಮ್ಮ ನಿಮಿತ್ತ ಶತ್ರುಗಳು. ಆದರೆ ದೇವರ ಆಯ್ಕೆಯ ದೃಷ್ಟಿಯಲ್ಲಿ ನೋಡುವಾಗ ಮೂಲಪಿತೃಗಳ ನಿಮಿತ್ತದಿಂದ ಅವರು ಪ್ರೀತಿಹೊಂದಿದವರು.
ROM 11:29 ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ.
ROM 11:30 ಒಂದು ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದ ನೀವು ಇಸ್ರಾಯೇಲರ ಅವಿಧೇಯತೆಯಿಂದ ಈಗ ಕರುಣೆಯನ್ನು ಹೊಂದಿರುವಿರಿ.
ROM 11:31 ಅದೇ ಪ್ರಕಾರವಾಗಿ ಇಸ್ರಾಯೇಲರು ಈಗ ಅವಿಧೇಯರಾಗಿದ್ದರೂ ನಿಮಗೆ ಕರುಣೆ ದೊರಕಿದಂತೆ, ಅವರಿಗೂ ಈಗ ಕರುಣೆ ದೊರಕುವುದು.
ROM 11:32 ದೇವರು ತಾವು ಎಲ್ಲರಿಗೂ ಕರುಣೆ ತೋರಿಸುವುದಕ್ಕಾಗಿ ಎಲ್ಲರನ್ನೂ ಅವಿಧೇಯತೆಯಲ್ಲಿ ಕಟ್ಟಿಹಾಕಿರುತ್ತಾರೆ.
ROM 11:33 ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು! ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು! ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!
ROM 11:34 “ಕರ್ತದೇವರ ಮನಸ್ಸನ್ನು ಅರಿತವರು ಯಾರು? ಅವರಿಗೆ ಆಲೋಚನೆಯನ್ನು ನೀಡುವವರು ಯಾರು?”
ROM 11:35 “ದೇವರಿಗೆ ಮೊದಲು ಕೊಟ್ಟು, ಅವರಿಂದ ಪ್ರತಿಫಲವನ್ನು ಪಡೆಯುವವರು ಯಾರು?”
ROM 11:36 ಏಕೆಂದರೆ ಸಮಸ್ತವೂ ದೇವರಿಂದ ಉಂಟಾಗಿ ದೇವರ ಮೂಲಕವಾಗಿಯೂ ದೇವರಿಗಾಗಿಯೂ ಇರುತ್ತವೆ. ಮಹಿಮೆಯು ಸದಾಕಾಲವೂ ದೇವರಿಗೇ ಸಲ್ಲುವುದಾಗಿರಲಿ. ಆಮೆನ್.
ROM 12:1 ಆದ್ದರಿಂದ, ಪ್ರಿಯರೇ ದೇವರ ಕರುಣೆಯಿಂದ ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು.
ROM 12:2 ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ.
ROM 12:3 ನನಗೆ ದಯಪಾಲಿಸಿರುವ ಕೃಪೆಯಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ, ನೀವು ಭಾವಿಸುವುದಕ್ಕಿಂತ ಹೆಚ್ಚಾಗಿ ಯಾರೂ ನಿಮ್ಮನ್ನು ನೀವೇ ಉನ್ನತವಾಗಿ ಭಾವಿಸಿಕೊಳ್ಳಬೇಡಿರಿ. ಅದರ ಬದಲಾಗಿ ದೇವರು ನಿಮಗೆ ಅನುಗ್ರಹಿಸಿರುವ ವಿಶ್ವಾಸದ ಅಳತೆಗೆ ಅನುಸಾರವಾಗಿ ಸ್ವಸ್ಥಚಿತ್ತವುಳ್ಳವರಾಗಿ ಭಾವಿಸಿಕೊಳ್ಳಿರಿ.
ROM 12:4 ನಮ್ಮಲ್ಲಿ ಪ್ರತಿಯೊಬ್ಬನಿಗೂ ಅನೇಕ ಅಂಗಗಳಿಂದ ಕೂಡಿದ ಒಂದು ದೇಹವಿರುವ ಹಾಗೆಯೇ ಮತ್ತು ಹೇಗೆ ಈ ಅಂಗಾಂಗಗಳಿಗೆಲ್ಲಾ ಒಂದೇ ಕೆಲಸವಿರುವುದ್ಲಿಲವೋ,
ROM 12:5 ಅದೇ ರೀತಿಯಲ್ಲಿ, ಅನೇಕರಾಗಿರುವ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗುತ್ತೇವೆ ಮತ್ತು ಪ್ರತಿಯೊಬ್ಬನೂ ಒಬ್ಬರಿಗೊಬ್ಬರು ಅಂಗಗಳಾಗಿರುತ್ತೇವೆ.
ROM 12:6 ನಮಗೆ ಕೊಟ್ಟಿರುವ ದೇವರ ಕೃಪೆಗೆ ಅನುಸಾರವಾಗಿ ನಮಗೆ ಬೇರೆ ಬೇರೆ ವರಗಳಿರುತ್ತವೆ. ಒಬ್ಬನಿಗೆ ಪ್ರವಾದನಾ ವರವಾಗಿದ್ದರೆ, ಅದನ್ನು ಅವನ ವಿಶ್ವಾಸದ ಅಳತೆಗೆ ತಕ್ಕ ರೀತಿಯಲ್ಲಿ ಉಪಯೋಗಿಸಲಿ.
ROM 12:7 ಅದು ಇತರರಿಗೆ ಸೇವೆ ಸಲ್ಲಿಸುವುದಾಗಿದ್ದರೆ, ಅದನ್ನು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಉಪಯೋಗಿಸಲಿ. ಅದು ಬೋಧಿಸುವ ವರವಾಗಿದ್ದರೆ, ಅವನು ಬೋಧಿಸಲಿ.
ROM 12:8 ಅದು ಪ್ರೋತ್ಸಾಹಗೊಳಿಸುವುದಾಗಿದ್ದರೆ, ಅವನು ಪ್ರೋತ್ಸಾಹಗೊಳಿಸಲಿ. ದಾನಕೊಡುವ ವರವಾಗಿದ್ದರೆ, ಅವನು ಧಾರಾಳವಾಗಿ ಕೊಡಲಿ. ನಾಯಕತ್ವ ವಹಿಸುವ ವರವಾಗಿದ್ದರೆ, ಅವನು ಶ್ರದ್ಧೆಯಿಂದ ಮಾಡಲಿ ದಯೆ ತೋರಿಸುವ ವರವಾಗಿದ್ದರೆ ಅದನ್ನು ಅವನು ಸಂತೋಷದಿಂದ ಮಾಡಲಿ.
ROM 12:9 ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.
ROM 12:10 ಒಬ್ಬರಿಗೊಬ್ಬರು ಸಹೋದರ ಪ್ರೀತಿಯಲ್ಲಿ ಸಮರ್ಪಿತರಾಗಿರಿ. ಗೌರವಿಸುವುದರಲ್ಲಿ ಒಬ್ಬರಿಗೊಬ್ಬರು ಮುಂದಾಗಿರಿ.
ROM 12:11 ಉತ್ಸಾಹದಲ್ಲಿ ಆಲಸ್ಯರಾಗದೆ, ಆತ್ಮದಲ್ಲಿ ಬೆಂಕಿಯುಳ್ಳವರಾಗಿ ಕರ್ತನ ಸೇವೆಯನ್ನು ಮಾಡಿರಿ.
ROM 12:12 ನಿರೀಕ್ಷೆಯಲ್ಲಿ ಸಂತೋಷವುಳ್ಳವರೂ ಸಂಕಟಗಳಲ್ಲಿ ಸಹನೆಯುಳ್ಳವರೂ ಪ್ರಾರ್ಥನೆಯಲ್ಲಿ ದೃಢಮನಸ್ಸುಳ್ಳವರೂ ಆಗಿ ಮುಂದುವರಿಯಿರಿ.
ROM 12:13 ಕೊರತೆ ಇರುವ ದೇವಜನರೊಂದಿಗೆ ನಿಮಗೆ ಇರುವುದನ್ನು ಹಂಚಿಕೊಳ್ಳಿರಿ, ಅತಿಥಿ ಸತ್ಕಾರವನ್ನು ಮಾಡುತ್ತಾ ಇರಿ.
ROM 12:14 ನಿಮ್ಮನ್ನು ಹಿಂಸಿಸುವರನ್ನು ಆಶೀರ್ವದಿಸಿರಿ, ಶಪಿಸಬೇಡಿರಿ.
ROM 12:15 ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ.
ROM 12:16 ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳವರಾಗಿರಿ. ನೀವು ಮನಸ್ಸಿನಲ್ಲಿ ಅಹಂಕಾರಿಗಳಾಗಿರದೆ, ದೀನರೊಂದಿಗೆ ಸಂತೋಷದಿಂದ ಸಹಭಾಗಿಗಳಾಗಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
ROM 12:17 ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯದನ್ನು ಮಾಡಿರಿ.
ROM 12:18 ಸಾಧ್ಯವಾದರೆ, ನಿಮ್ಮಿಂದ ಆದಷ್ಟು ಎಲ್ಲರೊಂದಿಗೂ ಸಮಾಧಾನದಿಂದಿರಿ.
ROM 12:19 ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸದೆ, ಅದನ್ನು ದೇವರ ಕೋಪಕ್ಕೆ ಬಿಟ್ಟುಬಿಡಿರಿ. ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸೇರಿದ್ದು. ನಾನು ಅದನ್ನು ತೀರಿಸುವೆನು, ಎಂದು ಕರ್ತನು ಹೇಳುತ್ತಾರೆ,” ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ.
ROM 12:20 “ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು, ಅವನು ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು.”
ROM 12:21 ಕೆಟ್ಟದ್ದಕ್ಕೆ ಸೋಲಬೇಡಿರಿ, ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸಿರಿ.
ROM 13:1 ಪ್ರತಿಯೊಬ್ಬನೂ ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು, ಏಕೆಂದರೆ ದೇವರು ನೇಮಿಸಿದ ಅಧಿಕಾರದ ಹೊರತು ಬೇರೆ ಯಾವದೂ ಇರುವುದಿಲ್ಲ. ಇರುವ ಅಧಿಕಾರಗಳು ದೇವರಿಂದಲೇ ನೇಮಕಗೊಂಡಿವೆ.
ROM 13:2 ಆದ್ದರಿಂದ ಅಧಿಕಾರಕ್ಕೆ ಎದುರು ಬೀಳುವವನು ದೇವರ ನೇಮಕವನ್ನು ಎದುರಿಸುವವನಾಗಿರುತ್ತಾನೆ. ಹಾಗೆ ಎದುರಿಸುವವರು ತೀರ್ಪಿಗೆ ಗುರಿಯಾಗುವರು.
ROM 13:3 ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು.
ROM 13:4 ಏಕೆಂದರೆ, ಅವನು ನಿನಗೆ ಒಳ್ಳೆಯದನ್ನು ಮಾಡುವುದಕ್ಕೋಸ್ಕರ ಇರುವ ದೇವರ ಸೇವಕನಾಗಿರುತ್ತಾನೆ. ಆದರೆ ನೀನು ಕೆಟ್ಟದ್ದನ್ನು ಮಾಡುವವನಾಗಿದ್ದರೆ ಭಯಪಡಬೇಕು. ಏಕೆಂದರೆ ಅವನು ವ್ಯರ್ಥವಾಗಿ ಅಧಿಕಾರವನ್ನು ಪಡೆದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಅಭ್ಯಾಸ ಮಾಡುವವನಿಗೆ ದಂಡನೆಯನ್ನು ವಿಧಿಸುತ್ತಾನೆ.
ROM 13:5 ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ.
ROM 13:6 ಇದರ ನಿಮಿತ್ತವಾಗಿಯೇ ನೀವು ತೆರಿಗೆಯನ್ನು ಪಾವತಿ ಮಾಡುತ್ತೀರಿ. ಏಕೆಂದರೆ, ಅಧಿಕಾರಿಗಳು ಇದರಲ್ಲಿಯೇ ನಿರತರಾಗಿರುವ ದೇವರ ಸೇವಕರಾಗಿರುತ್ತಾರೆ.
ROM 13:7 ನೀವು ಯಾರಿಗೆ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸಿರಿ. ತೆರಿಗೆ ಕಟ್ಟಬೇಕಾಗಿದ್ದರೆ ತೆರಿಗೆಯನ್ನು, ಸುಂಕ ಕೊಡಬೇಕಾಗಿದ್ದರೆ ಸುಂಕವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು, ಗೌರವ ಸಲ್ಲಿಸಬೇಕಾಗಿದ್ದರೆ ಗೌರವವನ್ನು ಸಲ್ಲಿಸಿರಿ.
ROM 13:8 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ನಿಮಗೆ ಬೇರೆ ಯಾವ ಸಾಲವೂ ಇರಬಾರದು. ಏಕೆಂದರೆ ಮತ್ತೊಬ್ಬರನ್ನು ಪ್ರೀತಿಸುವವನು ಮೋಶೆಯ ನಿಯಮವನ್ನೇ ನೆರವೇರಿಸಿದ್ದಾನೆ.
ROM 13:9 ಏಕೆಂದರೆ, “ವ್ಯಭಿಚಾರ ಮಾಡಬೇಡ, ಕೊಲೆ ಮಾಡಬೇಡ, ಕದಿಯಬೇಡ, ದುರಾಶೆ ಪಡಬೇಡ,” ಎನ್ನುವ ಹಾಗೂ ಇತರ ಯಾವ ಆಜ್ಞೆಗಳೇ ಇರಲಿ ಅವೆಲ್ಲವೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಮಾತಿನಲ್ಲಿವೆ.
ROM 13:10 ಪ್ರೀತಿಯು ತನ್ನ ನೆರೆಯವನಿಗೆ ಹಾನಿ ಮಾಡುವುದಿಲ್ಲ. ಆದ್ದರಿಂದ ಪ್ರೀತಿಯು ನಿಯಮದ ನೆರವೇರಿಕೆಯಾಗಿರುತ್ತದೆ.
ROM 13:11 ಈಗಿನ ಕಾಲವನ್ನು ತಿಳಿದು ಇದನ್ನೆಲ್ಲಾ ಮಾಡಿರಿ. ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಗಳಿಗೆಯಾಗಿದೆ. ಏಕೆಂದರೆ, ನಮ್ಮ ರಕ್ಷಣೆಯು ನಾವು ಮೊದಲು ವಿಶ್ವಾಸವಿಟ್ಟಿದಕ್ಕಿಂತ ಈಗ ಹತ್ತಿರವಾಗಿರುತ್ತದೆ.
ROM 13:12 ರಾತ್ರಿಯು ಬಹಳಷ್ಟು ಕಳೆದು ಹಗಲು ಸಮೀಪಿಸಿದೆ. ಆದ್ದರಿಂದ ನಾವು ಕತ್ತಲೆಯ ಕೃತ್ಯಗಳನ್ನು ಎಸೆದು ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ.
ROM 13:13 ಪಕ್ಷತನ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಯ ಕೃತ್ಯಗಳಲ್ಲಾಗಲಿ, ಮತ್ಸರಗಳಲ್ಲಾಗಲಿ ನಿರತರಾಗಿರದೆ ಹಗಲಿನಲ್ಲಿರುವವರಂತೆ ಸಭ್ಯತೆಯಿಂದ ನಡೆದುಕೊಳ್ಳೋಣ.
ROM 13:14 ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಧರಿಸಿಕೊಳ್ಳಿರಿ. ದೈಹಿಕ ಆಶೆಗಳನ್ನು ನೆರವೇರಿಸಲು ಯೋಚಿಸಬೇಡಿರಿ.
ROM 14:1 ಅಂಥವನ ಅಭಿಪ್ರಾಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ. ವಿಶ್ವಾಸದಲ್ಲಿ ಬಲಹೀನನಾಗಿರುವವನನ್ನು ಸ್ವೀಕರಿಸಿಕೊಳ್ಳಿರಿ.
ROM 14:2 ಒಬ್ಬನ ವಿಶ್ವಾಸವು ಎಲ್ಲವನ್ನೂ ತಿನ್ನುವಂತೆ ಮಾಡುತ್ತದೆ. ಆದರೆ ವಿಶ್ವಾಸದಲ್ಲಿ ಬಲಹೀನನಾಗಿರುವವನು ಸಸ್ಯಾಹಾರಿಯಾಗಿಯೇ ಇರುತ್ತಾನೆ.
ROM 14:3 ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸದಿರಲಿ. ಸಸ್ಯಾಹಾರಿಯು ಮಾಂಸಾಹಾರಿಯನ್ನು ತೀರ್ಪು ಮಾಡದಿರಲಿ. ಏಕೆಂದರೆ ದೇವರು ಇಬ್ಬರನ್ನು ಸ್ವೀಕಾರ ಮಾಡಿರುತ್ತಾರೆ.
ROM 14:4 ಬೇರೊಬ್ಬನ ಮನೆಗೆಲಸದವನನ್ನು ತೀರ್ಪುಮಾಡಲು ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೆ ಸೇರಿದ್ದು. ಅವನನ್ನು ನಿಲ್ಲುವಂತೆ ಮಾಡಲು ಕರ್ತನು ಶಕ್ತನಾಗಿರುವುದರಿಂದ ಅವನು ಎದ್ದು ನಿಲ್ಲುವನು.
ROM 14:5 ಕೆಲವರು ಒಂದು ದಿನವನ್ನು ಮತ್ತೊಂದು ದಿನಕ್ಕಿಂತ ವಿಶೇಷವೆಂದು ಎಣಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಂತೆ ನಡೆಯಲಿ.
ROM 14:6 ಒಬ್ಬ ಒಂದು ದಿನವನ್ನು ವಿಶೇಷವೆಂದು ಎಣಿಸುವುದಾದರೆ ಅವನು ಅದನ್ನು ಕರ್ತನಿಗಾಗಿಯೇ ಮಾಡಲಿ. ಮಾಂಸಾಹಾರಿಯು ದೇವರಿಗೆ ಕೃತಜ್ಞತೆಯನ್ನು ಮಾಡಿ ಊಟಮಾಡುವುದಾದರೆ ಅವನು ಅದನ್ನು ಮಾಡುವುದು ಕರ್ತನಿಗಾಗಿಯೇ. ಸಸ್ಯಾಹಾರಿಯು ಕರ್ತನಿಗಾಗಿಯೇ ತಿನ್ನದೆ ಕೃತಜ್ಞತೆ ಸಲ್ಲಿಸುತ್ತಾನೆ.
ROM 14:7 ನಮ್ಮಲ್ಲಿ ಯಾರೂ ತಮಗಾಗಿ ಜೀವಿಸದಿರಲಿ, ತಮಗಾಗಿ ಮರಣಿಸುವುದು ಬೇಡ.
ROM 14:8 ಬದುಕಿದರೆ ನಾವು ಕರ್ತನಿಗಾಗಿ ಬದುಕುತ್ತೇವೆ, ಸತ್ತರೆ ಕರ್ತನಿಗಾಗಿ ಸಾಯುತ್ತೇವೆ. ಹೀಗೆ ನಾವು ಬದುಕಿದರೂ ಸತ್ತರೂ ಕರ್ತನಿಗೆ ಸೇರಿದವರಾಗಿರುತ್ತೇವೆ.
ROM 14:9 ಈ ಕಾರಣಕ್ಕಾಗಿಯೇ, ಜೀವಿಸುವವರಿಗೂ ಸತ್ತವರಿಗೂ ಕರ್ತನಾಗಿರಬೇಕೆಂದು ಕ್ರಿಸ್ತನು ಮರಣಹೊಂದಿ ಪುನರುತ್ಥಾನಗೊಂಡರು.
ROM 14:10 ಹೀಗಿರುವಾಗ, ನೀನು ಏಕೆ ನಿನ್ನ ಸಹೋದರರಿಗೆ ತೀರ್ಪುಮಾಡುತ್ತೀ? ಅಥವಾ ನಿನ್ನ ಸಹೋದರರನ್ನು ಏಕೆ ಹೀನಾಯವಾಗಿ ಕಾಣುತ್ತೀ? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲುವೆವು.
ROM 14:11 ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ನಾನು ಜೀವಿಸುವುದರಿಂದ, ಪ್ರತಿಯೊಬ್ಬರೂ ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಅರಿಕೆ ಮಾಡುವುದು,’ ಎಂದು ಕರ್ತನು ಹೇಳುತ್ತಾರೆ.”
ROM 14:12 ಹೀಗಿರುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.
ROM 14:13 ಆದ್ದರಿಂದ ನಾವು ಒಬ್ಬರ ಮೇಲೊಬ್ಬರು ತೀರ್ಪುಮಾಡದಿರೋಣ. ಇದಲ್ಲದೆ ಸಹೋದರರಿಗೆ ಅಡೆತಡೆಯನ್ನಾಗಲಿ, ಅಡ್ಡಿಯನ್ನಾಗಲಿ, ಹಾಕದಿರೋಣ.
ROM 14:14 ಯಾವುದೇ ಪದಾರ್ಥವು ತನ್ನಷ್ಟಕ್ಕೆ ಅಶುದ್ಧವಲ್ಲ ಎಂದು ನಾನು ಕರ್ತ ಆಗಿರುವ ಯೇಸುವಿನಲ್ಲಿ ನಿಶ್ಚಯವಾಗಿ ಬಲ್ಲೆನು. ಆದರೆ ಯಾರಾದರೂ ಅಶುದ್ಧವೆಂದು ಪರಿಗಣಿಸಿದರೆ ಅದು ಅವರಿಗೆ ಅಶುದ್ಧವಾಗಿರುವುದು.
ROM 14:15 ನೀವು ಆಹಾರದಿಂದ ನಿಮ್ಮ ಸಹೋದರರನ್ನು ದುಃಖ ಪಡಿಸುವುದಾದರೆ ನೀವು ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ. ನೀವು ತಿನ್ನುವುದರ ಮೂಲಕ ಕ್ರಿಸ್ತನು ಯಾವನಿಗೋಸ್ಕರವಾಗಿ ಸತ್ತರೋ ಅಂಥವರನ್ನು ನಾಶಮಾಡಬೇಡಿರಿ.
ROM 14:16 ನಿಮಗಿರುವ ಒಳ್ಳೆಯದು ಪರರ ದೂಷಣೆಗೆ ಗುರಿಯಾಗದಿರಲಿ.
ROM 14:17 ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ. ನೀತಿ, ಸಮಾಧಾನ, ಪವಿತ್ರಾತ್ಮರಲ್ಲಿರುವ ಆನಂದವೂ ಆಗಿದೆ.
ROM 14:18 ಈ ರೀತಿಯಲ್ಲಿ ಕ್ರಿಸ್ತನಿಗೆ ಸೇವೆಮಾಡುವವರು ದೇವರಿಗೆ ಮೆಚ್ಚುಗೆಯಾದವರೂ ಜನರಿಂದ ಅನುಮೋದನೆ ಹೊಂದಿದವರೂ ಆಗಿರುತ್ತಾರೆ.
ROM 14:19 ಆದ್ದರಿಂದ ಯಾವುದು ನಮ್ಮನ್ನು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ನಡೆಸುತ್ತದೋ ಅದನ್ನೇ ಮಾಡೋಣ.
ROM 14:20 ಆಹಾರದ ನಿಮಿತ್ತವಾಗಿ ದೇವರ ಕೆಲಸವನ್ನು ಕೆಡಿಸಬೇಡ, ಎಲ್ಲಾ ಆಹಾರವೂ ಶುದ್ಧವಾದದ್ದೇ. ಆದರೆ ಒಬ್ಬರು ತಿಂದು ವಿಘ್ನವನ್ನು ಒಡ್ಡುವುದು ಕೆಟ್ಟದ್ದು.
ROM 14:21 ಮಾಂಸ ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ ಅಥವಾ ಬೇರೆ ಏನನ್ನೇ ಆಗಲಿ, ಅದು ನಿಮ್ಮ ಸಹೋದರರನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದೆ ಇರುವುದೇ ಒಳ್ಳೆಯದು.
ROM 14:22 ಈ ವಿಷಯದಲ್ಲಿ ನಿಮಗಿರುವ ವೈಯಕ್ತಿಕ ದೃಢವಿಶ್ವಾಸವನ್ನು ನೀವು ದೇವರ ಮುಂದೆ ಇಟ್ಟುಕೊಂಡಿರು. ತಾವು ಅನುಮೋದಿಸಿ ಮಾಡಿದ ಕಾರ್ಯಗಳ ಬಗ್ಗೆ ತಮಗೆ ದಂಡನಾತೀರ್ಪು ಮಾಡಿಕೊಳ್ಳದವರು ಧನ್ಯರು.
ROM 14:23 ಆದರೆ ಅನುಮಾನವುಳ್ಳವರು ಊಟಮಾಡುವುದು ವಿಶ್ವಾಸದಿಂದ ಅಲ್ಲವಾದ್ದರಿಂದ ಅವರು ದೋಷಿಯಾಗುತ್ತಾರೆ. ವಿಶ್ವಾಸವಿಲ್ಲದೆ ಮಾಡುವ ಎಲ್ಲವೂ ಪಾಪವಾಗಿವೆ.
ROM 15:1 ವಿಶ್ವಾಸದಲ್ಲಿ ಬಲವುಳ್ಳವರಾದ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ, ಬಲಹೀನರ ಬಲಹೀನತೆಗಳನ್ನು ಸಹಿಸಿಕೊಳ್ಳಬೇಕು.
ROM 15:2 ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಭಕ್ತಿವೃದ್ಧಿಯ ಹಿತಕ್ಕಾಗಿ ಅವರನ್ನು ಸುಖವನ್ನು ನೋಡಿಕೊಳ್ಳಲಿ.
ROM 15:3 “ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಂದವು,” ಎಂದು ಬರೆದಿರುವಂತೆ ಕ್ರಿಸ್ತನು ಸಹ ತಮ್ಮ ಸುಖಕ್ಕಾಗಿ ಬಾಳಲಿಲ್ಲ.
ROM 15:4 ಪವಿತ್ರ ವೇದದಲ್ಲಿ ಮುಂಚಿತವಾಗಿ ಬರೆದಿರುವುದೆಲ್ಲವೂ ನಮ್ಮ ಬೋಧನೆಗಾಗಿಯೇ ಬರೆಯಲಾಗಿದೆ. ನಾವು ಆ ಬೋಧನೆಗಳ ಮೂಲಕ ಸಹನೆಯನ್ನೂ ಉತ್ತೇಜನೆಯನ್ನೂ ಹೊಂದಿಕೊಂಡು ನಿರೀಕ್ಷೆಯುಳ್ಳವರಾಗಿರಬೇಕೆಂದು ಬರೆಯಲಾಗಿದೆ.
ROM 15:5 ಸಹನೆಯನ್ನೂ ಉತ್ತೇಜನವನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವಂತೆ ನಿಮಗೆ ಒಂದೇ ಆತ್ಮವನ್ನು ಕೊಡಲಿ.
ROM 15:6 ಹೀಗೆ ನೀವು ಒಂದೇ ಮನಸ್ಸುಳ್ಳವರಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರನ್ನು ಒಂದೇ ಬಾಯಿಂದ ಮಹಿಮೆ ಪಡಿಸುವಿರಿ.
ROM 15:7 ದೇವರಿಗೆ ಮಹಿಮೆಯಾಗುವುದಕ್ಕಾಗಿ ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿರಿ.
ROM 15:8 ನಾನು ನಿಮಗೆ ಹೇಳುವುದೇನೆಂದರೆ, ದೇವರು ನಂಬಿಗಸ್ತರು ಎಂದು ತೋರಿಸುವುದಕ್ಕಾಗಿ ಕ್ರಿಸ್ತ ಯೇಸು ಯೆಹೂದ್ಯರಿಗೆ ಸೇವಕರಾಗಿ ಬಂದರು. ಹೀಗೆ ದೇವರು ಪಿತೃಗಳಿಗೆ ಕೊಟ್ಟ ವಾಗ್ದಾನಗಳನ್ನು ದೃಢಪಡಿಸಿದರು.
ROM 15:9 ಇದಲ್ಲದೆ ಯೆಹೂದ್ಯರಲ್ಲದವರು ದೇವರ ಕರುಣೆಗಾಗಿ ದೇವರನ್ನು ಮಹಿಮೆ ಪಡಿಸುವಂತೆ ಹೀಗೆ ಮಾಡಿದರು. ಇದು ಪವಿತ್ರ ವೇದದಲ್ಲಿ ಹೀಗೆ ಬರೆದದ್ದನ್ನು ನೆರವೇರಿಸಿತು: “ಆದ್ದರಿಂದ ಯೆಹೂದ್ಯರಲ್ಲದವರ ನಡುವೆ ನಾನು ನಿನ್ನನ್ನು ಸ್ತುತಿಸುವೆನು, ನಾನು ನಿನ್ನ ನಾಮವನ್ನು ಸ್ತುತಿಸಿ ಹಾಡುವೆನು.”
ROM 15:10 ಮತ್ತೊಂದು ಕಡೆಯಲ್ಲಿ ಹೀಗೆ ಬರೆಯಲಾಗಿದೆ: “ಯೆಹೂದ್ಯರಲ್ಲದವರೇ ದೇವಜನರೊಂದಿಗೆ ಸೇರಿ ಸಂತೋಷಪಡಿರಿ.”
ROM 15:11 ಇನ್ನೊಂದು ಕಡೆಯಲ್ಲಿ, “ಯೆಹೂದ್ಯರಲ್ಲದವರೇ ಕರ್ತನನ್ನು ಸ್ತುತಿಸಿರಿ. ಸಮಸ್ತ ಜನರೇ ಕರ್ತನಿಗೆ ಸ್ತೋತ್ರಮಾಡಿರಿ.”
ROM 15:12 ಪುನಃ ಪ್ರವಾದಿ ಯೆಶಾಯನು ಹೇಳುವುದೇನೆಂದರೆ: “ಇಷಯನ ವಂಶದಿಂದ ಬೇರು ಒಂದು ಚಿಗುರುವುದು, ಜನಾಂಗಗಳನ್ನು ಆಳುವವರಾಗಿ ಅವರು ಉದಯಿಸುವರು. ಯೆಹೂದ್ಯರಲ್ಲದವರು ಆತನಲ್ಲಿ ನಿರೀಕ್ಷೆ ಇಡುವರು.”
ROM 15:13 ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.
ROM 15:14 ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ.
ROM 15:15 ನಾನು ನಿಮಗೆ ಕೆಲವು ವಿಷಯಗಳನ್ನು ಜ್ಞಾಪಕ ಪಡಿಸುವುದಕ್ಕಾಗಿ ಬಹಳ ಧೈರ್ಯದಿಂದ ಹೀಗೆ ಬರೆದಿದ್ದೇನೆ.
ROM 15:16 ಯೆಹೂದ್ಯರಲ್ಲದವರು ಪವಿತ್ರಾತ್ಮನಿಂದ ಪರಿಶುದ್ಧರಾಗಿ, ದೇವರಿಗೆ ಅಂಗೀಕೃತವಾದ ಕಾಣಿಕೆಗಳಾಗಬೇಕೆಂಬ ಕಾರಣದಿಂದ, ನಾನು ಯೆಹೂದ್ಯರಲ್ಲದವರಿಗೆ ಕ್ರಿಸ್ತ ಯೇಸುವಿನ ಸೇವಕನಾಗಿ ದೇವರ ಸುವಾರ್ತೆಯನ್ನು ಪ್ರಕಟಿಸಲು ದೇವರು ನನಗೆ ಕೃಪೆ ನೀಡಿದ್ದಾರೆ.
ROM 15:17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ದೇವರ ಸೇವೆಯ ವಿಷಯವಾಗಿ ಹೊಗಳಿಕೊಳ್ಳುತ್ತೇನೆ.
ROM 15:18 ಯೆಹೂದ್ಯರಲ್ಲದವರನ್ನು ದೇವರಿಗೆ ವಿಧೇಯರಾಗುವುದಕ್ಕಾಗಿ ಕ್ರಿಸ್ತನು ನನ್ನ ಮೂಲಕ ಮಾತಿನಿಂದಲೂ ಕೃತ್ಯದಿಂದಲೂ
ROM 15:19 ಬಲವಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಪವಿತ್ರಾತ್ಮ ಶಕ್ತಿಯಿಂದಲೂ ಮಾಡಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. ಯೆರೂಸಲೇಮಿನಿಂದ ಪ್ರಾರಂಭಿಸಿ, ಇಲ್ಲುರಿಕದವರೆಗೆ ನಾನು ಕ್ರಿಸ್ತನ ಸುವಾರ್ತೆಯನ್ನು ಸಂಪೂರ್ಣವಾಗಿ ಸಾರಿದ್ದೇನೆ.
ROM 15:20 ಬೇರೊಬ್ಬರು ಹಾಕಿರುವ ಅಸ್ತಿವಾರದ ಮೇಲೆ ನಾನು ಕಟ್ಟಬಾರದೆಂದು, ಕ್ರಿಸ್ತನ ಹೆಸರು ತಿಳಿಯಪಡಿಸದೆ ಇರುವಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಆತುರದಿಂದ ಹೋರಾಡುತ್ತಿದ್ದೇನೆ.
ROM 15:21 ಪವಿತ್ರ ವೇದದಲ್ಲಿ ಬರೆದಿರುವಂತೆ : “ಯಾರಿಗೆ ಆತನ ಸುದ್ದಿ ಮುಟ್ಟಲಿಲ್ಲವೋ ಅವರು ಆತನನ್ನು ಕಾಣುವರು; ಯಾರು ಆತನ ವರ್ತಮಾನ ಕೇಳಲಿಲ್ಲವೋ ಅವರು ಗ್ರಹಿಸಿಕೊಳ್ಳುವರು.”
ROM 15:22 ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಬಾರಿ ಅಭ್ಯಂತರವಾಯಿತು.
ROM 15:23 ಈಗಲಾದರೋ ಈ ಪ್ರದೇಶದಲ್ಲಿ ನನಗೆ ಅವಕಾಶವಿಲ್ಲದಿರುವುದರಿಂದಲೂ ಅನೇಕ ವರ್ಷಗಳಿಂದ ನಿಮ್ಮನ್ನು ಸಂದರ್ಶಿಸಬೇಕೆಂಬ ಹಂಬಲವಿರುವುದರಿಂದಲೂ
ROM 15:24 ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನಿಮ್ಮನ್ನು ಸಂದರ್ಶಿಸುವ ನಿರೀಕ್ಷೆಯಲ್ಲಿದ್ದೇನೆ. ಸ್ವಲ್ಪಕಾಲ ನಿಮ್ಮ ಅನ್ಯೋನ್ಯತೆಯ ಆನಂದವನ್ನು ಪಡೆದ ಬಳಿಕ ಅಲ್ಲಿಗೆ ಹೋಗುವ ನನ್ನ ಪ್ರಯಾಣದಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತೇನೆ.
ROM 15:25 ಈಗಲಾದರೋ ನಾನು ದೇವಜನರ ಸೇವೆಗಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ.
ROM 15:26 ಮಕೆದೋನ್ಯ ಮತ್ತು ಅಖಾಯದವರು ಯೆರೂಸಲೇಮಿನ ಭಕ್ತರಲ್ಲಿರುವ ಬಡವರಾಗಿರುವವರಿಗೆ ಸಹಾಯ ಮಾಡುವುದು ಒಳ್ಳೆಯದೆಂದು ಭಾವಿಸಿದ್ದಾರೆ.
ROM 15:27 ಅವರು ಅದನ್ನು ಮಾಡಲು ಇಷ್ಟಪಟ್ಟದ್ದಲ್ಲದೆ, ಅದು ಕರ್ತವ್ಯವೂ ಆಗಿದೆ. ಹೌದು, ಯೆಹೂದ್ಯರಲ್ಲದವರು ಯೆಹೂದ್ಯರ ಆತ್ಮಿಕ ಆಶೀರ್ವಾದಗಳಲ್ಲಿ ಪಾಲುಗೊಂಡಿರುವುದಾದರೆ ತಮ್ಮ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯವಾಗಿದೆ.
ROM 15:28 ಆದ್ದರಿಂದ ಈ ಕೆಲಸವನ್ನು ಪೂರೈಸಿ ಸಂಗ್ರಹಿಸಿ ಕೊಟ್ಟದ್ದನ್ನು ಅವರಿಗೆ ಒಪ್ಪಿಸಿ ಖಚಿತವಾದ ಬಳಿಕ, ನಾನು ಸ್ಪೇನ್ ದೇಶಕ್ಕೆ ಹೋಗುವ ದಾರಿಯಲ್ಲಿ ನಿಮ್ಮನ್ನು ಸಂದರ್ಶಿಸುತ್ತೇನೆ.
ROM 15:29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದದಿಂದ ತುಂಬಿದವನಾಗಿ ಬರುತ್ತೇನೆಂದು ಬಲ್ಲೆನು.
ROM 15:30 ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ.
ROM 15:31 ನಾನು ಯೂದಾಯ ಪ್ರಾಂತದಲ್ಲಿ ಅವಿಶ್ವಾಸಿಗಳ ಕೈಯಿಂದ ಕಾಪಾಡಬೇಕೆಂತಲೂ ನನ್ನ ಸೇವೆಯು ಯೆರೂಸಲೇಮಿನಲ್ಲಿರುವ ದೇವಜನರಿಗೆ ಮೆಚ್ಚುಗೆಯಾಗಿರಬೇಕೆಂತಲೂ ಪ್ರಾರ್ಥಿಸಿರಿ.
ROM 15:32 ಆಗ ನಾನು ದೇವರ ಚಿತ್ತಾನುಸಾರ ನಿಮ್ಮ ಬಳಿಗೆ ಸಂತೋಷದಿಂದ ಬಂದು, ನಿಮ್ಮ ಸಂಗಡ ವಿಶ್ರಾಂತಿ ಹೊಂದುವೆನು.
ROM 15:33 ಸಮಾಧಾನದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
ROM 16:1 ನಮ್ಮ ಸಹೋದರಿಯೂ ಕೆಂಖ್ರೆಯ ಸಭೆಯ ಸೇವಕಿಯೂ ಆಗಿರುವ ಫೊಯಿಬೆಯನ್ನು ನಿಮಗೆ ಪರಿಚಯಿಸುತ್ತೇನೆ.
ROM 16:2 ಕರ್ತನಲ್ಲಿ ದೇವಜನರಿಗೆ ಯೋಗ್ಯವಾಗಿರುವ ರೀತಿಯಲ್ಲಿ ಆಕೆಯನ್ನು ಸ್ವೀಕರಿಸಿ, ಆಕೆಯು ಅನೇಕರಿಗೂ ನನಗೂ ವಿಶೇಷವಾದ ರೀತಿಯಲ್ಲಿ ಸಹಾಯ ಮಾಡಿದವಳಾಗಿರುವುದರಿಂದ ನಿಮಗೆ ಯಾವ ಕೊರತೆಗಳಿದ್ದರೂ ಆಕೆಗೆ ಬೇಕಾದದ್ದನ್ನು ಒದಗಿಸಿರಿ.
ROM 16:3 ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಕೆಲಸದವರಾಗಿರುವ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
ROM 16:4 ಅವರು ನನ್ನ ಪ್ರಾಣದ ನಿಮಿತ್ತವಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿದರು. ಅವರಿಗೆ ನಾನು ಮಾತ್ರವೇ ಅಲ್ಲ ಯೆಹೂದ್ಯರಲ್ಲದವರು ಎಲ್ಲಾ ಸಭೆಗಳವರೂ ಕೃತಜ್ಞರಾಗಿರುತ್ತಾರೆ.
ROM 16:5 ಅವರ ಮನೆಯಲ್ಲಿ ಸೇರಿ ಬರುವ ಸಭೆಗೂ ನನ್ನ ವಂದನೆಗಳನ್ನು ತಿಳಿಸಿರಿ. ಏಷ್ಯಾ ಪ್ರಾಂತದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾಗಿರುವ ಎಪೈನೆತನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
ROM 16:6 ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆಗಳು.
ROM 16:7 ನನ್ನ ಬಂಧುಗಳೂ ಜೊತೆ ಸೆರೆಯವರೂ ಆದ ಅಂದ್ರೋನಿಕನಿಗೂ ಯೂನ್ಯಳಿಗೂ ವಂದನೆಗಳು. ಅವರು ಅಪೊಸ್ತಲರಲ್ಲಿ ಪ್ರಸಿದ್ಧರೂ ಮತ್ತು ನನಗಿಂತ ಮೊದಲೇ ಕ್ರಿಸ್ತನಲ್ಲಿದ್ದವರೂ ಆಗಿರುತ್ತಾರೆ.
ROM 16:8 ನನಗೆ ಕರ್ತನಲ್ಲಿ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆಗಳು.
ROM 16:9 ಕ್ರಿಸ್ತನಲ್ಲಿ ನನ್ನ ಜೊತೆ ಸೇವಕನಾಗಿರುವ ಉರ್ಬಾನನಿಗೂ ನನಗೆ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
ROM 16:10 ಕ್ರಿಸ್ತನಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆಗಳು, ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
ROM 16:11 ನನ್ನ ಸಂಬಂಧಿಯಾಗಿರುವ ಹೆರೊಡಿಯೋನನಿಗೆ ವಂದನೆಗಳು, ಕರ್ತನಲ್ಲಿರುವ ನಾರ್ಕಿಸ್ಸನ ಕುಟುಂಬದವರಿಗೆ ವಂದನೆಗಳು.
ROM 16:12 ಕರ್ತನ ಸೇವೆಯಲ್ಲಿ ದುಡಿಯುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು, ಕರ್ತನಲ್ಲಿ ತುಂಬಾ ಶ್ರಮಪಟ್ಟು ದುಡಿದಿರುವ ಪ್ರೀತಿಯ ಪೆರ್ಸೀಸಳಿಗೂ ನನ್ನ ವಂದನೆಗಳು.
ROM 16:13 ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೂ ತಾಯಿಯಂತಿದ್ದ ಅವನ ತಾಯಿಗೂ ವಂದನೆಗಳು.
ROM 16:14 ಅಸುಂಕ್ರಿತ, ಪ್ಲೆಗೋನ, ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನ ಮತ್ತು ಅವನೊಂದಿಗಿರುವ ಪ್ರಿಯರಿಗೂ ವಂದನೆಗಳು.
ROM 16:15 ಫಿಲೊಲೊಗ, ಯೂಲ್ಯಳು, ನೇರ್ಯ ಮತ್ತು ಅವನ ಸಹೋದರಿ, ಒಲುಂಪ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೂ ವಂದನೆಗಳು.
ROM 16:16 ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲಾ ಸಭೆಗಳವರೂ ನಿಮಗೆ ವಂದನೆಗಳನ್ನು ಕಳುಹಿಸುತ್ತಾರೆ.
ROM 16:17 ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ROM 16:18 ಅಂಥಾ ಜನರು ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಸೇವೆ ಮಾಡುವವರಾಗಿರದೆ ತಮ್ಮ ಹೊಟ್ಟೆಯ ಸೇವೆ ಮಾಡುವವರಾಗಿರುತ್ತಾರೆ. ನಯವಾದ ಮತ್ತು ಮುಖಸ್ತುತಿಯ ಮಾತುಗಳಿಂದ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
ROM 16:19 ನಿಮ್ಮ ವಿಧೇಯತೆಯು ಎಲ್ಲಾ ಮನುಷ್ಯರಿಗೂ ಪ್ರಸಿದ್ಧವಾಯಿತು. ಆದ್ದರಿಂದ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ಆದರೆ ನೀವು ಒಳ್ಳೆಯದನ್ನು ಕುರಿತು ಜ್ಞಾನಿಗಳಾಗಿಯೂ ಕೆಟ್ಟವುಗಳನ್ನು ಕುರಿತು ನಿಷ್ಕಳಂಕರಾಗಿಯೂ ಇರಬೇಕೆಂದು ಅಪೇಕ್ಷಿಸುತ್ತೇನೆ.
ROM 16:20 ಆಗ ಸಮಾಧಾನದ ದೇವರು ಬೇಗನೆ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತ ಆಗಿರುವ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
ROM 16:21 ನನ್ನ ಜೊತೆ ಕೆಲಸದವನಾಗಿರುವ ತಿಮೊಥೆಯನು ನಿಮಗೆ ವಂದನೆಗಳನ್ನು ತಿಳಿಸುತ್ತಾನೆ. ಹಾಗೆಯೇ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
ROM 16:22 ಈ ಪತ್ರವನ್ನು ಬರೆದ ತೆರ್ತ್ಯನೆಂಬ ನಾನು ಕರ್ತನಲ್ಲಿ ನಿಮ್ಮನ್ನು ವಂದಿಸುತ್ತೇನೆ.
ROM 16:23 ಇಲ್ಲಿ ನನಗೂ ಇಡೀ ಸಭೆಗೂ ಅತಿಥಿ ಸತ್ಕಾರ ಮಾಡುತ್ತಿರುವ ಗಾಯನು ತನ್ನ ವಂದನೆಗಳನ್ನು ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾಗಿರುವ ಎರಸ್ತನೂ ಮತ್ತು ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
ROM 16:24 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರೊಡನೆ ಇರಲಿ! ಆಮೆನ್.
ROM 16:25 ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.
ROM 16:26 ಆದರೆ ನಿತ್ಯ ದೇವರು ಆಜ್ಞಾಪಿಸಿದಂತೆ ಈಗ ಪ್ರವಾದಿಗಳ ಗ್ರಂಥಗಳ ಮೂಲಕ ಮುಂತಿಳಿಸಿರುವಂತೆ, ಈ ಸಂದೇಶವು ಯೆಹೂದ್ಯರಲ್ಲದ ಜನರೆಲ್ಲರಿಗೂ ತಿಳಿಸಲಾಗಿದೆ. ಹೀಗೆ ಅವರು ನಂಬಿದ್ದರಿಂದ ವಿಧೇಯರಾಗುತ್ತಾರೆ.
ROM 16:27 ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.
1CO 1:1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನಿಂದ ಅಪೊಸ್ತಲನಾಗಲು ಕರೆಯಲಾದ ಪೌಲನೆಂಬ ನಾನು ಮತ್ತು ನಮ್ಮ ಸಹೋದರ ಸೊಸ್ಥೆನನು,
1CO 1:2 ಕ್ರಿಸ್ತ ಯೇಸುವಿನಲ್ಲಿ ಪ್ರತ್ಯೇಕವಾಗಿ, ಪವಿತ್ರರಾಗುವುದಕ್ಕೆ ಕರೆಹೊಂದಿದ ಕೊರಿಂಥದಲ್ಲಿರುವ ದೇವರ ಸಭೆಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟ ಸಕಲ ಜನರಿಗೂ ಬರೆಯುವ ಪತ್ರ:
1CO 1:3 ನಮ್ಮ ತಂದೆಯಾದ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.
1CO 1:4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಟ್ಟಿರುವ ದೇವರ ಕೃಪೆಯ ಕಾರಣಕ್ಕಾಗಿ ನಾನು ಯಾವಾಗಲೂ ನಿಮಗೋಸ್ಕರ ಅವರಿಗೆ ಕೃತಜ್ಞತೆ ಹೇಳುವವನಾಗಿದ್ದೇನೆ.
1CO 1:5 ನೀವು ಕ್ರಿಸ್ತ ಯೇಸುವಿನಲ್ಲಿ ಜ್ಞಾನದಲ್ಲಿಯೂ ಮಾತುಗಳಲ್ಲಿಯೂ ಎಲ್ಲಾ ಸಮೃದ್ಧಿಯನ್ನು ಹೊಂದಿದ್ದೀರಿ.
1CO 1:6 ಆದ್ದರಿಂದ ದೇವರು ಕ್ರಿಸ್ತ ಯೇಸುವಿನ ವಿಷಯವಾದ ನಮ್ಮ ಸಾಕ್ಷಿಯು ನಿಮ್ಮಲ್ಲಿ ದೃಢವಾಯಿತು.
1CO 1:7 ಹೀಗಿರುವುದರಿಂದ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಪುನರಾಗಮನವನ್ನು ಆತುರದಿಂದ ಎದುರು ನೋಡುವವರಾದ ನಿಮಗೆ, ಯಾವುದೇ ಆತ್ಮಿಕ ವರಗಳ ಕೊರತೆಯು ಇರುವುದಿಲ್ಲ.
1CO 1:8 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು.
1CO 1:9 ತಮ್ಮ ಪುತ್ರರೂ ನಮ್ಮ ಕರ್ತ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ಪ್ರಾಮಾಣಿಕರು.
1CO 1:10 ಪ್ರಿಯರೇ, ನೀವೆಲ್ಲರೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು, ನಿಮ್ಮೊಳಗೆ ಗುಂಪುಗಾರಿಕೆ, ಪಕ್ಷಬೇಧಗಳಿರದೆ, ಒಂದೇ ಮನಸ್ಸು ಮತ್ತು ಒಂದೇ ಆಲೋಚನೆಗಳಲ್ಲಿ ಪರಿಪೂರ್ಣವಾದ ಅನ್ಯೋನ್ಯತೆಯಲ್ಲಿರಬೇಕೆಂದು ನಾನು ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1CO 1:11 ನನ್ನ ಪ್ರಿಯರೇ, ಖ್ಲೋಯೆಯ ಮನೆಯ ಕೆಲವರು, ನಿಮ್ಮೊಳಗೆ ಜಗಳಗಳುಂಟೆಂದು ನನಗೆ ತಿಳಿಸಿದರು.
1CO 1:12 ನಿಮ್ಮಲ್ಲಿ ಒಬ್ಬನು, “ನಾನು ಪೌಲನವನು,” ಇನ್ನೊಬ್ಬನು, “ನಾನು ಅಪೊಲ್ಲೋಸನವನು,” ಬೇರೊಬ್ಬನು, “ನಾನು ಕೇಫನವನು,” ಇನ್ನೊಬ್ಬನು, “ನಾನು ಕ್ರಿಸ್ತನವನು,” ಎಂದು ಹೇಳುತ್ತೀರಂತೆ.
1CO 1:13 ಕ್ರಿಸ್ತ ಯೇಸು ವಿಭಾಗವಾಗಿದ್ದಾರೋ? ಪೌಲನು ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ತೆಗೆದುಕೊಂಡಿರುವಿರೋ?
1CO 1:14 ಕ್ರಿಸ್ಪನನ್ನು ಮತ್ತು ಗಾಯನನ್ನು ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಕೊಡಲಿಲ್ಲ. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಹೇಳುತ್ತೇನೆ.
1CO 1:15 ಏಕೆಂದರೆ ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದ್ದಾರೆಂದು ಯಾರೂ ಹೇಳಬಾರದು.
1CO 1:16 ಹೌದು, ಸ್ತೆಫನನ ಮನೆಯವರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದೇನೆ. ಇದನ್ನು ಬಿಟ್ಟು ಯಾರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದು ನನ್ನ ಜ್ಞಾಪಕದಲ್ಲಿಲ್ಲ.
1CO 1:17 ದೀಕ್ಷಾಸ್ನಾನ ಕೊಡುವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಕಳುಹಿಸದೆ ಸುವಾರ್ತೆಯನ್ನು ಸಾರುವುದಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ. ಸುವಾರ್ತೆ ಸಾರುವಂಥದ್ದು ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರುತ್ತಿದ್ದರೆ ಕ್ರಿಸ್ತ ಯೇಸುವಿನ ಶಿಲುಬೆಯ ಶಕ್ತಿಯು ಬರಿದಾಗಿಬಿಡುತಿತ್ತು.
1CO 1:18 ಶಿಲುಬೆಯ ಸಂದೇಶವು ವಿನಾಶದ ಮಾರ್ಗದಲ್ಲಿರುವವರಿಗೆ ಬುದ್ದಿಹೀನವಾಗಿದೆ. ರಕ್ಷಣೆ ಹೊಂದುತ್ತಿರುವ ನಮಗಾದರೋ, ಅದು ದೇವರ ಶಕ್ತಿಯಾಗಿದೆ.
1CO 1:19 ಏಕೆಂದರೆ, ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ಜ್ಞಾನಿಗಳ ಜ್ಞಾನವನ್ನು ನಾನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ನಾನು ನಿರರ್ಥಕ ಮಾಡುವೆನು.”
1CO 1:20 ಜ್ಞಾನಿಯಾದ ಮನುಷ್ಯನೆಲ್ಲಿ? ಪಂಡಿತನು ಎಲ್ಲಿ? ಈ ಕಾಲದ ತತ್ವಜ್ಞಾನಿ ಎಲ್ಲಿ? ಈ ಲೋಕದ ಜ್ಞಾನವನ್ನು ದೇವರು ಬುದ್ದಿಹೀನತೆಯನ್ನಾಗಿ ಮಾಡಿದ್ದಾರಲ್ಲವೇ?
1CO 1:21 ಈ ಪ್ರಪಂಚವು ತನ್ನ ಜ್ಞಾನದ ಮೂಲಕ ದೇವರನ್ನು ಅರಿತುಕೊಳ್ಳಲಿಲ್ಲ; ಆದ್ದರಿಂದ ದೇವರ ಜ್ಞಾನದಿಂದ, ನಂಬಿದವರನ್ನು ಪ್ರಸಂಗದ ಬುದ್ದಿಹೀನತೆಯಿಂದ ರಕ್ಷಿಸುವುದು ದೇವರಿಗೆ ಮೆಚ್ಚುಗೆಯಾಯಿತು.
1CO 1:22 ಯೆಹೂದ್ಯರು ಆಶ್ಚರ್ಯಕರವಾದ ಗುರುತುಗಳನ್ನು ಹುಡುಕುತ್ತಾರೆ. ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ.
1CO 1:23 ನಾವಾದರೋ ಶಿಲುಬೆಗೆ ಹಾಕಲಾದ ಕ್ರಿಸ್ತ ಯೇಸುವನ್ನೇ ಪ್ರಸಂಗಿಸುತ್ತಿದ್ದೇವೆ. ಇದು ಯೆಹೂದ್ಯರಿಗೆ ವಿಘ್ನವೂ ಯೆಹೂದ್ಯರಲ್ಲದವರಿಗೆ ಬುದ್ದಿಹೀನತೆಯಾಗಿದೆ.
1CO 1:24 ಆದರೆ ದೇವರಿಂದ ರಕ್ಷಣೆಗೆ ಕರೆಹೊಂದಿದ ಯೆಹೂದ್ಯರಿಗಾಗಲಿ, ಯೆಹೂದ್ಯರಲ್ಲದವರಿಗಾಗಲಿ ಕ್ರಿಸ್ತ ಯೇಸು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾರೆ.
1CO 1:25 ಏಕೆಂದರೆ ದೇವರ ಬುದ್ಧಿಹೀನತೆ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆ ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.
1CO 1:26 ಪ್ರಿಯರೇ, ನೀವು ದೇವರ ಕರೆಯನ್ನು ಹೊಂದಿದಾಗ ಏನಾಗಿದ್ದಿರೆಂಬುದನ್ನು ಆಲೋಚಿಸಿರಿ. ನಿಮ್ಮೊಳಗೆ ಲೋಕಾನುಸಾರವಾಗಿ ಜ್ಞಾನಿಗಳೂ ಅನೇಕರಿಲ್ಲ, ಪ್ರಭಾವಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ.
1CO 1:27 ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವಂತೆ, ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾರೆ. ದೇವರು ಬಲಿಷ್ಠರನ್ನು ನಾಚಿಕೆಪಡಿಸುವಂತೆ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾರೆ.
1CO 1:28 ದೇವರು ಈ ಲೋಕದ ಗಣ್ಯರನ್ನು ಏನೂ ಇಲ್ಲದವರನ್ನಾಗಿ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನೂ, ಹೀನೈಸಲಾದವರನ್ನೂ ಕೀಳಾದವರನ್ನೂ, ಆರಿಸಿಕೊಂಡಿದ್ದಾರೆ.
1CO 1:29 ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿರುವುದಿಲ್ಲ.
1CO 1:30 ನೀವು ದೇವರಿಂದಲೇ ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿಯೂ ಶುದ್ಧೀಕರಣವೂ ವಿಮೋಚನೆಯೂ ಆಗಿದ್ದಾರೆ.
1CO 1:31 ಪವಿತ್ರ ವೇದದಲ್ಲಿ ಬರೆದಿರುವಂತೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”
1CO 2:1 ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಮಾನವೀಯ ಜ್ಞಾನದಿಂದಾಗಲಿ ದೇವರ ವಾಕ್ಯವನ್ನು ಸಾರುವವನಾಗಿ ಬರಲಿಲ್ಲ.
1CO 2:2 ಶಿಲುಬೆಗೆ ಹಾಕಲಾದ ಯೇಸು ಕ್ರಿಸ್ತನನ್ನೇ ಹೊರತು ನಿಮ್ಮಲ್ಲಿ ಬೇರೆ ಯಾವುದನ್ನೂ ತಿಳಿಯದವನಾಗಿರುವೆನೆಂದು ತೀರ್ಮಾನಿಸಿಕೊಂಡೆನು.
1CO 2:3 ನಾನು ನಿಮ್ಮ ಬಳಿಗೆ ಬಂದಾಗ ಬಲಹೀನನೂ ಬಹಳವಾಗಿ ಭಯಪಟ್ಟು ನಡುಗುವವನೂ ಆಗಿದ್ದೆನು.
1CO 2:4 ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಜ್ಞಾನ ಹಾಗೂ ಮನವೊಲಿಸುವ ವಾಕ್ಯಗಳನ್ನು ಪ್ರಯೋಗಿಸದೆ, ದೇವರಾತ್ಮನ ಶಕ್ತಿಯನ್ನೇ ಪ್ರಯೋಗಿಸಿದೆನು.
1CO 2:5 ನಿಮ್ಮ ನಂಬಿಕೆಯು ಮನುಷ್ಯ ಜ್ಞಾನದ ಮೇಲೆ ಅವಲಂಬಿಸದೆ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕೆಂದು ನಾನು ಹೀಗೆ ಮಾಡಿದೆನು.
1CO 2:6 ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ.
1CO 2:7 ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ.
1CO 2:8 ಇದನ್ನು ಇಹಲೋಕದ ಅಧಿಕಾರಿಗಳಲ್ಲಿ ಒಬ್ಬರಾದರೂ ಅರಿಯಲಿಲ್ಲ. ಅರಿತಿದ್ದರೆ, ಅವರು ಮಹಿಮೆಯುಳ್ಳ ಕರ್ತದೇವರನ್ನು ಶಿಲುಬೆಗೇರಿಸುತ್ತಿರಲಿಲ್ಲ.
1CO 2:9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು ಯಾವ ಕಣ್ಣೂ ಕಾಣಲಿಲ್ಲ, ಯಾವ ಕಿವಿಯೂ ಕೇಳಲಿಲ್ಲ, ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”
1CO 2:10 ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ. ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ.
1CO 2:11 ಮನುಷ್ಯನ ಆಲೋಚನೆಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವುದು? ಹಾಗೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಗ್ರಹಿಸಲಾರರು.
1CO 2:12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ.
1CO 2:13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ.
1CO 2:14 ಆದರೆ ಭೌತಿಕ ಮನುಷ್ಯನು ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು.
1CO 2:15 ಆದರೆ ಆತ್ಮಿಕ ಮನುಷ್ಯನು ಎಲ್ಲವನ್ನೂ ವಿವೇಚಿಸಿಕೊಳ್ಳುತ್ತಾನೆ. ಆದರೆ ಅವನಿಗೆ ಬೇರೆ ಯಾರೂ ತೀರ್ಪುಮಾಡಲಾಗದು.
1CO 2:16 ಏಕೆಂದರೆ, “ಕರ್ತದೇವರ ಮನಸ್ಸನ್ನು ತಿಳಿದುಕೊಂಡು, ಅವರಿಗೆ ಉಪದೇಶಿಸುವವನಾರು?” ಆದರೆ ನಮಗೆ ಕ್ರಿಸ್ತ ಯೇಸುವಿನ ಮನಸ್ಸು ಇದೆ.
1CO 3:1 ಪ್ರಿಯರೇ, ನೀವು ದೇವರಾತ್ಮರಿಗೆ ತಕ್ಕಂತೆ ಬಾಳುವವರಾಗಿ ನಾನು ನಿಮ್ಮ ಸಂಗಡ ಮಾತನಾಡುತ್ತಾ ಇಲ್ಲ. ನೀವು ಇನ್ನೂ ಕ್ರಿಸ್ತ ಯೇಸುವಿನಲ್ಲಿ ಕೂಸುಗಳೂ ಪ್ರಾಪಂಚಿಕರೂ ಆಗಿರುವಿರೆಂದು ಭಾವಿಸಿ ನಿಮ್ಮ ಸಂಗಡ ಮಾತನಾಡಬೇಕಾಯಿತು.
1CO 3:2 ನಾನು ನಿಮಗೆ ಹಾಲು ಕೊಟ್ಟೆನು. ಗಟ್ಟಿ ಆಹಾರವನ್ನು ಕೊಡಲಿಲ್ಲ, ಏಕೆಂದರೆ ನಿಮಗೆ ಶಕ್ತಿ ಇರಲಿಲ್ಲ, ಈಗಲಾದರೂ ನಿಮಗೆ ಶಕ್ತಿಯಿಲ್ಲ.
1CO 3:3 ಏಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ಹೇಗೆಂದರೆ, ನಿಮ್ಮೊಳಗೆ ಅಸೂಯೆ, ಜಗಳಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದೀರಲ್ಲದೆ ಕೇವಲ ಮಾನವರಂತೆ ನಡೆಯುತ್ತೀರಲ್ಲವೇ?
1CO 3:4 ಒಬ್ಬನು, “ನಾನು ಪೌಲನವನು,” ಎಂದು ಮತ್ತೊಬ್ಬನು, “ನಾನು ಅಪೊಲ್ಲೋಸನವನು,” ಎಂದೂ ಹೇಳುತ್ತಿರುವಾಗ, ನೀವು ಕೇವಲ ಮಾನವರಂತೆ ಆಗಿದ್ದೀರಲ್ಲವೇ?
1CO 3:5 ಹಾಗಾದರೆ, ಅಪೊಲ್ಲೋಸನು ಯಾರು? ಪೌಲನು ಯಾರು? ಅವನವನಿಗೆ ಕರ್ತದೇವರು ನೇಮಿಸಿದ ಕಾರ್ಯದ ಪ್ರಕಾರ ಅವರವರ ಮುಖಾಂತರ ನೀವು ನಂಬಿದ್ದೀರಿ. ಅವರು ಕೇವಲ ಸೇವಕರಾಗಿದ್ದಾರೆ.
1CO 3:6 ನಾನು ಬೀಜವನ್ನು ಬಿತ್ತಿದೆನು, ಅಪೊಲ್ಲೋಸನು ನೀರು ಹಾಕಿದನು, ಆದರೆ ಬೆಳೆಸಿದವರು ದೇವರೇ.
1CO 3:7 ಹೀಗಿರಲಾಗಿ ನೆಡುವವನಾಗಲಿ, ನೀರು ಹಾಕುವವನಾಗಲಿ ಪ್ರಾಮುಖ್ಯರಾಗಿರದೆ, ಬೆಳೆಸುವ ದೇವರೇ ಬಹು ಪ್ರಾಮುಖ್ಯವಾದವರು.
1CO 3:8 ನೆಡುವವನೂ ನೀರು ಹಾಕುವವನೂ ಒಂದೇ ಉದ್ದೇಶವುಳ್ಳವರಾಗಿರುತ್ತಾರೆ. ಪ್ರತಿಯೊಬ್ಬನಿಗೆ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು.
1CO 3:9 ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
1CO 3:10 ದೇವರು ನನಗೆ ಕೊಟ್ಟ ಕೃಪೆಗೆ ಅನುಸಾರವಾಗಿ, ನಾನು ಜ್ಞಾನಿಯಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ಪ್ರತಿಯೊಬ್ಬನೂ ತಾನು ಅದರ ಮೇಲೆ ಎಷ್ಟು ಶ್ರದ್ಧೆಯಿಂದ ಕಟ್ಟುತ್ತಾನೆಂದು ನೋಡಿಕೊಳ್ಳಬೇಕು.
1CO 3:11 ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
1CO 3:12 ಯಾವನಾದರೂ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಕಟ್ಟಿಗೆ, ಹುಲ್ಲು ಅಥವಾ ಜೊಂಡು ಮುಂತಾದವುಗಳಿಂದ ಕಟ್ಟಿದರೆ,
1CO 3:13 ಕ್ರಿಸ್ತ ಯೇಸುವಿನ ದಿನವು ಇದನ್ನು ಬಹಿರಂಗಕ್ಕೆ ತರುವಾಗ, ಅವನವನ ಕೆಲಸವು ಏನಾಗಿರುವುದೆಂಬುದು ವ್ಯಕ್ತವಾಗುವುದು. ಏಕೆಂದರೆ ಅದು ಬೆಂಕಿಯಿಂದ ಪ್ರಕಟವಾಗುವುದು. ಪ್ರತಿಯೊಬ್ಬನ ಕೆಲಸದ ಯೋಗ್ಯತೆಯನ್ನು ಬೆಂಕಿಯೇ ಪರೀಕ್ಷಿಸುವುದು.
1CO 3:14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಬೆಂಕಿಯಿಂದ ತಪ್ಪಿಸಿಕೊಂಡು ಉಳಿದರೆ, ಅವನಿಗೆ ಪ್ರತಿಫಲ ಸಿಕ್ಕುವುದು.
1CO 3:15 ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ, ಅವನಿಗೆ ನಷ್ಟವಾಗುವುದು, ಅವನಾದರೋ ರಕ್ಷಣೆಹೊಂದುವನು. ಆದರೆ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡವನ ಹಾಗಿರುವನು.
1CO 3:16 ನೀವು ದೇವರ ಆಲಯವಾಗಿದ್ದೀರೆಂಬುದೂ ದೇವರ ಆತ್ಮ ನಿಮ್ಮಲ್ಲಿ ವಾಸ ಮಾಡುತ್ತಾರೆಂಬುದೂ ನಿಮಗೆ ಗೊತ್ತಿಲ್ಲವೋ?
1CO 3:17 ಯಾರಾದರೂ ದೇವರ ಆಲಯವನ್ನು ನಾಶಪಡಿಸಿದರೆ, ದೇವರು ಅವರನ್ನು ನಾಶಪಡಿಸುವರು. ಏಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
1CO 3:18 ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ.
1CO 3:19 ಏಕೆಂದರೆ ಇಹಲೋಕ ಜ್ಞಾನವು ದೇವರ ದೃಷ್ಟಿಯಲ್ಲಿ ಮೂರ್ಖತನವಾಗಿದೆ, ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುವರು,” ಎಂದೂ
1CO 3:20 “ಜ್ಞಾನಿಗಳ ಯೋಚನೆಗಳು ವ್ಯರ್ಥವಾದವುಗಳೆಂದು ಕರ್ತದೇವರು ತಿಳಿದುಕೊಳ್ಳುತ್ತಾರೆ,” ಎಂದೂ ಬರೆದಿದೆಯಲ್ಲಾ.
1CO 3:21 ಆದಕಾರಣ ಇನ್ನು ಮೇಲೆ ನಾಯಕರ ಬಗ್ಗೆ ಯಾರೂ ಹೊಗಳುವುದು ಬೇಡ! ಏಕೆಂದರೆ ಸಮಸ್ತವೂ ನಿಮ್ಮದು.
1CO 3:22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ, ಲೋಕವಾಗಲಿ, ಜೀವವಾಗಲಿ, ಮರಣವಾಗಲಿ, ವರ್ತಮಾನದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ ಸಮಸ್ತವೂ ನಿಮ್ಮವೇ.
1CO 3:23 ನೀವು ಕ್ರಿಸ್ತ ಯೇಸುವಿನವರು, ಕ್ರಿಸ್ತ ಯೇಸು ದೇವರವರು.
1CO 4:1 ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.
1CO 4:2 ಹೀಗಿರುವುದರಿಂದ ನಂಬಿಗಸ್ತರಾಗಿರುವುದು ನಿರ್ವಾಹಕರಲ್ಲಿ ಅವಶ್ಯವಾಗಿ ಕಾಣತಕ್ಕ ಸದ್ಗುಣವಾಗಿದೆ.
1CO 4:3 ನನಗಾದರೋ ನಿಮ್ಮಿಂದಾಗಲಿ, ಮನುಷ್ಯರ ನ್ಯಾಯಾಲಯದಿಂದಾಗಲಿ ವಿಚಾರಣೆಯಾಗುವುದು ಅತ್ಯಲ್ಪ ಕಾರ್ಯವಾಗಿದೆ. ನನ್ನನ್ನು ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ.
1CO 4:4 ನನ್ನ ಮನಸ್ಸಾಕ್ಷಿಯು ಶುದ್ಧವಾಗಿದೆ. ಆದರೆ ಅದು ನನ್ನನ್ನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯತೀರಿಸುವವರು ಕರ್ತದೇವರೇ,
1CO 4:5 ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು.
1CO 4:6 ಪ್ರಿಯರೇ, ನಾನು ನಿಮ್ಮ ಪ್ರಯೋಜನಕ್ಕಾಗಿ ಇವುಗಳನ್ನು ದೃಷ್ಟಾಂತರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. “ನೀವು ಬರೆದಿರುವುದಕ್ಕೆ ಮೀರಿ ಹೋಗಬಾರದು,” ಎಂಬ ಹೇಳಿಕೆಯ ಅರ್ಥವನ್ನು ನಮ್ಮಿಂದ ಕಲಿತುಕೊಳ್ಳಬಹುದು. ಆಗ ನಿಮ್ಮಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುವುದರ ವಿರೋಧವಾಗಿ ಹೆಮ್ಮೆ ಪಡುವುದಿಲ್ಲ.
1CO 4:7 ನಿಮ್ಮನ್ನು ಇತರರಿಗಿಂತಲೂ ವ್ಯತ್ಯಾಸವುಳ್ಳವರಾಗಿ ಮಾಡಿದವರು ಯಾರು? ನೀವು ದೇವರಿಂದ ಪಡೆಯದಿರುವಂಥದು ನಿಮ್ಮಲ್ಲಿ ಯಾವುದಾದರೂ ಇದೆಯೇ? ಹೀಗೆ ಎಲ್ಲವನ್ನೂ ಪಡೆದ ಮೇಲೆ, ಪಡೆಯದವರಂತೆ ನೀವು ಹೆಮ್ಮೆ ಪಟ್ಟುಕೊಳ್ಳುವುದೇಕೆ?
1CO 4:8 ಈಗ ನೀವು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರಾಗಿದ್ದೀರಿ. ನಮ್ಮ ಸಹಾಯವಿಲ್ಲದೆ ಆಳುತ್ತಿದ್ದೀರಿ. ನೀವು ನಿಜವಾಗಿಯೂ ಅರಸರಾಗಿದ್ದರೆ, ನಾವು ಸಹ ನಿಮ್ಮೊಂದಿಗೆ ಸೇರಿ ಆಳುತ್ತಿದ್ದೇವಲ್ಲವೇ?
1CO 4:9 ಅಪೊಸ್ತಲರಾದ ನಮ್ಮನ್ನು ಮರಣದಂಡನೆ ಹೊಂದಿದವರಂತೆ ದೇವರು ಮೆರವಣಿಗೆಯ ಕಡೆಯವರನ್ನಾಗಿ ಮಾಡಿ ತೋರಿಸಿದ್ದಾರೆಂದು ನನಗನಿಸುತ್ತದೆ. ಏಕೆಂದರೆ, ದೇವರು ನಮ್ಮನ್ನು ದೇವದೂತರಿಗೂ ಮನುಷ್ಯರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವನ್ನಾಗಿ ಮಾಡಿದ್ದಾರೆ.
1CO 4:10 ನಾವು ಕ್ರಿಸ್ತ ಯೇಸುವಿನ ನಿಮಿತ್ತ ಮೂರ್ಖರಾಗಿದ್ದೇವೆ! ನೀವೋ ಕ್ರಿಸ್ತ ಯೇಸುವಿನಲ್ಲಿ ಬುದ್ಧಿವಂತರು, ನಾವೋ ಬಲಹೀನರು. ನೀವು ಬಲಿಷ್ಠರು, ನೀವು ಮಾನವಂತರು, ನಾವೋ ಮಾನಹೀನರು!
1CO 4:11 ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರೂ, ಸಾಕಷ್ಟು ವಸ್ತ್ರವಿಲ್ಲದವರೂ, ಕ್ರೂರವಾಗಿ ಪೆಟ್ಟಿಗೆ ಗುರಿಯಾಗುವವರೂ, ಮನೆಯಿಲ್ಲದವರೂ,
1CO 4:12 ಸ್ವಂತ ಕೈಯಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸಿಕೊಂಡು ಆಶೀರ್ವದಿಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ,
1CO 4:13 ಅಪಕೀರ್ತಿ ಹೊಂದಿ ಸಮಾಧಾನವಾಗುತ್ತೇವೆ. ನಾವು ಈಗಿನ ವರೆಗೂ ಭೂಮಿಯ ಕಸವೋ ವಿಶ್ವದ ಹೊಲಸೋ ಎಂಬಂತೆ ಆಗಿದ್ದೇವೆ.
1CO 4:14 ನಾನು ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ, ನನ್ನ ಪ್ರಿಯ ಮಕ್ಕಳೆಂದು ನಿಮಗೆ ಬುದ್ಧಿ ಹೇಳುತ್ತೇನಷ್ಟೆ.
1CO 4:15 ಏಕೆಂದರೆ, ನಿಮಗೆ ಕ್ರಿಸ್ತ ಯೇಸುವಿನಲ್ಲಿ ಹತ್ತು ಸಾವಿರ ಮಂದಿ ಪೋಷಕರು ಇದ್ದರೂ, ತಂದೆಗಳು ಬಹುಮಂದಿ ಇಲ್ಲ. ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ತಂದೆಯಾದೆನು.
1CO 4:16 ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1CO 4:17 ಇದರ ನಿಮಿತ್ತವೇ ಕರ್ತ ದೇವರಲ್ಲಿ ನಂಬಿಗಸ್ತನಾಗಿರುವ ನನ್ನ ಮಗ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ನಾನು ಎಲ್ಲಾ ಕಡೆಗಳಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವುದರ ಪ್ರಕಾರ, ಅವನು ಕ್ರಿಸ್ತ ಯೇಸುವಿನಲ್ಲಿರುವ ನನ್ನ ನಡವಳಿಕೆಯನ್ನು, ನಿಮ್ಮ ನೆನಪಿಗೆ ತರುವನು.
1CO 4:18 ನಾನು ನಿಮ್ಮಲ್ಲಿಗೆ ಬರುವುದಿಲ್ಲವೆಂದು ಕೆಲವರು ಅಹಂಕಾರಿಗಳಾಗಿದ್ದಾರೆ.
1CO 4:19 ಆದರೆ ಕರ್ತದೇವರ ಚಿತ್ತವಿದ್ದರೆ, ನಾನು ಬೇಗ ನಿಮ್ಮ ಬಳಿಗೆ ಬಂದು, ಅಹಂಕಾರಿಗಳ ಮಾತನ್ನಲ್ಲ, ಅವರಿಗೆ ಎಷ್ಟು ಶಕ್ತಿ ಇದೆ ಎಂಬುವುದನ್ನು ಕಂಡುಕೊಳ್ಳುವೆನು.
1CO 4:20 ಏಕೆಂದರೆ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಇದೆ.
1CO 4:21 ಶಿಸ್ತಿನ ಬೆತ್ತವನ್ನು ಹಿಡಿದು ಬಿಗಿಯಲು ನಿಮ್ಮ ಬಳಿ ಬರಲೋ? ಅಥವಾ ಪ್ರೀತಿ ಸೌಮ್ಯದಿಂದ ಬರಲೋ? ನಿಮಗೆ ಯಾವುದು ಇಷ್ಟ?
1CO 5:1 ಯೆಹೂದ್ಯರಲ್ಲದವರಲ್ಲಿ ನಡೆಯದೇ ಇರುವಂಥ ಅನೈತಿಕತೆ ನಿಮ್ಮಲ್ಲಿದೆಯೆಂದು ವಾಸ್ತವವಾಗಿ ವರದಿ ಬಂದಿದೆ: ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ.
1CO 5:2 ಹೀಗಿದ್ದರೂ ಗರ್ವಪಡುತ್ತಿದ್ದೀರಲ್ಲಾ! ನೀವು ದುಃಖಪಟ್ಟು, ಈ ಕಾರ್ಯ ಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸಬೇಕಲ್ಲವೇ?
1CO 5:3 ನಾನು ಸ್ವತಃ ನಿಮ್ಮ ಮಧ್ಯದಲ್ಲಿ ಇರದಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಈ ಕಾರ್ಯಮಾಡಿದವನ ಮೇಲೆ ಆಗಲೇ ಹತ್ತಿರವಿದ್ದವನಂತೆ ನಮಗೆ ಕರ್ತ ಆಗಿರುವ ಯೇಸುವಿನ ಹೆಸರಿನಲ್ಲಿ ತೀರ್ಪುಮಾಡಿದ್ದೇನೆ.
1CO 5:4 ನೀವು ಕರ್ತ ಯೇಸುವಿನ ಹೆಸರಿನಲ್ಲಿ ಸಭೆಯಾಗಿ ಬಂದು ಸೇರಿದಾಗ, ನಾನೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನಮಗೆ ಕರ್ತ ಆಗಿರುವ ಯೇಸುವಿನ ಸಾನಿಧ್ಯ ಶಕ್ತಿಯೊಂದಿರುವಾಗ,
1CO 5:5 ಕರ್ತ ಯೇಸುವಿನ ಪುನರಾಗಮನ ದಿನದಲ್ಲಿ ಆ ಮನುಷ್ಯನ ಆತ್ಮವು ರಕ್ಷಣೆ ಹೊಂದುವಂತೆಯೂ ಅವನ ಪಾಪಭರಿತ ಶರೀರವು ನಾಶವಾಗುವಂತೆಯೂ ಅವನನ್ನು ಸೈತಾನನಿಗೆ ಒಪ್ಪಿಸಿ ಬಿಡುತ್ತೇನೆ.
1CO 5:6 ನೀವು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ?
1CO 5:7 ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ.
1CO 5:8 ಆದಕಾರಣ ಹಗೆತನ, ದುಷ್ಟತನ, ಎಂಬ ಹಳೇ ಹುಳಿಯಿಂದಲ್ಲ, ಯಥಾರ್ಥತೆ ಹಾಗೂ ಸತ್ಯ ಎಂಬ ಹುಳಿಯಿಲ್ಲದ ರೊಟ್ಟಿಯಿಂದಲೇ ಹಬ್ಬವನ್ನು ಆಚರಿಸೋಣ.
1CO 5:9 ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ.
1CO 5:10 ಈ ಲೋಕದಲ್ಲಿರುವ ಎಲ್ಲಾ ಅನೈತಿಕರು, ಲೋಭಿಗಳು, ಸುಲಿಗೆ ಮಾಡುವವರು, ವಿಗ್ರಹಾರಾಧಕರು ಇಂಥವರ ಸಹವಾಸವನ್ನು ನೀವು ಬಿಟ್ಟು ಇರಬೇಕೆಂಬುದು ನನ್ನ ಅರ್ಥವಲ್ಲ. ಹಾಗಿದ್ದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುವುದು.
1CO 5:11 ಆದರೆ ಸಹೋದರಿ ಅಥವಾ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಪರನಿಂದಕನಾದರೂ ಕುಡುಕನಾದರೂ ಸುಲಿಗೆ ಮಾಡುವವನಾದರೂ ಆಗಿದ್ದರೆ, ಅಂಥವರ ಸಹವಾಸ ಮಾಡಬೇಡಿರಿ. ಅಂಥವರ ಸಂಗಡ ಊಟ ಮಾಡಲೂ ಬೇಡಿರಿ ಎಂದು ಈಗ ಬರೆಯುತ್ತಿದ್ದೇನೆ.
1CO 5:12 ಸಭೆಗೆ ಸೇರದಿರುವ ಹೊರಗಿನವರನ್ನು ತೀರ್ಪುಮಾಡುವುದಕ್ಕೆ ನಾನು ಯಾರು? ಸಭೆಯ ಒಳಗಿನವರನ್ನು ತೀರ್ಪುಮಾಡಬೇಕಾದವರು ನೀವಲ್ಲವೇ?
1CO 5:13 ಆದರೆ ಹೊರಗಿನವರನ್ನು ತೀರ್ಪುಮಾಡುವವರು ದೇವರೇ. “ಆ ದುಷ್ಟನನ್ನು ನಿಮ್ಮಿಂದ ತೆಗೆದು ಹೊರಗೆ ಹಾಕಿರಿ.”
1CO 6:1 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ, ನ್ಯಾಯವಿಚಾರಣೆಗಾಗಿ ಕರ್ತದೇವರ ಜನರ ಮುಂದೆ ಹೋಗದೆ, ಭಕ್ತಿಹೀನರ ಮುಂದೆ ಹೋಗುವುದಕ್ಕೆ ಧೈರ್ಯವಿದೆಯೋ?
1CO 6:2 ಕರ್ತದೇವರ ಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ನೀವೇ ಲೋಕವನ್ನು ನ್ಯಾಯತೀರ್ಪು ಮಾಡಬೇಕಾಗಿರುವಲ್ಲಿ, ಅತ್ಯಲ್ಪ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅಯೋಗ್ಯರಾಗಿದ್ದೀರೋ?
1CO 6:3 ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಈ ಜೀವನದ ವ್ಯಾಜ್ಯಗಳನ್ನು ಕುರಿತು ತೀರ್ಪು ಮಾಡುವುದು ಎಷ್ಟು ಸುಲಭವಲ್ಲವೇ?
1CO 6:4 ಆದ್ದರಿಂದ ಇಂಥ ವ್ಯಾಜ್ಯಗಳ ಬಗ್ಗೆ ವ್ಯಾಜ್ಯಗಳಿದ್ದರೂ ಸಭೆಯಲ್ಲಿ ಮರ್ಯಾದೆ ಇಲ್ಲದವರನ್ನು ನ್ಯಾಯಾಧೀಶರಾಗಿ ನೇಮಿಸುವಿರೋ?
1CO 6:5 ನಿಮ್ಮಲ್ಲಿ ನಾಚಿಕೆ ಹುಟ್ಟಿಸುವುದಕ್ಕೆ ಇದನ್ನು ಹೇಳುತ್ತೇನೆ. ತನ್ನ ಸಹೋದರನ ನ್ಯಾಯವನ್ನು ವಿವೇಚಿಸಿ ತೀರ್ಮಾನ ಕೊಡುವ ಜ್ಞಾನಿಯು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
1CO 6:6 ಇದಕ್ಕೆ ಬದಲಾಗಿ ಒಬ್ಬ ಸಹೋದರನು ಇನ್ನೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅದೂ ಅವಿಶ್ವಾಸಿಗಳ ಮುಂದೆ ನ್ಯಾಯಕ್ಕಾಗಿ ಹೋಗುವುದು ಸರಿಯೇ?
1CO 6:7 ನಿಮ್ಮ ನಿಮ್ಮಲ್ಲಿ ವ್ಯಾಜ್ಯವಿರುವುದೇ, ನೀವು ಈಗಾಗಲೇ ಸಂಪೂರ್ಣವಾಗಿ ಸೋತವರೆಂಬುದಕ್ಕೆ ಸೂಚನೆಗಳಾಗಿವೆ. ಆದರೆ ಅನ್ಯಾಯವನ್ನು ಏಕೆ ಸಹಿಸಬಾರದು? ಏಕೆ ಮೋಸಹೊಂದಬಾರದು?
1CO 6:8 ಅದಕ್ಕೆ ಬದಲಾಗಿ ನೀವೇ ನಿಮ್ಮ ಸಹೋದರರಿಗೆ ಅನ್ಯಾಯ ಮಾಡಿ ಮೋಸಮಾಡುತ್ತೀರಲ್ಲಾ?
1CO 6:9 ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ: ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು,
1CO 6:10 ಕಳ್ಳರು, ಲೋಭಿಗಳು, ಕುಡುಕರು, ಬೈಯ್ಯುವವರು, ಸುಲಿಗೆ ಮಾಡುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
1CO 6:11 ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೂ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಿಂದಲೂ ನೀವು ತೊಳೆದು, ಶುದ್ಧೀಕರಣ ಹೊಂದಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
1CO 6:12 “ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೂ ಹಕ್ಕಿದೆ” ಎಂದು ನೀವು ಹೇಳುತ್ತೀರಿ. ಆದರೆ ಎಲ್ಲವೂ ನನಗೆ ಪ್ರಯೋಜನಕರವಾಗಿರುವುದಿಲ್ಲ. ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಹಕ್ಕಿದೆ; ಆದರೆ ನಾನು ಯಾವುದಕ್ಕೂ ಗುಲಾಮನಾಗಿರುವುದಿಲ್ಲ.
1CO 6:13 “ಆಹಾರವು ಹೊಟ್ಟೆಗಾಗಿಯೂ, ಹೊಟ್ಟೆಯು ಆಹಾರಕ್ಕಾಗಿಯೂ ಇದೆ,” ಎಂದು ನೀವು ಹೇಳುತ್ತೀರಿ. ಆದರೆ ದೇವರು ಇವೆರಡನ್ನೂ ನಾಶಮಾಡುವರು. ದೇಹವು ಲೈಂಗಿಕ ಅನೈತಿಕತೆಗಾಗಿರುವಂಥದ್ದಲ್ಲ, ಆದರೆ ಕರ್ತ ದೇವರಿಗೋಸ್ಕರವಾಗಿದೆ. ಕರ್ತದೇವರು ದೇಹಕ್ಕೋಸ್ಕರ ಇದ್ದಾರೆ.
1CO 6:14 ದೇವರು ತಮ್ಮ ಶಕ್ತಿಯಿಂದ ನಮಗೆ ಕರ್ತ ಆಗಿರುವ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು ಮತ್ತು ನಮ್ಮನ್ನೂ ಎಬ್ಬಿಸುವರು.
1CO 6:15 ನಿಮ್ಮ ದೇಹಗಳು ಕ್ರಿಸ್ತ ಯೇಸುವಿನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಕ್ರಿಸ್ತ ಯೇಸುವಿನ ಅಂಗಗಳಾಗಿರುವಂಥವುಗಳನ್ನೇ ತೆಗೆದುಕೊಂಡು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಬೇಡ.
1CO 6:16 ವೇಶ್ಯೆಯನ್ನು ಸೇರುವವನು ಅವಳೊಂದಿಗೆ ಒಂದೇ ದೇಹವಾಗುವನೆಂಬುದು ನಿಮಗೆ ತಿಳಿಯದೋ? “ಅವರಿಬ್ಬರೂ ಒಂದೇ ಶರೀರವಾಗಿರುವರು,” ಎಂದು ಹೇಳಲಾಗಿದೆಯಲ್ಲವೇ?
1CO 6:17 ಆದರೆ ಕರ್ತ ದೇವರೊಂದಿಗೆ ಅನ್ಯೋನ್ಯತೆಯಲ್ಲಿರುವವನು ಅವರೊಂದಿಗೆ ಒಂದೇ ಆತ್ಮವಾಗಿದ್ದಾನೆ.
1CO 6:18 ಲೈಂಗಿಕ ಅನೈತಿಕತೆಯಿಂದ ಓಡಿಹೋಗಿರಿ. ಮನುಷ್ಯನು ಮಾಡುವ ಇತರ ಎಲ್ಲಾ ಪಾಪಗಳು ಅವನ ದೇಹದ ಹೊರಗಿರುತ್ತವೆ, ಆದರೆ ಲೈಂಗಿಕ ಅನೈತಿಕತೆಯು, ತನ್ನ ದೇಹಕ್ಕೆ ವಿರುದ್ಧವಾಗಿ ಪಾಪಕ್ಕೆ ನಡೆಸುತ್ತದೆ.
1CO 6:19 ದೇವರಿಂದ ನಿಮಗೆ ದೊರಕಿ, ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮರ ಆಲಯವು ನಿಮ್ಮ ದೇಹವಾಗಿದೆ ಎಂಬುದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ.
1CO 6:20 ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನೀವು ನಿಮ್ಮ ದೇಹದಿಂದ ದೇವರನ್ನು ಮಹಿಮೆಪಡಿಸಿರಿ.
1CO 7:1 ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.”
1CO 7:2 ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ.
1CO 7:3 ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ.
1CO 7:4 ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ.
1CO 7:5 ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು.
1CO 7:6 ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ.
1CO 7:7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.
1CO 7:8 ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು.
1CO 7:9 ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ.
1CO 7:10 ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.
1CO 7:11 ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು.
1CO 7:12 ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ.
1CO 7:13 ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ.
1CO 7:14 ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ.
1CO 7:15 ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ.
1CO 7:16 ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು?
1CO 7:17 ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ.
1CO 7:18 ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ.
1CO 7:19 ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.
1CO 7:20 ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.
1CO 7:21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು.
1CO 7:22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು.
1CO 7:23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ.
1CO 7:24 ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ.
1CO 7:25 ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.
1CO 7:26 ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ.
1CO 7:27 ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ.
1CO 7:28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ.
1CO 7:29 ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ
1CO 7:30 ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ
1CO 7:31 ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ.
1CO 7:32 ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
1CO 7:33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ.
1CO 7:34 ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.
1CO 7:35 ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ.
1CO 7:36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.
1CO 7:37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು.
1CO 7:38 ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ.
1CO 7:39 ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು.
1CO 7:40 ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.
1CO 8:1 ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.
1CO 8:2 ಯಾರಾದರೂ ತಾನು ಏನನ್ನಾದರೂ ತಿಳಿದಿರುವುದಾಗಿ ಭಾವಿಸಿದರೆ, ಅಂಥವನು ತಿಳಿಯಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ.
1CO 8:3 ಆದರೆ ದೇವರನ್ನು ಪ್ರೀತಿಸುವವರನ್ನು ದೇವರು ತಿಳಿದುಕೊಂಡಿರುತ್ತಾರೆ.
1CO 8:4 ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ.
1CO 8:5 ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ.
1CO 8:6 ನಮಗಾದರೋ ತಂದೆ ದೇವರು ಒಬ್ಬರೇ ಇರುತ್ತಾರೆ. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರಿಗಾಗಿಯೇ ನಾವು ಜೀವಿಸುತ್ತೇವೆ. ನಮಗಿರುವ ಕರ್ತದೇವರು ಒಬ್ಬರೇ. ಅವರೇ ಕ್ರಿಸ್ತ ಯೇಸು. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.
1CO 8:7 ಆದರೆ ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಕೆಲವರು ಇದುವರೆಗೂ ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನುವ ರೂಢಿಯಲ್ಲಿದ್ದು, ಅವರು ವಿಗ್ರಹಕ್ಕೆ ನೈವೇದ್ಯ ಮಾಡಿ ತಿನ್ನುವುದಾಗಿ ಭಾವಿಸಿಕೊಳ್ಳುತ್ತಾರೆ. ಹೀಗೆ ಅವರ ಮನಸ್ಸಾಕ್ಷಿ ಬಲಹೀನವಾಗಿರುವುದರಿಂದ, ಅದು ಅಶುದ್ಧವಾಗಿರುತ್ತದೆ.
1CO 8:8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ.
1CO 8:9 ಆದರೆ ಈ ನಿಮ್ಮ ಸ್ವಾತಂತ್ರ್ಯವು ಬಲಹೀನರಿಗೆ ವಿಘ್ನವಾಗದಂತೆ ಜಾಗರೂಕರಾಗಿರಿ.
1CO 8:10 ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ?
1CO 8:11 ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ?
1CO 8:12 ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ.
1CO 8:13 ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ.
1CO 9:1 ನಾನು ಸ್ವತಂತ್ರನಲ್ಲವೇ? ನಾನೂ ಅಪೊಸ್ತಲನಲ್ಲವೇ? ನಾನು ನಮ್ಮ ಕರ್ತ ಆಗಿರುವ ಯೇಸುವನ್ನು ಕಂಡವನಲ್ಲವೇ? ನಾನು ಕರ್ತ ದೇವರಲ್ಲಿ ಮಾಡಿದ ಕೆಲಸದ ಫಲವು ನೀವಲ್ಲವೇ?
1CO 9:2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ.
1CO 9:3 ನನ್ನ ಮೇಲೆ ತಪ್ಪು ಹೊರಿಸುವವರಿಗೆ ಇದೇ ನನ್ನ ಪ್ರತಿವಾದ:
1CO 9:4 ಅನ್ನಪಾನಗಳಿಗಾಗಿ ನಮಗೆ ಹಕ್ಕಿಲ್ಲವೇ?
1CO 9:5 ಮಿಕ್ಕ ಅಪೊಸ್ತಲರಂತೆಯೂ ಕರ್ತದೇವರ ತಮ್ಮಂದಿರಂತೆಯೂ ಕೇಫನಂತೆಯೂ ವಿಶ್ವಾಸಿಯಾದ ಒಬ್ಬಳನ್ನು ಮದುವೆಮಾಡಿಕೊಳ್ಳಲು ನಮಗೆ ಹಕ್ಕಿಲ್ಲವೇ?
1CO 9:6 ಇಲ್ಲವೆ ಉಪಜೀವನಕ್ಕಾಗಿ ನಾನೂ ಮತ್ತು ಬಾರ್ನಬನೂ ಮಾತ್ರವೇ ಕೆಲಸಮಾಡಬೇಕೋ?
1CO 9:7 ಸೈನಿಕ ಸೇವೆಯನ್ನು ಯಾವನಾದರೂ ಸ್ವಂತ ಖರ್ಚಿನಿಂದ ಮಾಡುವುದುಂಟೋ? ದ್ರಾಕ್ಷಿಯ ತೋಟವನ್ನು ಮಾಡಿ ಅದರ ಫಲವನ್ನು ತಿನ್ನದೇ ಇರುವವರುಂಟೋ? ಮಂದೆಯನ್ನು ಮೇಯಿಸುವವನು ಹಾಲನ್ನು ಕುಡಿಯದೇ ಇರುವುದುಂಟೋ?
1CO 9:8 ನಾನು ಕೇವಲ ಮಾನವೀಯ ನೋಟದಲ್ಲಿ ಮಾತನಾಡುತ್ತಿದ್ದೇನೋ? ನಿಯಮವು ಸಹ ಇದನ್ನು ಹೇಳುವುದಿಲ್ಲವೋ?
1CO 9:9 “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು,” ಎಂದು ಮೋಶೆಯ ನಿಯಮದಲ್ಲಿ ಬರೆದಿದೆ. ಇಲ್ಲಿ ದೇವರಿಗೆ ಎತ್ತಿನ ಬಗ್ಗೆ ಮಾತ್ರ ಚಿಂತೆಯಿದೆಯೋ?
1CO 9:10 ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು.
1CO 9:11 ನಾವು ನಿಮ್ಮಲ್ಲಿ ಆತ್ಮಿಕ ಸಂಗತಿಗಳನ್ನು ಬಿತ್ತಿದ ಮೇಲೆ, ನಿಮ್ಮಿಂದ ಭೌತಿಕ ಸುಗ್ಗಿಯನ್ನು ಕೊಯ್ಯುವುದು ದೊಡ್ಡದೋ?
1CO 9:12 ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ? ಆದರೆ ನಾವು ಈ ಅಧಿಕಾರವನ್ನು ಚಲಾಯಿಸಿಲ್ಲ. ಕ್ರಿಸ್ತ ಯೇಸುವಿಗೆ ಸೇರಿದ ಸುವಾರ್ತೆಗೆ ಅಡ್ಡಿಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.
1CO 9:13 ದೇವಾಲಯದಲ್ಲಿ ಸೇವೆಮಾಡುವವರು, ದೇವಾಲಯದಲ್ಲಿ ಊಟ ಪಡೆಯುತ್ತಾರೆಂಬುದೂ; ಬಲಿಪೀಠದ ಬಳಿಯಲ್ಲಿ ಸೇವೆಮಾಡುವವರು, ಆ ಬಲಿಪೀಠದ ಮೇಲೆ ಸಮರ್ಪಿಸಿದ್ದರಲ್ಲಿ ಪಾಲು ಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?
1CO 9:14 ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು, ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ಕರ್ತದೇವರು ಸಹ ಆಜ್ಞಾಪಿಸಿದ್ದಾರೆ.
1CO 9:15 ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು.
1CO 9:16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ!
1CO 9:17 ನಾನು ಇಷ್ಟಪೂರ್ವಕವಾಗಿ ಸುವಾರ್ತೆ ಸಾರಿದರೆ, ನನಗೆ ಬಹುಮಾನವಿರುವುದು. ಇಷ್ಟವಿಲ್ಲದೆ ಮಾಡಿದರೆ, ನನ್ನ ವಶಕ್ಕೆ ಒಪ್ಪಿಸಲಾದ ಕಾರ್ಯಭಾರವನ್ನು ನಾನು ನೆರವೇರಿಸಿದಂತಾಗುತ್ತದೆ.
1CO 9:18 ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.
1CO 9:19 ನಾನು ಸ್ವತಂತ್ರನಾಗಿದ್ದರೂ, ಯಾರಿಗೂ ಸೇರಿದವನಾಗಿರದಿದ್ದರೂ, ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂಬ ಉದ್ದೇಶದಿಂದ ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಂಡೆನು.
1CO 9:20 ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಕ್ಕೆ ಅಧೀನನಲ್ಲದಿದ್ದರೂ ನಿಯಮಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವಂತೆ ಅವರಿಗಾಗಿ ನಿಯಮಕ್ಕೆ ಅಧೀನನಂತಾದೆನು.
1CO 9:21 ನಾನು ನಿಯಮ ಇಲ್ಲದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು. ನಾನು ಕ್ರಿಸ್ತ ಯೇಸುವಿನ ನಿಯಮಕ್ಕೆ ಒಳಗಾದವನಾಗಿದ್ದರೂ ನಾನು ದೇವರ ನಿಯಮದಿಂದ ಸ್ವತಂತ್ರವಾದವನಲ್ಲ.
1CO 9:22 ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ಬಲವಿಲ್ಲದವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲವೂ ಆದೆನು.
1CO 9:23 ನಾನು ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.
1CO 9:24 ಪಂದ್ಯಗಳಲ್ಲಿ ಎಲ್ಲರೂ ಓಡುತ್ತಾರೆ. ಆದರೆ ಒಬ್ಬನಿಗೆ ಮಾತ್ರ ಬಹುಮಾನ ದೊರೆಯುತ್ತದೆ ಎಂಬುದು ನಿಮಗೆ ತಿಳಿಯದೋ? ಬಹುಮಾನವನ್ನು ಪಡಕೊಳ್ಳಬೇಕೆಂದು ನೀವೂ ಓಡಿರಿ.
1CO 9:25 ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ.
1CO 9:26 ಗೊತ್ತುಗುರಿ ಇಲ್ಲದವನ ಹಾಗೆ ನಾನು ಓಡುವುದಿಲ್ಲ, ಗಾಳಿಯನ್ನು ಗುದ್ದುವವನ ಹಾಗೆ ನಾನು ಹೋರಾಡುವುದಿಲ್ಲ.
1CO 9:27 ನಾನು ಇತರರಿಗೆ ಸುವಾರ್ತೆ ಸಾರಿದ ಮೇಲೆ, ನಾನೇ ಬಹುಮಾನ ಹೊಂದಲು ಅಯೋಗ್ಯನಾಗದಂತೆ ನನ್ನ ದೇಹವನ್ನು ದಂಡಿಸಿ, ನನ್ನ ಸ್ವಾಧೀನದಲ್ಲಿಟ್ಟುಕೊಳ್ಳುತ್ತೇನೆ.
1CO 10:1 ಪ್ರಿಯರೇ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು, ಅವರೆಲ್ಲರೂ ಸಮುದ್ರವನ್ನು ಹಾದುಹೋದರು ಎಂಬ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ.
1CO 10:2 ಅವರೆಲ್ಲರೂ ಮೋಶೆಯಲ್ಲಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಸ್ನಾನವನ್ನು ಹೊಂದಿದರು.
1CO 10:3 ಅವರೆಲ್ಲರೂ ಒಂದೇ ಆತ್ಮಿಕವಾದ ಆಹಾರವನ್ನು ಉಂಡರು.
1CO 10:4 ಅವರೆಲ್ಲರೂ ಒಂದೇ ಆತ್ಮಿಕವಾದ ಪಾನವನ್ನು ಕುಡಿದರು. ಅವರು ತಮ್ಮೊಂದಿಗೆ ಬಂದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿದರು. ಕ್ರಿಸ್ತ ಯೇಸುವೇ ಆ ಬಂಡೆ.
1CO 10:5 ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು.
1CO 10:6 ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವೂ ಆಶಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ಈಗ ನಮಗೆ ನಿದರ್ಶನಗಳಾಗಿವೆ.
1CO 10:7 “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿ ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು, ಕುಣಿದಾಡುವುದಕ್ಕೆ ಎದ್ದರು,” ಎಂದು ಬರೆದಿರುವಂತೆ ನೀವೂ ವಿಗ್ರಹಾರಾಧಕರಾಗಬೇಡಿರಿ.
1CO 10:8 ಅವರಲ್ಲಿ ಕೆಲವರು ಜಾರತ್ವ ಮಾಡಿ, ಒಂದೇ ದಿನದಲ್ಲಿ ಇಪ್ಪತ್ಮೂರು ಸಾವಿರ ಮಂದಿ ಸತ್ತರು. ನಾವು ಜಾರತ್ವ ಮಾಡದೆ ಇರೋಣ.
1CO 10:9 ಅವರಲ್ಲಿ ಕೆಲವರು ಕರ್ತದೇವರನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ, ನಾವೂ ಪರೀಕ್ಷಿಸದೆ ಇರೋಣ.
1CO 10:10 ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕನ ಕೈಯಿಂದ ಸಂಹಾರವಾದಂತೆ ನೀವೂ ಗೊಣಗುಟ್ಟಬೇಡಿರಿ.
1CO 10:11 ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ.
1CO 10:12 ಆದಕಾರಣ ದೃಢವಾಗಿ ನಿಂತಿದ್ದೇವೆಂದು ಭಾವಿಸುವ ನೀವು ಬೀಳದಿರುವಂತೆ ನೋಡಿಕೊಳ್ಳಿರಿ.
1CO 10:13 ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಮಾಡುವರು.
1CO 10:14 ಆದ್ದರಿಂದ ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ.
1CO 10:15 ವಿವೇಕಿಗಳಿಗೆ ಹೇಳಿದಂತೆ, ನಾನು ಹೇಳುವುದನ್ನು ನೀವು ವಿವೇಚಿಸಿರಿ.
1CO 10:16 ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತ ಯೇಸುವಿನ ರಕ್ತದ ಅನ್ಯೋನ್ಯತೆಯಲ್ಲವೇ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿಯ ಅನ್ಯೋನ್ಯತೆಯಲ್ಲವೇ?
1CO 10:17 ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.
1CO 10:18 ನೀವು ಇಸ್ರಾಯೇಲ್ ಜನರ ಕುರಿತು ಆಲೋಚಿಸಿರಿ: ಯಜ್ಞಾರ್ಪಿತವಾದದ್ದನ್ನು ತಿನ್ನುವವರು ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ?
1CO 10:19 ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ.
1CO 10:20 ಆದರೆ ಯೆಹೂದ್ಯರಲ್ಲದವರು ಅರ್ಪಿಸುವ ಯಜ್ಞ ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುವಂತದ್ದಾಗಿದೆ. ನೀವು ದೆವ್ವಗಳೊಂದಿಗೆ ಭಾಗಿಗಳಾಗಿರಬೇಕೆಂಬುದು ನನ್ನ ಇಷ್ಟವಲ್ಲ.
1CO 10:21 ನೀವು ಕರ್ತದೇವರ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ. ನೀವು ಕರ್ತದೇವರ ಪಂಕ್ತಿಯಲ್ಲಿಯೂ ದೆವ್ವಗಳ ಪಂಕ್ತಿಯಲ್ಲಿಯೂ ಭಾಗಿಗಳಾಗಿರಲಾರಿರಿ.
1CO 10:22 ನಾವು ಹೀಗೆ ದೇವರನ್ನು ಅಸೂಯೆಗೆಬ್ಬಿಸಬಹುದೇ? ನಾವು ದೇವರಿಗಿಂತಲೂ ಬಲಿಷ್ಠರಾಗಿದ್ದೇವೆಯೋ?
1CO 10:23 ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಆದರೆ ಎಲ್ಲಾ ಕಾರ್ಯಗಳೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ ಆದರೆ, ಎಲ್ಲಾ ಕಾರ್ಯಗಳೂ ಭಕ್ತಿವೃದ್ಧಿಯನ್ನುಂಟುಮಾಡುವುದಿಲ್ಲ.
1CO 10:24 ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ನೋಡಿಕೊಳ್ಳದೆ, ಪರಹಿತವನ್ನೂ ನೋಡಲಿ.
1CO 10:25 ಮಾಂಸದ ಅಂಗಡಿಯಲ್ಲಿ ಮಾರುವುದು ಏನಿದ್ದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ತಿನ್ನಿರಿ.
1CO 10:26 ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತ ದೇವರದಾಗಿದೆ.”
1CO 10:27 ಅವಿಶ್ವಾಸಿಗಳಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆದಾಗ ನೀವು ಹೋಗಬಯಸಿದರೆ, ನಿಮ್ಮ ಮುಂದೆ ಬಡಿಸಿದ ಪ್ರತಿಯೊಂದನ್ನು ಮನಸ್ಸಾಕ್ಷಿ ನಿಮಿತ್ತ ಏನನ್ನೂ ಪ್ರಶ್ನಿಸದೆ ತಿನ್ನಿರಿ.
1CO 10:28 ಆದರೆ ಯಾರಾದರೂ ನಿಮಗೆ, “ಇದು ನೈವೇದ್ಯ ಮಾಡಿದ್ದು,” ಎಂದು ಹೇಳಿದರೆ, ತಿಳಿಸಿದ ವ್ಯಕ್ತಿಯ ನಿಮಿತ್ತವೂ ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತವೂ ತಿನ್ನಬೇಡಿರಿ.
1CO 10:29 ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು?
1CO 10:30 ನಾನು ಕೃತಜ್ಞತೆ ಸಲ್ಲಿಸಿ ಆ ಊಟವನ್ನು ಮಾಡಿದರೆ, ಹಾಗೆ ದೇವರಿಗೆ ಕೃತಜ್ಞತೆ ಸಲ್ಲಿಸಿ ಮಾಡಿದ ಊಟಕ್ಕಾಗಿ ನನ್ನ ಮೇಲೆ ತಪ್ಪುಹೊರಿಸುವುದೇಕೆ?
1CO 10:31 ಆದ್ದರಿಂದ ನೀವು ಊಟಮಾಡಿದರೂ ಪಾನೀಯ ಸೇವಿಸಿದರೂ ಯಾವುದನ್ನೇ ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ.
1CO 10:32 ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.
1CO 10:33 ನಾನಂತೂ ಎಲ್ಲರನ್ನೂ, ಎಲ್ಲದರಲ್ಲೂ ಮೆಚ್ಚಿಸಲು ಶ್ರಮಿಸುವವನಾಗಿದ್ದೇನೆ. ಏಕೆಂದರೆ, ನಾನು ನನ್ನ ಸ್ವಂತ ಹಿತವನ್ನೇ ಹುಡುಕದೆ, ಅನೇಕರು ರಕ್ಷಣೆ ಹೊಂದಬೇಕೆಂದು ಇತರರ ಹಿತಕ್ಕಾಗಿ ಶ್ರಮಿಸುವವನಾಗಿದ್ದೇನೆ.
1CO 11:1 ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆಯೇ, ನೀವೂ ನನ್ನನ್ನು ಅನುಸರಿಸಿರಿ.
1CO 11:2 ನೀವು ಎಲ್ಲದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು, ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶಗಳನ್ನು ಬಿಗಿಯಾಗಿ ಅನುಸರಿಸುತ್ತಿರೆಂದು ನಿಮ್ಮನ್ನು ಹೊಗಳುತ್ತೇನೆ.
1CO 11:3 ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಗೆ ಪುರುಷನು ಶಿರಸ್ಸು ಮತ್ತು ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾರೆ, ಎಂಬುದನ್ನು ನೀವು ತಿಳಿಯಬೇಕೆಂಬುದು ನನ್ನ ಅಪೇಕ್ಷೆ.
1CO 11:4 ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
1CO 11:5 ಆದರೆ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆ ಮಾಡುವ ಇಲ್ಲವೆ ಪ್ರವಾದನೆ ಹೇಳುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನ ಪಡಿಸುತ್ತಾಳೆ. ಹೀಗೆ ಮಾಡುವ ಸ್ತ್ರೀಯು ತನ್ನ ತಲೆ ಬೋಳಿಸಿಕೊಳ್ಳುವುದಕ್ಕೆ ಸಮಾನವಾಗಿದೆ.
1CO 11:6 ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು.
1CO 11:7 ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ, ತನ್ನ ತಲೆಗೆ ಮುಸುಕು ಹಾಕಬೇಕಾಗಿಲ್ಲ. ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ.
1CO 11:8 ಏಕೆಂದರೆ, ಪುರುಷನು ಸ್ತ್ರೀಯಿಂದಲ್ಲ, ಆದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.
1CO 11:9 ಪುರುಷನು ಸ್ತ್ರೀಗಾಗಿ ಸೃಷ್ಟಿಯಾಗಲಿಲ್ಲ, ಸ್ತ್ರೀಯು ಪುರುಷನಿಗಾಗಿ ಸೃಷ್ಟಿಯಾದಳು.
1CO 11:10 ಈ ಕಾರಣದಿಂದಲೂ ದೇವದೂತರ ನಿಮಿತ್ತವಾಗಿಯೂ ಸ್ತ್ರೀಯ ತಲೆಯ ಮೇಲೆ ಅಧಿಕಾರದ ಮುಸುಕನ್ನು ಹಾಕಿರಬೇಕು.
1CO 11:11 ಆದರೂ, ಕರ್ತ ದೇವರಲ್ಲಿ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀಯಿಲ್ಲದ ಪುರುಷನೂ ಇಲ್ಲ.
1CO 11:12 ಏಕೆಂದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಂತೆ, ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಆದರೆ ಸಮಸ್ತವೂ ದೇವರಿಂದಲೇ ಆಗಿರುತ್ತದೆ.
1CO 11:13 ಇದನ್ನು ನೀವೇ ತೀರ್ಮಾನ ಮಾಡಿಕೊಳ್ಳಿರಿ: ಸ್ತ್ರೀಯು ಮುಸುಕಿಲ್ಲದೆ ದೇವರಿಗೆ ಪ್ರಾರ್ಥಿಸುವುದು ಯುಕ್ತವೋ?
1CO 11:14 ಪುರುಷನು ಕೂದಲನ್ನು ಬೆಳೆಸಿಕೊಂಡರೆ, ಅದು ಅವನಿಗೆ ಅವಮಾನಕರವಾಗಿದೆಯೆಂದೂ
1CO 11:15 ಸ್ತ್ರೀಯು ಕೂದಲು ಬೆಳೆಸಿಕೊಂಡರೆ, ಅದು ಅವಳಿಗೆ ಮಹಿಮೆಯಾಗಿದೆಯೆಂದೂ ಪ್ರಕೃತಿಯೇ ಸ್ಪಷ್ಟಪಡಿಸುತ್ತದೆ ಅಲ್ಲವೇ? ಏಕೆಂದರೆ, ಅವಳಿಗೆ ಉದ್ದ ಕೂದಲು ಮುಸುಕಿನಂತೆ ಕೊಡಲಾಗಿದೆ.
1CO 11:16 ಇದರ ಬಗ್ಗೆ ಯಾರಿಗಾದರೂ ವಾಗ್ವಾದ ಮಾಡಬಯಸಿದರೆ, ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ.
1CO 11:17 ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ.
1CO 11:18 ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ.
1CO 11:19 ದೇವರ ಮೆಚ್ಚುಗೆ ನಿಮ್ಮಲ್ಲಿ ಯಾರ ಮೇಲೆ ಇದೆ ಎಂಬುದು ಕಂಡುಬರುವಂತೆ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.
1CO 11:20 ನೀವು ಒಟ್ಟಾಗಿ ಕೂಡಿಬರುವಾಗ, ನೀವು ಮಾಡುವ ಭೋಜನವು ಕರ್ತದೇವರ ಭೋಜನವಲ್ಲ.
1CO 11:21 ಏಕೆಂದರೆ, ಭೋಜನ ಮಾಡುವಾಗ, ಪ್ರತಿಯೊಬ್ಬನು ಇತರರಿಗಾಗಿ ಕಾಯದೇ, ತನ್ನ ಭೋಜನವನ್ನು ಮುಂಚಿತವಾಗಿ ಆರಂಭಿಸುತ್ತಾನೆ. ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದಿರುತ್ತಾನೆ.
1CO 11:22 ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ.
1CO 11:23 ನಾನು ಕರ್ತ ದೇವರಿಂದಲೇ ಪಡೆದದ್ದನ್ನು ನಿಮಗೆ ಒಪ್ಪಿಸಿಕೊಟ್ಟಿದ್ದೇನೆ: ಕರ್ತ ಆಗಿರುವ ಯೇಸು ತಮ್ಮನ್ನು ಹಿಡಿದುಕೊಡಲಾದ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು,
1CO 11:24 ಸ್ತೋತ್ರಮಾಡಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
1CO 11:25 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ. ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ,” ಎಂದರು.
1CO 11:26 ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ, ಕರ್ತದೇವರ ಮರಣವನ್ನು ಅವರು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
1CO 11:27 ಹೀಗಿರುವುದರಿಂದ, ಯಾರಾದರೂ ಅಯೋಗ್ಯವಾಗಿ ಕರ್ತದೇವರ ರೊಟ್ಟಿಯನ್ನು ತಿಂದರೆ, ಇಲ್ಲವೆ ಅವರ ಪಾತ್ರೆಯಲ್ಲಿ ಪಾನ ಮಾಡಿದರೆ, ಅಂಥವರು ಕರ್ತದೇವರ ದೇಹಕ್ಕೂ, ರಕ್ತಕ್ಕೂ ದ್ರೋಹ ಮಾಡಿದವರಾಗಿರುವರು.
1CO 11:28 ಆದರೆ ಪ್ರತಿಯೊಬ್ಬರೂ ತಮ್ಮನ್ನು ಪರೀಕ್ಷಿಸಿಕೊಂಡವರಾಗಿ, ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.
1CO 11:29 ಏಕೆಂದರೆ, ಯಾರಾದರು ಕ್ರಿಸ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿದರೆ, ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವರು.
1CO 11:30 ಇದರಿಂದ ನಿಮ್ಮಲ್ಲಿ ಬಹುಮಂದಿ ಬಲಹೀನರೂ, ರೋಗಿಗಳೂ ಆಗಿದ್ದಾರೆ, ಕೆಲವರು ನಿದ್ರೆ ಹೋಗಿದ್ದಾರೆ.
1CO 11:31 ನಮ್ಮನ್ನು ನಾವೇ ತೀರ್ಪುಮಾಡಿಕೊಂಡರೆ, ನಾವು ನ್ಯಾಯವಿಚಾರಣೆಗೆ ಒಳಗಾಗುವುದಿಲ್ಲ.
1CO 11:32 ನಾವು ಲೋಕದವರ ಸಂಗಡ ದಂಡನೆಗೆ ಗುರಿಯಾಗಬಾರದೆಂದು, ದೇವರು ನಮ್ಮನ್ನು ಈಗ ಈ ರೀತಿಯಾಗಿ ಶಿಸ್ತಿನ ನ್ಯಾಯವಿಚಾರಣೆಗೆ ಒಳಪಡಿಸುತ್ತಾರೆ.
1CO 11:33 ಹೀಗಿರುವುದರಿಂದ ನನ್ನ ಪ್ರಿಯರೇ, ನೀವು ಭೋಜನಕ್ಕಾಗಿ ಕೂಡಿಬರುವಾಗ ಎಲ್ಲರಿಗಾಗಿ ಕಾದುಕೊಂಡಿರಿ.
1CO 11:34 ನೀವು ಒಟ್ಟಾಗಿ ಕೂಟಕ್ಕೆ ಸೇರಿಬರುವಾಗ, ನ್ಯಾಯತೀರ್ಪಿಗೆ ಒಳಗಾದಂತೆ, ಹಸಿದವರು ಮನೆಯಲ್ಲೇ ಊಟಮಾಡಲಿ. ಇನ್ನುಳಿದ ವಿಷಯಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.
1CO 12:1 ಪ್ರಿಯರೇ, ಈಗ ಆತ್ಮಿಕ ವರಗಳನ್ನು ಕುರಿತು ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ.
1CO 12:2 ನೀವು ಕ್ರಿಸ್ತನನ್ನು ನಂಬದಿದ್ದಾಗ, ಹೇಗೆ ಮೂಕ ವಿಗ್ರಹಗಳ ಕಡೆಗೆ ಪ್ರಭಾವಗೊಂಡು ದಾರಿತಪ್ಪಿ ಹೋಗಿದ್ದಿರಿ ಎಂಬುದನ್ನು ಬಲ್ಲಿರಿ.
1CO 12:3 ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು.
1CO 12:4 ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ.
1CO 12:5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ.
1CO 12:6 ಕಾರ್ಯರೀತಿಗಳಲ್ಲಿ ಬೇರೆ ಬೇರೆ ವಿಧಗಳಿವೆ, ಎಲ್ಲರಲ್ಲಿಯೂ ಎಲ್ಲಾ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬರೇ.
1CO 12:7 ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ.
1CO 12:8 ಹೇಗೆಂದರೆ, ಪವಿತ್ರಾತ್ಮ ದೇವರ ಮೂಲಕ ಒಬ್ಬನಿಗೆ ಜ್ಞಾನ ವಾಕ್ಯವು, ಒಬ್ಬನಿಗೆ ಆ ಆತ್ಮರ ಅನುಸಾರವಾಗಿ ವಿದ್ಯಾವಾಕ್ಯವು,
1CO 12:9 ಒಬ್ಬನಿಗೆ ಅದೇ ಆತ್ಮನಿಂದ ನಂಬಿಕೆಯು, ಮತ್ತೊಬ್ಬನಿಗೆ ಅದೇ ಆತ್ಮನಿಂದ ರೋಗ ವಾಸಿಮಾಡುವ ವರಗಳು ಕೊಡಲಾಗಿವೆ.
1CO 12:10 ಒಬ್ಬನಿಗೆ ಅದ್ಭುತಕಾರ್ಯಗಳ ಶಕ್ತಿಯೂ ಒಬ್ಬನಿಗೆ ಪ್ರವಾದನೆಯೂ ಒಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವೂ ಒಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಶಕ್ತಿಯೂ ಮತ್ತೊಬ್ಬನಿಗೆ ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವೂ ಕೊಡಲಾಗುತ್ತದೆ.
1CO 12:11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಚಿತ್ತಾನುಸಾರ ಪ್ರತಿಯೊಬ್ಬನಿಗೂ ಹಂಚಿಕೊಡುತ್ತಾರೆ.
1CO 12:12 ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ.
1CO 12:13 ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ಒಂದೇ ದೇಹವಾಗುವಂತೆ, ನಾವೆಲ್ಲರೂ ಒಬ್ಬರೇ ಆತ್ಮದಿಂದ ಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬ ಆತ್ಮವನ್ನು ಪಾನವಾಗಿ ಕೊಡಲಾಗಿದೆ.
1CO 12:14 ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ.
1CO 12:15 ಒಂದು ವೇಳೆ ಕಾಲು, “ನಾನು ಕೈಯಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ, ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ?
1CO 12:16 ಒಂದು ವೇಳೆ ಕಿವಿ, “ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ?
1CO 12:17 ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ?
1CO 12:18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತಮ್ಮ ಇಷ್ಟದ ಪ್ರಕಾರ ದೇಹದಲ್ಲಿ ಇಟ್ಟಿದ್ದಾರೆ.
1CO 12:19 ಅವೆಲ್ಲವೂ ಒಂದೇ ಅಂಗವಾಗಿದ್ದರೆ, ಆಗ ದೇಹವೆಲ್ಲಿ?
1CO 12:20 ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ.
1CO 12:21 ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. ತಲೆಯು ಕಾಲುಗಳಿಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು.
1CO 12:22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ.
1CO 12:23 ಕಡಿಮೆ ಗೌರವವುಳ್ಳವುಗಳೆಂದು ಯೋಚಿಸುವವುಗಳನ್ನು ವಿಶೇಷ ಗೌರವದಿಂದ ನೋಡುತ್ತೇವೆ. ಬಹಿರಂಗಪಡಿಸದ ಅಂಗಗಳನ್ನು ವಿಶೇಷ ಮರ್ಯಾದೆಯಿಂದ ಸಂರಕ್ಷಿಸುತ್ತೇವೆ.
1CO 12:24 ನಾವು ಬಾಹ್ಯ ಅಂಗಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಡುವುದಿಲ್ಲ. ಆದರೆ ಗೌರವ ಕಡಿಮೆಯಿರುವ ಅಂಗಗಳಿಗೆ, ದೇವರು ಹೆಚ್ಚು ಗೌರವವನ್ನು ಕೊಡುವಂತೆ, ಎಲ್ಲಾ ಅಂಗಗಳನ್ನು ಒಟ್ಟಾಗಿ ದೇಹದಲ್ಲಿಟ್ಟಿದ್ದಾರೆ.
1CO 12:25 ಹೀಗೆ ದೇವರು ದೇಹದಲ್ಲಿ ಭಿನ್ನಭೇದವಿಲ್ಲದೇ, ಎಲ್ಲವೂ ಒಂದಕ್ಕೊಂದು ಪರಸ್ಪರ ಚಿಂತಿಸುವುದಾಗಿ ಕೂಡಿ ಹೋಗುವಂತೆ ಸಮಾನವಾಗಿ ಮಾಡಿದ್ದಾರೆ.
1CO 12:26 ದೇಹದ ಒಂದು ಅಂಗ ಬಾಧೆಪಟ್ಟರೆ, ಎಲ್ಲಾ ಅಂಗಗಳು ಬಾಧೆಪಡುತ್ತದೆ. ಒಂದು ಅಂಗಕ್ಕೆ ಗೌರವ ದೊರೆತರೆ, ಅದರೊಂದಿಗೆ ಪ್ರತಿಯೊಂದು ಅಂಗವೂ ಆನಂದಪಡುತ್ತವೆ.
1CO 12:27 ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ.
1CO 12:28 ದೇವರು ತಮ್ಮ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಅದ್ಭುತಕಾರ್ಯಗಳನ್ನು ಮಾಡುವವರನ್ನು, ರೋಗಗಳನ್ನು ಗುಣಪಡಿಸುವ ವರವನ್ನು, ಪರೋಪಕಾರಿಗಳನ್ನು, ಆಡಳಿತಗಾರರನ್ನು, ವಿವಿಧ ವಾಣಿಗಳನ್ನಾಡುವವರನ್ನು ನೇಮಿಸಿದ್ದಾರೆ.
1CO 12:29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಅದ್ಭುತ ಮಾಡುವವರೋ?
1CO 12:30 ಎಲ್ಲರೂ ರೋಗಗಳನ್ನು ಗುಣಪಡಿಸುವ ವರವನ್ನು ಹೊಂದಿದವರೋ? ಎಲ್ಲರೂ ಪರೋಪಕಾರಿಗಳೋ? ಎಲ್ಲರೂ ಆಡಳಿತಗಾರರೋ? ಎಲ್ಲರೂ ಅನ್ಯಭಾಷೆಗಳನ್ನಾಡುವವರೋ? ಅಥವಾ ಅನ್ಯಭಾಷೆಗಳ ವ್ಯಾಖ್ಯಾನ ಮಾಡುವವರೋ?
1CO 12:31 ಆದರೆ ನೀವು ಆಸಕ್ತಿಯಿಂದ ಶ್ರೇಷ್ಠ ವರಗಳನ್ನು ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
1CO 13:1 ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.
1CO 13:2 ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ.
1CO 13:3 ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ.
1CO 13:4 ಪ್ರೀತಿ ತಾಳ್ಮೆಯುಳ್ಳದ್ದು, ಪ್ರೀತಿ ದಯೆಯುಳ್ಳದ್ದು, ಪ್ರೀತಿ ಅಸೂಯೆಪಡುವುದಿಲ್ಲ, ಪ್ರೀತಿ ಹೊಗಳಿಕೊಳ್ಳುವುದಿಲ್ಲ, ಗರ್ವಪಡುವುದಿಲ್ಲ,
1CO 13:5 ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ,
1CO 13:6 ಪ್ರೀತಿ ಕೆಟ್ಟದ್ದರಲ್ಲಿ ಸಂತೋಷಪಡುವುದಿಲ್ಲ, ಸತ್ಯದೊಂದಿಗೆ ಸಂತೋಷ ಪಡುತ್ತದೆ.
1CO 13:7 ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ.
1CO 13:8 ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು.
1CO 13:9 ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ.
1CO 13:10 ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು.
1CO 13:11 ನಾನು ಬಾಲಕನಾಗಿದ್ದಾಗ, ಬಾಲಕನ ಮಾತುಗಳನ್ನಾಡಿದೆನು, ಬಾಲಕನಂತೆ ಯೋಚಿಸಿದೆನು, ಬಾಲಕನಂತೆಯೇ ತರ್ಕಿಸಿದೆನು. ಪ್ರೌಢನಾದಾಗ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.
1CO 13:12 ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.
1CO 13:13 ಆದರೆ ಈಗ ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿರುತ್ತವೆ. ಇವುಗಳಲ್ಲಿ ಮಹತ್ತಾದದ್ದು ಪ್ರೀತಿಯೇ.
1CO 14:1 ಪ್ರೀತಿಯ ಮಾರ್ಗ ಅನುಸರಿಸಿರಿ, ಆತ್ಮಿಕ ವರಗಳನ್ನು, ವಿಶೇಷವಾಗಿ ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ.
1CO 14:2 ಅನ್ಯಭಾಷೆಗಳನ್ನು ಆಡುವವನು ಮನುಷ್ಯರ ಸಂಗಡವಲ್ಲ, ದೇವರೊಂದಿಗೆ ಮಾತನಾಡುತ್ತಾನೆ. ಅವನು ಮಾತನಾಡುವುದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಆತ್ಮದಲ್ಲಿ ರಹಸ್ಯಗಳನ್ನು ಮಾತನಾಡುವವನಾಗಿದ್ದಾನೆ.
1CO 14:3 ಪ್ರವಾದಿಸುವವನಾದರೋ, ಜನರ ಭಕ್ತಿವೃದ್ಧಿಗಾಗಿ, ಪ್ರೋತ್ಸಾಹಕ್ಕಾಗಿ, ಸಂತೈಸುವಿಕೆಗಾಗಿ ಮಾತನಾಡುತ್ತಾನೆ.
1CO 14:4 ಅನ್ಯಭಾಷೆಗಳನ್ನಾಡುವವನು ತನಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ.
1CO 14:5 ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ಈಗ ನಾನು ಅಪೇಕ್ಷಿಸಿದರೂ, ಅದಕ್ಕಿಂತ ಹೆಚ್ಚಾಗಿ ನೀವು ಪ್ರವಾದಿಸಬೇಕೆಂದು ಅಪೇಕ್ಷಿಸುತ್ತೇನೆ. ಅನ್ಯಭಾಷೆಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವಂತೆ ಅದರ ಅರ್ಥವನ್ನು ಹೇಳದೆ ಹೋದರೆ, ಅವನಿಗಿಂತ ಪ್ರವಾದಿಸುವವನೇ ಶ್ರೇಷ್ಠನು.
1CO 14:6 ಹೀಗಿರುವುದರಿಂದ ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟನೆಯಿಂದಾಗಲಿ, ವಿದ್ಯೆಯಿಂದಾಗಲಿ, ಪ್ರವಾದನೆಯಿಂದಾಗಲಿ, ಉಪದೇಶದಿಂದಾಗಲಿ ಮಾತನಾಡದೆ, ಅನ್ಯಭಾಷೆಗಳಿಂದ ಮಾತನಾಡುವವನಾಗಿದ್ದರೆ, ನನ್ನಿಂದ ನಿಮಗೇನು ಪ್ರಯೋಜನ?
1CO 14:7 ಕೊಳಲು, ವೀಣೆ ಮೊದಲಾದ ನಿರ್ಜೀವ ವಾದ್ಯಗಳ ಸ್ವರಗಳ ಹಾಗೆ, ವಿವಿಧ ಶೃತಿಗಳು ಕಂಡುಬರದಿದ್ದರೆ, ಊದಿದ್ದು ಕೊಳಲೋ ಅಥವಾ ಬಾರಿಸಿದ್ದು ವೀಣೆಯೋ ಎಂದು ತಿಳಿಯುವುದು ಹೇಗೆ?
1CO 14:8 ತುತೂರಿಯನ್ನು ಸ್ಪಷ್ಟವಾಗಿ ಊದದಿದ್ದರೆ, ಯಾರು ತಾನೇ ಯುದ್ಧಕ್ಕೆ ಸನ್ನದ್ಧರಾಗುವರು?
1CO 14:9 ಅದರಂತೆಯೇ, ನೀವೂ ಸ್ಪಷ್ಟವಾದ ಭಾಷೆಯಿಂದ ಮಾತನಾಡದೆ ಹೋದರೆ, ಮಾತನಾಡಿದ್ದು ಏನೆಂದು ತಿಳಿಯುವುದು ಹೇಗೆ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.
1CO 14:10 ಲೋಕದಲ್ಲಿ ಎಷ್ಟು ವಿಧವಾದ ಭಾಷೆಗಳಿದ್ದರೂ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ.
1CO 14:11 ನಾನು ಭಾಷೆಯ ಅರ್ಥವನ್ನು ಗ್ರಹಿಸದಿದ್ದರೆ, ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು, ಮಾತನಾಡುವವನು ನನಗೆ ಅನ್ಯದೇಶದವನಂತಿರುವನು.
1CO 14:12 ಅದರಂತೆಯೇ, ನೀವು ಸಹ ಆತ್ಮಿಕ ವರಗಳನ್ನು ಬಯಸುವುದರಿಂದ, ಸಭೆಗೆ ಭಕ್ತಿವೃದ್ಧಿ ಉಂಟುಮಾಡುವ ವರಗಳನ್ನೇ ಸಮೃದ್ಧವಾಗಿ ಪ್ರಯತ್ನಿಸಿರಿ.
1CO 14:13 ಆದ್ದರಿಂದ, ಅನ್ಯಭಾಷೆಗಳನ್ನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವುದಕ್ಕೆ ದೇವರನ್ನು ಪ್ರಾರ್ಥಿಸಲಿ.
1CO 14:14 ಏಕೆಂದರೆ ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದು. ಆದರೆ ನನ್ನ ಬುದ್ಧಿ ನಿಷ್ಫಲವಾಗಿರುವುದು.
1CO 14:15 ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು. ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.
1CO 14:16 ನೀನು ಆತ್ಮದಲ್ಲಿ ಮಾತ್ರ ಸ್ತೋತ್ರ ಮಾಡಿದರೆ, ತಿಳುವಳಿಕೆ ಇಲ್ಲದೆ ಕುಳಿತಿರುವವನು ನಿನ್ನ ಕೃತಜ್ಞತಾಸ್ತುತಿಗೆ, “ಆಮೆನ್” ಎಂದು ಹೇಳುವುದು ಹೇಗೆ?
1CO 14:17 ನೀನು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ ನಿಜವೇ. ಆದರೆ, ಮತ್ತೊಬ್ಬನಿಗೆ ಭಕ್ತಿವೃದ್ಧಿಯಾಗಲಿಲ್ಲ.
1CO 14:18 ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರಿಗೆ ಕೃತಜ್ಞತೆ ಮಾಡುತ್ತೇನೆ.
1CO 14:19 ಆದರೂ ಸಭೆಯಲ್ಲಿ ಅನ್ಯಭಾಷೆಗಳಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ, ಇತರರಿಗೆ ಉಪದೇಶ ಮಾಡುವುದನ್ನೇ ನಾನು ಇಷ್ಟಪಡುತ್ತೇನೆ.
1CO 14:20 ಸಹೋದರರೇ, ಮಕ್ಕಳಂತೆ ಯೋಚಿಸುವುದನ್ನು ಬಿಟ್ಟುಬಿಡಿರಿ. ಕೇಡಿನ ವಿಷಯದಲ್ಲಿ ಶಿಶುಗಳಂತೆ ಇದ್ದರೂ, ನಿಮ್ಮ ಯೋಚನೆಯಲ್ಲಿ ಪ್ರಾಯಸ್ಥರಾಗಿರಿ.
1CO 14:21 “ಬೇರೆಭಾಷೆಯವರ ಮೂಲಕವಾಗಿಯೂ ವಿದೇಶದವರ ತುಟಿಗಳಿಂದಲೂ ನಾನು ಈ ಜನರೊಡನೆ ಮಾತಾಡುವೆನು, ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು ಕರ್ತದೇವರು ಹೇಳುತ್ತಾರೆ,” ಎಂದು ನಿಯಮದಲ್ಲಿ ಬರೆದಿದೆ.
1CO 14:22 ಆದ್ದರಿಂದ, ಅನ್ಯಭಾಷೆಗಳನ್ನಾಡುವುದು ವಿಶ್ವಾಸಿಗಳಿಗೆ ಅಲ್ಲ, ಅವಿಶ್ವಾಸಿಗಳಿಗೆ ಸೂಚನೆಯಾಗಿದೆ. ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ ಸೂಚನೆಯಾಗಿದೆ.
1CO 14:23 ಆದಕಾರಣ ಸಭೆಯೆಲ್ಲವೂ ಕೂಡಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ, ಅಜ್ಞಾನಿಗಳು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು, ನೀವು ಹುಚ್ಚರೆಂದು ಹೇಳುವುದಿಲ್ಲವೇ?
1CO 14:24 ಆದರೆ ನೀವೆಲ್ಲರೂ ಪ್ರವಾದಿಸುತ್ತಿರಲು, ಅವಿಶ್ವಾಸಿಯಾಗಲಿ, ಅನ್ವೇಷಕನಾಗಲಿ ಒಳಗೆ ಬಂದರೆ, ಅವನು ತಾನು ಪಾಪಿಯೆಂಬ ಮನವರಿಕೆಯನ್ನು ಹೊಂದುವನು. ಅವನು ಎಲ್ಲರ ಮಾತಿನಿಂದ ಪರಿಶೋಧಿತನಾಗುವನು.
1CO 14:25 ಅವನ ಹೃದಯದ ರಹಸ್ಯಗಳು ಬಯಲಾಗುವುವು. ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, “ದೇವರು ನಿಜವಾಗಿಯೂ ನಿಮ್ಮ ಮಧ್ಯದಲ್ಲಿ ಇದ್ದಾರೆ!” ಎಂದು ಪ್ರಕಟಪಡಿಸುವನು.
1CO 14:26 ಹಾಗಾದರೇನು ಪ್ರಿಯರೇ? ನೀವು ಸಭೆಯಾಗಿ ಕೂಡಿಬರುವಾಗ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಸಂದೇಶವಾಗಲಿ, ಪ್ರಕಟನೆಯಾಗಲಿ, ಅನ್ಯಭಾಷೆಯನ್ನಾಡುವುದಾಗಲಿ, ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವಾಗಲಿ ಇರುತ್ತದಷ್ಟೆ. ಇವೆಲ್ಲವೂ ಸಭೆಗೆ ಭಕ್ತಿವೃದ್ಧಿಗಾಗಿಯೇ ಇರಲಿ.
1CO 14:27 ಯಾವನಾದರೂ ಅನ್ಯಭಾಷೆಗಳನ್ನಾಡುವುದಾದರೆ, ಇಬ್ಬರು ಅಥವಾ ಹೆಚ್ಚೆಂದರೆ ಮೂವರು ಒಬ್ಬೊಬ್ಬರಾಗಿ ಮಾತನಾಡಬೇಕು, ಒಬ್ಬನು ಅರ್ಥವನ್ನು ಹೇಳಲಿ.
1CO 14:28 ಅರ್ಥವನ್ನು ಹೇಳುವವನಿಲ್ಲದಿದ್ದರೆ, ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಮೌನವಾಗಿರಲಿ. ಅವನು ತನ್ನೊಂದಿಗೂ ದೇವರೊಂದಿಗೂ ಮಾತನಾಡಿಕೊಳ್ಳಲಿ.
1CO 14:29 ಪ್ರವಾದಿಗಳು ಇಬ್ಬರಾಗಲಿ, ಮೂವರಾಗಲಿ ಮಾತಾಡಲಿ, ಇತರರರು ವಿವೇಚನೆ ಮಾಡಲಿ.
1CO 14:30 ಕುಳಿತಿರುವ ಮತ್ತೊಬ್ಬನಿಗೆ ಏನಾದರೂ ಪ್ರಕಟನೆಯಾದರೆ, ಮೊದಲಿನವನು ಮೌನವಾಗಿರಲಿ.
1CO 14:31 ಎಲ್ಲರೂ ಕಲಿತುಕೊಳ್ಳುವಂತೆಯೂ, ಎಲ್ಲರೂ ಪ್ರೋತ್ಸಾಹ ಹೊಂದುವಂತೆಯೂ, ನೀವೆಲ್ಲರು ಒಬ್ಬೊಬ್ಬರಾಗಿ ಪ್ರವಾದಿಸಿರಿ.
1CO 14:32 ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.
1CO 14:33 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ, ದೇವರು ಗಲಿಬಿಲಿಯ ದೇವರಲ್ಲ, ಸಮಾಧಾನದ ದೇವರಾಗಿದ್ದಾರೆ.
1CO 14:34 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಲಿ. ಏಕೆಂದರೆ ಮಾತನಾಡಲು ಅವರಿಗೆ ಅನುಮತಿಯಿಲ್ಲ, ನಿಯಮವು ಸಹ ಹೇಳಿರುವಂತೆ ಅವರು ಅಧೀನರಾಗಿರಬೇಕು.
1CO 14:35 ಅವರು ಏನಾದರೂ ಕಲಿಯಬಯಸಿದರೆ, ಮನೆಯಲ್ಲಿ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ನಾಚಿಕೆಪಡುವಂಥದಾಗಿದೆ.
1CO 14:36 ದೇವರ ವಾಕ್ಯವು ನಿಮ್ಮಿಂದ ಹೊರಟಿತೋ? ಅಥವಾ ಅದು ತಲುಪಿದ್ದು ನಿಮಗೆ ಮಾತ್ರವೋ?
1CO 14:37 ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ, ಆತ್ಮನ ವರಗಳನ್ನು ಹೊದಿದವನೆಂದಾಗಲಿ ಭಾವಿಸುವುದಾದರೆ, ನಾನು ನಿಮಗೆ ಬರೆದಿರುವ ಸಂಗತಿಗಳು ಕರ್ತದೇವರ ಆಜ್ಞೆಗಳೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲಿ.
1CO 14:38 ಆದರೆ ಯಾರಾದರೂ ಇದನ್ನು ತಿರಸ್ಕಸಿದರೆ, ಅವರೂ ತಿರಸ್ಕಾರಕ್ಕೆ ಗುರಿಯಾಗುವರು.
1CO 14:39 ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ.
1CO 14:40 ಆದರೆ ಎಲ್ಲವನ್ನೂ ಯೋಗ್ಯವಾಗಿಯೂ ಕ್ರಮವಾಗಿಯೂ ಮಾಡಿರಿ.
1CO 15:1 ಪ್ರಿಯರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನೂ, ನೀವು ಅದನ್ನು ಸ್ವೀಕರಿಸಿದ್ದನ್ನೂ, ಅದರಲ್ಲಿ ನಿಂತಿರುವುದನ್ನೂ, ಈಗ ನಿಮಗೆ ನೆನಪಿಸುತ್ತೇನೆ.
1CO 15:2 ನಾನು ಸಾರಿದ ಈ ಸುವಾರ್ತೆಯ ವಾಕ್ಯವನ್ನು ನೀವು ಬಿಗಿಯಾಗಿ ಹಿಡಿದುಕೊಂಡರೆ, ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ, ನಿಮ್ಮ ನಂಬಿಕೆ ವ್ಯರ್ಥವಾಗಿ ಹೋಗುತ್ತದೆ.
1CO 15:3 ಏಕೆಂದರೆ ನಾನು ಪಡೆದುಕೊಂಡಿದ್ದರಲ್ಲಿ ಬಹು ಪ್ರಾಮುಖ್ಯವಾದದ್ದನ್ನೇ ನಿಮಗೆ ಕೊಟ್ಟಿದ್ದೇನೆ. ಅದೇನೆಂದರೆ, ಪವಿತ್ರ ವೇದದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತರು,
1CO 15:4 ಹೂಣಿಡಲಾದರು, ಪವಿತ್ರ ವೇದದ ಪ್ರಕಾರವೇ ಮೂರನೆಯ ದಿನದಲ್ಲಿ ಎದ್ದು ಬಂದರು.
1CO 15:5 ಕೇಫನಿಗೂ ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.
1CO 15:6 ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಹಿಂಬಾಲಕರಿಗೆ ಕ್ರಿಸ್ತ ಯೇಸು ಕಾಣಿಸಿಕೊಂಡರು. ಅವರಲ್ಲಿ ಕೆಲವರು ಸತ್ತು ಹೋಗಿದ್ದರೂ ಬಹುಜನರು ಇಂದಿಗೂ ಬದುಕಿದ್ದಾರೆ.
1CO 15:7 ತರುವಾಯ ಕ್ರಿಸ್ತ ಯೇಸು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡರು.
1CO 15:8 ಕಟ್ಟಕಡೆಗೆ, ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.
1CO 15:9 ನಾನಾದರೋ ಅಪೊಸ್ತಲರಲ್ಲಿ ಕನಿಷ್ಠನು, ಅಪೊಸ್ತಲನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ, ಏಕೆಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿದೆನು.
1CO 15:10 ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
1CO 15:11 ಆದ್ದರಿಂದ ನಾನಾದರೇನು, ಅವರಾದರೇನು ಇದನ್ನೇ ನಾವು ಸಾರುವುದು, ಇದನ್ನೇ ನೀವು ನಂಬಿದ್ದೀರಿ.
1CO 15:12 ಆದರೆ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದಿರುತ್ತಾರೆಂದು ಸಾರುತ್ತಿರುವಲ್ಲಿ ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನ ಇಲ್ಲ ಎಂದು ಹೇಳುವುದು ಹೇಗೆ?
1CO 15:13 ಈಗ ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಕ್ರಿಸ್ತಯೇಸುವಾದರೂ ಎದ್ದು ಬರಲಿಲ್ಲ.
1CO 15:14 ಕ್ರಿಸ್ತ ಯೇಸು ಎದ್ದು ಬರಲಿಲ್ಲವಾದರೆ, ನಮ್ಮ ಪ್ರಸಂಗವೂ ನಿಮ್ಮ ವಿಶ್ವಾಸವೂ ನಿಷ್ಪ್ರಯೋಜನವಾದದ್ದು.
1CO 15:15 ಅದು ಮಾತ್ರವಲ್ಲ, ದೇವರು ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ದೇವರ ಬಗ್ಗೆ ಸಾಕ್ಷಿಕೊಟ್ಟ ನಾವೂ ಸುಳ್ಳುಸಾಕ್ಷಿಗಳಾಗಿ ಕಂಡುಬರುವೆವು. ದೇವರು ಕ್ರಿಸ್ತನನ್ನು ಎಬ್ಬಿಸದಿದ್ದರೆ ಸತ್ತವರನ್ನೂ ದೇವರು ಎಬ್ಬಿಸುವುದಿಲ್ಲ.
1CO 15:16 ಸತ್ತವರು ಎದ್ದುಬರುವುದಿಲ್ಲವಾದರೆ, ಕ್ರಿಸ್ತ ಯೇಸುವೂ ಎದ್ದುಬಂದಿಲ್ಲ.
1CO 15:17 ಕ್ರಿಸ್ತ ಯೇಸುವು ಎದ್ದುಬಂದಿಲ್ಲವಾದರೆ, ನಿಮ್ಮ ವಿಶ್ವಾಸವೂ ವ್ಯರ್ಥವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.
1CO 15:18 ಅಲ್ಲದೆ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ನಿದ್ರೆ ಹೋದವರು ಸಹ ನಾಶವಾದರು.
1CO 15:19 ನಾವು ಈ ಜೀವನದಲ್ಲಿ ಮಾತ್ರ ಕ್ರಿಸ್ತ ಯೇಸುವಿನಲ್ಲಿ ನಿರೀಕ್ಷೆಯಿಟ್ಟು ಕೊಂಡಿರುವವರಾಗಿದ್ದರೆ, ನಾವು ಎಲ್ಲಾ ಮನುಷ್ಯರಲ್ಲಿಯೂ ಕನಿಕರಪಡತಕ್ಕವರೇ ಆಗುತ್ತೇವೆ.
1CO 15:20 ಆದರೆ ಈಗ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದೇ ಇದ್ದಾರೆ. ನಿದ್ರೆ ಹೋದವರಲ್ಲಿ ಪ್ರಥಮಫಲವಾಗಿದ್ದಾರೆ.
1CO 15:21 ಏಕೆಂದರೆ ಒಬ್ಬ ಮನುಷ್ಯನ ಮೂಲಕ ಮರಣವು ಬಂದಂತೆಯೇ, ಒಬ್ಬ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವು ಸಹ ಬರುವುದು.
1CO 15:22 ಏಕೆಂದರೆ, ಆದಾಮನಲ್ಲಿ ಎಲ್ಲರೂ ಸತ್ತಂತೆಯೇ, ಕ್ರಿಸ್ತನಲ್ಲಿ ಎಲ್ಲರೂ ಜೀವಂತರಾಗುವರು.
1CO 15:23 ಆದರೆ ಒಬ್ಬೊಬ್ಬರು ತಮ್ಮ ತಮ್ಮ ಕ್ರಮದ ಅನುಸಾರವಾಗಿ ಎದ್ದು ಬರುವರು. ಪ್ರಥಮಫಲವಾಗಿ ಕ್ರಿಸ್ತನು, ತರುವಾಯ ಕ್ರಿಸ್ತನ ಪುನರಾಗಮನದಲ್ಲಿ ಕ್ರಿಸ್ತನಿಗೆ ಸೇರಿದವರು ಎದ್ದು ಬರುವರು.
1CO 15:24 ಆಮೇಲೆ ಕ್ರಿಸ್ತನು ಎಲ್ಲಾ ಆಧಿಪತ್ಯವನ್ನೂ ಎಲ್ಲಾ ಅಧಿಕಾರವನ್ನೂ ಎಲ್ಲಾ ಶಕ್ತಿಯನ್ನೂ ತೆಗೆದುಹಾಕಿ, ರಾಜ್ಯವನ್ನು ತಂದೆ ದೇವರಿಗೆ ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.
1CO 15:25 ಏಕೆಂದರೆ, ಕ್ರಿಸ್ತನು ಎಲ್ಲಾ ಶತ್ರುಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ಆಳುವುದು ಅವಶ್ಯ.
1CO 15:26 ಕೊನೆಯದಾಗಿ, ನಿರ್ಮೂಲವಾಗುವ ವೈರಿ ಮರಣವೇ.
1CO 15:27 ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿ ಅವರಿಗೆ ಅಧೀನಮಾಡಿದ್ದಾರೆ. “ಸಮಸ್ತವೂ ಅವರಿಗೆ ಅಧೀನ ಮಾಡಲಾಗಿದೆ” ಎಂದು ಹೇಳುವಾಗ, ಸಮಸ್ತವನ್ನೂ ಕ್ರಿಸ್ತನಿಗೆ ಅಧೀನಮಾಡಿಕೊಟ್ಟ ದೇವರು ಇದರಲ್ಲಿ ಒಳಪಡಲಿಲ್ಲ ಎಂಬುದು ಸ್ಪಷ್ಟವಾಗಿದೆ.
1CO 15:28 ಸಮಸ್ತವೂ ಅವರಿಗೆ ಅಧೀನವಾದ ಮೇಲೆ, ಮಗನೂ ಸಹ ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟ ದೇವರಿಗೆ ತಾವೇ ಅಧೀನರಾಗುವರು. ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.
1CO 15:29 ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ನಿಜವಾಗಿಯೂ ಎದ್ದುಬರುವುದಿಲ್ಲವಾದರೆ, ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಏಕೆ?
1CO 15:30 ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಅಪಾಯದಲ್ಲಿರುವುದೇಕೆ?
1CO 15:31 ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ.
1CO 15:32 ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, “ತಿನ್ನೋಣ, ಕುಡಿಯೋಣ, ನಾಳೆ ಮರಣ ಹೊಂದೋಣ.”
1CO 15:33 ಮೋಸಹೋಗಬೇಡಿರಿ. ಏಕೆಂದರೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”
1CO 15:34 ಸ್ವಸ್ಥಚಿತ್ತರಾಗಿರಿ, ಪಾಪಮಾಡುವುದನ್ನು ನಿಲ್ಲಿಸಿರಿ. ಕೆಲವರಂತೂ ದೇವರನ್ನೇ ಅಲಕ್ಷ್ಯಮಾಡುವವರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕೆಂದು ನಾನು ಇದನ್ನು ಹೇಳುತ್ತೇನೆ.
1CO 15:35 “ಸತ್ತವರು ಎದ್ದೇಳುವುದು ಹೇಗೆ? ಎಂಥ ದೇಹದಿಂದ ಎದ್ದು ಬರುತ್ತಾರೆ?” ಎಂದು ಯಾರಾದರೂ ಕೇಳಬಹುದು.
1CO 15:36 ಮತಿಹೀನ ಮನುಷ್ಯನೇ! ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವಂತವಾಗುವುದಿಲ್ಲ.
1CO 15:37 ನೀನು ಒಂದು ವೇಳೆ ಗೋಧಿಯನ್ನಾಗಲಿ, ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ, ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವುದಿಲ್ಲ.
1CO 15:38 ಆದರೆ ದೇವರು ತಾನು ನಿರ್ಣಯಿಸಿದಂತೆ ಅದಕ್ಕೆ ದೇಹವನ್ನು ಕೊಡುತ್ತಾರೆ ಮತ್ತು ಒಂದೊಂದು ಬೀಜಕ್ಕೂ ಅದರದರ ದೇಹವನ್ನು ಕೊಡುತ್ತಾರೆ.
1CO 15:39 ಎಲ್ಲಾ ದೇಹಗಳು ಒಂದೇ ವಿಧವಾಗಿಲ್ಲ. ಮನುಷ್ಯನ ದೇಹ ಬೇರೆ, ಪಶುಗಳ ದೇಹ ಬೇರೆ, ಪಕ್ಷಿಗಳ ದೇಹ ಬೇರೆ, ಮೀನುಗಳದೇ ಬೇರೆ.
1CO 15:40 ಪರಲೋಕದ ದೇಹಗಳಿವೆ, ಭೂಲೋಕದ ದೇಹಗಳಿವೆ. ಆದರೆ ಪರಲೋಕದ ದೇಹಗಳ ಮಹಿಮೆಯೇ ಬೇರೆ, ಭೂಲೋಕದ ದೇಹಗಳ ಮಹಿಮೆಯೇ ಬೇರೆ.
1CO 15:41 ಸೂರ್ಯನ ಮಹಿಮೆ ಬೇರೆ, ಚಂದ್ರನ ಮಹಿಮೆಯೇ ಬೇರೆ ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಏಕೆಂದರೆ, ನಕ್ಷತ್ರ ನಕ್ಷತ್ರಕ್ಕೆ ಮಹಿಮೆಯಲ್ಲಿ ವ್ಯತ್ಯಾಸವಾಗಿರುವುದು.
1CO 15:42 ಸತ್ತವರಿಗಾಗುವ ಪುನರುತ್ಥಾನವು ಸಹ ಹಾಗೆಯೇ ಇರುವುದು. ದೇಹವು ಅಳಿಯುವ ಅವಸ್ಥೆಯಲ್ಲಿ ಬಿತ್ತಲಾಗುತ್ತದೆ. ಅಮರತ್ವ ಅವಸ್ಥೆಯಲ್ಲಿ ಎದ್ದು ಬರುವುದು.
1CO 15:43 ದೇಹವು ಹೀನಾವಸ್ಥೆಯಲ್ಲಿ ಬಿತ್ತಲಾಗುತ್ತದೆ. ಮಹಿಮೆಯಲ್ಲಿ ಎದ್ದು ಬರುವುದು. ಬಲಹೀನತೆಯಲ್ಲಿ ಬಿತ್ತಲಾಗುತ್ತದೆ, ಶಕ್ತಿಯಲ್ಲಿ ಎದ್ದು ಬರುವುದು.
1CO 15:44 ಪ್ರಾಕೃತ ದೇಹವಾಗಿ ಬಿತ್ತಲಾಗುತ್ತದೆ, ಆತ್ಮಿಕ ದೇಹವಾಗಿ ಎದ್ದು ಬರುವುದು. ಪ್ರಾಕೃತ ದೇಹವಿರುವುದಾದರೆ, ಆತ್ಮಿಕ ದೇಹವೂ ಇರುವುದು.
1CO 15:45 “ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,” ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು.
1CO 15:46 ಆತ್ಮಿಕವಾದದ್ದು ಮೊದಲು ಬರಲಿಲ್ಲ, ಪ್ರಾಕೃತವಾದದ್ದೇ ಮೊದಲನೆಯದು, ಅನಂತರ ಆತ್ಮಿಕವಾದದ್ದು.
1CO 15:47 ಮೊದಲನೆಯ ಮನುಷ್ಯ, ಭೂಮಿಯ ಮಣ್ಣಿನವನಾಗಿದ್ದಾನೆ, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.
1CO 15:48 ಮಣ್ಣಿನ ಮನುಷ್ಯನು ಎಂಥವನೋ, ಮಣ್ಣಿಗೆ ಸೇರಿದವರೂ ಅಂಥವರೇ. ಪರಲೋಕದ ಮನುಷ್ಯನು ಎಂಥವನೋ, ಪರಲೋಕಕ್ಕೆ ಸಂಬಂಧಿಸಿದವರೂ ಅಂಥವರಾಗಿರುವರು.
1CO 15:49 ನಾವು ಮಣ್ಣಿನ ಮನುಷ್ಯನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ, ಪರಲೋಕದ ಮನುಷ್ಯನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು.
1CO 15:50 ಪ್ರಿಯರೇ, ನಾನು ಹೇಳುವುದೇನೆಂದರೆ, ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರವು. ಅಳಿಯುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲಾರದು.
1CO 15:51 ನಾನು ರಹಸ್ಯವಾಗಿದ್ದ ಸಂಗತಿಯನ್ನು ನಿಮಗೆ ಹೇಳುತ್ತೇನೆ ಕೇಳಿರಿ: ನಾವೆಲ್ಲರೂ ನಿದ್ರೆ ಹೋಗುವುದಿಲ್ಲ, ನಾವೆಲ್ಲರೂ ರೂಪಾಂತರವಾಗುವೆವು.
1CO 15:52 ಆದರೆ ಒಂದು ಕ್ಷಣದಲ್ಲೇ, ರೆಪ್ಪೆ ಬಡಿಯುವಷ್ಟರಲ್ಲಿ, ಕಡೇ ತುತೂರಿಯು ಊದಲಾಗುವುದು. ತುತೂರಿ ಧ್ವನಿಯಾಗುವಾಗ, ಸತ್ತವರು ಅಮರತ್ವಪಡೆದು ಎಬ್ಬಿಸಲಾಗುವರು, ನಾವು ರೂಪಾಂತರವಾಗುವೆವು.
1CO 15:53 ಅಳಿಯುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು, ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು.
1CO 15:54 ನಶಿಸಿಹೋಗುವಂಥದ್ದು ನಶಿಸಿಹೋಗದಂಥದ್ದನ್ನೂ, ಮರಣಾಧೀನವಾದ ಈ ದೇಹವು ಅಮರತ್ವವನ್ನೂ ಧರಿಸಿಕೊಳ್ಳುವಾಗ, ಬರೆದಿರುವ ಈ ಮಾತುಗಳು ನೆರವೇರುವುದು: “ಮರಣವು ನುಂಗಿಯೇ ಹೋಯಿತು, ಜಯವಾಯಿತು.”
1CO 15:55 “ಓ ಮರಣವೇ, ನಿನ್ನ ಜಯವು ಎಲ್ಲಿ? ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”
1CO 15:56 ಮರಣದ ಕೊಂಡಿ ಪಾಪವೇ ಮತ್ತು ಪಾಪದ ಶಕ್ತಿಯು ನಿಯಮವೇ.
1CO 15:57 ಆದರೆ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.
1CO 15:58 ಆದ್ದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿ ನಿಲ್ಲಿರಿ. ಯಾವುದೂ ನಿಮ್ಮನ್ನು ಕದಲಿಸದಿರಲಿ. ಕರ್ತನಲ್ಲಿ ನಿಮ್ಮ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದು, ಕರ್ತನ ಕೆಲಸಕ್ಕೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಿರಿ.
1CO 16:1 ಈಗ ದೇವಜನರಿಗೋಸ್ಕರ ಹಣ ಕೂಡಿಸಿಡುವುದನ್ನು ಕುರಿತು: ನಾನು ಗಲಾತ್ಯದ ಸಭೆಗಳಿಗೆ ಹೇಳಿದ್ದನ್ನೇ ನೀವೂ ಮಾಡಿರಿ.
1CO 16:2 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಆದಾಯಕ್ಕೆ ತಕ್ಕಂತೆ ವಾರದ ಮೊದಲನೆಯ ದಿನದಲ್ಲಿ ಕೂಡಿಟ್ಟುಕೊಂಡಿರಲಿ. ಹೀಗೆ ಮಾಡಿದರೆ, ನಾನು ಬಂದಾಗ ನೀವು ಹಣ ಕೂಡಿಸುವ ಅವಶ್ಯವಿರುವುದಿಲ್ಲ.
1CO 16:3 ನಾನು ನಿಮ್ಮಲ್ಲಿಗೆ ಬಂದಾಗ, ನೀವು ಯಾರನ್ನು ಅನುಮೋದಿಸುವಿರೋ, ಅವರಿಗೆ ಪತ್ರ ಕೊಟ್ಟು ನಿಮ್ಮ ಕೊಡುಗೆಯನ್ನು ತೆಗೆದುಕೊಂಡು ಯೆರೂಸಲೇಮಿಗೆ ಹೋಗುವಂತೆ ಕಳುಹಿಸುವೆನು.
1CO 16:4 ನಾನು ಸಹ ಹೋಗುವುದು ಯುಕ್ತವಾಗಿದ್ದರೆ, ಅವರು ನನ್ನೊಂದಿಗೆ ಬರಲಿ.
1CO 16:5 ಮಕೆದೋನ್ಯವನ್ನು ದಾಟಿದ ಮೇಲೆ, ಅದೇ ಮಾರ್ಗವಾಗಿ ನಾನು ಪುನಃ ನಿಮ್ಮ ಬಳಿಗೆ ಬರುವೆನು.
1CO 16:6 ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು.
1CO 16:7 ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.
1CO 16:8 ಆದರೆ ಐವತ್ತು ದಿನಗಳ ಹಬ್ಬದ ತನಕ ಎಫೆಸದಲ್ಲಿರುವೆನು.
1CO 16:9 ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ.
1CO 16:10 ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ.
1CO 16:11 ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ.
1CO 16:12 ಈಗ ನಮ್ಮ ಸಹೋದರನಾದ ಅಪೊಲ್ಲೋಸನ ವಿಷಯವೇನೆಂದರೆ, ಅವನು ಇತರ ಸಹೋದರರೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಅವನಿಗೆ ಬಹಳವಾಗಿ ಕೇಳಿಕೊಂಡೆನು. ಆದರೆ ಈಗ ಬರುವುದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿಲ್ಲ. ಅವನು ತನಗೆ ಸಂದರ್ಭ ಸಿಕ್ಕಿದಾಗ ಬರುವನು.
1CO 16:13 ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ.
1CO 16:14 ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
1CO 16:15 ಸ್ತೆಫನನ ಕುಟುಂಬದವರು ಅಖಾಯದಲ್ಲಿ ಪ್ರಥಮವಾಗಿ ವಿಶ್ವಾಸಿಗಳಾದವರು ಎಂಬುದನ್ನು ನೀವು ಬಲ್ಲಿರಿ. ಅವರು ದೇವಜನರಿಗೆ ಸೇವೆ ಮಾಡುವುದಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರಾಗಿದ್ದಾರೆ.
1CO 16:16 ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1CO 16:17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ.
1CO 16:18 ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ.
1CO 16:19 ಏಷ್ಯಾದ ಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ನಿಮ್ಮನ್ನು ಹೃದಯಪೂರ್ವಕವಾಗಿ ವಂದಿಸುತ್ತಾರೆ.
1CO 16:20 ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ.
1CO 16:21 ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ.
1CO 16:22 ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ!
1CO 16:23 ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.
1CO 16:24 ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇದೆ. ಆಮೆನ್.
2CO 1:1 ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, ಕೊರಿಂಥದಲ್ಲಿರುವ ದೇವರ ಸಭೆಗೆ ಮತ್ತು ಅಖಾಯ ಪ್ರಾಂತದಲ್ಲಿರುವ ಎಲ್ಲಾ ಪವಿತ್ರ ಜನರಿಗೆ ಬರೆಯುವ ಪತ್ರ:
2CO 1:2 ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
2CO 1:3 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ.
2CO 1:4 ದೇವರು ನಮಗಾಗುವ ಎಲ್ಲಾ ಬಾಧೆಗಳಲ್ಲಿ ನಮ್ಮನ್ನು ಸಂತೈಸುವವರಾಗಿದ್ದಾರೆ. ಇತರರು ಬಾಧೆಗಳನ್ನು ಅನುಭವಿಸುತ್ತಿರುವಾಗ, ನಾವು ಸಹ ದೇವರಿಂದ ಹೊಂದಿರುವ ಸಂತೈಸುವಿಕೆಯಿಂದ ಅವರನ್ನು ಸಂತೈಸಲು ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾರೆ.
2CO 1:5 ಕ್ರಿಸ್ತ ಯೇಸುವಿನ ಸಂಕಟವು ನಮ್ಮಲ್ಲಿ ಹೇಗೆ ಅಧಿಕವಾಗಿದೆಯೋ ಹಾಗೆಯೇ, ಕ್ರಿಸ್ತ ಯೇಸುವಿನ ಮೂಲಕ ನಮ್ಮ ಸಂತೈಸುವಿಕೆಯೂ ನಮ್ಮಲ್ಲಿ ಅಧಿಕವಾಗಿರುತ್ತದೆ.
2CO 1:6 ನಮಗೆ ಕಷ್ಟಸಂಕಟಗಳು ಬಂದರೆ, ಅದು ನಿಮ್ಮ ಆದರಣೆ ಮತ್ತು ರಕ್ಷಣೆಗೋಸ್ಕರವೇ ಇರುತ್ತದೆ. ನಾವು ಸಂತೈಸುವಿಕೆಯನ್ನು ಹೊಂದಿರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ಆ ಆದರಣೆಯು ನಮ್ಮಂತೆ ನೀವು ಅನುಭವಿಸುವ ಕಷ್ಟಸಂಕಟಗಳನ್ನು ಸಹನೆಯಿಂದ ಅನುಭವಿಸುವಂತೆ ಮಾಡುವುದು.
2CO 1:7 ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥಿರವಾಗಿದೆ. ಏಕೆಂದರೆ, ನಮ್ಮ ಕಷ್ಟಸಂಕಟಗಳಲ್ಲಿ ನೀವು ಪಾಲುಗಾರರಾಗಿದ್ದಂತೆಯೇ, ನಮ್ಮ ಸಂತೈಸುವಿಕೆಗಳಲ್ಲಿಯೂ ನೀವು ನಮ್ಮೊಂದಿಗೆ ಪಾಲುಗಾರರಾಗಿದ್ದೀರಿ ಎಂದು ನಮಗೆ ಗೊತ್ತಿದೆ.
2CO 1:8 ಪ್ರಿಯರೇ, ನಾವು ಏಷ್ಯಾ ಪ್ರಾಂತದಲ್ಲಿ ಅನುಭವಿಸಿದ ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿಯಬೇಕೆಂದು ಬಯಸುತ್ತೇವೆ. ನಾವು ಸಹಿಸುವುದಕ್ಕೆ ಬಹುಕಷ್ಟಕರವಾದ ಒತ್ತಡಗಳು ನಮಗೆ ಬಂದೊದಗಿದಾಗ, ಅವು ನಮ್ಮ ಪ್ರಾಣಕ್ಕೂ ಅಪಾಯಕಾರಿ ಎಂದೆನಿಸಿತು.
2CO 1:9 ಮರಣದ ಶಿಕ್ಷೆಯನ್ನು ನಾವು ಅನುಭವಿಸುತ್ತೇವೋ ಎಂಬಂತೆ ನಮಗಾಯಿತು. ನಾವು ನಮ್ಮ ಮೇಲೆ ಭರವಸೆಯಿಡದೆ, ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸೆ ಇಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು.
2CO 1:10 ನಾವು ಭರವಸೆಯಿಟ್ಟ ದೇವರು ಅಂಥಾ ಮರಣಕರ ಅಪಾಯದಿಂದ ನಮ್ಮನ್ನು ತಪ್ಪಿಸಿದ್ದಾರೆ ಮತ್ತು ಮುಂದೆಯೂ ಅಪಾಯಗಳಿಂದ ನಮ್ಮನ್ನು ಪಾರುಮಾಡುವರು.
2CO 1:11 ನೀವು ನಿಮ್ಮ ಪ್ರಾರ್ಥನೆಯಿಂದ ನಮಗೆ ಸಹಾಯಮಾಡಿರಿ. ಹೀಗೆ, ಬಹಳ ಜನರ ಪ್ರಾರ್ಥನೆಗಳಿಗೆ ಉತ್ತರವಾಗಿ ನಮಗೆ ದೊರಕಿದ ಕೃಪೆಯ ಮೆಚ್ಚುಗೆಗಾಗಿ, ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವರು.
2CO 1:12 ಈ ಲೋಕದೊಂದಿಗೂ, ವಿಶೇಷವಾಗಿ ನಮ್ಮ ಮತ್ತು ನಿಮ್ಮ ಸಂಬಂಧದಲ್ಲಿಯೂ, ನಾವು ದೇವರಿಂದ ಹೊಂದಿದ ಪವಿತ್ರತೆ ಮತ್ತು ದೈವಿಕ ನಿಷ್ಕಪಟತ್ವದಿಂದ ಯೋಗ್ಯರಾಗಿ ವರ್ತಿಸಿದ್ದೇವೆ ಎಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಈ ಮನಸ್ಸಾಕ್ಷಿಯ ಹೇಳಿಕೆಯು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಇದನ್ನು ಈ ಲೋಕದ ಜ್ಞಾನದಿಂದ ಅಲ್ಲ, ದೇವರ ಕೃಪೆಯನ್ನೇ ಆಶ್ರಯಿಸಿ ಮಾಡಿದ್ದೇವೆ.
2CO 1:13 ನಿಮಗೆ ಓದಲು ಅಥವಾ ಅರ್ಥಮಾಡಿಕೊಳ್ಳಲು ಅಸಾಧ್ಯವಾದ ಯಾವುದನ್ನೂ ನಾವು ಬರೆಯಲಿಲ್ಲ.
2CO 1:14 ಈಗ ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರಿತುಕೊಂಡಿದ್ದೀರಿ. ಆದರೆ ಕರ್ತ ಆಗಿರುವ ಯೇಸುವಿನ ಪುನರಾಗಮನ ದಿನದಲ್ಲಿ ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ, ನಮ್ಮ ಬಗ್ಗೆ ಹೆಮ್ಮೆ ಪಡಲು ನೀವು ಸಂಪೂರ್ಣವಾಗಿ ನಮ್ಮನ್ನು ಅರಿತುಕೊಳ್ಳುವಿರೆಂಬ ನಿರೀಕ್ಷೆ ನಮಗಿದೆ.
2CO 1:15 ಈ ಭರವಸೆಯಿಂದ, ನಾನು ನಿಮ್ಮನ್ನು ಮೊದಲು ಸಂದರ್ಶಿಸಿ, ನಿಮಗೆ ಎರಡರಷ್ಟು ಉಪಯುಕ್ತತೆಯನ್ನು ಹೊಂದುವಂತೆ ಯೋಚನೆ ಮಾಡಿದ್ದೆನು.
2CO 1:16 ಮಕೆದೋನ್ಯಕ್ಕೆ ಹೋಗುವಾಗ ನಾನು ನಿಮ್ಮನ್ನು ಸಂದರ್ಶಿಸುವೆನು, ಅಲ್ಲಿಂದ ಹಿಂದಿರುಗಿ ಬರುವಾಗಲೂ ನಿಮ್ಮನ್ನು ಸಂದರ್ಶಿಸಲು ನಾನೇ ಯೂದಾಯಕ್ಕೆ ಬರುವಂತೆ ಯೋಚನೆ ಮಾಡಿದ್ದೆನು.
2CO 1:17 ನಾನು ಇದನ್ನು ಯೋಚಿಸಿದಾಗ, ಚಂಚಲಹೃದಯವನ್ನು ತಾಳಿದೆನೋ? ಅಥವಾ, ಒಮ್ಮೆ ಅದು “ಹೌದು, ಹೌದು” ಅದೇ ಕ್ಷಣದಲ್ಲಿ ಅದು “ಅಲ್ಲ, ಅಲ್ಲ” ಎಂದು ನಾನು ಲೋಕ ರೀತಿಯಾಗಿ ಯೋಜನೆಯನ್ನು ತಯಾರಿಸಿದ್ದೇನೋ?
2CO 1:18 ನಿಶ್ಚಯವಾಗಿ, ದೇವರು ಹೇಗೆ ಪ್ರಾಮಾಣಿಕತೆಗೆ ಯೋಗ್ಯರೋ, ಹಾಗೆಯೇ ನಾವು ನಿಮಗೆ ಕೊಟ್ಟ ಸಂದೇಶವೂ, ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ.
2CO 1:19 ನಾನು, ಸಿಲ್ವಾನ ಮತ್ತು ತಿಮೊಥೆಯನು ನಿಮ್ಮಲ್ಲಿ ಬೋಧಿಸಿದ ದೇವರ ಪುತ್ರನಾದ ಯೇಸು ಕ್ರಿಸ್ತನು ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ. ಯಾವಾಗಲೂ ಅದು ಕ್ರಿಸ್ತನಲ್ಲಿ ಹೌದು ಎಂದೇ ಆಗಿರುತ್ತಾನೆ.
2CO 1:20 ದೇವರು ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತ ಯೇಸುವಿನಲ್ಲಿ “ಹೌದು” ಎಂದೇ ಇರುತ್ತದೆ. ಕ್ರಿಸ್ತ ಯೇಸುವಿನ ಮೂಲಕ ನಾವು ಅದಕ್ಕೆ “ಆಮೆನ್” ಎಂದು ದೇವರ ಮಹಿಮೆಗಾಗಿ ಎನ್ನುತ್ತೇವೆ.
2CO 1:21 ನೀವೂ ನಾವೂ ಕ್ರಿಸ್ತ ಯೇಸುವಿನಲ್ಲಿ ದೃಢವಾಗಿ ನಿಲ್ಲುವಂತೆ ದೇವರು ನಮ್ಮನ್ನು ಸ್ಥಿರಪಡಿಸುತ್ತಾರೆ. ದೇವರು ನಮ್ಮನ್ನು ಅಭಿಷೇಕಿಸಿ,
2CO 1:22 ನಮ್ಮ ಮೇಲೆ ದೇವರಿಗಿರುವ ಅಧಿಕಾರವೆಂಬ ಮುದ್ರೆಯನ್ನು ಒತ್ತಿದರು. ಮಾತ್ರವಲ್ಲದೇ ತಮ್ಮ ಪವಿತ್ರಾತ್ಮನನ್ನು ಖಾತರಿಯಾಗಿ ನಮ್ಮ ಹೃದಯದಲ್ಲಿಟ್ಟರು.
2CO 1:23 ನಿಮಗೆ ಶ್ರಮೆ ಪಡಿಸಬಾರದೆಂದು ನಾನು ಕೊರಿಂಥಕ್ಕೆ ಹಿಂದಿರುಗಿ ಬರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ.
2CO 1:24 ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತೇವೆಂದು ತಿಳಿಯಬೇಡಿರಿ. ಆದರೆ ನಿಮ್ಮ ಆನಂದಕ್ಕಾಗಿ ಕೆಲಸಮಾಡಿ, ನಾವೂ ಭಾಗಿಗಳಾಗಿರಲು ಬಯಸುತ್ತೇವೆ. ಏಕೆಂದರೆ, ನೀವು ವಿಶ್ವಾಸದಲ್ಲಿ ದೃಢವಾಗಿ ನಿಂತಿದ್ದೀರಲ್ಲ.
2CO 2:1 ಆದ್ದರಿಂದ ಇನ್ನೊಮ್ಮೆ ನಿಮ್ಮ ಬಳಿಗೆ ಬಂದು ನಿಮಗೆ ವೇದನೆಯನ್ನು ಉಂಟುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆನು.
2CO 2:2 ನಾನೇ ನಿಮ್ಮನ್ನು ದುಃಖಪಡಿಸಿದರೆ, ನಾನು ದುಃಖಪಡಿಸಿದ ನಿಮ್ಮನ್ನಲ್ಲದೆ ನನ್ನನ್ನು ಆನಂದಪಡಿಸುವವರು ಬೇರೆ ಯಾರಿದ್ದಾರೆ?
2CO 2:3 ನಾನು ಬಂದಾಗ ನನ್ನನ್ನು ಆನಂದಪಡಿಸತಕ್ಕವರಿಂದಲೇ ದುಃಖ ಹೊಂದಬಾರದೆಂದು ನಾನು ಹಿಂದಿನ ಪತ್ರವನ್ನು ನಿಮಗೆ ಬರೆದಿದ್ದೇನೆ. ನನ್ನ ಆನಂದದಲ್ಲಿ ನೀವೆಲ್ಲರೂ ಪಾಲಾಗುವಿರಿ ಎಂದು ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸೆ ಇದೆ.
2CO 2:4 ಏಕೆಂದರೆ, ನಿಮಗೆ ದುಃಖವಾಗಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಮಹಾ ದುಃಖದಿಂದಲೂ ಬಹಳ ಕಣ್ಣೀರಿನಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು.
2CO 2:5 ನಿಮ್ಮಲ್ಲಿ ಯಾರಾದರೂ ನನ್ನನ್ನು ದುಃಖಪಡಿಸಿದರೆ, ಅವನು ನನ್ನನ್ನು ಮಾತ್ರವೇ ದುಃಖ ಪಡಿಸದೆ, ಒಂದು ವಿಧದಲ್ಲಿ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ಅವನ ಮೇಲೆ ಬಹಳ ಕಠಿಣನಾಗಿರಲು ನನಗೆ ಇಷ್ಟವಿಲ್ಲ.
2CO 2:6 ಅವನಿಗೆ ನಿಮ್ಮಲ್ಲಿ ಅನೇಕರಿಂದ ಉಂಟಾದ ಶಿಕ್ಷೆಯೇ ಸಾಕು.
2CO 2:7 ಈಗ ಅವನನ್ನು ನೀವು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ, ಅವನು ದುಃಖದಲ್ಲಿ ಮುಳುಗಿ ಹೋದಾನು.
2CO 2:8 ಅದಕ್ಕಾಗಿ ನೀವು ನಿಮ್ಮ ಪ್ರೀತಿಯನ್ನು ಮೊದಲು ಇದ್ದಂತೆ ಈಗಲೂ ಅವನ ಮೇಲೆ ತೋರಿಸಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
2CO 2:9 ಎಲ್ಲಾ ವಿಷಯಗಳಲ್ಲಿ ನೀವು ವಿಧೇಯರಾಗುತ್ತೀರೋ ಏನೋ ಎಂದು ಪರೀಕ್ಷಿಸಿ ಅರಿತುಕೊಳ್ಳಬೇಕೆಂಬ ಕಾರಣಕ್ಕಾಗಿ ನಾನು ನಿಮಗೆ ಹಾಗೆ ಬರೆದನು.
2CO 2:10 ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು.
2CO 2:11 ಸೈತಾನನು ನಮ್ಮನ್ನು ವಂಚಿಸಲು ಅವಕಾಶ ಕೊಡಬಾರದು. ಅವನ ಕುತಂತ್ರಗಳನ್ನು ನಾವು ಅರಿತವರಲ್ಲವೇ?
2CO 2:12 ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಹೋದಾಗ, ಅಲ್ಲಿ ಕರ್ತ ಯೇಸುವು ನನಗೆ ಬಾಗಿಲು ತೆರೆದಿರುವುದನ್ನು ಕಂಡೆನು.
2CO 2:13 ನನ್ನ ಸಹೋದರನಾದ ತೀತನು ನನಗೆ ಅಲ್ಲಿ ಸಿಗದಿದ್ದ ಕಾರಣ, ನನ್ನ ಆತ್ಮಕ್ಕೆ ಇನ್ನೂ ವಿಶ್ರಾಂತಿಯಿರಲಿಲ್ಲ. ಆದ್ದರಿಂದ ತ್ರೋವದವರಿಗೆ ನಾನು ನನ್ನ ವಂದನೆಗಳನ್ನರ್ಪಿಸಿ ಮಕೆದೋನ್ಯ ಪ್ರಾಂತಕ್ಕೆ ಹೋದೆನು.
2CO 2:14 ಕ್ರಿಸ್ತ ಯೇಸುವಿನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ, ಅವರ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ಪ್ರಸಾರಗೊಳಿಸುವ ದೇವರಿಗೆ ಕೃತಜ್ಞತೆಗಳು.
2CO 2:15 ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ.
2CO 2:16 ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು?
2CO 2:17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ.
2CO 3:1 ನಮ್ಮನ್ನು ನಾವೇ ತಿರುಗಿ ಶಿಫಾರಸ್ಸು ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಬೇರೆಯವರಂತೆ ನಿಮಗೆ ತೋರಿಸುವುದಕ್ಕೆ ಯೋಗ್ಯತಾಪತ್ರವು ಬೇಕೋ ಅಥವಾ ನಿಮ್ಮಿಂದ ನಮಗೆ ಯೋಗ್ಯತಾಪತ್ರವು ಬೇಕಾಗಿದೆಯೋ?
2CO 3:2 ನೀವೇ ನಮ್ಮ ಹೃದಯದ ಮೇಲೆ ಎಲ್ಲರೂ ಓದಿ ತಿಳಿದುಕೊಳ್ಳಬಹುದಾದ ಪತ್ರವಾಗಿರುತ್ತೀರಿ.
2CO 3:3 ನಮ್ಮ ಸುವಾರ್ತಾ ಸೇವೆಯ ಫಲಿತಾಂಶವಾಗಿ, ನೀವು ಕ್ರಿಸ್ತ ಯೇಸುವಿನ ಪತ್ರವೆಂದು ಪ್ರಕಟಿಸುತ್ತಿದ್ದೀರಿ ಎಂಬುದು ಸ್ಪಷ್ಟವಾಗಿದೆ. ಆ ಪತ್ರವು ಮಸಿಯಿಂದ ಬರೆದದ್ದಲ್ಲ, ಜೀವವುಳ್ಳ ದೇವರ ಆತ್ಮನಿಂದಲೇ ಬರೆಯಲಾಗಿದೆ, ಕಲ್ಲಿನ ಹಲಗೆಗಳ ಮೇಲೆಯಲ್ಲ, ಮಾನವ ಹೃದಯಗಳೆಂಬ ಹಲಗೆಗಳ ಮೇಲೆ ಬರೆಯಲಾಗಿದೆ.
2CO 3:4 ಕ್ರಿಸ್ತ ಯೇಸುವಿನ ಮೂಲಕ ದೇವರ ಮುಂದೆ ನಮಗೆ ಅಂಥಾ ಭರವಸೆಯು ಇರುವುದರಿಂದ ನಾವು ಹಾಗೆ ಹೇಳುತ್ತಿದ್ದೇವೆ.
2CO 3:5 ನಮ್ಮಿಂದಲೇ ಉಂಟಾಯಿತು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವ ಸಾಮರ್ಥ್ಯವೂ ಇಲ್ಲ. ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ.
2CO 3:6 ದೇವರು ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂತೆ ಸಾಮರ್ಥ್ಯವನ್ನು ನೀಡಿರುತ್ತಾರೆ. ಇದು ಲಿಖಿತ ನಿಯಮಕ್ಕೆ ಸೇರಿದ್ದಾಗಿರದೆ, ಪವಿತ್ರಾತ್ಮನ ನಿಯಮದ ಸೇವೆಯಾಗಿರುತ್ತದೆ. ಏಕೆಂದರೆ, ಲಿಖಿತವಾದದ್ದು ಮರಣವನ್ನುಂಟುಮಾಡುತ್ತದೆ. ದೇವರಾತ್ಮನಿಂದಾದದ್ದು ಜೀವವನ್ನು ಉಂಟುಮಾಡುತ್ತದೆ.
2CO 3:7 ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತಿಸಿದ್ದೂ, ಮರಣವನ್ನುಂಟುಮಾಡುವಂಥದ್ದೂ ಆಗಿರುವ ಆ ಸೇವೆಯು ಮಹಿಮೆಯಿಂದ ಕೂಡಿದ್ದಾಗಿತ್ತು. ಕುಂದಿಹೋಗುವಂಥ ಆ ಮಹಿಮೆಯಿಂದ ತುಂಬಿದ ಮೋಶೆಯ ಮುಖವನ್ನು ಇಸ್ರಾಯೇಲರಿಗೆ ದಿಟ್ಟಿಸಿ ನೋಡಲು ಸಾಧ್ಯವಾಗಲಿಲ್ಲ.
2CO 3:8 ಆದರೆ ಪವಿತ್ರಾತ್ಮ ದೇವರಿಂದ ಜೀವವನ್ನು ಉಂಟುಮಾಡುವ ಸೇವೆಯು ಎಷ್ಟೋ ಹೆಚ್ಚಾಗಿ ಮಹಿಮೆಯುಳ್ಳದ್ದಾಗಿರಬೇಕು?
2CO 3:9 ಮನುಷ್ಯರನ್ನು ದಂಡನಾ ತೀರ್ಪಿಗೆ ಒಳಪಡಿಸುವಂಥ ಸೇವೆಯೇ ಮಹಿಮೆಯುಳ್ಳದ್ದಾಗಿದ್ದರೆ, ನೀತಿವಂತರೆಂದು ನಿರ್ಣಯಿಸುವ ಸೇವೆಯು ಇನ್ನೆಷ್ಟು ಮಹಿಮೆಯುಳ್ಳದ್ದಾಗಿರಬೇಕು!
2CO 3:10 ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ, ಹಿಂದಿನ ಆ ಶಾಸನದ ಮಹಿಮೆಯು ಇಲ್ಲದಂತಾಗಿದೆ.
2CO 3:11 ಇಲ್ಲದೆ ಹೋಗುವಂಥದ್ದು ಮಹಿಮೆಯುಳ್ಳದ್ದಾಗಿದ್ದಲ್ಲಿ, ನಿತ್ಯವಾಗಿರುವಂಥದ್ದು ಇನ್ನು ಹೆಚ್ಚಾದ ಮಹಿಮೆಯಲ್ಲಿರಬೇಕಲ್ಲವೇ?
2CO 3:12 ಇಂಥಾ ನಿರೀಕ್ಷೆಯು ನಮಗಿರುವುದರಿಂದ ನಾವು ಬಹಳ ಧೈರ್ಯಶಾಲಿಗಳಾಗಿದ್ದೇವೆ.
2CO 3:13 ತನ್ನ ಮುಖದಲ್ಲಿರುವ ಮಹಿಮೆಯು ಕುಂದಿ ಹೋಗುತ್ತಿರುವುದನ್ನು ಇಸ್ರಾಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. ನಾವು ಮೋಶೆಯಂತೆ ಮಾಡುವವರಲ್ಲ.
2CO 3:14 ಆದರೆ ಇಸ್ರಾಯೇಲರ ಬುದ್ಧಿ ಮಂದವಾಯಿತು. ಈ ದಿನದವರೆಗೂ ಹಳೆಯ ಒಡಂಬಡಿಕೆಯು ಓದುವಾಗಲೆಲ್ಲಾ, ಅದೇ ಮುಸುಕು ಅವರಲ್ಲಿ ಇರುತ್ತದೆ. ಅದು ಕ್ರಿಸ್ತ ಯೇಸುವಿನಲ್ಲಿ ಮಾತ್ರವೇ ತೆಗೆಯಲು ಸಾಧ್ಯ. ಆದ್ದರಿಂದ ಅದು ಈಗಲೂ ತೆಗೆದುಹಾಕಲಾಗಿಲ್ಲ.
2CO 3:15 ಈ ದಿನದ ತನಕವೂ ಮೋಶೆಯ ಗ್ರಂಥವು ಓದುಗುವಾಗಲೆಲ್ಲಾ, ಅವರ ಹೃದಯಕ್ಕೆ ಮುಸುಕು ಹಾಕಲಾಗಿರುತ್ತದೆ.
2CO 3:16 ಆದರೆ ಯಾರಾದರೂ ಕರ್ತ ಯೇಸುವಿನ ಕಡೆಗೆ ತಿರುಗಿದಾಗೆಲ್ಲಾ, ಆ ಮುಸುಕು ಅವರಿಂದ ತೆಗೆಯಲಾಗುತ್ತದೆ.
2CO 3:17 ಕರ್ತದೇವರೇ ಆತ್ಮರಾಗಿದ್ದಾರೆ. “ಕರ್ತದೇವರ ಆತ್ಮವು ಎಲ್ಲಿರುತ್ತದೋ ಅಲ್ಲಿ ಸ್ವಾತಂತ್ರ್ಯವಿರುವುದು.”
2CO 3:18 ಹಾಗೆಯೇ, ನಾವು ಮುಸುಕಿಲ್ಲದ ನಮ್ಮ ಮುಖದಲ್ಲಿ ಕರ್ತದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಹೀಗೆ ನಾವು ಮಹಿಮೆಯಿಂದ ಅಧಿಕ ಮಹಿಮೆಗೆ ಸಾಗಿ ಅವರ ಸಾರೂಪ್ಯಕ್ಕೆ ಅನುಸಾರವಾಗಿ ನಾವು ರೂಪಾಂತರವಾಗುತ್ತಿದ್ದೇವೆ. ಈ ರೂಪಾಂತರವು ದೇವರಾತ್ಮನಾಗಿರುವ ಕರ್ತನಿಂದಲೇ.
2CO 4:1 ದೇವರ ಕರುಣೆಯ ನಿಮಿತ್ತ ನಾವು ಈ ಸೇವೆಯನ್ನು ಹೊಂದಿರುವುದರಿಂದ ನಾವು ಧೈರ್ಯಗೆಡುವವರಲ್ಲ.
2CO 4:2 ನಾವು ನಾಚಿಕೆಯ ಗುಪ್ತ ಕಾರ್ಯಗಳನ್ನು ಬಿಟ್ಟುಬಿಟ್ಟು, ಕುತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯಗಳನ್ನು ವ್ಯಾಖ್ಯಾನ ಮಾಡದೆಯೂ ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತಾ, ಎಲ್ಲಾ ಮನುಷ್ಯರ ಮನಸ್ಸಾಕ್ಷಿಯು ಒಪ್ಪಬೇಕಾದ ರೀತಿಯಲ್ಲಿ ನಮ್ಮನ್ನು ನಾವೇ ದೇವರ ಮುಂದೆ ಸಮರ್ಪಿಸಿಕೊಳ್ಳುತ್ತೇವೆ.
2CO 4:3 ನಾವು ಪ್ರಚಾರ ಮಾಡುವ ಸುವಾರ್ತೆಯು ಮುಸುಕು ಹಾಕಿರುವುದಾದರೆ, ಅದು ನಾಶದ ಮಾರ್ಗದಲ್ಲಿರುವವರಿಗೆ ಮಾತ್ರ.
2CO 4:4 ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು.
2CO 4:5 ನಾವು ನಮ್ಮ ಬಗ್ಗೆಯೇ ಪ್ರಚಾರ ಮಾಡುವುದಿಲ್ಲ. ಆದರೆ ಕ್ರಿಸ್ತ ಯೇಸು ಕರ್ತ ದೇವರೆಂದೂ ನಾವು ಯೇಸುವಿಗಾಗಿ ನಿಮ್ಮ ಸೇವಕರಾಗಿದ್ದೇವೆ ಎಂದೂ ಪ್ರಚುರಪಡಿಸುತ್ತೇವೆ.
2CO 4:6 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ.
2CO 4:7 ಆದರೆ ಸರ್ವೋನ್ನತವಾದ ಈ ಶಕ್ತಿಯೂ ನಮ್ಮಿಂದಲ್ಲ ದೇವರಿಂದಲೇ ಬಂದಿರುತ್ತದೆ ಎಂಬುದನ್ನು ತೋರಿಸುವಂತೆ ಮಣ್ಣಿನ ಮಡಕೆಗಳಾದ ನಮ್ಮಲ್ಲಿ ನಿಕ್ಷೇಪವಿದೆ.
2CO 4:8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಜಜ್ಜಿಹೋಗಲಿಲ್ಲ, ನಾವು ಚಂಚಲರಾಗಿದ್ದರೂ ನಿರಾಶರಾಗಲಿಲ್ಲ.
2CO 4:9 ಹಿಂಸೆಗೆ ಒಳಪಟ್ಟರೂ ಕೈಬಿಟ್ಟವವರಲ್ಲ, ದಬ್ಬಿದವರಾದಾಗ್ಯೂ ನಾಶವಾಗಲಿಲ್ಲ.
2CO 4:10 ಯೇಸುವಿನ ಜೀವವು ನಮ್ಮ ಶರೀರದಲ್ಲಿ ಪ್ರಕಟವಾಗುವಂತೆ, ನಾವು ಯಾವಾಗಲೂ ನಮ್ಮ ಶರೀರದಲ್ಲಿ ಯೇಸುವಿನ ಮರಣವನ್ನು ಧರಿಸುವವರಾಗಿರುತ್ತೇವೆ.
2CO 4:11 ಏಕೆಂದರೆ ಜೀವಂತವಾಗಿರುವ ನಾವು ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಪ್ರಕಟಿಸುವಂತೆ, ನಮ್ಮನ್ನು ಯಾವಾಗಲೂ ಯೇಸುವಿಗಾಗಿ ಮರಣಕ್ಕೆ ಒಪ್ಪಿಸಿಕೊಟ್ಟವರಾಗಿದ್ದೇವೆ.
2CO 4:12 ಹೀಗಿರುವುದರಿಂದ, ನಮ್ಮೊಳಗೆ ಮರಣವು ಕಾರ್ಯ ಮಾಡುತ್ತದೆ, ಆದರೆ ನಿಮ್ಮೊಳಗೆ ಜೀವವು ಕಾರ್ಯ ಮಾಡುತ್ತದೆ.
2CO 4:13 “ನಾನು ನಂಬಿದೆನು, ಆದ್ದರಿಂದ ಮಾತನಾಡುವೆನು,” ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ. ಅದೇ ನಂಬಿಕೆಯ ಆತ್ಮವನ್ನು ಹೊಂದಿದವರಾದ ನಾವು ಕೂಡಾ ನಂಬಿದ್ದೇವೆ, ಆದ್ದರಿಂದ ನಾವು ಮಾತನಾಡುತ್ತೇವೆ.
2CO 4:14 ಏಕೆಂದರೆ, ಕರ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರೇ, ನಮ್ಮನ್ನೂ ಸಹ ಯೇಸುವಿನೊಂದಿಗೆ ಎಬ್ಬಿಸಿ, ನಿಮ್ಮ ಜೊತೆಯಲ್ಲಿಯೂ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.
2CO 4:15 ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ. ಇದರಿಂದ ಹೆಚ್ಚಾದ ಜನರಿಗೆ ತಲುಪುತ್ತಿರುವ ಕೃಪೆಯು, ಕೃತಜ್ಞತೆಯಿಂದ ತುಂಬಿ ಹರಿಯುವುದು. ಆಗ ದೇವರ ಮಹಿಮೆಯು ಸ್ಪಷ್ಟವಾಗುವುದು.
2CO 4:16 ಆದ್ದರಿಂದ ನಾವು ಅಧೈರ್ಯಪಡುವುದಿಲ್ಲ. ನಮ್ಮ ಹೊರಗಿನ ಮನುಷ್ಯ ಕ್ಷಯಿಸುತ್ತಿದ್ದರೂ ನಮ್ಮ ಆಂತರ್ಯ ಮನುಷ್ಯ ಅನುದಿನವೂ ನೂತನವಾಗುತ್ತಿದೆ.
2CO 4:17 ಹಗುರವಾಗಿಯೂ ಕ್ಷಣಿಕವಾಗಿಯೂ ಇರುವ ನಮ್ಮ ಸಂಕಟವು ಅತ್ಯಂತ ಘನತೆಯುಳ್ಳ ನಿತ್ಯ ಮಹಿಮೆಯನ್ನು ನಮಗೆ ದೊರಕಿಸಿಕೊಡುವುದು.
2CO 4:18 ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು.
2CO 5:1 ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ.
2CO 5:2 ನಮ್ಮ ಪರಲೋಕದ ನಿವಾಸವನ್ನು ನೀವೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಈ ಜೀವನದಲ್ಲಿ ನರಳುತ್ತಿದ್ದೇವೆ.
2CO 5:3 ಏಕೆಂದರೆ, ನಾವು ಪರಲೋಕದ ನಿವಾಸವನ್ನು ಧರಿಸಿಕೊಂಡಾಗ, ಆತ್ಮವಿಲ್ಲದ ದೇಹವಾಗಿ ನಾವು ಇರುವುದಿಲ್ಲ.
2CO 5:4 ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ಗುಡಾರವೆಂಬ ಹಳೆಯ ಶರೀರವು ನಮ್ಮಿಂದ ಕಳಚಿ ಹೋಗಬೇಕೆಂಬುದು ನಮ್ಮ ಇಷ್ಟವಲ್ಲ. ಆದರೆ ಪರಲೋಕದ ನಿವಾಸವೆಂಬ ನೂತನ ಶರೀರವನ್ನು ನಾವು ಧರಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಶ್ವರವಾದ ಈ ನಮ್ಮ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು.
2CO 5:5 ಈ ಉದ್ದೇಶಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು, ಮುಂಬರುವುದರ ಖಾತರಿಯಾಗಿ ನಮಗೆ ತಮ್ಮ ಆತ್ಮವನ್ನೇ ಕೊಟ್ಟಿದ್ದಾರೆ.
2CO 5:6 ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ.
2CO 5:7 ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ.
2CO 5:8 ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ.
2CO 5:9 ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ.
2CO 5:10 ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು.
2CO 5:11 ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ.
2CO 5:12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.
2CO 5:13 ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ.
2CO 5:14 ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು.
2CO 5:15 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.
2CO 5:16 ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ.
2CO 5:17 ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು.
2CO 5:18 ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ:
2CO 5:19 ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ.
2CO 5:20 ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ.
2CO 5:21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.
2CO 6:1 ನೀವು ಹೊಂದಿರುವ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ದೇವರ ಜೊತೆಕೆಲಸದವರಾದ ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ,
2CO 6:2 ಏಕೆಂದರೆ ದೇವರು ಹೇಳಿದ ಹಾಗೆ, “ಪ್ರಸನ್ನತೆಯ ಕಾಲದಲ್ಲಿ ನಿನ್ನ ಪ್ರಾರ್ಥನೆಯನ್ನು ನಾನು ಲಾಲಿಸಿದೆನು. ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು,” ಇಗೋ, ಇದೇ ದೇವರ ಮೆಚ್ಚುಗೆಯ ಕಾಲ, ಈಗಲೇ ರಕ್ಷಣೆಯ ದಿನ.
2CO 6:3 ನಮ್ಮ ಸೇವೆಯು ಅಪವಾದಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.
2CO 6:4 ಅದಕ್ಕೆ ಬದಲಾಗಿ, ಸರ್ವ ವಿಷಯಗಳಲ್ಲಿ ನಾವು ದೇವರ ಸೇವಕರಾಗಿದ್ದೇವೆಂದು ತೋರಿಸುತ್ತೇವೆ. ಕಷ್ಟ, ಸಂಕಟ ತೊಂದರೆಗಳಲ್ಲಿ ಮಹಾ ದೀರ್ಘತಾಳ್ಮೆಯನ್ನು ತೋರಿಸುತ್ತೇವೆ.
2CO 6:5 ನಾವು ಪೆಟ್ಟು ತಿಂದಿದ್ದೇವೆ, ಸೆರೆವಾಸವಾಗಿದ್ದೇವೆ, ಕಲಹಗಳನ್ನು ಅನುಭವಿಸಿದ್ದೇವೆ, ಶ್ರಮೆಪಟ್ಟು ದುಡಿದಿದ್ದೇವೆ, ರಾತ್ರಿಯಲ್ಲಿ ನಿದ್ರೆಗೆಟ್ಟಿದ್ದೇವೆ, ಊಟವಿಲ್ಲದೆ ಹಸಿದಿದ್ದೇವೆ,
2CO 6:6 ಪವಿತ್ರಾತ್ಮ ದೇವರ ಸಹಾಯದಿಂದ ಶುದ್ಧ ಮನಸ್ಸು, ತಿಳುವಳಿಕೆ, ಸಹನೆಯು ಮತ್ತು ದಯೆಯಿಂದಕೂಡಿ, ನಿಷ್ಕಪಟ ಪ್ರೀತಿಯಲ್ಲಿ ಜೀವಿಸಿದ್ದೇವೆ.
2CO 6:7 ಸತ್ಯಮಾತುಗಳಿಂದಲೂ, ದೇವರ ಶಕ್ತಿಯಿಂದಲೂ, ಎಡಬಲಗೈಗಳಲ್ಲಿ ನೀತಿಯ ಆಯುಧಗಳೂ
2CO 6:8 ಮಾನ ಅವಮಾನಗಳಿಂದಲೂ ಕೀರ್ತಿ ಅಪಕೀರ್ತಿಗಳಿಂದಲೂ ಸತ್ಯವಂತರಾಗಿದ್ದರೂ ಮೋಸಗಾರರೂ ಎಂದೆಣಿಸಿಕೊಂಡವರಾಗಿದ್ದೇವೆ.
2CO 6:9 ಪ್ರಖ್ಯಾತರಾಗಿದ್ದರೂ ಅಪ್ರಖ್ಯಾತರಾಗಿದ್ದೇವೆ; ಸಾಯುತ್ತಿದ್ದರೂ ನಾವು ಜೀವಿಸುತ್ತಿದ್ದೇವೆ, ನಾವು ಪೆಟ್ಟು ತಿಂದಿದ್ದೇವೆ, ಕೊಲೆಗೆ ಗುರಿಯಾಗಲಿಲ್ಲ.
2CO 6:10 ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ.
2CO 6:11 ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡೆವು, ನಮ್ಮ ಹೃದಯವನ್ನು ನಿಮ್ಮೊಂದಿಗೆ ವಿಶಾಲವಾಗಿ ತೆರೆದಿದ್ದೇವೆ.
2CO 6:12 ನಿಮ್ಮ ಕಡೆಗಿರುವ ನಮ್ಮ ಪ್ರೀತಿಯನ್ನು ನಿಲ್ಲಿಸಲಿಲ್ಲ. ಆದರೆ ನೀವು ನಮಗೆ ತೋರಿಸಬೇಕಾದ ಪ್ರೀತಿಯನ್ನು ತೋರಿಸಲಿಲ್ಲ.
2CO 6:13 ಆದ್ದರಿಂದ ಮಕ್ಕಳಿಗೆ ಹೇಳುವ ರೀತಿಯಲ್ಲಿ ನಿಮಗೆ ಹೇಳುತ್ತಿದ್ದೇವೆ. ನಾವು ನಿಮ್ಮನ್ನು ಪೂರ್ಣಹೃದಯದಿಂದ ಪ್ರೀತಿಸಿದಂತೆ ನೀವೂ ಪೂರ್ಣಹೃದಯದಿಂದ ನಮ್ಮನ್ನು ಪ್ರೀತಿಸಿರಿ.
2CO 6:14 ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಲ್ಲದವರೊಂದಿಗೆ ಸೇರಿ ಒಂದಾಗಿ ಪಾಲುಗಾರರಾಗಬೇಡಿರಿ. ನೀತಿಗೂ ಅನೀತಿಗೂ ಸಮಾನವೆಲ್ಲಿ? ಅಥವಾ ಬೆಳಕಿಗೂ ಕತ್ತಲೆಗೂ ಅನ್ಯೋನ್ಯತೆಯೇನು?
2CO 6:15 ಕ್ರಿಸ್ತ ಯೇಸುವಿಗೂ ಪಿಶಾಚನಿಗೂ ಐಕ್ಯತೆಯೇನು? ಅಥವಾ ಕ್ರಿಸ್ತ ವಿಶ್ವಾಸಿಗೂ ಅವಿಶ್ವಾಸಿಗೂ ಹುದುವಾಗಿರುವುದೇನು?
2CO 6:16 ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ: “ನಾನು ಅವರೊಂದಿಗೆ ವಾಸಿಸುವೆನು, ಅವರ ಮಧ್ಯದಲ್ಲಿ ತಿರುಗಾಡುವೆನು. ನಾನು ಅವರಿಗೆ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.”
2CO 6:17 ಆದ್ದರಿಂದ, “ಅವರ ನಡುವೆಯಿಂದ ಹೊರಟುಬಂದು ಪ್ರತ್ಯೇಕವಾಗಿರಿ. ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ನಾನು ನಿಮ್ಮನ್ನು ಸ್ವೀಕರಿಸುವೆನು ಎಂದು ಕರ್ತದೇವರು ಹೇಳುತ್ತಾರೆ.”
2CO 6:18 ಇದಲ್ಲದೆ, “ನಾನು ನಿಮಗೆ ತಂದೆಯಾಗಿರುವೆನು. ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ,” ಎಂದು ಸರ್ವಶಕ್ತ ಆಗಿರುವ ಕರ್ತದೇವರು ಹೇಳುತ್ತಾರೆ.
2CO 7:1 ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.
2CO 7:2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ. ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ, ಯಾರಿಗೂ ನಾವು ಕೇಡು ಬಗೆಯಲಿಲ್ಲ, ನಾವು ಸ್ವಂತ ಲಾಭಕ್ಕಾಗಿ ಯಾರನ್ನೂ ದುಡಿಸಿಕೊಳ್ಳಲಿಲ್ಲ.
2CO 7:3 ನಿಮ್ಮ ಮೇಲೆ ತಪ್ಪು ಹೊರಿಸುವುದಕ್ಕಾಗಿ ನಾನು ಇದನ್ನು ನಿಮಗೆ ಹೇಳುತ್ತಿಲ್ಲ. ನಾವು ನಿಮ್ಮೊಂದಿಗೆ ಜೀವಿಸಿ, ಸಾಯುವಷ್ಟರ ಮಟ್ಟಿಗೆ ನಾವು ನಮ್ಮ ಹೃದಯದಾಳದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದು ನಾನು ಹಿಂದೆ ಹೇಳಲಿಲ್ಲವೇ?
2CO 7:4 ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ.
2CO 7:5 ನಾವು ಮಕೆದೋನ್ಯಕ್ಕೆ ಬಂದಿದ್ದಾಗ ನಮ್ಮ ದೇಹಕ್ಕೆ ವಿಶ್ರಾಂತಿ ದೊರೆಯಲಿಲ್ಲ. ಎಲ್ಲಾ ವಿಧದಲ್ಲಿಯೂ ಒತ್ತಡಗಳು: ಹೊರಗೆ ಹೋರಾಟ, ಒಳಗೆ ಅಂಜಿಕೆ.
2CO 7:6 ಆದರೆ ಮನಗುಂದಿದವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದರು.
2CO 7:7 ತೀತನು ಬರುವುದರಿಂದ ಮಾತ್ರವಲ್ಲ, ನೀವು ಅವನನ್ನು ಸ್ವೀಕರಿಸಿ, ಆದರಣೆಗಳಿಂದ ಸತ್ಕರಿಸಿದ್ದನ್ನು ಕೇಳಿ ನಮಗೆ ಸಂತೋಷವಾಯಿತು. ನೀವು ನನಗಾಗಿ ಹಂಬಲಿಸುತ್ತಿರುವುದನ್ನೂ, ಚಿಂತಿಸುವುದನ್ನೂ, ನನ್ನ ಮೇಲೆ ನಿಮಗಿರುವ ಆಳವಾದ ಅನುಕಂಪವನ್ನೂ ನಾವು ತೀತನಿಂದ ಕೇಳಿದಾಗ, ನಾನು ಇನ್ನೂ ಅಧಿಕ ಆನಂದಪಟ್ಟೆನು.
2CO 7:8 ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ,
2CO 7:9 ಈಗ ಸಂತೋಷಪಡುತ್ತೇನೆ. ನಿಮಗೆ ದುಃಖವಾಯಿತೆಂಬ ಕಾರಣಕ್ಕಾಗಿ ಅಲ್ಲ. ಆ ದುಃಖವು ನಿಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಿ, ನಿಮಗಾದ ದುಃಖವು ದೇವರ ಚಿತ್ತದಿಂದ ಆಗಿದ್ದರಿಂದ ನಮ್ಮಿಂದ ನಿಮಗೆ ನಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಈಗ ಸಂತೋಷಪಡುತ್ತೇನೆ.
2CO 7:10 ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ.
2CO 7:11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ.
2CO 7:12 ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು.
2CO 7:13 ಆದಕಾರಣ ಇವೆಲ್ಲವುಗಳಿಂದ ನಮಗೆ ಉತ್ತೇಜನವಾಯಿತು. ನಮಗೆ ಉತ್ತೇಜನವಾಗಿದ್ದು ಅಲ್ಲದೆ, ನಿಮ್ಮೆಲ್ಲರಿಂದ ತೀತನ ಆತ್ಮಕ್ಕೆ ಉಪಶಮನವಾದ ಕಾರಣ, ನಾವು ಅವನ ಸಂತೋಷಕ್ಕಾಗಿ ಇನ್ನಷ್ಟು ಆನಂದಿಸಿದೆವು.
2CO 7:14 ನಿಮ್ಮ ವಿಷಯವಾಗಿ ನಾನು ತೀತನ ಮುಂದೆ ಹೊಗಳಿದ್ದಕ್ಕೆ ನಾನು ಬೇಸರಪಡಬೇಕಾಗಿರಲಿಲ್ಲ. ನಾನು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ನಿಮ್ಮ ಬಗ್ಗೆ ನಾವು ತೀತನ ಬಗ್ಗೆ ಹೊಗಳಿದ್ದೆಲ್ಲವೂ ಸತ್ಯವಾದವು.
2CO 7:15 ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ.
2CO 7:16 ನಿಮ್ಮ ಮೇಲೆ ಸಂಪೂರ್ಣ ಭರವಸೆ ಇಡಬಹುದೆಂಬುದಕ್ಕಾಗಿ ನಾನು ಹರ್ಷಿಸುತ್ತೇನೆ.
2CO 8:1 ಪ್ರಿಯರೇ, ಮಕೆದೋನ್ಯದಲ್ಲಿರುವ ಸಭೆಗಳಿಗೆ ದೇವರು ಕೊಟ್ಟಿರುವ ಕೃಪೆಯನ್ನು ಕುರಿತು ನೀವು ತಿಳಿದಿರಬೇಕೆಂದು ನಮ್ಮ ಅಪೇಕ್ಷೆ.
2CO 8:2 ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ.
2CO 8:3 ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.
2CO 8:4 ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು.
2CO 8:5 ಇವೆಲ್ಲವನ್ನೂ ನಾವು ನೆನಸಿದ್ದಕ್ಕಿಂತಲೂ ಅವರು ಹೆಚ್ಚಾಗಿಯೇ ಮಾಡಿದರು. ಹೇಗೆಂದರೆ ಮೊದಲು ಅವರು ತಮ್ಮನ್ನೇ ಕರ್ತ ಯೇಸುವಿಗೆ ಒಪ್ಪಿಸಿಕೊಟ್ಟರು. ಅನಂತರ ದೇವರ ಚಿತ್ತಾನುಸಾರವಾಗಿ ತಮ್ಮನ್ನು ನಮಗೂ ಒಪ್ಪಿಸಿಕೊಟ್ಟರು.
2CO 8:6 ಹೀಗಿರಲಾಗಿ, ತೀತನು ಪ್ರಾರಂಭಿಸಿದ ಈ ದಾನ ಕಾರ್ಯವನ್ನು ನಿಮ್ಮಲ್ಲಿ ಸಹ ಪೂರ್ಣಗೊಳಿಸಬೇಕೆಂದು ನಾವು ಅವನನ್ನು ಬಹಳವಾಗಿ ಕೇಳಿಕೊಂಡೆವು.
2CO 8:7 ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ.
2CO 8:8 ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ.
2CO 8:9 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯನ್ನು ನೀವು ಬಲ್ಲವರಾಗಿದ್ದೀರಿ. ಅವರು ಐಶ್ವರ್ಯವಂತರಾಗಿದ್ದರೂ ತಮ್ಮ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ಅವರು ನಿಮಗೋಸ್ಕರ ಬಡವರಾದರು.
2CO 8:10 ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ, ಕಳೆದ ವರ್ಷದಲ್ಲಿ ಮೊದಲು ನೀವೇ ಈ ಕಾರ್ಯವನ್ನು ಪ್ರಾರಂಭಿಸಿದ್ದಲ್ಲದೇ ಇದನ್ನು ಮಾಡಬೇಕೆಂದು ಬಯಸಿದ್ದೀರಿ.
2CO 8:11 ಆದ್ದರಿಂದ ನೀವು ಎಷ್ಟು ಆಸಕ್ತರಾಗಿ ಪ್ರಾರಂಭಿಸಿದ್ದೀರೋ, ಅಷ್ಟೇ ಆಸಕ್ತಿಯಿಂದ ಅದನ್ನು ಮುಗಿಸಿರಿ. ನಿಮ್ಮ ನಿಮ್ಮ ಶಕ್ತ್ಯಾನುಸಾರವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿರಿ.
2CO 8:12 ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ.
2CO 8:13 ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಬೇರೆಯವರನ್ನು ಕಷ್ಟಕ್ಕೆ ಒಳಪಡಿಸಬಾರದೆಂಬುದು ನಮ್ಮ ಉದ್ದೇಶವಲ್ಲ. ಸಮಾನತ್ವವಿರಬೇಕೆಂಬುದೇ ನಮ್ಮ ಉದ್ದೇಶವಾಗಿದೆ.
2CO 8:14 ಸದ್ಯದಲ್ಲಿ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುವುದು. ಅನಂತರ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದು. ಆಗ ಸಮಾನತೆಯ ಗುರಿಯು ಉಂಟಾಗುವುದು.
2CO 8:15 ಪವಿತ್ರ ವೇದದಲ್ಲಿ ಬರೆದಿರುವಂತೆ: “ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ.”
2CO 8:16 ನಿಮ್ಮ ವಿಷಯವಾಗಿ ನನಗಿರುವ ಹಿತಚಿಂತನೆಯನ್ನು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
2CO 8:17 ನಮ್ಮ ವಿನಂತಿಯನ್ನು ತೀತನು ಒಪ್ಪಿಕೊಂಡದ್ದು ಮಾತ್ರವಲ್ಲದೆ, ತನ್ನ ಸ್ವಂತ ಇಚ್ಛೆಯಿಂದ ನಿಮ್ಮಲ್ಲಿಗೆ ಬರಲು ಆಸಕ್ತಿಯಿಂದ ಹೊರಟಿರುತ್ತಾನೆ.
2CO 8:18 ಅವನೊಂದಿಗೆ ಇನ್ನೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇನೆ. ಆ ಸಹೋದರನು ಮಾಡಿದ ಸುವಾರ್ತೆ ಸೇವೆಯನ್ನು ಎಲ್ಲಾ ಸಭೆಗಳವರು ಪ್ರಶಂಶಿಸಿದ್ದಾರೆ.
2CO 8:19 ಅಲ್ಲದೆ, ಕರ್ತ ಯೇಸುವಿನ ಮಹಿಮೆಗಾಗಿಯೂ ಸಹಾಯಮಾಡಬೇಕೆಂಬ ಸದುದ್ದೇಶ ತೋರಿಸುವುದಕ್ಕಾಗಿಯೂ ನಾವು ಸೇವೆಯನ್ನು ನಿರ್ವಹಿಸುತ್ತೇವೆ. ಇದಕ್ಕಾಗಿಯೇ, ನಮ್ಮ ಜೊತೆ ಬಂದು ಸಹಾಯಮಾಡಲು ಸಭೆಗಳಿಂದ ಆಯ್ಕೆಯಾದವನು ಆ ಸಹೋದರನು.
2CO 8:20 ಹೀಗೆ ನಮ್ಮ ಕೈಗೆ ಒಪ್ಪಿಸಲಾದ ಈ ಉದಾರ ಕೊಡುಗೆಯ ವಿತರಣೆಯ ಕಾರ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸಲು ಆಸ್ಪದವಿರಕೂಡದು.
2CO 8:21 ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ.
2CO 8:22 ಇವರಿಬ್ಬರ ಜೊತೆಯಲ್ಲಿ ನಾವು ನಮ್ಮ ಅನೇಕ ಅನುಭವಗಳಿಂದ ಆಸಕ್ತಿಯುಳ್ಳವನೆಂಬುದನ್ನು ದೃಢಪಡಿಸಿಕೊಂಡ ಬೇರೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಅವನು ನಿಮ್ಮ ಬಗ್ಗೆ ಪೂರ್ಣ ಭರವಸೆಯನ್ನಿಟ್ಟು ನಿಮಗೆ ನೆರವಾಗಲು ಇನ್ನೂ ಉತ್ಸುಕತೆಯಲ್ಲಿದ್ದಾನೆ.
2CO 8:23 ತೀತನು ನನ್ನ ಸಹೋದ್ಯೋಗಿ ಮತ್ತು ನಿಮ್ಮ ನಡುವೆಯಿರುವ ನನ್ನ ಸಹಕಾರಿಯಾಗಿರುತ್ತಾನೆ. ಇವನ ಸಂಗಡ ಬರುತ್ತಿರುವ ನಮ್ಮ ಸಹೋದರರು ಸಭೆಗಳ ಪ್ರತಿನಿಧಿಗಳಾಗಿದ್ದಾರೆ ಮತ್ತು ಕ್ರಿಸ್ತ ಯೇಸುವಿನ ಮಹಿಮೆಗೆ ಕಾರಣಸ್ಥರೂ ಆಗಿದ್ದಾರೆ.
2CO 8:24 ಆದ್ದರಿಂದ, ಇವರೊಂದಿಗೆ ನಿಮಗಿರುವ ಪ್ರೀತಿಯನ್ನೂ ನಿಮ್ಮ ಬಗ್ಗೆಯಿರುವ ನಮ್ಮ ಹೊಗಳಿಕೆಯನ್ನೂ ಸಭೆಗಳವರ ಮುಂದೆ ರುಜುಪಡಿಸಿ ತೋರಿಸಿರಿ.
2CO 9:1 ದೇವಜನರಿಗೆ ಸಹಾಯ ಮಾಡುವುದನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯವಿಲ್ಲ.
2CO 9:2 ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ.
2CO 9:3 ಆದರೂ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಮಗಿರುವ ಹೊಗಳಿಕೆಯು ಸುಳ್ಳಾಗಿರಬಾರದೆಂದು ಸಹೋದರರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ನೀವು ಸಹ ನಾನು ನಿಮಗೆ ಹೇಳಿದಂತೆ, ಇದಕ್ಕಾಗಿ ಸಿದ್ಧರಾಗಿರುವಿರಿ ಎಂದು ಭಾವಿಸುತ್ತೇನೆ.
2CO 9:4 ಏಕೆಂದರೆ, ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಜೊತೆಯಲ್ಲಿ ಬಂದು, ನೀವು ಇನ್ನೂ ಸಿದ್ಧರಿಲ್ಲದೆ ಇರುವುದನ್ನು ಕಂಡರೆ, ನಿಮಗೆ ಬೇಸರವಾಗುವುದಲ್ಲದೆ, ನಿಮ್ಮ ಬಗ್ಗೆ ಭರವಸೆಯಿಟ್ಟಿರುವುದಕ್ಕೆ ನಾವು ಸಹ ನಾಚಿಕೆಪಡುವ ಸನ್ನಿವೇಶ ಬರಬಾರದು.
2CO 9:5 ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು.
2CO 9:6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
2CO 9:7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.
2CO 9:8 ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ.
2CO 9:9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.”
2CO 9:10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು.
2CO 9:11 ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.
2CO 9:12 ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು.
2CO 9:13 ನಿಮ್ಮ ಸ್ವಭಾವವನ್ನು ರುಜುಪಡಿಸಿದ ಈ ಸೇವೆಯ ನಿಮಿತ್ತವಾಗಿಯೂ, ಕ್ರಿಸ್ತ ಯೇಸುವಿನ ಸುವಾರ್ತೆಯ ಅರಿಕೆಯನ್ನು ಅನುಸರಿಸುವ ನಿಮ್ಮ ವಿಧೇಯತೆಗಾಗಿಯೂ ಇತರರು ದೇವರನ್ನು ಸ್ತುತಿಸುವರು. ಹೀಗೆ, ನೀವು ಅವರಿಗೂ ಪ್ರತಿಯೊಬ್ಬರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವರು.
2CO 9:14 ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು.
2CO 9:15 ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತೋತ್ರವಾಗಲಿ!
2CO 10:1 ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:
2CO 10:2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.
2CO 10:3 ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ.
2CO 10:4 ನಾವು ಹೋರಾಡುವಾಗ ಉಪಯೋಗಿಸುವ ಆಯುಧಗಳು ಲೋಕದವುಗಳಲ್ಲ. ಅವುಗಳಿಗೆ ಕೋಟೆಗಳನ್ನೇ ಕೆಡವಿ ಹಾಕುವ ದೈವಿಕ ಶಕ್ತಿ ಇದೆ.
2CO 10:5 ನಾವು ದೈವಜ್ಞಾನವನ್ನು ವಿರೋಧಿಸುವ ವಾಗ್ವಾದಗಳನ್ನೂ ಪ್ರತಿಯೊಂದು ನಟನೆಯನ್ನೂ ಧ್ವಂಸಮಾಡುತ್ತೇವೆ. ಪ್ರತಿಯೊಂದು ಯೋಚನೆಗಳನ್ನು ಕ್ರಿಸ್ತ ಯೇಸುವಿಗೆ ವಿಧೇಯವಾಗುವಂತೆ ಸೆರೆಹಿಡಿಯುವವರು ಆಗಿದ್ದೇವೆ.
2CO 10:6 ನಿಮ್ಮ ವಿಧೇಯತ್ವವು ಪರಿಪೂರ್ಣವಾದಾಗ, ನಾವು ಪ್ರತಿಯೊಂದು ಅವಿಧೇಯತ್ವವನ್ನೂ ಶಿಕ್ಷಿಸಲು ಸಿದ್ಧರಾಗಿದ್ದೇವೆ.
2CO 10:7 ನೀವು ಹೊರಗಿನ ತೋರಿಕೆಗಳನ್ನು ಮಾತ್ರ ತೀರ್ಪುಮಾಡುವವರಾಗಿದ್ದೀರಿ. ಯಾರಾದರೂ ತಾನು ಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ತಾನು ಹೇಗೆ ಕ್ರಿಸ್ತ ಯೇಸುವಿನವನೋ, ಹಾಗೆಯೇ ನಾವೂ ಕ್ರಿಸ್ತ ಯೇಸುವಿನವರು ಎಂದು ಅವನು ತಿಳಿದುಕೊಳ್ಳಲಿ.
2CO 10:8 ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ. ನಿಮ್ಮ ಭಕ್ತಿವೃದ್ಧಿಮಾಡಲಿಕ್ಕೆ ಕರ್ತ ಯೇಸು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಅಧಿಕಾರದ ಬಗ್ಗೆ ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ನಾಚಿಕೆಪಡುವುದಿಲ್ಲ.
2CO 10:9 ನನ್ನ ಪತ್ರಗಳಿಂದ ನಾನು ನಿಮಗೆ ಭಯ ಹುಟ್ಟಿಸಲು ಪ್ರಯತ್ನಿಸುವುದಕ್ಕೆ ನನಗೆ ಮನಸ್ಸಿಲ್ಲ.
2CO 10:10 “ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ.
2CO 10:11 ಆದರೆ, ನಾವು ದೂರದಲ್ಲಿರುವಾಗ ಪತ್ರಗಳ ಮಾತಿನಲ್ಲಿ ಎಂಥವರಾಗಿದ್ದೇವೋ, ಹತ್ತಿರದಲ್ಲಿರುವಾಗಲೂ ಕೃತ್ಯದಲ್ಲಿ ಅಂಥವರಾಗಿಯೇ ಇರುತ್ತೇವೆ ಎಂದು ಅಂಥವರು ಅರ್ಥಮಾಡಿಕೊಳ್ಳಲಿ.
2CO 10:12 ತಮ್ಮನ್ನು ತಾವೇ ಹೊಗಳಿಕೊಳ್ಳುವವರೊಂದಿಗೆ ನಾವು ಹೋಲಿಸಿಕೊಳ್ಳಲು ಯತ್ನಿಸುವುದಿಲ್ಲ. ಏಕೆಂದರೆ, ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳತೆ ಮಾಡಿಕೊಂಡು ಒಬ್ಬರೊಂದಿಗೊಬ್ಬರು ಹೋಲಿಸಿಕೊಳ್ಳುವುದರಿಂದ ವಿವೇಕವಿಲ್ಲದವರಾಗಿರುತ್ತಾರೆ.
2CO 10:13 ನಾವಾದರೋ ಮೇರೆ ತಪ್ಪಿ ಹೊಗಳಿಕೊಳ್ಳುವುದಿಲ್ಲ; ದೇವರು ತಾವೇ ನಮಗೆ ನೇಮಿಸಿದ ಸೇವಾಕ್ಷೇತ್ರದ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗೆ ನೀವೂ ಒಳಪಟ್ಟಿದ್ದೀರಿ.
2CO 10:14 ನಾವು ಮೊದಲು ನಿಮ್ಮ ಬಳಿಗೆ ಬಾರದಿದ್ದರೆ, ನಮ್ಮ ಹೊಗಳಿಕೊಳ್ಳುವಿಕೆಯು ಮೇರೆಯನ್ನು ಉಲ್ಲಂಘಿಸುವುದಾಗಿರುತ್ತಿತ್ತು; ಆದರೆ ನಾವು ನಿಮಗೆ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕಾಗಿ ನಿಮ್ಮ ಬಳಿಗೆ ಬಂದೇವಲ್ಲಾ.
2CO 10:15 ಬೇರೆಯವರು ಮಾಡಿದ ಪ್ರಯಾಸದ ಫಲಕ್ಕಾಗಿ, ನಾವು ಮೇರೆ ತಪ್ಪಿ ಹೊಗಳಿಕೊಳ್ಳುವವರಲ್ಲ. ಆದರೆ ನಿಮ್ಮ ವಿಶ್ವಾಸವು ವೃದ್ಧಿಯಾದಂತೆ, ನಿಮ್ಮ ಮಧ್ಯೆ ನಮ್ಮ ಸೇವಾಕ್ಷೇತ್ರವು ಅಧಿಕವಾಗಿ ವಿಸ್ತಾರವಾಗಬೇಕೆಂದು ನಿರೀಕ್ಷಿಸುತ್ತೇವೆ.
2CO 10:16 ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ.
2CO 10:17 ಆದರೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”
2CO 10:18 ತನ್ನನ್ನು ತಾನೇ ಹೊಗಳಿಕೊಳ್ಳುವವನಲ್ಲ, ಕರ್ತ ಯೇಸು ಯಾರನ್ನು ಹೊಗಳುತ್ತಾರೋ ಅವನೇ ಯೋಗ್ಯನು.
2CO 11:1 ನನ್ನ ಬುದ್ಧಿಹೀನತೆಯನ್ನು ನೀವು ಇನ್ನೂ ಸ್ವಲ್ಪ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈಗಾಗಲೇ ನೀವು ಸಹಿಸಿಕೊಂಡಿದ್ದೀರಿ.
2CO 11:2 ದೇವರು ನಿಮ್ಮ ವಿಷಯದಲ್ಲಿ ಅಸೂಯೆಪಡುವಂತೆ, ನಾನು ನಿಮ್ಮ ವಿಷಯದಲ್ಲಿ ಅಸೂಯೆಪಡುತ್ತಿದ್ದೇನೆ. ಹೇಗೆಂದರೆ, ನಿಮ್ಮನ್ನು ಶುದ್ಧ ಕನ್ನಿಕೆಯಾಗಿ ಕ್ರಿಸ್ತ ಯೇಸು ಎಂಬ ಒಬ್ಬರೇ ಪುರುಷನಿಗೆ ಒಪ್ಪಿಸಬೇಕೆಂದು ಆತನೊಂದಿಗೆ ನಾನು ನಿಶ್ಚಯ ಮಾಡಿದ್ದೆನಲ್ಲಾ.
2CO 11:3 ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು.
2CO 11:4 ಏಕೆಂದರೆ ಯಾವನಾದರೂ ನಿಮ್ಮ ಬಳಿಗೆ ಬಂದು ನಾನು ನಿಮಗೆ ಬೋಧಿಸದೆ ಇರುವ ಬೇರೊಬ್ಬ ಯೇಸುವಿನ ವಿಷಯ ಬೋಧಿಸಿದರೆ, ನೀವು ಸ್ವೀಕರಿಸುವಿರಿ. ನೀವು ಹೊಂದಿದ ಆತ್ಮನ ಬದಲಿಗೆ ಬೇರೊಂದು ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನೀವು ಕೇಳಿರುವ ಸುವಾರ್ತೆಯ ಬದಲು ಬೇರೊಂದು ಸುವಾರ್ತೆಯನ್ನು ಯಾರಾದರೂ ಬೋಧಿಸಿದರೆ, ನೀವು ಬೇಗನೇ ಒಪ್ಪಿಕೊಳ್ಳುತ್ತೀರಿ.
2CO 11:5 “ಅತ್ಯಂತ ಮಹಾ ಅಪೊಸ್ತಲರು” ಎಂದೆನಿಸಿದ ಇತರ ಅಪೊಸ್ತಲರಿಗಿಂತಲೂ ನಾನು ಕಡಿಮೆಯಾದವನಲ್ಲ ಎಂದು ಭಾವಿಸುತ್ತೇನೆ.
2CO 11:6 ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ.
2CO 11:7 ಪ್ರತಿಫಲವನ್ನು ಎದುರುನೋಡದೇ, ದೇವರ ಸುವಾರ್ತೆಯನ್ನು ನೀವು ಉನ್ನತರಾಗಬೇಕೆಂದು, ನನ್ನನ್ನು ನಾನೇ ತಗ್ಗಿಸಿಕೊಂಡು ಉಚಿತವಾಗಿ ಸಾರಿದ್ದು ನನ್ನ ಪಾಪವೋ?
2CO 11:8 ನಿಮ್ಮ ಸೇವೆಯನ್ನು ಮಾಡುವುದಕ್ಕಾಗಿ ನಾನು ಬೇರೆ ಸಭೆಗಳಿಂದ ಸಹಾಯವನ್ನು ಹೊಂದಿ, ಅವರಿಂದ ವಸೂಲಿ ಮಾಡುತ್ತಿದ್ದೆ.
2CO 11:9 ನಾನು ನಿಮ್ಮಲ್ಲಿದ್ದಾಗ, ನನಗೆ ಕೊರತೆಯಾದಾಗ, ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಏಕೆಂದರೆ, ಮಕೆದೋನ್ಯದಿಂದ ಬಂದಿದ್ದ ಸಹೋದರರು ನನ್ನ ಅವಶ್ಯಕತೆಯನ್ನು ಪೂರೈಸಿದರು. ಹೀಗೆ ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಇನ್ನು ಮುಂದೆಯೂ ಭಾರವಾಗಿರುವುದಿಲ್ಲ.
2CO 11:10 ಅಖಾಯ ಪ್ರಾಂತದಲ್ಲಿರುವ ಯಾರೂ ಈ ನನ್ನ ಹೊಗಳಿಕೆಯನ್ನು ನಿಲ್ಲಿಸಲಾರರು ಎಂದು ಕ್ರಿಸ್ತ ಯೇಸುವಿನ ಸತ್ಯ ನನ್ನಲ್ಲಿ ಇರುವ ನಿಶ್ಚಯದಿಂದ ಹೇಳುತ್ತೇನೆ.
2CO 11:11 ಏಕೆ? ನಾನು ನಿಮ್ಮನ್ನು ಪ್ರೀತಿ ಇಲ್ಲದ್ದರಿಂದಲೋ? ನಾನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತುಂಟು!
2CO 11:12 ತಾವು ಮಾಡುವ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಸರಿಸಮಾನವೆಂದು ಹೊಗಳಿಕೊಳ್ಳಲು ಅವಕಾಶವನ್ನು ಹುಡುಕುವವರಿಗೆ, ಯಾವ ಆಸ್ಪದವೂ ಸಿಗದಂತೆ ನಾನು ಮಾಡುತ್ತಿರುವುದನ್ನು ನಿಲ್ಲಿಸದೆ, ಇನ್ನು ಮುಂದೆಯೂ ಮಾಡುತ್ತಿರುವೆನು.
2CO 11:13 ಅಂಥಾ ಜನರು ಸುಳ್ಳು ಅಪೊಸ್ತಲರು, ವಂಚಿಸುವ ವರ್ತಕರು, ಕ್ರಿಸ್ತ ಯೇಸುವಿನ ಅಪೊಸ್ತಲರೆಂದು ವೇಷ ಹಾಕಿಕೊಂಡವರೂ ಆಗಿದ್ದಾರೆ.
2CO 11:14 ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.
2CO 11:15 ಆದ್ದರಿಂದ ಸೈತಾನನ ಸೇವಕರೂ ನೀತಿಯ ಸೇವಕರಂತೆ ಕಾಣಿಸಿಕೊಳ್ಳುವುದಕ್ಕೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಅವರ ಕೃತ್ಯಗಳಿಗೆ ತಕ್ಕಂತೆ ಅವರಿಗೆ ಅಂತ್ಯವೂ ಇರುವುದು.
2CO 11:16 ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು.
2CO 11:17 ಈ ಹೆಚ್ಚಳ ಪಡುವ ವಿಷಯದಲ್ಲಿ ನಾನು ಕರ್ತ ಯೇಸು ಬಯಸಿದಂತೆ ಮಾತನಾಡದೆ, ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ.
2CO 11:18 ಅನೇಕರು ಪ್ರಾಪಂಚಿಕ ವಿಷಯಗಳಲ್ಲಿ ತಮ್ಮನ್ನು ಹೊಗಳಿಕೊಳ್ಳುವಂತೆ ನಾನೂ ಹೊಗಳಿಕೊಳ್ಳುವೆನು.
2CO 11:19 ಬುದ್ಧಿಹೀನರನ್ನು ಹರ್ಷದಿಂದ ಸಹಿಸಿಕೊಳ್ಳುತ್ತಿರುವ ಬುದ್ಧಿವಂತರು ನೀವು!
2CO 11:20 ನಿಜವಾಗಿ ಹೇಳಬೇಕಾದರೆ, ಯಾರಾದರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರೂ, ನಿಮ್ಮನ್ನು ಮರುಳುಗೊಳಿಸಿದರೂ, ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡರೂ, ನಿಮ್ಮ ಕೆನ್ನೆಗೆ ಬಾರಿಸಿದರೂ, ನೀವು ಸಹಿಸಿಕೊಳ್ಳುತ್ತೀರಲ್ಲಾ.
2CO 11:21 ಹೀಗೆಲ್ಲಾ ಮಾಡಲು ಬಹಳ ಬಲಹೀನರಾದ ನಮಗೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ! ಯಾವುದನ್ನು ಇತರರು ಹೊಗಳಿಕೊಳ್ಳುವುದಕ್ಕೆ ಧೈರ್ಯ ಮಾಡುತ್ತಾರೋ, ಅದನ್ನು ನಾನು ಬುದ್ಧಿಹೀನನಂತೆ ಹೊಗಳುವ ಧೈರ್ಯ ಮಾಡುತ್ತೇನೆ.
2CO 11:22 ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ.
2CO 11:23 ಅವರು ಕ್ರಿಸ್ತ ಯೇಸುವಿನ ಸೇವಕರೋ? ಅವರಿಗಿಂತ ಹೆಚ್ಚಾಗಿ ನಾನು ಸೇವೆ ಮಾಡಿದ್ದೇನೆ. ನಾನು ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. ನಾನು ಅತಿಯಾಗಿ ಪ್ರಯಾಸ ಪಟ್ಟಿರುತ್ತೇನೆ. ಅನೇಕಬಾರಿ ಸೆರೆಮನೆಗೆ ಹಾಕಲಾದೆನು. ಬಹು ಕ್ರೂರವಾದ ರೀತಿಯಲ್ಲಿ ಪೆಟ್ಟುಗಳನ್ನು ತಿಂದೆನು. ಅನೇಕಬಾರಿ ಮರಣವನ್ನು ಎದುರಿಸಿದೆನು.
2CO 11:24 ಯೆಹೂದ್ಯರ ಕೈಯಿಂದ ಐದು ಬಾರಿ ನಲ್ವತ್ತಕ್ಕೆ ಒಂದು ಕಡಿಮೆ ಛಡಿ ಏಟುಗಳನ್ನು ತಿಂದಿದ್ದೇನೆ.
2CO 11:25 ಮೂರು ಸಾರಿ ದೊಣ್ಣೆಯಿಂದ ಬಡಿಸಿಕೊಂಡಿದ್ದೇನೆ. ಒಂದು ಸಾರಿ ಕಲ್ಲೆಸೆದು ನನ್ನನ್ನು ಕೊಲ್ಲಲು ನೋಡಿದರು. ಮೂರು ಬಾರಿ ನಾನು ಪ್ರಯಾಣಿಸುತ್ತಿದ್ದ ಹಡಗು ಒಡೆದು ನೀರು ಪಾಲಾಯಿತು. ಒಂದು ಇಡೀ ಹಗಲುರಾತ್ರಿ ನಾನು ಸಮುದ್ರದ ಮೇಲೆ ತೇಲಿದೆನು.
2CO 11:26 ಊರಿಂದೂರಿಗೆ ಪ್ರಯಾಣ ಮಾಡುತ್ತಲೇ ಇದ್ದೆನು, ನದಿಗಳಿಂದ ಅಪಾಯ, ದಾರಿಗಳ್ಳರಿಂದ ಅಪಾಯ, ನನ್ನ ಸ್ವಂತ ಜನರಿಂದ ಅಪಾಯ, ಯೆಹೂದ್ಯರಲ್ಲದವರಿಂದ ಅಪಾಯ, ಪಟ್ಟಣಗಳಲ್ಲಿ ಅಪಾಯ, ಹೊರ ಪ್ರದೇಶಗಳಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ ಮತ್ತು ಸುಳ್ಳು ಸಹೋದರರಿಂದ ಅಪಾಯಗಳನ್ನೆಲ್ಲಾ ನಾನು ಎದುರಿಸಿದೆನು.
2CO 11:27 ನಾನು ಪ್ರಯಾಸಪಟ್ಟು ಮೈಮುರಿದು ಕೆಲಸ ಮಾಡಿದೆನು. ಎಷ್ಟೋ ಬಾರಿ ನಿದ್ರೆಗೆಟ್ಟೆನು. ಹಸಿವೆ ಬಾಯಾರಿಕೆಗಳೇನೆಂಬುದನ್ನು ಅರಿತೆನು. ಊಟವಿಲ್ಲದೆ ಎಷ್ಟೋ ಬಾರಿ ಉಪವಾಸ ಬಿದ್ದೆನು. ಸರಿಯಾದ ಬಟ್ಟೆ ಇಲ್ಲದೆ ಚಳಿಯಲ್ಲಿ ಬಹಳವಾಗಿ ಸಂಕಟಪಟ್ಟೆನು.
2CO 11:28 ಇಷ್ಟೇ ಅಲ್ಲ, ಎಲ್ಲಾ ಸಭೆಗಳ ಮೇಲಿರುವ ಚಿಂತೆಯು ನನ್ನನ್ನು ದಿನನಿತ್ಯವೂ ಬಾಧಿಸುತ್ತಿದೆ.
2CO 11:29 ನಿಮ್ಮಲ್ಲಿ ಯಾರಾದರೂ ಬಲಹೀನರಾಗಿದ್ದರೆ, ನಾನೂ ಬಲಹೀನನಾಗಿರುವುದಿಲ್ಲವೋ? ನಿಮ್ಮಲ್ಲಿ ಯಾವನಾದರೂ ಪಾಪದಲ್ಲಿ ಬಿದ್ದುಹೋದರೆ, ನಾನು ನೊಂದುಕೊಳ್ಳುವುದಿಲ್ಲವೋ?
2CO 11:30 ನನ್ನನ್ನು ಹೊಗಳಿಕೊಳ್ಳಬೇಕಾಗಿದ್ದರೆ, ನಾನು ನನ್ನ ಬಲಹೀನತೆಯಲ್ಲಿ ಹೊಗಳಿಕೊಳ್ಳುವೆನು.
2CO 11:31 ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ.
2CO 11:32 ದಮಸ್ಕದ ಅರಸನಾದ ಅರೇತನ ಆಜ್ಞೆಯ ಪ್ರಕಾರ, ಅಲ್ಲಿಯ ರಾಜ್ಯಪಾಲನು ನನ್ನನ್ನು ಹಿಡಿದು ಬಂಧಿಸಬೇಕೆಂದು ದಮಸ್ಕದ ಪಟ್ಟಣವನ್ನು ಕಾವಲಿರಿಸಿದನು.
2CO 11:33 ಆದರೆ ಪಟ್ಟಣದ ಕೋಟೆ ಗೋಡೆಯ ಕಿಟಿಕಿಯೊಳಗಿಂದ ಒಂದು ಬುಟ್ಟಿಯ ಮೂಲಕ ಕೆಳಗಿಳಿಸಲಾಗಿ, ಅವನ ಕೈಯೊಳಗಿಂದ ನಾನು ತಪ್ಪಿಸಿಕೊಂಡೆನು.
2CO 12:1 ನನ್ನ ಹೊಗಳಿಕೆಯಲ್ಲಿ ಪ್ರಯೋಜನವಿಲ್ಲದಿದ್ದರೂ ಅದು ಅವಶ್ಯವಾಗಿದೆ. ನಾನು ಈಗ ಕರ್ತ ಯೇಸುವಿನಿಂದ ಹೊಂದಿದ ದರ್ಶನಗಳನ್ನು ಮತ್ತು ಪ್ರಕಟನೆಗಳನ್ನು ಕುರಿತು ಹೇಳುತ್ತೇನೆ.
2CO 12:2 ಕ್ರಿಸ್ತ ಯೇಸುವಿನಲ್ಲಿ ಒಬ್ಬನನ್ನು ನಾನು ಬಲ್ಲೆನು. ಹದಿನಾಲ್ಕು ವರ್ಷಗಳ ಹಿಂದೆ ನಾನು ಮೂರನೆಯ ಸ್ವರ್ಗಕ್ಕೆ ಒಯ್ಯಲಾದೆನು. ನಾನು ದೇಹ ಸಹಿತವಾಗಿ ಹೋದೆನೋ, ದೇಹ ರಹಿತನಾಗಿ ಹೋದೆನೋ ನನಗೆ ಗೊತ್ತಿಲ್ಲ ದೇವರಿಗೇ ಗೊತ್ತು.
2CO 12:3 ನನ್ನ ಅನುಭವ ದೇಹಸಹಿತನಾಗಿಯೋ, ದೇಹರಹಿತನಾಗಿಯೋ ಇದು ನನಗೆ ಗೊತ್ತಿಲ್ಲ. ದೇವರಿಗೇ ಗೊತ್ತು.
2CO 12:4 ನಾನು ಪರದೈಸಕ್ಕೆ ಒಯ್ಯಲಾದೆನು. ಅಲ್ಲಿ ನಾನು ವಿವರಿಸಲು ಅಸಾಧ್ಯವಾದದ್ದೂ ವರ್ಣಿಸಲು ಅಪ್ಪಣೆಯಿಲ್ಲದ್ದೂ ಆಗಿರುವ ವಿಷಯಗಳನ್ನು ಕೇಳಿದೆನು.
2CO 12:5 ಈ ಅನುಭವಗಳನ್ನು ಕುರಿತು ನಾನು ಹೆಚ್ಚಳ ಪಡುವೆನು. ಆದರೆ ನನ್ನ ವಿಷಯದಲ್ಲಿ ಅಲ್ಲ; ನನ್ನ ಬಲಹೀನತೆ ವಿಷಯದಲ್ಲಿ ಮಾತ್ರ ನಾನು ಹೊಗಳಿಕೊಳ್ಳುವೆನು.
2CO 12:6 ಒಂದು ವೇಳೆ ಹೊಗಳಿಕೊಳ್ಳಲು ಬಯಸಿದರೂ ನಾನು ಬುದ್ಧಿಹೀನನಾಗುವುದಿಲ್ಲ. ಏಕೆಂದರೆ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಆದರೆ ಯಾರೂ ನಾನು ಮಾಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಎಣಿಸಬಾರದು.
2CO 12:7 ಬಹು ವಿಶೇಷವಾದ ಪ್ರಕಟನೆಗಳ ಬಗ್ಗೆ ನಾನು ಗರ್ವಪಡದಂತೆ, ನನ್ನ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಗಿತ್ತು. ಅದು ನನ್ನನ್ನು ಕಾಡಿಸಲು ಕಳುಹಿಸಲಾದ ಸೈತಾನನ ದೂತನೇ ಆಗಿತ್ತು.
2CO 12:8 ಅದು ನನ್ನಿಂದ ತಗೆದುಹಾಕಬೇಕೆಂದು ನಾನು ಮೂರು ಸಾರಿ ಕರ್ತ ಯೇಸುವನ್ನು ಬೇಡಿಕೊಂಡೆನು.
2CO 12:9 ಅದಕ್ಕೆ ಕರ್ತ ಯೇಸು, “ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು,” ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು.
2CO 12:10 ಹೀಗಿರುವುದರಿಂದ ಕ್ರಿಸ್ತ ಯೇಸುವಿನ ನಿಮಿತ್ತ ನನಗೆ ಬಲಹೀನತೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಹರ್ಷಿಸುತ್ತೇನೆ. ಏಕೆಂದರೆ, ಬಲಹೀನತೆಯಲ್ಲಿಯೇ ನಾನು ಶಕ್ತನಾಗಿರುವೆನು.
2CO 12:11 ನೀವೇ ನನ್ನನ್ನು ಹೊಗಳಿಕೊಳ್ಳುವಂತೆ ಮಾಡಿ, ನಾನು ಬುದ್ಧಿಹೀನನಾಗಿ ನಡೆಯಲು ಒತ್ತಾಯಿಸಿದ್ದೀರಿ. ನನಗೆ ನಿಮ್ಮಿಂದಲೇ ಹೊಗಳಿಕೆಯು ಬೇಕಾಗಿತ್ತು. ಏಕೆಂದರೆ ನಾನು ಕೇವಲ ಅತ್ಯಲ್ಪನಾದರೂ “ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ” ಕಡಿಮೆ ಅಲ್ಲ.
2CO 12:12 ನಾನು ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ, ಮಹತ್ಕಾರ್ಯಗಳನ್ನೂ ನಡೆಸುವುದರಲ್ಲಿ ಸರ್ವ ಸಹನೆಯಲ್ಲಿಯೂ ಸತ್ಯ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳನ್ನು ನಿಮ್ಮ ನಡುವೆ ತೋರಿಸಿದೆನು.
2CO 12:13 ನಾನು ನಿಮಗೆ ಎಂದೂ ಭಾರವಾಗಿರಲಿಲ್ಲ ಎಂಬ ಒಂದೇ ವಿಷಯದಲ್ಲಿ ಹೊರತು, ಬೇರೆ ಯಾವ ವಿಷಯದಲ್ಲಿಯೂ ನಿಮ್ಮನ್ನು ಉಳಿದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲ. ಈ ನನ್ನ ತಪ್ಪನ್ನು ಕ್ಷಮಿಸಿರಿ.
2CO 12:14 ಇಗೋ, ನಾನು ನಿಮ್ಮ ಬಳಿಗೆ ಬರುವುದಕ್ಕೆ ಸಿದ್ದನಾಗಿರುವುದು ಇದು ಮೂರನೆಯ ಸಾರಿ. ನಾನು ಬಂದಾಗ ನಿಮಗೆ ಭಾರವಾಗಲು ಬಿಡುವುದಿಲ್ಲ. ನಾನು ನಿಮ್ಮ ಸೊತ್ತನ್ನು ಆಶಿಸುವುದಿಲ್ಲ. ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ನಿಕ್ಷೇಪವನ್ನು ಕೂಡಿಸಿಡುವುದಿಲ್ಲ. ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುತ್ತಾರಷ್ಟೇ.
2CO 12:15 ನಾನಂತೂ ನನಗಿರುವುದೆಲ್ಲವನ್ನೂ ನಿಮ್ಮ ಆತ್ಮಗಳಿಗೋಸ್ಕರ ಬಹು ಸಂತೋಷದಿಂದ ವೆಚ್ಚಮಾಡುತ್ತೇನೆ. ನನ್ನನ್ನು ಕೂಡ ನಿಮಗೋಸ್ಕರ ವೆಚ್ಚಮಾಡಲು ಸಿದ್ಧನಾಗಿದ್ದೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?
2CO 12:16 ಏನೇ ಇದ್ದರೂ, ನಾನು ನಿಮಗೆ ಭಾರವಾಗಿರಲಿಲ್ಲ; ನಾನು ಯುಕ್ತಿಯುಳ್ಳವನಾಗಿ ನಿಮ್ಮನ್ನು ಉಪಾಯದಿಂದ ಸುಲಿದುಕೊಂಡೆನೋ?
2CO 12:17 ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾರ ಮೂಲಕವಾಗಿಯಾಗಲಿ ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡೆನೋ?
2CO 12:18 ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಒತ್ತಾಯಪಡಿಸಿ, ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನು. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಆತ್ಮದಲ್ಲಿ ನಡೆದು ಒಂದೇ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?
2CO 12:19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿದ್ದೇವೆಂದು ನೆನಸುತ್ತೀರೋ? ಹಾಗೆ ಅಲ್ಲ; ಪ್ರಿಯರೇ, ನಾವು ಮಾಡುವುದೆಲ್ಲವೂ ನಿಮ್ಮ ಭಕ್ತಿವೃದ್ಧಿಗಾಗಿ ದೇವರ ದೃಷ್ಟಿಯಲ್ಲಿ ಕ್ರಿಸ್ತ ಯೇಸುವಿನಲ್ಲಿ ಇರುವವರಂತೆ ಮಾತನಾಡುವವರಾಗಿದ್ದೇವೆ.
2CO 12:20 ನಾನು ಬಂದಾಗ ಒಂದು ವೇಳೆ ನೀವು ನನ್ನ ಮನಸ್ಸಿನ ತೋರಿಕೆಯ ಪ್ರಕಾರ ಇರುವುದಿಲ್ಲವೋ ಏನೋ? ನಾನು ನಿಮ್ಮ ಇಷ್ಟದ ಪ್ರಕಾರ ತೋರದೆ ಇರಬಹುದು. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಭೇದಗಳು, ಚಾಡಿ ಹೇಳುವುದು, ಹರಟೆ ಹೊಡೆಯುವುದು, ಉಬ್ಬಿಕೊಳ್ಳುವುದು, ಕಲಹ ಎಬ್ಬಿಸುವುದು, ಇವುಗಳು ಕಾಣಬರುವುದೋ ಎಂಬ ಭಯ ನನಗೆ ಉಂಟು.
2CO 12:21 ನಾನು ತಿರುಗಿ ಬಂದಾಗ, ಹಿಂದೆ ನಿಮ್ಮಲ್ಲಿ ಅಶುದ್ಧತ್ವ, ಲೈಂಗಿಕ ಅನೈತಿಕತೆ, ಪೋಕರಿತನ ಮುಂತಾದ ಪಾಪಗಳನ್ನು ಮಾಡಿ ಪಶ್ಚಾತ್ತಾಪ ಪಡದಿರುವ ಅನೇಕರ ವಿಷಯವಾಗಿ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ತಗ್ಗಿಸಿಬಿಡುವನು ಎಂದು ದುಃಖಪಡಬೇಕಾಗಿರುವುದರಿಂದ ನಾನು ಭಯಪಡುತ್ತೇನೆ.
2CO 13:1 ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,” ಎಂದು ಬರೆಯಲಾಗಿದೆ.
2CO 13:2 ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಗತಕಾಲದಲ್ಲಿ ಪಾಪ ಮಾಡುತ್ತಿದ್ದವರನ್ನು ಎಚ್ಚರಿಸಿದೆನು. ನಾನು ತಿರುಗಿ ಬಂದರೆ, ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದುಕೊಂಡು ಹೇಳುತ್ತಿದ್ದೇನೆ.
2CO 13:3 ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ.
2CO 13:4 ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ.
2CO 13:5 ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಕ್ರಿಸ್ತ ಯೇಸು ನಿಮ್ಮಲ್ಲಿದ್ದಾರೆಂಬುದರ ಬಗ್ಗೆ ನಿಮಗೆ ನಂಬಿಕೆಯಿಲ್ಲವೋ? ಅವರು ನಿಮ್ಮಲ್ಲಿಲ್ಲದಿದ್ದರೆ, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲ.
2CO 13:6 ನಾವಂತೂ ಉತ್ತೀರ್ಣರಾದವರೆಂದು ನಿಮಗೆ ಗೊತ್ತಾಗುವುದೆಂದು ನಾನು ನಿರೀಕ್ಷಿಸುತ್ತೇನೆ.
2CO 13:7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ.
2CO 13:8 ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು. ಸತ್ಯದ ಪರವಾಗಿಯೇ ಎಲ್ಲವನ್ನೂ ಮಾಡುತ್ತೇವೆ.
2CO 13:9 ನಾವು ಬಲಹೀನರಾಗಿದ್ದರೂ, ನೀವು ಬಲಿಷ್ಠರಾಗಿದ್ದಿರೆಂದು ತಿಳಿದು ಆನಂದಪಡುತ್ತೇವೆ. ನೀವು ಪರಿಪೂರ್ಣರಾಗಬೇಕೆಂದೇ ನಾವು ಪ್ರಾರ್ಥಿಸುತ್ತೇವೆ.
2CO 13:10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ, ಈ ಮಾತುಗಳನ್ನು ಬರೆದಿದ್ದೇನೆ. ನಾನು ಬಂದಾಗ ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ ಆದರೆ ಕಟ್ಟುವುದಕ್ಕಾಗಿ ಕರ್ತ ಯೇಸು ನನಗೆ ಕೊಟ್ಟಿರುವ ಅಧಿಕಾರದಿಂದ ನಿಮಗೆ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ.
2CO 13:11 ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು.
2CO 13:12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
2CO 13:13 ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.
2CO 13:14 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮ ದೇವರ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡ ಇರಲಿ.
GAL 1:1 ಮನುಷ್ಯರಿಂದಾಗಲಿ, ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಕ್ರಿಸ್ತ ಯೇಸುವಿನ ಮುಖಾಂತರವೂ ಅವರನ್ನು ಮರಣದಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲನಾದ ಪೌಲನೆಂಬ ನಾನೂ
GAL 1:2 ನನ್ನ ಜೊತೆಯಲ್ಲಿರುವ ಎಲ್ಲಾ ಪ್ರಿಯರೂ, ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದು:
GAL 1:3 ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಇರಲಿ.
GAL 1:4 ಈ ಯೇಸುವೇ ನಮ್ಮನ್ನು ಈಗಿನ ದುಷ್ಟ ಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗಾಗಿ ತಮ್ಮನ್ನೇ ಬಲಿಯಾಗಿ ಒಪ್ಪಿಸಿದರು.
GAL 1:5 ದೇವರಿಗೆ ಯುಗಯುಗಾಂತರಗಳಿಗೂ ಮಹಿಮೆಯಾಗಲಿ. ಆಮೆನ್.
GAL 1:6 ಕ್ರಿಸ್ತ ಯೇಸುವಿನ ಕೃಪೆಯಲ್ಲಿ ನಿಮ್ಮನ್ನು ಕರೆದ ದೇವರನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೆ ಸುವಾರ್ತೆಯ ಕಡೆಗೆ ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ.
GAL 1:7 ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಗಲಿಬಿಲಿಗೆ ಒಳಪಡಿಸಿ, ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ವಕ್ರಪಡಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ.
GAL 1:8 ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೊಂದನ್ನು ನಾವೇ ಆಗಲಿ, ಪರಲೋಕದೊಳಗಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ.
GAL 1:9 ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ, ಅವನು ಶಾಪಗ್ರಸ್ತನಾಗಲಿ ಎಂದು ಮೊದಲು ಹೇಳಿದಂತೆಯೇ ಈಗಲೂ ನಾನು ಪುನಃ ಹೇಳುತ್ತೇನೆ.
GAL 1:10 ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ.
GAL 1:11 ಪ್ರಿಯರೇ, ನಾನು ಸಾರಿದ ಸುವಾರ್ತೆಯು ಮಾನವೀಯವಾದದ್ದಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.
GAL 1:12 ನಾನು ಅದನ್ನು ಯಾವ ಮನುಷ್ಯನಿಂದಲೂ ಪಡೆಯಲಿಲ್ಲ, ನನಗೆ ಯಾವ ಮನುಷ್ಯನೂ ಉಪದೇಶಿಸಲಿಲ್ಲ, ಆದರೆ ನಾನು ಅದನ್ನು ಕ್ರಿಸ್ತ ಯೇಸುವಿನ ಪ್ರಕಟನೆಯಿಂದಲೇ ಸ್ವೀಕರಿಸಿಕೊಂಡೆನು.
GAL 1:13 ನಾನು ಯೆಹೂದ್ಯ ವಿಶ್ವಾಸದಲ್ಲಿದ್ದಾಗ ನನ್ನ ಹಿಂದಿನ ನಡತೆಯನ್ನು ನೀವು ಕೇಳಿದ್ದೀರಷ್ಟೇ. ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸೆಪಡಿಸಿ ಹಾಳುಮಾಡಲು ಯತ್ನಿಸುತ್ತಿದ್ದೆನು.
GAL 1:14 ಇದಲ್ಲದೆ ನಾನು ನನ್ನ ಪಿತೃಗಳ ಸಂಪ್ರದಾಯಗಳಲ್ಲಿ ಅತ್ಯಂತ ಅಭಿಮಾನವುಳ್ಳವನಾಗಿ ಸಮಕಾಲಿಕರಾದ ನನ್ನ ಜನರೊಳಗೆ ಅನೇಕರಿಗಿಂತ ಯೆಹೂದ್ಯ ವಿಶ್ವಾಸದಲ್ಲಿ ಎಷ್ಟೋ ಪ್ರಗತಿಯನ್ನು ಹೊಂದಿದವನಾಗಿದ್ದೆನು.
GAL 1:15 ಆದರೆ ದೇವರು ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತಮ್ಮ ಕೃಪೆಯ ಮೂಲಕ ನನ್ನನ್ನು ಕರೆದು,
GAL 1:16 ದೇವರು ತಮ್ಮ ಪುತ್ರನನ್ನು ನನ್ನಲ್ಲಿ ಪ್ರಕಟಿಸಿ, ಯೆಹೂದ್ಯರಲ್ಲದವರಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಮನಸ್ಸು ಮಾಡಿದರು. ಕೂಡಲೇ ದೇವರ ಪುತ್ರ ಆಗಿರುವವರ ಪ್ರಕಟಣೆಯ ತರುವಾಯ ನಾನು ಯಾವ ಮನುಷ್ಯರನ್ನು ವಿಚಾರಿಸಲಿಲ್ಲ.
GAL 1:17 ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ, ನಾನು ಅರೇಬಿಯಾಕ್ಕೆ ಹೋದೆನು. ಅನಂತರ ಪುನಃ ದಮಸ್ಕಕ್ಕೆ ಹಿಂದಿರುಗಿದೆನು.
GAL 1:18 ಮೂರು ವರ್ಷಗಳ ನಂತರವೇ ನಾನು ಕೇಫನನ್ನು ಪರಿಚಯಮಾಡಿಕೊಳ್ಳಲು ಯೆರೂಸಲೇಮಿಗೆ ಹೋಗಿ ಅವನೊಂದಿಗೆ ಹದಿನೈದು ದಿವಸ ಇದ್ದೆನು.
GAL 1:19 ಆದರೆ ಕರ್ತ ಯೇಸುವಿನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.
GAL 1:20 ಈಗ ನಾನು ನಿಮಗೆ ಬರೆಯುತ್ತಿರುವ ವಿಷಯಗಳು ಸುಳ್ಳಲ್ಲ ಎಂದು ದೇವರ ಮುಂದೆ ನಾನು ನಿಶ್ಚಯವಾಗಿ ನಿಮಗೆ ಹೇಳುತ್ತೇನೆ.
GAL 1:21 ಆಮೇಲೆ ಸಿರಿಯಾ ಮತ್ತು ಕಿಲಿಕ್ಯ ಪ್ರಾಂತಗಳಿಗೆ ಬಂದೆನು.
GAL 1:22 ಆಗ ಕ್ರಿಸ್ತ ಯೇಸುವಿನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ.
GAL 1:23 ಆದರೆ ಅವರು, “ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದ ಇವನು, ತಾನು ನಾಶಮಾಡಲು ಪ್ರಯತ್ನಿಸಿದ್ದ ವಿಶ್ವಾಸವನ್ನೇ ಈಗ ಪ್ರಸಂಗಿಸುತ್ತಿದ್ದಾನೆ,” ಎಂಬುದನ್ನು ಮಾತ್ರ ಕೇಳಿದ್ದರು.
GAL 1:24 ಅವರು ನನ್ನ ದೆಸೆಯಿಂದ ದೇವರನ್ನು ಕೊಂಡಾಡಿದರು.
GAL 2:1 ಹದಿನಾಲ್ಕು ವರ್ಷಗಳಾದ ಮೇಲೆ ನಾನು ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಯೆರೂಸಲೇಮಿಗೆ ಹೋದೆನು.
GAL 2:2 ನಾನು ನನಗೆ ದೊರೆತ ಪ್ರಕಟನೆಗೆ ಅನುಸಾರವಾಗಿ ಅಲ್ಲಿಗೆ ಹೋದೆನು. ಅಲ್ಲಿ ಇರುವ ಸಭೆಗೆ ಹೋಗಿ ಯೆಹೂದ್ಯರಲ್ಲದ ಜನರಿಗೆ ನಾನು ಸಾರುವ ಸುವಾರ್ತೆಯ ಬಗ್ಗೆ ವಿವರಿಸಿದೆನು. ಅಲ್ಲಿರುವ ಗಣ್ಯನಾಯಕರಿಗೆ ವೈಯಕ್ತಿಕವಾಗಿ ಅದರ ಬಗ್ಗೆ ವರದಿಮಾಡಿದೆನು. ಏಕೆಂದರೆ ನಾನು ಮಾಡಿದ ಸೇವೆ ಮತ್ತು ಮುಂದೆ ಮಾಡಲಿರುವ ಸೇವೆಯು ನಿಷ್ಫಲವಾಗಬಾರದೆಂಬ ಕಾರಣಕ್ಕಾಗಿ ಹೀಗೆ ಮಾಡಿದೆ.
GAL 2:3 ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಅವನನ್ನು ಬಲಾತ್ಕಾರ ಮಾಡಲಿಲ್ಲ.
GAL 2:4 ಆದರೆ ರಹಸ್ಯವಾಗಿ ಒಳಗೆ ಬಂದಿದ್ದ ಸುಳ್ಳು ವಿಶ್ವಾಸಿಗಳು ನಮ್ಮನ್ನು ದಾಸತ್ವದಲ್ಲಿ ಸಿಕ್ಕಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿರುವ ನಮ್ಮ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸಲು ಬಂದಿದ್ದರು.
GAL 2:5 ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರಿಗೆ ಕ್ಷಣಮಾತ್ರವೂ ಬಿಟ್ಟುಕೊಡಲು ಒಪ್ಪಲಿಲ್ಲ.
GAL 2:6 ಅಲ್ಲಿದ್ದ ಸಭೆಯ ನಾಯಕರೂ ಸಹ ನನ್ನ ಸಂದೇಶದ ಬಗ್ಗೆ ನನಗೆ ಏನೂ ಹೇಳಲಿಲ್ಲ. ಅವರು ಎಂಥವರು ಎಂಬುದು ನನಗೆ ಮುಖ್ಯವಲ್ಲ; ಏಕೆಂದರೆ, ದೇವರು ಪಕ್ಷಪಾತಿಯಲ್ಲ.
GAL 2:7 ಅದಕ್ಕೆ ಬದಲಾಗಿ, ಯೆಹೂದ್ಯರಿಗೆ ಸುವಾರ್ತೆ ಸಾರುವುದು ಪೇತ್ರನಿಗೆ ಒಪ್ಪಿಸಿಕೊಟ್ಟಂತೆಯೇ, ಯೆಹೂದ್ಯರಲ್ಲದವರಿಗೆ ಸುವಾರ್ತೆ ಸಾರುವುದು ನನಗೆ ಒಪ್ಪಿಸಲಾಯಿತು ಎಂಬುದನ್ನು ಸಭೆಯ ನಾಯಕರು ಸಹ ಗ್ರಹಿಸಿಕೊಂಡರು.
GAL 2:8 ಏಕೆಂದರೆ, ಯೆಹೂದ್ಯರಿಗೆ ಅಪೊಸ್ತಲನಾಗಿರುವ ಪೇತ್ರನಲ್ಲಿ ಕಾರ್ಯಮಾಡಿದ ದೇವರೇ, ಯೆಹೂದ್ಯರಲ್ಲದವರಿಗೆ ನಾನು ಅಪೊಸ್ತಲನಾಗಿರಲು ನನ್ನಲ್ಲಿ ಕಾರ್ಯಮಾಡಿದರು.
GAL 2:9 ಸಭೆಯ ಸ್ತಂಭಗಳಂತಿರುವ ನಾಯಕರಾದ ಯಾಕೋಬ, ಪೇತ್ರ ಹಾಗೂ ಯೋಹಾನರು ನನಗೆ ಕೊಡಲಾದ ಕೃಪೆಯನ್ನು ಗ್ರಹಿಸಿಕೊಂಡರು. ಆಗ ಅವರು, ನನಗೂ ಬಾರ್ನಬನಿಗೂ ಅನ್ಯೋನ್ಯತೆಯ ಬಲಗೈಯನ್ನು ಕೊಟ್ಟರು. ಹೀಗೆ ನಾವು ಯೆಹೂದ್ಯರಲ್ಲದವರ ಬಳಿಗೂ ಅವರು ಯೆಹೂದ್ಯರ ಬಳಿಗೂ ಹೋಗುವಂತೆ ತೀರ್ಮಾನವಾಯಿತು.
GAL 2:10 ಅವರು ನಾವು ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಇದನ್ನು ಮಾಡುವುದರಲ್ಲಿ ಆಸಕ್ತನಾಗಿದ್ದೆನು.
GAL 2:11 ಕೇಫನು ಅಂತಿಯೋಕ್ಯ ಎಂಬ ಪಟ್ಟಣಕ್ಕೆ ಬಂದಾಗ ಅವನು ತಪ್ಪುಮಾಡಿದವನಾಗಿ ಇದ್ದುದರಿಂದ, ನಾನು ಅವನನ್ನು ಬಹಿರಂಗವಾಗಿ ಎದುರಿಸಿದೆನು.
GAL 2:12 ಏಕೆಂದರೆ ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕೆ ಮುಂಚೆ ಪೇತ್ರನು ಯೆಹೂದ್ಯರಲ್ಲದವರೊಡನೆ ಊಟಮಾಡುತ್ತಿದ್ದನು. ಅವರು ಬಂದ ಮೇಲೆ ಯೆಹೂದ್ಯರಿಗೆ ಅವನು ಭಯಪಟ್ಟು ಯೆಹೂದ್ಯರಲ್ಲದವರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು.
GAL 2:13 ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಕಪಟಮಾಡಿದರು. ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಒಳಗಾದನು.
GAL 2:14 ಆದರೆ ಅವರು ಸುವಾರ್ತೆಯ ಸತ್ಯದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ, “ನೀನು ಯೆಹೂದ್ಯನಾಗಿದ್ದು, ಯೆಹೂದ್ಯರಂತೆ ಜೀವಿಸದೆ ಯೆಹೂದ್ಯರಲ್ಲದವರಂತೆ ಜೀವಿಸಿ, ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸಬೇಕೆಂದು ನೀನು ಒತ್ತಾಯ ಮಾಡುವುದು ಹೇಗೆ?” ಎಂದು ಕೇಳಿದೆ.
GAL 2:15 “ನಾವಂತೂ ಹುಟ್ಟು ಯೆಹೂದ್ಯರು, ಪಾಪಿಗಳೆಂದು ಕರೆಯಲಾಗುವ ಯೆಹೂದ್ಯರಲ್ಲದವರಲ್ಲ.
GAL 2:16 ಒಬ್ಬ ವ್ಯಕ್ತಿ ಮೋಶೆಯ ನಿಯಮದ ಕ್ರಿಯೆಗಳಿಂದ ನೀತಿವಂತನಾಗುವುದಿಲ್ಲ. ಆದರೆ ಕ್ರಿಸ್ತ ಯೇಸುವನ್ನು ನಂಬುವುದರಿಂದಲೇ ನೀತಿವಂತನಾಗುತ್ತಾನೆ ಎಂದು ನಮಗೆ ತಿಳಿದಿದೆ. ನಾವು ಸಹ ಮೋಶೆಯ ನಿಯಮದ ಕ್ರಿಯೆಗಳಿಂದಲ್ಲ, ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ನೀತಿವಂತರಾವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟೆವು. ಏಕೆಂದರೆ, ಮೋಶೆಯ ನಿಯಮದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ.
GAL 2:17 “ಆದರೆ, ನಾವು ಕ್ರಿಸ್ತ ಯೇಸುವಿನಲ್ಲಿ ನೀತಿವಂತರಾಗಲು ಪ್ರಯತ್ನಿಸುವ ನಾವೂ ಪಾಪಿಗಳಾಗಿ ಇರುವುದಾದರೆ, ಕ್ರಿಸ್ತ ಯೇಸು ಪಾಪಕ್ಕೆ ಪ್ರೋತ್ಸಾಹ ನೀಡಿದ ಹಾಗಾಗುವುದೋ? ಎಂದಿಗೂ ಇಲ್ಲ.
GAL 2:18 ನಾನು ಕೆಡವಿದ್ದನ್ನೇ ಪುನಃ ನಾನೇ ಕಟ್ಟಿದರೆ, ನನ್ನನ್ನು ನಿಯಮ ಉಲ್ಲಂಘಿಸಿದವನು ಎಂದು ರುಜುಪಡಿಸಿಕೊಳ್ಳುತ್ತೇನಲ್ಲಾ?
GAL 2:19 “ನಾನಾದರೋ ದೇವರಿಗಾಗಿ ಜೀವಿಸುವುದಕ್ಕೋಸ್ಕರ, ನಿಯಮದ ಮೂಲಕ, ನಿಯಮದ ಪಾಲಿಗೆ ಸತ್ತವನಾಗಿದ್ದೇನೆ.
GAL 2:20 ಕ್ರಿಸ್ತ ಯೇಸುವಿನೊಂದಿಗೆ ನಾನೂ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ. ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತ ಯೇಸುವೇ ನನ್ನಲ್ಲಿ ಜೀವಿಸುತ್ತಾರೆ. ನನ್ನನ್ನು ಪ್ರೀತಿಸಿ ನನಗೋಸ್ಕರ ತಮ್ಮನ್ನೇ ಒಪ್ಪಿಸಿಕೊಟ್ಟ ದೇವಪುತ್ರ ಆಗಿರುವವರ ನಂಬಿಕೆಯಲ್ಲಿಯೇ ಈಗ ನಾನು ಈ ಶರೀರದಲ್ಲಿ ಜೀವಿಸುತ್ತಿದ್ದೇನೆ.
GAL 2:21 ನಾನು ದೇವರ ಕೃಪೆಯನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ನಿಯಮದ ಮೂಲಕ ನೀತಿಯು ಬರುವುದಾದರೆ, ಕ್ರಿಸ್ತ ಯೇಸು ಕಾರಣವಿಲ್ಲದೆ ಸತ್ತಂತಾಯಿತು!”
GAL 3:1 ಬುದ್ಧಿಯಿಲ್ಲದ ಗಲಾತ್ಯದವರೇ, ನಿಮಗೆ ಮಾಟಮಾಡಿಸಿದವರು ಯಾರು? ಯೇಸು ಕ್ರಿಸ್ತರು ಶಿಲುಬೆಗೆ ಹಾಕಿಸಿಕೊಂಡದ್ದನ್ನು ನಾನು ನಿಮ್ಮ ಕಣ್ಣೆದುರಿನಲ್ಲಿಯೇ ಚಿತ್ರೀಕರಿಸಲಿಲ್ಲವೆ?
GAL 3:2 ಇದೊಂದನ್ನು ಮಾತ್ರ ನಿಮ್ಮಿಂದ ತಿಳಿಯಬಯಸುತ್ತೇನೆ. ನೀವು ಪವಿತ್ರ ಆತ್ಮರನ್ನು ಹೊಂದಿದ್ದು ನಿಯಮದ ಕ್ರಿಯೆಯಿಂದಲೋ? ಇಲ್ಲವೆ ಕೇಳಿದ್ದನ್ನು ನಂಬಿದ್ದರಿಂದಲೋ?
GAL 3:3 ನೀವು ಇಷ್ಟು ಬುದ್ಧಿಯಿಲ್ಲದವರಾಗಿದ್ದೀರಾ? ನೀವು ಪವಿತ್ರ ಆತ್ಮರಲ್ಲಿ ಪ್ರಾರಂಭಿಸಿ ಈಗ ಮಾನವೀಯವಾಗಿ ಪರಿಪೂರ್ಣರಾಗಬೇಕೆಂದ್ದೀರಾ?
GAL 3:4 ನೀವು ಎಷ್ಟೋ ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವಾಯಿತೋ?
GAL 3:5 ನಿಜವಾಗಿಯೂ ವ್ಯರ್ಥವಾಯಿತು. ದೇವರು ಪವಿತ್ರ ಆತ್ಮರನ್ನು ನಿಮಗೆ ಕೊಟ್ಟದ್ದು ಮತ್ತು ನಿಮ್ಮಲ್ಲಿ ಅದ್ಭುತಕಾರ್ಯಗಳನ್ನು ನಡೆಸಿದ್ದು ನಿಯಮದ ಕ್ರಿಯೆಗಳಿಂದಲೋ ಅಥವಾ ನೀವು ಕೇಳಿ ನಂಬಿದ್ದರಿಂದಲೋ?
GAL 3:6 ಈ ರೀತಿಯಾಗಿ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅದು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು.”
GAL 3:7 ಆದ್ದರಿಂದ ನಂಬುವವರೇ, ಅಬ್ರಹಾಮನ ಮಕ್ಕಳೆಂದು ನೀವು ಅರ್ಥಮಾಡಿಕೊಳ್ಳಿರಿ.
GAL 3:8 ಯೆಹೂದ್ಯರಲ್ಲದವರನ್ನು ನಂಬಿಕೆಯಿಂದಲೇ ದೇವರು ನೀತಿವಂತರನ್ನಾಗಿ ಮಾಡುವರು ಎಂದು ಪವಿತ್ರ ವೇದವು ಮೊದಲೇ ಕಂಡು, “ನಿನ್ನ ಮೂಲಕ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂಬ ಸುವಾರ್ತೆಯನ್ನು ಅಬ್ರಹಾಮನಿಗೆ, ಮುಂಚಿತವಾಗಿಯೇ ಸಾರಿತು.
GAL 3:9 ಆದ್ದರಿಂದ, ದೇವರನ್ನು ನಂಬುವ ಎಲ್ಲರೂ ಅಬ್ರಹಾಮನು ಆಶೀರ್ವಾದ ಹೊಂದಿದ ಹಾಗೆಯೇ ಆಶೀರ್ವಾದ ಹೊಂದುವರು.
GAL 3:10 ಮೋಶೆಯ ನಿಯಮದ ಕ್ರಿಯೆಗಳನ್ನು ಆಶ್ರಯಿಸಿಕೊಳ್ಳುವವರೆಲ್ಲರೂ ಶಾಪಾಧೀನರಾಗಿದ್ದಾರೆ. ಏಕೆಂದರೆ, “ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವವುಗಳನ್ನೆಲ್ಲಾ ನಿರಂತರವಾಗಿ ಕೈಗೊಳ್ಳದಿರುವ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಬರೆದಿದೆ.
GAL 3:11 ಇದಲ್ಲದೆ ನಿಯಮದಿಂದ ದೇವರ ಮುಂದೆ ಯಾರೂ ನೀತಿವಂತರೆಂಬ ನಿರ್ಣಯವನ್ನು ಹೊಂದುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಏಕೆಂದರೆ, “ನೀತಿವಂತನು ನಂಬಿಕೆಯಿಂದಲೇ ಬದುಕುವನು.”
GAL 3:12 ನಿಯಮವು ನಂಬಿಕೆಯನ್ನು ಆಧಾರಗೊಂಡದ್ದಲ್ಲ. ಆದರೆ, “ನಿಯಮಗಳ ಕ್ರಿಯೆಗಳನ್ನು ಮಾಡುವವನು ಅವುಗಳ ಮೂಲಕ ಬದುಕುವನು.”
GAL 3:13 ಪವಿತ್ರ ವೇದದಲ್ಲಿ, “ಮರಕ್ಕೆ ತೂಗುಹಾಕಲಾದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ ಕ್ರಿಸ್ತ ಯೇಸು ಮರಕ್ಕೆ ತೂಗುಹಾಕಲಾಗಿ ನಮಗೋಸ್ಕರ ಶಾಪಗ್ರಸ್ಥರಾಗಿ ನಿಯಮದ ಶಾಪದೊಳಗಿಂದ ನಮ್ಮನ್ನು ವಿಮೋಚಿಸಿದರು.
GAL 3:14 ಅಬ್ರಹಾಮನ ಆಶೀರ್ವಾದವು ಕ್ರಿಸ್ತ ಯೇಸುವಿನ ಮೂಲಕ ಯೆಹೂದ್ಯರಲ್ಲದವರಿಗೆ ಉಂಟಾಗಿ, ನಂಬಿಕೆಯ ಮೂಲಕ ವಾಗ್ದಾನದ ಪವಿತ್ರಾತ್ಮರನ್ನು ನಾವು ಪಡೆದುಕೊಳ್ಳುವುದಕ್ಕಾಗಿಯೇ ದೇವರು ನಮ್ಮನ್ನು ವಿಮೋಚಿಸಿದರು.
GAL 3:15 ಪ್ರಿಯರೇ, ನಾನು ದಿನನಿತ್ಯದ ವ್ಯವಹಾರದಂತೆ ಮಾತನಾಡುತ್ತಿದ್ದೇನೆ. ಮತ್ತೊಬ್ಬನೊಡನೆ ಯಾರಾದರೂ ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದ ಮೇಲೆ ಯಾರೂ ಅದನ್ನು ರದ್ದು ಮಾಡುವುದಿಲ್ಲ, ಇಲ್ಲವೆ ಕೂಡಿಸುವುದಿಲ್ಲ.
GAL 3:16 ಹಾಗೆಯೇ ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳು ಮಾಡಲಾದವು. ಅದರಲ್ಲಿ, “ನಿನ್ನ ಸಂತತಿಗಳಿಗೆ,” ಎಂದು ಹೇಳಿ ಅನೇಕರನ್ನು ಸೂಚಿಸದೆ, “ನಿನ್ನ ಸಂತತಿಗೆ,” ಎಂದು ಹೇಳಿದ ಒಬ್ಬರನ್ನೇ ಸೂಚಿಸಿದೆ. ಆ ಒಬ್ಬ ವ್ಯಕ್ತಿ ಕ್ರಿಸ್ತ ಯೇಸುವೇ.
GAL 3:17 ನಾನು ಹೇಳುವ ಮಾತಿನ ತಾತ್ಪರ್ಯ ಏನೆಂದರೆ, ದೇವರು ಸ್ಥಿರಪಡಿಸಿ ಮುಗಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರ್ಷಗಳ ತರುವಾಯ ಬಂದ ಮೋಶೆಯ ನಿಯಮವು ಆ ವಾಗ್ದಾನವನ್ನು ರದ್ದುಪಡಿಸಲಾಗದು ಮತ್ತು ವ್ಯರ್ಥಪಡಿಸಲಾಗದು.
GAL 3:18 ಏಕೆಂದರೆ ಆ ಬಾಧ್ಯತೆಯು ನಿಯಮದ ಪ್ರಕಾರವಾಗಿದ್ದರೆ, ಅದು ಇನ್ನು ವಾಗ್ದಾನದ ಮೇಲೆ ಆಧಾರವಾದದ್ದಲ್ಲ. ಆದರೆ ದೇವರು ತಮ್ಮ ಕೃಪೆಯಿಂದ ಅಬ್ರಹಾಮನಿಗೆ ವಾಗ್ದಾನದ ಮೂಲಕವೇ ಆ ಬಾಧ್ಯತೆಯನ್ನು ಕೊಟ್ಟಿದ್ದಾರೆ.
GAL 3:19 ಹಾಗಾದರೆ ಮೋಶೆಯ ನಿಯಮವನ್ನು ಏಕೆ ಕೊಡಲಾಯಿತು? ಅಪರಾಧಗಳ ಅರಿವನ್ನು ಮೂಡಿಸುವುದಕ್ಕಾಗಿ, ನಿಯಮವು ಸೇರಿಸಲಾಯಿತು. ಇದು ಆ ಸಂತತಿಯಾದಾತನು ಬರುವ ವಾಗ್ದಾನದ ತನಕ ಮಾತ್ರವಾಗಿರುವುದು. ಹೀಗೆ ನಿಯಮವು ದೇವದೂತರ ಮುಖಾಂತರ ಮಧ್ಯಸ್ಥನಾದ ಮೋಶೆಯ ಕೈಯಲ್ಲಿ ಕೊಡಲಾಯಿತು.
GAL 3:20 ಒಂದು ಪಕ್ಷಕ್ಕಿಂತಲೂ ಹೆಚ್ಚಿನವನಾಗಿದ್ದರೆ ಮಾತ್ರ ಮಧ್ಯಸ್ಥನ ಅಗತ್ಯವಿರುವುದು; ದೇವರಾದರೋ ಒಬ್ಬರೇ.
GAL 3:21 ಹಾಗಾದರೆ ನಿಯಮವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ಆಗಬಾರದು! ಕೊಡಲಾಗಿದ್ದ ನಿಯಮವು ಒಂದು ವೇಳೆ ಜೀವವನ್ನು ನೀಡುವುದಕ್ಕೆ ಶಕ್ತಿಯುಳ್ಳದ್ದಾಗಿದ್ದರೆ, ನಿಶ್ಚಯವಾಗಿಯೂ ಮೋಶೆಯ ನಿಯಮದಿಂದ ನೀತಿವಂತರಾಗುತ್ತಿದ್ದೆವು.
GAL 3:22 ಆದರೆ ಸಮಸ್ತವೂ ಪಾಪದ ಅಧೀನಕ್ಕೆ ಒಳಗಾಯಿತು ಎಂದು ಪವಿತ್ರ ವೇದ ಸ್ಪಷ್ಟೀಕರಿಸುತ್ತದೆ. ಇದು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರಿಗೂ ಮಾಡಿದ ವಾಗ್ದಾನವು ಅವರ ನಂಬಿಕೆಯ ಆಧಾರವಾಗಿ ಕೊಡಲಾಗುತ್ತದೆ.
GAL 3:23 ನಂಬಿಕೆ ಬರುವುದಕ್ಕೆ ಮುಂಚೆ ನಾವು ನಿಯಮದ ಅಧೀನದಲ್ಲಿ ಇದ್ದೆವು. ಬರಲಿರುವ ಆ ನಂಬಿಕೆಯು ಪ್ರಕಟವಾಗುವ ತನಕ ನಾವು ಸೆರೆಯಾದವರಂತೆ ಇದ್ದೆವು.
GAL 3:24 ಹೀಗಿರಲಾಗಿ ನಿಯಮವು ನಮ್ಮ ಪೋಷಕನಂತಿತ್ತು. ನಾವು ನಂಬಿಕೆಯ ಮೂಲಕ ನೀತಿವಂತರಾಗುವುದಕ್ಕಾಗಿ ಕ್ರಿಸ್ತ ಯೇಸುವಿನ ಬಳಿಗೆ ತರುವ ತನಕ ನಮ್ಮನ್ನು ಪೋಷಿಸುತ್ತದೆ.
GAL 3:25 ಆದರೆ ಈಗ ನಂಬಿಕೆಯು ಬಂದಿರುವುದರಿಂದ, ಇನ್ನೆಂದಿಗೂ ನಾವು ಪೋಷಕ ಎಂಬ ನಿಯಮದ ಕೆಳಗೆ ಇಲ್ಲ.
GAL 3:26 ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿದ್ದೀರಿ.
GAL 3:27 ಹೇಗೆಂದರೆ, ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ.
GAL 3:28 ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ, ಯೆಹೂದ್ಯರು ಯೆಹೂದ್ಯರಲ್ಲದವರು ಎಂದೂ ದಾಸರು ಸ್ವತಂತ್ರರು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.
GAL 3:29 ಆದರೆ ನೀವು ಕ್ರಿಸ್ತನವರಾಗಿದ್ದರೆ, ಅಬ್ರಹಾಮನ ಸಂತತಿಯವರಾಗಿದ್ದೀರಿ ಮಾತ್ರವಲ್ಲದೆ ವಾಗ್ದಾನಕ್ಕನುಸಾರವಾಗಿ ವಾರಸುದಾರರೂ ಆಗಿದ್ದೀರಿ.
GAL 4:1 ಆದರೆ ನಾನು ಹೇಳುವುದೇನೆಂದರೆ, ವಾರಸುದಾರನು ತಾನು ಇಡೀ ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ಅವನಿಗೂ ದಾಸನಿಗೂ ವ್ಯತ್ಯಾಸವಿರುವುದಿಲ್ಲ.
GAL 4:2 ಆದರೆ ಅವನ ತಂದೆಯು ಮುಂಚಿತವಾಗಿ ನೇಮಿಸಿದ ದಿನದವರೆಗೂ ಅವನು ಪೋಷಕರ ಹಾಗೂ ಆಡಳಿತಗಾರರ ಕೈಕೆಳಗಿರುವನು.
GAL 4:3 ಅದರಂತೆಯೇ ನಾವು ಬಾಲಕರಾಗಿದ್ದಾಗ ಲೋಕದ ಮೂಲಪಾಠಗಳಿಗೆ ಗುಲಾಮರಾಗಿದ್ದೆವು.
GAL 4:4 ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.
GAL 4:5 ಹೀಗೆ ದೇವರು ನಿಯಮಕ್ಕೆ ಒಳಗಾದ ನಮ್ಮನ್ನು ವಿಮೋಚಿಸಿ, ನಾವು ಪುತ್ರರ ಸ್ಥಾನವನ್ನು ಹೊಂದುವಂತೆ ಮಾಡಿದರು.
GAL 4:6 ನೀವು ದೇವರ ಪುತ್ರರಾಗಿರುವುದರಿಂದ, ದೇವರು ತಮ್ಮ ಪುತ್ರ ಆಗಿರುವವರ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿ, “ಅಪ್ಪಾ ತಂದೆಯೇ!” ಎಂದು ಕರೆಯುವಂತೆ ಮಾಡಿದ್ದಾರೆ.
GAL 4:7 ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ ಪುತ್ರನಾಗಿದ್ದೀ. ನೀನು ದೇವರ ಮಗು ಎಂದ ಮೇಲೆ ದೇವರ ಮೂಲಕ ವಾರಸುದಾರನೂ ಆಗಿದ್ದೀ.
GAL 4:8 ಮುಂಚೆ ನೀವು ದೇವರನ್ನು ಅರಿಯದವರಾಗಿದ್ದಾಗ, ಸ್ವಾಭಾವಿಕವಾಗಿ ದೇವರಲ್ಲದವುಗಳಿಗೆ ನೀವು ಗುಲಾಮರಾಗಿದ್ದೀರಿ.
GAL 4:9 ಈಗಲಾದರೋ ನೀವು ದೇವರನ್ನು ಅರಿತುಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲಪಾಠಗಳಿಗೆ ಪುನಃ ಗುಲಾಮರಾಗಬೇಕೆಂದು ಅಪೇಕ್ಷಿಸಿ, ಅವುಗಳಿಗೆ ನೀವು ತಿರುಗಿಕೊಳ್ಳುವುದು ಹೇಗೆ?
GAL 4:10 ನೀವು ದಿನಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ.
GAL 4:11 ನಾವು ನಿಮ್ಮ ಮಧ್ಯದಲ್ಲಿ ಪ್ರಯಾಸಪಟ್ಟದ್ದು ವ್ಯರ್ಥವಾಯಿತೇನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
GAL 4:12 ಪ್ರಿಯರೇ, ನಾನು ನಿಮ್ಮ ಹಾಗೆ ಆದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ಕೇಡನ್ನೂ ಮಾಡಲಿಲ್ಲ.
GAL 4:13 ನಾನು ಮುಂಚೆ ನಿಮಗೆ ಸುವಾರ್ತೆ ಸಾರಿದ್ದು, ನನ್ನ ಶರೀರದ ಬಲಹೀನತೆಯಿಂದ ಎಂದು ನೀವು ಬಲ್ಲಿರಿ.
GAL 4:14 ನನ್ನ ದೇಹಸ್ಥಿತಿ ನಿಮಗೆ ಬೇಸರಗೊಳಿಸುವುದಾಗಿದ್ದರೂ ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸುವಿನಂತೆಯೂ ಸೇರಿಸಿಕೊಂಡಿರಿ.
GAL 4:15 ನೀವು ಕೋರಿದ ಆ ಶುಭವೆಲ್ಲಿ? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಿಮ್ಮ ವಿಷಯವಾಗಿ ನಾನು ಸಾಕ್ಷಿಕೊಡುತ್ತೇನೆ.
GAL 4:16 ಹೀಗಿರಲಾಗಿ ಸತ್ಯವನ್ನು ಹೇಳಿದ್ದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೋ?
GAL 4:17 ಅವರು ನಿಮ್ಮನ್ನು ಆಕರ್ಷಿಸಲು ಆಸಕ್ತರಾಗಿದ್ದಾರೆ. ಆದರೆ ಒಳ್ಳೆಯ ಅಭಿಪ್ರಾಯದಿಂದ ಅಲ್ಲ. ನೀವು ಅವರ ವಿಷಯದಲ್ಲಿ ಆಸಕ್ತರಾಗಬೇಕೆಂದು ಅವರು ನಿಮ್ಮನ್ನು ನಮ್ಮಿಂದ ಪ್ರತ್ಯೇಕಿಸುವುದಕ್ಕೆ ಅಪೇಕ್ಷಿಸುತ್ತಾರೆ.
GAL 4:18 ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಉತ್ತಮ ಕಾರ್ಯಗಳಲ್ಲಿ ನೀವು ಆಸಕ್ತರಾಗಿರುವುದು ಒಳ್ಳೆಯದು.
GAL 4:19 ನನ್ನ ಮಕ್ಕಳೇ, ಕ್ರಿಸ್ತ ಯೇಸುವು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಾನು ನಿಮಗಾಗಿ ಪುನಃ ಪ್ರಸವವೇದನೆ ಪಡುತ್ತೇನೆ.
GAL 4:20 ನಾನು ಈಗ ನಿಮ್ಮ ಜೊತೆಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ, ಏಕೆಂದರೆ, ನಾನು ನಿಮ್ಮ ವಿಷಯದಲ್ಲಿ ಚಿಂತಿಸುವವನಾಗಿದ್ದೇನೆ.
GAL 4:21 ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ.
GAL 4:22 ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ.
GAL 4:23 ದಾಸಿಯ ಮಗನು ಶಾರೀರಿಕವಾಗಿ ಹುಟ್ಟಿದವನು. ಆದರೆ ಧರ್ಮಪತ್ನಿಯ ಮಗನಾದರೋ ದೇವರ ವಾಗ್ದಾನದ ಮೂಲಕ ಹುಟ್ಟಿದನು.
GAL 4:24 ಈ ಸಂಗತಿಗಳು ಉಪಮಾನವಾಗಿವೆ. ಹೇಗೆಂದರೆ, ಇವರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು. ಅದೇ ಹಾಗರ್.
GAL 4:25 ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ.
GAL 4:26 ಆದರೆ ಸ್ವರ್ಗೀಯ ಯೆರೂಸಲೇಮ್ ಸ್ವತಂತ್ರಳು. ಈಕೆಯೇ ನಮ್ಮ ತಾಯಿ.
GAL 4:27 ಏಕೆಂದರೆ, “ಬಂಜೆಯೇ, ಹೆರದವಳೇ, ಆನಂದಿಸು. ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,” ಎಂದು ಪವಿತ್ರ ವೇದದಲ್ಲಿ ಬರೆದಿದೆ.
GAL 4:28 ಪ್ರಿಯರೇ, ನಾವು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ.
GAL 4:29 ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ.
GAL 4:30 ಆದರೆ ಪವಿತ್ರ ವೇದವು ಏನು ಹೇಳುತ್ತದೆ? “ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಏಕೆಂದರೆ ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಂದಿಗೂ ವಾರಸುದಾರನಾಗಬಾರದು.” ಎಂದಲ್ಲವೇ?
GAL 4:31 ಹೀಗಿರುವಲ್ಲಿ ಪ್ರಿಯರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳೇ ಆಗಿದ್ದೇವೆ.
GAL 5:1 ಕ್ರಿಸ್ತ ಯೇಸು ನಮ್ಮನ್ನು ಸ್ವತಂತ್ರಕ್ಕಾಗಿಯೇ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸ್ಥಿರವಾಗಿ ನಿಲ್ಲಿರಿ. ನೀವು ನಿಯಮದ ದಾಸತ್ವದ ನೊಗದಲ್ಲಿ ಪುನಃ ಸಿಕ್ಕಿಕೊಳ್ಳಬೇಡಿರಿ.
GAL 5:2 ಇಗೋ, ಪೌಲನೆಂಬ ನಾನು ನಿಮಗೆ ಹೇಳುವುದೇನೆಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ, ಕ್ರಿಸ್ತ ಯೇಸುವಿನ ಮುಖಾಂತರ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ.
GAL 5:3 ಸುನ್ನತಿ ಮಾಡಿಸಿಕೊಳ್ಳಲು ಬಯಸುವ ಪ್ರತಿಯೊಬ್ಬನೂ ನಿಯಮವನ್ನೆಲ್ಲಾ ಕೈಗೊಳ್ಳುವ ಹಂಗಿನಲ್ಲಿದ್ದಾನೆ ಎಂದು ಪುನಃ ದೃಢವಾಗಿ ಹೇಳುತ್ತೇನೆ.
GAL 5:4 ನೀವು ನಿಯಮದ ಮೂಲಕ ನೀತಿವಂತರಾಗಬೇಕೆಂದು ಪ್ರಯತ್ನಿಸುವವರು, ಕ್ರಿಸ್ತ ಯೇಸುವಿನಿಂದ ಬೇರ್ಪಟ್ಟಿದ್ದೀರಿ. ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
GAL 5:5 ನಾವಾದರೋ ನಂಬಿಕೆಯಿಂದ ನೀತಿವಂತರಾಗುವ ನಮ್ಮ ನಿರೀಕ್ಷೆಯನ್ನು ದೇವರ ಆತ್ಮನ ಮೂಲಕ ಆತುರದಿಂದ ಎದುರುನೋಡುತ್ತಿದ್ದೇವೆ.
GAL 5:6 ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಸುನ್ನತಿ ಆಗದಿದ್ದರೂ ಯಾವ ವ್ಯತ್ಯಾಸವಿರುವುದಿಲ್ಲ. ಆದರೆ ಪ್ರೀತಿಯಿಂದ ಕಾರ್ಯ ನಡೆಸುವ ನಂಬಿಕೆಯು ಮಾತ್ರ ಪ್ರಯೋಜನವಾಗಿರುತ್ತದೆ.
GAL 5:7 ನೀವು ಚೆನ್ನಾಗಿ ಓಡುತ್ತಿದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗದಂತೆ ನಿಮ್ಮನ್ನು ತಡೆದವರು ಯಾರು?
GAL 5:8 ಈ ಪ್ರೇರಣೆಯು ನಿಮ್ಮನ್ನು ಕರೆದ ದೇವರಿಂದ ಬಂದದ್ದಲ್ಲ.
GAL 5:9 ಸ್ವಲ್ಪ ಹುಳಿಯು ಹಿಟ್ಟನ್ನೆಲ್ಲಾ ಹುಳಿಮಾಡುವುದು.
GAL 5:10 ನೀವು ಬೇರೆ ರೀತಿಯಿಂದ ಯೋಚಿಸುವುದಿಲ್ಲವೆಂದು ಕರ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಇದೆ. ಆದರೆ ನಿಮ್ಮನ್ನು ತೊಂದರೆ ಪಡಿಸುವವನು ಯಾವನಾದರೂ ಸರಿ, ಅವನು ದಂಡನೆಯನ್ನು ಅನುಭವಿಸುವನು.
GAL 5:11 ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ?
GAL 5:12 ನಿಮ್ಮನ್ನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ತೊಂದರೆ ಪಡಿಸುವವರಿಗೆ ಆ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು ಎಂದು ಬಯಸುತ್ತೇನೆ!
GAL 5:13 ಪ್ರಿಯರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಹೊಂದಿದವರು. ಆದರೆ ಆ ಸ್ವಾತಂತ್ರ್ಯವನ್ನು ಶಾರೀರಿಕ ಅನುಕೂಲಕ್ಕಾಗಿ ಉಪಯೋಗಿಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ದೀನರಾಗಿ ಸೇವೆಮಾಡಿರಿ.
GAL 5:14 ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ನಿಯಮವೆಲ್ಲಾ ಅಡಕವಾಗಿದೆ.
GAL 5:15 ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
GAL 5:16 ನಾನು ಹೇಳುವುದೇನೆಂದರೆ, ಪವಿತ್ರಾತ್ಮರ ನಡೆಸುವಿಕೆಯಿಂದ ಬಾಳಿರಿ, ಆಗ ನೀವು ದೈಹಿಕ ಆಸೆಗಳನ್ನು ಎಂದೂ ಪೂರೈಸಲಾರಿರಿ.
GAL 5:17 ಏಕೆಂದರೆ ಮಾಂಸಭಾವವು ಆತ್ಮನಿಗೆ ವಿರುದ್ಧವಾಗಿಯೂ ಆತ್ಮನು ಮಾಂಸಭಾವಕ್ಕೆ ವಿರುದ್ಧವಾಗಿಯೂ ಆಶಿಸುತ್ತದೆ. ನೀವು ಮಾಡಬಯಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರೋಧವಾಗಿವೆ.
GAL 5:18 ಆದರೆ ನೀವು ದೇವರ ಆತ್ಮದಿಂದ ನಡೆಸಿಕೊಳ್ಳುವವರಾದರೆ, ನಿಯಮದ ಅಧೀನತೆಯಲ್ಲಿ ಇರುವವರಲ್ಲ.
GAL 5:19 ಮಾಂಸಭಾವದ ಕೃತ್ಯಗಳು ಹೀಗೆ ಸ್ಪಷ್ಟವಾಗಿವೆ: ಜಾರತ್ವ, ಅಶುದ್ಧತ್ವ, ಸಡಿಲ ಜೀವನ,
GAL 5:20 ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಸ್ವಾರ್ಥತ್ವ, ವಿರೋಧತ್ವ, ಭಿನ್ನತೆ,
GAL 5:21 ಮತ್ಸರ, ಕುಡಿಕತನ, ದುಂದೌತಣ ಈ ಮೊದಲಾದವುಗಳೇ. ಇಂಥ ಕೃತ್ಯಗಳನ್ನು ನಡೆಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.
GAL 5:22 ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,
GAL 5:23 ಸಾತ್ವಿಕತೆ, ಸಂಯಮ ಇಂಥವುಗಳೇ. ಇವುಗಳಿಗೆ ವಿರೋಧವಾಗಿ ಯಾವ ನಿಯಮವೂ ಇಲ್ಲ.
GAL 5:24 ಕ್ರಿಸ್ತ ಯೇಸುವಿನವರು ತಮ್ಮ ಮಾಂಸಭಾವವನ್ನೂ ಅದರ ಆಶೆ ಹಾಗೂ ಅಪೇಕ್ಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ.
GAL 5:25 ನಾವು ದೇವರ ಆತ್ಮದಿಂದ ಜೀವಿಸುತ್ತಿರಲಾಗಿ ಆತ್ಮರನ್ನನುಸರಿಸಿ ನಡೆಯೋಣ.
GAL 5:26 ನಾವು ಅಹಂಕಾರಿಗಳಾಗಿರಬಾರದು. ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಮತ್ಸರಗೊಳ್ಳದೆಯೂ ಇರೋಣ.
GAL 6:1 ಪ್ರಿಯರೇ, ಒಬ್ಬ ಮನುಷ್ಯನು ಯಾವುದಾದರೊಂದು ಪಾಪದಲ್ಲಿ ಸಿಕ್ಕಿಬಿದ್ದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕ ಆತ್ಮದಿಂದ ಪುನಃ ಸ್ಥಾಪಿಸಿರಿ. ಆದರೆ ನೀನು ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.
GAL 6:2 ಒಬ್ಬನು ಮತ್ತೊಬ್ಬನ ಭಾರವನ್ನು ಹೊತ್ತುಕೊಳ್ಳಲಿ. ಹೀಗೆ ಕ್ರಿಸ್ತ ಯೇಸುವಿನ ನಿಯಮವನ್ನು ನೆರವೇರಿಸಿರಿ.
GAL 6:3 ಏನೂ ಅಲ್ಲದವನೊಬ್ಬನು ತಾನು ಏನೋ ಆಗಿದ್ದೇನೆಂದು ಭಾವಿಸಿಕೊಂಡರೆ, ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ.
GAL 6:4 ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನು ತನ್ನಲ್ಲಿ ಮಾತ್ರ ಸಂತೋಷಪಡುವುದಕ್ಕೆ ಆಸ್ಪದವಾಗುವುದೇ ಹೊರತು ಮತ್ತೊಬ್ಬನಲ್ಲಿ ಅಲ್ಲ.
GAL 6:5 ಏಕೆಂದರೆ ಪ್ರತಿಯೊಬ್ಬನೂ ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.
GAL 6:6 ವಾಕ್ಯದಲ್ಲಿ ಉಪದೇಶ ಹೊಂದುವವನು, ಉಪದೇಶ ಮಾಡುವವನೊಂದಿಗೆ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.
GAL 6:7 ಮೋಸಹೋಗಬೇಡಿರಿ, ದೇವರು ಪರಿಹಾಸ್ಯಕ್ಕೆ ಒಳಗಾಗುವವರಲ್ಲ. ಏಕೆಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.
GAL 6:8 ಮಾಂಸಭಾವಕ್ಕೆ ಬಿತ್ತುವವನು, ಮಾಂಸಭಾವದಿಂದ ನಾಶವನ್ನು ಕೊಯ್ಯುವನು. ಆದರೆ ದೇವರ ಆತ್ಮರನ್ನು ಮೆಚ್ಚಿಸಲು ಬಿತ್ತುವವನು, ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.
GAL 6:9 ಒಳ್ಳೆಯದನ್ನು ಮಾಡುವುದರಲ್ಲಿ ಎದೆಗುಂದದಿರೋಣ. ಏಕೆಂದರೆ ನಾವು ಬೇಸರಗೊಳ್ಳದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.
GAL 6:10 ಆದ್ದರಿಂದ ನಮಗೆ ಸಮಯವಿರಲಾಗಿ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ. ಮುಖ್ಯವಾಗಿ ವಿಶ್ವಾಸಿಗಳ ಕುಟುಂಬದವರಿಗೆ ಮಾಡೋಣ.
GAL 6:11 ನನ್ನ ಕೈಯಿಂದ ಎಷ್ಟು ದೊಡ್ಡ ಅಕ್ಷರಗಳಲ್ಲಿ ನಾನು ನಿಮಗೆ ಬರೆದಿದ್ದೇನೆ ನೋಡಿರಿ.
GAL 6:12 ಶರೀರದಲ್ಲಿ ಅಂದವಾಗಿ ಕಾಣಬೇಕೆಂದು ಇಷ್ಟಪಡುವವರೂ ತಮಗೆ ಕ್ರಿಸ್ತ ಯೇಸುವಿನ ಶಿಲುಬೆಯ ನಿಮಿತ್ತ ಹಿಂಸೆಯಾಗಬಾರದೆಂಬುದಕ್ಕಾಗಿಯೇ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಿಮ್ಮನ್ನು ಒತ್ತಾಯ ಮಾಡುತ್ತಾರೆ.
GAL 6:13 ಸುನ್ನತಿ ಮಾಡಿಸಿಕೊಳ್ಳುವ ತಾವಾದರೋ ನಿಯಮವನ್ನು ಕೈಗೊಂಡು ನಡೆಯುವುದಿಲ್ಲ. ಆದರೆ ಅವರು ನಿಮ್ಮ ಶರೀರದ ಸುನ್ನತಿಯಿಂದ ಹೆಚ್ಚಳಪಡುವಂತೆ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
GAL 6:14 ನನಗಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಹೆಚ್ಚಳ ಪಡುವುದು ಬೇಡವೇ ಬೇಡ. ಅವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.
GAL 6:15 ಸುನ್ನತಿಯಾಗುವುದರಿಂದ ಇಲ್ಲವೆ, ಸುನ್ನತಿಯಾಗದೆ ಇರುವುದರಿಂದ ಏನೂ ಪ್ರಯೋಜನವಿಲ್ಲ. ಆದರೆ ಹೊಸ ಸೃಷ್ಟಿಯೇ ಬೇಕು.
GAL 6:16 ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರ ಮೇಲೆಯೂ ದೇವರ ಇಸ್ರಾಯೇಲಿನ ಸಮಾಧಾನ ಹಾಗೂ ಕರುಣೆ ಇರಲಿ.
GAL 6:17 ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡಬಾರದು. ನಾನು ನನ್ನ ದೇಹದಲ್ಲಿ ಕರ್ತ ಆಗಿರುವ ಯೇಸುವಿನ ಗುರುತುಗಳನ್ನು ಪಡೆದಿದ್ದೇನೆ.
GAL 6:18 ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ. ಆಮೆನ್.
EPH 1:1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು, ಎಫೆಸದಲ್ಲಿರುವ ಭಕ್ತರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಿಗೂ ಬರೆಯುತ್ತಿರುವುದು:
EPH 1:2 ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
EPH 1:3 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ದೇವರೂ ತಂದೆಯೂ ಆಗಿರುವವರಿಗೆ ಸ್ತೋತ್ರ, ದೇವರು ಕ್ರಿಸ್ತನಲ್ಲಿ ಪರಲೋಕದ ಎಲ್ಲಾ ಆತ್ಮಿಕ ಆಶೀರ್ವಾದಗಳಿಂದ ನಮ್ಮನ್ನು ಆಶೀರ್ವದಿಸಿದ್ದಾರೆ.
EPH 1:4 ನಾವು ಪ್ರೀತಿಯಲ್ಲಿದ್ದು ಅವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಅವರು ಲೋಕದ ಅಸ್ತಿವಾರಕ್ಕೆ ಮುಂಚೆ ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡರು.
EPH 1:5 ದೇವರು ತಮ್ಮ ಚಿತ್ತದ ಸಂತೋಷಕ್ಕನುಸಾರವಾಗಿ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತಮಗೋಸ್ಕರ ತಮ್ಮ ಪುತ್ರರಾಗಿ ಸ್ವೀಕಾರ ಮಾಡುವಂತೆ ಮೊದಲೇ ನೇಮಿಸಿದರು.
EPH 1:6 ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ.
EPH 1:7 ದೇವರ ಕೃಪಾ ಐಶ್ವರ್ಯಕ್ಕೆ ಅನುಸಾರವಾಗಿ ಕ್ರಿಸ್ತನಲ್ಲಿ ನಮಗೆ ಅವರ ರಕ್ತದ ಮೂಲಕ ಪಾಪಗಳ ಕ್ಷಮಾಪಣೆಯಾಗಿ ವಿಮೋಚನೆಯಾಯಿತು.
EPH 1:8 ದೇವರು ಆ ಕೃಪೆಯನ್ನು ನಮ್ಮಲ್ಲಿ ಸಮೃದ್ಧಿಯಾಗಿ ಸುರಿಸಿದ್ದಾರೆ. ಎಲ್ಲಾ ಜ್ಞಾನ ವಿವೇಕಗಳೊಂದಿಗೆ
EPH 1:9 ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು,
EPH 1:10 ಆ ರಹಸ್ಯವೋ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕಾಲವು ಪರಿಪೂರ್ಣಗೊಂಡಾಗ ಕ್ರಿಸ್ತನಲ್ಲಿ ಒಂದುಗೂಡಿಸುವುದಾಗಿದೆ.
EPH 1:11 ದೇವರ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವ ಅವರ ಉದ್ದೇಶದ ಪ್ರಕಾರ ಕ್ರಿಸ್ತನಲ್ಲಿ ನಮ್ಮನ್ನು ಮೊದಲೇ ಆರಿಸಿಕೊಂಡರು.
EPH 1:12 ಇದರಿಂದ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯುಳ್ಳವರಾದ ನಾವು ಅವರ ಮಹಿಮೆಯ ಸ್ತುತಿಯಾಗಿರುವಂತೆ ನೇಮಿಸಿದರು.
EPH 1:13 ನೀವು ಸಹ ನಿಮ್ಮ ರಕ್ಷಣೆಯ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿದ ಮೇಲೆ ಕ್ರಿಸ್ತನಲ್ಲಿ ನಂಬಿಕೆಯಿಟ್ಟು ವಾಗ್ದಾನದ ಪವಿತ್ರಾತ್ಮರಿಂದ ಮುದ್ರೆಹೊಂದಿದ್ದೀರಿ.
EPH 1:14 ದೇವರಿಗೆ ಸೇರಿದವರಾದ ನಾವು ವಿಮೋಚನೆಯಾಗುವ ತನಕ ನಮ್ಮ ಸ್ವರ್ಗೀಯ ವಾರಸುತನವನ್ನು ಹೊಂದುವೆವು ಎಂಬುವುದಕ್ಕೆ ಈ ಪವಿತ್ರಾತ್ಮ ದೇವರೇ ನಮಗೆ ಹೊಣೆಯಾಗಿದ್ದಾರೆ. ದೇವರ ಮಹಿಮೆಯ ನಿಮಿತ್ಯವಾಗಿ ನಾವು ಅವರನ್ನು ಸ್ತುತಿಸೋಣ.
EPH 1:15 ಈ ಕಾರಣದಿಂದ ನಾನು ಸಹ ಕರ್ತ ಯೇಸುವಿನಲ್ಲಿರುವ ನಿಮ್ಮ ನಂಬಿಕೆ ಹಾಗೂ ಪರಿಶುದ್ಧರೆಲ್ಲರಿಗಾಗಿರುವ ಪ್ರೀತಿಯನ್ನು ಕುರಿತು ಕೇಳಿ,
EPH 1:16 ನನ್ನ ಪ್ರಾರ್ಥನೆಗಳಲ್ಲಿ ನಿಮಗಾಗಿ ವಿಜ್ಞಾಪಿಸಿ, ನಿಮ್ಮ ನಿಮಿತ್ತವಾಗಿ ಎಡಬಿಡದೆ ಸ್ತೋತ್ರ ಮಾಡುತ್ತೇನೆ.
EPH 1:17 ನಮ್ಮ ಕರ್ತ ಯೇಸುಕ್ರಿಸ್ತರ ದೇವರೂ ಮಹಿಮೆಯ ತಂದೆಯಾದವರನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳುವಂತೆ ಜ್ಞಾನದ ಮತ್ತು ಪ್ರಕಟಣೆಯ ಆತ್ಮವನ್ನು ನಿಮಗೆ ಅನುಗ್ರಹಿಸಲಿ ಎಂದು ನಿಮಗಾಗಿ ಯಾವಾಗಲೂ ಪ್ರಾರ್ಥನೆ ಮಾಡುವವನಾಗಿದ್ದೇನೆ.
EPH 1:18 ದೇವರು ನಿಮ್ಮ ಮನೋನೇತ್ರಗಳನ್ನು ಬೆಳಗಿಸಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಆಗ ಮಾತ್ರವೇ ನೀವು ದೇವರ ಕರೆಯ ನಿರೀಕ್ಷೆಯನ್ನೂ, ಪರಿಶುದ್ಧರಲ್ಲಿ ಅವರಿಗಿರುವ ವಾರಸುತನದ ಮಹಿಮೆಯನ್ನೂ ನೀವು ತಿಳಿದುಕೊಳ್ಳುವಿರಿ.
EPH 1:19 ಮಾತ್ರವಲ್ಲದೆ ನಂಬುವವರಾದ ನಮಗಾಗಿರುವ ಹೋಲಿಸಲಾಗದ ದೇವರ ಮಹಾಶಕ್ತಿಯನ್ನೂ ನೀವು ತಿಳಿಯುವಂತೆ ಪ್ರಾರ್ಥನೆ ಮಾಡುವವನಾಗಿದ್ದೇನೆ.
EPH 1:20 ಈ ಮಹಾಶಕ್ತಿಯನ್ನು ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ,
EPH 1:21 ಸಕಲ ರಾಜತ್ವ, ಅಧಿಕಾರ, ಶಕ್ತಿ, ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿಯೂ ಸಹ, ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೋಕದಲ್ಲಿ ಕ್ರಿಸ್ತರನ್ನು ತಮ್ಮ ಬಲಗಡೆಯಲ್ಲಿ ಕೂರಿಸಿಕೊಂಡರು.
EPH 1:22 ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಅಧೀನಮಾಡಿ, ಅವರನ್ನು ಎಲ್ಲದರ ಮೇಲೆ ಶಿರಸ್ಸಾಗಿರಲು ಸಭೆಗೋಸ್ಕರ ನೇಮಿಸಿದ್ದಾರೆ.
EPH 1:23 ಎಲ್ಲವನ್ನು ಎಲ್ಲಾ ವಿಧದಲ್ಲಿಯೂ ತುಂಬಿಸುವ ದೇವರಿಂದ ಕ್ರಿಸ್ತನ ದೇಹವಾಗಿರುವ ಸಭೆಯು ಪರಿಪೂರ್ಣ ಉಳ್ಳದ್ದಾಗಿದೆ.
EPH 2:1 ನೀವು ನಿಮ್ಮ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಹಿಂದೊಮ್ಮೆ ಸತ್ತವರಾಗಿದ್ದೀರಿ.
EPH 2:2 ನೀವು, ಹಿಂದೆ ಇಹಲೋಕದ ಮಾರ್ಗಕ್ಕೆ ಅನುಸಾರವಾಗಿ ನಡೆದುಕೊಂಡು, ವಾಯುಮಂಡಲದ ಅಧಿಪತಿಯ ಆತ್ಮನಿಗನುಸಾರವಾಗಿದ್ದೀರಿ. ಆ ದುರಾತ್ಮವು ಈಗ ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿದೆ.
EPH 2:3 ಹಿಂದೊಮ್ಮೆ ನಾವೆಲ್ಲರೂ ಅವರೊಂದಿಗೆ ನಮ್ಮ ದೇಹದ ಆಶೆಗಳ ಪ್ರಕಾರ ಜೀವಿಸುತ್ತಿದ್ದಾಗ ಮನಸ್ಸಿನ ಹಾಗೂ ಶರೀರದ ಆಶೆಗಳನ್ನು ನೆರವೇರಿಸುತ್ತಾ ನಡೆದು, ಉಳಿದವರಂತೆ ಸ್ವಾಭಾವಿಕವಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದೆವು.
EPH 2:4 ಆದರೆ ಕರುಣೆಯಲ್ಲಿ ಐಶ್ವರ್ಯವಂತರಾದ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿದರು.
EPH 2:5 ಹೇಗೆದಂರೆ, ಅಪರಾಧಗಳಲ್ಲಿ ಸತ್ತವರಾಗಿದ್ದರೂ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದರು. ಹೀಗೆ ನೀವು ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ.
EPH 2:6 ಕ್ರಿಸ್ತ ಯೇಸುವಿನೊಂದಿಗೆ ದೇವರು ನಮ್ಮನ್ನು ಎಬ್ಬಿಸಿ ಪರಲೋಕದ ಉನ್ನತ ಸ್ಥಳಗಳಲ್ಲಿ ಕ್ರಿಸ್ತನೊಂದಿಗೇ ನಮ್ಮನ್ನು ಕೂತುಕೊಳ್ಳುವಂತೆ ಮಾಡಿದ್ದಾರೆ.
EPH 2:7 ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ.
EPH 2:8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ.
EPH 2:9 ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ.
EPH 2:10 ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.
EPH 2:11 ಆದಕಾರಣ ಸುನ್ನತಿಮಾಡಿಸಿಕೊಂಡಿದ್ದೇವೆ ಎಂದು ತಮ್ಮ ಬಗ್ಗೆ ಹೇಳಿಕೊಂಡವರು, ಹುಟ್ಟಿದಂದಿನಿಂದ ಯೆಹೂದ್ಯರಲ್ಲದವರಾದ ನಿಮಗೆ ಸುನ್ನತಿಮಾಡಿಸಿಕೊಳ್ಳದವರು ಎಂದು ಹೇಳಿದ್ದನು ನೆನಪುಮಾಡಿಕೊಳ್ಳಿ. ಈ ಸುನ್ನತಿಯು ಮನುಷ್ಯರಿಂದಾದದ್ದಷ್ಟೇ.
EPH 2:12 ಇದಲ್ಲದೆ ನೀವು ಆಗ ಕ್ರಿಸ್ತನಿಲ್ಲದವರೂ ಇಸ್ರಾಯೇಲಿನ ಪೌರತ್ವದಿಂದ ಪ್ರತ್ಯೇಕಿಸಲಾದವರೂ ಒಡಂಬಡಿಕೆಯ ವಾಗ್ದಾನಕ್ಕೆ ವಿದೇಶಿಯವರೂ ಲೋಕದಲ್ಲಿ ದೇವರೊಂದಿಗೆ ಯಾವ ಸಂಬಂಧವಿಲ್ಲದೆ ನಿರೀಕ್ಷೆಯಿಲ್ಲದವರೂ ಆಗಿದ್ದೀರೆಂದು ಜ್ಞಾಪಕಮಾಡಿಕೊಳ್ಳಿರಿ.
EPH 2:13 ಮೊದಲು ಕ್ರಿಸ್ತ ಯೇಸುವಿಗೆ ದೂರವಾಗಿದ್ದ ನೀವು ಈಗ ಕ್ರಿಸ್ತನ ರಕ್ತದ ಮೂಲಕ ಹತ್ತಿರವಾಗಿದ್ದೀರಿ.
EPH 2:14 ಕ್ರಿಸ್ತ ಯೇಸು ತಾವೇ ನಮ್ಮ ಸಮಾಧಾನವಾಗಿದ್ದು, ಎರಡು ಗುಂಪಿನವರನ್ನು ಒಂದು ಮಾಡಿ, ಅಗಲಿಸಿದ ವೈರತ್ವದ ಅಡ್ಡಗೋಡೆಯನ್ನು ತಮ್ಮ ಶರೀರದ ಮೂಲಕ ಕೆಡವಿಹಾಕಿದರು.
EPH 2:15 ಹೀಗೆ ಕ್ರಿಸ್ತ ಯೇಸು ತಮ್ಮ ದೇಹವನ್ನು ಶಿಲುಬೆಯಲ್ಲಿ ಸಮರ್ಪಿಸಿದ್ದರಿಂದ ನಿಯಮದ ಆಜ್ಞೆಗಳುಳ್ಳ ಶಾಸನಗಳನ್ನು ರದ್ದುಗೊಳಿಸಿದರು. ಈ ರೀತಿಯಾಗಿ ಇವೆರಡೂ ಗುಂಪಿನವರಿಂದ ಒಬ್ಬ ನೂತನ ಮಾನವತ್ವವನ್ನು ತಮ್ಮಲ್ಲಿ ಸೃಷ್ಟಿಸಿ ಸಮಾಧಾನವನ್ನು ಉಂಟುಮಾಡಿದರು.
EPH 2:16 ಶಿಲುಬೆಯ ಮರಣದ ಮೂಲಕ ಇವೆರಡೂ ಗುಂಪಿನವರಿಂದ ಒಂದೇ ದೇಹದವರನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿ, ಇದ್ದ ವೈರತ್ವವನ್ನು ಇಲ್ಲದಂತೆ ಮಾಡಿದರು.
EPH 2:17 ಇದಲ್ಲದೆ ಕ್ರಿಸ್ತ ಯೇಸುವು ಬಂದು ದೂರವಾಗಿದ್ದ ನಿಮಗೂ ಸಮೀಪವಾಗಿದ್ದ ನಮಗೂ ಸಮಾಧಾನವನ್ನು ಸಾರಿದರು.
EPH 2:18 ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ನಾವೂ ನೀವೂ ಪವಿತ್ರಾತ್ಮ ದೇವರಿಂದ ತಂದೆಯ ಬಳಿಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು.
EPH 2:19 ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶದವರೂ ಆಗಿರದೆ ದೇವಜನರೊಂದಿಗೆ ಜೊತೆ ನಾಗರಿಕರೂ ದೇವರ ಮನೆಯವರೂ ಆಗಿದ್ದೀರಿ.
EPH 2:20 ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ.
EPH 2:21 ಕ್ರಿಸ್ತನಲ್ಲಿ ಕಟ್ಟಡವೆಲ್ಲವೂ ಒಂದಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.
EPH 2:22 ನೀವೂ ಸಹ ಆತ್ಮನ ಮೂಲಕ ಕ್ರಿಸ್ತನಲ್ಲಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ನಿರ್ಮಿತರಾಗುತ್ತಿದ್ದೀರಿ.
EPH 3:1 ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:
EPH 3:2 ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
EPH 3:3 ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.
EPH 3:4 ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.
EPH 3:5 ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ.
EPH 3:6 ಸುವಾರ್ತೆಯ ಮೂಲಕ ಯೆಹೂದ್ಯರಲ್ಲದವರೂ ಸಹ ಇಸ್ರಾಯೇಲರೊಂದಿಗೆ ವಾರಸುದಾರರೂ ಒಂದೇ ದೇಹದ ಅವಯವಗಳೂ ಕ್ರಿಸ್ತ ಯೇಸುವಿನಲ್ಲಿ ದೇವರ ವಾಗ್ದಾನದ ಸಹಪಾಲುಗಾರರೂ ಆಗಿರಬೇಕೆಂಬುದೇ ಈ ರಹಸ್ಯ.
EPH 3:7 ದೇವರ ಶಕ್ತಿಯ ಕ್ರಿಯೆಯಿಂದ ನನಗೆ ಕೊಡಲಾದ ಅವರ ದೇವ ಕೃಪಾದಾನಕ್ಕೆ ಅನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
EPH 3:8 ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ
EPH 3:9 ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.
EPH 3:10 ಬಹು ಪ್ರಕಾರದ ದೇವರ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶ.
EPH 3:11 ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು.
EPH 3:12 ಕ್ರಿಸ್ತನಲ್ಲಿಯೂ ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದರ ಮೂಲಕವೂ ನಾವು ಸ್ವಾತಂತ್ರ್ಯದಿಂದಲೂ ಭರವಸೆಯಿಂದಲೂ ದೇವರನ್ನು ಸಮೀಪಿಸಲು ಈಗ ಸಾಧ್ಯ.
EPH 3:13 ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
EPH 3:14 ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ:
EPH 3:16 ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.
EPH 3:17 ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು
EPH 3:18 ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ.
EPH 3:19 ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.
EPH 3:20 ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ
EPH 3:21 ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್.
EPH 4:1 ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.
EPH 4:2 ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ.
EPH 4:3 ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ.
EPH 4:4 ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ,
EPH 4:5 ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ,
EPH 4:6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬರೇ; ಅವರೇ ಎಲ್ಲರ ಮೇಲಿರುವರೂ ಎಲ್ಲರ ಮೂಲಕ ಕಾರ್ಯನಡಿಸುವವರೂ ಎಲ್ಲರಲ್ಲಿ ವಾಸಿಸುವವರೂ ಆಗಿದ್ದಾರೆ.
EPH 4:7 ನಮ್ಮಲ್ಲಿ ಪ್ರತಿಯೊಬ್ಬನಿಗೂ ಕ್ರಿಸ್ತ ಯೇಸುವು ನೀಡಿದ ಅಳತೆಗೆ ಅನುಸಾರವಾಗಿ ವರವನ್ನು ಕೊಡಲಾಗಿದೆ.
EPH 4:8 ಆದ್ದರಿಂದ ಪವಿತ್ರ ವೇದದಲ್ಲಿ ಹೀಗೆ ಹೇಳಲಾಗಿದೆ: “ಅವರು ಉನ್ನತಸ್ಥಾನಕ್ಕೆ ಏರಿಹೋದಾಗ, ಸೆರೆಯಾಳಾಗಿದ್ದ ಅನೇಕರನ್ನು ಕೊಂಡೊಯ್ದು ತಮ್ಮ ಜನರಿಗೆ ವರದಾನಗಳನ್ನು ಕೊಟ್ಟರು!”
EPH 4:9 “ಅವರು ಏರಿ ಹೋದರೆಂದು,” ಹೇಳಿದ್ದರ ಅರ್ಥವೇನು? ಭೂಮಿಯ ಭೂಗರ್ಭಕ್ಕೂ ಇಳಿದಿದ್ದರು ಎಂದೂ ಹೇಳಿದ ಹಾಗಾಯಿತಲ್ಲವೇ?
EPH 4:10 ಇಳಿದು ಬಂದ ಅವರೇ ಮೇಲಣ ಎಲ್ಲಾ ಆಕಾಶಗಳಿಗಿಂತ ಉನ್ನತವಾಗಿ ಏರಿಹೋಗಿ, ಇಡೀ ವಿಶ್ವವನ್ನೇ ತುಂಬಿಕೊಳ್ಳುವುದಕ್ಕಾಗಿ ಮೇಲೆ ಏರಿ ಹೋಗಿದ್ದಾರೆ.
EPH 4:11 ಕ್ರಿಸ್ತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಕೆಲವರನ್ನು ಉಪದೇಶಿಗಳನ್ನಾಗಿಯೂ ಸಭೆಗೆ ಕೊಟ್ಟರು.
EPH 4:12 ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ದೇವಜನರನ್ನು ಸೇವಾ ಕೆಲಸಕ್ಕಾಗಿ ಪರಿಣಿತರನ್ನಾಗಿ ಮಾಡುವುದಕ್ಕಾಗಿಯೂ ಕ್ರಿಸ್ತನು ಅವರನ್ನು ಕೊಟ್ಟ ಉದ್ದೇಶವಾಗಿತ್ತು.
EPH 4:13 ನಾವೆಲ್ಲರೂ ಕ್ರಿಸ್ತನ ಪರಿಪೂರ್ಣತೆಯ ಬೆಳವಣಿಗೆಯಲ್ಲಿ ವಿಶ್ವಾಸದಲ್ಲಿಯೂ ದೇವಪುತ್ರನ ತಿಳುವಳಿಕೆಯಲ್ಲಿ ಒಂದು ಮನಸ್ಸುಳ್ಳವರಾಗಿ ಪರಿಪಕ್ವತೆಯನ್ನು ಹೊಂದುವುದೇ ಆ ಉದ್ದೇಶವಾಗಿತ್ತು.
EPH 4:14 ಆಗ, ನಾವು ಚಿಕ್ಕಮಕ್ಕಳಂತೆ ಇರುವುದಿಲ್ಲ: ಮನುಷ್ಯರ ವಿವಿಧ ಬೋಧನೆಗಳಿಂದ ಗಾಳಿಯಿಂದ ತೂರಾಡಿಕೊಳ್ಳುವಂತಾಗುವುದಿಲ್ಲ. ಮನುಷ್ಯರ ಕುಯುಕ್ತಿಗೆ, ತಂತ್ರಕ್ಕೆ, ಒಳಸಂಚಿಗೆ ಒಳಗಾಗುವುದಿಲ್ಲ. ಅವರ ಪ್ರತಿಯೊಂದು ಬೋಧನೆಯ ಗಾಳಿಯಿಂದಲೂ ತೂರಾಡಿಕೊಂಡು ಅತ್ತಿತ್ತ ಅಲೆದಾಡುವ ಚಿಕ್ಕಮಕ್ಕಳಂತೆ ಇರಬಾರದು.
EPH 4:15 ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ, ನಾವು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ದೇಹದ ಪರಿಪಕ್ವತೆಯೆಡೆಗೆ ಅವರ ಶಿರಸತ್ವದಲ್ಲಿ ಬೆಳೆಯೋಣ.
EPH 4:16 ಹೀಗೆ ದೇಹವೆಲ್ಲಾ ಕ್ರಿಸ್ತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಣೆಹೊಂದಿ, ಪ್ರತಿ ಅಂಗವೂ ತನ್ನ ಕೆಲಸವನ್ನು ಸೂಕ್ತವಾಗಿ ಮಾಡುವಂತೆ ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿ ಹೊಂದುತ್ತದೆ.
EPH 4:17 ಆದ್ದರಿಂದ, ಯೆಹೂದ್ಯರಲ್ಲದವರು ವ್ಯರ್ಥ ಆಲೋಚನೆಯುಳ್ಳವರಾಗಿ ಬಾಳುವ ರೀತಿಯಲ್ಲಿ ನೀವು ಇನ್ನು ಮೇಲೆ ಬಾಳದಂತೆ, ಕರ್ತನಲ್ಲಿ ನಾನು ನಿಮಗೆ ಸಾಕ್ಷಿಕೊಟ್ಟು ಹೇಳುತ್ತೇನೆ.
EPH 4:18 ಅವರು ತಮ್ಮ ಹೃದಯ ಕಠಿಣತ್ವದ ಅಜ್ಞಾನದಿಂದ ತಮ್ಮ ಕತ್ತಲು ಕವಿದ ತಿಳುವಳಿಕೆಯಲ್ಲಿ, ದೇವರ ಜೀವದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರಾಗಿದ್ದಾರೆ.
EPH 4:19 ಅವರು ಸರ್ವ ಸೂಕ್ಷ್ಮತೆಯನ್ನು ಕಳೆದುಕೊಂಡು, ತಮ್ಮನ್ನು ಕಾಮುಕತನಕ್ಕೆ ಒಪ್ಪಿಸಿಕೊಟ್ಟು, ಎಲ್ಲಾ ಅಶುದ್ಧತ್ವವನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
EPH 4:20 ನೀವಾದರೋ ಕ್ರಿಸ್ತನನ್ನು ಆ ರೀತಿಯಾಗಿ ಅರಿತುಕೊಳ್ಳಲಿಲ್ಲ.
EPH 4:21 ನೀವು ಕ್ರಿಸ್ತನ ಬಗ್ಗೆ ಕೇಳಿ ಬೋಧನೆಯನ್ನು ಪಡೆದಾಗ, ಅದು ಯೇಸುವಿನಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತು.
EPH 4:22 ನಿಮಗೆ ಉಪದೇಶಿಸಿದಂತೆ, ನೀವು ನಿಮ್ಮ ಹಿಂದಿನ ನಡತೆಯ ಪ್ರಕಾರ ಮೋಸಕರವಾದ ಆಶೆಗಳ ಅನುಸಾರವಾಗಿರುವ ಹಳೆಯ ಸ್ವಭಾವವನ್ನು ತೆಗೆದುಹಾಕಬೇಕು.
EPH 4:23 ಹೀಗೆ ನೀವು ನಿಮ್ಮ ಮನೋಭಾವನೆಯನ್ನು ನವೀಕರಿಸಿಕೊಂಡು;
EPH 4:24 ಸತ್ಯವಾದ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ದೇವರ ಹೋಲಿಕೆಯ ಪ್ರಕಾರವಾಗಿರಲು ಸೃಷ್ಟಿಸಲಾದ ಹೊಸ ಸ್ವಭಾವವನ್ನು ಧರಿಸಿಕೊಳ್ಳಿರಿ.
EPH 4:25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ. ಏಕೆಂದರೆ ನಾವೆಲ್ಲರೂ ಒಂದೇ ದೇಹದ ಅಂಗಗಳು.
EPH 4:26 “ಕೋಪ ಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪವು ಇಳಿಯಲಿ.
EPH 4:27 ಹೀಗೆ ನೀವು ಸೈತಾನನಿಗೆ ಅವಕಾಶಕೊಡಬೇಡಿರಿ.
EPH 4:28 ಕಳ್ಳತನ ಮಾಡುವವನು ಇನ್ನು ಮೇಲೆ ಕಳ್ಳತನ ಮಾಡದೆ, ಕೈಯಿಂದ ಯಾವುದಾದರೊಂದು ಒಳ್ಳೆಯ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವನಿಗೆ ಕೊಡುವುದಕ್ಕೆ ಅವನಿಂದಾಗುವುದು.
EPH 4:29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟಮಾತೂ ಹೊರಡದಿರಲಿ. ಕೇಳುವವರಿಗೆ ಆತ್ಮಿಕ ಹಿತವನ್ನುಂಟು ಮಾಡಿ, ಇತರರಿಗೆ ಅವಶ್ಯವಿರುವ ಮಾತುಗಳನ್ನು ಮಾತ್ರ ಆಡಿರಿ.
EPH 4:30 ದೇವರ ಪವಿತ್ರಾತ್ಮರನ್ನು ದುಃಖ ಪಡಿಸಬೇಡಿರಿ. ಆ ಆತ್ಮನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.
EPH 4:31 ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.
EPH 4:32 ನೀವು ದಯೆಯುಳ್ಳವರೂ ಮೃದು ಹೃದಯುಳ್ಳವರೂ ಆಗಿದ್ದು, ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರೊನ್ನಬ್ಬರನ್ನು ಕ್ಷಮಿಸಿರಿ.
EPH 5:1 ಆದ್ದರಿಂದ ನೀವು ದೇವರ ಪ್ರಿಯರಾದ ಮಕ್ಕಳಂತೆ ದೇವರ ಮಾದರಿಯನ್ನು ಅನುಸರಿಸಿ ಬಾಳಿರಿ.
EPH 5:2 ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.
EPH 5:3 ಆದರೆ ನಿಮ್ಮೊಳಗೆ ಅನೈತಿಕತೆಯಾಗಲಿ, ಯಾವ ಅಶುದ್ಧತ್ವವಾಗಲಿ, ಇಲ್ಲವೆ ಲೋಭವಾಗಲಿ ಇರಲೇಬಾರದು. ಇವು ದೇವರ ಪರಿಶುದ್ಧರಿಗೆ ಯೋಗ್ಯವಲ್ಲ.
EPH 5:4 ಅಶ್ಲೀಲತೆ, ಬುದ್ಧಿಹೀನ ಮಾತು, ಅಸಭ್ಯ ಹರಟೆ ಇವು ಬೇಡ, ಇವು ಅಯುಕ್ತವಾಗಿವೆ, ಪ್ರತಿಯಾಗಿ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ.
EPH 5:5 ಏಕೆಂದರೆ ಯಾವ ಜಾರನಾಗಲಿ, ಅಶುದ್ಧನಾಗಲಿ, ದೇವರಲ್ಲದವುಗಳನ್ನು ಪೂಜಿಸುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಹಕ್ಕುಬಾಧ್ಯತೆಯನ್ನು ಹೊಂದುವುದಿಲ್ಲವೆಂಬುದು ನಿಮಗೆ ಮನದಟ್ಟಾಗಿರಲಿ.
EPH 5:6 ಪ್ರಯೋಜನವಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ವಂಚಿಸದಿರಲಿ. ಏಕೆಂದರೆ ಇಂಥವುಗಳ ದೆಸೆಯಿಂದ ದೇವರ ಕೋಪಾಗ್ನಿಯು ಅವರಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
EPH 5:7 ಆದ್ದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
EPH 5:8 ನೀವು ಹಿಂದೊಮ್ಮೆ ಕತ್ತಲೆಯಾಗಿದ್ದಿರಿ. ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ಬಾಳಿರಿ.
EPH 5:9 ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ.
EPH 5:10 ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿರಿ.
EPH 5:11 ನಿಷ್ಪ್ರಯೋಜಕವಾದ ಕತ್ತಲೆಯ ಕಾರ್ಯಗಳೊಂದಿಗೆ ಪಾಲುಗಾರರಾಗಿರದೆ ಅವುಗಳನ್ನು ಬೆಳಕಿಗೆ ತನ್ನಿರಿ.
EPH 5:12 ಆ ಅವಿಧೇಯರು ಗುಟ್ಟಾಗಿ ಮಾಡುವ ಕೃತ್ಯಗಳನ್ನು ಹೇಳುವುದಕ್ಕೂ ಅವಮಾನಕರವಾಗಿವೆ.
EPH 5:13 ಆದರೆ, ಬಹಿರಂಗವಾದವುಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ. ಎಲ್ಲವನ್ನೂ ಪ್ರಕಾಶಪಡಿಸುವಂಥದ್ದು ಬೆಳಕೇ.
EPH 5:14 ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
EPH 5:15 ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ.
EPH 5:16 ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ.
EPH 5:17 ಆದಕಾರಣ ಬುದ್ಧಿಹೀನರಾಗಿರದೆ ಕರ್ತನ ಚಿತ್ತವೇನೆಂಬುದನ್ನು ತಿಳಿದವರಾಗಿರಿ.
EPH 5:18 ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದು ದುಷ್ಟತನಕ್ಕೆ ಎಡೆಮಾಡುತ್ತದೆ. ಆದರೆ ಪವಿತ್ರಾತ್ಮರಿಂದ ತುಂಬಿದವರಾಗಿದ್ದು,
EPH 5:19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮನಿಂದಾದ ಹಾಡುಗಳಿಂದಲೂ ಪರಸ್ಪರ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಾಂತರಾಳದಿಂದ ಕರ್ತನಿಗೆ ಹಾಡಿ ಹರಸಿರಿ.
EPH 5:20 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ತಂದೆಯಾದ ದೇವರಿಗೆ, ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ಕೃತಜ್ಞತೆಯನ್ನು ಸಲ್ಲಿಸಿರಿ.
EPH 5:21 ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.
EPH 5:22 ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
EPH 5:23 ಏಕೆಂದರೆ, ಕ್ರಿಸ್ತ ಯೇಸು ಸಭೆಗೆ ಶಿರಸ್ಸಾಗಿರುವ ಪ್ರಕಾರ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಕ್ರಿಸ್ತ ಯೇಸು ತಮ್ಮ ಸಭೆ ಎಂಬ ದೇಹಕ್ಕೆ ರಕ್ಷಕರಾಗಿದ್ದಾರೆ.
EPH 5:24 ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
EPH 5:25 ಗಂಡಂದಿರೇ, ಕ್ರಿಸ್ತ ಯೇಸು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಂತೆಯೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.
EPH 5:26 ಕ್ರಿಸ್ತ ಯೇಸು ತಮ್ಮ ಸಭೆಯನ್ನು ವಾಕ್ಯದ ನೀರಿನ ಸ್ನಾನದಿಂದ ಪವಿತ್ರಗೊಳಿಸಿ, ಶುದ್ಧಮಾಡಿ,
EPH 5:27 ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು.
EPH 5:28 ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.
EPH 5:29 ಏಕೆಂದರೆ, ಯಾರೂ ಸ್ವಂತ ಶರೀರವನ್ನು ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ತಮ್ಮ ಶರೀರವನ್ನು ಪೋಷಿಸಿ ಸಂರಕ್ಷಿಸುತ್ತಾರೆ. ಅದೇ ಪ್ರಕಾರ ಕರ್ತ ಯೇಸು ಸಭೆಯನ್ನು ಪೋಷಿಸಿ, ಸಂರಕ್ಷಿಸುವವರಾಗಿದ್ದಾರೆ.
EPH 5:30 ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.
EPH 5:31 “ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.”
EPH 5:32 ಈ ರಹಸ್ಯವು ಮಹತ್ತಾದದ್ದು. ಆದರೆ ನಾನು ಕ್ರಿಸ್ತನ ಹಾಗೂ ಸಭೆಯ ವಿಷಯವಾಗಿ ಮಾತನಾಡುತ್ತಿದ್ದೇನೆ.
EPH 5:33 ಆದರೂ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಪ್ರೀತಿಸುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.
EPH 6:1 ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಇದು ಸೂಕ್ತವಾದದ್ದು.
EPH 6:2 “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು,” ಎಂಬುದು ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯಾಗಿದೆ.
EPH 6:3 “ಸನ್ಮಾನಿಸಿದರೆ ನಿನಗೆ ಶುಭವಾಗುವುದು. ನೀನು ಭೂಮಿಯ ಮೇಲೆ ಬಹುಕಾಲ ಬದುಕುವೆ.”
EPH 6:4 ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸಬೇಡಿರಿ; ಕರ್ತನ ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಮಕ್ಕಳನ್ನು ಬೆಳೆಸಿರಿ.
EPH 6:5 ಸೇವಕರೇ, ಭಯಭಕ್ತಿಯಿಂದಲೂ ಸರಳ ಹೃದಯದಿಂದ ಕ್ರಿಸ್ತನಿಗೆ ವಿಧೇಯರಾಗುವ ಪ್ರಕಾರ ಲೌಕಿಕವಾಗಿ ನಿಮ್ಮ ಯಜಮಾನನಾಗಿರುವವರಿಗೆ ವಿಧೇಯರಾಗಿರಿ.
EPH 6:6 ಯಜಮಾನರನ್ನು ಮೆಚ್ಚಿಸುವವರಂತೆ ಕಣ್ಣಿಗೆ ಕಾಣುವಾಗ ಮಾತ್ರ ಅವರಿಗೆ ಸೇವೆಮಾಡದೆ, ಕ್ರಿಸ್ತನ ದಾಸರಿಗೆ ತಕ್ಕಂತೆ ಮನಃಪೂರ್ವಕವಾಗಿ ದೇವರ ಚಿತ್ತವನ್ನು ನೆರವೇರಿಸಿರಿ.
EPH 6:7 ನೀವು ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರವೇ ಸೇವೆ ಮಾಡುವಂತೆ, ಪೂರ್ಣಮನಸ್ಸಿನಿಂದ ಸೇವೆಮಾಡಿರಿ.
EPH 6:8 ದಾಸನಾಗಲಿ, ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತ ಯೇಸುವಿನಿಂದ ಹೊಂದುವನೆಂದು ನೀವು ತಿಳಿದಿದ್ದೀರಿ.
EPH 6:9 ಯಜಮಾನರೇ, ನೀವು ಸಹ ನಿಮ್ಮ ಸೇವಕರೊಡನೆ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೆ ಯಜಮಾನನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿರಿ.
EPH 6:10 ಕೊನೆಯದಾಗಿ, ಕರ್ತನಲ್ಲಿಯೂ ಅವರ ಪರಾಕ್ರಮ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
EPH 6:11 ನೀವು ಪಿಶಾಚನ ತಂತ್ರಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
EPH 6:12 ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ.
EPH 6:13 ಆದುದರಿಂದ ವೈರಿಯು ದಾಳಿಮಾಡುವ ದಿನವು ಬರುವಾಗ ನೀವು ಅವನನ್ನು ಎದುರಿಸಿ ನಿಲ್ಲುವಂತೆಯು, ಎಲ್ಲವನ್ನು ಜಯಿಸಿ ಮುಗಿಸಿದ ಮೇಲೆ ನಿಲ್ಲಲು ಶಕ್ತರಾಗುವಂತೆ, ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
EPH 6:14 ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ.
EPH 6:15 ಸಮಾಧಾನದ ಸುವಾರ್ತೆಯ ಸಿದ್ಧತೆಯೆಂಬ ಪಾದರಕ್ಷೆಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
EPH 6:16 ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
EPH 6:17 ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.
EPH 6:18 ನೀವು ಪವಿತ್ರಾತ್ಮ ದೇವರಲ್ಲಿ ಎಲ್ಲಾ ಸಮಯಗಳಲ್ಲಿಯೂ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಕರ್ತನ ಜನರೆಲ್ಲರಿಗಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರವಾಗಿರಿ.
EPH 6:19 ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.
EPH 6:20 ಏಕೆಂದರೆ ಆ ಸುವಾರ್ತೆಗಾಗಿಯೇ ಸೆರೆಯಲ್ಲಿರುವ ರಾಯಭಾರಿಯಾದ ನಾನು ಅದನ್ನು ಸಾರುವುದರಲ್ಲಿ ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
EPH 6:21 ನನ್ನ ವಿಷಯವಾಗಿಯೂ ನಾನು ಮಾಡುತ್ತಿರುವುದರ ವಿಷಯವಾಗಿಯೂ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತನಾದ ಸೇವಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸುವನು.
EPH 6:22 ನೀವು ನಮ್ಮ ಸಮಾಚಾರವನ್ನು ತಿಳಿದುಕೊಳ್ಳುವಂತೆಯೂ ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
EPH 6:23 ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ಶಾಂತಿಯೂ ಮತ್ತು ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರಿಗೆ ಇರಲಿ.
EPH 6:24 ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಳಿದು ಹೋಗದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ಕೃಪೆಯಿರಲಿ.
PHI 1:1 ಕ್ರಿಸ್ತ ಯೇಸುವಿನ ದಾಸರಾದ ಪೌಲ ತಿಮೊಥೆಯರು, ಕ್ರಿಸ್ತ ಯೇಸುವಿನಲ್ಲಿರುವ ಫಿಲಿಪ್ಪಿಯ ದೇವರ ಪರಿಶುದ್ಧರೆಲ್ಲರಿಗೂ, ಅವರೊಂದಿಗಿರುವ ಮೇಲ್ವಿಚಾರಕರಿಗೂ ಸಭಾಸೇವಕರಿಗೂ ಬರೆಯುವ ಪತ್ರ:
PHI 1:2 ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
PHI 1:3 ನಾನು ನಿಮ್ಮನ್ನು ನೆನೆಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
PHI 1:4 ನಾನು ನಿಮ್ಮೆಲ್ಲರಿಗೋಸ್ಕರ ಯಾವಾಗಲೂ ಮಾಡುವ ನನ್ನ ಪ್ರತಿಯೊಂದು ಪ್ರಾರ್ಥನೆಯಲ್ಲಿ ಆನಂದದಿಂದಲೇ ಬೇಡಿಕೊಳ್ಳುವವನಾಗಿದ್ದೇನೆ.
PHI 1:5 ಏಕೆಂದರೆ, ನೀವು ಮೊದಲನೆಯ ದಿನದಿಂದ ಇಂದಿನವರೆಗೂ ಸುವಾರ್ತೆಯಲ್ಲಿ ಸಹಭಾಗಿಗಳಾಗಿದ್ದೀರಿ.
PHI 1:6 ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ.
PHI 1:7 ನಿಮ್ಮೆಲ್ಲರ ವಿಷಯದಲ್ಲಿ ಹೀಗೆ ಯೋಚಿಸುವುದು ನನಗೆ ಸೂಕ್ತವಾಗಿದೆ. ಏಕೆಂದರೆ ನಾನು ನಿಮ್ಮನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ. ನಾನು ಬೇಡಿಗಳಿಂದ ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಸಮರ್ಥಿಸಿ ದೃಢಪಡಿಸುವಾಗಲೂ ನೀವೆಲ್ಲರು ನನ್ನೊಂದಿಗಿರುವ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ.
PHI 1:8 ಕ್ರಿಸ್ತ ಯೇಸುವಿನ ವಾತ್ಸಲ್ಯದಿಂದ ನಿಮ್ಮೆಲ್ಲರಿಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ.
PHI 1:9 ನಿಮ್ಮ ಪ್ರೀತಿಯು ಹೆಚ್ಚುತ್ತಾ ಜ್ಞಾನದಲ್ಲಿಯೂ ಒಳನೋಟದಲ್ಲಿಯೂ ಬಹು ಹೆಚ್ಚಾಗಿ ಸಮೃದ್ಧಿಯಾಗಲಿ.
PHI 1:10 ಆಗ, ಅತ್ಯುತ್ತಮ ಕಾರ್ಯಗಳನ್ನು ನೀವು ವಿವೇಚಿಸಿಕೊಳ್ಳುವಿರಿ. ಕ್ರಿಸ್ತನ ಪುನರಾಗಮನ ದಿನದವರೆಗೆ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕೆಂತಲೂ
PHI 1:11 ದೇವರ ಮಹಿಮೆ ಹಾಗೂ ಸ್ತೋತ್ರಕ್ಕಾಗಿ ಕ್ರಿಸ್ತ ಯೇಸುವಿನ ಮೂಲಕ ಬರುವ ನೀತಿಯ ಫಲಗಳಿಂದ ತುಂಬಿದವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
PHI 1:12 ಪ್ರಿಯರೇ, ನನಗೆ ಸಂಭವಿಸಿದ ಸಂಕಟಗಳು ಸುವಾರ್ತೆಯ ಪ್ರಗತಿಗಾಗಿಯೇ ಅನುಕೂಲವಾಯಿತು ಎಂಬುದನ್ನು ನೀವು ತಿಳಿಯಬೇಕೆಂದು ನಾನು ಅಪೇಕ್ಷಿಸುತ್ತೇನೆ.
PHI 1:13 ಹೇಗೆಂದರೆ, ನಾನು ಸೆರೆಯಲ್ಲಿರುವುದು ಕ್ರಿಸ್ತನ ನಿಮಿತ್ತವೇ ಎಂದು ಇಡೀ ರಾಜಭವನದಲ್ಲಿಯೂ ಮಿಕ್ಕಾದವರೆಲ್ಲರಿಗೂ ಚೆನ್ನಾಗಿ ತಿಳಿದಿದೆ.
PHI 1:14 ನಾನು ಸೆರೆಯಲ್ಲಿರುವುದರಿಂದಲೇ ಕರ್ತ ದೇವರಲ್ಲಿರುವ ಅನೇಕ ಸಹೋದರರು ಭಯವಿಲ್ಲದೆಯೂ ಭರವಸೆಯಿಂದಲೂ ಸುವಾರ್ತೆಯ ವಾಕ್ಯವನ್ನು ಮಾತನಾಡುವುದಕ್ಕೆ ಪ್ರೋತ್ಸಾಹ ಹೊಂದಿದ್ದಾರೆ.
PHI 1:15 ಕೆಲವರು ಅಸೂಯೆಯಿಂದಲೂ ಸ್ಪರ್ಧೆಯ ಮನೋಭಾವನೆಯಿಂದಲೂ ಕ್ರಿಸ್ತನನ್ನು ಸಾರುವುದು ನಿಜ. ಆದರೆ ಇತರರು ಒಳ್ಳೆಯ ಮನೋಭಾವದಿಂದ ಕ್ರಿಸ್ತ ಯೇಸುವನ್ನು ಸಾರುತ್ತಿದ್ದಾರೆ.
PHI 1:16 ಇವರಾದರೋ, ನಾನು ಸುವಾರ್ತೆಗಾಗಿ ನೇಮಕವಾಗಿದ್ದೇವೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ.
PHI 1:17 ಅವರಾದರೋ, ನಾನು ಬೇಡಿಗಳಿಂದ ಸೆರೆಮನೆಯಲ್ಲಿರುವಾಗ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧ ಪಡಿಸದೆ ಪ್ರತಿಸ್ಪರ್ಧೆಗಾಗಿ ಸಾರುತ್ತಾರೆ.
PHI 1:18 ಹೇಗಾದರೇನು? ಕಪಟದಿಂದಾಗಲಿ, ಸತ್ಯದಿಂದಾಗಲಿ ಯಾವ ರೀತಿಯಿಂದಾದರೂ ಕ್ರಿಸ್ತನನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. ಹೌದು ಮುಂದೆಯೂ ಸಂತೋಷಿಸುವೆನು.
PHI 1:19 ನಿಮ್ಮ ಪ್ರಾರ್ಥನೆಯಿಂದಲೂ ಕ್ರಿಸ್ತ ಯೇಸು ಕೊಡುವ ಪವಿತ್ರಾತ್ಮರ ಸಹಾಯದಿಂದ ನನಗೆ ಸಂಭವಿಸಿದವುಗಳು ನನ್ನ ಬಿಡುಗಡೆಗಾಗಿಯೇ ಎಂದು ನಾನು ಬಲ್ಲೆನು.
PHI 1:20 ಹೇಗೆಂದರೆ, ನಾನು ಯಾವ ವಿಷಯದಲ್ಲೂ ನಾಚಿಕೆಪಡದೆ ಎಂದಿನಂತೆ ಈಗಲೂ ಪೂರ್ಣ ಧೈರ್ಯದಿಂದಿರುವಂತೆಯೇ ಬದುಕಿದರೂ ಸತ್ತರೂ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂಬುದೇ ನನ್ನ ಬಯಕೆಯೂ ನಿರೀಕ್ಷೆಯೂ ಆಗಿದೆ.
PHI 1:21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ,
PHI 1:22 ಶರೀರದಲ್ಲಿಯೇ ಬದುಕುವುದು ನನಗೆ ಫಲದಾಯಕವಾದ ಪ್ರಯಾಸವಾಗಿದ್ದರೆ, ನಾನು ಯಾವುದನ್ನು ಆರಿಸಿಕೊಳ್ಳಬೇಕೋ ನನಗೆ ತಿಳಿಯದು.
PHI 1:23 ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ. ಇಲ್ಲಿಂದ ಹೊರಟು ಕ್ರಿಸ್ತನೊಡನೆ ಇರಬೇಕೆಂಬ ಆಶೆಯಿದೆ. ಅದು ಬಹು ಉತ್ತಮವಾಗಿರುವುದು.
PHI 1:24 ಆದರೂ ನಾನು ಶರೀರದಲ್ಲಿಯೇ ಉಳಿದಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.
PHI 1:25 ನಿಮಗೆ ನಂಬಿಕೆಯಲ್ಲಿ ಅಭಿವೃದ್ಧಿಯೂ ಸಂತೋಷವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರೊಡನೆ ಇರುವೆನೆಂದು ನಿಶ್ಚಯವಾಗಿ ತಿಳಿದಿದ್ದೇನೆ.
PHI 1:26 ಹೀಗೆ ನಾನು ಪುನಃ ನಿಮ್ಮ ಬಳಿಗೆ ಬರುವುದರಿಂದ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಸಂತೋಷವು ನನ್ನ ನಿಮಿತ್ತವಾಗಿ ಅತ್ಯಧಿಕವಾಗಿರುವುದು.
PHI 1:27 ಏನೇ ಸಂಭವಿಸಿದರೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿ, ದೂರದಲ್ಲಿದ್ದು ನಿಮ್ಮ ವಿಷಯವಾಗಿ ಕೇಳಿದರೂ ಸರಿ, ನೀವು ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗಾಗಿ ಒಂದೇ ಮನಸ್ಸಿನಿಂದ ಒಟ್ಟಿಗೆ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.
PHI 1:28 ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಿಯೂ ಅಂಜದೆ ಧೈರ್ಯದಿಂದಿರಿ. ನೀವು ಧೈರ್ಯದಿಂದಿರುವುದು, ಅವರ ವಿನಾಶಕ್ಕೂ, ನಿಮ್ಮ ರಕ್ಷಣೆಗೂ ದೇವರಿಂದಾದ ಸೂಚನೆಯಾಗಿದೆ.
PHI 1:29 ನೀವು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದು ಮಾತ್ರವಲ್ಲ, ಅವರಿಗೋಸ್ಕರ ಸಂಕಷ್ಟಗಳನ್ನು ಅನುಭವಿಸುವುದೂ ನಿಮಗೆ ದಾನವಾಗಿ ಕೊಡಲಾಗಿದೆ.
PHI 1:30 ನೀವು ನನ್ನಲ್ಲಿ ಕಂಡು, ಈಗ ನನ್ನಲ್ಲಿರುವುದೆಂದು ಕೇಳುತ್ತಿರುವ ಅದೇ ಹೋರಾಟದ ಅನುಭವವೇ ನಿಮಗೂ ಇದೆ.
PHI 2:1 ನೀವು ಕ್ರಿಸ್ತನೊಂದಿಗೆ ಐಕ್ಯವಾಗಿರುವುದರಿಂದ ಉತ್ತೇಜನ, ಅವರ ಪ್ರೀತಿಯಿಂದ ಸಂತೈಸುವಿಕೆ, ಆತ್ಮನಲ್ಲಿ ಅನ್ಯೋನ್ಯತೆ, ಕನಿಕರದ ವಾತ್ಸಲ್ಯಗಳು ಇರುವುದಾದರೆ,
PHI 2:2 ನೀವು ಒಂದೇ ಮನಸ್ಸು, ಒಂದೇ ಪ್ರೀತಿ, ಆತ್ಮ, ಹಾಗೂ ಒಂದೇ ಗುರಿಯುಳ್ಳವರಾಗಿ, ನನ್ನ ಸಂತೋಷವನ್ನು ಪರಿಪೂರ್ಣಗೊಳಿಸಿರಿ.
PHI 2:3 ಸ್ವಾರ್ಥ ಉದ್ದೇಶದಿಂದಾಗಲಿ, ವ್ಯರ್ಥ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನತ್ವದಿಂದ ಮತ್ತೊಬ್ಬನನ್ನು ತನಗಿಂತಲೂ ಶ್ರೇಷ್ಠನೆಂದು ಎಣಿಸಲಿ.
PHI 2:4 ಪ್ರತಿಯೊಬ್ಬನೂ ಸ್ವಹಿತವನ್ನು ನೋಡದೆ ಪರಹಿತವನ್ನು ಸಹ ನೋಡಲಿ.
PHI 2:5 ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿಯೂ ಇರಲಿ:
PHI 2:6 ಅವರು ದೇವರ ಸ್ವರೂಪವಾಗಿದ್ದರೂ, ದೇವರಿಗೆ ಸಮಾನರಾಗಿರುವುದನ್ನು ಬಿಡಲೊಲ್ಲೆನೆಂದು ಎಣಿಸದೆ,
PHI 2:7 ತಮ್ಮನ್ನು ತಾವೇ ಬರಿದುಮಾಡಿಕೊಂಡು ಗುಲಾಮನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದರು.
PHI 2:8 ಹೀಗೆ ಅವರು ಆಕಾರದಲ್ಲಿ ಮನುಷ್ಯರಾಗಿ ಕಾಣಿಸಿಕೊಂಡಾಗ ತಮ್ಮನ್ನು ತಾವೇ ತಗ್ಗಿಸಿಕೊಂಡು ಮರಣವನ್ನು ಎಂದರೆ ಶಿಲುಬೆಯ ಮರಣವನ್ನೂ ಹೊಂದುವಷ್ಟು ವಿಧೇಯರಾದರು.
PHI 2:9 ಈ ಕಾರಣದಿಂದಲೇ ದೇವರು ಅವರನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಅವರಿಗೆ ದಯಪಾಲಿಸಿದ್ದಾರೆ.
PHI 2:10 ಆದ್ದರಿಂದ ಪರಲೋಕ, ಭೂಲೋಕ, ಭೂಮಿಯ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ,
PHI 2:11 ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತದೇವರು ಎಂಬುದಾಗಿ ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವುದು.
PHI 2:12 ಹೀಗಿರುವಲ್ಲಿ ನನ್ನ ಪ್ರಿಯ ಸ್ನೇಹಿತರೇ, ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ನೀವು ಯಾವಾಗಲೂ ನನಗೆ ವಿಧೇಯರಾದಂತೆ ಈಗಲೂ ವಿಧೇಯರಾಗಿ, ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ರಕ್ಷಣೆಯನ್ನು ಕಾರ್ಯರೂಪಕ್ಕೆ ತನ್ನಿರಿ.
PHI 2:13 ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.
PHI 2:14 ಗೊಣಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನೂ ಮಾಡಿರಿ.
PHI 2:15 ಹೀಗೆ ನೀವು ನಿಂದಾರಹಿತರೂ ದೋಷವಿಲ್ಲದವರೂ, “ನಿಷ್ಕಳಂಕರಾದ ದೇವರ ಮಕ್ಕಳಾಗಿ, ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ,” ಜೀವವಾಕ್ಯವನ್ನು ಹಿಡಿದುಕೊಂಡು, ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುವವರಾಗಿರುವಿರಿ.
PHI 2:16 ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.
PHI 2:17 ನಿಮ್ಮ ವಿಶ್ವಾಸದಿಂದ ಬರುವ ಯಜ್ಞದ ಮೇಲೆಯೂ ಸೇವೆಯ ಮೇಲೆಯೂ ನಾನು ಪಾನಸಮರ್ಪಣೆಯಾದರೂ ಸಹ ಹರ್ಷದಿಂದ ನಿಮ್ಮೆಲ್ಲರೊಡನೆ ಆನಂದಿಸುವೆನು.
PHI 2:18 ಇದಕ್ಕಾಗಿಯೇ ನೀವೂ ಹರ್ಷಿಸಿರಿ. ನನ್ನೊಡನೆ ಆನಂದಿಸಿರಿ.
PHI 2:19 ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವುದಕ್ಕೆ ಕರ್ತ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಹೀಗೆ ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಉತ್ತೇಜನಗೊಳ್ಳುವೆನು.
PHI 2:20 ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು, ನನ್ನ ಬಳಿ ಬೇರೆ ಯಾರೂ ಇಲ್ಲ.
PHI 2:21 ಎಲ್ಲರೂ ಸ್ವಕಾರ್ಯಗಳನ್ನೇ ಹುಡುಕುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಕಾರ್ಯಗಳನ್ನು ಹುಡುಕುವುದಿಲ್ಲ.
PHI 2:22 ಆದರೆ ತಿಮೊಥೆಯನ ಗುಣಸ್ವಭಾವವನ್ನು ನೀವು ಬಲ್ಲಿರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಶ್ರಮಿಸಿದ್ದಾನೆ.
PHI 2:23 ಆದ್ದರಿಂದ ನನಗೆ ಏನು ಸಂಭವಿಸುವುದು ಎಂದು ತಿಳಿದ ಕೂಡಲೇ ಅವನನ್ನು ಕಳುಹಿಸುವ ನಿರೀಕ್ಷೆಯಿದೆ.
PHI 2:24 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತ ದೇವರಲ್ಲಿ ಭರವಸೆಯುಳ್ಳವನಾಗಿದ್ದೇನೆ.
PHI 2:25 ಆದರೂ ನನ್ನ ಸಹೋದರನೂ ಜೊತೆ ಕೆಲಸದವನೂ ಸಹಸೈನಿಕನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ನಾನು ನೆನೆಸಿದ್ದೇನೆ. ಅವನು ನನ್ನ ಕೊರತೆಯಲ್ಲಿ ಸೇವೆ ಮಾಡುವಂತೆ ನೀವು ಕಳುಹಿಸಿದ ನಿಮ್ಮ ಸಂದೇಶಕನೂ ಆಗಿದ್ದಾನೆ.
PHI 2:26 ಏಕೆಂದರೆ ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮಗೆ ಮುಟ್ಟಿತೆಂದು ತಿಳಿದು ತುಂಬಾ ವ್ಯಸನಪಡುತ್ತಿದ್ದಾನೆ.
PHI 2:27 ಅವನು ಅಸ್ವಸ್ಥನಾಗಿ ಸಾಯುವ ಹಾಗೆ ಇದ್ದದ್ದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದರು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನು ಕರುಣಿಸಿದರು.
PHI 2:28 ಆದ್ದರಿಂದ ನೀವು ಅವನನ್ನು ನೋಡಿ ಪುನಃ ಆನಂದಿಸುವಂತೆಯೂ ನನಗೆ ದುಃಖ ಕಡಿಮೆಯಾಗುವಂತೆಯೂ ನಾನು ಅವನನ್ನು ಅತ್ಯಾಸಕ್ತಿಯಿಂದ ಕಳುಹಿಸಿದ್ದೇನೆ.
PHI 2:29 ನೀವು ಅವನನ್ನು ಪೂರ್ಣ ಆನಂದದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.
PHI 2:30 ಅವನು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಹಾಗಿದ್ದನು. ನೀವು ನನಗೆ ಮಾಡಲು ಸಾಧ್ಯವಾಗದೆ ಹೋದ ಸಹಾಯವನ್ನು ತಾನೇ ಪೂರ್ತಿ ಮಾಡುವುದಕ್ಕಾಗಿ, ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಗುರಿಪಡಿಸಿಕೊಂಡನು.
PHI 3:1 ಕಡೆಯದಾಗಿ ನನ್ನ ಪ್ರಿಯರೇ, ಕರ್ತನಲ್ಲಿ ಆನಂದಿಸಿರಿ. ಬರೆದದ್ದನ್ನೇ ನಿಮಗೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ, ಅದು ನಿಮಗೆ ಸುರಕ್ಷಿತವೇ.
PHI 3:2 ನಾಯಿಗಳಂತೆ ವರ್ತಿಸುವವರಿಗೆ ಎಚ್ಚರಿಕೆ. ದುಷ್ಟಕಾರ್ಯಮಾಡುವವರಿಗೆ ಎಚ್ಚರಿಕೆ, ಸುಳ್ಳು ಸುನ್ನತಿಗಾಗಿ ವಾಗ್ವಾದಿಸುವವರಿಗೆ ಎಚ್ಚರಿಕೆ.
PHI 3:3 ಏಕೆಂದರೆ ದೇವರನ್ನು ಪವಿತ್ರಾತ್ಮರಿಂದ ಆರಾಧಿಸಿ ಕ್ರಿಸ್ತ ಯೇಸುವನ್ನು ಮಹಿಮೆಪಡಿಸುತ್ತಾ ಹರ್ಷಗೊಳ್ಳುವವರೂ ಮಾಂಸದಲ್ಲಿ ಭರವಸೆಯಿಡದ ನಾವೇ ಸುನ್ನತಿಯಾಗಿದ್ದೇವೆ.
PHI 3:4 ಮಾಂಸದಲ್ಲಿ ಭರವಸೆ ಇಡಲು ನನಗೆ ಸಾಕಷ್ಟು ಕಾರಣಗಳಿವೆ. ಬೇರೆ ಯಾವನಾದರೂ ಮಾನವೀಯ ಪ್ರಯತ್ನಗಳಲ್ಲಿ ಭರವಸೆ ಇಡಬಹುದೆಂದು ಭಾವಿಸುವುದಾದರೆ, ನಾನು ಅದಕ್ಕಿಂತಲೂ ಹೆಚ್ಚಾಗಿ ಹೇಳಬಹುದು:
PHI 3:5 ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು; ಬೆನ್ಯಾಮೀನನ ಕುಲದವನು; ಹೀಬ್ರಿಯರಿಂದ ಹುಟ್ಟಿದ ಹೀಬ್ರಿಯನು; ಮೋಶೆಯ ನಿಯಮದ ಅನುಸಾರವಾಗಿ ನಾನು ಫರಿಸಾಯನು.
PHI 3:6 ಆಸಕ್ತಿಯನ್ನು ನೋಡಿದರೆ, ನಾನು ಸಭೆಯ ಹಿಂಸಕನು; ಮೋಶೆಯ ನಿಯಮದಲ್ಲಿರುವ ನೀತಿಯ ಅನುಸಾರವಾಗಿ ನಾನು ನಿರ್ದೋಷಿ.
PHI 3:7 ನನಗೆ ಲಾಭವಾಗಿದ್ದ ಎಲ್ಲವನ್ನೂ ಈಗ ನಾನು ಕ್ರಿಸ್ತನ ನಿಮಿತ್ತ ನಷ್ಟವೆಂದು ಎಣಿಸುತ್ತೇನೆ.
PHI 3:8 ಇದಲ್ಲದೆ, ನನ್ನ ಕರ್ತದೇವರು ಆಗಿರುವ ಕ್ರಿಸ್ತ ಯೇಸುವನ್ನು ಅರಿತುಕೊಳ್ಳುವುದೇ ಅತಿ ಶ್ರೇಷ್ಠವಾದುದ್ದೆಂದು, ನಾನು ಎಲ್ಲವನ್ನೂ ನಷ್ಟವೆಂದು ಎಣಿಸುತ್ತೇನೆ. ಕ್ರಿಸ್ತನನ್ನೇ ಲಾಭವನ್ನಾಗಿಸಿಕೊಳ್ಳಲು ನಾನು ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.
PHI 3:9 ಹೀಗೆ ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ಅವರಲ್ಲಿ ಒಂದಾಗಿರ ಬಯಸುತ್ತೇನೆ. ನಿಯಮದಿಂದ ಬರುವ ಸ್ವನೀತಿಯನ್ನು ಆಶ್ರಯಿಸಿಕೊಳ್ಳದೆ, ಕ್ರಿಸ್ತನನ್ನು ನಂಬುವುದರ ಮೂಲಕ ವಿಶ್ವಾಸದ ಆಧಾರದ ಮೇಲೆ ದೇವರು ಕೊಡುವ ನೀತಿಯನ್ನೇ ಹೊಂದಿದವನಾಗಿರ ಬಯಸುತ್ತೇನೆ.
PHI 3:10 ಕ್ರಿಸ್ತನನ್ನೂ ಅವರ ಪುನರುತ್ಥಾನದ ಶಕ್ತಿಯನ್ನೂ ನಾನು ಅರಿತುಕೊಂಡು, ಕ್ರಿಸ್ತನ ಶ್ರಮೆಯಲ್ಲಿ ಪಾಲುಗೊಳ್ಳುವ ಅನ್ಯೋನ್ಯತೆಯನ್ನೂ ಅವರ ಮರಣದಲ್ಲಿ ಅವರ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ.
PHI 3:11 ಹೇಗಾದರೂ, ನಾನೂ ಸಹ ಸತ್ತವರೊಳಗಿಂದ ಪುನರುತ್ಥಾನ ಹೊಂದುವೆನು.
PHI 3:12 ಇದನ್ನೆಲ್ಲಾ ನಾನು ಸಾಧಿಸಿದ್ದೇನೆಂದಲ್ಲ ಅಥವಾ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ನಾನು ಹೇಳುತ್ತಾ ಇಲ್ಲ. ಆದರೆ ಕ್ರಿಸ್ತ ಯೇಸು ನನ್ನನ್ನು ಅನುಸರಿಸಬೇಕೆಂದು ಯಾವುದಕ್ಕಾಗಿ ಆರಿಸಿಕೊಂಡರೋ, ಆ ಪೂರ್ಣತೆಯೆಡೆಗೆ ತಲುಪುವಂತೆ ನಾನು ಪರಿಶ್ರಮಿಸುತ್ತಿದ್ದೇನೆ.
PHI 3:13 ಪ್ರಿಯರೇ, ನಾನಂತೂ ಆ ಗುರಿಯನ್ನು ತಲುಪಿದ್ದೇನೆಂದು ಭಾವಿಸಿಕೊಂಡಿಲ್ಲ. ಆದರೆ ಒಂದು ಸಂಗತಿ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು, ಮುಂದಿನ ವಿಷಯಗಳನ್ನು ಮಾತ್ರ ಲಕ್ಷ್ಯವನ್ನಾಗಿ ಮಾಡಿಕೊಂಡು ಅದನ್ನೇ ಪಡೆದುಕೊಳ್ಳುವುದಕ್ಕಾಗಿ ಓಡುತ್ತಿದ್ದೇನೆ.
PHI 3:14 ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.
PHI 3:15 ಆದ್ದರಿಂದ ನಮ್ಮಲ್ಲಿ ಆತ್ಮಿಕ ಪರಿಪಕ್ವತೆಯುಳ್ಳವರು ಇದೇ ಮನೋಭಾವವುಳ್ಳವರಾಗಿರಬೇಕು. ಕೆಲವು ವಿಷಯಗಳ ಮೇಲೆ ಭಿನ್ನಾಭಿಪ್ರಾಯವಿದ್ದರೆ, ಅದನ್ನೂ ದೇವರು ನಿಮಗೆ ಸ್ಪಷ್ಟಪಡಿಸುವರು.
PHI 3:16 ಆದರೂ ಈಗಾಗಲೇ ನಾವು ಯಾವುದರಲ್ಲಿ ಮುಂದುವರೆದಿದ್ದೇವೋ ಆ ಸೂತ್ರದ ಪ್ರಕಾರ ಒಂದೇ ಮನಸ್ಸುಳ್ಳವರಾಗಿ ಬಾಳೋಣ.
PHI 3:17 ಪ್ರಿಯರೇ, ನೀವು ನನ್ನನ್ನು ಅನುಸರಿಸುವವರಾಗಿರಿ. ನಮ್ಮ ಹಾಗೆ ಬಾಳುವ ಆದರ್ಶದ ಪ್ರಕಾರ ನಡೆದುಕೊಳ್ಳುವವರನ್ನು ಗಮನಿಸಿರಿ.
PHI 3:18 ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ಬಾಳುತ್ತಿದ್ದಾರೆ. ಅವರ ವಿಷಯದಲ್ಲಿ ನಾನು ನಿಮಗೆ ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಕಣ್ಣೀರಿನಿಂದ ಹೇಳುತ್ತೇನೆ.
PHI 3:19 ವಿನಾಶನವೇ ಅವರ ಅಂತ್ಯವು. ಹೊಟ್ಟೆಯೇ ಅವರ ದೇವರು. ನಾಚಿಕೆ ಕಾರ್ಯಗಳಲ್ಲಿಯೇ ಅವರ ಪ್ರಭಾವ. ಅವರು ಲೌಕಿಕವಾದವುಗಳ ಮೇಲೆ ಮನಸ್ಸಿಡುತ್ತಾರೆ.
PHI 3:20 ಆದರೆ ನಮ್ಮ ಪೌರತ್ವವು ಪರಲೋಕದಲ್ಲಿದೆ. ನಾವು ಪರಲೋಕದಿಂದಲೇ ರಕ್ಷಕರಾಗಿರುವ ಒಬ್ಬರ ಬರುವಿಕೆಗಾಗಿ ಆತುರದಿಂದ ಎದುರುನೋಡುತ್ತಿದ್ದೇವೆ. ಅವರೇ ಕರ್ತದೇವರು ಆಗಿರುವ ಕ್ರಿಸ್ತ ಯೇಸು.
PHI 3:21 ಹೀಗೆ ಕ್ರಿಸ್ತ ಯೇಸು ಎಲ್ಲವನ್ನೂ ತಮಗೆ ಅಧೀನ ಮಾಡಿಕೊಳ್ಳುವ ತಮ್ಮ ಶಕ್ತಿಯ ಪ್ರಕಾರ, ಮಹಿಮೆಯುಳ್ಳ ತಮ್ಮ ದೇಹಕ್ಕೆ ಸಮವಾಗಿ ಸಾರೂಪ್ಯವಾಗುವಂತೆ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸುವರು.
PHI 4:1 ಹೀಗಿರಲಾಗಿ, ನನಗೆ ಆಪ್ತರೂ ನಾನು ಹಂಬಲಿಸುವವರೂ ಆದ ನನ್ನ ಪ್ರಿಯರೇ, ನನ್ನ ಆನಂದವೂ ಕಿರೀಟವೂ ಆಗಿರುವ ಸ್ನೇಹಿತರೇ, ಈಗಲೂ ಕರ್ತ ದೇವರಲ್ಲಿ ದೃಢವಾಗಿ ನಿಲ್ಲಿರಿ!
PHI 4:2 ಕರ್ತ ದೇವರಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.
PHI 4:3 ಜೀವಗ್ರಂಥದಲ್ಲಿ ಹೆಸರು ಬರೆದಿರುವ ಕ್ಲೇಮೆನ್ಸ್ ಮುಂತಾದ ನನ್ನ ಜೊತೆ ಕೆಲಸದವರೊಡನೆ ನನ್ನೊಂದಿಗೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟ ಆ ಸ್ತ್ರೀಯರಿಗೆ ನೀನೂ ಸಹಾಯಕನಾಗಿರಬೇಕೆಂದು ನಿಜ ಜೊತೆಗಾರನೇ, ನಿನ್ನನ್ನೂ ಕೇಳಿಕೊಳ್ಳುತ್ತೇನೆ.
PHI 4:4 ಯಾವಾಗಲೂ ಕರ್ತ ದೇವರಲ್ಲಿ ಆನಂದಿಸಿರಿ, ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.
PHI 4:5 ನಿಮ್ಮ ಸಹನೆಯು ಎಲ್ಲರಿಗೂ ತಿಳಿದಿರಲಿ. ಕರ್ತದೇವರ ಬರುವಿಕೆಯು ಹತ್ತಿರವಾಗಿದೆ.
PHI 4:6 ಯಾವ ವಿಷಯವಾಗಿಯೂ ಚಿಂತೆ ಮಾಡದೆ, ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ಸಮರ್ಪಿಸಿರಿ.
PHI 4:7 ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು.
PHI 4:8 ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ.
PHI 4:9 ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿದ್ದೀರೋ ಅದನ್ನೇ ಮಾಡುವವರಾಗಿರಿ. ಆಗ ಸಮಾಧಾನದ ದೇವರು ನಿಮ್ಮೊಂದಿಗಿರುವರು.
PHI 4:10 ಅಂತೂ ಕೊನೆಯದಾಗಿ ನನ್ನ ಬಗ್ಗೆ ನಿಮಗಿರುವ ಆಸಕ್ತಿಯು ಪುನಃ ಚಿಗುರಿದ್ದಕ್ಕಾಗಿ ಕರ್ತ ದೇವರಲ್ಲಿ ಬಹಳವಾಗಿ ಆನಂದಿಸುತ್ತೇನೆ. ನೀವು ನನ್ನ ಬಗ್ಗೆ ಆಸಕ್ತಿ ಮೊದಲಿನಿಂದ ಹೊಂದಿದ್ದರೂ ಅದನ್ನು ತೋರಿಸಲು ನಿಮಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ.
PHI 4:11 ನನಗೆ ಕೊರತೆಯಿದೆ ಎಂಬುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸಂತೃಪ್ತನಾಗಿರುವುದನ್ನು ನಾನು ಕಲಿತುಕೊಂಡಿದ್ದೇನೆ.
PHI 4:12 ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬ ಅನುಭವವನ್ನು ತಿಳಿದುಕೊಂಡಿದ್ದೇನೆ. ಚೆನ್ನಾಗಿ ಊಟಮಾಡಿರಲಿ, ಹಸಿವೆಯಿಂದಿರಲಿ, ಸಮೃದ್ಧಿಯುಳ್ಳವನಾಗಿರಲಿ, ಕೊರತೆಯುಳ್ಳವನಾಗಿರಲಿ, ಯಾವುದೇ ಪರಿಸ್ಥಿತಿಯಲ್ಲಿದ್ದರೂ ಎಲ್ಲಾ ಪರಿಸ್ಥಿತಿಗಳಲ್ಲಿ ತೃಪ್ತನಾಗಿರುವ ರಹಸ್ಯವನ್ನು ಕಲಿತುಕೊಂಡಿದ್ದೇನೆ.
PHI 4:13 ನನಗೆ ಶಕ್ತಿನೀಡುವ ಕ್ರಿಸ್ತ ಯೇಸುವಿನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.
PHI 4:14 ಹೀಗಿದ್ದರೂ, ನನ್ನ ತೊಂದರೆಗಳಲ್ಲಿ ನೀವು ಭಾಗವಹಿಸಿದ್ದು ಒಳ್ಳೆಯದಾಯಿತು.
PHI 4:15 ಫಿಲಿಪ್ಪಿಯವರೇ, ನಾನು ಪ್ರಾರಂಭ ದಿನಗಳಲ್ಲಿ ನಿಮ್ಮ ನಡುವೆ ಸುವಾರ್ತೆ ಸಾರಿ ಮಕೆದೋನ್ಯದಿಂದ ಹೊರಟುಹೋದಾಗ, ನಿಮ್ಮನ್ನು ಬಿಟ್ಟು ಬೇರಾವ ಸಭೆಯವರು ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ಯಾರೂ ನನ್ನೊಂದಿಗೆ ಪಾಲುಗಾರರಾಗಲಿಲ್ಲ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.
PHI 4:16 ನಾನು ಥೆಸಲೋನಿಕದಲ್ಲಿದ್ದಾಗಲೂ ನನಗೆ ಕೊರತೆಯಾದಾಗ ನೀವು ಒಂದೆರಡು ಬಾರಿ ಸಹಾಯ ಕಳುಹಿಸಿದಿರಿ.
PHI 4:17 ನಾನು ನಿಮ್ಮಿಂದ ದಾನವನ್ನು ನಿರೀಕ್ಷಿಸುವುದಿಲ್ಲ. ಆದರೆ ನಿಮ್ಮ ಲೆಕ್ಕಕ್ಕೆ ಲಾಭ ಹೆಚ್ಚಿಸುವುದನ್ನೇ ನೋಡುತ್ತಿದ್ದೇನೆ.
PHI 4:18 ನಾನು ಎಲ್ಲವನ್ನೂ ಪರಿಪೂರ್ಣವಾಗಿ ಹೊಂದಿದ್ದೇನೆ. ನನಗೆ ಅಗತ್ಯಕ್ಕಿಂತಲೂ ಹೆಚ್ಚು ದೊರೆತಿದೆ. ನೀವು ಎಪಫ್ರೊದೀತನಿಂದ ಕಳುಹಿಸುವವುಗಳು ಈಗ ನನಗೆ ತಲುಪಿದೆ; ನಿಮ್ಮ ಕೊಡುಗೆ ದೇವರನ್ನು ಮೆಚ್ಚಿಸುವ ಸುಗಂಧ ಕಾಣಿಕೆಯೂ ಸ್ವೀಕೃತವಾದ ಯಜ್ಞವೂ ಆಗಿರುತ್ತವೆ.
PHI 4:19 ನನ್ನ ದೇವರು, ಕ್ರಿಸ್ತ ಯೇಸುವಿನಲ್ಲಿರುವ ತಮ್ಮ ಮಹಿಮೆಯ ಐಶ್ವರ್ಯಕ್ಕೆ ತಕ್ಕಂತೆಯೇ ನಿಮ್ಮ ಎಲ್ಲಾ ಕೊರತೆಗಳನ್ನು ನೀಗಿಸುವರು.
PHI 4:20 ನಮ್ಮ ತಂದೆ ದೇವರಿಗೆ ನಿರಂತರವೂ ಮಹಿಮೆಯಾಗಲಿ. ಆಮೆನ್.
PHI 4:21 ಕ್ರಿಸ್ತ ಯೇಸುವಿನಲ್ಲಿರುವ ಎಲ್ಲಾ ದೇವಜನರಿಗೂ ವಂದನೆಗಳನ್ನು ಹೇಳಿರಿ. ನನ್ನ ಜೊತೆಯಲ್ಲಿರುವ ಸಹೋದರರೂ ಸಹೋದರಿಯರೂ ವಂದನೆಗಳನ್ನು ತಿಳಿಸುತ್ತಾರೆ.
PHI 4:22 ಎಲ್ಲಾ ದೇವಜನರೂ ವಿಶೇಷವಾಗಿ ಕೈಸರನ ಮನೆತನಕ್ಕೆ ಸೇರಿದವರೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
PHI 4:23 ಕರ್ತದೇವರು ಆಗಿರುವ ಕ್ರಿಸ್ತ ಯೇಸುವಿನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ. ಆಮೆನ್.
COL 1:1 ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ,
COL 1:2 ಕ್ರಿಸ್ತನಲ್ಲಿರುವ ಕೊಲೊಸ್ಸೆಯ ದೇವರ ಪರಿಶುದ್ಧರಿಗೆ ಮತ್ತು ನಂಬಿಗಸ್ತರಾದ ಸಹೋದರ ಸಹೋದರಿಯರಿಗೆ: ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
COL 1:3 ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗ, ನಮ್ಮ ಕರ್ತ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
COL 1:4 ಏಕೆಂದರೆ, ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆ ಹಾಗೂ ದೇವಜನರೆಲ್ಲರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿ ನಾವು ಕೇಳಿದ್ದೇವೆ.
COL 1:5 ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಲಾದ ನಿರೀಕ್ಷೆಯಿಂದಲೇ ಈ ವಿಶ್ವಾಸವೂ ಪ್ರೀತಿಯೂ ಬುಗ್ಗೆಯಾಗಿ ಒದಗಿಬರುತ್ತದೆ. ಈ ನಿರೀಕ್ಷೆಯ ಬಗ್ಗೆ ಸುವಾರ್ತೆಯ ಸತ್ಯ ಸಂದೇಶವನ್ನು ಮೊದಲೇ ನೀವು ಕೇಳಿದ್ದೀರಿ.
COL 1:6 ಆ ಸುವಾರ್ತೆಯು ಲೋಕದಲ್ಲೆಲ್ಲಾ ಹರಡಿದಂತೆ, ನಿಮಗೂ ತಲುಪಲು ನೀವು ಸಹ ಅದನ್ನು ಕೇಳಿ ದೇವರ ಕೃಪೆಯನ್ನು ನಿಜವಾಗಿಯೂ ತಿಳಿದುಕೊಂಡ ದಿವಸದಿಂದ ನಿಮ್ಮಲ್ಲಿಯೂ ಫಲಕೊಟ್ಟು ವೃದ್ಧಿಯಾಗುತ್ತಿದೆ.
COL 1:7 ಇದನ್ನು ನೀವು ನಮ್ಮ ಪ್ರೀತಿಯ ಜೊತೆ ಸೇವಕನಾದ ಎಪಫ್ರನಿಂದ ಕಲಿತುಕೊಂಡಿರಿ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತನಾದ ಸೇವಕನು.
COL 1:8 ಪವಿತ್ರಾತ್ಮರಿಂದ ನೀವು ಹೊಂದಿರುವ ಪ್ರೀತಿಯನ್ನು ನಮಗೆ ತಿಳಿಸಿದವನೂ ಅವನೇ.
COL 1:9 ಆದಕಾರಣ ನಾವೂ ಸಹ ನಿಮ್ಮ ಬಗ್ಗೆ ಕೇಳಿದ ದಿನದಿಂದ ನಿಮಗಾಗಿ ಪ್ರಾರ್ಥಿಸುವುದನ್ನು ಬಿಡಲಿಲ್ಲ. ನೀವು ದೇವರಾತ್ಮ ನೀಡುವ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ, ದೇವರ ಚಿತ್ತದ ತಿಳುವಳಿಕೆಯಿಂದ ತುಂಬಿರಬೇಕೆಂದು ನಾವು ದೇವರಿಗೆ ಬೇಡಿಕೊಳ್ಳುತ್ತಿದ್ದೇವೆ.
COL 1:10 ಕರ್ತ ಯೇಸುವಿಗೆ ಯೋಗ್ಯರಾಗಿ ಜೀವಿಸಿ ಎಲ್ಲಾ ವಿಧದಲ್ಲಿ ಅವರನ್ನೇ ಮೆಚ್ಚಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯದಲ್ಲಿ ಫಲಕೊಡುತ್ತಾ ದೇವರ ತಿಳುವಳಿಕೆಯಲ್ಲಿ ವೃದ್ಧಿಯಾಗುತ್ತಿರಬೇಕೆಂತಲೂ
COL 1:11 ದೇವರ ಮಹಿಮೆಯ ಪರಾಕ್ರಮದಿಂದ ಬರುವ ಸರ್ವಶಕ್ತಿಯನ್ನು ಹೊಂದಿ ಬಲಗೊಳ್ಳಲಿ ಎಂದು ಬೇಡಿಕೊಳ್ಳುತ್ತೇವೆ. ಆಗ ನೀವು ಸರ್ವತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಹೊಂದಿದವರಾಗಿ,
COL 1:12 ತಂದೆಯಾದ ದೇವರಿಗೆ ಹರ್ಷದಿಂದ ಕೃತಜ್ಞತೆಯನ್ನು ಸಲ್ಲಿಸುವಿರಿ. ಬೆಳಕಿನಲ್ಲಿರುವ ದೇವಭಕ್ತರ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ್ದಾರೆ.
COL 1:13 ತಂದೆಯು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತಮ್ಮ ಪ್ರಿಯ ಪುತ್ರ ಕ್ರಿಸ್ತ ಯೇಸುವಿನ ರಾಜ್ಯದೊಳಗೆ ಸೇರಿಸಿದರು.
COL 1:14 ಕ್ರಿಸ್ತ ಯೇಸುವಿನಲ್ಲಿಯೇ ನಮಗೆ ವಿಮೋಚನೆ ಉಂಟಾಯಿತು. ನಮ್ಮ ಪಾಪಗಳ ಕ್ಷಮೆಯೇ ಆ ವಿಮೋಚನೆಯಾಗಿರುತ್ತದೆ.
COL 1:15 ಕ್ರಿಸ್ತ ಯೇಸು ಅದೃಶ್ಯರಾದ ದೇವರ ಸ್ವರೂಪವೂ ಸರ್ವಸೃಷ್ಟಿಗು ಜ್ಯೇಷ್ಠ ಪುತ್ರರೂ ಆಗಿದ್ದಾರೆ.
COL 1:16 ಏಕೆಂದರೆ ಭೂಪರಲೋಕಗಳಲ್ಲಿರುವ ಕಾಣುವಂತವುಗಳಾಗಲಿ, ಕಾಣದಂತವುಗಳಾಗಲಿ ಸಮಸ್ತವು ಇವರ ಮೂಲಕವೇ ಸೃಷ್ಟಿಸಲಾಯಿತು. ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಕ್ರಿಸ್ತನಲ್ಲಿಯೇ ಸೃಷ್ಟಿಗೊಂಡವು. ಸರ್ವವೂ ಕ್ರಿಸ್ತರಿಂದಲೂ ಕ್ರಿಸ್ತರಿಗಾಗಿಯೂ ಸೃಷ್ಟಿಹೊಂದಿತು.
COL 1:17 ಕ್ರಿಸ್ತ ಯೇಸು ಎಲ್ಲದಕ್ಕೂ ಮೊದಲು ಇದ್ದವರು, ಇವರಲ್ಲಿಯೇ ಸಮಸ್ತವೂ ನೆಲೆಯಾಗಿದೆ.
COL 1:18 ಕ್ರಿಸ್ತ ಯೇಸು ಸಭೆಯೆಂಬ ದೇಹಕ್ಕೆ ಶಿರಸ್ಸಾಗಿದ್ದಾರೆ. ಎಲ್ಲದರಲ್ಲಿಯೂ ಇವರೇ ಪ್ರಥಮ ಸ್ಥಾನಹೊಂದಿರುವಂತೆ, ಆರಂಭವೂ ಸತ್ತು ಎದ್ದು ಬಂದವರಲ್ಲಿ ಪ್ರಥಮವಾದವರು ಆಗಿದ್ದಾರೆ. ಹೀಗೆ ಇವರು ಎಲ್ಲದರಲ್ಲಿಯೂ ಸರ್ವಶ್ರೇಷ್ಠರಾಗಿದ್ದಾರೆ.
COL 1:19 ಏಕೆಂದರೆ ದೇವರು ಕ್ರಿಸ್ತ ಯೇಸುವಿನಲ್ಲಿ ಸರ್ವಸಂಪೂರ್ಣತೆಯು ವಾಸವಾಗಿರಲು ಬಯಸಿದರು.
COL 1:20 ಕ್ರಿಸ್ತ ಯೇಸು ಶಿಲುಬೆಯ ಮೇಲೆ ಸುರಿಸಿದ ರಕ್ತದ ಮೂಲಕವಾಗಿ, ದೇವರು ಸಮಾಧಾನವನ್ನು ಉಂಟುಮಾಡಿ, ಕ್ರಿಸ್ತನ ಮೂಲಕವೇ ಭೂಪರಲೋಕಗಳಲ್ಲಿರುವ ಎಲ್ಲವನ್ನೂ ತಮ್ಮೊಂದಿಗೆ ಸಂಧಾನಪಡಿಸಿಕೊಂಡರು.
COL 1:21 ಹಿಂದಿನ ಕಾಲದಲ್ಲಿ ನೀವು ನಿಮ್ಮ ದುಷ್ಕೃತ್ಯಗಳ ನಿಮಿತ್ತ ದೇವರಿಂದ ದೂರವಿದ್ದವರೂ ಮನಸ್ಸಿನಲ್ಲಿ ದೇವರ ಶತ್ರುಗಳೂ ಆಗಿದ್ದೀರಿ.
COL 1:22 ಈಗಲಾದರೋ ದೇವರು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿಂದಾರಹಿತರನ್ನಾಗಿಯೂ ತಮ್ಮ ಸನ್ನಿಧಿಯಲ್ಲಿ ನಿಲ್ಲಿಸಿಕೊಳ್ಳುವಂತೆ, ಕ್ರಿಸ್ತನ ಮಾಂಸದೇಹದ ಮರಣದಿಂದ ಈಗ ನಿಮ್ಮನ್ನು ಸಂಧಾನಪಡಿಸಿಕೊಂಡಿದ್ದಾರೆ.
COL 1:23 ನೀವು ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿ ಮುಂದುವರೆದು ನೆಲೆಗೊಂಡು, ಸುವಾರ್ತೆಯ ನಿರೀಕ್ಷೆಯಿಂದ ತೊಲಗಿ ಹೋಗದಿರಿ. ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲಾದ ಈ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾದೆನು.
COL 1:24 ಈಗ ನಾನು ನಿಮಗೋಸ್ಕರ ಸಹಿಸುತ್ತಿರುವ ಬಾಧೆಗಳಲ್ಲಿ ಆನಂದಿಸುತ್ತೇನೆ. ಕ್ರಿಸ್ತ ಯೇಸುವಿನ ಸಂಕಟಗಳೊಳಗೆ ಇನ್ನೂ ಕೊರತೆಯಾಗಿರುವುದನ್ನು ಅವರ ದೇಹವಾಗಿರುವ ಸಭೆಗಾಗಿ ನನ್ನ ದೇಹದಲ್ಲಿ ತೀರಿಸುತ್ತೇನೆ.
COL 1:25 ನಿಮಗೋಸ್ಕರವಾಗಿ ನನಗೆ ದೇವರು ಕೊಟ್ಟಿರುವ ಜವಾಬ್ದಾರಿಗೆ ಅನುಸಾರವಾಗಿ, ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರಲು ನಾನು ಸಭೆಗೆ ಸೇವಕನಾದೆನು.
COL 1:26 ಆ ರಹಸ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು. ಆದರೂ ಈಗ ಅದು ಕರ್ತ ಯೇಸುವಿನ ಜನರಿಗೆ ಪ್ರಕಟವಾಗಿದೆ.
COL 1:27 ಯೆಹೂದ್ಯರಲ್ಲದವರಲ್ಲಿ ಆ ರಹಸ್ಯದ ಮಹಿಮೆಯ ಐಶ್ವರ್ಯವು ಎಷ್ಟೆಂಬುದನ್ನು ದೇವರು ತಮ್ಮ ಜನರಿಗೆ ಪ್ರಕಟಿಸುವುದಕ್ಕೆ ಮನಸ್ಸು ಮಾಡಿದ್ದಾರೆ. ಆ ರಹಸ್ಯವು ಏನೆಂದರೆ, ನಿಮ್ಮಲ್ಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆಯಾಗಿದ್ದಾರೆ ಎಂಬುದೇ.
COL 1:28 ಈ ಕ್ರಿಸ್ತ ಯೇಸುವನ್ನೇ ನಾವು ಸಾರುವವರಾಗಿದ್ದೇವೆ; ಪ್ರತಿಯೊಬ್ಬರೂ ಕ್ರಿಸ್ತ ಯೇಸುವಿನಲ್ಲಿ ಪರಿಪಕ್ವತೆಯುಳ್ಳವರಾಗಿ ಸಮರ್ಪಿಸುವಂತೆ, ಪ್ರತಿಯೊಬ್ಬರನ್ನೂ ಎಚ್ಚರಿಸಿ ಎಲ್ಲಾ ಜ್ಞಾನದಲ್ಲಿ ಪ್ರತಿಯೊಬ್ಬರಿಗೂ ಬೋಧಿಸುತ್ತಿದ್ದೇವೆ.
COL 1:29 ನನ್ನಲ್ಲಿ ಬಲದಿಂದ ಕಾರ್ಯ ಮಾಡುವ ಕ್ರಿಸ್ತನ ಶಕ್ತಿಗೆ ಅನುಸಾರವಾಗಿ, ನಾನೂ ಸಹ ಪ್ರಯಾಸ ಪಡುತ್ತಾ ಈ ಗುರಿಗಾಗಿ ಹೋರಾಡುತ್ತೇನೆ.
COL 2:1 ನಿಮಗಾಗಿಯೂ ಲವೊದಿಕೀಯದವರಿಗಾಗಿಯೂ ವೈಯಕ್ತಿಕವಾಗಿ ಭೇಟಿಯಾಗದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆ ಎಂಬುದನ್ನು ನೀವು ತಿಳಿದಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
COL 2:2 ಅವರು ಹೃದಯದಲ್ಲಿ ಉತ್ತೇಜನಗೊಂಡು, ಪ್ರೀತಿಯಲ್ಲಿ ಒಂದಾಗಿ, ದೇವರ ರಹಸ್ಯವಾಗಿರುವ ಕ್ರಿಸ್ತ ಯೇಸುವನ್ನು ತಿಳಿದುಕೊಳ್ಳುವಂತೆ ಪೂರ್ಣಜ್ಞಾನದ ಸರ್ವ ಐಶ್ವರ್ಯವನ್ನು ದೃಢವಾಗಿ ಹೊಂದಬೇಕೆಂಬುದೇ ನನ್ನ ಗುರಿಯಾಗಿದೆ.
COL 2:3 ಏಕೆಂದರೆ, ಜ್ಞಾನ ಮತ್ತು ತಿಳುವಳಿಕೆಯ ಎಲ್ಲಾ ನಿಕ್ಷೇಪಗಳೂ ಕ್ರಿಸ್ತ ಯೇಸುವಿನಲ್ಲಿಯೇ ಮರೆಯಾಗಿವೆ.
COL 2:4 ಯಾರೂ ತಮ್ಮ ತರ್ಕದ ನಯಮಾತುಗಳಿಂದ ನಿಮ್ಮನ್ನು ವಂಚಿಸಬಾರದೆಂದು ನಾನು ಇದನ್ನು ಹೇಳುತ್ತಿದ್ದೇನೆ.
COL 2:5 ನಾನು ಶಾರೀರಿಕವಾಗಿ ನಿಮ್ಮಿಂದ ದೂರವಾಗಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನೀವು ಎಷ್ಟು ಕ್ರಮವುಳ್ಳವರೆಂಬುದನ್ನೂ, ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಶ್ವಾಸ ಎಷ್ಟು ದೃಢವಾಗಿದೆ ಎಂಬುದನ್ನೂ, ನೋಡಿ ನನಗೆ ಆನಂದವಾಗುತ್ತದೆ.
COL 2:6 ಆದ್ದರಿಂದ ನೀವು ಕ್ರಿಸ್ತ ಯೇಸುವನ್ನು ಕರ್ತ ಎಂದು ಅಂಗೀಕರಿಸಿದಂತೆಯೇ ಅವರಲ್ಲಿ ಬಾಳಿರಿ.
COL 2:7 ನೀವು ಕ್ರಿಸ್ತ ಯೇಸುವಿನಲ್ಲಿ ಬೇರೂರಿದವರಾಗಿಯೂ ಕಟ್ಟಲಾದವರಾಗಿಯೂ ಇದ್ದು, ನಿಮಗೆ ಬೋಧನೆ ನೀಡಿದ ಪ್ರಕಾರ ನಿಮ್ಮ ವಿಶ್ವಾಸದಲ್ಲಿ ಬಲಹೊಂದಿ ಕೃತಜ್ಞತೆಯಿಂದ ತುಂಬಿ ಪ್ರವಾಹಿಸುವವರಾಗಿರಿ.
COL 2:8 ತತ್ವಜ್ಞಾನವೂ ನಿರರ್ಥಕವೂ ವಂಚನೆಯೂ ಆಗಿರುವ ಮನುಷ್ಯರ ಸಂಪ್ರದಾಯದಿಂದ ನಿಮ್ಮಲ್ಲಿ ಯಾರಾದರೂ ಬಂದು ನಿಮ್ಮನ್ನು ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಅಂಥವರು ಕ್ರಿಸ್ತ ಯೇಸುವನ್ನು ಅನುಸರಿಸದೆ, ಪ್ರಾಪಂಚಿಕ ಬಾಲಬೋಧನೆಗಳನ್ನೂ ಅನುಸರಿಸುವವರಾಗಿದ್ದಾರೆ.
COL 2:9 ಏಕೆಂದರೆ ದೇವರ ಸರ್ವಸಂಪೂರ್ಣತೆಯು ಮಾನವ ದೇಹವಾಗಿ ಕ್ರಿಸ್ತ ಯೇಸುವಿನಲ್ಲಿಯೇ ವಾಸಮಾಡಿದೆ.
COL 2:10 ನೀವು ಕ್ರಿಸ್ತ ಯೇಸುವಿನಲ್ಲಿ ಪರಿಪೂರ್ಣರಾಗಿದ್ದೀರಿ. ಅವರೇ ಎಲ್ಲಾ ಆಳಿಕೆಗೂ, ಅಧಿಕಾರಕ್ಕೂ ಶಿರಸ್ಸಾಗಿದ್ದಾರೆ.
COL 2:11 ನೀವು ಕ್ರಿಸ್ತ ಯೇಸುವಿನಲ್ಲಿ ಸ್ವೀಕರಿಸಿದ ಸುನ್ನತಿಯು ಕೈಯಿಂದ ಮಾಡಿದ್ದಲ್ಲ, ಅದು ನಿಮ್ಮ ಮಾಂಸಭಾವವನ್ನು ಆಳುವ ಇಡೀ ಸ್ವಾರ್ಥವನ್ನೇ ಬಿಟ್ಟುಬಿಡುವ ಆತ್ಮಿಕ ಸುನ್ನತಿಯಾಗಿದೆ.
COL 2:12 ದೀಕ್ಷಾಸ್ನಾನದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಸಮಾಧಿಯಾದಿರಿ ಮತ್ತು ಕ್ರಿಸ್ತ ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಕ್ರಿಸ್ತ ಯೇಸುವಿನೊಂದಿಗೆ ಮರಣದಿಂದ ಜೀವಂತವಾಗಿ ಎದ್ದು ಬಂದಿರಿ.
COL 2:13 ನಿಮ್ಮ ಪಾಪಗಳಿಂದಲೂ ನಿಮ್ಮ ಸುನ್ನತಿಯಿಲ್ಲದ ಪಾಪ ಸ್ವಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಕ್ರಿಸ್ತ ಯೇಸುವಿನೊಂದಿಗೆ ಜೀವಿತರನ್ನಾಗಿ ಮಾಡಿ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದರು.
COL 2:14 ನಮಗೆ ವಿರೋಧವಾಗಿ ನಿಂತು ನಮ್ಮ ಮೇಲೆ ತಪ್ಪು ಹೊರಿಸುವಂತೆ ಬರೆಯಲಾಗಿದ್ದ ಶಾಸನಗಳನ್ನು ಕ್ರಿಸ್ತ ಯೇಸು ರದ್ದುಮಾಡಿದರು. ಅವುಗಳನ್ನು ಶಿಲುಬೆಯ ಮೇಲೆ ಜಡಿದು ಇಲ್ಲದಂತೆ ಮಾಡಿದರು.
COL 2:15 ಕ್ರಿಸ್ತ ಯೇಸುವು ಆಳುವ ಅದೃಶ್ಯ ಶಕ್ತಿಗಳನ್ನೂ ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ ಶಿಲುಬೆಯಲ್ಲಿ ಅವುಗಳ ಮೇಲೆ ಜಯಹೊಂದಿ, ಬಹಿರಂಗವಾಗಿ ಪ್ರದರ್ಶಿಸಿದರು.
COL 2:16 ಹೀಗಿರಲಾಗಿ, ಅನ್ನಪಾನಗಳ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತ್ ದಿನ ಮುಂತಾದವುಗಳ ವಿಷಯದಲ್ಲಿಯೂ ಯಾರೂ ನಿಮ್ಮನ್ನು ತೀರ್ಪು ಮಾಡದಿರಲಿ.
COL 2:17 ಇವು ಬರಬೇಕಾಗಿದ್ದವುಗಳ ಛಾಯೆಯಾಗಿವೆ, ಆದರೆ ನಿಜಸ್ವರೂಪವು ಕ್ರಿಸ್ತ ಯೇಸುವೇ.
COL 2:18 ಕೆಲವರು ತಾವು ದರ್ಶನ ಕಂಡದ್ದರ ಬಗ್ಗೆ ಬಹಳ ಮಾತನಾಡಿ, ತಮ್ಮ ನಿರರ್ಥಕವಾದ ಪ್ರಾಪಂಚಿಕ ಬುದ್ಧಿಯಿಂದ ಉಬ್ಬಿಕೊಳ್ಳುತ್ತಾರೆ. ಇಂಥವರು ಕಪಟ ದೀನತೆಯಲ್ಲಿಯೂ ದೂತರ ಆರಾಧನೆಯಲ್ಲಿಯೂ ಆನಂದಿಸುವವರಾಗಿರುತ್ತಾರೆ. ಇವರು ನಿಮ್ಮ ಬಳಿಗೆ, ನೀವು ಪ್ರತಿಫಲಹೊಂದದೆ ಇರುವಂತೆ ಅಡ್ಡಿಮಾಡಲು ಅವಕಾಶಕೊಡಬೇಡಿರಿ.
COL 2:19 ಇಂಥವರು ಶಿರಸ್ಸಾಗಿರುವ ಕ್ರಿಸ್ತ ಯೇಸುವಿನನೊಂದಿಗೆ ಸಂಬಂಧ ಕಳೆದುಕೊಂಡವರಾಗಿದ್ದಾರೆ. ಏಕೆಂದರೆ, ಕ್ರಿಸ್ತನಿಂದಲೇ ದೇಹವೆಲ್ಲಾ ಕೀಲು ನರಗಳ ಮೂಲಕ ಪೋಷಣೆ ಪಡೆದು ಒಂದಾಗಿ ಜೋಡಿಸಲಾಗಿ ದೇವರು ಬೆಳೆಸುವಂತೆ ಬೆಳೆಯುತ್ತದೆ.
COL 2:20 ಪ್ರಾಪಂಚಿಕ ಬಾಲಬೋಧನೆಗಳಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದೀರಿ. ಹಾಗಾದರೆ ನೀವು ಇನ್ನೂ ಪ್ರಾಪಂಚಿಕ ನಿಯಮಗಳಿಗೆ ಅಧೀನರಾಗಿರುವುದೇಕೆ?
COL 2:21 “ಹಿಡಿಯಬೇಡ! ರುಚಿನೋಡಬೇಡ! ಮುಟ್ಟಬೇಡ!”
COL 2:22 ಈ ಶಾಸನಗಳು ಮಾನವ ಆಜ್ಞೆಗಳ ಹಾಗೂ ಬೋಧನೆಗಳ ಅನುಸಾರವಾಗಿ ಬಳಕೆಯಿಂದ ಅಳಿದುಹೋಗುತ್ತವೆ!
COL 2:23 ಇಂಥ ಉಪದೇಶಗಳು ತಾವೇ ತಂದುಕೊಂಡ ಆರಾಧನೆಯಲ್ಲಿಯೂ ಸುಳ್ಳು ದೀನತ್ವದಲ್ಲಿಯೂ ದೇಹದಂಡನೆಯಲ್ಲಿಯೂ ಜ್ಞಾನದ ತೋರಿಕೆಯುಳ್ಳದ್ದಾಗಿರುವುದು ನಿಜವೇ. ಆದರೆ ಇವು ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸಲು ಪ್ರಯೋಜನವಿಲ್ಲದವುಗಳಾಗಿವೆ.
COL 3:1 ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
COL 3:2 ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ.
COL 3:3 ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ.
COL 3:4 ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
COL 3:5 ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ.
COL 3:6 ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ.
COL 3:7 ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ.
COL 3:8 ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
COL 3:9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!
COL 3:10 ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.
COL 3:11 ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.
COL 3:12 ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.
COL 3:13 ಯಾವನಿಗಾದರೂ ಇನ್ನೊಬ್ಬನ ಮೇಲೆ ದೂರು ಇದ್ದರೂ, ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸಿರಿ. ಕರ್ತ ಯೇಸುವು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.
COL 3:14 ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.
COL 3:15 ಕ್ರಿಸ್ತ ಯೇಸುವಿನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ, ಆ ಸಮಾಧಾನಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲಾಗಿದ್ದೀರಿ. ನೀವು ಕೃತಜ್ಞತೆಯುಳ್ಳವರಾಗಿರಿ.
COL 3:16 ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
COL 3:17 ನೀವು ಮಾತಿನಿಂದಾಗಲಿ, ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ, ಕ್ರಿಸ್ತ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
COL 3:18 ಹೆಂಡತಿಯರೇ, ನೀವು ಕರ್ತ ಯೇಸುವಿನಲ್ಲಿ ಯೋಗ್ಯರಾಗಿರುವಂತೆ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
COL 3:19 ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
COL 3:20 ಮಕ್ಕಳೇ, ಎಲ್ಲಾ ವಿಧಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಏಕೆಂದರೆ ಇದು ಕರ್ತ ಯೇಸುವಿಗೆ ಬಹು ಮೆಚ್ಚಿಕೆಯಾಗಿದೆ.
COL 3:21 ತಂದೆಯರೇ, ನಿಮ್ಮ ಮಕ್ಕಳನ್ನು ರೇಗಿಸಬೇಡಿರಿ. ಹಾಗೆ ಮಾಡಿದರೆ, ಅವರು ನಿರಾಶರಾಗುವರು.
COL 3:22 ಸೇವಕರೇ, ಭೂಮಿಯಲ್ಲಿ ನಿಮ್ಮ ಯಜಮಾನರಾಗಿರುವವರು ನೋಡುತ್ತಿರುವಾಗ ಮಾತ್ರ ಸೇವೆ ಮಾಡುವವರಾಗದೆ, ಕರ್ತ ಯೇಸುವಿಗೆ ಭಯಪಡುವವರಾಗಿ ಸರಳ ಹೃದಯದಿಂದ ಕೆಲಸಮಾಡಿ, ಅವರಿಗೆ ವಿಧೇಯರಾಗಿರಿ.
COL 3:23 ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ.
COL 3:24 ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.
COL 3:25 ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ದೇವರಲ್ಲಿ ಪಕ್ಷಪಾತವಿರುವುದಿಲ್ಲ.
COL 4:1 ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ, ಯೋಗ್ಯವಾದದ್ದನ್ನೂ ಕೊಡಿರಿ.
COL 4:2 ಎಚ್ಚರವಾಗಿದ್ದು ಕೃತಜ್ಞತೆ ಉಳ್ಳವರಾಗಿ ಪ್ರಾರ್ಥನೆಯಲ್ಲಿ ನಿರತರಾಗಿರಿ.
COL 4:3 ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.
COL 4:4 ಆದಕಾರಣ ನಾನು ಆ ರಹಸ್ಯವನ್ನು ಮಾಡಬಯಸುವ ರೀತಿಯಲ್ಲಿ ಸ್ಪಷ್ಟವಾಗಿ ಸಾರುವಂತೆಯೂ ಬೇಡಿಕೊಳ್ಳಿರಿ.
COL 4:5 ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.
COL 4:6 ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
COL 4:7 ಪ್ರಿಯ ಸಹೋದರನೂ ನಂಬಿಗಸ್ತ ಸೇವಕನೂ ಮತ್ತು ಕರ್ತ ಯೇಸುವಿನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯವನ್ನೆಲ್ಲಾ ನಿಮಗೆ ತಿಳಿಸುವನು.
COL 4:8 ನೀವು ನಮ್ಮ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
COL 4:9 ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ, ಪ್ರಿಯ ಸಹೋದರನೂ ಆದ ಓನೇಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
COL 4:10 ನನ್ನ ಜೊತೆ ಸೆರೆಯಾಳಾದ ಅರಿಸ್ತಾರ್ಕ, ಬಾರ್ನಬನ ಸಹೋದರಿಯ ಮಗನಾದ ಮಾರ್ಕನು ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನ ವಿಷಯದಲ್ಲಿ ನೀವು ಮಾರ್ಗದರ್ಶನ ಹೊಂದಿದ್ದೀರಲ್ಲಾ, ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ.
COL 4:11 ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾನೆ. ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸದವರಾಗಿದ್ದವರಲ್ಲಿ ಇವರು ಮಾತ್ರವೇ ಯೆಹೂದ್ಯರು. ಇವರು ನನಗೆ ತುಂಬಾ ಆದರಣೆಯಾಗಿದ್ದರು.
COL 4:12 ನಿಮ್ಮಲ್ಲಿ ಒಬ್ಬನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ದೇವರ ಚಿತ್ತದ ಬಗ್ಗೆ ಪರಿಪಕ್ವರಾಗಿ, ಪೂರ್ಣ ನಿಶ್ಚಯವುಳ್ಳವರಾಗಿ ನಿಂತು, ಎಲ್ಲಾ ವಿಷಯಗಳಲ್ಲಿ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ.
COL 4:13 ನಿಮಗಾಗಿಯೂ ಲವೊದಿಕೀಯ ಹಾಗೂ ಹಿರಿಯಾಪೊಲಿಯ ಜನರಿಗಾಗಿಯೂ ಅವನು ಬಹಳ ಪ್ರಯಾಸಪಡುತ್ತಿದ್ದಾನೆಂದು ಎಪಫ್ರನ ವಿಷಯವಾಗಿ ನಾನು ಸಾಕ್ಷಿ ಹೇಳುತ್ತೇನೆ.
COL 4:14 ಪ್ರಿಯ ವೈದ್ಯನಾದ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.
COL 4:15 ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಆಕೆಯ ಮನೆಯಲ್ಲಿರುವ ಸಭೆಗೂ ವಂದನೆಗಳನ್ನು ಹೇಳಿರಿ.
COL 4:16 ಈ ಪತ್ರವನ್ನು ನಿಮ್ಮ ಮಧ್ಯದಲ್ಲಿ ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿ ಹೇಳುವ ವ್ಯವಸ್ಥೆಮಾಡಿರಿ. ಹಾಗೆಯೇ ಲವೊದಿಕೀಯದಿಂದ ಬರುವ ಪತ್ರವನ್ನು ನೀವೂ ಓದಿಕೊಳ್ಳಿರಿ.
COL 4:17 ಅರ್ಖಿಪ್ಪನಿಗೆ, “ನೀನು ಕರ್ತ ಯೇಸುವಿನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರಬೇಕು!” ಎಂದು ಹೇಳಿರಿ.
COL 4:18 ಇದು ಪೌಲನಾದ ನಾನೇ ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.
1TH 1:1 ತಂದೆ ದೇವರಲ್ಲಿಯೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ, ಪೌಲ, ಸಿಲ್ವಾನ ಹಾಗೂ ತಿಮೊಥೆ ಇವರು ಬರೆಯುವ ಪತ್ರ: ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
1TH 1:2 ನಾವು ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸ್ಮರಿಸುತ್ತಾ ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
1TH 1:3 ನಿಮ್ಮ ವಿಶ್ವಾಸ ಪ್ರಕಟಿಸುವ ಕ್ರಿಯೆಯನ್ನೂ ಪ್ರೀತಿ ಪ್ರೇರಿತ ಪ್ರಯಾಸವನ್ನೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿರುವ ನಿರೀಕ್ಷೆಯ ಸ್ಮರಣೆಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡಬಿಡದೆ ಜ್ಞಾಪಿಸಿಕೊಳ್ಳುತ್ತೇವೆ.
1TH 1:4 ದೇವರು ಪ್ರೀತಿಸುವ ಪ್ರಿಯರೇ, ದೇವರು ತಾವಾಗಿಯೇ ನಿಮ್ಮನ್ನು ಆರಿಸಿಕೊಂಡಿದ್ದಾರೆಂದು ನಾವು ಬಲ್ಲೆವು.
1TH 1:5 ಏಕೆಂದರೆ ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ, ಶಕ್ತಿಯಲ್ಲಿಯೂ ಪವಿತ್ರಾತ್ಮ ದೇವರ ಸನ್ನಿಧಿಯಲ್ಲಿಯೂ ಬಹು ನಿಶ್ಚಯದಲ್ಲಿಯೂ ಬಂತೆಂಬುದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಮಾಡಿದ ಜೀವನ ಎಂಥದ್ದೆಂದು ನೀವೇ ಬಲ್ಲಿರಿ.
1TH 1:6 ನೀವು ಬಹು ಹಿಂಸೆಯಿಂದಲೂ ಪವಿತ್ರಾತ್ಮ ಪ್ರೇರಿತ ಆನಂದದಿಂದಲೂ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತ ಯೇಸುವನ್ನೂ ಅನುಸರಿಸುವವರಾಗಿದ್ದೀರಿ.
1TH 1:7 ಹೀಗೆ ಮಕೆದೋನ್ಯ ಹಾಗೂ ಅಖಾಯದ ವಿಶ್ವಾಸಿಗಳೆಲ್ಲರಿಗೂ ನೀವು ಆದರ್ಶರಾದಿರಿ.
1TH 1:8 ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯ ಹಾಗೂ ಅಖಾಯದಲ್ಲಿ ಘೋಷಿತವಾದದ್ದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಹರಡಿತು. ಆದ್ದರಿಂದ ಇದನ್ನು ಕುರಿತು ನಾವು ಹೇಳಬೇಕಾದ ಅವಶ್ಯ ಏನೂ ಇಲ್ಲ.
1TH 1:9 ಏಕೆಂದರೆ ನೀವು ನಮ್ಮನ್ನು ಹೇಗೆ ಸ್ವೀಕರಿಸಿದ್ದಿರೆಂಬುದನ್ನೂ ನೀವು ಹೇಗೆ ದೇವರಲ್ಲದವುಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬುದನ್ನೂ ಅವರು ತಾವೇ ವಿವರಿಸುತ್ತಾರೆ.
1TH 1:10 ಇದಲ್ಲದೆ, ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ತಮ್ಮ ಪುತ್ರರಾಗಿರುವ ಯೇಸು ಮುಂದೆ ಬರುವ ಕೋಪದಿಂದ ನಮ್ಮನ್ನು ಬಿಡಿಸುವವರೂ ಆಗಿದ್ದಾರೆ. ಈ ಯೇಸುವನ್ನೇ ಪರಲೋಕದಿಂದ ಬರುವುದನ್ನು ನೀವು ಎದುರು ನೋಡುತ್ತಿದ್ದೀರಿ ಎಂಬುದನ್ನೂ ಅವರು ನಮಗೆ ವಿವರಿಸಿದರು.
1TH 2:1 ಪ್ರಿಯರೇ, ನಾವು ನಿಮ್ಮ ಬಳಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂಬುದನ್ನು ನೀವು ತಿಳಿದಿದ್ದೀರಿ.
1TH 2:2 ಫಿಲಿಪ್ಪಿ ಪಟ್ಟಣದಲ್ಲಿ ಮುಂಚೆ ನಮಗೆ ಹಿಂಸೆ ಮತ್ತು ಅವಮಾನವು ಸಂಭವಿಸಿದ್ದನ್ನು ನೀವು ಬಲ್ಲಿರಿ. ಹಾಗಿದ್ದರೂ ನಾವು ನಮ್ಮ ದೇವರ ಸಹಾಯದಿಂದ ಧೈರ್ಯಗೊಂಡು ಬಹು ವಿರೋಧದ ನಡುವೆ ನಿಮಗೆ ಸುವಾರ್ತೆಯನ್ನು ತಿಳಿಸಿದೆವು.
1TH 2:3 ಏಕೆಂದರೆ ನಮ್ಮ ಬೋಧನೆಯು ದುರುದ್ದೇಶದಿಂದಲೂ ಇಲ್ಲವೆ ವಂಚನೆಗಳಿಂದಲೂ ತಪ್ಪುಗಳಿಂದಲೂ ಕೂಡಿದ್ದಲ್ಲ.
1TH 2:4 ದೇವರು ನಮ್ಮನ್ನು ಅನುಮೋದಿಸಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿಕೊಟ್ಟಿದ್ದಾರೆ. ಹಾಗಿರುವುದರಿಂದ, ನಾವು ಮನುಷ್ಯರನ್ನು ಮೆಚ್ಚಿಸದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.
1TH 2:5 ನಾವು ಎಂದಿಗೂ ನಿಮ್ಮನ್ನು ಹೊಗಳಿ ಮಾತನಾಡಲಿಲ್ಲ, ಕೌಶಲ್ಯವನ್ನು ಪ್ರಯೋಗಿಸಿ ಹಣದಾಸೆಯನ್ನು ಮರೆಮಾಡುವವರು ಆಗಿರಲಿಲ್ಲ ಎಂಬುದನ್ನು ನೀವು ತಿಳಿದಿರುವಿರಿ. ಇದಕ್ಕೆ ದೇವರೇ ಸಾಕ್ಷಿ.
1TH 2:6 ಕ್ರಿಸ್ತ ಯೇಸುವಿನ ಅಪೊಸ್ತಲರಾದ ನಾವು ನಿಮ್ಮ ಮೇಲೆ ಭಾರವನ್ನು ಹಾಕಬಹುದಾಗಿದ್ದರೂ ಮನುಷ್ಯರಿಂದ ಬರುವ ಗೌರವವನ್ನು ನಿಮ್ಮಿಂದಾಗಲೀ, ಇತರರಿಂದಾಗಲೀ, ಹುಡುಕುವವರಾಗಿರಲಿಲ್ಲ.
1TH 2:7 ಅದರ ಬದಲಾಗಿ, ನಾವು ನಿಮ್ಮ ನಡುವೆ ಶಿಶುಗಳಂತೆ ಇದ್ದೆವು. ತಾಯಿಯು ತನ್ನ ಮಕ್ಕಳನ್ನು ಪೋಷಿಸುವಂತೆ,
1TH 2:8 ನಿಮ್ಮನ್ನು ಪೋಷಿಸಿದೆವು. ಏಕೆಂದರೆ ನಾವು ನಿಮ್ಮನ್ನು ಬಹಳವಾಗಿ ಪ್ರೀತಿಸಿದ್ದರಿಂದ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ನಾವು ನಮ್ಮ ಪ್ರಾಣವನ್ನೇ ಕೊಡುವುದಕ್ಕೂ ಇಷ್ಟವುಳ್ಳವರಾಗಿದ್ದೆವು.
1TH 2:9 ಪ್ರಿಯರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಕಷ್ಟ ಪ್ರಯಾಸದಿಂದ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವೆಂಬುದು ನಿಮ್ಮ ನೆನಪಿನಲ್ಲಿರುವುದಷ್ಟೆ.
1TH 2:10 ನಂಬುವವರಾದ ನಿಮ್ಮೊಂದಿಗೆ ನಾವು ಎಷ್ಟೋ ಪವಿತ್ರರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವೇ ಸಾಕ್ಷಿಗಳು, ಮಾತ್ರವಲ್ಲದೆ ದೇವರೂ ಸಾಕ್ಷಿ.
1TH 2:11 ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನನ್ನು ನಡೆಸಿದೆವು.
1TH 2:12 ನಿಮಗೆ ಬುದ್ಧಿ ಹೇಳುತ್ತಾ ಸಂತೈಸುತ್ತಾ ಬಂದೆವು. ಹೀಗೆ ದೇವರ ಹಾಗೂ ಅವರ ರಾಜ್ಯದ ಮಹಿಮೆಗಾಗಿ ಕರೆದಾತನಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಸಾಕ್ಷಿ ಹೇಳಿದೆವೆಂಬುದು ನಿಮಗೆ ತಿಳಿದಿದೆ.
1TH 2:13 ಈ ಕಾರಣಕ್ಕಾಗಿಯೇ ನಂಬುವವರಾದ ನಿಮ್ಮಲ್ಲಿ ಕಾರ್ಯಸಾಧಿಸುವ ದೇವರ ವಾಕ್ಯವನ್ನು ನಮ್ಮಿಂದ ನೀವು ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ, ನಿಜವಾಗಿಯೂ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
1TH 2:14 ಪ್ರಿಯರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನೇ ನೀವೂ ಸಹ ನಿಮ್ಮ ಸ್ವದೇಶಿಯರಿಂದ ಅನುಭವಿಸಿದಿರಿ.
1TH 2:15 ಆ ಯೆಹೂದ್ಯರು ನಮಗೆ ಕರ್ತ ಆಗಿರುವ ಯೇಸುವನ್ನು ಮತ್ತು ಪ್ರವಾದಿಗಳನ್ನು ಕೊಂದರು. ನಮ್ಮನ್ನೂ ಓಡಿಸಿಬಿಟ್ಟರು. ಅವರು ದೇವರನ್ನು ಮೆಚ್ಚಿಸದೆ ಜನರೆಲ್ಲರಿಗೂ ವಿರೋಧಿಗಳಾಗಿದ್ದಾರೆ.
1TH 2:16 ಯೆಹೂದ್ಯರಲ್ಲದವರಿಗೆ ರಕ್ಷಣೆಯಾಗುವಂತೆ ಮಾತನಾಡುವ ನಮಗೆ ಅವರು ಅಡ್ಡಿ ಮಾಡುತ್ತಾರೆ. ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಹೆಚ್ಚೆಚ್ಚಾಗಿ ಕೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಕೊನೆಗೆ ಕೋಪಾಗ್ನಿಯೂ ಅವರ ಮೇಲೆ ಬರಲಿದೆ.
1TH 2:17 ಪ್ರಿಯರೇ, ನಾವು ದೈಹಿಕವಾಗಿ ನಿಮ್ಮನ್ನು ಬಿಟ್ಟು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ, ನಿಮ್ಮ ಮುಖವನ್ನು ಕಾಣಲು ಅತ್ಯಾಶೆಯಿಂದ ಬಹಳ ಪ್ರಯತ್ನ ಮಾಡಿದೆವು.
1TH 2:18 ಆದ್ದರಿಂದ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಪೌಲನಾದ ನಾನಂತೂ ಮತ್ತೆ ಮತ್ತೆ ಬರಲು ಬಯಸಿದೆನು. ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.
1TH 2:19 ನಮಗೆ ಕರ್ತ ಆಗಿರುವ ಯೇಸು ಬರುವಾಗ ಅವರ ಮುಂದೆ ನಮ್ಮ ನಿರೀಕ್ಷೆಯೂ ಆನಂದವೂ ಅಭಿಮಾನದ ಕಿರೀಟವೂ ಯಾರು? ನೀವೇ ಅಲ್ಲವೇ?
1TH 2:20 ನೀವೇ ನಮ್ಮ ಮಹಿಮೆಯೂ ಆನಂದವೂ ಆಗಿದ್ದೀರಿ.
1TH 3:1 ಆದ್ದರಿಂದ ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ, ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿದೆವು.
1TH 3:2 ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.
1TH 3:3 ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ. ಏಕೆಂದರೆ ಇವುಗಳಿಗಾಗಿಯೇ ನಾವು ನೇಮಕವಾಗಿದ್ದೇವೆ ಎಂದು ನೀವೇ ಬಲ್ಲಿರಿ.
1TH 3:4 ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ. ಹಾಗೆ ಆಯಿತೆಂದು ನೀವೂ ಚೆನ್ನಾಗಿ ಬಲ್ಲಿರಿ.
1TH 3:5 ಈ ಕಾರಣದಿಂದ, ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಶೋಧಿಸುವನೋ ಎಂಬ ಭಯದ ದೆಸೆಯಿಂದ, ನಾನು ಸಹ ಸಹಿಸಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳಿದುಕೊಳ್ಳುವುದಕ್ಕೆ ತಿಮೊಥೆಯನನ್ನು ಕಳುಹಿಸಿದೆನು.
1TH 3:6 ತಿಮೊಥೆಯನು ಈಗಲೇ ನಿಮ್ಮಿಂದ ನಮ್ಮ ಬಳಿಗೆ ಬಂದು ನಿಮ್ಮ ವಿಶ್ವಾಸ ಹಾಗೂ ಪ್ರೀತಿಯ ವಿಷಯವಾಗಿ ಒಳ್ಳೆಯ ವರ್ತಮಾನವನ್ನು ತಂದಿದ್ದಾನೆ. ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ನೆನಪಿಸಿಕೊಂಡು, ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡುವುದಕ್ಕೆ ಹಾರೈಸುತ್ತೀರೆಂಬುದನ್ನು ತಿಳಿಸಿದ್ದಾನೆ.
1TH 3:7 ಈ ಕಾರಣದಿಂದ ಪ್ರಿಯರೇ, ನಮ್ಮ ಎಲ್ಲಾ ಇಕ್ಕಟ್ಟು ಹಾಗೂ ಹಿಂಸೆಗಳಲ್ಲಿಯೂ ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.
1TH 3:8 ಏಕೆಂದರೆ ನೀವು ಕರ್ತ ಯೇಸುವಿನಲ್ಲಿ ದೃಢವಾಗಿ ನಿಂತಿರುವುದರಿಂದಲೇ ಈಗ ನಾವು ನಿಜವಾಗಿಯೂ ಜೀವಿಸುತ್ತಿದ್ದೇವೆ.
1TH 3:9 ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಆನಂದಕ್ಕೆ ಬದಲಾಗಿ ದೇವರಿಗೆ ಹೇಗೆ ಸಾಕಷ್ಟು ಕೃತಜ್ಞತೆಯನ್ನು ಸಲ್ಲಿಸಬಹುದು?
1TH 3:10 ನಿಮ್ಮ ಮುಖವನ್ನು ನೋಡುವುದಕ್ಕಾಗಿಯೂ ನಿಮ್ಮ ನಂಬಿಕೆಯಲ್ಲಿರುವ ಕೊರತೆಯನ್ನು ನಿವಾರಿಸುವುದಕ್ಕೂ ನಾವು ಹಗಲಿರುಳು ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದೇವೆ.
1TH 3:11 ನಮ್ಮ ತಂದೆಯಾದ ದೇವರೂ ನಮಗೆ ಕರ್ತ ಆಗಿರುವ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ಮಾರ್ಗವನ್ನು ಸುಗಮಗೊಳಿಸಲಿ.
1TH 3:12 ನಮ್ಮ ಪ್ರೀತಿಯು ನಿಮ್ಮ ಕಡೆಗೆ ಸಮೃದ್ಧಿಯಾಗಿರುವಂತೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ತುಂಬಿರುವಂತೆ ಕರ್ತ ಯೇಸು ನಿಮಗೆ ಅನುಗ್ರಹಿಸಲಿ.
1TH 3:13 ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!
1TH 4:1 ಪ್ರಿಯರೇ, ನೀವು ಹೇಗೆ ನಡೆದುಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿದಂತೆಯೇ ಜೀವಿಸುತಿರುವಿರಿ. ಇದರಲ್ಲಿ ನೀವು ಹೆಚ್ಚೆಚ್ಚಾಗಿ ಮಾಡಬೇಕೆಂದು ನಾವು ಕಡೆಯದಾಗಿ ನಮಗೆ ಕರ್ತ ಆಗಿರುವ ಯೇಸುವಿನಲ್ಲಿ ನಿಮ್ಮನ್ನು ಪ್ರಬೋಧಿಸುತ್ತೇವೆ ಮತ್ತು ಉತ್ತೇಜಿಸುತ್ತೇವೆ.
1TH 4:2 ನಮಗೆ ಕರ್ತ ಆಗಿರುವ ಯೇಸುವಿನ ಅಧಿಕಾರದ ಮೂಲಕ ನಿಮಗೆ ಕೊಟ್ಟ ಆಜ್ಞೆಗಳನ್ನು ನೀವು ತಿಳಿದವರಾಗಿದ್ದೀರಿ.
1TH 4:3 ನೀವು ಪವಿತ್ರರಾಗಿ ಇರಬೇಕೆಂಬುದೇ ದೇವರ ಚಿತ್ತವಾಗಿದೆ. ಆದ್ದರಿಂದ ನೀವು ಕಾಮಾತಿರೇಕಕ್ಕೆ ದೂರವಾಗಿರಬೇಕು.
1TH 4:4 ನಿಮ್ಮಲ್ಲಿ ಪ್ರತಿಯೊಬ್ಬನೂ ಪವಿತ್ರತೆಯಿಂದಲೂ ಘನತೆಯಿಂದಲೂ ತನ್ನ ಸ್ವಂತ ದೇಹವನ್ನು ಕಾಪಾಡಿಕೊಳ್ಳಲು ತಿಳಿಯಬೇಕು.
1TH 4:5 ನೀವು ದೇವರನ್ನರಿಯದ ಯೆಹೂದ್ಯರಲ್ಲದವರಂತೆ ಕಾಮಾಭಿಲಾಷೆಗೆ ಒಳಪಡಬಾರದು.
1TH 4:6 ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತಮ್ಮ ಸಹೋದರ ಸಹೋದರಿಯನ್ನು ವಂಚಿಸದಿರಲಿ. ಏಕೆಂದರೆ ನಾವು ಮೊದಲು ತಿಳಿಸಿ ನಿಮಗೆ ಗಂಭೀರವಾಗಿ ಎಚ್ಚರಿಸಿದಂತೆ ಈ ಪಾಪಗಳ ವಿಷಯದಲ್ಲಿ ಕರ್ತ ಯೇಸುವು ಮುಯ್ಯಿಗೆ ಮುಯ್ಯಿ ತೀರಿಸುವವರಾಗಿದ್ದಾರೆ.
1TH 4:7 ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಪವಿತ್ರ ಜೀವನವನ್ನು ಜೀವಿಸಲು ಕರೆದಿದ್ದಾರೆ.
1TH 4:8 ಆದ್ದರಿಂದ, ಈ ಆಜ್ಞೆಗಳನ್ನು ತಿರಸ್ಕರಿಸುವವನು ಮನುಷ್ಯನನ್ನಲ್ಲ ದೇವರನ್ನು ಅಂದರೆ, ತಮ್ಮ ಪವಿತ್ರಾತ್ಮರನ್ನು ನಮಗೆ ಕೊಡುವ ದೇವರನ್ನೇ ತಿರಸ್ಕರಿಸುತ್ತಾನೆ.
1TH 4:9 ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವುದು ಅವಶ್ಯವಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ನೀವು ದೇವರಿಂದಲೇ ಉಪದೇಶ ಹೊಂದಿದ್ದೀರಿ.
1TH 4:10 ಸಮಸ್ತ ಮಕೆದೋನ್ಯದಲ್ಲಿರುವ ಸಹೋದರರನ್ನೆಲ್ಲಾ ನೀವು ಪ್ರೀತಿಸುತ್ತಿರುವುದು ನಿಜವೆ. ಆದರೂ ಪ್ರಿಯರೇ, ನೀವು ಪ್ರೀತಿಯಲ್ಲಿ ಇನ್ನೂ ಸಮೃದ್ಧಿಯಾಗಬೇಕೆಂದು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.
1TH 4:11 ಇದಲ್ಲದೆ ನಾವು ನಿಮಗೆ ಹೇಳಿದ ಪ್ರಕಾರ ಪ್ರಶಾಂತ ಜೀವನವೇ ನಿಮ್ಮ ಗುರಿಯಾಗಿರಲಿ: ನೀವು ಸ್ವಂತ ಕಾರ್ಯಗಳನ್ನೇ ನಡೆಸಿಕೊಂಡು, ನಿಮ್ಮ ಕೈಯಾರೆ ಕೆಲಸ ಮಾಡುವವರಾಗಿರಿ.
1TH 4:12 ಹೀಗೆ ನಿಮ್ಮ ಅನುದಿನದ ಜೀವನವು ಹೊರಗಿನವರ ಮುಂದೆ ಯೋಗ್ಯವಾಗಿರುವುದು ಮತ್ತು ನೀವು ಯಾರ ಮೇಲೆಯೂ ಆತುಕೊಳ್ಳದೆ ಬಾಳುವಿರಿ.
1TH 4:13 ಪ್ರಿಯರೇ, ನೀವು ನಿರೀಕ್ಷೆಯಿಲ್ಲದೆ ಗೋಳಾಡುವವರಂತೆ ಮರಣ ಹೊಂದಿದ ವಿಶ್ವಾಸಿಗಳ ಬಗ್ಗೆ ಅಜ್ಞಾನಿಗಳಾಗಿರಬಾರದೆಂದು ನಾವು ಅಪೇಕ್ಷಿಸುತ್ತೇವೆ.
1TH 4:14 ಏಕೆಂದರೆ ಯೇಸು ಸತ್ತು ಪುನಃ ಜೀವಂತವಾಗಿ ಎದ್ದರೆಂದು ನಾವು ನಂಬಿದರೆ, ಅದರಂತೆ ಯೇಸುವಿನಲ್ಲಿ ನಿದ್ರೆಹೋದವರನ್ನು ಸಹ ದೇವರು ಅವರೊಡನೆ ಕರೆದುಕೊಂಡು ಬರುವರು.
1TH 4:15 ಕರ್ತ ಯೇಸುವಿನ ಪುನರಾಗಮನದವರೆಗೆ ಇನ್ನೂ ಜೀವದಿಂದ ಉಳಿದಿರುವ ನಾವು ಮರಣಹೊಂದಿದವರಿಗಿಂತ ಮುಂದಾಗಿ ಪುನರುತ್ಥಾನವಾಗುವುದಿಲ್ಲ ಎಂದು, ನಾವು ಕರ್ತ ಯೇಸುವಿನ ವಾಕ್ಯದ ಆಧಾರದಿಂದ ನಿಮಗೆ ಹೇಳುತ್ತಿದ್ದೇವೆ.
1TH 4:16 ಏಕೆಂದರೆ ಕರ್ತ ಯೇಸು ತಾವೇ ಆಜ್ಞಾಘೋಷದೊಡನೆಯೂ ಪ್ರಧಾನ ದೇವದೂತನ ಧ್ವನಿಯೊಡನೆಯೂ ದೇವರ ತುತೂರಿಯೊಡನೆಯೂ ಪರಲೋಕದಿಂದ ಇಳಿದು ಬರುವರು. ಆಗ ಕ್ರಿಸ್ತ ಯೇಸುವಿನಲ್ಲಿ ಸತ್ತವರು ಮೊದಲು ಎದ್ದು ಬರುವರು.
1TH 4:17 ಆಮೇಲೆ, ಜೀವದಿಂದ ಉಳಿದಿರುವ ನಾವು ಅವರೊಂದಿಗೆ ಅಂತರಿಕ್ಷದಲ್ಲಿ ಕರ್ತ ಯೇಸುವನ್ನು ಎದುರುಗೊಳ್ಳುವುದಕ್ಕಾಗಿ ಮೇಘಗಳಲ್ಲಿ ಒಯ್ಯಲಾಗುವೆವು. ಹೀಗೆ ನಾವು ಸದಾಕಾಲವೂ ಕರ್ತ ಯೇಸುವಿನ ಜೊತೆಯಲ್ಲಿಯೇ ಇರುವೆವು.
1TH 4:18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.
1TH 5:1 ಪ್ರಿಯರೇ, ಈ ಕಾಲಸಮಯಗಳನ್ನು ಕುರಿತು ನಿಮಗೆ ಬರೆಯುವುದು ಅವಶ್ಯವಿಲ್ಲ.
1TH 5:2 ರಾತ್ರಿಯಲ್ಲಿ ಕಳ್ಳನು ಬರುವಂತೆ ಕರ್ತ ಯೇಸುವಿನ ದಿನವು ಬರುವುದೆಂದು ನೀವೇ ಚೆನ್ನಾಗಿ ಬಲ್ಲಿರಿ.
1TH 5:3 ಆದರೆ, “ಸಮಾಧಾನ, ಸುರಕ್ಷಿತ,” ಎಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವುದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.
1TH 5:4 ಆದರೆ ಪ್ರಿಯರೇ, ಆ ದಿನವು ಕಳ್ಳನಂತೆ ನಿಮ್ಮನ್ನು ಆಶ್ಚರ್ಯಪಡಿಸುವುದಕ್ಕೆ ನೀವು ಕತ್ತಲೆಯಲ್ಲಿರುವವರಲ್ಲ.
1TH 5:5 ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಿ. ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.
1TH 5:6 ಆದಕಾರಣ ನಾವು ಇತರರಂತೆ ನಿದ್ರೆ ಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿರೋಣ.
1TH 5:7 ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರೆ.
1TH 5:8 ನಾವಾದರೋ ಹಗಲಿಗೆ ಸೇರಿದವರಾಗಿ ಇರುವುದರಿಂದ ನಂಬಿಕೆ ಹಾಗೂ ಪ್ರೀತಿಯನ್ನು ಕವಚವನ್ನಾಗಿಯೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವನ್ನಾಗಿಯೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.
1TH 5:9 ಏಕೆಂದರೆ ದೇವರು ನಮ್ಮನ್ನು ಕೋಪಾಗ್ನಿಗೆ ನೇಮಿಸದೆ ನಾವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿ ರಕ್ಷಣೆಯನ್ನು ಹೊಂದಬೇಕೆಂದೇ ನೇಮಿಸಿದರು.
1TH 5:10 ನಾವು ಎಚ್ಚರವಾಗಿದ್ದರೂ ನಿದ್ರೆಯಲ್ಲಿದ್ದರೂ ತಮ್ಮ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಅವರು ನಮಗಾಗಿ ಸತ್ತರು.
1TH 5:11 ಆದ್ದರಿಂದ ನೀವು ಈಗ ಮಾಡುತ್ತಿರುವಂತೆಯೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.
1TH 5:12 ಪ್ರಿಯರೇ, ಯಾರು ನಿಮ್ಮ ನಡುವೆ ಪ್ರಯಾಸಪಟ್ಟು ಕರ್ತ ಯೇಸುವಿನಲ್ಲಿ ನಿಮ್ಮನ್ನು ಪರಾಮರಿಸುವವರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಗೌರವಿಸಿರಿ.
1TH 5:13 ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಅತ್ಯಧಿಕವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.
1TH 5:14 ಪ್ರಿಯರೇ, ಶಿಸ್ತು ಇಲ್ಲದವರನ್ನು ಎಚ್ಚರಿಸಿರಿ. ಮನಗುಂದಿದವರನ್ನು ಆದರಿಸಿರಿ. ಬಲಹೀನರಿಗೆ ಆಧಾರವಾಗಿರಿ. ಎಲ್ಲರೊಂದಿಗೂ ತಾಳ್ಮೆಯುಳ್ಳವರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
1TH 5:15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ. ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಳ್ಳುವುದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.
1TH 5:16 ಯಾವಾಗಲೂ ಆನಂದಿಸಿರಿ.
1TH 5:17 ಎಡೆಬಿಡದೆ ಪ್ರಾರ್ಥಿಸಿರಿ.
1TH 5:18 ಎಲ್ಲವುಗಳಿಗಾಗಿ ಕೃತಜ್ಞತೆ ಸಲ್ಲಿಸಿರಿ. ಏಕೆಂದರೆ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
1TH 5:19 ಪವಿತ್ರಾತ್ಮ ದೇವರ ಸನ್ನಿಧಿಯನ್ನು ನಂದಿಸಬೇಡಿರಿ.
1TH 5:20 ಪ್ರವಾದನೆಗಳನ್ನು ಹೀನೈಸಬೇಡಿರಿ.
1TH 5:21 ಎಲ್ಲವನ್ನು ಪರಿಶೋಧಿಸಿ ಒಳ್ಳೆಯದನ್ನೇ ಬಿಗಿಯಾಗಿ ಹಿಡಿದುಕೊಳ್ಳಿರಿ.
1TH 5:22 ಸಕಲ ವಿಧವಾದ ಕೆಟ್ಟತನಗಳಿಗೆ ದೂರವಾಗಿರಿ.
1TH 5:23 ಸಮಾಧಾನದ ದೇವರು ತಾವಾಗಿಯೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ. ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಪುನರಾಗಮನದಲ್ಲಿ ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿ.
1TH 5:24 ನಿಮ್ಮನ್ನು ಕರೆಯುವ ದೇವರು ನಂಬಿಗಸ್ತರು, ಅವರೇ ಅದನ್ನು ಸಾಧಿಸುವವರೂ ಆಗಿದ್ದಾರೆ.
1TH 5:25 ಪ್ರಿಯರೇ, ನಮಗಾಗಿ ಪ್ರಾರ್ಥಿಸಿರಿ.
1TH 5:26 ಪವಿತ್ರವಾದ ಮುದ್ದಿಟ್ಟು ದೇವಜನರೆಲ್ಲರನ್ನೂ ವಂದಿಸಿರಿ.
1TH 5:27 ಈ ಪತ್ರವನ್ನು ಸಹೋದರ ಸಹೋದರಿಯರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತ ಯೇಸುವಿನ ಹೆಸರಿನಲ್ಲಿ ಆಜ್ಞಾಪಿಸುತ್ತೇನೆ.
1TH 5:28 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.
2TH 1:1 ನಮ್ಮ ತಂದೆ ದೇವರಲ್ಲಿಯೂ, ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ತಿಮೊಥೆಯರು ಬರೆಯುವುದು:
2TH 1:2 ನಮ್ಮ ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.
2TH 1:3 ಪ್ರಿಯರೇ, ನಾವು ಯಾವಾಗಲೂ ನಿಮಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬದ್ಧರಾಗಿದ್ದೇವೆ. ಹಾಗೆ ಮಾಡುವುದು ಯೋಗ್ಯ. ಏಕೆಂದರೆ ನಿಮ್ಮ ವಿಶ್ವಾಸವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುತ್ತಾ ಇದೆ ಮತ್ತು ಪರಸ್ಪರ ನಿಮ್ಮೆಲ್ಲರಲ್ಲಿ ಪ್ರೀತಿಯೂ ಹೆಚ್ಚುತ್ತಿದೆ.
2TH 1:4 ಹೀಗಿರುವುದರಿಂದ, ನೀವು ಸಹಿಸುತ್ತಿರುವ ನಿಮ್ಮ ಎಲ್ಲಾ ಹಿಂಸೆಗಳಲ್ಲಿಯೂ ಸಂಕಟಗಳಲ್ಲಿಯೂ ನಿಮಗೆ ತೋರಿ ಬಂದ ನಿಮ್ಮ ತಾಳ್ಮೆ, ನಂಬಿಕೆಗಳನ್ನು ನೆನೆಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಮ್ಮೆಪಡುತ್ತೇವೆ.
2TH 1:5 ನೀವು ಯಾವ ದೇವರ ರಾಜ್ಯಕ್ಕಾಗಿ ಕಷ್ಟವನ್ನು ಅನುಭವಿಸುತ್ತಿರುವಿರೋ, ಆ ರಾಜ್ಯಕ್ಕಾಗಿ ನೀವು ಯೋಗ್ಯರೆಂದು ಎಣಿಕೆಯಾಗಲು ಇದು ದೇವರ ನೀತಿಯುಳ್ಳ ನ್ಯಾಯತೀರ್ಪಿಗೆ ಸ್ಪಷ್ಟವಾದ ನಿದರ್ಶನವಾಗಿದೆ.
2TH 1:6 ನಿಮ್ಮನ್ನು ಸಂಕಟ ಪಡಿಸುವವರಿಗೆ ದೇವರು ಪ್ರತಿಯಾಗಿ ಸಂಕಟವನ್ನೂ ಮತ್ತು
2TH 1:7 ಸಂಕಟ ಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರಿಗೆ ನ್ಯಾಯವಾಗಿದೆ. ನಮಗೆ ಕರ್ತ ಆಗಿರುವ ಯೇಸು ತಮ್ಮ ಶಕ್ತಿಯುತವಾದ ದೂತರೊಂದಿಗೆ ಪರಲೋಕದಿಂದ ಪ್ರಜ್ವಲಿಸುವ ಜ್ವಾಲೆಯಲ್ಲಿ ಪ್ರತ್ಯಕ್ಷರಾಗುವಾಗ ಇದಾಗುವುದು.
2TH 1:8 ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು.
2TH 1:9 ಅಂಥವರು ಕರ್ತ ಯೇಸುವಿನ ಸನ್ನಿಧಿಯಿಂದಲೂ ಅವರ ಮಹಿಮೆಯ ಬಲದಿಂದಲೂ ಬಹಿಷ್ಕೃತರಾಗಿ ನಿತ್ಯನಾಶದ ಶಿಕ್ಷೆಯನ್ನು ಅನುಭವಿಸುವರು.
2TH 1:10 ಆ ದಿನದಲ್ಲಿ ಕರ್ತ ಯೇಸು ತಮ್ಮ ಪರಿಶುದ್ಧ ಜನರಲ್ಲಿ ಮಹಿಮೆ ಹೊಂದುವವರಾಗಿಯೂ ನಂಬುವವರೆಲ್ಲರನ್ನು ಆಶ್ಚರ್ಯಪಡಿಸುವವರಾಗಿಯೂ ಬರುವರು. ನಮ್ಮ ಸಾಕ್ಷಿಯನ್ನು ನಂಬಿದ್ದರಿಂದ ನಿಮಗೂ ಇವು ಸಂಭವಿಸುವುವು.
2TH 1:11 ನಮ್ಮ ದೇವರು ನೀಡಿರುವ ಕರೆಯುವಿಕೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ, ಒಳಿತನ್ನು ಮಾಡಲು ನಿಮ್ಮ ಎಲ್ಲಾ ಇಷ್ಟಾರ್ಥವನ್ನೂ ವಿಶ್ವಾಸದಿಂದ ಆಗಿರುವ ನಿಮ್ಮ ಎಲ್ಲಾ ಕಾರ್ಯಗಳನ್ನೂ ದೇವರು ತಮ್ಮ ಶಕ್ತಿಯಿಂದ ಪರಿಪೂರ್ಣಗೊಳಿಸುವಂತೆ ನಾವು ಯಾವಾಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ.
2TH 1:12 ನಮ್ಮ ದೇವರ ಹಾಗೂ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯ ಅನುಸಾರವಾಗಿ, ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಬೇಕು. ಮಾತ್ರವಲ್ಲದೇ ನೀವು ಕೂಡಾ ಅವರಲ್ಲಿ ಮಹಿಮೆ ಹೊಂದಬೇಕು ಎಂದು ಬೇಡಿಕೊಳ್ಳುತ್ತೇವೆ.
2TH 2:1 ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಬರುವಿಕೆಯನ್ನೂ ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನೂ ಕುರಿತು ನಾವು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:
2TH 2:2 ಕ್ರಿಸ್ತ ಯೇಸುವಿನ ದಿನವು ಈಗಾಗಲೇ ಬಂದಿದೆಯೆಂದು ಪ್ರವಾದನೆಯಿಂದಾಗಲಿ, ಪ್ರಸಂಗದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ನೀವು ಬೇಗನೆ ಚಂಚಲರಾಗಿ ಕಳವಳಪಡಬೇಡಿರಿ.
2TH 2:3 ನಿಮ್ಮನ್ನು ಯಾರೂ ಯಾವ ವಿಧದಲ್ಲಿಯೂ ವಂಚಿಸದಿರಲಿ. ಏಕೆಂದರೆ ವಿಶ್ವಾಸದಿಂದ ಬಿದ್ದುಹೋಗುವಿಕೆಯು ಸಂಭವಿಸಿ, ನಾಶಕ್ಕೆ ನೇಮಕವಾಗಿರುವ ನಿಯಮ ಮೀರುವ ಮನುಷ್ಯನು ಬರುವುದಕ್ಕೆ ಮುಂಚೆ ಕರ್ತ ಯೇಸುವಿನ ದಿನವು ಬರುವುದಿಲ್ಲ!
2TH 2:4 ದೇವರೆಣಿಸಿಕೊಳ್ಳುವ ಎಲ್ಲವನ್ನೂ ಆರಾಧಿಸಲಾಗುವ ಪ್ರತಿಯೊಂದನ್ನೂ ಅವನು ವಿರೋಧಿಸಿ ನಿಲ್ಲುವನು. ದೇವರಿಗೆ ಸಂಬಂಧಿಸಿದ ಇವೆಲ್ಲವುಗಳ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವನು. ತಾನೇ ದೇವರೆಂದು ಘೋಷಿಸಿ ದೇವರ ಆಲಯದಲ್ಲಿ ಕೂತುಕೊಳ್ಳುವನು.
2TH 2:5 ನಾನು ನಿಮ್ಮ ಸಂಗಡ ಇರುವಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ?
2TH 2:6 ಇದಲ್ಲದೆ ಅವನು ನಿಯಮಿತ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವಂತೆ ಈಗ ಅವನನ್ನು ಏನು ಅಡ್ಡಿಮಾಡುತ್ತಿದೆಯೋ ಅದನ್ನು ನೀವೇ ಬಲ್ಲಿರಿ.
2TH 2:7 ಏಕೆಂದರೆ, ನಿಯಮ ಮೀರುವ ರಹಸ್ಯ ಶಕ್ತಿಯು ಈಗಾಗಲೇ ಕಾರ್ಯಮಾಡುತ್ತಿದೆ. ಅವನನ್ನು ದಾರಿಯಿಂದ ತೆಗೆಯುವವರೆಗೆ ಈಗ ಅಡ್ಡಿಮಾಡುವಾತನು ಅಡ್ಡಿ ಮಾಡುತ್ತಲೇ ಇರುವನು.
2TH 2:8 ಆಗ ಆ ನಿಯಮ ಮೀರುವವನು ಪ್ರತ್ಯಕ್ಷನಾಗುವನು. ಅವನನ್ನು ಕರ್ತ ಯೇಸು ತಮ್ಮ ಬಾಯಿಯ ಶ್ವಾಸದಿಂದ ಕೆಡವಿ, ತಮ್ಮ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಮಾಡಿಬಿಡುವರು.
2TH 2:9 ಆ ನಿಯಮ ಮೀರುವವನ ಬರುವಿಕೆಯು ಸೈತಾನನ ಕಾರ್ಯಗಳಿಗೆ ಅನುಸಾರವಾಗಿರುವುದು. ಅವು ಎಲ್ಲಾ ಶಕ್ತಿಯ ಪ್ರದರ್ಶನದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಇರುವವು.
2TH 2:10 ಎಲ್ಲಾ ವಿಧವಾದ ದುಷ್ಟತನದ ವಂಚನೆಯಿಂದಲೂ ಕೂಡಿ ನಾಶವಾಗುವವರಲ್ಲಿ ಇದು ಸಂಭವಿಸುವುದು. ಏಕೆಂದರೆ ಅವರು ರಕ್ಷಣೆ ಹೊಂದುವಂತೆ ಸತ್ಯವನ್ನು ಪ್ರೀತಿಸಲು ನಿರಾಕರಿಸಿದ ಕಾರಣದಿಂದ ನಾಶವಾಗಿ ಹೋಗುವರು.
2TH 2:11 ಇದೇ ಕಾರಣದಿಂದ ದೇವರು ಅವರ ಮೇಲೆ ವಂಚಿಸಲು ಶಕ್ತಿಯುಳ್ಳ ಭ್ರಮೆಯನ್ನು ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುವರು.
2TH 2:12 ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಿಸುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಗುರಿಯಾಗುವರು.
2TH 2:13 ಕರ್ತ ಯೇಸುವಿಗೆ ಪ್ರಿಯರಾಗಿರುವವರೇ, ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಏಕೆಂದರೆ, ನೀವು ಪವಿತ್ರಾತ್ಮ ದೇವರ ಶುದ್ಧೀಕರಣದಿಂದಲೂ ಸತ್ಯವನ್ನು ನಂಬುವುದರಿಂದಲೂ ರಕ್ಷಣೆಯನ್ನು ಹೊಂದಿ ಪ್ರಥಮ ಫಲವಾಗುವುದಕ್ಕೆ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡಿದ್ದಾರೆ.
2TH 2:14 ನಾವು ನಿಮಗೆ ತಿಳಿಸಿದ ಸುವಾರ್ತೆಯ ಮೂಲಕವಾಗಿ, ನೀವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಿಮ್ಮನ್ನು ಈ ಆಯ್ಕೆಗಾಗಿ ಕರೆದರು.
2TH 2:15 ಹೀಗಿರುವುದರಿಂದ ಪ್ರಿಯರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದಿಂದಾಗಲಿ ನಿಮಗೆ ಕಲಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಪಾಲಿಸಿರಿ.
2TH 2:16 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಹಾಗೂ ನಮ್ಮ ತಂದೆ ದೇವರು ನಮ್ಮನ್ನು ಪ್ರೀತಿಸಿ ಕೃಪೆಯಿಂದ ಕೊಟ್ಟಿರುವ ನಮಗೆ ನಿತ್ಯ ಆದರಣೆಯನ್ನೂ ಒಳ್ಳೆಯ ನಿರೀಕ್ಷೆಯನ್ನೂ ನೀಡಿ,
2TH 2:17 ನಿಮ್ಮ ಹೃದಯಗಳನ್ನು ಸಂತೈಸಿ, ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.
2TH 3:1 ಕೊನೆಯದಾಗಿ ಪ್ರಿಯರೇ, ಕರ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಹಬ್ಬಿದಂತೆ ಎಲ್ಲ ಕಡೆಗಳಲ್ಲಿಯೂ ಅತಿವೇಗದಿಂದ ಹಬ್ಬಿ ಹರಡುವಂತೆ ನಮಗಾಗಿ ಬೇಡಿಕೊಳ್ಳಿರಿ.
2TH 3:2 ವಕ್ರಬುದ್ಧಿಯುಳ್ಳ ದುಷ್ಟರ ಕೈಯಿಂದ ನಾವು ತಪ್ಪಿಸಿಕೊಳ್ಳುವಂತೆಯೂ ಪ್ರಾರ್ಥಿಸಿರಿ. ಏಕೆಂದರೆ ಎಲ್ಲರಲ್ಲಿಯೂ ವಿಶ್ವಾಸವಿಲ್ಲವಲ್ಲಾ.
2TH 3:3 ಆದರೆ ಕರ್ತ ಯೇಸು ನಂಬಿಗಸ್ತರು, ಅವರು ನಿಮ್ಮನ್ನು ದೃಢಪಡಿಸಿ ನಿಮ್ಮನ್ನು ಕೆಡುಕನಿಂದ ತಪ್ಪಿಸುವರು.
2TH 3:4 ನಾವು ನಿಮಗೆ ಆಜ್ಞಾಪಿಸಿದವುಗಳನ್ನು ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯವಾಗಿ ಕರ್ತ ಯೇಸುವಿನಲ್ಲಿ ನಮಗೆ ಭರವಸೆಯಿದೆ.
2TH 3:5 ಕರ್ತ ಯೇಸು ದೇವರ ಪ್ರೀತಿಯಲ್ಲಿಯೂ ತಮ್ಮ ತಾಳ್ಮೆಯಲ್ಲಿಯೂ ನಿಮ್ಮ ಹೃದಯಗಳನ್ನು ನಡೆಸಲಿ.
2TH 3:6 ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ, ನಮ್ಮಿಂದ ಸ್ವೀಕರಿಸಿದ ಬೋಧನೆಯನ್ನು ಅನುಸರಿಸದೆ, ಸೋಮಾರಿಯಾಗಿ ಅಶಿಸ್ತಿನಿಂದ ನಡೆಯುವ ಪ್ರತಿ ವಿಶ್ವಾಸಿಗೆ ನೀವು ದೂರವಾಗಿರಬೇಕು.
2TH 3:7 ನೀವು ನಮ್ಮ ಮಾದರಿಯನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ. ಏಕೆಂದರೆ ನಾವು ನಿಮ್ಮಲ್ಲಿರುವಾಗ ಸೋಮಾರಿಗಳಾಗಿರಲಿಲ್ಲ.
2TH 3:8 ನಾವು ಉಚಿತವಾಗಿ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರದೆಂದು ಹಗಲಿರುಳೂ ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದೆವು.
2TH 3:9 ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದಲ್ಲ. ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಆದರ್ಶರಾಗಿರಬೇಕೆಂದು ಹಾಗೆ ಮಾಡಿದೆವು.
2TH 3:10 ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಉಣ್ಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
2TH 3:11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಶಿಸ್ತಿನಿಂದ ನಡೆಯುತ್ತಾರೆಂದು ಕೇಳಿದ್ದೇವೆ.
2TH 3:12 ಅಂಥವರು ಶಾಂತವಾಗಿ ಕೆಲಸಮಾಡಿ ತಮ್ಮ ಸ್ವಂತ ಆಹಾರವನ್ನೇ ಊಟ ಮಾಡಬೇಕೆಂದು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.
2TH 3:13 ಪ್ರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
2TH 3:14 ಈ ಪತ್ರದ ಮೂಲಕ ಹೇಳಿರುವ ನಮ್ಮ ಮಾತಿಗೆ ಯಾರಾದರೂ ವಿಧೇಯರಾಗದಿದ್ದರೆ ಅಂಥವರನ್ನು ಗುರುತಿಸಿ ಅವರಿಗೆ ನಾಚಿಕೆಯಾಗುವಂತೆ ಅವರ ಸಹವಾಸದಲ್ಲಿ ಸೇರಬೇಡಿರಿ.
2TH 3:15 ಆದರೂ ಅಂಥವರನ್ನು ವೈರಿಯೆಂದು ಎಣಿಸದೆ, ಜೊತೆ ವಿಶ್ವಾಸಿಯೆಂದು ಭಾವಿಸಿ ಬುದ್ಧಿಹೇಳಿರಿ.
2TH 3:16 ನಮಗೆ ಕರ್ತ ಆಗಿರುವ ಯೇಸು ಈ ಸಮಾಧಾನದಲ್ಲಿ ತಾವೇ ಸದಾಕಾಲದಲ್ಲಿಯೂ ಸಕಲ ವಿಧದಲ್ಲಿಯೂ ನಿಮಗೆ ಸಮಾಧಾನವನ್ನು ದಯಪಾಲಿಸಲಿ. ಕರ್ತದೇವರು ನಿಮ್ಮೆಲ್ಲರೊಂದಿಗೆ ಇರಲಿ.
2TH 3:17 ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.
2TH 3:18 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ.
1TI 1:1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು, ನಮಗೆ ರಕ್ಷಕ ಆಗಿರುವ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ,
1TI 1:2 ನಂಬಿಕೆಯಲ್ಲಿ ನನ್ನ ನಿಜ ಪುತ್ರನಾಗಿರುವ ತಿಮೊಥೆಯನಿಗೆ ಬರೆಯುವುದು: ನಮ್ಮ ತಂದೆ ದೇವರಿಂದಲೂ, ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ದೊರೆಯಲಿ.
1TI 1:3 ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸದಲ್ಲಿ ಇದ್ದುಕೊಂಡು ಸುಳ್ಳು ಬೋಧನೆಯನ್ನು ಉಪದೇಶಿಸಬಾರದೆಂತಲೂ
1TI 1:4 ಕಟ್ಟುಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಕೆಲವರಿಗೆ ಆಜ್ಞಾಪಿಸಬೇಕೆಂದು ನಾನು ನಿನಗೆ ಖಂಡಿತವಾಗಿ ಹೇಳಿದಂತೆ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆಯಿಂದುಂಟಾಗುವ ದೇವರ ಕಾರ್ಯಭಾರವನ್ನು ವೃದ್ಧಿ ಮಾಡುವುದೇ ಇಲ್ಲ.
1TI 1:5 ಈ ಆಜ್ಞೆಯ ಗುರಿಯು ಪ್ರೀತಿಯೇ ಆಗಿರುತ್ತದೆ. ಶುದ್ಧ ಹೃದಯ, ಒಳ್ಳೆಯ ಮನಸ್ಸಾಕ್ಷಿ ಹಾಗೂ ನಿಷ್ಕಪಟವಾದ ನಂಬಿಕೆಯಿಂದ ಈ ಪ್ರೀತಿಯು ಹುಟ್ಟುತ್ತದೆ.
1TI 1:6 ಕೆಲವರು ಇವುಗಳನ್ನು ಬಿಟ್ಟುಬಿಟ್ಟು ವ್ಯರ್ಥವಾದ ಮಾತುಗಳಿಗೆ ತಿರುಗಿಕೊಂಡಿದ್ದಾರೆ.
1TI 1:7 ಅವರು ನಿಯಮದ ಬೋಧಕರಾಗಿರಲು ಬಯಸಿದರೂ ತಾವು ಹೇಳುವುದನ್ನಾಗಲಿ, ತಾವು ಸ್ಥಾಪಿಸುವುದನ್ನಾಗಲಿ ಏನೆಂದು ದೃಢನಿಶ್ಚಯವಿಲ್ಲದವರಾಗಿದ್ದಾರೆ.
1TI 1:8 ಒಬ್ಬನು ನಿಯಮವನ್ನು ಸರಿಯಾಗಿ ಉಪಯೋಗಿಸುವುದಾದರೆ ಅದು ಒಳ್ಳೆಯದೆಂದು ನಾವು ಬಲ್ಲೆವು.
1TI 1:9 ನಿಯಮವು ನೀತಿವಂತರಿಗೋಸ್ಕರ ಅಲ್ಲ. ಬದಲಿಗೆ ಅದು ಅವಿಧೇಯರಿಗೆ, ಅಕ್ರಮಗಾರರಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಅಪವಿತ್ರರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ, ಕೊಲೆಗಾರರಿಗೆ,
1TI 1:10 ಜಾರರಿಗೆ, ಸಲಿಂಗಕಾಮಿಗಳಿಗೆ, ನರಚೋರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ, ಸ್ವಸ್ಥಬೋಧನೆಯನ್ನು ವಿರೋಧಿಸುವ ಬೇರೆ ಏನಾದರೂ ಇದ್ದರೆ ಮೋಶೆಯ ನಿಯಮವು ಇಂಥವವರಿಗಾಗಿ ಕೊಡಲಾಗಿದೆ ಎಂದು ನಮಗೆ ತಿಳಿದಿದೆ.
1TI 1:11 ಈ ಬೋಧನೆಯು ಭಾಗ್ಯವಂತರಾದ ದೇವರ ಮಹಿಮೆಯ ಸುವಾರ್ತೆಗೆ ಅನುರೂಪವಾಗಿದೆ. ಈ ಸುವಾರ್ತೆಯು ನನ್ನ ವಶಕ್ಕೆ ಕೊಡಲಾಗಿದೆ.
1TI 1:12 ನನ್ನನ್ನು ಬಲಪಡಿಸುವ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವು ನನ್ನನ್ನು ನಂಬಿಗಸ್ತನೆಂದು ಎಣಿಸಿ ಸೇವೆಗೆ ನೇಮಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
1TI 1:13 ಮೊದಲು ದೇವದೂಷಕನೂ ಹಿಂಸಕನೂ ಅಪಮಾನ ಮಾಡುವವನೂ ಆಗಿದ್ದ ನಾನು ಅಜ್ಞಾನಿಯಾಗಿ ಅಪನಂಬಿಕೆಯಲ್ಲಿ ಹಾಗೆ ವರ್ತಿಸಿದ್ದರೂ ದೇವರು ನನಗೆ ಕರುಣೆತೋರಿದರು.
1TI 1:14 ಆದರೆ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಕೃಪೆಯು ನನಗೆ ಧಾರಾಳವಾಗಿ ಸುರಿಯಲಾಯಿತು. ಮಾತ್ರವಲ್ಲದೆ ವಿಶ್ವಾಸ ಪ್ರೀತಿಯೊಂದಿಗೆ ಅತ್ಯಧಿಕವಾಯಿತು.
1TI 1:15 ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದರು, ಎಂಬ ವಾಕ್ಯವು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಆ ಪಾಪಿಗಳಲ್ಲಿ ನಾನೇ ಮುಖ್ಯನು.
1TI 1:16 ಆದರೂ ಇನ್ನು ಮುಂದೆ ನಿತ್ಯಜೀವಕ್ಕೆ ತಮ್ಮ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಾಗಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನಲ್ಲಿ ತಮ್ಮ ಪೂರ್ಣ ಸಹನೆಯನ್ನು ತೋರ್ಪಡಿಸಿರುವುದಕ್ಕಾಗಿ ನನಗೆ ಕರುಣೆ ದೊರೆಯಿತು.
1TI 1:17 ನಿತ್ಯವಾದ ಅರಸರೂ ಅಮರರೂ ಅದೃಶ್ಯರೂ ಆಗಿರುವ ಜ್ಞಾನಿಯಾದ ಒಬ್ಬರೇ ದೇವರಿಗೆ ಯುಗಯುಗಾಂತರಗಳಲ್ಲಿಯೂ ಘನವೂ ಮಹಿಮೆಯೂ ಉಂಟಾಗಲಿ. ಆಮೆನ್.
1TI 1:18 ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ.
1TI 1:19 ನಂಬಿಗಸ್ತನೂ ಒಳ್ಳೆಯ ಮನಸ್ಸಾಕ್ಷಿಯುಳ್ಳವನೂ ಆಗಿರು. ಕೆಲವರು ಈ ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ಹಡಗನ್ನು ಒಡೆದವರ ಹಾಗೆ ಇದ್ದಾರೆ.
1TI 1:20 ಹುಮೆನಾಯನೂ ಅಲೆಕ್ಸಾಂಡರನೂ ಅಂಥವರಾಗಿದ್ದಾರೆ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನಿಗೆ ಒಪ್ಪಿಸಿಬಿಟ್ಟಿದ್ದೇನೆ.
1TI 2:1 ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಪ್ರಬೋಧಿಸುತ್ತೇನೆ.
1TI 2:2 ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು.
1TI 2:3 ಏಕೆಂದರೆ ಇದು ನಮ್ಮ ರಕ್ಷಕರಾದ ದೇವರ ಮುಂದೆ ಒಳ್ಳೆಯದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಇದೆ.
1TI 2:4 ಎಲ್ಲಾ ಮನುಷ್ಯರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ದೇವರ ಚಿತ್ತವಾಗಿದೆ.
1TI 2:5 ದೇವರು ಒಬ್ಬರೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥ ಒಬ್ಬರೇ. ಅವರು ಮನುಷ್ಯರಾಗಿ ಬಂದ ಕ್ರಿಸ್ತ ಯೇಸುವೇ.
1TI 2:6 ಯೇಸು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು. ಇದೇ ಸೂಕ್ತ ಸಮಯದಲ್ಲಿ ನೀಡಬೇಕಾದ ಸಾಕ್ಷಿಯಾಗಿದೆ.
1TI 2:7 ಇದಕ್ಕಾಗಿಯೇ ಸಂದೇಶ ಸಾರುವವನೂ ಅಪೊಸ್ತಲನೂ ಆಗಿರುವ ನಾನು ಯೆಹೂದ್ಯರಲ್ಲದವರಿಗೆ ನಂಬಿಗಸ್ತನಾದ ಸತ್ಯ ಬೋಧಕನಾಗಿ ನೇಮಕವಾದೆನು. ಇದು ಸುಳ್ಳಲ್ಲ, ಸತ್ಯವನ್ನೇ ಹೇಳುತ್ತೇನೆ.
1TI 2:8 ಆದ್ದರಿಂದ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ಸಂದೇಹವೂ ಇಲ್ಲದೆ ಶುದ್ಧವಾದ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ.
1TI 2:9 ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ,
1TI 2:10 ದೇವ ಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ತಕ್ಕಂತೆ ಸತ್ಕ್ರಿಯೆಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು.
1TI 2:11 ಸ್ತ್ರೀಯು ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು.
1TI 2:12 ಆದರೆ ಉಪದೇಶ ಮಾಡುವುದಕ್ಕಾಗಲಿ, ಪುರುಷನ ಮೇಲೆ ಅಧಿಕಾರ ನಡೆಸುವುದಕ್ಕಾಗಲಿ ಸ್ತ್ರೀಗೆ ನಾನು ಅಪ್ಪಣೆ ಕೊಡುವುದಿಲ್ಲ. ಆಕೆಯು ಮೌನವಾಗಿರಬೇಕು.
1TI 2:13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮನು, ಆಮೇಲೆ ಹವ್ವಳು.
1TI 2:14 ಆದಾಮನು ವಂಚನೆಗೊಳಗಾಗಲಿಲ್ಲ, ಸ್ತ್ರೀಯು ವಂಚನೆಗೊಳಗಾಗಿ ಅಪರಾಧಿಯಾದಳು.
1TI 2:15 ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆ, ಪ್ರೀತಿ ಹಾಗೂ ಪರಿಶುದ್ಧತೆಯಲ್ಲಿ ನೆಲೆಗೊಂಡಿದ್ದರೆ ಅವರು ಮಗುವನ್ನು ಹೆರುವುದರ ಮೂಲಕ ರಕ್ಷಣೆಹೊಂದುವರು.
1TI 3:1 ಸಭೆಯ ಮೇಲ್ವಿಚಾರಕನಾಗಲು ಬಯಸುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
1TI 3:2 ಸಭೆಯ ಮೇಲ್ವಿಚಾರಕನು ನಿಂದಾರಹಿತನಾಗಿ, ಏಕಪತ್ನಿಯುಳ್ಳವನೂ ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಗೌರವಸ್ಥನೂ ಅತಿಥಿ ಸತ್ಕಾರ ಮಾಡುವವನೂ ಬೋಧಿಸುವುದರಲ್ಲಿ ಪ್ರವೀಣನೂ ಆಗಿರಬೇಕು.
1TI 3:3 ಅವನು ಮದ್ಯಪಾನ ಮಾಡುವವನಾಗಿರಬಾರದು, ಹೊಡೆದಾಡುವವನಾಗಿರಬಾರದು. ಆದರೆ ಸಾತ್ವಿಕನೂ ಕುತರ್ಕ ಮಾಡದವನೂ ಹಣದಾಶೆಯಿಲ್ಲದವನೂ ಆಗಿರಬೇಕು.
1TI 3:4 ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.
1TI 3:5 ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?
1TI 3:6 ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು.
1TI 3:7 ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.
1TI 3:8 ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ನಾಲಿಗೆಯುಳ್ಳವರಾಗಿರಬಾರದು. ಮದ್ಯಾಸಕ್ತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ
1TI 3:9 ನಂಬಿಕೆಯ ರಹಸ್ಯವನ್ನು ಶುದ್ಧಮನಸ್ಸಾಕ್ಷಿಯಿಂದ ಹಿಡಿದುಕೊಂಡವರಾಗಿರಬೇಕು.
1TI 3:10 ಇದಲ್ಲದೆ ಇವರು ಸಹ ಮೊದಲು ಪರೀಕ್ಷೆಗೊಳಪಡಬೇಕು. ಅವರು ನಿಂದಾರಹಿತರಾಗಿ ಕಂಡು ಬಂದರೆ ಸಭಾ ಹಿರಿಯರಾಗಿ ಸೇವೆಮಾಡಲಿ.
1TI 3:11 ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು. ಚಾಡಿ ಹೇಳದವರೂ ಸ್ವಸ್ಥ ಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು.
1TI 3:12 ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು.
1TI 3:13 ಸಭಾ ಹಿರಿಯರಾಗಿ ಚೆನ್ನಾಗಿ ಸೇವೆ ಮಾಡಿದವರು ತಮಗೆ ಒಳ್ಳೆಯ ಸ್ಥಿತಿಯನ್ನೂ, ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸದಲ್ಲಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
1TI 3:14 ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.
1TI 3:15 ಒಂದು ವೇಳೆ ನಾನು ತಡ ಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಎಂದರೆ ಜೀವಸ್ವರೂಪರಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಿರಬೇಕು.
1TI 3:16 ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”
1TI 4:1 ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಗೊಟ್ಟು ವಿಶ್ವಾಸದಲ್ಲಿ ಬಿದ್ದುಹೋಗುವರೆಂದು ಪವಿತ್ರಾತ್ಮ ದೇವರು ಸ್ಪಷ್ಟವಾಗಿ ಹೇಳುತ್ತಾರೆ.
1TI 4:2 ಅವರು ಕಪಟಿಗಳೂ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಯುಳ್ಳವರಾದರೂ ಆಗಿದ್ದು
1TI 4:3 ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ತಿಳಿದುಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವುದಕ್ಕೋಸ್ಕರ ದೇವರು ಸೃಷ್ಟಿಸಿದ ಆಹಾರವನ್ನು ತಿನ್ನಬಾರದೆಂತಲೂ ಆಜ್ಞಾಪಿಸುತ್ತಾರೆ.
1TI 4:4 ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದಾಗಿದೆ. ಕೃತಜ್ಞತೆ ಮಾಡಿ ಸ್ವೀಕರಿಸುವ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.
1TI 4:5 ಅದು ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಪವಿತ್ರವಾಗುತ್ತದೆ.
1TI 4:6 ಈ ವಿಷಯಗಳನ್ನು ಸಹೋದರರಿಗೆ ತಿಳಿಸುವವನಾದರೆ ನೀನು ಅನುಸರಿಸುತ್ತಿರುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವನಾಗಿ ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ.
1TI 4:7 ಪ್ರಾಪಂಚಿಕ ಹಾಗೂ ಅಜ್ಜಿ ಕಥೆಗಳನ್ನು ನಿರಾಕರಿಸಿ ನೀನು ದೇವಭಕ್ತಿಯನ್ನು ಅಭ್ಯಾಸ ಮಾಡಿಕೋ.
1TI 4:8 ದೇಹ ಸಾಧನೆಯೂ ಸ್ವಲ್ಪಮಟ್ಟಿಗೆ ಲಾಭಕರವಾಗಿದೆ. ಭಕ್ತಿಯಾದರೋ ಎಲ್ಲಾ ವಿಧದಲ್ಲಿಯೂ ಲಾಭಕರವಾದದ್ದು. ಅದಕ್ಕೆ ಈಗಲೂ ಮುಂದೆಯೂ ಜೀವ ವಾಗ್ದಾನ ಉಂಟು.
1TI 4:9 ಈ ಮಾತು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ.
1TI 4:10 ಇದಕ್ಕಾಗಿ ನಾವು ಕಷ್ಟಪಡುತ್ತೇವೆ ಮತ್ತು ಪ್ರಯಾಸ ಪಡುತ್ತೇವೆ. ಏಕೆಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕ ಆಗಿರುವ ಜೀವಸ್ವರೂಪರಾದ ದೇವರನ್ನು ನಾವು ನಿರೀಕ್ಷಿಸಿದ್ದೇವೆ.
1TI 4:11 ಈ ವಿಷಯಗಳನ್ನು ಆಜ್ಞಾಪಿಸಿ ಬೋಧಿಸು.
1TI 4:12 ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು.
1TI 4:13 ನಾನು ಬರುವ ತನಕ ಓದುವುದರಲ್ಲಿಯೂ ಎಚ್ಚರಿಸುವುದರಲ್ಲಿಯೂ ಬೋಧಿಸುವುದರಲ್ಲಿಯೂ ಲಕ್ಷ್ಯಕೊಡು.
1TI 4:14 ನಿನ್ನಲ್ಲಿರುವ ವರವನ್ನು ಅಲಕ್ಷ್ಯ ಮಾಡಬೇಡ. ಅದು ಸಭೆಯ ಹಿರಿಯರು ಪ್ರವಾದನೆಯ ಮೂಲಕ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ನಿನಗೆ ಕೊಡಲಾಯಿತಲ್ಲವೇ?
1TI 4:15 ಈ ವಿಷಯಗಳನ್ನು ಧ್ಯಾನಿಸುವವನಾಗಿರು. ಇವುಗಳಲ್ಲಿಯೇ ನೆಲೆಗೊಂಡಿರು. ಹೀಗೆ ನಿನ್ನ ಪ್ರಗತಿಯು ಎಲ್ಲರಿಗೂ ಪ್ರಕಟವಾಗುವುದು.
1TI 4:16 ನಿನ್ನ ವಿಷಯದಲ್ಲಿಯೂ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿಯೇ ನಿರತನಾಗಿರು. ಹೀಗೆ ಮಾಡುವುದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವೆ.
1TI 5:1 ವೃದ್ಧನನ್ನು ಗದರಿಸದೆ ತಂದೆಯಂತೆಯೂ ಯೌವನಸ್ಥರನ್ನು ಸಹೋದರರಂತೆಯೂ
1TI 5:2 ವೃದ್ಧ ಸ್ತ್ರೀಯರನ್ನು ತಾಯಿಯಂತೆಯೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆಯಿಂದ ಸಹೋದರಿಯರಂತೆಯೂ ಅವರವರಿಗೆ ಬುದ್ಧಿ ಹೇಳು.
1TI 5:3 ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯರನ್ನು ಗುರುತಿಸಿ ಅವರಿಗೆ ಸಹಾಯಮಾಡು.
1TI 5:4 ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿಯಿಂದಿರುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.
1TI 5:5 ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲು ಇರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.
1TI 5:6 ಆದರೆ ಭೋಗಿಯಾಗಿರುವ ವಿಧವೆಯು ಬದುಕಿರುವಾಗಲೂ ಸತ್ತವಳೇ.
1TI 5:7 ವಿಧವೆಯರು ನಿಂದೆಗೆ ಗುರಿಯಾಗದಂತೆ ಇವುಗಳನ್ನು ಆಜ್ಞಾಪಿಸು.
1TI 5:8 ಯಾವನಾದರೂ ಸ್ವಂತದವರನ್ನು ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆದವನೂ ಅವಿಶ್ವಾಸಿಗಿಂತ ನೀಚನೂ ಆಗಿದ್ದಾನೆ.
1TI 5:9 ವಯಸ್ಸಿನಲ್ಲಿ ಅರವತ್ತಕ್ಕೆ ಕಡಿಮೆಯಿಲ್ಲದ ವಿಧವೆಯರನ್ನು ಮಾತ್ರ ವಿಧವೆಯರ ಪಟ್ಟಿಯಲ್ಲಿ ಸೇರಿಸು. ಅಂಥವಳು ಗಂಡನಿಗೆ ನಂಬಿಗಸ್ತಳಾಗಿದ್ದಿರಬೇಕು.
1TI 5:10 ಆಕೆಯು ಮಕ್ಕಳನ್ನು ಸಾಕಿದವಳೂ ಅತಿಥಿ ಸತ್ಕಾರ ಮಾಡಿದವಳೂ ಭಕ್ತರ ಪಾದಗಳನ್ನು ತೊಳೆದವಳೂ ಸಂಕಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಹೀಗೆ ಪ್ರತಿಯೊಂದು ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.
1TI 5:11 ಆದರೆ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ ಅವರಲ್ಲಿ ದೈಹಿಕ ಅಪೇಕ್ಷೆಗಳು ಕ್ರಿಸ್ತ ಯೇಸುವಿನ ಮೇಲಿಟ್ಟ ಅವರ ಪ್ರತಿಷ್ಠೆಯನ್ನು ಸೋಲಿಸಿ, ಅವರು ಮದುವೆ ಮಾಡಿಕೊಳ್ಳುವಂತೆ ಮಾಡುವವು.
1TI 5:12 ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ಬಿಟ್ಟಿದ್ದರಿಂದ ತೀರ್ಪಿಗೆ ಗುರಿಯಾಗುವರು.
1TI 5:13 ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಸೋಮಾರಿತನವನ್ನು ಕಲಿಯುತ್ತಾರೆ. ಸೋಮಾರಿಗಳಾಗುವುದಷ್ಟೇ ಅಲ್ಲ, ಹರಟೆ ಮಾತನಾಡುವವರೂ ಇತರರ ಕೆಲಸದಲ್ಲಿ ತಲೆಹಾಕುವವರಾಗಿ ಆಡಬಾರದ ಮಾತುಗಳನ್ನಾಡುವವರೂ ಆಗುತ್ತಾರೆ.
1TI 5:14 ಆದ್ದರಿಂದ ಯೌವನಸ್ಥ ವಿಧವೆಯರು ಮದುವೆಮಾಡಿಕೊಂಡು, ಮಕ್ಕಳನ್ನು ಹೆತ್ತು, ಮನೆಯ ಕೆಲಸಮಾಡಿ, ವಿರೋಧಿಯ ನಿಂದೆಗೆ ಆಸ್ಪದ ಕೊಡಬಾರದೆಂಬುದೇ ನನ್ನ ಅಪೇಕ್ಷೆ.
1TI 5:15 ಈಗಾಗಲೇ ಕೆಲವರು ದಾರಿತಪ್ಪಿ ಸೈತಾನನನ್ನು ಹಿಂಬಾಲಿಸಿದ್ದಾರೆ.
1TI 5:16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆ ಇಂಥವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸಬೇಕಾಗಿರುವುದರಿಂದ ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.
1TI 5:17 ಸಭಾಕಾರ್ಯಗಳನ್ನು ಸರಿಯಾಗಿ ನಡೆಸುತ್ತಿರುವ ಹಿರಿಯರು, ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆಯಲ್ಲಿಯೂ ಶ್ರಮಿಸುತ್ತಿರುವವರು ಇಮ್ಮಡಿಯಾದ ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.
1TI 5:18 ಏಕೆಂದರೆ, “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು!” ಎಂತಲೂ, “ಕೆಲಸದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ!” ಎಂತಲೂ ಪವಿತ್ರ ವೇದದಲ್ಲಿ ಹೇಳಿದೆಯಲ್ಲಾ.
1TI 5:19 ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ, ಇಬ್ಬರ ಇಲ್ಲವೆ ಮೂವರ ಸಾಕ್ಷಿ ಇಲ್ಲದೆ ಅದನ್ನು ಅಂಗೀಕರಿಸಬೇಡ.
1TI 5:20 ಪಾಪಮಾಡುವ ಹಿರಿಯರನ್ನು ಎಲ್ಲರ ಮುಂದೆಯೇ ಗದರಿಸು. ಇದರಿಂದ ಇತರರಿಗೂ ಎಚ್ಚರಿಕೆಯಾಗುವುದು.
1TI 5:21 ನೀನು ವಿಚಾರಿಸುವುದಕ್ಕೆ ಮೊದಲೇ ತೀರ್ಮಾನಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಗೊಳ್ಳಬೇಕೆಂದು ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ಆಯ್ಕೆಯಾದ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ.
1TI 5:22 ಅವಸರದಿಂದ ಯಾರ ಮೇಲೆಯೂ ಹಸ್ತವನ್ನಿಟ್ಟು, ಸಭಾ ಹಿರಿಯರನ್ನಾಗಿ ನೇಮಿಸಬೇಡ. ಇತರರ ಪಾಪಗಳಲ್ಲಿ ಪಾಲುಗಾರನಾಗಬೇಡ. ನಿನ್ನನ್ನು ಶುದ್ಧನಾಗಿ ಕಾಪಾಡಿಕೋ.
1TI 5:23 ನೀರನ್ನು ಮಾತ್ರ ಕುಡಿಯದೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ್ಗೆ ಉಂಟಾಗುವ ಬಲಹೀನತೆಗಳಿಗಾಗಿಯೂ ಸ್ವಲ್ಪ ದ್ರಾಕ್ಷಾರಸವನ್ನು ಉಪಯೋಗಿಸು.
1TI 5:24 ಕೆಲವರ ಪಾಪಗಳು ತೀರ್ಪಿಗೆ ಮುಂಚೆಯೇ ಬಹಿರಂಗವಾಗುತ್ತವೆ. ಇನ್ನು ಕೆಲವರ ಪಾಪಗಳು ಕ್ರಮೇಣವಾಗಿ ಕಂಡುಬರುತ್ತವೆ.
1TI 5:25 ಅದರಂತೆಯೇ ಕೆಲವರ ಒಳ್ಳೆಯ ಕ್ರಿಯೆಗಳು ಮುಂಚೆಯೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವ ಒಳ್ಳೆಯ ಕ್ರಿಯೆಗಳು ನಿರಂತರವಾಗಿ ಮರೆಯಾಗಿರಲಾರವು.
1TI 6:1 ದೇವರ ನಾಮವೂ ನಮ್ಮ ಬೋಧನೆಯೂ ದೂಷಣೆಗೆ ಗುರಿಯಾಗದಂತೆ ದಾಸತ್ವದ ನೊಗ ಹೊತ್ತಿರುವವರು ತಮ್ಮ ಸ್ವಂತ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರೆಂದೆಣಿಸಲಿ.
1TI 6:2 ವಿಶ್ವಾಸಿಗಳಾದ ಯಜಮಾನರಿರುವವರು ಆ ಯಜಮಾನರು ಸಹೋದರನಾಗಿರುವುದರಿಂದ ಅವರನ್ನು ತಾತ್ಸಾರ ಮಾಡದಿರಲಿ. ಏಕೆಂದರೆ ತಮ್ಮ ಸೇವೆಯಿಂದ ಲಾಭ ಹೊಂದುವವರು ವಿಶ್ವಾಸಿಗಳು ಮತ್ತು ತಮಗೆ ಪ್ರಿಯರಾಗಿದ್ದಾರೆ ಎಂದು ತಿಳಿದು ಅವರಿಗೆ ಉತ್ತಮ ಸೇವೆಮಾಡಲಿ. ಇವುಗಳನ್ನು ಅವರಿಗೆ ಬೋಧಿಸಿ ಎಚ್ಚರಿಸು.
1TI 6:3 ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶುದ್ಧವಾದ ಮಾತುಗಳಿಗೂ ಭಕ್ತಿಗೆ ಅನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ,
1TI 6:4 ಅಂಥವರು ಅಹಂಕಾರಿಯೂ ವಿವೇಕರಹಿತನಾಗಿದ್ದಾರೆ. ಅವರು ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯಪಡುವ ಭ್ರಾಂತರಾಗಿ ಸತ್ಯವನ್ನು ಬಿಟ್ಟು, ಕುತರ್ಕ ವಾಗ್ವಾದಗಳನ್ನು ಮಾಡುವವರಾಗಿದ್ದಾರೆ.
1TI 6:5 ಹೀಗೆ ಅನಾರೋಗ್ಯಕರವಾದ ವಿವಾದಗಳನ್ನೂ ಕೆಲವು ಮಾತುಗಳ ಕುರಿತಾಗಿರುವ ತರ್ಕಗಳನ್ನೂ ಸೃಷ್ಟಿಸುವ ಪ್ರಸಿದ್ಧರಾಗಿದ್ದಾರೆ. ಅಂಥವರು ದೇವಭಕ್ತಿಯನ್ನು ಆರ್ಥಿಕ ಲಾಭವನ್ನಾಗಿ ಭಾವಿಸುವವರಾಗಿದ್ದಾರೆ.
1TI 6:6 ಸಂತೃಪ್ತಿಯೊಂದಿಗಿರುವ ದೇವಭಕ್ತಿಯೇ ದೊಡ್ಡ ಲಾಭವು.
1TI 6:7 ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬರಲಿಲ್ಲ. ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.
1TI 6:8 ಆದರೆ ಅನ್ನವಸ್ತ್ರಗಳು ನಮಗಿರುವುದಾದರೆ, ನಾವು ಅದರಲ್ಲಿ ತೃಪ್ತರಾಗಿರೋಣ.
1TI 6:9 ಆದರೆ ಐಶ್ವರ್ಯವಂತರಾಗಬೇಕೆಂದು ಬಯಸುವವರು ಶೋಧನೆಯಲ್ಲಿಯೂ ಉರುಲಿನಲ್ಲಿಯೂ ಬಿದ್ದು ಅನೇಕ ಬುದ್ಧಿಹೀನವಾದ ಹಾಗೂ ಹಾನಿಕರವಾದ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ವಿನಾಶನಗಳಲ್ಲಿ ಮುಳುಗಿಸುತ್ತವೆ.
1TI 6:10 ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಬೇರಾಗಿದೆ. ಕೆಲವರು ಹಣಕ್ಕಾಗಿ ಆತುರಪಟ್ಟು ನಂಬಿಕೆಯಿಂದ ದೂರಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.
1TI 6:11 ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು.
1TI 6:12 ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ?
1TI 6:13 ಎಲ್ಲಕ್ಕೂ ಜೀವ ನೀಡುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಒಳ್ಳೆಯ ಅರಿಕೆಯನ್ನು ಸಾಕ್ಷಿಯಾಗಿ ನೀಡಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳವುದೇನೆಂದರೆ:
1TI 6:14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.
1TI 6:15 ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು.
1TI 6:16 ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್.
1TI 6:17 ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು.
1TI 6:18 ಅಂಥವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲು ಕೊಡುವುದರಲ್ಲಿ ಸಿದ್ಧರಾಗಿರುವವರೂ ಪರೋಪಕಾರ ಮಾಡುವವರೂ ಆಗಿರಬೇಕೆಂದು ಅವರನ್ನು ಪ್ರಬೋಧಿಸು.
1TI 6:19 ಹೀಗೆ ಮುಂದಿನ ಕಾಲಕ್ಕೆ ಯಥಾರ್ಥ ಜೀವವಾಗಿರುವ ನಿತ್ಯಜೀವವನ್ನು ಹಿಡಿದುಕೊಳ್ಳುವಂತೆ ತಮಗೋಸ್ಕರ ಸ್ಥಿರವಾದ ಅಸ್ತಿವಾರಕ್ಕಾಗಿ ನಿಕ್ಷೇಪಗಳನ್ನು ಕೂಡಿಸಿಟ್ಟುಕೊಳ್ಳಲಿ.
1TI 6:20 ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು.
1TI 6:21 ಕೆಲವರು ಇಂಥವುಗಳಿಗೆ ಒಳಪಟ್ಟು ನಂಬಿಕೆಯಿಂದ ಗುರಿತಪ್ಪಿ ಹೋಗಿದ್ದಾರೆ. ಕೃಪೆಯು ನಿಮ್ಮೊಂದಿಗಿರಲಿ.
2TI 1:1 ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನದ ಪ್ರಕಾರ ದೇವರ ಚಿತ್ತದಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೆಂಬ ನಾನು,
2TI 1:2 ನನ್ನ ಪ್ರಿಯ ಪುತ್ರನಾದ ತಿಮೊಥೆಯನಿಗೆ ಬರೆಯುವುದು: ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ.
2TI 1:3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ನೆನೆಸಿಕೊಳ್ಳುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕರಂತೆ ದೇವರ ಸೇವೆಮಾಡುತ್ತಾ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
2TI 1:4 ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು, ನಿನ್ನನ್ನು ನೋಡಿ ಆನಂದಭರಿತನಾಗಬೇಕೆಂದು ಬಹಳವಾಗಿ ಹಂಬಲಿಸುತ್ತೇನೆ.
2TI 1:5 ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನಿಕೆಯಲ್ಲಿಯೂ ಮೊದಲು ಇದ್ದ ನಂಬಿಕೆಯು ಈಗ ನಿನ್ನಲ್ಲಿಯೂ ಇದೆಯೆಂದು ನಾನು ದೃಢವಾಗಿ ನಂಬಿದ್ದೇನೆ.
2TI 1:6 ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತಗಳನ್ನು ಇಟ್ಟಿದ್ದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ.
2TI 1:7 ದೇವರು ನಮಗೆ ಕೊಟ್ಟಿರುವ ಆತ್ಮವು ಶಕ್ತಿ, ಪ್ರೀತಿ ಹಾಗೂ ಸ್ವಶಿಸ್ತು ಆತ್ಮವೇ ಹೊರತು ಭಯದ ಆತ್ಮವಲ್ಲ.
2TI 1:8 ಹೀಗಿರುವುದರಿಂದ ನಮ್ಮ ಕರ್ತ ಯೇಸುವಿನ ಸಾಕ್ಷಿಯ ವಿಷಯವಾಗಿಯೂ ಅವರ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡಬೇಡ. ಅದರ ಬದಲಾಗಿ, ದೇವರ ಶಕ್ತಿಗೆ ಅನುಸಾರವಾಗಿ, ಸುವಾರ್ತೆಗೋಸ್ಕರ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು.
2TI 1:9 ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು.
2TI 1:10 ಆದರೆ ಈಗ ನಮಗೆ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಕೃಪೆ ಪ್ರಕಟವಾಯಿತು. ಕ್ರಿಸ್ತ ಯೇಸು ಮರಣವನ್ನು ನಾಶಮಾಡಿ, ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದರು.
2TI 1:11 ಈ ಸುವಾರ್ತೆಯನ್ನು ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಯೆಹೂದ್ಯರಲ್ಲದವರಿಗೆ ಉಪದೇಶಕನಾಗಿಯೂ ದೇವರಿಂದ ನೇಮಕವಾದೆನು.
2TI 1:12 ಇದಕ್ಕಾಗಿಯೇ ನಾನು ಈ ಶ್ರಮೆಗಳನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ಏಕೆಂದರೆ ನಾನು ನಂಬಿರುವ ಕ್ರಿಸ್ತ ಯೇಸುವನ್ನು ಬಲ್ಲೆನು. ನಾನು ಕ್ರಿಸ್ತ ಯೇಸುವಿಗೆ ಒಪ್ಪಿಸಿದ್ದನ್ನು ಅವರು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತರಾಗಿದ್ದಾರೆಂಬ ದೃಢವಿಶ್ವಾಸ ನನಗಿದೆ.
2TI 1:13 ನೀನು ನನ್ನಿಂದ ಕೇಳಿದ ಸ್ವಸ್ಥವಾಕ್ಯಗಳನ್ನು ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸ ಹಾಗೂ ಪ್ರೀತಿಯೊಂದಿಗೆ ಒಂದು ಮಾದರಿಯಾಗಿ ಹಿಡಿದುಕೋ.
2TI 1:14 ನಿನಗೆ ಒಪ್ಪಿಸಲಾಗಿರುವ ಆ ಒಳ್ಳೆಯದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮ ದೇವರ ಮೂಲಕ ನೀನು ಕಾಪಾಡು.
2TI 1:15 ಏಷ್ಯ ಸೀಮೆಯಲ್ಲಿ ಫುಗೇಲನೂ ಹರ್ಮೊಗೇನನೂ ಒಳಗೊಂಡು ಎಲ್ಲರೂ ನನ್ನನ್ನು ಬಿಟ್ಟು ಹೋದರೆಂಬುದನ್ನು ನೀನು ಬಲ್ಲೆ.
2TI 1:16 ಒನೇಸಿಫೊರನ ಮನೆಯವರಿಗೆ ಕರ್ತ ಯೇಸು ಕರುಣೆಯನ್ನು ದಯಪಾಲಿಸಲಿ. ಏಕೆಂದರೆ ಅವನು ಅನೇಕಾವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆ ಪಡಲಿಲ್ಲ.
2TI 1:17 ಆದರೆ ಅವನು ರೋಮಿನಲ್ಲಿದ್ದಾಗ ಪ್ರಯಾಸದಿಂದ ನನ್ನನ್ನು ಹುಡುಕಿ ಕಂಡುಕೊಂಡನು.
2TI 1:18 ಅವನು ಆ ದಿನದಲ್ಲಿ ಕರ್ತ ಯೇಸುವಿನಿಂದ ಕರುಣೆಯನ್ನು ಕಂಡುಕೊಳ್ಳುವಂತೆ ಕರ್ತ ಯೇಸುವೇ ಅವನಿಗೆ ಅನುಗ್ರಹ ಮಾಡಲಿ. ಎಫೆಸದಲ್ಲಿ ಅವನು ನನಗೆ ಎಷ್ಟು ಸಹಾಯಮಾಡಿದನೆಂಬುದು ನಿನಗೆ ಚೆನ್ನಾಗಿ ಗೊತ್ತಿದೆ.
2TI 2:1 ಆದ್ದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲಗೊಂಡವನಾಗಿರು.
2TI 2:2 ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನು ಇತರರಿಗೆ ಸಹ ಬೋಧಿಸಲು ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.
2TI 2:3 ಆದ್ದರಿಂದ ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು.
2TI 2:4 ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡ ನಾಯಕನನ್ನು ಮೆಚ್ಚಿಸಬೇಕೆಂದು ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳಲಾರನು.
2TI 2:5 ಇದಲ್ಲದೆ ಯಾವನಾದರೂ ಆಟದ ಸ್ವರ್ಧೆಯಲ್ಲಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ, ಅವನು ಜಯಶಾಲಿಯ ಕಿರೀಟ ಹೊಂದುವುದಿಲ್ಲ.
2TI 2:6 ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯದಾಗಿ ಪಾಲುಗಾರನಾಗಿರತಕ್ಕದ್ದು.
2TI 2:7 ನಾನು ಹೇಳುತ್ತಿರುವುದನ್ನು ಆಲೋಚಿಸು. ಕರ್ತ ಯೇಸುವು ಇವೆಲ್ಲವುಗಳಲ್ಲಿ ನಿನಗೆ ವಿವೇಕವನ್ನು ದಯಪಾಲಿಸುವರು.
2TI 2:8 ನನ್ನ ಸುವಾರ್ತೆಯ ಸಾರೋಣಕ್ಕೆ ಅನುಸಾರವಾಗಿ ದಾವೀದನ ವಂಶದವರಾದ ಯೇಸು ಕ್ರಿಸ್ತರು ಸತ್ತವರೊಳಗಿಂದ ಎಬ್ಬಿಸಲಾದರೆಂದು ಜ್ಞಾಪಕಮಾಡಿಕೋ.
2TI 2:9 ಈ ಸುವಾರ್ತೆಗಾಗಿ ನಾನು ಕಷ್ಟವನ್ನು ಅನುಭವಿಸಿ ದುಷ್ಕರ್ಮಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
2TI 2:10 ಆದಕಾರಣ ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ.
2TI 2:11 ಇದು ನಂಬತಕ್ಕ ವಾಕ್ಯವಾಗಿದೆ: ನಾವು ಕ್ರಿಸ್ತ ಯೇಸುವಿನ ಜೊತೆಯಲ್ಲಿ ಸತ್ತಿದ್ದರೆ, ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಜೀವಿಸುವೆವು.
2TI 2:12 ನಾವು ಸಹಿಸಿಕೊಳ್ಳುವವರಾಗಿದ್ದರೆ ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಆಳುವೆವು. ಅವರನ್ನು ನಿರಾಕರಿಸಿದರೆ ಅವರು ಸಹ ನಮ್ಮನ್ನು ನಿರಾಕರಿಸುವರು.
2TI 2:13 ನಾವು ಅಪನಂಬಿಗಸ್ತರಾಗಿದ್ದರೂ ಅವರು ನಂಬಿಗಸ್ತರಾಗಿಯೇ ಉಳಿದಿರುವರು. ಅವರು ತಮ್ಮ ಸ್ವಭಾವವನ್ನು ತಾವೇ ನಿರಾಕರಿಸಲಾರರು.
2TI 2:14 ಈ ವಿಷಯಗಳನ್ನು ದೇವಜನರ ನೆನಪಿಗೆ ತರಬೇಕು. ಕೇಳುವವರಿಗೆ ಯಾವ ಪ್ರಯೋಜನವನ್ನೂ ಉಂಟು ಮಾಡದೆ ಕೆಡವಿ ಹಾಕುವ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ದೇವರ ಮುಂದೆ ಎಚ್ಚರಿಸು.
2TI 2:15 ನೀನು ನಾಚಿಕೆಗೆ ಒಳಪಡದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಬೋಧಿಸುವವನೂ ಆಗಿರುವಂತೆ ನಿನ್ನನ್ನು ದೇವರಿಗೆ ಮೆಚ್ಚಿಕೆಯಾದವನಾಗಿರಲು ಸಮರ್ಪಿಸಲು ಅತ್ಯಂತ ಆಸಕ್ತನಾಗಿರು.
2TI 2:16 ಆದರೆ ಭಕ್ತಿಗೆ ವಿರುದ್ಧವಾದ ಹರಟೆ ಮಾತುಗಳಿಂದ ತೊಲಗಿರು. ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
2TI 2:17 ಅವರ ಬೋಧನೆ ಮಾರಕ ಹುಣ್ಣಿನಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.
2TI 2:18 ಅವರು ಪುನರುತ್ಥಾನವು ಆಗಲೇ ಆಗಿ ಹೋಯಿತೆಂದು ಹೇಳುತ್ತಾ ಸತ್ಯದ ಗುರಿಯನ್ನು ತಪ್ಪಿದವರಾಗಿ ಕೆಲವರ ವಿಶ್ವಾಸವನ್ನು ಕೆಡಿಸಿಬಿಡುವವರಾಗಿದ್ದಾರೆ.
2TI 2:19 ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ, “ತನ್ನವರು ಯಾರಾರೆಂಬುದನ್ನು ಕರ್ತದೇವರು ತಿಳಿದಿದ್ದಾರೆ!” ಎಂತಲೂ, “ಕರ್ತದೇವರ ಹೆಸರನ್ನು ಅರಿಕೆಮಾಡುವವರೆಲ್ಲರೂ ದುಷ್ಟತನವನ್ನು ಬಿಟ್ಟುಬಿಡಬೇಕು!” ಎಂತಲೂ ಮುದ್ರೆ ಉಂಟು.
2TI 2:20 ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಹಾಗೂ ಮಣ್ಣಿನ ಪಾತ್ರೆಗಳೂ ಇರುತ್ತವೆ. ಕೆಲವು ವಿಶೇಷ ಉದ್ದೇಶಗಳಿಗಾಗಿಯೂ ಕೆಲವು ಸಾಮಾನ್ಯ ಉಪಯೋಗಕ್ಕಾಗಿಯೂ ಇರುತ್ತವೆ.
2TI 2:21 ಒಬ್ಬನು ತನ್ನನ್ನು ಸಾಮಾನ್ಯ ಘನಹೀನತೆಯಿಂದ ಶುದ್ಧಮಾಡಿಕೊಂಡರೆ, ಅವನು ವಿಶೇಷ ಉದ್ದೇಶಕ್ಕಾಗಿ ಶುದ್ಧೀಕರಗೊಂಡವನೂ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕಾರ್ಯಕ್ಕೆ ಸಿದ್ಧನೂ ಆಗಿರುವ ಗೌರವದ ಪಾತ್ರೆಯಾಗಿರುವನು.
2TI 2:22 ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು.
2TI 2:23 ಬುದ್ಧಿಯಿಲ್ಲದ ಅಯುಕ್ತ ವಾಗ್ವಾದಗಳು ಜಗಳಗಳನ್ನು ಹುಟ್ಟಿಸುತ್ತವೆ ಎಂದು ತಿಳಿದು ಅವುಗಳನ್ನು ನಿರಾಕರಿಸು.
2TI 2:24 ಕರ್ತ ಯೇಸುವಿನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ದಯೆಯುಳ್ಳವನೂ ಬೋಧಿಸುವುದರಲ್ಲಿ ಪ್ರವೀಣನೂ ಸಹನೆಯುಳ್ಳವನೂ ಆಗಿರಬೇಕು.
2TI 2:25 ವಿರೋಧಿಸುವವರ ಮನಸ್ಸನ್ನು ತಾಳ್ಮೆಯಿಂದ ತಿದ್ದುವವನಾಗಿದ್ದರೆ, ದೇವರು ಒಂದು ವೇಳೆ ಅಂಥವರಿಗೆ ಸತ್ಯದ ತಿಳುವಳಿಕೆಗೆ ನಡೆಸುವ ಪಶ್ಚಾತ್ತಾಪವನ್ನು ಕೊಡುವ ನಿರೀಕ್ಷೆ ಇರುವುದು.
2TI 2:26 ಈ ರೀತಿಯಾಗಿ, ಸೈತಾನನ ಚಿತ್ತವನ್ನು ನೆರವೇರಿಸಲು ಗುಲಾಮರಾಗಿರುವವರು, ಅವನ ಬಲೆಯಿಂದ ಬಿಡುಗಡೆಹೊಂದಿ ಸ್ವಸ್ಥಮನಸ್ಸುಳ್ಳವರಾಗಿ ತಪ್ಪಿಸಿಕೊಳ್ಳುವರು.
2TI 3:1 ಆದರೆ ಕಡೆಯ ದಿವಸಗಳಲ್ಲಿ ಕಷ್ಟಕರವಾದ ಕಾಲಗಳು ಬರುವುವೆಂಬುದನ್ನು ಸಹ ತಿಳಿದುಕೋ.
2TI 3:2 ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರೂ ಹಣದಾಶೆಯುಳ್ಳವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೇವದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ಅಶುದ್ಧರೂ
2TI 3:3 ಮಾನವತ್ವವಿಲ್ಲದವರೂ ಸಮಾಧಾನವಾಗದವರೂ ಚಾಡಿಕೋರರೂ ಸಂಯಮವಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯದನ್ನು ಪ್ರೀತಿಸದವರೂ
2TI 3:4 ದ್ರೋಹಿಗಳೂ ದುಡುಕುವವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವುದಕ್ಕಿಂತಲೂ ಭೋಗಗಳನ್ನೇ ಪ್ರೀತಿಸುವವರೂ
2TI 3:5 ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು. ಇಂಥವರನ್ನು ಬಿಟ್ಟು ಪ್ರತ್ಯೇಕವಾಗಿರು.
2TI 3:6 ಇಂಥವರು ಮನೆಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಣೆ ಹೊಂದಿ ಸುಲಭವಾಗಿ ಮೋಸಹೋಗುವ ಸ್ತ್ರೀಯರನ್ನು ವಶಮಾಡಿಕೊಳ್ಳುವರು.
2TI 3:7 ಇಂಥ ಸ್ತ್ರೀಯರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಜ್ಞಾನಕ್ಕೆ ಬರಲಾರದವರು ಆಗಿರುವರು.
2TI 3:8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ, ಈ ಸುಳ್ಳು ಬೋಧಕರು ಸಹ ಸತ್ಯವನ್ನು ವಿರೋಧಿಸುತ್ತಾರೆ. ಇದಲ್ಲದೆ ಇವರು ಬುದ್ಧಿಗೆಟ್ಟವರೂ ವಿಶ್ವಾಸದ ವಿಷಯದಲ್ಲಿ ಭ್ರಷ್ಠರೂ ಆಗಿ, ತಿರಸ್ಕಾರ ಹೊಂದಿರುತ್ತಾರೆ.
2TI 3:9 ಆದರೆ ಇವರು ಇನ್ನು ಮುಂದುವರಿಯಲಾರರು. ಯನ್ನ, ಯಂಬ್ರರ ಮೂರ್ಖತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ, ಇವರದೂ ತಿಳಿದುಬರುವುದು.
2TI 3:10 ನೀನಾದರೋ ನನ್ನ ಎಲ್ಲಾ ಬೋಧನೆ, ನನ್ನ ನಡತೆ, ನನ್ನ ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ,
2TI 3:11 ನಾನು ಎಂತೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬುದನ್ನೂ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಕಷ್ಟಾನುಭವಗಳನ್ನೂ ನನಗುಂಟಾದ ಎಲ್ಲಾ ಹಿಂಸೆಗಳನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಕರ್ತದೇವರು ನನ್ನನ್ನು ಇವೆಲ್ಲವುಗಳಿಂದ ಬಿಡಿಸಿದರು.
2TI 3:12 ನಿಜವಾಗಿಯೂ ಕ್ರಿಸ್ತ ಯೇಸುವಿನಲ್ಲಿ ಭಕ್ತಿಯುಳ್ಳವರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
2TI 3:13 ಆದರೆ ದುಷ್ಟರೂ ಇತರರಂತೆ ನಟಿಸುವ ವೇಷಧಾರಿಗಳೂ ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ಹೆಚ್ಚಾದ ಕೆಟ್ಟತನಕ್ಕೆ ಸಾಗುವರು.
2TI 3:14 ನೀನಾದರೋ, ಕಲಿತು ನಿಶ್ಚಯಗೊಂಡವುಗಳಲ್ಲಿ ಮುಂದುವರಿಯುತ್ತಿರು. ನಿನಗೆ ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ.
2TI 3:15 ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸದ ಮೂಲಕ ರಕ್ಷಣೆ ಹೊಂದುವಂತೆ ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಶಕ್ತವಾಗಿರುವ ಪವಿತ್ರ ವೇದಗಳನ್ನು ನೀನು ಚಿಕ್ಕಂದಿನಿಂದಲೂ ತಿಳಿದವನಾಗಿದ್ದೀಯಲ್ಲಾ.
2TI 3:16 ಪವಿತ್ರ ವೇದಗಳೆಲ್ಲವೂ ದೇವರ ಶ್ವಾಸದಿಂದಲೇ ಉಂಟಾದದ್ದು. ಅದು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ.
2TI 3:17 ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
2TI 4:1 ದೇವರ ಮುಂದೆಯೂ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸಲು ಕರ್ತ ಆಗಿರುವ ಕ್ರಿಸ್ತ ಯೇಸುವಿನ ಮುಂದೆಯೂ ಅವರ ಪ್ರತ್ಯಕ್ಷತೆ ಹಾಗೂ ಅವರ ರಾಜ್ಯದ ಮುಂದೆಯೂ ನಾನು ನಿನಗೆ ಆಜ್ಞಾಪಿಸಿ ಹೇಳುವುದೇನೆಂದರೆ:
2TI 4:2 ವಾಕ್ಯವನ್ನು ಸಾರು; ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಸಿದ್ಧವಾಗಿರು. ಎಲ್ಲಾ ತಾಳ್ಮೆಯಿಂದ ಉಪದೇಶಿಸಿ ಖಂಡಿಸು, ಗದರಿಸು, ಪ್ರೋತ್ಸಾಹಿಸು.
2TI 4:3 ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಆದರೆ ಅವರು ತಮ್ಮ ಕಿವಿಗಳು ಕೇಳಲು ಆಶೆಪಡುವ ಅನೇಕ ಉಪದೇಶಕರನ್ನು ಕೂಡಿಟ್ಟುಕೊಳ್ಳುವರು.
2TI 4:4 ಅವರು ಸತ್ಯಕ್ಕೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ತಿರುಗಿಕೊಳ್ಳುವರು.
2TI 4:5 ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು. ಶ್ರಮೆಗಳನ್ನು ತಾಳಿಕೋ. ಸುವಾರ್ತಿಕನ ಕೆಲಸವನ್ನು ಮಾಡು. ನಿನ್ನ ಸೇವೆಯ ಎಲ್ಲಾ ಕರ್ತವ್ಯಗಳನ್ನು ನೆರವೇರಿಸು.
2TI 4:6 ಏಕೆಂದರೆ ನಾನು ಈಗಲೇ ಪಾನ ಅರ್ಪಣೆಯಾಗಿ ಇದ್ದೇನೆ. ನಾನು ಹೊರಟುಹೋಗಬೇಕಾದ ಸಮಯವು ಹತ್ತಿರ ಬಂದಿದೆ.
2TI 4:7 ನಾನು ಒಳ್ಳೆಯ ಹೋರಾಟವನ್ನು ಮಾಡಿದ್ದೇನೆ. ನಾನು ಓಟವನ್ನು ಮುಗಿಸಿದ್ದೇನೆ. ನಾನು ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.
2TI 4:8 ಈಗ ನನಗೋಸ್ಕರ ನೀತಿಯ ಕಿರೀಟವು ಇಡಲಾಗಿದೆ. ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾದ ಕರ್ತದೇವರು ಆ ದಿನದಲ್ಲಿ ನನಗೆ ಕೊಡುವರು. ನನಗೆ ಮಾತ್ರವಲ್ಲದೆ ಅವರ ಪುನರಾಗಮನಕ್ಕಾಗಿ ಆಸಕ್ತಿಯಿಂದ ಕಾದಿರುವವರೆಲ್ಲರಿಗೂ ಕೊಡುವರು.
2TI 4:9 ನನ್ನ ಬಳಿಗೆ ಆದಷ್ಟು ಬೇಗನೆ ಬರುವುದಕ್ಕೆ ನೀನು ಪ್ರಯತ್ನ ಮಾಡು.
2TI 4:10 ಏಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ, ತೀತನು ದಲ್ಮಾತ್ಯಕ್ಕೂ ಹೋದನು.
2TI 4:11 ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನು ನನ್ನ ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ.
2TI 4:12 ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದೆನು.
2TI 4:13 ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ಮೇಲಂಗಿಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
2TI 4:14 ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡು ಮಾಡಿದ್ದಾನೆ. ಕರ್ತದೇವರು ಅವನ ಕೃತ್ಯಗಳಿಗೆ ಅನುಸಾರವಾಗಿ ಅವನಿಗೆ ಪ್ರತಿಫಲವನ್ನು ಕೊಡಲಿ.
2TI 4:15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ಏಕೆಂದರೆ ಅವನು ನಮ್ಮ ಸಂದೇಶವನ್ನು ಬಹಳವಾಗಿ ವಿರೋಧಿಸಿದನು.
2TI 4:16 ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರ ಲೆಕ್ಕಕ್ಕೆ ಸೇರಿಸಲಾಗದೆ ಇರಲಿ.
2TI 4:17 ಆದರೆ ಕರ್ತ ಯೇಸು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ, ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರುವಂತೆ ಮಾಡಿದರು. ಯೆಹೂದ್ಯರಲ್ಲದವರೆಲ್ಲರೂ ಸಹ ಅದನ್ನು ಕೇಳುವಂತೆಯೂ ಮಾಡಿದರು. ಇದಲ್ಲದೆ ಕರ್ತ ಯೇಸು ನನ್ನನ್ನು ಸಿಂಹದ ಬಾಯೊಳಗಿಂದ ಸಂರಕ್ಷಿಸಿದರು.
2TI 4:18 ನನ್ನನ್ನು ಪ್ರತಿಯೊಂದು ದುಷ್ಟದಾಳಿಯಿಂದ ಕರ್ತ ಯೇಸು ತಪ್ಪಿಸಿ, ತಮ್ಮ ಪರಲೋಕ ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ತರುವರು. ಯುಗಯುಗಾಂತರಗಳಲ್ಲಿಯೂ ಅವರಿಗೆ ಮಹಿಮೆ. ಆಮೆನ್.
2TI 4:19 ಪ್ರಿಸ್ಕಳಿಗೂ ಅಕ್ವಿಲನಿಗೂ ಒನೇಸಿಫೊರನ ಮನೆಯವರಿಗೂ ವಂದನೆ.
2TI 4:20 ಎರಸ್ತನು ಕೊರಿಂಥದಲ್ಲಿ ಉಳಿದುಕೊಂಡಿದ್ದಾನೆ. ಆದರೆ ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ನಾನು ಮಿಲೇತದಲ್ಲಿ ಬಿಟ್ಟಿದ್ದೇನೆ.
2TI 4:21 ನೀನು ಚಳಿಗಾಲಕ್ಕೆ ಮುಂಚೆಯೇ ಆದಷ್ಟು ಬೇಗನೆ ಬರುವುದಕ್ಕೆ ಪ್ರಯತ್ನ ಮಾಡು. ಯುಬೂಲನೂ ಪೊದೆಯನೂ ಲೀನನೂ ಕ್ಲೌದ್ಯಳೂ ಎಲ್ಲಾ ಸಹೋದರರೂ ನಿನಗೆ ವಂದನೆ ಹೇಳುತ್ತಾರೆ.
2TI 4:22 ಕರ್ತ ಯೇಸು ನಿನ್ನ ಆತ್ಮದೊಂದಿಗೆ ಇರಲಿ. ಕೃಪೆಯು ನಿಮ್ಮೆಲ್ಲರೊಂದಿಗಿರಲಿ.
TIT 1:1 ದೇವರು ಆಯ್ದುಕೊಂಡವರ ನಂಬಿಕೆಗನುಸಾರವೂ ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಗನುಸಾರವೂ ದೇವರ ಸೇವಕನೂ ಕ್ರಿಸ್ತ ಯೇಸುವಿನ ಅಪೊಸ್ತಲನೂ ಆಗಿರುವ ಪೌಲನೆಂಬ ನನಗೆ
TIT 1:2 ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ.
TIT 1:3 ತಮ್ಮ ವಾಕ್ಯ ಸಾರುವುದರ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕರಾದ ದೇವರ ಆಜ್ಞೆಗನುಸಾರವಾಗಿ ನನಗೆ ಒಪ್ಪಿಸಿದರು.
TIT 1:4 ನಮ್ಮಲ್ಲಿ ಹುದುವಾಗಿರುವ ವಿಶ್ವಾಸಕ್ಕೆ ಅನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವುದು: ತಂದೆಯಾದ ದೇವರಿಂದಲೂ ನಮಗೆ ರಕ್ಷಕ ಹಾಗೂ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ.
TIT 1:5 ಕ್ರೇತದ್ವೀಪದಲ್ಲಿ ಪೂರ್ಣಗೊಳಿಸದ ಕಾರ್ಯಗಳನ್ನು ನೀನು ಕ್ರಮಪಡಿಸಿ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಪ್ರತಿಯೊಂದು ಪಟ್ಟಣದಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆನು.
TIT 1:6 ಸಭೆಯ ಹಿರಿಯನು, ನಿಂದಾರಹಿತನೂ ಪತ್ನಿಗೆ ನಂಬಿಗಸ್ತನೂ ಆಗಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ದುರ್ಮಾಗಿಗಳು ಇಲ್ಲವೆ ತಿರುಗಿ ಬೀಳುವವರೂ ಎಂಬ ಆರೋಪವನ್ನು ಹೊಂದಿರಬಾರದು.
TIT 1:7 ಏಕೆಂದರೆ ಸಭಾಧ್ಯಕ್ಷನು ದೇವರ ಕಾರ್ಯಭಾರವನ್ನು ಉಳ್ಳವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಗರ್ವಿಷ್ಠನೂ ಮುಂಗೋಪಿಯೂ ಮದ್ಯಪಾನ ಮಾಡುವವನೂ ಹೊಡೆದಾಡುವವನೂ ನೀಚಲಾಭವನ್ನು ಆಶಿಸುವವನೂ ಆಗಿರಬಾರದು.
TIT 1:8 ಆದರೆ, ಅವನು ಅತಿಥಿ ಸತ್ಕಾರ ಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಸ್ವಯಂನಿಯಂತ್ರವುಳ್ಳವನೂ ನ್ಯಾಯವಂತನೂ ಪರಿಶುದ್ಧನೂ ಶಿಸ್ತುಳ್ಳವನಾಗಿರಬೇಕು.
TIT 1:9 ಇತರರನ್ನು ಸ್ವಸ್ಥಬೋಧನೆಯಿಂದ ಪ್ರೋತ್ಸಾಹಿಸುವುದಕ್ಕೂ ಎದುರಿಸುವವರನ್ನು ಖಂಡಿಸುವಂತೆ ಮಾತನಾಡುವುದಕ್ಕೂ ಶಕ್ತನಾಗಿರಲು ಅವನು ಬೋಧಿಸಿದ ಪ್ರಕಾರ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.
TIT 1:10 ಏಕೆಂದರೆ, ಅನೇಕ ದಂಗೆಕೋರ ಜನರೂ ಬರೀ ಮಾತನಾಡುವವರೂ ಮೋಸಗೊಳಿಸುವವರೂ ಮುಖ್ಯವಾಗಿ ಸುನ್ನತಿಯಾಗಬೇಕೆಂದು ಹೇಳುವ ಗುಂಪಿನವರೂ ಇದ್ದಾರೆ.
TIT 1:11 ಅವರು ನೀಚಲಾಭವನ್ನು ಹೊಂದುವುದಕ್ಕಾಗಿ ಮಾಡಬಾರದ ಬೋಧನೆಯನ್ನು ಮಾಡಿ ಇಡೀ ಕುಟುಂಬಗಳನ್ನೇ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಅವರ ಬಾಯಿಗಳನ್ನು ಮುಚ್ಚಿಸಬೇಕಾಗಿದೆ.
TIT 1:12 “ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳಂಥವರೂ ಸೋಮಾರಿಗಳಾದ ಹೊಟ್ಟೆಬಾಕರೂ ಆಗಿದ್ದಾರೆ!” ಎಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.
TIT 1:13 ಈ ಸಾಕ್ಷಿಯು ನಿಜವೇ. ಇದರ ದೆಸೆಯಿಂದ ಅವರು ನಂಬಿಕೆಯಲ್ಲಿ ಸ್ವಸ್ಥರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು.
TIT 1:14 ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಸತ್ಯದಿಂದ ದೂರಮಾಡುವ ಮಾನವರ ಆಜ್ಞೆಗಳಿಗೂ ಲಕ್ಷ್ಯಕೊಡಬಾರದು.
TIT 1:15 ಶುದ್ಧರಿಗೆ ಎಲ್ಲವೂ ಶುದ್ಧವೇ. ಆದರೆ ಮಲಿನವಾದವರಿಗೂ ಅವಿಶ್ವಾಸಿಗಳಿಗೂ ಯಾವುದೂ ಶುದ್ಧವಲ್ಲ. ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಮಲಿನವಾಗಿವೆ.
TIT 1:16 ತಾವು ದೇವರನ್ನು ತಿಳಿದವರೆಂದು ಅವರು ವಾದಿಸುತ್ತಾರೆ. ಆದರೆ ತಮ್ಮ ಕೃತ್ಯಗಳಿಂದ ದೇವರನ್ನೇ ಅಲ್ಲಗಳೆಯುವರಾಗಿದ್ದಾರೆ. ಅವರು ಅಸಹ್ಯರೂ ಅವಿಧೇಯರೂ ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೆ ಅಯೋಗ್ಯರಾಗಿದ್ದಾರೆ.
TIT 2:1 ನೀನಾದರೋ ಸ್ವಸ್ಥಬೋಧನೆಗೆ ಅನುಗುಣವಾಗಿ ಉಪದೇಶಿಸು.
TIT 2:2 ವೃದ್ಧರು ಆತ್ಮ ಸಂಯಮವುಳ್ಳವರೂ ಗೌರವಕ್ಕೆ ಯೋಗ್ಯರೂ ಸ್ವಯಂನಿಯಂತ್ರಿತರೂ ನಂಬಿಕೆ, ಪ್ರೀತಿ, ತಾಳ್ಮೆ ಇವುಗಳಲ್ಲಿ ಬದಲಾಗದವರೂ ಆಗಿರಬೇಕೆಂದು ಉಪದೇಶಿಸು.
TIT 2:3 ಅದೇ ಪ್ರಕಾರ, ವೃದ್ಧಸ್ತ್ರೀಯರು ನಡತೆಯಲ್ಲಿ ಭಕ್ತಿಗೆ ತಕ್ಕ ಹಾಗೆ ಇರುವವರಾಗಿರಬೇಕು. ಅವರು ಸುಳ್ಳಾಗಿ ದೂರುವವರೂ ಮದ್ಯಾಸಕ್ತರೂ ಆಗಿರದೆ, ಒಳ್ಳೆಯವುಗಳನ್ನು ಬೋಧಿಸುವವರಾಗಿರಬೇಕು ಎಂದು ಅವರಿಗೆ ಉಪದೇಶಿಸು.
TIT 2:4 ಇದಲ್ಲದೆ ದೇವರ ವಾಕ್ಯವು ದೂಷಣೆಯಾಗದಂತೆ ಯೌವನ ಸ್ತ್ರೀಯರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ
TIT 2:5 ಸ್ವಶಿಸ್ತನ್ನು ಹೊಂದಿದವರೂ ಪತಿವ್ರತೆಯರೂ ಮನೆಯಲ್ಲಿ ಕೆಲಸ ಮಾಡುವವರೂ ದಯೆವುಳ್ಳವರೂ ತಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಿರಿ.
TIT 2:6 ಹಾಗೆಯೇ, ಯೌವನಸ್ಥರು ಆತ್ಮ ಸ್ವಶಿಸ್ತನ್ನು ಹೊಂದಿದವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸು.
TIT 2:7 ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ
TIT 2:8 ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.
TIT 2:9 ಸೇವಕರು ತಮ್ಮ ಸ್ವಂತ ಯಜಮಾನರಿಗೆ ಅಧೀನರಾಗಿದ್ದು ಎಲ್ಲವುಗಳಲ್ಲಿ ಅವರನ್ನು ಮೆಚ್ಚಿಸುವವರಾಗಿ ಎದುರು ಮಾತನಾಡದೆ,
TIT 2:10 ಯಾವುದನ್ನೂ ಕದ್ದಿಟ್ಟುಕೊಳ್ಳದೆ, ನಮ್ಮ ರಕ್ಷಕರಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿಯೂ ಅಲಂಕರಿಸುವಂತೆ, ಒಳ್ಳೆಯ ನಂಬಿಗಸ್ತರೆಂದು ಎಲ್ಲದರಲ್ಲಿಯೂ ತೋರಿಸಬೇಕೆಂದು ಅವರನ್ನು ಉಪದೇಶಿಸು.
TIT 2:11 ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.
TIT 2:12 ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ.
TIT 2:13 ನಮಗೆ ರಕ್ಷಕರೂ ಮಹಾ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಭಾಗ್ಯಕರವಾದ ಮಹಿಮೆಯ ಪ್ರತ್ಯಕ್ಷತೆಯ ನಿರೀಕ್ಷೆಯನ್ನೂ ಎದುರು ನೋಡುತ್ತಿರಬೇಕೆಂದು ಕೃಪೆಯು ನಮಗೆ ಬೋಧಿಸುತ್ತದೆ.
TIT 2:14 ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.
TIT 2:15 ಈ ಕಾರ್ಯಗಳ ವಿಷಯದಲ್ಲಿ, ನೀನು ಉಪದೇಶಿಸುತ್ತಾ ಇರು. ಪ್ರೋತ್ಸಾಹಮಾಡುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
TIT 3:1 ಆಳುವವರಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಸಿದ್ಧರಾಗಿರಬೇಕೆಂತಲೂ ಅವರಿಗೆ ಜ್ಞಾಪಕಮಾಡು.
TIT 3:2 ಯಾರ ವಿಷಯವಾಗಿಯೂ ಕೆಟ್ಟದ್ದನ್ನಾಡದೆ, ಎಲ್ಲರೊಂದಿಗೆ ಸಮಾಧಾನವಾಗಿಯೂ ಇತರರನ್ನು ಅರ್ಥಮಾಡಿಕೊಳ್ಳುವವರಾಗಿಯೂ ಯಾವಾಗಲೂ ನಮ್ರರಾಗಿ ಇರಬೇಕೆಂತಲೂ ಅವರಿಗೆ ಜ್ಞಾಪಕಮಾಡು.
TIT 3:3 ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು.
TIT 3:4 ಆದರೆ ನಮಗೆ ರಕ್ಷಕರೂ ದೇವರೂ ಆಗಿರುವ ಕ್ರಿಸ್ತ ಯೇಸುವಿನ ದಯೆಯೂ ಪ್ರೀತಿಯೂ ಮನುಷ್ಯರ ಕಡೆಗೆ ಪ್ರತ್ಯಕ್ಷವಾದಾಗ,
TIT 3:5 ಅವರು ನಮ್ಮನ್ನು ರಕ್ಷಿಸಿದರು. ಹೇಗೆಂದರೆ, ನಾವು ಮಾಡಿದ ಪುಣ್ಯ ಕ್ರಿಯೆಗಳಿಂದಲ್ಲ, ಅವರ ಕರುಣೆಗೆ ಅನುಸಾರವಾಗಿ ಆತ್ಮಿಕವಾಗಿ ಹುಟ್ಟುವಂತೆ ಮಾಡಿ, ನಮ್ಮನ್ನು ತೊಳೆದೂ ಪವಿತ್ರಾತ್ಮ ದೇವರು ನೂತನ ಜೀವನವನ್ನು ಕೊಡುವುದರ ಮೂಲಕವೇ ಅವರು ನಮ್ಮನ್ನು ರಕ್ಷಿಸಿದರು.
TIT 3:6 ನಮಗೆ ರಕ್ಷಕರಾದ ಕ್ರಿಸ್ತ ಯೇಸುವಿನ ಮೂಲಕ ದೇವರು ಪವಿತ್ರಾತ್ಮ ದೇವರನ್ನು ನಮ್ಮ ಮೇಲೆ ಸಮೃದ್ಧವಾಗಿ ಸುರಿಸಿದರು.
TIT 3:7 ನಾವು ಅವರ ಕೃಪೆಯಿಂದ ನೀತಿವಂತರೆಂದು ನಿರ್ಣಯ ಹೊಂದಿ, ನಿತ್ಯಜೀವದ ನಿರೀಕ್ಷೆಗೆ ಅನುಸಾರವಾಗಿ ಬಾಧ್ಯರಾಗುವಂತೆ ಮಾಡಿದರು.
TIT 3:8 ಇದು ನಂಬತಕ್ಕ ಮಾತಾಗಿದೆ. ದೇವರನ್ನು ನಂಬಿದವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಇವುಗಳ ವಿಷಯವಾಗಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಹಿತಕರವೂ ಪ್ರಯೋಜನಕರವೂ ಆಗಿವೆ.
TIT 3:9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನಿಯಮದ ವಿಷಯವಾಗಿರುವ ವಾಗ್ವಾದಗಳಿಗೂ ದೂರವಾಗಿರು. ಏಕೆಂದರೆ ಅವು ನಿಷ್ಪ್ರಯೋಜನವಾದವುಗಳೂ ವ್ಯರ್ಥವಾದವುಗಳೂ ಆಗಿವೆ.
TIT 3:10 ಭೇದ ಹುಟ್ಟಿಸುವವರನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು. ಅಂಥವರ ಸಹವಾಸ ಮಾಡದಿರು.
TIT 3:11 ಅಂಥವರು ಸನ್ಮಾರ್ಗ ತಪ್ಪಿದವರೂ ತಮ್ಮನ್ನು ತಾವೇ ಖಂಡಿಸಿಕೊಳ್ಳುವವರಾಗಿ ಪಾಪಮಾಡುವವರೂ ಆಗಿದ್ದಾರೆಂದು ನಿಶ್ಚಯವಾಗಿ ತಿಳಿದುಕೊ.
TIT 3:12 ನಾನು ಅರ್ತೆಮನನ್ನಾಗಲಿ, ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದಾಗ ನೀನು ನಿಕೊಪೊಲಿಯಲ್ಲಿ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನ ಮಾಡು. ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂದು ನಾನು ತೀರ್ಮಾನಿಸಿದ್ದೇನೆ.
TIT 3:13 ನಿಯಮ ಪಂಡಿತನಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು. ಅವರಿಗೇನೂ ಕೊರತೆಯಾಗಬಾರದು.
TIT 3:14 ನಮ್ಮವರು ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೂ ಅಗತ್ಯವಾಗಿರುವ ಕೊರತೆಗಳನ್ನು ನೀಗಿಸುವುದಕ್ಕೂ ಕಲಿತುಕೊಳ್ಳಲಿ. ಆಗ ಅವರು ನಿಷ್ಪಲರಾಗದೇ ಇರುವರು.
TIT 3:15 ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ವಿಶ್ವಾಸದಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!
PHM 1:1 ಸುವಾರ್ತೆಯನ್ನು ಸಾರಿದ್ದರಿಂದ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆಮೋನನಿಗೂ
PHM 1:2 ಸಹೋದರಿ ಅಪ್ಫಿಯಳಿಗೂ ನಮ್ಮ ಸಹ ಸೈನಿಕನಾದ ಅರ್ಖಿಪ್ಪನಿಗೂ ನಿಮ್ಮ ಮನೆಯಲ್ಲಿ ಸೇರುವ ಸಭೆಯವರಿಗೂ ಬರೆಯುವುದೇನೆಂದರೆ:
PHM 1:3 ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಇರಲಿ.
PHM 1:4 ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
PHM 1:5 ಏಕೆಂದರೆ, ನಮ್ಮ ಕರ್ತ ಆಗಿರುವ ಯೇಸುವಿನಲ್ಲಿ ನಿನಗಿರುವ ವಿಶ್ವಾಸವನ್ನೂ ಪರಿಶುದ್ಧರೆಲ್ಲರಿಗಾಗಿ ನಿನಗಿರುವ ಪ್ರೀತಿಯನ್ನೂ ಕುರಿತು ನಾನು ಕೇಳಿದ್ದೇನೆ.
PHM 1:6 ನಿನ್ನ ವಿಶ್ವಾಸದಲ್ಲಿ ಅನ್ಯೋನ್ಯತೆಯು ನಿನ್ನ ಎಲ್ಲಾ ಒಳ್ಳೆಯದರ ಆಳವಾದ ತಿಳುವಳಿಕೆಯನ್ನು ಕ್ರಿಸ್ತ ಯೇಸುವಿಗಾಗಿ ಪರಿಣಾಮಗೊಳಿಸಿ ಹಂಚುವಂತೆ ನಾನು ಪ್ರಾರ್ಥಿಸುತ್ತೇನೆ.
PHM 1:7 ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಉತ್ತೇಜನವಾದ್ದರಿಂದ, ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಆದರಣೆಯೂ ಉಂಟಾದವು.
PHM 1:8 ಆದಕಾರಣ, ನಾನು ಈಗ ನಿನಗೆ ಏನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಬಹು ಧೈರ್ಯವಿದ್ದರೂ
PHM 1:9 ಹಾಗೆ ಆಜ್ಞಾಪಿಸದೆ, ಈಗ ಕ್ರಿಸ್ತ ಯೇಸುವಿನ ಸೆರೆಯಾಳೂ ಮುದುಕನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.
PHM 1:10 ನಾನು ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾನು ಸೆರೆಯಲ್ಲಿದ್ದಾಗ ಅವನು ನನಗೆ ಆತ್ಮಿಕ ಮಗನಾದನು.
PHM 1:11 ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.
PHM 1:12 ನನಗೆ ಪ್ರಾಣವಾಗಿರುವ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ನಾನು ಕಳುಹಿಸಿ ಕೊಡುತ್ತಿದ್ದೇನೆ.
PHM 1:13 ಸುವಾರ್ತೆಯ ನಿಮಿತ್ತ ಸೆರೆಯಲ್ಲಿರುವ ನನಗೆ ಉಪಚಾರ ಮಾಡುವಂತೆ ನಿನಗೆ ಬದಲಾಗಿ ಓನೇಸಿಮನನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಅಪೇಕ್ಷಿಸಿದ್ದೆನು.
PHM 1:14 ಆದರೆ ನಿನ್ನ ಉಪಚಾರವು ಬಲಾತ್ಕಾರದಿಂದಾಗದೆ, ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ, ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.
PHM 1:15 ಓನೇಸಿಮನು ಸ್ವಲ್ಪಕಾಲ ನಿನ್ನಿಂದ ಅಗಲಿದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ!
PHM 1:16 ಇನ್ನು ಮೇಲೆ ಅವನು ದಾಸನಾಗದೆ, ದಾಸನಿಗಿಂತ ಮೇಲಾಗಿ ಪ್ರಿಯ ಸಹೋದರನಂತಾಗಬೇಕು. ಅವನು ವಿಶೇಷವಾಗಿ ನನಗೆ ಬಹು ಪ್ರಿಯನಾಗಿದ್ದಾನೆ. ಆದರೂ ಓನೇಸಿಮನು ನಿನಗೆ ಮಾನವ ರೀತಿಯಲ್ಲಿಯೂ ಕರ್ತ ಯೇಸುವಿನಲ್ಲಿಯೂ ಒಬ್ಬ ಸಹೋದರನಾಗಿ ಇನ್ನು ಎಷ್ಟೋ ಪ್ರಿಯನಾಗಿರಬೇಕಲ್ಲವೇ.
PHM 1:17 ಆದಕಾರಣ ನಾನು ನಿನಗೆ ಅನ್ಯೋನ್ಯತೆವುಳ್ಳವನೆಂದು ನೀನು ಎಣಿಸುವುದಾದರೆ ನನ್ನನ್ನು ಸ್ವೀಕರಿಸಿಕೊಳ್ಳುವ ಪ್ರಕಾರವೇ ಅವನನ್ನು ಸ್ವೀಕರಿಸು.
PHM 1:18 ಅವನು ನಿನಗೆ ಏನಾದರೂ ತಪ್ಪು ಮಾಡಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು.
PHM 1:19 ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ನನ್ನ ಸ್ವಂತ ಕೈಯಲ್ಲಿ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನು ನಿನ್ನ ಪ್ರಾಣವನ್ನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕಾಗಿಲ್ಲ.
PHM 1:20 ಸಹೋದರನೇ ಹೌದು, ಕರ್ತ ಯೇಸುವಿನಲ್ಲಿ ನಿನ್ನಿಂದ ನನಗೆ ಈ ಸಹಾಯಮಾಡು; ಅದು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಉತ್ತೇಜನಗೊಳಿಸಲಿ.
PHM 1:21 ನಿನ್ನ ವಿಧೇಯತೆಯಲ್ಲಿ ಭರವಸೆಯುಳ್ಳವನಾಗಿ ನಾನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುವೆಯೆಂದು ನನಗೆ ಗೊತ್ತಿದೆ.
PHM 1:22 ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.
PHM 1:23 ಕ್ರಿಸ್ತ ಯೇಸುವಿಗಾಗಿ ನನ್ನ ಜೊತೆ ಸೆರೆಯಾಳಾಗಿರುವ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.
PHM 1:24 ನನ್ನ ಜೊತೆಕೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ ಹಾಗೂ ಲೂಕ ನಿನ್ನನ್ನು ವಂದಿಸುತ್ತಾರೆ.
PHM 1:25 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.
HEB 1:1 ಗತಕಾಲದಲ್ಲಿ ನಮ್ಮ ಪಿತೃಗಳ ಸಂಗಡ ವಿವಿಧ ರೀತಿಯಲ್ಲಿಯೂ ಅನೇಕಬಾರಿ ಪ್ರವಾದಿಗಳ ಮುಖಾಂತರವೂ ಮಾತನಾಡಿದ ದೇವರು,
HEB 1:2 ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು.
HEB 1:3 ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
HEB 1:4 ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ದೇವದೂತರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಅವರಿಗಿಂತ ಅತಿ ಶ್ರೇಷ್ಠ ಹೆಸರನ್ನು ಬಾಧ್ಯವಾಗಿ ಹೊಂದಿದವರೂ ಆಗಿದ್ದಾರೆ.
HEB 1:5 ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದೂ, “ನಾನು ಆತನ ತಂದೆಯಾಗಿರುವೆನು; ಆತನು ನನಗೆ ಮಗನಾಗಿರುವನು!”
HEB 1:6 ಇದಲ್ಲದೆ ಮೊದಲು ಹುಟ್ಟಿದವರನ್ನು ದೇವರು ಲೋಕದೊಳಗೆ ಬರಮಾಡುವಾಗ, “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ!” ಎಂದು ಹೇಳಿದ್ದಾರೆ.
HEB 1:7 ದೂತರ ವಿಷಯದಲ್ಲಿ ದೇವರು ಮಾತನಾಡುವಾಗ, “ಅವರು ತಮ್ಮ ದೂತರನ್ನು ಆತ್ಮಗಳಾಗಿಯೂ ತಮ್ಮ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾರೆ!” ಎಂದು ಹೇಳಿದ್ದಾರೆ.
HEB 1:8 ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿಮ್ಮ ರಾಜದಂಡವಾಗಿದೆ.
HEB 1:9 ನೀವು ನೀತಿಯನ್ನು ಪ್ರೀತಿಸಿದ್ದೀರಿ. ಅನೀತಿಯನ್ನು ದ್ವೇಷಿಸಿದ್ದೀರಿ; ಆದ್ದರಿಂದ ದೇವರೇ, ನಿಮ್ಮ ದೇವರು ನಿಮ್ಮನ್ನು ನಿಮ್ಮ ಜೊತೆಗಾರರಿಗಿಂತ ಮಿಗಿಲಾಗಿ ಆನಂದದ ತೈಲದಿಂದ ಅಭಿಷೇಕಿಸಿದ್ದಾರೆ!”
HEB 1:10 ಇದಲ್ಲದೆ ದೇವರು ಹೀಗೆಂದರು: “ಕರ್ತದೇವರೇ, ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ, ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.
HEB 1:11 ಅವು ನಾಶವಾಗುವವು. ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
HEB 1:12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತಿರಿ, ಅವು ವಸ್ತ್ರದಂತೆ ಮಾರ್ಪಡುತ್ತವೆ. ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ!”
HEB 1:13 ಆದರೆ ದೇವದೂತರಲ್ಲಿ ಯಾರ ವಿಷಯದಲ್ಲಿಯಾದರೂ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು!” ಎಂಬುದಾಗಿ ದೇವರು ಎಂದಾದರೂ ಹೇಳಿದ್ದುಂಟೇ?
HEB 1:14 ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?
HEB 2:1 ಆದ್ದರಿಂದ ದಾರಿಬಿಟ್ಟು ಹೋಗದಂತೆ, ನಾವು ಕೇಳಿದ ಸಂಗತಿಗಳಿಗೆ ಹೆಚ್ಚು ಲಕ್ಷ್ಯ ಕೊಡುವವರಾಗಿರಬೇಕು.
HEB 2:2 ಏಕೆಂದರೆ ದೇವದೂತರ ಮೂಲಕ ಹೇಳಲಾದ ವಾಕ್ಯವೇ ದೃಢಪಡಿಸಲಾಯಿತು. ಆದ್ದರಿಂದ ಆ ವಾಕ್ಯವನ್ನು ಮೀರಿದವರಿಗೂ ಅವಿಧೇಯರಾದವರಿಗೂ ನ್ಯಾಯವಾದ ದಂಡನೆ ಕೊಡಲಾಯಿತು.
HEB 2:3 ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.
HEB 2:4 ದೇವರು ಸಹ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ತಮ್ಮ ಚಿತ್ತಾನುಸಾರವಾಗಿ ದಯಪಾಲಿಸಿದ ಪವಿತ್ರಾತ್ಮರ ವರದಾನಗಳಿಂದಲೂ ಸಾಕ್ಷಿನೀಡಿ ದೃಢಪಡಿಸಿದ್ದಾರೆ.
HEB 2:5 ನಾವು ಸಾರುತ್ತಿರುವ ಮುಂದಣ ಲೋಕವನ್ನು ದೇವರು ತಮ್ಮ ದೂತರಿಗೆ ಅಧೀನ ಮಾಡಲಿಲ್ಲವಲ್ಲ.
HEB 2:6 ಆದರೆ ಪವಿತ್ರ ವೇದದ ಒಂದು ಸ್ಥಳದಲ್ಲಿ ಒಬ್ಬನು ಹೀಗೆ ಸಾಕ್ಷಿ ಹೇಳಿದ್ದಾನೆ: “ಮನುಷ್ಯನನ್ನು ನೀನು ನೆನಸುವುದಕ್ಕೆ ಅವನು ಎಷ್ಟು ಮಾತ್ರದವನು? ಮನುಷ್ಯಪುತ್ರನನ್ನು ಲಕ್ಷ್ಯವಿಡುವುದಕ್ಕೆ ಅವನು ಎಷ್ಟರವನು?
HEB 2:7 ನೀನು ಆತನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದೆಯಲ್ಲಾ? ಮಹಿಮೆಯನ್ನೂ ಮಾನವನ್ನೂ ಆತನಿಗೆ ಕಿರೀಟವನ್ನಾಗಿ ಇಟ್ಟೆ.
HEB 2:8 ಎಲ್ಲವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದ್ದೀಯಲ್ಲವೇ?” ಹೀಗೆ ದೇವರು ಎಲ್ಲವನ್ನೂ ಆತನಿಗೆ ಅಧೀನ ಮಾಡಿದರೆಂಬುದರಲ್ಲಿ ಆತನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ ಎಂಬುದು ಸ್ವಷ್ಟವಾಗುತ್ತದೆ. ಆದರೆ ಈಗ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಇನ್ನೂ ಕಾಣುವದಿಲ್ಲ.
HEB 2:9 ಆದರೂ ದೇವದೂತರಿಗಿಂತ ಸ್ವಲ್ಪಕಾಲ ಕಡಿಮೆಯಾಗಿ ಮಾಡಲಾದ ಆ ಒಬ್ಬಾತನು ಯೇಸುವೇ. ಈ ಯೇಸು ಬಾಧೆಪಟ್ಟು ಮೃತಪಟ್ಟಿದ್ದರಿಂದಲೇ ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಹೊಂದಿದರೆಂದು ಎಂದು ನಾವು ಕಾಣುತ್ತೇವೆ. ದೇವರ ಕೃಪೆಯಿಂದಲೇ ಎಲ್ಲರಿಗೋಸ್ಕರ ಮರಣವನ್ನು ಈ ಯೇಸು ಅನುಭವಿಸಬೇಕಾಗಿತ್ತು.
HEB 2:10 ದೇವರು ಸಮಸ್ತವನ್ನೂ ತಮಗೋಸ್ಕರವೂ ತಮ್ಮ ಮೂಲಕವೂ ಉಂಟುಮಾಡಿ ಬಹುಮಂದಿ ಮಕ್ಕಳನ್ನು ಮಹಿಮೆಗೆ ತರುವಂತೆ ಅವರ ರಕ್ಷಣಾ ನಾಯಕರಾದ ಕ್ರಿಸ್ತ ಯೇಸುವನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ದೇವರಿಗೆ ಯುಕ್ತವಾಗಿತ್ತು.
HEB 2:11 ಪವಿತ್ರ ಮಾಡುವ ದೇವರೂ ಪವಿತ್ರರಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಯೇಸು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡದೆ,
HEB 2:12 ಹೇಳಿದ್ದು, “ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು. ಸಭಾ ಮಧ್ಯದಲ್ಲಿ ನಿಮಗೆ ಸ್ತುತಿ ಪದಗಳನ್ನು ಹಾಡುವೆನು.”
HEB 2:13 ಎಂದೂ ಪುನಃ, “ನಾನು ದೇವರ ಮೇಲೆ ಭರವಸೆ ಇಡುವೆನು.” ಎಂದೂ ಪುನಃ, “ಇಗೋ ನಾನೂ, ದೇವರು ನನಗೆ ದಯಪಾಲಿಸಿರುವ ಮಕ್ಕಳೂ ನನಗಿದ್ದಾರೆ.” ಎಂದು ಹೇಳಿದ್ದಾರೆ.
HEB 2:14 ಮಕ್ಕಳು ರಕ್ತಮಾಂಸಧಾರಿಗಳು ಆಗಿರುವುದರಿಂದ ಯೇಸು ತಮ್ಮ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ನಾಶಮಾಡುವುದಕ್ಕೂ
HEB 2:15 ಮರಣ ಭಯದಿಂದ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರ ಮಾನವತ್ವದಲ್ಲಿ ಪಾಲುಗಾರರಾದರು.
HEB 2:16 ಯೇಸು ನಿಜವಾಗಿಯೂ ದೂತರಿಗಾಗಿ ಹಾಗೆ ಮಾಡದೆ ಅಬ್ರಹಾಮನ ಸಂತತಿಯವರಿಗಾಗಿ ಹಾಗೆ ಮಾಡಿದರು.
HEB 2:17 ಆದ್ದರಿಂದ ಯೇಸು ಎಲ್ಲಾ ವಿಷಯಗಳಲ್ಲಿಯೂ ತಮ್ಮ ಸಹೋದರರಿಗೆ ಸಮಾನವಾಗಬೇಕಾಯಿತು. ಹೀಗೆ ಅವರು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ದೇವರ ಸೇವೆಯಲ್ಲಿ ಕರುಣೆಯುಳ್ಳ ನಂಬಿಗಸ್ತರಾದ ಮಹಾಯಾಜಕರಾದರು.
HEB 2:18 ಆದ್ದರಿಂದ ಯೇಸು ತಾವೇ ಶೋಧನೆಗೊಳಗಾಗಿ ಬಾಧೆಯನ್ನು ಅನುಭವಿಸಿರುವುದರಿಂದ, ಶೋಧನೆಗೆ ಒಳಗಾಗುವವರಿಗೆ ಸಹಾಯ ಮಾಡುವುದಕ್ಕೆ ಶಕ್ತರಾಗಿದ್ದಾರೆ.
HEB 3:1 ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ.
HEB 3:2 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸು ತಮ್ಮನ್ನು ನೇಮಿಸಿದವರಿಗೆ ನಂಬಿಗಸ್ತರಾಗಿದ್ದಾರೆ.
HEB 3:3 ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ, ಮೋಶೆಗಿಂತ ಯೇಸು ಹೆಚ್ಚಾದ ಮಹಿಮೆಗೆ ಯೋಗ್ಯರೆಂದು ಎಣಿಸಿಕೊಂಡಿದ್ದಾರೆ.
HEB 3:4 ಏಕೆಂದರೆ ಪ್ರತಿಯೊಂದು ಮನೆಯೂ ಯಾರೋ ಒಬ್ಬರಿಂದ ಕಟ್ಟಲಾಗುತ್ತದೆ. ಆದರೆ ಸಮಸ್ತವನ್ನು ಕಟ್ಟಿದವರು ದೇವರೇ.
HEB 3:5 “ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು.” ಅವನು, ಮುಂದೆ ಪ್ರಕಟವಾಗಬೇಕಾಗಿದ್ದ ಒಬ್ಬರಿಗೆ ಸಾಕ್ಷಿಯಾಗಿದ್ದನು.
HEB 3:6 ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.
HEB 3:7 ಆದ್ದರಿಂದ ಪವಿತ್ರಾತ್ಮ ದೇವರು ಹೇಳುವ ಪ್ರಕಾರ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
HEB 3:8 ಅರಣ್ಯದಲ್ಲಿದ್ದಾಗ ನನ್ನನ್ನು ಪರೀಕ್ಷಿಸಿದ ದಿನದಲ್ಲಿ ಕೋಪಕ್ಕೆ ಈಡುಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.
HEB 3:9 ನಿಮ್ಮ ಪಿತೃಗಳು ನನ್ನನ್ನು ಕೆಣಕಿ ಪರೀಕ್ಷಿಸಿದರು, ನಲವತ್ತು ವರ್ಷ ನನ್ನ ಕಾರ್ಯಗಳನ್ನು ನೋಡಿದರು.
HEB 3:10 ಆದ್ದರಿಂದ ನಾನು ಆ ಸಂತತಿಯವರ ಮೇಲೆ ಕೋಪಿಸಿಕೊಂಡು, ‘ಅವರು ಯಾವಾಗಲೂ ತಮ್ಮ ಹೃದಯದಲ್ಲಿ ತಪ್ಪಿಹೋಗುತ್ತಾರೆ, ಅವರು ನನ್ನ ಮಾರ್ಗಗಳನ್ನು ತಿಳಿದುಕೊಳ್ಳಲಿಲ್ಲ.’
HEB 3:11 ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ!’ ಎಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು!”
HEB 3:12 ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ.
HEB 3:13 ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, “ಈ ಹೊತ್ತು” ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.
HEB 3:14 ಮೊದಲಿನಿಂದಿರುವ ನಮ್ಮ ನಿರೀಕ್ಷೆಯನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡಿದುಕೊಳ್ಳುವುದಾದರೆ ಕ್ರಿಸ್ತ ಯೇಸುವಿನ ಭಾಗಿಗಳಾಗಿದ್ದೇವಲ್ಲಾ!
HEB 3:15 ಈಗಲೇ ಹೇಳಿದಂತೆ: “ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ, ತಿರುಗಿಬಿದ್ದಾಗ ನಡೆದಂತೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”
HEB 3:16 “ದೇವರು ನುಡಿದದ್ದನ್ನು ಕೇಳಿ ಕೋಪಗೊಂಡು ವಿರೋಧಿಸಿದವರು ಯಾರು? ಆದರೂ ಮೋಶೆಯ ಮೂಲಕ ಈಜಿಪ್ಟಿನಿಂದ ಹೊರಟು ಬಂದವರೆಲ್ಲರೂ ಹಾಗೆ ಮಾಡಲಿಲ್ಲವಲ್ಲಾ?
HEB 3:17 ನಲವತ್ತು ವರ್ಷ ದೇವರು ಯಾರ ಮೇಲೆ ಕೋಪಗೊಂಡರು? ಪಾಪಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
HEB 3:18 ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲ!” ಎಂದು ಯಾರನ್ನು ಕುರಿತು ಅವರು ಪ್ರಮಾಣ ಮಾಡಿದರು, ಅವಿಧೇಯರಾದವರ ಕುರಿತಲ್ಲವೇ?
HEB 3:19 ಅವರು ಸೇರಲಾರದೆ ಹೋದದ್ದು ಅವರ ಅವಿಶ್ವಾಸದಿಂದಲೇ ಎಂದು ಕಾಣುತ್ತೇವೆ.
HEB 4:1 ಹೀಗಿರಲಾಗಿ ದೇವರ ವಿಶ್ರಾಂತಿಯಲ್ಲಿ ಸೇರುವೆವು ಎಂಬ ವಾಗ್ದಾನವು ಇನ್ನೂ ಉಳಿದಿರಲು ನಿಮ್ಮಲ್ಲಿ ಯಾರಾದರೂ ಅದನ್ನು ಹೊಂದದೆ ಇರಬಾರದು ಎಂದು ಎಚ್ಚರವಹಿಸೋಣ.
HEB 4:2 ಇಸ್ರಾಯೇಲರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರಿಹೇಳಲಾಯಿತು. ಆದರೆ ಕೇಳಿದವರು ವಿಧೇಯರಾದವರ ನಂಬಿಕೆಯಲ್ಲಿ ಭಾಗವಹಿಸದೇ ಹೋದದ್ದರಿಂದ, ಸಾರಿದ ವಾಕ್ಯವು ಅವರಿಗೆ ಪ್ರಯೋಜನವಾಗಲಿಲ್ಲ.
HEB 4:3 ಈಗ ದೇವರು ಹೇಳಿದಂತೆಯೇ ವಿಶ್ವಾಸದಲ್ಲಿರುವ ನಾವು ಆ ವಿಶ್ರಾಂತಿಯಲ್ಲಿ ಪ್ರವೇಶಿಸಿದೆವು, “ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ’ ಎಂದು ನಾನು ಕೋಪದಿಂದ ಪ್ರಮಾಣಮಾಡಿದೆನು,” ಆದರೂ ದೇವರ ಕೆಲಸವು ಜಗತ್ತಿನ ಸೃಷ್ಟಿಯ ಕಾರ್ಯದಿಂದಲೇ ಮುಗಿದಿದೆ.
HEB 4:4 ಪವಿತ್ರ ವೇದದ ಯಾವುದೋ ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು, “ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂತಲೂ,
HEB 4:5 ಮೇಲಿನ ವಾಕ್ಯಕ್ಕೆ ಸಂಬಂಧಿಸಿ, “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,” ಎಂದೂ ದೇವರು ಇನ್ನೊಂದು ಕಡೆ ಹೇಳಿದ್ದಾರೆ.
HEB 4:6 ಆದ್ದರಿಂದ ಯಾರಿಗೆ ಮೊದಲು ಸುವಾರ್ತೆಯು ಸಾರಲಾಯಿತೋ ಅವರು ಅವಿಧೇಯತೆಯ ನಿಮಿತ್ತ ಆ ವಿಶ್ರಾಂತಿಯಲ್ಲಿ ಸೇರದೆಹೋದರು. ಆದರೂ ಕೆಲವರು ಆ ವಿಶ್ರಾಂತಿಯಲ್ಲಿ ಪ್ರವೇಶಿಸುವ ಅವಕಾಶ ಇನ್ನೂ ಇರುವುದರಿಂದ ಅವರು ಸೇರುವರು.
HEB 4:7 ದೇವರು “ಈ ಹೊತ್ತೇ” ಎಂದು ಬೇರೊಂದು ದಿವಸವನ್ನು ಗೊತ್ತು ಮಾಡುತ್ತಾರೆ. ಈ ದಿನವನ್ನು ಕುರಿತೇ ಬಹುಕಾಲದ ನಂತರ ದಾವೀದನ ಮೂಲಕ ಮೊದಲೇ ಹೀಗೆ ಹೇಳಿದ್ದಾರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”
HEB 4:8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ದೇವರು ಬೇರೊಂದು ದಿವಸವನ್ನು ಕುರಿತು ಹೇಳುತ್ತಿರಲಿಲ್ಲವಲ್ಲ.
HEB 4:9 ಆದ್ದರಿಂದ ದೇವಜನರಿಗೆ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಇದೆ.
HEB 4:10 ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿ ವಿಶ್ರಾಂತಿ ಪಡೆದಂತೆ, ದೇವರ ವಿಶ್ರಾಂತಿಯನ್ನು ಪಡೆದವರು ಸಹ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ.
HEB 4:11 ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಿಸೋಣ. ನಮ್ಮಲ್ಲಿ ಯಾರೂ ಆ ಜನರ ಅವಿಧೇಯತೆಯನ್ನು ಅನುಸರಿಸಿ, ನಾಶರಾಗದೇ ಇರೋಣ.
HEB 4:12 ಯಾಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಕ್ರಿಯಾತ್ಮಕವಾದದ್ದು, ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು, ಪ್ರಾಣ ಮತ್ತು ಆತ್ಮಗಳ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ಛೇದಿಸುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಿ ತೀರ್ಪು ನೀಡುವಂಥದ್ದು ಆಗಿದೆ.
HEB 4:13 ನಾವು ಲೆಕ್ಕ ಒಪ್ಪಿಸಬೇಕಾಗಿರುವ ದೇವರ ದೃಷ್ಟಿಗೆ ಸಮಸ್ತವೂ ಬಹಿರಂಗವಾದದ್ದಾಗಿಯೂ ಬಯಲಾದದ್ದಾಗಿಯೂ ಆಗಿದೆ. ಎಲ್ಲಾ ಸೃಷ್ಟಿಯಲ್ಲಿ ದೇವರ ದೃಷ್ಟಿಗೆ ಮರೆಯಾದದ್ದು ಯಾವುದೂ ಇಲ್ಲ.
HEB 4:14 ಆದ್ದರಿಂದ ಪರಲೋಕಗಳನ್ನು ದಾಟಿಹೋದ ದೇವಪುತ್ರ ಯೇಸು ಎಂಬ ಶ್ರೇಷ್ಠ ಮಹಾಯಾಜಕರು ನಮಗಿರುವುದರಿಂದ ನಾವು ಅರಿಕೆಮಾಡುವ ವಿಶ್ವಾಸವನ್ನು ಬಿಗಿಯಾಗಿ ಹಿಡಿಯೋಣ.
HEB 4:15 ನಮಗಿರುವ ಮಹಾಯಾಜಕ ನಮ್ಮ ಬಲಹೀನತೆಗಳನ್ನು ಕುರಿತು ಅನುಕಂಪಗೊಳ್ಳದೆ ಇರುವವರಲ್ಲ. ಅವರು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾತ್ರ ಮಾಡಲಿಲ್ಲ.
HEB 4:16 ನಾವು ಕರುಣೆಯನ್ನು ಹೊಂದುವಂತೆಯೂ ತಕ್ಕ ಸಮಯದಲ್ಲಿ ಸಹಾಯ ಮಾಡುವ ಕೃಪೆಯನ್ನು ಪಡೆಯುವಂತೆಯೂ ಧೈರ್ಯದಿಂದ ಕೃಪಾಸನದ ಬಳಿಗೆ ಬರೋಣ.
HEB 5:1 ಪ್ರತಿಯೊಬ್ಬ ಮಹಾಯಾಜಕ ಮನುಷ್ಯರೊಳಗಿಂದ ಆರಿಸಲಾಗಿ ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗಾಗಿ ಸಮರ್ಪಿಸಲು ಮನುಷ್ಯರ ಪರವಾಗಿ ದೇವರ ಕಾರ್ಯಗಳಿಗಾಗಿ ನೇಮಿಸಲಾಗುತ್ತಾನಲ್ಲಾ.
HEB 5:2 ಮಹಾಯಾಜಕನು ತಾನೂ ಬಲಹೀನ ಆಗಿರುವುದರಿಂದ ಆತನು ಅಜ್ಞಾನಿಗಳನ್ನೂ ಮಾರ್ಗ ತಪ್ಪಿದವರನ್ನೂ ಕುರಿತು ಕನಿಕರ ತೋರಿಸಬಲ್ಲನು.
HEB 5:3 ಆ ಬಲಹೀನತೆಯ ಕಾರಣದಿಂದ ಆತನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಬೇಕಾದವನಾಗಿದ್ದಾನೆ.
HEB 5:4 ಆರೋನನಂತೆ ದೇವರಿಂದ ಕರೆ ಹೊಂದದ ಹೊರತು ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳಲಾರನು.
HEB 5:5 ಅದೇ ರೀತಿಯಾಗಿ ಕ್ರಿಸ್ತ ಯೇಸು ಮಹಾಯಾಜಕರಾಗುವ ಮಹಿಮೆಯನ್ನು ತಮ್ಮ ಮೇಲೆ ತಾವೇ ತೆಗೆದುಕೊಳ್ಳಲಿಲ್ಲ. ಆದರೆ ದೇವರು, “ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದು ಹೇಳಿದರು.
HEB 5:6 ದೇವರು ಇನ್ನೊಂದು ಸ್ಥಳದಲ್ಲಿ: “ನೀನು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಪ್ರಕಾರವಿರುವ ಯಾಜಕನು!” ಎಂದು ಹೇಳುತ್ತಾರೆ.
HEB 5:7 ಕ್ರಿಸ್ತ ಯೇಸುವು ಭೂಲೋಕದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತರಾಗಿರುವ ದೇವರಿಗೆ ಬಲವಾಗಿ ಕೂಗುತ್ತಾ ಕಣ್ಣೀರಿಟ್ಟರು. ಯೇಸುವಿನ ಭಯಭಕ್ತಿಯ ನಿಮಿತ್ತ ಅವರ ಪ್ರಾರ್ಥನೆ, ವಿಜ್ಞಾಪನೆಗಳಿಗೆ ಉತ್ತರ ಸಿಕ್ಕಿತ್ತು.
HEB 5:8 ಕ್ರಿಸ್ತ ಯೇಸು ದೇವರ ಪುತ್ರರಾಗಿದ್ದರೂ ತಾವು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡರು.
HEB 5:9 ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು.
HEB 5:10 ಯೇಸು ದೇವರಿಂದ ನೇಮಕಗೊಂಡು, ಮೆಲ್ಕಿಜೆದೇಕನ ಕ್ರಮದ ಪ್ರಕಾರ ಮಹಾಯಾಜಕರಾದರು.
HEB 5:11 ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ನೀವು ಗ್ರಹಿಸ ಬಯಸದಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ.
HEB 5:12 ನೀವು ಇಷ್ಟರೊಳಗೆ ಬೋಧಕರಾಗಿ ಇರಬೇಕಾಗಿತ್ತು. ಆದರೂ ನಿಮಗೆ ದೇವರ ವಾಕ್ಯಗಳ ಪ್ರಾಥಮಿಕ ಉಪದೇಶಗಳನ್ನೇ ಕಲಿಸಿಕೊಡಬೇಕಾಗಿದೆ. ನಿಮಗೆ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.
HEB 5:13 ಹಾಲು ಕುಡಿಯುವವರು ಕೂಸಿನಂತಿದ್ದು ನೀತಿ ಬೋಧನೆಯಲ್ಲಿ ಅನುಭವ ಇಲ್ಲದವರಾಗಿದ್ದಾರೆ.
HEB 5:14 ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ಹೊಂದಿದವರಿಗೆ ಸೇರಿದ್ದಾಗಿದೆ.
HEB 6:1 ಆದ್ದರಿಂದ ಕ್ರಿಸ್ತ ಯೇಸುವಿನ ವಿಷಯವಾದ ಪ್ರಾಥಮಿಕ ಉಪದೇಶಗಳನ್ನು ಬಿಟ್ಟು, ನಿರ್ಜೀವ ಕ್ರಿಯೆಗಳಿಂದ ದೇವರ ಕಡೆಗೆ ತಿರುಗಿಕೊಳ್ಳುವುದೂ ದೇವರಲ್ಲಿ ನಂಬಿಕೆಯಿಡುವುದೂ
HEB 6:2 ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ.
HEB 6:3 ದೇವರು ಅನುಮತಿಸಿದರೆ ನಾವು ಇದನ್ನು ಮಾಡೋಣ.
HEB 6:4 ಒಂದು ಸಾರಿ ಬೆಳಕನ್ನು ಪಡೆದು, ಪರಲೋಕದ ವರವನ್ನು ರುಚಿ ನೋಡಿ, ಪವಿತ್ರಾತ್ಮ ದೇವರ ಪಾಲನ್ನು ಹೊಂದಿ,
HEB 6:5 ದೇವರ ವಾಕ್ಯದ ಒಳ್ಳೆತನವನ್ನೂ ಬರುವ ಲೋಕದ ಶಕ್ತಿಯನ್ನೂ ರುಚಿ ನೋಡಿದವರು
HEB 6:6 ಬಿದ್ದುಹೋದರೆ, ಅವರನ್ನು ತಿರುಗಿ ಪಶ್ಚಾತ್ತಾಪಕ್ಕೆ ನಡೆಸುವುದು ಅಸಾಧ್ಯ. ಏಕೆಂದರೆ ಅವರು ತಾವಾಗಿಯೇ ದೇವರ ಪುತ್ರ ಆಗಿರುವವರನ್ನು ಪುನಃ ಶಿಲುಬೆಗೆ ಹಾಕುವವರೂ ಅವರನ್ನು ಬಹಿರಂಗವಾಗಿ ಅವಮಾನ ಪಡಿಸುವವರೂ ಆಗಿರುತ್ತಾರೆ.
HEB 6:7 ಭೂಮಿಯು ತನ್ನ ಮೇಲೆ ಆಗಾಗ್ಗೆ ಬೀಳುವ ಮಳೆಯನ್ನು ಹೀರಿಕೊಂಡು ಅದು ತನ್ನ ಒಡೆಯನಿಗೆ ಯೋಗ್ಯವಾದ ಬೆಳೆಯನ್ನು ಕೊಡುವುದಾದರೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
HEB 6:8 ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ನಿಷ್ಪ್ರಯೋಜಕವಾದದ್ದಾಗಿ ಶಾಪಕ್ಕೆ ಗುರಿಯಾಗಿ, ಕೊನೆಗದು ಬೆಂಕಿಗೆ ತುತ್ತಾಗುತ್ತದೆ.
HEB 6:9 ಪ್ರಿಯರೇ, ನಾವು ಈ ರೀತಿಯಾಗಿ ಮಾತನಾಡಿದರೂ ನಿಮ್ಮ ವಿಷಯವಾಗಿಯೂ ನೀವು ಉತ್ತಮವಾದವುಗಳನ್ನೂ ರಕ್ಷಣೆಯ ಕಾರ್ಯಗಳನ್ನೂ ಹೊಂದಿದ್ದೀರಿ ಎಂಬ ನಿಶ್ಚಯ ನಮಗಿದೆ.
HEB 6:10 ಅವರು ನಿಮ್ಮ ಸೇವೆಯನ್ನೂ ನೀವು ಪರಿಶುದ್ಧರಿಗೆ ಸೇವೆಮಾಡಿದ್ದರಲ್ಲಿ ಇನ್ನೂ ಮಾಡುತ್ತಿರುವುದರಲ್ಲಿ ದೇವರ ಹೆಸರಿನ ಕಡೆಗೆ ತೋರಿಸಿದ ಪ್ರೀತಿಯನ್ನೂ ಅವರು ಮರೆಯುವುದಕ್ಕೆ ದೇವರು ಅನ್ಯಾಯಗಾರರಲ್ಲ.
HEB 6:11 ಅಂತ್ಯದವರೆಗೆ ನೀವು ನಿಮ್ಮ ನಿರೀಕ್ಷೆಯ ಪೂರ್ಣ ನಿಶ್ಚಯವನ್ನು ಗ್ರಹಿಸುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
HEB 6:12 ನೀವು ಸೋಮಾರಿಗಳಾಗಿರಬಾರದು. ವಿಶ್ವಾಸದಿಂದಲೂ ತಾಳ್ಮೆಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಿರಬೇಕು.
HEB 6:13 ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮಗಿಂತಲೂ ಹೆಚ್ಚು ದೊಡ್ಡವರಾರೂ ಇಲ್ಲದ್ದರಿಂದ ತಮ್ಮ ಮೇಲೆ ಆಣೆಯಿಟ್ಟು,
HEB 6:14 “ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು, ನಿನ್ನ ಸಂತಾನವನ್ನು ಹೆಚ್ಚಿಸೇ ಹೆಚ್ಚಿಸುವೆನು,” ಎಂದು ಹೇಳಿದರಷ್ಟೆ.
HEB 6:15 ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಪಡೆದುಕೊಂಡನು.
HEB 6:16 ಮನುಷ್ಯರು ನಿಜವಾಗಿಯೂ ದೊಡ್ಡವರ ಮೇಲೆ ಆಣೆ ಇಡುತ್ತಾರಷ್ಟೆ. ಆಣೆಯನ್ನು ದೃಢಪಡಿಸುವುದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿರುವುದು.
HEB 6:17 ದೇವರು ತಮ್ಮ ಮಾರ್ಪಡದ ಉದ್ದೇಶವನ್ನು ವಾಗ್ದಾನದ ಬಾಧ್ಯಸ್ಥರಿಗೆ ಇನ್ನೂ ಹೆಚ್ಚಾಗಿಯೇ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದರು.
HEB 6:18 ದೇವರ ವಾಗ್ದಾನ ಮತ್ತು ಆಣೆ ಇವೆರಡೂ ಬದಲಾಗದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಸುಳ್ಳಾಡುವವರಲ್ಲ. ಇದರಿಂದಾಗಿ, ದೇವರ ಆಶ್ರಯವನ್ನು ಹೊಂದುವುದಕ್ಕೆ ಓಡಿಬಂದಿರುವ ನಾವು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಳ್ಳಲು ಬಲವಾದ ಉತ್ತೇಜನ ಉಂಟಾಯಿತು.
HEB 6:19 ಈ ನಿರೀಕ್ಷೆಯು ನಮ್ಮ ಆತ್ಮಕ್ಕೆ ನಿಶ್ಚಯವಾದದ್ದೂ ಸ್ಥಿರವಾದದ್ದೂ ಆಗಿರುವ ಲಂಗರದ ಹಾಗಿದೆ. ಅದು ಅತಿ ಪರಿಶುದ್ಧಸ್ಥಳದ ತೆರೆಯ ಒಳಗಡೆ ಪ್ರವೇಶಿಸುವಂಥದ್ದೂ ಆಗಿದೆ.
HEB 6:20 ಯೇಸು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಮಹಾಯಾಜಕರಾಗಿ ಅತಿ ಪರಿಶುದ್ಧ ಸ್ಥಳಕ್ಕೆ ಮುಂದಾಗಿ ಹೋಗಿ ಯೇಸು ನಮ್ಮ ಪರವಾಗಿ ಪ್ರವೇಶಿಸಿದ್ದಾರೆ.
HEB 7:1 ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. ರಾಜರನ್ನು ಸೋಲಿಸಿ, ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು.
HEB 7:2 ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, “ನೀತಿರಾಜನು” ಎಂದೂ ತರುವಾಯ “ಸಾಲೇಮಿನ ರಾಜ,” ಅಂದರೆ, “ಸಮಾಧಾನದ ಅರಸನು” ಎಂದರ್ಥ.
HEB 7:3 ಈ ಮೆಲ್ಕಿಜೆದೇಕನಿಗೆ ತಂದೆಯೂ, ತಾಯಿಯೂ, ವಂಶಾವಳಿಯೂ ಇಲ್ಲ. ಅವನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಅವನು ದೇವರ ಪುತ್ರ ಆಗಿರುವವರಿಗೆ ಹೋಲಿಕೆಯಾಗಿರುವ ನಿತ್ಯ ಯಾಜಕನಾಗಿ ಉಳಿಯುತ್ತಾನೆ.
HEB 7:4 ಮೆಲ್ಕಿಜೆದೇಕನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಮೂಲ ಪಿತೃವಾದ ಅಬ್ರಹಾಮನು ಗೆದ್ದು ತಂದವುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಇವನಿಗೇ ಕೊಟ್ಟನಲ್ಲಾ.
HEB 7:5 ನಿಜವಾಗಿಯೂ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಮೋಶೆಯ ನಿಯಮದಲ್ಲಿ ಅಪ್ಪಣೆಯಿದೆ.
HEB 7:6 ಆದರೆ ವಂಶಾವಳಿಯಲ್ಲಿ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ, ವಾಗ್ದಾನಗಳನ್ನು ಪಡೆದಿದ್ದ ಅಬ್ರಹಾಮನನ್ನು ಆಶೀರ್ವದಿಸಿದನು.
HEB 7:7 ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ದೊಡ್ಡವನು ಎಂಬುದರಲ್ಲಿ ವಿವಾದವಿಲ್ಲ.
HEB 7:8 ಇಲ್ಲಿ ದಶಮಭಾಗಗಳನ್ನು ತೆಗೆದುಕೊಳ್ಳುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು. ಆದರೆ ಅಲ್ಲಿ ತೆಗೆದುಕೊಳ್ಳುವ ಮೆಲ್ಕಿಜೆದೇಕನು ಜೀವಿಸುತ್ತಿದ್ದಾನೆಂದು ಸಾಕ್ಷಿ ಹೊಂದಿರುವವನು.
HEB 7:9 ಇದು ಮಾತ್ರವಲ್ಲದೆ ದಶಮಭಾಗಗಳನ್ನು ತೆಗೆದುಕೊಳ್ಳುವ ಲೇವಿಯೂ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತು.
HEB 7:10 ಹೇಗೆಂದರೆ, ಮೆಲ್ಕಿಜೆದೇಕನು ಅಬ್ರಹಾಮನನ್ನು ಸಂಧಿಸಿದಾಗ, ಲೇವಿಯು ತನ್ನ ಪಿತೃ ಆದ ಅಬ್ರಹಾಮನ ದೇಹದಲ್ಲಿ ಇದ್ದನು ಎಂದು ಪರಿಗಣಿಸಬಹುದು.
HEB 7:11 ಲೇವಿಯರ ಯಾಜಕತ್ವದ ಆಧಾರದ ಮೇಲೆ ಜನರು ನಿಯಮವನ್ನು ಪಡೆದಿದ್ದರು. ಈ ಯಾಜಕತ್ವದ ಮೂಲಕವೇ ಪರಿಪೂರ್ಣತೆಯು ಉಂಟಾಗಿದ್ದರೆ, ಆರೋನನ ಕ್ರಮಾನುಸಾರವಾಗಿರದೆ ಮೆಲ್ಕಿಜೆದೇಕನ ಕ್ರಮದ ಪ್ರಕಾರ ಬೇರೊಬ್ಬ ಯಾಜಕನು ಎದ್ದೇಳುವ ಅವಶ್ಯವೇನಿತ್ತು?
HEB 7:12 ಯಾಜಕತ್ವವು ಬದಲಾದಾಗ ನಿಯಮವು ಸಹ ಬದಲಾಗುವುದು ಅಗತ್ಯ.
HEB 7:13 ಇವು ಯಾರ ವಿಷಯದಲ್ಲಿ ಹೇಳಿದೆಯೋ ಆ ವ್ಯಕ್ತಿ ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಎಂದೂ ಯಾರೂ ಬಲಿಪೀಠದ ಬಳಿ ಸೇವೆ ಮಾಡಿದವರಲ್ಲ.
HEB 7:14 ಹೀಗೆ ನಮ್ಮ ಕರ್ತ ಯೇಸು ಯೂದಾ ಗೋತ್ರಕ್ಕೆ ಸೇರಿದವರೆಂದು ತಿಳಿದ ಸಂಗತಿಯಾಗಿದೆ. ಈ ಗೋತ್ರವನ್ನು ಸಂಬಂಧಿಸಿ ಮೋಶೆಯು ಯಾಜಕರ ವಿಷಯವಾಗಿ ಏನನ್ನೂ ಹೇಳಲಿಲ್ಲ.
HEB 7:15 ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಏಳುತ್ತಾನೆಂಬುದು ಇನ್ನೂ ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.
HEB 7:16 ಕ್ರಿಸ್ತ ಯೇಸು ಯಾಜಕರಾದುದು ಅಳಿವಿಲ್ಲದ ಜೀವದ ಶಕ್ತಿಗೆ ಅನುಸಾರವಾಗಿದೆಯೇ ಹೊರತು ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.
HEB 7:17 ಕರ್ತ ಯೇಸುವಿನ ವಿಷಯದಲ್ಲಿ, “ನೀನು ಸದಾಕಾಲವೂ, ಮೆಲ್ಕಿಜೆದೇಕನ ಕ್ರಮದ ಯಾಜಕನಾಗಿದ್ದೀ,” ಎಂಬ ಸಾಕ್ಷಿಯಿದೆ.
HEB 7:18 ಏಕೆಂದರೆ ಮೊದಲಿದ್ದ ಆಜ್ಞೆಯು ನಿರ್ಬಲವೂ ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.
HEB 7:19 ಮೋಶೆಯ ನಿಯಮವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ಒಯ್ಯುವಂತೆ ಹೊಸ ಉತ್ತಮ ನಿರೀಕ್ಷೆಗೆ ನಡಿಸುತ್ತದೆ.
HEB 7:20 ಇದಂತೂ ಆಣೆಯಿಲ್ಲದೆ ಆಗಿರುವಂಥದ್ದಲ್ಲ! ಲೇವಿಯರು ಆಣೆಯಿಲ್ಲದೆಯೇ ಯಾಜಕರಾದರು,
HEB 7:21 ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’ ”
HEB 7:22 ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.
HEB 7:23 ಒಂದು ಕಡೆ ಆ ಯಾಜಕರು ಮುಂದುವರಿಯದಂತೆ ಮರಣವು ಅಡ್ಡಿಯಾದದ್ದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.
HEB 7:24 ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ.
HEB 7:25 ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.
HEB 7:26 ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರೂ ಗಗನ ಮಂಡಲಗಳಿಗಿಂತ ಉನ್ನತಕ್ಕೇರಿದಾತರೂ ಆಗಿರುವ ಇಂಥಾ ಮಹಾಯಾಜಕ ನಮಗಿದ್ದಾರೆ.
HEB 7:27 ಮೊದಲು ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಾರ್ಪಣೆ ಮಾಡುವ ಆ ಮಹಾಯಾಜಕರಂತೆ ಯೇಸು ಪ್ರತಿದಿನವೂ ಬಲಿ ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಇವರು ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡಾಗ ಅದನ್ನು ಒಂದೇ ಸಾರಿ ಮಾಡಿ ಮುಗಿಸಿದರು.
HEB 7:28 ಏಕೆಂದರೆ ಮೋಶೆಯ ನಿಯಮವು ಬಲಹೀನರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಿಸುತ್ತದೆ. ಆದರೆ ಮೋಶೆಯ ನಿಯಮದ ತರುವಾಯ ದೇವರ ಆಣೆಯೊಡನೆ ಬಂದ ವಾಕ್ಯವು ನಿತ್ಯವಾಗಿ ಪರಿಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ.
HEB 8:1 ನಾವು ಈಗ ಹೇಳುವ ವಿಷಯಗಳ ಮುಖ್ಯಾಂಶ ಇದು: ಪರಲೋಕದೊಳಗೆ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿರುವಂಥ ಮಹಾಯಾಜಕ ಒಬ್ಬರು ನಮಗಿದ್ದಾರೆ.
HEB 8:2 ಕ್ರಿಸ್ತ ಯೇಸು ಆಗಿರುವ ಇವರು ಪವಿತ್ರ ಸ್ಥಾನದಲ್ಲಿ ಅಂದರೆ, ಮನುಷ್ಯರಿಂದಲ್ಲ ದೇವರೇ ನಿರ್ಮಿಸಿದ ಪವಿತ್ರ ಸ್ಥಾನದ ನಿಜ ಗುಡಾರದಲ್ಲಿ ಸೇವೆಮಾಡುವವರಾಗಿದ್ದಾರೆ.
HEB 8:3 ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಯೇಸುವಿಗೆ ಸಹ ಏನಾದರೂ ಇರುವುದು ಅವಶ್ಯವಾಗಿದೆ.
HEB 8:4 ಯೇಸು ಭೂಮಿಯ ಮೇಲೆ ಇರುವುದಾದರೆ ಯಾಜಕರೇ ಆಗುತ್ತಿರಲಿಲ್ಲ. ಏಕೆಂದರೆ ಮೋಶೆಯ ನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.
HEB 8:5 ಅವರು ಪರಲೋಕದಲ್ಲಿರುವವುಗಳ ನಿದರ್ಶನವೂ ಛಾಯೆಯೂ ಆಗಿರುವ ಆಲಯಗಳಲ್ಲಿ ಸೇವೆಯನ್ನು ನಡೆಸುವರು. ಇದರಂತೆಯೇ ಮೋಶೆಯು ಗುಡಾರವನ್ನು ಮಾಡುವುದಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು,” ಎಂದು ದೇವರಿಂದ ಎಚ್ಚರಿಕೆ ಕೊಡಲಾಗಿತ್ತಲ್ಲವೇ?
HEB 8:6 ಯೇಸುವಾದರೋ ಈಗ ಅದಕ್ಕಿಂತ ಶ್ರೇಷ್ಠ ಸೇವೆಯನ್ನು ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಒಡಂಬಡಿಕೆಗೆ ಸಹ ಮಧ್ಯಸ್ಥರಾಗಿದ್ದಾರೆ.
HEB 8:7 ಆ ಮೊದಲನೆಯ ಒಡಂಬಡಿಕೆಯು ತಪ್ಪಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.
HEB 8:8 ಆದರೆ ದೇವರು ಜನರಲ್ಲಿ ತಪ್ಪನ್ನು ಕಂಡುಹಿಡಿದು ಹೀಗೆಂದರು, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
HEB 8:9 ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು, ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ದಿವಸದಂದು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ಆದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ, ಎಂದು ಕರ್ತದೇವರು ಹೇಳುತ್ತಾರೆ.
HEB 8:10 ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
HEB 8:11 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ, ತನ್ನ ಸಹೋದರನಿಗೂ, ‘ಕರ್ತದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.
HEB 8:12 ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ, ಎಂದು ಕರ್ತದೇವರು ನುಡಿಯುತ್ತಾರೆ.”
HEB 8:13 ಇಲ್ಲಿ ದೇವರು “ಹೊಸ ಒಡಂಬಡಿಕೆ” ಎಂದು ಹೇಳಿರುವಾಗ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿದ್ದಾರೆ. ಅದು ಹಳೆಯದಾಗುತ್ತಾ ಕ್ಷೀಣವಾಗಿ ಅಳಿದು ಹೋಗಲಿದೆ.
HEB 9:1 ಮೊದಲನೆಯ ಒಡಂಬಡಿಕೆಯಲ್ಲಿ ದೈವಿಕ ಆರಾಧನೆಯ ಕ್ರಮಗಳಿದ್ದವು. ಮಾತ್ರವಲ್ಲದೆ ಮಾನವ ನಿರ್ಮಿತ ಪವಿತ್ರ ಸ್ಥಳವೂ ಇತ್ತು.
HEB 9:2 ಅದರೊಳಗೆ ಒಂದು ಗುಡಾರವು ಕಟ್ಟಲಾಗಿತ್ತು. ಅದರ ಪ್ರಥಮ ಭಾಗದಲ್ಲಿ ದೀಪಸ್ತಂಭ, ಮೇಜು, ಸಮ್ಮುಖದ ರೊಟ್ಟಿ ಇವುಗಳಿದ್ದವು. ಅದು ಪವಿತ್ರ ಸ್ಥಳ ಎಂದು ಕರೆಯಲಾಗಿತ್ತು.
HEB 9:3 ಎರಡನೆಯ ತೆರೆಯ ಆಚೆ ಅತಿ ಪವಿತ್ರ ಸ್ಥಳ ಎಂದು ಕರೆಯಲಾದ ಗುಡಾರವಿತ್ತು.
HEB 9:4 ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು. ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಶಿಲಾಶಾಸನಗಳೂ ಇದ್ದವು.
HEB 9:5 ಮಂಜೂಷದ ಮೇಲೆ ಮಹಿಮೆಯ ಕೆರೂಬಿಯರು ಕರುಣಾಸನವನ್ನು ಮುಚ್ಚಿಕೊಂಡಿದ್ದವು. ಸದ್ಯಕ್ಕೆ ಈ ವಿಷಯಗಳನ್ನು ಸವಿಸ್ತಾರವಾಗಿ ನಾನು ಹೇಳುವುದಕ್ಕಾಗದು.
HEB 9:6 ಇವುಗಳು ಹೀಗೆ ಸಿದ್ಧವಾದ ಬಳಿಕ ಯಾಜಕರು ಯಾವಾಗಲೂ ಹೊರಗಿನ ಗುಡಾರವನ್ನು ಪ್ರವೇಶಿಸಿ ದೈವಿಕ ಆರಾಧನೆಯನ್ನು ನಡೆಸುತ್ತಿದ್ದರು.
HEB 9:7 ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೆ ಒಂದೇ ಸಾರಿ ಪ್ರವೇಶಿಸುತ್ತಿದ್ದನು. ಅವನು ರಕ್ತವನ್ನು ತೆಗೆದುಕೊಳ್ಳದೆ ಎಂದಿಗೂ ಹೋಗುತ್ತಿರಲಿಲ್ಲ. ಬಲಿಯ ರಕ್ತವನ್ನು ತನಗೋಸ್ಕರವೂ ಜನರು ತಿಳಿಯದೆ ಮಾಡಿದ ಪಾಪಗಳಿಗೋಸ್ಕರವೂ ಸಮರ್ಪಿಸುತ್ತಿದ್ದನು.
HEB 9:8 ಹೊರಗಿನ ಗುಡಾರವು ಇನ್ನೂ ಇರುವ ತನಕ ಅತಿ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲವೆಂಬುದನ್ನು ಪವಿತ್ರಾತ್ಮ ದೇವರು ವ್ಯಕ್ತಪಡಿಸುತ್ತಾರೆ
HEB 9:9 ಈ ಗುಡಾರವು ಈ ಕಾಲವನ್ನು ಸೂಚಿಸುವ ಒಂದು ಮಾದರಿಯಾಗಿದೆ. ಆಗ ಆರಾಧಿಸುವವರ ಮನಸ್ಸಾಕ್ಷಿಯನ್ನು ಪರಿಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲಾಗುತ್ತಿದ್ದವು.
HEB 9:10 ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳಲ್ಲಿಯೂ ಮುಂತಾದ ಬಾಹ್ಯಾಚಾರದ ಕ್ರಮಗಳಾಗಿದ್ದವು. ಅವು ಹೊಸ ಕ್ರಮಕಾಲದವರೆಗೆ ಮಾತ್ರ ನೇಮಕವಾಗಿದ್ದವು.
HEB 9:11 ಆದರೆ ಕ್ರಿಸ್ತ ಯೇಸು ಈಗಾಗಲೇ ಮಹಾಯಾಜಕರಾಗಿ ಬಂದಿದ್ದಾರೆ. ಅವರು ಕೊಡುವ ಒಳ್ಳೆಯವುಗಳು ಈಗಾಗಲೇ ನಮಗೆ ದೊರೆತಿವೆ. ಅವರು ಹಿಂದಿನವುಗಳಿಗಿಂತಲೂ ಶ್ರೇಷ್ಠವಾದದ್ದೂ ಪರಿಪೂರ್ಣವಾದದ್ದೂ ಆಗಿರುವ ಗುಡಾರವನ್ನು ಅಂದರೆ ಕೈಯಿಂದ ಕಟ್ಟಿರದಂತದ್ದೂ ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿರದಂತದ್ದೂ ಆಗಿರುವ ಗುಡಾರವನ್ನು ಪ್ರವೇಶಿಸಿದರು.
HEB 9:12 ಕ್ರಿಸ್ತ ಯೇಸು ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವರಾಗಿ ಒಂದೇ ಸಾರಿ ಮಹಾ ಪವಿತ್ರ ಸ್ಥಳದೊಳಗೆ ಪ್ರವೇಶಿಸಿದರು.
HEB 9:13 ಹೋತ ಹೋರಿಗಳ ರಕ್ತವನ್ನೂ ಅಶುದ್ಧರಾದವರ ಮೇಲೆ ಚಿಮುಕಿಸಲಾಯಿತು. ಯಜ್ಞಪಶುಗಳ ಬೂದಿಯನ್ನೂ ಅವರ ಮೇಲೆ ತೂರಲಾಯಿತು. ಇದು ಅವರ ದೇಹವನ್ನು ಶುದ್ಧೀಕರಿಸಿತು.
HEB 9:14 ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ?
HEB 9:15 ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ.
HEB 9:16 ಮರಣ ಶಾಸನವು ಎಲ್ಲಿದೆಯೋ ಅಲ್ಲಿ ಅದನ್ನು ಮಾಡಿಕೊಂಡಾತನ ಮರಣ ಅವಶ್ಯ ಎಂಬುದನ್ನು ರುಜುಪಡಿಸಬೇಕು.
HEB 9:17 ಮರಣ ಶಾಸನವು ಬರೆದವನು ಜೀವದಿಂದಿರುವವರೆಗೂ ಅದು ಎಂದಿಗೂ ಜಾರಿಗೆ ಬರುವುದಿಲ್ಲ.
HEB 9:18 ಆದ್ದರಿಂದ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಪ್ರತಿಷ್ಠಾಪನೆ ಆಗಲಿಲ್ಲ.
HEB 9:19 ಮೋಶೆಯು ಪ್ರತಿಯೊಂದು ಆಜ್ಞೆಯನ್ನು ನಿಯಮದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪು ಇವುಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಚಿಮುಕಿಸಿದನು.
HEB 9:20 ಹಾಗೆ ಚಿಮುಕಿಸುವಾಗ ಮೋಶೆಯು, “ಇದು ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯ ರಕ್ತ,” ಎಂದು ಹೇಳಿದನು.
HEB 9:21 ಅದೇ ರೀತಿಯಾಗಿ ಮೋಶೆಯು ಗುಡಾರದ ಮೇಲೆಯೂ ಸೇವೆಯ ಎಲ್ಲಾ ಉಪ ಪಾತ್ರೆಗಳ ಮೇಲೆಯೂ ರಕ್ತವನ್ನು ಚಿಮುಕಿಸಿದನು.
HEB 9:22 ಹೀಗೆ ದೇವರ ನಿಯಮದ ಪ್ರಕಾರ ಎಲ್ಲವೂ ರಕ್ತದಿಂದಲೇ ಶುದ್ಧಿಯಾಗಬೇಕು. ರಕ್ತಧಾರೆ ಇಲ್ಲದೆ ಪಾಪಪರಿಹಾರವು ಉಂಟಾಗುವುದಿಲ್ಲ.
HEB 9:23 ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತೆ ಇರುವ ವಸ್ತುಗಳನ್ನು ಈ ಯಜ್ಞಗಳಿಂದ ಶುದ್ಧಿಮಾಡುವುದು ಅವಶ್ಯವಾಗಿದೆ. ಹಾಗಾದರೆ ಪರಲೋಕದ ನಿಜ ವಸ್ತುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯಕವಾಗಿವೆ.
HEB 9:24 ಏಕೆಂದರೆ ಕ್ರಿಸ್ತ ಯೇಸು ನಿಜ ದೇವಾಲಯದ ಪ್ರತಿರೂಪದಂತಿರುವ, ಕೈಯಿಂದ ಕಟ್ಟಿದ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವಂತೆ ಪರಲೋಕದಲ್ಲಿಯೇ ಪ್ರವೇಶಿಸಿದರು.
HEB 9:25 ಇದಲ್ಲದೆ ಮಹಾಯಾಜಕನು ಪ್ರತಿವರ್ಷವೂ ತನ್ನ ಸ್ವಂತದ್ದಾಗಿರದ ರಕ್ತವನ್ನು ತೆಗದುಕೊಂಡು ಅತಿ ಪವಿತ್ರ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ ಯೇಸು ತಮ್ಮನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಪ್ರವೇಶಿಸಲಿಲ್ಲ.
HEB 9:26 ಹಾಗಿದ್ದರೆ, ಕ್ರಿಸ್ತ ಯೇಸುವು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಈಗ ಅವರು ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪ ನಿವಾರಣೆ ಮಾಡುವುದಕ್ಕೆ ತಮ್ಮನ್ನು ತಾವೇ ಯಜ್ಞ ಮಾಡಿಕೊಳ್ಳುವವರಾಗಿ ಪ್ರತ್ಯಕ್ಷರಾದರು.
HEB 9:27 ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ.
HEB 9:28 ಅದರಂತೆಯೇ ಕ್ರಿಸ್ತ ಯೇಸು ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವುದಕ್ಕೋಸ್ಕರ ಒಂದೇ ಸಾರಿ ಸಮರ್ಪಿತರಾದರು. ತಮಗಾಗಿ ಕಾದಿರುವವರಿಗೆ ರಕ್ಷಣೆ ಕೊಡಲು ಕ್ರಿಸ್ತ ಯೇಸು ಎರಡನೆಯ ಸಲ ಕಾಣಿಸಿಕೊಳ್ಳುವರು. ಆಗ ಪಾಪ ಹೊತ್ತುಕೊಳ್ಳುವುದಕ್ಕಾಗಿ ಬರುವುದಿಲ್ಲ.
HEB 10:1 ಮೋಶೆಯ ನಿಯಮವು ಬರಬೇಕಾಗಿದ್ದ ವಸ್ತುಗಳ ಛಾಯೆಯಾಗಿದೆ ಹೊರತು ಅವುಗಳ ನಿಜಸ್ವರೂಪವಲ್ಲ. ಈ ಕಾರಣದಿಂದ ಅದು ಪ್ರತಿವರ್ಷ ಯಾವಾಗಲೂ ಯಜ್ಞಗಳನ್ನು ಅರ್ಪಿಸುವುದಕ್ಕೆ ಬರುವವರನ್ನು ಮೋಶೆಯ ನಿಯಮವು ಎಂದಿಗೂ ಪರಿಪೂರ್ಣತೆಗೆ ತರಲಾರದು.
HEB 10:2 ಒಂದು ವೇಳೆ ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಪಾಪದಿಂದ ಶುದ್ಧೀಕರಣ ಹೊಂದಿದ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ.
HEB 10:3 ಆ ಯಜ್ಞಗಳು ಪ್ರತಿವರ್ಷವೂ ಪಾಪಗಳ ಜ್ಞಾಪಕವನ್ನು ಉಂಟುಮಾಡುತ್ತಿತ್ತು.
HEB 10:4 ಏಕೆಂದರೆ ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದುಹಾಕುವುದು ಅಸಾಧ್ಯ.
HEB 10:5 ಆದ್ದರಿಂದ ಕ್ರಿಸ್ತ ಯೇಸು ಭೂಲೋಕದೊಳಗೆ ಬಂದಾಗ, “ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿ ಕೊಟ್ಟಿರುವೆ;
HEB 10:6 ದಹನಬಲಿಗಳಲ್ಲಿಯೂ ಪಾಪಪರಿಹಾರ ಬಲಿಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ.
HEB 10:7 ಆಗ ನಾನು ಹೀಗೆಂದೆನು, ‘ಓ, ದೇವರೇ, ಪವಿತ್ರ ವೇದದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವಂತೆ ನಾನು ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ.’ ”
HEB 10:8 ಮೋಶೆಯ ನಿಯಮದ ಪ್ರಕಾರವಾಗಿ ಅರ್ಪಿಸಲಾಗುತ್ತಿದ್ದಂತೆಯೇ, “ಯಜ್ಞವೂ ಅರ್ಪಣೆಯೂ ದಹನಬಲಿಗಳೂ ಪಾಪ ಪರಿಹಾರದ ಬಲಿಯೂ ನಿಮಗೆ ಇಷ್ಟವಾಗಿರಲಿಲ್ಲ. ಅವುಗಳಲ್ಲಿ ನಿಮಗೆ ಸಂತೋಷವಿರಲಿಲ್ಲ,” ಎಂದು ಮೊದಲು ಅವರು ಹೇಳಿ,
HEB 10:9 ತರುವಾಯ, “ಇಗೋ, ದೇವರೇ, ನಿಮ್ಮ ಚಿತ್ತವನ್ನು ನೆರವೇರಿಸಲು ಬಂದಿದ್ದೇನೆ!” ಎಂದು ಹೇಳಿದ್ದಾರೆ. ಹೀಗೆ ಅವರು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ರದ್ದು ಮಾಡಿದ್ದಾರೆ.
HEB 10:10 ಹೀಗೆ ಒಂದೇ ಸಾರಿ ಎಲ್ಲಾ ಕಾಲಕ್ಕೂ ಕ್ರಿಸ್ತ ಯೇಸು ತಮ್ಮ ದೇಹವನ್ನು ಸಮರ್ಪಿಸಿದ್ದರ ಮೂಲಕ ದೇವರ ಚಿತ್ತವನ್ನು ನೆರವೇರಿಸಿ, ನಮ್ಮನ್ನು ಶುದ್ಧರನ್ನಾಗಿ ಮಾಡಿದ್ದಾರೆ.
HEB 10:11 ಇದಲ್ಲದೆ ಪ್ರತಿ ಯಾಜಕನು ಅನುದಿನವೂ ಸೇವೆಮಾಡುತ್ತಾ ನಿಂತಿರುವನು. ಆದರೆ ಎಂದಿಗೂ ಪಾಪಗಳನ್ನು ತೆಗೆದುಹಾಕಲಾರದಂಥ ಯಜ್ಞಗಳನ್ನು ಪದೇಪದೇ ಅರ್ಪಿಸುತ್ತಿದ್ದನು.
HEB 10:12 ಕ್ರಿಸ್ತ ಯೇಸುವು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡರು.
HEB 10:13 ಅಂದಿನಿಂದ ತಮ್ಮ ವಿರೋಧಿಗಳನ್ನು ತಮ್ಮ ಪಾದಪೀಠವಾಗಿ ಮಾಡಿಕೊಳ್ಳುವ ತನಕ ಕ್ರಿಸ್ತ ಯೇಸು ಕಾಯುತ್ತಿರುವರು.
HEB 10:14 ಏಕೆಂದರೆ ಕ್ರಿಸ್ತ ಯೇಸುವು ಒಂದೇ ಬಲಿ ಅರ್ಪಣೆಯಿಂದ ಪವಿತ್ರವಾಗುವವರನ್ನು ನಿರಂತರ ಪರಿಪೂರ್ಣರನ್ನಾಗಿ ಮಾಡಿದ್ದಾರೆ.
HEB 10:15 ಪವಿತ್ರಾತ್ಮ ದೇವರು ಸಹ ನಿಮಗೆ ಸಾಕ್ಷಿ ಕೊಡುವವರಾಗಿ,
HEB 10:16 “ಆ ದಿನಗಳ ತರುವಾಯ, ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಹೃದಯಗಳಲ್ಲಿ ಇಡುವೆನು. ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು, ಎಂದು ಕರ್ತದೇವರು ಹೇಳುತ್ತಾರೆ.”
HEB 10:17 ತರುವಾಯ ಅವರು, “ನಾನು ಅವರ ಪಾಪಗಳನ್ನೂ ಅಧರ್ಮಗಳನ್ನೂ ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ!” ಎಂದು ಹೇಳುತ್ತಾರೆ.
HEB 10:18 ಆದ್ದರಿಂದ, ಈಗ ಕ್ಷಮಾಪಣೆಯಾದ ಬಳಿಕ ಪಾಪ ಪರಿಹಾರದ ಬಲಿಯ ಅವಶ್ಯಕತೆ ಇಲ್ಲ.
HEB 10:19 ಆದ್ದರಿಂದ ಪ್ರಿಯರೇ, ಯೇಸುವಿನ ರಕ್ತದಿಂದ ಅವರ ದೇಹವೆಂಬ ಪರದೆಯ ಮೂಲಕ ನಮಗೆ ತೆರೆಯಲಾದ
HEB 10:20 ಹೊಸ ಹಾಗೂ ಸಜೀವವಾದ ಮಾರ್ಗವಿರುವುದರಿಂದ ಅತಿಪರಿಶುದ್ಧವಾದ ಸ್ಥಳವನ್ನು ಪ್ರವೇಶಿಸಲು ಭರವಸೆಯಿದೆ.
HEB 10:21 ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವುದರಿಂದ
HEB 10:22 ಆದಕಾರಣ ಅಪರಾಧ ಮನಸ್ಸಾಕ್ಷಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ಶುದ್ಧ ನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಸಮೀಪಕ್ಕೆ ಬರೋಣ.
HEB 10:23 ನಾವು ನಮ್ಮ ನಿರೀಕ್ಷೆಯ ಅರಿಕೆಯನ್ನು ಚಂಚಲರಾಗದೆ ಬಿಗಿಯಾಗಿ ಹಿಡಿಯೋಣ. ಏಕೆಂದರೆ ವಾಗ್ದಾನ ಮಾಡಿದವರು ನಂಬಿಗಸ್ತರು.
HEB 10:24 ನಾವು ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿಯೂ ಸತ್ಕಾರ್ಯ ಮಾಡುವುದಕ್ಕಾಗಿಯೂ ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕೆಂದು ಯೋಚಿಸೋಣ.
HEB 10:25 ಸಭೆಯಾಗಿ ಸೇರುವುದನ್ನು ಕೆಲವರಿಗೆ ರೂಢಿಯಾಗಿ ಬಿಟ್ಟಂತೆ, ನಾವು ಹಾಗೆ ಮಾಡದಿರೋಣ. ಕರ್ತ ಯೇಸುವಿನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ತಿಳಿದಿರುವುದರಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಗೊಳಿಸುವುದನ್ನು ಇನ್ನೂ ಹೆಚ್ಚಾಗಿ ಮಾಡಿರಿ.
HEB 10:26 ಏಕೆಂದರೆ, ನಾವು ಸತ್ಯದ ಅರಿವನ್ನು ಹೊಂದಿದ ಮೇಲೆ ಬೇಕೆಂದು ಪಾಪ ಮಾಡುತ್ತಾ ಇದ್ದರೆ, ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ.
HEB 10:27 ಆದರೆ ಖಂಡಿತವಾಗಿ ಎದುರು ನೋಡತಕ್ಕ ಭಯಂಕರವಾದ ನ್ಯಾಯತೀರ್ಪು ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಇರುವುವು.
HEB 10:28 ಮೋಶೆಯ ನಿಯಮವನ್ನು ಅಸಡ್ಡೆ ಮಾಡಿದವನಿಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕರುಣೆಯಿಲ್ಲದೆ ಮರಣದಂಡನೆಯಾಗುತ್ತಿತ್ತು.
HEB 10:29 ಯಾವನು ದೇವಪುತ್ರರನ್ನೇ ತುಳಿದು ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಪವಿತ್ರಾತ್ಮ ದೇವರನ್ನು ತಿರಸ್ಕಾರ ಮಾಡಿದ್ದಾನೋ, ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗುವನೆಂಬುದನ್ನು ಯೋಚಿಸಿರಿ.
HEB 10:30 ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,” ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” ಎಂದೂ ಹೇಳಲಾಗಿದೆ.
HEB 10:31 ಸಜೀವ ದೇವರ ಕೈಯಲ್ಲಿ ಬೀಳುವುದು ಭಯಂಕರವಾದದ್ದು.
HEB 10:32 ಆದರೆ ನೀವು ಬೆಳಕನ್ನು ಹೊಂದಿದ ಮೇಲೆ ಬಾಧೆಗಳ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪುಮಾಡಿಕೊಳ್ಳಿರಿ.
HEB 10:33 ಕೆಲವು ಸಾರಿ ನೀವು ನಿಂದೆಗಳನ್ನೂ ಉಪದ್ರವಗಳನ್ನೂ ಅನುಭವಿಸಿ ಬಹಿರಂಗ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸುವವರ ಭಾಗಿಗಳಾದಿರಿ.
HEB 10:34 ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಸ್ಥಿರವಾದ ಉತ್ತಮ ಆಸ್ತಿಯಿದೆ ಎಂದು ತಿಳಿದು, ನಿಮ್ಮ ಆಸ್ತಿ ಸುಲಿಗೆಯಾದಾಗ ಸಂತೋಷವಾಗಿ ಬಿಟ್ಟುಕೊಟ್ಟಿದ್ದೀರಿ.
HEB 10:35 ಮಹಾ ಪ್ರತಿಫಲ ನಿಮಗಿರುವುದರಿಂದ ನಿಮ್ಮ ಧೈರ್ಯವನ್ನು ಕಳೆದುಕೊಳ್ಳಬೇಡಿರಿ.
HEB 10:36 ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ಅವರು ಮಾಡಿದ ವಾಗ್ದಾನವನ್ನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ:
HEB 10:37 ಏಕೆಂದರೆ, “ಇನ್ನು ಸ್ವಲ್ಪ ಸಮಯದಲ್ಲಿಯೇ, ಬರಲಿರುವ ಒಬ್ಬರು ಬಂದೇ ಬರುವರು. ಅವರು ತಡಮಾಡುವುದಿಲ್ಲ.”
HEB 10:38 ಆದರೆ, “ನನ್ನ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಹಿಂಜರಿದರೆ, ಅವನಲ್ಲಿ ನನಗೆ ಸಂತೋಷವಿರುವುದಿಲ್ಲ.”
HEB 10:39 ನಾವಾದರೋ ಹಿಂಜರಿದು ನಾಶವಾಗುವವರಲ್ಲ, ನಂಬುವವರಾಗಿ ಆ ರಕ್ಷಣೆಯನ್ನು ಹೊಂದುವವರಾಗಿದ್ದೇವೆ.
HEB 11:1 ನಂಬಿಕೆ ಎಂಬುದು ನಾವು ನಿರೀಕ್ಷಿಸುವವುಗಳ ನಿಶ್ಚಯವೂ ಕಾಣದವುಗಳ ನಿದರ್ಶನವೂ ಆಗಿದೆ.
HEB 11:2 ಹಿರಿಯರು ನಂಬಿಕೆಯಿಂದಲೇ ಒಳ್ಳೆಯ ಸಾಕ್ಷಿಹೊಂದಿದರು.
HEB 11:3 ವಿಶ್ವವು ದೇವರ ವಾಕ್ಯದಿಂದ ಉಂಟಾದವೆಂದೂ ಕಾಣುವಂತವುಗಳು ಕಾಣದವುಗಳಿಂದ ಉಂಟಾದವು ಎಂಬುದನ್ನು ನಾವು ನಂಬಿಕೆಯಿಂದ ತಿಳಿದುಕೊಂಡದ್ದರಿಂದ ಗ್ರಹಿಸುತ್ತೇವೆ.
HEB 11:4 ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಉತ್ತಮ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ಅವನು ನೀತಿವಂತನೆಂದು ಸಾಕ್ಷಿಹೊಂದಿದನು. ದೇವರು ಸಹ ಅವನ ಕಾಣಿಕೆಗಳನ್ನು ಸ್ವೀಕಾರಮಾಡಿದರು. ಅವನು ಸತ್ತು ಹೋಗಿದ್ದರೂ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
HEB 11:5 ನಂಬಿಕೆಯಿಂದಲೇ ಹನೋಕನು ಮರಣ ಹೊಂದದೆ, ಒಯ್ಯಲಾದನು. “ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.” ಅವನು ಒಯ್ಯಲಾಗುವುದಕ್ಕಿಂತ ಮುಂಚೆ ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿಹೊಂದಿದನು.
HEB 11:6 ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವರು, ದೇವರು ಇದ್ದಾರೆಂತಲೂ ತಮ್ಮನ್ನು ಜಾಗ್ರತೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆಂತಲೂ ನಂಬಬೇಕು.
HEB 11:7 ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಕೆ ಪಡೆದು ಭಕ್ತಿಯಲ್ಲಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧಮಾಡಿದನು. ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಗೆ ಅನುಸಾರವಾಗಿ ನಂಬಿಕೆಯಿಂದ ಬರುವ ನೀತಿಗೆ ಬಾಧ್ಯನಾದನು.
HEB 11:8 ನಂಬಿಕೆಯಿಂದಲೇ ಅಬ್ರಹಾಮನು ಕರೆಕೊಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.
HEB 11:9 ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗಲೂ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರು ಸಹ ಗುಡಾರಗಳಲ್ಲಿ ವಾಸಿಸಿದರು.
HEB 11:10 ಏಕೆಂದರೆ ದೇವರು ಯಾವುದನ್ನು ಕಟ್ಟುವವರೂ ಮಾಡುವವರೂ ಆಗಿದ್ದಾರೋ ಆ ಅಸ್ತಿವಾರಗಳುಳ್ಳ ಪಟ್ಟಣಕ್ಕೋಸ್ಕರ ಅವರು ಎದುರುನೋಡುತ್ತಿದ್ದರು.
HEB 11:11 ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನ ಮಾಡಿದ ದೇವರು ನಂಬಿಗಸ್ತರು ಎಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ಗರ್ಭವತಿಯಾಗುವುದಕ್ಕೆ ಸಾಮರ್ಥ್ಯ ಹೊಂದಿ, ಒಂದು ಮಗುವನ್ನು ಹೆತ್ತಳು.
HEB 11:12 ಆದ್ದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಮರಳಿನಂತೆ ಅಸಂಖ್ಯವಾಗಿಯೂ ಸಂತತಿಯವರು ಹುಟ್ಟಿದರು.
HEB 11:13 ಈ ಎಲ್ಲಾ ಜನರು ಮರಣ ಹೊಂದುವಾಗಲೂ ವಿಶ್ವಾಸದಿಂದ ಜೀವಿಸುವವರಾಗಿದ್ದರು. ವಾಗ್ದಾನದ ಸಂಗತಿಗಳನ್ನು ಅವರು ಹೊಂದಲಿಲ್ಲ. ಅವುಗಳನ್ನು ಅವರು ದೂರದಿಂದಲೇ ನೋಡಿ ಸ್ವಾಗತಿಸಿದರು. ತಾವು ಭೂಮಿಯ ಮೇಲೆ ಪರದೇಶದವರೂ ಅಪರಿಚಿತರೂ ಆಗಿದ್ದೇವೆಂದು ಒಪ್ಪಿಕೊಂಡರು.
HEB 11:14 ಇಂಥಾ ಸಂಗತಿಗಳನ್ನು ಹೇಳುವ ಜನರು ತಮ್ಮ ಸ್ವಂತ ದೇಶಕ್ಕಾಗಿ ಎದುರುನೋಡುತ್ತಿದ್ದರು.
HEB 11:15 ಒಂದು ವೇಳೆ ತಾವು ಬಿಟ್ಟುಬಂದ ದೇಶವನ್ನು ಕುರಿತು ಅವರು ಯೋಚಿಸುತ್ತಿದ್ದರೆ, ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.
HEB 11:16 ಅದರ ಬದಲು ಅವರು ಅದಕ್ಕಿಂತ ಉತ್ತಮವಾದ ಪರಲೋಕದ ದೇಶವನ್ನು ನಿರೀಕ್ಷಿಸಿದರು. ಆದ್ದರಿಂದ ದೇವರು ಅವರ ದೇವರೆನಿಸಿಕೊಳ್ಳುವುದಕ್ಕೆ ನಾಚಿಕೊಳ್ಳದೆ ಅವರಿಗಾಗಿ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾರೆ.
HEB 11:17 ಅಬ್ರಹಾಮನು ಪರೀಕ್ಷೆಗೆ ಒಳಗಾದಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.
HEB 11:18 ಅವನ ವಿಷಯದಲ್ಲಿ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ದೇವರು ಅವನಿಗೆ ಹೇಳಿದ್ದರೂ ವಾಗ್ದಾನ ಸ್ವೀಕರಿಸಿದವನು ತನ್ನ ಒಬ್ಬನೇ ಮಗನನ್ನು ಬಲಿಗಾಗಿ ಅರ್ಪಿಸಿದನು.
HEB 11:19 ತನ್ನ ದೇವರು ಸತ್ತವರೊಳಗಿಂದ ಎಬ್ಬಿಸಲು ಸಮರ್ಥರು ಎಂದು ಅಬ್ರಹಾಮನು ತಿಳಿದಿದ್ದನು. ಅವನು ಇಸಾಕನನ್ನು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು.
HEB 11:20 ನಂಬಿಕೆಯಿಂದಲೇ ಇಸಾಕನು ಮುಂದೆ ಬರಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.
HEB 11:21 ನಂಬಿಕೆಯಿಂದಲೇ ಯಾಕೋಬನು ಮರಣ ಹೊಂದುವ ಸಮಯದಲ್ಲಿ ಯೋಸೇಫನ ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
HEB 11:22 ನಂಬಿಕೆಯಿಂದಲೇ ಯೋಸೇಫನು ಸಾಯುವಾಗ ಇಸ್ರಾಯೇಲರು ಹೊರಡುವುದನ್ನು ಕುರಿತು ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು.
HEB 11:23 ನಂಬಿಕೆಯಿಂದಲೇ ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರುವುದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
HEB 11:24 ಮೋಶೆಯು ದೊಡ್ಡವನಾಗಿ ಬೆಳೆದ ಮೇಲೆ ನಂಬಿಕೆಯಿಂದಲೇ ಫರೋಹನ ಪುತ್ರಿಯ ಮಗನೆಂದು ಕರೆಯಿಸಿಕೊಳ್ಳಲು ನಿರಾಕರಿಸಿದ್ದನು.
HEB 11:25 ಮೋಶೆ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟ ಅನುಭವಿಸುವುದನ್ನೇ ಆರಿಸಿಕೊಂಡನು.
HEB 11:26 ಈಜಿಪ್ಟಿನ ನಿಕ್ಷೇಪಕ್ಕಿಂತಲೂ ಕ್ರಿಸ್ತ ಯೇಸುವಿಗಾಗಿ ನಿಂದೆಯನ್ನು ಹೊಂದುವುದು ಮಹಾಐಶ್ವರ್ಯವೆಂದೆಣಿಸಿಕೊಂಡನು. ಏಕೆಂದರೆ ಅವನು ತನ್ನ ಬಹುಮಾನಕ್ಕಾಗಿ ಎದುರು ನೋಡಿದನು.
HEB 11:27 ನಂಬಿಕೆಯಿಂದಲೇ ಮೋಶೆ ಅರಸನ ಕೋಪಕ್ಕೆ ಭಯಪಡದೆ ಈಜಿಪ್ಟನ್ನು ಬಿಟ್ಟುಹೋದನು. ಏಕೆಂದರೆ ಅವನು ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿದ್ದನು.
HEB 11:28 ಚೊಚ್ಚಲ ಮಕ್ಕಳನ್ನು ಸಂಹರಿಸುವ ದೂತನು ಇಸ್ರಾಯೇಲರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ ಮೋಶೆ ನಂಬಿಕೆಯಿಂದಲೇ ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದನು.
HEB 11:29 ನಂಬಿಕೆಯಿಂದಲೇ ಇಸ್ರಾಯೇಲರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು. ಈಜಿಪ್ಟಿನವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿ ಮುಳುಗಿ ಹೋದರು.
HEB 11:30 ಇಸ್ರಾಯೇಲರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ, ಅವು ಬಿದ್ದು ಹೋದದ್ದು ನಂಬಿಕೆಯಿಂದಲೇ.
HEB 11:31 ರಹಾಬಳೆಂಬ ವೇಶ್ಯೆಯು ಗೂಢಚಾರರನ್ನು ಸಮಾಧಾನವಾಗಿ ಸ್ವಾಗತಿಸಿದ್ದರಿಂದ ಅವಿಧೇಯರೊಂದಿಗೆ ನಾಶವಾಗದೆ ಉಳಿದದ್ದು ನಂಬಿಕೆಯಿಂದಲೇ.
HEB 11:32 ಇನ್ನೂ ಏನು ಹೇಳಬೇಕು? ಗಿಡಿಯೋನ್, ಬಾರಾಕ್, ಸಂಸೋನ್, ಎಪ್ತಾಹ, ದಾವೀದ, ಸಮುಯೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವುದಕ್ಕೆ ನನಗೆ ಸಮಯ ಸಾಲದು.
HEB 11:33 ಇವರೆಲ್ಲರೂ ನಂಬಿಕೆಯ ಮೂಲಕವೇ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು. ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು,
HEB 11:34 ಬೆಂಕಿಯ ಶಕ್ತಿಯನ್ನು ಆರಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ಬಲಹೀನತೆಯಿಂದ ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರರ ಸೈನ್ಯಗಳನ್ನು ಓಡಿಸಿಬಿಟ್ಟರು,
HEB 11:35 ಸ್ತ್ರೀಯರು ಸತ್ತು ಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಆದರೆ ಬೇರೆ ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಉತ್ತಮ ಪುನರುತ್ಥಾನ ಹೊಂದುವುದಕ್ಕಾಗಿ ತಮಗೆ ಬಿಡುಗಡೆಯನ್ನು ಸ್ವೀಕರಿಸದೆ ಹೋದರು,
HEB 11:36 ಇನ್ನೂ ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು ತಿಂದು ಬೇಡಿ ಸೆರೆವಾಸವನ್ನು ಸಹ ಅನುಭವಿಸಿದರು,
HEB 11:37 ಕೆಲವರ ಮೇಲೆ ಕಲ್ಲೆಸೆದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಸಾಯಿಸಿದರು, ಕೆಲವರನ್ನು ಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು, ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ
HEB 11:38 ಭೂಮಿಯ ಕಾಡು, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು. ಇಂಥವರಿಗೆ ಈ ಲೋಕವು ಯೋಗ್ಯವಾದ ಸ್ಥಳವಲ್ಲ.
HEB 11:39 ಇವರೆಲ್ಲರೂ ತಮ್ಮ ನಂಬಿಕೆಯ ಮೂಲಕ ಒಳ್ಳೆಯ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವಾದದ್ದನ್ನು ಹೊಂದಲಿಲ್ಲ.
HEB 11:40 ಏಕೆಂದರೆ ನಮ್ಮೊಂದಿಗೆ ಅವರು ಪರಿಪೂರ್ಣರಾಗಬೇಕೆಂದು ದೇವರು ನಮಗೋಸ್ಕರ ಉತ್ತಮವಾದದ್ದನ್ನು ಸಂಕಲ್ಪಿಸಿದ್ದಾರೆ.
HEB 12:1 ಆದಕಾರಣ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು,
HEB 12:2 ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.
HEB 12:3 ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡ ಯೇಸುವನ್ನು ಕುರಿತು ನೀವು ಯೋಚಿಸಿರಿ.
HEB 12:4 ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ, ಇನ್ನೂ ರಕ್ತವನ್ನು ಸುರಿಸುವಷ್ಟು ಅದನ್ನು ಎದುರಿಸಲಿಲ್ಲ.
HEB 12:5 ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು, “ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ. ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
HEB 12:6 ಏಕೆಂದರೆ, ಕರ್ತದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಶಿಕ್ಷಿಸುತ್ತಾರೆ. ತಾವು ಸ್ವೀಕರಿಸುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾರೆ!” ಎಂಬುದಾಗಿದೆ.
HEB 12:7 ಶಿಸ್ತಿಗಾಗಿ ಕಷ್ಟವನ್ನು ನೀವು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳೆಂದು ನಡೆಸಿಕೊಳ್ಳುತ್ತಾರೆ. ಏಕೆಂದರೆ ತಂದೆಯಿಂದ ಶಿಸ್ತುಹೊಂದದ ಮಕ್ಕಳೆಲ್ಲಿ?
HEB 12:8 ನೀವು ಶಿಕ್ಷೆ ಹೊಂದುವವರೆಲ್ಲರೊಂದಿಗೆ ಪಾಲುಗಾರರಾಗಿರದಿದ್ದರೆ, ನೀವು ಅಕ್ರಮವಾಗಿ ಹುಟ್ಟಿದ ಮಕ್ಕಳೇ ಹೊರತು ನಿಜ ಮಕ್ಕಳಲ್ಲ.
HEB 12:9 ಇದು ಮಾತ್ರವಲ್ಲದೆ, ನಮ್ಮನ್ನು ಶಿಕ್ಷಿಸಿದ ಇಹಲೋಕದ ಶಾರೀರಿಕ ತಂದೆಗಳನ್ನು ನಾವು ಸನ್ಮಾನಿಸಿದೆವಷ್ಟೆ. ಆತ್ಮಗಳಿಗೆ ತಂದೆಯಾದ ದೇವರಿಗೆ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?
HEB 12:10 ನಮ್ಮ ತಂದೆಯಾದವರು ತಮಗೆ ಒಳ್ಳೆಯದೆಂದು ತಿಳಿದಾಗ, ಸ್ವಲ್ಪಕಾಲ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತಮ್ಮ ಪವಿತ್ರತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಒಳ್ಳೆಯದಕ್ಕಾಗಿಯೇ ಶಿಕ್ಷಿಸುತ್ತಾರೆ.
HEB 12:11 ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನವುಳ್ಳ ನೀತಿಯ ಫಲವನ್ನು ಕೊಡುತ್ತದೆ.
HEB 12:12 ಆದ್ದರಿಂದ, ಜೋತು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ಬಲಪಡಿಸಿರಿ.
HEB 12:13 “ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿರಿ.” ಹೀಗೆ ಮಾಡಿದರೆ ಕುಂಟ ಕಾಲು ಉಳುಕಿಹೋಗದೆ ವಾಸಿಯಾಗುವುದು.
HEB 12:14 ಎಲ್ಲರ ಸಂಗಡ ಸಮಾಧಾನದಿಂದ ಜೀವಿಸಲು ಮತ್ತು ಪವಿತ್ರರಾಗಿರಲು ಸರ್ವಪ್ರಯತ್ನ ಮಾಡಿರಿ. ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವುದಿಲ್ಲ.
HEB 12:15 ನಿಮ್ಮಲ್ಲಿ ಯಾರೂ ದೇವರ ಕೃಪೆಗೆ ತಪ್ಪಿಹೋಗದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅದರಿಂದ ಅನೇಕರು ಮಲಿನರಾಗದಂತೆಯೂ
HEB 12:16 ಯಾವ ಕಾಮುಕರಾಗಲಿ, ಏಸಾವನಂಥ ಪ್ರಾಪಂಚಿಕರಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆಯಿಂದ ನೋಡಿಕೊಳ್ಳಿರಿ. ಅವನು ಒಂದು ತುತ್ತು ಅನ್ನಕ್ಕಾಗಿ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.
HEB 12:17 ತರುವಾಯ ಅವನು ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಬಯಸಿ, ಕಣ್ಣೀರನ್ನು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲಾದವನೆಂದು ನೀವು ಬಲ್ಲಿರಿ.
HEB 12:18 ನೀವು ಮುಟ್ಟಬಹುದಾದ ಮತ್ತು ಬೆಂಕಿಹತ್ತಿದಂಥ ಬೆಟ್ಟಕ್ಕೂ ಮಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
HEB 12:19 ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು, ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು.
HEB 12:20 ಏಕೆಂದರೆ, “ಯಾವ ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ, ಅದನ್ನು ಕಲ್ಲೆಸೆದು ಕೊಲ್ಲಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕು,” ಎಂದು ಆಜ್ಞಾಪಿಸಿದ್ದನ್ನು ಅವರು ತಾಳಲಾರದೆ ಹೋದರು.
HEB 12:21 ಇದಲ್ಲದೆ ಆ ದೃಶ್ಯವು ಎಷ್ಟೋ ಭಯಂಕರವಾದದ್ದರಿಂದ ಮೋಶೆಯು, “ನಾನು ಭಯದಿಂದಲೂ ನಡುಕದಿಂದಲೂ ತುಂಬಿದವನಾಗಿದ್ದೇನೆ!” ಎಂದು ಹೇಳಿದನು.
HEB 12:22 ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವವುಳ್ಳ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಆನಂದಭರಿತ ಅಸಂಖ್ಯಾತ ದೇವದೂತಗಣಗಳ ಬಳಿಗೂ
HEB 12:23 ಪರಲೋಕದಲ್ಲಿ ಹೆಸರು ದಾಖಲಾಗಿರುವ ಮಂಡಳಿಗೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೂ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಪರಿಪೂರ್ಣವಾಗಿರುವ ನೀತಿವಂತರ ಆತ್ಮಗಳ ಬಳಿಗೂ
HEB 12:24 ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.
HEB 12:25 ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?
HEB 12:26 ಆ ಕಾಲದಲ್ಲಿ ದೇವರ ಧ್ವನಿಯು ಭೂಮಿಯನ್ನು ಕದಲಿಸಿತು. ಈಗಲಾದರೋ, “ಇನ್ನೊಂದು ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ!” ಎಂದು ದೇವರು ವಾಗ್ದಾನಮಾಡಿದ್ದಾರೆ.
HEB 12:27 “ಇನ್ನೂ ಒಂದು ಸಾರಿ,” ಎಂಬ ಮಾತು ನಿರ್ಮಿತವಾಗಿರುವ ಕದಲುವ ವಸ್ತುಗಳು ತೆಗೆದುಹಾಕಲಾಗುವುದು ಎಂದೂ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿರುವುದು ಎಂಬುದನ್ನು ಸೂಚಿಸುತ್ತದೆ.
HEB 12:28 ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು, ಸ್ವೀಕರಿಸುವವರಾಗಿದ್ದುದರಿಂದ ನಾವು ಕೃತಜ್ಞತೆಯಿಂದ ಇರೋಣ. ನಾವು ದೇವರಿಗೆ ಭಯಭಕ್ತಿಯಿಂದ ಕೂಡಿದ ಮೆಚ್ಚಿಕೆಯುಳ್ಳ ಸೇವೆಯನ್ನು ಸಲ್ಲಿಸುವಂತೆ ಕೃತಜ್ಞತೆಯನ್ನು ತೋರಿಸುವವರಾಗಿರೋಣ.
HEB 12:29 ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”
HEB 13:1 ಪ್ರಿಯರೇ, ಒಬ್ಬರಿಗೊಬ್ಬರು ಪ್ರೀತಿಯಲ್ಲಿ ಮುಂದುವರೆಯಿರಿ.
HEB 13:2 ಪರಕೀಯರಿಗೆ ಸತ್ಕಾರ ಮಾಡುವುದನ್ನು ಅಲಕ್ಷ್ಯ ಮಾಡಬೇಡಿರಿ. ಏಕೆಂದರೆ ಅದನ್ನು ಮಾಡುವುದರ ಮೂಲಕ, ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.
HEB 13:3 ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂಬಂತೆ ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ಕಷ್ಟ ಅನುಭವಿಸುವವರ ಸಂಗಡ ನೀವು ಸಹ ಕಷ್ಟ ಅನುಭವಿಸುವವರೆಂಬಂತೆ ನೆನೆಸಿರಿ.
HEB 13:4 ಎಲ್ಲರೂ ವಿವಾಹವನ್ನು ಗೌರವಿಸಬೇಕು ಮತ್ತು ದಾಂಪತ್ಯ ಜೀವನವು ಪರಿಶುದ್ಧವಾದದ್ದಾಗಿರಬೇಕು. ಏಕೆಂದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವರು.
HEB 13:5 ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!”
HEB 13:6 ಆದ್ದರಿಂದ, “ಕರ್ತದೇವರು ನನ್ನ ಸಹಾಯಕರು, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದು ನಾವು ಧೈರ್ಯವಾಗಿ ಹೇಳುವೆವು.
HEB 13:7 ನಿಮಗೆ ದೇವರ ವಾಕ್ಯವನ್ನು ತಿಳಿಸಿ, ನಿಮ್ಮನ್ನು ನಡೆಸಿದ ನಿಮ್ಮ ಪಾಲಕರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ಜೀವಿಸಿದ ದಾರಿಯ ಅಂತ್ಯ ಫಲವನ್ನು ಆಲೋಚಿಸಿ, ಅವರ ನಂಬಿಕೆಯನ್ನು ಅನುಸರಿಸಿರಿ.
HEB 13:8 ಕ್ರಿಸ್ತ ಯೇಸುವು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾರೆ, ನಿರಂತರವೂ ಹಾಗೆಯೇ ಇರುವರು.
HEB 13:9 ವಿಚಿತ್ರವಾದ ವಿವಿಧ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ಏಕೆಂದರೆ ಕೃಪೆಯ ಮೂಲಕ ಹೃದಯವನ್ನು ಬಲಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳಲ್ಲಿ ಮಗ್ನರಾದವರು, ಅವುಗಳಿಂದ ಏನೂ ಪ್ರಯೋಜನ ಹೊಂದಲಿಲ್ಲ.
HEB 13:10 ನಮಗೊಂದು ಬಲಿಪೀಠ ಉಂಟು. ಅದರ ಪದಾರ್ಥವನ್ನು ತಿನ್ನುವುದಕ್ಕೆ ಗುಡಾರದ ಸೇವೆ ಮಾಡುವವರಿಗೆ ಹಕ್ಕಿಲ್ಲ.
HEB 13:11 ಮಹಾಯಾಜಕನು ಪಾಪದ ನಿಮಿತ್ತವಾಗಿ ಪಶುಗಳ ರಕ್ತವನ್ನು ತೆಗೆದುಕೊಂಡು ಮಹಾ ಪವಿತ್ರ ಸ್ಥಳದೊಳಗೆ ಹೋದ ಮೇಲೆ, ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಟ್ಟು ಬಿಡಲಾಗುತ್ತವಲ್ಲಾ.
HEB 13:12 ಅದರಂತೆ ಯೇಸು ಸಹ ತಮ್ಮ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವುದಕ್ಕೋಸ್ಕರ ಊರ ಹೊರಗೆ ಬಾಧೆಪಟ್ಟರು.
HEB 13:13 ಆದ್ದರಿಂದ ನಾವು ಯೇಸು ಹೇಗೆ ನಿಂದನೆಯನ್ನು ಹೊತ್ತುಕೊಂಡರೋ ಹಾಗೆ ಹೊತ್ತು ಪಾಳೆಯದ ಆಚೆ ಅವರ ಬಳಿಗೆ ಹೊರಟು ಹೋಗೋಣ.
HEB 13:14 ಏಕೆಂದರೆ ಶಾಶ್ವತವಾದ ಪಟ್ಟಣವು ಇಲ್ಲಿ ನಮಗಿಲ್ಲ. ಮುಂದೆ ಬರುವ ಪಟ್ಟಣವನ್ನು ಹುಡುಕುತ್ತಾ ಇದ್ದೇವೆ.
HEB 13:15 ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಅದು ದೇವರ ಹೆಸರಿಗೆ ಸಲ್ಲಿಸುವ ಕೃತಜ್ಞತೆಯೆಂಬ ತುಟಿಗಳ ಫಲವೇ ಆಗಿದೆ.
HEB 13:16 ಇದಲ್ಲದೆ ಒಳ್ಳೆಯದನ್ನು ಮಾಡುವುದನ್ನೂ ಪರರೊಡನೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ. ಏಕೆಂದರೆ ಇಂಥಾ ಯಜ್ಞಗಳನ್ನು ದೇವರು ಮೆಚ್ಚುತ್ತಾರೆ.
HEB 13:17 ನಿಮ್ಮ ನಾಯಕರಿಗೆ ವಿಧೇಯರಾಗಿದ್ದು, ಅವರಿಗೆ ಅಧೀನರಾಗಿರಿ. ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಮನನೊಂದವರಾಗದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ಮನನೊಂದವರಾಗಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.
HEB 13:18 ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಶುದ್ಧಮನಸ್ಸಾಕ್ಷಿಯಿಂದ ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಲು ಬಯಸುತ್ತೇವೆ.
HEB 13:19 ನೀವು ಪ್ರಾರ್ಥನೆ ಮಾಡುವಂತೆ, ನಾನು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ. ಇದರ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ಪುನಃ ಬರುವೆನು.
HEB 13:20 ಕುರಿ ಹಿಂಡಿಗೆ ಮಹಾಕುರುಬ ಆಗಿರುವ ನಮ್ಮ ಕರ್ತ ಯೇಸುವನ್ನು ನಿತ್ಯಒಡಂಬಡಿಕೆಯ ರಕ್ತದ ಮೂಲಕ ಸಮಾಧಾನದ ದೇವರು ಸತ್ತವರೊಳಗಿಂದ ಜೀವಂತವಾಗಿ ಬರಮಾಡಿದರು.
HEB 13:21 ನೀವು ದೇವರ ಚಿತ್ತಾನುಸಾರವಾಗಿ ಎಲ್ಲವನ್ನೂ ಮಾಡುವಂತೆ ನಿಮ್ಮನ್ನು ಸನ್ನದ್ಧರಾಗಿ ಮಾಡಲಿ. ಕ್ರಿಸ್ತ ಯೇಸುವಿನ ಶಕ್ತಿಯ ಮೂಲಕವಾಗಿ ಪ್ರತಿಯೊಂದು ಸತ್ಕಾರ್ಯಗಳನ್ನು ತಮಗೆ ಮೆಚ್ಚಿಕೆಯಾಗುವಂತೆ ನಿಮ್ಮ ಮೂಲಕವಾಗಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಯೇಸುವಿಗೆ ಮಹಿಮೆ ಉಂಟಾಗಲಿ. ಆಮೆನ್.
HEB 13:22 ಪ್ರಿಯರೇ, ಈ ಪ್ರಬೋಧನೆಗಳನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
HEB 13:23 ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
HEB 13:24 ನಿಮ್ಮ ಎಲ್ಲಾ ನಾಯಕರಿಗೆ, ದೇವಜನರಿಗೆ ವಂದನೆಗಳು. ಇಟಲಿಯವರು ನಿಮ್ಮನ್ನು ವಂದಿಸುತ್ತಾರೆ.
HEB 13:25 ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!
JAM 1:1 ದೇವರಿಗೂ ಕರ್ತ ಆಗಿರುವ ಯೇಸು ಕ್ರಿಸ್ತರಿಗೂ ದಾಸನಾಗಿರುವ ಯಾಕೋಬನು, ವಿವಿಧ ದೇಶಗಳಲ್ಲಿ ಚದರಿರುವ ಇಸ್ರಾಯೇಲರ ಹನ್ನೆರಡು ಗೋತ್ರದವರಿಗೆ ಬರೆಯುವುದು: ನಿಮಗೆ ಶುಭವಾಗಲಿ.
JAM 1:2 ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ.
JAM 1:3 ನಿಮ್ಮ ನಂಬಿಕೆಯ ಪರೀಕ್ಷೆಯು ದೃಢ ನಿಷ್ಠೆಯನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದೀರಿ.
JAM 1:4 ಆ ದೃಢ ನಿಷ್ಠೆಯು ನಿಮ್ಮಲ್ಲಿ ಪೂರ್ಣ ಕ್ರಿಯೆಯನ್ನು ಉಂಟುಮಾಡಿದಾಗ, ಆಗ ನೀವು ಪರಿಪಕ್ವತೆಗೆ ಬಂದವರೂ ಪರಿಪೂರ್ಣರೂ ಯಾವ ಕೊರತೆಯೂ ಇಲ್ಲದವರೂ ಆಗಿರುವಿರಿ.
JAM 1:5 ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
JAM 1:6 ನೀವು ಕೇಳಿಕೊಂಡಾಗ ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಂದ ಕೇಳಿಕೊಳ್ಳಿರಿ. ಏಕೆಂದರೆ ಸಂದೇಹ ಪಡುವವನು ಬಿರುಗಾಳಿಯ ಬಡಿತಕ್ಕೆ ಒಳಗಾದ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು.
JAM 1:7 ಅಂಥವನು ತಾನು ಕರ್ತ ದೇವರಿಂದ ಏನಾದರೂ ಹೊಂದುವೆನೆಂದು ನಿರೀಕ್ಷಿಸದೆ ಇರಲಿ.
JAM 1:8 ಅಂತಹ ವ್ಯಕ್ತಿ ಎರಡು ಮನಸ್ಸುಳ್ಳವನೂ ತನ್ನ ಮಾರ್ಗಗಳಲ್ಲೆಲ್ಲಾ ಚಂಚಲನೂ ಆಗಿದ್ದಾನೆ.
JAM 1:9 ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ.
JAM 1:10 ಐಶ್ವರ್ಯವಂತನಾದ ಸಹೋದರನು, ತಾನು ದೀನಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ. ಆದರೆ ಐಶ್ವರ್ಯವಂತನು ಕಾಡು ಹೂವಿನಂತೆ ಮರೆಯಾಗುವನು.
JAM 1:11 ಸೂರ್ಯನು ಉದಯಿಸಿದ ತರುವಾಯ ಉಷ್ಣತೆಯಿಂದ ಗಿಡ ಬಾಡಲು, ಅದರ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುವುದಷ್ಟೆ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿಗಳಲ್ಲಿ ಬಾಡಿಹೋಗುವನು.
JAM 1:12 ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು.
JAM 1:13 ಯಾರಿಗಾದರೂ ಶೋಧನೆ ಬಂದಾಗ, “ದೇವರು ನನ್ನನ್ನು ಶೋಧಿಸುತ್ತಿದ್ದಾರೆ ಎಂದು ಹೇಳಬಾರದು,” ಏಕೆಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರರು. ಅವರು ಯಾರನ್ನೂ ಶೋಧಿಸುವುದೂ ಇಲ್ಲ.
JAM 1:14 ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಆಕರ್ಷಿಸಿ ಮರುಳುಗೊಂಡವನಾಗಿ ಶೋಧನೆಗೆ ಒಳಗಾಗುವನು.
JAM 1:15 ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಸಂಪೂರ್ಣವಾದ ಮೇಲೆ ಮರಣವನ್ನು ಹೆರುತ್ತದೆ.
JAM 1:16 ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
JAM 1:17 ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.
JAM 1:18 ತಂದೆಯು ತಮ್ಮ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಅವರ ಸರ್ವ ಸೃಷ್ಟಿಗಳಲ್ಲಿ ಪ್ರಥಮ ಫಲವಾದೆವು.
JAM 1:19 ನನ್ನ ಪ್ರಿಯರೇ ಇದನ್ನು ತಿಳಿಯಿರಿ, ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ತೀವ್ರವಾಗಿಯೂ ಮಾತನಾಡುವುದರಲ್ಲಿ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
JAM 1:20 ಏಕೆಂದರೆ ಮನುಷ್ಯನ ಕೋಪವು ದೇವರು ಬಯಸುವ ನೀತಿಯ ಜೀವನವನ್ನು ತರುವುದಿಲ್ಲ.
JAM 1:21 ಆದಕಾರಣ ಎಲ್ಲಾ ಮಾಲಿನ್ಯವನ್ನೂ ಉಳಿದಿರುವ ದುಷ್ಟತನವನ್ನೂ ತೆಗೆದುಹಾಕಿ, ನಿಮ್ಮೊಳಗೆ ಬೇರೂರಿರುವ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
JAM 1:22 ನೀವು ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
JAM 1:23 ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡ ಮನುಷ್ಯನಂತಿರುವನು.
JAM 1:24 ಏಕೆಂದರೆ ಇವನು ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಹೋಗಿದ್ದರೂ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
JAM 1:25 ಆದರೆ ಸ್ವಾತಂತ್ರ್ಯವನ್ನುಂಟುಮಾಡುವ ಪರಿಪೂರ್ಣವಾದ ನಿಯಮವನ್ನು ಲಕ್ಷ್ಯವಿಟ್ಟು ನೋಡುತ್ತಲೇ ಇರುವವನು, ಆ ವಾಕ್ಯವನ್ನು ಕೇಳಿದರೂ ಮರೆತು ಹೋಗದೆ ಅದರಂತೆ ನಡೆಯುವವನಾದ್ದರಿಂದ ಅವನು ಧನ್ಯನಾಗುವನು.
JAM 1:26 ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜಕವಾಗಿದೆ.
JAM 1:27 ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಅವರ ಸಂಕಟದಲ್ಲಿ ಪರಾಮರಿಸಿ, ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ದೋಷವೂ ಆಗಿರುವ ಭಕ್ತಿ.
JAM 2:1 ನನ್ನ ಪ್ರಿಯರೇ, ಮಹಿಮೆಯುಳ್ಳ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ವಿಶ್ವಾಸಿಗಳಾಗಿರುವ ನೀವು ಪಕ್ಷಪಾತಿಗಳಾಗಿರಬಾರದು.
JAM 2:2 ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹರಕು ಬಟ್ಟೆ ಹಾಕಿಕೊಂಡು ಬರಲು
JAM 2:3 ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಆ ವ್ಯಕ್ತಿಗೆ, “ನೀವು ಇಲ್ಲಿಯ ಗೌರವ ಪೀಠದಲ್ಲಿ ಕುಳಿತುಕೊಳ್ಳಿರಿ,” ಎಂತಲೂ ಆ ಬಡವನಿಗೆ, “ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ,” ಎಂತಲೂ ಹೇಳಿದರೆ,
JAM 2:4 ನೀವು ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿಗಳಾಗಿರುತ್ತೀರಲ್ಲವೇ?
JAM 2:5 ನನ್ನ ಪ್ರಿಯರೇ, ಕೇಳಿರಿ, ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ ತಮ್ಮನ್ನು ಪ್ರೀತಿಸುವವರಿಗೆ ತಾವು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರನ್ನಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
JAM 2:6 ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
JAM 2:7 ನೀವು ಕರೆಸಿಕೊಳ್ಳುವ ಆ ಯೋಗ್ಯವಾದ ನಾಮವನ್ನು ದೂಷಿಸುವವರು ಅವರಲ್ಲವೇ?
JAM 2:8 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು!” ಎಂದು ಪವಿತ್ರ ವೇದದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಉತ್ತಮವಾದದ್ದನ್ನು ಮಾಡುವವರಾಗಿರುವಿರಿ.
JAM 2:9 ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದೀರಿ. ಮಾತ್ರವಲ್ಲದೆ ಮೋಶೆಯ ನಿಯಮದ ಪ್ರಕಾರ ಅಪರಾಧಿಗಳೆಂದು ನಿರ್ಣಯ ಹೊಂದುತ್ತೀರಿ.
JAM 2:10 ಏಕೆಂದರೆ ಯಾವನಾದರೂ ಇಡೀ ಮೋಶೆಯ ನಿಯಮದಲ್ಲಿ ಒಂದೇ ಒಂದನ್ನು ಕೈಕೊಂಡು ನಡೆಯದೇ ಹೋದರೆ, ಅವನು ಇಡೀ ನಿಯಮವನ್ನೇ ಕೈಕೊಳ್ಳದ ಅಪರಾಧಿಯಾಗುತ್ತಾನೆ.
JAM 2:11 ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.
JAM 2:12 ಸ್ವಾತಂತ್ರ್ಯವನ್ನು ಉಂಟುಮಾಡುವ ನಿಯಮದಿಂದ ನಾವು ತೀರ್ಪುಹೊಂದುವೆವು ಎಂದು ತಿಳಿದು, ನಮ್ಮ ಮಾತುಗಳೂ ಕೃತ್ಯಗಳೂ ಅದಕ್ಕೆ ಅನುಸಾರವಾಗಿರಲಿ.
JAM 2:13 ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.
JAM 2:14 ನನ್ನ ಪ್ರಿಯರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?
JAM 2:15 ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ದಿನದ ಆಹಾರವೂ ಇಲ್ಲದಿರುವಾಗ,
JAM 2:16 ನಿಮ್ಮಲ್ಲಿ ಒಬ್ಬನು ಅವನಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ, “ಸಮಾಧಾನದಿಂದ ಹೋಗಿರಿ, ಚಳಿ ಕಾಯಿಸಿಕೊಳ್ಳಿರಿ, ಹೊಟ್ಟೆ ತುಂಬಿಸಿಕೊಳ್ಳಿರಿ,” ಎಂದು ಹೇಳಿದರೆ ಪ್ರಯೋಜನವೇನು?
JAM 2:17 ಅದರಂತೆಯೇ, ಕ್ರಿಯೆಗಳಿಲ್ಲದ ನಂಬಿಕೆಯು, ಕ್ರಿಯೆಗಳು ಇಲ್ಲದಿರುವುದರಿಂದ ಸತ್ತ ನಂಬಿಕೆಯಾಗಿರುತ್ತದೆ.
JAM 2:18 ಆದರೆ ಒಬ್ಬ ಮನುಷ್ಯನು, “ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ,” ಎಂದು ವಾದಿಸಬಹುದು. ಅಂಥವನಿಗೆ, “ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ರುಜುಪಡಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ರುಜುಪಡಿಸುತ್ತೇನೆ,” ಎಂದು ಹೇಳಬಹುದು.
JAM 2:19 ದೇವರು ಒಬ್ಬರೇ ಎಂದು ನೀನು ನಂಬುತ್ತೀ, ಅದು ಒಳ್ಳೆಯದು, ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ.
JAM 2:20 ಮೂರ್ಖನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಪ್ರಮಾಣಗಳು ಬೇಕೋ?
JAM 2:21 ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಬಲಿಪೀಠದ ಮೇಲೆ ಅರ್ಪಿಸಿದಾಗ ನೀತಿನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ?
JAM 2:22 ಅಬ್ರಹಾಮನ ನಂಬಿಕೆಯೂ ಕ್ರಿಯೆಗಳೂ ಒಂದಾಗಿ ಕಾರ್ಯ ಸಾಧಿಸಿದವು. ಹೀಗೆ ಅವನು ಮಾಡಿದ ಕ್ರಿಯೆಗಳಿಂದಲೇ ಅವನ ನಂಬಿಕೆಯು ಸಂಪೂರ್ಣಗೊಂಡಿತು ಎಂದು ನೋಡುತ್ತೇವೆ.
JAM 2:23 ಹೀಗೆ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. ಅಬ್ರಹಾಮನು ದೇವರ ಸ್ನೇಹಿತನೆಂದು ಎಣಿಸಿಕೊಂಡನು.
JAM 2:24 ಹೀಗೆ ಮನುಷ್ಯನು ನಂಬಿಕೆಯಿಂದ ಮಾತ್ರವಲ್ಲ ಕ್ರಿಯೆಗಳಿಂದಲೂ ನೀತಿವಂತನೆಂದು ನಿರ್ಣಯ ಹೊಂದುತ್ತಾನೆ ಎಂದು ನೀವು ನೋಡುತ್ತೀರಿ.
JAM 2:25 ಅದೇ ರೀತಿಯಾಗಿ ರಹಾಬಳೆಂಬ ವೇಶ್ಯೆಯು ಸಹ ಗೂಢಚಾರರನ್ನು ಸೇರಿಸಿಕೊಂಡು, ಅವರನ್ನು ಬೇರೆ ದಾರಿಯಿಂದ ಕಳುಹಿಸಿದ ಕ್ರಿಯೆಗಳಿಂದಲೇ ಆಕೆಯು ನೀತಿನಿರ್ಣಯವನ್ನು ಹೊಂದಿದಳಲ್ಲವೇ?
JAM 2:26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ, ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿರುತ್ತದೆ.
JAM 3:1 ನನ್ನ ಪ್ರಿಯರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವುದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ.
JAM 3:2 ಏಕೆಂದರೆ ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವುದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಪರಿಪೂರ್ಣನೂ ತನ್ನ ಇಡೀ ದೇಹವನ್ನೇ ಸ್ವಾಧೀನದಲ್ಲಿಟ್ಟುಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
JAM 3:3 ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ, ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವುದಕ್ಕೆ ಆಗುತ್ತದೆ.
JAM 3:4 ಹಡಗುಗಳ ಉದಾಹರಣೆಯೂ ಅದರಂತೆ ಇದೆ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ನಡೆಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ಅವುಗಳನ್ನು ತಿರುಗಿಸುತ್ತಾನೆ.
JAM 3:5 ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಒಂದು ಸಣ್ಣ ಬೆಂಕಿ ಕಿಡಿಯು ದೊಡ್ಡಕಾಡನ್ನೇ ಸುಟ್ಟುಬಿಡುತ್ತದೆ ನೋಡಿರಿ.
JAM 3:6 ನಮ್ಮ ದೇಹದ ಅಂಗಗಳಲ್ಲಿ ನಾಲಿಗೆಯು ಸಹ ಬೆಂಕಿಯೂ ದುಷ್ಟ ಲೋಕವೂ ಆಗಿದೆ. ಹೀಗೆ ನಾಲಿಗೆಯು ನಮ್ಮ ಅಂಗಗಳಲ್ಲಿ ಇದ್ದು, ಇಡೀ ದೇಹವನ್ನೆಲ್ಲಾ ಮಲಿನಗೊಳಿಸುತ್ತದೆ. ಅದು ನರಕದ ಬೆಂಕಿಯಿಂದ ಹೊತ್ತಿಕೊಂಡು, ಮಾನವರ ಇಡೀ ಜೀವನಕ್ಕೆ ಬೆಂಕಿ ಹಚ್ಚುವದಾಗಿದೆ.
JAM 3:7 ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಮಾನವರು ಹತೋಟಿಗೆ ತರುತ್ತಾರೆ ಮತ್ತು ತಂದಿದ್ದಾರೆ.
JAM 3:8 ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿಕೊಂಡಿದೆ.
JAM 3:9 ಅದೇ ನಾಲಿಗೆಯಿಂದ ನಮ್ಮ ತಂದೆಯಾದ ಕರ್ತದೇವರನ್ನು ಕೊಂಡಾಡುತ್ತೇವೆ, ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಸೃಷ್ಟಿಸಲಾದ ಮನುಷ್ಯರನ್ನು ನಾವು ಶಪಿಸುತ್ತೇವೆ.
JAM 3:10 ಅದೇ ಬಾಯಿಂದ ಸ್ತುತಿ ಮತ್ತು ಶಾಪ ಬರುತ್ತವೆ. ನನ್ನ ಪ್ರಿಯರೇ, ಇವುಗಳು ಹೀಗಿರಬಾರದು.
JAM 3:11 ಒಂದೇ ಬುಗ್ಗೆಯಿಂದ ಸಿಹಿನೀರನ್ನೂ ಉಪ್ಪುನೀರನ್ನೂ ಒಂದೇ ಸ್ಥಳದಿಂದ ಹೊರಡಿಸುವುದುಂಟೇ?
JAM 3:12 ನನ್ನ ಪ್ರಿಯರೇ, ಅಂಜೂರದ ಮರವು ಎಣ್ಣೇಮರದ ಕಾಯನ್ನು ಬಿಡುವುದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಉಪ್ಪುನೀರಿನ ಬುಗ್ಗೆಯು ಸಿಹಿನೀರನ್ನು ಕೊಡಲು ಎಂದಿಗೂ ಸಾಧ್ಯವಿಲ್ಲ.
JAM 3:13 ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಜ್ಞಾನದಿಂದ ಬರುವ ದೀನತ್ವದಲ್ಲಿ ತನ್ನ ಕ್ರಿಯೆಗಳನ್ನು ಒಳ್ಳೆಯ ಜೀವನದಿಂದ ತೋರಿಸಲಿ.
JAM 3:14 ನಿಮ್ಮ ಹೃದಯದೊಳಗೆ ಕಹಿಯಾದ ಹಗೆತನವನ್ನೂ ಸ್ವಾರ್ಥ ಉದ್ದೇಶವನ್ನು ಕೂಡಿಟ್ಟು ಕೊಂಡಿರುವಲ್ಲಿ, ನೀವು ಜ್ಞಾನದ ಕುರಿತು ಹೊಗಳಿಕೊಳ್ಳಬೇಡಿರಿ ಮತ್ತು ಸತ್ಯವನ್ನು ನಿರಾಕರಿಸಬೇಡಿರಿ.
JAM 3:15 ಅಂಥ ಜ್ಞಾನವು ದೈವಿಕ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು. ಅದು ಆತ್ಮಿಕವಾದದ್ದಲ್ಲ. ಅದು ದೆವ್ವಗಳಿಗೆ ಸಂಬಂಧಪಟ್ಟದ್ದು.
JAM 3:16 ಏಕೆಂದರೆ ನಿಮ್ಮಲ್ಲಿ ಹೊಟ್ಟೆಕಿಚ್ಚೂ ಸ್ವಾರ್ಥ ಉದ್ದೇಶವೂ ಇರುವಲ್ಲಿ ಗಲಿಬಿಲಿಯೂ ಸಕಲ ವಿಧವಾದ ಕೆಟ್ಟ ಅಭ್ಯಾಸವೂ ಇರುತ್ತವೆ.
JAM 3:17 ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.
JAM 3:18 ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುತ್ತಾರೆ.
JAM 4:1 ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಬರಲು ಕಾರಣಗಳೇನು? ನಿಮ್ಮಲ್ಲಿ ಹೋರಾಡುವ ದುರಾಶೆಗಳಿಂದ ಅಲ್ಲವೇ?
JAM 4:2 ನೀವು ಬಯಸಿದರೂ ಪಡೆಯದೆ ಇದ್ದುದರಿಂದ ನೀವು ಕೊಲ್ಲುತ್ತೀರಿ. ದುರಾಶೆಯಿಂದ ಅಪೇಕ್ಷಿಸುತ್ತೀರಿ, ಆದರೆ ಪಡೆಯಲಾರಿರಿ. ನೀವು ಕಾದಾಡುತ್ತೀರಿ ಮತ್ತು ಯುದ್ಧ ಮಾಡುತ್ತೀರಿ, ಆದರೂ ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ.
JAM 4:3 ನೀವು ಬೇಡಿದರೂ ಬೇಡಿದ್ದನ್ನು ಪಡೆದುಕೊಳ್ಳುವುದಿಲ್ಲ. ಏಕೆಂದರೆ, ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂದು ದುರುದ್ದೇಶಕ್ಕಾಗಿ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುವುದಿಲ್ಲ.
JAM 4:4 ವ್ಯಭಿಚಾರಿಗಳೇ, ಇಹಲೋಕ ಸ್ನೇಹವು ದೇವರೊಂದಿಗಿರುವ ಶತ್ರುತ್ವ ಎಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರಬೇಕೆಂಬುವವನು ದೇವರಿಗೆ ಶತ್ರುವಾಗಿದ್ದಾನೆ.
JAM 4:5 ಅಥವಾ ದೇವರು ನಮ್ಮಲ್ಲಿ ವಾಸವಾಗಿರಲು ನಮಗೆ ಕೊಟ್ಟಿರುವ ಪವಿತ್ರಾತ್ಮ ದೇವರು, ನಾವು ಅವರಿಗೆ ಮಾತ್ರ ಸೇರಿದವರಾಗಿರಬೇಕೆಂದು ಬಲವಾದ ಬಯಕೆ ಉಳ್ಳವರಾಗಿದ್ದಾರೆಂದು ಪವಿತ್ರ ವೇದವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸುತ್ತೀರೋ?
JAM 4:6 ಆದರೆ ದೇವರು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾರೆ. ಆದ್ದರಿಂದ ಈ ಕಾರಣಕ್ಕಾಗಿ, ಪವಿತ್ರ ವೇದವು: “ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ. ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ,” ಎಂದು ಹೇಳುತ್ತದೆ.
JAM 4:7 ಹೀಗಿರಲಾಗಿ ದೇವರಿಗೆ ಅಧೀನವಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
JAM 4:8 ದೇವರ ಸಮೀಪಕ್ಕೆ ಬನ್ನಿರಿ. ಆಗ ನಿಮ್ಮ ಸಮೀಪಕ್ಕೆ ದೇವರು ಬರುವರು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.
JAM 4:9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ, ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.
JAM 4:10 ಕರ್ತದೇವರ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆಗ ಅವರು ನಿಮ್ಮನ್ನು ಮೇಲಕ್ಕೆತ್ತುವರು.
JAM 4:11 ಪ್ರಿಯರೇ, ಒಬ್ಬರ ವಿಷಯದಲ್ಲಿ ಒಬ್ಬರು ಕೆಟ್ಟದ್ದನ್ನು ಮಾತನಾಡಬೇಡಿರಿ. ಯಾವನಾದರೂ ತನ್ನ ಸಹೋದರನ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಅಥವಾ ತೀರ್ಪುಮಾಡಿದರೆ ಅವನು ದೇವರ ನಿಯಮದ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿ, ನಿಯಮವನ್ನೇ ತೀರ್ಪುಮಾಡಿದ ಹಾಗಾಗುವುದು. ಆದರೆ ನೀನು ದೇವರ ನಿಯಮವನ್ನೇ ತೀರ್ಪುಮಾಡಿದರೆ ನೀನು ಅನುಸರಿಸುವವನಾಗಿರದೆ ನ್ಯಾಯಾಧಿಪತಿಯೆನಿಸಿಕೊಳ್ಳುವಿ.
JAM 4:12 ನಿಯಮವನ್ನು ಕೊಟ್ಟವರೂ ನ್ಯಾಯಾಧಿಪತಿಯೂ ದೇವರೊಬ್ಬರೇ ಆಗಿರುತ್ತಾರೆ. ಅವರು ಉಳಿಸುವುದಕ್ಕೂ ನಾಶಮಾಡುವುದಕ್ಕೂ ಶಕ್ತರಾಗಿದ್ದಾರೆ. ಹೀಗಿರುವಾಗ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?
JAM 4:13 “ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು, ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ,” ಎನ್ನುವವರೇ ಕೇಳಿರಿ.
JAM 4:14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ.
JAM 4:15 ಆದ್ದರಿಂದ, “ಕರ್ತದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ, ಆ ಕೆಲಸವನ್ನಾಗಲಿ ಮಾಡುವೆವು!” ಎಂದು ನೀವು ಹೇಳುವುದೇ ಸರಿ.
JAM 4:16 ಆದರೆ ನೀವು ನಿಮ್ಮ ಹೊಗಳಿಕೆಯ ಯೋಜನೆಗಳಲ್ಲಿ ಹೆಮ್ಮೆಪಡುತ್ತೀರಿ. ಅಂಥಾ ಅಹಂಭಾವವೆಲ್ಲಾ ಕೆಟ್ಟದ್ದೆ.
JAM 4:17 ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
JAM 5:1 ಧನಿಕರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.
JAM 5:2 ನಿಮ್ಮ ಐಶ್ವರ್ಯವು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿಹಿಡಿದಿದೆ.
JAM 5:3 ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದಿವೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದುಬಿಡುವುದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ.
JAM 5:4 ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.
JAM 5:5 ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸಿಗೆ ಬಂದಂತೆ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.
JAM 5:6 ನಿಮ್ಮನ್ನು ವಿರೋಧ ಮಾಡದ ನಿರ್ದೋಷಿಗೆ ದಂಡನೆಯನ್ನು ವಿಧಿಸಿ, ಕೊಂದುಹಾಕಿದ್ದೀರಿ.
JAM 5:7 ಪ್ರಿಯರೇ, ಕರ್ತ ಯೇಸು ಬರುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ. ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.
JAM 5:8 ನೀವೂ ದೀರ್ಘಶಾಂತಿಯಿಂದಿರಿ. ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಏಕೆಂದರೆ ಕರ್ತ ಯೇಸುವಿನ ಪುನರಾಗಮನ ಹತ್ತಿರವಾಯಿತು.
JAM 5:9 ಪ್ರಿಯರೇ, ನೀವು ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿರಿ. ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾರೆ.
JAM 5:10 ನನ್ನ ಪ್ರಿಯರೇ, ಕರ್ತದೇವರ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯವಾಗಿ ಆದರ್ಶವಾಗಿ ಇಟ್ಟುಕೊಳ್ಳಿರಿ.
JAM 5:11 ಇಗೋ, ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ, ಕರ್ತದೇವರು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ತಿಳಿದು, ಕರ್ತದೇವರು ಬಹಳ ಒಳ್ಳೆಯವರೂ ದಯಾಳುವೂ ಆಗಿದ್ದಾರೆಂದು ತಿಳಿದಿದ್ದೀರಷ್ಟೆ.
JAM 5:12 ಮುಖ್ಯವಾಗಿ ನನ್ನ ಪ್ರಿಯರೇ, ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ನಾವುದರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ “ಹೌದು” ಎನ್ನಿರಿ. ಇಲ್ಲವಾದರೆ “ಇಲ್ಲ” ಎನ್ನಿರಿ. ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.
JAM 5:13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷ ಪಡುವವನಿದ್ದಾನೋ? ಅವನು ಕೀರ್ತನೆಗಳನ್ನು ಹಾಡಲಿ.
JAM 5:14 ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯನನ್ನು ಕರೆಕಳುಹಿಸಲಿ. ಅವರು ಕರ್ತ ಯೇಸುವಿನ ಹೆಸರಿನಿಂದ ಎಣ್ಣೆ ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ.
JAM 5:15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುತ್ತದೆ. ಕರ್ತ ಯೇಸು ಅವನನ್ನು ಎಬ್ಬಿಸುವರು. ಪಾಪಗಳನ್ನು ಮಾಡಿದವನಾಗಿದ್ದರೆ ಅವನು ಕ್ಷಮೆಯನ್ನು ಪಡೆಯುತ್ತಾನೆ.
JAM 5:16 ನೀವು ಸ್ವಸ್ಥವಾಗಬೇಕಾದರೆ, ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು, ಅರಿಕೆಮಾಡಿ, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಪ್ರಾರ್ಥನೆಯು ಶಕ್ತಿಯುತವೂ ಪರಿಣಾಮಕಾರಿಯೂ ಆಗಿರುತ್ತದೆ.
JAM 5:17 ಎಲೀಯನು ನಮ್ಮಂಥ ಮಾನವ ಸ್ವಭಾವವುಳ್ಳವನಾಗಿದ್ದನು. ಅವನು ಮಳೆ ಬರಬಾರದೆಂದು ಆಸಕ್ತಿಯಿಂದ ಪ್ರಾರ್ಥಿಸಲು, ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ.
JAM 5:18 ತಿರುಗಿ ಅವನು ಪ್ರಾರ್ಥನೆಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಿಸಿತು.
JAM 5:19 ಪ್ರಿಯರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ,
JAM 5:20 ಅವನು ಆ ಪಾಪ ಮಾಡಿದವನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ, ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ, ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲಿ.
1PE 1:1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಇವುಗಳಲ್ಲೆಲ್ಲಾ ಚದರಿರುವ, ದೇವರಿಂದ ಆಯ್ಕೆಯಾದ ಪ್ರವಾಸಿಗಳಿಗೆ,
1PE 1:2 ಪವಿತ್ರಾತ್ಮ ದೇವರ ಕಾರ್ಯದಿಂದ ಪರಿಶುದ್ಧರಾಗಿ, ಯೇಸುಕ್ರಿಸ್ತರಿಗೆ ವಿಧೇಯರಾಗಲು ಅವರ ರಕ್ತದಿಂದ ಪ್ರೋಕ್ಷಿತರಾಗುವುದಕ್ಕೂ ನಮ್ಮ ತಂದೆ ದೇವರ ಪೂರ್ವಜ್ಞಾನಾನುಸಾರವಾಗಿ ಆಯ್ಕೆಯಾದವರಿಗೆ ಬರೆಯುವುದು: ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
1PE 1:3 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯೂ ದೇವರೂ ಆಗಿರುವವರಿಗೆ ಸ್ತೋತ್ರವಾಗಲಿ. ಅವರು ಕ್ರಿಸ್ತ ಯೇಸುವನ್ನು ತಮ್ಮ ಮಹಾ ಕರುಣಾನುಸಾರವಾಗಿ, ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಜೀವಕರವಾದ ನಿರೀಕ್ಷೆಗೆ ನಮ್ಮನ್ನು ತಿರುಗಿ ಹುಟ್ಟಿಸಿದ್ದಾರೆ.
1PE 1:4 ಈ ನಿರೀಕ್ಷೆಯು ಲಯ, ಕಳಂಕ, ಕ್ಷಯಗಳಿಲ್ಲದ ಬಾಧ್ಯತೆಯಾಗಿದೆ. ಈ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿದೆ.
1PE 1:5 ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ.
1PE 1:6 ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ.
1PE 1:7 ಬಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವುದುಂಟಷ್ಟೆ. ಬಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಿಷ್ಕಪಟ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವುದು.
1PE 1:8 ನೀವು ಕ್ರಿಸ್ತ ಯೇಸುವನ್ನು ನೋಡಲಿಲ್ಲವಾದರೂ ಅವರನ್ನು ಪ್ರೀತಿಸುತ್ತೀರಿ. ನೀವು ಈಗ ಅವರನ್ನು ಕಾಣದಿದ್ದರೂ ಅವರಲ್ಲಿ ನಂಬಿಕೆಯಿಟ್ಟು ವ್ಯಕ್ತಪಡಿಸಲಾಗದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
1PE 1:9 ಏಕೆಂದರೆ ನಿಮ್ಮ ನಂಬಿಕೆಯ ಅಂತಿಮ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ.
1PE 1:10 ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು, ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
1PE 1:11 ಅವರಲ್ಲಿದ್ದ ಕ್ರಿಸ್ತ ಯೇಸುವಿನ ಆತ್ಮ, ಕ್ರಿಸ್ತ ಯೇಸುವಿಗೆ ಸಂಭವಿಸಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಗಳನ್ನೂ ಪ್ರವಾದಿಸಿದಾಗ, ಅದರ ಸಮಯ ಸಂದರ್ಭಗಳನ್ನು ಕಂಡುಹಿಡಿಯಲು ಪರಿಶೋಧನೆ ಮಾಡಿದರು.
1PE 1:12 ತಮಗೋಸ್ಕರವಲ್ಲ ಆದರೆ ನಿಮಗೋಸ್ಕರ ಸೇವೆಮಾಡಿದರೆಂದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಿದವು ಎಂಬ ವರ್ತಮಾನವು, ಪರಲೋಕದಿಂದ ಕಳುಹಿಸಲಾದ ಪವಿತ್ರಾತ್ಮ ದೇವರಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ಪ್ರಸಿದ್ಧಿಮಾಡಲಾಗಿದೆ. ದೇವದೂತರು ಸಹ ಈ ಸಂಗತಿಗಳನ್ನು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುತ್ತಾರೆ.
1PE 1:13 ಆದ್ದರಿಂದ, ನೀವು ನಿಮ್ಮ ಮನಸ್ಸನ್ನು ಸಿದ್ಧಮಾಡಿಕೊಂಡು, ಸ್ವಸ್ಥಚಿತ್ತರಾಗಿದ್ದು ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಅಂತ್ಯದವರೆಗೆ ಇಡಿರಿ.
1PE 1:14 ವಿಧೇಯರಾದ ಮಕ್ಕಳಿಗೆ ತಕ್ಕಂತೆ, ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮ್ಮ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರಬೇಡಿರಿ.
1PE 1:15 ಆದರೆ ನಿಮ್ಮನ್ನು ಕರೆದಿರುವ ದೇವರು ಪರಿಶುದ್ಧರಾಗಿರುವ ಪ್ರಕಾರವೇ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ.
1PE 1:16 ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು,” ಎಂದು ಪವಿತ್ರ ವೇದದಲ್ಲಿ ಬರೆದಿದೆ.
1PE 1:17 ಪ್ರತಿಯೊಬ್ಬನ ಕೆಲಸವನ್ನು ಪಕ್ಷಪಾತವಿಲ್ಲದೆ ತೀರ್ಪುಮಾಡುವ ದೇವರನ್ನು ನೀವು ತಂದೆಯೆಂದು ಬೇಡಿಕೊಳ್ಳುವವರಾಗಿದ್ದು ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.
1PE 1:18 ನಿಮ್ಮ ಪೂರ್ವಿಕರಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿ, ಬಂಗಾರದಿಂದಲ್ಲ.
1PE 1:19 ಅದು ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯಾಗಿರುವ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತದಿಂದಲೇ.
1PE 1:20 ಅವರು ಜಗದುತ್ಪತ್ತಿಗೆ ಮೊದಲೇ ನೇಮಕಗೊಂಡು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷರಾದರು.
1PE 1:21 ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿ ಅವರಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಕ್ರಿಸ್ತ ಯೇಸುವಿನ ಮೂಲಕ ವಿಶ್ವಾಸವಿಟ್ಟಿದ್ದೀರಿ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿರಲಿ.
1PE 1:22 ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.
1PE 1:23 ಏಕೆಂದರೆ ನೀವು ತಿರುಗಿ ಹುಟ್ಟಿದವರಾಗಿದ್ದೀರಲ್ಲಾ! ಆ ಜನ್ಮವು ನಾಶವಾಗುವ ಬೀಜದಿಂದಲ್ಲ. ಆದರೆ ನಾಶವಾಗದಂಥದ್ದರಿಂದ ಸಜೀವವಾದ ಸದಾಕಾಲವಿರುವ ದೇವರ ವಾಕ್ಯದ ಮೂಲಕ ಆಗಿದೆ.
1PE 1:24 “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯರ ಪ್ರಭಾವವೆಲ್ಲಾ ಹೊಲದ ಹೂವಿನಂತಿದೆ. ಹುಲ್ಲು ಒಣಗಿಹೋಗುವುದು. ಅದರ ಹೂವು ಉದುರಿ ಹೋಗುವುದು.
1PE 1:25 ಕರ್ತದೇವರ ವಾಕ್ಯವಾದರೋ ಸದಾಕಾಲ ಇರುವುದು.” ಇದೇ ನಿಮಗೆ ಸಾರಲಾದ ಸುವಾರ್ತಾವಾಕ್ಯವು.
1PE 2:1 ಆದಕಾರಣ, ಎಲ್ಲಾ ದ್ವೇಷವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೆಕಿಚ್ಚನ್ನೂ ಎಲ್ಲಾ ಅಪವಾದಗಳನ್ನೂ ವಿಸರ್ಜಿಸಿರಿ.
1PE 2:2 ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ರಕ್ಷಣೆಯಲ್ಲಿ ಬೆಳೆಯುವ ಹಾಗೆ ಆತ್ಮಿಕವಾದ ಶುದ್ಧಹಾಲನ್ನು ಬಯಸಿರಿ.
1PE 2:3 ಏಕೆಂದರೆ ಕರ್ತದೇವರು ಒಳ್ಳೆಯವರೆಂದು ನೀವು ರುಚಿ ನೋಡಿದ್ದೀರಲ್ಲಾ.
1PE 2:4 ನೀವು ಸಜೀವ ಕಲ್ಲಾಗಿರುವವರ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿರಾಕರಿಸಿದರೂ ಅದು ದೇವರಿಂದ ಆರಿಸಿಕೊಂಡದ್ದೂ ಅವರಿಗೆ ಅಮೂಲ್ಯವಾದದ್ದೂ ಆಯಿತು.
1PE 2:5 ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಿಕ ಮಂದಿರವಾಗುವುದಕ್ಕೆ ನಿರ್ಮಿತವಾಗುತ್ತಾ ಇದ್ದೀರಿ. ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮಿಕ ಯಜ್ಞಗಳನ್ನು ಸಮರ್ಪಿಸಲು ನೀವು ಪವಿತ್ರ ಯಾಜಕವರ್ಗದವರಾಗಬೇಕು.
1PE 2:6 ಪವಿತ್ರ ವೇದವು ಹೇಳುವುದೇನೆಂದರೆ: “ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆರಿಸಿಕೊಂಡದ್ದು, ಅಮೂಲ್ಯವಾದದ್ದು. ದೇವರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”
1PE 2:7 ಈಗ ನಂಬುವವರಾದ ನಿಮಗೆ ಈ ಕಲ್ಲು ಅಮೂಲ್ಯವಾದುದು. ನಂಬದವರಿಗಾದರೋ, “ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,”
1PE 2:8 ಮತ್ತು, “ಜನರು ಎಡವಲು ಕಾರಣವಾಗುವ ಕಲ್ಲೂ ಅವರು ಬಿದ್ದುಹೋಗುವಂತೆ ಮಾಡುವ ಬಂಡೆಯೂ ಆಗಿರುತ್ತದೆ,” ಅವರು ವಾಕ್ಯಕ್ಕೆ ಅವಿಧೇಯರಾದ್ದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.
1PE 2:9 ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.
1PE 2:10 ಮೊದಲು ನೀವು ಪ್ರಜೆಗಳಾಗಿರಲಿಲ್ಲ. ಈಗ ದೇವರ ಪ್ರಜೆಗಳಾಗಿದ್ದೀರಿ. ಮೊದಲು ಕರುಣೆ ಹೊಂದಿರಲಿಲ್ಲ. ಈಗ ಕರುಣೆ ಹೊಂದಿದ್ದೀರಿ.
1PE 2:11 ಪ್ರಿಯರೇ, ಈ ಲೋಕದಲ್ಲಿ ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1PE 2:12 ನಿಮ್ಮ ನಡವಳಿಕೆಯು ಯೆಹೂದ್ಯರಲ್ಲದವರ ನಡುವೆ ಯೋಗ್ಯವಾಗಿರಲಿ, ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ, ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಕರ್ತ ಯೇಸು ನಮ್ಮನ್ನು ದರ್ಶಿಸುವ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.
1PE 2:13 ಮನುಷ್ಯನ ಪ್ರತಿಯೊಂದು ನಿಯಮಗಳಿಗೂ ಕರ್ತದೇವರ ನಿಮಿತ್ತ ನೀವು ಅಧೀನರಾಗಿರಿ. ಅರಸನು ಸರ್ವಾಧಿಕಾರಿಯಾಗಿದ್ದು,
1PE 2:14 ರಾಜ್ಯಪಾಲರು ಕೆಟ್ಟವರನ್ನು ದಂಡಿಸುವುದಕ್ಕೆ ಒಳ್ಳೆಯವರನ್ನು ಪ್ರೋತ್ಸಾಹಪಡಿಸುವುದಕ್ಕೆ ಅರಸನಿಂದ ಅವರು ಕಳುಹಿಸಲಾದವರೆಂದೂ ತಿಳಿದು ಅವರಿಗೆ ಅಧೀನರಾಗಿರಿ.
1PE 2:15 ನೀವು ನಿಮ್ಮ ಒಳ್ಳೆಯ ನಡತೆಯಿಂದ, ತಿಳುವಳಿಕೆಯಿಲ್ಲದೆ ಮಾತಾಡುವ ಮೂಢಜನರ ಬಾಯಿ ಮುಚ್ಚುವಂತೆ ಮಾಡುವುದೇ ದೇವರ ಚಿತ್ತ.
1PE 2:16 ಸ್ವತಂತ್ರರಾಗಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ. ದೇವರ ಸೇವಕರಂತೆಯೇ ಬಾಳಿರಿ.
1PE 2:17 ಎಲ್ಲರನ್ನು ಸನ್ಮಾನಿಸಿರಿ, ವಿಶ್ವಾಸಿಗಳ ಸಹೋದರತ್ವವನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ, ಅರಸನನ್ನು ಸನ್ಮಾನಿಸಿರಿ.
1PE 2:18 ದಾಸರೇ, ಯಜಮಾನರಿಗೆ ಅಧೀನರಾಗಿರಿ. ನೀವು ಅವರಲ್ಲಿ ಒಳ್ಳೆಯ ಯಜಮಾನರಿಗೆ ಮಾತ್ರವಲ್ಲ, ಕ್ರೂರ ಯಜಮಾನರಿಗೂ ಪೂರ್ಣಭಯಭಕ್ತಿಯಿಂದ ಅಧೀನರಾಗಿರಿ.
1PE 2:19 ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರ ವಿಷಯವಾದ ಮನಸ್ಸಾಕ್ಷಿಗೋಸ್ಕರ ಆ ದುಃಖವನ್ನು ಸಹಿಸಿಕೊಂಡರೆ ಅವನು ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
1PE 2:20 ತಪ್ಪುಮಾಡಿ ಶಿಕ್ಷೆ ಹೊಂದುವುದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದರಿಂದೇನು ಹೆಚ್ಚಳ? ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ತಾಳ್ಮೆಯಿಂದಿದ್ದರೆ ಇದು ದೇವರಿಗೆ ಮೆಚ್ಚುಗೆಯಾಗಿದೆ.
1PE 2:21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು: ಕ್ರಿಸ್ತ ಯೇಸು ಸಹ ನಮಗೋಸ್ಕರ ಬಾಧೆಯನ್ನು ಅನುಭವಿಸಿ ತಮ್ಮ ಹೆಜ್ಜೆಯ ಜಾಡಿನಲ್ಲಿ ನೀವು ನಡೆಯಬೇಕೆಂದು ಆದರ್ಶವನ್ನು ಬಿಟ್ಟುಹೋದರು.
1PE 2:22 “ಕ್ರಿಸ್ತ ಯೇಸುವು ಯಾವ ಪಾಪವನ್ನೂ ಮಾಡಲಿಲ್ಲ, ಅವರ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.”
1PE 2:23 ಬೈಯ್ಯುವವರನ್ನು ಅವರು ಪ್ರತಿಯಾಗಿ ಬೈಯಲಿಲ್ಲ. ಅವರು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವ ತಂದೆಗೆ ತಮ್ಮನ್ನು ಒಪ್ಪಿಸಿದರು.
1PE 2:24 ನಾವು ನಮ್ಮ ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಕ್ರಿಸ್ತ ಯೇಸು ಶಿಲುಬೆಯ ಮೇಲೆ, “ನಮ್ಮ ಪಾಪಗಳನ್ನು ತಾವೇ ತಮ್ಮ ದೇಹದಲ್ಲಿ ಹೊತ್ತರು. ಅವರ ಗಾಯಗಳಿಂದ ನಿಮಗೆ ಗುಣವಾಯಿತು.”
1PE 2:25 ಏಕೆಂದರೆ, “ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ.” ಆದರೆ ಈಗ ನೀವು ತಿರುಗಿ ನಿಮ್ಮ ಆತ್ಮಗಳ ಕುರುಬ ಹಾಗೂ ಸಭಾಧ್ಯಕ್ಷರೂ ಆಗಿರುವ ಕ್ರಿಸ್ತ ಯೇಸುವಿನ ಬಳಿಗೆ ಬಂದಿದ್ದೀರಿ.
1PE 3:1 ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಪತಿಯರಲ್ಲಿ ಯಾರಾದರೂ ವಾಕ್ಯವನ್ನು ಸ್ವೀಕರಿಸದವರಾಗಿದ್ದರೂ ಪತ್ನಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ,
1PE 3:2 ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಲಿ.
1PE 3:3 ವಿಚಿತ್ರವಾಗಿ ಜಡೆ ಹೆಣೆದುಕೊಳ್ಳುವುದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದೂ ಇಲ್ಲವೆ ತುಂಬಾ ಬೆಲೆಯ ಉಡಿಗೆಗಳನ್ನು ಧರಿಸಿಕೊಳ್ಳುವುದೂ ಇವೇ ನಿಮ್ಮ ಅಲಂಕಾರವಾಗಿರಬಾರದು.
1PE 3:4 ಅದರ ಬದಲು ಸಾತ್ವಿಕವಾದ ಶಾಂತಮನಸ್ಸು ಎಂಬ ಹೃದಯದ ಆಂತರ್ಯದ ಅಲಂಕಾರವೇ ನಿಮ್ಮದಾಗಿರಲಿ. ಇದು ದೇವರ ದೃಷ್ಟಿಗೆ ಬಹು ಅಮೂಲ್ಯವಾದದ್ದಾಗಿದೆ.
1PE 3:5 ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಪತಿಯರಿಗೆ ಅಧೀನರಾಗಿದ್ದರು.
1PE 3:6 ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು “ಯಜಮಾನ” ಎಂದು ಕರೆದಳು. ನೀವು ಸಾರಳ ಪುತ್ರಿಯರಾಗಿದ್ದೀರಲ್ಲಾ. ನೀವು ಒಳ್ಳೆಯದು ಯಾವುದೋ ಅದನ್ನು ಮಾಡುವುದಾದರೆ ಯಾವುದಕ್ಕೂ ಭಯಪಡಬೇಕಾಗಿರುವುದಿಲ್ಲ.
1PE 3:7 ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಬಲಹೀನಳೆಂಬುದನ್ನು ತಿಳಿದು ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ಇರಿ. ಅವರು ಜೀವ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವುದಿಲ್ಲ.
1PE 3:8 ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ, ಒಬ್ಬರಿಗೊಬ್ಬರೂ ಕರುಣೆಯುಳ್ಳವರಾಗಿದ್ದು ಸಹೋದರರಂತೆ ಪ್ರೀತಿಸಿರಿ. ಕನಿಕರವೂ ದೀನತೆ ಉಳ್ಳವರಾಗಿರಿ,
1PE 3:9 ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ.
1PE 3:10 “ಬಾಳನ್ನು ಪ್ರೀತಿಸಿ ಸುದಿನಗಳನ್ನು ನೋಡುವುದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
1PE 3:11 ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಮಾಡಲಿ. ಸಮಾಧಾನವನ್ನು ಹುಡುಕಿ ಅದಕ್ಕೋಸ್ಕರ ಪ್ರಯತ್ನಪಡಲಿ.
1PE 3:12 ಏಕೆಂದರೆ ನೀತಿವಂತರ ಮೇಲೆ ಕರ್ತದೇವರು ದೃಷ್ಟಿ ಇಡುತ್ತಾರೆ. ಅವರ ಪ್ರಾರ್ಥನೆಗಳಿಗೆ ಕರ್ತದೇವರು ಕಿವಿಗೊಡುತ್ತಾರೆ. ಆದರೆ ಕೆಟ್ಟದ್ದನ್ನು ಮಾಡುವವರಿಗೆ ದೇವರು ವಿಮುಖರಾಗಿದ್ದಾರೆ,” ಎಂದು ಪವಿತ್ರ ವೇದದಲ್ಲಿ ಬರೆದಿದೆಯಲ್ಲಾ?
1PE 3:13 ನೀವು ಒಳ್ಳೆಯದನ್ನು ಅನುಸರಿಸಲು ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?
1PE 3:14 ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನಿಮಗೆ ಆಶೀರ್ವಾದವಿರುವುದು. ಅವರ ಬೆದರಿಕೆಗೆ ಹೆದರಬೇಡಿರಿ ಮತ್ತು ಕಳವಳಪಡಬೇಡಿರಿ.
1PE 3:15 ಆದರೆ ಕ್ರಿಸ್ತ ಯೇಸುವನ್ನು ನಿಮ್ಮ ಹೃದಯಗಳಲ್ಲಿ “ಕರ್ತದೇವರು” ಎಂದು ಪ್ರತಿಷ್ಠೆ ಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧವಾಗಿರಿ.
1PE 3:16 ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ. ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಒಳ್ಳೆಯ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೊಳ್ಳುವರು.
1PE 3:17 ಕೆಟ್ಟನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತ ಒಳ್ಳೆಯ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವುದು ಲೇಸು.
1PE 3:18 ಕ್ರಿಸ್ತ ಯೇಸುವು ನೀತಿವಂತರಾಗಿದ್ದರೂ ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವುದಕ್ಕಾಗಿ, ಒಂದೇ ಸಾರಿ ಪಾಪಗಳಿಗೋಸ್ಕರ ಬಾಧೆಪಟ್ಟು ಶರೀರದಲ್ಲಿ ಮರಣಹೊಂದಿದರು. ಆದರೆ ಆತ್ಮದಲ್ಲಿ ಬದುಕುವವರಾದರು.
1PE 3:19 ಹೀಗೆ ಕ್ರಿಸ್ತ ಯೇಸುವು ಆತ್ಮರೂಪದಲ್ಲಿ ಬದುಕುವವರಾಗಿ, ಸೆರೆಯಲ್ಲಿದ್ದ ಅವಿಧೇಯ ಆತ್ಮಗಳ ಬಳಿಗೆ ಹೋಗಿ ಸಾರಿದರು.
1PE 3:20 ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು.
1PE 3:21 ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ.
1PE 3:22 ಕ್ರಿಸ್ತ ಯೇಸು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾರೆ, ದೇವದೂತರೂ ಪ್ರಭುತ್ವಗಳೂ ಅಧಿಕಾರಗಳೂ ಅವರಿಗೆ ಅಧೀನವಾಗಿವೆ.
1PE 4:1 ಆದ್ದರಿಂದ ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಮಾಂಸದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅವರಿಗಿದ್ದ ಮನೋಭಾವವನ್ನು ಧರಿಸಿಕೊಳ್ಳಿರಿ. ಏಕೆಂದರೆ ಮಾಂಸದಲ್ಲಿ ಬಾಧೆಪಟ್ಟವರು ಪಾಪಮಾಡುವುದನ್ನು ನಿಲ್ಲಿಸಿಬಿಡುವರು.
1PE 4:2 ಅಂಥವರು ಉಳಿದಿರುವ ತಮ್ಮ ಭೂಲೋಕದ ಬಾಳಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವರು.
1PE 4:3 ದೇವರನ್ನು ಅರಿಯದ ಜನರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಸಾಕಷ್ಟು ಮಾಡಿದ್ದೀರಿ. ಆಗ ನೀವು ಅಶ್ಲೀಲತೆ, ದುರಾಶೆಗಳು, ಕುಡುಕತನ, ಅಮಲೇರುವಿಕೆ, ದುಂದು ಔತಣಗಳು, ಅಸಹ್ಯವಾದ ವಿಗ್ರಹಾರಾಧನೆಗಳು ಇವುಗಳನ್ನು ಮಾಡುತ್ತಿದ್ದೀರಿ.
1PE 4:4 ಆದುದರಿಂದ ನಿಮ್ಮ ಹಳೆಯ ಸ್ನೇಹಿತರೊಂದಿಗೆ ನೀವು ಮುಂಚಿನಂತೆ ಹಳೆಯ ದುಷ್ಕಾರ್ಯಗಳಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
1PE 4:5 ಅಂಥವರು ಬದುಕುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕಾಗಿ ಸಿದ್ಧವಾಗಿರುವ ದೇವರಿಗೆ ಲೆಕ್ಕ ಕೊಡಬೇಕಾಗುವುದು.
1PE 4:6 ಈ ಕಾರಣದಿಂದಲೇ ಈಗ ಸತ್ತಿರುವವರಿಗೂ ಸಹ ಬದುಕಿದ್ದಾಗ ಸುವಾರ್ತೆ ಸಾರಲಾಯಿತು. ಆದ್ದರಿಂದ ಎಲ್ಲಾ ಮನುಷ್ಯರಿಗೆ ನೇಮಿಸಿದ ನ್ಯಾಯತೀರ್ಪಿನಂತೆ ಅವರು ದೇಹದಲ್ಲಿ ಮರಣ ಹೊಂದಿದ್ದರೂ, ತಮ್ಮ ಆತ್ಮದಲ್ಲಿ ದೇವರಿಗಾಗಿ ಜೀವಿಸುವರು.
1PE 4:7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ.
1PE 4:8 ಎಲ್ಲಕ್ಕೂ ಮಿಗಿಲಾಗಿ ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ ಇರಲಿ. ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
1PE 4:9 ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
1PE 4:10 ನೀವು ದೇವರಿಂದ ವಿವಿಧ ಕೃಪಾವರಗಳನ್ನು ಹೊಂದಿರಲಾಗಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿರುವ ವರಗಳನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.
1PE 4:11 ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.
1PE 4:12 ಪ್ರಿಯರೇ, ನಿಮ್ಮನ್ನು ಶೋಧಿಸಲು ಬರುವ ಅಗ್ನಿಪರೀಕ್ಷೆಗೆ ನೀವು ಆಶ್ಚರ್ಯಪಡಬೇಡಿರಿ. ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿತೆಂದು ಯೋಚಿಸಬೇಡಿರಿ.
1PE 4:13 ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
1PE 4:14 ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ.
1PE 4:15 ನಿಮ್ಮಲ್ಲಿ ಯಾವನಾದರೂ ಕೊಲೆಗಾರನು, ಕಳ್ಳನು, ದುಷ್ಟನು ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನು ಅನುಭವಿಸಬಾರದು.
1PE 4:16 ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ.
1PE 4:17 ಏಕೆಂದರೆ ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯತೀರ್ಪಿನ ಸಮಯವು ಬಂದಿದೆ. ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರಬಹುದು?
1PE 4:18 ಮತ್ತು, “ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಪಾಪಿಷ್ಠನೂ ಆಗಿರುವವನ ಗತಿ ಏನು?”
1PE 4:19 ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ತಮ್ಮ ಆತ್ಮಗಳನ್ನು ನಂಬಿಗಸ್ತ ಆಗಿರುವ ಸೃಷ್ಟಿಕರ್ತ ದೇವರಿಗೆ ಒಪ್ಪಿಸಿ, ಒಳ್ಳೆಯದನ್ನು ಮಾಡಲಿ.
1PE 5:1 ಜೊತೆ ಹಿರಿಯನೂ ಕ್ರಿಸ್ತ ಯೇಸುವಿನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಬೇಡಿಕೊಳ್ಳುವುದು.
1PE 5:2 ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.
1PE 5:3 ದೇವರ ಸ್ವಾಸ್ತ್ಯದ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಆದರ್ಶವಾಗಿಯೇ ನಡೆದುಕೊಳ್ಳಿರಿ.
1PE 5:4 ಪ್ರಧಾನ ಕುರುಬ ಆಗಿರುವವರು ಪ್ರತ್ಯಕ್ಷರಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
1PE 5:5 ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರಿ. ಏಕೆಂದರೆ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ, ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ!”
1PE 5:6 ಹೀಗಿರುವುದರಿಂದ ದೇವರ ಪರಾಕ್ರಮವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ದೇವರು ಸಕಾಲದಲ್ಲಿ ನಿಮ್ಮನ್ನು ಮೇಲಕ್ಕೆತ್ತುವರು.
1PE 5:7 ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.
1PE 5:8 ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
1PE 5:9 ನೀವು ನಂಬಿಕೆಯಲ್ಲಿ ದೃಢವಾಗಿದ್ದು ಸೈತಾನನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಸಹೋದರಿಯರಿಗೂ ಅಂಥಾ ಬಾಧೆಗಳೇ ಸಂಭವಿಸುತ್ತವೆ ಎಂದು ನಿಮಗೆ ತಿಳಿದದೆಯಲ್ಲಾ.
1PE 5:10 ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು.
1PE 5:11 ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.
1PE 5:12 ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಿಮಗೆ ನಂಬಿಗಸ್ತ ಆಗಿರುವ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಸಹಾಯದಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.
1PE 5:13 ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.
1PE 5:14 ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ!
2PE 1:1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು, ನಮ್ಮ ದೇವರ ಮತ್ತು ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ನೀತಿಯ ಮೂಲಕ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದು:
2PE 1:2 ದೇವರ ವಿಷಯವಾಗಿಯೂ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿಯೂ ಇರುವ ತಿಳುವಳಿಕೆಯ ಮೂಲಕ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
2PE 1:3 ದೇವರು ತಮ್ಮ ಸ್ವಂತ ಮಹಿಮೆಗಾಗಿಯೂ ಸದ್ಗುಣಕ್ಕಾಗಿಯೂ ನಮ್ಮನ್ನು ಕರೆದಿದ್ದಾರೆ. ಏಕೆಂದರೆ, ದೇವರ ತಿಳುವಳಿಕೆಯ ಮೂಲಕವಾಗಿ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ದೇವರ ಶಕ್ತಿಯು ನಮಗೆ ಕೊಡಲಾಗಿದೆ.
2PE 1:4 ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಅತ್ಯಂತ ಮಹತ್ವವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ದೇವರು ನಮಗೆ ದಯಪಾಲಿಸಿದ್ದಾರೆ.
2PE 1:5 ಈ ಕಾರಣದಿಂದಲೇ ನೀವು ಪೂರ್ಣಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ
2PE 1:6 ಜ್ಞಾನಕ್ಕೆ ಸ್ವಯಂ ನಿಯಂತ್ರಣವನ್ನೂ ಸ್ವಯಂ ನಿಯಂತ್ರಣಕ್ಕೆ ತಾಳ್ಮೆಯನ್ನೂ
2PE 1:7 ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸೋದರ ಸ್ನೇಹವನ್ನೂ ಸೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.
2PE 1:8 ಈ ಗುಣಗಳು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ, ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅರಿತುಕೊಳ್ಳುವುದರಲ್ಲಿ ನೀವು ನಿಷ್ಪ್ರಯೋಜಕರೂ ನಿಷ್ಫಲರೂ ಆಗದಂತೆ ಮಾಡುತ್ತವೆ.
2PE 1:9 ಆದರೆ ಈ ಗುಣಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಿನ ಪಾಪಗಳಿಂದ ಶುದ್ಧನಾದದ್ದನ್ನು ಮರೆತು ಬಿಟ್ಟಿದ್ದಾನೆ.
2PE 1:10 ಆದ್ದರಿಂದ ಪ್ರಿಯರೇ, ನಿಮ್ಮ ಕರೆಯುವಿಕೆಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಮಾಡಿರಿ. ಏಕೆಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ಪಾಪದಲ್ಲಿ ಬಿದ್ದುಹೋಗುವುದಿಲ್ಲ.
2PE 1:11 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವು ತಮ್ಮ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಭಾಗ್ಯವನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವರು.
2PE 1:12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮ್ಮ ನೆನಪಿಗೆ ತರಲು ನಾನು ಬಯಸುತ್ತೇನೆ.
2PE 1:13 ನಾನು ನನ್ನ ದೇಹವೆಂಬ ಗುಡಾರದಲ್ಲಿ ಬಾಳುವ ತನಕ ನಿಮ್ಮ ನೆನಪಿಗೆ ತರುವುದು ಯುಕ್ತವೆಂದೆಣಿಸಿದ್ದೇನೆ.
2PE 1:14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ನನಗೆ ಸ್ಪಷ್ಟ ಪಡಿಸಿದ ಪ್ರಕಾರ, ಈ ನನ್ನ ದೇಹವೆಂಬ ಗುಡಾರವನ್ನು ತೆಗೆದುಹಾಕುವ ಕಾಲ ಬೇಗನೆ ಬರುತ್ತದೆಂದು ನಾನು ಬಲ್ಲೆನು.
2PE 1:15 ಆದರೂ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ನನ್ನಿಂದಾದಷ್ಟು ಪ್ರಯಾಸಪಡುವೆನು.
2PE 1:16 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶಕ್ತಿಯ ಬಗ್ಗೆಯೂ ಅವರ ಪುನರಾಗಮನದ ಬಗ್ಗೆಯೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಕುತಂತ್ರವಾಗಿ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸಲಿಲ್ಲ. ಆದರೆ ನಾವೇ ಕ್ರಿಸ್ತ ಯೇಸುವಿನ ಮಹತ್ತನ್ನು ಕಣ್ಣಾರೆ ಕಂಡವರಾಗಿ ತಿಳಿಯಪಡಿಸಿದೆವು.
2PE 1:17 ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ,” ಎಂಬ ಧ್ವನಿಯು ಮಹೋನ್ನತ ಮಹಿಮೆಯಿಂದ ಅವರಿಗೆ ಉಂಟಾದದ್ದರಲ್ಲಿ ಅವರು ತಂದೆ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಹೊಂದಿದರಲ್ಲವೇ.
2PE 1:18 ನಾವು ಪರಿಶುದ್ಧ ಪರ್ವತದ ಮೇಲೆ ಕ್ರಿಸ್ತ ಯೇಸುವಿನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.
2PE 1:19 ಮಾತ್ರವಲ್ಲದೆ ನಮಗೆ ಬಹು ನಿಶ್ಚಯವಾದ ಪ್ರವಾದನೆಯ ವಾಕ್ಯಗಳಿವೆ. ಉದಯ ನಕ್ಷತ್ರವಾಗಿರುವ ಕ್ರಿಸ್ತ ಯೇಸು ನಿಮ್ಮ ಹೃದಯಗಳಲ್ಲಿ ಉದಯಿಸುವಾಗ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತೆ ಎಣಿಸಿ, ನೀವು ಆ ಪ್ರವಾದನಾ ವಾಕ್ಯಗಳಿಗೆ ಲಕ್ಷ್ಯಕೊಡುವುದು ಒಳ್ಳೆಯದು.
2PE 1:20 ಪವಿತ್ರ ವೇದದ ಯಾವ ಪ್ರವಾದನೆಯೂ ಕೇವಲ ಪ್ರವಾದಿಗಳಿಂದ ಸ್ವಂತವಾಗಿ ವಿವರಿಸತಕ್ಕದ್ದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿರಿ.
2PE 1:21 ಯಾವ ಪ್ರವಾದನೆಯೂ ಎಂದೂ ಮನುಷ್ಯನ ಚಿತ್ತದಿಂದ ಬರಲಿಲ್ಲ, ಆದರೆ ಪ್ರವಾದಿಗಳು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಪಡೆದುಕೊಂಡಿದ್ದನ್ನೇ ಮಾತನಾಡಿದರು.
2PE 2:1 ಆದರೆ ಆ ಕಾಲದಲ್ಲಿ ಸುಳ್ಳು ಪ್ರವಾದಿಗಳು ಸಹ ಜನರಲ್ಲಿ ಕಾಣಿಸಿಕೊಂಡರು. ಅದೇ ಪ್ರಕಾರ ನಿಮ್ಮಲ್ಲಿಯೂ ಈಗ ಸುಳ್ಳು ಬೋಧಕರು ಕಾಣಿಸಿಕೊಳ್ಳುವರು. ಅಂಥವರು ಹಾನಿಕರವಾದ ಸುಳ್ಳು ಬೋಧನೆಗಳನ್ನು ರಹಸ್ಯವಾಗಿ ಸಭೆಯೊಳಗೆ ತರುವರು. ತಮ್ಮನ್ನು ಕೊಂಡುಕೊಂಡ ಸಾರ್ವಭೌಮ ಕರ್ತ ಆಗಿರುವವರನ್ನೇ ಅಲ್ಲಗಳೆಯುವರು. ಹೀಗೆ ಅವರು ತಮ್ಮ ಮೇಲೆ ವಿನಾಶವನ್ನು ತಾವೇ ಬರಮಾಡಿಕೊಳ್ಳುವರು.
2PE 2:2 ಆ ಸುಳ್ಳು ಬೋಧಕರ ಅಸಹ್ಯ ಕೃತ್ಯಗಳನ್ನು ಅನೇಕರು ಅನುಸರಿಸುವರು. ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು.
2PE 2:3 ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತುಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು. ಅಂಥವರಿಗೆ ಬಹುಕಾಲದ ಹಿಂದೆಯೇ ದೇವರ ತೀರ್ಪು ಸಿದ್ಧಪಡಿಸಲಾಗಿದೆ. ಅವರಿಗಾಗುವ ವಿನಾಶವು ತೂಕಡಿಸುವುದಿಲ್ಲ.
2PE 2:4 ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕೆ ಬಂಧಿಸಿ, ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದರು.
2PE 2:5 ದೇವರು ಪುರಾತನ ಜಗತ್ತನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದರು. ಆದರೆ ನೀತಿಯನ್ನು ಸಾರುತ್ತಿದ್ದ ನೋಹನನ್ನು ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ರಕ್ಷಿಸಿದರು.
2PE 2:6 ದೇವರು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದರು.
2PE 2:7 ದೇವರು ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದರು.
2PE 2:8 ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ, ಕೇಳುತ್ತಾ, ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು.
2PE 2:9 ಕರ್ತದೇವರು ಭಕ್ತರನ್ನು ಸಂಕಟದೊಳಗಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವರಾಗಿದ್ದಾರೆ.
2PE 2:10 ಆದರೆ ಮುಖ್ಯವಾಗಿ ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವರು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ. ದುರಹಂಕಾರದಿಂದ ಸ್ವರ್ಗೀಯ ಜೀವಿಗಳನ್ನು ದೂಷಿಸುತ್ತಾರೆ.
2PE 2:11 ಆದರೂ ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಸ್ವರ್ಗೀಯ ಜೀವಿಗಳ ವಿರೋಧವಾಗಿ ಕರ್ತದೇವರ ಮುಂದೆ ಇವರು ನ್ಯಾಯತೀರ್ಪನ್ನು ತರುವುದಿಲ್ಲ.
2PE 2:12 ಆದರೆ ಬೇಟೆಗಾಗಿ ಹುಟ್ಟಿರುವ ವಿವೇಕಹೀನ ಮೃಗಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಮಾಡುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ಮೃಗಗಳಂತೆ ಸಂಪೂರ್ಣ ನಾಶವಾಗುವರು.
2PE 2:13 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯನ್ನು ಹಗಲಲ್ಲಿ ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಕಳಂಕಕ್ಕೂ, ನಿಂದೆಗೂ ಕಾರಣರಾಗಿದ್ದಾರೆ.
2PE 2:14 ಇವರು ಕಾಮುಕದಿಂದ ತುಂಬಿದ ಕಣ್ಣು ಮತ್ತು ಪಾಪವನ್ನು ಬಿಡಲೊಲ್ಲದ ಚಪಲಚಿತ್ತರೂ ಮರುಳುಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.
2PE 2:15 ಇವರು ನೇರವಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು.
2PE 2:16 ಆದರೆ ಅವನ ದುಷ್ಟತನಕ್ಕೆ ಖಂಡನೆಯಾಯಿತು. ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿಮಾಡಿತು.
2PE 2:17 ಈ ಸುಳ್ಳು ಬೋಧಕರು ನೀರಿಲ್ಲದ ಬಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ಕಾರ್ಗತ್ತಲು ಇಟ್ಟಿರುವುದು.
2PE 2:18 ತಪ್ಪಾದ ಮಾರ್ಗದಲ್ಲಿ ಬಾಳುವವರಿಂದ ತಪ್ಪಿಸಿಕೊಂಡವರನ್ನು ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಅವರನ್ನು ಮರುಳುಗೊಳಿಸುತ್ತಾರೆ.
2PE 2:19 ಇಂಥವರು ಸ್ವಾತಂತ್ರ್ಯಕೊಡುತ್ತೇವೆಂದು ಅವರಿಗೆ ವಾಗ್ದಾನ ಮಾಡುತ್ತಾರೆ. ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತು ಹೋಗಿರುವನೋ, ಅವನು ಅದರ ದಾಸತ್ವದೊಳಗಿರುವನಷ್ಟೆ.
2PE 2:20 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನಹೊಂದಿ ಲೋಕದ ಮಾಲಿನ್ಯಗಳನ್ನು ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.
2PE 2:21 ಅವರು ನೀತಿಮಾರ್ಗವನ್ನು ತಿಳಿದುಕೊಂಡ ಮೇಲೆ ತಮಗೆ ಕೊಡಲಾದ ಪವಿತ್ರ ಆಜ್ಞೆಯಿಂದ ತೊಲಗಿ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು.
2PE 2:22 “ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡಲು ತಿರುಗಿಕೊಂಡಿತು!” ಎಂಬ ನಿಜವಾದ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.
2PE 3:1 ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ.
2PE 3:2 ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ನಮಗೆ ಕರ್ತ ಹಾಗೂ ರಕ್ಷಕ ಆಗಿರುವವರು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ.
2PE 3:3 ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು,
2PE 3:4 “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?” ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು.
2PE 3:5 ಆದರೆ ಪೂರ್ವಕಾಲದಲ್ಲಿ ದೇವರ ವಾಕ್ಯದಿಂದ ಆಕಾಶವು ಅಸ್ತಿತ್ವಕ್ಕೆ ಬಂದಿತು ಎಂತಲೂ ಜಲದಿಂದ ಜಲದ ಮೂಲಕ ಭೂಮಿಯು ಉಂಟಾಯಿತೆಂಬುದನ್ನು ಅವರು ಬೇಕೆಂತಲೇ ಮರೆತುಬಿಡುತ್ತಾರೆ.
2PE 3:6 ಈ ಜಲದಿಂದ ಆ ಸಮಯದಲ್ಲಿ ಜಗತ್ತು ಪ್ರಳಯದಲ್ಲಿ ನಾಶವಾಯಿತು.
2PE 3:7 ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.
2PE 3:8 ಆದರೆ ಪ್ರಿಯರೇ, ಕರ್ತದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
2PE 3:9 ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.
2PE 3:10 ಆದರೂ ಕರ್ತ ಯೇಸುವಿನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
2PE 3:11 ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
2PE 3:12 ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿಹತ್ತಿ ಲಯವಾಗಿ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
2PE 3:13 ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
2PE 3:14 ಆದಕಾರಣ ಪ್ರಿಯ ಸ್ನೇಹಿತರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವುದರಿಂದ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಅವರಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವರಾಗಿರಿ.
2PE 3:15 ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
2PE 3:16 ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ವಿಷಯಗಳು ತಿಳಿಯುವುದಕ್ಕೆ ಕಷ್ಟವಾಗಿವೆ. ಪವಿತ್ರ ವೇದದ ಮಿಕ್ಕಾದ ಭಾಗಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ವಿದ್ಯಾಹೀನರೂ ಚಪಲಚಿತ್ತರೂ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.
2PE 3:17 ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವುದರಿಂದ ನಿಯಮರಹಿತರ ಸೆಳೆಯುವಿಕೆಗೆ ಮರುಳಾಗಿ ನಿಮ್ಮ ಸ್ಥಿರತೆಯಿಂದ ಬಿದ್ದುಹೋಗದಂತೆ ಎಚ್ಚರಿಕೆಯಿಂದಿರಿ.
2PE 3:18 ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.
1JO 1:1 ಆದಿಯಿಂದ ಇರುವಂಥದ್ದೂ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದ ಆ ಜೀವವಾಕ್ಯವನ್ನೇ ಸಾರುತ್ತಿದ್ದೇವೆ.
1JO 1:2 ಈ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು, ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತೇವೆ.
1JO 1:3 ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರಬೇಕೆಂದು, ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡವೂ ಅವರ ಮಗನಾದ ಕ್ರಿಸ್ತ ಯೇಸುವಿನ ಸಂಗಡವೂ ಇರುವಂಥದ್ದು.
1JO 1:4 ನಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ಬರೆಯುತ್ತಿದ್ದೇವೆ.
1JO 1:5 ನಾವು ಕ್ರಿಸ್ತ ಯೇಸುವಿನಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಯಾವುದೆಂದರೆ: ದೇವರು ಬೆಳಕಾಗಿದ್ದಾರೆ, ಅವರಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ, ಎಂಬುದೇ.
1JO 1:6 ನಾವು ದೇವರ ಸಂಗಡ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿ ಕತ್ತಲೆಯಲ್ಲಿ ನಡೆದರೂ ಸುಳ್ಳಾಡುವವರಾಗಿದ್ದರೆ, ನಾವು ಸತ್ಯವನ್ನು ಅನುಸರಿಸುವವರಲ್ಲ.
1JO 1:7 ದೇವರು ಬೆಳಕಿನಲ್ಲಿರುವಂತೆಯೇ ನಾವೂ ಬೆಳಕಿನಲ್ಲಿ ಬಾಳಿದರೆ, ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ, ಆಗ ದೇವರ ಮಗನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.
1JO 1:8 ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ.
1JO 1:9 ನಾವು ನಮ್ಮ ಪಾಪಗಳನ್ನು ದೇವರಿಗೆ ಅರಿಕೆಮಾಡಿದರೆ ಅವರು ನಂಬಿಗಸ್ತರೂ ನೀತಿವಂತರೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ, ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವರು.
1JO 1:10 ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ದೇವರನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ. ಅವರ ವಾಕ್ಯವು ನಮ್ಮಲ್ಲಿ ಬಾಳುವುದಿಲ್ಲ.
1JO 2:1 ನನ್ನ ಪ್ರಿಯ ಮಕ್ಕಳೇ, ನೀವು ಪಾಪಮಾಡದಂತೆ ಇವುಗಳನ್ನು ನಾನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತರಾದ ಕ್ರಿಸ್ತ ಯೇಸುವು ನಮ್ಮ ಪರವಾಗಿ ವಾದಿಸುವ ವಕೀಲರಾಗಿದ್ದಾರೆ.
1JO 2:2 ಕ್ರಿಸ್ತ ಯೇಸು ನಮ್ಮ ಪಾಪಗಳನ್ನು ಪರಿಹರಿಸುವ ಬಲಿಯಾಗಿದ್ದಾರೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನೂ ಪರಿಹರಿಸುತ್ತಾರೆ.
1JO 2:3 ನಾವು ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಿಂದಲೇ ದೇವರನ್ನು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ.
1JO 2:4 ಒಬ್ಬನು, “ನಾನು ಅವರನ್ನು ಬಲ್ಲೆನು,” ಎಂದು ಹೇಳಿ ಅವರ ಆಜ್ಞೆಗಳನ್ನು ಕೈಗೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವು ಅವನಲ್ಲಿ ಇಲ್ಲ.
1JO 2:5 ಯಾವನಾದರೂ ದೇವರ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ದೇವರಲ್ಲಿದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
1JO 2:6 ದೇವರಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಯೇಸು ಜೀವಿಸಿದಂತೆಯೇ ತಾನೂ ಜೀವಿಸಬೇಕು.
1JO 2:7 ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ. ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ.
1JO 2:8 ತಿರುಗಿ ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯೇ. ಇದು ಕ್ರಿಸ್ತ ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ ಕತ್ತಲೆಯು ಕಳೆದುಹೋಗುತ್ತದೆ. ಸತ್ಯವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ.
1JO 2:9 ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.
1JO 2:10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆತಂಕವುಳ್ಳದ್ದು ಯಾವುದೂ ಇಲ್ಲ.
1JO 2:11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ಜೀವಿಸುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡು ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಎಂದು ಅವನಿಗೆ ತಿಳಿಯದು.
1JO 2:12 ಪ್ರಿಯ ಮಕ್ಕಳೇ, ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ.
1JO 2:13 ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತೇನೆ.
1JO 2:14 ಮಕ್ಕಳೇ, ನೀವು ತಂದೆಯನ್ನು ತಿಳಿದುಕೊಂಡಿರುವುದರಿಂದ ನಿಮಗೆ ಬರೆಯುತ್ತೇನೆ. ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಬಲ ಹೊಂದಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಿಮಗೆ ಬರೆದಿದ್ದೇನೆ.
1JO 2:15 ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
1JO 2:16 ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ.
1JO 2:17 ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು.
1JO 2:18 ಪ್ರಿಯ ಮಕ್ಕಳೇ, ಇದು ಅಂತ್ಯ ಕಾಲವಾಗಿದೆ. ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳಿದ್ದಾರೆ. ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.
1JO 2:19 ಅವರು ನಮ್ಮಿಂದ ಹೊರಟು ಹೋದರು. ಆದರೆ ಅವರು ನಮ್ಮವರಾಗಿರಲಿಲ್ಲ. ಏಕೆಂದರೆ ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ತೋರಿಬಂತು.
1JO 2:20 ಆದರೆ ನೀವು ಪವಿತ್ರವಾದವರಿಂದ ಅಭಿಷೇಕವನ್ನು ಹೊಂದಿದವರಾಗಿದ್ದು ನೀವೆಲ್ಲರೂ ಸತ್ಯವನ್ನು ತಿಳಿದವರಾಗಿದ್ದೀರಿ.
1JO 2:21 ನೀವು ಸತ್ಯವನ್ನು ತಿಳಿಯದವರೆಂದು ನಾನು ಭಾವಿಸುತ್ತಿಲ್ಲ, ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಬರುವುದಿಲ್ಲ ಎಂಬುವುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.
1JO 2:22 ಸುಳ್ಳುಗಾರನು ಯಾರು? ಮನುಷ್ಯನಾಗಿ ಬಂದ ಯೇಸುವು ಕ್ರಿಸ್ತ ಅಲ್ಲ ಎಂದು ಯಾವನು ಅಲ್ಲಗಳೆಯುತ್ತಾನೋ ಅವನೇ ಸುಳ್ಳುಗಾರನು. ಅವನೇ ತಂದೆಯನ್ನೂ ಮಗನನ್ನೂ ಅಲ್ಲಗಳೆಯುವ ಕ್ರಿಸ್ತವಿರೋಧಿಯಾಗಿದ್ದಾನೆ.
1JO 2:23 ಮಗನನ್ನು ಅಲ್ಲಗಳೆಯುವವನು ತಂದೆಯನ್ನೂ ಅಲ್ಲಗಳೆಯುತ್ತಾನೆ. ಮಗನನ್ನು ಅಂಗೀಕರಿಸುವವನು ತಂದೆಯನ್ನೂ ಅಂಗೀಕರಿಸುತ್ತಾನೆ.
1JO 2:24 ನೀವಂತೂ ಯಾವುದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಹಾಗಿದ್ದರೆ, ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿರುತ್ತೀರಿ.
1JO 2:25 ಇದೇ ಕ್ರಿಸ್ತ ಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವವಾಗಿರುತ್ತದೆ.
1JO 2:26 ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ.
1JO 2:27 ಆದರೆ ಕ್ರಿಸ್ತ ಯೇಸುವಿನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುತ್ತದೆ. ಆದುದರಿಂದ ಬೇರೆ ಯಾರೂ ನಿಮಗೆ ಬೋಧಿಸುವ ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಬೋಧಿಸುವುದು. ಆ ಬೋಧನೆಯು ಸುಳ್ಳಲ್ಲ, ಸತ್ಯವಾದದ್ದು. ಆದ್ದರಿಂದ ಅದು ನಿಮಗೆ ಬೋಧಿಸಿದ ಪ್ರಕಾರವೇ, ಕ್ರಿಸ್ತ ಯೇಸುವಿನಲ್ಲಿ ನೀವು ನೆಲೆಗೊಳ್ಳಿರಿ.
1JO 2:28 ಪ್ರಿಯ ಮಕ್ಕಳೇ, ಕ್ರಿಸ್ತ ಯೇಸು ಪ್ರತ್ಯಕ್ಷವಾಗುವಾಗ ನೀವು ಅವರ ಆಗಮನದಲ್ಲಿ ಅವರ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಳ್ಳಿರಿ.
1JO 2:29 ದೇವರು ನೀತಿವಂತರಾಗಿದ್ದಾರೆಂಬುದು ನಿಮಗೆ ಗೊತ್ತಾಗಿದ್ದರೆ, ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನೂ ಅವರಿಂದ ಹುಟ್ಟಿದವನೆಂದು ನೀವು ತಿಳಿದಿರಬೇಕು.
1JO 3:1 ಇಗೋ, ನಾವು ದೇವರ ಮಕ್ಕಳೆಂದು ಕರೆಯುವುದರಲ್ಲಿ ತಂದೆಯು ಎಂಥಾ ಮಹಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾರಲ್ಲಾ! ನಿಜಕ್ಕೂ ನಾವು ದೇವರ ಮಕ್ಕಳಾಗಿದ್ದೇವೆ. ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳುವುದಿಲ್ಲ, ಏಕೆಂದರೆ ಅದು ತಂದೆಯನ್ನು ತಿಳಿದುಕೊಳ್ಳಲಿಲ್ಲ.
1JO 3:2 ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು.
1JO 3:3 ಕ್ರಿಸ್ತ ಯೇಸುವಿನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
1JO 3:4 ಪಾಪಮಾಡುವ ಪ್ರತಿಯೊಬ್ಬನೂ ನಿಯಮವನ್ನು ಮೀರುವವನಾಗಿದ್ದಾನೆ. ನಿಯಮವನ್ನು ಮೀರುವುದೇ ಪಾಪ.
1JO 3:5 ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾದರೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತ ಯೇಸುವಿನಲ್ಲಿ ಪಾಪವಿಲ್ಲ.
1JO 3:6 ಕ್ರಿಸ್ತ ಯೇಸುವಿನಲ್ಲಿ ನೆಲೆಗೊಂಡಿರುವವರು ಪಾಪದಲ್ಲಿ ಮುಂದುವರಿಯುವುದಿಲ್ಲ. ಪಾಪದಲ್ಲಿ ಮುಂದುವರೆಯುವವರು ಕ್ರಿಸ್ತ ಯೇಸುವನ್ನು ಕಂಡವರೂ ಅಲ್ಲ, ತಿಳಿದವರೂ ಅಲ್ಲ.
1JO 3:7 ಪ್ರಿಯ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತ ಯೇಸು ಹೇಗೆ ನೀತಿವಂತರಾಗಿದ್ದಾರೋ ಹಾಗೆಯೇ ನೀತಿಯನ್ನು ಅನುಸರಿಸುವವರು ನೀತಿವಂತರಾಗಿದ್ದಾರೆ.
1JO 3:8 ಪಾಪದಲ್ಲಿ ಮುಂದುವರೆಯುವವರು ಸೈತಾನನಿಗೆ ಸೇರಿದವರು. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ದೇವಪುತ್ರ ಯೇಸು ಸೈತಾನನ ಕೆಲಸಗಳನ್ನು ಲಯ ಮಾಡುವುದಕ್ಕೋಸ್ಕರವೇ ಪ್ರತ್ಯಕ್ಷರಾದರು.
1JO 3:9 ದೇವರಿಂದ ಹುಟ್ಟಿದವನು ಪಾಪವನ್ನು ಅಭ್ಯಾಸ ಮಾಡಲಾರನು, ಏಕೆಂದರೆ ದೇವರ ಬೀಜವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪ ಅಭ್ಯಾಸ ಮಾಡುವುದು ಅವನಿಗೆ ಅಸಾಧ್ಯ.
1JO 3:10 ಇವರು ದೇವರ ಮಕ್ಕಳೆಂಬುದೂ ಅವರು ಸೈತಾನನ ಮಕ್ಕಳೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರ ಮಗುವಲ್ಲ.
1JO 3:11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.
1JO 3:12 ಕೆಡುಕನಾಗಿದ್ದ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ಅಲ್ಲ. ಅವನು ಯಾವ ಕಾರಣದಿಂದ ತಮ್ಮನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ ಅಲ್ಲವೇ?
1JO 3:13 ನನ್ನ ಪ್ರಿಯರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
1JO 3:14 ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
1JO 3:15 ತನ್ನ ಸಹೋದರನನ್ನು ದ್ವೇಷಿಸುವ ಯಾರೇ ಆದರೂ ಕೊಲೆಗಾರನಾಗಿದ್ದಾನೆ ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.
1JO 3:16 ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರ ಸಹೋದರಿಯರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವವರಾಗಿದ್ದೇವೆ.
1JO 3:17 ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರ ಸಹೋದರಿಯರನ್ನು ನೋಡಿ, ಕರುಣೆ ತೋರಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ?
1JO 3:18 ನನ್ನ ಪ್ರಿಯ ಮಕ್ಕಳೇ, ನೀವು ಬರೀಮಾತಿನಿಂದಾಗಲಿ, ಹೊಗಳಿಕೆಯ ಮಾತಿನಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರಬೇಕು.
1JO 3:19 ದೇವರ ಸಮಕ್ಷಮದಲ್ಲಿ ನಾವು ನಮ್ಮ ಹೃದಯವನ್ನು ವಿಶ್ರಾಂತಿಗೊಳಿಸಿರುವುದರಿಂದ ನಾವು ಸತ್ಯಕ್ಕೆ ಸೇರಿದವರು ಎಂಬುದು ಇದರಿಂದಲೇ ನಮಗೆ ತಿಳಿಯುತ್ತದೆ:
1JO 3:20 ಏಕೆಂದರೆ ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸುವಾಗಲೆಲ್ಲಾ, ನಮ್ಮ ಹೃದಯಕ್ಕಿಂತ ದೇವರು ದೊಡ್ಡವರಾಗಿದ್ದಾರೆಂತಲೂ ದೇವರು ಎಲ್ಲವನ್ನೂ ಬಲ್ಲವರಾಗಿದ್ದಾರೆಂತಲೂ ತಿಳಿದುಕೊಳ್ಳಿರಿ.
1JO 3:21 ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸದಿದ್ದರೆ ದೇವರ ಮುಂದೆ ಆತ್ಮವಿಶ್ವಾಸ ನಮಗಿರುವುದು.
1JO 3:22 ಮತ್ತು ನಾವು ಏನೇನು ಬೇಡಿಕೊಳ್ಳುತ್ತೇವೋ ಅದನ್ನು ದೇವರಿಂದ ನಾವು ಹೊಂದಿಕೊಳ್ಳುತ್ತೇವೆ. ಏಕೆಂದರೆ ನಾವು ಅವರ ಆಜ್ಞೆಗಳನ್ನು ಕೈಗೊಂಡು ಅವರ ದೃಷ್ಟಿಯಲ್ಲಿ ಮೆಚ್ಚಿಗೆಯಾದವುಗಳನ್ನು ಮಾಡುವವರಾಗಿದ್ದೇವೆ.
1JO 3:23 ನಾವು ದೇವರ ಪುತ್ರ ಆಗಿರುವ ಯೇಸುಕ್ರಿಸ್ತರ ಹೆಸರನ್ನು ನಂಬಿ, ಅವರು ನಮಗೆ ಆಜ್ಞಾಪಿಸಿದ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ದೇವರ ಆಜ್ಞೆಯಾಗಿರುತ್ತದೆ.
1JO 3:24 ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವವನು ದೇವರಲ್ಲಿ ವಾಸಮಾಡುತ್ತಾನೆ ಮತ್ತು ದೇವರು ಅವನಲ್ಲಿ ವಾಸಮಾಡುತ್ತಾರೆ. ದೇವರು ನಮ್ಮಲ್ಲಿ ವಾಸಮಾಡುತ್ತಾರೆಂದು ದೇವರು ನಮಗೆ ದಯಪಾಲಿಸಿದ ಆತ್ಮನಿಂದಲೇ ನಾವು ಬಲ್ಲೆವು.
1JO 4:1 ಪ್ರಿಯ ಸ್ನೇಹಿತರೇ, ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
1JO 4:2 ನೀವು ದೇವರಾತ್ಮನನ್ನು ಹೀಗೆ ಗುರುತಿಸಬಹುದು: ಕ್ರಿಸ್ತ ಯೇಸು ನರಮಾಂಸರಾಗಿ ಬಂದರೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದು.
1JO 4:3 ನರಮಾಂಸದಲ್ಲಿ ಬಂದ ಯೇಸುವನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುವುದೆಂಬುದನ್ನು ನೀವು ಕೇಳಿದ್ದೀರಲ್ಲಾ. ಈಗಲೂ ಅದು ಲೋಕದಲ್ಲಿ ಇದೆ.
1JO 4:4 ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರಾಗಿದ್ದೀರಿ, ಸುಳ್ಳು ಪ್ರವಾದಿಗಳನ್ನು ಜಯಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವ ದೇವರು ಲೋಕದಲ್ಲಿ ಇರುವವನಿಗಿಂತ ದೊಡ್ಡವರಾಗಿದ್ದಾರೆ.
1JO 4:5 ಅವರು ಲೋಕಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಅವರು ಲೋಕ ಸಂಬಂಧವಾಗಿ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.
1JO 4:6 ನಾವಂತೂ ದೇವರಿಗೆ ಸೇರಿದವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸೇರದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದು ಸತ್ಯದ ಆತ್ಮ. ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದುಕೊಳ್ಳುತ್ತೇವೆ.
1JO 4:7 ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರೂ ದೇವರನ್ನು ಬಲ್ಲವರೂ ಆಗಿದ್ದಾರೆ.
1JO 4:8 ಪ್ರೀತಿಯಿಲ್ಲದವರು ದೇವರನ್ನು ಬಲ್ಲವರಲ್ಲ. ಏಕೆಂದರೆ ದೇವರು ಪ್ರೀತಿಯಾಗಿದ್ದಾರೆ.
1JO 4:9 ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮೂಲಕ ನಾವು ಜೀವಿಸುವುದಕ್ಕಾಗಿ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ಇದರಿಂದಲೇ ದೇವರು ತಮ್ಮ ಪ್ರೀತಿಯನ್ನು ನಮ್ಮ ನಡುವೆ ತೋರಿಸಿದರು.
1JO 4:10 ಪ್ರೀತಿಯು ಇದಾಗಿರುತ್ತದೆ: ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ದೇವರೇ ನಮ್ಮನ್ನು ಪ್ರೀತಿಸಿ, ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕಳುಹಿಸಿ ಕೊಟ್ಟಿದ್ದರಲ್ಲಿಯೇ ಅವರ ಸತ್ಯ ಪ್ರೀತಿಯು ತೋರಿಬರುತ್ತದೆ.
1JO 4:11 ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
1JO 4:12 ದೇವರನ್ನು ಯಾರೂ ಎಂದೂ ನೋಡಿಲ್ಲ, ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
1JO 4:13 ದೇವರು ನಮಗೆ ತಮ್ಮ ಆತ್ಮವನ್ನು ಕೊಟ್ಟಿರುವುದರಿಂದಲೇ, ನಾವು ದೇವರಲ್ಲಿಯೂ ದೇವರು ನಮ್ಮಲ್ಲಿಯೂ ಬಾಳುವವರಾಗಿದ್ದಾರೆಂದು ತಿಳಿದುಕೊಳ್ಳುತ್ತೇವೆ.
1JO 4:14 ತಂದೆಯು ಮಗನನ್ನು ಲೋಕ ರಕ್ಷಕರನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ನೋಡಿದ್ದೇವೆ ಮತ್ತು ಅದಕ್ಕೆ ನಾವು ಸಾಕ್ಷಿ ಹೇಳುತ್ತೇವೆ.
1JO 4:15 ಯೇಸು ದೇವರ ಪುತ್ರರಾಗಿದ್ದಾರೆಂದು ಯಾರು ಒಪ್ಪಿಕೊಳ್ಳುತ್ತಾರೋ, ಅವರಲ್ಲಿ ದೇವರು ಬಾಳುತ್ತಾರೆ ಮತ್ತು ಅವರು ದೇವರಲ್ಲಿ ಬಾಳುವವರಾಗಿದ್ದಾರೆ.
1JO 4:16 ದೇವರು ನಮ್ಮನ್ನು ಪ್ರೀತಿಸುತ್ತಾರೆಂದು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾರೆ, ಪ್ರೀತಿಯಲ್ಲಿ ಬಾಳುವವರು ದೇವರಲ್ಲಿ ಬಾಳುವವರಾಗಿದ್ದಾರೆ, ದೇವರು ಅವರಲ್ಲಿ ಬಾಳುವವರಾಗಿದ್ದಾರೆ.
1JO 4:17 ನ್ಯಾಯತೀರ್ಪಿನ ದಿನದಲ್ಲಿ ನಮಗೆ ಧೈರ್ಯವಿರುವಂತೆ ನಮ್ಮ ಪ್ರೀತಿಯು ಸಿದ್ಧಿಗೆ ಬಂತು. ಏಕೆಂದರೆ ಯೇಸು ಎಂಥವರಾಗಿದ್ದಾರೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ.
1JO 4:18 ಪ್ರೀತಿಯಲ್ಲಿ ಹೆದರಿಕೆಯಿಲ್ಲ ಆದರೆ ಪೂರ್ಣ ಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಏಕೆಂದರೆ ಭಯವಿರುವಲ್ಲಿ ಯಾತನೆಯಿರುವುದು. ಭಯಪಡುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.
1JO 4:19 ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ದೇವರನ್ನು ಪ್ರೀತಿಸುತ್ತೇವೆ.
1JO 4:20 ಒಬ್ಬನು, “ನಾನು ದೇವರನ್ನು ಪ್ರೀತಿಸುತ್ತೇನೆ,” ಎಂದು ಹೇಳಿ ತನ್ನ ಸಹೋದರರನ್ನು ದ್ವೇಷ ಮಾಡಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು, ಕಾಣದಿರುವ ದೇವರನ್ನು ಪ್ರೀತಿಸಲಾರನು.
1JO 4:21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಸಹೋದರಿಯನ್ನೂ ಪ್ರೀತಿಸಬೇಕೆಂಬ ಈ ಆಜ್ಞೆಯನ್ನು ನಾವು ದೇವರಿಂದ ಹೊಂದಿದ್ದೇವೆ.
1JO 5:1 ಯೇಸುವೇ ಕ್ರಿಸ್ತ ಎಂದು ನಂಬುವ ಪ್ರತಿಯೊಬ್ಬರೂ ದೇವರಿಂದ ಹುಟ್ಟಿದವರಾಗಿದ್ದಾರೆ. ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರನ್ನು ಸಹ ಪ್ರೀತಿಸುತ್ತಾರೆ.
1JO 5:2 ನಾವು ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
1JO 5:3 ದೇವರ ಪ್ರೀತಿ ಏನೆಂದರೆ: ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವುದೇ. ಅವರ ಆಜ್ಞೆಗಳು ಕಠಿಣವಾದವುಗಳಲ್ಲ.
1JO 5:4 ದೇವರಿಂದ ಹುಟ್ಟಿರುವ ಪ್ರತಿಯೊಬ್ಬರು ಲೋಕವನ್ನು ಜಯಿಸುತ್ತಾರೆ. ಲೋಕವನ್ನು ಜಯಿಸುವಂಥದು ನಮ್ಮ ನಂಬಿಕೆಯೇ.
1JO 5:5 ಯೇಸುವು ದೇವಪುತ್ರ ಎಂದು ನಂಬಿದವರೇ ಹೊರತು ಲೋಕವನ್ನು ಜಯಿಸುವವರು ಯಾರು?
1JO 5:6 ಕ್ರಿಸ್ತ ಯೇಸುವೇ ನೀರಿನಿಂದಲೂ ರಕ್ತದಿಂದಲೂ ಬಂದವರು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ ರಕ್ತದಿಂದಲೂ ಬಂದರು, ಇದಕ್ಕೆ ಸಾಕ್ಷಿಕೊಡುವವರು ಪವಿತ್ರಾತ್ಮ ದೇವರೇ, ಏಕೆಂದರೆ ಪವಿತ್ರಾತ್ಮ ದೇವರು ಸತ್ಯವಾಗಿದ್ದಾರೆ.
1JO 5:7 ಇದಲ್ಲದೆ ಸಾಕ್ಷಿಕೊಡುವವರು ಮೂವರಿದ್ದಾರೆ.
1JO 5:8 ಆತ್ಮ, ಜಲ, ರಕ್ತ ಎಂಬ ಮೂರು ಸಾಕ್ಷಿಗಳು ಇವೆ. ಇವು ಕೊಡುವ ಸಾಕ್ಷಿ ಒಂದೇ ಆಗಿರುತ್ತದೆ.
1JO 5:9 ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವುದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಏಕೆಂದರೆ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.
1JO 5:10 ದೇವಪುತ್ರ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟವರು ಆ ಸಾಕ್ಷಿಯನ್ನು ಸ್ವೀಕರಿಸುತ್ತಾರೆ. ದೇವರನ್ನು ನಂಬದವರು ದೇವರನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾರೆ. ಹೇಗೆಂದರೆ ದೇವರು ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅಂಥವರು ನಂಬಿಕೆಯಿಡಲಿಲ್ಲ.
1JO 5:11 ಆ ಸಾಕ್ಷಿ ಯಾವುದೆಂದರೆ: ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಈ ಜೀವವು ದೇವರ ಪುತ್ರ ಕ್ರಿಸ್ತ ಯೇಸುವಿನಲ್ಲಿ ಇದೆ ಎಂಬುದೇ.
1JO 5:12 ಯಾರು ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಹೊಂದಿದ್ದಾರೊ ಅವರಿಗೆ ಜೀವವಿದೆ. ಯಾರಲ್ಲಿ ದೇವರ ಪುತ್ರ ಆಗಿರುವ ಕ್ರಿಸ್ತ ಯೇಸು ಇರುವುದಿಲ್ಲವೋ ಅಂಥವರಿಗೆ ಜೀವವಿಲ್ಲ.
1JO 5:13 ದೇವಪುತ್ರ ಆಗಿರುವವರ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆ ನಾನು ನಿಮಗೆ ಇವುಗಳನ್ನು ಬರೆದಿದ್ದೇನೆ.
1JO 5:14 ದೇವರ ಚಿತ್ತಾನುಸಾರವಾಗಿ ನಾವು ಏನಾದರೂ ಬೇಡಿಕೊಂಡರೆ, ದೇವರು ಕೇಳುತ್ತಾರೆ. ಇದೇ ದೇವರಲ್ಲಿ ನಮಗಿರುವ ನಿಶ್ಚಯ.
1JO 5:15 ನಾವು ಏನು ಬೇಡಿಕೊಂಡರೂ ದೇವರು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾರೆ ಎಂದು ತಿಳಿದಿದ್ದರೆ, ನಾವು ಬೇಡಿದವುಗಳು ನಮಗೆ ದೊರೆಯುತ್ತವೆ ಎಂಬ ದೃಢನಿಶ್ಚಯ ನಮಗಿದೆ.
1JO 5:16 ಮರಣಕರವಲ್ಲದ ಪಾಪವನ್ನು ಮಾಡುವ ಸಹೋದರ ಅಥವಾ ಸಹೋದರಿಯನ್ನು ಯಾರಾದರೂ ಕಂಡರೆ, ಆ ಸಹೋದರ ಅಥವಾ ಸಹೋದರಿಯರಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಅವರಿಗೆ ಜೀವವನ್ನು ದಯಪಾಲಿಸುವರು. ಮರಣಕರವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಮರಣಕರವಾದ ಪಾಪವೂ ಉಂಟು. ಈ ಮರಣಕರವಾದ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ.
1JO 5:17 ಅನೀತಿಯೆಲ್ಲವೂ ಪಾಪವಾಗಿದೆ. ಆದರೂ ಮರಣಕರವಲ್ಲದ ಪಾಪವುಂಟು.
1JO 5:18 ದೇವರಿಂದ ಹುಟ್ಟಿರುವವರು ಪಾಪದಲ್ಲಿ ಮುಂದುವರೆಯುವುದಿಲ್ಲವೆಂಬುದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದವರನ್ನು ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ಅಂಥವರನ್ನು ಕಾಪಾಡುವರು, ಕೆಡುಕನು ಅಂಥವರನ್ನು ಮುಟ್ಟುವುದಿಲ್ಲ.
1JO 5:19 ನಾವು ದೇವರ ಮಕ್ಕಳೆಂದೂ ಲೋಕವೆಲ್ಲವು ಕೆಡುಕನ ನಿಯಂತ್ರಣದಲ್ಲಿ ಇದೆ ಎಂದೂ ನಮಗೆ ಗೊತ್ತಿದೆ.
1JO 5:20 ದೇವರ ಪುತ್ರ ಆಗಿರುವ ಕ್ರಿಸ್ತ ಯೇಸುವು ಬಂದು, ಸತ್ಯವಾಗಿರುವ ದೇವರನ್ನು ನಾವು ಅರಿತುಕೊಳ್ಳುವ ಹಾಗೆ ಅವರು ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾರೆಂದೂ ನಾವು ಸತ್ಯವಾಗಿರುವ ದೇವರಲ್ಲಿ ಅವರ ಪುತ್ರ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವವರಾಗಿದ್ದೇವೆ ಎಂದೂ ನಮಗೆ ಗೊತ್ತಿದೆ. ಈ ಕ್ರಿಸ್ತ ಯೇಸುವೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾರೆ.
1JO 5:21 ಪ್ರಿಯ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.
2JO 1:1 ಸಭಾಹಿರಿಯನಾದ ನಾನು, ನಮ್ಮಲ್ಲಿ ವಾಸಿಸುವ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿ ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ
2JO 1:2 ಸತ್ಯದಲ್ಲಿ ಪ್ರೀತಿಸುವ ದೇವರಿಂದ ಆಯ್ಕೆಯಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಬರೆಯುವುದೇನೆಂದರೆ:
2JO 1:3 ತಂದೆಯಾದ ದೇವರಿಂದಲೂ ಆ ತಂದೆಯ ಪುತ್ರ ಆಗಿರುವ ಕರ್ತ ಕ್ರಿಸ್ತ ಯೇಸುವಿನಿಂದಲೂ ಕೃಪೆಯು, ಕರುಣೆಯು ಮತ್ತು ಶಾಂತಿಯು ಸತ್ಯಪೂರ್ವಕವಾಗಿ ಪ್ರೀತಿಪೂರ್ವಕವಾಗಿ ನಿಮ್ಮೊಂದಿಗಿರಲಿ.
2JO 1:4 ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು.
2JO 1:5 ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿನಗೆ ಬರೆಯುವವನಾಗಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.
2JO 1:6 ದೇವರ ಆಜ್ಞೆಗಳನ್ನು ಅನುಸರಿಸಿ ಬಾಳುವುದೇ ಪ್ರೀತಿ. ಪ್ರೀತಿಯಲ್ಲಿ ಬಾಳಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಅಪ್ಪಣೆಯಾಗಿದೆ.
2JO 1:7 ಏಕೆಂದರೆ ನರಮಾಂಸದಲ್ಲಿ ಬಂದಿರುವ ಕ್ರಿಸ್ತ ಯೇಸುವನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವರೇ ಮೋಸಗಾರರೂ ಕ್ರಿಸ್ತವಿರೋಧಿಗಳೂ ಆಗಿದ್ದಾರೆ.
2JO 1:8 ಪರಿಪೂರ್ಣ ಪ್ರತಿಫಲವನ್ನು ನೀವು ಹೊಂದುವಂತೆ ನಾವು ಪ್ರಯಾಸಪಟ್ಟು ಮಾಡಿದವುಗಳು ನಷ್ಟವಾಗದಂತೆ ಎಚ್ಚರವಹಿಸಿರಿ.
2JO 1:9 ಕ್ರಿಸ್ತ ಯೇಸುವಿನ ಬೋಧನೆಯಲ್ಲಿ ಬಾಳದೆ ಅದನ್ನು ಅತಿಕ್ರಮಿಸುವವರಿಗೆ ದೇವರಿಲ್ಲ. ಕ್ರಿಸ್ತ ಯೇಸುವಿನ ಬೋಧನೆಯಲ್ಲಿ ಬಾಳುವವರಿಗೆ ತಂದೆ ಮತ್ತು ಪುತ್ರ ಇಬ್ಬರೂಇರುತ್ತಾರೆ.
2JO 1:10 ಈ ಬೋಧನೆಯನ್ನು ಒಪ್ಪದಿರುವ ಯಾರಾದರೂ ನಿಮ್ಮ ಬಳಿಗೆ ಬಂದರೆ, ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವರಿಗೆ, “ವಂದನೆ” ಎಂದೂ ಹೇಳಬೇಡಿರಿ.
2JO 1:11 ಏಕೆಂದರೆ ಅವರಿಗೆ “ವಂದನೆ” ಎಂದು ಹೇಳುವವರು ಅವರ ದುಷ್ಕೃತ್ಯಗಳಲ್ಲಿ ಪಾಲುಗಾರರಾಗುತ್ತಾರೆ.
2JO 1:12 ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಮ್ಮ ಸಂತೋಷವು ಪರಿಪೂರ್ಣವಾಗುವುದು.
2JO 1:13 ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ.
3JO 1:1 ಹಿರಿಯನು, ಸತ್ಯದಲ್ಲಿ ಬಹಳವಾಗಿ ಪ್ರೀತಿಸುವ ಗಾಯನಿಗೆ ಬರೆಯುವುದು:
3JO 1:2 ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ನೀನು ಆರೋಗ್ಯವೂ ಅಭಿವೃದ್ಧಿಯೂ ಹೊಂದಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ.
3JO 1:3 ನಿನ್ನಲ್ಲಿ ಸತ್ಯಕ್ಕಾಗಿರುವ ನಂಬಿಗಸ್ತಿಕೆಯ ಕುರಿತು ಸಹೋದರರು ಬಂದು ಸಾಕ್ಷೀಕರಿಸಿದ್ದರಿಂದ ನಾನು ಬಹಳವಾಗಿ ಸಂತೋಷಪಟ್ಟೆನು.
3JO 1:4 ನನ್ನ ಮಕ್ಕಳು ಸತ್ಯವನ್ನು ಅನುಸರಿಸಿ ಬಾಳುತ್ತಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
3JO 1:5 ಪ್ರಿಯ ಸ್ನೇಹಿತನೇ, ಸಹೋದರರಿಗೂ ಪರಿಚಯವಿಲ್ಲದವರಿಗೂ ನೀನು ಮಾಡುವುದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.
3JO 1:6 ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ದೇವರು ಮೆಚ್ಚುವ ರೀತಿಯಲ್ಲಿ ಸಾಗಕಳುಹಿಸಿದರೆ ನೀನು ಒಳ್ಳೆಯದನ್ನು ಮಾಡುತ್ತೀ.
3JO 1:7 ಏಕೆಂದರೆ ಅವರು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ. ಅವಿಶ್ವಾಸಿಗಳಿಂದ ಏನೂ ತೆಗೆದುಕೊಳ್ಳುವವರಲ್ಲ.
3JO 1:8 ಆದ್ದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಉಪಚರಿಸಬೇಕು.
3JO 1:9 ಸಭೆಗೆ ನಾನು ಬರೆದಿದ್ದೆನು. ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮನ್ನು ಅಂಗೀಕರಿಸುವುದಿಲ್ಲ.
3JO 1:10 ಆದಕಾರಣ ನಾನು ಬಂದಾಗ ನಮ್ಮನ್ನು ದೂಷಿಸಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನಾಡುವ ಅವನ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಇದರಲ್ಲಿ ತೃಪ್ತನಾಗದೆ, ಸಹೋದರರನ್ನು ತಾನೂ ಸೇರಿಸಿಕೊಳ್ಳದೆ, ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿ ಮಾಡುತ್ತಾ, ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಿದ್ದಾನೆ.
3JO 1:11 ಪ್ರಿಯ ಸ್ನೇಹಿತನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೆಯದನ್ನು ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ, ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.
3JO 1:12 ದೇಮೇತ್ರಿಯನನ್ನು ಕುರಿತಾಗಿ ಎಲ್ಲರೂ ಒಳ್ಳೆಯದನ್ನೇ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಸತ್ಯವೇ ಅವನ ಪರವಾಗಿ ಸಾಕ್ಷಿಕೊಡುತ್ತದೆ. ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀವು ಬಲ್ಲಿರಿ.
3JO 1:13 ನಾನು ಬರೆಯತಕ್ಕ ಅನೇಕ ವಿಷಯಗಳಿವೆ. ಆದರೆ ಮಸಿ ಮತ್ತು ಲೇಖನಿಗಳಿಂದ ಬರೆಯುವುದಕ್ಕೆ ನನಗಿಷ್ಟವಿಲ್ಲ.
3JO 1:14 ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು.
3JO 1:15 ನಿನಗೆ ಶಾಂತಿ ಇರಲಿ. ನಮ್ಮ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನ್ನು ಹೆಸರು ಹೆಸರಾಗಿ ವಂದಿಸು.
JUD 1:1 ಕ್ರಿಸ್ತ ಯೇಸುವಿನ ದಾಸನೂ ಯಾಕೋಬನ ಸಹೋದರನೂ ಆಗಿರುವ ಯೂದನು, ತಂದೆಯಾದ ದೇವರಿಗೆ ಪ್ರಿಯರಾದವವರಿಗೂ ಕ್ರಿಸ್ತ ಯೇಸು ಸುರಕ್ಷತೆಯನ್ನೂ ಅವರ ಕರೆಯುವಿಕೆಯನ್ನೂ ಹೊಂದಿದವರಿಗೆ ಬರೆಯುವ ಪತ್ರ:
JUD 1:2 ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
JUD 1:3 ಪ್ರಿಯ ಸ್ನೇಹಿತರೇ, ನಾವು ಹಂಚಿಕೊಳ್ಳುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಜಾಗ್ರತೆಯಿಂದ ಪ್ರಯತ್ನ ಮಾಡುತ್ತಿದ್ದಾಗ, ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲಾದ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
JUD 1:4 ಏಕೆಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆಪಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡೆಸುವವರೂ ನಮ್ಮ ಒಬ್ಬರೇ ಕರ್ತ ಆಗಿರುವ ದೇವರನ್ನು ಮತ್ತು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಲ್ಲಗಳೆಯುವ ಕೆಲವು ಜನರೂ ರಹಸ್ಯವಾಗಿ ಸಭೆಯೊಳಗೆ ಹೊಕ್ಕಿದ್ದಾರೆ. ಇವರು ದಂಡನೆಗೋಸ್ಕರ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ.
JUD 1:5 ಇದನ್ನು ನೀವು ಈಗಾಗಲೇ ಒಂದು ಸಾರಿ ತಿಳಿದವರಾಗಿದ್ದೀರಿ. ಆದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವುದೆಂದರೆ: ಕರ್ತದೇವರು ತಮ್ಮ ಪ್ರಜೆಯನ್ನು ಈಜಿಪ್ಟ್ ದೇಶದೊಳಗಿಂದ ರಕ್ಷಿಸಿದರೂ ತರುವಾಯ ಅವರೊಳಗೆ ನಂಬದೆ ಹೋದವರನ್ನು ಸಂಹಾರ ಮಾಡಿದರು.
JUD 1:6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ಅವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿಟ್ಟಿದ್ದಾರೆ.
JUD 1:7 ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ.
JUD 1:8 ಹಾಗೆಯೇ ಈ ದುಃಸ್ವಪ್ನದವರೂ ಶರೀರವನ್ನು ಮಲಿನಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆಮಾಡುವವರೂ ದೇವದೂತರುಗಳನ್ನು ದೂಷಿಸುವವರೂ ಆಗಿದ್ದಾರೆ.
JUD 1:9 ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು, ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ, ಅವನು ಸೈತಾನನನ್ನು ದೂಷಿಸುವುದಕ್ಕೆ ಧೈರ್ಯಗೊಳ್ಳದೆ, “ಕರ್ತದೇವರು ನಿನ್ನನ್ನು ಗದರಿಸಲಿ!” ಎಂದನು.
JUD 1:10 ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ. ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
JUD 1:11 ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವುದಕ್ಕಾಗಿ ಬಿಳಾಮನ ದೋಷವನ್ನು ಮಾಡುವುದಕ್ಕೆ ದುರಾಶೆಯಿಂದ ಓಡುವವರಾಗಿದ್ದಾರೆ. ಅವರು ಕೋರಹನಂತೆ ಎದುರು ಮಾತನಾಡಿ ನಾಶವಾಗುವವರಾಗಿದ್ದಾರೆ. ಆದ್ದರಿಂದ ಅವರ ಗತಿ ಏನೆಂದು ಹೇಳಲಿ!
JUD 1:12 ಕಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಚದುರಿ ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತು, ಹಣ್ಣು ಬಿಡದೆ ಒಣಗಿ ಹೋಗಿ ಬೇರುಸಹಿತ ಕಿತ್ತು ಬಿದ್ದ ಮರಗಳೂ
JUD 1:13 ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೆ ಇಡಲಾಗಿದೆ.
JUD 1:14 ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ, “ಇಗೋ, ಕರ್ತದೇವರು ತಮ್ಮ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು
JUD 1:15 ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು.
JUD 1:16 ಇವರು ಗೊಣಗುಟ್ಟುವವರೂ ದೂರುವವರೂ ತಮ್ಮ ದುರಾಶೆಗಳನ್ನು ಅನುಸರಿಸಿ ನಡೆಯುವವರೂ ಆಗಿದ್ದಾರೆ. ಇವರ ಬಾಯಿಂದ ದೊಡ್ಡ ದೊಡ್ಡ ಮಾತುಗಳು ಉದುರುತ್ತವೆ. ಇವರು ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ.
JUD 1:17 ಪ್ರಿಯ ಸ್ನೇಹಿತರೇ, ನೀವಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
JUD 1:18 “ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅಪೊಸ್ತಲರು ನಿಮಗೆ ಹೇಳಿದರು.
JUD 1:19 ಇವರು ನಿಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವವರೂ ಪ್ರಾಪಂಚಿಕ ಮನುಷ್ಯರೂ ಪವಿತ್ರಾತ್ಮ ದೇವರಿಲ್ಲದವರೂ ಆಗಿದ್ದಾರೆ.
JUD 1:20 ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯಲ್ಲಿ ನಿಮ್ಮನ್ನು ನಿರ್ಮಿಸಿಕೊಂಡವರಾಗಿ ಪರಿಶುದ್ಧಾತ್ಮ ದೇವರಲ್ಲಿ ಪ್ರಾರ್ಥಿಸಿರಿ.
JUD 1:21 ನಿತ್ಯಜೀವಕ್ಕಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕರುಣೆಗೋಸ್ಕರ ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.
JUD 1:22 ಸಂಶಯಪಡುವ ಕೆಲವರಿಗೆ ಕನಿಕರವನ್ನು ತೋರಿಸಿರಿ.
JUD 1:23 ಬೇರೆಯವರನ್ನು ಬೆಂಕಿಯಿಂದ ಎಳೆದು ರಕ್ಷಿಸಿರಿ. ಭಯದಿಂದ ಕರುಣೆ ತೋರಿಸಿರಿ. ಪಾಪ ಕೃತ್ಯಗಳಿಂದ ಮೈಲಿಗೆಯಾದ ಅವರ ಜೀವನವನ್ನು ಸಹ ಹಗೆ ಮಾಡಿರಿ.
JUD 1:24 ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತಮ್ಮ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ಅತ್ಯಂತ ಹರ್ಷದೊಡನೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತರಾಗಿರುವ
JUD 1:25 ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್.
REV 1:1 ಇದು ಕ್ರಿಸ್ತ ಯೇಸುವಿನ ಪ್ರಕಟನೆ. ಶೀಘ್ರವೇ ಸಂಭವಿಸಲಿಕ್ಕಿರುವ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದರು. ಇದಲ್ಲದೆ ದೇವರು ತಮ್ಮ ದೇವದೂತನನ್ನು ಕಳುಹಿಸಿ, ಅವನ ಮುಖಾಂತರ ಆ ಸಂಗತಿಗಳನ್ನು ತಮ್ಮ ದಾಸನಾದ ಯೋಹಾನನಿಗೆ ತಿಳಿಸಿದರು.
REV 1:2 ಯೋಹಾನನು ತಾನು ಕಂಡ ಎಲ್ಲಾ ಸಂಗತಿಗಳನ್ನು ಅಂದರೆ ದೇವರ ವಾಕ್ಯದ ವಿಷಯವಾಗಿಯೂ ಕ್ರಿಸ್ತ ಯೇಸುವಿನ ವಿಷಯವಾಗಿಯೂ ತಿಳಿಸಿ ಸಾಕ್ಷಿಕೊಟ್ಟನು.
REV 1:3 ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.
REV 1:4 ಯೋಹಾನನು, ಅಂದಿನ ಏಷ್ಯಾ ಪ್ರಾಂತದಲ್ಲಿರುವ ಏಳು ಸಭೆಗಳಿಗೆ ಬರೆಯುವುದೇನೆಂದರೆ, ಗತಕಾಲ, ವರ್ತಮಾನ, ಭವಿಷ್ಯತ್ ಕಾಲಗಳಲ್ಲಿರುವ ದೇವರಿಂದ ಮತ್ತು ತಮ್ಮ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ,
REV 1:5 ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.
REV 1:6 ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್.
REV 1:7 “ಇಗೋ, ಯೇಸು ಮೇಘಗಳೊಂದಿಗೆ ಬರುತ್ತಾರೆ,” ಮತ್ತು “ಎಲ್ಲರ ಕಣ್ಣುಗಳು ಅವರನ್ನು ಕಾಣುವವು, ಅವರನ್ನು ಇರಿದವರು ಸಹ ಕಾಣುವರು.” ಭೂಲೋಕದಲ್ಲಿರುವ ಎಲ್ಲಾ ಜನರು, “ಅವರ ದೆಸೆಯಿಂದ ಗೋಳಾಡುವರು.”
REV 1:8 “ನಾನೇ ಆದಿಯೂ ಅಂತ್ಯವೂ ಗತಕಾಲ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿರುವವನೂ ಮತ್ತು ಸರ್ವಶಕ್ತನೂ ಆಗಿದ್ದೇನೆ,” ಎಂದು ಕರ್ತದೇವರು ಹೇಳುತ್ತಾರೆ.
REV 1:9 ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಆಗುವ ಬಾಧೆಯಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
REV 1:10 ನಾನು ಕರ್ತ ಯೇಸುವಿನ ದಿನದಲ್ಲಿ ಆತ್ಮಭರಿತನಾಗಿರಲು ನನ್ನ ಹಿಂದೆ ತುತೂರಿಯ ಶಬ್ದದಂತಿರುವ ಮಹಾಧ್ವನಿಯನ್ನು ಕೇಳಿದೆನು.
REV 1:11 ಅದು, “ಕಾಣುತ್ತಿರುವುದನ್ನು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸಬೇಕು,” ಎಂದು ನುಡಿಯಿತು.
REV 1:12 ನನ್ನೊಂದಿಗೆ ಮಾತನಾಡುತ್ತಿದ್ದ ಧ್ವನಿಯು ಯಾರದೆಂದು ನೋಡುವುದಕ್ಕೆ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ
REV 1:13 ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಪುತ್ರ ಇವರ ಹಾಗೆ ಒಬ್ಬ ವ್ಯಕ್ತಿ ಇರುವವರನ್ನೂ ಕಂಡೆನು. ಅವರು ಪಾದದವರೆಗೆ ಮುಚ್ಚುವ ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದರು.
REV 1:14 ಅವರ ತಲೆ ಕೂದಲುಗಳು ಬಿಳಿಯ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿದ್ದವು. ಅವರ ನೇತ್ರಗಳು ಬೆಂಕಿಯ ಜ್ವಾಲೆಯಂತೆಯೂ
REV 1:15 ಅವರ ಪಾದಗಳು ಕುಲುಮೆಯಲ್ಲಿ ಹೊಳೆಯುವ ತಾಮ್ರದಂತೆಯೂ ಅವರ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
REV 1:16 ಅವರು ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿದ್ದರು. ಅವರ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಅವರ ಮುಖವು ಸೂರ್ಯನ ತೇಜಸ್ಸಿನಂತೆ ಪ್ರಕಾಶಿಸುವಂತಿತ್ತು.
REV 1:17 ನಾನು ಅವರನ್ನು ಕಂಡಾಗ ಸತ್ತವನ ಹಾಗೆ ಅವರ ಪಾದಗಳ ಮೇಲೆ ಬಿದ್ದೆನು. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, “ಭಯಪಡಬೇಡ, ನಾನು ಮೊದಲನೆಯವನೂ ಕಡೆಯವನೂ
REV 1:18 ಸದಾ ಜೀವಿಸುವವನೂ ಆಗಿದ್ದೇನೆ. ಮರಣ ಹೊಂದಿದ್ದೆನು, ಇಗೋ, ಯುಗಯುಗಾಂತರಗಳಲ್ಲಿಯೂ ನಾನು ಬದುಕುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನ ಬಳಿ ಇವೆ.
REV 1:19 “ಆದ್ದರಿಂದ ನೀನು ಕಂಡದ್ದವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಸಂಭವಿಸುವವುಗಳನ್ನೂ ಬರೆ.
REV 1:20 ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ರಹಸ್ಯ ಏನೆಂದರೆ: ಆ ಏಳು ನಕ್ಷತ್ರಗಳು, ಆ ಏಳು ಸಭೆಗಳ ಸಂದೇಶಕರು, ಆ ಏಳು ದೀಪಸ್ತಂಭಗಳು, ಆ ಏಳು ಸಭೆಗಳಾಗಿರುತ್ತವೆ.
REV 2:1 “ನೀನು ಎಫೆಸದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು, ಏಳು ಚಿನ್ನದ ದೀಪಸ್ತಂಭಗಳ ನಡುವೆ ನಡೆದಾಡುವವರು ಹೇಳುವುದೇನೆಂದರೆ:
REV 2:2 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ಪ್ರಯಾಸ, ಸಹನೆಯನ್ನು ಬಲ್ಲೆನು. ನೀನು ದುಷ್ಟರನ್ನು ಸಹಿಸಲಾರೆ. ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.
REV 2:3 ನೀನು ತಾಳ್ಮೆಯಿಂದ ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡು ಬೇಸರಗೊಳ್ಳಲಿಲ್ಲ.
REV 2:4 ಆದರೂ ನೀನು ನಿನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ ಎಂದು ನಿನ್ನ ವಿರುದ್ಧವಾಗಿ ಹೇಳುತ್ತೇನೆ.
REV 2:5 ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ, ಅದನ್ನು ಜ್ಞಾಪಿಸಿಕೊಂಡು ಪಶ್ಚಾತ್ತಾಪಪಡು. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನಿನ್ನ ಮನಸ್ಸು ಪರಿವರ್ತನೆ ಹೊಂದದಿದ್ದರೆ, ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು.
REV 2:6 ಆದರೆ ನಿನ್ನಲ್ಲಿ ಒಳ್ಳೆಯದು ಒಂದುಂಟು. ಅದೇನೆಂದರೆ ನಾನು ಹಗೆ ಮಾಡುವ ನಿಕೊಲಾಯಿತರ ಕೃತ್ಯಗಳನ್ನು ನೀನೂ ಸಹ ಹಗೆ ಮಾಡುತ್ತೀ.
REV 2:7 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು, ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ದೇವರ ಪರಲೋಕದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನಲು ಕೊಡುವೆನು.
REV 2:8 “ಸ್ಮುರ್ನದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಮೊದಲನೆಯವರೂ ಕೊನೆಯವರೂ ಮರಣಹೊಂದಿ, ಜೀವಂತವಾಗಿ ಎದ್ದು ಬಂದವರು ಹೇಳುವುದೇನೆಂದರೆ:
REV 2:9 ನಾನು ನಿನ್ನ ಸಂಕಟವನ್ನೂ ನಿನ್ನ ದಾರಿದ್ರ್ಯವನ್ನೂ ಬಲ್ಲೆನು. ಆದರೂ ನೀನು ಸಿರಿವಂತನೇ! ಮಾತ್ರವಲ್ಲದೇ ಅವರು ಯೆಹೂದ್ಯರಲ್ಲದಿದ್ದರೂ ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನೂ ಬಲ್ಲೆನು. ಅವರು ಸೈತಾನನ ಸಭಾಮಂದಿರದವರಾಗಿದ್ದಾರೆ.
REV 2:10 ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಭಯಪಡಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು, ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕೆ ಇದ್ದಾನೆ. ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವವರೆಗೆ ನಂಬಿಗಸ್ತನಾಗಿರು. ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು.
REV 2:11 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಜಯ ಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
REV 2:12 “ಪೆರ್ಗಮದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಹರಿತವಾದ ಇಬ್ಬಾಯಿಕತ್ತಿಯನ್ನು ಹಿಡಿದವರು ಹೇಳುವುದೇನೆಂದರೆ:
REV 2:13 ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು, ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ. ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನನ್ನು ಕೊಲ್ಲಲಾದ ದಿನಗಳಲ್ಲಿಯೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ಅಲ್ಲಗಳೆಯಲಿಲ್ಲ.
REV 2:14 ಆದರೂ ನಿನಗೆ ವಿರೋಧವಾಗಿ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ ವ್ಯಭಿಚಾರ ಮಾಡುವುದರಲ್ಲಿಯೂ ಇಸ್ರಾಯೇಲರು ಮುಗ್ಗರಿಸಿ ಬೀಳುವಂತೆ ಬಿಳಾಮನು ಬಾಲಾಕನಿಗೆ ಕಲಿಸಿದ ಬೋಧನೆಯನ್ನು ಹಿಡಿದುಕೊಂಡಿರುವವರು ನಿನ್ನಲ್ಲಿದ್ದಾರೆ.
REV 2:15 ಹಾಗೆಯೇ, ನಿಕೊಲಾಯಿತರ ಬೋಧನೆಯನ್ನು ಹಿಡಿದುಕೊಂಡಿರುವವರೂ ನಿನ್ನಲ್ಲಿದ್ದಾರೆ.
REV 2:16 ಆದ್ದರಿಂದ ನೀನು ದೇವರ ಕಡೆಗೆ ತಿರುಗಿಕೋ! ಇಲ್ಲದಿದ್ದರೆ ನಾನು ಶೀಘ್ರವೇ ನಿನ್ನ ಬಳಿಗೆ ಬಂದು ನನ್ನ ಇಬ್ಬಾಯಿ ಕತ್ತಿಯಿಂದ ಅವರ ಮೇಲೆ ಯುದ್ಧಮಾಡುವೆನು.
REV 2:17 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ಬಚ್ಚಿಟ್ಟಿರುವ ಮನ್ನಾವನ್ನು ಕೊಡುವೆನು. ಇದಲ್ಲದೆ ಅವರಿಗೆ ಬಿಳಿಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು. ಆ ಹೆಸರನ್ನು ಹೊಂದಿದವನಿಗೇ ಹೊರತು, ಅದು ಮತ್ತಾರಿಗೂ ತಿಳಿಯದು.
REV 2:18 “ಥುವತೈರದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಬೆಂಕಿಯ ಜ್ವಾಲೆಯಂತಿರುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಪುತ್ರ ಆಗಿರುವವರು ಹೇಳುವುದೇನೆಂದರೆ:
REV 2:19 ನಾನು ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ನೀನು ಮೊದಲು ಮಾಡಿದ್ದಕ್ಕಿಂತಲೂ ಈಗ ಹೆಚ್ಚಾಗಿ ಮಾಡುತ್ತಿರುವೆ.
REV 2:20 ಆದರೆ ನಿನ್ನ ಮೇಲೆ ಒಂದು ತಪ್ಪು ಹೊರಿಸಬೇಕಾಗುತ್ತದೆ. ಅದೇನೆಂದರೆ, ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ವ್ಯಭಿಚಾರ ಮಾಡಬಹುದೆಂದೂ ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಬಿಟ್ಟಿರುವುದು.
REV 2:21 ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು. ಆದರೆ ದೇವರ ಕಡೆಗೆ ತಿರುಗಿಕೊಂಡು ತನ್ನ ವ್ಯಭಿಚಾರವನ್ನು ಬಿಟ್ಟುಬಿಡಲು ಅವಳಿಗೆ ಮನಸ್ಸಿಲ್ಲ.
REV 2:22 ಇಗೋ, ಅವಳು ಹಾಸಿಗೆಯಲ್ಲಿ ಬಾಧೆಯಿಂದ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರ ಮಾಡುವವರು ತಮ್ಮ ಹೃದಯದಲ್ಲೂ ಮನಸ್ಸಿನಲ್ಲೂ ಪಶ್ಚಾತ್ತಾಪಪಟ್ಟು ತಮ್ಮ ಕೃತ್ಯಗಳನ್ನು ಬಿಟ್ಟುಬಿಡದೆ ಹೋದರೆ, ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.
REV 2:23 ಅವಳ ಮಕ್ಕಳನ್ನು ಮರಣಕ್ಕೆ ಒಪ್ಪಿಸುವೆನು. ಆಗ ನಾನು ಮನುಷ್ಯರ ಅಂತರಿಂದ್ರಿಯವನ್ನೂ ಹೃದಯವನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ತಿಳಿದುಬರುವುದು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು.
REV 2:24 ಥುವತೈರದಲ್ಲಿರುವ ಉಳಿದವರಿಗೆ ನಾನು ಹೇಳುವುದೇನಂದರೆ: ಅವಳ ಬೋಧನೆಯನ್ನು ನೀವು ಅವಲಂಬಿಸಲಿಲ್ಲ. ಸೈತಾನನ ಆಳವಾದ ರಹಸ್ಯ ಬೋಧನೆಗಳು ಎಂದು ಹೇಳುವ ಬೋಧನೆಯನ್ನು ನೀವು ಅವಲಂಬಿಸಲಿಲ್ಲ.
REV 2:25 ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಬೇಕೆಂಬ ಅಪ್ಪಣೆಯನ್ನೇ ಹೊರತು ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲವೆಂಬುದೇ.
REV 2:26 ಯಾರು ಜಯಶಾಲಿಯಾಗಿದ್ದು, ನನ್ನ ಚಿತ್ತವನ್ನು ಅಂತ್ಯದವರೆಗೂ ಯಾರು ನಡೆಸುತ್ತಾರೋ, ಅವರಿಗೆ ನಾನು ರಾಷ್ಟ್ರಗಳ ಮೇಲೆ ಅಧಿಕಾರವನ್ನು ನೀಡುವೆನು.
REV 2:27 ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ, ‘ಅವರು ಕಬ್ಬಿಣದ ಕೋಲಿನಿಂದ ರಾಷ್ಟ್ರಗಳನ್ನು ಆಳುವರು. ಮಣ್ಣಿನ ಮಡಿಕೆಗಳು ಒಡೆಯುವಂತೆ ಬಲ ಮುರಿದು ಹೋಗುವುದು.’
REV 2:28 ನಾನು ಅಂಥವರಿಗೆ ಉದಯಸೂಚಕ ತಾರೆಯನ್ನು ಅವರಿಗೆ ಕೊಡುವೆನು.
REV 2:29 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕೇಳಲು ಇಷ್ಟ ಉಳ್ಳವರು ಕೇಳಲಿ.
REV 3:1 “ಸಾರ್ದಿಸಿನಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ದೇವರ ಏಳು ಆತ್ಮಗಳನ್ನೂ ಏಳು ನಕ್ಷತ್ರಗಳನ್ನೂ ಹಿಡಿದುಕೊಂಡಿರುವವರು ಹೇಳುವುದೇನೆಂದರೆ: ನಾನು ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು. ಜೀವಿಸುವವನು ಎಂಬ ಹೆಸರು ನಿನಗಿದ್ದರೂ ಸತ್ತವನಾಗಿದ್ದೀಯೆ.
REV 3:2 ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ನನಗೆ ಪರಿಪೂರ್ಣವಾಗಿ ಕಂಡುಬರಲಿಲ್ಲ.
REV 3:3 ಆದ್ದರಿಂದ ನೀನು ಹೊಂದಿದ ಉಪದೇಶವನ್ನೂ ಕೇಳಿದ ರೀತಿಯನ್ನೂ ಜ್ಞಾಪಿಸಿಕೊಂಡು, ಅದನ್ನು ಕೈಕೊಳ್ಳುವವನಾಗಿ ಪಶ್ಚಾತ್ತಾಪಪಡು, ನೀನು ಎಚ್ಚರವಾಗಿರದಿದ್ದರೆ, ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಎಂದು ನಿನಗೆ ಯಾವ ರೀತಿಯಲ್ಲಿಯೂ ತಿಳಿಯದು.
REV 3:4 ಆದರೂ ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಕೆಲವು ಜನರು ಸಾರ್ದಿಸಿ ಪಟ್ಟಣದಲ್ಲಿ ಇದ್ದಾರೆ, ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.
REV 3:5 ಜಯಹೊಂದುವವರಿಗೆ ಹೀಗೆ ಬಿಳಿಯ ವಸ್ತ್ರಗಳನ್ನು ಹೊದಿಸಲಾಗುವುದು. ಅವರ ಹೆಸರನ್ನು ಜೀವಬಾಧ್ಯರ ಪಟ್ಟಿಯಿಂದ ನಾನು ಅಳಿಸಿಬಿಡದೆ, ಅವರ ಹೆಸರನ್ನು ನನ್ನ ತಂದೆಯ ಮುಂದೆಯೂ ಅವರ ದೂತರ ಮುಂದೆಯೂ ಅರಿಕೆ ಮಾಡುವೆನು.
REV 3:6 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.
REV 3:7 “ಫಿಲದೆಲ್ಫಿಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಪರಿಶುದ್ಧರೂ ಸತ್ಯವಂತರೂ ದಾವೀದನ ಬೀಗದ ಕೈಯುಳ್ಳವರೂ ಯಾರೂ ಮುಚ್ಚದಂತೆ ತೆರೆಯುವವರೂ ಯಾರೂ ತೆರೆಯದಂತೆ ಮುಚ್ಚುವವರೂ ಆಗಿರುವವರು ಹೇಳುವುದೇನೆಂದರೆ:
REV 3:8 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನಿನ್ನ ಶಕ್ತಿಯು ಸ್ವಲ್ಪವೇ ಆಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿಕೊಂಡಿದ್ದರಿಂದ, ನಿನ್ನೆದುರಿನಲ್ಲಿ ಒಂದು ದ್ವಾರವನ್ನು ತೆರೆದಿಟ್ಟಿದ್ದೇನೆ, ಅದನ್ನು ಯಾರೂ ಮುಚ್ಚಲಾರರು.
REV 3:9 ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದಿಂದ ಕೆಲವರು ಬಂದು ನಿನ್ನ ಪಾದಕ್ಕೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳಿಯುವಂತೆಯೂ ಮಾಡುವೆನು.
REV 3:10 ನೀನು ನನ್ನ ವಾಕ್ಯವನ್ನು ಸಹನೆಯಿಂದ ಕಾಪಾಡಿಕೊಂಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸಲು ಇಡೀ ಲೋಕದಲ್ಲೆಲ್ಲಾ ಬರಲಿರುವ ಶೋಧನೆಯ ಸಮಯದಲ್ಲಿ ನಾನು ಸಹ ನಿನ್ನನ್ನು ಸುರಕ್ಷಿತವಾಗಿಡುವೆನು.
REV 3:11 ನಾನು ಬೇಗ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ಅಪಹರಿಸದಂತೆ ನಿನಗಿರುವುದನ್ನು ಹಿಡಿದುಕೊಂಡಿರು.
REV 3:12 ಯಾರು ಜಯ ಹೊಂದುತ್ತಾರೋ, ಅವರನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಸ್ಥಾಪಿಸುವೆನು. ಅವರು ಎಂದಿಗೂ ಅದರೊಳಗಿಂದ ಹೊರಗೆ ಹೋಗುವುದಿಲ್ಲ. ನಾನು ನನ್ನ ದೇವರ ಹೆಸರನ್ನು ಪರಲೋಕದಲ್ಲಿರುವ ನನ್ನ ದೇವರಿಂದ ಇಳಿದು ಬರುವ ಹೊಸ ಯೆರೂಸಲೇಮಿನ ಹೆಸರನ್ನೂ ಹಾಗೂ ನನ್ನ ಹೊಸ ಹೆಸರನ್ನೂ ಅವರ ಮೇಲೆ ಬರೆಯುವೆನು.
REV 3:13 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.
REV 3:14 “ಲವೊದಿಕೀಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಆಮೆನ್ ಎಂಬವರೂ ನಂಬಿಗಸ್ತರೂ ಸತ್ಯಸಾಕ್ಷಿಯೂ ದೇವರಿಂದಾದ ಸೃಷ್ಟಿಗೆ ಒಡೆಯರೂ ಆಗಿರುವವರು ಹೇಳುವುದೇನೆಂದರೆ:
REV 3:15 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ, ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು.
REV 3:16 ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು.
REV 3:17 ಏಕೆಂದರೆ ನೀನು ನಿನ್ನ ವಿಷಯದಲ್ಲಿ, ‘ನಾನು ಐಶ್ವರ್ಯವಂತನು, ನಾನು ಸಂಪಾದಕನಾಗಿದ್ದೇನೆ ಮತ್ತು ಕೊರತೆ ನನಗಿಲ್ಲ,’ ಎಂದು ಹೇಳಿಕೊಳ್ಳುತ್ತಿ. ಆದರೆ ನೀನು ಕೇವಲ ದುರವಸ್ಥೆಯುಳ್ಳವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾದವನು ಎಂಬುದನ್ನು ತಿಳಿಯದೆ ಇದ್ದೀ.
REV 3:18 ನೀನು ಸಿರಿವಂತನಾಗುವಂತೆ ಬೆಂಕಿಯಲ್ಲಿ ಪುಟಕ್ಕೆ ಹಾಕಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ ಬಿಳಿ ವಸ್ತ್ರಗಳನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಮುಲಾಮನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ.
REV 3:19 ನಾನು ಯಾರನ್ನು ಪ್ರೀತಿಸುತ್ತೇನೋ, ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಆಸಕ್ತನಾಗಿರು, ಪಶ್ಚಾತ್ತಾಪಪಡು.
REV 3:20 ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ. ಯಾರಾದರೂ ನನ್ನ ಸ್ವರವನ್ನು ಕೇಳಿ, ಬಾಗಿಲನ್ನು ತೆರೆದರೆ, ನಾನು ಪ್ರವೇಶ ಮಾಡಿ, ಆ ವ್ಯಕ್ತಿಯ ಸಂಗಡ ಊಟಮಾಡುವೆನು. ಅವರೂ ನನ್ನ ಸಂಗಡ ಊಟಮಾಡುವರು.
REV 3:21 ನಾನು ಜಯಹೊಂದಿ, ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆ, ಜಯಶಾಲಿಯಾದವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು.
REV 3:22 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.”
REV 4:1 ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
REV 4:2 ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.
REV 4:3 ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.
REV 4:4 ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.
REV 4:5 ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.
REV 4:6 ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
REV 4:7 ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.
REV 4:8 ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು:
REV 4:9 ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ,
REV 4:10 ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,
REV 4:11 “ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.
REV 5:1 ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯಲ್ಲಿ ಒಂದು ಚರ್ಮದ ಸುರುಳಿಯನ್ನು ಕಂಡೆನು. ಅದರ ಒಳಗೂ ಹಿಂಭಾಗದಲ್ಲಿಯೂ ಬರೆಯಲಾಗಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
REV 5:2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು, “ಈ ಸುರುಳಿಯ ಮುದ್ರೆಗಳನ್ನು ಬರೆಯುವುದಕ್ಕೂ ಅದನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಧ್ವನಿಯಿಂದ ಕೂಗುವುದನ್ನು ಕಂಡೆನು.
REV 5:3 ಆದರೆ ಆ ಸುರುಳಿಯನ್ನು ಬಿಚ್ಚಲು ಇಲ್ಲವೆ ಅದರಲ್ಲಿ ನೋಡಲು ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾವ ವ್ಯಕ್ತಿಗೂ ಆಗಲಿಲ್ಲ.
REV 5:4 ಆಗ ಸುರುಳಿಯನ್ನು ಬಿಚ್ಚುವುದಕ್ಕಾಗಲಿ, ಅದರಲ್ಲಿ ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅತ್ತೆನು.
REV 5:5 ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜರೂ ಆಗಿರುವವರು ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೆ ಜಯವೀರರಾಗಿದ್ದಾರೆ,” ಎಂದು ಹೇಳಿದನು.
REV 5:6 ಆಗ ನಾನು, ಸಿಂಹಾಸನದ ಮಧ್ಯದಲ್ಲಿಯೂ ನಾಲ್ಕು ಜೀವಿಗಳು ಮತ್ತು ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ಬಲಿಗೋಸ್ಕರ ವಧೆಯಾಗಿದ್ದಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಭೂಮಿಯ ಮೇಲೆಲ್ಲಾ ಕಳುಹಿಸಲಾದ ದೇವರ ಏಳು ಆತ್ಮಗಳು.
REV 5:7 ಆ ಕುರಿಮರಿ ಆಗಿರುವವರು ಬಂದು ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯೊಳಗಿಂದ ಸುರುಳಿಯನ್ನು ತೆಗೆದುಕೊಂಡರು.
REV 5:8 ಸುರುಳಿಯನ್ನು ತೆಗೆದುಕೊಂಡಾಗ, ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿ ಆಗಿರುವವರ ಮುಂದೆ ಅಡ್ಡಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.
REV 5:9 ಅವರು ಹೊಸಹಾಡನ್ನು ಹಾಡುತ್ತಾ, “ನೀವು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ನೀವು ವಧಿತರಾಗಿ, ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿರುವಿರಿ.
REV 5:10 ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿರಿ, ಅವರು ಭೂಮಿಯ ಮೇಲೆ ಆಳುವರು!” ಎಂದು ಹೇಳಿದರು.
REV 5:11 ಇದಲ್ಲದೆ ನಾನು ನೋಡಲಾಗಿ, ಸಿಂಹಾಸನದ ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
REV 5:12 ಅವರು, ಮಹಾಧ್ವನಿಯಿಂದ: “ವಧಿತರಾದ ಕುರಿಮರಿ ಆಗಿರುವವರು ಶಕ್ತಿ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಗೌರವ, ಮಹಿಮೆ, ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯರು!” ಎಂದು ಹೇಳಿದರು.
REV 5:13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗಡೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಹೀಗೆ ಹೇಳುವುದನ್ನು ಕೇಳಿದೆನು: “ಸಿಂಹಾಸನದ ಮೇಲೆ ಕುಳಿತಿರುವವರಿಗೂ ಕುರಿಮರಿ ಆಗಿರುವವರಿಗೂ ಸ್ತೋತ್ರ, ಗೌರವ, ಮಹಿಮೆ, ಶಕ್ತಿ,
REV 5:14 ಆಗ ನಾಲ್ಕು ಜೀವಿಗಳು, “ಆಮೆನ್,” ಎಂದವು. ಹಿರಿಯರು ಅಡ್ಡಬಿದ್ದು ಆರಾಧಿಸಿದರು.
REV 6:1 ಏಳು ಮುದ್ರೆಗಳಲ್ಲಿ ಒಂದನ್ನು ಯಜ್ಞದ ಕುರಿಮರಿ ಆಗಿರುವವರು ತೆರೆಯುವುದನ್ನು ನಾನು ಕಂಡೆನು. ಆ ಜೀವಿಗಳಲ್ಲೊಂದು ಗುಡುಗಿನಂತಿದ್ದ ಶಬ್ದದಲ್ಲಿ, “ಬಾ!” ಎಂದು ಹೇಳುವುದನ್ನು ಕೇಳಿದೆನು.
REV 6:2 ನಾನು ನೋಡಲು, ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಸವಾರಿ ಮಾಡುವವನು ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲಾಗಿತ್ತು. ಅವನು ಜಯಿಸುವವನಾಗಿ ಜಯಿಸುವುದಕ್ಕೊಸ್ಕರ ಹೊರಟನು.
REV 6:3 ಕುರಿಮರಿ ಆಗಿರುವವರು ಎರಡನೆಯ ಮುದ್ರೆಯನ್ನು ತೆರೆದಾಗ, ಎರಡನೆಯ ಜೀವಿಯು, “ಬಾ” ಎಂದು ಹೇಳುವುದನ್ನು ಕೇಳಿದೆನು.
REV 6:4 ಆಗ ಕೆಂಪು ಬಣ್ಣದ ಬೇರೊಂದು ಕುದುರೆಯು ಹೊರಟು ಬಂದಿತು. ಅದರ ಸವಾರನಿಗೆ ಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವುದಕ್ಕೂ ಅಧಿಕಾರವು ಕೊಡಲಾಗಿತ್ತು. ಅವನಿಗೆ ದೊಡ್ಡ ಕತ್ತಿಯು ಸಹ ಕೊಡಲಾಗಿತ್ತು.
REV 6:5 ಕುರಿಮರಿ ಆಗಿರುವವರು ಮೂರನೆಯ ಮುದ್ರೆಯನ್ನು ತೆರೆದಾಗ, ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ಕೇಳಿದೆನು. ನಾನು ನೋಡಲು, ಕಪ್ಪಾದ ಒಂದು ಕುದುರೆಯನ್ನು ಕಂಡೆನು. ಅದರ ಸವಾರನು ತನ್ನ ಕೈಯಲ್ಲಿ ಒಂದು ತಕ್ಕಡಿಯನ್ನು ಹಿಡಿದಿದ್ದನು.
REV 6:6 ಆಗ ನಾನು ನಾಲ್ಕು ಜೀವಿಗಳ ಮಧ್ಯದಿಂದ ಬಂದಂತೆ ಒಂದು ಧ್ವನಿಯನ್ನು ಕೇಳಿದೆನು. ಅದು, “ದಿನದ ಕೂಲಿಗೆ ಒಂದು ಕಿಲೋಗ್ರಾಂ ಗೋಧಿ, ಮೂರು ಕಿಲೋಗ್ರಾಂ ಜವೆಗೋಧಿ, ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದಿತು.
REV 6:7 ಕುರಿಮರಿ ಆಗಿರುವವರು ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿಯು, “ಬಾ” ಎಂದು ಕರೆಯುವ ಧ್ವನಿಯನ್ನು ಕೇಳಿದೆನು.
REV 6:8 ನಾನು ನೋಡಲು, ಒಂದು ನಸು ಹಸಿರು ಬಣ್ಣದ ಕುದುರೆ ಕಾಣಿಸಿತು. ಅದರ ಸವಾರನಿಗೆ ಮೃತ್ಯುವೆಂದು ಹೆಸರಿತ್ತು. ಪಾತಾಳವೆಂಬವನು ಅವನ ಹಿಂದೆ ಹೋಗುತ್ತಿದ್ದನು. ಅವರಿಗೆ ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಕತ್ತಿ, ಕ್ಷಾಮ, ಮರಣ ಮತ್ತು ಭೂಮಿಯ ಕ್ರೂರಮೃಗಗಳಿಂದ ಕೊಲ್ಲುವ ಅಧಿಕಾರಕೊಡಲಾಗಿತ್ತು.
REV 6:9 ಕುರಿಮರಿ ಆಗಿರುವವರು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ತಮಗಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತರಾದವರ ಆತ್ಮಗಳು ಬಲಿಪೀಠದ ಕೆಳಗಿರುವುದನ್ನು ಕಂಡೆನು.
REV 6:10 ಅವರು ಮಹಾಶಬ್ದದಿಂದ, “ಒಡೆಯನೇ, ಪವಿತ್ರನೇ, ಸತ್ಯವಂತನೇ ನಮ್ಮ ರಕ್ತ ಸುರಿಸಿದ ಲೋಕನಿವಾಸಿಗಳಿಗೆ ತೀರ್ಪನ್ನೂ ಪ್ರತಿದಂಡನೆಯನ್ನೂ ಮಾಡಲು ಇನ್ನೆಷ್ಟು ಸಮಯ ಬೇಕು?” ಎಂದು ಕೂಗಿದರು.
REV 6:11 ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಬಿಳೀ ನಿಲುವಂಗಿಯು ಕೊಡಲಾಗಿತ್ತು. ಇನ್ನು ಸ್ವಲ್ಪಕಾಲ ಅವರಂತೆಯೇ ವಧಿಸಲಾಗಬೇಕಾಗಿರುವ ಅವರ ಜೊತೆ ಸೇವಕರ ಮತ್ತು ಸಹೋದರರ ಸಂಖ್ಯೆ ಪೂರ್ಣಗೊಳ್ಳುವ ತನಕ ಕಾದಿರಬೇಕೆಂದು ಅವರಿಗೆ ಹೇಳಲಾಯಿತು.
REV 6:12 ಕುರಿಮರಿ ಆಗಿರುವವರು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾ ಭೂಕಂಪವಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು.
REV 6:13 ಬಿರುಗಾಳಿಯಿಂದ ಆಕಾಶದ ನಕ್ಷತ್ರಗಳು ಅಂಜೂರದ ಕಾಯಿಗಳಂತೆ ಭೂಮಿಗೆ ಬಿದ್ದವು.
REV 6:14 ಆಕಾಶವು ಸುರುಳಿಯಂತೆ ಸುತ್ತಿಕೊಂಡು ಹೊರಟುಹೋಯಿತು. ಪ್ರತಿ ಬೆಟ್ಟಗಳು ಮತ್ತು ದ್ವೀಪಗಳು ತಮ್ಮ ಸ್ಥಳಗಳಿಂದ ಕದಲಿದವು.
REV 6:15 ಅನಂತರ ಭೂರಾಜರುಗಳು, ಮಹಾಪುರುಷರು, ಸಹಸ್ರಾಧಿಪತಿಗಳು, ಐಶ್ವರ್ಯವಂತರು, ಬಲಿಷ್ಠರು, ದಾಸರು ಹಾಗೂ ಸ್ವತಂತ್ರರು, ಗವಿ ಮತ್ತು ಬೆಟ್ಟಗಳ ಬಂಡೆಗಳಲ್ಲಿ ತಮ್ಮನ್ನು ಮರೆಮಾಡಿಕೊಂಡು,
REV 6:16 ಬೆಟ್ಟಗುಡ್ಡಗಳಿಗೆ, “ನಮ್ಮ ಮೇಲೆ ಬಿದ್ದು ಸಿಂಹಾಸನದ ಮೇಲೆ ಕುಳಿತಿರುವವನ ಮುಖದಿಂದ ಮತ್ತು ಕುರಿಮರಿ ಆಗಿರುವವರ ಕೋಪಾಗ್ನಿಯಿಂದ ನಮ್ಮನ್ನು ಮರೆಮಾಡಿರಿ.
REV 6:17 ಏಕೆಂದರೆ, ಅವರ ಕೋಪಾಗ್ನಿಯ ಮಹಾದಿನವು ಬಂದಿದೆ, ಅದರ ಮುಂದೆ ಯಾರು ನಿಂತಾರು?” ಎಂದು ಹೇಳಿದರು.
REV 7:1 ಇದಾದನಂತರ ನಾಲ್ಕು ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿರುವುದನ್ನು ಕಂಡೆನು. ಅವರು ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ತಡೆಹಿಡಿದಿದ್ದರು.
REV 7:2 ಆಗ ಮತ್ತೊಬ್ಬ ದೂತನು, ಜೀವಸ್ವರೂಪರಾದ ದೇವರ ಮುದ್ರೆಯನ್ನು ಹಿಡಿದು ಪೂರ್ವದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಭೂಮಿ ಮತ್ತು ಸಮುದ್ರವನ್ನು ಬಾಧಿಸುವ ಶಕ್ತಿ ಹೊಂದಿದ ನಾಲ್ಕು ದೂತರಿಗೆ ಅವನು ಮಹಾಶಬ್ದದಿಂದ,
REV 7:3 “ನಾವು ನಮ್ಮ ದೇವರ ದಾಸರ ಹಣೆಗಳ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ಹಾನಿಪಡಿಸಬೇಡ!” ಎಂದು ಹೇಳಿದನು.
REV 7:4 ಆಗ ಮುದ್ರೆ ಹೊಂದಿರುವವರ ಸಂಖ್ಯೆಯು ನನಗೆ ಕೇಳಿಸಿತು. ಇಸ್ರಾಯೇಲಿನ ಎಲ್ಲಾ ಕುಲಗಳಿಂದ ಮುದ್ರೆಹಾಕಿಸಿಕೊಂಡವರು 1,44,000 ಜನರು.
REV 7:5 ಯೂದ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000, ರೂಬೇನ್ ಕುಲದಿಂದ 12,000, ಗಾದ್ ಕುಲದಿಂದ 12,000,
REV 7:6 ಆಶೇರ್ ಕುಲದಿಂದ 12,000, ನಫ್ತಲೀಮ ಕುಲದಿಂದ 12,000, ಮನಸ್ಸೆ ಕುಲದಿಂದ 12,000,
REV 7:7 ಸಿಮೆಯೋನ್ ಕುಲದಿಂದ 12,000, ಲೇವಿ ಕುಲದಿಂದ 12,000, ಇಸ್ಸಾಕರ್ ಕುಲದಿಂದ 12,000,
REV 7:8 ಜೆಬುಲೋನ್ ಕುಲದಿಂದ 12,000, ಯೋಸೇಫನ ಕುಲದಿಂದ 12,000, ಬೆನ್ಯಾಮೀನ್ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000 ಜನರು.
REV 7:9 ಇದಾದನಂತರ ಯಾರೂ ಎಣಿಸಲಾಗದಂಥ ಮಹಾ ಜನಸಮೂಹವನ್ನು ಕಂಡೆನು. ಅವರು ಪ್ರತಿ ರಾಷ್ಟ್ರ, ಕುಲ, ಜನ ಮತ್ತು ಭಾಷೆಯವರಾಗಿದ್ದು, ಯಜ್ಞದ ಕುರಿಮರಿ ಆಗಿರುವವರ ಮುಂದೆಯೂ ಸಿಂಹಾಸನದ ಮುಂದೆಯೂ ನಿಂತಿದ್ದರು. ಅವರು ಬಿಳಿ ನಿಲುವಂಗಿಗಳನ್ನು ಧರಿಸಿದ್ದವರಾಗಿ, ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು.
REV 7:10 ಅವರು ಮಹಾಧ್ವನಿಯಿಂದ ಹೀಗೆ ಕೂಗಿದರು: “ಸಿಂಹಾಸನದಲ್ಲಿ ಕೂತಿರುವ ನಮ್ಮ ದೇವರಿಗೂ, ಕುರಿಮರಿ ಆಗಿರುವವರಿಗೂ, ರಕ್ಷಣೆಯು ಸೇರತಕ್ಕದ್ದಾಗಿದೆ.”
REV 7:11 ಸಿಂಹಾಸನ, ಹಿರಿಯರು ಮತ್ತು ನಾಲ್ಕು ಜೀವಿಗಳ ಸುತ್ತಲೂ ದೇವದೂತರು ನಿಂತಿದ್ದರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು ದೇವರನ್ನು ಆರಾಧಿಸಿ,
REV 7:12 “ಆಮೆನ್! ಸ್ತೋತ್ರ, ಮಹಿಮೆ, ಜ್ಞಾನ, ಕೃತಜ್ಞತೆ, ಗೌರವ, ಶಕ್ತಿ, ಬಲ ನಮ್ಮ ದೇವರಿಗೆ ಯುಗಯುಗಾಂತರಕ್ಕೂ ಉಂಟಾಗಲಿ. ಆಮೆನ್!” ಎಂದು ಹೇಳುತ್ತಿದ್ದರು.
REV 7:13 ಆಗ ಹಿರಿಯರಲ್ಲೊಬ್ಬನು ನನ್ನನ್ನು, “ಈ ಬಿಳಿ ನಿಲುವಂಗಿಯನ್ನು ತೊಟ್ಟ ಇವರು ಯಾರು? ಎಲ್ಲಿಂದ ಬಂದವರು?” ಎಂದು ಕೇಳಿದನು.
REV 7:14 ಅದಕ್ಕೆ ನಾನು, “ನನ್ನ ಒಡೆಯನೆ ನೀನೇ ಬಲ್ಲೆ!” ಎಂದು ಉತ್ತರಿಸಿದೆನು. ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು. ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿ ಆಗಿರುವವರ ರಕ್ತದಲ್ಲಿ ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ!”
REV 7:15 ಆದ್ದರಿಂದ, “ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು, ದೇವರ ಆಲಯದಲ್ಲಿ ಹಗಲಿರುಳೂ ದೇವರನ್ನು ಸೇವೆಮಾಡುವರು. ಸಿಂಹಾಸನದ ಮೇಲೆ ಕೂತಿದ್ದವರು ಅವರನ್ನು ಆವರಿಸಿ ಸಂರಕ್ಷಿಸಿದರು.
REV 7:16 ‘ಇವರಿಗೆ ಇನ್ನೆಂದಿಗೂ ಹಸಿವೆಯಾಗಲಿ; ಬಾಯಾರಿಕೆಯಾಗಲಿ ಆಗುವುದಿಲ್ಲ. ಇದಲ್ಲದೆ ಸೂರ್ಯನ ಬಿಸಿಲಾದರೂ,’ ಯಾವ ಝಳವಾದರೂ ಇವರಿಗೆ ತಟ್ಟುವುದಿಲ್ಲ.
REV 7:17 ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿ ಆಗಿರುವವರು ಇವರನ್ನು ಮೇಯಿಸಿ; ‘ಜೀವಜಲದ ಒರತೆಗಳ ಬಳಿ ನಡೆಸುವರು.’ ‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’” ಎಂದು ಹೇಳಿದನು.
REV 8:1 ಕುರಿಮರಿ ಆಗಿರುವವರು ಏಳನೆಯ ಮುದ್ರೆಯನ್ನು ಒಡೆದಾಗ ಪರಲೋಕದಲ್ಲಿ ಸುಮಾರು ಅರ್ಧ ತಾಸಿನವರೆಗೂ ನಿಶ್ಶಬ್ದವಿತ್ತು.
REV 8:2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.
REV 8:3 ಚಿನ್ನದ ಧೂಪಾರತಿಯಿದ್ದ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಸಿಂಹಾಸನದ ಮುಂದಿನ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳೊಂದಿಗೆ ಅರ್ಪಿಸಲು ಅವನಿಗೆ ಬಹಳ ಧೂಪವು ಕೊಡಲಾಗಿತ್ತು.
REV 8:4 ದೇವದೂತನ ಕೈಯಿಂದ ಧೂಪದ ಹೊಗೆಯು, ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ, ದೇವಸನ್ನಿಧಿಗೆ ಏರಿಹೋಯಿತು.
REV 8:5 ಆಗ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಬಲಿಪೀಠದ ಬೆಂಕಿಯಿಂದ ಅದನ್ನು ತುಂಬಿಸಿ, ಭೂಮಿಯ ಮೇಲೆ ಎಸೆದನು. ಆಗ ಗುಡುಗುಗಳೂ ಸಪ್ಪಳವೂ ಮಿಂಚುಗಳೂ ಮತ್ತು ಭೂಕಂಪವೂ ಉಂಟಾದವು.
REV 8:6 ಆಗ ಏಳು ತುತೂರಿಗಳನ್ನು ಹಿಡಿದಿರುವ ಏಳು ದೇವದೂತರು ಅವುಗಳನ್ನು ಊದಲು ಸಿದ್ಧರಾದರು.
REV 8:7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಲು, ರಕ್ತದೊಂದಿಗೆ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿದವು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋಯಿತು.
REV 8:8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಉರಿಯುತ್ತಿರುವ ದೊಡ್ಡ ಬೆಟ್ಟದಂಥದ್ದು ಸಮುದ್ರದಲ್ಲಿ ಎಸೆಯಲಾಯಿತು. ಸಮುದ್ರದ ಮೂರರಲ್ಲಿ ಒಂದು ಭಾಗವು ರಕ್ತವಾಯಿತು.
REV 8:9 ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗ ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗ ನಾಶವಾದವು.
REV 8:10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೀಪದಂತೆ ಉರಿಯುವ ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು.
REV 8:11 ಆ ನಕ್ಷತ್ರದ ಹೆಸರು, ಮಾಚಿಪತ್ರೆ, ಆಗ ಮೂರರಲ್ಲಿ ಒಂದು ಭಾಗವು ಕಹಿಯಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕ ಜನರು ಸತ್ತರು.
REV 8:12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು, ಆಗ ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ ಮೂರನೇ ಭಾಗವು ಕತ್ತಲಾಯಿತು. ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ, ಮೂರನೇ ಭಾಗವು ಕತ್ತಲಾಯಿತು. ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಹೋಯಿತು. ರಾತ್ರಿಯು ಹಾಗೆಯೇ ಆಯಿತು.
REV 8:13 ನಾನು ನೋಡಲಾಗಿ, ಆಕಾಶದ ಮಧ್ಯದಲ್ಲಿ ಹಾರುತ್ತಿರುವ ಒಂದು ಗರುಡ ಪಕ್ಷಿ ಮಹಾಧ್ವನಿಯಿಂದ: ಇನ್ನೂ ಊದಲಿರುವ ಮೂವರು ದೂತರ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ, “ಅಯ್ಯೋ! ಅಯ್ಯೋ! ಅಯ್ಯೋ!” ಎಂದಿತು.
REV 9:1 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು.
REV 9:2 ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು.
REV 9:3 ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು.
REV 9:4 ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು.
REV 9:5 ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.
REV 9:6 ಆ ದಿನಗಳಲ್ಲಿ ಜನರು ಮರಣವನ್ನು ಹುಡುಕುವರು, ಆದರೆ ಅದನ್ನು ಯಾವ ರೀತಿಯಿಂದಲೂ ಕಾಣರು; ಅವರು ಸಾಯಲು ಹಾರೈಸುವರು, ಆದರೆ ಮರಣವು ಅವರಿಂದ ಓಡಿ ಹೋಗುವುದು.
REV 9:7 ಆ ಮಿಡತೆಗಳು ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದಂತಿರುವ ಕಿರೀಟಗಳಿದ್ದವು. ಅವುಗಳ ಮುಖವು ಮಾನವರ ಮುಖಗಳಂತೆ ಇದ್ದವು.
REV 9:8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು.
REV 9:9 ಅವುಗಳಿಗೆ ಕಬ್ಬಿಣದ ಕವಚದಂಥ ಕವಚಗಳಿದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳಂತಿತ್ತು.
REV 9:10 ಅವುಗಳಿಗೆ ಚೇಳಿನಂತೆ ಬಾಲವೂ ಕೊಂಡಿಯೂ ಇದ್ದವು. ಅವುಗಳಿಗೆ ಮನುಷ್ಯರನ್ನು ಐದು ತಿಂಗಳುಗಳ ಕಾಲ ತಮ್ಮ ಬಾಲಗಳಿಂದ ಬಾಧಿಸುವ ಸಾಮರ್ಥ್ಯವಿತ್ತು.
REV 9:11 ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು.
REV 9:12 ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇವುಗಳ ನಂತರ ಇನ್ನೂ ಎರಡು ವಿಪತ್ತುಗಳು ಬರಲಿವೆ.
REV 9:13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಲು, ದೇವರ ಮುಂದೆ ಇರುವ ಚಿನ್ನದ ಬಲಿಪೀಠದ ನಾಲ್ಕು ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.
REV 9:14 ಅದು ತುತೂರಿಯನ್ನು ಹೊಂದಿರುವ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾನದಿಯ ಬಳಿ ಕಟ್ಟಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಹೇಳಿತು.
REV 9:15 ಮಾನವಕುಲದ ಮೂರರಲ್ಲೊಂದು ಭಾಗವನ್ನು ಕೊಲ್ಲುವುದಕ್ಕಾಗಿ ಆ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿಯೇ ಸಿದ್ಧವಾಗಿದ್ದ ನಾಲ್ಕು ದೇವದೂತರನ್ನು ಬಿಡುಗಡೆ ಮಾಡಲಾಯಿತು.
REV 9:16 ಕುದುರೆ ಸೈನಿಕರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.
REV 9:17 ನಾನು ನನ್ನ ದರ್ಶನದಲ್ಲಿ ಕುದುರೆಗಳನ್ನೂ ಸವಾರರನ್ನೂ ಕಂಡೆನು. ಅವರ ಕವಚಗಳು ಬೆಂಕಿಯ ಕೆಂಪು, ನೀಲಮಣಿ ಹಾಗೂ ಹಳದಿ ಬಣ್ಣದಂತೆಯೂ ಇದ್ದವು. ಕುದುರೆಗಳ ತಲೆಗಳು ಸಿಂಹದ ತಲೆಗಳಂತಿದ್ದವು. ಅವುಗಳ ಬಾಯೊಳಗಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬಂದವು.
REV 9:18 ಅವುಗಳ ಬಾಯೊಳಗಿಂದ ಬಂದ ಬೆಂಕಿ ಹೊಗೆ ಮತ್ತು ಗಂಧಕಗಳೆಂಬ ಮೂರು ಉಪದ್ರವಗಳಿಂದ ಮಾನವಕುಲದ ಮೂರರಲ್ಲೊಂದು ಭಾಗದ ಜನರು ಹತರಾದರು.
REV 9:19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲದಲ್ಲಿಯೂ ಇತ್ತು. ಏಕೆಂದರೆ ಅವುಗಳ ಬಾಲಗಳು ತಲೆಗಳನ್ನು ಹೊಂದಿದ್ದ ಸರ್ಪಗಳಂತಿದ್ದವು. ಅವುಗಳಿಂದ ಅವು ಕೇಡನ್ನುಂಟು ಮಾಡುತ್ತವೆ.
REV 9:20 ಈ ಉಪದ್ರವಗಳಿಂದ ಸಾಯದೆ ಉಳಿದ ಮನುಷ್ಯರು ಇನ್ನೂ ತಮ್ಮ ದುಷ್ಟಕೃತ್ಯಗಳನ್ನು ಬಿಟ್ಟು ಪಶ್ಚಾತ್ತಾಪ ಪಡಲಿಲ್ಲ. ಅವರು ದೆವ್ವಗಳನ್ನೂ, ನೋಡಲು, ಕೇಳಲು, ನಡೆಯಲು ಆಗದ ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳ ವಿಗ್ರಹಗಳನ್ನು ಆರಾಧಿಸುವುದನ್ನೂ ನಿಲ್ಲಿಸಲಿಲ್ಲ.
REV 9:21 ಇದಲ್ಲದೆ ಅವರು ಕೊಲೆ, ಮಾಟ, ಜಾರತ್ವ ಮತ್ತು ಕಳ್ಳತನಗಳಿಗಾಗಿಯೂ ಪಶ್ಚಾತ್ತಾಪ ಪಡಲಿಲ್ಲ.
REV 10:1 ಆಗ ನಾನು ಮತ್ತೊಬ್ಬ ಬಲಿಷ್ಠನಾದ ದೇವದೂತನು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಮುಗಿಲ ಬಿಲ್ಲು ಇತ್ತು. ಅವನ ಮುಖವು ಸೂರ್ಯನಂತಿದ್ದು, ಅವನ ಕಾಲುಗಳು ಅಗ್ನಿಸ್ತಂಭಗಳಂತಿದ್ದವು.
REV 10:2 ಅವನು ತನ್ನ ಕೈಯಲ್ಲಿ ತೆರೆದಿದ್ದ ಒಂದು ಚಿಕ್ಕ ಸುರುಳಿಯನ್ನು ಹಿಡಿದುಕೊಂಡಿದ್ದನು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೂ ತನ್ನ ಎಡಗಾಲನ್ನು ಭೂಮಿಯ ಮೇಲೂ ಇಟ್ಟುಕೊಂಡು,
REV 10:3 ಸಿಂಹದ ಘರ್ಜನೆಯಂತೆ ಮಹಾ ಸ್ವರದಿಂದ ಕೂಗಿದನು. ಅವನು ಕೂಗಿದಾಗ, ಏಳು ಗುಡುಗುಗಳು ಮಾತನಾಡಿದವು.
REV 10:4 ಏಳು ಗುಡುಗುಗಳು ಮಾತನಾಡಿದಾಗ, ನಾನು ಬರೆಯಬೇಕೆಂದಿದ್ದೆನು. ಆದರೆ ಪರಲೋಕದಿಂದ ಬಂದ ಶಬ್ದವು, “ನೀನು ಆ ಏಳು ಗುಡುಗುಗಳು ಹೇಳಿರುವುದನ್ನು ಮುದ್ರೆಹಾಕಿ ಮುಚ್ಚಿಡು. ಅದನ್ನು ಬರೆಯಬೇಡ,” ಎಂದು ಹೇಳುವುದನ್ನು ಕೇಳಿದೆನು.
REV 10:5 ಆಗ ಸಮುದ್ರದ ಮೇಲೂ ಭೂಮಿಯ ಮೇಲೂ ನಿಂತಿರುವ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,
REV 10:6 ಯುಗಯುಗಾಂತರಕ್ಕೂ ಜೀವಿಸುವವರೂ ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿದವರ ಮೇಲೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಇನ್ನು ಆಲಸ್ಯವಾಗುವುದಿಲ್ಲ!
REV 10:7 ಆದರೆ ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಬೇಕೆಂದಿರುವ ದಿನಗಳಲ್ಲಿ ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ಪ್ರಕಟಿಸಿದಂತೆಯೇ, ದೇವರ ರಹಸ್ಯವು ನೆರವೇರುವುದು.”
REV 10:8 ಆಗ ಪರಲೋಕದಿಂದ ನಾನು ಕೇಳಿದ್ದ ಧ್ವನಿಯು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವ ದೇವದೂತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ಹೇಳಿತು.
REV 10:9 ಆಗ ನಾನು ದೇವದೂತನ ಬಳಿ ಹೋಗಿ, ಅವನನ್ನು, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಅವನು ನನಗೆ, “ಇದನ್ನು ತೆಗೆದುಕೊಂಡು ತಿನ್ನು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು. ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು,” ಎಂದು ಹೇಳಿದನು.
REV 10:10 ನಾನು ದೇವದೂತನ ಕೈಯಿಂದ ಆ ಚಿಕ್ಕ ಸುರುಳಿಯನ್ನು ತೆಗೆದುಕೊಂಡು ತಿಂದೆನು. ಇದರ ರುಚಿಯು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಾಗ, ನನ್ನ ಹೊಟ್ಟೆ ಕಹಿಯಾಯಿತು.
REV 10:11 ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.
REV 11:1 ದಂಡದಂತಿದ್ದ ಒಂದು ಅಳತೆ ಕೋಲು ನನಗೆ ಕೊಡಲಾಯಿತು. ನನಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡಿ, ಆಲಯದಲ್ಲಿ ಆರಾಧನೆ ಮಾಡುವವರನ್ನು ಎಣಿಸು.
REV 11:2 ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು. ಏಕೆಂದರೆ ಅದು ಯೆಹೂದ್ಯರಲ್ಲದವರಿಗಾಗಿ ಬಿಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು.
REV 11:3 ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,”
REV 11:4 ಇವರು, “ಎಣ್ಣೆಯ ಮರಗಳೂ ಭೂಲೋಕದ ಒಡೆಯ ಆಗಿರುವವರ ಮುಂದೆ ನಿಂತಿರುವ ಎರಡು ದೀಪಸ್ತಂಭಗಳೂ ಆಗಿದ್ದಾರೆ.”
REV 11:5 ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಇವರ ಬಾಯೊಳಗಿಂದ ಬೆಂಕಿ ಹೊರಟು, ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಅವನಿಗೂ ಅದೇ ರೀತಿಯಾಗಿ ಕೊಲೆಯಾಗಬೇಕು.
REV 11:6 ತಾವು ಪ್ರವಾದಿಸುತ್ತಿರುವ ದಿನಗಳಲ್ಲಿ, ಮಳೆ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಇರುವುದು. ಇದಲ್ಲದೆ ಇವರಿಗೆ ಬಯಸಿದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಬಾಧಿಸುವುದಕ್ಕೂ ಅಧಿಕಾರ ಇರುತ್ತದೆ.
REV 11:7 ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು.
REV 11:8 ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಗಳು ಸಾಂಕೇತಿಕವಾಗಿ ಸೊದೋಮ್ ಹಾಗೂ ಈಜಿಪ್ಟ್ ಎಂದೂ ಹೆಸರುಗಳಿರುವುದು. ಇವರ ಒಡೆಯ ಆಗಿರುವವರನ್ನು ಸಹ ಅಲ್ಲಿಯೇ ಶಿಲುಬೆಗೆ ಹಾಕಲಾಗಿತ್ತು.
REV 11:9 ಆಗ ಸಕಲ ಪ್ರಜೆ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು, ಇವರ ಶವಗಳನ್ನು ಸಮಾಧಿಯಲ್ಲಿಡಲು ಅನುಮತಿಸದೆ, ಮೂರುವರೆ ದಿನಗಳವರೆಗೂ ನೋಡುತ್ತಾ ಇರುವರು.
REV 11:10 ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ, ಇದರ ವಿಷಯವಾಗಿ ಭೂನಿವಾಸಿಗಳು ಸಂತೋಷಿಸಿ, ಹರ್ಷಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
REV 11:11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮವು ಬಂದು, ಆ ಶವಗಳಲ್ಲಿ ಪ್ರವೇಶಿಸಲು, ಅವು ಕಾಲೂರಿ ನಿಂತವು. ಅವರನ್ನು ಕಂಡವರಿಗೆ ಮಹಾ ಭಯವುಂಟಾಯಿತು.
REV 11:12 ಆಗ ಅವರಿಗೆ, “ಇಲ್ಲಿ ಮೇಲಕ್ಕೆ ಬನ್ನಿರಿ,” ಎಂದು ಮಹಾಧ್ವನಿಯು ಕೇಳಿಸಿತು. ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
REV 11:13 ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.
REV 11:14 ಎರಡನೆಯ ವಿಪತ್ತು ಕಳೆದುಹೋಯಿತು. ಮೂರನೆಯ ವಿಪತ್ತು ಬೇಗನೆ ಬರಲಿದೆ.
REV 11:15 ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.”
REV 11:16 ತರುವಾಯ ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ದೇವರಿಗೆ ಅಡ್ಡಬಿದ್ದು,
REV 11:17 ಹೀಗೆ ಹೇಳಿದರು: “ಕರ್ತ ಆಗಿರುವ, ಸರ್ವಶಕ್ತರಾದ ದೇವರೇ, ಮೊದಲು ಇದ್ದು ಈಗಲೂ ಇರುವವರೂ, ನೀವು ನಿಮ್ಮ ಮಹಾ ಅಧಿಕಾರವನ್ನು ಪಡೆದು ಆಳಿದ್ದರಿಂದ ನಿಮಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
REV 11:18 ರಾಷ್ಟ್ರಗಳು ಕೋಪಗೊಂಡವು, ನಿಮ್ಮ ರೋಷವು ಈಗ ಬಂದಿದೆ. ಸತ್ತವರು ತೀರ್ಪು ಹೊಂದುವ ಸಮಯ ಬಂದಿದೆ. ನೀವು ನಿಮ್ಮ ಸೇವಕರಾದ ಪ್ರವಾದಿಗಳಿಗೂ ದೇವಜನರಿಗೂ ನಿಮ್ಮ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು, ಲೋಕ ನಾಶಕರನ್ನು ದಂಡಿಸುವಿರಿ.”
REV 11:19 ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.
REV 12:1 ಪರಲೋಕದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು: ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಆಕೆಯ ಪಾದಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.
REV 12:2 ಆಕೆಯು ಗರ್ಭಿಣಿಯಾಗಿದ್ದು, ಪ್ರಸವವೇದನೆಯಿಂದ ನರಳುತ್ತಾ ಕೂಗುತ್ತಿದ್ದಳು.
REV 12:3 ಪರಲೋಕದಲ್ಲಿ ಮತ್ತೊಂದು ಸೂಚನೆಯು ಕಾಣಿಸಿತು. ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು.
REV 12:4 ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಚೆಲ್ಲಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ, ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
REV 12:5 ಆಕೆ, “ರಾಷ್ಟ್ರಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ” ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ದೇವರ ಬಳಿಗೂ ಅವರ ಸಿಂಹಾಸನದ ಬಳಿಗೂ ಎತ್ತಲಾಯಿತು.
REV 12:6 ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದರು.
REV 12:7 ಪರಲೋಕದಲ್ಲಿ ಯುದ್ಧನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡಿದರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು.
REV 12:8 ಅವರಿಗೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ, ಪರಲೋಕದೊಳಗೆ ಅವರಿಗಿರುವ ಸ್ಥಾನವನ್ನು ಕಳೆದುಕೊಂಡರು.
REV 12:9 ಭೂಲೋಕದವರನ್ನೆಲ್ಲಾ ವಂಚಿಸುತ್ತಿದ್ದ ಆ ಮಹಾ ಘಟಸರ್ಪನು ಎಂದರೆ ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲಾದ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರನ್ನೂ ಅವನೊಂದಿಗೆ ತಳ್ಳಲಾಯಿತು.
REV 12:10 ಆಗ ಪರಲೋಕದಲ್ಲಿ ಮಹಾಧ್ವನಿಯನ್ನು ಕೇಳಿದೆನು. ಅದು, “ರಕ್ಷಣೆಯೂ ಶಕ್ತಿಯೂ ರಾಜ್ಯವೂ ಈಗ ನಮ್ಮ ದೇವರದಾದವು. ದೇವರ ಕ್ರಿಸ್ತ ಆಗಿರುವವರ ಅಧಿಕಾರವು ಈಗ ಸ್ಥಾಪಿತವಾಯಿತು. ಹಗಲಿರುಳು ನಮ್ಮ ಸಹೋದರರ ಮೇಲೆ, ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನನ್ನು ತಳ್ಳಲಾಗಿದೆ.
REV 12:11 ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಕುರಿಮರಿಯಾಗಿರುವವರ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.
REV 12:12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮಗೆ ದುರ್ಗತಿ! ಎನ್ನುತ್ತೇನೆ. ಏಕೆಂದರೆ, ಪಿಶಾಚನು ತನಗಿರುವ ಕಾಲವು ಕೊಂಚವೆಂದು ತಿಳಿದು, ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ,” ಎಂಬುದಾಗಿ ಹೇಳಿತು.
REV 12:13 ಘಟಸರ್ಪನು ತಾನು ಭೂಮಿಗೆ ತಳ್ಳಲಾಗಿರುವುದನ್ನು ಕಂಡಾಗ, ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು.
REV 12:14 ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲಾದವು. ಅಲ್ಲಿ ಆಕೆಯು ಒಂದುಕಾಲ, ಎರಡುಕಾಲ ಮತ್ತು ಅರ್ಧಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು.
REV 12:15 ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟನು.
REV 12:16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಿತು. ಅದು ಬಾಯಿತೆರೆದು, ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತು.
REV 12:17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹುಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಎಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು, ಯೇಸುವಿನ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು.
REV 13:1 ಘಟಸರ್ಪವು ಸಮುದ್ರತೀರದ ಮರಳಿನ ಮೇಲೆ ನಿಂತನು. ಸಮುದ್ರದೊಳಗೆ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಕೊಂಬುಗಳ ಮೇಲೆ ಹತ್ತು ಮುಕುಟಗಳೂ ತಲೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು.
REV 13:2 ನಾನು ಕಂಡ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು.
REV 13:3 ಮೃಗದ ತಲೆಗಳಲ್ಲಿ ಒಂದು ಮರಣಾಂತಿಕ ಗಾಯ ಹೊಂದಿದಂತಿರುವುದನ್ನು ನೋಡಿದೆನು. ಆದರೆ ಆ ಮರಣಕರವಾದ ಗಾಯವು ವಾಸಿಯಾಯಿತು. ಭೂಲೋಕವೆಲ್ಲಾ ಆ ಮೃಗವನ್ನು ಕಾಣುತ್ತಾ ಆಶ್ಚರ್ಯಪಟ್ಟಿತು.
REV 13:4 ಜನರು ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ, ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ, “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದರು.
REV 13:5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಕೊಡಲಾಯಿತು. ನಲವತ್ತೆರಡು ತಿಂಗಳುಗಳವರೆಗೆ ಕಾರ್ಯಸಾಧಿಸುವ ಅಧಿಕಾರವನ್ನೂ ಅದಕ್ಕೆ ಕೊಡಲಾಯಿತು.
REV 13:6 ಆ ಮೃಗವು ತನ್ನ ಬಾಯಿತೆರೆದು, ದೇವರಿಗೆ ವಿರುದ್ಧವಾಗಿ ದೂಷಿಸಿ, ಅವರ ನಾಮವನ್ನೂ ಅವರ ನಿವಾಸವನ್ನೂ ಮತ್ತು ಪರಲೋಕ ನಿವಾಸಿಗಳನ್ನೂ ದೂಷಿಸಿತು.
REV 13:7 ಇದಲ್ಲದೆ ಅದಕ್ಕೆ ಪರಿಶುದ್ಧರ ಮೇಲೆ ಯುದ್ಧಮಾಡಿ, ಅವರನ್ನು ಜಯಿಸುವುದಕ್ಕೆ ಬಲವು ಕೊಡಲಾಯಿತು ಮತ್ತು ಸಕಲ ಕುಲ, ಪ್ರಜೆ, ಭಾಷೆ, ರಾಷ್ಟ್ರಗಳ ಮೇಲೆ ಅದಕ್ಕೆ ಅಧಿಕಾರವು ಸಹ ಕೊಡಲಾಯಿತು.
REV 13:8 ಜಗದುತ್ಪತ್ತಿಗೆ ಮೊದಲೇ ಕೊಯ್ಯಲಾದ ಕುರಿಮರಿಯವರ ಜೀವಗ್ರಂಥದಲ್ಲಿ ಯಾರ‍್ಯಾರ ಹೆಸರುಗಳು ಬರೆದಿರುವುದಿಲ್ಲವೋ, ಆ ಭೂನಿವಾಸಿಗಳೆಲ್ಲರೂ ಆ ಮೃಗವನ್ನು ಆರಾಧಿಸುವರು.
REV 13:9 ಕಿವಿಯುಳ್ಳವನು ಕೇಳಲಿ.
REV 13:10 “ಸೆರೆಹಿಡಿಯುವವನು ತಾನೇ ಸೆರೆಯಾಗಿ ಹೋಗುವನು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗುವನು.” ಇದರಲ್ಲಿ ದೇವಜನರ ಸೈರಣೆಯೂ ನಂಬಿಕೆಯೂ ಇವೆ.
REV 13:11 ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಅದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು ಆದರೆ ಘಟಸರ್ಪದಂತೆ ಮಾತನಾಡಿತು.
REV 13:12 ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲಿ ಚಲಾಯಿಸಿತು. ಇದು ಮರಣಕರವಾದ ಗಾಯದಿಂದ ವಾಸಿಯಾದ ಮೊದಲನೆಯ ಮೃಗವನ್ನು ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.
REV 13:13 ಎರಡನೆಯ ಮೃಗವೂ ಮಹಾಸೂಚಕಕಾರ್ಯಗಳನ್ನು ನಡೆಸಿತು ಮತ್ತು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಬೀಳುವಂತೆ ಮಾಡಿತು.
REV 13:14 ಆ ಮೊದಲನೆಯ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕೊಡಲಾಗಿದ್ದರಿಂದ ಭೂನಿವಾಸಿಗಳನ್ನು ಮೋಸಗೊಳಿಸುತ್ತದೆ. ಭೂಮಿಯ ಮೇಲೆ ವಾಸಿಸುವವರು, ಕತ್ತಿಯಿಂದ ಗಾಯಹೊಂದಿ, ಸಾಯದೆ ಬದುಕಿದ ಮೃಗದ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಹೇಳುತ್ತದೆ.
REV 13:15 ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಕೊಡಲಾಗಿದ್ದರಿಂದ, ಆ ವಿಗ್ರಹವು ಮಾತನಾಡುವಂತೆಯೂ ತನ್ನನ್ನು ಆರಾಧನೆ ಮಾಡದವರನ್ನು ಕೊಲ್ಲುವಂತೆಯೂ ಮಾಡುತ್ತದೆ.
REV 13:16 ಅದು ಚಿಕ್ಕವರು, ದೊಡ್ಡವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ಗುಲಾಮರು, ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂದೂ
REV 13:17 ಆ ಗುರುತಾಗಲಿ, ಮೃಗದ ಹೆಸರಾಗಲಿ, ಅದರ ಹೆಸರಿನ ಸಂಖ್ಯೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುವುದು.
REV 13:18 ಇದರಲ್ಲಿ ಜ್ಞಾನವಿದೆ. ಬುದ್ಧಿಯುಳ್ಳವನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆಯು 666.
REV 14:1 ನಾನು ನೋಡಲಾಗಿ, ಕುರಿಮರಿ ಆಗಿರುವವರು ಚೀಯೋನ್ ಪರ್ವತದ ಮೇಲೆ ನಿಂತಿದ್ದರು. ಕುರಿಮರಿಯವರ ಜೊತೆಯಲ್ಲಿ ಒಂದು ಲಕ್ಷ ನಲವತ್ನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಕುರಿಮರಿಯವರ ಹೆಸರೂ ಕುರಿಮರಿಯವರ ತಂದೆಯ ಹೆಸರೂ ಬರೆಯಲಾಗಿದ್ದವು.
REV 14:2 ಇದಲ್ಲದೆ ಪರಲೋಕದಿಂದ ಜಲ ಪ್ರವಾಹದಂತೆಯೂ ಮಹಾ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಕಿನ್ನರಿಗಳನ್ನು ನುಡಿಸುತ್ತಿರುವ ಕಿನ್ನರರ ಶಬ್ದದಂತಿತ್ತು.
REV 14:3 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
REV 14:4 ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು.
REV 14:5 ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.
REV 14:6 ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು.
REV 14:7 ಅವನು, “ನೀವು ದೇವರಿಗೆ ಭಯಪಟ್ಟು ಅವರಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಅವರು ನ್ಯಾಯತೀರ್ಪು ಮಾಡುವ ಸಮಯ ಬಂದಿದೆ. ಭೂಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದ ದೇವರನ್ನೇ ಆರಾಧಿಸಿರಿ!” ಎಂದು ಮಹಾಧ್ವನಿಯಿಂದ ಹೇಳಿದನು.
REV 14:8 ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು, “ ‘ಬಿದ್ದಳು, ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ಸಕಲ ಜನಾಂಗಗಳಿಗೆ ತನ್ನ ಅತ್ಯಾಸಕ್ತಿಯ ಅನೈತಿಕತೆವೆಂಬ ದ್ರಾಕ್ಷಾರಸವನ್ನು ಕುಡಿಸಿದಳು,” ಎಂದು ಹೇಳಿದನು.
REV 14:9 ಅವರ ಹಿಂದೆ ಮೂರನೆಯವನಾದ ಒಬ್ಬ ದೇವದೂತನು ಬಂದು, “ಯಾವುದಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ, ಕೈಯ ಮೇಲಾಗಲಿ ಗುರುತು ಹಾಕಿಸಿಕೊಂಡರೆ,
REV 14:10 ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆ ಹಾಕಿದ ಅವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಕುರಿಮರಿಯಾಗಿರುವವರ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
REV 14:11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು.
REV 14:12 ಇದಕ್ಕಾಗಿಯೇ ದೇವರ ಆಜ್ಞೆಗಳನ್ನೂ ಯೇಸುವಿನಲ್ಲಿ ನಂಬಿಕೆಯನ್ನೂ ಕಾಪಾಡುವ ದೇವಜನರ ತಾಳ್ಮೆಯ ಸಹಿಷ್ಣುತೆ ಇದರಲ್ಲಿದೆ.
REV 14:13 ಪರಲೋಕದಿಂದ ಒಂದು ಧ್ವನಿಯು ನನಗೆ, “ಇಂದಿನಿಂದ ಕರ್ತರಲ್ಲಿ ವಿಶ್ವಾಸವುಳ್ಳವರು ಧನ್ಯರು ಎಂಬುದಾಗಿ ಬರೆ!” ಎಂದು ಹೇಳಿತು. ಅದಕ್ಕೆ ಪವಿತ್ರಾತ್ಮ ದೇವರು, “ಹೌದು, ಅವರ ಪ್ರಯಾಸಗಳು ತೀರಿದವು ಅವರಿಗೆ ವಿಶ್ರಾಂತಿಯಾಗುವುದು, ಅವರ ಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ!” ಎಂದು ಹೇಳುತ್ತಾರೆ.
REV 14:14 ನಾನು ನೋಡಲಾಗಿ, ಒಂದು ಬಿಳಿ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯಪುತ್ರರಂತೆ ಒಬ್ಬರು ಕುಳಿತಿರುವುದನ್ನು ಕಂಡೆನು. ಅವರ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
REV 14:15 ಆಗ ಮತ್ತೊಬ್ಬ ದೂತನು ದೇವಾಲಯದೊಳಗಿಂದ ಬಂದು ಮೇಘದ ಮೇಲೆ ಕುಳಿತಿದ್ದವರಿಗೆ, “ಭೂಮಿಯ ಪೈರು ಮಾಗಿದೆ. ಕೊಯ್ಯುವ ಕಾಲ ಬಂದಿರುವುದರಿಂದ, ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ!” ಎಂದು ಮಹಾಧ್ವನಿಯಿಂದ ಕೂಗಿದನು.
REV 14:16 ಮೇಘದ ಮೇಲೆ ಕುಳಿತಿದ್ದವರು ತಮ್ಮ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದರು. ಆಗ ಭೂಮಿಯ ಪೈರು ಕೊಯ್ಯಲಾಯಿತು.
REV 14:17 ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
REV 14:18 ತರುವಾಯ ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಬಲಿಪೀಠದ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ, ಭೂಮಿಯ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರ್ತಿಯಾಗಿ ಮಾಗಿವೆ!” ಎಂದು ಮಹಾಧ್ವನಿಯಿಂದ ಕೂಗಿದನು.
REV 14:19 ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ, ಭೂಮಿಯ ದ್ರಾಕ್ಷಿಹಣ್ಣನ್ನು ಕೂಡಿಸಿ, ದೇವರ ಕೋಪವೆಂಬ ದೊಡ್ಡ ದ್ರಾಕ್ಷಿಯ ತೊಟ್ಟಿಯಲ್ಲಿ ಹಾಕಿದನು.
REV 14:20 ಆಗ ಪಟ್ಟಣದ ಹೊರಗೆ ದ್ರಾಕ್ಷಿಯ ತೊಟ್ಟಿಯನ್ನು ತುಳಿಯಲಾಯಿತು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು, ಕುದುರೆಗಳ ಕಡಿವಾಣವನ್ನು ಮುಟ್ಟುವಷ್ಟು ಮುನ್ನೂರು ಕಿಲೋಮೀಟರ್ ದೂರ ಹರಿಯಿತು.
REV 15:1 ನಾನು ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ಕಂಡೆನು. ಏಳುಮಂದಿ ದೂತರಲ್ಲಿ ಕಡೆಯ ಏಳು ಉಪದ್ರವಗಳಿದ್ದವು. ಏಕೆಂದರೆ, ಅವುಗಳಲ್ಲಿ ದೇವರ ಕೋಪವು ಸಂಪೂರ್ಣವಾಗುವುದು.
REV 15:2 ನನಗೆ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಒಂದು ಕಾಣಿಸಿತು. ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಹೆಸರಿನ ಸಂಖ್ಯೆಯ ಮೇಲೆಯೂ ಜಯಹೊಂದಿದವರು ದೇವರ ಕಿನ್ನರಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಗಾಜಿನ ಸಮುದ್ರದ ಮೇಲೆ ನಿಂತುಕೊಂಡು,
REV 15:3 ದೇವರ ದಾಸನಾದ ಮೋಶೆಯ ಮತ್ತು ಕುರಿಮರಿ ಆಗಿರುವವರ ಹಾಡನ್ನೂ ಹಾಡುತ್ತಾ: “ಕರ್ತ ಆಗಿರುವ ಸರ್ವಶಕ್ತ ದೇವರೇ, ನಿಮ್ಮ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯವಾದವುಗಳೂ ಆಗಿವೆ. ರಾಷ್ಟ್ರಗಳ ಅರಸರಾಗಿರುವ ನಿಮ್ಮ ಮಾರ್ಗಗಳು ನೀತಿಯುಳ್ಳವೂ ಸತ್ಯವೂ ಆಗಿವೆ.
REV 15:4 ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು? ಏಕೆಂದರೆ ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ ಎಲ್ಲಾ ರಾಷ್ಟ್ರಗಳವರು ಬಂದು, ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,” ಎಂದು ಹೇಳಿದರು.
REV 15:5 ಇದಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿರುವ ಸಾಕ್ಷಿಯ ಗುಡಾರದ ದೇವಾಲಯವು ತೆರೆದಿರುವುದನ್ನು ಕಂಡೆನು.
REV 15:6 ಆ ದೇವಾಲಯದೊಳಗಿಂದ ಏಳು ಉಪದ್ರವಗಳನ್ನು ಹಿಡಿದು, ಆ ಏಳು ದೇವದೂತರು ಬಂದರು. ಅವರು ಪ್ರಕಾಶಮಯವಾದ ಶುಭ್ರವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
REV 15:7 ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು.
REV 15:8 ದೇವರ ಮಹಿಮೆಯಿಂದಲೂ ಅವರ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ದೇವಾಲಯವು ಆವರಿಸಿದ ಕಾರಣ, ಆ ಏಳುಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ, ಆ ದೇವಾಲಯದೊಳಗೆ ಪ್ರವೇಶಿಸುವುದಕ್ಕೆ ಯಾರಿಗೂ ಆಗಲಿಲ್ಲ.
REV 16:1 ಆಗ ದೇವಾಲಯದಿಂದ ಬಂದ ಗಟ್ಟಿಯಾದ ಧ್ವನಿಯು, ಏಳು ದೇವದೂತರಿಗೂ, “ಹೋಗಿರಿ, ಏಳು ಬೋಗುಣಿಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿರಿ!” ಎಂದು ಹೇಳುವುದನ್ನು ನಾನು ಕೇಳಿದೆನು.
REV 16:2 ಮೊದಲನೆಯ ದೂತನು ಹೋಗಿ ತನ್ನ ಬೋಗುಣಿಯೊಳಗಿರುವುದನ್ನು ಭೂಮಿಯ ಮೇಲೆ ಸುರಿಯಲು, ಮೃಗದ ಗುರುತನ್ನು ಹಾಕಿಸಿಕೊಂಡು ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.
REV 16:3 ಎರಡನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಸಮುದ್ರದ ಮೇಲೆ ಸುರಿಯಲು, ಅದು ಸತ್ತ ಮನುಷ್ಯನ ರಕ್ತದಂತಾಯಿತು, ಸಕಲ ಜೀವಿಗಳೂ ಸತ್ತವು.
REV 16:4 ಮೂರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ನದಿಗಳ ಮೇಲೂ ನೀರಿನ ಬುಗ್ಗೆಗಳ ಮೇಲೂ ಸುರಿಯಲು, ಅವು ರಕ್ತವಾದವು.
REV 16:5 ಆಗ ಜಲಾಶಯದ ಜಲಗಳ ದೂತನು: “ನೀವು ಇದ್ದವರೂ, ಇರುವವರೂ ಆಗಿರುವ ಪರಿಶುದ್ಧರು. ನೀವು ನೀತಿವಂತರಾಗಿದ್ದೀರಿ. ಏಕೆಂದರೆ, ನೀವು ಇವುಗಳಿಗೆ ನ್ಯಾಯತೀರಿಸುವಿರಿ.
REV 16:6 ಅವರು ನಿಮ್ಮ ಭಕ್ತರ ಮತ್ತು ನಿಮ್ಮ ಪ್ರವಾದಿಗಳ ರಕ್ತವನ್ನು ಸುರಿಸಿದ್ದಾರೆ. ನೀವು ಅವರಿಗೆ ಕುಡಿಯುವುದಕ್ಕೆ ರಕ್ತವನ್ನೇ ಕೊಟ್ಟಿರುವಿರಿ. ಅವರು ಅದಕ್ಕೆ ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.
REV 16:7 ಆಗ ಬಲಿಪೀಠವು ಹೀಗೆ ಮಾತನಾಡುವುದನ್ನು ಕೇಳಿದೆನು: “ಕರ್ತಾ, ಸರ್ವಶಕ್ತರಾದ ದೇವರೇ, ನಿಮ್ಮ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ.”
REV 16:8 ನಾಲ್ಕನೆಯ ದೇವದೂತನು ತನ್ನ ಬೋಗುಣಿಯೊಳಗಿರುವುದನ್ನು ಸೂರ್ಯನ ಮೇಲೆ ಸುರಿಯಲು, ಸೂರ್ಯನಿಗೆ ಮನುಷ್ಯರನ್ನು ಬೆಂಕಿಯಿಂದ ಕಂದಿಸುವ ಅಧಿಕಾರ ಕೊಡಲಾಯಿತು.
REV 16:9 ಮನುಷ್ಯರು ಬಲವಾದ ಕಾವಿನಿಂದ ಕಂದಿ ಹೋದಾಗ್ಯೂ, ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದರು. ಆದರೆ ಅವರು ದೇವರಿಗೆ ಮಹಿಮೆಯನ್ನು ಸಲ್ಲಿಸುವ ಹಾಗೆ ಪಶ್ಚಾತ್ತಾಪ ಪಡಲಿಲ್ಲ.
REV 16:10 ಐದನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು, ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,
REV 16:11 ತಮ್ಮ ನೋವುಗಳಿಗಾಗಿಯೂ ಹುಣ್ಣುಗಳಿಗಾಗಿಯೂ ಪರಲೋಕದ ದೇವರನ್ನು ದೂಷಿಸಿದರು. ಆದರೆ ಅವರು, ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿಲ್ಲ.
REV 16:12 ಆರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು.
REV 16:13 ಆಗ ಕಪ್ಪೆಗಳಂತೆ ಕಾಣುವ ಮೂರು ಅಶುದ್ಧಾತ್ಮಗಳು ಘಟಸರ್ಪನ ಬಾಯೊಳಗಿಂದಲೂ ಮತ್ತು ಸುಳ್ಳು ಪ್ರವಾದಿಯ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಬರುವುದನ್ನು ಕಂಡೆನು.
REV 16:14 ಅವು ಸೂಚಕಕಾರ್ಯಗಳನ್ನು ನಡೆಸುವ ದೆವ್ವಗಳ ಆತ್ಮಗಳಾಗಿದ್ದು, ಭೂಲೋಕದ ರಾಜರುಗಳನ್ನು ಸರ್ವಶಕ್ತರಾದ ದೇವರ ಮಹಾದಿನದ ಯುದ್ಧಕ್ಕಾಗಿ ಕೂಡಿಸುವುದಕ್ಕಾಗಿ ಹೊರಟವು.
REV 16:15 “ಇಗೋ, ನಾನು ಕಳ್ಳನು ಬರುವಂತೆ ಬರುತ್ತೇನೆ. ಬೆತ್ತಲೆಯಾಗಿ ತಿರುಗಾಡಿ, ಜನರಿಂದ ಅವಮಾನಗೊಳ್ಳದಂತೆ ಎಚ್ಚರವಾಗಿದ್ದು ತನ್ನ ವಸ್ತ್ರವನ್ನು ಯಾವನು ಕಾಪಾಡಿಕೊಳ್ಳುತ್ತಾನೋ ಅವನು ಧನ್ಯನು.”
REV 16:16 ಆಗ ಅವು ಅವರನ್ನು ಹೀಬ್ರೂ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರಿನ ಸ್ಥಳಕ್ಕೆ ಸೇರಿಸಿದವು.
REV 16:17 ಏಳನೆಯ ದೂತನು ತನ್ನ ಬೋಗುಣಿಯಲ್ಲಿರುವುದನ್ನು ವಾಯುಮಂಡಲದ ಮೇಲೆ ಸುರಿಯಲು, ಆ ದೇವಾಲಯದೊಳಗಿನ ಸಿಂಹಾಸನದಿಂದ ಬಂದ ಮಹಾಧ್ವನಿಯು, “ಸಂಭವಿಸಿದ್ದಾಯಿತು” ಎಂದು ಹೇಳುವುದನ್ನು ಕೇಳಿದೆನು.
REV 16:18 ಆಗ ಅಲ್ಲಿ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಮತ್ತು ಮಹಾಭೂಕಂಪವೂ ಸಂಭವಿಸಿದವು. ಮನುಷ್ಯನು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.
REV 16:19 ಮಹಾ ಪಟ್ಟಣವು ಮೂರು ಭಾಗಗಳಾಗಿ ಹೋಯಿತು ಮತ್ತು ರಾಷ್ಟ್ರಗಳ ನಗರಗಳು ಬಿದ್ದವು. ಇದಲ್ಲದೆ ಮಹಾ ಬಾಬಿಲೋನಿಗೆ ರೋಷವೆಂಬ ದ್ರಾಕ್ಷಾರಸದ ಬಟ್ಟಲನ್ನು ಕೊಡುವಂತೆ ದೇವರಿಗೆ ಅದು ಜ್ಞಾಪಕಕ್ಕೆ ಬಂತು.
REV 16:20 ಆಗ ಪ್ರತಿಯೊಂದು ದ್ವೀಪಗಳು ಮರೆಯಾಗಿ ಹೋದವು, ಬೆಟ್ಟಗಳು ಕಾಣದಂತಾದವು.
REV 16:21 ಆಕಾಶದಿಂದ ಒಂದೊಂದು ಸುಮಾರು ನಲವತ್ತೈದು ಕಿಲೋಗ್ರಾಂ ತೂಕದ ಬಹುದೊಡ್ಡ ಆಲಿಕಲ್ಲುಗಳು ಮನುಷ್ಯರ ಮೇಲೆ ಬಿದ್ದವು. ಆಲಿಕಲ್ಲಿನ ಉಪದ್ರವವು ಬಹು ಹೆಚ್ಚಾಗಿದ್ದರಿಂದಲೂ ಮನುಷ್ಯರು ದೇವರನ್ನು ದೂಷಿಸಿದರು.
REV 17:1 ಏಳು ಬೋಗುಣಿಗಳನ್ನು ಹಿಡಿದಿದ್ದ ಏಳು ದೂತರಲ್ಲೊಬ್ಬನು ನನಗೆ, “ಬಾ, ಬಹಳ ನೀರುಗಳ ಮೇಲೆ ಕುಳಿತಿರುವ ಮಹಾಜಾರಸ್ತ್ರೀಗಾಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
REV 17:2 ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು,” ಎಂದು ಹೇಳಿದನು.
REV 17:3 ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು.
REV 17:4 ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ಹರಳು, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದ ವಸ್ತುಗಳಿಂದಲೂ ಮತ್ತು ತನ್ನ ಅಶುದ್ಧ ಅನೈತಿಕತೆಯಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
REV 17:5 ಆಕೆಯ ಹಣೆಯ ಮೇಲೆ: “ಮಹಾ ಬಾಬಿಲೋನ್, ಜಾರ ಸ್ತ್ರೀಯರಿಗೂ ಭೂಮಿಯ ಎಲ್ಲಾ ಅಸಹ್ಯವಾದವುಗಳಿಗೂ ತಾಯಿ!” ಎಂದು ನಿಗೂಢ ಹೆಸರು ಬರೆದಿತ್ತು.
REV 17:6 ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು. ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.
REV 17:7 ಆಗ ದೂತನು ನನಗೆ: “ನೀನೇಕೆ ಆಶ್ಚರ್ಯಪಟ್ಟೆ? ನಾನು ನಿನಗೆ ಆ ಸ್ತ್ರೀಯ ವಿಷಯವಾಗಿಯೂ ಅವಳು ಹೊತ್ತುಕೊಂಡಿದ್ದ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದ ಮೃಗದ ವಿಷಯವಾಗಿಯೂ ಇರುವ ಗೂಡಾರ್ಥವನ್ನು ನಿನಗೆ ತಿಳಿಸುವೆನು.
REV 17:8 ನೀನು ಕಂಡ ಮೃಗವು ಒಮ್ಮೆ ಇತ್ತು, ಈಗ ಇಲ್ಲ, ಪಾತಾಳದೊಳಗಿನಿಂದ ಮೇಲೆ ಬಂದು ವಿನಾಶಕ್ಕೆ ಹೊರಡಲಿದೆ. ಲೋಕದ ಸೃಷ್ಟಿಯಾದ ದಿನದಿಂದ ಯಾರ ಯಾರ ಹೆಸರುಗಳು ಜೀವಗ್ರಂಥದಲ್ಲಿ ಬರೆದಿರುವುದಿಲ್ಲವೋ, ಆ ಭೂನಿವಾಸಿಗಳು ಮೃಗವನ್ನು ನೋಡಿ ಆ ಮೃಗವು ಹಿಂದೆ ಇತ್ತು, ಈಗ ಇಲ್ಲ, ಇನ್ನು ಮೇಲೆ ಬರಲಿದೆ ಎಂದು ಆಶ್ಚರ್ಯಗೊಳ್ಳುವರು.
REV 17:9 “ಆ ಏಳು ತಲೆಗಳು, ಆ ಸ್ತ್ರೀ ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ಅವು ಏಳು ರಾಜರುಗಳಾಗಿರುತ್ತವೆ.
REV 17:10 ಅವರಲ್ಲಿ ಐದು ರಾಜರು ಬಿದ್ದಿದ್ದಾರೆ; ಒಬ್ಬನು ಇದ್ದಾನೆ, ಇನ್ನೊಬ್ಬನು ಇನ್ನೂ ಬಂದಿಲ್ಲ. ಅವನು ಬಂದಾಗ ಸ್ವಲ್ಪಕಾಲ ಇರಬೇಕಾಗುತ್ತದೆ.
REV 17:11 ಹಿಂದೆ ಇದ್ದು ಈಗ ಇಲ್ಲದ ಆ ಮೃಗವು ಎಂಟನೆಯವನು. ಅವನು ಆ ಏಳು ಜನರಲ್ಲಿ ಸೇರಿದವನಾಗಿದ್ದು, ವಿನಾಶಕ್ಕೆ ಹೋಗುತ್ತಿದ್ದಾನೆ.
REV 17:12 “ನೀನು ಕಂಡ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಮೃಗದೊಂದಿಗೆ ಅಧಿಕಾರ ಹೊಂದುವವು.
REV 17:13 ಅವರು ಏಕ ಮನಸ್ಸುಳ್ಳವರಾಗಿ, ಮೃಗಕ್ಕೆ ತಮ್ಮ ಬಲ ಮತ್ತು ಅಧಿಕಾರವನ್ನು ಕೊಡುವರು.
REV 17:14 ಅವರು ಕುರಿಮರಿಯಾದವರ ಮೇಲೆ ಯುದ್ಧಮಾಡುವರು. ಆದರೆ ಕುರಿಮರಿಯಾದವರು ಕರ್ತರ ಕರ್ತರೂ ರಾಜಾಧಿರಾಜರೂ ಆಗಿರುವುದರಿಂದ ಅವರನ್ನು ಜಯಿಸುವರು. ಅವರೊಂದಿಗಿದ್ದವರು ದೇವರಿಂದ ಕರೆಹೊಂದಿದವರೂ ಆಯ್ದುಕೊಂಡವರೂ ನಂಬಿಗಸ್ತರೂ ಆಗಿರುವರು.”
REV 17:15 ಅನಂತರ ದೂತನು ನನಗೆ, “ಜಾರಸ್ತ್ರೀ ಕೂತಿದ್ದ ಕಡೆ ನೀನು ಕಂಡ ನೀರುಗಳು, ಪ್ರಜೆಗಳನ್ನೂ ಸಮೂಹಗಳನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತವೆ.
REV 17:16 ನೀನು ಕಂಡ ಆ ಮೃಗ ಮತ್ತು ಹತ್ತು ಕೊಂಬುಗಳು ಆ ಜಾರಸ್ತ್ರೀಯನ್ನು ದ್ವೇಷಿಸಿ, ಆಕೆಯನ್ನು ಗತಿಯಿಲ್ಲದವಳನ್ನಾಗಿಯೂ ಆಕೆಯನ್ನು ಬಟ್ಟೆ ಇಲ್ಲದವಳನ್ನಾಗಿಯೂ ಆಕೆಯ ಮಾಂಸವನ್ನು ತಿಂದು, ಆಕೆಯನ್ನು ಬೆಂಕಿಯಲ್ಲಿ ಸುಟ್ಟುಬಿಡುವವು.
REV 17:17 ಏಕೆಂದರೆ, ದೇವರು ತಮ್ಮ ಮನಸ್ಸಿನಲ್ಲಿರುವುದನ್ನು ನಡೆಸುವಂತೆಯೂ ಅವುಗಳ ರಾಜ್ಯವನ್ನು ಮೃಗಕ್ಕೆ ಕೊಡಲು ಒಮ್ಮನಸ್ಸಾಗಿರುವಂತೆಯೂ ಮಾಡಿ, ದೇವರು ತಮ್ಮ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಇದನ್ನು ಅವುಗಳ ಹೃದಯದಲ್ಲಿಟ್ಟಿದ್ದಾರೆ.
REV 17:18 ನೀನು ಕಂಡ ಆ ಸ್ತ್ರೀಯು ಭೂರಾಜರನ್ನು ಆಳುವ ಮಹಾನಗರಿಯೇ,” ಎಂದು ಹೇಳಿದನು.
REV 18:1 ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.
REV 18:2 ಅವನು ಮಹಾಧ್ವನಿಯಿಂದ: “ ‘ಬಿದ್ದಳು! ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ದೆವ್ವಗಳಿಗೆ ವಾಸಸ್ಥಾನವೂ ಎಲ್ಲಾ ದುರಾತ್ಮಗಳಿಗೂ ಅಶುದ್ಧವಾದ ಹಾಗೂ ಅಸಹ್ಯವಾದ ಪ್ರತಿಯೊಂದು ಪ್ರಾಣಿಪಕ್ಷಿಗಳಿಗೂ ನಿವಾಸವಾಗಿದ್ದಾಳೆ.
REV 18:3 ಏಕೆಂದರೆ ಎಲ್ಲಾ ದೇಶಗಳೂ ಆಕೆಯ ಜಾರತ್ವಗಳೆಂಬ ಅತ್ಯಾಸಕ್ತಿಯ ದ್ರಾಕ್ಷಾರಸವನ್ನು ಕುಡಿದಿವೆ. ಭೂಲೋಕದ ಅರಸರು ಆಕೆಯೊಂದಿಗೆ ವ್ಯಭಿಚಾರ ಮಾಡಿದರು, ಭೂಲೋಕದ ವರ್ತಕರು ಆಕೆಯ ಭೋಗ ವಸ್ತುಗಳಿಂದ ಸಿರಿವಂತರಾದರು,” ಎಂದು ಕೂಗಿದನು.
REV 18:4 ಅನಂತರ ಪರಲೋಕದಿಂದ ಇನ್ನೊಂದು ಧ್ವನಿಯು: “ ‘ನನ್ನ ಜನರೇ, ಆಕೆಯನ್ನು ಬಿಟ್ಟು ಬನ್ನಿರಿ, ನೀವು ಆಕೆಯ ಪಾಪಗಳಲ್ಲಿ ಪಾಲುಗಾರರಾಗಬಾರದು, ಆಕೆಯ ಉಪದ್ರವಗಳಿಗೆ ಗುರಿಯಾಗಬಾರದು.’
REV 18:5 ಏಕೆಂದರೆ ಆಕೆಯ ಪಾಪಗಳು ಒಂದಕ್ಕೊಂದು ಸೇರಿ ಆಕಾಶದಷ್ಟಾಗಿವೆ. ದೇವರು ಆಕೆಯ ಅಪರಾಧಗಳನ್ನು ಜ್ಞಾಪಿಸಿಕೊಂಡಿದ್ದಾರೆ.
REV 18:6 ಆಕೆಯು ನಿಮಗೆ ಕೊಟ್ಟಿದ್ದಕ್ಕೆ ಸರಿಯಾಗಿ ಹಿಂದಕ್ಕೆ ಕೊಡಿರಿ. ಕೃತ್ಯಗಳಿಗೆ ಸರಿಯಾಗಿ ಎರಡರಷ್ಟು ಅವಳಿಗೆ ಕೊಡಿರಿ. ಆಕೆಯ ಬಟ್ಟಲಿನಿಂದಲೇ ಎರಡರಷ್ಟು ಆಕೆಗೆ ಕಲಸಿ ಕೊಡಿರಿ.
REV 18:7 ಆಕೆಯು ಯಾವುದರಿಂದ ತನ್ನನ್ನು ಘನಪಡಿಸಿಕೊಂಡು ಭೋಗಿನಿಯಾಗಿದ್ದಳೋ ಅದಕ್ಕೆ ತಕ್ಕಂತೆ ನೀವು ಆಕೆಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ. ಏಕೆಂದರೆ ಆಕೆ ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ. ನಾನು ವಿಧವೆಯಲ್ಲ, ಎಂದೆಂದಿಗೂ ದುಃಖಿಸುವುದಿಲ್ಲ!’ ಎಂದುಕೊಳ್ಳುತ್ತಾಳೆ.
REV 18:8 ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ ಮರಣ, ಗೋಳಾಟ ಮತ್ತು ಕ್ಷಾಮವು ಬರುವುವು. ಆಕೆಯನ್ನು ತೀರ್ಪುಮಾಡುವ ಕರ್ತದೇವರು ಶಕ್ತರಾಗಿರುವುದರಿಂದ ಆಕೆಯು ಬೆಂಕಿಯಿಂದ ನಾಶವಾಗುವಳು.”
REV 18:9 “ಆಕೆಯೊಂದಿಗೆ ಜಾರತ್ವ ಮಾಡಿರುವ ಭೂರಾಜರು, ಆಕೆಯ ದಹನದಿಂದ ಏರುವ ಹೊಗೆಯನ್ನು ಕಂಡಾಗೆಲ್ಲಾ ಆಕೆಗಾಗಿ ಅಳುತ್ತಾ ಗೋಳಾಡುವರು.
REV 18:10 ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.
REV 18:11 “ಭೂಮಿಯ ವರ್ತಕರು ಆಕೆಗಾಗಿ ದುಃಖಿಸಿ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.
REV 18:12 ಅವರ ಸರಕುಗಳಾದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲು ಹಾಗೂ ಮುತ್ತುಗಳು, ನಯವಾದ ನಾರುಮಡಿ, ಕಡುಗೆಂಪು ವಸ್ತ್ರ, ರೇಷ್ಮೆ, ಊದಾವರ್ಣದ ವಸ್ತ್ರ, ಅಗಿಲು ಮರ ಮತ್ತು ದಂತ ಪಾತ್ರೆಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ,
REV 18:13 ಸರಕುಗಳಾದ ದಾಲ್ಚಿನ್ನಿ ಮತ್ತು ಮಸಾಲೆ, ಧೂಪ, ಸುಗಂಧ ತೈಲ, ರಕ್ತಬೋಳ, ದ್ರಾಕ್ಷಾರಸ ಮತ್ತು ಓಲಿವ್ ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು ಮತ್ತು ಕುರಿಗಳು, ಕುದುರೆಗಳು, ವಾಹನಗಳು, ಗುಲಾಮರು ಹಾಗೂ ಮನುಷ್ಯರು ಇವುಗಳನ್ನೆಲ್ಲಾ ಆ ವರ್ತಕರು ಅವಳಿಗೆ ಮಾರುತ್ತಿದ್ದರು.
REV 18:14 “ನೀನು ಬಯಸಿದ ನಿನ್ನ ಪ್ರಾಣ ಫಲವು ನಿನ್ನಿಂದ ತೊಲಗಿಹೋಗಿದೆ. ನಿನ್ನ ಎಲ್ಲಾ ವೈಭವವು ಹಾಗೂ ನಿನ್ನ ಶೋಭೆಯ ಸೊಗಸುಗಳೆಲ್ಲಾ ನಿನ್ನಿಂದ ನಾಶವಾದವು. ಅವರು ಅವುಗಳನ್ನು ಇನ್ನೆಂದೂ ಕಾಣಲಾರರು.
REV 18:15 ಆಕೆಯಿಂದ ಸಿರಿವಂತರಾದ ಆ ಸರಕುಗಳ ವರ್ತಕರು ದೂರದಲ್ಲಿ ನಿಂತು ಆಕೆಯ ಯಾತನೆಯ ದೆಸೆಯಿಂದ ಭಯಪಟ್ಟು, ದುಃಖಿಸಿ,
REV 18:16 “ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ, ನೀನು ನೇರಳೆ, ಕಡುಗೆಂಪು ನಾರುಮಡಿಯನ್ನು ಧರಿಸಿ, ಚಿನ್ನ, ಬೆಲೆಬಾಳುವ ಕಲ್ಲು ಮತ್ತು ಮುತ್ತುಗಳಿಂದ ಬೆಳಗುತ್ತಿದ್ದೆ.
REV 18:17 ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ” ಎಂದು ಗೋಳಾಡುವರು. “ಪ್ರತಿಯೊಂದು ಹಡಗಿನ ಮಾಲೀಕರು ಮತ್ತು ಹಡಗು ಪಯಣಿಗರು, ನಾವಿಕರು ಮತ್ತು ಸಮುದ್ರದಿಂದ ತಮ್ಮ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತು
REV 18:18 ಆಕೆಯ ದಹನದ ಹೊಗೆಯನ್ನು ನೋಡಿ, ‘ಈ ಮಹಾಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಕೂಗುವರು.
REV 18:19 ಆಗ ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು ಅಳುತ್ತಾ ದುಃಖಿಸುತ್ತಾ ಹೀಗೆ ಕೂಗುವರು: “ ‘ಅಯ್ಯೋ! ಅಯ್ಯೋ! ದುಃಖಭರಿತ ಮಹಾನಗರಿಯೇ, ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಆಕೆಯ ವೈಭವದಿಂದಲೇ ಐಶ್ವರ್ಯವಂತರಾದರಲ್ಲಾ! ಒಂದು ತಾಸಿನಲ್ಲಿ ಆಕೆ ಹಾಳಾದಳಲ್ಲಾ?’
REV 18:20 “ಪರಲೋಕವೇ ಸಂಭ್ರಮಿಸಿರಿ, ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ ಆಕೆಯ ನಿಮಿತ್ತ ಹರ್ಷಗೊಳ್ಳಿರಿ! ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ ದೇವರು ಆಕೆಗೆ ತೀರ್ಪುಮಾಡಿದ್ದಾರೆ!”
REV 18:21 ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಬಲಾತ್ಕಾರದಿಂದ ಕೆಡವಲಾಗಿ ಎಂದಿಗೂ ಕಾಣಿಸದು.
REV 18:22 ಬಾಬಿಲೋನೇ, ನಿನ್ನಲ್ಲಿ ಮತ್ತೆ ತಂತಿವಾದ್ಯ ನುಡಿಸುವವರು, ಸಂಗೀತಗಾರರು, ಕೊಳಲೂದುವವರು, ತುತೂರಿಯವರು, ಮಾಡುವ ಧ್ವನಿ ಎಂದೂ ಕೇಳಿಸದು. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಎಂದೂ ಕಂಡುಬಾರನು. ಬೀಸುವ ಕಲ್ಲಿನ ಶಬ್ದವು, ನಿನ್ನಲ್ಲಿ ಎಂದೂ ಕೇಳಿಸದು.
REV 18:23 ದೀಪದ ಬೆಳಕು ನಿನ್ನಲ್ಲಿ ಎಂದೂ ಪ್ರಕಾಶಿಸದು. ವಧೂವರರ ಸ್ವರವು ಮತ್ತೆ ನಿನ್ನಲ್ಲಿ ಎಂದೂ ಕೇಳಿಬರದು. ಏಕೆಂದರೆ ನಿನ್ನ ವರ್ತಕರು ಭೂಮಿಯ ಮಹಾ ಪುರುಷರಾಗಿದ್ದು, ನಿನ್ನ ಮಾಂತ್ರಿಕ ಶಕ್ತಿಯ ದೆಸೆಯಿಂದ ಎಲ್ಲಾ ದೇಶಗಳವರು ವಂಚಿತರಾದರು.
REV 18:24 ಆಕೆಯಲ್ಲಿ ಪ್ರವಾದಿಗಳ ಮತ್ತು ಪರಿಶುದ್ಧರ ರಕ್ತವೂ ಮತ್ತು ಭೂಮಿಯ ಮೇಲೆ ಕೊಲೆಯಾದವರ ರಕ್ತವೂ ಸಿಕ್ಕಿತು,” ಎಂದು ಹೇಳಿದನು.
REV 19:1 ಇವುಗಳಾದ ಮೇಲೆ ಪರಲೋಕದಲ್ಲಿ ದೊಡ್ಡ ಸಮೂಹದ ಮಹಾಸ್ವರವನ್ನು ಕೇಳಿದೆನು. ಅವರು: “ಹಲ್ಲೆಲೂಯಾ! ರಕ್ಷಣೆಯೂ ಮಹಿಮೆಯೂ ಶಕ್ತಿಯೂ ನಮ್ಮ ದೇವರದಾಗಿವೆ!
REV 19:2 ಏಕೆಂದರೆ ದೇವರ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ. ಏಕೆಂದರೆ ತನ್ನ ಅನೈತಿಕತೆಯಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ದೇವರು ನ್ಯಾಯತೀರಿಸಿ, ಆಕೆಯು ದೇವರ ದಾಸರನ್ನು ಹಿಂಸಿಸಿ, ಚೆಲ್ಲಿಸಿದ ರಕ್ತಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾರೆ.”
REV 19:3 ಎಂದೂ ದ್ವಿತೀಯ ಬಾರಿ: “ಹಲ್ಲೆಲೂಯಾ! ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ!” ಎಂದು ಘೋಷಿಸಿದರು.
REV 19:4 ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು, ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿ: “ಆಮೆನ್, ಹಲ್ಲೆಲೂಯಾ!” ಎಂದರು.
REV 19:5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು: “ದೇವರ ಎಲ್ಲಾ ದಾಸರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಸ್ತುತಿಸಿರಿ!” ಎಂದು ಹೇಳಿತು.
REV 19:6 ತರುವಾಯ ಜನರ ದೊಡ್ಡ ಗುಂಪಿನ ಶಬ್ದವನ್ನು ಕೇಳಿದೆನು. ಅದು ಹೀಗೆ ಹೇಳಿತು: “ಹಲ್ಲೆಲೂಯಾ! ಸರ್ವಶಕ್ತ ಆಗಿರುವ ನಮ್ಮ ಕರ್ತದೇವರು ಆಳುತ್ತಾರೆ.
REV 19:7 ಕುರಿಮರಿ ಆಗಿರುವವರ ವಿವಾಹ ಕಾಲವು ಬಂತು. ಅವರಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ. ಸಂತೋಷಪಡೋಣ, ಹರ್ಷಗೊಳ್ಳೋಣ, ಅವರನ್ನು ಮಹಿಮೆಪಡಿಸೋಣ!”
REV 19:8 ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ತೊಟ್ಟುಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸಲಾಗಿತ್ತು. ಏಕೆಂದರೆ ಆ ನಾರುಮಡಿಯು ಪರಿಶುದ್ಧರ ನೀತಿಕೃತ್ಯಗಳೇ.
REV 19:9 ಇದಲ್ಲದೆ ಅವನು ನನಗೆ, “ಕುರಿಮರಿ ಆಗಿರುವವರ ವಿವಾಹದ ಔತಣಕ್ಕೆ ಕರೆಯಲಾದವರು ಧನ್ಯರು ಮತ್ತು ಅವರು ಹೀಗೆ ಹೇಳಿದರು, ದೇವರ ಈ ಮಾತುಗಳು ಸತ್ಯವಾಗಿವೆ!” ಎಂದನು.
REV 19:10 ಆಗ ನಾನು ಅವನನ್ನು ಆರಾಧಿಸಬೇಕೆಂದು ಅವನ ಪಾದಗಳಿಗೆ ಬೀಳಲು ಅವನು, “ಹಾಗೆ ಮಾಡಬೇಡ, ನಾನು ನಿನಗೂ ಯೇಸುವಿನ ಸಾಕ್ಷಿಯುಳ್ಳ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು. ಏಕೆಂದರೆ ಯೇಸುವಿನ ಸಾಕ್ಷಿಯೇ ಪ್ರವಾದನೆಯ ಆತ್ಮವಾಗಿದೆ!” ಎಂದನು.
REV 19:11 ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಇಗೋ, ಬಿಳಿಯ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವರ ಹೆಸರು, ನಂಬಿಗಸ್ತರು ಮತ್ತು ಸತ್ಯವಂತರು ಎಂಬುದು. ಅವರ ನೀತಿಯಿಂದ ನ್ಯಾಯವಿಚಾರಿಸುತ್ತಾ ಯುದ್ಧಮಾಡುತ್ತಾರೆ.
REV 19:12 ಆತನ ನೇತ್ರಗಳು ಬೆಂಕಿಯ ಜ್ವಾಲೆಯಂತಿದ್ದವು. ಆತನ ತಲೆಯ ಮೇಲೆ ಅನೇಕ ಮುಕುಟಗಳಿದ್ದವು. ಆತನಿಗೆ ಒಂದು ಹೆಸರು ಬರೆದು ಕೊಟ್ಟಿದೆ. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.
REV 19:13 ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದಾನೆ. ಆತನ ಹೆಸರು ದೇವರ ವಾಕ್ಯವೆಂಬುದೇ.
REV 19:14 ಪರಲೋಕದ ಸೈನ್ಯದವರು ಶುಭ್ರ ಹಾಗೂ ಬಿಳಿಯ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳಿಯ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದರು.
REV 19:15 ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.” ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ.
REV 19:16 ಆತನ ತೊಡೆಯ ಮೇಲಣ ವಸ್ತ್ರದಲ್ಲಿ: ರಾಜಾಧಿರಾಜನೂ ಕರ್ತರ ಕರ್ತನೂ. ಎಂಬ ಹೆಸರು ಬರೆದಿದೆ.
REV 19:17 ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾಧ್ವನಿಯಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಏರ್ಪಡಿಸುವ ಮಹಾಭೋಜನಕ್ಕೆ ಕೂಡಿಬನ್ನಿರಿ.
REV 19:18 ರಾಜರು, ಸಹಸ್ರಾಧಿಪತಿಗಳು, ಪರಾಕ್ರಮಶಾಲಿಗಳು, ಅಶ್ವಗಳು, ಅಶ್ವಾರೂಢರು, ಸ್ವತಂತ್ರರು, ದಾಸರು, ದೊಡ್ಡವರು, ಚಿಕ್ಕವರು, ಇವರೆಲ್ಲರ ಮಾಂಸವನ್ನು ತಿನ್ನುವುದಕ್ಕೆ ಬನ್ನಿರಿ!” ಎಂದು ಹೇಳಿದನು.
REV 19:19 ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವರ ಮೇಲೆಯೂ ಅವರ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿ ಬಂದಿರುವುದನ್ನು ನಾನು ಕಂಡೆನು.
REV 19:20 ಆಗ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿ ಸಹ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲಾಯಿತು.
REV 19:21 ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು ಮತ್ತು ಪಕ್ಷಿಗಳೆಲ್ಲಾ ಅವರ ಮಾಂಸದಿಂದ ಹೊಟ್ಟೆ ತುಂಬಿಸಿಕೊಂಡವು.
REV 20:1 ಆಗ ಒಬ್ಬ ದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು.
REV 20:2 ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
REV 20:3 ಆ ಸಾವಿರ ವರ್ಷ ತೀರುವ ತನಕ ಅವನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೂತನು ಅವನನ್ನು ಅಧೋಲೋಕದಲ್ಲಿ ತಳ್ಳಿ, ಬಾಗಿಲು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು. ಇವುಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗತಕ್ಕದ್ದು.
REV 20:4 ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು.
REV 20:5 ಉಳಿದ ಸತ್ತವರು ಆ ಸಾವಿರ ವರ್ಷ ಗತಿಸುವ ತನಕ ಜೀವಿತರಾಗಲಿಲ್ಲ. ಇದೇ ಪ್ರಥಮ ಪುನರುತ್ಥಾನವು.
REV 20:6 ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಧನ್ಯರೂ ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಯೇಸುಕ್ರಿಸ್ತರೊಂದಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷಗಳ ಕಾಲ ಆಳುವರು.
REV 20:7 ಆ ಸಾವಿರ ವರ್ಷಗಳು ಗತಿಸಿದ ಮೇಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು.
REV 20:8 ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು.
REV 20:9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.
REV 20:10 ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.
REV 20:11 ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು.
REV 20:12 ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
REV 20:13 ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು.
REV 20:14 ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.
REV 20:15 ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು.
REV 21:1 ತರುವಾಯ, “ನೂತನ ಆಕಾಶವನ್ನೂ ನೂತನ ಭೂಮಿಯನ್ನೂ” ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಇಲ್ಲದಂತಾದವು. ಇನ್ನು ಸಮುದ್ರವು ಇರಲಿಲ್ಲ.
REV 21:2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ನೂತನ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾದ ವಧುವಿನಂತೆ ಶೃಂಗರಿಸಲಾಗಿತ್ತು.
REV 21:3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು.
REV 21:4 ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.
REV 21:5 ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಇಗೋ, ನಾನು ಎಲ್ಲವನ್ನೂ ನೂತನಗೊಳಿಸುತ್ತೇನೆ!” ಎಂದರು ಮತ್ತು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ ಸತ್ಯವಾದವೂ ಆಗಿವೆ!” ಎಂದು ಹೇಳಿದನು.
REV 21:6 ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಎಲ್ಲಾ ನೆರವೇರಿತು, ನಾನು ಆದಿಯೂ ಅಂತ್ಯವೂ ಆರಂಭವೂ ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಉಚಿತವಾಗಿ ಕೊಡುವೆನು.
REV 21:7 ಜಯಹೊಂದುವವರು ಇವುಗಳಿಗೆ ಬಾಧ್ಯನಾಗುವರು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಮಕ್ಕಳಾಗಿರುವರು.
REV 21:8 ಆದರೆ ಹೇಡಿಗಳು, ನಂಬದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ, ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು!” ಎಂದು ನನಗೆ ಹೇಳಿದರು.
REV 21:9 ಅಂತಿಮ ಏಳು ಉಪದ್ರವಗಳಿಂದ ತುಂಬಿದ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳುಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ, ಯಜ್ಞದ ಕುರಿಮರಿಯಾದವವರಿಗೆ ಹೆಂಡತಿಯಾಗತಕ್ಕ ವಧುವನ್ನು ನಿನಗೆ ತೋರಿಸುವೆನು!” ಎಂದು ಹೇಳಿ,
REV 21:10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು.
REV 21:11 ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು.
REV 21:12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು.
REV 21:13 ಪೂರ್ವದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು.
REV 21:14 ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಕುರಿಮರಿಯಾದವರ ಹನ್ನೆರಡು ಜನ ಅಪೊಸ್ತಲರ ಹೆಸರುಗಳಿದ್ದವು.
REV 21:15 ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.
REV 21:16 ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು, ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು 2,200 ಕಿಲೋಮೀಟರ್ ಆಗಿತ್ತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿದ್ದವು.
REV 21:17 ಅವನು ಅದರ ಗೋಡೆಯನ್ನೂ ಅಳತೆ ಮಾಡಿದನು. ಅದು 65 ಮೀಟರ್ ಆಗಿತ್ತು. ಮನುಷ್ಯನ ಅಳತೆಯಂತೆ ದೇವದೂತನು ಅಳೆದನು.
REV 21:18 ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲಾಗಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
REV 21:19 ಪಟ್ಟಣದ ಗೋಡೆಯು ಮತ್ತು ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತ, ಎರಡನೆಯದು ವೈಡೂರ್ಯ, ಮೂರನೆಯದು ಪಚ್ಚೆ, ನಾಲ್ಕನೆಯದು ಪದ್ಮರಾಗ,
REV 21:20 ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಬತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲ ಸ್ಪಟಿಕ.
REV 21:21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
REV 21:22 ಪಟ್ಟಣದಲ್ಲಿ ನಾನು ಆಲಯವನ್ನೇ ಕಾಣಲಿಲ್ಲ. ಏಕೆಂದರೆ ಕರ್ತ ಆಗಿರುವ ಸರ್ವಶಕ್ತ ದೇವರೂ, ಕುರಿಮರಿಯಾಗಿರುವವರೂ ಆಲಯವಾಗಿದ್ದಾರೆ.
REV 21:23 ಪಟ್ಟಣವನ್ನು ಬೆಳಗಿಸಲು ಸೂರ್ಯನಾಗಲಿ, ಚಂದ್ರನಾಗಲಿ ಅವಶ್ಯವಿಲ್ಲ. ಏಕೆಂದರೆ ದೇವರ ಮಹಿಮೆಯೇ ಅದಕ್ಕೆ ಬೆಳಕಾಗಿತ್ತು. ಕುರಿಮರಿಯಾದಾತನೇ ಅದರ ದೀಪವು.
REV 21:24 ಅದರ ಬೆಳಕಿನಲ್ಲಿ ಎಲ್ಲಾ ಜನರು ನಡೆಯುವರು. ಭೂರಾಜರು ತಮ್ಮ ಮಹಿಮೆಯನ್ನು ಅಲ್ಲಿಗೆ ತರುವರು.
REV 21:25 ಅದರ ಹೆಬ್ಬಾಗಿಲುಗಳು ಒಂದು ದಿನವೂ ಮುಚ್ಚುವುದೇ ಇಲ್ಲ. ಇರುಳಂತೂ ಇರುವುದೇ ಇಲ್ಲ.
REV 21:26 ಜನಾಂಗಗಳ ಮಹಿಮೆಯೂ ಗೌರವವೂ ಅಲ್ಲಿಗೆ ತರಲಾಗುವವು.
REV 21:27 ಅಶುದ್ಧವಾದದ್ದು ಅದರಲ್ಲಿ ಸೇರುವುದಿಲ್ಲ. ಅಸಹ್ಯವಾದದ್ದನ್ನೂ ವಂಚಕವಾದದ್ದನ್ನೂ ನಡೆಸುವವನು ಅದರಲ್ಲಿ ಪ್ರವೇಶಿಸಲಾರನು. ಕುರಿಮರಿಯ ಜೀವ ಪುಸ್ತಕದಲ್ಲಿ ಯಾರ ಯಾರ ಹೆಸರುಗಳು ಬರೆದಿವೆಯೋ ಅವರು ಮಾತ್ರ ಸೇರುವರು.
REV 22:1 ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು,
REV 22:2 ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು.
REV 22:3 ಇನ್ನು ಯಾವ ಶಾಪವೂ ಇರುವುದಿಲ್ಲ. ಅದರಲ್ಲಿ ದೇವರ ಮತ್ತು ಕುರಿಮರಿಯಾದವರ ಸಿಂಹಾಸನವಿರುವುದು. ದೇವರ ದಾಸರು ಅವರಿಗೆ ಸೇವೆಮಾಡುವರು.
REV 22:4 ದೇವರ ಮುಖವನ್ನು ಅವರು ಕಾಣುವರು. ಅವರ ಹಣೆಗಳ ಮೇಲೆ ದೇವರ ಹೆಸರು ಇರುವುದು.
REV 22:5 ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
REV 22:6 ಆಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ!” ಎಂದನು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನು ನೀಡುವ ಕರ್ತದೇವರು ಬೇಗನೆ ಸಂಭವಿಸತಕ್ಕ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿಯೇ ತಮ್ಮ ದೇವದೂತನನ್ನು ಕಳುಹಿಸಿದರು.
REV 22:7 ಆಗ, “ಇಗೋ, ಬೇಗನೆ ಬರುತ್ತೇನೆ! ಈ ಗ್ರಂಥದ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವರು ಧನ್ಯರು,” ಎಂದು ಕರ್ತ ಆಗಿರುವ ಯೇಸು ಹೇಳಿದರು.
REV 22:8 ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
REV 22:9 ಅವನು ನನಗೆ, “ನೋಡು, ನೀನು ಹಾಗೆ ಮಾಡಬೇಡ. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಳ್ಳುವವರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು!” ಎಂದು ಹೇಳಿದನು.
REV 22:10 ಇದಲ್ಲದೆ ಅವನು, “ನನಗೆ ಈ ಪುಸ್ತಕದಲ್ಲಿರುವ ಪ್ರವಾದನಾ ವಾಕ್ಯಗಳಿಗೆ ಮುದ್ರೆ ಹಾಕಬೇಡ. ಏಕೆಂದರೆ ಸಮಯವು ಸಮೀಪವಾಗಿದೆ.
REV 22:11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ, ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ. ನೀತಿವಂತನು ಇನ್ನೂ ನೀತಿಯನ್ನು ಮಾಡಲಿ. ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ!” ಎಂದನು.
REV 22:12 ಆಗ ಕರ್ತ ಯೇಸು, “ಇಗೋ, ನಾನು ಬೇಗ ಬರುತ್ತೇನೆ. ಪ್ರತಿಯೊಬ್ಬರಿಗೂ ಅವರವರ ಕೆಲಸಕ್ಕೆ ತಕ್ಕಂತೆ ಕೊಡುವ ಪ್ರತಿಫಲವು ನನ್ನಲ್ಲಿದೆ.
REV 22:13 ನಾನೇ ಆಲ್ಫಾ ಮತ್ತು ಒಮೆಗಾ, ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಆರಂಭವೂ ಸಮಾಪ್ತಿಯೂ ಆಗಿದ್ದೇನೆ.
REV 22:14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರು ಧನ್ಯರು. ಹೀಗೆ ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ದ್ವಾರಗಳ ಮೂಲಕ ಆ ಪಟ್ಟಣದೊಳಕ್ಕೆ ಸೇರುವರು.
REV 22:15 ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ಅನುಸರಿಸುವರೆಲ್ಲರೂ ಹೊರಗಿರುವರು.
REV 22:16 “ಯೇಸುವೆಂಬ ನಾನು ನಮ್ಮ ಸಭೆಗಳಲ್ಲಿ ಈ ಸಂಗತಿಗಳ ವಿಷಯವಾಗಿ ನಿಮಗೆ ಸಾಕ್ಷಿ ನೀಡುವಂತೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶದ ಕುಡಿ, ಅವನ ಸಂತತಿಯೂ ಉದಯದ ಪ್ರಕಾಶಮಾನ ತಾರೆಯೂ ಆಗಿದ್ದೇನೆ!” ಎಂದರು.
REV 22:17 ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.
REV 22:18 ಈ ಗ್ರಂಥದ ಪ್ರವಾದನೆಯನ್ನು ಕೇಳುವ ಪ್ರತಿಯೊಬ್ಬರಿಗೂ ನಾನು ಸಾಕ್ಷಿ ಕೊಡುವುದೇನೆಂದರೆ: ಯಾರಾದರೂ ಹೆಚ್ಚು ಮಾತುಗಳನ್ನು ಇವುಗಳಿಗೆ ಕೂಡಿಸಿದರೆ, ದೇವರು ಅವರ ಮೇಲೆ ಈ ಗ್ರಂಥದಲ್ಲಿ ಬರೆದಿರುವ ಉಪದ್ರವಗಳನ್ನು ಕೂಡಿಸುವರು.
REV 22:19 ಯಾರಾದರೂ ಈ ಪ್ರವಾದನಾ ಗ್ರಂಥದಲ್ಲಿರುವ ಮಾತುಗಳನ್ನು ತೆಗೆದುಬಿಟ್ಟರೆ, ಈ ಗ್ರಂಥದಲ್ಲಿ ಬರೆದಿರುವ ಜೀವವೃಕ್ಷದಲ್ಲಿಯೂ ಪವಿತ್ರ ನಗರದಲ್ಲಿಯೂ ಅವರಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.
REV 22:20 ಈ ವಿಷಯಗಳಲ್ಲಿ ಸಾಕ್ಷಿ ನೀಡುವವರು, “ಹೌದು, ನಾನು ಬೇಗ ಬರುತ್ತೇನೆ!” ಎಂದು ಹೇಳುತ್ತಾರೆ. ಆಮೆನ್. ಕರ್ತ ಯೇಸುವೇ ಬಾ.
REV 22:21 ನಮ್ಮ ಕರ್ತ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!
